Home Blog

IPL 2026: ಆರ್ ಸಿಬಿ ಸೇರ್ತಾರಾ ಸಂಜು ಸ್ಯಾಮ್ಸನ್!?

0

ಮುಂಬೈ: ರಾಜಸ್ಥಾನ್ ರಾಯಲ್ಸ್ ಜೊತೆ ಸಂಜು ಸ್ಯಾಮ್ಸನ್ ಅವರ ಸಂಬಂಧ ಹದಗೆಟ್ಟಿರುವ ಹಿನ್ನೆಲೆಯಲ್ಲಿ, ಅವರು 2026ರ ಐಪಿಎಲ್ ಮಿನಿ ಹರಾಜಿಗೆ ಮುನ್ನ ಫ್ರಾಂಚೈಸಿಯಿಂದ ಬಿಡುಗಡೆ ಆಗಲು ಬಯಸಿದ್ದಾರೆ.

ಈ ಸುದ್ದಿಯ ಮಧ್ಯೆ, ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಫೋಟೋಗಳು RCBಗೆ ಅವರ ಸೇರ್ಪಡೆಯ ಬಗ್ಗೆ ಹೊಸ ಹೈಪ್ ಸೃಷ್ಟಿಸಿದ್ದವು.

ಫೋಟೋಗಳಲ್ಲಿ ಸಂಜು S.R.C.B. ಥ್ರೋ-ಡೌನ್ ಸ್ಪೆಷಲಿಸ್ಟ್ ಗೇಬ್ರಿಯಲ್ ಅವರೊಂದಿಗೆ ತರಬೇತಿ ಮಾಡುತ್ತಿರುವ ದೃಶ್ಯಗಳು ಕಾಣಿಸುತ್ತಿವೆ. ಈ ತರಬೇತಿ RCBಗೆ ಸೇರ್ಪಡೆಯಾಗುವ ಶಕ್ತಿಯ ಸೂಚನೆ ನೀಡುತ್ತಿದೆ.

ಕಳೆದ ತಿಂಗಳು ಮುಕ್ತಾಯವಾದ T20 ಏಷ್ಯಾಕಪ್‌ನಲ್ಲಿ ಸಂಜು ಮೊದಲ ಆಯ್ಕೆಯ ವಿಕೆಟ್‌ ಕೀಪರ್ ಬ್ಯಾಟರ್ ಆಗಿದ್ದರು. ಅಕ್ಟೋಬರ್ 29 ರಿಂದ ಆಸ್ಟ್ರೇಲಿಯಾ ವಿರುದ್ಧ 5 ಪಂದ್ಯಗಳ ಟಿ20 ಸರಣಿಗೆ ಅವರು ಭಾರತ ತಂಡದ ಜೊತೆ ಪ್ರಯಾಣ ಮಾಡುವ ನಿರೀಕ್ಷೆ ಇದೆ.

ಇದಕ್ಕೆ ಮುನ್ನ, ಸಂಜು RCB ತಂಡದ ಥ್ರೋ-ಡೌನ್ ತರಬೇತಿಯಲ್ಲಿ ತೊಡಗಿಸಿಕೊಂಡಿದ್ದು, ಫ್ಯಾನ್ಸ್ ನಡುವಣ ತೀವ್ರ ಕುತೂಹಲವನ್ನು ಉಂಟುಮಾಡಿದೆ.

ಬೆಂಗಳೂರಿನಲ್ಲಿ ಪಟಾಕಿ ಸ್ಫೋಟ: 68 ಜನರ ಕಣ್ಣಿಗೆ ಹಾನಿ!

0

ಬೆಂಗಳೂರು:- ದೀಪಾವಳಿ ಸಂಭ್ರಮದಲ್ಲಿ ಪಟಾಕಿ ಹಚ್ಚುವಾಗ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಅವಘಡಗಳಾಗಿದ್ದು, 68 ಜನರ ಕಣ್ಣು ಗಾಯಗೊಂಡಿದೆ.

ಕಳೆದ ಎರಡು ದಿನಗಳಲ್ಲಿ ಮಿಂಟೋ ಆಸ್ಪತ್ರೆಯಲ್ಲಿ 25 ಮಂದಿ, ನಾರಾಯಣ ನೇತ್ರಾಲಯದಲ್ಲಿ 43 ಮಂದಿ ಚಿಕಿತ್ಸೆ ಪಡೆದಿದ್ದಾರೆ. ನಾಲ್ವರು ಗಂಭೀರ ಸ್ಥಿತಿಯಲ್ಲಿ ಇದ್ದು, ಮೂವರಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ.

ಗಾಯಗೊಂಡವರಲ್ಲಿ 16 ವರ್ಷದ ಬಾಲಕ ದೃಷ್ಟಿ ಕಳೆದುಕೊಂಡಿದ್ದಾರೆ, 18 ವರ್ಷದ ಯುವಕನ ಕಣ್ಣು ಗಂಭೀರವಾಗಿ ಹಾನಿಯಾಗಿದೆ. ಹಾಗೂ 10 ವರ್ಷದ ಬಾಲಕನ ಮುಖದ ಬಳಿಯೇ ಪಟಾಕಿ ಸ್ಫೋಟದಿಂದ ರೆಪ್ಪೆ ಸುಟ್ಟಿದೆ.

ವೈದ್ಯರು ಪೋಷಕರಿಗೆ ಮಕ್ಕಳೊಂದಿಗೆ ಎಚ್ಚರಿಕೆಯಿಂದ ಪಟಾಕಿ ಹಚ್ಚಲು, ಕಣ್ಣಿನ ಸುರಕ್ಷತೆಗಾಗಿ ಕನ್ನಡಕ ಧರಿಸಲು ಸಲಹೆ ನೀಡಿದ್ದಾರೆ.

ಬೆಂಗಳೂರು| ಮುಜರಾಯಿ ದೇವಾಲಯಗಳಲ್ಲಿ ನಾಳೆ ಗೋ ಪೂಜೆಗೆ ಸರ್ಕಾರದ ಆದೇಶ

0

ಬೆಂಗಳೂರು: ಮುಖ್ಯಮಂತ್ರಿ ಹಾಗೂ ಸಚಿವ ರಾಮಲಿಂಗಾರೆಡ್ಡಿ ಅವರ ಸೂಚನೆಯ ಮೇರೆಗೆ, ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯಲ್ಲಿರುವ ಮುಜರಾಯಿ ದೇವಾಲಯಗಳಲ್ಲಿ ನಾಳೆ (ದೀಪಾವಳಿ/ಬಲಿಪಾಡ್ಯಮಿ ದಿನ) ಗೋ ಪೂಜೆ ಕಾರ್ಯಕ್ರಮವನ್ನು ಆಯೋಜಿಸಲು ಆದೇಶ ಹೊರಡಿಸಲಾಗಿದೆ.

ಹಿಂದೂ ಧರ್ಮದಲ್ಲಿ ಗೋವುಗಳಿಗೆ ವಿಶೇಷ ಸ್ಥಾನಮಾನವಿದ್ದು, “ಗೋಮಾತೆ” ಎಂಬ ಹೆಸರಿನಲ್ಲಿ ಪೂಜಾ ವಿಧಿಗಳನ್ನು ನೆರವೇರಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ, ದೀಪಾವಳಿ (ಬಲಿಪಾಡ್ಯಮಿ) ದಿನದಂದು ಎಲ್ಲಾ ಅಧಿಸೂಚಿತ ದೇವಾಲಯಗಳಲ್ಲಿ ಗೋಮಾತೆಗಳಿಗೆ ಸ್ನಾನ ಮಾಡಿಸಿ, ಅರಿಶಿನ, ಕುಂಕುಮ ಮತ್ತು ಹೂವುಗಳಿಂದ ಅಲಂಕರಿಸುವಂತೆ ಮುಜರಾಯಿ ಇಲಾಖೆ ಸೂಚಿಸಿದೆ. ಜೊತೆಗೆ ಅಕ್ಕಿ, ಬೆಲ್ಲ, ಹಣ್ಣು ಮುಂತಾದ ಗೋಗ್ರಾಸವನ್ನು ನೀಡುವ ಮೂಲಕ ಸಂಜೆ ಗೋಪೂಜೆ ಕಾರ್ಯಕ್ರಮ ಯಶಸ್ವಿಯಾಗಿ ನಡೆಸುವಂತೆ ಸೂಚನೆ ನೀಡಲಾಗಿದೆ.

ಮುಜರಾಯಿ ಖಾತೆ ಸಚಿವ ರಾಮಲಿಂಗಾರೆಡ್ಡಿ ಅವರ ಮೌಖಿಕ ಸೂಚನೆಯಂತೆ ಈ ಆದೇಶವನ್ನು ಮುಜರಾಯಿ ಇಲಾಖೆಯ ಆಯುಕ್ತರು ಜಾರಿಗೆ ತರುತ್ತಿರುವುದಾಗಿ ಅಧಿಕೃತವಾಗಿ ಘೋಷಿಸಲಾಗಿದೆ. ಈ ಕ್ರಮವು ಧಾರ್ಮಿಕ, ಸಾಂಸ್ಕೃತಿಕ ಪರಂಪರೆಯ ಅವಿಭಾಜ್ಯ ಅಂಗವಾದ ಗೋಮಾತೆಯ ಮಹತ್ವ ಮತ್ತು ಸಂರಕ್ಷಣೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ಸಹಕಾರಿಯಾಗಲಿದೆ.

ಇನ್ಮುಂದೆ ನಂದಿನಿ ಹಾಲಿನಲ್ಲಿ ನಕಲಿ, ಕಲಬೆರಕೆ ತಕ್ಷಣ ಗುರುತಿಸಬಹುದು; ಹೊಸ ಟೆಕ್ನಾಲಜಿ ಪರಿಚಯಿಸಿದ KMF

0

ಬೆಂಗಳೂರು:- ನಾವು ಸೇವಿಸುವ ಹಾಲು, ಮೊಸರು ಸೇರಿದಂತೆ ದಿನಪಯೋಗಿ ಉತ್ಪನ್ನಗಳಲ್ಲಿ ಕಲಬೆರಕೆ ಮತ್ತು ನಕಲಿ ಉತ್ಪನ್ನಗಳ ಸಮಸ್ಯೆ ಹೆಚ್ಚುತ್ತಿರುವುದು ಗ್ರಾಹಕರಿಗೆ ತಲೆನೋವಾಗಿದೆ.

ಈ ನಡುವೆ ಕರ್ನಾಟಕದ ಹೆಮ್ಮೆಯ ಬ್ರ್ಯಾಂಡ್ ನಂದಿನಿ ಗ್ರಾಹಕರು ತನ್ನ ಮೇಲೆ ಇಟ್ಟಿರುವ ನಂಬಿಕೆ ಉಳಿಸಿಕೊಳ್ಳಲು ಮುಂದಾಗಿದೆ. ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಶಿವಸ್ವಾಮಿ ತಿಳಿಸಿದ್ದಾರೆ, ಶೀಘ್ರವೇ ನಂದಿನಿ ಉತ್ಪನ್ನಗಳ ಮೇಲೆ QR ಕೋಡ್ ಅಂಟಿಸಲಾಗುವುದು. ಇದರ ಮೂಲಕ ಉತ್ಪನ್ನಗಳ ಮಾಹಿತಿಯನ್ನು ತಕ್ಷಣ ಪರಿಶೀಲಿಸಬಹುದು ಮತ್ತು ಯಾವುದು ಅಸಲಿ, ಯಾವುದು ನಕಲಿ ಎಂಬುದನ್ನು ಗುರುತಿಸಬಹುದು. ಜೊತೆಗೆ ನಕಲಿ ಹಾಗೂ ಕಲಬೆರಕೆ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.

ಪ್ರತಿದಿನ ಸರಾಸರಿ 1 ಕೋಟಿ ಲೀಟರ್ ಹಾಲು ಸಂಗ್ರಹವಾಗುತ್ತಿದ್ದು, 65 ಲಕ್ಷ ಲೀಟರ್ ಹಾಲು, ಮೊಸರು ಮತ್ತು ಇತರ ಉತ್ಪನ್ನಗಳು ಗ್ರಾಹಕರಿಗೆ ತಲುಪುತ್ತಿದೆ. ನಂದಿನಿ ಉತ್ಪನ್ನಗಳು ದುಬೈ, ಸಿಂಗಾಪುರ ಸೇರಿದಂತೆ ವಿದೇಶಗಳಿಗೂ ಮಾರಾಟವಾಗುತ್ತಿದ್ದು, ಮಧುಮೇಹಿಗಳಿಗೆ ಸಕ್ಕರೆ ರಹಿತ ಸಿಹಿ ಉತ್ಪನ್ನಗಳು ಸಹ ಲಭ್ಯವಿರುತ್ತವೆ.

ಪಶುಸಂಗೋಪನೆ ಸಚಿವ ಕೆ. ವೆಂಕಟೇಶ್ ತಿಳಿಸಿದ್ದಾರೆ, ಇತ್ತೀಚೆಗೆ ಹಾಲು ಮತ್ತು ಉತ್ಪನ್ನಗಳ ಬೆಲೆ ಏರಿಕೆ ಪ್ರಸ್ತಾವನೆ ಇಲ್ಲ. ಕಳೆದ ವರ್ಷ 725 ಮೆಟ್ರಿಕ್ ಟನ್ ನಂದಿನಿ ಸಿಹಿ ಉತ್ಪನ್ನ ಮಾರಾಟವಾಗಿದ್ದು, ಈ ಬಾರಿ ಗುರಿಯನ್ನು ಮೀರಿ 1100 ಮೆಟ್ರಿಕ್ ಟನ್ ಮಾರಾಟ ಸಾಧಿಸಿದೆ. ಒಟ್ಟಾರೆ 46 ಕೋಟಿ ರೂ. ವಹಿವಾಟು ದಾಖಲಾಗಿದ್ದು, ಇದು ಕೆಎಂಎಫ್ ಇತಿಹಾಸದಲ್ಲೇ ಅತ್ಯಂತ ಉನ್ನತ ದಾಖಲೆಯಾಗಿದೆ.

ಹೆಂಡತಿ ಕಿರುಕುಳ ತಾಳಲಾರದೆ ಆತ್ಮಹತ್ಯೆ; ಸೆಲ್ಫಿ ವಿಡಿಯೋ ಮಾಡಿಟ್ಟು ರೈಲಿಗೆ ತಲೆಕೊಟ್ಟ ಗಂಡ

0

ಬೆಂಗಳೂರು ದಕ್ಷಿಣ:- ಹೆಂಡತಿ ಕಿರುಕುಳ ತಾಳಲಾರದೆ ಯುವಕನೊಬ್ಬ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರ ತಾಲೂಕಿನ ಬಿಡದಿಯಲ್ಲಿ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ರೇವಂತ್ ಕುಮಾರ್ (30) ಎಂದು ಗುರುತಿಸಲಾಗಿದೆ. ಅಣ್ಣೆದೊಡ್ಡಿ ಗ್ರಾಮದ ನಿವಾಸಿಯಾಗಿರುವ ರೇವಂತ್ ಬಿಡದಿ ಬಳಿಯ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು. ಕೇವಲ ಐದು ತಿಂಗಳ ಹಿಂದೆ ವಿವಾಹವಾಗಿದ್ದರು ಎನ್ನಲಾಗಿದೆ.

ರೇವಂತ್ ಸಾವಿಗೆ ಮುನ್ನ ಸೆಲ್ಫಿ ವಿಡಿಯೋ ಮಾಡಿದ್ದು, ಅದರಲ್ಲಿ “ನನ್ನ ಸಾವಿಗೆ ನನ್ನ ಹೆಂಡತಿ ಕಾರಣ. ತುಂಬ ಕಿರುಕುಳ ಕೊಡುತ್ತಿದ್ದಾಳೆ, ಬದುಕಲು ಆಗುತ್ತಿಲ್ಲ” ಎಂದು ಹೇಳಿಕೊಂಡಿದ್ದಾನೆ. ಬಳಿಕ ಬಿಡದಿ ಬಳಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿದ್ದಾರೆ.

ಈ ಘಟನೆಯ ಕುರಿತು ಬೆಂಗಳೂರು ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

ಫುಡ್ ಡೆಲಿವರಿ ಬಾಯ್‌ʼಗಳ ಮೊಬೈಲ್ ದೋಚುತ್ತಿದ್ದ “ನೇಪಾಳಿ ಗ್ಯಾಂಗ್” ಬಂಧನ

0

ಬೆಂಗಳೂರು: ನಗರದಲ್ಲಿ ಫುಡ್ ಡೆಲಿವರಿ ಬಾಯ್‌ಗಳ ಮೊಬೈಲ್‌ಗಳನ್ನು ಗುರಿಯಾಗಿಸಿಕೊಂಡು ದರೋಡೆ ಮಾಡುತ್ತಿದ್ದ ನೇಪಾಳಿ ಮೂಲದ ನಾಲ್ವರು ಆರೋಪಿಗಳನ್ನು ಬೆಳ್ಳಂದೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 9 ಮೊಬೈಲ್‌ ಫೋನ್‌ಗಳು ಹಾಗೂ 3 ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ.

ದರೋಡೆಗೊಳಗಾದ ಸುರೇಶ್ (22) ಎಂಬವರು ನೀಡಿದ ದೂರಿನ ಮೇರೆಗೆ, ಪೊಲೀಸರು ಪಾರಸ್ ಸಿಂಗ್ (25), ಮುಕೇಶ್ ಸಾಯಿ (19), ಬಿಪಿನ್ ಕರ್ಕಿ (20), ಸಮೀರ್ ಲೋಹಾರ್ ಎಂಬ ಆರೋಪಿಗಳನ್ನು ಬಂಧಿಸಿದ್ದಾರೆ. ಫುಡ್​ ಡೆಲಿವರಿಗೆಂದು ತೆರಳುವವರನ್ನು ಅಡ್ಡಗಟ್ಟಿ ಮೊಬೈಲ್​ ಮತ್ತು ಹಣವನ್ನು ಪೀಕುತ್ತಿದ್ದ ಗ್ಯಾಂಗ್​, ಕಳೆದ ತಿಂಗಳು ಸೆ.13ರ ರಾತ್ರಿ ಕಸವನಹಳ್ಳಿ ರಸ್ತೆಯಲ್ಲಿಯೂ ಕೈಚಳಕ ತೋರಿಸಿತ್ತು. ಫುಡ್ ಡೆಲಿವರಿ ಬಾಯ್ ಸುರೇಶ್ ಎಂಬಾತನಿಗೆ ಹಲ್ಲೆ ಮಾಡಿ ಮೊಬೈಲ್ ಕಿತ್ತುಕೊಂಡು ಪರಾರಿಯಾಗಿತ್ತು.

ಮೂರು ಬೈಕ್​ ಗಳಲ್ಲಿ ಬಂದಿದ್ದ ಆರೋಪಿಗಳು ಕೃತ್ಯ ಎಸಗಿದ್ದರು. ಸುರೇಶ್ ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ 9 ಮೊಬೈಲ್ ಗಳು ಮತ್ತು ಮೂರು ದ್ವಿಚಕ್ರ ವಾಹನಗಳನ್ನ ವಶಕ್ಕೆ ಪಡೆಯಲಾಗಿದೆ. ಬೆಳ್ಳಂದೂರು ಮಾತ್ರವಲ್ಲದೆ, ಹೆಬ್ಬಗೋಡಿ, ಪರಪ್ಪನ ಅಗ್ರಹಾರ, ಬಂಡೆಪಾಳ್ಯ, HSR ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿಯೂ ಈ ಗ್ಯಾಂಗ್​ ಕೃತ್ಯವೆಸಗಿರೋದು ಬೆಳಕಿಗೆ ಬಂದಿದೆ.

ಪ್ರಧಾ‌ನಿಯವರಿಗೆ ಸಲ್ಲಿಸಿದ ಅನುದಾನ ಮನವಿಗೆ ಇನ್ನೂ ಉತ್ತರ ಇಲ್ಲ: ಡಿ.ಕೆ. ಶಿವಕುಮಾರ್

0

ಬೆಂಗಳೂರು: 4 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ನಗರದ 500 ಕಿ.ಮೀ. ಉದ್ದದ ರಸ್ತೆಗಳನ್ನು ವೈಟ್ ಟಾಪಿಂಗ್ ಮಾಡಲು ಡಿಪಿಆರ್ ಸಿದ್ಧಪಡಿಸುತ್ತಿದ್ದೇವೆ. ನಗರದಲ್ಲಿ 1650 ಕಿ.ಮೀ ಉದ್ದದ ಪ್ರಮುಖ ರಸ್ತೆಗಳಿದ್ದು, ಹೊಸದಾಗಿ 104 ಕಿಮೀ ರಸ್ತೆಗೆ ವೈಟ್ ಟಾಪಿಂಗ್ ಮಾಡಲಾಗುತ್ತಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಹೇಳಿದರು. ಬೆಂಗಳೂರಿನ ಗಾಂಧಿನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ವೈಟ್ ಟಾಪಿಂಗ್ ಮತ್ತು ಸಮಗ್ರ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಮಂಗಳವಾರ ಚಾಲನೆ ನೀಡಿ ಮಾತನಾಡಿದರು.

“ವೈಟ್ ಟಾಪಿಂಗ್ ರಸ್ತೆಗಳು ಸುಮಾರು 25-30 ವರ್ಷಗಳ ಕಾಲ ಬಾಳಿಕೆ ಬರುತ್ತವೆ. ಈಗಾಗಲೇ 148 ಕಿ.ಮೀ ಉದ್ದದ ರಸ್ತೆಗಳ ವೈಟ್ ಟಾಪಿಂಗ್ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಒಟ್ಟು 83 ರಸ್ತೆಗಳ ಅಭಿವೃದ್ದಿಗೆ 1,800 ಕೋಟಿ ಹಣ ವ್ಯಯಿಸಲಾಗುತ್ತಿದೆ. 350 ಕಿಲೋ ಮೀಟರ್ ಉದ್ದದ 182 ರಸ್ತೆಗಳಲ್ಲಿ ಬ್ಲಾಕ್ ಟಾಪಿಂಗ್ ಕಾಮಗಾರಿ ನಡೆಯುತ್ತಿದೆ. ಇದಕ್ಕೆ 695 ಕೋಟಿ ರೂಪಾಯಿ ವ್ಯಯಿಸಲಾಗುತ್ತಿದೆ. ಮುಖ್ಯಮಂತ್ರಿಯವರು ಹೊಸದಾಗಿ 1100 ಕೋಟಿ ರೂಪಾಯಿ ಅನುದಾನ ನೀಡಿದ್ದು, ಇದರಿಂದ 550 ಕಿ.ಮೀ. ಉದ್ದದ ರಸ್ತೆಗಳ ಡಾಂಬರೀಕರಣ ಕೈಗೆತ್ತಿಕೊಂಡಿದ್ದೇವೆ” ಎಂದು ವಿವರಿಸಿದರು.

“ಕಳೆದ ಸಚಿವ ಸಂಪುಟ ಸಭೆಯಲ್ಲಿ 117 ಕಿಮೀ ಉದ್ದದ ಬೆಂಗಳೂರು ಬಿಜಿನೆಸ್ ಕಾರಿಡಾರ್ ನಿರ್ಮಾಣಕ್ಕೆ ತೀರ್ಮಾನಿಸಲಾಗಿದೆ. ಬಿಡಿಎ ಕಾಯ್ದೆ ಪ್ರಕಾರ ದುಪ್ಪಟ್ಟು ಪರಿಹಾರ ನೀಡಲು ಅವಕಾಶವಿಲ್ಲ. ಆದರೂ ನಮ್ಮ ಸರ್ಕಾರ ರೈತರಿಗೆ ಬಂಪರ್ ಪರಿಹಾರ ನೀಡಲು ಮುಂದಾಗಿದೆ. ಮೂರು ಪಟ್ಟು ಪರಿಹಾರ, ಟಿಡಿಆರ್ ಅಥವಾ ಎಫ್ ಎಆರ್ ‌ನೀಡಲು ತೀರ್ಮಾನ ಮಾಡಿದ್ದೇವೆ. ಹಿಂದಿನ ಯಾವ ಸರ್ಕಾರವೂ ಈ ವಿಚಾರದಲ್ಲಿ ಧೈರ್ಯ ತೋರಿಸಿರಲಿಲ್ಲ. 2007-08 ರಲ್ಲಿ ತೀರ್ಮಾನವಾಗಿದ್ದರೂ ಅನುಷ್ಠಾನ ಸಾಧ್ಯವಾಗಿರಲಿಲ್ಲ” ಎಂದು ತಿಳಿಸಿದರು.

ಪ್ರಧಾನಿಯವರಿಂದ ಇನ್ನೂ ಉತ್ತರ ಬಂದಿಲ್ಲ

“ಪ್ರಧಾ‌ನಿ ನರೇಂದ್ರ ಮೋದಿಯವರು ಮೆಟ್ರೋ ಹಳದಿ ಮಾರ್ಗ ಉದ್ಘಾಟನೆಗೆ ಬಂದಿದ್ದ ಸಂದರ್ಭದಲ್ಲಿ, ನಗರದ ಅಭಿವೃದ್ದಿಗೆ 1.5 ಲಕ್ಷ ಕೋಟಿ ರೂ. ಮೊತ್ತದ ಯೋಜನೆಗಳಿಗೆ ಅನುದಾನ ನೀಡಬೇಕು, ಮುಂಬೈ ನಂತರ ಬೆಂಗಳೂರು ಅತಿ ಹೆಚ್ಚು ತೆರಿಗೆ ನೀಡುತ್ತಿದೆ‌ ಎಂದು ಮನವಿ ಮಾಡಿದ್ದೆ. ಆದರೆ ಅವರಿಂದ ಇದುವರೆಗೂ ಉತ್ತರ ಬಂದಿಲ್ಲ”ಎಂದರು.

“ನಗರದಲ್ಲಿ 113 ಕಿಲೋಮೀಟರ್ ಉದ್ದದ ಎಲಿವೇಟೆಡ್ ಕಾರಿಡಾರ್ ಗಳ ನಿರ್ಮಾಣಕ್ಕೆ ಸರ್ಕಾರ ತೀರ್ಮಾನ ತೆಗೆದುಕೊಂಡಿದೆ. ಮೊದಲ ಹಂತದಲ್ಲಿ 40 ಕಿಲೋಮೀಟರ್ ಉದ್ದದ ಟನಲ್ ರಸ್ತೆ ನಿರ್ಮಾಣಕ್ಕೆ ಮುಂದಾಗಿದ್ದೇವೆ. ಇದಕ್ಕೆ ಖಾಲಿಡಬ್ಬ ಸಂಸದನೊಬ್ಬ ಬರೀ ಟ್ವೀಟ್ ಮಾಡಿಕೊಂಡು ಟೀಕೆ ಮಾಡುತ್ತಿದ್ದಾನೆ” ಎಂದು ಕಿಡಿಕಾರಿದರು.

“ಐದು ಜನ ಸಂಸದರನ್ನು ಬೆಂಗಳೂರು ಜನತೆ ಗೆಲ್ಲಿಸಿದ್ದಾರೆ. ನಿರ್ಮಲ ಸೀತಾರಾಮನ್ ಕೇಂದ್ರ ಹಣಕಾಸು ಸಚಿವರಾಗಿದ್ದಾರೆ‌. ಒಬ್ಬನೇ ಒಬ್ಬ ಸಂಸದ ಹತ್ತು ರೂಪಾಯಿ ಅನುದಾನವನ್ನು ಕರ್ನಾಟಕಕ್ಕೆ ತಂದಿದ್ದರೆ ಜನರು ನೀಡುವ ಶಿಕ್ಷೆಗೆ ನಾನು ತಲೆಬಾಗುತ್ತೇನೆ” ಎಂದು ಕಿಡಿಕಾರಿದರು.

 

ಬೆಳಕಿನ ಹಬ್ಬವೇ ಕತ್ತಲೆಯ ಶಾಪ! ದಾವಣಗೆರೆಯ ಈ ಹಳ್ಳಿಯ ವಿಚಿತ್ರ ಕಥೆ

0

ದಾವಣಗೆರೆ: ಜಿಲ್ಲೆಯ ಲೋಕಿಕೆರೆ ಗ್ರಾಮ…ದೇಶದಾದ್ಯಂತ ದೀಪಾವಳಿ ಅಂದರೆ ಬೆಳಕಿನ ಹಬ್ಬ, ಸಂಭ್ರಮ, ಸಂತೋಷ. ಆದರೆ ಈ ಹಳ್ಳಿಯಲ್ಲಿ ದೀಪಾವಳಿ ಅಂದರೆ ಭಯ, ದುಃಖ, ಕತ್ತಲೆ! ಹೌದು, ಇಲ್ಲಿನ ಜನರ ಮನದಲ್ಲಿ ದೀಪಾವಳಿ ಹಬ್ಬದ ಹೆಸರು ಕೇಳಿದರೂ ಕಳವಳ ಮೂಡುತ್ತದೆ. ಬೆಳಕಿನ ಹಬ್ಬವೇ ಇವರ ಪಾಲಿಗೆ “ಕರಾಳ ದಿನ” ಆಗಿದೆ.

ಗ್ರಾಮದ ಹಿರಿಯರ ಪ್ರಕಾರ ನೂರಾರು ವರ್ಷಗಳ ಹಿಂದೆ ದೀಪಾವಳಿ ಹಬ್ಬದ ದಿನದಂದು ಊರಿನ ನೂರಾರು ಯುವಕರು ಉತ್ಸವದ ಸಿದ್ಧತೆಯಲ್ಲಿ ಊರಿನಿಂದ ಹೊರಟು ಹೋಗಿ ಮತ್ತೆ ಹಿಂದಿರುಗಲೇ ಇಲ್ಲ. ಹುಡುಕಿದರೂ ಸುಳಿವು ಸಿಗಲಿಲ್ಲ. ಆ ಘಟನೆ ನಂತರದಿಂದ ದೀಪಾವಳಿ ದಿನವೇ ದುರಂತದ ದಿನ ಎಂದು ನಂಬಿಕೆ ಬೇರೂರಿತು.

ಆ ದಿನದಿಂದ ಇಂದಿನವರೆಗೆ ಸುಮಾರು 200ಕ್ಕೂ ಹೆಚ್ಚು ಕುಟುಂಬಗಳು ಈ ಹಬ್ಬದಿಂದ ದೂರವಿದ್ದಾರೆ. ದೇಶದಾದ್ಯಂತ ಮನೆ ಮನೆ ಬೆಳಗುತ್ತಿದ್ದಾಗ, ಲೋಕಿಕೆರೆಯ ಮನೆಗಳಲ್ಲಿ ಕತ್ತಲೆ ಆವರಿಸುತ್ತದೆ.

ಐದು ದಶಕಗಳ ಹಿಂದೆ ಕೆಲವು ಕುಟುಂಬಗಳು “ಹಳೆಯ ನಂಬಿಕೆ ಬಿಟ್ಟು ಹಬ್ಬ ಆಚರಿಸೋಣ” ಎಂದು ನಿರ್ಧರಿಸಿದರೂ, ಅದೇ ದಿನ ಜಮೀನಿನ ಪೈರುಗಳಿಗೆ ಹಾಗೂ ಹುಲ್ಲಿನ ಬಣವಿಗೆ ಬೆಂಕಿ ಬಿದ್ದ ಘಟನೆಯಿಂದ ಅವರು ಮತ್ತಷ್ಟು ಭಯಗೊಂಡರು. ಅದಾದ ನಂತರ ಯಾರೂ ದೀಪಾವಳಿ ಆಚರಿಸುವ ಧೈರ್ಯ ತೋರಲಿಲ್ಲ.

ಇಂದಿಗೂ ಲೋಕಿಕೆರೆಯಲ್ಲಿ ದೀಪಾವಳಿಯ ದಿನ ಕತ್ತಲೆ, ನೆನಪು, ಭಯ, ಎಲ್ಲವೂ ಒಂದೇ ಆಗಿದೆ. ಬೆಳಕಿನ ಹಬ್ಬವೇ ಇವರ ಪಾಲಿಗೆ ಕತ್ತಲಿನ ಕಥೆಯಾಗಿದೆ.

ದೇವಿರಮ್ಮ ಬೆಟ್ಟದಲ್ಲಿ ಜಾತ್ರಾ ಸಂಭ್ರಮ: ಮೈಸೂರು ಅರಸರ ಪರವಾಗಿ ಬಾಗಿನ ಅರ್ಪಣೆ

0

ಚಿಕ್ಕಮಗಳೂರು: ದೇವಿರಮ್ಮನ ಬೆಟ್ಟದಲ್ಲಿ ಜಾತ್ರಾ ಮಹೋತ್ಸವದ ಹಿನ್ನೆಲೆ, ಪ್ರತಿ ವರ್ಷದಂತೆ ಮೈಸೂರು ಅರಸರ ಮನೆತನದಿಂದ ದೇವಿಗೆ ಬಾಗಿನ ಅರ್ಪಣೆ ಮಾಡಲಾಗಿದೆ.

ಅನಾದಿ ಕಾಲದಿಂದಲೂ ಅರಸರ ಮನೆತನದಿಂದ ಜಾತ್ರೆಯಲ್ಲಿ ದೇವಿರಮ್ಮನಿಗೆ ಬಾಗಿನ ಕೊಡುವ ಸಂಪ್ರದಾಯವಿದೆ. ಮೈಸೂರು ಸಂಸ್ಥಾನದ ಪರವಾಗಿ ಆಗಮಿಸಿದ ಅರಸು ಸಂಘದ ರಾಜ್ಯಾಧ್ಯಕ್ಷ ದಿನೇಶ್ ಅವರ ತಂಡಕ್ಕೆ ದೇವಾಲಯದ ಆಡಳಿತ ಮಂಡಳಿ ಸ್ವಾಗತಿಸಿತು. ಬಳಿಕ ಹಣ್ಣು, ಕಾಯಿ, ವಿಲ್ಯದೆಲೆ, ಸೀರೆ, ಅರಿಶಿನ-ಕುಂಕುಮ ಅರ್ಪಣೆ ಮಾಡಲಾಯಿತು.

ರಾಕ್ಷಸನನ್ನು ಸಂಹರಿಸಿದ ಚಾಮುಂಡೇಶ್ವರಿ ಶಾಂತರೂಪ ತಾಳಿದ್ದು ಬಿಂಡಿಗ ಬೆಟ್ಟದಲ್ಲೆ ಎನ್ನುವ ನಂಬಿಕೆ ಇದೆ. ರಾಜರ ಆಳ್ವಿಕೆಯ ಕಾಲದಲ್ಲಿಯೂ ಮೈಸೂರಿನಿಂದ ಬಾಗಿನದ ವಸ್ತುಗಳು ಬರುತ್ತಿದ್ದವು. ದೇವಿರಮ್ಮನ ಬೆಟ್ಟದ ತಪ್ಪಲಿನ ಕೆಳಭಾಗದಲ್ಲಿರುವ ದೇವಸ್ಥಾನಕ್ಕೆ ಗಾಳಿ ರೂಪದಲ್ಲಿ ದೇವಿರಮ್ಮ ಪ್ರವೇಶಿಸಿದ್ದಾಳೆ. ವರ್ಷಕ್ಕೊಮ್ಮೆ ಬೆಟ್ಟದ ಮೇಲೆ ಭಕ್ತರಿಗೆ ದರ್ಶನ ನೀಡುವ ದೇವಿರಮ್ಮ ಉಳಿದ 364 ದಿನ ದೇವಸ್ಥಾನದಲ್ಲಿ ಭಕ್ತರಿಗೆ ದರ್ಶನ ನೀಡುತ್ತಾಳೆ.

ಎರಡು ದಿನಗಳಿಂದ ಬೆಟ್ಟದ ಮೇಲಿದ್ದ ದೇವಿ ಇಂದು ಕೆಳಗಿರುವ ದೇಗುಲದ ಗರ್ಭಗುಡಿಗೆ ಪ್ರವೇಶಿಸಿದ್ದಾಳೆ. ಈ ಬಾರಿ ಎರಡು ದಿನ ಬೆಟ್ಟ ಹತ್ತಲು ಅವಕಾಶ ನೀಡಲಾಗಿತ್ತು. ಎರಡು ದಿನಗಳಲ್ಲಿ ಸುಮಾರು 70 ಸಾವಿರಕ್ಕೂ ಹೆಚ್ಚು ಭಕ್ತರು ಬರೀಗಾಲಿನಲ್ಲಿ ಬೆಟ್ಟ ಏರಿ ತಾಯಿಯ ದರ್ಶನ ಪಡೆದಿದ್ದಾರೆ.

ಸಕ್ರೆಬೈಲು ಆನೆ ಶಿಬಿರದಲ್ಲಿ ಗಾಯಗೊಂಡ ಆನೆಗಳು: ಶಿಸ್ತು ಕ್ರಮಕ್ಕೆ ಅರಣ್ಯ ಸಚಿವರಿಂದ ಸೂಚನೆ

0

ಬೆಂಗಳೂರು: ಶಿವಮೊಗ್ಗ ಜಿಲ್ಲೆಯ ಸಕ್ರೆಬೈಲು ಆನೆ ಶಿಬಿರದಲ್ಲಿ ಕೆಲ ಆನೆಗಳು ಗಾಯದಿಂದ ಬಳಲುತ್ತಿರುವುದಕ್ಕೆ ಸಂಬಂಧಿಸಿದಂತೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗೆ ಪತ್ರ ಬರೆದಿರುವ ಸಚಿವರು,

“ದಸರಾ ಮಹೋತ್ಸವಕ್ಕೆ ಕಳುಹಿಸಲಾಗಿದ್ದ ‘ಬಾಲಣ್ಣ’ ಎಂಬ 35 ವರ್ಷದ ಆನೆ ಐ.ವಿ. ಚುಚ್ಚುಮದ್ದು ನೀಡುವ ವೇಳೆ ನಿರ್ಲಕ್ಷ್ಯದಿಂದ ಸಂಕ್ರಮಣಗೊಂಡು ನರಳುತ್ತಿದೆ ಎಂದು ತಿಳಿಸಿದ್ದಾರೆ. ಜೊತೆಗೆ, ಶಿಬಿರದಲ್ಲಿರುವ ‘ಸಾಗರ್’ ಸೇರಿದಂತೆ ನಾಲ್ಕು ಆನೆಗಳು ಗಾಯಗೊಂಡು ಬಳಲುತ್ತಿರುವುದನ್ನೂ ಅವರು ಉಲ್ಲೇಖಿಸಿದ್ದಾರೆ.

ಇಲ್ಲಿ ಪಶುವೈದ್ಯರ ಕೊರತೆ ಇದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ರಾಜ್ಯದಲ್ಲಿರುವ ಎಲ್ಲ ಆನೆ ಶಿಬಿರಗಳಲ್ಲಿ ಮತ್ತು ಮೃಗಾಲಯಗಳಲ್ಲಿ ಸಮರ್ಪಿತ ವೈದ್ಯಾಧಿಕಾರಿ ಇರಬೇಕು. ವೈದ್ಯರ ಕೊರತೆ ಇದ್ದರೆ ಗುತ್ತಿಗೆಯ ಆಧಾರದಲ್ಲಿ ಅಥವಾ ನಿಯೋಜನೆಯ ಮೇಲೆ ವೈದ್ಯರನ್ನು ತಕ್ಷಣ ನೇಮಕ ಮಾಡಿಕೊಳ್ಳಬೇಕು ಎಂದು ಈ ಹಿಂದೆ ಹಲವು ಸಭೆಗಳಲ್ಲಿ ತಿಳಿಸಲಾಗಿದೆ ಎಂದು ತಿಳಿಸಿದ್ದಾರೆ.

ಈ ಬಗ್ಗೆ ತುರ್ತು ಕ್ರಮ ವಹಿಸಲು ಮತ್ತು ಬಾಲಣ್ಣ ಆನೆಗೆ ಚುಚ್ಚುಮದ್ದು ನೀಡುವ ವೇಳೆ ವೈದ್ಯಾಧಿಕಾರಿ, ಅಧಿಕಾರಿ ಹಾಗೂ ಸಿಬ್ಬಂದಿಯ ನಿರ್ಲಕ್ಷ್ಯ ಇದ್ದಲ್ಲಿ, ಅವರ ವಿರುದ್ಧ ಶಿಸ್ತುಕ್ರಮದ ಶಿಫಾರಸಿನೊಂದಿಗೆ 1 ವಾರದೊಳಗೆ ಸಮಗ್ರ ವರದಿಯನ್ನು ಕಡ್ಡಾಯವಾಗಿ ಸಲ್ಲಿಸಲು ಸೂಚಿಸಿದ್ದಾರೆ.

error: Content is protected !!