Home Blog

ಗ್ರಾಹಕರ ಅಡಮಾನ ಚಿನ್ನ ಕಳವು: ಬ್ಯಾಂಕ್ ಸಹಾಯಕ ವ್ಯವಸ್ಥಾಪಕ ಅರೆಸ್ಟ್

0

ಬೆಂಗಳೂರು: ನಗರದ ಗಿರಿನಗರ ಪೊಲೀಸ್ ಠಾಣಾ ವ್ಯಾಪ್ತಿಯ ಇಂಡಿಯನ್ ಬ್ಯಾಂಕ್ ಶಾಖೆಯಲ್ಲಿ ಗ್ರಾಹಕರ ಅಡಮಾನ ಚಿನ್ನ ಕಳವು ಪ್ರಕರಣ ಬೆಳಕಿಗೆ ಬಂದಿದೆ.

ಸುಮಾರು 2 ಕೆಜಿ 787 ಗ್ರಾಂ ಚಿನ್ನಾಭರಣ ಕಾಣೆಯಾಗಿದ್ದು, ಅದರ ಮೌಲ್ಯವನ್ನು 4 ಕೋಟಿ 12 ಲಕ್ಷ 65 ಸಾವಿರ ರೂಪಾಯಿ ಎಂದು ಅಂದಾಜಿಸಲಾಗಿದೆ. ಪ್ರಕರಣ ಸಂಬಂಧ ಬ್ಯಾಂಕ್‌ನ ಸಹಾಯಕ ವ್ಯವಸ್ಥಾಪಕ ಕಿರಣ್ ಕುಮಾರ್ ಅವರನ್ನು ಬಂಧಿಸಲಾಗಿದೆ.

ಪ್ರಕರಣ ಹೇಗೆ ಬಹಿರಂಗವಾಯಿತು?

ಗಿರಿನಗರ ಶಾಖೆಯಲ್ಲಿ ವ್ಯವಸ್ಥಾಪಕ ಹಾಗೂ ಸಹಾಯಕ ವ್ಯವಸ್ಥಾಪಕರ ಬಳಿ ಲಾಕರ್ ಕೀಲಿಗಳು ಇರುತ್ತಿದ್ದವು. ವ್ಯವಸ್ಥಾಪಕರು ಇಲ್ಲದ ಸಂದರ್ಭಗಳಲ್ಲಿ ಗ್ರಾಹಕರು ಅಡವಿಟ್ಟಿದ್ದ ಚಿನ್ನದ ಪ್ಯಾಕೇಟ್‌ಗಳಿಂದ ಸ್ವಲ್ಪಸ್ವಲ್ಪವಾಗಿ ಚಿನ್ನ ತೆಗೆದು ಕಳವು ಮಾಡಲಾಗಿದೆ ಎಂದು ಆರೋಪಿಸಲಾಗಿದೆ.

ಫೆಬ್ರವರಿ 2ರಂದು ಗ್ರಾಹಕರೊಬ್ಬರು ತಮ್ಮ ಚಿನ್ನವನ್ನು ಬಿಡಿಸಿಕೊಳ್ಳಲು ಬಂದಾಗ ಪ್ಯಾಕೇಟ್‌ನಲ್ಲಿ ಚಿನ್ನಾಭರಣ ಕಾಣೆಯಾಗಿರುವುದು ಪತ್ತೆಯಾಯಿತು. ತಕ್ಷಣ ಶಾಖಾ ವ್ಯವಸ್ಥಾಪಕಿ ತೃಪ್ತಿ ಝಾ ಇತರ ಪ್ಯಾಕೇಟ್‌ಗಳನ್ನು ಪರಿಶೀಲಿಸಿದಾಗ 24 ಪ್ಯಾಕೇಟ್‌ಗಳಲ್ಲಿ ತಿರುಚಾಟ ಕಂಡುಬಂದಿತು. ಅದರಲ್ಲಿ 21 ಪ್ಯಾಕೇಟ್‌ಗಳಲ್ಲಿ ಭಾಗಶಃ ಚಿನ್ನ ಮತ್ತು 3 ಪ್ಯಾಕೇಟ್‌ಗಳಲ್ಲಿ ಸಂಪೂರ್ಣ ಚಿನ್ನಾಭರಣ ಕಾಣೆಯಾಗಿತ್ತು.

ಈ ಮಾಹಿತಿ ಮುಖ್ಯ ವ್ಯವಸ್ಥಾಪಕ ದಿಲೀಪ್ ಕುಮಾರ್ ಅವರಿಗೆ ನೀಡಲಾಗಿದ್ದು, ಬಳಿಕ ಗಿರಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಜೂಜಾಟದ ಚಟಕ್ಕೆ ಕಳವು:-

ತನಿಖೆ ವೇಳೆ ಆರೋಪಿ ತಪ್ಪೊಪ್ಪಿಕೊಂಡಿದ್ದು, ಕದ್ದ ಚಿನ್ನವನ್ನು ವಿವಿಧ ಹಣಕಾಸು ಸಂಸ್ಥೆಗಳಲ್ಲಿ ಅಡವಿಟ್ಟು ಹಣ ಪಡೆದು ಜೂಜಾಟ ಮತ್ತು ಬೆಟ್ಟಿಂಗ್‌ಗೆ ಬಳಸಿರುವುದು ತಿಳಿದುಬಂದಿದೆ. ಪೊಲೀಸರು ಈಗಾಗಲೇ ಸುಮಾರು 700 ಗ್ರಾಂ ಚಿನ್ನವನ್ನು ವಶಕ್ಕೆ ಪಡೆದಿದ್ದಾರೆ. ಉಳಿದ ಚಿನ್ನ ವಶಪಡಿಸಿಕೊಳ್ಳಲು ಕ್ರಮ ಮುಂದುವರಿದಿದೆ.

ಕೆಲವು ಹಣಕಾಸು ಸಂಸ್ಥೆಗಳು ಕಳುವಾದ ಚಿನ್ನ ಹಸ್ತಾಂತರಿಸಲು ನಿರಾಕರಿಸಿರುವ ಹಿನ್ನೆಲೆ, ಪೊಲೀಸರು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.

ಚಾಮರಾಜನಗರ| 16 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಅಪರಾಧಿ ಕೊನೆಗೂ ಅರೆಸ್ಟ್!

0

ಚಾಮರಾಜನಗರ: ಅಪಘಾತ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿ 16 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಅಪರಾಧಿಯನ್ನು ಬಂಧಿಸುವಲ್ಲಿ ಕೊನೆಗೂ ಪೊಲೀಸರು ಯಶಸ್ವಿಯಾಗಿದ್ದಾರೆ.

ಚಾಮರಾಜನಗರ ಗ್ರಾಮಾಂತರ ಪೊಲೀಸರು ಕಾರ್ಯಾಚರಣೆ ನಡೆಸಿ ನಂಜನಗೂಡು ಪಟ್ಟಣದ ನೀಲಕಂಠ ನಗರ ನಿವಾಸಿ ಸಫಿ ಬಿನ್ ಸೈಯದ್ ಮಹಮ್ಮದ್ ಎಂಬ ಆಟೋ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ. ಅಪಘಾತ ಪ್ರಕರಣದಲ್ಲಿ 2010ರಲ್ಲಿ ಚಾಮರಾಜನಗರ ಜೆಎಂಎಫ್‌ಸಿ ನ್ಯಾಯಾಲಯ ಒಂದು ವರ್ಷದ ಜೈಲು ಶಿಕ್ಷೆ ವಿಧಿಸಿತ್ತು. ಆದರೆ ಆರೋಪಿ ನ್ಯಾಯಾಲಯಕ್ಕೂ ಹಾಜರಾಗದೇ ಕಳೆದ 16 ವರ್ಷಗಳಿಂದ ತಲೆಮರೆಸಿಕೊಂಡಿದ್ದನು.

ಇದೀಗ ಆರೋಪಿಯನ್ನು ಬಂಧಿಸಿರುವ ಪೊಲೀಸರು, ಬಂಧಿತನನ್ನು ನ್ಯಾಯಾಲಯದ ಆದೇಶದಂತೆ ಜೈಲಿಗೆ ಕಳುಹಿಸಲಾಗಿದೆ.

ಬೈರತಿ ಬಸವರಾಜ್ ಆರೋಗ್ಯದಲ್ಲಿ ಅಸಾಮಾನ್ಯತೆ: ಇಸಿಜಿ ವ್ಯತ್ಯಾಸ, ಜಯದೇವ ಆಸ್ಪತ್ರೆಯಲ್ಲಿ ಆಂಜಿಯೋಗ್ರಾಂಗೆ ಸಿದ್ಧತೆ

0

ಬೆಂಗಳೂರು: ರೌಡಿಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಶಾಸಕ ಬೈರತಿ ಬಸವರಾಜ್ ಅವರ ಆರೋಗ್ಯ ತಪಾಸಣೆ ವೇಳೆ ಇಸಿಜಿಯಲ್ಲಿ ವ್ಯತ್ಯಾಸ ಕಂಡುಬಂದಿದೆ. ಈ ಹಿನ್ನೆಲೆ ಜಯದೇವ ಹೃದಯ ರೋಗ ಸಂಸ್ಥೆಯಲ್ಲಿ ಆಂಜಿಯೋಗ್ರಾಂ ನಡೆಸಲು ವೈದ್ಯರು ಸಿದ್ಧತೆ ಮಾಡಿಕೊಂಡಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಇಸಿಜಿ ವರದಿಯಲ್ಲಿ ಅಸಾಮಾನ್ಯತೆ ಪತ್ತೆಯಾದ ಬೆನ್ನಲ್ಲೇ ಬೈರತಿ ಬಸವರಾಜ್ ಅವರನ್ನು ಐಸಿಯು ವಾರ್ಡ್‌ನ ಎ ಬ್ಲಾಕ್‌ಗೆ ದಾಖಲಿಸಿ ತೀವ್ರ ನಿಗಾದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಬೆಳಿಗ್ಗೆ 10 ಗಂಟೆ ಸುಮಾರಿಗೆ ಆಂಜಿಯೋಗ್ರಾಂ ಪ್ರಕ್ರಿಯೆ ನಡೆಯುವ ಸಾಧ್ಯತೆ ಇದೆ. ಇದರ ಜೊತೆಗೆ ಇನ್ನೂ ಕೆಲವು ವೈದ್ಯಕೀಯ ಪರೀಕ್ಷೆಗಳನ್ನೂ ವೈದ್ಯರು ಕೈಗೊಳ್ಳಲಿದ್ದಾರೆ.

ಆಸ್ಪತ್ರೆಯಲ್ಲಿರುವ ಅವರ ಕೊಠಡಿ ಬಳಿ ಕಟ್ಟುನಿಟ್ಟಿನ ಭದ್ರತೆ ವಹಿಸಲಾಗಿದೆ. ಸಿಐಡಿ ಇನ್ಸ್‌ಪೆಕ್ಟರ್ ನೇತೃತ್ವದ ವಿಶೇಷ ತಂಡ ನಿಗಾವಹಿಸಿದ್ದು, ತಿಲಕ್ ನಗರ ಪೊಲೀಸರನ್ನೂ ಭದ್ರತೆಗೆ ನಿಯೋಜಿಸಲಾಗಿದೆ.

ಇದೀಗಾಗಲೇ ಬ್ಲಡ್ ಸ್ಯಾಂಪಲ್ ಸಂಗ್ರಹಿಸಲಾಗಿದೆ. ಆಂಜಿಯೋಗ್ರಾಂ ವರದಿ ಬಂದ ನಂತರ ನ್ಯಾಯಾಧೀಶರ ಮುಂದೆ ಹಾಜರುಪಡಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿದುಬಂದಿದೆ.

ಪ್ರಶಸ್ತಿಗಿಂತ ಜನಪ್ರೇಮವೇ ಸಾಕು ಎಂದ ಜೋ ಸೈಮನ್ ಇನ್ನು ನೆನಪು ಮಾತ್ರ: ರವೀಂದ್ರ ಕಲಾಕ್ಷೇತ್ರದಲ್ಲಿ ಇಂದು ಅಂತಿಮ ದರ್ಶನ

ಕನ್ನಡ ಚಿತ್ರರಂಗ ತನ್ನ ಸರಳ ಮತ್ತು ಮಿತಭಾಷಿ ನಿರ್ದೇಶಕನನ್ನು ಕಳೆದುಕೊಂಡಿದೆ. ಹಿರಿಯ ನಿರ್ದೇಶಕ ಹಾಗೂ ನಟ ಜೋ ಸೈಮನ್ ಫೆಬ್ರವರಿ 13ರಂದು ಹೃದಯಾಘಾತದಿಂದ ನಿಧನ ಹೊಂದಿದರು. ಫಿಲಂ ಚೇಂಬರ್‌ನಲ್ಲಿ ನಡೆದ ಕಾರ್ಯಕಾರಿ ಸಭೆಯ ವೇಳೆ ಅವರಿಗೆ ಹೃದಯಾಘಾತ ಉಂಟಾಯಿತು.

ಸುದ್ದಿಗೆ ಹಪಹಪಿಸದೆ, ಮೌನವಾಗಿ ಕೆಲಸ ಮಾಡುತ್ತಿದ್ದ ಜೋ ಸೈಮನ್, ಚಿತ್ರರಂಗಕ್ಕೆ ನೀಡಿದ ಕೊಡುಗೆ ಅಪಾರವಾದರೂ ಮಾನ್ಯತೆ ವಿಚಾರದಲ್ಲಿ ಒಂದಿಷ್ಟು ಬೇಸರ ಹೊಂದಿದ್ದರು. ಕೆಲ ವಾರಗಳ ಹಿಂದಷ್ಟೇ ನೀಡಿದ ಸಂದರ್ಶನದಲ್ಲಿ ಅವರು ಈ ಮನದಾಳದ ಮಾತು ಹಂಚಿಕೊಂಡಿದ್ದರು.

ರಾಜ್ಯೋತ್ಸವ ಪ್ರಶಸ್ತಿಗೆ ಹಲವು ಬಾರಿ ಹೆಸರು ಶಿಫಾರಸು ಆಗಿದ್ದರೂ ಪ್ರಶಸ್ತಿ ಸಿಗದಿರುವುದು ಅವರಿಗೆ ನೋವು ತಂದಿತ್ತು. ಕಣಗಾಲ್ ಪ್ರಶಸ್ತಿಗೂ ಅರ್ಜಿ ಹಾಕಿದ್ದರೂ ಪರಿಗಣಿಸಲಿಲ್ಲ ಎಂದು ಹೇಳಿಕೊಂಡಿದ್ದರು. ಆದರೆ ಪತ್ನಿಯ ಮಾತು ಕೇಳಿ “ಜನರ ಪ್ರೀತಿ ಇದ್ದರೆ ಸಾಕು” ಎಂದು ಪ್ರಶಸ್ತಿ ಅರ್ಜಿಗಳನ್ನು ನಿಲ್ಲಿಸಿದ್ದರಂತೆ.

ಸರಳ ಬದುಕು ನಡೆಸುತ್ತಿದ್ದ ಅವರು ಯಾವುದೇ ಹಂಗಿಲ್ಲದೆ ಜೀವನ ಸಾಗಿಸುತ್ತಿದ್ದರು. ಪರಿಚಯ ಫಲಕ ಇಲ್ಲ, ವಿಸಿಟಿಂಗ್ ಕಾರ್ಡ್ ಇಲ್ಲ – ಇದು ಅವರ ವೈಖರಿ. ಸಮಚಿತ್ತದಿಂದ ಬದುಕುವುದು ಅವರ ಜೀವನದ ತತ್ವವಾಗಿತ್ತು.

ಫೆಬ್ರವರಿ 14ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಕ್ರಿಶ್ಚಿಯನ್ ಸಂಪ್ರದಾಯದಂತೆ ಅಂತಿಮ ವಿಧಿ ವಿಧಾನಗಳು ನೆರವೇರಲಿವೆ. ಕನ್ನಡ ಚಿತ್ರರಂಗದ ಈ ಸರಳ ಸಾಧಕ ಇನ್ನು ನೆನಪುಗಳಲ್ಲಿ ಮಾತ್ರ ಉಳಿದಿದ್ದಾರೆ.

ಇಂದು ಮತ್ತಷ್ಟು ಕಳಪೆ ಮಟ್ಟಕ್ಕಿಳಿದ ಬೆಂಗಳೂರು, ಮಂಗಳೂರಿನ ಏರ್ ಕ್ವಾಲಿಟಿ: ಜನರಲ್ಲಿ ಆತಂಕ!

0

ಬೆಂಗಳೂರು: ಕಳೆದ ಕೆಲವು ದಿನಗಳಿಂದ ಏರಿಕೆಯಾಗುತ್ತಿದ್ದ ಬೆಂಗಳೂರು ನಗರದ ವಾಯು ಗುಣಮಟ್ಟ (AQI) ಇಂದು ಕಳಪೆಯಾಗಿರುವ ಮಟ್ಟಕ್ಕೆ ತಲುಪಿದೆ. ನಿನ್ನೆ ಸುಧಾರಣೆ ಕಾಣಿಸಿಕೊಂಡಿದ್ದವು ಎಂದು ನಿರೀಕ್ಷಿಸಿದಾಗ, ಇದೀಗ ಮರುಳಿಯಷ್ಟು ಗುಣಮಟ್ಟ ಕುಸಿತ ಕಂಡು ಬಂದಿದೆ.

ಇದೇ ರೀತಿಯಾಗಿ, ಮೈಸೂರು ಮತ್ತು ಬೆಳಗಾವಿ ನಗರಗಳಲ್ಲಿಯೂ ಗಾಳಿಯ ಗುಣಮಟ್ಟ 150ರ ಮೇಲಿನ ‘ಅನಾರೋಗ್ಯಕರ’ ಶ್ರೇಣಿಗೆ ಏರಿದೆ. ದಿನದಿಂದ ದಿನಕ್ಕೆ ರಾಜ್ಯದ ಅನೇಕ ನಗರಗಳಲ್ಲಿ AQI ಕುಸಿಯುತ್ತಿರುವುದು ಸಾರ್ವಜನಿಕ ಆರೋಗ್ಯಕ್ಕೆ ಆಲೋಚನೆ ಎಸೆಯುತ್ತಿದೆ, ಮತ್ತು ತಜ್ಞರು ಮುನ್ನೆಚ್ಚರಿಕೆ ವಹಿಸುವಂತೆ ಸಲಹೆ ನೀಡಿದ್ದಾರೆ.

ಇಂದಿನ ಗಾಳಿಯ ಗುಣಮಟ್ಟ – ಪ್ರಮುಖ ನಗರಗಳು

  • ಬೆಂಗಳೂರು – 140

  • ಮಂಗಳೂರು – 185

  • ಮೈಸೂರು – 126

  • ಬೆಳಗಾವಿ – 165

  • ಕಲಬುರ್ಗಿ – 149

  • ಶಿವಮೊಗ್ಗ – 135

  • ಬಳ್ಳಾರಿ – 132

  • ಹುಬ್ಬಳ್ಳಿ – 154

  • ಉಡುಪಿ – 170

  • ವಿಜಯಪುರ – 160

ಈ ಅಂಕೆಗಳಲ್ಲಿ WHO ಮಾನದಂಡಗಳ ಪ್ರಕಾರ, 100–150 ಶ್ರೇಣೆಯ ಗಾಳಿ “ಕಳಪೆ” ಎಂದು ಪರಿಗಣಿಸಲಾಗುತ್ತದೆ. 150–200 ಮಧ್ಯಂತರ “ಅನಾರೋಗ್ಯಕರ” ಶ್ರೇಣಿಗೂ ಕೆಲವು ನಗರಗಳ ಪೂರ್ಣವಾಗಿ ತಲುಪಿರುವುದು ಆರೋಗ್ಯಕ್ಕೆ ಹೆಚ್ಚು ಗಮನ ಕೆಳಮಟ್ಟದ ಸೂಚನೆ.

ಗಾಳಿ ಗುಣಮಟ್ಟದ ಮಾನದಂಡಗಳು:
ಉತ್ತಮ – 0-50
ಮಧ್ಯಮ – 50-100
ಕಳಪೆ – 100-150
ಅನಾರೋಗ್ಯಕರ – 150-200
ಗಂಭೀರ – 200-300
ಅಪಾಯಕಾರಿ – 300-500+

ತಜ್ಞರು ತಿಳಿಸಿದ್ದಾರೆ, ಈ ರೀತಿಯ “ಕಳಪೆ” ಮತ್ತು “ಅನಾರೋಗ್ಯಕರ” ಬಾಹ್ಯ ವಾಯು ಗುಣಮಟ್ಟದಲ್ಲಿ ಜನರಿಗೆ outdoor ಚಟುವಟಿಕೆಗಳನ್ನು ನಿರ್ವಹಿಸುತ್ತಾಗ ಎಚ್ಚರಿಕೆ ವಹಿಸಲು ಸೂಕ್ತ. ವಾಯುಮಲಿನ ದೋಷಗಳು ವಿಶೇಷವಾಗಿ ಮಕ್ಕಳ, ವಯೋವೃದ್ಧರ ಮತ್ತು ಉಸಿರಾಟ ಸಂಬಂಧಿ ಸಮಸ್ಯೆಗಳಿರುವವರಿಗೆ ಹೆಚ್ಚು ಹಾನಿಕರವಾಗಬಹುದು.

ಕಾಂಗ್ರೆಸ್‌ನಲ್ಲಿ ತೀವ್ರವಾದ ಒಳಕಿತ್ತಾಟ: ಫೆಬ್ರವರಿ 17 ಬಳಿಕ ಗೇಮ್ ಪ್ಲ್ಯಾನ್ ಬದಲಾಗುತ್ತಾ?

0

ಬೆಂಗಳೂರು: ಕಾಂಗ್ರೆಸ್ ಪಕ್ಷದಲ್ಲಿ ಅಧಿಕಾರ ಹಂಚಿಕೆ ವಿಚಾರವಾಗಿ ಉಂಟಾದ ಒಳಕಿತ್ತಾಟ ದಿನೇದಿನೆ ತೀವ್ರಗೊಳ್ಳುತ್ತಿದೆ. ಸಿಎಂ ಸಿದ್ದರಾಮಯ್ಯ ‘ನಾ ಕೊಡೆ’ ಎನ್ನುವ ನಿಲುವು ಹಿಡಿದಿದ್ದರೆ, ಡಿಸಿಎಂ ಡಿಕೆ ಶಿವಕುಮಾರ್ ‘ನಾ ಬಿಡೆ’ ಎಂದು ಪಟ್ಟು ಹಿಡಿದಿದ್ದಾರೆ ಎನ್ನುವ ರಾಜಕೀಯ ವಲಯದ ಚರ್ಚೆ ಗರಿಗೆದರಿದೆ.

ದೆಹಲಿಯಲ್ಲಿ ವರಿಷ್ಠರನ್ನು ಭೇಟಿ ಮಾಡಿ ವಾಪಸ್ ಆದ ಬಳಿಕ ಡಿಕೆ ಶಿವಕುಮಾರ್ ಅವರ ವರಸೆಯಲ್ಲಿ ಬದಲಾವಣೆ ಕಂಡುಬರುತ್ತಿದೆ. ಶನಿವಾರ ಬೆಂಗಳೂರಿನಲ್ಲಿ ನಡೆದ ಅಂತಾರಾಷ್ಟ್ರೀಯ ಅಣೆಕಟ್ಟು ಸುರಕ್ಷತಾ ಸಮ್ಮೇಳನದಲ್ಲಿ ಸಿಎಂ ಮತ್ತು ಡಿಸಿಎಂ ಒಂದೇ ವೇದಿಕೆಯಲ್ಲಿ ಇದ್ದರೂ, ಬಹು ಹೊತ್ತು ಪರಸ್ಪರ ಸಂಭಾಷಣೆ ಇಲ್ಲದಿರುವುದು ರಾಜಕೀಯ ಸಂದೇಶ ನೀಡಿದೆ. ಸಾಮಾನ್ಯವಾಗಿ ಅಕ್ಕಪಕ್ಕ ಕುಳಿತ ನಾಯಕರು ಮಾತನಾಡುವುದು ಸಹಜವಾದರೂ, ಈ ಬಾರಿ ದೂರವೇ ಹೆಚ್ಚು ಕಾಣಿಸಿಕೊಂಡಿತು.

ನಂತರ ನದಿ ಮೂಲ ನಿರ್ವಹಣೆ ಪುಸ್ತಕದ ಕುರಿತು ಅನಿವಾರ್ಯವಾಗಿ ಕೆಲ ಮಾತುಕತೆ ನಡೆದರೂ, ಒಟ್ಟಾರೆ ಮೌನವೇ ಹೆಚ್ಚಿನದಾಗಿ ಗಮನ ಸೆಳೆದಿತು. ಈ ಬೆಳವಣಿಗೆಗೆ ಬಿಜೆಪಿ ನಾಯಕರು ವ್ಯಂಗ್ಯವಾಡಿದ್ದು, “ದೆಹಲಿಯಿಂದ ರಾಜಕೀಯ ಗನ್ ಹಿಡಿದುಕೊಂಡು ಬಂದಿದ್ದಾರೆ” ಎಂದು ಟೀಕಿಸಿದ್ದಾರೆ.

ದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್, “ಹೇಳಬೇಕಾದುದನ್ನೆಲ್ಲ ವರಿಷ್ಠರಿಗೆ ಹೇಳಿದ್ದೇನೆ” ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು. ಗುರುವಾರ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ, ವಿಪಕ್ಷ ನಾಯಕ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಎದುರು ಹಕ್ಕು ಮಂಡಿಸಿ ವಾಪಸ್ ಆದ ಬಳಿಕ “ಕಾಲವೇ ಉತ್ತರಿಸುತ್ತದೆ” ಎಂದು ಹೇಳಿದ್ದರು.

ಫೆಬ್ರವರಿ 17ರ ಬಳಿಕ ರಾಜಕೀಯ ಸಮೀಕರಣ ಬದಲಾಗುತ್ತದೆಯೇ ಎಂಬ ಚರ್ಚೆ ತೀವ್ರವಾಗಿದೆ. ಹೈಕಮಾಂಡ್ ಮಧ್ಯಪ್ರವೇಶದ ನಿರೀಕ್ಷೆಯಲ್ಲಿ ಡಿಕೆಶಿ ಬಣ ಇದ್ದರೆ, ಬಜೆಟ್ ದಿನಾಂಕ ಘೋಷಿಸಿ ಲೆಕ್ಕಪತ್ರ ಮಂಡನೆಗೆ ಸಜ್ಜಾಗಿರುವ ಸಿಎಂ ಮುಂದಿನ 1 ತಿಂಗಳು ಬ್ಯುಸಿ ಎಂಬ ಸಂದೇಶ ರವಾನಿಸಿದ್ದಾರೆ.

ಎಐಸಿಸಿ ಮೂಲಗಳ ಪ್ರಕಾರ, ವರಿಷ್ಠರು ಸಚಿವರು ಮತ್ತು ನಾಯಕರನ್ನು ವಿಶ್ವಾಸಕ್ಕೆ ಪಡೆಯಲು ಮುಂದಾಗಿದ್ದು, ಸಿಎಂ ಹಾಗೂ ಡಿಸಿಎಂ ಜತೆ ಪ್ರತ್ಯೇಕವಾಗಿ ಮಾತುಕತೆ ನಡೆಸುವ ಸಾಧ್ಯತೆ ಇದೆ.

ಇದರ ಮಧ್ಯೆ ಡಿಕೆ ಶಿವಕುಮಾರ್ ನೊಣವಿನಕೆರೆ ಅಜ್ಜಯ್ಯನ ಸನ್ನಿಧಿಗೆ ಭೇಟಿ ನೀಡಿ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದಾರೆ. “ಅಜ್ಜಯ್ಯನ ಶಕ್ತಿ ಇಲ್ಲದೇ ಇದ್ದರೆ ಈ ಸರ್ಕಾರ ಇಷ್ಟು ಶಕ್ತಿಯುತವಾಗಿರುತ್ತಿರಲಿಲ್ಲ” ಎಂದು ಹೇಳಿ ರಾಜಕೀಯವಾಗಿ ಟ್ವಿಸ್ಟ್ ನೀಡಿದ್ದಾರೆ.

ಸರ್ಕಾರ ಸಾವಿರ ದಿನ ಪೂರೈಸಿರುವ ಸಂಭ್ರಮದ ನಡುವೆಯೇ ಈ ಪಟ್ಟದಾಟ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಹಾವೇರಿಯಲ್ಲಿ ನಡೆಯುತ್ತಿರುವ ಕಾರ್ಯಕ್ರಮದತ್ತ ರಾಜ್ಯದ ಗಮನ ನೆಟ್ಟಿದೆ.

ಡ್ರಗ್ಸ್ ವಿರುದ್ಧ ಪೊಲೀಸರ ಭಾರಿ ಕಾರ್ಯಚರಣೆ: ಹಾಸನದಲ್ಲಿ ಎಂಡಿಎಂಎ ಸೀಜ್, ಚಿಕ್ಕಮಗಳೂರಿನಲ್ಲಿ ಭಾರೀ ಪ್ರಮಾಣದ ಗಾಂಜಾ ಪತ್ತೆ!

ಹಾಸನ: ನಗರದಲ್ಲಿ ಎಂಡಿಎಂಎ ಮಾದಕ ವಸ್ತುಗಳ ಮಾರಾಟ ಜಾಲವನ್ನು ಪೊಲೀಸರು ಭೇದಿಸಿದ್ದು, 5 ಆರೋಪಿಗಳನ್ನು ಬಂಧಿಸಿದ್ದಾರೆ. ರಾಜ್‌ಕುಮಾರ್ ನಗರ ಬಳಿಯ ಚೆಕ್‌ಪೋಸ್ಟ್‌ನಲ್ಲಿ ತಪಾಸಣೆ ವೇಳೆ ಕಾರಿನಲ್ಲಿ ಸುಮಾರು 40 ಗ್ರಾಂ ಎಂಡಿಎಂಎ ಪತ್ತೆಯಾಗಿದ್ದು, ಅದರ ಮೌಲ್ಯ ರೂ.2 ಲಕ್ಷಕ್ಕೂ ಅಧಿಕವೆಂದು ಅಂದಾಜಿಸಲಾಗಿದೆ.

ಖಚಿತ ಮಾಹಿತಿಯ ಮೇರೆಗೆ ಚೆಕ್‌ಪೋಸ್ಟ್‌ನಲ್ಲಿ ಸಂಚರಿಸುತ್ತಿದ್ದ ಎರ್ಟಿಗಾ ಕಾರನ್ನು ತಪಾಸಣೆ ನಡೆಸಿದಾಗ ಆರೋಪಿಗಳು ಸಿಕ್ಕಿಬಿದ್ದರು. ಬಂಧಿತರನ್ನು ಶಿವಮೊಗ್ಗ ಮೂಲದ ಫರ್ವೀಜ್ (29), ಸುಹೇಲ್ (24), ಅಬ್ದುಲ್ ಯಾಸಿನ್ (20), ಇಬ್ರತ್ ಖಾನ್ (24) ಹಾಗೂ ಹಾಸನದ ಸೈಯದ್ ಯೂಸಫ್ (23) ಎಂದು ಗುರುತಿಸಲಾಗಿದೆ. ಇವರಲ್ಲಿ 4 ಮಂದಿ ಶಿವಮೊಗ್ಗ ಜಿಲ್ಲೆಯವರಾಗಿದ್ದು, ಒಬ್ಬ ಹಾಸನ ನಿವಾಸಿ ಎಂದು ಪೊಲೀಸರು ತಿಳಿಸಿದ್ದಾರೆ.

40 ಗ್ರಾಂ ಎಂಡಿಎಂಎ ಹಾಗೂ ಆರೋಪಿಗಳು ಬಳಸುತ್ತಿದ್ದ ಕಾರನ್ನು ವಶಕ್ಕೆ ಪಡೆಯಲಾಗಿದೆ. ಪೆನ್‌ಷನ್ ಮೊಹಲ್ಲಾ ಠಾಣೆಯ ಸಿಪಿಐ ಸ್ವಾಮಿನಾಥ್ ನೇತೃತ್ವದಲ್ಲಿ ಪಿಎಸ್‌ಐ ರವಿಶಂಕರ್ ಹಾಗೂ ಸಿಬ್ಬಂದಿ ಪ್ರಸನ್ನಕುಮಾರ್, ದಿಲೀಪ್, ಪುನೀತ್, ಲೋಕೇಶ್, ಹನುಮೇಶ್ ಸೇರಿದಂತೆ ಇತರರು ಕಾರ್ಯಾಚರಣೆ ನಡೆಸಿದರು. ಪ್ರಕರಣವನ್ನು ಪೆನ್‌ಷನ್ ಮೊಹಲ್ಲಾ ಪೊಲೀಸ್ ಠಾಣೆಯಲ್ಲಿ ದಾಖಲಿಸಿ ಮುಂದಿನ ತನಿಖೆ ಕೈಗೊಳ್ಳಲಾಗಿದೆ.

ಇದೇ ವೇಳೆ, ಚಿಕ್ಕಮಗಳೂರಿನಲ್ಲಿ ನಡೆದ ವಿಶೇಷ ಕಾರ್ಯಾಚರಣೆಯಲ್ಲಿ 5 ಕೆ.ಜಿ 850 ಗ್ರಾಂ ಗಾಂಜಾ ವಶಕ್ಕೆ ಪಡೆಯಲಾಗಿದೆ. ರೈಲ್ವೆ ನಿಲ್ದಾಣದ ಸಮೀಪ ಮಾರಾಟಕ್ಕೆ ಯತ್ನಿಸುತ್ತಿದ್ದ ವ್ಯಕ್ತಿಯನ್ನು ಬಂಧಿಸಲಾಗಿದ್ದು, ವಶಪಡಿಸಿಕೊಂಡ ಗಾಂಜಾದ ಮೌಲ್ಯ ಸುಮಾರು 3 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ.

ಬಂಧಿತನನ್ನು ವಿಜಯ್ ಕುಮಾರ್ ಎಂದು ಗುರುತಿಸಲಾಗಿದ್ದು, ಆತ ಬೆಂಗಳೂರಿನ ನಿವಾಸಿ ಎಂದು ತಿಳಿದುಬಂದಿದೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಗಾಂಜಾ ಸರಬರಾಜು ಜಾಲದ ಕುರಿತು ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಊಟ ಕಡಿಮೆ ತಿಂದ್ರೂ ಅಸಿಡಿಟಿ ಆಗುತ್ತಾ? ಹಾಗಿದ್ರೆ ಮೊದಲು ಇದಕ್ಕೆ ಕಾರಣ ತಿಳಿಯಿರಿ!

0

ಇತ್ತೀಚಿನ ದಿನಗಳಲ್ಲಿ ಹೊಟ್ಟೆಯಲ್ಲಿ ಜೀರ್ಣಸಂಬಂಧಿ ಸಮಸ್ಯೆಗಳು ಹೆಚ್ಚಾಗಿವೆ.

ಹೆಚ್ಚು ಮಸಾಲೆಯ ಆಹಾರ ಅಥವಾ ಅತಿಯಾದ ಆಹಾರ ಸೇವನೆಯಿಂದ ಮಾತ್ರವಲ್ಲ, ಕೆಲವೊಂದು ಸಂದರ್ಭಗಳಲ್ಲಿ ಹೊಟ್ಟೆಯ ಆಮ್ಲ ಪ್ರಮಾಣ ಕಡಿಮೆಯಾಗುವುದೂ ಸಮಸ್ಯೆಗೆ ಕಾರಣವಾಗಬಹುದು. ಹೊಟ್ಟೆಯಲ್ಲಿ ಹೈಡ್ರೋಕ್ಲೋರಿಕ್ ಆಮ್ಲವು ಆಹಾರ ಜೀರ್ಣಗೊಳಿಸಲು ಮತ್ತು ಅಗತ್ಯ ಪೋಷಕಾಂಶಗಳನ್ನು ಶೋಷಿಸಲು ನೆರವಾಗುತ್ತದೆ.

ಆದರೆ ವಯಸ್ಸು, ದೀರ್ಘಕಾಲಿಕ ಔಷಧಿ ಬಳಕೆ, ಒತ್ತಡ, ಪೌಷ್ಟಿಕಾಂಶ ಕೊರತೆ, ವಿಟಮಿನ್ B12 ಕೊರತೆ ಮತ್ತು ಅಸಮತೋಲಿತ ಆಹಾರ ಪದ್ಧತಿಗಳಿಂದಾಗಿ ಈ ಆಮ್ಲದ ಪ್ರಮಾಣ ಕಡಿಮೆಯಾಗಬಹುದು. ಹೀಗೆ ಆದರೆ ಆಹಾರ ಸರಿಯಾಗಿ ಜೀರ್ಣವಾಗದೇ ಅನಿಲ, ಎದೆ ಸುಡುವಿಕೆ ಮತ್ತು ಗಂಟಲಿನಲ್ಲಿ ಕಿರಿಕಿರಿ ಸಂಭವಿಸಬಹುದು.

ಈ ಸಮಸ್ಯೆ ತಡೆಯಲು ನಿಯಮಿತವಾಗಿ ದಿನಕ್ಕೆ ಸ್ವಲ್ಪ ಸ್ವಲ್ಪ ಪ್ರಮಾಣದಲ್ಲಿ ಆಹಾರ ಸೇವನೆ ಮಾಡುವುದು, ಹುರಿದ ಮತ್ತು ಮಸಾಲೆ ಪದಾರ್ಥಗಳನ್ನು ಮಿತಿಗೊಳಿಸುವುದು, ಊಟದ ನಂತರ ತಕ್ಷಣ ಮಲಗದಂತೆ 30 ನಿಮಿಷ ನಿಂತು ನಡೆಯುವುದು, ನೀರಿನ ಪ್ರಮಾಣವನ್ನು ಹೆಚ್ಚಿಸುವುದು, ಹಾಗೂ ಯೋಗ ಮತ್ತು ಧ್ಯಾನ ಅಭ್ಯಾಸ ಮಾಡುವುದರಿಂದ ಹೊಟ್ಟೆಯ ಆರೋಗ್ಯ ಸುಧಾರಿಸಬಹುದು.

ಇಷ್ಟಾರ್ಥ ಸಿದ್ಧಿಸುವ ಶ್ರೀ ಗುಂಡೇಶ್ವರ ದೇವರು

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ತಾಲೂಕಿನ ಯಳವತ್ತಿ ಗ್ರಾಮ ಐತಿಹಾಸಿಕ, ಧಾರ್ಮಿಕ, ಕೃಷಿ, ಶಿಕ್ಷಣ ವಿವಿಧ ರಂಗದಲ್ಲಿ ಹೆಸರಾಗಿದೆ. ಇಲ್ಲಿನ ಶ್ರೀ ಗುಂಡೇಶ್ವರ ದೇವಸ್ಥಾನ, ಕೋಟೆ ಆವರಣ ಗ್ರಾಮದ ಐತಿಹಾಸಿಕ ಶ್ರೀಮಂತಿಕೆಯನ್ನು ಸಾಕ್ಷೀಕರಿಸುತ್ತವೆ. ಗ್ರಾಮದ ಜನರ, ಭಕ್ತರ ಇಷ್ಟಾರ್ಥ ಸಿದ್ಧಿಸುವ ಶ್ರೀ ಗುಂಡೇಶ್ವರ ಎಲ್ಲರ ಆರಾಧ್ಯದೈವವಾಗಿದೆ.

ಗುಂಡೇಶ್ವರ ದೇವಸ್ಥಾನ ಅತ್ಯಂತ ಪುರಾತನ ದೇವಸ್ಥಾನ. ಆದರೆ ದೇವಾಲಯಕ್ಕೆ ಸುಣ್ಣ-ಬಣ್ಣ ಬಳಿದಿರುವುದರಿಂದ ಪುರಾತನ ಕಲ್ಲುಗಳು ಮರೆಯಾಗಿವೆ. ಇದು 11ನೇ ಶತಮಾನದಲ್ಲಿ ನಿರ್ಮಿಸಲ್ಪಟ್ಟ ದೇವಸ್ಥಾನ ಎಂಬುದಕ್ಕೆ ಇಲ್ಲಿನ ಶಿಲಾ ಶಾಸನಗಳು ಸಾಕ್ಷಿಯಾಗಿವೆ. ಗುಂಡಲಿಂಗ ದೇವಾಲಯದ ಆವರಣದಲ್ಲಿರುವ ಕ್ರಿ.ಶ. 1152ರ ಶಾಸನದಲ್ಲಿ ಕಲ್ಯಾಣದ ಚಾಲುಕ್ಯರ ತ್ರಿಭುವನಮಲ್ಲದೇವನ ಆಳ್ವಿಕೆಯ ಕಾಲಾವಧಿಯಲ್ಲಿ ಊರುಗಳ ಚಕ್ರವರ್ತಿ ಎನಿಸಿದ ಶ್ರೀರಾಮಸ್ವಾಮಿ ದತ್ತಿಯಾದ ಯಳವತ್ತಿ ಮಹಾ ಅಗ್ರಹಾರದ 120 ಮಹಾಜನರು ತಮ್ಮ ಕುಲದೈವರಾದ ಗುಂಡೇಶ್ವರ ದೇವರ ಪೂಜೆ ಪುನಸ್ಕಾರಗಳಿಗೆ ದೇವರಾಶಿಯತಿಪತಿಯ ಸನ್ನಿಧಿಯಲ್ಲಿ ಭೂದಾನ ಮಾಡಿದ ನಿರೂಪಣೆಯಿದೆ. ಸಾಂಗ್ಲಿ ಸಂಸ್ಥಾನಿಕರು ಆಡಳಿತ ನಡೆಸಿದ ಕ್ಷೇತ್ರವಾಗಿದ್ದು, ಇಲ್ಲಿನ ಬೃಹತ್ ಕಲ್ಲಿನ ಕೋಟೆಯನ್ನು ಪೇಶ್ವೆಯವರ ಕಾಲದಲ್ಲಿ ನಿರ್ಮಿಸಲಾಗಿದೆ.

ಧಾರವಾಡ ಜಿಲ್ಲೆ ಅಣ್ಣಿಗೇರಿಯ ಅಮೃತೇಶ್ವರ, ಯಳವತ್ತಿ ಗ್ರಾಮದ ಗುಂಡೇಶ್ವರ ಮತ್ತು ಲಕ್ಷ್ಮೇಶ್ವರದ ಸೋಮೇಶ್ವರ ದೇವಸ್ಥಾನಗಳು ಒಂದೇ ವೇಳೆಗೆ ನಿರ್ಮಿಸಲ್ಪಟ್ಟಿವೆ ಎಂಬ ಐತಿಹ್ಯವೂ ಇದೆ. ಈ ಮೂರೂ ದೇವಸ್ಥಾನಗಳು ಚಾಲುಕ್ಯ ಶಿಲ್ಪಕಲೆ ಹೊಂದಿರುವುದು ಪರಶಿವನೇ ಇಲ್ಲಿನ ಅಧಿದೈವ.

ಒಮ್ಮೆ ಸಂತ ಶಿಶುನಾಳದ ಶರೀಫರು ನವಲಗುಂದದ ನಾಗಲಿಂಗ ಸ್ವಾಮಿಗಳೊಡನೆ ತೆರಳುವ ಸಂದರ್ಭದಲ್ಲಿ ಯಳವತ್ತಿಯ ಗುಂಡೇಶ್ವರ ದೇವಸ್ಥಾನದಲ್ಲಿ ತಂಗುತ್ತಾರೆ. ಈ ಮಹಾತ್ಮರು ತಮ್ಮ ದಿವ್ಯದೃಷ್ಟಿಯಿಂದ ದೇವಸ್ಥಾನದ ಮಹತ್ವ ಅರಿತು ಹಾವು ಕಡಿದವರಾಗಲಿ ಅಥವಾ ವಿಷ ಬಾಧಿತರಾಗಲಿ ದೇವಸ್ಥಾನದ ಹೊಸ್ತಿಲನ್ನು ದಾಟಿಕೊಂಡು ಹೋದರೆ ಅವರು ವಿಷ ಬಾಧೆಯಿಂದ ಪಾರಾಗುತ್ತಾರೆ ಎಂದು ನೆರೆದಿದ್ದ ಭಕ್ತರಿಗೆ ತಿಳಿಸುತ್ತಾರೆ. ಅಂದಿನಿಂದ ಇಂದಿನವರೆಗೆ ಹಾವು ಕಡಿದವರು ಮತ್ತು ವಿಷ ಬಾಧಿತರು ದೇವಸ್ಥಾನದಲ್ಲಿನ ಶಿವಲಿಂಗದ ದರ್ಶನ ಮಾಡಿ ಸಂಕಷ್ಟದಿಂದ ಪಾರಾಗುತ್ತಾರೆ.

ಪ್ರತಿವರ್ಷ ಮೇ ತಿಂಗಳು ಶಿರಹಟ್ಟಿ ಫಕ್ಕೀರೇಶ್ವರ ಸಂಸ್ಥಾನಮಠದ ಜಾತ್ರೆ ನಡೆದ ಹತ್ತು ದಿನಗಳ ನಂತರ ಗುಂಡೇಶ್ವರ ದೇವರ ಜಾತ್ರೆ ವೈಭವದಿಂದ ನಡೆಯುತ್ತದೆ.

ನಮ್ಮೂರಿನ ಗುಂಡೇಶ್ವರ ದೇವರ ದೇವಸ್ಥಾನ ಪುರಾತನವಾಗಿದ್ದು, ಇಲ್ಲಿ ಶರೀಫ ಸಾಹೇಬರು ಮತ್ತು ನವಲಗುಂದದ ನಾಗಲಿಂಗಪ್ಪ ಸ್ವಾಮೀಜಿ ಪವಾಡ ಮೆರೆದಿದ್ದಾರೆ. ಈಗಲೂ ಹಾವು ಕಡಿಸಿಕೊಂಡವರು ದೇವಸ್ಥಾನಕ್ಕೆ ಬಂದು ಬಾವಿಯಲ್ಲಿ ಸ್ನಾನ ಮಾಡಿ ದರ್ಶನ ಪಡೆದರೆ ಗುಣಮುಖರಾಗುತ್ತಾರೆ ಎನ್ನುತ್ತಾರೆ ಇಲ್ಲಿನ ಗ್ರಾಮಸ್ಥರು.

ಸಿಎಂ ಆಗಮಿಸಿದ್ದ ಹಂಪಿ ಉತ್ಸವದಲ್ಲಿ ಅವಘಡ: ಸ್ವಲ್ಪದರಲ್ಲೇ ತಪ್ಪಿದ ಅನಾಹುತ!

0

ಬಳ್ಳಾರಿ: ಹಂಪಿ ಉತ್ಸವ–2026 ಉದ್ಘಾಟಿಸಲು ಆಗಮಿಸಿದ್ದ ಸಿಎಂ ಸಿದ್ದರಾಮಯ್ಯರಿದ್ದ ವೇದಿಕೆಯ ಸಮೀಪ ಬೆಂಕಿ ಅವಘಡ ಸಂಭವಿಸಿದೆ.

ಸಿಎಂ ಸಿದ್ದರಾಮಯ್ಯ ಅವರಿದ್ದ ಮುಖ್ಯ ವೇದಿಕೆಯ ಎದುರೇ ಬೆಂಕಿ ಹೊತ್ತಿಕೊಂಡಿದೆ. ವೇದಿಕೆಯ ಬಳಿ ಪಟಾಕಿ ಸಿಡಿಸಿದ ವೇಳೆ ಬೆಂಕಿ ಹುಲ್ಲು ಮತ್ತು ಸಮೀಪದ ವಸ್ತುಗಳಿಗೆ ತಗುಲಿ ಅಘಾತದ ಪರಿಸ್ಥಿತಿ ಉಂಟಾಗಿದೆ. ವೇದಿಕೆಯ ಸಮೀಪ ದಟ್ಟ ಹೊಗೆ ಮತ್ತು ಬೆಂಕಿ ಕಾಣಿಸಿಕೊಂಡು ನೆರೆದಿದ್ದ ಸಾವಿರಾರು ಪ್ರೇಕ್ಷಕರು ಕೆಲ ಕ್ಷಣ ಆತಂಕಗೊಂಡಿದ್ದರು. ಆದರೆ ಸ್ಥಳದಲ್ಲಿಯೇ ನಿಯೋಜಿತ ಅಗ್ನಿಶಾಮಕ ದಳ ಸಿಬ್ಬಂದಿ ತ್ವರಿತವಾಗಿ ಬೆಂಕಿ ನಂದಿಸಲು ಯಶಸ್ವಿಯಾಗಿದ್ದಾರೆ.

ಉತ್ಸವವನ್ನು ಶುಕ್ರವಾರ ರಾತ್ರಿ ಸಿದ್ದರಾಮಯ್ಯ ಅವರು ಡೊಳ್ಳು, ನಗಾರಿ ಬಾರಿಸುವ ಮೂಲಕ ಉದ್ಘಾಟಿಸಿದ್ದಾರೆ. ಮೂರು ದಿನಗಳ ಈ ಹಂಪಿ ಉತ್ಸವದಲ್ಲಿ ಫಲಪುಷ್ಪ ಪ್ರದರ್ಶನ, ಆಹಾರ ಮೇಳ, ಮತ್ಸ್ಯ ಮೇಳ, ಕುಸ್ತಿ, ಬೈ ಸ್ಕೈ, ಎತ್ತುಗಳ ಪ್ರದರ್ಶನ, ರಂಗೋಲಿ ಸ್ಪರ್ಧೆ, ಬೋಟಿಂಗ್, ಡ್ರೋನ್ ಪ್ರದರ್ಶನ, ಗ್ರಾಮೀಣ ಕ್ರೀಡೆಗಳು, ಕವಿಗೋಷ್ಠಿ, ಗಾಳಿಪಟ ಪ್ರದರ್ಶನ, ಯುವ ಗೋಷ್ಠಿ, ಜಾನಪದ ವಾಹಿನಿ ಸೇರಿದಂತೆ ಹಂಪಿಯ ಇತಿಹಾಸ ಮತ್ತು ಸಂಸ್ಕೃತಿಯ ಮೇಲೆ ಬೆಳಕು ಚೆಲ್ಲುವ ನೂರಾರು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ.

error: Content is protected !!