Home Blog

ರಾಯಚೂರಿನಲ್ಲಿ ಭೀಕರ ದುರಂತ: ಕಟ್ಟಡದ ಮೆಟ್ಟಿಲು-ಗೋಡೆ ಕುಸಿದು ಇಬ್ಬರು ಯುವಕರು ಸಾವು

ರಾಯಚೂರು: ಜಿಲ್ಲೆಯ ದೇವದುರ್ಗ ಪಟ್ಟಣದ ಬಸ್ ನಿಲ್ದಾಣದ ಸಮೀಪ ಜನನಿಬಿಡ ಪ್ರದೇಶದಲ್ಲಿದ್ದ ವಾಣಿಜ್ಯ ಸಂಕೀರ್ಣದ ಮೆಟ್ಟಿಲು ಹಾಗೂ ಗೋಡೆ ಏಕಾಏಕಿ ಕುಸಿದು ಬಿದ್ದ ಪರಿಣಾಮ ಇಬ್ಬರು ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.

ಮೃತರನ್ನು ನಾಗರಾಜ್ ಕ್ಯಾದಿಗೇರಾ (26) ಹಾಗೂ ರವಿಕುಮಾರ್ (27) ಎಂದು ಗುರುತಿಸಲಾಗಿದೆ.

ಗಾಯಗೊಂಡಿರುವ ಉಮೇಶ್ ಮತ್ತು ಅಭಿಷೇಕ್ ಅವರನ್ನು ತಕ್ಷಣ ದೇವದುರ್ಗ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಪ್ರತಿನಿತ್ಯದಂತೆ ವಾಣಿಜ್ಯ ಸಂಕೀರ್ಣದಲ್ಲಿನ ಅಂಗಡಿಗಳಲ್ಲಿ ವ್ಯಾಪಾರ-ವಹಿವಾಟು ನಡೆಯುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ಏಕಾಏಕಿ ಕಟ್ಟಡದ ಮೆಟ್ಟಿಲು ಹಾಗೂ ಗೋಡೆ ಕುಸಿದು ಬಿದ್ದಿದ್ದು, ಅದೇ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ನಾಲ್ವರು ಯುವಕರು ಅವಶೇಷಗಳಡಿ ಸಿಲುಕಿಕೊಂಡರು. ಘಟನೆಯಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟರೆ, ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡರು.

ಮಾಹಿತಿ ತಿಳಿಯುತ್ತಿದ್ದಂತೆ ದೇವದುರ್ಗ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದೇ ವೇಳೆ ದೇವದುರ್ಗ ಶಾಸಕಿ ಕರೆಮ್ಮಾ ನಾಯಕ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಘಟನೆ ಕುರಿತು ಪೊಲೀಸರಿಂದ ಮಾಹಿತಿ ಪಡೆದು, ಮೃತರ ಕುಟುಂಬದವರಿಗೆ ಸಾಂತ್ವನ ಹೇಳಿದರು. ಬಳಿಕ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು.

2026 ಫಿಫಾ ವಿಶ್ವಕಪ್ʼನಲ್ಲಿ ಮೆಸ್ಸಿ ಅಬ್ಬರ: ಜೋರ್ಡನ್ ವಿರುದ್ಧ ಅರ್ಜೆಂಟೀನಾಗೆ 3-1 ಅಂತರದ ಗೆಲುವು

0

2026ರ ಫಿಫಾ ವಿಶ್ವಕಪ್‌ನಲ್ಲಿ ಅರ್ಜೆಂಟೀನಾ ನಾಯಕ ಲಿಯೋನೆಲ್ ಮೆಸ್ಸಿ ತಮ್ಮ ಅದ್ಭುತ ಪ್ರದರ್ಶನವನ್ನು ಮುಂದುವರಿಸಿದ್ದು, ಜೋರ್ಡಾನ್ ವಿರುದ್ಧದ ಪಂದ್ಯದಲ್ಲಿ ಮತ್ತೊಂದು ಮನಮೋಹಕ ಫ್ರೀ ಕಿಕ್ ಗೋಲು ಬಾರಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.

ವಿಶ್ವಕಪ್‌ನ ಗ್ರೂಪ್ ಜೆ ಹಂತದ ಕೊನೆಯ ಪಂದ್ಯದಲ್ಲಿ ಅರ್ಜೆಂಟೀನಾ 3-1 ಗೋಲುಗಳಿಂದ ಜೋರ್ಡಾನ್ ತಂಡವನ್ನು ಮಣಿಸಿ ನಾಕೌಟ್ ಹಂತಕ್ಕೆ ಭರ್ಜರಿಯಾಗಿ ಪ್ರವೇಶಿಸಿದೆ.

ಪಂದ್ಯದ ಆರಂಭದಲ್ಲಿ ಜಿಯೋವಾನಿ ಲೊ ಸೆಲ್ಸೊ ಹಾಗೂ ಲೌಟಾರೊ ಮಾರ್ಟಿನೆಜ್ ತಲಾ ಒಂದು ಗೋಲು ದಾಖಲಿಸಿ ಅರ್ಜೆಂಟೀನಾಗೆ 2-1 ಮುನ್ನಡೆ ತಂದುಕೊಟ್ಟಿದ್ದರು. ಬಳಿಕ ಪಂದ್ಯದ 60ನೇ ನಿಮಿಷದಲ್ಲಿ ಬದಲಿ ಆಟಗಾರನಾಗಿ ಮೈದಾನಕ್ಕಿಳಿದ ಮೆಸ್ಸಿ, 80ನೇ ನಿಮಿಷದಲ್ಲಿ ಅದ್ಭುತ ಫ್ರೀ ಕಿಕ್ ಮೂಲಕ ಚೆಂಡನ್ನು ಗೋಲುಪೆಟ್ಟಿಗೆಯೊಳಗೆ ಸೇರಿಸಿ ತಂಡದ ಗೆಲುವನ್ನು ಖಚಿತಪಡಿಸಿದರು.

ಈ ಗೋಲಿನೊಂದಿಗೆ ಮೆಸ್ಸಿ ಪ್ರಸಕ್ತ ವಿಶ್ವಕಪ್‌ನಲ್ಲಿ ತಮ್ಮ ಗೋಲುಗಳ ಸಂಖ್ಯೆಯನ್ನು 6ಕ್ಕೆ ಏರಿಸಿಕೊಂಡಿದ್ದು, ಟೂರ್ನಿಯ ಗರಿಷ್ಠ ಗೋಲು ಗಳಿಸಿದ ಆಟಗಾರರ ಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ. ಜೊತೆಗೆ ವಿಶ್ವಕಪ್ ಇತಿಹಾಸದಲ್ಲಿ ತಮ್ಮ ಒಟ್ಟು ಗೋಲುಗಳ ಸಂಖ್ಯೆಯನ್ನು 19ಕ್ಕೆ ಹೆಚ್ಚಿಸಿಕೊಂಡಿದ್ದಾರೆ.

ಗ್ರೂಪ್ ಹಂತವನ್ನು ಮೊದಲೇ ಗೆದ್ದಿದ್ದ ಕಾರಣ, ಹಿಂದಿನ ಪಂದ್ಯದಲ್ಲಿ ವಿಶ್ರಾಂತಿ ಪಡೆದಿದ್ದ ಪ್ರಮುಖ ಆಟಗಾರರಲ್ಲಿ ಮೆಸ್ಸಿಯೂ ಒಬ್ಬರಾಗಿದ್ದರು. ಇದಕ್ಕೂ ಮೊದಲು ಅಲ್ಜೀರಿಯಾ ಹಾಗೂ ಆಸ್ಟ್ರಿಯಾ ವಿರುದ್ಧದ ಪಂದ್ಯಗಳಲ್ಲಿ ಅರ್ಜೆಂಟೀನಾ ಗಳಿಸಿದ್ದ ಐದು ಗೋಲುಗಳನ್ನೂ ಮೆಸ್ಸಿಯೇ ದಾಖಲಿಸಿದ್ದರು. ಆ ಪೈಕಿ ವಿಶ್ವಕಪ್‌ನ ಮೊದಲ ಹ್ಯಾಟ್ರಿಕ್ ಹಾಗೂ ಒಂದು ಪಂದ್ಯದಲ್ಲಿ ಎರಡು ಗೋಲುಗಳ ಸಾಧನೆಯೂ ಸೇರಿದೆ.

ವಿಶೇಷವೆಂದರೆ, ಮೆಸ್ಸಿ ಇದೀಗ ಸತತ ಏಳು ವಿಶ್ವಕಪ್ ಪಂದ್ಯಗಳಲ್ಲಿ ಗೋಲು ದಾಖಲಿಸಿದ ಅಪರೂಪದ ಸಾಧನೆ ಮಾಡಿದ್ದಾರೆ.

ಕೊನೆಯ ಒಂಬತ್ತು ವಿಶ್ವಕಪ್ ಪಂದ್ಯಗಳಲ್ಲಿ ಏಳು ಗೆಲುವು ಹಾಗೂ ಎರಡು ಡ್ರಾ ದಾಖಲಿಸಿರುವ ಅರ್ಜೆಂಟೀನಾ ಇನ್ನೂ ಅಜೇಯವಾಗಿ ಮುಂದುವರಿದಿದೆ. ಇದೀಗ ಪ್ರೀಕ್ವಾರ್ಟರ್‌ನಲ್ಲಿ ಕೇಪ್ ವರ್ಡೆ ತಂಡವನ್ನು ಎದುರಿಸಲಿದ್ದು, ಈ ಪಂದ್ಯ ಶುಕ್ರವಾರ ಅಮೆರಿಕದ ಮಿಯಾಮಿಯಲ್ಲಿ ನಡೆಯಲಿದೆ.

ನಿರ್ಮಾಪಕ ಸುಧನ್ ಸುಂದರಂ ಜೊತೆ ಅದ್ದೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡ ನಟಿ ಶರ್ಮಿಳಾ ಮಾಂಡ್ರೆ!

ಕನ್ನಡ ಚಿತ್ರರಂಗದ ಖ್ಯಾತ ನಟಿ ಶರ್ಮಿಳಾ ಮಾಂಡ್ರೆ ನಿರ್ಮಾಪಕ ಸುಧನ್ ಸುಂದರಂ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಬೆಂಗಳೂರಿನ ಖಾಸಗಿ ಸ್ಟಾರ್ ಹೋಟೆಲ್‌ನಲ್ಲಿ ನಡೆದ ಆತ್ಮೀಯ ಸಮಾರಂಭದಲ್ಲಿ ಉಭಯ ಕುಟುಂಬದ ಸದಸ್ಯರು ಹಾಗೂ ಆಪ್ತ ಸ್ನೇಹಿತರು ಮಾತ್ರ ಭಾಗವಹಿಸಿದ್ದರು.

ನಿಶ್ಚಿತಾರ್ಥದ ಸುಂದರ ಕ್ಷಣಗಳ ಫೋಟೋಗಳನ್ನು ಶರ್ಮಿಳಾ ಮಾಂಡ್ರೆ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಅಭಿಮಾನಿಗಳು ಹಾಗೂ ಸಿನಿರಂಗದ ಗಣ್ಯರಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.

ತಮಿಳು ಚಿತ್ರರಂಗದಲ್ಲಿ ನಿರ್ಮಾಪಕರಾಗಿ ಗುರುತಿಸಿಕೊಂಡಿರುವ ಸುಧನ್ ಸುಂದರಂ ಅವರೊಂದಿಗೆ ಶರ್ಮಿಳಾ ಹೊಸ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಕೆಲವೇ ದಿನಗಳ ಹಿಂದೆ ಜೀವನದಲ್ಲಿ ಹೊಸ ಅಧ್ಯಾಯ ಆರಂಭವಾಗಲಿದೆ ಎಂದು ಸುಳಿವು ನೀಡಿದ್ದ ನಟಿ, ಇದೀಗ ಅಧಿಕೃತವಾಗಿ ನಿಶ್ಚಿತಾರ್ಥದ ಸುದ್ದಿಯನ್ನು ಹಂಚಿಕೊಂಡಿದ್ದಾರೆ.

ಮದುವೆಯ ದಿನಾಂಕ ಹಾಗೂ ಸ್ಥಳದ ಕುರಿತು ಇನ್ನೂ ಅಧಿಕೃತ ಮಾಹಿತಿ ಪ್ರಕಟವಾಗಿಲ್ಲ. ಆದರೆ, ಅದ್ದೂರಿ ಡೆಸ್ಟಿನೇಷನ್ ವೆಡ್ಡಿಂಗ್‌ಗೆ ಸಿದ್ಧತೆಗಳು ನಡೆಯುತ್ತಿವೆ ಎಂಬ ಮಾಹಿತಿ ಲಭ್ಯವಾಗಿದೆ.

ನಿಶ್ಚಿತಾರ್ಥದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ಜೋಡಿಗೆ ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ.

ಬೈಕ್ʼಗೆ ಡಿಕ್ಕಿ ಹೊಡೆದ ಕಾರು: ಸ್ಥಳದಲ್ಲೇ ತಂದೆ- ಮಗ ದುರ್ಮರಣ, ಕಾರಿನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯ

ಶಿರಹಟ್ಟಿ: ತಾಲೂಕಿನ ವರವಿ ಕ್ರಾಸ್ ಸಮೀಪ ಭಾನುವಾರ ಬೆಳಿಗ್ಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್‌ನಲ್ಲಿ ತೆರಳುತ್ತಿದ್ದ ತಂದೆ ಮತ್ತು ಪುತ್ರ ಸ್ಥಳದಲ್ಲೇ ಸಾವನ್ನಪ್ಪಿದ ದಾರುಣ ಘಟನೆ ನಡೆದಿದೆ.

ಮೃತರನ್ನು ಶಿರಹಟ್ಟಿ ಪಟ್ಟಣದ ದುರಗಪ್ಪ ಮೋಡಕೇರ (38) ಹಾಗೂ ಅವರ 14 ವರ್ಷದ ಪುತ್ರ ಮೈಲಾರಿ ಮೋಡಕೇರ ಎಂದು ಗುರುತಿಸಲಾಗಿದೆ.

ಭಾನುವಾರ ಬೆಳಿಗ್ಗೆ ದುರಗಪ್ಪ ಅವರು ಪುತ್ರನೊಂದಿಗೆ ಬೈಕ್‌ನಲ್ಲಿ ಶಿರಹಟ್ಟಿಯಿಂದ ಬೆಳ್ಳಟ್ಟಿ ಕಡೆಗೆ ತೆರಳುತ್ತಿದ್ದ ವೇಳೆ, ಶಿವಮೊಗ್ಗದಿಂದ ಗದಗ ಕಡೆಗೆ ಬರುತ್ತಿದ್ದ ಐ-20 ಕಾರು ವರವಿ ಕ್ರಾಸ್ ಬಳಿ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ತಂದೆ-ಮಗ ಇಬ್ಬರೂ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಅಪಘಾತದಲ್ಲಿ ಕಾರಿನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗೆ ಗದಗ ನಗರದ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನಾ ಸ್ಥಳಕ್ಕೆ ಶಿರಹಟ್ಟಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಅಪಘಾತಕ್ಕೆ ನಿಖರ ಕಾರಣವೇನು ಎಂಬ ಕುರಿತು ತನಿಖೆ ಮುಂದುವರಿಸಿದ್ದಾರೆ.

ರಾಜ್ಯಾದ್ಯಂತ ಪಲ್ಸ್ ಪೋಲಿಯೋ ಲಸಿಕಾ ಅಭಿಯಾನಕ್ಕೆ ಚಾಲನೆ; ಪ್ರತಿಯೊಂದು ಮಗುವಿಗೂ ಲಸಿಕೆ ತಲುಪಲಿ – ಸಿಎಂ ಡಿಕೆಶಿ

ಬೆಂಗಳೂರು: ದೇಶವನ್ನು ಪೋಲಿಯೋ ಮುಕ್ತವಾಗಿಡುವ ಉದ್ದೇಶದಿಂದ ರಾಜ್ಯಾದ್ಯಂತ ಇಂದು ಹಮ್ಮಿಕೊಳ್ಳಲಾಗಿರುವ ಪಲ್ಸ್ ಪೋಲಿಯೋ ಲಸಿಕಾ ಅಭಿಯಾನಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಚಾಲನೆ ನೀಡಿದರು.

ಬೆಂಗಳೂರಿನ ಮುಖ್ಯಮಂತ್ರಿ ನಿವಾಸದಲ್ಲಿ ನಡೆದ ರಾಜ್ಯಮಟ್ಟದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 1972ರಲ್ಲೇ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ದೇಶದಲ್ಲಿ ಪೋಲಿಯೋ ನಿರ್ಮೂಲನೆಗೆ ಮುನ್ನುಡಿ ಬರೆದಿದ್ದರು. ಮಕ್ಕಳ ಆರೋಗ್ಯಕರ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಈ ಲಸಿಕಾ ಕಾರ್ಯಕ್ರಮ ಆರಂಭಿಸಲಾಗಿತ್ತು ಎಂದು ಹೇಳಿದರು.

ನೆರೆಯ ಕೆಲವು ದೇಶಗಳಲ್ಲಿ ಇಂದಿಗೂ ಪೋಲಿಯೋ ಸಮಸ್ಯೆ ಮುಂದುವರಿದಿದೆ. ಆದರೆ ಭಾರತದಲ್ಲಿ ಮತ್ತೆ ಈ ರೋಗ ಮರುಕಳಿಸದಂತೆ ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಪೋಷಕರೂ ತಮ್ಮ ಮಕ್ಕಳಿಗೆ ಕಡ್ಡಾಯವಾಗಿ ಪೋಲಿಯೋ ಲಸಿಕೆ ಹಾಕಿಸಬೇಕು ಎಂದು ಸಿಎಂ ಮನವಿ ಮಾಡಿದರು.

ಆರೋಗ್ಯ ಇಲಾಖೆಯ ಸಮನ್ವಯದಲ್ಲಿ ರಾಜ್ಯಮಟ್ಟದಲ್ಲಿ ಅಭಿಯಾನ ಯಶಸ್ವಿಯಾಗಿ ಆಯೋಜಿಸಲಾಗಿದೆ. ಕಾರ್ಯಕ್ರಮವನ್ನು ಮುಖ್ಯಮಂತ್ರಿ ನಿವಾಸದಿಂದಲೇ ಆರಂಭಿಸಲು ಅಧಿಕಾರಿಗಳು ನಿರ್ಧರಿಸಿದ್ದು, ಎಲ್ಲಾ ಇಲಾಖೆಗಳ ಸಹಕಾರದಿಂದ ಅದು ಯಶಸ್ವಿಯಾಗಿದೆ ಎಂದು ಸಿಎಂ ಮೆಚ್ಚುಗೆ ವ್ಯಕ್ತಪಡಿಸಿದರು.

ವಿಶೇಷವಾಗಿ ಗ್ರಾಮೀಣ, ಗಡಿ ಹಾಗೂ ಗುಡ್ಡಗಾಡು ಪ್ರದೇಶಗಳಲ್ಲಿರುವ ಪ್ರತಿಯೊಂದು ಮಗುವಿಗೂ ಪೋಲಿಯೋ ಲಸಿಕೆ ತಲುಪುವಂತೆ ಆರೋಗ್ಯ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಸೂಚಿಸಿದರು.

ಬಿಲ್ ವಿಚಾರಕ್ಕೆ ಪಬ್ ಮ್ಯಾನೇಜರ್ ಮೇಲೆ ಹಲ್ಲೆ; ಚಿನ್ನದ ಸರ ಕಸಿದು ಪರಾರಿ

0

ಮೈಸೂರು: ಬಿಲ್ ಪಾವತಿ ವಿಚಾರವಾಗಿ ಆರಂಭವಾದ ಮಾತಿನ ಚಕಮಕಿ ಪಬ್ ಮ್ಯಾನೇಜರ್ ಮೇಲೆ ಹಲ್ಲೆ ನಡೆಸಿ ಚಿನ್ನದ ಸರ ಕಸಿದುಕೊಳ್ಳುವ ಮಟ್ಟಕ್ಕೆ ತಿರುಗಿದ ಘಟನೆ ಮೈಸೂರಿನ ಅಗ್ರಹಾರದಲ್ಲಿರುವ ಸಿಪಾಯಿ ಗ್ರಾಂಡೆ ಪಬ್‌ನಲ್ಲಿ ನಡೆದಿದೆ.

ಜನ್ಮದಿನದ ಸಂಭ್ರಮಕ್ಕಾಗಿ ಪಬ್‌ಗೆ ಬಂದಿದ್ದ ಯುವಕರ ತಂಡ, ಬಿಲ್ ವಿಚಾರದಲ್ಲಿ ಮ್ಯಾನೇಜರ್ ಜತೆ ವಾಗ್ವಾದ ನಡೆಸಿದೆ. ಗಲಾಟೆಯ ಸಂಪೂರ್ಣ ದೃಶ್ಯಾವಳಿ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ನಜರಾಬಾದ್ ಮೂಲದ ಏಳು ಮಂದಿ ಯುವಕರ ತಂಡ ಪಾರ್ಟಿ ಮಾಡಿದ್ದು, ಸುಮಾರು 15 ಸಾವಿರ ರೂಪಾಯಿ ಬಿಲ್ ಆಗಿತ್ತು. ಬಿಲ್ ಪಾವತಿಸಲು ಕೇಳಿದ ವೇಳೆ ಮಾತಿಗೆ ಮಾತು ಬೆಳೆದು ಜಗಳ ಶುರುವಾಗಿದೆ.

ಕಾರ್ಡ್ ಮೂಲಕ ಹಣ ಪಾವತಿಸುತ್ತೇವೆ ಎಂದು ನೆಪ ಹೇಳಿ ಪಬ್ ಮ್ಯಾನೇಜರ್ ವಿನಯ್ ಅವರನ್ನು ಹೊರಗೆ ಕರೆಸಿಕೊಂಡ ಆರೋಪಿಗಳು, ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಅಲ್ಲದೆ, ವಿನಯ್ ಅವರ ಕುತ್ತಿಗೆಯಲ್ಲಿದ್ದ 23 ಗ್ರಾಂ ತೂಕದ ಚಿನ್ನದ ಸರವನ್ನು ಕಸಿದು ಪರಾರಿಯಾಗಿದ್ದಾರೆ.

ಘಟನೆ ಸಂಬಂಧ ಕೆ.ಆರ್. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಸಿಟಿವಿ ದೃಶ್ಯಾವಳಿ ಆಧರಿಸಿ ಆರೋಪಿಗಳ ಪತ್ತೆಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಓಣಂ ಸ್ಪೆಷಲ್: ಬೆಂಗಳೂರು–ಎರ್ನಾಕುಲಂ ವಂದೇ ಭಾರತ್ ರೈಲಿನಲ್ಲಿ ಹೆಚ್ಚುವರಿ ಬೋಗಿ ಜೋಡಿಸಲು ರೈಲ್ವೆ ನಿರ್ಧಾರ

ಬೆಂಗಳೂರು: ಓಣಂ ಹಬ್ಬದ ಸಂದರ್ಭದಲ್ಲಿ ಕೇರಳಕ್ಕೆ ಪ್ರಯಾಣಿಸುವವರಿಗೆ ಭಾರತೀಯ ರೈಲ್ವೆ ಸಿಹಿಸುದ್ದಿ ನೀಡಿದೆ. ಬೆಂಗಳೂರು–ಎರ್ನಾಕುಲಂ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಸಾಮರ್ಥ್ಯವನ್ನು ದ್ವಿಗುಣಗೊಳಿಸಲು ಸೌತರ್ನ್ ರೈಲ್ವೆ ನಿರ್ಧರಿಸಿದೆ.

ಪ್ರಸ್ತುತ 8 ಬೋಗಿಗಳೊಂದಿಗೆ ಸಂಚರಿಸುತ್ತಿರುವ ಈ ರೈಲನ್ನು 16 ಬೋಗಿಗಳಿಗೆ ವಿಸ್ತರಿಸಲಾಗುತ್ತಿದ್ದು, ಪ್ರತಿ ಪ್ರಯಾಣದಲ್ಲಿ 598 ಹೆಚ್ಚುವರಿ ಆಸನಗಳು ಲಭ್ಯವಾಗಲಿವೆ. ಹೊಸ 16 ಬೋಗಿಗಳ ರೇಕ್‌ ಅನ್ನು ಜುಲೈ ಮೊದಲ ವಾರದಲ್ಲಿ ಸೇವೆಗೆ ಪರಿಚಯಿಸುವ ಸಾಧ್ಯತೆ ಇದೆ ಎಂದು ರೈಲ್ವೆ ಮೂಲಗಳು ತಿಳಿಸಿವೆ. ಕಳೆದ ವರ್ಷದ ನವೆಂಬರ್‌ನಲ್ಲಿ ಆರಂಭವಾದ ಈ ರೈಲು ಸೇವೆಗೆ ಏಳು ತಿಂಗಳ ಬಳಿಕ ಮೊದಲ ಬಾರಿಗೆ ಸಾಮರ್ಥ್ಯ ಹೆಚ್ಚಿಸಲಾಗುತ್ತಿದೆ.

ಓಣಂ ಹಬ್ಬದ ಹಿನ್ನೆಲೆಯಲ್ಲಿ ಆಗಸ್ಟ್ 21 ಮತ್ತು 22ರ ಪ್ರಯಾಣದ ಟಿಕೆಟ್‌ಗಳು ಬುಕ್ಕಿಂಗ್ ಆರಂಭವಾದ ಕೆಲವೇ ಸಮಯದಲ್ಲಿ ವೇಟಿಂಗ್ ಲಿಸ್ಟ್‌ಗೆ ತಲುಪಿದ್ದವು. ಹಬ್ಬದ ದಿನಗಳು ಹಾಗೂ ದೀರ್ಘ ವಾರಾಂತ್ಯಗಳಲ್ಲಿ ಈ ರೈಲಿಗೆ ಭಾರೀ ಬೇಡಿಕೆ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಹೆಚ್ಚುವರಿ ಬೋಗಿಗಳನ್ನು ಸೇರಿಸಲು ರೈಲ್ವೆ ನಿರ್ಧರಿಸಿದೆ.

ರೈಲ್ವೆಯ ಹಿರಿಯ ಅಧಿಕಾರಿಯೊಬ್ಬರ ಪ್ರಕಾರ, ಬೆಂಗಳೂರಿನಲ್ಲಿ ಉದ್ಯೋಗದಲ್ಲಿರುವ ಕೇರಳ ಮೂಲದ ಪ್ರಯಾಣಿಕರಿಂದ ಈ ರೈಲಿಗೆ ನಿರಂತರ ಉತ್ತಮ ಸ್ಪಂದನೆ ಸಿಗುತ್ತಿದೆ. ಹೆಚ್ಚುವರಿ ಬೋಗಿಗಳ ಸೇರ್ಪಡೆಯಿಂದ ಹಬ್ಬದ ಸಮಯದ ಪ್ರಯಾಣಿಕರ ಒತ್ತಡ ಗಣನೀಯವಾಗಿ ಕಡಿಮೆಯಾಗಲಿದೆ.

ಈ ಬದಲಾವಣೆಯೊಂದಿಗೆ ರೈಲಿನ ಒಟ್ಟು ಆಸನ ಸಾಮರ್ಥ್ಯ 530ರಿಂದ 1,128ಕ್ಕೆ ಏರಿಕೆಯಾಗಲಿದ್ದು, ಪ್ರತಿ ಪ್ರಯಾಣದಲ್ಲಿ 598 ಹೆಚ್ಚುವರಿ ಪ್ರಯಾಣಿಕರಿಗೆ ಅವಕಾಶ ದೊರೆಯಲಿದೆ. ವಾರದಲ್ಲಿ ಆರು ದಿನ ರೈಲು ಸಂಚರಿಸುವುದರಿಂದ, ಒಂದು ದಿಕ್ಕಿನಲ್ಲಿ ವಾರಕ್ಕೆ 6,768 ಹೆಚ್ಚುವರಿ ಪ್ರಯಾಣಿಕರು ಪ್ರಯಾಣಿಸಬಹುದಾಗಿದೆ.

630 ಕಿಲೋಮೀಟರ್ ದೂರದ ಬೆಂಗಳೂರು–ಎರ್ನಾಕುಲಂ ಮಾರ್ಗವನ್ನು ಈ ವಂದೇ ಭಾರತ್ ರೈಲು ಕೇವಲ 8 ಗಂಟೆ 40 ನಿಮಿಷಗಳಲ್ಲಿ ಕ್ರಮಿಸುತ್ತಿದ್ದು, ಮಾರ್ಗ ಮಧ್ಯೆ ಒಂಬತ್ತು ನಿಲ್ದಾಣಗಳಲ್ಲಿ ಮಾತ್ರ ನಿಲುಗಡೆ ಮಾಡುತ್ತದೆ ಎಂದು ವರದಿಯಾಗಿದೆ.

1.80 ಲಕ್ಷ ರೈತರ RTCಗಳಲ್ಲಿ ವಕ್ಫ್ ಉಲ್ಲೇಖ ದಾಖಲು: ಕಾಂಗ್ರೆಸ್ ಸರ್ಕಾರದ ವಿರುದ್ಧ ಆರ್. ಅಶೋಕ್ ವಾಗ್ದಾಳಿ

ಬೆಂಗಳೂರು: ರಾಜ್ಯದಲ್ಲಿ ರೈತರ ಭೂಮಿ ದಾಖಲೆಗಳಿಗೆ ಸಂಬಂಧಿಸಿದ ವಕ್ಫ್ ವಿವಾದ ಮತ್ತೊಮ್ಮೆ ರಾಜಕೀಯ ಚರ್ಚೆಗೆ ಗ್ರಾಸವಾಗಿದೆ. ಕರ್ನಾಟಕದ ವಿವಿಧ ಭಾಗಗಳ ರೈತರು ಹಾಗೂ ಖಾಸಗಿ ವ್ಯಕ್ತಿಗಳ ಜಮೀನುಗಳ ಆರ್‌ಟಿಸಿ (RTC) ದಾಖಲೆಗಳಲ್ಲಿ ಪೂರ್ವ ಸೂಚನೆ ಇಲ್ಲದೆ ವಕ್ಫ್ ಉಲ್ಲೇಖ ನಮೂದಾಗುತ್ತಿದೆ ಎಂದು ಆರೋಪಿಸಿರುವ ವಿಧಾನಸಭೆ ಪ್ರತಿಪಕ್ಷ ನಾಯಕ ಆರ್. ಅಶೋಕ್, ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಅವರು, ರಾಜ್ಯದ 1.80 ಲಕ್ಷಕ್ಕೂ ಹೆಚ್ಚು ರೈತರ ಆರ್‌ಟಿಸಿ ದಾಖಲೆಗಳ ಕಾಲಂ 11ರಲ್ಲಿ ಈಗಾಗಲೇ ವಕ್ಫ್ ಉಲ್ಲೇಖ ದಾಖಲಾಗಿದೆ ಎಂದು ಆರೋಪಿಸಿದ್ದಾರೆ. ಅಲ್ಲದೆ, ಒಟ್ಟು 3 ಲಕ್ಷ ಆರ್‌ಟಿಸಿ ದಾಖಲೆಗಳನ್ನು ಈ ಪ್ರಕ್ರಿಯೆಯ ವ್ಯಾಪ್ತಿಗೆ ತರಲು ಕ್ರಮ ನಡೆಯುತ್ತಿದೆ ಎಂಬ ಮಾಹಿತಿಯೂ ಲಭ್ಯವಾಗಿದೆ ಎಂದು ಹೇಳಿದ್ದಾರೆ.

ರಾಜ್ಯ ಸರ್ಕಾರದ ತುಷ್ಟೀಕರಣದ ರಾಜಕಾರಣ ಈಗ ರೈತರ ಅಸ್ತಿತ್ವಕ್ಕೇ ಧಕ್ಕೆ ತರುವ ಹಂತಕ್ಕೆ ತಲುಪಿದೆ ಎಂದು ಅಶೋಕ್ ಆರೋಪಿಸಿದ್ದಾರೆ. ರೈತರ ಜಮೀನು ದಾಖಲೆಗಳಲ್ಲಿ ವಕ್ಫ್ ಉಲ್ಲೇಖ ಸೇರ್ಪಡೆಯಾಗುತ್ತಿರುವುದು ಕೇವಲ ದಾಖಲೆ ತಿದ್ದುಪಡಿಯ ವಿಷಯವಲ್ಲ, ಅದು ರೈತರ ಮಾಲೀಕತ್ವದ ಹಕ್ಕು, ಬದುಕು ಹಾಗೂ ಭವಿಷ್ಯಕ್ಕೆ ಸಂಬಂಧಿಸಿದ ಗಂಭೀರ ವಿಚಾರವಾಗಿದೆ ಎಂದು ಅವರು ತಿಳಿಸಿದ್ದಾರೆ.

ರಾಜ್ಯದ 31 ಜಿಲ್ಲೆಗಳ ರೈತರು ಈ ಬೆಳವಣಿಗೆಯಿಂದ ಆತಂಕದಲ್ಲಿದ್ದು, ತಮ್ಮ ಜಮೀನುಗಳ ಮಾಲೀಕತ್ವದ ಬಗ್ಗೆ ಅನಿಶ್ಚಿತತೆ ಎದುರಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

ಜಿಲ್ಲಾವಾರು ಉಲ್ಲೇಖಿಸಿದ ಅಂಕಿ-ಅಂಶ

ಆರ್. ಅಶೋಕ್ ಹಂಚಿಕೊಂಡಿರುವ ಮಾಹಿತಿಯ ಪ್ರಕಾರ, ವಕ್ಫ್ ಉಲ್ಲೇಖ ದಾಖಲಾಗಿರುವ ಆರ್‌ಟಿಸಿಗಳ ಸಂಖ್ಯೆ ಹೀಗಿದೆ:

  • ಉತ್ತರ ಕನ್ನಡ – 73,000
  • ದಕ್ಷಿಣ ಕನ್ನಡ – 48,000
  • ಶಿವಮೊಗ್ಗ – 38,000
  • ಬೆಂಗಳೂರು ದಕ್ಷಿಣ – 18,000
  • ಕಲಬುರಗಿ – 17,000
  • ಬಾಗಲಕೋಟೆ – 17,000

ರೈತರು ತಮ್ಮದೇ ಜಮೀನನ್ನು ಮಾರಾಟ ಮಾಡಲು, ಬ್ಯಾಂಕ್‌ಗಳಿಂದ ಸಾಲ ಪಡೆಯಲು ಅಥವಾ ಮಾಲೀಕತ್ವದ ಹಕ್ಕು ಚಲಾಯಿಸಲು ಅನಿಶ್ಚಿತತೆ ಎದುರಿಸುವ ಪರಿಸ್ಥಿತಿ ಏಕೆ ನಿರ್ಮಾಣವಾಗಿದೆ ಎಂದು ಅಶೋಕ್ ಪ್ರಶ್ನಿಸಿದ್ದಾರೆ.

“ರೈತರನ್ನು ತಮ್ಮದೇ ಭೂಮಿಯಲ್ಲಿ ಭಿಕ್ಷುಕರನ್ನಾಗಿ ಮಾಡಲು ಸರ್ಕಾರ ಹೊರಟಿದೆಯೇ? ಕಾಂಗ್ರೆಸ್ ಸರ್ಕಾರಕ್ಕೆ ರೈತರ ಹಿತ ಮುಖ್ಯವೇ, ಅಥವಾ ತುಷ್ಟೀಕರಣದ ರಾಜಕಾರಣ ಮುಖ್ಯವೇ?” ಎಂದು ಅವರು ಪ್ರಶ್ನಿಸಿದ್ದಾರೆ.

ಅನ್ನದಾತ ದೇಶದ ಹಸಿವನ್ನು ನೀಗಿಸುವವನು. ಅಂತಹ ರೈತನನ್ನು ತನ್ನದೇ ಜಮೀನಿನ ಹಕ್ಕಿಗಾಗಿ ಸರ್ಕಾರಿ ಕಚೇರಿಗಳ ಮುಂದೆ ಅಲೆದಾಡುವ ಸ್ಥಿತಿಗೆ ತಳ್ಳಬಾರದು. ಇಲ್ಲವಾದರೆ ಅನ್ನದಾತನ ಶಾಪ ಸರ್ಕಾರಕ್ಕೆ ತಟ್ಟದೇ ಇರದು ಎಂದು ಆರ್. ಅಶೋಕ್ ಎಚ್ಚರಿಸಿದ್ದಾರೆ.

ಮುಖ್ಯಮಂತ್ರಿಯ ಸಿಂಹಾಸನ ನಶ್ವರ, ಜನರ ಹೃದಯ ಸಿಂಹಾಸನ ಶಾಶ್ವತ: ಸಿದ್ದರಾಮಯ್ಯ ಭಾವುಕ ಪೋಸ್ಟ್

ಬೆಂಗಳೂರು: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಮೊದಲ ಬಾರಿಗೆ ತವರು ಜಿಲ್ಲೆ ಮೈಸೂರಿಗೆ ಭೇಟಿ ನೀಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಜನರಿಂದ ದೊರೆತ ಅದ್ಧೂರಿ ಸ್ವಾಗತಕ್ಕೆ ಭಾವುಕರಾಗಿ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಮನದಾಳದ ಸಂದೇಶ ಹಂಚಿಕೊಂಡಿದ್ದಾರೆ.

ತಮ್ಮ ಪೋಸ್ಟ್‌ನಲ್ಲಿ, “ಮುಖ್ಯಮಂತ್ರಿಯ ಸಿಂಹಾಸನ ನಶ್ವರ, ಜನರ ಹೃದಯ ಸಿಂಹಾಸನ ಶಾಶ್ವತ. ಅಲ್ಲಿಂದ ನನ್ನನ್ನು ಯಾರೂ ಕೆಳಗಿಳಿಸಲಾರರು. ಅದು ನನ್ನ ಮತ್ತು ನಾನು ನಂಬಿರುವ ಜನತಾ ಜನಾರ್ಧನರ ನಡುವಿನ ಶಾಶ್ವತ ಒಪ್ಪಂದ” ಎಂದು ಅವರು ಬರೆದುಕೊಂಡಿದ್ದಾರೆ.

ರಾಜಕೀಯ ಅಧಿಕಾರವೆಂದರೆ ಜನಸೇವೆ ಮಾಡಲು ದೊರೆಯುವ ಒಂದು ಅವಕಾಶ ಎಂದು ತಾವು ಯಾವಾಗಲೂ ನಂಬಿದ್ದೇನೆ ಎಂದು ಹೇಳಿರುವ ಸಿದ್ದರಾಮಯ್ಯ, ಮುಖ್ಯಮಂತ್ರಿ ಸ್ಥಾನ ತೊರೆದ ಬಳಿಕ ರಾಜ್ಯದ ವಿವಿಧ ಭಾಗಗಳಲ್ಲಿ ಜನರು ತೋರುತ್ತಿರುವ ಪ್ರೀತಿ, ವಿಶ್ವಾಸ ಮತ್ತು ಅಭಿಮಾನ ತಮ್ಮ ಸಾರ್ವಜನಿಕ ಬದುಕಿನ ದೊಡ್ಡ ಸಂಪತ್ತಾಗಿದೆ ಎಂದು ತಿಳಿಸಿದ್ದಾರೆ.

“ಅಧಿಕಾರ ಮತ್ತು ಸಂಪತ್ತು ಕಾಲ ಬದಲಾದಂತೆ ಕಳೆದುಹೋಗಬಹುದು. ಆದರೆ ಜನರ ಪ್ರೀತಿ ಮಾತ್ರ ಶಾಶ್ವತ. ಮುಖ್ಯಮಂತ್ರಿಯಾಗಿ ಅಧಿಕಾರದಲ್ಲಿದ್ದಾಗ ಜನಮೆಚ್ಚುವ ರೀತಿಯಲ್ಲಿ ಸೇವೆ ಸಲ್ಲಿಸಿದ್ದೇನೆ ಎಂಬ ತೃಪ್ತಿ ಈಗ ಜನರ ಪ್ರೀತಿಯನ್ನು ಕಂಡಾಗ ಮತ್ತಷ್ಟು ಹೆಚ್ಚಾಗಿದೆ,” ಎಂದು ಅವರು ಹೇಳಿದ್ದಾರೆ.

ಮೈಸೂರಿಗೆ ಭೇಟಿ ನೀಡಿದ ವೇಳೆ ಜನಸಾಗರದಿಂದ ವ್ಯಕ್ತವಾದ ಅಭಿಮಾನ ತಮ್ಮನ್ನು ಮೂಕವಿಸ್ಮಿತರನ್ನಾಗಿಸಿದೆ ಎಂದು ಉಲ್ಲೇಖಿಸಿರುವ ಅವರು, “ನನ್ನ ಸಾರ್ವಜನಿಕ ಬದುಕಿನಲ್ಲಿ ಅಪಾರ ಜನರ ಪ್ರೀತಿಯನ್ನು ಸಂಪಾದಿಸಿದ್ದೇನೆ ಎಂಬ ಹೆಮ್ಮೆ ನನಗಿದೆ. ನಾಡಿನ ಉದ್ದಗಲಕ್ಕೂ ಯಾವುದೇ ನಿರೀಕ್ಷೆಯಿಲ್ಲದೆ ಪ್ರೀತಿ ಮತ್ತು ಅಕ್ಕರೆ ತೋರುತ್ತಿರುವ ಜನರ ಸೇವೆಗೆ ನಾನು ಸದಾ ಬದ್ಧನಾಗಿರುತ್ತೇನೆ,” ಎಂದು ಭರವಸೆ ನೀಡಿದ್ದಾರೆ.

ಇದರೊಂದಿಗೆ ಮೈಸೂರಿನಲ್ಲಿ ಅಭಿಮಾನಿಗಳು ನೀಡಿದ ಅದ್ಧೂರಿ ಸ್ವಾಗತದ ವಿಡಿಯೊವನ್ನೂ ಸಿದ್ದರಾಮಯ್ಯ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಶನಿವಾರ ಮೈಸೂರಿಗೆ ಆಗಮಿಸಿದ್ದ ಸಿದ್ದರಾಮಯ್ಯ ಅವರಿಗೆ ಹೈವೇ ಸರ್ಕಲ್‌ನಲ್ಲಿ ಅಭಿಮಾನಿಗಳು ಬೃಹತ್ ಸೇಬಿನ ಹಾರ ಹಾಕಿ, ಪಟಾಕಿ ಸಿಡಿಸಿ ಅದ್ಧೂರಿಯಾಗಿ ಸ್ವಾಗತ ಕೋರಿದ್ದರು. ಈ ಸಂದರ್ಭದಲ್ಲಿ ಶಾಸಕರಾದ ತನ್ವೀರ್ ಸೇಠ್, ಹರೀಶ್ ಗೌಡ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರು ಮಾಜಿ ಮುಖ್ಯಮಂತ್ರಿಯನ್ನು ಬರಮಾಡಿಕೊಂಡಿದ್ದರು.

ಜಪಾನ್ʼನಲ್ಲಿ ಮತ್ತೆ ಭೂಮಿ ಕಂಪನ; 6.1 ತೀವ್ರತೆಯ ದಾಖಲು, ಕೇವಲ 7 ದಿನಗಳಲ್ಲಿ ವಿಶ್ವದಾದ್ಯಂತ 11 ಪ್ರಬಲ ಕಂಪನಗಳು

0

ಟೋಕಿಯೊ: ಜಪಾನ್‌ನಲ್ಲಿ ಭಾನುವಾರ ಮುಂಜಾನೆ 6.1 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ಜನರಲ್ಲಿ ಆತಂಕ ಮೂಡಿಸಿದೆ. ರಿಕ್ಟರ್ ಮಾಪಕದಲ್ಲಿ 6.1 ತೀವ್ರತೆಯ ಕಂಪನ ದಾಖಲಾಗಿದ್ದರೂ, ಸದ್ಯಕ್ಕೆ ಸುನಾಮಿ ಎಚ್ಚರಿಕೆ ನೀಡಲಾಗಿಲ್ಲ. ಯಾವುದೇ ಪ್ರಾಣಹಾನಿ ಅಥವಾ ಆಸ್ತಿಪಾಸ್ತಿ ನಷ್ಟದ ವರದಿಯೂ ಇದುವರೆಗೆ ಲಭ್ಯವಾಗಿಲ್ಲ.

ಜಪಾನ್ ಹವಾಮಾನ ಇಲಾಖೆ (JMA) ಮಾಹಿತಿ ಪ್ರಕಾರ, ಭಾನುವಾರ ಬೆಳಗ್ಗೆ 7.25ಕ್ಕೆ ಈಶಾನ್ಯ ಜಪಾನ್‌ನಲ್ಲಿ ಭೂಕಂಪ ಸಂಭವಿಸಿದೆ. ಇವಾಟೆ ಪ್ರಾಂತ್ಯದ ಕರಾವಳಿಯಿಂದ ಸುಮಾರು 40 ಕಿಲೋಮೀಟರ್ ಆಳದಲ್ಲಿ ಭೂಕಂಪದ ಕೇಂದ್ರಬಿಂದು ಪತ್ತೆಯಾಗಿದೆ. ಕಂಪನದ ಪರಿಣಾಮ ಅಯೋಮೋರಿ ಸೇರಿದಂತೆ ಸುತ್ತಮುತ್ತಲಿನ ಹಲವು ಪ್ರದೇಶಗಳಲ್ಲಿ ಭೂಮಿ ನಡುಗಿದ ಅನುಭವವಾಗಿದೆ.

ಕಳೆದ ಒಂದು ವಾರದಿಂದ ಜಪಾನ್‌ನಲ್ಲಿ ನಿರಂತರವಾಗಿ ಭೂಕಂಪಗಳು ಸಂಭವಿಸುತ್ತಿದ್ದು, ಪ್ರಸ್ತುತ ಟೈಫೂನ್ (ಚಂಡಮಾರುತ) ಕಾಲವೂ ಆಗಿರುವುದರಿಂದ ಗುಡ್ಡಗಾಡು ಪ್ರದೇಶಗಳಲ್ಲಿ ಭೂಕುಸಿತದ ಅಪಾಯ ಹೆಚ್ಚಾಗಿದೆ ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಇದೇ ವೇಳೆ, ವಿಶ್ವದಾದ್ಯಂತ ಕಳೆದ ಏಳು ದಿನಗಳಲ್ಲಿ ಒಟ್ಟು 11 ಪ್ರಬಲ ಭೂಕಂಪಗಳು ದಾಖಲಾಗಿವೆ. ಇದರಲ್ಲಿ ವೆನೆಜುವೆಲಾದಲ್ಲಿ ಬುಧವಾರ ಸಂಭವಿಸಿದ ಎರಡು ಭೀಕರ ಭೂಕಂಪಗಳಿಂದ ಭಾರೀ ಪ್ರಮಾಣದ ಹಾನಿಯಾಗಿದೆ. ಈ ದುರಂತದಲ್ಲಿ 920ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, 3,360ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ಜಪಾನ್ ಭೂಕಂಪ ಹಾಗೂ ಸುನಾಮಿ ಅಪಾಯ ಹೆಚ್ಚಿರುವ ಪ್ರದೇಶಗಳಲ್ಲಿ ಒಂದಾಗಿದೆ. ಕಳೆದ ಗುರುವಾರ 7.2 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದರೆ, ಶುಕ್ರವಾರ ಮೌಂಟ್ ಫೂಜಿ ಸಮೀಪದ ಯಮನಾಶಿ ಪ್ರಾಂತ್ಯ ಹಾಗೂ ಟೋಕಿಯೊದ ಪಶ್ಚಿಮ ಭಾಗದಲ್ಲಿ 5.6 ತೀವ್ರತೆಯ ಮತ್ತೊಂದು ಭೂಕಂಪ ದಾಖಲಾಗಿತ್ತು.

ಸರಣಿಯಾಗಿ ಭೂಕಂಪಗಳು ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿಯೂ ಕಂಪನಗಳು ಸಂಭವಿಸುವ ಸಾಧ್ಯತೆ ಇದೆ ಎಂದು ಭೂವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ. ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು ಹಾಗೂ ಅಧಿಕಾರಿಗಳ ಸೂಚನೆಗಳನ್ನು ಪಾಲಿಸಬೇಕು ಎಂದು ಮನವಿ ಮಾಡಲಾಗಿದೆ.