Home Blog

ವೈಟ್‌ಫೀಲ್ಡ್‌ನಲ್ಲಿ ದಾರುಣ ಘಟನೆ: 17 ಮಗಳನ್ನು ಕೊಂದು ತಾಯಿ ಆತ್ಮಹತ್ಯೆ

ಬೆಂಗಳೂರು: ನಗರದ ವೈಟ್‌ಫೀಲ್ಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತಾಯಿ ತನ್ನ 17 ವರ್ಷದ ಮಗಳನ್ನು ಕೊಂದು ಬಳಿಕ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ.

40 ವರ್ಷದ ಸುವರ್ಣ ಎಂಬ ಮಹಿಳೆ ತನ್ನ ಮಗಳು ಕಾರುಣ್ಯಳನ್ನು ಹತ್ಯೆ ಮಾಡಿ ನಂತರ ಆತ್ಮಹತ್ಯೆ ಶರಣಾಗಿದ್ದಾಳೆ ಎಂದು ತಿಳಿದುಬಂದಿದೆ. ಈ ದಾರುಣ ಘಟನೆಯ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.

ಘಟನೆ ಕುರಿತು ಮಾಹಿತಿ ತಿಳಿದ ವೈಟ್‌ಫೀಲ್ಡ್ ಪೊಲೀಸ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಈ ಘಟನೆ ಸ್ಥಳೀಯರಲ್ಲಿ ಆಘಾತ ಮೂಡಿಸಿದೆ.

ಬಿಹಾರದ ನೂತನ ಸಿಎಂ ಆಗಿ ಬಿಜೆಪಿಯ ಸಾಮ್ರಾಟ್ ಚೌಧರಿ ಆಯ್ಕೆ

ಪಾಟ್ನಾ: ಬಿಹಾರದ ನೂತನ ಮುಖ್ಯಮಂತ್ರಿಯಾಗಿ ಸಾಮ್ರಾಟ್ ಚೌಧರಿ ಅವರನ್ನು ಭಾರತೀಯ ಜನತಾ ಪಕ್ಷ ಆಯ್ಕೆ ಮಾಡಿದೆ. ಅವರು ನಾಳೆ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ.

57 ವರ್ಷದ ಸಾಮ್ರಾಟ್ ಚೌಧರಿ ರಾಜ್ಯದ ಪ್ರಮುಖ ಒಬಿಸಿ ಸಮುದಾಯವಾದ ಕೊಯೇರಿ ಅಥವಾ ಕುಶ್ವಾಹ ಜಾತಿಗೆ ಸೇರಿದವರಾಗಿದ್ದು, ಈ ಸಮುದಾಯವು ಹಿಂದುಳಿದ ವರ್ಗಗಳಲ್ಲಿ ಮಹತ್ವದ ಸ್ಥಾನ ಹೊಂದಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಸಿಎಂ ಆಗಿ ಆಯ್ಕೆ ಮಾಡಿರುವುದು ರಾಜಕೀಯವಾಗಿ ಮಹತ್ವ ಪಡೆದುಕೊಂಡಿದೆ.

ರಾಜ್ಯದಲ್ಲಿ ಮೊದಲ ಬಾರಿಗೆ ಬಿಜೆಪಿ ತನ್ನದೇ ನಾಯಕನನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಏರಿಸುತ್ತಿರುವುದು ವಿಶೇಷವಾಗಿದ್ದು, ಇದುವರೆಗೆ ಮೈತ್ರಿ ಸರ್ಕಾರದಲ್ಲೇ ಭಾಗಿಯಾಗಿದ್ದ ಬಿಜೆಪಿ ಈಗ ಸ್ವತಂತ್ರ ನಾಯಕತ್ವದತ್ತ ಹೆಜ್ಜೆ ಇಟ್ಟಿದೆ.

ನಿತೀಶ್ ಕುಮಾರ್ ನೇತೃತ್ವದ ಜನತಾ ದಳ (ಯುನೈಟೆಡ್) ಈ ಬಾರಿ ಸಿಎಂ ಸ್ಥಾನವನ್ನು ಬಿಜೆಪಿಗೆ ಬಿಟ್ಟುಕೊಟ್ಟಿದೆ ಎನ್ನಲಾಗಿದೆ. ಜೆಡಿಯು ಪಕ್ಷವು ಇದೇ ಸಮುದಾಯದಿಂದ ನಾಯಕನನ್ನು ಆಯ್ಕೆ ಮಾಡುವಂತೆ ಸೂಚನೆ ನೀಡಿದ್ದುದೂ ತಿಳಿದುಬಂದಿದೆ.

243 ಸದಸ್ಯ ಬಲದ ಬಿಹಾರ ವಿಧಾನಸಭೆಯಲ್ಲಿ ಜೆಡಿಯು 85 ಶಾಸಕರನ್ನು ಹೊಂದಿದ್ದು, ಬಿಜೆಪಿಗಿಂತ ಕೇವಲ ನಾಲ್ಕು ಸ್ಥಾನಗಳು ಕಡಿಮೆ ಇವೆ. 2005ರಿಂದ ಮೈತ್ರಿಯಲ್ಲಿ ಕಿರಿಯ ಪಾಲುದಾರನಾಗಿದ್ದ ಬಿಜೆಪಿ, ಈಗ ಮೊದಲ ಬಾರಿಗೆ ರಾಜ್ಯದ ಉನ್ನತ ಹುದ್ದೆಯನ್ನು ತನ್ನದಾಗಿಸಿಕೊಂಡಿದೆ.

2026-27 ಶೈಕ್ಷಣಿಕ ವರ್ಷ ವೇಳಾಪಟ್ಟಿ ಪ್ರಕಟ: ಮೇ 29ರಿಂದ ಶಾಲೆ ಆರಂಭ

ಬೆಂಗಳೂರು: ರಾಜ್ಯದ 2026-27ನೇ ಸಾಲಿನ ಶಾಲಾ ಶೈಕ್ಷಣಿಕ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದ್ದು, ಮೇ 29ರಿಂದ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ತರಗತಿಗಳು ಆರಂಭಗೊಳ್ಳಲಿವೆ.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ವಾರ್ಷಿಕ ಶೈಕ್ಷಣಿಕ ಕ್ರಿಯಾಯೋಜನೆಯಡಿ ಈ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ಈ ಬಾರಿ ಒಟ್ಟು 245 ಕೆಲಸದ ದಿನಗಳನ್ನು ನಿಗದಿಪಡಿಸಲಾಗಿದೆ. ಅಕ್ಟೋಬರ್ 3ರಿಂದ 21ರವರೆಗೆ ದಸರಾ ರಜೆ ಹಾಗೂ 2027ರ ಏಪ್ರಿಲ್ 11ರಿಂದ ಬೇಸಿಗೆ ರಜೆ ಘೋಷಿಸಲಾಗಿದೆ.

ಶೈಕ್ಷಣಿಕ ಅವಧಿಯನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿದ್ದು, ಮೊದಲ ಅವಧಿ ಮೇ 29ರಿಂದ ಅಕ್ಟೋಬರ್ 2ರವರೆಗೆ ಮತ್ತು ಎರಡನೇ ಅವಧಿ ಅಕ್ಟೋಬರ್ 22ರಿಂದ 2027ರ ಏಪ್ರಿಲ್ 10ರವರೆಗೆ ನಡೆಯಲಿದೆ.

ಒಟ್ಟು 365 ದಿನಗಳಲ್ಲಿ 119 ರಜಾ ದಿನಗಳನ್ನು ನಿಗದಿಪಡಿಸಲಾಗಿದ್ದು, 245 ದಿನಗಳನ್ನು ಕರ್ತವ್ಯದ ದಿನಗಳಾಗಿ ಪರಿಗಣಿಸಲಾಗಿದೆ. ಇದರಲ್ಲಿ ಪರೀಕ್ಷೆ ಮತ್ತು ಮೌಲ್ಯಾಂಕನ ಕಾರ್ಯಗಳಿಗೆ 26 ದಿನಗಳು, ಪಠ್ಯೇತರ ಚಟುವಟಿಕೆಗಳಿಗೆ 24 ದಿನಗಳು, ಮೌಲ್ಯಮಾಪನ ಹಾಗೂ ಫಲಿತಾಂಶ ವಿಶ್ಲೇಷಣೆಗೆ 10 ದಿನಗಳು ಮೀಸಲಾಗಿದೆ. ಸ್ಥಳೀಯ ರಜೆಗಳಿಗೆ 4 ದಿನಗಳನ್ನು ನಿಗದಿ ಮಾಡಲಾಗಿದೆ.

ಇದಲ್ಲದೆ, ಜೂನ್ ಮೊದಲ ವಾರದಲ್ಲೇ ವಿದ್ಯಾರ್ಥಿಗಳಿಗೆ ಸಮವಸ್ತ್ರ ಮತ್ತು ಪಠ್ಯಪುಸ್ತಕ ವಿತರಣೆ ಮಾಡಲು ಸೂಚನೆ ನೀಡಲಾಗಿದೆ. ಜೂನ್ 30ರೊಳಗೆ ದಾಖಲಾತಿ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಸೂಚಿಸಿದ್ದು, 6ರಿಂದ 18 ವರ್ಷದ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮರಳಿ ಶಾಲೆಗೆ ತರಲು ವಿಶೇಷ ದಾಖಲಾತಿ ಅಭಿಯಾನ ನಡೆಸಲು ಇಲಾಖೆಯು ಸೂಚಿಸಿದೆ.

ರಾಜ್ಯದ ಎಲ್ಲಾ ಶಾಲೆಗಳಲ್ಲಿ ಏಕರೂಪದ ಶೈಕ್ಷಣಿಕ ಚಟುವಟಿಕೆಗಳನ್ನು ಅನುಷ್ಠಾನಗೊಳಿಸುವ ಉದ್ದೇಶದಿಂದ ಈ ಕಾರ್ಯಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.

ಹೊಸಕೋಟೆಯಲ್ಲಿ ಬೆಳ್ಳಂಬೆಳಿಗ್ಗೆ ರಕ್ತಪಾತ: ಮನೆ ಮುಂದೆಯೇ ಮಚ್ಚಿನಿಂದ ಕೊಚ್ಚಿ ವ್ಯಕ್ತಿಯ ಹತ್ಯೆ!

0

ಹೊಸಕೋಟೆ: ತಾಲೂಕಿನ ಜಡಿಗೇನಹಳ್ಳಿ ಹೋಬಳಿಯ ದಬ್ಬಗುಂಠಹಳ್ಳಿ ಗ್ರಾಮದಲ್ಲಿ ಬೆಳ್ಳಂಬೆಳಿಗ್ಗೆ ನಡೆದ ಭೀಕರ ಕೊಲೆ ಪ್ರಕರಣ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

ಮುಂಜಾನೆ ಸುಮಾರು 4:30ರ ಸಮಯದಲ್ಲಿ ಮನೆ ಮುಂದೆಯೇ ವ್ಯಕ್ತಿಯೊಬ್ಬರನ್ನು ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಮೃತರನ್ನು 40 ವರ್ಷದ ಶಿವಶಂಕರ್ ಎಂದು ಗುರುತಿಸಲಾಗಿದೆ.

ಮಾಹಿತಿಯ ಪ್ರಕಾರ, ನಿದ್ದೆಯಲ್ಲಿದ್ದ ವೇಳೆ ಶಿವಶಂಕರ್‌ಗೆ ಕರೆ ಬಂದಿದ್ದು, ಅವರು ಮನೆ ಹೊರಗೆ ತೆರಳಿದ ಬಳಿಕ ಮತ್ತೆ ಹಿಂದಿರುಗಿಲ್ಲ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಬಳಿಕ ಅವರು ರಕ್ತದ ಮಡುವಿನಲ್ಲಿ ಬಿದ್ದಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಕೊಲೆಗೈದ ದುಷ್ಕರ್ಮಿಗಳು ಘಟನೆ ಬಳಿಕ ಸ್ಥಳದಿಂದ ಪರಾರಿಯಾಗಿದ್ದು, ಕೊಲೆಯ ನಿಖರ ಕಾರಣ ಇನ್ನೂ ಸ್ಪಷ್ಟವಾಗಿಲ್ಲ.

ಘಟನೆ ಕುರಿತು ಮಾಹಿತಿ ಪಡೆದ ಹೊಸಕೋಟೆ ಪೊಲೀಸರು ಹಾಗೂ SOCO ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ.

ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದ್ದು, ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

 

ಚಲಿಸುತ್ತಿದ್ದ ಕ್ಯಾಂಟರ್ ಟೈರ್ ಸ್ಫೋಟ! KSRTC ಬಸ್ ಡಿಕ್ಕಿಯಾಗಿ ಹಲವು ಪ್ರಯಾಣಿಕರಿಗೆ ಗಾಯ

ತುಮಕೂರು: ಇಂದು ಮಧ್ಯಾಹ್ನ ಸುಮಾರು 12 ಗಂಟೆ ಸುಮಾರಿಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಹಲವು ಪ್ರಯಾಣಿಕರು ಗಾಯಗೊಂಡಿದ್ದಾರೆ.

ದ್ವಾರಾಳು ಬ್ರಿಡ್ಜ್ ಸಮೀಪ ವೇಗವಾಗಿ ಸಾಗುತ್ತಿದ್ದ ಕ್ಯಾಂಟರ್ ವಾಹನದ ಟೈರ್ ಸ್ಫೋಟಗೊಂಡ ಪರಿಣಾಮ ಅದು ನಿಯಂತ್ರಣ ತಪ್ಪಿದೆ. ಇದೇ ವೇಳೆ ಅದರ ಹಿಂದಿನಿಂದ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಕ್ಯಾಂಟರ್‌ಗೆ ಡಿಕ್ಕಿ ಹೊಡೆದಿದೆ.

ಡಿಕ್ಕಿಯ ರಭಸಕ್ಕೆ ಬಸ್‌ನ ಮುಂಭಾಗ ಸಂಪೂರ್ಣ ಜಖಂಗೊಂಡಿದ್ದು, ಬಸ್‌ನಲ್ಲಿದ್ದ ಹಲವು ಪ್ರಯಾಣಿಕರಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ತಕ್ಷಣವೇ ಶಿರಾ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಘಟನೆ ಕುರಿತು ಮಾಹಿತಿ ಪಡೆದ ತಾವರೆಕೆರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತದ ಕಾರಣದಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲಕಾಲ ಸಂಚಾರ ವ್ಯತ್ಯಯ ಉಂಟಾಗಿದೆ.

ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಅಣ್ಣನ ಕೊಲೆಗೆ ಪ್ರತೀಕಾರ: ಆರೋಪಿಗಳ ಮನೆ ಸುಟ್ಟು ಭಸ್ಮ!

ಯಾದಗಿರಿ: ಜಿಲ್ಲೆಯ ಸುರಪುರ ತಾಲೂಕಿನ ಮಾವಿನಮಟ್ಟಿ ಗ್ರಾಮದಲ್ಲಿ ಜಮೀನು ವಿವಾದದಿಂದ ಆರಂಭವಾದ ಜಗಳ ಕೊಲೆ ಮತ್ತು ಪ್ರತೀಕಾರದ ಹಿಂಸೆಗೆ ತಿರುಗಿ ಹತ್ತಾರು ಕುಟುಂಬಗಳನ್ನು ಸಂಕಷ್ಟಕ್ಕೆ ತಳ್ಳಿದೆ.

ಮಲ್ಲಪ್ಪ ಹಾಗೂ ಹನುಮಂತರಾಯನ ಕುಟುಂಬಗಳ ನಡುವೆ ಎರಡು ಎಕರೆ ಜಮೀನಿನ ದಾರಿ ವಿಚಾರವಾಗಿ ಕಳೆದ ನಾಲ್ಕು ವರ್ಷಗಳಿಂದ ವೈಷಮ್ಯ ಮುಂದುವರಿದಿತ್ತು. ಇದೇ ಹಳೆ ದ್ವೇಷದ ಹಿನ್ನೆಲೆ ಹನುಮಂತರಾಯನ ಕುಟುಂಬದವರು ಸೇರಿ 27 ವರ್ಷದ ಪರಮೇಶ್ವರನನ್ನು ತಲ್ವಾರ್ ಹಾಗೂ ದೊಣ್ಣೆಗಳಿಂದ ಹೊಡೆದು ಭೀಕರವಾಗಿ ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ. ಈ ವೇಳೆ ಅಣ್ಣನನ್ನು ರಕ್ಷಿಸಲು ಹೋಗಿದ್ದ ರೇವಣಸಿದ್ದನಿಗೂ ಗಂಭೀರ ಗಾಯಗಳಾಗಿವೆ.

ಘಟನೆ ಸಂಬಂಧ ಕೆಂಭಾವಿ ಪೊಲೀಸರು ತ್ವರಿತ ಕ್ರಮ ಕೈಗೊಂಡು ಪ್ರಮುಖ ಆರೋಪಿಗಳಾದ ಪರಮಣ್ಣ, ದೇವಿಂದ್ರಪ್ಪ, ಚನ್ನಪ್ಪ ಮತ್ತು ಮಹದೇವಪ್ಪರನ್ನು ಬಂಧಿಸಿದ್ದಾರೆ.

ಇದೇ ವೇಳೆ ಅಣ್ಣನ ಸಾವಿನಿಂದ ಆಕ್ರೋಶಗೊಂಡ ರೇವಣಸಿದ್ದ, ಆರೋಪಿಗಳ ಕುಟುಂಬ ಊರು ಬಿಟ್ಟಿದ್ದ ಸಂದರ್ಭವನ್ನು ಬಳಸಿಕೊಂಡು ಅವರ ಮನೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಈ ಅಗ್ನಿಕಾಂಡದಲ್ಲಿ ಧಾನ್ಯ, ಬಟ್ಟೆ ಸೇರಿದಂತೆ ಸುಮಾರು 10 ಲಕ್ಷ ರೂಪಾಯಿಗೂ ಅಧಿಕ ಮೌಲ್ಯದ ವಸ್ತುಗಳು ಭಸ್ಮವಾಗಿವೆ.

ಮನೆಗೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ ರೇವಣಸಿದ್ದನನ್ನೂ ಪೊಲೀಸರು ಬಂಧಿಸಿದ್ದು, ಒಂದು ಕುಟುಂಬದ ದುಃಖ ಇನ್ನಷ್ಟು ಗಂಭೀರವಾಗುವಂತಾಗಿದೆ.

 

ಬೆಂಗಳೂರಿನ ಕ್ರಿಕೆಟ್ ಪ್ರೇಮಿಗಳ ಗಮನಕ್ಕೆ: ಈ ಎರಡು ದಿನ ನಮ್ಮ ಮೆಟ್ರೋ ಸೇವೆ ವಿಸ್ತರಣೆ!

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಏಪ್ರಿಲ್ 15, 18 ಹಾಗೂ 24ರಂದು ಐಪಿಎಲ್ ಪಂದ್ಯಗಳು ನಡೆಯಲಿವೆ. ಈ ಹಿನ್ನೆಲೆ ನಮ್ಮ ಮೆಟ್ರೋ ಸೇವೆಯಲ್ಲಿ ಬದಲಾವಣೆ ಮಾಡಲಾಗಿದೆ.

ಏಪ್ರಿಲ್ 15 ಮತ್ತು 24ರಂದು ಪಂದ್ಯಾವಳಿ ಹಿನ್ನೆಲೆ ಮೆಟ್ರೋ ಸೇವೆಯನ್ನು ರಾತ್ರಿ 2 ಗಂಟೆಯವರೆಗೆ ವಿಸ್ತರಿಸಲಾಗಿದೆ. ವೈಟ್‌ಫೀಲ್ಡ್ (ಕಾಡುಗೋಡಿ) ನಿಂದ ರಾತ್ರಿ 12:30ಕ್ಕೆ, ಚಲ್ಲಘಟ್ಟದಿಂದ ರಾತ್ರಿ 12:45ಕ್ಕೆ ರೈಲುಗಳು ಹೊರಡಲಿವೆ. ರೇಷ್ಮೆ ಸಂಸ್ಥೆ ಹಾಗೂ ಮಾದಾವರದಿಂದ ರಾತ್ರಿ 12:45ಕ್ಕೆ, ಬೊಮ್ಮಸಂದ್ರದಿಂದ ರಾತ್ರಿ 12:30ಕ್ಕೆ ಮತ್ತು ಆರ್.ವಿ ರಸ್ತೆದಿಂದ ರಾತ್ರಿ 2:00ಕ್ಕೆ ಕೊನೆಯ ರೈಲು ಸಂಚರಿಸಲಿದೆ.

ನಾಡಪ್ರಭು ಕೆಂಪೇಗೌಡ ನಿಲ್ದಾಣ (ಮಜೆಸ್ಟಿಕ್)ದಿಂದ ನಾಲ್ಕು ದಿಕ್ಕುಗಳಿಗೆ ಮಧ್ಯರಾತ್ರಿ 1:30ಕ್ಕೆ ಕೊನೆಯ ರೈಲು ಹೊರಡಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನೂ ಏಪ್ರಿಲ್ 18ರಂದು ನಡೆಯಲಿರುವ ಪಂದ್ಯದ ದಿನ ಯಾವುದೇ ಸಮಯ ವಿಸ್ತರಣೆ ಇರುವುದಿಲ್ಲ. ಮೆಟ್ರೋ ರೈಲುಗಳು ನಿಗದಿತ ವೇಳಾಪಟ್ಟಿಯಂತೆ ಸಂಚರಿಸಲಿವೆ ಎಂದು ಸ್ಪಷ್ಟಪಡಿಸಲಾಗಿದೆ.

ದಾವಣಗೆರೆ ಟಿಕೆಟ್ ವಿವಾದ: ಗೆಲ್ಲಿಸದಿದ್ದರೆ ರಾಜೀನಾಮೆ ನೀಡ್ತಿನಿ ಅಂದಿದ್ದು ನಿಜ – ಜಮೀರ್ ಸ್ಪಷ್ಟನೆ

ಬೆಂಗಳೂರು: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಟಿಕೆಟ್ ವಿಚಾರದಲ್ಲಿ ಉಂಟಾದ ಅಸಮಾಧಾನದ ಬಗ್ಗೆ ಸಚಿವ ಜಮೀರ್ ಅಹ್ಮದ್ ಖಾನ್ ಸ್ಪಷ್ಟನೆ ನೀಡಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದಾವಣಗೆರೆ ಟಿಕೆಟ್ ಸಂಬಂಧ ಕೆಪಿಸಿಸಿ ಸಭೆಯಲ್ಲಿ ತಾವು ಏಳು ಮುಸ್ಲಿಂ ನಾಯಕರ ಹೆಸರನ್ನು ನೀಡಿದ್ದಾಗಿ ಹೇಳಿದರು. “ಯಾರಿಗಾದರೂ ಟಿಕೆಟ್ ನೀಡಿ ಗೆಲ್ಲಿಸಿಕೊಂಡು ಬರದಿದ್ದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಡಿ.ಕೆ. ಶಿವಕುಮಾರ್ ಹಾಗೂ ರಣದೀಪ್ ಸಿಂಗ್ ಸುರ್ಜೇವಾಲಾ ಅವರ ಸಮ್ಮುಖದಲ್ಲೇ ಓಪನ್ ಆಗಿ ಹೇಳಿದ್ದೆ” ಎಂದು ತಿಳಿಸಿದರು.

ಅಬ್ದುಲ್ ಜಬ್ಬಾರ್‌ಗೆ ಟಿಕೆಟ್ ಕೇಳಿಲ್ಲ, ಏಕೆಂದರೆ ಅವರು ಎಂಎಲ್‌ಸಿ ಆಗಿದ್ದಾರೆ ಎಂಬುದು ತಿಳಿದ ಬಳಿಕ ಬೇರೆ ಮುಸ್ಲಿಂ ನಾಯಕರಲ್ಲಿ ಯಾರಿಗಾದರೂ ಟಿಕೆಟ್ ನೀಡುವಂತೆ ಕೇಳಿದ್ದೆ. ಟಿಕೆಟ್ ನೀಡದಿರುವುದರಿಂದ ಅಸಮಾಧಾನ ಇದ್ದದ್ದು ನಿಜ, ಆದರೆ ಬಳಿಕ ಎಲ್ಲವೂ ಸರಿಯಾಗಿದೆ ಎಂದು ಹೇಳಿದರು.

ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸ್ಥಾನಕ್ಕೆ ಅಬ್ದುಲ್ ಜಬ್ಬಾರ್ ರಾಜೀನಾಮೆ ನೀಡಿದ ವಿಚಾರಕ್ಕೆ ಪ್ರತಿಕ್ರಿಯಿಸಿ, ಆ ಸಂದರ್ಭ ತಾವು ಉಪಸ್ಥಿತರಿರಲಿಲ್ಲ ಎಂದರು. ನಜೀರ್ ಅಹ್ಮದ್ ಅವರನ್ನು ಹುದ್ದೆಯಿಂದ ಕೈಬಿಟ್ಟಿರುವ ಕುರಿತು ಕಾರಣ ತಿಳಿದಿಲ್ಲ ಎಂದು ಹೇಳಿದರು.

ದಾವಣಗೆರೆ ಹಾಗೂ ಬಾಗಲಕೋಟೆ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಉತ್ತಮ ಮುನ್ನಡೆಯೊಂದಿಗೆ ಗೆಲುವು ಸಾಧಿಸುವ ವಿಶ್ವಾಸ ವ್ಯಕ್ತಪಡಿಸಿದ ಜಮೀರ್, “ನಾನು ಸಾಮಾನ್ಯ ಕಾರ್ಯಕರ್ತ, ಜನ ಸೇವಕ ಮಾತ್ರ” ಎಂದು ಹೇಳಿದರು.

ಇದೇ ವೇಳೆ, ಕಾಂಗ್ರೆಸ್ ಶಾಸಕರ ದೆಹಲಿ ಭೇಟಿ ಕುರಿತು ಪ್ರತಿಕ್ರಿಯಿಸಿದ ಅವರು, ಎಲ್ಲರಿಗೂ ಸಚಿವರಾಗುವ ಆಸೆ ಸಹಜ ಎಂದು ಹೇಳಿದರು.

ರಾಮನಗರ: ರೈಲು ಹಳಿಯಲ್ಲಿ ಗ್ಯಾಸ್ ಸಿಲಿಂಡರ್ ಪತ್ತೆ, ಕೆಲಕಾಲ ಆತಂಕ

ರಾಮನಗರ: ಜಿಲ್ಲೆಯ ಮದ್ದೂರು–ಚನ್ನಪಟ್ಟಣ ಮಾರ್ಗಮಧ್ಯೆಯ ಶೆಟ್ಟಿಹಳ್ಳಿ ರೈಲ್ವೆ ನಿಲ್ದಾಣ ಸಮೀಪ ರೈಲು ಹಳಿಯ ಮೇಲೆ ಗ್ಯಾಸ್ ಸಿಲಿಂಡರ್ ಪತ್ತೆಯಾಗಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣಗೊಂಡ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ನಿನ್ನೆ ಬೆಳಿಗ್ಗೆ ಈ ಘಟನೆ ನಡೆದಿದ್ದು, ಮೈಸೂರಿನಿಂದ ಬೆಂಗಳೂರಿಗೆ ಬರುತ್ತಿದ್ದ ಮಂಗಳಾ ಎಕ್ಸ್‌ಪ್ರೆಸ್ ರೈಲಿನ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ಹಳಿಯ ಮೇಲೆ ಖಾಲಿ ಗ್ಯಾಸ್ ಸಿಲಿಂಡರ್, ಗ್ಯಾಸ್ ಸ್ಟವ್ ಹಾಗೂ ಬಟ್ಟೆ ತುಂಬಿದ್ದ ಪ್ಲಾಸ್ಟಿಕ್ ಚೀಲ ಕಂಡು ಬಂದ ಹಿನ್ನೆಲೆಯಲ್ಲಿ ಲೋಕೋಪೈಲೆಟ್ ರೈಲನ್ನು ನಿಲ್ಲಿಸಿ ಪರಿಶೀಲನೆ ನಡೆಸಿದ್ದಾರೆ.

ಪರಿಶೀಲನೆ ವೇಳೆ, ಮತ್ತೊಂದು ರೈಲಿನಲ್ಲಿ ಸಾಗಿಸುತ್ತಿದ್ದ ಸಿಲಿಂಡರ್ ಹಾಗೂ ಗ್ಯಾಸ್ ಸ್ಟವ್ ಇದ್ದ ಚೀಲ ಅಕಸ್ಮಾತ್ ಕೆಳಗೆ ಬಿದ್ದಿದ್ದು, ಅದರ ಹಿಂದೆ ಬಂದ ಮಂಗಳಾ ಎಕ್ಸ್‌ಪ್ರೆಸ್‌ಗೆ ಚೀಲ ಸಿಲುಕಿದ ಪರಿಣಾಮ ವಸ್ತುಗಳು ಹಳಿಯ ಮೇಲೆ ಚದರಿಕೊಂಡಿರುವುದು ತಿಳಿದುಬಂದಿದೆ.

ಘಟನೆ ತಿಳಿದು ಸ್ಥಳಕ್ಕೆ ರೈಲ್ವೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಇದು ಆಕಸ್ಮಿಕವಾಗಿ ಬಿದ್ದ ವಸ್ತುಗಳಾ ಅಥವಾ ಉದ್ದೇಶಪೂರ್ವಕವಾಗಿ ಇಡಲಾಗಿದೆಯಾ ಎಂಬುದರ ಕುರಿತು ತನಿಖೆ ಮುಂದುವರಿದಿದೆ.

ಸುಮಾರು ಅರ್ಧಗಂಟೆಗಳ ಬಳಿಕ ಮತ್ತೆ ರೈಲು ಸಂಚಾರ ಪುನರಾರಂಭಗೊಂಡಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.

ಕಿಸಾನ್ ವಿಕಾಸ್ ಪತ್ರ: ಹೂಡಿಕೆ ಮಾಡಿದ ಹಣ ಡಬಲ್ ಆಗುವ ಯೋಜನೆ

0

ಜನಪ್ರಿಯ ಪೋಸ್ಟ್ ಆಫೀಸ್ ಯೋಜನೆಗಳಲ್ಲಿ ಒಂದಾದ ಕಿಸಾನ್ ವಿಕಾಸ್ ಪತ್ರ ಹೂಡಿಕೆದಾರರಿಗೆ ಭದ್ರತೆ ಹಾಗೂ ನಿಶ್ಚಿತ ಲಾಭ ನೀಡುವ ಯೋಜನೆಯಾಗಿ ಗುರುತಿಸಿಕೊಂಡಿದೆ.

ಈ ಯೋಜನೆಯನ್ನು ಮೂಲತಃ 1988ರಲ್ಲಿ ರೈತರಿಗಾಗಿ ಆರಂಭಿಸಲಾಗಿದ್ದರೂ, ಇದೀಗ ಎಲ್ಲಾ ಭಾರತೀಯ ನಾಗರಿಕರಿಗೆ ಲಭ್ಯವಿದೆ. 10 ವರ್ಷ ಮೇಲ್ಪಟ್ಟವರು ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದಾಗಿದ್ದು, ಅಪ್ರಾಪ್ತರ ಹೆಸರಿನಲ್ಲಿ ಹಿರಿಯರು ಖಾತೆ ತೆರೆದು ನಂತರ ವರ್ಗಾವಣೆ ಮಾಡುವ ಅವಕಾಶವೂ ಇದೆ.

ಕಿಸಾನ್ ವಿಕಾಸ್ ಪತ್ರ ಯೋಜನೆಯ ಅವಧಿ 115 ತಿಂಗಳುಗಳಾಗಿದ್ದು, ಅಂದರೆ ಸುಮಾರು 9 ವರ್ಷ 5 ತಿಂಗಳುಗಳ ದೀರ್ಘಾವಧಿಯ ಯೋಜನೆಯಾಗಿದೆ. ಕನಿಷ್ಠ ಹೂಡಿಕೆ 1,000 ರೂಪಾಯಿಯಿಂದ ಆರಂಭವಾಗುತ್ತಿದ್ದು, ಗರಿಷ್ಠ ಹೂಡಿಕೆಗೆ ಯಾವುದೇ ಮಿತಿ ಇಲ್ಲ. ಆದರೆ 10,000 ರೂಪಾಯಿಗಿಂತ ಹೆಚ್ಚಿನ ಹೂಡಿಕೆ ಮಾಡಿದರೆ ಅದರ ಆದಾಯ ಮೂಲವನ್ನು ತೋರಿಸುವುದು ಕಡ್ಡಾಯ.

ಈ ಯೋಜನೆಯ ಪ್ರಮುಖ ಆಕರ್ಷಣೆ ಎಂದರೆ ಹೂಡಿಕೆ ಮಾಡಿದ ಹಣವು ಮೆಚ್ಯೂರಿಟಿ ಅವಧಿಯಲ್ಲಿ ಎರಡು ಪಟ್ಟು ಆಗುವುದು. ಪ್ರಸ್ತುತ ವಾರ್ಷಿಕ ಬಡ್ಡಿದರ ಶೇ. 7.5 ರಷ್ಟಿದೆ. ಹೂಡಿಕೆ ಮಾಡುವವರು ಪೋಸ್ಟ್ ಆಫೀಸ್‌ಗಳಲ್ಲಿ ಅಥವಾ ಇಂಡಿಯಾ ಪೋಸ್ಟ್ ವೆಬ್‌ಸೈಟ್ ಮೂಲಕ ಈ ಯೋಜನೆಗೆ ಸೇರಬಹುದು.

ಆದರೆ, ಈ ಯೋಜನೆಗೆ ತೆರಿಗೆ ಸೌಲಭ್ಯ ಇರುವುದಿಲ್ಲ. ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80ಸಿ ಅಡಿಯಲ್ಲಿ ಕಡಿತ ಸಿಗುವುದಿಲ್ಲ. ಜೊತೆಗೆ ಬಡ್ಡಿ ಆದಾಯಕ್ಕೆ ತೆರಿಗೆ ಅನ್ವಯವಾಗುತ್ತಿದ್ದು, ಪ್ರತಿ ವರ್ಷ ಉತ್ಪತ್ತಿಯಾಗುವ ಬಡ್ಡಿಗೆ ಶೇ. 10ರಷ್ಟು ಟಿಡಿಎಸ್ ಕಡಿತಗೊಳ್ಳುತ್ತದೆ.

ಒಟ್ಟಿನಲ್ಲಿ, ಭದ್ರ ಮತ್ತು ನಿಶ್ಚಿತ ಲಾಭ ಬಯಸುವ ಹೂಡಿಕೆದಾರರಿಗೆ ಕಿಸಾನ್ ವಿಕಾಸ್ ಪತ್ರ ಯೋಜನೆ ಒಳ್ಳೆಯ ಆಯ್ಕೆಯಾಗಿದೆ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.

error: Content is protected !!