ಚಿಕ್ಕಮಗಳೂರು: ಮುಖ್ಯಮಂತ್ರಿ ಸ್ಥಾನ ಬದಲಾವಣೆ ಕುರಿತ ರಾಜಕೀಯ ಚರ್ಚೆಗಳ ನಡುವೆಯೇ ರಂಭಾಪುರಿ ಶ್ರೀಗಳು ಮಹತ್ವದ ಹೇಳಿಕೆ ನೀಡಿದ್ದಾರೆ. ಸಿದ್ದರಾಮಯ್ಯ ಅವರು ಸಿಎಂ ಸ್ಥಾನ ಬಿಟ್ಟುಕೊಡುವ ಮೂಲಕ ರಾಜಕೀಯ ಪ್ರೌಢಿಮೆ ತೋರಿದ್ದಾರೆ ಎಂದು ಅವರು ಶ್ಲಾಘಿಸಿದ್ದಾರೆ.
ಬಾಳೆಹೊನ್ನೂರಿನಲ್ಲಿ ಮಾತನಾಡಿದ ಶ್ರೀಗಳು, “2023ರಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿದ ಬಳಿಕ ಅನುಭವಿ ನಾಯಕನಾಗಿ ಸಿದ್ದರಾಮಯ್ಯ ಅವರಿಗೆ ಮೊದಲ ಅವಕಾಶ ನೀಡಲಾಗಿತ್ತು. ಎರಡೂವರೆ ವರ್ಷಗಳ ಬಳಿಕ ಅಧಿಕಾರ ಹಸ್ತಾಂತರದ ಮಾತು ಈಗ ಸಾಕಾರವಾಗುತ್ತಿದೆ” ಎಂದರು.
“ಡಿಕೆ ಶಿವಕುಮಾರ್ ಅವರು ಈ ಅವಧಿಯಲ್ಲಿ ತಾಳ್ಮೆ ಮತ್ತು ಸಹನೆಯನ್ನು ಕಳೆದುಕೊಳ್ಳದೆ ಕಾಯುತ್ತಿದ್ದರು. ಸಿದ್ದರಾಮಯ್ಯ ಅವರು ಉದಾರ ಮನಸ್ಸಿನಿಂದ ಸ್ಥಾನ ಬಿಟ್ಟುಕೊಡುವ ಮೂಲಕ ಮುತ್ಸದ್ದಿತನ ತೋರಿದ್ದಾರೆ” ಎಂದು ಹೇಳಿದರು.
ರಾಜ್ಯದ ಮುಂದಿನ ಆಡಳಿತ ಕುರಿತು ಮಾತನಾಡಿದ ಅವರು, “ಡಿಕೆಶಿ ಮುಖ್ಯಮಂತ್ರಿ ಆಗಿ ಉತ್ತಮ ಆಡಳಿತ ನೀಡಲಿ. ಜಾತಿ-ಧರ್ಮದ ಸಂಘರ್ಷಗಳು ಹೆಚ್ಚಾಗಬಾರದು. ಎಲ್ಲಾ ಸಮುದಾಯದ ಜನರನ್ನೂ ಮೇಲೆತ್ತುವ ಕೆಲಸ ನಡೆಯಬೇಕು” ಎಂದು ಆಶಿಸಿದರು.
“ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲೂ ಜಾತಿ ಭಾವನೆ ಬೆಳೆಸುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಇದು ಬೇಸರದ ಸಂಗತಿ. ಸಮಾಜದಲ್ಲಿ ಸಮಾನತೆ ಮತ್ತು ಶಾಂತಿ ಉಳಿಯಬೇಕು” ಎಂದು ಶ್ರೀಗಳು ಕರೆ ನೀಡಿದರು.

