Home Blog

ನಾಲ್ಕು ಮತದಾರರ ಗುರುತಿನ ಚೀಟಿ ಪ್ರಕರಣ: ನಟ ಪ್ರಕಾಶ್ ರಾಜ್ʼಗೆ ಜಾಮೀನು ಮಂಜೂರು

ಬೆಂಗಳೂರು: ನಾಲ್ಕು ಮತದಾರರ ಗುರುತಿನ ಚೀಟಿ (ವೋಟರ್ ಐಡಿ) ಹೊಂದಿರುವ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ನಟ ಪ್ರಕಾಶ್ ರಾಜ್‌ಗೆ ಬಿಗ್ ರಿಲೀಫ್ ಸಿಕ್ಕಿದ್ದು, 48ನೇ ಎಸಿಜೆಎಂ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

ಪ್ರಕರಣಕ್ಕೆ ಸಂಬಂಧಿಸಿ ಈ ಹಿಂದೆ ನ್ಯಾಯಾಲಯ ಜಾಮೀನು ರಹಿತ ಬಂಧನ ವಾರಂಟ್ (NBW) ಜಾರಿಗೊಳಿಸಿದ್ದರಿಂದ ಪ್ರಕಾಶ್ ರಾಜ್ ಬಂಧನದ ಭೀತಿ ಎದುರಿಸುತ್ತಿದ್ದರು. ಇಂದು ಅವರ ಪರ ವಕೀಲರು ವಾರಂಟ್ ರದ್ದುಗೊಳಿಸುವಂತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಜೊತೆಗೆ ಪ್ರಕಾಶ್ ರಾಜ್ ಸ್ವತಃ ನ್ಯಾಯಾಲಯಕ್ಕೆ ಹಾಜರಾಗಿದ್ದರು.

ಮಧ್ಯಾಹ್ನ ವಿಚಾರಣೆ ನಡೆಸಿದ 48ನೇ ಎಸಿಜೆಎಂ ನ್ಯಾಯಾಲಯ, ₹4,000 ನಗದು ಶ್ಯೂರಿಟಿ ಸಲ್ಲಿಸುವ ಷರತ್ತಿನೊಂದಿಗೆ ಪ್ರಕಾಶ್ ರಾಜ್‌ಗೆ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದೆ.

ಏನಿದು ಪ್ರಕರಣ?

ಪ್ರಕಾಶ್ ರಾಜ್ ಹೆಸರಿನಲ್ಲಿ ಕರ್ನಾಟಕ, ತಮಿಳುನಾಡು ಹಾಗೂ ತೆಲಂಗಾಣ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಒಟ್ಟು ನಾಲ್ಕು ಮತದಾರರ ಗುರುತಿನ ಚೀಟಿಗಳಿವೆ ಎಂಬ ಆರೋಪ ಕೇಳಿಬಂದಿತ್ತು.

ಈ ಸಂಬಂಧ ವಕೀಲ ದಿಲೀಪ್ ಕುಮಾರ್ ಅವರು 2019ರಲ್ಲಿ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಬಳಿಕ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಪೊಲೀಸ್ ಆಯುಕ್ತರು ಹಾಗೂ ಕೇಂದ್ರ ಚುನಾವಣಾ ಆಯೋಗಕ್ಕೂ ದೂರು ಸಲ್ಲಿಸಲಾಗಿತ್ತು.

ಅಲ್ಲಿಯೂ ಕ್ರಮವಾಗದ ಕಾರಣ ನ್ಯಾಯಾಲಯದ ಮೊರೆ ಹೋಗಲಾಗಿತ್ತು. ಪ್ರಕರಣದ ವಿಚಾರಣೆಗೆ ನ್ಯಾಯಾಲಯ ಪ್ರಕಾಶ್ ರಾಜ್ ಅವರಿಗೆ ಸಮನ್ಸ್ ಜಾರಿ ಮಾಡಿತ್ತು. ಆದರೆ ಸಮನ್ಸ್‌ಗೆ ಸ್ಪಂದಿಸದೇ ನ್ಯಾಯಾಲಯಕ್ಕೆ ಹಾಜರಾಗದ ಕಾರಣ ಅವರ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್ ಹೊರಡಿಸಲಾಗಿತ್ತು.

ಈಗ ವಾರಂಟ್ ರದ್ದುಗೊಳಿಸುವ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, ಪ್ರಕಾಶ್ ರಾಜ್‌ಗೆ ಜಾಮೀನು ಮಂಜೂರು ಮಾಡಿ ಮುಂದಿನ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ.

ಸೋನಿಯಾ ಬಗ್ಗೆ ಮಾತನಾಡುವ ಮೊದಲು ಯಡಿಯೂರಪ್ಪ ಇತಿಹಾಸ ನೆನಪಿಸಿಕೊಳ್ಳಿ: ವಿಜಯೇಂದ್ರ ವಿರುದ್ಧ ಬಿ.ಕೆ. ಹರಿಪ್ರಸಾದ್ ವಾಗ್ದಾಳಿ

ಬೆಂಗಳೂರು: ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮಾಡಿರುವ ಟೀಕೆಗಳಿಗೆ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಸೋನಿಯಾ ಗಾಂಧಿ ವಿರುದ್ಧ ಯಾವುದೇ ಪ್ರಕರಣಗಳಿಲ್ಲವೇ ಎಂದು ಪ್ರಶ್ನಿಸುವ ಮೊದಲು, ಚೆಕ್ ಮೂಲಕ ಲಂಚ ಪಡೆದ ಪ್ರಕರಣದಲ್ಲಿ ಜೈಲು ಸೇರಿದ್ದ ಬಿ.ಎಸ್. ಯಡಿಯೂರಪ್ಪ ಅವರ ಇತಿಹಾಸವನ್ನು ನೆನಪಿಸಿಕೊಳ್ಳಬೇಕು” ಎಂದು ವಾಗ್ದಾಳಿ ನಡೆಸಿದರು.

ವಿಜಯೇಂದ್ರ ಅವರನ್ನು ಉಲ್ಲೇಖಿಸಿ, “ಬೇಬಿ ಯಡಿಯೂರಪ್ಪ” ಎಂದು ವ್ಯಂಗ್ಯವಾಡಿದ ಹರಿಪ್ರಸಾದ್, “ತಮ್ಮ ನಾಯಕರ ಮೇಲಿರುವ ಆರೋಪಗಳಿಗೆ ಮೊದಲು ಉತ್ತರ ನೀಡಿದ್ದರೆ ಉತ್ತಮವಾಗುತ್ತಿತ್ತು” ಎಂದು ಟೀಕಿಸಿದರು.

ರಾಷ್ಟ್ರೀಯ ಹೆರಾಲ್ಡ್ ಪ್ರಕರಣದ ಕುರಿತು ಮಾತನಾಡಿದ ಅವರು, “ಈ ಪ್ರಕರಣ ಕಳೆದ ಹತ್ತು ವರ್ಷಗಳಿಂದ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದೆ. ನ್ಯಾಷನಲ್ ಹೆರಾಲ್ಡ್ ಕಂಪನಿ ಕಾಯ್ದೆಯ ಪ್ರಕಾರ ಇದರಲ್ಲಿ ಹಣವನ್ನು ತೆಗೆದುಕೊಳ್ಳುವ ಅಥವಾ ನೀಡುವ ಪ್ರಶ್ನೆಯೇ ಇಲ್ಲ” ಎಂದು ಹೇಳಿದರು.

ಕೇಂದ್ರ ಸರ್ಕಾರದ ಬಳಿ ಎಲ್ಲಾ ತನಿಖಾ ಸಂಸ್ಥೆಗಳಿರುವುದನ್ನು ಉಲ್ಲೇಖಿಸಿದ ಅವರು, “ಯಾವುದೇ ಅವ್ಯವಹಾರ ನಡೆದಿರುವುದು ಸಾಬೀತಾಗಿದ್ದರೆ, ಅದನ್ನು ನ್ಯಾಯಾಲಯದ ಮುಂದೆ ಸಾಬೀತುಪಡಿಸಲಿ” ಎಂದು ಬಿಜೆಪಿ ಹಾಗೂ ಕೇಂದ್ರ ಸರ್ಕಾರಕ್ಕೆ ಸವಾಲು ಹಾಕಿದರು.

ರಾಜ್‌ಪಾಲ್ ಯಾದವ್‌ಗೆ ಹೈಕೋರ್ಟ್‌ನಿಂದ ಭಾರೀ ಆಘಾತ: ಜೈಲು ಶಿಕ್ಷೆ ಎತ್ತಿಹಿಡಿದ ಕೋರ್ಟ್

ನವದೆಹಲಿ: ಚೆಕ್‌ ಬೌನ್ಸ್ ಪ್ರಕರಣಗಳಲ್ಲಿ ಸಿಲುಕಿರುವ ಬಾಲಿವುಡ್ ನಟ ರಾಜ್‌ಪಾಲ್ ಯಾದವ್‌ಗೆ ದೆಹಲಿ ಹೈಕೋರ್ಟ್ ಭಾರೀ ಆಘಾತ ನೀಡಿದೆ. ಕೆಳ ನ್ಯಾಯಾಲಯ ವಿಧಿಸಿದ್ದ ಶಿಕ್ಷೆಯನ್ನು ಎತ್ತಿಹಿಡಿದಿರುವ ಹೈಕೋರ್ಟ್, 7 ಪ್ರಕರಣಗಳಲ್ಲಿ ತಲಾ ಮೂರು ತಿಂಗಳ ಸಾದಾ ಜೈಲು ಶಿಕ್ಷೆಯನ್ನು ಕಾಯಂ ಮಾಡಿದೆ. ಎಲ್ಲಾ ಶಿಕ್ಷೆಗಳು ಏಕಕಾಲದಲ್ಲಿ ಜಾರಿಯಾಗಲಿದ್ದು, ಪ್ರತಿ ಪ್ರಕರಣದಲ್ಲೂ ದೂರುದಾರರಿಗೆ ತಲಾ 1.05 ಕೋಟಿ ರೂಪಾಯಿ ಪಾವತಿಸುವಂತೆ ನಟನಿಗೆ ಆದೇಶಿಸಲಾಗಿದೆ.

ಪ್ರಕರಣದಲ್ಲಿ ರಾಜ್‌ಪಾಲ್ ಯಾದವ್ ಅವರ ಪತ್ನಿ ರಾಧಾ ಯಾದವ್ ಅವರಿಗೂ ಭಾರೀ ಆರ್ಥಿಕ ಹೊರೆ ಬಿದ್ದಿದೆ. ಪ್ರತಿ ಪ್ರಕರಣಕ್ಕೂ ತಲಾ 5.51 ಕೋಟಿ ರೂಪಾಯಿ ಪರಿಹಾರ ಪಾವತಿಸಲು ಹೈಕೋರ್ಟ್ ನಿರ್ದೇಶನ ನೀಡಿದ್ದು, ಈ ಹಿಂದೆ ಪಾವತಿಸಿದ್ದ 2.25 ಕೋಟಿ ರೂಪಾಯಿಯನ್ನು ಬಾಕಿ ಮೊತ್ತದಲ್ಲಿ ಸರಿಹೊಂದಿಸಲಾಗುವುದು ಎಂದು ತಿಳಿಸಿದೆ.

ವಿಚಾರಣೆ ವೇಳೆ ಸಂಧಾನದ ಮೂಲಕ ಬಾಕಿ ಹಣ ಪಾವತಿಸುವುದಾಗಿ ರಾಜ್‌ಪಾಲ್ ಯಾದವ್ ಹಲವು ಬಾರಿ ನ್ಯಾಯಾಲಯಕ್ಕೆ ಭರವಸೆ ನೀಡಿದ್ದರು. ಆದರೆ, ನೀಡಿದ್ದ ಮಾತನ್ನು ಉಳಿಸಿಕೊಳ್ಳಲು ವಿಫಲರಾದ ಹಿನ್ನೆಲೆಯಲ್ಲಿ ನ್ಯಾಯಾಲಯ ಕಠಿಣ ನಿಲುವು ತಾಳಿತು. ಅಂತಿಮ ಹಂತದಲ್ಲಿ ದೂರುದಾರ ಸಂಸ್ಥೆ ಮೆಸರ್ಸ್ ಮುರಳಿ ಪ್ರಾಜೆಕ್ಟ್ಸ್ ಪ್ರೈವೇಟ್ ಲಿಮಿಟೆಡ್ಗೆ ಇನ್ನು ಯಾವುದೇ ಹಣ ಪಾವತಿಸಲು ಸಾಧ್ಯವಿಲ್ಲ, ತಾವು ಜೈಲು ಶಿಕ್ಷೆ ಅನುಭವಿಸಲು ಸಿದ್ಧ ಎಂದು ಅವರು ತಿಳಿಸಿದ್ದಾಗಿ ದಾಖಲಾಗಿದೆ.

ಆದಾಗ್ಯೂ, ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ಎರಡು ತಿಂಗಳ ಕಾಲಾವಕಾಶ ನೀಡಲಾಗಿದೆ. ಈ ಅವಧಿಯಲ್ಲಿ ಶಿಕ್ಷೆ ಜಾರಿಗೆ ತಡೆ ಮುಂದುವರಿಯಲಿದೆ.

ವಿಚಾರಣೆ ವೇಳೆ ನ್ಯಾಯಾಲಯ, “ಯಾವುದೇ ವ್ಯಕ್ತಿ ಸಿನಿಮಾ ಕ್ಷೇತ್ರದವರಾಗಿದ್ದಾರೆ ಎಂಬ ಕಾರಣಕ್ಕೆ ವಿಶೇಷ ಸೌಲಭ್ಯ ನೀಡಲು ಸಾಧ್ಯವಿಲ್ಲ. ಕಾನೂನಿನ ಮುಂದೆ ಎಲ್ಲರೂ ಸಮಾನರು” ಎಂದು ಕಠಿಣ ಅಭಿಪ್ರಾಯ ವ್ಯಕ್ತಪಡಿಸಿದೆ.

ರಾಮಮಂದಿರ ದೇಣಿಗೆ ಎಣಿಕೆಗೆ ಕಠಿಣ ನಿಯಮ; ಸಾಮೂಹಿಕ ರಾಜೀನಾಮೆ ನೀಡಿದ 23 ಸಿಬ್ಬಂದಿ

0

ಅಯೋಧ್ಯೆ: ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಜಾರಿಗೊಳಿಸಿರುವ ಕಠಿಣ ಸುರಕ್ಷತಾ ನಿಯಮಗಳಿಗೆ ಅಸಮಾಧಾನ ವ್ಯಕ್ತಪಡಿಸಿ, ದೇಣಿಗೆ ಎಣಿಕೆ ಕಾರ್ಯದಲ್ಲಿ ನಿಯೋಜಿತರಾಗಿದ್ದ 23 ಬ್ಯಾಂಕ್ ಸಿಬ್ಬಂದಿ ಸಾಮೂಹಿಕವಾಗಿ ರಾಜೀನಾಮೆ ನೀಡಿದ್ದಾರೆ.

ಅಯೋಧ್ಯೆಯ ರಾಮಮಂದಿರಕ್ಕೆ ದೇಶ-ವಿದೇಶಗಳಿಂದ ಪ್ರತಿದಿನ ಭಾರೀ ಪ್ರಮಾಣದಲ್ಲಿ ನಗದು ಹಾಗೂ ಚಿನ್ನಾಭರಣಗಳ ರೂಪದಲ್ಲಿ ಕಾಣಿಕೆ ಹರಿದುಬರುತ್ತಿದೆ. ದೇಣಿಗೆ ಎಣಿಕೆ ಪ್ರಕ್ರಿಯೆಯಲ್ಲಿ ಸಂಪೂರ್ಣ ಪಾರದರ್ಶಕತೆ ಮತ್ತು ಭದ್ರತೆ ಕಾಪಾಡುವ ಉದ್ದೇಶದಿಂದ ಟ್ರಸ್ಟ್ ಇತ್ತೀಚೆಗೆ ಹಲವು ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತಂದಿದೆ.

ಹೊಸ ನಿಯಮದ ಪ್ರಕಾರ, ಕಾಣಿಕೆ ಎಣಿಕೆ ಕಾರ್ಯದಲ್ಲಿ ತೊಡಗುವ ಸಿಬ್ಬಂದಿ ಯಾವುದೇ ಜೇಬುಗಳಿರುವ ಉಡುಪು ಧರಿಸುವಂತಿಲ್ಲ. ಜೇಬಿಲ್ಲದ ಬಟ್ಟೆ ಧರಿಸಿ ಮಾತ್ರ ಎಣಿಕೆ ಕೊಠಡಿಗೆ ಪ್ರವೇಶಿಸಲು ಅವಕಾಶ ನೀಡಲಾಗುತ್ತಿದೆ.

ಇದರ ಜೊತೆಗೆ, ಎಣಿಕೆ ಕೊಠಡಿಗೆ ಪ್ರವೇಶಿಸುವ ಮೊದಲು ಮತ್ತು ಹೊರಬರುವ ವೇಳೆ ಸಿಬ್ಬಂದಿಗೆ ಪೊಲೀಸರು ಸಂಪೂರ್ಣ ತಪಾಸಣೆ ನಡೆಸುತ್ತಿದ್ದಾರೆ. ಬೆಲ್ಟ್, ಪರ್ಸ್ ಸೇರಿದಂತೆ ಯಾವುದೇ ವೈಯಕ್ತಿಕ ವಸ್ತುಗಳನ್ನು ಒಳಗೆ ತೆಗೆದುಕೊಂಡು ಹೋಗಲು ಅವಕಾಶವಿಲ್ಲ. ಸಂಪೂರ್ಣ ಎಣಿಕೆ ಪ್ರಕ್ರಿಯೆ ಹೈಟೆಕ್ ಸಿಸಿಟಿವಿ ಕ್ಯಾಮೆರಾಗಳ ನಿಗಾದಲ್ಲೇ ನಡೆಯುತ್ತಿದೆ.

ರಾಮಮಂದಿರದ ದೇಣಿಗೆ ಎಣಿಕೆ ಕಾರ್ಯಕ್ಕೆ ವಿವಿಧ ಬ್ಯಾಂಕುಗಳ, ವಿಶೇಷವಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಆದರೆ ಹೊಸ ನಿಯಮಗಳು ಮತ್ತು ತಪಾಸಣಾ ಕ್ರಮಗಳು ತಮ್ಮ ಪ್ರಾಮಾಣಿಕತೆಯನ್ನೇ ಪ್ರಶ್ನಿಸುವಂತಿವೆ ಎಂದು ಸಿಬ್ಬಂದಿ ಆರೋಪಿಸಿದ್ದಾರೆ.

ಇದಲ್ಲದೆ, ಹಿಂದೆ ಎರಡು ಪಾಳಿಗಳಲ್ಲಿ ನಡೆಯುತ್ತಿದ್ದ ಕೆಲಸವನ್ನು ಈಗ ಒಂದೇ ಪಾಳಿಗೆ ಸೀಮಿತಗೊಳಿಸಲಾಗಿದೆ. ಕರ್ತವ್ಯದ ಅವಧಿಯನ್ನು ಆರು ಗಂಟೆಯಿಂದ ಒಂಬತ್ತು ಗಂಟೆಗೆ ಹೆಚ್ಚಿಸಲಾಗಿದೆ. ವೇತನದಲ್ಲಿ ಕಡಿತ, ಒಂದೇ ಕೆಲಸಕ್ಕೆ ಬೇರೆಬೇರೆ ಸಂಬಳ ಹಾಗೂ ಮಾಸಿಕ ರಜೆಗಳ ಸಂಖ್ಯೆಯಲ್ಲೂ ಕಡಿತ ಮಾಡಲಾಗಿದೆ ಎಂದು ಸಿಬ್ಬಂದಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮಂದಿರಕ್ಕೆ ಪ್ರತಿದಿನ ಲಕ್ಷಾಂತರ ರೂಪಾಯಿ ಕಾಣಿಕೆ ಬರುತ್ತಿರುವ ಹಿನ್ನೆಲೆಯಲ್ಲಿ ಯಾವುದೇ ರೀತಿಯ ಭ್ರಷ್ಟಾಚಾರ ಅಥವಾ ಹಣದ ದುರುಪಯೋಗಕ್ಕೆ ಅವಕಾಶ ನೀಡಬಾರದು ಎಂಬ ಉದ್ದೇಶದಿಂದಲೇ ಈ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೆ ತಂದಿದ್ದೇವೆ ಎಂದು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಸ್ಪಷ್ಟಪಡಿಸಿದೆ.

ಈ ಹಿಂದೆ ದೇಣಿಗೆ ದುರುಪಯೋಗದ ಕುರಿತು ವದಂತಿಗಳು ಹರಿದಾಡಿದ್ದ ಕಾರಣ ಭದ್ರತಾ ಕ್ರಮಗಳನ್ನು ಮತ್ತಷ್ಟು ಬಲಪಡಿಸಲಾಗಿದೆ ಎಂದು ಟ್ರಸ್ಟ್ ತಿಳಿಸಿದೆ.

ರಾಜೀನಾಮೆ ನೀಡಿರುವ ಸಿಬ್ಬಂದಿಯ ಸ್ಥಾನಕ್ಕೆ ಪರ್ಯಾಯ ವ್ಯವಸ್ಥೆ ಮಾಡಲಾಗುತ್ತಿದ್ದು, ದೇಣಿಗೆ ಎಣಿಕೆ ಕಾರ್ಯ ಎಂದಿನಂತೆ ಮುಂದುವರಿದಿದೆ.

ಭವಿಷ್ಯದಲ್ಲಿ ಮಾನವ ಹಸ್ತಕ್ಷೇಪವನ್ನು ಕಡಿಮೆಗೊಳಿಸುವ ಉದ್ದೇಶದಿಂದ ಕೈಯಿಂದ ಹಣ ಎಣಿಸುವ ಪದ್ಧತಿಯನ್ನು ಹಂತ ಹಂತವಾಗಿ ಸ್ಥಗಿತಗೊಳಿಸಿ, ಅತ್ಯಾಧುನಿಕ ನೋಟು ಎಣಿಕೆ ಯಂತ್ರಗಳು ಹಾಗೂ ಸ್ವಯಂಚಾಲಿತ ತಂತ್ರಜ್ಞಾನವನ್ನು ಅಳವಡಿಸಲು ಟ್ರಸ್ಟ್ ಯೋಜನೆ ರೂಪಿಸಿದೆ.

ಆರ್ಯನ್ ಖಾನ್‌ಗೆ ಅಭಿಮಾನಿಗಳ ಮುತ್ತಿಗೆ: ನೂಕುನುಗ್ಗಲಿನ ವಿಡಿಯೋ ವೈರಲ್

ರಾಘವ್ ಜುಯಲ್ ಜನ್ಮದಿನದ ಪಾರ್ಟಿಯಲ್ಲಿ ಭಾಗವಹಿಸಿದ್ದ ಆರ್ಯನ್ ಖಾನ್ ಭಾರೀ ಜನದಟ್ಟಣೆಯಲ್ಲಿ ಸಿಲುಕಿ ಒದ್ದಾಡಿದ ವಿಡಿಯೋಗಳು ವೈರಲ್ ಆಗಿವೆ. ನೂಕುನುಗ್ಗಲಿನ ವೇಳೆ ಒಬ್ಬ ವ್ಯಕ್ತಿ ಅವರ ಕಾಲಿಗೆ ಬಿದ್ದಿದ್ದು, ಭದ್ರತಾ ಸಿಬ್ಬಂದಿ ತಕ್ಷಣವೇ ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ.

ಪಾರ್ಟಿಯಿಂದ ಹೊರಬರುತ್ತಿದ್ದ ವೇಳೆ ಅಭಿಮಾನಿಗಳು ಮತ್ತು ಛಾಯಾಗ್ರಾಹಕರ ದಟ್ಟಣೆಯಿಂದ ಗೊಂದಲ ಉಂಟಾಗಿತ್ತು. ಇದೇ ವೇಳೆ ಒಬ್ಬ ವ್ಯಕ್ತಿ ಆರ್ಯನ್ ಕಾಲಿಗೆ ಬಿದ್ದಿದ್ದು, ಸೆಕ್ಯೂರಿಟಿ ಸಿಬ್ಬಂದಿ ಅವರನ್ನು ಸುರಕ್ಷಿತವಾಗಿ ಕಾರಿನವರೆಗೆ ಕರೆದೊಯ್ದಿದ್ದಾರೆ.

ಮತ್ತೊಂದು ವೈರಲ್ ವಿಡಿಯೋದಲ್ಲಿ ಜನರಿಂದ ತುಂಬಿದ್ದ ಲಿಫ್ಟ್‌ನಲ್ಲಿ ಆರ್ಯನ್ ಖಾನ್ ಜಾಗದ ಕೊರತೆಯಿಂದ ಕೆಳಗೆ ಕುಳಿತುಕೊಂಡಿರುವುದು ಕಂಡುಬಂದಿದೆ. ಈ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿವೆ.

ಆರ್ಯನ್ ನಿರ್ದೇಶನದ ‘ಬ್ಯಾಡ್ಸ್ ಆಫ್ ಬಾಲಿವುಡ್’ ವೆಬ್ ಸರಣಿಯಲ್ಲಿ ರಾಘವ್ ಜುಯಲ್ ನಟಿಸಿರುವ ಹಿನ್ನೆಲೆ ಅವರು ಪಾರ್ಟಿಯಲ್ಲಿ ಭಾಗವಹಿಸಿದ್ದರು. ಇದೇ ವೇಳೆ ಶೆಹನಾಜ್ ಗಿಲ್ ಮತ್ತು ರಾಘವ್ ಜುಯಲ್ ಒಂದೇ ಕಾರಿನಲ್ಲಿ ತೆರಳಿರುವುದು ಡೇಟಿಂಗ್ ವದಂತಿಗಳಿಗೆ ಮತ್ತೆ ಇಂಬು ನೀಡಿದೆ.

8 ವರ್ಷದ ಬಾಲಕಿಯ ಫೋಟೋ ಹಂಚಿಕೆ ಆರೋಪ: ನಟ ವಿನಾಯಗನ್ ವಿರುದ್ಧ ಮತ್ತೊಂದು ಪ್ರಕರಣ

ಫೇಸ್‌ಬುಕ್‌ನಲ್ಲಿ ಎಂಟು ವರ್ಷದ ಬಾಲಕಿಯ ಫೋಟೋ ಹಂಚಿಕೊಂಡ ಆರೋಪದಡಿ ಮಲಯಾಳಂ ನಟ ವಿನಾಯಗನ್ ವಿರುದ್ಧ ಕೇರಳ ಪೊಲೀಸರು ಮತ್ತೊಂದು ಪ್ರಕರಣ ದಾಖಲಿಸಿದ್ದಾರೆ. ಮಕ್ಕಳ ಹಕ್ಕುಗಳ ಆಯೋಗದ ಸೂಚನೆಯ ಬಳಿಕ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ವಿನಾಯಗನ್ ಅವರಿಗೆ ಕಳುಹಿಸಲಾಗಿದ್ದ ವಾಟ್ಸ್ಆ್ಯಪ್ ಸಂದೇಶದ ಸ್ಕ್ರೀನ್‌ಶಾಟ್ ಅನ್ನು ಅವರು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದರು. ಅದರಲ್ಲಿ ದೂರುದಾರರ ವಾಟ್ಸ್ಆ್ಯಪ್ ಪ್ರೊಫೈಲ್ ಫೋಟೋ ಹಾಗೂ ಮೊಬೈಲ್ ಸಂಖ್ಯೆ ಕೂಡ ಕಾಣಿಸಿಕೊಂಡಿದ್ದು, ಪ್ರೊಫೈಲ್ ಚಿತ್ರದಲ್ಲಿ ಎಂಟು ವರ್ಷದ ಬಾಲಕಿಯ ಫೋಟೋ ಇತ್ತು ಎಂದು ಆರೋಪಿಸಲಾಗಿದೆ.

ಪೋಸ್ಟ್ ವೈರಲ್ ಆದ ನಂತರ ಹಲವರು ದೂರುದಾರರ ಕುಟುಂಬದ ವಿರುದ್ಧ ಅವಹೇಳನಕಾರಿ ಕಾಮೆಂಟ್‌ಗಳನ್ನು ಮಾಡಿದ್ದು, ಮೊಬೈಲ್ ಸಂಖ್ಯೆಗೆ ಕರೆ ಮಾಡಿ ನಿಂದಿಸಿದ್ದಾರೆ ಎನ್ನಲಾಗಿದೆ. ಇದರಿಂದ ಬಾಲಕಿಯ ತಂದೆ ಮಕ್ಕಳ ಹಕ್ಕುಗಳ ಆಯೋಗದ ಮೊರೆ ಹೋಗಿದ್ದರು.

ಆಯೋಗದ ನಿರ್ದೇಶನದ ಮೇರೆಗೆ ಮಾವೇಲಿಕ್ಕರ ಪೊಲೀಸರು ಪ್ರಕರಣ ದಾಖಲಿಸಿದ್ದು, ಶೀಘ್ರದಲ್ಲೇ ನಟ ವಿನಾಯಗನ್ ಅವರಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆಗೆ ಕರೆಯಲಾಗುವುದು ಎಂದು ತಿಳಿಸಿದ್ದಾರೆ. ಇದು ವಿನಾಯಗನ್ ವಿರುದ್ಧ ದಾಖಲಾಗಿರುವ ಮೊದಲ ಪ್ರಕರಣವಲ್ಲ; ಈ ಹಿಂದೆ ಸಹ ಅವರು ಹಲವು ವಿವಾದಗಳಲ್ಲಿ ಸಿಲುಕಿ ಬಂಧನಕ್ಕೊಳಗಾಗಿದ್ದರು.

ರೈಲು ಸಿಗಲಿಲ್ಲ ಎಂದು ಸರ್ಕಾರಿ ಬಸ್ ಕದ್ದ! 21 ಕಿ.ಮೀ ಓಡಿಸಿ ಟೋಲ್ ಬಳಿ ಸಿಕ್ಕಿಬಿದ್ದ ಚಾಲಕ

0

ತೆಲಂಗಾಣದ ಜನಗಾಂವ್ ಜಿಲ್ಲೆಯಲ್ಲಿ ರೈಲು ಸಿಗದ ಬೇಸರದಲ್ಲಿ ಮದ್ಯದ ಅಮಲಿನಲ್ಲಿದ್ದ ಟ್ರ್ಯಾಕ್ಟರ್ ಚಾಲಕನೊಬ್ಬ ಸರ್ಕಾರಿ ಆರ್ಟಿಸಿ ಬಸ್ ಕಳವು ಮಾಡಿ 21 ಕಿಲೋಮೀಟರ್ ಓಡಿಸಿದ ವಿಚಿತ್ರ ಘಟನೆ ನಡೆದಿದೆ. ಟೋಲ್ ಪ್ಲಾಜಾ ಬಳಿ ಬಸ್ ಅಪಘಾತಕ್ಕೀಡಾದ ಬಳಿಕ ಕಳ್ಳತನದ ಪ್ರಕರಣ ಬೆಳಕಿಗೆ ಬಂದಿದೆ.

ಪೊಲೀಸರ ಮಾಹಿತಿ ಪ್ರಕಾರ, ಜನಗಾಂವ್ ಜಿಲ್ಲೆಯ ಚೆನ್ನೂರು ಗ್ರಾಮದ ನಿವಾಸಿ ವೆಂಕಣ್ಣ ವೃತ್ತಿಯಲ್ಲಿ ಟ್ರ್ಯಾಕ್ಟರ್ ಚಾಲಕ. ತಿರುಪತಿಗೆ ತೆರಳುವ ಉದ್ದೇಶದಿಂದ ರೈಲು ನಿಲ್ದಾಣಕ್ಕೆ ಎರಡು ಬಾರಿ ಹೋದರೂ ರೈಲು ಸಿಗದ ಕಾರಣ ಆತ ನಿರಾಶನಾಗಿದ್ದ. ಬಳಿಕ ಮದ್ಯ ಸೇವಿಸಿದ ವೆಂಕಣ್ಣ ಜನಗಾಂವ್ ಬಸ್ ನಿಲ್ದಾಣಕ್ಕೆ ತೆರಳಿದ್ದು, ಅಲ್ಲಿ ಲಾಕ್ ಮಾಡದೇ ನಿಲ್ಲಿಸಲಾಗಿದ್ದ ಆರ್ಟಿಸಿ ಬಸ್ ಗಮನಕ್ಕೆ ಬಂದಿದೆ.

ಬಸ್‌ನಲ್ಲಿ ಕೀ ಇಲ್ಲದಿದ್ದರೂ ಟೂಲ್ ಬಾಕ್ಸ್ ಬಳಸಿ ಬಸ್ ಸ್ಟಾರ್ಟ್ ಮಾಡಿದ ವೆಂಕಣ್ಣ, ಮೊದಲು ಬಸ್ ನಿಲ್ದಾಣದ ಸುತ್ತ ಒಂದು ಸುತ್ತು ಹಾಕಿ ಬಳಿಕ ಸೂರ್ಯಪೇಟೆ ಹೆದ್ದಾರಿಯತ್ತ ಪ್ರಯಾಣ ಬೆಳೆಸಿದ್ದಾನೆ. ರಾತ್ರಿ ವೇಳೆ ಸುಮಾರು 21 ಕಿಲೋಮೀಟರ್‌ಗಳಷ್ಟು ದೂರ ಬಸ್ ಓಡಿಸಿದ್ದಾನೆ.

ಸಿಂಗರಾಜುಪಲ್ಲಿ ಟೋಲ್ ಪ್ಲಾಜಾ ಬಳಿ ಬಸ್ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ. ಬಳಿಕ ಬಸ್ ಅನ್ನು ರಿವರ್ಸ್ ಮಾಡುವ ಯತ್ನದಲ್ಲಿ ವೆಂಕಣ್ಣ ಅನುಮಾನಾಸ್ಪದವಾಗಿ ವರ್ತಿಸಿದ್ದರಿಂದ ಟೋಲ್ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಬಂದ ಪೊಲೀಸರು ವಿಚಾರಣೆ ನಡೆಸಿದಾಗ ಬಸ್ ಕಳವು ಮಾಡಿರುವುದು ಬೆಳಕಿಗೆ ಬಂದಿದೆ. ತನಿಖೆಯಲ್ಲಿ ಬಸ್ ಕದ್ದು ಮಾರಾಟ ಮಾಡುವ ಉದ್ದೇಶ ಇರಲಿಲ್ಲ; ಮದ್ಯದ ಅಮಲಿನಲ್ಲಿ ದೊಡ್ಡ ಬಸ್ ಓಡಿಸುವ ಆಸೆಯಿಂದಲೇ ಈ ಕೃತ್ಯ ಎಸಗಿದ್ದಾನೆ ಎಂದು ತಿಳಿದುಬಂದಿದೆ. ಪ್ರಕರಣ ದಾಖಲಿಸಿರುವ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ನಕಲಿ ನೋಟು ನೀಡಿ ಸಿಗರೇಟ್ ಖರೀದಿಸಿದ್ದ ಎಂಬಿಎ ಪದವೀಧರ ಪೊಲೀಸರ ಬಲೆಗೆ!

0

ಬೆಂಗಳೂರು: ನಕಲಿ ₹500 ನೋಟು ನೀಡಿ ಸಿಗರೇಟ್ ಖರೀದಿಸಿದ್ದ ಆರೋಪದಡಿ ಎಂಬಿಎ ಪದವೀಧರನೊಬ್ಬನನ್ನು ತುಮಕೂರಿನ ಹುಳಿಯಾರು ಹಾಗೂ ಬೆಂಗಳೂರಿನ ಮಾದನಾಯಕನಹಳ್ಳಿ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

ಬಂಧಿತನನ್ನು ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಮೂಲದ 41 ವರ್ಷದ ರುದ್ರೇಶ್ ಎಂದು ಗುರುತಿಸಲಾಗಿದೆ. ಈತನ ವಿರುದ್ಧ ಈ ಹಿಂದೆಯೂ ನಕಲಿ ನೋಟು ಮುದ್ರಿಸಿ ಚಲಾವಣೆ ಮಾಡಿದ ಆರೋಪದಡಿ ಪ್ರಕರಣ ದಾಖಲಾಗಿದ್ದು, 2024ರಲ್ಲಿ ದಾವಣಗೆರೆ ಪೊಲೀಸರು ಆತನನ್ನು ಸೇರಿ ಆರು ಮಂದಿಯನ್ನು ಬಂಧಿಸಿದ್ದರು.

ಜುಲೈ 2ರಂದು ಸ್ನೇಹಿತನೊಂದಿಗೆ ಕಾರಿನಲ್ಲಿ ಬಂದಿದ್ದ ರುದ್ರೇಶ್, ತುಮಕೂರು ಜಿಲ್ಲೆಯ ಹೊಸಹಳ್ಳಿ ಕೈಮಾರ ಸಮೀಪದ ಅಂಗಡಿಯೊಂದರಲ್ಲಿ ಸಿಗರೇಟ್ ಪ್ಯಾಕೆಟ್ ಖರೀದಿಸಿದ್ದ. ಪಾವತಿಗಾಗಿ ₹500 ನೋಟು ನೀಡಿದ್ದು, ಅಂಗಡಿ ಮಾಲಕಿ ಅಂಜನಾ ಶೆಟ್ಟಿ ಅವರು ₹370 ಚಿಲ್ಲರೆ ಹಣವನ್ನು ಹಿಂದಿರುಗಿಸಿದ್ದರು.

ಬಳಿಕ ನೋಟನ್ನು ಪರಿಶೀಲಿಸಿದಾಗ ಅದು ನಕಲಿ ಎಂಬುದು ತಿಳಿದುಬಂದಿದ್ದು, ಅವರು ಕೂಡಲೇ ಹುಳಿಯಾರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆರೋಪಿಗಳು ನೀಲಿ ಬಣ್ಣದ ಮಾರುತಿ ಆಲ್ಟೋ ಕಾರಿನಲ್ಲಿ ಬಂದಿದ್ದರು ಎಂಬ ಮಾಹಿತಿಯನ್ನೂ ಪೊಲೀಸರಿಗೆ ನೀಡಿದ್ದರು.

ದೂರಿನ ಆಧಾರದ ಮೇಲೆ ವಾಹನದ ಮಾಹಿತಿ ಹಾಗೂ ತಾಂತ್ರಿಕ ಕಣ್ಗಾವಲು ಮೂಲಕ ಪೊಲೀಸರು ಆರೋಪಿಯ ಚಲನವಲನವನ್ನು ಪತ್ತೆಹಚ್ಚಿದರು. ರುದ್ರೇಶ್ ಬೆಂಗಳೂರಿನ ಮಾದನಾಯಕನಹಳ್ಳಿ ವ್ಯಾಪ್ತಿಯಲ್ಲಿರುವುದು ಖಚಿತವಾದ ಬಳಿಕ ಎರಡೂ ಠಾಣೆಗಳ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಿದರು.

ಗಂಗೊಂಡನಹಳ್ಳಿಯಲ್ಲಿರುವ ಮನೆ ಮೇಲೆ ದಾಳಿ ನಡೆಸಿದ ವೇಳೆ ರುದ್ರೇಶ್ ಕುಟುಂಬದವರನ್ನು ಮುಂದೆ ಬಿಟ್ಟು ತಪ್ಪಿಸಿಕೊಳ್ಳಲು ಯತ್ನಿಸಿದ್ದ. ಬಳಿಕ ಪೊಲೀಸರು ಮನೆ ಪರಿಶೀಲನೆ ನಡೆಸಿದಾಗ ಮಂಚದ ಕೆಳಗೆ ಅಡಗಿಕೊಂಡಿದ್ದ ಆರೋಪಿಯನ್ನು ಬಂಧಿಸಿದರು.

ರುದ್ರೇಶ್ ವಿರುದ್ಧ ಈ ಹಿಂದೆಯೂ ನಕಲಿ ನೋಟು ಚಲಾವಣೆ ಪ್ರಕರಣ ದಾಖಲಾಗಿತ್ತು. 2024ರಲ್ಲಿ ದಾವಣಗೆರೆ ಪೊಲೀಸರು ನಡೆಸಿದ್ದ ಕಾರ್ಯಾಚರಣೆಯಲ್ಲಿ ಆತನೊಂದಿಗೆ ಇನ್ನೂ ಐವರನ್ನು ಬಂಧಿಸಲಾಗಿತ್ತು. ಆಗ ₹200 ಹಾಗೂ ₹500 ಮುಖಬೆಲೆಯ ಒಟ್ಟು ₹7.70 ಲಕ್ಷ ಮೌಲ್ಯದ ನಕಲಿ ನೋಟುಗಳು ಮತ್ತು ₹43 ಸಾವಿರ ಅಸಲಿ ನೋಟುಗಳನ್ನು ವಶಪಡಿಸಿಕೊಳ್ಳಲಾಗಿತ್ತು.

ಜೈಲಿನಿಂದ ಬಿಡುಗಡೆಯಾದ ಬಳಿಕವೂ ರುದ್ರೇಶ್ ಮತ್ತೆ ನಕಲಿ ನೋಟು ಚಲಾವಣೆಯಲ್ಲಿ ತೊಡಗಿದ್ದಾನೆ ಎಂಬ ಮಾಹಿತಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಪ್ರಕರಣದ ಕುರಿತು ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.

ಬಾರ್ ಮೇಲೆಯೇ ಬಿಸಿಎಂ ವಿದ್ಯಾರ್ಥಿ ನಿಲಯ: ಬೆಂಗಳೂರಿನಲ್ಲಿ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟ

ಬೆಂಗಳೂರು: ವಿದ್ಯಾರ್ಥಿಗಳು ನೆಮ್ಮದಿಯಿಂದ ವಿದ್ಯಾಭ್ಯಾಸ ನಡೆಸಬೇಕಾದ ವಿದ್ಯಾರ್ಥಿ ನಿಲಯದ ಕಟ್ಟಡದ ನೆಲ ಮಹಡಿಯಲ್ಲೇ ಬಾರ್ ಅಂಡ್ ರೆಸ್ಟೋರೆಂಟ್ ಕಾರ್ಯನಿರ್ವಹಿಸುತ್ತಿರುವ ಘಟನೆ ಬೆಂಗಳೂರಿನ ಕೆ.ಆರ್.ಪುರಂ ವ್ಯಾಪ್ತಿಯ ಅವಲಹಳ್ಳಿಯಲ್ಲಿ ಬೆಳಕಿಗೆ ಬಂದಿದೆ.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ಸೇರಿದ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯವು ಖಾಸಗಿ ಕಟ್ಟಡದಲ್ಲಿ ಕಳೆದ ಎರಡು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದೆ. ಇದೇ ಕಟ್ಟಡದ ನೆಲ ಮಹಡಿಯಲ್ಲಿ ಮೂರು ತಿಂಗಳ ಹಿಂದೆ ಬಾರ್ ಅಂಡ್ ರೆಸ್ಟೋರೆಂಟ್ ಆರಂಭವಾಗಿದ್ದು, ಮೇಲಿನ ಮಹಡಿಯಲ್ಲಿ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ವಾಸಿಸುತ್ತಿದ್ದಾರೆ.

ಬಾರ್ ಆರಂಭವಾದ ಬಳಿಕ ವಿದ್ಯಾರ್ಥಿಗಳು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಹಗಲು-ರಾತ್ರಿ ಬಾರ್‌ಗೆ ಬರುವ ಗ್ರಾಹಕರ ಗದ್ದಲ, ಗಲಾಟೆ ಹಾಗೂ ಶಬ್ದ ಮಾಲಿನ್ಯದಿಂದ ಓದು ಮತ್ತು ನಿದ್ರೆಗೆ ತೀವ್ರ ತೊಂದರೆಯಾಗುತ್ತಿದೆ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡಿದ್ದಾರೆ.

ವಿದ್ಯಾಭ್ಯಾಸಕ್ಕೆ ಅಗತ್ಯವಾದ ಶಾಂತ ವಾತಾವರಣ ಇಲ್ಲದ ಕಾರಣ ವಿದ್ಯಾರ್ಥಿ ನಿಲಯವನ್ನು ತಕ್ಷಣವೇ ಬೇರೆ ಕಟ್ಟಡಕ್ಕೆ ಸ್ಥಳಾಂತರಿಸಬೇಕು ಎಂದು ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.

ಈ ಕುರಿತು ಹಲವು ಬಾರಿ ಗಮನಕ್ಕೆ ತಂದರೂ ಹಾಸ್ಟೆಲ್ ವಾರ್ಡನ್ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ಆರೋಪವೂ ಕೇಳಿಬಂದಿದೆ. ವಿದ್ಯಾರ್ಥಿಗಳ ಶಿಕ್ಷಣ ಮತ್ತು ಹಿತಾಸಕ್ತಿಯ ವಿಚಾರದಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಂಪುಟ ವಿಸ್ತರಣೆ ಬಗ್ಗೆ ಒತ್ತಡ ಇಲ್ಲ: ಹೈಕಮಾಂಡ್ ಕರೆಯುತ್ತಿದ್ದಂತೆ ದೆಹಲಿಗೆ ಹೋಗುತ್ತೇನೆ ಎಂದ ಸಿಎಂ ಡಿ.ಕೆ. ಶಿವಕುಮಾರ್

ಬೆಳಗಾವಿ: ರಾಜ್ಯ ಸಚಿವ ಸಂಪುಟ ವಿಸ್ತರಣೆ ಕುರಿತು ಯಾವುದೇ ಒತ್ತಡ ಇಲ್ಲ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. ಪಕ್ಷದ ಹೈಕಮಾಂಡ್ ನಾಯಕರು ಇಂದು ಅಥವಾ ನಾಳೆ ರಾಜ್ಯಕ್ಕೆ ಆಗಮಿಸುವ ನಿರೀಕ್ಷೆಯಿದ್ದು, ಅವರು ಕರೆಯುವ ಸಮಯದಲ್ಲಿ ದೆಹಲಿಗೆ ತೆರಳಿ ಚರ್ಚೆ ನಡೆಸುವುದಾಗಿ ತಿಳಿಸಿದ್ದಾರೆ.

ಬೆಳಗಾವಿಯ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತರಣೆ ಬಗ್ಗೆ ಕೇಳಿದ ಪ್ರಶ್ನೆಗೆ, “ಒತ್ತಡ ಎಂಬುದೇ ಇಲ್ಲ. ನಮ್ಮ ನಾಯಕರು ಬಂದ ಬಳಿಕ ಯಾವಾಗ ಕರೆಯುತ್ತಾರೋ ಆಗ ನಾನು ಹೋಗುತ್ತೇನೆ” ಎಂದು ಉತ್ತರಿಸಿದರು.

ರಾಜ್ಯದ ಹಲವು ಭಾಗಗಳಲ್ಲಿ ಮಳೆ ಕೊರತೆ ಹಿನ್ನೆಲೆಯಲ್ಲಿ ಮೋಡ ಬಿತ್ತನೆ (Cloud Seeding) ನಡೆಸುವಂತೆ ಶಾಸಕರು ಒತ್ತಾಯಿಸಿದ್ದಾರೆ. ಈ ಕುರಿತು ಕಾನೂನು ಹಾಗೂ ಹಣಕಾಸು ಇಲಾಖೆಗಳೊಂದಿಗೆ ಸಮಾಲೋಚನೆ ನಡೆಸಿ ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂದು ಸಿಎಂ ಹೇಳಿದರು.

ಸುವರ್ಣ ವಿಧಾನಸೌಧದಲ್ಲಿ ನಡೆದ ಸಭೆಯಲ್ಲಿ ರಾಜ್ಯದ ಎಲ್ಲಾ ದೇವಸ್ಥಾನಗಳ ಹುಂಡಿಗಳ ಸುರಕ್ಷತೆಯನ್ನು ಮತ್ತಷ್ಟು ಬಲಪಡಿಸುವಂತೆ ತೀರ್ಮಾನ ಕೈಗೊಂಡಿರುವುದಾಗಿ ತಿಳಿಸಿದ ಅವರು, ದೇವಸ್ಥಾನಗಳಲ್ಲಿ ಭದ್ರತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುವುದು ಎಂದು ಹೇಳಿದರು.

ಬೆಳಗಾವಿಯಲ್ಲಿ ಆರ್‌ಎಸ್‌ಎಸ್ ಸಭೆ ಆಯೋಜಿಸಿರುವ ಕುರಿತು ಪ್ರತಿಕ್ರಿಯಿಸಿದ ಸಿಎಂ, ಈ ಬಗ್ಗೆ ಇನ್ನೂ ಅಧಿಕೃತ ವರದಿ ಬಂದಿಲ್ಲ. ಪತ್ರಿಕೆಗಳಲ್ಲಿ ಮಾಹಿತಿ ನೋಡಿದ್ದೇನೆ. ವರದಿ ಕೇಳಿದ್ದೇನೆ. ಕಾನೂನಿನಲ್ಲಿ ಅವಕಾಶ ಇದ್ದರೆ ಅನುಮತಿ ಸಿಗುತ್ತದೆ, ಇಲ್ಲದಿದ್ದರೆ ಸಿಗುವುದಿಲ್ಲ. ಎಲ್ಲರಿಗೂ ಒಂದೇ ರೀತಿಯ ಕಾನೂನು ಅನ್ವಯವಾಗುತ್ತದೆ ಎಂದು ಹೇಳಿದರು.

ಬೆಂಗಳೂರಿನಲ್ಲಿ ಬೀದಿಬದಿ ವ್ಯಾಪಾರಿಗಳ ತೆರವು ಕಾರ್ಯಾಚರಣೆ ಕುರಿತು ಮಾತನಾಡಿದ ಮುಖ್ಯಮಂತ್ರಿ, ಸಂಚಾರ ದಟ್ಟಣೆ ಸಮಸ್ಯೆ ನಿವಾರಣೆಗೆ ಎಲ್ಲಾ ಪಕ್ಷಗಳ ಶಾಸಕರೊಂದಿಗೆ ಈ ಹಿಂದೆ ಚರ್ಚೆ ನಡೆಸಲಾಗಿತ್ತು. ಸರ್ಕಾರ ಗುರುತಿಸಿರುವ ಸ್ಥಳಗಳಲ್ಲಿ ಮಾತ್ರ ವ್ಯಾಪಾರ ನಡೆಸಬೇಕು. ಮುಖ್ಯ ರಸ್ತೆಗಳಲ್ಲಿ ಅಂಗಡಿ ಇಡಲು ಅವಕಾಶ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಸುಮಾರು 60 ಸಾವಿರ ಬೀದಿಬದಿ ವ್ಯಾಪಾರಿಗಳ ಪೈಕಿ 30 ಸಾವಿರ ಮಂದಿ ಮಾತ್ರ ನೋಂದಣಿ ಮಾಡಿಕೊಂಡಿದ್ದಾರೆ. ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಕ್ರಮ ಜಾರಿಗೊಳಿಸಲಾಗುತ್ತಿದ್ದು, ಇಂದು ಪೊಲೀಸ್ ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.

ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಚುನಾವಣೆಗೆ ಸಂಬಂಧಿಸಿದಂತೆ ಅಧಿಕಾರಿಗಳು ಸುಪ್ರೀಂ ಕೋರ್ಟ್‌ಗೆ ತೆರಳಿರುವ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ, ನ್ಯಾಯಾಲಯ ಆಗಸ್ಟ್ ತಿಂಗಳೊಳಗೆ ಗಡುವು ನೀಡಿದೆ. ಅಧಿಕಾರಿಗಳಿಗೆ ಕೆಲವು ಆಡಳಿತಾತ್ಮಕ ಸಮಸ್ಯೆಗಳಿರುವ ಹಿನ್ನೆಲೆಯಲ್ಲಿ ಅವರೇ ಈ ವಿಚಾರವನ್ನು ನೋಡಿಕೊಳ್ಳುತ್ತಿದ್ದಾರೆ. ಸರ್ಕಾರ ಈ ಪ್ರಕ್ರಿಯೆಯಲ್ಲಿ ನೇರವಾಗಿ ಹಸ್ತಕ್ಷೇಪ ಮಾಡುವುದಿಲ್ಲ. ಆದರೆ ಜಿಬಿಎ ಚುನಾವಣೆಗೆ ಸರ್ಕಾರ ಸಂಪೂರ್ಣ ಸಿದ್ಧತೆ ಮಾಡಿಕೊಂಡಿದೆ ಎಂದು ತಿಳಿಸಿದರು.