Home Blog

ಕುಟುಂಬದ ನೆಮ್ಮದಿಗೆ ಕೊಡುಗೆ ನೀಡುವ ಎಲ್ಲರೂ ‘ಹೋಮ್ ಮೇಕರ್’ ಎಂದ ಹೈಕೋರ್ಟ್

0

ಬೆಂಗಳೂರು: ಕುಟುಂಬದ ಆರೈಕೆ ಮತ್ತು ಜವಾಬ್ದಾರಿಗಳನ್ನು ಹೊರುವ ‘ಹೋಮ್‌ಮೇಕರ್’ ಎಂಬ ಪದವು ಕೇವಲ ಮಹಿಳೆಯರಿಗೆ ಮಾತ್ರ ಸೀಮಿತವಾಗಿಲ್ಲ, ಅದು ಸಂಪೂರ್ಣವಾಗಿ ಲಿಂಗತಟಸ್ಥ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ. ಪುರುಷನಾಗಲಿ, ಮಹಿಳೆಯಾಗಲಿ ಅಥವಾ ಉದ್ಯೋಗದಲ್ಲಿರುವ ವೃತ್ತಿಪರರಾಗಲಿ, ಮನೆಯಲ್ಲಿ ಕುಟುಂಬದ ಕಲ್ಯಾಣಕ್ಕಾಗಿ ಶ್ರಮಿಸುವ ಪ್ರತಿಯೊಬ್ಬರೂ ‘ಗೃಹ ನಿರ್ವಾಹಕರು’ ಎಂದು ಪರಿಗಣಿಸಲ್ಪಡುತ್ತಾರೆ ಎಂದು ನ್ಯಾಯಾಲಯ ತಿಳಿಸಿದೆ.

ರಸ್ತೆ ಅಪಘಾತದಲ್ಲಿ ಶಾಶ್ವತ ಅಂಗವೈಕಲ್ಯಕ್ಕೆ ತುತ್ತಾಗಿದ್ದ ಮಹಿಳೆಗೆ ಮೋಟಾರು ಅಪಘಾತಗಳ ಪರಿಹಾರ ನ್ಯಾಯಾಧಿಕರಣ ನೀಡಿದ್ದ ಪರಿಹಾರ ಮೊತ್ತ ಹೆಚ್ಚಳ ಮಾಡುವಂತೆ ಕೋರಿ ಪಶ್ಚಿಮ ಬಂಗಾಳ ಮೂಲದ ಪಂಪಪಾಲ್ ಎಂಬ ಮಹಿಳೆ ಹಾಗೂ ಪರಿಹಾರ ಘೋಷಣೆಯನ್ನು ಪ್ರಶ್ನಿಸಿ ಕೆಎಸ್‌ಆರ್‌ಟಿಸಿ ಹೈಕೋರ್ಟ್‌ಗೆ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಗಳನ್ನು ಜಂಟಿಯಾಗಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಡಾ.ಚಿಲಕೂರು ಸುಮಲತಾ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿತು.

ಉನ್ನತ ಶಿಕ್ಷಣ ಅಥವಾ ವೃತ್ತಿಪರ ಹಿನ್ನೆಲೆ ಹೊಂದಿರುವ ಮಾತ್ರಕ್ಕೆ ಯಾರೂ ಗೃಹಿಣಿಯಾಗಿರಲು ಅನರ್ಹರಾಗುವುದಿಲ್ಲ ಎಂದ ಪೀಠ, ಪದವಿ, ಸ್ನಾತಕೋತ್ತರ ಪದವಿ ಅಥವಾ ಡಾಕ್ಟರೇಟ್ ಪಡೆದಿದ್ದರೂ ಸಹ ಅವರು ಕುಟುಂಬಕ್ಕಾಗಿ ನೀಡುವ ಸೇವೆಗಳ ಮೌಲ್ಯ ಕಡಿಮೆಯಾಗುವುದಿಲ್ಲ ಎಂದು ಹೇಳಿತು. ಗೃಹ ನಿರ್ವಾಹಕರೆಂದರೆ ಕೇವಲ ಅನಕ್ಷರಸ್ಥರಾಗಿರಬೇಕು, ದಿನದ 24 ಗಂಟೆಯೂ ಮನೆಯಲ್ಲೇ ಇರಬೇಕು ಅಥವಾ ಕೇವಲ ಮನೆಕೆಲಸಗಳನ್ನೇ ಮಾಡಬೇಕು ಎಂಬ ಹಳೆಯ ಸಾಂಪ್ರದಾಯಿಕ ಕಲ್ಪನೆ ತಪ್ಪು ಎಂದು ಪೀಠ ಸ್ಪಷ್ಟಪಡಿಸಿತು.

ಅವಿಶ್ರಾಂತವಾಗಿ ಶ್ರಮಿಸುತ್ತಾ, ಬೇಷರತ್ ಪ್ರೀತಿ ತೋರುತ್ತಾ, ವೈಯಕ್ತಿಕ ಹಿತಾಸಕ್ತಿಗಳನ್ನು ತ್ಯಾಗ ಮಾಡಿ ಕುಟುಂಬದ ಸುಖ-ಶಾಂತಿಗೆ ಆಧಾರಸ್ತಂಭವಾಗಿ ನಿಲ್ಲುವ ಪ್ರತಿಯೊಬ್ಬ ವ್ಯಕ್ತಿಯೂ ಗೃಹಿಣಿಯೇ ಆಗಿದ್ದಾರೆ, ಇದು ಪುರುಷರಿಗೂ ಹಾಗೂ ದುಡಿಯುವ ಉದ್ಯೋಗಸ್ಥರಿಗೂ ಅನ್ವಯಿಸುತ್ತದೆ ಎಂದು ಪೀಠ ತಿಳಿಸಿತು.

ಅರ್ಜಿದಾರರು ಮಾಡಿಸಿಕೊಂಡಿದ್ದ ವೈದ್ಯಕೀಯ ವಿಮೆಯಿಂದ ಆಸ್ಪತ್ರೆ ಖರ್ಚು ಮರುಪಾವತಿಯಾಗಿದ್ದು, ಈ ಪ್ರೀಮಿಯಂ ಹಣವನ್ನು ಗ್ರಾಹಕರೇ ಪಾವತಿಸಿರುವುದರಿಂದ ಆ ಮೊತ್ತವನ್ನು ದ್ವಿ ಲಾಭ ಎಂದು ಪರಿಗಣಿಸಿ ಪರಿಹಾರ ಮೊತ್ತದಲ್ಲಿ ಕಡಿತ ಮಾಡುವುದಕ್ಕೆ ಅವಕಾಶವಿಲ್ಲ ಎಂದು ಪೀಠ ತಿಳಿಸಿದೆ. ಅಪಘಾತಕ್ಕೆ ಒಳಗಾಗಿದ್ದ ಮಹಿಳೆಗೆ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ನಿಗದಿಪಡಿಸಿರುವ ಕಾಲ್ಪನಿಕ ಆದಾಯ ಪರಿಗಣಿಸಿ ಮಾಸಿಕ ₹8,000ರಂತೆ ಪರಿಹಾರ ನೀಡಿದ್ದು, ನ್ಯಾಯಾಧಿಕರಣ ನೀಡಿದ್ದ ಪರಿಹಾರಕ್ಕೆ ₹1,96,800 ಹೆಚ್ಚಿಸಿ ಆದೇಶಿಸಿದೆ.

ಪ್ರಕರಣದ ಹಿನ್ನೆಲೆ: ಸಂತ್ರಸ್ತ ಮಹಿಳೆ 2013ರ ಅಕ್ಟೋಬರ್ 19ರಂದು ಬೆಂಗಳೂರಿನಿಂದ ಮಡಿಕೇರಿಗೆ ಕೆಎಸ್‌ಆರ್‌ಟಿಸಿ ರಾಜಹಂಸ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದಾಗ ಬಸ್ ಲಾರಿಗೆ ಡಿಕ್ಕಿ ಹೊಡೆದಿತ್ತು. ಈ ಅಪಘಾತದಲ್ಲಿ ಅರ್ಜಿದಾರ ಪಂಪಪಾಲ್ ಅವರು ಶಾಶ್ವತ ದೈಹಿಕ ವೈಕಲ್ಯಕ್ಕೆ ಒಳಗಾಗಿ ಚಿಕಿತ್ಸೆಗಾಗಿ ₹10 ಲಕ್ಷದವರೆಗೂ ವೆಚ್ಚ ಮಾಡಿದ್ದರು. ಬೆಂಗಳೂರಿನ ಮೋಟಾರು ವಾಹನಗಳ ಪರಿಹಾರ ನ್ಯಾಯಾಧಿಕರಣ ವೈದ್ಯಕೀಯ ವೆಚ್ಚ ಸೇರಿ ಒಟ್ಟು ₹4,55,243 ಪರಿಹಾರ ಘೋಷಿಸಿತ್ತು, ಇದನ್ನು ಪ್ರಶ್ನಿಸಿ ಕೆಎಸ್‌ಆರ್‌ಟಿಸಿ ಮತ್ತು ಸಂತ್ರಸ್ತೆ ಹೈಕೋರ್ಟ್ ಮೆಟ್ಟಿಲೇರಿದ್ದರು.

ಬಯೋಟೆಕ್ನಾಲಜಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಅರ್ಜಿದಾರರು ಅಪಘಾತಕ್ಕೂ ಮುನ್ನ ಅತಿಥಿ ಉಪನ್ಯಾಸಕರಾಗಿ ಮಾಸಿಕ ₹35 ಸಾವಿರದವರೆಗೂ ದುಡಿಯುತ್ತಿದ್ದರು, ಘಟನೆ ನಡೆದ ದಿನ ಗೃಹಿಣಿಯಾಗಿ ಕೆಲಸ ಮಾಡುತ್ತಿದ್ದರು ಎಂದು ಅರ್ಜಿದಾರರ ಪರ ವಕೀಲರು ವಾದಿಸಿದ್ದರು. ಇದಕ್ಕೆ ಆಕ್ಷೇಪಿಸಿದ್ದ ಕೆಎಸ್‌ಆರ್‌ಟಿಸಿ ಪರ ವಕೀಲರು, ಅರ್ಜಿದಾರರು ಉನ್ನತ ಶಿಕ್ಷಣ ಪಡೆದವರಾಗಿರುವುದರಿಂದ ಗೃಹಿಣಿಯಾಗಿರುವುದಕ್ಕೆ ಅವಕಾಶವಿಲ್ಲ, ಆದ್ದರಿಂದ ಭವಿಷ್ಯದ ನಷ್ಟಕ್ಕೆ ಪರಿಹಾರ ನೀಡಲಾಗದು ಎಂದು ವಾದಿಸಿದ್ದರು.

ಫೇಕ್ ಮೆಡಿಸಿನ್ ವಿರುದ್ಧ ಸರ್ಕಾರದ ಮಾಸ್ಟರ್‌ಸ್ಟ್ರೋಕ್: ಮಾಹಿತಿ ಕೊಟ್ಟವರಿಗೆ ₹10,000-₹50,000 ಕ್ಯಾಶ್ ರಿವಾರ್ಡ್

0

ಬೆಂಗಳೂರು: ರಾಜ್ಯದಲ್ಲಿ ನಕಲಿ ಔಷಧಗಳ ತಯಾರಿಕೆ, ದಾಸ್ತಾನು, ಮಾರಾಟ ಮತ್ತು ಪೂರೈಕೆ ಜಾಲಕ್ಕೆ ಕಡಿವಾಣ ಹಾಕಲು ಕರ್ನಾಟಕ ಆರೋಗ್ಯ ಇಲಾಖೆ ಮಹತ್ವದ ಕ್ರಮ ಕೈಗೊಂಡಿದೆ. ನಕಲಿ ಔಷಧ ದಂಧೆಯ ಬಗ್ಗೆ ಖಚಿತ ಮಾಹಿತಿ ನೀಡುವ ಸಾರ್ವಜನಿಕರಿಗೆ ₹10 ಸಾವಿರದಿಂದ ₹50 ಸಾವಿರದವರೆಗೆ ನಗದು ಬಹುಮಾನ ನೀಡಲು ಇಲಾಖೆ ಮುಂದಾಗಿದೆ.

ನಕಲಿ ಔಷಧಗಳ ಜಾಲದ ಕುರಿತು ಸಾರ್ವಜನಿಕರಿಂದಲೇ ಮಾಹಿತಿ ಸಂಗ್ರಹಿಸಿ ಕಾರ್ಯಾಚರಣೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ. ಅನುಮಾನಾಸ್ಪದ ಔಷಧಗಳು, ಮೆಡಿಕಲ್ ಸ್ಟೋರ್‌ಗಳು ಅಥವಾ ನಕಲಿ ಔಷಧಗಳ ತಯಾರಿಕೆ ಹಾಗೂ ಮಾರಾಟದ ಕುರಿತು ಮಾಹಿತಿ ಇದ್ದರೆ ಔಷಧ ನಿಯಂತ್ರಣ ಮಂಡಳಿಯ ಸಹಾಯವಾಣಿಗೆ ಮಾಹಿತಿ ನೀಡುವಂತೆ ಆರೋಗ್ಯ ಇಲಾಖೆ ಮನವಿ ಮಾಡಿದೆ.

ಸಾರ್ವಜನಿಕರಿಂದ ಲಭ್ಯವಾಗುವ ಮಾಹಿತಿಯನ್ನು ಆಧರಿಸಿ ಔಷಧ ನಿಯಂತ್ರಣ ಅಧಿಕಾರಿಗಳು ಪರಿಶೀಲನೆ ಮತ್ತು ತನಿಖೆ ನಡೆಸಲಿದ್ದಾರೆ. ಮಾಹಿತಿ ಖಚಿತವೆಂದು ದೃಢಪಟ್ಟರೆ ಸಂಬಂಧಪಟ್ಟವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ.

ಇತ್ತೀಚೆಗೆ ಬೆಂಗಳೂರಿನಲ್ಲಿ ಪತ್ತೆಯಾದ ನಕಲಿ ಔಷಧ ತಯಾರಿಕಾ ಜಾಲದ ತನಿಖೆ ಹಲವು ರಾಜ್ಯಗಳಿಗೆ ವಿಸ್ತರಿಸಿರುವ ಸಾಧ್ಯತೆ ಬೆಳಕಿಗೆ ಬಂದಿತ್ತು. ಬೆಂಗಳೂರಿನಿಂದ ಮುಂಬೈವರೆಗೆ ಸಂಪರ್ಕ ಹೊಂದಿರುವ ಅಂತರರಾಜ್ಯ ಜಾಲದ ಕುರಿತು ದೇಶದ ವಿವಿಧ ರಾಜ್ಯಗಳ ಔಷಧ ನಿಯಂತ್ರಣ ಅಧಿಕಾರಿಗಳು ಹಾಗೂ ಸ್ಟೇಟ್ ಲೈಸೆನ್ಸಿಂಗ್ ಅಥಾರಿಟಿಗಳಿಗೆ ಎಚ್ಚರಿಕೆ ನೀಡಲಾಗಿತ್ತು.

ರೋಗಿಗಳ ಆರೋಗ್ಯ ಮತ್ತು ಜೀವಕ್ಕೆ ಅಪಾಯ ಉಂಟುಮಾಡಬಹುದಾದ ನಕಲಿ ಔಷಧಗಳ ದಂಧೆ ವಿರುದ್ಧದ ಕಾರ್ಯಾಚರಣೆಗೆ ಸಾರ್ವಜನಿಕರ ಸಹಕಾರ ಅತ್ಯಂತ ಮುಖ್ಯ ಎಂದು ಇಲಾಖೆ ತಿಳಿಸಿದೆ. ಅನುಮಾನಾಸ್ಪದ ಔಷಧ ಅಥವಾ ದಂಧೆ ಕಂಡುಬಂದರೆ ಯಾವುದೇ ಕಾರಣಕ್ಕೂ ಮೌನವಾಗಿರದೆ ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ಮನವಿ ಮಾಡಲಾಗಿದೆ.

ಮಾಹಿತಿ ನೀಡುವವರ ಗುರುತು ಹಾಗೂ ವೈಯಕ್ತಿಕ ವಿವರಗಳನ್ನು ಗೌಪ್ಯವಾಗಿಡುವ ವ್ಯವಸ್ಥೆಯನ್ನೂ ಕಲ್ಪಿಸಲು ಇಲಾಖೆ ಮುಂದಾಗಿದೆ. ನಕಲಿ ಔಷಧ ಜಾಲದ ವಿರುದ್ಧದ ಹೋರಾಟದಲ್ಲಿ ಜನರನ್ನೇ ಮಾಹಿತಿ ಜಾಲದ ಭಾಗವಾಗಿಸುವ ಮೂಲಕ ದಂಧೆಗೆ ಕಡಿವಾಣ ಹಾಕಲು ಸರ್ಕಾರ ಮುಂದಾಗಿದೆ.

ಷೇರು ಮಾರುಕಟ್ಟೆ ನಷ್ಟದ ಬೆನ್ನಲ್ಲೇ ಕುಟುಂಬ ನಾಪತ್ತೆ: ಇಬ್ಬರು ಮಕ್ಕಳ ಸಮೇತ ದಂಪತಿ ನಾಪತ್ತೆ

0

ದಾವಣಗೆರೆ: ಷೇರು ಮಾರುಕಟ್ಟೆಯಲ್ಲಿ ನಷ್ಟ ಅನುಭವಿಸಿದ ಹಿನ್ನೆಲೆಯಲ್ಲಿ ಕುಟುಂಬ ಸಮೇತ ಮನೆ ತೊರೆದಿರಬಹುದೇ ಎಂಬ ಅನುಮಾನ ಮೂಡಿಸಿರುವ ಪ್ರಕರಣವೊಂದು ದಾವಣಗೆರೆಯಲ್ಲಿ ನಡೆದಿದೆ. ಬೆಂಗಳೂರಿಗೆ ತೆರಳಿ ಬರುವುದಾಗಿ ಪೋಷಕರಿಗೆ ತಿಳಿಸಿದ್ದ ದಂಪತಿ, ಇಬ್ಬರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ನಾಲ್ವರು ಇದೀಗ ನಾಪತ್ತೆಯಾಗಿದ್ದಾರೆ.

ಬನಶಂಕರಿ ಬಡಾವಣೆಯ ನಿವಾಸಿಗಳಾದ ರಮೇಶ್ ಕುಮಾರ್ (38), ಪತ್ನಿ ಜಯಶೀಲ (36), ಪುತ್ರ ಹಿತೇಶ್ (9) ಹಾಗೂ ಪುತ್ರಿ ಪ್ರೇರಣ (3) ಕಾಣೆಯಾಗಿದ್ದಾರೆ. ರಮೇಶ್ ಕುಮಾರ್ ಷೇರು ಮಾರುಕಟ್ಟೆ ಹೂಡಿಕೆ ವ್ಯವಹಾರ ನಡೆಸುತ್ತಿದ್ದು, ಸಾರ್ವಜನಿಕರಿಂದ ಹಣ ಪಡೆದು ಹೂಡಿಕೆ ಮಾಡುತ್ತಿದ್ದರು ಎನ್ನಲಾಗಿದೆ.

ಇತ್ತೀಚೆಗೆ ಷೇರು ಮಾರುಕಟ್ಟೆಯಲ್ಲಿ ಭಾರಿ ನಷ್ಟವಾಗಿತ್ತು ಎನ್ನಲಾಗಿದ್ದು, ಕುಟುಂಬದ ನಾಪತ್ತೆಗೂ ಇದಕ್ಕೂ ಸಂಬಂಧವಿದೆಯೇ ಎಂಬ ಕೋನದಲ್ಲೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಆಗಸ್ಟ್ 14ರಂದು ರಮೇಶ್ ಕುಮಾರ್ ಪೋಷಕರಿಗೆ ಕರೆ ಮಾಡಿ ಬೆಂಗಳೂರಿಗೆ ವೈಯಕ್ತಿಕ ಕೆಲಸದ ನಿಮಿತ್ತ ತೆರಳುವುದಾಗಿ ಹೇಳಿದ್ದರು. ಬಳಿಕ ಕುಟುಂಬ ತಮ್ಮ ಕಾರು ಮತ್ತು ಬೈಕ್‌ಗಳನ್ನು ಮನೆಯಲ್ಲೇ ಬಿಟ್ಟು ಆಟೋ ಮೂಲಕ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ತೆರಳಿದೆ ಎನ್ನಲಾಗಿದೆ.

ಬೆಂಗಳೂರಿಗೆ ತೆರಳಿದ ನಂತರ ನಾಲ್ವರೂ ಕುಟುಂಬಸ್ಥರ ಸಂಪರ್ಕಕ್ಕೆ ಸಿಕ್ಕಿಲ್ಲ. ಎಲ್ಲರ ಮೊಬೈಲ್‌ಗಳು ಸ್ವಿಚ್‌ಆಫ್ ಆಗಿರುವುದರಿಂದ ಆತಂಕಗೊಂಡ ಕುಟುಂಬಸ್ಥರು ಬೆಂಗಳೂರು ಸೇರಿದಂತೆ ವಿವಿಧೆಡೆ ಹುಡುಕಾಟ ನಡೆಸಿದ್ದಾರೆ. ಆದರೆ ಇದುವರೆಗೆ ಯಾವುದೇ ಸುಳಿವು ಪತ್ತೆಯಾಗಿಲ್ಲ.

ನಾಲ್ವರು ನಾಪತ್ತೆಯಾಗಿರುವ ಕುರಿತು ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಕುಟುಂಬದ ಪ್ರಯಾಣದ ಮಾರ್ಗ, ಕೊನೆಯ ಮೊಬೈಲ್ ಲೊಕೇಶನ್ ಹಾಗೂ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸುತ್ತಿದ್ದಾರೆ.

ಕುಟುಂಬದ ನಾಪತ್ತೆಗೆ ನಿಖರ ಕಾರಣವೇನು, ಅವರು ಬೆಂಗಳೂರಿಗೆ ತೆರಳಿದ್ದಾರೆಯೇ ಅಥವಾ ಬೇರೆಡೆಗೆ ಪ್ರಯಾಣಿಸಿದ್ದಾರೆಯೇ ಎಂಬುದನ್ನು ಪತ್ತೆಹಚ್ಚಲು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಮರಣದಂಡನೆ: ನೇಣು ಶಿಕ್ಷೆಯೇ ಮುಂದುವರಿಕೆ, ಇಂಜೆಕ್ಷನ್ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್

0

ನವದೆಹಲಿ: ಭಾರತದಲ್ಲಿ ಮರಣದಂಡನೆ ಶಿಕ್ಷೆ ಜಾರಿಗೊಳಿಸಲು ನೇಣು ಹಾಕುವ ಪದ್ಧತಿಯ ಬದಲಿಗೆ ಮಾರಕ ವಿಷಕಾರಿ ಚುಚ್ಚುಮದ್ದು ಬಳಸಬೇಕೆಂಬ ಬಹುದಿನಗಳ ಚರ್ಚೆಗೆ ಭಾರತದ ಸುಪ್ರೀಂ ಕೋರ್ಟ್ ತೆರೆ ಎಳೆದಿದೆ. ಗಲ್ಲು ಶಿಕ್ಷೆಗಿಂತ ಮಾರಕ ಇಂಜೆಕ್ಷನ್ ಹೆಚ್ಚು ವೈಜ್ಞಾನಿಕ, ಶಾಂತಿಯುತ ಅಥವಾ ಮಾನವೀಯ ಎಂದು ಸಾಬೀತುಪಡಿಸಲು ಯಾವುದೇ ಗಣನೀಯ ವೈಜ್ಞಾನಿಕ ಪುರಾವೆಗಳಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಅಸ್ತಿತ್ವದಲ್ಲಿರುವ ಕಾನೂನಿನಿಂದ ನೇಣು ಶಿಕ್ಷೆಯನ್ನು ತೆಗೆದುಹಾಕಬೇಕೆಂದು ಕೋರಿ ವಕೀಲ ರಿಷಿ ಮಲ್ಹೋತ್ರಾ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರ ಪೀಠ ವಜಾಗೊಳಿಸಿದೆ.

ಮಾರಕ ಇಂಜೆಕ್ಷನ್ ಪದ್ಧತಿಯಲ್ಲಿ ಗಂಭೀರ ಲೋಪಗಳಿವೆ ಎಂದು ಪೀಠ ಅಭಿಪ್ರಾಯಪಟ್ಟಿದೆ. ಅಮೆರಿಕ ಸೇರಿದಂತೆ ಹಲವು ದೇಶಗಳಲ್ಲಿ ಮಾರಕ ಇಂಜೆಕ್ಷನ್‌ಗಾಗಿ ಮೂರು ಹಂತದ ಔಷಧಿಗಳನ್ನು ಬಳಸಲಾಗುತ್ತದೆ. ಮೊದಲನೆಯದು ಪ್ರಜ್ಞೆ ತಪ್ಪಿಸಲು, ಎರಡನೆಯದು ಸ್ನಾಯುಗಳ ಚಲನೆ ನಿಲ್ಲಿಸಲು ಮತ್ತು ಮೂರನೆಯದು ಹೃದಯ ಸ್ಥಗಿತಗೊಳಿಸಲು. ಮೊದಲ ಔಷಧ ಸಮರ್ಪಕವಾಗಿ ಕೆಲಸ ಮಾಡದಿದ್ದರೆ, ವ್ಯಕ್ತಿ ಹೊರನೋಟಕ್ಕೆ ಶಾಂತವಾಗಿ ಕಂಡರೂ ದೇಹದೊಳಗೆ ಅಸಹನೀಯ ಉರಿ ಮತ್ತು ನರಕಯಾತನೆ ಅನುಭವಿಸುತ್ತಾನೆ ಎಂದು ನ್ಯಾಯಾಲಯ ವಿವರಿಸಿದೆ.

ದೆಹಲಿ ಎನ್‌ಎಲ್‌ಯುನ ‘ಪ್ರಾಜೆಕ್ಟ್ 39ಎ’ ವರದಿಯ ಪ್ರಕಾರ, ಅಮೆರಿಕದಲ್ಲಿ ನಡೆದ 9,000 ಮರಣದಂಡನೆಗಳಲ್ಲಿ 276 ಪ್ರಕರಣಗಳು ತಾಂತ್ರಿಕವಾಗಿ ಎಡವಿವೆ ಎಂಬ ಅಂಶವನ್ನೂ ಪೀಠ ಉಲ್ಲೇಖಿಸಿದೆ. 2024ರಲ್ಲಿ ಅಮೆರಿಕದ ಇಡಾಹೊದಲ್ಲಿ ಥಾಮಸ್ ಕ್ರೀಚ್ ಎಂಬ ಅಪರಾಧಿಗೆ ರಕ್ತನಾಳ ಸಿಗದೆ 8 ಬಾರಿ ಪ್ರಯತ್ನಿಸಿ ವಿಫಲವಾದಾಗ ಶಿಕ್ಷೆಯನ್ನೇ ಮುಂದೂಡಲಾಗಿತ್ತು ಎಂಬ ಉದಾಹರಣೆಯನ್ನೂ ನೀಡಲಾಗಿದೆ.

ಭಾರತದ ಅಟಾರ್ನಿ ಜನರಲ್ ಆರ್.ವೆಂಕಟರಮಣಿ ಅವರು ವಾದ ಮಂಡಿಸಿ, ಭಾರತದಲ್ಲಿ ನೇಣು ಶಿಕ್ಷೆಯು ಅತ್ಯಂತ ವಿಶ್ವಾಸಾರ್ಹವಾಗಿದ್ದು ಎಂದೂ ವಿಫಲವಾಗಿಲ್ಲ, ಆದರೆ ಇಂಜೆಕ್ಷನ್ ವಿಧಾನದಲ್ಲಿ ರಕ್ತನಾಳ ಪತ್ತೆ ಹಚ್ಚುವುದು ಮತ್ತು ಔಷಧಿ ಕೊರತೆಯಂತಹ ಸಮಸ್ಯೆಗಳಿವೆ ಎಂದು ವಿವರಿಸಿದರು.

1983ರ ‘ದೀನಾ ವರ್ಸಸ್ ಯೂನಿಯನ್ ಆಫ್ ಇಂಡಿಯಾ’ ಪ್ರಕರಣದಲ್ಲೂ ನ್ಯಾಯಾಲಯವು ವಿದ್ಯುತ್ ಕುರ್ಚಿ, ಗ್ಯಾಸ್ ಚೇಂಬರ್ ಮತ್ತು ಇಂಜೆಕ್ಷನ್‌ಗಳಿಗಿಂತ ನೇಣು ಪದ್ಧತಿಯೇ ಹೆಚ್ಚು ತ್ವರಿತ ಹಾಗೂ ಕಡಿಮೆ ದೋಷಪೂರಿತ ಎಂದು ಅಭಿಪ್ರಾಯಪಟ್ಟಿತ್ತು. ಈ ಎಲ್ಲಾ ಐತಿಹಾಸಿಕ ಮತ್ತು ವೈಜ್ಞಾನಿಕ ಅಂಶಗಳನ್ನು ಪರಿಗಣಿಸಿದ ಸುಪ್ರೀಂ ಕೋರ್ಟ್, ಪ್ರಸ್ತುತ ಇರುವ ನೇಣು ಶಿಕ್ಷೆಯ ವಿಧಾನವೇ ಮುಂದುವರಿಯಲಿದೆ ಎಂದು ತೀರ್ಪು ನೀಡಿದೆ.

ಪವಿತ್ರಾ ಗೌಡ ಮಾಜಿ ಪತಿ ಸಂಜಯ್ ಸಿಂಗ್ ನಿಧನ: ಸಾವಿಗೆ ಕಾರಣವೇನು ಗೊತ್ತಾ?

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ-1 ಆರೋಪಿ ಪವಿತ್ರಾ ಗೌಡ ಅವರ ಮಾಜಿ ಪತಿ ಸಂಜಯ್ ಸಿಂಗ್ (42) ಮೃತಪಟ್ಟಿರುವ ವಿಚಾರ ಇದೀಗ ಬೆಳಕಿಗೆ ಬಂದಿದೆ. ರಾಜಸ್ಥಾನದಲ್ಲಿ ಸುಮಾರು 7–8 ತಿಂಗಳ ಹಿಂದೆಯೇ ಅವರು ನಿಧನರಾಗಿದ್ದಾರೆ ಎನ್ನಲಾಗಿದ್ದು, ಇಷ್ಟು ದಿನಗಳ ಬಳಿಕ ಅವರ ಸಾವಿನ ಸುದ್ದಿ ಬಹಿರಂಗವಾಗಿದೆ.

ನಟಿ ಪವಿತ್ರಾ ಗೌಡ ಹಾಗೂ ನಟ ದರ್ಶನ್ ಬಂಧನದ ಸಂದರ್ಭದಲ್ಲಿ ಸಂಜಯ್ ಸಿಂಗ್ ರಾಜಸ್ಥಾನದಿಂದ ಬೆಂಗಳೂರಿಗೆ ಬಂದಿದ್ದರು. ಮಾಜಿ ಪತ್ನಿಯ ಪರವಾಗಿ ಮಾಧ್ಯಮಗಳ ಎದುರು ನಿಂತು ಮಾತನಾಡಿದ್ದ ಅವರು, ಪವಿತ್ರಾ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದರು.

ಬಳಿಕ ರಾಜಸ್ಥಾನಕ್ಕೆ ಮರಳಿದ್ದ ಸಂಜಯ್ ಸಿಂಗ್ ಅಲ್ಲಿ ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದರು. ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಪವಿತ್ರಾ ಗೌಡ ಅವರಿಂದ ವಿಚ್ಛೇದನ ಪಡೆದ ನಂತರ ಸಂಜಯ್ ಸಿಂಗ್ ರಾಜಸ್ಥಾನದಲ್ಲೇ ನೆಲೆಸಿದ್ದರು. ದಾಂಪತ್ಯ ಜೀವನದ ಮುರಿತದ ಬಳಿಕ ಅವರು ಖಿನ್ನತೆಗೆ ಒಳಗಾಗಿದ್ದರು ಹಾಗೂ ಮದ್ಯಪಾನದ ಚಟಕ್ಕೆ ಬಲಿಯಾಗಿದ್ದರು ಎನ್ನಲಾಗಿದೆ. ಆರೋಗ್ಯದಲ್ಲಿ ಕ್ರಮೇಣ ಏರುಪೇರು ಉಂಟಾಗಿ ಕೊನೆಗೆ ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಸಂಜಯ್ ಸಿಂಗ್ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದು, ಕಂಪ್ಯೂಟರ್ ಇನ್‌ಸ್ಟಿಟ್ಯೂಟ್ ಕೂಡ ನಡೆಸುತ್ತಿದ್ದರು. 2007–08ರಲ್ಲಿ ಪವಿತ್ರಾ ಗೌಡ ಅವರನ್ನು ಪ್ರೀತಿಸಿ ವಿವಾಹವಾಗಿದ್ದರು. 2011ರಲ್ಲಿ ಅವರಿಗೆ ಖುಷಿ ಎಂಬ ಪುತ್ರಿ ಜನಿಸಿದ್ದರು. ಬಳಿಕ ದಂಪತಿ ನಡುವೆ ಭಿನ್ನಾಭಿಪ್ರಾಯ ಉಂಟಾಗಿ ಪರಸ್ಪರ ಒಪ್ಪಿಗೆಯಿಂದ ವಿಚ್ಛೇದನ ಪಡೆದಿದ್ದರು.

ವಿಚ್ಛೇದನದ ಬಳಿಕ ಬೆಂಗಳೂರು ತೊರೆದಿದ್ದ ಸಂಜಯ್ ಸಿಂಗ್ ರಾಜಸ್ಥಾನದಲ್ಲಿ ತಮ್ಮ ಜೀವನ ಮುಂದುವರಿಸಿದ್ದರು. ಆದರೆ ಪವಿತ್ರಾ ಗೌಡ ಬಂಧನದ ಸಂದರ್ಭದಲ್ಲಿ ಮಾತ್ರ ಬೆಂಗಳೂರಿಗೆ ಮರಳಿ ಮಾಜಿ ಪತ್ನಿಯ ಬೆಂಬಲಕ್ಕೆ ನಿಂತಿದ್ದರು. ಇದೀಗ ಅವರ ನಿಧನದ ಸುದ್ದಿ ಹಲವು ತಿಂಗಳ ಬಳಿಕ ಹೊರಬಂದಿರುವುದು ಪ್ರಕರಣದ ಬೆಳವಣಿಗೆಗಳ ನಡುವೆ ಮತ್ತೊಂದು ಗಮನಾರ್ಹ ಸಂಗತಿಯಾಗಿದೆ.

ಬ್ರಹ್ಮಾವರ ಸಮೀಪ ಖಾಸಗಿ ಬಸ್‌ಗೆ ಬೆಂಕಿ: ಏಳು ಪ್ರಯಾಣಿಕರು ಪಾರು!

0

ಉಡುಪಿ: ಬ್ರಹ್ಮಾವರ ಸಮೀಪ ಖಾಸಗಿ ಬಸ್‌ಗೆ ಏಕಾಏಕಿ ಬೆಂಕಿ ಹೊತ್ತಿಕೊಂಡ ಘಟನೆ ನಡೆದಿದೆ.

ಬಸ್‌ನಲ್ಲಿದ್ದ ಏಳು ಪ್ರಯಾಣಿಕರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಉಡುಪಿಯಿಂದ ಸಾಗರದತ್ತ ಖಾಸಗಿ ಬಸ್ ತೆರಳುತ್ತಿತ್ತು. ಈ ವೇಳೆ ಬಸ್‌ನಲ್ಲಿ ಏಕಾಏಕಿ ಹೊಗೆ ಕಾಣಿಸಿಕೊಂಡಿದೆ. ಬಳಿಕ ಬಸ್‌ನ ಎಲೆಕ್ಟ್ರಿಕಲ್ ಬಾಕ್ಸ್ ಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕೆಲವೇ ಕ್ಷಣಗಳಲ್ಲಿ ಬೆಂಕಿ ವ್ಯಾಪಿಸಲು ಆರಂಭಿಸಿದೆ.

ಬೆಂಕಿ ಕಾಣಿಸಿಕೊಂಡ ಕೂಡಲೇ ಬಸ್ ನಿರ್ವಾಹಕ ಸಮಯಪ್ರಜ್ಞೆ ಮೆರೆದು ಬಸ್‌ನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿದ್ದಾರೆ. ತಕ್ಷಣವೇ ಬಸ್‌ನಲ್ಲಿದ್ದ ಏಳು ಪ್ರಯಾಣಿಕರನ್ನು ಕೆಳಗಿಳಿಸಿ ಸುರಕ್ಷಿತ ಸ್ಥಳಕ್ಕೆ ಕರೆದೊಯ್ದಿದ್ದಾರೆ.

ನಂತರ ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದು ಉಡುಪಿ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ನಡೆಸಿದ್ದಾರೆ. ಕೆಲಕಾಲ ಕಾರ್ಯಾಚರಣೆ ನಡೆಸಿದ ಬಳಿಕ ಬಸ್‌ಗೆ ಹೊತ್ತಿಕೊಂಡಿದ್ದ ಬೆಂಕಿಯನ್ನು ಸಂಪೂರ್ಣವಾಗಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ನಿರ್ವಾಹಕನ ಸಮಯೋಚಿತ ಕ್ರಮದಿಂದ ಬಸ್‌ನಲ್ಲಿದ್ದ ಪ್ರಯಾಣಿಕರಿಗೆ ಯಾವುದೇ ಅಪಾಯವಾಗಿಲ್ಲ. ಹೀಗಾಗಿ ಸಂಭವಿಸಬಹುದಾಗಿದ್ದ ದೊಡ್ಡ ಅನಾಹುತವೊಂದು ತಪ್ಪಿದೆ.

ಬಸ್‌ನ ಎಲೆಕ್ಟ್ರಿಕಲ್ ಬಾಕ್ಸ್‌ನಲ್ಲಿ ಬೆಂಕಿ ಕಾಣಿಸಿಕೊಂಡಿರುವುದರಿಂದ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಆದರೆ ಬೆಂಕಿಗೆ ನಿಖರ ಕಾರಣ ಇನ್ನಷ್ಟೇ ತಿಳಿದುಬರಬೇಕಿದೆ.

ಬ್ಯಾಡ್ಮಿಂಟನ್ ತಾರೆ ಸಿಂಧು ತಲೆಯ ಮೇಲಿದ್ದ ಡಿವೈಸ್ ಹಿಂದಿನ ರಹಸ್ಯವೇನು? ಇಲ್ಲಿದೆ ಉತ್ತರ

0

ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ. ಸಿಂಧು 2026ರ ಬಿಡಬ್ಲ್ಯೂಎಫ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಗೆಲುವಿನೊಂದಿಗೆ ಅಭಿಯಾನ ಆರಂಭಿಸಿದ್ದಾರೆ. ಆದರೆ, ಪಂದ್ಯದಲ್ಲಿ ಸಿಂಧು ಅವರ ಅದ್ಭುತ ಆಟದ ಜತೆಗೆ ಅವರ ತಲೆಯ ಬದಿಯಲ್ಲಿ ಕಾಣಿಸಿಕೊಂಡಿದ್ದ ಸಣ್ಣ ಸಾಧನವೊಂದು ಇದೀಗ ಭಾರೀ ಕುತೂಹಲಕ್ಕೆ ಕಾರಣವಾಗಿದೆ.

ಕಣ್ಣಿನ ಪಕ್ಕದಲ್ಲಿ ಸ್ಟಿಕ್ಕರ್‌ನಂತೆ ಕಾಣುತ್ತಿದ್ದ ಈ ಸಾಧನ ಸಾಮಾನ್ಯ ಹೆಡ್‌ಬ್ಯಾಂಡ್ ಅಥವಾ ಫ್ಯಾಷನ್ ಆಕ್ಸೆಸರಿಯಲ್ಲ. ಇದನ್ನು ‘Temple’ ಎಂದು ಕರೆಯಲಾಗುತ್ತಿದ್ದು, ಜೋಮಾಟೊ ಸಹ-ಸಂಸ್ಥಾಪಕ ದೀಪಿಂದರ್ ಗೋಯಲ್ ನೇತೃತ್ವದ ತಂಡ ಅಭಿವೃದ್ಧಿಪಡಿಸುತ್ತಿರುವ ಪ್ರಾಯೋಗಿಕ ವೇಯರಬಲ್ ತಂತ್ರಜ್ಞಾನವಾಗಿದೆ.

ಏನಿದು ‘Temple’ ಸಾಧನ?

ಹೆಚ್ಚಿನ ಸಾಮರ್ಥ್ಯದ ಕ್ರೀಡಾಪಟುಗಳ ತರಬೇತಿ ಹಾಗೂ ಸ್ಪರ್ಧೆಯ ಸಂದರ್ಭದಲ್ಲಿ ದೇಹ ಮತ್ತು ಮೆದುಳಿಗೆ ಸಂಬಂಧಿಸಿದ ವಿವಿಧ ಮಾಹಿತಿಯನ್ನು ಸಂಗ್ರಹಿಸುವ ಉದ್ದೇಶದಿಂದ Temple ಸಾಧನವನ್ನು ಅಭಿವೃದ್ಧಿಪಡಿಸಲಾಗುತ್ತಿದೆ.

ನೆತ್ತಿಯ ಬದಿಯಲ್ಲಿ ಧರಿಸಬಹುದಾದಷ್ಟು ಸಣ್ಣದಾಗಿರುವ ಈ ಸಾಧನವನ್ನು ಪಿ.ವಿ. ಸಿಂಧು ಈಗಾಗಲೇ ತರಬೇತಿ ಸಂದರ್ಭದಲ್ಲಿ ಪರೀಕ್ಷಿಸುತ್ತಿದ್ದಾರೆ ಎನ್ನಲಾಗಿದೆ. ಇದೀಗ ನೈಜ ಸ್ಪರ್ಧೆಯಲ್ಲೂ ಅವರು ಈ ಸಾಧನವನ್ನು ಧರಿಸಿರುವುದು ಗಮನ ಸೆಳೆದಿದೆ.

ವರದಿಗಳ ಪ್ರಕಾರ, Temple ಮೂಲಕ ಮೆದುಳಿಗೆ ಹೋಗುವ ರಕ್ತದ ಹರಿವು ಸೇರಿದಂತೆ ವಿವಿಧ ನರವೈಜ್ಞಾನಿಕ ಹಾಗೂ ಶಾರೀರಿಕ ಮಾಹಿತಿಯನ್ನು ಸಂಗ್ರಹಿಸುವ ಉದ್ದೇಶವಿದೆ. ಕ್ರೀಡಾಪಟುವಿನ ದೇಹ ಮತ್ತು ಮೆದುಳು ಒತ್ತಡಕ್ಕೆ ಹೇಗೆ ಪ್ರತಿಕ್ರಿಯಿಸುತ್ತವೆ, ಮಾನಸಿಕ ಶ್ರಮದ ಸಂದರ್ಭದಲ್ಲಿ ಏನೆಲ್ಲ ಬದಲಾವಣೆಗಳಾಗುತ್ತವೆ ಹಾಗೂ ಸ್ಪರ್ಧೆಯ ವೇಳೆ ದೈಹಿಕ ಮತ್ತು ಅರಿವಿನ ಸಾಮರ್ಥ್ಯ ಹೇಗೆ ಬದಲಾಗುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಈ ಡೇಟಾ ನೆರವಾಗಬಹುದು.

ಅಂದರೆ, ಇದು ಕೇವಲ ಹೃದಯ ಬಡಿತ ಅಥವಾ ಸಾಮಾನ್ಯ ಫಿಟ್ನೆಸ್ ಮಾಹಿತಿಯನ್ನು ಅಳೆಯುವ ಸಾಧನವಲ್ಲ. ಕ್ರೀಡಾಪಟುವಿನ ಮೆದುಳು ಮತ್ತು ದೇಹದ ಪ್ರತಿಕ್ರಿಯೆಗಳನ್ನು ಇನ್ನಷ್ಟು ಆಳವಾಗಿ ಅರ್ಥಮಾಡಿಕೊಳ್ಳುವ ಪ್ರಯತ್ನ ಇದರ ಹಿಂದಿದೆ.

ಸಿಂಧು ಏಕೆ ಪಂದ್ಯದಲ್ಲೂ Temple ಧರಿಸಿದ್ದಾರೆ?

ತರಬೇತಿ ಸಂದರ್ಭದಲ್ಲಿ ಸಾಧನವನ್ನು ಪರೀಕ್ಷಿಸುವುದರಿಂದ ನಿಯಂತ್ರಿತ ಪರಿಸ್ಥಿತಿಯಲ್ಲಿನ ಡೇಟಾ ಸಿಗುತ್ತದೆ. ಆದರೆ ನೈಜ ಪಂದ್ಯದಲ್ಲಿ ಒತ್ತಡ, ದೈಹಿಕ ಪರಿಶ್ರಮ ಹಾಗೂ ಸ್ಪರ್ಧಾತ್ಮಕ ವಾತಾವರಣದಿಂದ ಕ್ರೀಡಾಪಟುವಿನ ದೇಹ ಮತ್ತು ಮೆದುಳು ವಿಭಿನ್ನ ರೀತಿಯಲ್ಲಿ ಪ್ರತಿಕ್ರಿಯಿಸಬಹುದು.

ಹೀಗಾಗಿ ಪಿ.ವಿ. ಸಿಂಧು ಪಂದ್ಯದಲ್ಲೂ Temple ಧರಿಸಿರುವುದು ನೈಜ ಸ್ಪರ್ಧಾತ್ಮಕ ಪರಿಸ್ಥಿತಿಯಲ್ಲಿ ಸಾಧನ ಹೇಗೆ ಕಾರ್ಯನಿರ್ವಹಿಸುತ್ತದೆ ಮತ್ತು ಯಾವ ರೀತಿಯ ಮಾಹಿತಿಯನ್ನು ಸಂಗ್ರಹಿಸಬಹುದು ಎಂಬುದನ್ನು ಪರೀಕ್ಷಿಸುವ ಭಾಗವಾಗಿರಬಹುದು.

ಜೋಮಾಟೊದ ಸಹ-ಸಂಸ್ಥಾಪಕ ದೀಪಿಂದರ್ ಗೋಯಲ್ ನೇತೃತ್ವದ ತಂಡ ಈ ಸಾಧನವನ್ನು ಅಭಿವೃದ್ಧಿಪಡಿಸುತ್ತಿದ್ದು, ಕ್ರೀಡಾ ಪ್ರದರ್ಶನ ಮತ್ತು ಆರೋಗ್ಯ ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸ ಪ್ರಯೋಗವಾಗಿ ಇದನ್ನು ರೂಪಿಸಲಾಗುತ್ತಿದೆ. ಸಿಂಧು ಸೇರಿದಂತೆ ಉನ್ನತ ಮಟ್ಟದ ಕ್ರೀಡಾಪಟುಗಳಿಂದ ಸಾಧನದ ಪರೀಕ್ಷೆ ಹಾಗೂ ಪ್ರತಿಕ್ರಿಯೆ ಪಡೆಯಲಾಗುತ್ತಿದೆ ಎಂದು ವರದಿಯಾಗಿದೆ.

ಸಿಂಧು ಅವರ ಪತಿ ವೆಂಕಟ ದತ್ತ ಸಾಯಿ ಕೂಡ ಈ ಸಾಧನದ ಪರೀಕ್ಷೆಯಲ್ಲಿ ಭಾಗಿಯಾಗಿದ್ದು, ಆರಂಭಿಕ ಫಲಿತಾಂಶಗಳು ಉತ್ತೇಜನಕಾರಿಯಾಗಿವೆ ಎಂದು ತಿಳಿಸಿರುವುದಾಗಿ ವರದಿಗಳು ಹೇಳುತ್ತವೆ.

ಇನ್ನೂ ಮಾರುಕಟ್ಟೆಗೆ ಬಂದಿಲ್ಲ

ಸದ್ಯ Temple ಸಾಮಾನ್ಯ ಗ್ರಾಹಕರಿಗಾಗಿ ಮಾರುಕಟ್ಟೆಯಲ್ಲಿ ಲಭ್ಯವಿರುವ ಉತ್ಪನ್ನವಲ್ಲ. ಇದು ಇನ್ನೂ ಪರೀಕ್ಷೆ ಮತ್ತು ಅಭಿವೃದ್ಧಿಯ ಹಂತದಲ್ಲಿರುವ ಪ್ರಾಯೋಗಿಕ ಸಾಧನವಾಗಿದೆ.

ಮುಂದಿನ ದಿನಗಳಲ್ಲಿ ಇದನ್ನು ವೆಲ್‌ನೆಸ್ ಉತ್ಪನ್ನವಾಗಿ ಪರಿಚಯಿಸುವ ಉದ್ದೇಶವಿದೆ ಎಂದು ವರದಿಯಾಗಿದೆ. ಸಾಧನದ ವೈಜ್ಞಾನಿಕ ಅಂಶಗಳಿಗೆ ಪೀರ್-ರಿವ್ಯೂಡ್ ಸಂಶೋಧನಾ ಅಧ್ಯಯನಗಳ ಬೆಂಬಲ ಪಡೆಯುವ ಪ್ರಯತ್ನವೂ ನಡೆಯುತ್ತಿದೆ ಎನ್ನಲಾಗಿದೆ.

Temple ವಾಣಿಜ್ಯವಾಗಿ ಬಿಡುಗಡೆಯಾದರೆ ಇದರ ಬೆಲೆ ಸುಮಾರು 1,000 ಅಮೆರಿಕನ್ ಡಾಲರ್, ಅಂದರೆ ಸುಮಾರು ₹1 ಲಕ್ಷ ಇರಬಹುದು ಎಂಬ ವರದಿಗಳಿವೆ. ಆದರೆ ಇದು ಸದ್ಯದ ಅಂದಾಜು ಮಾತ್ರವಾಗಿದ್ದು, ಅಂತಿಮ ಬೆಲೆ ಮತ್ತು ಅಧಿಕೃತ ಬಿಡುಗಡೆಯ ದಿನಾಂಕ ಇನ್ನೂ ಖಚಿತವಾಗಿಲ್ಲ.

ಹೀಗಾಗಿ ಪಿ.ವಿ. ಸಿಂಧು ಅವರ ತಲೆಯ ಮೇಲಿದ್ದ ಸಣ್ಣ ಸಾಧನ ಇದೀಗ ಕೇವಲ ಅಭಿಮಾನಿಗಳ ಕುತೂಹಲಕ್ಕೆ ಕಾರಣವಾದ ಟೆಕ್ ಗ್ಯಾಜೆಟ್ ಆಗಿ ಉಳಿದಿಲ್ಲ. ಕ್ರೀಡಾಪಟುಗಳ ಕಾರ್ಯಕ್ಷಮತೆ, ಮಾನಸಿಕ ಒತ್ತಡ, ಚೇತರಿಕೆ ಹಾಗೂ ದೇಹ-ಮೆದುಳಿನ ಪ್ರತಿಕ್ರಿಯೆಗಳನ್ನು ಡೇಟಾ ಆಧಾರಿತವಾಗಿ ಅರ್ಥಮಾಡಿಕೊಳ್ಳುವ ಹೊಸ ಪ್ರಯತ್ನವಾಗಿ ‘Temple’ ಗಮನ ಸೆಳೆಯುತ್ತಿದೆ.

ಮಂಡ್ಯ: ಗಾರ್ಮೆಂಟ್ಸ್ ಕಾರ್ಖಾನೆಯಲ್ಲಿ ಅಗ್ನಿ ಅವಘಡ; ಕೋಟ್ಯಂತರ ರೂ. ಮೌಲ್ಯದ ವಸ್ತುಗಳು ಸುಟ್ಟು ಭಸ್ಮ

0

ಮಂಡ್ಯ: ಮದ್ದೂರು ನಗರದ ಮಳವಳ್ಳಿ ರಸ್ತೆಯಲ್ಲಿರುವ ಗಿಲ್ ವುಡ್ ಫ್ಯಾಷನ್ ಪ್ರೈವೇಟ್ ಲಿಮಿಟೆಡ್ ಗಾರ್ಮೆಂಟ್ಸ್ ಕಾರ್ಖಾನೆಯಲ್ಲಿ ಗುರುವಾರ ಬೆಳಗಿನ ಜಾವ ಭಾರೀ ಬೆಂಕಿ ಕಾಣಿಸಿಕೊಂಡಿದೆ.

ಬೆಂಕಿಯ ತೀವ್ರತೆಗೆ ಕಾರ್ಖಾನೆಯಲ್ಲಿದ್ದ ಬಟ್ಟೆ, ಯಂತ್ರೋಪಕರಣಗಳು ಸೇರಿದಂತೆ ಕೋಟ್ಯಂತರ ರೂಪಾಯಿ ಮೌಲ್ಯದ ವಸ್ತುಗಳು ಸುಟ್ಟು ಭಸ್ಮವಾಗಿವೆ.

ಗುರುವಾರ ಬೆಳಿಗ್ಗೆ ಕಾರ್ಮಿಕರು ಎಂದಿನಂತೆ ಕೆಲಸಕ್ಕೆ ಆಗಮಿಸಿದಾಗ ಕಾರ್ಖಾನೆಯಲ್ಲಿ ಬೆಂಕಿ ಕಾಣಿಸಿಕೊಂಡಿರುವುದು ಬೆಳಕಿಗೆ ಬಂದಿದೆ. ಕೆಲವೇ ಸಮಯದಲ್ಲಿ ಬೆಂಕಿ ಕಾರ್ಖಾನೆಯ ಒಳಭಾಗಕ್ಕೆ ವೇಗವಾಗಿ ಹರಡಿದ್ದು, ದಟ್ಟ ಹೊಗೆ ಆವರಿಸಿಕೊಂಡಿತ್ತು.

ತಕ್ಷಣ ಅಗ್ನಿಶಾಮಕ ಇಲಾಖೆಗೆ ಮಾಹಿತಿ ನೀಡಲಾಗಿದ್ದು, ಮದ್ದೂರು ಸೇರಿದಂತೆ ವಿವಿಧೆಡೆಯಿಂದ ಮೂರಕ್ಕೂ ಹೆಚ್ಚು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಆಗಮಿಸಿವೆ. ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಲು ಹಲವು ಗಂಟೆಗಳ ಕಾಲ ಹರಸಾಹಸ ನಡೆಸಿದರು. 15ಕ್ಕೂ ಹೆಚ್ಚು ಕಾರ್ಮಿಕರು ಹಾಗೂ ಸಿಬ್ಬಂದಿ ಕೂಡ ಬೆಂಕಿ ನಂದಿಸುವ ಕಾರ್ಯದಲ್ಲಿ ನೆರವಾದರು.

ಕಾರ್ಖಾನೆಯಲ್ಲಿದ್ದ ಬಟ್ಟೆ, ಸಿದ್ಧ ಉಡುಪುಗಳು, ಯಂತ್ರೋಪಕರಣಗಳು ಹಾಗೂ ಇತರ ಸಾಮಗ್ರಿಗಳು ಬೆಂಕಿಗೆ ಆಹುತಿಯಾಗಿವೆ. ಘಟನೆಯಿಂದ ಸುಮಾರು ₹5ರಿಂದ ₹6 ಕೋಟಿಗೂ ಹೆಚ್ಚು ಮೌಲ್ಯದ ವಸ್ತುಗಳು ನಾಶವಾಗಿರುವುದಾಗಿ ಅಂದಾಜಿಸಲಾಗಿದೆ.

ಈ ಗಾರ್ಮೆಂಟ್ಸ್ ಕಾರ್ಖಾನೆ ಈ ಹಿಂದೆ ಮದ್ದೂರು ತಾಲೂಕಿನ ಸೋಮನಹಳ್ಳಿ ಗ್ರಾಮದಲ್ಲಿ ಕಾರ್ಯನಿರ್ವಹಿಸುತ್ತಿತ್ತು. ಇತ್ತೀಚೆಗೆ ಕಾರ್ಖಾನೆಯನ್ನು ಸೋಮನಹಳ್ಳಿಯಿಂದ ಮದ್ದೂರು ನಗರಕ್ಕೆ ಸ್ಥಳಾಂತರಿಸಲಾಗಿತ್ತು. ಸ್ಥಳಾಂತರಗೊಂಡ ಕೆಲವೇ ದಿನಗಳಲ್ಲಿ ಈ ಅಗ್ನಿ ಅವಘಡ ಸಂಭವಿಸಿರುವುದು ಆತಂಕಕ್ಕೆ ಕಾರಣವಾಗಿದೆ.

ಅಗ್ನಿ ಅವಘಡದ ವೇಳೆ ಕಾರ್ಮಿಕರು ಕೆಲಸಕ್ಕೆ ಆಗಮಿಸುತ್ತಿದ್ದ ಸಮಯವಾಗಿದ್ದರೂ, ಬೆಂಕಿ ಕಾಣಿಸಿಕೊಂಡ ಕೂಡಲೇ ಎಲ್ಲರೂ ಹೊರಗೆ ಬಂದಿದ್ದಾರೆ ಎನ್ನಲಾಗಿದೆ. ಹೀಗಾಗಿ ಯಾವುದೇ ಪ್ರಾಣಹಾನಿ ಸಂಭವಿಸಿರುವ ಬಗ್ಗೆ ಸದ್ಯಕ್ಕೆ ಮಾಹಿತಿ ಇಲ್ಲ.

ಮದ್ದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೆಂಕಿ ಹೇಗೆ ಹೊತ್ತಿಕೊಂಡಿತು ಎಂಬುದು ಇನ್ನೂ ಖಚಿತವಾಗಿಲ್ಲ. ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಿತೇ ಅಥವಾ ಬೇರೆ ಕಾರಣವಿದೆಯೇ ಎಂಬ ಬಗ್ಗೆ ತನಿಖೆ ನಡೆಯಬೇಕಿದೆ.

ಘಟನೆಯಿಂದ ಗಾರ್ಮೆಂಟ್ಸ್ ಮಾಲೀಕರು ಹಾಗೂ ಕಾರ್ಮಿಕರಲ್ಲಿ ಆತಂಕ ಮೂಡಿದ್ದು, ಕೋಟ್ಯಂತರ ರೂಪಾಯಿ ನಷ್ಟ ಉಂಟಾಗಿದೆ. ಅಗ್ನಿ ಅವಘಡಕ್ಕೆ ನಿಖರ ಕಾರಣ ಹಾಗೂ ಸಂಭವಿಸಿದ ಒಟ್ಟು ನಷ್ಟದ ಬಗ್ಗೆ ಅಧಿಕಾರಿಗಳ ಪರಿಶೀಲನೆಯ ನಂತರ ಸ್ಪಷ್ಟ ಮಾಹಿತಿ ಲಭ್ಯವಾಗಲಿದೆ.

ಬೆಳ್ಳೂರು ಟೋಲ್ ಬಳಿ ಬಸ್ ಪಲ್ಟಿ; ಇಬ್ಬರು ದುರ್ಮರಣ, 20ಕ್ಕೂ ಹೆಚ್ಚು ಪ್ರಯಾಣಿಕರು ಗಾಯ

0

ಮಂಡ್ಯ: ಹೆದ್ದಾರಿಯಲ್ಲಿ ಅಳವಡಿಸಿದ್ದ ಸೈನ್‌ಬೋರ್ಡ್‌ಗೆ ಖಾಸಗಿ ಬಸ್ ಡಿಕ್ಕಿ ಹೊಡೆದು ಪಲ್ಟಿಯಾದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಬೆಳ್ಳೂರು ಟೋಲ್ ಬಳಿ ನಡೆದಿದೆ.

ಮಂಗಳೂರಿನಿಂದ ಬೆಂಗಳೂರಿನತ್ತ ತೆರಳುತ್ತಿದ್ದ ಖಾಸಗಿ ಬಸ್ ಬೆಳ್ಳೂರು ಟೋಲ್ ಸಮೀಪ ವೇಗವಾಗಿ ಸಂಚರಿಸುತ್ತಿತ್ತು. ಈ ವೇಳೆ ಹೆದ್ದಾರಿಯಲ್ಲಿ ಅಳವಡಿಸಿದ್ದ ಸೈನ್‌ಬೋರ್ಡ್‌ಗೆ ಬಸ್ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಚಾಲಕನ ನಿಯಂತ್ರಣ ತಪ್ಪಿ ಬಸ್ ರಸ್ತೆಯಲ್ಲಿ ಪಲ್ಟಿಯಾಗಿದೆ.

ಅಪಘಾತದಲ್ಲಿ ಬಸ್‌ನಲ್ಲಿದ್ದ ಬೆಂಗಳೂರಿನ ನಿವಾಸಿ ಕಸ್ತೂರಿ ಶಾನ್‌ಬಾಗ್ (64) ಹಾಗೂ ಬಸ್ ಕ್ಲೀನರ್ ಅಶೋಕ್ (25) ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಬಸ್ ಪಲ್ಟಿಯಾದ ಪರಿಣಾಮ 20ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ. ಅಪಘಾತದ ಬಳಿಕ ಸ್ಥಳೀಯರು ಹಾಗೂ ಪೊಲೀಸರು ಗಾಯಾಳುಗಳನ್ನು ಬಸ್‌ನಿಂದ ಹೊರತೆಗೆದು ಆಸ್ಪತ್ರೆಗೆ ಕರೆದೊಯ್ಯಲು ನೆರವಾದರು. ಗಾಯಾಳುಗಳನ್ನು ಬೆಳ್ಳೂರು ಬಿಜಿಎಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ಘಟನೆ ಕುರಿತು ಮಾಹಿತಿ ತಿಳಿದ ಕೂಡಲೇ ಬೆಳ್ಳೂರು ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಅಪಘಾತದಿಂದ ಕೆಲಕಾಲ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೂ ಅಡಚಣೆ ಉಂಟಾಯಿತು.

ಈ ಕುರಿತು ಬೆಳ್ಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಸ್ ಅತಿವೇಗವಾಗಿ ಚಲಿಸುತ್ತಿತ್ತೇ ಅಥವಾ ಅಪಘಾತಕ್ಕೆ ಬೇರೆ ಯಾವುದೇ ಕಾರಣವಿದೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇರಾನ್ ಜೊತೆ ವ್ಯಾಪಾರ ಬಂದ್ ಮಾಡಿ; ಇಲ್ಲದಿದ್ದರೆ ಆರ್ಥಿಕ ಪರಿಣಾಮ ಎದುರಿಸಿ: ಟ್ರಂಪ್ ಎಚ್ಚರಿಕೆ

0

ವಾಷಿಂಗ್ಟನ್: ಇರಾನ್‌ಗೆ ಸಹಾಯ ಮಾಡುವ ಅಥವಾ ಆ ದೇಶದೊಂದಿಗೆ ವ್ಯವಹಾರ ನಡೆಸುವ ದೇಶಗಳ ವಿರುದ್ಧ ಕಠಿಣ ಆರ್ಥಿಕ ಕ್ರಮ ಕೈಗೊಳ್ಳುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.

ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷ ಮುಂದುವರಿದಿರುವ ನಡುವೆಯೇ ಟ್ರಂಪ್ ಈ ಎಚ್ಚರಿಕೆ ನೀಡಿದ್ದಾರೆ. ಇರಾನ್‌ಗೆ ನೆರವು ನೀಡುವ ಅಥವಾ ಅದರೊಂದಿಗೆ ವ್ಯಾಪಾರ ನಡೆಸುವ ಯಾವುದೇ ದೇಶವು ಭಾರೀ ಆರ್ಥಿಕ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ.

ಇರಾನ್‌ಗೆ ಒಪ್ಪಂದ ಮಾಡಿಕೊಳ್ಳಲು ಅಮೆರಿಕದ ಕಡೆಯಿಂದ ದೊಡ್ಡ ಅವಕಾಶ ನೀಡಲಾಗಿತ್ತು. ಆದರೆ ಇರಾನ್ ಅದನ್ನು ಬಳಸಿಕೊಳ್ಳುವಲ್ಲಿ ವಿಫಲವಾಗಿದೆ ಎಂದು ಟ್ರಂಪ್ ಹೇಳಿದ್ದಾರೆ. ಹೀಗಾಗಿ ಇರಾನ್ ವಿರುದ್ಧ ಇದುವರೆಗೆ ಕೈಗೊಳ್ಳದಷ್ಟು ಕಠಿಣ ಆರ್ಥಿಕ ಕ್ರಮಗಳನ್ನು ಜಾರಿಗೆ ತರಲಾಗುವುದು ಎಂದು ಅವರು ತಿಳಿಸಿದ್ದಾರೆ.

ಇರಾನ್‌ಗೆ ಯಾವುದೇ ರೀತಿಯ ನೆರವು ನೀಡದಂತೆ ಇತರ ದೇಶಗಳಿಗೆ ಟ್ರಂಪ್ ಸೂಚನೆ ನೀಡಿದ್ದಾರೆ. ವಿಶೇಷವಾಗಿ ಹಣಕಾಸು ಸಂಸ್ಥೆಗಳು, ವ್ಯಾಪಾರ ಸಂಸ್ಥೆಗಳು, ವಿಮಾನ ನಿಲ್ದಾಣಗಳು ಅಥವಾ ಸರ್ಕಾರಿ ಸಂಸ್ಥೆಗಳ ಮೂಲಕ ಇರಾನ್‌ಗೆ ನೆರವು ನೀಡಿದರೆ ಸಂಬಂಧಪಟ್ಟ ದೇಶಗಳು ಗಂಭೀರ ಆರ್ಥಿಕ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಇರಾನ್‌ನ ತೈಲ ಕಳ್ಳಸಾಗಣೆ, ಹಣ ವರ್ಗಾವಣೆ, ವಿನಿಮಯ ವ್ಯವಸ್ಥೆ ಹಾಗೂ ಹಡಗು ನೋಂದಣಿ ಸೇರಿದಂತೆ ಇರಾನ್‌ನ ಆರ್ಥಿಕ ವ್ಯವಸ್ಥೆಗೆ ನೆರವಾಗುವ ಮಾರ್ಗಗಳನ್ನು ತಕ್ಷಣ ಸ್ಥಗಿತಗೊಳಿಸುವಂತೆ ಟ್ರಂಪ್ ಸೂಚಿಸಿದ್ದಾರೆ.

ಇರಾನ್‌ನ ಪ್ರಮುಖ ವ್ಯಾಪಾರ ಪಾಲುದಾರರಾಗಿ ಚೀನಾ, ಭಾರತ, ಟರ್ಕಿ, ಜರ್ಮನಿ, ದಕ್ಷಿಣ ಕೊರಿಯಾ ಮತ್ತು ಜಪಾನ್ ದೇಶಗಳು ಗುರುತಿಸಿಕೊಂಡಿವೆ. ಹೀಗಾಗಿ ಟ್ರಂಪ್ ಅವರ ಈ ಎಚ್ಚರಿಕೆ ಇರಾನ್ ಜೊತೆ ವ್ಯಾಪಾರ ನಡೆಸುವ ಹಲವು ದೇಶಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.