Home Blog

ಬರ ವೀಕ್ಷಣೆಯಲ್ಲೂ ಬಣ ರಾಜಕೀಯ ಬಿಸಿ: ಎಂ.ಬಿ. ಪಾಟೀಲ್ ಜೊತೆ ಯಶವಂತರಾಯಗೌಡ ಪಾಟೀಲ್ ಗೈರು

0

ವಿಜಯಪುರ: ರಾಜ್ಯ ಸಚಿವ ಸಂಪುಟ ವಿಸ್ತರಣೆ ವೇಳೆ ಬಹಿರಂಗವಾಗಿದ್ದ ಸಚಿವ ಎಂ.ಬಿ. ಪಾಟೀಲ್ ಹಾಗೂ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್ ನಡುವಿನ ಅಸಮಾಧಾನ ಇದೀಗ ಮತ್ತೆ ಮುನ್ನೆಲೆಗೆ ಬಂದಿದೆ. ಜಿಲ್ಲೆಯ ಬರ ಪರಿಸ್ಥಿತಿ ಪರಿಶೀಲನೆಗೆ ಸಚಿವ ಎಂ.ಬಿ. ಪಾಟೀಲ್ ಆಗಮಿಸಿದ ವೇಳೆ ಶಾಸಕ ಯಶವಂತರಾಯಗೌಡ ಪಾಟೀಲ್ ಗೈರಾಗಿರುವುದು ಕಾಂಗ್ರೆಸ್ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

ನೂತನ ಜಿಲ್ಲಾ ಉಸ್ತುವಾರಿ ಸಚಿವರಿಗೆ ಜಿಲ್ಲೆಯ ಪ್ರತಿಯೊಂದು ವಿಧಾನಸಭಾ ಕ್ಷೇತ್ರದಲ್ಲಿ ಬರ ವೀಕ್ಷಣೆ ನಡೆಸಿ ವರದಿ ಸಲ್ಲಿಸುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೂಚಿಸಿದ್ದರು. ಅದರಂತೆ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ್ ಇಂಡಿ ಕ್ಷೇತ್ರದಲ್ಲಿ ಬರ ಪರಿಸ್ಥಿತಿ ಪರಿಶೀಲನೆ ನಡೆಸಿದರು. ಆದರೆ ಕ್ಷೇತ್ರದ ಶಾಸಕ ಯಶವಂತರಾಯಗೌಡ ಪಾಟೀಲ್ ಕಾರ್ಯಕ್ರಮಕ್ಕೆ ಗೈರಾಗಿದ್ದರು.

ಸಚಿವ ಸ್ಥಾನ ಕೈತಪ್ಪಿದ ಬಳಿಕ ಎಂ.ಬಿ. ಪಾಟೀಲ್ ವಿರುದ್ಧ ಬಹಿರಂಗ ಅಸಮಾಧಾನ ವ್ಯಕ್ತಪಡಿಸಿದ್ದ ಯಶವಂತರಾಯಗೌಡ ಪಾಟೀಲ್, ತಮ್ಮ ರಾಜೀನಾಮೆಯನ್ನೂ ಸಲ್ಲಿಸಿದ್ದರು. ಬಳಿಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಸೇರಿದಂತೆ ಕಾಂಗ್ರೆಸ್‌ನ ಹಲವು ನಾಯಕರು ಮಧ್ಯಪ್ರವೇಶಿಸಿ ಅವರನ್ನು ಮನವೊಲಿಸಿದ್ದರು.

ರಾಜ್ಯ ಮಟ್ಟದಲ್ಲಿ ಅಸಮಾಧಾನ ಶಮನವಾದಂತೆ ಕಂಡುಬಂದಿದ್ದರೂ, ವಿಜಯಪುರ ಜಿಲ್ಲೆಯಲ್ಲಿ ಇಬ್ಬರು ನಾಯಕರ ನಡುವಿನ ಮುನಿಸು ಮುಂದುವರಿದಿರುವುದು ಇದೀಗ ಬರ ವೀಕ್ಷಣೆ ವೇಳೆ ಮತ್ತೆ ಬಹಿರಂಗವಾಗಿದೆ.

ಮೊದಲ ಸಚಿವ ಸಂಪುಟ ವಿಸ್ತರಣೆಯಲ್ಲಿ ವಿಜಯಪುರ ಜಿಲ್ಲೆಯಿಂದ ಎಂ.ಬಿ. ಪಾಟೀಲ್ ಅವರಿಗೆ ಮಾತ್ರ ಸಚಿವ ಸ್ಥಾನ ದೊರೆತಿತ್ತು. ಎರಡನೇ ಹಂತದ ಸಂಪುಟ ವಿಸ್ತರಣೆಯಲ್ಲಿ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್ ಹಾಗೂ ಮುದ್ದೇಬಿಹಾಳ ಶಾಸಕ ಸಿ.ಎಸ್. ನಾಡಗೌಡ ಸಚಿವ ಸ್ಥಾನಕ್ಕಾಗಿ ಪ್ರಯತ್ನ ನಡೆಸಿದ್ದರು. ಆದರೆ ಇಬ್ಬರಿಗೂ ಸಚಿವ ಸ್ಥಾನ ಸಿಗಲಿಲ್ಲ.

ಸಚಿವ ಸ್ಥಾನ ಕೈತಪ್ಪಲು ಎಂ.ಬಿ. ಪಾಟೀಲ್ ಅವರೇ ಕಾರಣ ಎಂದು ಯಶವಂತರಾಯಗೌಡ ಪಾಟೀಲ್ ಈ ಹಿಂದೆ ಬಹಿರಂಗವಾಗಿ ಆರೋಪಿಸಿದ್ದರು. ಇದೀಗ ಬರ ವೀಕ್ಷಣೆಯ ಕಾರ್ಯಕ್ರಮದಿಂದ ದೂರ ಉಳಿದಿರುವುದು ಜಿಲ್ಲೆಯ ಕಾಂಗ್ರೆಸ್ ರಾಜಕೀಯದಲ್ಲಿ ಅಸಮಾಧಾನ ಇನ್ನೂ ಸಂಪೂರ್ಣವಾಗಿ ಶಮನವಾಗಿಲ್ಲ ಎಂಬ ಚರ್ಚೆಗೆ ಕಾರಣವಾಗಿದೆ.

ಮುಂದಿನ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯ ಇಬ್ಬರು ಪ್ರಮುಖ ನಾಯಕರ ನಡುವಿನ ಈ ಭಿನ್ನಾಭಿಪ್ರಾಯ ಕಾಂಗ್ರೆಸ್ ಸಂಘಟನೆಯ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂಬುದು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.

ಕನಸಿನಲ್ಲಿ ಶ್ರೀರಂಗನಾಥಸ್ವಾಮಿ ದರ್ಶನ: ₹66.78 ಲಕ್ಷದ ಚಿನ್ನದ ಕಲಶ ಅರ್ಪಿಸಿದ ಟಿವಿಎಸ್‌ ವೇಣು ಶ್ರೀನಿವಾಸನ್

0

ಮಂಡ್ಯ: ಕನಸಿನಲ್ಲಿ ಶ್ರೀರಂಗನಾಥಸ್ವಾಮಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಶ್ರೀರಂಗಪಟ್ಟಣದ ಶ್ರೀರಂಗನಾಥಸ್ವಾಮಿ ದೇವಾಲಯಕ್ಕೆ ಆಗಮಿಸಿದ ಟಿವಿಎಸ್‌ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ವೇಣು ಶ್ರೀನಿವಾಸನ್ ಅವರು ₹66.78 ಲಕ್ಷ ಮೌಲ್ಯದ ಚಿನ್ನದ ಅಷ್ಟಲಕ್ಷ್ಮಿ ಕಲಶವನ್ನು ಸಮರ್ಪಿಸಿದ್ದಾರೆ.

398.580 ಗ್ರಾಂ ಶುದ್ಧ ಬಂಗಾರದಿಂದ ನಿರ್ಮಿಸಿರುವ ಕಲಶದ ಸುತ್ತಲೂ ಅಷ್ಟಲಕ್ಷ್ಮಿಯರ ಚಿತ್ರಗಳನ್ನು ಕೆತ್ತಲಾಗಿದೆ. ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಉಮಾ ಅವರಿಗೆ ಕಲಶ ಹಸ್ತಾಂತರಿಸಲಾಯಿತು.

ನಂತರ ಮಂಗಳವಾದ್ಯಗಳೊಂದಿಗೆ ರಾಯಗೋಪುರದಿಂದ ಗರ್ಭಗುಡಿಯವರೆಗೆ ಕಲಶವನ್ನು ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು. ಶ್ರೀರಂಗನಾಥಸ್ವಾಮಿ ಸನ್ನಿಧಿಯಲ್ಲಿ ಕಲಶವನ್ನಿರಿಸಿ ವಿಶೇಷ ಪೂಜೆ ನೆರವೇರಿಸಲಾಯಿತು. ಪ್ರಧಾನ ಅರ್ಚಕ ವಿಜಯಸಾರಥಿ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ನಡೆದವು.

ಶ್ರೀರಂಗಪಟ್ಟಣದ ಈ ಪವಿತ್ರ ಕ್ಷೇತ್ರಕ್ಕೆ 27 ವರ್ಷಗಳ ಹಿಂದೆಯೇ ಬರಬೇಕೆಂಬ ಆಸೆ ಹೊಂದಿದ್ದೆ. ಆದರೆ ಅಂದು ಭೇಟಿ ಸಾಧ್ಯವಾಗಿರಲಿಲ್ಲ. ಇದೀಗ ಶ್ರೀರಂಗನಾಥಸ್ವಾಮಿ ಕನಸಿನಲ್ಲಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಇಲ್ಲಿಗೆ ಬಂದು ಸೇವೆ ಸಲ್ಲಿಸಿದ್ದೇನೆ ಎಂದು ವೇಣು ಶ್ರೀನಿವಾಸನ್ ಹೇಳಿದರು.

ಗದಗ| ಇಬ್ಬರು ಬಾಂಗ್ಲಾದೇಶಿ ನಿವಾಸಿಗಳ ಪತ್ತೆ: ಆಧಾರ್ ಪಶ್ಚಿಮ ಬಂಗಾಳದ್ದು, ಜನ್ಮಸ್ಥಳ ಬಾಂಗ್ಲಾದೇಶದ್ದು!

ಗದಗ: ತಾಲೂಕಿನ ಹರ್ತಿ ಗ್ರಾಮದ ಹೊರವಲಯದಲ್ಲಿ ನಿರ್ಮಾಣ ಹಂತದಲ್ಲಿರುವ ಅಲ್ಪಸಂಖ್ಯಾತ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಕಟ್ಟಡ ಕಾಮಗಾರಿ ಸ್ಥಳದಲ್ಲಿ ಅಕ್ರಮವಾಗಿ ಭಾರತದಲ್ಲಿ ನೆಲೆಸಿದ್ದರೆನ್ನಲಾದ ಇಬ್ಬರು ಬಾಂಗ್ಲಾದೇಶಿ ನಿವಾಸಿಗಳು ಪತ್ತೆಯಾಗಿದ್ದಾರೆ. ಕಳೆದ ಎರಡು ತಿಂಗಳಿಂದ ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದ ಸಕೀಬ್ ಸಹೀನ್ (೨೬) ಹಾಗೂ ದಿಲಾವರ್ ಹುಸೇನ್ (೨೨) ಅವರನ್ನು ಗದಗ ಗ್ರಾಮೀಣ ಠಾಣೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಇಬ್ಬರೂ ಪಶ್ಚಿಮ ಬಂಗಾಳದಿಂದ ಬಂದಿದ್ದ ಕೂಲಿ ಕಾರ್ಮಿಕರ ತಂಡದೊಂದಿಗೆ ಗದಗ ಜಿಲ್ಲೆಗೆ ಆಗಮಿಸಿದ್ದರು ಎನ್ನಲಾಗಿದೆ. ಹರ್ತಿಯ ವಸತಿ ಶಾಲೆ ಕಟ್ಟಡ ಕಾಮಗಾರಿಯಲ್ಲಿ ಕಳೆದ ಎರಡು ತಿಂಗಳಿಂದ ಕೆಲಸ ಮಾಡುತ್ತಿದ್ದರು.

ಇವರ ಬಳಿ ಪಶ್ಚಿಮ ಬಂಗಾಳ ರಾಜ್ಯದ ವಿಳಾಸ ಹೊಂದಿರುವ ಆಧಾರ್ ಕಾರ್ಡ್ ಇತ್ತು. ಆದರೆ, ಜನ್ಮಸ್ಥಳ ಹಾಗೂ ಇತರೆ ದಾಖಲೆಗಳ ಪರಿಶೀಲನೆ ನಡೆಸಿದಾಗ ಇಬ್ಬರೂ ಬಾಂಗ್ಲಾದೇಶದ ನಿವಾಸಿಗಳು ಎಂಬುದು ಪೊಲೀಸರ ಗಮನಕ್ಕೆ ಬಂದಿದೆ. ಹೀಗಾಗಿ, ದಾಖಲೆಗಳ ಸತ್ಯಾಸತ್ಯತೆ ಹಾಗೂ ಇಬ್ಬರ ಹಿನ್ನೆಲೆ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಬೆಂಗಳೂರು, ಮಂಗಳೂರು, ಗಂಗಾವತಿಯಲ್ಲೂ ಕೆಲಸ!

ವಿಚಾರಣೆ ವೇಳೆ ಸಕೀಬ್ ಸಹೀನ್ ಹಾಗೂ ದಿಲಾವರ್ ಹುಸೇನ್ ಈ ಹಿಂದೆ ಬೆಂಗಳೂರು, ಮಂಗಳೂರು, ಗಂಗಾವತಿ ಸೇರಿದಂತೆ ವಿವಿಧೆಡೆ ಕೂಲಿ ಕೆಲಸ ಮಾಡಿದ್ದರೆನ್ನಲಾಗಿದೆ. ಭಾರತಕ್ಕೆ ಯಾವ ಮಾರ್ಗದಲ್ಲಿ ಪ್ರವೇಶಿಸಿದರು, ಎಲ್ಲೆಲ್ಲಿ ವಾಸವಾಗಿದ್ದರು, ಯಾರು ಇವರನ್ನು ಕೆಲಸಕ್ಕೆ ಕರೆತಂದರು ಎಂಬುದರ ಕುರಿತು ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇಬ್ಬರ ದಾಖಲೆಗಳು ಹಾಗೂ ಹಿನ್ನೆಲೆಯನ್ನು ಪರಿಶೀಲಿಸಲಾಗುತ್ತಿದೆ.

ಈ ಕುರಿತು ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ಮಾತನಾಡಿ, ಹರ್ತಿ ಗ್ರಾಮದ ವಸತಿ ಶಾಲೆ ಕಟ್ಟಡ ಕಾಮಗಾರಿಯಲ್ಲಿ ಇಬ್ಬರು ಬಾಂಗ್ಲಾದೇಶಿ ನಿವಾಸಿಗಳು ಕಳೆದ ಎರಡು ತಿಂಗಳಿಂದ ಕೆಲಸ ಮಾಡುತ್ತಿದ್ದರು. ಅವರನ್ನು ವಶಕ್ಕೆ ಪಡೆದು ದಾಖಲೆಗಳು ಹಾಗೂ ಹಿನ್ನೆಲೆಯ ಕುರಿತು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಹರ್ತಿಯ ಕಟ್ಟಡ ಕಾಮಗಾರಿ ಸ್ಥಳದಲ್ಲಿ ಪತ್ತೆಯಾದ ಈ ಪ್ರಕರಣ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಪಶ್ಚಿಮ ಬಂಗಾಳದ ವಿಳಾಸದ ಆಧಾರ್ ಕಾರ್ಡ್ ಇವರ ಕೈಗೆ ಹೇಗೆ ಬಂತು? ಗದಗಕ್ಕೆ ಇವರನ್ನು ಕರೆತಂದವರು ಯಾರು? ಭಾರತಕ್ಕೆ ಯಾವ ಮಾರ್ಗದಲ್ಲಿ ಪ್ರವೇಶಿಸಿದ್ದರು? ಈ ಎಲ್ಲ ಪ್ರಶ್ನೆಗಳಿಗೆ ಪೊಲೀಸ್ ತನಿಖೆಯಿಂದ ಉತ್ತರ ಸಿಗಬೇಕಿದೆ.

ಬೆಂಗಳೂರಿನಿಂದ ಗೋವಾಕ್ಕೆ ತೆರಳುತ್ತಿದ್ದ ಬಸ್ ಪಲ್ಟಿ: ಮೂವರು ಸಾವು!

0

ಚಿತ್ರದುರ್ಗ: ಬೆಂಗಳೂರಿನಿಂದ ಗೋವಾಕ್ಕೆ ತೆರಳುತ್ತಿದ್ದ ಖಾಸಗಿ ಪ್ರವಾಸಿ ಬಸ್‌ವೊಂದು ರಾಷ್ಟ್ರೀಯ ಹೆದ್ದಾರಿಯಲ್ಲಿ ಪಲ್ಟಿಯಾಗಿ ದುರಂತ ಸಂಭವಿಸಿದೆ. ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಐಮಂಗಲ ಬಳಿ ನಡೆದ ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದು, ಸುಮಾರು ೨೦ ಮಂದಿ ಗಾಯಗೊಂಡಿದ್ದಾರೆ.

ಐಮಂಗಲ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಬಸ್‌ ನಿಯಂತ್ರಣ ತಪ್ಪಿ ರಸ್ತೆಯ ಎಡಭಾಗದ ಕಂದಕಕ್ಕೆ ಉರುಳಿದೆ. ಬಸ್‌ನಲ್ಲಿದ್ದ ಒಟ್ಟು ೫೩ ಪ್ರಯಾಣಿಕರ ಪೈಕಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಅಪಘಾತದಲ್ಲಿ ಗಾಯಗೊಂಡ ಸುಮಾರು ೨೦ ಮಂದಿಯನ್ನು ಚಿಕಿತ್ಸೆಗಾಗಿ ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳ ಪೈಕಿ ಕೆಲವರ ಸ್ಥಿತಿ ಗಂಭೀರವಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಬೇಕಿದೆ.

ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಐಮಂಗಲ ಠಾಣೆ ಪೊಲೀಸರು ತೆರಳಿ ಪರಿಶೀಲನೆ ನಡೆಸಿದ್ದಾರೆ. ಘಟನೆಗೆ ನಿಖರ ಕಾರಣವೇನು ಎಂಬುದು ಪೊಲೀಸ್ ತನಿಖೆಯಿಂದ ತಿಳಿದುಬರಬೇಕಿದೆ. ಐಮಂಗಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ವಿದೇಶಿ ಟೆಸ್ಟ್ʼಗಳಲ್ಲಿ ಸಚಿನ್ʼಗಿಂತ ಕೊಹ್ಲಿಯೇ ಬೆಸ್ಟ್: ಕ್ರಿಕೆಟ್ ದಿಗ್ಗಜರ ಹೋಲಿಕೆಯಲ್ಲಿ ಡಿವಿಲಿಯರ್ಸ್ ಕೊಟ್ಟ ಕಾರಣವೇನು?

0

ಗಾಲೆ: ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ 165 ರನ್‌ಗಳ ಭರ್ಜರಿ ಗೆಲುವು ದಾಖಲಿಸಿದ ಬೆನ್ನಲ್ಲೇ, ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ವಿರಾಟ್ ಕೊಹ್ಲಿ ಜೊತೆ ಆಡಿದ್ದ ಎಬಿ ಡಿವಿಲಿಯರ್ಸ್ ನೀಡಿರುವ ಹೇಳಿಕೆ ಇದೀಗ ಭಾರಿ ಚರ್ಚೆಗೆ ಕಾರಣವಾಗಿದೆ.

ವಿದೇಶಿ ಟೆಸ್ಟ್‌ ಪಂದ್ಯಗಳ ಪ್ರದರ್ಶನವನ್ನು ಪರಿಗಣಿಸಿದರೆ ಸಚಿನ್ ತೆಂಡೂಲ್ಕರ್‌ಗಿಂತ ವಿರಾಟ್ ಕೊಹ್ಲಿಯೇ ಉತ್ತಮ ಬ್ಯಾಟರ್ ಎಂದು ಎಬಿ ಡಿವಿಲಿಯರ್ಸ್ ಅಭಿಪ್ರಾಯಪಟ್ಟಿದ್ದಾರೆ. ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಎಬಿಡಿ, ವಿದೇಶಿ ನೆಲದಲ್ಲಿ ಕೊಹ್ಲಿ ಭಾರತೀಯ ಬ್ಯಾಟಿಂಗ್‌ನ ಮಟ್ಟವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ದಿದ್ದಾರೆ ಎಂದು ಮಾಜಿ ಸಹ ಆಟಗಾರನನ್ನು ಕೊಂಡಾಡಿದ್ದಾರೆ.

ವಿದೇಶದ ಬೌನ್ಸಿ ಪಿಚ್‌ಗಳಲ್ಲೂ ಏಷ್ಯಾದ ಬ್ಯಾಟರ್‌ಗಳು ಅತ್ಯುತ್ತಮವಾಗಿ ಆಡಬಲ್ಲರು ಎಂಬ ನಂಬಿಕೆಯನ್ನು ಮೊದಲು ಮೂಡಿಸಿದವರಲ್ಲಿ ಸಚಿನ್ ತೆಂಡೂಲ್ಕರ್ ಪ್ರಮುಖರು ಎಂದು ಡಿವಿಲಿಯರ್ಸ್ ಹೇಳಿದ್ದಾರೆ.

ಆದರೆ, ಸಚಿನ್ ಆರಂಭಿಸಿದ ಆ ದಾರಿಯನ್ನು ವಿರಾಟ್ ಕೊಹ್ಲಿ ಮುಂದಿನ ಹಂತಕ್ಕೆ ಕೊಂಡೊಯ್ದರು. ವಿದೇಶಿ ಟೆಸ್ಟ್ ಸರಣಿಗಳಲ್ಲಿ ಭಾರತವನ್ನು ಗೆಲುವಿನ ತಂಡವನ್ನಾಗಿ ರೂಪಿಸುವಲ್ಲಿ ಕೊಹ್ಲಿಯ ಬ್ಯಾಟಿಂಗ್ ಹಾಗೂ ನಾಯಕತ್ವ ಮಹತ್ವದ ಪಾತ್ರ ವಹಿಸಿದೆ ಎಂದು ಎಬಿಡಿ ಅಭಿಪ್ರಾಯಪಟ್ಟಿದ್ದಾರೆ. ಆದರೆ, ಸಚಿನ್ ಮತ್ತು ಕೊಹ್ಲಿಯ ವಿದೇಶಿ ಟೆಸ್ಟ್‌ ದಾಖಲೆಗಳನ್ನು ಅಂಕಿಅಂಶಗಳ ಆಧಾರದ ಮೇಲೆ ನೋಡಿದರೆ ಸಚಿನ್ ತೆಂಡೂಲ್ಕರ್ ಕೊಂಚ ಮುಂದಿದ್ದಾರೆ.

ಸಚಿನ್ ತೆಂಡೂಲ್ಕರ್ ತಮ್ಮ ವೃತ್ತಿಜೀವನದಲ್ಲಿ 200 ಟೆಸ್ಟ್ ಪಂದ್ಯಗಳಿಂದ 15,921 ರನ್ ಗಳಿಸಿದ್ದಾರೆ. ಅವರ ಒಟ್ಟು ರನ್‌ಗಳ ಪೈಕಿ ಬರೋಬ್ಬರಿ 8,705 ರನ್‌ಗಳು ವಿದೇಶಿ ನೆಲದಲ್ಲಿ ಬಂದಿವೆ. ಅಂದರೆ, ಸಚಿನ್ ಅವರ ಒಟ್ಟು ಟೆಸ್ಟ್ ರನ್‌ಗಳ ಶೇ.55ರಷ್ಟು ವಿದೇಶಿ ಪಿಚ್‌ಗಳಲ್ಲೇ ದಾಖಲಾಗಿದೆ. ಇನ್ನೊಂದೆಡೆ, ವಿರಾಟ್ ಕೊಹ್ಲಿ 123 ಟೆಸ್ಟ್‌ಗಳಿಂದ 9,230 ರನ್ ಗಳಿಸಿದ್ದಾರೆ. ವಿದೇಶಿ ನೆಲದಲ್ಲಿ ಆಡಿದ 66 ಟೆಸ್ಟ್ ಪಂದ್ಯಗಳಿಂದ ಕೊಹ್ಲಿ 4,774 ರನ್ ಗಳಿಸಿದ್ದಾರೆ.

ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ಒಳಗೊಂಡ SENA ದೇಶಗಳಲ್ಲಿನ ಪ್ರದರ್ಶನವನ್ನು ಪರಿಗಣಿಸಿದರೂ ಸಚಿನ್ ಕೊಹ್ಲಿಗಿಂತ ಮುಂದಿದ್ದಾರೆ. SENA ದೇಶಗಳ ವಿರುದ್ಧ ಸಚಿನ್ ತೆಂಡೂಲ್ಕರ್ 63 ಟೆಸ್ಟ್‌ಗಳಲ್ಲಿ 5,387 ರನ್ ಗಳಿಸಿದ್ದು, 17 ಶತಕ ಮತ್ತು 23 ಅರ್ಧಶತಕಗಳೊಂದಿಗೆ 51.30ರ ಸರಾಸರಿ ಹೊಂದಿದ್ದಾರೆ.

ವಿರಾಟ್ ಕೊಹ್ಲಿ SENA ದೇಶಗಳ ವಿರುದ್ಧ 46 ಟೆಸ್ಟ್‌ಗಳಲ್ಲಿ 3,661 ರನ್ ಗಳಿಸಿದ್ದು, 12 ಶತಕ ಮತ್ತು 14 ಅರ್ಧಶತಕಗಳೊಂದಿಗೆ 42.08ರ ಸರಾಸರಿ ಹೊಂದಿದ್ದಾರೆ. ಒಟ್ಟಾರೆ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಸಚಿನ್ ತೆಂಡೂಲ್ಕರ್ ಮೊದಲ ಸ್ಥಾನದಲ್ಲಿದ್ದರೆ, ಕಳೆದ ವರ್ಷ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಘೋಷಿಸಿರುವ ವಿರಾಟ್ ಕೊಹ್ಲಿ 19ನೇ ಸ್ಥಾನದಲ್ಲಿದ್ದಾರೆ.

ಆದರೆ, ಕೇವಲ ಅಂಕಿಅಂಶಗಳ ಆಧಾರದ ಮೇಲೆ ಸಚಿನ್ ಮತ್ತು ಕೊಹ್ಲಿಯನ್ನು ಹೋಲಿಸಬಾರದು ಎಂಬುದು ಎಬಿ ಡಿವಿಲಿಯರ್ಸ್ ಅವರ ವಾದ. ವಿದೇಶಿ ಟೆಸ್ಟ್ ಸರಣಿಗಳನ್ನು ಗೆಲ್ಲುವ ಸಾಮರ್ಥ್ಯವಿರುವ ತಂಡವಾಗಿ ಭಾರತವನ್ನು ರೂಪಿಸುವಲ್ಲಿ ಕೊಹ್ಲಿಯ ನಾಯಕತ್ವ ಮತ್ತು ಅವರ ಆಟದ ಪ್ರಭಾವ ದೊಡ್ಡದಾಗಿದೆ ಎಂದು ಅವರು ಹೇಳಿದ್ದಾರೆ.

ಸಚಿನ್ ಮತ್ತು ಕೊಹ್ಲಿ ನಿರ್ಮಿಸಿರುವ ಈ ಪರಂಪರೆ ಈಗಿನ ಭಾರತೀಯ ಬ್ಯಾಟರ್‌ಗಳಿಗೂ ನೆರವಾಗುತ್ತಿದೆ. ವಿಶೇಷವಾಗಿ ಕೆ.ಎಲ್. ರಾಹುಲ್ ಮತ್ತು ದೇವದತ್ ಪಡಿಕ್ಕಲ್ ಅವರಂತಹ ಆಟಗಾರರು ವಿದೇಶಿ ಪಿಚ್‌ಗಳಲ್ಲಿ ಉತ್ತಮ ಪ್ರದರ್ಶನ ನೀಡಲು ಈ ಹಿಂದಿನ ದಿಗ್ಗಜರ ಪ್ರಭಾವ ಸಹಕಾರಿಯಾಗಿದೆ ಎಂದು ಎಬಿಡಿ ಅಭಿಪ್ರಾಯಪಟ್ಟಿದ್ದಾರೆ.

ಕೆ.ಎಲ್. ರಾಹುಲ್ ತಾಂತ್ರಿಕವಾಗಿ ಅತ್ಯುತ್ತಮ ಬ್ಯಾಟರ್ ಆಗಿದ್ದು, ವಿದೇಶಿ ನೆಲದಲ್ಲಿ ದೊಡ್ಡ ಮೊತ್ತ ಕಲೆಹಾಕುವ ಸಾಮರ್ಥ್ಯ ಹೊಂದಿದ್ದಾರೆ. ಅವರು ಶತಕ ಗಳಿಸಿದ ಬಳಿಕ ಅಲ್ಲಿಗೇ ನಿಲ್ಲದೆ, ಅದನ್ನು 180 ರನ್‌ಗಳಂತಹ ದೊಡ್ಡ ಮೊತ್ತವಾಗಿ ಪರಿವರ್ತಿಸುವತ್ತ ಗಮನ ಹರಿಸಬೇಕು ಎಂದು ಡಿವಿಲಿಯರ್ಸ್ ಕಿವಿಮಾತು ಹೇಳಿದ್ದಾರೆ.

ಸಚಿನ್ ಮತ್ತು ಕೊಹ್ಲಿ ನಡುವಿನ ಹೋಲಿಕೆ ಕ್ರಿಕೆಟ್‌ನಲ್ಲಿ ಎಂದಿಗೂ ಮುಗಿಯದ ಚರ್ಚೆ. ಇದೀಗ ವಿದೇಶಿ ಟೆಸ್ಟ್‌ಗಳ ವಿಚಾರದಲ್ಲಿ ಕೊಹ್ಲಿಗೆ ಎಬಿಡಿ ನೀಡಿರುವ ಬೆಂಬಲ ಮತ್ತೊಮ್ಮೆ ಈ ಚರ್ಚೆಗೆ ಕಿಚ್ಚು ಹಚ್ಚಿದೆ.

ಯುವತಿಗೆ ಬ್ಲ್ಯಾಕ್ ಮೇಲ್ ಮಾಡಿ ಆತ್ಮಹತ್ಯೆಗೆ ಪ್ರಚೋದನೆ: ಆರೋಪಿಯ ಅರ್ಜಿ ವಜಾಗೊಳಿಸಿದ ಹೈಕೋರ್ಟ್

0

ಬೆಂಗಳೂರು: ಪ್ರೀತಿಯ ನಾಟಕವಾಡಿ, ಯುವತಿಯ ಮದುವೆಗೆ ನಿರಂತರವಾಗಿ ಅಡ್ಡಿಪಡಿಸಿ, ಬ್ಲ್ಯಾಕ್‌ಮೇಲ್ ಮಾಡುವ ಮೂಲಕ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪ ಎದುರಿಸುತ್ತಿರುವ ವ್ಯಕ್ತಿಯೊಬ್ಬನ ವಿರುದ್ಧದ ಕ್ರಿಮಿನಲ್ ಪ್ರಕರಣವನ್ನು ರದ್ದುಗೊಳಿಸಲು ಹೈಕೋರ್ಟ್ ನಿರಾಕರಿಸಿದೆ.

ಅರ್ಜಿದಾರರು ಪೂರ್ಣ ಪ್ರಮಾಣದ ವಿಚಾರಣೆ ಎದುರಿಸಿ ತಮ್ಮ ಮೇಲಿನ ಆರೋಪದಿಂದ ಮುಕ್ತರಾಗಬೇಕು ಎಂದು ನ್ಯಾಯಪೀಠ ಹೇಳಿದೆ. ತಮ್ಮ ವಿರುದ್ಧದ ಪ್ರಕರಣ ರದ್ದು ಕೋರಿ ಜೆ.ನವೀನ್ ಎಂಬವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಈ ಆದೇಶ ನೀಡಿ, ಅರ್ಜಿ ವಜಾಗೊಳಿಸಿದೆ.

ಅರ್ಜಿದಾರರು ಮೃತ ಸಂತ್ರಸ್ತೆಗೆ ಲೈಂಗಿಕ ಕಿರುಕುಳ ನೀಡಿರುವುದು, ಪದೇ ಪದೆ ಹಿಂಬಾಲಿಸಿರುವುದು ಮತ್ತು ಖಾಸಗಿಯಾಗಿ ತೆಗೆದುಕೊಂಡ ಫೋಟೋಗಳನ್ನು ಬಹಿರಂಗಪಡಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎಂಬುದು ತನಿಖೆಯಲ್ಲಿ ಗೊತ್ತಾಗಿದೆ ಎಂದು ಪೀಠ ಹೇಳಿದೆ. ಆಕೆಗೆ ಆಗಬಹುದಾದಂತಹ ವೈವಾಹಿಕ ಸಂಬಂಧಗಳನ್ನು ತಪ್ಪಿಸಿರುವುದು, ಭಾವಿ ಪತಿಯಾಗಬೇಕಾದವರಿಗೆ ಸಂತ್ರಸ್ತೆಯ ಬಗ್ಗೆ ಅಪಪ್ರಚಾರ ಮಾಡಿ ವಿವಾಹ ಸಂಬಂಧ ಬೆಳೆಯದಂತೆ ನೋಡಿಕೊಂಡಿದ್ದಾರೆ ಎಂಬ ಅಂಶಗಳೂ ಬಯಲಾಗಿವೆ ಎಂದು ಪೀಠ ತಿಳಿಸಿದೆ.

2025ರ ಜುಲೈ 5ರಂದು ಯುವತಿ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದರು ಎಂದೂ ಆ ಸಂದರ್ಭದಲ್ಲಿ ದೂರು ದಾಖಲಾಗಿ, ಹಿರಿಯರು ರಾಜಿ ಮಾಡಿಸಿ ಅದನ್ನು ಹಿಂಪಡೆದುಕೊಂಡಿದ್ದರು ಎಂದೂ ಪೀಠ ಉಲ್ಲೇಖಿಸಿದೆ. ಆದರೂ ಅರ್ಜಿದಾರ ತನ್ನ ಚಾಳಿ ಮುಂದುವರೆಸಿ, ಮದುವೆಗಳನ್ನು ಮುರಿಯುತ್ತಾ ಬಂದಿರುವುದು ತನಿಖೆಯಿಂದ ದೃಢಪಟ್ಟಿದೆ ಎಂದು ಪೀಠ ತಿಳಿಸಿದೆ.

ಆರೋಪಿ ಅರ್ಜಿದಾರ ಮೃತಳನ್ನು ಹಂತ-ಹಂತವಾಗಿ ಮೂಲೆಗುಂಪು ಮಾಡುವುದಕ್ಕೆ ಪ್ರಯತ್ನಿಸಿದ್ದಾರೆ, ಆಕೆಯ ಗೌಪ್ಯತೆಗೆ ಧಕ್ಕೆಯಾಗುವಂತೆ ಮಾಡಿದ್ದಾರೆ, ಕೆಲಸದ ಸ್ಥಳದಲ್ಲಿ ಕಿರುಕುಳ ನೀಡಿದ್ದಾರೆ, ಸ್ವತಂತ್ರವಾಗಿ ಜೀವನ ನಡೆಸಲು ಅವಕಾಶ ನೀಡಿಲ್ಲ ಎಂದ ನ್ಯಾಯಪೀಠ, ಈ ಎಲ್ಲ ಅಂಶಗಳು ಪ್ರಚೋದನೆಯ ಆರೋಪಗಳಾಗಿದ್ದು, ಸಾಬೀತಾಗಲು ಸಾಕ್ಷ್ಯಾಧಾರಗಳಿವೆ ಎಂದಿತು. ಇಬ್ಬರ ನಡುವಿನ ಘಟನೆ ಭಾವಾವೇಶದ ಕ್ಷಣಿಕ ಮಾತಿನ ಜಗಳವಲ್ಲ, ಬದಲಿಗೆ ನಿರಂತರವಾದ ಕಿರುಕುಳ, ಬ್ಲ್ಯಾಕ್‌ಮೇಲ್ ಮತ್ತು ಮಾನಸಿಕ ಹಿಂಸೆ ಮುಂದುವರೆದಿದೆ ಎಂದು ಪೀಠ ಹೇಳಿದೆ.

ಪ್ರಕರಣದ ಹಿನ್ನೆಲೆ: ಮೈಸೂರಿನಲ್ಲಿ ನರ್ಸಿಂಗ್ ವ್ಯಾಸಂಗ ಮಾಡುತ್ತಿದ್ದ ಸಂದರ್ಭದಲ್ಲಿ ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಆರೋಪಿ ನವೀನ್ ಪರಿಚಯವಾಗಿದ್ದ ಸಂತ್ರಸ್ತೆ ಭಾವನಾ (22). ಈ ಪರಿಚಯ ಕ್ರಮೇಣ ಬೆಳೆದು, ನವೀನ್ ತಾನು ಮದುವೆಯಾಗಿರುವುದನ್ನು ಮುಚ್ಚಿಟ್ಟು ಭಾವನಾ ಅವರನ್ನು ಬಲವಂತವಾಗಿ ಪ್ರೀತಿಸುವಂತೆ ಹಾಗೂ ಮದುವೆಯಾಗುವಂತೆ ಪೀಡಿಸಲು ಶುರು ಮಾಡಿದ್ದ ಎಂದೂ, ಆಕೆಯೊಂದಿಗೆ ತೆಗೆಸಿಕೊಂಡಿದ್ದ ಖಾಸಗಿ ಫೋಟೋಗಳನ್ನು ಇಟ್ಟುಕೊಂಡು ಬೆದರಿಕೆ ಹಾಕಿದ್ದ ಎಂದೂ ಆರೋಪಿಸಲಾಗಿದೆ.

ಭಾವನಾ ಅವರ ಮದುವೆ ನಿಶ್ಚಯವಾದಾಗಲೆಲ್ಲಾ ಆತ ಬಂದು ಭಾವಿ ಪತಿಯ ಬಳಿ ಸಂಬಂಧದ ಬಗ್ಗೆ ಹೇಳಿ ಮದುವೆ ಮುರಿಯುತ್ತಿದ್ದ. ಇದೇ ಕಾರಣದಿಂದ ನಿಶ್ಚಯವಾಗಿದ್ದ ಮದುವೆಯೂ ಮುರಿದುಹೋಗಿತ್ತು. ಈ ಬೆಳವಣಿಗೆಗಳ ಬಳಿಕ ಭಾವನಾ 2025ರ ಜುಲೈ 29ರಂದು ಮನೆಯಲ್ಲಿ ಮೃತಪಟ್ಟಿದ್ದರು. ಈ ಸಂಬಂಧ ಭಾವನಾ ತಾಯಿ ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ದೂರಿನ ಸಂಬಂಧ ಪೊಲೀಸರು ತನಿಖೆ ನಡೆಸಿ ದೋಷಾರೋಪಪಟ್ಟಿಯನ್ನು ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಪ್ರಕರಣದಿಂದ ಬಿಡುಗಡೆ ಕೋರಿ ನವೀನ್ ಹೈಕೋರ್ಟ್ ಮೆಟ್ಟಿಲೇರಿದ್ದ. ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಪ್ರಚೋದನೆ ನೀಡುವಂತಹ ನೇರ ಅಂಶಗಳಿಲ್ಲ, ಮೃತರ ಸಾವಿಗೂ ಅರ್ಜಿದಾರರಿಗೂ ನೇರ ಸಂಬಂಧವಿಲ್ಲ ಎಂದು ವಾದಿಸಿ ಅರ್ಜಿ ವಜಾಗೊಳಿಸಬೇಕು ಎಂದು ಕೋರಿದ್ದರು.

ಬೆಂಗಳೂರಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಬರೋಬ್ಬರಿ ₹9 ಕೋಟಿ ಹಣ ವಶಕ್ಕೆ ಪಡೆದ ಪೊಲೀಸರು!

0

ಬೆಂಗಳೂರು: ಅಕ್ರಮವಾಗಿ ಸಾಗಿಸುತ್ತಿದ್ದ ₹9 ಕೋಟಿ ಹಣ ಹಾಗೂ ವಾಹನವನ್ನು ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹಣ ಸಾಗಾಟದ ಬಗ್ಗೆ ಆದಾಯ ತೆರಿಗೆ ಅಧಿಕಾರಿಗಳು ಪೊಲೀಸರಿಗೆ ಖಚಿತ ಮಾಹಿತಿ ನೀಡಿದ್ದರು. ಎಲೆಕ್ಟ್ರಾನಿಕ್ ಸಿಟಿಯ ವೀರಸಂದ್ರ ಸಿಗ್ನಲ್ ಬಳಿ ವಾಹನವನ್ನು ಪೊಲೀಸರು ಅಡ್ಡಗಟ್ಟಿ ಪರಿಶೀಲನೆ ನಡೆಸಿದಾಗ ಹಣ ಪತ್ತೆಯಾಗಿದೆ.

ತಮಿಳುನಾಡಿನ ತೂತುಕುಡಿಯ ಸಿಂಧೂ ಜ್ಯೂವೆಲರ್ಸ್ ಮಾಲೀಕ ಸಚಿನ್ ಎಂಬಾತನಿಗೆ ಸೇರಿದ ಹಣ ಎನ್ನಲಾಗಿದೆ. ಕಾರಿನಲ್ಲಿ ಸಾಗಾಟ ಮಾಡುತ್ತಿದ್ದಾಗ ಖಚಿತ ಮಾಹಿತಿ ಮೇರೆಗೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಳಿಕ ಹಣ ಮತ್ತು ಸಚಿನ್ ಎಂಬಾತನನ್ನು ಆದಾಯ ತೆರಿಗೆ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದಾರೆ.

ಐಟಿ ಅಧಿಕಾರಿಗಳು ಸಚಿನ್ ಮನೆಯನ್ನು ಪರಿಶೀಲನೆ ನಡೆಸಿದ್ದು, ಈ ವೇಳೆ ₹1.3 ಕೋಟಿ ನಗದು ಪತ್ತೆಯಾಗಿದೆ. ಈ ಹಣ ಯಾರಿಗೆ ಸೇರಿದ್ದು ಎನ್ನುವ ಬಗ್ಗೆ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.

ಹೋಂವರ್ಕ್ ಮಾಡದ್ದಕ್ಕೆ ಕೆನ್ನೆಗೆ ಬಾರಿಸಿದ ಶಿಕ್ಷಕಿ: ಕುಸಿದು ಬಿದ್ದು ವಿದ್ಯಾರ್ಥಿ ಸಾವು

0

ಅಮರಾವತಿ: ಹೋಂ ವರ್ಕ್ ಮಾಡದಿದ್ದಕ್ಕೆ ಶಿಕ್ಷಕಿ ಕೆನ್ನೆಗೆ ಬಾರಿಸಿದ ಪರಿಣಾಮ ಕುಸಿದು ಬಿದ್ದು ವಿದ್ಯಾರ್ಥಿ ಸಾವನ್ನಪ್ಪಿರುವ ಘಟನೆ ವಿಶಾಖಪಟ್ಟಣಂನ ಖಾಸಗಿ ಶಾಲೆಯಲ್ಲಿ ನಡೆದಿದೆ.

ಶಿಕ್ಷಕಿ ಕೆನ್ನೆಗೆ ಬಾರಿಸಿದ ನಂತರ ವಿದ್ಯಾರ್ಥಿ ತೇಜ ಕುಸಿದು ಬಿದ್ದಿದ್ದ. ಆತನನ್ನು ಕಿಂಗ್ ಜಾರ್ಜ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಬಾಲಕ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ಪೊಲೀಸರು ಮತ್ತು ಕಂದಾಯ ಅಧಿಕಾರಿಗಳು ಸಾವಿನ ಕುರಿತು ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಸಾವಿನ ಸುದ್ದಿ ತಿಳಿದ ನಂತರ ಕುಟುಂಬ ಸದಸ್ಯರು ಮತ್ತು ಸಂಬಂಧಿಕರು ಆಸ್ಪತ್ರೆಯಲ್ಲಿ ಜಮಾಯಿಸಿ, ಘಟನೆಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ಶಿಕ್ಷಕರು ವಿದ್ಯಾರ್ಥಿಗಳೊಂದಿಗೆ ಸೂಕ್ಷ್ಮವಾಗಿ, ಜವಾಬ್ದಾರಿಯುತವಾಗಿ ಮತ್ತು ಮಾನವೀಯತೆಯಿಂದ ವರ್ತಿಸುವಂತೆ ಅಗತ್ಯ ಸಂವೇದನಾಶೀಲ ಕಾರ್ಯಕ್ರಮಗಳನ್ನು ಆಯೋಜಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ. ಇಂತಹ ಘಟನೆಗಳು ಮರುಕಳಿಸದಂತೆ ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಮೂವರು ಸದಸ್ಯರ ಸಮಿತಿಯ ವರದಿಯ ಆಧಾರದ ಮೇಲೆ ಮತ್ತಷ್ಟು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಇಲಾಖೆ ಸ್ಪಷ್ಟಪಡಿಸಿದೆ.

ನಕಲಿ ಔಷಧಿ ಜಾಲ: ಹಿಮಾಚಲ, ತೆಲಂಗಾಣ, ದೆಹಲಿ ಸೇರಿ 5 ರಾಜ್ಯಗಳಿಗೆ ಲಿಂಕ್! ತನಿಖೆಗೆ ಪ್ರತ್ಯೇಕ ತಂಡ ರಚನೆ

0

ಬೆಂಗಳೂರು: ನಕಲಿ ಔಷಧಿ ಜಾಲ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಈ ಜಾಲ ಐದು ರಾಜ್ಯಗಳಿಗೆ ಲಿಂಕ್ ಇರುವುದು ತನಿಖೆಯಿಂದ ಬಯಲಾಗಿದೆ. ಹಿಮಾಚಲ ಪ್ರದೇಶ, ತೆಲಂಗಾಣ, ದೆಹಲಿ, ಚೆನ್ನೈ, ಆಂಧ್ರಪ್ರದೇಶ ರಾಜ್ಯಗಳಿಗೆ ನಕಲಿ ಔಷಧಿ ಜಾಲ ಲಿಂಕ್ ಇರುವ ಬಗ್ಗೆ ತಿಳಿದುಬಂದಿದೆ.

5 ರಾಜ್ಯಗಳಲ್ಲಿ ಜಾಲ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಡ್ರಗ್ ಕಂಟ್ರೋಲರ್‌ಗಳ ಐದು ತಂಡಗಳನ್ನು ರಚಿಸಿ ತನಿಖೆ ನಡೆಸಲಾಗುತ್ತಿದೆ. ಈ ತನಿಖಾ ತಂಡಗಳು ಐದು ರಾಜ್ಯಗಳಿಗೆ ಭೇಟಿ ನೀಡಲಿವೆ.

ಐದು ರಾಜ್ಯಗಳ ಕಂಪನಿಯ ಲೇಬಲ್ ಇರುವುದು ಬಯಲಾಗಿದ್ದು, ಪ್ರಕರಣ ಸಂಬಂಧ ಅಧಿಕಾರಿಗಳು ಐದು ರಾಜ್ಯಗಳಿಂದ ಮಾಹಿತಿ ಸಂಗ್ರಹ ಮಾಡಲಿದ್ದಾರೆ. ಐದು ರಾಜ್ಯದ ಕಂಪನಿಗಳಿಗೂ ಲೆಟರ್ ಹೆಡ್ ರೆಡಿ ಮಾಡಿ ಮಾಹಿತಿ ಕೋರಲಿದ್ದಾರೆ. ಔಷಧಿ ಮೇಲೆ ಆಯಾ ಕಂಪನಿಯ ಲೇಬಲ್ ಇದ್ದು, ಅನಧಿಕೃತವಾಗಿ ಪ್ಯಾಕಿಂಗ್ ಆಗುತ್ತಿದೆಯೇ ಎಂಬ ಬಗ್ಗೆ ತನಿಖೆ ನಡೆಯಲಿದೆ.

ಡೇವಿಡ್ ಡಿಸೋಜಾ ಹತ್ಯೆ ಪ್ರಕರಣ: ಉತ್ತರಾಖಂಡದಲ್ಲಿ ಮತ್ತೋರ್ವ ಆರೋಪಿ ಬಂಧನ

0

ಉಡುಪಿ: ಕಾಂಗ್ರೆಸ್ ಮುಖಂಡ ಡೇವಿಡ್ ಡಿಸೋಜಾ ಹತ್ಯೆ ಪ್ರಕರಣದಲ್ಲಿ ಮತ್ತೋರ್ವ ಆರೋಪಿಯನ್ನು ಕುಂದಾಪುರ ಪೊಲೀಸರು ಬಂಧಿಸಿದ್ದಾರೆ. ಬಿಹಾರ ಮೂಲದ ಸೂರಜ್ (31) ಬಂಧಿತ ಆರೋಪಿಯಾಗಿದ್ದಾನೆ.

ಉತ್ತರಾಖಂಡ್‌ನ ನೈನಿತಾಲ್ ಜಿಲ್ಲೆಯ ಹಲ್ದ್ವಾನಿ ಬಳಿ ವಿಶೇಷ ಕಾರ್ಯಾಚರಣೆ ನಡೆಸಿ, ತಲೆಮರೆಸಿಕೊಂಡಿದ್ದ ಸೂರಜ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಈ ಮೂಲಕ ಶೂಟೌಟ್ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 8ಕ್ಕೆ ಏರಿಕೆಯಾಗಿದೆ.

ಸೂರಜ್ ವಿರುದ್ಧ ಈ ಪ್ರಕರಣದಲ್ಲಿ ಒಳಸಂಚು ರೂಪಿಸಿ, ಹಣಕಾಸು ಪೂರೈಕೆ ಮಾಡಿದ್ದ ಆರೋಪ ಇದೆ. ಈಗಾಗಲೇ ಬಂಧಿತರಾಗಿರುವ ಇರ್ಷಾದ್, ಚಿರಾಗ್, ಸದಾನಂದ ಹಾಗೂ ಕಿಶೋರ್ ಜೊತೆ ಸೂರಜ್ ಕೈಜೋಡಿಸಿದ್ದ ಎನ್ನಲಾಗಿದೆ. ಈ ಬಗ್ಗೆ ಹೆಚ್ಚಿನ ವಿಚಾರಣೆ ನಡೆಯುತ್ತಿದೆ.