Home Blog

ಪಿಂಚಣಿದಾರರನ್ನು ವಿಭಜಿಸುವುದು ಅಸಂವಿಧಾನಿಕ: ಹೈಕೋರ್ಟ್ ಮಹತ್ವದ ತೀರ್ಪು

ಬೆಂಗಳೂರು: ನಿವೃತ್ತ ನೌಕರರನ್ನು ನಿವೃತ್ತಿಯ ದಿನಾಂಕದ ಆಧಾರದ ಮೇಲೆ ಎರಡು ವರ್ಗಗಳಾಗಿ ವಿಭಜಿಸುವುದು ಸಂವಿಧಾನದ 14ನೇ ವಿಧಿಯ ಅಡಿಯಲ್ಲಿ ಸಮಾನತೆಯ ಹಕ್ಕಿನ ಉಲ್ಲಂಘನೆ ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಈ ಹಿನ್ನೆಲೆಯಲ್ಲಿ 2005ರ ಜುಲೈ 1ಕ್ಕೂ ಮುನ್ನ ನಿವೃತ್ತರಾದ ಕರ್ನಾಟಕ ವಿದ್ಯುತ್ ನಿಗಮ ನಿಯಮಿತ (ಕೆಪಿಸಿಎಲ್) ನೌಕರರ ಕುಟುಂಬಗಳಿಗೂ ಪರಿಷ್ಕೃತ ಪಿಂಚಣಿ ಸೌಲಭ್ಯ ನೀಡುವಂತೆ ಆದೇಶಿಸಿದೆ.

ಕೆಪಿಸಿಎಲ್ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಅನು ಶಿವರಾಮನ್ ಮತ್ತು ತಾರಾ ವಿತಸ್ತ ಗಂಜು ಅವರ ವಿಭಾಗೀಯ ಪೀಠ ವಿಚಾರಣೆ ನಡೆಸಿ ಈ ತೀರ್ಪು ನೀಡಿದೆ.

ಪಿಂಚಣಿ ಪರಿಷ್ಕರಣೆಯಿಂದ ಸಂಸ್ಥೆಗೆ ಸುಮಾರು 250 ಕೋಟಿ ರೂಪಾಯಿ ಹೊರೆ ಬೀಳುತ್ತದೆ ಎಂಬ ಕೆಪಿಸಿಎಲ್ ವಾದವನ್ನು ಪೀಠ ತಳ್ಳಿಹಾಕಿದೆ. ಏಕಸದಸ್ಯ ಪೀಠಕ್ಕೆ ಅರ್ಜಿ ಸಲ್ಲಿಸಿದವರು ಬಾಕಿ ಮೊತ್ತದ ಹಕ್ಕನ್ನು ತ್ಯಜಿಸಿರುವುದರಿಂದ ಕೇವಲ 4 ಕೋಟಿ ರೂಪಾಯಿ ವೆಚ್ಚದಲ್ಲೇ ಈ ಸೌಲಭ್ಯ ನೀಡಬಹುದು ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

ಸುಪ್ರೀಂ ಕೋರ್ಟ್‌ನ ಡಿ.ಎಸ್. ನಕಾರಾ ಪ್ರಕರಣದ ತೀರ್ಪನ್ನು ಉಲ್ಲೇಖಿಸಿದ ಹೈಕೋರ್ಟ್, ಪಿಂಚಣಿ ಪರಿಷ್ಕರಣೆಯ ಲಾಭವು ಎಲ್ಲ ನಿವೃತ್ತರಿಗೂ ಸಮಾನವಾಗಿ ಲಭ್ಯವಾಗಬೇಕು ಎಂದು ಅಭಿಪ್ರಾಯಪಟ್ಟಿದೆ. ಆದ್ದರಿಂದ 2005 ಜುಲೈ 1ಕ್ಕೂ ಮುನ್ನ ನಿವೃತ್ತರಾದ ನೌಕರರ ಕುಟುಂಬಗಳಿಗೂ ಪರಿಷ್ಕೃತ ಪಿಂಚಣಿ ನೀಡಬೇಕು ಎಂದು ಸೂಚಿಸಿದೆ.

ಆದರೆ ಬಾಕಿ ಮೊತ್ತವನ್ನು ಏಕಸದಸ್ಯ ಪೀಠದ ತೀರ್ಪು ಬಂದ ದಿನಾಂಕದಿಂದಲೇ ಪಾವತಿಸಬೇಕು ಹಾಗೂ ಈ ಪ್ರಕ್ರಿಯೆಯನ್ನು ಮೂರು ತಿಂಗಳ ಒಳಗೆ ಪೂರ್ಣಗೊಳಿಸಬೇಕು ಎಂದು ನ್ಯಾಯಪೀಠ ಆದೇಶಿಸಿದೆ.

ಪ್ರಕರಣದ ಹಿನ್ನೆಲೆಯಂತೆ, ಕೆಪಿಸಿಎಲ್ ಹೊರಡಿಸಿದ್ದ ಆದೇಶದಲ್ಲಿ 2005ರ ಜುಲೈ 1ರ ನಂತರ ನಿವೃತ್ತರಾದವರಿಗೆ ಮಾತ್ರ ಪರಿಷ್ಕೃತ ಪಿಂಚಣಿ ನೀಡಲಾಗುತ್ತಿತ್ತು. ಈ ನಿರ್ಧಾರವನ್ನು ಪ್ರಶ್ನಿಸಿ ಎಂ.ಎಸ್. ರಾಜೇಶ್ವರಿ ಸೇರಿದಂತೆ ಹಲವು ನಿವೃತ್ತರ ಕುಟುಂಬಸ್ಥರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಏಕಸದಸ್ಯ ಪೀಠವು ಈ ಹಿಂದೆ ನಿವೃತ್ತಿ ದಿನಾಂಕ ಆಧರಿಸಿ ಪಿಂಚಣಿ ವಿಭಜನೆ ಮಾಡುವುದು ತಾರತಮ್ಯ ಎಂದು ಹೇಳಿ ಸರ್ಕಾರದ ಸುತ್ತೋಲೆಯನ್ನು ರದ್ದುಪಡಿಸಿತ್ತು. ಇದನ್ನು ಪ್ರಶ್ನಿಸಿ ಕೆಪಿಸಿಎಲ್ ಮೇಲ್ಮನವಿ ಸಲ್ಲಿಸಿದ್ದ ಪ್ರಕರಣದಲ್ಲಿ ಈಗ ವಿಭಾಗೀಯ ಪೀಠ ಈ ಮಹತ್ವದ ತೀರ್ಪು ನೀಡಿದೆ.

ಬೇಸಿಗೆಯಲ್ಲಿ ಫ್ರಿಡ್ಜ್ ಸದಾ ತಾಜಾ ವಾಸನೆ ಬರಬೇಕೇ? ಈ ಸಿಂಪಲ್ ಟಿಪ್ಸ್ ಅನುಸರಿಸಿ ಸಾಕು!

ಬೇಸಿಗೆ ಕಾಲದಲ್ಲಿ ಮನೆಯಲ್ಲೇ ಹೆಚ್ಚು ಬಳಕೆಯಾಗುವ ಉಪಕರಣಗಳಲ್ಲಿ ರೆಫ್ರಿಜರೇಟರ್ ಪ್ರಮುಖವಾದುದು. ತಣ್ಣೀರು, ಐಸ್‌ಕ್ರೀಮ್, ಹಣ್ಣು-ತರಕಾರಿಗಳಿಗಾಗಿ ಪದೇಪದೆ ಫ್ರಿಡ್ಜ್ ಬಾಗಿಲು ತೆರೆಯುವುದರಿಂದ ಕೆಲವೊಮ್ಮೆ ಅದರೊಳಗೆ ವಿಚಿತ್ರವಾದ ದುರ್ವಾಸನೆ ಉಂಟಾಗಬಹುದು. ಈ ವಾಸನೆ ಆಹಾರಕ್ಕೂ ಅಂಟಿಕೊಂಡು ಅದರ ರುಚಿಯನ್ನೇ ಬದಲಾಯಿಸಬಹುದು. ಆದರೆ ಮನೆಯಲ್ಲಿ ಸುಲಭವಾಗಿ ಸಿಗುವ ಕೆಲವು ವಸ್ತುಗಳ ಮೂಲಕ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.

ನಿಂಬೆ ಸಿಪ್ಪೆಯಿಂದ ತಾಜಾತನ
ನಿಂಬೆಹಣ್ಣಿನಲ್ಲಿರುವ ಸಿಟ್ರಿಕ್ ಆಮ್ಲವು ಬ್ಯಾಕ್ಟೀರಿಯಾವನ್ನು ಕಡಿಮೆ ಮಾಡುವುದರ ಜೊತೆಗೆ ದುರ್ವಾಸನೆಯನ್ನು ಹೀರಿಕೊಳ್ಳುವ ಗುಣ ಹೊಂದಿದೆ. ನಿಂಬೆ ರಸ ತೆಗೆದ ಬಳಿಕ ಉಳಿದ ಸಿಪ್ಪೆಗಳನ್ನು ಒಂದು ಸಣ್ಣ ತಟ್ಟೆಯಲ್ಲಿ ಇಟ್ಟು ಅದರ ಮೇಲೆ ಸ್ವಲ್ಪ ಉಪ್ಪು ಸಿಂಪಡಿಸಿ ಫ್ರಿಡ್ಜ್‌ನ ಮಧ್ಯಭಾಗದಲ್ಲಿ ಇಟ್ಟರೆ ಒಳಗಿನ ಗಾಳಿ ತಾಜಾವಾಗುತ್ತದೆ.

ಬೇಕಿಂಗ್ ಸೋಡಾ ಬಳಕೆ
ಬೇಕಿಂಗ್ ಸೋಡಾ ದುರ್ವಾಸನೆಯನ್ನು ತಟಸ್ಥಗೊಳಿಸುವ ಅತ್ಯುತ್ತಮ ನೈಸರ್ಗಿಕ ವಸ್ತು. ಒಂದು ಸಣ್ಣ ಪಾತ್ರೆಯಲ್ಲಿ ಬೇಕಿಂಗ್ ಸೋಡಾವನ್ನು ಹಾಕಿ ಮುಚ್ಚಳವಿಲ್ಲದೆ ಫ್ರಿಡ್ಜ್‌ನ ಮೂಲೆಯಲ್ಲಿ ಇಡಬೇಕು. ಇದನ್ನು ವಾರಕ್ಕೊಮ್ಮೆ ಬದಲಾಯಿಸಿದರೆ ಫ್ರಿಡ್ಜ್‌ನೊಳಗೆ ಸದಾ ತಾಜಾತನ ಉಳಿಯುತ್ತದೆ.

ಕಾಫಿ ಪುಡಿಯಿಂದ ಸುವಾಸನೆ
ಕಾಫಿ ಪುಡಿ ಅಥವಾ ಕಾಫಿ ಬೀಜಗಳು ದುರ್ವಾಸನೆಯನ್ನು ಹೀರಿಕೊಂಡು ಮೃದುವಾದ ಪರಿಮಳವನ್ನು ಹರಡುತ್ತವೆ. ಸ್ವಲ್ಪ ಕಾಫಿ ಪುಡಿಯನ್ನು ತೆಳುವಾದ ಬಟ್ಟೆಯಲ್ಲಿ ಕಟ್ಟಿ ಫ್ರಿಡ್ಜ್‌ನಲ್ಲಿ ಇಟ್ಟರೆ ಉತ್ತಮ ಫಲಿತಾಂಶ ಸಿಗುತ್ತದೆ.

ವೆನಿಲ್ಲಾ ಸಾರದ ಸಿಹಿ ಪರಿಮಳ
ವೆನಿಲ್ಲಾ ಸಾರವು ಆಹಾರಕ್ಕೆ ಮಾತ್ರವಲ್ಲ, ಫ್ರಿಡ್ಜ್‌ಗೆ ಸುಗಂಧ ನೀಡಲು ಸಹ ಸಹಾಯಕ. ಹತ್ತಿಯ ತುಂಡಿನ ಮೇಲೆ ಕೆಲವು ಹನಿ ವೆನಿಲ್ಲಾ ಸಾರ ಹಾಕಿ ಅದನ್ನು ಫ್ರಿಡ್ಜ್‌ನಲ್ಲಿ ಇಟ್ಟರೆ ಸಿಹಿ ಪರಿಮಳ ಹರಡುತ್ತದೆ.

ಫ್ರಿಡ್ಜ್ ತಾಜಾವಾಗಿಡಲು ಪಾಲಿಸಬೇಕಾದ ಕ್ರಮಗಳು

  • ಗಾಳಿಯಾಡದ ಪಾತ್ರೆಗಳ ಬಳಕೆ: ಈರುಳ್ಳಿ, ಬೆಳ್ಳುಳ್ಳಿ ಪೇಸ್ಟ್ ಅಥವಾ ಉಳಿದ ಆಹಾರವನ್ನು ಯಾವಾಗಲೂ ಗಾಳಿಯಾಡದ ಡಬ್ಬಿಗಳಲ್ಲಿ ಇಡಿ.
  • ಹಾಳಾದ ಆಹಾರ ಪರಿಶೀಲನೆ: ವಾರಕ್ಕೊಮ್ಮೆ ಫ್ರಿಡ್ಜ್ ಪರಿಶೀಲಿಸಿ ಹಾಳಾಗಿರುವ ತರಕಾರಿ, ಹಣ್ಣು ಅಥವಾ ಅವಧಿ ಮೀರಿದ ವಸ್ತುಗಳನ್ನು ತೆಗೆದುಹಾಕಿ.
  • ವಿನೆಗರ್‌ನಿಂದ ಸ್ವಚ್ಛತೆ: ತಿಂಗಳಿಗೊಮ್ಮೆ ಫ್ರಿಡ್ಜ್ ಖಾಲಿ ಮಾಡಿ ನೀರಿಗೆ ಸ್ವಲ್ಪ ವಿನೆಗರ್ ಬೆರೆಸಿ ಒಳಭಾಗವನ್ನು ಒರೆಸಿದರೆ ಕಲೆಗಳು ಹಾಗೂ ಬ್ಯಾಕ್ಟೀರಿಯಾ ನಿವಾರಣೆಯಾಗುತ್ತವೆ.

ಈ ಸರಳ ಕ್ರಮಗಳನ್ನು ಅನುಸರಿಸಿದರೆ ಬೇಸಿಗೆಯಲ್ಲೂ ನಿಮ್ಮ ಫ್ರಿಡ್ಜ್ ಸದಾ ತಾಜಾ ಹಾಗೂ ಪರಿಮಳಯುಕ್ತವಾಗಿರುತ್ತದೆ.

ತೂಕ ಇಳಿಕೆಗೆ ದಿನಕ್ಕೆ 10,000 ಹೆಜ್ಜೆ ಸಾಕೇ? ತಜ್ಞರಿಂದ ಮಹತ್ವದ ಸಲಹೆ

ಇತ್ತೀಚಿನ ದಿನಗಳಲ್ಲಿ ಫಿಟ್‌ನೆಸ್‌ಗಾಗಿ ದಿನಕ್ಕೆ 10,000 ಹೆಜ್ಜೆ ನಡೆಯುವುದು ಸಾಮಾನ್ಯ ಗುರಿಯಾಗಿ ಪರಿಗಣಿಸಲಾಗಿದೆ.

ಆದರೆ ಆರೋಗ್ಯ ತಜ್ಞರು ಹೇಳುವಂತೆ, ಕೇವಲ ಹೆಜ್ಜೆಗಳ ಸಂಖ್ಯೆ ಮಾತ್ರವಲ್ಲ, ನೀವು ಹೇಗೆ ನಡೆಯುತ್ತೀರಿ ಎಂಬುದೇ ಹೆಚ್ಚು ಮಹತ್ವದಾಗಿದೆ.

ಅಧ್ಯಯನಗಳ ಪ್ರಕಾರ, ಸಾಮಾನ್ಯವಾಗಿ ದಿನಕ್ಕೆ 7,000 ರಿಂದ 8,000 ಹೆಜ್ಜೆಗಳು ಉತ್ತಮ ಆರೋಗ್ಯಕ್ಕೆ ಸಾಕು ಎಂದು ಹೇಳಲಾಗುತ್ತದೆ. ಆದರೆ 2024ರಲ್ಲಿ ಪ್ರಕಟವಾದ ಸಂಶೋಧನೆಯೊಂದು ಹೇಳುವಂತೆ, ವ್ಯಾಯಾಮದ ತೀವ್ರತೆ ಮತ್ತು ಗುಣಮಟ್ಟವೂ ಅಷ್ಟೇ ಮುಖ್ಯ. ಅಂದರೆ ನಿಧಾನವಾಗಿ ಹೆಚ್ಚು ನಡೆಯುವುದಕ್ಕಿಂತ, ವೇಗವಾಗಿ ಮತ್ತು ಶ್ರಮದೊಂದಿಗೆ ನಡೆಯುವುದು ದೇಹಕ್ಕೆ ಹೆಚ್ಚು ಪ್ರಯೋಜನಕಾರಿ.

ವೈದ್ಯರು ಹೇಳುವಂತೆ, ದಿನದ ನಡಿಗೆಯಲ್ಲಿ ಕನಿಷ್ಠ 30 ನಿಮಿಷಗಳ ವೇಗದ ನಡಿಗೆ ಅಥವಾ ಸ್ವಲ್ಪ ಜಾಗಿಂಗ್ ಸೇರಿಸುವುದರಿಂದ ಹೃದಯದ ಆರೋಗ್ಯ ಸುಧಾರಿಸುತ್ತದೆ. ಜೊತೆಗೆ, ಒಂದು ನಿಮಿಷದ ತೀವ್ರ ಚಟುವಟಿಕೆಯೂ ಸಹ ದೇಹದ ಮೆಟಾಬಾಲಿಕ್ ಆರೋಗ್ಯಕ್ಕೆ ಒಳ್ಳೆಯ ಪರಿಣಾಮ ಬೀರುತ್ತದೆ ಎಂದು ತಿಳಿಸಲಾಗಿದೆ.

ಪ್ರಮುಖ ಆರೋಗ್ಯ ಪ್ರಯೋಜನಗಳು:

  • ತೂಕ ಇಳಿಕೆ: ವೇಗದ ನಡಿಗೆ ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡುತ್ತದೆ
  • ರಕ್ತದೊತ್ತಡ ನಿಯಂತ್ರಣ: ವ್ಯಾಯಾಮದ ನಂತರವೂ ಪರಿಣಾಮ ಮುಂದುವರಿಯಬಹುದು
  • ರಕ್ತದಲ್ಲಿನ ಸಕ್ಕರೆ ನಿಯಂತ್ರಣ: 48 ಗಂಟೆಗಳವರೆಗೆ ಸಹಕಾರಿ ಪರಿಣಾಮ
  • ಹೃದಯ ಆರೋಗ್ಯ ಸುಧಾರಣೆ: ಮೆಟಾಬಾಲಿಕ್ ಸಿಂಡ್ರೋಮ್ ಅಪಾಯ ಕಡಿಮೆ

ತಜ್ಞರ ಸಲಹೆಯಂತೆ, WHO ಮಾರ್ಗಸೂಚಿಯ ಪ್ರಕಾರ ವಾರಕ್ಕೆ ಕನಿಷ್ಠ 150 ನಿಮಿಷಗಳ ಮಧ್ಯಮ ತೀವ್ರತೆಯ ವ್ಯಾಯಾಮ ಅಥವಾ 75 ನಿಮಿಷಗಳ ಹೆಚ್ಚಿನ ತೀವ್ರತೆಯ ವ್ಯಾಯಾಮ ಅಗತ್ಯ.

ಸರಳ ಬದಲಾವಣೆಗಳು ಸಾಕು:

ಲಿಫ್ಟ್ ಬದಲು ಮೆಟ್ಟಿಲು ಬಳಸುವುದು, ಸ್ವಲ್ಪ ವೇಗವಾಗಿ ನಡೆದು ಹೋಗುವುದು ಅಥವಾ ಪ್ರಯಾಣದ ಸಮಯದಲ್ಲಿ ಹೆಚ್ಚು ಚುರುಕಾಗಿ ಇರುವುದು ಆರೋಗ್ಯಕ್ಕೆ ದೊಡ್ಡ ಲಾಭ ನೀಡುತ್ತದೆ.

ಅಂತಿಮವಾಗಿ ಹೇಳುವುದಾದರೆ, ಕೇವಲ ಹೆಜ್ಜೆಗಳ ಸಂಖ್ಯೆಯನ್ನು ಗುರಿಯಾಗಿಸದೇ, ನಿಮ್ಮ ನಡಿಗೆಗೆ ವೇಗ ಮತ್ತು ಶಕ್ತಿ ಸೇರಿಸಿದರೆ ಆರೋಗ್ಯದ ಲಾಭಗಳು ಇನ್ನಷ್ಟು ಹೆಚ್ಚುತ್ತವೆ ಎಂದು ತಜ್ಞರು ಸಲಹೆ ನೀಡುತ್ತಾರೆ.

ಮಗು ತೋರಿಸಿಲ್ಲ ಎಂಬ ಸಿಟ್ಟಿಗೆ ಭೀಕರ ದಾಳಿ: ಅತ್ತೆಗೆ ಅಳಿಯನಿಂದ ಚಾಕು ಇರಿತ!

ಬೆಳಗಾವಿ: ಕ್ಷುಲ್ಲಕ ಕಾರಣಕ್ಕಾಗಿ ಅಳಿಯನೊಬ್ಬ ತನ್ನ ಅತ್ತೆಗೆ ಚಾಕುವಿನಿಂದ ಇರಿದ ಭೀಕರ ಘಟನೆ ಸವದತ್ತಿ ತಾಲೂಕಿನ ಆಲದಕಟ್ಟಿ ಗ್ರಾಮದಲ್ಲಿ ನಡೆದಿದೆ.

ವಿಡಿಯೋ ಕಾಲ್‌ನಲ್ಲಿ ಮಗು ತೋರಿಸಿಲ್ಲ ಎಂಬ ಕಾರಣಕ್ಕೆ ಆರೋಪಿ ಅರವಿಂದ ಗವಳಿ ಸಿಟ್ಟಿಗೆದ್ದಿದ್ದು, ತನ್ನ ಅತ್ತೆ ಮಹಾದೇವಿ (45) ಅವರಿಗೆ ಚಾಕುವಿನಿಂದ ದಾಳಿ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಪತ್ನಿಗೆ ಎರಡು ತಿಂಗಳ ಹಿಂದೆ ಹೆರಿಗೆಯಾಗಿದ್ದು, ಆಕೆ ತವರು ಮನೆಯಲ್ಲಿ ಉಳಿದಿದ್ದಳು. ಅರವಿಂದ ನಿರಂತರವಾಗಿ ವಿಡಿಯೋ ಕಾಲ್ ಮಾಡಿ ಮಗುವನ್ನು ತೋರಿಸುವಂತೆ ಒತ್ತಾಯಿಸುತ್ತಿದ್ದನು. ಇದಕ್ಕೆ ಅತ್ತೆ ವಿರೋಧ ವ್ಯಕ್ತಪಡಿಸಿ ಬುದ್ಧಿವಾದ ಹೇಳಿದ್ದರಿಂದ ಇಬ್ಬರ ನಡುವೆ ವಾಗ್ವಾದ ನಡೆದಿದೆ.

ಇದೇ ದ್ವೇಷದಿಂದ ಅರವಿಂದ ಅತ್ತೆಯ ಮನೆಗೆ ನುಗ್ಗಿ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ. ಗಂಭೀರವಾಗಿ ಗಾಯಗೊಂಡ ಮಹಾದೇವಿಯನ್ನು ಕೂಡಲೇ ಬೆಳಗಾವಿಯ ಬಿಮ್ಸ್ ಆಸ್ಪತ್ರೆಯ ಐಸಿಯುಗೆ ದಾಖಲಿಸಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಘಟನೆ ಬಳಿಕ ಆರೋಪಿ ಅರವಿಂದ ಸಾಮಾಜಿಕ ಜಾಲತಾಣದಲ್ಲಿ “ಇಂದು ಜೈಲು, ನಾಳೆ ಬೇಲ್… ನಿನ್ನನ್ನು ಬಿಡಲ್ಲ” ಎಂದು ಸ್ಟೇಟಸ್ ಹಾಕಿಕೊಂಡು ಅಹಂಕಾರ ಪ್ರದರ್ಶಿಸಿದ್ದಾನೆ ಎಂದು ತಿಳಿದುಬಂದಿದೆ.

ಮುರಗೋಡ ಪೊಲೀಸರು ತಕ್ಷಣ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.

ರಾಜ್ಯದಲ್ಲಿ ಮುಂದಿನ 4 ದಿನ ಭಾರಿ ಮಳೆ! ದಕ್ಷಿಣ ಒಳನಾಡಿಗೆ ಯೆಲ್ಲೋ ಅಲರ್ಟ್​ ಘೋಷಣೆ

ಬೆಂಗಳೂರು: ರಾಜ್ಯದಲ್ಲಿ ಮುಂದಿನ ನಾಲ್ಕು ದಿನಗಳ ಕಾಲ ಮಳೆ ಅಬ್ಬರ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಜೋರು ಮಳೆಯಾಗುವ ಸಾಧ್ಯತೆ ಇದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಬೆಂಗಳೂರು ನಗರದಲ್ಲಿ ಮುಂದಿನ ಮೂರು ದಿನಗಳ ಕಾಲ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದ್ದು, 30-40 ಕಿ.ಮೀ ವೇಗದ ಗಾಳಿ ಬೀಸುವ ಸಾಧ್ಯತೆಯಿದೆ ಎಂದು ಇಲಾಖೆ ತಿಳಿಸಿದೆ. ಚಿಕ್ಕಮಗಳೂರು, ಕೊಡಗು, ಹಾಸನ, ಮೈಸೂರು, ಮಂಡ್ಯ, ರಾಮನಗರ, ಚಾಮರಾಜನಗರ, ತುಮಕೂರು, ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಗಳಲ್ಲಿ ಮಳೆ ತೀವ್ರವಾಗುವ ನಿರೀಕ್ಷೆಯಿದೆ.

ಕರಾವಳಿ ಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗಲಿದ್ದು, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಒಣ ಹವೆಯೇ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಉತ್ತರ ಕರ್ನಾಟಕದ ಯಾದಗಿರಿ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಕೂಡ ಗುಡುಗು ಸಹಿತ ಸಾಧಾರಣ ಮಳೆಯ ಸಾಧ್ಯತೆ ಇದೆ.

ಮೇ 7 ಮತ್ತು 8ರಂದು ಬೆಳಗಾವಿ, ಧಾರವಾಡ, ಹಾವೇರಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ನಿರೀಕ್ಷೆಯಿದ್ದು, ಉಳಿದ ಬಹುತೇಕ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಮುಂದುವರಿಯಲಿದೆ.

ಇತ್ತ ಮೈಸೂರು ಜಿಲ್ಲೆಯಲ್ಲಿ ಮಳೆ ಮತ್ತು ಗಾಳಿಯ ಆರ್ಭಟ ಮುಂದುವರಿದಿದ್ದು, ಹುಣಸೂರು ತಾಲ್ಲೂಕಿನ ಬಿಳಿಕೆರೆ–ಮನುಗನಹಳ್ಳಿ ಮಧ್ಯೆ ಬೃಹತ್ ಮರ ಬಿದ್ದು ಮೈಸೂರು–ಹುಣಸೂರು ಮುಖ್ಯ ರಸ್ತೆಯಲ್ಲಿ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗಿದೆ. ವಾಹನ ಸವಾರರು ಪರದಾಡುವಂತಾಗಿದೆ.

ಇತರರ ಮಾತಿಗೆ ಮಣಿಯುವ ಅಭ್ಯಾಸವೇ ವಿನಾಶಕ್ಕೆ ಕಾರಣ: ಚಾಣಕ್ಯರ ಮಹತ್ವದ ಸಂದೇಶ

ಆಚಾರ್ಯ ಚಾಣಕ್ಯರು ತಮ್ಮ ನೀತಿಶಾಸ್ತ್ರದಲ್ಲಿ ಜೀವನ, ಯಶಸ್ಸು, ಸಂಬಂಧಗಳು ಸೇರಿದಂತೆ ಹಲವು ವಿಷಯಗಳ ಬಗ್ಗೆ ಗಾಢವಾದ ಉಪದೇಶಗಳನ್ನು ನೀಡಿದ್ದಾರೆ.

ವಿಶೇಷವಾಗಿ ಅವರು ಒಬ್ಬ ವ್ಯಕ್ತಿ ಇತರರನ್ನು ಯೋಚನೆಯಿಲ್ಲದೆ, ಕುರುಡಾಗಿ ನಂಬುವ ಅಭ್ಯಾಸ ಬೆಳೆಸಿಕೊಂಡರೆ ಅದು ಅವನ ಜೀವನಕ್ಕೆ ದೊಡ್ಡ ಹಾನಿಯನ್ನುಂಟುಮಾಡಬಹುದು ಎಂದು ಎಚ್ಚರಿಸಿದ್ದಾರೆ. ಇಂದಿನ ಕಾಲದಲ್ಲೂ ಈ ಮಾತು ಬಹಳ ಪ್ರಸ್ತುತವಾಗಿದ್ದು, ನಮ್ಮ ದೈನಂದಿನ ನಿರ್ಧಾರಗಳಿಗೆ ಸಂಬಂಧಿಸಿದೆ.

ಚಾಣಕ್ಯರ ಪ್ರಕಾರ, ಇತರರ ಮಾತನ್ನು ಸಂಪೂರ್ಣವಾಗಿ ನಂಬಿ ಸ್ವಂತ ಯೋಚನೆ ಇಲ್ಲದೆ ಮುಂದುವರಿದರೆ, ವ್ಯಕ್ತಿಯ ಮನಸ್ಸು ನಿಧಾನವಾಗಿ ಸ್ವತಂತ್ರವಾಗಿ ಯೋಚಿಸುವ ಶಕ್ತಿಯನ್ನು ಕಳೆದುಕೊಳ್ಳುತ್ತದೆ. ಜನರು ಹೇಳುವ ಪ್ರತಿಯೊಂದು ಮಾತು ಸತ್ಯವಾಗಿರಲು ಸಾಧ್ಯವಿಲ್ಲ. ಕೆಲವರು ತಮ್ಮ ಸ್ವಾರ್ಥ, ಲಾಭ ಅಥವಾ ಕೆಟ್ಟ ಉದ್ದೇಶಗಳಿಂದ ತಪ್ಪು ಸಲಹೆ ನೀಡಬಹುದು. ಅಂತಹ ಸಂದರ್ಭದಲ್ಲಿ ಸ್ವಂತ ವಿಶ್ಲೇಷಣೆ ಇಲ್ಲದೆ ಅವರ ಮಾತನ್ನು ಅನುಸರಿಸಿದರೆ, ಅದು ತಪ್ಪು ದಾರಿಗೆ ಕರೆದೊಯ್ಯಬಹುದು.

ಇದರಿಂದ ವ್ಯಕ್ತಿಯ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವೂ ದುರ್ಬಲವಾಗುತ್ತದೆ. ಸಣ್ಣ ವಿಷಯಗಳಿಗೂ ಇತರರ ಅಭಿಪ್ರಾಯವನ್ನು ಕೇಳಬೇಕಾದ ಸ್ಥಿತಿ ನಿರ್ಮಾಣವಾಗುತ್ತದೆ. ಇದರಿಂದ ಸ್ವಂತ ನಿರ್ಧಾರ ತೆಗೆದುಕೊಳ್ಳುವ ಆತ್ಮವಿಶ್ವಾಸ ಕಡಿಮೆಯಾಗುತ್ತದೆ. ಕ್ರಮೇಣ ವ್ಯಕ್ತಿ ತನ್ನ ಮೇಲೆ ನಂಬಿಕೆ ಕಳೆದುಕೊಳ್ಳುತ್ತಾನೆ ಮತ್ತು ಇತರರ ಮೇಲೆ ಸಂಪೂರ್ಣವಾಗಿ ಅವಲಂಬಿತನಾಗುತ್ತಾನೆ.

ಇದಲ್ಲದೆ, ಈ ಅಭ್ಯಾಸವು ವ್ಯಕ್ತಿಯ ಆತ್ಮವಿಶ್ವಾಸವನ್ನು ಕೂಡ ಕುಸಿತಗೊಳಿಸುತ್ತದೆ. ಯಾವ ಕೆಲಸ ಮಾಡಿದರೂ “ನಾನು ಮಾಡಬಹುದೇ?” ಎಂಬ ಸಂಶಯ ಹುಟ್ಟುತ್ತದೆ. ಇದು ವ್ಯಕ್ತಿತ್ವದ ಬೆಳವಣಿಗೆಯನ್ನೇ ತಡೆಹಿಡಿಯುತ್ತದೆ ಎಂದು ಚಾಣಕ್ಯರು ತಿಳಿಸಿದ್ದಾರೆ.

ಹೀಗಾಗಿ ಚಾಣಕ್ಯ ನೀತಿಯ ಪ್ರಮುಖ ಸಂದೇಶವೆಂದರೆ—ಇತರರ ಸಲಹೆಗಳನ್ನು ಕೇಳುವುದು ಒಳ್ಳೆಯದು, ಆದರೆ ಅಂತಿಮ ನಿರ್ಧಾರವನ್ನು ಸ್ವಂತ ಬುದ್ಧಿ, ಅನುಭವ ಮತ್ತು ವಿವೇಚನೆಯ ಆಧಾರದ ಮೇಲೆ ತೆಗೆದುಕೊಳ್ಳಬೇಕು. ಇದರಿಂದ ಮಾತ್ರ ವ್ಯಕ್ತಿ ಜೀವನದಲ್ಲಿ ಯಶಸ್ಸು ಸಾಧಿಸಿ ಸ್ಥಿರವಾಗಿ ಮುಂದುವರಿಯಲು ಸಾಧ್ಯವಾಗುತ್ತದೆ.

IPL 2026: ಲಕ್ನೋ ವಿರುದ್ಧ ಮುಂಬೈಗೆ ವಿಕೆಟ್‌ಗಳ ಜಯ! ಪ್ಲೇ ಆಫ್ ರೇಸ್ ನಿಂದ LSG ಔಟ್

ಮುಂಬೈ: ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ 2026ರ 47ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ 6 ವಿಕೆಟ್‌ಗಳ ಗೆಲುವು ಸಾಧಿಸಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ತಂಡ ನಿಕೋಲಸ್ ಪೂರನ್ ಹಾಗೂ ಮಿಚೆಲ್ ಮಾರ್ಷ್ ಅವರ ಸ್ಫೋಟಕ ಆಟದ ನೆರವಿನಿಂದ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 228 ರನ್ ಗಳಿಸಿತು. ಪೂರನ್ ಕೇವಲ 21 ಎಸೆತಗಳಲ್ಲಿ 63 ರನ್ ಗಳಿಸಿ ಮಿಂಚಿದರು. ಮಾರ್ಷ್ 25 ಎಸೆತಗಳಲ್ಲಿ 44 ರನ್ ದಾಖಲಿಸಿದರು. ನಂತರದ ಹಂತದಲ್ಲಿ ಮಾಕ್ರಮ್ ಮತ್ತು ಹಿಮ್ಮತ್ ಸಿಂಗ್ ಅವರ ಉತ್ತಮ ಆಟದಿಂದ ತಂಡ ಬಲವಾದ ಮೊತ್ತ ದಾಖಲಿಸಿತು.

ಗುರಿ ಬೆನ್ನಟ್ಟಿದ ಮುಂಬೈ ತಂಡಕ್ಕೆ ರಯಾನ್ ರಿಕಲ್ಟನ್ ಹಾಗೂ ರೋಹಿತ್ ಶರ್ಮಾ ಭರ್ಜರಿ ಆರಂಭ ನೀಡಿದರು. ರಿಕಲ್ಟನ್ 32 ಎಸೆತಗಳಲ್ಲಿ 83 ರನ್ ಗಳಿಸಿ 8 ಸಿಕ್ಸರ್ ಮತ್ತು 6 ಬೌಂಡರಿಗಳೊಂದಿಗೆ ಅಬ್ಬರಿಸಿದರು. ರೋಹಿತ್ ಶರ್ಮಾ ಕೂಡ 44 ಎಸೆತಗಳಲ್ಲಿ 84 ರನ್ ಸಿಡಿಸಿ ತಂಡಕ್ಕೆ ಬಲ ನೀಡಿದರು.

ಕೊನೆಯಲ್ಲಿ ನಮನ್ ಧೀರ್ 12 ಎಸೆತಗಳಲ್ಲಿ ಅಜೇಯ 23 ರನ್ ಗಳಿಸಿ ಮುಂಬೈಗೆ ಗೆಲುವಿನ ಮುಟ್ಟಿಸಿದರು. ಮುಂಬೈ ತಂಡ 18.4 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 229 ರನ್ ಗಳಿಸಿ ರೋಚಕ ಜಯ ಸಾಧಿಸಿತು.

ಎಲ್‌ಪಿಜಿ ದರ ಏರಿಕೆ ಬಿಸಿ: ಬೆಂಗಳೂರಿನ ಹೋಟೆಲ್ ಆಹಾರ ದುಬಾರಿ!

ಬೆಂಗಳೂರು: ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ದರದಲ್ಲಿ ಭಾರಿ ಏರಿಕೆ ಆಗಿರುವ ಹಿನ್ನೆಲೆಯಲ್ಲಿ ಬೆಂಗಳೂರಿನ ಹೋಟೆಲ್‌ಗಳಲ್ಲಿ ಆಹಾರ ಪದಾರ್ಥಗಳ ಬೆಲೆ ಹೆಚ್ಚಳಗೊಂಡಿದೆ.

ಮಧ್ಯಪ್ರಾಚ್ಯ ಯುದ್ಧದ ಭೀತಿ ಹಾಗೂ ಜಾಗತಿಕ ತೈಲ ಮಾರುಕಟ್ಟೆಯ ಏರಿಳಿತ ಇದರ ಪ್ರಮುಖ ಕಾರಣವಾಗಿದೆ ಎಂದು ಮೂಲಗಳು ತಿಳಿಸಿವೆ. 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ದರ ಬರೋಬ್ಬರಿ 993 ರೂ. ಏರಿಕೆ ಕಂಡು 3,154 ರೂ.ಗೆ ತಲುಪಿದೆ. ಇದರ ನೇರ ಪರಿಣಾಮವಾಗಿ ಹೋಟೆಲ್ ಮಾಲೀಕರು ತಿಂಡಿ, ಊಟ ಹಾಗೂ ಪಾನೀಯಗಳ ದರವನ್ನು ಶೇ.20ರಷ್ಟು ಹೆಚ್ಚಿಸಲು ಮುಂದಾಗಿದ್ದಾರೆ.

ಗಾಂಧಿನಗರದ ‘ರಸಪಾಕ’ ಹೋಟೆಲ್ ಸೇರಿದಂತೆ ಹಲವೆಡೆ ಈಗಾಗಲೇ ಹೊಸ ದರ ಜಾರಿಗೆ ಬಂದಿದ್ದು,

  • ಊಟ: 100 ರೂ. ನಿಂದ 120 ರೂ.
  • ದೋಸೆ: 75 ರೂ. ನಿಂದ 85 ರೂ.
  • ಪೂರಿ: 60 ರೂ. ನಿಂದ 75 ರೂ.
  • ಟೀ: 20 ರೂ. ನಿಂದ 25 ರೂ.ಗೆ ಏರಿಕೆ ಮಾಡಲಾಗಿದೆ.

ಈ ಬಗ್ಗೆ ಗ್ರಾಹಕರು ಅಸಮಾಧಾನ ವ್ಯಕ್ತಪಡಿಸಿದ್ದು, ನಿರಂತರ ಬೆಲೆ ಏರಿಕೆ ಸಾಮಾನ್ಯ ಜನರ ಜೇಬಿಗೆ ಹೊರೆ ಆಗುತ್ತಿದೆ ಎಂದು ಹೇಳಿದ್ದಾರೆ. ಇತ್ತ ಬೆಂಗಳೂರು ನಗರ ಹೋಟೆಲ್ ಮಾಲೀಕರ ಸಂಘವು, ಬೆಲೆ ಏರಿಕೆ ನಿರ್ಧಾರವು ಹೋಟೆಲ್ ಮಾಲೀಕರ ವಿವೇಚನೆಗೆ ಬಿಟ್ಟ ವಿಚಾರ ಎಂದು ಪ್ರತಿಕ್ರಿಯಿಸಿದೆ.

ಪೀಣ್ಯ ಫ್ಲೈಓವರ್ 4 ದಿನ ಬಂದ್: ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ!

ಬೆಂಗಳೂರು: ತುಮಕೂರು ರಸ್ತೆ ಮತ್ತು ಪೀಣ್ಯ ಮಾರ್ಗದಲ್ಲಿ ಸಂಚರಿಸುವ ವಾಹನ ಸವಾರರಿಗೆ ಪ್ರಮುಖ ಸೂಚನೆ ನೀಡಲಾಗಿದೆ.

ಪೀಣ್ಯ ಎಲಿವೇಟೆಡ್ ಫ್ಲೈಓವರ್ ಮೇಲೆ ಇಂದಿನಿಂದ ಮುಂದಿನ 4 ದಿನಗಳ ಕಾಲ ಸಂಪೂರ್ಣ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ತಿಳಿಸಿದೆ.

ಮೇ 5ರ ಬೆಳಗ್ಗೆ 5 ಗಂಟೆಯಿಂದ ಮೇ 8ರ ಬೆಳಗ್ಗೆ 11 ಗಂಟೆಯವರೆಗೆ ಫ್ಲೈಓವರ್ ಮೇಲೆ ಸಂಚಾರ ಸ್ಥಗಿತವಾಗಿದ್ದು, ಕೇಬಲ್ ಅಳವಡಿಕೆ ದುರಸ್ತಿ ಹಾಗೂ ಅಂತಿಮ ಲೋಡ್ ಟೆಸ್ಟಿಂಗ್ ಕಾಮಗಾರಿ ನಡೆಯಲಿದೆ. ಸಾರ್ವಜನಿಕರ ಸುರಕ್ಷತೆ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಅವಧಿಯಲ್ಲಿ ನೆಲಮಂಗಲದಿಂದ ಬೆಂಗಳೂರು ನಗರಕ್ಕೆ ಹಾಗೂ ಬೆಂಗಳೂರು ನಗರದಿಂದ ನೆಲಮಂಗಲ ಕಡೆಗೆ ಸಂಚರಿಸುವ ವಾಹನಗಳು ಪರ್ಯಾಯ ಮಾರ್ಗಗಳನ್ನು ಬಳಸಬೇಕಾಗಿದೆ. ಸರ್ವಿಸ್ ರಸ್ತೆ ಮತ್ತು ಪೀಣ್ಯ–ದಾಸರಹಳ್ಳಿ–ಜಾಲಹಳ್ಳಿ ಕ್ರಾಸ್ ಮಾರ್ಗದಲ್ಲಿ ಸಂಚಾರ ವ್ಯವಸ್ಥೆ ಮಾಡಲಾಗಿದೆ.

ಪ್ರಯಾಣಿಕರು ಸಮಯಕ್ಕಿಂತ ಮುಂಚಿತವಾಗಿ ಪ್ರಯಾಣ ಆರಂಭಿಸುವಂತೆ ಹಾಗೂ ಪರ್ಯಾಯ ಮಾರ್ಗಗಳನ್ನು ಅನುಸರಿಸುವಂತೆ ಟ್ರಾಫಿಕ್ ಪೊಲೀಸರು ಮನವಿ ಮಾಡಿದ್ದಾರೆ. ಈ ಹಿಂದೆ ಮುಂದೂಡಲಾಗಿದ್ದ ಕಾಮಗಾರಿ ಇದೀಗ ಆರಂಭವಾಗಿರುವುದರಿಂದ ಸುತ್ತಮುತ್ತಲಿನ ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಲಾಗಿದೆ.

ಗದಗಕ್ಕೆ ಬರುತ್ತಿದ್ದ ಪಲ್ಲಕ್ಕಿ ಬಸ್‌ಗೆ ಬೆಂಕಿ: 17 ಜನರ ಪ್ರಾಣ ಜಸ್ಟ್ ಮಿಸ್! ಚಾಲಕನ ಸಾಹಸಕ್ಕೆ ಮೆಚ್ಚುಗೆ

ಗದಗ: ಬೆಂಗಳೂರಿನಿಂದ ಗದಗ ನಗರಕ್ಕೆ ಬರುತ್ತಿದ್ದ ಪಲ್ಲಕ್ಕಿ ಬಸ್‌ಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಸಂಪೂರ್ಣವಾಗಿ ಸುಟ್ಟು ಕರಕಲಾದ ಘಟನೆ ಮಂಗಳವಾರ ಬೆಳಗಿನ ಜಾವ ಗುತ್ತಲ ಸಮೀಪ ನಡೆದಿದೆ.

ಕ್ಷಣಾರ್ಧದಲ್ಲಿ ಸಂಭವಿಸಿದ ಈ ಅವಘಡದಲ್ಲಿ ದೊಡ್ಡ ದುರಂತ ತಪ್ಪಿದ್ದು, ಚಾಲಕನ ಸಮಯೋಚಿತ ಕ್ರಮದಿಂದ ಎಲ್ಲಾ ಪ್ರಯಾಣಿಕರು ಜೀವಂತವಾಗಿ ಪಾರಾಗಿದ್ದಾರೆ.

ಸೋಮವಾರ ರಾತ್ರಿ ಬೆಂಗಳೂರಿನಿಂದ ಹೊರಟಿದ್ದ (KA-57-F6680) ಸಂಖ್ಯೆಯ ಪಲ್ಲಕ್ಕಿ ಬಸ್‌ನಲ್ಲಿ ಸುಮಾರು ಹದಿನೈದಕ್ಕೂ ಹೆಚ್ಚು ಪ್ರಯಾಣಿಕರು ಗದಗ ಕಡೆಗೆ ಪ್ರಯಾಣಿಸುತ್ತಿದ್ದರು. ಸಾಮಾನ್ಯವಾಗಿ ನಡೆಯುತ್ತಿದ್ದ ಪ್ರಯಾಣ ಮಧ್ಯರಾತ್ರಿ ಬಳಿಕ ಭೀತಿಯ ಕ್ಷಣಗಳಿಗೆ ತಿರುಗಿತು. ಬಸ್ ಚಲಿಸುತ್ತಿದ್ದಾಗ ಬ್ರೇಕ್ ಲೈನ್‌ನಲ್ಲಿ ಉಂಟಾದ ತೊಂದರೆಯಿಂದ ಕಿಡಿ ಹೊತ್ತಿಕೊಂಡಿದ್ದು, ಅದು ಕ್ಷಣಕ್ಷಣಕ್ಕೂ ಬೆಂಕಿಯಾಗಿ ವ್ಯಾಪಿಸತೊಡಗಿತು.

ಆರಂಭದಲ್ಲಿ ಸಣ್ಣದಾಗಿ ಕಾಣಿಸಿಕೊಂಡ ಬೆಂಕಿ ಕೆಲವೇ ಕ್ಷಣಗಳಲ್ಲಿ ಬಸ್‌ನ ಹಿಂಭಾಗವನ್ನು ಆವರಿಸಿತು. ಪರಿಸ್ಥಿತಿ ಗಂಭೀರವಾಗುತ್ತಿರುವುದನ್ನು ಅರಿತ ಚಾಲಕ ಫಕ್ಕೀರಪ್ಪ ತಕ್ಷಣ ಬಸ್ ನಿಲ್ಲಿಸಿ, ಯಾವುದೇ ಗಾಬರಿಯಾಗದೆ ಪ್ರಯಾಣಿಕರನ್ನು ಹೊರಗೆ ಬಿಡಲು ಮುಂದಾದರು. ಬಸ್ ಬಾಗಿಲು ಮೂಲಕ ಎಲ್ಲರನ್ನು ಇಳಿಸಲು ಸಮಯ ಸಾಲದ ಕಾರಣ, ಗಾಜುಗಳನ್ನು ಒಡೆದು ಪ್ರಯಾಣಿಕರನ್ನು ಹೊರಗೆ ತೆಗೆದು ಸುರಕ್ಷಿತ ಸ್ಥಳಕ್ಕೆ ಕರೆದೊಯ್ದರು. ಈ ವೇಳೆ ಒಟ್ಟು ಹದಿನೇಳು ಮಂದಿ ಪ್ರಯಾಣಿಕರು ಪಾರಾಗಿದ್ದು, ಯಾರಿಗೂ ಪ್ರಾಣಾಪಾಯವಾಗಿಲ್ಲ ಎನ್ನುವುದು ದೊಡ್ಡ ನೆಮ್ಮದಿ.

ಪ್ರತ್ಯಕ್ಷದರ್ಶಿಗಳ ಪ್ರಕಾರ, ಇನ್ನೂ ಕೆಲ ನಿಮಿಷ ತಡವಾದರೂ ಬೆಂಕಿ ಸಂಪೂರ್ಣ ಬಸ್ ಅನ್ನು ಆವರಿಸಿ ಭೀಕರ ದುರಂತಕ್ಕೆ ಕಾರಣವಾಗಬಹುದಿತ್ತು. “ಚಾಲಕನ ಧೈರ್ಯ ಮತ್ತು ಚಾತುರ್ಯದಿಂದಲೇ ನಾವು ಬದುಕಿದ್ದೇವೆ” ಎಂದು ಕೆಲ ಗದಗ ತಾಲೂಕು ಪಂಚಾಯತ್ ಇಒ ಜಿನಗಾ ಅವರು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.

ಈ ಘಟನೆಗೆ ಸಾಕ್ಷಿಯಾದ ಪತ್ರಕರ್ತ ರಮೇಶ್ ಭಜಂತ್ರಿ ಅವರು ತಮ್ಮ ಮಗನೊಂದಿಗೆ ಬೆಂಗಳೂರಿಗೆ ಹೋಗಿ ವಾಪಾಸಾಗುತ್ತಿದ್ದ ವೇಳೆ ಇದೇ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದರು. ಘಟನೆ ನಡೆದ ಕೂಡಲೇ ಅವರು ತಮ್ಮ ಮೊಬೈಲ್‌ನಲ್ಲಿ ಬೆಂಕಿಗಾಹುತಿಯಾದ ಬಸ್‌ನ ದೃಶ್ಯಗಳನ್ನು ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಆ ದೃಶ್ಯಗಳು ವ್ಯಾಪಕವಾಗಿ ವೈರಲ್ ಆಗಿವೆ. ಬಸ್ ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗುತ್ತಿರುವ ದೃಶ್ಯಗಳು ಘಟನೆಯ ಭೀಕರತೆಯನ್ನು ತೋರಿಸುತ್ತವೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳೀಯ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಲು ಕ್ರಮ ಕೈಗೊಂಡರು. ಆದರೆ ಅಷ್ಟರಲ್ಲಾಗಲೇ ಬಸ್ ಸಂಪೂರ್ಣ ಸುಟ್ಟು ಹಾಳಾಗಿತ್ತು.

ಪ್ರಾಥಮಿಕ ತನಿಖೆಯಲ್ಲಿ ಬ್ರೇಕ್ ಲೈನ್‌ನ ದೋಷವೇ ಬೆಂಕಿಗೆ ಕಾರಣವಾಗಿರುವ ಸಾಧ್ಯತೆ ವ್ಯಕ್ತವಾಗಿದ್ದು, ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಈ ಅವಘಡ ಮತ್ತೊಮ್ಮೆ ವಾಹನಗಳ ತಾಂತ್ರಿಕ ಪರಿಶೀಲನೆ ಮತ್ತು ಸುರಕ್ಷತಾ ಕ್ರಮಗಳ ಮಹತ್ವವನ್ನು ನೆನಪಿಸಿಕೊಟ್ಟಿದೆ. ಸಮಯಕ್ಕೆ ಸೂಕ್ತ ಕ್ರಮ ಕೈಗೊಂಡ ಚಾಲಕ ಫಕ್ಕೀರಪ್ಪ ಅವರ ಸಾಹಸದಿಂದ ಸಂಭವಿಸಬಹುದಾದ ದೊಡ್ಡ ಅನಾಹುತ ತಪ್ಪಿದಂತಾಗಿದೆ.

error: Content is protected !!