Home Blog

ರಾಯರ ಮಠದಲ್ಲಿ ದಾಖಲೆ ಬರೆದ ಹುಂಡಿ ಎಣಿಕೆ! 20 ದಿನದಲ್ಲಿ 2.78 ಕೋಟಿ ಕಾಣಿಕೆ ಸಂಗ್ರಹ

ರಾಯಚೂರು: ಕಲಿಯುಗದ ಕಾಮಧೇನು ಎಂದೇ ಪ್ರಸಿದ್ಧವಾದ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠಕ್ಕೆ ಏಪ್ರಿಲ್ ಹಾಗೂ ಮೇ ತಿಂಗಳ ಮೊದಲ 20 ದಿನಗಳಲ್ಲಿ ಭಕ್ತರಿಂದ ಭಾರೀ ಪ್ರಮಾಣದ ಕಾಣಿಕೆ ಹರಿದು ಬಂದಿದೆ.

ಮಠದಲ್ಲಿ ನಡೆದ ಕಾಣಿಕೆ ಹುಂಡಿ ಎಣಿಕೆ ಕಾರ್ಯ ಸೋಮವಾರ ರಾತ್ರಿ ಮುಕ್ತಾಯವಾಗಿದ್ದು, ಒಟ್ಟು ₹2,78,19,526 ರೂಪಾಯಿ ಸಂಗ್ರಹವಾಗಿದೆ ಎಂದು ಮಠದ ಮೂಲಗಳು ತಿಳಿಸಿವೆ. ಇದರಲ್ಲಿ ₹2,69,28,176 ನೋಟು ರೂಪದಲ್ಲಿದ್ದು, ₹8,91,350 ನಾಣ್ಯಗಳ ರೂಪದಲ್ಲಿ ಸಂಗ್ರಹವಾಗಿದೆ.

ಅದೇ ರೀತಿ ಭಕ್ತರು ಕಾಣಿಕೆ ರೂಪದಲ್ಲಿ 15.100 ಗ್ರಾಂ ಚಿನ್ನ ಹಾಗೂ 751 ಗ್ರಾಂ ಬೆಳ್ಳಿಯನ್ನು ಸಮರ್ಪಿಸಿದ್ದಾರೆ ಎಂದು ತಿಳಿದುಬಂದಿದೆ.

ಹುಂಡಿ ಎಣಿಕೆ ಕಾರ್ಯದಲ್ಲಿ ಮಠದ ನೂರಾರು ಸಿಬ್ಬಂದಿ, ಭಜನಾ ಮಂಡಳಿಯ ಭಕ್ತರು ಹಾಗೂ ಕರ ಸೇವಕರು ಭಾಗವಹಿಸಿದ್ದರು. ಮಂತ್ರಾಲಯ ರಾಘವೇಂದ್ರ ಸ್ವಾಮಿ ಮಠದಲ್ಲಿ ಪ್ರತಿ ತಿಂಗಳು ನಡೆಯುವ ಹುಂಡಿ ಎಣಿಕೆ ಭಕ್ತರ ನಂಬಿಕೆ ಹಾಗೂ ಭಕ್ತಿಯ ಪ್ರತಿಬಿಂಬವಾಗಿದ್ದು, ಈ ಬಾರಿಯೂ ಭಾರೀ ಕಾಣಿಕೆ ದಾಖಲಾಗಿದೆ.

ಮುಗ್ಗೂರು ಅರಣ್ಯದಲ್ಲಿ ಹೆಣ್ಣಾನೆ ಸಾವು: ತಾಯಿ ಆನೆ ಬಳಿ ಮರಿ ಆನೆಯ ರೋಧನೆ!

ರಾಮನಗರ: ರಾಮನಗರ ಜಿಲ್ಲೆಯ ಕಾವೇರಿ ವನ್ಯಜೀವಿ ವಲಯದ ಮುಗ್ಗೂರು ಅರಣ್ಯ ಪ್ರದೇಶದಲ್ಲಿ ಹೃದಯವಿದ್ರಾವಕ ಘಟನೆ ನಡೆದಿದೆ.

ಅನಾರೋಗ್ಯದಿಂದ ಬಳಲುತ್ತಿದ್ದ 35 ವರ್ಷದ ಹೆಣ್ಣಾನೆ ಬಹುಅಂಗಾಂಗ ವೈಫಲ್ಯದಿಂದ ಮೃತಪಟ್ಟಿದ್ದು, ಅದರ ಬಳಿ ನಿಂತು ಮರಿ ಆನೆ ಮೂಕರೋಧನೆ ವ್ಯಕ್ತಪಡಿಸಿರುವ ದೃಶ್ಯ ಎಲ್ಲರ ಮನಕಲುಕಿಸಿದೆ.

ಕನಕಪುರ ತಾಲೂಕಿನ ಮಡಿವಾಳ ಸಮೀಪದ ಮುಗ್ಗೂರು ಅರಣ್ಯ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ತಾಯಿ ಆನೆ ಸಾವನ್ನಪ್ಪಿದ ವಿಷಯ ತಿಳಿಯದೇ ಅದರ ದೇಹದ ಬಳಿ ಮರಿ ಆನೆ ನಿಂತು ನಿರಂತರವಾಗಿ ಸುತ್ತಾಡಿ ರೋಧನೆ ವ್ಯಕ್ತಪಡಿಸಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

ಈ ದೃಶ್ಯದ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವನ್ಯಜೀವಿ ಪ್ರೇಮಿಗಳಲ್ಲಿ ಭಾವನಾತ್ಮಕ ಪ್ರತಿಕ್ರಿಯೆ ಮೂಡಿಸಿದೆ.

ಘಟನೆಯ ಮಾಹಿತಿ ಪಡೆದ ಕಾವೇರಿ ವನ್ಯಜೀವಿ ವಲಯದ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಂತರ ಮೃತ ಕಾಡಾನೆಯ ಮರಣೋತ್ತರ ಪರೀಕ್ಷೆ ನಡೆಸಿ ಅಂತ್ಯಕ್ರಿಯೆ ನೆರವೇರಿಸಲಾಗಿದೆ.

ಬಳಿಕ ಅರಣ್ಯಾಧಿಕಾರಿಗಳು ಮರಿ ಆನೆಯನ್ನು ಶಾಂತಪಡಿಸಿ ಸುರಕ್ಷಿತವಾಗಿ ಕಾಡಿಗೆ ಬಿಡಲಾಗಿದೆ ಎಂದು ತಿಳಿದುಬಂದಿದೆ.

 

ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ಬೈಕ್ ಬ್ಯಾಟರಿ ಸ್ಫೋಟ: ವ್ಯಕ್ತಿ ಸಾವು!

ಬೆಂಗಳೂರು: ಎಲೆಕ್ಟ್ರಿಕ್ ಬೈಕ್ ಬ್ಯಾಟರಿ ಸ್ಫೋಟಗೊಂಡು 62 ವರ್ಷದ ವ್ಯಕ್ತಿ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಹಲಸೂರು ಪೊಲೀಸ್ ಠಾಣಾ ವ್ಯಾಪ್ತಿಯ ಮರ್ಸಿ ಟೌನ್‌ನಲ್ಲಿ ನಡೆದಿದೆ.

ಮೃತರನ್ನು ಲೂಥ್ ನಾಥನ್ (62) ಎಂದು ಗುರುತಿಸಲಾಗಿದೆ. ಆಟೋ ಚಾಲಕರಾಗಿದ್ದ ಅವರು ಮನೆಯಲ್ಲಿ ರಾತ್ರಿ ಎಲೆಕ್ಟ್ರಿಕ್ ಬೈಕನ್ನು ಚಾರ್ಜ್‌ಗೆ ಹಾಕಿ ಹಾಲ್‌ನಲ್ಲಿ ಮಲಗಿದ್ದ ವೇಳೆ ಈ ದುರಂತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮನೆ ಗ್ರೌಂಡ್ ಫ್ಲೋರ್‌ನಲ್ಲಿ ಒಬ್ಬರೇ ಮಲಗಿದ್ದ ನಾಥನ್, ಫಸ್ಟ್ ಫ್ಲೋರ್‌ನಲ್ಲಿ ಅವರ ಮಕ್ಕಳು ವಾಸವಾಗಿದ್ದರು. ಮುಂಜಾನೆ ಸುಮಾರು 3:15ರ ವೇಳೆಗೆ ಬೈಕ್ ಬ್ಯಾಟರಿ ಸ್ಫೋಟಗೊಂಡಿದ್ದು, ಕ್ಷಣಾರ್ಧದಲ್ಲಿ ಬೆಂಕಿ ಮನೆಗೆ ವ್ಯಾಪಿಸಿದೆ ಎಂದು ಹೇಳಲಾಗಿದೆ.

ಸ್ಫೋಟದ ತೀವ್ರತೆಯಿಂದ ಮನೆ ಸಂಪೂರ್ಣವಾಗಿ ಹೊತ್ತಿ ಉರಿದಿದ್ದು, ನಾಥನ್ ಸುಟ್ಟ ಸ್ಥಿತಿಯಲ್ಲಿ ಮೃತದೇಹವಾಗಿ ಪತ್ತೆಯಾಗಿದ್ದಾರೆ. ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದರೂ ಮನೆಗೆ ಭಾರೀ ಹಾನಿಯಾಗಿದೆ.

ಘಟನೆಯ ಕುರಿತು ಹಲಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬ್ಯಾಟರಿ ಸ್ಫೋಟದ ನಿಖರ ಕಾರಣದ ಬಗ್ಗೆ ತನಿಖೆ ನಡೆಯುತ್ತಿದೆ.

 

ರೇಷ್ಮೆ ಸೀರೆ ಸ್ವಚ್ಛಗೊಳಿಸುವ ಸುಲಭ ಮನೆಮದ್ದುಗಳು – ಇಲ್ಲಿದೆ ಉಪಯುಕ್ತ ಟಿಪ್ಸ್

ರೇಷ್ಮೆ ಸೀರೆಗಳು ಮಹಿಳೆಯರ ಫ್ಯಾಷನ್‌ನಲ್ಲಿ ಸದಾ ವಿಶೇಷ ಸ್ಥಾನ ಪಡೆದಿವೆ.

ಕಾಲ ಬದಲಾಗಿದ್ರೂ, ಫ್ಯಾಷನ್ ಎಷ್ಟೇ ಹೊಸ ರೂಪ ಪಡೆದರೂ ರೇಷ್ಮೆ ಸೀರೆ ಮೇಲಿನ ಆಕರ್ಷಣೆ ಮಾತ್ರ ಕಡಿಮೆಯಾಗಿಲ್ಲ. ವಿಶೇಷ ಸಂದರ್ಭಗಳಲ್ಲಿ ಧರಿಸಲಾಗುವ ಈ ಸೀರೆಗಳು ಅತ್ಯಂತ ಸೂಕ್ಷ್ಮ ಬಟ್ಟೆಯಿಂದ ತಯಾರಾಗಿರುವುದರಿಂದ ಅವುಗಳನ್ನು ತೊಳೆಯುವುದು ತುಂಬಾ ಎಚ್ಚರಿಕೆಯಿಂದ ಮಾಡಬೇಕಾಗುತ್ತದೆ.

ಡ್ರೈ ಕ್ಲೀನಿಂಗ್ ಮಾಡುವುದೂ ಕೆಲವೊಮ್ಮೆ ಕಷ್ಟಕರವಾಗುವ ಈ ರೇಷ್ಮೆ ಸೀರೆಗಳನ್ನು ಮನೆಯಲ್ಲಿಯೇ ಸರಳವಾಗಿ ಸ್ವಚ್ಛಗೊಳಿಸಬಹುದಾದ ಕೆಲವು ಸುರಕ್ಷಿತ ವಿಧಾನಗಳು ಇಲ್ಲಿವೆ.

ಮೊದಲು ಪ್ಯಾಚ್ ಟೆಸ್ಟ್ ಮುಖ್ಯ:

ಯಾವುದೇ ಕ್ಲೀನಿಂಗ್ ವಿಧಾನ ಬಳಸುವ ಮೊದಲು ಸೀರೆಯ ಸಣ್ಣ ಭಾಗದಲ್ಲಿ ಪರೀಕ್ಷೆ ಮಾಡಬೇಕು. ಸೀರೆಯ ಲೇಬಲ್ ಓದಿ ಯಾವ ವಸ್ತು ಬಳಸಬಾರದು ಎಂಬುದನ್ನು ಗಮನಿಸುವುದು ಮುಖ್ಯ. ಸೀರೆಯನ್ನು ಪ್ರತಿದಿನ ತೊಳೆಯುವ ಬದಲು ಕೆಲವು ಬಾರಿ ಉಟ್ಟ ನಂತರ ಮಾತ್ರ ತೊಳೆಯುವುದು ಉತ್ತಮ. ತೊಳೆಯುವ ನಂತರ ನೇರ ಸೂರ್ಯನ ಬೆಳಕಿನಲ್ಲಿ ಒಣಗಿಸಬಾರದು.

ಟಾಲ್ಕಮ್ ಪೌಡರ್ ಬಳಕೆ:

ರೇಷ್ಮೆ ಸೀರೆಯ ಮೇಲೆ ಎಣ್ಣೆ ಅಥವಾ ತುಪ್ಪ ಬಿದ್ದರೆ ನೀರು ಬಳಸಬೇಡಿ. ಬದಲಿಗೆ ಟಾಲ್ಕಮ್ ಪೌಡರ್ ಅಥವಾ ಕಾರ್ನ್‌ಸ್ಟಾರ್ಚ್ ಹಚ್ಚಿ 15–20 ನಿಮಿಷ ಬಿಡಿ. ಇದು ಎಣ್ಣೆಯನ್ನು ಹೀರಿಕೊಂಡು ನಂತರ ಮೃದುವಾಗಿ ಒರೆಸಿದರೆ ಕಲೆ ಹೋಗುತ್ತದೆ.

ಬೇಬಿ ಶಾಂಪೂ ವಿಧಾನ:

ಕಠಿಣ ಡಿಟರ್ಜೆಂಟ್ ಬಳಸುವುದು ರೇಷ್ಮೆಗೆ ಹಾನಿಕಾರಕ. ಸ್ವಲ್ಪ ಬೇಬಿ ಶಾಂಪೂವನ್ನು ನೀರಿನಲ್ಲಿ ಬೆರೆಸಿ ನೊರೆ ತಯಾರಿಸಿ, ಅದನ್ನು ಕಲೆ ಇರುವ ಭಾಗಕ್ಕೆ ನಿಧಾನವಾಗಿ ಹಚ್ಚಿ 10 ನಿಮಿಷ ನಂತರ ತಣ್ಣೀರಿನಲ್ಲಿ ತೊಳೆಯಿರಿ.

ಅಡುಗೆ ಸೋಡಾ ಉಪಾಯ:

ಒಣ ಕಲೆಗಳಿಗೆ ಅಡುಗೆ ಸೋಡಾ ಮತ್ತು ನೀರಿನ ಮಿಶ್ರಣ ಪೇಸ್ಟ್ ಮಾಡಿ 10–15 ನಿಮಿಷ ಹಚ್ಚಿ ಬಿಡಬಹುದು. ನಂತರ ನಿಧಾನವಾಗಿ ತೊಳೆಯುವುದರಿಂದ ಕಲೆ ಕಡಿಮೆಯಾಗುತ್ತದೆ.

ಬಿಳಿ ವಿನೆಗರ್ ಬಳಕೆ:

ಚಹಾ, ಕಾಫಿ ಅಥವಾ ಜ್ಯೂಸ್ ಕಲೆಗಳಿಗೆ ತಣ್ಣೀರಿನಲ್ಲಿ ಬಿಳಿ ವಿನೆಗರ್ ಮಿಶ್ರಣ ಮಾಡಿ ಹತ್ತಿಯಿಂದ ಸೌಮ್ಯವಾಗಿ ಒರೆಸಿದರೆ ಕಲೆ ಹೋಗುತ್ತದೆ.

 

ರಾಜ್ಯ ಸಾರಿಗೆ ನೌಕರರಿಗೆ ಬಂಪರ್ ಗಿಫ್ಟ್: ಮೂಲ ವೇತನದಲ್ಲಿ ಶೇ.12.50 ಹೆಚ್ಚಳಕ್ಕೆ ಸರ್ಕಾರ ಆದೇಶ!

ಬೆಂಗಳೂರು: ರಾಜ್ಯದ ನಾಲ್ಕು ಪ್ರಮುಖ ಸಾರಿಗೆ ನಿಗಮಗಳ ನೌಕರರ ಮೂಲ ವೇತನದಲ್ಲಿ ಶೇ.12.50 ರಷ್ಟು ಹೆಚ್ಚಳ ಮಾಡುವ ಮೂಲಕ ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ.

ಈ ಸಂಬಂಧ ಮಂಗಳವಾರ ಅಧಿಕೃತ ಆದೇಶ ಹೊರಡಿಸಲಾಗಿದ್ದು, ದೀರ್ಘಕಾಲದಿಂದ ಬಾಕಿಯಿದ್ದ ವೇತನ ಪರಿಷ್ಕರಣೆ ಬೇಡಿಕೆಗೆ ಸರ್ಕಾರ ಸ್ಪಂದಿಸಿದೆ.

ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹಾಗೂ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಗಳ ಸಾವಿರಾರು ನೌಕರರಿಗೆ ಈ ವೇತನ ಹೆಚ್ಚಳ ಅನ್ವಯವಾಗಲಿದೆ. ನೌಕರ ಸಂಘಟನೆಗಳು ಹಲವು ವರ್ಷಗಳಿಂದ ವೇತನ ಪರಿಷ್ಕರಣೆಗಾಗಿ ಸರ್ಕಾರದ ಗಮನ ಸೆಳೆಯುತ್ತಿದ್ದವು.

ಸರ್ಕಾರದ ಈ ನಿರ್ಧಾರದಿಂದ ಸಾರಿಗೆ ನೌಕರರಿಗೆ ಆರ್ಥಿಕ ಭದ್ರತೆ ಹೆಚ್ಚುವ ನಿರೀಕ್ಷೆಯಿದ್ದು, ಕುಟುಂಬದ ಜೀವನಮಟ್ಟದಲ್ಲಿಯೂ ಸುಧಾರಣೆ ಸಾಧ್ಯವಾಗಲಿದೆ ಎಂದು ಅಂದಾಜಿಸಲಾಗಿದೆ. ಇತ್ತೀಚಿನ ದೈನಂದಿನ ವೆಚ್ಚ ಮತ್ತು ದುಬಾರಿ ಜೀವನ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಈ ಪರಿಷ್ಕರಣೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ವೇತನ ಹೆಚ್ಚಳ ಆದೇಶ ಪ್ರಕಟವಾದ ಬಳಿಕ ರಾಜ್ಯದ ವಿವಿಧ ಸಾರಿಗೆ ಘಟಕಗಳಲ್ಲಿ ನೌಕರರು ಸಂತೋಷ ವ್ಯಕ್ತಪಡಿಸಿದ್ದಾರೆ. ದೀರ್ಘಕಾಲದ ಹೋರಾಟಕ್ಕೆ ಕೊನೆಗೂ ಫಲ ದೊರೆತಿರುವುದಾಗಿ ಸಂಘಟನೆಗಳು ಅಭಿಪ್ರಾಯಪಟ್ಟಿವೆ.

ಈ ನಿರ್ಧಾರದಿಂದ ರಾಜ್ಯದ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ಸೇವೆ ನೀಡುತ್ತಿರುವ ನೌಕರರ ಮನೋಬಲ ಹೆಚ್ಚುವ ನಿರೀಕ್ಷೆಯಿದೆ.

ತುಮಕೂರಿನಲ್ಲಿ ಪಿಡಬ್ಲ್ಯೂಡಿ ಎಂಜಿನಿಯರ್ ಆತ್ಮಹತ್ಯೆ: ಕುಟುಂಬದಲ್ಲಿ ಆಘಾತ!

ತುಮಕೂರು: ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಪಿಡಬ್ಲ್ಯೂಡಿ ಎಂಜಿನಿಯರ್ ಮಂಜುಪ್ರಸಾದ್ ಅವರು ದೇವರಾಯನದುರ್ಗ ಬೆಟ್ಟದ ಪ್ರದೇಶದಲ್ಲಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತುಮಕೂರಿನಲ್ಲಿ ನಡೆದಿದೆ.

ಮೃತ ಮಂಜುಪ್ರಸಾದ್ ಮೂಲತಃ ತುಮಕೂರು ತಾಲೂಕಿನ ಸತ್ಯಮಂಗಲ ನಿವಾಸಿಯಾಗಿದ್ದು, ಎಂಟೆಕ್ ಪದವಿ ಪೂರ್ಣಗೊಳಿಸಿ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡಿದ ನಂತರ ಕಳೆದ ಮೂರು ವರ್ಷಗಳಿಂದ ಪಿಡಬ್ಲ್ಯೂಡಿ ಎಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಪ್ರಸ್ತುತ ಪಾವಗಡ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.

ತಾಯಿಯ ಅಗಲಿಕೆಯ ನಂತರ ಅವರು ತೀವ್ರ ಮಾನಸಿಕ ನೋವಿಗೆ ಒಳಗಾಗಿದ್ದರು ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಇತ್ತೀಚೆಗೆ ಹುಟ್ಟಿದ 20 ದಿನಗಳ ಮಗುವನ್ನು ಕಂಡು ಸಂತೋಷಗೊಂಡಿದ್ದರೂ, ಮಾನಸಿಕ ಒತ್ತಡದಿಂದ ಅವರು ಬಳಲುತ್ತಿದ್ದರು ಎನ್ನಲಾಗಿದೆ.

ಮೊನ್ನೆ ದೇವಸ್ಥಾನಕ್ಕೆ ಭೇಟಿ ನೀಡಿ ಮನೆಗೆ ಮರಳಿದ್ದ ಅವರು, ನಂತರ “ಕೆಲಸ ಇದೆ” ಎಂದು ತೆರಳಿದವರು ಮತ್ತೆ ಮರಳದೆ ದುರಂತ ಅಂತ್ಯ ಕಂಡಿದ್ದಾರೆ ಎಂದು ವರದಿಯಾಗಿದೆ.

ಈ ಘಟನೆಯಿಂದ ಪತ್ನಿ ಹಾಗೂ ಕುಟುಂಬಸ್ಥರು ತೀವ್ರ ಶೋಕಕ್ಕೆ ಒಳಗಾಗಿದ್ದು, 20 ದಿನಗಳ ಹಸುಗೂಸು ತಂದೆಯ ನೆರಳಿಲ್ಲದೆ ಅನಾಥವಾಗಿದೆ. ಸ್ನೇಹಿತರು ಹಾಗೂ ಸಹೋದ್ಯೋಗಿಗಳೂ ಆಘಾತ ವ್ಯಕ್ತಪಡಿಸಿದ್ದಾರೆ.

ಮಾನಸಿಕ ಒತ್ತಡದಿಂದ ಅವರು ಹಿಂದೆಯೂ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಮೂಲಗಳು ತಿಳಿಸಿವೆ. ಘಟನೆ ಕುರಿತು ಸಂಬಂಧಿತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

NEET ಪೇಪರ್ ಲೀಕ್ʼಗೆ ಕೇಂದ್ರ ಸರ್ಕಾರವೇ ಹೊಣೆ; ಆಡಳಿತ ವೈಫಲ್ಯಕ್ಕೆ ಇದು ಸಾಕ್ಷಿ ಎಂದ ಲಕ್ಷ್ಮೀ ಹೆಬ್ಬಾಳ್ಕರ್

ಬೆಂಗಳೂರು: ನೀಟ್ (NEET) ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣವನ್ನು ತೀವ್ರವಾಗಿ ಖಂಡಿಸಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಕೇಂದ್ರ ಸರ್ಕಾರ ಚೆಲ್ಲಾಟವಾಡುತ್ತಿದೆ ಎಂದು ಆರೋಪಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಘಟನೆ ಅತ್ಯಂತ ದುರದೃಷ್ಟಕರ ಹಾಗೂ ಖಂಡನೀಯ ಎಂದು ತಿಳಿಸಿದ್ದಾರೆ. ಪರೀಕ್ಷೆಗೆ ಹಗಲಿರುಳು ಶ್ರಮಿಸಿ ಸಿದ್ಧತೆ ಮಾಡಿಕೊಂಡು ಪರೀಕ್ಷೆ ಬರೆದ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ಇಂದು ಅನಿಶ್ಚಿತತೆಯಲ್ಲಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ದೇಶದ ಅತ್ಯುನ್ನತ ಪ್ರವೇಶ ಪರೀಕ್ಷೆಗಳನ್ನೇ ಪಾರದರ್ಶಕವಾಗಿ ನಡೆಸಲು ಸಾಧ್ಯವಾಗದಿರುವುದು ಕೇಂದ್ರ ಸರ್ಕಾರದ ಆಡಳಿತ ವೈಫಲ್ಯಕ್ಕೆ ಸ್ಪಷ್ಟ ಉದಾಹರಣೆ ಎಂದು ಟೀಕಿಸಿದ್ದಾರೆ.

ಪರೀಕ್ಷಾ ಅಕ್ರಮಗಳು ಹಾಗೂ ಆಡಳಿತಾತ್ಮಕ ಅಸಮರ್ಥತೆಯಿಂದ ದೇಶದ ಪ್ರತಿಭಾವಂತ ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ವಿದ್ಯಾರ್ಥಿಗಳ ಭವಿಷ್ಯದ ವಿಚಾರದಲ್ಲಿ ಇಂತಹ ನಿರ್ಲಕ್ಷ್ಯ ತೋರಿರುವುದು ಅಕ್ಷಮ್ಯ ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

‘ಕೃಷ್ಣಾವತಾರಂ’ಗೆ ರಾಷ್ಟ್ರಮಟ್ಟದ ಗೌರವ: ಯೋಗಿ ಸರ್ಕಾರದಿಂದ ಟ್ಯಾಕ್ಸ್ ಫ್ರೀ ಘೋಷಣೆ

ಭಾರತೀಯ ಪೌರಾಣಿಕ ಕಥೆಯನ್ನು ಅದ್ದೂರಿಯಾಗಿ ತೆರೆ ಮೇಲೆ ತಂದಿರುವ ‘ಕೃಷ್ಣಾವತಾರಂ’ ಚಿತ್ರಕ್ಕೆ ಉತ್ತರ ಪ್ರದೇಶ ಸರ್ಕಾರ ಭಾರಿ ಬೆಂಬಲ ಘೋಷಿಸಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಿನಿಮಾ ರಾಜ್ಯದಲ್ಲಿ ತೆರಿಗೆ ಮುಕ್ತ ಎಂದು ಘೋಷಿಸಿದ್ದು, ಚಿತ್ರರಂಗದಲ್ಲಿ ಈ ಬೆಳವಣಿಗೆ ದೊಡ್ಡ ಚರ್ಚೆಗೆ ಕಾರಣವಾಗಿದೆ.

ಕೇವಲ ಟ್ಯಾಕ್ಸ್ ಫ್ರೀ ಘೋಷಣೆ ಮಾತ್ರವಲ್ಲದೆ, ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಚಿತ್ರದ ವಿಶೇಷ ಪ್ರದರ್ಶನ ನಡೆಸುವಂತೆ ಸರ್ಕಾರದ ಮಾಹಿತಿ ಇಲಾಖೆಗೆ ಸೂಚನೆ ನೀಡಲಾಗಿದೆ. ಭಾರತೀಯ ಸಂಸ್ಕೃತಿ, ಧಾರ್ಮಿಕ ಪರಂಪರೆ ಮತ್ತು ಪೌರಾಣಿಕ ಮೌಲ್ಯಗಳನ್ನು ಹೊಸ ಪೀಳಿಗೆಗೆ ತಲುಪಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ಈ ಹಿನ್ನೆಲೆ ‘ಕೃಷ್ಣಾವತಾರಂ’ ಚಿತ್ರತಂಡ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಭೇಟಿ ಮಾಡಿತು. ನಿರ್ಮಾಪಕರಾದ ಸಜ್ಜನ್ ರಾಜ್ ಕುರುಪ್, ಶೋಭಾ ಸಂತ, ಪೂನಂ ಶ್ರಾಫ್ ಗಜ್ಜರ್, ನಿರ್ದೇಶಕ ಹಾರ್ದಿಕ್ ಗಜ್ಜರ್ ಮತ್ತು ನಟರಾದ ಸಿದ್ಧಾರ್ಥ್ ಗುಪ್ತಾ, ಸಂಸ್ಕೃತಿ ಜಯಾನ ಸಭೆಯಲ್ಲಿ ಭಾಗವಹಿಸಿದ್ದರು.

ಮೂರು ಭಾಗಗಳ ಸಿನಿಮಾ ಸರಣಿಯ ಮೊದಲ ಅಧ್ಯಾಯವಾಗಿರುವ ‘ಕೃಷ್ಣಾವತಾರಂ: ಪಾರ್ಟ್-1’ ಈಗಾಗಲೇ ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಕನ್ನಡದ ಕಾರ್ತಿಕ್ ಜಯರಾಮ್ (ಜೆಕೆ) ಮತ್ತು ಸುಷ್ಮಿತಾ ಭಟ್ ಅಭಿನಯ ಚಿತ್ರದ ಪ್ರಮುಖ ಆಕರ್ಷಣೆಯಾಗಿದೆ.

ಚಿತ್ರವು ಮೊದಲ ವಾರಾಂತ್ಯದಲ್ಲೇ 6.75 ಕೋಟಿ ರೂ. ಕಲೆಕ್ಷನ್ ಮಾಡಿ ಬಾಕ್ಸ್ ಆಫೀಸ್‌ನಲ್ಲಿ ಭದ್ರ ಹಿಡಿತ ಸಾಧಿಸಿದೆ. ಹಿಂದಿಯ ಜೊತೆಗೆ ತೆಲುಗು ಮತ್ತು ತಮಿಳು ಭಾಷೆಗಳಲ್ಲೂ ಬಿಡುಗಡೆಯಾಗಿರುವ ಈ ಸಿನಿಮಾ ದಕ್ಷಿಣ ಭಾರತದಲ್ಲೂ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ.

ಚಿರತೆ ದಾಳಿಯಲ್ಲಿ ಬಾಲಕ ಸಾವು; ರಾಜ್ಯದ ವನ್ಯಜೀವಿ ಪ್ರದೇಶಗಳಲ್ಲಿನ ಚಾರಣಪಥಗಳಿಗೆ ತಾತ್ಕಾಲಿಕ ನಿರ್ಬಂಧ

ಬೆಂಗಳೂರು/ಚಾಮರಾಜನಗರ: ನಾಗಮಲೆ ಅರಣ್ಯ ಪ್ರದೇಶದಲ್ಲಿ ಚಿರತೆ ದಾಳಿಯಿಂದ 10 ವರ್ಷದ ಬಾಲಕ ಮೃತಪಟ್ಟ ಘಟನೆ ಹಿನ್ನೆಲೆ ರಾಜ್ಯ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದೆ. ವನ್ಯಜೀವಿಗಳ ಸಂಚಾರ ಹೆಚ್ಚಿರುವ ಪ್ರದೇಶಗಳಲ್ಲಿನ ಎಲ್ಲಾ ಚಾರಣಪಥ ಮತ್ತು ಸಂಚಾರ ಮಾರ್ಗಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಅರಣ್ಯ, ಜೀವಿಶಾಸ್ತ್ರ ಹಾಗೂ ಪರಿಸರ ಸಚಿವ ಈಶ್ವರ್ ಬಿ. ಖಂಡ್ರೆ ಸೂಚನೆ ನೀಡಿದ್ದಾರೆ.

ಸಾರ್ವಜನಿಕರು ಹಾಗೂ ಚಾರಣಿಗರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಮುಂದಿನ ಆದೇಶದವರೆಗೆ ಚಿರತೆ, ಹುಲಿ, ಆನೆ, ಕರಡಿ ಸೇರಿದಂತೆ ಇತರೆ ವನ್ಯಜೀವಿಗಳ ಸಂಚಾರವಿರುವ ಹಾಗೂ ಮಾನವ-ವನ್ಯಜೀವಿ ಸಂಘರ್ಷ ಸಂಭವಿಸಿರುವ ಪ್ರದೇಶಗಳಲ್ಲಿ ಚಾರಣ ಮತ್ತು ಸಂಚಾರ ಚಟುವಟಿಕೆಗಳನ್ನು ತಕ್ಷಣದಿಂದಲೇ ನಿಲ್ಲಿಸಲು ಸೂಚಿಸಲಾಗಿದೆ. ಈ ಸಂಬಂಧ ಅರಣ್ಯ ಇಲಾಖೆ ಅಧಿಕೃತ ಸುತ್ತೋಲೆ ಹೊರಡಿಸಿದೆ.

ಚಾರಣ ಚಟುವಟಿಕೆಗಳನ್ನು ಸುರಕ್ಷಿತ ಮತ್ತು ಜವಾಬ್ದಾರಿಯುತವಾಗಿ ನಡೆಸುವಂತೆ ಸೂಚಿಸಿರುವ ಸಚಿವ ಖಂಡ್ರೆ, ಇತ್ತೀಚೆಗೆ ಬಿಡುಗಡೆ ಮಾಡಿರುವ ಪ್ರಮಾಣಿತ ಕಾರ್ಯಾಚರಣೆ ವಿಧಾನಗಳನ್ನು (SOP) ಕಡ್ಡಾಯವಾಗಿ ಪಾಲಿಸಬೇಕು ಎಂದು ಸ್ಪಷ್ಟಪಡಿಸಿದ್ದಾರೆ.

ಎಸ್‌ಒಪಿ ಪಾಲನೆಗೆ ಅಗತ್ಯ ಪೂರ್ವಸಿದ್ಧತೆ ಇಲ್ಲದ ಪ್ರದೇಶಗಳಲ್ಲಿ ಚಾರಣ ಚಟುವಟಿಕೆಗಳನ್ನು ಸಂಪೂರ್ಣ ಸ್ಥಗಿತಗೊಳಿಸಬೇಕು ಎಂದು ಸೂಚನೆ ನೀಡಲಾಗಿದೆ. ಸುರಕ್ಷತಾ ಕ್ರಮಗಳನ್ನು ಸಮರ್ಪಕವಾಗಿ ಜಾರಿಗೆ ತಂದ ಬಳಿಕ ಮಾತ್ರ ಚಾರಣ ಚಟುವಟಿಕೆಗಳನ್ನು ಪುನರಾರಂಭಿಸಲು ಅವಕಾಶ ಇರಲಿದೆ.

ಕರ್ನಾಟಕ ಅರಣ್ಯ ಇಲಾಖೆ ಹಾಗೂ ಕರ್ನಾಟಕ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿಯ ಮೇಲ್ವಿಚಾರಣೆಯಲ್ಲಿ ನಡೆಯುವ ಚಾರಣಪಥಗಳಲ್ಲಿ ಅಗತ್ಯ ಸುರಕ್ಷತಾ ವ್ಯವಸ್ಥೆಗಳನ್ನು ಖಚಿತಪಡಿಸಿಕೊಂಡ ಬಳಿಕವೇ ಚಟುವಟಿಕೆ ಮುಂದುವರಿಸಲು ಆದೇಶಿಸಲಾಗಿದೆ.

ಈ ಸಂಬಂಧ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಮುಖ್ಯ ವನ್ಯಜೀವಿ ಪರಿಪಾಲಕರು ಎರಡು ಪ್ರತ್ಯೇಕ ಸುತ್ತೋಲೆಗಳನ್ನು ಹೊರಡಿಸಿದ್ದು, ರಾಜ್ಯದ ಎಲ್ಲಾ ಸಂಬಂಧಿತ ಅಧಿಕಾರಿಗಳಿಗೆ ತಕ್ಷಣದಿಂದಲೇ ಜಾರಿಗೊಳಿಸಲು ಸೂಚಿಸಲಾಗಿದೆ.

ಅಜಯ್ ದೇವಗನ್ ‘ದೃಶ್ಯಂ 3’ ಬೇರೆ ಲೆವೆಲ್: ಕ್ಲೈಮ್ಯಾಕ್ಸ್ ಶಾಕ್ ಕೊಡಲಿದೆ ಎಂದ ನಿರ್ದೇಶಕ

ಮುಂಬೈ: ‘ದೃಶ್ಯಂ 3’ ಚಿತ್ರದ ಬಗ್ಗೆ ಸಿನಿಪ್ರಿಯರಲ್ಲಿ ಭಾರೀ ನಿರೀಕ್ಷೆ ನಿರ್ಮಾಣವಾಗಿರುವ ನಡುವೆಯೇ ನಿರ್ದೇಶಕ ಅಭಿಷೇಕ್ ಪಾಠಕ್ ಮಹತ್ವದ ಮಾಹಿತಿ ಬಹಿರಂಗಪಡಿಸಿದ್ದಾರೆ. ಹಿಂದಿ ಮತ್ತು ಮಲಯಾಳಂ ಆವೃತ್ತಿಗಳು ಈ ಬಾರಿ ಒಂದೇ ರೀತಿಯಲ್ಲಿರುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಅಜಯ್ ದೇವಗನ್ ಅಭಿನಯದ ಹಿಂದಿ ಆವೃತ್ತಿಯ ಶೂಟಿಂಗ್ ಈಗಾಗಲೇ ಮುಗಿದಿದ್ದು, ಚಿತ್ರವನ್ನು ಅಕ್ಟೋಬರ್ 2ರಂದು ಬಿಡುಗಡೆ ಮಾಡಲು ಸಿದ್ಧತೆ ನಡೆಯುತ್ತಿದೆ. ಮೋಹನ್‌ಲಾಲ್ ನಟನೆಯ ಮಲಯಾಳಂ ಸಿನಿಮಾ ಮೇ 21ರಂದು ಬಿಡುಗಡೆಯಾಗಲಿದೆ.

ಹಿಂದಿ ‘ದೃಶ್ಯಂ 3’ ಅನ್ನು ಹೆಚ್ಚು ಥ್ರಿಲ್ಲಿಂಗ್ ಹಾಗೂ ಸಸ್ಪೆನ್ಸ್‌ನಿಂದ ತುಂಬಿದ ಫ್ಯಾಮಿಲಿ ಥ್ರಿಲ್ಲರ್ ಆಗಿ ರೂಪಿಸಲಾಗಿದೆ. ವಿಶೇಷವಾಗಿ ಕ್ಲೈಮ್ಯಾಕ್ಸ್ ಪ್ರೇಕ್ಷಕರಿಗೆ ಭಾರೀ ಶಾಕ್ ನೀಡಲಿದೆ ಎಂದು ಅಭಿಷೇಕ್ ಪಾಠಕ್ ಹೇಳಿದ್ದಾರೆ.

ಜೀತು ಜೋಸೆಫ್ ಅವರ ಮೂಲ ಕಥೆಯನ್ನು ಆಧಾರ ಮಾಡಿಕೊಂಡಿದ್ದರೂ, ಹಿಂದಿ ಪ್ರೇಕ್ಷಕರ ರುಚಿಗೆ ತಕ್ಕಂತೆ ಕಥೆಯಲ್ಲಿ ಹಲವು ಬದಲಾವಣೆಗಳನ್ನು ಮಾಡಲಾಗಿದೆ. ಕಥೆ ಬರೆಯುವ ಮೊದಲು ಕ್ಲೈಮ್ಯಾಕ್ಸ್ ಫಿಕ್ಸ್ ಮಾಡಿದ್ದೇವೆ ಎಂದು ನಿರ್ದೇಶಕರು ತಿಳಿಸಿದ್ದಾರೆ.

ಇದೇ ವೇಳೆ ಕನ್ನಡದ ‘ದೃಶ್ಯ 3’ ಕೂಡ ಬರಲಿದ್ದು, ಮಲಯಾಳಂ ಮೂಲ ಕಥೆಯನ್ನು ಹೆಚ್ಚು ಅನುಸರಿಸುವ ಸಾಧ್ಯತೆ ಇದೆ ಎಂಬ ಮಾಹಿತಿ ಸಿನಿ ವಲಯದಲ್ಲಿ ಹರಿದಾಡುತ್ತಿದೆ.

error: Content is protected !!