Home Blog

‘ಕೊರಗಜ್ಜ’ ನಿರ್ದೇಶಕನಿಗೆ ನಿರ್ಮಾಪಕರಿಂದ ಕೋಟಿ ಮೌಲ್ಯದ ಸರ್ಪ್ರೈಸ್ ಗಿಫ್ಟ್‌

ಮಂಗಳೂರು: ಇನ್ನೂ ಸಿನಿಮಾ ಬಿಡುಗಡೆಯಾಗಿಲ್ಲ. ಆದರೆ ‘ಕೊರಗಜ್ಜ’ ಚಿತ್ರ ಈಗಾಗಲೇ ದಾಖಲೆ ಮಟ್ಟದ ಚರ್ಚೆಗೆ ಕಾರಣವಾಗಿದೆ. ಚಿತ್ರದ ಮೇಲೆ ನಿರ್ಮಾಪಕರ ವಿಶ್ವಾಸ ಎಷ್ಟರ ಮಟ್ಟಿಗೆ ಇದೆ ಎಂಬುದಕ್ಕೆ ನಿರ್ದೇಶಕ ಸುಧೀರ್ ಅತ್ತಾವರ್ ಅವರಿಗೆ ನೀಡಲಾದ ₹1.75 ಕೋಟಿ ಮೌಲ್ಯದ ಐಷಾರಾಮಿ ಫ್ಲಾಟ್ ಸಾಕ್ಷಿಯಾಗಿದೆ.

ಮೂರು ವರ್ಷಗಳಿಂದ ನಿರಂತರವಾಗಿ ಸಿನಿಮಾ ನಿರ್ಮಾಣದ ಕೆಲಸದಲ್ಲಿ ತೊಡಗಿದ್ದ ನಿರ್ದೇಶಕರ ಶ್ರಮವನ್ನು ಗುರುತಿಸಿ ನಿರ್ಮಾಪಕ ತ್ರಿವಿಕ್ರಮ ಸಪಲ್ಯ ಈ ದುಬಾರಿ ಉಡುಗೊರೆಯನ್ನು ನೀಡಿದ್ದಾರೆ. ಇತ್ತೀಚೆಗೆ ನಡೆದ ಗೃಹ ಪ್ರವೇಶ ಕಾರ್ಯಕ್ರಮದಲ್ಲಿ ಚಿತ್ರತಂಡದ ಪ್ರಮುಖರು ಭಾಗವಹಿಸಿದ್ದರು.

ಇದೇ ವೇಳೆ ‘ಕೊರಗಜ್ಜ’ ಚಿತ್ರ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ. ಈಗಾಗಲೇ ಆರು ಭಾಷೆಗಳಲ್ಲಿ ನಿರ್ಮಾಣವಾಗುತ್ತಿರುವ ಈ ಸಿನಿಮಾ ಚೈನೀಸ್ ಹಾಗೂ ಇಂಗ್ಲಿಷ್ ಆವೃತ್ತಿಗಳಲ್ಲೂ ಬಿಡುಗಡೆಯಾಗಲು ಸಜ್ಜಾಗಿದೆ. ಹಾಂಕಾಂಗ್ ಮತ್ತು ಬೀಜಿಂಗ್ ಮೂಲದ ವಿತರಣಾ ಸಂಸ್ಥೆಗಳು ಚಿತ್ರದ ಹಕ್ಕುಗಳ ಕುರಿತು ಮಾತುಕತೆ ನಡೆಸುತ್ತಿರುವುದು ಚಿತ್ರದ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸಿದೆ.

ಚಿತ್ರದ 3ಡಿ ತಾಂತ್ರಿಕ ಕಾರ್ಯಗಳು ಕೊಚ್ಚಿ ಮತ್ತು ಚೆನ್ನೈನಲ್ಲಿ ನಡೆಯುತ್ತಿದ್ದು, ಅಂತರರಾಷ್ಟ್ರೀಯ ಗುಣಮಟ್ಟದ ದೃಶ್ಯಾನುಭವ ನೀಡುವ ಗುರಿ ಹೊಂದಲಾಗಿದೆ. ಸುಮಾರು ₹40 ಕೋಟಿಗೂ ಅಧಿಕ ಬಜೆಟ್‌ನಲ್ಲಿ ನಿರ್ಮಾಣವಾಗುತ್ತಿರುವ ಈ ಸಿನಿಮಾ ಕರಾವಳಿ ದೈವ ಆರಾಧನೆಯ ಕಥೆಯನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವ ನಿರೀಕ್ಷೆ ಮೂಡಿಸಿದೆ.

ಹಿರಿಯ ನಟಿ ಭವ್ಯ ಅಭಿನಯಿಸಿರುವ ಈ ಚಿತ್ರದಲ್ಲಿ ದೈವ ಪರಂಪರೆ, ಸಂಸ್ಕೃತಿ ಹಾಗೂ ಆಧ್ಯಾತ್ಮಿಕ ಅಂಶಗಳಿಗೆ ವಿಶೇಷ ಒತ್ತು ನೀಡಲಾಗಿದ್ದು, ಆಗಸ್ಟ್‌ನಲ್ಲಿ ಚಿತ್ರಮಂದಿರಗಳಲ್ಲಿ ಅದ್ದೂರಿ ಬಿಡುಗಡೆಗೆ ಸಿದ್ಧತೆ ನಡೆಯುತ್ತಿದೆ.

ಈಜಲು ತೆರಳಿದ್ದ ಹಾವೇರಿ ಮೂಲದ ವಿದ್ಯಾರ್ಥಿ ನದಿಯಲ್ಲಿ ಮುಳುಗಿ ಸಾವು

ಬೈಂದೂರು: ಕುಟುಂಬ ಪ್ರವಾಸದ ಸಂಭ್ರಮ ಕೆಲವೇ ನಿಮಿಷಗಳಲ್ಲಿ ಶೋಕವಾಗಿ ಬದಲಾಗಿದೆ. ಮುರುಡೇಶ್ವರ ಪ್ರವಾಸ ಮುಗಿಸಿ ವಿಶ್ರಾಂತಿಗಾಗಿ ನಿಂತಿದ್ದ ವೇಳೆ ಹೊಳೆಗೆ ಸ್ನಾನಕ್ಕೆ ಇಳಿದ 16 ವರ್ಷದ ವಿದ್ಯಾರ್ಥಿಯೊಬ್ಬ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಬೈಂದೂರು ತಾಲೂಕಿನ ಶಿರೂರು ಸಂಕದಗುಂಡಿ ಹೊಳೆಯಲ್ಲಿ ನಡೆದಿದೆ.

ಹಾವೇರಿ ಮೂಲದ ಆಯುಷ್ ಮೃತ ದುರ್ದೈವಿ. ಕುಟುಂಬದ ಏಳು ಮಂದಿ ಮುರುಡೇಶ್ವರ ಹಾಗೂ ಕನ್ಯಾಕುಮಾರಿ ಪ್ರವಾಸದಲ್ಲಿದ್ದು, ಶಿರೂರು ಸಮೀಪ ವಾಹನ ನಿಲ್ಲಿಸಿ ಊಟದ ವ್ಯವಸ್ಥೆ ಮಾಡುತ್ತಿದ್ದರು.

ಈ ವೇಳೆ ಆಯುಷ್ ಹಾಗೂ ಮತ್ತೊಬ್ಬ ಬಾಲಕ ಸಮೀಪದ ಹೊಳೆಗೆ ತೆರಳಿದ್ದಾರೆ. ಆರಂಭದಲ್ಲಿ ಸಾಮಾನ್ಯವಾಗಿ ಸ್ನಾನ ಮಾಡುತ್ತಿದ್ದ ಬಾಲಕ, ಬಳಿಕ ನೀರಿನ ಆಳ ಹೆಚ್ಚಿರುವ ಪ್ರದೇಶಕ್ಕೆ ತೆರಳಿದ್ದಾನೆ. ಆಳದ ಅಂದಾಜು ಸಿಗದ ಕಾರಣ ಕ್ಷಣಾರ್ಧದಲ್ಲಿ ನೀರಿನಲ್ಲಿ ಮುಳುಗಿದ್ದಾನೆ ಎನ್ನಲಾಗಿದೆ.

ಜೊತೆಯಲ್ಲಿದ್ದ ಬಾಲಕ ಆತಂಕದಿಂದ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದು, ಕೂಡಲೇ ರಕ್ಷಣಾ ಕಾರ್ಯ ಆರಂಭಿಸಲಾಯಿತು. ಆದರೆ ಎಲ್ಲ ಪ್ರಯತ್ನಗಳು ವಿಫಲವಾದವು.

ಅಗ್ನಿಶಾಮಕ ಸಿಬ್ಬಂದಿ ಹಾಗೂ ಸ್ಥಳೀಯರು ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಕಾರ್ಯಾಚರಣೆ ನಡೆಸಿದ ಬಳಿಕ ಬಾಲಕನ ಮೃತದೇಹವನ್ನು ಹೊರತೆಗೆದಿದ್ದಾರೆ.

ಗುಜರಾತ್‌ನಲ್ಲಿ ವಾಸವಿದ್ದ ಆಯುಷ್ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಯಾಗಿದ್ದು, ಕುಟುಂಬದೊಂದಿಗೆ ರಜೆ ಪ್ರವಾಸಕ್ಕೆ ಬಂದಿದ್ದ. ಪ್ರವಾಸದ ಖುಷಿಯ ನಡುವೆ ನಡೆದ ಈ ದುರಂತ ಕುಟುಂಬವನ್ನು ಕಣ್ಣೀರಿನಲ್ಲಿ ಮುಳುಗಿಸಿದೆ. ಬೈಂದೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ವೈರಲ್ ಆಡಿಯೋ ಸಂಪೂರ್ಣ ನಕಲಿ: AI ತಂತ್ರಜ್ಞಾನ ಬಳಸಿ ಸೃಷ್ಟಿಸಲಾಗಿದೆ – ಜಮೀರ್ ಸ್ಪಷ್ಟನೆ

ಬೆಂಗಳೂರು: ತಮ್ಮ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಆಡಿಯೋ ಕ್ಲಿಪ್ ಸಂಪೂರ್ಣ ನಕಲಿ ಆಗಿದ್ದು, ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ಬಳಸಿ ಸೃಷ್ಟಿಸಲಾಗಿದೆ ಎಂದು ಕಾಂಗ್ರೆಸ್ ನಾಯಕ ಜಮೀರ್ ಅಹ್ಮದ್ ಖಾನ್ ಸ್ಪಷ್ಟಪಡಿಸಿದ್ದಾರೆ.

ಈ ಕುರಿತು ಮಾಧ್ಯಮ ಪ್ರಕಟಣೆ ಹೊರಡಿಸಿರುವ ಅವರು, ವೈರಲ್ ಆಗಿರುವ ಆಡಿಯೋದಲ್ಲಿ ಕೇಳಿಬರುತ್ತಿರುವ ಧ್ವನಿ ತಮ್ಮದೇ ಅಲ್ಲ ಎಂದು ಹೇಳಿದ್ದು, ಇದೊಂದು ರಾಜಕೀಯ ಪ್ರೇರಿತ ಷಡ್ಯಂತ್ರ ಎಂದು ಆರೋಪಿಸಿದ್ದಾರೆ. ನಕಲಿ ಆಡಿಯೋ ಸೃಷ್ಟಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿರುವವರ ವಿರುದ್ಧ ಸೈಬರ್ ಠಾಣೆಗೆ ದೂರು ಸಲ್ಲಿಸಿ ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

“ಆಡಿಯೋ ಬಗ್ಗೆ ಯಾವುದೇ ರೀತಿಯ ತನಿಖೆ ನಡೆಸಿದರೂ ನಾನು ಸಿದ್ಧನಿದ್ದೇನೆ. ನಾನು ಅಂತಹ ಯಾವುದೇ ಮಾತುಗಳನ್ನು ಆಡಿಲ್ಲ. ಜನರಲ್ಲಿ ಗೊಂದಲ ಸೃಷ್ಟಿಸುವ ಉದ್ದೇಶದಿಂದ ಕೆಲವರು ಈ ರೀತಿಯ ಕೃತ್ಯಕ್ಕೆ ಮುಂದಾಗಿದ್ದಾರೆ. ಇದು ಕಿಡಿಗೇಡಿಗಳ ಕೆಲಸ. ಯಾರೂ ಈ ಆಡಿಯೋವನ್ನು ನಂಬಬಾರದು,” ಎಂದು ಜಮೀರ್ ಹೇಳಿದ್ದಾರೆ.

ರಾಜ್ಯದಲ್ಲಿ ಹೊಸ ಸಚಿವ ಸಂಪುಟ ರಚನೆಗೆ ಸಿದ್ಧತೆಗಳು ನಡೆಯುತ್ತಿರುವ ನಡುವೆಯೇ ಈ ಆಡಿಯೋ ವೈರಲ್ ಆಗಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಬುಧವಾರ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದು, ಮೊದಲ ಹಂತದಲ್ಲಿ 10 ರಿಂದ 12 ಮಂದಿ ಸಚಿವರನ್ನು ಸಂಪುಟಕ್ಕೆ ಸೇರ್ಪಡೆಗೊಳಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಜಮೀರ್ ಅಹ್ಮದ್ ಖಾನ್ ಕೂಡ ಸಚಿವ ಸ್ಥಾನ ಆಕಾಂಕ್ಷಿಗಳ ಪೈಕಿ ಪ್ರಮುಖರಾಗಿದ್ದಾರೆ.

ಇದೇ ವೇಳೆ, ದಾವಣಗೆರೆ ಉಪಚುನಾವಣೆಗೆ ಸಂಬಂಧಿಸಿದಂತೆ ಮುಸ್ಲಿಂ ಸಮುದಾಯದ ಅಸಮಾಧಾನ, ಟಿಕೆಟ್ ಹಂಚಿಕೆ ವಿವಾದ ಹಾಗೂ ಪ್ರಚಾರದಿಂದ ಕೆಲ ನಾಯಕರು ದೂರ ಉಳಿದಿದ್ದ ವಿಚಾರಗಳ ನಡುವೆ ಈ ಆಡಿಯೋ ಹೊರಬಿದ್ದಿರುವುದು ಮತ್ತಷ್ಟು ಕುತೂಹಲ ಮೂಡಿಸಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಆಡಿಯೋದಲ್ಲಿ ಸ್ಥಳೀಯ ಕಾಂಗ್ರೆಸ್ ನಾಯಕನೊಂದಿಗೆ ಮಾತುಕತೆ ನಡೆಸಿರುವಂತೆ ತೋರಿಸಲಾಗಿದ್ದು, ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಕಡಿಮೆ ಮತ ಬರುವಂತೆ ನೋಡಿಕೊಳ್ಳುವ ಕುರಿತು ಸೂಚನೆ ನೀಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಆದರೆ ಈ ಆರೋಪಗಳನ್ನು ಜಮೀರ್ ಅಹ್ಮದ್ ಖಾನ್ ಸಂಪೂರ್ಣವಾಗಿ ತಳ್ಳಿಹಾಕಿದ್ದು, ಆಡಿಯೋಗೆ ಯಾವುದೇ ವಾಸ್ತವಿಕತೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಪ್ರಕರಣದ ಕುರಿತು ಸೈಬರ್ ಪೊಲೀಸರು ತನಿಖೆ ಕೈಗೊಳ್ಳುವ ಸಾಧ್ಯತೆ ಇದ್ದು, ಆಡಿಯೋ ನೈಜವೇ ಅಥವಾ ಕೃತಕವಾಗಿ ಸೃಷ್ಟಿಸಲ್ಪಟ್ಟಿದೆಯೇ ಎಂಬುದು ತನಿಖೆಯಿಂದ ಸ್ಪಷ್ಟವಾಗಲಿದೆ.

ದೆಹಲಿ: ಶಿಕ್ಷಣ ಸಚಿವಾಲಯದ ಕಚೇರಿಯಲ್ಲಿ ಅಗ್ನಿ ಅವಘಡ

ನವದೆಹಲಿ: ದೆಹಲಿಯ ಶಿಕ್ಷಣ ಸಚಿವಾಲಯದ ಕಚೇರಿಯಲ್ಲಿ ಇಂದು ಅಗ್ನಿ ಅವಘಡ ಸಂಭವಿಸಿದ್ದು, ವಿಕಾಸ್ ಮಾರ್ಗದಲ್ಲಿರುವ ಸಚಿವಾಲಯದ ಕಟ್ಟಡದ ಎರಡನೇ ಮಹಡಿಯಲ್ಲಿ ಭಾರೀ ಪ್ರಮಾಣದ ಬೆಂಕಿ ಕಾಣಿಸಿಕೊಂಡಿದೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಕನಿಷ್ಠ ಎಂಟು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿದ್ದು, ಬೆಂಕಿ ನಂದಿಸುವ ಕಾರ್ಯಾಚರಣೆ ಭರದಿಂದ ಸಾಗುತ್ತಿದೆ. ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಿಯಂತ್ರಣಕ್ಕೆ ತರಲು ನಿರಂತರ ಪ್ರಯತ್ನ ನಡೆಸುತ್ತಿದ್ದಾರೆ.

ಸದ್ಯ ಅಗ್ನಿ ಅವಘಡಕ್ಕೆ ನಿಖರ ಕಾರಣ ಏನು ಎಂಬುದು ತಿಳಿದುಬಂದಿಲ್ಲ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಅಥವಾ ಗಾಯಗಳಾಗಿರುವ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.

ಅಧಿಕಾರಿಗಳು ಸ್ಥಳದಲ್ಲೇ ಮೊಕ್ಕಾಂ ಹೂಡಿ ಪರಿಸ್ಥಿತಿಯನ್ನು ನಿಕಟವಾಗಿ ಪರಿಶೀಲಿಸುತ್ತಿದ್ದು, ಬೆಂಕಿಯಿಂದ ಉಂಟಾದ ಹಾನಿಯ ಪ್ರಮಾಣ ಹಾಗೂ ಅವಘಡದ ಕಾರಣ ಕುರಿತು ತನಿಖೆ ಮುಂದುವರಿದಿದೆ.

ನೂತನ ಶೈಕ್ಷಣಿಕ ವರ್ಷಕ್ಕೆ ಕಾಲಿಡುತ್ತಿರುವ ವಿದ್ಯಾರ್ಥಿಗಳಿಗೆ ಶುಭವಾಗಲಿ: CLP ನಾಯಕ ಡಿ.ಕೆ. ಶಿವಕುಮಾರ್

ಬೆಂಗಳೂರು: ಇಂದಿನಿಂದ ನೂತನ ಶೈಕ್ಷಣಿಕ ವರ್ಷ ಪ್ರಾರಂಭವಾಗಲಿದೆ. ನನ್ನ ಪ್ರೀತಿಯ ವಿದ್ಯಾರ್ಥಿಗಳಿಗೆ ಶುಭವಾಗಲಿ, ಯಶಸ್ಸು ಸಿಗಲಿ ಎಂದು ಸರ್ಕಾರದ ಪರವಾಗಿ ಹಾಗೂ ವೈಯಕ್ತಿಕವಾಗಿ ಹಾರೈಸುತ್ತೇನೆ” ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾದ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು. ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳಿಗೆ ಶಿವಕುಮಾರ್ ಅವರು ಸೋಮವಾರ ಪ್ರತಿಕ್ರಿಯೆ ನೀಡಿದರು.

“ನಮ್ಮಲ್ಲಿ ಓದಿರುವ ವಿದ್ಯಾರ್ಥಿಗಳು ಜಾಗತಿಕ ಮಟ್ಟದಲ್ಲಿ ಅತ್ಯಮೂಲ್ಯ ಮಾನವ ಸಂಪನ್ಮೂಲವಾಗಿ ತಮ್ಮದೇ ಆದ ಕೊಡುಗೆ ನೀಡಿದ್ದು, ಇಡೀ ವಿಶ್ವ ಇದಕ್ಕೆ ಸಾಕ್ಷಿಯಾಗಿದೆ. ನಮ್ಮ ಜ್ಞಾನದ ಭಂಡಾರ ಇಡೀ ವಿಶ್ವವನ್ನೇ ಆಕರ್ಷಿಸುತ್ತಿದೆ. ಜಗತ್ತಿನ ಬಹುತೇಕ ವಿಶ್ವ ವಿದ್ಯಾಲಯಗಳಲ್ಲಿ ನಮ್ಮ ವಿದ್ಯಾರ್ಥಿಗಳು ಓದಿ ಅನೇಕ ಸಾಧನೆ ಮಾಡಿದ್ದಾರೆ” ಎಂದರು.

“ನಮ್ಮಲ್ಲಿ ಅಮೂಲ್ಯ ಮಾನವ ಸಂಪನ್ಮೂಲಗಳಿವೆ. ಹೀಗಾಗಿ ಜಗತ್ತು ಭಾರತವನ್ನು ಕರ್ನಾಟಕ ಮೂಲಕ ನೋಡುತ್ತಿದೆ. ಇದೇ ಕಾರಣಕ್ಕೆ ನಮ್ಮ ಹಿರಿಯರು, ಐಐಟಿ, ಐಐಎಂ, ರಾಷ್ಟ್ರೀಯ ಕಾನೂನು ಕಾಲೇಜು, ಇಸ್ರೋ ಸೇರಿದಂತೆ ಹೆಚ್ ಎಎಲ್ ಹಾಗೂ ಇತರೆ ಪ್ರಮುಖ ಸಂಸ್ಥೆಗಳನ್ನು ಇಲ್ಲೇ ಆರಂಭಿಸಿದ್ದಾರೆ. ಇವುಗಳನ್ನು ಮುಂದುವರಿಸಿಕೊಂಡು ಹೋಗುವ ನಿಟ್ಟಿನಲ್ಲಿ ಮಕ್ಕಳು ತಮ್ಮ ವಿದ್ಯಾಭ್ಯಾಸ ಮಾಡಬೇಕಾಗುತ್ತದೆ” ಎಂದು ಸಲಹೆ ನೀಡಿದರು.

ಆತ್ಮ ವಿಶ್ವಾಸ ಕಳೆದುಕೊಳ್ಳಬಾರದು

“ನಾವು ಕೃತಕಬುದ್ಧಿಮತ್ತೆ ಯುಗಕ್ಕೆ ಹೋಗುತ್ತಿದ್ದು, ಇದಕ್ಕೆ ಪೂರಕವಾಗಿ ವಿದ್ಯಾಭ್ಯಾಸ ಮಾಡಬೇಕು. ಮುಂದಿನ ದಿನಗಳಲ್ಲಿ ನಮ್ಮ ಶಿಕ್ಷಣ ನೀತಿಯನ್ನು ತಿಳಿಸಲಾಗುವುದು. ಈ ವರ್ಷ ನಿಮಗೆ ಶುಭವಾಗಲಿ, ಯಶಸ್ಸು ಸಿಗಲಿ. ಸರ್ಕಾರಿ ಶಾಲಾ ಮಕ್ಕಳು ಆತ್ಮ ವಿಶ್ವಾಸ ಕಳೆದುಕೊಳ್ಳಬಾರದು. ನಮ್ಮ ಸರ್ಕಾರಿ ಶಾಲೆಗಳಲ್ಲಿ ಉತ್ತಮ ಶಿಕ್ಷಕರಿದ್ದಾರೆ. ಖಾಸಗಿ ಶಾಲೆಯಲ್ಲಿ ಓದುತ್ತಿರುವ ಮಕ್ಕಳಷ್ಟೇ ಪ್ರತಿಭೆ ನಿಮ್ಮಲ್ಲೂ ಇದೆ” ಎಂದು ತಿಳಿಸಿದರು.

ಹಿಜಾಬ್ ಗೆ ಪರ್ಯಾಯವಾಗಿ ಕೇಸರಿ ಶಾಲು ಕೊಡುವ ಕರೆ ಬಗ್ಗೆ ಕೇಳಿದಾಗ, “ಕೇಸರಿ ಶಾಲು ಬೇಕೇ, ರಾಷ್ಟ್ರ ಧ್ವಜದ ಶಾಲು ಬೇಕೇ ಎಂದು ಮುಂದೆ ಚರ್ಚೆ ಮಾಡೋಣ” ಎಂದು ತಿಳಿಸಿದರು. ದೆಹಲಿ ಭೇಟಿ ಬಗ್ಗೆ ಕೇಳಿದಾಗ, “ನಾನು ಹಾಗೂ ಸಿದ್ದರಾಮಯ್ಯ ಅವರು ದೆಹಲಿಗೆ ಹೋಗುತ್ತಿದ್ದೇವೆ” ಎಂದು ತಿಳಿಸಿದರು.

ಗುಜರಾತಿನವರು ಮತ್ತೆ ನಮ್ಮ ಪಂದ್ಯ ಕಿತ್ತುಕೊಳ್ಳದಂತೆ ಕ್ರಮ ಕೈಗೊಳ್ಳುತ್ತೇವೆ

ಐಪಿಎಲ್ ಟೂರ್ನಿಯಲ್ಲಿ ಆರ್ ಸಿಬಿ ವಿಜೇತವಾಗಿರುವ ಬಗ್ಗೆ ಕೇಳಿದಾಗ, “ಐಪಿಎಲ್ ಫೈನಲ್ ಪಂದ್ಯ ಬೆಂಗಳೂರಿನಲ್ಲಿ ನಡೆಯಬೇಕಿತ್ತು. ನಾವು ಅದಕ್ಕೆ ಅನುಮತಿ ನೀಡಿದ್ದೆವು. ಆದರೆ ಗುಜರಾತಿನವರು ತಮ್ಮ ಪ್ರಭಾವ ಬಳಸಿ ನಮ್ಮಿಂದ ಪಂದ್ಯ ಕಿತ್ತುಕೊಂಡಿದ್ದಾರೆ.

ಮುಂದೆ ಮತ್ತೆ ಈ ರೀತಿ ಕಿತ್ತುಕೊಳ್ಳದಂತೆ ಅಗತ್ಯ ಸಿದ್ಧತೆ ಮಾಡುತ್ತಿದ್ದೇವೆ. ಇದಕ್ಕೆ ಸ್ವಲ್ಪ ಸಮಯ ಬೇಕಾಗುತ್ತದೆ. ನಮ್ಮ ಕ್ರೀಡಾಪ್ರೇಮಿಗಳಿಗೆ ಅನ್ಯಾಯ ಆಗಿರಬಹುದು. ನಮ್ಮ ರಾಜ್ಯ ಹೆಸರಿನಲ್ಲಿ ಪ್ರತಿನಿಧಿಸುವ ತಂಡ ಉತ್ತಮವಾಗಿ ಆಡಿ ಗೆದ್ದಿದ್ದಾರೆ. ನಮ್ಮೆಲ್ಲರಿಗೂ ಹೆಮ್ಮೆ ತಂದಿದ್ದಾರೆ. ಕರ್ನಾಟಕ ರಾಜ್ಯದ ಜನರ ಪರವಾಗಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ” ಎಂದು ತಿಳಿಸಿದರು.

ಒಂದೇ ದಿನ 35 ಸಚಿವರು! ಬಂಗಾಳದಲ್ಲಿ ಸುವೇಂದು ಅಧಿಕಾರಿಯ ಮೇಗಾ ಸಂಪುಟ ವಿಸ್ತರಣೆ ಹಿಂದೆ ದೊಡ್ಡ ರಾಜಕೀಯ ಲೆಕ್ಕಾಚಾರ?

ಕೋಲ್ಕತ್ತಾ: ಪಶ್ಚಿಮ ಬಂಗಾಳ ರಾಜಕೀಯದಲ್ಲಿ ಅಚ್ಚರಿ ಮೂಡಿಸುವಂತಹ ಬೃಹತ್ ಬೆಳವಣಿಗೆ ನಡೆದಿದೆ. ಮುಖ್ಯಮಂತ್ರಿ ಸುವೇಂದು ಅಧಿಕಾರಿ  ಅವರು ಒಂದೇ ದಿನದಲ್ಲಿ 35 ಬಿಜೆಪಿ ಶಾಸಕರನ್ನು ಸಚಿವರನ್ನಾಗಿ ನೇಮಿಸಿ ಭಾರೀ ಸಂಪುಟ ವಿಸ್ತರಣೆ ಮಾಡಿದ್ದಾರೆ.

ಲೋಕಭವನದಲ್ಲಿ ನಡೆದ ಪ್ರಮಾಣ ವಚನ ಸಮಾರಂಭದಲ್ಲಿ ರಾಜ್ಯಪಾಲ ಆರ್.ಎನ್. ರವಿ ಅವರು ನೂತನ ಸಚಿವರಿಗೆ ಪ್ರಮಾಣ ವಚನ ಬೋಧಿಸಿದರು. ಈ ಏಕಕಾಲಿಕ ದೊಡ್ಡ ಪ್ರಮಾಣದ ನೇಮಕಾತಿ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.

ಮೇ 9ರಂದು ಸುವೇಂದು ಅಧಿಕಾರಿಯವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದ ನಂತರ ಇದು ಎರಡನೇ ಹಂತದ ಸಂಪುಟ ವಿಸ್ತರಣೆ. ಸಂವಿಧಾನದ ನಿಯಮದಂತೆ ಗರಿಷ್ಠ 44 ಸಚಿವರನ್ನು ನೇಮಿಸಲು ಅವಕಾಶವಿದ್ದು, ಈಗ ಸರ್ಕಾರವು ಬಹುತೇಕ ಆ ಮಟ್ಟಕ್ಕೆ ಹತ್ತಿರವಾಗಿದೆ.

ಮೊದಲ ಹಂತದಲ್ಲಿ ಕೆಲ ಪ್ರಮುಖ ನಾಯಕರಿಗೆ ಸಚಿವ ಸ್ಥಾನ ನೀಡಲಾಗಿದ್ದರೆ, ಇಂದು ನಡೆದ ಹಂತದಲ್ಲಿ 35 ಶಾಸಕರು ಸಚಿವ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ. ಇದರಲ್ಲಿ ಹಲವು ಹಿರಿಯ ಹಾಗೂ ಹೊಸ ಮುಖಗಳೂ ಸೇರಿದ್ದಾರೆ.

ರಾಜಕೀಯ ವಿಶ್ಲೇಷಕರ ಪ್ರಕಾರ, ಈ ಮೇಗಾ ಸಂಪುಟ ವಿಸ್ತರಣೆ ರಾಜ್ಯ ರಾಜಕೀಯದಲ್ಲಿ ಹೊಸ ಸಮೀಕರಣಗಳಿಗೆ ಕಾರಣವಾಗುವ ಸಾಧ್ಯತೆ ಇದೆ. ಆಡಳಿತ ಮತ್ತು ಪಕ್ಷದೊಳಗಿನ ಸಮತೋಲನ ಸಾಧಿಸಲು ಈ ತಂತ್ರ ಅನುಸರಿಸಲಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

16 ವರ್ಷದೊಳಗಿನ ಮಕ್ಕಳಿಗೆ ಸೋಷಿಯಲ್ ಮೀಡಿಯಾ ನಿಷೇಧ: ಮಲೇಷ್ಯಾದಿಂದ ಮಹತ್ವದ ಕ್ರಮ

ಕೌಲಾಲಂಪುರ್: ಮಕ್ಕಳಲ್ಲಿ ಹೆಚ್ಚುತ್ತಿರುವ ಸೋಷಿಯಲ್ ಮೀಡಿಯಾ ವ್ಯಸನ ಮತ್ತು ಆನ್‌ಲೈನ್ ಅಪಾಯಗಳನ್ನು ನಿಯಂತ್ರಿಸುವ ಉದ್ದೇಶದಿಂದ ಮಲೇಷ್ಯಾ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದ್ದು, 16 ವರ್ಷದೊಳಗಿನ ಮಕ್ಕಳು ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ಖಾತೆ ತೆರೆಯುವುದನ್ನು ನಿಷೇಧಿಸಿದೆ.

ಹೊಸ ನಿಯಮದ ಪ್ರಕಾರ, 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಫೇಸ್‌ಬುಕ್, ಇನ್‌ಸ್ಟಾಗ್ರಾಂ, ಟಿಕ್‌ಟಾಕ್, ಯೂಟ್ಯೂಬ್ ಸೇರಿದಂತೆ ಯಾವುದೇ ಸೋಷಿಯಲ್ ಮೀಡಿಯಾ ವೇದಿಕೆಗಳಲ್ಲಿ ಖಾತೆ ಹೊಂದಲು ಅವಕಾಶ ಇರುವುದಿಲ್ಲ. ಈ ಹಿನ್ನೆಲೆಯಲ್ಲಿ ಬಳಕೆದಾರರ ವಯಸ್ಸು ಪರಿಶೀಲಿಸುವ ವ್ಯವಸ್ಥೆಯನ್ನು ಕಡ್ಡಾಯವಾಗಿ ಜಾರಿಗೆ ತರಬೇಕು ಎಂದು ಸರ್ಕಾರ ಸಾಮಾಜಿಕ ಜಾಲತಾಣ ಕಂಪನಿಗಳಿಗೆ ಸೂಚಿಸಿದೆ.

ನಿಯಮಗಳನ್ನು ಪಾಲಿಸದ ಕಂಪನಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿರುವ ಸರ್ಕಾರ, ಗರಿಷ್ಠ 1 ಕೋಟಿ ರಿಂಗಿಟ್‌ (ಸುಮಾರು 23.95 ಕೋಟಿ ರೂಪಾಯಿ) ದಂಡ ವಿಧಿಸುವುದಾಗಿ ತಿಳಿಸಿದೆ.

ಮಕ್ಕಳನ್ನು ಹಾನಿಕಾರಕ ವಿಷಯಗಳು, ಸೈಬರ್ ಬುಲ್ಲಿಂಗ್, ಆನ್‌ಲೈನ್ ಶೋಷಣೆ ಹಾಗೂ ಅತಿಯಾದ ಸೋಷಿಯಲ್ ಮೀಡಿಯಾ ಬಳಕೆಯಿಂದ ರಕ್ಷಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆದರೆ, ಈ ನಿಯಮದಿಂದ ಮಕ್ಕಳಿಗೆ ಇಂಟರ್ನೆಟ್ ಅಥವಾ ಡಿಜಿಟಲ್ ತಂತ್ರಜ್ಞಾನ ಬಳಕೆಯ ಮೇಲೆ ಯಾವುದೇ ನಿರ್ಬಂಧ ಇರುವುದಿಲ್ಲ ಎಂದು ಮಲೇಷ್ಯಾ ಸರ್ಕಾರ ಸ್ಪಷ್ಟಪಡಿಸಿದೆ. ಶಿಕ್ಷಣ, ಅಧ್ಯಯನ ಹಾಗೂ ಇತರ ಅಗತ್ಯ ಡಿಜಿಟಲ್ ಸೇವೆಗಳನ್ನು ಮಕ್ಕಳು ಬಳಸಬಹುದಾಗಿದೆ.

ಇದಲ್ಲದೆ, ಸಾಮಾಜಿಕ ಜಾಲತಾಣ ಸಂಸ್ಥೆಗಳು ಅಪ್ರಾಪ್ತ ವಯಸ್ಕರ ಸುರಕ್ಷತೆಯನ್ನು ಖಚಿತಪಡಿಸಲು ವಿಶೇಷ ಭದ್ರತಾ ಕ್ರಮಗಳನ್ನು ಜಾರಿಗೆ ತರಬೇಕು. ಮಕ್ಕಳಿಗೆ ಹಾನಿಕಾರಕವಾಗುವ ವಿಷಯಗಳನ್ನು ನಿಯಂತ್ರಿಸುವುದು ಹಾಗೂ ನಕಲಿ ಅಥವಾ ಅನಧಿಕೃತ ಖಾತೆಗಳ ವಿರುದ್ಧ ಕ್ರಮ ಕೈಗೊಳ್ಳುವುದು ಕಡ್ಡಾಯವಾಗಿರಲಿದೆ ಎಂದು ಸರ್ಕಾರ ಸೂಚಿಸಿದೆ.

ಗಮನಾರ್ಹ ಸಂಗತಿಯೆಂದರೆ, ಮಕ್ಕಳ ಆನ್‌ಲೈನ್ ಸುರಕ್ಷತೆಯನ್ನು ಹೆಚ್ಚಿಸುವ ಉದ್ದೇಶದಿಂದ ಆಸ್ಟ್ರೇಲಿಯಾ, ಬ್ರೆಜಿಲ್, ಇಂಡೋನೇಷ್ಯಾ ಸೇರಿದಂತೆ ಹಲವು ದೇಶಗಳು ಈಗಾಗಲೇ ಇಂತಹ ನಿಯಮಗಳನ್ನು ಜಾರಿಗೆ ತಂದಿವೆ. ಇದೀಗ ಮಲೇಷ್ಯಾ ಕೂಡ ಆ ಸಾಲಿಗೆ ಸೇರ್ಪಡೆಯಾಗಿದೆ.

RCB ವಿಜಯೋತ್ಸವದ ಅಬ್ಬರದ ನಡುವೆ ಬೆಂಗಳೂರಿನಲ್ಲಿ ಪೊಲೀಸ್ ಬೇಟೆ! ಒಂದೇ ರಾತ್ರಿ 260 ಡ್ರಂಕ್ & ಡ್ರೈವ್ ಕೇಸ್ ದಾಖಲೆ

ಬೆಂಗಳೂರು: ಆರ್‌ಸಿಬಿ ತಂಡ ಐಪಿಎಲ್ 2026 ಫೈನಲ್‌ನಲ್ಲಿ ಭರ್ಜರಿ ಜಯ ಸಾಧಿಸಿ ಸತತ ಎರಡನೇ ಬಾರಿಗೆ ಟ್ರೋಫಿ ಗೆದ್ದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ವಿಜಯೋತ್ಸವ ಸಂಭ್ರಮಾಚರಣೆ ತೀವ್ರಗೊಂಡಿದೆ. ಆದರೆ ಈ ಸಂಭ್ರಮದ ನಡುವೆ ಸಂಚಾರಿ ಪೊಲೀಸರು ಕಟ್ಟುನಿಟ್ಟಿನ ಕಾರ್ಯಾಚರಣೆ ನಡೆಸಿದ್ದಾರೆ.

ನಗರದ ವಿವಿಧ ಭಾಗಗಳಲ್ಲಿ ನಡೆದ ತಪಾಸಣೆಯಲ್ಲಿ ಒಂದೇ ರಾತ್ರಿ 260 ಡ್ರಂಕ್ & ಡ್ರೈವ್ ಪ್ರಕರಣಗಳು ದಾಖಲಾಗಿರುವುದು ಪೊಲೀಸ್ ಇಲಾಖೆ ದೃಢಪಡಿಸಿದೆ. ವಿಜಯೋತ್ಸವದ ಸಂದರ್ಭದಲ್ಲೇ ವಾಹನ ಚಾಲನೆ ವೇಳೆ ಮದ್ಯಪಾನ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗಿದೆ.

ಆರ್‌ಸಿಬಿ ಗೆಲುವಿನ ನಂತರ ಅಭಿಮಾನಿಗಳು ಬೈಕ್ ರ‍್ಯಾಲಿ ನಡೆಸಿ, ರಸ್ತೆಗಳಲ್ಲೇ ಜಯಘೋಷ ಕೂಗಿ ಸಂಭ್ರಮಿಸಿದ್ದಾರೆ. ಹಲವೆಡೆ ಪಟಾಕಿ ಸಿಡಿಸಿ ಉತ್ಸಾಹಭರಿತ ಆಚರಣೆ ನಡೆದಿದ್ದು, ಕೆಲ ಪ್ರದೇಶಗಳಲ್ಲಿ ಟ್ರಾಫಿಕ್ ಗೊಂದಲವೂ ಉಂಟಾಗಿದೆ.

ಮುನ್ನೆಚ್ಚರಿಕಾ ಕ್ರಮವಾಗಿ ಫೈನಲ್ ಪಂದ್ಯ ದಿನ ರಾತ್ರಿ 11 ಗಂಟೆಯಿಂದ ಬೆಳಗ್ಗೆ 5 ಗಂಟೆವರೆಗೆ ನಗರದ ಪ್ರಮುಖ ಫ್ಲೈಓವರ್‌ಗಳನ್ನು ಬಂದ್ ಮಾಡುವಂತೆ ಸೂಚನೆ ನೀಡಲಾಗಿತ್ತು. ಆದರೂ ಸಂಭ್ರಮಾಚರಣೆ ಹೆಚ್ಚಾದ ಹಿನ್ನೆಲೆಯಲ್ಲಿ ಪೊಲೀಸರು ವಿಶೇಷ ತಪಾಸಣೆ ನಡೆಸಿದ್ದಾರೆ.

ಸದ್ಯ ಪ್ರಕರಣಗಳಿಗೆ ಸಂಬಂಧಿಸಿದಂತೆ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಂಚಾರಿ ಪೊಲೀಸರು ತಿಳಿಸಿದ್ದಾರೆ.

ಒಮ್ಮೆ ಟ್ರೋಲ್… ಈಗ ದೇವತೆ! RCB ಗೆಲುವಿನ ನಂತರ ಅನುಷ್ಕಾ ಶರ್ಮಾ ಬಗ್ಗೆ ಬದಲಾಗಿದ ಅಭಿಪ್ರಾಯ

ಒಂದು ಕಾಲದಲ್ಲಿ ವಿರಾಟ್ ಕೊಹ್ಲಿಯ ಪ್ರತಿಯೊಂದು ವೈಫಲ್ಯಕ್ಕೂ ಗುರಿಯಾಗುತ್ತಿದ್ದವರು ಅನುಷ್ಕಾ ಶರ್ಮಾ. ಸೋಷಿಯಲ್ ಮೀಡಿಯಾದಲ್ಲಿ ‘ಅಶುಭ’ ಎಂಬ ಟ್ಯಾಗ್‌ನಿಂದ ತೀವ್ರ ಟ್ರೋಲ್ ಎದುರಿಸಿದ್ದ ಅವರು, ಈಗ ಅದೇ ನೆಟ್ಟಿಗರಿಂದ ಸಂಪೂರ್ಣ ವಿಭಿನ್ನ ರೀತಿಯಲ್ಲಿ ಹೊಗಳಿಕೆ ಪಡೆಯುತ್ತಿದ್ದಾರೆ.

ಐಪಿಎಲ್ ಫೈನಲ್‌ನಲ್ಲಿ ಆರ್‌ಸಿಬಿ ಗುಜರಾತ್ ಟೈಟನ್ಸ್ ವಿರುದ್ಧ ಭರ್ಜರಿ ಜಯ ದಾಖಲಿಸಿದ ನಂತರ, ಫ್ಯಾನ್ಸ್ ಅಭಿಪ್ರಾಯವೇ ತಲೆಕೆಳಗಾಗಿದೆ. “ಅನುಷ್ಕಾ ಇದ್ದರೆ RCB ಗೆಲ್ಲುತ್ತದೆ” ಎಂಬ ಹೊಸ ನಂಬಿಕೆ ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿದೆ.

ಮೈದಾನದಲ್ಲಿ ಕೊಹ್ಲಿಯ ಆಕ್ರಮಣಕಾರಿ ಬ್ಯಾಟಿಂಗ್, ಗ್ಯಾಲರಿಯಲ್ಲಿ ಕುಳಿತಿದ್ದ ಅನುಷ್ಕಾ ಅವರ ಪ್ರತಿಕ್ರಿಯೆ—ಈ ಎರಡೂ ಕ್ಷಣಗಳು ಈಗ ವೈರಲ್ ಸೆನ್ಸೇಷನ್ ಆಗಿವೆ. ಕೊಹ್ಲಿ ಗೆಲುವಿನ ಶಾಟ್ ಹೊಡೆಯುತ್ತಿದ್ದಂತೆ ಫ್ಲೈಯಿಂಗ್ ಕಿಸ್ ನೀಡಿದ ದೃಶ್ಯ ಅಭಿಮಾನಿಗಳನ್ನು ಆಕರ್ಷಿಸಿದೆ.

ಹಿಂದೆ ಟ್ರೋಲ್ ಮಾಡಿದ ಅದೇ ಜನರು ಈಗ ಅವರನ್ನು “RCB ಯ ಲಕ್ಕಿ ಚಾರ್ಮ್”, “ವಿಜಯದ ಸಂಕೇತ” ಎಂದು ಕರೆಯುತ್ತಿದ್ದಾರೆ. ಸೋಷಿಯಲ್ ಮೀಡಿಯಾದ ಟ್ರೆಂಡ್ ಮತ್ತೆ ತಿರುಗಿದೆ.

ವಮಿಕಾ ಮತ್ತು ಅಕಾಯ್ ಜನನದ ನಂತರ ಪಂದ್ಯಗಳಲ್ಲಿ ಕಡಿಮೆ ಕಾಣಿಸಿಕೊಂಡಿದ್ದ ಅನುಷ್ಕಾ, ಈಗ ಮತ್ತೆ ಸ್ಟೇಡಿಯಂನಲ್ಲಿ ಸಕ್ರಿಯರಾಗಿದ್ದಾರೆ. ಅವರ ಮರಳುವಿಕೆ ಮತ್ತು RCB ಯಶಸ್ಸು—ಈ ಎರಡರ ನಡುವೆ ಫ್ಯಾನ್ಸ್ ಹೊಸ ಕಥೆಯನ್ನು ಕಟ್ಟುತ್ತಿದ್ದಾರೆ.

ಮದುವೆಯ ಸಂಭ್ರಮವೇ ಕೊನೆಯ ಕ್ಷಣ! ಕೆಲವೇ ಗಂಟೆಗಳಲ್ಲಿ ವರನ ಜೀವ ಕಸಿದ ಹೆಲಿಕಾಪ್ಟರ್ ದುರಂತ

ಅಟ್ಲಾಂಟಾ: ಹೊಸ ಬದುಕಿನ ಕನಸುಗಳೊಂದಿಗೆ ಸಪ್ತಪದಿ ತುಳಿದಿದ್ದ ಜೋಡಿಯ ಬದುಕು ಕೆಲವೇ ಗಂಟೆಗಳಲ್ಲಿ ಭೀಕರ ದುರಂತಕ್ಕೆ ತುತ್ತಾದ ಹೃದಯವಿದ್ರಾವಕ ಘಟನೆ ಅಮೆರಿಕದ ಜಾರ್ಜಿಯಾದಲ್ಲಿ ನಡೆದಿದೆ.

ಕೇರಳ ಮೂಲದ ನವವಿವಾಹಿತ ದಂಪತಿ ಮದುವೆಯ ಸಂಭ್ರಮ ಮುಗಿಸಿಕೊಂಡು ಹೋಟೆಲ್‌ಗೆ ತೆರಳಲು ಹೆಲಿಕಾಪ್ಟರ್ ಏರಿದ ಕೆಲವೇ ಕ್ಷಣಗಳಲ್ಲಿ, ದಟ್ಟ ಮಂಜು ಮತ್ತು ಕೆಟ್ಟ ಹವಾಮಾನದ ಪರಿಣಾಮವಾಗಿ ಹೆಲಿಕಾಪ್ಟರ್ ನಿಯಂತ್ರಣ ತಪ್ಪಿ ಅರಣ್ಯ ಪ್ರದೇಶದಲ್ಲಿ ಪತನಗೊಂಡಿದೆ.

ಈ ದುರಂತದಲ್ಲಿ ಡೆಲ್ಟಾ ಏರ್‌ಲೈನ್ಸ್‌ನ ಯುವ ಪೈಲಟ್ ಡೇವ್ ಫಿಜಿ (25) ಮತ್ತು ಹೆಲಿಕಾಪ್ಟರ್ ಪೈಲಟ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಆದರೆ ವೃತ್ತಿಯಲ್ಲಿ ನರ್ಸ್ ಆಗಿರುವ ನವವಧು ಜೆಸ್ನಿ ಅದ್ಭುತವಾಗಿ ಬದುಕುಳಿದಿದ್ದಾರೆ.

ಅಪಘಾತದ ಬಳಿಕ ಸುಮಾರು ಐದು ಗಂಟೆಗಳ ಕಾಲ ಅವಶೇಷಗಳ ನಡುವೆ ಸಿಲುಕಿದ್ದ ಜೆಸ್ನಿಯನ್ನು ರಕ್ಷಣಾ ಸಿಬ್ಬಂದಿ ಅತ್ಯಂತ ಕಷ್ಟಪಟ್ಟು ಹೊರತೆಗೆದಿದ್ದಾರೆ. ತೀವ್ರ ಗಾಯಗಳಾಗಿದ್ದರೂ ಜೀವಕ್ಕೆ ಅಪಾಯವಾಗದಂತೆ ಅವರು ಪಾರಾಗಿರುವುದು ವೈದ್ಯಕೀಯ ಅಚ್ಚರಿಯಾಗಿದೆ.

ಸ್ಥಳಕ್ಕೆ ಆಗಮಿಸಿದ ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿ (NTSB) ತನಿಖೆ ಆರಂಭಿಸಿದ್ದು, ಪ್ರಾಥಮಿಕ ವರದಿ 30 ದಿನಗಳಲ್ಲಿ ನಿರೀಕ್ಷಿಸಲಾಗಿದೆ.

ಮದುವೆಯ ಸಂತೋಷ ಕ್ಷಣಗಳಲ್ಲಿ ಆರಂಭವಾದ ಈ ಕಥೆ, ಕೆಲವೇ ಗಂಟೆಗಳಲ್ಲಿ ದುಃಖದ ದುರಂತವಾಗಿ ಬದಲಾಗಿರುವುದು ಎಲ್ಲರನ್ನೂ ಬೆಚ್ಚಿಬೀಳಿಸಿದೆ.

error: Content is protected !!