ವಿಜಯಸಾಕ್ಷಿ ಸುದ್ದಿ, ಗದಗ”: ಕಲಿಯುಗದ ಕಾಮಧೇನು, ಕಲ್ಪವೃಕ್ಷ ಹಾಗೂ ಅಪಮೃತ್ಯು ಪರಿಹಾರದ ಗುರು ಎಂದೇ ಆರಾಧಿಸಲ್ಪಡುವ ಶ್ರೀ ರಾಘವೇಂದ್ರ ಸ್ವಾಮಿಗಳ 355ನೇ ಆರಾಧನಾ ಮಹೋತ್ಸವದ ಅಂಗವಾಗಿ ಗದಗ ನಗರದ ಕಳಸಾಪೂರ ರಸ್ತೆಯಲ್ಲಿರುವ ಮಂತ್ರಾಲಯ ರಾಘವೇಂದ್ರ ಸ್ವಾಮಿಗಳ ಶಾಖಾ ಮಠದಿಂದ ಭಕ್ತರ ಮನೆ-ಮನೆಗೆ ರಜತ ಪಾದುಕೆ ಪೂಜೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಆರಾಧನಾ ಮಹೋತ್ಸವದ ಪ್ರಯುಕ್ತ ರಜತ ಪ್ರಹ್ಲಾದರಾಯರ ಮೂರ್ತಿ, ರಜತ ಬೃಂದಾವನ ಹಾಗೂ ರಜತ ಪಾದುಕೆಗಳನ್ನು ಭಕ್ತರ ಮನೆಗಳಿಗೆ ಕೊಂಡೊಯ್ದು ವಿಶೇಷ ಪೂಜೆ ನೆರವೇರಿಸಲಾಗುವುದು. ಈ ಸೇವೆಯಿಂದ ಭಕ್ತರಿಗೆ ಶ್ರೀ ರಾಘವೇಂದ್ರ ಸ್ವಾಮಿಗಳ ಕೃಪೆಗೆ ಪಾತ್ರರಾಗುವ ಅಪೂರ್ವ ಅವಕಾಶ ದೊರೆಯಲಿದೆ.
ಮಂತ್ರಾಲಯ ಪೀಠಾಧಿಪತಿಗಳಾದ ಶ್ರೀ ಶ್ರೀ ಸುಭುದೇಂದ್ರ ತೀರ್ಥ ಶ್ರೀಗಳ ಅಪ್ಪಣೆಯಂತೆ ಈ ವಿಶೇಷ ಪೂಜಾ ಸೇವೆ ಆಯೋಜಿಸಲಾಗಿದ್ದು, ಭಕ್ತರು ರಾಯರ ಪಾದುಕೆಗಳನ್ನು ಪೂಜಿಸಿ ಆಶೀರ್ವಾದ ಪಡೆಯುವಂತೆ ಮಠ ಮನವಿ ಮಾಡಿದೆ.
ಜುಲೈ 20ರಿಂದ ಆಗಸ್ಟ್ 28ರವರೆಗೆ ಮನೆ-ಮನೆಗೆ ಪಾದುಕೆ ಪೂಜೆ ನಡೆಯಲಿದೆ. ಪೂಜೆ ಮಾಡಿಸಿಕೊಳ್ಳಲು ಆಸಕ್ತ ಭಕ್ತರು ಮುಂಚಿತವಾಗಿ ಕಳಸಾಪೂರ ರಸ್ತೆಯ ರಾಘವೇಂದ್ರ ಶಾಖಾ ಮಠದ ಕಾರ್ಯಾಲಯದಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕು.
ಹೆಚ್ಚಿನ ಮಾಹಿತಿಗಾಗಿ ಶಾಖಾ ಮಠದ ಆಚಾರ್ಯ ನಂಜನಗೂಡು ಅನಿಲ ಆಚಾರ್ಯ ಅವರನ್ನು ಮೊ. 97392 74755ರಲ್ಲಿ ಸಂಪರ್ಕಿಸಬಹುದಾಗಿದೆ.

