Home Blog

ಹವಾಮಾನ ಬದಲಾವಣೆ ಮಕ್ಕಳ ಆರೋಗ್ಯಕ್ಕೆ ಎಫೆಕ್ಟ್: ಯಾವ ಲಕ್ಷಣಗಳನ್ನು ನಿರ್ಲಕ್ಷ್ಯ ಮಾಡಬಾರದು?

ಇತ್ತೀಚಿನ ದಿನಗಳಲ್ಲಿ ಹವಾಮಾನದಲ್ಲಿ ಆಗುತ್ತಿರುವ ನಿರಂತರ ಬದಲಾವಣೆಗಳು ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿವೆ.

ಹೆಚ್ಚು ಬಿಸಿಲು, ಸಂಜೆಯ ತಣ್ಣನೆಯ ಗಾಳಿ ಹಾಗೂ ತಾಪಮಾನದಲ್ಲಿ ಏರುಪೇರುಗಳು ಮಕ್ಕಳಲ್ಲಿ ವಿವಿಧ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತಿವೆ. ಹಿರಿಯರಿಗಿಂತ ಮಕ್ಕಳ ರೋಗನಿರೋಧಕ ಶಕ್ತಿ ಕಡಿಮೆ ಇರುವುದರಿಂದ, ಇಂತಹ ಪರಿಸ್ಥಿತಿಗೆ ಅವರು ಬೇಗ ತುತ್ತಾಗುವ ಸಾಧ್ಯತೆ ಇದೆ.

ಹವಾಮಾನ ಬದಲಾವಣೆಯ ಸಮಯದಲ್ಲಿ ಮಕ್ಕಳಲ್ಲಿ ಪದೇಪದೇ ಜ್ವರ, ಕೆಮ್ಮು ಕಾಣಿಸಿಕೊಂಡರೆ ಅದನ್ನು ನಿರ್ಲಕ್ಷ್ಯ ಮಾಡಬಾರದು. ಜೊತೆಗೆ ದೌರ್ಬಲ್ಯ, ಊಟದಲ್ಲಿ ಆಸಕ್ತಿ ಕಡಿಮೆ, ಹೆಚ್ಚು ನಿದ್ರೆ, ಚಿಡಿಚಿಡಿ ಸ್ವಭಾವ ಇತ್ಯಾದಿ ಲಕ್ಷಣಗಳು ಕಾಣಿಸಬಹುದು. ಕೆಲವು ಸಂದರ್ಭಗಳಲ್ಲಿ ಅಲರ್ಜಿ, ಉಸಿರಾಟದ ತೊಂದರೆ ಹಾಗೂ ಚರ್ಮದ ಮೇಲೆ ರಾಶ್‌ಗಳೂ ಕಾಣಿಸಬಹುದು. ಇಂತಹ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಅಗತ್ಯ.

ಮಕ್ಕಳ ಆರೋಗ್ಯ ಕಾಪಾಡಲು ಪೌಷ್ಟಿಕ ಆಹಾರ ಬಹಳ ಮುಖ್ಯ. ಹಣ್ಣು, ತರಕಾರಿ ಹಾಗೂ ವಿಟಮಿನ್‌ಗಳುಳ್ಳ ಆಹಾರವನ್ನು ದಿನನಿತ್ಯ ನೀಡುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಮಕ್ಕಳಿಗೆ ಸಾಕಷ್ಟು ನೀರು ಕುಡಿಸುವುದು ಹಾಗೂ ಹವಾಮಾನಕ್ಕೆ ತಕ್ಕ ಉಡುಪುಗಳನ್ನು ಧರಿಸುವುದು ಮುಖ್ಯ.

ಇದರ ಜೊತೆಗೆ ಸ್ವಚ್ಛತೆಗೂ ಹೆಚ್ಚಿನ ಆದ್ಯತೆ ನೀಡಬೇಕು. ಕೈ ತೊಳೆಯುವ ಅಭ್ಯಾಸ ಬೆಳೆಸುವುದು, ಹೊರಗಡೆ ಆಟವಾಡಿ ಬಂದ ನಂತರ ಕೈ-ಕಾಲುಗಳನ್ನು ಸ್ವಚ್ಛಗೊಳಿಸುವುದು ಅನಿವಾರ್ಯ. ಮಕ್ಕಳಿಗೆ ಸಾಕಷ್ಟು ವಿಶ್ರಾಂತಿ ಮತ್ತು ನಿದ್ರೆ ಸಿಗುವಂತೆ ನೋಡಿಕೊಳ್ಳಬೇಕು.

ತುಂಬಾ ಬಿಸಿ ಅಥವಾ ತಣ್ಣನೆಯ ಆಹಾರಗಳನ್ನು ತಪ್ಪಿಸುವುದು ಉತ್ತಮ. ಹೊರಗಡೆ ಆಟವಾಡುವಾಗ ಧೂಳು, ತೀವ್ರ ಬಿಸಿಲು ಅಥವಾ ತಣ್ಣನೆಯ ಗಾಳಿಯಿಂದ ರಕ್ಷಣೆ ನೀಡಬೇಕು.

ಒಟ್ಟಾರೆ, ಈ ಸಮಯದಲ್ಲಿ ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚಿನ ಜಾಗ್ರತೆ ವಹಿಸಿದರೆ ಹಲವು ಸಮಸ್ಯೆಗಳನ್ನು ತಪ್ಪಿಸಿಕೊಳ್ಳಬಹುದು.

ಬಾಗಲಕೋಟೆ ಜಿಲ್ಲಾಸ್ಪತ್ರೆಯಲ್ಲಿ ದುರಂತ: ವಿಧವೆಯ ಮೇಲೆ ಹೊರಗುತ್ತಿಗೆ ನೌಕರನಿಂದ ಅತ್ಯಾಚಾರ?

ಬಾಗಲಕೋಟೆ: ನಗರದ ಜಿಲ್ಲಾಸ್ಪತ್ರೆಯಲ್ಲಿ ಮನಕಲಕುವ ಹಾಗೂ ಆಕ್ರೋಶ ಹುಟ್ಟಿಸುವ ಘಟನೆ ಬೆಳಕಿಗೆ ಬಂದಿದೆ.

ಆಸ್ಪತ್ರೆಯ ಬಾತ್‌ರೂಮ್‌ನಲ್ಲಿ ವಿಧವೆಯ ಮೇಲೆ ಹೊರಗುತ್ತಿಗೆ ನೌಕರನೊಬ್ಬ ಅತ್ಯಾಚಾರ ಎಸಗಿರುವ ಆರೋಪ ಕೇಳಿಬಂದಿದೆ.

ಆರೋಪಿಯನ್ನು ಫರೀದ್ ಸಾಬ್ ಡಾಂಗಿ ಎಂದು ಗುರುತಿಸಲಾಗಿದೆ. ಆಸ್ಪತ್ರೆಯಲ್ಲಿ ಡಿ-ದರ್ಜೆ ನೌಕರನಾಗಿ ಕೆಲಸ ಮಾಡುತ್ತಿದ್ದ ಆತ, ಚಿಕಿತ್ಸೆ ಪಡೆಯುತ್ತಿದ್ದ ರೋಗಿಯೊಬ್ಬರ ಸಹೋದರಿಯ ಮೇಲೆ ಈ ಕೃತ್ಯವೆಸಗಿದ್ದಾನೆ ಎಂದು ತಿಳಿದುಬಂದಿದೆ.

34 ವರ್ಷದ ಸಂತ್ರಸ್ತೆ ತನ್ನ ಅನಾರೋಗ್ಯ ಪೀಡಿತ ಸಹೋದರನ ಆರೈಕೆಗಾಗಿ ಕಳೆದ ಒಂದು ತಿಂಗಳಿನಿಂದ ಆಸ್ಪತ್ರೆಯಲ್ಲೇ ತಂಗಿದ್ದಳು. ಈ ಅವಧಿಯಲ್ಲಿ ಆರೋಪಿಯು ಆಕೆಯೊಂದಿಗೆ ಪರಿಚಯ ಮಾಡಿಕೊಂಡಿದ್ದನು. ಮೇ 4ರ ಮಧ್ಯರಾತ್ರಿ 12ರಿಂದ 2 ಗಂಟೆಯ ನಡುವೆ ಆಕೆಗೆ ಬೆದರಿಕೆ ಹಾಕಿ, ಸಿಬ್ಬಂದಿ ಬಳಕೆ ಬಾತ್‌ರೂಮ್‌ಗೆ ಕರೆದೊಯ್ದು ಅತ್ಯಾಚಾರ ಎಸಗಿದನೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಘಟನೆ ಬಳಿಕ ಸಂತ್ರಸ್ತೆಯನ್ನು ಒಳಗೆ ಬಂದಿಸಿ ಆರೋಪಿಯು ಸ್ಥಳದಿಂದ ತೆರಳಿದ್ದಾನೆ ಎನ್ನಲಾಗಿದೆ. ವಿಚಾರ ತಿಳಿದು ಸ್ಥಳಕ್ಕೆ ಬಂದ ಕುಟುಂಬಸ್ಥರು ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಈ ಸಂಬಂಧ ಬಾಗಲಕೋಟೆ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಂಬಂಧಿತ ಕಾನೂನು ವಿಧಿಗಳಡಿ ತನಿಖೆ ನಡೆಯುತ್ತಿದೆ.

ಘಟನೆಯ ಬಳಿಕ ಜಿಲ್ಲಾಸ್ಪತ್ರೆಯ ಸರ್ಜನ್ ಮಹೇಶ್ ಕೋಣಿ ಅವರು ಆರೋಪಿಯನ್ನು ತಕ್ಷಣವೇ ಕೆಲಸದಿಂದ ವಜಾಗೊಳಿಸಿದ್ದಾರೆ.

ಈ ಘಟನೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಸಂತ್ರಸ್ತೆಯ ಕುಟುಂಬಸ್ಥರು, “ಜಿಲ್ಲಾಸ್ಪತ್ರೆ ಬಡವರ ದೇವಾಲಯದಂತಿರಬೇಕು, ಆದರೆ ಇಲ್ಲಿ ಮಹಿಳೆಯರಿಗೂ ಸುರಕ್ಷತೆ ಇಲ್ಲ” ಎಂದು ಆಕ್ರೋಶ ಹೊರಹಾಕಿದ್ದಾರೆ. ಆರೋಪಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಅವರು ಆಗ್ರಹಿಸಿದ್ದಾರೆ.

 

ಕೋಲಾರದಲ್ಲಿ ದುರಂತ: ಕೃಷಿ ಹೊಂಡದಲ್ಲಿ ಮುಳುಗಿ ಇಬ್ಬರು ಮಕ್ಕಳು ಸಾವು!

ಕೋಲಾರ: ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಬೊಡೇನಹಳ್ಳಿಯಲ್ಲಿ ಮನಕಲಕುವ ಘಟನೆ ನಡೆದಿದೆ.

ಆಟವಾಡಲು ಹೋಗಿದ್ದ ಇಬ್ಬರು ಮಕ್ಕಳು ಕೃಷಿ ಹೊಂಡಕ್ಕೆ ಬಿದ್ದು ಮೃತಪಟ್ಟಿದ್ದಾರೆ.

ಮೃತರನ್ನು ವರದರಾಜು–ಶ್ಯಾಮಲ ದಂಪತಿಯ ಪುತ್ರ ಕಾರ್ತಿಕ್ (8) ಹಾಗೂ ಬಾಬು–ರೂಪ ದಂಪತಿಯ ಪುತ್ರಿ ತನುಶ್ರೀ (15) ಎಂದು ಗುರುತಿಸಲಾಗಿದೆ. ಅಜ್ಜಿ ಹಾಗೂ ತಾಯಿಯೊಂದಿಗೆ ತೋಟಕ್ಕೆ ತೆರಳಿದ್ದ ವೇಳೆ ಆಟವಾಡುತ್ತಿದ್ದ ಮಕ್ಕಳು ಆಕಸ್ಮಿಕವಾಗಿ ಹೊಂಡಕ್ಕೆ ಬಿದ್ದಿದ್ದಾರೆ.

ಮೊದಲು ಕಾರ್ತಿಕ್ ಕಾಲು ಜಾರಿ ಹೊಂಡಕ್ಕೆ ಬಿದ್ದಿದ್ದಾನೆ. ಇದನ್ನು ಕಂಡ ತನುಶ್ರೀ ಆತನನ್ನು ರಕ್ಷಿಸಲು ಹೊಂಡಕ್ಕೆ ಇಳಿದಿದ್ದಾಳೆ. ಆದರೆ ನೀರಿನ ಆಳ ತಿಳಿಯದೆ ಇಬ್ಬರೂ ಮುಳುಗಿ ಮೃತಪಟ್ಟಿದ್ದಾರೆ.

ತನುಶ್ರೀ ಇತ್ತೀಚೆಗೆ ಎಸ್‌ಎಸ್‌ಎಲ್‌ಸಿಯಲ್ಲಿ ಶೇ.86 ಅಂಕ ಗಳಿಸಿದ್ದ ವಿದ್ಯಾರ್ಥಿನಿಯಾಗಿದ್ದು, ಬಂಗಾರಪೇಟೆಯ ಡಿ.ಪಿ.ಹಳ್ಳಿಯ ವಸತಿ ಶಾಲೆಯಲ್ಲಿ ಓದುತ್ತಿದ್ದಳು. ಕಾರ್ತಿಕ್ ತಾಲೂಕಿನ ನಲ್ಲಗುಟ್ಟಹಳ್ಳಿಯ ಶಾಲೆಯಲ್ಲಿ 3ನೇ ತರಗತಿ ವಿದ್ಯಾರ್ಥಿಯಾಗಿದ್ದ.

ಘಟನೆ ತಿಳಿದ ತಕ್ಷಣ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಕ್ಕಳನ್ನು ಕಳೆದುಕೊಂಡು ಪೋಷಕರು ಶೋಕಸಾಗರದಲ್ಲಿ ಮುಳುಗಿದ್ದು, ಗ್ರಾಮದಲ್ಲಿ ಮೌನ ವಾತಾವರಣ ನಿರ್ಮಾಣವಾಗಿದೆ.

ಘಟನೆ ಕಾಮಸಮುದ್ರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.

 

ಅಂತರರಾಜ್ಯ ಬೈಕ್ ಕಳ್ಳರ ಜಾಲ ಭೇದಿಸಿದ ಹೊಸಕೋಟೆ ಪೊಲೀಸರು: 55 ಲಕ್ಷ ಮೌಲ್ಯದ ವಾಹನಗಳು ಪತ್ತೆ!

ಹೊಸಕೋಟೆ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಪೊಲೀಸರು ಅಂತರರಾಜ್ಯ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಬೈಕ್ ಕಳ್ಳರ ಜಾಲವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇಬ್ಬರು ಆರೋಪಿಗಳನ್ನು ಬಂಧಿಸಿ, ಸುಮಾರು 55 ಲಕ್ಷ ರೂಪಾಯಿ ಮೌಲ್ಯದ 50 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತರನ್ನು ಆಂಧ್ರಪ್ರದೇಶ ಮೂಲದ ಪ್ರಸಾದ್ ಹಾಗೂ ಕೋಲಾರದ ನರಸಿಂಹಮೂರ್ತಿ ಎಂದು ಗುರುತಿಸಲಾಗಿದೆ. ಸದ್ಯ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇವರ ವಿರುದ್ಧ 8 ಪೊಲೀಸ್ ಠಾಣೆಗಳಲ್ಲಿ 45ಕ್ಕೂ ಹೆಚ್ಚು ಬೈಕ್ ಕಳವು ಪ್ರಕರಣಗಳು ದಾಖಲಾಗಿರುವುದು ತನಿಖೆಯಲ್ಲಿ ಬಹಿರಂಗವಾಗಿದೆ.

ಆರೋಪಿಗಳು ಕದ್ದ ಬೈಕ್‌ಗಳನ್ನು ಗ್ರಾಮೀಣ ಪ್ರದೇಶದ ಜನರಿಗೆ ಮಾರಾಟ ಮಾಡಿ, ಬಂದ ಹಣದಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದರು ಎನ್ನಲಾಗಿದೆ.

ಪ್ರಕರಣದ ಸುಳಿವು ಹಿಡಿದು ತನಿಖೆ ಮುಂದುವರೆಸಿದ ಪೊಲೀಸರು, ದೊಡ್ಡ ಪ್ರಮಾಣದ ಬೈಕ್ ಕಳವು ಜಾಲವನ್ನು ಬಯಲಿಗೆಳೆದಿದ್ದಾರೆ. ಹೊಸಕೋಟೆ ಕ್ರೈಂ ಕಾನ್ಸ್ಟೇಬಲ್ ಗೋಪಾಲ್ ಈ ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.

ಎಸ್ಪಿ ಚಂದ್ರಕಾಂತ್, ಡಿವೈಎಸ್ಪಿ ಮಲ್ಲೇಶ್ ಹಾಗೂ ಇನ್ಸ್ಪೆಕ್ಟರ್ ಗೋವಿಂದ್ ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಈ ಸಾಧನೆ ಸಾಧ್ಯವಾಗಿದೆ.

ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಪೊಲೀಸ್ ತಂಡಕ್ಕೆ ಜಿಲ್ಲಾ ಪೊಲೀಸ್ ಇಲಾಖೆ ನಗದು ಬಹುಮಾನ ಹಾಗೂ ಪ್ರಶಂಸನಾ ಪತ್ರ ಘೋಷಿಸಿದೆ.

 

ನಡುರಸ್ತೆಯಲ್ಲೇ ಮದ್ಯಪಾನ: ಪ್ರಶ್ನಿಸಿದ ಪೊಲೀಸರ ಮೇಲೆ ಹಲ್ಲೆ ನಡೆಸಿದ ಯುವಕರು!

ಬೆಂಗಳೂರು:  ರಾಜಧಾನಿ ಬೆಂಗಳೂರಿನಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಘಟನೆ ನಡೆದಿದೆ.

ಅಮೃತಹಳ್ಳಿ ವ್ಯಾಪ್ತಿಯ ಆಕಾಶವಾಣಿ ಲೇಔಟ್‌ನಲ್ಲಿ ನಡುರಸ್ತೆಯಲ್ಲೇ ಮದ್ಯಪಾನ ಮಾಡುತ್ತಿದ್ದ ಯುವಕರು ಪೊಲೀಸರ ಮೇಲೆಯೇ ಹಲ್ಲೆ ನಡೆಸಿದ್ದಾರೆ.

ಮೇ 1ರಂದು ಮುಂಜಾನೆ ಸುಮಾರು 3 ಗಂಟೆಯ ವೇಳೆ ನಾಲ್ವರು ಯುವಕರು ಕಾರನ್ನು ರಸ್ತೆ ಮಧ್ಯೆ ನಿಲ್ಲಿಸಿ ಮದ್ಯಪಾನ ಮಾಡುತ್ತಿದ್ದರು. ಕುಡಿದ ಮತ್ತಿನಲ್ಲಿ ಗಲಾಟೆ ಮಾಡುತ್ತಿದ್ದ ಇವರನ್ನು ಪ್ರಶ್ನಿಸಲು ಪೊಲೀಸರು ಮುಂದಾದಾಗ, ಯುವಕರು ಸಿಟ್ಟಿಗೆದ್ದು ಅವಾಚ್ಯ ಪದಗಳಿಂದ ನಿಂದಿಸಿ, ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ.

ಅಷ್ಟೇ ಅಲ್ಲದೆ ಪೊಲೀಸರ ಬೈಕ್ ಕೀ ಕಸಿದುಕೊಂಡು ಅವರ ಕೈ ತಿರುಚಿ ಹಲ್ಲೆ ನಡೆಸಿ, ಬಳಿಕ ನಾಲ್ವರು ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.

ಘಟನೆಯ ಸಂಬಂಧ ಹರ್ಷ ಮತ್ತು ಆರ್ಯನ್ ಎಂಬ ಇಬ್ಬರು ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ. ಉಳಿದ ಇಬ್ಬರು ಆರೋಪಿಗಳಿಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ. ಪ್ರಕರಣ ದಾಖಲಿಸಿ ತನಿಖೆ ನಡೆಯುತ್ತಿದೆ.

ನವದಂಪತಿಗಳಿಗೆ ಹನಿಮೂನ್ ಯಾಕೆ ವಿಶೇಷ? ಮದುವೆಯ ನಂತರದ ಈ ಸಂಪ್ರದಾಯದ ರಹಸ್ಯ ಏನು?

ಮದುವೆಯ ನಂತರ ನವ ಜೋಡಿಗಳು ಹೋಗುವ ಪ್ರವಾಸವನ್ನು ಹನಿಮೂನ್ ಎಂದು ಕರೆಯಲಾಗುತ್ತದೆ.

ಇತ್ತೀಚಿನ ದಿನಗಳಲ್ಲಿ ಬಹುತೇಕ ದಂಪತಿಗಳು ಮದುವೆಯ ಬಳಿಕ ಹನಿಮೂನ್‌ಗೆ ತೆರಳುವುದು ಸಾಮಾನ್ಯವಾಗಿದೆ. ಕೆಲವರು ವಿದೇಶಿ ಪ್ರವಾಸ ಆಯ್ಕೆ ಮಾಡಿಕೊಳ್ಳುತ್ತಿದ್ದರೆ, ಇನ್ನೂ ಕೆಲವರು ದೇಶದೊಳಗಿನ ರೊಮ್ಯಾಂಟಿಕ್ ತಾಣಗಳನ್ನು ಆರಿಸಿಕೊಳ್ಳುತ್ತಿದ್ದಾರೆ.

ಹನಿಮೂನ್ ಕೇವಲ ಪ್ರವಾಸವಲ್ಲ, ದಂಪತಿಗಳ ಜೀವನದಲ್ಲಿ ಹೊಸ ಅಧ್ಯಾಯದ ಆರಂಭವೆಂದೇ ಪರಿಗಣಿಸಲಾಗುತ್ತದೆ. ಮದುವೆಯ ಗಡಿಬಿಡಿ, ಒತ್ತಡಗಳ ನಂತರ ವಧು-ವರರಿಗೆ ವಿಶ್ರಾಂತಿ ನೀಡುವ ಜೊತೆಗೆ, ಒಬ್ಬರನ್ನೊಬ್ಬರು ಚೆನ್ನಾಗಿ ಅರಿತುಕೊಳ್ಳುವ ಅವಕಾಶವನ್ನು ಇದು ಒದಗಿಸುತ್ತದೆ.

ಇತಿಹಾಸದ ಪ್ರಕಾರ, ಹನಿಮೂನ್ ಸಂಪ್ರದಾಯವು ಯುರೋಪಿನಲ್ಲಿ ಹುಟ್ಟಿಕೊಂಡಿದ್ದು, ನಂತರ ಪ್ರಪಂಚದಾದ್ಯಂತ ವ್ಯಾಪಕವಾಗಿದೆ. ಹಿಂದಿನ ಕಾಲದಲ್ಲಿ ಮದುವೆಯ ದಿನವೇ ಮೊದಲ ಬಾರಿಗೆ ಭೇಟಿಯಾಗುತ್ತಿದ್ದ ದಂಪತಿಗಳಿಗೆ ಪರಸ್ಪರ ತಿಳಿದುಕೊಳ್ಳಲು ಹನಿಮೂನ್‌ಗೆ ಕಳುಹಿಸಲಾಗುತ್ತಿತ್ತು ಎಂಬುದು ಗಮನಾರ್ಹ.

ಇಂದಿನ ಕಾಲದಲ್ಲಿ ಹನಿಮೂನ್ ದಂಪತಿಗಳ ನಡುವಿನ ಪ್ರೀತಿ, ನಂಬಿಕೆ ಮತ್ತು ಬಾಂಧವ್ಯವನ್ನು ಗಟ್ಟಿಗೊಳಿಸುವ ಪ್ರಮುಖ ಸಂದರ್ಭವಾಗಿದೆ. ಜೊತೆಗೆ, ದೈನಂದಿನ ಜೀವನದ ಗೊಂದಲಗಳಿಂದ ದೂರವಿದ್ದು, ಶಾಂತ ವಾತಾವರಣದಲ್ಲಿ ಗುಣಮಟ್ಟದ ಸಮಯ ಕಳೆಯಲು ಇದು ಸಹಕಾರಿಯಾಗುತ್ತದೆ.

ಒಟ್ಟಾರೆ, ಹನಿಮೂನ್ ನವ ದಂಪತಿಗಳಿಗೆ ಸುಂದರ ನೆನಪುಗಳನ್ನು ನಿರ್ಮಿಸುವ ಜೊತೆಗೆ, ಅವರ ಭವಿಷ್ಯದ ಜೀವನಕ್ಕೆ ಭದ್ರ ಅಡಿಪಾಯ ಹಾಕುವ ಮಹತ್ವದ ಹಂತವೆಂದು ಹೇಳಬಹುದು.

ಭೋವಿ ಜನಾಂಗದವರು ಶಿಕ್ಷಣಕ್ಕೆ ಒತ್ತು ನೀಡಬೇಕು: ಮುಖ್ಯಮಂತ್ರಿ ಸಿದ್ದರಾಮಯ್ಯ

ಮೈಸೂರು: ಆರ್ಥಿಕ ಹಾಗೂ ಸಾಮಾಜಿಕ ಶಕ್ತಿಗಾಗಿ ಶಿಕ್ಷಣ ಅಗತ್ಯವಾಗಿದ್ದು, ಭೋವಿ ಜನಾಂಗದವರು ಶಿಕ್ಷಣಕ್ಕೆ ಒತ್ತು ನೀಡಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮೈಸೂರು ಜಿಲ್ಲಾಡಳಿತದ ವತಿಯಿಂದ ಮೈಸೂರಿನ ಕಲಾಮಂದಿರದಲ್ಲಿ ಆಯೋಜಿಸಿದ್ದ ಸಿದ್ದರಾಮೇಶ್ವರ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದರು.

ಉತ್ಪಾದಿಸಿದ ಸಂಪತ್ತಿನ ಸಮಾನ ಹಂಚಿಕೆ
ಶ್ರೀ ಸಿದ್ದರಾಮೇಶ್ವರ ಜಯಂತಿಯ ಶುಭ ಕೋರಿದ ಮುಖ್ಯಮಂತ್ರಿಗಳು, ರಾಜ್ಯದಲ್ಲಿ ಸಮಸಮಾಜ ನಿರ್ಮಿಸುವ ಸಂಕಲ್ಪವನ್ನು ಸರ್ಕಾರ ಹೊಂದಿದೆ. ಉತ್ಪಾದಿಸಿದ ಸಂಪತ್ತು ಸಮಾನವಾಗಿ ಹಂಚಿಕೆಯಾಗಿಬೇಕು. ರಾಜ್ಯದ ಸರ್ವರಿಗೂ ಸಮಪಾಲು, ಸಮಬಾಳು ಸಿಗಬೇಕೆಂಬುದೇ ಸರ್ಕಾರದ ಉದ್ದೇಶ.

ಸಿದ್ದರಾಮೇಶ್ವವರೂ ಸೇರಿದಂತೆ ಸಂತಮಹಾಶಯರು, ಸಮಾಜದಲ್ಲಿ ಜಾತಿವರ್ಗಗಳ ವ್ಯವಸ್ಥೆಗಳು ತೊಲಗಬೇಕು ಎಂದು ಬಯಸಿದ್ದರು. ಬಸವಾದಿ ಶರಣರು 12 ನೇ ಶತಮಾನದಲ್ಲಿ ಸಮಾನತೆಯ ಸಿದ್ಧಾಂತವನ್ನು ಬೋಧಿಸಿದ್ದರು. ಶೋಷಣೆಗೊಳಗಾದ ಹಾಗೂ ಅವಕಾಶವಂಚಿತ ಸಮುದಾಯಗಳು ಸಂಘಟಿತರಾಗುವ ಸಮ್ಮೇಳನಗಳು ಉತ್ತಮ ಕಾರ್ಯಗಳಾಗಿವೆ ಎಂದರು.

ನಾನು ಸಾಮಾಜಿಕ ನ್ಯಾಯದಲ್ಲಿ ನಂಬಿಕೆಯಿರಿಸಿದ್ದೇನೆ
ಬಸವಜಯಂತಿಯಂದು ನಾನು 2013 ಮೇ 13 ರಂದು ನಾನು ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಿದೆ. ಬಸವಣ್ಣನವರು ಬೋಧಿಸಿದಂತೆ ನಾನು ಸಾಮಾಜಿಕ ನ್ಯಾಯದಲ್ಲಿ ನಂಬಿಕೆಯಿರಿಸಿದ್ದೇನೆ. ರಾಜಕೀಯ ಸ್ವಾತಂತ್ರ್ಯವು, ಆರ್ಥಿಕ ಹಾಗೂ ಸಾಮಾಜಿಕ ಸ್ವಾತಂತ್ರ್ಯದ ತಳಹದಿಯ ಮೇಲೆ ನಿಂತಿದೆ. ಶಿಕ್ಷಣ ಪಡೆದಾಗ ಮಾತ್ರ ಸಾಮಾಜಿಕ ಆರ್ಥಿಕ ಶಕ್ತಿ ದೊರಕಲು ಸಾಧ್ಯ ಎಂದರು.

ಗ್ಯಾರಂಟಿ ಯೋಜನೆಗಳು ಮಹಿಳಾಸಮೂಹಕ್ಕೆ ವರದಾನ
ಆರ್ಥಿಕವಾಗಿ ಶಕ್ತಿಯಿಲ್ಲದವರಿಗೆ ಗ್ಯಾರಂಟಿ ಯೋಜನೆಗಳನ್ನು ಸಮಾನವಾಗಿ ನೀಡಲಾಗಿದೆ. ಮಹಿಳೆಯರಿಗೆ ಶಕ್ತಿ ಹಾಗೂ ಗೃಹಲಕ್ಷ್ಮಿ ಯೋಜನೆಯನ್ನು ಯಾವುದೇ ತಾರತಮ್ಯವಿಲ್ಲದೇ ನೀಡಲಾಗುತ್ತಿದೆ. ನಮ್ಮ ಸರ್ಕಾರ ಭೋವಿ ನಿಗಮವೂ ಸೇರಿದಂತೆ ವಿವಿಧ ಸಮುದಾಯಗಳ ಅಭಿವೃದ್ಧಿ ನಿಗಮಗಳ ಸಾಲವನ್ನು ಮನ್ನಾ ಮಾಡಲಾಗಿದೆ. ಪರಿಶಿಷ್ಟ ಜಾತಿಯ ಸಮುದಾಯಗಳಲ್ಲಿನ ಅಸಮಾನತೆ ಹೋಗಲಾಡಿಸಲು ಐತಿಹಾಸಿಕ ಒಳ ಮೀಸಲಾತಿಯನ್ನು ಜಾರಿಗೊಳಿಸಿದೆ ಎಡಗೈಗೆ 5.25%, ಬಲಗೈಗೆ 5.25%, ಹಾಗೂ ಇತರ ಉಪಜಾತಿಗಳಿಗೆ 4.5% ಹಂಚಿಕೆ ಮಾಡಲಾಗಿದೆ ಎಂದರು.

ಸರ್ಕಾರ ಸಾಮಾಜಿಕ ನ್ಯಾಯಕ್ಕೆ ಬದ್ಧ
ಈಗ ಜಾತಿ ಸಮೀಕ್ಷೆ ನಡೆಯುತ್ತಿದ್ದು, ಜಾತಿ ಸಮೀಕ್ಷೆ ವರದಿ ಬಂದ ನಂತರ ಚರ್ಚೆ ಮಾಡೋಣ ಎಂದರು. ನಮ್ಮ ಸರ್ಕಾರ ಸಾಮಾಜಿಕ ನ್ಯಾಯಕ್ಕೆ ಬದ್ಧವಾಗಿದೆ. ಯಾರಿಗೂ ಅನ್ಯಾಯವಾಗಬಾರದು, ನೂರಕ್ಕೆ ನೂರು ಅಲ್ಲದಿದ್ದರೂ 99% ನ್ಯಾಯ ಒದಗಿಸಲು ಪ್ರಯತ್ನಿಸಲಾಗುವುದು ಎಂದರು.

ಅವಕಾಶಗಳಿಂದ ಯಾರೂ ವಂಚಿತರಾಗಬಾರದು
ಸಮುದಾಯದವರು ಇಟ್ಟಿರುವ ಬೇಡಿಕೆಗಳನ್ನು ಈಡೇರಿಸುವ ಬಗ್ಗೆ ಭರವಸೆ ನೀಡಿದ ಮುಖ್ಯಮಂತ್ರಿಗಳು ಸಮುದಾಯದವರಿಗೆ ಕುಲಪತಿ, ವಿಧಾನ ಪರಿಷತ್ ಸದಸ್ಯ ಸ್ಥಾನ ನೀಡುವ ಬಗ್ಗೆ ಪರಿಶೀಲಿಸಲಾಗುವುದು ಎಂದರು. ಏಳು ಕೋಟಿ ಜನರಿಗೂ ನ್ಯಾಯ ಸಿಗಬೇಕು ಹಾಗೂ ಯಾರೂ ಅವಕಾಶಗಳಿಂದ ವಂಚಿತರಾಗಬಾರದು ಎಂದರು. ಸಂವಿಧಾನ ರಚನೆಯಾದ ನಂತರ ಸಮಾನತೆಯನ್ನು ಸಾಧಿಸುವತ್ತ ದೇಶ ಸಾಗಿದ್ದು, ಸಂವಿಧಾನ ಹೇಳುವಂತೆಯೇ ನಡೆದುಕೊಳ್ಳುತ್ತೇವೆ ಎಂದರು.

ಸಹಿಷ್ಣುತೆಯನ್ನು ರೂಡಿಸಿಕೊಳ್ಳಬೇಕು
ಸ್ವಾತಂತ್ರ್ಯ ಸಮಾನತೆ ಮತ್ತು ಭ್ರಾತೃತ್ವ ಸಂವಿಧಾನದ ಮೂಲ ತತ್ವಗಳು. ಜಡತ್ವದಿಂದ ಕೂಡಿರುವ ಜಾತಿ ವ್ಯವಸ್ಥೆಯನ್ನು ಸುಧಾರಿಸಬೇಕಿದೆ. ಎಲ್ಲಾ ಜಾತಿಗಳನ್ನು ಪ್ರೀತಿಸಿ, ಅವರೂ ನಮ್ಮನ್ನು ಪ್ರೀತಿಸುವಂತೆ ಮಾಡಬೇಕು ಹಾಗೂ ಸಹಿಷ್ಣುತೆಯನ್ನು ರೂಡಿಸಿಕೊಳ್ಳಬೇಕು. ಉತ್ಪಾದನೆಯಲ್ಲಿ ಎಲ್ಲರೂ ಭಾಗವಹಿ ಉತ್ಪನ್ನವನ್ನು ಸಮಾನವಾಗಿ ಹಂಚಿಕೊಳ್ಳಬೇಕು ಎಂದು ಸಿದ್ಧರಾಮೇಶ್ವರರು ನಮಗೆ ಬೋಧಿಸಿದ್ದರು. ಅವರು ನಡೆದ ಹಾದಿಯಲ್ಲಿಯೇ ನಮ್ಮ ಸರ್ಕಾರವೂ ನಡೆಯುತ್ತಿದೆ ಎಂದರು.

ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ರಾಜೀನಾಮೆ: ಮೇ 12ಕ್ಕೆ ಪ್ರಮಾಣವಚನ ಸಾಧ್ಯತೆ

ಗುವಾಹಟಿ: ಅಸ್ಸಾಂ ವಿಧಾನಸಭೆ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟ ಭರ್ಜರಿ ಗೆಲುವು ಸಾಧಿಸಿದ ಬೆನ್ನಲ್ಲೇ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ತಮ್ಮ ಸಂಪುಟ ಸಚಿವರೊಂದಿಗೆ ಬುಧವಾರ ರಾಜ್ಯಪಾಲರಿಗೆ ರಾಜೀನಾಮೆ ಸಲ್ಲಿಸಿದ್ದಾರೆ.

ಲೋಕಭವನದಲ್ಲಿ ರಾಜ್ಯಪಾಲ ಲಕ್ಷ್ಮಣ್ ಪ್ರಸಾದ್ ಆಚಾರ್ಯ ಅವರನ್ನು ಭೇಟಿಯಾದ ಶರ್ಮಾ, ತಮ್ಮ ಸಚಿವ ಸಂಪುಟದ ರಾಜೀನಾಮೆ ಪತ್ರವನ್ನು ಅಧಿಕೃತವಾಗಿ ಸಲ್ಲಿಸಿದರು.

ರಾಜ್ಯಪಾಲರು ಹಿಮಂತ ಬಿಸ್ವಾ ಶರ್ಮಾ ಹಾಗೂ ಸಚಿವ ಸಂಪುಟದ ರಾಜೀನಾಮೆಯನ್ನು ಅಂಗೀಕರಿಸಿದ್ದು, ಅಸ್ಸಾಂ ವಿಧಾನಸಭೆಯನ್ನು ವಿಸರ್ಜಿಸಿದ್ದಾರೆ.

ಹೊಸ ಸರ್ಕಾರ ರಚನೆಯಾಗುವವರೆಗೆ ಹಂಗಾಮಿ ಮುಖ್ಯಮಂತ್ರಿಯಾಗಿ ಅಧಿಕಾರದಲ್ಲಿ ಮುಂದುವರಿಯುವಂತೆ ರಾಜ್ಯಪಾಲರು ಹಿಮಂತ ಬಿಸ್ವಾ ಶರ್ಮಾಗೆ ಸೂಚನೆ ನೀಡಿದ್ದಾರೆ ಎಂದು ಲೋಕಭವನದಿಂದ ಪ್ರಕಟಣೆ ಹೊರಡಿಸಲಾಗಿದೆ.

ಹೊಸ ಸರ್ಕಾರದ ಪ್ರಮಾಣವಚನ ಸ್ವೀಕಾರ ಸಮಾರಂಭ ಮೇ 12ರಂದು ನಡೆಯುವ ಸಾಧ್ಯತೆ ಇದೆ ಎಂದು ವರದಿಗಳು ತಿಳಿಸಿವೆ.

ಬಿಜೆಪಿ ಮೂಲಗಳ ಪ್ರಕಾರ, ಹಿಮಂತ ಬಿಸ್ವಾ ಶರ್ಮಾ ಅವರೇ ಎರಡನೇ ಅವಧಿಗೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಹೆಚ್ಚು ಇದೆ. ಈ ಕುರಿತು ಪ್ರತಿಕ್ರಿಯೆ ನೀಡಿದ ಹಿಮಂತ ಬಿಸ್ವಾ ಶರ್ಮಾ, ಬಿಜೆಪಿ ಶಾಸಕಾಂಗ ಪಕ್ಷದ ಸಭೆಯ ದಿನಾಂಕವನ್ನು ಪಕ್ಷದ ಕೇಂದ್ರ ವೀಕ್ಷಕ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ನಿರ್ಧರಿಸಲಿದ್ದಾರೆ ಎಂದು ಹೇಳಿದರು.

ಶಾಸಕಾಂಗ ಪಕ್ಷದ ಸಭೆಯಲ್ಲಿ ಮುಂದಿನ ನಾಯಕನ ಆಯ್ಕೆ ನಡೆಯಲಿದೆ. ಆಯ್ಕೆಯಾದ ನಾಯಕರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಅವರು ತಿಳಿಸಿದರು. ಪ್ರಮಾಣವಚನ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸುವ ಸಾಧ್ಯತೆಯೂ ಇದೆ ಎಂದು ಶರ್ಮಾ ಹೇಳಿದ್ದಾರೆ.

ಬಿಜೆಪಿ ಮತ ಕಳ್ಳತನದಿಂದ ಸರ್ಕಾರ ರಚಿಸಿದೆ: ಅಸ್ಸಾಂ-ಬಂಗಾಳ ಫಲಿತಾಂಶದ ಬಳಿಕ ರಾಹುಲ್ ವಾಗ್ದಾಳಿ

ನವದೆಹಲಿ: ಅಸ್ಸಾಂ ಹಾಗೂ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಭರ್ಜರಿ ಗೆಲುವಿನ ಬಳಿಕ, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತೆ ಚುನಾವಣಾ ಅಕ್ರಮದ ಆರೋಪಗಳನ್ನು ಮುಂದಿಟ್ಟಿದ್ದಾರೆ.

ಚುನಾವಣಾ ಪ್ರಕ್ರಿಯೆಯಲ್ಲಿ ಗಂಭೀರ ಅಕ್ರಮ ನಡೆದಿದೆ ಎಂದು ಆರೋಪಿಸಿರುವ ಅವರು, ಬಿಜೆಪಿ ಜನಾದೇಶವನ್ನು ದುರುಪಯೋಗಪಡಿಸಿಕೊಂಡು ಅಧಿಕಾರಕ್ಕೆ ಬಂದಿದೆ ಎಂದು ಟೀಕಿಸಿದ್ದಾರೆ. ತಮ್ಮ ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ರಾಹುಲ್ ಗಾಂಧಿ, ಲೋಕಸಭೆಯಲ್ಲಿರುವ ಬಿಜೆಪಿಯ ಪ್ರತಿ ಆರನೇ ಸಂಸದ ಮತ ಕಳ್ಳತನದ ಮೂಲಕ ಆಯ್ಕೆಯಾಗಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಹರಿಯಾಣ ಉದಾಹರಣೆ ಉಲ್ಲೇಖಿಸಿದ ಅವರು, ಕಾಂಗ್ರೆಸ್ ಗೆಲ್ಲಬೇಕಿದ್ದ ಸರ್ಕಾರವನ್ನು ಬಿಜೆಪಿ ಅಕ್ರಮವಾಗಿ ತನ್ನದಾಗಿಸಿಕೊಂಡಿದೆ. ಅಲ್ಲಿ ಆಯ್ಕೆಯಾದ ಶಾಸಕರು ಜನರ ನಿಜವಾದ ಪ್ರತಿನಿಧಿಗಳಲ್ಲ ಎಂದು ಟೀಕಿಸಿದರು.

ಕೆಲವೊಮ್ಮೆ ಮತ ಕಳ್ಳತನದ ಮೂಲಕ ಒಂದು ಸ್ಥಾನ ಕದಿಯಲಾಗುತ್ತದೆ. ಕೆಲವೊಮ್ಮೆ ಇಡೀ ಸರ್ಕಾರವನ್ನೇ ಕಬಳಿಸಲಾಗುತ್ತದೆ. ಲೋಕಸಭೆಯ 240 ಬಿಜೆಪಿ ಸಂಸದರಲ್ಲಿ ಹಲವರು ಇಂತಹ ಅಕ್ರಮದ ಫಲಾನುಭವಿಗಳು. ಅವರನ್ನು ಬಿಜೆಪಿಯದೇ ಭಾಷೆಯಲ್ಲಿ ‘ಒಳನುಸುಳುವವರು’ ಎಂದು ಕರೆಯಬೇಕೇ? ಎಂದು ಪ್ರಶ್ನಿಸಿದರು.

ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧವೂ ರಾಹುಲ್ ಗಾಂಧಿ ತೀವ್ರ ವಾಗ್ದಾಳಿ ನಡೆಸಿದರು.

ಈ ಸರ್ಕಾರ ಎಲ್ಲದರಲ್ಲೂ ರಾಜಿ ಮಾಡಿಕೊಂಡಿದೆ. ಇದು ಸತ್ಯವನ್ನು ಎದುರಿಸಲು ಹೆದರುತ್ತಿದೆ. ಸಂವಿಧಾನಿಕ ಸಂಸ್ಥೆಗಳನ್ನು ತನ್ನ ನಿಯಂತ್ರಣದಲ್ಲಿಟ್ಟುಕೊಂಡಿದೆ. ಮತದಾರರ ಪಟ್ಟಿ ಮತ್ತು ಚುನಾವಣಾ ಆಯೋಗದ ವಿಶ್ವಾಸಾರ್ಹತೆಯನ್ನು ಹಾಳು ಮಾಡಿದೆ ಎಂದು ಆರೋಪಿಸಿದರು.

ಬಿಜೆಪಿ ಅಧಿಕಾರದಿಂದ ದೂರ ಇಡಲು ಟಿವಿಕೆ ಜತೆ ಮೈತ್ರಿ: ಡಿ.ಕೆ. ಶಿವಕುಮಾರ್

ಬೆಂಗಳೂರು: ಅಹಮದಾಬಾದ್ ನಲ್ಲಿ ದೊಡ್ಡ ಕ್ರೀಡಾಂಗಣವಿದೆ, ಹೆಚ್ಚು ಜನ ಸೇರುತ್ತಾರೆ ಎಂಬ ಉದ್ದೇಶದಿಂದ ಐಪಿಎಲ್ ಫೈನಲ್ ಪಂದ್ಯವನ್ನು ಸ್ಥಳಾಂತರ ಮಾಡಿರಬೇಕು. ಶಾಸಕರಿಗೆ ಟಿಕೆಟ್ ವಿತರಣೆಗೂ ಅಂತಿಮ ಪಂದ್ಯ ಸ್ಥಳಾಂತರಕ್ಕೂ ಸಂಬಂಧವಿಲ್ಲ” ಎಂದು‌ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಹೇಳಿದರು. ಸದಾಶಿವನಗರದ ನಿವಾಸದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಬುಧವಾರ ಪ್ರತಿಕ್ರಿಯೆ ನೀಡಿದರು.

ಶಾಸಕರಿಗೆ ಐಪಿಎಲ್ ಟಿಕೆಟ್ ಬೇಡಿಕೆ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ನಡೆಯಬೇಕಿದ್ದ ಐಪಿಎಲ್ ಫೈನಲ್ ಪಂದ್ಯವನ್ನು ಅಹಮದಾಬಾದಿಗೆ ಸ್ಥಳಾಂತರಿಸಲಾಗಿದೆ ಎಂಬ ವಿಚಾರವಾಗಿ ಕೇಳಿದಾಗ, “ಬೇರೆ ಕಡೆ ಶೇ 50 ರಷ್ಟು ಮೀಸಲಿರುತ್ತದೆ” ಎಂದರು‌.

ಬಿಸಿಸಿಐ ಟಿಕೆಟ್ ವಿಚಾರಕ್ಕೆ ಸ್ಥಳಾಂತರ ನಿರ್ಧಾರ ಮಾಡಿದ್ದೇವೆ ಎಂದು ಹೇಳಿಕೆ ನೀಡಿರುವ ಬಗ್ಗೆ ಕೇಳಿದಾಗ, “ಅವರು ಈ ರೀತಿ ಹೇಳಿಕೆ ನೀಡಲಿ, ನಾನು ಅದಕ್ಕೆ ಸರಿಯಾದ ಉತ್ತರ ಕೊಡುತ್ತೇನೆ” ಎಂದರು.

ಪಕ್ಷದ ತೀರ್ಮಾನದ ಬಗ್ಗೆ ಮಾತನಾಡುವುದಿಲ್ಲ

ದಾವಣಗೆರೆಯಲ್ಲಿ ಮುಸ್ಲಿಂ ನಾಯಕರ ಅಮಾನತನ್ನು ವಾಪಸ್ ಪಡೆಯುವ ಸಾಧ್ಯತೆ ಇದೆಯೇ ಎಂದು ಕೇಳಿದಾಗ, “ನಾನು ಈ ಬಗ್ಗೆ ಏನೂ ಮಾತನಾಡುವುದಿಲ್ಲ. ಪಕ್ಷ ಈ ತೀರ್ಮಾನ ಮಾಡಿದೆ‌. ಸಿಎಂ ರಾಜಕೀಯ ಕಾರ್ಯದರ್ಶಿಯವರನ್ನು ಕೈಬಿಡಬೇಕಾದರೆ, ಆ ಬಗ್ಗೆ ಮುಖ್ಯಮಂತ್ರಿಯವರು ಮಾತನಾಡಿದ್ದರು. ಮುಖ್ಯಮಂತ್ರಿಗಳಿಗೆ ತಮ್ಮದೇ ಆದ ಮಾಹಿತಿ ಇರುತ್ತದೆ.

ಪಕ್ಷದ ಪದಾಧಿಕಾರಿಗಳು ಮಾರ್ಗದರ್ಶನ ಮಾಡಿದ್ದಾರೆ. ಪಕ್ಷ ಅವರಿಗೆ ಕೆಲವು ಜವಾಬ್ದಾರಿಗಳನ್ನು ನೀಡಿತ್ತು. ಅದನ್ನು ಅವರು ಸರಿಯಾಗಿ ನಿಭಾಯಿಸಲಿಲ್ಲ ಅದಕ್ಕೆ ಅವರನ್ನು ಆ ಸ್ಥಾನದಿಂದ ಇಳಿಸಲಾಯಿತು. ಜಬ್ಬಾರ್ ಅವರು ತಾವಾಗಿಯೇ ರಾಜೀನಾಮೆ ನೀಡಿದ್ದರು. ಅದನ್ನು ಸ್ವೀಕಾರ ಮಾಡಿದ್ದೇವೆ ಅಷ್ಟೇ” ಎಂದರು.

ಕರೆದಾಗ ದೆಹಲಿಗೆ ಹೋಗುತ್ತೇವೆ

ಸಿಎಂ, ಡಿಸಿಎಂ ದೆಹಲಿ ಭೇಟಿ ವಿಚಾರ ಕೇಳಿದಾಗ, “ಅವರು (ಹೈಕಮಾಂಡ್) ಕರೆದಾಗ ನಾವು ಹೋಗುತ್ತೇವೆ. ಕರೆಯದೇ ಹೋಗುವುದು ಸರಿಯಲ್ಲ. ಕರೆಯುತ್ತಾರೆ, ಕರೆದಾಗ ನಾವು ಹೋಗುತ್ತೇವೆ” ಎಂದರು.

ತಮಿಳುನಾಡಿನ ಹಿತ, ಜಾತ್ಯಾತೀತ ತತ್ವ ಉಳಿಯಲು ತೀರ್ಮಾನ

ತಮಿಳುನಾಡಿನಲ್ಲಿ ಟಿವಿಕೆಗೆ ಕಾಂಗ್ರೆಸ್ ಬೆಂಬಲ ನೀಡಿರುವ ಬಗ್ಗೆ ಕೇಳಿದಾಗ, “ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಬೇಕು. ಜಾತ್ಯಾತೀತ ಶಕ್ತಿಗಳು ಒಂದಾಗಿ ಇರಬೇಕು ಎಂದು ಈ ತೀರ್ಮಾನ ಮಾಡಲಾಗಿದೆ. ಎಐಡಿಎಂಕೆ, ಬಿಜೆಪಿಯವರು ಎಷ್ಟೇ ಒತ್ತಡ ಹಾಕಿದರು ಟಿವಿಕೆಯವರು ಮೈತ್ರಿ ಮಾಡಿಕೊಳ್ಳಲಿಲ್ಲ. ಜಾತ್ಯಾತೀತ ಶಕ್ತಿ ಉಳಿಯಲು, ತಮಿಳುನಾಡಿನ ಹಿತಕ್ಕಾಗಿ ನಮ್ಮ ಪಕ್ಷ ತೀರ್ಮಾನ ಮಾಡಿದೆ” ಎಂದರು.

error: Content is protected !!