Home Blog

ಕರ್ನಾಟಕ ವಿಧಾನಸಭೆಯ ನೂತನ ಸ್ಪೀಕರ್ ಆಗಿ ಜಿ.ಎಸ್. ಪಾಟೀಲ್ ಅವಿರೋಧ ಆಯ್ಕೆ!

0

ಬೆಂಗಳೂರು: ಕರ್ನಾಟಕ ವಿಧಾನಸಭೆಯ ನೂತನ ಸ್ಪೀಕರ್‌ ಆಗಿ ಜಿ.ಎಸ್. ಪಾಟೀಲ್ ಸರ್ವಾನುಮತದಿಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸ್ಪೀಕರ್‌ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಸಂಪ್ರದಾಯದಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹಾಗೂ ವಿಪಕ್ಷ ನಾಯಕ ಆರ್. ಅಶೋಕ್‌ ಅವರು ಜಿ.ಎಸ್. ಪಾಟೀಲ್ ಅವರನ್ನು ಸ್ಪೀಕರ್‌ ಪೀಠಕ್ಕೆ ಕರೆತಂದು ಕೂರಿಸಿದರು.

ಸ್ಪೀಕರ್‌ ಆಯ್ಕೆ ಪ್ರಕ್ರಿಯೆ ಆರಂಭಕ್ಕೂ ಮುನ್ನ ಹಂಗಾಮಿ ಸ್ಪೀಕರ್‌ ಜಯಚಂದ್ರ ಅವರು ಸದನದಲ್ಲಿ ರೂಲಿಂಗ್ ನೀಡಿದರು. ಬಳಿಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಸ್ಪೀಕರ್‌ ಸ್ಥಾನಕ್ಕೆ ಜಿ.ಎಸ್. ಪಾಟೀಲ್ ಅವರ ಹೆಸರನ್ನು ಪ್ರಸ್ತಾಪಿಸಿದರು.

ಈ ಪ್ರಸ್ತಾವನೆಗೆ ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ಅನುಮೋದನೆ ನೀಡಿದರು. ಬಳಿಕ ಹಂಗಾಮಿ ಸ್ಪೀಕರ್‌ ಪ್ರಸ್ತಾವನೆಯನ್ನು ಮತಕ್ಕೆ ಹಾಕಿದರು. ಪ್ರಸ್ತಾವನೆ ಅಂಗೀಕಾರವಾದ ನಂತರ ಜಿ.ಎಸ್. ಪಾಟೀಲ್ ಅವರು ವಿಧಾನಸಭೆಯ ನೂತನ ಸ್ಪೀಕರ್‌ ಆಗಿ ಅವಿರೋಧವಾಗಿ ಆಯ್ಕೆಯಾದರು. ಸ್ಪೀಕರ್‌ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಸದನದ ಕಲಾಪಕ್ಕೆ ವಿಪಕ್ಷ ಬಿಜೆಪಿ ಸದಸ್ಯರು ಪ್ರವೇಶಿಸಿದರು.

‘ರಾಜಕಾರಣದಲ್ಲಿ ಯಾವುದೂ ಶಾಶ್ವತವಲ್ಲ’

ಸ್ಪೀಕರ್‌ ಆಯ್ಕೆಗೂ ಮುನ್ನ ಸದನವನ್ನು ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ತಮ್ಮ ರಾಜಕೀಯ ಚಿಂತನೆಗಳು ಹಾಗೂ ಯೋಜನೆಗಳ ಬಗ್ಗೆ ಮುಂದಿನ ದಿನಗಳಲ್ಲಿ ಮಾತನಾಡುವುದಾಗಿ ಹೇಳಿದರು.

ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಯಾರಿಗೂ ತೊಂದರೆ ನೀಡುವ ಉದ್ದೇಶ ತಮ್ಮದಲ್ಲ. ಯಾರಿಗೆ ಎಷ್ಟು ಗೌರವ ನೀಡಬೇಕೋ ಅಷ್ಟೇ ಗೌರವ ನೀಡುತ್ತೇನೆ ಎಂದು ಅವರು ಹೇಳಿದರು.

ಹಿಂದೆ ಇದೇ ಸದನದಲ್ಲಿ ಸಿದ್ದರಾಮಯ್ಯ ಅವರೊಂದಿಗೆ ಕುಳಿತುಕೊಂಡು, ‘ಒನ್ ಮ್ಯಾನ್ ವಿತ್ ಕರೇಜ್ ಮೇಕ್ಸ್ ಮೇಜಾರಿಟಿ’ ಎಂದು ಹೇಳಿದ್ದನ್ನು ಡಿಕೆ ಶಿವಕುಮಾರ್‌ ನೆನಪಿಸಿಕೊಂಡರು. ಸಿದ್ದರಾಮಯ್ಯ ಸೇರಿದಂತೆ ತಮ್ಮ ಸಂಖ್ಯೆ 136 ಎಂದು ಹೇಳಿದ್ದೆ. ನಾವೆಲ್ಲರೂ ಒಂದಾಗಿ, ಒಗ್ಗಟ್ಟಿನಿಂದ ಇರಲಿದ್ದೇವೆ ಎಂದು ಅವರು ತಿಳಿಸಿದರು. 2028ರ ಚುನಾವಣೆಯಲ್ಲಿ ಏನಾಗಬೇಕು ಎಂಬುದನ್ನು ರಾಜ್ಯದ ಜನರು ತೀರ್ಮಾನಿಸಲಿದ್ದಾರೆ ಎಂದು ಡಿಕೆ ಶಿವಕುಮಾರ್‌ ಹೇಳಿದರು.

‘ನಾನು ಫುಟ್‌ಬಾಲ್ ಆಡೋನಲ್ಲ, ಚೆಸ್ ಆಡೋನೂ ಅಲ್ಲ’

ತಮಗೆ ರಾಜಕಾರಣ ಗೊತ್ತಿದೆ ಎಂದು ಹೇಳಿದ ಡಿಕೆ ಶಿವಕುಮಾರ್‌, ‘ನಾನು ಫುಟ್‌ಬಾಲ್ ಆಡುವವನಲ್ಲ, ಚೆಸ್ ಆಡುವವನೂ ಅಲ್ಲ’ ಎಂದು ರಾಜಕೀಯದ ಬಗ್ಗೆ ತಮ್ಮದೇ ಶೈಲಿಯಲ್ಲಿ ಮಾತನಾಡಿದರು.

ವಿಪಕ್ಷಗಳು ಹಾಗೂ ಆಡಳಿತ ಪಕ್ಷದವರು ಒಟ್ಟಾಗಿ ರಾಜ್ಯದ ಹಿತಕ್ಕಾಗಿ ಕೆಲಸ ಮಾಡಬೇಕು ಎಂದು ಅವರು ಕರೆ ನೀಡಿದರು. ರಾಜಕಾರಣದಲ್ಲಿ ಯಾವುದೂ ಶಾಶ್ವತವಲ್ಲ. ಇಂದು ಇಲ್ಲಿರುವವರು ನಾಳೆ ಅಲ್ಲಿರಬಹುದು, ಅಲ್ಲಿರುವವರು ಇಲ್ಲಿಗೆ ಬರಬಹುದು. ನಾವು ಎಲ್ಲರೂ ರಾಜ್ಯದ ಹಿತಕ್ಕಾಗಿ ಜನರಿಂದ ಆಯ್ಕೆಯಾಗಿದ್ದೇವೆ ಎಂದು ಡಿಕೆ ಶಿವಕುಮಾರ್‌ ಹೇಳಿದರು.

‘ವಿಶ್ವಾಸದ ಮೇಲೆ ಬದುಕಬೇಕು’

ಹಂಗಾಮಿ ಸ್ಪೀಕರ್‌ ಜಯಚಂದ್ರ ಅವರನ್ನು ಉದ್ದೇಶಿಸಿ ಮಾತನಾಡಿದ ಡಿಕೆ ಶಿವಕುಮಾರ್‌, ನೀವು ಹಿರಿಯರು. ದೇವರು ನಿಮ್ಮನ್ನು ಈ ಸ್ಥಾನದಲ್ಲಿ ಕೂರಿಸಿದ್ದಾನೆ ಎಂದು ಹೇಳಿದರು.

ಈ ಸ್ಥಾನದಲ್ಲಿ ಕುಳಿತಿದ್ದವರು ಮುಂದೆ ಮುಖ್ಯಮಂತ್ರಿಗಳಾಗಿದ್ದಾರೆ ಎಂದು ಉದಾಹರಣೆ ನೀಡಿದ ಅವರು, ಎಸ್.ಎಂ. ಕೃಷ್ಣ ಹಾಗೂ ಜಗದೀಶ್ ಶೆಟ್ಟರ್‌ ಅವರು ಸ್ಪೀಕರ್‌ ಸ್ಥಾನದಲ್ಲಿದ್ದು ಬಳಿಕ ಮುಖ್ಯಮಂತ್ರಿಗಳಾದ ಸಂದರ್ಭವನ್ನು ಉಲ್ಲೇಖಿಸಿದರು.

ಹಾಗೆಯೇ ಖಾದರ್‌ ಅವರು ಸ್ಪೀಕರ್‌ ಸ್ಥಾನದಲ್ಲಿ ಕುಳಿತಿದ್ದರು. ಇದೀಗ ಅವರು ‘ಡಬಲ್ ಧಮಾಕಾ’ ಪಡೆದಿದ್ದಾರೆ ಎಂದು ಡಿಕೆ ಶಿವಕುಮಾರ್‌ ಹಾಸ್ಯಮಿಶ್ರಿತವಾಗಿ ಹೇಳಿದರು. ‘ವಿಶ್ವಾಸ ಇಡಿ, ವಿಶ್ವಾಸದ ಮೇಲೆ ಬದುಕಬೇಕು’ ಎಂದು ಹೇಳುವ ಮೂಲಕ ಡಿಕೆ ಶಿವಕುಮಾರ್‌ ಅವರು ಸದನದ ಸದಸ್ಯರಿಗೆ ಕಿವಿಮಾತು ಹೇಳಿದರು.

ವೀರೇಶ್ವರ ಪುಣ್ಯಾಶ್ರಮದ ಹುಂಡಿಯಲ್ಲಿ ₹6.36 ಲಕ್ಷ ನಗದು, 1.3 ಗ್ರಾಂ ಚಿನ್ನ: ಒಂದೂವರೆ ತಿಂಗಳ ಸಂಗ್ರಹದ ಎಣಿಕೆ ಕಾರ್ಯ ಯಶಸ್ವಿ

0

ಗದಗ: ನಗರದ ಶ್ರೀ ವೀರೇಶ್ವರ ಪುಣ್ಯಾಶ್ರಮದಲ್ಲಿ ಸುಮಾರು ಒಂದೂವರೆ ತಿಂಗಳಿನಿಂದ ಸಂಗ್ರಹವಾಗಿದ್ದ ಕಾಣಿಕೆ ಹುಂಡಿಗಳ ಎಣಿಕೆ ಕಾರ್ಯ ಆ.10ರಂದು ನೆರವೇರಿದ್ದು, ಒಟ್ಟು 6,36,616 ರೂ. ನಗದು ಹಾಗೂ 1.3 ಗ್ರಾಂ ಚಿನ್ನ ಸಂಗ್ರಹವಾಗಿರುವುದು ತಿಳಿದುಬಂದಿದೆ.

ಶ್ರೀ ವೀರೇಶ್ವರ ಪುಣ್ಯಾಶ್ರಮದ ಪ.ಪೂಜ್ಯ ಕಲ್ಲಯ್ಯಜ್ಜನವರ ಸಮ್ಮುಖದಲ್ಲಿ ಇದೇ ಮೊದಲ ಬಾರಿಗೆ ಟ್ರಸ್ಟಿಗಳು ಹಾಗೂ ಸಂಬಂಧಪಟ್ಟವರ ಉಪಸ್ಥಿತಿಯಲ್ಲಿ ಕಾಣಿಕೆ ಹುಂಡಿಗಳ ಎಣಿಕೆ ಕಾರ್ಯ ನಡೆಸಲಾಯಿತು. ಭಕ್ತರು ಸಲ್ಲಿಸಿದ್ದ ಕಾಣಿಕೆಗಳ ಎಣಿಕೆ ಕಾರ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಯಿತು.

ಹುಂಡಿ ಎಣಿಕೆ ಸಂದರ್ಭದಲ್ಲಿ 1.3 ಗ್ರಾಂ ಚಿನ್ನದ ಜೊತೆಗೆ 6,36,616 ರೂ. ನಗದು ಸಂಗ್ರಹವಾಗಿರುವುದು ಲೆಕ್ಕಪತ್ರದಲ್ಲಿ ದಾಖಲಾಗಿದೆ. ಎಣಿಕೆ ಕಾರ್ಯದಲ್ಲಿ ಶ್ರೀ ವೀರೇಶ್ವರ ಪುಣ್ಯಾಶ್ರಮದ ಸೋಲ್ ಟ್ರಸ್ಟ್ ಅಧ್ಯಕ್ಷ ನಿಂಗಪ್ಪ ಕೆಂಗಾರ, ಉಪಾಧ್ಯಕ್ಷ ಪ್ರಕಾಶ ಬಸರಿಗೆಡ, ಸಂಗಮೇಶ ದುಂದೂರ, ಶಿವರುದ್ರಪ್ಪ ಇಟಗಿ, ಪಿ.ಸಿ. ಹಿರೇಮಠ, ಚನ್ನಬಸಯ್ಯ ಬಂಕಾಪೂರಮಠ, ಪುಣ್ಯಾಶ್ರಮದ ಹಳೆಯ ವಿದ್ಯಾರ್ಥಿ ಸಾಧಕರ ಪ್ರತಿನಿಧಿ ಸಂದೀಪ ಸೇರಿದಂತೆ ಸಿಬ್ಬಂದಿ ವರ್ಗದವರು ಸಹಕರಿಸಿದರು.

ಭಕ್ತರು ಸಲ್ಲಿಸಿದ ಕಾಣಿಕೆಗಳ ಮೂಲಕ ಸಂಗ್ರಹವಾದ ಹಣ ಹಾಗೂ ಚಿನ್ನದ ವಿವರಗಳನ್ನು ಹುಂಡಿ ಎಣಿಕೆ ಕಾರ್ಯದ ಮೂಲಕ ದಾಖಲಿಸಲಾಗಿದೆ ಎಂದು ಪುಣ್ಯಾಶ್ರಮದ ಪ್ರಕಟಣೆ ತಿಳಿಸಿದೆ.

ಶಾಸಕ ಸುರೇಶ್ ಗೌಡ ಪುತ್ರಿಯಿಂದ ದರ್ಪ: ಮಹಿಳಾ PSI ಗೆ ಕಪಾಳಮೋಕ್ಷ

0

ಮಂಡ್ಯ: ದೇವಸ್ಥಾನದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮಹಿಳಾ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್‌ಗೆ ಹಲ್ಲೆ ನಡೆಸಿ, ಕಪಾಳಕ್ಕೆ ಹೊಡೆದಿರುವ ಆರೋಪ ಕೇಳಿಬಂದಿರುವ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಆರತಿ ಉಕ್ಕಡ ಗ್ರಾಮದಲ್ಲಿ ನಡೆದಿದೆ. ತುಮಕೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಶಾಸಕ ಬಿ. ಸುರೇಶ್‌ಗೌಡ ಅವರ ಪುತ್ರಿ ಐಶ್ವರ್ಯ ವಿರುದ್ಧ ಈ ಆರೋಪ ಕೇಳಿಬಂದಿದ್ದು, ಈ ಸಂಬಂಧ ಕ್ಯಾತನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬುಧವಾರ (ಆ.12) ಭೀಮನ ಅಮಾವಾಸ್ಯೆ ಹಿನ್ನೆಲೆಯಲ್ಲಿ ಆರತಿ ಉಕ್ಕಡದಲ್ಲಿರುವ ಪ್ರಸಿದ್ಧ ಶ್ರೀ ಲಕ್ಷ್ಮಿ ನರಸಿಂಹಸ್ವಾಮಿ ದೇವಸ್ಥಾನಕ್ಕೆ ಸಾವಿರಾರು ಭಕ್ತರು ಆಗಮಿಸಿದ್ದರು. ಈ ವೇಳೆ ಶಾಸಕ ಬಿ. ಸುರೇಶ್‌ಗೌಡ ಅವರ ಪುತ್ರಿ ಐಶ್ವರ್ಯ ಕೂಡ ದೇವಸ್ಥಾನಕ್ಕೆ ಬಂದಿದ್ದರು ಎನ್ನಲಾಗಿದೆ.

ಆರೋಪದ ಪ್ರಕಾರ, ಪ್ರಭಾವ ಬಳಸಿ ಐಶ್ವರ್ಯ ಅವರು ವಿಐಪಿ ಸಾಲಿನಲ್ಲಿ ಪ್ರವೇಶ ಪಡೆದ ಬಳಿಕ ನೇರವಾಗಿ ದೇವರ ಗರ್ಭಗುಡಿಯೊಳಗೆ ತೆರಳಲು ಮುಂದಾಗಿದ್ದಾರೆ. ಈ ವೇಳೆ ದೇವಸ್ಥಾನದ ಭದ್ರತಾ ಕರ್ತವ್ಯದಲ್ಲಿದ್ದ ಕ್ಯಾತನಹಳ್ಳಿ ಪೊಲೀಸ್ ಠಾಣೆಯ ಪಿಎಸ್‌ಐ ಸವಿತಾ ಅವರು ಅವರನ್ನು ತಡೆದಿದ್ದಾರೆ.

ದೇವಸ್ಥಾನದಲ್ಲಿ ಭಕ್ತರ ಸಂಖ್ಯೆ ಹೆಚ್ಚಿರುವುದರಿಂದ ಸದ್ಯ ಗರ್ಭಗುಡಿಯೊಳಗೆ ತೆರಳಲು ಸಾಧ್ಯವಿಲ್ಲ ಎಂದು ಪಿಎಸ್‌ಐ ಸವಿತಾ ತಿಳಿಸಿದ್ದರು ಎನ್ನಲಾಗಿದೆ. ಇದೇ ವೇಳೆ ಮಫ್ತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸರ್ಕಲ್ ಇನ್ಸ್‌ಪೆಕ್ಟರ್ ಲಕ್ಷ್ಮಿ ಅವರು ಗರ್ಭಗುಡಿಯ ಕಡೆಗೆ ತೆರಳಿದ್ದಾರೆ. ಇದನ್ನು ಗಮನಿಸಿದ ಐಶ್ವರ್ಯ, ಅವರನ್ನು ಒಳಗೆ ಹೇಗೆ ಬಿಡಲಾಗಿದೆ ಎಂದು ಪಿಎಸ್‌ಐ ಸವಿತಾ ಅವರನ್ನು ಪ್ರಶ್ನಿಸಿದ್ದಾರೆ ಎನ್ನಲಾಗಿದೆ.

ಅದಕ್ಕೆ ಪಿಎಸ್‌ಐ ಸವಿತಾ, ಅವರು ನಮ್ಮ ಸರ್ಕಲ್ ಇನ್ಸ್‌ಪೆಕ್ಟರ್ ಆಗಿದ್ದು, ಕರ್ತವ್ಯದಲ್ಲಿರುವ ಕಾರಣ ಒಳಗೆ ತೆರಳುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ ತಮಗೂ ಗರ್ಭಗುಡಿಯೊಳಗೆ ತೆರಳಲು ಅವಕಾಶ ನೀಡಬೇಕು ಎಂದು ಐಶ್ವರ್ಯ ಪಟ್ಟು ಹಿಡಿದಿದ್ದು, ಈ ವಿಚಾರವಾಗಿ ಇಬ್ಬರ ನಡುವೆ ವಾಗ್ವಾದ ನಡೆದಿದೆ ಎನ್ನಲಾಗಿದೆ.

ವಾಗ್ವಾದ ತೀವ್ರಗೊಂಡ ಸಂದರ್ಭದಲ್ಲಿ ಐಶ್ವರ್ಯ ಅವರು ಕರ್ತವ್ಯದಲ್ಲಿದ್ದ ಪಿಎಸ್‌ಐ ಸವಿತಾ ಅವರ ಕಪಾಳಕ್ಕೆ ಹೊಡೆದಿದ್ದಾರೆ ಎಂದು ಆರೋಪಿಸಲಾಗಿದೆ.

ಘಟನೆಯ ಬಳಿಕ ಸರ್ಕಾರಿ ಅಧಿಕಾರಿಯ ಕರ್ತವ್ಯಕ್ಕೆ ಅಡ್ಡಿಪಡಿಸಿ, ಹಲ್ಲೆ ನಡೆಸಿದ ಆರೋಪದಡಿ ಐಶ್ವರ್ಯ ವಿರುದ್ಧ ಕ್ಯಾತನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಮುಂದುವರಿಸಿದ್ದು, ದೇವಸ್ಥಾನದಲ್ಲಿದ್ದವರ ಹೇಳಿಕೆಗಳು ಹಾಗೂ ಲಭ್ಯವಿರುವ ಇತರ ಮಾಹಿತಿಯನ್ನು ಪರಿಶೀಲಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಲಾಕಪ್ ಸಾವಿನ ಪ್ರಕರಣ: ಇಬ್ಬರು ಪೊಲೀಸರು ಸಿಐಡಿ ವಶಕ್ಕೆ

0

ಹಗರಿಬೊಮ್ಮನಹಳ್ಳಿ: ಪಟ್ಟಣ ಪೊಲೀಸ್ ಠಾಣೆಯಲ್ಲಿ ಕಟ್ಟಡ ಕಾರ್ಮಿಕ ಖಲೀಲುಲ್ಲಾ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾಗಿರುವ ಇಬ್ಬರು ಪೊಲೀಸರನ್ನು ಸಿಐಡಿ ಅಧಿಕಾರಿಗಳು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.

ಹೆಡ್ ಕಾನ್ ಸ್ಟೇಬಲ್ ರಾಘವೇಂದ್ರ ಹಾಗೂ ಕಾನ್ ಸ್ಟೇಬಲ್ ವೆಂಕಟೇಶ್ ಅವರನ್ನು ವಿಚಾರಣೆಗಾಗಿ ಬೆಂಗಳೂರಿನ ಸಿಐಡಿ ಕೇಂದ್ರ ಕಚೇರಿಗೆ ಕರೆದೊಯ್ಯಲಾಗಿದೆ.

ಠಾಣೆಯಲ್ಲಿ ಪೊಲೀಸರೇ ಹೊಡೆದು ಖಲೀಲುಲ್ಲಾ ಅವರನ್ನು ಸಾಯಿಸಿದ್ದಾರೆ ಎಂದು ಮೃತರ ಪತ್ನಿ ಶೈನಾಜ್ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಇಬ್ಬರು ಪೊಲೀಸರನ್ನು ಬಂಧಿಸಿ ಹೂವಿನಹಡಗಲಿ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿರಿಸಲಾಗಿತ್ತು.

ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿದ ಬಳಿಕ, ಸಿಐಡಿ ತಂಡ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿ ಇಬ್ಬರು ಆರೋಪಿಗಳನ್ನು ತಮ್ಮ ವಶಕ್ಕೆ ಪಡೆದುಕೊಂಡಿದೆ. ಬಳಿಕ ಅವರನ್ನು ವಿಚಾರಣೆಗೊಳಪಡಿಸಿ ಪ್ರಕರಣದ ತನಿಖೆಯನ್ನು ಮುಂದುವರಿಸಿದೆ.

ಆಸ್ತಿ ವಿವಾದ ಬಗೆಹರಿಸಲು SC/ST ಆಯೋಗಕ್ಕೆ ಅಧಿಕಾರವಿಲ್ಲ: ಹೈಕೋರ್ಟ್

0

ಬೆಂಗಳೂರು: ಸ್ಥಿರಾಸ್ತಿಗಳಿಗೆ ಸಂಬಂಧಿಸಿದ ವಿವಾದಗಳನ್ನು ಬಗೆಹರಿಸುವುದು, ಕಂದಾಯ ದಾಖಲೆಗಳಲ್ಲಿ ಬದಲಾವಣೆ ಮಾಡುವುದು ಹಾಗೂ ಅರಣ್ಯ ಭೂಮಿಯನ್ನು ಅರಣ್ಯೇತರ ಭೂಮಿ ಎಂದು ಘೋಷಿಸುವ ಅಧಿಕಾರ ರಾಜ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಆಯೋಗಕ್ಕೆ ಇಲ್ಲ ಎಂದು ಕರ್ನಾಟಕ ಹೈಕೋರ್ಟ್ ಸ್ಪಷ್ಟಪಡಿಸಿದೆ.

ರಾಜ್ಯ ಸರ್ಕಾರದ ಅರಣ್ಯ ಇಲಾಖೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ಏಕಸದಸ್ಯ ಪೀಠ ಈ ಮಹತ್ವದ ಆದೇಶ ನೀಡಿದೆ.

2002ರ ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಆಯೋಗದ ಕಾಯ್ದೆಯಡಿ ಆಯೋಗಕ್ಕೆ ಸೀಮಿತ ಅಧಿಕಾರಗಳಿವೆ ಎಂದು ಹೈಕೋರ್ಟ್ ತಿಳಿಸಿದೆ. ಆಯೋಗವು ತನಿಖೆ ನಡೆಸುವುದು, ಸಲಹೆ ನೀಡುವುದು, ಮೇಲ್ವಿಚಾರಣೆ ಮಾಡುವುದು ಹಾಗೂ ಶಿಫಾರಸು ಮಾಡುವ ಅಧಿಕಾರವನ್ನು ಹೊಂದಿದೆ. ಆದರೆ ಸಿವಿಲ್ ನ್ಯಾಯಾಲಯದಂತೆ ಆಸ್ತಿ ಹಕ್ಕುಗಳಿಗೆ ಸಂಬಂಧಿಸಿದ ವಿವಾದಗಳನ್ನು ವಿಚಾರಣೆ ನಡೆಸಿ ಅಂತಿಮ ತೀರ್ಪು ನೀಡುವ ಅಧಿಕಾರ ಆಯೋಗಕ್ಕಿಲ್ಲ ಎಂದು ಪೀಠ ಸ್ಪಷ್ಟಪಡಿಸಿದೆ.

ಅರಣ್ಯ ಭೂಮಿ ಕುರಿತು ನಿರ್ಧರಿಸುವ ಅಧಿಕಾರವಿಲ್ಲ

ಯಾವುದೇ ಜಮೀನು ಅರಣ್ಯ ಭೂಮಿಗೆ ಸೇರಿದ್ದೇ ಅಥವಾ ಇಲ್ಲವೇ ಎಂಬ ಬಗ್ಗೆ ಗಂಭೀರ ಪ್ರಶ್ನೆಗಳು ಹಾಗೂ ದಾಖಲೆಗಳಿಗೆ ಸಂಬಂಧಿಸಿದ ವಿವಾದಗಳಿದ್ದರೆ, ಅಂತಹ ವಿಚಾರಗಳನ್ನು ನಿರ್ಧರಿಸುವ ಅಧಿಕಾರ ಆಯೋಗಕ್ಕೆ ಇರುವುದಿಲ್ಲ ಎಂದು ಹೈಕೋರ್ಟ್ ಹೇಳಿದೆ.

ಅರಣ್ಯ ಭೂಮಿ ಹಾಗೂ ಕಂದಾಯ ದಾಖಲೆಗಳಿಗೆ ಸಂಬಂಧಿಸಿದ ಇಂತಹ ವಿವಾದಗಳನ್ನು ಸಂಬಂಧಪಟ್ಟ ಸಮರ್ಥ ಪ್ರಾಧಿಕಾರಗಳು ಅಥವಾ ನ್ಯಾಯಾಲಯಗಳೇ ಕಾನೂನುಬದ್ಧವಾಗಿ ನಿರ್ಧರಿಸಬೇಕು ಎಂದು ಪೀಠ ತಿಳಿಸಿದೆ.

ದೂರುದಾರರು ಪರಿಶಿಷ್ಟ ಜಾತಿಗೆ ಸೇರಿದವರು ಎಂಬ ಕಾರಣಕ್ಕೆ ಮಾತ್ರ ಸಾಮಾನ್ಯ ಆಸ್ತಿ ಮತ್ತು ಕಂದಾಯ ವಿವಾದಗಳನ್ನು ಬಗೆಹರಿಸುವ ಅಧಿಕಾರವನ್ನು ಆಯೋಗ ಚಲಾಯಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಈ ಹಿನ್ನೆಲೆಯಲ್ಲಿ ಪ್ರಕರಣದಲ್ಲಿ ರಾಜ್ಯ ಎಸ್‌ಸಿ/ಎಸ್‌ಟಿ ಆಯೋಗ ನೀಡಿದ್ದ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿದೆ.

ಏನಿದು ಪ್ರಕರಣ?

ತುಮಕೂರು ಜಿಲ್ಲೆಯ ಸಿರಾ ತಾಲೂಕಿನ ಕಳ್ಳಂಬೆಳ್ಳ ಹೋಬಳಿಯ ಶೀಬಿ ಗ್ರಾಮದ ವಿವಿಧ ಸರ್ವೆ ನಂಬರ್‌ಗಳಿಗೆ ಸೇರಿದ ಜಮೀನುಗಳ ಖಾತೆ ಹಾಗೂ ಸ್ವಾಧೀನಕ್ಕೆ ಸಂಬಂಧಿಸಿದಂತೆ ವಿವಾದ ಉಂಟಾಗಿತ್ತು.

ಈ ಜಮೀನುಗಳು ಅರಣ್ಯ ಇಲಾಖೆಗೆ ಸೇರಿವೆ ಎಂದು ದಾಖಲೆಗಳಲ್ಲಿ ಉಲ್ಲೇಖಿಸಲಾಗಿತ್ತು. ಆದರೆ ಅರಣ್ಯ ಇಲಾಖೆಯ ದಾಖಲೆಗಳಿಂದ ಈ ಜಮೀನುಗಳನ್ನು ಕೈಬಿಟ್ಟು, ಅರ್ಜಿದಾರರ ಹೆಸರಿಗೆ ಖಾತೆ ಮಾಡಿಕೊಡುವಂತೆ ರಾಜ್ಯ ಎಸ್‌ಸಿ/ಎಸ್‌ಟಿ ಆಯೋಗವು 2023ರ ಮೇ 18ರಂದು ಆದೇಶ ಹೊರಡಿಸಿತ್ತು.

ಆಯೋಗದ ಈ ಆದೇಶವನ್ನು ಪ್ರಶ್ನಿಸಿ ಕಂದಾಯ ಇಲಾಖೆ ಹಾಗೂ ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳು ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ಆಯೋಗದ ಅಧಿಕಾರ ವ್ಯಾಪ್ತಿಯನ್ನು ಸ್ಪಷ್ಟಪಡಿಸಿ, ಆಸ್ತಿ ಹಕ್ಕು, ಕಂದಾಯ ದಾಖಲೆ ಹಾಗೂ ಅರಣ್ಯ ಭೂಮಿಗೆ ಸಂಬಂಧಿಸಿದ ವಿವಾದಗಳನ್ನು ಆಯೋಗ ಸಿವಿಲ್ ನ್ಯಾಯಾಲಯದಂತೆ ನಿರ್ಧರಿಸಲು ಸಾಧ್ಯವಿಲ್ಲ ಎಂದು ಹೇಳಿದೆ.

ಬೌಲಿಂಗ್ ವೈಫಲ್ಯದಿಂದ ಕಂಗಾಲಾದ ಮುಂಬೈ ಇಂಡಿಯನ್ಸ್: 2027ರ ಹರಾಜಿಗೂ ಮುನ್ನ 3 ಬೌಲರ್ʼಗಳಿಗೆ ಗೇಟ್ ಪಾಸ್!?

0

ಮುಂಬೈ: ಐದು ಬಾರಿ ಐಪಿಎಲ್ ಚಾಂಪಿಯನ್ ಪಟ್ಟಕ್ಕೇರಿರುವ ಮುಂಬೈ ಇಂಡಿಯನ್ಸ್‌ ಅತ್ಯಂತ ಯಶಸ್ವಿ ತಂಡಗಳ ಪೈಕಿ ಒಂದಾಗಿದೆ. ಆದರೆ 2021ರಿಂದೀಚೆಗೆ ತಂಡದ ಪ್ರದರ್ಶನದಲ್ಲಿ ನಿರೀಕ್ಷಿತ ಸ್ಥಿರತೆ ಕಂಡುಬರುತ್ತಿಲ್ಲ. ಕಳೆದ ಕೆಲ ವರ್ಷಗಳಿಂದ ನೀತಾ ಅಂಬಾನಿ ಮಾಲೀಕತ್ವದ ಮುಂಬೈ ಇಂಡಿಯನ್ಸ್ ನೀರಸ ಪ್ರದರ್ಶನ ನೀಡುತ್ತಿದ್ದು, ಇದೀಗ 2027ರ ಐಪಿಎಲ್‌ಗೂ ಮುನ್ನ ತಂಡದಲ್ಲಿ ದೊಡ್ಡ ಮಟ್ಟದ ಬದಲಾವಣೆ ನಡೆಯುವ ಸಾಧ್ಯತೆ ಎದುರಾಗಿದೆ.

ಮೇಲ್ನೋಟಕ್ಕೆ ಮುಂಬೈ ಇಂಡಿಯನ್ಸ್‌ನ ಬ್ಯಾಟಿಂಗ್ ವಿಭಾಗ ಬಲಿಷ್ಠವಾಗಿ ಕಾಣಿಸಿಕೊಂಡರೂ, ಬೌಲಿಂಗ್ ವಿಭಾಗದ ವೈಫಲ್ಯ ತಂಡಕ್ಕೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. 2026ರ ಐಪಿಎಲ್‌ನಲ್ಲಿ ಹಾರ್ದಿಕ್ ಪಾಂಡ್ಯ ನಾಯಕತ್ವದ ಮುಂಬೈ ಇಂಡಿಯನ್ಸ್ 14 ಪಂದ್ಯಗಳಲ್ಲಿ 10 ಸೋಲುಗಳನ್ನು ಕಂಡು ಅಂಕಪಟ್ಟಿಯಲ್ಲಿ 9ನೇ ಸ್ಥಾನಕ್ಕೆ ಕುಸಿದು ತನ್ನ ಅಭಿಯಾನ ಮುಗಿಸಿತ್ತು.

ಹೀಗಾಗಿ ಮುಂಬರುವ ಐಪಿಎಲ್ ಹರಾಜಿಗೂ ಮುನ್ನ ತಂಡದ ಬೌಲಿಂಗ್ ವಿಭಾಗದಲ್ಲಿ ಮಹತ್ವದ ಬದಲಾವಣೆ ಮಾಡಲು ಫ್ರಾಂಚೈಸಿ ಮುಂದಾಗಬಹುದು ಎಂಬ ಚರ್ಚೆ ಆರಂಭವಾಗಿದೆ. ಅದರಲ್ಲೂ ದುಬಾರಿ ಮೊತ್ತಕ್ಕೆ ತಂಡದಲ್ಲೇ ಉಳಿಸಿಕೊಂಡಿದ್ದ ಬೌಲರ್‌ಗಳನ್ನೇ ಬಿಡುಗಡೆ ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

1. ದೀಪಕ್ ಚಹರ್

ಭಾರತದ ವೇಗಿ ದೀಪಕ್ ಚಹರ್ ಅವರನ್ನು ಮುಂಬೈ ಇಂಡಿಯನ್ಸ್ ₹9.25 ಕೋಟಿಗೆ ರಿಟೇನ್ ಮಾಡಿಕೊಂಡಿತ್ತು. ಗಾಯದ ಸಮಸ್ಯೆಗಳ ನಡುವೆಯೂ ಚಹರ್ ಮೇಲೆ ಫ್ರಾಂಚೈಸಿ ವಿಶ್ವಾಸವಿಟ್ಟಿತ್ತು.

ಆದರೆ 2026ರ ಐಪಿಎಲ್‌ನಲ್ಲಿ ಚಹರ್ ಮುಂಬೈ ಪರ ಕೇವಲ ಮೂರು ಪಂದ್ಯಗಳಲ್ಲಿ ಕಾಣಿಸಿಕೊಂಡು ಒಂದು ವಿಕೆಟ್ ಮಾತ್ರ ಪಡೆಯಲು ಸಾಧ್ಯವಾಯಿತು. ನಿರೀಕ್ಷಿತ ಪ್ರದರ್ಶನ ನೀಡಲು ವಿಫಲರಾಗಿರುವ ಹಿನ್ನೆಲೆಯಲ್ಲಿ ಮುಂಬರುವ ಹರಾಜಿಗೂ ಮುನ್ನ ಚಹರ್ ಅವರನ್ನು ಬಿಡುಗಡೆ ಮಾಡುವ ಸಾಧ್ಯತೆ ಹೆಚ್ಚಿದೆ ಎನ್ನಲಾಗುತ್ತಿದೆ.

2. ಶಾರ್ದೂಲ್ ಠಾಕೂರ್

2026ರ ಐಪಿಎಲ್‌ಗೂ ಮುನ್ನ ಮುಂಬೈ ಇಂಡಿಯನ್ಸ್ ₹2 ಕೋಟಿ ನೀಡಿ ಲಖನೌ ಸೂಪರ್ ಜೈಂಟ್ಸ್‌ನಿಂದ ಶಾರ್ದೂಲ್ ಠಾಕೂರ್ ಅವರನ್ನು ತಂಡಕ್ಕೆ ಕರೆತಂದಿತ್ತು.

ಶಾರ್ದೂಲ್ ಅವರ ಅನುಭವ ಹಾಗೂ ಆಲ್‌ರೌಂಡ್ ಸಾಮರ್ಥ್ಯದ ಮೇಲೆ ಮುಂಬೈ ಫ್ರಾಂಚೈಸಿ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿತ್ತು. ಆದರೆ 2026ರ ಆವೃತ್ತಿಯಲ್ಲಿ ಮುಂಬೈ ಪರ ಏಳು ಪಂದ್ಯಗಳನ್ನು ಆಡಿದ ಶಾರ್ದೂಲ್ ಕೇವಲ ಆರು ವಿಕೆಟ್‌ಗಳನ್ನು ಪಡೆದರು.

ತಂಡದ ನಿರೀಕ್ಷೆಗೆ ತಕ್ಕಂತೆ ಪ್ರದರ್ಶನ ನೀಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಶಾರ್ದೂಲ್ ಠಾಕೂರ್ ಅವರನ್ನು ಬಿಡುಗಡೆ ಮಾಡುವ ಸಾಧ್ಯತೆಯೂ ಇದೆ ಎಂದು ಹೇಳಲಾಗುತ್ತಿದೆ.

3. ಟ್ರೆಂಟ್ ಬೌಲ್ಟ್

ಮುಂಬೈ ಇಂಡಿಯನ್ಸ್‌ನಿಂದ ಗೇಟ್‌ಪಾಸ್ ಪಡೆಯುವ ಸಾಧ್ಯತೆ ಇರುವ ಬೌಲರ್‌ಗಳ ಪಟ್ಟಿಯಲ್ಲಿ ನ್ಯೂಜಿಲೆಂಡ್‌ನ ಅನುಭವಿ ಎಡಗೈ ವೇಗಿ ಟ್ರೆಂಟ್ ಬೌಲ್ಟ್ ಹೆಸರು ಪ್ರಮುಖವಾಗಿ ಕೇಳಿಬರುತ್ತಿದೆ.

2026ರ ಐಪಿಎಲ್‌ಗೂ ಮುನ್ನ ಮುಂಬೈ ಫ್ರಾಂಚೈಸಿ ಬೌಲ್ಟ್ ಅವರನ್ನು ಬರೋಬ್ಬರಿ ₹12.5 ಕೋಟಿಗೆ ರಿಟೇನ್ ಮಾಡಿಕೊಂಡಿತ್ತು. ಪವರ್‌ಪ್ಲೇ ಹಾಗೂ ಡೆತ್ ಓವರ್‌ಗಳಲ್ಲಿ ಪರಿಣಾಮಕಾರಿ ಬೌಲಿಂಗ್ ಮಾಡುವ ಸಾಮರ್ಥ್ಯ ಹೊಂದಿರುವ ಬೌಲ್ಟ್ ಅವರಿಂದ ತಂಡ ದೊಡ್ಡ ನಿರೀಕ್ಷೆ ಇಟ್ಟುಕೊಂಡಿತ್ತು.

ಆದರೆ 2026ರ ಐಪಿಎಲ್‌ನಲ್ಲಿ ಬೌಲ್ಟ್ ಐದು ಪಂದ್ಯಗಳನ್ನು ಆಡಿದ್ದು, 11.62ರ ದುಬಾರಿ ಎಕಾನಮಿ ದರದಲ್ಲಿ ರನ್ ಬಿಟ್ಟುಕೊಟ್ಟು ಕೇವಲ ಎರಡು ವಿಕೆಟ್‌ಗಳನ್ನು ಮಾತ್ರ ಕಬಳಿಸಿದ್ದರು. ಹೀಗಾಗಿ ದುಬಾರಿ ಮೊತ್ತಕ್ಕೆ ಉಳಿಸಿಕೊಂಡಿದ್ದ ಬೌಲ್ಟ್ ಅವರನ್ನು ಕೂಡ ಬಿಡುಗಡೆ ಮಾಡುವ ಬಗ್ಗೆ ಮುಂಬೈ ಇಂಡಿಯನ್ಸ್ ಚಿಂತನೆ ನಡೆಸಬಹುದು ಎನ್ನಲಾಗುತ್ತಿದೆ.

ಒಟ್ಟಿನಲ್ಲಿ 2026ರ ಐಪಿಎಲ್‌ನಲ್ಲಿ ಬೌಲಿಂಗ್ ವಿಭಾಗದ ವೈಫಲ್ಯದಿಂದಾಗಿ ಭಾರಿ ಹಿನ್ನಡೆ ಅನುಭವಿಸಿರುವ ಮುಂಬೈ ಇಂಡಿಯನ್ಸ್, 2027ರ ಆವೃತ್ತಿಗೂ ಮುನ್ನ ತಂಡವನ್ನು ಪುನರ್‌ರಚಿಸುವ ಸಾಧ್ಯತೆಯಿದೆ. ದೀಪಕ್ ಚಹರ್, ಶಾರ್ದೂಲ್ ಠಾಕೂರ್ ಹಾಗೂ ಟ್ರೆಂಟ್ ಬೌಲ್ಟ್ ಅವರ ಭವಿಷ್ಯದ ಬಗ್ಗೆ ಫ್ರಾಂಚೈಸಿ ತೆಗೆದುಕೊಳ್ಳುವ ನಿರ್ಧಾರ ಇದೀಗ ಕುತೂಹಲ ಮೂಡಿಸಿದೆ.

ಹಾಸನದಲ್ಲಿ ಲೋಕಾಯುಕ್ತ ದಾಳಿ; ಹಣದ ಸಮೇತ ಸಿಕ್ಕಿಬಿದ್ದ ಹಳೆಬೀಡು ಪಿಎಸ್‌ಐ!

0

ಹಾಸನ: ಎನ್‌ಸಿಆರ್  ಪ್ರಕರಣ ಇತ್ಯರ್ಥಪಡಿಸಲು ₹1 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟು, ಮುಂಗಡವಾಗಿ ₹20 ಸಾವಿರ ಸ್ವೀಕರಿಸುತ್ತಿದ್ದ ಹಳೆಬೀಡು ಪೊಲೀಸ್ ಠಾಣೆಯ ಪಿಎಸ್‌ಐ ಮಂಜುನಾಥ್ ಅವರನ್ನು ಲೋಕಾಯುಕ್ತ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ನವೀನ ಎಂಬುವರಿಂದ ಎನ್‌ಸಿಆರ್ ಪ್ರಕರಣ ಮುಕ್ತಾಯಗೊಳಿಸುವುದಾಗಿ ಹೇಳಿ ಪಿಎಸ್‌ಐ ಮಂಜುನಾಥ್ ₹1 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಈ ಕುರಿತು ನವೀನ ಲೋಕಾಯುಕ್ತ ಅಧಿಕಾರಿಗಳಿಗೆ ದೂರು ನೀಡಿದ್ದರು.

ದೂರಿನ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ಅಧಿಕಾರಿಗಳು, ಹೋಟೆಲ್‌ನಲ್ಲಿ ಮುಂಗಡವಾಗಿ ₹20 ಸಾವಿರ ಲಂಚ ಪಡೆಯುತ್ತಿದ್ದ ವೇಳೆ ಪಿಎಸ್‌ಐಯನ್ನು ಹಣದ ಸಮೇತ ವಶಕ್ಕೆ ಪಡೆದಿದ್ದಾರೆ.

ಲೋಕಾಯುಕ್ತ ಇನ್ಸ್‌ಪೆಕ್ಟರ್ ಶಿಲ್ಪಾ ಹಾಗೂ ಗವಿರಾಜು ನೇತೃತ್ವದಲ್ಲಿ ದಾಳಿ ನಡೆದಿದ್ದು, ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.

ಬೂತ್ ಮಟ್ಟದಲ್ಲಿ ಸಂಘಟನೆ ಬಲಪಡಿಸಿ: ಕೃಷ್ಣಗೌಡ ಎಚ್. ಪಾಟೀಲ

0

ವಿಜಯಸಾಕ್ಷಿ ಸುದ್ದಿ, ಗದಗ: ಮುಂಬರುವ ದಿನಗಳಲ್ಲಿ ಪಕ್ಷದ ಸಂಘಟನೆ ಮತ್ತಷ್ಟು ಬಲಿಷ್ಠವಾಗಬೇಕಾದರೆ ಬೂತ್ ಮಟ್ಟದಿಂದಲೇ ಕಾರ್ಯಕರ್ತರನ್ನು ಸಜ್ಜುಗೊಳಿಸಿ ಸಂಘಟನೆಗೆ ಚುರುಕು ನೀಡಬೇಕು ಎಂದು ಯುವ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಕೃಷ್ಣಗೌಡ ಎಚ್. ಪಾಟೀಲ ಕರೆ ನೀಡಿದರು.

ಅವರ ನೇತೃತ್ವದಲ್ಲಿ ನಡೆದ ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು, ಪ್ರತಿಯೊಂದು ಬೂತ್‌ನಲ್ಲೂ ಯುವ ಕಾರ್ಯಕರ್ತರನ್ನು ಸಕ್ರಿಯಗೊಳಿಸಿ, ಪಕ್ಷದ ಸಿದ್ಧಾಂತ ಹಾಗೂ ಸರ್ಕಾರದ ಜನಪರ ಯೋಜನೆಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡಬೇಕು ಎಂದರು.

ಸಭೆಯಲ್ಲಿ ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಅಕ್ಷಯ್ ಪಾಟೀಲ, ಅಕ್ಷತಾ ರವಿಕುಮಾರ್, ಸೂರಜ್ ಅವಾಟಿ, ಉದಯ್ ವೀರನಗೌಡ, ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಅಶೋಕ್ ಮಂದಾಲಿ, ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷರಾದ ರಾಘವೇಂದ್ರ ದೊಡ್ಡಮನಿ, ವೀಣಾ ಹಿರೇಮಠ, ಶರಣಪ್ಪ ಗವಾರಿ, ಅಹಮದ್ ಖಾಜಿ ಹಾಗೂ ಪ್ರಧಾನ ಕಾರ್ಯದರ್ಶಿಗಳಾದ ವಿಜಯ್ ಚಲವಾದಿ, ರವಿ ಮೆಟಗುಡ್ಡ, ಹಸನಸಾಬ ಜಂಗ್ಲಿ, ಎಚ್.ಡಿ. ನದಾಫ, ಉಮರ್ ಫಾರೂಕ್ ಬಾರಿಗಿಡದ ಉಪಸ್ಥಿತರಿದ್ದರು.

ಗದಗ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಮುತ್ತು ಮುಳವಾಡ, ನರಗುಂದ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ವೀರೇಶ್ ಚುಳುಕಿ, ಗದಗ-ಬೆಟಗೇರಿ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಅನ್ವರಭಾಷಾ ಕೆ. ನದಾಫ, ಮುಳಗುಂದ ಬ್ಲಾಕ್ ಅಧ್ಯಕ್ಷ ಅಜ್ಜಪ್ಪ ಹುಗ್ಗನ್ನವರ, ನರಗುಂದ ಬ್ಲಾಕ್ ಅಧ್ಯಕ್ಷ ಸುನೀಲ ಕಳಸನ್ನವರ, ಶಿರಹಟ್ಟಿ ಬ್ಲಾಕ್ ಅಧ್ಯಕ್ಷ ಸಂತೋಷ್ ರೆಡ್ಡಿ, ಹೊಳೆಆಲೂರ ಬ್ಲಾಕ್ ಅಧ್ಯಕ್ಷ ನಿಂಗಪ್ಪ ಗುಂಜಾಳ, ರೋಣ ಯುವ ಕಾಂಗ್ರೆಸ್ ಅಧ್ಯಕ್ಷ ಆನಂದ ರಾಥೋಡ ಸೇರಿದಂತೆ ವಿವಿಧ ಘಟಕಗಳ ಪದಾಧಿಕಾರಿಗಳು ಭಾಗವಹಿಸಿದ್ದರು.

ಶಹರ ಸೇವಾದಳ ಅಧ್ಯಕ್ಷ ಮೊಹಮ್ಮದ್ ಬೆಟಗೇರಿ ಹಾಗೂ ಶೃತಿ ಕಮತರ, ಚಂದ್ರಶೇಖರ ಕಡಕೋಳ, ಅಭಿಷಯ ಅಬ್ನಿಸ್, ಕಿರಣ್ ಮಾಕಾಪುರ, ಶಾರುಖ್ ಹುಯಿಲ್‌ಗೋಳ, ಹಸನ್ ಓಲೆಕಾರ್, ರವಿ ಹಾದಿಮನಿ, ನಾವೀದು ಸಿದ್ದಾಪುರ, ಮಹೇಶ್ ಹೊಸಳ್ಳಿ, ರಝಾ ಡಂಬಳ, ಮಹೇಶ ದೊಡ್ಡಮನಿ, ಚನ್ನು ಬ್ಯಾಹಟ್ಟಿ, ರಾಜೇಸಾಬ ಪಿಂಜಾರ, ಸೋಮು ನಾಗರಾಜ, ಗೋಪಿ ರಾಯನಗೌಡ್ರ, ಮಹೇಶ ಕಳಸನವರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

“ಪಕ್ಷದ ನಿಜವಾದ ಶಕ್ತಿ ಬೂತ್ ಮಟ್ಟದ ಕಾರ್ಯಕರ್ತರು. ಪ್ರತಿಯೊಂದು ಬೂತ್‌ನಲ್ಲೂ ಸಂಘಟನೆ ಬಲಪಡಿಸಿ, ಯುವಕರನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳುವ ಮೂಲಕ ಪಕ್ಷವನ್ನು ಮತ್ತಷ್ಟು ಸದೃಢಗೊಳಿಸಬೇಕು.”

ಕೃಷ್ಣಗೌಡ ಎಚ್. ಪಾಟೀಲ

ಯುವಜನರ ಉದ್ಯೋಗ ಸೇತುವೆಗೆ ‘ಜಾಬ್ ಬ್ರಿಡ್ಜ್ ನೋಡ್’

0

ವಿಜಯಸಾಕ್ಷಿ ಸುದ್ದಿ, ಗದಗ: ಕರ್ನಾಟಕದ ಯುವಜನರ ಸಬಲೀಕರಣ ಹಾಗೂ ಉದ್ಯೋಗಾವಕಾಶಗಳಿಗೆ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಸೋಲಿಡಾರಿಟಿ ಯೂತ್ ಮೂವ್‌ಮೆಂಟ್ ವತಿಯಿಂದ ‘ಜಾಬ್ ಬ್ರಿಡ್ಜ್ ನೋಡ್’ ವೆಬ್ ಪೋರ್ಟಲ್‌ಗೆ ಆ.1ರಿಂದ 15ರವರೆಗೆ ಉದ್ಘಾಟನಾ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಮೊಹಮ್ಮದ್ ಯೂಸುಫ್ ಮುಲ್ಲಾ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯುವ ವಿದ್ಯಾವಂತ ನಿರುದ್ಯೋಗಿಗಳನ್ನು ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಗಳು ಹಾಗೂ ಸೂಕ್ತ ಮಾರ್ಗದರ್ಶನದೊಂದಿಗೆ ಸಂಪರ್ಕಿಸುವುದು ಉಪಕ್ರಮದ ಪ್ರಮುಖ ಉದ್ದೇಶವಾಗಿದೆ ಎಂದರು.

ಯುವಜನರಿಗೆ ಸೂಕ್ತ ಉದ್ಯೋಗಾವಕಾಶಗಳ ಮಾಹಿತಿ, ಅಗತ್ಯ ಕೌಶಲ್ಯಾಭಿವೃದ್ಧಿ, ತರಬೇತಿ ಹಾಗೂ ಮಾರ್ಗದರ್ಶನವನ್ನು ಒಂದೇ ವೇದಿಕೆಯಲ್ಲಿ ಒದಗಿಸುವ ಪ್ರಯತ್ನವನ್ನು ‘ಜಾಬ್ ಬ್ರಿಡ್ಜ್ ನೋಡ್’ ಮೂಲಕ ಮಾಡಲಾಗಿದೆ. ಉದ್ಯೋಗದಾತರು ಮತ್ತು ಉದ್ಯೋಗಾಕಾಂಕ್ಷಿಗಳ ನಡುವೆ ಸಂಪರ್ಕ ಕಲ್ಪಿಸುವ ವೇದಿಕೆಯಾಗಿ ಇದು ಕಾರ್ಯನಿರ್ವಹಿಸಲಿದೆ ಎಂದು ಹೇಳಿದರು.

ಪೋರ್ಟಲ್‌ನಲ್ಲಿ ವಿವಿಧ ಉದ್ಯೋಗಾವಕಾಶಗಳು, ಕೌಶಲ್ಯಾಭಿವೃದ್ಧಿ, ತರಬೇತಿ ಕಾರ್ಯಕ್ರಮಗಳು ಹಾಗೂ ಉದ್ಯೋಗಕ್ಕೆ ಸಂಬಂಧಿಸಿದ ಮಾರ್ಗದರ್ಶನದ ಮಾಹಿತಿಯನ್ನು ಪಡೆಯಬಹುದಾಗಿದೆ.

ಸೋಲಿಡಾರಿಟಿ ಯೂತ್ ಮೂವ್‌ಮೆಂಟ್ ರಾಜ್ಯ ಘಟಕದ ನೇತೃತ್ವದಲ್ಲಿ ಕಾರ್ಯಕ್ರಮ ರೂಪಿಸಲಾಗಿದ್ದು, 2016ರಿಂದ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಯುವಜನರ ಸಬಲೀಕರಣಕ್ಕಾಗಿ ಹಲವು ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಸಾಮಾಜಿಕ ಕಾರ್ಯಕರ್ತರು ಹಾಗೂ ಯುವಜನರಿಗೆ ಉದ್ಯೋಗ ಸಂಬಂಧಿತ ಮಾಹಿತಿ ತಲುಪಿಸುವ ಉದ್ದೇಶದಿಂದ ಈ ಹೊಸ ಉಪಕ್ರಮ ಕೈಗೊಳ್ಳಲಾಗಿದೆ ಎಂದರು.

ಉದ್ಯೋಗಾಕಾಂಕ್ಷಿಗಳು ಹಾಗೂ ಉದ್ಯೋಗದಾತರು www.jobbridgenode.com ಮೂಲಕ ಸೇವೆ ಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ 6366234200 ಸಂಪರ್ಕಿಸಬಹುದು. jobbridge@solidaritykarnataka.com ಇ-ಮೇಲ್ ಮೂಲಕವೂ ಮಾಹಿತಿ ಪಡೆಯಬಹುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ರಿಯಾಜ್ ಅಹ್ಮದ್ ಶೇಖ್, ಮೆಹಬೂಬ್ ರೋಣದ, ಜಾವೇದ್ ಉಮಚಗಿ, ಅಕ್ಬರ್ ಅತ್ತಾರ, ಜಹೀರ್ ಅಹ್ಮದ್, ತಾಹೀರ್ ಡಂಬಳ, ಖಾಸೀನ್ ದರ್ಗದ್, ಮುನ್ನಾ ಕಲ್ಮನಿ, ಇಮಾಮ್ ಮೊರಬದ, ಸಾಧಿಕ್ ಧಾರವಾಡ ಉಪಸ್ಥಿತರಿದ್ದರು.

ಗ್ಯಾರಂಟಿ ಯೋಜನೆಗಳ ಸೌಲಭ್ಯ ಸಕಾಲಕ್ಕೆ ತಲುಪಲಿ: ಎಸ್.ಆರ್. ಪಾಟೀಲ

0

ವಿಜಯಸಾಕ್ಷಿ ಸುದ್ದಿ, ಧಾರವಾಡ: ಮಳೆಗಾಲದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ಉಂಟಾಗುತ್ತಿರುವ ವ್ಯತ್ಯಯದಿಂದ ಸಾರ್ವಜನಿಕರಿಗೆ ತೊಂದರೆಯಾಗದಂತೆ ಅಧಿಕಾರಿಗಳು ತ್ವರಿತವಾಗಿ ಕ್ರಮ ಕೈಗೊಳ್ಳಬೇಕು. ಗ್ಯಾರಂಟಿ ಯೋಜನೆಗಳ ಸೌಲಭ್ಯ ಅರ್ಹ ಫಲಾನುಭವಿಗಳಿಗೆ ಸಕಾಲದಲ್ಲಿ ತಲುಪುವಂತೆ ಅನುಷ್ಠಾನವನ್ನು ಮತ್ತಷ್ಟು ಚುರುಕುಗೊಳಿಸಬೇಕು ಎಂದು ಗ್ಯಾರಂಟಿ ಯೋಜನೆಗಳ ಜಿಲ್ಲಾ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಸ್.ಆರ್. ಪಾಟೀಲ ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ಗ್ಯಾರಂಟಿ ಯೋಜನೆಗಳ ಜಿಲ್ಲಾಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಅರ್ಹ ಯುವಕರು ಯುವನಿಧಿಗೆ ಅರ್ಜಿ ಸಲ್ಲಿಸಿದ ಬಳಿಕ ಯಾವುದೇ ಕಾರಣಕ್ಕೂ ಭತ್ಯೆ ಪಡೆಯಲು ವಿಳಂಬವಾಗಬಾರದು. ಪ್ರತಿಯೊಬ್ಬ ಫಲಾನುಭವಿಗೂ ಸಕಾಲದಲ್ಲಿ ಸೌಲಭ್ಯ ತಲುಪುವಂತೆ ಅಧಿಕಾರಿಗಳು ಗಮನಹರಿಸಬೇಕು. ಗ್ರಾಮೀಣ ಭಾಗದಲ್ಲಿ ಮಳೆಯಿಂದ ಉಂಟಾಗುವ ವಿದ್ಯುತ್ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಎಸ್.ಆರ್. ಪಾಟೀಲ ಹೇಳಿದರು.

ಮಕ್ಕಳ ಬಸ್ ಪಾಸ್‌ಗಳು ಯಾವುದೇ ರೀತಿಯಲ್ಲೂ ಬಾಕಿ ಉಳಿಯದಂತೆ ಕ್ರಮ ಕೈಗೊಳ್ಳಬೇಕು. ಧಾರವಾಡ ಜಿಲ್ಲೆ ಹಾಗೂ ತಾಲೂಕು ವ್ಯಾಪ್ತಿಯ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಗಳ ಶೌಚಾಲಯಗಳ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಬೇಕು. ಸಾರ್ವಜನಿಕರು ಹಾಗೂ ಪ್ರಯಾಣಿಕರಿಗೆ ಸ್ವಚ್ಛ ಮತ್ತು ಉತ್ತಮ ಪರಿಸರ ದೊರೆಯುವಂತೆ ಅಧಿಕಾರಿಗಳು ಕ್ರಮ ವಹಿಸಬೇಕು ಎಂದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ, ಗ್ಯಾರಂಟಿ ಯೋಜನೆಗಳ ಜಿಲ್ಲಾ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರಾದ ಸುಧೀರ ಎಸ್. ಬೋಳಾರ, ರತ್ನಾ ತೇಗೂರಮಠ, ರೇಹಾನ್ ರಝಾ ಐನಾಪೂರಿ ಹಾಗೂ ಸದಸ್ಯರಾದ ಅರವಿಂದ ಏಗನಗೌಡರ, ಬಸಪ್ಪ ಮಹಾಬಲೇಶ್ವರ ಬಾವಕಾರ ಅವರು ಮಾತನಾಡಿದರು.

ಜಿಪಂ ಉಪಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ ಸ್ವಾಗತಿಸಿ, ವಂದಿಸಿದರು.

ಸಭೆಯಲ್ಲಿ ಗ್ಯಾರಂಟಿ ಯೋಜನೆಗಳ ಜಿಲ್ಲಾ ಅನುಷ್ಠಾನ ಪ್ರಾಧಿಕಾರದ ಸದಸ್ಯರಾದ ವರ್ಧಮಾನ ಹಿರೇಗೌಡರ, ಶಿವಾನಂದ ಭೂಮಣ್ಣನವರ, ನೆಹರು ಪಾಟೀಲ ಸೇರಿದಂತೆ ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಸಂಬಂಧಿಸಿದ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

ಯುವನಿಧಿಗೆ 12,792 ಅರ್ಜಿ

ಜಿಲ್ಲೆಯಲ್ಲಿ ಯುವನಿಧಿ ಯೋಜನೆಯಡಿ ಇದುವರೆಗೆ 12,792 ಅರ್ಜಿಗಳು ಸ್ವೀಕೃತವಾಗಿದ್ದು, 11,553 ಫಲಾನುಭವಿಗಳಿಗೆ ಡಿಬಿಟಿ ಮೂಲಕ ₹34,51,19,500 ಸಹಾಯಧನ ಜಮೆಯಾಗಿದೆ.

ಶಕ್ತಿ ಯೋಜನೆ ಆರಂಭವಾದಾಗಿನಿಂದ ಜಿಲ್ಲೆಯಲ್ಲಿ 42,46,65,439 ಮಹಿಳೆಯರು ಉಚಿತವಾಗಿ ಪ್ರಯಾಣಿಸಿದ್ದು, ಸರ್ಕಾರದಿಂದ ಸುಮಾರು ₹936.73 ಕೋಟಿ ಬಿಡುಗಡೆಯಾಗಿದೆ.

ಗೃಹ ಜ್ಯೋತಿ ಯೋಜನೆಯಡಿ 5,67,985 ಫಲಾನುಭವಿಗಳಿದ್ದು, ಸರ್ಕಾರದಿಂದ ಒಟ್ಟು ₹80371.92 ಲಕ್ಷ ಬಿಡುಗಡೆಯಾಗಿದೆ. ಗೃಹಲಕ್ಷ್ಮಿ ಯೋಜನೆಯಡಿ 3,77,361 ಫಲಾನುಭವಿಗಳಿಗೆ ₹2,270,27,90,000 ಹಣ ಬಿಡುಗಡೆಯಾಗಿದೆ. ಜುಲೈ ತಿಂಗಳಲ್ಲಿ ಜಿಲ್ಲೆಯಲ್ಲಿ 27 ಫಲಾನುಭವಿಗಳು ಮೃತಪಟ್ಟಿರುವುದಾಗಿ ಸಭೆಯಲ್ಲಿ ಮಾಹಿತಿ ನೀಡಲಾಯಿತು.

ಅನ್ನಭಾಗ್ಯ ಯೋಜನೆಯಡಿ 3,75,996 ಫಲಾನುಭವಿಗಳಿದ್ದು, ಒಟ್ಟು ₹3,62,516 ಲಕ್ಷ ಹಣ ಬಿಡುಗಡೆಯಾಗಿದೆ.