Home Blog

ಡೆಲಿವರಿ, ಆಟೋ ನೆಪದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಗಳ ಬಂಧನ!

0

ಬೆಂಗಳೂರು: ಪರಪ್ಪನ ಅಗ್ರಹಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ರಾಹುಲ್ ಮತ್ತು ಪ್ರೇಮ್ ಎಂದು ಗುರುತಿಸಲಾಗಿದೆ. ಇವರಿಂದ ಸುಮಾರು 7 ಕೆಜಿ 500 ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದ್ದು, ಇದರ ಮೌಲ್ಯ ಸುಮಾರು 3 ಲಕ್ಷ ರೂಪಾಯಿ ಎಂದು ತಿಳಿದುಬಂದಿದೆ.

ಪೊಲೀಸರ ಮಾಹಿತಿ ಪ್ರಕಾರ, ಆರೋಪಿಗಳು ತಮಿಳುನಾಡಿನಿಂದ ಗಾಂಜಾ ತರಿಸಿ ನಗರದಲ್ಲಿ ಮಾರಾಟ ಮಾಡುತ್ತಿದ್ದರು. ರಾಹುಲ್ ಸ್ವಿಗ್ಗಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದರೆ, ಪ್ರೇಮ್ ಆಟೋ ಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದನು.

ಈ ಕೆಲಸಗಳನ್ನು ನೆಪ ಮಾಡಿಕೊಂಡು ಗಾಂಜಾ ಪೆಡ್ಲಿಂಗ್ ನಡೆಸುತ್ತಿದ್ದರು ಎಂಬುದು ತನಿಖೆಯಲ್ಲಿ ಬಹಿರಂಗವಾಗಿದೆ. ಸದ್ಯ ಇಬ್ಬರನ್ನೂ ಬಂಧಿಸಿರುವ ಪೊಲೀಸರು, ನ್ಯಾಯಾಲಯಕ್ಕೆ ಹಾಜರುಪಡಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ದಾವಣಗೆರೆ ಉಪಚುನಾವಣೆ: ಸ್ವಾಮೀಜಿ ಹೆಸರಿನಲ್ಲಿ ನಕಲಿ ಸಂದೇಶ ವೈರಲ್, ಮಠದಿಂದ ಸ್ಪಷ್ಟನೆ

0

ದಾವಣಗೆರೆ: ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಹಿನ್ನಲೆಯಲ್ಲಿ ರಾಜಕೀಯ ಚಟುವಟಿಕೆಗಳು ವೇಗ ಪಡೆದುಕೊಂಡಿರುವ ನಡುವೆ, ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಸಂದೇಶಗಳ ಹಾವಳಿ ಹೆಚ್ಚಾಗಿದೆ.

ಡಾ. ಶಿವಮೂರ್ತಿ ಶಿವಾಚಾರ್ಯ ಶ್ರೀ ಅವರ ಹೆಸರಿನಲ್ಲಿ ನಿರ್ದಿಷ್ಟ ಅಭ್ಯರ್ಥಿಗೆ ಮತ ನೀಡುವಂತೆ ಕರೆ ನೀಡಿರುವ ಸಂದೇಶ ವೈರಲ್ ಆಗಿದ್ದು, ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿಸಿತ್ತು.

ಈ ಕುರಿತು ತರಳುಬಾಳು ಗುರುಪೀಠ ಆಡಳಿತ ಮಂಡಳಿ ಸ್ಪಷ್ಟನೆ ನೀಡಿದ್ದು, ಸ್ವಾಮೀಜಿಯವರ ಹೆಸರನ್ನು ದುರುಪಯೋಗಪಡಿಸಿಕೊಂಡು ನಕಲಿ ಸಂದೇಶ ರವಾನಿಸಲಾಗುತ್ತಿದೆ ಎಂದು ತಿಳಿಸಿದೆ. ಈ ರೀತಿಯ ಸಂದೇಶಗಳು ಶ್ರೀಗಳ ನಿಲುವನ್ನು ತಪ್ಪಾಗಿ ಪ್ರತಿಬಿಂಬಿಸುತ್ತವೆ ಎಂದು ಹೇಳಲಾಗಿದೆ.

ಪ್ರಕರಣದ ಗಂಭೀರತೆಯನ್ನು ಮನಗಂಡ ಮಠದ ಕಾರ್ಯದರ್ಶಿ ಜಿಲ್ಲಾಧಿಕಾರಿಗೆ ಲಿಖಿತ ದೂರು ಸಲ್ಲಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಮಾಹಿತಿ ಹರಡುವವರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

ಮತದಾರರನ್ನು ತಪ್ಪು ದಾರಿಗೆಳೆಯುವ ಸಾಧ್ಯತೆ ಇರುವುದರಿಂದ ಅಧಿಕಾರಿಗಳು ಕಟ್ಟುನಿಟ್ಟಿನ ನಿಗಾ ವಹಿಸಬೇಕಾಗಿದೆ.

ಕಾವೇರಿ ನದಿಯಲ್ಲಿ ಅನುಮಾನಾಸ್ಪವಾಗಿ ಕಂಟ್ರಾಕ್ಟರ್ ಶವ ಪತ್ತೆ! ಕೊಲೆ ಶಂಕೆ

0

ಮಂಡ್ಯ: ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಹುಣಸನ ಹಳ್ಳಿಯಲ್ಲಿ ಪ್ರಥಮ ದರ್ಜೆ ಕಂಟ್ರಾಕ್ಟರ್ ಪವನ್ (27) ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಆತಂಕ ಮೂಡಿಸಿದೆ. ಅವರ ಮೃತದೇಹ ಕಾವೇರಿ ನದಿಯಲ್ಲಿ ಪತ್ತೆಯಾಗಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿದೆ.

ಪವನ್ ಕೋಟ್ಯಾಂತರ ರೂಪಾಯಿ ಮೌಲ್ಯದ ಕಾಮಗಾರಿಗಳನ್ನು ನಿರ್ವಹಿಸುತ್ತಿದ್ದ ಕಂಟ್ರಾಕ್ಟರ್ ಆಗಿದ್ದರು. ನಾಲ್ಕು ದಿನಗಳ ಹಿಂದೆ “ಕೆಲಸ ಇದೆ, ಇಂದು ಮನೆಗೆ ಬರುವುದಿಲ್ಲ” ಎಂದು ಕುಟುಂಬಕ್ಕೆ ತಿಳಿಸಿ ಹೊರಟಿದ್ದ ಅವರು ಬಳಿಕ ಮನೆಗೆ ವಾಪಸ್ಸಾಗಿರಲಿಲ್ಲ. ಅವರ ಮೊಬೈಲ್ ಸ್ವಿಚ್ ಆಫ್ ಆಗಿದ್ದಲ್ಲದೆ, ಸಾಮಾಜಿಕ ಜಾಲತಾಣ ಖಾತೆಗಳೂ ಡಿ-ಆಕ್ಟಿವ್ ಆಗಿದ್ದವು. ಇದರಿಂದ ಆತಂಕಗೊಂಡ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದರು.

ನಿನ್ನೆ ಶ್ರೀರಂಗಪಟ್ಟಣ ತಾಲೂಕಿನ ಕಾವೇರಿ ನದಿಯಲ್ಲಿ ಪವನ್ ಮೃತದೇಹ ಪತ್ತೆಯಾಗಿದೆ. ದೇಹದ ಮೇಲೆ ಗಾಯಗಳಿರುವುದು ಗಮನಕ್ಕೆ ಬಂದಿದ್ದು, ಇದು ಕೊಲೆ ಆಗಿರಬಹುದೆಂದು ಕುಟುಂಬಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ.

ಘಟನೆ ಸ್ಥಳೀಯರಲ್ಲಿ ಭೀತಿ ಮೂಡಿಸಿದ್ದು, ಪವನ್ ಸಾವಿನ ಕುರಿತು ಸಮಗ್ರ ತನಿಖೆ ನಡೆಸುವಂತೆ ಕುಟುಂಬಸ್ಥರು ಒತ್ತಾಯಿಸಿದ್ದಾರೆ. ಈ ಸಂಬಂಧ ಶ್ರೀರಂಗಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

 

ಬಾಂಗ್ಲಾದೇಶದ ಮಾಜಿ ಸ್ಪೀಕರ್ ಶಿರಿನ್ ಶರ್ಮಿನ್ ಚೌಧರಿ ಅರೆಸ್ಟ್..!

0

ಢಾಕಾ: ಬಾಂಗ್ಲಾದೇಶದ ಮೊದಲ ಮಹಿಳಾ ಸ್ಪೀಕರ್ ಆಗಿ ಕಾರ್ಯನಿರ್ವಹಿಸಿದ್ದ ಶಿರಿನ್ ಶರ್ಮಿನ್ ಚೌಧರಿ ಅವರನ್ನು ಢಾಕಾ ಮೆಟ್ರೋಪಾಲಿಟನ್ ಪೊಲೀಸರ ಪತ್ತೇದಾರಿ ವಿಭಾಗ (ಡಿಬಿ) ಬಂಧಿಸಿದೆ. ಧನ್ಮಂಡಿಯ 8/ಎ ರಸ್ತೆಯಲ್ಲಿರುವ ಅವರ ನಿವಾಸದಲ್ಲಿ ಅಧಿಕಾರಿಗಳು ಬಂಧನ ಕ್ರಮ ಕೈಗೊಂಡಿದ್ದಾರೆ.

ವಿದ್ಯಾರ್ಥಿ ಚಳವಳಿಗೆ ಸಂಬಂಧಿಸಿದ ಪ್ರಕರಣದಡಿ ಅವರನ್ನು ಬಂಧಿಸಲಾಗಿದೆ ಎಂದು ಪತ್ತೇದಾರಿ ವಿಭಾಗದ ಹೆಚ್ಚುವರಿ ಕಮಿಷನರ್ ಮೊಹಮ್ಮದ್ ಶಫೀಕುಲ್ ಇಸ್ಲಾಂ ತಿಳಿಸಿದ್ದಾರೆ.

ಶಿರಿನ್ ಶರ್ಮಿನ್ ಚೌಧರಿ ಅವರು 2013ರಿಂದ 2024ರ ಆಗಸ್ಟ್ ವರೆಗೆ ಬಾಂಗ್ಲಾದೇಶ ಸಂಸತ್ತಿನ ಸ್ಪೀಕರ್ ಆಗಿ ಸೇವೆ ಸಲ್ಲಿಸಿದ್ದರು. ದೇಶದ ಮೊದಲ ಮಹಿಳಾ ಸ್ಪೀಕರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

2025ರ ಆಗಸ್ಟ್ 5ರಂದು ಶೇಖ್ ಹಸೀನಾ ನೇತೃತ್ವದ ಸರ್ಕಾರ ಪತನಗೊಂಡ ಬಳಿಕ 27 ದಿನಗಳ ನಂತರ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದರೊಂದಿಗೆ ಅವರ ದೀರ್ಘಕಾಲದ ರಾಜಕೀಯ ಪಯಣ ಅಂತ್ಯಗೊಂಡಿತ್ತು.

ಬೆಂಗಳೂರು: ಹೆಲ್ಮೆಟ್ ಧರಿಸಿ ರಾತ್ರೋ ರಾತ್ರಿ ಸಿಲಿಂಡರ್ ಕದ್ದೊಯ್ದ ಖದೀಮ!

ಬೆಂಗಳೂರು: ನಗರದ ಕಾಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೋಮವಾರ ಬೆಳಗಿನ ಜಾವ ವಿಚಿತ್ರ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ.

ಬೆಳಗ್ಗಿನ ಜಾವ ಸುಮಾರು 3 ಗಂಟೆ ಹೊತ್ತಿಗೆ ಹೆಲ್ಮೆಟ್ ಧರಿಸಿ ಬೈಕ್‌ನಲ್ಲಿ ಬಂದ ಕಳ್ಳನೊಬ್ಬ, ರಸ್ತೆಯಲ್ಲಿನ ಮನೆಗಳ ಗೇಟ್ ಪರಿಶೀಲಿಸಿ, ಲಾಕ್ ಇಲ್ಲದ ಮನೆಯೊಳಗೆ ನುಗ್ಗಿ LPG ಸಿಲಿಂಡರ್ ಕದ್ದು ಪರಾರಿಯಾಗಿದ್ದಾನೆ.

ಕಳ್ಳತನ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಘಟನೆ ಬೆನ್ನಲ್ಲೇ ಕಾಡುಗೋಡಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿಗಾಗಿ ಶೋಧ ಕಾರ್ಯ ಕೈಗೊಂಡಿದ್ದಾರೆ.

ಬೆಂಕಿಯ ಜ್ವಾಲೆಗೆ 5 ಜಾನುವಾರುಗಳು ದಾರುಣ ಸಾವು: ಕ್ಷಣಾರ್ಧದಲ್ಲಿ ಸುಟ್ಟು ಕರಕಲಾದ ಹಸುಗಳ ಶೆಡ್!

ಬೆಂಗಳೂರು: ನಗರದ ಡಿಜೆ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಶಾಂಪುರ ರಸ್ತೆಯಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಹಸುಗಳ ಶೆಡ್ ಬೆಂಕಿಗೆ ಆಹುತಿಯಾಗಿರುವ ಘಟನೆ ಜರುಗಿದೆ.

ಘಟನೆಯಲ್ಲಿ ಐದು ಹಸುಗಳು ದಾರುಣವಾಗಿ ಸಾವನ್ನಪ್ಪಿದೆ. ತಡರಾತ್ರಿ ಶೆಡ್ ಪಕ್ಕದಲ್ಲಿದ್ದ ಫ್ಲೈವುಡ್ ಸಾಮಗ್ರಿಗಳಿಗೆ ಬೆಂಕಿ ತಗುಲಿದ ಪರಿಣಾಮ, ಕೆಲವೇ ಕ್ಷಣಗಳಲ್ಲಿ ಬೆಂಕಿ ವೇಗವಾಗಿ ಹರಡಿ ಹಸುಗಳ ಶೆಡ್‌ಗೂ ವ್ಯಾಪಿಸಿದೆ. ಬೆಂಕಿಯ ತೀವ್ರತೆ ಹೆಚ್ಚಾದ ಪರಿಣಾಮ ಶೆಡ್‌ನೊಳಗಿದ್ದ ಹಸುಗಳು ಸಿಲುಕಿಕೊಂಡಿದೆ.

ಘಟನೆ ಸಂಭವಿಸಿದ ವೇಳೆ ಶೆಡ್‌ನಲ್ಲಿ ಒಟ್ಟು 19 ಹಸುಗಳಿದ್ದು, ಅವುಗಳಲ್ಲಿ ಐದು ಹಸುಗಳು ಬೆಂಕಿಗೆ ಆಹುತಿಯಾಗಿವೆ. ಸ್ಥಳೀಯರು ತಕ್ಷಣವೇ ಎಚ್ಚರಗೊಂಡು ಕಾರ್ಯಪ್ರವೃತ್ತರಾಗಿ ಉಳಿದ 14 ಹಸುಗಳನ್ನು ಸುರಕ್ಷಿತವಾಗಿ ಹೊರತೆಗೆದಿದ್ದಾರೆ.

ಸುದ್ದಿ ತಿಳಿಯುತ್ತಿದ್ದಂತೆಯೇ ಅಗ್ನಿಶಾಮಕ ದಳದ ನಾಲ್ಕು ವಾಹನಗಳು ಸ್ಥಳಕ್ಕೆ ಧಾವಿಸಿ, ಹರಡುತ್ತಿದ್ದ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿವೆ. ಹೆಚ್ಚಿನ ಹಾನಿ ಸಂಭವಿಸದಂತೆ ತಡೆಯಲಾಗಿದೆ.

ಘಟನೆ ಕುರಿತು ಡಿಜೆ ಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬೆಂಕಿ ಕಾಣಿಸಿಕೊಂಡ ನಿಖರ ಕಾರಣ ಪತ್ತೆ ಹಚ್ಚಲು ತನಿಖೆ ಕೈಗೊಂಡಿದ್ದಾರೆ.

62ರ ಹರೆಯದಲ್ಲೂ ಅದ್ಭುತ ಸಾಹಸ: ಹಾಲುಗಂಭ ಏರಿ ಮೆಚ್ಚುಗೆಗೆ ಪಾತ್ರರಾದ ಶರಣಪ್ಪ

ಕೊಪ್ಪಳ: ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಕಬ್ಬರಗಿಯಲ್ಲಿ ನಡೆದ ಶ್ರೀ ಮಾಸ್ತೆಮ್ಮ ದೇವಿ ಜಾತ್ರೆಯಲ್ಲಿ 62 ವರ್ಷದ ವ್ಯಕ್ತಿಯೊಬ್ಬರು ಅಸಾಮಾನ್ಯ ಸಾಹಸ ಮೆರೆದಿದ್ದಾರೆ.

ಮನ್ನೇರಾಳ ಗ್ರಾಮದ ಶರಣಪ್ಪ ಗೊಲ್ಲರ ಅವರು ಎಣ್ಣೆ ಸವರಿ ಜಾರುತ್ತಿದ್ದ ಸುಮಾರು 120 ಅಡಿ ಎತ್ತರದ ಹಾಲುಗಂಭವನ್ನು ಲೀಲಾಜಾಲವಾಗಿ ಏರಿ ನೆರೆದಿದ್ದ ಸಾವಿರಾರು ಭಕ್ತರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಮೂರು ವರ್ಷಕ್ಕೊಮ್ಮೆ ನಡೆಯುವ ಈ ಜಾತ್ರೆಯಲ್ಲಿ ಯಾದವ ಸಮಾಜದವರು ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸುತ್ತಾರೆ. ಸಂಪ್ರದಾಯದಂತೆ ಕಂಬದ ಮೇಲ್ಭಾಗದಲ್ಲಿ ಕೊಬ್ಬರಿ ಉತ್ತತ್ತಿ ಕಟ್ಟಲಾಗುತ್ತದೆ.

ಎಣ್ಣೆ ಸುರಿದು ಜಾರುವಂತಾಗಿದ್ದ ಕಂಬವನ್ನೂ ಲೆಕ್ಕಿಸದೆ, ಶರಣಪ್ಪ ಅವರು ತೋರಿದ ದೈಹಿಕ ಸಾಮರ್ಥ್ಯ ಮತ್ತು ಭಕ್ತಿಭಾವಕ್ಕೆ ಸ್ಥಳೀಯರು ಹಾಗೂ ಭಕ್ತರು ಶಹಬ್ಬಾಸ್ ಹೇಳಿದ್ದಾರೆ.

ಈ ಘಟನೆ ಜಾತ್ರೆಯ ವಿಶೇಷ ಆಕರ್ಷಣೆಯಾಗಿದ್ದು, ಎಲ್ಲರ ಗಮನ ಸೆಳೆದಿದೆ.

ರಾಜ್ಯದಲ್ಲಿ ಎಲ್‌ಪಿಜಿ ಅಭಾವ ತೀವ್ರ: ‘ಕರ್ನಾಟಕ ಬಂದ್’ ಎಚ್ಚರಿಕೆ ನೀಡಿದ ಆಟೋ ಚಾಲಕರು

ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಆಟೋ ಗ್ಯಾಸ್ ಅಭಾವ ದಿನದಿಂದ ದಿನಕ್ಕೆ ಗಂಭೀರವಾಗುತ್ತಿದ್ದು, ಆಟೋ ಚಾಲಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಎಲ್‌ಪಿಜಿ ಬಂಕ್‌ಗಳ ಮುಂದೆ ಕಿಲೋಮೀಟರ್‌ಗಟ್ಟಲೆ ಸಾಲಿನಲ್ಲಿ ನಿಲ್ಲಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಬೆಂಗಳೂರು ನಗರದ ಗಿರಿನಗರ, ಹೆಬ್ಬಾಳ, ಸಾರಕ್ಕಿ, ಸಜ್ಜನ್ ರಾವ್ ಸರ್ಕಲ್ ಸೇರಿದಂತೆ ಹಲವೆಡೆ ಚಾಲಕರು ದಿನಪೂರ್ತಿ ದುಡಿಮೆ ಬಿಟ್ಟು ಗ್ಯಾಸ್‌ಗಾಗಿ ಕಾಯುತ್ತಿದ್ದಾರೆ. ಸಮಸ್ಯೆ ಪರಿಹರಿಸದಿದ್ದರೆ ‘ಕರ್ನಾಟಕ ಬಂದ್’ ನಡೆಸುವುದಾಗಿ ಆಟೋ ಸಂಘಟನೆಗಳು ಸರ್ಕಾರಕ್ಕೆ ಎಚ್ಚರಿಕೆ ನೀಡಿವೆ.

ಇತ್ತೀಚೆಗೆ ಆಹಾರ ಸಚಿವ ಕೆ.ಹೆಚ್. ಮುನಿಯಪ್ಪ ಅವರ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ್ದ ಚಾಲಕರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದರು. ಚಾಲಕರ ಅಹವಾಲು ಆಲಿಸಿದ ಸಚಿವರು, ಏಪ್ರಿಲ್ 10ರಂದು ಸಭೆ ನಡೆಸಿ ಸಮಸ್ಯೆ ಇತ್ಯರ್ಥಪಡಿಸುವುದಾಗಿ ಭರವಸೆ ನೀಡಿದ್ದಾರೆ.

ಇದೇ ವೇಳೆ, ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಅವರಿಗೆ ಪತ್ರ ಬರೆದಿರುವ ಮುನಿಯಪ್ಪ, ರಾಜ್ಯದಲ್ಲಿ ಎಲ್‌ಪಿಜಿ ಅಭಾವ ತೀವ್ರವಾಗಿದ್ದು, ಕೆಲವು ಖಾಸಗಿ ಬಂಕ್‌ಗಳಲ್ಲಿ ಹೆಚ್ಚುವರಿ ದರ ವಸೂಲಿ ನಡೆಯುತ್ತಿದೆ ಎಂದು ತಿಳಿಸಿದ್ದಾರೆ. ನಿಗದಿತ ದರದಲ್ಲಿ ಪೂರೈಕೆ ಖಚಿತಪಡಿಸಲು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

ಇತ್ತ ಬಾಗಲಕೋಟೆಯಲ್ಲಿ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ಗ್ಯಾಸ್ ಪೂರೈಕೆ ಕೇಂದ್ರ ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಹೇಳಿ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದರು.

ಇನ್ನೊಂದೆಡೆ, ಪೀಸ್ ಆಟೋ ಸಂಘಟನೆಯ ಅಧ್ಯಕ್ಷ ರಘು, ತಕ್ಷಣ ಸಮಸ್ಯೆ ಪರಿಹರಿಸದಿದ್ದರೆ ಪ್ರತಿಭಟನೆ ತೀವ್ರಗೊಳಿಸುವುದಾಗಿ ಎಚ್ಚರಿಸಿದ್ದಾರೆ. ಏಪ್ರಿಲ್ 9ರಂದು ‘ಕರಾಳ ದಿನ’ ಆಚರಿಸಿ ಆಟೋಗಳಿಗೆ ಕಪ್ಪು ಬಾವುಟ ಕಟ್ಟಿ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ರಾಜ್ಯಾದ್ಯಂತ ಬಂದ್ ನಡೆಸುವುದಾಗಿ ಸಂಘಟನೆಗಳು ಎಚ್ಚರಿಕೆ ನೀಡಿವೆ.

ಒಟ್ಟಾರೆ, ಎಲ್‌ಪಿಜಿ ಅಭಾವದಿಂದ ಸಂಕಷ್ಟಕ್ಕೀಡಾದ ಆಟೋ ಚಾಲಕರು ತಕ್ಷಣ ಪರಿಹಾರಕ್ಕಾಗಿ ಆಗ್ರಹಿಸುತ್ತಿದ್ದು, ಸರ್ಕಾರದ ಕ್ರಮಗಳತ್ತ ಕಾದುನೋಡುತ್ತಿದ್ದಾರೆ.

ರಾಜ್ಯದಲ್ಲಿ ವಾಯು ಗುಣಮಟ್ಟ ಸುಧಾರಣೆ: ಇನ್ನೂ ಆರೋಗ್ಯಕ್ಕೆ ಅಪಾಯ ಎಂದ ತಜ್ಞರು

ಬೆಂಗಳೂರು: ಕಳೆದ ಕೆಲವು ದಿನಗಳಿಂದ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ವಾಯು ಗುಣಮಟ್ಟದಲ್ಲಿ ಸ್ವಲ್ಪ ಮಟ್ಟಿನ ಸುಧಾರಣೆ ಕಂಡುಬಂದಿದೆ.

ಇತ್ತೀಚಿನ ದಿನಗಳಲ್ಲಿ ಉಸಿರಾಟಕ್ಕೂ ಕಷ್ಟವಾಗುವ ಮಟ್ಟಕ್ಕಿಳಿದಿದ್ದ ಗಾಳಿಯ ಗುಣಮಟ್ಟ ಇದೀಗ ಸ್ವಲ್ಪ ಉತ್ತಮಗೊಂಡಿದ್ದು, ಜನರಲ್ಲಿ ಆತಂಕ ಕಡಿಮೆಯಾಗುತ್ತಿದೆ.

ಆದರೆ, ತಜ್ಞರ ಪ್ರಕಾರ ವಾಯು ಗುಣಮಟ್ಟ ಇನ್ನೂ ಸಂಪೂರ್ಣ ಸುರಕ್ಷಿತ ಮಟ್ಟಕ್ಕೇನೂ ತಲುಪಿಲ್ಲ. ವಿಶ್ವ ಆರೋಗ್ಯ ಸಂಸ್ಥೆಯ ಮಾನದಂಡಗಳ ಪ್ರಕಾರ ಈ ಮಟ್ಟದ ಗಾಳಿ ಆರೋಗ್ಯಕ್ಕೆ ಹಾನಿಕರವಾಗಿಯೇ ಉಳಿದಿದೆ.

ಇಂದು ವಿವಿಧ ನಗರಗಳ ಗಾಳಿಯ ಗುಣಮಟ್ಟ ಸೂಚ್ಯಂಕ ವಿವರಗಳು ಹೀಗಿವೆ:
ಬೆಂಗಳೂರು – 94
ಮಂಗಳೂರು – 87
ಮೈಸೂರು – 93
ಬೆಳಗಾವಿ – 128
ಕಲಬುರ್ಗಿ – 71
ಶಿವಮೊಗ್ಗ – 54
ಬಳ್ಳಾರಿ – 66
ಹುಬ್ಬಳ್ಳಿ – 146
ಉಡುಪಿ – 89
ವಿಜಯಪುರ – 86

ಕೆಲ ದಿನಗಳ ಹಿಂದೆ ತೀವ್ರ ಕಳಪೆ ಮಟ್ಟಕ್ಕೆ ಇಳಿದಿದ್ದ ಬೆಂಗಳೂರಿನ ಗಾಳಿಯ ಗುಣಮಟ್ಟ ಇದೀಗ 94ಕ್ಕೆ ತಲುಪಿದ್ದು, ಮಧ್ಯಮ ಮಟ್ಟದಲ್ಲಿದೆ. ಉಡುಪಿ ಮತ್ತು ಮಂಗಳೂರು ಸೇರಿದಂತೆ ಕರಾವಳಿ ಭಾಗಗಳಲ್ಲೂ ಗಾಳಿಯ ಗುಣಮಟ್ಟದಲ್ಲಿ ಸುಧಾರಣೆ ಕಂಡುಬಂದಿದೆ.

ಗಾಳಿಯ ಗುಣಮಟ್ಟದ ವರ್ಗೀಕರಣ ಹೀಗಿದೆ:
ಉತ್ತಮ – 0 ರಿಂದ 50
ಮಧ್ಯಮ – 50 ರಿಂದ 100
ಕಳಪೆ – 100 ರಿಂದ 150
ಅನಾರೋಗ್ಯಕರ – 150 ರಿಂದ 200
ಗಂಭೀರ – 200 ರಿಂದ 300
ಅಪಾಯಕಾರಿ – 300ಕ್ಕೂ ಹೆಚ್ಚು

ಒಟ್ಟಾರೆ, ಗಾಳಿಯ ಗುಣಮಟ್ಟದಲ್ಲಿ ಸ್ವಲ್ಪ ಸುಧಾರಣೆ ಕಂಡರೂ, ಇನ್ನೂ ಆರೋಗ್ಯದ ದೃಷ್ಟಿಯಿಂದ ಎಚ್ಚರಿಕೆ ಅಗತ್ಯವಿದೆ ಎಂದು ತಜ್ಞರು ಸೂಚಿಸಿದ್ದಾರೆ.

ಕೊಲ್ಕತ್ತಾ-ಪಂಜಾಬ್ ಪಂದ್ಯ ಮಳೆಯಿಂದ ರದ್ದು: RCB ಹಿಂದಿಕ್ಕಿ ಮೊದಲ ಸ್ಥಾನಕ್ಕೆ ಜಿಗಿದ ಶ್ರೇಯಸ್ ಪಡೆ

0

ಕೋಲ್ಕತ್ತಾ: ಈಡನ್ ಗಾರ್ಡನ್ ನಲ್ಲಿ ಸೋಮವಾರ ನಡೆಯಬೇಕಾಗಿದ್ದ ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ಪಂಜಾಬ್ ಕಿಂಗ್ಸ್ ನಡುವಿನ ಐಪಿಎಲ್ ಪಂದ್ಯ ಮಳೆಯ ಕಾರಣದಿಂದ ರದ್ದಾಗಿದೆ.

ಮೊದಲು ಟಾಸ್ ಗೆದ್ದ ಕೆಕೆಆರ್ ನಾಯಕ ಅಜಿಂಕ್ಯ ರಹಾನೆ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದರು. ಆದರೆ ಪಂದ್ಯ ಕೇವಲ 3.4 ಓವರ್‌ಗಳಷ್ಟೇ ನಡೆಯಿತು. ನಂತರ ಆರಂಭವಾದ ಮಳೆ ಆಟವನ್ನು ಸಂಪೂರ್ಣವಾಗಿ ಅಡ್ಡಿಪಡಿಸಿತು.

ಮಳೆ ಬರುವಷ್ಟರಲ್ಲಿ ಕೆಕೆಆರ್ 3.4 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 25 ರನ್ ಗಳಿಸಿತ್ತು. ನಾಯಕ ರಹಾನೆ ಹಾಗೂ ಅಂಗ್‌ಕ್ರಿಶ್ ರಘುವಂ ಕ್ರೀಸ್‌ನಲ್ಲಿ ಇದ್ದರು. ಎರಡನೇ ಓವರ್‌ನಲ್ಲಿ ಕ್ಸೇವಿಯರ್ ಬಾರ್ಟ್ಲೆಟ್ ಎರಡು ವಿಕೆಟ್ ಕಬಳಿಸಿ ಕೆಕೆಆರ್‌ಗೆ ಆಘಾತ ನೀಡಿದ್ದರು.

ಬಳಿಕ ಮಳೆ ಮುಂದುವರಿದ ಕಾರಣ ಪಂದ್ಯವನ್ನು ರದ್ದುಪಡಿಸಲಾಗಿದ್ದು, ಫಲಿತಾಂಶ ಸಿಗದ ಹಿನ್ನೆಲೆಯಲ್ಲಿ ಎರಡೂ ತಂಡಗಳಿಗೆ ತಲಾ ಒಂದು ಪಾಯಿಂಟ್ ನೀಡಲಾಗಿದೆ. ಇದು ಕೆಕೆಆರ್‌ಗೆ ಈ ಸೀಸನ್‌ನ ಮೊದಲ ಪಾಯಿಂಟ್ ಆಗಿದೆ.

ಇನ್ನೊಂದೆಡೆ, ಪಂಜಾಬ್ ಕಿಂಗ್ಸ್ 5 ಪಾಯಿಂಟ್‌ಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಶ್ರೇಯಸ್ ಅಯ್ಯರ್ ನೇತೃತ್ವದ ತಂಡ ಉತ್ತಮ ಪ್ರದರ್ಶನ ತೋರಿಸುತ್ತಿದೆ. 4 ಪಾಯಿಂಟ್‌ಗಳೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಎರಡನೇ ಸ್ಥಾನದಲ್ಲಿದೆ.

error: Content is protected !!