Home Blog

ಅಮೆರಿಕದಲ್ಲಿ ವಿಮಾನ ಪತನ: ಪೈಲಟ್ ಸೇರಿ 12 ಮಂದಿ ದುರ್ಮರಣ!

0

ವಾಷಿಂಗ್ಟನ್: ಅಮೆರಿಕದ ಮಿಸೌರಿ ರಾಜ್ಯದಲ್ಲಿ ನಡೆದ ಭೀಕರ ವಿಮಾನ ಅಪಘಾತದಲ್ಲಿ 11 ಸ್ಕೈಡೈವರ್‌ಗಳು ಮತ್ತು 1 ಪೈಲಟ್ ಸೇರಿ ಒಟ್ಟು 12 ಮಂದಿ ಸಾವನ್ನಪ್ಪಿರುವ ದುರ್ಘಟನೆ ನಡೆದಿದೆ.

ಸ್ಕೈಡೈವಿಂಗ್ ಚಟುವಟಿಕೆಗಾಗಿ ಗುತ್ತಿಗೆ ಪಡೆದಿದ್ದ ವಿಮಾನವು ಭಾನುವಾರ ಸ್ಥಳೀಯ ಸಮಯ 11:20ರ ಸುಮಾರಿಗೆ ಟೇಕ್‌ಆಫ್ ಆಗಿತ್ತು.

ಹಾರಾಟ ಆರಂಭವಾದ ಕೆಲವೇ ಕ್ಷಣಗಳಲ್ಲಿ ವಿಮಾನವು ತೀಕ್ಷ್ಣ ಎಡ ತಿರುವು ಪಡೆದು ಬಟ್ಲರ್ ಸ್ಮಾರಕ ವಿಮಾನ ನಿಲ್ದಾಣದಿಂದ ಸುಮಾರು 200 ಗಜ ದೂರದಲ್ಲಿ ಅಪ್ಪಳಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೇಟ್ಸ್ ಕೌಂಟಿ ತುರ್ತು ನಿರ್ವಹಣಾ ವಕ್ತಾರರ ಪ್ರಕಾರ, ವಿಮಾನದಲ್ಲಿದ್ದ ಎಲ್ಲಾ 12 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆ ಕುರಿತು ತೀವ್ರ ಪರಿಶೀಲನೆ ನಡೆಯುತ್ತಿದೆ.

ಅಮೆರಿಕದ ಫೆಡರಲ್ ಏವಿಯೇಷನ್ ಆಡಳಿತ (FAA) ಮಾಹಿತಿ ಪ್ರಕಾರ, ಅಪಘಾತಕ್ಕೀಡಾದ ವಿಮಾನವು ಪೆಸಿಫಿಕ್ ಏರೋಸ್ಪೇಸ್ P-750 ಆಗಿದ್ದು, ವಾಣಿಜ್ಯ ಪ್ರಯಾಣಿಕ ವಿಮಾನವಲ್ಲ, ಸ್ಥಳೀಯ ಸ್ಕೈಡೈವಿಂಗ್ ಕಾರ್ಯಾಚರಣೆಗೆ ಬಳಸಲಾಗುತ್ತಿತ್ತು.

ಅಪಘಾತದ ನಿಖರ ಕಾರಣವನ್ನು ಪತ್ತೆಹಚ್ಚಲು ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಸ್ತೆ ಅಪಘಾತದಲ್ಲಿ ಗಾಯಾಗೊಂಡಿದ್ದ ಯುವಕ ಸಾವು

0

ಉಪ್ಪಿನಂಗಡಿ: ಕಾರು ಮತ್ತು ಬೈಕ್ ನಡುವೆ ಸಂಭವಿಸಿದ್ದ ಭೀಕರ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ತಿಂಗಳುಗಳ ಕಾಲ ಕೋಮಾ ಸ್ಥಿತಿಯಲ್ಲಿದ್ದ ಬದ್ರುದ್ದೀನ್ ಮಠ ಅವರು ಚಿಕಿತ್ಸೆ ಫಲಿಸದೆ ಜೂನ್ 14ರಂದು ನಿಧನರಾಗಿದ್ದಾರೆ.

ಮೂಲತಃ ಮಠ ನಿವಾಸಿಯಾಗಿದ್ದ ಬದ್ರುದ್ದೀನ್, ಪ್ರಸ್ತುತ ನೆಕ್ಕಿಲಾಡಿಯ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಕೂಟೇಲ್ ಹೋಟೆಲ್‌ನಲ್ಲಿ ಉದ್ಯೋಗದಲ್ಲಿದ್ದ ಅವರು 2025ರ ಡಿಸೆಂಬರ್ 11ರ ರಾತ್ರಿ ಉಪ್ಪಿನಂಗಡಿಯಿಂದ ನೆಕ್ಕಿಲಾಡಿಗೆ ಬೈಕ್‌ನಲ್ಲಿ ತೆರಳುತ್ತಿದ್ದಾಗ ಎದುರಿನಿಂದ ಬಂದ ಕಾರು ಅವರ ವಾಹನಕ್ಕೆ ಮುಖಾಮುಖಿ ಢಿಕ್ಕಿ ಹೊಡೆದಿತ್ತು.

ಘಟನೆಯ ನಂತರ ಗಂಭೀರವಾಗಿ ಗಾಯಗೊಂಡ ಅವರನ್ನು ಪುತ್ತೂರಿನಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಬಳಿಕ ಮಂಗಳೂರಿಗೆ ಸ್ಥಳಾಂತರಿಸಲಾಗಿತ್ತು. ಆದರೆ ಚಿಕಿತ್ಸೆ ವೇಳೆ ಅವರು ಕೋಮಾ ಸ್ಥಿತಿಗೆ ಜಾರಿದ್ದರು.

ದೀರ್ಘಕಾಲ ಆಸ್ಪತ್ರೆ ಮತ್ತು ನಂತರ ಮನೆಯಲ್ಲಿನ ಆರೈಕೆಯಲ್ಲಿದ್ದ ಅವರು ಅಂತಿಮವಾಗಿ ಜೂನ್ 14ರಂದು ಮಧ್ಯಾಹ್ನ ಕೊನೆಯುಸಿರೆಳೆದಿದ್ದಾರೆ. ನಂತರ ಅವರ ಅಂತ್ಯಸಂಸ್ಕಾರವನ್ನು ಮಠದ ಬದ್ರಿಯ ಜುಮಾ ಮಸೀದಿಯಲ್ಲಿ ನಡೆಸಲಾಗಿದೆ.

ತಾಯಿಯಿಂದ ಬೇರ್ಪಟ್ಟ ಮರಿಯಾನೆ ಗ್ರಾಮಕ್ಕೆ ಎಂಟ್ರಿ: ಜನರಲ್ಲಿ ಆತಂಕ!

ಆನೇಕಲ್: ತಾಯಿಯಿಂದ ಬೇರ್ಪಟ್ಟ ಮರಿಯಾನೆ ಆಹಾರ ಹುಡುಕುತ್ತಾ ಗ್ರಾಮಕ್ಕೆ ಬಂದ ಘಟನೆ ತಮಿಳುನಾಡಿನ ಡೆಂಕಣಿಕೋಟೆ ಗಡಿಭಾಗದಲ್ಲಿ ನಡೆದಿದೆ.

ತಾಯಿ ಆನೆಯ ಗುಂಪಿನಿಂದ ದೂರವಾದ ಮರಿಯಾನೆ, ಜಮೀನಿನ ಮನೆಯೊಂದರ ಬಳಿ ಕಾಣಿಸಿಕೊಂಡಿದ್ದು ಸ್ಥಳೀಯರಲ್ಲಿ ಆತಂಕ ಉಂಟುಮಾಡಿದೆ.

ಮರಿಯಾನೆ ಆಹಾರಕ್ಕಾಗಿ ಗ್ರಾಮಕ್ಕೆ ಪ್ರವೇಶಿಸಿದ್ದು, ಖಾಸಗಿ ತೋಟದ ಮನೆಯ ಬಳಿ ಕಾಣಿಸಿಕೊಂಡಿದೆ. ಆನೆ ಕಂಡ ಸ್ಥಳೀಯರು ಕೂಡಲೇ ಜಮಾಯಿಸಿದ್ದು, ಕಬ್ಬು ಹಾಗೂ ಬಾಳೆಹಣ್ಣು ನೀಡಿ ಅದರ ಹಸಿವು ನೀಗಿಸಿದ್ದಾರೆ.

ಘಟನೆ ಕುರಿತು ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ. ಮರಿಯಾನೆಯನ್ನು ಸುರಕ್ಷಿತವಾಗಿ ತಾಯಿ ಆನೆಯ ಗುಂಪಿಗೆ ಸೇರಿಸಲು ಅರಣ್ಯ ಇಲಾಖೆ ಹರಸಾಹಸ ನಡೆಸುತ್ತಿದೆ.

ಪ್ರಸ್ತುತ ಅರಣ್ಯ ಸಿಬ್ಬಂದಿ ತಾಯಿ ಆನೆಯ ಗುಂಪಿನ ಪತ್ತೆಗೆ ಕಾರ್ಯಾಚರಣೆ ಮುಂದುವರಿಸಿದ್ದಾರೆ ಎಂದು ತಿಳಿದುಬಂದಿದೆ.

ತೀರ್ಥಯಾತ್ರೆ ವೇಳೆ ಭೀಕರ ದುರಂತ: ಬಾವಿಗೆ ಉರುಳಿದ ಪಿಕಪ್ ವ್ಯಾನ್, ಮಹಿಳೆಯರು-ಮಕ್ಕಳು ಸೇರಿ 8 ಮಂದಿ ಸಾವು

0

ಮಹಾರಾಷ್ಟ್ರ: ಸೋಲಾಪುರ ಜಿಲ್ಲೆಯಲ್ಲಿ ತೀರ್ಥಯಾತ್ರೆಗೆ ತೆರಳುತ್ತಿದ್ದ ಭಕ್ತರ ವಾಹನ ಭೀಕರ ಅಪಘಾತಕ್ಕೀಡಾಗಿ ಮಹಿಳೆಯರು ಮತ್ತು ಮಕ್ಕಳು ಸೇರಿ 8 ಮಂದಿ ಸಾವನ್ನಪ್ಪಿರುವ ದುರ್ಘಟನೆ ನಡೆದಿದೆ.

ಮಲ್ಶಿರಾಸ್ ತಾಲ್ಲೂಕಿನ ತಂಡುಲ್ ಗ್ರಾಮದ ಸಮೀಪ ಭಾನುವಾರ ಸಂಜೆ 15 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಪಿಕಪ್ ವ್ಯಾನ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಬಾವಿಗೆ ಉರುಳಿ ಬಿದ್ದಿದೆ. ಪರಿಣಾಮ ಸ್ಥಳದಲ್ಲೇ ನಾಲ್ವರು ಮಹಿಳೆಯರು ಸೇರಿದಂತೆ ಒಟ್ಟು ಎಂಟು ಮಂದಿ ಮೃತಪಟ್ಟಿದ್ದಾರೆ.

ಅಪಘಾತದಲ್ಲಿ ಇನ್ನೂ ಏಳು ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ತಕ್ಷಣವೇ ರಕ್ಷಿಸಿ ಸಮೀಪದ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಗಾಯಾಳುಗಳ ಆರೋಗ್ಯ ಸ್ಥಿತಿಯ ಮೇಲೆ ವೈದ್ಯರು ನಿಗಾ ವಹಿಸಿದ್ದಾರೆ.

ಮೃತರು ಹಾಗೂ ಗಾಯಾಳುಗಳು ಪಂಢರಪುರ ಸಮೀಪದ ರಂಜನಿ ಗ್ರಾಮದ ನಿವಾಸಿಗಳಾಗಿದ್ದು, ಧಾರ್ಮಿಕ ಯಾತ್ರೆಯ ಭಾಗವಾಗಿ ಒಟ್ಟಿಗೆ ಪ್ರಯಾಣಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಪೊಲೀಸರು, ಸ್ಥಳೀಯ ಆಡಳಿತ ಹಾಗೂ ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ನಡೆಸಿದರು. ಅಪಘಾತದ ನಿಖರ ಕಾರಣ ಕುರಿತು ತನಿಖೆ ಮುಂದುವರಿದಿದೆ.

ಹೇಮಾವತಿ ನದಿಯಲ್ಲಿ ಮುಳುಗಿ ಬೆಂಗಳೂರಿನ ಮೂವರು ಯುವಕರು ದಾರುಣ ಸಾವು

0

ಹಾಸನ: ಶೆಟ್ಟಿಹಳ್ಳಿ ಚರ್ಚ್ ವೀಕ್ಷಣೆಗೆ ತೆರಳಿದ್ದ ಬೆಂಗಳೂರಿನ ಯುವಕರ ತಂಡಕ್ಕೆ ಭೀಕರ ದುರಂತ ಸಂಭವಿಸಿದ್ದು, ಹೇಮಾವತಿ ನದಿಯ ಹಿನ್ನೀರಿನಲ್ಲಿ ಈಜಲು ಇಳಿದ ಮೂವರು ಯುವಕರು ನೀರುಪಾಲಾಗಿದ್ದಾರೆ.

ಚರಣ್ (20), ಮಿಲನ್ (23) ಮತ್ತು ಮಣಿಕಂಠ (20) ಮೃತ ದುರ್ದೈವಿಗಳು. ಧರ್ಮಸ್ಥಳ ಪ್ರವಾಸ ಮುಗಿಸಿ ಬೆಂಗಳೂರಿಗೆ ಹಿಂದಿರುಗುತ್ತಿದ್ದ 10 ಮಂದಿ ಸ್ನೇಹಿತರ ತಂಡ, ಗೂಗಲ್ ಮ್ಯಾಪ್‌ನಲ್ಲಿ ಶೆಟ್ಟಿಹಳ್ಳಿ ಚರ್ಚ್ ಬಗ್ಗೆ ಮಾಹಿತಿ ತಿಳಿದು ಅಲ್ಲಿಗೆ ಭೇಟಿ ನೀಡಿತ್ತು.

ಈ ವೇಳೆ ಚರ್ಚ್ ಸಮೀಪದ ಹಿನ್ನೀರಿನಲ್ಲಿ ಈಜಲು ಇಳಿದ ಮೂವರು ಯುವಕರು ನೀರಿನ ಆಳ ಅರಿಯದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ದಡದಲ್ಲಿದ್ದ ಸ್ನೇಹಿತರು ಸಹಾಯಕ್ಕಾಗಿ ಕೂಗಿಕೊಂಡರೂ, ಯಾರಿಗೂ ಈಜು ಬಾರದ ಕಾರಣ ಯುವಕರನ್ನು ರಕ್ಷಿಸಲು ಸಾಧ್ಯವಾಗಲಿಲ್ಲ.

ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳ ಮತ್ತು ಪೊಲೀಸ್ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದು, ಇಬ್ಬರ ಮೃತದೇಹಗಳನ್ನು ಹೊರತೆಗೆದಿದ್ದಾರೆ. ಕತ್ತಲೆ ಹೆಚ್ಚಾದ ಹಿನ್ನೆಲೆಯಲ್ಲಿ ಶೋಧ ಕಾರ್ಯವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದು, ಉಳಿದ ಯುವಕನ ಮೃತದೇಹಕ್ಕಾಗಿ ಸೋಮವಾರ ಬೆಳಗ್ಗೆ ಮತ್ತೆ ಕಾರ್ಯಾಚರಣೆ ಆರಂಭಿಸಲಾಗುತ್ತದೆ.

ಪ್ರವಾಸದ ಉತ್ಸಾಹದಲ್ಲಿದ್ದ ಯುವಕರ ತಂಡಕ್ಕೆ ಈ ದುರಂತ ಆಘಾತ ಉಂಟುಮಾಡಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.

ಮತ್ತಷ್ಟು ದುಬಾರಿಯಾದ ಗೋಲ್ಡ್: 15,000 ರೂ ಗಡಿ ದಾಟಿದ ಅಪರಂಜಿ ಚಿನ್ನದ ಬೆಲೆ!

0

ನವದೆಹಲಿ: ದೇಶದಲ್ಲಿ ಚಿನ್ನದ ಬೆಲೆ ಮತ್ತೆ ಏರಿಕೆಯ ಹಾದಿ ಹಿಡಿದಿದ್ದು, ಕಳೆದ ಕೆಲವು ವಾರಗಳಿಂದ ಕಂಡಿದ್ದ ಇಳಿಕೆಯ ಬಳಿಕ ಇದೀಗ ಸತತವಾಗಿ ಹೆಚ್ಚಳ ಕಂಡು ಬಂದಿದೆ.

ಕಳೆದ ಎರಡು ದಿನಗಳಲ್ಲಿ ಸುಮಾರು 300 ರೂ.ಗಳಷ್ಟು ಏರಿಕೆ ಕಂಡಿದ್ದ ಚಿನ್ನದ ದರ ಇಂದೂ ಸೋಮವಾರ 225 ರೂ. ಹೆಚ್ಚಾಗಿದೆ. ಅಪರಂಜಿ ಚಿನ್ನದ ಬೆಲೆ 15,000 ರೂ. ಗಡಿ ದಾಟಿದ್ದು, ಬೆಳ್ಳಿ ಬೆಲೆಯಲ್ಲೂ ಪ್ರತಿ ಗ್ರಾಂಗೆ 5 ರೂ. ಹೆಚ್ಚಳ ಕಂಡುಬಂದಿದೆ. ವಿದೇಶಿ ಮಾರುಕಟ್ಟೆಗಳಲ್ಲಿ ದರಗಳಲ್ಲಿ ದೊಡ್ಡ ಮಟ್ಟದ ವ್ಯತ್ಯಾಸ ಕಂಡುಬರದಿದ್ದರೂ, ಭಾರತದಲ್ಲಿ ಚಿನ್ನ-ಬೆಳ್ಳಿ ದರಗಳು ಏರಿಕೆಯ ಟ್ರೆಂಡ್ ಮುಂದುವರಿದಿದೆ.

ಪ್ರಸ್ತುತ 10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ ₹1,38,900 ಹಾಗೂ 24 ಕ್ಯಾರಟ್ ಅಪರಂಜಿ ಚಿನ್ನದ ಬೆಲೆ ₹1,51,530 ಆಗಿದ್ದು, 100 ಗ್ರಾಂ ಬೆಳ್ಳಿ ₹26,500ರಲ್ಲಿ ಇದೆ. ಬೆಂಗಳೂರಿನಲ್ಲಿ ಸಹ ಇದೇ ದರಗಳು ಮುಂದುವರಿದಿವೆ ಎಂದು ವರದಿಯಾಗಿದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ:

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,153 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,890 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 11,365 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 265 ರೂ.

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ:

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,153 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,890 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 265 ರೂ.

ಪವಿತ್ರ ಮಾಲೆ ಧರಿಸಿ ಶಬರಿಮಲೆ ಯಾತ್ರೆಗೆ ತೆರಳಿದ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ!

ಬೆಂಗಳೂರು: ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಅವರು ಶಬರಿಮಲೆ ಯಾತ್ರೆ ಕೈಗೊಂಡಿದ್ದಾರೆ.

ಇಂದು ಮುಂಜಾನೆ ಕೊಚ್ಚಿಯ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇಗುಲದಲ್ಲಿ ಪವಿತ್ರ ಮಾಲೆ ಧರಿಸಿ ಯಾತ್ರೆಗೆ ಚಾಲನೆ ನೀಡಿದ್ದಾರೆ.

ಮೂಲಗಳ ಪ್ರಕಾರ, ಅವರು ರಾತ್ರಿ 8 ಗಂಟೆಗೆ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ದರ್ಶನ ಪಡೆಯಲಿದ್ದಾರೆ. ಬಳಿಕ ಸುಮಾರು ಎರಡು ಗಂಟೆಗಳ ಕಾಲ ಪಡಿಪೂಜೆ ಸೇರಿದಂತೆ ವಿಶೇಷ ಪೂಜೆಗಳನ್ನು ಸಲ್ಲಿಸಲಿದ್ದಾರೆ.

ಈ ಯಾತ್ರೆಯಲ್ಲಿ ಮಾಜಿ ಸಚಿವ ಸಾ.ರಾ. ಮಹೇಶ್, ಸಿ.ಎಸ್. ಪುಟ್ಟರಾಜು, ಜೆಡಿಎಲ್‌ಪಿ ನಾಯಕ ಸುರೇಶ್ ಬಾಬು ಹಾಗೂ ಎಂಎಲ್ಸಿ ಭೋಜೇಗೌಡ ಸೇರಿದಂತೆ ಸುಮಾರು 30 ಭಕ್ತರ ತಂಡ ಭಾಗವಹಿಸಿದೆ.

ಶ್ರದ್ಧಾ ಭಕ್ತಿಯೊಂದಿಗೆ ಆರಂಭವಾದ ಈ ಯಾತ್ರೆ ಇಂದು ಸಂಜೆ ಅಯ್ಯಪ್ಪ ಸ್ವಾಮಿ ದರ್ಶನದೊಂದಿಗೆ ಮುಂದುವರಿಯಲಿದೆ ಎಂದು ತಿಳಿದುಬಂದಿದೆ.

ಸಿಎಂ ಆಪ್ತ ಶಾಸಕ ಇಕ್ಬಾಲ್ ಹುಸೇನ್‌ಗೆ ಹೃದಯಾಘಾತ: ಆಸ್ಪತ್ರೆಗೆ ದಾಖಲು!

ಬೆಂಗಳೂರು: ರಾಮನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಇಕ್ಬಾಲ್ ಹುಸೇನ್ ಅವರಿಗೆ ಹೃದಯಾಘಾತ ಸಂಭವಿಸಿದ್ದು, ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ರಾತ್ರಿ ವೇಳೆ ಶಾಸಕರಿಗೆ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯರ ತಂಡ ತುರ್ತು ಚಿಕಿತ್ಸೆ ನೀಡಿದೆ. ವಿಷಯ ತಿಳಿಯುತ್ತಿದ್ದಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಆಸ್ಪತ್ರೆಗೆ ತೆರಳಿ ಶಾಸಕರ ಆರೋಗ್ಯ ವಿಚಾರಿಸಿದ್ದಾರೆ.

ವೈದ್ಯ ವಿ.ಕೆ. ಶ್ರೀನಿವಾಸ್ ಅವರ ನೇತೃತ್ವದ ತಂಡ ಚಿಕಿತ್ಸೆ ನೀಡುತ್ತಿದ್ದು, ಪ್ರಸ್ತುತ ಶಾಸಕರ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿದುಬಂದಿದೆ.

ಮೂಲಗಳ ಪ್ರಕಾರ, ಇಕ್ಬಾಲ್ ಹುಸೇನ್ ಅವರನ್ನು ಎರಡು ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಿನ್ನೆ ಅವರಿಗೆ ಸ್ಟೆಂಟ್ ಅಳವಡಿಸಲಾಗಿದ್ದು, ಹೆಚ್ಚಿನ ಪರೀಕ್ಷೆಗಳ ನಂತರ ಓಪನ್ ಹಾರ್ಟ್ ಸರ್ಜರಿ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದಾರೆ.

ವೈದ್ಯರು ಮಾಹಿತಿ ನೀಡಿದಂತೆ, ನಾಳೆ ಅಥವಾ ನಾಡಿದ್ದು ಓಪನ್ ಹಾರ್ಟ್ ಸರ್ಜರಿ ನಡೆಸುವ ಸಾಧ್ಯತೆ ಇದೆ. ಸದ್ಯ ಶಾಸಕರ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ವೈದ್ಯಕೀಯ ತಂಡ ನಿಗಾ ವಹಿಸಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಗೃಹಲಕ್ಷ್ಮಿಗೆ ಮೇಜರ್ ಸರ್ಜರಿ: ರಾಜ್ಯಾದ್ಯಂತ ಒಟ್ಟು 3.89 ಲಕ್ಷ ಫಲಾನುಭವಿಗಳಿಗೆ ಕೊಕ್​​

ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವದ 5 ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಗೆ ಇದೀಗ ಸರ್ಕಾರದಿಂದ ಮೇಜರ್ ಪರಿಷ್ಕರಣೆ ಕೈಗೊಳ್ಳಲಾಗಿದೆ.

ಯೋಜನೆಯ ದುರುಪಯೋಗ ಪ್ರಕರಣಗಳು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಫಲಾನುಭವಿಗಳ ಮರು ಪರಿಶೀಲನೆ ಆರಂಭವಾಗಿದ್ದು, ಅನರ್ಹರನ್ನು ಗುರುತಿಸಿ ಹಣ ವರ್ಗಾವಣೆ ಸ್ಥಗಿತಗೊಳಿಸಲಾಗಿದೆ.

ಸಿಎಂ ಡಿ.ಕೆ. ಶಿವಕುಮಾರ್ ಅವರೇ ಈಗಾಗಲೇ ಫಲಾನುಭವಿಗಳು ಮರು ಅರ್ಜಿ ಸಲ್ಲಿಸಬೇಕೆಂದು ಮಾಹಿತಿ ನೀಡಿದ್ದಾರೆ. ಒಟ್ಟು 1.30 ಕೋಟಿ ಗೃಹಲಕ್ಷ್ಮಿ ಫಲಾನುಭವಿಗಳ ಪೈಕಿ 3.89 ಲಕ್ಷ ಮಂದಿಯನ್ನು ಅನರ್ಹರೆಂದು ಗುರುತಿಸಲಾಗಿದೆ. ಇದರಲ್ಲಿ ಆದಾಯ ತೆರಿಗೆ ಹಾಗೂ GST ಪಾವತಿದಾರರು ಹಾಗೂ ಮೃತಪಟ್ಟವರ ಹೆಸರಿನಲ್ಲಿ ಹಣ ಪಡೆಯುತ್ತಿದ್ದ ಪ್ರಕರಣಗಳು ಹೆಚ್ಚಾಗಿ ಪತ್ತೆಯಾಗಿವೆ.

ಅಧಿಕಾರಿಗಳ ಮಾಹಿತಿಯ ಪ್ರಕಾರ, 1.94 ಲಕ್ಷ ಐಟಿ/ಜಿಎಸ್‌ಟಿ ಪಾವತಿದಾರರು ಹಾಗೂ 1.95 ಲಕ್ಷ ಮೃತ ಫಲಾನುಭವಿಗಳ ಖಾತೆಗಳಿಗೆ ಹಣ ಜಮೆಯಾಗುತ್ತಿರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಅವರ ಪಾವತಿಯನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದೆ.

ಅನರ್ಹ ಫಲಾನುಭವಿಗಳ ಪೈಕಿ ಬೆಂಗಳೂರು ನಗರ ಮೊದಲ ಸ್ಥಾನದಲ್ಲಿದ್ದು, ನಂತರ ಬೆಳಗಾವಿ, ದಕ್ಷಿಣ ಕನ್ನಡ, ಮೈಸೂರು ಹಾಗೂ ತುಮಕೂರು ಜಿಲ್ಲೆಗಳು ಸ್ಥಾನ ಪಡೆದಿವೆ.

ಜಿಲ್ಲಾವಾರು ವಿವರ (ಮುಖ್ಯಾಂಶ):

  • ಬೆಂಗಳೂರು ನಗರ: 47,871
  • ಬೆಳಗಾವಿ: 32,282
  • ದಕ್ಷಿಣ ಕನ್ನಡ: 16,654
  • ಮೈಸೂರು: 20,680
  • ತುಮಕೂರು: 20,037

ಮಾರ್ಚ್ ತಿಂಗಳಲ್ಲಿ ನಡೆದ ಪರಿಶೀಲನೆಯಲ್ಲೇ ಈ ಅನರ್ಹರನ್ನು ಗುರುತಿಸಲಾಗಿದ್ದು, ವಿವಿಧ ಸರ್ಕಾರಿ ದತ್ತಾಂಶಗಳನ್ನು ಪರಸ್ಪರ ಹೊಂದಾಣಿಕೆ ಮಾಡಿ ಕ್ರಮ ಕೈಗೊಳ್ಳಲಾಗಿದೆ ಎಂದು ಇಲಾಖೆ ತಿಳಿಸಿದೆ.

ಮುಂದಿನ ಹಂತದಲ್ಲಿ ಬಯೋಮೆಟ್ರಿಕ್ ದೃಢೀಕರಣ ವ್ಯವಸ್ಥೆ ಜಾರಿಗೆ ತರಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಿದ್ಧತೆ ನಡೆಸಿದೆ. ಇದರಿಂದ ನಕಲಿ ಫಲಾನುಭವಿಗಳನ್ನು ತಡೆಯಲು ಹಾಗೂ ಯೋಜನೆಯ ನಿಖರ ಅನುಷ್ಠಾನಕ್ಕೆ ಸಹಾಯವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಪರಿಷ್ಕರಣೆಯಿಂದ ಸರ್ಕಾರಕ್ಕೆ ಪ್ರತಿ ತಿಂಗಳು ಸುಮಾರು 77 ಕೋಟಿ ರೂ. ಉಳಿತಾಯವಾಗಲಿದೆ ಎಂದು ಅಂದಾಜಿಸಲಾಗಿದೆ.

ಧಾರಾಕಾರ ಮಳೆಗೆ ತತ್ತರಿಸಿದ ಮಂತ್ರಾಲಯ: ಹೊಳೆಯಂತಾದ ರಸ್ತೆಗಳು, ಸಂಕಷ್ಟದಲ್ಲಿ ಭಕ್ತರು!

ರಾಯಚೂರು: ಧಾರಾಕಾರ ಮಳೆಗೆ ಮಂತ್ರಾಲಯ ಅಕ್ಷರಶಃ ನಲುಗಿ ಹೋಗಿದೆ.

ಧಾರಾಕಾರ ಮಳೆಯಿಂದ ಪ್ರಸಿದ್ಧ ಶ್ರೀ ರಾಘವೇಂದ್ರ ಸ್ವಾಮಿ ಮಠ ಸುತ್ತಮುತ್ತಲ ಪ್ರದೇಶಗಳು ಸಂಪೂರ್ಣವಾಗಿ ಜಲಾವೃತಗೊಂಡಿದ್ದು, ಭಕ್ತರ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗಿದೆ.

ಮಳೆಯ ಅರ್ಭಟದಿಂದ ರಸ್ತೆಗಳಲ್ಲಿ ನೀರು ಹರಿದು ಹೊಳೆಯಂತಾದ ದೃಶ್ಯ ನಿರ್ಮಾಣವಾಗಿದ್ದು, ಅನೇಕ ಭಕ್ತರು ನೀರಿನ ನಡುವೆಯೇ ರಾಯರ ದರ್ಶನಕ್ಕೆ ತೆರಳುವ ಪರಿಸ್ಥಿತಿ ಎದುರಾಗಿದೆ.

ಸ್ಥಳೀಯ ಆಡಳಿತ ಹಾಗೂ ಮಠದ ಆಡಳಿತ ಮಂಡಳಿ ತಕ್ಷಣ ಕ್ರಮ ಕೈಗೊಂಡು ಭಕ್ತರಿಗೆ ಅಗತ್ಯ ಸಹಾಯ ಹಾಗೂ ಸುರಕ್ಷತಾ ವ್ಯವಸ್ಥೆ ಕಲ್ಪಿಸಿದ ಹಿನ್ನೆಲೆಯಲ್ಲಿ ದೊಡ್ಡ ಮಟ್ಟದ ಅನಾಹುತ ತಪ್ಪಿದೆಯೆಂದು ತಿಳಿದುಬಂದಿದೆ.

error: Content is protected !!