Home Blog

ಆಟವಾಡುತ್ತಿದ್ದ ವೇಳೆ ಮೊದಲ ಮಹಡಿಯಿಂದ ಬಿದ್ದ ಮಗು: ಪವಾಡ ಸದೃಶ ರೀತಿಯಲ್ಲಿ ಪಾರು

ಬೆಂಗಳೂರು: ಮನೆಯಲ್ಲಿ ಆಟವಾಡುತ್ತಿದ್ದ ಮಗು ಆಕಸ್ಮಿಕವಾಗಿ ಹೊರಬಂದು ಮೊದಲ ಮಹಡಿಯಿಂದ ಬಿದ್ದು ಗಂಭೀರ ಗಾಯಗೊಂಡಿರುವ ಘಟನೆ ನಾಯಂಡಹಳ್ಳಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಮಗು ಮಹಡಿಯಿಂದ ಬೀಳುವ ದೃಶ್ಯವು ಸಿಸಿಟಿವಿ ಕ್ಯಾಮರಾದಲ್ಲಿ ದಾಖಲಾಗಿದ್ದು, ಕುಟುಂಬ ಮತ್ತು ನೆರೆಹೊರೆಯವರಿಗೆ ಭಾರೀ ಆತಂಕ ಮೂಡಿಸಿದೆ.

ನಯಂಡನಹಳ್ಳಿ ನಿವಾಸಿ ನವೀನ್ ಮತ್ತು ಜಯಶ್ರೀ ದಂಪತಿಯ ಏಕೈಕ ಮಗಳು ಸಹನ. ಮನೆಯಲ್ಲಿ ಆಟವಾಡುತ್ತಿದ್ದ ಮಗು ಮುಂಬಾಗದ ಡೋರ್ ಮೂಲಕ ಮನೆಯಿಂದ ಹೊರಗಡೆ ಬಂದಿದೆ. ಮನೆಯ ವರಾಂಡದಲ್ಲಿ ಹಾಕಿದ್ದ ಸ್ಟೂಲ್ ಮೇಲೆ ಏರಿದಾಗ ಆಯತಪ್ಪಿ ಕೆಳಗೆ ಬಿದ್ದಿದ್ದು, ರಕ್ತದ ಮಡುವಿನಲ್ಲಿ ಬಿದ್ದ ಮಗು ನೋಡಿ ತಾಯಿ ಜಯಶ್ರೀ ನಡು ರಸ್ತೆಯಲ್ಲೇ ಮೂರ್ಚೆ ತಪ್ಪಿ ಅಸ್ವಸ್ಥಗೊಂಡಿದ್ದಾರೆ.

ಮಗುವನ್ನು ತಕ್ಷಣವೇ ಬಸವನಗುಡಿಯ ರಂಗದೊರೆ ಸ್ಮಾರಕ ಆಸ್ಪತ್ರೆಯ ಐಸಿಯುವಿನಲ್ಲಿ ದಾಖಲಿಸಿಕೊಂಡು ಚಿಕಿತ್ಸೆ ನೀಡಲಾಗಿದೆ. ವೈದ್ಯರು ತಲೆ ಭಾಗಕ್ಕೆ ಸ್ವಲ್ಪ ಗಾಯ ಹೊರತು, ಪ್ರಾಣಕ್ಕೆ ಯಾವುದೇ ಅಪಾಯವಿಲ್ಲ ಎಂದು ತಿಳಿಸಿದ್ದಾರೆ. ಮಗು ತಲೆಗೆ ಮೂರು ಹೊಲಿಗೆ ಹಾಕಲಾಗಿದ್ದು, ಸಹನಾ ಈಗ ಚೇತರಿಕೆ ಕಾಣಿಸುತ್ತಿದ್ದಾರೆ.

ಘಟನೆಯ ಸಮಯದಲ್ಲಿ ತಾಯಿ ಹಾಲು ಕಾಯಿಸಲು ಹೋಗಿದ್ದರು. ಆ ವೇಳೆ ಮಗು ಹೊರ ಬಂದು ಆಯ ತಪ್ಪಿ ಕೆಳಗೆ ಬಿದ್ದಿದೆ. ಈ ಘಟನೆಯಿಂದ ಪೋಷಕರು ಮತ್ತು ಸ್ಥಳೀಯರು ಮಕ್ಕಳ ಸುರಕ್ಷತೆಗೆ ಹೆಚ್ಚು ಎಚ್ಚರಿಕೆ ವಹಿಸುವಂತೆ ಮನವಿ ಮಾಡುತ್ತಿದ್ದಾರೆ.

ತಿಥಿ ಊಟ ತಿಂದ್ರೆ ಅಶುಭವಾ? ತಜ್ಞರು ಹೇಳೋದೇನು ಗೊತ್ತಾ!?

0

ನಮ್ಮ ಸಂಪ್ರದಾಯದಲ್ಲಿ ದೈವಾಧೀನರಾದವರು, ಸ್ವರ್ಗಸ್ಥರಾದವರು ಅಥವಾ ವೈಕುಂಠಕ್ಕೆ ಹೋಗಿದವರ ನೆನಪಿನಲ್ಲಿ ತಿಥಿ ಊಟ ಅಥವಾ ತಿಥಿ ಆಹಾರ ಸೇವಿಸುವ ಪದ್ಧತಿ ಇದೆ. ಕೆಲವರು ಇದನ್ನು ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಾರೆ, “ಅದೃಷ್ಟ ಕೆಡುತ್ತದೆ” ಅಥವಾ “ಅಶುಭವಾಗುತ್ತದೆ” ಎಂಬ ಭಾವನೆಯಿಂದ.

ಆದರೆ ವಾಸ್ತವದಲ್ಲಿ, ದೈಹಿಕವಾಗಿ ಯಾರಾದರೂ ಮೃತರಾದಾಗ ಅವರ ಆತ್ಮ ಈ ಲೋಕದಿಂದ ನಿರ್ಗಮಿಸುತ್ತದೆ. ನಂತರ ಮೂರು ದಿನದ ಅಥವಾ ಹನ್ನೊಂದನೇ ದಿನದ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ.

ಹನ್ನೊಂದನೇ ದಿನದ ತಿಥಿ ಊಟದಲ್ಲಿ ಬಂಧುಬಾಂಧವರು, ಸ್ನೇಹಿತರು ಬಂದು ದಿವಂಗತನ ಭಾವಚಿತ್ರಕ್ಕೆ ಪೂಜೆ ಮಾಡಿ ಅವರ ನೆನಪಿನಲ್ಲಿ ಆಹಾರ ಸೇವಿಸುತ್ತಾರೆ. ಇದು ಯಾವುದೇ ರೀತಿಯ ಆಧ್ಯಾತ್ಮಿಕ ಅಥವಾ ದೈಹಿಕ ತೊಂದರೆ ಉಂಟುಮಾಡುವುದಿಲ್ಲ. ಆಹಾರ ಸೇವಿಸುವುದು ದಿವಂಗತನ ಆತ್ಮಕ್ಕೆ ಗೌರವ ಸಲ್ಲಿಸುವ ಪದ್ಧತಿ. ಚಿಕ್ಕವರು, ಹಿರಿಯರು, ಆರೋಗ್ಯ ಸಮಸ್ಯೆ ಹೊಂದಿರುವವರು ಎಲ್ಲರೂ ಭಾಗವಹಿಸಬಹುದು. ಗರುಡ ಪುರಾಣದ ಪ್ರಕಾರ, ತಿಥಿ ಸಂದರ್ಭದಲ್ಲಿ ನೀಡುವ ಒಂದು ತೊಟ್ಟು ನೀರು, ತೀರ್ಥ ಅಥವಾ ಪ್ರಸಾದದಿಂದ ಯಾವುದೇ ದುಷ್ಪರಿಣಾಮಗಳಾಗುವುದಿಲ್ಲ.

ತಿಥಿ ಊಟಕ್ಕೆ ಹೋಗಿ ಭೋಜನ ಸೇವಿಸುವುದು ಧರ್ಮಪೂರ್ಣ, ಸುರಕ್ಷಿತ ಮತ್ತು ಶ್ರದ್ಧೆಯಾಚರಣೆ. ಇದು ದಿವಂಗತನ ಆತ್ಮಕ್ಕೆ ಸಂತೋಷ ನೀಡುವುದಷ್ಟೇ ಅಲ್ಲ, ನಮ್ಮ ಜೀವನಕ್ಕೆ ಧನಾತ್ಮಕ ಆಶೀರ್ವಾದವನ್ನು ನೀಡುತ್ತದೆ.

ಯೋಗೇಶ್‌ ಗೌಡ ಕೊಲೆ ಪ್ರಕರಣ: ‘ಕೈ’ ಶಾಸಕ ವಿನಯ್‌ ಕುಲಕರ್ಣಿ ಭವಿಷ್ಯ ಇಂದೇ ನಿರ್ಧಾರ!

ಧಾರವಾಡ:- ಧಾರವಾಡ ಗ್ರಾಮೀಣ ಕ್ಷೇತ್ರದ ಮಾಜಿ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಅವರ ಭವಿಷ್ಯವು ಇಂದು ನ್ಯಾಯಾಲಯದ ತೀರ್ಪಿನ ಮೂಲಕ ನಿರ್ಧಾರವಾಗಲಿದೆ.

2016 ರಲ್ಲಿ ನಡೆದ ಜಿಲ್ಲಾ ಪಂಚಾಯತ್ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣವು ರಾಜ್ಯ ರಾಜಕೀಯದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಕೊಲೆಯ ದಿನ ಯೋಗೇಶ್ ಗೌಡ ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದರು ಮತ್ತು ಜೈಲಿನಲ್ಲಿ ಇದ್ದಾಗಲೇ ಚುನಾವಣೆ ಗೆದ್ದು ಹೈ ಪ್ರೊಫೈಲ್ ಕೇಸ್‌ ಆಗಿತ್ತು. ಈ ಪ್ರಕರಣದಲ್ಲಿ ವಿನಯ್ ಕುಲಕರ್ಣಿ 15ನೇ ಆರೋಪಿಯಾಗಿ (A-15) ಹೆಸರು ಬಂದಿದ್ದು, ಪೊಲೀಸ್ ಅಧಿಕಾರಿಗಳೂ ತನಿಖೆಯಲ್ಲಿ ತಳಕು ಹಾಕಿಕೊಂಡಿದ್ದರು.

2020 ರಲ್ಲಿ ವಿನಯ್ ಕುಲಕರ್ಣಿ ಸಿಬಿಐ ಬಂಧನಕ್ಕೆ ಒಳಗಾದರು. ತನಿಖೆಯಲ್ಲಿ ಸಾಕ್ಷಿ ನಾಶ ಮಾಡಲು ಅಧಿಕಾರ ದುರುಪಯೋಗ ಮಾಡಿದ್ದಾರೆಂದು ವರದಿ ಇದೆ. 2016 ರ ಏಪ್ರಿಲ್‌ನಲ್ಲಿ ಜಿಲ್ಲಾ ಪಂಚಾಯತ್ ಸಭಾ ಭವನದಲ್ಲಿ ನಡೆದ ಮಾತಿನ ಚಕಮಕಿ ಮತ್ತು ಅಧಿಕಾರ ಹಸ್ತಾಂತರ ವಿಳಂಬವು ಯೋಗೇಶ್ ಗೌಡ ಹಾಗೂ ವಿನಯ್ ಕುಲಕರ್ಣಿಯ ನಡುವೆ ವೈಮನಸ್ಸನ್ನು ಹೆಚ್ಚಿಸಿತ್ತು. ಕೊಲೆ ರಾಜಕೀಯ ದ್ವೇಷದಿಂದ ನಡೆದಿದೆ ಎಂದು ಕೆಲ ಪಕ್ಷಗಳ ಮುಖಂಡರು ಆರೋಪಿಸಿದ್ದಾರೆ.

ಇವುಗಳೊಂದಿಗೆ, ಈ ಹೈ ಪ್ರೊಫೈಲ್ ಪ್ರಕರಣವು ಇಂದು ನ್ಯಾಯಾಲಯದ ತೀರ್ಪಿನಿಂದ ಹೊಸ ತಿರುವು ಪಡೆಯಲಿದೆ.

ದಾವಣಗೆರೆ ಬಾಗಲಕೋಟೆ ಬೈ ಎಲೆಕ್ಷನ್: ಮತದಾನ ಪ್ರಕ್ರಿಯೆ ಆರಂಭ, ಮತದಾರರ ಕೈಯಲ್ಲಿದೆ ಅಭ್ಯರ್ಥಿಗಳ ಭವಿಷ್ಯ

ದಾವಣಗೆರೆ/ಬಾಗಲಕೋಟೆ: ಕರ್ನಾಟಕದ ವಿಧಾನಸಭೆ ಕ್ಷೇತ್ರಗಳಾದ ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳಿಗೆ ಇಂದು ಉಪಚುನಾವಣೆ ನಡೆಯುತ್ತಿದೆ.

ಹಿರಿಯ ನಾಯಕರಾದ ಶಾಮನೂರು ಶಿವಶಂಕರಪ್ಪ ಮತ್ತು ಎಚ್.ವೈ. ಮೇಟಿ ನಿಧನದಿಂದ ತೆರವಾಗಿದ್ದ ಈ ಸ್ಥಾನಗಳಿಗೆ ಕಾಂಗ್ರೆಸ್ ಮತ್ತು ಬಿಜೆಪಿ ಕಣಕ್ಕೆ ಇಳಿದಿದ್ದು, ಮತದಾರರು ಯಾರ ಕೈ ಹಿಡಿಯುತ್ತಾರೆ ಎಂಬುದಕ್ಕೆ ಕುತೂಹಲ ಮೂಡಿದೆ.

ಮತದಾನ ವಿವರ – ಬಾಗಲಕೋಟೆ – ದಾವಣಗೆರೆ ದಕ್ಷಿಣ: 

ಮತಗಟ್ಟೆ – 322 – 284
ಸಿಬ್ಬಂದಿ – 2500 – 1,489
ಕಣದಲ್ಲಿರುವ ಅಭ್ಯರ್ಥಿಗಳು – 9 – 25
ಒಟ್ಟು ಮತದಾರರು – 2,59,797 – 2,31,072
ಪುರುಷರು – 1,26,999 – 1,13,399
ಮಹಿಳೆಯರು – 1,32,775 – 1,17,690

ಸಿಬ್ಬಂದಿ ಮತ್ತು ಭದ್ರತೆ:
ಚುನಾವಣಾ ಕರ್ತವ್ಯಕ್ಕಾಗಿ 1,430ಕ್ಕೂ ಹೆಚ್ಚು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಹೃದಯಾಘಾತ ಮತ್ತು ಬಿಪಿ ಸಮಸ್ಯೆ ಇರುವ ಸಿಬ್ಬಂದಿಗಾಗಿ ಪ್ರತಿ ಕೇಂದ್ರದಲ್ಲೂ ಹೆಲ್ತ್ ಚೆಕಪ್ ವ್ಯವಸ್ಥೆ ಮಾಡಲಾಗಿದೆ ಎರಡೂ ಕ್ಷೇತ್ರಗಳಾದ್ಯಂತ ವ್ಯಾಪಕ ಬಂದೋಬಸ್ತ್ ನಡುವೆ ಮತದಾನಕ್ಕೆ ವ್ಯವಸ್ಥೆ ಮಾಡಲಾಗಿದೆ.

ಮತದಾನದ ಸಮಯ ಮತ್ತು ಸೌಲಭ್ಯ:
ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ. ಹಿರಿಯ ನಾಗರಿಕರು ಮತ್ತು ಅಂಗವಿಕಲರನ್ನು ಮತಗಟ್ಟೆಗೆ ಕರೆತರಲು ಜಿಲ್ಲಾಡಳಿತವು ಉಚಿತ ವಾಹನ ಸೌಲಭ್ಯವನ್ನು ಒದಗಿಸಿದೆ. ಸುಡು ಬಿಸಿಲಿನ ಹಿನ್ನೆಲೆಯಲ್ಲಿ ಮತಗಟ್ಟೆಗಳಲ್ಲಿ ಕುಡಿಯುವ ನೀರು ಮತ್ತು ನೆರಳಿನ ವ್ಯವಸ್ಥೆ ಮಾಡಲಾಗಿದೆ. ಇಂದು ದಾಖಲಾಗುವ ಮತಗಳ ಎಣಿಕೆಯು ಮೇ 4ರಂದು ನಡೆಯಲಿದ್ದು, ಅಂದು ಫಲಿತಾಂಶ ಪ್ರಕಟವಾಗಲಿದೆ.

ವಿಜಯಪುರ| ಭೂತನಾಳ ಕೆರೆಯಲ್ಲಿ ಪ್ರವಾಸಕ್ಕೆ ಬಂದಿದ್ದ ಮೂವರು ಮುಳುಗಿ ಸಾವು

ವಿಜಯಪುರ: ವಿಜಯಪುರ ಹೊರವಲಯದ ಭೂತನಾಳ ಕೆರೆಯಲ್ಲಿ ಪ್ರವಾಸಕ್ಕೆ ಬಂದಿದ್ದ ಬೆಂಗಳೂರು ಮೂಲದ ಮೂವರು ಯುವಕರು ನೀರಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.

ಮೃತರು ಬೆಂಗಳೂರಿನ ಆರ್.ಟಿ. ನಗರ ನಿವಾಸಿಗಳಾದ ಬಾಲಕ ಮಹಮ್ಮದ್ ಹಯಾತ್, ಅಬ್ದುಲ್ ಖುದ್ದುಸ್ ಹಾಗೂ ಹೈದರ್ ಪಾಶಾ ಎಂದು ಗುರುತಿಸಲಾಗಿದೆ.

14 ಜನ ಕುಟುಂಬಸ್ಥರು ಪ್ರವಾಸಕ್ಕೆಂದು ವಿಜಯಪುರಕ್ಕೆ ಬಂದಿದ್ದರು. ಈ ವೇಳೆ ಭೂತನಾಳ ಕೆರೆ ವೀಕ್ಷಣೆಗೆ ಹೋಗಿದ್ದರು. ಮೃತ ಬಾಲಕ ನೀರಿಗೆ ಇಳಿದು ಆಟವಾಡುವಾಗ ಮುಳುಗಿದ್ದಾನೆ. ಬಾಲಕನ ರಕ್ಷಣೆಗೆ ಇನ್ನಿಬ್ಬರು ನೀರಿಗೆ ಇಳಿದಿದ್ದಾರೆ. ಆದರೆ ರಕ್ಷಿಸಲಾಗದೇ ಇಬ್ಬರು ಸಾವನ್ನಪ್ಪಿದ್ದು, ಇನ್ನೋರ್ವ ವ್ಯಕ್ತಿ ತೀವ್ರ ಅಸ್ವಸ್ಥರಾಗಿದ್ದರು. ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಆದರ್ಶ ನಗರ ಪೊಲೀಸರು ಎರಡು ಶವಗಳನ್ನು ಹೊರತೆಗೆದಿದ್ದು, ಇನ್ನೋರ್ವ ವ್ಯಕ್ತಿ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಸಾವನ್ನಪ್ಪಿದ್ದಾರೆ.

ಸದ್ಯ ಎಲ್ಲಾ ಶವಗಳನ್ನು ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ. ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣವು ಆದರ್ಶ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ನೆಲಮಂಗಲ: ಬೆಂಕಿ ಅವಘಡದಿಂದ 18 ವರ್ಷದ ಹಳೆಯ ಗೋದಾಮು ಸಂಪೂರ್ಣ ಸುಟುಭಸ್ಮ!

ನೆಲಮಂಗಲ: ನೆಲಮಂಗಲದ ಅಡಕಮಾರನಹಳ್ಳಿಯಲ್ಲಿನ ಆಹಾರ ಸಂಗ್ರಹ ಗೋದಾಮಿನಲ್ಲಿ ಬುಧವಾರ ರಾತ್ರಿ ಭೀಕರ ಬೆಂಕಿ ಅವಘಡ ಸಂಭವಿಸಿದೆ.

ಈ ಘಟನೆಯಾಗಿದ್ದ ಸ್ಥಳ ಆಂಜನೇಯ ದೇಗುಲದ ಬಳಿ ಇದ್ದು, ಗೋದಾಮಿನಲ್ಲಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ಆಹಾರ ಪದಾರ್ಥಗಳು ಸಂಪೂರ್ಣ ಸುಟ್ಟು ಭಸ್ಮವಾಗಿವೆ.

ಸ್ಥಳಕ್ಕೆ ಮಾಹಿತಿ ಲಭ್ಯವಾಗುತ್ತಿದ್ದಂತೆಯೇ ನೆಲಮಂಗಲ ಅಗ್ನಿಶಾಮಕ ದಳದ ಸಿಬ್ಬಂದಿ ತಕ್ಷಣ ದೌಡಾಯಿಸಿ ಬೆಂಕಿ ನಂದಿಸುವ ಕಾರ್ಯಾಚರಣೆಯನ್ನು ಕೈಗೊಂಡಿದ್ದಾರೆ. ಪ್ರತ್ಯಕ್ಷದರ್ಶಿಗಳ ಹೇಳಿಕೆ ಪ್ರಕಾರ, ರಾತ್ರಿ ಸುಮಾರು 10 ಗಂಟೆಯ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿತ್ತು. ಪ್ರಾಥಮಿಕ ವರದಿಗಳಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಈ ಅಗ್ನಿದುರಂತ ಸಂಭವಿಸಿರಬಹುದು ಎಂದು ತಿಳಿಸಲಾಗಿದೆ.

ಈ ಗೋದಾಮು 18 ವರ್ಷಗಳ ಹಿಂದೆ 20 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿತ್ತು. ರಾತ್ರಿ ವೇಳೆ ಘಟನೆ ಸಂಭವಿಸಿದ ಕಾರಣ ಯಾವುದೇ ಕಾರ್ಮಿಕರು ಸ್ಥಳದಲ್ಲಿ ಇರಲಿಲ್ಲ. ಹೀಗಾಗಿ ಯಾವುದೇ ಪ್ರಾಣಾಪಾಯ ಅಥವಾ ಗಾಯಗಳಾಗಿಲ್ಲ ಎಂದು ಗೋದಾಮಿನ ಮಾಲಿಕ ಪದ್ಮರಾಜ್ ತಿಳಿಸಿದ್ದಾರೆ.

ಈ ಬೆಂಕಿ ಅವಘಡವು ಹಠಾತ್‌ಅಪಘಾತವಾಗಿದ್ದರೂ, ಅದರಿಂದ ಯಾವುದೇ ಮಾನವ ಹಾನಿ ಸಂಭವಿಸಿಲ್ಲ ಎನ್ನಲಾಗಿದೆ.

ಪಾರ್ಟಿ ವೇಳೆ ದುರಂತ: ಹೊಂಡದಲ್ಲಿ ಬಿದ್ದು ಕಾಲೇಜು ವಿದ್ಯಾರ್ಥಿ ಸಾವು!

0

ನೊಯ್ಡಾ: ಉತ್ತರ ಪ್ರದೇಶದ ನೊಯ್ಡಾದಲ್ಲಿ ನೀರು ತುಂಬಿದ ಗುಂಡಿಯಲ್ಲಿ ಬಿದ್ದು ಕಾಲೇಜು ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿದ ದುರಂತ ಘಟನೆ ನಡೆದಿದೆ. ಗಾಜಿಯಾಬಾದ್‌ನ ಇಂದಿರಾಪುರಂ ನಿವಾಸಿ ಹರ್ಷಿತ್ ಭಟ್ ಮೃತ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ.

ಅಮಿಟಿ ವಿಶ್ವವಿದ್ಯಾಲಯದ ನಾಲ್ವರು ವಿದ್ಯಾರ್ಥಿಗಳು ಪರೀಕ್ಷೆಗಳ ನಂತರ ಪಾರ್ಟಿಗಾಗಿ ಸೂಪರ್‌ನೋವಾ ಸಮೀಪದ ನಿರ್ಜನ ಪ್ರದೇಶಕ್ಕೆ ತೆರಳಿದ್ದರು. ಈ ವೇಳೆ ಹರ್ಷಿತ್ ನೀರು ತುಂಬಿದ ಹೊಂಡದ ಬಳಿ ಸ್ನಾನಕ್ಕೆ ಇಳಿದಾಗ ಅಕಸ್ಮಾತ್ ಆಳವಾದ ನೀರಿಗೆ ಜಾರಿ ಮುಳುಗಲು ಆರಂಭಿಸಿದ್ದಾನೆ.

ಆತನನ್ನು ರಕ್ಷಿಸಲು ಮೂವರು ಸ್ನೇಹಿತರು ಕೂಡ ನೀರಿಗೆ ಇಳಿದರೂ, ಅವರು ಸಹ ಸಂಕಷ್ಟಕ್ಕೆ ಸಿಲುಕಿದ್ದರು. ಇವರ ಕಿರುಚಾಟ ಕೇಳಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಪೊಲೀಸರು, ಅಗ್ನಿಶಾಮಕ ದಳ, ಎಸ್‌ಡಿಆರ್‌ಎಫ್ ಮತ್ತು ಎನ್‌ಡಿಆರ್‌ಎಫ್ ತಂಡಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿವೆ.

ಹರ್ಷಿತ್ ಭಟ್ ಅವರನ್ನು ನೀರಿನಿಂದ ಹೊರತೆಗೆದು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ವೈದ್ಯರು ಅವರನ್ನು ಮೃತಪಟ್ಟಿದ್ದಾರೆ ಎಂದು ಘೋಷಿಸಿದ್ದಾರೆ. ಇನ್ನು ಉಳಿದ ಮೂವರು ಸ್ನೇಹಿತರನ್ನು ಯಶಸ್ವಿಯಾಗಿ ರಕ್ಷಿಸಲಾಗಿದ್ದು, ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯ ನಿಖರ ಕಾರಣ ತಿಳಿಯಲು ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

ಬಿಪಿ ರೋಗಿಗಳಿಗೆ ಅಪಾಯ ಕಟ್ಟಿಟ್ಟ ಬುತ್ತಿ! ಈ ಆಹಾರಗಳಲ್ಲಿ ಹಿಡನ್ ಸೋಡಿಯಂ ಇರಬಹುದು ಎಚ್ಚರ!

0

ಸಾಮಾನ್ಯವಾಗಿ ಉಪ್ಪಿನ ಪ್ರಮಾಣ ಹೆಚ್ಚು ಇರುವ ಆಹಾರಗಳು ಆರೋಗ್ಯಕ್ಕೆ ಹಾನಿಕಾರಕವೆಂದು ತಿಳಿದಿದ್ದರೂ, ಆರೋಗ್ಯಕರವೆಂದು ಕಾಣುವ ಕೆಲವು ಆಹಾರಗಳಲ್ಲೂ ‘ಹಿಡನ್ ಸೋಡಿಯಂ’ ಇರುವುದರಿಂದ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

ವಿಶೇಷವಾಗಿ ಹೈ ಬ್ಲಡ್ ಪ್ರೆಷರ್ ಸಮಸ್ಯೆ ಇರುವವರು ಉಪ್ಪಿನ ಸೇವನೆಯಲ್ಲಿ ಹೆಚ್ಚು ಜಾಗ್ರತೆ ವಹಿಸಬೇಕು ಎಂದು ಸಲಹೆ ನೀಡಿದ್ದಾರೆ. ಎಲ್ಲಾ ಉಪ್ಪಿನ ರುಚಿ ಇರುವ ಆಹಾರಗಳಲ್ಲಿ ಮಾತ್ರ ಸೋಡಿಯಂ ಇರುತ್ತದೆ ಎಂಬುದು ತಪ್ಪು ಕಲ್ಪನೆ. ದಿನನಿತ್ಯ ಸೇವಿಸುವ ಕೆಲವು ಆಹಾರಗಳಲ್ಲಿ ಉಪ್ಪಿನ ರುಚಿ ಸ್ಪಷ್ಟವಾಗಿ ಗೊತ್ತಾಗದಿದ್ದರೂ, ಅವುಗಳಲ್ಲಿ ಸಾಕಷ್ಟು ಪ್ರಮಾಣದ ಸೋಡಿಯಂ ಅಡಗಿರುತ್ತದೆ. ವೈದ್ಯಕೀಯವಾಗಿ ಇದನ್ನು ‘ಹಿಡನ್ ಸೋಡಿಯಂ’ ಎಂದು ಕರೆಯಲಾಗುತ್ತದೆ. ಇದು ನಿಧಾನವಾಗಿ ದೇಹದಲ್ಲಿ ಜಮೆಯಾಗುತ್ತಾ ರಕ್ತದೊತ್ತಡ ಹಾಗೂ ಹೃದಯ ಸಂಬಂಧಿ ರೋಗಗಳ ಅಪಾಯವನ್ನು ಹೆಚ್ಚಿಸುತ್ತದೆ.

ಉದಾಹರಣೆಗೆ, ಬ್ರೆಡ್ ಅನ್ನು ಹಲವರು ಲಘು ಮತ್ತು ಆರೋಗ್ಯಕರ ಆಹಾರವೆಂದು ಪರಿಗಣಿಸುತ್ತಾರೆ. ಆದರೆ ಒಂದು ಬ್ರೆಡ್ ಸ್ಲೈಸ್‌ನಲ್ಲೇ 150 ರಿಂದ 230 ಮಿಲಿಗ್ರಾಂ ಸೋಡಿಯಂ ಇರಬಹುದು. ಇದೇ ರೀತಿ ಸಂಸ್ಕರಿಸಿದ ಆಹಾರಗಳಲ್ಲಿ ಸಹ ಹೆಚ್ಚುವರಿ ಉಪ್ಪು ಇರುವ ಸಾಧ್ಯತೆ ಇದೆ. ಇವುಗಳನ್ನು ನಿಯಂತ್ರಣವಿಲ್ಲದೆ ಸೇವಿಸಿದರೆ ಆರೋಗ್ಯ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ ಎಂದು ತಜ್ಞರು ತಿಳಿಸಿದ್ದಾರೆ.

ತಜ್ಞರ ಪ್ರಕಾರ, ಒಬ್ಬ ವ್ಯಕ್ತಿ ದಿನಕ್ಕೆ ಗರಿಷ್ಠ 5 ಗ್ರಾಂ ಉಪ್ಪು ಮಾತ್ರ ಸೇವಿಸಬೇಕು. ಆದರೆ ಬಹುತೇಕ ಜನರು ಅರಿವಿಲ್ಲದೆ ಇದಕ್ಕಿಂತ ಹೆಚ್ಚು ಉಪ್ಪು ಸೇವಿಸುತ್ತಿದ್ದಾರೆ. ಬ್ರೆಡ್, ಸೀರಿಯಲ್‌ಗಳಂತಹ ಆಹಾರಗಳಿಂದಲೇ ದೇಹಕ್ಕೆ ಹೆಚ್ಚುವರಿ ಸೋಡಿಯಂ ಸೇರುತ್ತಿದೆ.

ಆದ್ದರಿಂದ, ಆಹಾರ ಸೇವಿಸುವಾಗ ಅದರ ಲೇಬಲ್ ಪರಿಶೀಲಿಸಿ, ಸೋಡಿಯಂ ಪ್ರಮಾಣ ಗಮನಿಸುವುದು ಅತ್ಯಗತ್ಯ. ಈ ಮೂಲಕ ರಕ್ತದೊತ್ತಡ ಮತ್ತು ಹೃದಯ ಸಂಬಂಧಿ ಸಮಸ್ಯೆಗಳನ್ನು ನಿಯಂತ್ರಣದಲ್ಲಿಡಬಹುದು ಎಂದು ಆರೋಗ್ಯ ತಜ್ಞರು ಸೂಚಿಸಿದ್ದಾರೆ.

ಡಿಜೆ ಹಳ್ಳಿಯಲ್ಲಿ ಹಸುಗಳ ಶೆಡ್​​ಗೆ ಬೆಂಕಿ ಪ್ರಕರಣ: ಉದ್ದೇಶಪೂರ್ವಕವಾಗಿಯೇ ನಡೆದಿರೋ ಕೃತ್ಯ!

ಬೆಂಗಳೂರು: ನಗರದ ಡಿಜೆ ಹಳ್ಳಿ ಸಮೀಪದ ಶಾಂಪುರ ರಸ್ತೆಯಲ್ಲಿ ನಿನ್ನೆ ಸಂಭವಿಸಿದ್ದ ಅಗ್ನಿ ದುರಂತಕ್ಕೆ ಇದೀಗ ಮಹತ್ವದ ತಿರುವು ಸಿಕ್ಕಿದೆ.

ಬೆಂಕಿ ಅವಘಡದಲ್ಲಿ ಶೆಡ್‌ನಲ್ಲಿ ಇದ್ದ 20 ಹಸುಗಳ ಪೈಕಿ ಆರು ಮೂಕಪ್ರಾಣಿಗಳು ದಾರುಣವಾಗಿ ಸಾವನ್ನಪ್ಪಿದ್ದವು.

ಆರಂಭದಲ್ಲಿ ಇದು ಆಕಸ್ಮಿಕ ಅಗ್ನಿ ಅವಘಡ ಎಂದು ಶಂಕಿಸಲಾಗಿತ್ತು. ಆದರೆ ಇದೀಗ ಸಿಸಿಟಿವಿ ದೃಶ್ಯಾವಳಿಗಳು ಬಹಿರಂಗವಾಗಿದ್ದು, ಅಪರಿಚಿತ ವ್ಯಕ್ತಿಯೊಬ್ಬ ಉದ್ದೇಶಪೂರ್ವಕವಾಗಿ ಶೆಡ್‌ಗೆ ಬೆಂಕಿ ಹಚ್ಚಿ ಪರಾರಿಯಾಗಿರುವುದು ಬೆಳಕಿಗೆ ಬಂದಿದೆ.

ಘಟನೆಗೆ ಸಂಬಂಧಿಸಿದಂತೆ ಡಿಜೆ ಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಬೆಂಕಿ ಹಚ್ಚಿದ ಆರೋಪಿಯನ್ನು ಪತ್ತೆಹಚ್ಚಲು ಪೊಲೀಸರು ಬಲೆ ಬೀಸಿದ್ದು, ಶೀಘ್ರದಲ್ಲೇ ಬಂಧಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಗಲ್ಫ್ ಯುದ್ಧ ಎಫೆಕ್ಟ್: ಈರುಳ್ಳಿ ಬೀಜದ ದರ ದಿಢೀರ್ ಕುಸಿತ; ರೈತ ಕಂಗಾಲು!

ಬೀದರ್: ಗಲ್ಫ್ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮ ಇದೀಗ ಕೃಷಿ ಕ್ಷೇತ್ರಕ್ಕೂ ತಟ್ಟಿದ್ದು, ಬೀದರ್ ಜಿಲ್ಲೆಯ ಈರುಳ್ಳಿ ಬೀಜ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಯುದ್ಧದ ಹಿನ್ನೆಲೆ ರಫ್ತು ವ್ಯವಹಾರದಲ್ಲಿ ವ್ಯತ್ಯಯ ಉಂಟಾಗಿ, ಈರುಳ್ಳಿ ಬೀಜದ ಬೆಲೆ ಗಣನೀಯವಾಗಿ ಕುಸಿತಗೊಂಡಿದೆ. ಕಳೆದ ವರ್ಷ ಒಂದು ಕ್ವಿಂಟಾಲ್ ಈರುಳ್ಳಿ ಬೀಜಕ್ಕೆ ಸುಮಾರು 1.20 ಲಕ್ಷ ರೂಪಾಯಿ ಸಿಗುತ್ತಿದ್ದರೆ, ಈ ವರ್ಷ ದರ ಅರ್ಧದಷ್ಟು ಇಳಿದು ರೈತರಿಗೆ ಭಾರೀ ನಷ್ಟ ಉಂಟಾಗಿದೆ. ಬೀದರ್ ಜಿಲ್ಲೆಯಲ್ಲಿ ಗುಣಮಟ್ಟದ ಈರುಳ್ಳಿ ಬೀಜ ಉತ್ಪಾದನೆಯಾಗುವುದರಿಂದ ಹೈದರಾಬಾದ್ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇತ್ತು. ಅಲ್ಲಿಂದ ದಲ್ಲಾಳಿಗಳು ವಿದೇಶಗಳಿಗೆ ರಫ್ತು ಮಾಡುತ್ತಿದ್ದರು.

ಆದರೆ ಮಧ್ಯ ಪ್ರಾಚ್ಯದ ಯುದ್ಧದಿಂದ ರಫ್ತು ಕಡಿಮೆಯಾಗಿದ್ದು, ದಲ್ಲಾಳಿಗಳು ಕಡಿಮೆ ದರಕ್ಕೆ ಖರೀದಿ ಮಾಡುತ್ತಿರುವುದು ರೈತರ ಸಂಕಷ್ಟವನ್ನು ಹೆಚ್ಚಿಸಿದೆ. ಜಿಲ್ಲೆಯಲ್ಲೇ ಸುಮಾರು 5 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಈ ಬೆಳೆ ಬೆಳೆದಿದ್ದು, ಕಡಿಮೆ ನೀರಿನಲ್ಲಿ ಬೆಳೆದು ಉತ್ತಮ ಆದಾಯ ನೀಡುವ ಕಾರಣದಿಂದ ರೈತರು ಹೆಚ್ಚಿನ ಆಸಕ್ತಿ ತೋರಿದ್ದರು. ಒಂದು ಎಕರೆ ಬೆಳೆ ಬೆಳೆಯಲು 70 ರಿಂದ 80 ಸಾವಿರ ರೂಪಾಯಿ ವೆಚ್ಚವಾಗುತ್ತದೆ. ಆದರೆ ಪ್ರಸ್ತುತ ದರ ಕುಸಿತದಿಂದ ರೈತರು ಸಂಕಷ್ಟಕ್ಕೀಡಾಗಿದ್ದು, “ಬೆಲೆ ಇಳಿಕೆಯಿಂದ ನಾವು ಹೈರಾಣಾಗಿದ್ದೇವೆ” ಎಂದು ರೈತ ಬಸವರಾಜ್ ಅಳಲು ತೋಡಿಕೊಂಡಿದ್ದಾರೆ.

ಯುದ್ಧದ ಪರಿಣಾಮ ಕೃಷಿ ಉತ್ಪನ್ನಗಳ ಮಾರುಕಟ್ಟೆಯ ಮೇಲೂ ಬಿದ್ದಿರುವುದು ರೈತರ ಆತಂಕಕ್ಕೆ ಕಾರಣವಾಗಿದೆ.

 

error: Content is protected !!