ಸೂರತ್: ಕಳೆದ ಐದು ವರ್ಷಗಳಿಂದ ಅಧಿಕಾರಿಗಳು ಹಾಗೂ ರಾಜಕೀಯ ಮುಖಂಡರಿಂದ ಕಿರುಕುಳ ಅನುಭವಿಸುತ್ತಿದ್ದು, ನ್ಯಾಯ ಸಿಗದಿದ್ದರೆ ದಯಾಮರಣಕ್ಕೆ ಅನುಮತಿ ನೀಡುವಂತೆ ಗುಜರಾತ್ನ ಸೂರತ್ ನಗರದ ವೃದ್ಧ ದಂಪತಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿರುವ ಘಟನೆ ಭಾರಿ ಸಂಚಲನ ಮೂಡಿಸಿದೆ.
ಸೂರತ್ ನಿವಾಸಿಗಳಾದ ಶ್ಯಾಮ್ಭಾಯಿ ಗೆಹ್ಲೋಟ್ ಮತ್ತು ಅವರ ಪತ್ನಿ ಮಧುಬೆನ್, ತಮಗೆ ಬದುಕುವ ಆಸೆ ಉಳಿದಿಲ್ಲ. ನಿರಂತರ ಕಿರುಕುಳದಿಂದ ಜೀವನ ದುಸ್ತರವಾಗಿದೆ. ನ್ಯಾಯ ಸಿಗದಿದ್ದರೆ ದಯಾಮರಣಕ್ಕೆ ಅವಕಾಶ ನೀಡಬೇಕು ಎಂದು ಪತ್ರ ಬರೆದು ಕೋರಿದ್ದಾರೆ.
ಈ ದಂಪತಿಯ ಬದುಕು ಈಗಾಗಲೇ ದುರಂತಗಳಿಂದ ಕೂಡಿದೆ. 2016ರ ನವೆಂಬರ್ 7ರಂದು ನಡೆದ ಭೀಕರ ರಸ್ತೆ ಅಪಘಾತದಲ್ಲಿ ಅವರ ಏಕೈಕ ಪುತ್ರ, ಸೊಸೆ, ಮೊಮ್ಮಕ್ಕಳು, ಪುತ್ರಿ ಹಾಗೂ ಅಳಿಯ ಸೇರಿದಂತೆ ಒಂದೇ ಕುಟುಂಬದ ಒಂಬತ್ತು ಮಂದಿ ಮೃತಪಟ್ಟಿದ್ದರು. ಆ ಘಟನೆಯ ಬಳಿಕ ಒಂಟಿಯಾಗಿರುವ ದಂಪತಿ ಪರಸ್ಪರ ಆಸರೆಯೊಂದಿಗೆ ಜೀವನ ಸಾಗಿಸುತ್ತಿದ್ದಾರೆ.
ಜೀವನ ನಿರ್ವಹಣೆಗಾಗಿ 2006ರಲ್ಲಿ ಖರೀದಿಸಿದ್ದ 11 ಸಣ್ಣ ಅಂಗಡಿಗಳ ಬಾಡಿಗೆ ಆದಾಯವನ್ನೇ ಅವಲಂಬಿಸಿದ್ದರು. ಆದರೆ 2021ರಲ್ಲಿ ಮಹಾನಗರ ಪಾಲಿಕೆ ಅಧಿಕಾರಿಗಳು ಯಾವುದೇ ಮುನ್ಸೂಚನೆ ನೀಡದೆ ಅಂಗಡಿಗಳಿಗೆ ಬೀಗ ಜಡಿದಿದ್ದರು. ಇದನ್ನು ಪ್ರಶ್ನಿಸಿ ದಂಪತಿ ಗುಜರಾತ್ ಹೈಕೋರ್ಟ್ ಮೊರೆ ಹೋಗಿದ್ದರು.
ಅಗ್ನಿಶಾಮಕ ಇಲಾಖೆಯ ಅನುಕೂಲಕರ ವರದಿ ಆಧರಿಸಿ ಈ ವರ್ಷದ ಜನವರಿ 31ರಂದು ಅಂಗಡಿಗಳನ್ನು ತೆರೆಯಲು ಅನುಮತಿ ದೊರೆತಿತ್ತು. ಆದರೆ ನ್ಯಾಯಾಲಯದ ಆದೇಶದ ಕೆಲವೇ ತಿಂಗಳ ಬಳಿಕ ಮೇ 30ರಂದು ಮತ್ತೆ ಯಾವುದೇ ಲಿಖಿತ ನೋಟಿಸ್ ನೀಡದೆ ಅಂಗಡಿಗಳಿಗೆ ಬೀಗ ಹಾಕಲಾಗಿದೆ ಎಂದು ದಂಪತಿ ಆರೋಪಿಸಿದ್ದಾರೆ.
ಸ್ಥಳೀಯ ರಾಜಕೀಯ ಮುಖಂಡರನ್ನು ಭೇಟಿಯಾಗುವಂತೆ ಅಧಿಕಾರಿಗಳು ಒತ್ತಡ ಹೇರುತ್ತಿದ್ದು, ತಮ್ಮ ಆಸ್ತಿಯನ್ನು ಕಬಳಿಸಲು ಅಧಿಕಾರಿಗಳು ಮತ್ತು ರಾಜಕಾರಣಿಗಳು ಸಂಚು ರೂಪಿಸಿದ್ದಾರೆ ಎಂದು ಶ್ಯಾಮ್ಭಾಯಿ ಗೆಹ್ಲೋಟ್ ದೂರಿದ್ದಾರೆ. ಅಂಗಡಿಗಳಿಗೆ ಸೀಲ್ ಹಾಕಲು ಯಾವುದೇ ಅಧಿಕೃತ ಕಾರಣವನ್ನೂ ಮಹಾನಗರ ಪಾಲಿಕೆ ನೀಡಿಲ್ಲ ಎಂದು ಅವರು ಹೇಳಿದ್ದಾರೆ.
ಜೀವನೋಪಾಯದ ಏಕೈಕ ಮೂಲವಾಗಿದ್ದ ಅಂಗಡಿಗಳು ಮುಚ್ಚಲ್ಪಟ್ಟ ಪರಿಣಾಮ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ದಂಪತಿ, ಅಧಿಕಾರಿಗಳ ಕ್ರಮದಿಂದ ಮಾನಸಿಕವಾಗಿ ಕುಗ್ಗಿದ್ದು, ಕೊನೆಗೆ ಜಿಲ್ಲಾಧಿಕಾರಿಗೆ ದಯಾಮರಣ ಕೋರಿ ಅರ್ಜಿ ಸಲ್ಲಿಸಿದ್ದಾರೆ.
ಈ ಘಟನೆ ಸದ್ಯ ಗುಜರಾತ್ ರಾಜ್ಯದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದ್ದು, ವೃದ್ಧ ದಂಪತಿಯ ಮನವಿಗೆ ಅಧಿಕಾರಿಗಳು ಯಾವ ರೀತಿಯಲ್ಲಿ ಸ್ಪಂದಿಸುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.

