ಹಗರಿಬೊಮ್ಮನಹಳ್ಳಿ: ತಾಲೂಕಿನ ಪಿಲ್ಲೂಬನಹಳ್ಳಿ ಗ್ರಾಮದ ಬಳಿ ಚಿಪ್ಸ್ ಲೋಡ್ ಹೊತ್ತೊಯ್ಯುತ್ತಿದ್ದ ಕ್ಯಾಂಟರ್ ಲಾರಿಗೆ ವಿದ್ಯುತ್ ತಂತಿ ತಗುಲಿ ವಾಹನ ಸಂಪೂರ್ಣವಾಗಿ ಸುಟ್ಟು ಕರಕಲಾದ ಘಟನೆ ಶುಕ್ರವಾರ ಸಂಜೆ ನಡೆದಿದೆ.
ಘಟನೆ ಮಾರ್ಚ್ 27ರಂದು ಸಂಜೆ ಸುಮಾರು 4ರಿಂದ 5 ಗಂಟೆ ನಡುವೆ ನಡೆದಿದೆ. ಬೆಂಗಳೂರಿನಿಂದ ಹಡಗಲಿ ಪಟ್ಟಣದತ್ತ ತೆರಳುತ್ತಿದ್ದ KA-37 A-3262 ಸಂಖ್ಯೆಯ ಕ್ಯಾಂಟರ್ ಲಾರಿ, ಕೂಡ್ಲಿಗಿ ಹೈವೇಯ ಶಿವಪುರದಿಂದ ಪಿಲ್ಲೂಬನಹಳ್ಳಿ-ಮಾದೂರು ಮಾರ್ಗವಾಗಿ ಸಾಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.
ಗ್ರಾಮದ ಕೃಷಿ ಚಟುವಟಿಕೆಗಳಿಗೆ ಸಂಬಂಧಿಸಿದ ಪಂಪ್ಸೆಟ್ಗಳಿಗೆ ವಿದ್ಯುತ್ ಸರಬರಾಜು ಇದ್ದ ಕಾರಣ, ರಸ್ತೆ ಮೇಲಿನ ತಂತಿ ಕೆಳಮಟ್ಟದಲ್ಲಿ ಇರುವುದು ಕಂಡುಬಂದಿದೆ. ಲಾರಿಯ ಮೇಲ್ಭಾಗದಲ್ಲಿ ತುಂಬಿದ್ದ ಚಿಪ್ಸ್ ಪ್ಯಾಕೆಟ್ಗಳಿಗೆ ವಿದ್ಯುತ್ ತಂತಿ ತಗುಲುತ್ತಿದ್ದಂತೆ ಬೆಂಕಿ ಕಾಣಿಸಿಕೊಂಡಿದೆ.
ಚಾಲಕ ಘಟನೆ ಗಮನಿಸಿ ಪಿಲ್ಲೂಬನಹಳ್ಳಿ ಗ್ರಾಮದಿಂದ ಸುಮಾರು 200 ಮೀಟರ್ ದೂರದಲ್ಲಿ ವಾಹನ ನಿಲ್ಲಿಸಿದ್ದರೂ, ಬೆಂಕಿ ಕ್ಷಣಾರ್ಧದಲ್ಲಿ ವ್ಯಾಪಿಸಿ ಸಂಪೂರ್ಣ ಲಾರಿಯನ್ನು ಆವರಿಸಿತು.
ಹಗರಿಬೊಮ್ಮನಹಳ್ಳಿ ಅಗ್ನಿಶಾಮಕ ಠಾಣೆಯ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಆದಾಗ್ಯೂ, ಈ ಅವಘಡದಲ್ಲಿ ಕ್ಯಾಂಟರ್ ವಾಹನ ಹಾಗೂ ಚಿಪ್ಸ್ ಪ್ಯಾಕೆಟ್ಗಳು ಸಂಪೂರ್ಣವಾಗಿ ಸುಟ್ಟುಹೋಗಿವೆ.
ಅಗ್ನಿಶಾಮಕ ಠಾಣೆ ಅಧಿಕಾರಿ ವಾಸುದೇವಪ್ಪ ಅವರ ನೇತೃತ್ವದಲ್ಲಿ ಕೆ. ಶಶಿಕುಮಾರ್ ನಾಯ್ಕ, ಹಾಲಸ್ವಾಮಿ, ನಾರಾಯಣ, ರಾಮದಾಸ್ ಸೇರಿದಂತೆ ಸಿಬ್ಬಂದಿ ಹಾಗೂ ಚಾಲಕರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

