Home Blog

ಅಮೆರಿಕ-ಇರಾನ್ ಉದ್ವಿಗ್ನತೆ ನಡುವೆ ಬಂಗಾರ ದರದಲ್ಲಿ ಇಳಿಕೆ! ಬೆಂಗಳೂರಿನಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಎಷ್ಟು?

ಬೆಂಗಳೂರು: ಅಮೆರಿಕ-ಇರಾನ್ ನಡುವಿನ ಉದ್ವಿಗ್ನತೆ ಹಾಗೂ ಜಾಗತಿಕ ಆರ್ಥಿಕ ಬೆಳವಣಿಗೆಗಳ ಪರಿಣಾಮವಾಗಿ ಚಿನ್ನದ ಬೆಲೆಯಲ್ಲಿ ದಿನದಿಂದ ದಿನಕ್ಕೆ ಏರಿಳಿತ ಮುಂದುವರಿದಿದೆ. ಬುಧವಾರ ಏರಿಕೆ ಕಂಡಿದ್ದ ಚಿನ್ನದ ದರ, ಗುರುವಾರ (ಜುಲೈ 16) ಮತ್ತೆ ಇಳಿಕೆಯಾಗಿದೆ ಎಂದು ಗುಡ್‌ರಿಟರ್ನ್ಸ್ ವರದಿ ತಿಳಿಸಿದೆ.

ಇಂದಿನ ದರದ ಪ್ರಕಾರ, 24 ಕ್ಯಾರೆಟ್ ಚಿನ್ನದ ಒಂದು ಗ್ರಾಂಗೆ 28 ರೂಪಾಯಿ ಇಳಿಕೆಯಾಗಿದ್ದು, ಪ್ರತಿ ಗ್ರಾಂ ಬೆಲೆ 14,329 ರೂಪಾಯಿಗೆ ತಲುಪಿದೆ. 10 ಗ್ರಾಂ 24 ಕ್ಯಾರೆಟ್ ಚಿನ್ನದ ದರ 280 ರೂಪಾಯಿ ಕುಸಿದು 1,43,290 ರೂಪಾಯಿಯಾಗಿದೆ.

ಇದೇ ವೇಳೆ, 22 ಕ್ಯಾರೆಟ್ ಚಿನ್ನದ ಬೆಲೆಯಲ್ಲೂ ಇಳಿಕೆ ದಾಖಲಾಗಿದೆ. ಒಂದು ಗ್ರಾಂಗೆ 25 ರೂಪಾಯಿ ಕಡಿಮೆಯಾಗಿದ್ದು, ಪ್ರಸ್ತುತ ಪ್ರತಿ ಗ್ರಾಂ 13,135 ರೂಪಾಯಿಗೆ ಮಾರಾಟವಾಗುತ್ತಿದೆ. 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 250 ರೂಪಾಯಿ ಇಳಿದು 1,31,350 ರೂಪಾಯಿಗೆ ತಲುಪಿದೆ.

ಬೆಂಗಳೂರುದಲ್ಲಿ ಇಂದಿನ ದರ

ಬೆಂಗಳೂರು ಮಾರುಕಟ್ಟೆಯಲ್ಲಿ 24 ಕ್ಯಾರೆಟ್ ಶುದ್ಧ ಚಿನ್ನದ ಪ್ರತಿ ಗ್ರಾಂ ಬೆಲೆ 14,329 ರೂಪಾಯಿಯಾಗಿದೆ. ಬೆಳ್ಳಿ ದರದಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ. ಪ್ರತಿ ಗ್ರಾಂ ಬೆಳ್ಳಿ 235 ರೂಪಾಯಿಯಲ್ಲೇ ಸ್ಥಿರವಾಗಿದ್ದು, ಪ್ರತಿ ಕೆ.ಜಿ. ಬೆಳ್ಳಿ ಬೆಲೆ 2,35,000 ರೂಪಾಯಿಯಾಗಿದೆ.

ಜುಲೈ ತಿಂಗಳ ಆರಂಭದಲ್ಲಿ 24 ಕ್ಯಾರೆಟ್ ಚಿನ್ನದ ಪ್ರತಿ ಗ್ರಾಂ ಬೆಲೆ 14,078 ರೂಪಾಯಿಯಷ್ಟಿದ್ದರೆ, ತಿಂಗಳ ಮಧ್ಯಭಾಗದಲ್ಲಿ ಅದು 14,700 ರೂಪಾಯಿವರೆಗೆ ಏರಿಕೆ ಕಂಡಿತ್ತು. ಬಳಿಕ ಬೆಲೆಯಲ್ಲಿ ಮತ್ತೆ ಇಳಿಕೆ ಕಂಡು, ಇದೀಗ 14,329 ರೂಪಾಯಿಗೆ ತಲುಪಿದೆ.

ಮಧ್ಯಪ್ರಾಚ್ಯದಲ್ಲಿ ಉಂಟಾಗಿರುವ ಉದ್ವಿಗ್ನತೆ, ಜಾಗತಿಕ ಕಚ್ಚಾ ತೈಲ ಬೆಲೆಗಳ ಏರಿಕೆ ಹಾಗೂ ಡಾಲರ್ ಎದುರು ರೂಪಾಯಿ ಮೌಲ್ಯದಲ್ಲಿನ ಏರಿಳಿತ ಚಿನ್ನದ ದರದ ಮೇಲೆ ಪರಿಣಾಮ ಬೀರುತ್ತಿದೆ.

ಹಾರ್ಮುಜ್ ಜಲಸಂಧಿಗೆ ಸಂಬಂಧಿಸಿದ ಸುಂಕದ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಹೇಳಿಕೆಯಲ್ಲಿ ಬದಲಾವಣೆ ಮಾಡಿದ ಬಳಿಕ ಜಾಗತಿಕ ಷೇರುಪೇಟೆಯಲ್ಲಿ ಅಲ್ಪ ಮಟ್ಟಿನ ಚೇತರಿಕೆ ಕಂಡುಬಂದಿತ್ತು. ಇದರ ಪರಿಣಾಮವಾಗಿ ಚಿನ್ನದ ದರದಲ್ಲೂ ಏರಿಳಿತ ಮುಂದುವರಿದಿದ್ದು, ಇಂದು ಚಿನ್ನದ ಬೆಲೆ ಇಳಿಕೆಯಾಗಿದ್ದರೆ, ಬೆಳ್ಳಿ ದರ ಸ್ಥಿರವಾಗಿದೆ.

ಬಿಲ್ ಕೇಳಿದ್ದಕ್ಕೆ ಗಲಾಟೆ? ಸೋಷಿಯಲ್ ಮೀಡಿಯಾ ಇನ್‌ಫ್ಲೂಯೆನ್ಸರ್ ವಿರುದ್ಧ ಪ್ರಕರಣ

0

ಬೆಂಗಳೂರು: ಮಹಿಳಾ ಸಿಬ್ಬಂದಿಯೊಂದಿಗೆ ಅನುಚಿತವಾಗಿ ವರ್ತಿಸಿ, ಬಿಲ್ ಕೇಳಿದ್ದಕ್ಕೆ ಗಲಾಟೆ ನಡೆಸಿ ಕೊಲೆ ಬೆದರಿಕೆ ಹಾಕಿದ ಆರೋಪದಡಿ ಸೋಷಿಯಲ್ ಮೀಡಿಯಾ ಇನ್‌ಫ್ಲೂಯೆನ್ಸರ್ ಮಂಜು ಅಲಿಯಾಸ್ ‘ಅಮುಕು ಡುಮುಕು’ ವಿರುದ್ಧ ಬೆಂಗಳೂರಿನಲ್ಲಿ ಎಫ್‌ಐಆರ್ ದಾಖಲಾಗಿದೆ.

ಜುಲೈ 9ರಂದು ರೆಸ್ಟೋ ಬಾರ್‌ಗೆ ತೆರಳಿದ್ದ ಮಂಜು ಹಾಗೂ ಅವರ ಸ್ನೇಹಿತರು ಊಟ ಮತ್ತು ಮದ್ಯ ಸೇವಿಸಿದ ಬಳಿಕ ಬಿಲ್ ಪಾವತಿಸುವ ವಿಚಾರದಲ್ಲಿ ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸಿದ್ದಾರೆ ಎನ್ನಲಾಗಿದೆ. ಈ ವೇಳೆ ಮಹಿಳಾ ಸಿಬ್ಬಂದಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದಲ್ಲದೆ, ಹೊರಡುವಾಗ ಅವರನ್ನು ತಡೆದು ಸೆಲ್ಫಿ ಕೇಳಿದ್ದಾರೆ ಎಂಬ ಆರೋಪವೂ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಘಟನೆಯಲ್ಲಿ ಮಧ್ಯಪ್ರವೇಶಿಸಿದ ಪಬ್ ಮ್ಯಾನೇಜರ್ ಮೇಲೂ ಹಲ್ಲೆಗೆ ಯತ್ನಿಸಿ, ಕೊಲೆ ಬೆದರಿಕೆ ಹಾಕಿರುವ ಆರೋಪ ಕೇಳಿಬಂದಿದೆ. ಈ ಸಂಬಂಧ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ.

ಪ್ರಕರಣದ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದು, ಘಟನೆಯ ಸಿಸಿಟಿವಿ ದೃಶ್ಯಗಳು ಹಾಗೂ ಇತರ ಸಾಕ್ಷ್ಯಾಧಾರಗಳನ್ನು ಪರಿಶೀಲಿಸುತ್ತಿದ್ದಾರೆ.

ನ್ಯಾಯಾಲಯಗಳು ಕೇವಲ ವ್ಯಾಜ್ಯ ಇತ್ಯರ್ಥದ ವೇದಿಕೆಗಳಲ್ಲ; ನೋವಿನಲ್ಲಿರುವವರಿಗೆ ನ್ಯಾಯ ಒದಗಿಸುವ ರಕ್ಷಕರು: ಹೈಕೋರ್ಟ್

ಬೆಂಗಳೂರು: ನ್ಯಾಯಾಲಯಗಳು ಕೇವಲ ವ್ಯಕ್ತಿಗಳು ಅಥವಾ ಸರ್ಕಾರಗಳ ನಡುವಿನ ವ್ಯಾಜ್ಯಗಳನ್ನು ಇತ್ಯರ್ಥಪಡಿಸುವ ವೇದಿಕೆಗಳಷ್ಟೇ ಅಲ್ಲ, ಅಗತ್ಯವಿದ್ದಾಗ ಸಂಕಷ್ಟದಲ್ಲಿರುವವರಿಗೆ ನ್ಯಾಯ ಮತ್ತು ಸಮಾನತೆ ಒದಗಿಸುವ ರಕ್ಷಕರಾಗಿಯೂ ಕಾರ್ಯನಿರ್ವಹಿಸಬೇಕು ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ.

ಮೂರು ವರ್ಷದ ಬಾಲಕ ನೀರಿನ ಸಂಪ್‌ಗೆ ಬಿದ್ದು ಮೃತಪಟ್ಟ ಪ್ರಕರಣದಲ್ಲಿ ತಮ್ಮ ವಿರುದ್ಧ ದಾಖಲಾದ ಕ್ರಿಮಿನಲ್ ಪ್ರಕರಣವನ್ನು ರದ್ದುಪಡಿಸುವಂತೆ ಮನೆಯ ಮಾಲೀಕರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಈ ಮಹತ್ವದ ಆದೇಶ ನೀಡಿದೆ.

ಪ್ರಕರಣದಲ್ಲಿ ಉಭಯ ಪಕ್ಷಗಳು ಪರಸ್ಪರ ಒಪ್ಪಂದದ ಮೂಲಕ ವಿವಾದವನ್ನು ಇತ್ಯರ್ಥಪಡಿಸಿಕೊಳ್ಳಲು ಮುಂದಾಗಿರುವುದನ್ನು ಪರಿಗಣಿಸಿದ ನ್ಯಾಯಾಲಯ, ಕಳೆದುಹೋದ ಜೀವವನ್ನು ಯಾವುದೇ ರೀತಿಯಲ್ಲೂ ಮರಳಿ ತರಲು ಸಾಧ್ಯವಿಲ್ಲ. ಅಂತಹ ಸಂದರ್ಭದಲ್ಲಿ ಹಣಕಾಸಿನ ಪರಿಹಾರ ಜೀವಕ್ಕೆ ಪರ್ಯಾಯವಾಗುವುದಿಲ್ಲ. ಆದರೆ ಸಂತ್ರಸ್ತ ಕುಟುಂಬದ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ನ್ಯಾಯಾಲಯಗಳು ಮಾನವೀಯ ದೃಷ್ಟಿಕೋನದಿಂದ ಪ್ರಗತಿಪರ ನಿರ್ಧಾರಗಳನ್ನು ಕೈಗೊಳ್ಳುವುದು ಅಗತ್ಯ ಎಂದು ತಿಳಿಸಿದೆ.

ಒಪ್ಪಂದದ ಭಾಗವಾಗಿ ಆರೋಪಿತ ಮನೆಯ ಮಾಲೀಕರು ಮೃತ ಬಾಲಕನ ಪೋಷಕರಿಗೆ ಮುಂದಿನ 12 ತಿಂಗಳವರೆಗೆ ಪ್ರತಿ ತಿಂಗಳು ₹10,000 ಪಾವತಿಸಲು ಒಪ್ಪಿಕೊಂಡಿದ್ದಾರೆ. ಇದರ ಜೊತೆಗೆ ₹5 ಲಕ್ಷ ಪರಿಹಾರ ಮೊತ್ತವನ್ನು ಪೋಷಕರ ಹೆಸರಿನಲ್ಲಿ ಖಾತೆ ತೆರೆಯುವ ಮೂಲಕ ಅಂಚೆ ಇಲಾಖೆಯ ಮಾಸಿಕ ಆದಾಯ ಯೋಜನೆಯಲ್ಲಿ ಹೂಡಿಕೆ ಮಾಡುವಂತೆ ಹೈಕೋರ್ಟ್ ನಿರ್ದೇಶಿಸಿದೆ.

ಈ ಹೂಡಿಕೆಯಿಂದ ದೊರೆಯುವ ಮಾಸಿಕ ಬಡ್ಡಿಯನ್ನು ಐದು ವರ್ಷಗಳ ಕಾಲ ನೇರವಾಗಿ ಪೋಷಕರಿಗೆ ನೀಡಬೇಕು. ಆ ಹಣವನ್ನು ಮೃತ ಬಾಲಕನ ಸಹೋದರ ಹಾಗೂ ಸಹೋದರಿಯ ಶಿಕ್ಷಣ, ಪಾಲನೆ-ಪೋಷಣೆ ಮತ್ತು ಕಲ್ಯಾಣಕ್ಕಾಗಿ ಮಾತ್ರ ಬಳಸಬೇಕು ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ. ಮಗಳು ಪ್ರಾಪ್ತ ವಯಸ್ಸಿಗೆ ಬಂದ ಬಳಿಕ ಕಾನೂನುಬದ್ಧವಾಗಿ ಮೂಲ ಹೂಡಿಕೆ ಮೊತ್ತವನ್ನು ಹಿಂಪಡೆಯಲು ಅವಕಾಶವಿರುತ್ತದೆ ಎಂದೂ ತಿಳಿಸಿದೆ.

ದಿನಗೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿರುವ ಸಂತ್ರಸ್ತ ಕುಟುಂಬಕ್ಕೆ ಒಮ್ಮೆಗೆ ದೊಡ್ಡ ಮೊತ್ತದ ಹಣ ನೀಡಿದರೆ ಅದು ತಕ್ಷಣದ ಅಗತ್ಯಗಳಿಗೆ ಖರ್ಚಾಗುವ ಸಾಧ್ಯತೆ ಹೆಚ್ಚಿದೆ. ಆದ್ದರಿಂದ ಉಳಿದಿರುವ ಮಕ್ಕಳ ದೀರ್ಘಕಾಲೀನ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಪರಿಹಾರ ಮೊತ್ತವನ್ನು ಸಂರಕ್ಷಿಸುವುದು ಸೂಕ್ತ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಪ್ರಕರಣದ ಹಿನ್ನೆಲೆ

2026ರ ಮೇ 27ರಂದು ರಾಜರಾಜೇಶ್ವರಿ ನಗರದ ಆರ್.ಆರ್. ಕೆಂಚೇನಹಳ್ಳಿಯ ಜನಪ್ರಿಯ ಲೇಔಟ್‌ನಲ್ಲಿರುವ ನಿರ್ಮಾಣ ಹಂತದ ತ್ರಿಲೋಕ ವಿಲ್ಲಾಸ್ ಅಪಾರ್ಟ್‌ಮೆಂಟ್ ಸಮೀಪ ಆಟವಾಡುತ್ತಿದ್ದ ಮೂರು ವರ್ಷದ ಬಾಲಕ ನೀರಿನ ಸಂಪ್‌ಗೆ ಬಿದ್ದು ಮೃತಪಟ್ಟಿದ್ದ. ಈ ಸಂಬಂಧ ನಿರ್ಮಾಣ ಸ್ಥಳದಲ್ಲಿ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಂಡಿಲ್ಲ ಎಂಬ ಆರೋಪದಡಿ ಮನೆಯ ಮಾಲೀಕ ಅಭಿಷೇಕ್, ಮೇಸ್ತ್ರಿ ವೇಲು ಹಾಗೂ ಗುತ್ತಿಗೆದಾರ ಅಲೋಕ್ ಸುಂದರ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 106(1) ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಎಫ್‌ಐಆರ್ ರದ್ದುಪಡಿಸುವಂತೆ ಮನೆಯ ಮಾಲೀಕರು ಹೈಕೋರ್ಟ್ ಮೊರೆ ಹೋಗಿದ್ದು, ಸಂತ್ರಸ್ತ ಕುಟುಂಬ ಮತ್ತು ಆರೋಪಿತರ ನಡುವಿನ ಒಪ್ಪಂದವನ್ನು ಪರಿಗಣಿಸಿ ನ್ಯಾಯಾಲಯ ಪ್ರಕರಣ ಇತ್ಯರ್ಥಕ್ಕೆ ಒಪ್ಪಿಗೆ ನೀಡಿದೆ.

ದೇವೇಗೌಡರ ಪತ್ನಿ ಚೆನ್ನಮ್ಮ ಆರೋಗ್ಯ ಸ್ಥಿರ; ಆತಂಕ ಬೇಡ – ವೈದ್ಯರು ನೀಡಿರುವ ಸ್ಪಷ್ಟ ಮಾಹಿತಿ ಇಲ್ಲಿದೆ ನೋಡಿ

ಬೆಂಗಳೂರು: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ಪತ್ನಿ ಚೆನ್ನಮ್ಮ ಅವರು ಉಸಿರಾಟದ ತೊಂದರೆಯಿಂದ ನಗರದ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದು, ಅವರ ಆರೋಗ್ಯ ಸದ್ಯ ಸ್ಥಿರವಾಗಿದೆ. ಚಿಕಿತ್ಸೆ ಫಲಕಾರಿಯಾಗಿ ನಡೆಯುತ್ತಿದ್ದು, ಯಾರೂ ಆತಂಕಪಡುವ ಅಗತ್ಯವಿಲ್ಲ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ.

ಮಣಿಪಾಲ್ ಆಸ್ಪತ್ರೆಯ ಹಿರಿಯ ವೈದ್ಯ ಡಾ. ಸತ್ಯನಾರಾಯಣ ಮೈಸೂರು ಅವರು ಈ ಕುರಿತು ಮಾಹಿತಿ ನೀಡಿದ್ದು, ಚೆನ್ನಮ್ಮ ಅವರಿಗೆ ಸಣ್ಣ ಪ್ರಮಾಣದ ಉಸಿರಾಟದ ತೊಂದರೆ ಹಾಗೂ ಎದೆಯಲ್ಲಿ ಕಫ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ. ಆಸ್ಪತ್ರೆಗೆ ದಾಖಲಾದ ವೇಳೆ ಆಮ್ಲಜನಕದ ಮಟ್ಟದಲ್ಲಿ ಸ್ವಲ್ಪ ಏರುಪೇರಾಗಿದ್ದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ಯಾವುದೇ ಗಂಭೀರ ಪರಿಸ್ಥಿತಿ ಇಲ್ಲ ಎಂದು ಅವರು ಹೇಳಿದ್ದಾರೆ.

ಕಳೆದ ಒಂದು ವರ್ಷದಿಂದ ಚೆನ್ನಮ್ಮ ಅವರಿಗೆ ಆಗಾಗ ಉಸಿರಾಟದ ಸಮಸ್ಯೆ ಕಾಣಿಸಿಕೊಳ್ಳುತ್ತಿತ್ತು. ಸುಮಾರು 25 ದಿನಗಳ ಹಿಂದಷ್ಟೇ ಜಯನಗರದ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಂಡು ಮನೆಗೆ ಮರಳಿದ್ದರು. ಆದರೆ ಮಂಗಳವಾರ ರಾತ್ರಿ ಮತ್ತೆ ಉಸಿರಾಟದ ತೊಂದರೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ರಾತ್ರಿ ಸುಮಾರು 8.30ಕ್ಕೆ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪ್ರಸ್ತುತ ಅವರಿಗೆ ಆಂಟಿಬಯೋಟಿಕ್ ಔಷಧೋಪಚಾರ ನೀಡಲಾಗುತ್ತಿದ್ದು, ಚಿಕಿತ್ಸೆಗೆ ಉತ್ತಮ ಸ್ಪಂದನೆ ದೊರೆಯುತ್ತಿದೆ. ಆರೋಗ್ಯದಲ್ಲಿ ಮತ್ತಷ್ಟು ಸುಧಾರಣೆ ಕಂಡುಬಂದರೆ ಇನ್ನೆರಡು ದಿನಗಳಲ್ಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡುವ ಸಾಧ್ಯತೆ ಇದೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ.

ವಿಷಯ ತಿಳಿದ ಕೂಡಲೇ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ರಾತ್ರಿ 10.30ರ ಸುಮಾರಿಗೆ ಆಸ್ಪತ್ರೆಗೆ ಭೇಟಿ ನೀಡಿ ಸುಮಾರು ಒಂದು ಗಂಟೆ ಕಾಲ ಪತ್ನಿಯ ಆರೋಗ್ಯ ವಿಚಾರಿಸಿದರು. ಬಳಿಕ ಪುತ್ರ ಎಚ್.ಡಿ. ರೇವಣ್ಣ, ಕುಟುಂಬದ ಸದಸ್ಯರು ಹಾಗೂ ವೈದ್ಯರೂ ಆಗಿರುವ ಅಳಿಯ ಡಾ. ಮಂಜುನಾಥ್ ಕೂಡ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರಿಂದ ಮಾಹಿತಿ ಪಡೆದರು.

ಇದೇ ವೇಳೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ವೈದ್ಯರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಆರೋಗ್ಯದ ಮಾಹಿತಿ ಪಡೆಯುತ್ತಿದ್ದಾರೆ. ಪರಿಸ್ಥಿತಿ ಸಂಪೂರ್ಣ ನಿಯಂತ್ರಣದಲ್ಲಿದ್ದು, ಅಭಿಮಾನಿಗಳು ಹಾಗೂ ಪಕ್ಷದ ಕಾರ್ಯಕರ್ತರು ಯಾವುದೇ ಆತಂಕಪಡುವ ಅಗತ್ಯವಿಲ್ಲ ಎಂದು ವೈದ್ಯರು ಮತ್ತು ಕುಟುಂಬಸ್ಥರು ಮನವಿ ಮಾಡಿದ್ದಾರೆ.

ಕಾನೂನು ಸುವ್ಯವಸ್ಥೆಗೆ ಧಕ್ಕೆ ಆರೋಪ: ಗದಗ ಜಿಲ್ಲೆಯಿಂದ ರೌಡಿಶೀಟರ್ ಪ್ರಕಾಶ್ ಗಡಿಪಾರು!

0

ಗದಗ: ಗಲಾಟೆ, ಜೀವ ಬೆದರಿಕೆ, ಜಾತಿ ನಿಂದನೆ, ಸಾರ್ವಜನಿಕ ಆಸ್ತಿಗೆ ಹಾನಿ ಸೇರಿದಂತೆ ಹಲವು ಗಂಭೀರ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ರೌಡಿಶೀಟರ್ ಪ್ರಕಾಶ್ ನನ್ನು ಗದಗ ಜಿಲ್ಲೆಯಿಂದ ಗಡಿಪಾರು ಮಾಡಲಾಗಿದೆ.

ಈ ಕುರಿತು ಗದಗ ಎಸ್ಪಿ ರೋಹನ್ ಜಗದೀಶ್ ಪ್ರಕಟಣೆ ನೀಡಿದ್ದು, ಸಾರ್ವಜನಿಕ ಶಾಂತಿ ಹಾಗೂ ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟುಮಾಡುವ ಚಟುವಟಿಕೆಗಳಲ್ಲಿ ನಿರಂತರವಾಗಿ ತೊಡಗಿದ್ದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದಿದ್ದಾರೆ.

ಪೊಲೀಸ್ ಇಲಾಖೆಯ ಮಾಹಿತಿಯಂತೆ, ಪ್ರಕಾಶ್ ವಿರುದ್ಧ ಈಗಾಗಲೇ ಹಲವು ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದು, ಬಂಧನ ಹಾಗೂ ನ್ಯಾಯಾಂಗ ಬಂಧನಕ್ಕೊಳಗಾದ ಬಳಿಕವೂ ಆತನ ವರ್ತನೆಯಲ್ಲಿ ಯಾವುದೇ ಬದಲಾವಣೆ ಕಂಡುಬಂದಿರಲಿಲ್ಲ. ಮತ್ತೆ ಮತ್ತೆ ಸಮಾಜಘಾತಕ ಚಟುವಟಿಕೆಗಳಲ್ಲಿ ತೊಡಗುತ್ತಿದ್ದ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಪೊಲೀಸ್ ಠಾಣೆಯಿಂದ ಗಡಿಪಾರು ಪ್ರಸ್ತಾವನೆ ಸಲ್ಲಿಸಲಾಗಿತ್ತು. ಬಳಿಕ ಸಮಗ್ರ ವಿಚಾರಣೆ ನಡೆಸಿದ ಅಧಿಕಾರಿಗಳು ಗದಗ ಜಿಲ್ಲೆಯಿಂದ ಗಡಿಪಾರು ಮಾಡುವ ಆದೇಶ ಹೊರಡಿಸಿದ್ದಾರೆ.

ಎರಡು ಗಂಭೀರ ಕ್ರಿಮಿನಲ್ ಪ್ರಕರಣಗಳು:

ಪ್ರಕಾಶ್ ವಿರುದ್ಧ 2024ರ ಅಪರಾಧ ಸಂಖ್ಯೆ 76/2024ರಲ್ಲಿ ಗಲಾಟೆ, ಹಲ್ಲೆ, ಜೀವ ಬೆದರಿಕೆ, ಸಾರ್ವಜನಿಕ ಆಸ್ತಿಗೆ ಹಾನಿ, ಜಾತಿ ನಿಂದನೆ ಸೇರಿದಂತೆ ಭಾರತೀಯ ದಂಡ ಸಂಹಿತೆ (IPC) ಹಾಗೂ ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಇದೇ ರೀತಿ ಅಪರಾಧ ಸಂಖ್ಯೆ 147/2024ರಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) ಹಾಗೂ ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ (ತಿದ್ದುಪಡಿ) ಕಾಯ್ದೆಯಡಿ ಮತ್ತೊಂದು ಗಂಭೀರ ಪ್ರಕರಣ ದಾಖಲಾಗಿದ್ದು, ಈ ಎರಡೂ ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿವೆ.

ಐದು ಬಾರಿ ಮುಂಜಾಗ್ರತಾ ಕ್ರಮ:

ಕ್ರಿಮಿನಲ್ ಪ್ರಕರಣಗಳ ಜೊತೆಗೆ ಪ್ರಕಾಶ್ ವಿರುದ್ಧ 2025 ಮತ್ತು 2026ರಲ್ಲಿ ಒಟ್ಟು ಐದು ಮುಂಜಾಗ್ರತಾ (P.R.) ಪ್ರಕರಣಗಳು ದಾಖಲಾಗಿವೆ. 2025ರಲ್ಲಿ ಮೂರು ಹಾಗೂ 2026ರಲ್ಲಿ ಎರಡು ಬಾರಿ ಮುಂಜಾಗ್ರತಾ ಕ್ರಮ ಕೈಗೊಂಡಿದ್ದರೂ ಆತನ ಚಟುವಟಿಕೆಗಳಲ್ಲಿ ಯಾವುದೇ ಬದಲಾವಣೆ ಕಂಡು ಬಂದಿರಲಿಲ್ಲ. ಇದೇ ಕಾರಣದಿಂದ ಅಂತಿಮವಾಗಿ ಗಡಿಪಾರು ಕ್ರಮ ಜಾರಿಗೊಳಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕಠಿಣ ಎಚ್ಚರಿಕೆ:

ಗಲಭೆ, ಜೀವ ಬೆದರಿಕೆ, ಸಾರ್ವಜನಿಕ ಆಸ್ತಿಗೆ ಹಾನಿ ಹಾಗೂ ಸಮಾಜಘಾತಕ ಚಟುವಟಿಕೆಗಳಲ್ಲಿ ತೊಡಗುವವರ ವಿರುದ್ಧ ಮುಂದೆಯೂ ಇದೇ ರೀತಿಯ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಗದಗ ಜಿಲ್ಲಾ ಪೊಲೀಸ್ ಇಲಾಖೆ ಎಚ್ಚರಿಕೆ ನೀಡಿದೆ. ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಯಾವುದೇ ವ್ಯಕ್ತಿಯನ್ನು ಸಹಿಸುವ ಪ್ರಶ್ನೆಯೇ ಇಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ಸ್ಪಷ್ಟಪಡಿಸಿದ್ದಾರೆ.

ಪ್ರಕಾಶ್ ವಿರುದ್ಧ ದಾಖಲಾಗಿರುವ ಮುಂಜಾಗ್ರತಾ ಪ್ರಕರಣಗಳು:

P.R. No. 08/2025,
P.R. No. 20/2025,
P.R. No. 54/2025,
P.R. No. 23/2026,
P.R. No. 28/2026

ಗರ್ಭಾವಸ್ಥೆಯಲ್ಲಿ ಕ್ಯಾಲ್ಸಿಯಂ ಕೊರತೆ ಆಗದಿರಲು ಈ ಪೌಷ್ಟಿಕ ಆಹಾರಗಳನ್ನು ತಪ್ಪದೇ ಸೇವಿಸಿ

0

ಗರ್ಭಾವಸ್ಥೆಯು ಮಹಿಳೆಯ ಜೀವನದ ಅತ್ಯಂತ ಮಹತ್ವದ ಹಂತಗಳಲ್ಲಿ ಒಂದಾಗಿದೆ. ಈ ಅವಧಿಯಲ್ಲಿ ತಾಯಿಯ ದೇಹದಲ್ಲಿ ಹಲವು ದೈಹಿಕ ಹಾಗೂ ಹಾರ್ಮೋನಲ್ ಬದಲಾವಣೆಗಳು ಸಂಭವಿಸುತ್ತವೆ.

ಜೊತೆಗೆ ಗರ್ಭದಲ್ಲಿರುವ ಮಗುವಿನ ಬೆಳವಣಿಗೆಗೆ ಅಗತ್ಯವಾದ ಎಲ್ಲಾ ಪೌಷ್ಟಿಕಾಂಶಗಳನ್ನು ಒದಗಿಸುವ ಜವಾಬ್ದಾರಿಯೂ ತಾಯಿಯದ್ದಾಗಿರುತ್ತದೆ. ಪ್ರೋಟೀನ್, ಕಬ್ಬಿಣ ಮತ್ತು ಫೋಲಿಕ್ ಆಮ್ಲದ ಜೊತೆಗೆ ಕ್ಯಾಲ್ಸಿಯಂ ಕೂಡ ಗರ್ಭಿಣಿಯರಿಗೆ ಅತ್ಯಗತ್ಯವಾದ ಖನಿಜಾಂಶವಾಗಿದೆ.

ಆರೋಗ್ಯ ತಜ್ಞರ ಪ್ರಕಾರ, ಗರ್ಭಾವಸ್ಥೆಯಲ್ಲಿ ಕ್ಯಾಲ್ಸಿಯಂ ಕೊರತೆಯಾದರೆ ತಾಯಿಯ ಮೂಳೆಗಳು ದುರ್ಬಲವಾಗುವುದರ ಜೊತೆಗೆ ಗರ್ಭದಲ್ಲಿರುವ ಮಗುವಿನ ಮೂಳೆಗಳು, ಹಲ್ಲುಗಳು ಹಾಗೂ ದೈಹಿಕ ಬೆಳವಣಿಗೆಯ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ.

ಗರ್ಭಿಣಿಯರಿಗೆ ಕ್ಯಾಲ್ಸಿಯಂ ಏಕೆ ಮುಖ್ಯ?

ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ, ಗರ್ಭದಲ್ಲಿರುವ ಮಗುವಿನ ಮೂಳೆಗಳು, ಹಲ್ಲುಗಳು, ಹೃದಯ, ನರಮಂಡಲ ಹಾಗೂ ಸ್ನಾಯುಗಳ ಸಮರ್ಪಕ ಬೆಳವಣಿಗೆಗೆ ಕ್ಯಾಲ್ಸಿಯಂ ಅತ್ಯಗತ್ಯವಾಗಿದೆ.

ಆಹಾರದಿಂದ ಸಾಕಷ್ಟು ಕ್ಯಾಲ್ಸಿಯಂ ದೊರೆಯದಿದ್ದರೆ, ಮಗುವಿನ ಅಗತ್ಯವನ್ನು ಪೂರೈಸಲು ತಾಯಿಯ ಮೂಳೆಗಳಲ್ಲಿ ಸಂಗ್ರಹವಾಗಿರುವ ಕ್ಯಾಲ್ಸಿಯಂ ಬಳಕೆಯಾಗುತ್ತದೆ. ಇದರಿಂದ ಮುಂದಿನ ದಿನಗಳಲ್ಲಿ ತಾಯಿಯಲ್ಲಿ ಮೂಳೆ ಸಾಂದ್ರತೆ ಕಡಿಮೆಯಾಗುವ ಅಪಾಯ ಹೆಚ್ಚಬಹುದು.

ಇದಲ್ಲದೆ, ಕಡಿಮೆ ಪ್ರಮಾಣದಲ್ಲಿ ಕ್ಯಾಲ್ಸಿಯಂ ಸೇವಿಸುವ ಗರ್ಭಿಣಿಯರಲ್ಲಿ ಪ್ರೀ-ಎಕ್ಲಾಂಪ್ಸಿಯಾ (ಗರ್ಭಾವಸ್ಥೆಯ ಅಧಿಕ ರಕ್ತದೊತ್ತಡ) ಅಪಾಯವೂ ಹೆಚ್ಚಾಗಬಹುದು. ವೈದ್ಯರ ಸಲಹೆಯಂತೆ ಕ್ಯಾಲ್ಸಿಯಂ ಪೂರಕಗಳನ್ನು ಸೇವಿಸುವುದರಿಂದ ಈ ಅಪಾಯವನ್ನು ಕೆಲವು ಸಂದರ್ಭಗಳಲ್ಲಿ ಕಡಿಮೆ ಮಾಡಬಹುದಾಗಿದೆ.

ಕ್ಯಾಲ್ಸಿಯಂ ಪಡೆಯಲು ಯಾವ ಆಹಾರ ಸೇವಿಸಬೇಕು?

ಗರ್ಭಿಣಿಯರು ತಮ್ಮ ದೈನಂದಿನ ಆಹಾರದಲ್ಲಿ ಈ ಪದಾರ್ಥಗಳನ್ನು ಸೇರಿಸಿಕೊಳ್ಳುವುದು ಉತ್ತಮ.

  • ಹಾಲು, ಮೊಸರು, ಮಜ್ಜಿಗೆ ಮತ್ತು ಪನೀರ್
  • ರಾಗಿ ಹಾಗೂ ಎಳ್ಳು
  • ಸೋಯಾಬೀನ್ ಮತ್ತು ಟೋಫು
  • ಬಾದಾಮಿ
  • ಹಸಿರು ಎಲೆಗಳ ಸೊಪ್ಪುಗಳು (ಮಿತ ಪ್ರಮಾಣದಲ್ಲಿ)
  • ಕ್ಯಾಲ್ಸಿಯಂ ಫೋರ್ಟಿಫೈಡ್ ಆಹಾರ ಪದಾರ್ಥಗಳು

ವಿಟಮಿನ್ ಡಿ ಕೂಡ ಅಷ್ಟೇ ಮುಖ್ಯ

ಕ್ಯಾಲ್ಸಿಯಂ ದೇಹದಲ್ಲಿ ಸರಿಯಾಗಿ ಹೀರಿಕೊಳ್ಳಲು ವಿಟಮಿನ್ ಡಿ ಅಗತ್ಯವಾಗಿರುತ್ತದೆ. ಆದ್ದರಿಂದ ಪ್ರತಿದಿನ ಬೆಳಗಿನ ಸೂರ್ಯನ ಬೆಳಕಿನಲ್ಲಿ ಸುಮಾರು 15ರಿಂದ 20 ನಿಮಿಷಗಳ ಕಾಲ ಇರುವುದರಿಂದ ವಿಟಮಿನ್ ಡಿ ಉತ್ಪಾದನೆಗೆ ಸಹಕಾರಿಯಾಗುತ್ತದೆ.

ಕ್ಯಾಲ್ಸಿಯಂ ಮಾತ್ರೆ ಸೇವಿಸುವಾಗ ಗಮನಿಸಬೇಕಾದ ಅಂಶಗಳು

ವೈದ್ಯರ ಸಲಹೆಯಿಲ್ಲದೆ ಕ್ಯಾಲ್ಸಿಯಂ ಮಾತ್ರೆಗಳನ್ನು ಸೇವಿಸಬಾರದು. ಕಬ್ಬಿಣ (Iron) ಮಾತ್ರೆ ಮತ್ತು ಕ್ಯಾಲ್ಸಿಯಂ ಮಾತ್ರೆಯನ್ನು ಒಂದೇ ಸಮಯದಲ್ಲಿ ಸೇವಿಸುವುದನ್ನು ತಪ್ಪಿಸಬೇಕು. ಎರಡರ ನಡುವೆ ಕನಿಷ್ಠ ಎರಡು ಗಂಟೆಗಳ ಅಂತರ ಇರಬೇಕು. ಜೊತೆಗೆ ಸಾಕಷ್ಟು ನೀರು ಕುಡಿಯುವುದು ಮತ್ತು ನಿಯಮಿತ ಗರ್ಭಪೂರ್ವ ತಪಾಸಣೆ ಮಾಡಿಸಿಕೊಳ್ಳುವುದೂ ಅಗತ್ಯ.

ಈ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ

ಗರ್ಭಾವಸ್ಥೆಯಲ್ಲಿ ಕಾಲು ಸೆಳೆತ, ಸ್ನಾಯು ನೋವು, ಹಲ್ಲು ದುರ್ಬಲವಾಗುವುದು ಅಥವಾ ಅತಿಯಾದ ಆಯಾಸದಂತಹ ಲಕ್ಷಣಗಳು ಕಂಡುಬಂದರೆ ಅವು ಕ್ಯಾಲ್ಸಿಯಂ ಕೊರತೆಯ ಸೂಚನೆಯಾಗಿರಬಹುದು. ಇಂತಹ ಸಂದರ್ಭಗಳಲ್ಲಿ ಸ್ವಯಂ ಔಷಧಿ ಸೇವಿಸುವ ಬದಲು ಪ್ರಸೂತಿ ತಜ್ಞರನ್ನು ಸಂಪರ್ಕಿಸಿ ಅಗತ್ಯ ಪರೀಕ್ಷೆ ಹಾಗೂ ಸೂಕ್ತ ಪೌಷ್ಟಿಕಾಂಶದ ಬಗ್ಗೆ ಸಲಹೆ ಪಡೆಯುವುದು ಸುರಕ್ಷಿತ.

ತಜ್ಞರ ಅಭಿಪ್ರಾಯದಂತೆ, ಸಮತೋಲಿತ ಆಹಾರ, ನಿಯಮಿತ ವ್ಯಾಯಾಮ, ಅಗತ್ಯ ಪೌಷ್ಟಿಕಾಂಶಗಳು ಹಾಗೂ ವೈದ್ಯರ ಸಲಹೆ ಪಾಲಿಸುವ ಮೂಲಕ ತಾಯಿ ಮತ್ತು ಗರ್ಭದಲ್ಲಿರುವ ಮಗುವಿನ ಆರೋಗ್ಯವನ್ನು ಉತ್ತಮವಾಗಿ ಕಾಪಾಡಿಕೊಳ್ಳಬಹುದು.

ಮಹಿಳಾ ಸಿಬ್ಬಂದಿ ಜೊತೆ ಅನುಚಿತ ವರ್ತನೆ ಆರೋಪ! ಇನ್‌ಫ್ಲೂಯೆನ್ಸರ್ ಅಮುಕು ಡುಮುಕು ವಿರುದ್ಧ FIR

0

ಬೆಂಗಳೂರು: ಮಹಿಳಾ ಸಿಬ್ಬಂದಿ ಜೊತೆ ಅನುಚಿತವಾಗಿ ವರ್ತಿಸಿದ ಆರೋಪದ ಮೇಲೆ ಸೋಷಿಯಲ್ ಮೀಡಿಯಾ ಇನ್‌ಫ್ಲೂಯೆನ್ಸರ್ ಮಂಜು ಅಲಿಯಾಸ್ ಅಮುಕು ಡುಮುಕು ವಿರುದ್ಧ ಪ್ರಕರಣ ದಾಖಲಾಗಿದೆ.

ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಎಫ್‌ಐಆರ್ ದಾಖಲಾಗಿದೆ. ರೆಸ್ಟೋ ಬಾರ್‌ನಲ್ಲಿ ಮಹಿಳಾ ಸಿಬ್ಬಂದಿ ಜೊತೆ ಅನುಚಿತವಾಗಿ ವರ್ತಿಸಿದ್ದು, ಬಳಿಕ ಕೊಲೆ ಬೆದರಿಕೆ ಹಾಕಿದ ಆರೋಪ ಕೇಳಿಬಂದಿದೆ.

ಮಾಹಿತಿ ಪ್ರಕಾರ, ಜುಲೈ 9ರ ರಾತ್ರಿ ಮಂಜು ಅಲಿಯಾಸ್ ಅಮುಕು ಡುಮುಕು ರೆಸ್ಟೋ ಬಾರ್‌ಗೆ ತೆರಳಿ ಊಟ ಹಾಗೂ ಮದ್ಯ ಸೇವಿಸಿದ್ದರು. ಬಳಿಕ ಬಿಲ್ ನೀಡುವಂತೆ ಕೇಳಿದಾಗ ಮಹಿಳಾ ಸಿಬ್ಬಂದಿ ಜೊತೆ ಅನುಚಿತವಾಗಿ ವರ್ತಿಸಿದ್ದಾರೆ ಎನ್ನಲಾಗಿದೆ.

ನಂತರ ಹೊರಗೆ ತೆರಳುತ್ತಿದ್ದ ವೇಳೆ ಮಹಿಳಾ ಸಿಬ್ಬಂದಿ ಪ್ರಶ್ನಿಸಿದಾಗ, ಆಕೆಗೆ ಸೆಲ್ಫಿ ಫೋಟೋ ನೀಡುವಂತೆ ಕೇಳಿದ್ದಾರೆ ಎಂದು ಆರೋಪಿಸಲಾಗಿದೆ. ಇದೇ ವೇಳೆ ಸ್ಥಳದಲ್ಲಿದ್ದ ಪಬ್ ಮ್ಯಾನೇಜರ್ ಮೇಲೆ ಹಲ್ಲೆಗೆ ಯತ್ನಿಸಿ, ಕೊಲೆ ಬೆದರಿಕೆ ಹಾಕಿದ್ದಾರೆ ಎಂಬ ಆರೋಪವೂ ಇದೆ.

ಈ ಸಂಬಂಧ ಅಮುಕು ಡುಮುಕು ಹಾಗೂ ಅವರ ಸ್ನೇಹಿತರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅನ್ನಪೂರ್ಣೇಶ್ವರಿ ನಗರ ಪೊಲೀಸರು ಆರೋಪಿಗಳಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ.

ಪ್ರಕರಣದ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಕೃಷಿ ಹೊಂಡದಲ್ಲಿ ಈಜಲು ಹೋಗಿ ನವ ವಿವಾಹಿತ ವಕೀಲ ಸಾವು!

ರಾಯಚೂರು: ಕೃಷಿ ಹೊಂಡದಲ್ಲಿ ಈಜಲು ಹೋಗಿದ್ದ ನವ ವಿವಾಹಿತ ವಕೀಲನೊಬ್ಬ ಹೂಳಿನಲ್ಲಿ ಸಿಲುಕಿ ಮೃತಪಟ್ಟಿರುವ ಘಟನೆ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಉಮಲೂಟಿ ಗ್ರಾಮದಲ್ಲಿ ನಡೆದಿದೆ.

ಮೃತರನ್ನು ಉಮಲೂಟಿ ಗ್ರಾಮದ 30 ವರ್ಷದ ಹನೀಫ್ ಎಂದು ಗುರುತಿಸಲಾಗಿದೆ. ಹನೀಫ್ ಅವರು ವಕೀಲರಾಗಿದ್ದು, ಎರಡು ತಿಂಗಳ ಹಿಂದಷ್ಟೇ ವಿವಾಹವಾಗಿದ್ದರು.

ಗ್ರಾಮದ ಸ್ನೇಹಿತರೊಂದಿಗೆ ಕೃಷಿ ಹೊಂಡದಲ್ಲಿ ಈಜಲು ತೆರಳಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಹೊಂಡದಲ್ಲಿ ಹೂಳು ಇರುವ ಬಗ್ಗೆ ಅರಿವಿಲ್ಲದೆ ಈಜಲು ನೀರಿಗೆ ಇಳಿದ ಹನೀಫ್, ಹೂಳಿನಲ್ಲಿ ಸಿಲುಕಿಕೊಂಡಿದ್ದಾರೆ. ಹೊರಬರಲು ಸಾಧ್ಯವಾಗದೆ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ವಿಷಯ ತಿಳಿದ ಗ್ರಾಮಸ್ಥರು ಸ್ಥಳಕ್ಕೆ ಆಗಮಿಸಿ ಮೃತದೇಹವನ್ನು ಹೊರತೆಗೆದಿದ್ದಾರೆ. ಘಟನೆ ಸಂಬಂಧ ತುರ್ವಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸಿಂಧನೂರು ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಗಿದೆ. ನವ ವಿವಾಹಿತನ ಸಾವಿನಿಂದ ಕುಟುಂಬಸ್ಥರು ಹಾಗೂ ಗ್ರಾಮದಲ್ಲಿ ದುಃಖದ ವಾತಾವರಣ ನಿರ್ಮಾಣವಾಗಿದೆ.

ಸ್ಕಾಚ್ ವಿಸ್ಕಿ ಪ್ರಿಯರಿಗೆ ಬಂಪರ್ ಸುದ್ದಿ: ಆಮದು ಸುಂಕ ಶೇ.150ರಿಂದ ಶೇ.75ಕ್ಕೆ ಇಳಿಕೆ?

ಬೆಂಗಳೂರು: ಭಾರತ ಮತ್ತು ಬ್ರಿಟನ್ ನಡುವಿನ ಮುಕ್ತ ವ್ಯಾಪಾರ ಒಪ್ಪಂದ ಜಾರಿಗೆ ಬಂದಿರುವ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಪ್ರೀಮಿಯಂ ಆಮದು ಮದ್ಯದ ಬೆಲೆ ಮತ್ತಷ್ಟು ಕಡಿಮೆಯಾಗುವ ಸಾಧ್ಯತೆ ಇದೆ.

ಈಗಾಗಲೇ ಕರ್ನಾಟಕ ಸರ್ಕಾರ ಜಾರಿಗೆ ತಂದಿರುವ ಹೊಸ ಅಬಕಾರಿ ತೆರಿಗೆ ನೀತಿಯಿಂದ ದುಬಾರಿ ಹಾಗೂ ಪ್ರೀಮಿಯಂ ಮದ್ಯದ ದರ ಇಳಿಕೆಯಾಗಿತ್ತು. ಇದೀಗ ಬ್ರಿಟನ್‌ನಿಂದ ಆಮದು ಮಾಡಿಕೊಳ್ಳುವ ಸ್ಕಾಚ್ ವಿಸ್ಕಿ ಮೇಲಿನ ಕಸ್ಟಮ್ಸ್ ಸುಂಕ ಕಡಿಮೆಯಾಗಿರುವುದರಿಂದ ಗ್ರಾಹಕರಿಗೆ ಇನ್ನಷ್ಟು ಅನುಕೂಲವಾಗುವ ನಿರೀಕ್ಷೆ ಇದೆ.

ಕರ್ನಾಟಕ ಸರ್ಕಾರ ಮೇ 11ರಿಂದ ಆಲ್ಕೋಹಾಲ್ ಪ್ರಮಾಣದ ಆಧಾರದ ಮೇಲೆ ಹೊಸ ಅಬಕಾರಿ ತೆರಿಗೆ ವ್ಯವಸ್ಥೆ ಜಾರಿಗೆ ತಂದಿದೆ. ಈ ನೀತಿಯಿಂದ ಕಡಿಮೆ ಆಲ್ಕೋಹಾಲ್ ಅಂಶ ಹೊಂದಿರುವ ಕೆಲವು ಪ್ರೀಮಿಯಂ ಆಮದು ಮದ್ಯಗಳ ಬೆಲೆ ಶೇ.15ರಿಂದ 23ರಷ್ಟು ಇಳಿಕೆಯಾಗಿದೆ.

ಇದೀಗ ಜುಲೈ 15ರಿಂದ ಭಾರತ-ಬ್ರಿಟನ್ ಸಮಗ್ರ ಆರ್ಥಿಕ ಮತ್ತು ವ್ಯಾಪಾರ ಒಪ್ಪಂದ ಜಾರಿಗೆ ಬಂದಿದೆ. ಇದರ ಪ್ರಕಾರ ಬ್ರಿಟನ್‌ನಿಂದ ಆಮದು ಮಾಡಿಕೊಳ್ಳುವ ಸ್ಕಾಚ್ ವಿಸ್ಕಿ ಮೇಲಿನ ಕಸ್ಟಮ್ಸ್ ಸುಂಕವನ್ನು ಶೇ.150ರಿಂದ ಶೇ.75ಕ್ಕೆ ಇಳಿಸಲಾಗಿದೆ. ಮುಂದಿನ 10 ವರ್ಷಗಳಲ್ಲಿ ಈ ಸುಂಕವನ್ನು ಹಂತ ಹಂತವಾಗಿ ಶೇ.40ಕ್ಕೆ ಇಳಿಸುವ ಯೋಜನೆ ಇದೆ.

ಇಂಟರ್‌ನ್ಯಾಷನಲ್ ಸ್ಪಿರಿಟ್ಸ್ ಅಂಡ್ ವೈನ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಪ್ರಕಾರ, ಕರ್ನಾಟಕದ ಹೊಸ ತೆರಿಗೆ ನೀತಿಯಿಂದಲೇ ಆಮದು ಮದ್ಯದ ಬೆಲೆ ಕಡಿಮೆಯಾಗಿದೆ. ಇದೀಗ CETA ಒಪ್ಪಂದದ ಪರಿಣಾಮವಾಗಿ ಪ್ರೀಮಿಯಂ ಮದ್ಯದ ಬೆಲೆ ಇನ್ನೂ ಶೇ.5ರಿಂದ 7ರಷ್ಟು ಇಳಿಕೆಯಾಗುವ ಸಾಧ್ಯತೆ ಇದೆ.

ಆದರೆ ಈ ಬೆಲೆ ಇಳಿಕೆ ತಕ್ಷಣವೇ ಜಾರಿಗೆ ಬರುವುದಿಲ್ಲ. ಹೊಸ ಸುಂಕ ವ್ಯವಸ್ಥೆ, ದಾಖಲೆ ಪ್ರಕ್ರಿಯೆ ಹಾಗೂ ವಿತರಣಾ ವ್ಯವಸ್ಥೆಯ ಬದಲಾವಣೆ ಪೂರ್ಣಗೊಂಡ ಬಳಿಕ ಗ್ರಾಹಕರಿಗೆ ಇದರ ಲಾಭ ಸಿಗಲಿದೆ ಎಂದು ಉದ್ಯಮ ವಲಯ ತಿಳಿಸಿದೆ.

ಬ್ರಿಟನ್‌ನಿಂದ ಆಮದು ಆಗುವ ಸ್ಕಾಚ್ ವಿಸ್ಕಿ ಕಡಿಮೆ ದರದಲ್ಲಿ ಲಭ್ಯವಾದರೆ, ಭಾರತೀಯ ಪ್ರೀಮಿಯಂ ಸಿಂಗಲ್ ಮಾಲ್ಟ್ ಹಾಗೂ ಇತರೆ ಉನ್ನತ ದರ್ಜೆಯ ಮದ್ಯ ಬ್ರಾಂಡ್‌ಗಳಿಗೆ ಹೆಚ್ಚಿನ ಸ್ಪರ್ಧೆ ಎದುರಾಗುವ ಸಾಧ್ಯತೆ ಇದೆ.

ಆದರೆ ಬಲ್ಕ್ ಸ್ಕಾಚ್ ಆಮದು ಸುಲಭವಾಗುವುದರಿಂದ ದೇಶೀಯ ಮದ್ಯ ತಯಾರಕರಿಗೂ ಕೆಲವು ಅನುಕೂಲಗಳು ದೊರೆಯಬಹುದು ಎಂದು ಉದ್ಯಮ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಒಟ್ಟಾರೆ ಭಾರತ-ಬ್ರಿಟನ್ ಮುಕ್ತ ವ್ಯಾಪಾರ ಒಪ್ಪಂದದಿಂದ ಗ್ರಾಹಕರಿಗೆ ಹೆಚ್ಚಿನ ಆಯ್ಕೆಗಳು ಲಭ್ಯವಾಗಲಿದ್ದು, ಜಾಗತಿಕ ಪ್ರೀಮಿಯಂ ಮದ್ಯ ಬ್ರಾಂಡ್‌ಗಳು ಸ್ಪರ್ಧಾತ್ಮಕ ದರದಲ್ಲಿ ಸಿಗುವ ಸಾಧ್ಯತೆ ಇದೆ.

ಮನೆಗೆ ನುಗ್ಗಿದ ಸಿಮೆಂಟ್ ಲಾರಿ: ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ಸಾವು!

0

ಮಿರ್ಜಾಪುರ: ಉತ್ತರ ಪ್ರದೇಶದ ಮಿರ್ಜಾಪುರ ಜಿಲ್ಲೆಯಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ಮೂವರು ಮೃತಪಟ್ಟಿರುವ ಘಟನೆ ನಡೆದಿದೆ.

ಸಿಮೆಂಟ್ ತುಂಬಿದ ಲಾರಿಯೊಂದು ನಿಯಂತ್ರಣ ತಪ್ಪಿ ರಸ್ತೆ ಬದಿಯ ಮನೆಗೆ ನುಗ್ಗಿದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.

ಅಪಘಾತವು ಬೆಳಗಿನ ಜಾವ ಸುಮಾರು 3 ಗಂಟೆ ವೇಳೆಗೆ ನಡೆದಿದೆ. ವಾರಾಣಸಿಯಿಂದ ಸೋನಭದ್ರದ ಕಡೆಗೆ ಸಿಮೆಂಟ್ ಚೀಲಗಳನ್ನು ಹೊತ್ತು ತೆರಳುತ್ತಿದ್ದ ಲಾರಿ, ಮಿರ್ಜಾಪುರದ ಹೆದ್ದಾರಿ ಬಳಿ ತಲುಪಿದಾಗ ಏಕಾಏಕಿ ಟೈರ್ ಸ್ಫೋಟಗೊಂಡಿದೆ.

ಟೈರ್ ಸ್ಫೋಟದಿಂದ ಚಾಲಕನ ನಿಯಂತ್ರಣ ತಪ್ಪಿದ ಲಾರಿ ನೇರವಾಗಿ ರಸ್ತೆ ಬದಿಯ ಮನೆಯೊಳಗೆ ನುಗ್ಗಿದೆ. ಮುಂಜಾನೆ ಸಮಯವಾಗಿದ್ದರಿಂದ ಮನೆಯಲ್ಲಿದ್ದವರು ಗಾಢ ನಿದ್ರೆಯಲ್ಲಿದ್ದರು. ಲಾರಿ ಡಿಕ್ಕಿ ಹೊಡೆದ ರಭಸಕ್ಕೆ ಮನೆಯ ಗೋಡೆಗಳು ಕುಸಿದು, ಮಲಗಿದ್ದವರ ಮೇಲೆ ಲಾರಿ ಹರಿದಿದೆ.

ಘಟನೆಯಲ್ಲಿ ರಾಜಾರಾಮ್ (47), ಸುಖಿಯಾ (70) ಹಾಗೂ ಚಂದತಾರಾ (45) ಎಂಬುವವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇದೇ ವೇಳೆ 12 ವರ್ಷದ ಬಾಲಕಿ ಸೇರಿದಂತೆ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಗಾಯಾಳುಗಳನ್ನು ಸ್ಥಳೀಯರು ಹಾಗೂ ಪೊಲೀಸರು ರಕ್ಷಿಸಿ, ಹೆಚ್ಚಿನ ಚಿಕಿತ್ಸೆಗಾಗಿ ವಾರಾಣಸಿಯ ಟ್ರಾಮಾ ಸೆಂಟರ್ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಅಪಘಾತದ ಬಳಿಕ ಲಾರಿ ಮನೆಯೊಳಗೆ ಸಿಲುಕಿಕೊಂಡಿತ್ತು. ಪೊಲೀಸರು ಕ್ರೇನ್ ಸಹಾಯದಿಂದ ಲಾರಿಯನ್ನು ಹೊರತೆಗೆದಿದ್ದಾರೆ. ಸದ್ಯ ಲಾರಿಯನ್ನು ವಶಕ್ಕೆ ಪಡೆದಿರುವ ಪೊಲೀಸರು, ಅಪಘಾತಕ್ಕೆ ಚಾಲಕನ ನಿರ್ಲಕ್ಷ್ಯ ಕಾರಣವೇ ಅಥವಾ ತಾಂತ್ರಿಕ ದೋಷವೇ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ನಿದ್ರೆಯಲ್ಲಿದ್ದಾಗಲೇ ಒಂದೇ ಕುಟುಂಬದ ಮೂವರನ್ನು ಬಲಿ ಪಡೆದ ಈ ಘಟನೆ ಸ್ಥಳೀಯರಲ್ಲಿ ತೀವ್ರ ದುಃಖ ಮೂಡಿಸಿದೆ.