ಅಸ್ಸಾಂ: ಪ್ರಧಾನಿ ನರೇಂದ್ರ ಮೋದಿ ಅಸ್ಸಾಂನಲ್ಲಿ ನಡೆಯಲಿರುವ ಚುನಾವಣಾ ರ್ಯಾಲಿಗಳಿಗೆ ಮುನ್ನ ದಿಬ್ರುಗಢದಲ್ಲಿರುವ ಚಹಾ ತೋಟಕ್ಕೆ ಭೇಟಿ ನೀಡಿದರು. ಈ ವೇಳೆ ಅಸ್ಸಾಂನ ಚಹಾವನ್ನು “ರಾಜ್ಯದ ಆತ್ಮ” ಎಂದು ಬಣ್ಣಿಸಿದರು. ಇಲ್ಲಿಂದ ಉತ್ಪಾದನೆಯಾಗುವ ಚಹಾ ವಿಶ್ವದಾದ್ಯಂತ ಪ್ರಸಿದ್ಧಿ ಪಡೆದಿದೆ ಎಂದು ಹೇಳಿದರು.
ಇಂದು ಬೆಳಗ್ಗೆ ದಿಬ್ರುಗಢದ ಚಹಾ ತೋಟಕ್ಕೆ ಭೇಟಿ ನೀಡಿ ಅಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯರೊಂದಿಗೆ ಮಾತನಾಡಿದ ಕ್ಷಣಗಳು ಬಹಳ ಸ್ಮರಣೀಯವಾಗಿದ್ದವು ಎಂದು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಚಹಾ ತೋಟಗಾರರ ಕುಟುಂಬಗಳ ಪರಿಶ್ರಮವನ್ನು ಮೆಚ್ಚಿದ ಮೋದಿ, ಅವರ ಶ್ರಮವೇ ಅಸ್ಸಾಂನ ಗೌರವವನ್ನು ಜಗತ್ತಿನ ಮಟ್ಟದಲ್ಲಿ ಹೆಚ್ಚಿಸಿದೆ ಎಂದು ಹೇಳಿದರು. ಅಲ್ಲಿನ ಕೆಲಸಗಾರರೊಂದಿಗೆ ಸಂವಾದ ನಡೆಸಿ, ಅವರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡರು.
ರಾಜ್ಯ ಸರ್ಕಾರದ ವರದಿಗಳ ಪ್ರಕಾರ, ಅಸ್ಸಾಂ ವರ್ಷಕ್ಕೆ ಸುಮಾರು 630–700 ಮಿಲಿಯನ್ ಕೆಜಿ ಚಹಾ ಉತ್ಪಾದನೆ ಮಾಡುತ್ತಿದ್ದು, ಇದು ಭಾರತದ ಒಟ್ಟು ಉತ್ಪಾದನೆಯ ಅರ್ಧಕ್ಕಿಂತ ಹೆಚ್ಚಿನದು ಎಂಬುದು ಗಮನಾರ್ಹವಾಗಿದೆ.
ಇದೇ ವೇಳೆ, ಮೋದಿ ಅವರು ಧೆಮಾಜಿ ಮತ್ತು ಢಕುವಾಖಾ ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳಾದ ರಾನೋಜ್ ಪೆಗು ಮತ್ತು ನಬಾ ಕುಮಾರ್ ಡೋಲೆ ಪರ ಪ್ರಚಾರ ನಡೆಸಲಿದ್ದಾರೆ. ಗೋಗಮುಖದಲ್ಲಿ ನಡೆಯುವ ರ್ಯಾಲಿಯಲ್ಲಿ ಮಾತನಾಡಿದ ಬಳಿಕ, ಮಧ್ಯಾಹ್ನ ಬಿಸ್ವಾನಾಥ್ ಜಿಲ್ಲೆಯಲ್ಲಿ ಮತ್ತೊಂದು ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಭಾಷಣ ಮಾಡುವ ಕಾರ್ಯಕ್ರಮವೂ ಇದೆ.

