ಭಾರತೀಯ ಪೌರಾಣಿಕ ಕಥೆಯನ್ನು ಅದ್ದೂರಿಯಾಗಿ ತೆರೆ ಮೇಲೆ ತಂದಿರುವ ‘ಕೃಷ್ಣಾವತಾರಂ’ ಚಿತ್ರಕ್ಕೆ ಉತ್ತರ ಪ್ರದೇಶ ಸರ್ಕಾರ ಭಾರಿ ಬೆಂಬಲ ಘೋಷಿಸಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಿನಿಮಾ ರಾಜ್ಯದಲ್ಲಿ ತೆರಿಗೆ ಮುಕ್ತ ಎಂದು ಘೋಷಿಸಿದ್ದು, ಚಿತ್ರರಂಗದಲ್ಲಿ ಈ ಬೆಳವಣಿಗೆ ದೊಡ್ಡ ಚರ್ಚೆಗೆ ಕಾರಣವಾಗಿದೆ.
ಕೇವಲ ಟ್ಯಾಕ್ಸ್ ಫ್ರೀ ಘೋಷಣೆ ಮಾತ್ರವಲ್ಲದೆ, ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಚಿತ್ರದ ವಿಶೇಷ ಪ್ರದರ್ಶನ ನಡೆಸುವಂತೆ ಸರ್ಕಾರದ ಮಾಹಿತಿ ಇಲಾಖೆಗೆ ಸೂಚನೆ ನೀಡಲಾಗಿದೆ. ಭಾರತೀಯ ಸಂಸ್ಕೃತಿ, ಧಾರ್ಮಿಕ ಪರಂಪರೆ ಮತ್ತು ಪೌರಾಣಿಕ ಮೌಲ್ಯಗಳನ್ನು ಹೊಸ ಪೀಳಿಗೆಗೆ ತಲುಪಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
ಈ ಹಿನ್ನೆಲೆ ‘ಕೃಷ್ಣಾವತಾರಂ’ ಚಿತ್ರತಂಡ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಭೇಟಿ ಮಾಡಿತು. ನಿರ್ಮಾಪಕರಾದ ಸಜ್ಜನ್ ರಾಜ್ ಕುರುಪ್, ಶೋಭಾ ಸಂತ, ಪೂನಂ ಶ್ರಾಫ್ ಗಜ್ಜರ್, ನಿರ್ದೇಶಕ ಹಾರ್ದಿಕ್ ಗಜ್ಜರ್ ಮತ್ತು ನಟರಾದ ಸಿದ್ಧಾರ್ಥ್ ಗುಪ್ತಾ, ಸಂಸ್ಕೃತಿ ಜಯಾನ ಸಭೆಯಲ್ಲಿ ಭಾಗವಹಿಸಿದ್ದರು.
ಮೂರು ಭಾಗಗಳ ಸಿನಿಮಾ ಸರಣಿಯ ಮೊದಲ ಅಧ್ಯಾಯವಾಗಿರುವ ‘ಕೃಷ್ಣಾವತಾರಂ: ಪಾರ್ಟ್-1’ ಈಗಾಗಲೇ ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಕನ್ನಡದ ಕಾರ್ತಿಕ್ ಜಯರಾಮ್ (ಜೆಕೆ) ಮತ್ತು ಸುಷ್ಮಿತಾ ಭಟ್ ಅಭಿನಯ ಚಿತ್ರದ ಪ್ರಮುಖ ಆಕರ್ಷಣೆಯಾಗಿದೆ.
ಚಿತ್ರವು ಮೊದಲ ವಾರಾಂತ್ಯದಲ್ಲೇ 6.75 ಕೋಟಿ ರೂ. ಕಲೆಕ್ಷನ್ ಮಾಡಿ ಬಾಕ್ಸ್ ಆಫೀಸ್ನಲ್ಲಿ ಭದ್ರ ಹಿಡಿತ ಸಾಧಿಸಿದೆ. ಹಿಂದಿಯ ಜೊತೆಗೆ ತೆಲುಗು ಮತ್ತು ತಮಿಳು ಭಾಷೆಗಳಲ್ಲೂ ಬಿಡುಗಡೆಯಾಗಿರುವ ಈ ಸಿನಿಮಾ ದಕ್ಷಿಣ ಭಾರತದಲ್ಲೂ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ.

