Home Blog

‘ಕ್ರಿಸ್ಟಲ್ ಎಐ’ ಟ್ರೇಡಿಂಗ್ ಸ್ಕ್ಯಾಂ: ಕೋಟಿ ಕೋಟಿ ವಂಚನೆ, ಎಂ.ಡಿ ರಾಜೇಶ್ ಕಾಮತ್ ಪೊಲೀಸರ ವಶಕ್ಕೆ

ಬೆಂಗಳೂರು: ನಗರದ ಹೂಡಿಕೆದಾರರನ್ನು ಗುರಿಯಾಗಿಸಿಕೊಂಡು “ಡಬಲ್ ಹಣ” ಆಮಿಷದಡಿ ಭಾರೀ ವಂಚನೆ ನಡೆದಿರುವುದು ಬಹಿರಂಗವಾಗಿದೆ. ಕ್ರಿಸ್ಟಲ್ ಎಐ ಎಂಬ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಂಸ್ಥೆ, ನೂರಾರು ಮಂದಿಯಿಂದ ಕೋಟ್ಯಾಂತರ ರೂಪಾಯಿ ಸಂಗ್ರಹಿಸಿ ಮೋಸ ಮಾಡಿರುವ ಆರೋಪ ಕೇಳಿಬಂದಿದೆ.

ಈ ಪ್ರಕರಣ ಸಂಬಂಧ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ರಾಜೇಶ್ ಕಾಮತ್ರ ಅವರನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ರೋಬೋಟ್ ಟ್ರೇಡಿಂಗ್ ಪ್ಲಾಟ್‌ಫಾರ್ಮ್ ಮೂಲಕ ಹೂಡಿಕೆ ಮಾಡಿದ ಹಣವನ್ನು ಕಡಿಮೆ ಅವಧಿಯಲ್ಲಿ ಡಬಲ್ ಮಾಡಿಕೊಡಲಾಗುತ್ತದೆ ಎಂದು ನಂಬಿಸಿ ಜನರನ್ನು ಸೆಳೆದಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಪ್ರಾಥಮಿಕ ತನಿಖೆಯ ಪ್ರಕಾರ 5ರಿಂದ 6 ಕೋಟಿ ರೂಪಾಯಿ ವಂಚನೆ ನಡೆದಿರುವುದು ತಿಳಿದುಬಂದಿದ್ದರೂ, ನಿಜವಾದ ಮೊತ್ತ ನೂರಾರು ಕೋಟಿಗಳಿಗೆ ತಲುಪಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಬೆಂಗಳೂರು ನಗರ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಚುರುಕುಗೊಂಡಿದೆ.

Gruhalakshmi money: ಗೃಹಲಕ್ಷ್ಮಿ ಹಣದಿಂದ ಐಸ್ ಕ್ರೀಂ ಅಂಗಡಿ ಆರಂಭಿಸಿದ ಮಹಿಳೆ!

ಬಳ್ಳಾರಿ: ಗೃಹಲಕ್ಷ್ಮಿ ಯೋಜನೆಯ ಹಣವನ್ನು ಸಂಗ್ರಹಿಸಿ ಮಹಿಳೆಯೊಬ್ಬರು ಸಣ್ಣ ಮಟ್ಟದಲ್ಲಿ ಐಸ್‌ಕ್ರೀಂ ಅಂಗಡಿ ಆರಂಭಿಸಿ ಸ್ವಾವಲಂಬಿ ಬದುಕು ಕಟ್ಟಿಕೊಂಡ ಘಟನೆ ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲ್ಲೂಕಿನ ಹರಾಳು ಗ್ರಾಮದಲ್ಲಿ ಬೆಳಕಿಗೆ ಬಂದಿದೆ.

ಹರಾಳು ಗ್ರಾಮದ ಎನ್. ವಿಶಾಲಾಕ್ಷಿ ಅವರು ಈ ಉದ್ಯಮ ಆರಂಭಿಸಿ ಗಮನ ಸೆಳೆದಿದ್ದಾರೆ. ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದ ಅವರು ಮೊದಲು ಕೂಲಿ ಕೆಲಸ ಮಾಡುತ್ತಿದ್ದರು. ನಂತರ ಪ್ರತಿ ತಿಂಗಳು ಗೃಹಲಕ್ಷ್ಮಿ ಯೋಜನೆಯಡಿ ದೊರೆಯುವ ₹2,000 ಹಣವನ್ನು ಉಳಿಸಿ ಐಸ್‌ಕ್ರೀಂ ಅಂಗಡಿ ಆರಂಭಿಸಿದ್ದಾರೆ.

ಕೊಟ್ಟೂರಿನ ವಿತರಕರಿಂದ ಚಾಕೋಬಾರ್, ಐಸ್ ಕ್ಯಾಂಡಿ, ಕುಲ್ಫಿ, ಕೋನ್ ಐಸ್, ಕಪ್ ಐಸ್ ಸೇರಿದಂತೆ ವಿವಿಧ ಐಸ್‌ಕ್ರೀಂ ಉತ್ಪನ್ನಗಳನ್ನು ಪಡೆದು ಮಾರಾಟ ಮಾಡುತ್ತಿದ್ದಾರೆ. ಅಂಗಡಿ ಆರಂಭವಾದ ಕೆಲವೇ ದಿನಗಳಲ್ಲಿ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ.

ಜಿಲ್ಲೆಯಲ್ಲಿ ಬಿಸಿಲಿನ ತಾಪಮಾನ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಜನರು ತಂಪುಪಾನೀಯಗಳು ಮತ್ತು ಐಸ್‌ಕ್ರೀಂ ಕಡೆ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಇದರಿಂದ ವಿಶಾಲಾಕ್ಷಿ ಅವರ ವ್ಯಾಪಾರಕ್ಕೂ ಉತ್ತೇಜನ ಸಿಕ್ಕಿದೆ.

ಇದುವರೆಗೂ ಪಡೆದ ಹಣವನ್ನು ಬ್ಯಾಂಕ್‌ನಲ್ಲಿ ಉಳಿಸಿಕೊಂಡಿದ್ದ ಅವರು, ಪತಿ ಎನ್. ಬಸವರಾಜ ಅವರ ಸಹಕಾರದಿಂದ ಈ ಉದ್ಯಮ ಆರಂಭಿಸಿದ್ದಾರೆ. ಗೃಹಲಕ್ಷ್ಮಿ ಯೋಜನೆ ನಮ್ಮ ಜೀವನದಲ್ಲಿ ದೊಡ್ಡ ಬದಲಾವಣೆ ತಂದಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಕಥೆ ಕಳವು ಆರೋಪಕ್ಕೆ ಕೋರ್ಟ್ ಎಚ್ಚರಿಕೆ: ‘ಧುರಂಧರ್ 2’ ವಿವಾದಕ್ಕೆ ಸಂಧಾನದ ದಾರಿ

ಧುರಂಧರ್ 2 ಸಿನಿಮಾದ ಕಥೆ ಕಳವು ಆರೋಪಕ್ಕೆ ಸಂಬಂಧಿಸಿದಂತೆ ಬಾಂಬೆ ಹೈಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ.

ನಿರ್ದೇಶಕ ಸಂತೋಷ್ ಕುಮಾರ್ ಮಾಡಿದ್ದ ಆರೋಪವನ್ನು ಖಂಡಿಸಿದ ಆದಿತ್ಯ ಧರ್, ಮಾನನಷ್ಟ ಮೊಕದ್ದಮೆ ಹೂಡಿದ್ದು, ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆಗೆ ಬಂದಿದೆ.

ನ್ಯಾಯಮೂರ್ತಿ ಅರಿಫ್ ಡಾಕ್ಟರ್ ಅವರ ಪೀಠ, ಬೌದ್ಧಿಕ ಆಸ್ತಿ ಹಕ್ಕುಗಳ ಕುರಿತ ವಿವಾದಗಳನ್ನು ಕಾನೂನು ಪ್ರಕಾರ ಸಿವಿಲ್ ಮೊಕದ್ದಮೆಗಳ ಮೂಲಕ ಬಗೆಹರಿಸಿಕೊಳ್ಳಬಹುದು ಎಂದು ಸ್ಪಷ್ಟಪಡಿಸಿದೆ. ಮಾಧ್ಯಮಗಳ ಮುಂದೆ ಆರೋಪ-ಪ್ರತ್ಯಾರೋಪ ಮಾಡುವುದು ಸರಿಯಲ್ಲ ಎಂದು ಕೋರ್ಟ್ ಸೂಚಿಸಿದೆ.

ಇದೇ ವೇಳೆ, ಈ ಹಿಂದೆ ಸಂತೋಷ್ ಕುಮಾರ್ ಅವರಿಗೆ ಮಾನಹಾನಿಕರ ಹೇಳಿಕೆ ನೀಡದಂತೆ ತಡೆಯಾಜ್ಞೆ ನೀಡಲಾಗಿತ್ತು. ಈಗ ಕೋರ್ಟ್ ನೀಡಿರುವ ಸಂಧಾನದ ಸಲಹೆ ಬಳಿಕ, ಉಭಯ ಪಕ್ಷಗಳು ಯಾವ ರೀತಿಯಲ್ಲಿ ಮುಂದುವರಿಯುತ್ತವೆ ಎಂಬುದರ ಮೇಲೆ ಮುಂದಿನ ದಿಕ್ಕು ನಿರ್ಧಾರವಾಗಲಿದೆ.

ಗೋವಾದ ಹಿನ್ನೆಲೆ, ತಂದೆ-ಮಗನ ಸೇಡಿನ ಕಥೆ: ‘ಟಾಕ್ಸಿಕ್’ ಬಗ್ಗೆ ಓಪನ್ ಆಗಿ ಹೇಳಿದ ಯಶ್

ಯಶ್ ಅವರಿಗೆ 2026ರ ವರ್ಷ ಅತ್ಯಂತ ಮಹತ್ವದ್ದಾಗಿದ್ದು, ಟಾಕ್ಸಿಕ್ ಮತ್ತು ‘ರಾಮಾಯಣ’ ಚಿತ್ರಗಳ ಮೂಲಕ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳಲು ಸಜ್ಜಾಗಿದ್ದಾರೆ.

ಇತ್ತೀಚೆಗೆ ವಿದೇಶಿ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಯಶ್, ‘ಟಾಕ್ಸಿಕ್’ ಚಿತ್ರದ ಕಥೆಯ ಬಗ್ಗೆ ಕುತೂಹಲಕಾರಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಈ ಚಿತ್ರವು ಕೇವಲ ಆಕ್ಷನ್ ಅಥವಾ ಗ್ಯಾಂಗ್‌ಸ್ಟರ್ ಸಿನಿಮಾ ಮಾತ್ರವಲ್ಲದೆ, ತಂದೆ ಮತ್ತು ಮಗನ ನಡುವಿನ ಭಾವನಾತ್ಮಕ ಸಂಘರ್ಷದ ಮೇಲೆ ಆಧಾರಿತವಾಗಿದೆ ಎಂದು ಹೇಳಿದ್ದಾರೆ.

ಚಿತ್ರದ ಕಥೆ 1961ರವರೆಗೆ ಪೋರ್ಚುಗೀಸ್ ಆಳ್ವಿಕೆಯಲ್ಲಿ ಇದ್ದ ಗೋವಾದ ಕಾಲಘಟ್ಟದಲ್ಲಿ ನಡೆಯುತ್ತದೆ ಎಂಬುದನ್ನು ಯಶ್ ಬಹಿರಂಗಪಡಿಸಿದ್ದು, ಕಥೆಯ ವಿಭಿನ್ನತೆಗೆ ಸಾಕ್ಷಿಯಾಗಿದೆ.

ನಿರ್ದೇಶಕಿ ಗೀತು ಮೋಹನ್ ದಾಸ್ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಚಿತ್ರದಲ್ಲಿ ಬಹು ತಾರಾಗಣವಿದ್ದು, ಟೀಸರ್ ಈಗಾಗಲೇ ಭಾರೀ ಪ್ರತಿಕ್ರಿಯೆ ಪಡೆದಿದೆ. ಟ್ರೇಲರ್‌ಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

ಮೊದಲಿಗೆ ಮಾರ್ಚ್ 19ರಂದು ಬಿಡುಗಡೆಯಾಗಬೇಕಿದ್ದ ಈ ಚಿತ್ರವನ್ನು ಜೂನ್ 4ಕ್ಕೆ ಮುಂದೂಡಲಾಗಿದ್ದು, ಇದೀಗ ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಮಟ್ಟದ ಸದ್ದು ಮಾಡುವ ನಿರೀಕ್ಷೆ ಇದೆ.

ಬಾಕ್ಸ್ ಆಫೀಸ್ ಫ್ಲಾಪ್ ಪರಿಣಾಮ: ‘ಭೂತ್ ಬಾಂಗ್ಲಾ’ ಚಿತ್ರದ ಸಂಭಾವನೆಯಲ್ಲಿ ರಾಜಿ ಮಾಡಿಕೊಂಡ ಅಕ್ಷಯ್ ಕುಮಾರ್

ಭೂತ್ ಬಾಂಗ್ಲಾ ಚಿತ್ರದ ಮೂಲಕ ಅಕ್ಷಯ್ ಕುಮಾರ್ ಮತ್ತು ಪ್ರಿಯದರ್ಶನ್ ಮತ್ತೆ ಒಂದಾಗಿದ್ದರೂ, ಈ ಬಾರಿ ಚರ್ಚೆಗೆ ಕಾರಣವಾಗಿದ್ದು ಸಂಭಾವನೆ ವಿಚಾರ.

ಇತ್ತೀಚಿನ ಸಿನಿಮಾಗಳು ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಕಾಣದ ಹಿನ್ನೆಲೆ, ಅಕ್ಷಯ್ ಕುಮಾರ್ ತಮ್ಮ ಸಂಭಾವನೆಯಲ್ಲಿ ಕಡಿತ ಮಾಡಿಕೊಂಡಿದ್ದಾರೆ ಎಂಬ ವರದಿಗಳು ಹೊರಬಿದ್ದಿವೆ. ‘ಜಾಲಿ ಎಲ್ಎಲ್ಬಿ 3’ಗೆ 70 ಕೋಟಿ ಪಡೆದಿದ್ದ ಅವರು, ‘ಭೂತ್ ಬಾಂಗ್ಲಾ’ಗೆ 50 ಕೋಟಿ ರೂಪಾಯಿಗೆ ಒಪ್ಪಿಕೊಂಡಿದ್ದಾರೆ.

ಚಿತ್ರದಲ್ಲಿ ಟಬು, ಪರೇಶ್ ರಾವಲ್, ರಾಜ್‌ಪಾಲ್ ಯಾದವ್ ಹಾಗೂ ವಾಮಿಕಾ ಗಬ್ಬಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ವಾಮಿಕಾ ಗಬ್ಬಿ 3 ಕೋಟಿ ರೂ. ಪಡೆದು ತಮ್ಮ ಮಾರುಕಟ್ಟೆ ಮೌಲ್ಯವನ್ನು ಮತ್ತಷ್ಟು ಹೆಚ್ಚಿಸಿಕೊಂಡಿದ್ದಾರೆ. ಟಬು ಅವರು 2.5 ಕೋಟಿ ರೂ., ಪರೇಶ್ ರಾವಲ್ 2 ಕೋಟಿ ರೂ. ಹಾಗೂ ರಾಜ್‌ಪಾಲ್ ಯಾದವ್ 1.5 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ.

120 ಕೋಟಿ ರೂ. ಬಜೆಟ್‌ನ ಈ ಹಾರರ್-ಕಾಮಿಡಿ ಸಿನಿಮಾ, ಅಕ್ಷಯ್ ಕುಮಾರ್‌ಗೆ ಮತ್ತೊಂದು ದೊಡ್ಡ ಕಂಬ್ಯಾಕ್ ನೀಡುತ್ತದೆಯೇ ಎಂಬುದು ಸಿನಿ ವಲಯದ ಕಣ್ಣುಗಳಲ್ಲಿದೆ.

ಹೆಸರಘಟ್ಟದಲ್ಲಿ ಹಕ್ಕಿಜ್ವರ ಪತ್ತೆ: ಸರ್ಕಾರದ ಕಟ್ಟುನಿಟ್ಟಿನ ಕ್ರಮ – ಜನರಿಗೆ ಆತಂಕ ಬೇಡ!

ಬೆಂಗಳೂರು: ಹೆಸರಘಟ್ಟದ ಮತ್ಕೂರು ಗ್ರಾಮದಲ್ಲಿ ಹಕ್ಕಿಜ್ವರ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ತುರ್ತು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ.

ಪರಿಸ್ಥಿತಿ ಸಂಪೂರ್ಣ ನಿಯಂತ್ರಣದಲ್ಲಿದ್ದು, ಸಾರ್ವಜನಿಕರು ಆತಂಕಪಡಬೇಕಾದ ಅಗತ್ಯವಿಲ್ಲ ಎಂದು ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ಮಾಧ್ಯಮ ಪ್ರಕಟಣೆ ಹೊರಡಿಸಿರುವ ಅವರು,, ಭೋಪಾಲ್‌ನ ರಾಷ್ಟ್ರೀಯ ಪ್ರಾಣಿ ರೋಗ ಸಂಶೋಧನಾ ಸಂಸ್ಥೆಯ ವರದಿ ಆಧರಿಸಿ ಏಪ್ರಿಲ್ 14ರಂದು ಮತ್ಕೂರು ಕೇಂದ್ರದಲ್ಲಿ ಹಕ್ಕಿಜ್ವರ ದೃಢಪಟ್ಟಿದೆ. ತಕ್ಷಣವೇ ಆರೋಗ್ಯ ಇಲಾಖೆಯ ತ್ವರಿತ ಪ್ರತಿಕ್ರಿಯೆ ತಂಡಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿವೆ. ವೈರಸ್ ಹಕ್ಕಿಗಳಲ್ಲಿ ಮಾತ್ರ ಪತ್ತೆಯಾಗಿದೆ. ಮನುಷ್ಯರಲ್ಲಿ ಯಾವುದೇ ಪ್ರಕರಣ ವರದಿಯಾಗಿಲ್ಲ. 10 ಕಿ.ಮೀ ವ್ಯಾಪ್ತಿಯಲ್ಲಿ ಕಟ್ಟುನಿಟ್ಟಿನ ನಿಗಾ ವಹಿಸಲಾಗಿದೆ. ಅಗತ್ಯವಿದ್ದರೆ ತಕ್ಷಣ ಪರೀಕ್ಷೆ ಪ್ರಾರಂಭಿಸಲಾಗುವುದು” ಎಂದು ತಿಳಿಸಿದ್ದಾರೆ.

ನಿಷೇಧ ಮತ್ತು ಕಣ್ಗಾವಲು ವಲಯ ಘೋಷಣೆ:

ಸೋಂಕು ಕಂಡುಬಂದ ಪ್ರದೇಶದ ಸುತ್ತ 3 ಕಿಲೋಮೀಟರ್ ವ್ಯಾಪ್ತಿಯನ್ನು ಸೋಂಕಿತ ವಲಯವಾಗಿ ಮತ್ತು 10 ಕಿಲೋಮೀಟರ್ ವ್ಯಾಪ್ತಿಯನ್ನು ಕಣ್ಗಾವಲು ವಲಯವಾಗಿ ಘೋಷಿಸಲಾಗಿದೆ. ಈ ಪ್ರದೇಶವನ್ನು ಒಂದು ವರ್ಷದವರೆಗೆ ನಿಷೇಧಿತ ಪ್ರದೇಶವೆಂದು ಗುರುತಿಸಲಾಗಿದೆ.

ಕೋಳಿಗಳ ನಾಶ, ಸಿಬ್ಬಂದಿ ಕ್ವಾರಂಟೈನ್:

ಪಶುಪಾಲನಾ ಇಲಾಖೆಯ ನೇತೃತ್ವದಲ್ಲಿ 7,444 ಕೋಳಿಗಳು, 14 ಸಾವಿರಕ್ಕೂ ಹೆಚ್ಚು ಮೊಟ್ಟೆಗಳು ಹಾಗೂ 2,250 ಕೆಜಿ ಆಹಾರವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲಾಗಿದೆ. ಕಾರ್ಯಾಚರಣೆಯಲ್ಲಿ ಭಾಗಿಯಾದ 10 ಸಿಬ್ಬಂದಿಯನ್ನು ಕ್ವಾರಂಟೈನ್‌ನಲ್ಲಿ ಇರಿಸಲಾಗಿದ್ದು, ಅವರಿಗೆ ಒಸೆಲ್ಟಾಮಿವಿರ್ ಔಷಧ ನೀಡಲಾಗಿದೆ.

ಜನರ ಮೇಲೆ ಕಟ್ಟುನಿಟ್ಟಿನ ನಿಗಾ:

ಸೋಂಕಿತ ವಲಯದ 2 ಗ್ರಾಮಗಳ 3,422 ಜನರು ಹಾಗೂ ಕಣ್ಗಾವಲು ವಲಯದ 17 ಗ್ರಾಮಗಳ 22,395 ಜನರ ಮೇಲೆ ಆರೋಗ್ಯ ಇಲಾಖೆ ನಿಗಾ ಇಟ್ಟಿದೆ. ಆಶಾ ಕಾರ್ಯಕರ್ತೆಯರು ಮುಂದಿನ 10 ದಿನಗಳ ಕಾಲ ಮನೆ ಮನೆಗೆ ಭೇಟಿ ನೀಡಿ ಜ್ವರ ತಪಾಸಣೆ ನಡೆಸಲಿದ್ದಾರೆ.

ಸಾರ್ವಜನಿಕರಿಗೆ ಸೂಚನೆಗಳು:

ಈವರೆಗೆ ಮನುಷ್ಯರಲ್ಲಿ ಸೋಂಕು ಕಂಡುಬಂದಿಲ್ಲ. ಆದರೂ ಮುನ್ನೆಚ್ಚರಿಕೆ ಕ್ರಮವಾಗಿ:

  • ಸತ್ತ ಅಥವಾ ಅಸ್ವಸ್ಥ ಹಕ್ಕಿಗಳ ಸಂಪರ್ಕ ತಪ್ಪಿಸಬೇಕು
  • ಕೋಳಿ ಮಾಂಸ ಮತ್ತು ಮೊಟ್ಟೆಯನ್ನು ಚೆನ್ನಾಗಿ ಬೇಯಿಸಿ ಸೇವಿಸಬೇಕು
  • ಅನುಮಾನಾಸ್ಪದ ಲಕ್ಷಣ ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು

ಒಟ್ಟಾರೆ, ಸರ್ಕಾರ ಮುನ್ನೆಚ್ಚರಿಕಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸುತ್ತಿದ್ದು, ಜನರು ಸಹ ಜಾಗರೂಕರಾಗಿರಬೇಕು ಎಂದು ಆರೋಗ್ಯ ಇಲಾಖೆ ಮನವಿ ಮಾಡಿದೆ.

 

 

IPL 2026: ಪಾಟಿದಾರ್ ನಾಯಕತ್ವಕ್ಕೆ ಮೆಚ್ಚುಗೆ! RCB ನಾಯಕನ ಗುಣಗಳನ್ನು ಕೊಂಡಾಡಿದ ಶ್ರೇಯಸ್ ಅಯ್ಯರ್

0

ಐಪಿಎಲ್ 2026ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ಅಮೋಘ ಪ್ರದರ್ಶನವನ್ನು ಮುಂದುವರೆಸುತ್ತಿದೆ. ಆಡಿದ ಐದು ಪಂದ್ಯಗಳಲ್ಲಿ ನಾಲ್ಕರಲ್ಲಿ ಗೆಲುವು ಸಾಧಿಸಿರುವ ತಂಡ, ಈ ಆವೃತ್ತಿಯಲ್ಲೂ ಪ್ರಶಸ್ತಿಯತ್ತ ದೃಢ ಹೆಜ್ಜೆ ಇಡುತ್ತಿದೆ.

ಈ ಯಶಸ್ಸಿನ ಹಿಂದೆ ತಂಡದ ನಾಯಕ ರಜತ್ ಪಾಟಿದಾರ್ ಅವರ ಪ್ರಮುಖ ಪಾತ್ರವಿದೆ. ಕಳೆದ ಸೀಸನ್‌ನಲ್ಲಿ ಮೊದಲ ಬಾರಿಗೆ ನಾಯಕತ್ವವಹಿಸಿಕೊಂಡು ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದ ಪಾಟಿದಾರ್, ಈ ಬಾರಿಯೂ ಅದೇ ದಾರಿಯಲ್ಲಿ ತಂಡವನ್ನು ಮುನ್ನಡೆಸುತ್ತಿದ್ದಾರೆ.

ಅಯ್ಯರ್ ಮೆಚ್ಚಿದ ಪಾಟಿದಾರ್ ಗುಣಗಳು:

ಹಿಂದಿನ ಫೈನಲ್‌ನಲ್ಲಿ ಆರ್‌ಸಿಬಿ ವಿರುದ್ಧ ಸೋಲು ಕಂಡಿದ್ದ ಪಂಜಾಬ್ ಕಿಂಗ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್, ಪಾಟಿದಾರ್ ಅವರ ನಾಯಕತ್ವ ಮತ್ತು ಬ್ಯಾಟಿಂಗ್ ಶೈಲಿಯನ್ನು ಬಹಿರಂಗವಾಗಿ ಮೆಚ್ಚಿಕೊಂಡಿದ್ದಾರೆ.

ಜಿಯೋ ಹಾಟ್‌ಸ್ಟಾರ್ ಯೂಟ್ಯೂಬ್ ಚಾನೆಲ್‌ನಲ್ಲಿ ಪ್ರಕಟವಾದ ಸಂದರ್ಶನದಲ್ಲಿ ಅಯ್ಯರ್ ಅವರಿಗೆ ಹಲವು ಪ್ರಶ್ನೆಗಳು ಕೇಳಲಾಗಿತ್ತು. ಅದರಲ್ಲಿ, “ಯಾವ ನಾಯಕನಿಂದ ಸಲಹೆ ಪಡೆಯಲು ಬಯಸುತ್ತೀರಿ?” ಎಂಬ ಪ್ರಶ್ನೆಗೆ ಅವರು ನೇರವಾಗಿ ರಜತ್ ಪಾಟಿದಾರ್ ಹೆಸರನ್ನು ಸೂಚಿಸಿದ್ದಾರೆ.

ಇನ್ನೊಂದು ಪ್ರಶ್ನೆಯಲ್ಲಿ “ಪ್ರಸ್ತುತ ಪೀಳಿಗೆಯ ಅತ್ಯಂತ ಸ್ಟೈಲಿಶ್ ಬ್ಯಾಟ್ಸ್‌ಮನ್ ಯಾರು?” ಎಂದು ಕೇಳಿದಾಗಲೂ ಅಯ್ಯರ್ ಮತ್ತೆ ಪಾಟಿದಾರ್ ಹೆಸರನ್ನೇ ಉಲ್ಲೇಖಿಸಿದ್ದಾರೆ. ಈ ಮೂಲಕ ಪಾಟಿದಾರ್ ಅವರ ನಾಯಕತ್ವ ಹಾಗೂ ಬ್ಯಾಟಿಂಗ್ ಕೌಶಲ್ಯಕ್ಕೆ ಅಯ್ಯರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪಾಟಿದಾರ್ ಸಾಧನೆ:

ಪಾಟಿದಾರ್ ನಾಯಕತ್ವದಲ್ಲಿ ಆರ್‌ಸಿಬಿ ತಂಡ ಉತ್ತಮ ಸಮತೋಲನದ ಪ್ರದರ್ಶನ ನೀಡುತ್ತಿದೆ. 2022-23ರಿಂದಲೇ ಅವರು ಐಪಿಎಲ್‌ನಲ್ಲಿ ಗಮನಾರ್ಹ ಬ್ಯಾಟ್ಸ್‌ಮನ್ ಆಗಿ ಹೊರಹೊಮ್ಮಿದ್ದಾರೆ.

ಪ್ರಸ್ತುತ ಆವೃತ್ತಿಯಲ್ಲಿ ಕೇವಲ ಐದು ಪಂದ್ಯಗಳಲ್ಲಿ ಪಾಟಿದಾರ್ 21 ಸಿಕ್ಸರ್‌ಗಳೊಂದಿಗೆ 222ರ ಸ್ಟ್ರೈಕ್‌ರೇಟ್‌ನಲ್ಲಿ 213 ರನ್ ಗಳಿಸಿರುವುದು ಗಮನಾರ್ಹವಾಗಿದೆ. ಅವರ ಸ್ಫೋಟಕ ಬ್ಯಾಟಿಂಗ್ ಮತ್ತು ಚತುರ ನಾಯಕತ್ವ ತಂಡದ ಗೆಲುವಿನ ಪ್ರಮುಖ ಅಂಶವಾಗಿದೆ.

ಒಟ್ಟಾರೆ, ಪಾಟಿದಾರ್ ಅವರ ನಾಯಕತ್ವ ಗುಣಗಳು ಮತ್ತು ಬ್ಯಾಟಿಂಗ್ ಪ್ರದರ್ಶನವು ಕೇವಲ ಆರ್‌ಸಿಬಿ ಅಭಿಮಾನಿಗಳನ್ನಷ್ಟೇ ಅಲ್ಲ, ಇತರ ತಂಡಗಳ ಆಟಗಾರರನ್ನೂ ಮೆಚ್ಚಿಸುವಂತಾಗಿದೆ.

ವಿನಯ್ ಕುಲಕರ್ಣಿಗೆ ಜೀವಾವಧಿ ಶಿಕ್ಷೆ: ನ್ಯಾಯ ಸಿಕ್ಕಿದೆ, ನೋವು ಕಮ್ಮಿಯಾಗಿಲ್ಲ – ಯೋಗೀಶ್ ಗೌಡ ಪತ್ನಿ ಕಣ್ಣೀರು!

ಧಾರವಾಡ: ಬಹು ಚರ್ಚಿತ ಯೋಗೀಶ್ ಗೌಡ ಹತ್ಯೆ ಪ್ರಕರಣದಲ್ಲಿ ನ್ಯಾಯಾಲಯ ತೀರ್ಪು ಹೊರಬಂದ ಹಿನ್ನೆಲೆ, ಮೃತ ಯೋಗೀಶ್ ಗೌಡ ಅವರ ಪತ್ನಿ ಮಲ್ಲಮ್ಮ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಈ ಪ್ರಕರಣದಲ್ಲಿ ಶಾಸಕ ವಿನಯ್ ಕುಲಕರ್ಣಿ ಸೇರಿದಂತೆ 16 ಆರೋಪಿಗಳಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ತೀರ್ಪಿನ ಬಗ್ಗೆ ಮಾತನಾಡಿದ ಮಲ್ಲಮ್ಮ, “ನಾನು ಹತ್ತು ವರ್ಷಗಳ ಕಾಲ ಅನುಭವಿಸಿದ ಕಷ್ಟಕ್ಕೆ ಇಂದು ನ್ಯಾಯ ಸಿಕ್ಕಿದೆ. ನ್ಯಾಯಾಲಯದ ತೀರ್ಪನ್ನು ಸ್ವಾಗತಿಸುತ್ತೇನೆ. ಆದರೆ ಈ ತೀರ್ಪು ನನ್ನ ನೋವನ್ನು ಸಂಪೂರ್ಣವಾಗಿ ಕಡಿಮೆ ಮಾಡಿಲ್ಲ” ಎಂದು ಭಾವುಕರಾಗಿ ಹೇಳಿದರು.

“ನನ್ನ ಗಂಡನ ಸ್ಥಾನದಲ್ಲಿ ನನ್ನ ಮಗ ಬೆಳೆದು ನಿಲ್ಲಬೇಕು. ನಮ್ಮ ಕ್ಷೇತ್ರದ ಜನರು ಅವನನ್ನು ಬೆಂಬಲಿಸಬೇಕು. ನನ್ನ ಗಂಡನಂತೆ ಅವನು ದೊಡ್ಡವನಾಗಬೇಕು. ಆಗ ಮಾತ್ರ ಅವರ ಆತ್ಮಕ್ಕೆ ಶಾಂತಿ ಸಿಗುತ್ತದೆ” ಎಂದು ಅವರು ಆಶಯ ವ್ಯಕ್ತಪಡಿಸಿದರು.

ಹತ್ತು ವರ್ಷಗಳ ಹೋರಾಟದ ಕುರಿತು ಮಾತನಾಡಿದ ಮಲ್ಲಮ್ಮ, “ನಾನು ಎಷ್ಟು ಕಷ್ಟಪಟ್ಟು ಮಕ್ಕಳನ್ನು ಬೆಳೆಸಿದ್ದೇನೆ ಎನ್ನುವುದು ನನಗೆ ಮಾತ್ರ ಗೊತ್ತು. ನನ್ನ ಮೇಲೆ ಹಲವು ಆರೋಪಗಳು, ನಿಂದನೆಗಳು ಬಂದವು. ಆದರೆ ಇಂದು ಆ ಎಲ್ಲವನ್ನು ಕ್ಷಮಿಸಿ ಬಿಡುತ್ತೇನೆ” ಎಂದರು. ನಮ್ಮದು ಪ್ರೇಮ ವಿವಾಹವಾಗಿದ್ದರಿಂದ ನನ್ನ ಗಂಡನ ಮನೆಯವರು ಅಥವಾ ನನ್ನ ತವರು ಮನೆಯವರು ಯಾರೂ ಸಹಾಯಕ್ಕೆ ಬರಲಿಲ್ಲ. ನನ್ನ ಕ್ಷೇತ್ರದ ಜನರು ಮಾತ್ರ ನನಗೆ ಬೆನ್ನೆಲುಬಾಗಿ ನಿಂತಿದ್ದಾರೆ. ನನ್ನ ಗಂಡ ಸುಮಾರು 28 ಲಕ್ಷ ಸಾಲ ಮಾಡಿಕೊಂಡಿದ್ದರು. ಅದನ್ನೆಲ್ಲ ತೀರಿಸಿ ನಾನು ಮಕ್ಕಳನ್ನು ಬೆಳೆಸಿಕೊಂಡು ಬಂದಿದ್ದೇನೆ” ಎಂದು ತಿಳಿಸಿದರು.

ರಾಜಕೀಯ ಪ್ರವೇಶದ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮಲ್ಲಮ್ಮ, “ನಾನು ರಾಜಕೀಯಕ್ಕೆ ಬರುವುದಕ್ಕಿಂತ ನನ್ನ ಮಕ್ಕಳು ಬಂದರೆ ನನಗೆ ಸಂತೋಷ. ನನ್ನ ಮಗನನ್ನು ಜಿಲ್ಲಾಪಂಚಾಯಿತಿ ಚುನಾವಣೆಯಲ್ಲಿ ನಿಲ್ಲಿಸುವ ಆಸೆ ಇದೆ. ಅವನ ವಿದ್ಯಾಭ್ಯಾಸ ಪೂರ್ಣವಾದ ಬಳಿಕ ಕ್ಷೇತ್ರದ ಜನರು ನಿರ್ಧಾರ ಮಾಡಲಿ” ಎಂದು ಹೇಳಿದರು.

ಒಟ್ಟಾರೆ, ದಶಕದ ಹೋರಾಟದ ಬಳಿಕ ತೀರ್ಪು ಬಂದಿದ್ದರೂ, ಮಲ್ಲಮ್ಮ ಅವರ ಮನದ ನೋವು ಮತ್ತು ಭವಿಷ್ಯದ ಆಶೆಗಳು ಈ ಹೇಳಿಕೆಯಲ್ಲಿ ವ್ಯಕ್ತವಾಗಿವೆ.

 

IPL 2026: ನಾಳೆ RCB ಮ್ಯಾಚ್; ಬದಲಾದ ಸಮಯದಲ್ಲಿ ಡೆಲ್ಲಿ ವಿರುದ್ದ ಫೈಟ್ ಮಾಡಲಿದೆ ಬೆಂಗಳೂರು!

0

ಐಪಿಎಲ್ 2026ರಲ್ಲಿ ಏಪ್ರಿಲ್ 18ರಂದು ಡಬಲ್ ಹೆಡರ್ ಪಂದ್ಯಗಳು ನಡೆಯಲಿದ್ದು, ದಿನದ ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸಲಿದೆ. ಈ ಪಂದ್ಯಕ್ಕೆ ಕ್ರಿಕೆಟ್ ಅಭಿಮಾನಿಗಳಲ್ಲಿ ಭಾರಿ ನಿರೀಕ್ಷೆ ಮೂಡಿದೆ.

ಈ ಆವೃತ್ತಿಯಲ್ಲಿ ರಜತ್ ಪಾಟಿದಾರ್ ನಾಯಕತ್ವದ ಆರ್‌ಸಿಬಿ ಐದು ಪಂದ್ಯಗಳಲ್ಲಿ ನಾಲ್ಕರಲ್ಲಿ ಗೆಲುವು ಸಾಧಿಸಿ ಉತ್ತಮ ಫಾರ್ಮ್‌ನಲ್ಲಿ ಇದೆ. ಇನ್ನೊಂದೆಡೆ, ಆರಂಭದಲ್ಲಿ ಗೆಲುವಿನ ಸರಣಿಯಲ್ಲಿ ಇದ್ದ ಡೆಲ್ಲಿ ಕ್ಯಾಪಿಟಲ್ಸ್ ತನ್ನ ಕೊನೆಯ ಎರಡು ಪಂದ್ಯಗಳಲ್ಲಿ ಸೋಲು ಕಂಡಿದ್ದು, ಮತ್ತೆ ಗೆಲುವಿನ ಹಾದಿಗೆ ಮರಳಲು ಪ್ರಯತ್ನಿಸುತ್ತಿದೆ.

ಪಂದ್ಯದ ವಿವರ:

ಆರ್‌ಸಿಬಿ ಮತ್ತು ಡೆಲ್ಲಿ ನಡುವಿನ 26ನೇ ಪಂದ್ಯ ಏಪ್ರಿಲ್ 18ರ ಶನಿವಾರ ಎಂ. ಚಿನ್ನಸ್ವಾಮಿ ಕ್ರೀಡಾಂಗಣದೆಲ್ಲಿ ನಡೆಯಲಿದೆ. ಮಧ್ಯಾಹ್ನ 3:30ಕ್ಕೆ ಪಂದ್ಯ ಪ್ರಾರಂಭವಾಗಲಿದ್ದು, 3 ಗಂಟೆಗೆ ಟಾಸ್ ನಡೆಯಲಿದೆ.

ಎಲ್ಲಿ ವೀಕ್ಷಿಸಬಹುದು?

ಪಂದ್ಯವನ್ನು ಟಿವಿಯಲ್ಲಿ ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ವೀಕ್ಷಿಸಬಹುದು. ಮೊಬೈಲ್‌ನಲ್ಲಿ ಜಿಯೋ ಹಾಟ್‌ಸ್ಟಾರ್ ಅಪ್ಲಿಕೇಶನ್ ಮೂಲಕ ಲೈವ್ ವೀಕ್ಷಣೆ ಸಾಧ್ಯ.

ಉಭಯ ತಂಡಗಳ ಆಟಗಾರರ ಪಟ್ಟಿ:

ಆರ್‌ಸಿಬಿ ತಂಡ:
ರಜತ್ ಪಾಟಿದಾರ್, ವಿರಾಟ್ ಕೊಹ್ಲಿ, ದೇವದತ್ತ್ ಪಡಿಕ್ಕಲ್, ಫಿಲ್ ಸಾಲ್ಟ್, ಜಿತೇಶ್ ಶರ್ಮಾ, ಜೋರ್ಡಾನ್ ಕಾಕ್ಸ್, ಕೃನಾಲ್ ಪಾಂಡ್ಯ, ಸ್ವಪ್ನಿಲ್ ಸಿಂಗ್, ಟಿಮ್ ಡೇವಿಡ್, ರೊಮಾರಿಯೋ ಶೆಫರ್ಡ್, ಜಾಕೋಬ್ ಬೆಥೆಲ್, ವೆಂಕಟೇಶ್ ಅಯ್ಯರ್, ಸಾತ್ವಿಕ್ ದೇಸ್ವಾಲ್, ಮಂಗೇಶ್ ಯಾದವ್, ವಿಕ್ಕಿ ಓಸ್ತ್ವಾಲ್, ವಿಹಾನ್ ಮಲ್ಹೋತ್ರಾ, ಕಾನಿಷ್ಕ್ ಚೌಹಾಣ್, ಜೋಶ್ ಹೇಜಲ್‌ವುಡ್, ರಸಿಖ್ ದಾರ್, ಸುಯಶ್ ಶರ್ಮಾ, ಭುವನೇಶ್ವರ್ ಕುಮಾರ್, ನುವಾನ್ ತುಷಾರ, ಅಭಿನಂದನ್ ಸಿಂಗ್, ಜಾಕೋಬ್ ಡಫಿ.

ಡೆಲ್ಲಿ ಕ್ಯಾಪಿಟಲ್ಸ್ ತಂಡ:
ಪಾತುಮ್ ನಿಸ್ಸಾಂಕ, ಕೆಎಲ್ ರಾಹುಲ್, ಸಮೀರ್ ರಿಜ್ವಿ, ಡೇವಿಡ್ ಮಿಲ್ಲರ್, ಅಕ್ಸರ್ ಪಟೇಲ್, ಟ್ರಿಸ್ಟಾನ್ ಸ್ಟಬ್ಸ್, ಅಕಿಬ್ ನಬಿ ದಾರ್, ಲುಂಗಿ ಎನ್‌ಗಿಡಿ, ಕುಲ್ದೀಪ್ ಯಾದವ್, ಟಿ ನಟರಾಜನ್, ಮುಖೇಶ್ ಕುಮಾರ್, ವಿಪ್ರಜ್ ನಿಗಮ್, ಅಶುತೋಷ್ ಶರ್ಮಾ, ಕರುಣ್ ನಾಯರ್, ಅಜಯ್ ಮಂಡಲ್, ಪೃಥ್ವಿ ಶಾ, ತ್ರಿಪುರ ವಿಜಯ್, ಅಭಿಷೇಕ್ ಪೊರೆಲ್, ಸಾಹಿಲ್ ಪರಾಖ್, ಮಾಧವ್ ತಿವಾರಿ.

 

ಕಬ್ಬಿಣದ ಕೊರತೆ ಹೆಚ್ಚಳ: ಹಾಗಿದ್ರೆ ಈ ಆಹಾರಗಳನ್ನು ನೀವು ತಪ್ಪದೇ ಸೇವಿಸಿ!

0

ಇತ್ತೀಚಿನ ದಿನಗಳಲ್ಲಿ ದೇಹದಲ್ಲಿ ಕಬ್ಬಿಣದ ಕೊರತೆ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ವಿಶೇಷವಾಗಿ ಮಹಿಳೆಯರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತಿದ್ದು, ಆರೋಗ್ಯ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.

ಸರಿಯಾದ ಆಹಾರ ಪದ್ಧತಿ ಇಲ್ಲದಿರುವುದು, ಪೋಷಕಾಂಶಗಳ ಕೊರತೆ ಹಾಗೂ ದೇಹದ ಹೆಚ್ಚಿದ ಅಗತ್ಯತೆಗಳು ಇದರ ಪ್ರಮುಖ ಕಾರಣಗಳಾಗಿವೆ. ಕಬ್ಬಿಣದ ಕೊರತೆಯಿಂದ ರಕ್ತದಲ್ಲಿನ ಹಿಮೋಗ್ಲೋಬಿನ್ ಪ್ರಮಾಣ ಕಡಿಮೆಯಾಗುತ್ತದೆ. ಇದರಿಂದ ದಣಿವು, ದುರ್ಬಲತೆ, ತಲೆ ಸುತ್ತು, ಉಸಿರಾಟದ ತೊಂದರೆ ಸೇರಿದಂತೆ ಹಲವು ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಆದರೆ ಈ ಲಕ್ಷಣಗಳನ್ನು ನಿರ್ಲಕ್ಷ್ಯ ಮಾಡುವವರ ಸಂಖ್ಯೆ ಹೆಚ್ಚುತ್ತಿರುವುದು ಸಮಸ್ಯೆಯನ್ನು ಮತ್ತಷ್ಟು ಗಂಭೀರಗೊಳಿಸುತ್ತಿದೆ.

ಆಹಾರವೇ ಉತ್ತಮ ಪರಿಹಾರ
ಕಬ್ಬಿಣದ ಕೊರತೆಯನ್ನು ನಿವಾರಿಸಲು ದಿನನಿತ್ಯದ ಆಹಾರದಲ್ಲಿ ಕಬ್ಬಿಣ ಸಮೃದ್ಧ ಪದಾರ್ಥಗಳನ್ನು ಸೇರಿಸಬೇಕು. ಪಾಲಕ್, ಮೆಂತೆ, ಸಾಸಿವೆ ಸೊಪ್ಪುಗಳಂತಹ ಹಸಿರು ತರಕಾರಿಗಳು ಉತ್ತಮ ಮೂಲಗಳಾಗಿವೆ. ಬೀಟ್‌ರೂಟ್, ದಾಳಿಂಬೆ, ಖರ್ಜೂರ ಹಾಗೂ ಒಣದ್ರಾಕ್ಷಿ ಹಿಮೋಗ್ಲೋಬಿನ್ ಹೆಚ್ಚಿಸಲು ಸಹಕಾರಿ. ಜೊತೆಗೆ ದಾಳ್, ಕಡಲೆ, ರಾಜ್ಮಾ ಹಾಗೂ ಸೋಯಾಬೀನ್ ಸೇವನೆಯೂ ಉಪಯುಕ್ತವಾಗಿದೆ.

ಮಾಂಸಾಹಾರ ಸೇವಿಸುವವರು ಮೊಟ್ಟೆ, ಮೀನು ಮತ್ತು ಕೋಳಿ ಮಾಂಸವನ್ನು ಆಹಾರದಲ್ಲಿ ಸೇರಿಸಬಹುದು.

ವಿಟಮಿನ್ ‘ಸಿ’ ಮಹತ್ವ
ಕಬ್ಬಿಣ ಇರುವ ಆಹಾರ ಸೇವಿಸುವುದಷ್ಟೇ ಸಾಕಾಗುವುದಿಲ್ಲ, ಅದು ದೇಹದಲ್ಲಿ ಸರಿಯಾಗಿ ಅವಶೋಷಣೆಯಾಗಬೇಕು. ಇದಕ್ಕಾಗಿ ನಿಂಬೆ, ಕಿತ್ತಳೆ ಮತ್ತು ನೆಲ್ಲಿಕಾಯಿ ಮುಂತಾದ ವಿಟಮಿನ್ ‘ಸಿ’ ಇರುವ ಆಹಾರಗಳನ್ನು ಸೇವಿಸುವುದು ಉತ್ತಮ. ಇದು ಕಬ್ಬಿಣದ ಶೋಷಣೆಯನ್ನು ಹೆಚ್ಚಿಸುತ್ತದೆ. ಆದರೆ ಕಬ್ಬಿಣ ಸಮೃದ್ಧ ಆಹಾರಗಳ ಜೊತೆ ಚಹಾ ಅಥವಾ ಕಾಫಿ ಸೇವಿಸುವುದನ್ನು ತಪ್ಪಿಸಬೇಕು.

ಜೀವನಶೈಲಿ ಮುಖ್ಯ
ಸರಿಯಾದ ಸಮಯಕ್ಕೆ ಆಹಾರ ಸೇವನೆ, ಸಮರ್ಪಕ ನಿದ್ರೆ ಹಾಗೂ ದೈನಂದಿನ ವ್ಯಾಯಾಮ ದೇಹದ ಆರೋಗ್ಯವನ್ನು ಉತ್ತಮವಾಗಿಡುತ್ತವೆ. ಕಬ್ಬಿಣದ ಕೊರತೆ ಹೆಚ್ಚಿದ್ದರೆ ವೈದ್ಯರ ಸಲಹೆಯೊಂದಿಗೆ ಪೂರಕ ಔಷಧಿಗಳನ್ನು ತೆಗೆದುಕೊಳ್ಳಬಹುದು.

ಒಟ್ಟಾರೆ, ಸಮತೋಲನ ಆಹಾರ ಮತ್ತು ಆರೋಗ್ಯಕರ ಜೀವನಶೈಲಿಯಿಂದ ಕಬ್ಬಿಣದ ಕೊರತೆಯನ್ನು ನಿಯಂತ್ರಿಸಬಹುದು. ನಿಯಮಿತ ಆರೋಗ್ಯ ತಪಾಸಣೆ ಮೂಲಕ ದೇಹವನ್ನು ಶಕ್ತಿಯುತವಾಗಿಡುವುದು ಅತ್ಯಂತ ಮುಖ್ಯವಾಗಿದೆ.

error: Content is protected !!