Home Blog

ಕಿಸಾನ್ ವಿಕಾಸ್ ಪತ್ರ: ಹೂಡಿಕೆ ಮಾಡಿದ ಹಣ ಡಬಲ್ ಆಗುವ ಯೋಜನೆ

0

ಜನಪ್ರಿಯ ಪೋಸ್ಟ್ ಆಫೀಸ್ ಯೋಜನೆಗಳಲ್ಲಿ ಒಂದಾದ ಕಿಸಾನ್ ವಿಕಾಸ್ ಪತ್ರ ಹೂಡಿಕೆದಾರರಿಗೆ ಭದ್ರತೆ ಹಾಗೂ ನಿಶ್ಚಿತ ಲಾಭ ನೀಡುವ ಯೋಜನೆಯಾಗಿ ಗುರುತಿಸಿಕೊಂಡಿದೆ.

ಈ ಯೋಜನೆಯನ್ನು ಮೂಲತಃ 1988ರಲ್ಲಿ ರೈತರಿಗಾಗಿ ಆರಂಭಿಸಲಾಗಿದ್ದರೂ, ಇದೀಗ ಎಲ್ಲಾ ಭಾರತೀಯ ನಾಗರಿಕರಿಗೆ ಲಭ್ಯವಿದೆ. 10 ವರ್ಷ ಮೇಲ್ಪಟ್ಟವರು ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದಾಗಿದ್ದು, ಅಪ್ರಾಪ್ತರ ಹೆಸರಿನಲ್ಲಿ ಹಿರಿಯರು ಖಾತೆ ತೆರೆದು ನಂತರ ವರ್ಗಾವಣೆ ಮಾಡುವ ಅವಕಾಶವೂ ಇದೆ.

ಕಿಸಾನ್ ವಿಕಾಸ್ ಪತ್ರ ಯೋಜನೆಯ ಅವಧಿ 115 ತಿಂಗಳುಗಳಾಗಿದ್ದು, ಅಂದರೆ ಸುಮಾರು 9 ವರ್ಷ 5 ತಿಂಗಳುಗಳ ದೀರ್ಘಾವಧಿಯ ಯೋಜನೆಯಾಗಿದೆ. ಕನಿಷ್ಠ ಹೂಡಿಕೆ 1,000 ರೂಪಾಯಿಯಿಂದ ಆರಂಭವಾಗುತ್ತಿದ್ದು, ಗರಿಷ್ಠ ಹೂಡಿಕೆಗೆ ಯಾವುದೇ ಮಿತಿ ಇಲ್ಲ. ಆದರೆ 10,000 ರೂಪಾಯಿಗಿಂತ ಹೆಚ್ಚಿನ ಹೂಡಿಕೆ ಮಾಡಿದರೆ ಅದರ ಆದಾಯ ಮೂಲವನ್ನು ತೋರಿಸುವುದು ಕಡ್ಡಾಯ.

ಈ ಯೋಜನೆಯ ಪ್ರಮುಖ ಆಕರ್ಷಣೆ ಎಂದರೆ ಹೂಡಿಕೆ ಮಾಡಿದ ಹಣವು ಮೆಚ್ಯೂರಿಟಿ ಅವಧಿಯಲ್ಲಿ ಎರಡು ಪಟ್ಟು ಆಗುವುದು. ಪ್ರಸ್ತುತ ವಾರ್ಷಿಕ ಬಡ್ಡಿದರ ಶೇ. 7.5 ರಷ್ಟಿದೆ. ಹೂಡಿಕೆ ಮಾಡುವವರು ಪೋಸ್ಟ್ ಆಫೀಸ್‌ಗಳಲ್ಲಿ ಅಥವಾ ಇಂಡಿಯಾ ಪೋಸ್ಟ್ ವೆಬ್‌ಸೈಟ್ ಮೂಲಕ ಈ ಯೋಜನೆಗೆ ಸೇರಬಹುದು.

ಆದರೆ, ಈ ಯೋಜನೆಗೆ ತೆರಿಗೆ ಸೌಲಭ್ಯ ಇರುವುದಿಲ್ಲ. ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80ಸಿ ಅಡಿಯಲ್ಲಿ ಕಡಿತ ಸಿಗುವುದಿಲ್ಲ. ಜೊತೆಗೆ ಬಡ್ಡಿ ಆದಾಯಕ್ಕೆ ತೆರಿಗೆ ಅನ್ವಯವಾಗುತ್ತಿದ್ದು, ಪ್ರತಿ ವರ್ಷ ಉತ್ಪತ್ತಿಯಾಗುವ ಬಡ್ಡಿಗೆ ಶೇ. 10ರಷ್ಟು ಟಿಡಿಎಸ್ ಕಡಿತಗೊಳ್ಳುತ್ತದೆ.

ಒಟ್ಟಿನಲ್ಲಿ, ಭದ್ರ ಮತ್ತು ನಿಶ್ಚಿತ ಲಾಭ ಬಯಸುವ ಹೂಡಿಕೆದಾರರಿಗೆ ಕಿಸಾನ್ ವಿಕಾಸ್ ಪತ್ರ ಯೋಜನೆ ಒಳ್ಳೆಯ ಆಯ್ಕೆಯಾಗಿದೆ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.

Gold Rate: ಮತ್ತೆ ಏರಿದ ಚಿನ್ನದ ಬೆಲೆ! ಇಂದಿನ ಗ್ರಾಂ ಬೆಲೆ ಎಷ್ಟು ಗೊತ್ತಾ?

0

ಚಿನ್ನದ ಬೆಲೆ ದಿನದಿಂದ ದಿನಕ್ಕೆ ಏರಿಳಿತ ಕಾಣುತ್ತಿದ್ದು, ಇವತ್ತು ಮತ್ತೆ ಏರಿಕೆಯಾಗಿದೆ.

ಮಂಗಳವಾರ ಚಿನ್ನದ ದರದಲ್ಲಿ ಗ್ರಾಮ್‌ಗೆ ಸುಮಾರು 135 ರೂಪಾಯಿ ಹೆಚ್ಚಳವಾಗಿದ್ದು, ಬೆಲೆ ಮತ್ತೊಮ್ಮೆ ಗರಿಷ್ಠ ಮಟ್ಟ ತಲುಪಿದೆ.

ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,41,100 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,53,930 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 25,500 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,41,100 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 25,500 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 26,000 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಏಪ್ರಿಲ್ 14ಕ್ಕೆ):

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,393 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,110 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 11,545 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 255 ರೂ.

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ:

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,393 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,110 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 255 ರೂ.

ಆದಿಚುಂಚನಗಿರಿಗೆ ನಾಳೆ ಮೋದಿ ಭೇಟಿ: ಪ್ರಧಾನಿಗಾಗಿ ಸಿದ್ಧವಾಗಿದೆ ಮೈಸೂರು ಪೇಟ!

ಮಂಡ್ಯ: ಜಿಲ್ಲೆಯ ನಾಗಮಂಗಲ ತಾಲೂಕಿನ ಆದಿಚುಂಚನಗಿರಿ ಕ್ಷೇತ್ರಕ್ಕೆ ನಾಳೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಲಿದ್ದಾರೆ.

ಶ್ರೀಕ್ಷೇತ್ರದ ಮಾಜಿ ಪೀಠಾಧಿಪತಿಗಳಾದ ಡಾ. ಬಾಲಗಂಗಾಧರನಾಥ ಸ್ವಾಮೀಜಿ ಅವರ ಸ್ಮರಣಾರ್ಥ ನಿರ್ಮಾಣಗೊಂಡಿರುವ ಭವ್ಯ ‘ಶ್ರೀ ಗುರು ಭೈರವೈಕ್ಯ ಮಂದಿರ’ವನ್ನು ಪ್ರಧಾನಿ ಲೋಕಾರ್ಪಣೆಗೊಳಿಸಲಿದ್ದಾರೆ. ಬಳಿಕ ಭಕ್ತರನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.

ಪ್ರಧಾನಿ ಆಗಮನದ ಹಿನ್ನೆಲೆಯಲ್ಲಿ ಆದಿಚುಂಚನಗಿರಿ ಕ್ಷೇತ್ರ ಸಕಲ ಸಿದ್ಧತೆಯೊಂದಿಗೆ ಕಂಗೊಳಿಸುತ್ತಿದ್ದು, ದ್ರಾವಿಡ ಶೈಲಿಯಲ್ಲಿ ನಿರ್ಮಾಣಗೊಂಡಿರುವ ಭೈರವೈಕ್ಯ ಮಂದಿರ ವಿಶೇಷ ಆಕರ್ಷಣೆಯಾಗಿದೆ. ಕಾರ್ಯಕ್ರಮಕ್ಕಾಗಿ ಬಿಜಿಎಸ್ ಕ್ರೀಡಾಂಗಣದಲ್ಲಿ ಭವ್ಯ ವೇದಿಕೆ ನಿರ್ಮಿಸಲಾಗಿದ್ದು, ಒಂದು ಲಕ್ಷಕ್ಕೂ ಅಧಿಕ ಭಕ್ತರು ಭಾಗವಹಿಸುವ ನಿರೀಕ್ಷೆಯಿದೆ. ಭದ್ರತೆಯ ದೃಷ್ಟಿಯಿಂದ 2000ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ.

ಪ್ರಧಾನಿ ಮೋದಿಯವರಿಗಾಗಿ ವಿಶೇಷ ‘ಮೈಸೂರು ಪೇಟ’ ಸಿದ್ಧಪಡಿಸಲಾಗಿದ್ದು, ಮೈಸೂರಿನ ಕಲಾವಿದ ನಂದನ್ ಸಿಂಗ್ ಐದು ದಿನಗಳ ಶ್ರಮದಿಂದ ಇದನ್ನು ತಯಾರಿಸಿದ್ದಾರೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಧರಿಸುತ್ತಿದ್ದ ಮಾದರಿಯ ಪೇಟವು ಬನಾರಸ್ ಬಟ್ಟೆ ಹಾಗೂ ಗಂಡಭೇರುಂಡ ವಿನ್ಯಾಸವನ್ನು ಒಳಗೊಂಡಿದೆ. ನಿರ್ಮಲಾನಂದನಾಥ ಶ್ರೀಗಳ ಮಾರ್ಗದರ್ಶನದಲ್ಲಿ ‘ನಮ್ಮೂರು ನಮ್ಮೋರು’ ಸಂಸ್ಥೆಯಿಂದ ಈ ಗೌರವ ಅರ್ಪಿಸಲಾಗುತ್ತಿದೆ.

ಪ್ರಧಾನಿ ಮೋದಿ ದಿನಚರಿ:

  • ಬೆಳಿಗ್ಗೆ ದೆಹಲಿಯಿಂದ ವಿಶೇಷ ವಿಮಾನದ ಮೂಲಕ ಬೆಂಗಳೂರಿನ ಎಚ್‌ಎಎಲ್ ವಿಮಾನ ನಿಲ್ದಾಣಕ್ಕೆ ಆಗಮನ
  • ಬೆಳಿಗ್ಗೆ 10:50ಕ್ಕೆ ಹೆಲಿಕಾಪ್ಟರ್ ಮೂಲಕ ಆದಿಚುಂಚನಗಿರಿ ಹೆಲಿಪ್ಯಾಡ್‌ಗೆ ಪ್ರಯಾಣ
  • ಬೆಳಿಗ್ಗೆ 11ಕ್ಕೆ ಮಠಕ್ಕೆ ಭೇಟಿ ನೀಡಿ ಭೈರವೈಕ್ಯ ಮಂದಿರ ಉದ್ಘಾಟನೆ
  • ನಂತರ ಬಿಜಿಎಸ್ ಕ್ರೀಡಾಂಗಣದಲ್ಲಿ ಸಾರ್ವಜನಿಕ ಸಮಾರಂಭದಲ್ಲಿ ಭಾಷಣ
  • ಕಾರ್ಯಕ್ರಮದ ಬಳಿಕ ಬೆಂಗಳೂರಿಗೆ ಮರಳಿ ಅಲ್ಲಿಂದ ಕೇರಳ ಪ್ರವಾಸಕ್ಕೆ ತೆರಳುವುದು.

ಕೊಪ್ಪಳ ಲವ್ ಜಿಹಾದ್ ಪ್ರಕರಣಕ್ಕೆ ಹೊಸ ತಿರುವು: ಆರೋಪಿಗೆ ಅಂತರಾಜ್ಯ ಲಿಂಕ್, ಸಾವಿರಾರು ವಿಡಿಯೋ, ಫೋಟೋ ಪತ್ತೆ!

ಕೊಪ್ಪಳ: ಜಿಲ್ಲೆಯಲ್ಲಿ ಕೇಳಿಬಂದಿರುವ ಲವ್ ಜಿಹಾದ್ ಆರೋಪ ಪ್ರಕರಣ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದೆ.

ಪ್ರಕರಣದಲ್ಲಿ ಆರೋಪಿ ಮುಸ್ತಫಾ ಖಾದ್ರಿಗೆ ಅಂತರಾಜ್ಯ ಸಂಪರ್ಕವಿದ್ದು, ಆರ್ಥಿಕ ಸಹಾಯ ಪಡೆದಿದ್ದಾನೆ ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಮೂಲಗಳ ಪ್ರಕಾರ, ಮುಸ್ತಫಾಗೆ ಗೋವಾ ಮತ್ತು ಮುಂಬೈ ಮೂಲದ ಕೆಲವರ ಸಂಪರ್ಕವಿದ್ದು, ಅಲ್ಲಿ  ಹಣಕಾಸಿನ ನೆರವು ದೊರೆಯುತ್ತಿತ್ತು ಎನ್ನಲಾಗಿದೆ. ಈ ಹಣದಿಂದಲೇ ಕೊಪ್ಪಳದಲ್ಲಿ ವೈಭವಯುತ ಜೀವನ ನಡೆಸುತ್ತಿದ್ದಾನೆ ಎಂದು ಹೇಳಲಾಗಿದೆ. ಇದೇ ಹಣವನ್ನು ಬಳಸಿ ಯುವತಿಯರೊಂದಿಗೆ ಸಂಪರ್ಕ ಬೆಳೆಸುತ್ತಿದ್ದಾನೆ ಎಂಬ ಆರೋಪವೂ ಕೇಳಿಬಂದಿದೆ.

ತನಿಖೆ ವೇಳೆ ಮುಸ್ತಫಾ ಖಾದ್ರಿಯ ಮೊಬೈಲ್‌ನಲ್ಲಿ ಸುಮಾರು 9,700 ವಿಡಿಯೋಗಳು ಮತ್ತು 7,000ಕ್ಕೂ ಹೆಚ್ಚು ಫೋಟೋಗಳು ಪತ್ತೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಈ ವಿಡಿಯೋಗಳನ್ನು ಇತರರಿಗೆ ರವಾನಿಸಿರುವ ಸಾಧ್ಯತೆ ಇದ್ದು, ಈ ಹಿನ್ನೆಲೆ ಮುಸ್ತಫಾ ವಿರುದ್ಧ ಐಟಿ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಇದೇ ವೇಳೆ, ಮುಸ್ತಫಾನನ್ನು ಪ್ರೀತಿಸುತ್ತಿದ್ದ ಯುವತಿಯೂ ಕೊಪ್ಪಳ ನಗರ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ದೂರು ದಾಖಲಿಸಿದ್ದಾಳೆ. ಮೆಡಿಕಲ್ ಕಾಲೇಜಿನ ವಾಟರ್ ಟ್ಯಾಂಕ್ ಬಳಿ ಊಟ ಮಾಡುತ್ತಿದ್ದ ವೇಳೆ 8ರಿಂದ 10 ಮಂದಿ ಅಪರಿಚಿತರು ಬಂದು ಮುಸ್ತಫಾಗೆ ಜೀವ ಬೆದರಿಕೆ ಹಾಕಿ, ಅವನ ಬಳಿ ಇದ್ದ ಎರಡು ಮೊಬೈಲ್‌ಗಳನ್ನು ಕಸಿದುಕೊಂಡು ಹಿಂತಿರುಗಿಸಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಪ್ರಕರಣ ಜಿಲ್ಲೆಯಲ್ಲಿ ಸಂಚಲನ ಮೂಡಿಸಿದ್ದು, ಸಂಪೂರ್ಣ ಸತ್ಯಾಸತ್ಯತೆ ಹೊರಬರುವಂತೆ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

6 ತಿಂಗಳ ಗರ್ಭಿಣಿಗೆ ಕಿರುಕುಳ: ಸ್ವಂತ ಪೋಷಕರ ವಿರುದ್ಧ ಮಗ ದೂರು!

ನೆಲಮಂಗಲ: ಪ್ರೀತಿಸಿ ಮದುವೆಯಾದ ದಂಪತಿಗೆ ಜಾತಿಯ ಹೆಸರಿನಲ್ಲಿ ಕಿರುಕುಳ ನೀಡಿ, ಜೀವಬೆದರಿಕೆ ಹಾಕಿರುವ ಅಮಾನವೀಯ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಟೌನ್‌ನಲ್ಲಿ ಬೆಳಕಿಗೆ ಬಂದಿದೆ.

ಸುಭಾಷ್ ನಗರ ನಿವಾಸಿಗಳಾದ ಅಭಿಷೇಕ್ ಮತ್ತು ವಿದ್ಯಾಶ್ರೀ ಇಬ್ಬರು ಕೆಲಸ ಮಾಡುವ ಸ್ಥಳದಲ್ಲಿ ಪರಿಚಯವಾಗಿ ಪ್ರೀತಿಸುತ್ತಿದ್ದರು. ಕುಟುಂಬದ ವಿರೋಧದ ನಡುವೆಯೇ ಎಂಟು ತಿಂಗಳ ಹಿಂದೆ ಕರಿ ಕಾಟೇರಮ್ಮ ದೇವಾಲಯದಲ್ಲಿ ಸರಳವಾಗಿ ಮದುವೆಯಾಗಿದ್ದರು.

ವಿದ್ಯಾಶ್ರೀ ಬೇರೆ ಜಾತಿಯವರು ಎಂಬ ಕಾರಣಕ್ಕೆ ಮದುವೆಯಾದ ದಿನದಿಂದಲೇ ಅಭಿಷೇಕ್ ಪೋಷಕರಾದ ಮುನಿಶಂಕರಯ್ಯ ಮತ್ತು ಆನಂದಮ್ಮ ಕಿರುಕುಳ ನೀಡುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ. ಸದ್ಯ ವಿದ್ಯಾಶ್ರೀ 6 ತಿಂಗಳ ಗರ್ಭಿಣಿಯಾಗಿದ್ದು, ಈ ಸಂದರ್ಭದಲ್ಲಿಯೂ ಆಕೆಯನ್ನು ಮನೆಗೆ ಸೇರಿಸಿಕೊಳ್ಳದೆ ಜಾತಿ ನಿಂದನೆ ಮಾಡಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಪತ್ನಿಯ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಪತಿ ಅಭಿಷೇಕ್ ಸ್ವಂತ ತಂದೆ-ತಾಯಿ ವಿರುದ್ಧವೇ ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವುದು ಗಮನಾರ್ಹವಾಗಿದೆ.

ಪ್ರಕರಣ ಸಂಬಂಧ ಪೊಲೀಸರು ಎನ್‌ಸಿಆರ್ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

 

Spiritual Tips: ಊಟದ ಬಳಿಕ ಈ ಅಭ್ಯಾಸ ಇದ್ದರೆ ಸಮೃದ್ಧಿ ಹೆಚ್ಚುತ್ತದೆ!

0

ಊಟದ ನಂತರ ತಮ್ಮ ತಟ್ಟೆಯನ್ನು ನಾವೇ ತೆಗೆದುಕೊಳ್ಳುವ ಸಂಪ್ರದಾಯದ ಮಹತ್ವದ ಬಗ್ಗೆ ಧಾರ್ಮಿಕ ಹಾಗೂ ಶಾಸ್ತ್ರದ ದೃಷ್ಟಿಯಿಂದ ಮಹತ್ವದ ಮಾಹಿತಿಯೊಂದು ಲಭ್ಯವಾಗಿದೆ.

ಆಹಾರ ಸೇವನೆಯನ್ನು ‘ಅನ್ನಯಜ್ಞ’ ಎಂದು ಪರಿಗಣಿಸಲಾಗುತ್ತದೆ. ಈ ಯಜ್ಞದ ಆರಂಭದಿಂದ ಅಂತ್ಯವರೆಗೂ ವಿನಯ, ವಿಧೇಯತೆ, ಭಕ್ತಿ ಮತ್ತು ಕೃತಜ್ಞತಾ ಭಾವ ಹೊಂದಿರುವುದು ಅಗತ್ಯವೆಂದು ತಿಳಿಸಲಾಗಿದೆ. ಮನೆಯಲ್ಲಿ ಯಾರು ಆಹಾರ ತಯಾರಿಸಿದರೂ, ಅನ್ನವನ್ನು ಪರಬ್ರಹ್ಮ ಸ್ವರೂಪವೆಂದು ಪರಿಗಣಿಸಲಾಗುತ್ತದೆ.

ಊಟದ ನಂತರ ತಮ್ಮ ತಟ್ಟೆಯನ್ನು ನಾವೇ ತೆಗೆದುಕೊಳ್ಳುವುದರಿಂದ ಅನ್ನಪೂರ್ಣೇಶ್ವರಿ ಹಾಗೂ ಅನ್ನದಾತರ ಮೇಲಿನ ಕೃತಜ್ಞತೆ ವ್ಯಕ್ತವಾಗುತ್ತದೆ. ಇದರಿಂದ ಜೀವನದಲ್ಲಿ ಆಹಾರದ ಕೊರತೆ ಎದುರಾಗುವುದಿಲ್ಲ ಎಂಬ ನಂಬಿಕೆಯೂ ಇದೆ.

ಊಟ ಮಾಡಿದ ಬಳಿಕ ಆಹಾರ ‘ಎಂಜಲು’ ಆಗುತ್ತದೆ. ಅದನ್ನು ಬೇರೆಯವರು ತೆಗೆದುಕೊಂಡು ಹೋದರೆ ಅದೃಷ್ಟ ಕುಗ್ಗುತ್ತದೆ ಎಂಬ ನಂಬಿಕೆ ಇದೆ. ಆದರೆ ಅತಿಥಿಗಳ ವಿಚಾರದಲ್ಲಿ ಇದು ಅನ್ವಯಿಸುವುದಿಲ್ಲ. ‘ಅತಿಥಿ ದೇವೋಭವ’ ಎಂಬ ತತ್ವದಂತೆ, ಅತಿಥಿಗಳ ತಟ್ಟೆಯನ್ನು ನಾವು ಸ್ವತಃ ತೆಗೆದುಕೊಳ್ಳುವುದು ಕರ್ತವ್ಯವಾಗಿದೆ.

ತಟ್ಟೆಯಲ್ಲಿ ಯಾವುದೇ ಆಹಾರ ಉಳಿಯದಂತೆ ಶುದ್ಧವಾಗಿ ಮಾಡುವುದು ಉತ್ತಮ. ಉಳಿದ ಆಹಾರವನ್ನು ತ್ಯಜಿಸಿ, ತಟ್ಟೆಯನ್ನು ತೊಳೆದು ಅಥವಾ ಸ್ವಚ್ಛ ಸ್ಥಳದಲ್ಲಿ ಇಡುವ ಅಭ್ಯಾಸದಿಂದ ಶಿಸ್ತು, ನಮ್ರತೆ ಮತ್ತು ಕೃತಜ್ಞತೆ ಬೆಳೆಯುತ್ತದೆ. ಇದರಿಂದ ಕುಟುಂಬದ ಬಾಂಧವ್ಯಗಳು ಬಲವಾಗುತ್ತವೆ.

ಶಾಸ್ತ್ರದ ಪ್ರಕಾರ, ಈ ಪದ್ಧತಿಯನ್ನು ಪಾಲಿಸುವುದರಿಂದ ಆರ್ಥಿಕ ಸಮೃದ್ಧಿ ಹೆಚ್ಚುತ್ತದೆ, ನಕಾರಾತ್ಮಕ ಶಕ್ತಿಗಳು ದೂರವಾಗುತ್ತವೆ ಮತ್ತು ಮನೆಯಲ್ಲಿನ ಶಾಂತಿ, ಸೌಹಾರ್ದತೆ ವೃದ್ಧಿಸುತ್ತದೆ ಎಂದು ಹೇಳಲಾಗಿದೆ.

ತಟ್ಟೆಯಲ್ಲಿ ಕೈ ತೊಳೆಯುವುದನ್ನು ತಪ್ಪಿಸಿ, ಬೇರೆಡೆ ಕೈ ತೊಳೆಯುವುದು ಉತ್ತಮ. ಊಟದ ನಂತರ ತಟ್ಟೆಯನ್ನು ಹೆಚ್ಚು ಹೊತ್ತು ಹಾಗೆಯೇ ಬಿಡದೆ ತಕ್ಷಣವೇ ಶುದ್ಧಿ ಮಾಡಬೇಕು. ವಿಶೇಷವಾಗಿ ರಾತ್ರಿಯಿಡೀ ತಟ್ಟೆಯನ್ನು ಸಿಂಕ್‌ನಲ್ಲಿ ಬಿಡಬಾರದು ಎಂದು ಸೂಚಿಸಲಾಗಿದೆ.

ಆದರೆ ಈ ನಿಯಮಗಳು ಮನೆಗಳಿಗೆ ಮಾತ್ರ ಅನ್ವಯಿಸುವುದಾಗಿದ್ದು, ಮದುವೆ ಸಮಾರಂಭಗಳು ಅಥವಾ ಹೋಟೆಲ್‌ಗಳಲ್ಲಿ ಅತಿಥಿಗಳಾಗಿ ಹೋದಾಗ ಈ ಪದ್ಧತಿಯನ್ನು ಪಾಲಿಸುವ ಅಗತ್ಯವಿಲ್ಲ ಎಂದು ತಿಳಿಸಲಾಗಿದೆ.

ಪರಪ್ಪನ ಅಗ್ರಹಾರ ಜೈಲಿನಲ್ಲಿ ಗಲಾಟೆ: ಕೈದಿಗಳ ಮೇಲೆ ಲಾಠಿ ಪ್ರಹಾರ

ಬೆಂಗಳೂರು: ನಗರದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಕೈದಿಗಳು ಮತ್ತು ಜೈಲು ಸಿಬ್ಬಂದಿ ನಡುವೆ ಸಂಘರ್ಷ ಸಂಭವಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಮಾರ್ಚ್ 29ರ ತಡರಾತ್ರಿ ಈ ಘಟನೆ ನಡೆದಿದ್ದು, ಜೈಲಿನಿಂದಲೇ ವಿಡಿಯೋ ಹೊರಬಂದ ಪ್ರಕರಣದ ಹಿನ್ನೆಲೆ ಜೈಲು ಅಧೀಕ್ಷಕ ಕರ್ಣ ಕ್ಷತ್ರಿ ನೇತೃತ್ವದಲ್ಲಿ ವಿಚಾರಣಾ ಬಂಧಿಗಳ ವಿಭಾಗದ ಟವರ್-1ರಲ್ಲಿ ತಪಾಸಣೆ ನಡೆಸಲಾಗುತ್ತಿತ್ತು. ಈ ವೇಳೆ ತಪಾಸಣೆಗೆ ಅಡ್ಡಿಪಡಿಸಿದ ಕೈದಿಗಳಾದ ಇನಾಕ್ ಜಾಯ್, ವೋಕು ಆರೆಂಜಿ ಸೇರಿದಂತೆ ಕೆಲವರು ಅಧಿಕಾರಿಗಳ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.

ಪರಿಸ್ಥಿತಿ ಉದ್ವಿಗ್ನಗೊಂಡ ಹಿನ್ನೆಲೆಯಲ್ಲಿ ಸಿಬ್ಬಂದಿ ತಕ್ಷಣವೇ ಕ್ರಮ ಕೈಗೊಂಡು ಕೈದಿಗಳನ್ನು ಚದುರಿಸಲು ಲಘು ಲಾಠಿ ಪ್ರಹಾರ ನಡೆಸಿದ್ದಾರೆ. ಕಾರ್ಯಾಚರಣೆ ವೇಳೆ ಬ್ಯಾರಕ್‌ಗಳಲ್ಲಿ ಅಡಗಿಸಿಟ್ಟಿದ್ದ 10ಕ್ಕೂ ಹೆಚ್ಚು ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಘಟನೆಗೆ ಸಂಬಂಧಿಸಿದಂತೆ ಗಲಾಟೆ ಮಾಡಿದ ಕೈದಿಗಳ ವಿರುದ್ಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

ಚಿತ್ರದುರ್ಗ| ಎರಡು ಲಾರಿಗಳ ನಡುವೆ ಮುಖಾಮುಖಿ ಡಿಕ್ಕಿ: ಮೂವರು ಸಾವು!

ಚಿತ್ರದುರ್ಗ: ಇಲ್ಲಿನ ಕಲ್ಕುಂಟೆ ಸಮೀಪದ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಎರಡು ಲಾರಿಗಳ ಮಧ್ಯೆ ಸಂಭವಿಸಿದ ಭೀಕರ ಅಪಘಾತದಲ್ಲಿ ಮೂವರು ಸಾವನ್ನಪ್ಪಿರುವ ಘಟನೆ ಜರುಗಿದೆ.

ಚಿತ್ರದುರ್ಗದಿಂದ ದಾವಣಗೆರೆ ಕಡೆಗೆ ಸಾಗುತ್ತಿದ್ದ ಲಾರಿ ಹಾಗೂ ದಾವಣಗೆರೆಯಿಂದ ಚಿತ್ರದುರ್ಗ ಕಡೆ ಬರುತ್ತಿದ್ದ ಮತ್ತೊಂದು ಲಾರಿ ಮುಖಾಮುಖಿಯಾಗಿ ಡಿಕ್ಕಿ ಹೊಡೆದಿವೆ. ಡಿಕ್ಕಿಯ ರಭಸಕ್ಕೆ ಒಂದು ಲಾರಿ ಡಿವೈಡರ್ ದಾಟಿ ಎದುರು ಬದಿಗೆ ಹೋಗಿ ಇನ್ನೊಂದು ಲಾರಿಗೆ ಅಪ್ಪಳಿಸಿದೆ ಎಂದು ತಿಳಿದುಬಂದಿದೆ.

ಅಪಘಾತದಲ್ಲಿ ಮೊದಲಿಗೆ ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಮತ್ತೊಬ್ಬರು ಬಳಿಕ ಮೃತಪಟ್ಟಿದ್ದಾರೆ. ಈವರೆಗೆ ಮೃತರ ಗುರುತು ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಭರಮಸಾಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ಸಂಬಂಧ ತನಿಖೆ ಮುಂದುವರಿದಿದೆ.

ಜೋಕಾಲಿ ಆಡುವಾಗ ದುರಂತ: ಸೀರೆ ಕೊರಳಿಗೆ ಸುತ್ತಿಕೊಂಡು 10 ವರ್ಷದ ಬಾಲಕಿ ಸಾವು

ಚಿಕ್ಕಮಗಳೂರು: ಮನೆಯಲ್ಲೇ ಜೋಕಾಲಿ ಆಡುವಾಗ ಸೀರೆ ಕೊರಳಿಗೆ ಸುತ್ತಿಕೊಂಡು 10 ವರ್ಷದ ಬಾಲಕಿ ಮೃತಪಟ್ಟಿರುವ ದಾರುಣ ಘಟನೆ ತಾಲೂಕಿನ ಹೆಬ್ಬಳ್ಳಿ ಗ್ರಾಮದಲ್ಲಿ ನಡೆದಿದೆ.

ಲೇಖನಾ (10) ಮೃತ ಬಾಲಕಿ ಎಂದು ತಿಳಿದುಬಂದಿದೆ. ಘಟನೆ ಸಂಭವಿಸಿದ ವೇಳೆ ಬಾಲಕಿಯ ಪೋಷಕರು ಮನೆಯಲ್ಲಿ ಇರಲಿಲ್ಲ ಎನ್ನಲಾಗಿದೆ. ಮನೆಯಲ್ಲಿ ಜೋಕಾಲಿ ಹಾಕಿ ಆಟವಾಡುತ್ತಿದ್ದಾಗ ಸೀರೆ ಉರುಳಿ ಬಾಲಕಿಯ ಕೊರಳಿಗೆ ಸುತ್ತಿಕೊಂಡಿದ್ದು, ಉಸಿರುಗಟ್ಟಿದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ ಎಂಬ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ.

ಘಟನೆ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಮಾಹಿತಿ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಮುಂದುವರಿಸಿದ್ದಾರೆ.

ಭಾರತೀಯ ತೈಲ ಹಡಗುಗಳಿಗೆ ಟೋಲ್ ವಿಧಿಸಿಲ್ಲ: ಇರಾನ್ ಸ್ಪಷ್ಟನೆ!

0

ನವದೆಹಲಿ: ಹಾರ್ಮುಜ್ ಜಲಸಂಧಿಯ ಮೂಲಕ ಸಂಚರಿಸುವ ಭಾರತೀಯ ತೈಲ ಟ್ಯಾಂಕರ್‌ಗಳಿಗೆ ಯಾವುದೇ ಶುಲ್ಕ ವಿಧಿಸಲಾಗಿಲ್ಲ ಎಂದು ಇರಾನ್ ರಾಯಭಾರಿ ಮೊಹಮ್ಮದ್ ಫಥಾಲಿ ಸ್ಪಷ್ಟಪಡಿಸಿದ್ದಾರೆ.

ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತೀಯ ಹಡಗುಗಳಿಗೆ ಟೋಲ್ ವಿಧಿಸಲಾಗಿದೆ ಎಂಬ ವರದಿಗಳನ್ನು ತಳ್ಳಿಹಾಕಿದ್ದಾರೆ. ಈ ಕುರಿತು ಯಾವುದೇ ಗೊಂದಲವಿದ್ದರೆ ಭಾರತ ಸರ್ಕಾರವನ್ನು ಸಂಪರ್ಕಿಸುವಂತೆ ಅವರು ತಿಳಿಸಿದ್ದಾರೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್‌ಗೆ ಟೋಲ್ ಪಾವತಿಸುವ ಹಡಗುಗಳನ್ನು ತಡೆಯುವುದಾಗಿ ಎಚ್ಚರಿಕೆ ನೀಡಿದ ಬೆನ್ನಲ್ಲೇ ಈ ಸ್ಪಷ್ಟನೆ ಹೊರಬಂದಿದೆ.

ಫಥಾಲಿ ಅವರ ಪ್ರಕಾರ, ಹಾರ್ಮುಜ್ ಜಲಸಂಧಿಯಲ್ಲಿ ಭಾರತೀಯ ಹಡಗುಗಳ ಸುರಕ್ಷಿತ ಸಂಚಾರಕ್ಕಾಗಿ ಇರಾನ್ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಶೀಘ್ರದಲ್ಲೇ ಹೊಸ ಕಾರ್ಯವಿಧಾನವನ್ನು ಪ್ರಕಟಿಸಲಾಗುವುದು.

ಜಗತ್ತಿನ ಒಟ್ಟು ತೈಲ ಸಾಗಣೆಯ ಸುಮಾರು 20% ಹಾರ್ಮುಜ್ ಜಲಸಂಧಿಯ ಮೂಲಕ ನಡೆಯುತ್ತದೆ. ಇಲ್ಲಿ ಸಂಚಾರಕ್ಕೆ ಅಡ್ಡಿಯಾದರೆ ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅವರು ಎಚ್ಚರಿಸಿದ್ದಾರೆ.

ಅಂತರರಾಷ್ಟ್ರೀಯ ಸಮುದ್ರ ಕಾನೂನಿನ ಪ್ರಕಾರ (UNCLOS), ಜಾಗತಿಕ ಜಲಮಾರ್ಗದಲ್ಲಿ ಕೇವಲ ಸಂಚಾರಕ್ಕಾಗಿ ಶುಲ್ಕ ವಿಧಿಸುವಂತಿಲ್ಲ. ಈ ಹಿನ್ನೆಲೆಯಲ್ಲಿ ಇರಾನ್ ಟೋಲ್ ವಿಧಿಸುವ ಕುರಿತು ಹರಡಿದ್ದ ಸುದ್ದಿಗಳಿಗೆ ಈಗ ತೆರೆ ಬಿದ್ದಿದೆ.

ಇರಾನ್ ತನ್ನ ಜಲಸಂಧಿಯ ಮೂಲಕ ಹಾದುಹೋಗುವ ಹಡಗುಗಳಿಗೆ ಸುಮಾರು 2 ಮಿಲಿಯನ್ ಡಾಲರ್ (₹17 ಕೋಟಿ) ಟೋಲ್ ವಿಧಿಸುವ ಸಾಧ್ಯತೆ ಇದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಈ ಸ್ಪಷ್ಟನೆ ನೀಡಲಾಗಿದೆ.

ಭಾರತ ಮತ್ತು ಇರಾನ್ ನಡುವಿನ ದ್ವಿಪಕ್ಷೀಯ ಸಂಬಂಧಗಳು ಉತ್ತಮವಾಗಿದ್ದು, ಚಾಬಹಾರ್ ಬಂದರು ಅಭಿವೃದ್ಧಿಯಲ್ಲಿ ಭಾರತ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ರಾಯಭಾರಿ ತಿಳಿಸಿದ್ದಾರೆ.

error: Content is protected !!