Home Blog

ಸಿನಿಮಾದಲ್ಲಿ ಕೋಟಿ ಕೋಟಿ.. ಸಿಎಂ ಆಗಿ ಲಕ್ಷಗಳಲ್ಲಿ ಸಂಬಳ: ವಿಜಯ್‌ಗೆ ಸಿಗೋ ಪವರ್‌ಫುಲ್ ಸೌಲಭ್ಯಗಳು ಯಾವೆಲ್ಲಾ?

ತಮಿಳುನಾಡಿನ ಮುಖ್ಯಮಂತ್ರಿ ಆಗಿ ಪ್ರಮಾಣವಚನ ಸ್ವೀಕರಿಸಿರುವ ದಳಪತಿ ವಿಜಯ್, ಚಿತ್ರರಂಗದ ಭಾರೀ ಸಂಭಾವನೆ ಬಿಟ್ಟು ಈಗ ಆಡಳಿತದ ಜವಾಬ್ದಾರಿ ಹೊತ್ತಿದ್ದಾರೆ. ಸಿಎಂ ಆದ ಬಳಿಕ ಅವರಿಗೆ ಸಿಗುವ ಸಂಬಳ ಮತ್ತು ಸೌಲಭ್ಯಗಳ ಬಗ್ಗೆ ಮಾಹಿತಿ ಹೊರಬಿದ್ದಿದೆ.

ತಮಿಳುನಾಡು ಮುಖ್ಯಮಂತ್ರಿಗೆ ಮೂಲ ವೇತನವಾಗಿ ತಿಂಗಳಿಗೆ 2,05,000 ರೂಪಾಯಿ ಸಿಗುತ್ತದೆ. ವಿವಿಧ ಭತ್ಯೆಗಳನ್ನು ಸೇರಿಸಿದರೆ ಒಟ್ಟು ಸಂಬಳ ಸುಮಾರು 2.85 ಲಕ್ಷ ರೂಪಾಯಿಗೆ ಏರಲಿದೆ. ವಾರ್ಷಿಕವಾಗಿ ಸುಮಾರು 34.20 ಲಕ್ಷ ರೂಪಾಯಿ ಆದಾಯ ಸಿಗಲಿದೆ.

ಒಂದು ಸಿನಿಮಾಕ್ಕೆ 100ರಿಂದ 200 ಕೋಟಿ ರೂಪಾಯಿ ವರೆಗೆ ಸಂಭಾವನೆ ಪಡೆಯುತ್ತಿದ್ದ ವಿಜಯ್, ಇದೀಗ ಸರ್ಕಾರಿ ಹುದ್ದೆಯ ಸಂಬಳಕ್ಕೆ ಬದಲಾಗಿರುವುದು ಅಭಿಮಾನಿಗಳಲ್ಲಿ ಚರ್ಚೆ ಹುಟ್ಟುಹಾಕಿದೆ.

ಸಿಎಂ ಆಗಿರುವ ವಿಜಯ್ ಅವರಿಗೆ ಸರ್ಕಾರಿ ಬಂಗಲೆ, ಕ್ಯಾಂಪ್ ಆಫೀಸ್, ಬುಲೆಟ್ ಪ್ರೂಫ್ ವಾಹನ, ಬೆಂಗಾವಲು ಪಡೆ ಹಾಗೂ ಅಧಿಕೃತ ಪ್ರವಾಸ ವೆಚ್ಚ ಸೇರಿದಂತೆ ಹಲವು ಸೌಲಭ್ಯಗಳು ದೊರೆಯಲಿವೆ. ಜೊತೆಗೆ Z+ ಭದ್ರತೆಯಡಿ 24 ಗಂಟೆಗಳ ಪೊಲೀಸ್ ಕಾವಲು ಕೂಡ ಇರಲಿದೆ.

ನಿವೃತ್ತಿಯ ನಂತರವೂ ಪಿಂಚಣಿ, ವೈದ್ಯಕೀಯ ಸೌಲಭ್ಯ, ರೈಲು ಪ್ರಯಾಣ ಹಾಗೂ ಕಚೇರಿ ಸಿಬ್ಬಂದಿ ಸೌಲಭ್ಯಗಳು ಮುಂದುವರಿಯಲಿದ್ದು, ಸಿನಿಮಾ ಸೂಪರ್‌ಸ್ಟಾರ್ ಇದೀಗ ಪವರ್‌ಫುಲ್ ರಾಜಕೀಯ ನಾಯಕರಾಗಿ ಹೊಸ ಅಧ್ಯಾಯ ಆರಂಭಿಸಿದ್ದಾರೆ.

ಮೇ 13ಕ್ಕೆ ಬೆಂಗಳೂರು ಜನತೆಗೆ ಬಿಗ್ ಗಿಫ್ಟ್ ನೀಡಲಿದ್ದೇವೆ: ಡಿಕೆ ಶಿವಕುಮಾರ್

ಬೆಂಗಳೂರು: ಮೇ 13ರಂದು ಬೆಂಗಳೂರು ಜನತೆಗೆ ಮಹತ್ವದ ‘ಬಿಗ್ ಗಿಫ್ಟ್’ ಘೋಷಣೆ ಮಾಡುವುದಾಗಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಆ ದಿನವೇ ಜನತೆಗೆ ವಿಶೇಷ ಮಾಹಿತಿ ನೀಡುವುದಾಗಿ ಹೇಳಿದ್ದಾರೆ.

“ಸುರ್ಜೇವಾಲ ಅವರೊಂದಿಗೆ ರಾಜಕೀಯ ವಿಚಾರವಾಗಿ ಸಭೆ ನಡೆಸಿದ್ದೇವೆ. ಈಗಾಗಲೇ ಅಧಿಕಾರಿಗಳನ್ನು ಕರೆದು ಅಗತ್ಯ ಸೂಚನೆಗಳನ್ನು ನೀಡಿದ್ದೇನೆ. ಮೇ 13ರಂದು ಬೆಂಗಳೂರಿನ ಜನತೆಗೆ ದೊಡ್ಡ ಗ್ಯಾರಂಟಿ ಹಾಗೂ ವಿಶೇಷ ಗಿಫ್ಟ್ ನೀಡಲಿದ್ದೇವೆ. ಅದರ ಸಂಪೂರ್ಣ ವಿವರವನ್ನು ಅಂದೇ ಬಹಿರಂಗಪಡಿಸುತ್ತೇನೆ,” ಎಂದು ಡಿಕೆ ಶಿವಕುಮಾರ್ ತಿಳಿಸಿದ್ದಾರೆ.

ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ದೇಶದ ಜನತೆಗೆ ನೀಡಿದ ಸಲಹೆಗಳ ಬಗ್ಗೆ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್, ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಮೋದಿ ಅವರು ಜನರಿಗೆ ಪೆಟ್ರೋಲ್ ಬಳಕೆ ಕಡಿಮೆ ಮಾಡಿ ಎನ್ನುತ್ತಾರೆ. ಆದರೆ ಪೆಟ್ರೋಲ್ ದರ ಏಕೆ ಏರಿಕೆಯಾಗಿದೆ ಎಂಬುದನ್ನು ಹೇಳುವುದಿಲ್ಲ. ಚಿನ್ನದ ಬೆಲೆ ಏರಿಕೆಯ ಬಗ್ಗೆ ಸಹ ಸ್ಪಷ್ಟನೆ ನೀಡುತ್ತಿಲ್ಲ. ಜನರಿಗೆ ತೊಂದರೆ ಆಗುತ್ತಿರುವುದಕ್ಕೆ ಕಾರಣವೇನು ಎಂಬುದನ್ನು ಪ್ರಧಾನಿ ಅವರೇ ವಿವರಿಸಬೇಕು ಎಂದು ಪ್ರಶ್ನಿಸಿದರು.

ಚಿನ್ನ ಖರೀದಿಸಬೇಡಿ ಎನ್ನುವ ಸಲಹೆ ಪ್ರಾಯೋಗಿಕವಲ್ಲ ಎಂದು ಟೀಕಿಸಿದ ಅವರು, ಮದುವೆ, ಶುಭಕಾರ್ಯಗಳಿಗೆ ಚಿನ್ನ ಖರೀದಿ ಮಾಡಲೇಬೇಕು. ಅದನ್ನು ನಿಲ್ಲಿಸೋಕೆ ಸಾಧ್ಯವೇ? ಜನರಿಗೆ ಸಲಹೆ ಕೊಡುವುದು ಸುಲಭ. ಆದರೆ ಅದು ವಾಸ್ತವಿಕವಾಗಿರಬೇಕು,” ಎಂದು ಹೇಳಿದರು.

ಕೊರೋನಾ ಅವಧಿಯಲ್ಲಿನ ಪ್ರಧಾನಿ ಮನವಿಯನ್ನು ಉಲ್ಲೇಖಿಸಿದ ಡಿಕೆಶಿ, “ಆಗ ದೀಪ ಹಚ್ಚಿ ಎಂದರು, ದೀಪ ಹಚ್ಚಿದ್ದೇವೆ. ಚಪ್ಪಾಳೆ ತಟ್ಟಿ ಎಂದರು, ತಟ್ಟಿದ್ದೇವೆ. ಆದರೆ ಅದರಿಂದ ಸಮಸ್ಯೆ ನಿಂತಿತೇ? ಯಾವುದೇ ಸಮಸ್ಯೆಗೆ ಪ್ರಾಯೋಗಿಕ ಪರಿಹಾರ ಬೇಕು,” ಎಂದು ಅಭಿಪ್ರಾಯಪಟ್ಟರು.

RCB ವಿರುದ್ಧ ಸೋಲಿನ ಬಳಿಕ ಬ್ಯಾಟಿಂಗ್ ವೈಫಲ್ಯ ಒಪ್ಪಿಕೊಂಡ ಸೂರ್ಯಕುಮಾರ್ ಯಾದವ್

ಇಂಡಿಯನ್ ಪ್ರೀಮಿಯರ್ ಲೀಗ್‌ನ 54ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಮುಂಬೈ ಇಂಡಿಯನ್ಸ್ ರೋಚಕ ಸೋಲು ಅನುಭವಿಸಿದೆ. ರಾಯ್‌ಪುರ್‌ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಆರ್‌ಸಿಬಿ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು.

ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ತಂಡ ನಿಗದಿತ 20 ಓವರ್‌ಗಳಲ್ಲಿ 167 ರನ್‌ಗಳ ಸವಾಲಿನ ಮೊತ್ತ ಕಲೆಹಾಕಿತು. ಈ ಗುರಿಯನ್ನು ಬೆನ್ನಟ್ಟಿದ ಆರ್‌ಸಿಬಿ ಕೊನೆಯ ಓವರ್‌ನ ಅಂತಿಮ ಎಸೆತದಲ್ಲಿ ಗುರಿ ತಲುಪಿ 2 ವಿಕೆಟ್‌ಗಳ ರೋಚಕ ಜಯ ದಾಖಲಿಸಿತು.

ಪಂದ್ಯದ ಬಳಿಕ ಮಾತನಾಡಿದ ಮುಂಬೈ ಇಂಡಿಯನ್ಸ್ ಹಂಗಾಮಿ ನಾಯಕ ಸೂರ್ಯಕುಮಾರ್ ಯಾದವ್, ತಂಡದ ಸೋಲಿಗೆ ಬ್ಯಾಟಿಂಗ್ ವಿಭಾಗದ ಹಿನ್ನಡೆಯೇ ಪ್ರಮುಖ ಕಾರಣ ಎಂದು ಅಭಿಪ್ರಾಯಪಟ್ಟರು.

“ನಮ್ಮ ತಂಡದ ಸ್ಕೋರ್‌ನಲ್ಲಿ ಕನಿಷ್ಠ 10 ರಿಂದ 15 ರನ್‌ಗಳ ಕೊರತೆ ಇತ್ತು. ಪ್ರಮುಖ ಹಂತದಲ್ಲಿ ವಿಕೆಟ್ ಕಳೆದುಕೊಂಡದ್ದು ನಮ್ಮ ಮೇಲೆ ಒತ್ತಡ ತಂದಿತು. ಆದರೆ ನಮನ್ ಧೀರ್ ಹಾಗೂ ತಿಲಕ್ ವರ್ಮಾ ಬ್ಯಾಟಿಂಗ್ ಮಾಡಿದ ರೀತಿ ಅಸಾಧಾರಣವಾಗಿತ್ತು. ಅವರು ಈ ಪಿಚ್‌ನಲ್ಲಿ ಆಡಿದ ರೀತಿ ನೋಡಿದರೆ, ಬೇರೆ ಟ್ರ್ಯಾಕ್‌ನಲ್ಲಿ ಬ್ಯಾಟಿಂಗ್ ಮಾಡುತ್ತಿದ್ದಾರೋ ಅನ್ನಿಸಿತು,” ಎಂದು ಯುವ ಆಟಗಾರರನ್ನು ಶ್ಲಾಘಿಸಿದರು.

ಪಂದ್ಯದ ಕೊನೆಯ ಓವರ್‌ನಲ್ಲಿ 15 ರನ್‌ಗಳನ್ನು ಕಾಪಾಡುವ ಜವಾಬ್ದಾರಿ ಯುವ ಆಲ್‌ರೌಂಡರ್ ರಾಜ್ ಬಾವಾಗೆ ನೀಡಲಾಗಿತ್ತು. ಈ ಕುರಿತು ಪ್ರತಿಕ್ರಿಯಿಸಿದ ಸೂರ್ಯಕುಮಾರ್, “ರಾಜ್ ಕಳೆದ ವರ್ಷದಿಂದಲೇ ಡೆತ್ ಓವರ್‌ಗಳಲ್ಲಿ ಸಾಕಷ್ಟು ಅಭ್ಯಾಸ ಮಾಡಿದ್ದಾರೆ. ಈ ಸೀಸನ್‌ನಲ್ಲಿ ಅವರು ಸಂಪೂರ್ಣ ವಿಭಿನ್ನ ಆಟಗಾರನಾಗಿ ಹೊರಹೊಮ್ಮಿದ್ದಾರೆ. ಕೊನೆಯ ಓವರ್‌ನಲ್ಲಿ ಅವರು ನಮಗೆ ಗೆಲುವಿನ ಹತ್ತಿರ ತಂದು ನಿಲ್ಲಿಸಿದರು. ಅವರ ಶ್ರಮದ ಬಗ್ಗೆ ನಮಗೆ ಹೆಮ್ಮೆ ಇದೆ,” ಎಂದರು.

ಇದೇ ವೇಳೆ ಪಂದ್ಯದ ವೇಳೆ ತಿಲಕ್ ವರ್ಮಾ ಮತ್ತು ನಮನ್ ಧೀರ್ ನಡುವೆ ಕ್ಯಾಚ್ ಪಡೆಯುವ ಸಂದರ್ಭ ಉಂಟಾದ ಗೊಂದಲದ ಬಗ್ಗೆ ಪ್ರತಿಕ್ರಿಯಿಸಿದ ಅವರು, “ಇಂತಹ ಘಟನೆಗಳು ಆಟದ ಭಾಗವೇ. ಅಭ್ಯಾಸದ ವೇಳೆ ಇವುಗಳ ಬಗ್ಗೆ ನಾವು ಗಮನಹರಿಸುತ್ತೇವೆ. ಅಂತಿಮವಾಗಿ ತಿಲಕ್ ಅದ್ಭುತ ಕ್ಯಾಚ್ ಹಿಡಿದ ರೀತಿ ಅವರ ಸಾಮರ್ಥ್ಯವನ್ನು ತೋರಿಸುತ್ತದೆ,” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘KHxRK’ಗೆ ತ್ರಿಶಾ ನಾಯಕಿ?: ರಜನಿ-ಕಮಲ್ ಕಾಂಬೋ ಸಿನಿಮಾಗೆ ಸೌತ್ ಕ್ವೀನ್ ಎಂಟ್ರಿ!

ಚೆನ್ನೈ: ರಜನಿಕಾಂತ್ ಮತ್ತು ಕಮಲ್ ಹಾಸನ್ ಒಂದಾಗುತ್ತಿರುವ ಬಹುನಿರೀಕ್ಷಿತ ‘KHxRK’ ಸಿನಿಮಾಗೆ ನಟಿ ತ್ರಿಶಾ ಕೃಷ್ಣನ್ ಸೇರ್ಪಡೆಯಾಗಲಿದ್ದಾರೆ ಎಂಬ ಸುದ್ದಿ ಕಾಲಿವುಡ್‌ನಲ್ಲಿ ಸಂಚಲನ ಸೃಷ್ಟಿಸಿದೆ.

ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದ ಈ ಚಿತ್ರಕ್ಕೆ ಅನಿರುದ್ಧ್ ರವಿಚಂದರ್ ಸಂಗೀತ ನೀಡುತ್ತಿದ್ದು, ಚಿತ್ರದ ಅನೌನ್ಸ್‌ಮೆಂಟ್ ವಿಡಿಯೋ ಈಗಾಗಲೇ ಅಭಿಮಾನಿಗಳಲ್ಲಿ ಭಾರೀ ಕ್ರೇಜ್ ಹುಟ್ಟಿಸಿತ್ತು.

ಇದೀಗ ತ್ರಿಶಾ ಈ ಸಿನಿಮಾದ ಪ್ರಮುಖ ಪಾತ್ರಕ್ಕೆ ಒಪ್ಪಿಗೆ ನೀಡಿದ್ದಾರೆ ಎನ್ನಲಾಗುತ್ತಿದೆ. 22 ವರ್ಷಗಳಿಂದ ಟಾಪ್ ಹೀರೋಯಿನ್ ಆಗಿ ಮಿಂಚುತ್ತಿರುವ ತ್ರಿಶಾಗೆ ಇದುವರೆಗೆ ಸಿಕ್ಕಿರುವ ಅತಿದೊಡ್ಡ ಬಜೆಟ್ ಸಿನಿಮಾ ಇದಾಗಲಿದೆ ಎನ್ನಲಾಗಿದೆ.

ತ್ರಿಶಾ ಈಗಾಗಲೇ ಕಮಲ್ ಹಾಸನ್ ಜೊತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದರೆ, ರಜನಿಕಾಂತ್ ಜೊತೆ ‘ಪೇಟ್ಟಾ’ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಹೀಗಾಗಿ ಈ ಕಾಂಬಿನೇಷನ್ ಬಗ್ಗೆ ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಾಗಿದೆ.

ಸದ್ಯ ಚಿತ್ರದ ಪ್ರೀ-ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗುತ್ತಿದ್ದು, ಶೀಘ್ರದಲ್ಲೇ ಶೂಟಿಂಗ್ ಆರಂಭವಾಗಲಿದೆ. 1000 ಕೋಟಿ ಕ್ಲಬ್ ಸೇರುವ ಮೊದಲ ತಮಿಳು ಸಿನಿಮಾ ಇದೇ ಆಗಬಹುದು ಎಂಬ ಲೆಕ್ಕಾಚಾರ ಚಿತ್ರರಂಗದಲ್ಲಿ ಕೇಳಿಬರುತ್ತಿದೆ.


ಗಲಾಟೆ ತಡೆಯಲು ಹೋದ ಜೈಲರ್ ಮೇಲೆ ಕೈದಿಗಳ ದಾಳಿ ; ಎಡಗೈ ಮೂಳೆ ಮುರಿದು ಆಸ್ಪತ್ರೆಗೆ ದಾಖಲು!

0

ಜಮಖಂಡಿ: ಜೈಲಿನೊಳಗೆ ನಡೆದ ಗಲಾಟೆ ಬಿಡಿಸಲು ಹೋದ ಜೈಲರ್ ಮೇಲೆ ಕೈದಿಗಳೇ ಹಿಗ್ಗಾಮುಗ್ಗಾ ಹಲ್ಲೆ ನಡೆಸಿದ ಘಟನೆ ಜಮಖಂಡಿ ಹೊರವಲಯದ ಕಾರಾಗೃಹದಲ್ಲಿ ನಡೆದಿದೆ.

ಘಟನೆಯಲ್ಲಿ ಜೈಲರ್ ವಿ.ಡಿ. ಕುಂಬಾರ ಅವರ ಎಡಗೈ ಫ್ರಾಕ್ಚರ್ ಆಗಿದ್ದು, ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪಡಿತರ ಅಕ್ಕಿ ಅಕ್ರಮ ಸಾಗಾಟ ಪ್ರಕರಣದಲ್ಲಿ ಬಂಧಿತರಾಗಿದ್ದ ಜಾಕೀರ್ ಹುಸೇನ್ ಮಕಾಂದಾರ್ ಮತ್ತು ಆತನ ಸಹಚರರು ಜೈಲಿನಲ್ಲಿದ್ದರು. ಇದೇ ಗ್ಯಾಂಗ್ ಸದಸ್ಯರ ನಡುವೆ ನಿನ್ನೆ ಸಂಜೆ ಜಗಳ ಆರಂಭವಾಗಿತ್ತು. ಈ ವೇಳೆ ಪರಿಸ್ಥಿತಿ ನಿಯಂತ್ರಿಸಲು ಬಂದ ಜೈಲರ್ ಮೇಲೆ ಆರೋಪಿಗಳು ಏಕಾಏಕಿ ಹಲ್ಲೆ ನಡೆಸಿದ್ದಾರೆ.

ಜಾಕೀರ್ ಹುಸೇನ್ ಮಕಾಂದಾರ್, ಫಯಾಜ್ ಮಕಾಂದಾರ್, ಅಶೋಕ ನಾಯ್ಕೊಡಿ ಮತ್ತು ಅರ್ಫಾತ್ ತಾಳಿಕೋಟಿ ವಿರುದ್ಧ ಪ್ರಕರಣ ದಾಖಲಾಗಿದೆ. ಘಟನೆ ಬಳಿಕ ಜೈಲು ಭದ್ರತೆ ಕುರಿತು ಪ್ರಶ್ನೆಗಳು ಎದ್ದಿದ್ದು, ಜಮಖಂಡಿ ಗ್ರಾಮೀಣ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ರಾಜ್ಯ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್; ಶೇ.1.50 ತುಟ್ಟಿ ಭತ್ಯೆ ಹೆಚ್ಚಳಕ್ಕೆ ಸರ್ಕಾರ ಆದೇಶ

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರು ಹಾಗೂ ನಿವೃತ್ತಿ ವೇತನದಾರರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದ್ದು, ತುಟ್ಟಿ ಭತ್ಯೆ (ಡಿಎ)ಯನ್ನು ಶೇ.1.50ರಷ್ಟು ಹೆಚ್ಚಿಸಿ ಅಧಿಕೃತ ಆದೇಶ ಹೊರಡಿಸಿದೆ.

ಈ ಆದೇಶದಂತೆ 2024ರ ಪರಿಷ್ಕೃತ ವೇತನ ಶ್ರೇಣಿಯಲ್ಲಿ ವೇತನ ಪಡೆಯುತ್ತಿರುವ ರಾಜ್ಯ ಸರ್ಕಾರಿ ನೌಕರರಿಗೆ 2026ರ ಜನವರಿ 1ರಿಂದ ಅನ್ವಯವಾಗುವಂತೆ ತುಟ್ಟಿ ಭತ್ಯೆಯನ್ನು ಹಾಲಿ ಶೇ.14.25ರಿಂದ ಶೇ.15.75ಕ್ಕೆ ಪರಿಷ್ಕರಿಸಿ ಮಂಜೂರು ಮಾಡಲಾಗಿದೆ.

ಇದಕ್ಕೂ ಮೊದಲು ಕೇಂದ್ರ ಸರ್ಕಾರ ಏಪ್ರಿಲ್ ತಿಂಗಳಲ್ಲಿ ತನ್ನ ನೌಕರರಿಗೆ ಶೇ.2ರಷ್ಟು ತುಟ್ಟಿ ಭathyೆ ಹೆಚ್ಚಳ ಘೋಷಿಸಿತ್ತು. ಇದೀಗ ರಾಜ್ಯ ಸರ್ಕಾರವೂ ತನ್ನ ನೌಕರರಿಗೆ ಡಿಎ ಏರಿಕೆ ನೀಡಿ ಅಧಿಕೃತ ಆದೇಶ ಪ್ರಕಟಿಸಿದೆ.

ಸರ್ಕಾರದ ಆದೇಶದ ಪ್ರಕಾರ, ತುಟ್ಟಿ ಭತ್ಯೆ ಲೆಕ್ಕಾಚಾರದ ಉದ್ದೇಶಕ್ಕಾಗಿ ಮೂಲ ವೇತನದಲ್ಲಿ ನೌಕರರು ತಮ್ಮ ಹುದ್ದೆಗೆ ಅನುಗುಣವಾಗಿ ಪಡೆಯುತ್ತಿರುವ ವೇತನದ ಜೊತೆಗೆ, 2024ರ ಪರಿಷ್ಕೃತ ವೇತನ ಶ್ರೇಣಿಯ ಗರಿಷ್ಠ ಮಿತಿಗಿಂತ ಹೆಚ್ಚಾಗಿ ನೀಡಲಾದ ಸ್ಥಗಿತ ವೇತನ ಬಡ್ತಿಯನ್ನೂ ಪರಿಗಣಿಸಲಾಗುತ್ತದೆ.

ಇದಲ್ಲದೆ, ಕರ್ನಾಟಕ ನಾಗರಿಕ ಸೇವಾ ಪರಿಷ್ಕೃತ ವೇತನ ನಿಯಮಗಳಡಿ ಮಂಜೂರಾದ ವೈಯಕ್ತಿಕ ವೇತನ ಹಾಗೂ ಹೆಚ್ಚುವರಿ ವೇತನ ಬಡ್ತಿಗಳನ್ನು ಕೂಡ ಸೇರಿಸಿ ಅದರ ಮೇಲೆ ತುಟ್ಟಿ ಭತ್ಯೆ ಲೆಕ್ಕ ಹಾಕಲಾಗುತ್ತದೆ.

ರಾಜ್ಯ ಸರ್ಕಾರದ ನಿವೃತ್ತಿ ವೇತನದಾರರು ಮತ್ತು ಕುಟುಂಬ ನಿವೃತ್ತಿ ವೇತನದಾರರು, ಹಾಗೆಯೇ ರಾಜ್ಯದ ಸಂಚಿತ ನಿಧಿಯಿಂದ ಪಿಂಚಣಿ ಪಡೆಯುತ್ತಿರುವ ಅನುದಾನಿತ ಶಿಕ್ಷಣ ಸಂಸ್ಥೆಗಳ ನಿವೃತ್ತಿ ವೇತನದಾರರಿಗೂ ಈ ಡಿಎ ಹೆಚ್ಚಳ ಅನ್ವಯವಾಗಲಿದೆ.

ಇವರಿಗೆ ಸಹ 2026ರ ಜನವರಿ 1ರಿಂದಲೇ ಜಾರಿಗೆ ಬರುವಂತೆ ತುಟ್ಟಿ ಭತ್ಯೆಯನ್ನು ಹಾಲಿ ಶೇ.14.25ರಿಂದ ಶೇ.15.75ಕ್ಕೆ ಹೆಚ್ಚಿಸಲಾಗಿದೆ.

ಯುಜಿಸಿ, ಎಐಸಿಟಿಇ ಹಾಗೂ ಐಸಿಎಆರ್ ವೇತನ ಶ್ರೇಣಿಯ ನಿವೃತ್ತ ನೌಕರರಿಗೂ ಈ ಪರಿಷ್ಕರಣೆ ಅನ್ವಯವಾಗಲಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ಸರ್ಕಾರದ ಮತ್ತು ಜಿಲ್ಲಾ ಪಂಚಾಯತ್‌ಗಳ ಪೂರ್ಣಾವಧಿ ನೌಕರರು, ಕಾಲಿಕ ವೇತನ ಶ್ರೇಣಿಯ ಪೂರ್ಣಾವಧಿ ವರ್ಕ್‌ಚಾರ್ಜ್ ನೌಕರರು ಹಾಗೂ ಸರ್ಕಾರದಿಂದ ಸಹಾಯಧನ ಪಡೆಯುವ ಶಿಕ್ಷಣ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳ ಪೂರ್ಣಾವಧಿ ಸಿಬ್ಬಂದಿಗೂ ಈ ಆದೇಶ ಅನ್ವಯಿಸುತ್ತದೆ.

ಯುಜಿಸಿ, ಎಐಸಿಟಿಇ, ಐಸಿಎಆರ್ ವೇತನ ಶ್ರೇಣಿಯಲ್ಲಿ ಸೇವೆ ಸಲ್ಲಿಸುತ್ತಿರುವ ನೌಕರರು ಹಾಗೂ ಎನ್‌ಜೆಪಿಸಿ ವೇತನ ಶ್ರೇಣಿಯ ನ್ಯಾಯಾಂಗ ಅಧಿಕಾರಿಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕ ಆದೇಶ ಹೊರಡಿಸಲಾಗುವುದು ಎಂದು ಸರ್ಕಾರ ತಿಳಿಸಿದೆ.

ಹೆಚ್ಚುವರಿ ತುಟ್ಟಿ ಭತ್ಯೆಯನ್ನು ಮುಂದಿನ ಆದೇಶದವರೆಗೆ ನಗದು ರೂಪದಲ್ಲಿ ಪಾವತಿಸಲಾಗುತ್ತದೆ. ಜೊತೆಗೆ 50 ಪೈಸೆ ಹಾಗೂ ಅದಕ್ಕಿಂತ ಹೆಚ್ಚಿನ ಮೊತ್ತವನ್ನು ಮುಂದಿನ ಪೂರ್ಣ ರೂಪಾಯಿಗೆ ಪರಿಗಣಿಸಲಾಗುವುದು, 50 ಪೈಸೆಗಿಂತ ಕಡಿಮೆ ಮೊತ್ತವನ್ನು ಕಡೆಗಣಿಸಲಾಗುವುದು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ನಾಗಮಲೆಯಲ್ಲಿ ಚಿರತೆ ದಾಳಿಗೆ ಬಲಿಯಾದ ಬಾಲಕನ ಕುಟುಂಬಕ್ಕೆ 20 ಲಕ್ಷ ಪರಿಹಾರ

ಚಾಮರಾಜನಗರ: ಜಿಲ್ಲೆಯ ನಾಗಮಲೆಯಲ್ಲಿ ಚಿರತೆ ದಾಳಿಗೆ ಮೃತಪಟ್ಟ ಬಾಲಕನ ಕುಟುಂಬಕ್ಕೆ ರಾಜ್ಯ ಸರ್ಕಾರ 20 ಲಕ್ಷ ರೂಪಾಯಿ ಪರಿಹಾರ ಘೋಷಿಸಿದೆ. ಅರಣ್ಯ ಇಲಾಖೆ ಈಗಾಗಲೇ 5 ಲಕ್ಷ ರೂಪಾಯಿ ಮೊತ್ತದ ಚೆಕ್‌ನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದು, ಉಳಿದ ಮೊತ್ತವನ್ನು ಖಾತೆ ವಿವರ ಪಡೆದು ಶೀಘ್ರದಲ್ಲೇ ಜಮಾ ಮಾಡುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಭಾನುವಾರ ಮೇ 10ರಂದು ಮಲೆ ಮಹದೇಶ್ವರ ಬೆಟ್ಟದಿಂದ ನಾಗಮಲೆಗೆ ತೆರಳುತ್ತಿದ್ದ ವೇಳೆ ಚಿರತೆ ದಾಳಿ ನಡೆಸಿ ಬಾಲಕನನ್ನು ಎಳೆದೊಯ್ದು ಕೊಂದಿತ್ತು. ಈ ದುರ್ಘಟನೆ ಹನೂರು ತಾಲೂಕಿನ ಇಂಡಿಗನತ್ತ ಗ್ರಾಮದ ಸಮೀಪ ಸಂಭವಿಸಿತ್ತು.

ಮೃತ ಬಾಲಕನನ್ನು ಬೆಂಗಳೂರಿನ ಕಾಮಾಕ್ಷಿಪಾಳ್ಯದ ವೃಷಭಾವತಿ ನಗರ ನಿವಾಸಿ ಹರ್ಷಿತ್ ಗೌಡ ಎಂದು ಗುರುತಿಸಲಾಗಿದೆ. ಆತ ತನ್ನ ಕುಟುಂಬದ 10 ಮಂದಿ ಸದಸ್ಯರೊಂದಿಗೆ ನಾಗಮಲೆಗೆ ಪಾದಯಾತ್ರೆ ಕೈಗೊಂಡಿದ್ದ ವೇಳೆ ಚಿರತೆ ದಾಳಿ ನಡೆಸಿದೆ. ಪೋಷಕರ ಕಣ್ಣೆದುರೇ ಬಾಲಕನನ್ನು ಚಿರತೆ ಕಾಡಿನೊಳಗೆ ಎಳೆದೊಯ್ದಿದ್ದು, ಬಳಿಕ ಅರಣ್ಯಾಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ಬಾಲಕನ ಮೃತದೇಹ ಪತ್ತೆಯಾಗಿದೆ.

ಈ ನಡುವೆ, ಬಾಲಕನ ಮೇಲೆ ದಾಳಿ ನಡೆಸಿದ ಚಿರತೆಯ ಚಲನವಲನ ಥರ್ಮಲ್ ಡ್ರೋನ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಅದನ್ನು ಸೆರೆಹಿಡಿಯಲು ಅರಣ್ಯ ಇಲಾಖೆ ನಾಲ್ಕು ಬೋನುಗಳನ್ನು ಅಳವಡಿಸಿದೆ. ಸ್ಥಳದಲ್ಲಿ 30ಕ್ಕೂ ಹೆಚ್ಚು ಅರಣ್ಯ ಸಿಬ್ಬಂದಿ ಬೀಡುಬಿಟ್ಟಿದ್ದು, ಡ್ರೋನ್ ತಂಡ ರಾತ್ರಿಯಿಡೀ ಚಿರತೆಯ ಮೇಲೆ ನಿಗಾ ವಹಿಸಿದೆ. ಸುರಕ್ಷತಾ ದೃಷ್ಟಿಯಿಂದ ನಾಗಮಲೆಗೆ ಭಕ್ತರ ಪ್ರವೇಶವನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ.

ಇದೇ ವೇಳೆ, ಘಟನೆಗೆ ಅರಣ್ಯ ಇಲಾಖೆಯ ನಿರ್ಲಕ್ಷ್ಯವೇ ಕಾರಣ ಎಂದು ಬಾಲಕನ ಕುಟುಂಬಸ್ಥರು ಆರೋಪಿಸಿದ್ದಾರೆ. ಕಾಡಿನೊಳಗೆ ತೆರಳಲು ಹೆಚ್ಚುವರಿ ಹಣ ವಸೂಲಿ ಮಾಡಿದ್ದರೂ, ದಾಳಿ ನಡೆದ ಬಳಿಕ ಅರ್ಧ ಗಂಟೆಯಾದರೂ ಯಾವುದೇ ಅರಣ್ಯಾಧಿಕಾರಿ ಸ್ಥಳಕ್ಕೆ ಬಂದಿರಲಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ನಮ್ಮ ಮಗುವಿಗೆ ಆದಂತ ದುರ್ಘಟನೆ ಮತ್ತಾರಿಗೂ ಆಗಬಾರದು” ಎಂದು ಕುಟುಂಬಸ್ಥರು ನೋವು ವ್ಯಕ್ತಪಡಿಸಿದ್ದಾರೆ.

ಪ್ರೀತಿಗೆ ಕುಟುಂಬದ ವಿರೋಧ; ಧಾರವಾಡದಲ್ಲಿ ಯುವತಿ ವಿಷ ಸೇವಿಸಿ ಆತ್ಮಹತ್ಯೆ

ಧಾರವಾಡ: ಜಿಲ್ಲೆಯಲ್ಲಿ ಪ್ರೀತಿಸಿದ ಯುವಕನೊಂದಿಗೆ ಮದುವೆಯಾಗಲು ಕುಟುಂಬಸ್ಥರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಮನನೊಂದು ಯುವತಿಯೊಬ್ಬಳು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ನಡೆದಿದೆ.

ಜಿಲ್ಲೆಯ ಕುಂದಗೋಳ ತಾಲೂಕಿನ ಯರಗುಪ್ಪಿ ಗ್ರಾಮದಲ್ಲಿ ಈ ಘಟನೆ ಸಂಭವಿಸಿದ್ದು, ಶ್ವೇತಾ ಕೊಟೆನ್ನವರ್ (18) ಮೃತಪಟ್ಟ ಯುವತಿ ಎಂದು ಗುರುತಿಸಲಾಗಿದೆ.

ಮೃತ ಶ್ವೇತಾ ಹಲವು ವರ್ಷಗಳಿಂದ ಹುಬ್ಬಳ್ಳಿ ತಾಲೂಕಿನ ಕೆರೆಸೂರ ಗ್ರಾಮದ ನಾಗರಾಜ್ ಎಂಬ ಯುವಕನನ್ನು ಪ್ರೀತಿಸುತ್ತಿದ್ದಳು ಎನ್ನಲಾಗಿದೆ. ಈ ವಿಷಯವನ್ನು ಕುಟುಂಬಸ್ಥರಿಗೆ ತಿಳಿಸಿ, ನಾಗರಾಜ್ ಅವರನ್ನು ಮದುವೆಯಾಗುವ ಇಚ್ಛೆಯನ್ನು ವ್ಯಕ್ತಪಡಿಸಿದ್ದಳು.

ಆದರೆ, ಈ ಮದುವೆಗೆ ಕುಟುಂಬಸ್ಥರು ವಿರೋಧ ವ್ಯಕ್ತಪಡಿಸಿದ್ದರಿಂದ ಶ್ವೇತಾ ತೀವ್ರವಾಗಿ ಮನನೊಂದಿದ್ದಳು. ಇದೇ ಬೇಸರದಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ತಿಳಿದುಬಂದಿದೆ.

ಘಟನೆ ಸಂಬಂಧ ಕುಂದಗೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಸೋಮನಾಥ ದೇಗುಲ ಅಮೃತ ಮಹೋತ್ಸವದಲ್ಲಿ PM ಮೋದಿ ಭಾಗಿ; ಕುಂಭಾಭಿಷೇಕ ನೆರವೇರಿಸಿ ವಿಶೇಷ ಪೂಜೆ

ಗಾಂಧೀನಗರ: ಗುಜರಾತಿನ ಗಾಂಧೀನಗರದಲ್ಲಿ ಸೋಮನಾಥ ದೇವಾಲಯದ 75ನೇ ವರ್ಷದ ಅಮೃತ ಮಹೋತ್ಸವ ಭವ್ಯವಾಗಿ ಆಚರಿಸಲಾಯಿತು. ಈ ವಿಶೇಷ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿ ಧಾರ್ಮಿಕ ವಿಧಿವಿಧಾನಗಳಲ್ಲಿ ಪಾಲ್ಗೊಂಡು ಕುಂಭಾಭಿಷೇಕ ನೆರವೇರಿಸಿದರು.

ಭಾರತದ 12 ಪವಿತ್ರ ಜ್ಯೋತಿರ್ಲಿಂಗಗಳಲ್ಲಿ ಒಂದಾದ ಸೋಮನಾಥ ದೇವಾಲಯವು ದೇಶದ ಆಧ್ಯಾತ್ಮಿಕ ಪರಂಪರೆಯ ಮಹತ್ವದ ಸಂಕೇತವಾಗಿದೆ. ಪುನರ್ನಿರ್ಮಾಣಗೊಂಡ ಈ ಐತಿಹಾಸಿಕ ದೇವಾಲಯ 75 ವರ್ಷಗಳನ್ನು ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಅಮೃತ ಮಹೋತ್ಸವವನ್ನು ವಿಶೇಷವಾಗಿ ಆಯೋಜಿಸಲಾಗಿತ್ತು.

ಕಾರ್ಯಕ್ರಮದ ಅಂಗವಾಗಿ ಪ್ರಧಾನಿ ಮೋದಿ, ಭಾರತದ 11 ಪವಿತ್ರ ಯಾತ್ರಾ ಕ್ಷೇತ್ರಗಳಿಂದ ಸಂಗ್ರಹಿಸಲಾದ ಪವಿತ್ರ ನೀರಿನಿಂದ ದೇವಾಲಯಕ್ಕೆ ಕುಂಭಾಭಿಷೇಕ ನೆರವೇರಿಸಿದರು. ಬಳಿಕ ವಿಶೇಷ ಪೂಜೆಯಲ್ಲಿ ಭಾಗವಹಿಸಿ ಸೋಮನಾಥನಿಗೆ ಪ್ರಾರ್ಥನೆ ಸಲ್ಲಿಸಿದರು.

ಅದ್ಧೂರಿ ಆಚರಣೆಯ ಭಾಗವಾಗಿ ಭಾರತೀಯ ವಾಯುಪಡೆಯ ಪ್ರಸಿದ್ಧ ಸೂರ್ಯಕಿರಣ್ ಏರೋಬ್ಯಾಟಿಕ್ ತಂಡ ನೀಡಿದ ಮನಮೋಹಕ ವೈಮಾನಿಕ ಪ್ರದರ್ಶನವನ್ನು ಪ್ರಧಾನಿ ಮೋದಿ ವೀಕ್ಷಿಸಿದರು. ಈ ಪ್ರದರ್ಶನ ಸಮಾರಂಭದ ಪ್ರಮುಖ ಆಕರ್ಷಣೆಯಾಗಿತ್ತು.

ನಂತರ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್, ಉಪಮುಖ್ಯಮಂತ್ರಿ ಹರ್ಷ ಸಾಂಘವಿ ಸೇರಿದಂತೆ ಗಣ್ಯರು ಪ್ರಧಾನಿ ಮೋದಿ ಅವರನ್ನು ಸನ್ಮಾನಿಸಿದರು. ಇದೇ ವೇಳೆ ಸೋಮನಾಥ ದೇವಾಲಯದ ಶ್ರೀಮಂತ ಇತಿಹಾಸ ಮತ್ತು ಪರಂಪರೆಯನ್ನು ಸ್ಮರಿಸುವ ಸ್ಮರಣಾರ್ಥ ಅಂಚೆ ಚೀಟಿ ಹಾಗೂ ವಿಶೇಷ ನಾಣ್ಯವನ್ನು ಮೋದಿ ಬಿಡುಗಡೆ ಮಾಡಿದರು.

ಸೋಮನಾಥ ದೇಗುಲ ತಲುಪುವ ಮುನ್ನ ಪ್ರಧಾನಿ ಮೋದಿ ರೋಡ್ ಶೋ ನಡೆಸಿ ಜನರ ಅಭಿನಂದನೆ ಸ್ವೀಕರಿಸಿದರು. ದೇವಾಲಯದ ಕಾರ್ಯಕ್ರಮದ ಬಳಿಕ ಸಂಜೆ ವಡೋದರಾಕ್ಕೆ ಭೇಟಿ ನೀಡಲಿರುವ ಪ್ರಧಾನಿ, ಅಲ್ಲಿನ ಸರ್ದಾರ್ ಧಾಮ್ ಹಾಸ್ಟೆಲ್ ಉದ್ಘಾಟಿಸಲಿದ್ದಾರೆ.

2.5 ಕೋಟಿ ರೂ. ಮೌಲ್ಯದ ಆಭರಣದಲ್ಲಿ ಇರೋದು ಕೇವಲ 28 ಗ್ರಾಂ ಚಿನ್ನಾ! ಅಂಜನಾದ್ರಿ ದೇಣಿಗೆಯಲ್ಲಿ ಮಹಾ ಮೋಸ

0

ಕೊಪ್ಪಳ: ಅಂಜನಾದ್ರಿ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ 2.50 ಕೋಟಿ ಮೌಲ್ಯದ ಚಿನ್ನದ ಆಭರಣ ದೇಣಿಗೆ ನೀಡಿದ್ದಾಗಿ ಹೇಳಿದ್ದ ಉದ್ಯಮಿ ಮಹೇಶ ರೆಡ್ಡಿಗೆ ಜಿಲ್ಲಾಡಳಿತ ನೋಟಿಸ್ ಜಾರಿ ಮಾಡಿದೆ. ತಪಾಸಣೆಯಲ್ಲಿ ಆಭರಣಗಳು ಸಂಪೂರ್ಣ ಚಿನ್ನದವಲ್ಲ ಎಂಬುದು ಬೆಳಕಿಗೆ ಬಂದಿದೆ.

ಹೈದರಾಬಾದ್ ಮೂಲದ ಎಎಂಆರ್ ಗ್ರೂಪ್ ಅಧ್ಯಕ್ಷ ಮಹೇಶ ರೆಡ್ಡಿ, ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಸಮ್ಮುಖದಲ್ಲಿ ಪ್ರಭಾವಳಿ, ಕಿರೀಟ ಮತ್ತು ಗದೆಯನ್ನು ದೇಣಿಗೆಯಾಗಿ ನೀಡಿದ್ದರು. ಅಂಜನಾದ್ರಿಯನ್ನು ತಿರುಪತಿ ಮಾದರಿಯಲ್ಲಿ ಅಭಿವೃದ್ಧಿಪಡಿಸುವ ಉದ್ದೇಶದಿಂದ ಈ ದೇಣಿಗೆ ನೀಡಲಾಗಿದೆ ಎಂದು ಹೇಳಲಾಗಿತ್ತು.

ಆದರೆ ಜಿಲ್ಲಾಡಳಿತ ಪರಿಶೀಲನೆ ವೇಳೆ ಆಭರಣಗಳಲ್ಲಿ ಕೇವಲ 28 ಗ್ರಾಂ ಬಂಗಾರ ಮಾತ್ರ ಇರುವುದಾಗಿ ಪತ್ತೆಯಾಗಿದೆ. ಉಳಿದ ಭಾಗ ತಾಮ್ರದ ಮೇಲೆ ಗೋಲ್ಡ್ ಪ್ಲೇಟಿಂಗ್ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆಭರಣಗಳ ನಿಖರ ಮೌಲ್ಯ ಮತ್ತು ಚಿನ್ನದ ಪ್ರಮಾಣದ ಬಗ್ಗೆ ಅಧಿಕೃತ ದಾಖಲೆಗಳಿಲ್ಲದ ಕಾರಣ ಖಜಾನೆಗೆ ಸೇರಿಸಿಕೊಳ್ಳುವುದನ್ನು ಜಿಲ್ಲಾಡಳಿತ ತಡೆಹಿಡಿದಿದೆ. ಸಂಬಂಧಪಟ್ಟ ಬಿಲ್ ಮತ್ತು ದಾಖಲೆಗಳನ್ನು ಸಲ್ಲಿಸುವಂತೆ ಮಹೇಶ ರೆಡ್ಡಿಗೆ ಸೂಚನೆ ನೀಡಲಾಗಿದೆ.

ಈ ಬೆಳವಣಿಗೆ ಭಕ್ತರಲ್ಲಿ ಆಕ್ರೋಶ ಮತ್ತು ಅನುಮಾನಕ್ಕೆ ಕಾರಣವಾಗಿದ್ದು, ದೇವಸ್ಥಾನ ದೇಣಿಗೆಗಳ ಪಾರದರ್ಶಕತೆ ಬಗ್ಗೆ ಮತ್ತೆ ಪ್ರಶ್ನೆಗಳು ಎದ್ದಿವೆ.

error: Content is protected !!