ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದಲ್ಲಿ ಮನ ಕಲುಕುವ ಘಟನೆ ಬೆಳಕಿಗೆ ಬಂದಿದೆ. 77 ವರ್ಷದ ಸಿರಿಲ್ ಮೋನಿಸ್ ಅನಾರೋಗ್ಯದಿಂದ ಮಲಗಿದ್ದಲ್ಲೇ ಮೃತಪಟ್ಟಿದ್ದಾರೆ. ಆದರೆ, ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ಅವರ ಪತ್ನಿಗೆ ಪತಿಯ ಸಾವಿನ ವಿಷಯವೇ ತಿಳಿದಿರಲಿಲ್ಲ. ಪರಿಣಾಮವಾಗಿ, ಅವರು ಸುಮಾರು 10 ದಿನಗಳ ಕಾಲ ಪತಿಯ ಕೊಳೆತ ಶವದ ಪಕ್ಕದಲ್ಲೇ ಇದ್ದರು.
ಮನೆಯಿಂದ ತೀವ್ರ ದುರ್ವಾಸನೆ ಬರುತ್ತಿರುವುದನ್ನು ಗಮನಿಸಿದ ಅಕ್ಕಪಕ್ಕದವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಶವವನ್ನು ತೆಗೆದುಕೊಳ್ಳಲು ಮುಂದಾದಾಗ, ಪತ್ನಿ “ನನ್ನ ಗಂಡ ನನಗೆ ಬೇಕು, ಯಾರೂ ಮುಟ್ಟಬೇಡಿ” ಎಂದು ಹೇಳುತ್ತಾ ತಡೆಯಲು ಪ್ರಯತ್ನಿಸಿದರು.
ಮೃತರ ಮಗ ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದು, ಮಗಳು ದುಬೈನಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಮಗ ಪ್ರತಿದಿನ ಕರೆ ಮಾಡಿದಾಗಲೂ ತಾಯಿ “ಅಪ್ಪ ಚೆನ್ನಾಗಿದ್ದಾರೆ” ಎಂದು ಹೇಳುತ್ತಿದ್ದಳು. ಪತಿಯ ಸಾವಿನ ಸುಮಾರು 10 ದಿನಗಳ ಬಳಿಕ ಮಗ ಮನೆಗೆ ಬಂದರೂ, ತಂದೆಯ ಮುಖವನ್ನು ನೋಡುವ ಅವಕಾಶ ಅವನಿಗೆ ಸಿಗಲಿಲ್ಲ. ಇನ್ನು ಮಗಳು ಸಹ ಅಂತ್ಯಕ್ರಿಯೆಗೆ ಆಗಮಿಸಿಲ್ಲ ಎಂದು ತಿಳಿದುಬಂದಿದೆ.
ಶವ ಸಂಪೂರ್ಣ ಕೊಳೆತು ಹೋಗಿದ್ದರಿಂದ ಸ್ಥಳೀಯರು ಅದನ್ನು ಮುಟ್ಟಲು ಹಿಂಜರಿದರು. ಈ ಸಂದರ್ಭದಲ್ಲಿ ಸಮಾಜ ಸೇವಕ ಆರೀಫ್ ಅವರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿ, ಅಂತ್ಯಸಂಸ್ಕಾರಕ್ಕೂ ನೆರವಾದರು. ಬಳಿಕ ಬಣಕಲ್ ಕ್ರೈಸ್ತ ಸ್ಮಶಾನದಲ್ಲಿ ಸಂಜೆ ವೇಳೆಗೆ ಅಂತ್ಯಸಂಸ್ಕಾರ ನೆರವೇರಿತು. ಈ ಘಟನೆ ಮೂಡಿಗೆರೆ ತಾಲೂಕಿನ ಬಣಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

