ಗದಗ: ಮಧ್ಯಪ್ರಾಚ್ಯ ದೇಶಗಳ ಯುದ್ಧದಿಂದಾಗಿ ಭಾರತದಲ್ಲಿ ಅನಿಲ ಬಿಕ್ಕಟ್ಟು ಹೆಚ್ಚಾಗಿದ್ದು, ಚಾಲಕರು, ಉದ್ಯಮಿಗಳ ಬದುಕು ಮೂರಾಬಟ್ಟೆಯಾಗಿದೆ.
ಗ್ಯಾಸ್ ಕೊರತೆ ಮಧ್ಯೆಯೇ ದರ ಏರಿಕೆಯಿಂದ ಚಾಲಕರು ಕಂಗಾಲಾಗಿದ್ದಾರೆ. ಅದರಲ್ಲೂ ಗದಗ ನಗರದಲ್ಲಿನ ಆಟೋ ಚಾಲಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಗ್ಯಾಸ್ ದರ ಮತ್ತು ಸರಬರಾಜಿನ ಸಮಸ್ಯೆಯಿಂದ ದಿನನಿತ್ಯದ ಆದಾಯ ಕುಸಿದಿದ್ದು, ಜೀವನ ನಿರ್ವಹಣೆ ಕಷ್ಟಕರವಾಗಿದೆ ಎಂದು ಚಾಲಕರು ಅಳಲು ವ್ಯಕ್ತಪಡಿಸಿದ್ದಾರೆ.
ಆಟೋ ಚಾಲಕರಿಗೆ ಅಗತ್ಯ ಪ್ರಮಾಣದಲ್ಲಿ ಎಲ್ಪಿಜಿ ಗ್ಯಾಸ್ ಲಭ್ಯವಾಗುತ್ತಿಲ್ಲ ಎಂಬುದು ಮತ್ತೊಂದು ಪ್ರಮುಖ ಸಮಸ್ಯೆಯಾಗಿದ್ದು, ಇದರಿಂದ ಉದ್ಯೋಗ ನಿರ್ವಹಣೆಯೇ ಅಸಾಧ್ಯವಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ. ಗ್ಯಾಸ್ ದರ ಏರಿಕೆಯಿಂದ ದುಡಿಮೆ ಕುಂಠಿತಗೊಂಡಿದ್ದು, ಮನೆ ಬಾಡಿಗೆ, ಮಕ್ಕಳ ಶಿಕ್ಷಣ ಸೇರಿದಂತೆ ಕುಟುಂಬದ ಅಗತ್ಯಗಳನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ.
ರಾಜ್ಯ ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿರುವ ಹಿನ್ನೆಲೆಯಲ್ಲಿ, ಅದೇ ಮಾದರಿಯಲ್ಲಿ ಬಿಪಿಎಲ್ ಕಾರ್ಡ್ ಹೊಂದಿರುವ ಆಟೋ ಚಾಲಕರಿಗೆ ವಿಶೇಷ ಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಲಾಗಿದೆ. ಪ್ರತಿ ದಿನ ಎರಡು ಲೀಟರ್ ಪೆಟ್ರೋಲ್ ಹಾಗೂ ಎರಡು ಕೆಜಿ ಎಲ್ಪಿಜಿ ಗ್ಯಾಸ್ ಉಚಿತವಾಗಿ ನೀಡುವಂತೆ ಅವರು ವಿನಂತಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಆಟೋ ಚಾಲಕರ ಸಂಘದ ಮುಖಂಡ ರಾಜು ಖಾನಪ್ಪನವರ, “ಗ್ಯಾಸ್ ದರ ಏರಿಕೆಯಿಂದ ನಮ್ಮ ಆದಾಯ ಸಂಪೂರ್ಣ ಕುಸಿದಿದೆ. ಸರ್ಕಾರ ತಕ್ಷಣವೇ ಕ್ರಮ ಕೈಗೊಂಡು ನೆರವು ನೀಡಬೇಕು” ಎಂದು ಹೇಳಿದ್ದಾರೆ.
ಆಟೋ ಸೇನೆಯ ನಗರಾಧ್ಯಕ್ಷ ಮೌನೇಶ್ ದಾಸರ ಮಾತನಾಡಿ, “ಆಟೋ ಚಾಲಕರ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸದಿದ್ದರೆ ಹೋರಾಟ ಅನಿವಾರ್ಯವಾಗುತ್ತದೆ” ಎಂದು ಎಚ್ಚರಿಸಿದರು.
ಆಟೋ ಚಾಲಕ ಶ್ರೀನಿವಾಸ್ ಕೂಡಾ, “ದಿನದ ಆದಾಯದಿಂದ ಕುಟುಂಬ ನಿರ್ವಹಣೆ ಕಷ್ಟವಾಗಿದ್ದು, ಸರ್ಕಾರದಿಂದ ಸಹಾಯ ಅಗತ್ಯವಾಗಿದೆ” ಎಂದು ಅಭಿಪ್ರಾಯಪಟ್ಟರು.
ಸರ್ಕಾರ ತಕ್ಷಣವೇ ಎಲ್ಪಿಜಿ ದರ ಇಳಿಕೆ ಹಾಗೂ ಆಟೋ ಚಾಲಕರಿಗೆ ನೆರವು ಯೋಜನೆಗಳನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿ, ಇಲ್ಲವಾದರೆ ಮುಂದಿನ ದಿನಗಳಲ್ಲಿ ತೀವ್ರ ಹೋರಾಟ ಕೈಗೊಳ್ಳುವುದಾಗಿ ಚಾಲಕರು ಎಚ್ಚರಿಕೆ ನೀಡಿದ್ದಾರೆ.

