Home Blog

ಮಣ್ಣು-ನೀರು ಸಂರಕ್ಷಣೆಗೆ ರೈತರು ಮುಂದಾಗಬೇಕು: ಸ್ಪೂರ್ತಿ ಜಿ.ಎಸ್

0

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ರೈತರು ತಮ್ಮ ಜಮೀನುಗಳಲ್ಲಿ ಮಣ್ಣು ಮತ್ತು ನೀರಿನ ಸಂರಕ್ಷಣೆಗೆ ಆದ್ಯತೆ ನೀಡಿ, ಭವಿಷ್ಯದಲ್ಲಿ ಎದುರಾಗಬಹುದಾದ ಬರ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಸಜ್ಜಾಗಬೇಕು ಎಂದು ಉಪ ಕೃಷಿ ನಿರ್ದೇಶಕಿ ಸ್ಪೂರ್ತಿ ಜಿ.ಎಸ್. ಹೇಳಿದರು.

ತಾಲೂಕಿನ ಬೆಳ್ಳಟ್ಟಿ ಗ್ರಾಮದ ಎಪಿಎಂಸಿ ಸಭಾಭವನದಲ್ಲಿ ಕೃಷಿ ಇಲಾಖೆ ವತಿಯಿಂದ ಖೇತ್ ಬಚಾವೋ ಅಭಿಯಾನ-ಆತ್ಮ ಯೋಜನೆಯಡಿ ಹಮ್ಮಿಕೊಂಡಿದ್ದ ಕಿಸಾನ ಗೋಷ್ಠಿ ಹಾಗೂ ಮರುಭೂಮೀಕರಣ ಮತ್ತು ಬರ ತಡೆಗಟ್ಟುವಿಕೆ ವಿಶ್ವ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಂಟಿ ಕೃಷಿ ನಿರ್ದೇಶಕಿ ಚೇತನಾ ಪಾಟೀಲ, ರೈತರು ಸಾಧ್ಯವಾದಷ್ಟು ಸಾವಯವ ಕೃಷಿಯತ್ತ ಒಲವು ತೋರಬೇಕು. ರಾಸಾಯನಿಕ ಗೊಬ್ಬರಗಳ ಅತಿಯಾದ ಬಳಕೆಯಿಂದ ಭೂಮಿಯ ಫಲವತ್ತತೆ ಕುಂಠಿತವಾಗುತ್ತಿದ್ದು, ಮುಂದಿನ ಪೀಳಿಗೆಗೆ ಫಲವತ್ತಾದ ಭೂಮಿಯನ್ನು ಉಳಿಸಿಕೊಡುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಹೇಳಿದರು.

ಎಲ್ಲ ರೈತರು ಕಡ್ಡಾಯವಾಗಿ ಎಫ್‌ಐಡಿ (FID) ಮಾಡಿಸಿಕೊಳ್ಳಬೇಕು. ಅಗತ್ಯಕ್ಕೆ ಅನುಗುಣವಾಗಿ ಯೂರಿಯಾ ಸೇರಿದಂತೆ ರಸಗೊಬ್ಬರಗಳನ್ನು ಎಫ್‌ಐಡಿ ಮೂಲಕವೇ ಪಡೆಯುವ ವ್ಯವಸ್ಥೆಗೆ ಸಹಕರಿಸಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ 2025-26ನೇ ಸಾಲಿನ ಆತ್ಮ ಯೋಜನೆಯಡಿ ತಾಲೂಕು ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿ ಪಡೆದ ರೈತರನ್ನು ಸನ್ಮಾನಿಸಲಾಯಿತು.

ಮೋಹನ ಗುತ್ತೆಮ್ಮನವರ, ಎನ್.ಎಚ್. ಬಂಡಿ, ಬಸವರಾಜ ನಾವಿ ಮಾತನಾಡಿದರು. ಸಹಾಯಕ ಕೃಷಿ ನಿರ್ದೇಶಕ ಶಿವಕುಮಾರ ಕಾಶಪ್ಪನವರ, ಮಹೇಶ ಬಡ್ನಿ, ಚಂದ್ರಶೇಖರಗೌಡ ಎಸ್.ಎನ್., ಮಂಜುನಾಥ ಭರಮಗೌಡ್ರ, ಆರ್.ಸಿ. ಚಾಕಲಬ್ಬಿ, ಎಂ.ಎಸ್. ಪೂಜಾರ, ಡಿ.ಕೆ. ಅಚಲಕರ್, ನೀಲನಗೌಡ ಪಾಟೀಲ, ಶ್ರೀನಿವಾಸ ಅಳವಂಡಿ, ಅಶೋಕ ಕಪ್ಲಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

“ಇಂದಿನ ಮಣ್ಣು ಮತ್ತು ನೀರಿನ ಸಂರಕ್ಷಣೆಯೇ ನಾಳಿನ ಕೃಷಿಗೆ ಭದ್ರ ಬುನಾದಿ; ಬರ ಎದುರಿಸಲು ರೈತರು ಈಗಿನಿಂದಲೇ ಸಿದ್ಧರಾಗಬೇಕು.”

ಸ್ಪೂರ್ತಿ ಜಿ.ಎಸ್.
ಉಪ ಕೃಷಿ ನಿರ್ದೇಶಕಿ

ಶಾಂತಿ-ಸೌಹಾರ್ದದಿಂದ ಮೊಹರಂ ಆಚರಿಸಿ: ಪಿಎಸ್‌ಐ ನಾಗರಾಜ ಗಡದ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಹಿಂದೂ-ಮುಸ್ಲಿಂ ಭಾವೈಕ್ಯತೆಯ ಪ್ರತೀಕವಾಗಿರುವ ಲಕ್ಷ್ಮೇಶ್ವರ ಪಟ್ಟಣದಲ್ಲಿ ಮೊಹರಂ ಹಬ್ಬವನ್ನು ಶಾಂತಿ, ಸೌಹಾರ್ದ ಮತ್ತು ಸಹೋದರತೆಯ ಮನೋಭಾವದಿಂದ ಆಚರಿಸಬೇಕು ಎಂದು ಪಿಎಸ್‌ಐ ನಾಗರಾಜ ಗಡದ ಹೇಳಿದರು.

ಪಟ್ಟಣದ ಪೊಲೀಸ್ ಠಾಣೆಯಲ್ಲಿ ಮೊಹರಂ ಹಬ್ಬದ ಪ್ರಯುಕ್ತ ಆಯೋಜಿಸಿದ್ದ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪಟ್ಟಣದಲ್ಲಿ ಹಲವು ದಶಕಗಳಿಂದ ಹಿಂದೂ ಹಾಗೂ ಮುಸ್ಲಿಂ ಸಮುದಾಯದವರು ಸಹೋದರ ಭಾವದಿಂದ ಮೊಹರಂ ಆಚರಿಸುತ್ತಾ ಬಂದಿದ್ದು, ಈ ಬಾರಿಯೂ ಶಾಂತಿಯುತವಾಗಿ ಹಬ್ಬ ಆಚರಿಸಬೇಕು. ಹಬ್ಬದ ಸಂದರ್ಭದಲ್ಲಿ ಅಗತ್ಯ ಪೊಲೀಸ್ ಭದ್ರತೆ ಒದಗಿಸಲಾಗುವುದು. ಸಮಾಜದಲ್ಲಿ ನೆಮ್ಮದಿ ಮತ್ತು ಸೌಹಾರ್ದ ವಾತಾವರಣ ನಿರ್ಮಾಣವಾಗಲು ಎಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿದರು.

ಹಬ್ಬದ ಹೆಸರಿನಲ್ಲಿ ಶಾಂತಿಗೆ ಭಂಗ ತರುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ ಅವರು, ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ಇ-ಚಲನ್ ದಂಡ ಪಾವತಿಗೆ ರಾಜ್ಯ ಸರ್ಕಾರ ಘೋಷಿಸಿರುವ ಶೇ.50 ರಿಯಾಯಿತಿಯ ಪ್ರಯೋಜನ ಪಡೆದುಕೊಳ್ಳುವಂತೆ ಸಾರ್ವಜನಿಕರಿಗೆ ಸಲಹೆ ನೀಡಿದರು. ಜೂನ್ 21ರಿಂದ ಜುಲೈ 10ರವರೆಗೆ ಈ ಸೌಲಭ್ಯ ಲಭ್ಯವಿರಲಿದೆ ಎಂದರು.

ಶಿಗ್ಲಿ ಕ್ರಾಸ್‌ನಲ್ಲಿ ಹೆಚ್ಚುತ್ತಿರುವ ವಾಹನ ದಟ್ಟಣೆಯನ್ನು ನಿಯಂತ್ರಿಸಲು ಟ್ರಾಫಿಕ್ ಸಿಗ್ನಲ್ ಅಳವಡಿಸುವ ಕುರಿತು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಸಾರ್ವಜನಿಕರ ಪರವಾಗಿ ಪೂರ್ಣಾಜಿ ಕರಾಟೆ, ಗಂಗಾಧರ ಮೆಣಸಿನಕಾಯಿ, ಎಂ.ಐ. ಮುಳಗುಂದ, ಅಮರೀಶ ತೆಂಬದಮನಿ ಹಾಗೂ ಬಸವರಾಜ ಕಲ್ಲೂರ ಮಾತನಾಡಿದರು.

ಸಭೆಯಲ್ಲಿ ಸುಲೇಮಾನಸಾಬ್ ಕಣಕೆ, ಅಬ್ದುಲಸಾಬ್ ಬೆಟಗೇರಿ, ಎಂ.ಎಚ್. ಶಮಲೆವಾಲೆ, ಭೀಮಣ್ಣ ಯಂಗಾಡಿ, ಮರಿಯಪ್ಪ ಭಜಂತ್ರಿ, ಅಕ್ಬರಸಾಬ್ ಸುಂಡಕೆ, ಮಲ್ಲಿಕಾರ್ಜುನ ವಾರದ, ಡಿ.ಬಿ. ಫಕ್ಕೀರಪ್ಪ, ಮುತ್ತಣ್ಣ ಪೂಜಾರ, ಜಾಫರ್ ಲಕ್ಷ್ಮೇಶ್ವರ, ಖಾಜಾಪೀರ ಜಮಖಂಡಿ, ನೂರಅಹ್ಮದ ಶಿದ್ದಿ, ಮಂಜಪ್ಪ ವಡ್ಡರ, ದಾದಾಪೀರ ತಂಬಾಕ, ಇರ್ಫಾನ ಮಿರ್ಜಾ, ಮುತ್ತು ನೀರಲಗಿ ಸೇರಿದಂತೆ ಹಿಂದೂ-ಮುಸ್ಲಿಂ ಸಮುದಾಯದ ಮುಖಂಡರು ಉಪಸ್ಥಿತರಿದ್ದರು. ಪ್ರಕಾಶ ಮ್ಯಾಗೇರಿ ನಿರೂಪಿಸಿದರು.

“ಹಬ್ಬಗಳು ಜನರನ್ನು ಒಗ್ಗೂಡಿಸುವ ಸೇತುವೆಗಳಾಗಬೇಕು, ಶಾಂತಿ ಮತ್ತು ಸೌಹಾರ್ದಕ್ಕೆ ಧಕ್ಕೆ ತರುವ ಯಾವುದೇ ಕೃತ್ಯವನ್ನು ಸಹಿಸುವುದಿಲ್ಲ.”

– ನಾಗರಾಜ ಗಡದ, ಪಿಎಸ್‌ಐ, ಲಕ್ಷ್ಮೇಶ್ವರ

ಎಚ್.ಕೆ. ಪಾಟೀಲರಿಗೆ ಡಿಸಿಎಂ ಹುದ್ದೆ, ಜಿ.ಎಸ್. ಪಾಟೀಲರಿಗೆ ಸಚಿವ ಸ್ಥಾನಕ್ಕೆ ಆಗ್ರಹ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಮಾಜಿ ಸಚಿವ ಎಚ್.ಕೆ. ಪಾಟೀಲ ಅವರನ್ನು ಉಪಮುಖ್ಯಮಂತ್ರಿಯನ್ನಾಗಿ ಹಾಗೂ ರೋಣ ಶಾಸಕ, ಗದಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಿ.ಎಸ್. ಪಾಟೀಲ ಅವರನ್ನು ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕು ಎಂದು ಲಕ್ಷ್ಮೇಶ್ವರ ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಬಸವರಾಜ ಹೊಳಲಾಪೂರ ಮುಖ್ಯಮಂತ್ರಿ ಅವರಿಗೆ ಮನವಿ ಮಾಡಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಗದಗ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಬೆಳವಣಿಗೆಗೆ ಎಚ್.ಕೆ. ಪಾಟೀಲ ಹಾಗೂ ಜಿ.ಎಸ್. ಪಾಟೀಲ ಇಬ್ಬರೂ ಮಹತ್ವದ ಕೊಡುಗೆ ನೀಡಿದ್ದಾರೆ. ಇವರಿಗೆ ಸಚಿವ ಸಂಪುಟದಲ್ಲಿ ಸೂಕ್ತ ಸ್ಥಾನಮಾನ ನೀಡುವುದರಿಂದ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಮತ್ತಷ್ಟು ಬಲಗೊಳ್ಳಲಿದ್ದು, ಸಂಘಟನೆಯ ಶಕ್ತಿಯೂ ವೃದ್ಧಿಯಾಗಲಿದೆ ಎಂದು ತಿಳಿಸಿದ್ದಾರೆ.

ಎಚ್.ಕೆ. ಪಾಟೀಲ ಅವರು ಮುತ್ಸದ್ದಿ, ಅಧ್ಯಯನಶೀಲ ಹಾಗೂ ಕಳಂಕರಹಿತ ರಾಜಕಾರಣಿಯಾಗಿ ರಾಜ್ಯದಲ್ಲಿ ವಿಶಿಷ್ಟ ಹೆಸರನ್ನು ಗಳಿಸಿದ್ದಾರೆ.

ಮತ್ತೊಂದೆಡೆ, ಜಿ.ಎಸ್. ಪಾಟೀಲ ಅವರು ಜನಸೇವೆ ಹಾಗೂ ಪಕ್ಷ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ಗದಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಪಕ್ಷವನ್ನು ಬಲಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಹೇಳಿದ್ದಾರೆ.

ರಾಜ್ಯದ ಎರಡನೇ ಹಂತದ ಸಚಿವ ಸಂಪುಟ ವಿಸ್ತರಣೆಯಲ್ಲಿ ಈ ಇಬ್ಬರು ನಾಯಕರಿಗೂ ಅವಕಾಶ ದೊರೆಯುವ ವಿಶ್ವಾಸ ಕಾರ್ಯಕರ್ತರಲ್ಲಿ ಇದೆ.

ವಿಶೇಷವಾಗಿ “ಸಾವಿರ ಕೆರೆಗಳ ಸರದಾರ” ಎಂದು ಹೆಸರಾಗಿರುವ ಜಿ.ಎಸ್. ಪಾಟೀಲ ಅವರಿಗೆ ಸಚಿವ ಸ್ಥಾನ ನೀಡುವ ಮೂಲಕ ಉತ್ತರ ಕರ್ನಾಟಕಕ್ಕೆ ಸಮರ್ಪಕ ಪ್ರಾತಿನಿಧ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿದ್ದಾರೆ.

“ಎಚ್.ಕೆ. ಪಾಟೀಲರ ಅನುಭವ ಮತ್ತು ಜಿ.ಎಸ್. ಪಾಟೀಲರ ಸಂಘಟನಾ ಸಾಮರ್ಥ್ಯವನ್ನು ಸರ್ಕಾರ ಬಳಸಿಕೊಳ್ಳಬೇಕು. ಇಬ್ಬರಿಗೂ ಸಚಿವ ಸಂಪುಟದಲ್ಲಿ ಸ್ಥಾನ ನೀಡಿದರೆ ಕಾಂಗ್ರೆಸ್ ಪಕ್ಷಕ್ಕೆ ಮತ್ತಷ್ಟು ಬಲ ಬರಲಿದೆ.”

– ರಾಹುಲ್ ಬಸವರಾಜ ಹೊಳಲಾಪೂರ, ಅಧ್ಯಕ್ಷರು, ಲಕ್ಷ್ಮೇಶ್ವರ ತಾಲೂಕು ಯುವ ಕಾಂಗ್ರೆಸ್

ಮತ್ತೊಮ್ಮೆ ಮಿಂಚಿದ ಕ್ರಿಯೇಟಿವ್ ಅಕಾಡೆಮಿ

0

ವಿಜಯಸಾಕ್ಷಿ ಸುದ್ದಿ, ಧಾರವಾಡ: ನವೋದಯ ಪ್ರವೇಶ ಪರೀಕ್ಷೆ ತರಬೇತಿಯಲ್ಲಿ ರಾಜ್ಯದ ಗಮನ ಸೆಳೆದಿರುವ ಧಾರವಾಡದ ಕ್ರಿಯೇಟಿವ್ ಅಕಾಡೆಮಿ, 2025-26ನೇ ಸಾಲಿನ ನವೋದಯ ಪ್ರವೇಶ ಪರೀಕ್ಷೆಯಲ್ಲೂ ಗಮನಾರ್ಹ ಸಾಧನೆ ದಾಖಲಿಸಿದೆ. ಕಳೆದ 17 ವರ್ಷಗಳಿಂದ ನಿರಂತರವಾಗಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ತರಬೇತಿ ನೀಡುತ್ತಾ ಅನೇಕ ವಿದ್ಯಾರ್ಥಿಗಳನ್ನು ನವೋದಯ ಹಾಗೂ ವಿವಿಧ ವಸತಿ ಶಾಲೆಗಳಿಗೆ ಆಯ್ಕೆ ಮಾಡಿಸುತ್ತಿರುವ ಸಂಸ್ಥೆ, ಈ ಬಾರಿಯೂ ತನ್ನ ಯಶಸ್ಸಿನ ಪರಂಪರೆಯನ್ನು ಮುಂದುವರಿಸಿದೆ.

ಇತ್ತೀಚೆಗೆ ಪ್ರಕಟವಾದ ಫಲಿತಾಂಶದಲ್ಲಿ ಕ್ರಿಯೇಟಿವ್ ಅಕಾಡೆಮಿಯ ಮೂವರು ವಿದ್ಯಾರ್ಥಿಗಳು ಉತ್ತಮ ಅಂಕಗಳೊಂದಿಗೆ ನವೋದಯ ಶಾಲೆಗೆ ಆಯ್ಕೆಯಾಗುವ ಮೂಲಕ ಸಂಸ್ಥೆಯ ಕೀರ್ತಿಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ದಿದ್ದಾರೆ.

ವಿದ್ಯಾರ್ಥಿ ಮೇಘರಾಜ ಗಾಳಿ ಶೇ.96.25 ಅಂಕಗಳನ್ನು ಪಡೆದು ಕೊಪ್ಪಳ ಜಿಲ್ಲೆಯಲ್ಲಿ 25ನೇ ರ‍್ಯಾಂಕ್ ಗಳಿಸಿದ್ದು, ಸಂಸ್ಥೆಯ ಹೆಮ್ಮೆಗೆ ಕಾರಣರಾಗಿದ್ದಾರೆ. ವಿದ್ಯಾರ್ಥಿನಿ ಅಮೃತಾ ಸಜ್ಜನರ ಶೇ.93.75 ಅಂಕಗಳನ್ನು ಪಡೆದು ಗದಗ ಜಿಲ್ಲೆಯಲ್ಲಿ 67ನೇ ರ‍್ಯಾಂಕ್ ಗಳಿಸಿದ್ದರೆ, ಸಂಗಮೇಶ ಚೌದರಿ ಶೇ.91.25 ಅಂಕಗಳೊಂದಿಗೆ ಧಾರವಾಡ ಜಿಲ್ಲೆಯಲ್ಲಿ 117ನೇ ರ‍್ಯಾಂಕ್ ಪಡೆದು ಸಾಧನೆ ಮೆರೆದಿದ್ದಾರೆ.

ಸಂಸ್ಥೆಯ ಈ ಫಲಿತಾಂಶ ವಿದ್ಯಾರ್ಥಿಗಳ ಶ್ರಮ, ಪಾಲಕರ ಸಹಕಾರ ಹಾಗೂ ಶಿಕ್ಷಕರ ಸಮರ್ಪಿತ ಮಾರ್ಗದರ್ಶನದ ಪ್ರತಿಫಲವಾಗಿದೆ ಎಂದು ಶಿಕ್ಷಣ ವಲಯದಲ್ಲಿ ಪ್ರಶಂಸೆ ವ್ಯಕ್ತವಾಗಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೂ ಗುಣಮಟ್ಟದ ಸ್ಪರ್ಧಾತ್ಮಕ ಶಿಕ್ಷಣ ದೊರಕಬೇಕು ಎಂಬ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಕ್ರಿಯೇಟಿವ್ ಅಕಾಡೆಮಿ, ಪ್ರತಿಭಾವಂತ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ.

ಸಾಧನೆಗೈದ ವಿದ್ಯಾರ್ಥಿಗಳು, ಅವರ ಪಾಲಕರು ಹಾಗೂ ತರಬೇತಿ ನೀಡಿದ ಶಿಕ್ಷಕರನ್ನು ಕ್ರಿಯೇಟಿವ್ ಅಕಾಡೆಮಿಯ ಸಂಸ್ಥಾಪಕ ಅಧ್ಯಕ್ಷ ಡಾ. ರಮೇಶ ಉಳ್ಳಾಗಡ್ಡಿ ಅಭಿನಂದಿಸಿ, ಮುಂದಿನ ಶೈಕ್ಷಣಿಕ ಪಯಣಕ್ಕೂ ಶುಭ ಹಾರೈಸಿದ್ದಾರೆ.

“ವಿದ್ಯಾರ್ಥಿಗಳ ಸಾಧನೆಯೇ ನಮ್ಮ ಸಂಸ್ಥೆಯ ನಿಜವಾದ ಸಂಪತ್ತು. ಗುಣಮಟ್ಟದ ತರಬೇತಿ ಮತ್ತು ನಿರಂತರ ಮಾರ್ಗದರ್ಶನದ ಮೂಲಕ ಇನ್ನಷ್ಟು ವಿದ್ಯಾರ್ಥಿಗಳನ್ನು ಉನ್ನತ ಸಾಧನೆಯತ್ತ ಕೊಂಡೊಯ್ಯುವುದು ನಮ್ಮ ಗುರಿಯಾಗಿದೆ.”

– ಡಾ. ರಮೇಶ ಉಳ್ಳಾಗಡ್ಡಿ, ಸಂಸ್ಥಾಪಕ ಅಧ್ಯಕ್ಷರು, ಕ್ರಿಯೇಟಿವ್ ಅಕಾಡೆಮಿ

443 ದಿನಗಳ ನಿರಂತರ ಸೇವೆ: ಆಸ್ಪತ್ರೆ ರೋಗಿಗಳಿಗೆ ಉಚಿತ ಉಪಹಾರ ವಿತರಣೆ

0

ವಿಜಯಸಾಕ್ಷಿ ಸುದ್ದಿ, ಹಗರಿಬೊಮ್ಮನಹಳ್ಳಿ: ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಒಳರೋಗಿಗಳಿಗೆ ಉಚಿತ ಉಪಹಾರ ವಿತರಿಸುವ ಸೇವಾ ಕಾರ್ಯ 443ನೇ ದಿನಕ್ಕೂ ಯಶಸ್ವಿಯಾಗಿ ಮುಂದುವರಿದಿದ್ದು, ಗುರುವಾರ ಒಂದೇ ದಿನದಲ್ಲಿ ಅತಿ ಹೆಚ್ಚು 110 ಒಳರೋಗಿಗಳಿಗೆ ಉಚಿತ ಉಪಹಾರ ನೀಡಲಾಯಿತು.

ರಾಮನಗರದ ದರ್ಶನ್ ಹೋಟೆಲ್ ಮಾಲೀಕ ಎಸ್.ಎಂ. ಗಂಗಾಧರಯ್ಯ, ಅವರ ಕುಟುಂಬ ಸದಸ್ಯರು ಹಾಗೂ ಆಪ್ತ ಸ್ನೇಹಿತರ ಬಳಗದ ಸಹಯೋಗದಲ್ಲಿ ಈ ಸೇವಾ ಕಾರ್ಯ ನಡೆಯುತ್ತಿದೆ. 2025ರ ಮಾರ್ಚ್ 31ರಂದು ಆರಂಭವಾದ ಈ ಯೋಜನೆ ನಿರಂತರವಾಗಿ ಸಾಗುತ್ತಿದ್ದು, ನೂರಾರು ರೋಗಿಗಳಿಗೆ ನೆರವಾಗುತ್ತಿದೆ.

ಸಾಮಾಜಿಕ ಕಳಕಳಿಯಿಂದ ಆರಂಭವಾದ ಈ ಸೇವಾ ಕಾರ್ಯಕ್ಕೆ ಸಾರ್ವಜನಿಕರು ಹಾಗೂ ವಿವಿಧ ಗಣ್ಯರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ರೋಗಿಗಳ ಆರೈಕೆಗೆ ನೆರವಾಗುವ ಉದ್ದೇಶದಿಂದ ನಡೆಯುತ್ತಿರುವ ಈ ಕಾರ್ಯ ಹಲವರಿಗೆ ಮಾದರಿಯಾಗಿದೆ.

ಈ ಸಂದರ್ಭದಲ್ಲಿ ಸಿಎಂ ಶ್ರೀನಿವಾಸ್, ಸರ್ದಾರ್ ಯಮನೂರಪ್ಪ, ಪಾನ್ ಶಾಪ್ ಪುಟ್ಟಣ್ಣ, ಆಟೋ ವೀರೇಶ್, ಮಡಿವಾಳರ ಅಶೋಕ್, ಸೇಡಿಗಾರ್ ಪರಶುರಾಮ್ ಹಾಗೂ ದರ್ಶನ್ ಹೋಟೆಲ್ ಸಿಬ್ಬಂದಿ ಉಪಸ್ಥಿತರಿದ್ದರು.

“ಸಮಾಜ ನಮಗೆ ಕೊಟ್ಟಿರುವುದನ್ನು ಸಮಾಜಕ್ಕೇ ಮರಳಿ ನೀಡಬೇಕು ಎಂಬ ಉದ್ದೇಶದಿಂದ ಈ ಸೇವೆ ನಿರಂತರವಾಗಿ ಸಾಗುತ್ತಿದೆ.”

– ಎಸ್.ಎಂ. ಗಂಗಾಧರಯ್ಯ, ದರ್ಶನ್ ಹೋಟೆಲ್ ಮಾಲೀಕರು

ಹೆಚ್.ಕೆ. ಪಾಟೀಲರಿಲ್ಲದ ಸಂಪುಟ ಎಂದರೆ ಅಲ್ಲಮಪ್ರಭು ಇಲ್ಲದ ಅನುಭವ ಮಂಟಪ!

0

ಕರ್ನಾಟಕ ಕಂಡ ಮುತ್ಸದ್ಧಿ, ಸುಸಂಸ್ಕೃತ, ಅಧ್ಯಯನಶೀಲ, ಸಂವೇದನಾಶೀಲ ಹಾಗೂ ಪ್ರಜೆಗಳ ಅಂತರಂಗದ ತಂತುಗಳನ್ನು ಬಲ್ಲ ಅಪರೂಪದ ರಾಜಕಾರಣಿಗಳಲ್ಲಿ ಡಾ. ಎಚ್.ಕೆ. ಪಾಟೀಲರು ಒಬ್ಬರು. ಅವರಿಲ್ಲದ ಸಚಿವ ಸಂಪುಟವು ಅಲ್ಲಮಪ್ರಭು ಇಲ್ಲದ ಅನುಭವ ಮಂಟಪದಂತಾಗುತ್ತದೆ ಎಂಬುದು ಅವರ ಅಭಿಮಾನಿ ಬಳಗದ ಒಕ್ಕೂರಲಿನ ಅಭಿಪ್ರಾಯವಾಗಿದೆ. ಜೂನ್ 16ರಂದು ಗದಗದಲ್ಲಿ ನಡೆದ ವಿಭಿನ್ನ ಹೋರಾಟವು ಕೇವಲ ಬೇಡಿಕೆಯಲ್ಲ, ಪಕ್ಷದ ಹೈಕಮಾಂಡ್ ವಿರುದ್ಧದ ಸಾತ್ವಿಕ ಸಿಟ್ಟಿನ ಅಭಿವ್ಯಕ್ತಿಯೂ ಆಗಿತ್ತು.

ನಾಡಿನ ಏಳ್ಗೆಗಾಗಿ ಮಾನವೀಯ ಮೌಲ್ಯಗಳೊಂದಿಗೆ ಕೆಲಸ ಮಾಡಿರುವ ಎಚ್.ಕೆ. ಪಾಟೀಲರು ಸದನದ ಒಳಗೆ ಮತ್ತು ಹೊರಗೆ ಆಡಳಿತದ ಗುಣಮಟ್ಟ ಹೆಚ್ಚಿಸುವ ಅನೇಕ ವಿಚಾರಗಳನ್ನು ಮಂಡಿಸಿದ್ದಾರೆ. ಅವರ ಚಿಂತನೆ ಮತ್ತು ಕಾರ್ಯವೈಖರಿಗೆ ವಿರೋಧ ಪಕ್ಷದವರೂ ಮೆಚ್ಚುಗೆ ವ್ಯಕ್ತಪಡಿಸಿರುವುದು ಗಮನಾರ್ಹ.

ಬೃಹತ್ ನೀರಾವರಿ ಸಚಿವರಾಗಿ ಕೃಷ್ಣಾ ಕಣಿವೆ ಯೋಜನೆಯ ಅನುಷ್ಠಾನಕ್ಕೆ ವೇಗ ನೀಡಿದ ಅವರು, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾಗಿ ಕರ್ನಾಟಕದ ವಿವಿಧ ಕಾನೂನುಗಳನ್ನು ಒಟ್ಟುಗೂಡಿಸುವ ಮಹತ್ವದ ಕಾರ್ಯ ಕೈಗೊಂಡರು. ಪ್ರಾದೇಶಿಕ ಅಸಮಾನತೆ ನಿವಾರಣೆಗೆ ಬೆಳಗಾವಿ ಮತ್ತು ಕಲಬುರಗಿಯಲ್ಲಿ ವಿಶೇಷ ಅಧಿವೇಶನ ನಡೆಸಲು ಕಾರಣಕರ್ತರಾಗಿದ್ದರು.

ಭಾರತದ ಮಾಜಿ ರಾಷ್ಟ್ರಪತಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರನ್ನು ಕರ್ನಾಟಕ ವಿಧಾನಮಂಡಲದ ಉಭಯ ಸದನಗಳ ಸದಸ್ಯರನ್ನು ಉದ್ದೇಶಿಸಿ ಮಾತನಾಡಲು ಆಹ್ವಾನಿಸುವ ಕಾರ್ಯಕ್ರಮದ ಸಂಘಟನೆಯಲ್ಲಿ ಅವರು ಪ್ರಮುಖ ಪಾತ್ರವಹಿಸಿದ್ದರು. ಅದೇ ಸಂದರ್ಭದಲ್ಲಿ ಕಲಾಂ ಅವರ 11 ಅಂಶಗಳ ಅಭಿವೃದ್ಧಿ ಯೋಜನೆ ಜಾರಿಗೆ ಮುಂದಾಗಿದ್ದ ಕ್ರಮ ಇಂದಿಗೂ ಸ್ಮರಣೀಯವಾಗಿದೆ.

ಕರ್ನಾಟಕ ಕಾನೂನು ವಿಶ್ವವಿದ್ಯಾಲಯ, ಕರ್ನಾಟಕ ಕಾನೂನು ಆಯೋಗ, ಮಾನವ ಹಕ್ಕುಗಳ ಆಯೋಗ ಹಾಗೂ ಕಾನೂನು ಮತ್ತು ಸಂಸದೀಯ ಸುಧಾರಣಾ ಸಂಸ್ಥೆಗಳಂತಹ ಮಹತ್ವದ ಸಂಸ್ಥೆಗಳ ಸ್ಥಾಪನೆಯ ಶ್ರೇಯಸ್ಸು ಕೂಡ ಅವರಿಗೇ ಸಲ್ಲುತ್ತದೆ. ನ್ಯಾಯಾಂಗ ಇಲಾಖೆ ನೌಕರರ ರಾಜ್ಯ ಮಟ್ಟದ 8ನೇ ಸಮಾವೇಶದಲ್ಲಿ ಸಂಘ ಸಲ್ಲಿಸಿದ್ದ ಹಲವು ಮನವಿಗಳು ಕಾರ್ಯರೂಪಕ್ಕೆ ಬರಲು ಅವರು ನೆರವಾಗಿದ್ದರು.

ಶುದ್ಧ ಕುಡಿಯುವ ನೀರಿನ ಯೋಜನೆ ಹಾಗೂ “ಪ್ರಜೆಗಳಡೆ ಪ್ರಜಾಪ್ರಭುತ್ವ” ಎಂಬ ವಿನೂತನ ಪರಿಕಲ್ಪನೆಯ ಮೂಲಕ ಜನರ ದೂರುಗಳಿಗೆ 24 ಗಂಟೆಯೊಳಗೆ ಸರ್ಕಾರದ ಪ್ರತಿಕ್ರಿಯೆ ದೊರೆಯುವ ವ್ಯವಸ್ಥೆಯನ್ನು ರೂಪಿಸಿದ್ದು ದೇಶದಲ್ಲಿಯೇ ವಿಶಿಷ್ಟ ಪ್ರಯೋಗವೆಂದು ಪರಿಗಣಿಸಲಾಗಿದೆ. ಈ ಯೋಜನೆಗಳು ಎಚ್.ಕೆ. ಪಾಟೀಲರ ಕನಸಿನ ಕೂಸುಗಳಾಗಿವೆ.

ಹೈದರಾಬಾದ್-ಕರ್ನಾಟಕ ಪ್ರದೇಶಕ್ಕೆ ಸಂವಿಧಾನದ 371(ಜೆ) ವಿಧಿಯಡಿ ವಿಶೇಷ ಸ್ಥಾನಮಾನ ಕಲ್ಪಿಸುವ ಪ್ರಕ್ರಿಯೆಯಲ್ಲಿ ಅವರು ಮಹತ್ವದ ಪಾತ್ರವಹಿಸಿದ್ದರು. ಪ್ರಾದೇಶಿಕ ಅಸಮಾನತೆ ನಿವಾರಣೆಗೆ ಸಚಿವ ಸಂಪುಟ ಉಪಸಮಿತಿ ಅಧ್ಯಕ್ಷರಾಗಿ ವರದಿ ಸಲ್ಲಿಸಿದ್ದಲ್ಲದೆ, ಗ್ರಾಮ ಸ್ವರಾಜ್ ಕಾಯ್ದೆ-2015 ಜಾರಿಗೆ ತಂದು 434 ಹೊಸ ಗ್ರಾಮ ಪಂಚಾಯಿತಿಗಳ ಪುನರ್ವಿಂಗಡಣೆಗೆ ಕಾರಣರಾಗಿದ್ದರು. ದೇಶದಲ್ಲೇ ಪ್ರಥಮ ಮಹಾತ್ಮ ಗಾಂಧಿ ಗ್ರಾಮೀಣ ಪಂಚಾಯತ್ ರಾಜ್ ವಿಶ್ವವಿದ್ಯಾಲಯವನ್ನು ಗದಗದಲ್ಲಿ ಸ್ಥಾಪಿಸಲು ಅವರು ಶ್ರಮಿಸಿದ್ದರು.

ಉತ್ತರ ಕರ್ನಾಟಕದ ಜನರ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತಲುಪಿಸಲು ಸದನದ ಕಲಾಪಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡ ನಾಯಕರಲ್ಲಿ ಎಚ್.ಕೆ. ಪಾಟೀಲರು ಪ್ರಮುಖರು. ಈ ಎಲ್ಲ ಸಾಧನೆಗಳನ್ನು ಪರಿಗಣಿಸಿ ಪಕ್ಷದ ಹೈಕಮಾಂಡ್ ಅವರಿಗೆ ಉಪ ಮುಖ್ಯಮಂತ್ರಿ ಅಥವಾ ಸಚಿವ ಸ್ಥಾನ ನೀಡಬೇಕೆಂಬುದು ಅವರ ಅಭಿಮಾನಿಗಳ ಒತ್ತಾಯವಾಗಿದೆ.

ಒಂದು ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಸಂಕಷ್ಟಕ್ಕೆ ಸಿಲುಕಿದ್ದಾಗ ರಾಜ್ಯಾದ್ಯಂತ ಪಕ್ಷ ಸಂಘಟನೆಯಲ್ಲಿ ಪ್ರಮುಖ ಪಾತ್ರವಹಿಸಿದ ನಾಯಕರಲ್ಲಿ ಎಚ್.ಕೆ. ಪಾಟೀಲರು ಒಬ್ಬರು. ಮಾಜಿ ಮುಖ್ಯಮಂತ್ರಿಗಳಾದ ಎಸ್.ಎಂ. ಕೃಷ್ಣ, ಧರ್ಮಸಿಂಗ್ ಹಾಗೂ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಪಕ್ಷವನ್ನು ಬಲಪಡಿಸುವಲ್ಲಿ ಅವರು ಸಲ್ಲಿಸಿದ ಸೇವೆಯನ್ನು ಅಭಿಮಾನಿಗಳು ನೆನಪಿಸಿಕೊಳ್ಳುತ್ತಾರೆ.

ಸಾಮಾಜಿಕ, ಆರ್ಥಿಕ, ಧಾರ್ಮಿಕ, ರಾಜಕೀಯ ಹಾಗೂ ಶೈಕ್ಷಣಿಕ ಕ್ಷೇತ್ರಗಳ ಯಾವುದೇ ಸಮಸ್ಯೆಯ ಆಳವನ್ನು ಅರಿತು ಪರಿಹಾರ ಸೂಚಿಸುವ ಅಪರೂಪದ ಧುರೀಣರಾಗಿರುವ ಎಚ್.ಕೆ. ಪಾಟೀಲರಿಗೆ ಸಚಿವ ಸ್ಥಾನ ನೀಡಬೇಕೆಂದು ಜಿಲ್ಲೆಯಾದ್ಯಂತ ನಡೆಯುತ್ತಿರುವ ಹೋರಾಟಕ್ಕೂ ಇದೇ ಕಾರಣವಾಗಿದೆ. ಇಂತಹ ಶುದ್ಧ ಚಾರಿತ್ರ್ಯವುಳ್ಳ ನಾಯಕರಿಂದ ಸದನದ ಘನತೆ ಹೆಚ್ಚುತ್ತದೆ. ಗದಗ ಜಿಲ್ಲೆ ಹಾಗೂ ಉತ್ತರ ಕರ್ನಾಟಕದ ಸರ್ವತೋಮುಖ ಅಭಿವೃದ್ಧಿಗಾಗಿ ಅವರಿಗೆ ಸಚಿವ ಸಂಪುಟದಲ್ಲಿ ಸೂಕ್ತ ಸ್ಥಾನಮಾನ ದೊರೆಯಬೇಕು ಎಂಬುದು ಅವರ ಅಭಿಮಾನಿಗಳ ಆಶಯವಾಗಿದೆ.

– ಎ.ಎಸ್. ಮಕಾನದಾರ
ಕವಿ ಹಾಗೂ ಪ್ರಕಾಶಕ, ಗದಗ

ಗುರುಗಳ ಋಣಕ್ಕೆ ಕೃತಜ್ಞತೆಯ ಕಾಣಿಕೆ

0

ವಿಜಯಸಾಕ್ಷಿ ಸುದ್ದಿ, ಗದಗ: ಸಿದ್ದಲಿಂಗ ನಗರದ ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಣ ಪಡೆದು ಇಂದು ವೈದ್ಯೆಯಾಗಿ ಸಮಾಜದಲ್ಲಿ ಗುರುತಿಸಿಕೊಂಡಿರುವ 2005-06ನೇ ಸಾಲಿನ ಹಳೆ ವಿದ್ಯಾರ್ಥಿನಿ ಡಾ. ಮಂಜುಳಾ ಸುರೇಬಾಣವರ, ತಮ್ಮ ತವರು ಶಾಲೆಗೆ ಪ್ರೊಫೆಷನಲ್ ಪೋರ್ಟೆಬಲ್ ಹೈಟೆಕ್ ಸ್ಪೀಕರ್ ದೇಣಿಗೆ ನೀಡಿ ಶಾಲೆಯೊಂದಿಗಿನ ಬಾಂಧವ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದರು.

ಶಾಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಈ ಶಾಲೆಯು ನನಗೆ ಉತ್ತಮ ಶಿಕ್ಷಣ, ಸಂಸ್ಕಾರ ಹಾಗೂ ಬದುಕಿನ ಮೌಲ್ಯಗಳನ್ನು ಕಲಿಸಿಕೊಟ್ಟಿದೆ. ನನ್ನ ಯಶಸ್ಸಿನ ಹಿಂದೆ ಈ ಶಾಲೆ ಮತ್ತು ಶಿಕ್ಷಕರ ಪಾತ್ರ ಅಪಾರವಾಗಿದೆ. ಶಾಲೆಯ ಋಣವನ್ನು ಸಂಪೂರ್ಣವಾಗಿ ತೀರಿಸಲು ಸಾಧ್ಯವಿಲ್ಲ. ಆದರೆ ಕೃತಜ್ಞತೆಯ ಸಂಕೇತವಾಗಿ ಈ ಸಣ್ಣ ದೇಣಿಗೆಯನ್ನು ನೀಡಿದ್ದೇನೆ” ಎಂದು ಹೇಳಿದರು.

ಶಾಲೆಯ ಹಳೆಯ ನೆನಪುಗಳನ್ನು ಹಂಚಿಕೊಂಡ ಅವರು, ಕಳೆದ ಎರಡು ದಶಕಗಳಲ್ಲಿ ಶಾಲೆಯು ಸಾಕಷ್ಟು ಅಭಿವೃದ್ಧಿ ಹೊಂದಿದ್ದು, ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ಸಾಧಿಸಿರುವುದು ಹೆಮ್ಮೆಯ ಸಂಗತಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ತಮ್ಮ ಬದುಕಿಗೆ ದಾರಿ ತೋರಿದ ಎಲ್ಲ ಶಿಕ್ಷಕರಿಗೆ ಹಾಗೂ ಪ್ರಸ್ತುತ ಶಿಕ್ಷಕ ವೃಂದಕ್ಕೆ ಕುಟುಂಬದ ಪರವಾಗಿ ಅಭಿನಂದನೆ ಸಲ್ಲಿಸಿದರು.

ಕಿರಿಯ ಶಿಕ್ಷಕಿ ಶಂಕ್ರಮ್ಮ ಹಣಮಗೌಡ್ರ ಮಾತನಾಡಿ, ಹಳೆ ವಿದ್ಯಾರ್ಥಿಗಳು ಶಾಲೆಗೆ ಬಂದು ತಮ್ಮ ಪ್ರೀತಿ, ಅಭಿಮಾನ ವ್ಯಕ್ತಪಡಿಸಿದಾಗ ಶಿಕ್ಷಕರಿಗೆ ಆಗುವ ಸಂತೋಷವನ್ನು ವರ್ಣಿಸಲು ಸಾಧ್ಯವಿಲ್ಲ. ವಿದ್ಯಾರ್ಥಿಗಳ ಸಾಧನೆಯೇ ಶಿಕ್ಷಕರಿಗೆ ದೊರೆಯುವ ಅತಿ ದೊಡ್ಡ ಗೌರವ ಎಂದರು.

ಹಿರಿಯ ಶಿಕ್ಷಕಿ ಜಯಲಕ್ಷ್ಮಿ ಅಣ್ಣಿಗೇರಿ ಮಾತನಾಡಿ, ಸರ್ಕಾರಿ ಶಾಲೆಗಳ ನಿಜವಾದ ಆಸ್ತಿ ವಿದ್ಯಾರ್ಥಿಗಳೇ. 20 ವರ್ಷಗಳ ಬಳಿಕ ಶಾಲೆಗೆ ಆಗಮಿಸಿ ಬೆಲೆಬಾಳುವ ಹೈಟೆಕ್ ಸ್ಪೀಕರ್ ದೇಣಿಗೆ ನೀಡಿರುವ ಡಾ. ಮಂಜುಳಾ ಅವರ ಕಾರ್ಯ ಇಂದಿನ ವಿದ್ಯಾರ್ಥಿಗಳಿಗೆ ಮಾದರಿಯಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಶಾಲೆಯ ವತಿಯಿಂದ ಡಾ. ಮಂಜುಳಾ ಸುರೇಬಾಣವರ ಹಾಗೂ ಅವರ ಕುಟುಂಬವನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರು, ಎಸ್‌ಡಿಎಂಸಿ ಸದಸ್ಯರು, ಶಿಕ್ಷಕ ವೃಂದ ಹಾಗೂ ಹಳೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

“ಶಾಲೆಯ ನೆನಪುಗಳನ್ನು ಮರೆಯದ ವಿದ್ಯಾರ್ಥಿಗಳೇ ಶಿಕ್ಷಣ ಸಂಸ್ಥೆಗಳ ನಿಜವಾದ ಹೆಮ್ಮೆ. ಡಾ. ಮಂಜುಳಾ ಅವರಂತಹ ಹಳೆ ವಿದ್ಯಾರ್ಥಿಗಳು ಮುಂದಿನ ಪೀಳಿಗೆಗೆ ಪ್ರೇರಣೆಯಾಗಬೇಕು.”

– ಜಯಲಕ್ಷ್ಮಿ ಅಣ್ಣಿಗೇರಿ, ಹಿರಿಯ ಶಿಕ್ಷಕಿ

ಎಚ್.ಕೆ. ಪಾಟೀಲರಿಗೆ ಸಚಿವ ಸ್ಥಾನಕ್ಕಾಗಿ ವಿಶೇಷ ಪೂಜೆ

0

ವಿಜಯಸಾಕ್ಷಿ ಸುದ್ದಿ, ಗದಗ: ರಾಜ್ಯದ ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಗದಗ ಶಾಸಕ ಡಾ. ಎಚ್.ಕೆ. ಪಾಟೀಲರಿಗೆ ಸಚಿವ ಸ್ಥಾನ ದೊರೆಯಲಿ ಎಂಬ ಆಶಯದೊಂದಿಗೆ ಗುರುವಾರ ಗದಗ ನಗರದ ಚಾವಡಿ ಕೂಟದಲ್ಲಿರುವ ಶ್ರೀ ಕರಿದೇವರು ದೇವಸ್ಥಾನದಲ್ಲಿ ಶ್ರೀ ಸೋಮನಾಥೇಶ್ವರನಿಗೆ ಮಹಾರುದ್ರಾಭಿಷೇಕ ಪೂಜೆ ನೆರವೇರಿಸಲಾಯಿತು.

14ನೇ ವಾರ್ಡ್‌ನ ಯುವ ಕಾಂಗ್ರೆಸ್ ಮುಖಂಡ ನವೀನ್ ಜಾಲಿಹಾಳ ಅವರ ನೇತೃತ್ವದಲ್ಲಿ ನಡೆದ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.

ಡಾ. ಎಚ್.ಕೆ. ಪಾಟೀಲರು ರಾಜ್ಯ ರಾಜಕಾರಣದಲ್ಲಿ ಅನುಭವಿಗಳಾಗಿದ್ದು, ಜಿಲ್ಲೆ ಹಾಗೂ ರಾಜ್ಯದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದ್ದಾರೆ. ಅವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ದೊರೆತು ಜಿಲ್ಲೆಯ ಜನರ ಆಶಯ ಈಡೇರಲಿ ಎಂದು ನವೀನ್ ಜಾಲಿಹಾಳ ಪ್ರಾರ್ಥಿಸಿದರು.

ಗದಗದಲ್ಲಿ ಗಾಂಜಾ ಜಾಲ ಭೇದಿಸಿದ ಪೊಲೀಸರು; 2.365 ಕೆಜಿ ಮಾದಕ ವಸ್ತು ಜಪ್ತಿ, ಐವರು ಅರೆಸ್ಟ್

0

ಗದಗ: ಮಾದಕ ವಸ್ತುಗಳ ವಿರುದ್ಧ ಸಮರ ಸಾರಿರುವ ಜಿಲ್ಲೆಯ ಲಕ್ಷ್ಮೇಶ್ವರ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ, ಲಕ್ಷಾಂತರ ರೂ. ಮೌಲ್ಯದ 2.365 ಕೆಜಿ ಗಾಂಜಾವನ್ನು ಜಪ್ತಿ ಮಾಡಿ ಐವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ದೇವಸ್ಥಾನವೊಂದರ ಬಳಿ ಗಾಂಜಾ ಸೇವಿಸುತ್ತಿದ್ದ ಇಬ್ಬರನ್ನು ಬಂಧಿಸಿದ ಪ್ರಕರಣದ ತನಿಖೆ ಮುಂದುವರಿದಂತೆ ಗದಗ-ಬೆಟಗೇರಿ ಮೂಲದ ಮತ್ತೊಂದು ಗಾಂಜಾ ಪೂರೈಕೆ ಜಾಲ ಬೆಳಕಿಗೆ ಬಂದಿದ್ದು, ಪೊಲೀಸರು ಜಾಲವನ್ನು ಭೇದಿಸಿದ್ದಾರೆ.

ಜೂನ್ 15ರಂದು ಲಕ್ಷ್ಮೇಶ್ವರ ನಗರದ ಮುಕ್ತಿನಗರದ ಅಗಸ್ತ್ಯತೀರ್ಥ ದೇವಸ್ಥಾನದ ಸಮೀಪ ಗಾಂಜಾ ಸೇವನೆ ನಡೆಸುತ್ತಿದ್ದ ಆರೋಪಿಗಳಾದ ಸಂತೋಷ ಬಸವರಾಜ ಉಪ್ಪಾರ ಹಾಗೂ ಸಾದಿಕ್ ರಿಯಾಜ್ ಅಹ್ಮದ್ ರಿತ್ತಿ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಈ ಸಂಬಂಧ ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ಎನ್‌ಡಿಪಿಎಸ್ ಕಾಯ್ದೆ 1985ರ ಕಲಂ 27(ಬಿ) ಅಡಿ ಪ್ರಕರಣ ದಾಖಲಿಸಲಾಗಿತ್ತು.

ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿದ ಪೊಲೀಸರು, ಬಂಧಿತರಿಂದ ದೊರೆತ ಮಾಹಿತಿಯ ಆಧಾರದ ಮೇಲೆ ಜೂನ್ 18ರಂದು ಗದಗದಿಂದ ಲಕ್ಷ್ಮೇಶ್ವರಕ್ಕೆ ಗಾಂಜಾ ಸಾಗಣೆ ಮಾಡುತ್ತಿದ್ದ ಮೂವರು ಆರೋಪಿಗಳ ಮೇಲೆ ದಾಳಿ ನಡೆಸಿದರು. ಈ ವೇಳೆ ನಾಗರಾಜ ದೊಡ್ಡಪ್ಪ ಮುತಗಾರ, ಪ್ರಶಾಂತ ಕರಿಯಪ್ಪ ಕಟಗೇರಿ ಹಾಗೂ ಗಂಗಪ್ಪ ಬಾಬು ನಾರಾಯಣ ಚವ್ಹಾಣ ಎಂಬ ಆರೋಪಿಗಳನ್ನು ಬಂಧಿಸಿ, ಅವರ ವಶದಲ್ಲಿದ್ದ 2.365 ಕೆಜಿ ಗಾಂಜಾ ವಶಪಡಿಸಿಕೊಂಡರು.

ಪೊಲೀಸರು ಆರೋಪಿಗಳ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯ ಕಲಂ 20(ಬಿ) ಅಡಿ ಹೆಚ್ಚುವರಿ ಆರೋಪಗಳನ್ನು ಸೇರಿಸಿದ್ದು, ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಈ ಯಶಸ್ವಿ ಕಾರ್ಯಾಚರಣೆಯನ್ನು ಪಿಎಸ್‌ಐ ಟಿ.ಕೆ. ರಾಠೋಡ್ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿ ನಡೆಸಿದ್ದು, ತನಿಖಾಧಿಕಾರಿಯಾಗಿ ಪಿಎಸ್‌ಐ ನಾಗರಾಜ ಗಡದ ಕಾರ್ಯನಿರ್ವಹಿಸಿದ್ದಾರೆ. ಪ್ರಕರಣ ಭೇದಿಸಲು ಮಾರ್ಗದರ್ಶನ ನೀಡಿದ ಗದಗ ಉಪವಿಭಾಗದ ಡಿವೈಎಸ್‌ಪಿ ಮುರ್ತುಜಾ ಖಾದ್ರಿ ಶಿರಹಟ್ಟಿ ಸಿಪಿಐ ಬಿ.ವಿ‌. ನ್ಯಾಮಗೌಡ ಅವರ ಕಾರ್ಯವೈಖರಿಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ಶ್ಲಾಘಿಸಿದ್ದಾರೆ.

ಶ್ರೀನಿವಾಸ ಮಾನೆಗೆ ಸಚಿವ ಸ್ಥಾನ ನೀಡಲು ಮನವಿ

0

ವಿಜಯಸಾಕ್ಷಿ ಸುದ್ದಿ, ಗದಗ: ಹಾನಗಲ್ ಕ್ಷೇತ್ರದ ಶಾಸಕ ಶ್ರೀನಿವಾಸ ವಿಷ್ಣುರಾವ್ ಮಾನೆಯವರಿಗೆ ಸಚಿವ ಸ್ಥಾನ ನೀಡುವ ಮೂಲಕ ಮರಾಠಾ ಸಮುದಾಯಕ್ಕೆ ಸಚಿವ ಸಂಪುಟದಲ್ಲಿ ಪ್ರಾತಿನಿಧ್ಯ ಕಲ್ಪಿಸಬೇಕು ಎಂದು ಮರಾಠಾ ವಿದ್ಯಾವರ್ಧಕ ಸಂಘ (ರಿ) ಗದಗ-ಬೆಟಗೇರಿ ಒತ್ತಾಯಿಸಿದೆ.

ಸಂಘದ ಅಧ್ಯಕ್ಷ ಅರುಣಕುಮಾರ ಬಿ. ಚವ್ಹಾಣ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಕುರಿತು ನಿರ್ಣಯ ಕೈಗೊಳ್ಳಲಾಯಿತು. ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಜನಪರ ಸೇವೆ ಸಲ್ಲಿಸಿದ ಹಾಗೂ ಅಭಿವೃದ್ಧಿ ದೃಷ್ಟಿಕೋನ ಹೊಂದಿರುವ ಯುವ ನಾಯಕರಾದ ಶ್ರೀನಿವಾಸ ಮಾನೆಯವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಮಾಡಲಾಗಿದೆ.

ಸಭೆಯಲ್ಲಿ ಸಂಘದ ಪದಾಧಿಕಾರಿಗಳು ಹಾಗೂ ಸಮಾಜದ ಮುಖಂಡರು ಉಪಸ್ಥಿತರಿದ್ದರು.

error: Content is protected !!