Home Blog

ಚಾಲಕನ ನಿಯಂತ್ರಣ ತಪ್ಪಿ ಕೆಎಸ್‌ಆರ್‌ಟಿಸಿ ಬಸ್ ಪಲ್ಟಿ: ತಪ್ಪಿದ ಭಾರೀ ದುರಂತ

0

ತುಮಕೂರು: ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಕಳ್ಳಿಪಾಳ್ಯ ಸಮೀಪ ರಾಷ್ಟ್ರೀಯ ಹೆದ್ದಾರಿ 206ರಲ್ಲಿ ಕೆಎಸ್‌ಆರ್‌ಟಿಸಿ ಬಸ್ ಪಲ್ಟಿಯಾಗಿದ್ದು, ಭಾರೀ ದುರಂತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದ ಘಟನೆ ನಡೆದಿದೆ. ಬಸ್‌ನಲ್ಲಿದ್ದ 40ಕ್ಕೂ ಹೆಚ್ಚು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ತಿಪಟೂರು ಡಿಪೋಗೆ ಸೇರಿದ ಈ ಬಸ್ ಹೊಸದುರ್ಗದಿಂದ ಬೆಂಗಳೂರಿನತ್ತ ಸಾಗುತ್ತಿದ್ದ ವೇಳೆ, ಗುಬ್ಬಿ ಸಮೀಪದ ಕಳ್ಳಿಪಾಳ್ಯ ಬಳಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಡಿವೈಡರ್‌ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಡಿಕ್ಕಿಯ ತೀವ್ರತೆಗೆ ಬಸ್ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ.

ಅಪಘಾತದಲ್ಲಿ ಐದಾರು ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ತಕ್ಷಣವೇ ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದ ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.

ಘಟನಾ ಸ್ಥಳಕ್ಕೆ ಗುಬ್ಬಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಸಂಬಂಧ ಗುಬ್ಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

SSLC ಹಿಂದಿ ಭಾಷೆ ಪರೀಕ್ಷೆಗೆ ಗ್ರೇಡ್ ಬದಲು ಅಂಕ ನೀಡಿ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಆದೇಶ

ಬೆಂಗಳೂರು: ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ತೃತೀಯ ಭಾಷೆ (ಹಿಂದಿ ಸೇರಿದಂತೆ) ವಿಷಯಕ್ಕೆ ಈ ವರ್ಷ ಗ್ರೇಡ್ ನೀಡದೇ, ಅಂಕಗಳನ್ನು ನೀಡಬೇಕು ಎಂದು ಹೈಕೋರ್ಟ್ ಸರ್ಕಾರಕ್ಕೆ ಮಹತ್ವದ ಆದೇಶ ನೀಡಿದೆ.

ತೃತೀಯ ಭಾಷೆಗೆ ಅಂಕಗಳ ಬದಲು ಗ್ರೇಡ್ ನೀಡುವ ಕುರಿತು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ಈ ವರ್ಷ ಹಳೆಯ ಪದ್ಧತಿಯನ್ನು ಮುಂದುವರಿಸುವಂತೆ ಸೂಚಿಸಿದೆ.

ಸರ್ಕಾರದ ಪರವಾಗಿ ಎಜಿ ಶಶಿಕಿರಣ್ ಶೆಟ್ಟಿ ವಾದ ಮಂಡಿಸಿದರು. 2025ರ ಅಕ್ಟೋಬರ್ 28ರಂದು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಕುರಿತು ಸುತ್ತೋಲೆ ಹೊರಡಿಸಲಾಗಿದ್ದು, 2026ರ ಮಾರ್ಚ್ 18ರಿಂದ ಏಪ್ರಿಲ್ 2ರವರೆಗೆ ಪರೀಕ್ಷೆಗಳು ನಡೆದಿವೆ ಎಂದು ಅವರು ತಿಳಿಸಿದರು.

ಈ ವೇಳೆ ನ್ಯಾಯಮೂರ್ತಿಗಳಾದ ಇಂದಿರೇಶ್ ಅವರು, “ನಿಮ್ಮ ಅಧಿಸೂಚನೆಯ ಉದ್ದೇಶವೇನು? ಕಳೆದ ವರ್ಷ 1.75 ಲಕ್ಷ ವಿದ್ಯಾರ್ಥಿಗಳು ಅನುತ್ತೀರ್ಣರಾದರು. ಎಲ್ಲರನ್ನೂ ಪಾಸ್ ಮಾಡುವುದು ನಿಮ್ಮ ಉದ್ದೇಶವೇ?” ಎಂದು ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಎಜಿ, ಗ್ರಾಮೀಣ ಭಾಗದ ಸುಮಾರು 80% ವಿದ್ಯಾರ್ಥಿಗಳು ತೃತೀಯ ಭಾಷೆ ಹಿಂದಿ ವಿಷಯದಲ್ಲಿ ಅನುತ್ತೀರ್ಣರಾಗುತ್ತಿದ್ದಾರೆ. ಅದರಿಂದ ಅವರ ಮೇಲಿನ ಒತ್ತಡ ಕಡಿಮೆ ಮಾಡಲು ಗ್ರೇಡಿಂಗ್ ವ್ಯವಸ್ಥೆ ಪರಿಚಯಿಸಲಾಗಿದೆ ಎಂದು ವಿವರಿಸಿದರು.

ಆದರೆ ನ್ಯಾಯಾಲಯ, “ಈ ವರ್ಷ ಹಳೆಯ ಪದ್ಧತಿಯನ್ನೇ ಅನುಸರಿಸಿ. ಮುಂದಿನ ವರ್ಷ ಅಗತ್ಯ ಕ್ರಮಗಳನ್ನು ಕೈಗೊಳ್ಳಬಹುದು” ಎಂದು ಸ್ಪಷ್ಟಪಡಿಸಿ, ಅಂಕಗಳನ್ನು ನೀಡಲು ನಿರ್ದೇಶಿಸಿತು.

ಮಾರ್ಚ್ 18ರಿಂದ ಏಪ್ರಿಲ್ 2ರವರೆಗೆ ಪರೀಕ್ಷೆಗಳು ನಡೆದಿದ್ದು, ಏಪ್ರಿಲ್ 10ರಂದು ಕರಡು ನಿಯಮಗಳು ರೂಪಿಸಲ್ಪಟ್ಟಿರುವ ಹಿನ್ನೆಲೆಯಲ್ಲಿ, ತನ್ನ ಆದೇಶವನ್ನು ಮರುಪರಿಶೀಲಿಸಲು ಹೈಕೋರ್ಟ್ ನಿರಾಕರಿಸಿದೆ.

ಇನ್ನೂ ಒಂದು ವಾರ ಬಿಸಿಲಿನ ಕಾಟ: ಬೆಂಗಳೂರು ಸೇರಿ ರಾಜ್ಯದಲ್ಲಿ ಉಷ್ಣಾಂಶ ಏರಿಕೆ

ಬೆಂಗಳೂರು: ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಇನ್ನೊಂದು ವಾರ ಬಿಸಿಲಿನ ತೀವ್ರತೆ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆಯ ವಿಜ್ಞಾನಿ ಸಿಎಸ್ ಪಾಟೀಲ್ ಎಚ್ಚರಿಕೆ ನೀಡಿದ್ದಾರೆ.

ಈಗಾಗಲೇ ಕರುನಾಡು ತೀವ್ರ ಬಿಸಿಲಿನಿಂದ ಬಳಲುತ್ತಿದ್ದು, ರಣಬೇಸಿಗೆಯ ತಾಪಕ್ಕೆ ಜನರು ಹೈರಾಣಾಗಿದ್ದಾರೆ. ರಾಯಚೂರು ಮತ್ತು ಕಲಬುರಗಿ ಜಿಲ್ಲೆಗಳಲ್ಲಿ ಉಷ್ಣಾಂಶ 41 ಡಿಗ್ರಿ ಸೆಲ್ಸಿಯಸ್ ದಾಟಿದೆ.

ಬೆಂಗಳೂರು ನಗರದಲ್ಲೂ ಉಷ್ಣಾಂಶ 36ರಿಂದ 37 ಡಿಗ್ರಿ ಸೆಲ್ಸಿಯಸ್ ನಡುವೆ ದಾಖಲಾಗುತ್ತಿದೆ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮುಂದಿನ ಒಂದು ವಾರ 40ರಿಂದ 42 ಡಿಗ್ರಿ ಸೆಲ್ಸಿಯಸ್ ವರೆಗೆ ಉಷ್ಣಾಂಶ ಏರಿಕೆ ಕಾಣುವ ಸಾಧ್ಯತೆ ಇದೆ ಎಂದು ಸಿಎಸ್ ಪಾಟೀಲ್ ತಿಳಿಸಿದ್ದಾರೆ.

ಬೆಂಗಳೂರು ನಗರದಲ್ಲಿಯೂ ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. ಹಗಲು ಮಾತ್ರವಲ್ಲದೆ, ರಾತ್ರಿ ವೇಳೆಯಲ್ಲೂ ಉಷ್ಣಾಂಶ ಕಡಿಮೆಯಾಗದೆ ಇರುವುದರಿಂದ ಹೆಚ್ಚುವರಿ ಸೆಕೆ ಅನುಭವವಾಗಲಿದೆ ಎಂದು ಅವರು ತಿಳಿಸಿದ್ದಾರೆ.

ಮದುವೆ ನಿರಾಕರಣೆಗೇ ಜೀವಭಯ: ತಂದೆಯ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ ಯುವತಿ

ಬೆಂಗಳೂರು: ತನ್ನ ಒಪ್ಪಿಗೆಯಿಲ್ಲದೆ ನಿಶ್ಚಯಿಸಿದ ಮದುವೆಯನ್ನು ತಿರಸ್ಕರಿಸಿದ್ದಕ್ಕೆ ಜೀವಕ್ಕೆ ಅಪಾಯವಿದೆ ಎಂದು ಆರೋಪಿಸಿರುವ ಯುವತಿ ಹೈಕೋರ್ಟ್ ಮೊರೆ ಹೋಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ವೈಟ್‌ಫೀಲ್ಡ್ ಠಾಣಾ ವ್ಯಾಪ್ತಿಯ ಕಾಜಲ್ ರಾಜಪುರೋಹಿತ್ ಎಂಬ ಯುವತಿ ತನ್ನ ತಂದೆ ಅಶೋಕ್ ರಾಜಪುರೋಹಿತ್ ವಿರುದ್ಧ ರಿಟ್ ಅರ್ಜಿ ಸಲ್ಲಿಸಿದ್ದಾಳೆ.

ಕಳೆದ ಎರಡು ವರ್ಷಗಳಿಂದ ಉದ್ಯೋಗದಲ್ಲಿರುವ ಕಾಜಲ್‌ಗೆ ಮದುವೆಯ ಮೇಲೆ ಆಸಕ್ತಿ ಇರಲಿಲ್ಲ. ತನ್ನ ಅಕ್ಕನಿಗೂ ಬಲವಂತವಾಗಿ ಮದುವೆ ಮಾಡಿದ್ದನ್ನು ಕಂಡಿದ್ದ ಆಕೆಗೆ ಇದೇ ಪರಿಸ್ಥಿತಿ ತಾನೂ ಎದುರಿಸಬೇಕಾಗುತ್ತದೆ ಎಂಬ ಆತಂಕ ಕಾಡುತ್ತಿತ್ತು. ತನ್ನ ಜೀವನದಲ್ಲಿ ಸ್ವತಂತ್ರವಾಗಿ ಏನಾದರೂ ಸಾಧಿಸಬೇಕೆಂಬ ಆಶಯ ಹೊಂದಿದ್ದರೂ, ತಂದೆ ಆಕೆಯ ಒಪ್ಪಿಗೆಯಿಲ್ಲದೆ ರಾಜಸ್ಥಾನ ಮೂಲದ ಡಾ. ಯಶ್‌ಪಾಲ್ ಜೊತೆ ವಿವಾಹ ನಿಶ್ಚಯ ಮಾಡಿರುವುದಾಗಿ ಆರೋಪಿಸಲಾಗಿದೆ.

ಮದುವೆಗೆ ಸಿದ್ಧತೆಗಳು ಮುಂದುವರಿದ ಹಿನ್ನೆಲೆಯಲ್ಲಿ ಜೀವಭಯ ವ್ಯಕ್ತಪಡಿಸಿರುವ ಯುವತಿ ನ್ಯಾಯಾಲಯದ ರಕ್ಷಣೆಯನ್ನು ಕೋರಿದ್ದಾಳೆ. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ವೈಟ್‌ಫೀಲ್ಡ್ ಪೊಲೀಸರಿಗೆ ಯುವತಿಗೆ ಸೂಕ್ತ ಭದ್ರತೆ ಒದಗಿಸಲು ನಿರ್ದೇಶನ ನೀಡಿದೆ. ಈ ಘಟನೆ ಕುಟುಂಬದ ಒಳಜಗಳದಿಂದ ಮೀರಿದು, ಮಹಿಳೆಯರ ಸ್ವಾತಂತ್ರ್ಯ ಮತ್ತು ಸುರಕ್ಷತೆ ಕುರಿತ ಚರ್ಚೆಗೆ ಕಾರಣವಾಗಿದೆ.

ಬೆಂಗಳೂರಿನಲ್ಲಿ ಜೀವಂತ ಗ್ರೆನೇಡ್ ಪತ್ತೆ ಪ್ರಕರಣ: ಆರೋಪಿಗಳಿಗೆ ಇಂದು ಶಿಕ್ಷೆ ಪ್ರಕಟ

ಬೆಂಗಳೂರು: ನಗರದಲ್ಲಿ ಜೀವಂತ ಗ್ರೆನೇಡ್ ಪತ್ತೆಯಾದ ಸಂಚು ಪ್ರಕರಣದಲ್ಲಿ ಆರೋಪಿಗಳಿಗೆ ಇಂದು ಶಿಕ್ಷೆ ಪ್ರಕಟವಾಗಲಿದೆ. 2008ರ ಮಾದರಿಯಲ್ಲಿ ಸ್ಫೋಟ ನಡೆಸಲು ಆರೋಪಿಗಳು ಸಂಚು ರೂಪಿಸಿದ್ದರೆಂದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಆರ್ಟಿ ನಗರದಲ್ಲಿನ ಮನೆಯಲ್ಲಿ ಜೀವಂತ ಗ್ರೆನೇಡ್, ಪಿಸ್ತೂಲ್ ಹಾಗೂ ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಈ ಪ್ರಕರಣವನ್ನು 2023ರಲ್ಲಿ ಸಿಸಿಬಿ ಪೊಲೀಸರು ಪತ್ತೆಹಚ್ಚಿದ್ದರು.

ಖಚಿತ ಮಾಹಿತಿಯ ಮೇರೆಗೆ ಸಿಸಿಬಿ ದಾಳಿ ನಡೆಸಿ ಸ್ಫೋಟಕ ವಸ್ತುಗಳು, ವಾಕಿ-ಟಾಕಿ ಹಾಗೂ ನಕ್ಷೆಗಳನ್ನು ವಶಪಡಿಸಿಕೊಂಡಿತ್ತು. ಬಳಿಕ ಪ್ರಕರಣವನ್ನು ಎನ್‌ಐಎ ಕೈಗೆತ್ತಿಕೊಂಡು ಮುಂದಿನ ತನಿಖೆ ನಡೆಸಿತು.

ತನಿಖೆಯಲ್ಲಿ ಬೆಂಗಳೂರು ಸ್ಫೋಟದ ರೂವಾರಿಯಾದ ಟಿ. ನಾಜೀರ್ ಜೊತೆ ಆರೋಪಿಗಳಿಗೆ ಸಂಪರ್ಕವಿದ್ದದ್ದು ಬಹಿರಂಗವಾಯಿತು. ಜೈಲಿನಲ್ಲಿದ್ದಾಗಲೇ ನಾಜೀರ್‌ನಿಂದ ಉಗ್ರ ಚಟುವಟಿಕೆಗಳಿಗೆ ಪ್ರೇರಣೆ ಪಡೆದಿದ್ದರು ಎಂಬುದು ತಿಳಿದುಬಂದಿದೆ. ಜೈಲಿನಿಂದ ಬಿಡುಗಡೆಯಾದ ನಂತರ ವಿವಿಧ ಸ್ಥಳಗಳಲ್ಲಿ ಬಾಂಬ್ ಸ್ಫೋಟಕ್ಕೆ ಸಂಚು ರೂಪಿಸಿದ್ದರೆಂದು ಆರೋಪಿಸಲಾಗಿದೆ.

2023ರಲ್ಲಿ ಸಂಚು ರೂಪಿಸುತ್ತಿದ್ದ ವೇಳೆ ಆರೋಪಿಗಳನ್ನು ಬಂಧಿಸಲಾಗಿತ್ತು. ಈ ಪ್ರಕರಣದಲ್ಲಿ ಎ1 ಟಿ. ನಾಜೀರ್, ಎ2 ಜುನೈದ್, ಎ3 ಸೈಯಾದ್ ಸುಹೈಲ್ ಖಾನ್, ಎ4 ಮಹಮ್ಮದ್ ಉಮರ್, ಎ5 ಜಾಹಿದ್ ತಬ್ರೇಜ್, ಎ6 ಸೈಯದ್, ಎ7 ಮುದಾಸೀರ್ ಪಾಷಾ, ಎ8 ಮಹಮ್ಮದ್ ಫಜೀದ್, ಎ9 ಅನೀಸ್ ಫಾತೀಮ್, ಎ10 ಚಾನ್ ಪಾಷಾ ಮತ್ತು ಎ11 ವೈದ್ಯ ಡಾ. ನಾಗರಾಜ್ ಸೇರಿದಂತೆ ಹಲವರನ್ನು ಬಂಧಿಸಲಾಗಿದೆ.

ಅರೋಪಿಗಳ ವಿರುದ್ಧ ಎನ್‌ಐಎ ಚಾರ್ಜ್‌ಶೀಟ್ ಸಲ್ಲಿಸಿತ್ತು. ಎನ್‌ಐಎ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರಾದ ಪ್ರಸನ್ನ ಕುಮಾರ್ ವಾದ ಮಂಡಿಸಿದ್ದರು. ವಾದ-ಪ್ರತಿವಾದಗಳನ್ನು ಆಲಿಸಿದ ಎನ್‌ಐಎ ವಿಶೇಷ ನ್ಯಾಯಾಲಯ ತೀರ್ಪನ್ನು ಕಾಯ್ದಿರಿಸಿತ್ತು. ಇಂದು ಮಧ್ಯಾಹ್ನದ ಬಳಿಕ ತೀರ್ಪು ಪ್ರಕಟವಾಗಲಿದೆ.

ಹಾಸ್ಟೆಲ್ ಕಟ್ಟಡದಲ್ಲೇ ಕೋಚಿಂಗ್ ವ್ಯವಹಾರ: ಯಾದಗಿರಿಯಲ್ಲಿ ಅಕ್ರಮ ಬಯಲು, ಅಧಿಕಾರಿಗಳ ವಿರುದ್ಧ ಆಕ್ರೋಶ

0

ಯಾದಗಿರಿ: ಸಮಾಜ ಕಲ್ಯಾಣ ಇಲಾಖೆಯಡಿಯಲ್ಲಿ ನಡೆಯುವ ಡಾ. ಬಿ.ಆರ್. ಅಂಬೇಡ್ಕರ್ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯವು ಖಾಸಗಿ ಕೋಚಿಂಗ್ ಕೇಂದ್ರವಾಗಿ ಬಳಸಲಾಗುತ್ತಿರುವ ಅಕ್ರಮ ಬೆಳಕಿಗೆ ಬಂದಿದೆ. ಲಿಂಗೇರಿ ಸ್ಟೇಷನ್ ಸಮೀಪದ ಈ ಹಾಸ್ಟೆಲ್ ಕಟ್ಟಡದಲ್ಲಿ ದೇವಿಂದ್ರಪ್ಪ ಎಂಬಾತ ಅಕ್ರಮವಾಗಿ ತರಬೇತಿ ಕೇಂದ್ರ ಆರಂಭಿಸಿರುವ ಆರೋಪ ಕೇಳಿಬಂದಿದೆ.

ಬೇಸಿಗೆ ಶಿಬಿರದ ಹೆಸರಿನಲ್ಲಿ ನಡೆಯುತ್ತಿರುವ ಈ ಚಟುವಟಿಕೆಯಲ್ಲಿ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗಿಯಾಗಿದ್ದು, ಪ್ರತಿ ವಿದ್ಯಾರ್ಥಿಯಿಂದ ತಿಂಗಳಿಗೆ 5 ಸಾವಿರ ರೂಪಾಯಿ ವಸೂಲಿ ಮಾಡಲಾಗುತ್ತಿದೆ ಎನ್ನಲಾಗಿದೆ. ಹಾಸ್ಟೆಲ್ ವಿದ್ಯಾರ್ಥಿಗಳ ಜೊತೆಗೆ ಹೊರಗಿನ ಮಕ್ಕಳಿಗೂ ಅವಕಾಶ ನೀಡಲಾಗಿದ್ದು, ರಾತ್ರಿ ವೇಳೆ ಹಾಸ್ಟೆಲ್ ಕೊಠಡಿಗಳಲ್ಲೇ ವಾಸ ಮಾಡುವಂತೆ ಮಾಡಲಾಗುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ.

ಈ ಘಟನೆಗೆ ಸಂಬಂಧಿಸಿದಂತೆ ಸಾಮಾಜಿಕ ಕಾರ್ಯಕರ್ತ ಉಮೇಶ್ ಹಾಗೂ ಸ್ಥಳೀಯ ನಾಗರಾಜ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಸರ್ಕಾರಿ ಆಸ್ತಿಯ ದುರುಪಯೋಗದ ಕುರಿತು ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ತನ್ನದೇ ಪಿಂಡ ಬಿಟ್ಟು ಸನ್ಯಾಸಿ ಆದ ಮಾಡೆಲ್: ಹರ್ಷ ರಿಚಾರಿಯಾ ಸ್ವಾಮಿ ಹರ್ಷಾನಂದ ಗಿರಿ ಆಗಿ ಪರಿವರ್ತನೆ

ಮಾಡೆಲ್ ಮತ್ತು ಇನ್‌ಫ್ಲುಯೆನ್ಸರ್ ಆಗಿ ಗುರುತಿಸಿಕೊಂಡಿದ್ದ ಹರ್ಷ ರಿಚಾರಿಯಾ ಇದೀಗ ಜೀವನದ ದಿಕ್ಕೇ ಬದಲಿಸಿ ಸನ್ಯಾಸ ಸ್ವೀಕರಿಸಿದ್ದಾರೆ. ಪ್ರಯಾಗರಾಜ್ ಮಹಾಕುಂಭದ ಬಳಿಕ ಗಮನ ಸೆಳೆದಿದ್ದ ಅವರು, ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ತಮ್ಮ ಗುರು ಮಹಾಮಂಡಲೇಶ್ವರ ಸುಮಾನಂದ ಮಹಾರಾಜರ ಸಮ್ಮುಖದಲ್ಲಿ ಪಿಂಡ ಬಿಡುವ ಮೂಲಕ ಲೌಕಿಕ ಬದುಕಿಗೆ ಅಂತ್ಯ ಘೋಷಿಸಿದ್ದಾರೆ. ಸಂಪ್ರದಾಯಬದ್ಧ ವಿಧಿವಿಧಾನಗಳೊಂದಿಗೆ ನಡೆದ ದೀಕ್ಷಾ ಕಾರ್ಯಕ್ರಮದ ಬಳಿಕ ಅವರು ‘ಸ್ವಾಮಿ ಹರ್ಷಾನಂದ ಗಿರಿ’ ಎಂದು ಹೊಸ ಹೆಸರನ್ನು ಪಡೆದಿದ್ದಾರೆ.

32ನೇ ವಯಸ್ಸಿನಲ್ಲಿ ಇಂತಹ ತೀವ್ರ ನಿರ್ಧಾರ ಕೈಗೊಂಡಿರುವುದು ವಿಶೇಷವಾಗಿದ್ದು, ಕಳೆದ ಒಂದೂವರೆ ವರ್ಷಗಳಿಂದ ಅವರು ಆಧ್ಯಾತ್ಮದತ್ತ ಒಲವು ತೋರಿಸುತ್ತಿದ್ದರು. ಸನ್ಯಾಸ ಸ್ವೀಕಾರದ ನಂತರ ಮಾತನಾಡಿದ ಅವರು, ಇನ್ನು ಮುಂದೆ ಧರ್ಮ ಮತ್ತು ಸಮಾಜ ಸೇವೆಯತ್ತ ತಮ್ಮ ಜೀವನವನ್ನು ಸಮರ್ಪಿಸುವುದಾಗಿ ತಿಳಿಸಿದ್ದಾರೆ.

ಗರುಡ ಪುರಾಣದಲ್ಲಿ ಉಲ್ಲೇಖವಾಗಿರುವಂತೆ, ಪಿಂಡ ವಿಧಿ ಸಾಮಾನ್ಯವಾಗಿ ಪೂರ್ವಜರ ಶಾಂತಿಗಾಗಿ ನಡೆಯುತ್ತದೆ. ಆದರೆ ಕೆಲವರು ತಮ್ಮ ಲೌಕಿಕ ಜವಾಬ್ದಾರಿಗಳನ್ನು ತ್ಯಜಿಸುವ ಸಂಕೇತವಾಗಿ ಜೀವಂತವಾಗಿಯೇ ಪಿಂಡ ಬಿಡುವ ಮೂಲಕ ಸನ್ಯಾಸ ಸ್ವೀಕರಿಸುತ್ತಾರೆ. ಹರ್ಷ ರಿಚಾರಿಯಾ ಅವರ ಈ ಹೆಜ್ಜೆ ಆಧ್ಯಾತ್ಮಿಕ ಪರಿವರ್ತನೆಯ ಸ್ಪಷ್ಟ ಉದಾಹರಣೆಯಾಗಿ ಕಾಣಿಸುತ್ತಿದೆ.

ಪೂರಕ ದಾಖಲೆಗಳಿಲ್ಲದಿದ್ದರೂ ಆರೋಪ ಪಟ್ಟಿ ಅಂತಿಮ ವರದಿ ಅಲ್ಲ: ಹೈಕೋರ್ಟ್ ಸ್ಪಷ್ಟನೆ

ಬೆಂಗಳೂರು: ಕಾಲ್ ಡಿಟೈಲ್ ರೆಕಾರ್ಡ್ಸ್ (ಸಿಡಿಆರ್) ಮತ್ತು ಫಾರೆನ್ಸಿಕ್ ಸೈನ್ಸ್ ಲ್ಯಾಬೊರೇಟರಿ (ಎಫ್‌ಎಸ್‌ಎಲ್) ವರದಿ ಸೇರಿದಂತೆ ಪೂರಕ ದಾಖಲೆಗಳು ಇಲ್ಲದಿದ್ದರೂ ಸಲ್ಲಿಸಲಾದ ಆರೋಪ ಪಟ್ಟಿ ಕಾನೂನುಬಾಹಿರವಾಗುವುದಿಲ್ಲ. ಆದರೆ ಅದನ್ನು ತನಿಖೆಯ ಅಂತಿಮ ವರದಿ ಎಂದು ಪರಿಗಣಿಸಲಾಗುವುದಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ತನಿಖೆ ಎನ್ನುವುದು ಆರೋಪಗಳು ಮತ್ತು ಸಾಕ್ಷ್ಯಗಳನ್ನು ಕ್ರಮೇಣ ಸಂಗ್ರಹಿಸುವ ಪ್ರಕ್ರಿಯೆಯಾಗಿದ್ದು, ನಂತರವೂ ಹೆಚ್ಚುವರಿ ಅಂಶಗಳನ್ನು ಸೇರಿಸುವ ಅವಕಾಶವಿದೆ. ಕೆಲವು ವರದಿಗಳು ಸೇರಿಸಲ್ಪಟ್ಟಿಲ್ಲ ಎಂಬ ಕಾರಣಕ್ಕೆ ಆರೋಪ ಪಟ್ಟಿಯನ್ನು ತಿರಸ್ಕರಿಸಲಾಗುವುದಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ. ಇದೇ ವೇಳೆ, ಪೋಕ್ಸೋ ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ ವ್ಯಕ್ತಿಗೆ ಡಿಫಾಲ್ಟ್ ಜಾಮೀನು ನೀಡಲು ಅವಕಾಶವಿಲ್ಲ ಎಂದು ಹೇಳಿದೆ.

ಈ ಸಂಬಂಧ, ಬೆಂಗಳೂರಿನ ಮತ್ತೀಕೆರೆಯ ನಿವಾಸಿ ಗೋವಿಂದ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.

ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿಎನ್ಎಸ್ಎಸ್) ಪ್ರಕಾರ, 10 ವರ್ಷಕ್ಕಿಂತ ಕಡಿಮೆ ಶಿಕ್ಷೆಗೆ ಒಳಪಡುವ ಅಪರಾಧ ಪ್ರಕರಣಗಳಲ್ಲಿ 60 ದಿನಗಳೊಳಗೆ ಮತ್ತು 10 ವರ್ಷಕ್ಕಿಂತ ಹೆಚ್ಚು ಶಿಕ್ಷೆಗೆ ಒಳಪಡುವ ಪ್ರಕರಣಗಳಲ್ಲಿ 90 ದಿನಗಳೊಳಗೆ ಆರೋಪ ಪಟ್ಟಿ ಸಲ್ಲಿಸಬೇಕು. ಈ ನಿಯಮದ ಮುಖ್ಯ ಉದ್ದೇಶ ಅತ್ಯಾಚಾರ ಮತ್ತು ಪೋಕ್ಸೋ ಪ್ರಕರಣಗಳಲ್ಲಿ ತನಿಖೆಯನ್ನು ವೇಗವಾಗಿ ಪೂರ್ಣಗೊಳಿಸುವುದು ಹಾಗೂ ಸಂತ್ರಸ್ತೆಯ ಹಿತವನ್ನು ಕಾಪಾಡುವುದಾಗಿದೆ.

ಆದರೆ, ಈ ನಿಯಮವನ್ನು ಆರೋಪಿಗಳು ಡಿಫಾಲ್ಟ್ ಜಾಮೀನು ಪಡೆಯಲು ಬಳಸಿಕೊಳ್ಳಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ತಿಳಿಸಿದೆ. ನಿಗದಿತ ಅವಧಿಯೊಳಗೆ ಆರೋಪ ಪಟ್ಟಿ ಸಲ್ಲಿಸಿದ ನಂತರವೂ ಹೆಚ್ಚುವರಿ ವರದಿ ಬಾಕಿ ಇದ್ದರೂ, ಡಿಫಾಲ್ಟ್ ಜಾಮೀನು ಪಡೆಯಲು ಅವಕಾಶವಿಲ್ಲ ಎಂದು ಹೇಳಿದೆ.

ಅಪರಾಧ ತನಿಖೆ ಆರಂಭದಲ್ಲೇ ಸಂಪೂರ್ಣವಾಗಿರಬೇಕೆಂಬುದು ಕಡ್ಡಾಯವಲ್ಲ. ಅದು ಕಾಲಕ್ರಮೇಣ ವಿಸ್ತರಿಸುವ ಪ್ರಕ್ರಿಯೆ. ಆರೋಪ ಪಟ್ಟಿ ಸಲ್ಲಿಸುವ ಹಂತದಲ್ಲೇ ಸಂಪೂರ್ಣತೆ ಒತ್ತಾಯಿಸುವುದು ತನಿಖಾ ಸಂಸ್ಥೆಗಳ ಮೇಲೆ ಅನಾವಶ್ಯಕ ಒತ್ತಡ ಉಂಟುಮಾಡುತ್ತದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಅತಿವೇಗದಿಂದ ಬಂದ ಕಾರು ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ: ಇಬ್ಬರು ಸಾವು!

ಕಾರವಾರ: ದಾಂಡೇಲಿ ತಾಲೂಕಿನ ಕರ್ಕಾ ಕ್ರಾಸ್ ಸಮೀಪದ ಅಜಗಾಂವ ಬಳಿ ಅತೀವೇಗದ ಚಾಲನೆಯಿಂದ ಕಾರು ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿಯಾದ ಪರಿಣಾಮ ಇಬ್ಬರು ಮೃತಪಟ್ಟಿದ್ದು, ಓರ್ವ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.

ಈ ಅಪಘಾತದಲ್ಲಿ ಧಾರವಾಡದ ಫಾರೂಖ್ ಸಾಬ್ ಹಾಗೂ ಹಳಿಯಾಳದ ಮುದಸ್ಸಿರ್ ಇಸ್ಮಾಯಿಲ್ ಮುಲ್ಲಾ ಮೃತ ಪಟ್ಟಿದ್ದಾರೆ. ಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ದಾಂಡೇಲಿಯಿಂದ ಹಳಿಯಾಳ ಕಡೆ ಪ್ರಯಾಣಿಸುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದ್ದು, ಡಿಕ್ಕಿಯ ರಭಸಕ್ಕೆ ಕಾರು ಎರಡು ಮರಗಳ ನಡುವೆ ಸಿಲುಕಿಕೊಂಡಿದೆ.

ಮೃತದೇಹಗಳನ್ನು ಹಳಿಯಾಳ ತಾಲೂಕು ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಈ ಸಂಬಂಧ ದಾಂಡೇಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಮಗಳಿಗಾಗಿ ಕಿಡ್ನಿ ಮಾರಾಟಕ್ಕೆ ಮುಂದಾದ ತಂದೆ: ನೊಂದ ಕುಟುಂಬಕ್ಕೆ ಶಾಸಕ ಸುರೇಶ್ ಕುಮಾರ್ ನೆರವು

ಬೆಂಗಳೂರು: ಬೆಂಗಳೂರಿನಲ್ಲಿ ಮಗಳ ಚಿಕಿತ್ಸೆಗೆ ಹಣ ಹೊಂದಿಸಲು ಸಾಧ್ಯವಾಗದೇ ತಂದೆ ಕಿಡ್ನಿ ಮಾರಾಟಕ್ಕೆ ಮುಂದಾದ ಹೃದಯವಿದ್ರಾವಕ ಘಟನೆ ಬೆಳಕಿಗೆ ಬಂದಿದೆ.

ಕುಸುಮಾ ಎಂಬ ಮಹಿಳೆ ಗಂಭೀರ ಅನಾರೋಗ್ಯದಿಂದ ಬಳಲುತ್ತಿದ್ದು, ಎಸ್ಟರ್ ಆಸ್ಪತ್ರೆನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಾಲ್ಕು ದಿನಗಳ ಚಿಕಿತ್ಸೆಗೆ ಸುಮಾರು ಐದೂವರೆ ಲಕ್ಷ ರೂಪಾಯಿ ವೆಚ್ಚವಾಗಿದ್ದು, ಹಣದ ಅಭಾವದಿಂದ ಸಂಕಷ್ಟದಲ್ಲಿದ್ದ ತಂದೆ ಕಿಡ್ನಿ ಮಾರಾಟಕ್ಕೆ ಮುಂದಾಗಿದ್ದರು

ಈ ವಿಷಯ ತಿಳಿದ ತಕ್ಷಣ ಶಾಸಕ ಸುರೇಶ್ ಕುಮಾರ್ ಆಸ್ಪತ್ರೆಗೆ ಭೇಟಿ ನೀಡಿ ಕುಟುಂಬದವರೊಂದಿಗೆ ಮಾತನಾಡಿದರು. ಬಳಿಕ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹಾಗೂ ಸಿಎಂ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ ಅವರ ಗಮನಕ್ಕೆ ವಿಷಯ ತಂದರು.

ಪರಿಣಾಮವಾಗಿ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಚಿಕಿತ್ಸಾ ವೆಚ್ಚ ಭರಿಸಲು ಕ್ರಮ ಕೈಗೊಳ್ಳಲಾಯಿತು. ಜೊತೆಗೆ ಆಸ್ಪತ್ರೆ ಆಡಳಿತ ಮಂಡಳಿಯೂ ಮಾನವೀಯತೆ ತೋರಿಸಿ, ಕುಸುಮಾ ಅವರಿಗೆ ಉಚಿತ ಚಿಕಿತ್ಸೆ ನೀಡಲು ಮುಂದಾಗಿದೆ.

ರೋಗಿಯ ಆರೋಗ್ಯವನ್ನು ಶೀಘ್ರದಲ್ಲೇ ಸುಧಾರಿಸುವುದಾಗಿ ವೈದ್ಯರು ಭರವಸೆ ನೀಡಿದ್ದು, ಈ ನೆರವಿಗೆ ಶಾಸಕ ಸುರೇಶ್ ಕುಮಾರ್ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದ್ದಾರೆ.

error: Content is protected !!