Home Blog

ಟೆಕ್ಕಿ ದಂಪತಿಗೆ ದುರಂತ: ಹೆದ್ದಾರಿಯಲ್ಲಿ ಕಾರು-ಲಾರಿ ಡಿಕ್ಕಿ, ನವವಿವಾಹಿತೆ ಸಾವು

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ತಾಲೂಕಿನ ಬೆಂಗಳೂರು-ಹೈದರಾಬಾದ್ ಹೆದ್ದಾರಿಯ ಬೆಂಗಳೂರು ಹೈದರಾಬಾದ್‌ ಹೈವೆಯ ಶೆಟ್ಟಿಗೆರೆ ಕ್ರಾಸ್ ಬಳಿ ಕಾರು ಕಂಟೇನರ್ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ನವವಿವಾಹಿತೆ ಸಾವನ್ನಪ್ಪಿ, ಪತಿ ಗಂಭೀರವಾಗಿ ಗಾಯಗೊಂಡಿರುವ ದಾರುಣ ಘಟನೆ ಸಂಭವಿಸಿದೆ.

ಅಪಘಾತದಲ್ಲಿ ರಕ್ಷಿತಾ ರೆಡ್ಡಿ (23) ಹಾಗೂ ಪವನ್ ರೆಡ್ಡಿ (30) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಪತಿ ರಾಜಶೇಖರ್ ರೆಡ್ಡಿ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ರಕ್ಷಿತಾ ಮತ್ತು ರಾಜಶೇಖರ್ ದಂಪತಿ ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಇಂಜಿನಿಯರ್‌ಗಳಾಗಿ ಕೆಲಸ ಮಾಡುತ್ತಿದ್ದರು. ಕಳೆದ ನವೆಂಬರ್‌ನಲ್ಲಿ ವಿವಾಹವಾಗಿದ್ದ ಈ ದಂಪತಿ, ತಮ್ಮ ಸಂಬಂಧಿ ಪವನ್ ರೆಡ್ಡಿ ಜೊತೆ ಕಾರಿನಲ್ಲಿ ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆಯ ಸ್ವಗ್ರಾಮಕ್ಕೆ ತೆರಳುತ್ತಿದ್ದರು.

ಈ ವೇಳೆ ಶೆಟ್ಟಿಗೆರೆ ಕ್ರಾಸ್ ಬಳಿ ಮುಂದೆ ಸಾಗುತ್ತಿದ್ದ ಕಂಟೇನರ್ ಲಾರಿಗೆ ಕಾರು ವೇಗವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯಾದ ತೀವ್ರತೆಗೆ ಕಾರಿನ ಮುಂಭಾಗ ಸಂಪೂರ್ಣ ಜಜ್ಜಿಹೋಗಿದ್ದು, ರಕ್ಷಿತಾ ಮತ್ತು ಪವನ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಗಂಭೀರವಾಗಿ ಗಾಯಗೊಂಡ ರಾಜಶೇಖರ್ ಅವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಗಿದೆ. ಘಟನೆ ಸಂಬಂಧ Peresandra Police Station ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

ರಾಜಮುಡಿ ಅಕ್ಕಿಗೆ ಶೀಘ್ರ GI ಟ್ಯಾಗ್ ನೀಡಲಿ: ಶ್ರೇಯಸ್ ಪಟೇಲ್ ಮನವಿ

0

ನವದೆಹಲಿ: ಹಾಸನ ಜಿಲ್ಲೆಯ ವಿಶಿಷ್ಟವಾದ ರಾಜಮುಡಿ ಅಕ್ಕಿಗೆ ಶೀಘ್ರವಾಗಿ ಭೌಗೋಳಿಕ ಸೂಚಕ ಮಾನ್ಯತೆ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಹಾಸನ ಸಂಸದ ಶ್ರೇಯಸ್ ಪಟೇಲ್ ಮನವಿ ಮಾಡಿದ್ದಾರೆ. ಲೋಕಸಭೆಯಲ್ಲಿ ಮಾತನಾಡಿದ ಅವರು, ರಾಜಮುಡಿ ಅಕ್ಕಿಯ ವೈಶಿಷ್ಟ್ಯ ಮತ್ತು ಅದರ ಮಹತ್ವವನ್ನು ವಿವರಿಸಿದರು.

ಇದೇ ವೇಳೆ, ಜಿಲ್ಲೆಯಲ್ಲಿ ಜೋಳ ಬೆಳೆ ಹಾನಿಯಾಗಿದ್ದರೂ ರೈತರಿಗೆ ಇನ್ನೂ ಪರಿಹಾರ ದೊರೆಯದಿರುವ ವಿಚಾರವನ್ನು ಅವರು ಗಮನಕ್ಕೆ ತಂದರು. ಕಳೆದ ಜೂನ್ ತಿಂಗಳಲ್ಲಿ ಸುಮಾರು 1.1 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಜೋಳ ಬೆಳೆ ಬೆಳೆದಿದ್ದು, ಜಿಲ್ಲೆಯ ಬಹುತೇಕ ಎಲ್ಲಾ ತಾಲ್ಲೂಕುಗಳಲ್ಲಿ ಹಾನಿಯಾಗಿದೆ. ಆದರೂ ಇದುವರೆಗೆ ರೈತರಿಗೆ ಯಾವುದೇ ಪರಿಹಾರ ದೊರೆತಿಲ್ಲ ಎಂದು ಅವರು ಹೇಳಿದರು.

ಈ ವಿಳಂಬದ ಕುರಿತು ಸರ್ಕಾರ ತ್ವರಿತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ ಅವರು, ಬೆಳೆ ಪರಿಹಾರವನ್ನು ಹಾಲು ಒಕ್ಕೂಟಗಳ ಮೂಲಕ ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡುವ ವ್ಯವಸ್ಥೆ ಜಾರಿಗೆ ತರಬೇಕು ಎಂದು ಮನವಿ ಮಾಡಿದರು.

ಹಾಸನ ಜಿಲ್ಲೆಯಲ್ಲಿ ಸುಮಾರು 1.8 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ತೆಂಗಿನಕಾಯಿ ಬೆಳೆ ಬೆಳೆಯಲಾಗುತ್ತಿದೆ. ಈ ಬೆಳೆಗಳಿಗೆ ಸೂಕ್ತ ಸಸ್ಯ ಸಂರಕ್ಷಣಾ ಯೋಜನೆಗಳನ್ನು ಜಾರಿಗೊಳಿಸುವುದರ ಜೊತೆಗೆ, ಜಿಲ್ಲೆಯ ಕೃಷಿ ಪ್ರಯೋಗಾಲಯಗಳ ಅಭಿವೃದ್ಧಿಗೆ ಹೆಚ್ಚುವರಿ ಅನುದಾನ ನೀಡಬೇಕು ಎಂದು ಅವರು ಒತ್ತಾಯಿಸಿದರು.

ಬಂಗಾಳದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲು ಬಿಜೆಪಿ ಸಂಚು: ಮಮತಾ ಬ್ಯಾನರ್ಜಿ ಆರೋಪ

0

ಪಶ್ಚಿಮ ಬಂಗಾಳ: ರಾಜ್ಯದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯನ್ನು ರದ್ದುಗೊಳಿಸಿ ರಾಷ್ಟ್ರಪತಿ ಆಳ್ವಿಕೆ ಹೇರಲು ಬಿಜೆಪಿ ಸಂಚು ರೂಪಿಸಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ  ಆರೋಪಿಸಿದ್ದಾರೆ.

ಮುರ್ಷಿದಾಬಾದ್ ಜಿಲ್ಲೆಯಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಚುನಾವಣಾ ಆಯೋಗದ ಕಾರ್ಯವೈಖರಿಯನ್ನು ತೀವ್ರವಾಗಿ ಟೀಕಿಸಿದರು. ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಕಾರ್ಯದಲ್ಲಿ ತೊಡಗಿದ್ದ ನ್ಯಾಯಾಂಗ ಅಧಿಕಾರಿಗಳಿಗೆ ಸಮರ್ಪಕ ಭದ್ರತೆ ಒದಗಿಸಲು ಆಯೋಗ ವಿಫಲವಾಗಿದೆ ಎಂದು ಅವರು ಹೇಳಿದರು.

ಚುನಾವಣೆ ಘೋಷಣೆಯಾದ ನಂತರ ಚುನಾವಣಾ ಆಯೋಗವು ನಾಗರಿಕ ಹಾಗೂ ಪೊಲೀಸ್ ಆಡಳಿತದಲ್ಲಿ ತನ್ನ ಅಧಿಕಾರಿಗಳನ್ನು ನಿಯೋಜಿಸಿದರೂ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಮಮತಾ ಆರೋಪಿಸಿದರು.

“ನನ್ನ ಎಲ್ಲಾ ಅಧಿಕಾರಗಳನ್ನು ಕಸಿದುಕೊಂಡಿದ್ದಾರೆ. ಇಂತಹ ಚುನಾವಣಾ ಆಯೋಗವನ್ನು ನಾನು ಎಂದಿಗೂ ನೋಡಿಲ್ಲ,” ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಬಂಗಾಳದಲ್ಲಿ ಚುನಾವಣೆ ರದ್ದುಗೊಳಿಸಿ ರಾಷ್ಟ್ರಪತಿ ಆಳ್ವಿಕೆ ಹೇರುವುದು ಬಿಜೆಪಿಯ ಉದ್ದೇಶ ಎಂದು ವಾಗ್ದಾಳಿ ನಡೆಸಿದರು.

ಮಾಲ್ಡಾದಲ್ಲಿ ನಡೆದ ಘಟನೆಯನ್ನು ಉಲ್ಲೇಖಿಸಿದ ಅವರು, ಅದು ಬಿಜೆಪಿಯ ಪೂರ್ವನಿಯೋಜಿತ ಯೋಜನೆ ಎಂದರು. ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕಿರುವುದನ್ನು ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ, ಎಸ್‌ಐಆರ್ ಕಾರ್ಯದಲ್ಲಿ ತೊಡಗಿದ್ದ ಏಳು ನ್ಯಾಯಾಂಗ ಅಧಿಕಾರಿಗಳನ್ನು ಭದ್ರತಾ ಪಡೆಗಳು ಸುಮಾರು 9 ಗಂಟೆಗಳ ಬಳಿಕ ರಕ್ಷಿಸಬೇಕಾಯಿತು ಎಂದು ಹೇಳಿದರು.

ರಾಜ್ಯದಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವ ಸಂದರ್ಭದಲ್ಲಿ, ನ್ಯಾಯಾಂಗ ಅಧಿಕಾರಿಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವುದು ಚುನಾವಣಾ ಆಯೋಗದ ಜವಾಬ್ದಾರಿ ಎಂದು ಒತ್ತಾಯಿಸಿದರು.

ಕರಾವಳಿ ಜನತೆಗೆ ಸಿಹಿ ಸುದ್ದಿ: ಏಪ್ರಿಲ್ 8ರಿಂದ ಕುವೈತ್–ಮಂಗಳೂರು ವಿಮಾನ ಸೇವೆ ಆರಂಭ

ಮಂಗಳೂರು: ಮಧ್ಯಪ್ರಾಚ್ಯ ದೇಶಗಳಲ್ಲಿ ಉದ್ಯೋಗದಲ್ಲಿರುವ ದಕ್ಷಿಣ ಭಾರತದ ಪ್ರಯಾಣಿಕರಿಗೆ, ವಿಶೇಷವಾಗಿ ಕರಾವಳಿ ಭಾಗದ ಜನರಿಗೆ ಜಜೀರಾ ಏರ್ವೇಸ್ ಸಂಸ್ಥೆ ಸಿಹಿ ಸುದ್ದಿ ನೀಡಿದೆ. ಏಪ್ರಿಲ್ 8ರಿಂದ ಸೌದಿ ಅರೇಬಿಯಾದ ದಮ್ಮಮ್ ಮೂಲಕ ಕುವೈತ್ ಮತ್ತು ಮಂಗಳೂರು ನಡುವೆ ವಾರಕ್ಕೆ ಎರಡು ಬಾರಿ ವಿಶೇಷ ವಿಮಾನ ಸೇವೆ ಆರಂಭವಾಗಲಿದೆ.

ಜಜೀರಾ ಏರ್ವೇಸ್ ಸಂಸ್ಥೆ ಮಂಗಳೂರು, ಕೋಝಿಕ್ಕೋಡ್, ತಿರುಚಿರಾಪಳ್ಳಿ ಮತ್ತು ಕಣ್ಣೂರು ಸೇರಿದಂತೆ ಭಾರತದ ನಾಲ್ಕು ನಗರಗಳಿಗೆ ದಮ್ಮಮ್ ವಿಮಾನ ನಿಲ್ದಾಣದ ಮೂಲಕ ಹೊಸ ವಿಮಾನ ಸೇವೆಗಳನ್ನು ಘೋಷಿಸಿದೆ. ಮಂಗಳೂರಿಗೆ ಏಪ್ರಿಲ್ 9ರಿಂದ ಪ್ರತಿ ಸೋಮವಾರ ಮತ್ತು ಗುರುವಾರ ವಿಮಾನಗಳು ಸಂಚರಿಸಲಿವೆ.

ಜೆ9 3417 ಸಂಖ್ಯೆಯ ವಿಮಾನವು ಕುವೈತ್ನಿಂದ ಬೆಳಿಗ್ಗೆ 8:40ಕ್ಕೆ ಹೊರಟು, ದಮ್ಮಮ್ ಮೂಲಕ ಸಂಜೆ 4:10ಕ್ಕೆ ಮಂಗಳೂರು ತಲುಪಲಿದೆ. ಹಿಂದಿರುಗುವ ಜೆ9 3418 ವಿಮಾನವು ಮಂಗಳೂರಿನಿಂದ ಸಂಜೆ 4:55ಕ್ಕೆ ಹೊರಟು, ರಾತ್ರಿ 7:40ಕ್ಕೆ ಕುವೈತ್ ತಲುಪಲಿದೆ. ಒಟ್ಟು ಪ್ರಯಾಣದ ಅವಧಿ ಸುಮಾರು 6 ಗಂಟೆಗಳಷ್ಟಿರುತ್ತದೆ.

ಕೊರೋನಾ ಅವಧಿಯಲ್ಲಿ ಮಂಗಳೂರಿಗೆ ವಿಶೇಷ ವಿಮಾನ ಸೇವೆ ಒದಗಿಸಿದ್ದ ಸಂಸ್ಥೆ, ಇದೀಗ ಮಧ್ಯಪ್ರಾಚ್ಯದ ಉದ್ವಿಗ್ನ ಪರಿಸ್ಥಿತಿಯ ನಡುವೆಯೂ ಸೇವೆಯನ್ನು ಪುನರಾರಂಭಿಸಲು ನಿರ್ಧರಿಸಿದೆ.

ಹೊಸ ಮಾರ್ಗಗಳ ಸೇರ್ಪಡೆಯೊಂದಿಗೆ ಭಾರತದಲ್ಲಿ ಜಜೀರಾ ಏರ್ವೇಸ್ ಸೇವೆ 12 ನಗರಗಳಿಗೆ ವಿಸ್ತರಿಸಿದೆ. ಅಹಮದಾಬಾದ್, ಬೆಂಗಳೂರು, ಚೆನ್ನೈ, ದೆಹಲಿ, ಹೈದರಾಬಾದ್, ಕೊಚ್ಚಿ, ಮುಂಬೈ ಮತ್ತು ತಿರುವನಂತಪುರಂ ನಗರಗಳಿಗೆ ಈಗಾಗಲೇ ವಿಮಾನ ಸೇವೆ ನೀಡಲಾಗುತ್ತಿದೆ.

ದಕ್ಷಿಣ ಭಾರತದ ಪ್ರಯಾಣಿಕರು ತಮ್ಮ ತವರು ನಗರಗಳಿಗೆ ಸುಲಭವಾಗಿ ಸಂಪರ್ಕ ಹೊಂದಲು ಸೇವೆ ಸಹಕಾರಿಯಾಗಲಿದೆ ಎಂದು ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭರತನ್ ಪಶುಪತಿ ತಿಳಿಸಿದ್ದಾರೆ.

ನಿಯಂತ್ರಣ ತಪ್ಪಿದ ಇನ್ನೋವಾ ಕಾರು: ಅಡಿಕೆ ತೋಟಕ್ಕೆ ಬಿದ್ದು ಚಾಲಕನಿಗೆ ಗಂಭೀರ ಗಾಯ

0

ಹಾಸನ: ನಿಯಂತ್ರಣ ತಪ್ಪಿದ ಕಾರೊಂದು ಅಡಿಕೆ ತೋಟಕ್ಕೆ ಬಿದ್ದು ಚಾಲಕ ಗಂಭೀರವಾಗಿ ಗಾಯಗೊಂಡ ಘಟನೆ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಲಿಂಗಾಪುರ ಗ್ರಾಮದ ಬಳಿ ನಡೆದಿದೆ. ಮಂಗಳೂರಿನಿಂದ ಬೇಲೂರು ಕಡೆಗೆ ತೆರಳುತ್ತಿದ್ದ ಇನ್ನೋವಾ ಕಾರು, ರಸ್ತೆ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಅಡಿಕೆ ತೋಟಕ್ಕೆ ಉರುಳಿಬಿದ್ದಿದೆ.

ಘಟನೆಯಲ್ಲಿ ಕಾರು ಚಾಲಕ ಮಹಮದ್ (30) ಗಾಯಗೊಂಡಿದ್ದು, ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರು ಬಿದ್ದ ತೀವ್ರತೆಗೆ ತೋಟದಲ್ಲಿದ್ದ ಮೂರು ಅಡಿಕೆ ಮರಗಳು ಮುರಿದು ಹೋಗಿವೆ. ಇನ್ನೋವಾ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ.

ಅದೃಷ್ಟವಶಾತ್ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಘಟನೆ ಅರೇಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ನಾನು CM ಆದ್ರೆ ಮೊದಲ ಕ್ಯಾಬಿನೆಟ್ʼನಲ್ಲೇ ಮುಸ್ಲಿಮರನ್ನು ಅಲ್ಪಸಂಖ್ಯಾತ ಪಟ್ಟಿಯಿಂದ ಹೊರಹಾಕ್ತೇನೆ: ಯತ್ನಾಳ್

ವಿಜಯಪುರ: ನಾನು ಮುಖ್ಯಮಂತ್ರಿ ಆದರೆ ಮೊದಲ ಸಚಿವ ಸಂಪುಟ ಸಭೆಯಲ್ಲೇ ಮುಸ್ಲಿಮರನ್ನು ಅಲ್ಪಸಂಖ್ಯಾತರ ಪಟ್ಟಿಯಿಂದ ಹೊರಹಾಕುತ್ತೇನೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹನುಮ ಜಯಂತಿ ಸಂದರ್ಭದಲ್ಲಿ ಆಂಜನೇಯನ ಸನ್ನಿಧಿಯಲ್ಲಿ ನಿಂತು ಈ ಮಾತುಗಳನ್ನು ಹೇಳುತ್ತಿದ್ದೇನೆ ಎಂದರು. ನಾನು ಯಾವುದೇ ಕಾರಣಕ್ಕೂ ಬಿಜೆಪಿಗೆ ಸೇರಿಸಿಕೊಳ್ಳಿ ಎಂದು ಕೇಳುವುದಿಲ್ಲ. ಅವರೇ ನನ್ನನ್ನು ಪಕ್ಷಕ್ಕೆ ಆಹ್ವಾನಿಸುತ್ತಾರೆ ಎಂದು ಹೇಳಿದರು.

ಮುಂದುವರಿದು, ಮುಖ್ಯಮಂತ್ರಿ ಆದರೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಮಾದರಿಯಲ್ಲಿ ಆಡಳಿತ ನಡೆಸುತ್ತೇನೆ ಎಂದರು. ಮೊದಲ ಸಚಿವ ಸಂಪುಟದಲ್ಲೇ ಮುಸ್ಲಿಮರನ್ನು ಅಲ್ಪಸಂಖ್ಯಾತರ ಪಟ್ಟಿಯಿಂದ ಹೊರಹಾಕುವುದಾಗಿ ಪುನರುಚ್ಚರಿಸಿದರು. ಮರಾಠರು, ಬ್ರಾಹ್ಮಣರು, ಕ್ಷತ್ರಿಯರು ಸೇರಿದಂತೆ ಇತರ ಸಮುದಾಯಗಳಿಗೆ ಅಲ್ಪಸಂಖ್ಯಾತ ಸ್ಥಾನಮಾನ ನೀಡುವ ವಿಚಾರವನ್ನೂ ಪ್ರಸ್ತಾಪಿಸಿದರು.

ಇದೇ ವೇಳೆ, ವೀರಣ್ಣ ಚರಂತಿಮಠ ನನ್ನ ಆತ್ಮೀಯರು. ಬಾಗಲಕೋಟೆಯಲ್ಲಿ ಬಿಜೆಪಿ ಕಾರ್ಯಕರ್ತರು ಪ್ರಚಾರಕ್ಕೆ ಕರೆದಿದ್ದಾರೆ. ಅದಕ್ಕಾಗಿ ನಾನು ಚರಂತಿಮಠ ಅವರ ಪರ ಪ್ರಚಾರಕ್ಕೆ ಹೋಗುತ್ತಿದ್ದೇನೆ ಎಂದರು.

ಯಾವುದೇ ನಾಟಕ ಮಾಡಿ ಬಿಜೆಪಿಗೆ ಸೇರುವ ಅವಶ್ಯಕತೆ ಇಲ್ಲ ಎಂದು ಹೇಳಿದ ಅವರು, ಸಚಿವ ಎಂ.ಬಿ. ಪಾಟೀಲ್ ಅವರ ವಿರುದ್ಧವೂ ಟೀಕೆ ಮಾಡಿದರು. ಸ್ವಾಭಿಮಾನ ಇದ್ದರೆ ಬಾಗೇವಾಡಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಮಾಡಬಾರದು ಎಂದು ಅವರು ಹೇಳಿದರು. ಅಲ್ಲದೆ, ಬಾಗೇವಾಡಿ ಕಾಂಗ್ರೆಸ್ ಅಭ್ಯರ್ಥಿ ರಾತ್ರಿ ವೇಳೆ ಬಂದು ಎಂ.ಬಿ. ಪಾಟೀಲ್ ವಿರುದ್ಧ ಪ್ರಚಾರ ಮಾಡುತ್ತಾನೆ ಎಂದು ಆರೋಪಿಸಿದರು.

ಟ್ರಂಪ್ ಭಾಷಣದ ಬೆನ್ನಲ್ಲೇ ಕಚ್ಚಾ ತೈಲ ಬೆಲೆಯಲ್ಲಿ ಭಾರೀ ಏರಿಕೆ

0

ವಾಷಿಂಗ್ಟನ್: ಇರಾನ್ ಯುದ್ಧಕ್ಕೆ ಸಂಬಂಧಿಸಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ಟ್ರಂಪ್ ದೇಶದ ಜನರನ್ನು ಉದ್ದೇಶಿಸಿ ಭಾಷಣ ಮಾಡಿದ ತಕ್ಷಣವೇ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯಲ್ಲಿ ದಿಢೀರ್ ಏರಿಕೆ ಕಂಡುಬಂದಿದೆ.

ಅಮೆರಿಕದ ಕಾಲಮಾನ ಪ್ರಕಾರ ಬುಧವಾರ ರಾತ್ರಿ 9 ಗಂಟೆಗೆ (ಭಾರತೀಯ ಕಾಲಮಾನ ಗುರುವಾರ ಬೆಳಗ್ಗೆ 6.30ಕ್ಕೆ) ಮಾತನಾಡಿದ ಅವರು, ಯುದ್ಧ ಇನ್ನೂ ಎರಡು ರಿಂದ ಮೂರು ವಾರಗಳವರೆಗೆ ಮುಂದುವರಿಯಲಿದೆ ಎಂದು ತಿಳಿಸಿದ್ದಾರೆ.

ಹೇಳಿಕೆಯ ಬೆನ್ನಲ್ಲೇ ತೈಲ ರಫ್ತು ರಾಷ್ಟ್ರಗಳ ಸಂಘಟನೆಯಾದ OPEC ಸದಸ್ಯ ರಾಷ್ಟ್ರಗಳ ಬ್ರೆಂಟ್ ಕಚ್ಚಾ ತೈಲದ ಬೆಲೆ 4.5 ಶೇಕಡಾ ಏರಿಕೆಯಾಗಿ, ಒಂದು ಬ್ಯಾರೆಲ್ (158 ಲೀಟರ್) ದರ 106.42 ಡಾಲರ್ (ಸುಮಾರು 9,930 ರೂಪಾಯಿ) ತಲುಪಿದೆ.

ಅಮೆರಿಕದ ವೆಸ್ಟ್ ಟೆಕ್ಸಾಸ್ ಮಧ್ಯಮ ದರ್ಜೆಯ ಕಚ್ಚಾ ತೈಲದ ದರ ಕೂಡ 4 ಶೇಕಡಾ ಏರಿಕೆಯಾಗಿ 104.24 ಡಾಲರ್ (ಸುಮಾರು 9,732 ರೂಪಾಯಿ) ಮಟ್ಟದಲ್ಲಿ ವ್ಯವಹಾರ ನಡೆಯುತ್ತಿದೆ.

ಇದಕ್ಕೂ ಮೊದಲು ಯುದ್ಧ ಶೀಘ್ರ ಅಂತ್ಯಗೊಳ್ಳಬಹುದು ಎಂದು ಹೇಳಿದ್ದ ಹಿನ್ನೆಲೆಯಲ್ಲಿ, ಬುಧವಾರ ಮಾರುಕಟ್ಟೆಯಲ್ಲಿ ಬ್ರೆಂಟ್ ತೈಲದ ಬೆಲೆ 99ರಿಂದ 100 ಡಾಲರ್ ನಡುವೆ ಇದ್ದರೆ, ವೆಸ್ಟ್ ಟೆಕ್ಸಾಸ್ ತೈಲದ ದರ 98.71 ಡಾಲರ್ ಮಟ್ಟದಲ್ಲಿ ಇತ್ತು.

ತೈಲದ ಬೆಲೆ ಏರಿಕೆ ತಾತ್ಕಾಲಿಕವಾಗಿದೆ ಎಂದು ಹೇಳಿದ ಅವರು, ಇರಾನ್ ನಡೆಸುತ್ತಿರುವ ದಾಳಿಗಳು ವಾಣಿಜ್ಯ ತೈಲ ಸಾಗಣೆ ನೌಕೆಗಳ ಮೇಲೆ ಪರಿಣಾಮ ಬೀರುತ್ತಿರುವುದರಿಂದ ಬೆಲೆ ಏರಿಕೆಯಾಗಿದೆ ಎಂದು ಆರೋಪಿಸಿದರು.

ಯುದ್ಧವು ಇನ್ನೂ ಎರಡು ಅಥವಾ ಮೂರು ವಾರಗಳಲ್ಲಿ ಅಂತ್ಯಗೊಳ್ಳಲಿದೆ. ಅದರ ಬಳಿಕ ತೈಲದ ಬೆಲೆ ತೀವ್ರವಾಗಿ ಇಳಿಕೆಯಾಗಲಿದೆ ಎಂದರು. ಹಾರ್ಮುಜ್ ಜಲಸಂಧಿಯಿಂದ ಬರುವ ತೈಲದ ಅವಶ್ಯಕತೆ ಅಮೆರಿಕಕ್ಕಿಲ್ಲ. ಮಾರ್ಗದಿಂದ ತೈಲ ಪಡೆಯುವ ಇತರ ರಾಷ್ಟ್ರಗಳೇ ಅದರ ರಕ್ಷಣೆಯ ಜವಾಬ್ದಾರಿ ಹೊತ್ತುಕೊಳ್ಳಬೇಕು ಎಂದು ಹೇಳಿದರು.

ಅಮೆರಿಕವು ವಿಶ್ವದ ಅತಿದೊಡ್ಡ ತೈಲ ಉತ್ಪಾದಕ ರಾಷ್ಟ್ರವಾಗಿದ್ದು, ಜಾಗತಿಕ ತೈಲ ಬೆಲೆ ಏರಿಕೆಯಾದಾಗ ದೇಶಕ್ಕೆ ಆರ್ಥಿಕ ಲಾಭವಾಗುತ್ತದೆ. ಸೌದಿ ಅರೇಬಿಯಾ ಮತ್ತು ರಷ್ಯಾ ದೇಶಗಳನ್ನು ಸೇರಿಸಿದರೂ, ಅಮೆರಿಕ ಹೆಚ್ಚು ಪ್ರಮಾಣದಲ್ಲಿ ತೈಲ ಉತ್ಪಾದಿಸುತ್ತಿದೆ ಎಂದು ಹೇಳಿದರು.

ತೈಲದ ಕೊರತೆಯನ್ನು ಎದುರಿಸುತ್ತಿರುವ ರಾಷ್ಟ್ರಗಳು ಅಮೆರಿಕದಿಂದ ತೈಲ ಖರೀದಿಸಬಹುದು ಎಂದೂ ಹೇಳಿದರು.

ಇರಾನ್ ಶಾಂತಿ ಮಾತುಕತೆಗೆ ಬಾರದಿದ್ದರೆ, ಮುಂದಿನ 2-3 ವಾರಗಳಲ್ಲಿ ಅಲ್ಲಿನ ತೈಲ ಕೇಂದ್ರಗಳು ಮತ್ತು ವಿದ್ಯುತ್ ಘಟಕಗಳ ಮೇಲೆ ತೀವ್ರ ದಾಳಿ ನಡೆಸುವ ಎಚ್ಚರಿಕೆಯನ್ನು ನೀಡಿದ್ದಾರೆ.

ಕಾನೂನು ಸುವ್ಯವಸ್ಥೆಗೂ ಜಿಡಿಪಿಗೂ ನೇರ ಸಂಬಂಧವಿದೆ: ಸಿ.ಎಂ.ಸಿದ್ದರಾಮಯ್ಯ

ಬೆಂಗಳೂರು: ಸೈಬರ್ ಅಪರಾಧಗಳು ಸೇರಿದಂತೆ ನಾನಾ ಅಪರಾಧಗಳಲ್ಲಿ ನಮ್ಮ ರಾಜ್ಯ ರಾಷ್ಟ್ರೀಯ ಸರಾಸರಿಗಿಂತ ಹೆಚ್ಚಾಗಿದ್ದು ಇದನ್ನು ಕಟ್ಟುನಿಟ್ಟಾಗಿ ತಡೆಗಟ್ಟಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಚಿಸಿದರು.

ಕೋರಮಂಗಲದ ಪರೇಡ್ ಮೈದಾನದಲ್ಲಿ ಆಯೋಜಿಸಿದ್ದ “ಪೊಲೀಸ್ ಧ್ವಜ ದಿನಾಚರಣೆ” ಕಾರ್ಯಕ್ರಮದಲ್ಲಿ “ಮುಖ್ಯಮಂತ್ರಿಗಳ ಪದಕ” ಪ್ರದಾನ ಮಾಡಿ ಮಾತನಾಡಿದರು.

ಯಾವುದೇ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಆಯಾ ಠಾಣಾಧಿಕಾರಿಯ ಗಮನಕ್ಕೆ ಬರದಂತೆ ಯಾವುದೇ ಅಪರಾಧಗಳು, ಕೆಟ್ಟ ವ್ಯವಹಾರಗಳು ನಡೆಯಲು ಸಾಧ್ಯವಿಲ್ಲ ಎನ್ನುವುದು ನನ್ನ ನಂಬಿಕೆ ಎಂದರು.

ಹಲವು ರೀತಿಯ ಅಪರಾಧ ಪ್ರಕರಣಗಳನ್ನು ಕಟ್ಟುನಿಟ್ಟಾಗಿ ನಿಯಂತ್ರಿಸಿ ಶಿಕ್ಷೆ ಪ್ರಮಾಣದಲ್ಲಿ ಕರ್ನಾಟಕ ರಾಜ್ಯ ಮುಂದಿದೆ. ಇದಕ್ಕಾಗಿ ಪೊಲೀಸ್ ಇಲಾಖೆಯನ್ನು ಅಭಿನಂದಿಸುವ ಜೊತೆಗೆ ಪ್ರಮಾಣ ಹೆಚ್ಚಾಗಿರುವ ಅಪರಾಧಗಳ ನಿಯಂತ್ರಣದಲ್ಲೂ ನಾವು ಶ್ರಮ ಹಾಕಬೇಕಿದೆ ಎಂದು ಸೂಚಿಸಿದರು.

ಸೈಬರ್ ಅಪರಾಧಗಳು ಸೇರಿದಂತೆ ನಾನಾ ರೀತಿಯ ಅಪರಾಧಗಳನ್ನು ತಡೆಯಲು ತಂತ್ರಜ್ಞಾನದ ಅವಕಾಶ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಸಮಯದ ಮಿತಿ ಇಲ್ಲದಂತೆ ದಿನದ 24 ಗಂಟೆಯೂ ಕರ್ತವ್ಯಪ್ರಜ್ಞೆ ಇಟ್ಟುಕೊಂಡು ಕೆಲಸ ಮಾಡುವುದರಿಂದ ಸಮಾಜದಲ್ಲಿ ನೆಮ್ಮದಿ ಮತ್ತು ಸೌಹಾರ್ದತೆ ನೆಲೆಸಿದೆ ಎಂದರು.

ಮಹಿಳೆಯರು, ಮಕ್ಕಳು ಮತ್ತು ದುರ್ಬಲರು ಹಾಗೂ ಅಸಹಾಯಕರ ನಮ್ಮ ಸರ್ಕಾರ ರಕ್ಷಣೆಗೆ ಮೊದಲ ಆದ್ಯತೆ ನೀಡುತ್ತಿದೆ. ಪೊಲೀಸರೂ ಇದನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡಬೇಕು ಎಂದರು.

ರಾಜ್ಯದ ಆರ್ಥಿಕ ಬೆಳವಣಿಗೆಗೂ, ಜಿಡಿಪಿ ಪ್ರಗತಿಗೂ ರಾಜ್ಯದ ಕಾನೂನು ಸುವ್ಯವಸ್ಥೆಗೂ ನೇರಾ ನೇರಾ ಸಂಬಂಧ ಇರುತ್ತದೆ. ಇದನ್ನು ಗಮನದಲ್ಲಿ ಇಟ್ಟುಕೊಂಡು ಪೊಲೀಸ್ ಇಲಾಖೆ ಕಾರ್ಯನಿರ್ವಹಿಸಿದರೆ ಆರ್ಥಿಕತೆಗೂ ದೊಡ್ಡ ಕೊಡುಗೆ ಕೊಟ್ಟಂತಾಗುತ್ತದೆ ಎಂದರು.

ಕರ್ನಾಟಕ ಡ್ರಗ್ಸ್ ಮುಕ್ತ ರಾಜ್ಯ ಆಗಬೇಕು ಎನ್ನುವ ಗುರಿ ನಮ್ಮ ಸರ್ಕಾರದ್ದಾಗಿದೆ. ಇದು ಪೊಲೀಸ್ ಇಲಾಖೆಯ ಗುರಿಯೂ ಆಗಬೇಕಿದೆ ಎಂದರು.

ಪದಕ ವಿಜೇತರೆಲ್ಲರಿಗೂ ಶುಭಾಶಯ ಕೋರಿದ ಮುಖ್ಯಮಂತ್ರಿಗಳು, ಇವರ ಕಾರ್ಯ ಮತ್ತು ವೃತ್ತಿಪರತೆ ಇತರರಿಗೂ ಸ್ಫೂರ್ತಿಯಾಗಲಿ ಎಂದು ಹಾರೈಸಿದರು. ಗೃಹ ಸಚಿವರಾದ ಜಿ.ಪರಮೇಶ್ವರ್, ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಡಾ.ಎಂ.ಎ.ಸಲೀಂ ಅವರುಗಳು ಉಪಸ್ಥಿತರಿದ್ದರು.‌

ಧರ್ಮಸ್ಥಳ ಪ್ರಕರಣ: ಯೂಟ್ಯೂಬರ್ ಸಮೀರ್ ವಿರುದ್ಧದ ತನಿಖೆಗೆ ಹೈಕೋರ್ಟ್ ತಡೆ

ಬೆಂಗಳೂರು: ಧರ್ಮಸ್ಥಳದಲ್ಲಿ ನಡೆದ ಅಸಹಜ ಸಾವಿನ ಪ್ರಕರಣದ ತನಿಖೆಗೆ ಸಂಬಂಧಿಸಿ, ಕಾಲ್ಪನಿಕ ವಿಚಾರಗಳನ್ನು ಆಧರಿಸಿ ಕೃತಕ ಬುದ್ಧಿಮತ್ತೆಯ ನೆರವಿನಿಂದ ವಿಡಿಯೋ ಸಿದ್ಧಪಡಿಸಿ ಯೂಟ್ಯೂಬ್ ಚಾನೆಲ್‌ನಲ್ಲಿ ಪ್ರಸಾರ ಮಾಡಿದ್ದ ಆರೋಪದ ಹಿನ್ನೆಲೆಯಲ್ಲಿ ಯೂಟ್ಯೂಬರ್ ಎಂ.ಡಿ. ಸಮೀರ್ ವಿರುದ್ಧ ದಾಖಲಾಗಿದ್ದ ಪ್ರಕರಣದ ತನಿಖೆಗೆ ಹೈಕೋರ್ಟ್ ತಾತ್ಕಾಲಿಕ ತಡೆ ನೀಡಿದೆ.

ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವನ್ನು ರದ್ದುಪಡಿಸುವಂತೆ ಕೋರಿ ಸಮೀರ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಏಕಸದಸ್ಯ ಪೀಠ, ತನಿಖೆಗೆ ತಡೆ ನೀಡುವುದರ ಜೊತೆಗೆ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ. ಮುಂದಿನ ವಿಚಾರಣೆಯನ್ನು ಏಪ್ರಿಲ್ 22ಕ್ಕೆ ಮುಂದೂಡಲಾಗಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಯೂಟ್ಯೂಬ್ ಚಾನೆಲ್ ತೆರೆಯುವಾಗ ಸಮೀರ್‌ನ ವಿಡಿಯೋ ಕಾಣಿಸಿಕೊಂಡಿದ್ದು, ಅದರಲ್ಲಿ ಸುಳ್ಳು ಮಾಹಿತಿಯನ್ನು ಹಂಚಲಾಗಿದೆ ಎಂದು ಹೇಳಲಾಗಿದೆ. ಪೊಲೀಸರು ಸ್ವಯಂಪ್ರೇರಿತವಾಗಿ ದೂರು ದಾಖಲಿಸಿದ್ದು, ಸಮೀರ್ ಸಾರ್ವಜನಿಕರ ನೆಮ್ಮದಿಯನ್ನು ಭಂಗಪಡಿಸಿದ್ದಾನೆ ಎಂದು ಆರೋಪಿಸಿದ್ದಾರೆ ಎಂದು ಪೀಠಕ್ಕೆ ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪೀಠ, “ಸುಮ್ಮನೆ ಇರಲು ಆಗುವುದಿಲ್ಲವೇ? ಯಾರ ನೆಮ್ಮದಿ ಹಾಳಾಗಿದೆ ಎಂಬುದು ತಿಳಿದಿದೆ. ಅದು ಸಾರ್ವಜನಿಕರದು ಅಲ್ಲ. ಅವರದೇ ನೆಮ್ಮದಿ ಯಾಕೆ ನೆಮ್ಮದಿ ಅಲ್ಲ?” ಎಂದು ಪ್ರಶ್ನಿಸಿದೆ.

ಇನ್ನೊಂದೆಡೆ, ಸರ್ಕಾರಿ ವಕೀಲರು ವಾದ ಮಂಡಿಸಿ, ಇದು ಸ್ವಯಂಪ್ರೇರಿತ ಪ್ರಕರಣವಲ್ಲ, ಧರ್ಮಸ್ಥಳ ಪ್ರಕರಣದ ತನಿಖೆಗೆ ಸಂಬಂಧಪಟ್ಟದ್ದಾಗಿದೆ ಎಂದು ಹೇಳಿದರು. ಸಾಕ್ಷಿದಾರರ ರಕ್ಷಣೆ ಸಂಬಂಧಿತ ಪ್ರಕರಣವಾಗಿದ್ದು, ಅದರಲ್ಲಿ ಕೃತಕ ಬುದ್ಧಿಮತ್ತೆ ಬಳಸಿ ಸಮೀರ್ ವಿಡಿಯೋ ನಿರ್ಮಿಸಿದ್ದಾರೆ. ಕೆಲವು ಶವಗಳನ್ನು ಹೂಳಲಾಗಿದೆ ಹಾಗೂ ಕೆಲವು ಸಂಸ್ಕಾರ ಮಾಡಲಾಗಿದೆ ಎಂದು ವಿಡಿಯೋದಲ್ಲಿ ತೋರಿಸಲಾಗಿದೆ ಎಂದು ತಿಳಿಸಿದರು.

ಸಮೀರ್ ವಿರುದ್ಧ ಈಗಾಗಲೇ ಐದು ಪ್ರಕರಣಗಳು ದಾಖಲಾಗಿವೆ. ತನಿಖೆ ಮುಂದುವರಿದರೆ ಸತ್ಯ ಬಹಿರಂಗವಾಗಲಿದೆ. ಇದೇ ಮೊದಲ ಬಾರಿ ಅಲ್ಲ, ಸಾರ್ವಜನಿಕರನ್ನು ದಾರಿ ತಪ್ಪಿಸಿ ದ್ವೇಷದ ವಾತಾವರಣ ನಿರ್ಮಿಸುವ ಕೆಲಸವನ್ನು ಸಮೀರ್ ಮಾಡಿದ್ದಾನೆ ಎಂದು ಸರ್ಕಾರಿ ವಕೀಲರು ಪೀಠಕ್ಕೆ ಮಾಹಿತಿ ನೀಡಿದರು.

ಚಂದ್ರನತ್ತ ಮತ್ತೆ ಮಾನವಯಾನ: 54 ವರ್ಷಗಳ ನಂತರ ನಾಸಾದ ಮಹತ್ವದ ಹೆಜ್ಜೆ

0

ವಾಷಿಂಗ್ಟನ್: ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ, 54 ವರ್ಷಗಳ ಬಳಿಕ ಮತ್ತೆ ಚಂದ್ರನತ್ತ ಮಾನವಸಹಿತ ಗಗನಯಾನವನ್ನು ಆರಂಭಿಸಿದೆ. ಯೋಜನೆಯಡಿಯಲ್ಲಿ ನಾಲ್ವರು ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಲಾಗಿದೆ.

ತಂಡದಲ್ಲಿ ಕಮಾಂಡರ್ ರೀಡ್ ವೈಸ್ಮನ್, ಪೈಲಟ್ಗಳಾದ ವಿಕ್ಟರ್ ಗ್ಲೋವರ್ ಮತ್ತು ಕ್ರಿಸ್ಟಿನಾ ಕೋಚ್, ಜೊತೆಗೆ ಕೆನಡಾದ ಗಗನಯಾತ್ರಿ ಜೆರೆಮಿ ಹ್ಯಾನ್ಸನ್ ಸೇರಿದ್ದಾರೆ.

1972ರಲ್ಲಿ ನಡೆದ ಅಪೊಲೊ 17 ಗಗನಯಾನದ ಬಳಿಕ ಇದು ಚಂದ್ರನತ್ತ ಸಾಗುತ್ತಿರುವ ಮೊದಲ ಮಾನವಸಹಿತ ಗಗನಯಾನವಾಗಿದೆ. ಯಾನಕ್ಕೆ ಭಾರಿ ಉಡಾವಣಾ ರಾಕೆಟ್ ಮತ್ತು ಒರಿಯನ್ ಬಾಹ್ಯಾಕಾಶ ನೌಕೆಯನ್ನು ಬಳಸಲಾಗಿದೆ.

ಸುಮಾರು 10 ದಿನಗಳ ಗಗನಯಾನ ಏಪ್ರಿಲ್ 1ರಂದು ಉಡಾವಣೆಯಾಗಿದ್ದು, ಏಪ್ರಿಲ್ 10 ಅಥವಾ 11ರಂದು ಭೂಮಿಗೆ ಮರಳುವ ನಿರೀಕ್ಷೆಯಿದೆ. ಪ್ರಯಾಣದಲ್ಲಿ ಗಗನಯಾತ್ರಿಗಳು ಚಂದ್ರನ ಮೇಲೆ ಇಳಿಯುವುದಿಲ್ಲ; ಬದಲಿಗೆ ಚಂದ್ರನ ಸುತ್ತ ಪ್ರದಕ್ಷಿಣೆ ಮಾಡಿ ಭೂಮಿಗೆ ವಾಪಸ್ಸಾಗುತ್ತಾರೆ.

ಗಗನಯಾನದ ಮುಖ್ಯ ಉದ್ದೇಶ ಬಾಹ್ಯಾಕಾಶ ನೌಕೆಯ ಜೀವ ರಕ್ಷಕ ವ್ಯವಸ್ಥೆಗಳ ಸುರಕ್ಷತೆಯನ್ನು ಪರೀಕ್ಷಿಸುವುದಾಗಿದೆ. ಮುಂದಿನ ದಿನಗಳಲ್ಲಿ ಮಾನವರನ್ನು ಚಂದ್ರನ ಮೇಲೆ ಇಳಿಸುವ ಮಹತ್ವದ ಯೋಜನೆಗಳಿಗೆ ಇದು ಮೊದಲ ಹಂತವಾಗಿದೆ.

error: Content is protected !!