Home Blog

ನೈಋತ್ಯ ರೈಲ್ವೆ ಪೊಲೀಸರ ಭರ್ಜರಿ ಬೇಟೆ: 49 ಮಕ್ಕಳ ರಕ್ಷಣೆ, ಲಕ್ಷಾಂತರ ಮೌಲ್ಯದ ಅಕ್ರಮ ವಸ್ತು ಜಪ್ತಿ

ಹುಬ್ಬಳ್ಳಿ: ಪ್ರಯಾಣಿಕರ ಸುರಕ್ಷತೆ, ರೈಲ್ವೆ ಆವರಣದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವುದು ಹಾಗೂ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ನೈಋತ್ಯ ರೈಲ್ವೆಯ ರೈಲ್ವೆ ರಕ್ಷಣಾ ಪಡೆ ಮೇ 2026ರ ಅವಧಿಯಲ್ಲಿ ಗಮನಾರ್ಹ ಸಾಧನೆ ದಾಖಲಿಸಿದೆ.

ಮಕ್ಕಳ ರಕ್ಷಣೆ, ಕಳೆದುಹೋದ ವಸ್ತುಗಳ ಪತ್ತೆ, ಮಾದಕ ವಸ್ತುಗಳು ಹಾಗೂ ಅಕ್ರಮ ಮದ್ಯ ಸಾಗಣೆ ವಿರುದ್ಧ ಕೈಗೊಂಡ ಕಾರ್ಯಾಚರಣೆಗಳ ಮೂಲಕ ಆರ್‌ಪಿಎಫ್ ತನ್ನ ಕಾರ್ಯಕ್ಷಮತೆಯನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.

ಆರ್‌ಪಿಎಫ್‌ನ ‘ನನ್ಹೆ ಫರಿಷ್ಠೇ’ ಅಭಿಯಾನದಡಿ ಮೇ ತಿಂಗಳಲ್ಲಿ 12 ಬಾಲಕಿಯರು ಸೇರಿದಂತೆ ಒಟ್ಟು 49 ಮಕ್ಕಳನ್ನು ರಕ್ಷಿಸಲಾಗಿದೆ. ರೈಲು ನಿಲ್ದಾಣಗಳು ಹಾಗೂ ರೈಲುಗಳಲ್ಲಿ ಅಪಾಯದ ಪರಿಸ್ಥಿತಿಯಲ್ಲಿದ್ದ, ದಾರಿ ತಪ್ಪಿದ್ದ ಅಥವಾ ಕಾಣೆಯಾಗಿದ್ದ ಮಕ್ಕಳನ್ನು ಗುರುತಿಸಿ ಸುರಕ್ಷಿತವಾಗಿ ರಕ್ಷಿಸಿ, ಸಂಬಂಧಿತ ಇಲಾಖೆಗಳು ಹಾಗೂ ಕುಟುಂಬಗಳೊಂದಿಗೆ ಸಂಪರ್ಕ ಸಾಧಿಸಿ ಪುನರ್ವಸತಿ ಕಲ್ಪಿಸಲಾಗಿದೆ. ಈ ಕಾರ್ಯಾಚರಣೆ ಮಕ್ಕಳ ಸುರಕ್ಷತೆಗಾಗಿ ಆರ್‌ಪಿಎಫ್‌ನ ಬದ್ಧತೆಯನ್ನು ತೋರಿಸಿದೆ.

ಇದೇ ಅವಧಿಯಲ್ಲಿ ರೈಲು ಪ್ರಯಾಣಿಕರು ಕಳೆದುಕೊಂಡಿದ್ದ ಮೊಬೈಲ್ ಫೋನ್‌ಗಳು, ಲ್ಯಾಪ್‌ಟಾಪ್‌ಗಳು, ಚಿನ್ನಾಭರಣ ಸೇರಿದಂತೆ ವಿವಿಧ ಅಮೂಲ್ಯ ವಸ್ತುಗಳನ್ನು ಪತ್ತೆಹಚ್ಚುವಲ್ಲಿಯೂ ಆರ್‌ಪಿಎಫ್ ಯಶಸ್ವಿಯಾಗಿದೆ. ಒಟ್ಟು ₹50.34 ಲಕ್ಷ ಮೌಲ್ಯದ ಕಳೆದುಹೋದ ವಸ್ತುಗಳನ್ನು ಪತ್ತೆಹಚ್ಚಿ ಅವುಗಳ ಮಾಲೀಕರಿಗೆ ಹಿಂದಿರುಗಿಸಲಾಗಿದೆ. ಇದರಿಂದ ಪ್ರಯಾಣಿಕರಲ್ಲಿ ರೈಲ್ವೆ ಭದ್ರತಾ ಸಿಬ್ಬಂದಿಯ ಮೇಲಿನ ವಿಶ್ವಾಸ ಮತ್ತಷ್ಟು ಹೆಚ್ಚಿದೆ.

ಮಾದಕ ವಸ್ತುಗಳ ವಿರುದ್ಧವೂ ಆರ್‌ಪಿಎಫ್ ಕಟ್ಟುನಿಟ್ಟಿನ ಕಾರ್ಯಾಚರಣೆ ನಡೆಸಿದೆ. ವಿವಿಧ ತಪಾಸಣೆ ಹಾಗೂ ದಾಳಿಗಳ ವೇಳೆ ₹63.80 ಲಕ್ಷ ಮೌಲ್ಯದ ಗಾಂಜಾ ಮತ್ತು ಅಕ್ರಮ ಸಿಗರೇಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದೇ ವೇಳೆ ಅಕ್ರಮ ಮದ್ಯ ಸಾಗಣೆ ವಿರುದ್ಧ ಕೈಗೊಂಡ ಕಾರ್ಯಾಚರಣೆಯಲ್ಲಿ ₹83.31 ಲಕ್ಷ ಮೌಲ್ಯದ 1,458 ಮದ್ಯದ ಬಾಟಲಿಗಳನ್ನು ಜಪ್ತಿ ಮಾಡಲಾಗಿದೆ. ಈ ಸಂಬಂಧ ಹಲವರ ವಿರುದ್ಧ ಪ್ರಕರಣಗಳನ್ನು ದಾಖಲಿಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಸಾಮಾಜಿಕ ಜವಾಬ್ದಾರಿಯ ಭಾಗವಾಗಿ ‘ಆಪರೇಷನ್ ಡಿಗ್ನಿಟಿ’ ಅಡಿಯಲ್ಲಿ ಸಂಕಷ್ಟದಲ್ಲಿದ್ದ ಮೂವರು ವೃದ್ಧರನ್ನು ರಕ್ಷಿಸಿ ಅಗತ್ಯ ನೆರವು ಹಾಗೂ ಪುನರ್ವಸತಿ ಸೌಲಭ್ಯ ಒದಗಿಸಲಾಗಿದೆ. ನಿರ್ಗತಿಕರು, ಹಿರಿಯ ನಾಗರಿಕರು ಹಾಗೂ ನೆರವಿನ ಅಗತ್ಯವಿರುವ ವ್ಯಕ್ತಿಗಳ ರಕ್ಷಣೆಗೆ ಆರ್‌ಪಿಎಫ್ ವಿಶೇಷ ಆದ್ಯತೆ ನೀಡುತ್ತಿದೆ.

ಪ್ರಯಾಣಿಕರ ಸುರಕ್ಷತೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಪ್ರತಿದಿನ 36ರಿಂದ 40 ಎಕ್ಸ್‌ಪ್ರೆಸ್ ಮತ್ತು ವಿಶೇಷ ರೈಲುಗಳಿಗೆ ಆರ್‌ಪಿಎಫ್ ಸಿಬ್ಬಂದಿ ಭದ್ರತಾ ಬೆಂಗಾವಲು ಒದಗಿಸುತ್ತಿದ್ದಾರೆ. ರೈಲುಗಳಲ್ಲಿ ಅಪರಾಧ ಚಟುವಟಿಕೆಗಳನ್ನು ತಡೆಗಟ್ಟುವುದು, ಮಹಿಳೆಯರು ಹಾಗೂ ಹಿರಿಯ ನಾಗರಿಕರ ಸುರಕ್ಷತೆ ಖಚಿತಪಡಿಸುವುದು ಮತ್ತು ತುರ್ತು ಸಂದರ್ಭಗಳಲ್ಲಿ ತಕ್ಷಣ ಸ್ಪಂದಿಸುವುದು ಈ ವ್ಯವಸ್ಥೆಯ ಪ್ರಮುಖ ಉದ್ದೇಶವಾಗಿದೆ.

ನೈಋತ್ಯ ರೈಲ್ವೆ ವ್ಯಾಪ್ತಿಯಲ್ಲಿ ಆರ್‌ಪಿಎಫ್ ಸಿಬ್ಬಂದಿ ಕೈಗೊಂಡಿರುವ ಈ ವಿವಿಧ ಕಾರ್ಯಾಚರಣೆಗಳು ಪ್ರಯಾಣಿಕರ ಸುರಕ್ಷತೆ ಮತ್ತು ಯೋಗಕ್ಷೇಮಕ್ಕೆ ನೀಡಲಾಗುತ್ತಿರುವ ಮಹತ್ವವನ್ನು ಪ್ರತಿಬಿಂಬಿಸುತ್ತವೆ. ಆರ್‌ಪಿಎಫ್ ಸಿಬ್ಬಂದಿಯ ಸೇವಾ ಮನೋಭಾವ, ಕಾರ್ಯನಿಷ್ಠೆ ಮತ್ತು ಅಪರಾಧ ನಿಯಂತ್ರಣ ಕ್ರಮಗಳನ್ನು ನೈಋತ್ಯ ರೈಲ್ವೆ ಆಡಳಿತ ಮೆಚ್ಚುಗೆ ವ್ಯಕ್ತಪಡಿಸಿದ್ದು, ಇದೇ ರೀತಿಯ ಕಾರ್ಯಾಚರಣೆಗಳು ಮುಂದಿನ ದಿನಗಳಲ್ಲಿಯೂ ನಿರಂತರವಾಗಿ ಮುಂದುವರಿಯಲಿವೆ ಎಂದು ತಿಳಿಸಿದೆ.

ಬಿಹಾರದ ಆಸ್ಪತ್ರೆಯೊಂದರ ಐಸಿಯುನಲ್ಲಿ ಭೀಕರ ಬೆಂಕಿ: 5 ರೋಗಿಗಳ ದಾರುಣ ಸಾವು!

ಪಾಟ್ನಾ: ಬಿಹಾರದ ಮುಜಫರ್‌ಪುರದಲ್ಲಿರುವ ಖಾಸಗಿ ಆಸ್ಪತ್ರೆಯ ಐಸಿಯು ವಿಭಾಗದಲ್ಲಿ ಸಂಭವಿಸಿದ ಭೀಕರ ಬೆಂಕಿ ಅವಘಡದಲ್ಲಿ ಐವರು ರೋಗಿಗಳು ಸಾವನ್ನಪ್ಪಿದ್ದು, 25ಕ್ಕೂ ಹೆಚ್ಚು ಜನರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ.

ಆಸ್ಪತ್ರೆಯ ಐದನೇ ಮಹಡಿಯಲ್ಲಿರುವ ಐಸಿಯುನಲ್ಲಿ ನಡುರಾತ್ರಿ ವೇಳೆ ಬೆಂಕಿ ಕಾಣಿಸಿಕೊಂಡಿದ್ದು, ಕೆಲವೇ ಕ್ಷಣಗಳಲ್ಲಿ ಹೊಗೆ ಇಡೀ ಮಹಡಿಯನ್ನು ಆವರಿಸಿತ್ತು.

ಮುಜಫರ್‌ಪುರದ ಪ್ರಸಾದ್ ಆಸ್ಪತ್ರೆಯಲ್ಲಿ ಗುರುವಾರ ಮುಂಜಾನೆ ಸುಮಾರು 3.55ರ ವೇಳೆಗೆ ಈ ದುರಂತ ಸಂಭವಿಸಿದೆ. ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 95 ವರ್ಷದ ರಾಧಾ ದೇವಿ ಎಂಬ ವೃದ್ಧೆ ಮೊದಲು ಬೆಂಕಿಯನ್ನು ಗಮನಿಸಿ ಆಸ್ಪತ್ರೆ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಅವರ ಸಮಯಪ್ರಜ್ಞೆಯಿಂದ ಆಸ್ಪತ್ರೆ ಸಿಬ್ಬಂದಿ ಹಾಗೂ ಇತರ ರೋಗಿಗಳಿಗೆ ತಕ್ಷಣ ಎಚ್ಚರಿಕೆ ನೀಡಲು ಸಾಧ್ಯವಾಗಿದ್ದು, ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ.

ಮಾಹಿತಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದರು. ಬೆಂಕಿಯನ್ನು ನಿಯಂತ್ರಣಕ್ಕೆ ತರುವ ಜೊತೆಗೆ ರೋಗಿಗಳು ಮತ್ತು ಆಸ್ಪತ್ರೆಯಲ್ಲಿದ್ದ ಇತರರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಯಿತು. ಆದಾಗ್ಯೂ, ಐವರು ರೋಗಿಗಳು ಬೆಂಕಿ ಮತ್ತು ಹೊಗೆಯ ಪರಿಣಾಮದಿಂದ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಿಲ್ಲಾ ಮ್ಯಾಜಿಸ್ಟ್ರೇಟ್ ಮಾಹಿತಿ ಪ್ರಕಾರ, ಅವಘಡ ಸಂಭವಿಸಿದ ವೇಳೆ ಐಸಿಯುನಲ್ಲಿ 13ರಿಂದ 15 ಮಂದಿ ಚಿಕಿತ್ಸೆ ಪಡೆಯುತ್ತಿದ್ದರು. ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು, ಘಟನೆಯ ನಿಖರ ಕಾರಣವನ್ನು ಪತ್ತೆಹಚ್ಚಲು ತನಿಖೆ ಆರಂಭಿಸಲಾಗಿದೆ. ಆಸ್ಪತ್ರೆಯ ಅಗ್ನಿ ಸುರಕ್ಷತಾ ವ್ಯವಸ್ಥೆಗಳ ಬಗ್ಗೆಯೂ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಆಸ್ಪತ್ರೆಗಳು ಹಾಗೂ ವಾಣಿಜ್ಯ ಕಟ್ಟಡಗಳಲ್ಲಿ ಅಗ್ನಿ ಅವಘಡಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಘಟನೆ ಮತ್ತೊಮ್ಮೆ ಸುರಕ್ಷತಾ ಕ್ರಮಗಳ ಕುರಿತು ಪ್ರಶ್ನೆಗಳನ್ನು ಎಬ್ಬಿಸಿದೆ. ನಿನ್ನೆಯಷ್ಟೇ ದೆಹಲಿಯ ಮಾಳವೀಯ ನಗರದಲ್ಲಿರುವ ಹೋಟೆಲ್‌ನಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ 17 ವಿದೇಶಿಯರು ಸೇರಿದಂತೆ 21 ಮಂದಿ ಮೃತಪಟ್ಟಿದ್ದರು. ಇದೀಗ ಬಿಹಾರದ ಆಸ್ಪತ್ರೆಯಲ್ಲಿ ಸಂಭವಿಸಿರುವ ಈ ದುರಂತ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.

ಯೂರಿನ್ ಟೆಸ್ಟ್‌ನಿಂದ 2 ವರ್ಷದ ಮಕ್ಕಳಲ್ಲೇ ಆಟಿಸಂ ಪತ್ತೆ? ಹೊಸ ಅಧ್ಯಯನದ ಸೂಚನೆ!

ಆಟಿಸಂ ಸ್ಪೆಕ್ಟ್ರಮ್ ಡಿಸಾರ್ಡರ್ (ಎಎಸ್‌ಡಿ) ಎಂಬ ನ್ಯೂರೋಡೆವಲಪ್ಮೆಂಟಲ್ ಸಮಸ್ಯೆಯನ್ನು ಆರಂಭಿಕ ಹಂತದಲ್ಲೇ ಗುರುತಿಸಲು ನೆರವಾಗುವ ಮಹತ್ವದ ಅಧ್ಯಯನವೊಂದು ವೈದ್ಯಕೀಯ ಕ್ಷೇತ್ರದಲ್ಲಿ ಹೊಸ ಭರವಸೆ ಮೂಡಿಸಿದೆ.

ಮೊಲಿಕ್ಯುಲರ್ ಸೈಕಿಯಾಟ್ರಿ ಜರ್ನಲ್‌ನಲ್ಲಿ ಪ್ರಕಟವಾದ ಈ ಅಧ್ಯಯನದ ಪ್ರಕಾರ, ಕೇವಲ ಯೂರಿನ್ ಟೆಸ್ಟ್ ಮೂಲಕವೇ 2 ವರ್ಷದ ಮಕ್ಕಳಲ್ಲಿಯೂ ಆಟಿಸಂಗೆ ಸಂಬಂಧಿಸಿದ ಸೂಚನೆಗಳನ್ನು ಪತ್ತೆಹಚ್ಚುವ ಸಾಧ್ಯತೆ ಇದೆ ಎಂದು ಸಂಶೋಧಕರು ತಿಳಿಸಿದ್ದಾರೆ. ಆಟಿಸಂ ಮಕ್ಕಳ ಮೆದುಳಿನ ಬೆಳವಣಿಗೆ, ಸಂವಹನ ಕೌಶಲ್ಯ, ಸಾಮಾಜಿಕ ವರ್ತನೆ ಹಾಗೂ ಕಲಿಕೆಯ ಸಾಮರ್ಥ್ಯದ ಮೇಲೆ ಪರಿಣಾಮ ಬೀರುವ ಸಮಸ್ಯೆಯಾಗಿದ್ದು, ಇದರ ಲಕ್ಷಣಗಳನ್ನು ಆರಂಭಿಕ ಹಂತದಲ್ಲೇ ಗುರುತಿಸುವುದು ಮಕ್ಕಳ ಭವಿಷ್ಯದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಪ್ರಸ್ತುತ ಆಟಿಸಂ ಪತ್ತೆ ಮಾಡಲು ಮಕ್ಕಳ ವರ್ತನೆ, ಮಾತಿನ ಬೆಳವಣಿಗೆ, ಸಾಮಾಜಿಕ ಪ್ರತಿಕ್ರಿಯೆ ಹಾಗೂ ದೈನಂದಿನ ಚಟುವಟಿಕೆಗಳನ್ನು ದೀರ್ಘಕಾಲದವರೆಗೆ ಅವಲೋಕಿಸಲಾಗುತ್ತದೆ. ಈ ಪ್ರಕ್ರಿಯೆ ಸಮಯ ತೆಗೆದುಕೊಳ್ಳುವುದರಿಂದ ಹಲವಾರು ಸಂದರ್ಭಗಳಲ್ಲಿ ಚಿಕಿತ್ಸೆ ಆರಂಭವಾಗುವುದು ವಿಳಂಬವಾಗುತ್ತದೆ. ಆದರೆ ಹೊಸ ಅಧ್ಯಯನದಲ್ಲಿ ಆಟಿಸಂ ಇರುವ ಮತ್ತು ಆಟಿಸಂ ಇಲ್ಲದ ಮಕ್ಕಳ ಮೂತ್ರದ ಮಾದರಿಗಳನ್ನು ವಿಶ್ಲೇಷಿಸಿದ ವೇಳೆ ಕೆಲವು ವಿಶೇಷ ಜೈವಿಕ ಸೂಚಕಗಳು (ಬಯೋಲಾಜಿಕಲ್ ಮಾರ್ಕರ್ಸ್) ವಿಭಿನ್ನ ಮಟ್ಟದಲ್ಲಿ ಕಂಡುಬಂದಿವೆ. ಈ ವ್ಯತ್ಯಾಸಗಳನ್ನು ಆಧರಿಸಿ ಆಟಿಸಂಗೆ ಸಂಬಂಧಿಸಿದ ಆರಂಭಿಕ ಲಕ್ಷಣಗಳನ್ನು ಗುರುತಿಸುವ ಪ್ರಯತ್ನವನ್ನು ಸಂಶೋಧಕರು ನಡೆಸಿದ್ದಾರೆ.

ಅಧ್ಯಯನದ ಪ್ರಕಾರ, ಯೂರಿನ್ ಪರೀಕ್ಷೆಯಲ್ಲಿ ಮೂತ್ರದಲ್ಲಿರುವ ಕೆಲವು ವಿಶೇಷ ರಾಸಾಯನಿಕಗಳು ಮತ್ತು ಜೈವಿಕ ಸೂಚನೆಗಳನ್ನು ಪರಿಶೀಲಿಸಲಾಗುತ್ತದೆ. ಇವು ದೇಹ ಹಾಗೂ ಕರುಳಿನಲ್ಲಿರುವ ಸೂಕ್ಷ್ಮಜೀವಿಗಳ ಚಟುವಟಿಕೆಗಳಿಗೆ ಸಂಬಂಧಿಸಿರಬಹುದೆಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ. ಪ್ರಯೋಗಾತ್ಮಕ ಹಂತದಲ್ಲಿ ನಡೆಸಲಾದ ಈ ಪರೀಕ್ಷೆ ಆಟಿಸಂ ಇರುವ ಮಕ್ಕಳನ್ನು ಗುರುತಿಸುವಲ್ಲಿ ಉತ್ತಮ ಮಟ್ಟದ ನಿಖರತೆಯನ್ನು ತೋರಿಸಿದ್ದು, ಭವಿಷ್ಯದಲ್ಲಿ ಆಟಿಸಂ ಪತ್ತೆಗೆ ಸರಳ ಮತ್ತು ಕಡಿಮೆ ವೆಚ್ಚದ ಪರ್ಯಾಯ ವಿಧಾನವಾಗುವ ಸಾಧ್ಯತೆಯಿದೆ ಎಂದು ತಿಳಿಸಲಾಗಿದೆ.

ಆದರೆ ಈ ಪರೀಕ್ಷೆ ಇನ್ನೂ ಸಂಶೋಧನಾ ಹಂತದಲ್ಲಿದ್ದು, ಸಾಮಾನ್ಯ ವೈದ್ಯಕೀಯ ತಪಾಸಣೆಯ ಭಾಗವಾಗಿಲ್ಲ ಎಂದು ವಿಜ್ಞಾನಿಗಳು ಸ್ಪಷ್ಟಪಡಿಸಿದ್ದಾರೆ. ಈ ವಿಧಾನವನ್ನು ಅಧಿಕೃತ ವೈದ್ಯಕೀಯ ಪರೀಕ್ಷೆಯಾಗಿ ಬಳಸಲು ಇನ್ನಷ್ಟು ದೊಡ್ಡ ಪ್ರಮಾಣದ ಅಧ್ಯಯನಗಳು ಮತ್ತು ವೈಜ್ಞಾನಿಕ ದೃಢೀಕರಣ ಅಗತ್ಯವಿದೆ ಎಂದು ತಜ್ಞರು ಹೇಳಿದ್ದಾರೆ. ಸದ್ಯಕ್ಕೆ ಮಕ್ಕಳ ವರ್ತನೆ, ಬೆಳವಣಿಗೆ ಮತ್ತು ವೈದ್ಯಕೀಯ ಮೌಲ್ಯಮಾಪನವನ್ನೇ ಆಟಿಸಂ ಪತ್ತೆಗೆ ಪ್ರಮುಖ ವಿಧಾನವಾಗಿ ಬಳಸಲಾಗುತ್ತಿದೆ.

ಇದರ ನಡುವೆ ಪೋಷಕರು ಮಕ್ಕಳ ಬೆಳವಣಿಗೆಯ ಬಗ್ಗೆ ಎಚ್ಚರಿಕೆಯಿಂದ ಇರಬೇಕಾಗಿದೆ. ಮಗು ಕಣ್ಣಿನಲ್ಲಿ ಕಣ್ಣಿಟ್ಟು ಮಾತನಾಡದಿರುವುದು, ಹೆಸರು ಕರೆದಾಗ ಪ್ರತಿಕ್ರಿಯಿಸದಿರುವುದು, ಮಾತಿನ ಬೆಳವಣಿಗೆ ವಿಳಂಬವಾಗಿರುವುದು, ಇತರ ಮಕ್ಕಳೊಂದಿಗೆ ಬೆರೆಯಲು ಆಸಕ್ತಿ ತೋರದಿರುವುದು ಹಾಗೂ ಒಂದೇ ಕೆಲಸವನ್ನು ಪುನರಾವರ್ತಿಸುವಂತಹ ಲಕ್ಷಣಗಳು ಕಂಡುಬಂದರೆ ತಕ್ಷಣ ಮಕ್ಕಳ ತಜ್ಞ ವೈದ್ಯರನ್ನು ಸಂಪರ್ಕಿಸುವುದು ಅಗತ್ಯವಾಗಿದೆ. ಆರಂಭಿಕ ಹಂತದಲ್ಲೇ ಆಟಿಸಂ ಗುರುತಿಸಿ ಸೂಕ್ತ ಚಿಕಿತ್ಸೆ ಮತ್ತು ಥೆರಪಿ ನೀಡಿದರೆ ಮಕ್ಕಳ ಬೆಳವಣಿಗೆಯಲ್ಲಿ ಗಮನಾರ್ಹ ಸುಧಾರಣೆ ತರಲು ಸಾಧ್ಯ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಬೆಂಗಳೂರು ಏರ್‌ಪೋರ್ಟ್‌ಗೆ ತೆರಳುವವರು ಎಚ್ಚರ: ಶುಕ್ರವಾರ ಭಾರಿ ಸಂಚಾರ ದಟ್ಟಣೆ ಸಾಧ್ಯತೆ!

ಬೆಂಗಳೂರು: ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕೆಐಎಡಿಬಿ ಭೂಸ್ವಾಧೀನ ಪ್ರಕ್ರಿಯೆ ವಿರೋಧಿಸಿ ರೈತರು ಹಮ್ಮಿಕೊಂಡಿರುವ ಬೃಹತ್ ‘ವಿಧಾನಸೌಧ ಚಲೋ’ ಪ್ರತಿಭಟನೆಯ ಹಿನ್ನೆಲೆಯಲ್ಲಿ ಶುಕ್ರವಾರ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸಂಪರ್ಕ ರಸ್ತೆಯಲ್ಲಿ ಭಾರಿ ಸಂಚಾರ ದಟ್ಟಣೆ ಉಂಟಾಗುವ ಸಾಧ್ಯತೆ ಇದೆ.

ಶಿಡ್ಲಘಟ್ಟ ತಾಲ್ಲೂಕಿನ ಜಂಗಮಕೋಟೆ ಹೋಬಳಿಯ 13 ಗ್ರಾಮಗಳ ರೈತರು ಕಳೆದ 80 ದಿನಗಳಿಂದ ಭೂಸ್ವಾಧೀನ ವಿರೋಧಿಸಿ ಹೋರಾಟ ನಡೆಸುತ್ತಿದ್ದು, ಇದೀಗ ರಾಜ್ಯ ಸರ್ಕಾರದ ಗಮನ ಸೆಳೆಯಲು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆಗೆ ಮುಂದಾಗಿದ್ದಾರೆ. ಕರ್ನಾಟಕ ರಾಜ್ಯ ರೈತ ಸಂಘ ಕೋಡಿಹಳ್ಳಿ ಚಂದ್ರಶೇಖರ್ ಬಣ ನೇತೃತ್ವದಲ್ಲಿ ನಡೆಯಲಿರುವ ಈ ಪ್ರತಿಭಟನೆಯಲ್ಲಿ 5,000ಕ್ಕೂ ಹೆಚ್ಚು ರೈತರು ಭಾಗವಹಿಸುವ ನಿರೀಕ್ಷೆಯಿದೆ.

ಜಂಗಮಕೋಟೆ ಭಾಗದ ಸುಮಾರು 2,800 ಎಕರೆ ಫಲವತ್ತಾದ ಕೃಷಿ ಭೂಮಿಯನ್ನು ಕೈಗಾರಿಕಾ ಅಭಿವೃದ್ಧಿಗಾಗಿ ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆಯನ್ನು ಕೈಬಿಡುವಂತೆ ಆಗ್ರಹಿಸಿ ರೈತರು ಹೋರಾಟ ನಡೆಸುತ್ತಿದ್ದಾರೆ. ಸರ್ಕಾರ ಮತ್ತು ಕೆಐಎಡಿಬಿ ಅಧಿಕಾರಿಗಳು ರೈತರ ಬೇಡಿಕೆಗಳಿಗೆ ಸ್ಪಂದಿಸದ ಹಿನ್ನೆಲೆಯಲ್ಲಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗಿದೆ ಎಂದು ಸಂಘಟನೆ ಮುಖಂಡರು ತಿಳಿಸಿದ್ದಾರೆ.

ಪ್ರತಿಭಟನಾ ಬೈಕ್ ರ್ಯಾಲಿಯು ಚಿಕ್ಕಬಳ್ಳಾಪುರದಿಂದ ಆರಂಭವಾಗಿ ದೇವನಹಳ್ಳಿ, ಯಲಹಂಕ, ಹೆಬ್ಬಾಳ ಫ್ಲೈಓವರ್ ಹಾಗೂ ಮೇಖ್ರಿ ಸರ್ಕಲ್ ಮಾರ್ಗವಾಗಿ ವಿಧಾನಸೌಧಕ್ಕೆ ತಲುಪಲಿದೆ. ಸಾವಿರಾರು ದ್ವಿಚಕ್ರ ವಾಹನಗಳು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸಲಿರುವುದರಿಂದ ವಿಮಾನ ನಿಲ್ದಾಣ ಸಂಪರ್ಕ ರಸ್ತೆಯಲ್ಲಿ ಭಾರಿ ವಾಹನ ದಟ್ಟಣೆ ಉಂಟಾಗುವ ಸಾಧ್ಯತೆ ಇದೆ.

ಈ ಹಿನ್ನೆಲೆಯಲ್ಲಿ ವಿಮಾನ ಪ್ರಯಾಣಿಕರು ನಿಗದಿತ ಸಮಯಕ್ಕಿಂತ ಸಾಕಷ್ಟು ಮುಂಚಿತವಾಗಿಯೇ ವಿಮಾನ ನಿಲ್ದಾಣಕ್ಕೆ ತೆರಳುವಂತೆ ಸೂಚಿಸಲಾಗಿದೆ. ಸಾಧ್ಯವಾದರೆ ಬೆಂಗಳೂರು ಉಪನಗರ ರೈಲು ಸೇವೆ ಅಥವಾ ಇತರೆ ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಸಲಹೆ ನೀಡಲಾಗಿದೆ.

ಪ್ರತಿಭಟನೆ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಇಲಾಖೆ ಬಿಗಿ ಬಂದೋಬಸ್ತ್ ಕೈಗೊಂಡಿದ್ದು, ಪ್ರಮುಖ ಜಂಕ್ಷನ್‌ಗಳು ಹಾಗೂ ಸಂಚಾರ ದಟ್ಟಣೆ ಉಂಟಾಗುವ ಪ್ರದೇಶಗಳಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ.

ವಿಮಾನ ಪ್ರಯಾಣಿಕರು ಹಾಗೂ ಸಾರ್ವಜನಿಕರು ಶುಕ್ರವಾರ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ದೇವನಹಳ್ಳಿ–ಯಲಹಂಕ–ಹೆಬ್ಬಾಳ ಮಾರ್ಗದಲ್ಲಿ ಸಂಚರಿಸುವಾಗ ಹೆಚ್ಚಿನ ಎಚ್ಚರಿಕೆ ವಹಿಸುವಂತೆ ಸಂಚಾರ ಪೊಲೀಸರು ಮನವಿ ಮಾಡಿದ್ದಾರೆ.

ಅಡುಗೆ ಎಣ್ಣೆ ಪ್ಯಾಕೇಟ್ʼಗಳಿಗೆ ಏಕರೂಪ ಗಾತ್ರ ನಿಗದಿ: ಕೇಂದ್ರ ಸರ್ಕಾರದ ಮಹತ್ವದ ನಿರ್ಧಾರ

ನವದೆಹಲಿ: ದೇಶಾದ್ಯಂತ ಅಡುಗೆ ಎಣ್ಣೆ ಪ್ಯಾಕೆಟ್‌ಗಳ ಗಾತ್ರವನ್ನು ಏಕರೂಪಗೊಳಿಸುವ ಮಹತ್ವದ ಕ್ರಮಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ. ಈ ನಿಯಮ ಜಾರಿಗೆ ಬಂದರೆ ಗ್ರಾಹಕರಿಗೆ ಬೆಲೆ ಮತ್ತು ಪ್ರಮಾಣದ ಬಗ್ಗೆ ಸ್ಪಷ್ಟ ಮಾಹಿತಿ ದೊರೆಯಲಿದ್ದು, ಮಾರುಕಟ್ಟೆಯಲ್ಲಿ ಪಾರದರ್ಶಕತೆ ಹೆಚ್ಚುವ ನಿರೀಕ್ಷೆಯಿದೆ.

ಪ್ರಸ್ತುತ ಮಾರುಕಟ್ಟೆಯಲ್ಲಿ 850 ಎಂಎಲ್, 875 ಎಂಎಲ್, 900 ಎಂಎಲ್ ಹಾಗೂ 950 ಎಂಎಲ್ ಸೇರಿದಂತೆ ವಿವಿಧ ಗಾತ್ರದ ಅಡುಗೆ ಎಣ್ಣೆ ಪ್ಯಾಕೆಟ್‌ಗಳು ಲಭ್ಯವಿವೆ. ಇದರಿಂದ ಗ್ರಾಹಕರು ವಿವಿಧ ಬ್ರ್ಯಾಂಡ್‌ಗಳ ಬೆಲೆಗಳನ್ನು ಹೋಲಿಕೆ ಮಾಡುವುದು ಹಾಗೂ ಒಂದು ಲೀಟರ್ ಎಣ್ಣೆಯ ನೈಜ ಬೆಲೆ ಅಂದಾಜಿಸುವುದು ಕಷ್ಟಕರವಾಗಿದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ಉದ್ದೇಶದಿಂದ ಸರ್ಕಾರ ಪ್ಯಾಕಿಂಗ್ ಗಾತ್ರಗಳ ಪ್ರಮಾಣೀಕರಣದ ಕುರಿತು ಚಿಂತನೆ ನಡೆಸುತ್ತಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಪಿ ಮಾರ್ಕ್ ಸಾಸಿವೆ ಎಣ್ಣೆ ಉತ್ಪಾದಕ ಸಂಸ್ಥೆಯಾದ ಪುರಿ ಆಯಿಲ್ ಮಿಲ್ಸ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ವಿವೇಕ್ ಪುರಿ, ಅಡುಗೆ ಎಣ್ಣೆ ಪ್ಯಾಕಿಂಗ್ ಗಾತ್ರಗಳಲ್ಲಿನ ಅಸಮಾನತೆ ದೀರ್ಘಕಾಲದ ಸಮಸ್ಯೆಯಾಗಿದ್ದು, ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿರುವುದು ಸ್ವಾಗತಾರ್ಹ ಬೆಳವಣಿಗೆ ಎಂದು ಹೇಳಿದ್ದಾರೆ.

ಒಂದೇ ಗಾತ್ರದ ಪ್ಯಾಕೆಟ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಾದರೆ ಗ್ರಾಹಕರು ಸುಲಭವಾಗಿ ವಿವಿಧ ಕಂಪನಿಗಳ ಬೆಲೆಗಳನ್ನು ಹೋಲಿಕೆ ಮಾಡಬಹುದು. ಇದರಿಂದ ಕಂಪನಿಗಳ ನಡುವಿನ ಸ್ಪರ್ಧೆ ಪ್ಯಾಕೇಜಿಂಗ್‌ಗಿಂತ ಉತ್ಪನ್ನದ ಗುಣಮಟ್ಟ ಮತ್ತು ಶುದ್ಧತೆಯ ಮೇಲೆ ಕೇಂದ್ರೀಕೃತವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಪ್ಯಾಕಿಂಗ್ ಗಾತ್ರಗಳ ಏಕರೂಪೀಕರಣದಿಂದ ಗ್ರಾಹಕರಿಗೆ ಮಾತ್ರವಲ್ಲ, ಉತ್ಪಾದನಾ ಕಂಪನಿಗಳಿಗೂ ಲಾಭವಾಗಲಿದೆ. ಪ್ರತ್ಯೇಕ ಗಾತ್ರಗಳಿಗೆ ಬೇರೆ ಬೇರೆ ಲೇಬಲ್‌, ಪ್ಯಾಕೇಜಿಂಗ್ ಸಾಮಗ್ರಿ ಹಾಗೂ ಸಂಗ್ರಹ ವ್ಯವಸ್ಥೆಗಳ ಅಗತ್ಯ ಕಡಿಮೆಯಾಗುವುದರಿಂದ ಉತ್ಪಾದನಾ ವೆಚ್ಚ ತಗ್ಗಲಿದೆ. ಜೊತೆಗೆ ಅನಗತ್ಯ ಪ್ಲಾಸ್ಟಿಕ್ ಬಳಕೆ ಕಡಿಮೆಯಾಗುವ ಮೂಲಕ ಪರಿಸರ ಸಂರಕ್ಷಣೆಯಿಗೂ ಸಹಕಾರಿಯಾಗಲಿದೆ.

ಉದ್ಯಮ ವಲಯದ ಹಲವು ಸಂಸ್ಥೆಗಳು ಪ್ಯಾಕಿಂಗ್ ಗಾತ್ರಗಳನ್ನು ದೇಶಾದ್ಯಂತ ಪ್ರಮಾಣೀಕರಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿವೆ. ಈ ಹಿನ್ನೆಲೆಯಲ್ಲಿ ಆಹಾರ ಸುರಕ್ಷತೆ ಮತ್ತು ಗ್ರಾಹಕ ವ್ಯವಹಾರಗಳ ಸಚಿವಾಲಯವು ಈ ಪ್ರಸ್ತಾವನೆಯನ್ನು ಪರಿಶೀಲಿಸುತ್ತಿದ್ದು, ಶೀಘ್ರದಲ್ಲೇ ಅಂತಿಮ ನಿರ್ಧಾರ ಪ್ರಕಟವಾಗುವ ಸಾಧ್ಯತೆ ಇದೆ.

ಗ್ರಾಹಕರಿಗೆ ಆಗುವ ಪ್ರಮುಖ ಲಾಭಗಳು

  • ವಿವಿಧ ಬ್ರ್ಯಾಂಡ್‌ಗಳ ಬೆಲೆಗಳನ್ನು ಸುಲಭವಾಗಿ ಹೋಲಿಕೆ ಮಾಡುವ ಅವಕಾಶ.
  • ಉತ್ಪನ್ನದ ಪ್ರಮಾಣ ಮತ್ತು ಬೆಲೆಯ ಕುರಿತು ಹೆಚ್ಚಿನ ಪಾರದರ್ಶಕತೆ.
  • ಅನಗತ್ಯ ಪ್ಲಾಸ್ಟಿಕ್ ಬಳಕೆ ಕಡಿಮೆಯಾಗುವ ಸಾಧ್ಯತೆ.
  • ಕಂಪನಿಗಳ ಉತ್ಪಾದನಾ ಮತ್ತು ವಿತರಣಾ ವೆಚ್ಚದಲ್ಲಿ ಇಳಿಕೆ.
  • ಗುಣಮಟ್ಟ ಆಧಾರಿತ ಆರೋಗ್ಯಕರ ಮಾರುಕಟ್ಟೆ ಸ್ಪರ್ಧೆಗೆ ಉತ್ತೇಜನ.

ಒಟ್ಟಾರೆ, ಅಡುಗೆ ಎಣ್ಣೆ ಪ್ಯಾಕಿಂಗ್ ಗಾತ್ರಗಳ ಪ್ರಮಾಣೀಕರಣ ಜಾರಿಯಾದರೆ ಗ್ರಾಹಕರ ಹಿತಾಸಕ್ತಿ ಕಾಪಾಡುವುದರ ಜೊತೆಗೆ ಮಾರುಕಟ್ಟೆಯಲ್ಲಿ ಪಾರದರ್ಶಕತೆ ಹಾಗೂ ಪರಿಸರ ಸ್ನೇಹಿ ವ್ಯವಹಾರಗಳಿಗೆ ಮತ್ತಷ್ಟು ಉತ್ತೇಜನ ಸಿಗಲಿದೆ.

ಪತಿ-ಪತ್ನಿ ಪ್ರಕರಣ: ಸಶಸ್ತ್ರ ಮೀಸಲು ಪಡೆಯ 9 ಕಾನ್ಸ್ ಟೇಬಲ್ʼಗಳ ಅಂತರ್ ಜಿಲ್ಲಾ ವರ್ಗಾವಣೆ

ಬೆಂಗಳೂರು: ಪತಿ-ಪತ್ನಿ ಪ್ರಕರಣದಡಿ ಸಶಸ್ತ್ರ ಮೀಸಲು ಪಡೆಯ (ಎಆರ್‌ಪಿ) 9 ಮಂದಿ ಕಾನ್ಸ್‌ಟೇಬಲ್‌ಗಳನ್ನು ಅಂತರ್‌ ಜಿಲ್ಲಾ ಹಾಗೂ ಘಟಕ ಮಟ್ಟದಲ್ಲಿ ವರ್ಗಾವಣೆಗೊಳಿಸಿ ರಾಜ್ಯ ಪೊಲೀಸ್ ಇಲಾಖೆ ಆದೇಶ ಹೊರಡಿಸಿದೆ.

ಅಂತರ್‌ ಜಿಲ್ಲಾ ಅಥವಾ ಘಟಕ ವರ್ಗಾವಣೆಗಾಗಿ ಇಲಾಖೆಯ ಅಧಿಕೃತ ಪೋರ್ಟಲ್‌ನಲ್ಲಿ ಸಲ್ಲಿಕೆಯಾಗಿದ್ದ ಅರ್ಜಿಗಳನ್ನು ಪರಿಶೀಲಿಸಿದ ಬಳಿಕ ಈ ಕ್ರಮ ಕೈಗೊಳ್ಳಲಾಗಿದೆ. ಸ್ವಂತ ಕೋರಿಕೆ ಮೇರೆಗೆ ಸೇವಾ ಜೇಷ್ಠತೆ (ಬಡ್ತಿ) ಹಕ್ಕನ್ನು ಬಿಟ್ಟುಕೊಡುವ ಷರತ್ತಿನಡಿ, ಬೆಂಗಳೂರು ಸೇರಿದಂತೆ ಇತರೆ ಜಿಲ್ಲೆಗಳಲ್ಲಿ ಏಳು ವರ್ಷಕ್ಕಿಂತ ಹೆಚ್ಚು ಅವಧಿ ಸೇವೆ ಸಲ್ಲಿಸಿದ್ದ ಕಾನ್ಸ್‌ಟೇಬಲ್‌ಗಳಿಗೆ ವರ್ಗಾವಣೆ ಮಂಜೂರು ಮಾಡಲಾಗಿದೆ.

ವರ್ಗಾವಣೆಗೊಂಡವರಲ್ಲಿ ಸಿ.ಎಸ್. ಶಿವಕುಮಾರಯ್ಯ, ಇಮ್ರಾನ್ ಪಟೇಲ್, ರಾಘವೇಂದ್ರ, ಹನುಮಂತರಾವ್, ಬ್ರಹ್ಮಾನಂದ ಕೋಟ್ರಪ್ಪ, ಪ್ರಸನ್ನ ಕುಮಾರ್, ಕೆ. ತಿಪ್ಪೇಶ್, ಆನಂದ ಹಾಗೂ ರಾಜು ಸೇರಿದ್ದಾರೆ.

ವರ್ಗಾವಣೆ ಜಾರಿಗೆ ಮುನ್ನ ಸಂಬಂಧಿತ ಅಧಿಕಾರಿಗಳು ವಿವಾಹ ನೋಂದಣಿ ಪ್ರಮಾಣಪತ್ರ ಹಾಗೂ ಸೇವಾ ದೃಢೀಕರಣ ಪತ್ರಗಳ ಮೂಲ ಪ್ರತಿಗಳನ್ನು ಪರಿಶೀಲಿಸಿ, ಪತಿ-ಪತ್ನಿ ಇಬ್ಬರೂ ಸರ್ಕಾರಿ ನೌಕರರಾಗಿರುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಇದರ ಜೊತೆಗೆ, ವರ್ಗಾವಣೆಗೊಳ್ಳುವ ಸಿಬ್ಬಂದಿಯ ವಿರುದ್ಧ ಯಾವುದೇ ಚಾಲ್ತಿ ಶಿಕ್ಷೆ ಅಥವಾ ಇಲಾಖಾ ವಿಚಾರಣೆ ಬಾಕಿ ಇರಬಾರದು. ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಸಂಬಂಧಿಸಿದ ಪ್ರಕರಣಗಳಿದ್ದರೆ ಅಗತ್ಯ ಪ್ರಮಾಣಪತ್ರಗಳನ್ನು ಪಡೆದು ಪರಿಶೀಲನೆ ನಡೆಸಿದ ಬಳಿಕವೇ ಹೊಸ ಕರ್ತವ್ಯ ಸ್ಥಳದಲ್ಲಿ ವರದಿ ಮಾಡಿಕೊಳ್ಳಲು ಅವಕಾಶ ನೀಡಬೇಕು ಎಂದು ಸೂಚಿಸಲಾಗಿದೆ. ಈ ಕುರಿತು ಆಡಳಿತ ವಿಭಾಗದ ಎಡಿಜಿಪಿ ಸೌಮೇಂದು ಮುಖರ್ಜಿ ಅಧಿಕೃತ ಆದೇಶ ಹೊರಡಿಸಿದ್ದಾರೆ.

ಇದು ಆತ್ಮಹತ್ಯೆಯಲ್ಲ, ವ್ಯವಸ್ಥೆಯ ಕೊಲೆ: ನೀಟ್ ಅಭ್ಯರ್ಥಿನಿ ಸಾವಿನ ಬೆನ್ನಲ್ಲೇ ಕೇಂದ್ರದ ವಿರುದ್ಧ ರಾಹುಲ್ ಗಾಂಧಿ ಕಿಡಿ

ನವದೆಹಲಿ: ನೀಟ್ (NEET-UG) ಪರೀಕ್ಷಾ ಅಕ್ರಮಗಳ ಹಿನ್ನೆಲೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾದ ವಿದ್ಯಾರ್ಥಿನಿಯ ಸಾವಿನ ಕುರಿತು ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದೇಶದ ಶಿಕ್ಷಣ ವ್ಯವಸ್ಥೆಯನ್ನು ಕೇಂದ್ರ ಸರ್ಕಾರ ಸಂಪೂರ್ಣವಾಗಿ ಹಾಳುಗೆಡವಿದ್ದು, ಅದರ ದುಷ್ಪರಿಣಾಮವನ್ನು ಯುವ ಪೀಳಿಗೆ ಅನುಭವಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಮಧ್ಯಪ್ರದೇಶದ ಮೌಗಂಜ್ ಜಿಲ್ಲೆಯ ವಿದ್ಯಾರ್ಥಿನಿಯೊಬ್ಬರು ನಾಗ್ಪುರದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿರುವ ಬೆನ್ನಲ್ಲೇ ರಾಹುಲ್ ಗಾಂಧಿ ಸಾಮಾಜಿಕ ಜಾಲತಾಣದ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ. ಕಳೆದ 12 ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಆಡಳಿತದಲ್ಲಿ ಶಿಕ್ಷಣ ವ್ಯವಸ್ಥೆ ನಿರಂತರವಾಗಿ ಕುಸಿದಿದ್ದು, ವಿದ್ಯಾರ್ಥಿಗಳ ಭವಿಷ್ಯ ಅನಿಶ್ಚಿತತೆಯತ್ತ ಸಾಗುತ್ತಿದೆ ಎಂದು ಅವರು ಟೀಕಿಸಿದ್ದಾರೆ.

ಮೃತ ವಿದ್ಯಾರ್ಥಿನಿ ವೈದ್ಯೆಯಾಗುವ ಕನಸು ಹೊಂದಿದ್ದಳು. ಆಕೆಯ ತಂದೆ ರೈತರಾಗಿದ್ದು, ಮಗಳ ವೈದ್ಯಕೀಯ ಶಿಕ್ಷಣದ ಕನಸನ್ನು ನನಸು ಮಾಡಲು ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ಸುಮಾರು 3 ಲಕ್ಷ ರೂಪಾಯಿ ಸಾಲ ಪಡೆದಿದ್ದರು. ಅಲ್ಲದೆ, ಮಗಳಿಗೆ ನಾಗ್ಪುರದಲ್ಲಿ ಕೋಚಿಂಗ್ ನೀಡಲು ಸ್ವತಃ ಅಲ್ಲೇ ಕೆಲಸಕ್ಕೂ ಸೇರಿಕೊಂಡಿದ್ದರು ಎಂದು ರಾಹುಲ್ ಗಾಂಧಿ ತಿಳಿಸಿದ್ದಾರೆ.

ನೀಟ್ ಪರೀಕ್ಷೆಗೆ ಸಂಬಂಧಿಸಿದ ಅಕ್ರಮಗಳು ಹಾಗೂ ಪ್ರಶ್ನೆಪತ್ರಿಕೆ ಸೋರಿಕೆ ಆರೋಪಗಳ ಹಿನ್ನೆಲೆಯಲ್ಲಿ ಪರೀಕ್ಷಾ ಪ್ರಕ್ರಿಯೆಯ ಬಗ್ಗೆ ವಿದ್ಯಾರ್ಥಿನಿ ತೀವ್ರ ನಿರಾಸೆಗೆ ಒಳಗಾಗಿದ್ದಳು ಎನ್ನಲಾಗಿದೆ. ಇದೇ ಮಾನಸಿಕ ಒತ್ತಡ ಆಕೆಯನ್ನು ಆತ್ಮಹತ್ಯೆಯಂತಹ ಕಠಿಣ ನಿರ್ಧಾರಕ್ಕೆ ದೂಡಿದೆ ಎಂದು ಅವರು ಹೇಳಿದ್ದಾರೆ.

ಈ ಘಟನೆ ಕೇವಲ ಆತ್ಮಹತ್ಯೆಯ ಪ್ರಕರಣವಲ್ಲ. ದೇಶದ ಯುವಕರ ಭವಿಷ್ಯವನ್ನು ನಿರ್ಲಕ್ಷಿಸಿರುವ ಭ್ರಷ್ಟ ಮತ್ತು ವಿಫಲ ವ್ಯವಸ್ಥೆಯ ಪರಿಣಾಮ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ. ವಿದ್ಯಾರ್ಥಿಗಳ ಭರವಸೆ, ಪರಿಶ್ರಮ ಮತ್ತು ಕನಸುಗಳನ್ನು ಕಾಪಾಡುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಮತದಾರರ ಹಕ್ಕು ಕಳೆದುಕೊಳ್ಳಬಾರದು: ಎಸ್‌ಐಆರ್ ಪ್ರಕ್ರಿಯೆ ಬಗ್ಗೆ ಅಧಿಕಾರಿಗಳಿಗೆ ಸಿಎಂ ಡಿಕೆಶಿ ಖಡಕ್ ಸೂಚನೆ

ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯಲ್ಲಿ ಯಾವುದೇ ಅರ್ಹ ಪ್ರಜೆಯ ಮತದಾನದ ಹಕ್ಕು ಕಳೆದುಹೋಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ, ಎಸ್‌ಐಆರ್ ಪ್ರಕ್ರಿಯೆ ಸಂಪೂರ್ಣ ಪಾರದರ್ಶಕವಾಗಿ ನಡೆಯಬೇಕು. ಸಾರ್ವಜನಿಕರಲ್ಲಿ ಗೊಂದಲ ಅಥವಾ ಆತಂಕ ಸೃಷ್ಟಿಯಾಗದಂತೆ ವ್ಯಾಪಕ ಜಾಗೃತಿ ಮೂಡಿಸುವ ಕೆಲಸವನ್ನು ತುರ್ತಾಗಿ ಕೈಗೊಳ್ಳಬೇಕು ಎಂದು ಸೂಚಿಸಿದರು.

ಇತರೆ ಕೆಲವು ರಾಜ್ಯಗಳಲ್ಲಿ ಎಸ್‌ಐಆರ್ ಪ್ರಕ್ರಿಯೆ ವೇಳೆ ದೊಡ್ಡ ಪ್ರಮಾಣದಲ್ಲಿ ಮತದಾರರ ಹೆಸರುಗಳು ಪಟ್ಟಿಯಿಂದ ಕೈಬಿಟ್ಟಿರುವ ಘಟನೆಗಳು ವರದಿಯಾಗಿವೆ. ಆದರೆ ಕೇರಳದಲ್ಲಿ ಈ ಪ್ರಕ್ರಿಯೆ ಯಶಸ್ವಿಯಾಗಿ ಜಾರಿಯಾಗಿದೆ. ಅದೇ ಮಾದರಿಯಲ್ಲಿ ಕರ್ನಾಟಕದಲ್ಲೂ ಯಾವುದೇ ಅರ್ಹ ಮತದಾರರ ಹೆಸರು ಕೈತಪ್ಪದಂತೆ ಅಧಿಕಾರಿಗಳು ವಿಶೇಷ ಎಚ್ಚರಿಕೆ ವಹಿಸಬೇಕು ಎಂದು ಸಿಎಂ ತಿಳಿಸಿದರು.

ಈ ಸಂಬಂಧ ಸಾರ್ವಜನಿಕರಿಂದ ದೂರುಗಳು ಹಾಗೂ ಕುಂದುಕೊರತೆಗಳನ್ನು ಸ್ವೀಕರಿಸಲು ಪ್ರತ್ಯೇಕ ವ್ಯವಸ್ಥೆ ರೂಪಿಸುವಂತೆ ಸೂಚಿಸಿರುವ ಅವರು, ಜಾಗೃತಿ ಕಾರ್ಯಕ್ರಮಗಳಿಗಾಗಿ ವಿಶೇಷ ಅಧಿಕಾರಿಗಳ ತಂಡ ರಚಿಸಲು ನಿರ್ದೇಶನ ನೀಡಿದ್ದಾರೆ.

ಎಸ್‌ಐಆರ್ ಪ್ರಕ್ರಿಯೆ ಮೂಲಕ ಮತದಾರರ ಪಟ್ಟಿಯಲ್ಲಿರುವ ನಕಲಿ ಹೆಸರುಗಳು, ಮೃತಪಟ್ಟವರ ವಿವರಗಳು ಹಾಗೂ ಒಂದಕ್ಕಿಂತ ಹೆಚ್ಚು ಕಡೆ ನೋಂದಣಿಯಾಗಿರುವ ಹೆಸರುಗಳನ್ನು ತೆರವುಗೊಳಿಸಲಾಗುತ್ತದೆ. ಆದರೆ ಈ ಪ್ರಕ್ರಿಯೆ ವೇಳೆ ನೈಜ ಮತದಾರರು ಪಟ್ಟಿಯಿಂದ ಹೊರಗುಳಿಯುವ ಅಪಾಯವಿರುವುದರಿಂದ ಸರ್ಕಾರ ಹೆಚ್ಚುವರಿ ಮುನ್ನೆಚ್ಚರಿಕೆ ಕ್ರಮಗಳತ್ತ ಗಮನ ಹರಿಸಿದೆ.

ಮತದಾರರ ಹಕ್ಕು ಕಳೆದುಕೊಳ್ಳಬಾರದು: ಎಸ್‌ಐಆರ್ ಪ್ರಕ್ರಿಯೆ ಬಗ್ಗೆ ಅಧಿಕಾರಿಗಳಿಗೆ ಸಿಎಂ ಡಿಕೆಶಿ ಖಡಕ್ ಸೂಚನೆ

ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯಲ್ಲಿ ಯಾವುದೇ ಅರ್ಹ ಪ್ರಜೆಯ ಮತದಾನದ ಹಕ್ಕು ಕಳೆದುಹೋಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ, ಎಸ್‌ಐಆರ್ ಪ್ರಕ್ರಿಯೆ ಸಂಪೂರ್ಣ ಪಾರದರ್ಶಕವಾಗಿ ನಡೆಯಬೇಕು. ಸಾರ್ವಜನಿಕರಲ್ಲಿ ಗೊಂದಲ ಅಥವಾ ಆತಂಕ ಸೃಷ್ಟಿಯಾಗದಂತೆ ವ್ಯಾಪಕ ಜಾಗೃತಿ ಮೂಡಿಸುವ ಕೆಲಸವನ್ನು ತುರ್ತಾಗಿ ಕೈಗೊಳ್ಳಬೇಕು ಎಂದು ಸೂಚಿಸಿದರು.

ಇತರೆ ಕೆಲವು ರಾಜ್ಯಗಳಲ್ಲಿ ಎಸ್‌ಐಆರ್ ಪ್ರಕ್ರಿಯೆ ವೇಳೆ ದೊಡ್ಡ ಪ್ರಮಾಣದಲ್ಲಿ ಮತದಾರರ ಹೆಸರುಗಳು ಪಟ್ಟಿಯಿಂದ ಕೈಬಿಟ್ಟಿರುವ ಘಟನೆಗಳು ವರದಿಯಾಗಿವೆ. ಆದರೆ ಕೇರಳದಲ್ಲಿ ಈ ಪ್ರಕ್ರಿಯೆ ಯಶಸ್ವಿಯಾಗಿ ಜಾರಿಯಾಗಿದೆ. ಅದೇ ಮಾದರಿಯಲ್ಲಿ ಕರ್ನಾಟಕದಲ್ಲೂ ಯಾವುದೇ ಅರ್ಹ ಮತದಾರರ ಹೆಸರು ಕೈತಪ್ಪದಂತೆ ಅಧಿಕಾರಿಗಳು ವಿಶೇಷ ಎಚ್ಚರಿಕೆ ವಹಿಸಬೇಕು ಎಂದು ಸಿಎಂ ತಿಳಿಸಿದರು.

ಈ ಸಂಬಂಧ ಸಾರ್ವಜನಿಕರಿಂದ ದೂರುಗಳು ಹಾಗೂ ಕುಂದುಕೊರತೆಗಳನ್ನು ಸ್ವೀಕರಿಸಲು ಪ್ರತ್ಯೇಕ ವ್ಯವಸ್ಥೆ ರೂಪಿಸುವಂತೆ ಸೂಚಿಸಿರುವ ಅವರು, ಜಾಗೃತಿ ಕಾರ್ಯಕ್ರಮಗಳಿಗಾಗಿ ವಿಶೇಷ ಅಧಿಕಾರಿಗಳ ತಂಡ ರಚಿಸಲು ನಿರ್ದೇಶನ ನೀಡಿದ್ದಾರೆ.

ಎಸ್‌ಐಆರ್  ಪ್ರಕ್ರಿಯೆ ಮೂಲಕ ಮತದಾರರ ಪಟ್ಟಿಯಲ್ಲಿರುವ ನಕಲಿ ಹೆಸರುಗಳು, ಮೃತಪಟ್ಟವರ ವಿವರಗಳು ಹಾಗೂ ಒಂದಕ್ಕಿಂತ ಹೆಚ್ಚು ಕಡೆ ನೋಂದಣಿಯಾಗಿರುವ ಹೆಸರುಗಳನ್ನು ತೆರವುಗೊಳಿಸಲಾಗುತ್ತದೆ. ಆದರೆ ಈ ಪ್ರಕ್ರಿಯೆ ವೇಳೆ ನೈಜ ಮತದಾರರು ಪಟ್ಟಿಯಿಂದ ಹೊರಗುಳಿಯುವ ಅಪಾಯವಿರುವುದರಿಂದ ಸರ್ಕಾರ ಹೆಚ್ಚುವರಿ ಮುನ್ನೆಚ್ಚರಿಕೆ ಕ್ರಮಗಳತ್ತ ಗಮನ ಹರಿಸಿದೆ.

ಟ್ರೆಕ್ಕಿಂಗ್ ವೇಳೆ ಎಂಬಿಎ ವಿದ್ಯಾರ್ಥಿನಿ ನಾಪತ್ತೆ: ಗೈಡ್, ಏಜೆನ್ಸಿ ಸಿಬ್ಬಂದಿ ವಶಕ್ಕೆ

ಡೆಹ್ರಾಡೂನ್: ಉತ್ತರಾಖಂಡದ ಗಡ್ವಾಲ್ ಹಿಮಾಲಯ ಪ್ರದೇಶದಲ್ಲಿ ಟ್ರೆಕ್ಕಿಂಗ್ ವೇಳೆ ಎಂಬಿಎ ವಿದ್ಯಾರ್ಥಿನಿಯೊಬ್ಬರು ನಾಪತ್ತೆಯಾಗಿರುವ ಪ್ರಕರಣ ಹೊಸ ತಿರುವು ಪಡೆದುಕೊಂಡಿದ್ದು, ಸುರಕ್ಷತಾ ಲೋಪದ ಆರೋಪದಡಿ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ದೆಹಲಿಯ ಪ್ರತಿಷ್ಠಿತ ಕಾಲೇಜಿನಲ್ಲಿ ಎಂಬಿಎ ವ್ಯಾಸಂಗ ಮಾಡುತ್ತಿದ್ದ ಬಬಿತಾ ಎಂಬ ವಿದ್ಯಾರ್ಥಿನಿ ಸ್ನೇಹಿತರ ತಂಡದೊಂದಿಗೆ ಖಾಸಗಿ ಟ್ರೆಕ್ಕಿಂಗ್ ಏಜೆನ್ಸಿ ಮೂಲಕ ಉತ್ತರಾಖಂಡದ ದುರ್ಗಮ ಪರ್ವತ ಪ್ರದೇಶಕ್ಕೆ ತೆರಳಿದ್ದರು. ಟ್ರೆಕ್ಕಿಂಗ್ ವೇಳೆ ಕ್ಯಾಂಪ್ ಪ್ರದೇಶದಿಂದ ವಿದ್ಯಾರ್ಥಿನಿ ನಾಪತ್ತೆಯಾಗಿದ್ದು, ಹಲವು ದಿನಗಳಾದರೂ ಯಾವುದೇ ಸುಳಿವು ಪತ್ತೆಯಾಗಿಲ್ಲ.

ವಿದ್ಯಾರ್ಥಿನಿಗಾಗಿ ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF), ಸ್ಥಳೀಯ ಪೊಲೀಸರು ಹಾಗೂ ಅರಣ್ಯ ಇಲಾಖೆ ಜಂಟಿಯಾಗಿ ಶೋಧ ಕಾರ್ಯಾಚರಣೆ ಮುಂದುವರಿಸಿದ್ದು, ಡ್ರೋನ್ ಮತ್ತು ಹೆಲಿಕಾಪ್ಟರ್ ಸಹಾಯದಿಂದ ವ್ಯಾಪಕ ಹುಡುಕಾಟ ನಡೆಸಲಾಗುತ್ತಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ರೆಕ್ಕಿಂಗ್ ತಂಡದ ಸ್ಥಳೀಯ ಗೈಡ್ ಹಾಗೂ ಏಜೆನ್ಸಿಯ ಒಬ್ಬ ನಿರ್ವಾಹಕನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ವಿದ್ಯಾರ್ಥಿನಿ ಕಾಣೆಯಾದ ತಕ್ಷಣ ಆಡಳಿತಕ್ಕೆ ಮಾಹಿತಿ ನೀಡದೆ ವಿಳಂಬ ಮಾಡಿರುವ ಆರೋಪವೂ ಕೇಳಿಬಂದಿದೆ.

ಪ್ರಾಥಮಿಕ ತನಿಖೆಯಲ್ಲಿ ಟ್ರೆಕ್ಕಿಂಗ್ ಏಜೆನ್ಸಿ ಅಗತ್ಯ ಸುರಕ್ಷತಾ ಕ್ರಮಗಳನ್ನು ಪಾಲಿಸಿರಲಿಲ್ಲ ಎಂಬ ಶಂಕೆ ವ್ಯಕ್ತವಾಗಿದೆ. ಅಲ್ಲದೆ, ಅನುಮತಿ ಇಲ್ಲದ ಅಥವಾ ಅಪಾಯಕಾರಿ ಮಾರ್ಗದಲ್ಲಿ ತಂಡವನ್ನು ಕರೆದೊಯ್ದಿರುವ ಸಾಧ್ಯತೆಗಳನ್ನೂ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ಆರೋಪ ಸಾಬೀತಾದರೆ ಏಜೆನ್ಸಿಯ ಪರವಾನಗಿ ರದ್ದುಗೊಳಿಸುವ ಸಾಧ್ಯತೆ ಇದೆ.

ಈ ಘಟನೆಯ ಬೆನ್ನಲ್ಲೇ ಉತ್ತರಾಖಂಡ ಸರ್ಕಾರ ಹಿಮಾಲಯನ್ ಟ್ರೆಕ್ಕಿಂಗ್ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಹೊಸ ಸುರಕ್ಷತಾ ನಿಯಮಗಳನ್ನು ಜಾರಿಗೆ ತರುವ ಸೂಚನೆ ನೀಡಿದೆ. ಇನ್ನು ಮುಂದೆ ಪ್ರತಿಯೊಬ್ಬ ಟ್ರೆಕ್ಕರ್‌ಗೆ ಜಿಪಿಎಸ್ ಟ್ರ್ಯಾಕಿಂಗ್ ಸಾಧನ ಕಡ್ಡಾಯಗೊಳಿಸುವ ಜೊತೆಗೆ, ನೋಂದಾಯಿತ ಮಾರ್ಗದರ್ಶಿಗಳಿಲ್ಲದೆ ಟ್ರೆಕ್ಕಿಂಗ್‌ಗೆ ಅವಕಾಶ ನೀಡದಂತೆ ಕ್ರಮ ಕೈಗೊಳ್ಳಲಾಗುತ್ತಿದೆ.

error: Content is protected !!