ಬೆಂಗಳೂರು: ಆರ್ಎಸ್ಎಸ್ ಕುರಿತು ಮಾಹಿತಿ ಕೋರಿ ಸಚಿವ ಪ್ರಿಯಾಂಕ್ ಖರ್ಗೆ ಸರಸಂಘಚಾಲಕ ಮೋಹನ್ ಭಾಗವತ್ ಅವರಿಗೆ ಪತ್ರ ಬರೆದಿರುವ ವಿಚಾರಕ್ಕೆ ಬಿಜೆಪಿ ನಾಯಕ ಸಿ.ಟಿ. ರವಿ ಪ್ರತಿಕ್ರಿಯೆ ನೀಡಿದ್ದು, ಸಂಘದ ಬಗ್ಗೆ ತಿಳಿದುಕೊಳ್ಳಬೇಕಾದರೆ ನೇರವಾಗಿ ಶಾಖೆಗೆ ಬಂದು ವೀಕ್ಷಣೆ ಮಾಡಲಿ ಎಂದು ಬಹಿರಂಗ ಆಹ್ವಾನ ನೀಡಿದ್ದಾರೆ.
ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಿಯಾಂಕ್ ಖರ್ಗೆ ಗೃಹ ಸಚಿವರಾಗಿ ಪತ್ರ ಬರೆದಿದ್ದರೆ, ಸರ್ಕಾರದ ದಾಖಲೆಗಳಲ್ಲಿಯೇ ಆರ್ಎಸ್ಎಸ್ಗೆ ಸಂಬಂಧಿಸಿದ ಸಾಕಷ್ಟು ಮಾಹಿತಿಗಳು ಲಭ್ಯವಿರುತ್ತವೆ ಎಂದು ಹೇಳಿದರು.
ಆರ್ಎಸ್ಎಸ್ ಅನ್ನು ದೇಶದಲ್ಲಿ ಮೂರು ಬಾರಿ ನಿಷೇಧಿಸಲಾಗಿತ್ತು. ಅವುಗಳಲ್ಲಿ ಎರಡು ಬಾರಿ ನ್ಯಾಯಾಲಯಗಳು ನಿಷೇಧವನ್ನು ತೆರವುಗೊಳಿಸಿದ್ದರೆ, ಮತ್ತೊಂದು ಸಂದರ್ಭದಲ್ಲಿ ಸರ್ಕಾರವೇ ನಿಷೇಧವನ್ನು ಹಿಂಪಡೆದಿತ್ತು. ಈ ಎಲ್ಲಾ ಪ್ರಕ್ರಿಯೆಗಳಲ್ಲಿ ಸಂಘದ ಚಟುವಟಿಕೆಗಳು ಹಾಗೂ ಕಾನೂನುಬದ್ಧತೆ ಕುರಿತು ಈಗಾಗಲೇ ಚರ್ಚೆ ನಡೆದಿದ್ದು, ಅಗತ್ಯ ದಾಖಲೆಗಳು ಸರ್ಕಾರ ಮತ್ತು ನ್ಯಾಯಾಲಯಗಳ ಬಳಿ ಇವೆ ಎಂದು ತಿಳಿಸಿದರು.
ಸಂವಿಧಾನವು ನೋಂದಾಯಿತ ಹಾಗೂ ನೋಂದಣಿಯಾಗದ ಸಂಘಟನೆಗಳ ಕಾರ್ಯಾಚರಣೆಗೆ ಅವಕಾಶ ನೀಡಿದೆ. ಆರ್ಎಸ್ಎಸ್ ಯಾವುದೇ ಸೊಸೈಟಿ, ಟ್ರಸ್ಟ್ ಅಥವಾ ಕಂಪನಿ ಅಲ್ಲ. ಹೀಗಾಗಿ ಅದನ್ನು ಕಡ್ಡಾಯವಾಗಿ ನೋಂದಾಯಿಸಬೇಕಾದ ಅಗತ್ಯವಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.
ಸಂಘವು ರಾಷ್ಟ್ರಭಕ್ತಿ ಮತ್ತು ಸಾಮಾಜಿಕ ಮೌಲ್ಯಗಳನ್ನು ಬೆಳೆಸುವ ಸಂಸ್ಥೆಯಾಗಿದ್ದು, ಅದರ ಕಾರ್ಯವೈಖರಿ ಕುರಿತು ಕುತೂಹಲ ಇದ್ದರೆ ಪ್ರಿಯಾಂಕ್ ಖರ್ಗೆ ಯಾವುದೇ ಆರ್ಎಸ್ಎಸ್ ಶಾಖೆಗೆ ಭೇಟಿ ನೀಡಿ ಸ್ವತಃ ತಿಳಿದುಕೊಳ್ಳಬಹುದು ಎಂದು ಸಿಟಿ ರವಿ ಹೇಳಿದರು.
“ಶಾಖೆಗೆ ಬಂದು ಅಲ್ಲಿನ ಚಟುವಟಿಕೆಗಳನ್ನು ವೀಕ್ಷಿಸಬಹುದು. ಹಾಡು, ಆಟ, ಅಮೃತ ವಚನ ಸೇರಿದಂತೆ ಸಂಘದ ಕಾರ್ಯಪದ್ಧತಿಯನ್ನು ನೇರವಾಗಿ ನೋಡಬಹುದು. ಯಾವುದೇ ಶಾಖೆಗೆ ಭೇಟಿ ನೀಡಿ ಸಂಘದ ಬಗ್ಗೆ ಮಾಹಿತಿ ಪಡೆಯಿರಿ” ಎಂದು ಆಹ್ವಾನ ನೀಡಿದರು.

