Home Blog

ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಗೆ ಆಸ್ಟ್ರೇಲಿಯಾ ಬಲಿಷ್ಠ ತಂಡ ಪ್ರಕಟ; ಕಮ್ಮಿನ್ಸ್, ಹ್ಯಾಜಲ್ವುಡ್, ಲಿಯಾನ್ ತಂಡಕ್ಕೆ ವಾಪಸ್

0

ಬಾಂಗ್ಲಾದೇಶ ವಿರುದ್ಧ ಆಗಸ್ಟ್‌ನಲ್ಲಿ ನಡೆಯಲಿರುವ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ 13 ಸದಸ್ಯರ ಬಲಿಷ್ಠ ತಂಡವನ್ನು ಪ್ರಕಟಿಸಿದೆ.

ಸರಣಿಯ ಮೊದಲ ಟೆಸ್ಟ್ ಡಾರ್ವಿನ್‌ನಲ್ಲಿ ಹಾಗೂ ಎರಡನೇ ಪಂದ್ಯ ಮೆಕೆ ನಗರದಲ್ಲಿ ನಡೆಯಲಿದೆ. ಈ ಸರಣಿಗೆ ನಾಯಕ ಪ್ಯಾಟ್ ಕಮ್ಮಿನ್ಸ್, ವೇಗಿ ಜೋಶ್ ಹ್ಯಾಜಲ್ವುಡ್ ಮತ್ತು ಅನುಭವಿ ಸ್ಪಿನ್ನರ್ ನಾಥನ್ ಲಿಯಾನ್ ಗಾಯದಿಂದ ಚೇತರಿಸಿಕೊಂಡು ತಂಡಕ್ಕೆ ಮರಳಿರುವುದು ಆಸ್ಟ್ರೇಲಿಯಾ ತಂಡಕ್ಕೆ ಮತ್ತಷ್ಟು ಬಲ ತುಂಬಿದೆ.

ಗಾಯದ ಕಾರಣದಿಂದ ಈ ಮೂವರು ಆಟಗಾರರು ಇತ್ತೀಚಿನ ಆಶಸ್ ಸರಣಿಯ ಸಿಡ್ನಿ ಟೆಸ್ಟ್‌ನಲ್ಲಿ ಆಡಲು ಸಾಧ್ಯವಾಗಿರಲಿಲ್ಲ. ಇದೀಗ ಅವರ ಮರಳುವಿಕೆಯಿಂದ ಕಳೆದ ಆಶಸ್ ಸರಣಿಯಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದ ವೇಗಿ ಮೈಕೆಲ್ ನೆಸರ್‌ಗೆ ಮುಖ್ಯ ತಂಡದಲ್ಲಿ ಸ್ಥಾನ ಸಿಗಲಿಲ್ಲ. ಆದರೆ ಮೈಕೆಲ್ ನೆಸರ್, ಟಾಡ್ ಮರ್ಫಿ ಹಾಗೂ ಬ್ರೆಂಡನ್ ಡಾಗೆಟ್ ಅವರನ್ನು ಬ್ಯಾಕಪ್ ಆಟಗಾರರಾಗಿ ಆಯ್ಕೆ ಮಾಡಲಾಗಿದೆ.

ಉಸ್ಮಾನ್ ಖವಾಜಾ ನಿವೃತ್ತಿಯ ಬಳಿಕ ಆಸ್ಟ್ರೇಲಿಯಾ ತಂಡದಲ್ಲಿ ಬ್ಯಾಟಿಂಗ್ ಕ್ರಮದಲ್ಲಿ ಕೆಲವು ಬದಲಾವಣೆಗಳಾಗುವ ಸಾಧ್ಯತೆ ಇದೆ. ಕ್ಯಾಮರೂನ್ ಗ್ರೀನ್ ಅವರನ್ನು ಐದನೇ ಕ್ರಮಾಂಕದಲ್ಲಿ ಆಡಿಸುವ ನಿರೀಕ್ಷೆಯಿದ್ದು, ಜ್ಯಾಕ್ ವೆದರ್ಲ್ಯಾಂಡ್ ಹಾಗೂ ಟ್ರಾವಿಸ್ ಹೆಡ್ ಆರಂಭಿಕ ಬ್ಯಾಟರ್‌ಗಳಾಗಿ ಕಣಕ್ಕಿಳಿಯುವ ಸಾಧ್ಯತೆ ಇದೆ.

ಮಾರ್ನಸ್ ಲ್ಯಾಬುಶೇನ್ ಮತ್ತು ಸ್ಟೀವ್ ಸ್ಮಿತ್ ಕ್ರಮವಾಗಿ ಮೂರನೇ ಹಾಗೂ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ನಿರೀಕ್ಷೆಯಿದೆ. ಜೋಶ್ ಇಂಗ್ಲಿಸ್ ಅವರನ್ನು ಬ್ಯಾಕಪ್ ಬ್ಯಾಟರ್ ಹಾಗೂ ವಿಕೆಟ್‌ಕೀಪರ್ ಆಗಿ ತಂಡದಲ್ಲಿ ಸೇರಿಸಲಾಗಿದೆ.

ವೇಗಿ ಜೋಶ್ ಹ್ಯಾಜಲ್ವುಡ್ ತಂಡಕ್ಕೆ ಮರಳಿರುವುದರಿಂದ ಅಂತಿಮ ಪ್ಲೇಯಿಂಗ್ ಇಲೆವೆನ್ ಆಯ್ಕೆ ನಾಯಕ ಪ್ಯಾಟ್ ಕಮ್ಮಿನ್ಸ್‌ಗೆ ಸವಾಲಾಗುವ ಸಾಧ್ಯತೆಯಿದೆ. ಸ್ಕಾಟ್ ಬೋಲ್ಯಾಂಡ್ ಮತ್ತು ಮಿಚೆಲ್ ಸ್ಟಾರ್ಕ್ ಇಬ್ಬರೂ ಉತ್ತಮ ಫಾರ್ಮ್‌ನಲ್ಲಿದ್ದು, ವಿಶೇಷವಾಗಿ ಬೋಲ್ಯಾಂಡ್ ಇತ್ತೀಚಿನ ಪಂದ್ಯಗಳಲ್ಲಿ ನಿರಂತರವಾಗಿ ವಿಕೆಟ್‌ಗಳನ್ನು ಪಡೆಯುತ್ತಿದ್ದಾರೆ. ಹೀಗಾಗಿ ಹ್ಯಾಜಲ್ವುಡ್ ಮತ್ತು ಬೋಲ್ಯಾಂಡ್ ಅವರಲ್ಲಿ ಯಾರಿಗೆ ಅಂತಿಮ ತಂಡದಲ್ಲಿ ಅವಕಾಶ ಸಿಗಲಿದೆ ಎಂಬುದು ಕುತೂಹಲ ಮೂಡಿಸಿದೆ.

37 ವರ್ಷದ ಸ್ಕಾಟ್ ಬೋಲ್ಯಾಂಡ್ ಇದುವರೆಗೆ 19 ಟೆಸ್ಟ್ ಪಂದ್ಯಗಳಲ್ಲಿ 82 ವಿಕೆಟ್‌ಗಳನ್ನು ಕಬಳಿಸಿದ್ದು, ತಮ್ಮ ಸ್ಥಿರ ಪ್ರದರ್ಶನದಿಂದ ಗಮನ ಸೆಳೆದಿದ್ದಾರೆ. ಮತ್ತೊಂದೆಡೆ, ಮಂಡಿರಜ್ಜು ಗಾಯದಿಂದ ಆಶಸ್ ಸರಣಿಯಿಂದ ಹೊರಗುಳಿದಿದ್ದ ಜೋಶ್ ಹ್ಯಾಜಲ್ವುಡ್ ಇದೀಗ ಸಂಪೂರ್ಣ ಫಿಟ್ ಆಗಿದ್ದು ತಂಡಕ್ಕೆ ಮರಳಿದ್ದಾರೆ.

ಬೆನ್ನು ನೋವಿನ ಸಮಸ್ಯೆಯಿಂದ ಕಳೆದ ಕೆಲವು ತಿಂಗಳು ಸೀಮಿತ ಪಂದ್ಯಗಳನ್ನಷ್ಟೇ ಆಡಿದ್ದ ನಾಯಕ ಪ್ಯಾಟ್ ಕಮ್ಮಿನ್ಸ್ ಕೂಡ ಇದೀಗ ಪೂರ್ಣ ಫಿಟ್ ಆಗಿದ್ದಾರೆ. ಮಂಡಿರಜ್ಜು ಶಸ್ತ್ರಚಿಕಿತ್ಸೆಯ ಬಳಿಕ ನಾಥನ್ ಲಿಯಾನ್ ಕೂಡ ತಂಡ ಸೇರಿಕೊಂಡಿದ್ದಾರೆ.

ರಾಷ್ಟ್ರೀಯ ಆಯ್ಕೆ ಸಮಿತಿಯ ಅಧ್ಯಕ್ಷ ಜಾರ್ಜ್ ಬೈಲಿ, ಎಲ್ಲಾ ಆಟಗಾರರ ಫಿಟ್ನೆಸ್ ಮೇಲೆ ವೈದ್ಯಕೀಯ ತಂಡ ನಿರಂತರವಾಗಿ ನಿಗಾ ವಹಿಸಲಿದೆ ಎಂದು ತಿಳಿಸಿದ್ದಾರೆ.

ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಗೆ ಆಸ್ಟ್ರೇಲಿಯಾ ತಂಡ:

ಪ್ಯಾಟ್ ಕಮ್ಮಿನ್ಸ್ (ನಾಯಕ), ಸ್ಕಾಟ್ ಬೋಲ್ಯಾಂಡ್, ಅಲೆಕ್ಸ್ ಕ್ಯಾರಿ, ಕ್ಯಾಮರೂನ್ ಗ್ರೀನ್, ಜೋಶ್ ಹ್ಯಾಜಲ್ವುಡ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಮಾರ್ನಸ್ ಲ್ಯಾಬುಶೇನ್, ನಾಥನ್ ಲಿಯಾನ್, ಸ್ಟೀವ್ ಸ್ಮಿತ್, ಮಿಚೆಲ್ ಸ್ಟಾರ್ಕ್, ಜ್ಯಾಕ್ ವೆದರ್ಲ್ಯಾಂಡ್ ಹಾಗೂ ಬ್ಯೂ ವೆಬ್ಸ್ಟರ್.

ಸರಣಿಯ ವೇಳಾಪಟ್ಟಿ:

  • ಮೊದಲ ಟೆಸ್ಟ್: ಆಗಸ್ಟ್ 13 ರಿಂದ 17, 2026 – ಮರಾರಾ ಕ್ರಿಕೆಟ್ ಮೈದಾನ, ಡಾರ್ವಿನ್.
  • ಎರಡನೇ ಟೆಸ್ಟ್: ಆಗಸ್ಟ್ 22 ರಿಂದ 26, 2026 – ಗ್ರೇಟ್ ಬ್ಯಾರಿಯರ್ ರೀಫ್ ಅರೆನಾ, ಮೆಕೆ.

ಕ್ಯಾಲಿಫೋರ್ನಿಯಾದಲ್ಲಿ ಭೀಕರ ರಸ್ತೆ ಅಪಘಾತ: ಹೈದರಾಬಾದ್ ಮೂಲದ ಒಂದೇ ಕುಟುಂಬದ ಮೂವರು ಸಾವು, ಮತ್ತೋರ್ವ ಗಂಭೀರ

0

ವಾಷಿಂಗ್ಟನ್: ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಹೈದರಾಬಾದ್ ಮೂಲದ ಒಂದೇ ಕುಟುಂಬದ ಮೂವರು ಮೃತಪಟ್ಟಿದ್ದು, ಕುಟುಂಬದ ಮುಖ್ಯಸ್ಥ ಹಾಗೂ ಮತ್ತೊಬ್ಬ ಬಾಲಕಿ ಗಂಭೀರವಾಗಿ ಗಾಯಗೊಂಡಿರುವ ಹೃದಯವಿದ್ರಾವಕ ಘಟನೆ ನಡೆದಿದೆ.

ಹೈದರಾಬಾದ್‌ನ ಸೈದಾಬಾದ್ ನಿವಾಸಿ ಶೇಖ್ ನವೀದ್ ತಮ್ಮ ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಮತ್ತೊಂದು ವಾಹನದೊಂದಿಗೆ ಭೀಕರವಾಗಿ ಡಿಕ್ಕಿ ಹೊಡೆದ ಪರಿಣಾಮ ದುರಂತ ಸಂಭವಿಸಿದೆ. ಅಪಘಾತದ ತೀವ್ರತೆಗೆ ನವೀದ್ ಅವರ ಪತ್ನಿ ನಾಜಿಯಾ ಸಲ್ಮಾ, ಪುತ್ರ ಹಾಗೂ ಪುತ್ರಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿರುವ ಶೇಖ್ ನವೀದ್ ಮತ್ತು ಅವರ ಕಿರಿಯ ಪುತ್ರಿಯನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇಬ್ಬರ ಆರೋಗ್ಯದ ಮೇಲೆ ವೈದ್ಯರು ನಿಗಾ ವಹಿಸಿದ್ದು, ಚಿಕಿತ್ಸೆ ಮುಂದುವರಿದಿದೆ.

ಸುಮಾರು ಹತ್ತು ವರ್ಷಗಳ ಹಿಂದೆ ಉದ್ಯೋಗ ನಿಮಿತ್ತ ಅಮೆರಿಕಕ್ಕೆ ತೆರಳಿದ್ದ ನವೀದ್ ಅಲ್ಲಿಯೇ ಕುಟುಂಬದೊಂದಿಗೆ ನೆಲೆಸಿದ್ದರು. ಮಗನಿಗೆ ಕರೆ ಮಾಡಿದ ವೇಳೆ ಅಮೆರಿಕದ ಪೊಲೀಸರಿಂದ ಅಪಘಾತದ ಮಾಹಿತಿ ತಿಳಿದುಬಂದಿದೆ ಎಂದು ನವೀದ್ ಅವರ ತಂದೆ ಶೇಖ್ ಅಬ್ದುಲ್ ಸಯೀದ್ ತಿಳಿಸಿದ್ದಾರೆ.

ಮೃತರ ಕುಟುಂಬ ಸದಸ್ಯರು ತುರ್ತಾಗಿ ಅಮೆರಿಕಕ್ಕೆ ತೆರಳಲು ಅವಕಾಶ ಕಲ್ಪಿಸುವಂತೆ ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರಿಗೆ ಮನವಿ ಮಾಡಿದ್ದಾರೆ. ಇದೇ ವೇಳೆ ಮಜ್ಲಿಸ್ ಬಚಾವೋ ತೆಹ್ರೀಕ್ ಸಂಘಟನೆಯ ವಕ್ತಾರ ಅಮ್ಜದ್ ಉಲ್ಲಾ ಖಾನ್ ಕುಟುಂಬಸ್ಥರನ್ನು ಭೇಟಿ ಮಾಡಿ ಸಾಂತ್ವನ ಹೇಳಿದ್ದು, ತುರ್ತು ವೀಸಾ ವ್ಯವಸ್ಥೆ ಕಲ್ಪಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಜೆನೆರಿಕ್ ಔಷಧಿಗಳ ಮೇಲೆ ಟ್ರಂಪ್ ಹೊಸ ಸುಂಕ ನೀತಿ: 2028ರ ಬಳಿಕ 100%, ನಂತರ 200% ತೆರಿಗೆ ಘೋಷಣೆ

0

ವಾಷಿಂಗ್ಟನ್: ಅಮೆರಿಕದಲ್ಲಿ ದೇಶೀಯ ಔಷಧ ಉತ್ಪಾದನೆಯನ್ನು ಉತ್ತೇಜಿಸುವ ಉದ್ದೇಶದಿಂದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಮದು ಮಾಡಿಕೊಳ್ಳುವ ಜೆನೆರಿಕ್ ಔಷಧಿಗಳ ಮೇಲೆ ಹೊಸ ಸುಂಕ ನೀತಿಯನ್ನು ಘೋಷಿಸಿದ್ದಾರೆ. ಹಂತಹಂತವಾಗಿ ಜಾರಿಗೆ ಬರಲಿರುವ ಈ ನೀತಿಯ ಪ್ರಕಾರ, 2028ರ ಬಳಿಕ ಆಮದು ಔಷಧಿಗಳ ಮೇಲೆ ಭಾರೀ ಪ್ರಮಾಣದ ಸುಂಕ ವಿಧಿಸಲಾಗುತ್ತದೆ.

ಟ್ರಂಪ್ ಅವರು ತಮ್ಮ Truth Social ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿದ್ದು, ಔಷಧ ಕಂಪನಿಗಳು ಅಮೆರಿಕದಲ್ಲೇ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು ಈ ನೀತಿ ಪ್ರೋತ್ಸಾಹ ನೀಡಲಿದೆ ಎಂದು ಹೇಳಿದ್ದಾರೆ. ವಿದೇಶಿ ಆಮದು ಅವಲಂಬನೆ ಕಡಿಮೆ ಮಾಡಿ ದೇಶೀಯ ಉತ್ಪಾದನೆಯನ್ನು ಬಲಪಡಿಸುವುದು ಸರ್ಕಾರದ ಪ್ರಮುಖ ಉದ್ದೇಶವಾಗಿದೆ ಎಂದು ಅವರು ತಿಳಿಸಿದ್ದಾರೆ.

ಹೊಸ ನೀತಿಯ ಪ್ರಕಾರ, 2026ರ ಆಗಸ್ಟ್ 1ರಿಂದ ಮುಂದಿನ ಎರಡು ವರ್ಷಗಳವರೆಗೆ ಜೆನೆರಿಕ್ ಔಷಧಿಗಳ ಆಮದಿಗೆ ಯಾವುದೇ ಹೆಚ್ಚುವರಿ ಸುಂಕ ವಿಧಿಸಲಾಗುವುದಿಲ್ಲ. ಆದರೆ 2028ರಿಂದ ಒಂದು ವರ್ಷದವರೆಗೆ 100 ಶೇಕಡಾ ಸುಂಕ ಜಾರಿಗೆ ಬರಲಿದ್ದು, ಅದರ ಬಳಿಕ 200 ಶೇಕಡಾ ಸುಂಕ ವಿಧಿಸಲಾಗುತ್ತದೆ ಎಂದು ಟ್ರಂಪ್ ಘೋಷಿಸಿದ್ದಾರೆ.

ನಿಗದಿತ ಅವಧಿಯೊಳಗೆ ಅಮೆರಿಕದಲ್ಲಿ ಉತ್ಪಾದನಾ ಘಟಕಗಳನ್ನು ಸ್ಥಾಪಿಸದ ಕಂಪನಿಗಳಿಗೆ ಈ ಹೆಚ್ಚುವರಿ ಸುಂಕ ದಂಡದ ರೀತಿಯಲ್ಲಿ ಪರಿಣಾಮ ಬೀರುತ್ತದೆ ಎಂದು ಟ್ರಂಪ್ ಎಚ್ಚರಿಸಿದ್ದಾರೆ. ಈಗಾಗಲೇ ಅಮೆರಿಕದ ವಿವಿಧ ಭಾಗಗಳಲ್ಲಿ ಹೊಸ ಔಷಧ ಉತ್ಪಾದನಾ ಘಟಕಗಳ ನಿರ್ಮಾಣ ಆರಂಭವಾಗಿದ್ದು, ಈ ಕ್ರಮದಿಂದ ದೇಶೀಯ ಉತ್ಪಾದನೆ ಮತ್ತಷ್ಟು ಬಲಗೊಳ್ಳಲಿದೆ ಎಂಬ ವಿಶ್ವಾಸವನ್ನೂ ವ್ಯಕ್ತಪಡಿಸಿದ್ದಾರೆ.

ಅಮೆರಿಕದಲ್ಲಿ ಬಳಕೆಯಾಗುವ ಔಷಧಿಗಳಲ್ಲಿ 90 ಶೇಕಡಕ್ಕೂ ಹೆಚ್ಚು ಜೆನೆರಿಕ್ ಔಷಧಿಗಳೇ ಇರುವ ಹಿನ್ನೆಲೆಯಲ್ಲಿ, ಈ ಹೊಸ ಸುಂಕ ನೀತಿ ಜಾಗತಿಕ ಔಷಧ ಉದ್ಯಮದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ವಿಶೇಷವಾಗಿ ಅಮೆರಿಕಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಜೆನೆರಿಕ್ ಔಷಧಿಗಳನ್ನು ರಫ್ತು ಮಾಡುವ ಭಾರತದ ಔಷಧ ಕಂಪನಿಗಳ ಮೇಲೆ ಇದರ ಪರಿಣಾಮ ಉಂಟಾಗಬಹುದು ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

Karnataka Cabinet Expansion: ಸಂಪುಟ ವಿಸ್ತರಣೆ ಮತ್ತೆ ವಿಳಂಬ, ಹೈಕಮಾಂಡ್ ತೀರ್ಮಾನಕ್ಕೆ ಕಾಯುತ್ತಿರುವ ಕಾಂಗ್ರೆಸ್!

ಬೆಂಗಳೂರು: ಕರ್ನಾಟಕ ಕಾಂಗ್ರೆಸ್ ಸರ್ಕಾರದ ಬಹುನಿರೀಕ್ಷಿತ ಸಚಿವ ಸಂಪುಟ ವಿಸ್ತರಣೆ ಪ್ರಕ್ರಿಯೆ ಮತ್ತೆ ಒಂದೆರಡು ದಿನ ಮುಂದೂಡಿಕೆಯಾಗಿದೆ.

ಬುಧವಾರವೇ ನೂತನ ಸಚಿವರ ಪ್ರಮಾಣವಚನ ನಡೆಯುವ ಸಾಧ್ಯತೆ ಇತ್ತು ಎನ್ನಲಾಗಿದ್ದರೂ, ಹೈಕಮಾಂಡ್ ನಾಯಕರ ಲಭ್ಯತೆ ಕೊರತೆಯಿಂದ ಅಂತಿಮ ನಿರ್ಧಾರ ವಿಳಂಬವಾಗಿದೆ.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಇಂದು ಬೆಂಗಳೂರಿಗೆ ಮರಳಲಿದ್ದು, ವಾರಾಂತ್ಯದಲ್ಲಿ ಮತ್ತೆ ದೆಹಲಿಗೆ ತೆರಳಿ ಕಾಂಗ್ರೆಸ್ ಹೈಕಮಾಂಡ್ ನಾಯಕರೊಂದಿಗೆ ಅಂತಿಮ ಸುತ್ತಿನ ಮಾತುಕತೆ ನಡೆಸುವ ಸಾಧ್ಯತೆ ಇದೆ.

ದೆಹಲಿಯ ಕರ್ನಾಟಕ ಭವನದಲ್ಲಿ ಮಂಗಳವಾರ ರಾತ್ರಿ ಮಾತನಾಡಿದ ಡಿಕೆ ಶಿವಕುಮಾರ್, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಬಂಧನದ ಬೆಳವಣಿಗೆಯಿಂದ ಸಂಪುಟ ವಿಸ್ತರಣೆ ಪ್ರಕ್ರಿಯೆ ವಿಳಂಬವಾಗುವ ಸಾಧ್ಯತೆ ಇದೆ ಎಂದು ಹೇಳಿದರು.

“ಸಂಪುಟ ವಿಸ್ತರಣೆ ಮುಂದೂಡಲು ಇಷ್ಟವಿಲ್ಲ. ಆದರೆ ಅಂತಿಮ ತೀರ್ಮಾನ ಹೈಕಮಾಂಡ್ ನಿರ್ಧಾರದಂತೆ ನಡೆಯಲಿದೆ” ಎಂದು ಸಿಎಂ ಸ್ಪಷ್ಟಪಡಿಸಿದರು. ಹಿರಿಯರು ಮತ್ತು ಕಿರಿಯರಿಗೆ ಸಮಾನ ಅವಕಾಶ ನೀಡುವ ಉದ್ದೇಶವಿದೆ. ಖಾಲಿ ಇರುವ ಸ್ಥಾನಗಳನ್ನು ಸಾಧ್ಯವಾದಷ್ಟು ಭರ್ತಿ ಮಾಡುವ ಪ್ರಯತ್ನ ಮಾಡಲಾಗುವುದು ಎಂದರು.

ದೆಹಲಿಯಲ್ಲಿ ನಡೆಯಬೇಕಿದ್ದ ಸಭೆ ಮುಂದೂಡಿಕೆ:

ಸಂಪುಟ ವಿಸ್ತರಣೆ ಕುರಿತು ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರೊಂದಿಗೆ ಸಭೆ ನಡೆಸಲು ಸಿದ್ಧತೆ ಮಾಡಿಕೊಂಡಿದ್ದರು.

ಆದರೆ, ನೀಟ್ ಅಕ್ರಮ ವಿರೋಧಿ ಪ್ರತಿಭಟನೆ ವೇಳೆ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ನಾಯಕರನ್ನು ಪೊಲೀಸರು ವಶಕ್ಕೆ ಪಡೆದ ಹಿನ್ನೆಲೆಯಲ್ಲಿ ಹೈಕಮಾಂಡ್ ಗಮನ ಆ ಬೆಳವಣಿಗೆಯತ್ತ ಕೇಂದ್ರೀಕೃತವಾಯಿತು. ಹೀಗಾಗಿ ಕರ್ನಾಟಕ ಸಂಪುಟ ವಿಸ್ತರಣೆ ಕುರಿತು ನಡೆಯಬೇಕಿದ್ದ ಚರ್ಚೆ ಮುಂದೂಡಿಕೆಯಾಯಿತು.

ಸುಮಾರು 20 ಮಂದಿಗೆ ಅವಕಾಶ ಸಾಧ್ಯತೆ:

ಸಂಪುಟ ವಿಸ್ತರಣೆಯಲ್ಲಿ ಹೊಸ ಮುಖಗಳು ಹಾಗೂ ಅನುಭವಿ ನಾಯಕರಿಗೆ ಸಮಾನ ಆದ್ಯತೆ ನೀಡುವ ಸಾಧ್ಯತೆ ಇದೆ. ಸುಮಾರು 10 ಹೊಸಬರು ಮತ್ತು 10 ಹಿರಿಯ ಶಾಸಕರಿಗೆ ಸಚಿವ ಸ್ಥಾನ ಸಿಗಬಹುದು ಎಂಬ ಚರ್ಚೆ ನಡೆಯುತ್ತಿದೆ.

ಮುಸ್ಲಿಂ ಸಮುದಾಯದಿಂದ ರಿಜ್ವಾನ್ ಅರ್ಷದ್, ಜಮೀರ್ ಅಹ್ಮದ್ ಖಾನ್, ತನ್ವೀರ್ ಸೇಠ್, ಸಲೀಂ ಅಹ್ಮದ್ ಹಾಗೂ ಖನೀಜ್ ಫಾತಿಮಾ ಅವರ ಹೆಸರುಗಳು ಕೇಳಿಬರುತ್ತಿದ್ದು, ಇವರಲ್ಲಿ ಮೂವರಿಗೆ ಅವಕಾಶ ಸಿಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಲಿಂಗಾಯತ ಸಮುದಾಯದಿಂದ ಅಶೋಕ್ ಪಟ್ಟಣ, ಲಕ್ಷ್ಮಣ ಸವದಿ, ಕಾಶಪ್ಪನವರ್, ಬಸವರಾಜ ರಾಯರೆಡ್ಡಿ, ಹಂಪನಗೌಡ ಬಾದರ್ಲಿ, ಯಶವಂತ್ ರಾಯಗೌಡ ಹಾಗೂ ಅಪ್ಪಾಜಿ ನಾಡಗೌಡ ಅವರ ಹೆಸರುಗಳು ಚರ್ಚೆಯಲ್ಲಿವೆ.

ಒಕ್ಕಲಿಗ ಸಮುದಾಯದಿಂದ ಶರತ್ ಬಚ್ಚೇಗೌಡ, ಮಾಗಡಿ ಬಾಲಕೃಷ್ಣ, ಗುಬ್ಬಿ ಶ್ರೀನಿವಾಸ್, ಶಿವಲಿಂಗೇಗೌಡ, ಚಲುವರಾಯಸ್ವಾಮಿ ಹಾಗೂ ಪ್ರಿಯಾ ಕೃಷ್ಣ ಅವರ ಹೆಸರುಗಳು ಸಚಿವ ಸ್ಥಾನದ ಆಕಾಂಕ್ಷಿಗಳ ಪಟ್ಟಿಯಲ್ಲಿವೆ.

ಮಹಿಳಾ ಕೋಟಾದಲ್ಲೂ ಎರಡು ಅಥವಾ ಮೂರು ಸ್ಥಾನ ನೀಡುವ ಕುರಿತು ಚರ್ಚೆ ನಡೆಯುತ್ತಿದ್ದು, ಆರತಿ ಕೃಷ್ಣ, ಲಕ್ಷ್ಮೀ ಹೆಬ್ಬಾಳ್ಕರ್, ಉಮಾಶ್ರೀ ಹಾಗೂ ನಯನಾ ಮೋಟಮ್ಮ ಅವರ ಹೆಸರುಗಳು ಕೇಳಿಬರುತ್ತಿವೆ.

ಸಂಪುಟ ವಿಸ್ತರಣೆ ಈ ವಾರದೊಳಗೆ ನಡೆಯುವ ಸಾಧ್ಯತೆ ಇದ್ದು, ಅಂತಿಮವಾಗಿ ಹೈಕಮಾಂಡ್ ಯಾರಿಗೆ ಅವಕಾಶ ನೀಡಲಿದೆ ಎಂಬುದು ರಾಜ್ಯ ರಾಜಕೀಯದಲ್ಲಿ ಕುತೂಹಲ ಮೂಡಿಸಿದೆ.

Tumakuru-Bengaluru Highway Accident: ಕೆಮಿಕಲ್ ಲಾರಿ ಪಲ್ಟಿ, ಕಿಲೋಮೀಟರ್‌ಗಟ್ಟಲೆ ಟ್ರಾಫಿಕ್ ಜಾಮ್!

ಬೆಂಗಳೂರು: ತುಮಕೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಾಯಕಾರಿ ರಾಸಾಯನಿಕ ತುಂಬಿದ ಲಾರಿ ಪಲ್ಟಿಯಾಗಿ ಅನಿಲ ಸೋರಿಕೆಯಾದ ಘಟನೆ ಬೆಂಗಳೂರು ಹೊರವಲಯದ ನೆಲಮಂಗಲ ತಾಲೂಕಿನ ಕುಲುವನಹಳ್ಳಿ ಗ್ರಾಮದ ಬಳಿ ನಡೆದಿದೆ.

ತುಮಕೂರು ಕಡೆಯಿಂದ ಬೆಂಗಳೂರಿನತ್ತ ಬರುತ್ತಿದ್ದ ಕ್ಲೋರೈಡ್ ಕೆಮಿಕಲ್ ತುಂಬಿದ ಲಾರಿ, ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿಯಲ್ಲೇ ಪಲ್ಟಿಯಾಗಿದೆ. ಲಾರಿ ಪಲ್ಟಿಯಾದ ಪರಿಣಾಮ ರಾಸಾಯನಿಕ ಸೋರಿಕೆಯಾಗಿದ್ದು, ಸ್ಥಳೀಯರು ಹಾಗೂ ವಾಹನ ಸವಾರರಲ್ಲಿ ಆತಂಕ ಮೂಡಿದೆ.

ಘಟನೆ ಮಾಹಿತಿ ತಿಳಿದ ತಕ್ಷಣ ನೆಲಮಂಗಲ ಅಗ್ನಿಶಾಮಕ ಸಿಬ್ಬಂದಿ ಹಾಗೂ ನೆಲಮಂಗಲ ಸಂಚಾರಿ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಸೋರಿಕೆಯನ್ನು ನಿಯಂತ್ರಿಸುವುದು ಹಾಗೂ ಲಾರಿಯನ್ನು ತೆರವುಗೊಳಿಸುವ ಕಾರ್ಯಾಚರಣೆ ಕೈಗೊಳ್ಳಲಾಗಿದೆ.

ಅಪಾಯಕಾರಿ ರಾಸಾಯನಿಕ ಸೋರಿಕೆಯ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಸ್ಥಳದಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

ಇನ್ನು ಲಾರಿ ಪಲ್ಟಿಯಾದ ಪರಿಣಾಮ ತುಮಕೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕಿಲೋಮೀಟರ್‌ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿದೆ. ಭಯದ ವಾತಾವರಣದ ನಡುವೆ ವಾಹನ ಸವಾರರು ನಿಧಾನಗತಿಯಲ್ಲಿ ಸಂಚರಿಸುವಂತಾಗಿದೆ.

ಪೊಲೀಸರು ಸಂಚಾರ ನಿಯಂತ್ರಣಕ್ಕೆ ಕ್ರಮ ಕೈಗೊಂಡಿದ್ದು, ಲಾರಿ ತೆರವು ಕಾರ್ಯ ಪೂರ್ಣಗೊಂಡ ಬಳಿಕ ಸಂಚಾರ ಸಾಮಾನ್ಯವಾಗುವ ನಿರೀಕ್ಷೆಯಿದೆ.

USA-Iran Conflict: ಕಚ್ಚಾ ತೈಲ ಬೆಲೆ 92 ಡಾಲರ್‌ಗೆ ಏರಿಕೆ, ಭಾರತಕ್ಕೆ ಹೆಚ್ಚುತ್ತಾ ಹೊರೆ?

0

ಲಂಡನ್: ಮಧ್ಯಪ್ರಾಚ್ಯದಲ್ಲಿ ಅಮೆರಿಕ ಮತ್ತು ಇರಾನ್ ನಡುವಿನ ಮಿಲಿಟರಿ ಸಂಘರ್ಷ ತೀವ್ರಗೊಂಡಿರುವ ಬೆನ್ನಲ್ಲೇ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಭಾರಿ ಏರಿಕೆ ಕಂಡಿದೆ.

ಅಂತರರಾಷ್ಟ್ರೀಯ ಮಾನದಂಡವಾಗಿರುವ ಬ್ರೆಂಟ್ ಕಚ್ಚಾ ತೈಲದ ಬೆಲೆ ಶೇ.1.2ಕ್ಕೂ ಹೆಚ್ಚು ಏರಿಕೆಯಾಗಿದ್ದು, ಪ್ರತಿ ಬ್ಯಾರಲ್‌ಗೆ 92.09 ಡಾಲರ್‌ಗೆ ತಲುಪಿದೆ. ಜೂನ್ ತಿಂಗಳ ಬಳಿಕ ಇದು ದಾಖಲಾದ ಅತಿ ಹೆಚ್ಚಿನ ಬೆಲೆಯಾಗಿದೆ.

ಇದೇ ವೇಳೆ ಅಮೆರಿಕದ ಪ್ರಮುಖ ಕಚ್ಚಾ ತೈಲ ಮಾನದಂಡವಾದ ಡಬ್ಲ್ಯೂಟಿಐ ದರವೂ ಶೇ.1.1ರಷ್ಟು ಏರಿಕೆಯಾಗಿದ್ದು, ಪ್ರತಿ ಬ್ಯಾರಲ್‌ಗೆ 85.23 ಡಾಲರ್ ತಲುಪಿದೆ.

ಹಾರ್ಮುಜ್ ಜಲಸಂಧಿಯಲ್ಲಿ ಆತಂಕ:

ವಿಶ್ವದ ಸುಮಾರು 20% ತೈಲ ಸಾಗಣೆ ನಡೆಯುವ ಹಾರ್ಮುಜ್ ಜಲಸಂಧಿಯಲ್ಲಿ ಇರಾನ್ ತೈಲ ಟ್ಯಾಂಕರ್‌ಗಳನ್ನು ತಡೆದು ದಾಳಿ ನಡೆಸಿರುವ ಹಿನ್ನೆಲೆಯಲ್ಲಿ ಜಾಗತಿಕ ತೈಲ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುವ ಆತಂಕ ಹೆಚ್ಚಾಗಿದೆ.

ಅಮೆರಿಕದ ಸೇನಾ ನೆಲೆಗಳು ಹಾಗೂ ರೇಡಾರ್ ಕೇಂದ್ರಗಳ ಮೇಲೆ ಇರಾನ್ ದಾಳಿ ನಡೆಸಿದ್ದು, ಇದಕ್ಕೆ ಪ್ರತಿಯಾಗಿ ಅಮೆರಿಕ ಕೂಡ ಇರಾನ್ ಆಸ್ತಿಗಳ ಮೇಲೆ ದಾಳಿ ನಡೆಸಿದೆ. ಈ ಬೆಳವಣಿಗೆಗಳು ತೈಲ ಮಾರುಕಟ್ಟೆಯಲ್ಲಿ ಅಸ್ಥಿರತೆ ಸೃಷ್ಟಿಸಿವೆ.

ಭಾರತ ಸೇರಿದಂತೆ ಆಮದುದಾರ ರಾಷ್ಟ್ರಗಳಿಗೆ ಹೊರೆ:

ಈ ಹಿಂದೆ ಅಮೆರಿಕ-ಇರಾನ್ ನಡುವೆ ಕದನ ವಿರಾಮ ಘೋಷಣೆಯಾದ ಬಳಿಕ ಜೂನ್ ಕೊನೆಯ ವಾರದಲ್ಲಿ ಕಚ್ಚಾ ತೈಲ ದರ ಪ್ರತಿ ಬ್ಯಾರಲ್‌ಗೆ ಸುಮಾರು 70 ಡಾಲರ್‌ಗೆ ಇಳಿಕೆಯಾಗಿತ್ತು. ಆದರೆ ಇದೀಗ ಮತ್ತೆ ಬೆಲೆ ಏರಿಕೆ ಕಾಣುತ್ತಿದೆ.

ಕಚ್ಚಾ ತೈಲ ದರ ಏರಿಕೆಯಿಂದ ಸರಕು ಸಾಗಣೆ ವೆಚ್ಚ ಹೆಚ್ಚಾಗುವ ಸಾಧ್ಯತೆ ಇದ್ದು, ಜಾಗತಿಕ ಮಟ್ಟದಲ್ಲಿ ಹಣದುಬ್ಬರ ಏರಿಕೆಯ ಆತಂಕ ಎದುರಾಗಿದೆ. ತೈಲ ಬೆಲೆ ಏರಿಕೆಯ ಪರಿಣಾಮ ಏಷ್ಯನ್ ಷೇರು ಮಾರುಕಟ್ಟೆ ಹಾಗೂ ಹೂಡಿಕೆದಾರರ ಮೇಲೂ ಪರಿಣಾಮ ಬೀರಿದೆ.

ಭಾರತ ಸೇರಿದಂತೆ ಪ್ರಮುಖ ತೈಲ ಆಮದುದಾರ ರಾಷ್ಟ್ರಗಳಿಗೆ ಇದು ಆರ್ಥಿಕ ಒತ್ತಡ ಹೆಚ್ಚಿಸಬಹುದು. ಮುಂದಿನ ದಿನಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರಗಳ ಮೇಲೂ ಇದರ ಪರಿಣಾಮ ಬೀರುವ ಸಾಧ್ಯತೆ ಇದೆ.

ತೈಲದ ಬೇಡಿಕೆ ಹೆಚ್ಚಾಗಿ ಪೂರೈಕೆ ಕಡಿಮೆಯಾದಾಗ ಬೆಲೆ ಏರಿಕೆಯಾಗುತ್ತದೆ. ಪ್ರಸ್ತುತ ಮಧ್ಯಪ್ರಾಚ್ಯದ ಸಂಘರ್ಷದಿಂದ ಪೂರೈಕೆ ಕುರಿತು ಆತಂಕ ಉಂಟಾಗಿರುವುದೇ ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿದೆ.

 

Abhishek Porel Case: ಅಭಿಷೇಕ್ ಪೊರೆಲ್‌ಗೆ ಸಂಕಷ್ಟ, ಕ್ರಿಕೆಟಿಗನ ಬಂಧನಕ್ಕೆ ಹೈಕೋರ್ಟ್ ಸೂಚನೆ!

0

ಕೋಲ್ಕತಾ: ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ರಿಕೆಟಿಗ ಅಭಿಷೇಕ್ ಪೊರೆಲ್ ಅವರನ್ನು ಬಂಧಿಸುವಂತೆ ಕಲ್ಕತ್ತಾ ಹೈಕೋರ್ಟ್ ಪೊಲೀಸರಿಗೆ ಆದೇಶ ನೀಡಿದೆ.

ಅಭಿಷೇಕ್ ಪೊರೆಲ್ ವಿರುದ್ಧ ವೈದ್ಯಕೀಯ ವಿದ್ಯಾರ್ಥಿನಿಯೊಬ್ಬರು ನೀಡಿದ ದೂರಿನ ಆಧಾರದ ಮೇಲೆ ಅತ್ಯಾಚಾರ, ಹಲ್ಲೆ, ಬೆದರಿಕೆ ಸೇರಿದಂತೆ ಹಲವು ಗಂಭೀರ ಆರೋಪಗಳಡಿ ಪ್ರಕರಣ ದಾಖಲಾಗಿದೆ.

ದೂರಿನಲ್ಲಿ, ಮದುವೆಯಾಗುವುದಾಗಿ ನಂಬಿಸಿ ಲೈಂಗಿಕ ಸಂಬಂಧ ಬೆಳೆಸಿದ್ದು, ಬಳಿಕ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಯುವತಿ ಆರೋಪಿಸಿದ್ದಾಳೆ. ಈ ಆರೋಪಗಳ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಪ್ರಕರಣದ ವಿಚಾರಣೆ ನಡೆಸಿದ ಕಲ್ಕತ್ತಾ ಹೈಕೋರ್ಟ್, ಅಭಿಷೇಕ್ ಪೊರೆಲ್ ಅವರನ್ನು ತಕ್ಷಣ ಬಂಧಿಸುವಂತೆ ಪೊಲೀಸರಿಗೆ ಸೂಚನೆ ನೀಡಿದೆ.

ಇನ್ನೊಂದೆಡೆ, ತಮ್ಮ ವಿರುದ್ಧದ ಎಲ್ಲ ಆರೋಪಗಳನ್ನು ಅಭಿಷೇಕ್ ಪೊರೆಲ್ ತಳ್ಳಿಹಾಕಿದ್ದಾರೆ. ಆರೋಪಗಳು ಆಧಾರರಹಿತವಾಗಿವೆ ಎಂದು ಅವರು ಹೇಳಿದ್ದಾರೆ.

ಸದ್ಯ ಪ್ರಕರಣದ ತನಿಖೆ ಮುಂದುವರಿದಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಳ್ಳುತ್ತಿದ್ದಾರೆ.

ಟೆಸ್ಟ್ ಡ್ರೈವ್ ವೇಳೆ ಕಾರು ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ: ತಪ್ಪಿದ ಭಾರಿ ಅನಾಹುತ!

ಬೆಂಗಳೂರು: ಟೆಸ್ಟ್ ಡ್ರೈವ್ ವೇಳೆ ಮಹಿಳೆ ಚಲಾಯಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿ ಫುಟ್‌ಪಾತ್ ಮೇಲಿದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಘಟನೆ ಬೆಂಗಳೂರಿನ ಕೆ.ಆರ್.ಪುರಂನಲ್ಲಿ ನಡೆದಿದೆ.

ಕೆ.ಆರ್.ಪುರಂ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯ ಸಿಂಗಯ್ಯನಪಾಳ್ಯ ಬಸ್ ನಿಲ್ದಾಣದ ಬಳಿ ಈ ಘಟನೆ ನಡೆದಿದೆ. ಟೆಸ್ಟ್ ಡ್ರೈವ್‌ಗಾಗಿ ತೆಗೆದುಕೊಂಡಿದ್ದ ಕೆಂಪು ಬಣ್ಣದ ಶಿಫ್ಟ್ ಡಿಸೈರ್ ಕಾರು ಚಲಾಯಿಸುತ್ತಿದ್ದ ವೇಳೆ ಏಕಾಏಕಿ ನಿಯಂತ್ರಣ ತಪ್ಪಿದೆ.

ನಿಯಂತ್ರಣ ಕಳೆದುಕೊಂಡ ಕಾರು ಫುಟ್‌ಪಾತ್ ಮೇಲೆ ಹತ್ತಿ ಅಲ್ಲಿದ್ದ ಎಲೆಕ್ಟ್ರಿಕ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಅದೃಷ್ಟವಶಾತ್ ಕಾರು ಚಾಲನೆ ಮಾಡುತ್ತಿದ್ದ ಮಹಿಳೆ ಯಾವುದೇ ಗಂಭೀರ ಗಾಯಗಳಿಲ್ಲದೆ ಪಾರಾಗಿದ್ದಾರೆ.

ಘಟನೆ ಮಾಹಿತಿ ತಿಳಿದ ತಕ್ಷಣ ಕೆ.ಆರ್.ಪುರಂ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಹಿಳೆ ವಿರುದ್ಧ ನಿರ್ಲಕ್ಷ್ಯ ಚಾಲನೆ ಆರೋಪದಡಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಈ ವೇಳೆ ದೊಡ್ಡ ಅನಾಹುತವೊಂದು ತಪ್ಪಿದೆ. ಕಾರು ಡಿಕ್ಕಿ ಹೊಡೆದ ವಿದ್ಯುತ್ ಕಂಬದ ಮುಂದೆಯೇ ಬಸ್ ನಿಲ್ದಾಣವಿತ್ತು. ಕಂಬ ಇಲ್ಲದಿದ್ದರೆ ಕಾರು ನೇರವಾಗಿ ಬಸ್ ನಿಲ್ದಾಣಕ್ಕೆ ನುಗ್ಗುವ ಸಾಧ್ಯತೆ ಇತ್ತು. ಹಗಲು ಹೊತ್ತಿನಲ್ಲಿ ಘಟನೆ ನಡೆದಿದ್ದರಿಂದ ಪ್ರಯಾಣಿಕರ ಜೀವಕ್ಕೂ ಅಪಾಯ ಎದುರಾಗಬಹುದಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ.

ಪ್ರೆಶರ್ ಕುಕ್ಕರ್ ಖರೀದಿಸುವಾಗ ಈ ತಪ್ಪು ಮಾಡಬೇಡಿ: ಅಲ್ಯೂಮಿನಿಯಂ ಮತ್ತು ಸ್ಟೀಲ್ ಕುಕ್ಕರ್ʼಗಳ ನಡುವಿನ ವ್ಯತ್ಯಾಸವೇನು?

0

ಭಾರತೀಯ ಮನೆಗಳಲ್ಲಿ ಬೆಳಗಿನ ಅಲಾರಮ್‌ಗಿಂತಲೂ ಹೆಚ್ಚು ಕೇಳಿಸುವ ಶಬ್ದವೆಂದರೆ ಪ್ರೆಶರ್ ಕುಕ್ಕರ್‌ನ ಸೀಟಿ. ಬೆಳಗ್ಗೆ ಮಕ್ಕಳಿಗೆ ಲಂಚ್ ಬಾಕ್ಸ್‌ಗಳನ್ನು ತಯಾರಿಸುವ ತಾಯಂದಿರಿಂದ ಹಿಡಿದು, ಕೆಲಸ ಮುಗಿಸಿ ರಾತ್ರಿ ಮನೆಗೆ ಮರಳುವ ಬ್ಯಾಚುಲರ್‌ಗಳವರೆಗೆ ಬಹುತೇಕ ಎಲ್ಲರ ಅಡುಗೆಮನೆಯಲ್ಲಿ ಪ್ರೆಶರ್ ಕುಕ್ಕರ್ ಪ್ರಮುಖ ಪಾತ್ರ ವಹಿಸುತ್ತದೆ.

ಏರ್ ಫ್ರೈಯರ್, ಮೈಕ್ರೋವೇವ್ ಓವನ್ ಸೇರಿದಂತೆ ಹಲವು ಆಧುನಿಕ ಅಡುಗೆ ಉಪಕರಣಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದರೂ, ಪ್ರೆಶರ್ ಕುಕ್ಕರ್‌ನ ಅನುಕೂಲತೆ ಮತ್ತು ಸಮಯ ಉಳಿತಾಯಕ್ಕೆ ಇಂದಿಗೂ ಹೆಚ್ಚಿನ ಬೇಡಿಕೆಯಿದೆ. ಬೇಳೆ, ಅನ್ನ, ತರಕಾರಿ ಸೇರಿದಂತೆ ಹಲವು ಆಹಾರಗಳನ್ನು ಸುಲಭವಾಗಿ ಬೇಯಿಸಲು ಇದು ಸಹಾಯ ಮಾಡುತ್ತದೆ.

ಆದರೆ ಹಳೆಯ ಕುಕ್ಕರ್ ಹಾಳಾದಾಗ ಅಥವಾ ಹೊಸ ಕುಕ್ಕರ್ ಖರೀದಿಸುವಾಗ ಬಹುತೇಕರು ಒಂದು ಸಾಮಾನ್ಯ ಗೊಂದಲಕ್ಕೆ ಸಿಲುಕುತ್ತಾರೆ. ಅಲ್ಯೂಮಿನಿಯಂ ಕುಕ್ಕರ್ ಖರೀದಿಸಬೇಕೇ? ಅಥವಾ ಹೆಚ್ಚು ದುಬಾರಿಯಾದ ಸ್ಟೇನ್‌ಲೆಸ್ ಸ್ಟೀಲ್ ಕುಕ್ಕರ್ ಆಯ್ಕೆ ಮಾಡಬೇಕೇ? ಈ ಎರಡರ ನಡುವಿನ ಪ್ರಮುಖ ವ್ಯತ್ಯಾಸಗಳನ್ನು ತಿಳಿದುಕೊಳ್ಳುವುದು ಅಗತ್ಯ.

ಅಲ್ಯೂಮಿನಿಯಂ ಪ್ರೆಶರ್ ಕುಕ್ಕರ್‌ನ ಅನುಕೂಲಗಳು

ಅಲ್ಯೂಮಿನಿಯಂ ಪ್ರೆಶರ್ ಕುಕ್ಕರ್‌ಗಳು ಹಲವು ವರ್ಷಗಳಿಂದ ಭಾರತೀಯ ಮನೆಗಳಲ್ಲಿ ಜನಪ್ರಿಯವಾಗಿವೆ. ವಿಶೇಷವಾಗಿ ಕಡಿಮೆ ಬಜೆಟ್‌ನಲ್ಲಿ ಅಡುಗೆಮನೆ ಸಿದ್ಧಪಡಿಸುವವರಿಗೆ ಇದು ಕೈಗೆಟುಕುವ ಆಯ್ಕೆಯಾಗಿದೆ.

ಅಲ್ಯೂಮಿನಿಯಂ ಉತ್ತಮ ಶಾಖ ವಾಹಕವಾಗಿರುವುದರಿಂದ, ಒಲೆಯ ಮೇಲೆ ಇಟ್ಟ ನಂತರ ಇದು ವೇಗವಾಗಿ ಬಿಸಿಯಾಗುತ್ತದೆ. ಇದರಿಂದ ನೀರು ಬೇಗ ಕುದಿಯುವುದರ ಜೊತೆಗೆ, ಕುಕ್ಕರ್‌ನಲ್ಲಿ ಒತ್ತಡವೂ ತ್ವರಿತವಾಗಿ ನಿರ್ಮಾಣವಾಗುತ್ತದೆ. ಹೀಗಾಗಿ ಬೇಳೆ, ತರಕಾರಿ ಮತ್ತು ಇತರ ಆಹಾರಗಳನ್ನು ಕಡಿಮೆ ಸಮಯದಲ್ಲಿ ಬೇಯಿಸಲು ಸಾಧ್ಯವಾಗುತ್ತದೆ.

ಇದರ ಮತ್ತೊಂದು ಪ್ರಮುಖ ಪ್ರಯೋಜನವೆಂದರೆ ಕಡಿಮೆ ಬೆಲೆ. ಹೀಗಾಗಿ ಕಡಿಮೆ ಬಜೆಟ್‌ನಲ್ಲಿ ಪ್ರೆಶರ್ ಕುಕ್ಕರ್ ಖರೀದಿಸಲು ಬಯಸುವವರಿಗೆ ಅಲ್ಯೂಮಿನಿಯಂ ಕುಕ್ಕರ್ ಜನಪ್ರಿಯ ಆಯ್ಕೆಯಾಗಿದೆ.

ಅಲ್ಯೂಮಿನಿಯಂ ಕುಕ್ಕರ್‌ನ ಅನಾನುಕೂಲಗಳು

ಅಲ್ಯೂಮಿನಿಯಂ ಕುಕ್ಕರ್ ವೇಗವಾಗಿ ಬಿಸಿಯಾಗುವುದಾದರೂ, ಇದರ ಬಳಕೆಯ ಬಗ್ಗೆ ಕೆಲವರು ಆರೋಗ್ಯದ ವಿಚಾರದಲ್ಲಿ ಎಚ್ಚರಿಕೆ ವಹಿಸುತ್ತಾರೆ. ಅಲ್ಯೂಮಿನಿಯಂ ಕೆಲವು ಆಮ್ಲೀಯ ಆಹಾರಗಳೊಂದಿಗೆ ಪ್ರತಿಕ್ರಿಯಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತದೆ.

ಟೊಮೆಟೊ, ಹುಣಸೆಹಣ್ಣು ಅಥವಾ ನಿಂಬೆ ಆಧಾರಿತ ಆಹಾರಗಳನ್ನು ಪದೇಪದೇ ಅಲ್ಯೂಮಿನಿಯಂ ಪಾತ್ರೆಗಳಲ್ಲಿ ಬೇಯಿಸುವ ಬಗ್ಗೆ ಕೆಲವರು ಆತಂಕ ವ್ಯಕ್ತಪಡಿಸುತ್ತಾರೆ. ಆದಾಗ್ಯೂ, ಆರೋಗ್ಯದ ಮೇಲೆ ಪರಿಣಾಮ ಬೀರುವ ವಿಚಾರದಲ್ಲಿ ಬಳಕೆಯ ಪ್ರಮಾಣ, ಪಾತ್ರೆಯ ಸ್ಥಿತಿ ಮತ್ತು ಆಹಾರದ ಸ್ವರೂಪ ಸೇರಿದಂತೆ ಹಲವು ಅಂಶಗಳು ಮುಖ್ಯವಾಗುತ್ತವೆ.

ಇದರ ಜೊತೆಗೆ ಅಲ್ಯೂಮಿನಿಯಂ ಕುಕ್ಕರ್‌ಗಳಿಗೆ ಸುಲಭವಾಗಿ ಗೀರು ಬೀಳುವ ಸಾಧ್ಯತೆ ಇದೆ. ದೀರ್ಘಕಾಲ ಬಳಕೆಯ ನಂತರ ಒಳಭಾಗ ಕಪ್ಪಾಗಬಹುದು ಅಥವಾ ಅದರ ಮೂಲ ಹೊಳಪು ಕಡಿಮೆಯಾಗಬಹುದು.

ಸ್ಟೇನ್‌ಲೆಸ್ ಸ್ಟೀಲ್ ಕುಕ್ಕರ್‌ನ ವಿಶೇಷತೆ

ಇತ್ತೀಚಿನ ವರ್ಷಗಳಲ್ಲಿ ಸ್ಟೇನ್‌ಲೆಸ್ ಸ್ಟೀಲ್ ಪ್ರೆಶರ್ ಕುಕ್ಕರ್‌ಗಳ ಬಳಕೆ ಹೆಚ್ಚಾಗಿದೆ. ದೀರ್ಘಕಾಲ ಬಾಳಿಕೆ, ಸುಲಭ ನಿರ್ವಹಣೆ ಮತ್ತು ಸ್ವಚ್ಛಗೊಳಿಸಲು ಅನುಕೂಲಕರವಾಗಿರುವುದು ಇದರ ಪ್ರಮುಖ ಕಾರಣಗಳಾಗಿವೆ.

ಸ್ಟೇನ್‌ಲೆಸ್ ಸ್ಟೀಲ್ ಕುಕ್ಕರ್‌ಗಳು ಸಾಮಾನ್ಯವಾಗಿ ಗೀರು, ಡೆಂಟ್ ಮತ್ತು ತುಕ್ಕಿಗೆ ಹೆಚ್ಚು ನಿರೋಧಕವಾಗಿರುತ್ತವೆ. ಸರಿಯಾಗಿ ನಿರ್ವಹಿಸಿದರೆ ಹಲವು ವರ್ಷಗಳ ಕಾಲ ಬಳಸಬಹುದು. ಆಹಾರ ಕೆಳಭಾಗಕ್ಕೆ ಅಂಟಿಕೊಂಡರೂ, ಸ್ವಲ್ಪ ಸಮಯ ನೆನೆಸಿಟ್ಟು ಸ್ವಚ್ಛಗೊಳಿಸಿದರೆ ಮತ್ತೆ ಹೊಳಪು ಪಡೆಯಬಹುದು.

ಇಂದಿನ ಆಧುನಿಕ ಸ್ಟೇನ್‌ಲೆಸ್ ಸ್ಟೀಲ್ ಕುಕ್ಕರ್‌ಗಳಲ್ಲಿ ಸಾಮಾನ್ಯವಾಗಿ ಬಹುಪದರದ ಅಥವಾ ಸ್ಯಾಂಡ್‌ವಿಚ್ ಬಾಟಮ್‌ಗಳನ್ನು ಬಳಸಲಾಗುತ್ತದೆ. ಇದರಿಂದ ಶಾಖವು ಕುಕ್ಕರ್‌ನ ಕೆಳಭಾಗದಲ್ಲಿ ಸಮವಾಗಿ ಹರಡಲು ಸಹಾಯವಾಗುತ್ತದೆ. ಹಳೆಯ ಸ್ಟೀಲ್ ಕುಕ್ಕರ್‌ಗಳಿಗೆ ಹೋಲಿಸಿದರೆ ಇವು ವೇಗವಾಗಿ ಬಿಸಿಯಾಗುವಂತೆ ವಿನ್ಯಾಸಗೊಳಿಸಲಾಗಿದೆ.

ಆರೋಗ್ಯದ ದೃಷ್ಟಿಯಿಂದ ಯಾವುದು ಉತ್ತಮ?

ಸ್ಟೇನ್‌ಲೆಸ್ ಸ್ಟೀಲ್ ಅನ್ನು ಸಾಮಾನ್ಯವಾಗಿ ಆಹಾರದೊಂದಿಗೆ ಕಡಿಮೆ ಪ್ರತಿಕ್ರಿಯಿಸುವ ವಸ್ತುವೆಂದು ಪರಿಗಣಿಸಲಾಗುತ್ತದೆ. ಹೀಗಾಗಿ ಟೊಮೆಟೊ, ಹುಣಸೆಹಣ್ಣು ಅಥವಾ ನಿಂಬೆ ಆಧಾರಿತ ಆಹಾರಗಳನ್ನು ಬೇಯಿಸುವಾಗ ಅಲ್ಯೂಮಿನಿಯಂ ಪಾತ್ರೆಗಳಿಗಿಂತ ಸ್ಟೇನ್‌ಲೆಸ್ ಸ್ಟೀಲ್ ಪಾತ್ರೆಗಳಿಗೆ ಹೆಚ್ಚಿನ ಆದ್ಯತೆ ನೀಡುವವರಿದ್ದಾರೆ.

ಆದರೆ ಯಾವುದೇ ಪ್ರೆಶರ್ ಕುಕ್ಕರ್ ಖರೀದಿಸುವಾಗ ಅದರ ಗುಣಮಟ್ಟ, ಸುರಕ್ಷತಾ ಮಾನದಂಡಗಳು, ಬಳಕೆಯ ಸೂಚನೆಗಳು ಮತ್ತು ತಯಾರಕರ ಮಾರ್ಗಸೂಚಿಗಳನ್ನು ಗಮನಿಸುವುದು ಅತ್ಯಂತ ಮುಖ್ಯ.

ಅಲ್ಯೂಮಿನಿಯಂ ಅಥವಾ ಸ್ಟೇನ್‌ಲೆಸ್ ಸ್ಟೀಲ್; ಯಾವುದು ಖರೀದಿಸಬೇಕು?

ನಿಮ್ಮ ಬಜೆಟ್ ಮತ್ತು ಬಳಕೆಯ ಅಗತ್ಯವನ್ನು ಆಧರಿಸಿ ಆಯ್ಕೆ ಮಾಡಬಹುದು. ಕಡಿಮೆ ಬೆಲೆಯಲ್ಲಿ ತಕ್ಷಣದ ಬಳಕೆಗಾಗಿ ಕುಕ್ಕರ್ ಬೇಕಿದ್ದರೆ ಅಲ್ಯೂಮಿನಿಯಂ ಕುಕ್ಕರ್ ಕೈಗೆಟುಕುವ ಆಯ್ಕೆಯಾಗಬಹುದು.

ಆದರೆ ದೀರ್ಘಕಾಲ ಬಾಳಿಕೆ, ಸುಲಭ ನಿರ್ವಹಣೆ ಮತ್ತು ಆಹಾರದೊಂದಿಗೆ ಕಡಿಮೆ ಪ್ರತಿಕ್ರಿಯಿಸುವ ಪಾತ್ರೆಯನ್ನು ಬಯಸುವವರು ಸ್ಟೇನ್‌ಲೆಸ್ ಸ್ಟೀಲ್ ಕುಕ್ಕರ್‌ನ್ನು ಪರಿಗಣಿಸಬಹುದು. ಆರಂಭದಲ್ಲಿ ಇದರ ಬೆಲೆ ಸ್ವಲ್ಪ ಹೆಚ್ಚಾಗಿದ್ದರೂ, ದೀರ್ಘಕಾಲ ಬಳಸುವ ದೃಷ್ಟಿಯಿಂದ ಇದು ಉತ್ತಮ ಹೂಡಿಕೆಯಾಗಬಹುದು.

ಒಟ್ಟಿನಲ್ಲಿ, ಪ್ರೆಶರ್ ಕುಕ್ಕರ್ ಆಯ್ಕೆ ಮಾಡುವಾಗ ಕೇವಲ ಬೆಲೆಯನ್ನು ಮಾತ್ರ ನೋಡದೆ, ಅದರ ಗುಣಮಟ್ಟ, ಸುರಕ್ಷತೆ, ಬಾಳಿಕೆ ಮತ್ತು ನಿಮ್ಮ ಕುಟುಂಬದ ಅಡುಗೆ ಅಗತ್ಯಗಳನ್ನು ಪರಿಗಣಿಸುವುದು ಉತ್ತಮ.

ಪ್ರಜಾಸೌಧಕ್ಕೆ ಅಡ್ಡಿಯಲ್ಲ, ಕ್ರೀಡಾಂಗಣ ಉಳಿಯಲಿ: ಲಕ್ಷ್ಮೇಶ್ವರದಲ್ಲಿ ಕ್ರೀಡಾಪಟುಗಳ ಪ್ರತಿಭಟನೆ

0

ಲಕ್ಷ್ಮೇಶ್ವರ: ಪ್ರಜಾಸೌಧ ನಿರ್ಮಾಣಕ್ಕೆ ವಿರೋಧವಿಲ್ಲ, ಆದರೆ ಕ್ರೀಡಾಂಗಣಕ್ಕೆ ಮೀಸಲಾದ ಜಾಗದ ಒಂದು ಇಂಚು ಕೂಡ ಕಡಿಮೆಯಾಗಬಾರದು ಎಂದು ಆಗ್ರಹಿಸಿ ಕ್ರೀಡಾಪಟುಗಳು, ಕ್ರೀಡಾಭಿಮಾನಿಗಳು ಹಾಗೂ ಸಾರ್ವಜನಿಕರು ಮಂಗಳವಾರ ಲಕ್ಷ್ಮೇಶ್ವರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.

ಪಟ್ಟಣದ ಪುರಸಭೆ ಉಮಾ ವಿದ್ಯಾಲಯದ ಹಿಂಭಾಗದಲ್ಲಿರುವ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಗೆ ಮೀಸಲಾದ ಕ್ರೀಡಾಂಗಣದ ಜಾಗದ ಪಕ್ಕದಲ್ಲಿ ಪ್ರಜಾಸೌಧ ನಿರ್ಮಾಣ ಕಾಮಗಾರಿ ಆರಂಭಿಸಲು ಗುತ್ತಿಗೆದಾರರು ಮುಂದಾದ ಹಿನ್ನೆಲೆಯಲ್ಲಿ ಪ್ರತಿಭಟನಾಕಾರರು ಸ್ಥಳಕ್ಕೆ ಆಗಮಿಸಿ ಕಾಮಗಾರಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸುವಂತೆ ಒತ್ತಾಯಿಸಿದರು.

“ಆಟದ ಮೈದಾನ ನಮ್ಮ ಹಕ್ಕು”, “ಕ್ರೀಡಾಂಗಣ ಉಳಿಸಿ” ಎಂಬ ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು, ಮೈದಾನದ ಜಾಗವನ್ನು ಒತ್ತುವರಿ ಮಾಡಿ ಯಾವುದೇ ಕಟ್ಟಡ ನಿರ್ಮಾಣಕ್ಕೆ ಅವಕಾಶ ನೀಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನಾಕಾರರ ಪರವಾಗಿ ಮಾತನಾಡಿದ ಶರಣು ಗೋಡಿ, ಸೋಮಣ್ಣ ಉಪನಾಳ ಹಾಗೂ ಬಸಣ್ಣ ಬೆಂಡಿಗೇರಿ, ತಾಲೂಕು ಕ್ರೀಡಾಂಗಣಕ್ಕೆ ಮೀಸಲಾದ 3.24 ಎಕರೆ ಜಾಗೆಯಲ್ಲಿ ಯಾವುದೇ ರೀತಿಯ ಕಡಿತ ಅಥವಾ ಒತ್ತುವರಿ ಆಗಬಾರದು. ಕ್ರೀಡಾ ಇಲಾಖೆಯ ಹೆಸರಿನಲ್ಲಿರುವ ಜಾಗೆಯನ್ನು ತಕ್ಷಣ ಸರ್ವೇ ಮಾಡಿ ಗಡಿ ಗುರುತಿಸಬೇಕು. ಇದೇ ಮೈದಾನದಿಂದ ನೂರಾರು ಕ್ರೀಡಾಪಟುಗಳು ತಾಲೂಕು, ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದ್ದಾರೆ. ಮುಂದಿನ ಪೀಳಿಗೆಯ ಹಿತದೃಷ್ಟಿಯಿಂದ ಕ್ರೀಡಾಂಗಣವನ್ನು ಉಳಿಸುವುದು ಅಗತ್ಯ ಎಂದು ಒತ್ತಾಯಿಸಿದರು.

ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ಧನಂಜಯ ಎಂ. ಅವರು ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿದರು. ಕ್ರೀಡಾಂಗಣಕ್ಕೆ ಮೀಸಲಾದ ಜಾಗದಲ್ಲಿ ಯಾವುದೇ ಕಟ್ಟಡ ನಿರ್ಮಾಣ ನಡೆಯುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.

2025ರಲ್ಲಿ ಪುರಸಭೆಗೆ ಸೇರಿದ 2.34 ಎಕರೆ ಭೂಮಿಯನ್ನು ಪ್ರಜಾಸೌಧ ನಿರ್ಮಾಣಕ್ಕೆ ಸರ್ಕಾರ ಮಂಜೂರು ಮಾಡಿದ್ದು, ₹8.60 ಕೋಟಿ ವೆಚ್ಚದ ಕಾಮಗಾರಿಗೆ ಕರ್ನಾಟಕ ಹೌಸಿಂಗ್ ಬೋರ್ಡ್‌ಗೆ ಆದೇಶ ನೀಡಲಾಗಿದೆ. ಪ್ರಸ್ತುತ ಗುತ್ತಿಗೆದಾರರು ಲೈನ್‌ಔಟ್ ಹಾಗೂ ತಾತ್ಕಾಲಿಕ ಶೆಡ್ ನಿರ್ಮಾಣದ ಕೆಲಸ ಮಾತ್ರ ಮಾಡುತ್ತಿದ್ದಾರೆ. ಕ್ರೀಡಾಂಗಣದ ಜಾಗ ಒತ್ತುವರಿಯಾಗುವುದಿಲ್ಲ ಎಂದು ಭರವಸೆ ನೀಡಿದರು.

ಕ್ರೀಡಾ ಇಲಾಖೆಯಿಂದ ಮನವಿ ಬಂದ ತಕ್ಷಣ ಜಾಗದ ಸರ್ವೇ ನಡೆಸಿ ಗಡಿ ಗುರುತಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಹಶೀಲ್ದಾರ್ ತಿಳಿಸಿದರು.

ಇದೇ ವೇಳೆ ಲಕ್ಷ್ಮೇಶ್ವರ ತಾಲೂಕು ಕಾಂಗ್ರೆಸ್ ಬ್ಲಾಕ್ ಸಮಿತಿ ಅಧ್ಯಕ್ಷ ಜೆ.ಆರ್. ಕೊಪ್ಪದ ಮಾತನಾಡಿ, ಪ್ರಜಾಸೌಧ ನಿರ್ಮಾಣಕ್ಕೆ ಕಾಂಗ್ರೆಸ್ ವಿರೋಧವಿಲ್ಲ. ಆದರೆ ಸಚಿವರು, ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರ ಸಮ್ಮುಖದಲ್ಲಿ ಭೂಮಿಪೂಜೆ ನಡೆಸದೆ ಕಾಮಗಾರಿ ಆರಂಭಿಸಿರುವುದು ಅನುಮಾನಕ್ಕೆ ಕಾರಣವಾಗಿದೆ ಎಂದು ಹೇಳಿದರು.

ಕ್ರೀಡಾಂಗಣದ ಜಾಗ ಹಾಗೂ ಅಲ್ಲಿನ ಗುಡಿಸಲು ನಿವಾಸಿಗಳ ಸಮಸ್ಯೆ ಬಗೆಹರಿಸಿದ ಬಳಿಕವೇ ಕಾಮಗಾರಿ ಆರಂಭಿಸಬೇಕು ಎಂದು ಅವರು ಆಗ್ರಹಿಸಿದರು.