ಗದಗ:- ಜಿಲ್ಲೆಯಲ್ಲಿ ಸಾರ್ವಜನಿಕ ಶಾಂತಿ ಹಾಗೂ ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟುಮಾಡುತ್ತಿದ್ದ ರೌಡಿಶೀಟರ್ಗಳ ವಿರುದ್ಧ ಗದಗ ಜಿಲ್ಲಾ ಪೊಲೀಸರು ಕಠಿಣ ಕ್ರಮ ಕೈಗೊಂಡಿದ್ದಾರೆ.

ಕಳೆದ ಮೂರು ತಿಂಗಳ ಅವಧಿಯಲ್ಲಿ 13 ಮಂದಿ ರೌಡಿಶೀಟರ್ಗಳನ್ನು ವಿವಿಧ ಜಿಲ್ಲೆಗಳಿಗೆ ಗಡಿಪಾರು ಮಾಡಲಾಗಿದೆ. ಕೊಲೆ ಯತ್ನ, ದರೋಡೆ, ಸುಲಿಗೆ, ಮಾದಕ ವಸ್ತುಗಳ ಮಾರಾಟ, ಜೂಜಾಟ, ಸಾರ್ವಜನಿಕ ಆಸ್ತಿ ಹಾನಿ, ಜೀವ ಬೆದರಿಕೆ ಸೇರಿದಂತೆ ಹಲವು ಗಂಭೀರ ಅಪರಾಧ ಪ್ರಕರಣಗಳಲ್ಲಿ ಪದೇ ಪದೇ ಭಾಗಿಯಾಗುತ್ತಿದ್ದ ಆರೋಪಿಗಳ ವಿರುದ್ಧ ಈ ಕ್ರಮ ಕೈಗೊಳ್ಳಲಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ಹಾಗೂ ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿಗಳ ಆದೇಶದ ಮೇರೆಗೆ ಗಡಿಪಾರು ಆದೇಶ ಜಾರಿಗೊಳಿಸಲಾಗಿದೆ. ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಿಂದ ಸಲ್ಲಿಸಲಾದ ಪ್ರಸ್ತಾವನೆಗಳನ್ನು ಪರಿಶೀಲಿಸಿದ ಬಳಿಕ ಸಾರ್ವಜನಿಕ ಹಿತದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.
ಗಡಿಪಾರುಗೊಂಡ ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS), ಭಾರತೀಯ ದಂಡ ಸಂಹಿತೆ (IPC), ಎನ್ಡಿಪಿಎಸ್ ಕಾಯ್ದೆ, ಎಸ್ಸಿ/ಎಸ್ಟಿ ದೌರ್ಜನ್ಯ ತಡೆ ಕಾಯ್ದೆ ಹಾಗೂ ಕರ್ನಾಟಕ ಪೊಲೀಸ್ ಕಾಯ್ದೆಯಡಿ ಪ್ರಕರಣಗಳು ದಾಖಲಾಗಿವೆ.
ಗಡಿಪಾರುಗೊಂಡ ರೌಡಿಶೀಟರ್ಗಳ ವಿವರ:
* ದವನಪ್ಪ (ಬಾಗಲಕೋಟೆ): ಕೊಲೆ ಯತ್ನ, ಗಲಭೆ, ಹಲ್ಲೆ, ಜೀವ ಬೆದರಿಕೆ, ಎಸ್ಸಿ/ಎಸ್ಟಿ ಕಾಯ್ದೆ ಉಲ್ಲಂಘನೆ ಸೇರಿ 6 ಪ್ರಕರಣಗಳು.
* ದಾವಲಸಾಬ್ (ಬಾಗಲಕೋಟೆ): ಗಾಂಜಾ ಹಾಗೂ ಮಾದಕ ವಸ್ತುಗಳ ಮಾರಾಟ ಮತ್ತು ಸಾಗಣೆ ಸಂಬಂಧ ಎನ್ಡಿಪಿಎಸ್ ಕಾಯ್ದೆಯಡಿ 3 ಪ್ರಕರಣಗಳು.
* ಅಭಿಷೇಕ್ (ಬಾಗಲಕೋಟೆ): ಜೀವ ಬೆದರಿಕೆ, ಹಲ್ಲೆ ಸೇರಿ 2 ಪ್ರಕರಣಗಳು.
* ಸಾಹಿಲ್ (ಕೊಪ್ಪಳ): ಜೀವ ಬೆದರಿಕೆ, ಹಲ್ಲೆ ಸೇರಿ 2 ಪ್ರಕರಣಗಳು.
* ರಾಚಣ್ಣ (ಬಾಗಲಕೋಟೆ): ಜೂಜಾಟಕ್ಕೆ ಸಂಬಂಧಿಸಿದ ಕರ್ನಾಟಕ ಪೊಲೀಸ್ ಕಾಯ್ದೆಯಡಿ 3 ಪ್ರಕರಣಗಳು.
* ಲಾಲಸಾಬ್ (ಹಾವೇರಿ): ಜೂಜಾಟಕ್ಕೆ ಸಂಬಂಧಿಸಿದ 3 ಪ್ರಕರಣಗಳು.
* ಮೈನುದ್ದೀನ್ (ಹಾವೇರಿ): ಕೊಲೆ ಯತ್ನ, ದರೋಡೆ, ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ, ಸಾರ್ವಜನಿಕ ಆಸ್ತಿ ಹಾನಿ ಸೇರಿದಂತೆ 5 ಪ್ರಕರಣಗಳು.
* ಫಕ್ರುಸಾಬ್ (ಹಾವೇರಿ): ಕೊಲೆ ಯತ್ನ, ದರೋಡೆ, ಜೀವ ಬೆದರಿಕೆ ಸೇರಿ 10 ಪ್ರಕರಣಗಳು.
* ಹಾಲಪ್ಪ (ಹಾವೇರಿ): ಕೊಲೆ ಯತ್ನ, ದರೋಡೆ, ಸಾರ್ವಜನಿಕ ಆಸ್ತಿ ಹಾನಿ ಸೇರಿ 12 ಪ್ರಕರಣಗಳು.
* ದರ್ಶನ (ವಿಜಯಪುರ): ಅಪಹರಣ, ಸುಲಿಗೆ, ವಂಚನೆ, ಅತಿಹೆಚ್ಚು ಬಡ್ಡಿ ವಸೂಲಿ, ಹಲ್ಲೆ ಸೇರಿದಂತೆ 10 ಪ್ರಕರಣಗಳು.
* ಬೈರಪ್ಪ (ಹಾವೇರಿ): ಜೂಜಾಟಕ್ಕೆ ಸಂಬಂಧಿಸಿದ 4 ಪ್ರಕರಣಗಳು.
* ಶೇಖಪ್ಪ (ಕೊಪ್ಪಳ): ಜೂಜಾಟಕ್ಕೆ ಸಂಬಂಧಿಸಿದ 5 ಪ್ರಕರಣಗಳು.
* ಕಳಕಪ್ಪ (ಧಾರವಾಡ): ಜೂಜಾಟ ಹಾಗೂ ಬಿಎನ್ಎಸ್ಎಸ್ ಅಡಿಯಲ್ಲಿ 3 ಪ್ರಕರಣಗಳು.
ಈ ಕುರಿತು ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್, “ಕಳೆದ ಮೂರು ತಿಂಗಳಲ್ಲಿ 13 ಮಂದಿ ರೌಡಿಶೀಟರ್ಗಳನ್ನು ಗಡಿಪಾರು ಮಾಡಲಾಗಿದೆ. ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವವರ ವಿರುದ್ಧ ಮುಂದೆಯೂ ನಿರ್ದಾಕ್ಷಿಣ್ಯ ಕ್ರಮ ಮುಂದುವರಿಯಲಿದೆ. ಗದಗ ಜಿಲ್ಲೆಯಲ್ಲಿ ರೌಡಿಸಂ ಹಾಗೂ ಸಮಾಜಘಾತಕ ಚಟುವಟಿಕೆಗಳಿಗೆ ಅವಕಾಶವಿಲ್ಲ” ಎಂದು ಎಚ್ಚರಿಕೆ ನೀಡಿದ್ದಾರೆ.