Home Blog

KPSC ನೇಮಕಾತಿ ಅಕ್ರಮ: ED, CID ಕಣ್ತಪ್ಪಿಸಿ ಪರಾರಿಯಾಗಿದ್ದ IAS ಅಧಿಕಾರಿ ಕೊನೆಗೂ ಪ್ರತ್ಯಕ್ಷ; ವಿಚಾರಣೆ ಆರಂಭ

0

ಬೆಂಗಳೂರು, ಆ.28: ಕೆಪಿಎಸ್‌ಸಿ ಪಶುವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಹಾಗೂ ಸಿಐಡಿ ತನಿಖೆಯಿಂದ ದೂರ ಉಳಿದಿದ್ದ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಗಂಗವಾರ್ ಕೊನೆಗೂ ವಿಚಾರಣೆಗೆ ಹಾಜರಾಗಿದ್ದಾರೆ. ಸಿಐಡಿ ನೋಟಿಸ್ ನೀಡಿದ ಬೆನ್ನಲ್ಲೇ ಶುಕ್ರವಾರ ತನಿಖಾಧಿಕಾರಿ ರಾಘವೇಂದ್ರ ಹೆಗಡೆ ಅವರ ಮುಂದೆ ಜ್ಞಾನೇಂದ್ರ ಕುಮಾರ್ ಹಾಜರಾಗಿದ್ದು, ಅಧಿಕಾರಿಗಳ ವಿಚಾರಣೆ ಎದುರಿಸುತ್ತಿದ್ದಾರೆ.

2016ನೇ ಬ್ಯಾಚ್‌ನ ಐಎಎಸ್ ಅಧಿಕಾರಿಯಾಗಿರುವ ಜ್ಞಾನೇಂದ್ರ ಕುಮಾರ್, ಕೆಪಿಎಸ್‌ಸಿಯಲ್ಲಿ ಪರೀಕ್ಷಾ ನಿಯಂತ್ರಕರಾಗಿ ಕಾರ್ಯನಿರ್ವಹಿಸುತ್ತಿದ್ದ ಅವಧಿಯಲ್ಲಿ ಪಶುವೈದ್ಯಾಧಿಕಾರಿಗಳ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿಬಂದಿತ್ತು. ಪ್ರಕರಣದ ತನಿಖೆ ಕೈಗೆತ್ತಿಕೊಂಡಿದ್ದ ಇಡಿ ಅಧಿಕಾರಿಗಳು ಬೆಂಗಳೂರಿನ ಜಯಮಹಲ್‌ನಲ್ಲಿರುವ ಅವರ ನಿವಾಸ ಹಾಗೂ ಉತ್ತರ ಪ್ರದೇಶದ ಲಖನೌ ಬಳಿಯ ಸ್ವಗ್ರಾಮದ ಮನೆ ಮೇಲೆ ದಾಳಿ ನಡೆಸಿದ್ದರು.

ಇಡಿ ದಾಳಿ ನಡೆಸಿದ ವೇಳೆ ಜ್ಞಾನೇಂದ್ರ ಕುಮಾರ್ ಮೊಬೈಲ್, ಲ್ಯಾಪ್‌ಟಾಪ್ ಹಾಗೂ ಪ್ರಮುಖ ದಾಖಲೆಗಳೊಂದಿಗೆ ದೆಹಲಿಗೆ ತೆರಳಿದ್ದರು ಎನ್ನಲಾಗಿದೆ. ಇದೇ ವೇಳೆ ತಂದೆಗೆ ಹೃದಯಾಘಾತವಾಗಿದ್ದು, ಶಸ್ತ್ರಚಿಕಿತ್ಸೆ ಅಗತ್ಯವಿದೆ ಎಂದು 15 ದಿನಗಳ ತುರ್ತು ರಜೆ ಕೋರಿ ಸರ್ಕಾರಕ್ಕೆ ಪತ್ರ ಬರೆದಿದ್ದರು.

ಆದರೆ ಲಖನೌನಲ್ಲಿದ್ದ ಅವರ ತಂದೆ ತಾನು ಆರೋಗ್ಯವಾಗಿದ್ದು, ಪುತ್ರ ಮನೆಗೆ ಬಂದಿಲ್ಲ ಎಂದು ಹೇಳಿಕೆ ನೀಡಿದ್ದರು ಎನ್ನಲಾಗಿದ್ದು, ಅಧಿಕಾರಿಯ ರಜೆ ಅರ್ಜಿಯೇ ಅನುಮಾನಕ್ಕೆ ಕಾರಣವಾಗಿತ್ತು.

ಇಡಿ ಶೋಧದ ಬಳಿಕ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿದ ಸಿಐಡಿ ಅಧಿಕಾರಿಗಳು ಜ್ಞಾನೇಂದ್ರ ಕುಮಾರ್ ಅವರ ಬೆಂಗಳೂರಿನ ನಿವಾಸ ಹಾಗೂ ಕಚೇರಿಗೆ ಭೇಟಿ ನೀಡಿ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೋಟಿಸ್ ಜಾರಿ ಮಾಡಿದ್ದರು.

ಸಾಲು ಸಾಲು ಅನುಮಾನಗಳು ಹಾಗೂ ತನಿಖೆ ತೀವ್ರಗೊಳ್ಳುತ್ತಿರುವ ನಡುವೆಯೇ ಇದೀಗ ಜ್ಞಾನೇಂದ್ರ ಕುಮಾರ್ ಸಿಐಡಿ ಮುಂದೆ ಹಾಜರಾಗಿದ್ದಾರೆ. ಪಶುವೈದ್ಯಾಧಿಕಾರಿ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ಅವರಿಂದ ಮಹತ್ವದ ಮಾಹಿತಿ ಕಲೆಹಾಕುವ ಸಾಧ್ಯತೆಯಿದೆ.

ಬಂಗಾರ ಬೆಲೆಯಲ್ಲಿ ಮತ್ತೆ ಭಾರೀ ಇಳಿಕೆ: ಒಂದೇ ದಿನ ₹290 ಕುಸಿತ! 24 ಕ್ಯಾರಟ್ ಚಿನ್ನದ ದರ ಎಷ್ಟಿದೆ ಗೊತ್ತಾ?

0

ಚಿನ್ನದ ಬೆಲೆಯಲ್ಲಿ ಸತತ ಎರಡನೇ ದಿನವೂ ಇಳಿಕೆ ದಾಖಲಾಗಿದೆ. ನಿನ್ನೆ 70 ರೂ. ಇಳಿಕೆ ಕಂಡಿದ್ದ ಬಂಗಾರದ ದರ, ಇಂದು ಬರೋಬ್ಬರಿ 290 ರೂ.ನಷ್ಟು ಕುಸಿದಿದೆ. ಇದರೊಂದಿಗೆ ಅಪರಂಜಿ ಚಿನ್ನದ ಬೆಲೆ ಮತ್ತೆ 16,000 ರೂ. ಗಡಿಯೊಳಗೆ ಬಂದಿದ್ದು, 18 ಕ್ಯಾರಟ್ ಚಿನ್ನದ ಬೆಲೆಯೂ 12,000 ರೂ. ಗಡಿಯೊಳಗೆ ಇಳಿದಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆ ಏರಿಳಿತ ಕಂಡುಬಂದಿದ್ದು, ಸ್ಪಾಟ್ ಗೋಲ್ಡ್ ದರದಲ್ಲೂ ಇಳಿಕೆಯಾಗಿದೆ. ಮತ್ತೊಂದೆಡೆ, ಭಾರತದಲ್ಲಿ ಬೆಳ್ಳಿ ಬೆಲೆ 5 ರೂ.ನಷ್ಟು ಕಡಿಮೆಯಾಗಿದೆ.

ಪ್ರಸ್ತುತ ಭಾರತದಲ್ಲಿ 10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ 1,46,500 ರೂ. ಇದ್ದು, 24 ಕ್ಯಾರಟ್ ಅಪರಂಜಿ ಚಿನ್ನದ ಬೆಲೆ 1,59,820 ರೂ. ಆಗಿದೆ. 100 ಗ್ರಾಂ ಬೆಳ್ಳಿಯ ಬೆಲೆ 25,500 ರೂ. ಇದೆ. ಬೆಂಗಳೂರಿನಲ್ಲಿ 10 ಗ್ರಾಂ ಚಿನ್ನದ ಬೆಲೆ 1,46,500 ರೂ. ಹಾಗೂ 100 ಗ್ರಾಂ ಬೆಳ್ಳಿಯ ಬೆಲೆ 25,500 ರೂ. ಆಗಿದ್ದು, ತಮಿಳುನಾಡು, ಕೇರಳ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಬೆಳ್ಳಿ ಬೆಲೆ 26,000 ರೂ. ಇದೆ.

ಆಗಸ್ಟ್ 28ರ ಚಿನ್ನ-ಬೆಳ್ಳಿ ದರ (1 ಗ್ರಾಂಗೆ):

  • 24 ಕ್ಯಾರಟ್ ಚಿನ್ನ: 15,982 ರೂ.
  • 22 ಕ್ಯಾರಟ್ ಚಿನ್ನ: 14,650 ರೂ.
  • 18 ಕ್ಯಾರಟ್ ಚಿನ್ನ: 11,987 ರೂ.
  • ಬೆಳ್ಳಿ: 255 ರೂ.

ವಿವಿಧ ನಗರಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಂಗೆ):
ಬೆಂಗಳೂರು, ಚೆನ್ನೈ, ಮುಂಬೈ, ಕೋಲ್ಕತಾ, ಕೇರಳ, ಭುವನೇಶ್ವರ್: 14,650 ರೂ. | ದೆಹಲಿ, ಜೈಪುರ, ಲಕ್ನೋ: 14,665 ರೂ. | ಅಹ್ಮದಾಬಾದ್: 14,655 ರೂ.

ಅಂತಾರಾಷ್ಟ್ರೀಯ ದರ: ಸ್ಪಾಟ್ ಗೋಲ್ಡ್ 1 ಗ್ರಾಂಗೆ 147.38 ಡಾಲರ್ (ಸುಮಾರು 14,080 ರೂ.), ಸ್ಪಾಟ್ ಸಿಲ್ವರ್ 1 ಗ್ರಾಂಗೆ 2.217 ಡಾಲರ್ (ಸುಮಾರು 211 ರೂ.).

ವಿದೇಶಗಳಲ್ಲಿ 24 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಂಗೆ, ರೂಪಾಯಿ ಲೆಕ್ಕದಲ್ಲಿ): ಭಾರತ 15,982 ರೂ., ಸಿಂಗಾಪುರ 14,965 ರೂ., ಓಮನ್ 14,593 ರೂ., ಅಮೆರಿಕ 14,476 ರೂ., ಸೌದಿ ಅರೇಬಿಯಾ 14,480 ರೂ., ಕತಾರ್ 14,469 ರೂ., ಮಲೇಷ್ಯಾ 14,449 ರೂ., ದುಬೈ 14,401 ರೂ., ಕುವೈತ್ 14,283 ರೂ.

ವಿವಿಧ ನಗರಗಳಲ್ಲಿ ಬೆಳ್ಳಿ ಬೆಲೆ (1 ಗ್ರಾಂಗೆ): ಚೆನ್ನೈ, ಕೇರಳ, ಭುವನೇಶ್ವರ್: 260 ರೂ. | ಬೆಂಗಳೂರು, ಮುಂಬೈ, ದೆಹಲಿ, ಕೋಲ್ಕತಾ, ಅಹ್ಮದಾಬಾದ್, ಜೈಪುರ, ಲಕ್ನೋ, ಪುಣೆ: 255 ರೂ.

ಮಧ್ಯಪ್ರದೇಶದಲ್ಲಿ ಭೀಕರ ಬಸ್ ದುರಂತ: ಬೆಂಗಳೂರು ಸೈಬರ್ ಕ್ರೈಂ ಇನ್‌ಸ್ಪೆಕ್ಟರ್ ಸೇರಿ 4 ಮಂದಿ ಸಾವು; 11ಕ್ಕೂ ಹೆಚ್ಚು ಜನರಿಗೆ ಗಾಯ

0

ಭೋಪಾಲ್: ಮಧ್ಯಪ್ರದೇಶದಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೆಂಗಳೂರು ಸೈಬರ್ ಕ್ರೈಂ ತಂಡದ ಇನ್‌ಸ್ಪೆಕ್ಟರ್ ಸೇರಿದಂತೆ ನಾಲ್ವರು ದಾರುಣವಾಗಿ ಮೃತಪಟ್ಟಿದ್ದಾರೆ. ರಾಜ್‌ಗಢ ಜಿಲ್ಲೆಯ ಬಿಯೋರಾ ನಗರದಲ್ಲಿ ಶುಕ್ರವಾರ ಬೆಳಗ್ಗೆ ಬೆಂಗಳೂರಿನಿಂದ ಇಂದೋರ್‌ಗೆ ತೆರಳುತ್ತಿದ್ದ ಪ್ರಯಾಣಿಕರ ಬಸ್ ನಿಯಂತ್ರಣ ತಪ್ಪಿ ಸುಮಾರು 30 ಅಡಿ ಎತ್ತರದ ಸೇತುವೆಗೆ ಡಿಕ್ಕಿ ಹೊಡೆದು ಉರುಳಿದೆ.

ಭೋಪಾಲ್ ಬೈಪಾಸ್‌ನ ಸೇತುವೆಗೆ ಬಸ್ ಡಿಕ್ಕಿ ಹೊಡೆದ ರಭಸಕ್ಕೆ ನಾಲ್ವರು ಪ್ರಯಾಣಿಕರು ಬಸ್‌ನಿಂದ ಹೊರಕ್ಕೆ ಎಸೆಯಲ್ಪಟ್ಟು ಸುಮಾರು 30 ಅಡಿ ಕೆಳಗಿನ ಸರ್ವಿಸ್ ರಸ್ತೆಗೆ ಬಿದ್ದಿದ್ದಾರೆ. ಘಟನೆಯಲ್ಲಿ ನಾಲ್ವರು ಮೃತಪಟ್ಟಿದ್ದು, 11 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳ ಪೈಕಿ ನಾಲ್ವರ ಸ್ಥಿತಿ ಗಂಭೀರವಾಗಿದೆ.

ಮೃತರಲ್ಲಿ ಬೆಂಗಳೂರು ಸೈಬರ್ ಕ್ರೈಂ ತಂಡದ ಇನ್‌ಸ್ಪೆಕ್ಟರ್ ರವಿ ಕೆ.ವಿ. ಕೂಡ ಸೇರಿದ್ದಾರೆ. ಬಸ್ ಚಾಲಕ ವಿಕಾಸ್ ಶುಕ್ಲಾ, ಬೆಲಾಲ್ ಅಲಿ ಹಾಗೂ ಜ್ಯೋತಿರಾದಿತ್ಯ ಸಿಂಗ್ ಗೌಡ್ ಕೂಡ ಮೃತಪಟ್ಟಿದ್ದಾರೆ.

ಸೈಬರ್ ಕ್ರೈಂ ತಂಡ ಆರೋಪಿಯೊಬ್ಬನನ್ನು ಪತ್ತೆಹಚ್ಚಲು ಬೆಂಗಳೂರಿನಿಂದ ಮಧ್ಯಪ್ರದೇಶಕ್ಕೆ ತೆರಳುತ್ತಿತ್ತು ಎನ್ನಲಾಗಿದೆ. ತಂಡದ ಸಬ್‌ಇನ್‌ಸ್ಪೆಕ್ಟರ್ ರಮೇಶ್ ನಾಯಕ್, ಎಎಸ್‌ಐ ಶ್ರೀನಿವಾಸ್ ಹಾಗೂ ತಾಂತ್ರಿಕ ಸಿಬ್ಬಂದಿ ವಿಶ್ವನಾಥ್ ಅಪಘಾತದಲ್ಲಿ ಗಾಯಗೊಂಡಿದ್ದಾರೆ. ಶ್ರೀನಿವಾಸ್ ಅವರ ಸ್ಥಿತಿ ಗಂಭೀರವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಭೋಪಾಲ್‌ಗೆ ಸ್ಥಳಾಂತರಿಸಲಾಗಿದೆ.

ಬಸ್‌ನಲ್ಲಿದ್ದ ಉತ್ತರ ಪ್ರದೇಶ ಮೂಲದ ಪ್ರಯಾಣಿಕರಿಗೂ ಗಾಯಗಳಾಗಿವೆ. ಅಮಿತ್ ಕುಮಾರ್ ಪ್ರತಾಪ್, ವಿನೋದ್ ಕುಮಾರ್ ಸಿಂಗ್, ಮೀನು ಸಿಂಗ್, ರಕ್ಷಿತ್ ಸಿಂಗ್, ಸುರೇಂದ್ರ ಪ್ರತಾಪ್ ಸಿಂಗ್, ರವಿ ಶರ್ಮಾ, ಎಂಟು ವರ್ಷದ ಪಾರ್ಥ್ ಶರ್ಮಾ, ಸುಮನ್ ಶರ್ಮಾ, ಕೇಶವ್, ರಮೇಶ್ ನಾಯಕ್, ಸೋನು ಹಾಗೂ ವಿಶ್ವನಾಥ್ ಸೇರಿದಂತೆ ಹಲವರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಗಂಭೀರ ಗಾಯಗೊಂಡಿರುವ ಸುರೇಂದ್ರ ಪ್ರತಾಪ್ ಸಿಂಗ್, ಸುಮನ್ ಶರ್ಮಾ ಹಾಗೂ ಶ್ರೀನಿವಾಸ್ ಅವರನ್ನು ಭೋಪಾಲ್‌ನ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದೆ. ಬಸ್ ನಿಯಂತ್ರಣ ತಪ್ಪಿ ಸೇತುವೆಗೆ ಡಿಕ್ಕಿ ಹೊಡೆದಿರುವುದಾಗಿ ಪೊಲೀಸರು ತಿಳಿಸಿದ್ದು, ಅಪಘಾತದ ನಿಖರ ಕಾರಣದ ಕುರಿತು ತನಿಖೆ ಮುಂದುವರಿದಿದೆ.

ಯಾದಗಿರಿಯಲ್ಲಿ RSS ಪಥಸಂಚಲನ ಎಫೆಕ್ಟ್: ಇಬ್ಬರು ಸರ್ಕಾರಿ ಶಿಕ್ಷಕರಿಗೆ ಅಮಾನತು ಬಿಸಿ, ದೂರು ಬೆನ್ನಲ್ಲೇ ಶಿಕ್ಷಣ ಇಲಾಖೆ ಕ್ರಮ

0

ಯಾದಗಿರಿ: ಆರ್‌ಎಸ್‌ಎಸ್ ಪಥಸಂಚಲನದಲ್ಲಿ ಭಾಗಿಯಾಗಿದ್ದ ಇಬ್ಬರು ಸರ್ಕಾರಿ ಶಿಕ್ಷಕರ ವಿರುದ್ಧ ಯಾದಗಿರಿ ಶಿಕ್ಷಣ ಇಲಾಖೆ ಕಠಿಣ ಕ್ರಮ ಕೈಗೊಂಡಿದೆ. ಹುಣಸಗಿ ತಾಲೂಕಿನ ಅಣ್ಣಾಸಾಹೇಬ ದೇಶಮುಖ ಹಾಗೂ ಗುರುರಾಜ ಜೋಶಿ ಅವರನ್ನು ಅಮಾನತುಗೊಳಿಸಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಆದೇಶ ಹೊರಡಿಸಿದ್ದಾರೆ.

ಇಬ್ಬರೂ ಸುಮಾರು ಎಂಟು ತಿಂಗಳ ಹಿಂದೆ ನಡೆದಿದ್ದ ಆರ್‌ಎಸ್‌ಎಸ್ ಪಥಸಂಚಲನದಲ್ಲಿ ಭಾಗಿಯಾಗಿದ್ದರು ಎನ್ನಲಾಗಿದೆ. ಈ ಕುರಿತು ಅಂಬೇಡ್ಕರ್ ಸ್ವಾಭಿಮಾನಿ ಸೇನೆಯ ಜಿಲ್ಲಾಧ್ಯಕ್ಷ ಜುಮ್ಮಣ್ಣ ಗುಡಿಮನಿ ಅವರು ಶಿಕ್ಷಣ ಇಲಾಖೆಗೆ ದೂರು ಸಲ್ಲಿಸಿದ್ದರು. ದೂರು ಪರಿಶೀಲನೆ ಬಳಿಕ ಇಲಾಖೆ ಅಮಾನತು ಆದೇಶ ಹೊರಡಿಸಿದೆ.

ಆರ್‌ಎಸ್‌ಎಸ್ ಪಥಸಂಚಲನದಲ್ಲಿ ಭಾಗಿಯಾಗಿದ್ದ ಸರ್ಕಾರಿ ನೌಕರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಚಿವ ಪ್ರಿಯಾಂಕ್ ಖರ್ಗೆ ಅವರು ಪತ್ರ ಬರೆದಿದ್ದ ಹಿನ್ನೆಲೆಯಲ್ಲಿ ಈ ವಿಚಾರ ಮತ್ತಷ್ಟು ಮಹತ್ವ ಪಡೆದುಕೊಂಡಿದೆ.

ಸರ್ಕಾರಿ ಸೇವೆಯಲ್ಲಿರುವವರು ಸಂಘಟನೆಯ ಚಟುವಟಿಕೆಗಳಲ್ಲಿ ಭಾಗವಹಿಸುವುದಕ್ಕೆ ಸಂಬಂಧಿಸಿದಂತೆ ಸರ್ಕಾರದ ನಿಲುವು ಈಗಾಗಲೇ ಸ್ಪಷ್ಟವಾಗಿರುವ ಹಿನ್ನೆಲೆಯಲ್ಲಿ, ಯಾದಗಿರಿಯಲ್ಲಿ ಇಬ್ಬರು ಶಿಕ್ಷಕರ ಅಮಾನತು ಕ್ರಮ ಇದೀಗ ರಾಜ್ಯ ರಾಜಕೀಯದಲ್ಲೂ ಚರ್ಚೆಗೆ ಕಾರಣವಾಗಿದೆ.

ಎಂಟು ತಿಂಗಳ ಹಿಂದೆ ನಡೆದಿದ್ದ ಪಥಸಂಚಲನದ ವಿಚಾರದಲ್ಲಿ ಇದೀಗ ಕ್ರಮ ಕೈಗೊಂಡಿರುವುದು ಗಮನ ಸೆಳೆದಿದ್ದು, ಮುಂದಿನ ದಿನಗಳಲ್ಲಿ ಇತರ ಸರ್ಕಾರಿ ನೌಕರರ ವಿರುದ್ಧವೂ ಇದೇ ರೀತಿಯ ಕ್ರಮ ಜರುಗಲಿದೆಯೇ ಎಂಬ ಪ್ರಶ್ನೆ ಮೂಡಿದೆ.

ಟಿ20 ಕ್ರಿಕೆಟ್ʼನಲ್ಲಿ ಕೀರನ್ ಪೊಲ್ಲಾರ್ಡ್ ಹೊಸ ದಾಖಲೆ: ಜೋಸ್ ಬಟ್ಲರ್ ಹಿಂದಿಕ್ಕಿ ಮತ್ತೊಮ್ಮೆ ನಂಬರ್ 1 ಸ್ಥಾನಕ್ಕೇರಿದ ‘ಪವರ್ ಹಿಟ್ಟರ್’

0

ಸೈಂಟ್ ಲೂಸಿಯಾ: ವೆಸ್ಟ್ ಇಂಡೀಸ್‌ನ ಮಾಜಿ ಆಲ್ರೌಂಡರ್ ಕೀರನ್ ಪೊಲ್ಲಾರ್ಡ್ ಟಿ20 ಕ್ರಿಕೆಟ್‌ನಲ್ಲಿ ಮತ್ತೊಂದು ಐತಿಹಾಸಿಕ ಮೈಲಿಗಲ್ಲು ನಿರ್ಮಿಸಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ ಅತಿಹೆಚ್ಚು ರನ್ ಗಳಿಸಿದ ಬ್ಯಾಟರ್ ಎಂಬ ದಾಖಲೆಯನ್ನು ಮತ್ತೆ ತಮ್ಮ ಹೆಸರಿಗೆ ಬರೆದುಕೊಂಡಿರುವ ಪೊಲ್ಲಾರ್ಡ್, ಇಂಗ್ಲೆಂಡ್‌ನ ಜೋಸ್ ಬಟ್ಲರ್ ಅವರನ್ನು ಹಿಂದಿಕ್ಕಿ ನಂಬರ್ ಒನ್ ಸ್ಥಾನಕ್ಕೇರಿದ್ದಾರೆ.

ಸೈಂಟ್ ಲೂಸಿಯಾ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಟ್ರಿನ್‌ಬಾಗೋ ನೈಟ್ ರೈಡರ್ಸ್ ಪರ ಕಣಕ್ಕಿಳಿದ 39 ವರ್ಷದ ಕೀರನ್ ಪೊಲ್ಲಾರ್ಡ್ ಕೇವಲ 26 ಎಸೆತಗಳಲ್ಲಿ ಸ್ಫೋಟಕ 65 ರನ್‌ಗಳ ಇನಿಂಗ್ಸ್ ಆಡಿದರು. ಈ ಭರ್ಜರಿ ಬ್ಯಾಟಿಂಗ್ ಪ್ರದರ್ಶನದೊಂದಿಗೆ ಅವರು ಜೋಸ್ ಬಟ್ಲರ್ ಅವರ 14,890 ರನ್‌ಗಳ ದಾಖಲೆಯನ್ನು ಹಿಂದಿಕ್ಕಿದ್ದಾರೆ.

ಪೊಲ್ಲಾರ್ಡ್ ಇದೀಗ 749 ಟಿ20 ಪಂದ್ಯಗಳ 666 ಇನಿಂಗ್ಸ್‌ಗಳಲ್ಲಿ ಒಟ್ಟು 14,921 ರನ್ ಗಳಿಸಿದ್ದಾರೆ. ಈ ಮೂಲಕ ಟಿ20 ಕ್ರಿಕೆಟ್‌ನಲ್ಲಿ ಗರಿಷ್ಠ ರನ್ ಗಳಿಸಿದ ಬ್ಯಾಟರ್ ಆಗಿ ಮತ್ತೊಮ್ಮೆ ಅಗ್ರಸ್ಥಾನ ಅಲಂಕರಿಸಿದ್ದಾರೆ.

ಅಂದಹಾಗೆ, ಈ ವರ್ಷದ ಆರಂಭದಲ್ಲೇ ಕೀರನ್ ಪೊಲ್ಲಾರ್ಡ್ ‘ಯೂನಿವರ್ಸಲ್ ಬಾಸ್’ ಖ್ಯಾತಿಯ ಕ್ರಿಸ್ ಗೇಲ್ ಅವರ ಹೆಸರಿನಲ್ಲಿದ್ದ ಗರಿಷ್ಠ ಟಿ20 ರನ್‌ಗಳ ದಾಖಲೆಯನ್ನು ಮುರಿದಿದ್ದರು. ಆದರೆ 2026ರ ಆಗಸ್ಟ್‌ನಲ್ಲಿ ಇಂಗ್ಲೆಂಡ್‌ನ ಮಾಜಿ ನಾಯಕ ಜೋಸ್ ಬಟ್ಲರ್, ದಿ ಹಂಡ್ರೆಡ್ ಟೂರ್ನಿಯಲ್ಲಿ ಮ್ಯಾಂಚೆಸ್ಟರ್ ಸೂಪರ್ ಜೈಂಟ್ಸ್ ಪರ ಆಡುತ್ತಾ ಪೊಲ್ಲಾರ್ಡ್ ಅವರನ್ನು ಹಿಂದಿಕ್ಕಿದ್ದರು.

ಇದೀಗ ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿರುವ ಪೊಲ್ಲಾರ್ಡ್, ಮತ್ತೆ ಬಟ್ಲರ್ ಅವರನ್ನು ಹಿಂದಿಕ್ಕಿ ಟಿ20 ಕ್ರಿಕೆಟ್‌ನ ನಂಬರ್ ಒನ್ ರನ್ ಸ್ಕೋರರ್ ಆಗಿದ್ದಾರೆ.

ಜೋಸ್ ಬಟ್ಲರ್ ಅವರ ದಾಖಲೆಯನ್ನು ಮುರಿಯಲು ಪೊಲ್ಲಾರ್ಡ್ ಅವರಿಗೆ ಕೇವಲ 35 ರನ್‌ಗಳ ಅಗತ್ಯವಿತ್ತು. ಆದರೆ ಅವರು 26 ಎಸೆತಗಳಲ್ಲೇ 65 ರನ್ ಸಿಡಿಸುವ ಮೂಲಕ ಈ ಗುರಿಯನ್ನು ಸುಲಭವಾಗಿ ದಾಟಿದ್ದಾರೆ.

15 ಸಾವಿರ ರನ್‌ಗಳ ವಿಶ್ವದಾಖಲೆಯತ್ತ ಪೊಲ್ಲಾರ್ಡ್

ಇದೀಗ ಕೀರನ್ ಪೊಲ್ಲಾರ್ಡ್ ಟಿ20 ಕ್ರಿಕೆಟ್‌ನಲ್ಲಿ 15,000 ರನ್‌ಗಳ ಗಡಿ ತಲುಪುವ ಸನಿಹದಲ್ಲಿದ್ದಾರೆ. ಈ ಐತಿಹಾಸಿಕ ಮೈಲಿಗಲ್ಲು ತಲುಪಲು ಅವರಿಗೆ ಇನ್ನು ಕೇವಲ 79 ರನ್‌ಗಳ ಅಗತ್ಯವಿದೆ.

ಶುಕ್ರವಾರ ಇದೇ ಮೈದಾನದಲ್ಲಿ ಬಾರ್ಬಡೋಸ್ ಟ್ರಿಡೆಂಟ್ಸ್ ವಿರುದ್ಧ ಟ್ರಿನ್‌ಬಾಗೋ ನೈಟ್ ರೈಡರ್ಸ್ ಪರ ಪೊಲ್ಲಾರ್ಡ್ ಕಣಕ್ಕಿಳಿಯಲಿದ್ದಾರೆ. ಈ ಪಂದ್ಯದಲ್ಲಿ 79 ರನ್ ಗಳಿಸಿದರೆ, ಟಿ20 ಕ್ರಿಕೆಟ್ ಇತಿಹಾಸದಲ್ಲಿ 15,000 ರನ್ ಪೂರೈಸಿದ ಮೊದಲ ಬ್ಯಾಟರ್ ಎಂಬ ಅಪರೂಪದ ವಿಶ್ವದಾಖಲೆಯನ್ನು ಪೊಲ್ಲಾರ್ಡ್ ತಮ್ಮ ಹೆಸರಿಗೆ ಬರೆದುಕೊಳ್ಳಲಿದ್ದಾರೆ.

ಈ ಮೂಲಕ ಈಗಾಗಲೇ ಟಿ20 ಕ್ರಿಕೆಟ್‌ನಲ್ಲಿ ಹಲವು ದಾಖಲೆಗಳನ್ನು ನಿರ್ಮಿಸಿರುವ ಕೀರನ್ ಪೊಲ್ಲಾರ್ಡ್, ಮತ್ತೊಂದು ಐತಿಹಾಸಿಕ ಸಾಧನೆಯ ಹೊಸ್ತಿಲಲ್ಲಿದ್ದಾರೆ.

KPSC ನೇಮಕಾತಿ ಅಕ್ರಮ: ನಾಪತ್ತೆಯಾಗಿದ್ದ ಗ್ಯಾನೇಂದ್ರ ಕುಮಾರ್ ಇಂದು ವಿಚಾರಣೆಗೆ ಹಾಜರು!

0

ಬೆಂಗಳೂರು: ಕೆಪಿಎಸ್‌ಸಿ ಪಶುವೈದ್ಯಾಧಿಕಾರಿಗಳ ನೇಮಕಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಪತ್ತೆಯಾಗಿದ್ದ ಐಎಎಸ್ ಅಧಿಕಾರಿ ಗ್ಯಾನೇಂದ್ರ ಕುಮಾರ್ ಇಂದು ಸಿಐಡಿ ಕಚೇರಿಗೆ ವಿಚಾರಣೆಗೆ ಹಾಜರಾಗಿದ್ದಾರೆ.

ಗ್ಯಾನೇಂದ್ರ ಕುಮಾರ್ ನಿನ್ನೆಯೇ ವಿಚಾರಣೆಗೆ ಹಾಜರಾಗಬೇಕಿತ್ತು. ಆದರೆ ನಿನ್ನೆ ವಿಚಾರಣೆಗೆ ಗೈರಾಗಿದ್ದ ಅವರು, ಇಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಸಿಐಡಿ ಕಚೇರಿಗೆ ಆಗಮಿಸಿದ್ದಾರೆ.

ಈ ಹಿಂದೆ ಕರ್ನಾಟಕ ಲೋಕಸೇವಾ ಆಯೋಗದಲ್ಲಿ ಪರೀಕ್ಷಾ ನಿಯಂತ್ರಕರಾಗಿದ್ದ ಗ್ಯಾನೇಂದ್ರ ಕುಮಾರ್ ಅವಧಿಯಲ್ಲಿ ಪಶುವೈದ್ಯಾಧಿಕಾರಿಗಳ ನೇಮಕಾತಿ ನಡೆದಿತ್ತು. ಈ ನೇಮಕಾತಿಯಲ್ಲಿ ಅಕ್ರಮ ನಡೆದಿರುವ ಆರೋಪವಿದ್ದು, ಈ ಸಂಬಂಧ ಸಿಐಡಿ ತನಿಖಾ ತಂಡ ಗ್ಯಾನೇಂದ್ರ ಕುಮಾರ್ ಅವರನ್ನು ವಿಚಾರಣೆ ನಡೆಸಲಿದೆ.

KRSಗೆ ಮಳೆ ಕೈಕೊಟ್ಟ ಬೆನ್ನಲ್ಲೇ ಒಳಹರಿವು ಕುಸಿತ: 17,427ರಿಂದ 10,028 ಕ್ಯೂಸೆಕ್‌ಗೆ ಇಳಿಕೆ, 31.923 ಟಿಎಂಸಿ ನೀರು ಸಂಗ್ರಹ

0

ಮಂಡ್ಯ: ಕಾವೇರಿ ಕೊಳ್ಳದಲ್ಲಿ ಮಳೆ ಅಬ್ಬರ ತಗ್ಗುತ್ತಿದ್ದಂತೆ ಶ್ರೀರಂಗಪಟ್ಟಣ ತಾಲೂಕಿನ ಕೃಷ್ಣರಾಜ ಸಾಗರ ಜಲಾಶಯಕ್ಕೂ ಅದರ ನೇರ ಪರಿಣಾಮ ತಟ್ಟಿದೆ. ಕೆಲವೇ ದಿನಗಳ ಹಿಂದೆ ಭಾರೀ ಏರಿಕೆ ಕಂಡಿದ್ದ ಕೆಆರ್‌ಎಸ್‌ನ ಒಳಹರಿವು ಇದೀಗ ಗಣನೀಯವಾಗಿ ಕುಸಿದಿದೆ.

ಗುರುವಾರ ಜಲಾಶಯಕ್ಕೆ 17,427 ಕ್ಯೂಸೆಕ್ ನೀರು ಹರಿದುಬರುತ್ತಿದ್ದರೆ, ಇದೀಗ ಈ ಪ್ರಮಾಣ 10,028 ಕ್ಯೂಸೆಕ್‌ಗೆ ಇಳಿಕೆಯಾಗಿದೆ. ಅಂದರೆ ಒಂದೇ ದಿನದಲ್ಲಿ ಒಳಹರಿವು 7,399 ಕ್ಯೂಸೆಕ್‌ನಷ್ಟು ಕಡಿಮೆಯಾಗಿದೆ. ಬುಧವಾರ ಬೆಳಗ್ಗೆ 9,438 ಕ್ಯೂಸೆಕ್ ಇದ್ದ ಒಳಹರಿವು ಗುರುವಾರ 17,427 ಕ್ಯೂಸೆಕ್‌ಗೆ ಏರಿಕೆಯಾಗಿದ್ದ ಹಿನ್ನೆಲೆಯಲ್ಲೇ ಇದೀಗ ಮತ್ತೆ ಇಳಿಕೆ ದಾಖಲಾಗಿದೆ.

ಪ್ರಸ್ತುತ 124.80 ಅಡಿ ಗರಿಷ್ಠ ಮಟ್ಟದ ಕೆಆರ್‌ಎಸ್‌ನಲ್ಲಿ 110.20 ಅಡಿ ನೀರು ಇದೆ. 49.452 ಟಿಎಂಸಿ ಗರಿಷ್ಠ ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಸದ್ಯ 31.923 ಟಿಎಂಸಿ ನೀರು ಸಂಗ್ರಹವಾಗಿದೆ.

ಕಾವೇರಿ ಜಲಾನಯನ ಪ್ರದೇಶದಲ್ಲಿ ಕಳೆದ ಕೆಲವು ದಿನಗಳಿಂದ ಸುರಿದ ಉತ್ತಮ ಮಳೆಯಿಂದಾಗಿ ಕೆಆರ್‌ಎಸ್‌ಗೆ ಒಳಹರಿವು ಹೆಚ್ಚಾಗಿತ್ತು. ವಿಶೇಷವಾಗಿ ವಾರದ ಆರಂಭದಲ್ಲಿ ಕೊಡಗಿನಲ್ಲಿ ಸುರಿದ ಭಾರೀ ಮಳೆ ಜಲಾಶಯದ ಒಳಹರಿವಿನ ಏರಿಕೆಗೆ ಕಾರಣವಾಗಿತ್ತು. ಇದೀಗ ಮಳೆ ಪ್ರಮಾಣ ಕಡಿಮೆಯಾಗಿರುವುದರಿಂದ ನೀರಿನ ಹರಿವಿನಲ್ಲೂ ಇಳಿಕೆಯಾಗಿದೆ.

ಒಳಹರಿವು ಕಡಿಮೆಯಾಗಿದ್ದರೂ ಕೆಆರ್‌ಎಸ್‌ನಲ್ಲಿ ನೀರಿನ ಮಟ್ಟ 110 ಅಡಿ ದಾಟಿರುವುದು ಸದ್ಯ ರೈತರು ಹಾಗೂ ಬೆಂಗಳೂರು ಸೇರಿದಂತೆ ವಿವಿಧ ಪ್ರದೇಶಗಳ ಕುಡಿಯುವ ನೀರಿನ ಅಗತ್ಯತೆಗೆ ನೆಮ್ಮದಿ ನೀಡಿದೆ. ಮುಂದಿನ ಮಳೆ ಹಾಗೂ ಒಳಹರಿವಿನ ಪ್ರಮಾಣದ ಮೇಲೆ ಜಲಾಶಯದ ಮುಂದಿನ ಸ್ಥಿತಿ ನಿರ್ಧಾರವಾಗಲಿದೆ.

ಜಲಪ್ರಳಯಕ್ಕೆ ತತ್ತರಿಸಿದ ನೇಪಾಳ: ಭೀಕರ ಪ್ರವಾಹದಲ್ಲಿ ಸಾವಿನ ಸಂಖ್ಯೆ 469ಕ್ಕೆ ಏರಿಕೆ, 1,500ಕ್ಕೂ ಅಧಿಕ ನಾಪತ್ತೆ!

0

ಕಠ್ಮಂಡು: ನೇಪಾಳದಲ್ಲಿ ಸಂಭವಿಸಿದ ಭೀಕರ ಜಲಪ್ರಳಯ ಹಾಗೂ ಭೂಕುಸಿತದಲ್ಲಿ ಬಲಿಯಾದವರ ಸಂಖ್ಯೆ ಕ್ಷಣಕ್ಷಣಕ್ಕೂ ಹೆಚ್ಚಾಗುತ್ತಿದೆ. ಈವರೆಗೂ 469 ಜನರು ಸಾವನ್ನಪ್ಪಿದ್ದು, 1,500ಕ್ಕೂ ಅಧಿಕ ಮಂದಿ ನಾಪತ್ತೆಯಾಗಿದ್ದಾರೆ.

ನೇಪಾಳ ಪೊಲೀಸರ ಮಾಹಿತಿ ಪ್ರಕಾರ, ಪ್ರವಾಹದಲ್ಲಿ ಕೊಚ್ಚಿಹೋದ 1,500ಕ್ಕೂ ಅಧಿಕ ಜನರು ಇನ್ನೂ ಪತ್ತೆಯಾಗಿಲ್ಲ. ನಾಪತ್ತೆಯಾದವರಲ್ಲಿ 30ಕ್ಕೂ ಹೆಚ್ಚು ದೇಶಗಳ ವಿದೇಶಿ ಪ್ರಜೆಗಳಿದ್ದು, ಅದರಲ್ಲಿ 288 ಮಂದಿ ಭಾರತೀಯರಾಗಿದ್ದಾರೆ. ಈ ಪೈಕಿ ಪವರ್ ಪ್ರಾಜೆಕ್ಟ್‌ನಲ್ಲಿ ಕೆಲಸ ಮಾಡುತ್ತಿದ್ದ 73 ಮಂದಿ ಭಾರತೀಯರೂ ಕಣ್ಮರೆಯಾಗಿದ್ದಾರೆ.

ಈ ಹಿನ್ನೆಲೆಯಲ್ಲಿ ನವದೆಹಲಿ ಮತ್ತು ಕಠ್ಮಂಡು ಪರಸ್ಪರ ಸಮನ್ವಯದೊಂದಿಗೆ ನಾಪತ್ತೆಯಾದವರ ಪತ್ತೆ ಕಾರ್ಯ ಹಾಗೂ ರಕ್ಷಣಾ ಮತ್ತು ಪರಿಹಾರ ಕಾರ್ಯಗಳಲ್ಲಿ ನಿರತವಾಗಿವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

ನೇಪಾಳದಲ್ಲಿ ಪ್ರವಾಹದಿಂದಾಗಿ 469 ಮಂದಿ ಸಾವನ್ನಪ್ಪಿದ್ದರೆ, ಟಿಬೆಟ್‌ನಲ್ಲಿ ಮೂವರು ಸಾವನ್ನಪ್ಪಿರುವುದಾಗಿ ಚೀನಾದ ಅಧಿಕೃತ ಮಾಧ್ಯಮಗಳು ದೃಢಪಡಿಸಿವೆ. ಜೊತೆಗೆ, ವಿಪತ್ತು ಪೀಡಿತ ಪ್ರದೇಶದಿಂದ 499 ಸ್ಥಳೀಯ ನಿವಾಸಿಗಳು ಹಾಗೂ 555 ಪ್ರವಾಸಿಗರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ.

ಗೃಹಲಕ್ಷ್ಮಿ ಫಲಾನುಭವಿಗಳ ಮರುನೋಂದಣಿ: ಬಯೋಮೆಟ್ರಿಕ್ ದೃಢೀಕರಣಕ್ಕೆ ಹೊಸ ಆ್ಯಪ್ ಸಿದ್ಧ

0

ಬೆಂಗಳೂರು: ಗೃಹಲಕ್ಷ್ಮಿ ಯೋಜನೆಯ ನವೀಕರಣಕ್ಕಾಗಿ ಬಹುವಿಧದ ಮೊಬೈಲ್ ಆ್ಯಪ್/ವೆಬ್ ಆ್ಯಪ್‌ಗಳು ಸಿದ್ಧಗೊಳ್ಳುತ್ತಿದ್ದು, ಶೀಘ್ರದಲ್ಲೇ ಗೃಹಲಕ್ಷ್ಮಿ ಫಲಾನುಭವಿಗಳ ನವೀಕರಣ ಪ್ರಕ್ರಿಯೆಗಳು ನಡೆಯಲಿವೆ.

ಗ್ಯಾರಂಟಿ ಯೋಜನೆಗಳ ಪೈಕಿ ಪ್ರಮುಖ ಯೋಜನೆಯಾಗಿರುವ ಗೃಹಲಕ್ಷ್ಮಿ, ರಾಜ್ಯದ ಎಪಿಎಲ್ ಹಾಗೂ ಬಿಪಿಎಲ್ ಕಾರ್ಡ್ ಹೊಂದಿರುವ ಪ್ರತಿ ಕುಟುಂಬದ ಯಜಮಾನಿಗೆ ಮಾಸಿಕ 2,000 ರೂ. ಆರ್ಥಿಕ ನೆರವು ನೀಡುವ ಯೋಜನೆಯಾಗಿದೆ. ಆದರೆ ಈ ಯೋಜನೆಯಡಿ ಅರ್ಹರಲ್ಲದವರೂ ಹಣ ಪಡೆಯುತ್ತಿದ್ದ ಹಿನ್ನೆಲೆಯಲ್ಲಿ, ಇಂತಹ ಸದಸ್ಯರನ್ನು ರದ್ದುಪಡಿಸುವ ಉದ್ದೇಶದಿಂದ ಮರುನವೀಕರಣಕ್ಕೆ ಸರ್ಕಾರ ಮುಂದಾಗಿದೆ. ನವೀಕರಣದ ವೇಳೆ ಫಲಾನುಭವಿಗಳ ಕೆಲವು ವೈಯಕ್ತಿಕ ವಿವರಗಳನ್ನೂ ಸಂಗ್ರಹಿಸಲು ನಿರ್ಧರಿಸಲಾಗಿದೆ.

ರಾಜ್ಯಾದ್ಯಂತ 1.24 ಕೋಟಿ ಗೃಹಲಕ್ಷ್ಮಿ ಫಲಾನುಭವಿಗಳಿದ್ದು, ಮರುಪರಿಶೀಲನೆ ಹಂತದಲ್ಲಿ ಫಲಾನುಭವಿಗಳ ಬಯೋಮೆಟ್ರಿಕ್ ಮತ್ತು ಮುಖಚಹರೆ ದೃಢೀಕರಣ ಪಡೆಯಲು ಅವಕಾಶ ಕಲ್ಪಿಸಲಾಗಿದೆ ಎಂದೂ, ಇದೇ ಉದ್ದೇಶಕ್ಕಾಗಿ ಮೊಬೈಲ್ ಆ್ಯಪ್ ಮತ್ತು ವೆಬ್ ಪೋರ್ಟಲ್ ಅಭಿವೃದ್ಧಿಪಡಿಸಲಾಗಿದ್ದು, ಅಂತಿಮ ಹಂತದ ಪರಿಶೀಲನೆ ನಡೆಯುತ್ತಿದೆ ಎಂದೂ ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಸರ್ಕಾರದ ನಿಯೋಜಿತ ಸಿಬ್ಬಂದಿ ಮನೆ ಮನೆಗೆ ಭೇಟಿ ನೀಡಿ ನವೀಕರಣ ಕಾರ್ಯ ಕೈಗೊಳ್ಳಲಿದ್ದು, ಇದರಿಂದ ಬೆಂಗಳೂರು ಒನ್, ಗ್ರಾಮ ಒನ್ ಕೇಂದ್ರಗಳಲ್ಲಿ ದಟ್ಟಣೆ ತಪ್ಪಿಸಬಹುದು. ಫಲಾನುಭವಿಗಳು ಸರ್ಕಾರದ ಅಧಿಕೃತ ಕೇಂದ್ರಗಳಲ್ಲೂ ದಾಖಲೆ ಸಲ್ಲಿಸಿ ನೋಂದಣಿ ಮಾಡಿಸಬಹುದು.

ಯೋಜನೆಯಡಿ ಒಟ್ಟು 1.24 ಕೋಟಿ ಫಲಾನುಭವಿಗಳು ನೋಂದಾಯಿಸಿಕೊಂಡಿದ್ದು, ಈ ಪೈಕಿ ಅರ್ಹ ಫಲಾನುಭವಿಗಳ ಖಾತೆಗೆ 32 ಕಂತುಗಳಲ್ಲಿ ತಲಾ 2,000 ರೂ.ನಂತೆ ಒಟ್ಟು 76,951 ಕೋಟಿ ರೂ. ಜಮೆ ಮಾಡಲಾಗಿದೆ. ನೋಂದಾಯಿತರ ಪೈಕಿ 3.13 ಲಕ್ಷ ಫಲಾನುಭವಿಗಳು ಮೃತಪಟ್ಟಿದ್ದು, ಇದರಲ್ಲಿ 1.10 ಲಕ್ಷ ಮಂದಿಯ ಖಾತೆಗೆ 117.31 ಕೋಟಿ ರೂ. ಜಮೆಯಾಗಿದ್ದು, ಇದನ್ನು ಹಿಂಪಡೆಯಲು ಸರ್ಕಾರ ಕ್ರಮ ಕೈಗೊಂಡಿದೆ.

ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹೊಸದಾಗಿ ಅರ್ಜಿ ತಯಾರಿಸಿದ್ದು, ಸರ್ಕಾರ ಮತ್ತು ಹಣಕಾಸು ಇಲಾಖೆಗೆ ಸಲ್ಲಿಸಿದೆ. ಮನೆ ಯಜಮಾನಿಯ ವಿವರ, ಮತದಾರರ ಗುರುತಿನ ವಿವರ, ಆಧಾರ್ ಸಂಖ್ಯೆ, ಬ್ಯಾಂಕ್ ಖಾತೆ ವಿವರ, ಈ ಹಿಂದೆ ಮನೆಯಲ್ಲಿ ಎಷ್ಟು ಸದಸ್ಯರಿಗೆ ಹಣ ಬರುತ್ತಿತ್ತು, ಜಾತಿಯ ವಿವರ, ಪತಿಯ ಹೆಸರು-ಆಧಾರ್ ಸಂಖ್ಯೆ ಸೇರಿದಂತೆ ಹಲವು ಮಾಹಿತಿಗಳನ್ನು ಒಳಗೊಂಡ ಹೊಸ ಅರ್ಜಿ ನಮೂನೆ ತಯಾರಾಗುತ್ತಿದೆ.

ಈಗಾಗಲೇ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್)ಯಿಂದಾಗಿ ನಕಲಿ ಹಾಗೂ ನಿಧನರಾದವರು ಸೇರಿದಂತೆ ಲಕ್ಷಾಂತರ ಹೆಸರುಗಳನ್ನು ಕೈಬಿಡಲಾಗಿದ್ದು, ಗೃಹಲಕ್ಷ್ಮಿ ಯೋಜನೆಯ ಮರುನೋಂದಣಿಯಿಂದಲೂ ಸಾಕಷ್ಟು ಮಂದಿ ಅನರ್ಹರು ಯೋಜನೆಯಿಂದ ಹೊರಗುಳಿಯುವ ಸಾಧ್ಯತೆಯಿದೆ. ಸೆಪ್ಟೆಂಬರ್ ನಂತರ ಈ ನವೀಕರಣ ಪ್ರಕ್ರಿಯೆ ನಡೆಯಲಿದೆ.

ಗೃಹಲಕ್ಷ್ಮಿ ಫಲಾನುಭವಿಗಳ ಮರುನೋಂದಣಿ: ಬಯೋಮೆಟ್ರಿಕ್ ದೃಢೀಕರಣಕ್ಕೆ ಹೊಸ ಆ್ಯಪ್ ಸಿದ್ಧ

0

ಬೆಂಗಳೂರು: ಗೃಹಲಕ್ಷ್ಮಿ ಯೋಜನೆಯ ನವೀಕರಣಕ್ಕಾಗಿ ಬಹುವಿಧದ ಮೊಬೈಲ್ ಆ್ಯಪ್/ವೆಬ್ ಆ್ಯಪ್‌ಗಳು ಸಿದ್ಧಗೊಳ್ಳುತ್ತಿದ್ದು, ಶೀಘ್ರದಲ್ಲೇ ಗೃಹಲಕ್ಷ್ಮಿ ಫಲಾನುಭವಿಗಳ ನವೀಕರಣ ಪ್ರಕ್ರಿಯೆಗಳು ನಡೆಯಲಿವೆ.

ಗ್ಯಾರಂಟಿ ಯೋಜನೆಗಳ ಪೈಕಿ ಪ್ರಮುಖ ಯೋಜನೆಯಾಗಿರುವ ಗೃಹಲಕ್ಷ್ಮಿ, ರಾಜ್ಯದ ಎಪಿಎಲ್ ಹಾಗೂ ಬಿಪಿಎಲ್ ಕಾರ್ಡ್ ಹೊಂದಿರುವ ಪ್ರತಿ ಕುಟುಂಬದ ಯಜಮಾನಿಗೆ ಮಾಸಿಕ 2,000 ರೂ. ಆರ್ಥಿಕ ನೆರವು ನೀಡುವ ಯೋಜನೆಯಾಗಿದೆ. ಆದರೆ ಈ ಯೋಜನೆಯಡಿ ಅರ್ಹರಲ್ಲದವರೂ ಹಣ ಪಡೆಯುತ್ತಿದ್ದ ಹಿನ್ನೆಲೆಯಲ್ಲಿ, ಇಂತಹ ಸದಸ್ಯರನ್ನು ರದ್ದುಪಡಿಸುವ ಉದ್ದೇಶದಿಂದ ಮರುನವೀಕರಣಕ್ಕೆ ಸರ್ಕಾರ ಮುಂದಾಗಿದೆ. ನವೀಕರಣದ ವೇಳೆ ಫಲಾನುಭವಿಗಳ ಕೆಲವು ವೈಯಕ್ತಿಕ ವಿವರಗಳನ್ನೂ ಸಂಗ್ರಹಿಸಲು ನಿರ್ಧರಿಸಲಾಗಿದೆ.

ರಾಜ್ಯಾದ್ಯಂತ 1.24 ಕೋಟಿ ಗೃಹಲಕ್ಷ್ಮಿ ಫಲಾನುಭವಿಗಳಿದ್ದು, ಮರುಪರಿಶೀಲನೆ ಹಂತದಲ್ಲಿ ಫಲಾನುಭವಿಗಳ ಬಯೋಮೆಟ್ರಿಕ್ ಮತ್ತು ಮುಖಚಹರೆ ದೃಢೀಕರಣ ಪಡೆಯಲು ಅವಕಾಶ ಕಲ್ಪಿಸಲಾಗಿದೆ ಎಂದೂ, ಇದೇ ಉದ್ದೇಶಕ್ಕಾಗಿ ಮೊಬೈಲ್ ಆ್ಯಪ್ ಮತ್ತು ವೆಬ್ ಪೋರ್ಟಲ್ ಅಭಿವೃದ್ಧಿಪಡಿಸಲಾಗಿದ್ದು, ಅಂತಿಮ ಹಂತದ ಪರಿಶೀಲನೆ ನಡೆಯುತ್ತಿದೆ ಎಂದೂ ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಸರ್ಕಾರದ ನಿಯೋಜಿತ ಸಿಬ್ಬಂದಿ ಮನೆ ಮನೆಗೆ ಭೇಟಿ ನೀಡಿ ನವೀಕರಣ ಕಾರ್ಯ ಕೈಗೊಳ್ಳಲಿದ್ದು, ಇದರಿಂದ ಬೆಂಗಳೂರು ಒನ್, ಗ್ರಾಮ ಒನ್ ಕೇಂದ್ರಗಳಲ್ಲಿ ದಟ್ಟಣೆ ತಪ್ಪಿಸಬಹುದು. ಫಲಾನುಭವಿಗಳು ಸರ್ಕಾರದ ಅಧಿಕೃತ ಕೇಂದ್ರಗಳಲ್ಲೂ ದಾಖಲೆ ಸಲ್ಲಿಸಿ ನೋಂದಣಿ ಮಾಡಿಸಬಹುದು.

ಯೋಜನೆಯಡಿ ಒಟ್ಟು 1.24 ಕೋಟಿ ಫಲಾನುಭವಿಗಳು ನೋಂದಾಯಿಸಿಕೊಂಡಿದ್ದು, ಈ ಪೈಕಿ ಅರ್ಹ ಫಲಾನುಭವಿಗಳ ಖಾತೆಗೆ 32 ಕಂತುಗಳಲ್ಲಿ ತಲಾ 2,000 ರೂ.ನಂತೆ ಒಟ್ಟು 76,951 ಕೋಟಿ ರೂ. ಜಮೆ ಮಾಡಲಾಗಿದೆ. ನೋಂದಾಯಿತರ ಪೈಕಿ 3.13 ಲಕ್ಷ ಫಲಾನುಭವಿಗಳು ಮೃತಪಟ್ಟಿದ್ದು, ಇದರಲ್ಲಿ 1.10 ಲಕ್ಷ ಮಂದಿಯ ಖಾತೆಗೆ 117.31 ಕೋಟಿ ರೂ. ಜಮೆಯಾಗಿದ್ದು, ಇದನ್ನು ಹಿಂಪಡೆಯಲು ಸರ್ಕಾರ ಕ್ರಮ ಕೈಗೊಂಡಿದೆ.

ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹೊಸದಾಗಿ ಅರ್ಜಿ ತಯಾರಿಸಿದ್ದು, ಸರ್ಕಾರ ಮತ್ತು ಹಣಕಾಸು ಇಲಾಖೆಗೆ ಸಲ್ಲಿಸಿದೆ. ಮನೆ ಯಜಮಾನಿಯ ವಿವರ, ಮತದಾರರ ಗುರುತಿನ ವಿವರ, ಆಧಾರ್ ಸಂಖ್ಯೆ, ಬ್ಯಾಂಕ್ ಖಾತೆ ವಿವರ, ಈ ಹಿಂದೆ ಮನೆಯಲ್ಲಿ ಎಷ್ಟು ಸದಸ್ಯರಿಗೆ ಹಣ ಬರುತ್ತಿತ್ತು, ಜಾತಿಯ ವಿವರ, ಪತಿಯ ಹೆಸರು-ಆಧಾರ್ ಸಂಖ್ಯೆ ಸೇರಿದಂತೆ ಹಲವು ಮಾಹಿತಿಗಳನ್ನು ಒಳಗೊಂಡ ಹೊಸ ಅರ್ಜಿ ನಮೂನೆ ತಯಾರಾಗುತ್ತಿದೆ.

ಈಗಾಗಲೇ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್)ಯಿಂದಾಗಿ ನಕಲಿ ಹಾಗೂ ನಿಧನರಾದವರು ಸೇರಿದಂತೆ ಲಕ್ಷಾಂತರ ಹೆಸರುಗಳನ್ನು ಕೈಬಿಡಲಾಗಿದ್ದು, ಗೃಹಲಕ್ಷ್ಮಿ ಯೋಜನೆಯ ಮರುನೋಂದಣಿಯಿಂದಲೂ ಸಾಕಷ್ಟು ಮಂದಿ ಅನರ್ಹರು ಯೋಜನೆಯಿಂದ ಹೊರಗುಳಿಯುವ ಸಾಧ್ಯತೆಯಿದೆ. ಸೆಪ್ಟೆಂಬರ್ ನಂತರ ಈ ನವೀಕರಣ ಪ್ರಕ್ರಿಯೆ ನಡೆಯಲಿದೆ.