ಮೈಸೂರು: ಕರುನಾಡಿನ ಮಣ್ಣಲ್ಲಿ ಖ್ಯಾತ ಗಾಯಕಿ ಎಸ್. ಜಾನಕಿ ಅವರು ಕೊನೆಯುಸಿರೆಳೆದಿದ್ದು, ಅವರ ನೆನಪಿಗಾಗಿ ಕರ್ನಾಟಕದಲ್ಲಿ ಸ್ಮಾರಕ ನಿರ್ಮಾಣವಾಗಬೇಕು ಎಂದು ಖ್ಯಾತ ಸಂಗೀತ ನಿರ್ದೇಶಕ ನಾದಬ್ರಹ್ಮ ಹಂಸಲೇಖ ಮನವಿ ಮಾಡಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಹಂಸಲೇಖ, “ಜಾನಕಿ ಅಂದ್ರೆ ಸೀತೆ, ಸೀತೆ ಅಂದ್ರೆ ನಮಗೆ ಗೀತೆ. ಅವರ ಆಸೆ ಕರುನಾಡಿನಲ್ಲಿತ್ತು. ಅವರ ಸ್ಮಾರಕ ನಿರ್ಮಾಣವಾಗಬೇಕು. ಈ ವಿಚಾರವನ್ನು ಸಂಬಂಧಪಟ್ಟವರ ಗಮನಕ್ಕೆ ತರೋಣ” ಎಂದು ಹೇಳಿದರು.
ಎಸ್. ಜಾನಕಿ ಅವರದ್ದು ಪರಿಪೂರ್ಣ ಜೀವನವಾಗಿದ್ದು, 88 ವರ್ಷಗಳನ್ನು ಪೂರೈಸಿದ್ದಾರೆ. ಅವರು ದೇವರ ಭಕ್ತರಾಗಿದ್ದರು. ಸಂಗೀತವೇ ದೇವರು, ಸಂಗೀತ ಎಲ್ಲ ದೇವರಿಗೂ ಪ್ರಿಯವಾದದ್ದು ಎಂದು ಹಂಸಲೇಖ ಹೇಳಿದರು.
ಮೈಸೂರು ಉಸ್ತುವಾರಿ ಸಚಿವ ಯತೀಂದ್ರ ಸಿದ್ದರಾಮಯ್ಯ ಅವರಿಗೆ ಜಾನಕಿ ಅವರ ಸ್ಮಾರಕ ನಿರ್ಮಿಸುವಂತೆ ಮನವಿ ಮಾಡುವುದಾಗಿ ತಿಳಿಸಿದರು.
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಎಸ್. ಜಾನಕಿ ಅವರು ಮೈಸೂರಿನ ಅಪೋಲೋ ಆಸ್ಪತ್ರೆಯಲ್ಲಿ ಜುಲೈ 11ರಂದು ನಿಧನರಾಗಿದ್ದರು. ಚಿಕಿತ್ಸೆಗೆ ದಾಖಲಾಗಿದ್ದ ಅವರು, ಮಗನ ನಿಧನದ ಬಳಿಕ ಮೈಸೂರಿನ ಬೋಗಾದಿಯಲ್ಲಿರುವ ಆಪ್ತರ ಮನೆಯಲ್ಲಿ ವಾಸವಾಗಿದ್ದರು.
80ರ ದಶಕದಲ್ಲಿ ತಮ್ಮ ಸುಮಧುರ ಕಂಠದಿಂದ ಅಪಾರ ಜನಪ್ರಿಯತೆ ಗಳಿಸಿದ್ದ ಜಾನಕಿ ಅವರನ್ನು “ಭಾರತದ ನೈಟಿಂಗೇಲ್” ಎಂದೇ ಕರೆಯಲಾಗುತ್ತಿತ್ತು. ಸುಮಾರು 48 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿರುವ ಅವರು, ಕನ್ನಡ ಸೇರಿದಂತೆ ಹಲವು ಭಾಷೆಗಳ ಸಂಗೀತ ಲೋಕಕ್ಕೆ ಅಪಾರ ಕೊಡುಗೆ ನೀಡಿದ್ದಾರೆ.
ಆಂಧ್ರಪ್ರದೇಶದಲ್ಲಿ ಜನಿಸಿದ್ದರೂ ಕರ್ನಾಟಕದ ಮೇಲೆ ವಿಶೇಷ ಪ್ರೀತಿ ಹೊಂದಿದ್ದ ಜಾನಕಿ ಅವರು ಕನ್ನಡದಲ್ಲೇ ಅತಿ ಹೆಚ್ಚು ಗೀತೆಗಳನ್ನು ಹಾಡಿದ್ದರು. ಅವರು 4 ರಾಷ್ಟ್ರೀಯ ಪ್ರಶಸ್ತಿ, 33 ರಾಜ್ಯ ಪ್ರಶಸ್ತಿ, ಮೈಸೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಹಾಗೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳಿಗೆ ಪಾತ್ರರಾಗಿದ್ದರು.

