ವಿಜಯಸಾಕ್ಷಿ ಸುದ್ದಿ, ಬಾದಾಮಿ: ಚಾಲುಕ್ಯರ ಐತಿಹಾಸಿಕ ನಾಡು ಬಾದಾಮಿಯಲ್ಲಿ ವಸಂತ ಬಸವ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ‘ಮಂದಾರ ಹೂವು’ (ಉಪಶೀರ್ಷಿಕೆ: ಇವಳು ನಮ್ಮ ಮನೆ ಮಗಳು) ಕನ್ನಡ ಚಲನಚಿತ್ರದ ಮುಹೂರ್ತ ಸಮಾರಂಭ ಭಕ್ತಿಭಾವದಿಂದ ನೆರವೇರಿತು.
ಬಾದಾಮಿಯ ಹೃದಯಭಾಗದಲ್ಲಿರುವ ಚೌಡಿಯ ದೊಡ್ಡ ಆಂಜನೇಯ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ, ದೇವಸ್ಥಾನದ ಪೂಜಾರಿಗಳ ಸಮ್ಮುಖದಲ್ಲಿ ಕ್ಯಾಮೆರಾಗೆ ಚಾಲನೆ ನೀಡಿ ಮೊದಲ ದೃಶ್ಯದ ಚಿತ್ರೀಕರಣ ಆರಂಭಿಸಲಾಯಿತು.
ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರ ಶಿಷ್ಯ ಶಾಂತಕುಮಾರ್ ಪಾಟೀಲ್ ಕಥೆ, ಚಿತ್ರಕಥೆ ಹಾಗೂ ನಿರ್ದೇಶನದ ಜವಾಬ್ದಾರಿ ವಹಿಸಿಕೊಂಡಿದ್ದು, ಚಿತ್ರದ ಮೂರು ಹಾಡುಗಳಿಗೆ ಅವರೇ ಸಾಹಿತ್ಯ ರಚಿಸಿದ್ದಾರೆ.
ಚಿತ್ರದ ಚಿತ್ರೀಕರಣ ಬಾದಾಮಿ, ಮುತ್ತಲಗೇರಿ ಹಾಗೂ ಬನಶಂಕರಿ ಸುತ್ತಮುತ್ತ ಸುಮಾರು 40 ದಿನಗಳ ಕಾಲ ನಡೆಯಲಿದ್ದು, ಉತ್ತರ ಕರ್ನಾಟಕದ ಸೊಗಡನ್ನು ಬೆಳ್ಳಿ ಪರದೆ ಮೇಲೆ ಕಟ್ಟಿಕೊಡುವ ಪ್ರಯತ್ನ ಇದಾಗಿದೆ ಎಂದು ನಿರ್ದೇಶಕ ಶಾಂತಕುಮಾರ್ ತಿಳಿಸಿದ್ದಾರೆ.
ಚಿತ್ರಕ್ಕೆ ಗಿರೀಶ್ ಶಿರಗನಹಳ್ಳಿ ಛಾಯಾಗ್ರಹಣ, ಹರ್ಷ ಕಾಗೋಡು ಸಂಗೀತ, ಸುನೈ ಎಸ್. ಜೈನ್ ಸಂಕಲನ, ರಾಜೇಶ್ ಎಸ್. ದೇಸಾಯಿ ಕಲಾ ನಿರ್ದೇಶನ, ಡಾ. ಪ್ರಭು ಗಂಜಿಹಾಳ ಹಾಗೂ ಡಾ. ವೀರೇಶ ಹಂಡಿಗಿ ಪತ್ರಿಕಾ ಸಂಪರ್ಕದ ಜವಾಬ್ದಾರಿ ವಹಿಸಿಕೊಂಡಿದ್ದಾರೆ.
ಸಹಾಯಕ ನಿರ್ದೇಶಕರಾಗಿ ಸುನಿಲ್ ಎಸ್. ಭಜಂತ್ರಿ, ತುಳಸಪ್ಪ ಪಾತ್ರೋಟಿ, ರವಿ ಎಚ್. ದೇಸಾಯಿ, ಸುಜಲ್ ರಾಠೋಡ ಹಾಗೂ ನವೀನ್ ರೋಡ್ಕರ್ ಕಾರ್ಯನಿರ್ವಹಿಸುತ್ತಿದ್ದು, ಪ್ರಭುರಾಜ್ ಹೂಲಗೇರಿ ಮುಖ್ಯ ಮೇಲ್ವಿಚಾರಣೆ ಮತ್ತು ಸಂಚಾಲಕರಾಗಿದ್ದಾರೆ.
ಚಿತ್ರದಲ್ಲಿ ಅಕ್ಷಯ್ ಪತ್ತಾರ ನಾಯಕನಾಗಿ ಹಾಗೂ ಸ್ವಾತಿ ತೋಟರ ನಾಯಕಿಯಾಗಿ ಅಭಿನಯಿಸುತ್ತಿದ್ದು, ಆನಂದ್ ದೇವಾಡಿಗ ಖಳನಟನಾಗಿ ಕಾಣಿಸಿಕೊಳ್ಳಲಿದ್ದಾರೆ. ರವಿ ಎಚ್. ದೇಸಾಯಿ, ವಸಂತ ಬಡಿಗೇರ, ಮಂಜು ಬೆಳ್ಳಿಗುಂಡಿ, ಸಂಜನಾ (ತೇಜಸ್ವಿನಿ), ಕಾವೇರಿ, ಚಂದ್ರಿಕಾ, ಪ್ರೇಮಾ ತುಡಬಿನ್, ಸ್ವಾತಿ ರಾಠೋಡ, ಶೈಲಾ ರಾಠೋಡ, ಮಂಜು ಎಚ್. ದೇಸಾಯಿ, ತುಳಸಪ್ಪ ಪಾತ್ರೋಟಿ, ಪ್ರಕಾಶ್ ಗದ್ದಿಗೌಡ್ರ ಸೇರಿದಂತೆ ಉತ್ತರ ಕರ್ನಾಟಕದ ಹಲವು ಕಲಾವಿದರು ಚಿತ್ರದ ತಾರಾಗಣದಲ್ಲಿದ್ದಾರೆ.
“ಉತ್ತರ ಕರ್ನಾಟಕದ ನೆಲ, ನುಡಿ, ಸಂಸ್ಕೃತಿ ಮತ್ತು ಭಾವನೆಗಳನ್ನು ಬೆಳ್ಳಿ ಪರದೆ ಮೇಲೆ ಅನಾವರಣಗೊಳಿಸುವ ಉದ್ದೇಶದಿಂದ ‘ಮಂದಾರ ಹೂವು’ ಚಿತ್ರ ನಿರ್ಮಾಣವಾಗುತ್ತಿದೆ.”
– ನಿರ್ದೇಶಕ ಶಾಂತಕುಮಾರ್ ಪಾಟೀಲ್

