Home Blog

ಬೆಂಗಳೂರು ಕಂಠೀರವ ಸ್ಟುಡಿಯೋ ಬಳಿ ಭೀಕರ ದುರಂತ: ಮಣ್ಣಿನ ತಡೆಗೋಡೆ ಕುಸಿದು ಕಾರ್ಮಿಕ ಸಾವು

0

ಬೆಂಗಳೂರು: ರಾಜಧಾನಿಯ ಕಂಠೀರವ ಸ್ಟುಡಿಯೋ ಮುಂಭಾಗ ಹಾಗೂ ಡಾ. ರಾಜ್‌ಕುಮಾರ್ ಪುಣ್ಯಭೂಮಿ ಬಳಿ ನಡೆಯುತ್ತಿದ್ದ ಅಂಡರ್‌ಪಾಸ್ ಕಾಮಗಾರಿ ವೇಳೆ ಭೀಕರ ದುರಂತ ಸಂಭವಿಸಿದೆ. ಸುಮಾರು 20 ಅಡಿ ಆಳಕ್ಕೆ ತೋಡಲಾಗಿದ್ದ ಗುಂಡಿಯ ಮಣ್ಣಿನ ತಡೆಗೋಡೆ ಏಕಾಏಕಿ ಕುಸಿದು ಬಿದ್ದ ಪರಿಣಾಮ ಓರ್ವ ಕಾರ್ಮಿಕ ಮೃತಪಟ್ಟಿದ್ದು, ಹಲವು ಕಾರ್ಮಿಕರು ಮಣ್ಣಿನಡಿ ಸಿಲುಕಿಕೊಂಡಿದ್ದಾರೆ.

ಅಂಡರ್‌ಪಾಸ್ ನಿರ್ಮಾಣಕ್ಕಾಗಿ ರಸ್ತೆಯಲ್ಲಿ ಸುಮಾರು 20 ಅಡಿ ಆಳದವರೆಗೆ ಮಣ್ಣು ತೆಗೆಯಲಾಗಿತ್ತು. ಎಂದಿನಂತೆ ಕಾರ್ಮಿಕರು ಕಾಮಗಾರಿಯಲ್ಲಿ ತೊಡಗಿಸಿಕೊಂಡಿದ್ದ ವೇಳೆ ಏಕಾಏಕಿ ಮೇಲ್ಭಾಗದಲ್ಲಿದ್ದ ಮಣ್ಣಿನ ತಡೆಗೋಡೆ ಕುಸಿದು ಬಿದ್ದಿದೆ. ಕ್ಷಣಾರ್ಧದಲ್ಲಿ ಮಣ್ಣು ಕುಸಿದ ಪರಿಣಾಮ ಸ್ಥಳದಲ್ಲಿದ್ದ ಐವರು ಕಾರ್ಮಿಕರು ಮಣ್ಣಿನಡಿ ಸಿಲುಕಿ ಉಸಿರಾಡಲಾಗದೆ ಪರದಾಡಿದ್ದಾರೆ.

ದುರಂತದ ಬೆನ್ನಲ್ಲೇ ಸಿಬ್ಬಂದಿ ಹಾಗೂ ಸಾರ್ವಜನಿಕರು ತಕ್ಷಣ ಕಾರ್ಯಾಚರಣೆಗೆ ಮುಂದಾಗಿದ್ದು, ಮಣ್ಣಿನಡಿ ಸಿಲುಕಿದ್ದ ಮೂವರು ಕಾರ್ಮಿಕರನ್ನು ಸುರಕ್ಷಿತವಾಗಿ ಹೊರತೆಗೆಯಲಾಗಿದೆ. ಘಟನೆಯಲ್ಲಿ ಓರ್ವ ಕಾರ್ಮಿಕ ಮೃತಪಟ್ಟಿರುವುದು ದೃಢಪಟ್ಟಿದ್ದು, ಮತ್ತೋರ್ವ ಕಾರ್ಮಿಕ ಮಣ್ಣಿನಡಿ ಸಿಲುಕಿರುವ ಹಿನ್ನೆಲೆಯಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.

ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಹಾಗೂ ಹೆಚ್ಚುವರಿ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದಾರೆ. ಮಣ್ಣಿನಡಿ ಇನ್ನೂ ಯಾರಾದರೂ ಸಿಲುಕಿಕೊಂಡಿದ್ದಾರೆಯೇ ಎಂಬ ಅನುಮಾನ ಹಿನ್ನೆಲೆಯಲ್ಲಿ ರಕ್ಷಣಾ ಸಿಬ್ಬಂದಿ ವ್ಯಾಪಕ ಶೋಧ ಕಾರ್ಯ ನಡೆಸುತ್ತಿದ್ದಾರೆ. ಘಟನಾ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ರಕ್ಷಣಾ ಕಾರ್ಯಾಚರಣೆ ತೀವ್ರಗೊಳಿಸಲಾಗಿದೆ.

‘ನನ್ನ ಮತವನ್ನೇ ತೆಗೆದುಹಾಕಿದ್ದಾರೆ’: ಎಸ್‌ಐಆರ್‌ ವಿರುದ್ಧ ನಟ ಪ್ರಕಾಶ್ ರೈ ಕಿಡಿ

ಬೆಂಗಳೂರು: ಎಸ್‌ಐಆರ್‌ ಪ್ರಕ್ರಿಯೆ ನಡುವೆ ನಟ ಪ್ರಕಾಶ್ ರೈ ಅವರ ಮತದಾರರ ಪಟ್ಟಿಯಲ್ಲಿನ ಹೆಸರು ಡಿಲೀಟ್ ಆಗಿರುವ ವಿಚಾರ ಮುನ್ನೆಲೆಗೆ ಬಂದಿದೆ. ಬೆಂಗಳೂರಿನಿಂದ ಎಸ್‌ಐಆರ್‌ ಅಡಿಯಲ್ಲಿ ಡಿಲೀಟ್ ಆಗಿರುವ 65 ಲಕ್ಷ ಮತದಾರರಲ್ಲಿ ತಾನೂ ಒಬ್ಬ ಎಂದು ಹೇಳಿಕೊಂಡಿರುವ ಪ್ರಕಾಶ್ ರೈ, ತಮ್ಮ ಹುಟ್ಟೂರು ಹಾಗೂ ಬೆಳೆದ ಕ್ಷೇತ್ರದಿಂದಲೇ ಮತದಾನದ ಹಕ್ಕು ಕಳೆದುಕೊಂಡಿರುವುದಾಗಿ ಇನ್‌ಸ್ಟಾಗ್ರಾಂ ವಿಡಿಯೊ ಮೂಲಕ ತಿಳಿಸಿದ್ದಾರೆ.

2024ರಲ್ಲಿ ಬೆಂಗಳೂರು ಸೆಂಟ್ರಲ್ ಕ್ಷೇತ್ರದ ಸೇಂಟ್ ಜೋಸೆಫ್ ಇಂಡಿಯನ್ ಹೈಸ್ಕೂಲ್‌ನಲ್ಲಿ ಮತ ಚಲಾಯಿಸಿದ್ದಾಗಿ ಹೇಳಿರುವ ಪ್ರಕಾಶ್ ರೈ, ಇದೇ ಕ್ಷೇತ್ರದಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ್ದೆ. ಹೀಗಿದ್ದರೂ ತಮ್ಮ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂದು ಪ್ರಶ್ನಿಸಿದ್ದಾರೆ.

ಪ್ರಕಾಶ್ ರೈ ಅವರ ಮತದಾರರ ಪಟ್ಟಿಯಲ್ಲಿನ ಹೆಸರು ಒಂದಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ಇರುವ ಆರೋಪ ಹೊಸದಲ್ಲ. 2019ರಲ್ಲೇ ಅವರ ವಿರುದ್ಧ ಈ ಸಂಬಂಧ ದೂರು ದಾಖಲಾಗಿತ್ತು. ಬೆಂಗಳೂರಿನ ಶಾಂತಿನಗರದಲ್ಲಿ ಒಂದು, ಚೆನ್ನೈನ ವಲಚೇರಿಯಲ್ಲಿ ಎರಡು ಹಾಗೂ ತೆಲಂಗಾಣದ ಸೆರಿಲಿಂಗಂಪಲ್ಲಿ ಕ್ಷೇತ್ರಗಳ ಮತದಾರರ ಪಟ್ಟಿಯಲ್ಲಿ ಅವರ ಹೆಸರು ಇದೆ ಎಂದು ಆರೋಪಿಸಲಾಗಿತ್ತು.

ಈ ಪ್ರಕರಣದ ವಿಚಾರಣೆಗೆ ಗೈರಾಗಿದ್ದ ಹಿನ್ನೆಲೆಯಲ್ಲಿ 2025ರಲ್ಲಿ ನ್ಯಾಯಾಲಯ ವಾರೆಂಟ್ ಹೊರಡಿಸಿತ್ತು. ಬಳಿಕ ಜುಲೈ 10, 2026ರಂದು ಪ್ರಕಾಶ್ ರೈ ಷರತ್ತುಬದ್ಧ ಜಾಮೀನು ಪಡೆದಿದ್ದಾರೆ. ಪ್ರಕರಣ ಇನ್ನೂ ವಿಚಾರಣೆಯಲ್ಲಿದೆ. ಈ ಹಿನ್ನೆಲೆಯಲ್ಲಿ ಒಂದಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರು ಹೊಂದಿರುವ ಆರೋಪವೇ ಎಸ್‌ಐಆರ್‌ ವೇಳೆ ಅವರ ಮತ ಡಿಲೀಟ್ ಆಗಲು ಕಾರಣವಾಗಿರಬಹುದೇ ಎಂಬ ಚರ್ಚೆ ನಡೆಯುತ್ತಿದೆ.

ಈ ನಡುವೆ ತಮ್ಮ ಮತವನ್ನು ಮರಳಿ ಪಡೆಯಲು ಹೋರಾಟ ನಡೆಸುವುದಾಗಿ ಪ್ರಕಾಶ್ ರೈ ಸ್ಪಷ್ಟಪಡಿಸಿದ್ದಾರೆ. ಎಷ್ಟು ದಾಖಲೆಗಳನ್ನು ನೀಡಬೇಕಾದರೂ ನೀಡುವುದಾಗಿ ಹೇಳಿರುವ ಅವರು, ತಮ್ಮ ಮತವನ್ನು ಡಿಲೀಟ್ ಮಾಡಿರುವ ವಿಚಾರದಲ್ಲಿ ಸುಮ್ಮನೆ ಕೂರುವುದಿಲ್ಲ ಎಂದು ತಿಳಿಸಿದ್ದಾರೆ.

‘ಮಂಗಳ ಗೌರಿ ಮದುವೆ’ ಧಾರಾವಾಹಿಯ ಕಾನ್‌ಸ್ಟೇಬಲ್‌ ಇನ್ನಿಲ್ಲ: ಹಿರಿಯ ನಟ ವಿಜಯಕುಮಾರ್ ಜಿತೂರಿ ಕೊನೆಯುಸಿರು

ಗದಗ: ‘ಮಂಗಳ ಗೌರಿ ಮದುವೆ’ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ಅಭಿನಯಿಸಿ ಕಿರುತೆರೆ ಪ್ರೇಕ್ಷಕರಿಗೆ ಪರಿಚಿತರಾಗಿದ್ದ ಹಿರಿಯ ಕಲಾವಿದ ವಿಜಯಕುಮಾರ್ ಜಿತೂರಿ ನಿಧನರಾಗಿದ್ದಾರೆ. ಸೋಮವಾರ ಸಂಜೆ ಗದಗದ ಬೆಟಗೇರಿಯಲ್ಲಿ ಅವರು ಕೊನೆಯುಸಿರೆಳೆದಿದ್ದು, ಅವರಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು ಎನ್ನಲಾಗಿದೆ.

ವಿಜಯಕುಮಾರ್ ಜಿತೂರಿ ಅವರದ್ದು ಬಹುಮುಖ ಪ್ರತಿಭೆ. ನಟನೆಯೊಂದಿಗೆ ಗಾಯನದಲ್ಲೂ ಆಸಕ್ತಿ ಹೊಂದಿದ್ದ ಅವರು ಕಿರುತೆರೆ ಮಾತ್ರವಲ್ಲದೆ ಹಿರಿತೆರೆ ಹಾಗೂ ರಂಗಭೂಮಿಯಲ್ಲೂ ಅಭಿನಯಿಸಿದ್ದರು. ಹಲವು ವರ್ಷಗಳ ಕಾಲ ಬಣ್ಣದ ಲೋಕದೊಂದಿಗೆ ನಂಟು ಹೊಂದಿದ್ದ ಅವರು, ವಿವಿಧ ಪಾತ್ರಗಳ ಮೂಲಕ ಪ್ರೇಕ್ಷಕರ ಗಮನ ಸೆಳೆದಿದ್ದರು.

ಗಗನ್ ಚಿನ್ನಪ್ಪ ಅಭಿನಯದ ‘ಮಂಗಳ ಗೌರಿ ಮದುವೆ’ ಧಾರಾವಾಹಿಯಲ್ಲಿ ಕಾನ್‌ಸ್ಟೇಬಲ್ ಪಾತ್ರದಲ್ಲಿ ವಿಜಯಕುಮಾರ್ ಜಿತೂರಿ ಕಾಣಿಸಿಕೊಂಡಿದ್ದರು. ಧಾರಾವಾಹಿಯ ಹಲವು ಪ್ರಮುಖ ಸನ್ನಿವೇಶಗಳಲ್ಲಿ ಗಗನ್ ಚಿನ್ನಪ್ಪ ಅವರೊಂದಿಗೆ ಅಭಿನಯಿಸಿ ಗುರುತಿಸಿಕೊಂಡಿದ್ದರು.

ಕಲಾ ಕ್ಷೇತ್ರದಲ್ಲಿ ಹಲವು ವರ್ಷಗಳ ಅನುಭವ ಹೊಂದಿದ್ದರೂ ಇತ್ತೀಚಿನ ದಿನಗಳಲ್ಲಿ ಅವರಿಗೆ ಹೆಚ್ಚಿನ ನಟನಾ ಅವಕಾಶಗಳು ದೊರೆಯಲಿಲ್ಲ ಎನ್ನಲಾಗಿದೆ. ಇದರ ಪರಿಣಾಮವಾಗಿ ಆರ್ಥಿಕ ಸಂಕಷ್ಟ ಎದುರಾಗಿತ್ತು. ಬೆಂಗಳೂರಿನಲ್ಲಿ ಮನೆ ಬಾಡಿಗೆ ಸೇರಿದಂತೆ ಜೀವನ ನಿರ್ವಹಣೆಯ ಸವಾಲುಗಳಿಂದಾಗಿ ಅವರು ಹುಟ್ಟೂರಾದ ಗದಗಕ್ಕೆ ವಾಪಸ್ ಆಗಿದ್ದರು.

ಇದೀಗ ವಿಜಯಕುಮಾರ್ ಜಿತೂರಿ ಅವರ ನಿಧನದಿಂದ ಅವರ ಕುಟುಂಬ, ಆಪ್ತರು ಹಾಗೂ ಕಲಾ ಕ್ಷೇತ್ರದ ಸಹೋದ್ಯೋಗಿಗಳು ಆಘಾತಕ್ಕೊಳಗಾಗಿದ್ದಾರೆ. ನಟ, ಗಾಯಕ ಹಾಗೂ ರಂಗಭೂಮಿ ಕಲಾವಿದನಾಗಿ ಅವರು ನೀಡಿದ ಕೊಡುಗೆಯನ್ನು ಸ್ಮರಿಸುತ್ತಾ ಹಲವರು ಸಂತಾಪ ಸೂಚಿಸಿದ್ದಾರೆ.

ನಮ್ಮ ಮೆಟ್ರೋದಲ್ಲಿ ಹೊಸ ರೆಕಾರ್ಡ್: ಒಂದೇ ದಿನ 11.19 ಲಕ್ಷ ಮಂದಿ ಪ್ರಯಾಣ, ಹಿಂದಿನ ದಾಖಲೆ ಉಡೀಸ್

0

ಬೆಂಗಳೂರು: ನಮ್ಮ ಮೆಟ್ರೋದಲ್ಲಿ ಪ್ರಯಾಣಿಕರ ಸಂಖ್ಯೆ ಹೊಸ ದಾಖಲೆ ನಿರ್ಮಿಸಿದೆ. ಒಂದೇ ದಿನ 11.19 ಲಕ್ಷಕ್ಕೂ ಅಧಿಕ ಮಂದಿ ಮೆಟ್ರೋದಲ್ಲಿ ಸಂಚರಿಸುವ ಮೂಲಕ ಹಿಂದಿನ ದಾಖಲೆಯನ್ನು ಮುರಿದಿದ್ದಾರೆ.

ಆಗಸ್ಟ್ 10ರಂದು, ಸೋಮವಾರ ಒಂದೇ ದಿನ ನಮ್ಮ ಮೆಟ್ರೋದಲ್ಲಿ ಬರೋಬ್ಬರಿ 11,19,815 ಮಂದಿ ಪ್ರಯಾಣಿಸಿದ್ದಾರೆ. ಈ ಮೂಲಕ ಮೆಟ್ರೋ ಆರಂಭವಾದ ಬಳಿಕದ ಅತಿ ಹೆಚ್ಚಿನ ರೈಡರ್‌ಶಿಪ್ ದಾಖಲಾಗಿದ್ದು, ಹೊಸ ಮೈಲಿಗಲ್ಲು ನಿರ್ಮಾಣವಾಗಿದೆ.

ಇದಕ್ಕೂ ಮುನ್ನ ಕಳೆದ ಐದು ತಿಂಗಳ ಹಿಂದೆ, ಯುಗಾದಿ ಹಬ್ಬದ ಸಂದರ್ಭದಲ್ಲಿ ನಮ್ಮ ಮೆಟ್ರೋದಲ್ಲಿ 10.73 ಲಕ್ಷ ಮಂದಿ ಪ್ರಯಾಣಿಸಿದ್ದು ದಾಖಲೆಯಾಗಿತ್ತು. ಇದೀಗ ಈ ದಾಖಲೆಯನ್ನು ಮೀರಿಸುವ ಮೂಲಕ ಹೊಸ ದಾಖಲೆ ಸೃಷ್ಟಿಯಾಗಿದೆ.

ನಮ್ಮ ಮೆಟ್ರೋ ಆರಂಭವಾಗಿ 15 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಒಂದೇ ದಿನ 11 ಲಕ್ಷಕ್ಕೂ ಅಧಿಕ ಪ್ರಯಾಣಿಕರು ಮೆಟ್ರೋ ಸೇವೆ ಬಳಸಿದ್ದಾರೆ.

ನಗರದಲ್ಲಿ ಹೆಚ್ಚುತ್ತಿರುವ ಸಂಚಾರ ದಟ್ಟಣೆ, ಸಾರ್ವಜನಿಕ ಸಾರಿಗೆಯ ಮೇಲಿನ ಅವಲಂಬನೆ ಹಾಗೂ ಮೆಟ್ರೋ ಜಾಲದ ವಿಸ್ತರಣೆಯಿಂದಾಗಿ ಪ್ರಯಾಣಿಕರ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ. ಇದೀಗ ಒಂದೇ ದಿನ 11,19,815 ಮಂದಿ ಮೆಟ್ರೋದಲ್ಲಿ ಸಂಚರಿಸಿರುವುದು ಬೆಂಗಳೂರಿನಲ್ಲಿ ಮೆಟ್ರೋ ಸೇವೆಯ ಮೇಲಿನ ಜನರ ಅವಲಂಬನೆ ಹೆಚ್ಚುತ್ತಿರುವುದಕ್ಕೆ ಸಾಕ್ಷಿಯಾಗಿದೆ.

ಬೈಕ್ ಟ್ಯಾಕ್ಸಿಗಳಿಗೆ ರಾಜ್ಯ ಸರ್ಕಾರದಿಂದ ಬಿಗ್ ಶಾಕ್; ಅನುಮತಿ ನೀಡಲು ಸಾಧ್ಯವಿಲ್ಲ ಎಂದು ಸುಪ್ರೀಂಗೆ ಅಫಿಡವಿಟ್

0

ಬೆಂಗಳೂರು: ನಗರದಲ್ಲಿ ಸದ್ದಿಲ್ಲದೆ ಕಾರ್ಯಾಚರಣೆ ನಡೆಸುತ್ತಿರುವ ಬೈಕ್ ಟ್ಯಾಕ್ಸಿ ಸೇವೆಗಳಿಗೆ ಕರ್ನಾಟಕ ಸರ್ಕಾರ ಹಾಗೂ ಸಾರಿಗೆ ಇಲಾಖೆ ಬಿಗ್ ಶಾಕ್ ನೀಡಿದೆ. ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ ಸೇವೆಗೆ ಅನುಮತಿ ನೀಡಲು ಸಾಧ್ಯವಿಲ್ಲ ಎಂದು ಕರ್ನಾಟಕ ಸರ್ಕಾರ ಸುಪ್ರೀಂಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿದೆ.

ಕರ್ನಾಟಕ ಹೈಕೋರ್ಟ್ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಿರುವ ರಾಜ್ಯ ಸರ್ಕಾರ, ದ್ವಿಚಕ್ರ ವಾಹನಗಳನ್ನು ವಾಣಿಜ್ಯ ಉದ್ದೇಶದ ಟ್ಯಾಕ್ಸಿಗಳಾಗಿ ಬಳಸಲು ಅನುಮತಿ ನೀಡಲು ಸಾಧ್ಯವಿಲ್ಲ ಎಂಬ ತನ್ನ ನಿಲುವನ್ನು ನ್ಯಾಯಾಲಯದ ಮುಂದೆ ಸ್ಪಷ್ಟಪಡಿಸಿದೆ.

ಬೈಕ್ ಟ್ಯಾಕ್ಸಿಗೆ ಸರ್ಕಾರದ ವಿರೋಧಕ್ಕೆ ಕಾರಣಗಳೇನು?

ಬೈಕ್ ಟ್ಯಾಕ್ಸಿ ಸೇವೆಯಿಂದ ಪ್ರಯಾಣಿಕರ ಸುರಕ್ಷತೆಗೆ ಅಪಾಯವಿದೆ ಎಂಬುದನ್ನು ರಾಜ್ಯ ಸರ್ಕಾರ ಪ್ರಮುಖ ಕಾರಣವಾಗಿ ಮುಂದಿಟ್ಟಿದೆ. ಸುರಕ್ಷತೆ ಮತ್ತು ವಿಮೆ ಕೊರತೆ: ಬೈಕ್ ಟ್ಯಾಕ್ಸಿಗಳಲ್ಲಿ ಪ್ರಯಾಣಿಸುವ ಸಾರ್ವಜನಿಕರಿಗೆ ಸೂಕ್ತ ಸುರಕ್ಷತಾ ವ್ಯವಸ್ಥೆ ಇರುವುದಿಲ್ಲ. ಇಂತಹ ವಾಹನಗಳಿಗೆ ಅಧಿಕೃತ ವಾಣಿಜ್ಯ ವಿಮಾ ರಕ್ಷಣೆ ಇಲ್ಲದಿರುವುದರಿಂದ ಅಪಘಾತ ಸಂಭವಿಸಿದ ಸಂದರ್ಭದಲ್ಲಿ ಪ್ರಯಾಣಿಕರ ಹಿತಾಸಕ್ತಿ ಕಾಪಾಡುವುದು ಕಷ್ಟವಾಗಲಿದೆ ಎಂದು ಸರ್ಕಾರ ಹೇಳಿದೆ.

ಅಪಘಾತದ ಅಪಾಯ: ದ್ವಿಚಕ್ರ ವಾಹನಗಳಿಗೆ ಸಂಬಂಧಿಸಿದಂತೆ ಅಪಘಾತಗಳು ಹಾಗೂ ಅವುಗಳಿಂದ ಉಂಟಾಗುವ ಸಾವು-ನೋವುಗಳ ಪ್ರಮಾಣ ಹೆಚ್ಚಾಗಿದೆ. ಹೀಗಾಗಿ ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ಬೈಕ್ ಟ್ಯಾಕ್ಸಿ ಸೇವೆಗೆ ಅನುಮತಿ ನೀಡಲು ಸಾಧ್ಯವಿಲ್ಲ ಎಂದು ಸರ್ಕಾರ ವಾದಿಸಿದೆ.

ಕೇಂದ್ರ ಕಾಯ್ದೆಯಲ್ಲಿ ಸ್ಪಷ್ಟ ಉಲ್ಲೇಖವಿಲ್ಲ: ಕೇಂದ್ರ ಮೋಟಾರು ವಾಹನ ಕಾಯ್ದೆಯಲ್ಲಿ ‘ಬೈಕ್ ಟ್ಯಾಕ್ಸಿ’ ಎಂಬುದಕ್ಕೆ ಯಾವುದೇ ಸ್ಪಷ್ಟ ವ್ಯಾಖ್ಯಾನ ಅಥವಾ ಪ್ರತ್ಯೇಕ ನಿಯಮಾವಳಿಗಳಿಲ್ಲ. ಹೀಗಾಗಿ ದ್ವಿಚಕ್ರ ವಾಹನಗಳನ್ನು ವಾಣಿಜ್ಯ ಟ್ಯಾಕ್ಸಿ ಸೇವೆಗೆ ಬಳಸಲು ಅನುಮತಿ ನೀಡುವ ಕಾನೂನು ಆಧಾರವಿಲ್ಲ ಎಂದು ರಾಜ್ಯ ಸರ್ಕಾರ ಸುಪ್ರೀಂಕೋರ್ಟ್‌ಗೆ ತಿಳಿಸಿದೆ.

ಎರಡನೇ ದಿನವೂ ಮುಂದುವರಿದ ಸಾರಿಗೆ ಇಲಾಖೆ ಕಾರ್ಯಾಚರಣೆ

ಒಂದೆಡೆ ಬೈಕ್ ಟ್ಯಾಕ್ಸಿ ವಿಚಾರವಾಗಿ ಸುಪ್ರೀಂಕೋರ್ಟ್‌ನಲ್ಲಿ ಕಾನೂನು ಹೋರಾಟ ನಡೆಯುತ್ತಿದ್ದರೆ, ಮತ್ತೊಂದೆಡೆ ಅನಧಿಕೃತ ಬೈಕ್ ಟ್ಯಾಕ್ಸಿಗಳ ವಿರುದ್ಧ ಸಾರಿಗೆ ಇಲಾಖೆಯ ಜಾರಿ ವಿಭಾಗದ ಕಾರ್ಯಾಚರಣೆ ಮತ್ತಷ್ಟು ಚುರುಕುಗೊಂಡಿದೆ.

ಪ್ರಾದೇಶಿಕ ಸಾರಿಗೆ ಕಚೇರಿ (RTO) ಅಧಿಕಾರಿಗಳು ಓಲಾ, ಊಬರ್ ಹಾಗೂ ರಾಪಿಡೋ ಸೇರಿದಂತೆ ವಿವಿಧ ಆ್ಯಪ್ ಆಧಾರಿತ ಅನಧಿಕೃತ ಬೈಕ್ ಟ್ಯಾಕ್ಸಿಗಳ ವಿರುದ್ಧ ದಾಳಿ ನಡೆಸುತ್ತಿದ್ದಾರೆ.

ಬೆಂಗಳೂರಿನ ಕೋರಮಂಗಲ ಆರ್‌ಟಿಒ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ತೀವ್ರಗೊಂಡಿದ್ದು, ಒಂದೇ ದಿನ 85ಕ್ಕೂ ಹೆಚ್ಚು ಬೈಕ್ ಟ್ಯಾಕ್ಸಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದುಬಂದಿದೆ.

ಅನಧಿಕೃತ ಬೈಕ್ ಟ್ಯಾಕ್ಸಿ ಸೇವೆಗಳಿಗೆ ಕಡಿವಾಣ ಹಾಕಲು ಸಾರಿಗೆ ಇಲಾಖೆ ಒಟ್ಟು 11 ವಿಶೇಷ ತಂಡಗಳನ್ನು ರಚಿಸಿದೆ. ಈ ತಂಡಗಳು ನಗರದ ವಿವಿಧ ಪ್ರದೇಶಗಳಲ್ಲಿ ತಪಾಸಣೆ ನಡೆಸುತ್ತಿವೆ.

ಈ ಹಿಂದೆ ಕಾರ್ಯಾಚರಣೆಯ ಮೊದಲ ದಿನವೇ 256 ಬೈಕ್ ಟ್ಯಾಕ್ಸಿಗಳನ್ನು ಸೀಜ್ ಮಾಡಲಾಗಿತ್ತು ಎನ್ನಲಾಗಿದೆ. ಇದೀಗ ಎರಡನೇ ದಿನವೂ 85ಕ್ಕೂ ಹೆಚ್ಚು ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಕೇವಲ ಎರಡು ದಿನಗಳಲ್ಲಿ ನೂರಾರು ಬೈಕ್ ಟ್ಯಾಕ್ಸಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.

ಬೈಕ್ ಟ್ಯಾಕ್ಸಿ ಸೇವೆಯ ಕಾನೂನು ಮಾನ್ಯತೆ ಕುರಿತು ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿರುವ ಬೆನ್ನಲ್ಲೇ ಸಾರಿಗೆ ಇಲಾಖೆಯ ಈ ಕಾರ್ಯಾಚರಣೆ ಮಹತ್ವ ಪಡೆದುಕೊಂಡಿದೆ.

ಮುಗಿಸುವುದಾಗಿ ಕಚೇರಿಗೆ ಸರಣಿ ಬೆದರಿಕೆ ಪತ್ರ: ಪೊಲೀಸ್‌ ಠಾಣೆ ಮೆಟ್ಟಿಲೇರಿದ ಗಂಗೂಲಿ ದಂಪತಿ

0

ಕೋಲ್ಕತ್ತಾ: ಟೀಮ್ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ ಹಾಗೂ ಅವರ ಪತ್ನಿ ಡೋನಾ ಗಂಗೂಲಿ ಅವರಿಗೆ ಅಪರಿಚಿತರಿಂದ ನಿರಂತರ ಕೊಲೆ ಬೆದರಿಕೆ ಪತ್ರಗಳು ಬರುತ್ತಿರುವ ಆತಂಕಕಾರಿ ಘಟನೆ ಬೆಳಕಿಗೆ ಬಂದಿದೆ. ಗಂಗೂಲಿ ದಂಪತಿ ಹಾಗೂ ಅವರ ಆಪ್ತರನ್ನು ಕೊಲ್ಲುವುದಾಗಿ ನೇರವಾಗಿ ಎಚ್ಚರಿಕೆ ನೀಡಲಾಗಿದ್ದು, ಈ ಸಂಬಂಧ ದಕ್ಷಿಣ ಕೋಲ್ಕತ್ತಾದ ಠಾಕೂರ್‌ಪುಕುರ್ ಪೊಲೀಸ್ ಠಾಣೆಯಲ್ಲಿ ಅಧಿಕೃತ ದೂರು ದಾಖಲಾಗಿದೆ.

ಕ್ರಿಕೆಟ್ ಅಸೋಸಿಯೇಷನ್ ಆಫ್ ಬೆಂಗಾಲ್ (CAB) ಅಧ್ಯಕ್ಷರಾಗಿರುವ ಸೌರವ್ ಗಂಗೂಲಿ ಅವರ ಕಚೇರಿಗೆ ಇಂಗ್ಲಿಷ್ ಭಾಷೆಯಲ್ಲಿ ಬೆದರಿಕೆ ಪತ್ರಗಳು ಬಂದಿವೆ. ಕಳೆದ ನಾಲ್ಕರಿಂದ ಆರು ತಿಂಗಳಿನಿಂದ ಇಂತಹ ಪತ್ರಗಳು ನಿರಂತರವಾಗಿ ಬರುತ್ತಿದ್ದರೂ, ಆರಂಭದಲ್ಲಿ ಅವುಗಳನ್ನು ಅಭಿಮಾನಿಗಳ ಅತಿರೇಕದ ಸಂದೇಶಗಳು ಅಥವಾ ಸಾಮಾನ್ಯ ದ್ವೇಷದ ಪತ್ರಗಳು ಎಂದು ಪರಿಗಣಿಸಿ ನಿರ್ಲಕ್ಷಿಸಲಾಗಿತ್ತು ಎನ್ನಲಾಗಿದೆ.

ಆದರೆ ಇತ್ತೀಚೆಗೆ ಬಂದ ಎರಡು ಪತ್ರಗಳಲ್ಲಿ ಬೆದರಿಕೆಯ ತೀವ್ರತೆ ಹೆಚ್ಚಾಗಿದೆ. ಗಂಗೂಲಿ ದಂಪತಿ ಹಾಗೂ ಅವರ ಆಪ್ತರನ್ನು ಕೊಲ್ಲುವುದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂಬ ರೀತಿಯಲ್ಲಿ ಉಗ್ರ ಎಚ್ಚರಿಕೆ ನೀಡಲಾಗಿದೆ. ಇದರಿಂದ ಆತಂಕಗೊಂಡ ಕುಟುಂಬಸ್ಥರು ಪೊಲೀಸರ ಮೊರೆ ಹೋಗಿದ್ದಾರೆ.

ಗಂಗೂಲಿ ಅವರ ಖಾಸಗಿ ಕಾರ್ಯದರ್ಶಿ ತಾನಿಯಾ ಭಟ್ಟಾಚಾರ್ಯ ನೀಡಿದ ದೂರಿನ ಆಧಾರದ ಮೇಲೆ, ಆಗಸ್ಟ್ 10ರಂದು ಠಾಕೂರ್‌ಪುಕುರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪ್ರಕರಣದ ಗಂಭೀರತೆಯನ್ನು ಪರಿಗಣಿಸಿರುವ ಕೋಲ್ಕತ್ತಾ ಪೊಲೀಸರ ವಿಶೇಷ ಕಾರ್ಯಪಡೆ (STF) ಹಾಗೂ ಪಶ್ಚಿಮ ಬಂಗಾಳ ಸರ್ಕಾರದ ಭದ್ರತಾ ವಿಭಾಗ ತನಿಖೆ ಆರಂಭಿಸಿದೆ.

ಪ್ರಾಥಮಿಕ ತನಿಖೆಯಲ್ಲಿ ಬೆದರಿಕೆ ಪತ್ರಗಳನ್ನು ಕೊರಿಯರ್ ಮೂಲಕ ಕಳುಹಿಸಿರುವ ಸುಳಿವು ಸಿಕ್ಕಿದೆ. ಪತ್ರದ ಮೇಲಿನ ವಿಳಾಸದಲ್ಲಿ ಉತ್ತರ 24 ಪರಗಣ ಜಿಲ್ಲೆಯ ಬೆಲ್ಘಾರಿಯಾ ಮೂಲದ ‘ಅರುಣ್ ಕುಮಾರ್’ ಎಂಬ ಹೆಸರು ನಮೂದಿಸಿರುವುದು ಪತ್ತೆಯಾಗಿದೆ.

ಕೊರಿಯರ್ ಜಾಡು ಆಧರಿಸಿ ತನಿಖೆ ಮುಂದುವರಿಸಿರುವ STF ತಂಡ, ಗಂಗೂಲಿ ಅವರ ಬೆಹಾಲಾ ನಿವಾಸದಿಂದ ಸುಮಾರು 32 ಕಿಲೋಮೀಟರ್ ದೂರದಲ್ಲಿರುವ ಶಂಕಿತ ಸ್ಥಳವೊಂದನ್ನು ಗುರುತಿಸಿ ದಾಳಿ ನಡೆಸಿದೆ. ಪತ್ರದಲ್ಲಿ ಉಲ್ಲೇಖವಾಗಿದ್ದ ಮೊಬೈಲ್ ಸಂಖ್ಯೆಯ ಲೊಕೇಶನ್ ಹಾಗೂ ಸಿಮ್ ಕಾರ್ಡ್ ಚಲನವಲನಗಳನ್ನೂ ಸೈಬರ್ ಕ್ರೈಂ ವಿಭಾಗ ತಾಂತ್ರಿಕವಾಗಿ ಪರಿಶೀಲಿಸುತ್ತಿದೆ.

ಅರುಣ್ ಕುಮಾರ್ ಅವರೇ ಈ ಬೆದರಿಕೆ ಪತ್ರಗಳನ್ನು ಕಳುಹಿಸಿದ್ದಾರೆಯೇ ಅಥವಾ ಅವರ ಹೆಸರನ್ನು ಯಾರಾದರೂ ದುರುಪಯೋಗಪಡಿಸಿಕೊಂಡಿದ್ದಾರೆಯೇ ಎಂಬುದರ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಬೆದರಿಕೆ ಪ್ರಕರಣದ ಹಿನ್ನೆಲೆಯಲ್ಲಿ ಸೌರವ್ ಗಂಗೂಲಿ, ಅವರ ಪತ್ನಿ ಡೋನಾ ಹಾಗೂ ಅವರ ನಿವಾಸಕ್ಕೆ ಕೋಲ್ಕತ್ತಾ ಪೊಲೀಸರು ಹೆಚ್ಚುವರಿ ಭದ್ರತೆ ಒದಗಿಸಿದ್ದಾರೆ. ಭದ್ರತಾ ವ್ಯವಸ್ಥೆಯನ್ನೂ ಮರುಪರಿಶೀಲಿಸಲಾಗಿದ್ದು, ಆರೋಪಿಯನ್ನು ಶೀಘ್ರ ಪತ್ತೆಹಚ್ಚಲು ತನಿಖೆ ಚುರುಕುಗೊಂಡಿದೆ.

ಪುನೀತ್ ಮೂಲಕ ಸಾಕ್ಷಿಗೆ ಕಿಡ್ನಾಪ್, ಬೆದರಿಕೆ: FSL ರಿಪೋರ್ಟ್‌ನಲ್ಲಿ ಪ್ರಭಾವಿ ಮಹಿಳೆ ಸೇರಿ ನಾಲ್ವರ ಲಿಂಕ್ ಪತ್ತೆ!

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ ಸಾಕ್ಷಿಗಳಿಗೆ ಬೆದರಿಕೆ ಹಾಕಿದ ಪ್ರಕರಣದ ತನಿಖೆಯಲ್ಲಿ ಪೊಲೀಸರಿಗೆ ಮತ್ತೊಂದು ದೊಡ್ಡ ಸುಳಿವು ಸಿಕ್ಕಿದೆ. ಎಫ್‌ಎಸ್‌ಎಲ್ ವರದಿಯಲ್ಲಿ ವಾಟ್ಸ್‌ಆ್ಯಪ್ ಕಾನ್ಫರೆನ್ಸ್ ಕಾಲ್‌ನ ವಿವರಗಳು ಪತ್ತೆಯಾಗಿದ್ದು, ಸಾಕ್ಷಿ ಸಂದೀಪ್‌ಗೆ ಬೆದರಿಕೆ ಹಾಕಿದ ವೇಳೆ ಗೌರವ್ ಶೆಟ್ಟಿ ಹಾಗೂ ಕಿರಣ್ ಸಂಪರ್ಕದಲ್ಲಿದ್ದರು ಎನ್ನಲಾಗಿದೆ. ಪುನೀತ್ ಹಾಗೂ ಆತನ ತಂಡಕ್ಕೆ ಇವರಿಬ್ಬರು ಮಾರ್ಗದರ್ಶನ ನೀಡಿದ್ದರೆಂಬ ಮಾಹಿತಿ ಇದೀಗ ತನಿಖೆಗೆ ಹೊಸ ತಿರುವು ನೀಡಿದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದ 49ನೇ ಸಾಕ್ಷಿ ಸಂದೀಪ್, ಕೋರ್ಟ್‌ನಲ್ಲಿ ತಮ್ಮನ್ನು ಕಿಡ್ನಾಪ್ ಮಾಡಿ ಜೀವ ಬೆದರಿಕೆ ಹಾಕಲಾಗಿತ್ತು ಎಂದು ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಕಾಮಾಕ್ಷಿಪಾಳ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪುನೀತ್, ಸುಹಾಸ್ ಹಾಗೂ ವೇಣು ಅವರನ್ನು ಬಂಧಿಸಿದ್ದರು.

ಪೊಲೀಸರ ತನಿಖೆಯಲ್ಲಿ ಸಾಕ್ಷಿಗೆ ಬೆದರಿಕೆ ಹಾಕುವ ಕಾರ್ಯಾಚರಣೆಯ ವೇಳೆ ವಾಟ್ಸ್‌ಆ್ಯಪ್ ಕಾನ್ಫರೆನ್ಸ್ ಕಾಲ್ ನಡೆದಿರುವುದು ಪತ್ತೆಯಾಗಿದೆ. ಕಿರಣ್ ಹಾಗೂ ಗೌರವ್ ಶೆಟ್ಟಿ ಈ ಕಾಲ್‌ನಲ್ಲಿದ್ದು, ಪುನೀತ್ ಮತ್ತು ಆತನ ತಂಡಕ್ಕೆ ಸೂಚನೆಗಳನ್ನು ನೀಡಿದ್ದರು ಎನ್ನಲಾಗಿದೆ.

ಪುನೀತ್ ಮೂಲಕ ಸಾಕ್ಷಿಯನ್ನು ಕಿಡ್ನಾಪ್ ಮಾಡಿಸಿ ಬೆದರಿಕೆ ಹಾಕಿಸಿದ ಪ್ರಕರಣದಲ್ಲಿ ಇದೀಗ ಗೌರವ್ ಶೆಟ್ಟಿ ಹಾಗೂ ಕಿರಣ್ ಅವರ ಪಾತ್ರದ ಕುರಿತು ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಕೃತ್ಯದ ಸಮಯದಲ್ಲಿ ಇಬ್ಬರೂ ಸಂಪರ್ಕದಲ್ಲಿದ್ದದ್ದು ಎಫ್‌ಎಸ್‌ಎಲ್ ವರದಿಯಿಂದ ದೃಢಪಟ್ಟಿದೆ ಎನ್ನಲಾಗಿದೆ.

ಇದಕ್ಕೂ ಮುನ್ನ ಪುನೀತ್‌ಗೆ ಪ್ರಭಾವಿ ಮಹಿಳೆಯೊಬ್ಬರು ಕರೆ ಮಾಡಿರುವುದು ಪತ್ತೆಯಾಗಿದೆ. ಗೌರವ್ ಶೆಟ್ಟಿ ಹೇಳಿದಂತೆ ನಡೆದುಕೊಳ್ಳುವಂತೆ ಆಕೆ ಪುನೀತ್‌ಗೆ ಸೂಚಿಸಿದ್ದಳು ಎನ್ನಲಾಗಿದ್ದು, ಇದರೊಂದಿಗೆ ಪ್ರಕರಣದ ಹಿಂದೆ ಪ್ರಭಾವಿ ಮಹಿಳೆ, ಗೌರವ್ ಶೆಟ್ಟಿ, ಕಿರಣ್ ಹಾಗೂ ಇತರರ ಸಂಪರ್ಕವಿರುವ ಶಂಕೆ ವ್ಯಕ್ತವಾಗಿದೆ.

ದರ್ಶನ್ ಕುಟುಂಬಕ್ಕೆ ಅತ್ಯಾಪ್ತನಾಗಿದ್ದ ಪುನೀತ್, ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರಮುಖ ಸಾಕ್ಷಿಯಾಗಿದ್ದ. ಇದೀಗ ಅದೇ ಪ್ರಕರಣದ ಸಾಕ್ಷಿಗೆ ಬೆದರಿಕೆ ಹಾಕಿದ ಆರೋಪದಲ್ಲಿ ಪುನೀತ್ ಬಂಧನಕ್ಕೊಳಗಾಗಿದ್ದಾನೆ. ಪುನೀತ್ ಹಾಗೂ ಆತನ ತಂಡ ಸಾಕ್ಷಿಯನ್ನು ಕಿಡ್ನಾಪ್ ಮಾಡಿ ಬೆದರಿಕೆ ಹಾಕಿದ್ದರೆಂಬ ಆರೋಪದ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಪ್ರಕರಣದ ಮುಂದಿನ ಹಂತದಲ್ಲಿ ಗೌರವ್ ಶೆಟ್ಟಿ ಹಾಗೂ ಕಿರಣ್ ಅವರನ್ನು ವಿಚಾರಣೆ ನಡೆಸಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ. ಇವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆಯೂ ಅಧಿಕಾರಿಗಳು ಚರ್ಚೆ ನಡೆಸುತ್ತಿದ್ದಾರೆ.

ಸದ್ಯ ಪೊಲೀಸರ ಕೈಗೆ ಮತ್ತೊಂದು ಟೆಕ್ನಿಕಲ್ ವರದಿ ಬರಬೇಕಿದೆ. ಆ ವರದಿ ಸಿಕ್ಕ ಬಳಿಕ ಕಾನ್ಫರೆನ್ಸ್ ಕಾಲ್‌ನಲ್ಲಿ ಯಾರೆಲ್ಲ ಇದ್ದರು, ಯಾರು ಯಾರಿಗೆ ಸೂಚನೆ ನೀಡಿದ್ದರು ಹಾಗೂ ಸಾಕ್ಷಿಗೆ ಬೆದರಿಕೆ ಹಾಕಿದ ಸಂಪೂರ್ಣ ಜಾಲದಲ್ಲಿ ಯಾರ ಪಾತ್ರ ಏನು ಎಂಬುದರ ಕುರಿತು ಮತ್ತಷ್ಟು ಸತ್ಯಗಳು ಹೊರಬೀಳುವ ಸಾಧ್ಯತೆ ಇದೆ.

ಸಿನಿಮಾದ ಆಪ್ತರಿಗೆ ಸರ್ಕಾರಿ ಹುದ್ದೆ: ದೇವಾಲಯದ ಉನ್ನತ ಸಮಿತಿಗೆ ನಿರ್ಮಾಪಕಿ ಅರ್ಚನಾ ಕಲ್ಪತಿ ನೇಮಕಕ್ಕೆ ನೆಟ್ಟಿಗರ ಆಕ್ರೋಶ 

ಚೆನ್ನೈ: ಸಿನಿಮಾ ನಿರ್ಮಾಪಕಿ ಅರ್ಚನಾ ಕಲ್ಪತಿ ಅವರನ್ನು ತಮಿಳುನಾಡಿನ ದೇವಾಲಯಗಳ ಧರ್ಮದರ್ಶಿಗಳ ಆಯ್ಕೆ ಸಮಿತಿಗೆ ನೇಮಕ ಮಾಡಿರುವುದು ರಾಜ್ಯ ರಾಜಕೀಯ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಚರ್ಚೆ ಹುಟ್ಟುಹಾಕಿದೆ. 10 ಲಕ್ಷ ರೂ.ಗಿಂತ ಹೆಚ್ಚು ಆದಾಯ ಹೊಂದಿರುವ ದೇವಾಲಯಗಳಿಗೆ ಧರ್ಮದರ್ಶಿಗಳನ್ನು ಆಯ್ಕೆ ಮಾಡುವ ಮಹತ್ವದ ಜವಾಬ್ದಾರಿ ಹೊಂದಿರುವ ಸಮಿತಿಗೆ ಚಿತ್ರರಂಗದ ವ್ಯಕ್ತಿಯನ್ನು ನೇಮಕ ಮಾಡಿರುವುದನ್ನು ಕೆಲವರು ಪ್ರಶ್ನಿಸಿದರೆ, ಮತ್ತೊಂದೆಡೆ ವಿಜಯ್ ಅಭಿಮಾನಿಗಳು ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.

ಎಜಿಎಸ್ ಎಂಟರ್‌ಟೈನ್‌ಮೆಂಟ್ ಸಂಸ್ಥೆಯ ನಿರ್ಮಾಪಕಿ ಅರ್ಚನಾ ಕಲ್ಪತಿ ಅವರನ್ನು ಹಿಂದೂ ಧಾರ್ಮಿಕ ಮತ್ತು ದತ್ತಿ ದೇಣಿಗೆ ಇಲಾಖೆಗೆ ಸಂಬಂಧಿಸಿದ ಸಮಿತಿಗೆ ನೇಮಕ ಮಾಡಲಾಗಿದೆ. ಎರಡು ವರ್ಷಗಳ ಅವಧಿಗೆ ಕಾರ್ಯನಿರ್ವಹಿಸಲಿರುವ ಸಮಿತಿಯಲ್ಲಿ ಹಿರಿಯ ನ್ಯಾಯಾಧೀಶರು ಮತ್ತು ನಿವೃತ್ತ ಐಎಎಸ್ ಅಧಿಕಾರಿಗಳೂ ಇದ್ದಾರೆ.

ನೇಮಕಾತಿ ವಿಚಾರ ಹೊರಬರುತ್ತಿದ್ದಂತೆ ನೆಟ್ಟಿಗರಿಂದ ಹಲವು ಪ್ರಶ್ನೆಗಳು ಎದುರಾಗಿವೆ. ದೇವಾಲಯಗಳ ಧರ್ಮದರ್ಶಿಗಳ ಆಯ್ಕೆಯಂತಹ ಜವಾಬ್ದಾರಿಯುತ ಸಮಿತಿಗೆ ಸಿನಿಮಾ ಕ್ಷೇತ್ರದ ವ್ಯಕ್ತಿಯನ್ನು ಆಯ್ಕೆ ಮಾಡಿರುವುದರ ಹಿಂದಿನ ಮಾನದಂಡವೇನು ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕು ಎಂದು ಕೆಲವರು ಆಗ್ರಹಿಸಿದ್ದಾರೆ.

ಇನ್ನೂ ಕೆಲವರು ತಮಿಳುನಾಡು ಸರ್ಕಾರವನ್ನು ಕಾಲಿವುಡ್‌ನ ಮನರಂಜನಾ ಕ್ಲಬ್‌ಗೆ ಹೋಲಿಸಿ ವ್ಯಂಗ್ಯವಾಡಿದ್ದಾರೆ. ನಟ ಹಾಗೂ ಮುಖ್ಯಮಂತ್ರಿ ವಿಜಯ್ ಅವರ ಅಭಿಮಾನಿಗಳು ಸರ್ಕಾರದ ಪ್ರತಿಯೊಂದು ನಿರ್ಧಾರವನ್ನೂ ಬೆಂಬಲಿಸುತ್ತಿದ್ದಾರೆ ಎಂಬ ಟೀಕೆಯೂ ಸಾಮಾಜಿಕ ಜಾಲತಾಣಗಳಲ್ಲಿ ಕೇಳಿಬಂದಿದೆ.

ಆದರೆ ವಿಜಯ್ ಅಭಿಮಾನಿಗಳ ವಾದವೇ ಬೇರೆ. ಅರ್ಚನಾ ಕಲ್ಪತಿ ಎರಡು ಸ್ನಾತಕೋತ್ತರ ಪದವಿಗಳನ್ನು ಪಡೆದಿದ್ದು, ಉದ್ಯಮ ಕ್ಷೇತ್ರದಲ್ಲೂ ಯಶಸ್ವಿಯಾಗಿದ್ದಾರೆ. ಹೀಗಾಗಿ ಅವರ ವೃತ್ತಿಪರ ಹಿನ್ನೆಲೆಯನ್ನು ಪರಿಗಣಿಸಿಯೇ ಸರ್ಕಾರ ನೇಮಕ ಮಾಡಿರಬಹುದು ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.

ಇದೇ ವೇಳೆ ವಿಜಯ್ ಅವರ ಮ್ಯಾನೇಜರ್ ಜಗದೀಶ್, ಛಾಯಾಗ್ರಾಹಕ ಮನೋಜ್ ಪರಮಹಂಸ ಮತ್ತು ನಿರ್ಮಾಪಕ ವೆಂಕಟ ನಾರಾಯಣ ಅವರಿಗೆ ಈ ಹಿಂದೆ ಸರ್ಕಾರಿ ಜವಾಬ್ದಾರಿಗಳು ನೀಡಲಾಗಿದ್ದವು ಎಂಬ ವಿಚಾರವೂ ಮುನ್ನೆಲೆಗೆ ಬಂದಿದೆ.

ಒಟ್ಟಿನಲ್ಲಿ ಅರ್ಚನಾ ಕಲ್ಪತಿ ಅವರ ನೇಮಕಾತಿ ಕೇವಲ ಒಂದು ಸರ್ಕಾರಿ ನೇಮಕಾತಿಯಾಗಿ ಉಳಿಯದೆ, ತಮಿಳುನಾಡಿನಲ್ಲಿ ಸಿನಿಮಾ ಕ್ಷೇತ್ರ ಮತ್ತು ಸರ್ಕಾರದ ನಡುವಿನ ಸಂಬಂಧದ ಕುರಿತು ಹೊಸ ರಾಜಕೀಯ ಹಾಗೂ ಸಾಮಾಜಿಕ ಚರ್ಚೆಗೆ ವೇದಿಕೆಯಾಗಿದೆ.

ಯಶ್‌ಗೆ ₹50 ಕೋಟಿ , ಕಿಯಾರಾಗೆ ₹15 ಕೋಟಿ..! ‘ಟಾಕ್ಸಿಕ್’ ಸ್ಟಾರ್‌ಗಳ ಸಂಭಾವನೆ ವೈರಲ್; ಯಾರಿಗೆ ಎಷ್ಟು?

‘ಟಾಕ್ಸಿಕ್’ ಸಿನಿಮಾ ಸದ್ಯ ಸ್ಯಾಂಡಲ್‌ವುಡ್‌ನಲ್ಲೇ ಹಾಟ್ ಟಾಪಿಕ್ ಆಗಿದೆ. ಯಶ್ ಅಭಿನಯದ ಈ ಬಹುನಿರೀಕ್ಷಿತ ಚಿತ್ರಕ್ಕೆ ಟ್ರೇಲರ್ ಬಿಡುಗಡೆಯಾದ ಬಳಿಕ ನಿರೀಕ್ಷೆ ಮತ್ತಷ್ಟು ಹೆಚ್ಚಿದ್ದು, ಇದೀಗ ಸಿನಿಮಾದ ತಾರೆಯರ ಸಂಭಾವನೆ ಕುರಿತು ಕೇಳಿಬರುತ್ತಿರುವ ಅಂಕಿಅಂಶಗಳು ಅಭಿಮಾನಿಗಳ ಗಮನ ಸೆಳೆದಿವೆ. ಗೀತೂ ಮೋಹನ್‌ದಾಸ್ ನಿರ್ದೇಶನದ ಸಿನಿಮಾ ಆಗಸ್ಟ್ 26ರಂದು ಅದ್ಧೂರಿಯಾಗಿ ತೆರೆಗೆ ಬರಲಿದೆ.

ಮಾಧ್ಯಮ ವರದಿಗಳ ಪ್ರಕಾರ ಸಿನಿಮಾದಲ್ಲಿ ರಾಯ ಮತ್ತು ಟಿಕೆಟ್ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಯಶ್‌ಗೆ 50 ಕೋಟಿ ರೂ. ಸಂಭಾವನೆ ನೀಡಲಾಗಿದೆ ಎನ್ನಲಾಗಿದೆ. ವಿಶೇಷವೆಂದರೆ ಯಶ್ ಕೇವಲ ನಟನಾಗಿ ಮಾತ್ರವಲ್ಲದೆ ಸಹ-ಬರಹಗಾರ ಮತ್ತು ಸಹ-ನಿರ್ಮಾಪಕರಾಗಿಯೂ ಸಿನಿಮಾದಲ್ಲಿ ತೊಡಗಿಸಿಕೊಂಡಿದ್ದಾರೆ. ಚಿತ್ರದ ಲಾಭದಲ್ಲೂ ಅವರಿಗೆ ಪಾಲು ದೊರೆಯಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಇನ್ನು ‘ಟಾಕ್ಸಿಕ್’ ಸಿನಿಮಾದ ಪ್ರಮುಖ ತಾರೆಯರ ಸಂಭಾವನೆಯ ಬಗ್ಗೆಯೂ ಹಲವು ವರದಿಗಳು ಹರಿದಾಡುತ್ತಿವೆ. ಕಿಯಾರಾ ಅಡ್ವಾಣಿ ಅವರಿಗೆ 15 ಕೋಟಿ ರೂ. ಸಂಭಾವನೆ ಸಿಕ್ಕಿದೆ ಎನ್ನಲಾಗಿದ್ದು, ನಯನತಾರಾ ಅವರಿಗೆ 12ರಿಂದ 18 ಕೋಟಿ ರೂ.ವರೆಗೆ ನೀಡಲಾಗಿದೆ ಎಂದು ವರದಿಯಾಗಿದೆ.

ರುಕ್ಮಿಣಿ ವಸಂತ್ ಅವರಿಗೆ 3ರಿಂದ 5 ಕೋಟಿ ರೂ. ಸಂಭಾವನೆ ನೀಡಲಾಗಿದೆ ಎನ್ನಲಾಗಿದೆ. ‘ಕಾಂತಾರ: ಅಧ್ಯಾಯ 1’ ಯಶಸ್ಸಿನ ಬಳಿಕ ರುಕ್ಮಿಣಿ ಅವರ ಸಂಭಾವನೆ ಹೆಚ್ಚಾಗಿದೆ ಎಂಬ ಚರ್ಚೆಯೂ ನಡೆಯುತ್ತಿದೆ. ಮತ್ತೊಂದೆಡೆ ಹುಮಾ ಖುರೇಷಿ ಮತ್ತು ತಾರಾ ಸುತಾರಿಯಾ ತಲಾ 2ರಿಂದ 3 ಕೋಟಿ ರೂ. ಪಡೆದಿದ್ದಾರೆ ಎಂದು ವರದಿಗಳು ಹೇಳುತ್ತಿವೆ.

ಈ ಮೊತ್ತಗಳೆಲ್ಲವೂ ಸದ್ಯ ಮಾಧ್ಯಮ ವರದಿಗಳಲ್ಲಷ್ಟೇ ಕಾಣಿಸಿಕೊಂಡಿದ್ದು, ‘ಟಾಕ್ಸಿಕ್’ ಚಿತ್ರತಂಡದಿಂದ ಅಧಿಕೃತವಾಗಿ ಯಾವುದೇ ಸಂಭಾವನೆ ವಿವರ ಬಹಿರಂಗವಾಗಿಲ್ಲ. ಹೀಗಾಗಿ ವರದಿಯಾಗಿರುವ ಮೊತ್ತಗಳು ನಿಖರವೇ ಎಂಬುದು ಸ್ಪಷ್ಟವಾಗಿಲ್ಲ.

ಚಿತ್ರವು ಈ ಹಿಂದೆ ಮಾರ್ಚ್ 19ರಂದು ಬಿಡುಗಡೆಯಾಗಬೇಕಿತ್ತು. ನಂತರ ಜೂನ್ 4ಕ್ಕೆ ಮುಂದೂಡಲಾಗಿತ್ತು. ಇದೀಗ ಆಗಸ್ಟ್ 26ರಂದು ಜಾಗತಿಕ ಮಟ್ಟದಲ್ಲಿ ಬಿಡುಗಡೆಯಾಗಲು ಸಜ್ಜಾಗಿದೆ. ಯಶ್ ಅವರ ದ್ವಿಪಾತ್ರ, ಭರ್ಜರಿ ತಾರಾಗಣ ಮತ್ತು ಟ್ರೇಲರ್‌ನಲ್ಲಿನ ಆಕ್ಷನ್ ದೃಶ್ಯಗಳು ಚಿತ್ರದ ಮೇಲಿನ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿವೆ.

ಅದಾನಿ ಕಂಪನಿಗೆ ಅಮೆರಿಕದಲ್ಲಿ ಬಿಗ್ ರಿಲೀಫ್: ಕ್ರಿಮಿನಲ್ ಆರೋಪ ಕೈಬಿಟ್ಟ ನ್ಯಾಯಾಲಯ

ವಾಷಿಂಗ್ಟನ್/ನವದೆಹಲಿ: ಅದಾನಿ ಸಮೂಹದ ಅಧ್ಯಕ್ಷ ಗೌತಮ್ ಅದಾನಿ ಹಾಗೂ ಸಾಗರ್ ಅದಾನಿ ಅವರಿಗೆ ಅಮೆರಿಕದ ನ್ಯಾಯಾಲಯದಲ್ಲಿ ಬಿಗ್ ರಿಲೀಫ್ ದೊರೆತಿದೆ. ಭಾರತೀಯ ಸರ್ಕಾರಿ ಅಧಿಕಾರಿಗಳಿಗೆ ಲಂಚ ನೀಡುವ ಪಿತೂರಿ ಹಾಗೂ ಅಮೆರಿಕದ ಹೂಡಿಕೆದಾರರನ್ನು ವಂಚಿಸಿದ ಆರೋಪಗಳಿಗೆ ಸಂಬಂಧಿಸಿದ ಕ್ರಿಮಿನಲ್ ಪ್ರಕರಣವನ್ನು ಅಮೆರಿಕದ ಈಸ್ಟರ್ನ್ ಡಿಸ್ಟ್ರಿಕ್ಟ್ ಆಫ್ ನ್ಯೂಯಾರ್ಕ್‌ನ ಜಿಲ್ಲಾ ನ್ಯಾಯಾಧೀಶ ನಿಕೋಲಸ್ ಗರೌಫಿಸ್ ವಜಾಗೊಳಿಸಿದ್ದಾರೆ. ಪ್ರಕರಣ ವಜಾಗೊಳಿಸುವಂತೆ ಅಮೆರಿಕದ ನ್ಯಾಯಾಂಗ ಇಲಾಖೆ ಸಲ್ಲಿಸಿದ್ದ ಮನವಿಯನ್ನು ನ್ಯಾಯಾಲಯ ಅಂಗೀಕರಿಸಿದೆ.

ಪ್ರಕರಣದ ಆರಂಭಿಕ ಆರೋಪಗಳ ಪ್ರಕಾರ, ಭಾರತದಲ್ಲಿ ಬೃಹತ್ ಸೌರಶಕ್ತಿ ಒಪ್ಪಂದಗಳನ್ನು ಪಡೆಯಲು ಭಾರತೀಯ ಸರ್ಕಾರಿ ಅಧಿಕಾರಿಗಳಿಗೆ 250 ಮಿಲಿಯನ್ ಡಾಲರ್‌ಗೂ ಅಧಿಕ ಲಂಚ ನೀಡಲು ಪಿತೂರಿ ನಡೆಸಲಾಗಿತ್ತು ಎಂದು ಅಮೆರಿಕದ ಪ್ರಾಸಿಕ್ಯೂಟರ್‌ಗಳು ಆರೋಪಿಸಿದ್ದರು. ಈ ಆರೋಪಗಳನ್ನು ಅದಾನಿ ಹಾಗೂ ಇತರ ಆರೋಪಿಗಳು ನಿರಾಕರಿಸಿದ್ದರು.

ಕೋರ್ಟ್ ತೀರ್ಪನ್ನು ಸ್ವಾಗತಿಸಿದ ಗೌತಮ್ ಅದಾನಿ

ತಮ್ಮ ಮೇಲಿದ್ದ ಕ್ರಿಮಿನಲ್ ಪ್ರಕರಣ ವಜಾಗೊಂಡಿರುವುದನ್ನು ಗೌತಮ್ ಅದಾನಿ ಸ್ವಾಗತಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಅವರು, ನ್ಯಾಯಾಂಗ ಪ್ರಕ್ರಿಯೆಯ ಮೇಲಿನ ಗೌರವವನ್ನು ವ್ಯಕ್ತಪಡಿಸಿದ್ದಾರೆ.

ಕಠಿಣ ಪರಿಸ್ಥಿತಿಯಲ್ಲಿಯೂ ಸತ್ಯ, ನ್ಯಾಯ ಮತ್ತು ಕಾನೂನಿನ ಮೇಲಿನ ತಮ್ಮ ನಂಬಿಕೆ ಅಚಲವಾಗಿತ್ತು ಎಂದು ಅವರು ಹೇಳಿದ್ದಾರೆ. ತಮ್ಮ ಮೇಲೆ, ವ್ಯವಸ್ಥೆಯ ಮೇಲೆ ಹಾಗೂ ಭಾರತದ ನ್ಯಾಯ ಒದಗಿಸುವ ಸಾಮರ್ಥ್ಯದ ಮೇಲೆ ನಂಬಿಕೆ ಇಟ್ಟ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿರುವ ಅದಾನಿ, ದೇಶ ನಿರ್ಮಾಣ, ಜಾಗತಿಕ ಮೌಲ್ಯ ಸೃಷ್ಟಿ ಹಾಗೂ ಮಹತ್ತರ ಉದ್ದೇಶಗಳಿಗಾಗಿ ತಮ್ಮ ಸೇವೆ ಮುಂದುವರಿಯಲಿದೆ ಎಂದು ತಿಳಿಸಿದ್ದಾರೆ.

ಪ್ರಕರಣ ಕೈಬಿಡಲು ಕಾರಣವೇನು?

ಅಮೆರಿಕದ ನ್ಯಾಯಾಂಗ ಇಲಾಖೆ ಪ್ರಕರಣವನ್ನು ಮುಂದುವರಿಸದಿರಲು ಕಾನೂನು ಹಾಗೂ ಪ್ರಾಯೋಗಿಕ ಕಾರಣಗಳನ್ನು ಮುಂದಿಟ್ಟಿತ್ತು. ಪ್ರಕರಣದ ಆರೋಪಗಳು ಭಾರತದಲ್ಲಿ ನಡೆದಿರುವ ಚಟುವಟಿಕೆಗಳಿಗೆ ಸಂಬಂಧಿಸಿದ್ದರಿಂದ ಅಮೆರಿಕದ ನ್ಯಾಯವ್ಯಾಪ್ತಿಯ ಪ್ರಶ್ನೆ ಹಾಗೂ ಪ್ರಕರಣವನ್ನು ಸಾಬೀತುಪಡಿಸುವಲ್ಲಿನ ಸವಾಲುಗಳನ್ನು DOJ ಉಲ್ಲೇಖಿಸಿತ್ತು.

ಅದಾನಿ ಸಮೂಹವು ಅಮೆರಿಕದಲ್ಲಿ ದೊಡ್ಡ ಮೊತ್ತದ ಹೂಡಿಕೆ ಮಾಡುವ ಭರವಸೆ ನೀಡಿದ್ದರಿಂದಲೇ ಪ್ರಕರಣವನ್ನು ಕೈಬಿಡಲಾಗಿದೆ ಎಂಬ ವರದಿಗಳನ್ನೂ ಅಮೆರಿಕದ ನ್ಯಾಯಾಂಗ ಇಲಾಖೆ ತಳ್ಳಿಹಾಕಿದೆ. ಪ್ರಕರಣದ ಕಾನೂನು ಸ್ಥಿರತೆ ಹಾಗೂ ನ್ಯಾಯವ್ಯಾಪ್ತಿಗೆ ಸಂಬಂಧಿಸಿದ ಕಾರಣಗಳೇ ನಿರ್ಧಾರಕ್ಕೆ ಕಾರಣವಾಗಿವೆ ಎಂದು ಇಲಾಖೆ ವಾದಿಸಿದೆ.

ಏನಿದು ಅದಾನಿ ಪ್ರಕರಣ?

2024ರ ನವೆಂಬರ್‌ನಲ್ಲಿ ಅಮೆರಿಕದ ನ್ಯಾಯಾಂಗ ಇಲಾಖೆ ಗೌತಮ್ ಅದಾನಿ, ಸಾಗರ್ ಅದಾನಿ ಸೇರಿದಂತೆ ಹಲವು ಉದ್ಯಮಿಗಳ ವಿರುದ್ಧ ಕ್ರಿಮಿನಲ್ ಆರೋಪ ದಾಖಲಿಸಿತ್ತು. ಭಾರತದಲ್ಲಿ ಸರ್ಕಾರಿ ಸಂಸ್ಥೆಗಳಿಂದ ಸೌರಶಕ್ತಿ ಒಪ್ಪಂದಗಳನ್ನು ಪಡೆಯಲು 250 ಮಿಲಿಯನ್ ಡಾಲರ್‌ಗೂ ಅಧಿಕ ಲಂಚ ನೀಡುವ ಯೋಜನೆ ರೂಪಿಸಲಾಗಿತ್ತು ಎಂಬುದು ಪ್ರಮುಖ ಆರೋಪವಾಗಿತ್ತು.

ಈ ಲಂಚದ ಆರೋಪವನ್ನು ಮರೆಮಾಚಿ ಅಮೆರಿಕದ ಹೂಡಿಕೆದಾರರು ಹಾಗೂ ಜಾಗತಿಕ ಹಣಕಾಸು ಸಂಸ್ಥೆಗಳಿಂದ ಕೋಟ್ಯಂತರ ಡಾಲರ್‌ಗಳನ್ನು ಸಂಗ್ರಹಿಸಲು ತಪ್ಪು ಅಥವಾ ದಾರಿ ತಪ್ಪಿಸುವ ಮಾಹಿತಿಯನ್ನು ನೀಡಲಾಗಿತ್ತು ಎಂಬ ಆರೋಪವೂ ಪ್ರಕರಣದಲ್ಲಿತ್ತು.

ಅಮೆರಿಕದ ಪ್ರಾಸಿಕ್ಯೂಟರ್‌ಗಳ ಪ್ರಕಾರ, ಸಂಬಂಧಿತ ಕಂಪನಿಗಳು ಭ್ರಷ್ಟಾಚಾರ ವಿರೋಧಿ ನಿಯಮಗಳನ್ನು ಪಾಲಿಸುತ್ತಿವೆ ಎಂದು ಹೂಡಿಕೆದಾರರಿಗೆ ತಪ್ಪು ಮಾಹಿತಿ ನೀಡಲಾಗಿತ್ತು. ಇದರ ಆಧಾರದ ಮೇಲೆ ಅಮೆರಿಕದ ಮಾರುಕಟ್ಟೆಯಿಂದ ಸಾಲ ಹಾಗೂ ಬಾಂಡ್‌ಗಳ ಮೂಲಕ ಶತಕೋಟಿ ಡಾಲರ್‌ಗಳಷ್ಟು ಹಣ ಸಂಗ್ರಹಿಸಲಾಗಿದೆ ಎಂಬ ಆರೋಪ ಮಾಡಲಾಗಿತ್ತು.

ಪ್ರಕರಣಕ್ಕೆ ಸಂಪೂರ್ಣ ತೆರೆ

ಅಮೆರಿಕದ ಫೆಡರಲ್ ನ್ಯಾಯಾಲಯವು ಕ್ರಿಮಿನಲ್ ಪ್ರಕರಣವನ್ನು ವಜಾಗೊಳಿಸುವ ಮೂಲಕ ಈ ಹಂತದ ಕಾನೂನು ಹೋರಾಟಕ್ಕೆ ತೆರೆ ಎಳೆದಿದೆ. ಈ ಪ್ರಕರಣದ ಪ್ರತ್ಯೇಕ ನಾಗರಿಕ (civil) ವ್ಯವಹಾರಗಳಲ್ಲಿ ಗೌತಮ್ ಅದಾನಿ ಮತ್ತು ಸಾಗರ್ ಅದಾನಿ ಅವರು ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್‌ಚೇಂಜ್ ಕಮಿಷನ್‌ (SEC) ಜೊತೆ ಒಪ್ಪಂದ ಮಾಡಿಕೊಂಡಿರುವುದು ಪ್ರತ್ಯೇಕ ಬೆಳವಣಿಗೆಯಾಗಿದೆ.