ವಿಜಯಸಾಕ್ಷಿ ಸುದ್ದಿ, ಗದಗ: ದೇಶದ ಗಡಿಯಲ್ಲಿ ಮಳೆ, ಗಾಳಿ, ಬಿಸಿಲು, ಚಳಿ ಎನ್ನದೆ ದೇಶದ ಭದ್ರತೆಗಾಗಿ ಹಗಲಿರುಳು ಕರ್ತವ್ಯ ನಿರ್ವಹಿಸುವ ಭಾರತೀಯ ಯೋಧರ ಸೇವೆ ಅವಿಸ್ಮರಣೀಯ ಎಂದು ಗದಗ ಜಿಲ್ಲಾ ರೆಡ್ಕ್ರಾಸ್ ಸಂಸ್ಥೆಯ ಸಭಾಪತಿ ಡಾ. ಆರ್.ಎನ್. ಗೋಡಬೋಲೆ ಹೇಳಿದರು.
ನಗರದ ಮಹಾತ್ಮಾ ಗಾಂಧಿ ವೃತ್ತದಲ್ಲಿ ಭಾನುವಾರ ಗದಗ ಜಿಲ್ಲಾ ಮಾಜಿ ಸೈನಿಕರ ಸಂಘ, ಮಾಜಿ ಹಾಗೂ ಹಾಲಿ ಪ್ಯಾರಾಮಿಲಿಟರಿ ಯೋಧರ ಕಲ್ಯಾಣ ಸಂಘ ಹಾಗೂ ವೀರನಾರಿಯರ ಸಂಘದ ಸಂಯುಕ್ತ ಆಶ್ರಯದಲ್ಲಿ ನಡೆದ 27ನೇ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಭಾರತೀಯ ಸೈನಿಕರು ದೇಶದ ಹೆಮ್ಮೆ. ಅವರ ತ್ಯಾಗ, ಸಾಹಸ ಮತ್ತು ದೇಶಭಕ್ತಿಗೆ ಪ್ರತಿಯೊಬ್ಬ ನಾಗರಿಕರೂ ಗೌರವ ಸಲ್ಲಿಸಬೇಕು. ಕಾರ್ಗಿಲ್ ಯುದ್ಧದಲ್ಲಿ ವೀರಮರಣ ಹೊಂದಿದ ಯೋಧರ ತ್ಯಾಗವನ್ನು ಎಂದಿಗೂ ಮರೆಯಬಾರದು ಎಂದು ಅವರು ಹೇಳಿದರು.
ಹಾಲಿ ಹಾಗೂ ಮಾಜಿ ಪ್ಯಾರಾಮಿಲಿಟರಿ ಯೋಧರ ಸಂಘದ ಅಧ್ಯಕ್ಷ ನಾಗರಾಜ ಕುಂದರಗಿ ಮಾತನಾಡಿ, ಸೈನಿಕರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ದೇಶದ ಗಡಿಯನ್ನು ಕಾಪಾಡುತ್ತಿದ್ದಾರೆ. ಕಾರ್ಗಿಲ್ ವಿಜಯೋತ್ಸವ ಹಾಗೂ ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ ಹುತಾತ್ಮ ಯೋಧರಿಗೆ ಸರ್ಕಾರ ಹಾಗೂ ಜಿಲ್ಲಾಡಳಿತದಿಂದಲೂ ಅಧಿಕೃತವಾಗಿ ಗೌರವ ಸಲ್ಲಿಸುವ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದು ಒತ್ತಾಯಿಸಿದರು.
ಗದಗ ಜಿಲ್ಲಾ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಗೂಳಯ್ಯ ಮಾಲಗಿತ್ತಿಮಠ, ಉಪಾಧ್ಯಕ್ಷ ಎಸ್.ಆರ್. ಪಾಟೀಲ ಹಾಗೂ ಎಸ್.ಎಸ್. ಪೆಂಟಾ ಕಾರ್ಗಿಲ್ ಯುದ್ಧದ ಘಟನೆಗಳು ಮತ್ತು ಭಾರತೀಯ ಸೇನೆಯ ಶೌರ್ಯವನ್ನು ಸ್ಮರಿಸಿದರು.
ಕಾರ್ಯಕ್ರಮದ ಆರಂಭದಲ್ಲಿ ಮಹಾತ್ಮಾ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಯೋಧರ ಗೌರವಾರ್ಥ ಮೌನಾಚರಣೆ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಮಾಜಿ ಸೈನಿಕರಾದ ಬಿ.ವಿ. ಅಬ್ಬಿಗೇರಿ, ಎ.ಎಂ. ತಹಶೀಲ್ದಾರ, ವಿ.ಬಿ. ಬಿಂಗಿ, ವಿಜಯ ಬಡಿಗೇರ, ಜಿ.ಬಿ. ಅರವಟಗಿಮಠ, ಮಹಮ್ಮದ್ ಹನೀಫ್, ಎಸ್.ಎಫ್. ಹೊನ್ನಪ್ಪನವರ, ಮಲ್ಲಿಕಾರ್ಜುನ, ಮಹೇಶ ಆಶಿ, ಕೆ.ಎಸ್. ಹಿರೇಮಠ, ಎಸ್.ಬಿ. ಸರ್ವಿ, ಎಸ್.ಎಸ್. ವಡ್ಡಿನ, ಮಂಗಲೇಶ ವಸ್ತ್ರದ, ಎಫ್.ಎನ್. ಪಾಟೀಲ, ಹಾಲಿ ಹಾಗೂ ಮಾಜಿ ಪ್ಯಾರಾಮಿಲಿಟರಿ ಯೋಧರ ಸಂಘದ ಬಸಯ್ಯ ಹಿರೇಮಠ, ಈಶ್ವರಪ್ಪ ಕರ್ಕಿಕಟ್ಟಿ, ಪ್ರಭಣ್ಣ ಮಾಕಾಪೂರ, ಮುತ್ತಣ್ಣ, ಬಸಪ್ಪ ಸಂದಿಮನಿ, ಮಲ್ಲಯ್ಯ ಕರವೀರಮಠ, ಶಂಭುಲಿಂಗಯ್ಯ ಹಾದಿಮನಿ, ಅಶೋಕ ಷಡಕ್ಷರಿ, ಅಂದಪ್ಪ ಅಬ್ಬಿಗೇರಿ, ಮಲ್ಲಿಕಾರ್ಜುನ ಮೇವುಂಡಿ, ವೀರನಾರಿಯರಾದ ಶಿವಲೀಲಾ ಬಾವಿಕಟ್ಟಿ, ಮೀನಾಕ್ಷಿ ಬಡಿ, ರೇಣುಕಾ ಮರಡಿ, ಗೀತಾ ಪೂಜಾರ, ಶಿವಲೀಲಾ ಚಿಗರಿ, ಇಂದಿರಾ ಹೆಬಸೂರ ಸೇರಿದಂತೆ ಪೊಲೀಸರು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.
“ಮಳೆ, ಗಾಳಿ, ಬಿಸಿಲು, ಚಳಿ ಎನ್ನದೆ ದೇಶದ ಗಡಿಯಲ್ಲಿ ಕರ್ತವ್ಯ ನಿರ್ವಹಿಸುವ ಭಾರತೀಯ ಯೋಧರ ಸೇವೆ ಸದಾ ಸ್ಮರಣೀಯ. ಅವರ ತ್ಯಾಗಕ್ಕೆ ಪ್ರತಿಯೊಬ್ಬರೂ ಗೌರವ ಸಲ್ಲಿಸಬೇಕು.”
– ಡಾ. ಆರ್.ಎನ್. ಗೋಡಬೋಲೆ, ಸಭಾಪತಿ, ಗದಗ ಜಿಲ್ಲಾ ರೆಡ್ಕ್ರಾಸ್ ಸಂಸ್ಥೆ

