ವಿಜಯಸಾಕ್ಷಿ ಸುದ್ದಿ, ಗದಗ: ಅವಳಿ ನಗರದ ಈದ್ ಮಿಲಾದ್ ಕಮಿಟಿ ವತಿಯಿಂದ ಆ. 26ರಂದು ಹಜರತ್ ಮಹಮ್ಮದ್ ಪೈಗಂಬರ್ ಜಯಂತ್ಯುತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಗಿದೆ. ನಗರದ ಉರ್ದು ಸೆಂಟ್ರಲ್ ಸ್ಕೂಲ್ನಲ್ಲಿ ವಿವಿಧ ರಚನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಅಂಜುಮನ್-ಏ-ಇಸ್ಲಾಂ ಕಮಿಟಿ ಸದಸ್ಯ ಬಾಷಾಸಾಬ್ ಮಲ್ಲಸಮುದ್ರ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮದ ನೇತೃತ್ವವನ್ನು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ್ ಬಬರ್ಚಿ ವಹಿಸಲಿದ್ದು, ಜಮಿಯತೆ ಉಲ್ಮಾ ಕಮಿಟಿ ಅಧ್ಯಕ್ಷ ಮೌಲಾನಾ ಇನಾಯಿತುಲ್ಲಾಸಾಬ ಸಾನ್ನಿಧ್ಯ ವಹಿಸಲಿದ್ದಾರೆ. ಮೌಲಾನಾ ಅಬ್ದುಲ್ ರಹೀಂ ಚಂದುನವರ ಪ್ರಾರ್ಥನಾ ಗೀತೆ ಹಾಡಲಿದ್ದಾರೆ ಎಂದರು.
ಮಾಜಿ ಸಚಿವ, ಶಾಸಕ ಡಾ. ಎಚ್.ಕೆ. ಪಾಟೀಲ ಕಾರ್ಯಕ್ರಮ ಉದ್ಘಾಟಿಸಲಿದ್ದು, ಬೆಳಗಾವಿ ಜಮಿಯತೆ ಉಲ್ಮಾ ಜಿಲ್ಲಾ ಕಾರ್ಯದರ್ಶಿ ಹಜರತ್ ಮೌಲಾನಾ ಮಹಮ್ಮದ್ ಆರೀಫ್ಸಾಬ್ ಇನಾಮಿ ಉಪನ್ಯಾಸ ನೀಡಲಿದ್ದಾರೆ. ಎನ್ಡಬ್ಲ್ಯುಆರ್ಟಿಸಿ ಹುಬ್ಬಳ್ಳಿ ಮಾಜಿ ಉಪಾಧ್ಯಕ್ಷ ಪೀರಸಾಬ ಕೌತಾಳ ಬಟ್ಟೆ ವಿತರಿಸಲಿದ್ದಾರೆ. ಆಸೀಫ್ ದಂಡಿನ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಹೇಳಿದರು.
ಜಯಂತ್ಯುತ್ಸವದ ಅಂಗವಾಗಿ ಪಠ್ಯಪುಸ್ತಕ ವಿತರಣೆ, ರಕ್ತದಾನ ಶಿಬಿರ, ಸಾಧಕರಿಗೆ ಸನ್ಮಾನ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಅವಳಿ ನಗರದ ಎಲ್ಲ ಮುಸ್ಲಿಂ ಜಮಾತ್ಗಳ ಮುತವಲ್ಲಿಗಳ ಸಹಯೋಗದಲ್ಲಿ ಮಸೀದಿಗಳ ಮುಅಜ್ಜಿನ್ಗಳಿಗೆ ಒಂದು ಜೊತೆ ಬಟ್ಟೆ ನೀಡಿ ಗೌರವಿಸಲಾಗುವುದು. ಸೂಫಿ ಸಂತರೂ ಸೇರಿದಂತೆ ಗಣ್ಯರನ್ನು ಸ್ಥಳೀಯ ಶಾಸಕರ ಸಮ್ಮುಖದಲ್ಲಿ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲು ನಿರ್ಧರಿಸಲಾಗಿದೆ ಎಂದರು.
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ್ ಬಬರ್ಚಿ ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷವೂ ಪೈಗಂಬರ್ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸಲು ನಿರ್ಧರಿಸಲಾಗಿದೆ. ಆದರೆ ಜಯಂತ್ಯುತ್ಸವದ ಅಂಗವಾಗಿ ಯಾವುದೇ ಡಿಜೆ ಮೆರವಣಿಗೆ ಇರುವುದಿಲ್ಲ. ಸರ್ವಧರ್ಮೀಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಆಸೀಫ್ ದಂಡಿನ, ಯೂಸೂಫ್ ಡಂಬಳ, ಅಹ್ಮದ್ ಖಾಜಿ, ಆರೀಫ್ ಹುನಗುಂದ, ಯೂಸೂಫ್ ಕೊಟ್ಟೂರ, ಕರೀಮ್ ಸುಣಗಾರ, ಅಬೂಬಕರ್ ಅಣ್ಣಿಗೇರಿ, ಯೂಸೂಫ್ ನಮಾಜಿ, ರಝಾ ಡಂಬಳ, ಪಾಷಾ ಕಪಾಲಿ, ಶಮೀರ್ ಜಮಾದಾರ, ಶಬ್ಬಿರ ಅಹ್ಮದ್ಸಾಬ್ ಬೋದ್ಲೆಖಾನ್, ರಾಜು ಪೆಂಡಾರಿ, ಉಸ್ಮಾನ ಮಾಳೆಕೊಪ್ಪ, ಇಬ್ರಾಹಿಂ ಕಿಲ್ಲೇದಾರ, ಯಾಸೀನ್ ಖಾಜಿ ಸೇರಿದಂತೆ ಈದ್ ಮಿಲಾದ್ ಕಮಿಟಿ ಪದಾಧಿಕಾರಿಗಳು ಇದ್ದರು.

