ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡದ ಅನುಭವಿ ಆಲ್ರೌಂಡರ್ ಕೃನಾಲ್ ಪಾಂಡ್ಯ ಇತ್ತೀಚೆಗೆ ಆರ್ಸಿಬಿಯ ಅಧಿಕೃತ ಯೂಟ್ಯೂಬ್ ಚಾನೆಲ್ನ ಪಾಡ್ಕಾಸ್ಟ್ನಲ್ಲಿ ಭಾಗವಹಿಸಿ ತಮ್ಮ ಜೀವನ, ಕ್ರಿಕೆಟ್ ಪಯಣ ಮತ್ತು ಯಶಸ್ಸಿನ ಕುರಿತಾದ ಹಲವು ಆಸಕ್ತಿಕರ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಯಶಸ್ಸು ಮತ್ತು ಸೋಲನ್ನು ಹೇಗೆ ಎದುರಿಸಬೇಕು ಎಂಬ ಬಗ್ಗೆ ಅವರು ಹೇಳಿರುವ ಮಾತುಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.
ಸಂಭಾಷಣೆಯ ವೇಳೆ ಮಾತನಾಡಿದ ಕೃನಾಲ್, “ನಾವು ಸೋತಾಗ ಅಥವಾ ಜೀವನದಲ್ಲಿ ಕಷ್ಟದ ಪರಿಸ್ಥಿತಿಯನ್ನು ಎದುರಿಸಿದಾಗ ಅದರಿಂದ ಹೊರಬರುವುದು ಹೇಗೆ ಎಂದು ಹಲವರು ಸಲಹೆ ನೀಡುತ್ತಾರೆ. ಆದರೆ, ದೊಡ್ಡ ಯಶಸ್ಸು ಸಿಕ್ಕಾಗ ಅದನ್ನು ಹೇಗೆ ನಿಭಾಯಿಸಬೇಕು ಎಂದು ಯಾರೂ ಹೇಳುವುದಿಲ್ಲ.
ಯಶಸ್ಸನ್ನು ಜೀರ್ಣಿಸಿಕೊಳ್ಳುವುದು ಕೂಡ ದೊಡ್ಡ ಸವಾಲು. ಎಷ್ಟೇ ಎತ್ತರಕ್ಕೆ ಬೆಳೆದರೂ ವಿನಮ್ರತೆಯನ್ನು ಉಳಿಸಿಕೊಳ್ಳುವುದು ಅತ್ಯಂತ ಮುಖ್ಯ” ಎಂದು ಹೇಳಿದರು. ತಮ್ಮ ಕ್ರಿಕೆಟ್ ಬದುಕಿನ ಗುರಿಯ ಬಗ್ಗೆ ಮಾತನಾಡಿದ ಅವರು, ವೈಯಕ್ತಿಕ ಸಾಧನೆಗಿಂತ ತಂಡದ ಯಶಸ್ಸಿಗೆ ಹೆಚ್ಚಿನ ಮಹತ್ವ ನೀಡುವುದಾಗಿ ತಿಳಿಸಿದರು.
“ನಾನು ಕ್ರಿಕೆಟ್ನಿಂದ ನಿವೃತ್ತಿಯಾದ ಬಳಿಕ ಎಷ್ಟು ರನ್ ಗಳಿಸಿದ್ದೇನೆ ಎಂಬುದಕ್ಕಿಂತ, ನನ್ನ ತಂಡ ಎಷ್ಟು ಟ್ರೋಫಿಗಳನ್ನು ಗೆದ್ದಿದೆ ಎಂಬುದೇ ನನಗೆ ಹೆಮ್ಮೆ ತರುತ್ತದೆ. ತಂಡದ ಗೆಲುವು ಯಾವಾಗಲೂ ನನ್ನ ಮೊದಲ ಆದ್ಯತೆ” ಎಂದು ಕೃನಾಲ್ ಹೇಳಿದ್ದಾರೆ.
ದೊಡ್ಡ ಪಂದ್ಯಗಳ ಒತ್ತಡವನ್ನು ಹೇಗೆ ನಿಭಾಯಿಸುತ್ತೀರಿ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ದೊಡ್ಡ ವೇದಿಕೆಗಳು ನನಗಾಗಿಯೇ ಸೃಷ್ಟಿಯಾಗಿವೆ ಎಂದು ನಾನು ನಂಬುತ್ತೇನೆ. ಒತ್ತಡದ ಸಂದರ್ಭದಲ್ಲೂ ಶಾಂತವಾಗಿ ಇರುವುದು ಹಾಗೂ ಪ್ರಸ್ತುತ ಕ್ಷಣದ ಮೇಲೆ ಗಮನ ಕೇಂದ್ರೀಕರಿಸುವುದು ಯಶಸ್ಸಿನ ಗುಟ್ಟು. ಹಿರಿಯರ ಆಶೀರ್ವಾದ ಮತ್ತು ದೇವರ ಕೃಪೆಯೇ ನನ್ನನ್ನು ಇಲ್ಲಿಯವರೆಗೆ ತಂದಿದೆ” ಎಂದರು.
ತಮ್ಮ ಸ್ಪರ್ಧಾತ್ಮಕ ಮನೋಭಾವದ ಬಗ್ಗೆ ಮಾತನಾಡಿದ ಕೃನಾಲ್, ಬಾಲ್ಯದಲ್ಲಿ ತಂದೆಯಿಂದ ಕಲಿತ ಶಿಸ್ತು ಮತ್ತು ಛಲವೇ ಇಂದು ತಮ್ಮ ವ್ಯಕ್ತಿತ್ವವನ್ನು ರೂಪಿಸಿದೆ ಎಂದು ನೆನಪಿಸಿಕೊಂಡರು. ಬಾಲ್ಯದ ಕಠಿಣ ಪರಿಶ್ರಮವೇ ವೃತ್ತಿಜೀವನದಲ್ಲಿ ಯಶಸ್ಸು ಸಾಧಿಸಲು ಪ್ರಮುಖ ಕಾರಣವಾಗಿದೆ ಎಂದು ಅವರು ಹೇಳಿದರು.
ಕೃನಾಲ್ ಪಾಂಡ್ಯ ಅವರ ಈ ಮಾತುಗಳು ಕೇವಲ ಕ್ರಿಕೆಟಿಗರಿಗೆ ಮಾತ್ರವಲ್ಲದೆ, ಜೀವನದಲ್ಲಿ ಯಶಸ್ಸಿನ ಕನಸು ಕಾಣುವ ಪ್ರತಿಯೊಬ್ಬ ಯುವಕರಿಗೂ ಪ್ರೇರಣೆಯ ಸಂದೇಶವಾಗಿದೆ. ಯಶಸ್ಸು ಬಂದಾಗ ಅಹಂಕಾರ ಪಡದೆ, ಸೋಲು ಎದುರಾದಾಗ ಆತ್ಮವಿಶ್ವಾಸ ಕಳೆದುಕೊಳ್ಳದೆ ಮುನ್ನಡೆಯುವುದೇ ನಿಜವಾದ ಸಾಧನೆ ಎಂಬ ಸಂದೇಶವನ್ನು ಅವರು ನೀಡಿದ್ದಾರೆ.

