Home Blog

ಹೊರಗಿನ ಸಂಪತ್ತಿಗಿಂತ ಅಂತರಂಗದ ನೆಮ್ಮದಿ ಶ್ರೇಷ್ಠ: ಚನ್ನವೀರ ಮಹಾಸ್ವಾಮಿಗಳು

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಬಹಿರಂಗದ ಸಂಪತ್ತನ್ನು ಗಳಿಸಿಕೊಳ್ಳಲು ಬದುಕಿನಲ್ಲಿ ಹಲವಾರು ದಾರಿಗಳಿವೆ. ಆದರೆ ಮನುಷ್ಯನ ಅಂತರಂಗದಲ್ಲಿ ಶಾಂತಿ, ಸಮಾಧಾನ ಹಾಗೂ ನೆಮ್ಮದಿ ನೆಲೆಸುವುದೇ ನಿಜವಾದ ಸಂಪತ್ತು. ಅದಕ್ಕಾಗಿ ಪ್ರತಿಯೊಬ್ಬರೂ ಪೂಜೆ, ಧ್ಯಾನ, ಪ್ರಾರ್ಥನೆ, ದಾನ ಹಾಗೂ ಧರ್ಮಕಾರ್ಯಗಳನ್ನು ಜೀವನದ ಅವಿಭಾಜ್ಯ ಅಂಗವನ್ನಾಗಿ ರೂಢಿಸಿಕೊಳ್ಳಬೇಕು ಎಂದು ಹೂವಿನಶಿಗ್ಲಿ ಮಠದ ಶ್ರೀ ಚನ್ನವೀರ ಮಹಾಸ್ವಾಮಿಗಳು ಹೇಳಿದರು.

ಶ್ರಾವಣ ಮಾಸದ ನಿಮಿತ್ತ ಬುಧವಾರ ಲಕ್ಷ್ಮೇಶ್ವರದಲ್ಲಿ ಹುಲಗೇರಿ ಬಣದ ಭಕ್ತಗಣ ಆಯೋಜಿಸಿದ್ದ ಇಷ್ಟಲಿಂಗ ಪೂಜಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು, ಇಂದಿನ ಒತ್ತಡದ ಬದುಕಿನಲ್ಲಿ ಮನುಷ್ಯ ಭೌತಿಕ ಸಂಪತ್ತು, ಉದ್ಯೋಗ ಹಾಗೂ ವಿವಿಧ ಚಟುವಟಿಕೆಗಳ ಹಿಂದೆ ಓಡುತ್ತ ಅಂತರಂಗದ ನೆಮ್ಮದಿಯನ್ನು ಕಳೆದುಕೊಳ್ಳುತ್ತಿದ್ದಾನೆ. ನಿತ್ಯದ ಕೆಲಸದ ಒತ್ತಡ, ಜಂಜಾಟ ಹಾಗೂ ಸ್ಪರ್ಧಾತ್ಮಕ ಜೀವನದ ನಡುವೆಯೂ ಧಾರ್ಮಿಕ ಕಾರ್ಯಗಳಿಗೆ ಸಮಯ ಮೀಸಲಿಡುವುದು ಅತ್ಯಂತ ಅಗತ್ಯವಾಗಿದೆ ಎಂದರು.

ಶ್ರಾವಣ ಮಾಸವು ಭಕ್ತಿ, ಧ್ಯಾನ, ಆತ್ಮಚಿಂತನೆ ಹಾಗೂ ಧಾರ್ಮಿಕ ಆಚರಣೆಗಳಿಗೆ ವಿಶೇಷ ಮಹತ್ವ ಹೊಂದಿದೆ. ಇವುಗಳ ಮೂಲಕ ಮನಸ್ಸಿನಲ್ಲಿ ಹೊಸ ಚೈತನ್ಯ ಮೂಡುತ್ತದೆ. ಭಕ್ತಿಯಿಂದ ಲಿಂಗಪೂಜೆ, ಜಪ, ಧ್ಯಾನ ಹಾಗೂ ಪ್ರಾರ್ಥನೆ ಮಾಡುವುದರಿಂದ ಮನಸ್ಸಿನ ಚಂಚಲತೆ ದೂರವಾಗಿ ಆತ್ಮಸ್ಥೈರ್ಯ ಹೆಚ್ಚುತ್ತದೆ. ಬದುಕಿನಲ್ಲಿ ಎದುರಾಗುವ ಕಷ್ಟ-ಸಂಕಷ್ಟಗಳನ್ನು ಸಮಚಿತ್ತದಿಂದ ಎದುರಿಸುವ ಶಕ್ತಿಯೂ ದೊರೆಯುತ್ತದೆ ಎಂದು ಹೇಳಿದರು.

ಇಷ್ಟಲಿಂಗ ಪೂಜೆ ಅಂತರಂಗವನ್ನು ಶುದ್ಧೀಕರಿಸುವ ಸಾಧನವಾಗಿದ್ದು, ಜೀವನದಲ್ಲಿ ಶಿಸ್ತು, ಸದಾಚಾರ, ಸಂಯಮ ಹಾಗೂ ಸಾತ್ವಿಕ ಚಿಂತನೆಯನ್ನು ಬೆಳೆಸುತ್ತದೆ. ಆದ್ದರಿಂದ ಶ್ರಾವಣ ಮಾಸದಲ್ಲಿ ಪ್ರತಿಯೊಬ್ಬರೂ ಸಾಧ್ಯವಾದಷ್ಟು ಧಾರ್ಮಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಮಕ್ಕಳಿಗೂ ಧಾರ್ಮಿಕ ಹಾಗೂ ಸಂಸ್ಕಾರದ ಶಿಕ್ಷಣ ನೀಡುವುದು ಇಂದಿನ ಅಗತ್ಯವಾಗಿದೆ. ತಂದೆ-ತಾಯಿಗಳು ತಮ್ಮ ಮಕ್ಕಳನ್ನು ಕೇವಲ ವಿದ್ಯಾಭ್ಯಾಸ ಮತ್ತು ಭೌತಿಕ ಯಶಸ್ಸಿನತ್ತ ಕೊಂಡೊಯ್ಯದೆ, ಪೂಜೆ, ಪ್ರಾರ್ಥನೆ, ದಾನ, ಧರ್ಮ ಹಾಗೂ ಹಿರಿಯರನ್ನು ಗೌರವಿಸುವ ಸಂಸ್ಕಾರವನ್ನೂ ಬೆಳೆಸಬೇಕು. ಉತ್ತಮ ಸಂಸ್ಕಾರ ಹೊಂದಿದ ಮಕ್ಕಳು ಭವಿಷ್ಯದಲ್ಲಿ ಸಮಾಜದ ಆಸ್ತಿಯಾಗುತ್ತಾರೆ ಎಂದು ಶ್ರೀಗಳು ಹೇಳಿದರು.

ಭೌತಿಕ ಜೀವನದಲ್ಲಿ ಎಷ್ಟೇ ಸಂಪತ್ತು ಗಳಿಸಿದರೂ ಮನಸ್ಸಿಗೆ ನೆಮ್ಮದಿ ಇಲ್ಲದಿದ್ದರೆ ಬದುಕು ಅಪೂರ್ಣವಾಗುತ್ತದೆ. ಆದ್ದರಿಂದ ಹೊರಗಿನ ಸಂಪತ್ತಿನೊಂದಿಗೆ ಅಂತರಂಗದ ಸಂಪತ್ತನ್ನೂ ಗಳಿಸಿಕೊಳ್ಳಬೇಕು. ಭಕ್ತಿ, ಧರ್ಮ ಹಾಗೂ ಸತ್ಕಾರ್ಯಗಳ ಮೂಲಕ ಅಂತರಂಗದ ಸಂಪತ್ತನ್ನು ವೃದ್ಧಿಸಿಕೊಂಡಾಗ ಜೀವನ ಸಾರ್ಥಕವಾಗುತ್ತದೆ ಎಂದು ಶ್ರೀ ಚನ್ನವೀರ ಮಹಾಸ್ವಾಮಿಗಳು ಆಶೀರ್ವದಿಸಿದರು.

ಸೋಮೇಶ್ವರ ಭಕ್ತರ ಟ್ರಸ್ಟ್ ಅಧ್ಯಕ್ಷ ಗುರುರಾಜ ಪಾಟೀಲ ಕುಲಕರ್ಣಿ, ಶಂಕರ ಬಾಳಿಕಾಯಿ, ದೇವಣ್ಣ ತೋಟದ, ಎಸ್.ಎಫ್. ಆದಿ, ಬಸವರಾಜ ಮೆಣಸಿನಕಾಯಿ, ವಿರೂಪಾಕ್ಷ ಆದಿ, ಬಸವರಾಜ ಅಣ್ಣಿಗೇರಿ, ಜಿ.ಎಸ್. ಗುಡಗೇರಿ, ಕಾಶಪ್ಪ ಮುಳಗುಂದ, ಮಯೂರಗೌಡ ಪಾಟೀಲ, ಸುರೇಶ ಚೌಕನವರ, ಶಂಕರಪ್ಪ ಆದಿ ಸೇರಿದಂತೆ ಭಕ್ತರು ಶ್ರಾವಣ ಮಾಸದ ಇಷ್ಟಲಿಂಗ ಪೂಜಾ ಕಾರ್ಯಕ್ರಮದಲ್ಲಿ ಶ್ರದ್ಧಾಭಕ್ತಿಯಿಂದ ಪಾಲ್ಗೊಂಡು ಪೂಜೆ ಸಲ್ಲಿಸಿದರು.

ಜಿಲ್ಲಾ ಮಟ್ಟದ ಮುಕ್ತ ಯೋಗಾಸನ ಸ್ಪರ್ಧೆಯಲ್ಲಿ ಸಾಹಿತ್ಯ ಜಾಧವ ಸಾಧನೆ

0

ವಿಜಯಸಾಕ್ಷಿ ಸುದ್ದಿ, ಗದಗ: ನಿಸರ್ಗ ಯೋಗ ಸೆಂಟರ್, ಧಾರವಾಡ ಹಾಗೂ ಕಿಟಲ್ ಕಲಾ ಮಹಾವಿದ್ಯಾಲಯ, ಧಾರವಾಡ ಇವರ ಸಹಯೋಗದಲ್ಲಿ ಇತ್ತೀಚೆಗೆ ನಡೆದ ಜಿಲ್ಲಾ ಮಟ್ಟದ ಮುಕ್ತ ಯೋಗಾಸನ ಸ್ಪರ್ಧೆಯಲ್ಲಿ ಸಿದ್ಧಲಿಂಗನಗರದ ಬಸವೇಶ್ವರ ಹಿರಿಯ ಪ್ರಾಥಮಿಕ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಸಾಹಿತ್ಯ ಕೆ. ಜಾಧವ ಉತ್ತಮ ಸಾಧನೆ ಮಾಡಿದ್ದಾರೆ.

೮ರಿಂದ ೧೨ ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ಸ್ಪರ್ಧಿಸಿದ ಸಾಹಿತ್ಯ ಜಾಧವ ಅವರು ಆರನೇ ಸ್ಥಾನ ಪಡೆದು ಗಮನಾರ್ಹ ಸಾಧನೆ ಮಾಡಿದ್ದಾರೆ.

ಯೋಗಾಸನ ಸ್ಪರ್ಧೆಯಲ್ಲಿ ಯಶಸ್ಸು ಸಾಧಿಸಿದ ಸಾಹಿತ್ಯ ಜಾಧವ ಅವರನ್ನು ಶಾಲೆಯ ಮುಖ್ಯೋಪಾಧ್ಯಾಯಿನಿ ಲತಾ ಕಾಲವಾಡ, ಶಿವಾನಂದ ಗಿಡ್ಡಕೆಂಚಣ್ಣವರ, ದೈಹಿಕ ಶಿಕ್ಷಣ ಶಿಕ್ಷಕ ಎಸ್.ಎಂ. ಬುರಡಿ, ಪಾಲಕರಾದ ಮಾಲಾಶ್ರೀ ಹಾಗೂ ಕೃಷ್ಣಾಜಿ ಜಾಧವ ಮತ್ತು ಯೋಗಾಸನ ಕ್ರೀಡಾಭಿಮಾನಿಗಳು ಅಭಿನಂದಿಸಿದ್ದಾರೆ.

ಮುಂದಿನ ದಿನಗಳಲ್ಲಿಯೂ ಇನ್ನಷ್ಟು ಉನ್ನತ ಸಾಧನೆ ಮಾಡುವಂತಾಗಲಿ ಎಂದು ಶುಭ ಹಾರೈಸಿದ್ದಾರೆ.

‘ನಾನು, ನನ್ನದು’ ಎಂಬ ಅಹಂಕಾರವೇ ನೆಮ್ಮದಿ ಕಸಿಯುತ್ತದೆ: ಡಾ. ರಾಜಶೇಖರ ದಾನರಡ್ಡಿ

0

ವಿಜಯಸಾಕ್ಷಿ ಸುದ್ದಿ, ಗದಗ: ‘ನಾನು… ನನ್ನದು… ನಾನು ಮಾಡಿದೆ…’ ಎಂಬ ಅಹಂಕಾರದ ಭಾವನೆಯೇ ಮನುಷ್ಯನ ಬದುಕಿನ ನೆಮ್ಮದಿಯನ್ನು ಕಸಿದುಕೊಳ್ಳುತ್ತದೆ. ತನು, ಮನ, ಧನ, ಮನೆ, ಸತಿ-ಸುತರ ಮೇಲಿನ ಅತಿಯಾದ ಮಮಕಾರವನ್ನು ಮೀರಿ, ಎಲ್ಲವೂ ಭಗವಂತನ ಕೃಪೆ ಎಂಬ ಸಮರ್ಪಣಾ ಭಾವದಿಂದ ಬದುಕಿದಾಗ ಮಾತ್ರ ಜೀವನದಲ್ಲಿ ನಿಜವಾದ ಸುಖ, ಸಂತೋಷ ಮತ್ತು ನೆಮ್ಮದಿ ಕಾಣಲು ಸಾಧ್ಯ ಎಂದು ಪಂಡಿತ ಪುಟ್ಟರಾಜ ಗವಾಯಿಗಳ ಕಲಾ ಮಹಾವಿದ್ಯಾಲಯದ ಸಹ ಪ್ರಾಧ್ಯಾಪಕ ಡಾ. ರಾಜಶೇಖರ ದಾನರಡ್ಡಿ ಹೇಳಿದರು.

ಎಸ್‌ವೈಬಿಎಂಎಸ್ ಯೋಗಪಾಠಶಾಲೆ, ಗದಗ, ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ವಚನಪಾಠಶಾಲೆ ಹಾಗೂ ಸಿದ್ಧಲಿಂಗನಗರದ ಅಕ್ಕಮಹಾದೇವಿ ಯೋಗ ವಿಜ್ಞಾನ ಕೇಂದ್ರದ ಸಹಯೋಗದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಆಯೋಜಿಸಿರುವ ಸಾಪ್ತಾಹಿಕ ವಚನ ಶ್ರಾವಣ-೨೦೨೬ ಕಾರ್ಯಕ್ರಮದ ಮೂರನೇ ಶ್ರಾವಣ ಸೋಮವಾರದ ಅಂಗವಾಗಿ ಅವರು ಷಣ್ಮುಖಸ್ವಾಮಿಯವರ ವಚನದ ಭಾವಾರ್ಥವನ್ನು ವಿಶ್ಲೇಷಿಸಿ ಮಾತನಾಡಿದರು.

ಮಾನವ ಮೂಲತಃ ಅಹಂಕಾರದ ಜೀವಿಯಾಗಿದ್ದು, ನಾನು, ನನ್ನದು, ನಾನು ಮಾಡಿದೆ ಎಂಬ ಭಾವದಿಂದ ಮೆರೆಯುತ್ತಾನೆ. ಆದರೆ ಈ ಅಹಂಕಾರ ಶಾಶ್ವತವಾದುದಲ್ಲ. ತಾನು ಕಟ್ಟಿಸಿದ ಮನೆ ಹಾಳಾದಾಗ, ಗಳಿಸಿದ ಸಂಪತ್ತು ಕಳೆದುಹೋದಾಗ ಅಥವಾ ಬದುಕಿನಲ್ಲಿ ಸಂಕಷ್ಟಗಳು ಎದುರಾದಾಗ ಇದೇ ಮನುಷ್ಯ ದುಃಖಕ್ಕೆ ಒಳಗಾಗುತ್ತಾನೆ ಎಂದು ಹೇಳಿದರು.

ನಾನಿರುವುದು ಭಗವಂತನ ಕೃಪೆಯಿಂದ. ನಾನು ಮಾಡುವ ಪ್ರತಿಯೊಂದು ಕಾರ್ಯವೂ ದೇವರಿಗಾಗಿ, ಅಂದರೆ ಸಮಾಜದ ಒಳಿತಿಗಾಗಿ ಎಂಬ ಮನೋಭಾವದಿಂದ ಬದುಕಬೇಕು. ನಮ್ಮೊಳಗಿನ ಅಹಂಕಾರ ಕರಗಿ ಸಮರ್ಪಣಾ ಭಾವ ಮೂಡಿದಾಗ ಮಾತ್ರ ನಿಜವಾದ ಸಂತೋಷದ ಬದುಕು ಸಾಧ್ಯವಾಗುತ್ತದೆ ಎಂದು ಹೇಳಿದರು.

ಮುಖ್ಯ ಅತಿಥಿಯಾಗಿದ್ದ ಡಿಜಿಎಂ ಆಯುರ್ವೇದ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಡಾ. ಜಿ.ಎಸ್. ಹಿರೇಮಠ ಮಾತನಾಡಿ, ಹಿಂದೆ ನಿರ್ದಿಷ್ಟ ಕಾಯಕಗಳನ್ನು ನಿರ್ದಿಷ್ಟ ವರ್ಗದವರೇ ಮಾಡಬೇಕು ಎಂಬ ಸಂಪ್ರದಾಯ ರೂಢಿಯಲ್ಲಿತ್ತು. ಆದರೆ ಇಂದು ಯಾವುದೇ ಕಾಯಕವನ್ನು ಯಾರು ಬೇಕಾದರೂ ಮಾಡಬಹುದಾಗಿದೆ. ಮಾಡುವ ಕಾಯಕದಲ್ಲಿ ಶ್ರದ್ಧೆ ಇರಬೇಕು ಹಾಗೂ ನಮ್ಮ ಕಾರ್ಯ ಇತರರಿಗೆ ಮಾರ್ಗದರ್ಶನವಾಗುವಂತಿರಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಕೃಷಿ ವಿಜ್ಞಾನಿ ಡಾ. ಎಸ್.ಕೆ. ನಾಲ್ವತವಾಡಮಠ ಮಾತನಾಡಿ, ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿಯೂ ಇಂದು ಸ್ವಾರ್ಥ ಮನೋಭಾವ ಹೆಚ್ಚುತ್ತಿದೆ. ಸ್ವಾರ್ಥತೆಯನ್ನು ಬಿಟ್ಟು ಎಲ್ಲರೂ ಒಗ್ಗಟ್ಟಿನಿಂದ ಸಮರ್ಪಣಾ ಭಾವದಿಂದ ಶ್ರಮಿಸಿದರೆ ದೇಶ ಇನ್ನಷ್ಟು ವೇಗವಾಗಿ ಪ್ರಗತಿಯ ಪಥದಲ್ಲಿ ಮುನ್ನಡೆಯಲಿದೆ ಎಂದು ಅಭಿಪ್ರಾಯಪಟ್ಟರು.

ವೇದಿಕೆಯಲ್ಲಿ ಅಕ್ಕಮಹಾದೇವಿ ಯೋಗ ವಿಜ್ಞಾನ ಕೇಂದ್ರದ ಗೌರವಾಧ್ಯಕ್ಷೆ ಅನ್ನಪೂರ್ಣಕ್ಕ ವರವಿ, ಅಧ್ಯಕ್ಷೆ ವಿಜಯಲಕ್ಷ್ಮೀ ಆನೆಹೊಸೂರ ಹಾಗೂ ಬಸವ ಯೋಗ ಮಹಾವಿದ್ಯಾಲಯದ ಪ್ರಾಚಾರ್ಯ ಕೆ.ಎಸ್. ಪಲ್ಲೇದ ಉಪಸ್ಥಿತರಿದ್ದು, ಕಾರ್ಯಕ್ರಮದ ಸೇವಾಕರ್ತರನ್ನು ಗೌರವಿಸಿದರು.

ವಿಶೇಷವಾಗಿ ಸುನಂದಾ ಜ್ಞಾನೋಪಂತರ ಹಾಗೂ ಚಂದ್ರಕಲಾ ಸ್ಥಾವರಮಠ ಅವರಿಂದ ವಚನ ಸಂಗೀತ ಕಾರ್ಯಕ್ರಮ ನಡೆಯಿತು. ಯೋಗಪಾಠಶಾಲೆ, ವಚನಪಾಠಶಾಲೆ ಹಾಗೂ ಯೋಗ ವಿಜ್ಞಾನ ಕೇಂದ್ರದ ಸದಸ್ಯರು ಸೇರಿದಂತೆ ಗಣ್ಯರು ಪಾಲ್ಗೊಂಡಿದ್ದರು.

ಪ್ರಾರಂಭದಲ್ಲಿ ಸಂಗೀತ ನಾಕೋಡ ಸಾಮೂಹಿಕ ಬಸವ ಪ್ರಾರ್ಥನೆ ನಡೆಸಿಕೊಟ್ಟರು. ಅರುಣಾ ಇಂಗಳಳ್ಳಿ ಸ್ವಾಗತಿಸಿದರು. ಶಾಂತಾ ಮುಂದಿನಮನಿ ಧರ್ಮಗ್ರಂಥ ಪಠಣ ಮಾಡಿದರು. ಬಸವರಾಜ ತೋಟಿಗೇರ ಸಂವಿಧಾನವನ್ನು ಓದಿ ತಿಳಿಸಿದರು. ಅಕ್ಕಮಹಾದೇವಿ ಯೋಗ ವಿಜ್ಞಾನ ಕೇಂದ್ರದ ಕಾರ್ಯದರ್ಶಿ ಸುಲೋಚನಾ ಐಹೊಳೆ ಕಾರ್ಯಕ್ರಮ ನಿರೂಪಿಸಿದರು.

ತನು, ಮನ, ಧನ, ಮನೆ ಎಂಬ ಮಮಕಾರವನ್ನು ಮೀರಿ, ಎಲ್ಲವೂ ಭಗವಂತನ ಕೃಪೆ ಎಂಬ ಸಮರ್ಪಣಾ ಭಾವದಿಂದ ಬದುಕಿದರೆ ಅಹಂಕಾರ ಕರಗಿ ಜೀವನದಲ್ಲಿ ನಿಜವಾದ ಸುಖ ಮತ್ತು ನೆಮ್ಮದಿ ದೊರೆಯುತ್ತದೆ.

— ಡಾ. ರಾಜಶೇಖರ ದಾನರಡ್ಡಿ, ಸಹ ಪ್ರಾಧ್ಯಾಪಕ

ಮಕ್ಕಳು ಆತ್ಮವಿಶ್ವಾಸದಿಂದ ಶೈಕ್ಷಣಿಕ ಸಾಧನೆಯತ್ತ ಮುನ್ನಡೆಯಲಿ: ಅನ್ನಪೂರ್ಣ ವರವಿ

0

ವಿಜಯಸಾಕ್ಷಿ ಸುದ್ದಿ, ಗದಗ: ಆತ್ಮವಿಶ್ವಾಸವು ವ್ಯಕ್ತಿಯಲ್ಲಿ ಇತರರೊಂದಿಗೆ ಬೆರೆಯುವ ಗುಣ, ಸ್ವಯಂಪ್ರೇರಣೆ, ಕಲಿಕೆಯ ಆಸಕ್ತಿ, ಅನ್ವೇಷಣಾ ಪ್ರವೃತ್ತಿ, ಪ್ರಶ್ನಿಸುವ ಮನೋಭಾವ ಹಾಗೂ ಸೃಜನಶೀಲ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಆದ್ದರಿಂದ ಮಕ್ಕಳು ಆತ್ಮವಿಶ್ವಾಸದಿಂದ ಶೈಕ್ಷಣಿಕ ಸಾಧನೆಯತ್ತ ಮುನ್ನಡೆಯಬೇಕು ಎಂದು ಚಿಂತಕಿ ಅನ್ನಪೂರ್ಣ ವರವಿ ಹೇಳಿದರು.

ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ. ೧೫ರಲ್ಲಿ ಗದಗ ಜಿಲ್ಲಾ ಶರಣ ಸಂಕುಲದ ಶರಣೆ ಅಕ್ಕಮಹಾದೇವಿಯ ಕದಳಿಶ್ರೀ ವೇದಿಕೆ ವತಿಯಿಂದ ಪ್ರತಿವರ್ಷ ಶ್ರಾವಣ ಮಾಸದಲ್ಲಿ ಆಯೋಜಿಸಲಾಗುವ ‘ಅಮೃತಭೋಜನ-ಜ್ಞಾನ ಸಿಂಚನ’ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಸಿಹಿ ಭೋಜನ ಹಾಗೂ ಕಲಿಕಾ ಸಾಮಗ್ರಿಗಳನ್ನು ವಿತರಿಸಿ ಅವರು ಮಾತನಾಡಿದರು.

ಇಂದಿನ ಸ್ಪರ್ಧಾತ್ಮಕ ಹಾಗೂ ತಂತ್ರಜ್ಞಾನ ಯುಗದಲ್ಲಿ ಮಕ್ಕಳು ಪೈಪೋಟಿಯನ್ನು ಸಮರ್ಥವಾಗಿ ಎದುರಿಸುವ ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು. ಶೈಕ್ಷಣಿಕ ಸಾಧನೆಗಳಲ್ಲಿ ಮುನ್ನಡೆ ಸಾಧಿಸಲು ಆತ್ಮವಿಶ್ವಾಸವೇ ಯಶಸ್ಸಿನ ಮುನ್ನುಡಿಗೆ ಪ್ರೇರಣೆಯಾಗಲಿದೆ ಎಂದು ಹೇಳಿದರು.

ಮಕ್ಕಳಿಗೆ ಸಿಹಿ ವಿತರಿಸಿದ ಶಾಲೆಯ ಎಸ್‌ಡಿಎಂಸಿ ಸದಸ್ಯ ಶ್ರೀನಿವಾಸ ಬೇವಿನಕಟ್ಟಿ ಮಾತನಾಡಿ, ಉತ್ತಮ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಬದುಕು ಸುಂದರವಾಗುತ್ತದೆ. ಮಹಾತ್ಮ ಗಾಂಧಿ, ಡಾ. ಬಿ.ಆರ್. ಅಂಬೇಡ್ಕರ್, ಬುದ್ಧ ಹಾಗೂ ಬಸವಣ್ಣನವರಂತಹ ಮಹನೀಯರ ಚಿಂತನೆಗಳು ಜೀವನಕ್ಕೆ ಪ್ರೇರಣೆ ನೀಡುತ್ತವೆ. ಆದ್ದರಿಂದ ಮಕ್ಕಳು ಹಿರಿಯರು ಹಾಗೂ ದಾರ್ಶನಿಕರ ನಡೆ-ನುಡಿಗಳನ್ನು ಮನನ ಮಾಡಿಕೊಳ್ಳಬೇಕು ಎಂದರು.

ನಿವೃತ್ತ ಶಿಕ್ಷಕಿ ಸುವರ್ಣ ಗುರಮ್ಮನವರ ಅವರು ಮಕ್ಕಳಿಗೆ ಗಾದೆಮಾತುಗಳ ಕುರಿತು ತಿಳುವಳಿಕೆ ನೀಡಿದರು. ಹಿರಿಯರ ಅನುಭವದ ಸಾರವೇ ಗಾದೆಮಾತುಗಳಾಗಿದ್ದು, ಅವು ಚಿಕ್ಕದಾಗಿದ್ದರೂ ಅರ್ಥಪೂರ್ಣವಾಗಿರುತ್ತವೆ. ಪ್ರತಿಯೊಂದು ಗಾದೆಯೂ ಒಂದೊಂದು ಜೀವನ ಸಂದೇಶವನ್ನು ಒಳಗೊಂಡಿದ್ದು, ಅವುಗಳ ಅರ್ಥವನ್ನು ತಿಳಿದು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ಕದಳಿಶ್ರೀ ವೇದಿಕೆಯ ಸಂಚಾಲಕಿ ಕವಿತಾ ದಂಡಿನ ಮಾತನಾಡಿ, ಶ್ರಾವಣ ಮಾಸದಲ್ಲಿ ವಿವಿಧ ಕ್ಷೇತ್ರಗಳ ಸಾಧಕರನ್ನು ಸರ್ಕಾರಿ ಶಾಲೆಗಳಿಗೆ ಆಹ್ವಾನಿಸಿ, ಅವರ ಅಮೃತವಾಣಿಯ ಮೂಲಕ ಮಕ್ಕಳಿಗೆ ಜೀವನ ಮೌಲ್ಯಗಳು ಹಾಗೂ ಪ್ರೇರಣಾದಾಯಕ ವಿಚಾರಗಳನ್ನು ತಿಳಿಸಲಾಗುತ್ತಿದೆ. ಸಿಹಿ ಭೋಜನದೊಂದಿಗೆ ಕಲಿಕಾ ಸಾಮಗ್ರಿಗಳನ್ನು ವಿತರಿಸುವ ಮೂಲಕ ಸಮುದಾಯವನ್ನು ಸರ್ಕಾರಿ ಶಾಲೆಗಳತ್ತ ಸೆಳೆಯುವ ಕಾರ್ಯವನ್ನು ವೇದಿಕೆ ನಿರಂತರವಾಗಿ ನಡೆಸುತ್ತಿದೆ ಎಂದರು.

ವಿದ್ಯಾರ್ಥಿನಿಯರಾದ ಅರ್ಚನಾ ಯಂಡಿಗೇರಿ, ಲೋಕೇಶ್ವರಿ ಮುಧೋಳ ಹಾಗೂ ಮಲ್ಲಿಕಾ ದಹಿಂಡೆ ವಚನ ಪ್ರಾರ್ಥನೆ ನೆರವೇರಿಸಿದರು. ಮುಖ್ಯೋಪಾಧ್ಯಾಯಿನಿ ವಿ.ಎನ್. ಬಸಾಪೂರ ಸ್ವಾಗತಿಸಿದರು. ಬಿ. ಯಶೋಧಾ ನಿರೂಪಿಸಿದರು. ವಿ.ಬಿ. ಕರಬಸಗೌಡರ ವಂದಿಸಿದರು.

ರೇಣುಕಾ ಗೌಳಿಕೇರ, ಗಿರಿಜಾ ದಾಸರ, ಮಹಾದೇವಿ ಮೊಸಳಿ, ವಿನೋದಾ ಕೆಳಗಿನಮನಿ, ಪ್ರಿಯಾಂಕಾ ಲಮಾಣಿ, ರೇಖಾ ಮೂಗನೂರ, ರೇಣುಕಾ ಶಿಂಧೆ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಕೊಪ್ಪಳ ವಿವಿ ಹಂಗಾಮಿ ಕುಲಪತಿಗೆ ಅತಿಥಿ ಉಪನ್ಯಾಸಕರಿಂದ ಸತ್ಕಾರ

0

ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ಕೊಪ್ಪಳ ವಿಶ್ವವಿದ್ಯಾಲಯದ ಹಂಗಾಮಿ ಕುಲಪತಿಯಾಗಿ ನೇಮಕಗೊಂಡಿರುವ ವಾಣಿಜ್ಯಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ. ಟಿ.ವಿ. ವಾರುಣಿ ಅವರನ್ನು ಕೊಪ್ಪಳ ಜಿಲ್ಲೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರು ಸತ್ಕರಿಸಿ ಗೌರವಿಸಿದರು.

ಈ ಸಂದರ್ಭದಲ್ಲಿ ಡಾ. ವೀರಣ್ಣ ಸಜ್ಜನರ್, ಡಾ. ಸಣ್ಣದೇವೇಂದ್ರಸ್ವಾಮಿ, ಡಾ. ತುಕಾರಾಂ, ಡಾ. ಶಿವಬಸಪ್ಪ ಮಸ್ಕಿ, ಡಾ. ಮಹಾಂತೇಶ ನೆಲಾಗಣಿ, ಬಸವರಾಜ ಕರುಗಲ್, ಜ್ಞಾನೇಶ್ವರ ಪತ್ತಾರ, ಸೋಮೇಶ್, ವಿಜಯಕುಮಾರ್ ಕೆ., ಡಾ. ಗಿರಿಜಾ ತುರಮುರಿ ಹಾಗೂ ಡಾ. ಸಾವಿತ್ರಿ ಕಣವಿ ಉಪಸ್ಥಿತರಿದ್ದರು.

ತಿಮ್ಮಾಪುರ ಅಭಿವೃದ್ಧಿಗೆ ರೈತ ಸಂಘದ ಆಗ್ರಹ

0

ವಿಜಯಸಾಕ್ಷಿ ಸುದ್ದಿ, ಗದಗ: ಗದಗ ತಾಲೂಕಿನ ತಿಮ್ಮಾಪುರ ಗ್ರಾಮದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಕ್ರಮ ಕೈಗೊಳ್ಳಬೇಕು ಹಾಗೂ ರೈತರು ಮತ್ತು ಗ್ರಾಮಸ್ಥರು ಎದುರಿಸುತ್ತಿರುವ ಮೂಲಭೂತ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಗದಗ ಜಿಲ್ಲಾ ಘಟಕದ ಅಧ್ಯಕ್ಷ ಯಲ್ಲಪ್ಪ ಎಚ್. ಬಾಬರಿ ಅವರು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಲೋಕಸಭಾ ಸಂಸದರಿಗೆ ಮನವಿ ಸಲ್ಲಿಸಿದ್ದಾರೆ.

ಬೆಂಗಳೂರಿನಲ್ಲಿರುವ ಮಾಜಿ ಮುಖ್ಯಮಂತ್ರಿಗಳು ಹಾಗೂ ಹಾವೇರಿ ಲೋಕಸಭಾ ಸಂಸದರ ನಿವಾಸಕ್ಕೆ ಭೇಟಿ ನೀಡಿದ ಅವರು, ತಿಮ್ಮಾಪುರ ಗ್ರಾಮ ಮತ್ತು ಸುತ್ತಮುತ್ತಲಿನ ಜನರ ಹಿತದೃಷ್ಟಿಯಿಂದ ವಿವಿಧ ಬೇಡಿಕೆಗಳನ್ನು ಸಂಸದರ ಅನುದಾನ ಹಾಗೂ ಸಂಬಂಧಪಟ್ಟ ಇಲಾಖೆಗಳ ಮೂಲಕ ಈಡೇರಿಸುವಂತೆ ಒತ್ತಾಯಿಸಿದರು.

ತಿಮ್ಮಾಪುರ-ಕೊಟುಮಚಗಿ ರಸ್ತೆ ಸಂಪೂರ್ಣ ಹಾಳಾಗಿದ್ದು, ಕೂಡಲೇ ಡಾಂಬರೀಕರಣಗೊಳಿಸಬೇಕು. ಅಲ್ಲದೆ ಮಾರ್ಗ ಮಧ್ಯದಲ್ಲಿರುವ ಕಣಿ ಹಳ್ಳಕ್ಕೆ ಮೇಲ್ಸೇತುವೆ ನಿರ್ಮಿಸಬೇಕು ಎಂದು ಮನವಿಯಲ್ಲಿ ಕೋರಲಾಗಿದೆ.

ತಿಮ್ಮಾಪುರ ಗ್ರಾಮದಲ್ಲಿ ರಾಷ್ಟ್ರೀಕೃತ ಬ್ಯಾಂಕ್ ಶಾಖೆ ಇಲ್ಲದಿರುವುದರಿಂದ ರೈತರಿಗೆ ತೊಂದರೆಯಾಗುತ್ತಿದೆ. ಕೂಡಲೇ ಗ್ರಾಮದಲ್ಲಿ ಬ್ಯಾಂಕ್ ಶಾಖೆ ತೆರೆಯಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗಿದೆ.

ಗದಗ ಜಿಲ್ಲೆಯಲ್ಲಿ ತೀವ್ರ ಬರಗಾಲವಿದ್ದು, ಸರ್ಕಾರ ಕೇವಲ ಒಂದು ತಾಲೂಕನ್ನು ಮಾತ್ರ ಬರಪೀಡಿತ ಎಂದು ಘೋಷಿಸಿದೆ. ಜಿಲ್ಲೆಯ ಎಲ್ಲ ೭ ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಿಸಲು ರಾಜ್ಯ ಹಾಗೂ ಕೇಂದ್ರ ಸರ್ಕಾರದ ಮಟ್ಟದಲ್ಲಿ ಒತ್ತಡ ತರಬೇಕು ಎಂದು ಆಗ್ರಹಿಸಲಾಗಿದೆ.

ತಿಮ್ಮಾಪುರ-ಹರ್ಲಾಪುರ ಸಂಪರ್ಕ ರಸ್ತೆಯನ್ನು ಡಾಂಬರೀಕರಣಗೊಳಿಸಲು ಅಗತ್ಯ ಅನುದಾನ ಮಂಜೂರು ಮಾಡಬೇಕು ಎಂಬ ಬೇಡಿಕೆಯನ್ನೂ ಸಲ್ಲಿಸಲಾಗಿದೆ.

ಹರ್ಲಾಪುರ ರೈಲ್ವೆ ನಿಲ್ದಾಣದಲ್ಲಿ ಹಂಪಿ ಎಕ್ಸ್‌ಪ್ರೆಸ್ ಹಾಗೂ ತಿರುಪತಿ ಎಕ್ಸ್‌ಪ್ರೆಸ್ ರೈಲುಗಳಿಗೆ ನಿಲುಗಡೆ ನೀಡುವಂತೆ ರೈಲ್ವೆ ಸಚಿವಾಲಯಕ್ಕೆ ಶಿಫಾರಸು ಮಾಡಬೇಕು. ಇದರಿಂದ ಸುತ್ತಲಿನ ೨೦ಕ್ಕೂ ಹೆಚ್ಚು ಹಳ್ಳಿಗಳ ಜನರಿಗೆ ಅನುಕೂಲವಾಗಲಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಮೇಲ್ಕಂಡ ಬೇಡಿಕೆಗಳು ರೈತರು ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಅತ್ಯಂತ ಅಗತ್ಯವಾಗಿದ್ದು, ಸಂಬಂಧಪಟ್ಟ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಕೋರಲಾಗಿದೆ.

ಮನವಿಯನ್ನು ಸ್ವೀಕರಿಸಿದ ಸಂಸದರು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಸಂಬಂಧಪಟ್ಟ ಇಲಾಖೆಗಳೊಂದಿಗೆ ಚರ್ಚಿಸಿ ಶೀಘ್ರದಲ್ಲೇ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದು ಯಲ್ಲಪ್ಪ ಎಚ್. ಬಾಬರಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ರೈತ ಸಂಘದ ಮುಖಂಡರಾದ ಅಂದಪ್ಪ ಕೊಳೂರು, ರಾಮಣ್ಣ ಖಂಡ್ರೆ ಹಾಗೂ ಶಿವಕುಮಾರ ಯತ್ನಟ್ಟಿ ಉಪಸ್ಥಿತರಿದ್ದರು.

ವಿದೇಶದಲ್ಲಿ ಉನ್ನತ ಶಿಕ್ಷಣಕ್ಕೆ ಅವಕಾಶ: ಸೆ.6ರಂದು ಬೆಂಗಳೂರಿನಲ್ಲಿ ‘Study Abroad-2026’

0

ವಿಜಯಸಾಕ್ಷಿ ಸುದ್ದಿ, ಗದಗ: ರಾಜ್ಯದ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಜಾಗತಿಕ ಉನ್ನತ ಶಿಕ್ಷಣದ ಅವಕಾಶಗಳ ಕುರಿತು ಮಾಹಿತಿ ನೀಡುವ ಉದ್ದೇಶದಿಂದ ‘ವಿದೇಶದಲ್ಲಿ ಅಧ್ಯಯನ-2026’ (Study Abroad-2026) ಕಾರ್ಯಕ್ರಮವನ್ನು ಸೆಪ್ಟೆಂಬರ್ 6ರಂದು ಬೆಂಗಳೂರಿನಲ್ಲಿ ಆಯೋಜಿಸಲಾಗಿದೆ.

ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಕರ್ನಾಟಕ ವೃತ್ತಿ ತರಬೇತಿ ಮತ್ತು ಕೌಶಲ್ಯಾಭಿವೃದ್ಧಿ ನಿಗಮವು ಅಂತರರಾಷ್ಟ್ರೀಯ ಏಜೆನ್ಸಿಯಾಗಿ ಈ ಕಾರ್ಯಕ್ರಮವನ್ನು ಆಯೋಜಿಸಿದೆ.

ಕಾರ್ಯಕ್ರಮವು ಬೆಂಗಳೂರಿನ ಗೇಟ್ ನಂ. 4, ಗಾಯತ್ರಿ ಗ್ರೌಂಡ್, ಗಾಯತ್ರಿ ವಿಹಾರ ಪ್ಯಾಲೇಸ್ ಗ್ರೌಂಡ್‌ನಲ್ಲಿ ನಡೆಯಲಿದೆ. ಉನ್ನತ ಶಿಕ್ಷಣಕ್ಕಾಗಿ ವಿದೇಶಗಳಿಗೆ ತೆರಳಲು ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಬಹುದು.

ಕಾರ್ಯಕ್ರಮದಲ್ಲಿ 10ಕ್ಕೂ ಹೆಚ್ಚು ವಿದೇಶಗಳ 75ಕ್ಕೂ ಹೆಚ್ಚು ಜಾಗತಿಕ ವಿಶ್ವವಿದ್ಯಾಲಯಗಳು ಭಾಗವಹಿಸಲಿವೆ. ವಿದೇಶಗಳಲ್ಲಿ ಉನ್ನತ ಶಿಕ್ಷಣ ಪಡೆಯಲು ಬಯಸುವ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯಗಳ ಪ್ರವೇಶ ಪ್ರಕ್ರಿಯೆ, ವಿದ್ಯಾರ್ಥಿ ವೀಸಾ, ಹಣಕಾಸು ಯೋಜನೆ, ಅರ್ಜಿ ಸಲ್ಲಿಕೆ, ಆರೋಗ್ಯ ವಿಮೆ ಹಾಗೂ ಭಾಷಾ ಪ್ರಾವೀಣ್ಯತೆ ಕುರಿತು ಒಂದೇ ವೇದಿಕೆಯಲ್ಲಿ ಮಾರ್ಗದರ್ಶನ ನೀಡಲಾಗುವುದು.

ಹಾಗೆಯೇ, ವಿದ್ಯಾರ್ಥಿಗಳಿಗೆ ವೈಯಕ್ತಿಕ ಸಮಾಲೋಚನೆ (One-on-One Sessions), ಸ್ಥಳದಲ್ಲೇ ವಿದ್ಯಾರ್ಥಿವೇತನ ಹಾಗೂ ಅರ್ಹತಾ ಮೌಲ್ಯಮಾಪನ (Spot Scholarship & Eligibility Assessment), ವಿಶ್ವವಿದ್ಯಾಲಯ ಪ್ರವೇಶ ಮಾರ್ಗದರ್ಶನ, ವೀಸಾ ಮಾರ್ಗದರ್ಶನ, ಹಣಕಾಸು ಯೋಜನೆ, ಅರ್ಜಿ ಸಲ್ಲಿಕೆಗೆ ನೆರವು, ಆರೋಗ್ಯ ವಿಮೆ ಮಾರ್ಗದರ್ಶನ ಹಾಗೂ ಭಾಷಾ ಪ್ರಾವೀಣ್ಯತೆಗಾಗಿ ಅಗತ್ಯ ಸಹಕಾರ ಸೇರಿದಂತೆ ಎಂಟು ಪ್ರಮುಖ ಅಂಶಗಳ ಕುರಿತು ಮಾಹಿತಿ ಮತ್ತು ಮಾರ್ಗದರ್ಶನ ನೀಡಲಾಗುವುದು.

ವಿದ್ಯಾರ್ಥಿಗಳಿಗೆ ಶೇ. 50ರವರೆಗೆ ವಿದ್ಯಾರ್ಥಿವೇತನ ಪಡೆಯುವ ಅವಕಾಶಗಳ ಬಗ್ಗೆಯೂ ಮಾಹಿತಿ ನೀಡಲಾಗುವುದು. ಪದವಿ (Under Graduate), ಸ್ನಾತಕೋತ್ತರ (Post Graduate), ಡಾಕ್ಟರೇಟ್, ಡಿಪ್ಲೊಮಾ, ವೃತ್ತಿಪರ ಹಾಗೂ ಇತರ ಉನ್ನತ ಶಿಕ್ಷಣ ಕೋರ್ಸ್‌ಗಳಿಗಾಗಿ ವಿದೇಶಗಳ ಜಾಗತಿಕ ವಿಶ್ವವಿದ್ಯಾಲಯಗಳಲ್ಲಿ ವ್ಯಾಸಂಗ ಮಾಡಲು ಬಯಸುವ ವಿದ್ಯಾರ್ಥಿಗಳಿಗೆ ಈ ಕಾರ್ಯಕ್ರಮ ಮಹತ್ವದ ಅವಕಾಶವಾಗಿದೆ.

ಆಸಕ್ತ ವಿದ್ಯಾರ್ಥಿಗಳು studyabroad.ksdckarnataka.com ವೆಬ್‌ಸೈಟ್ ಅಥವಾ ಕ್ಯೂಆರ್ ಕೋಡ್ ಮೂಲಕ ನೋಂದಣಿ ಮಾಡಿಕೊಳ್ಳಬಹುದು.

ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿಗಳ ಕಚೇರಿ, ಕೊಠಡಿ ಸಂಖ್ಯೆ 106, ಜಿಲ್ಲಾಧಿಕಾರಿ ಕಚೇರಿ, ಗದಗ ಅಥವಾ ಮೊಬೈಲ್ ಸಂಖ್ಯೆ 8618650935, 9481856181, 9481008754, 8722762768, 9686352815 ಹಾಗೂ 9008234012ಗೆ ಸಂಪರ್ಕಿಸಬಹುದು ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೂರು ತಿಂಗಳಿಗೊಮ್ಮೆ ಕುಂದುಕೊರತೆ ಸಭೆ: ಸಿಇಎ ಭರವಸೆ

0

ವಿಜಯಸಾಕ್ಷಿ ಸುದ್ದಿ, ಗದಗ: ಗದಗ ಜಿಲ್ಲಾ ಪಂಚಾಯಿತಿಗೆ ನೂತನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ (ಸಿಇಒ) ಆಗಮಿಸಿರುವ ಮುಕುಲ್ ಜೈನ್ ಅವರನ್ನು ವಿಬಿಜಿ-ರಾಮ್-ಜಿ ಯೋಜನೆಯ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಬುಧವಾರ ಭೇಟಿ ಮಾಡಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷ ಹಾಗೂ ರಾಜ್ಯ ಉಪಾಧ್ಯಕ್ಷ ಸುರೇಶ್ ಬಾಳಿಕಾಯಿ ಅವರು, ನೌಕರರ ಹಿತದೃಷ್ಟಿಯಿಂದ ಪ್ರತಿ ಮೂರು ತಿಂಗಳಿಗೊಮ್ಮೆ ವಿಬಿಜಿ-ರಾಮ್-ಜಿ ಯೋಜನೆಯ ನೌಕರರ ಕುಂದುಕೊರತೆ ಸಭೆ ನಡೆಸುವಂತೆ ಸಿಇಒ ಮುಕುಲ್ ಜೈನ್ ಅವರಿಗೆ ಮನವಿ ಸಲ್ಲಿಸಿದರು.

ಮನವಿಗೆ ಸ್ಪಂದಿಸಿದ ಸಿಇಒ ಮುಕುಲ್ ಜೈನ್ ಅವರು, ವಿಬಿಜಿ-ರಾಮ್-ಜಿ ಯೋಜನೆಯ ಎಲ್ಲ ನೌಕರರನ್ನು ಕರೆದು ಸಭೆ ನಡೆಸಿ, ಅವರ ಸಮಸ್ಯೆಗಳು ಹಾಗೂ ಕುಂದುಕೊರತೆಗಳನ್ನು ಆಲಿಸುವುದಾಗಿ ಭರವಸೆ ನೀಡಿದರು.

ನೌಕರರ ಸಮಸ್ಯೆಗಳನ್ನು ಕಾಲಕಾಲಕ್ಕೆ ಆಲಿಸುವ ಮೂಲಕ ಯೋಜನೆಯ ಅನುಷ್ಠಾನದ ಸಂದರ್ಭದಲ್ಲಿ ಎದುರಾಗುವ ತೊಂದರೆಗಳನ್ನು ಪರಿಹರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಸಂಘದ ರಾಜ್ಯ ಪ್ರತಿನಿಧಿ ಕಿರಣಕುಮಾರ್, ನರಗುಂದ ತಾಲೂಕು ಅಧ್ಯಕ್ಷ ಹನುಮಂತ ಡಂಬಳ, ರೋಣ ತಾಲೂಕು ಅಧ್ಯಕ್ಷೆ ಶಾಂತಾ ತಿಮ್ಮರಡ್ಡಿ, ಮುಂಡರಗಿ ತಾಲೂಕು ಪ್ರತಿನಿಧಿ ಬಸವರಾಜ ಮನ್ನಮ್ಮನವರ, ಗದಗದ ನವೀನ ಬಸರಿ, ಶಿರಹಟ್ಟಿಯ ವೀರೇಶ ಪಟ್ಟಣಶೆಟ್ಟಿ, ಲಕ್ಷ್ಮೇಶ್ವರದ ಶ್ರೀನಿವಾಸ ಕಲಾಲ ಸೇರಿದಂತೆ ಜಿಲ್ಲಾ ಪದಾಧಿಕಾರಿಗಳಾದ ಪಕ್ಕೀರೇಶ ನಿಟ್ಟಾಲಿ, ಅರುಣ ಸಿಂಗ್ರಿ, ಹರೀಶ್ ಸೊಬರದ, ಲಿಂಗರಾಜ ಮುದಿಗೌಡರ, ಮಲ್ಲಿಕಾರ್ಜುನ ಸರ್ವಿ, ವೀರಭದ್ರಪ್ಪ ಸಜ್ಜನ, ಲಿಂಗರಾಜ ಅರಿಶಿಣದ, ಮಂಜುನಾಥ ತಳವಾರ, ಅಜಯ್ ಅಬ್ಬಿಗೇರಿ ಹಾಗೂ ವಿವಿಧ ತಾಲೂಕುಗಳ ನೌಕರರು ಉಪಸ್ಥಿತರಿದ್ದರು.

ತಹಶೀಲ್ದಾರ್ ಕಚೇರಿ ಸ್ಥಳಾಂತರ ನಿರ್ಧಾರ ಕೈಬಿಡಿ : ರೈತ ಸಂಘ ಆಗ್ರಹ

0

ವಿಜಯಸಾಕ್ಷಿ ಸುದ್ದಿ, ಗದಗ: ಗದಗ ತಾಲೂಕು ದಂಡಾಧಿಕಾರಿಗಳ (ತಹಸೀಲ್ದಾರ್) ಕಚೇರಿ ಶಿಥಿಲಾವಸ್ಥೆಯಲ್ಲಿರುವ ಹಿನ್ನೆಲೆಯಲ್ಲಿ, ನೂತನ ಕಟ್ಟಡ ನಿರ್ಮಾಣವಾಗುವವರೆಗೆ ಜಿಲ್ಲಾಧಿಕಾರಿ ಕಚೇರಿ ಎದುರಿನ ನಿಸರ್ಗ ಬಡಾವಣೆಯಲ್ಲಿರುವ ಜಿಲ್ಲಾ ಸಾಹಿತ್ಯ ಭವನಕ್ಕೆ ತಾತ್ಕಾಲಿಕವಾಗಿ ಸ್ಥಳಾಂತರಿಸುವ ನಿರ್ಧಾರವನ್ನು ಕೈಬಿಡಬೇಕು ಎಂದು ಶ್ರೀ ಡಾ. ಪಂಡಿತ ಪುಟ್ಟರಾಜ ರೈತ ಸಂಘದ ರಾಜ್ಯ ಗೌರವಾಧ್ಯಕ್ಷ ಶಾಂತಯ್ಯ ಮುತ್ತಿನಪೆಂಡಿಮಠ ಆಗ್ರಹಿಸಿದರು.

ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಹೃದಯಭಾಗದಲ್ಲಿರುವ ಗದಗ ತಾಲೂಕು ತಹಸೀಲ್ದಾರ್ ಕಚೇರಿಯನ್ನು ದೂರದ ಪ್ರದೇಶಕ್ಕೆ ಸ್ಥಳಾಂತರಿಸಿದರೆ ರೈತರು ಹಾಗೂ ಸಾರ್ವಜನಿಕರು ತಮ್ಮ ಕೆಲಸಗಳಿಗಾಗಿ ತೆರಳಲು ತೀವ್ರ ತೊಂದರೆ ಅನುಭವಿಸಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈಗಾಗಲೇ ಗದಗ ನಗರದಲ್ಲಿ ಸಮರ್ಪಕ ನಗರ ಸಾರಿಗೆ ವ್ಯವಸ್ಥೆ ಇಲ್ಲ. ಇಂತಹ ಸಂದರ್ಭದಲ್ಲಿ ಕಚೇರಿಯನ್ನು ದೂರದ ಪ್ರದೇಶಕ್ಕೆ ಸ್ಥಳಾಂತರಿಸಿದರೆ ಸಾರ್ವಜನಿಕರು ಖಾಸಗಿ ಆಟೊಗಳನ್ನು ಅವಲಂಬಿಸಬೇಕಾಗುತ್ತದೆ. ಇದರಿಂದ ಪ್ರಯಾಣ ವೆಚ್ಚ ಹಾಗೂ ಸಮಯ ಎರಡೂ ಹೆಚ್ಚಲಿದ್ದು, ಗ್ರಾಮೀಣ ಭಾಗದಿಂದ ಬರುವ ರೈತರಿಗೆ ಮತ್ತಷ್ಟು ಹೊರೆಯಾಗಲಿದೆ ಎಂದು ಹೇಳಿದರು.

ಸಾರ್ವಜನಿಕರ ಅನುಕೂಲಕ್ಕಾಗಿ ನಗರದಲ್ಲಿಯೇ ಸಾಕಷ್ಟು ಸರ್ಕಾರಿ ಕಟ್ಟಡಗಳು ಲಭ್ಯವಿದ್ದರೂ ತಹಶೀಲ್ದಾರ್ ಕಚೇರಿಯನ್ನು ದೂರದ ಸ್ಥಳಕ್ಕೆ ಸ್ಥಳಾಂತರಿಸುವ ಅಗತ್ಯವೇನಿದೆ ಎಂದು ಪ್ರಶ್ನಿಸಿದರು.

ಈ ನಿರ್ಧಾರದಿಂದ ಅಧಿಕಾರಿಗಳ ಸ್ವಹಿತಾಸಕ್ತಿ ಮೇಲ್ನೋಟಕ್ಕೆ ಕಂಡುಬರುತ್ತಿದೆ ಎಂದು ಆರೋಪಿಸಿದ ಅವರು, ರೈತರು ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಕೂಡಲೇ ಸ್ಥಳಾಂತರದ ನಿರ್ಧಾರವನ್ನು ಹಿಂಪಡೆದು, ಜನರಿಗೆ ಸುಲಭವಾಗಿ ತಲುಪಬಹುದಾದ ಸ್ಥಳದಲ್ಲಿಯೇ ತಾತ್ಕಾಲಿಕ ಕಚೇರಿ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಘದ ರಾಜ್ಯ ಕಾರ್ಯದರ್ಶಿ ಪ್ರಭು ಜುಟ್ಟದ, ದಾವಲಸಾಬ ನಾಗನೂರ, ಶಿವಯೋಗಯ್ಯ ಶಶಿಮಠ, ಅಜಾಜ್ ಧಾ ಹಾಗೂ ವೆಂಕಟೇಶ ಜುಂಜಣಿ ಸೇರಿದಂತೆ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ತಹಸೀಲ್ದಾರ್ ಕಚೇರಿ ಜನಸಾಮಾನ್ಯರಿಗೆ ಸುಲಭವಾಗಿ ತಲುಪುವ ಸ್ಥಳದಲ್ಲಿರಬೇಕು. ನಗರ ಸಾರಿಗೆ ವ್ಯವಸ್ಥೆಯೇ ಸಮರ್ಪಕವಾಗಿಲ್ಲದ ಸಂದರ್ಭದಲ್ಲಿ ದೂರದ ಪ್ರದೇಶಕ್ಕೆ ಕಚೇರಿ ಸ್ಥಳಾಂತರಿಸುವುದರಿಂದ ರೈತರು ಹಾಗೂ ಸಾರ್ವಜನಿಕರಿಗೆ ಅನಗತ್ಯ ತೊಂದರೆ ಮತ್ತು ಹೆಚ್ಚುವರಿ ಆರ್ಥಿಕ ಹೊರೆ ಉಂಟಾಗಲಿದೆ. ಕೂಡಲೇ ಈ ನಿರ್ಧಾರವನ್ನು ಹಿಂಪಡೆಯಬೇಕು.

– ಶಾಂತಯ್ಯ ಮುತ್ತಿನಪೆಂಡಿಮಠ, ರಾಜ್ಯ ಗೌರವಾಧ್ಯಕ್ಷರು, ಶ್ರೀ ಡಾ. ಪಂಡಿತ ಪುಟ್ಟರಾಜ ರೈತ ಸಂಘ

ಮುಕ್ತಿಮಂದಿರ ನನ್ನ ನಂಬಿಕೆಯ, ಹೃದಯಕ್ಕೆ ಹತ್ತಿರವಾದ ಪವಿತ್ರ ಕ್ಷೇತ್ರ : ಡಿ.ಕೆ. ಶಿವಕುಮಾರ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಮುಕ್ತಿಮಂದಿರ ಧರ್ಮಕ್ಷೇತ್ರವು ನನ್ನ ನಂಬಿಕೆಯ ಹಾಗೂ ಹೃದಯಕ್ಕೆ ಹತ್ತಿರವಾದ ದೈವಿಕ ಮತ್ತು ಪವಿತ್ರ ಕ್ಷೇತ್ರವಾಗಿದೆ. ಈ ಹಿಂದೆ ಲಿಂ. ವೀರಗಂಗಾಧರ ಜಗದ್ಗುರುಗಳ (ಅಜ್ಜಯ್ಯ) ಕರ್ತೃಗದ್ದುಗೆಯ ಮುಂದೆ ಸಲ್ಲಿಸಿದ್ದ ಪ್ರಾರ್ಥನೆ ಮತ್ತು ಸಂಕಲ್ಪ ಈಡೇರಿದ ಹಿನ್ನೆಲೆಯಲ್ಲಿ ಮತ್ತೊಮ್ಮೆ ದರ್ಶನ ಪಡೆದು ಪೂಜೆ ಸಲ್ಲಿಸಿದ್ದೇನೆ. ರಾಜ್ಯದಲ್ಲಿ ಉತ್ತಮ ಮಳೆಯಾಗಿ, ಸಮೃದ್ಧ ಬೆಳೆ ಬರಲಿ, ರೈತರು ಹಾಗೂ ಜನರು ನೆಮ್ಮದಿಯಿಂದ ಬದುಕುವಂತಾಗಲಿ ಎಂದು ಪ್ರಾರ್ಥಿಸಿದ್ದೇನೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಹೇಳಿದರು.

ಗದಗ ಜಿಲ್ಲೆಯ ಬರ ಪರಿಸ್ಥಿತಿ ಪರಿಶೀಲನೆ ನಡೆಸಿದ ಬಳಿಕ ಮಂಗಳವಾರ ಲಕ್ಷ್ಮೇಶ್ವರ ತಾಲೂಕಿನ ಮುಕ್ತಿಮಂದಿರ ಧರ್ಮಕ್ಷೇತ್ರಕ್ಕೆ ಭೇಟಿ ನೀಡಿದ ಅವರು, ಲಿಂ. ವೀರಗಂಗಾಧರ ಜಗದ್ಗುರುಗಳ ಕರ್ತೃಗದ್ದುಗೆಯಲ್ಲಿ ವಿಶೇಷ ಪೂಜೆ ಸಲ್ಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು.

ಮುಕ್ತಿಮಂದಿರ ಧರ್ಮಕ್ಷೇತ್ರದ ಪಟ್ಟಾಧ್ಯಕ್ಷ ಶ್ರೀ ವಿಮಲರೇಣುಕ ವೀರಮುಕ್ತಿಮುನಿ ಶಿವಾಚಾರ್ಯರು ಹಾಗೂ ನೊಣವಿನಕೆರೆ ಕಾಡಸಿದ್ದೇಶ್ವರ ಮಠದ ಶ್ರೀ ಕರಿವೃಷಭ ದೇಶಿಕೇಂದ್ರ ಶಿವಯೋಗೀಶ್ವರ ಶಿವಾಚಾರ್ಯರ ಮಾರ್ಗದರ್ಶನದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಅಭಿಷೇಕ, ಅಷ್ಟೋತ್ತರ ಹಾಗೂ ಮಹಾಮಂಗಳಾರತಿ ನೆರವೇರಿಸಿದರು. ಬಳಿಕ ಕೆಲಕಾಲ ಕರ್ತೃಗದ್ದುಗೆಯಲ್ಲಿ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸಿದರು.

ಮಾನವ ಧರ್ಮಕ್ಕೆ ಜಯವಾಗಲಿ ಹಾಗೂ ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂಬ ಸಂದೇಶ ಸಾರಿದ ಲಿಂ. ವೀರಗಂಗಾಧರ ಜಗದ್ಗುರುಗಳ ಪಾವನ ಕ್ಷೇತ್ರ ಇದಾಗಿದೆ. ಈ ಕ್ಷೇತ್ರದ ಮೇಲೆ ನನಗೆ ಅಪಾರವಾದ ಶ್ರದ್ಧೆಯಿದೆ. ಭಕ್ತ ಮತ್ತು ಭಗವಂತನ ನಡುವೆ ಪವಿತ್ರ ಬಂಧವನ್ನು ಬೆಸೆಯುವ ಶಕ್ತಿ ಇಂತಹ ಧರ್ಮಕ್ಷೇತ್ರಗಳಿಗೆ ಇದೆ ಎಂದು ಹೇಳಿದರು.

ಬಳಿಕ ಶ್ರೀ ವಿಮಲರೇಣುಕ ವೀರಮುಕ್ತಿಮುನಿ ಶಿವಾಚಾರ್ಯರೊಂದಿಗೆ ಕ್ಷೇತ್ರದಲ್ಲಿ ನಡೆಯುತ್ತಿರುವ ತ್ರಿಕೋಟಿ ಶಿವಲಿಂಗ ಸ್ಥಾಪನೆ, ಸಮುದಾಯ ಭವನ, ಅನ್ನದಾಸೋಹ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳ ಕುರಿತು ಮಾಹಿತಿ ಪಡೆದ ಮುಖ್ಯಮಂತ್ರಿ, ಮುಕ್ತಿಮಂದಿರ ಧರ್ಮಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ಸರ್ಕಾರದಿಂದ ಸಕಲ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ಗದಗ ಜಿಲ್ಲೆಯ ಬರ ಪರಿಸ್ಥಿತಿಯನ್ನು ಖುದ್ದಾಗಿ ಅರಿಯುವ ಉದ್ದೇಶದಿಂದ ಜಿಲ್ಲೆಗೆ ಭೇಟಿ ನೀಡಿದ್ದೇನೆ. ಜಿಲ್ಲೆಯ ಏಳು ತಾಲೂಕುಗಳ ಪೈಕಿ ಗಜೇಂದ್ರಗಡ ತಾಲೂಕನ್ನು ಮಾತ್ರ ಬರಪೀಡಿತ ಎಂದು ಘೋಷಿಸಿರುವುದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ನೆಲದ ಮೇಲಿನ ವಾಸ್ತವ ಪರಿಸ್ಥಿತಿಯನ್ನು ಪರಿಶೀಲಿಸಿದ್ದೇನೆ ಎಂದು ಮುಖ್ಯಮಂತ್ರಿ ಹೇಳಿದರು.

ಜಿಲ್ಲೆಯಲ್ಲಿ ಶೇ. ೪೦ರಿಂದ ೪೪ರಷ್ಟು ಮಳೆ ಕೊರತೆಯಾಗಿದ್ದು, ಬರ ಪರಿಸ್ಥಿತಿ ಗಂಭೀರವಾಗಿದೆ ಎಂಬುದು ಮನವರಿಕೆಯಾಗಿದೆ. ರೈತರ ಜಮೀನುಗಳಿಗೆ ತೆರಳಿ ಹತ್ತಿ, ಕಡಲೆಕಾಯಿ, ಜೋಳ ಹಾಗೂ ಸೂರ್ಯಕಾಂತಿ ಬೆಳೆಗಳ ಸ್ಥಿತಿಯನ್ನು ಕಣ್ಣಾರೆ ಕಂಡಿದ್ದೇನೆ. ರೈತರು ಎದುರಿಸುತ್ತಿರುವ ಸಂಕಷ್ಟದ ಪ್ರಮಾಣವೂ ತಿಳಿದುಬಂದಿದೆ ಎಂದರು.

ಬರಪೀಡಿತ ತಾಲೂಕುಗಳನ್ನು ಘೋಷಿಸಲು ಸರ್ಕಾರದ ನಿಗದಿತ ಮಾರ್ಗಸೂಚಿಗಳಿವೆ. ಅದರಂತೆ ಸಮಗ್ರ ಅಧ್ಯಯನ ನಡೆಸಿ ಶೀಘ್ರದಲ್ಲೇ ಎರಡನೇ ಹಂತದ ಬರಪೀಡಿತ ತಾಲೂಕುಗಳ ಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ಡಿ.ಕೆ. ಶಿವಕುಮಾರ ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಜಿಲ್ಲೆಯ ಶಾಸಕರು ಎಲ್ಲ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸುವಂತೆ ಮನವಿ ಸಲ್ಲಿಸಿದ್ದಾರೆ. ಮನವಿಯ ಜತೆಗೆ ವಾಸ್ತವ ಪರಿಸ್ಥಿತಿಯನ್ನೂ ಸರ್ಕಾರ ಗಂಭೀರವಾಗಿ ಪರಿಗಣಿಸಲಿದೆ ಎಂದು ಹೇಳಿದರು.

ವಿಧಾನಸಭೆಯಲ್ಲಿ ಬರ ಪರಿಸ್ಥಿತಿ ಕುರಿತು ಸಮಗ್ರವಾಗಿ ಚರ್ಚಿಸಿ, ಸರ್ಕಾರ ನೂರು ದಿನಗಳಲ್ಲಿ ಕೈಗೊಂಡಿರುವ ಕ್ರಮಗಳು ಹಾಗೂ ಮುಂದಿನ ಕಾರ್ಯಯೋಜನೆ ಕುರಿತು ವಿವರಿಸಲು ಉದ್ದೇಶಿಸಿದ್ದೆ. ಆದರೆ ಪ್ರತಿಪಕ್ಷದವರು ಅದಕ್ಕೆ ಅವಕಾಶ ನೀಡಲಿಲ್ಲ ಎಂದು ಮುಖ್ಯಮಂತ್ರಿ ಟೀಕಿಸಿದರು.

ಈ ಸಂದರ್ಭದಲ್ಲಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ, ಶಾಸಕರಾದ ಡಾ. ಚಂದ್ರು ಲಮಾಣಿ, ಎನ್.ಎಚ್. ಕೋನರಡ್ಡಿ, ಯಾಸೀರ್ ಖಾನ್ ಪಠಾಣ, ಆನಂದಸ್ವಾಮಿ ಗಡ್ಡದೇವರಮಠ, ಶ್ರೀನಿವಾಸ ಮಾನೆ, ಮಾಜಿ ಶಾಸಕರಾದ ಜಿ.ಎಸ್. ಗಡ್ಡದೇವರಮಠ, ರಾಮಣ್ಣ ಲಮಾಣಿ, ರಾಮಕೃಷ್ಣ ದೊಡ್ಡಮನಿ ಸೇರಿದಂತೆ ಹಲವು ಮುಖಂಡರು, ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಡಿ.ಕೆ. ಶಿವಕುಮಾರ ಅಭಿಮಾನಿ ಬಳಗದವರು ಉಪಸ್ಥಿತರಿದ್ದರು.

ಕೋಟ್

ಮುಕ್ತಿಮಂದಿರ ನನ್ನ ನಂಬಿಕೆಯ ಹಾಗೂ ಹೃದಯಕ್ಕೆ ಹತ್ತಿರವಾದ ಪವಿತ್ರ ಕ್ಷೇತ್ರ. ರಾಜ್ಯದಲ್ಲಿ ಉತ್ತಮ ಮಳೆಯಾಗಿ, ಸಮೃದ್ಧ ಬೆಳೆ ಬರಲಿ; ರೈತರು ಮತ್ತು ಜನರು ನೆಮ್ಮದಿಯಿಂದ ಬದುಕುವಂತಾಗಲಿ ಎಂದು ಅಜ್ಜಯ್ಯನ ಕರ್ತೃಗದ್ದುಗೆಯಲ್ಲಿ ಪ್ರಾರ್ಥಿಸಿದ್ದೇನೆ.

— ಡಿ.ಕೆ. ಶಿವಕುಮಾರ, ಮುಖ್ಯಮಂತ್ರಿ