Home Blog Page 3

ಶಿವಮೊಗ್ಗದಲ್ಲಿ ಹೊತ್ತಿ ಉರಿದ ಖಾಸಗಿ ಸ್ಲೀಪರ್ ಬಸ್; ಚಾಲಕನ ಸಮಯ ಪ್ರಜ್ಞೆಯಿಂದ ತಪ್ಪಿದ ಭಾರೀ ಅನಾಹುತ!

0

ಶಿವಮೊಗ್ಗ: ನಗರದಿಂದ ಬೆಂಗಳೂರಿಗೆ ತೆರಳುತ್ತಿದ್ದ ಖಾಸಗಿ ನಾನ್ ಎಸಿ ಸ್ಲೀಪರ್ ಬಸ್‌ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಬಸ್ ಸಂಪೂರ್ಣ ಸುಟ್ಟು ಕರಕಲಾಗಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕು ಅರಸಾಳು ಸಮೀಪದ ಸೂಡೂರು ಗ್ರಾಮದ ಬಳಿ ನಡೆದಿದೆ.

ಬೆಂಕಿ ಹೊತ್ತಿಕೊಂಡ ದೃಶ್ಯ ಭಯಾನಕವಾಗಿತ್ತು. ಅನ್ನಪೂರ್ಣ ಹೆಸರಿನ ಖಾಸಗಿ ಬಸ್ ಹೊಸನಗರ ತಾಲೂಕು ನಗರದಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದು, ನಗರ, ಹೊಸನಗರ ಹಾಗೂ ರಿಪ್ಪನ್‌ಪೇಟೆಗಳಲ್ಲಿ ಪ್ರಯಾಣಿಕರನ್ನು ಪಿಕ್‌ಅಪ್ ಮಾಡಿಕೊಂಡಿತ್ತು. ಅರಸಾಳು ಗ್ರಾಮದ ಬಳಿ ಇರುವ 9ನೇ ಮೈಲಿಗಲ್ಲಿನ ಸಮೀಪ ಬಸ್ ಸಾಗುತ್ತಿದ್ದಾಗ ಏಕಾಏಕಿ ಹೊಗೆ ಕಾಣಿಸಿಕೊಂಡಿದ್ದು, ಕ್ಷಣಾರ್ಧದಲ್ಲೇ ಬಸ್‌ಗೆ ಬೆಂಕಿ ತಗುಲಿದೆ. ಈ ವೇಳೆ ಬಸ್‌ನಲ್ಲಿ ಸುಮಾರು 36 ಜನ ಪ್ರಯಾಣಿಕರು ಇದ್ದರು. ಪರಿಸ್ಥಿತಿ ಅರಿತ ಚಾಲಕ ಸಮಯಪ್ರಜ್ಞೆ ಪ್ರದರ್ಶಿಸಿ ಬಸ್ ಅನ್ನು ರಸ್ತೆ ಪಕ್ಕದ ಮರಕ್ಕೆ ಡಿಕ್ಕಿ ಹೊಡೆಸಿ ನಿಲ್ಲಿಸಿದ್ದರಿಂದ ದೊಡ್ಡ ಅನಾಹುತ ತಪ್ಪಿದೆ. ಬಸ್ ಪ್ರಯಾಣ ಆರಂಭಿಸಿ ಕೇವಲ 30 ನಿಮಿಷಗಳಷ್ಟೇ ಕಳೆದಿದ್ದು, ಪ್ರಯಾಣಿಕರು ಇನ್ನೂ ನಿದ್ರೆಗೆ ಜಾರಿರದ ಕಾರಣ ಬೆಂಕಿ ಕಾಣಿಸಿಕೊಂಡ ತಕ್ಷಣವೇ ಎಲ್ಲರೂ ಬಸ್‌ನಿಂದ ಇಳಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಘಟನೆಯಲ್ಲಿ ಎಲ್ಲಾ ಪ್ರಯಾಣಿಕರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು, 12 ಜನರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಉಳಿದ ಪ್ರಯಾಣಿಕರನ್ನು ರಿಪ್ಪನ್‌ಪೇಟೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನಾ ಸ್ಥಳಕ್ಕೆ ರಿಪ್ಪನ್‌ಪೇಟೆ ಠಾಣೆಯ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದರು. ಬಸ್ ಹೊರಟು ಹೆಚ್ಚು ಸಮಯವಾಗಿರದ ಕಾರಣ ಹಾಗೂ ಹೇಗೆ ಬೆಂಕಿ ತಗುಲಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಈ ಕುರಿತು ರಿಪ್ಪನ್‌ಪೇಟೆ ಠಾಣೆಯ ಪಿಎಸ್ಐ ಮಾತನಾಡಿ, ಬಸ್‌ಗೆ ಬೆಂಕಿ ತಗುಲಿದ ಕಾರಣ ತಿಳಿದುಬಂದಿಲ್ಲ. ಘಟನೆಯಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ. ಗಾಯಗೊಂಡ ಎಲ್ಲ ಪ್ರಯಾಣಿಕರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಉಡುಪಿ ಬೋಟ್ ದುರಂತ: ಚಿಕಿತ್ಸೆ ಫಲಕಾರಿಯಾಗದೆ ಮತ್ತೋರ್ವ ಯುವತಿ ಸಾವು!

0

ಉಡುಪಿ: ಉಡುಪಿಯ ಮಲ್ಪೆ ವ್ಯಾಪ್ತಿಯ ಕೋಡಿಬೆಂಗ್ರೆಯಲ್ಲಿರುವ ಡೆಲ್ಟಾ ಬೀಚ್ ಸಮೀಪ ನಡೆದ ಪ್ರವಾಸಿ ಬೋಟ್ ದುರಂತ ಪ್ರಕರಣದಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಇಂದು ಮತ್ತೋರ್ವ ಯುವತಿ ಸಾವನ್ನಪ್ಪಿದ್ದಾರೆ.

ಮೈಸೂರಿನ ದಿಶಾ (23) ಮೃತ ಯುವತಿ ಎಂದು ಗುರುತಿಸಲಾಗಿದೆ. ಈ ಮೂಲಕ ಈ ದುರ್ಘಟನೆಯಲ್ಲಿ ಮೃತಪಟ್ಟವರ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ. ನಿನ್ನೆ ನಡೆದ ಅಪಘಾತದಲ್ಲಿ ಶಂಕರಪ್ಪ (22) ಹಾಗೂ ಸಿಂಧು (23) ಎಂಬುವವರು ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲೇ ಮೃತಪಟ್ಟಿದ್ದರು. ಗಂಭೀರವಾಗಿ ಗಾಯಗೊಂಡಿರುವ ಧರ್ಮರಾಜ್ ಎಂಬ ಯುವಕನಿಗೆ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಈ ಸಂಬಂಧ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೋಡಿಬೆಂಗ್ರೆಯ ಡೆಲ್ಟಾ ಬೀಚ್ ವಿಶ್ವಪ್ರಸಿದ್ಧ ಪ್ರವಾಸಿ ತಾಣವಾಗಿದ್ದು, ಯೂಟ್ಯೂಬ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಈ ಬೀಚ್ ದೃಶ್ಯಗಳು ಭೂಲೋಕದ ಸ್ವರ್ಗದಂತೆ ಕಾಣುತ್ತವೆ. ಇದೇ ಆಕರ್ಷಣೆಯಿಂದ ಮೈಸೂರಿನ ಬಿಪಿಒ ಕಾಲ್ ಸೆಂಟರ್‌ನ 28 ಮಂದಿ ಯುವಕ–ಯುವತಿಯರ ಪ್ರವಾಸಿ ತಂಡ ಮೋಜು ಮಾಡಲು ಉಡುಪಿಗೆ ಆಗಮಿಸಿತ್ತು. ಆದರೆ ಅವರ ಪ್ರವಾಸವೇ ದುರಂತದಲ್ಲಿ ಅಂತ್ಯಗೊಂಡಿದೆ.

ಡೆಲ್ಟಾ ಬೀಚ್ ಸಮೀಪ ಎರಡು ಪ್ರವಾಸಿ ಬೋಟುಗಳಲ್ಲಿ 28 ಮಂದಿ ಕಡಲಿಗೆ ಇಳಿದಿದ್ದರು. ಭದ್ರತಾ ದೃಷ್ಟಿಯಿಂದ ಎಲ್ಲರಿಗೂ ಲೈಫ್ ಜಾಕೆಟ್ ನೀಡಲಾಗಿದ್ದರೂ, ಕೆಲವರು ಮಾತ್ರ ಜಾಕೆಟ್ ಧರಿಸಿದ್ದು, ಇನ್ನು ಕೆಲವರು ನಿರ್ಲಕ್ಷ್ಯದಿಂದ ಧರಿಸದೆ ಬೋಟ್ ಹತ್ತಿದ್ದರು ಎನ್ನಲಾಗಿದೆ. ಕಡಲಿನಲ್ಲಿ ಬೋಟ್ ಸಾಗುತ್ತಿದ್ದಾಗ ಕೆಲ ಪ್ರವಾಸಿಗರು ಕುಣಿದು ಹಾರಾಟ ನಡೆಸಿದ್ದು, ಇದರಿಂದ ಬೋಟ್ ನಿಯಂತ್ರಣ ತಪ್ಪಿ ಮಗುಚಿ ಬಿದ್ದಿದೆ.
ಘಟನೆಯ ಸುದ್ದಿ ತಿಳಿದ ತಕ್ಷಣ ಸ್ಥಳೀಯ ಮೀನುಗಾರರಾದ ನಾಗರಾಜ, ವಿಶ್ವನಾಥ್ ಶ್ರೀಯಾನ್ ಹಾಗೂ ದಿನೇಶ್ ಕರ್ಕೆರ ಅವರು ಮತ್ತೊಂದು ಬೋಟಿನ ಮೂಲಕ ಸ್ಥಳಕ್ಕೆ ಧಾವಿಸಿ ನೀರಿನಲ್ಲಿ ಮುಳುಗಿದವರನ್ನು ರಕ್ಷಣೆ ಮಾಡಿದ್ದಾರೆ.

ಲೈಫ್ ಜಾಕೆಟ್ ಧರಿಸಿದ್ದ ಹಲವರನ್ನು ಸುಲಭವಾಗಿ ಮೇಲಕ್ಕೆತ್ತಿ ಸುರಕ್ಷಿತವಾಗಿ ಇನ್ನೊಂದು ಬೋಟಿಗೆ ಸ್ಥಳಾಂತರಿಸಲಾಯಿತು. ನೀರಿನಲ್ಲಿ ಬಿದ್ದ 14 ಮಂದಿಯ ಪೈಕಿ ನಾಲ್ವರ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಪೈಕಿ ಶಂಕರಪ್ಪ ಹಾಗೂ ಸಿಂಧು ನಿನ್ನೆ ಮೃತಪಟ್ಟರೆ, ಇಂದು ಚಿಕಿತ್ಸೆ ಫಲಕಾರಿಯಾಗದೆ ದಿಶಾ ಕೊನೆಯುಸಿರೆಳೆದಿದ್ದಾರೆ. ಈ ದುರಂತದಿಂದ ಪ್ರವಾಸಿಗರ ಕುಟುಂಬಗಳಲ್ಲಿ ಶೋಕದ ವಾತಾವರಣ ಆವರಿಸಿದೆ.

ರಾಮಣ್ಣ ಮೇಗಲಮನಿಯವರಿಗೆ ಸಮಾಜಸೇವಾ ಪ್ರಶಸ್ತಿ

0

ವಿಜಯಸಾಕ್ಷಿ ಸುದ್ದಿ, ಮುಂಡರಗಿ: ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ನಿಸ್ವಾರ್ಥ ಸೇವೆ, ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ಕಡು ಬಡವರ ಹಿತ ಕಾಯುವ ಉದ್ದೇಶದೊಂದಿಗೆ ಸೇವೆ ಸಲ್ಲಿಸುತ್ತಿರುವ ಅತ್ತಿಕಟ್ಟಿ ಗ್ರಾಮದ ಹಿರಿಯ ನೇತಾರ ಹಾಗೂ ಸಮಾಜ ಸೇವಕರಾದ ರಾಮಣ್ಣ ಮೇಗಲಮನಿ ಅವರಿಗೆ ತಾಲೂಕಾಡಳಿತದ ವತಿಯಿಂದ 77ನೇ ಗಣರಾಜ್ಯೋತ್ಸವದ ಅಂಗವಾಗಿ ಸಮಾಜಸೇವಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಸೋಮಪ್ಪ–ಫಕೀರವ್ವ ದಂಪತಿಗಳ ಪುತ್ರ ರಾಮಣ್ಣ ಮೇಗಲಮನಿ ಅತ್ತಿಕಟ್ಟಿ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಡೋಣಿ ಗ್ರಾಮದಲ್ಲಿ 7ನೇ ತರಗತಿ, ಹಳ್ಳಿಕೇರಿಯಲ್ಲಿ 8 ಮತ್ತು 9ನೇ ತರಗತಿ ಹಾಗೂ ಗದಗ ಬಸವೇಶ್ವರ ಶಾಲೆಯಲ್ಲಿ 10ನೇ ತರಗತಿ ವಿದ್ಯಾಭ್ಯಾಸ ಪೂರೈಸಿದರು. 30ನೇ ವಯಸ್ಸಿನಲ್ಲಿ 10ನೇ ತರಗತಿ ಪೂರ್ಣಗೊಳಿಸಿ, ಪಿಯುಸಿ ನಂತರ 35ನೇ ವಯಸ್ಸಿನಲ್ಲಿ ಗದಗ ನಗರದ ಕೆಎಸ್‌ಎಸ್ ಕಾಲೇಜಿನಲ್ಲಿ ಬಿ.ಎ. ಪದವಿ ಆರಂಭಿಸಿದರು. 50ನೇ ವಯಸ್ಸಿನಲ್ಲಿ ಉಳಿದ ವಿಷಯಗಳನ್ನು ಬರೆದು ಬಿ.ಎ. ಪದವಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸುವ ಮೂಲಕ ಜೀವನಪೂರ್ತಿ ಕಲಿಕೆಯ ಪ್ರೇರಣೆಯಾಗಿ ಹೊರಹೊಮ್ಮಿದ್ದಾರೆ.

ರಾಜಕೀಯ ಹಾಗೂ ಸಮಾಜಸೇವಾ ಕ್ಷೇತ್ರದಲ್ಲಿ ಅವರು ಮಹತ್ವದ ಪಾತ್ರ ವಹಿಸಿದ್ದು, 2005ರಲ್ಲಿ ಅತ್ತಿಕಟ್ಟಿ ಗ್ರಾ.ಪಂ ಸದಸ್ಯರಾಗಿ, 2018ರಲ್ಲಿ ಎಸ್‌ಡಿಎಂಸಿ ಸದಸ್ಯರಾಗಿ, ಎಪಿಎಂಸಿ ಸದಸ್ಯರಾಗಿ ಹಾಗೂ ಮುಂಡರಗಿ ತಾಲೂಕು ಪಂಚ ಗ್ಯಾರಂಟಿ ಸಮಿತಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಜೊತೆಗೆ ದುರ್ಗಾದೇವಿ ಸಮಿತಿಯ ಅಧ್ಯಕ್ಷರಾಗಿ ಗ್ರಾಮೀಣ ಅಭಿವೃದ್ಧಿಗೆ ಶ್ರಮಿಸಿದ್ದಾರೆ.

ಕದಾಂಪುರ ಕ್ಲಸ್ಟರ್ ವ್ಯಾಪ್ತಿಯ 10 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಿಗೆ ಪ್ರತಿ ಶಾಲೆಗೆ 20 ಸಾವಿರ ರೂ.ಗಳಂತೆ ಒಟ್ಟು 2 ಲಕ್ಷ ರೂ. ದೇಣಿಗೆ ನೀಡಿದ್ದು, ಅತ್ತಿಕಟ್ಟಿ ಗ್ರಾಮದ ಶಾಲೆಗೆ 1,10,000 ರೂ. ದೇಣಿಗೆ ನೀಡಿದ್ದಾರೆ. ಈ ಮೊತ್ತವನ್ನು ಬ್ಯಾಂಕ್ ಡಿಪಾಸಿಟ್ ಮಾಡಿ ಅದರ ಬಡ್ಡಿ ಹಣವನ್ನು ಪ್ರತಿವರ್ಷ ಉತ್ತಮ ಸಾಧನೆ ಮಾಡುವ ವಿದ್ಯಾರ್ಥಿಗಳಿಗೆ ಬಹುಮಾನವಾಗಿ ನೀಡುವ ವ್ಯವಸ್ಥೆ ಮಾಡಿರುವುದು ಅವರ ಸೇವೆಯ ವಿಶೇಷತೆಯಾಗಿದೆ.

ಮುಂಡರಗಿ ನಗರದ ಕ್ರೀಡಾಂಗಣದಲ್ಲಿ 80 ಸಾವಿರ ರೂ. ವೆಚ್ಚದಲ್ಲಿ ದ್ವಜಸ್ತಂಭ ನಿರ್ಮಾಣ, 1 ಲಕ್ಷ ರೂ. ಕನಕಭವನ ನಿರ್ಮಾಣಕ್ಕೆ ಸಹಾಯ, ಡಂಬಳ ಗ್ರಾಮದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಮೂರ್ತಿ ಪ್ರತಿಷ್ಠಾಪನೆಗೆ 50 ಸಾವಿರ ರೂ. ದೇಣಿಗೆ, ಶಾಲಾ ಪರಿಕರ ವಿತರಣೆ ಹಾಗೂ ಕಡುಬಡವರಿಗೆ ಆರ್ಥಿಕ ನೆರವು ನೀಡುತ್ತಾ ಬರುತ್ತಿದ್ದಾರೆ.

ಈ ಸೇವೆಗಾಗಿ ಅವರಿಗೆ ತಾಲೂಕು ಸಮಾಜಸೇವಾ ಪ್ರಶಸ್ತಿ, ಉತ್ತಮ ಎಸ್‌ಡಿಎಂಸಿ ಅಧ್ಯಕ್ಷ ಪ್ರಶಸ್ತಿ ಸೇರಿದಂತೆ ಜಿಲ್ಲಾ ಹಾಗೂ ರಾಜ್ಯ ಮಟ್ಟದ ಹಲವಾರು ಗೌರವಗಳು ಸಂದಿವೆ. ಅವರ ನಿರಂತರ ಜನಸೇವೆಗೆ ಗ್ರಾಮಸ್ಥರು ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

“ಮಕ್ಕಳ ಶಿಕ್ಷಣವೇ ಸಮಾಜದ ಭವಿಷ್ಯ. ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳಿಗೆ ಉತ್ತಮ ಅವಕಾಶಗಳು ದೊರಕಬೇಕು ಎಂಬ ಉದ್ದೇಶದಿಂದ ಈ ಸಹಾಯ ಮಾಡಲಾಗಿದೆ. ಮುಂದೆಯೂ ಶಿಕ್ಷಣ ಕ್ಷೇತ್ರಕ್ಕೆ ನನ್ನ ಸಹಕಾರ ನಿರಂತರವಾಗಿರುತ್ತದೆ”

  • ರಾಮಣ್ಣ ಮೇಗಲಮನಿ.
    ಸಮಾಜಸೇವಾ ಪ್ರಶಸ್ತಿ ಪುರಸ್ಕೃತರು.

“ರಾಮಣ್ಣ ಮೇಗಲಮನಿ ಅವರು 10 ಶಾಲೆಗಳಿಗೆ 20 ಸಾವಿರ ರೂ. ಹಾಗೂ ಅತ್ತಿಕಟ್ಟಿ ಗ್ರಾಮದ ಶಾಲೆಗೆ 1.10 ಲಕ್ಷ ರೂ. ನೆರವು ನೀಡುವ ಮೂಲಕ ತಾಲೂಕಿನ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿ ಮತ್ತು ಪ್ರತಿಭಾ ಪ್ರೋತ್ಸಾಹಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ. ಅವರು ಸಮಾಜಕ್ಕೆ ಮಾದರಿಯಾಗಿದ್ದಾರೆ”

  • ಗಂಗಾಧರ ಅಣ್ಣಿಗೇರಿ.
    ಕ್ಷೇತ್ರ ಶಿಕ್ಷಣಾಧಿಕಾರಿ, ಮುಂಡರಗಿ.

ವಿಜಯಪುರದ ಬಳಿಕ ಬೆಂಗಳೂರಿನಲ್ಲಿ ಮತ್ತೊಂದು ಜ್ಯುವೆಲ್ಲರಿ ಶಾಪ್ ಲೂಟಿ!

0

ಬೆಂಗಳೂರು:- ರಾಜ್ಯದಲ್ಲಿ ದರೋಡೆ ಪ್ರಕರಣಗಳು ನಿರಂತರವಾಗಿ ಹೆಚ್ಚುತ್ತಿದ್ದು, ಜನರಲ್ಲಿ ಆತಂಕ ಹೆಚ್ಚಾಗಿದೆ.

ಸೋಮವಾರ ವಿಜಯಪುರ ಜಿಲ್ಲೆಯ ಚಡಚಣ ತಾಲ್ಲೂಕಿನ ಹಲಸಂಗಿ ಗ್ರಾಮದಲ್ಲಿನ ಭೂಮಿಕಾ ಜ್ಯುವೆಲರಿ ಅಂಗಡಿಗೆ ನುಗ್ಗಿದ ದರೋಡೆಕೋರರು ಚಿನ್ನಾಭರಣ ದೋಚಿ ಪರಾರಿಯಾಗಿದ್ದರು. ಇದರ ಬೆನ್ನಲ್ಲೇ ಇಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲಿ ಮತ್ತೊಂದು ದರೋಡೆ ಘಟನೆ ನಡೆದಿದೆ.

ನೆಲಮಂಗಲದ ರಾಮ್‌ದೇವ್ ಜ್ಯುವೆಲ್ಲರಿ ಅಂಗಡಿಗೆ ಬೈಕ್‌ನಲ್ಲಿ ಬಂದಿದ್ದ ಇಬ್ಬರು ದರೋಡೆಕೋರರು, ಗನ್ ತೋರಿಸಿ ಅಂಗಡಿಗೆ ನುಗ್ಗಿದ್ದಾರೆ. ಬಳಿಕ ಅಂಗಡಿಯಲ್ಲಿ ಲಭ್ಯವಿದ್ದ ಚಿನ್ನಾಭರಣಗಳನ್ನು ದೋಚಿಕೊಂಡು ಕ್ಷಣಾರ್ಧದಲ್ಲಿ ಪರಾರಿಯಾಗಿದ್ದಾರೆ. ಈ ದರೋಡೆಕೋರರ ಕೃತ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಘಟನೆಯ ಮಾಹಿತಿ ತಿಳಿದ ಕೂಡಲೇ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸಿಸಿಟಿವಿ ದೃಶ್ಯಗಳ ಆಧಾರದಲ್ಲಿ ಆರೋಪಿಗಳ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ. ದರೋಡೆಕೋರರ ಬಂಧನಕ್ಕಾಗಿ ಪೊಲೀಸರು ಶೋಧ ಕಾರ್ಯ ತೀವ್ರಗೊಳಿಸಿದ್ದಾರೆ.

ಯುಜಿಸಿ ನಿಯಮಗಳ ಬಗ್ಗೆ ಆತಂಕ ಬೇಡ; ಕಾನೂನು ದುರುಪಯೋಗವಾಗಲ್ಲ – ಧರ್ಮೇಂದ್ರ ಪ್ರಧಾನ್ ಸ್ಪಷ್ಟನೆ

0

ನವದೆಹಲಿ: ಶೈಕ್ಷಣಿಕ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯ ಹೋಗಲಾಡಿಸುವ ಉದ್ದೇಶದಿಂದ ಯುಜಿಸಿ ಜಾರಿಗೆ ತಂದಿರುವ ಹೊಸ ನಿಯಮಗಳ ಬಗ್ಗೆ ಉಂಟಾದ ವಿವಾದಕ್ಕೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಸ್ಪಷ್ಟನೆ ನೀಡಿದ್ದಾರೆ.

ಹೊಸ ನಿಯಮಗಳ ಜಾರಿಯಿಂದ ಯಾವುದೇ ಸಮುದಾಯಕ್ಕೆ ಅನ್ಯಾಯವಾಗುವುದಿಲ್ಲ ಹಾಗೂ ಕಾನೂನು ದುರುಪಯೋಗಕ್ಕೂ ಅವಕಾಶ ನೀಡುವುದಿಲ್ಲ ಎಂದು ಅವರು ಹೇಳಿದ್ದಾರೆ. ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಸಮುದಾಯದ ವಿದ್ಯಾರ್ಥಿಗಳಿಗೆ ಕ್ಯಾಂಪಸ್‌ಗಳಲ್ಲಿ ರಕ್ಷಣೆ ಒದಗಿಸುವುದೇ ಈ ನಿಯಮಗಳ ಮುಖ್ಯ ಉದ್ದೇಶವಾಗಿದ್ದು, ಜಾತಿ ನಿಂದನೆ ಮತ್ತು ತಾರತಮ್ಯವನ್ನು ಸಂಪೂರ್ಣವಾಗಿ ತಡೆಯಲು ಯುಜಿಸಿ ಕಠಿಣ ಕ್ರಮಗಳನ್ನು ಕೈಗೊಂಡಿದೆ ಎಂದು ಸಚಿವರು ತಿಳಿಸಿದ್ದಾರೆ.

ಭಾರತೀಯ ಆಟೋಮೊಬೈಲ್ ಕ್ಷೇತ್ರದಲ್ಲಿ ದಾಖಲೆ ಬೆಳವಣಿಗೆ; ಹೆಚ್ ಡಿ ಕುಮಾರಸ್ವಾಮಿ

0

ಪುಣೆ:- ದೇಶಿಯ ಆಟೋಮೊಬೈಲ್‌ ಕ್ಷೇತ್ರವು ನಾಗಾಲೋಟದಲ್ಲಿ ಬೆಳವಣಿಗೆ ಸಾಧಿಸುತ್ತಿದೆ ಎಂದು ಕೇಂದ್ರ ಸಚಿವ ಹೆಚ್ ಡಿಕೆ ಕುಮಾರಸ್ವಾಮಿ ಹೇಳಿದ್ದಾರೆ.

ಪುಣೆಯಲ್ಲಿ ಮಂಗಳವಾರ ಆಯೋಜಿಸಲಾದ ಅಂತಾರಾಷ್ಟ್ರೀಯ ಆಟೋಮೋಟಿವ್ ತಂತ್ರಜ್ಞಾನ (SIAT)–2026ರ ಮೂರು ದಿನಗಳ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸುರಕ್ಷಿತ, ಸುಸ್ಥಿರ ಮತ್ತು ಜಾಗತಿಕ ಮಟ್ಟದಲ್ಲಿ ಸ್ಪರ್ಧಾತ್ಮಕ ಚಲನಶೀಲತಾ ಪರಿಹಾರಗಳತ್ತ ಭಾರತ ಸಾಧಿಸುತ್ತಿರುವ ಬೆಳವಣಿಗೆ ಮಹತ್ವದ ಮೈಲಿಗಲ್ಲಾಗಿದೆ ಎಂದರು.

ಭಾರತೀಯ ಆಟೋಮೊಬೈಲ್ ಕ್ಷೇತ್ರದ ವೇಗದ ಬೆಳವಣಿಗೆಯನ್ನು ಉಲ್ಲೇಖಿಸಿದ ಸಚಿವರು, 2023–24ನೇ ಹಣಕಾಸು ವರ್ಷದಲ್ಲಿ 28.4 ಮಿಲಿಯನ್ ಯೂನಿಟ್‌ಗಳಾಗಿದ್ದ ವಾಹನ ಉತ್ಪಾದನೆ 2024–25ರಲ್ಲಿ 31 ಮಿಲಿಯನ್ ಯೂನಿಟ್‌ಗಳಿಗೆ ಏರಿಕೆಯಾಗಿದೆ. ಅದೇ ಅವಧಿಯಲ್ಲಿ ರಫ್ತು 4.5 ಮಿಲಿಯನ್ ಯೂನಿಟ್‌ಗಳಿಂದ 5.36 ಮಿಲಿಯನ್ ಯೂನಿಟ್‌ಗಳಿಗೆ ಹೆಚ್ಚಾಗಿದೆ. ಈ ಅಂಕಿ-ಅಂಶಗಳು ಸ್ವಚ್ಛ, ಸ್ಪರ್ಧಾತ್ಮಕ ಮತ್ತು ಸುಸ್ಥಿರ ವಾಹನ ವಲಯವನ್ನು ಉತ್ತೇಜಿಸುವಲ್ಲಿ ಕೇಂದ್ರ ಸರ್ಕಾರದ ನೀತಿಗಳ ಯಶಸ್ಸನ್ನು ತೋರಿಸುತ್ತವೆ ಎಂದು ಹೇಳಿದರು.

ಭಾರತದ ಆರ್ಥಿಕ ಪ್ರಗತಿಯ ಬಗ್ಗೆ ಮಾತನಾಡಿದ ಅವರು, 4.18 ಟ್ರಿಲಿಯನ್ ಡಾಲರ್ ಜಿಡಿಪಿಯೊಂದಿಗೆ ಭಾರತ ಜಗತ್ತಿನ ನಾಲ್ಕನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದ್ದು, ಶೀಘ್ರದಲ್ಲೇ ಮೂರನೇ ಸ್ಥಾನಕ್ಕೇರುವ ಸಾಧ್ಯತೆ ಇದೆ ಎಂದರು. 2030ರ ವೇಳೆಗೆ ದೇಶದ ಜಿಡಿಪಿ 7.3 ಟ್ರಿಲಿಯನ್ ಡಾಲರ್ ಮೈಲಿಗಲ್ಲು ತಲುಪುವ ಸಾಮರ್ಥ್ಯ ಹೊಂದಿದ್ದು, ಉತ್ಪಾದನೆ ಮತ್ತು ಬೆಳವಣಿಗೆ ಸಮತೋಲಿತ ದಿಕ್ಕಿನಲ್ಲಿ ಸಾಗುತ್ತಿದೆ ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ನಾಯಕತ್ವದಲ್ಲಿ, 2070ರ ವೇಳೆಗೆ ಇಂಗಾಲದ ನಿವ್ವಳ ಶೂನ್ಯ ಹೊರಸೂಸುವಿಕೆ ಸಾಧಿಸುವ ಗುರಿಯತ್ತ ಭಾರತ ಸ್ಪಷ್ಟ ಮತ್ತು ಮಹತ್ವಾಕಾಂಕ್ಷೆಯ ಮಾರ್ಗಸೂಚಿಯನ್ನು ರೂಪಿಸಿದೆ. ಮೇಕ್ ಇನ್ ಇಂಡಿಯಾ ಹಾಗೂ ಆತ್ಮನಿರ್ಭರ ಭಾರತ ದೃಷ್ಟಿಕೋನವು ಮುಂದುವರಿದ ಉತ್ಪಾದನಾ ವಲಯಗಳನ್ನು ಬಲಪಡಿಸಿ, ಭಾರತದ ಭವಿಷ್ಯದ ಬೆಳವಣಿಗೆ ಮತ್ತು ಜಾಗತಿಕ ಸ್ಥಾನವನ್ನು ಮತ್ತಷ್ಟು ದೃಢಪಡಿಸುತ್ತಿದೆ ಎಂದು ಹೆಚ್.ಡಿ. ಕುಮಾರಸ್ವಾಮಿ ಹೇಳಿದರು.

ಹೈಬ್ರಿಡ್ ಕಾಡು ಬೆಕ್ಕು ಪತ್ತೆ

0

ವಿಜಯಸಾಕ್ಷಿ ಸುದ್ದಿ, ರೋಣ: ತಾಲೂಕಿನ ಇಟಗಿ ಹಾಗೂ ಅಬ್ಬಿಗೇರಿ ಗ್ರಾಮದ ಬಳಿ ಎರಡು ಹೈಬ್ರಿಡ್ ಕಾಡು ಬೆಕ್ಕುಗಳು ಪತ್ತೆಯಾಗಿದ್ದು, ಅರಣ್ಯ ಇಲಾಖೆಯ ಸಿಬ್ಬಂದಿಗಳಿಗೆ ಅಚ್ಚರಿ ಮೂಡಿಸಿದೆ. ಹೈಬ್ರಿಡ್ ಕಾಡು ಬೆಕ್ಕು ರಾಜ್ಯದಲ್ಲಿ ಮೊದಲ ಬಾರಿಗೆ ನೆಲಮಂಗಲ ತಾಲೂಕಿನ ಮರಳುಕುಂಟೆ ಗ್ರಾಮದ ಜಮೀನೊಂದರಲ್ಲಿ ಪತ್ತೆಯಾಗಿತ್ತು. ನಂತರ ರೋಣ ತಾಲೂಕಿನಲ್ಲಿ ಈ ವಿಧದ ಕಾಡು ಬೆಕ್ಕು ಕಂಡುಬಂದಿದೆ. ರೋಣ ಅರಣ್ಯಾಧಿಕಾರಿ ಅನ್ವರ ಕೊಲ್ಹಾರ ತಮ್ಮ ತಂಡದೊಂದಿಗೆ ವನ್ಯಜೀವಿಗಳ ಗಣತಿ ಕಾರ್ಯದಲ್ಲಿ ತೊಡಗಿದ್ದ ಸಂದರ್ಭದಲ್ಲಿ ಹೈಬ್ರಿಡ್ ಕಾಡು ಬೆಕ್ಕುಗಳು ಪತ್ತೆಯಾಗಿವೆ ಎಂದು ಜೀವವೈವಿಧ್ಯ ಸಂಶೋಧಕ ಮಂಜುನಾಥ ನಾಯಕ ತಿಳಿಸಿದ್ದಾರೆ.

ನೌಕರರ ಸಂಘದ ವಾರ್ಷಿಕ ಮಹಾಸಭೆ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ತಾಲೂಕು ಶಾಖೆಯ 2024-25ನೇ ಸಾಲಿನ ವಾರ್ಷಿಕ ಮಹಾಸಭೆ ಹಾಗೂ ಎನ್‌ಎಂಎಎಸ್ ಉಚಿತ ತರಬೇತಿ ಸಮಾರೋಪ ಸಮಾರಂಭವು ಸೋಮವಾರ ಪಟ್ಟಣದಲ್ಲಿ ಜರುಗಿತು.

ಇದೇ ಸಂದರ್ಭದಲ್ಲಿ 2025-26ನೇ ಸಾಲಿನ ಜಿಲ್ಲಾಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ವಿಜೇತರಾಗಿ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಕ್ರೀಡಾಪಟುಗಳಿಗೆ ತಾಲೂಕಾ ಶಾಖೆಯಿಂದ ಅಭಿನಂದನಾ ಪತ್ರಗಳನ್ನು ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಹಾಗೂ ರಾಜ್ಯ ಉಪಾಧ್ಯಕ್ಷ ಡಾ. ಬಸವರಾಜ ಬಳ್ಳಾರಿ, ಸಂಘದ ವತಿಯಿಂದ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದು, ಅದರಲ್ಲಿ ಎನ್‌ಎಂಎಎಸ್ ಉಚಿತ ತರಬೇತಿಯೂ ಒಂದಾಗಿದೆ. ಎನ್‌ಎಂಎಎಸ್‌ನಿಂದ ಮಕ್ಕಳಿಗೆ ಹೆಚ್ಚು ಉಪಯೋಗವಾಗಲಿದ್ದು, ಅವರ ಭವಿಷ್ಯಕ್ಕೆ ಸಹಾಯಕಾರಿಯಾಗುತ್ತದೆ. ಲಕ್ಷ್ಮೇಶ್ವರ ತಾಲೂಕು ಶಾಖೆಯು ಗದಗ ಜಿಲ್ಲೆಗೆ ಮತ್ತು ರಾಜ್ಯಕ್ಕೆ ಮಾದರಿಯೆಂದು ಸಂತಸ ವ್ಯಕ್ತಪಡಿಸಿದರು.

ನಿಕಟಪೂರ್ವ ಅಧ್ಯಕ್ಷ ರವಿ ಗುಂಜೀಕರ ಮಾತನಾಡಿ, ನೌಕರರಿಗೆ ಅನುಕೂಲವಾಗುವ ರೀತಿ ಸಂಘಟನೆಯ ಕೆಲಸ ಕಾರ್ಯಗಳನ್ನು ಮಾಡಬೇಕು ಎಂದು ಸಲಹೆ ನೀಡಿದರು.

ಸಭೆಯಲ್ಲಿ ತಾಲೂಕಾಧ್ಯಕ್ಷ ಗುರುರಾಜ ಹವಳದ, ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ನಾಣಕಿ ನಾಯಕ, ಎಂ.ಎ. ನಿಟ್ಟಾಲಿ, ಜಿಲ್ಲಾ ಉಪಾಧ್ಯಕ್ಷ ಶ್ರೀಧರ್, ಜಿಲ್ಲಾ ಕಾರ್ಯದರ್ಶಿ ಮಲಕಶೆಟ್ಟಿ, ಆಯ್.ಎ. ಗಾಡಗೋಳಿ, ತಾಲೂಕಾ ಕಾರ್ಯದರ್ಶಿ ಎಂ.ಎ. ನದಾಫ್, ರಾಜ್ಯ ಪರಿಷತ್ ಸದಸ್ಯ ಎ.ಬಿ. ಗೌಡರ, ಎಮ್.ಡಿ. ವಾರದ, ಎಂ.ಎಸ್. ಹಿರೇಮಠ, ಎಲ್.ಎನ್. ನಂದೆಣ್ಣವರ, ಮಂಜುನಾಥ ಕೊಕ್ಕರಗುಂದಿ, ಬಿ.ಎಂ. ಯರಗುಪ್ಪಿ, ಫಕೀರಪ್ಪ ಹೂಗಾರ್, ಮಹಮ್ಮದ್‌ಹನೀಫ್ ಶಿರಹಟ್ಟಿ, ಎ.ಎಮ್. ಅಕ್ಕಿ, ಪ್ರಶಾಂತ ಸನದಿ ಇದ್ದರು. ನವೀನ ಅಂಗಡಿ ನಿರೂಪಿಸಿದರು.

ತಹಸೀಲ್ದಾರರ ಕೊಲೆಗೆ ಯತ್ನ ಆರೋಪಿಗಳಿಬ್ಬರ ಬಂಧನ

0

ವಿಜಯಸಾಕ್ಷಿ ಸುದ್ದಿ, ಗದಗ: ರೋಣ ತಹಸೀಲ್ದಾರ ಕಚೇರಿಯಲ್ಲಿ ದಂಡಾಧಿಕಾರಿಗಳಾಗಿ ಸೇವೆ ಸಲ್ಲಿಸುತ್ತಿರುವ ನಾಗರಾಜ ಕೆ ಅವರ ಮೇಲೆ ಆರೋಪಿಗಳಿಬ್ಬರು ಭಾನುವಾರ ತಡರಾತ್ರಿ ಕೊಲೆಗೆ ಯತ್ನಿಸಿದ್ದು, ಸಕಾಲದಲ್ಲಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ಪಿಡಬ್ಲುಡಿ ಪ್ರವಾಸಿ ಮಂದಿರದ ಆವರಣದಲ್ಲಿರುವ ತಹಸೀಲ್ದಾರರ ಮನೆಗೆ ಭಾನುವಾರ ರಾತ್ರಿ ನುಗ್ಗಿದ ಆರೋಪಿಗಳು ತಹಸೀಲ್ದಾರ ನಾಗರಾಜ ಕೆ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಅವರ ಕೊಲೆಗೆ ಯತ್ನ ನಡೆಸಿದ್ದಾರೆ ಎಂದು ತಹಸೀಲ್ದಾರ ನಾಗರಾಜ ಕೆ ರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಘಟನೆಗೆ ಸಂಬಂಧಿಸಿ ಆರೋಪಿಗಳಾದ ಪಟ್ಟಣದ ಹನಮಂತ ಚಲವಾದಿ ಹಾಗೂ ಶರಣಪ್ಪ ಗದಗಿನ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿ ಹನ್ಮಂತ ಚಲವಾದಿ ಮೇಲೆ ಈ ಹಿಂದೆಯೂ ಪ್ರಕರಣ ದಾಖಲಾಗಿತ್ತು. ಆರೋಪಿ ಆಗಾಗ ತಹಸೀಲ್ದಾರ ಕಚೇರಿಗೆ ತೆರಳಿ ತನ್ನ ಮೇಲೆ ಇರುವ ಪ್ರಕರಣಗಳನ್ನು ಖುಲಾಸೆಗೊಳಿಸುವಂತೆ ಒತ್ತಾಯಿಸಿ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸುತ್ತಿದ್ದ ಎನ್ನಲಾಗಿದ್ದು, ಪ್ರಕರಣ ಖುಲಾಸೆಗೊಳಿಸದಿದ್ದರೆ ಪರಿಣಾಮ ಕೆಟ್ಟದಾಗಿರುತ್ತದೆ ಎಂದು ತಹಸೀಲ್ದಾರ ನಾಗರಾಜರಿಗೆ ಬೆದರಿಕೆ ಹಾಕಿದ್ದ ಎನ್ನಲಾಗಿದೆ.

ಆದರೆ ತಹಸೀಲ್ದಾರ ನಾಗರಾಜ ಕೆ ಯಾವುದಕ್ಕೂ ಜಗ್ಗದೆ ತಮ್ಮ ಕರ್ತವ್ಯವನ್ನು ನಿಭಾಯಿಸಿದ್ದಾರೆ. ಇದನ್ನು ಸಹಿಸದ ಆರೋಪಿಗಳು ಭಾನುವಾರ ತಡರಾತ್ರಿ ಅವರ ನಿವಾಸಕ್ಕೆ ತೆರಳಿ ಕತ್ತು ಹಿಸುಕಿ ಅವರ ಕೊಲೆಗೆ ಯತ್ನಿಸಿದ್ದಾರೆ ಎಂದು ದೂರು ದಾಖಲು ಮಾಡಲಾಗಿದೆ. ರೋಣ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

ಅಂಚೆ ಆಧೀಕ್ಷಕರಿಗೆ ಸನ್ಮಾನ

0

ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಅಂಚೆ ಇಲಾಖೆಗೆ ಅಂಚೆ ಆಧೀಕ್ಷಕರಾಗಿ ಆಗಮಿಸಿದ ಎಸ್.ಎಸ್. ಶಿರಹಟ್ಟಿ ಅವರನ್ನು ಹಾಲುಮತ ಮಹಾಸಭಾ ಹಾಗೂ ಕರ್ನಾಟಕ ಪ್ರದೇಶ ಕುರುಬರ ಸಂಘದ ಜಿಲ್ಲಾ ಯುವ ಘಟಕದ ವತಿಯಿಂದ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಹಾಲುಮತ ಮಹಾಸಭಾದ ರಾಜ್ಯಾಧ್ಯಕ್ಷ ರುದ್ರಣ್ಣ ಗುಳಗುಳಿ, ನಾಗರಾಜ ಮೆಣಸಗಿ, ಸೋಮನಗೌಡ ಪಾಟೀಲ, ಮುತ್ತು ಜಡಿ, ರಾಘು ವಗ್ಗನವರ, ಹೇಮಂತ ಗಿಡ್ಡಹನಮಣ್ಣನವರ, ಮಂಜು ಜಡಿ, ಸತೀಶ ಗಿಡ್ಡಹನಮಣ್ಣನವರ, ರವಿ ಜೋಗಿನ, ಸುರೇಶ ಹೆಬಸೂರ, ಕುಮಾರ ಮಾರನಬಸರಿ, ಪರಶುರಾಮ ಜಡಿ, ಸೋಮು ಮೇಟಿ, ಸೋಮು ಬಿಂಗಿ, ಅಂಚೆ ಇಲಾಖೆ ಅಧಿಕಾರಿಗಳಾದ ವೆಂಕಟೇಶ ಕೊಳ್ಳಿ, ಎಂ.ಟಿ. ಕರಿಗಾರ, ನವೀನ ಕೊಪ್ಪದ ಮುಂತಾದವರು ಉಪಸ್ಥಿತರಿದ್ದರು.

error: Content is protected !!