ವಿಜಯಸಾಕ್ಷಿ ಸುದ್ದಿ, ಗದಗ: ಧರ್ಮವನ್ನು ರಕ್ಷಿಸುವವರನ್ನು ಧರ್ಮವೇ ರಕ್ಷಿಸುತ್ತದೆ. ಧರ್ಮದ ಹಾದಿಯಲ್ಲಿ ನಡೆಯುವವರ ದುಃಖಗಳು ಔಷಧಿಯಿಂದ ಶಮನವಾದಂತೆ ದೂರವಾಗುತ್ತವೆ. ಧರ್ಮಾಮೃತವನ್ನು ಪಾನ ಮಾಡಿದವರೇ ನಿಜವಾದ ಸುಖಿಗಳು ಎಂದು ಅಡ್ನೂರ ಬೃಹನ್ಮಠದ ಪೂಜ್ಯ ಅಭಿನವ ಪಂಚಾಕ್ಷರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ನಗರದ ಮಾಂಗಲ್ಯ ಮಂದಿರದಲ್ಲಿ ಗದಗ-ಬೆಟಗೇರಿ ಪಂಚಾಚಾರ್ಯ ಸೇವಾ ಸಂಘದ ಆಶ್ರಯದಲ್ಲಿ ನಡೆದ ‘ಸಿದ್ಧಾಂತ ಶಿಖಾಮಣಿ’ ಆಧ್ಯಾತ್ಮಿಕ ಪ್ರವಚನ ಮಾಲಿಕೆಯಲ್ಲಿ ನೇತೃತ್ವ ವಹಿಸಿ ಅವರು ಮಾತನಾಡಿದರು.
“ಧರ್ಮೋ ರಕ್ಷತಿ ರಕ್ಷಿತಃ” ಎಂಬುದು ಕೇವಲ ನುಡಿಯಲ್ಲ, ಬದುಕಿನ ಸತ್ಯ. ಧರ್ಮವೇ ಮನುಷ್ಯನ ಬದುಕಿನ ಶ್ರೇಷ್ಠ ಶಕ್ತಿಯಾಗಿದ್ದು, ದಯೆ, ಸತ್ಯ ಮತ್ತು ದಾನ ಮನುಷ್ಯನ ನಿಜವಾದ ಆಭರಣಗಳಾಗಿವೆ ಎಂದು ಹೇಳಿದರು.
ಶಿಬಿ ಚಕ್ರವರ್ತಿಯ ಧರ್ಮನಿಷ್ಠೆ, ದಾನವೀರ ಕರ್ಣನ ಉದಾರತೆಯನ್ನು ಉದಾಹರಿಸಿ ಮಾತನಾಡಿದ ಅವರು, ಸಕಲ ಜೀವಿಗಳಲ್ಲಿ ದಯೆ ತೋರುವುದು ನಿಜವಾದ ಧರ್ಮ. ಕೈಗಳಿಗೆ ಬಂಗಾರದ ಬಳೆಗಿಂತ ದಾನವೇ ಭೂಷಣ, ಕಂಠಕ್ಕೆ ಸತ್ಯವೇ ಭೂಷಣ ಹಾಗೂ ಕಿವಿಗಳಿಗೆ ಶಾಸ್ತ್ರಶ್ರವಣವೇ ಭೂಷಣ ಎಂದು ತಿಳಿಸಿದರು.
ಕಾಶಿ ಪೀಠದ ಜಗದ್ಗುರುಗಳ ನೇತೃತ್ವದಲ್ಲಿ ನಡೆಯುತ್ತಿರುವ ಸಂಗೀತಯುಕ್ತ ಇಷ್ಟಲಿಂಗ ಮಹಾಪೂಜೆ ಆತ್ಮಶುದ್ಧಿಗೆ ದಾರಿಯಾಗಿದ್ದು, ಆರು ದಿನಗಳ ಪ್ರವಚನ ಮತ್ತು ಪೂಜೆ ಮುಂದಿನ ವರ್ಷದವರೆಗೆ ಮನಸ್ಸಿಗೆ ಚೈತನ್ಯ ತುಂಬುವ ಆಧ್ಯಾತ್ಮಿಕ ಶಕ್ತಿಯಾಗಿದೆ ಎಂದು ಹೇಳಿದರು.
ನರೇಗಲ್ಲ ಹಿರೇಮಠದ ಪೂಜ್ಯ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳ ಗಣ್ಯರನ್ನು ಕಾಶಿ ಜಗದ್ಗುರುಗಳು ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ ಮಠಾಧೀಶರು, ಪಂಚಾಚಾರ್ಯ ವೇದ ಆಗಮ ಸಂಸ್ಕೃತ ಪಾಠಶಾಲೆಯ ವಟುಗಳು, ಅಖಿಲ ಭಾರತ ವೀರಶೈವ ಮಹಾಸಭೆಯ ಪದಾಧಿಕಾರಿಗಳು ಹಾಗೂ ಅಪಾರ ಸಂಖ್ಯೆಯ ಭಕ್ತರು ಪಾಲ್ಗೊಂಡಿದ್ದರು.


