ಬೆಂಗಳೂರು: ನಟ ದಿಲೀಪ್ ರಾಜ್ ಅಗಲಿಕೆಯ ನೋವಿನಿಂದ ಕನ್ನಡ ಚಿತ್ರರಂಗ ಇನ್ನೂ ಹೊರಬಂದಿಲ್ಲ. ಅವರ ನಿಧನದ ಬಳಿಕ ಸ್ನೇಹಿತರು, ಸಹ ಕಲಾವಿದರು ಹಾಗೂ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾವುಕ ನೆನಪುಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇದೀಗ ನಟ ಹಾಗೂ ನಿರ್ದೇಶಕ ನವೀನ್ ಕೃಷ್ಣ ತಮ್ಮ ಆಪ್ತ ಗೆಳೆಯ ದಿಲೀಪ್ ರಾಜ್ ಅವರಿಗೆ ಹಾಡಿನ ಮೂಲಕ ಭಾವುಕ ನಮನ ಸಲ್ಲಿಸಿದ್ದಾರೆ.
ಕಾಲೇಜು ದಿನಗಳಿಂದಲೂ ದಿಲೀಪ್ ರಾಜ್ ಮತ್ತು ನವೀನ್ ಕೃಷ್ಣ ಆತ್ಮೀಯ ಸ್ನೇಹಿತರಾಗಿದ್ದರು. ಕೇವಲ ನಟನೆಯಲ್ಲ, ಜೀವನದ ಅನೇಕ ಹಂತಗಳಲ್ಲಿ ಇಬ್ಬರೂ ಜೊತೆಯಾಗಿದ್ದರು. ನಿರ್ದೇಶನದತ್ತ ಹೆಜ್ಜೆ ಇಡಲು ಕೂಡ ದಿಲೀಪ್ ರಾಜ್ ಅವರೇ ಪ್ರೇರಣೆ ಎಂದು ನವೀನ್ ಕೃಷ್ಣ ಹಲವು ಬಾರಿ ಹೇಳಿಕೊಂಡಿದ್ದರು.
ಗೆಳೆಯನ ಅಗಲಿಕೆಯಿಂದ ಮನನೊಂದಿರುವ ನವೀನ್ ಕೃಷ್ಣ, ಇದೀಗ ದಿಲೀಪ್ ರಾಜ್ ಅವರ ವ್ಯಕ್ತಿತ್ವ ಮತ್ತು ಮಾನವೀಯತೆಯನ್ನು ಹಾಡಿನ ಮೂಲಕ ಸ್ಮರಿಸಿದ್ದಾರೆ.
“ಕಲೆಯೇ ಅವನ ಉಸಿರಾಯ್ತು.. ನಗುವೇ ಅವನ ಹೆಸರಾಯ್ತು.. ಸಾಧನೆ ರೂಢಿಯಾಯ್ತು.. ಹಸಿದವರ ಅನ್ನದಾತ..” ಎಂಬ ಸಾಲುಗಳು ದಿಲೀಪ್ ರಾಜ್ ಬದುಕಿನ ನೈಜ ಚಿತ್ರಣದಂತಿವೆ.
ಹಾಡಿನ ಕೊನೆಯಲ್ಲಿ “ವಿಧಿಯೂ ಬಂದು ಕರೆದರೂ ಸಾವಿಗೂ ಕೈ ಚಾಚಿದಾತ” ಎಂಬ ಸಾಲು ಕೇಳುಗರನ್ನು ಕಣ್ಣೀರಾಗಿಸುವಂತಿದೆ.
ಈ ಹಾಡಿನ ವಿಡಿಯೋ ಹಂಚಿಕೊಂಡಿರುವ ನವೀನ್ ಕೃಷ್ಣ, “ನೀನಿಲ್ಲ ಅಂತ ನಾನು ಒಪ್ಪಲ್ಲ.. ನೀನು ಎಲ್ಲಿದ್ದರೂ ಎಂದಿನಂತೆ ನಗು ನಗ್ತಾ ಇರು” ಎಂದು ಬರೆದುಕೊಂಡಿದ್ದು, ಆ ಪೋಸ್ಟ್ ಈಗ ಭಾರೀ ವೈರಲ್ ಆಗಿದೆ.
ಚಿತ್ರರಂಗದ ಅನೇಕ ಕಲಾವಿದರು ಈ ಪೋಸ್ಟ್ಗೆ ಪ್ರತಿಕ್ರಿಯಿಸಿ ದಿಲೀಪ್ ರಾಜ್ ಅವರನ್ನು ನೆನಪಿಸಿಕೊಂಡಿದ್ದಾರೆ. ಅಭಿಮಾನಿಗಳೂ ಸಹ “ಒಬ್ಬ ನಿಜವಾದ ಸ್ನೇಹಿತ ಮಾತ್ರ ಇಷ್ಟು ಹೃದಯಸ್ಪರ್ಶಿಯಾಗಿ ಗೆಳೆಯನನ್ನು ನೆನಪಿಸಿಕೊಳ್ಳಬಹುದು” ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ದಿಲೀಪ್ ರಾಜ್ ಅವರ ಸರಳತೆ, ನಗುಮುಖ ಮತ್ತು ಮಾನವೀಯತೆ ಅವರನ್ನು ಇಂದಿಗೂ ಅಭಿಮಾನಿಗಳ ಮನಸ್ಸಿನಲ್ಲಿ ಜೀವಂತವಾಗಿರಿಸಿದೆ.

