Home Blog Page 4

ರಾತ್ರಿ ಫೋನ್ ನೋಡುವ ಅಭ್ಯಾಸ ಇದೆಯಾ? ಮಲಗುವ 1 ಗಂಟೆ ಮೊದಲು ಮೊಬೈಲ್ ದೂರವಿಡಿ

0

ರಾತ್ರಿ ಮಲಗುವ ಮುನ್ನ ಮೊಬೈಲ್ ನೋಡುವುದು ಬಹುತೇಕ ಜನರ ದಿನನಿತ್ಯದ ಅಭ್ಯಾಸವಾಗಿದೆ. ರೀಲ್ಸ್, ಸಾಮಾಜಿಕ ಜಾಲತಾಣ, ಮೆಸೇಜ್, ಸುದ್ದಿ ಅಥವಾ ಕೆಲಸದ ವಿಚಾರಗಳನ್ನು ನೋಡುತ್ತಾ ಸಮಯ ಕಳೆಯುವುದರಿಂದ ನಿದ್ರೆಯ ಸಮಯ ಕಡಿಮೆಯಾಗುವ ಸಾಧ್ಯತೆಯಿದೆ.

ಇದರ ಪರಿಣಾಮವಾಗಿ ಬೆಳಗ್ಗೆ ದಣಿವು, ಕಣ್ಣುಗಳಲ್ಲಿ ಒಣತನ ಅಥವಾ ಅಸ್ವಸ್ಥತೆ ಹಾಗೂ ದಿನವಿಡೀ ಸುಸ್ತು ಕಾಣಿಸಿಕೊಳ್ಳಬಹುದು.

ತಜ್ಞರ ಪ್ರಕಾರ, ಮಲಗುವ ಕನಿಷ್ಠ ಒಂದು ಗಂಟೆ ಮೊದಲು ಮೊಬೈಲ್‌ ಸೇರಿದಂತೆ ಸ್ಕ್ರೀನ್‌ಗಳಿಂದ ದೂರವಿರುವುದು ನಿದ್ರೆಯ ಗುಣಮಟ್ಟಕ್ಕೆ ಸಹಾಯ ಮಾಡಬಹುದು. ರಾತ್ರಿ ಸ್ಕ್ರೀನ್‌ನಿಂದ ಬರುವ ಬೆಳಕು, ವಿಶೇಷವಾಗಿ ನೀಲಿ ಬೆಳಕು, ನಿದ್ರೆಗೆ ಸಂಬಂಧಿಸಿದ ಮೆಲಟೋನಿನ್ ಹಾರ್ಮೋನ್‌ನ ಸ್ರಾವಕ್ಕೆ ಅಡ್ಡಿಯಾಗಬಹುದು. ಇದರಿಂದ ನಿದ್ರೆ ಬರಲು ಹೆಚ್ಚು ಸಮಯ ಬೇಕಾಗುವ ಸಾಧ್ಯತೆಯಿದೆ.

ಒಂದು ಗಂಟೆ ಮೊಬೈಲ್ ದೂರವಿಟ್ಟರೆ ಏನೆಲ್ಲಾ ಪ್ರಯೋಜನ?

ಮಲಗುವ ಒಂದು ಗಂಟೆ ಮೊದಲು ಫೋನ್ ದೂರವಿಟ್ಟರೆ ಸ್ಕ್ರೀನ್ ಬೆಳಕಿನ ಪ್ರಭಾವ ಕಡಿಮೆಯಾಗುವುದರ ಜೊತೆಗೆ ಮೆದುಳಿಗೆ ವಿಶ್ರಾಂತಿ ಸಿಗುತ್ತದೆ. ಇದರಿಂದ:

  • ನಿದ್ರೆಗೆ ಮಾನಸಿಕವಾಗಿ ಸಿದ್ಧವಾಗಲು ಸಹಾಯವಾಗಬಹುದು.
  • ನಿದ್ರೆ ಬರುವ ಪ್ರಕ್ರಿಯೆ ಸುಲಭವಾಗಬಹುದು.
  • ರಾತ್ರಿ ತಡವಾಗಿ ಮಲಗುವ ಅಭ್ಯಾಸ ಕಡಿಮೆಯಾಗಬಹುದು.
  • ಒಟ್ಟು ನಿದ್ರೆಯ ಅವಧಿಯನ್ನು ಕಾಪಾಡಿಕೊಳ್ಳಲು ನೆರವಾಗಬಹುದು.
  • ಬೆಳಗ್ಗೆ ಎದ್ದಾಗ ದಣಿವು ಕಡಿಮೆಯಾಗಲು ಸಹಾಯವಾಗಬಹುದು.
  • ಫೋನ್ ಬದಲು ಏನು ಮಾಡಬಹುದು?

ಮಲಗುವ ಒಂದು ಗಂಟೆ ಮೊದಲು ಮೊಬೈಲ್ ದೂರವಿಟ್ಟು ಪುಸ್ತಕ ಓದುವುದು, ಲಘು ಸ್ಟ್ರೆಚಿಂಗ್ ಮಾಡುವುದು, ಧ್ಯಾನ ಅಥವಾ ಉಸಿರಾಟದ ವ್ಯಾಯಾಮ ಮಾಡುವುದು ಸೇರಿದಂತೆ ಹಲವು ಶಾಂತ ಚಟುವಟಿಕೆಗಳನ್ನು ಮಾಡಬಹುದು.

ಅಲ್ಲದೆ, ಕುಟುಂಬದವರೊಂದಿಗೆ ಶಾಂತವಾಗಿ ಮಾತನಾಡುವುದು, ಮಲಗುವ ಕೋಣೆಯ ಬೆಳಕನ್ನು ಕಡಿಮೆ ಮಾಡುವುದು ಹಾಗೂ ಪ್ರತಿದಿನ ಒಂದೇ ಸಮಯಕ್ಕೆ ಮಲಗಿ ಒಂದೇ ಸಮಯಕ್ಕೆ ಏಳುವ ಅಭ್ಯಾಸ ಬೆಳೆಸಿಕೊಳ್ಳುವುದು ಉತ್ತಮ.

ಫೋನ್ ಆಫ್ ಮಾಡಿದರೆ ಮಾತ್ರ ಸಾಕೇ?

ಒಳ್ಳೆಯ ನಿದ್ರೆಗಾಗಿ ಕೇವಲ ಮೊಬೈಲ್ ಬಳಕೆ ಕಡಿಮೆ ಮಾಡುವುದು ಮಾತ್ರ ಸಾಕಾಗುವುದಿಲ್ಲ. ನಿಯಮಿತ ನಿದ್ರೆ ಸಮಯ, ಸಾಕಷ್ಟು ನಿದ್ರೆ, ದೈಹಿಕ ಚಟುವಟಿಕೆ ಹಾಗೂ ಆರೋಗ್ಯಕರ ದಿನಚರಿಯೂ ಮುಖ್ಯ.

ದೀರ್ಘಕಾಲದಿಂದ ನಿದ್ರೆ ಬರದಿರುವುದು, ಪದೇಪದೇ ನಿದ್ರೆಯಿಂದ ಎಚ್ಚರವಾಗುವುದು ಅಥವಾ ಹಗಲಿನಲ್ಲಿ ಅತಿಯಾದ ನಿದ್ರೆ ಕಾಣಿಸಿಕೊಳ್ಳುತ್ತಿದ್ದರೆ ವೈದ್ಯರ ಸಲಹೆ ಪಡೆಯುವುದು ಸೂಕ್ತ.

ಸೂಚನೆ: ಈ ಮಾಹಿತಿ ಸಾಮಾನ್ಯ ಆರೋಗ್ಯ ಮಾಹಿತಿಗಾಗಿ ಮಾತ್ರ. ನಿರಂತರ ನಿದ್ರೆಯ ಸಮಸ್ಯೆಗಳಿದ್ದರೆ ಅರ್ಹ ವೈದ್ಯರನ್ನು ಸಂಪರ್ಕಿಸಿ.

ಬಿಸಿಎ ನಾಲ್ಕನೇ ಸೆಮಿಸ್ಟರ್‌ನಲ್ಲಿ ಮನೋರಮಾ ಕಾಲೇಜಿನ ವಿದ್ಯಾರ್ಥಿಗಳ ಸಾಧನೆ

0

ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಮನೋರಮಾ ಮಹಾವಿದ್ಯಾಲಯದ ಬಿಸಿಎ ಕೋರ್ಸ್‌ನ ನಾಲ್ಕನೇ ಸೆಮಿಸ್ಟರ್ ಪರೀಕ್ಷೆಯಲ್ಲಿ ವಿದ್ಯಾರ್ಥಿನಿಯರು ಉತ್ತಮ ಸಾಧನೆ ಮಾಡಿದ್ದು, ಐವರು ವಿದ್ಯಾರ್ಥಿನಿಯರು ಮೊದಲ ಐದು ಸ್ಥಾನಗಳನ್ನು ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ.

ಕುಮಾರಿ ಮೆಹೆಕ ದುಕಾಂದಾರ 575 ಅಂಕ ಪಡೆದು ಪ್ರಥಮ ಸ್ಥಾನ, ಕುಮಾರಿ ಮೇಘಾ ಅಂಗಡಿ 559 ಅಂಕ ಪಡೆದು ದ್ವಿತೀಯ ಸ್ಥಾನ, ಕುಮಾರಿ ಮೆಹತಾಬಾನು ಕಾತರಕಿ 533 ಅಂಕ ಪಡೆದು ತೃತೀಯ ಸ್ಥಾನ, ಕುಮಾರಿ ಸ್ವಾತಿ ಚುದಗುಂಡ 525 ಅಂಕ ಪಡೆದು ನಾಲ್ಕನೇ ಸ್ಥಾನ ಹಾಗೂ ಕುಮಾರಿ ಸೌಮ್ಯ ಬಣ್ಣದಬಾವಿ 521 ಅಂಕ ಪಡೆದು ಐದನೇ ಸ್ಥಾನ ಪಡೆದಿದ್ದಾರೆ.

ವಿದ್ಯಾರ್ಥಿನಿಯರ ಸಾಧನೆಗೆ ಸಂಸ್ಥೆಯ ಚೇರ್ಮನ್ ಎನ್.ಎಂ. ಕುಡತರಕರ, ಪ್ರಾಚಾರ್ಯ ಬಿ.ಎಸ್. ಹಿರೇಮಠ, ಆಡಳಿತಾಧಿಕಾರಿ ಕಿಶೋರ ಮುದಗಲ್ಲ, ಸಂಸ್ಥೆಯ ನಿರ್ದೇಶಕರಾದ ಮಂಜುನಾಥ ಕುಡತರಕರ, ಸಂಜಯಕುಮಾರ ಕುಡತರಕರ, ಚೇತನ ಕುಡತರಕರ, ಸಂಯೋಜಕಿ ಪ್ರೊ. ಸವಿತಾ ಪೂಜಾರ ಹಾಗೂ ಸಿಬ್ಬಂದಿ ವರ್ಗದವರು ಅಭಿನಂದಿಸಿ, ಮುಂದಿನ ಶೈಕ್ಷಣಿಕ ಬದುಕಿಗೆ ಶುಭ ಹಾರೈಸಿದ್ದಾರೆ.

ವಿಡಿಎಸ್‌ಟಿಸಿ ಶಾಲೆಯಲ್ಲಿ ಸಾವರ್ಕರ್ ಸ್ಮರಣೆ

0

ವಿಜಯಸಾಕ್ಷಿ ಸುದ್ದಿ, ಗದಗ: ದೇಶದ ಸ್ವಾತಂತ್ರ್ಯಕ್ಕಾಗಿ ಮನೆ, ಆಸ್ತಿ ಹಾಗೂ ಜೀವನವನ್ನೇ ತ್ಯಾಗ ಮಾಡಿದ ಮಹಾನ್ ಸ್ವಾತಂತ್ರ್ಯ ಹೋರಾಟಗಾರ ವಿ.ಡಿ. ಸಾವರ್ಕರ್ ಅವರ ದೇಶಭಕ್ತಿ, ಧೈರ್ಯ, ತ್ಯಾಗ ಹಾಗೂ ದೃಢಸಂಕಲ್ಪ ಇಂದಿನ ಯುವಜನತೆಗೆ ಪ್ರೇರಣೆಯಾಗಬೇಕು ಎಂದು ಪ್ರಾಚಾರ್ಯೆ ಡಾ. ಗಂಗೂಬಾಯಿ ಪವಾರ ಹೇಳಿದರು.

ನಗರದ ವಿದ್ಯಾದಾನ ಸಮಿತಿಯ ಶ್ರೀಮತಿ ಎಂ.ಬಿ. ಹುಯಿಲಗೋಳ ಶಿಕ್ಷಣ ಮಹಾವಿದ್ಯಾಲಯದಲ್ಲಿ ನಡೆದ ಸ್ವಾತಂತ್ರ್ಯ ಹೋರಾಟಗಾರರ ಸಂಸ್ಮರಣಾ ವಿಶೇಷ ಕಾರ್ಯಕ್ರಮದಲ್ಲಿ ದೇಶಪ್ರೇಮಿ ವಿನಾಯಕ ದಾಮೋದರ ಸಾವರ್ಕರ್ ಕುರಿತು ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮಹಾರಾಷ್ಟ್ರದ ಭಗೂರಿನಲ್ಲಿ ಜನಿಸಿದ ಸಾವರ್ಕರ್ ಬಾಲ್ಯದಿಂದಲೇ ದೇಶಭಕ್ತಿ ಹಾಗೂ ಸ್ವಾತಂತ್ರ್ಯದ ತುಡಿತ ಬೆಳೆಸಿಕೊಂಡಿದ್ದರು. ಬ್ರಿಟಿಷರ ಆಳ್ವಿಕೆಯಿಂದ ಭಾರತವನ್ನು ಮುಕ್ತಗೊಳಿಸಬೇಕೆಂಬ ದೃಢ ಸಂಕಲ್ಪ ಹೊಂದಿದ್ದರು. ಶ್ರೇಷ್ಠ ಕ್ರಾಂತಿಕಾರಿ, ಕವಿ ಹಾಗೂ ರಾಜನೀತಿಜ್ಞರಾಗಿದ್ದ ಅವರು ‘ಅಭಿನವ ಭಾರತ’ ಸಂಸ್ಥೆ ಹಾಗೂ ನಾಸಿಕದಲ್ಲಿ ‘ಮಿತ್ರಮಂಡಳಿ’ ಸ್ಥಾಪಿಸಿ ಸ್ವಾತಂತ್ರ್ಯ ಹೋರಾಟಕ್ಕೆ ಸಂಘಟನಾ ಬಲ ನೀಡಿದ್ದರು ಎಂದರು.

1902ರಲ್ಲಿ ಭಾರತದ ಸ್ವಾತಂತ್ರ್ಯ ಸಂಗ್ರಾಮದ ಸ್ವರ್ಣ ಮಹೋತ್ಸವ ಆಚರಿಸಿದ ಸಾವರ್ಕರ್, ಬ್ರಿಟಿಷರಿಂದ ಕಠಿಣ ‘ಕಾಲಾಪಾನಿ’ ಶಿಕ್ಷೆ ಅನುಭವಿಸಿದರೂ ತಮ್ಮ ಬರಹ ಹಾಗೂ ಕಾವ್ಯದ ಮೂಲಕ ಸ್ವಾತಂತ್ರ್ಯ ಹೋರಾಟಕ್ಕೆ ಸ್ಫೂರ್ತಿ ತುಂಬಿದರು. ಅವರ ಜೀವನದಲ್ಲಿ ದೇಶಭಕ್ತಿ, ಧೈರ್ಯ, ತ್ಯಾಗ ಹಾಗೂ ದೃಢಸಂಕಲ್ಪ ಪ್ರಮುಖ ಸ್ಥಾನ ಪಡೆದಿದ್ದವು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಬಿ.ಇಡ್. ಪ್ರಶಿಕ್ಷಣಾರ್ಥಿಗಳು ವೀರ ಸಾವರ್ಕರ್ ಅವರ ಜೀವನದ ಪ್ರಮುಖ ಘಟನೆಗಳ ಕುರಿತು ಮಾತನಾಡಿದರು. ಸಾವರ್ಕರ್ ಅವರ ಜೀವನಾಧಾರಿತ ಚಲನಚಿತ್ರ ಪ್ರದರ್ಶಿಸಲಾಯಿತು. ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ರೇಣುಕಾ ಚಿಮ್ಮನಕಟ್ಟಿ ಪ್ರಾರ್ಥಿಸಿದರು. ರುದ್ರೇಶ ಸ್ವಾಗತಿಸಿದರು. ಸಂತೋಷ ಐಹೊಳಿ ನಿರೂಪಿಸಿದರು. ಮೇಘಾ ಮುದ್ದಿ ವಂದಿಸಿದರು. ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.

ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಕ್ರೀಡೆ ಸಹಕಾರಿ: ನಾಗರಾಜ ದೇಶಪಾಂಡೆ

0

ವಿಜಯಸಾಕ್ಷಿ ಸುದ್ದಿ, ಮುಳಗುಂದ: ವಿದ್ಯಾರ್ಥಿಗಳು ಶಿಕ್ಷಣದ ಜತೆಗೆ ಕ್ರೀಡೆ ಹಾಗೂ ಇತರ ಪಠ್ಯೇತರ ಚಟುವಟಿಕೆಗಳಲ್ಲೂ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಕ್ರೀಡೆಯಿಂದ ಶಿಸ್ತು, ಸಮಯಪ್ರಜ್ಞೆ, ನಾಯಕತ್ವ ಗುಣ ಹಾಗೂ ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವ ಬೆಳೆಸಿಕೊಳ್ಳಲು ಸಾಧ್ಯ ಎಂದು ನಾಗರಾಜ ದೇಶಪಾಂಡೆ ಹೇಳಿದರು.

ಪಟ್ಟಣದ ಸರ್ಕಾರಿ ಪ್ರೌಢಶಾಲೆ (ಆರ್‌ಎಂಎಸ್‌ಎ) ಆವರಣದಲ್ಲಿ ಜಿಪಂ, ತಾಪಂ ಗದಗ, ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯಗಳ ಸಹಯೋಗದಲ್ಲಿ ಸೋಮವಾರ ನಡೆದ 2026-27ನೇ ಸಾಲಿನ ಪ್ರೌಢಶಾಲೆಗಳ ಮುಳಗುಂದ ವಲಯ ಮಟ್ಟದ ಕ್ರೀಡಾಕೂಟಕ್ಕೆ ಕ್ರೀಡಾ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ಕ್ರೀಡೆ ವಿದ್ಯಾರ್ಥಿಗಳಲ್ಲಿ ದೈಹಿಕ ಸಾಮರ್ಥ್ಯದ ಜತೆಗೆ ಮಾನಸಿಕ ಸ್ಥೈರ್ಯವನ್ನು ಬೆಳೆಸುತ್ತದೆ. ಕ್ರೀಡೆಯಲ್ಲಿ ಸೋಲು-ಗೆಲುವು ಸಹಜವಾಗಿದ್ದು, ವಿದ್ಯಾರ್ಥಿಗಳು ಗೆಲುವಿನಿಂದ ಅಹಂಕಾರಪಡದೆ, ಸೋಲಿನಿಂದ ನಿರಾಶರಾಗದೆ ಮುಂದಿನ ಅವಕಾಶಕ್ಕಾಗಿ ಸಿದ್ಧರಾಗಬೇಕು ಎಂದರು.

ಬಸವರಾಜ ಸುಂಕಾಪೂರ ಮಾತನಾಡಿ, ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸುವುದೇ ದೊಡ್ಡ ಸಾಧನೆ. ವಿದ್ಯಾರ್ಥಿಗಳು ಮೊಬೈಲ್ ಹಾಗೂ ಸಾಮಾಜಿಕ ಜಾಲತಾಣಗಳ ಬಳಕೆಯನ್ನು ಕಡಿಮೆ ಮಾಡಿ, ಕ್ರೀಡಾ ಚಟುವಟಿಕೆಗಳಿಗೆ ಹೆಚ್ಚಿನ ಸಮಯ ಮೀಸಲಿಡಬೇಕು ಎಂದರು.

ಗದಗ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವಿ. ನಡುವಿನಮನಿ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿಯೂ ಒಂದಲ್ಲ ಒಂದು ಪ್ರತಿಭೆ ಇರುತ್ತದೆ. ಅದನ್ನು ಗುರುತಿಸಿ ಪ್ರೋತ್ಸಾಹಿಸುವ ಜವಾಬ್ದಾರಿ ಶಿಕ್ಷಕರು ಹಾಗೂ ಪಾಲಕರ ಮೇಲಿದೆ. ಗ್ರಾಮೀಣ ವಿದ್ಯಾರ್ಥಿಗಳಲ್ಲಿಯೂ ಕ್ರೀಡಾ ಪ್ರತಿಭೆ ಸಾಕಷ್ಟಿದ್ದು, ಸೂಕ್ತ ತರಬೇತಿ ಹಾಗೂ ಅವಕಾಶ ದೊರೆತರೆ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಬಲ್ಲರು. ವಿದ್ಯಾರ್ಥಿಗಳು ನಿರಂತರ ಪ್ರಯತ್ನ ಹಾಗೂ ಪರಿಶ್ರಮದೊಂದಿಗೆ ಕ್ರೀಡೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದರು.

ಶಾಲೆಯ ಮುಖ್ಯೋಪಾಧ್ಯಾಯ ಎಸ್.ಎಚ್. ಪೂಜಾರ ಪ್ರಾಸ್ತಾವಿಕವಾಗಿ ಮಾತನಾಡಿ, ಮುಳಗುಂದ ಪಟ್ಟಣದ ಮುಖಂಡರು ಕ್ರೀಡೆಗಳಿಗೆ ಸಾಕಷ್ಟು ಸಹಾಯ-ಸಹಕಾರ ನೀಡುತ್ತಿರುವುದು ಶ್ಲಾಘನೀಯ ಎಂದರು.

ಹಿರಿಯರಾದ ಎಂ.ಡಿ. ಬಟ್ಟೂರ ಕ್ರೀಡಾ ಜ್ಯೋತಿ ಸ್ವೀಕರಿಸಿದರು. ಸಾಧಕರು ಹಾಗೂ ದಾನಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಮಾದೇವಪ್ಪ ಮಾನೇಗರ ಅಧ್ಯಕ್ಷತೆ ವಹಿಸಿದ್ದರು.

ಹಿರಿಯರಾದ ಅಶೋಕ ಸೊನಗೋಜಿ, ಶಿವಶಿಂಪರ, ಎಸ್.ಸಿ. ಅಮರಶೆಟ್ಟರ, ವಿಜಯ ನೀಲಗುಂದ, ಸಂಜಯ ನೀಲಗುಂದ, ಅಶೋಕ ಹುಣಸಿಮರದ, ಬಸವರಾಜ ಹಾರೋಗೇರಿ, ಮಹಾದೇವಪ್ಪ ಗಡಾದ, ಇಮಾಮಸಾಬ ಶೇಖ, ಮಹಾಂತಪ್ಪ ನೀಲಗುಂದ, ದೈಹಿಕ ಶಿಕ್ಷಕ ವಿ.ಟಿ. ಅಂಗಡಿ, ನೂರಹ್ಮದ ನದಾಫ್ ಸೇರಿದಂತೆ ಮುಳಗುಂದ ವಲಯದ ಪ್ರೌಢಶಾಲೆಗಳ ದೈಹಿಕ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಕ್ರೀಡೆಯಲ್ಲಿ ಸೋಲು-ಗೆಲುವು ಸಹಜ. ಗೆಲುವಿನಿಂದ ಅಹಂಕಾರ ಪಡದೆ, ಸೋಲಿನಿಂದ ನಿರಾಶರಾಗದೆ ಮುಂದಿನ ಅವಕಾಶಕ್ಕಾಗಿ ಸಿದ್ಧರಾಗಬೇಕು. ಮೊಬೈಲ್ ಹಾಗೂ ಸಾಮಾಜಿಕ ಜಾಲತಾಣಗಳ ಬಳಕೆ ಕಡಿಮೆ ಮಾಡಿ ಕ್ರೀಡೆಗೆ ಹೆಚ್ಚಿನ ಸಮಯ ನೀಡಬೇಕು.

— ಬಸವರಾಜ ಸುಂಕಾಪೂರ

ಗದಗದ ಜಾನಪದ ವೈಭವಕ್ಕೆ ಮೆರವಣಿಗೆಯ ಮೆರುಗು

0

ವಿಜಯಸಾಕ್ಷಿ ಸುದ್ದಿ, ಗದಗ: ಜಗತ್ತಿನ ಸಾಂಸ್ಕೃತಿಕ ಲೋಕಕ್ಕೆ ಗದಗ ಜಿಲ್ಲೆಯ ಕೊಡುಗೆ ಅಪಾರ. ಪಾರಂಪರಿಕ ಕಲೆಗಳನ್ನು ತಲೆಮಾರಿನಿಂದ ತಲೆಮಾರಿಗೆ ಪರಿಚಯಿಸಿ, ಅವುಗಳನ್ನು ಉಳಿಸಿ ಬೆಳೆಸುವಲ್ಲಿ ಜಿಲ್ಲೆಯ ಕಲಾವಿದರ ಪಾತ್ರ ಶ್ಲಾಘನೀಯ ಎಂದು ವಿಧಾನ ಪರಿಷತ್ ಸದಸ್ಯ ಪ್ರೊ. ಎಸ್.ವಿ. ಸಂಕನೂರ ಹೇಳಿದರು.

ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಜಾನಪದ ಅಕಾಡೆಮಿ, ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರ, ತಂಜಾವೂರು ಹಾಗೂ ಎ.ಎಸ್.ಎಸ್. ಮಹಾವಿದ್ಯಾಲಯದ ಸಂಯುಕ್ತ ಆಶ್ರಯದಲ್ಲಿ ವಿಶ್ವ ಜಾನಪದ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ‘ಪಂಚಂ… ಪಗಡಂ…’ ಜಾನಪದ ಆಟ-ನೃತ್ಯ ಸಂಭ್ರಮದ ಮೆರವಣಿಗೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ಜಾನಪದ ಕಲೆಗಳು ನಮ್ಮ ನೆಲದ ಸಂಸ್ಕೃತಿ, ಜೀವನ ಪದ್ಧತಿ ಹಾಗೂ ಜನರ ಭಾವನೆಗಳನ್ನು ಪ್ರತಿಬಿಂಬಿಸುತ್ತವೆ. ಇಂತಹ ಕಲೆಗಳನ್ನು ಉಳಿಸಿ ಮುಂದಿನ ಪೀಳಿಗೆಗೆ ಪರಿಚಯಿಸುವ ಕಾರ್ಯ ನಿರಂತರವಾಗಿ ನಡೆಯಬೇಕು ಎಂದರು.

ಮೆರವಣಿಗೆಯಲ್ಲಿ ವಿವಿಧ ಜಿಲ್ಲೆಗಳ ಜಾನಪದ ಕಲಾತಂಡಗಳು ತಮ್ಮ ಸಾಂಪ್ರದಾಯಿಕ ಕಲೆಗಳನ್ನು ಪ್ರದರ್ಶಿಸಿ ಗಮನ ಸೆಳೆದವು. ಕಲಘಟಗಿಯ ಕುಬೇರಗೌಡ ಮುರಳಿ ಮತ್ತು ತಂಡದ ಕರಡಿ ಮಜಲು, ಉತ್ತರ ಕನ್ನಡ ಜಿಲ್ಲೆಯ ಜುಲಿಯಾ ಫೇದ್ರು ಫರ್ನಾಂಡಿಸ್ ಮತ್ತು ತಂಡದ ಸಿದ್ಧಿ ಡಮಾಮಿ ನೃತ್ಯ, ಹಾವೇರಿಯ ಬಸವಣ್ಣಿಪ್ಪ ಅಟವಳಗಿ ಮತ್ತು ತಂಡದ ಪುರವಂತಿಕೆ, ರಾಯಚೂರು ಜಿಲ್ಲೆಯ ಮಸ್ಕಿ ಅಮರೇಶ ಮತ್ತು ತಂಡದ ಹಗಲು ವೇಷ, ಕೊಪ್ಪಳ ಜಿಲ್ಲೆಯ ನಾಗರಾಜ ಹಿರೇಮಠ ಮತ್ತು ತಂಡದ ನಂದಿಧ್ವಜ ಕುಣಿತ ಹಾಗೂ ಧಾರವಾಡ ಜಿಲ್ಲೆಯ ದ್ಯಾಮಣ್ಣ ಲಮಾಣಿ ಮತ್ತು ತಂಡದ ವೀರಗಾಸೆ ಪ್ರದರ್ಶನ ಮೆರವಣಿಗೆಗೆ ಮೆರುಗು ತಂದವು.

ಸ್ಥಳೀಯ ಕಲಾವಿದರಿಂದಲೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಮೆರವಣಿಗೆಯಲ್ಲಿ ಕರ್ನಾಟಕ ಜಾನಪದ ಅಕಾಡೆಮಿ ರಿಜಿಸ್ಟ್ರಾರ್ ನಮ್ರತಾ ಎನ್., ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ. ಬಸವರಾಜ ಬಳ್ಳಾರಿ, ಹಿರಿಯ ಸಾಂಸ್ಕೃತಿಕ ಚಿಂತಕ ಡಾ. ಜಿ.ಬಿ. ಪಾಟೀಲ, ಜಾನಪದ ಅಕಾಡೆಮಿ ಸದಸ್ಯ ಶಂಕ್ರಣ್ಣ ಸಂಕಣ್ಣವರ, ಸಾಹಿತಿಗಳಾದ ಡಾ. ರಾಜೇಂದ್ರ ಗಡಾದ, ಡಾ. ನಿಂಗೂ ಸೊಲಗಿ, ಕಲಾವಿದರಾದ ವಿಜಯ ಕಿರೇಸೂರ, ಸೋಮಶೇಖರ ಚಿಕ್ಕಮಠ, ಶಿವು ಭಜಂತ್ರಿ, ಗೌಡಪ್ಪ ಬೊಮ್ಮಪ್ಪನವರ, ಬಸವರಾಜ ಈರಣ್ಣವರ, ನಿಂಗಪ್ಪ ಗುಡ್ಡದ, ಯಲ್ಲಪ್ಪ ಡಕ್ಕಣ್ಣವರ, ಅಜಿತ ಬಸಾಪೂರ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ಜಾನಪದ ಕಲೆಗಳು ನಮ್ಮ ಸಾಂಸ್ಕೃತಿಕ ಪರಂಪರೆಯ ಜೀವಂತ ಪ್ರತಿಬಿಂಬ. ಅವುಗಳನ್ನು ತಲೆಮಾರಿನಿಂದ ತಲೆಮಾರಿಗೆ ಕೊಂಡೊಯ್ಯುವಲ್ಲಿ ಕಲಾವಿದರ ಪಾತ್ರ ಅತ್ಯಂತ ಮಹತ್ವದ್ದು.

— ಪ್ರೊ. ಎಸ್.ವಿ. ಸಂಕನೂರ, ವಿಧಾನ ಪರಿಷತ್ ಸದಸ್ಯ

ಈದ್ ಮಿಲಾದ್‌ ಹಿನ್ನೆಲೆ: 110 ಮಂದಿಗೆ ಉಚಿತ ಕಣ್ಣು ತಪಾಸಣೆ

0

ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ: ಈದ್ ಮಿಲಾದ್ ಅಂಗವಾಗಿ ಇಲ್ಲಿಯ ಮುಸ್ಲಿಂ ಜಮಾತ್, ಅಂಜುಮನ್-ಎ-ಇಸ್ಲಾಂ ಕಮಿಟಿ ಹಾಗೂ ಹಜರತ್ ಟಿಪ್ಪು ಸುಲ್ತಾನ್ ಯೂತ್ ಅಸೋಸಿಯೇಷನ್ ವತಿಯಿಂದ ಜಯಪ್ರಿಯಾ ಕಣ್ಣಿನ ಆಸ್ಪತ್ರೆ, ಹುಬ್ಬಳ್ಳಿ ಸಹಯೋಗದಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ ನಡೆಯಿತು.

ಹಿರೇಮಸೂತಿ ಆವರಣದಲ್ಲಿ ನಡೆದ ಶಿಬಿರವನ್ನು ಅಂಜುಮನ್-ಎ-ಇಸ್ಲಾಂ ಕಮಿಟಿ ಅಧ್ಯಕ್ಷ ನಜೀರ್‌ಅಹ್ಮದ್ ಕಿರೀಟಗೇರಿ ಉದ್ಘಾಟಿಸಿದರು. ಹುಬ್ಬಳ್ಳಿಯ ಡಾ. ಚಂದ್ರು ಶ್ರೀಗಿರಿ ನೇತೃತ್ವದ ವೈದ್ಯರ ತಂಡ 110 ಮಂದಿಯ ಕಣ್ಣುಗಳನ್ನು ತಪಾಸಣೆ ನಡೆಸಿತು. ಈ ಪೈಕಿ 30 ಮಂದಿಗೆ ಶಸ್ತ್ರಚಿಕಿತ್ಸೆ ಅಗತ್ಯವಿದ್ದು, ಅವರನ್ನು ಹುಬ್ಬಳ್ಳಿಯ ಜಯಪ್ರಿಯಾ ಕಣ್ಣಿನ ಆಸ್ಪತ್ರೆಗೆ ಶಿಫಾರಸು ಮಾಡಲಾಯಿತು.

ಕಮಿಟಿ ಉಪಾಧ್ಯಕ್ಷ ದಾದಾಪೀರ ಕೊರ್ಲಹಳ್ಳಿ, ಸದಸ್ಯರಾದ ಅಲ್ಲಿಸಾಬ ನದಾಫ್, ಖಾಜಿಸಾಬ ಮುಲ್ಲಾ, ಮಹ್ಮದಸಾಬ ನದಾಫ್, ಮಹಮ್ಮದಸಾಬ ಹಂದ್ರಾಳ, ದಾವೂದ್ ಹಂದ್ರಾಳ, ಗಫರಸಾಬ ಮೂಲಿಮನಿ, ಜಲಾನಸಾಬ ಡೋಣಿ ಹಾಗೂ ಹಜರತ್ ಟಿಪ್ಪು ಸುಲ್ತಾನ್ ಯೂತ್ ಅಸೋಸಿಯೇಷನ್ ಅಧ್ಯಕ್ಷ ಹೈದರಲಿ ನದಾಫ್, ಉಪಾಧ್ಯಕ್ಷ ರೀಯಾಜ್ ಮಸೂತಿ, ಕಾರ್ಯದರ್ಶಿ ಆಸ್ಪಾಕ್ ಹಮಸಾಗರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಪ್ರವಾದಿ ಮೊಹಮ್ಮದ್ ಪೈಗಂಬರ್ ಜೀವನ ಮಾನವಕುಲಕ್ಕೆ ಆದರ್ಶ: ಮೌಲಾನಾ ಫಾರೂಖ್ ಸಾಹೇಬ್

0

ವಿಜಯಸಾಕ್ಷಿ ಸುದ್ದಿ, ಗದಗ: ಪ್ರವಾದಿ ಹಜರತ್ ಮೊಹಮ್ಮದ್ ಪೈಗಂಬರ್ ಅವರ ಜೀವನ ಮಾನವಕುಲಕ್ಕೆ ಆದರ್ಶವಾಗಿದೆ. ಅವರ ಸುನ್ನತ್‌ಗಳನ್ನು ಅನುಸರಿಸುವ ಜತೆಗೆ ಪವಿತ್ರ ಕುರಾನ್‌ನ ಬೋಧನೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಮೌಲಾನಾ ಫಾರೂಖ್ ಸಾಹೇಬ್ ಹೇಳಿದರು.

ತಾಲೂಕಿನ ಕೋಟುಮಚಗಿ ಗ್ರಾಮದ ಹಜರತ್ ಜಿಂದಾಶಾವಲಿ ಶಾದಿಮಹಲ್‌ನಲ್ಲಿ ಅಂಜುಮನ್-ಏ-ಇಸ್ಲಾಂ ಕಮಿಟಿ ಹಾಗೂ ನೌಜವಾನ್ ಕಮಿಟಿ ಆಶ್ರಯದಲ್ಲಿ ಬುಧವಾರ ಆಯೋಜಿಸಿದ್ದ ಪ್ರವಾದಿ ಹಜರತ್ ಮೊಹಮ್ಮದ್ ಪೈಗಂಬರ್ ಜಯಂತ್ಯೋತ್ಸವದಲ್ಲಿ ಅವರು ಮಾತನಾಡಿದರು.

ಇಮಾನ್ ಎಂದರೆ ಅಲ್ಲಾಹನ ಮೇಲೆ ದೃಢವಾದ ವಿಶ್ವಾಸವಿಡುವುದರ ಜತೆಗೆ ಪವಿತ್ರ ಗ್ರಂಥಗಳು, ಪ್ರವಾದಿಗಳು ಹಾಗೂ ಧಾರ್ಮಿಕ ಬೋಧನೆಗಳ ಮೇಲೆ ನಂಬಿಕೆ ಹೊಂದುವುದಾಗಿದೆ. ಇಮಾನ್ ಮತ್ತು ಕಲ್ಮಾದ ಮಹತ್ವವನ್ನು ಅರಿತು ಜೀವನದುದ್ದಕ್ಕೂ ಪಾಲಿಸಬೇಕು ಎಂದರು.

ಸತ್ಯ, ಪ್ರಾಮಾಣಿಕತೆ, ಕರುಣೆ, ಸಹನೆ ಹಾಗೂ ಅಮಾನತ್‌ದಾರಿತನಕ್ಕೆ ಪ್ರವಾದಿಯವರು ವಿಶೇಷ ಮಹತ್ವ ನೀಡಿದ್ದರು. ಅವರನ್ನು ‘ಅಲ್-ಅಮೀನ್’ ಎಂದು ಕರೆಯಲಾಗುತ್ತಿತ್ತು. ಅವರ ಆದರ್ಶಗಳನ್ನು ಕೇವಲ ಸ್ಮರಿಸುವುದಲ್ಲದೆ, ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ಹಾಜಿ ಅಬ್ದುಲ್ ಖಾದರ್ ಸನ್ನುಭಾಯಿ ಮಾತನಾಡಿ, ಇಸ್ಲಾಂ ಶಾಂತಿ, ಸೌಹಾರ್ದ ಹಾಗೂ ಮಾನವೀಯತೆಯನ್ನು ಸಾರುತ್ತದೆ. ಧರ್ಮದ ಹೆಸರಿನಲ್ಲಿ ದ್ವೇಷ ಹಾಗೂ ಅಶಾಂತಿಗೆ ಅವಕಾಶ ನೀಡದೆ ಎಲ್ಲ ಧರ್ಮಗಳ ಜನರು ಪರಸ್ಪರ ಗೌರವದಿಂದ ಬದುಕಬೇಕು ಎಂದರು.

ಮೌಲಾನಾ ಅಬುಬಕ್ಕರ್ ಮಾತನಾಡಿ, ಇಮಾನ್ ಮಾನವನಿಗೆ ದೊರೆತ ಅಮೂಲ್ಯ ಸಂಪತ್ತು. ದೊರೆತ ಜೀವನವನ್ನು ಸಾರ್ಥಕಪಡಿಸಿಕೊಳ್ಳಲು ಸತ್ಕಾರ್ಯಗಳಲ್ಲಿ ತೊಡಗಬೇಕು. ನಮಾಜ್ ಸೇರಿದಂತೆ ಧಾರ್ಮಿಕ ಕರ್ತವ್ಯಗಳನ್ನು ಶ್ರದ್ಧೆಯಿಂದ ಪಾಲಿಸಬೇಕು ಎಂದು ಕರೆ ನೀಡಿದರು.

ನಿವೃತ್ತ ಶಿಕ್ಷಕರಾದ ಜೆ.ಎಚ್. ಮುಲ್ಲಾ, ಕೆ.ಎಫ್. ಮೀರಾನಾಯ್ಕ, ಜೆ.ಜೆ. ಹಿರೇಹಾಳ, ಕನ್ನಡಪ್ರಭದ ಹಿರಿಯ ಉಪಸಂಪಾದಕ ಅಜೀಜ್ ಅಹ್ಮದ್ ಬಳಗಾನೂರ ಹಾಗೂ ಅಂಜುಮನ್-ಏ-ಇಸ್ಲಾಂ ಕಮಿಟಿ ಅಧ್ಯಕ್ಷ ಜೀವನಸಾಬ ಸರ್ಕಾವಸ್ ಅವರನ್ನು ಸನ್ಮಾನಿಸಲಾಯಿತು.

ಮಕ್ಕಳಿಂದ ಕುರಾನ್ ಪಠಣ, ಭಾಷಣ, ಕವ್ವಾಲಿ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಮೌಲಾನಾ ಇಮಾಮಹುಸೇನ ಸಾಹೇಬ್, ಮೌಲಾನಾ ಆರೀಫಸಾಬ ಹಾಳಕೇರಿ, ನೌಜವಾನ್ ಕಮಿಟಿ ಸದಸ್ಯರಾದ ರಶೀದ್ ಅಹ್ಮದ್ ಹಾಳಕೇರಿ, ಜೀವನಸಾಬ ಸರಕಾವಸ್, ಮಹ್ಮದ್ ರಫೀಕ ಕೊಚಲಾಪುರ, ಜೀವನಸಾಬ ಅತ್ತಾರ, ಮುನ್ನಾ ಮುಳಗುಂದ, ಜೀವನಸಾಬ ಬುಕ್ಕಿಟಗಾರ, ಅಶ್ಫಾಕ್ ಮುಲ್ಲಾ, ಜೀವನಸಾಬ ಹಾಳಕೇರಿ, ನಭಿಸಾಬ್ ಮೀರನಾಯ್ಕ, ಶಾಮೀದ ಮೀರನಾಯ್ಕ, ದಾದೇಸಾಬ್ ಮುಜಾವರ್, ರಜಾಕ್ ತಹಶೀಲ್ದಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಮಹ್ಮದಗೌಸ್ ನಿರೂಪಿಸಿದರು.

ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರ ಆದರ್ಶಗಳು ಸತ್ಯ, ಕರುಣೆ, ಸಹನೆ ಹಾಗೂ ಮಾನವೀಯತೆಯ ಬದುಕಿಗೆ ದಾರಿದೀಪ. ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದೇ ನಿಜವಾದ ಗೌರವ.

— ಮೌಲಾನಾ ಫಾರೂಖ್ ಸಾಹೇಬ್

ಶಾಂತಿಯ ಸಂದೇಶದೊಂದಿಗೆ ಲಕ್ಷ್ಮೇಶ್ವರದಲ್ಲಿ ಮೊಳಗಿದ ಈದ್ ಮಿಲಾದ್

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪ್ರವಾದಿ ಹಜರತ್ ಮಹಮ್ಮದ್ ಅವರ ಜನ್ಮದಿನದ ಸ್ಮರಣಾರ್ಥ ಆಚರಿಸುವ ಈದ್ ಮಿಲಾದ್-ಉನ್-ನಬಿ ಅಂಗವಾಗಿ ಪಟ್ಟಣದಲ್ಲಿ ಬುಧವಾರ ಸಾವಿರಾರು ಮುಸ್ಲಿಂ ಬಾಂಧವರು ಶ್ರದ್ಧಾಭಕ್ತಿ ಹಾಗೂ ಸಡಗರದಿಂದ ಅದ್ದೂರಿ ಧಾರ್ಮಿಕ ಮೆರವಣಿಗೆ ನಡೆಸಿದರು. ಧಾರ್ಮಿಕ ಗೀತೆ, ಘೋಷಣೆಗಳು ಹಾಗೂ ಬಣ್ಣಬಣ್ಣದ ಅಲಂಕಾರಗಳಿಂದ ಪಟ್ಟಣದ ಪ್ರಮುಖ ಬೀದಿಗಳು ಹಬ್ಬದ ಸಂಭ್ರಮದಲ್ಲಿ ಮಿಂದೆದ್ದವು.

ಅಂಜುಮನ್-ಎ-ಇಸ್ಲಾಂ ಕಮಿಟಿ, ದರ್ಗಾ ಕಮಿಟಿ ಹಾಗೂ ಮುಸ್ಲಿಂ ಸಮಾಜದ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಆಯೋಜಿಸಿದ್ದ ಮೆರವಣಿಗೆ ಪಟ್ಟಣದ ಭಾವೈಕ್ಯತೆಯ ಪ್ರತೀಕವಾಗಿರುವ ದೂದಪೀರಾಂ ದರ್ಗಾದಿಂದ ಆರಂಭವಾಯಿತು. ಪ್ರವಾದಿಯ ಸಂದೇಶ ಸಾರುವ ಗೀತೆಗಳು ಹಾಗೂ ಧಾರ್ಮಿಕ ಘೋಷಣೆಗಳೊಂದಿಗೆ ಬಜಾರ ರಸ್ತೆ, ಬಸ್ ನಿಲ್ದಾಣ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಸಾಗಿತು.

ಯುವಕರು, ಹಿರಿಯರು ಸೇರಿದಂತೆ ವಿವಿಧ ವಯೋಮಾನದ ಸಾವಿರಾರು ಜನರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಶಾಂತಿ, ಸೌಹಾರ್ದತೆ ಹಾಗೂ ಸಹಬಾಳ್ವೆಯ ಸಂದೇಶ ಸಾರಿದ ಮೆರವಣಿಗೆ ಪುನಃ ದೂದಪೀರಾಂ ದರ್ಗಾಕ್ಕೆ ಆಗಮಿಸಿ ಸಮಾಪ್ತಿಗೊಂಡಿತು.

ಮೆರವಣಿಗೆಗೆ ಚಾಲನೆ ನೀಡಿ ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ ಮಾತನಾಡಿ, ಪ್ರವಾದಿ ಮಹಮ್ಮದ್ ಅವರು ಜಾತಿ, ಮತ, ಪಂಥದ ಗಡಿಗಳನ್ನು ಮೀರಿ ಮಾನವೀಯ ಮೌಲ್ಯಗಳಿಗೆ ಮಹತ್ವ ನೀಡಿದ ಮಹಾನ್ ವ್ಯಕ್ತಿ. ಅವರು ಸಾರಿದ ಶಾಂತಿ, ದಯೆ, ಸಹಿಷ್ಣುತೆ ಹಾಗೂ ಸಹಬಾಳ್ವೆಯ ಸಂದೇಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಈದ್ ಮಿಲಾದ್ ಅಂಗವಾಗಿ ಪಟ್ಟಣದ ಮಸೀದಿಗಳು ಹಾಗೂ ಪ್ರಮುಖ ಸ್ಥಳಗಳನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ಕುರಾನ್ ಪಠಣ, ಧಾರ್ಮಿಕ ಪ್ರವಚನ, ದಾನಧರ್ಮ ಹಾಗೂ ಸಿಹಿ-ಭಕ್ಷ್ಯ ವಿತರಣೆ ಸೇರಿದಂತೆ ವಿವಿಧ ಸಮಾಜಮುಖಿ ಕಾರ್ಯಕ್ರಮಗಳು ನಡೆದವು.

ಮೆರವಣಿಗೆ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆ ಸೂಕ್ತ ಬಂದೋಬಸ್ತ್ ಕಲ್ಪಿಸಿತ್ತು. ಡಿವೈಎಸ್‌ಪಿ ಮುರ್ತುಜಾ ಖಾದ್ರಿ, ಸಿಪಿಐ ಬಿ.ವಿ. ನ್ಯಾಮಗೌಡ, ಪಿಎಸ್‌ಐ ನಾಗರಾಜ ಗಡಾದ, ಕ್ರೈಂ ವಿಭಾಗದ ಪಿಎಸ್‌ಐ ಟಿ.ಕೆ. ರಾಥೋಡ, ಪ್ರಭಾರಿ ಪಿಎಸ್‌ಐ ರಮಾಕಾಂತ ಗುಗ್ಗರಿ ಸೇರಿದಂತೆ ಪೊಲೀಸ್ ಸಿಬ್ಬಂದಿ ಬಂದೋಬಸ್ತ್‌ನಲ್ಲಿ ಕರ್ತವ್ಯ ನಿರ್ವಹಿಸಿದರು.

ಅಂಜುಮನ್ ಕಮಿಟಿ ಅಧ್ಯಕ್ಷ ಎಂ.ಎಂ. ಗದಗ, ದೂದನಾನಾ ದರ್ಗಾ ಸಮಿತಿ ಅಧ್ಯಕ್ಷ ಸುಲೇಮಾನ ಕಣಕೆ, ಪುರಸಭೆ ಮಾಜಿ ಉಪಾಧ್ಯಕ್ಷರಾದ ದಾದಾಪೀರ ಮುಚ್ಚಾಲೆ, ಪಿರ್ದೋಶ ಆಡೂರ, ಮಾಜಿ ಸದಸ್ಯರಾದ ಎಸ್.ಕೆ. ಹವಾಲ್ದಾರ, ಮುಸ್ತಾಕ್‌ಅಹ್ಮದ್ ಶಿರಹಟ್ಟಿ, ಸಿಕಂದರ ಕಣಕೆ, ವೀರಕನ್ನಡಿಗ ಟಿಪ್ಪು ಸೇನೆ ಅಧ್ಯಕ್ಷ ಜಾಕೀರಹುಸೇನ್ ಹವಾಲ್ದಾರ, ಅಂಜುಮನ್ ಕಮಿಟಿ ಉಪಾಧ್ಯಕ್ಷ ಅಬ್ದುಲ್ ಕರೀಂ ಸೂರಣಗಿ ಸೇರಿದಂತೆ ಸಮಾಜದ ಮುಖಂಡರು ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಪ್ರವಾದಿ ಮುಹಮ್ಮದ್ ಅವರ ಶಾಂತಿ, ದಯೆ, ಸಹಿಷ್ಣುತೆ ಹಾಗೂ ಸಹಬಾಳ್ವೆಯ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದೇ ಅವರ ಜನ್ಮದಿನದ ಆಚರಣೆಗೆ ನಿಜವಾದ ಗೌರವ.

— ಜಿ.ಎಸ್. ಗಡ್ಡದೇವರಮಠ, ಮಾಜಿ ಶಾಸಕ

ಕಾರ್ಮಿಕರು ಮಕ್ಕಳ ಭವಿಷ್ಯವನ್ನೂ ಕಟ್ಟಬೇಕು: ಶ್ರೀಶೈಲ ಸೋಮನಕಟ್ಟಿ

ವಿಜಯಸಾಕ್ಷಿ ಸುದ್ದಿ, ಗದಗ: ಭದ್ರ ಬುನಾದಿಯೊಂದಿಗೆ ಭವ್ಯ ಕಟ್ಟಡ ನಿರ್ಮಿಸುವ ಕಾರ್ಮಿಕರು ತಮ್ಮ ಮಕ್ಕಳ ಭವಿಷ್ಯವನ್ನೂ ಭದ್ರವಾಗಿ ರೂಪಿಸಿ, ಅವರನ್ನು ನಾಡಿನ ಹಾಗೂ ದೇಶದ ಕಣ್ಮಣಿಗಳನ್ನಾಗಿ ಮಾಡಬೇಕು ಎಂದು ಗದಗ ಜಿಲ್ಲಾ ಕಾರ್ಮಿಕ ಅಧಿಕಾರಿ ಶ್ರೀಶೈಲ ಸೋಮನಕಟ್ಟಿ ಹೇಳಿದರು.

ನಗರದ ಡಿ.ಸಿ. ಮಿಲ್ ಕಾಂಪೌಂಡ್‌ನ ಕಾರ್ಮಿಕರ ಮಹಾಸಂಘದ ಕಾರ್ಯಾಲಯದಲ್ಲಿ ಸೋಮವಾರ ನಡೆದ ಗದಗ-ಬೆಟಗೇರಿ ಸೆಂಟ್ರಿಂಗ್ ಮತ್ತು ಬಾರ್ ಬೆಂಡಿಂಗ್ ಮೇಸ್ತ್ರಿಗಳ ಸಂಘದ 4ನೇ ವಾರ್ಷಿಕೋತ್ಸವ ಹಾಗೂ ಕಾರ್ಮಿಕರ ಮಕ್ಕಳಿಗೆ ಸ್ಕೂಲ್ ಕಿಟ್ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಕಾರ್ಮಿಕರು ತಮ್ಮ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು. ಸಂಘದ ಸದಸ್ಯರು ಸ್ವಂತ ಕೊಡುಗೆಯಿಂದ ಸುಮಾರು 50 ಮಕ್ಕಳಿಗೆ ತಲಾ ₹700 ಮೌಲ್ಯದ ಶಾಲಾ ಬ್ಯಾಗ್, ನೋಟ್‌ಬುಕ್, ಕಂಪಾಸ್ ಬಾಕ್ಸ್ ಹಾಗೂ ಲೇಖನ ಸಾಮಗ್ರಿಗಳನ್ನು ಒಳಗೊಂಡ ಕಿಟ್ ವಿತರಿಸುತ್ತಿರುವುದು ಶ್ಲಾಘನೀಯ ಎಂದರು.

ಕಾರ್ಮಿಕರು ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು. ಆಧಾರ್ ಕಾರ್ಡ್, ಬ್ಯಾಂಕ್ ಖಾತೆ ಹಾಗೂ ಲೇಬರ್ ಕಾರ್ಡ್‌ನಲ್ಲಿರುವ ಹೆಸರು ಒಂದೇ ರೀತಿಯಾಗಿರಬೇಕು. ಬ್ಯಾಂಕ್ ಖಾತೆ ಚಾಲ್ತಿಯಲ್ಲಿದ್ದು, ಆಧಾರ್‌ಗೆ ಲಿಂಕ್ ಆಗಿರುವುದನ್ನು ಖಚಿತಪಡಿಸಿಕೊಳ್ಳಬೇಕು. ಮದುವೆ ಸಹಾಯಧನ, ತಾಯಿ-ಮಗು ಸಹಾಯಧನ, ಪಿಂಚಣಿ ಸೇರಿದಂತೆ ವಿವಿಧ ಸೌಲಭ್ಯಗಳಿಗಾಗಿ ಲೇಬರ್ ಕಾರ್ಡ್ ಅನ್ನು ಪ್ರತಿ ವರ್ಷ ನವೀಕರಿಸಬೇಕು ಎಂದು ಸಲಹೆ ನೀಡಿದರು.

ಕೆಲಸದ ಸ್ಥಳದಲ್ಲಿ ಹೆಲ್ಮೆಟ್, ಸುರಕ್ಷತಾ ಶೂ ಹಾಗೂ ಜಾಕೆಟ್ ಧರಿಸಿ ಸುರಕ್ಷತೆಗೆ ಆದ್ಯತೆ ನೀಡಬೇಕು. ಮದ್ಯ, ತಂಬಾಕು ಹಾಗೂ ಗುಟ್ಕಾದಂತಹ ದುಶ್ಚಟಗಳಿಂದ ದೂರವಿದ್ದು ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು.

ಹೆಸ್ಕಾಂ ಜಾಗೃತ ದಳದ ಪಿಎಸ್‌ಐ ಮಾರುತಿ ಜೋಗದಂಡಕರ ಮಾತನಾಡಿ, ಬಡತನದ ನೆಪದಲ್ಲಿ ಮಕ್ಕಳ ಶಿಕ್ಷಣವನ್ನು ಮೊಟಕುಗೊಳಿಸಬಾರದು. ಬಾಲ್ಯದ ಅಂಕ ಅಥವಾ ಪ್ರತಿಭೆಯ ಆಧಾರದ ಮೇಲೆ ಮಗುವಿನ ಭವಿಷ್ಯ ನಿರ್ಧರಿಸುವುದು ಸರಿಯಲ್ಲ ಎಂದರು.

ತಮ್ಮ ಜೀವನದ ಅನುಭವ ಹಂಚಿಕೊಂಡ ಅವರು, ತಂದೆಯಿಲ್ಲದೆ ತಾಯಿಯ ದುಡಿಮೆಯಲ್ಲಿ ಬೆಳೆದ ತಾವು ಶಾಲಾ ದಿನಗಳಲ್ಲೇ ಇಟ್ಟಿಗೆ ಭಟ್ಟಿ, ಗೌಂಡಿ ಹಾಗೂ ಕಾರ್ಪೆಂಟರಿ ಕೆಲಸ ಮಾಡಿದ್ದು, ಪದವಿ ವ್ಯಾಸಂಗದ ಸಂದರ್ಭದಲ್ಲಿ ಆಟೋ ಓಡಿಸುತ್ತಲೇ ಶಿಕ್ಷಣ ಮುಂದುವರಿಸಿದ್ದಾಗಿ ಸ್ಮರಿಸಿದರು. ಪೊಲೀಸ್ ಕಾನ್ಸ್‌ಟೇಬಲ್ ಆಗಿ ಸೇವೆ ಆರಂಭಿಸಿ ಅಪರಾಧ ಪತ್ತೆಯಲ್ಲಿ ಗುರುತಿಸಿಕೊಂಡು ರಾಷ್ಟ್ರಪತಿ ಪೊಲೀಸ್ ಪದಕ ಸೇರಿದಂತೆ ಹಲವು ಗೌರವಗಳಿಗೆ ಪಾತ್ರರಾಗಿರುವುದಾಗಿ ತಿಳಿಸಿದರು.

ಗದಗ ಶಹರ ಬಿಆರ್‌ಪಿ ಮಹ್ಮದ್‌ಶಫಿ ಯರಗುಡಿ ಮಾತನಾಡಿ, ಮಕ್ಕಳ ಭವಿಷ್ಯ ರೂಪಿಸುವಲ್ಲಿ ಹಣಕ್ಕಿಂತ ಪಾಲಕರು ನೀಡುವ ಸಮಯ, ಪ್ರೀತಿ ಹಾಗೂ ಮೌಲ್ಯಗಳು ಹೆಚ್ಚು ಮಹತ್ವದ್ದಾಗಿವೆ. ಮಕ್ಕಳ ಆಸಕ್ತಿ ಹಾಗೂ ಪ್ರತಿಭೆಯನ್ನು ಬೆಳೆಸಿಕೊಳ್ಳಲು ಅವಕಾಶ ನೀಡಬೇಕು. ಪ್ರತಿದಿನ ಸ್ವಲ್ಪ ಸಮಯ ಮಕ್ಕಳೊಂದಿಗೆ ಕಳೆಯಬೇಕು. ಮೊಬೈಲ್ ಕುಟುಂಬದ ಸಂವಾದಕ್ಕೆ ಅಡ್ಡಿಯಾಗದಂತೆ ಎಚ್ಚರಿಕೆ ವಹಿಸಬೇಕು. ಶಿಕ್ಷಣದ ಅಂತಿಮ ಗುರಿ ಕೇವಲ ಪದವಿ ಪಡೆಯುವುದಲ್ಲ, ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳುವುದಾಗಿದೆ ಎಂದರು.

ಕಾರ್ಮಿಕರ ಮಹಾಸಂಘದ ಅಧ್ಯಕ್ಷ ಮಾಬುಖಾನ್ ಪಠಾಣ ಮಾತನಾಡಿ, ಎಲ್ಲ ಕಾರ್ಮಿಕ ಸಂಘಟನೆಗಳನ್ನು ಒಗ್ಗೂಡಿಸಿಕೊಂಡು ಮಹಾಸಂಘವು ರಾಜ್ಯದಲ್ಲಿಯೇ ಮಾದರಿ ಸಂಘವಾಗಿ ಹೊರಹೊಮ್ಮುತ್ತಿದೆ. ಕಾರ್ಮಿಕರ ಸಮಸ್ಯೆಗಳಿಗೆ ಧ್ವನಿಯಾಗಿ, ಸರ್ಕಾರದ ಸೌಲಭ್ಯಗಳನ್ನು ಕಾರ್ಮಿಕರಿಗೆ ತಲುಪಿಸುವಲ್ಲಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತಿದೆ. ಕಾರ್ಮಿಕರ ಮಕ್ಕಳ ಉನ್ನತ ಶಿಕ್ಷಣ ಪೂರ್ಣಗೊಳಿಸಲು ಅಗತ್ಯವಿದ್ದಲ್ಲಿ ನೆರವು ನೀಡಲಾಗುವುದು ಎಂದರು.

ವೇದಿಕೆಯಲ್ಲಿ ಗದಗ-ಬೆಟಗೇರಿ ಎ.ಎಲ್.ಸಿ ಕಾರ್ಮಿಕ ಸಂಘದ ಅಧ್ಯಕ್ಷ ನಿಂಗಪ್ಪ ಕಟ್ಟಿಮನಿ ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷ ಚಾಂದಸಾಬ ಅಬ್ಬಿಗೇರಿ ಅಧ್ಯಕ್ಷತೆ ವಹಿಸಿದ್ದರು.

ಕೆ.ಬಿ. ಕುಡಗುಂಟಿ ಸ್ವಾಗತಿಸಿ ನಿರೂಪಿಸಿದರು. ಸಂಘದ ಕಾರ್ಯದರ್ಶಿ ಜಂದಿಸಾಬ ಢಾಲಾಯತ ವಂದಿಸಿದರು. ಸಂಘದ ಕಾರ್ಯದರ್ಶಿ ಮಹ್ಮದ್‌ಯುಸೂಫ ಬೇಪಾರಿ, ಸಹಕಾರ್ಯದರ್ಶಿ ಜಾವೇದ ಹೈದರ್, ಖಜಾಂಚಿ ಬಸವರಾಜ ನಿರೇರ, ಗೌರವಾಧ್ಯಕ್ಷ ರಿಯಾಜ್‌ಅಹ್ಮದ್ ಡಂಬಳ, ಉಪಾಧ್ಯಕ್ಷ ಶಿವಶಂಕರಗೌಡ ಕರಿಸೋಮನಗೌಡ್ರ, ಸದಸ್ಯರಾದ ಚಾಂದಸಾಬ ಅಬ್ಬಿಗೇರಿ, ನೂರಅಹ್ಮದ್ ಶಿರಹಟ್ಟಿ, ಬಾಬಾಜಾನ್ ಅತ್ತಾರ, ರೆಹಮಾನ್‌ಸಾಬ ಕರಮುಡಿ ಸೇರಿದಂತೆ ವಿವಿಧ ಕಾರ್ಮಿಕ ಸಂಘಟನೆಗಳ ಪದಾಧಿಕಾರಿಗಳು, ಸದಸ್ಯರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಕೈಕೆಲಸದಲ್ಲಿ ಯಾವುದೇ ಕೀಳರಿಮೆ ಇಲ್ಲ. ಆದರೆ ನಾವು ಅನುಭವಿಸಿದ ಬದುಕೇ ನಮ್ಮ ಮಕ್ಕಳಿಗೂ ಅನಿವಾರ್ಯ ಎಂದು ಭಾವಿಸಬೇಡಿ. ಅವರಿಗೆ ಶಿಕ್ಷಣದ ಅವಕಾಶ ನೀಡಿ.

— ಮಾರುತಿ ಜೋಗದಂಡಕರ, ಪಿಎಸ್‌ಐ, ಹೆಸ್ಕಾಂ ಜಾಗೃತ ದಳ

ಮೋಡ ಬಿತ್ತನೆಗಿಂತ ರೈತರಿಗೆ ನೇರ ಪರಿಹಾರ ನೀಡಿ: ಯಲ್ಲಪ್ಪಗೌಡ್ರ ಕರಮಡಿ

0

ವಿಜಯಸಾಕ್ಷಿ ಸುದ್ದಿ, ಡಂಬಳ: ರಾಜ್ಯದಲ್ಲಿ ಮಳೆ ಕೊರತೆಯಿಂದ ರೈತರು ಸಂಕಷ್ಟಕ್ಕೆ ಸಿಲುಕಿರುವ ಸಂದರ್ಭದಲ್ಲಿ ಸರ್ಕಾರ ಸುಮಾರು ₹27 ಕೋಟಿ ವೆಚ್ಚದಲ್ಲಿ ಮೋಡ ಬಿತ್ತನೆ ಕೈಗೊಳ್ಳಲು ಮುಂದಾಗಿರುವುದನ್ನು ಅಖಿಲ ಕರ್ನಾಟಕ ರಾಜ್ಯ ಕಿಸಾನ್ ಜಾಗೃತಿ ಸಂಘದ ಗದಗ ಜಿಲ್ಲಾಧ್ಯಕ್ಷ ಯಲ್ಲಪ್ಪಗೌಡ್ರ ಕರಮಡಿ ವಿರೋಧಿಸಿದ್ದಾರೆ.

ಡಂಬಳ ಹೋಬಳಿಯ ಪೇಠಾ ಆಲೂರ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚೆಗೆ ನಡೆದ ಎಂಟು ದಿನಗಳ ವಿಧಾನಮಂಡಲ ಅಧಿವೇಶನದಲ್ಲಿ ರಾಜ್ಯದ ರೈತರ ಸಮಸ್ಯೆಗಳು, ಮಳೆ ಕೊರತೆ ಹಾಗೂ ಬರ ಪರಿಸ್ಥಿತಿಯ ಕುರಿತು ಸಮರ್ಪಕವಾಗಿ ಧ್ವನಿ ಎತ್ತಿ, ರೈತರ ನೆರವಿಗೆ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸುವಲ್ಲಿ ಶಾಸಕರು ವಿಫಲರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಳೆ ಕೊರತೆಯಿಂದ ಬೆಳೆಗಳು ಒಣಗುತ್ತಿದ್ದು, ರೈತರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ರೈತರಿಗೆ ನೇರ ಪರಿಹಾರ ನೀಡುವುದು ಸರ್ಕಾರದ ಮೊದಲ ಆದ್ಯತೆಯಾಗಬೇಕು. ಆದರೆ ₹27 ಕೋಟಿ ವೆಚ್ಚ ಮಾಡಿ ಮೋಡ ಬಿತ್ತನೆ ಮಾಡುವ ನಿರ್ಧಾರ ಎಷ್ಟರ ಮಟ್ಟಿಗೆ ಪರಿಣಾಮಕಾರಿ ಎಂಬುದನ್ನು ಸರ್ಕಾರ ಮರುಪರಿಶೀಲಿಸಬೇಕು ಎಂದು ಹೇಳಿದರು.

ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಅವರು ಮೋಡ ಬಿತ್ತನೆಗೆ ಸುಮಾರು ₹27 ಕೋಟಿ ವೆಚ್ಚದಲ್ಲಿ 60 ದಿನಗಳ ಕಾರ್ಯಾಚರಣೆ ನಡೆಸುವ ಕುರಿತು ಹೇಳಿಕೆ ನೀಡಿದ್ದಾರೆ. ಹಿಂದೆಯೂ ರಾಜ್ಯದಲ್ಲಿ ಮೋಡ ಬಿತ್ತನೆ ಪ್ರಯೋಗಗಳು ನಡೆದಿದ್ದು, ನಿರೀಕ್ಷಿತ ಮಟ್ಟದಲ್ಲಿ ಫಲಿತಾಂಶ ದೊರೆತಿಲ್ಲ. ಹೀಗಾಗಿ ಮತ್ತೊಮ್ಮೆ ಸಾರ್ವಜನಿಕರ ತೆರಿಗೆ ಹಣವನ್ನು ಇಂತಹ ಪ್ರಯೋಗಕ್ಕೆ ಬಳಸುವುದು ಸೂಕ್ತವಲ್ಲ ಎಂದು ಯಲ್ಲಪ್ಪಗೌಡ್ರ ಕರಮಡಿ ಹೇಳಿದರು.

ಮೋಡ ಬಿತ್ತನೆಯ ಯಶಸ್ಸಿನ ಪ್ರಮಾಣ ಕಡಿಮೆ ಇರುವ ಸಂದರ್ಭದಲ್ಲಿ ₹27 ಕೋಟಿಯನ್ನು ಮಳೆ ಕೊರತೆಯಿಂದ ಹಾನಿಗೊಳಗಾದ ರೈತರಿಗೆ ನೇರ ಪರಿಹಾರವಾಗಿ ನೀಡಬೇಕು. ರಾಜ್ಯದ ಮಳೆ ಕೊರತೆಯನ್ನು ವೈಜ್ಞಾನಿಕವಾಗಿ ಪರಿಶೀಲಿಸಿ ಅಗತ್ಯವಿರುವ ತಾಲೂಕುಗಳನ್ನು ಬರಪೀಡಿತ ಪ್ರದೇಶಗಳೆಂದು ಘೋಷಿಸಿ, ಬೆಳೆ ನಷ್ಟ ಪರಿಹಾರ, ಸಾಲ ಸೌಲಭ್ಯ ಹಾಗೂ ಇತರ ನೆರವುಗಳನ್ನು ತುರ್ತಾಗಿ ಒದಗಿಸಬೇಕು ಎಂದು ಒತ್ತಾಯಿಸಿದರು.

ರೈತರ ಕಣ್ಣೀರು ಒರೆಸುವುದು ಸರ್ಕಾರದ ಮೊದಲ ಕರ್ತವ್ಯ. ಮೋಡ ಬಿತ್ತನೆಗೆ ಹಣ ವ್ಯಯಿಸುವ ಬದಲು ಸಂಕಷ್ಟದಲ್ಲಿರುವ ರೈತರಿಗೆ ನೇರ ಪರಿಹಾರ ನೀಡಬೇಕು.

— ಯಲ್ಲಪ್ಪಗೌಡ್ರ ಕರಮಡಿ, ಜಿಲ್ಲಾಧ್ಯಕ್ಷ, ಅಖಿಲ ಕರ್ನಾಟಕ ರಾಜ್ಯ ಕಿಸಾನ್ ಜಾಗೃತಿ ಸಂಘ, ಗದಗ