Home Blog Page 4

ಬಾಯಲ್ಲೇ ಚಿನ್ನದ ಕ್ಯಾಪ್ಸೂಲ್: ದುಬೈನಿಂದ ಬಂದ ಪ್ರಯಾಣಿಕನಿಂದ 82 ಗ್ರಾಂ ಗೋಲ್ಡ್ ಪತ್ತೆ, ಏರ್‌ಪೋರ್ಟ್‌ನಲ್ಲಿ ಹೈಡ್ರಾಮಾ

0

ಬೆಂಗಳೂರು: ಚಿನ್ನವನ್ನು ಅಕ್ರಮವಾಗಿ ಸಾಗಿಸಲು ಪ್ರಯಾಣಿಕನೊಬ್ಬ ಅನುಸರಿಸಿದ್ದ ವಿಚಿತ್ರ ಮಾರ್ಗ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಯಲಾಗಿದೆ. ದುಬೈನಿಂದ ಬೆಂಗಳೂರಿಗೆ ಬಂದಿದ್ದ ಪ್ರಯಾಣಿಕನ ಬಾಯಿಯಲ್ಲಿ ಬರೋಬ್ಬರಿ 82 ಗ್ರಾಂ ಚಿನ್ನ ಪತ್ತೆಯಾಗಿದ್ದು, CISF ಸಿಬ್ಬಂದಿಯ ಸಮಯೋಚಿತ ಅನುಮಾನದಿಂದ ಕಳ್ಳಸಾಗಣೆ ಪ್ರಯತ್ನ ಬಯಲಾಗಿದೆ.

ಮಹಮ್ಮದ್ ಸಿರಾಜ್ ಎಂಬಾತ ದುಬೈನಿಂದ ಬೆಂಗಳೂರಿಗೆ ವಿಮಾನದಲ್ಲಿ ಬಂದಿಳಿದಿದ್ದ. ಬಳಿಕ ಬೆಂಗಳೂರಿನಿಂದ ಗಾಜಿಯಾಬಾದ್‌ಗೆ ತೆರಳಲು ಸಿದ್ಧತೆ ನಡೆಸುತ್ತಿದ್ದ. ಈ ವೇಳೆ ವಿಮಾನ ನಿಲ್ದಾಣದಲ್ಲಿದ್ದ ಕೇಂದ್ರ ಕೈಗಾರಿಕಾ ಭದ್ರತಾ ಪಡೆ ಸಿಬ್ಬಂದಿಗೆ ಆತನ ವರ್ತನೆ ಅನುಮಾನಾಸ್ಪದವಾಗಿ ಕಂಡುಬಂದಿದೆ.

CISF ಸಿಬ್ಬಂದಿ ಆತನನ್ನು ಪರಿಶೀಲಿಸಿದರೂ ಆರಂಭದಲ್ಲಿ ಯಾವುದೇ ಅನುಮಾನಾಸ್ಪದ ವಸ್ತು ಪತ್ತೆಯಾಗಿರಲಿಲ್ಲ. ಬಳಿಕ ಬಾಯಿಯನ್ನು ಪರಿಶೀಲಿಸಿದಾಗ ಎರಡು ಚಿನ್ನದ ಕ್ಯಾಪ್ಸೂಲ್‌ಗಳು ಪತ್ತೆಯಾಗಿವೆ. ಅವುಗಳಲ್ಲಿ ಒಟ್ಟು 82 ಗ್ರಾಂ ಚಿನ್ನ ಇತ್ತು ಎನ್ನಲಾಗಿದೆ.

ಬಾಡಿ ಸ್ಕ್ಯಾನರ್‌ನಲ್ಲಿ ಚಿನ್ನ ಪತ್ತೆಯಾಗದಂತೆ ಮಾಡಲು ಬಾಯಿಯಲ್ಲಿ ಕ್ಯಾಪ್ಸೂಲ್ ರೂಪದಲ್ಲಿ ಚಿನ್ನವನ್ನು ಅಡಗಿಸಿಕೊಂಡು ಬಂದಿದ್ದ ಎನ್ನಲಾಗಿದೆ. ಆದರೆ CISF ಸಿಬ್ಬಂದಿಯ ಅನುಮಾನದಿಂದಾಗಿ ಕೊನೆಗೂ ಅಕ್ರಮ ಸಾಗಣೆ ಪ್ರಯತ್ನ ಬಯಲಾಗಿದೆ.

ಸದ್ಯ ಮಹಮ್ಮದ್ ಸಿರಾಜ್‌ನನ್ನು ಹೆಚ್ಚಿನ ತನಿಖೆಗಾಗಿ ಕೆಐಎ ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ಚಿನ್ನದ ಮೂಲವೇನು, ಯಾರಿಗಾಗಿ ಅದನ್ನು ಸಾಗಿಸಲಾಗುತ್ತಿತ್ತು ಹಾಗೂ ಇದರ ಹಿಂದೆ ಮತ್ತಾರಾದರೂ ಇದ್ದಾರೆಯೇ ಎಂಬ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

106 ಜೋಡಿಗಳ ಸಾಮೂಹಿಕ ವಿವಾಹ: ಮದುವೆ ಗಿಫ್ಟ್ ಆಗಿ ಸೀಮೆ ಹಸು, ಜೊತೆಗೆ ₹50 ಸಾವಿರ ನಗದು

0

ಚಿಕ್ಕಬಳ್ಳಾಪುರ: ಸಾಮೂಹಿಕ ವಿವಾಹದಲ್ಲಿ ನವಜೋಡಿಗಳಿಗೆ ಸೀಮೆ ಹಸುವನ್ನೇ ಉಡುಗೊರೆಯಾಗಿ ನೀಡಿದ ಅಪರೂಪದ ಘಟನೆ ಬಾಗೇಪಲ್ಲಿಯಲ್ಲಿ ನಡೆದಿದೆ. 23ನೇ ವರ್ಷದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಬರೋಬ್ಬರಿ 106 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಪ್ರತಿ ನವದಂಪತಿಗೂ ಸೀಮೆ ಹಸು ನೀಡಲಾಗಿದೆ.

ಬಾಗೇಪಲ್ಲಿ ತಾಲೂಕಿನ ಗಡಿದಂ ಲಕ್ಷ್ಮಿ ವೆಂಕಟರಮಣಸ್ವಾಮಿ ದೇವಾಲಯದ ಬಳಿ ಎಸ್.ಎನ್. ಚಾರಿಟೇಬಲ್ ಟ್ರಸ್ಟ್ ಈ ಸಾಮೂಹಿಕ ವಿವಾಹವನ್ನು ಆಯೋಜಿಸಿತ್ತು. ಬಾಗೇಪಲ್ಲಿ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಅವರು ನವದಂಪತಿಗಳಿಗೆ ಸೀಮೆ ಹಸುಗಳನ್ನು ಉಡುಗೊರೆಯಾಗಿ ನೀಡಿದರು. ಜತೆಗೆ 50 ಸಾವಿರ ರೂ. ನಗದು ನೆರವು ನೀಡುವ ಘೋಷಣೆಯೂ ಮಾಡಲಾಗಿದೆ.

ನವದಂಪತಿಗಳ ಹೊಸ ಬದುಕಿಗೆ ಆದಾಯದ ಮೂಲ ಕಲ್ಪಿಸುವ ಉದ್ದೇಶದಿಂದ ಈ ರೀತಿಯ ಉಡುಗೊರೆ ನೀಡಲಾಗಿದೆ. ಸಾಮಾನ್ಯವಾಗಿ ಸಾಮೂಹಿಕ ವಿವಾಹಗಳಲ್ಲಿ ನೀಡುವ ಬಟ್ಟೆ, ಆಭರಣಗಳ ಬದಲಿಗೆ ಜೀವನೋಪಾಯಕ್ಕೆ ನೆರವಾಗುವ ಉಡುಗೊರೆ ನೀಡಿರುವುದು ವಿಶೇಷ ಗಮನ ಸೆಳೆದಿದೆ.

ಇದೇ ವೇಳೆ ಶ್ರೀ ತಿರುಮಲ ತಿರುಪತಿ ದೇವಸ್ಥಾನದ ವತಿಯಿಂದ ಶ್ರೀ ಲಕ್ಷ್ಮಿ ವೆಂಕಟೇಶ್ವರ ಕಲ್ಯಾಣೋತ್ಸವವೂ ನಡೆಯಿತು. ಕಾರ್ಯಕ್ರಮದಲ್ಲಿ ಸಚಿವ ಕೆ.ಹೆಚ್. ಮುನಿಯಪ್ಪ, ಮಾಜಿ ಸಂಸದ ಡಿ.ಕೆ. ಸುರೇಶ್, ಬಂಗಾರಪೇಟೆ ಶಾಸಕ ನಾರಾಯಣಸ್ವಾಮಿ, ಮಾಜಿ ಸಚಿವ ಶಿವಶಂಕರ ರೆಡ್ಡಿ, ಮಾಜಿ ಶಾಸಕ ಎನ್. ಸಂಪಂಗಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.

106 ಜೋಡಿಗಳ ಸಾಮೂಹಿಕ ವಿವಾಹಕ್ಕೆ ಸಾಕ್ಷಿಯಾದ ಬಾಗೇಪಲ್ಲಿಯಲ್ಲಿ, ನವದಂಪತಿಗಳ ಭವಿಷ್ಯಕ್ಕೆ ಆರ್ಥಿಕ ಭದ್ರತೆ ಕಲ್ಪಿಸುವ ಉದ್ದೇಶದ ಈ ವಿಭಿನ್ನ ಉಡುಗೊರೆ ಇದೀಗ ವಿಶೇಷ ಚರ್ಚೆಗೆ ಕಾರಣವಾಗಿದೆ.

ಟಿಪ್ಪು ಕಟೌಟ್ ವಿವಾದದ ಬೆನ್ನಲ್ಲೇ ಚಿಕ್ಕಮಗಳೂರಿನಲ್ಲಿ ‘ಐ ಲವ್ ಮೊಹಮ್ಮದ್’: ಈದ್ ಮಿಲಾದ್ ಬ್ಯಾನರ್ ಮತ್ತೆ ಚರ್ಚೆಗೆ

0

ಚಿಕ್ಕಮಗಳೂರು: ಈದ್ ಮಿಲಾದ್ ಮೆರವಣಿಗೆಗೆ ಸಂಬಂಧಿಸಿದಂತೆ ಚಿಕ್ಕಮಗಳೂರಿನಲ್ಲಿ ವಿವಾದದ ಸರಣಿ ಮುಂದುವರಿದಿದೆ. ಟಿಪ್ಪು ಕಟೌಟ್ ವಿಡಿಯೋಗೆ ದೇಶವಿರೋಧಿ ಹಾಡು ಬಳಕೆ ಆರೋಪದ ಕುರಿತು ಆಕ್ರೋಶ ವ್ಯಕ್ತವಾಗಿರುವ ಬೆನ್ನಲ್ಲೇ, ಟಿಪ್ಪು ನಗರದಲ್ಲಿ ‘ಐ ಲವ್ ಮೊಹಮ್ಮದ್’ ಬ್ಯಾನರ್ ಅಳವಡಿಸಿರುವುದು ಇದೀಗ ಹೊಸ ವಿವಾದಕ್ಕೆ ಕಾರಣವಾಗಿದೆ.

ಈದ್ ಮಿಲಾದ್ ಮೆರವಣಿಗೆ ಹಿನ್ನೆಲೆಯಲ್ಲಿ ಬ್ಯಾನರ್ ಅಳವಡಿಸಲಾಗಿದ್ದು, ಕಳೆದ ವರ್ಷ ಉತ್ತರ ಪ್ರದೇಶದ ಕಾನ್ಪುರದಲ್ಲಿ ಇದೇ ಘೋಷವಾಕ್ಯದಿಂದ ಆರಂಭವಾಗಿದ್ದ ವಿವಾದವನ್ನು ಮತ್ತೆ ನೆನಪಿಸಿದೆ.

ಕಾನ್ಪುರದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ‘ಐ ಲವ್ ಮೊಹಮ್ಮದ್’ ಬ್ಯಾನರ್ ಬಳಕೆಯಾದ ಬಳಿಕ ಘೋಷವಾಕ್ಯ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿತ್ತು. ನಂತರ ಮುಂಬೈ, ತೆಲಂಗಾಣ, ಹೈದರಾಬಾದ್, ನಾಗ್ಪುರ ಸೇರಿದಂತೆ ಹಲವು ಪ್ರದೇಶಗಳಲ್ಲಿ ಇದೇ ಹೆಸರಿನಲ್ಲಿ ರ್ಯಾಲಿಗಳು ನಡೆದಿದ್ದವು.

ರಾಜ್ಯದಲ್ಲೂ ‘ಐ ಲವ್ ಮೊಹಮ್ಮದ್’ ಬ್ಯಾನರ್ ಹಾಗೂ ಘೋಷಣೆ ವಿಚಾರ ಇದೇ ಮೊದಲ ಬಾರಿಗೆ ಕಾಣಿಸಿಕೊಂಡಿರುವುದಲ್ಲ. ಬೆಳಗಾವಿ, ದಾವಣಗೆರೆ, ಆಳಂದ ಸೇರಿದಂತೆ ವಿವಿಧೆಡೆ ಈ ಸಂಬಂಧ ವಿವಾದಗಳು ಉಂಟಾಗಿದ್ದವು. ಕೆಲವು ಸಂದರ್ಭಗಳಲ್ಲಿ ಪೊಲೀಸ್ ಪ್ರಕರಣಗಳೂ ದಾಖಲಾಗಿದ್ದು, ರಾಜಕೀಯ ಆರೋಪ-ಪ್ರತ್ಯಾರೋಪಗಳಿಗೆ ಕಾರಣವಾಗಿತ್ತು.

ಇದೀಗ ಚಿಕ್ಕಮಗಳೂರಿನಲ್ಲಿ ಟಿಪ್ಪು ಕಟೌಟ್ ವಿವಾದದ ಬೆನ್ನಲ್ಲೇ ಇದೇ ಘೋಷವಾಕ್ಯದ ಬ್ಯಾನರ್ ಕಾಣಿಸಿಕೊಂಡಿರುವುದು ಮತ್ತಷ್ಟು ಚರ್ಚೆಗೆ ಗ್ರಾಸವಾಗಿದೆ. ಘಟನೆಯ ಕುರಿತು ಮುಂದಿನ ಕ್ರಮ ಹಾಗೂ ಆಡಳಿತದ ಪ್ರತಿಕ್ರಿಯೆ ಏನು ಎಂಬುದು ಇದೀಗ ಕುತೂಹಲ ಮೂಡಿಸಿದೆ.

ತಾಯಿ, 5 ಮಕ್ಕಳ ಸಾವಿನ ಹಿಂದೆ ಕೌಟುಂಬಿಕ ಕಲಹ? ಭೂತನಾಳ ಕೆರೆ ಪ್ರಕರಣದಲ್ಲಿ ಪತಿ ವಿರುದ್ಧ ಕುಟುಂಬಸ್ಥರ ಆರೋಪ

0

ವಿಜಯಪುರ: ಭೂತನಾಳ ಕೆರೆಯಲ್ಲಿ ತಾಯಿ ಸೇರಿದಂತೆ ಐವರು ಮಕ್ಕಳ ಮೃತದೇಹ ಪತ್ತೆಯಾದ ಪ್ರಕರಣ ತೀವ್ರ ಕುತೂಹಲ ಮೂಡಿಸಿದ್ದು, ತನಿಖೆಯಲ್ಲಿ ಕೌಟುಂಬಿಕ ಕಲಹದ ಆಯಾಮ ಪ್ರಮುಖವಾಗಿ ಹೊರಹೊಮ್ಮಿದೆ. ಮೃತರನ್ನು ಶೋಭಾ ಜಾಲಗೇರಿ (45), ವಿದ್ಯಾ (16), ಸುವರ್ಣ (14), ಗೌಡೇಶ್ ಉರ್ಫ್ ತಿಪ್ಪರಾಯ (10), ವಿಕಾಸ (5) ಮತ್ತು ಸಾನಿಕಾ (7) ಎಂದು ಗುರುತಿಸಲಾಗಿದೆ.

ಪೊಲೀಸರ ಪ್ರಾಥಮಿಕ ಮಾಹಿತಿಯಂತೆ, ಆಗಸ್ಟ್ 23ರ ರಾತ್ರಿ ಶೋಭಾ ಹಾಗೂ ಪತಿ ಮಲಕಾರಿ ನಡುವೆ ಜಗಳ ನಡೆದಿತ್ತು. ಶ್ರಾವಣ ಸೋಮವಾರದ ಹಿನ್ನೆಲೆಯಲ್ಲಿ ಪೂಜೆಗೆ ನೈವೇದ್ಯ ಸಿದ್ಧಪಡಿಸುವುದು ಹಾಗೂ ಕೂಲಿ ಕೆಲಸಕ್ಕೆ ತೆರಳಲು ಬುತ್ತಿ ಮಾಡಿಕೊಡುವ ವಿಚಾರದಲ್ಲಿ ದಂಪತಿ ನಡುವೆ ಗಲಾಟೆ ನಡೆದಿತ್ತು ಎನ್ನಲಾಗಿದೆ. ಬಳಿಕ ಶೋಭಾ ಮಕ್ಕಳೊಂದಿಗೆ ಮನೆಯಿಂದ ಹೊರಹೋಗಿದ್ದರು.

ಅವರು ಮರಳಿ ಮನೆಗೆ ಬಾರದ ಹಿನ್ನೆಲೆಯಲ್ಲಿ ಮಲಕಾರಿ ಗ್ರಾಮ ಹಾಗೂ ಸಂಬಂಧಿಕರ ಮನೆಗಳಲ್ಲಿ ಹುಡುಕಾಟ ನಡೆಸಿದ್ದ. ಸುಳಿವು ಸಿಗದ ಹಿನ್ನೆಲೆಯಲ್ಲಿ ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದ. ನಂತರ ಭೂತನಾಳ ಕೆರೆಯಲ್ಲಿ ಆರು ಮಂದಿಯ ಶವಗಳು ಪತ್ತೆಯಾಗಿವೆ.

ಮರಣೋತ್ತರ ಪರೀಕ್ಷೆಗಾಗಿ ಮೃತದೇಹಗಳನ್ನು ಬಿಎಲ್‌ಡಿಇ ಆಸ್ಪತ್ರೆಗೆ ರವಾನಿಸಲಾಗಿದ್ದು, ಸಾವಿನ ನಿಖರ ಕಾರಣ ವರದಿ ಬಂದ ಬಳಿಕ ಸ್ಪಷ್ಟವಾಗಲಿದೆ ಎಂದು ಎಸ್‌ಪಿ ಲಕ್ಷ್ಮಣ ಬಿ. ನಿಂಬರಗಿ ತಿಳಿಸಿದ್ದಾರೆ.

ಇತ್ತ ಶೋಭಾ ಕುಟುಂಬಸ್ಥರು ಮಲಕಾರಿ ವಿರುದ್ಧ ಗಂಭೀರ ಆರೋಪ ಮಾಡಿದ್ದು, ಮದ್ಯಪಾನ ಮಾಡಿ ಹಲ್ಲೆ ನಡೆಸುತ್ತಿದ್ದ ಹಾಗೂ ಮತ್ತೊಬ್ಬ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಎಂದು ದೂರಿದ್ದಾರೆ. ಈ ಹಿನ್ನೆಲೆಯಲ್ಲಿ ಶೋಭಾಗೆ ಕಿರುಕುಳ ನೀಡಲಾಗುತ್ತಿತ್ತು ಎಂದು ಆರೋಪಿಸಿದ್ದಾರೆ.

ಆದರ್ಶ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಕೌಟುಂಬಿಕ ಕಲಹ ಸೇರಿದಂತೆ ಸಾವಿಗೆ ಕಾರಣವಾಗಬಹುದಾದ ಎಲ್ಲ ಸಾಧ್ಯತೆಗಳ ಕುರಿತು ತನಿಖೆ ನಡೆಸುತ್ತಿದ್ದಾರೆ.

ಭೀಕರ ರಸ್ತೆ ಅಪಘಾತ; ನರಗುಂದದ ಮೂವರು ಯುವಕರು ಸ್ಥಳದಲ್ಲೇ ಸಾವು

ಗದಗ/ಕೊಪ್ಪಳ: ಕೊಪ್ಪಳದಲ್ಲಿ ನಡೆಯಲಿರುವ ಈದ್ ಮಿಲಾದ್ ಹಬ್ಬದ ಮೆರವಣಿಗೆ ವೀಕ್ಷಿಸಲು ನರಗುಂದದಿಂದ ಬೈಕ್‌ನಲ್ಲಿ ತೆರಳುತ್ತಿದ್ದ ಮೂವರು ಯುವಕರು ಭೀಕರ ರಸ್ತೆ ಅಪಘಾತದಲ್ಲಿ ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ಕೊಪ್ಪಳ ಜಿಲ್ಲೆಯ ಬನ್ನಿಕೊಪ್ಪ ಗ್ರಾಮದ ಬಳಿ ನಡೆದಿದೆ.

ಇಂದು ಮುಂಜಾನೆ ನರಗುಂದದಿಂದ ಕೊಪ್ಪಳದತ್ತ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ರಸ್ತೆ ಬದಿಯಲ್ಲಿ ಕೆಟ್ಟು ನಿಂತಿದ್ದ ಟಾಟಾ ಏಸ್ ವಾಹನಕ್ಕೆ ಬೈಕ್ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬೈಕ್‌ನಲ್ಲಿದ್ದ ಮೂವರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮೃತರನ್ನು ನರಗುಂದ ಪಟ್ಟಣದ ಹೊರಕೆರೆ ಓಣಿಯ ಶಾನುಸಾಬ ತಂದೆ ಮಕ್ತುಮಸಾಬ ಬಸಾಪೂರ (15) ಮಾಬುಸಾಬ ತಂದೆ ಬುಡನಸಾಬ ಮಟಗೇರಿ (17) ಹಾಗೂ ಹೊಸೂರ ಓಣಿಯ ಫಕ್ರುಸಾಬ್ ತಂದೆ ಹಸನಸಾಬ ಮಟಗೇರಿ (18) ಎಂದು ಪೊಲೀಸರು ತಿಳಿಸಿದ್ದಾರೆ.

ಮೂವರು ಯುವಕರು ಈದ್ ಮಿಲಾದ್ ಹಬ್ಬದ ಮೆರವಣಿಗೆ ವೀಕ್ಷಿಸಲು ಕೊಪ್ಪಳಕ್ಕೆ ತೆರಳುತ್ತಿದ್ದರು ಎನ್ನಲಾಗಿದೆ. ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಮೃತರ ಕುಟುಂಬಸ್ಥರು, ಸಂಬಂಧಿಕರು ಹಾಗೂ ಸ್ನೇಹಿತರ ಆಕ್ರಂದನ ಮುಗಿಲು ಮುಟ್ಟಿದ್ದು, ನರಗುಂದದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.

ವಿಷಯ ತಿಳಿದು ಕುಕನೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕುಕನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ನೇಪಾಳದಲ್ಲಿ ಭೀಕರ ಪ್ರವಾಹ: 16 ಸಾವು, 400 ಮಂದಿ ನಾಪತ್ತೆ; 105 ಭಾರತೀಯ ಪ್ರವಾಸಿಗರಿಗಾಗಿ ತೀವ್ರ ಶೋಧ

0

ಕಠ್ಮಂಡು: ನೇಪಾಳದ ರಸುವಾ ಪ್ರದೇಶದಲ್ಲಿ ಭೋಟೆ ಕೋಶಿ ನದಿಯಲ್ಲಿ ದಿಢೀರ್ ಉಂಟಾದ ಭೀಕರ ಪ್ರವಾಹ ಭಾರೀ ಅವಾಂತರ ಸೃಷ್ಟಿಸಿದೆ. ಪ್ರವಾಹದಲ್ಲಿ ಇದುವರೆಗೆ 16 ಮಂದಿ ಮೃತಪಟ್ಟಿದ್ದು, ನೇಪಾಳ ಪ್ರವಾಸೋದ್ಯಮ ಮಂಡಳಿಯ ಪ್ರಕಾರ ಸುಮಾರು 400 ಮಂದಿ ನಾಪತ್ತೆಯಾಗಿದ್ದಾರೆ.

ನಾಪತ್ತೆಯಾದವರಲ್ಲಿ 291 ಮಂದಿ ವಿದೇಶಿ ಪ್ರಜೆಗಳಾಗಿದ್ದು, ಕನಿಷ್ಠ 105 ಭಾರತೀಯ ಪ್ರವಾಸಿಗರು ಸೇರಿದ್ದಾರೆ. ನಾಪತ್ತೆಯಾದ ವಿದೇಶಿಯರಲ್ಲಿ ಅಮೆರಿಕದ ಮೂವರು, ಮಲೇಷ್ಯಾದ 17, ಬ್ರಿಟನ್‌ನ 12, ದಕ್ಷಿಣ ಆಫ್ರಿಕಾದ ನಾಲ್ವರು, ಆಸ್ಟ್ರೇಲಿಯಾದ ಒಬ್ಬರು ಹಾಗೂ ನೆದರ್ಲೆಂಡ್ಸ್‌ನ ಒಬ್ಬರು ಸೇರಿದ್ದಾರೆ. ಮತ್ತೂ 103 ಮಂದಿಯ ಪೌರತ್ವ ಇನ್ನೂ ದೃಢಪಟ್ಟಿಲ್ಲ.

ಟಿಬೆಟ್ ಗಡಿಗೆ ಹೊಂದಿಕೊಂಡಿರುವ ಮಧ್ಯ ನೇಪಾಳದ ರಸುವಾ ಮತ್ತು ಧಾಡಿಂಗ್ ಜಿಲ್ಲೆಗಳು ಸೇರಿದಂತೆ ನುವಾಕೋಟ್ ಜಿಲ್ಲೆಯ ಮೇಲೂ ಪ್ರವಾಹದ ತೀವ್ರ ಪರಿಣಾಮ ಬೀರಿದೆ. ಬೆಳಗ್ಗೆ ಸುಮಾರು 9 ಗಂಟೆ ವೇಳೆಗೆ ಟಿಬೆಟ್ ಕಡೆಯಿಂದ ಭೋಟೆ ಕೋಶಿ ನದಿಗೆ ಹಠಾತ್ ಭಾರೀ ಪ್ರಮಾಣದಲ್ಲಿ ನೀರು ಹರಿದುಬಂದಿದ್ದು, ನದಿ ತೀರದ ಜನವಸತಿ ಪ್ರದೇಶಗಳು ನಲುಗಿ ಹೋಗಿವೆ.

ರಸುವಾ ಜಿಲ್ಲೆಯ ತಿಮುರೆ ಮತ್ತು ಸ್ಯಾಫ್ರುಬೆಸಿ ಪ್ರದೇಶಗಳಲ್ಲಿ ವ್ಯಾಪಕ ಹಾನಿಯಾಗಿದ್ದು, ವಾಹನಗಳು, ವಸ್ತುಗಳು ಹಾಗೂ ಆಸ್ತಿಪಾಸ್ತಿಗಳು ಪ್ರವಾಹದ ನೀರಿನಲ್ಲಿ ಕೊಚ್ಚಿಹೋಗಿವೆ.

ನೇಪಾಳ ಸೇನೆಯ ನೆರವಿನೊಂದಿಗೆ ರಕ್ಷಣಾ ಹಾಗೂ ಶೋಧ ಕಾರ್ಯಾಚರಣೆ ಭರದಿಂದ ಸಾಗಿದೆ. ರಸುವಾ, ನುವಾಕೋಟ್, ಧಾಡಿಂಗ್ ಮತ್ತು ಚಿತ್ವಾನ್ ಸೇರಿದಂತೆ ನದಿ ತಳಪ್ರದೇಶದ ಹಲವು ಜಿಲ್ಲೆಗಳನ್ನು ಹೈ ಅಲರ್ಟ್‌ನಲ್ಲಿ ಇರಿಸಲಾಗಿದೆ.

ಭಾರತದಿಂದ ಪರಿಹಾರ ನೆರವು

ಪ್ರವಾಹದಿಂದ ತೀವ್ರ ಹಾನಿಗೊಳಗಾದ ನೇಪಾಳಕ್ಕೆ ಶೀಘ್ರವೇ ಪರಿಹಾರ ಸಾಮಗ್ರಿಗಳನ್ನು ಕಳುಹಿಸಲು ಭಾರತ ಸರ್ಕಾರ ಸಿದ್ಧತೆ ನಡೆಸುತ್ತಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.

ಪ್ರವಾಹಕ್ಕೆ ಕಾರಣವೇನು?

ರಸುವಾದಲ್ಲಿ ಸುರಿದ ಸ್ಥಳೀಯ ಮಳೆಯಿಂದ ಈ ದಿಢೀರ್ ಪ್ರವಾಹ ಸಂಭವಿಸಿಲ್ಲ ಎನ್ನಲಾಗಿದ್ದು, ಟಿಬೆಟ್ ಭಾಗದಲ್ಲಿ ಸುರಿದ ಭಾರಿ ಮಳೆ ಅಥವಾ ಹಿಮಪಾತದಿಂದ ನದಿಯಲ್ಲಿ ಹಠಾತ್ ನೀರಿನ ಪ್ರಮಾಣ ಏರಿಕೆಯಾಗಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ಆದರೆ ಪ್ರವಾಹದ ನಿಖರ ಕಾರಣ ಇನ್ನೂ ಸ್ಪಷ್ಟವಾಗಿಲ್ಲ.

ಉತ್ತರಾಖಂಡದಲ್ಲಿ ಹಂದಿಜ್ವರ ಆತಂಕ: 49 ಮಂದಿಗೆ ಸೋಂಕು, ಐವರು ಸಾವು

0

ಡೆಹ್ರಾಡೂನ್: ಉತ್ತರಾಖಂಡದಲ್ಲಿ ಹಂದಿಜ್ವರ (H1N1) ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿದ್ದು, ಆರೋಗ್ಯ ಇಲಾಖೆಯಲ್ಲಿ ಆತಂಕ ಮೂಡಿಸಿದೆ. ಆಗಸ್ಟ್‌ 1ರಿಂದ ಈವರೆಗೆ ರಾಜ್ಯದಲ್ಲಿ 49 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, ಐವರು ಮೃತಪಟ್ಟಿದ್ದಾರೆ. ಮೃತಪಟ್ಟ ಐವರೂ ಈಗಾಗಲೇ ಇತರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಕೆಲವೇ ದಿನಗಳಲ್ಲಿ ಸೋಂಕಿತರ ಸಂಖ್ಯೆ 31ರಿಂದ 49ಕ್ಕೆ ಏರಿಕೆಯಾಗಿದೆ. ಒಟ್ಟು ಸೋಂಕಿತರ ಪೈಕಿ 34 ಮಂದಿ ಡೆಹ್ರಾಡೂನ್‌ನವರೇ ಆಗಿದ್ದಾರೆ. ಸೋಂಕು ಪತ್ತೆಯಾದ ಪ್ರದೇಶಗಳಲ್ಲಿ ಆರೋಗ್ಯ ಇಲಾಖೆ ತಪಾಸಣೆಯನ್ನು ತೀವ್ರಗೊಳಿಸಿದ್ದು, ಎಲ್ಲ ಜಿಲ್ಲೆಗಳಲ್ಲೂ ಕ್ಷಿಪ್ರ ಪ್ರತಿಕ್ರಿಯಾ ತಂಡಗಳನ್ನು ನಿಯೋಜಿಸಲಾಗಿದೆ.

ವೈದ್ಯರು ಹಾಗೂ ತಜ್ಞರು ಸೇರಿದಂತೆ ನಾಲ್ವರು ಸಿಬ್ಬಂದಿಯ ತಂಡಗಳು ಸೋಂಕು ಬಾಧಿತ ಪ್ರದೇಶಗಳಿಗೆ ತೆರಳಿ ಪರಿಶೀಲನೆ ನಡೆಸುತ್ತಿವೆ. ಸೋಂಕಿತರ ಕಳೆದ 10ರಿಂದ 15 ದಿನಗಳ ಪ್ರಯಾಣದ ವಿವರ ಹಾಗೂ ಅವರ ಸಂಪರ್ಕಕ್ಕೆ ಬಂದವರ ಮಾಹಿತಿಯನ್ನೂ ಆರೋಗ್ಯ ಇಲಾಖೆ ಸಂಗ್ರಹಿಸುತ್ತಿದೆ. ಸೋಂಕಿತರ ಸಂಪರ್ಕದಲ್ಲಿದ್ದವರಿಗೂ H1N1 ಪರೀಕ್ಷೆ ನಡೆಸಲಾಗುತ್ತಿದೆ.

ಮಧುಮೇಹ, ರಕ್ತದೊತ್ತಡ, ಉಸಿರಾಟ ಹಾಗೂ ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿರುವವರ ಮೇಲೆ ವಿಶೇಷ ನಿಗಾ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಇಂತಹ ಸಹ-ಅಸ್ವಸ್ಥತೆ ಹೊಂದಿರುವವರಲ್ಲಿ ಸೋಂಕು ಗಂಭೀರ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿರುವುದರಿಂದ ಹೆಚ್ಚಿನ ಎಚ್ಚರಿಕೆ ವಹಿಸಲಾಗುತ್ತಿದೆ. ಮೃತಪಟ್ಟ ಐವರೂ ಇಂತಹ ಆರೋಗ್ಯ ಸಮಸ್ಯೆಗಳನ್ನು ಹೊಂದಿದ್ದರು ಎಂದು ಇಲಾಖೆ ತಿಳಿಸಿದೆ.

ಸೋಂಕಿತರ ಹಾಗೂ ಅವರ ಸಂಪರ್ಕಕ್ಕೆ ಬಂದವರನ್ನು ಅಗತ್ಯವಿದ್ದಲ್ಲಿ ಪ್ರತ್ಯೇಕವಾಗಿರಿಸುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಉಸಿರಾಟದ ತೊಂದರೆ, ದಿಢೀರ್ ಜ್ವರ, ಚಳಿ, ಕೆಮ್ಮು, ಮೂಗು ಸೋರುವಿಕೆ, ಸ್ನಾಯು ನೋವು, ವಾಂತಿ ಅಥವಾ ತೀವ್ರ ಆಯಾಸ ಕಂಡುಬಂದರೆ ತಡ ಮಾಡದೆ ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳುವಂತೆ ಸೂಚಿಸಲಾಗಿದೆ.

ಆಸ್ಪತ್ರೆಗಳಿಗೆ ಈಗಾಗಲೇ H1N1 ನಿಯಂತ್ರಣಕ್ಕೆ ಸಂಬಂಧಿಸಿದ ಮಾರ್ಗಸೂಚಿಗಳನ್ನು ನೀಡಲಾಗಿದ್ದು, ಪರಿಸ್ಥಿತಿ ಎದುರಿಸಲು ಆರೋಗ್ಯ ಇಲಾಖೆ ಸಿದ್ಧವಾಗಿದೆ ಎಂದು ಉತ್ತರಾಖಂಡ ಆರೋಗ್ಯ ಕಾರ್ಯದರ್ಶಿ ವಿಜಯ್ ಶಂಕರ್ ಪಾಂಡೆ ತಿಳಿಸಿದ್ದಾರೆ.

ಲಕ್ನೋದಿಂದ ಬೆಂಗಳೂರಿಗೆ ಬಂದ ಇಂಡಿಗೋ ವಿಮಾನದಲ್ಲಿ ಬಾಂಬ್ ಬೆದರಿಕೆ ಪತ್ರ ಪತ್ತೆ!

ಲಕ್ನೋ/ಬೆಂಗಳೂರು: ಲಕ್ನೋದಿಂದ ಬೆಂಗಳೂರಿಗೆ ಬರುತ್ತಿದ್ದ ಇಂಡಿಗೋ ವಿಮಾನದಲ್ಲಿ ಬಾಂಬ್ ಬೆದರಿಕೆ ಪತ್ರವೊಂದು ಪತ್ತೆಯಾಗಿದ್ದು, ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ಹಾಗೂ ಇತರ ಭದ್ರತಾ ಏಜೆನ್ಸಿಗಳು ತಕ್ಷಣವೇ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿವೆ ಎಂದು ಮೂಲಗಳು ತಿಳಿಸಿವೆ.

ಇಂಡಿಗೋ ವಿಮಾನ (ಸಂಖ್ಯೆ 6E231)ದಲ್ಲಿ ಈ ಘಟನೆ ನಡೆದಿದ್ದು, ಬುಧವಾರ ಇಂದು ಬೆಂಗಳೂರಿಗೆ ಬಂದು ಸುರಕ್ಷಿತವಾಗಿ ಲ್ಯಾಂಡ್ ಆದ ಬಳಿಕ ಬೆದರಿಕೆ ಪತ್ರ ಪತ್ತೆಯಾಗಿದೆ. ಟಿಶ್ಯೂ ಪೇಪರ್‌ನಲ್ಲಿ ಬಾಂಬ್ ಬೆದರಿಕೆ ಬರೆಯಲಾಗಿದ್ದು, ವಿಮಾನ ಪ್ರಯಾಣದ ಕೊನೆಯ ಹಂತದಲ್ಲಿ ಈ ಪತ್ರ ಪತ್ತೆಯಾಗಿದೆ ಎನ್ನಲಾಗಿದೆ.

ಬೆದರಿಕೆ ಪತ್ರ ಪತ್ತೆಯಾದ ಬೆನ್ನಲ್ಲೇ ಭದ್ರತಾ ಏಜೆನ್ಸಿಗಳು ಮುನ್ನೆಚ್ಚರಿಕಾ ಕ್ರಮವಾಗಿ ವಿಮಾನವನ್ನು ಸಂಪೂರ್ಣವಾಗಿ ಪರಿಶೀಲಿಸಲು ಮುಂದಾಗಿವೆ. ಬೆದರಿಕೆ ನಿಜವಾಗಿದೆಯೇ ಅಥವಾ ಹುಸಿ ಬೆದರಿಕೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ತಪಾಸಣೆ ನಡೆಸಲಾಗುತ್ತಿದೆ. ಬೆದರಿಕೆ ಪತ್ರವನ್ನು ಯಾರು ಬರೆದಿದ್ದಾರೆ ಮತ್ತು ಅದು ವಿಮಾನದಲ್ಲಿ ಹೇಗೆ ಪತ್ತೆಯಾಯಿತು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಘಟನೆಗೆ ಸಂಬಂಧಿಸಿದಂತೆ ಅಧಿಕಾರಿಗಳು ತನಿಖೆ ಮುಂದುವರಿಸಿದ್ದು, ಹೆಚ್ಚಿನ ವಿವರಗಳಿಗಾಗಿ ಕಾಯಲಾಗುತ್ತಿದೆ.

ಹೆಲ್ಮೆಟ್ ಇಲ್ಲದೆ ಬೈಕ್ ಸವಾರಿ: ಶಾಸಕ ಪ್ರಕಾಶ್ ಕೋಳಿವಾಡಗೆ 500 ರೂ. ದಂಡ

0

ಹಾವೇರಿ: ಟ್ರಾಫಿಕ್ ನಿಯಮ ಉಲ್ಲಂಘಿಸಿದ ಆರೋಪದ ಹಿನ್ನೆಲೆಯಲ್ಲಿ ರಾಣೇಬೆನ್ನೂರು ಕಾಂಗ್ರೆಸ್ ಶಾಸಕ ಪ್ರಕಾಶ್ ಕೋಳಿವಾಡ ಅವರಿಗೆ ಟ್ರಾಫಿಕ್ ಪೊಲೀಸರು 500 ರೂ. ದಂಡ ವಿಧಿಸಿದ್ದಾರೆ.

ಆಗಸ್ಟ್ 25ರಂದು ಪ್ರಕಾಶ್ ಕೋಳಿವಾಡ ಹೆಲ್ಮೆಟ್ ಧರಿಸದೇ ಬುಲೆಟ್ ಬೈಕ್ ಚಲಾಯಿಸಿದ್ದರು. ಈ ವಿಡಿಯೋ ಹಾಗೂ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರಿಂದಲೂ ಟೀಕೆ ವ್ಯಕ್ತವಾಗಿತ್ತು.

ಸಾಮಾನ್ಯ ಜನರು ಹೆಲ್ಮೆಟ್ ಇಲ್ಲದೆ ಬೈಕ್ ಚಲಾಯಿಸಿದರೆ ದಂಡ ಹಾಕಲಾಗುತ್ತದೆ, ಆದರೆ ಜನಪ್ರತಿನಿಧಿಗಳಿಗೆ ನಿಯಮ ಅನ್ವಯಿಸುವುದಿಲ್ಲವೇ ಎಂದು ಕೆಲವರು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನಿಸಿದ್ದರು. ಈ ಹಿನ್ನೆಲೆಯಲ್ಲಿ ರಾಣೇಬೆನ್ನೂರು ಟ್ರಾಫಿಕ್ ಪೊಲೀಸರು ಶಾಸಕರಿಗೆ ನೋಟಿಸ್ ಜಾರಿ ಮಾಡಿದ್ದು, ಬಳಿಕ 500 ರೂ. ದಂಡದ ನೋಟಿಸ್ ಶಾಸಕರ ಮನೆಗೆ ತಲುಪಿಸಲಾಗಿದೆ.

ಪೊಲೀಸರ ನೋಟಿಸ್ ಆಧರಿಸಿ ಶಾಸಕ ಪ್ರಕಾಶ್ ಕೋಳಿವಾಡ ದಂಡ ಪಾವತಿಸಿದ್ದಾರೆ. ಈ ಕುರಿತು ತಮ್ಮ ಫೇಸ್‌ಬುಕ್ ಖಾತೆಯಲ್ಲೂ ಮಾಹಿತಿ ಹಂಚಿಕೊಂಡಿರುವ ಅವರು, ಎಸ್‌ಪಿ ಮೇಡಂ ತಮಗೆ ನೋಟಿಸ್ ನೀಡಿದ್ದಾರೆ, ಅವರು ತಮ್ಮ ಕರ್ತವ್ಯ ನಿರ್ವಹಿಸಿದ್ದಾರೆ, ಅದನ್ನು ತಾವು ಗೌರವಿಸುವುದಾಗಿ ತಿಳಿಸಿದ್ದಾರೆ. ಈ ಘಟನೆ ಮೂಲಕ ಜನಪ್ರತಿನಿಧಿಗಳೂ ಸೇರಿದಂತೆ ಎಲ್ಲರೂ ಟ್ರಾಫಿಕ್ ನಿಯಮಗಳನ್ನು ಪಾಲಿಸಬೇಕು ಎಂಬ ಸಂದೇಶ ಮತ್ತೊಮ್ಮೆ ಹೊರಬಂದಿದೆ.

5 ಗ್ರಾಂ ಚಿನ್ನ ಚರಂಡಿಗೆ ಎಸೆದಿದ್ದ ದಂಪತಿ! ಪೊಲೀಸರ ಸಮಯಪ್ರಜ್ಞೆಯಿಂದ ಆಭರಣಗಳು ವಾಪಸ್

0

ವಿಶಾಖಪಟ್ಟಣಂ: ಪೂಜೆ ಮುಗಿದ ನಂತರ ಕಸದ ಜೊತೆಗೆ ತಿಳಿಯದೇ ಚರಂಡಿಗೆ ಎಸೆದಿದ್ದ ಸುಮಾರು 5 ಗ್ರಾಂ ಚಿನ್ನದ ಆಭರಣಗಳು ಪೊಲೀಸರ ಸಕಾಲಿಕ ಕಾರ್ಯಾಚರಣೆಯಿಂದಾಗಿ ಮರಳಿ ಸಿಕ್ಕಿರುವ ರೋಚಕ ಘಟನೆ ವಿಶಾಖಪಟ್ಟಣಂನ ಶ್ರೀನಗರದಲ್ಲಿ ನಡೆದಿದೆ.

ಗಾಜುವಾಕ ಶ್ರೀನಗರದ ನಿವಾಸಿಗಳಾದ ಉಡುಮುಲ ರಮೇಶ್ ಹಾಗೂ ದಿವ್ಯಾ ದಂಪತಿ ಈ ತಿಂಗಳ 21ರಂದು ಶುಕ್ರವಾರ ವರಮಹಾಲಕ್ಷ್ಮಿ ವ್ರತದ ಅಂಗವಾಗಿ ದೇವಿಗೆ ಸುಮಾರು 8 ತೊಲ ಚಿನ್ನದ ಆಭರಣಗಳಿಂದ ಅಲಂಕಾರ ಮಾಡಿದ್ದರು. ಮೂರು ದಿನಗಳ ನಂತರ ರಮೇಶ್ ದೇವಿಯ ಮೇಲಿದ್ದ 3 ತೊಲದ ಹಾರ ಮತ್ತು ಕಾಸನ್ನು ಮಾತ್ರ ತೆಗೆದುಕೊಂಡಿದ್ದು, ಹೂವುಗಳ ನಡುವೆ ಇದ್ದ 1 ಬ್ರೇಸ್‌ಲೆಟ್, 2 ಚೈನ್‌ಗಳು ಹಾಗೂ 3 ಉಂಗುರಗಳು ಸೇರಿದಂತೆ ಉಳಿದ 5 ತೊಲ ಚಿನ್ನದ ಆಭರಣಗಳನ್ನು ಗಮನಿಸದೇ ಪೂಜೆಗೆ ಬಳಸಿದ್ದ ಹೂವು-ಸಾಮಗ್ರಿಗಳ ಜೊತೆಗೆ ಡ್ರೈನೇಜ್‌ಗೆ ಎಸೆದು ಮನೆಗೆ ಮರಳಿದ್ದರು.

ಮನೆಗೆ ಬಂದ ನಂತರ ಚಿನ್ನದ ಆಭರಣಗಳು ಇಲ್ಲದಿರುವುದನ್ನು ಗಮನಿಸಿದ ದಿವ್ಯಾ, ಪತಿಗೆ ತಿಳಿಸಿದ್ದರು. ತಕ್ಷಣವೇ ಕಾಲುವೆ ಬಳಿ ಹೋಗಿ ಹುಡುಕಿದರೂ ಚಿನ್ನ ಸಿಗದ ಕಾರಣ ತೀವ್ರ ಆತಂಕಗೊಂಡ ದಂಪತಿ ಸ್ಟೀಲ್ ಪ್ಲಾಂಟ್ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದರು. ಘಟನೆಯ ಗಂಭೀರತೆ ಅರಿತ ಸಿಐ ಕೇಶವರಾವ್, ತಕ್ಷಣವೇ ಕಾನ್‌ಸ್ಟೇಬಲ್ ಮತ್ತು ಹೋಂ ಗಾರ್ಡ್‌ಗಳನ್ನು ಸ್ಥಳಕ್ಕೆ ಕಳುಹಿಸಿ, ಜೆಸಿಬಿ ಸಹಾಯದಿಂದ ಡ್ರೈನೇಜ್ ನೀರಿನ ಹರಿವನ್ನು ಬೇರೆಡೆಗೆ ತಿರುಗಿಸಿ ತೀವ್ರ ಶೋಧ ನಡೆಸಿದರು.

ನೀರು ಕಡಿಮೆಯಾಗುತ್ತಿದ್ದಂತೆ ಸ್ವಲ್ಪ ದೂರದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಆಭರಣಗಳು ಒಂದೊಂದಾಗಿ ಪತ್ತೆಯಾಗಿದ್ದು, ಪೊಲೀಸರು ಎಲ್ಲಾ 5 ಗ್ರಾಂ ಆಭರಣಗಳನ್ನು ಸುರಕ್ಷಿತವಾಗಿ ಹೊರತೆಗೆದು ದಂಪತಿಗೆ ಹಸ್ತಾಂತರಿಸಿದರು. ಹಬ್ಬ ಹಾಗೂ ಪೂಜೆಗಳ ಸಂದರ್ಭದಲ್ಲಿ ಬೆಲೆಬಾಳುವ ಆಭರಣ ಮತ್ತು ವಸ್ತುಗಳ ವಿಷಯದಲ್ಲಿ ಸಾರ್ವಜನಿಕರು ತೀವ್ರ ಎಚ್ಚರಿಕೆಯಿಂದ ಇರಬೇಕು ಎಂದು ಸ್ಟೀಲ್ ಪ್ಲಾಂಟ್ ಪೊಲೀಸ್ ಠಾಣೆ ಸಿಐ ಕೇಶವರಾವ್ ಹೇಳಿದ್ದಾರೆ.