Home Blog Page 4

ಜಾಬ್‌ಕಾರ್ಡ್‌ಗಾಗಿ ಮನೆ ಬಾಗಿಲಿಗೆ ಅಧಿಕಾರಿಗಳು

0

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಗ್ರಾಮೀಣ ಕುಟುಂಬಗಳಿಗೆ ಸ್ವಗ್ರಾಮದಲ್ಲಿಯೇ ಉದ್ಯೋಗಾವಕಾಶ ಕಲ್ಪಿಸುವ ಉದ್ದೇಶದಿಂದ ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ) ಯೋಜನೆಯಡಿ ಶಿರಹಟ್ಟಿ ತಾಲೂಕಿನಾದ್ಯಂತ ಆ. ೧೫ರಿಂದ ಸೆ. ೧೫ರವರೆಗೆ ಜಾಬ್‌ಕಾರ್ಡ್ ಮೇಳ ಹಾಗೂ ವಿಶೇಷ ಜಾಗೃತಿ ಅಭಿಯಾನ ನಡೆಯುತ್ತಿದೆ.

ಅಭಿಯಾನದ ಅಂಗವಾಗಿ ಕಡಕೋಳ, ರಣತೂರ ಹಾಗೂ ಮಜ್ಜೂರು ಗ್ರಾಮಗಳಲ್ಲಿ ಜಾಬ್‌ಕಾರ್ಡ್ ಮೇಳ ಆಯೋಜಿಸಿ ಗ್ರಾಮಸ್ಥರಿಗೆ ಯೋಜನೆಯ ಕುರಿತು ಮಾಹಿತಿ ನೀಡಲಾಯಿತು.

ತಾಲೂಕಿನ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಜಾಬ್‌ಕಾರ್ಡ್ ಮೇಳ ನಡೆಸಲಾಗುತ್ತಿದ್ದು, ಗ್ರಾಮೀಣ ಕುಟುಂಬಗಳಿಗೆ ಹೊಸ ಜಾಬ್‌ಕಾರ್ಡ್ ಮಾಡಿಸಿಕೊಡುವುದು, ಹಳೆಯ ಜಾಬ್‌ಕಾರ್ಡ್ ನವೀಕರಿಸುವುದು, ಇ-ಕೆವೈಸಿ ಪೂರ್ಣಗೊಳಿಸುವುದು ಹಾಗೂ ಉದ್ಯೋಗದ ಬೇಡಿಕೆ ಸ್ವೀಕರಿಸುವ ಕಾರ್ಯಕ್ಕೆ ಆದ್ಯತೆ ನೀಡಲಾಗುತ್ತಿದೆ.

ಮಾಹಿತಿ, ಶಿಕ್ಷಣ ಹಾಗೂ ಸಂವಹನ ಚಟುವಟಿಕೆಗಳಡಿ ನಿಷ್ಕ್ರಿಯ ಜಾಬ್‌ಕಾರ್ಡ್ ಹೊಂದಿರುವ ಕುಟುಂಬಗಳನ್ನು ಗುರುತಿಸಿ ಮನೆಮನೆಗೆ ಭೇಟಿ ನೀಡಲಾಗುತ್ತಿದೆ. ಈ ವೇಳೆ ಯೋಜನೆಯಡಿ ಲಭ್ಯವಿರುವ ಅಕುಶಲ ಉದ್ಯೋಗ ಹಾಗೂ ವೈಯಕ್ತಿಕ ಸವಲತ್ತುಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.

ಕಾರ್ಮಿಕರ ಹಾಜರಾತಿ, ಕಾಮಗಾರಿಗಳ ಪ್ರಗತಿ ಹಾಗೂ ಸಂಬಂಧಿತ ದಾಖಲೆಗಳನ್ನು ಡಿಜಿಟಲ್ ವ್ಯವಸ್ಥೆಯಲ್ಲಿ ನಿರ್ವಹಿಸುವುದಕ್ಕೂ ಒತ್ತು ನೀಡಲಾಗುತ್ತಿದೆ. ಸ್ವಗ್ರಾಮದಲ್ಲಿಯೇ ಉದ್ಯೋಗ ದೊರೆಯುವುದರಿಂದ ಉದ್ಯೋಗ ಅರಸಿ ಗ್ರಾಮೀಣ ಪ್ರದೇಶದಿಂದ ನಗರಗಳಿಗೆ ವಲಸೆ ಹೋಗುವ ಪರಿಸ್ಥಿತಿ ತಡೆಯುವ ಆಶಯವೂ ಯೋಜನೆಯದ್ದಾಗಿದೆ.

ಜಾಬ್‌ಕಾರ್ಡ್, ಯೋಜನೆಯಡಿ ಲಭ್ಯವಿರುವ ಸೌಲಭ್ಯಗಳು ಹಾಗೂ ಉದ್ಯೋಗದ ಬೇಡಿಕೆ ಸಲ್ಲಿಕೆ ಕುರಿತು ಮಾಹಿತಿ ಅಗತ್ಯವಿರುವವರು ತಮ್ಮ ಗ್ರಾಮ ಪಂಚಾಯಿತಿ ಕಾರ್ಯಾಲಯವನ್ನು ಸಂಪರ್ಕಿಸಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ತಾಂತ್ರಿಕ ಸಿಬ್ಬಂದಿ ಸೇರಿದಂತೆ ಗ್ರಾಮ ಪಂಚಾಯಿತಿ ಸಿಬ್ಬಂದಿ ಉಪಸ್ಥಿತರಿದ್ದರು.

ದುರ್ಬಲ ವರ್ಗದವರ ಪಾಲ್ಗೊಳ್ಳುವಿಕೆ ಹೆಚ್ಚಿಸಲು ಒತ್ತು

ಅಭಿಯಾನದ ಮೂಲಕ ದುರ್ಬಲ ವರ್ಗದ ಜನರ ಯೋಜನಾ ಭಾಗವಹಿಸುವಿಕೆ ಹೆಚ್ಚಿಸಿ, ಉದ್ಯೋಗ ಸೃಷ್ಟಿಯ ಮೂಲಕ ಆರ್ಥಿಕ ಹಾಗೂ ಜೀವನೋಪಾಯ ಭದ್ರತೆ ಕಲ್ಪಿಸುವ ಗುರಿ ಹೊಂದಲಾಗಿದೆ. ಬರ ಪರಿಸ್ಥಿತಿಯನ್ನು ಎದುರಿಸಲು ಜಲ ಸಂರಕ್ಷಣೆ, ಅಂತರ್ಜಲ ಮರುಪೂರಣ ಹಾಗೂ ದೀರ್ಘಕಾಲೀನ ಜೀವನೋಪಾಯಕ್ಕೆ ನೆರವಾಗುವ ಕಾಮಗಾರಿಗಳಿಗೆ ಆದ್ಯತೆ ನೀಡಲಾಗುವುದು.

— ವೀರೇಶ, ಮಾಹಿತಿ, ಶಿಕ್ಷಣ ಸಂಯೋಜಕ

ಸ್ವಗ್ರಾಮದಲ್ಲೇ ಉದ್ಯೋಗ ಒದಗಿಸುವ ಗುರಿ

ಅರ್ಹ ಗ್ರಾಮೀಣ ಕುಟುಂಬಗಳಿಗೆ ಸ್ವಗ್ರಾಮದಲ್ಲಿಯೇ ಉದ್ಯೋಗ ಒದಗಿಸುವುದು ನಮ್ಮ ಮುಖ್ಯ ಉದ್ದೇಶ. ಜಾಬ್‌ಕಾರ್ಡ್ ಮೇಳದ ಮೂಲಕ ಹೆಚ್ಚಿನ ಮಾನವ ದಿನಗಳ ಸೃಷ್ಟಿಗೆ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗುತ್ತಿದೆ. ಅರ್ಹ ಫಲಾನುಭವಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು.

— ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು

ಮನೆ ಬಾಗಿಲಿಗೆ ಅಂಚೆ ಸೇವೆ

0

ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಕುಮಾರವ್ಯಾಸ ವ್ಯಾಪಾರ ಮಳಿಗೆ ಸಂಕೀರ್ಣದಲ್ಲಿ ಗುರುವಾರ ನೂತನ ಅಂಚೆ ಗ್ರಾಹಕ ಸೇವಾ ಕೇಂದ್ರಕ್ಕೆ ಗದಗ ವಿಭಾಗೀಯ ಅಂಚೆ ಅಧೀಕ್ಷಕ ಎಸ್.ಎಸ್. ಶಿರಹಟ್ಟಿ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಗ್ರಾಹಕರಿಗೆ ತ್ವರಿತ, ವಿಶ್ವಾಸಾರ್ಹ ಹಾಗೂ ಸುಲಭ ಅಂಚೆ ಸೇವೆಗಳನ್ನು ಒದಗಿಸುವ ಉದ್ದೇಶದಿಂದ ನೂತನ ಸೇವಾ ಕೇಂದ್ರ ಆರಂಭಿಸಲಾಗಿದೆ. ಇದರಿಂದ ನಗರದ ಜನರಿಗೆ ಅಗತ್ಯ ಅಂಚೆ ಸೇವೆಗಳು ಇನ್ನಷ್ಟು ವೇಗವಾಗಿ ಹಾಗೂ ಸುಲಭವಾಗಿ ಲಭ್ಯವಾಗಲಿವೆ ಎಂದರು.

ಗ್ರಾಹಕರ ಅನುಕೂಲಕ್ಕಾಗಿ ಗದಗ ನಗರದ ಹೃದಯ ಭಾಗದಲ್ಲಿ ನೂತನ ಅಂಚೆ ಫ್ರಾಂಚೈಸಿ ಹಾಗೂ ಗ್ರಾಹಕ ಸೇವಾ ಕೇಂದ್ರಗಳಿಗೆ ಅವಕಾಶ ಕಲ್ಪಿಸಲಾಗಿದೆ. ಅಂಚೆ ಇಲಾಖೆ ಇಂದು ಕೇವಲ ಪತ್ರಗಳನ್ನು ತಲುಪಿಸುವ ಸಂಸ್ಥೆಯಾಗಿರದೆ, ಜನರ ಅಗತ್ಯಗಳಿಗೆ ಸ್ಪಂದಿಸುವ ಸಮಗ್ರ ಸೇವಾ ಸಂಸ್ಥೆಯಾಗಿ ರೂಪಾಂತರಗೊಂಡಿದೆ ಎಂದು ಎಸ್.ಎಸ್. ಶಿರಹಟ್ಟಿ ಹೇಳಿದರು.

ತಂತ್ರಜ್ಞಾನ ಹಾಗೂ ನೂತನ ಸೇವಾ ಕೇಂದ್ರಗಳ ಮೂಲಕ ಅಂಚೆ ಸೇವೆಗಳು ಜನರ ಮನೆ ಬಾಗಿಲಿಗೆ ಇನ್ನಷ್ಟು ಹತ್ತಿರವಾಗುತ್ತಿವೆ. ನಗರದ ನಾಗರಿಕರು ಈ ಕೇಂದ್ರದ ಸೌಲಭ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸದುಪಯೋಗಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.

ಪ್ರಧಾನ ಅಂಚೆ ಪಾಲಕ ಲಕ್ಷ್ಮಣ ಅಸುಂಡಿ, ಅಂಚೆ ಸಹಾಯಕರಾದ ಎಂ.ಟಿ. ಕರಿಗಾರ, ಮಧು ಶಿರೂರ, ವೆಂಕಟೇಶ ಆಕಳವಾಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಒಳ ಮೀಸಲಾತಿ ಫಲ: ವೈದ್ಯಕೀಯ ಶಿಕ್ಷಣದತ್ತ ವಿದ್ಯಾರ್ಥಿನಿ

ವಿಜಯಸಾಕ್ಷಿ ಸುದ್ದಿ, ಹಗರಿಬೊಮ್ಮನಹಳ್ಳಿ: ಸುಮಾರು ೩೫ ವರ್ಷಗಳ ಒಳ ಮೀಸಲಾತಿ ಹೋರಾಟದ ಫಲವಾಗಿ ತಾಲೂಕಿನ ಮೋರಗೇರಿ ಗ್ರಾಮದ ಮಾದಿಗ ಸಮಾಜದ ವಿದ್ಯಾರ್ಥಿನಿ ಕುಮಾರಿ ದುರುಗಮ್ಮ ಉತ್ತಂಗಿ ಬೆಂಗಳೂರಿನ ಸಪ್ತಗಿರಿ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯಕೀಯ ಸೀಟು ಪಡೆದಿದ್ದಾರೆ.
ಒಳ ಮೀಸಲಾತಿ ಜಾರಿಯಿಂದ ವಿದ್ಯಾರ್ಥಿಗಳಿಗೆ ತಮ್ಮ ವಿದ್ಯಾರ್ಹತೆಗೆ ಅನುಗುಣವಾಗಿ ಉನ್ನತ ಶಿಕ್ಷಣ ಹಾಗೂ ಸರ್ಕಾರಿ ಉದ್ಯೋಗ ಪಡೆಯಲು ಅವಕಾಶ ದೊರೆತಿದೆ ಎಂದು ಮಹಾಸಭಾ ಅಧ್ಯಕ್ಷ ಪೂಜಾರ್ ಲೋಕಪ್ಪ ಮಾದರ ಹೇಳಿದರು.
ಪೋಷಕರು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿ, ಅವರನ್ನು ಉನ್ನತ ಶಿಕ್ಷಣದತ್ತ ಕೊಂಡೊಯ್ಯಬೇಕು. ದುರುಗಮ್ಮ ಅವರ ಮುಂದಿನ ವಿದ್ಯಾಭ್ಯಾಸಕ್ಕೆ ಸಮಾಜ ಸದಾ ಬೆಂಬಲವಾಗಿ ನಿಲ್ಲಲಿದೆ ಎಂದು ಅವರು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಗದ್ದಿಕೇರಿ ಎಚ್. ದೊಡ್ಡಬಸಪ್ಪ, ಬೆಣಕಲ್ ಪ್ರಕಾಶ್, ವರಲಹಳ್ಳಿ ಶಿವು, ಮಂಜುನಾಥ ಬ್ಯಾಲಾಳ, ಬುಳ್ಳಪ್ಪ ಉಪ್ಪಾರಗಟ್ಟಿ, ಅರ್ಜುನ್ ಟಿ., ಕಿತ್ತೂರು ಮಲ್ಲಪ್ಪ ಸೇರಿದಂತೆ ಸಮಾಜದ ಮುಖಂಡರು ಹಾಗೂ ಬಾಂಧವರು ಉಪಸ್ಥಿತರಿದ್ದರು.

ಹರಿಜಾತ್ರೆ ಎಂದರೆ ದೈವಶಕ್ತಿಯ ಆರಾಧನೆ: ಸದಾಶಿವಾನಂದ ಮಹಾಸ್ವಾಮೀಜಿ

0

ವಿಜಯಸಾಕ್ಷಿ ಸುದ್ದಿ, ಗದಗ: ಹರಿಜಾತ್ರೆ ಎಂದರೆ ತಾಯಿಯರ ಜಾತ್ರೆ. ತಾಯಿ ಎಂದರೆ ಶಕ್ತಿ. ಈ ಜಗತ್ತು ವಿಕಾಸವಾಗಿರುವುದೇ ಆ ಶಕ್ತಿಯಿಂದ ಎಂದು ಗದುಗಿನ ಶಿವಾನಂದ ಬ್ರಹ್ಮಮಠದ ಪೂಜ್ಯಶ್ರೀ ಜ. ಸದಾಶಿವಾನಂದ ಮಹಾಸ್ವಾಮೀಜಿ ಹೇಳಿದರು.

ನಗರದ ಒಕ್ಕಲಗೇರಿ ಓಣಿಯಲ್ಲಿ 18 ವರ್ಷಗಳ ಬಳಿಕ ನಡೆಯುತ್ತಿರುವ ಶ್ರೀ ದ್ಯಾಮಮ್ಮ ಹಾಗೂ ಶ್ರೀ ದುರ್ಗಮ್ಮ ದೇವಿಯರ ಹರಿಜಾತ್ರೋತ್ಸವದ ಮೂರನೇ ದಿನದ ಸಭಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಪ್ರಕೃತಿಯೇ ತಾಯಿ. ಆ ತಾಯಿಯ ಮಡಿಲಲ್ಲಿ ಎಲ್ಲರನ್ನೂ ಕಾಪಾಡುವ ಶಕ್ತಿಯಿದೆ. ಆ ತಾಯಿಗೆ ಉಡಿ ತುಂಬುವ ಮೂಲಕ ಕೃತಜ್ಞತೆ ಸಲ್ಲಿಸುವುದೇ ಜಾತ್ರೆಯ ಉದ್ದೇಶ. ನಮ್ಮ ದೇಶದಲ್ಲಿ ಹೆಣ್ಣುಮಕ್ಕಳಿಗೆ ದೇವಿಯ ಸ್ಥಾನ ನೀಡಲಾಗುತ್ತದೆ. ಮನೆಯಲ್ಲಿ ಹೆಣ್ಣುಮಕ್ಕಳನ್ನು ಸಾಕ್ಷಾತ್ ದೇವಿಯ ರೂಪದಲ್ಲಿ ಕಾಣುವ ಸಂಪ್ರದಾಯವಿದೆ ಎಂದರು.

18 ವರ್ಷಗಳಿಗೊಮ್ಮೆ ನಡೆಯುವ ಹರಿಜಾತ್ರೆಗೆ ತನ್ನದೇ ಆದ ವಿಶೇಷ ಮಹತ್ವವಿದೆ. ಯಾವ ಸಮಯದಲ್ಲಿ ಯಾವ ಕಾರ್ಯ ನಡೆಯಬೇಕು ಎಂಬುದೂ ದೈವಿಚ್ಛೆಯಾಗಿರುತ್ತದೆ. ದೈವಶಕ್ತಿಯನ್ನು ಆರಾಧಿಸುವುದೇ ಜಾತ್ರೆಯ ಮೂಲ ಆಶಯ ಎಂದು ಶ್ರೀಗಳು ಹೇಳಿದರು.

ಕಪ್ಪತಗುಡ್ಡದ ಪರಿಸರ ಸಂರಕ್ಷಣೆ ಕುರಿತು ಕಳವಳ ವ್ಯಕ್ತಪಡಿಸಿದ ಅವರು, ಅಭಿವೃದ್ಧಿಯ ಹೆಸರಿನಲ್ಲಿ ಕಪ್ಪತಗುಡ್ಡ ಮಲಿನವಾಗುತ್ತಿದೆ. ಪರಿಸರ ಹಾಳಾಗುತ್ತಿದೆ. ಮುಂದಿನ ಪೀಳಿಗೆಗೆ ಉತ್ತಮ ಪರಿಸರವನ್ನು ಉಳಿಸಿಕೊಡುವಂತೆ ಶ್ರೀ ದ್ಯಾಮಮ್ಮ ಹಾಗೂ ಶ್ರೀ ದುರ್ಗಮ್ಮ ದೇವಿಯರಲ್ಲಿ ಎಲ್ಲರೂ ಪ್ರಾರ್ಥಿಸೋಣ ಎಂದು ಕರೆ ನೀಡಿದರು.

ಆಧ್ಯಾತ್ಮಿಕ ವಿದ್ಯಾಶ್ರಮದ ಪೂಜ್ಯಶ್ರೀ ನೀಲಮ್ಮ ತಾಯಿ ಅಸುಂಡಿ ಅಮ್ಮನವರು ವೇದಿಕೆಯಲ್ಲಿ ಸಾನ್ನಿಧ್ಯ ವಹಿಸಿದ್ದರು. ಟ್ರಸ್ಟ್ ಕಮಿಟಿ ಅಧ್ಯಕ್ಷ ಕೊಟ್ರಪ್ಪ ಕಮತರ್ ಅಧ್ಯಕ್ಷತೆ ವಹಿಸಿದ್ದರು. ಜಾತ್ರಾ ಕಮಿಟಿ ಕಾರ್ಯಾಧ್ಯಕ್ಷ ಫಕ್ಕೀರಪ್ಪ ಹೆಬಸೂರ, ಸಾಮಾಜಿಕ ಕಾರ್ಯಕರ್ತ ಮಹೇಶ ದಾಸರ, ಗಣ್ಯ ವ್ಯಾಪಾರಸ್ಥ ಶರಣಪ್ಪ ಸಾಸನೂರ, ಯುವ ಧುರೀಣ ಸಂಗಮೇಶ ಕವಳಿಕಾಯಿ, ಉದ್ಯಮಿ ಸಾಗರ ಪವಾರ, ಗಣ್ಯ ವ್ಯಾಪಾರಸ್ಥ ಫಕೀರಸಾ ಬಾಂಡಗೆ ಮುಖ್ಯ ಅತಿಥಿಗಳಾಗಿದ್ದರು.

ನಗರಸಭೆ ಸದಸ್ಯರಾದ ಶ್ವೇತಾ ದಂಡಿನ, ವಿಜಯಲಕ್ಷ್ಮೀ ದಿಂಡೂರ, ಗೂಳಪ್ಪ ಮುಶಿಗೇರಿ, ಪ್ರಕಾಶ ಅಂಗಡಿ, ಚಂದ್ರಶೇಖರ ತಡಸದ, ಜಾತ್ರಾ ಕಮಿಟಿ ಕಾರ್ಯದರ್ಶಿ ಗಂಗಾಧರ ಮೆಲಗೇರಿ, ಚಂದ್ರಶೇಖರ ಶೆಟ್ಟರ, ಮಹೇಶ ಶಾಬಾದಿಮಠ, ಕಿರಣ ಭೂಮಾ ಪಾಲನಕರ, ಸಂತೋಷ ಎಂ.ಎಂ. ಹಿರೇಮಠ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಪಂಚಾಕ್ಷರಿ ಅಂಗಡಿ ಸ್ವಾಗತಿಸಿದರು. ಬಾಹುಬಲಿ ಜೈನರ ಕಾರ್ಯಕ್ರಮ ನಿರೂಪಿಸಿದರು.

ಸಭಾ ಕಾರ್ಯಕ್ರಮದ ಬಳಿಕ ಡೋಣಿಯ ನಿಂಗಪ್ಪ ಗುಡ್ಡದ ಅವರಿಂದ ಡೊಳ್ಳಿನ ಪದ ಹಾಗೂ ರಾಮದುರ್ಗ ತಂಡದಿಂದ ಜುಗಲಬಂದಿ ಕಾರ್ಯಕ್ರಮ ನಡೆಯಿತು. ಜಾತ್ರೋತ್ಸವದಲ್ಲಿ ಭಕ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ಸದ್ಭಾವನೆಯಿಂದಲೇ ರಾಷ್ಟ್ರದ ಏಕತೆಗೆ ಬಲ: ಪರಶುರಾಮ ಗುಡದಾರಿ

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಜಾತಿ, ಧರ್ಮ, ಭಾಷೆ ಹಾಗೂ ಪ್ರಾದೇಶಿಕತೆಯ ಹೆಸರಿನಲ್ಲಿ ಇರುವ ಭೇದಭಾವಗಳನ್ನು ತೊಲಗಿಸಿ, ಸಮಾಜದಲ್ಲಿ ಸದ್ಭಾವನೆ, ಸೌಹಾರ್ದತೆ ಹಾಗೂ ಶಾಂತಿಯನ್ನು ಬೆಳೆಸುವ ಮೂಲಕ ರಾಷ್ಟ್ರದ ಏಕತೆಯನ್ನು ಮತ್ತಷ್ಟು ಬಲಪಡಿಸಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ಪರಶುರಾಮ ಗುಡದಾರಿ ಹೇಳಿದರು.

ಪಟ್ಟಣದ ಪುರಸಭೆಯಲ್ಲಿ ಗುರುವಾರ ಸದ್ಭಾವನಾ ದಿನಾಚರಣೆ ಅಂಗವಾಗಿ ಸಿಬ್ಬಂದಿಯೊಂದಿಗೆ ಪ್ರತಿಜ್ಞಾ ವಿಧಿ ಸ್ವೀಕರಿಸಿ ಅವರು ಮಾತನಾಡಿದರು.

ಮಕ್ಕಳಿಗೆ ಶಾಲಾ ಹಂತದಿಂದಲೇ ಸಂವಿಧಾನದ ಆಶಯ, ರಾಷ್ಟ್ರೀಯ ಏಕತೆ ಹಾಗೂ ಸೌಹಾರ್ದತೆಯ ಮಹತ್ವವನ್ನು ತಿಳಿಸಿಕೊಟ್ಟರೆ ಉತ್ತಮ ಸಮಾಜ ನಿರ್ಮಾಣ ಸಾಧ್ಯ. ದೇಶದ ಏಕತೆ ಕೇವಲ ಸರ್ಕಾರದ ಜವಾಬ್ದಾರಿಯಲ್ಲ; ಪ್ರತಿಯೊಬ್ಬ ನಾಗರಿಕನ ಕರ್ತವ್ಯವೂ ಆಗಿದೆ. ವೈವಿಧ್ಯತೆಯಲ್ಲಿಯೇ ಭಾರತದ ಶಕ್ತಿ ಅಡಗಿದೆ. ಹೀಗಾಗಿ ಜಾತಿ, ಧರ್ಮ, ಭಾಷೆ ಅಥವಾ ಪ್ರದೇಶದ ಆಧಾರದ ಮೇಲೆ ಜನರನ್ನು ವಿಭಜಿಸುವ ಮನೋಭಾವಕ್ಕೆ ಅವಕಾಶ ನೀಡದೆ, ಪರಸ್ಪರ ಸಹಕಾರ ಹಾಗೂ ಸಹೋದರತ್ವದಿಂದ ಬದುಕಬೇಕು ಎಂದು ಹೇಳಿದರು.

ಸದ್ಭಾವನಾ ದಿನಾಚರಣೆ ಕೇವಲ ಒಂದು ದಿನಕ್ಕೆ ಸೀಮಿತವಾಗಬಾರದು. ಪ್ರತಿದಿನದ ಬದುಕಿನಲ್ಲಿ ಸೌಹಾರ್ದತೆ, ಸಹಿಷ್ಣುತೆ ಹಾಗೂ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳುವ ಸಂಕಲ್ಪವಾಗಬೇಕು ಎಂದು ಪರಶುರಾಮ ಗುಡದಾರಿ ಕರೆ ನೀಡಿದರು.

ಈ ಸಂದರ್ಭದಲ್ಲಿ ಹಿರಿಯ ಸಿಬ್ಬಂದಿ ಹನುಮಂತಪ್ಪ ನಂದೆಣ್ಣವರ ಅವರು ಸದ್ಭಾವನಾ ದಿನದ ಪ್ರತಿಜ್ಞಾ ವಿಧಿ ಬೋಧಿಸಿದರು. ಪುರಸಭೆ ವ್ಯವಸ್ಥಾಪಕಿ ಮಂಜುಳಾ ಹೂಗಾರ, ಆರೋಗ್ಯ ನಿರೀಕ್ಷಕ ಮಂಜುನಾಥ ಮುದಗಲ್, ಕಂದಾಯ ಅಧಿಕಾರಿ ಸುರೇಶ ಪೂಜಾರ, ಎಸ್.ಪಿ. ಲಿಂಬಯ್ಯನಮಠ, ನೇತ್ರಾ ಹೊಸಮನಿ, ಮಹೇಶ ಹೊಸಮನಿ, ಹೇಮರಾಜ ಅಣ್ಣಿಗೇರಿ, ಸಿದ್ದಪ್ಪ ಬಾಲೇಹೊಸೂರು, ಮಂಜುನಾಥ ಹೆಬ್ಬಾಳ, ಶೈಲಜಾ ಪಾಟೀಲ ಸೇರಿದಂತೆ ಪುರಸಭೆ ಸಿಬ್ಬಂದಿ ಉಪಸ್ಥಿತರಿದ್ದರು.

ಗದಗ ಉತ್ಸವಕ್ಕೆ ಭವ್ಯ ಮೆರುಗು: ಯುವ ಉದ್ಯಮಿ ಅಪ್ಪುರಾಜ್‌ಗೆ ಸನ್ಮಾನ

ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಎಪಿಎಂಸಿ ಯಾರ್ಡ್‌ನ ಸ್ವಾಮಿ ವಿವೇಕಾನಂದ ಸಭಾಭವನ ಹಾಗೂ ಕೆ.ಎಚ್. ಪಾಟೀಲ ಸಭಾಭವನದಲ್ಲಿ ನಡೆದ ‘ಗದಗ ಉತ್ಸವ–೨೦೨೬’ ಕೈಗಾರಿಕಾ ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳ ಯಶಸ್ವಿಯಾಗಿ ಸಂಪನ್ನಗೊಂಡಿತು.

ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ, ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ, ಗ್ರಾಮೀಣ ಹಾಗೂ ಸಣ್ಣ ಉದ್ಯಮ ವಿಭಾಗ ಮತ್ತು ಜಿಲ್ಲಾ ಪಂಚಾಯಿತಿ ಆಶ್ರಯದಲ್ಲಿ ಆಯೋಜಿಸಿದ್ದ ಉತ್ಸವಕ್ಕೆ ಭವ್ಯ ವೇದಿಕೆ, ಆಕರ್ಷಕ ದೀಪಾಲಂಕಾರ, ಅಚ್ಚುಕಟ್ಟಾದ ಪೀಠೋಪಕರಣ ವ್ಯವಸ್ಥೆ ಹಾಗೂ ಅತ್ಯಾಧುನಿಕ ಧ್ವನಿವರ್ಧಕ ವ್ಯವಸ್ಥೆಗಳು ವಿಶೇಷ ಮೆರುಗು ನೀಡಿದವು.

ಉತ್ಸವದ ಯಶಸ್ಸಿನ ಹಿಂದೆ ತಮ್ಮ ಸೃಜನಶೀಲತೆ ಹಾಗೂ ಪರಿಶ್ರಮದ ಮೂಲಕ ಪ್ರಮುಖ ಪಾತ್ರ ವಹಿಸಿದ ‘ಅಪ್ಪುರಾಜ್ ಇವೆಂಟ್ಸ್’ನ ಯುವ ಉದ್ಯಮಿ ಅಪ್ಪುರಾಜ್ ಭದ್ರಕಾಳಮ್ಮನಮಠ ಅವರನ್ನು ಗದಗ ಉತ್ಸವದ ಸಮಾರೋಪ ಸಮಾರಂಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ತಮ್ಮ ಉತ್ಸಾಹಿ ಕಲಾ ತಂಡದೊಂದಿಗೆ ಉತ್ಸವದ ವೇದಿಕೆ ಸಜ್ಜುಗೊಳಿಸುವಿಕೆ, ಅಲಂಕಾರ ಹಾಗೂ ವಿವಿಧ ವ್ಯವಸ್ಥೆಗಳಿಗೆ ನೀಡಿದ ಸೇವೆಯನ್ನು ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ಶರಣಬಸಪ್ಪ ಗುಡಿಮನಿ ಹಾಗೂ ಉತ್ಸವ ಸಮಿತಿ ಅಧ್ಯಕ್ಷ ಮಧುಸೂದನ ಪುಣೇಕರ ಶ್ಲಾಘಿಸಿ, ಅಪ್ಪುರಾಜ್ ಅವರನ್ನು ಅಭಿನಂದಿಸಿದರು.

ಯುವ ಉದ್ಯಮಿ ಅಪ್ಪುರಾಜ್ ಅವರ ಸೃಜನಶೀಲತೆ, ಸಂಘಟನಾ ಸಾಮರ್ಥ್ಯ ಹಾಗೂ ಅವರ ಕಲಾತಂಡದ ಪರಿಶ್ರಮಕ್ಕೆ ದೊರೆತ ಈ ಗೌರವವು ಗದಗ ಉತ್ಸವದ ಯಶಸ್ಸಿನ ಮತ್ತೊಂದು ಹೆಮ್ಮೆಯ ಕ್ಷಣವಾಗಿ ಮೂಡಿಬಂದಿತು ಎಂದು ಆಯೋಜಕರು ತಿಳಿಸಿದ್ದಾರೆ.

ಶಾಲಾ ಮಕ್ಕಳಿಂದ ಹಸಿರು ಸಂಭ್ರಮ

0

ವಿಜಯಸಾಕ್ಷಿ ಸುದ್ದಿ, ಗದಗ: ಪರಿಸರ ಸಂರಕ್ಷಣೆಯ ಮಹತ್ವವನ್ನು ವಿದ್ಯಾರ್ಥಿಗಳಲ್ಲಿ ಬಿತ್ತುವ ಉದ್ದೇಶದಿಂದ ಗದಗ-ಬೆಟಗೇರಿ ರೋಟರಿ ಕ್ಲಬ್ ವತಿಯಿಂದ ತಾಲೂಕಿನ ಬೆಳಹೋಡ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಸರ್ಕಾರಿ ಕಿರಿಯ ಪ್ರಾಥಮಿಕ ಉರ್ದು ಶಾಲೆ ಆವರಣದಲ್ಲಿ ಸಸಿ ನೆಡುವ ಹಾಗೂ ಪಾಲನಾ ಆಂದೋಲನ ಕಾರ್ಯಕ್ರಮ ಬುಧವಾರ ನಡೆಯಿತು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಉತ್ಸಾಹದಿಂದ ಸಸಿ ನೆಟ್ಟು, ಅವುಗಳನ್ನು ಪೋಷಿಸಿ ಬೆಳೆಸುವ ಸಂಕಲ್ಪ ತೊಟ್ಟರು. ಮಕ್ಕಳೊಂದಿಗೆ ರೋಟರಿ ಕ್ಲಬ್‌ನ ಪದಾಧಿಕಾರಿಗಳೂ ಸಸಿ ನೆಡುವ ಮೂಲಕ ಪರಿಸರ ಸಂರಕ್ಷಣೆಯ ಸಂದೇಶ ಸಾರಿದರು.

ಇದು ಕೇವಲ ಸಸಿ ವಿತರಣಾ ಕಾರ್ಯಕ್ರಮವಲ್ಲ. ಮುಂದಿನ ಪೀಳಿಗೆಗಾಗಿ ಹಸಿರು ಪರಂಪರೆಯನ್ನು ಉಳಿಸುವ ಜನಾಂದೋಲನವಾಗಿದೆ. ನಾವು ಇಂದು ನೆಡುವ ಪ್ರತಿಯೊಂದು ಮರವು ಮುಂದಿನ ತಲೆಮಾರಿಗೆ ಹಾಗೂ ಪರಿಸರಕ್ಕೆ ಬಹುದೊಡ್ಡ ಶಕ್ತಿಯಾಗಲಿದೆ ಎಂದು ಉಚಿತ ಸಸಿ ವಿತರಣಾ ಅಭಿಯಾನದ ರೋಟರಿ ಕ್ಲಬ್ ಪರಿಸರೋತ್ಸವದ ಕಾರ್ಯಕ್ರಮ ಅಧ್ಯಕ್ಷ ಸುರೇಶ ಕುಂಬಾರ ಹೇಳಿದರು.

ಗದಗ-ಬೆಟಗೇರಿ ರೋಟರಿ ಕ್ಲಬ್ ಅಧ್ಯಕ್ಷ ಡಾ. ಪ್ರದೀಪ ಉಗಲಾಟ ಮಾತನಾಡಿ, ಪರಿಸರ ಸಂರಕ್ಷಣೆಯಲ್ಲಿ ಪ್ರತಿಯೊಬ್ಬ ನಾಗರಿಕನ ಪಾತ್ರ ಮಹತ್ವದ್ದಾಗಿದೆ. ಮರಗಳನ್ನು ನೆಟ್ಟು, ಅವುಗಳನ್ನು ನಿರಂತರವಾಗಿ ಪೋಷಿಸುವ ಮೂಲಕವೇ ಪ್ರಕೃತಿಯ ಸಮತೋಲನ ಕಾಪಾಡಲು ಸಾಧ್ಯ ಎಂದರು.

ಮರ ಕಡಿದರೆ ಮಳೆ ನಿಲ್ಲುತ್ತದೆ, ಮರ ನೆಟ್ಟರೆ ಮಳೆ ಬರುತ್ತದೆ ಎಂಬುದು ಕೇವಲ ಮಾತಲ್ಲ, ಅದರ ಹಿಂದೆ ವೈಜ್ಞಾನಿಕ ಸತ್ಯವಿದೆ. ಮರಗಳು ಇಂಗಾಲದ ಡೈಆಕ್ಸೈಡ್ ಹೀರಿಕೊಂಡು ಆಮ್ಲಜನಕ ಬಿಡುಗಡೆ ಮಾಡುತ್ತವೆ. ನಗರಗಳ ಉಷ್ಣತೆ ತಗ್ಗಿಸುವಲ್ಲಿಯೂ ಮರಗಳ ಪಾತ್ರ ಅಪಾರ ಎಂದು ವಿವರಿಸಿದರು.

ಅಧ್ಯಕ್ಷತೆ ವಹಿಸಿದ್ದ ಶಾಲೆಯ ಮುಖ್ಯ ಶಿಕ್ಷಕ ಕೆ.ಎಸ್. ದಿಂಡಿ ಮಾತನಾಡಿ, ರೋಟರಿ ಕ್ಲಬ್‌ನ ಪದಾಧಿಕಾರಿಗಳು ಶಾಲೆಗೆ ಆಗಮಿಸಿ ಮಕ್ಕಳೊಂದಿಗೆ ಸಸಿ ನೆಟ್ಟು ಸಂಭ್ರಮಿಸಿರುವುದು ಸಂತಸ ತಂದಿದೆ. ಇದರೊಂದಿಗೆ ವಿದ್ಯಾರ್ಥಿಗಳಲ್ಲಿ ಪರಿಸರ ಪ್ರಜ್ಞೆ ಮೂಡಿಸಿರುವುದು ಶ್ಲಾಘನೀಯ. ನೆಟ್ಟ ಸಸಿಗಳನ್ನು ಉತ್ತಮ ರೀತಿಯಲ್ಲಿ ಪೋಷಿಸಿ ಮರಗಳನ್ನಾಗಿ ಬೆಳೆಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.

ವೇದಿಕೆಯಲ್ಲಿ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಪತ್ತೇಸಾಬ ದೊಡ್ಡಮನಿ, ಸದಸ್ಯ ಪರಸಪ್ಪ ಹುಲಕೋಟಿ ಹಾಗೂ ರೋಟರಿ ಕ್ಲಬ್ ಕಾರ್ಯದರ್ಶಿ ಅಕ್ಷಯ್ ಶೆಟ್ಟಿ ಉಪಸ್ಥಿತರಿದ್ದರು.

ಕಾರ್ಯಕ್ರಮದ ಆರಂಭದಲ್ಲಿ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಶಿಕ್ಷಕ ಬಿ.ಎಂ. ಸೈಯದ್ ಸ್ವಾಗತಿಸಿದರು. ಶಿಕ್ಷಕ ಮಂಜುನಾಥ ಜಕ್ಕಲಿ ನಿರೂಪಿಸಿದರು. ಶಿಕ್ಷಕಿ ರುಕ್ಮಿಣಿ ಗುಳಗಂದಿ ವಂದಿಸಿದರು.

ಶಿಕ್ಷಕಿಯರಾದ ಸುಜಾತಾ ಧೋಳ, ಸುಮಾ ತಿಪ್ಪರಡ್ಡಿ, ಲಲಿತಾ ಚನ್ನಪ್ಪಗೌಡರ, ಸರ್ಕಾರಿ ಕಿರಿಯ ಪ್ರಾಥಮಿಕ ಉರ್ದು ಶಾಲೆಯ ಮುಖ್ಯ ಶಿಕ್ಷಕ ಮದನಿ ಬಾದಷಾ ಸರ್ವರ, ರಮೇಶ ಮೇಡಿ ಸೇರಿದಂತೆ ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದರು.

ಶಾಂತಿ, ಸೌಹಾರ್ದತೆಯೇ ಭಾರತೀಯ ಸಂಸ್ಕೃತಿ: ಡಾ. ಅಪ್ಪಣ್ಣ ಹಂಜೆ

0

ವಿಜಯಸಾಕ್ಷಿ ಸುದ್ದಿ, ಹುಲಕೋಟಿ: ವೈವಿಧ್ಯತೆಯಲ್ಲಿ ಏಕತೆಯನ್ನು ಹೊಂದಿರುವ ಭಾರತದಲ್ಲಿ ಪ್ರತಿಯೊಬ್ಬರೂ ಜಾತಿ, ಮತ, ಧರ್ಮಗಳ ಗಡಿಯನ್ನು ಮೀರಿ ಸೌಹಾರ್ದತೆಯಿಂದ ಬದುಕಿದಾಗ ಮಾತ್ರ ದೇಶದ ಸಮಗ್ರ ಪ್ರಗತಿ ಸಾಧ್ಯ ಎಂದು ಹುಲಕೋಟಿಯ ಶ್ರೀ ಕೆ.ಎಚ್. ಪಾಟೀಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಅಪ್ಪಣ್ಣ ಹಂಜೆ ಹೇಳಿದರು.

ಕಾಲೇಜಿನ ಐಕ್ಯುಎಸಿ, ರೆಡ್‌ಕ್ರಾಸ್, ಎನ್‌ಎಸ್‌ಎಸ್ ಹಾಗೂ ಸ್ಕೌಟ್ಸ್ ಮತ್ತು ಗೈಡ್ಸ್ ಘಟಕಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಸದ್ಭಾವನಾ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಯುವಜನರು ಬಹುತ್ವದ ಭಾರತದ ಸಾಂವಿಧಾನಿಕ ಹಾಗೂ ಸಾಮಾಜಿಕ ಮೌಲ್ಯಗಳನ್ನು ಗೌರವಿಸಬೇಕು. ಜಾತಿ, ಮತ, ಧರ್ಮದ ಹೆಸರಿನಲ್ಲಿ ಸಮಾಜವನ್ನು ವಿಭಜಿಸುವ ಮನೋಭಾವದಿಂದ ದೂರವಿದ್ದು, ಪರಸ್ಪರ ಗೌರವ, ಸಹಕಾರ ಹಾಗೂ ಸಹೋದರತ್ವದೊಂದಿಗೆ ಬದುಕುವ ಮೂಲಕ ದೇಶದ ಏಕತೆ ಮತ್ತು ಪ್ರಗತಿಗೆ ಕೊಡುಗೆ ನೀಡಬೇಕು ಎಂದು ಕರೆ ನೀಡಿದರು.

ರೆಡ್‌ಕ್ರಾಸ್ ಘಟಕದ ಸಂಯೋಜಕ ಭೀಮೇಶ ಪ್ರಾಸ್ತಾವಿಕವಾಗಿ ಮಾತನಾಡಿ, ಸದ್ಭಾವನಾ ದಿನದ ಮಹತ್ವ ಹಾಗೂ ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಭಾವೈಕ್ಯತೆಯನ್ನು ಕಾಪಾಡುವಲ್ಲಿ ಯುವಜನರ ಪಾತ್ರದ ಕುರಿತು ವಿವರಿಸಿದರು.

ಎನ್‌ಎಸ್‌ಎಸ್ ಘಟಕದ ಸಂಯೋಜಕ ವಿಜಯಕುಮಾರ ಎಸ್. ಅವರು ಸದ್ಭಾವನಾ ದಿನಾಚರಣೆಯ ಆಶಯದಂತೆ ಹಿಂಸೆಯನ್ನು ತ್ಯಜಿಸಿ, ದೇಶದ ಒಗ್ಗಟ್ಟು, ಶಾಂತಿ ಹಾಗೂ ಸಹೋದರತೆಯನ್ನು ಎತ್ತಿಹಿಡಿಯುವ ಸದ್ಭಾವನಾ ಪ್ರತಿಜ್ಞಾವಿಧಿಯನ್ನು ಬೋಧಿಸಿದರು.

ಕಾರ್ಯಕ್ರಮದಲ್ಲಿ ಐಕ್ಯುಎಸಿ ಸಹ ಸಂಚಾಲಕ ಡಾ. ಮಂಜುನಾಥ ತ್ಯಾಲಗಡಿ, ಕಲಾ ವಿಭಾಗದ ಮುಖ್ಯಸ್ಥೆ ಮಹಾನಂದ ಹಿರೇಮಠ, ಇತಿಹಾಸ ಉಪನ್ಯಾಸಕ ಬಸವಂತಪ್ಪ ದೊಡ್ಡಮನಿ, ಅರ್ಥಶಾಸ್ತ್ರ ಪ್ರಾಧ್ಯಾಪಕ ಮಹಾಂತೇಶ, ರಾಜ್ಯಶಾಸ್ತ್ರ ಪ್ರಾಧ್ಯಾಪಕ ಹುಸೇನಭಾಷಾ, ನವೀನ ಮರಿಗೌಡರ ಸೇರಿದಂತೆ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಸಹಕಾರ ಕ್ಷೇತ್ರದಿಂದ ಆರ್ಥಿಕ ಅಭಿವೃದ್ಧಿಗೆ ಬಲ:ಎಸ್.ಎಸ್. ಪಟ್ಟಣಶೆಟ್ಟಿ

0

ವಿಜಯಸಾಕ್ಷಿ ಸುದ್ದಿ, ಗದಗ: ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ಸಹಕಾರ ಕ್ಷೇತ್ರ ಮಹತ್ವದ ಪಾತ್ರ ವಹಿಸುತ್ತಿದ್ದು, ಕೃಷಿ, ಹೈನುಗಾರಿಕೆ, ಬ್ಯಾಂಕಿಂಗ್, ಗ್ರಾಮೀಣ ಉದ್ಯೋಗ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಹಕಾರ ಸಂಘಗಳು ಪ್ರಮುಖ ಕೊಡುಗೆ ನೀಡುತ್ತಿವೆ ಎಂದು ಗದಗ ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕ ಎಸ್.ಎಸ್. ಪಟ್ಟಣಶೆಟ್ಟಿ ಹೇಳಿದರು.

ಸಹಕಾರ ಇಲಾಖೆ, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಹಾಗೂ ಗದಗ ಜಿಲ್ಲಾ ಸಹಕಾರ ಯೂನಿಯನ್ ಸಹಯೋಗದಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರಬಂಧ ಹಾಗೂ ಚರ್ಚಾ ಸ್ಪರ್ಧೆಗಳ ಬಹುಮಾನ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಸಹಕಾರ ಕ್ಷೇತ್ರ ಕೇವಲ ಗ್ರಾಮೀಣ ಸಾಲ ಅಥವಾ ಹಾಲು ಉತ್ಪಾದನೆಗೆ ಸೀಮಿತವಲ್ಲ. ರೈತರು, ಕಾರ್ಮಿಕರು, ಮಹಿಳೆಯರು ಹಾಗೂ ಸಣ್ಣ ಉದ್ಯಮಿಗಳನ್ನು ಒಗ್ಗೂಡಿಸಿ ಉದ್ಯೋಗ, ಉತ್ಪಾದನೆ ಮತ್ತು ಗ್ರಾಮೀಣ ಸಮೃದ್ಧಿಗೆ ವೇಗ ನೀಡುವ ಆರ್ಥಿಕ ಮಾದರಿಯಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಯೂನಿಯನ್ ಅಧ್ಯಕ್ಷ ಸಿ.ಎಂ. ಪಾಟೀಲ ಮಾತನಾಡಿ, “ಯುವಕರು ತಂತ್ರಜ್ಞಾನ ಮತ್ತು ಡಿಜಿಟಲೀಕರಣದಲ್ಲಿ ಪರಿಣತಿ ಪಡೆದು ಸಹಕಾರ ಸಂಘಗಳನ್ನು ಆಧುನಿಕಗೊಳಿಸಬೇಕು. ಯುವಶಕ್ತಿ ಮತ್ತು ಸಹಕಾರ ಶಕ್ತಿ ಒಂದಾದಾಗ ‘ಸಹಕಾರದಿಂದ ಸಮೃದ್ಧಿ’ ಘೋಷಣೆಯಾಗದೆ ಆರ್ಥಿಕ ಅಭಿವೃದ್ಧಿಯ ಶಕ್ತಿಯಾಗಲಿದೆ” ಎಂದು ಹೇಳಿದರು.

ಪ್ರಬಂಧ ಸ್ಪರ್ಧೆಯಲ್ಲಿ ಕಣವಿ ಸರ್ಕಾರಿ ಪ್ರೌಢಶಾಲೆಯ ವಿನಾಯಕ ಎಂ. ಕೋರಿ ಪ್ರಥಮ, ಕಲಕೇರಿಯ ಎಸ್.ಜಿ.ಎಂ. ಪ್ರೌಢಶಾಲೆಯ ಸಿಂಧೂ ಮೌನೇಶ ಅಂಗಡಿ ದ್ವಿತೀಯ ಹಾಗೂ ಗದಗದ ಸಿದ್ಧಲಿಂಗನಗರ ಸರ್ಕಾರಿ ಪ್ರೌಢಶಾಲೆಯ ಕೃಷ್ಣಪ್ರಿಯಾ ಆನಂದ ಬದಿ ತೃತೀಯ ಸ್ಥಾನ ಪಡೆದರು.

ಚರ್ಚಾ ಸ್ಪರ್ಧೆಯ ವಿಷಯದ ಪರವಾಗಿ ಭುವನೇಶ್ವರಿ ಆರ್. ಬಳ್ಳಾರಿ ಪ್ರಥಮ, ಅರ್ಚನಾ ದ್ವಿತೀಯ ಹಾಗೂ ಭರತಕುಮಾರ ಎಂ. ಬಿಳೆಯಲಿ ತೃತೀಯ ಸ್ಥಾನ ಪಡೆದರೆ, ವಿರೋಧವಾಗಿ ಕಾವ್ಯಾ ಬಸನಗೌಡ ಬೆಳ್ಳಿಗೌಡ್ರ ಪ್ರಥಮ, ಲೇಖನಾ ಎ.ಪಿ. ದ್ವಿತೀಯ ಹಾಗೂ ಐಶ್ವರ್ಯ ಕೊಡಗಲಿ ತೃತೀಯ ಸ್ಥಾನ ಪಡೆದರು.

ವಿಜೇತರಿಗೆ ನಗದು ಬಹುಮಾನ, ಪದಕ ಹಾಗೂ ಪ್ರಮಾಣಪತ್ರ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಸಹಕಾರ ಇಲಾಖೆಯ ಅಧಿಕಾರಿಗಳು, ಕಾಲೇಜು ಪ್ರಾಚಾರ್ಯರು, ತೀರ್ಪುಗಾರರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಗದಗ ಅಭಿವೃದ್ಧಿಗೆ ಆಗ್ರಹಿಸಿ ಹೀರಾಲಾಲ್ ಸಿಂಗ್ರಿ ಪಾದಯಾತ್ರೆ

ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಸಮಗ್ರ ಅಭಿವೃದ್ಧಿಗೆ ಆಗ್ರಹಿಸಿ ಸಾಮಾಜಿಕ ಕಾರ್ಯಕರ್ತ ಹೀರಾಲಾಲ್ ಬಿ. ಸಿಂಗ್ರಿ ಅವರು ಗದಗ-ಬೆಟಗೇರಿ ನಗರಸಭೆಯಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪಾದಯಾತ್ರೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ನಗರಸಭೆಯಿಂದ ತೆರವುಗೊಳಿಸಲಾದ ೫೪ ವಕಾರಗಳು ಇಂದಿಗೂ ಪಾಳುಬಿದ್ದಿದ್ದು, ಅಲ್ಲಿನ ಜಾಗದಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಹೆಸರಿನಲ್ಲಿ ವಾಣಿಜ್ಯ ಮಳಿಗೆ ನಿರ್ಮಿಸಿ ನಗರಸಭೆಗೆ ಶಾಶ್ವತ ಆದಾಯ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಹಳೇ ಬಸ್ ನಿಲ್ದಾಣದಿಂದ ಬ್ಯಾಂಕ್ ರಸ್ತೆ, ಟಾಂಗಾಕೂಟ ರಸ್ತೆವರೆಗೆ ಬೀದಿ ವ್ಯಾಪಾರಿಗಳ ತಳ್ಳುಗಾಡಿಗಳಿಂದ ಸಂಚಾರಕ್ಕೆ ತೊಂದರೆಯಾಗುತ್ತಿದೆ. ವ್ಯಾಪಾರಿಗಳನ್ನು ಪರ್ಯಾಯ ಸ್ಥಳಕ್ಕೆ ಸ್ಥಳಾಂತರಿಸಿ ರಸ್ತೆಗಳನ್ನು ಸ್ವಚ್ಛಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು. ಗಟಾರ ದುರಸ್ತಿ ಕಾರ್ಯವನ್ನೂ ತ್ವರಿತವಾಗಿ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಇಂದ್ರವನ ರದ್ದುಪಡಿಸಿ ಎಸ್.ಎಂ. ಕೃಷ್ಣಾ ನಗರದವರೆಗೆ ರಸ್ತೆ ನಿರ್ಮಿಸಬೇಕು. ಈ ಕುರಿತು ನಗರಸಭೆ, ಪೊಲೀಸ್ ಇಲಾಖೆ, ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.