Home Blog Page 4

ಶಾಲೆ ಪಕ್ಕದಲ್ಲೇ ಬಂಡೆ ಒಡೆಯಲು ಅಕ್ರಮ ಸ್ಫೋಟ? ಬೆಂಗಳೂರಿನಲ್ಲಿ 800 ಕೆಜಿಗೂ ಹೆಚ್ಚು ಜಿಲೆಟಿನ್ ಸೀಜ್

0

ಬೆಂಗಳೂರು: ನಗರದ ಬೆಳ್ಳಂದೂರು ಸಮೀಪದ ಭೋಗನಹಳ್ಳಿಯಲ್ಲಿ ನಿರ್ಮಾಣ ಹಂತದ ಕಟ್ಟಡ ಕಾಮಗಾರಿಯಲ್ಲಿ ಅಕ್ರಮವಾಗಿ ಜಿಲೆಟಿನ್ ಬಳಸಿ ಬಂಡೆಗಳನ್ನು ಸ್ಫೋಟಿಸಲಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಬೆಳ್ಳಂದೂರು ಪೊಲೀಸರು ಕಾರ್ಯಾಚರಣೆ ನಡೆಸಿ 800 ಕೆಜಿಗೂ ಹೆಚ್ಚು ಜಿಲೆಟಿನ್ ವಶಪಡಿಸಿಕೊಂಡಿದ್ದಾರೆ.

ಪ್ರಕರಣ ಸಂಬಂಧ ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ.

ಭೋಗನಹಳ್ಳಿಯಲ್ಲಿ ಆದರ್ಶ ಕಂಪನಿಯ ಕಟ್ಟಡ ಕಾಮಗಾರಿ ನಡೆಯುತ್ತಿರುವ ವೇಳೆ ಸ್ಥಳದಲ್ಲಿ ದೊಡ್ಡ ಕಲ್ಲಿನ ಬಂಡೆಗಳು ಪತ್ತೆಯಾಗಿದ್ದವು. ಅವುಗಳನ್ನು ತೆರವುಗೊಳಿಸಲು ಅಗತ್ಯ ಸುರಕ್ಷತಾ ಕ್ರಮಗಳನ್ನು ಪಾಲಿಸದೇ ಜಿಲೆಟಿನ್ ಬಳಸಿ ಬ್ಲಾಸ್ಟಿಂಗ್ ನಡೆಸಲಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ನಿರ್ಮಾಣ ಸ್ಥಳದ ಸಮೀಪದಲ್ಲೇ ಶಾಲೆ ಇರುವುದರಿಂದ ಸ್ಥಳೀಯರಲ್ಲಿ ಆತಂಕ ಹೆಚ್ಚಾಗಿದೆ. ರಾತ್ರಿ 12 ಗಂಟೆಯ ಬಳಿಕ ಸ್ಫೋಟ ನಡೆಸಲಾಗುತ್ತಿದೆ ಎಂದು ಆರೋಪಿಸಿರುವ ನಿವಾಸಿಗಳು, ಮಕ್ಕಳ ಸುರಕ್ಷತೆಗೂ ಅಪಾಯ ಉಂಟಾಗುತ್ತಿದೆ ಎಂದು ಪ್ರಶ್ನಿಸಿದ್ದಾರೆ. ಈ ಕುರಿತು ಹಲವು ಬಾರಿ ಬೆಳ್ಳಂದೂರು ಠಾಣೆಗೆ ದೂರು ನೀಡಿದ್ದರೂ ಸೂಕ್ತ ಕ್ರಮವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.

ಪೊಲೀಸರಿಗೆ ನೀಡಿದ ದೂರಿನಲ್ಲಿ ಅರ್ಥ್‌ವರ್ಕ್ ಕೆಲಸ ಮಾಡುವ ಸತೀಶ್ ನಾಯಕ್, ಶ್ರೀನಿವಾಸ ಅರ್ಥ್ ಮೂವರ್ಸ್ ಮಾಲೀಕ ಅರುಣ್ ಕುಮಾರ್ ತಮ್ಮನ್ನು ಭೋಗನಹಳ್ಳಿಯ ವಿವಿಧ ಸರ್ವೆ ನಂಬರಿನ ಕಾಮಗಾರಿಗೆ ನೇಮಿಸಿದ್ದಾಗಿ ತಿಳಿಸಿದ್ದಾರೆ.

ಕಾಮಗಾರಿ ವೇಳೆ ದೊಡ್ಡ ಬಂಡೆಗಳು ಪತ್ತೆಯಾಗಿದ್ದರಿಂದ ಅವುಗಳನ್ನು ತೆರವುಗೊಳಿಸಲು ಕಾನೂನುಬಾಹಿರವಾಗಿ ಸ್ಫೋಟಕ ವಸ್ತುಗಳನ್ನು ಬಳಸುವಂತೆ ಒತ್ತಡ ಹೇರಲಾಗಿತ್ತು ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಬಳಿಕ ಕೆಲಸದಿಂದ ದೂರವಿಟ್ಟು, ಹಣ ನೀಡದೆ ಪ್ರಾಣ ಬೆದರಿಕೆ ಹಾಕಲಾಗಿದೆ ಎಂದೂ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಶ್ರೀನಿವಾಸ ಅರ್ಥ್ ಮೂವರ್ಸ್ ಮಾಲೀಕ, ಸೈಟ್ ಇನ್‌ಚಾರ್ಜ್, ಸೈಟ್ ಎಂಜಿನಿಯರ್, ಆದರ್ಶ ಡೆವಲಪರ್ಸ್‌ನ ಮಾಲೀಕರು ಹಾಗೂ ಗುತ್ತಿಗೆದಾರರು ಕಾನೂನುಬಾಹಿರವಾಗಿ ಸ್ಫೋಟಕ ವಸ್ತುಗಳನ್ನು ಸಂಗ್ರಹಿಸಿ ಬಳಸುತ್ತಿದ್ದಾರೆ ಎಂದು ದೂರುದಾರರು ಆರೋಪಿಸಿದ್ದಾರೆ.

ಸ್ಥಳೀಯರ ದೂರಿನ ಆಧಾರದಲ್ಲಿ ಎಫ್‌ಐಆರ್ ದಾಖಲಿಸಿಕೊಂಡಿರುವ ಬೆಳ್ಳಂದೂರು ಪೊಲೀಸರು ಕಾರ್ಯಾಚರಣೆ ನಡೆಸಿ 800 ಕೆಜಿಗೂ ಹೆಚ್ಚು ಜಿಲೆಟಿನ್ ವಶಪಡಿಸಿಕೊಂಡಿದ್ದಾರೆ. ನಿರ್ಮಾಣ ಸ್ಥಳದಲ್ಲಿ ಸ್ಫೋಟಕ ವಸ್ತುಗಳನ್ನು ಯಾವ ರೀತಿಯಲ್ಲಿ ಸಂಗ್ರಹಿಸಲಾಗಿತ್ತು, ಅವುಗಳ ಬಳಕೆಗೆ ಅಗತ್ಯ ಅನುಮತಿ ಇತ್ತೇ ಹಾಗೂ ನಿಜವಾಗಿಯೂ ಬ್ಲಾಸ್ಟಿಂಗ್ ನಡೆಸಲಾಗುತ್ತಿತ್ತೇ ಎಂಬ ಬಗ್ಗೆ ತನಿಖೆ ಮುಂದುವರಿದಿದೆ. ಪ್ರಕರಣಕ್ಕೆ ಸಂಬಂಧಿಸಿದ ಆರೋಪಗಳ ಸತ್ಯಾಸತ್ಯತೆ ತನಿಖೆಯ ಬಳಿಕವೇ ಸ್ಪಷ್ಟವಾಗಲಿದೆ.

ಇಂದು ಸಂಜೆ 4 ಗಂಟೆಯೊಳಗೆ SIR ಫಾರ್ಮ್ ಸಲ್ಲಿಸಿ: ಇಲ್ಲದಿದ್ದರೆ ಮತದಾರರ ಪಟ್ಟಿಯಿಂದ ಹೆಸರು ರದ್ದು?

0

ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ SIR ಪ್ರಕ್ರಿಯೆಯಲ್ಲಿ ಗಣತಿ ನಮೂನೆ ವಾಪಸ್ ಸಲ್ಲಿಸಲು ಇಂದು ಸಂಜೆ 4 ಗಂಟೆಯವರೆಗೆ ಮಾತ್ರ ಅವಕಾಶ ಇದೆ.

ಈಗಾಗಲೇ ಬೂತ್ ಮಟ್ಟದ ಅಧಿಕಾರಿ (BLO) ಮೂಲಕ ಫಾರ್ಮ್ ಪಡೆದಿರುವ ಮತದಾರರು ಅಗತ್ಯ ಮಾಹಿತಿ ಭರ್ತಿ ಮಾಡಿ, ಸಹಿ ಹಾಕಿ ನಿಗದಿತ ಸಮಯದೊಳಗೆ BLOಗೆ ಸಲ್ಲಿಸಬೇಕು.

ನಿಮ್ಮ ಹೆಸರು ASDDO ಪಟ್ಟಿಯಲ್ಲಿದೆಯೇ?

SIR ಪ್ರಕ್ರಿಯೆಯಲ್ಲಿ ಕೆಲವು ಮತದಾರರನ್ನು ASDDO ವರ್ಗಕ್ಕೆ ಸೇರಿಸಲಾಗಿದೆ. ಇದರಲ್ಲಿ:

  • Absent (A) – 15,30,449

  • Permanently Shifted (S) – 65,62,586

  • Death (D) – 16,38,600

  • Duplicate (D) – 7,07,095

  • Others (O) – 3,95,865

ನಿಮ್ಮ ಹೆಸರು ಈ ಪಟ್ಟಿಯಲ್ಲಿದ್ದರೆ ತಕ್ಷಣ BLO ಅಥವಾ ಚುನಾವಣಾ ನೋಂದಣಾಧಿಕಾರಿ (ERO) ಅವರನ್ನು ಸಂಪರ್ಕಿಸಿ ಗಣತಿ ನಮೂನೆ ಸಲ್ಲಿಸಿ ರೋಲ್‌ಬ್ಯಾಕ್ ಮಾಡಿಸಿಕೊಳ್ಳಬೇಕು. ಇಲ್ಲವಾದರೆ ನಿಮ್ಮ ಹೆಸರು ಕರಡು ಮತದಾರರ ಪಟ್ಟಿಯಲ್ಲಿ ಕಾಣಿಸಿಕೊಳ್ಳದೇ ಹೋಗುವ ಸಾಧ್ಯತೆ ಇದೆ.

1.08 ಕೋಟಿ ಹೆಸರು ರದ್ದಾಗುವ ಸಾಧ್ಯತೆ:

ರಾಜ್ಯದಲ್ಲಿ ಒಟ್ಟು 5,54,32,314 ಮತದಾರರಿದ್ದಾರೆ. ಇವರಲ್ಲಿ 1,08,34,595 (19.55%) ಮಂದಿಯನ್ನು ASDDO ವರ್ಗಕ್ಕೆ ಸೇರಿಸಲಾಗಿದೆ. ಉಳಿದ 4,45,97,719 ಮತದಾರರ ಹೆಸರು ಕರಡು ಪಟ್ಟಿಯಲ್ಲಿ ಮುಂದುವರಿಯಲಿದೆ.

ಸ್ಥಳಾಂತರವಾಗಿದ್ದರೆ Form-6 ಅವಕಾಶ:

ಶಾಶ್ವತವಾಗಿ ಸ್ಥಳಾಂತರಗೊಂಡಿರುವ 65.62 ಲಕ್ಷ ಮಂದಿ ಅಗತ್ಯ ದಾಖಲೆಗಳೊಂದಿಗೆ Form-6 ಸಲ್ಲಿಸಿದರೆ ಪರಿಶೀಲನೆಯ ಬಳಿಕ ಮತದಾರರ ಪಟ್ಟಿಗೆ ಮತ್ತೆ ಹೆಸರು ಸೇರಿಸಿಕೊಳ್ಳಬಹುದು. ಹೊಸ ಮತದಾರರಿಗೂ Form-6 ಮೂಲಕ ನೋಂದಣಿ ಅವಕಾಶವಿದೆ.

ಮುಂದಿನ ವೇಳಾಪಟ್ಟಿ:

  • ಆ.17: ಮನೆ-ಮನೆ ಭೇಟಿ ಹಾಗೂ ರೋಲ್‌ಬ್ಯಾಕ್ ಅಂತಿಮ ದಿನ

  • ಆ.24: ಕರಡು ಮತದಾರರ ಪಟ್ಟಿ ಪ್ರಕಟ

  • ಆ.24 ರಿಂದ ಸೆ.23: ಹೆಸರು ಸೇರ್ಪಡೆ, ತಿದ್ದುಪಡಿ ಹಾಗೂ ಆಕ್ಷೇಪಣೆ ಸಲ್ಲಿಕೆ

  • ಅ.27: ಅಂತಿಮ ಮತದಾರರ ಪಟ್ಟಿ ಪ್ರಕಟ

ಮತದಾರರು ತಮ್ಮ ಹೆಸರು ಯಾವ ವರ್ಗದಲ್ಲಿ ದಾಖಲಾಗಿದೆ ಎಂಬುದನ್ನು ತಕ್ಷಣ ಪರಿಶೀಲಿಸಿ, ಅಗತ್ಯವಿದ್ದರೆ ಇಂದು ಸಂಜೆ 4 ಗಂಟೆಯೊಳಗೆ ಕ್ರಮ ಕೈಗೊಳ್ಳುವುದು ಸೂಕ್ತ.

ಹನೂರು ಎನ್‌ಕೌಂಟರ್‌ ಪ್ರಕರಣ: 15 ಲಕ್ಷ ಪರಿಹಾರದ ಭರವಸೆ ಬಳಿಕ ಅಂತ್ಯಗೊಂಡ ಪ್ರತಿಭಟನೆ

0
ಚಾಮರಾಜನಗರ: ಕಾವೇರಿ ವನ್ಯಧಾಮದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ನಡೆಸಿದ ಎನ್‌ಕೌಂಟರ್‌ನಲ್ಲಿ ಮೂವರು ಮೃತಪಟ್ಟ ಪ್ರಕರಣ ಖಂಡಿಸಿ ಹನೂರಿನಲ್ಲಿ ನಡೆಯುತ್ತಿದ್ದ ಪ್ರತಿಭಟನೆ ಕೊನೆಗೂ ಅಂತ್ಯಗೊಂಡಿದೆ.
ಮೃತರ ಕುಟುಂಬಗಳಿಗೆ ₹15 ಲಕ್ಷ ಪರಿಹಾರ ಹಾಗೂ ಸರ್ಕಾರಿ ಉದ್ಯೋಗದ ಭರವಸೆ ನೀಡಿದ ಬಳಿಕ ಪ್ರತಿಭಟನಾಕಾರರು ಹೋರಾಟ ಕೈಬಿಟ್ಟಿದ್ದಾರೆ.

ಹನೂರು ಶಾಸಕ ಎಂ.ಆರ್. ಮಂಜುನಾಥ್ ಅವರು ಮೃತರ ಕುಟುಂಬಸ್ಥರು, ಚರ್ಚ್ ಫಾದರ್ ಹಾಗೂ ವಿವಿಧ ಸಂಘಟನೆಗಳ ಮುಖಂಡರೊಂದಿಗೆ ಸಂಧಾನ ಸಭೆ ನಡೆಸಿ ಪರಿಸ್ಥಿತಿ ತಿಳಿಗೊಳಿಸುವ ಪ್ರಯತ್ನ ನಡೆಸಿದರು.

15 ಲಕ್ಷ ಪರಿಹಾರ, ಸರ್ಕಾರಿ ಉದ್ಯೋಗದ ಭರವಸೆ:

ಸಂಧಾನ ಸಭೆಯಲ್ಲಿ ಮೃತಪಟ್ಟ ಮೂವರ ಕುಟುಂಬಗಳಿಗೆ ಸರ್ಕಾರದಿಂದ ತಲಾ ₹5 ಲಕ್ಷ ಪರಿಹಾರ ಹಾಗೂ ವೈಯಕ್ತಿಕವಾಗಿ ತಲಾ ₹10 ಲಕ್ಷ ನೀಡುವುದಾಗಿ ಶಾಸಕ ಮಂಜುನಾಥ್ ಭರವಸೆ ನೀಡಿದರು. ಇದರೊಂದಿಗೆ ಪ್ರತಿ ಕುಟುಂಬಕ್ಕೂ ಒಟ್ಟು ₹15 ಲಕ್ಷ ಪರಿಹಾರ ದೊರೆಯಲಿದೆ ಎಂದು ತಿಳಿಸಿದರು.

ಇದಲ್ಲದೆ, ಮೃತರ ಅಂತ್ಯಸಂಸ್ಕಾರದ ವೆಚ್ಚವನ್ನು ಭರಿಸುವುದು, ಅವರ ಮಕ್ಕಳ ವಿದ್ಯಾಭ್ಯಾಸದ ಸಂಪೂರ್ಣ ಖರ್ಚನ್ನು ನೋಡಿಕೊಳ್ಳುವುದು ಹಾಗೂ ಕುಟುಂಬದ ಸದಸ್ಯರಿಗೆ ಸರ್ಕಾರಿ ಉದ್ಯೋಗ ಕಲ್ಪಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.

ಎನ್‌ಕೌಂಟರ್‌ನಲ್ಲಿ ಭಾಗಿಯಾಗಿರುವ ಅರಣ್ಯಾಧಿಕಾರಿಗಳ ಅಮಾನತಿಗೆ ಕ್ರಮ ಕೈಗೊಳ್ಳಲಾಗುವುದು. ಅಲ್ಲದೆ, ಹನೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಅರಣ್ಯ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಯ ವರ್ಗಾವಣೆಗೆ ಕ್ರಮ ಕೈಗೊಳ್ಳುವ ಪ್ರಯತ್ನ ಮಾಡಲಾಗುವುದು ಎಂದು ಶಾಸಕ ಮಂಜುನಾಥ್ ಹೇಳಿದರು.

ಶಾಸಕರ ಭರವಸೆಯ ಬೆನ್ನಲ್ಲೇ ಪ್ರತಿಭಟನಾಕಾರರು ಹೋರಾಟವನ್ನು ಹಿಂಪಡೆದಿದ್ದು, ಹನೂರಿನಲ್ಲಿ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಿದೆ. ರಸ್ತೆ ತಡೆ ತೆರವಾಗಿದ್ದು, ವಾಹನ ಸಂಚಾರವೂ ಸುಗಮವಾಗಿದೆ.

ಹನೂರು ಶೂಟೌಟ್‌ ಪ್ರಕರಣ: ಮ್ಯಾಜಿಸ್ಟ್ರೇಟ್ ತನಿಖೆ ಬೇಡ, ನ್ಯಾಯಾಂಗ ತನಿಖೆ ಆಗಲಿ ಎಂದ ಆರ್. ಅಶೋಕ್

0

ಬೆಂಗಳೂರು: ಚಾಮರಾಜನಗರ ಜಿಲ್ಲೆಯ ಹನೂರು ಸಮೀಪ ಅರಣ್ಯ ಇಲಾಖೆ ಸಿಬ್ಬಂದಿ ನಡೆಸಿದ ಗುಂಡಿನ ದಾಳಿಯಲ್ಲಿ ಮೂವರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ನ್ಯಾಯಾಂಗ ತನಿಖೆಗೆ ಆಗ್ರಹಿಸಿದ್ದಾರೆ.

ಸರ್ಕಾರ ನೀಡುತ್ತಿರುವ ಮಾಹಿತಿ ಹಾಗೂ ವಿವಿಧ ಅಧಿಕಾರಿಗಳ ಹೇಳಿಕೆಗಳಲ್ಲಿ ವ್ಯತ್ಯಾಸವಿರುವುದರಿಂದ ಪ್ರಕರಣದಲ್ಲಿ ಸತ್ಯ ಹೊರಬರಬೇಕಾದರೆ ನ್ಯಾಯಾಂಗ ತನಿಖೆಯೇ ಸೂಕ್ತ ಎಂದು ಅವರು ಹೇಳಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅಶೋಕ್, ಕಾಂಗ್ರೆಸ್ ಸರ್ಕಾರದ ಉತ್ತರಗಳು ಪರಸ್ಪರ ತಾಳೆಯಾಗುತ್ತಿಲ್ಲ. ಅರಣ್ಯ ಇಲಾಖೆ ಒಂದು ರೀತಿಯ ಹೇಳಿಕೆ ನೀಡಿದರೆ, ಸ್ಥಳೀಯ ಜನಪ್ರತಿನಿಧಿಗಳು ಮತ್ತೊಂದು ರೀತಿಯ ಮಾಹಿತಿ ನೀಡುತ್ತಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರ ಹೇಳಿಕೆಗಳಲ್ಲೂ ಸ್ಪಷ್ಟತೆ ಇಲ್ಲ. ಹಾಗಾದರೆ ನಿಜ ಯಾವುದು, ಯಾರ ಮಾತನ್ನು ನಂಬಬೇಕು ಎಂದು ಪ್ರಶ್ನಿಸಿದರು.

ಅರಣ್ಯ ಇಲಾಖೆ ಪ್ರಾಣಿ ಬೇಟೆಯಾಡಿ ಮಾಂಸ ಸಾಗಿಸುತ್ತಿದ್ದವರ ಮೇಲೆ ಕ್ರಮ ಕೈಗೊಂಡಿದ್ದೇವೆ ಎಂದು ಹೇಳುತ್ತಿದೆ. ಆದರೆ ಮೃತರ ಕುಟುಂಬಸ್ಥರು ಇದನ್ನು ನಕಲಿ ಎನ್‌ಕೌಂಟರ್ ಎಂದು ಆರೋಪಿಸುತ್ತಿದ್ದಾರೆ ಎಂದು ಅಶೋಕ್ ಹೇಳಿದರು.

ಗುಂಡಿನ ದಾಳಿ ನಡೆಸಬೇಕಾದ ಪರಿಸ್ಥಿತಿ ಇದ್ದರೂ ಮೊದಲು ಕಾಲಿಗೆ ಗುಂಡು ಹಾರಿಸುವುದು ಸಾಮಾನ್ಯ ಕ್ರಮವಾಗಿರುತ್ತದೆ. ಆದರೆ ಎದೆಗೆ ಗುಂಡು ತಗುಲಿದೆ ಎಂದು ಕುಟುಂಬಸ್ಥರು ಹೇಳುತ್ತಿದ್ದಾರೆ. ಈ ಕುರಿತು ಸಂಪೂರ್ಣ ತನಿಖೆ ಅಗತ್ಯ ಎಂದು ಅವರು ಒತ್ತಾಯಿಸಿದರು.

ಪ್ರಕರಣದ ಕುರಿತು ಎಸ್‌ಪಿ ಅವರೊಂದಿಗೆ ಮಾತನಾಡಿದ್ದಾಗಿ ತಿಳಿಸಿದ ಅಶೋಕ್, ಮಹಜರು ಪೂರ್ಣಗೊಳ್ಳುವ ಮೊದಲೇ ಮೃತದೇಹಗಳನ್ನು ಮೈಸೂರಿನ ಕೆ.ಆರ್. ಆಸ್ಪತ್ರೆಗೆ ಸ್ಥಳಾಂತರ ಮಾಡಿದ್ದೇಕೆ ಎಂದು ಪ್ರಶ್ನಿಸಿದರು.

ಇದಲ್ಲದೆ, ಮೂವರ ಹಿನ್ನೆಲೆ ಕುರಿತು ಇನ್ನೂ ಸ್ಪಷ್ಟ ಮಾಹಿತಿ ಹೊರಬಂದಿಲ್ಲ. ಗುಂಡಿನ ದಾಳಿ ನಡೆಸಿದ ಅರಣ್ಯ ಸಿಬ್ಬಂದಿಯೂ ಸದ್ಯ ಸಾರ್ವಜನಿಕರ ಮುಂದೆ ಕಾಣಿಸುತ್ತಿಲ್ಲ. ಅವರು ಪೊಲೀಸರಿಗೆ ಮಾಹಿತಿ ನೀಡಿ ಕಾನೂನು ಪ್ರಕ್ರಿಯೆಗೆ ಒಳಗಾಗಬೇಕಿತ್ತು ಎಂದು ಹೇಳಿದರು.

“ಮ್ಯಾಜಿಸ್ಟ್ರೇಟ್ ತನಿಖೆ ಸಾಲದು”:

ಮುಖ್ಯಮಂತ್ರಿ ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶಿಸಿರುವುದು ಸಾಕಾಗುವುದಿಲ್ಲ. ನ್ಯಾಯ ಸಿಗಬೇಕಾದರೆ ನ್ಯಾಯಾಂಗ ತನಿಖೆ ನಡೆಯಬೇಕು. ತನಿಖೆ ಪೂರ್ಣಗೊಳ್ಳುವವರೆಗೆ ಸಂಬಂಧಪಟ್ಟ ಸಿಬ್ಬಂದಿಯನ್ನು ಕರ್ತವ್ಯದಿಂದ ದೂರವಿಡಬೇಕು ಎಂದು ಅಶೋಕ್ ಆಗ್ರಹಿಸಿದರು.

ಮೂರು ಮಂದಿಯ ಮೇಲೆ ಗುಂಡು ಹಾರಿಸುವ ಅನಿವಾರ್ಯತೆ ನಿಜವಾಗಿಯೂ ಇತ್ತೇ? ಎಲ್ಲರ ಕೈಯಲ್ಲೂ ಆಯುಧ ಇತ್ತೇ? ಎಂಬ ಪ್ರಶ್ನೆಗಳಿಗೆ ಉತ್ತರ ಸಿಗಬೇಕು ಎಂದು ಅವರು ಹೇಳಿದರು.

ಈ ಪ್ರಕರಣದಲ್ಲಿ ಅರಣ್ಯ ಸಚಿವ ರಾಮಲಿಂಗಾ ರೆಡ್ಡಿ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ಪರಿಶೀಲಿಸಬೇಕಿತ್ತು. ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿ ನ್ಯಾಯ ದೊರಕುವ ಭರವಸೆ ನೀಡಬೇಕಿತ್ತು ಎಂದು ಅಶೋಕ್ ಟೀಕಿಸಿದರು.

‘ನನ್ನ ಮಗುವನ್ನು ಅಪ್ಪ-ಅಮ್ಮನಿಗೆ ಕೊಡಿ’; ಡೆತ್‌ನೋಟ್ ಬರೆದು 26 ವರ್ಷದ ಗೃಹಿಣಿ ಆತ್ಮಹತ್ಯೆ!

0

ಚಿಕ್ಕಬಳ್ಳಾಪುರ: ವರದಕ್ಷಿಣೆ ಕಿರುಕುಳ ಹಾಗೂ ಕೌಟುಂಬಿಕ ಕಲಹದಿಂದ ಮನನೊಂದ ಗೃಹಿಣಿಯೊಬ್ಬರು ಡೆತ್‌ನೋಟ್ ಬರೆದಿಟ್ಟು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ನಗರದ ಸೊಣ್ಣಶೆಟ್ಟಿಹಳ್ಳಿ ಬಡಾವಣೆಯಲ್ಲಿ ನಡೆದಿದೆ.

ಮೃತರನ್ನು ಮಮತಾಶ್ರೀ (26) ಎಂದು ಗುರುತಿಸಲಾಗಿದೆ. ಐದು ವರ್ಷಗಳ ಹಿಂದೆ ಮಮತಾಶ್ರೀ ಅವರು ಮೋಹನ್ ರೆಡ್ಡಿ ಅವರನ್ನು ವಿವಾಹವಾಗಿದ್ದು, ದಂಪತಿಗೆ ನಾಲ್ಕು ವರ್ಷದ ಗಂಡು ಮಗು ಇದೆ. ಅವರು ಸೊಣ್ಣಶೆಟ್ಟಿಹಳ್ಳಿ ಬಡಾವಣೆಯಲ್ಲಿ ವಾಸವಾಗಿದ್ದರು.

ಕಳೆದ ಕೆಲವು ದಿನಗಳಿಂದ ಪತಿ-ಪತ್ನಿಯ ನಡುವೆ ವೈಮನಸ್ಸು ಹಾಗೂ ಕೌಟುಂಬಿಕ ಕಲಹ ಮುಂದುವರಿದಿದ್ದು, ಇದರಿಂದ ಮನನೊಂದ ಮಮತಾಶ್ರೀ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ.

ಡೆತ್‌ನೋಟ್‌ನಲ್ಲಿ ಏನಿದೆ?

ಮಮತಾಶ್ರೀ ಬರೆದಿದ್ದಾರೆ ಎನ್ನಲಾದ ಡೆತ್‌ನೋಟ್‌ನಲ್ಲಿ, ತಮ್ಮ ನಾಲ್ಕು ವರ್ಷದ ಮಗುವನ್ನು ತಮ್ಮ ಪೋಷಕರ ವಶಕ್ಕೆ ಒಪ್ಪಿಸಬೇಕು ಹಾಗೂ ತಮ್ಮ ಅಂತ್ಯಸಂಸ್ಕಾರದಲ್ಲಿ ಪತಿ ಭಾಗವಹಿಸಬಾರದು ಎಂದು ಉಲ್ಲೇಖಿಸಿರುವುದಾಗಿ ತಿಳಿದುಬಂದಿದೆ.

ಈ ಸಂಬಂಧ ಮೃತೆಯ ತಂದೆ ನೀಡಿದ ದೂರಿನ ಮೇರೆಗೆ ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವರದಕ್ಷಿಣೆ ಕಿರುಕುಳ ಸೇರಿದಂತೆ ವಿವಿಧ ಆಯಾಮಗಳಲ್ಲಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ಹೃದಯವಿದ್ರಾವಕ ಘಟನೆ: ಈಶಾ ಆದಿಯೋಗಿ ದರ್ಶನ ಮುಗಿಸಿ ಬರುತ್ತಿದ್ದ ಯುವಕ-ಯುವತಿ ದಾರುಣ ಅಂತ್ಯ!

0

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ತಾಲೂಕಿನ ಲಿಂಗಶೆಟ್ಟಿಪುರ ಗೇಟ್ ಬಳಿ ಲಾರಿ ಡಿಕ್ಕಿಯಾಗಿ ಬೈಕ್‌ನಲ್ಲಿ ತೆರಳುತ್ತಿದ್ದ ಯುವಕ ಮತ್ತು ಯುವತಿ ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ.

ಮೃತರು ಉತ್ತರ ಪ್ರದೇಶ ಮೂಲದವರಾಗಿದ್ದು, ಚಿಕ್ಕಬಳ್ಳಾಪುರ ಸಮೀಪದ ಈಶಾ ಆದಿಯೋಗಿ ದರ್ಶನ ಪಡೆದು ಬೈಕ್‌ನಲ್ಲಿ ವಾಪಸ್ ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ.

ಲಿಂಗಶೆಟ್ಟಿಪುರ ಗೇಟ್ ಬಳಿ ವೇಗವಾಗಿ ಬಂದ ಲಾರಿಯೊಂದು ಬೈಕ್‌ಗೆ ಭೀಕರವಾಗಿ ಡಿಕ್ಕಿ ಹೊಡೆದ ಪರಿಣಾಮ ಅಪಘಾತದ ತೀವ್ರತೆಗೆ ಇಬ್ಬರೂ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

ಘಟನೆ ಬಳಿಕ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಈ ಸಂಬಂಧ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಲಾರಿ ಚಾಲಕನ ವಿರುದ್ಧ ಮುಂದಿನ ತನಿಖೆ ಮುಂದುವರಿದಿದೆ.

ವಂದೇ ಮಾತರಂ ವಿವಾದ: ಸೋನಿಯಾ ಗಾಂಧಿ ವಿರುದ್ಧ ಮಂಗಳೂರಿನಲ್ಲಿ ದೂರು, ಎಫ್‌ಐಆರ್‌ಗೆ ಬಿಜೆಪಿ ಒತ್ತಾಯ

0

ಮಂಗಳೂರು: ವಂದೇ ಮಾತರಂಗೆ ಅಪಮಾನ ಮಾಡಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಹಿರಿಯ ನಾಯಕಿ ಸೋನಿಯಾ ಗಾಂಧಿ ವಿರುದ್ಧ ಮಂಗಳೂರಿನ ಉರ್ವಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಬಿಜೆಪಿ ಮುಖಂಡ ವಿಕಾಸ್ ಪುತ್ತೂರು ಈ ದೂರು ಸಲ್ಲಿಸಿದ್ದು, ಸೋನಿಯಾ ಗಾಂಧಿ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಆಗ್ರಹಿಸಿದ್ದಾರೆ.

ದೂರು ದಾಖಲಿಸದಿದ್ದರೆ ಹೈಕೋರ್ಟ್‌ನಲ್ಲಿ ಕಾನೂನು ಹೋರಾಟ ನಡೆಸುವುದಾಗಿ ವಿಕಾಸ್ ಪುತ್ತೂರು ಎಚ್ಚರಿಕೆ ನೀಡಿದ್ದಾರೆ.

ಬಿಜೆಪಿ ನಾಯಕನ ಆರೋಪವೇನು?

ದೂರು ನೀಡಿದ ಬಳಿಕ ಮಾತನಾಡಿದ ವಿಕಾಸ್ ಪುತ್ತೂರು, ದೇಶ 80ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸುತ್ತಿರುವ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಪ್ರಧಾನ ಕಚೇರಿಯಲ್ಲಿ ನಡೆದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ವಂದೇ ಮಾತರಂಗೆ ಅಪಮಾನವಾಗಿದೆ ಎಂದು ಆರೋಪಿಸಿದರು.

ಧ್ವಜಾರೋಹಣ ವೇಳೆ ಸೋನಿಯಾ ಗಾಂಧಿ ಅವರು ವಂದೇ ಮಾತರಂ ಹಾಡುವ ಬಗ್ಗೆ ಸೂಚನೆ ನೀಡಿದ ಕ್ರಮ ರಾಷ್ಟ್ರದ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಅವರು ಆರೋಪಿಸಿದರು. ವಂದೇ ಮಾತರಂ ಸ್ವಾತಂತ್ರ್ಯ ಹೋರಾಟಕ್ಕೆ ಸ್ಫೂರ್ತಿ ನೀಡಿದ ಗೀತೆ ಆಗಿರುವುದರಿಂದ ಅದಕ್ಕೆ ಗೌರವ ಸಲ್ಲಿಸಬೇಕು ಎಂದು ಹೇಳಿದರು.

ಕಾನೂನು ಕ್ರಮಕ್ಕೆ ಒತ್ತಾಯ:

ರಾಷ್ಟ್ರೀಯ ಚಿಹ್ನೆಗಳು ಮತ್ತು ಸಂಕೇತಗಳಿಗೆ ಅಪಮಾನ ಮಾಡುವುದು ಕಾನೂನಿನ ಪ್ರಕಾರ ಅಪರಾಧ ಎಂದು ವಿಕಾಸ್ ಪುತ್ತೂರು ಹೇಳಿದ್ದಾರೆ. ಭಾರತೀಯ ನ್ಯಾಯ ಸಂಹಿತೆ (BNS) ಅಡಿಯಲ್ಲಿ ಸೂಕ್ತ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಪೊಲೀಸರು ಯಾವುದೇ ಕಾರಣಕ್ಕೂ ಎಫ್‌ಐಆರ್ ದಾಖಲಿಸದಿದ್ದರೆ ಖಾಸಗಿ ದೂರು ಸಲ್ಲಿಸಿ ಹೈಕೋರ್ಟ್ ಮೊರೆ ಹೋಗುವುದಾಗಿ ಅವರು ತಿಳಿಸಿದ್ದಾರೆ.

ಕಾಂಗ್ರೆಸ್ ಪಕ್ಷವು ಹಿಂದಿನಿಂದಲೂ ವಂದೇ ಮಾತರಂ ಕುರಿತು ವಿರೋಧದ ನಿಲುವು ಹೊಂದಿದೆ ಎಂದು ವಿಕಾಸ್ ಪುತ್ತೂರು ಆರೋಪಿಸಿದ್ದು, 1937ರಲ್ಲಿಯೇ ವಂದೇ ಮಾತರಂ ಅನ್ನು ಪೂರ್ಣ ಪ್ರಮಾಣದಲ್ಲಿ ಹಾಡಬಾರದು ಎಂಬ ನಿರ್ಧಾರ ಕೈಗೊಂಡಿತ್ತು ಎಂದು ಹೇಳಿದ್ದಾರೆ.

ಸದ್ಯ ಈ ಪ್ರಕರಣದಲ್ಲಿ ಪೊಲೀಸರ ಮುಂದಿನ ಕ್ರಮದತ್ತ ಗಮನ ನೆಟ್ಟಿದೆ.

ಬೆಂಗಳೂರು PGಗಳಿಗೆ ಬಿಗ್ ಶಾಕ್! ನಾಳೆಯಿಂದ ಹಾಸ್ಟೆಲ್‌, ರೆಸ್ಟೋರೆಂಟ್‌ಗಳ ಪರಿಶೀಲನೆ ಶುರು!

0

ಬೆಂಗಳೂರು: ನಗರದ ಐಷಾರಾಮಿ ಹೋಟೆಲ್‌ಗಳು, 3 ಸ್ಟಾರ್ ಹಾಗೂ 5 ಸ್ಟಾರ್ ಹೋಟೆಲ್‌ಗಳ ಅಡುಗೆಮನೆಗಳಲ್ಲಿ ಆಹಾರ ಸುರಕ್ಷತಾ ಉಲ್ಲಂಘನೆಗಳು ಪತ್ತೆಯಾದ ಬೆನ್ನಲ್ಲೇ, ಇದೀಗ ಬೆಂಗಳೂರು ಪೂರ್ವ ಮಹಾನಗರ ಪಾಲಿಕೆ ವ್ಯಾಪ್ತಿಯ ಪಿಜಿ, ಹಾಸ್ಟೆಲ್, ರೆಸ್ಟೋರೆಂಟ್, ಡಾಬಾ ಹಾಗೂ ಆಹಾರ ತಯಾರಿಕಾ ಕೇಂದ್ರಗಳ ಮೇಲೆ ನಾಳೆಯಿಂದ ವಿಶೇಷ ತಪಾಸಣೆ ನಡೆಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.

ಸಾರ್ವಜನಿಕರ ಆರೋಗ್ಯ, ಸುರಕ್ಷತೆ ಮತ್ತು ನೈರ್ಮಲ್ಯ ಕಾಪಾಡುವ ಉದ್ದೇಶದಿಂದ ಈ ಕಾರ್ಯಾಚರಣೆ ಕೈಗೊಳ್ಳಲಾಗುತ್ತಿದೆ. ಸಾರ್ವಜನಿಕರಿಂದ ಪಿಜಿಗಳ ಆಹಾರದ ಗುಣಮಟ್ಟ ಮತ್ತು ಸ್ವಚ್ಛತೆ ಕುರಿತು ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ಬೆಂಗಳೂರು ಪೂರ್ವ ಪಾಲಿಕೆ ಆಯುಕ್ತ ಡಿ.ಎಸ್. ರಮೇಶ್ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಜಂಟಿ ತಂಡದಿಂದ ತಪಾಸಣೆ:

ಪಿಜಿ ವಸತಿಗೃಹಗಳ ಪರಿಶೀಲನೆಗಾಗಿ ಉಪನಿರ್ದೇಶಕರು, ಕಾರ್ಯಪಾಲಕ ಅಭಿಯಂತರರು, ಆರೋಗ್ಯ ವೈದ್ಯಾಧಿಕಾರಿಗಳು ಹಾಗೂ ಸಹಾಯಕ ಕಾರ್ಯಪಾಲಕ ಅಭಿಯಂತರರನ್ನು ಒಳಗೊಂಡ ಜಂಟಿ ತಂಡವನ್ನು ರಚಿಸಲಾಗಿದೆ. ಪ್ರತಿ ಪಿಜಿಯಲ್ಲೂ ಪ್ರತ್ಯೇಕವಾಗಿ ಪರಿಶೀಲನೆ ನಡೆಸಿ, ನಿಯಮ ಉಲ್ಲಂಘನೆ ಕಂಡುಬಂದರೆ ಕಾನೂನು ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.

ಏನೆಲ್ಲ ಪರಿಶೀಲನೆ?

ತಪಾಸಣೆ ವೇಳೆ ಈ ಪ್ರಮುಖ ಅಂಶಗಳನ್ನು ಪರಿಶೀಲಿಸಲಾಗುತ್ತದೆ:

  • ಆಹಾರ ತಯಾರಿಕಾ ಸ್ಥಳಗಳ ಸ್ವಚ್ಛತೆ

  • ನೈರ್ಮಲ್ಯ, ಕುಡಿಯುವ ನೀರು ಹಾಗೂ ಒಳಚರಂಡಿ ವ್ಯವಸ್ಥೆ

  • ಕಟ್ಟಡ ಮತ್ತು ಅಗ್ನಿ ಸುರಕ್ಷತಾ ಕ್ರಮಗಳು

  • ವ್ಯಾಪಾರ ಪರವಾನಗಿ ಹಾಗೂ ಅಗತ್ಯ ಅನುಮತಿಗಳು

  • ಘನತ್ಯಾಜ್ಯ ನಿರ್ವಹಣೆ

  • ಸಾರ್ವಜನಿಕ ಆಸ್ತಿ ಒತ್ತುವರಿ ಹಾಗೂ ಪಾರ್ಕಿಂಗ್ ವ್ಯವಸ್ಥೆ

  • ಅವಧಿ ಮೀರಿದ ಆಹಾರ ಪದಾರ್ಥಗಳ ಬಳಕೆ

ಯಾವುದೇ ಉಲ್ಲಂಘನೆ ಕಂಡುಬಂದರೆ ನಿಯಮಾನುಸಾರ ಕಠಿಣ ಕ್ರಮ ಕೈಗೊಳ್ಳುವುದಾಗಿ ಪಾಲಿಕೆ ಎಚ್ಚರಿಸಿದೆ.

ಮೈಸೂರಿನಲ್ಲೂ ಮುಂದುವರಿದ ದಾಳಿ:

ಬೆಂಗಳೂರು ಬಳಿಕ ಮೈಸೂರಿನಲ್ಲೂ ಆಹಾರ ಸುರಕ್ಷತಾ ಅಧಿಕಾರಿಗಳು ಕಾರ್ಯಾಚರಣೆ ಮುಂದುವರಿಸಿದ್ದಾರೆ. ಮೈಸೂರು ಹಾಗೂ ನಂಜನಗೂಡು ತಾಲೂಕಿನ ಮೂರು ರೆಸಾರ್ಟ್‌ಗಳಲ್ಲಿ ತಪಾಸಣೆ ನಡೆಸಿದ ವೇಳೆ 16 ಕೆಜಿ ಅವಧಿ ಮೀರಿದ ಆಹಾರ ಪದಾರ್ಥಗಳನ್ನು ಜಪ್ತಿ ಮಾಡಲಾಗಿದೆ. ನಿಯಮ ಉಲ್ಲಂಘಿಸಿದ ಹಿನ್ನೆಲೆ ನೋಟಿಸ್ ನೀಡಲಾಗಿದ್ದು, ನಾಲ್ಕು ಹೋಟೆಲ್‌ಗಳ ಮೇಲೂ ಪರಿಶೀಲನೆ ನಡೆಸಲಾಗಿದೆ.

ಖಾಸಗಿ ಕಂಪನಿಯ ₹2 ಕೋಟಿ ಮೌಲ್ಯದ ಕಟ್ಟಿಂಗ್ ಟೂಲ್ಸ್ ಕಳ್ಳತನ; ಐವರು ಅರೆಸ್ಟ್!

0

ಚಿಕ್ಕಬಳ್ಳಾಪುರ: ಖಾಸಗಿ ಕಂಪನಿಗೆ ಸೇರಿದ ಸುಮಾರು ₹2 ಕೋಟಿ ಮೌಲ್ಯದ ಕಟ್ಟಿಂಗ್ ಟೂಲ್ಸ್ ಕಳ್ಳತನ ಪ್ರಕರಣವನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಭೇದಿಸಿದ್ದು, ಐವರು ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತರನ್ನು ಸೋಮಶೇಖರ್, ಚಂದ್ರಶೇಖರ್, ಧನುಷ್, ನಾಗಭೂಷಣ್ ಹಾಗೂ ಹರೀಶ್ ಎಂದು ಗುರುತಿಸಲಾಗಿದೆ. ಆರೋಪಿಗಳಿಂದ ಸುಮಾರು ₹80 ಲಕ್ಷ ಮೌಲ್ಯದ ಕಟ್ಟಿಂಗ್ ಟೂಲ್ಸ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಹಂತ ಹಂತವಾಗಿ ಟೂಲ್ಸ್ ಕಳ್ಳತನ?

ದೊಡ್ಡಬಳ್ಳಾಪುರದಲ್ಲಿರುವ ವೈಜಿ ಖಾಸಗಿ ಕಂಪನಿಯಲ್ಲಿ ಆರೋಪಿಗಳು ಈ ಹಿಂದೆ ಉದ್ಯೋಗಿಗಳಾಗಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಇದೇ ಸಂದರ್ಭವನ್ನು ಬಳಸಿಕೊಂಡು ಕಂಪನಿಯ ಕಟ್ಟಿಂಗ್ ಟೂಲ್ಸ್‌ಗಳನ್ನು ಹಂತ ಹಂತವಾಗಿ ಕಳ್ಳತನ ಮಾಡಿರುವ ಆರೋಪ ಕೇಳಿಬಂದಿದೆ.

2025ನೇ ಸಾಲಿನ ಆಡಿಟ್ ವೇಳೆ ಕಂಪನಿಯ ಸ್ಟಾಕ್‌ನಲ್ಲಿ ವ್ಯತ್ಯಾಸ ಕಂಡುಬಂದಿದೆ. ಬಳಿಕ ಪರಿಶೀಲನೆ ನಡೆಸಿದಾಗ ಕಟ್ಟಿಂಗ್ ಟೂಲ್ಸ್‌ಗಳು ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ.

ಈ ಸಂಬಂಧ ಕಂಪನಿ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ತನಿಖೆಯ ವೇಳೆ ಐವರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದ್ದು, ಅವರಿಂದ ₹80 ಲಕ್ಷ ಮೌಲ್ಯದ ಕಟ್ಟಿಂಗ್ ಟೂಲ್ಸ್‌ಗಳನ್ನು ಜಪ್ತಿ ಮಾಡಲಾಗಿದೆ.

ಪ್ರಕರಣದಲ್ಲಿ ಇನ್ನಷ್ಟು ವಸ್ತುಗಳು ಕಳುವಾಗಿರುವ ಸಾಧ್ಯತೆಯ ಹಿನ್ನೆಲೆಯಲ್ಲಿ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.

ಮಳೆಗಾಲದಲ್ಲಿ ತುಳಸಿ ಟೀ ಕುಡಿಯುತ್ತೀರಾ? ಈ ಆರೋಗ್ಯ ಪ್ರಯೋಜನಗಳ ಬಗ್ಗೆ ತಿಳಿಯಿರಿ

0

ಮಳೆಗಾಲ ಹಾಗೂ ಹವಾಮಾನ ಬದಲಾವಣೆಯ ಸಂದರ್ಭದಲ್ಲಿ ನೆಗಡಿ, ಕೆಮ್ಮು, ಗಂಟಲು ನೋವು ಸೇರಿದಂತೆ ಹಲವು ಸಾಮಾನ್ಯ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.

ಈ ಸಂದರ್ಭದಲ್ಲಿ ಕೆಲವರು ಮನೆಮದ್ದು ಹಾಗೂ ಗಿಡಮೂಲಿಕೆಗಳ ಮೊರೆ ಹೋಗುತ್ತಾರೆ. ಅವುಗಳಲ್ಲಿ ತುಳಸಿ ಟೀ ಕೂಡ ಜನಪ್ರಿಯವಾಗಿದೆ.

ತುಳಸಿಯಲ್ಲಿ ವಿವಿಧ ಸಸ್ಯಜನ್ಯ ಸಂಯುಕ್ತಗಳು ಹಾಗೂ ಆ್ಯಂಟಿಆಕ್ಸಿಡೆಂಟ್‌ಗಳು ಕಂಡುಬರುತ್ತವೆ. ಆರೋಗ್ಯಕರ ಆಹಾರ ಪದ್ಧತಿಯ ಭಾಗವಾಗಿ ತುಳಸಿ ಟೀ ಸೇವಿಸುವುದರಿಂದ ಕೆಲವು ಆರೋಗ್ಯ ಪ್ರಯೋಜನಗಳು ದೊರೆಯಬಹುದು.

ಆ್ಯಂಟಿಆಕ್ಸಿಡೆಂಟ್‌ಗಳ ಮೂಲ:

ತುಳಸಿಯಲ್ಲಿ ಆ್ಯಂಟಿಆಕ್ಸಿಡೆಂಟ್ ಗುಣಗಳನ್ನು ಹೊಂದಿರುವ ಸಸ್ಯಜನ್ಯ ಸಂಯುಕ್ತಗಳಿವೆ. ಇವು ದೇಹದ ಕೋಶಗಳನ್ನು ಆಕ್ಸಿಡೇಟಿವ್ ಒತ್ತಡದಿಂದ ರಕ್ಷಿಸಲು ಸಹಾಯ ಮಾಡಬಹುದು. ಹೀಗಾಗಿ ಸಮತೋಲಿತ ಆಹಾರದ ಜೊತೆಗೆ ತುಳಸಿಯನ್ನು ಸೇವಿಸುವುದು ಒಟ್ಟಾರೆ ಆರೋಗ್ಯಕ್ಕೆ ಪೂರಕವಾಗಬಹುದು.

ನೆಗಡಿ, ಗಂಟಲು ನೋವಿನಲ್ಲಿ ಆರಾಮ:

ತುಳಸಿ, ಶುಂಠಿ ಹಾಗೂ ಸ್ವಲ್ಪ ಮೆಣಸು ಸೇರಿಸಿ ತಯಾರಿಸಿದ ಬಿಸಿ ಪಾನೀಯವು ಕೆಲವರಿಗೆ ನೆಗಡಿ ಅಥವಾ ಗಂಟಲಿನ ಅಸ್ವಸ್ಥತೆಯ ಸಂದರ್ಭದಲ್ಲಿ ಆರಾಮದ ಅನುಭವ ನೀಡಬಹುದು. ಆದರೆ ತುಳಸಿ ಟೀ ವೈರಸ್ ಸೋಂಕನ್ನು ಗುಣಪಡಿಸುತ್ತದೆ ಎಂದು ಪರಿಗಣಿಸಬಾರದು.

ಒತ್ತಡ ಕಡಿಮೆ ಮಾಡಲು ಸಹಾಯವಾಗುತ್ತಾ?

ತುಳಸಿಯನ್ನು ಆಯುರ್ವೇದದಲ್ಲಿ ದೀರ್ಘಕಾಲದಿಂದ ಬಳಸಲಾಗುತ್ತಿದೆ. ತುಳಸಿಯಲ್ಲಿರುವ ಕೆಲವು ಸಸ್ಯಜನ್ಯ ಸಂಯುಕ್ತಗಳು ಒತ್ತಡ ಹಾಗೂ ಮಾನಸಿಕ ನೆಮ್ಮದಿಗೆ ಸಂಬಂಧಿಸಿದ ಪ್ರಯೋಜನಗಳನ್ನು ಹೊಂದಿರಬಹುದು ಎಂಬ ಸಂಶೋಧನೆಗಳಿವೆ. ಆದರೆ ಆತಂಕ ಅಥವಾ ಇತರ ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ತುಳಸಿ ಟೀಯನ್ನೇ ಚಿಕಿತ್ಸೆಯಾಗಿ ಅವಲಂಬಿಸುವುದು ಸೂಕ್ತವಲ್ಲ.

ಜೀರ್ಣಕ್ರಿಯೆಗೆ ಪೂರಕವಾಗಬಹುದು:

ಶುಂಠಿ ಮತ್ತು ತುಳಸಿಯಂತಹ ಪದಾರ್ಥಗಳಿಂದ ತಯಾರಿಸಿದ ಬಿಸಿ ಹರ್ಬಲ್ ಟೀ ಕೆಲವರಿಗೆ ಹೊಟ್ಟೆ ಉಬ್ಬರ, ಗ್ಯಾಸ್ ಅಥವಾ ಸಣ್ಣ ಪ್ರಮಾಣದ ಜೀರ್ಣಕ್ರಿಯೆಯ ಅಸ್ವಸ್ಥತೆಯಲ್ಲಿ ಆರಾಮ ನೀಡಬಹುದು. ಆದರೆ ಪದೇಪದೇ ಅಜೀರ್ಣ, ಹೊಟ್ಟೆ ನೋವು ಅಥವಾ ಇತರ ಸಮಸ್ಯೆಗಳು ಕಾಣಿಸಿಕೊಂಡರೆ ವೈದ್ಯರನ್ನು ಸಂಪರ್ಕಿಸಿ ಮೂಲ ಕಾರಣವನ್ನು ಪರಿಶೀಲಿಸಿಕೊಳ್ಳುವುದು ಮುಖ್ಯ.

ಯಾರಿಗೆ ಎಚ್ಚರಿಕೆ ಅಗತ್ಯ?

ಕೆಲವು ಸಂದರ್ಭಗಳಲ್ಲಿ ತುಳಸಿ ಟೀ ಸೇವಿಸುವಾಗ ಎಚ್ಚರಿಕೆ ವಹಿಸುವುದು ಅಗತ್ಯ. ವಿಶೇಷವಾಗಿ:

  • ಡಯಾಬಿಟಿಸ್‌ಗೆ ಔಷಧಿ ಸೇವಿಸುವವರು
  • ಗರ್ಭಿಣಿಯರು
  • ಸ್ತನ್ಯಪಾನ ಮಾಡಿಸುವ ತಾಯಂದಿರು
  • ರಕ್ತ ತೆಳುವಾಗಿಸುವ ಔಷಧಿ ಸೇವಿಸುವವರು
  • ದೀರ್ಘಕಾಲದ ಕಾಯಿಲೆ ಹೊಂದಿರುವವರು

ಇವರು ತುಳಸಿ ಟೀಯನ್ನು ನಿಯಮಿತವಾಗಿ ಅಥವಾ ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವ ಮೊದಲು ವೈದ್ಯರ ಸಲಹೆ ಪಡೆಯುವುದು ಉತ್ತಮ.

ಗಮನಿಸಿ: ತುಳಸಿ ಟೀ ಆರೋಗ್ಯಕರ ಜೀವನಶೈಲಿಯ ಒಂದು ಭಾಗವಾಗಬಹುದು. ಆದರೆ ಒಂದು ಕಪ್ ತುಳಸಿ ಟೀ ಕುಡಿಯುವುದರಿಂದ ವೈರಸ್ ಸೋಂಕು ಅಥವಾ ಎಲ್ಲಾ ಕಾಯಿಲೆಗಳಿಂದ ರಕ್ಷಣೆ ಸಿಗುತ್ತದೆ ಎಂಬುದಕ್ಕೆ ವೈಜ್ಞಾನಿಕ ಆಧಾರವಿಲ್ಲ. ರೋಗನಿರೋಧಕ ಆರೋಗ್ಯಕ್ಕಾಗಿ ಸಮತೋಲಿತ ಆಹಾರ, ಸಾಕಷ್ಟು ನಿದ್ರೆ, ನಿಯಮಿತ ವ್ಯಾಯಾಮ, ಸ್ವಚ್ಛತೆ, ಅಗತ್ಯ ಲಸಿಕೆಗಳು ಹಾಗೂ ಸೂಕ್ತ ವೈದ್ಯಕೀಯ ಆರೈಕೆ ಮುಖ್ಯ.