Home Blog Page 4

ಬಂಗಾರದ ಬೆಲೆಯಲ್ಲಿ ಇಳಿಕೆ: ಬೆಂಗಳೂರಿನಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ಎಷ್ಟು? ಇಲ್ಲಿದೆ ಮಾಹಿತಿ

ಬೆಂಗಳೂರು: ಅಂತರರಾಷ್ಟ್ರೀಯ ಮಾರುಕಟ್ಟೆಯ ಬೆಳವಣಿಗೆಗಳ ಪರಿಣಾಮ ದೇಶೀಯ ಚಿನ್ನದ ಮಾರುಕಟ್ಟೆಯಲ್ಲೂ ಕಾಣಿಸಿಕೊಂಡಿದೆ. ಇರಾನ್-ಅಮೆರಿಕ ನಡುವಿನ ಉದ್ವಿಗ್ನತೆ ತಾತ್ಕಾಲಿಕವಾಗಿ ಶಮನಗೊಂಡಿರುವುದು ಹಾಗೂ ತೈಲ ಬೆಲೆಯಲ್ಲಿ ಇಳಿಕೆ ಕಂಡುಬಂದಿರುವ ಹಿನ್ನೆಲೆಯಲ್ಲಿ ಚಿನ್ನದ ದರದಲ್ಲಿ ಕೊಂಚ ಇಳಿಕೆಯಾಗಿದೆ.

ಇದೇ ವೇಳೆ ಹೂಡಿಕೆದಾರರು ಮುಂದಿನ ಆರ್ಥಿಕ ಬೆಳವಣಿಗೆಗಳ ಮೇಲೆ ಗಮನಹರಿಸಿದ್ದು, ಮಾತುಕತೆಗಳ ನಿರೀಕ್ಷೆಯಲ್ಲಿದ್ದಾರೆ. ಗುಡ್ ರಿಟರ್ನ್ಸ್ ವರದಿ ಪ್ರಕಾರ, ಆಗಸ್ಟ್ 4, 2026 (ಮಂಗಳವಾರ) 24 ಕ್ಯಾರೆಟ್ ಚಿನ್ನದ ದರದಲ್ಲಿ ಇಳಿಕೆ ದಾಖಲಾಗಿದೆ.

ಇಂದಿನ ಚಿನ್ನದ ದರ

  • 24 ಕ್ಯಾರೆಟ್ ಚಿನ್ನ (1 ಗ್ರಾಂ): ₹14,400 (₹22 ಇಳಿಕೆ)
  • 24 ಕ್ಯಾರೆಟ್ ಚಿನ್ನ (10 ಗ್ರಾಂ): ₹1,44,000 (₹220 ಇಳಿಕೆ)
  • 22 ಕ್ಯಾರೆಟ್ ಚಿನ್ನ (1 ಗ್ರಾಂ): ₹13,200 (₹20 ಇಳಿಕೆ)
  • 22 ಕ್ಯಾರೆಟ್ ಚಿನ್ನ (10 ಗ್ರಾಂ): ₹1,32,000 (₹200 ಇಳಿಕೆ)

ಬೆಂಗಳೂರಿನ ಬೆಳ್ಳಿ ದರ

ಬೆಳ್ಳಿ ದರದಲ್ಲಿ ಇಂದು ಯಾವುದೇ ಬದಲಾವಣೆ ಕಂಡುಬಂದಿಲ್ಲ.

  • ಬೆಳ್ಳಿ (1 ಗ್ರಾಂ): ₹235
  • ಬೆಳ್ಳಿ (1 ಕೆಜಿ): ₹2,35,000

ಜಾಗತಿಕ ಆರ್ಥಿಕ ಬೆಳವಣಿಗೆಗಳು, ಡಾಲರ್ ಮೌಲ್ಯ, ಕಚ್ಚಾತೈಲ ದರ ಹಾಗೂ ಭೌರಾಜಕೀಯ ಬೆಳವಣಿಗೆಗಳ ಪರಿಣಾಮವಾಗಿ ಮುಂದಿನ ದಿನಗಳಲ್ಲಿ ಚಿನ್ನ ಮತ್ತು ಬೆಳ್ಳಿ ದರದಲ್ಲಿ ಮತ್ತಷ್ಟು ಏರಿಳಿತವಾಗುವ ಸಾಧ್ಯತೆ ಇದೆ.

ತ್ರಿಷಾ ಕುರಿತು ಉದಯನಿಧಿ ಸ್ಟಾಲಿನ್ ಹೇಳಿಕೆ ವಿವಾದ: ಮಹಿಳಾ ಆಯೋಗದ ಮೊರೆ ಹೋದ ಟಿವಿಕೆ

ಚೆನ್ನೈ: ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಅವರು ಸಾರ್ವಜನಿಕ ಸಭೆಯಲ್ಲಿ ನಟಿ ತ್ರಿಷಾ ಕುರಿತು ನೀಡಿದ ಹೇಳಿಕೆ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಮಹಿಳೆಯರ ಘನತೆಗೆ ಧಕ್ಕೆ ತರುವ ರೀತಿಯ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿರುವ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷವು ರಾಷ್ಟ್ರೀಯ ಮಹಿಳಾ ಆಯೋಗಕ್ಕೆ (ಎನ್‌ಸಿಡಬ್ಲ್ಯು) ದೂರು ಸಲ್ಲಿಸಿ, ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದೆ.

ಕಾವೇರಿ ನೀರಿನ ವಿಚಾರವಾಗಿ ತಂಜಾವೂರಿನಲ್ಲಿ ನಡೆದ ಡಿಎಂಕೆ ಪ್ರತಿಭಟನಾ ಸಭೆಯಲ್ಲಿ ಮಾತನಾಡುತ್ತಿದ್ದ ವೇಳೆ, ಜನಸಮೂಹದಿಂದ “ತ್ರಿಷಾ… ತ್ರಿಷಾ…” ಎಂಬ ಘೋಷಣೆಗಳು ಕೇಳಿಬಂದವು. ಇದಕ್ಕೆ ಪ್ರತಿಕ್ರಿಯಿಸಿದ ಉದಯನಿಧಿ ಸ್ಟಾಲಿನ್ ಅವರ ಹೇಳಿಕೆ ಮಹಿಳೆಯರನ್ನು ಅವಮಾನಿಸುವ ಹಾಗೂ ದ್ವಂದ್ವಾರ್ಥ ಹೊಂದಿದೆ ಎಂದು ಟಿವಿಕೆ ಆರೋಪಿಸಿದೆ.

ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಸಲ್ಲಿಸಿರುವ ದೂರಿನಲ್ಲಿ, ಸಾರ್ವಜನಿಕ ವೇದಿಕೆಯಲ್ಲಿ ಮಹಿಳೆಯರ ಕುರಿತು ಇಂತಹ ಹೇಳಿಕೆ ನೀಡುವುದು ಅಸ್ವೀಕಾರಾರ್ಹ. ಇದು ಮಹಿಳೆಯರನ್ನು ವಸ್ತುವಿನಂತೆ ಕಾಣುವ ಮನೋಭಾವಕ್ಕೆ ಉತ್ತೇಜನ ನೀಡುತ್ತದೆ ಎಂದು ಟಿವಿಕೆ ತಿಳಿಸಿದೆ.

ಉದಯನಿಧಿ ಸ್ಟಾಲಿನ್ ಅವರು ಸಾರ್ವಜನಿಕವಾಗಿ ಬೇಷರತ್ ಕ್ಷಮೆಯಾಚನೆ ಮಾಡಬೇಕು. ಮಹಿಳೆಯರ ಘನತೆಗೆ ಧಕ್ಕೆ ತಂದಿರುವ ಆರೋಪದಡಿ ಅವರ ವಿರುದ್ಧ ಪೊಲೀಸ್ ಪ್ರಕರಣ ದಾಖಲಿಸಬೇಕು ಎಂದು ಪಕ್ಷ ಒತ್ತಾಯಿಸಿದೆ. ಅಲ್ಲದೆ, ಈ ವಿಚಾರವಾಗಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸುವುದಾಗಿ ಟಿವಿಕೆ ಘೋಷಿಸಿದೆ.

ಈ ಹೇಳಿಕೆಯನ್ನು ಬಿಜೆಪಿ ಕೂಡ ತೀವ್ರವಾಗಿ ಖಂಡಿಸಿದ್ದು, ಮಹಿಳೆಯರ ಬಗ್ಗೆ ಇಂತಹ ಭಾಷೆ ಬಳಸುವುದು ಯಾವುದೇ ರಾಜಕೀಯ ನಾಯಕರಿಗೆ ಶೋಭೆ ತರುವುದಿಲ್ಲ ಎಂದು ಟೀಕಿಸಿದೆ. ಉದಯನಿಧಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ತಮಿಳುನಾಡು ಬಿಜೆಪಿ ನಾಯಕರು ಆಗ್ರಹಿಸಿದ್ದಾರೆ.

ರಸ್ತೆ ಅಪಘಾತದಲ್ಲಿ ಮಹಿಳೆ ಸಾವು ಪ್ರಕರಣ; ₹40 ಲಕ್ಷ ಪರಿಹಾರ ನೀಡುವಂತೆ ಬಿಎಂಟಿಸಿಗೆ ಹೈಕೋರ್ಟ್ ಆದೇಶ

ಬೆಂಗಳೂರು: ರಸ್ತೆ ಅಪಘಾತದಲ್ಲಿ ಮೃತಪಟ್ಟ ಮಹಿಳೆಯ ಕುಟುಂಬಕ್ಕೆ ನೀಡಲಾಗಿದ್ದ ಪರಿಹಾರದ ಮೊತ್ತವನ್ನು ಕರ್ನಾಟಕ ಹೈಕೋರ್ಟ್‌ ಗಣನೀಯವಾಗಿ ಹೆಚ್ಚಿಸಿದೆ. ವಿಚಾರಣಾ ನ್ಯಾಯಾಲಯ ಘೋಷಿಸಿದ್ದ ₹13.30 ಲಕ್ಷ ಪರಿಹಾರವನ್ನು ಮಾರ್ಪಡಿಸಿದ ಹೈಕೋರ್ಟ್‌, ಮೃತರ ಕುಟುಂಬಕ್ಕೆ ಒಟ್ಟು ₹40.54 ಲಕ್ಷ ಪರಿಹಾರ ನೀಡುವಂತೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ)ಗೆ ಆದೇಶಿಸಿದೆ.

ಮೃತ ಶಕಿಲಾ ಬಿ. ಶೆಟ್ಟಿ ಅವರ ಪತಿ ಭಾಸ್ಕರ್ ಎನ್. ಶೆಟ್ಟಿ ಹಾಗೂ ಮಕ್ಕಳು ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಯಂತ್ ಬ್ಯಾನರ್ಜಿ ಮತ್ತು ನ್ಯಾಯಮೂರ್ತಿ ತಾರಾ ವಿತಸ್ತಾ ಗಂಜು ಅವರಿದ್ದ ವಿಭಾಗೀಯ ಪೀಠ ಈ ಮಹತ್ವದ ತೀರ್ಪು ನೀಡಿದೆ.

ಹೈಕೋರ್ಟ್ ಆದೇಶದಂತೆ, ಮೇಲ್ಮನವಿ ಸಲ್ಲಿಸಲು ಅರ್ಜಿದಾರರು ವಿಳಂಬ ಮಾಡಿದ 217 ದಿನಗಳ ಅವಧಿಗೆ ಬಡ್ಡಿ ಅನ್ವಯಿಸುವುದಿಲ್ಲ. ಉಳಿದ ಅವಧಿಗೆ ಅರ್ಜಿ ಸಲ್ಲಿಸಿದ ದಿನಾಂಕದಿಂದ ವಾರ್ಷಿಕ ಶೇ.9ರ ಬಡ್ಡಿದರದಲ್ಲಿ ಎಂಟು ವಾರಗಳೊಳಗೆ ಪರಿಹಾರದ ಬಾಕಿ ಮೊತ್ತವನ್ನು ಪಾವತಿಸುವಂತೆ ಬಿಎಂಟಿಸಿಗೆ ನಿರ್ದೇಶಿಸಲಾಗಿದೆ.

ಆದಾಯ ತೆರಿಗೆ ದಾಖಲೆ ಪರಿಗಣಿಸದ ನ್ಯಾಯಮಂಡಳಿ

ಮೃತರು ಸ್ವಯಂ ಉದ್ಯೋಗಿಯಾಗಿದ್ದು, ಟ್ಯೂಷನ್ ತರಗತಿಗಳನ್ನು ನಡೆಸುತ್ತಿದ್ದರು. ಅವರ ಆದಾಯ ತೆರಿಗೆ ರಿಟರ್ನ್ಸ್ ದಾಖಲೆಗಳನ್ನು ವಿಚಾರಣಾ ನ್ಯಾಯಾಲಯ ಪರಿಗಣಿಸದೇ, ಕೇವಲ ತಿಂಗಳಿಗೆ ₹9 ಸಾವಿರ ಆದಾಯವೆಂದು ನಿಗದಿಪಡಿಸಿ ₹13.30 ಲಕ್ಷ ಪರಿಹಾರ ಘೋಷಿಸಿತ್ತು.

ಆದರೆ, ಸುಪ್ರೀಂ ಕೋರ್ಟ್‌ನ ತೀರ್ಪುಗಳ ಪ್ರಕಾರ ಆದಾಯ ತೆರಿಗೆ ದಾಖಲೆಗಳು ಶಾಸನಬದ್ಧ ದಾಖಲೆಗಳಾಗಿದ್ದು, ವಾರ್ಷಿಕ ಆದಾಯ ನಿರ್ಧಾರಕ್ಕೆ ಅವುಗಳನ್ನು ಕಡ್ಡಾಯವಾಗಿ ಪರಿಗಣಿಸಬೇಕು ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ. ಕಳೆದ ಮೂರು ವರ್ಷಗಳ ಆದಾಯ ತೆರಿಗೆ ದಾಖಲೆಗಳ ಆಧಾರದ ಮೇಲೆ ಮೃತರ ವಾರ್ಷಿಕ ಸರಾಸರಿ ಆದಾಯ ₹3.33 ಲಕ್ಷ ಎಂದು ಪರಿಗಣಿಸಿ ಹೊಸದಾಗಿ ಪರಿಹಾರ ಲೆಕ್ಕ ಹಾಕಲಾಗಿದೆ.

ಪರಿಹಾರದ ವಿವರ

ಹೈಕೋರ್ಟ್ ಘೋಷಿಸಿರುವ ಪರಿಹಾರದ ವಿವರ ಹೀಗಿದೆ:

  • ಅವಲಂಬನೆ ನಷ್ಟ – ₹38,89,200
  • ಪತಿ ಮತ್ತು ಮಕ್ಕಳಿಗೆ ಸಾಂತ್ವನ ಪರಿಹಾರ – ₹1,32,000
  • ಆಸ್ತಿ (Estate) ನಷ್ಟ – ₹16,500
  • ಅಂತ್ಯಕ್ರಿಯೆ ವೆಚ್ಚ – ₹16,500

ಒಟ್ಟು ಪರಿಹಾರ: ₹40,54,200

ಪ್ರಕರಣದ ಹಿನ್ನೆಲೆ

2017ರ ಜುಲೈ 1ರಂದು ಮಧ್ಯಾಹ್ನ ಶಕಿಲಾ ಬಿ. ಶೆಟ್ಟಿ ಅವರು ತಮ್ಮ ಸಹೋದರನೊಂದಿಗೆ ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುತ್ತಿದ್ದ ವೇಳೆ, ಅತಿವೇಗ ಮತ್ತು ನಿರ್ಲಕ್ಷ್ಯದಿಂದ ಬಂದ ಬಿಎಂಟಿಸಿ ಬಸ್ ಹಿಂದಿನಿಂದ ಡಿಕ್ಕಿ ಹೊಡೆದಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು.

ಈ ಹಿನ್ನೆಲೆಯಲ್ಲಿ ಮೃತರ ಪತಿ ಹಾಗೂ ಇಬ್ಬರು ಅಪ್ರಾಪ್ತ ಮಕ್ಕಳು ಮೋಟಾರು ವಾಹನಗಳ ಕಾಯ್ದೆ-1988ರ ಸೆಕ್ಷನ್ 166ರಡಿ ಪರಿಹಾರ ಕೋರಿ ಮೋಟಾರು ಅಪಘಾತಗಳ ಪರಿಹಾರ ನ್ಯಾಯಮಂಡಳಿಯನ್ನು ಸಂಪರ್ಕಿಸಿದ್ದರು. ನ್ಯಾಯಮಂಡಳಿ ಘೋಷಿಸಿದ್ದ ಪರಿಹಾರ ಅಲ್ಪವಾಗಿದೆ ಎಂದು ವಾದಿಸಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಗಿತ್ತು.

ಹೈಕೋರ್ಟ್ ಇದೀಗ ಆದಾಯ ತೆರಿಗೆ ದಾಖಲೆಗಳಿಗೆ ಮಹತ್ವ ನೀಡಿ ಪರಿಹಾರದ ಮೊತ್ತವನ್ನು ಮೂರು ಪಟ್ಟು ಹೆಚ್ಚಿಸಿರುವುದು, ರಸ್ತೆ ಅಪಘಾತ ಪರಿಹಾರ ಪ್ರಕರಣಗಳಲ್ಲಿ ಮಹತ್ವದ ತೀರ್ಪಾಗಿ ಪರಿಗಣಿಸಲಾಗುತ್ತಿದೆ.

ಟಾಪ್-5 ಭಾರತೀಯ ಬೌಲರ್ʼಗಳ ಪಟ್ಟಿಯನ್ನು ಬಹಿರಂಗಪಡಿಸಿದ ಅರ್ಶದೀಪ್ ಸಿಂಗ್!

0

ಭಾರತದ ಯುವ ವೇಗದ ಬೌಲರ್ ಅರ್ಶದೀಪ್ ಸಿಂಗ್ ತಮ್ಮ ಪಾಲಿನ ಸಾರ್ವಕಾಲಿಕ ಶ್ರೇಷ್ಠ ಐವರು ಭಾರತೀಯ ಬೌಲರ್‌ಗಳ ಪಟ್ಟಿಯನ್ನು ಬಹಿರಂಗಪಡಿಸಿದ್ದು, ಕ್ರಿಕೆಟ್ ಅಭಿಮಾನಿಗಳಲ್ಲಿ ಚರ್ಚೆಗೆ ಕಾರಣವಾಗಿದೆ. ವಿಶೇಷವೆಂದರೆ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ ಹಾಗೂ ರವಿಚಂದ್ರನ್ ಅಶ್ವಿನ್ ಅವರಂತಹ ದಿಗ್ಗಜರನ್ನು ಹಿಂದಿಕ್ಕಿ ಅನುಭವಿ ವೇಗಿ ಭುವನೇಶ್ವರ್ ಕುಮಾರ್ ಅವರಿಗೆ ಅರ್ಶದೀಪ್ ಮೊದಲ ಸ್ಥಾನ ನೀಡಿದ್ದಾರೆ.

ಕೃಷ್ಣಾಕ್ ಅಥ್ರೆ ಅವರ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಅರ್ಶದೀಪ್ ಸಿಂಗ್, “ಭುವನೇಶ್ವರ್ ಕುಮಾರ್ ನನ್ನ ನೆಚ್ಚಿನ ಬೌಲರ್. ಆದ್ದರಿಂದ ಅವರಿಗೆ ಮೊದಲ ಸ್ಥಾನ ನೀಡಿದ್ದೇನೆ. ಈ ವಿಚಾರದಲ್ಲಿ ನಾನು ಸ್ವಲ್ಪ ಪಕ್ಷಪಾತಿಯಾಗಿದ್ದೇನೆ,” ಎಂದು ನಗುಮುಖದಿಂದ ಹೇಳಿದ್ದಾರೆ.

ಇದೇ ವೇಳೆ ಎರಡನೇ ಸ್ಥಾನವನ್ನು ಮೊಹಮ್ಮದ್ ಶಮಿ ಅವರಿಗೆ ನೀಡಿದ ಅರ್ಶದೀಪ್, “ಯಾವುದೇ ಪಿಚ್‌ನಲ್ಲಾದರೂ ಶಮಿ ಅತ್ಯುತ್ತಮ ವೇಗದ ಬೌಲಿಂಗ್ ಮಾಡುತ್ತಾರೆ. ಅವರ ಲೈನ್, ಲೆಂಗ್ತ್ ಹಾಗೂ ವೇಗ ಯಾವಾಗಲೂ ಎದುರಾಳಿಗಳಿಗೆ ಸವಾಲಾಗಿರುತ್ತದೆ. ಅವರು ವಿಶ್ವದ ಶ್ರೇಷ್ಠ ವೇಗಿಗಳಲ್ಲಿ ಒಬ್ಬರು,” ಎಂದು ಪ್ರಶಂಸಿಸಿದರು.

ಮೂರನೇ ಸ್ಥಾನದಲ್ಲಿ ಎಡಗೈ ಚೈನಾಮನ್ ಸ್ಪಿನ್ನರ್ ಕುಲ್ದೀಪ್ ಯಾದವ್ ಅವರನ್ನು ಆಯ್ಕೆ ಮಾಡಿದ ಅರ್ಶದೀಪ್, ಅವರ ವಿಶಿಷ್ಟ ಸ್ಪಿನ್ ಕೌಶಲ್ಯವನ್ನು ಶ್ಲಾಘಿಸಿದರು. ನಾಲ್ಕನೇ ಸ್ಥಾನದಲ್ಲಿ ಯುಜುವೇಂದ್ರ ಚಹಲ್ ಅವರನ್ನು ಆಯ್ಕೆ ಮಾಡಿ, “ಚಹಲ್ ಸಾಕಷ್ಟು ವಿಕೆಟ್‌ಗಳನ್ನು ಪಡೆದ ಅನುಭವಿ ಸ್ಪಿನ್ನರ್. ಅವರ ಬೌಲಿಂಗ್ ತಂಡಕ್ಕೆ ಅನೇಕ ಬಾರಿ ಗೆಲುವು ತಂದುಕೊಟ್ಟಿದೆ,” ಎಂದು ಹೇಳಿದರು.

ಇನ್ನು ಭಾರತದ ಎರಡನೇ ಗರಿಷ್ಠ ಟೆಸ್ಟ್ ವಿಕೆಟ್ ಸರದಾರ ರವಿಚಂದ್ರನ್ ಅಶ್ವಿನ್ ಅವರಿಗೆ ಐದನೇ ಸ್ಥಾನ ನೀಡಿದ ಅರ್ಶದೀಪ್, ತಮಾಷೆಯ ಶೈಲಿಯಲ್ಲಿ ಕ್ಷಮೆಯನ್ನೂ ಕೇಳಿದರು. “ಅಶ್ವಿನ್ ಅಣ್ಣನಿಗೆ ಕೊನೆಯ ಸ್ಥಾನ ನೀಡಬೇಕೆಂಬ ಉದ್ದೇಶ ನನ್ನದಲ್ಲ. ಆದರೆ ಬೇರೆ ಸ್ಥಾನ ಉಳಿದಿರಲಿಲ್ಲ.

ಅವರು ದಿಗ್ಗಜ ಆಟಗಾರ. ಪಂಜಾಬ್ ಕಿಂಗ್ಸ್‌ನಲ್ಲಿ ನನ್ನ ಮೊದಲ ಐಪಿಎಲ್ ನಾಯಕ ಕೂಡ ಅವರೇ. ಕ್ಷಮಿಸಿ ಅಶ್ವಿನ್ ಅಣ್ಣ… ನಿಮಗೆ ನಾನು ವೈಯಕ್ತಿಕವಾಗಿ ಸಂದೇಶ ಕಳುಹಿಸುತ್ತೇನೆ,” ಎಂದು ಹಾಸ್ಯಭರಿತವಾಗಿ ಪ್ರತಿಕ್ರಿಯಿಸಿದರು.

ಅರ್ಶದೀಪ್ ಸಿಂಗ್ ಅವರ ಈ ಆಯ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದ್ದು, ಅಭಿಮಾನಿಗಳು ತಮ್ಮದೇ ಆದ ಟಾಪ್-5 ಭಾರತೀಯ ಬೌಲರ್‌ಗಳ ಪಟ್ಟಿಯನ್ನು ಹಂಚಿಕೊಳ್ಳಲು ಆರಂಭಿಸಿದ್ದಾರೆ.

ಶಿಕ್ಷಣವೇ ಸಮಾಜ ಪರಿವರ್ತನೆಯ ಶಕ್ತಿ: ಶಾಸಕ ಡಾ. ಚಂದ್ರು ಲಮಾಣಿ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಗ್ರಾಮೀಣ ಭಾಗದ ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗದಂತೆ ಸರ್ಕಾರ ವಿವಿಧ ಸೌಲಭ್ಯಗಳನ್ನು ಕಲ್ಪಿಸಿದ್ದು, ವಿದ್ಯಾರ್ಥಿಗಳು ಅವುಗಳನ್ನು ಸದ್ಬಳಕೆ ಮಾಡಿಕೊಂಡು ಉನ್ನತ ಸಾಧನೆ ಮಾಡಬೇಕು ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.

ಸೋಮವಾರ ಪಟ್ಟಣದಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ₹3 ಕೋಟಿ 58 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ಡಾ. ಬಿ.ಆರ್. ಅಂಬೇಡ್ಕರ್ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯದ ನೂತನ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಶಿಕ್ಷಣವು ಕೇವಲ ಪದವಿ ಪಡೆಯುವ ಸಾಧನವಲ್ಲ; ಉತ್ತಮ ವ್ಯಕ್ತಿತ್ವ, ಸಂಸ್ಕಾರ ಮತ್ತು ಸಾಮಾಜಿಕ ಹೊಣೆಗಾರಿಕೆಯನ್ನು ಬೆಳೆಸುವ ಶಕ್ತಿಯಾಗಿದೆ. ವಿದ್ಯಾರ್ಥಿನಿಯರು ವಸತಿ ನಿಲಯದ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಂಡು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸಾಧನೆ ಮಾಡಿ ಕುಟುಂಬ ಹಾಗೂ ಸಮಾಜಕ್ಕೆ ಕೀರ್ತಿ ತರಬೇಕು ಎಂದು ಕರೆ ನೀಡಿದರು.

ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ನಂದಾ ಹಣಬರಟ್ಟಿ ಮಾತನಾಡಿ, ಸರ್ಕಾರವು ಹಿಂದುಳಿದ ಹಾಗೂ ಬಡ ವರ್ಗದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ವಸತಿ ನಿಲಯಗಳ ಮೂಲಕ ಉತ್ತೇಜನ ನೀಡುತ್ತಿದೆ. 100 ವಿದ್ಯಾರ್ಥಿನಿಯರಿಗೆ ಊಟ, ವಸತಿ ಸೇರಿದಂತೆ ಅಗತ್ಯ ಸೌಲಭ್ಯಗಳೊಂದಿಗೆ ಈ ನಿಲಯವನ್ನು ಇಲಾಖೆಯ ನಿಯಮಾನುಸಾರ ಭರ್ತಿ ಮಾಡಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆ ತಾಲೂಕು ಅಧಿಕಾರಿ ಗೋಪಾಲ ನಾಯಕ, ಬಿಜೆಪಿ ಮಂಡಲ ಅಧ್ಯಕ್ಷ ಸುನೀಲ ಮಹಾಂತಶೆಟ್ಟರ, ಗ್ಯಾರಂಟಿ ಯೋಜನೆಗಳ ತಾಲೂಕು ಸಮಿತಿ ಅಧ್ಯಕ್ಷ ನಾಗರಾಜ ಮಡಿವಾಳ, ಮುತ್ತಣ್ಣ ಸಂಕನೂರ, ಎಂ.ಆರ್. ಪಾಟೀಲ, ಪ್ರವೀಣ ಬಾಳಿಕಾಯಿ, ಜಗದೀಶ ಪುರಾಣಿಕಮಠ ಸೇರಿದಂತೆ ವಿವಿಧ ಗಣ್ಯರು, ವಿದ್ಯಾರ್ಥಿನಿಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

ಮತಗಟ್ಟೆಗಳ ಪುನರಸಂಘಟನೆಗೆ ವೇಗ

0

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಶಿರಹಟ್ಟಿ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರ ಪಟ್ಟಿಗಳ ಸಮಗ್ರ ವಿಶೇಷ ಪರಿಷ್ಕರಣೆ–2026ರ ಅಂಗವಾಗಿ 1200ಕ್ಕೂ ಹೆಚ್ಚು ಮತದಾರರಿರುವ ಮತಗಟ್ಟೆಗಳ ಪುನರಸಂಘಟನೆ ಕಾರ್ಯವನ್ನು ಆಗಸ್ಟ್ 8ರೊಳಗೆ ಪೂರ್ಣಗೊಳಿಸಬೇಕು ಎಂದು ಮತದಾರರ ನೋಂದಣಾಧಿಕಾರಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ನಂದಾ ಹಣಬರಟ್ಟಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸೋಮವಾರ ಶಿರಹಟ್ಟಿ ತಹಸೀಲ್ದಾರ್ ಕಚೇರಿಯಲ್ಲಿ ರಾಷ್ಟ್ರೀಯ ಹಾಗೂ ರಾಜ್ಯ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮನೆ-ಮನೆಗೆ ಭೇಟಿ ನೀಡಿ ಮತದಾರರಿಗೆ ಗಣತಿ ನಮೂನೆ ವಿತರಿಸಿ, ಸ್ವೀಕರಿಸಿದ ನಮೂನೆಗಳನ್ನು ಡಿಜಿಟಲೀಕರಣಗೊಳಿಸುವ ಕಾರ್ಯ ಬಹುತೇಕ ಪೂರ್ಣಗೊಂಡಿದೆ. ಈಗ ಮತದಾರರ ಸಂಖ್ಯೆಯನ್ನು ಆಧರಿಸಿ 1200ಕ್ಕೂ ಹೆಚ್ಚು ಮತದಾರರಿರುವ ಮತಗಟ್ಟೆಗಳನ್ನು ವಿಭಜಿಸಿ ಪುನರಸಂಘಟನೆ ಮಾಡುವ ಕಾರ್ಯ ನಡೆಯುತ್ತಿದೆ ಎಂದು ತಿಳಿಸಿದರು.

ಶಿವಾಜಿನಗರ, ಕೋಗನೂರ, ಕುಂದ್ರಳ್ಳಿ, ರಾಮಗೇರಿ, ಆದರಹಳ್ಳಿ, ಹರದಗಟ್ಟಿ, ಹುಲ್ಲೂರು ಸೇರಿದಂತೆ ಹಲವು ಮತಗಟ್ಟೆಗಳನ್ನು ಪುನರಸಂಘಟನೆ ಮಾಡಲಾಗುತ್ತಿದ್ದು, ಲಕ್ಷ್ಮೇಶ್ವರ, ಸೂರಣಗಿ ಹಾಗೂ ಬಾಲೇಹೊಸೂರ ಭಾಗಗಳ ಕೆಲ ಮತಗಟ್ಟೆಗಳನ್ನು ವಿಲೀನಗೊಳಿಸಲಾಗಿದೆ ಎಂದು ವಿವರಿಸಿದರು.

ಸಭೆಯಲ್ಲಿ ಶಿರಹಟ್ಟಿ ತಹಸೀಲ್ದಾರ್ ಎ.ಎ. ಮುಳಗುಂದಮಠ, ಲಕ್ಷ್ಮೇಶ್ವರ ತಹಸೀಲ್ದಾರ್ ಧನಂಜಯ, ಬಿಜೆಪಿ ಮುಖಂಡ ಶಂಕರ ಮರಾಠೆ, ಜೆಡಿಎಸ್ ಮುಖಂಡ ಶರಣಪ್ಪ ಹೂಗಾರ, ಕಾಂಗ್ರೆಸ್ ಮುಖಂಡ ಬುಡನಶ್ಯಾ ಮಕಾನದಾರ, ಶಿರಸ್ತೇದಾರ ಜಮೀರ್ ಮನಿಯಾರ, ಎಸ್.ಎಸ್. ಅಸ್ಕಿ, ವಿನೋದಕುಮಾರ ಪಾಟೀಲ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.

ಡಾ. ಬಿ.ಎಫ್. ದಂಡಿನ ಸ್ಮಾರಕ ಭವನಕ್ಕೆ ಆಗಸ್ಟ್ 5ರಂದು ಭೂಮಿಪೂಜೆ

0

ವಿಜಯಸಾಕ್ಷಿ ಸುದ್ದಿ, ಗದಗ: ಕನಕದಾಸ ಶಿಕ್ಷಣ ಸಮಿತಿ ಹಾಗೂ ಡಾ. ಬಿ.ಎಫ್. ದಂಡಿನ ವಿದ್ಯಾರ್ಥಿ ಬಳಗದ ಆಶ್ರಯದಲ್ಲಿ ಅಗಲಿದ ಶಿಕ್ಷಣ ತಜ್ಞ ಡಾ. ಬಿ.ಎಫ್. ದಂಡಿನ ಹಾಗೂ ಶಕುಂತಲಾಬಾಯಿ ದಂಡಿನ ಅವರ ಸ್ಮರಣಾರ್ಥ ಸಾರ್ವಜನಿಕ ನುಡಿನಮನ ಸಭೆ ಹಾಗೂ ಸ್ಮಾರಕ ಭವನದ ಭೂಮಿಪೂಜೆ ಕಾರ್ಯಕ್ರಮ ಆಗಸ್ಟ್ 5ರಂದು ಬೆಳಿಗ್ಗೆ 10.30ಕ್ಕೆ ನಗರದ ಗಾಣಿಗ ಭವನದಲ್ಲಿ ನಡೆಯಲಿದೆ ಎಂದು ಸಮಿತಿ ಪದಾಧಿಕಾರಿಗಳು ತಿಳಿಸಿದರು.

ಸೋಮವಾರ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಂ.ಎನ್. ಕಾಮನಹಳ್ಳಿ, ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಕಾಗಿನೆಲೆ ಮಹಾಸಂಸ್ಥಾನದ ನಿರಂಜನಾನಂದ ಪುರಿ ಮಹಾಸ್ವಾಮಿಗಳು ಸೇರಿದಂತೆ ವಿವಿಧ ಮಠಾಧೀಶರು ವಹಿಸಲಿದ್ದು, ಹಲವು ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.

ಡಾ. ಡಿ.ಬಿ. ಗವಾನಿ ಮಾತನಾಡಿ, ಡಾ. ಬಿ.ಎಫ್. ದಂಡಿನ ಅವರು ಗ್ರಾಮೀಣ ಭಾಗದ ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣದ ಬೆಳಕು ನೀಡಿದ ಮಹನೀಯರು. ಅವರ ಸೇವೆಯನ್ನು ಚಿರಸ್ಥಾಯಿಗೊಳಿಸುವ ಉದ್ದೇಶದಿಂದ ಸ್ಮಾರಕ ಭವನ ನಿರ್ಮಿಸಲಾಗುತ್ತಿದೆ ಎಂದು ಹೇಳಿದರು.

ಹಾಲುಮತ ಮಹಾಸಭಾ ರಾಜ್ಯಾಧ್ಯಕ್ಷ ರುದ್ರಣ್ಣ ಗುಳಗುಳಿ ಮಾತನಾಡಿ, ಶಿಕ್ಷಕರಾಗಿ ಆರಂಭಿಸಿದ ಡಾ. ದಂಡಿನ ಅವರು 65ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಶಿಕ್ಷಣ ಕ್ಷೇತ್ರಕ್ಕೆ ಅನನ್ಯ ಕೊಡುಗೆ ನೀಡಿದ್ದಾರೆ. ಜೀವನದ ಕೊನೆಯ ಕ್ಷಣದವರೆಗೂ ಶಿಕ್ಷಣ ಸೇವೆಯನ್ನೇ ಧ್ಯೇಯವಾಗಿಸಿಕೊಂಡು ಬದುಕಿದ ಅವರ ಆದರ್ಶ ಸಮಾಜಕ್ಕೆ ಮಾದರಿಯಾಗಿದೆ ಎಂದು ಸ್ಮರಿಸಿದರು.

ಸುದ್ದಿಗೋಷ್ಠಿಯಲ್ಲಿ ರವಿ ದಂಡಿನ, ಪ್ರೊ. ಅನಿಲ ವೈದ್ಯ, ಡಾ. ಎನ್.ಎಂ. ಅಂಬನಿ, ಬಸವರಾಜ ಬಿಂಗಿ, ಯಲ್ಲಪ್ಪ ಗುರಿಕಾರ ಹಾಗೂ ವೈ.ಡಿ. ಜಡದೇಲಿ ಉಪಸ್ಥಿತರಿದ್ದರು.

ಜಕ್ಕಲಿ ಮಾರ್ಗವಾಗಿ ರೋಣ–ಬೆಂಗಳೂರು ಬಸ್ ಸಂಚಾರ ಪುನರಾರಂಭ

0

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಸಮೀಪದ ಜಕ್ಕಲಿ ಗ್ರಾಮ ಮಾರ್ಗವಾಗಿ ರೋಣ–ಬೆಂಗಳೂರು ಬಸ್ ಸೇವೆ ಸೋಮವಾರದಿಂದ ಪುನರಾರಂಭಗೊಂಡಿದ್ದು, ಹಲವು ವರ್ಷಗಳ ಸಾರ್ವಜನಿಕರ ಹೋರಾಟಕ್ಕೆ ಕೊನೆಗೂ ಯಶಸ್ಸು ದೊರೆತಿದೆ. ಬಸ್ ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಗ್ರಾಮಸ್ಥರು ವಿಶೇಷ ಪೂಜೆ ಸಲ್ಲಿಸಿ, ಚಾಲಕ ಹಾಗೂ ನಿರ್ವಾಹಕರಿಗೆ ಮಾಲಾರ್ಪಣೆ ಮಾಡಿ ಆತ್ಮೀಯವಾಗಿ ಸ್ವಾಗತಿಸಿದರು.

ಕೋವಿಡ್-19 ಅವಧಿಯಲ್ಲಿ ಸ್ಥಗಿತಗೊಂಡಿದ್ದ ಈ ಬಸ್ ಸೇವೆಯಿಂದ ಜಕ್ಕಲಿ, ನರೇಗಲ್ಲ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನರು ಬೆಂಗಳೂರಿಗೆ ತೆರಳಲು ಗದಗ, ಹಾವೇರಿ ಅಥವಾ ಹುಬ್ಬಳ್ಳಿಗೆ ತೆರಳಿ ಬಸ್ ಹತ್ತಬೇಕಾದ ಅನಿವಾರ್ಯತೆ ಎದುರಾಗಿತ್ತು.

ಬಸ್ ಸೇವೆ ಪುನರಾರಂಭಕ್ಕೆ ಆಗ್ರಹಿಸಿ ಜಕ್ಕಲಿ ಬಸ್ ಹೋರಾಟಗಾರರ ಸಮಿತಿ ಹಲವು ಬಾರಿ ರೋಣ ಸಾರಿಗೆ ಘಟಕದ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿತ್ತು. ಇತ್ತೀಚೆಗೆ ಜಿಲ್ಲೆಯ ಜನಪ್ರತಿನಿಧಿಗಳ ಮಧ್ಯಪ್ರವೇಶದ ಬಳಿಕ ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಬಸ್ ಸೇವೆ ಪುನರಾರಂಭಿಸಲು ಒಪ್ಪಿಗೆ ನೀಡಿದರು.

ಬಸ್ ಆಗಮಿಸಿದ ವೇಳೆ ಗ್ರಾಮಸ್ಥರು ತೆಂಗಿನಕಾಯಿ ಒಡೆದು, ಆರತಿ ಬೆಳಗಿ ಪೂಜೆ ಸಲ್ಲಿಸಿದರು. ಬಳಿಕ ಚಾಲಕ ಮತ್ತು ನಿರ್ವಾಹಕರಿಗೆ ಮಾಲಾರ್ಪಣೆ ಮಾಡಿ ಸಿಹಿ ಹಂಚಿ ಸಂಭ್ರಮಿಸಿದರು. ಬಸ್ ಸೇವೆ ಪುನರಾರಂಭಗೊಂಡಿರುವುದರಿಂದ ವಿದ್ಯಾರ್ಥಿಗಳು, ಉದ್ಯೋಗಿಗಳು, ವ್ಯಾಪಾರಸ್ಥರು ಹಾಗೂ ಬೆಂಗಳೂರಿಗೆ ತೆರಳುವ ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ವೀರಭದ್ರಪ್ಪ ಗಾಣಿಗೇರ, ಅನಿಲಕುಮಾರ ಹೊಸಮನಿ, ವಿನಾಯಕ ಉಮತಾರ, ಅನಿಲಕುಮಾರ ತಳವಾರ, ಮಂಜುನಾಥ ವಾಲಿ, ಜಗದೀಶ ಪಲ್ಲೇದ, ಸಂತೋಷ ಕೋರಿ, ಮಲ್ಲಪ್ಪ ಪಲ್ಲೇದ, ಪ್ರಕಾಶ ವಾಲಿ, ಎಸ್.ಕೆ. ತಮ್ಮಿನಾಳ, ರಮೇಶ ತಳವಾರ, ವೀರೇಶ ಪಟ್ಟಣಶೆಟ್ಟಿ, ಮಂಜುನಾಥ ಪಲ್ಲೇದ, ಗೌಸುಸಾಬ ನಮಾಜಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಠಾಣೆ ಸಾವು ಪ್ರಕರಣಕ್ಕೆ ನ್ಯಾಯಾಂಗ ತನಿಖೆಗೆ ಆಗ್ರಹ

0

ವಿಜಯಸಾಕ್ಷಿ ಸುದ್ದಿ, ಹಗರಿಬೊಮ್ಮನಹಳ್ಳಿ: ಹಗರಿಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ನಡೆದ ಖಲೀಲುಲ್ಲಾ ಸಾವಿನ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸಿ, ಮೃತರ ಕುಟುಂಬಕ್ಕೆ ₹50 ಲಕ್ಷ ಪರಿಹಾರ ನೀಡಬೇಕು ಎಂದು ಸಿಪಿಐ(ಎಂ) ಹಾಗೂ ಸಿಐಟಿಯು ಮುಖಂಡರು ಆಗ್ರಹಿಸಿದರು.

ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಬಳಿಕ ಉಪತಹಶೀಲ್ದಾರ್ ಕೆ. ಶಿವಕುಮಾರ ಗೌಡ ಅವರಿಗೆ ತಹಶೀಲ್ದಾರ್ ಮೂಲಕ ಗೃಹ ಸಚಿವರಿಗೆ ಮನವಿ ಸಲ್ಲಿಸಿ ಮಾತನಾಡಿದ ಸಿಐಟಿಯು ಮುಖಂಡ ಆರ್.ಎಸ್. ಬಸವರಾಜ್, ವಿಜಯನಗರ ಜಿಲ್ಲೆಯ ಇತಿಹಾಸದಲ್ಲೇ ಮೊದಲ ಬಾರಿಗೆ ಪೊಲೀಸ್ ಠಾಣೆಯಲ್ಲಿ ಲಾಕಪ್ ಸಾವು ಸಂಭವಿಸಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಇದರಿಂದ ಸಾರ್ವಜನಿಕರಲ್ಲಿ ಪೊಲೀಸ್ ಇಲಾಖೆಯ ಮೇಲಿನ ವಿಶ್ವಾಸ ಕುಸಿದಿದ್ದು, ಅನ್ಯಾಯವಾದಾಗ ಠಾಣೆಗೆ ಹೋಗುವುದಕ್ಕೂ ಜನರು ಭಯಪಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದರು.

ಸಿಪಿಐ(ಎಂ) ಮುಖಂಡ ಜಗನ್ನಾಥ್ ಮಾತನಾಡಿ, ಕುಟುಂಬ ಕಲಹದ ಹಿನ್ನೆಲೆಯಲ್ಲಿ ಠಾಣೆಗೆ ಕರೆತರಲಾಗಿದ್ದ ಮೆಹಬೂಬ್ ನಗರದ ಕಟ್ಟಡ ಕಾರ್ಮಿಕ ಖಲೀಲುಲ್ಲಾ ಮೇಲೆ ಹಲ್ಲೆ ನಡೆಸಿದ ಪರಿಣಾಮವೇ ಅವರು ಮೃತಪಟ್ಟಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಆದ್ದರಿಂದ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಿ ಸತ್ಯಾಂಶ ಹೊರತರಬೇಕು ಎಂದು ಒತ್ತಾಯಿಸಿದರು.

ಸಿಪಿಐ(ಎಂ) ತಾಲೂಕು ಕಾರ್ಯದರ್ಶಿ ಬಿ. ಮಾಳಮ್ಮ ಮಾತನಾಡಿ, ಇಲಾಖೆಯ ತನಿಖೆಯಿಂದ ನ್ಯಾಯ ಸಿಗುವ ವಿಶ್ವಾಸ ಇಲ್ಲ. ಬಡ ಕುಟುಂಬದ ಆಧಾರಸ್ತಂಭವಾಗಿದ್ದ ಖಲೀಲುಲ್ಲಾ ಸಾವಿನಿಂದ ಕುಟುಂಬ ಸಂಕಷ್ಟಕ್ಕೆ ಸಿಲುಕಿದ್ದು, ಸರ್ಕಾರ ₹50 ಲಕ್ಷ ಪರಿಹಾರ ನೀಡಿ ಕುಟುಂಬದ ಒಬ್ಬರಿಗೆ ಉದ್ಯೋಗ ಕಲ್ಪಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಕೆ. ರಮೇಶ್, ಸರ್ದಾರ್ ಹುಲಿಗೆಮ್ಮ, ಕೆ. ಗಾಳೆಪ್ಪ, ಕೆ. ಬಸವರಾಜ, ರಂಗಪ್ಪ ದಾಸರ, ಪಿ. ಚಾಂದ್ ಸೇರಿದಂತೆ ಹಲವರು ಭಾಗವಹಿಸಿದ್ದರು.

“ಅನ್ಯಾಯಕ್ಕೊಳಗಾದ ಜನರು ನ್ಯಾಯಕ್ಕಾಗಿ ಪೊಲೀಸ್ ಠಾಣೆಗೆ ಹೋಗುವುದೇ ತಪ್ಪಾ ಎಂಬ ಪ್ರಶ್ನೆ ಇಂದು ಸಾರ್ವಜನಿಕರನ್ನು ಕಾಡುತ್ತಿದೆ. ಖಲೀಲುಲ್ಲಾ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.”

– ಆರ್.ಎಸ್. ಬಸವರಾಜ್, ಸಿಐಟಿಯು ಮುಖಂಡ

ಚರಂಡಿ ನೀರಿಗೆ 160 ಎಕರೆ ಜಮೀನು ಬಲಿ!

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಲಕ್ಷ್ಮೇಶ್ವರ ಪಟ್ಟಣದ ಚರಂಡಿ ನೀರು ಅಡರಕಟ್ಟಿ ಹಾಗೂ ಮಂಜಲಾಪುರ ಗ್ರಾಮದ ರೈತರ ಜಮೀನುಗಳಿಗೆ ನುಗ್ಗಿ ಸುಮಾರು 160 ಎಕರೆ ಫಲವತ್ತಾದ ಕೃಷಿ ಭೂಮಿ ಹಲವು ವರ್ಷಗಳಿಂದ ಪಾಳು ಬೀಳುತ್ತಿದ್ದು, ಸಮಸ್ಯೆ ಪರಿಹರಿಸದಿದ್ದರೆ ಒಂದು ವಾರದ ಬಳಿಕ ಪಾಳಾ–ಬದಾಮಿ ರಾಜ್ಯ ಹೆದ್ದಾರಿ ತಡೆ ನಡೆಸುವುದಾಗಿ ರೈತರು ಎಚ್ಚರಿಕೆ ನೀಡಿದ್ದಾರೆ.

ಸೋಮವಾರ ಪುರಸಭೆಗೆ ಮನವಿ ಸಲ್ಲಿಸಿದ ರೈತರು, ಕಳೆದ ಹಲವು ವರ್ಷಗಳಿಂದ ಪಟ್ಟಣದ ಚರಂಡಿ ನೀರು ಲಂಡಿಹಳ್ಳದ ಮೂಲಕ ಹರಿದು ಹೊಲಗಳಿಗೆ ಸೇರುತ್ತಿದ್ದು, ಜಮೀನಿನಲ್ಲಿ ಆಳೆತ್ತರದ ಜವುಳು ಮತ್ತು ಕಸ ಬೆಳೆದು ಕೃಷಿ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಅಳಲು ತೋಡಿಕೊಂಡರು.

ರೈತ ಮುಖಂಡ ಮಂಜುನಾಥ ಮಾಗಡಿ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ನಿಂಗಪ್ಪ ಪ್ಯಾಟಿ ಹಾಗೂ ಮುತ್ತಣ್ಣ ಗಡೆಪ್ಪನವರ ಮಾತನಾಡಿ, ಕಳೆದ ತಿಂಗಳು ಮನವಿ ಸಲ್ಲಿಸಿದಾಗ ಒಂದು ವಾರದಲ್ಲಿ ಅಧಿಕಾರಿಗಳ ಸಭೆ ಕರೆದು ಸಮಸ್ಯೆ ಬಗೆಹರಿಸುವ ಭರವಸೆ ನೀಡಲಾಗಿತ್ತು. ಆದರೆ 15 ದಿನ ಕಳೆದರೂ ಯಾವುದೇ ಕ್ರಮ ಕೈಗೊಳ್ಳದಿರುವುದು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ ಎಂದು ಆರೋಪಿಸಿದರು.

ಮತ್ತೊಮ್ಮೆ ಮನವಿ ಸಲ್ಲಿಸಲಾಗಿದ್ದು, ಒಂದು ವಾರದೊಳಗೆ ರೈತರು ಹಾಗೂ ಸಂಬಂಧಿತ ಅಧಿಕಾರಿಗಳ ಸಭೆ ಕರೆದು ಶಾಶ್ವತ ಪರಿಹಾರ ಕಲ್ಪಿಸದಿದ್ದರೆ ಸಮಗ್ರ ರೈತರು ಸೇರಿ ಲಕ್ಷ್ಮೇಶ್ವರ ಮೂಲಕ ಹಾದು ಹೋಗುವ ಪಾಳಾ–ಬದಾಮಿ ರಾಜ್ಯ ಹೆದ್ದಾರಿಯನ್ನು ತಡೆದು ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಪುರಸಭೆ ವ್ಯವಸ್ಥಾಪಕಿ ಮಂಜುಳಾ ಹೂಗಾರ ಅವರಿಗೆ ರೈತರು ಮನವಿ ಸಲ್ಲಿಸಿದರು. ರೈತ ಮುಖಂಡರಾದ ಸಿದ್ದಣ್ಣ ಹವಳದ, ಯಲ್ಲಪ್ಪ ಗಡೆಪ್ಪನವರ, ಸಿದ್ದು ಚಿಕ್ಕಣ್ಣವರ, ಲೋಹಿತ ಹಳೆಮನಿ, ಮಾಂತೇಶ ಲಿಂಗಶೆಟ್ಟಿ, ಮೌನೇಶ ಗಡೆಪ್ಪನವರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

“ಹಲವು ವರ್ಷಗಳಿಂದ ಫಲವತ್ತಾದ ಭೂಮಿ ಚರಂಡಿ ನೀರಿನಿಂದ ಹಾಳಾಗುತ್ತಿದೆ. ಇನ್ನೂ ನಿರ್ಲಕ್ಷ್ಯ ಮುಂದುವರಿದರೆ ರೈತರು ರಸ್ತೆಗಿಳಿದು ಹೋರಾಟ ನಡೆಸುವುದು ಅನಿವಾರ್ಯ.”

– ಮಂಜುನಾಥ ಮಾಗಡಿ, ರೈತ ಮುಖಂಡ