ಕಾರವಾರ: ಉತ್ತರ ಕನ್ನಡ ಕರಾವಳಿಯಲ್ಲಿ ಎರಡು ತಿಂಗಳ ಮೀನುಗಾರಿಕೆ ನಿಷೇಧ ಶುಕ್ರವಾರದಿಂದ ಅಧಿಕೃತವಾಗಿ ಅಂತ್ಯಗೊಳ್ಳುತ್ತಿದ್ದು, ಹೊಸ ಮೀನುಗಾರಿಕೆ ಋತುವಿಗೆ ಮೀನುಗಾರರು ಭರ್ಜರಿ ಸಿದ್ಧತೆ ನಡೆಸಿದ್ದಾರೆ. ಆದರೆ ಸೀಸನ್ ಆರಂಭಕ್ಕೂ ಮುನ್ನವೇ ಹವಾಮಾನ ಇಲಾಖೆ ನೀಡಿರುವ ಸಮುದ್ರ ಪ್ರಕ್ಷುಬ್ಧದ ಎಚ್ಚರಿಕೆ ಹಾಗೂ ಸಮುದ್ರದಲ್ಲಿನ ಬಿಸಿಗಾಳಿಯ ಪರಿಣಾಮ ಈ ಬಾರಿ ಉತ್ತಮ ಮೀನುಗಾರಿಕೆಯ ನಿರೀಕ್ಷೆಗೆ ದೊಡ್ಡ ಹೊಡೆತ ನೀಡಿದೆ.
ನಿಷೇಧ ಅವಧಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಮೀನುಗಾರರು ಬೋಟುಗಳಿಗೆ ವಿಶೇಷ ಪೂಜೆ ಸಲ್ಲಿಸಿ ಸಮುದ್ರಕ್ಕಿಳಿಯಲು ಸಜ್ಜಾಗಿದ್ದಾರೆ. ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಎಂಜಿನ್, ಬಲೆ ಹಾಗೂ ಇತರ ಉಪಕರಣಗಳನ್ನು ದುರಸ್ತಿ ಮಾಡಿಕೊಂಡಿರುವ ಮೀನುಗಾರರು ಉತ್ತಮ ಆದಾಯದ ನಿರೀಕ್ಷೆಯಲ್ಲಿದ್ದಾರೆ.
ಆದರೆ ಆಗಸ್ಟ್ ಮೊದಲ ವಾರದಲ್ಲೇ ಸಮುದ್ರ ಕ್ಷೋಭೆ ಉಂಟಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿರುವುದು ಆತಂಕ ಹೆಚ್ಚಿಸಿದೆ. ಮತ್ತೊಂದೆಡೆ ಸಮುದ್ರದ ಉಷ್ಣಾಂಶ ಏರಿಕೆ ಮತ್ತು ಬಿಸಿಗಾಳಿಯ ಪರಿಣಾಮ ಈ ಬಾರಿ ಮೀನುಗಳ ಲಭ್ಯತೆ ಗಣನೀಯವಾಗಿ ಕುಸಿಯಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.
ಕಳೆದ ವರ್ಷವೂ ಹವಾಮಾನ ವೈಪರೀತ್ಯದಿಂದ ಮೀನುಗಾರಿಕೆ ಹಲವು ದಿನಗಳ ಕಾಲ ಸಂಪೂರ್ಣ ಸ್ಥಗಿತಗೊಂಡಿತ್ತು. ಬೋಟುಗಳು ಬಂದರಿನಲ್ಲೇ ಲಂಗರು ಹಾಕಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದರಿಂದ ಮೀನುಗಾರರು ಭಾರೀ ನಷ್ಟ ಅನುಭವಿಸಿದ್ದರು. ಇದೇ ಪರಿಸ್ಥಿತಿ ಮತ್ತೊಮ್ಮೆ ಎದುರಾದರೆ ಈ ವರ್ಷದ ಹೂಡಿಕೆ ಮತ್ತು ಆದಾಯ ಎರಡೂ ತೀವ್ರ ಹೊಡೆತ ಅನುಭವಿಸುವ ಸಾಧ್ಯತೆ ಇದೆ.
ಈ ಹಿನ್ನೆಲೆಯಲ್ಲಿ ರೈತರಿಗೆ ಘೋಷಿಸಿದ ರೀತಿಯಲ್ಲೇ ಮತ್ಸೋದ್ಯಮಕ್ಕೂ ಸಾಲಮನ್ನಾ ಅಥವಾ ಕನಿಷ್ಠ ಬಡ್ಡಿ ಮನ್ನಾ ಸೇರಿದಂತೆ ವಿಶೇಷ ಪರಿಹಾರ ಪ್ಯಾಕೇಜ್ ಘೋಷಿಸಬೇಕೆಂದು ಮೀನುಗಾರರು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಎರಡು ತಿಂಗಳ ನಿರೀಕ್ಷೆಯ ಬಳಿಕ ಸಮುದ್ರ ಮತ್ತೆ ಮೀನುಗಾರರಿಗೆ ತೆರೆದುಕೊಳ್ಳುತ್ತಿದ್ದರೂ, ಪ್ರಕೃತಿಯ ವೈಪರೀತ್ಯವೇ ಈ ಬಾರಿಯ ಮೀನುಗಾರಿಕೆ ಋತುವಿನ ಯಶಸ್ಸು ಅಥವಾ ವೈಫಲ್ಯವನ್ನು ನಿರ್ಧರಿಸಲಿದೆ.

