ರಾಮನಗರ: ಸಾರ್ವಜನಿಕರ ಕಣ್ಣುತಪ್ಪಿಸಿ ನಿರ್ಮಾಣ ಹಂತದ ಮನೆಯಲ್ಲೇ ಖೋಟಾ ನೋಟುಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದ ಅಂತರಜಿಲ್ಲಾ ಗ್ಯಾಂಗ್ನ ಜಾಲವನ್ನು ಐಜೂರು ಪೊಲೀಸರು ಭೇದಿಸಿದ್ದಾರೆ. ರಾಮನಗರದ ಶಾಂತಿಲಾಲ್ ಲೇಔಟ್ನ ಕಟ್ಟಡವೊಂದರ ಮೇಲೆ ದಾಳಿ ನಡೆಸಿದ ಪೊಲೀಸರು ಐವರನ್ನು ವಶಕ್ಕೆ ಪಡೆದು, ನಕಲಿ ನೋಟು ತಯಾರಿಕೆಗೆ ಬಳಸುತ್ತಿದ್ದ ಹಲವು ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.
ಶಾಂತಿಲಾಲ್ ಲೇಔಟ್ನಲ್ಲಿ ಸಂತೋಷ್ ಎಂಬುವವರಿಗೆ ಸೇರಿದ ನಿರ್ಮಾಣ ಹಂತದ ಕಟ್ಟಡವನ್ನು ಆರೋಪಿಗಳು ತಮ್ಮ ಅಡ್ಡೆಯನ್ನಾಗಿ ಮಾಡಿಕೊಂಡಿದ್ದರು ಎನ್ನಲಾಗಿದೆ. ಯಾರಿಗೂ ಅನುಮಾನ ಬಾರದಂತೆ ಅಲ್ಲಿಯೇ ನಕಲಿ ನೋಟು ಮುದ್ರಿಸಿ, ಬಳಿಕ ಅವುಗಳನ್ನು ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ವಿಶೇಷ ಕಾಗದದ ಶೀಟ್ಗಳನ್ನು ಹೊರಗಿನಿಂದ ತರಿಸಿಕೊಂಡು, ನಿರ್ದಿಷ್ಟ ರಾಸಾಯನಿಕ ಲೇಪನ ಮಾಡಿ ₹200 ಹಾಗೂ ₹500 ಮುಖಬೆಲೆಯ ನೋಟುಗಳನ್ನು ಅಸಲಿ ನೋಟಿನಂತೆ ಕಾಣುವ ರೀತಿಯಲ್ಲಿ ತಯಾರಿಸಲಾಗುತ್ತಿತ್ತು ಎನ್ನಲಾಗಿದೆ. ಮುದ್ರಣದ ಬಳಿಕ ಶೀಟ್ಗಳನ್ನು ಅಚ್ಚುಕಟ್ಟಾಗಿ ಕತ್ತರಿಸಿ, ಬಂಡಲ್ಗಳಾಗಿ ಪ್ಯಾಕ್ ಮಾಡಿ ಮಾರಾಟ ಮಾಡಲಾಗುತ್ತಿತ್ತು.
ಖಚಿತ ಮಾಹಿತಿ ಆಧರಿಸಿ ಐಜೂರು ಪೊಲೀಸರು ದಿಢೀರ್ ದಾಳಿ ನಡೆಸಿ ದಂಧೆಯನ್ನು ಬಯಲಿಗೆಳೆದಿದ್ದಾರೆ. ಘಟನಾ ಸ್ಥಳಕ್ಕೆ ವಿಧಿವಿಜ್ಞಾನ ಮತ್ತು ಬೆರಳಚ್ಚು ತಜ್ಞರನ್ನು ಒಳಗೊಂಡ SOCO ತಂಡವೂ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ನೋಟು ತಯಾರಿಕೆಗೆ ಬಳಸಿದ್ದ ರಾಸಾಯನಿಕ, ವಿಶೇಷ ಕಾಗದ ಹಾಗೂ ಇತರ ಮಹತ್ವದ ಸಾಕ್ಷ್ಯಗಳನ್ನು ತಂಡ ವಶಕ್ಕೆ ಪಡೆದುಕೊಂಡಿದೆ.
ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕಣಿಯೂರು ಗ್ರಾಮದ ಅಡೆಂಜದಲ್ಲೂ ಇದೇ ಮಾದರಿಯ ಖೋಟಾ ನೋಟು ತಯಾರಿಕಾ ಜಾಲ ಪತ್ತೆಯಾಗಿತ್ತು. ಮಹಮ್ಮದ್ ಇದ್ರೀಸ್ ಎಂಬಾತನ ನೂತನ ಕಟ್ಟಡದಲ್ಲಿ ದಂಧೆ ನಡೆಯುತ್ತಿತ್ತು ಎನ್ನಲಾಗಿದ್ದು, ಮಾಹಿತಿ ಆಧರಿಸಿ ಉಪ್ಪಿನಂಗಡಿ ಪೊಲೀಸರು ಮಧ್ಯರಾತ್ರಿ ದಾಳಿ ನಡೆಸಿ ಏಳು ಆರೋಪಿಗಳನ್ನು ಬಂಧಿಸಿದ್ದರು.
ಆ ಪ್ರಕರಣದಲ್ಲಿ ಸಿರಾಜುದ್ದೀನ್ (34), ಇರ್ಷಾದ್ (31), ಇಬ್ರಾಹಿಂ (60), ಸಲ್ಮಾನ್ ಪಾರೀಸ್ (25), ಶರೀಫ್ (51), ಸಂದೀಪ್ ಪುಂಡಲೀಕ ಶೋಳಂಬಿ (30) ಹಾಗೂ ಮಹಮ್ಮದ್ ನಬಾಸ್ (37) ಬಂಧಿತರಾಗಿದ್ದರು.

