Home Blog Page 4

ಗಣೇಶ ವಿಸರ್ಜನೆಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಮನವಿ

0

ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಭೀಷ್ಮ ಕೆರೆಯಲ್ಲಿ ಚರಂಡಿ ಕೊಳಚೆ ನೀರು ಹಾಗೂ ಹಂದಿ, ನಾಯಿಗಳ ತ್ಯಾಜ್ಯ ಸೇರಿ ನೀರು ಕಲುಷಿತಗೊಂಡಿದ್ದು, ಇಂತಹ ನೀರಿನಲ್ಲಿ ಶ್ರದ್ಧಾಭಕ್ತಿಯಿಂದ ಪೂಜಿಸಿದ ಗಣೇಶ ಮೂರ್ತಿಗಳನ್ನು ವಿಸರ್ಜಿಸುವುದು ಭಕ್ತರ ಭಾವನೆಗಳಿಗೆ ನೋವುಂಟು ಮಾಡುತ್ತಿದೆ. ಹೀಗಾಗಿ ಗಣೇಶ ವಿಸರ್ಜನೆಗೆ ಕೂಡಲೇ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂದು ಸುದರ್ಶನ ಚಕ್ರ ಯುವ ಮಂಡಳ ಗದಗ-ಬೆಟಗೇರಿ ನಗರಸಭೆಗೆ ಮನವಿ ಮಾಡಿದೆ.

ಈ ಕುರಿತು ಸೋಮವಾರ ನಗರಸಭೆ ಪೌರಾಯುಕ್ತರಿಗೆ ಮನವಿ ಸಲ್ಲಿಸಿದ ಮಂಡಳದ ಅಧ್ಯಕ್ಷ ರಾಘವೇಂದ್ರ ಹಬೀಬ ಅವರು, ಗಣೇಶ ವಿಸರ್ಜನೆಗೆ ಇನ್ನೂ ಸಾಕಷ್ಟು ಕಾಲಾವಕಾಶವಿರುವುದರಿಂದ ಕೂಡಲೇ ಸೂಕ್ತ ವ್ಯವಸ್ಥೆ ಕೈಗೊಳ್ಳುವಂತೆ ಒತ್ತಾಯಿಸಿದರು.

ಗದಗ ನಗರದಲ್ಲಿ ಹಲವು ವರ್ಷಗಳಿಂದ ಭೀಷ್ಮ ಕೆರೆಯಲ್ಲಿ ಗಣೇಶ ಮೂರ್ತಿಗಳ ವಿಸರ್ಜನೆ ಮಾಡುವ ಪದ್ಧತಿ ನಡೆದುಕೊಂಡು ಬಂದಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ನಗರದ ಚರಂಡಿ ನೀರು ಹಾಗೂ ಹಂದಿಗಳ ತ್ಯಾಜ್ಯ ನೇರವಾಗಿ ಕೆರೆಗೆ ಸೇರುತ್ತಿದ್ದು, ಕೆರೆಯ ನೀರು ಕಲುಷಿತಗೊಂಡಿದೆ. ಇದರಿಂದ ಕೆರೆಯ ಪಾವಿತ್ರ್ಯವೂ ಹಾಳಾಗುತ್ತಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಭಕ್ತರು ಐದು, ಒಂಬತ್ತು, ಹನ್ನೊಂದು, ಇಪ್ಪತ್ತೊಂದು ದಿನಗಳ ಕಾಲ ಗಣೇಶ ಮೂರ್ತಿಗಳನ್ನು ಅತ್ಯಂತ ಶ್ರದ್ಧಾಭಕ್ತಿಯಿಂದ ಪೂಜಿಸಿ, ಕೊನೆಗೆ ಕೊಳಕು ಹಾಗೂ ದುರ್ವಾಸನೆಯ ನೀರಿನಲ್ಲಿ ವಿಸರ್ಜಿಸುವ ಪರಿಸ್ಥಿತಿ ನಿರ್ಮಾಣವಾಗಿರುವುದು ನೋವುಂಟು ಮಾಡುವ ಸಂಗತಿಯಾಗಿದೆ. ಆದ್ದರಿಂದ ಭಕ್ತರ ಭಾವನೆಗಳಿಗೆ ಬೆಲೆ ನೀಡಿ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿದ್ದಾರೆ.

ಕೃತಕ ಹೊಂಡ ನಿರ್ಮಿಸಲು ಆಗ್ರಹ

ಭೀಷ್ಮ ಕೆರೆಯ ಪಕ್ಕದಲ್ಲಿಯೇ ಸುಮಾರು 60×100 ಅಡಿ ಅಳತೆಯ ತಾತ್ಕಾಲಿಕ ಕೃತಕ ಹೊಂಡ ನಿರ್ಮಿಸಿ, ಅದರಲ್ಲಿ ಶುದ್ಧ ನೀರು ತುಂಬಿಸುವ ವ್ಯವಸ್ಥೆ ಮಾಡಬೇಕು. ಇದರಿಂದ ಭಕ್ತರು ಯಾವುದೇ ಅಳುಕಿಲ್ಲದೆ ಶ್ರದ್ಧಾಭಕ್ತಿಯಿಂದ ಗಣೇಶ ಮೂರ್ತಿಗಳನ್ನು ವಿಸರ್ಜಿಸಲು ಅನುಕೂಲವಾಗಲಿದೆ. ಗಣೇಶ ಹಬ್ಬ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಹೊಂಡ ನಿರ್ಮಾಣಕ್ಕೆ ಕೂಡಲೇ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮಂಡಳದ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.

ಮನವಿ ಸಲ್ಲಿಸುವ ಸಂದರ್ಭದಲ್ಲಿ ರಾಘವೇಂದ್ರ ಹಬೀಬ, ಮಾರುತಿ ದಹಿಂಡೆ, ವಿಜಯ ಬನಹಟ್ಟಿ, ರಾಜು ನಾಯ್ಕರ್, ವಿಜಯ ಸೋಳಂಕಿ, ರತ್ನಾ ಕುರುಗೋಡ, ಆಕಾಶ್ ಗುಜ್ಜರ, ಸಾಗರ ಮಡಿವಾಳರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಶೈಕ್ಷಣಿಕ ಪ್ರಗತಿಗೆ ಲಿಂಗರಾಜ ದೇಸಾಯಿ ಅವರ ದೂರದೃಷ್ಟಿಯೇ ಪ್ರೇರಣೆ: ಜ. ಅಭಿನವ ಬೂದಿಶ್ವರ ಮಹಾಸ್ವಾಮಿಗಳು

0

ವಿಜಯಸಾಕ್ಷಿ ಸುದ್ದಿ, ಗದಗ: ಲಿಂಗಾಯತ ಸಮಾಜದ ಶೈಕ್ಷಣಿಕ ಪ್ರಗತಿಗೆ ತ್ಯಾಗವೀರ ಶ್ರೀ ಶಿರಸಂಗಿ ಲಿಂಗರಾಜ ದೇಸಾಯಿ ಅವರ ದೂರದೃಷ್ಟಿ, ತ್ಯಾಗ ಹಾಗೂ ಸೇವಾ ಮನೋಭಾವವೇ ಪ್ರಮುಖ ಪ್ರೇರಣೆಯಾಗಿದೆ. ಸಮಾಜದ ಭವಿಷ್ಯವನ್ನು ದೂರದೃಷ್ಟಿಯಿಂದ ಕಂಡು ಶಿಕ್ಷಣಕ್ಕೆ ಅವರು ನೀಡಿದ ಮಹತ್ವದಿಂದಾಗಿ ಇಂದು ಲಿಂಗಾಯತ ಸಮಾಜದವರು ಶಿಕ್ಷಣ ಕ್ಷೇತ್ರದಲ್ಲಿ ಉನ್ನತ ಸಾಧನೆ ಮಾಡಲು ಸಾಧ್ಯವಾಗಿದೆ ಎಂದು ಹೊಸಳ್ಳಿಯ ಪೂಜ್ಯ ಜ. ಅಭಿನವ ಬೂದಿಶ್ವರ ಮಹಾಸ್ವಾಮಿಗಳು ಹೇಳಿದರು.

ನಗರದ ಕುಡುವಕ್ಕಲಿಗರ ಭವನದಲ್ಲಿ ಭಾನುವಾರ ನಡೆದ ಅಖಿಲ ಕರ್ನಾಟಕ ಲಿಂಗಾಯತ ಕುಡುವಕ್ಕಲಿಗರ ಸಂಘದ 14ನೇ ವಾರ್ಷಿಕ ಮಹಾಸಭೆಯಲ್ಲಿ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ತ್ಯಾಗವೀರ ಲಿಂಗರಾಜ ದೇಸಾಯಿ ಅವರ 120ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಸ್ವಾಮೀಜಿ, ಸಮಸ್ತ ಲಿಂಗಾಯತ ಸಮಾಜದ ಅಭಿವೃದ್ಧಿಗೆ ಲಿಂಗರಾಜ ದೇಸಾಯಿ ನೀಡಿದ ಕೊಡುಗೆ ಅಪಾರ. ಶಿಕ್ಷಣ, ಸಮಾಜಸೇವೆ ಹಾಗೂ ರೈತರ ಹಿತಕ್ಕಾಗಿ ಅವರು ಕೈಗೊಂಡ ಕಾರ್ಯಗಳು ಅವರ ಮಹಾನ್ ತ್ಯಾಗ ಮತ್ತು ಸಮಾಜಮುಖಿ ಚಿಂತನೆಗೆ ಸಾಕ್ಷಿಯಾಗಿವೆ ಎಂದರು.

ಲಿಂಗರಾಜ ದೇಸಾಯಿ ಅವರ ದೂರದೃಷ್ಟಿ ಹಾಗೂ ಸೇವಾ ಮನೋಭಾವವನ್ನು ಇಂದಿನ ಪೀಳಿಗೆ ಆದರ್ಶವಾಗಿಸಿಕೊಂಡು ಸಮಾಜದ ಶೈಕ್ಷಣಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಕರೆ ನೀಡಿದರು.

ಸಂಘದ ಕೋಶಾಧ್ಯಕ್ಷ ಎ.ಎಸ್. ಪಾಟೀಲ ಮಾತನಾಡಿ, ಲಿಂಗರಾಜ ದೇಸಾಯಿ ಅವರು ಕಾಶಿಯಲ್ಲಿ ಅಧ್ಯಯನ ಪೀಠ ಸ್ಥಾಪಿಸುವಲ್ಲಿ ವಹಿಸಿದ ಪಾತ್ರ ಹಾಗೂ ಬರಗಾಲದ ಸಂದರ್ಭದಲ್ಲಿ ಕೆರೆ-ಕಟ್ಟೆಗಳನ್ನು ನಿರ್ಮಿಸಿ ರೈತರಿಗೆ ನೆರವಾದ ಸೇವೆಯನ್ನು ಸ್ಮರಿಸಿದರು.

ಸಂಘದ ರಾಜ್ಯಾಧ್ಯಕ್ಷ ಶಿವಕುಮಾರ್ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಸಾಧಕರು, ಇಬ್ಬರು ಮಾಜಿ ಸೈನಿಕರು, ಶ್ರೇಷ್ಠ ರೈತರು, ಗೌರವ ಡಾಕ್ಟರೇಟ್ ಪದವಿ ಪಡೆದವರು ಹಾಗೂ ಪರ್ವತಾರೋಹಿಯನ್ನು ಸನ್ಮಾನಿಸಲಾಯಿತು.

ಕುಡುವಕ್ಕಲಿಗರ ಭವನದ ನಿರ್ಮಾಣಕ್ಕೆ ನೆರವಾಗುವ ಉದ್ದೇಶದಿಂದ ಹಮ್ಮಿಕೊಂಡಿದ್ದ ಬಂಪರ್ ಲಾಟರಿ ಯೋಜನೆಯ ಡ್ರಾ ನೆರವೇರಿಸಲಾಯಿತು. ಸಂಘದ ಕಾರ್ಯದರ್ಶಿ ಶರಣಪ್ಪ ದಿಡ್ಡಿಮನಿ ವಾರ್ಷಿಕ ವರದಿ ಹಾಗೂ ಆಯವ್ಯಯ ಪತ್ರಿಕೆ ಮಂಡಿಸಿದರು. ಸಭೆಯಲ್ಲಿ ಚರ್ಚಿಸಿ ಅದನ್ನು ಅನುಮೋದಿಸಲಾಯಿತು.

ಸಮಾಜದ ಹಿರಿಯರಾದ ಕಲ್ಲನಗೌಡ್ರ, ಈರಪ್ಪಣ್ಣ ಬಿಸನಹಳ್ಳಿ, ವಿ.ಜಿ. ಕನಾಜ, ಸಿ.ಎನ್. ಜನಯಿ ಹಾಗೂ ವಿ.ಕೆ. ಬಳಗೇರ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು. ಯಲ್ಲಪ್ಪಗೌಡ ಸಂಕನಗೌಡ ಪ್ರಾರ್ಥಿಸಿದರು. ಪ್ರಶಾಂತ ಕನಾಜ ನಿರೂಪಿಸಿದರು.

ಮಾಧ್ಯಮ ಮಿತ್ರರ ಕ್ರೀಡಾಸಕ್ತಿ ಉತ್ತಮ ಬೆಳವಣಿಗೆ: ಎಚ್.ಕೆ.ಪಾಟೀಲ

0

ವಿಜಯಸಾಕ್ಷಿ ಸುದ್ದಿ, ಗದಗ: ಮಾಧ್ಯಮ ಕ್ಷೇತ್ರದವರು ಕ್ರಿಕೆಟ್ ಲೀಗ್‌ನಲ್ಲಿ ಉತ್ಸಾಹದಿಂದ ಭಾಗವಹಿಸಿರುವುದು ಉತ್ತಮ ಬೆಳವಣಿಗೆಯಾಗಿದೆ. ಕ್ರೀಡೆಯಲ್ಲಿ ತೊಡಗಿಸಿಕೊಂಡಾಗ ವಯಸ್ಸಿನ ಅಂತರವೇ ಕಾಣಿಸುವುದಿಲ್ಲ. ಕ್ರೀಡೆಯಿಂದ ಉತ್ಸಾಹ, ಹುರುಪು ಹೆಚ್ಚುತ್ತದೆ ಎಂದು ಮಾಜಿ ಸಚಿವ, ಶಾಸಕ ಎಚ್.ಕೆ. ಪಾಟೀಲ ಹೇಳಿದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಗದಗ ಜಿಲ್ಲಾ ಘಟಕದ ವತಿಯಿಂದ ನಗರದ ವ್ಹಿಡಿಎಸ್ ಮೈದಾನದಲ್ಲಿ ಆಯೋಜಿಸಿದ್ದ ಗದಗ ಮೀಡಿಯಾ ಕ್ರಿಕೆಟ್ ಲೀಗ್‌ನ ಫೈನಲ್ ಪಂದ್ಯಕ್ಕೆ ಟಾಸ್ ಮಾಡುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.

ಕ್ರಿಕೆಟ್ ಇತ್ತೀಚೆಗೆ ಹೆಚ್ಚು ಜನಪ್ರಿಯವಾಗುತ್ತಿದೆ. ಆಟಗಾರರು ಸಮವಸ್ತ್ರ ಧರಿಸಿ ಮೈದಾನಕ್ಕಿಳಿಯುವುದು ಆಟಗಾರರಿಗಷ್ಟೇ ಅಲ್ಲದೆ ಅವರ ಮಕ್ಕಳು ಹಾಗೂ ಮೊಮ್ಮಕ್ಕಳಿಗೂ ಸಂತಸ ನೀಡುತ್ತದೆ. ಕ್ರೀಡೆ ಮನರಂಜನೆಯ ಜೊತೆಗೆ ಆರೋಗ್ಯಕರ ಚಟುವಟಿಕೆಯೂ ಆಗಿದೆ. ಕ್ರೀಡೆಯ ಮೂಲಕ ಇನ್ನಷ್ಟು ಎತ್ತರಕ್ಕೆ ಬೆಳೆಯಲು ಎಲ್ಲರಿಗೂ ಅವಕಾಶವಿದೆ ಎಂದರು.

ಕ್ರಿಕೆಟ್ ಲೀಗ್ ಆಯೋಜಿಸಲು ಶ್ರಮಿಸಿದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ರಾಜು ಹೆಬ್ಬಳ್ಳಿ ಹಾಗೂ ಪದಾಧಿಕಾರಿಗಳನ್ನು ಅಭಿನಂದಿಸಿದರು.

ಕಾನಿಪ ಸಂಘದ ಜಿಲ್ಲಾಧ್ಯಕ್ಷ ರಾಜು ಹೆಬ್ಬಳ್ಳಿ ಮಾತನಾಡಿ, ಜಿಲ್ಲೆಯ ಕಾರ್ಯನಿರತ ಪತ್ರಕರ್ತರಿಗಾಗಿ ಜಿಲ್ಲಾ ಸಂಘದ ವತಿಯಿಂದ ಇದೇ ಮೊದಲ ಬಾರಿಗೆ ಕ್ರಿಕೆಟ್ ಲೀಗ್ ಆಯೋಜಿಸಲಾಗಿದೆ. ಲೀಗ್‌ನ ವಿಜೇತ ತಂಡಕ್ಕೆ ₹೫,೫೫೫ ನಗದು ಹಾಗೂ ಟ್ರೋಫಿ, ರನ್ನರ್‌ಅಪ್ ತಂಡಕ್ಕೆ ₹೩,೩೩೩ ನಗದು ಹಾಗೂ ಟ್ರೋಫಿ ನೀಡಲಾಗುವುದು ಎಂದರು.

ನಾಲ್ಕೂ ತಂಡಗಳ ಮಾಲೀಕರು, ಸಂಘದ ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರ ಸಹಕಾರದಿಂದ ಕ್ರಿಕೆಟ್ ಲೀಗ್ ಯಶಸ್ವಿಯಾಗಿ ಆಯೋಜಿಸಲಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರಡಗಿ, ಜಿಲ್ಲಾ ವಾರ್ತಾಧಿಕಾರಿ ವಸಂತ ಮಡ್ಲೂರ, ರವಿಕಾಂತ ಅಂಗಡಿ, ದೇವಪ್ಪ ಲಿಂಗದಾಳ, ಕಾನಿಪ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರಣು ದೊಡ್ಡೂರ, ರಾಜ್ಯ ಕಾರ್ಯಕಾರಿಣಿ ಸದಸ್ಯ ಅರುಣಕುಮಾರ ಹಿರೇಮಠ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ ಬಬರ್ಚಿ, ಅಶೋಕ ಮಂದಾಲಿ, ಸಿದ್ದು ಪಾಟೀಲ, ತಂಡಗಳ ಮಾಲೀಕರಾದ ಜಗದೀಶ್ ಎಸ್.ಪಿ., ಅಜಿತ್ ಹೊಂಬಾಳಿ, ಎಚ್.ಎಂ. ಶರೀಫನವರ್, ಆನಂದ ಸಾಲಿಗ್ರಾಮ, ಆನಂದಯ್ಯ ವಿರಕ್ತಮಠ, ಅನಂತ ಕಾರ್ಕಳ, ಟಿ.ಎನ್. ಬಾಂಡಗೆ, ಸುನಿಲ್ ತೆಂಬದಮನಿ, ಅನಿಲ್ ತೆಂಬದಮನಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಜಿಲ್ಲೆಯ ಕಾರ್ಯನಿರತ ಪತ್ರಕರ್ತರಿಗಾಗಿ ಇದೇ ಮೊದಲ ಬಾರಿಗೆ ಕ್ರಿಕೆಟ್ ಲೀಗ್ ಆಯೋಜಿಸಲಾಗಿದೆ. ಎಲ್ಲ ತಂಡಗಳ ಮಾಲೀಕರು, ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರ ಸಹಕಾರದಿಂದ ಲೀಗ್ ಯಶಸ್ವಿಯಾಗಿದೆ.

— ರಾಜು ಎಂ. ಹೆಬ್ಬಳ್ಳಿ, ಜಿಲ್ಲಾಧ್ಯಕ್ಷ, ಕಾನಿಪ ಸಂಘ, ಗದಗ

ಮೈದಾನದಲ್ಲಿ ಪತ್ರಕರ್ತರು ತೋರಿಸುವ ಕ್ರೀಡಾ ಮನೋಭಾವ ವೃತ್ತಿಯಲ್ಲೂ ಕಾಣಿಸಲಿ. ಸಮಾಜವನ್ನು ತಿದ್ದುವ ಬಹುದೊಡ್ಡ ಶಕ್ತಿಯಾಗಿರುವ ಮಾಧ್ಯಮ ಕ್ಷೇತ್ರದವರು ಕ್ರೀಡೆಯ ಮೂಲಕ ಇನ್ನಷ್ಟು ಉತ್ಸಾಹ ಮತ್ತು ಹುರುಪು ಪಡೆದುಕೊಳ್ಳಲಿ.

— ಎಚ್.ಕೆ. ಪಾಟೀಲ, ಶಾಸಕ

ಸಭಾಧ್ಯಕ್ಷ ಜಿ.ಎಸ್. ಪಾಟೀಲರಿಗೆ ಸನ್ಮಾನ

0

ವಿಜಯಸಾಕ್ಷಿ ಸುದ್ದಿ, ತಿಮ್ಮಾಪೂರ: ರೋಣ ಮತಕ್ಷೇತ್ರದ ಶಾಸಕ ಹಾಗೂ ವಿಧಾನಸಭೆ ಸಭಾಧ್ಯಕ್ಷ ಜಿ.ಎಸ್. ಪಾಟೀಲರನ್ನು ತಿಮ್ಮಾಪೂರ ಗ್ರಾಮದ ಮುಖಂಡರು ಭೇಟಿ ಮಾಡಿ ಶಾಲು, ಹೂಗುಚ್ಛ ನೀಡಿ ಸನ್ಮಾನಿಸಿ, ಗ್ರಾಮದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ನೀಡುವಂತೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಗದಗ ಜಿಲ್ಲಾ ಅಧ್ಯಕ್ಷ ಯಲ್ಲಪ್ಪ ಎಚ್. ಬಾಬರಿ ಮಾತನಾಡಿ, ತಿಮ್ಮಾಪೂರ ಕೃಷಿ ಪ್ರಧಾನ ಗ್ರಾಮವಾಗಿದ್ದು, ಮೂಲಸೌಕರ್ಯಗಳ ಕೊರತೆಯಿಂದ ರೈತರು ಹಾಗೂ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ. ಗ್ರಾಮದ ಸಮಗ್ರ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಬೇಕು. ಸಭಾಧ್ಯಕ್ಷರು ವಿಶೇಷ ಮುತುವರ್ಜಿ ವಹಿಸಿ ಅಗತ್ಯ ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಮಾಡಬೇಕು ಎಂದು ಮನವಿ ಮಾಡಿದರು.

ತಿಮ್ಮಾಪೂರ–ಹರ್ಲಾಪೂರ ರಸ್ತೆ ಡಾಂಬರೀಕರಣ, ರೈತ ಸಂಘಕ್ಕೆ ರೈತ ಭವನ ನಿರ್ಮಾಣ, ರೇಣುಕಾದೇವಿ ದೇವಸ್ಥಾನಕ್ಕೆ ಅನುದಾನ, ರೈತರ ಹೊಲದ ದಾರಿಗಳ ಅಭಿವೃದ್ಧಿ, ಗ್ರಾಮದ ಸಿ.ಸಿ. ರಸ್ತೆಗಳ ನಿರ್ಮಾಣ, ಕೊಟುಮಚಗಿ ರಸ್ತೆ ಹಾಗೂ ಕಾಣೆ ಹಳ್ಳಕ್ಕೆ ಮೇಲ್ಸೇತುವೆ, ಹಳ್ಳಿಗುಡಿ–ಸೋಂಪುರ ರಸ್ತೆ ಡಾಂಬರೀಕರಣ, ಸ್ಮಶಾನ ಅಭಿವೃದ್ಧಿ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಅನುದಾನ ನೀಡುವಂತೆ ಕೋರಲಾಯಿತು.

ಸಂಗೊಳ್ಳಿ ರಾಯಣ್ಣ ಪುತ್ಥಳಿ ಬಳಿ ಹಳ್ಳಕ್ಕೆ ಸ್ಲ್ಯಾಬ್ ನಿರ್ಮಾಣ ಹಾಗೂ ಅಪೂರ್ಣಗೊಂಡಿರುವ ಚೌಕಿ ಬಸವೇಶ್ವರ, ಕನಕ ಮತ್ತು ಮಾರುತೇಶ್ವರ ಸಮುದಾಯ ಭವನಗಳ ಕಾಮಗಾರಿ ಪೂರ್ಣಗೊಳಿಸಲು ಅಗತ್ಯ ಅನುದಾನ ನೀಡುವಂತೆಯೂ ಮನವಿ ಮಾಡಲಾಯಿತು.

ಮನವಿ ಸ್ವೀಕರಿಸಿದ ಜಿ.ಎಸ್. ಪಾಟೀಲರು, ತಿಮ್ಮಾಪೂರ ಗ್ರಾಮದ ಅಭಿವೃದ್ಧಿಗೆ ಅಗತ್ಯವಿರುವ ಕಾಮಗಾರಿಗಳಿಗೆ ಹಂತ ಹಂತವಾಗಿ ಅನುದಾನ ಒದಗಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಗ್ರಾಮದ ಹಿರಿಯರಾದ ಬಾಳಪ್ಪ ಗಂಗರಾತ್ರಿ, ಶರಣಪ್ಪ ಜೋಗಿನ, ಶಿವಕುಮಾರ ಯತ್ನಟ್ಟಿ, ಭೀಮಪ್ಪ ರಾಮಜಿ, ರಾಜಾಸಾಬ್ ನಧಾಪ, ಹನುಮಂತ ರಾಮಜಿ, ರಫೀಕಸಾಬ ನಧಾಪ, ಕಪ್ಪತ್ತಪ್ಪ ಸೋಂಪೂರ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

ಮೊಳಕೆಯಲ್ಲೇ ಕಮರುತ್ತಿರುವ ಈರುಳ್ಳಿ–ಮೆಣಸಿನಕಾಯಿ ಬೆಳೆ

0

ವಿಜಯಸಾಕ್ಷಿ ಸುದ್ದಿ, ಗದಗ: ಜಿಲ್ಲೆಯಲ್ಲಿ ಮಳೆ ಕೊರತೆಯಿಂದ ಭೂಮಿಯಲ್ಲಿ ತೇವಾಂಶದ ಕೊರತೆ ಉಂಟಾಗಿ ತಿಮ್ಮಾಪೂರ, ಹರ್ಲಾಪೂರ ಸೇರಿದಂತೆ ವಿವಿಧ ಭಾಗಗಳಲ್ಲಿ ಈರುಳ್ಳಿ ಹಾಗೂ ಮೆಣಸಿನಕಾಯಿ ಬೆಳೆಗಳು ‘ಮುಟುಗಿ’ ರೋಗಕ್ಕೆ ತುತ್ತಾಗುತ್ತಿವೆ. ಮೊಳಕೆ ಹಂತದಲ್ಲೇ ಬೆಳೆಗಳು ಭೂಮಿಯಿಂದ ಮೇಲೆ ಬರಲಾಗದೆ ಕಮರಿ, ಕೊಳೆತು ಹೋಗುತ್ತಿದ್ದು ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಬಿತ್ತನೆಗಾಗಿ ಸಾವಿರಾರು ರೂಪಾಯಿ ಮೌಲ್ಯದ ಬೀಜ, ಗೊಬ್ಬರ ಹಾಗೂ ಕೂಲಿ ವೆಚ್ಚ ಮಾಡಿದ ರೈತರಿಗೆ ಬೆಳೆ ಕೈಕೊಟ್ಟಿರುವುದರಿಂದ ಆರ್ಥಿಕ ಹೊರೆ ಮತ್ತಷ್ಟು ಹೆಚ್ಚಾಗಿದೆ. ಸಾಲ ಮಾಡಿ ಬಿತ್ತನೆ ಮಾಡಿರುವ ರೈತರು ಇದೀಗ ಸಾಲ ತೀರಿಸುವುದು ಹೇಗೆ ಎಂಬ ಚಿಂತೆಯಲ್ಲಿದ್ದಾರೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಗದಗ ಜಿಲ್ಲಾ ಅಧ್ಯಕ್ಷ ಯಲ್ಲಪ್ಪ ಎಚ್. ಬಾಬರಿ ತಿಳಿಸಿದ್ದಾರೆ.

ಜಿಲ್ಲಾಡಳಿತ, ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು ತಕ್ಷಣವೇ ರೈತರ ಹೊಲಗಳಿಗೆ ಭೇಟಿ ನೀಡಿ ಬೆಳೆಗಳಿಗೆ ತಗುಲಿರುವ ರೋಗದ ಕುರಿತು ತಜ್ಞರಿಂದ ಅಧ್ಯಯನ ನಡೆಸಬೇಕು. ಬೆಳೆ ನಷ್ಟದ ಸಮೀಕ್ಷೆ ಕೈಗೊಂಡು ರೈತರಿಗೆ ಸೂಕ್ತ ಪರಿಹಾರ ಹಾಗೂ ಬೆಳೆ ವಿಮೆ ದೊರಕಿಸಲು ಕ್ರಮ ಕೈಗೊಳ್ಳಬೇಕು ಎಂದು ರೈತ ಸಂಘ ಒತ್ತಾಯಿಸಿದೆ.

ಮುಂದಿನ ಬಿತ್ತನೆಗೆ ಗುಣಮಟ್ಟದ ಬೀಜ, ಅಗತ್ಯ ಔಷಧ ಹಾಗೂ ತಾಂತ್ರಿಕ ಮಾರ್ಗದರ್ಶನ ಒದಗಿಸಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಾಗೂ ಜಿಲ್ಲಾಡಳಿತ ರೈತರ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಯಲ್ಲಪ್ಪ ಎಚ್. ಬಾಬರಿ ಎಚ್ಚರಿಸಿದ್ದಾರೆ.

ಭೂಮಿಯಲ್ಲಿ ತೇವಾಂಶ ಇಲ್ಲದೆ ಈರುಳ್ಳಿ ಮತ್ತು ಮೆಣಸಿನಕಾಯಿ ಬೆಳೆಗಳು ಮುಟುಗಿ ರೋಗಕ್ಕೆ ತುತ್ತಾಗಿ, ಮೇಲೆ ಬರಲಾಗದೆ ಭೂಮಿಯಲ್ಲೇ ಕಮರಿ ಹೋಗುತ್ತಿವೆ. ರೈತರ ಕಣ್ಣೆದುರೇ ಬೆಳೆ ಸಾಯುತ್ತಿದೆ. ಬಿತ್ತನೆಗಾಗಿ ಮಾಡಿದ ಸಾಲ ಹೇಗೆ ತೀರಿಸಬೇಕು ಎಂಬ ಚಿಂತೆಯಲ್ಲಿ ರೈತರಿದ್ದಾರೆ. ಸರ್ಕಾರ ತಕ್ಷಣ ಮಧ್ಯಪ್ರವೇಶಿಸಿ ತಜ್ಞರ ತಂಡದಿಂದ ಸಮೀಕ್ಷೆ ನಡೆಸಿ ಪರಿಹಾರ ಒದಗಿಸಬೇಕು.

— ಯಲ್ಲಪ್ಪ ಎಚ್. ಬಾಬರಿ, ಜಿಲ್ಲಾಧ್ಯಕ್ಷ, ಕರ್ನಾಟಕ ರಾಜ್ಯ ರೈತ ಸಂಘ

Urvashi Theatre: ಬೆಂಗಳೂರಿನ ಐತಿಹಾಸಿಕ ‘ಊರ್ವಶಿ’ ಚಿತ್ರಮಂದಿರ ನೆಲಸಮಕ್ಕೆ ಹೈಕೋರ್ಟ್ ತಡೆ!

0

ಬೆಂಗಳೂರು: ಬೆಂಗಳೂರಿನ ಪ್ರಸಿದ್ಧ ಹಾಗೂ ಐತಿಹಾಸಿಕ ‘ಊರ್ವಶಿ’ ಚಿತ್ರಮಂದಿರದ ನೆಲಸಮ ಪ್ರಕ್ರಿಯೆಗೆ ಕರ್ನಾಟಕ ಹೈಕೋರ್ಟ್ ತಾತ್ಕಾಲಿಕ ತಡೆಯಾಜ್ಞೆ ನೀಡಿದೆ.

ಚಿತ್ರಮಂದಿರದ ಕಟ್ಟಡದಲ್ಲಿರುವ ಯಾವುದೇ ವಸ್ತುಗಳನ್ನು ತೆರವುಗೊಳಿಸದಂತೆ ಭೂಮಾಲೀಕರಿಗೆ ಹೈಕೋರ್ಟ್‌ನ ಏಕಸದಸ್ಯ ಪೀಠ ಸ್ಪಷ್ಟ ನಿರ್ದೇಶನ ನೀಡಿದೆ.

ಸೋಮವಾರ ಊರ್ವಶಿ ಚಿತ್ರಮಂದಿರವನ್ನು ನೆಲಸಮಗೊಳಿಸುವ ಪ್ರಕ್ರಿಯೆ ಆರಂಭವಾಗಿತ್ತು. ಇದರಿಂದ ಬೆಂಗಳೂರಿನ ಸಿನಿಪ್ರಿಯರಲ್ಲಿ ಬೇಸರ ಮೂಡಿತ್ತು. ಇದೀಗ ಹೈಕೋರ್ಟ್ ಮಧ್ಯಂತರ ತಡೆ ನೀಡಿರುವುದು ಚಿತ್ರಪ್ರೇಮಿಗಳಿಗೆ ಕೊಂಚ ನೆಮ್ಮದಿ ತಂದಿದೆ.

ಸೆ.30ರವರೆಗೆ ಕಾಲಾವಕಾಶ:

ಚಿತ್ರಮಂದಿರದ ಜಾಗವನ್ನು ಖಾಲಿ ಮಾಡುವಂತೆ ಸುಪ್ರೀಂ ಕೋರ್ಟ್ ಸೆಪ್ಟೆಂಬರ್ 30ರವರೆಗೆ ಕಾಲಾವಕಾಶ ನೀಡಿದೆ. ಆದರೆ, ಈ ಗಡುವಿಗೂ ಮುನ್ನವೇ ಭೂಮಾಲೀಕರು ಜಾಗವನ್ನು ವಶಕ್ಕೆ ಪಡೆಯಲು ಮುಂದಾಗಿದ್ದಾರೆ ಎಂದು ಊರ್ವಶಿ ಚಿತ್ರಮಂದಿರದ ಆಡಳಿತ ಮಂಡಳಿ ಆರೋಪಿಸಿದೆ.

ಈ ವೇಳೆ ಚಿತ್ರಮಂದಿರದಲ್ಲಿದ್ದ ಬೆಲೆಬಾಳುವ ಪ್ರೊಜೆಕ್ಟರ್, ಸ್ಕ್ರೀನ್ ಹಾಗೂ ಸೀಟುಗಳಿಗೆ ಹಾನಿಯಾಗಿದೆ ಎಂದು ಚಿತ್ರಮಂದಿರದ ಪರ ಹಿರಿಯ ವಕೀಲ ಶ್ಯಾಮ್‌ಸುಂದರ್ ಹೈಕೋರ್ಟ್‌ನಲ್ಲಿ ವಾದ ಮಂಡಿಸಿದರು.

ಭೂಮಾಲೀಕರ ಪರ ವಕೀಲರಿಂದ ಆಕ್ಷೇಪ:

ಇದಕ್ಕೆ ಪ್ರತಿಯಾಗಿ ಭೂಮಾಲೀಕರ ಪರ ವಕೀಲರು ವಾದ ಮಂಡಿಸಿ, ಸುಪ್ರೀಂ ಕೋರ್ಟ್ ಸೂಚಿಸಿರುವ ನಿಯಮಗಳಂತೆ ಚಿತ್ರಮಂದಿರದ ಆಡಳಿತ ಮಂಡಳಿ ಅಗತ್ಯ ಪ್ರಮಾಣಪತ್ರವನ್ನು ಸಲ್ಲಿಸಿಲ್ಲ. ಹೀಗಾಗಿ ಈ ಹಂತದಲ್ಲಿ ತಡೆಯಾಜ್ಞೆ ನೀಡಬಾರದು ಎಂದು ಪೀಠಕ್ಕೆ ಮನವಿ ಮಾಡಿದರು.

ಎರಡೂ ಕಡೆಯ ವಾದಗಳನ್ನು ಆಲಿಸಿದ ಹೈಕೋರ್ಟ್, ಸುಪ್ರೀಂ ಕೋರ್ಟ್ ಸೂಚನೆಯಂತೆ ಅಗತ್ಯ ಪ್ರಮಾಣಪತ್ರವನ್ನು ತಕ್ಷಣ ಸಲ್ಲಿಸುವಂತೆ ಊರ್ವಶಿ ಚಿತ್ರಮಂದಿರದವರಿಗೆ ಸೂಚಿಸಿದೆ.

ನಾಳೆ ಮತ್ತೆ ವಿಚಾರಣೆ:

ಪ್ರಕರಣದ ಮುಂದಿನ ವಿಚಾರಣೆಯನ್ನು ಆಗಸ್ಟ್ 25ಕ್ಕೆ ಮುಂದೂಡಲಾಗಿದೆ. ಅಲ್ಲಿಯವರೆಗೆ ಚಿತ್ರಮಂದಿರವನ್ನು ನೆಲಸಮಗೊಳಿಸಬಾರದು. ಕಟ್ಟಡದಲ್ಲಿರುವ ಯಾವುದೇ ವಸ್ತು ಅಥವಾ ಸಾಮಗ್ರಿಗಳನ್ನು ತೆರವುಗೊಳಿಸಬಾರದು ಎಂದು ಹೈಕೋರ್ಟ್ ಆದೇಶಿಸಿದೆ.

ಬೆಂಗಳೂರಿನ ಪ್ರಮುಖ ಚಿತ್ರಮಂದಿರಗಳ ಪೈಕಿ ಊರ್ವಶಿ ಕೂಡ ಒಂದಾಗಿತ್ತು. ಸಾವಿರಕ್ಕೂ ಹೆಚ್ಚು ಆಸನಗಳನ್ನು ಹೊಂದಿರುವ ಈ ಚಿತ್ರಮಂದಿರದಲ್ಲಿ 5 ಸಾವಿರಕ್ಕೂ ಅಧಿಕ ಸಿನಿಮಾಗಳು ಪ್ರದರ್ಶನಗೊಂಡಿವೆ ಎಂದು ತಿಳಿದುಬಂದಿದೆ.

ಹಲವು ಸಿನಿಮಾಗಳು ಇಲ್ಲಿ ಬ್ಲಾಕ್‌ಬಸ್ಟರ್‌ ಆಗಿ ದಾಖಲೆ ನಿರ್ಮಿಸಿವೆ. ಬೆಂಗಳೂರಿನ ಸಿನಿಮಾ ಸಂಸ್ಕೃತಿಯೊಂದಿಗೆ ಅವಿನಾಭಾವ ಸಂಬಂಧ ಹೊಂದಿರುವ ಊರ್ವಶಿ ಚಿತ್ರಮಂದಿರದೊಂದಿಗೆ ಹಲವು ತಲೆಮಾರುಗಳ ಸಿನಿಪ್ರಿಯರ ನೆನಪುಗಳು ಬೆಸೆದುಕೊಂಡಿವೆ.

ಹೀಗಾಗಿ ಊರ್ವಶಿ ಚಿತ್ರಮಂದಿರ ನೆಲಸಮ ಪ್ರಕ್ರಿಯೆಗೆ ಹೈಕೋರ್ಟ್ ತಾತ್ಕಾಲಿಕ ತಡೆ ನೀಡಿರುವುದು ಸಿನಿಪ್ರಿಯರಲ್ಲಿ ಸಂತಸ ಮೂಡಿಸಿದೆ.

ಗದಗ ಜಿಲ್ಲೆ ಬರಪೀಡಿತ ಘೋಷಿಸಿ; ರೈತರ ಸಾಲ ಮನ್ನಾ ಮಾಡಿ: ಯಲ್ಲಪ್ಪಗೌಡ ಕರಮಡಿ

0

ವಿಜಯಸಾಕ್ಷಿ ಸುದ್ದಿ, ಡಂಬಳ: ಮಳೆ ಕೊರತೆಯಿಂದ ರೈತರು ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆಯಲ್ಲಿ ಗದಗ ಜಿಲ್ಲೆಯನ್ನು ಬರಪೀಡಿತ ಜಿಲ್ಲೆ ಎಂದು ಘೋಷಿಸಿ, ರೈತರ ಬೆಳೆ ಸಾಲ ಹಾಗೂ ಸ್ತ್ರೀಶಕ್ತಿ ಸಂಘಗಳ ಸಾಲ ಮನ್ನಾ ಮಾಡಬೇಕು ಎಂದು ಅಖಿಲ ಕರ್ನಾಟಕ ರಾಜ್ಯ ಕಿಸಾನ ಜಾಗೃತಿ ಸಂಘದ ಗದಗ ಜಿಲ್ಲಾಧ್ಯಕ್ಷ ಯಲ್ಲಪ್ಪಗೌಡ ಕರಮಡಿ ಆಗ್ರಹಿಸಿದರು.

ಡಂಬಳ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲಾ ಸಹಕಾರ ಬ್ಯಾಂಕ್‌ಗಳಿಂದ ರೈತರಿಗೆ ಬಡ್ಡಿರಹಿತ ಬೆಳೆ ಸಾಲ ಒದಗಿಸಬೇಕು. ರಾಷ್ಟ್ರೀಕೃತ ಹಾಗೂ ಸಹಕಾರ ಬ್ಯಾಂಕ್‌ಗಳಲ್ಲಿರುವ ರೈತರ ಬೆಳೆ ಸಾಲವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.

ಮುಂಗಾರು ಆರಂಭದಲ್ಲಿ ಅಲ್ಪ ಪ್ರಮಾಣದ ಮಳೆಯಾದ ಹಿನ್ನೆಲೆಯಲ್ಲಿ ರೈತರು ಸಾಲ ಮಾಡಿ ಬಿತ್ತನೆ ಕೈಗೊಂಡಿದ್ದರು. ಬಳಿಕ ಮಳೆ ಕೈಕೊಟ್ಟಿದ್ದರಿಂದ ಬೆಳೆಗಳು ಒಣಗಿ ಸಂಪೂರ್ಣ ಹಾನಿಯಾಗಿವೆ. ಬಿತ್ತನೆ ಅವಧಿ ಮುಗಿಯುತ್ತಿದ್ದರೂ ಅಗತ್ಯ ಮಳೆಯಾಗದ ಕಾರಣ ರೈತರು ಜಮೀನು ಹರಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.

ಮಳೆ ಕೊರತೆಯಿಂದ ಬಹುತೇಕ ಕೊಳವೆಬಾವಿಗಳಲ್ಲಿಯೂ ನೀರಿನ ಪ್ರಮಾಣ ಕಡಿಮೆಯಾಗಿದೆ. ಲಭ್ಯವಿರುವ ನೀರಿನಿಂದ ಕೃಷಿ ಮಾಡುವುದು ಕಷ್ಟವಾಗಿದ್ದು, ಡೀಸೆಲ್ ದರ ಹೆಚ್ಚಳದಿಂದ ಟ್ರ್ಯಾಕ್ಟರ್‌ಗಳ ಬಾಡಿಗೆಯೂ ಏರಿಕೆಯಾಗಿದೆ. ಕೃಷಿಗೆ ಅಗತ್ಯವಿರುವ ಬಹುತೇಕ ವಸ್ತುಗಳ ಬೆಲೆ ಹೆಚ್ಚಳದಿಂದ ರೈತರು ಹಾಕಿದ ಬಂಡವಾಳವೂ ವಾಪಸ್ ಪಡೆಯಲಾಗದ ಸ್ಥಿತಿಗೆ ತಲುಪಿದ್ದಾರೆ ಎಂದು ಹೇಳಿದರು.

ರೋಣ ಕ್ಷೇತ್ರದಲ್ಲಿ ಈ ಹಿಂದೆ ಬೆಳೆದಿದ್ದ ಕೆಂಪು ಮೆಣಸಿನಕಾಯಿಗೆ ವಿಮಾ ಸೌಲಭ್ಯ ಘೋಷಣೆಯಾಗಿಲ್ಲ. ರೈತರ ಸಂಕಷ್ಟವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಮುಂಡರಗಿ ತಾಲೂಕು ಸೇರಿದಂತೆ ಇಡೀ ಗದಗ ಜಿಲ್ಲೆಯನ್ನು ಬರಪೀಡಿತ ಎಂದು ಘೋಷಿಸಿ ಬೆಳೆ ನಷ್ಟ ಪರಿಹಾರ ನೀಡಬೇಕು. ಕೃಷಿ ಕಾರ್ಮಿಕರಿಗೆ ಬರ ಪರಿಹಾರ ಕಾಮಗಾರಿಗಳನ್ನು ಒದಗಿಸಬೇಕು ಎಂದು ಆಗ್ರಹಿಸಿದರು.

ರೈತರ ಸಾಲ ಮನ್ನಾ ಹಾಗೂ ಅಗತ್ಯ ಪರಿಹಾರ ಕಲ್ಪಿಸಲು ಸಂಸದರು, ಉಸ್ತುವಾರಿ ಸಚಿವರು ಹಾಗೂ ಶಾಸಕರು ಸರ್ಕಾರದ ಮೇಲೆ ಒತ್ತಡ ತರಬೇಕು ಎಂದು ಯಲ್ಲಪ್ಪಗೌಡ ಕರಮಡಿ ಒತ್ತಾಯಿಸಿದರು.

ನಿಮ್ಮ ಪ್ರೀತಿ–ವಿಶ್ವಾಸವೇ ನನ್ನ ರಾಜಕೀಯ ಶಕ್ತಿ: ಜಿ.ಎಸ್. ಪಾಟೀಲ

0

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ರೋಣ ಮತಕ್ಷೇತ್ರದ ಜನತೆ, ಅದರಲ್ಲೂ ನರೇಗಲ್ಲ ಭಾಗದ ಜನರು ನೀಡಿದ ಪ್ರೀತಿ, ವಿಶ್ವಾಸ ಹಾಗೂ ಆಶೀರ್ವಾದವೇ ನಾನು ವಿಧಾನಸಭೆಯ ಸಭಾಧ್ಯಕ್ಷನಾಗಿ ಆಯ್ಕೆಯಾಗಲು ಕಾರಣ. ನೀವು ಇಟ್ಟಿರುವ ವಿಶ್ವಾಸಕ್ಕೆ ತಕ್ಕಂತೆ ನಡೆದುಕೊಳ್ಳುವುದು ನನ್ನ ಜವಾಬ್ದಾರಿ. ನಿಮ್ಮ ಋಣವನ್ನು ಎಂದಿಗೂ ಮರೆಯುವುದಿಲ್ಲ ಎಂದು ವಿಧಾನಸಭೆ ಸಭಾಧ್ಯಕ್ಷ ಹಾಗೂ ರೋಣ ಶಾಸಕ ಜಿ.ಎಸ್. ಪಾಟೀಲ ಹೇಳಿದರು.

ಸಭಾಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಪ್ರಥಮ ಬಾರಿಗೆ ನರೇಗಲ್ಲ ಪಟ್ಟಣಕ್ಕೆ ಭಾನುವಾರ ಆಗಮಿಸಿದ ಜಿ.ಎಸ್. ಪಾಟೀಲರಿಗೆ ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳು ಹಾಗೂ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಅದ್ದೂರಿ ಸ್ವಾಗತ ಕೋರಿದರು.

ಪಟ್ಟಣದ ದುರ್ಗಾ ಸರ್ಕಲ್‌ನಲ್ಲಿ ತೆರೆದ ವಾಹನದಲ್ಲಿ ಜನರನ್ನುದ್ದೇಶಿಸಿ ಮಾತನಾಡಿದ ಅವರು, ಸಭಾಧ್ಯಕ್ಷ ಸ್ಥಾನ ದೊರೆತಿರುವುದರಿಂದ ಕ್ಷೇತ್ರದ ಜನರಿಂದ ದೂರವಾಗುವುದಿಲ್ಲ. ಜನಪ್ರತಿನಿಧಿಯಾಗಿ ಕ್ಷೇತ್ರದ ಅಭಿವೃದ್ಧಿಗೆ ಸಂಪೂರ್ಣ ಶಕ್ತಿ ವಿನಿಯೋಗಿಸುವುದಾಗಿ ಭರವಸೆ ನೀಡಿದರು.

ರಸ್ತೆ, ಕುಡಿಯುವ ನೀರು, ನೀರಾವರಿ, ಶಿಕ್ಷಣ, ಆರೋಗ್ಯ ಹಾಗೂ ರೈತರ ಸಮಸ್ಯೆಗಳಿಗೆ ಆದ್ಯತೆ ನೀಡಲಾಗುವುದು. ಗ್ರಾಮೀಣ ಪ್ರದೇಶಗಳ ಮೂಲಸೌಕರ್ಯ ಅಭಿವೃದ್ಧಿಗೂ ಹೆಚ್ಚಿನ ಗಮನ ಹರಿಸುವುದಾಗಿ ಹೇಳಿದರು.

ಸಭಾಧ್ಯಕ್ಷ ಸ್ಥಾನ ಪಕ್ಷಾತೀತ ಹಾಗೂ ಸಂವಿಧಾನಾತ್ಮಕ ಜವಾಬ್ದಾರಿಯಾಗಿದೆ. ರಾಜ್ಯದ ಎಲ್ಲ ಶಾಸಕರನ್ನು ಸಮಾನವಾಗಿ ಕಾಣುತ್ತಾ ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸುವುದಾಗಿ ತಿಳಿಸಿದ ಅವರು, ರೈತರು, ಬಡವರು, ದೀನದಲಿತರು, ಅಲ್ಪಸಂಖ್ಯಾತರು ಸೇರಿದಂತೆ ಎಲ್ಲ ವರ್ಗದ ಜನರ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸುವುದು ತಮ್ಮ ಕರ್ತವ್ಯ ಎಂದರು.

ಪಟ್ಟಣಕ್ಕೆ ದೊರೆತ ಅದ್ಧೂರಿ ಸ್ವಾಗತಕ್ಕೆ ಭಾವುಕರಾದ ಪಾಟೀಲ, ಸಾಮಾನ್ಯವಾಗಿ ಬಂದು ಹೋಗೋಣ ಎಂದುಕೊಂಡಿದ್ದೆ. ಆದರೆ ನಿಮ್ಮ ಪ್ರೀತಿ, ಅಭಿಮಾನ ಮತ್ತು ಆತ್ಮೀಯತೆ ನನ್ನನ್ನು ಮತ್ತಷ್ಟು ಭಾವುಕರನ್ನಾಗಿಸಿದೆ. ಇಷ್ಟೊಂದು ಸಂಖ್ಯೆಯಲ್ಲಿ ಸೇರಿ ಸನ್ಮಾನಿಸಿರುವುದು ಜೀವನದ ಮರೆಯಲಾಗದ ಕ್ಷಣ ಎಂದರು.

ಈ ಸಂದರ್ಭದಲ್ಲಿ ಪಾಟೀಲರು ಶ್ರೀ ವೀರಭದ್ರೇಶ್ವರ ಹಾಗೂ ದ್ಯಾಮಮ್ಮ ದೇವಿ ದೇವಸ್ಥಾನಗಳಿಗೆ ಭೇಟಿ ನೀಡಿ ದರ್ಶನ ಪಡೆದರು. ಲಿಂಗೈಕ್ಯ ಗುರು ಅನ್ನದಾನ ಮಹಾಸ್ವಾಮಿಗಳನ್ನು ಸ್ಮರಿಸಿ ಗೌರವ ನಮನ ಸಲ್ಲಿಸಿದರು.

ಸಭಾಧ್ಯಕ್ಷರ ಪ್ರಥಮ ನರೇಗಲ್ಲ ಭೇಟಿ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಪ್ರಮುಖ ರಸ್ತೆಗಳು ಹಾಗೂ ವೃತ್ತಗಳಲ್ಲಿ ಅಭಿನಂದನಾ ಬ್ಯಾನರ್, ಕಟೌಟ್‌ಗಳು ಹಾಗೂ ಫಲಕಗಳು ರಾರಾಜಿಸಿದವು. ಕಾರ್ಯಕರ್ತರು ಜಯಘೋಷ ಮೊಳಗಿಸಿ, ಕ್ರೇನ್ ಮೂಲಕ ಬೃಹತ್ ಹೂಮಾಲೆ ಹಾಕಿ, ಪುಷ್ಪವೃಷ್ಟಿ ಮಾಡಿ ಸ್ವಾಗತಿಸಿದರು. ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಮಹಿಳೆಯರು ಆರತಿ ಬೆಳಗಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಮಿಥುನ ಪಾಟೀಲ, ಡಾ. ಕೆ.ಬಿ. ಧನ್ನೂರ, ಅಕ್ಷಯ ಪಾಟೀಲ, ಎಂ.ಎಸ್. ಧಡೇಸೂರಮಠ, ವಿ.ಬಿ. ಸೋಮನಕಟ್ಟಿಮಠ, ಮೈಲಾರಪ್ಪ ಚಳ್ಳಮರದ, ಎಂ.ಎನ್. ಹುಲಕೋಟಿ, ನಿಂಗನಗೌಡ ಲಕ್ಕನಗೌಡ, ಹನುಮಂತಪ್ಪ ಅಬ್ಬಿಗೇರಿ, ಅಲ್ಲಾಭಕ್ಷ ನದಾಫ್, ಎ.ಎ. ನವಲಗುಂದ, ಸದ್ದಾಂ ನಶೇಖಾನ, ಶೇಖಪ್ಪ ಜುಟ್ಟಲದ, ಶರಣಪ್ಪ ಕುರಿ ಸೇರಿದಂತೆ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

ಸಭಾಧ್ಯಕ್ಷ ಸ್ಥಾನದಿಂದ ಕ್ಷೇತ್ರದ ಅಭಿವೃದ್ಧಿಗೆ ಯಾವುದೇ ಹಿನ್ನಡೆಯಾಗುವುದಿಲ್ಲ. ಬದಲಾಗಿ ರಾಜ್ಯದ ಅತ್ಯುನ್ನತ ಸಾಂವಿಧಾನಿಕ ಸ್ಥಾನಗಳಲ್ಲಿ ಒಂದಾದ ಈ ಜವಾಬ್ದಾರಿಯನ್ನು ಕ್ಷೇತ್ರದ ಅಭಿವೃದ್ಧಿಗೆ ಹೊಸ ಅವಕಾಶವನ್ನಾಗಿ ಬಳಸಿಕೊಳ್ಳುತ್ತೇನೆ.

— ಜಿ.ಎಸ್. ಪಾಟೀಲ, ವಿಧಾನಸಭೆ ಸಭಾಧ್ಯಕ್ಷ

ಅನುದಾನ ಹಂಚಿಕೆಯಲ್ಲಿ ತಾರತಮ್ಯ ಆರೋಪ

0

ವಿಜಯಸಾಕ್ಷಿ ಸುದ್ದಿ, ಗದಗ: ಗದಗ-ಬೆಟಗೇರಿ ಅವಳಿ ನಗರದ ೩೫ ವಾರ್ಡ್‌ಗಳಲ್ಲಿ ಮುಖ್ಯಮಂತ್ರಿ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿ ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂದು ಬಿಜೆಪಿ ಮುಖಂಡ ರಾಘವೇಂದ್ರ ಯಳವತ್ತಿ ಆರೋಪಿಸಿದ್ದಾರೆ.

೨೦೨೫-೨೬ನೇ ಸಾಲಿನ ಯೋಜನೆಯಡಿ ಕಾಂಗ್ರೆಸ್ ಸದಸ್ಯರು ಪ್ರತಿನಿಧಿಸುವ ವಾರ್ಡ್‌ಗಳಿಗೆ ಹೆಚ್ಚಿನ ಅನುದಾನ ನೀಡಿ, ಬಿಜೆಪಿ ಸದಸ್ಯರ ವಾರ್ಡ್‌ಗಳನ್ನು ನಿರ್ಲಕ್ಷಿಸಲಾಗುತ್ತಿದೆ. ಇದರಿಂದ ಬಿಜೆಪಿ ಸದಸ್ಯರು ಹಾಗೂ ಆಯಾ ವಾರ್ಡ್‌ಗಳ ಸಾರ್ವಜನಿಕರಲ್ಲಿ ಅಸಮಾಧಾನ ಮೂಡಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಶಾಲ ಭೌಗೋಳಿಕ ವ್ಯಾಪ್ತಿಯನ್ನು ಹೊಂದಿರುವ ಬೆಟಗೇರಿ ಭಾಗದ ೭ನೇ ವಾರ್ಡ್‌ನಲ್ಲಿ ೧೬ಕ್ಕೂ ಹೆಚ್ಚು ಓಣಿಗಳು, ಐದು ಕೊಳಚೆ ಪ್ರದೇಶಗಳು, ಪಂಚಲಕ್ಷ್ಮೀ ಬಡಾವಣೆ, ರಾಮಕೃಷ್ಣ ಬಡಾವಣೆ ಸೇರಿದಂತೆ ಹೊಸ ತರಕಾರಿ ಮಾರುಕಟ್ಟೆ ಹಾಗೂ ಬೆಟಗೇರಿ ಬಸ್ ನಿಲ್ದಾಣವೂ ಬರುತ್ತವೆ. ಇಂತಹ ವಿಶಾಲ ವಾರ್ಡ್‌ನ ಅಭಿವೃದ್ಧಿಗೆ ಅಗತ್ಯವಾದಷ್ಟು ಆರ್ಥಿಕ ಸಂಪನ್ಮೂಲ ದೊರೆಯುತ್ತಿಲ್ಲ ಎಂದು ಆರೋಪಿಸಿದ್ದಾರೆ.

ಮುಖ್ಯಮಂತ್ರಿ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿ ಕಾಂಗ್ರೆಸ್ ಸದಸ್ಯರ ವಾರ್ಡ್‌ಗಳಿಗೆ ತಲಾ ₹೧ ಕೋಟಿ ಅನುದಾನ ನೀಡಲಾಗುತ್ತಿದ್ದರೆ, ಬಿಜೆಪಿ ಸದಸ್ಯರ ವಾರ್ಡ್‌ಗಳಿಗೆ ₹೫೦ ಲಕ್ಷ ಮಾತ್ರ ನೀಡಲಾಗುತ್ತಿದೆ. ಅಲ್ಲದೆ, ಬಿಜೆಪಿ ಸದಸ್ಯರ ವಾರ್ಡ್‌ಗಳಲ್ಲಿ ಕಾಮಗಾರಿಗಳ ಅಂದಾಜು ಪತ್ರಿಕೆ ಸಿದ್ಧಪಡಿಸುವ ಜವಾಬ್ದಾರಿಯನ್ನೂ ಚುನಾಯಿತ ಬಿಜೆಪಿ ಸದಸ್ಯರಿಗೆ ನೀಡದೆ ಕಾಂಗ್ರೆಸ್ ಮುಖಂಡರಿಗೆ ವಹಿಸಿರುವುದು ಖಂಡನೀಯ ಎಂದು ಯಳವತ್ತಿ ಹೇಳಿದ್ದಾರೆ.

ಈ ಹಿಂದೆಯೂ ವಿವಿಧ ಇಲಾಖೆಗಳ ಅನುದಾನ ಹಂಚಿಕೆ ಸಂದರ್ಭದಲ್ಲಿ ಬಿಜೆಪಿ ಸದಸ್ಯರ ವಾರ್ಡ್‌ಗಳನ್ನು ಕಡೆಗಣಿಸಲಾಗಿದೆ ಎಂದು ಆರೋಪಿಸಿರುವ ಅವರು, ನಗರಸಭೆಯಲ್ಲಿ ಬಿಜೆಪಿ ಆಡಳಿತವಿದ್ದಾಗ ಪಕ್ಷಭೇದವಿಲ್ಲದೆ ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರ ವಾರ್ಡ್‌ಗಳಿಗೆ ಸಮಾನವಾಗಿ ಅನುದಾನ ನೀಡಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿತ್ತು ಎಂದು ತಿಳಿಸಿದ್ದಾರೆ.

ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮುಂದುವರಿದರೆ ಬಿಜೆಪಿ ಸದಸ್ಯರ ವಾರ್ಡ್‌ಗಳಲ್ಲಿನ ಸಾರ್ವಜನಿಕ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವುದು ಕಷ್ಟವಾಗಲಿದೆ. ಶಾಸಕರು ಕ್ಷೇತ್ರದ ಎಲ್ಲ ವಾರ್ಡ್‌ಗಳನ್ನು ಸಮಾನವಾಗಿ ಪರಿಗಣಿಸಿ ಅಭಿವೃದ್ಧಿಗೆ ಅನುದಾನ ನೀಡಬೇಕು. ಪಕ್ಷಭೇದ ಮರೆತು ಬಿಜೆಪಿ ಸದಸ್ಯರನ್ನು ವಿಶ್ವಾಸಕ್ಕೆ ಪಡೆದು ಅಭಿವೃದ್ಧಿ ಕಾರ್ಯಗಳಿಗೆ ಸಹಕರಿಸಬೇಕು ಎಂದು ರಾಘವೇಂದ್ರ ಯಳವತ್ತಿ ಆಗ್ರಹಿಸಿದ್ದಾರೆ.

೨೧೦೦ ಕಿ.ಮೀ. ಪಾದಯಾತ್ರೆ; ಕೇದಾರನಾಥ ದರ್ಶನ ಮಾಡಿದ ಲಕ್ಷ್ಮೇಶ್ವರದ ಯುವಕ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಎದೆತುಂಬಿದ ಶಿವಭಕ್ತಿ, ಕಣ್ಣೆದುರು ಕೇದಾರನಾಥದ ದರ್ಶನದ ಗುರಿ. ದಣಿವರಿಯದ ಹೆಜ್ಜೆಗಳು, ಮಳೆ-ಬಿಸಿಲು, ಗಾಳಿ, ಗುಡ್ಡ-ಕಣಿವೆಗಳ ದುರ್ಗಮ ಹಾದಿ ಹಾಗೂ ಆರೋಗ್ಯದ ಏರುಪೇರುಗಳನ್ನೂ ಲೆಕ್ಕಿಸದೆ ೮೭ ದಿನಗಳ ಕಾಲ ಬರೋಬ್ಬರಿ ೨೧೦೦ ಕಿ.ಮೀ. ಕಾಲ್ನಡಿಗೆಯಲ್ಲಿ ಸಾಗಿ ಹಿಮಾಲಯದ ಕೇದಾರನಾಥ ತಲುಪಿ ಶಿವನ ದರ್ಶನ ಪಡೆದ ಲಕ್ಷ್ಮೇಶ್ವರದ ಯುವಕ ವಿಕಾಸ್ ಮಂಜುನಾಥ ಮಹಾಜನಶೆಟ್ಟರ ಅವರ ಭಕ್ತಿಯ ಪಾದಯಾತ್ರೆ ಇದೀಗ ಗಮನ ಸೆಳೆದಿದೆ.

ಇದು ಕೇವಲ ಪಾದಯಾತ್ರೆಯಲ್ಲ; ಭಕ್ತಿಯ ಬಲ, ಸಂಕಲ್ಪದ ಶಕ್ತಿ ಹಾಗೂ ಸಾಹಸದ ಸಂಗಮ. ಸಾಮಾನ್ಯವಾಗಿ ವಾಹನಗಳಲ್ಲಿ ಕ್ರಮಿಸುವ ದೂರವನ್ನು ಕಾಲ್ನಡಿಗೆಯಲ್ಲಿ ಕ್ರಮಿಸಿ ವಿಕಾಸ್ ಅಪರೂಪದ ಸಾಹಸ ಮೆರೆದಿದ್ದಾರೆ.

ಮೇ ೧೩ರಂದು ಲಕ್ಷ್ಮೇಶ್ವರದ ಸೋಮೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಕೇದಾರನಾಥದತ್ತ ಪಾದಯಾತ್ರೆ ಆರಂಭಿಸಿದ ವಿಕಾಸ್, ಪ್ರತಿದಿನ ಸರಾಸರಿ ೨೫ರಿಂದ ೩೦ ಕಿ.ಮೀ. ನಡೆದು ರಾಜ್ಯದಿಂದ ರಾಜ್ಯಕ್ಕೆ ಮುನ್ನಡೆದರು. ದಾರಿ ಬದಲಾದರೂ ಗುರಿ ಬದಲಾಗಲಿಲ್ಲ. ಹಾದಿ ಕಠಿಣವಾದರೂ ಸಂಕಲ್ಪ ಸಡಿಲವಾಗಲಿಲ್ಲ. ಪಾದಗಳಲ್ಲಿ ನೋವು, ದೇಹದಲ್ಲಿ ಆಯಾಸವಿದ್ದರೂ ಮನದಲ್ಲಿ ಮಾತ್ರ ‘ಹರ ಹರ ಮಹಾದೇವ’ ಎಂಬ ಜಪ ಮುಂದುವರಿಯುತ್ತಿತ್ತು.

ಸುದೀರ್ಘ ಪಯಣದಲ್ಲಿ ಜ್ವರ, ತಲೆನೋವು ಸೇರಿದಂತೆ ಆರೋಗ್ಯ ಸಮಸ್ಯೆಗಳು ಎದುರಾದವು. ಮಳೆ-ಬಿಸಿಲಿನ ಹೊಡೆತ, ಅಪರಿಚಿತ ದಾರಿಗಳು ಹಾಗೂ ಗುಡ್ಡಗಾಡಿನ ಏರು-ಇಳಿಜಾರುಗಳು ದೈಹಿಕ ಸಾಮರ್ಥ್ಯವನ್ನು ಪರೀಕ್ಷಿಸಿದವು. ಆದರೆ ಶಿವನ ದರ್ಶನ ಮಾಡಲೇಬೇಕು ಎಂಬ ಒಂದೇ ಸಂಕಲ್ಪ ಎಲ್ಲ ನೋವು-ಆಯಾಸವನ್ನು ಮರೆಸಿತು.

ಯಾತ್ರೆಯ ದಾರಿಯಲ್ಲಿ ಪರಿಚಯವಿಲ್ಲದ ಹಲವರು ಆಶ್ರಯ, ಆಹಾರ ಹಾಗೂ ಅಗತ್ಯ ನೆರವು ನೀಡಿದರು. ಅಪರಿಚಿತರ ಆತ್ಮೀಯತೆ, ಭಕ್ತರ ಸಹಕಾರ ಹಾಗೂ ದಾರಿಯುದ್ದಕ್ಕೂ ಮೊಳಗಿದ ಶಿವನಾಮ ವಿಕಾಸ್ ಅವರ ಪಯಣಕ್ಕೆ ಮತ್ತಷ್ಟು ಚೈತನ್ಯ ತುಂಬಿತು.

ನೂರಾರು ಕಿಲೋಮೀಟರ್‌ಗಳ ಹೆಜ್ಜೆ ಹಾಗೂ ಸಾವಿರಾರು ಕ್ಷಣಗಳ ನಿರೀಕ್ಷೆಯ ಬಳಿಕ ಆಗಸ್ಟ್ ೭ರಂದು ವಿಕಾಸ್ ಕೇದಾರನಾಥ ತಲುಪಿ ಶಿವನ ದರ್ಶನ ಪಡೆದರು. ೮೭ ದಿನಗಳ ತಪಸ್ಸಿನ ಬಳಿಕ ದೊರೆತ ದರ್ಶನ ಅವರ ಪಾಲಿಗೆ ಮರೆಯಲಾಗದ ಕ್ಷಣವಾಯಿತು.

ಕೇದಾರನಾಥ ತಲುಪಿದ ಬಳಿಕ ೨೫ ಕೆ.ಜಿ. ಅಕ್ಕಿ ಬಳಸಿ ಭಕ್ತರಿಗೆ ಪ್ರಸಾದ ವಿತರಿಸುವ ಮೂಲಕ ತಮ್ಮ ಯಾತ್ರೆಯ ಸಂತೋಷವನ್ನು ಇತರರೊಂದಿಗೆ ಹಂಚಿಕೊಂಡರು.

ಸುದೀರ್ಘ ಪಾದಯಾತ್ರೆ ಪೂರ್ಣಗೊಳಿಸಿ ಭಾನುವಾರ ಲಕ್ಷ್ಮೇಶ್ವರಕ್ಕೆ ಮರಳಿದ ವಿಕಾಸ್ ಅವರಿಗೆ ಹಿಂದೂ ಮಹಾಸಭಾ ಗಣಪತಿ ಮಂಡಳಿ, ಹಾವಳಿ ಆಂಜನೇಯ ದೇವಸ್ಥಾನ ಸಮಿತಿ ಸೇರಿದಂತೆ ವಿವಿಧ ಸಂಘಟನೆಗಳು, ಜನಪ್ರತಿನಿಧಿಗಳು, ಬಂಧುಗಳು ಹಾಗೂ ಗೆಳೆಯರ ಬಳಗದ ವತಿಯಿಂದ ಮೆರವಣಿಗೆಯೊಂದಿಗೆ ಅದ್ದೂರಿ ಸ್ವಾಗತ ನೀಡಲಾಯಿತು. ‘ಹರ ಹರ ಮಹಾದೇವ’ ಘೋಷಣೆಗಳ ನಡುವೆ ವಿಕಾಸ್ ಅವರನ್ನು ಅಭಿನಂದಿಸಿ, ಅವರ ಸಾಹಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಲಾಯಿತು.

ವಿಕಾಸ್ ಅವರ ಪಾದಯಾತ್ರೆ ಕೇವಲ ಕೇದಾರನಾಥ ತಲುಪಿದ ಕಥೆಯಲ್ಲ; ‘ಗುರಿ ದೊಡ್ಡದಾಗಿದ್ದರೆ ಹೆಜ್ಜೆಗಳು ಚಿಕ್ಕದಾಗಿದ್ದರೂ ಪರವಾಗಿಲ್ಲ, ಆದರೆ ಅವು ನಿಲ್ಲಬಾರದು’ ಎಂಬ ಸಂದೇಶ ಸಾರುವ ಸಾಹಸಗಾಥೆಯಾಗಿದೆ. ದೈವಭಕ್ತಿ, ಆತ್ಮವಿಶ್ವಾಸ, ಶಿಸ್ತು ಹಾಗೂ ಅಚಲ ಸಂಕಲ್ಪದಿಂದ ಮುನ್ನಡೆದರೆ ಅಸಾಧ್ಯವೆನಿಸುವ ಗುರಿಯನ್ನೂ ಸಾಧಿಸಬಹುದು ಎಂಬುದನ್ನು ವಿಕಾಸ್ ತಮ್ಮ ೨೧೦೦ ಕಿ.ಮೀ. ಪಾದಯಾತ್ರೆಯ ಮೂಲಕ ತೋರಿಸಿಕೊಟ್ಟಿದ್ದಾರೆ ಎಂದು ಮಾಜಿ ಶಾಸಕ ರಾಮಣ್ಣ ಲಮಾಣಿ ಮೆಚ್ಚುಗೆ ವ್ಯಕ್ತಪಡಿಸಿದರು.