Home Blog Page 4

ಗಣೇಶನಿಗೆ ನವಧಾನ್ಯಗಳ ವಿಶೇಷ ಪೂಜೆ : ಉತ್ತಮ ಮಳೆ, ರೈತರ ಸಮೃದ್ಧಿಗಾಗಿ ಪ್ರಾರ್ಥನೆ

0

ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಗಾನಯೋಗಿ ಶ್ರೀ ಪಂ. ಪಂಚಾಕ್ಷರ ಗವಾಯಿಗಳ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಪ್ರಾಂಗಣದಲ್ಲಿ ಶ್ರೀ ಗಜಾನನೋತ್ಸವ ಟ್ರಸ್ಟ್ ಕಮಿಟಿ ವತಿಯಿಂದ ಪ್ರತಿಷ್ಠಾಪಿಸಿರುವ ಗಣೇಶ ಮೂರ್ತಿಗೆ ಎರಡನೇ ದಿನವಾದ ಮಂಗಳವಾರ ದಲಾಲ ವರ್ತಕರ ಸಂಘದ ವತಿಯಿಂದ ರೈತಪರ ವಿಶೇಷ ಪೂಜೆ ನೆರವೇರಿಸಲಾಯಿತು.

ಗಣೇಶನ ಮೂರ್ತಿಯ ಮುಂದೆ ಜಿಲ್ಲೆಯ ರೈತರು ಶ್ರಮವಹಿಸಿ ಬೆಳೆದ ಜೋಳ, ಗೋಧಿ, ಹೆಸರು, ತೊಗರಿ, ಕಡಲೆ, ಎಳ್ಳು, ಸೂರ್ಯಕಾಂತಿ ಸೇರಿದಂತೆ ನವಧಾನ್ಯಗಳನ್ನು ಇಟ್ಟು ವಿಶೇಷ ಪೂಜೆ ಸಲ್ಲಿಸಲಾಯಿತು. ಕೃಷಿ ಸಂಸ್ಕೃತಿ ಹಾಗೂ ರೈತರ ಶ್ರಮಕ್ಕೆ ಗೌರವ ಸಲ್ಲಿಸುವ ಉದ್ದೇಶದಿಂದ ನವಧಾನ್ಯಗಳ ನೈವೇದ್ಯ ಸಮರ್ಪಿಸಲಾಯಿತು.

ಜಿಲ್ಲೆಯಲ್ಲಿ ನಿರೀಕ್ಷಿತ ಮಳೆಯಾಗದೆ ಕೃಷಿ ಚಟುವಟಿಕೆಗಳು ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆಯಲ್ಲಿ, ಉತ್ತಮ ಮಳೆ ಹಾಗೂ ರೈತರ ಸಮೃದ್ಧಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಎಪಿಎಂಸಿ ದಲಾಲ ಸಂಘದ ಪದಾಧಿಕಾರಿಗಳಾದ ಮಹಾದೇವಪ್ಪ ಗೌರಿಪುರ, ಶಶಿಧರ ಭೀರನವರ, ತಿಮ್ಮಣ್ಣ ಕೋನರೆಡ್ಡಿ, ಹುಚ್ಚಪ್ಪ ಶಹಪೂರ, ಮಂಜುನಾಥ ಬೇಲೆರಿ, ಸಿದ್ಧಣ್ಣ ಮಾರನಬಸರಿ, ಪ್ರಕಾಶ ಉಗಲಾಟದ, ನಿತಿನ್ ವಾರಕರ, ಮಂಜುನಾಥ ಹುಚ್ಚಣ್ಣವರ, ಶರಣಪ್ಪ ಕುರಡಗಿ, ಸೋಮನಗೌಡ ಪಾಟೀಲ ಹಾಗೂ ಶಿವಯ್ಯ ನಾಲ್ವತ್ವಾಡಮಠ ಸೇರಿದಂತೆ ಶ್ರೀ ಗಜಾನನೋತ್ಸವ ಟ್ರಸ್ಟ್ ಕಮಿಟಿ ಪದಾಧಿಕಾರಿಗಳು, ವರ್ತಕರು, ರೈತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ವರಸಿದ್ಧಿ ವಿನಾಯಕನ ಕೃಪೆಯಿಂದ ಗದಗ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿ, ರೈತರ ಬೆಳೆಗಳು ನಳನಳಿಸಲಿ. ಬರಗಾಲದ ಛಾಯೆ ದೂರವಾಗಿ ಜಿಲ್ಲೆಯ ರೈತರಿಗೆ ಸಮೃದ್ಧಿ ದೊರೆಯಲಿ.

— ಮುರಘರಾಜೇಂದ್ರ ಬಡ್ನಿ, ಅಧ್ಯಕ್ಷರು, ಎಪಿಎಂಸಿ ದಲಾಲ ವರ್ತಕರ ಸಂಘ

ಮಕ್ಕಳ ಪ್ರತಿಭೆಗೆ ವೇದಿಕೆ ಕಲ್ಪಿಸಿ: ಶಂಕರ ಹಲಗತ್ತಿ

0

ವಿಜಯಸಾಕ್ಷಿ ಸುದ್ದಿ, ಧಾರವಾಡ: ಇಂದಿನ ಮಕ್ಕಳು ಪ್ರತಿಭಾವಂತರಾಗಿದ್ದು, ಶಿಕ್ಷಣದ ಜತೆಗೆ ನೃತ್ಯ, ಸಂಗೀತ, ವೇಷಭೂಷಣ ಸೇರಿದಂತೆ ಪಠ್ಯೇತರ ಚಟುವಟಿಕೆಗಳಲ್ಲೂ ಭಾಗವಹಿಸುವಂತೆ ಪಾಲಕರು ಪ್ರೋತ್ಸಾಹಿಸಬೇಕು ಎಂದು ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಹೇಳಿದರು.

ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಯುವ ಡಾನ್ಸ್ ಅಕಾಡೆಮಿ ಆಯೋಜಿಸಿದ್ದ ಯುವ ಕೃಷ್ಣ-ಯುವ ರಾಧೆ 2026, ಸೀಸನ್-2 ಮಕ್ಕಳ ಫ್ಯಾಷನ್ ಶೋ, ವೇಷಭೂಷಣ ಸ್ಪರ್ಧೆ ಹಾಗೂ ಸಾಂಸ್ಕೃತಿಕ ಪ್ರತಿಭೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

ಮಕ್ಕಳು ಮೊಬೈಲ್ ಅವಲಂಬನೆಯಿಂದ ಹೊರಬಂದು ಸೃಜನಶೀಲ ಹಾಗೂ ದೈಹಿಕ ಚಟುವಟಿಕೆಗಳಲ್ಲಿ ತೊಡಗುವಂತೆ ಪಾಲಕರು ಗಮನಹರಿಸಬೇಕು. ಯುವ ಡಾನ್ಸ್ ಅಕಾಡೆಮಿ ಕಳೆದ ಹಲವು ವರ್ಷಗಳಿಂದ ಮಕ್ಕಳ ಪ್ರತಿಭೆ ಉತ್ತೇಜಿಸುವ ಜತೆಗೆ ಸಮಾಜಮುಖಿ ಹಾಗೂ ಪರಿಸರ ಕಾಳಜಿಯ ಕಾರ್ಯಕ್ರಮಗಳನ್ನು ನಡೆಸುತ್ತಿರುವುದು ಶ್ಲಾಘನೀಯ ಎಂದರು.

ಡಾ. ಎಂ.ಡಿ. ಒಕ್ಕುಂದ ಮಾತನಾಡಿ, ಮಕ್ಕಳ ಪ್ರತಿಭೆ ಬೆಳೆಸುವಲ್ಲಿ ಯುವ ಡಾನ್ಸ್ ಅಕಾಡೆಮಿಯ ಕಾರ್ಯ ಅಭಿನಂದನೀಯ. ಕ್ಯಾನ್ಸರ್ ಪೀಡಿತ ಮಕ್ಕಳಿಗೆ ನೆರವು ಹಾಗೂ ಪರಿಸರ ಕಾಳಜಿಯ ಕಾರ್ಯಕ್ರಮಗಳನ್ನು ನಡೆಸುತ್ತಿರುವುದು ಮಾದರಿಯಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಸುಮಾರು 30 ಮಕ್ಕಳು ರಾಧಾ-ಕೃಷ್ಣ ವೇಷಭೂಷಣ, ಜಾನಪದ ನೃತ್ಯ, ಸಂಗೀತ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿದರು. ಅಕಾಡೆಮಿ ಸಂಸ್ಥಾಪಕ ರಮೇಶ್ ಪಾಟೀಲ್, ಗೌರವಾಧ್ಯಕ್ಷೆ ರತ್ನಮ್ಮ ಪಾಟೀಲ್, ನಿರ್ಣಾಯಕರಾದ ಸಂತೋಷ್ ಪಾಟೀಲ್ ಹಾಗೂ ಸುರಕ್ಷಾ ಹಿರೇಮಠ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ವಿಜೇತರಿಗೆ ಬಹುಮಾನ ಹಾಗೂ ಪ್ರಮಾಣಪತ್ರ ವಿತರಿಸಲಾಯಿತು. ಭಾಗವಹಿಸಿದ ಎಲ್ಲ ಮಕ್ಕಳಿಗೂ ವಿವಿಧ ವಿಶೇಷ ಬಿರುದು ನೀಡಿ ಗೌರವಿಸಲಾಯಿತು.

ಮಕ್ಕಳನ್ನು ಮೊಬೈಲ್ ಅವಲಂಬನೆಯಿಂದ ಹೊರತಂದು ಸೃಜನಶೀಲ ಚಟುವಟಿಕೆಗಳಲ್ಲಿ ತೊಡಗಿಸುವ ಮೂಲಕ ಅವರ ಪ್ರತಿಭೆಗೆ ಸೂಕ್ತ ವೇದಿಕೆ ಕಲ್ಪಿಸಬೇಕು.

— ಶಂಕರ ಹಲಗತ್ತಿ, ಪ್ರಧಾನ ಕಾರ್ಯದರ್ಶಿ, ಕರ್ನಾಟಕ ವಿದ್ಯಾವರ್ಧಕ ಸಂಘ

ವಂದೇ ಮಾತರಂನಲ್ಲಿ ಸರ್ಕಾರ ರಾಷ್ಟ್ರಭಕ್ತಿ ಮೆರೆಯಲಿ

0

ವಿಜಯಸಾಕ್ಷಿ ಸುದ್ದಿ, ಗದಗ: ರಾಷ್ಟ್ರಭಕ್ತಿಯ ಪ್ರತೀಕವಾದ ವಂದೇ ಮಾತರಂ ಗೀತೆಯನ್ನು ಕೇವಲ ಎರಡು ಚರಣಗಳಿಗೆ ಸೀಮಿತಗೊಳಿಸಿರುವ ರಾಜ್ಯ ಸರ್ಕಾರ ತನ್ನ ನಿಲುವಿನಿಂದ ಹಿಂದೆ ಸರಿದು, ಗೀತೆಯ ಪೂರ್ಣರೂಪಕ್ಕೆ ಗೌರವ ನೀಡಬೇಕು ಎಂದು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಲಿಂಗರಾಜ ಪಾಟೀಲ ಮಲ್ಲಾಪೂರ ಆಗ್ರಹಿಸಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಅವರು, ವಂದೇ ಮಾತರಂ ಗೀತೆಯನ್ನು ಎರಡು ಚರಣಗಳಿಗೆ ಸೀಮಿತಗೊಳಿಸಿ ಹಾಡುವಂತೆ ರಾಜ್ಯ ಸರ್ಕಾರ ಸೂಚಿಸಿರುವುದು ಖಂಡನೀಯ. ಇದು ವಂದೇ ಮಾತರಂ ಗೀತೆಗೆ ಮಾತ್ರವಲ್ಲದೆ, ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಹೋರಾಟಗಾರರಿಗೆ ಮಾಡಿರುವ ಅವಮಾನ ಎಂದು ಟೀಕಿಸಿದ್ದಾರೆ.

ವಂದೇ ಮಾತರಂ ಭಾರತದ ಸ್ವಾತಂತ್ರ್ಯ ಹೋರಾಟದ ಚೈತನ್ಯ, ತ್ಯಾಗ ಹಾಗೂ ರಾಷ್ಟ್ರಭಕ್ತಿಯ ಪ್ರತೀಕ. ಇಂತಹ ಐತಿಹಾಸಿಕ ಗೀತೆಯನ್ನು ಮೊಟಕುಗೊಳಿಸುವುದು ಅದರ ಪರಂಪರೆ ಹಾಗೂ ಇತಿಹಾಸವನ್ನು ಕುಗ್ಗಿಸಿದಂತಾಗುತ್ತದೆ ಎಂದು ಹೇಳಿದ್ದಾರೆ.

ರಾಜ್ಯ ಕಾಂಗ್ರೆಸ್ ಸರ್ಕಾರವು ತುಷ್ಟೀಕರಣ ರಾಜಕಾರಣಕ್ಕಾಗಿ ವಂದೇ ಮಾತರಂ ವಿಚಾರದಲ್ಲಿ ಇಂತಹ ನಿರ್ಧಾರ ಕೈಗೊಂಡಿದೆ ಎಂದು ಆರೋಪಿಸಿದ ಅವರು, ಸಂವಿಧಾನದ ಆಶಯಗಳ ಬಗ್ಗೆ ಮಾತನಾಡುವ ಕಾಂಗ್ರೆಸ್ ನಾಯಕರು ಈ ವಿಚಾರದಲ್ಲಿ ದ್ವಂದ್ವ ನಿಲುವು ತಾಳುತ್ತಿರುವುದು ಖಂಡನೀಯ ಎಂದಿದ್ದಾರೆ.

ವಂದೇ ಮಾತರಂ ವಿಚಾರದಲ್ಲಿ ಸರ್ಕಾರದ ನಿರ್ಧಾರವನ್ನು ಬಿಜೆಪಿ ರಾಜ್ಯಾದ್ಯಂತ ವಿರೋಧಿಸಲಿದೆ. ಸರ್ಕಾರ ಕೂಡಲೇ ತನ್ನ ನಿಲುವು ಬದಲಿಸಿ, ವಂದೇ ಮಾತರಂನ ಪೂರ್ಣರೂಪಕ್ಕೆ ಗೌರವ ನೀಡುವಂತೆ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ರಾಜ್ಯದ ಜನರ ಆಕ್ರೋಶವನ್ನು ಎದುರಿಸಬೇಕಾಗುತ್ತದೆ ಎಂದು ಲಿಂಗರಾಜ ಪಾಟೀಲ ಎಚ್ಚರಿಸಿದ್ದಾರೆ.

ವಂದೇ ಮಾತರಂ ಕೇವಲ ಗೀತೆಯಲ್ಲ; ಅದು ಸ್ವಾತಂತ್ರ್ಯ ಹೋರಾಟದ ಚೈತನ್ಯ ಮತ್ತು ರಾಷ್ಟ್ರಭಕ್ತಿಯ ಪ್ರತೀಕ. ಇಂತಹ ಐತಿಹಾಸಿಕ ಗೀತೆಯನ್ನು ಮೊಟಕುಗೊಳಿಸುವ ನಿರ್ಧಾರವನ್ನು ಬಿಜೆಪಿ ಎಂದಿಗೂ ಒಪ್ಪುವುದಿಲ್ಲ.

— ಲಿಂಗರಾಜ ಪಾಟೀಲ ಮಲ್ಲಾಪೂರ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ

ಇನಾಮತಿ ಪ್ರೌಢಶಾಲೆಗೆ ಕ್ರೀಡಾ ಕಿರೀಟ

0

ವಿಜಯಸಾಕ್ಷಿ ಸುದ್ದಿ, ಕುರ್ತಕೋಟಿ: ಗದಗ ತಾಲೂಕಿನ ಬೂದೀಶ್ವರ ಹೊಸಳ್ಳಿ ಗ್ರಾಮದ ಬೂದೀಶ್ವರ ವಿದ್ಯಾಪೀಠದಲ್ಲಿ ನಡೆದ 2026-27ನೇ ಸಾಲಿನ ಹುಲಕೋಟಿ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಕುರ್ತಕೋಟಿಯ ಹುಲಕೋಟಿ ಸಹಕಾರಿ ಶಿಕ್ಷಣ ಸಂಸ್ಥೆಯ ಮನೋಹರ ಅಮರಪ್ಪ ಇನಾಮತಿ ಪ್ರೌಢಶಾಲೆ ಗಮನಾರ್ಹ ಸಾಧನೆ ಮಾಡಿದೆ.

ಬಾಲಕಿಯರ ವಿಭಾಗದಲ್ಲಿ ಶಿಲ್ಪಾ ಕಂಬಾರ 400, 1500 ಹಾಗೂ 3000 ಮೀಟರ್ ಓಟದಲ್ಲಿ ಪ್ರಥಮ ಸ್ಥಾನ ಪಡೆದು ವೀರಾಗ್ರಣಿ ಪ್ರಶಸ್ತಿ ಪಡೆದಿದ್ದಾರೆ. ಸವಿತಾ ಶಿ. ಕಾಬಳ್ಳಿ ಗುಂಡು ಎಸೆತ, ಜಾವೆಲಿನ್ ಎಸೆತ ಹಾಗೂ ಸರಪಳಿ ಗುಂಡು ಎಸೆತದಲ್ಲಿ ಪ್ರಥಮ ಸ್ಥಾನ ಪಡೆದು ವೀರಾಗ್ರಣಿ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಅಪೂರ್ವ ದಿಂಡೆನವರ್ ಉದ್ದ ಜಿಗಿತದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.

ಬಾಲಕಿಯರ ಗುಂಪು ವಿಭಾಗದಲ್ಲಿ ವಾಲಿಬಾಲ್ ಹಾಗೂ ಥ್ರೋಬಾಲ್‌ನಲ್ಲಿ ಪ್ರಥಮ ಸ್ಥಾನ ಗಳಿಸಿದೆ. 14 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ಲಕ್ಷ್ಮೀ ಪೂಜಾರ 100 ಮೀಟರ್ ಓಟ, ಗುಂಡು ಎಸೆತ ಹಾಗೂ ಹರ್ಡಲ್ಸ್‌ನಲ್ಲಿ ಪ್ರಥಮ ಸ್ಥಾನ ಪಡೆದು ವೀರಾಗ್ರಣಿ ಪ್ರಶಸ್ತಿ ಪಡೆದಿದ್ದಾರೆ. ಇದೇ ವಿಭಾಗದ ವಾಲಿಬಾಲ್ ಹಾಗೂ ಥ್ರೋಬಾಲ್ ತಂಡಗಳು ಪ್ರಥಮ ಸ್ಥಾನ ಪಡೆದಿವೆ.

ಬಾಲಕರ ವಿಭಾಗದಲ್ಲಿ ಆನಂದ ಅಸುಂಡಿ ಉದ್ದ ಜಿಗಿತ, ಎತ್ತರ ಜಿಗಿತ ಹಾಗೂ ತ್ರಿವಿಧ ಜಿಗಿತದಲ್ಲಿ ಪ್ರಥಮ ಸ್ಥಾನ ಪಡೆದು ವೀರಾಗ್ರಣಿ ಪ್ರಶಸ್ತಿ ಪಡೆದಿದ್ದಾರೆ. ಚೇತನ್ ಉಗಲಾಟ 100 ಮೀಟರ್ ಓಟದಲ್ಲಿ ಪ್ರಥಮ, ವಿನೋದ ತಂಟ್ರಿ ಸರಪಳಿ ಗುಂಡು ಎಸೆತದಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ. ತರುಣ ಜಕ್ಕಲಿ, ಸಮರ್ಥ್ ವಡ್ಡರ, ಶಿವಾನಂದ ನಾಗರಳ್ಳಿ, ಕಾರ್ತಿಕ್ ಇಳಿಗೇರ ಹಾಗೂ ಇರ್ಫಾನ್ ಅಣ್ಣಿಗೇರಿ ವಿವಿಧ ಸ್ಪರ್ಧೆಗಳಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಬಾಲಕರ ಥ್ರೋಬಾಲ್ ಹಾಗೂ ರಿಲೇ ಓಟದಲ್ಲಿ ಪ್ರಥಮ, ವಾಲಿಬಾಲ್‌ನಲ್ಲಿ ದ್ವಿತೀಯ ಸ್ಥಾನ ಲಭಿಸಿದೆ.

ವಿವಿಧ ವೈಯಕ್ತಿಕ ಹಾಗೂ ಗುಂಪು ವಿಭಾಗಗಳಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳು ಮುಂದಿನ ಹಂತದ ಸ್ಪರ್ಧೆಗಳಿಗೆ ಆಯ್ಕೆಯಾಗಿದ್ದಾರೆ.

ವಿದ್ಯಾರ್ಥಿಗಳ ಸಾಧನೆಗೆ ಹುಲಕೋಟಿ ಸಹಕಾರಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಆರ್.ಎಂ. ಮೂಲಿಮನಿ, ಆಡಳಿತಾಧಿಕಾರಿ ಆರ್.ಎಸ್. ಪಾಟೀಲ, ಸ್ಥಾನಿಕ ಆಡಳಿತ ಮಂಡಳಿ ಅಧ್ಯಕ್ಷ ಯು.ವಿ. ಬೆಟಗೇರಿ, ಸದಸ್ಯ ಅಪ್ಪಣ್ಣ ಇನಾಮತಿ, ಶಾಲೆಯ ಮುಖ್ಯೋಪಾಧ್ಯಾಯ ಜಂಬುನಾಥ ಹರಿವಾಣ, ದೈಹಿಕ ಶಿಕ್ಷಕ ಮಂಜುನಾಥ ಅಂಗಡಿ ಹಾಗೂ ಸಿಬ್ಬಂದಿ ಅಭಿನಂದನೆ ಸಲ್ಲಿಸಿದ್ದಾರೆ.

ವಿದ್ಯಾರ್ಥಿಗಳ ಕ್ರೀಡಾ ಪ್ರತಿಭೆಗೆ ಸೂಕ್ತ ತರಬೇತಿ ಹಾಗೂ ಪ್ರೋತ್ಸಾಹ ನೀಡಿದರೆ ಇನ್ನಷ್ಟು ದೊಡ್ಡ ಮಟ್ಟದಲ್ಲಿ ಸಾಧನೆ ಮಾಡಲು ಸಾಧ್ಯ. ಈ ಗೆಲುವು ವಿದ್ಯಾರ್ಥಿಗಳ ಪರಿಶ್ರಮಕ್ಕೆ ದೊರೆತ ಫಲ.

— ಜಂಬುನಾಥ ಹರಿವಾಣ, ಮುಖ್ಯೋಪಾಧ್ಯಾಯರು

ಉತ್ತಮ ಶಿಕ್ಷಕರು ಪ್ರಭಾವ ಬೀರುವ ಶಕ್ತಿಗಳು: ಕವಿತಾ ದಂಡಿನ

0

ವಿಜಯಸಾಕ್ಷಿ ಸುದ್ದಿ, ಗದಗ: ಶಿಕ್ಷಕರು ಕೇವಲ ಪಾಠ ಬೋಧನೆಗೆ ಸೀಮಿತರಲ್ಲ. ವಿದ್ಯಾರ್ಥಿಗಳ ಜ್ಞಾನಾಭಿವೃದ್ಧಿ, ವ್ಯಕ್ತಿತ್ವ ವಿಕಸನ, ಚಿಂತನಶೀಲತೆ ಹಾಗೂ ಜೀವನ ಮೌಲ್ಯಗಳನ್ನು ರೂಪಿಸುವ ಮೂಲಕ ಆಧುನಿಕ ಸಮಾಜದ ನಿರ್ಮಾತೃಗಳಾಗಿ ಕಾರ್ಯನಿರ್ವಹಿಸುತ್ತಾರೆ ಎಂದು ಸಂಪನ್ಮೂಲ ವ್ಯಕ್ತಿ ಕವಿತಾ ದಂಡಿನ ಹೇಳಿದರು.

ನಗರದ ತೋಂಟದಾರ್ಯ ಮಠದ ಅನುಭವ ಮಂಟಪದಲ್ಲಿ ಅಕ್ಕಮಹಾದೇವಿ ಯೋಗ ವಿಜ್ಞಾನ ಕೇಂದ್ರದ ವತಿಯಿಂದ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ‘ಶಿಕ್ಷಕರು ಆಧುನಿಕ ಸಮಾಜದ ನಿರ್ಮಾತೃಗಳು’ ವಿಷಯ ಕುರಿತು ಉಪನ್ಯಾಸ ನೀಡಿ ಅವರು ಮಾತನಾಡಿದರು.

ಉತ್ತಮ ಶಿಕ್ಷಕರು ವಿದ್ಯಾರ್ಥಿಗಳ ಮೇಲೆ ಆಳವಾದ ಪ್ರಭಾವ ಬೀರುವ ಶಕ್ತಿಯಾಗಿದ್ದಾರೆ. ಶಿಕ್ಷಕರಿಂದ ಜ್ಞಾನ ಹಾಗೂ ಮೌಲ್ಯಗಳನ್ನು ಕಲಿತ ವಿದ್ಯಾರ್ಥಿಗಳು ಮುಂದೆ ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ದೇಶದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡುತ್ತಾರೆ. ಹೀಗಾಗಿ ಶಿಕ್ಷಕರು ರಾಷ್ಟ್ರದ ಉಜ್ವಲ ಭವಿಷ್ಯ ರೂಪಿಸುವ ಪ್ರಮುಖ ಶಕ್ತಿಯಾಗಿದ್ದಾರೆ ಎಂದರು.

ಮೈಸೂರು ವಿವೇಕಾನಂದ ಯೋಗ ಎಜುಕೇಷನ್ ಆ್ಯಂಡ್ ರಿಸರ್ಚ್ ಇನ್‌ಸ್ಟಿಟ್ಯೂಟ್‌ನಿಂದ ರಾಜಯೋಗಿ ಟಿ. ಕೃಷ್ಣಮಾಚಾರ್ಯ ಪ್ರಶಸ್ತಿ-2026 ಪಡೆದ ಯೋಗಾಚಾರ್ಯ ಕೆ.ಎಸ್. ಪಲ್ಲೇದ ಮಾತನಾಡಿ, ಉತ್ತಮ ಶಿಕ್ಷಕರು ಉತ್ತಮ ವಿದ್ಯಾರ್ಥಿಗಳನ್ನು ರೂಪಿಸುವ ಮೂಲಕ ಸಮಾಜ ನಿರ್ಮಾಣದ ಕಾರ್ಯಕ್ಕೆ ಕೈಜೋಡಿಸುತ್ತಾರೆ. ವಿದ್ಯಾರ್ಥಿಗಳನ್ನು ಮೌಲ್ಯಯುತ ನಾಗರಿಕರನ್ನಾಗಿ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ. ಉತ್ತಮ ನಾಗರಿಕರಿಂದ ಉತ್ತಮ ಸಮಾಜ ನಿರ್ಮಾಣವಾಗುತ್ತದೆ. ಶಿಕ್ಷಕರು ಸಮಾಜದ ಮಾರ್ಗದರ್ಶಕರಾಗಿ ಜ್ಞಾನ ದೀವಿಗೆ ಬೆಳಗಿಸುವ ನಿರಂತರ ಜ್ಯೋತಿಗಳಾಗಿದ್ದಾರೆ ಎಂದರು.

ಅಕ್ಕಮಹಾದೇವಿ ಯೋಗ ವಿಜ್ಞಾನ ಕೇಂದ್ರದ ಅಧ್ಯಕ್ಷೆ ಜಯಶ್ರೀ ಉಗಲಾಟ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಿಕ್ಷಕರು ಮಕ್ಕಳಿಗೆ ವಿದ್ಯಾಭ್ಯಾಸ ನೀಡುವುದರ ಜತೆಗೆ ಅವರನ್ನು ಸುಶಿಕ್ಷಿತರನ್ನಾಗಿ ರೂಪಿಸುತ್ತಾರೆ. ನಮ್ಮೆಲ್ಲರ ಬದುಕಿಗೆ ಗುರುಗಳು ಆದರ್ಶವಾಗಿದ್ದು, ಅವರ ಸೇವೆಯನ್ನು ಸ್ಮರಿಸಿ ಶಿಕ್ಷಕರ ದಿನಾಚರಣೆ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಗದಗ ಜಿಲ್ಲಾ ಉತ್ತಮ ಶಿಕ್ಷಕಿ ಪ್ರಶಸ್ತಿ ವಿಜೇತೆ ಭಾರತಿ ಕುಲಕರ್ಣಿ, ಸಂಪನ್ಮೂಲ ವ್ಯಕ್ತಿ ಕವಿತಾ ದಂಡಿನ, ಯೋಗಾಚಾರ್ಯ ಕೆ.ಎಸ್. ಪಲ್ಲೇದ, ಯೋಗ ಶಿಕ್ಷಕರಾದ ಸುನಂದಾ ಜಾನೋಪಂತರ, ಜಯಶ್ರೀ ಡಾವಣಗೆರೆ ಹಾಗೂ ಲಕ್ಷ್ಮೀ ನಿಡವಣಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸನ್ಮಾನಿತರು ಕೃತಜ್ಞತೆ ಸಲ್ಲಿಸಿ ಮಾತನಾಡಿದರು.

ಅರುಣಾ ಹಳಕಟ್ಟಿ ವಚನ ಪ್ರಾರ್ಥನೆ ನೆರವೇರಿಸಿದರು. ಶಾರದಾ ಬೊಮ್ಮಸಾಗರ ನಿರೂಪಿಸಿದರು. ರೇಣುಕಾ ಅಮಾತ್ಯ ಹಾಗೂ ಶಶಿಕಲಾ ಮಾಲೀಪಾಟೀಲ ಪರಿಚಯಿಸಿದರು. ಸುಗ್ಗಲಾ ಯಳಮಲಿ ಕಾರ್ಯಕ್ರಮ ನಿರ್ವಹಿಸಿದರು. ಪುಷ್ಪಾ ಬಂಡಾರಿ ವಂದಿಸಿದರು.

ಗೌರವ ಅಧ್ಯಕ್ಷರಾದ ನಿರ್ಮಲಾ ಪಾಟೀಲ, ಅಕ್ಕಮಹಾದೇವಿ ಚಟ್ಟಿ, ಸದಸ್ಯರಾದ ಶೀಲಾ ಗೋಟಡಕಿ, ಶಾರದಾ ಸಜ್ಜನರ, ಜಯಶ್ರೀ ಹುಬ್ಬಳ್ಳಿ, ಅಕ್ಕಮ್ಮ ವಸ್ತ್ರದ, ಶಕುಂತಲಾ ಹಿರೇಮಠ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Renukaswamy Murder Case: ಜೈಲಲ್ಲೂ ಆರೋಪಿ ಪ್ರದೋಷ್ ಕಳ್ಳಾಟ; ವಕೀಲರ ನಂಬರ್ ಹೆಸರಲ್ಲಿ ಪತ್ನಿಗೆ ಕರೆ

0

ಆನೇಕಲ್: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ 14ನೇ ಆರೋಪಿಯಾಗಿರುವ ಪ್ರದೋಷ್, ಪರಪ್ಪನ ಅಗ್ರಹಾರ ಜೈಲಿನಲ್ಲಿ ನಿಯಮ ಉಲ್ಲಂಘಿಸಿ ಪತ್ನಿಯೊಂದಿಗೆ ಮಾತನಾಡಿರುವ ಆರೋಪ ಕೇಳಿಬಂದಿದೆ.

ಬೇರೆ ಖೈದಿ ಹೆಸರಿನಲ್ಲಿ ಮೊಬೈಲ್ ನಂಬರ್ ನೋಂದಾಯಿಸಿಕೊಂಡು, ವಕೀಲರ ನಂಬರ್ ಎಂದು ನಮೂದಿಸಿ ಪತ್ನಿಯೊಂದಿಗೆ ಮಾತನಾಡುತ್ತಿದ್ದ ವಿಚಾರ ಇದೀಗ ಬೆಳಕಿಗೆ ಬಂದಿದೆ.

ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಆರೋಪಿಗಳಿಗೆ ವಕೀಲರು ಹಾಗೂ ಕುಟುಂಬದವರೊಂದಿಗೆ ಮಾತನಾಡಲು ಮೂರು ನಂಬರ್‌ಗಳನ್ನು ನೋಂದಾಯಿಸಿಕೊಳ್ಳಲು ಅವಕಾಶವಿದೆ. ಈ ನಂಬರ್‌ಗಳನ್ನು ಪರಿಶೀಲಿಸಿ ರಿಜಿಸ್ಟರ್ ಮಾಡಿಸಿಕೊಳ್ಳುವ ಜವಾಬ್ದಾರಿಯನ್ನು ಜೈಲು ಸಿಬ್ಬಂದಿ ಮೌನೇಶ್ ಹೆಚ್. ಕೋರಿ ಅವರಿಗೆ ವಹಿಸಲಾಗಿತ್ತು.

ಆರೋಪಿ ಪ್ರದೋಷ್ ಬೇರೆ ಖೈದಿಯ ಹೆಸರಿನಲ್ಲಿ ನಂಬರ್ ಪಡೆದುಕೊಂಡಿದ್ದಾನೆ ಎನ್ನಲಾಗಿದೆ. ಈ ನಂಬರ್ ಅನ್ನು ನೋಂದಾಯಿಸಿಕೊಳ್ಳಲು ಜೈಲು ಸಿಬ್ಬಂದಿ ಮೌನೇಶ್ ಸಹಾಯ ಮಾಡಿದ್ದಾನೆ ಎಂಬ ಆರೋಪವೂ ಕೇಳಿಬಂದಿದೆ.

ವಕೀಲರ ನಂಬರ್ ಎಂದು ನಮೂದಿಸಿದ್ದ ನಂಬರ್‌ನಿಂದ ಪ್ರದೋಷ್ ತನ್ನ ಪತ್ನಿಯೊಂದಿಗೆ ಮಾತನಾಡುತ್ತಿದ್ದ ವಿಚಾರ ಇದೀಗ ಪತ್ತೆಯಾಗಿದೆ. ಈ ಮೂಲಕ ಜೈಲು ನಿಯಮಗಳನ್ನು ಉಲ್ಲಂಘಿಸಿ ಕರೆ ಮಾಡಿರುವ ಆರೋಪ ಎದುರಾಗಿದೆ.

ಈ ಸಂಬಂಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಜೈಲು ಸಿಬ್ಬಂದಿ ಮೌನೇಶ್ ಹಾಗೂ ಆರೋಪಿ ಪ್ರದೋಷ್ ವಿರುದ್ಧ ದೂರು ದಾಖಲಾಗಿದೆ. ಪ್ರಕರಣದ ಕುರಿತು ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಗಣೇಶನ ಭವ್ಯ ಮೆರವಣಿಗೆ: ಭಕ್ತರ ಸಂಭ್ರಮದ ಹೆಜ್ಜೆ

0

ವಿಜಯಸಾಕ್ಷಿ ಸುದ್ದಿ, ಗದಗ: ಗಣೇಶ ಚತುರ್ಥಿಯ ಅಂಗವಾಗಿ ನಗರದ ಗದಗ ಕೃಷಿ ಉತ್ಪನ್ನ ಮಾರುಕಟ್ಟೆ (ಎಪಿಎಂಸಿ) ಪ್ರಾಂಗಣದ ಶ್ರೀ ಗಜಾನನೋತ್ಸವ ಟ್ರಸ್ಟ್ ಕಮಿಟಿ ವತಿಯಿಂದ ಶ್ರೀ ಗಣೇಶ ಮೂರ್ತಿಯ ಪ್ರತಿಷ್ಠಾಪನಾ ಮೆರವಣಿಗೆ ವೈಭವದಿಂದ ಜರುಗಿತು.

ನಗರದ ಮಸಾರಿ ಭಾಗದಲ್ಲಿರುವ ಶ್ರೀ ವರಸಿದ್ಧಿ ವಿನಾಯಕ ದೇವಸ್ಥಾನದಿಂದ ಆರಂಭಗೊಂಡ ಮೆರವಣಿಗೆಯಲ್ಲಿ ಟ್ರಸ್ಟ್ ಕಮಿಟಿ ಸದಸ್ಯರು, ಭಕ್ತರು ಹಾಗೂ ಯುವಕರು ಉತ್ಸಾಹದಿಂದ ಪಾಲ್ಗೊಂಡರು. ಸಾಂಪ್ರದಾಯಿಕ ಉಡುಪು ಧರಿಸಿದ್ದ ಮಹಿಳೆಯರು ಹಾಗೂ ಯುವಕರು ಮಂಗಳವಾದ್ಯಗಳ ಮಧುರ ನಾದಕ್ಕೆ ಹೆಜ್ಜೆ ಹಾಕಿದರು. ಭಜನೆ, ಮೆಲೋಡಿ ಹಾಗೂ ಭಕ್ತಿಗೀತೆಗಳ ಗಾಯನದ ನಡುವೆ ‘ಗಣಪತಿ ಬಪ್ಪಾ ಮೋರಯಾ, ಮಂಗಳಮೂರ್ತಿ ಮೋರಯಾ’ ಎಂಬ ಜಯಘೋಷಗಳು ಮೊಳಗಿದವು.

ಮೆರವಣಿಗೆಯುದ್ದಕ್ಕೂ ಯುವಕರು ಬಣ್ಣಬಣ್ಣದ ಗುಲಾಲ್ ಎರಚಿ ಕುಣಿದು ಕುಪ್ಪಳಿಸುವ ಮೂಲಕ ಹಬ್ಬದ ಸಂಭ್ರಮ ಹೆಚ್ಚಿಸಿದರು. ಭಕ್ತಿಭಾವ ಹಾಗೂ ಸಡಗರದ ವಾತಾವರಣದಲ್ಲಿ ಮೆರವಣಿಗೆ ಸಾಗಿತು.

ನಂತರ ಶ್ರೀ ಗಣೇಶ ಮೂರ್ತಿಯನ್ನು ನಿಗದಿಪಡಿಸಿದ ಎಪಿಎಂಸಿ ಆವರಣದ ಸಾರ್ವಜನಿಕ ಮಂಟಪಕ್ಕೆ ಕರೆತರಲಾಯಿತು. ವೈದಿಕ ಮಂತ್ರೋಚ್ಚಾರಣೆಗಳೊಂದಿಗೆ ಶಾಸ್ತ್ರೋಕ್ತವಾಗಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ಮಹಾಮಂಗಳಾರತಿ ನೆರವೇರಿಸಲಾಯಿತು.

ಈ ಸಂದರ್ಭದಲ್ಲಿ ಶ್ರೀ ಗಜಾನನೋತ್ಸವ ಟ್ರಸ್ಟ್ ಕಮಿಟಿ ಅಧ್ಯಕ್ಷ ತಿಮ್ಮರೆಡ್ಡಿ ಕೋನರೆಡ್ಡಿ, ಗೌರವ ಅಧ್ಯಕ್ಷ ಪ್ರಮೋದ್ ಆರ್. ವಾರಕರ, ಕಾರ್ಯದರ್ಶಿ ರಾಜಶೇಖರ ಬಿ. ಮುಧೋಳ, ಉಪಾಧ್ಯಕ್ಷ ರಾಜು ಎನ್. ಮೂಲೀಮನಿ, ಸಹಕಾರ್ಯದರ್ಶಿ ಚಂದ್ರಕಾಂತ ಬಿ. ಸವದತ್ತಿ, ಖಜಾಂಚಿ ಮಹೇಶ ಜಿ. ಗಾಣಿಗೇರ, ವಿನಾಯಕ ಪಿ. ವಜೇಶ್ವರಿ, ವಿವೇಕಾನಂದ ಗುಡಿಮನಿ, ಕೊಟ್ರೇಶ ಈ. ಬಾಳಿಕಾಯಿ, ಗಿರೀಶ ವಿ. ಅಳವಂಡಿ, ದಯಾನಂದ ದುಂಡಪ್ಪನವರ, ಮುರಗೇಶ ಬಡ್ನಿ, ಅಜೀತ್ ಪುಣೇಕರ, ವಿನೂತ್ ಕವಲೂರ, ಸಾಗರ ವಜ್ರೇಶ್ವರಿ, ಮಂಜುನಾಥ ಬೇಲೆರಿ, ನಿಕೀಲ್ ದನ್ನೂರಮಠ, ಬಸವರಾಜ ಹರ್ತಿ, ಪ್ರಕಾಶ ಉಗಲಾಟದ, ಪ್ರದೀಪ್ ಆಸಂಗಿ, ಶರತ್ ಅಂಗಡಿ ಹಾಗೂ ಪ್ರಮೋದ್ ಬಳಗಾನೂರ ಸೇರಿದಂತೆ ದಲಾಲ ವರ್ತಕರ ಸಂಘ ಹಾಗೂ ಖರೀದಿ ವರ್ತಕರ ಸಂಘದ ಸರ್ವ ಸದಸ್ಯರು ಉಪಸ್ಥಿತರಿದ್ದರು.

ದೇವರು, ಮರಣ ಮರೆಯದಿರು ಮನುಜ: ರಂಭಾಪುರಿ ಜಗದ್ಗುರು

0

ವಿಜಯಸಾಕ್ಷಿ ಸುದ್ದಿ, ನರಗುಂದ: ಮಾನವ ಜೀವನ ದೇವರು ನೀಡಿದ ಅಮೂಲ್ಯ ವರ. ಅರಿವುಳ್ಳ ಜನ್ಮ ಪಡೆದ ಮನುಷ್ಯ ಶಿವಜ್ಞಾನ ಹಾಗೂ ಗುರು ಕಾರುಣ್ಯ ಪಡೆದು ಬದುಕಬೇಕು. ಜೀವನದಲ್ಲಿ ದೇವರು ಹಾಗೂ ಮರಣವನ್ನು ಎಂದಿಗೂ ಮರೆಯಬಾರದು ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು.

ತಾಲೂಕಿನ ಕೊಣ್ಣೂರು ಗ್ರಾಮದ ಚಿಕ್ಕಮಠದಲ್ಲಿ ಶ್ರೀ ಜಗದ್ಗುರು ವಿಶ್ವಾರಾಧ್ಯ ಮೂರ್ತಿ ಪ್ರತಿಷ್ಠಾಪನೆ ಅಂಗವಾಗಿ ಸೋಮವಾರ ನಡೆದ ಜನಜಾಗೃತಿ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ನಾವು ನಿಂತಿರುವ ನೆಲ, ಕುಡಿಯುವ ನೀರು, ತಿನ್ನುವ ಅನ್ನ ಹಾಗೂ ಉಸಿರಾಡುವ ಗಾಳಿ ದೇವರು ನೀಡಿರುವ ಅಮೂಲ್ಯ ಕೊಡುಗೆಗಳು. ಇವುಗಳಿಲ್ಲದೆ ಮನುಷ್ಯ ಬದುಕಲು ಸಾಧ್ಯವಿಲ್ಲ. ಇಷ್ಟೆಲ್ಲ ಅಮೂಲ್ಯ ಸಂಪನ್ಮೂಲಗಳನ್ನು ನೀಡಿರುವ ದೇವರನ್ನು ಸ್ಮರಿಸುವುದು ಪ್ರತಿಯೊಬ್ಬರ ಧರ್ಮವಾಗಬೇಕು ಎಂದರು.

ದೇವರು ಎಲ್ಲರಲ್ಲಿಯೂ ಇದ್ದಾನೆ. ಆದರೆ ದೇವರಲ್ಲಿ ಎಲ್ಲರೂ ಇಲ್ಲ ಎಂಬುದು ಸತ್ಯ. ಶ್ರೀ ಜಗದ್ಗುರು ರೇಣುಕಾಚಾರ್ಯರು ವೀರಶೈವ ಧರ್ಮದ ಸಿದ್ಧಾಂತದಲ್ಲಿ ಮಾನವ ಜೀವನದ ಅಮೂಲ್ಯ ಮೌಲ್ಯಗಳನ್ನು ಪ್ರತಿಪಾದಿಸಿದ್ದಾರೆ. ಅಂಗ ಲಿಂಗವಾಗಲು, ನರ ಹರನಾಗಲು, ಭವಿ ಭಕ್ತನಾಗಲು ಸಾಧನೆಯ ಮಾರ್ಗವನ್ನು ಬೋಧಿಸಿದ್ದಾರೆ. ಅಹಿಂಸೆಯಿಂದ ಧ್ಯಾನದವರೆಗೆ ಇರುವ ದಶಧರ್ಮ ಸೂತ್ರಗಳು ಮಾನವ ಜೀವನದ ಉನ್ನತಿ ಹಾಗೂ ಶ್ರೇಯಸ್ಸಿಗೆ ದಾರಿದೀಪವಾಗಿವೆ ಎಂದು ಹೇಳಿದರು.

ಮನುಷ್ಯ ಎಷ್ಟೇ ವರ್ಷ ಬದುಕಿದ್ದರೂ ಒಂದಲ್ಲ ಒಂದು ದಿನ ಮೃತ್ಯು ಎದುರಾಗುವುದು ನಿಶ್ಚಿತ. ಹುಟ್ಟು-ಸಾವಿನ ನಡುವಿನ ಬದುಕನ್ನು ಸಮೃದ್ಧಗೊಳಿಸಿಕೊಳ್ಳಲು ಗುರುಗಳ ಬೋಧಾಮೃತ ಅಗತ್ಯ. ಭೌತಿಕ ಬದುಕಿನೊಂದಿಗೆ ಆಂತರಿಕ ಬದುಕನ್ನೂ ಶ್ರೀಮಂತಗೊಳಿಸಿಕೊಳ್ಳಬೇಕು ಎಂದರು.

ಶ್ರೀ ಕಾಶಿ ಡಾ. ಮಲ್ಲಿಕಾರ್ಜುನ ವಿಶ್ವಾರಾಧ್ಯ ಜಗದ್ಗುರುಗಳು ಮಾತನಾಡಿ, ಧರ್ಮದ ಉದಾತ್ತ ಮೌಲ್ಯಗಳನ್ನು ಬದುಕಿನ ಆಚರಣೆಯಲ್ಲಿ ಅಳವಡಿಸಿಕೊಂಡಾಗ ಮಾತ್ರ ಜೀವನ ಸಾರ್ಥಕವಾಗುತ್ತದೆ. ವೀರಶೈವ ಧರ್ಮದಲ್ಲಿರುವ ಆಧ್ಯಾತ್ಮಿಕ ಸಂಪತ್ತನ್ನು ಅರಿತು, ಆಚರಿಸುವ ಮನೋಪ್ರವೃತ್ತಿ ಬೆಳೆಸಿಕೊಳ್ಳಬೇಕು ಎಂದರು.

ಚಿಕ್ಕಮಠದ ಸಿದ್ದಲಿಂಗ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಕೊಣ್ಣೂರು ಗ್ರಾಮದ ಭಕ್ತರ ಬಹುದಿನಗಳ ಕನಸು ಇಂದು ನನಸಾಗಿರುವುದು ಸಂತಸದ ಸಂಗತಿ. ಶ್ರೀ ರಂಭಾಪುರಿ ಹಾಗೂ ಕಾಶಿ ಜಗದ್ಗುರುಗಳು ಕೊಣ್ಣೂರಿಗೆ ಆಗಮಿಸಿರುವುದು ಭಕ್ತರ ಪುಣ್ಯದ ಫಲ ಎಂದರು.

ಸಮಾರಂಭದಲ್ಲಿ ನರಗುಂದ, ಆಲಮೇಲ, ಮಮದಾಪುರ ಸೇರಿದಂತೆ ವಿವಿಧ ಮಠಗಳ ಮಠಾಧೀಶರು ಪಾಲ್ಗೊಂಡಿದ್ದರು. ಸಮಾರಂಭಕ್ಕೂ ಮುನ್ನ ಗ್ರಾಮದಲ್ಲಿ ಉಭಯ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವ ಸಂಭ್ರಮದಿಂದ ಜರುಗಿತು. ಸಹಸ್ರಾರು ಭಕ್ತರು ಪಾಲ್ಗೊಂಡರು. ಕುಂಭ ಹೊತ್ತ ಮಹಿಳೆಯರು, ಆರತಿ ಹಿಡಿದ ಸುಮಂಗಲೆಯರು, ಭಜನಾ ತಂಡಗಳು ಹಾಗೂ ವೀರಗಾಸೆ ಕಲಾವಿದರು ಉತ್ಸವಕ್ಕೆ ಮೆರುಗು ತಂದರು. ಬಳಿಕ ಅನ್ನದಾಸೋಹ ನಡೆಯಿತು.

ಮನುಷ್ಯ ಎಷ್ಟೇ ವರ್ಷ ಬದುಕಿದ್ದರೂ ಒಂದಲ್ಲ ಒಂದು ದಿನ ಮೃತ್ಯು ಎದುರಾಗುವುದು ನಿಶ್ಚಿತ. ಹುಟ್ಟು-ಸಾವಿನ ನಡುವಿನ ಬದುಕು ಸಮೃದ್ಧಗೊಳ್ಳಲು ಗುರು ಬೋಧಾಮೃತ ಅಗತ್ಯ.

— ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು

ನಾನು ಕೇವಲ ನಾಲ್ಕು ಸೆಲ್‌ಗಳ ಗೃಹ ಸಚಿವನಲ್ಲ: ಪ್ರಿಯಾಂಕ್ ಖರ್ಗೆ

0

ವಿಜಯಸಾಕ್ಷಿ ಸುದ್ದಿ, ಕಲಬುರಗಿ: ಬಿಡದಿ ವಿಚಾರವನ್ನು ಡೈವರ್ಟ್ ಮಾಡಲು ಜೈಲುಗಳ ಮೇಲೆ ದಾಳಿ ನಡೆಸಿಲ್ಲ. ರಾಜ್ಯದ ಹಲವು ಜೈಲುಗಳ ಮೇಲೆ ದಾಳಿ ನಡೆಸಿದ್ದೇವೆ. ನಾನು ಕೇವಲ ನಾಲ್ಕು ಸೆಲ್‌ಗಳ ಗೃಹ ಸಚಿವನಲ್ಲ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಆರೋಪಕ್ಕೆ ತಿರುಗೇಟು ನೀಡಿದರು.

ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಹಲವು ಜೈಲುಗಳ ಮೇಲೆ ದಾಳಿ ನಡೆಸಿದ್ದೇವೆ. ಅದನ್ನೂ ಮಾಡಬಾರದಾ ಎಂದು ಪ್ರಶ್ನಿಸಿದರು. ಜೈಲಿನಿಂದ ಪ್ರಜ್ವಲ್ ರೇವಣ್ಣ ನಿರಂತರವಾಗಿ ಫೋನ್‌ನಲ್ಲಿ ಮಾತನಾಡಿರುವ ವಿಚಾರ ಪ್ರಸ್ತಾಪಿಸಿದ ಅವರು, “ಅವರು ಯಾರಿಗೆ ಮಾತನಾಡಿದ್ದಾರೆ? ಇಷ್ಟೆಲ್ಲ ಮಾತನಾಡುವವರು ಯಾಕೆ ಮಾಹಿತಿ ನೀಡಿಲ್ಲ? ಕುಟುಂಬದವರೊಂದಿಗೆ ತಾನೇ ಅವರು ಮಾತನಾಡಿದ್ದು” ಎಂದರು.

ಹಾಸನದಲ್ಲಿ ನಡೆದ ಘಟನೆಗಳ ಕುರಿತು ಮಾತನಾಡಿದ ಪ್ರಿಯಾಂಕ್ ಖರ್ಗೆ, ನೊಂದ ಕುಟುಂಬಗಳ ಕ್ಷೇಮ ವಿಚಾರಿಸುವುದು ಮೊದಲು ಆಗಬೇಕು ಎಂದು ಹೇಳಿದರು. “ಹಾಸನದಲ್ಲಿ ಏನಾಗಿತ್ತು ಎಂಬುದರ ಬಗ್ಗೆ ಒಂದು ಬಾರಿಯಾದರೂ ಮಾತನಾಡಿದ್ದಾರಾ? ಮೊದಲು ಆ ಕುಟುಂಬಗಳ ಕ್ಷಮೆ ಕೇಳಬೇಕು. ನೊಂದ ಮಹಿಳೆಯರ ಕ್ಷೇಮ ವಿಚಾರಿಸಬೇಕು” ಎಂದು ಹೇಳಿದರು.

ವಿಜಯದಶಮಿಯಿಂದ ಯುದ್ಧ ಆರಂಭವಾಗಲಿದೆ ಎಂಬ ಎಚ್.ಡಿ. ಕುಮಾರಸ್ವಾಮಿ ಹೇಳಿಕೆಗೆ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ ಅವರು, “ಅಲ್ಲೋಲ-ಕಲ್ಲೋಲ ಆಗೋದು ಮುಂದಕ್ಕೆ ಹೋಯ್ತಾ?” ಎಂದು ಪ್ರಶ್ನಿಸಿದರು.

ತಮ್ಮ ಕುಟುಂಬವನ್ನು ಮುಗಿಸಲು ಪ್ಲ್ಯಾನ್ ಮಾಡಿದ್ದಾರೆ ಎಂಬ ಕುಮಾರಸ್ವಾಮಿ ಆರೋಪಕ್ಕೂ ತಿರುಗೇಟು ನೀಡಿದ ಅವರು, “ಯಾರು ಪ್ರಯತ್ನ ಮಾಡುತ್ತಿದ್ದಾರೆ? ನಾವ್ಯಾಕೆ ಅದನ್ನು ಮಾಡೋಣ?” ಎಂದು ಪ್ರಶ್ನಿಸಿದರು.

ಟಿ. ನರಸೀಪುರ ಇನ್‌ಸ್ಪೆಕ್ಟರ್ ವಿರುದ್ಧದ ಹಳೆಯ ಪ್ರಕರಣದ ಕುರಿತು ಮಾತನಾಡಿದ ಪ್ರಿಯಾಂಕ್ ಖರ್ಗೆ, ಅವರ ವಿರುದ್ಧ ಇಲಾಖೆ ವಿಚಾರಣೆ ಆಗಿರಬೇಕು. ಅದಕ್ಕೂ ಗಣೇಶೋತ್ಸವದ ವಿಚಾರಕ್ಕೂ ಏನು ಸಂಬಂಧ ಎಂದು ಪ್ರಶ್ನಿಸಿದರು. ಗಣೇಶೋತ್ಸವಕ್ಕೆ ಸಂಬಂಧಿಸಿದ ಇಲಾಖೆಯ ಎಸ್‌ಒಪಿ ಕುರಿತು ಮಾತನಾಡಿದ ಅವರು, ಆರೋಪಗಳಿದ್ದರೆ ದೂರು ನೀಡಲಿ, ತನಿಖೆ ನಡೆಸಲಾಗುವುದು ಎಂದರು.

ಗಣೇಶೋತ್ಸವವನ್ನು ಎಲ್ಲರೂ ವಿಜೃಂಭಣೆಯಿಂದ ಆಚರಿಸಬೇಕು. ಆದರೆ ಒಂದು ಸಮುದಾಯದ ಸಂಭ್ರಮ ಮತ್ತೊಬ್ಬರಿಗೆ ಆತಂಕ ಉಂಟುಮಾಡಬಾರದು ಎಂದು ಮನವಿ ಮಾಡಿದರು. “ಇವರಿಗೆ ಬೆಂಕಿ ಹಚ್ಚೋದೇ ಕೆಲಸ” ಎಂದು ಇದೇ ವೇಳೆ ಟೀಕಿಸಿದರು.

ಉಮರ್ ಖಾಲಿದ್ ಅವರನ್ನು ರಾಷ್ಟ್ರೀಯವಾದಿ ಎಂದು ಬಿಂಬಿಸುವ ವಿಚಾರದ ಕುರಿತು ಮಾತನಾಡಿದ ಅವರು, ಉಮರ್ ಖಾಲಿದ್ ಎಷ್ಟು ದಿನದಿಂದ ಜೈಲಿನಲ್ಲಿದ್ದಾನೆ ಎಂಬುದನ್ನು ಪ್ರಶ್ನಿಸಿದರು. ಕೇಂದ್ರ ಸರ್ಕಾರ ಆತನ ವಿಚಾರಣೆಯನ್ನು ನಡೆಸಿ ನ್ಯಾಯಾಲಯದ ಮೂಲಕ ತೀರ್ಪು ಹೊರಬರಲು ಅವಕಾಶ ನೀಡಬೇಕು ಎಂದರು.

ಟ್ರಯಲ್ ನಡೆಸಿ ಕೋರ್ಟ್ ತೀರ್ಪು ನೀಡಲಿ. ಆಗ ಆತ ಅಪರಾಧಿಯೇ ಅಥವಾ ಅಲ್ಲವೇ ಎಂಬುದು ಸ್ಪಷ್ಟವಾಗುತ್ತದೆ. ಬಿಜೆಪಿ ಹೇಳಿದರೆ ನಾವು ಒಪ್ಪಿಕೊಳ್ಳಬೇಕಾ? ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು.

ರಾಜ್ಯದ ಎಲ್ಲ ಜೈಲುಗಳ ಮೇಲೂ ಕಾನೂನುಬದ್ಧವಾಗಿ ಕ್ರಮ ಕೈಗೊಳ್ಳಲಾಗುತ್ತದೆ. ನಾನು ಕೇವಲ ನಾಲ್ಕು ಸೆಲ್‌ಗಳ ಗೃಹ ಸಚಿವನಲ್ಲ.

ಪ್ರಿಯಾಂಕ್ ಖರ್ಗೆ, ಗೃಹ ಸಚಿವ

ಪ್ರಜಾಪ್ರಭುತ್ವದ ಮೌಲ್ಯ ಅರಿವು ಪ್ರತಿಯೊಬ್ಬರ ಕರ್ತವ್ಯ: ಎಫ್.ಹೆಚ್. ಜಕ್ಕಪ್ಪನವರ

0

ವಿಜಯಸಾಕ್ಷಿ ಸುದ್ದಿ, ಧಾರವಾಡ: ಪ್ರಜಾಪ್ರಭುತ್ವದ ಮೌಲ್ಯಗಳು ಹಾಗೂ ಅದರ ಬೇರುಗಳನ್ನು ಪ್ರತಿಯೊಬ್ಬರೂ ಅರ್ಥೈಸಿಕೊಳ್ಳುವ ನಿಟ್ಟಿನಲ್ಲಿ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಎಫ್.ಹೆಚ್. ಜಕ್ಕಪ್ಪನವರ ಹೇಳಿದರು.

ನಗರದ ಕರ್ನಾಟಕ ಕುಲಪುರೋಹಿತ ಆಲೂರು ವೆಂಕಟರಾವ್ ಸಭಾಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ, ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆ, ಉನ್ನತ ಶಿಕ್ಷಣ ಇಲಾಖೆ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ-2026 ಹಾಗೂ ಯುವ ಸಂಸತ್ತು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಬಸವಣ್ಣನವರ ಅನುಭವ ಮಂಟಪದಿಂದ ಚಾಮರಾಜನಗರದವರೆಗೆ ಸುಮಾರು 31 ಜಿಲ್ಲೆಗಳನ್ನು ಹಾದುಹೋಗುವ ಬೃಹತ್ ಮಾನವ ಸರಪಳಿ ನಿರ್ಮಿಸಿ ಸಂವಿಧಾನದ ಆಶಯಕ್ಕೆ ನಿಷ್ಠೆ ತೋರಿದ ಹೆಮ್ಮೆ ಕರ್ನಾಟಕಕ್ಕಿದೆ. ಇಂದಿನ ಯುವಜನರಲ್ಲಿ ದೇಶದ ಇತಿಹಾಸ, ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಬಗ್ಗೆ ಅರಿವು ಮೂಡಿಸುವುದು ಅತ್ಯಂತ ಮುಖ್ಯವಾಗಿದೆ. ಈ ಉದ್ದೇಶದಿಂದ ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಯುವ ಸಂಸತ್ತು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದರು.

ಜಾತಿ, ಭೇದಭಾವಗಳನ್ನು ಮೀರಿ ನಾವೆಲ್ಲರೂ ಭಾರತೀಯರು ಎಂಬ ಭಾವನೆ ಬೆಳೆಸಿಕೊಳ್ಳಬೇಕು. ಸಂವಿಧಾನದ ಪೀಠಿಕೆಯಲ್ಲಿ ಪ್ರತಿಪಾದಿಸಿರುವ ಭ್ರಾತೃತ್ವ ಮತ್ತು ಸಮಾನತೆಯ ಮೌಲ್ಯಗಳು ಸಮಾಜದಲ್ಲಿ ಬೇರೂರಬೇಕು. ಯುವ ಮನಸ್ಸುಗಳಿಗೆ ಸಂವಿಧಾನಿಕ ಮೌಲ್ಯಗಳನ್ನು ಪರಿಚಯಿಸಿ ದೇಶದ ಐಕ್ಯತೆ ಕಾಪಾಡುವ ಜವಾಬ್ದಾರಿ ಹಿರಿಯರ ಮೇಲಿದೆ ಎಂದು ಹೇಳಿದರು.

ಜಿಲ್ಲಾಧಿಕಾರಿ ಸ್ನೇಹಲ್ ಆರ್. ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆ ನಮಗೆ ಅಭಿವ್ಯಕ್ತಿ ಸ್ವಾತಂತ್ರ್ಯ, ಸಂಚಾರ ಸ್ವಾತಂತ್ರ್ಯ ಹಾಗೂ ಮತದಾನದ ಹಕ್ಕು ಸೇರಿದಂತೆ ಹಲವು ಹಕ್ಕುಗಳನ್ನು ನೀಡಿದೆ. ಸಂವಿಧಾನ ನೀಡಿರುವ ಹಕ್ಕುಗಳು ಮತ್ತು ಪ್ರಜಾಪ್ರಭುತ್ವದ ನಿಜವಾದ ಅರ್ಥವನ್ನು ಪ್ರತಿಯೊಬ್ಬ ನಾಗರಿಕರೂ ತಿಳಿದುಕೊಳ್ಳಬೇಕು ಎಂದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ ಮಾತನಾಡಿ, ಪ್ರಜಾಪ್ರಭುತ್ವ ಎಂದರೆ ಜನರಿಂದ, ಜನರಿಗಾಗಿ ಮತ್ತು ಜನರಿಗೋಸ್ಕರ ಇರುವ ಆಡಳಿತ. ಸಂವಿಧಾನದ ಪೀಠಿಕೆ ‘ನಾವು ಭಾರತದ ಪ್ರಜೆಗಳು’ ಎಂಬ ಸಾಲಿನಿಂದಲೇ ಆರಂಭವಾಗುತ್ತದೆ. ಇದು ದೇಶದ ಸಮಸ್ತ ಜನರ ಆಶಯವನ್ನು ಪ್ರತಿಬಿಂಬಿಸುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಅವರು ಸಂವಿಧಾನದ ಪೀಠಿಕೆಯನ್ನು ಬೋಧಿಸಿದರು. ಕರ್ನಾಟಕ ವಿಶ್ವವಿದ್ಯಾಲಯದ ಮಾನವಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ ಡಾ. ಸದಾನಂದ ಸುಗಂಧಿ ಉಪನ್ಯಾಸ ನೀಡಿದರು.

ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ, ಸಹಾಯಕ ಪೊಲೀಸ್ ಆಯುಕ್ತ ಪ್ರಶಾಂತ ಸಿದ್ದನಗೌಡರ, ಪ್ರೊಬೆಷನರಿ ಐಎಎಸ್ ಅಧಿಕಾರಿ ಅನುಪ್ರಿಯಾ ಸಾಕ್ಯ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಉಮೇಶ ಬೊಮ್ಮಕ್ಕನವರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.

ಪ್ರಜಾಪ್ರಭುತ್ವದ ಮೌಲ್ಯಗಳು ಹಾಗೂ ಸಂವಿಧಾನದ ಆಶಯಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನ ಮತ್ತು ಕರ್ತವ್ಯದಲ್ಲಿ ಅಳವಡಿಸಿಕೊಳ್ಳಬೇಕು. ವಿದ್ಯಾರ್ಥಿಗಳು, ಯುವಕರು ಹಾಗೂ ಅಧಿಕಾರಿಗಳು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಗೌರವಿಸಿ, ಅನುಸರಿಸಿ ಕಾರ್ಯನಿರ್ವಹಿಸಬೇಕು.

— ಎಫ್.ಹೆಚ್. ಜಕ್ಕಪ್ಪನವರ, ವಿಧಾನ ಪರಿಷತ್ ಸದಸ್ಯರು