Home Blog Page 4

ಅಂಜನಾದ್ರಿಗೆ ಸಂಸದ ಯದುವೀರ್ ಭೇಟಿ: 575 ಮೆಟ್ಟಿಲೇರಿ ಹನುಮನ ದರ್ಶನ ಪಡೆದು ವಿಶೇಷ ಪೂಜೆ

0

ಕೊಪ್ಪಳ: ಹನುಮ ಹುಟ್ಟಿದ ನಾಡು ಎಂದೇ ಪ್ರಸಿದ್ಧವಾಗಿರುವ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಐತಿಹಾಸಿಕ ಅಂಜನಾದ್ರಿ ಪರ್ವತಕ್ಕೆ ಸಂಸದ ಯದುವೀರ್ ಭೇಟಿ ನೀಡಿ, ಆಂಜನೇಯನಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಅಂಜನಾದ್ರಿಗೆ ಆಗಮಿಸಿದ ಸಂಸದ ಯದುವೀರ್ ಅವರು ಬೆಟ್ಟದ 575 ಮೆಟ್ಟಿಲುಗಳನ್ನು ಏರುವ ಮೂಲಕ ಹನುಮನ ದರ್ಶನ ಪಡೆದರು. ಬಳಿಕ ದೇವಾಲಯದಲ್ಲಿ ಆಂಜನೇಯನಿಗೆ ವಿಶೇಷ ಪೂಜೆ ಸಲ್ಲಿಸಿ, ಭಕ್ತಿಭಾವದಿಂದ ಪ್ರಾರ್ಥನೆ ಸಲ್ಲಿಸಿದರು. ಈ ವೇಳೆ ಅಂಜನಾದ್ರಿಯ ಐತಿಹಾಸಿಕ ಹಾಗೂ ಧಾರ್ಮಿಕ ಮಹತ್ವದ ಹಿನ್ನೆಲೆಯಲ್ಲಿ ಸಂಸದ ಯದುವೀರ್ ಅವರ ಭೇಟಿ ವಿಶೇಷ ಗಮನ ಸೆಳೆಯಿತು.

ರೈತನ ಜಮೀನಿನಲ್ಲಿ 37 ಮೊಸಳೆ ಮರಿಗಳು ಪತ್ತೆ; ಅವರಗೋಳ ಗ್ರಾಮಸ್ಥರಲ್ಲಿ ಹೆಚ್ಚಿದ ಆತಂಕ

0

ಬೆಳಗಾವಿ: ರೈತನ ಜಮೀನಿನಲ್ಲಿ ಬರೋಬ್ಬರಿ 37 ಮೊಸಳೆ ಮರಿಗಳು ಪತ್ತೆಯಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಅವರಗೋಳ ಗ್ರಾಮದಲ್ಲಿ ನಡೆದಿದೆ.

ರೈತರ ಜಮೀನಿನಲ್ಲಿ ಏಕಾಏಕಿ ಇಷ್ಟೊಂದು ಸಂಖ್ಯೆಯಲ್ಲಿ ಮೊಸಳೆ ಮರಿಗಳು ಪತ್ತೆಯಾಗಿರುವುದು ಗ್ರಾಮಸ್ಥರಲ್ಲಿ ಆತಂಕಕ್ಕೆ ಕಾರಣವಾಗಿದೆ. ಜಮೀನಿನ ಸುತ್ತಮುತ್ತ ಮೊಸಳೆ ಮರಿಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿತ್ತು.

ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಅರಣ್ಯ ವೀಕ್ಷಕ ಮಾರುತಿ ಗಸ್ತಿ, ಕಾರ್ಯಾಚರಣೆ ನಡೆಸಿ 37 ಮೊಸಳೆ ಮರಿಗಳನ್ನು ಸುರಕ್ಷಿತವಾಗಿ ಹಿಡಿದಿದ್ದಾರೆ.

ಬಳಿಕ ಮೊಸಳೆ ಮರಿಗಳನ್ನು ಯಾವುದೇ ಅಪಾಯವಾಗದಂತೆ ಹಿಡಕಲ್ ಜಲಾಶಯದ ಹಿನ್ನೀರಿನಲ್ಲಿ ಸುರಕ್ಷಿತವಾಗಿ ಬಿಡಲಾಗಿದೆ. ಅರಣ್ಯ ಇಲಾಖೆಯ ಸಮಯೋಚಿತ ಕಾರ್ಯಾಚರಣೆಯಿಂದ ರೈತರು ಹಾಗೂ ಗ್ರಾಮಸ್ಥರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ಇದು ಶತದಿನೋತ್ಸವವಲ್ಲ, ಸಾಧನೆಯ ಶೂನ್ಯತೆ ಮುಚ್ಚುವ ಪ್ರದರ್ಶನ: 100 ದಿನಗಳ ಸರ್ಕಾರದ ವಿರುದ್ಧ ಆರ್. ಅಶೋಕ್ ವಾಗ್ದಾಳಿ

0

ಬೆಂಗಳೂರು: ರಾಜ್ಯ ಸರ್ಕಾರದ ನೂರು ದಿನಗಳ ಕಾರ್ಯಕ್ರಮದ ವಿರುದ್ಧ ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಇದು ಶತದಿನೋತ್ಸವವಲ್ಲ, ಸರ್ಕಾರದ ಸಾಧನೆಯ ಶೂನ್ಯತೆಯನ್ನು ದೀಪಾಲಂಕಾರದ ಹಿಂದೆ ಮುಚ್ಚುವ ವ್ಯರ್ಥ ಪ್ರದರ್ಶನ ಎಂದು ಅವರು ಟೀಕಿಸಿದ್ದಾರೆ.

ಈ ಸಂಬಂಧ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಆರ್. ಅಶೋಕ್, ಸರ್ಕಾರದ ಸಾಧನೆಯ ಖಾತೆ ಖಾಲಿಯಾಗಿದೆ. ಆದರೆ ಸಂಭ್ರಮದ ಖರ್ಚು ಮಾತ್ರ ಭಾರಿಯಾಗಿದೆ ಎಂದು ಆರೋಪಿಸಿದ್ದಾರೆ. 100 ದಿನಗಳ ಆಡಳಿತಕ್ಕೆ ಬ್ಯಾಂಕ್ವೆಟ್ ಹಾಲ್, ಭರ್ಜರಿ ವೇದಿಕೆ, ವಿದ್ಯುತ್ ದೀಪಾಲಂಕಾರ ಹಾಗೂ ಕೋಟ್ಯಂತರ ರೂಪಾಯಿ ಪ್ರಚಾರಕ್ಕೆ ಖರ್ಚು ಮಾಡಲಾಗುತ್ತಿದೆ. ಇಷ್ಟೆಲ್ಲಾ ಸಂಭ್ರಮ ಯಾವ ಸಾಧನೆಗಾಗಿ ಎಂದು ಪ್ರಶ್ನಿಸಿದ್ದಾರೆ.

ಜನರಿಗೆ ತೋರಿಸಲು ಒಂದೇ ಒಂದು ದೊಡ್ಡ ಸಾಧನೆಯೂ ಇಲ್ಲದಿರುವಾಗ, ಸರ್ಕಾರದ ವೈಫಲ್ಯಗಳನ್ನೇ ಸಾಧನೆಗಳೆಂದು ಬಿಂಬಿಸಲು ಈ ಕಾರ್ಯಕ್ರಮ ನಡೆಸಲಾಗುತ್ತಿದೆಯೇ ಎಂದು ಅಶೋಕ್ ಪ್ರಶ್ನಿಸಿದ್ದಾರೆ.

ಮಹಿಳೆಯರು ಗೃಹಲಕ್ಷ್ಮಿ ಹಣಕ್ಕಾಗಿ ತಿಂಗಳುಗಟ್ಟಲೆ ಕಾಯುವ ಪರಿಸ್ಥಿತಿ ಇದೆ. ಯುವಜನರಿಗೆ ಉದ್ಯೋಗ ಸಿಗಬೇಕಾದರೆ ಅರ್ಹತೆಗಿಂತ ಲಂಚವೇ ಮುಖ್ಯ ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ಆರೋಪಿಸಿದ್ದಾರೆ.

ವಿದ್ಯಾರ್ಥಿಗಳಿಗೆ ಸಮಯಕ್ಕೆ ಪಠ್ಯಪುಸ್ತಕಗಳು ಸಿಗುತ್ತಿಲ್ಲ. ಶಾಲಾ ಕೊಠಡಿಗಳು ಸೋರುತ್ತಿದ್ದು, ಕೆಲವು ಕಡೆ ಕುಸಿಯುವ ಸ್ಥಿತಿಯಲ್ಲಿವೆ. ಕಳಪೆ ಗುಣಮಟ್ಟದ ಶೂ ಮತ್ತು ಸಾಕ್ಸ್‌ಗಳು ಒಂದೇ ದಿನದಲ್ಲಿ ಹರಿದುಹೋಗುತ್ತಿವೆ ಎಂದು ಟೀಕಿಸಿದ್ದಾರೆ.

ಬೆಳೆನಷ್ಟದಿಂದ ಕಂಗಾಲಾಗಿರುವ ರೈತರಿಗೆ ಬರ ಪರಿಹಾರವೂ ಇಲ್ಲ, ಸರ್ಕಾರದ ಸಮರ್ಪಕ ಸ್ಪಂದನೆಯೂ ಇಲ್ಲ. ವೃದ್ಧರು, ವಿಧವೆಯರು ಹಾಗೂ ಅಂಗವಿಕಲರಿಗೆ ಆಸರೆಯಾಗಿರುವ ಪಿಂಚಣಿಗೂ ಕತ್ತರಿ ಹಾಕಲಾಗಿದೆ ಎಂದು ಅಶೋಕ್ ಆರೋಪಿಸಿದ್ದಾರೆ.

ದಿನಬಳಕೆಯ ವಸ್ತುಗಳ ಬೆಲೆ ಏರಿಕೆ ಹಾಗೂ ತೆರಿಗೆಗಳ ಹೊರೆಯಿಂದ ಸಾಮಾನ್ಯ ಜನರ ಬದುಕು ದುಬಾರಿಯಾಗಿದೆ. ಬೆಂಗಳೂರಿನ ರಸ್ತೆಗಳಲ್ಲಿನ ಗುಂಡಿಗಳು ಹಾಗೂ ರಸ್ತೆಯಂಚಿನಲ್ಲಿರುವ ಕಸದ ರಾಶಿಯನ್ನು ಉಲ್ಲೇಖಿಸಿ, ‘ಬ್ರ್ಯಾಂಡ್ ಬೆಂಗಳೂರು’ ಎಂದು ಹೇಳಿ ‘ಬ್ರೋಕನ್ ಬೆಂಗಳೂರು’ ನೀಡಲಾಗಿದೆ ಎಂದು ಸರ್ಕಾರದ ವಿರುದ್ಧ ವ್ಯಂಗ್ಯವಾಡಿದ್ದಾರೆ.

ಜನರ ಬದುಕು ಕತ್ತಲಲ್ಲಿದ್ದರೆ, ಬ್ಯಾಂಕ್ವೆಟ್ ಹಾಲ್‌ನಲ್ಲಿ ಮಾತ್ರ ದೀಪಾಲಂಕಾರ ಮಾಡಲಾಗಿದೆ. ರಾಜ್ಯಕ್ಕೆ ಬೇಕಾಗಿರುವುದು ಅಭಿವೃದ್ಧಿಯ ಬೆಳಕು, ಆದರೆ ಸರ್ಕಾರ ವೇದಿಕೆಯ ಥಳಕನ್ನು ತೋರಿಸುತ್ತಿದೆ ಎಂದು ಅಶೋಕ್ ಟೀಕಿಸಿದ್ದಾರೆ.

ಯುವಕರಿಗೆ ಉದ್ಯೋಗ ಬೇಕಾಗಿದ್ದು, ಸರ್ಕಾರ ಜಾಹೀರಾತು ನೀಡುತ್ತಿದೆ. ರೈತರಿಗೆ ಪರಿಹಾರ ಬೇಕಾಗಿದ್ದು, ಸಮಾವೇಶ ನಡೆಸಲಾಗುತ್ತಿದೆ. ಮಹಿಳೆಯರಿಗೆ ಸಮಯಕ್ಕೆ ಹಣ ಬೇಕಾಗಿದ್ದು, ಸರ್ಕಾರ ಫೋಟೋಶೂಟ್‌ನಲ್ಲಿ ತೊಡಗಿದೆ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.

ಸಾಧನೆ ತೋರಿಸಲು ಆಗಲಿಲ್ಲ, ಸಿಂಗಾರ ತೋರಿಸುತ್ತಿದ್ದಾರೆ. ಅಭಿವೃದ್ಧಿ ತೋರಿಸಲು ಆಗಲಿಲ್ಲ, ದೀಪಾಲಂಕಾರ ತೋರಿಸುತ್ತಿದ್ದಾರೆ. ಆಡಳಿತ ತೋರಿಸಲು ಆಗಲಿಲ್ಲ, ಆಡಂಬರ ತೋರಿಸುತ್ತಿದ್ದಾರೆ ಎಂದು ಅಶೋಕ್ ಟೀಕಿಸಿದ್ದಾರೆ.

‘ಕೆಲಸ ಶೂನ್ಯ, ಪ್ರಚಾರ ಭರಪೂರ. ಸಾಧನೆ ಶೂನ್ಯ, ಸಡಗರ ಭರ್ಜರಿ. ಜನರ ಸಂಕಷ್ಟ ಅಪಾರ, ಸರ್ಕಾರದ ಸಂಭ್ರಮ ಅದ್ದೂರಿ’ ಎಂದು ಆರ್. ಅಶೋಕ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ರಾಜ್ಯ ಬೆಳಗಲಿಲ್ಲ, ಸರ್ಕಾರದ ವೇದಿಕೆ ಮಾತ್ರ ಬೆಳಗಿದೆ. ಜನರ ಬದುಕು ಬದಲಾಗಲಿಲ್ಲ, ಸರ್ಕಾರದ ಪ್ರಚಾರ ಮಾತ್ರ ಕಂಗೊಳಿಸಿದೆ. ಹೀಗಾಗಿ ಇದು ಶತದಿನೋತ್ಸವವಲ್ಲ, ಸಾಧನೆಯ ಶೂನ್ಯತೆಯನ್ನು ದೀಪಾಲಂಕಾರದ ಹಿಂದೆ ಮುಚ್ಚುವ ವ್ಯರ್ಥ ಪ್ರದರ್ಶನ ಎಂದು ಕಾಂಗ್ರೆಸ್ ಸರ್ಕಾರವನ್ನು ಆರ್. ಅಶೋಕ್ ಟೀಕಿಸಿದ್ದಾರೆ.

ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ MLC ರವಿ ಆಯ್ಕೆ: ಶರಣಗೌಡ ಬಯ್ಯಾಪುರಗೆ ಉಪಾಧ್ಯಕ್ಷ ಸ್ಥಾನ, ರಾಜಣ್ಣಗೆ ನಿರಾಸೆ

0

ಬೆಂಗಳೂರು: ರಾಜ್ಯ ಸಹಕಾರ ಕ್ಷೇತ್ರದ ಪ್ರಮುಖ ಸಂಸ್ಥೆಯಾಗಿರುವ ಕರ್ನಾಟಕ ರಾಜ್ಯ ಅಪೆಕ್ಸ್ ಬ್ಯಾಂಕ್‌ನ ಅಧ್ಯಕ್ಷ ಸ್ಥಾನ ಕೊನೆಗೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸಂಬಂಧಿ ಹಾಗೂ ಆಪ್ತರಾಗಿರುವ ವಿಧಾನ ಪರಿಷತ್ ಸದಸ್ಯ ರವಿ ಅವರ ಪಾಲಾಗಿದೆ. ಉಪಾಧ್ಯಕ್ಷರಾಗಿ ಶರಣಗೌಡ ಬಯ್ಯಾಪುರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಅಪೆಕ್ಸ್ ಬ್ಯಾಂಕ್‌ಗೆ ನಾಲ್ಕು ತಿಂಗಳ ಹಿಂದೆಯೇ ಚುನಾವಣೆ ನಡೆಯಬೇಕಿತ್ತು. ಆದರೆ ಅಧ್ಯಕ್ಷ ಸ್ಥಾನಕ್ಕಾಗಿ ಆಕಾಂಕ್ಷಿಗಳ ನಡುವೆ ತೀವ್ರ ಪೈಪೋಟಿ ಇದ್ದ ಹಿನ್ನೆಲೆಯಲ್ಲಿ ಚುನಾವಣೆ ಮುಂದೂಡಿಕೆಯಾಗಿತ್ತು. ಅಂತಿಮವಾಗಿ ಎಂಎಲ್‌ಸಿ ರವಿ ಹಾಗೂ ಮಾಜಿ ಸಚಿವ ಕೆ.ಎನ್. ರಾಜಣ್ಣ ನಡುವೆ ಅಧ್ಯಕ್ಷ ಸ್ಥಾನಕ್ಕಾಗಿ ಪೈಪೋಟಿ ತೀವ್ರಗೊಂಡಿತ್ತು.

ಈ ನಡುವೆ ಕಾಂಗ್ರೆಸ್ ಹೈಕಮಾಂಡ್ ರವಿ ಅವರನ್ನು ಅಧ್ಯಕ್ಷರನ್ನಾಗಿ ಹಾಗೂ ಶರಣಗೌಡ ಬಯ್ಯಾಪುರ ಅವರನ್ನು ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡುವ ಮೂಲಕ ಹಲವು ದಿನಗಳಿಂದ ನಡೆಯುತ್ತಿದ್ದ ಕುತೂಹಲಕ್ಕೆ ತೆರೆ ಎಳೆದಿದೆ.

ಬುಧವಾರ ಸಹಕಾರ ಸಚಿವ ಲಕ್ಷ್ಮಣ ಸವದಿ ಅವರ ಉಪಸ್ಥಿತಿಯಲ್ಲಿ ಡಿ.ಕೆ. ಶಿವಕುಮಾರ್ ಅವರು ಅಪೆಕ್ಸ್ ಬ್ಯಾಂಕ್‌ನ 19 ನಿರ್ದೇಶಕರೊಂದಿಗೆ ಸಭೆ ನಡೆಸಿದ್ದರು. ಬಳಿಕ ಸಂಜೆ ನಿರ್ದೇಶಕರು, ಸಚಿವ ಲಕ್ಷ್ಮಣ ಸವದಿ ಹಾಗೂ ಕೆ.ಎನ್. ರಾಜಣ್ಣ ಅವರು ಖಾಸಗಿ ಹೋಟೆಲ್‌ನಲ್ಲಿ ಮತ್ತೊಂದು ಸುತ್ತಿನ ಮಾತುಕತೆ ನಡೆಸಿದ್ದರು. ಈ ವೇಳೆ ಬಹುತೇಕ ನಿರ್ದೇಶಕರು ರವಿ ಅವರ ಪರ ನಿಂತ ಹಿನ್ನೆಲೆಯಲ್ಲಿ ಚುನಾವಣೆ ನಡೆಸದೇ ಇಬ್ಬರನ್ನೂ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.

ಅಪೆಕ್ಸ್ ಬ್ಯಾಂಕ್ ಚುನಾವಣಾ ಪ್ರಕ್ರಿಯೆ ಕುರಿತು ಬೆಂಗಳೂರಿನಲ್ಲಿ ಸಹಕಾರ ಸಚಿವ ಲಕ್ಷ್ಮಣ ಸವದಿ ಸ್ಪಷ್ಟನೆ ನೀಡಿದ್ದು, ಮೊದಲ ಎರಡೂವರೆ ವರ್ಷಗಳ ಅವಧಿಗೆ ಎಂಎಲ್‌ಸಿ ರವಿ ಅವರನ್ನು ಅಧ್ಯಕ್ಷರನ್ನಾಗಿ ಹಾಗೂ ಶರಣಗೌಡ ಬಯ್ಯಾಪುರ ಅವರನ್ನು ಉಪಾಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ನಾಮಪತ್ರ ಸಲ್ಲಿಕೆಯ ಬಳಿಕ ಇಬ್ಬರ ಆಯ್ಕೆ ಅಂತಿಮಗೊಂಡಿದ್ದು, ಮುಂದಿನ ಎರಡೂವರೆ ವರ್ಷಗಳ ಅಧಿಕಾರಾವಧಿ ಕುರಿತು ನಂತರ ತೀರ್ಮಾನಿಸಲಾಗುವುದು ಎಂದು ಹೇಳಿದ್ದಾರೆ.

ಇತ್ತ ಮಾಜಿ ಸಚಿವ ಹಾಗೂ ಸಿದ್ದರಾಮಯ್ಯ ಅವರ ಕಟ್ಟಾ ಬೆಂಬಲಿಗರಾಗಿರುವ ಕೆ.ಎನ್. ರಾಜಣ್ಣ ಅವರಿಗೆ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಸ್ಥಾನ ಕೈತಪ್ಪಿರುವುದು ರಾಜಕೀಯವಾಗಿ ಹಿನ್ನಡೆಯಾಗಿ ಪರಿಣಮಿಸಿದೆ. ಸಂಪುಟ ಪುನಾರಚನೆ ವೇಳೆ ಸಚಿವ ಸ್ಥಾನ ವಂಚಿತರಾಗಿದ್ದ ರಾಜಣ್ಣ, ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಸ್ಥಾನವನ್ನು ಪಡೆಯುವ ನಿರೀಕ್ಷೆಯಲ್ಲಿದ್ದರು. ಆದರೆ ಇದೀಗ ಆ ಸ್ಥಾನವೂ ಅವರ ಕೈತಪ್ಪಿದೆ.

ಈ ಬೆಳವಣಿಗೆಯ ಬೆನ್ನಲ್ಲೇ ಕಾಂಗ್ರೆಸ್‌ನೊಳಗಿನ ರಾಜಕೀಯ ಸಮೀಕರಣಗಳ ಬಗ್ಗೆಯೂ ಚರ್ಚೆ ಜೋರಾಗಿದೆ. ಡಿ.ಕೆ. ಶಿವಕುಮಾರ್ ಅವರ ಕಾರ್ಯವೈಖರಿಯನ್ನು ಬಹಿರಂಗವಾಗಿ ಪ್ರಶ್ನಿಸುತ್ತಿದ್ದ ನಾಯಕರನ್ನು ಪ್ರಮುಖ ಹಾಗೂ ಆಯಕಟ್ಟಿನ ಹುದ್ದೆಗಳಿಂದ ದೂರವಿಡಲಾಗುತ್ತಿದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ.

ಮಾಜಿ ಸಚಿವರಾದ ಡಾ. ಹೆಚ್.ಸಿ. ಮಹದೇವಪ್ಪ ಹಾಗೂ ಕೆ.ಎನ್. ರಾಜಣ್ಣ ಅವರು ಅಧಿಕಾರದಿಂದ ದೂರ ಉಳಿಯುವಂತಾಗಿರುವುದು ಇದೇ ಚರ್ಚೆಗೆ ಮತ್ತಷ್ಟು ಪುಷ್ಟಿ ನೀಡಿದೆ. ಮತ್ತೊಂದೆಡೆ, ಸನ್ನಿವೇಶಕ್ಕೆ ತಕ್ಕಂತೆ ರಾಜಕೀಯ ಹೆಜ್ಜೆ ಇಟ್ಟಿರುವ ಜಮೀರ್ ಅಹ್ಮದ್ ಅವರು ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ ಎಂಬ ವಿಶ್ಲೇಷಣೆಗಳೂ ಕೇಳಿಬರುತ್ತಿವೆ.

ಮಾನವ ನಿಯಂತ್ರಣಕ್ಕೆ ಸಿಗದಷ್ಟು ಶಕ್ತಿಶಾಲಿಯಾಗಲಿದೆಯೇ AI? ಆಂಥ್ರೋಪಿಕ್ ತಜ್ಞನ ಶಾಕಿಂಗ್ ವಾರ್ನಿಂಗ್!

0

ವಾಷಿಂಗ್ಟನ್‌: ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ವೇಗವಾಗಿ ಅಭಿವೃದ್ಧಿಯಾಗುತ್ತಿರುವ ಬೆನ್ನಲ್ಲೇ, ಅದರ ಭವಿಷ್ಯದ ಪರಿಣಾಮಗಳ ಕುರಿತು ಆತಂಕವೂ ಹೆಚ್ಚುತ್ತಿದೆ. AI ಕಂಪನಿಗಳು ಮಾನವರು ನಿಯಂತ್ರಿಸಲು ಕಷ್ಟವಾಗುವಷ್ಟು ಶಕ್ತಿಶಾಲಿ ವ್ಯವಸ್ಥೆಗಳತ್ತ ವೇಗವಾಗಿ ಸಾಗುತ್ತಿವೆ. ಈ ದಶಕದ ಅಂತ್ಯದ ವೇಳೆಗೆ AI ಮನುಕುಲಕ್ಕೆ ದೊಡ್ಡ ಅಪಾಯ ತಂದೊಡ್ಡುವ ಸಾಧ್ಯತೆಯಿದೆ ಎಂದು AI ಕ್ಷೇತ್ರದಲ್ಲಿ ಕೆಲಸ ಮಾಡಿದ್ದ ಸಂಶೋಧಕರೊಬ್ಬರು ಎಚ್ಚರಿಕೆ ನೀಡಿದ್ದಾರೆ.

ಆ್ಯಂಥ್ರೋಪಿಕ್ ಸಂಸ್ಥೆಯಲ್ಲಿ ಮೂರು ವರ್ಷಗಳ ಕಾಲ AI ಸಂಶೋಧಕರಾಗಿ ಕಾರ್ಯನಿರ್ವಹಿಸಿದ್ದ ಜಾಕೋಬ್ ಕಾಕ್ಸೋನ್ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ ಬಳಿಕ ಈ ಆತಂಕವನ್ನು ವ್ಯಕ್ತಪಡಿಸಿದ್ದಾರೆ. AI ಕ್ಷೇತ್ರದ ಎಕ್ಸಿಕ್ಯುಟಿವ್‌ಗಳು ಮತ್ತು ಹಿರಿಯ ಸಂಶೋಧಕರು ಸಾರ್ವಜನಿಕವಾಗಿ ಹೇಳುವ ಮಾತುಗಳಿಗಿಂತ ಖಾಸಗಿ ಚರ್ಚೆಗಳಲ್ಲಿ ಹೆಚ್ಚು ಗಂಭೀರವಾದ ಆತಂಕಗಳನ್ನು ವ್ಯಕ್ತಪಡಿಸುತ್ತಿರುವುದನ್ನು ತಾವು ಕೇಳಿದ್ದಾಗಿ ಅವರು ಹೇಳಿದ್ದಾರೆ.

AI ಅಭಿವೃದ್ಧಿಯ ವೇಗವನ್ನು ಗಮನಿಸಿದರೆ, ಇತರೆ ಯಾವುದೇ ಮಾನವ ಚಟುವಟಿಕೆಗಳು ಒಡ್ಡದಷ್ಟು ದೊಡ್ಡ ಅಪಾಯವನ್ನು ಈ ತಂತ್ರಜ್ಞಾನ ಒಡ್ಡಬಹುದು ಎಂಬುದು ಅವರ ಅಭಿಪ್ರಾಯವಾಗಿದೆ. AI ವ್ಯವಸ್ಥೆಗಳು ಅತಿಮಾನವ ಮಟ್ಟದ ಬುದ್ಧಿಮತ್ತೆಯನ್ನು ಸಾಧಿಸಿದರೆ ಅವುಗಳನ್ನು ನಿಯಂತ್ರಿಸುವುದು ಅತ್ಯಂತ ಕಷ್ಟಕರವಾಗಬಹುದು ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಜಾಕೋಬ್ ಕಾಕ್ಸೋನ್ ಅವರ ಹೇಳಿಕೆಗೆ ಆ್ಯಂಥ್ರೋಪಿಕ್‌ನ ಸೇಫ್ಟಿ ಲೀಡ್ ಈವನ್ ಹುಬಿಂಜರ್ ಕೂಡ ಬೆಂಬಲ ವ್ಯಕ್ತಪಡಿಸಿದ್ದಾರೆ. ಅತಿಶಕ್ತಿಶಾಲಿ AI ವ್ಯವಸ್ಥೆಗಳಿಂದ ಮಾನವರಿಗೆ ಗಂಭೀರ ಅಪಾಯ ಎದುರಾಗುವ ಸಾಧ್ಯತೆಯನ್ನು ತಾವು ಕೂಡ ಪರಿಗಣಿಸುತ್ತಿರುವುದಾಗಿ ಅವರು ಹೇಳಿದ್ದಾರೆ.

ಅತಿಮಾನವ AI ವ್ಯವಸ್ಥೆಗಳ ನಿಯಂತ್ರಣ ಮತ್ತು ಸುರಕ್ಷತೆಗಾಗಿ ಆ್ಯಂಥ್ರೋಪಿಕ್ ಹಲವು ಪ್ರಯತ್ನಗಳನ್ನು ನಡೆಸುತ್ತಿದ್ದರೂ, ಅತ್ಯಂತ ಬುದ್ಧಿವಂತ AI ವ್ಯವಸ್ಥೆಗಳ ‘ಅಲೈನ್‌ಮೆಂಟ್‌’ ಸಮಸ್ಯೆಯನ್ನು ಸಂಪೂರ್ಣವಾಗಿ ಪರಿಹರಿಸಲು ಸದ್ಯ ಯಾವುದೇ ಖಚಿತ ಯೋಜನೆ ತಮ್ಮ ಬಳಿ ಇಲ್ಲ ಎಂದು ಹುಬಿಂಜರ್ ಹೇಳಿದ್ದಾರೆ. AI ವ್ಯವಸ್ಥೆಗಳು ಮಾನವ ಉದ್ದೇಶಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸುವಂತೆ ಮಾಡುವುದು ಅಲೈನ್‌ಮೆಂಟ್‌ನ ಪ್ರಮುಖ ಉದ್ದೇಶವಾಗಿದೆ.

AI ತಂತ್ರಜ್ಞಾನವನ್ನು ಕಡಿಮೆ ಅಂದಾಜು ಮಾಡಬಾರದು ಎಂಬುದನ್ನೂ ಸಂಶೋಧಕರು ಒತ್ತಿಹೇಳಿದ್ದಾರೆ. ಭವಿಷ್ಯದಲ್ಲಿ ಅತಿಮಾನವ ಸಾಮರ್ಥ್ಯ ಹೊಂದುವ AI ವ್ಯವಸ್ಥೆಗಳು ಸೈಬರ್ ಭದ್ರತೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ವೇಗವಾಗಿ ಬದಲಾವಣೆ ತರಬಲ್ಲವು. ಯಾವುದೇ ತಂತ್ರಜ್ಞಾನ ಅಥವಾ ಕ್ಷೇತ್ರದಲ್ಲಿ ಅತ್ಯಂತ ಕಡಿಮೆ ಅವಧಿಯಲ್ಲಿ ದೊಡ್ಡ ಮಟ್ಟದ ಪರಿಣಾಮ ಉಂಟುಮಾಡುವ ಸಾಮರ್ಥ್ಯವನ್ನು ಇಂತಹ ವ್ಯವಸ್ಥೆಗಳು ಹೊಂದಿರಬಹುದು ಎಂಬ ಆತಂಕ ವ್ಯಕ್ತವಾಗಿದೆ.

ಈ ಹಿನ್ನೆಲೆಯಲ್ಲಿ AI ಅಭಿವೃದ್ಧಿಯ ವೇಗ ಮತ್ತು ಅದರ ಸುರಕ್ಷತೆಯ ನಡುವೆ ಸಮತೋಲನ ಕಾಯ್ದುಕೊಳ್ಳುವುದು ಅಗತ್ಯವಾಗಿದೆ. ಸರ್ಕಾರಗಳು ಮತ್ತು AI ಕಂಪನಿಗಳು ಒಟ್ಟಾಗಿ ಕೆಲಸ ಮಾಡಿ ಈ ತಂತ್ರಜ್ಞಾನ ಅಭಿವೃದ್ಧಿಯ ಸ್ಪರ್ಧೆಗೆ ಸೂಕ್ತ ಮಿತಿಗಳನ್ನು ರೂಪಿಸಬೇಕು ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.

ಮುಂಗಾರು ಅಬ್ಬರಕ್ಕೆ ಜಲಾಶಯಗಳು ಭರ್ತಿ; ಕರ್ನಾಟಕದ ಪ್ರಮುಖ ಡ್ಯಾಂಗಳ ಇಂದಿನ ನೀರಿನ ಮಟ್ಟ ಇಲ್ಲಿದೆ

0

ಬೆಂಗಳೂರು: ಕರ್ನಾಟಕದಲ್ಲಿ ಮುಂಗಾರು ಮಳೆ ಆರ್ಭಟ ಮುಂದುವರಿದಿದೆ. ಇದರ ಪರಿಣಾಮ ರಾಜ್ಯದ ಪ್ರಮುಖ ಜಲಾಶಯಗಳಿಗೆ ನೀರಿನ ಒಳಹರಿವು ಉತ್ತಮವಾಗಿದೆ.

ಕೃಷ್ಣಾ ಹಾಗೂ ತುಂಗಭದ್ರಾ ಜಲಾನಯನ ಪ್ರದೇಶದ ಹಲವು ಡ್ಯಾಂಗಳು ಭರ್ತಿಯ ಅಂಚಿಗೆ ತಲುಪಿದ್ದು, ಕಾವೇರಿ ಜಲಾನಯನ ಪ್ರದೇಶದ ಕೆಆರ್‌ಎಸ್‌ನಲ್ಲೂ ನೀರಿನ ಸಂಗ್ರಹ ಸ್ಥಿರವಾಗಿದೆ. ಇಂದಿನ ಸೆಪ್ಟೆಂಬರ್ 10ರ ಪ್ರಮುಖ ಜಲಾಶಯಗಳ ನೀರಿನ ಮಟ್ಟ ಹೇಗಿದೆ ಅನ್ನೋದನ್ನ ನೋಡೋದಾದ್ರೆ..

ಯಾದಗಿರಿ ಜಿಲ್ಲೆಯ ನಾರಾಯಣಪುರದ ಬಸವಸಾಗರ ಜಲಾಶಯ ಬಹುತೇಕ ಭರ್ತಿಯಾಗಿದೆ. 492.25 ಮೀಟರ್ ಗರಿಷ್ಠ ಮಟ್ಟ ಹೊಂದಿರುವ ಜಲಾಶಯದಲ್ಲಿ ಸದ್ಯ 492.07 ಮೀಟರ್ ನೀರು ಸಂಗ್ರಹವಾಗಿದೆ. ಒಳಹರಿವು ಸದ್ಯ ಶೂನ್ಯ ಕ್ಯೂಸೆಕ್ ಇದ್ದು, 12 ಸಾವಿರ ಕ್ಯೂಸೆಕ್ ನೀರನ್ನು ಹೊರಗೆ ಬಿಡಲಾಗುತ್ತಿದೆ.

ಇನ್ನು ವಿಜಯಪುರ ಜಿಲ್ಲೆಯ ಆಲಮಟ್ಟಿ ಜಲಾಶಯ ಕೂಡ ಭರ್ತಿಯ ಅಂಚಿನಲ್ಲಿದೆ. 519.60 ಮೀಟರ್ ಗರಿಷ್ಠ ಮಟ್ಟ ಹೊಂದಿರುವ ಜಲಾಶಯದಲ್ಲಿ ಸದ್ಯ 519.56 ಮೀಟರ್ ನೀರಿನ ಮಟ್ಟವಿದೆ. 12,326 ಕ್ಯೂಸೆಕ್ ಒಳಹರಿವು ಇದ್ದು, 8,263 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ.

ಮಂಡ್ಯದ ಕೆಆರ್‌ಎಸ್ ಜಲಾಶಯದ ಕಡೆ ನೋಡೋದಾದ್ರೆ, 124.80 ಅಡಿ ಗರಿಷ್ಠ ಮಟ್ಟ ಹೊಂದಿರುವ ಜಲಾಶಯದಲ್ಲಿ ಸದ್ಯ 106.64 ಅಡಿ ನೀರಿದೆ. ಒಟ್ಟು 49.452 ಟಿಎಂಸಿ ಸಾಮರ್ಥ್ಯ ಹೊಂದಿರುವ ಕೆಆರ್‌ಎಸ್‌ನಲ್ಲಿ 28.478 ಟಿಎಂಸಿ ನೀರು ಸಂಗ್ರಹವಾಗಿದೆ. ಒಳಹರಿವು 2,804 ಕ್ಯೂಸೆಕ್ ಇದ್ದು, ಹೊರಹರಿವು 3,734 ಕ್ಯೂಸೆಕ್ ಇದೆ.

ಇನ್ನು ವಿಜಯನಗರ ಜಿಲ್ಲೆಯ ಹೊಸಪೇಟೆಯ ತುಂಗಭದ್ರಾ ಜಲಾಶಯದಲ್ಲೂ 90 ಟಿಎಂಸಿಗೂ ಹೆಚ್ಚು ನೀರು ಸಂಗ್ರಹವಾಗಿದೆ. 1633 ಅಡಿ ಗರಿಷ್ಠ ಮಟ್ಟ ಹೊಂದಿರುವ ಜಲಾಶಯದಲ್ಲಿ ಸದ್ಯ 1629.08 ಅಡಿ ನೀರಿದೆ. ಒಟ್ಟು 105.788 ಟಿಎಂಸಿ ಸಾಮರ್ಥ್ಯದಲ್ಲಿ 90.643 ಟಿಎಂಸಿ ನೀರು ಸಂಗ್ರಹವಾಗಿದೆ.

ಇನ್ನು ಕಬಿನಿ ಜಲಾಶಯದ ನೀರಿನ ಮಟ್ಟ ನೋಡೋದಾದ್ರೆ, 84 ಅಡಿ ಗರಿಷ್ಠ ಮಟ್ಟ ಹೊಂದಿರುವ ಜಲಾಶಯದಲ್ಲಿ ಸದ್ಯ 68.62 ಅಡಿ ನೀರಿದೆ. ಒಟ್ಟು ಸಂಗ್ರಹ 11.01 ಟಿಎಂಸಿ ಎಂದು ವರದಿಯಾಗಿದೆ.

ಒಟ್ಟಾರೆ ರಾಜ್ಯದಲ್ಲಿ ಮುಂಗಾರು ಮಳೆ ಮುಂದುವರಿದಿರುವ ಹಿನ್ನೆಲೆ ಪ್ರಮುಖ ಜಲಾಶಯಗಳಲ್ಲಿ ನೀರಿನ ಸಂಗ್ರಹ ಉತ್ತಮವಾಗಿದೆ. ಕೃಷ್ಣಾ, ತುಂಗಭದ್ರಾ ಹಾಗೂ ಕಾವೇರಿ ಜಲಾನಯನ ಪ್ರದೇಶದ ಡ್ಯಾಂಗಳ ನೀರಿನ ಮಟ್ಟದ ಮೇಲೆ ಸದ್ಯ ಎಲ್ಲರ ಗಮನ ನೆಟ್ಟಿದೆ.

ಮೈಸೂರು ಗಣೇಶ ಚತುರ್ಥಿಗೆ ಮಾಂಸ ಮಾರಾಟ ಬಂದ್; ಸೆ.14ರಂದು ಕಸಾಯಿಖಾನೆಗಳೂ ಕ್ಲೋಸ್

0

ಮೈಸೂರು: ಗಣೇಶ ಚತುರ್ಥಿ ಹಬ್ಬದ ಹಿನ್ನೆಲೆಯಲ್ಲಿ ಮೈಸೂರು ಮಹಾನಗರ ಪಾಲಿಕೆ ಮಹತ್ವದ ಆದೇಶ ಹೊರಡಿಸಿದೆ.

ಸೆಪ್ಟೆಂಬರ್ 14ರಂದು ನಗರ ವ್ಯಾಪ್ತಿಯಲ್ಲಿ ಕಸಾಯಿಖಾನೆಗಳು ಹಾಗೂ ಎಲ್ಲಾ ರೀತಿಯ ಮಾಂಸ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಪಾಲಿಕೆಯ ಆದೇಶದಂತೆ ಅಂದು ಕುರಿ, ಮೇಕೆ ಮಾಂಸ ಮಾರಾಟದ ಕಸಾಯಿಖಾನೆಗಳು, ಚಿಕನ್ ಸೆಂಟರ್‌ಗಳು, ಮಟನ್ ಅಂಗಡಿಗಳು, ಹಂದಿ ಮಾಂಸ ಮಾರಾಟ ಮಳಿಗೆಗಳು ಹಾಗೂ ಮೀನು ಮಾರಾಟದ ಅಂಗಡಿಗಳು ಕಡ್ಡಾಯವಾಗಿ ಬಂದ್ ಇರಬೇಕು. ಪ್ರಾಣಿವಧೆ ಮತ್ತು ಮಾಂಸ ಮಾರಾಟಕ್ಕೆ ಒಂದು ದಿನದ ಮಟ್ಟಿಗೆ ಸಂಪೂರ್ಣ ನಿರ್ಬಂಧ ವಿಧಿಸಲಾಗಿದೆ.

ಗಣೇಶ ಚತುರ್ಥಿ ದಿನದಂದು ಸಾರ್ವಜನಿಕರ ಧಾರ್ಮಿಕ ಭಾವನೆಗಳಿಗೆ ಗೌರವ ನೀಡುವುದರ ಜೊತೆಗೆ ನಗರದಲ್ಲಿ ಶಾಂತಿ ಮತ್ತು ಸೌಹಾರ್ದತೆಯ ವಾತಾವರಣ ಕಾಪಾಡುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಪಾಲಿಕೆ ತಿಳಿಸಿದೆ.

ಆದೇಶ ಉಲ್ಲಂಘಿಸಿದರೆ ಕಠಿಣ ಕ್ರಮ:

ನಿಷೇಧದ ನಡುವೆಯೂ ಯಾರಾದರೂ ಮಾಂಸ ಮಾರಾಟ ಮಾಡುವುದು ಕಂಡುಬಂದರೆ ಅಂತಹವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ನಿಯಮ ಪಾಲನೆಯಾಗುತ್ತಿದೆಯೇ ಎಂಬುದನ್ನು ಪರಿಶೀಲಿಸಲು ನಗರದಾದ್ಯಂತ ವಿಶೇಷ ಅಧಿಕಾರಿಗಳ ತಂಡದಿಂದ ತಪಾಸಣೆ ನಡೆಸಲಾಗುತ್ತದೆ.

ಹೀಗಾಗಿ ಸೆಪ್ಟೆಂಬರ್ 14ರಂದು ಮೈಸೂರಿನಲ್ಲಿ ಮಾಂಸ ಮಾರಾಟಕ್ಕೆ ಸಂಪೂರ್ಣ ಬ್ರೇಕ್ ಬೀಳಲಿದೆ. ಮಾಂಸ ಮಾರಾಟಗಾರರು, ಹೋಟೆಲ್‌ಗಳು ಹಾಗೂ ರೆಸ್ಟೋರೆಂಟ್‌ಗಳ ಮಾಲೀಕರು ಪಾಲಿಕೆಯ ಆದೇಶವನ್ನು ಗಮನದಲ್ಲಿಟ್ಟುಕೊಂಡು ಸಹಕರಿಸುವಂತೆ ಸೂಚಿಸಲಾಗಿದೆ.

ಮನೆಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡುತ್ತಿದ್ದೀರಾ? ಮೂರ್ತಿ ಆಯ್ಕೆಯಿಂದ ಪೂಜಾ ವಿಧಿವರೆಗೆ ಈ ನಿಯಮ ಗಮನಿಸಿ

0

ಗಣೇಶ ಚತುರ್ಥಿ ಹಬ್ಬದ ಸಂಭ್ರಮಕ್ಕೆ ದಿನಗಣನೆ ಆರಂಭವಾಗಿದೆ. ಹಬ್ಬದ ಸಂದರ್ಭದಲ್ಲಿ ಮನೆಗಳಲ್ಲಿ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸಿ, ವಿಶೇಷ ಪೂಜೆ ಸಲ್ಲಿಸಿ ಬಳಿಕ ವಿಸರ್ಜನೆ ಮಾಡುವುದು ವಾಡಿಕೆ.

ಆದರೆ ಮನೆಗೆ ಗಣೇಶನ ಮೂರ್ತಿಯನ್ನು ತರುವಾಗ ವಿಗ್ರಹದ ಸೊಂಡಿಲಿನ ದಿಕ್ಕು, ಭಂಗಿ, ಬಣ್ಣ ಹಾಗೂ ಗಾತ್ರ ಸೇರಿದಂತೆ ಕೆಲವು ವಿಚಾರಗಳನ್ನು ಗಮನಿಸಬೇಕು ಎಂದು ವಾಸ್ತು ಮತ್ತು ಧಾರ್ಮಿಕ ನಂಬಿಕೆಗಳು ಹೇಳುತ್ತವೆ.

ಮನೆಗೆ ಗಣೇಶನ ಮೂರ್ತಿ ತರುವಾಗ ಸಾಮಾನ್ಯವಾಗಿ ಎಡಕ್ಕೆ ತಿರುಗಿರುವ ಸೊಂಡಿಲಿನ ವಿಗ್ರಹವನ್ನು ಆಯ್ಕೆ ಮಾಡುವುದು ಶುಭಕರ ಎಂದು ಪರಿಗಣಿಸಲಾಗುತ್ತದೆ. ಇಂತಹ ಮೂರ್ತಿ ಮನೆಗೆ ಸಂತೋಷ, ಸಮೃದ್ಧಿ ಹಾಗೂ ಶಾಂತಿ ತರುತ್ತದೆ ಎಂಬ ನಂಬಿಕೆ ಇದೆ. ಬಲಕ್ಕೆ ತಿರುಗಿರುವ ಸೊಂಡಿಲಿನ ಮೂರ್ತಿಗಳಿಗೆ ವಿಶೇಷ ಪೂಜಾ ವಿಧಿವಿಧಾನಗಳ ಅಗತ್ಯವಿರುವುದರಿಂದ ಅವುಗಳನ್ನು ಮನೆಗಳಲ್ಲಿ ಪ್ರತಿಷ್ಠಾಪಿಸುವುದು ಸಾಮಾನ್ಯವಲ್ಲ ಎನ್ನಲಾಗುತ್ತದೆ.

ಇನ್ನು ಗಣೇಶನ ಮೂರ್ತಿಯ ಭಂಗಿಯೂ ಮುಖ್ಯವಾಗಿದ್ದು, ಕುಳಿತಿರುವ ಭಂಗಿಯಲ್ಲಿರುವ ವಿಗ್ರಹವನ್ನು ಮನೆಗೆ ತರುವುದು ಶುಭಕರ ಎಂದು ನಂಬಲಾಗಿದೆ. ಇದು ಸ್ಥಿರತೆ ಮತ್ತು ಅಭಿವೃದ್ಧಿಯ ಸಂಕೇತ ಎಂದು ಪರಿಗಣಿಸಲಾಗುತ್ತದೆ.

ಮೂರ್ತಿಯ ಬಣ್ಣದ ವಿಚಾರದಲ್ಲೂ ಕೆಲವು ನಿಯಮಗಳಿವೆ ಎನ್ನಲಾಗುತ್ತದೆ. ಕೇಸರಿ, ಬಿಳಿ ಹಾಗೂ ಹಳದಿ ಬಣ್ಣದ ಗಣೇಶನ ಮೂರ್ತಿಗಳನ್ನು ಶ್ರೇಷ್ಠವೆಂದು ಪರಿಗಣಿಸಲಾಗುತ್ತದೆ. ಕಪ್ಪು ಬಣ್ಣದ ವಿಗ್ರಹವನ್ನು ಮನೆಯಲ್ಲಿ ಪ್ರತಿಷ್ಠಾಪಿಸಬಾರದು ಎಂಬ ನಂಬಿಕೆಯೂ ಇದೆ.

ಮೂರ್ತಿಯಲ್ಲಿ ನಾಲ್ಕು ಕೈಗಳು ಹಾಗೂ ಗಣೇಶನ ವಾಹನವಾದ ಮೂಷಕ ಇರಬೇಕು ಎಂದು ಹೇಳಲಾಗುತ್ತದೆ. ಏಕದಂತ ರೂಪದ ಗಣೇಶನ ಮೂರ್ತಿಯಲ್ಲಿ ಬಲ ದಂತ ಪೂರ್ಣವಾಗಿದ್ದು, ಎಡ ದಂತ ಸ್ವಲ್ಪ ಮುರಿದಿರುವಂತೆ ಇರಬೇಕು ಎಂಬುದು ಮತ್ತೊಂದು ನಂಬಿಕೆ.

ಮನೆಯ ಗಣೇಶ ಪೂಜೆಗೆ ಜೇಡಿಮಣ್ಣು, ಹಿತ್ತಾಳೆ, ತಾಮ್ರ, ಬೆಳ್ಳಿ ಅಥವಾ ಬಿಳಿ ಅಮೃತಶಿಲೆಯಿಂದ ತಯಾರಿಸಿದ ಮೂರ್ತಿಗಳನ್ನು ಆಯ್ಕೆ ಮಾಡಬಹುದು ಎಂದು ಹೇಳಲಾಗುತ್ತದೆ. ಮೂರ್ತಿಯನ್ನು ಖರೀದಿಸುವಾಗ ಯಾವುದೇ ಬಿರುಕು ಅಥವಾ ಹಾನಿ ಇಲ್ಲದಿರುವುದನ್ನು ಪರಿಶೀಲಿಸುವುದು ಮುಖ್ಯ.

ಇನ್ನು ಮನೆಯ ಪೂಜಾ ಸ್ಥಳದ ಗಾತ್ರಕ್ಕೆ ಅನುಗುಣವಾಗಿ ಸಣ್ಣ ಅಥವಾ ಮಧ್ಯಮ ಗಾತ್ರದ ಮೂರ್ತಿಯನ್ನು ಆಯ್ಕೆ ಮಾಡುವುದು ಸೂಕ್ತ ಎಂದು ವಾಸ್ತು ನಂಬಿಕೆಗಳು ಹೇಳುತ್ತವೆ. ಮನೆಯ ಈಶಾನ್ಯ ಮೂಲೆಯಲ್ಲಿ ಅಥವಾ ಪೂರ್ವ ದಿಕ್ಕಿನಲ್ಲಿ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸುವುದು ಶುಭಕರ ಎಂದು ಪರಿಗಣಿಸಲಾಗುತ್ತದೆ.

ಪೂಜೆಯ ದಿನ ಬೆಳಗ್ಗೆ ಬೇಗ ಎದ್ದು ಸ್ನಾನ ಮಾಡಿ ಶುಚಿಯಾದ ಬಟ್ಟೆ ಧರಿಸಿ, ಮರದ ಪೀಠದ ಮೇಲೆ ಕೆಂಪು ಅಥವಾ ಹಳದಿ ಬಟ್ಟೆಯನ್ನು ಹಾಸಿ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸಬಹುದು. ಬಳಿಕ ಕಲಶ ಸ್ಥಾಪನೆ ಮಾಡಿ, ಗಣೇಶನಿಗೆ ಪ್ರಿಯವಾದ ಹೂವು, ಹಣ್ಣು, ಮೋದಕ ಅಥವಾ ಲಡ್ಡುಗಳನ್ನು ನೈವೇದ್ಯವಾಗಿ ಅರ್ಪಿಸಿ ಆರತಿ ಮಾಡಲಾಗುತ್ತದೆ.

ಇವೆಲ್ಲವೂ ಧಾರ್ಮಿಕ ಹಾಗೂ ವಾಸ್ತು ನಂಬಿಕೆಗಳನ್ನು ಆಧರಿಸಿದ ಆಚರಣೆಗಳಾಗಿದ್ದು, ಪ್ರದೇಶ ಮತ್ತು ಸಂಪ್ರದಾಯಕ್ಕೆ ಅನುಗುಣವಾಗಿ ವಿಧಿವಿಧಾನಗಳು ಬದಲಾಗಬಹುದು.

ಹಣದ ವಿಚಾರಕ್ಕೆ ಅಳಿಯಂದಿರ ನಡುವೆ ಜಗಳ; ಕತ್ತಿಯಿಂದ ಇರಿದು ವ್ಯಕ್ತಿ ಕೊಲೆ

0

ಹಾಸನ: ಹಣದ ವಿಚಾರಕ್ಕೆ ಒಂದೇ ಮನೆಯ ಅಳಿಯಂದಿರ ನಡುವೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಬೇಲೂರು ತಾಲೂಕಿನ ಅರೇಹಳ್ಳಿಯಲ್ಲಿ ನಡೆದಿದೆ.

ಜಗಳದ ವೇಳೆ ಕತ್ತಿಯಿಂದ ಇರಿತಕ್ಕೊಳಗಾದ ಮಹಮದ್ ಸಿದ್ದಿಕ್ (33) ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸುಜೀತ್ (29) ವಿರುದ್ಧ ಕೊಲೆ ಆರೋಪ ಕೇಳಿಬಂದಿದೆ.

ಒಂದು ವರ್ಷದ ಹಿಂದೆ ದಿವ್ಯಾ ಅವರಿಗೆ ಅವರ ಅಕ್ಕ ರೇಷ್ಮಾ ₹50 ಸಾವಿರ ಸಾಲ ನೀಡಿದ್ದರು ಎನ್ನಲಾಗಿದೆ. ಹಣವನ್ನು ವಾಪಸ್ ನೀಡುವಂತೆ ರೇಷ್ಮಾ, ತಂಗಿ ದಿವ್ಯಾ ಅವರನ್ನು ಕೇಳಿದ್ದರು. ಇದೇ ವಿಚಾರವಾಗಿ ರೇಷ್ಮಾ ಪತಿ ಮಹಮದ್ ಸಿದ್ದಿಕ್ ಹಾಗೂ ದಿವ್ಯಾ ಪತಿ ಸುಜೀತ್ ನಡುವೆ ಜಗಳ ಶುರುವಾಗಿದೆ.

ಜಗಳ ತಾರಕಕ್ಕೇರಿದ ವೇಳೆ ಸುಜೀತ್ ತನ್ನ ಬಳಿಯಿದ್ದ ಕತ್ತಿಯಿಂದ ಮಹಮದ್ ಸಿದ್ದಿಕ್‌ಗೆ ಹಲವು ಬಾರಿ ಇರಿದಿದ್ದಾನೆ ಎಂದು ಆರೋಪಿಸಲಾಗಿದೆ. ಗಂಭೀರವಾಗಿ ಗಾಯಗೊಂಡಿದ್ದ ಸಿದ್ದಿಕ್ ಅವರನ್ನು ಅರೇಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿತ್ತು.

ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಸಿದ್ದಿಕ್ ಅವರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದ್ದ ಹಿನ್ನೆಲೆಯಲ್ಲಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಸ್ಥಳಾಂತರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.

ಘಟನೆ ಮಾಹಿತಿ ತಿಳಿದು ಅರೇಹಳ್ಳಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ತನಿಖೆ ಕೈಗೊಂಡಿದ್ದಾರೆ.

ದರ್ಶನ್ ಫಾರ್ಮ್‌ಹೌಸ್‌ನ ಹೆಬ್ಬಾತು ಪ್ರಕರಣ: ಹೈಕೋರ್ಟ್ ಮೆಟ್ಟಿಲೇರಿದ ವಿಜಯಲಕ್ಷ್ಮಿ!

0

ಬೆಂಗಳೂರು: ನಟ ದರ್ಶನ್ ಅವರ ಫಾರ್ಮ್‌ಹೌಸ್‌ನಲ್ಲಿ ಪಟ್ಟೆ ತಲೆ ಹೆಬ್ಬಾತುಗಳು ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್ ಕುಟುಂಬ ಇದೀಗ ಹೈಕೋರ್ಟ್‌ ಮೊರೆ ಹೋಗಿದೆ.

ದರ್ಶನ್ ಅವರ ಫಾರ್ಮ್‌ಹೌಸ್‌ನಲ್ಲಿ ನಾಲ್ಕು ಪಟ್ಟೆ ತಲೆ ಹೆಬ್ಬಾತುಗಳು ಪತ್ತೆಯಾದ ಹಿನ್ನೆಲೆಯಲ್ಲಿ ಅರಣ್ಯಾಧಿಕಾರಿಗಳು ಟಿ. ನರಸೀಪುರ ನ್ಯಾಯಾಲಯಕ್ಕೆ ಖಾಸಗಿ ದೂರು ಸಲ್ಲಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್, ವಿಜಯಲಕ್ಷ್ಮಿ ಹಾಗೂ ನಾಗರಾಜ್ ಅವರಿಗೆ ನ್ಯಾಯಾಲಯ ಸಮನ್ಸ್ ಜಾರಿ ಮಾಡಿತ್ತು.

ಇದನ್ನು ಪ್ರಶ್ನಿಸಿ ದರ್ಶನ್, ವಿಜಯಲಕ್ಷ್ಮಿ ಹಾಗೂ ನಾಗರಾಜ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ನಾಲ್ಕು ಪಟ್ಟೆ ತಲೆ ಹೆಬ್ಬಾತುಗಳನ್ನು ತಾವು ಸಾಕಿಲ್ಲ ಎಂದು ಅರ್ಜಿಯಲ್ಲಿ ತಿಳಿಸಿದ್ದಾರೆ.

ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ದಾಖಲಿಸಿರುವ ಪ್ರಕರಣದಲ್ಲಿ ತಮ್ಮ ವಿರುದ್ಧ ಯಾವುದೇ ಆಧಾರವಿಲ್ಲ ಎಂದು ವಾದಿಸಿರುವ ಅರ್ಜಿದಾರರು, ಪ್ರಕರಣವನ್ನು ರದ್ದುಗೊಳಿಸುವಂತೆ ಹೈಕೋರ್ಟ್‌ಗೆ ಮನವಿ ಮಾಡಿದ್ದಾರೆ.