Home Blog Page 4

‘ಅಹವಾಲು ನಿಮ್ಮದು; ಪರಿಹಾರ ನಮ್ಮದು’: ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್

0

ವಿಜಯಸಾಕ್ಷಿ ಸುದ್ದಿ, ಗದಗ: ಸಾರ್ವಜನಿಕರು ಸಲ್ಲಿಸುವ ಅಹವಾಲುಗಳನ್ನು ಸ್ವೀಕರಿಸಿ ಕಡತಕ್ಕೆ ಸೀಮಿತಗೊಳಿಸದೆ, ಸಮಸ್ಯೆ ಬಗೆಹರಿಯುವವರೆಗೆ ನಿರಂತರ ಅನುಸರಣೆ ನಡೆಸಿ ಪರಿಹಾರ ಕಲ್ಪಿಸಲಾಗುವುದು ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಹೇಳಿದರು.

ನಗರದ ಜಿಲ್ಲಾಡಳಿತ ಭವನದಲ್ಲಿ ಶನಿವಾರ ಜಿಲ್ಲಾಡಳಿತದ ನೇತೃತ್ವದಲ್ಲಿ ನಡೆದ ‘ಪ್ರಜಾ ಸೇವಾ ಅಭಿಯಾನ–ಜನ ಸಂಪರ್ಕ ಸಭೆ’ ಉದ್ಘಾಟಿಸಿ ಅವರು ಮಾತನಾಡಿದರು.

‘ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ’ ಹಾಗೂ ‘ಅಹವಾಲು ನಿಮ್ಮದು, ಪರಿಹಾರ ನಮ್ಮದು’ ಎಂಬ ಆಶಯದೊಂದಿಗೆ ನಡೆಯುತ್ತಿರುವ ಅಭಿಯಾನವು ಸರ್ಕಾರದ ಸೇವೆಗಳನ್ನು ಜನರ ಮನೆಬಾಗಿಲಿಗೆ ತಲುಪಿಸುವ ಮಹತ್ವದ ಹೆಜ್ಜೆಯಾಗಿದೆ. ಸಾರ್ವಜನಿಕರು ಸಮಸ್ಯೆಗಳ ಪರಿಹಾರಕ್ಕಾಗಿ ಕಚೇರಿಯಿಂದ ಕಚೇರಿಗೆ ಅಲೆದಾಡುವ ಪರಿಸ್ಥಿತಿ ತಪ್ಪಿಸುವುದು ಇದರ ಉದ್ದೇಶವಾಗಿದೆ ಎಂದರು.

ಪ್ರತಿ ಶನಿವಾರ ಅಹವಾಲುಗಳ ಪರಿಶೀಲನೆ

ಪ್ರತಿ ಮನೆಗೂ ಅಹವಾಲು ಸಲ್ಲಿಸಲು ಅರ್ಜಿ ನಮೂನೆಗಳನ್ನು ನೀಡಲಾಗಿದ್ದು, ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ಸ್ಪಷ್ಟವಾಗಿ ನಮೂದಿಸಿ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬೇಕು. ಜನ ಸಂಪರ್ಕ ಸಭೆಯಲ್ಲಿ ಸ್ವೀಕರಿಸಿದ ಅಹವಾಲುಗಳ ಮೇಲೆ ಕೈಗೊಂಡ ಕ್ರಮಗಳ ಕುರಿತು ಪ್ರತಿ ಶನಿವಾರ ಪರಿಶೀಲನೆ ನಡೆಸಲಾಗುವುದು. ಸಮಸ್ಯೆ ಇತ್ಯರ್ಥವಾಗುವವರೆಗೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳೊಂದಿಗೆ ನಿರಂತರ ಅನುಸರಣೆ ಮಾಡಲಾಗುವುದು ಎಂದು ಶ್ರೀಧರ್ ತಿಳಿಸಿದರು.

ಸರ್ಕಾರದ ವಿವಿಧ ಯೋಜನೆಗಳು, ಸೌಲಭ್ಯಗಳು ಹಾಗೂ ಇಲಾಖೆಗಳ ಸೇವೆಗಳು ಅರ್ಹ ಫಲಾನುಭವಿಗಳಿಗೆ ತಲುಪಬೇಕು. ಯಾವುದೇ ಕಾರಣಕ್ಕೂ ಅರ್ಹರು ಸೌಲಭ್ಯಗಳಿಂದ ವಂಚಿತರಾಗಬಾರದು. ಸಾರ್ವಜನಿಕರು ಮಧ್ಯವರ್ತಿಗಳನ್ನು ಅವಲಂಬಿಸದೆ ನೇರವಾಗಿ ಅಧಿಕಾರಿಗಳನ್ನು ಸಂಪರ್ಕಿಸಿ ಅರ್ಜಿ ಸಲ್ಲಿಸಬೇಕು ಎಂದು ಮನವಿ ಮಾಡಿದರು.

ಸಭೆಯಲ್ಲಿ ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ್ದ ಸಾರ್ವಜನಿಕರು ಕಂದಾಯ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಪೊಲೀಸ್, ಅರಣ್ಯ, ಕೃಷಿ ಸೇರಿದಂತೆ ವಿವಿಧ ಇಲಾಖೆಗಳ ವ್ಯಾಪ್ತಿಯ ವೈಯಕ್ತಿಕ ಹಾಗೂ ಸಾರ್ವಜನಿಕ ಸಮಸ್ಯೆಗಳನ್ನು ಅಧಿಕಾರಿಗಳ ಮುಂದಿಟ್ಟರು. ಕೆಲವು ಅಹವಾಲುಗಳಿಗೆ ಸ್ಥಳದಲ್ಲಿಯೇ ಪರಿಹಾರ ಕಲ್ಪಿಸಲಾಯಿತು. ಸ್ಥಳ ಪರಿಶೀಲನೆ, ದಾಖಲೆ ಪರಿಶೀಲನೆ ಅಥವಾ ಇಲಾಖೆಯ ಅನುಮತಿ ಅಗತ್ಯವಿದ್ದ ಪ್ರಕರಣಗಳನ್ನು ಸಂಬಂಧಿಸಿದ ಅಧಿಕಾರಿಗಳಿಗೆ ವಹಿಸಿ, ನಿಗದಿತ ಅವಧಿಯಲ್ಲಿ ಕ್ರಮ ಕೈಗೊಳ್ಳುವಂತೆ ಸೂಚಿಸಲಾಯಿತು.

ಜನರ ಸಮಸ್ಯೆಗಳನ್ನು ಕೇವಲ ಅರ್ಜಿಗಳಾಗಿ ಪರಿಗಣಿಸದೆ, ಅವುಗಳ ಹಿಂದಿರುವ ವಾಸ್ತವಿಕ ಪರಿಸ್ಥಿತಿಯನ್ನು ಅರಿತು ಪರಿಹಾರ ಕಲ್ಪಿಸುವುದೇ ಜನ ಸಂಪರ್ಕ ಸಭೆಯ ಉದ್ದೇಶವಾಗಿದೆ. ಈ ಮೂಲಕ ಆಡಳಿತ ಮತ್ತು ಸಾರ್ವಜನಿಕರ ನಡುವಿನ ನೇರ ಸಂಪರ್ಕವನ್ನು ಮತ್ತಷ್ಟು ಬಲಪಡಿಸಲಾಗುತ್ತಿದೆ ಎಂದರು.

ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಎಚ್.ಎನ್., ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷ ಕುಮಾರ, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಸಿ.ಆರ್. ಮುಂಡರಗಿ, ಸಹಾಯಕ ಆಯುಕ್ತ ಗಂಗಪ್ಪ ಎಂ. ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು. ಅಪರ ಜಿಲ್ಲಾಧಿಕಾರಿ ಡಾ. ದುರ್ಗೇಶ್ ಕೆ.ಆರ್. ಸ್ವಾಗತಿಸಿ ಕಾರ್ಯಕ್ರಮದ ಉದ್ದೇಶ ವಿವರಿಸಿದರು. ವೆಂಕಟೇಶ್ ಆಲ್ಕೋಡ ಮತ್ತು ತಂಡ ನಾಡಗೀತೆ ಪ್ರಸ್ತುತಪಡಿಸಿದರು.

ಅಧಿಕಾರಿಗಳಿಗೆ ಸ್ಪಷ್ಟ ಹೊಣೆಗಾರಿಕೆ

ಅಹವಾಲು ಸ್ವೀಕರಿಸಿದ ಬಳಿಕ ಅದನ್ನು ಯಾವ ಇಲಾಖೆಗೆ ವಹಿಸಲಾಗಿದೆ, ಕೈಗೊಂಡ ಕ್ರಮವೇನು ಹಾಗೂ ಸಮಸ್ಯೆ ಇತ್ಯರ್ಥವಾಗಿದೆಯೇ ಎಂಬುದರ ಮೇಲೆ ಜಿಲ್ಲಾಡಳಿತ ನಿಗಾ ವಹಿಸಲಿದೆ. ಹೀಗಾಗಿ ಜನ ಸಂಪರ್ಕ ಸಭೆ ಕೇವಲ ಅಹವಾಲು ಸ್ವೀಕಾರ ಕಾರ್ಯಕ್ರಮವಾಗದೆ, ಪರಿಹಾರಕ್ಕೆ ಹೊಣೆಗಾರಿಕೆ ನಿಗದಿಪಡಿಸುವ ವೇದಿಕೆಯಾಗಿ ರೂಪುಗೊಳ್ಳಲಿದೆ.

ಸಾರ್ವಜನಿಕರಿಂದ ಸ್ವೀಕರಿಸುವ ಪ್ರತಿಯೊಂದು ಅರ್ಜಿಯೂ ಸಂಬಂಧಿಸಿದ ಇಲಾಖೆಯ ಗಮನಕ್ಕೆ ಹೋಗಬೇಕು. ಅರ್ಜಿ ಸ್ವೀಕರಿಸಿ ಅಲ್ಲಿಗೇ ಕೈಬಿಡುವ ವ್ಯವಸ್ಥೆ ಇದಲ್ಲ. ಸಮಸ್ಯೆ ಬಗೆಹರಿಯುವವರೆಗೆ ಅನುಸರಣೆ ನಡೆಸಲಾಗುವುದು. ಅರ್ಜಿಯ ಕುರಿತು ಕೈಗೊಂಡ ಕ್ರಮ ಹಾಗೂ ದೊರೆತ ಪರಿಹಾರದ ಬಗ್ಗೆಯೂ ಪರಿಶೀಲನೆ ನಡೆಸಲಾಗುತ್ತದೆ.

— ಸಿ.ಎನ್. ಶ್ರೀಧರ್, ಜಿಲ್ಲಾಧಿಕಾರಿ

ಜನರ ಸಮಸ್ಯೆಗಳಿಗೆ ಅಧಿಕಾರಿಗಳ ಸ್ಪಂದನೆ

0

ವಿಜಯಸಾಕ್ಷಿ ಸುದ್ದಿ, ಡಂಬಳ: ಜಿಲ್ಲಾಡಳಿತ, ತಾಲೂಕು ಆಡಳಿತ, ಡಂಬಳ ಗ್ರಾಮ ಪಂಚಾಯಿತಿ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಡಂಬಳ ಗ್ರಾಮದ ತೋಂಟದಾರ್ಯ ಕಲ್ಯಾಣ ಮಂಟಪದಲ್ಲಿ ನಡೆದ ಹೋಬಳಿ ಮಟ್ಟದ ಪ್ರಜಾಸೇವಾ ಆಂದೋಲನದಲ್ಲಿ ಸಾರ್ವಜನಿಕರಿಂದ ವಿವಿಧ ಸಮಸ್ಯೆಗಳಿಗೆ ಸಂಬಂಧಿಸಿದಂತೆ 175 ಅರ್ಜಿಗಳು ಸಲ್ಲಿಕೆಯಾದವು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ತಹಸೀಲ್ದಾರ್ ಯರಿಸ್ವಾಮಿ, ಸರ್ಕಾರಿ ಸೇವೆಗಳಿಗೆ ಸಂಬಂಧಿಸಿದ ಸಮಸ್ಯೆಗಳಿಗಾಗಿ ಸಾರ್ವಜನಿಕರು ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಿ, ಆಡಳಿತವನ್ನು ಜನರ ಬಳಿಗೆ ಕೊಂಡೊಯ್ಯುವ ಉದ್ದೇಶದಿಂದ ಪ್ರಜಾಸೇವಾ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಪಿಂಚಣಿ, ಪಹಣಿ, ಪಡಿತರ ಚೀಟಿ, ಕಂದಾಯ, ವಿದ್ಯುತ್, ಕುಡಿಯುವ ನೀರು, ಚರಂಡಿ ಸೇರಿದಂತೆ ವಿವಿಧ ಇಲಾಖೆಗಳ ಸೇವೆಗಳಿಗೆ ಸಂಬಂಧಿಸಿದ ಅರ್ಜಿಗಳು ಹಾಗೂ ದೂರುಗಳನ್ನು ಸ್ವೀಕರಿಸಲಾಯಿತು. ಅರ್ಜಿಗಳನ್ನು ಸಂಬಂಧಿಸಿದ ಇಲಾಖೆಗೆ ಕಳುಹಿಸಿ ನಿಗದಿತ ಕಾಲಮಿತಿಯಲ್ಲಿ ಪರಿಹರಿಸಲಾಗುವುದು ಎಂದು ತಿಳಿಸಿದರು.

ಸಮಾಜ ಕಲ್ಯಾಣ ಅಧಿಕಾರಿ ಉದಯಕುಮಾರ ಯಲಿವಾಳ ಹಾಗೂ ಬಿಇಒ ಗಂಗಾಧರ ಅಣ್ಣಿಗೇರಿ ಮಾತನಾಡಿ, ಸಾರ್ವಜನಿಕರ ಸಮಸ್ಯೆಗಳಿಗೆ ಕಾಲಮಿತಿಯಲ್ಲಿ ಪರಿಹಾರ ಒದಗಿಸುವುದು ಅಭಿಯಾನದ ಉದ್ದೇಶವಾಗಿದೆ. ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಡಂಬಳ ಹೋಬಳಿಯ ವಿವಿಧ ಗ್ರಾಮಗಳಿಂದ ಸಲ್ಲಿಕೆಯಾದ ಅರ್ಜಿಗಳಲ್ಲಿ ಆಶ್ರಯ ಮನೆಗಳ ಬೇಡಿಕೆ ಹೆಚ್ಚಿನ ಸಂಖ್ಯೆಯಲ್ಲಿತ್ತು. ಡಂಬಳ ಎಪಿಎಂಸಿಯಲ್ಲಿ ವಿದ್ಯುತ್ ದೀಪ ಅಳವಡಿಕೆ, ಸಿದ್ಧಲಿಂಗಪ್ಪ ಪ್ಲಾಟ್‌ಗೆ ತೆರಳುವ ರಸ್ತೆಯ ಕಂಬಗಳಿಗೆ ಬೀದಿ ದೀಪ, ಚರಂಡಿ ಹಾಗೂ ಸಿಸಿ ರಸ್ತೆ ನಿರ್ಮಾಣ, ನೂತನ ಕೆರೆ ಮತ್ತು ಸಾರ್ವಜನಿಕ ಶೌಚಾಲಯ ನಿರ್ಮಾಣ ಸೇರಿದಂತೆ ಹಲವು ಮೂಲಸೌಕರ್ಯ ಸಮಸ್ಯೆಗಳ ಕುರಿತು ಸಾರ್ವಜನಿಕರು ಮನವಿ ಸಲ್ಲಿಸಿದರು.

ಮುಂಡರಗಿ ಉಪತಹಸೀಲ್ದಾರ್ ಬಿ.ಎಸ್. ಕನ್ನೂರ ಅವರು ಸ್ವೀಕರಿಸಲಾದ ಅರ್ಜಿಗಳನ್ನು ಪರಿಶೀಲಿಸಿ, ಸಂಬಂಧಿಸಿದ ಇಲಾಖೆಗಳ ಗಮನಕ್ಕೆ ತಂದರು.

ಸಮಾಜ ಕಲ್ಯಾಣ ಇಲಾಖೆಯ ಅಂತರಜಾತಿ ವಿವಾಹ ಪ್ರೋತ್ಸಾಹ ಯೋಜನೆಯಡಿ ಜಂತ್ಲಿ ಶಿರೂರ ಗ್ರಾಮದ ರವಿ ಕೋಟೆಪ್ಪ ಹೊಸಮನಿ ಮತ್ತು ರಕ್ಷಿತಾ ದಂಪತಿಗೆ ₹1.50 ಲಕ್ಷ ಮೊತ್ತದ ಠೇವಣಿ ಬಾಂಡ್ ವಿತರಿಸಲಾಯಿತು. ಅಂಗವಿಕಲರ ಹಾಗೂ ವೃದ್ಧಾಪ್ಯ ಮಾಶಾಸನದ ಮಂಜೂರಾತಿ ಪತ್ರಗಳನ್ನು ಸ್ಥಳದಲ್ಲಿಯೇ ನೀಡಲಾಯಿತು.

ಕಾರ್ಯಕ್ರಮಕ್ಕೆ ಕೆಲವು ಇಲಾಖೆಗಳ ಸ್ಥಳೀಯ ಅಧಿಕಾರಿಗಳು ಆಗಮಿಸದೆ ತಮ್ಮ ಸಿಬ್ಬಂದಿಯನ್ನು ಕಳುಹಿಸಿರುವುದು ಕಂಡುಬಂತು.

ಕಾರ್ಯಕ್ರಮದಲ್ಲಿ ಇಒ ವಿಜಯಕುಮಾರ ಬೆಣ್ಣಿ, ತೋಟಗಾರಿಕಾ ಹಿರಿಯ ಅಧಿಕಾರಿ ಮಹಮ್ಮದ್ ರಫೀಕ್ ತಾಂಬೋಟಿ, ಡಂಬಳ ಉಪ ತಹಸೀಲ್ದಾರ್ ಎಸ್.ಎಸ್. ಬಿಚ್ಚಾಲಿ, ಅರಣ್ಯ ವಲಯ ಅಧಿಕಾರಿ ಮಂಜುನಾಥ ಮೇಗಲಮನಿ, ಪಶುವೈದ್ಯಾಧಿಕಾರಿ ಡಾ. ಎಸ್.ವಿ. ತಿಗರಿಮಠ, ಉಪತಹಸೀಲ್ದಾರ್ ಚಿದಾನಂದ ಬಳೂಟಗಿ, ಕಾರ್ಯಪಾಲಕ ಅಭಿಯಂತರ ನಾಗೇಂದ್ರ ಪಟ್ಟಶೆಟ್ಟರ್, ಸಿಪಿಐ ಅಯ್ಯನಗೌಡ ಪಾಟೀಲ, ಡಂಬಳ ಗ್ರಾಪಂ ಆಡಳಿತಾಧಿಕಾರಿ ಗುರುರಾಜ ಚವ್ಹಾಣ, ಕಂದಾಯ ನಿರೀಕ್ಷಕ ಪ್ರಭು ಬಾಗಲಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

ಸರ್ಕಾರಿ ಕಚೇರಿಗಳಿಗೆ ಅಲೆದಾಡುವ ಬದಲು ಜನರ ಸಮಸ್ಯೆಗಳನ್ನು ಅವರ ಬಳಿಯೇ ಆಲಿಸಿ, ಸಾಧ್ಯವಾದಷ್ಟು ಸ್ಥಳದಲ್ಲಿಯೇ ಪರಿಹಾರ ನೀಡುವುದು ಪ್ರಜಾಸೇವಾ ಆಂದೋಲನದ ಉದ್ದೇಶ. ಸಲ್ಲಿಕೆಯಾಗಿರುವ ಎಲ್ಲ ಅರ್ಜಿಗಳನ್ನು ಸಂಬಂಧಿಸಿದ ಇಲಾಖೆಗೆ ರವಾನಿಸಿ, ನಿಯಮಾನುಸಾರ ಶೀಘ್ರ ಪರಿಹಾರ ಒದಗಿಸಲಾಗುವುದು.

— ಯರಿಸ್ವಾಮಿ, ತಹಸೀಲ್ದಾರ್

ಜನರ ಬಳಿಗೆ ಬಂದ ಸರ್ಕಾರ : ಪ್ರಜಾಸೇವಾ ಆಂದೋಲನದಲ್ಲಿ 200ಕ್ಕೂ ಹೆಚ್ಚು ಅರ್ಜಿ ಸ್ವೀಕಾರ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಸರ್ಕಾರಿ ಸೌಲಭ್ಯ ಹಾಗೂ ವಿವಿಧ ಯೋಜನೆಗಳಿಗಾಗಿ ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಿ, ಜನರ ಸಮಸ್ಯೆಗಳಿಗೆ ತ್ವರಿತ ಪರಿಹಾರ ಕಲ್ಪಿಸುವ ಉದ್ದೇಶದಿಂದ ಹಮ್ಮಿಕೊಂಡಿರುವ ‘ಪ್ರಜಾಸೇವಾ ಆಂದೋಲನ’ಕ್ಕೆ ಲಕ್ಷ್ಮೇಶ್ವರದಲ್ಲಿ ಭರ್ಜರಿ ಸ್ಪಂದನೆ ವ್ಯಕ್ತವಾಗಿದೆ. ಶನಿವಾರ ತಾಲೂಕು ಪಂಚಾಯಿತಿ ಕಾರ್ಯಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಗಳ ಪ್ರತ್ಯೇಕ ಕೌಂಟರ್‌ಗಳ ಮೂಲಕ 200ಕ್ಕೂ ಹೆಚ್ಚು ಅರ್ಜಿಗಳನ್ನು ಸ್ವೀಕರಿಸಲಾಯಿತು.

‘ಸರ್ಕಾರ ಬಾಗಿಲಿಗೆ ಬಂತು, ಸರ್ಕಾರ-ಸೇವೆಗೆ ಇರಲಿ ಸಹಕಾರ’ ಎಂಬ ಆಶಯದಡಿ ನಡೆದ ಕಾರ್ಯಕ್ರಮಕ್ಕೆ ಉಪತಹಸೀಲ್ದಾರ ಮಂಜುನಾಥ ಅಮಾಸಿ ಚಾಲನೆ ನೀಡಿದರು. ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ, ವಿವಿಧ ಪಿಂಚಣಿ ಯೋಜನೆಗಳ ಫಲಾನುಭವಿಗಳಿಗೆ ಆದೇಶ ಪತ್ರ ವಿತರಿಸಿದರು.

ಆಹಾರ, ಕಂದಾಯ, ತಾಲೂಕು ಪಂಚಾಯಿತಿ, ಪುರಸಭೆ ಹಾಗೂ ಹೆಸ್ಕಾಂ ಸೇರಿದಂತೆ ವಿವಿಧ ಇಲಾಖೆಗಳ ಕೌಂಟರ್‌ಗಳನ್ನು ತೆರೆಯಲಾಗಿತ್ತು. ಹೊಸ ರೇಷನ್‌ ಕಾರ್ಡ್‌ಗಾಗಿ ಹೆಚ್ಚಿನ ಅರ್ಜಿಗಳು ಸಲ್ಲಿಕೆಯಾಗಿದ್ದು, ಒಟ್ಟಾರೆ 200ಕ್ಕೂ ಹೆಚ್ಚು ಅರ್ಜಿಗಳು ಸ್ವೀಕೃತವಾದವು. ಸಂಧ್ಯಾ ಸುರಕ್ಷಾ, ವೃದ್ಧಾಪ್ಯ ಹಾಗೂ ಕುಟುಂಬ ನಿರ್ವಹಣೆ ಯೋಜನೆಗಳ ಫಲಾನುಭವಿಗಳಿಗೆ ಆದೇಶ ಪತ್ರ ನೀಡಲಾಯಿತು.

ತಾಪಂ ಇಒ ಮಂಜುಳಾ ಹಕಾರಿ ಮಾತನಾಡಿ, ಸರ್ಕಾರಿ ಯೋಜನೆಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದು ಅಧಿಕಾರಿಗಳ ಜವಾಬ್ದಾರಿಯಾಗಿದ್ದು, ಮಧ್ಯವರ್ತಿಗಳ ಹಸ್ತಕ್ಷೇಪವಿಲ್ಲದೆ ಅರ್ಹರಿಗೆ ಸೌಲಭ್ಯ ತಲುಪಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಪುರಸಭೆ ಮುಖ್ಯಾಧಿಕಾರಿ ಪರಶುರಾಮ ಗುಡದಾರಿ, ಹೆಸ್ಕಾಂ ಎಇ ಆಂಜನಪ್ಪ ಬಿ., ವಿಬಿಜಿ-ರಾಮ್-ಜಿ ಸಹಾಯಕ ನಿರ್ದೇಶಕ ಕೃಷ್ಣಪ್ಪ ಧರ್ಮರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು. ಸರ್ಕಾರಿ ಪ್ರಾಥಮಿಕ ಶಾಲೆ ನಂ.2ರ ಮಕ್ಕಳು ನಾಡಗೀತೆ ಹಾಡಿದರು. ಶಿಕ್ಷಕ ಡಿ.ಡಿ. ಲಮಾಣಿ ನಿರೂಪಿಸಿದರು.

ಸಾರ್ವಜನಿಕರು ಸಮಸ್ಯೆಗಳ ಪರಿಹಾರಕ್ಕಾಗಿ ವಿವಿಧ ಸರ್ಕಾರಿ ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸುವುದೇ ಆಂದೋಲನದ ಉದ್ದೇಶ. ಪ್ರತಿ ತಿಂಗಳ 1 ಮತ್ತು 3ನೇ ಶನಿವಾರ ತಾಲೂಕು ಹಾಗೂ ಹೋಬಳಿ ಮಟ್ಟದಲ್ಲಿ ಅಹವಾಲು ಸ್ವೀಕರಿಸಲಾಗುವುದು. ಅಧಿಕಾರಿಗಳು ಅಹವಾಲು ಆಲಿಸುವುದಷ್ಟೇ ಅಲ್ಲದೆ, ನಿಯಮಾನುಸಾರ ಶೀಘ್ರ ಪರಿಹಾರ ಕಲ್ಪಿಸಬೇಕು.

— ಮಂಜುನಾಥ ಅಮಾಸಿ, ಉಪತಹಸೀಲ್ದಾರ್

ಕಪ್ಪತ್ತಮಲ್ಲಯ್ಯ–ಭ್ರಮರಾಂಬಾದೇವಿ ಕಲ್ಯಾಣಕ್ಕೆ ಡಂಬಳ ಸಜ್ಜು

0

ವಿಜಯಸಾಕ್ಷಿ ಸುದ್ದಿ, ಡಂಬಳ: ಐತಿಹಾಸಿಕ ಹಾಗೂ ಧಾರ್ಮಿಕ ಕ್ಷೇತ್ರವಾದ ಡಂಬಳ–ಕಪ್ಪತ್ತಗುಡ್ಡದಲ್ಲಿ ಶ್ರೀ ಕಪ್ಪತ್ತಮಲ್ಲೇಶ್ವರ (ಕಪ್ಪತ್ತಮಲ್ಲಯ್ಯ) ಹಾಗೂ ಭ್ರಮರಾಂಬಾದೇವಿ ವಿವಾಹ ಮಹೋತ್ಸವ ಮತ್ತು ಜಾತ್ರಾ ರಥೋತ್ಸವ ಸೆ. 6 ಮತ್ತು 7ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಅದ್ಧೂರಿಯಾಗಿ ನಡೆಯಲಿದೆ.

ಕಪ್ಪತ್ತಗುಡ್ಡದ ಕಪ್ಪತ್ತಮಲ್ಲೇಶ್ವರ ದೇವಸ್ಥಾನದಲ್ಲಿ ಸೆ. 6ರಂದು ಕಪ್ಪತ್ತಮಲ್ಲೇಶ್ವರ ಹಾಗೂ ಭ್ರಮರಾಂಬಾದೇವಿಯ ವಿವಾಹ ಮಹೋತ್ಸವ ಕಪ್ಪತ್ತಮಲ್ಲೇಶ್ವರ ಟ್ರಸ್ಟ್ ಕಮಿಟಿ ವತಿಯಿಂದ ನೆರವೇರಲಿದೆ. ವಿವಾಹ ಮಹೋತ್ಸವದ ಅಂಗವಾಗಿ ದಾಸೋಹ ಸಮಿತಿಯಿಂದ ಕಪ್ಪತ್ತಗುಡ್ಡದಲ್ಲಿ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ.

ಇದರ ಮುಂದುವರಿದ ಭಾಗವಾಗಿ ಸೆ. 7ರಂದು ಡಂಬಳ ಗ್ರಾಮದಲ್ಲಿ ಜಾತ್ರಾ ರಥೋತ್ಸವ ಜರುಗಲಿದೆ. ಡಂಬಳದ ಮೈಲಾರಲಿಂಗೇಶ್ವರ ದೇವಸ್ಥಾನದಿಂದ ಹೊರಡುವ ರಥವು ಗ್ರಾಮದ ಪ್ರಮುಖ ಪೇಟೆಯ ಮೂಲಕ ಸಂಚರಿಸಿ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನ ತಲುಪಲಿದೆ.

ಎರಡು ದಿನಗಳ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸುತ್ತಮುತ್ತಲಿನ ಗ್ರಾಮಗಳ ಹಾಗೂ ವಿವಿಧೆಡೆಯಿಂದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ವಿವಾಹ ಮಹೋತ್ಸವ ಹಾಗೂ ರಥೋತ್ಸವವನ್ನು ಯಶಸ್ವಿಗೊಳಿಸಬೇಕು ಎಂದು ಕಪ್ಪತ್ತಮಲ್ಲೇಶ್ವರ ಟ್ರಸ್ಟ್ ಕಮಿಟಿ ಹಾಗೂ ಜಾತ್ರಾ ಮಹೋತ್ಸವ ಸಮಿತಿ ಪದಾಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ. ಕಪ್ಪತ್ತಮಲ್ಲೇಶ್ವರ ಟ್ರಸ್ಟ್ ಕಮಿಟಿ ಅಧ್ಯಕ್ಷ ಮಹೇಶ ಗಡಗಿ, ಉಪಾಧ್ಯಕ್ಷರಾದ ಮಹೇಶ ರಾಯರಡ್ಡಿ ಹಾಗೂ ತ್ರಿಯಾಂಬಕ ಎನ್. ಬಂಡಿಹಾಳ, ಕಾರ್ಯದರ್ಶಿ ಶರಣಬಸಪ್ಪ ಪ್ಯಾಟಿ, ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಪ್ಯಾಟಿ, ಉಪಾಧ್ಯಕ್ಷ ಬಸುರಾಜ ಶಿರೋಳ, ಕಾರ್ಯದರ್ಶಿ ಶಶಿಕುಮಾರ ಸಣ್ಣಪ್ಯಾಟಿ, ಖಜಾಂಚಿ ಮಲ್ಲೇಶ ಚಿಕ್ಕರಡ್ಡಿ ಸೇರಿದಂತೆ ಉತ್ಸವ ಸಮಿತಿ, ದಾಸೋಹ ಸಮಿತಿ ಸದಸ್ಯರು ಹಾಗೂ ಭಕ್ತರು ಉತ್ಸವದ ಸಿದ್ಧತೆಯಲ್ಲಿ ತೊಡಗಿದ್ದಾರೆ.

ಕಪ್ಪತ್ತಮಲ್ಲೇಶ್ವರ–ಭ್ರಮರಾಂಬಾದೇವಿ ವಿವಾಹ ಮಹೋತ್ಸವ ಮತ್ತು ರಥೋತ್ಸವವು ಭಕ್ತಿಭಾವದಿಂದ ನಡೆಯಲಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಉತ್ಸವದ ಸಡಗರ ಹೆಚ್ಚಿಸಬೇಕು.

— ಮಹೇಶ ಗಡಗಿ, ಅಧ್ಯಕ್ಷ, ಕಪ್ಪತ್ತಮಲ್ಲೇಶ್ವರ ಟ್ರಸ್ಟ್ ಕಮಿಟಿ

ಮಕ್ಕಳ ಕೈಗೆ ಮೊಬೈಲ್‌ಗಿಂತ ಸಾಹಿತ್ಯದ ಪುಸ್ತಕ ಬರಲಿ: ಚೆನ್ನಬಸಪ್ಪ ಅಕ್ಕಿ

0

ವಿಜಯಸಾಕ್ಷಿ ಸುದ್ದಿ, ಗದಗ: ಮಕ್ಕಳ ಕೈಗೆ ಮೊಬೈಲ್‌ಗಿಂತ ಸಾಹಿತ್ಯದ ಪುಸ್ತಕಗಳು ಸಿಗುವಂತಾಗಬೇಕು. ಉತ್ತಮ ಓದುವ ಹವ್ಯಾಸವು ಮಕ್ಕಳ ಜ್ಞಾನ, ವ್ಯಕ್ತಿತ್ವ ಹಾಗೂ ಸೃಜನಶೀಲ ಬೆಳವಣಿಗೆಗೆ ಬಲವಾದ ಅಡಿಪಾಯವಾಗಿದ್ದು, ಮಕ್ಕಳು ಬಾಲ್ಯದಿಂದಲೇ ಸಾಹಿತ್ಯದ ಒಡನಾಟ ಬೆಳೆಸಿಕೊಳ್ಳಬೇಕು ಎಂದು ಚಿಂತಕ ಚೆನ್ನಬಸಪ್ಪ ಅಕ್ಕಿ ಹೇಳಿದರು.

ಬೆಟಗೇರಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ. 8ರಲ್ಲಿ ಗದಗ ಜಿಲ್ಲಾ ಶರಣ ಸಂಕುಲದ ಶರಣೆ ಅಕ್ಕಮಹಾದೇವಿ ಕದಳಿಶ್ರೀ ವೇದಿಕೆ ವತಿಯಿಂದ ಆಯೋಜಿಸಿದ್ದ ಶ್ರಾವಣ ಮಾಸದ ‘ಅಮೃತ ಭೋಜನ–ಜ್ಞಾನ ಸಿಂಚನ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಕಥೆ, ಕವನ, ನಾಟಕ, ಗಾದೆ ಹಾಗೂ ಶಿಶುಗೀತೆಗಳು ಮಕ್ಕಳಲ್ಲಿ ಜ್ಞಾನ ಮತ್ತು ಕಲ್ಪನಾಶಕ್ತಿಯ ಜತೆಗೆ ವಿಚಾರವಂತಿಕೆಯನ್ನು ಬೆಳೆಸುತ್ತವೆ. ಉತ್ತಮ ಸಾಹಿತ್ಯ ಓದುವ ಮೂಲಕ ಭಾಷಾ ಜ್ಞಾನವನ್ನು ರೂಢಿಸಿಕೊಳ್ಳಬೇಕು. ಓದುವುದು ಎಂದರೆ ಕೇವಲ ಅಕ್ಷರಗಳನ್ನು ಓದುವುದಲ್ಲ; ಓದಿದ್ದನ್ನು ಮನನ ಮಾಡಿಕೊಂಡು ಬದುಕಿನಲ್ಲಿ ಅಳವಡಿಸಿಕೊಳ್ಳುವುದು ಮುಖ್ಯ ಎಂದರು.

ಗದಗ ಜಿಲ್ಲೆ ಐತಿಹಾಸಿಕವಾಗಿ ವಿಶೇಷ ಸ್ಥಾನ ಹೊಂದಿದ್ದು, ಮಕ್ಕಳು ಜಿಲ್ಲೆಯ ಐತಿಹಾಸಿಕ ಸ್ಥಳಗಳ ಕುರಿತು ತಿಳಿದುಕೊಳ್ಳುವುದರ ಜತೆಗೆ ಅವುಗಳನ್ನು ನೇರವಾಗಿ ಕಂಡು ಅರ್ಥೈಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಮಕ್ಕಳಿಗೆ ಸಿಹಿ ವಿತರಿಸಿ ಮಾತನಾಡಿದ ಲೇಖಕಿ ಮಂಜುಳಾ ವೆಂಕಟೇಶಯ್ಯ, ಓದುವ ಹವ್ಯಾಸದಿಂದ ಜ್ಞಾನ, ಭಾಷಾ ಸಾಮರ್ಥ್ಯ, ಸೃಜನಶೀಲತೆ, ಏಕಾಗ್ರತೆ ಹಾಗೂ ಪದಸಂಪತ್ತು ವೃದ್ಧಿಯಾಗುತ್ತದೆ. ಮಕ್ಕಳು ಚಿಕ್ಕಚಿಕ್ಕ ಕವಿತೆ, ಕಥೆಗಳನ್ನು ಬರೆಯುವ ಮತ್ತು ಓದುವ ಅಭ್ಯಾಸ ಬೆಳೆಸಿಕೊಳ್ಳಬೇಕು ಎಂದರು.

ಚಿಂತಕಿ ಪುಷ್ಪಲತಾ ಚಿಕ್ಕಣ್ಣವರ ಮಾತನಾಡಿ, ಉತ್ತಮ ಹವ್ಯಾಸ ಹಾಗೂ ಮೌಲ್ಯಗಳನ್ನು ಜೀವನದಲ್ಲಿ ರೂಢಿಸಿಕೊಳ್ಳಬೇಕು. ಓದು-ಬರಹದಲ್ಲಿ ಯಶಸ್ಸು ಸಾಧಿಸಲು ಶಿಕ್ಷಕರು ಮತ್ತು ಪಾಲಕರ ಮಾರ್ಗದರ್ಶನ ಪಾಲಿಸಬೇಕು. ಟಿ.ವಿ. ಹಾಗೂ ಮೊಬೈಲ್ ಬಳಕೆಯಿಂದ ದೂರವಿದ್ದು, ಶರಣರ ತತ್ವಗಳು ಮತ್ತು ವಚನಗಳನ್ನು ಅರಿತುಕೊಳ್ಳಬೇಕು ಎಂದರು.

ಹಿರಿಯ ಚಿಂತಕಿ ಪುಷ್ಪಾ ಮಾಕಾಪೂರ ಮಾತನಾಡಿ, ಮಕ್ಕಳಲ್ಲಿ ಓದುವ ಹವ್ಯಾಸ ಬೆಳೆಸಲು ಶಾಲೆ ಹಾಗೂ ಮನೆಯ ಸಹಕಾರ ಅತ್ಯಗತ್ಯ. ಓದಿ, ಅರ್ಥೈಸಿಕೊಂಡು ತಪ್ಪಿಲ್ಲದಂತೆ ಬರೆಯುವ ಅಭ್ಯಾಸ ವಿದ್ಯಾರ್ಥಿಗಳ ಶೈಕ್ಷಣಿಕ ಯಶಸ್ಸಿಗೆ ನೆರವಾಗುತ್ತದೆ. ಉತ್ತಮ ಓದು ಮಕ್ಕಳನ್ನು ಉತ್ತಮ ವ್ಯಕ್ತಿಗಳನ್ನಾಗಿ ರೂಪಿಸುತ್ತದೆ ಎಂದರು.

ಕಾರ್ಯಕ್ರಮದ ಆರಂಭದಲ್ಲಿ ಖುಷಿ ಕಾಶಪ್ಪನವರ, ಮೀನಾಕ್ಷಿ ಎಣ್ಣಿ, ದಿವ್ಯಾ ಹಳ್ಳಿಕೇರಿ, ಶ್ರಾವಣಿ ಜಾಲಿಕಟ್ಟಿ ಹಾಗೂ ಸಂಗೀತಾ ಹಾವೇರಿ ವಚನ ಪ್ರಾರ್ಥನೆ ನೆರವೇರಿಸಿದರು. ವೇದಿಕೆಯ ಸಂಚಾಲಕಿ ಕವಿತಾ ದಂಡಿನ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯೋಪಾಧ್ಯಾಯಿನಿ ಎನ್.ಎಸ್. ಮಾಗಳ ಸ್ವಾಗತಿಸಿದರು. ಶಿಕ್ಷಕಿ ಐ.ವೈ. ಉಳ್ಳಾಗಡ್ಡಿ ನಿರೂಪಿಸಿದರು. ಆರ್.ಎಸ್. ರಾಜೋಳಿ ಪರಿಚಯಿಸಿದರು. ವಿದ್ಯಾ ಕಾಡಸಿದ್ಧೇಶ್ವರಮಠ ವಂದಿಸಿದರು.

ಪೂರ್ಣಿಮಾ ಸರ್ವಿ, ಸಾವಿತ್ರಿ ಬಿಜವಾಡ, ರಾಧಿಕಾ ಮುಳ್ಳಾಳ, ವೀಣಾ ನೀಲಗುಂದ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಸಾಹಿತ್ಯ ಮಕ್ಕಳಲ್ಲಿ ಕೇವಲ ಜ್ಞಾನವನ್ನಷ್ಟೇ ಬೆಳೆಸುವುದಿಲ್ಲ; ಅವರ ಕಲ್ಪನಾಶಕ್ತಿ, ವಿಚಾರಶಕ್ತಿ ಹಾಗೂ ವ್ಯಕ್ತಿತ್ವವನ್ನು ರೂಪಿಸುತ್ತದೆ. ಓದುವ, ಬರೆಯುವ ಮತ್ತು ಮಾತನಾಡುವ ಕೌಶಲಗಳು ಭವಿಷ್ಯದಲ್ಲಿ ಅವರಿಗೆ ಸುಗಮ ದಾರಿ ತೋರಿಸುತ್ತವೆ.

— ಚೆನ್ನಬಸಪ್ಪ ಅಕ್ಕಿ, ಚಿಂತಕ

₹165 ಕೋಟಿಯಲ್ಲಿ ರಸ್ತೆ ಅಭಿವೃದ್ಧಿಗೆ ಭರ್ಜರಿ ಚಾಲನೆ

0

ವಿಜಯಸಾಕ್ಷಿ ಸುದ್ದಿ, ಹಗರಿಬೊಮ್ಮನಹಳ್ಳಿ: ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಪ್ರಮುಖ ಗ್ರಾಮಗಳು ಹಾಗೂ ಹಳ್ಳಿಗಳಿಗೆ ಸುಗಮ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ₹165 ಕೋಟಿ ವೆಚ್ಚದಲ್ಲಿ ವಿವಿಧ ರಸ್ತೆ ಮತ್ತು ಸೇತುವೆ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಎಂದು ಶಾಸಕ ಕೆ. ನೇಮಿರಾಜ ನಾಯ್ಕ ಹೇಳಿದರು.

ತಾಲೂಕಿನ ದಶಮಾಪುರ ಗ್ರಾಮದಲ್ಲಿ ಶುಕ್ರವಾರ ₹3 ಕೋಟಿ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿ ಹಾಗೂ ವರಲಹಳ್ಳಿಯಲ್ಲಿ ₹5 ಕೋಟಿ ವೆಚ್ಚದಲ್ಲಿ ಸೇತುವೆ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ಹಲವು ವರ್ಷಗಳಿಂದ ರಸ್ತೆ ಸಮಸ್ಯೆ ಎದುರಿಸುತ್ತಿರುವ ಗ್ರಾಮಗಳ ಜನರಿಗೆ ಕಾಮಗಾರಿಗಳಿಂದ ಅನುಕೂಲವಾಗಲಿದೆ. ಗ್ರಾಮೀಣ ಸಂಪರ್ಕ ರಸ್ತೆಗಳು ಸುಧಾರಿಸುವುದರಿಂದ ರೈತರು ತಮ್ಮ ಉತ್ಪನ್ನಗಳನ್ನು ಸಾಗಿಸಲು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಸಂಚರಿಸಲು ಅನುಕೂಲವಾಗಲಿದೆ ಎಂದರು.

ಕ್ಷೇತ್ರದ ಬಂಡಿಹಳ್ಳಿ–ದಶಮಾಪುರ–ನಾಣ್ಯಪುರ ರಸ್ತೆ, ಬ್ಯಾಸಿಗಿದೇರಿಯಿಂದ ನಂದಿಪುರದವರೆಗೆ, ಬ್ಯಾಸಿಗೇರಿ ವೃತ್ತದಿಂದ ತಂಬ್ರಹಳ್ಳಿ ಮಾರ್ಗ ಹಾಗೂ ಬ್ಯಾಲಾಳ ರಸ್ತೆ–ರೈಲ್ವೆ ಗೇಟ್‌ನಿಂದ ಹಗರಿ–ಕ್ಯಾದಿಹಳ್ಳಿ ಮೂಲಕ ಚಿಲಗೋಡುವರೆಗಿನ ರಸ್ತೆ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು. ಸೊನ್ನ–ಮೋರಿಗೇರಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ₹4.5 ಕೋಟಿ ವೆಚ್ಚವಾಗಲಿದ್ದು, ಶೀಘ್ರದಲ್ಲೇ ಚಾಲನೆ ನೀಡಲಾಗುವುದು ಎಂದರು.

ಚಿಂತರಪಳ್ಳಿ ರಸ್ತೆ ಅಭಿವೃದ್ಧಿಗೆ ₹4 ಕೋಟಿ ಮೀಸಲಿಡಲಾಗಿದ್ದು, ಮರಿಯಮ್ಮನಹಳ್ಳಿಯಿಂದ ಇಟಗಿ ವರೆಗೆ ಡಬಲ್ ಕೋಟಿಂಗ್‌ ತಾರ್ ರಸ್ತೆ ನಿರ್ಮಿಸಲಾಗುವುದು. ಓಬಳಾಪುರ, ಕೆಚ್ಚಿನಬಂಡಿ, ಹೊಸ ಆನಂದ ದೇವನಹಳ್ಳಿ ಹಾಗೂ ಹಲಗಾಪುರ ಗ್ರಾಮಗಳಲ್ಲಿ ತಲಾ ₹50 ಲಕ್ಷ ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಿಸಲಾಗುವುದು ಎಂದು ತಿಳಿಸಿದರು.

ಉಪ್ಪಾರಗಟ್ಟೆ ರಸ್ತೆ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ವರಲಹಳ್ಳಿ ಹಾಗೂ ಮಾಲವಿ ರಸ್ತೆ ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿವೆ. ಕೊಟ್ಟೂರು ಹಾಗೂ ಮರಿಯಮ್ಮನಹಳ್ಳಿ ಭಾಗದ ರಸ್ತೆ ಅಭಿವೃದ್ಧಿಗೂ ಆದ್ಯತೆ ನೀಡಲಾಗುವುದು ಎಂದರು.

ದಶಮಾಪುರದ ಮುಖಂಡರಾದ ಮಾಳಗಿ ಗಿರೀಶ್, ಚಂದ್ರಪ್ಪ, ಸಿದ್ದಬಸಪ್ಪ, ನಾಗರಾಜು, ಜಗದೀಶ್, ನೆರಗಲ್ ಬಸವರಾಜ್, ಹೋಟೆಲ್ ಸಿದ್ದರಾಜು, ವರಲಹಳ್ಳಿ ಮುಖಂಡರಾದ ಮೂರ್ತೆಪ್ಪ, ಸುರೇಶ್ ರೆಡ್ಡಿ, ಬಸವರಾಜ್, ನಾಗಪ್ಪ, ಕೊಟ್ರೇಶ್, ಬ್ಯಾಟಿ ನಾಗರಾಜ್ ಸೇರಿದಂತೆ ಲೋಕೋಪಯೋಗಿ ಇಲಾಖೆ, ಪಂಚಾಯಿತಿ ಅಭಿವೃದ್ಧಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

2027ರೊಳಗಾಗಿ ಹಗರಿಬೊಮ್ಮನಹಳ್ಳಿ, ಕೊಟ್ಟೂರು ಹಾಗೂ ಮರಿಯಮ್ಮನಹಳ್ಳಿ ವ್ಯಾಪ್ತಿಯ ಕ್ಷೇತ್ರದಲ್ಲಿ ಶೇ.80ರಷ್ಟು ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ಹಂತ ಹಂತವಾಗಿ ಎಲ್ಲ ಪ್ರಮುಖ ಸಂಪರ್ಕ ರಸ್ತೆಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು.

— ಕೆ. ನೇಮಿರಾಜ ನಾಯ್ಕ, ಶಾಸಕ

‘ಚಂದ್ರಿ’ ಚಿತ್ರೀಕರಣ ಮುಕ್ತಾಯ: ಭರದಿಂದ ಸಾಗಿದ ಪೋಸ್ಟ್‌ ಪ್ರೊಡಕ್ಷನ್‌ ಕೆಲಸ

ವಿಜಯಸಾಕ್ಷಿ ಸುದ್ದಿ, ಬೆಂಗಳೂರು: ಓಜೆಎಸ್ ಮೂವಿ ಮೇಕರ್ಸ್ ಅರ್ಪಿಸುವ ‘ಚಂದ್ರಿ’ ಕನ್ನಡ ಚಲನಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಇದೀಗ ಪೋಸ್ಟ್‌ ಪ್ರೊಡಕ್ಷನ್‌ ಕಾರ್ಯಗಳು ಭರದಿಂದ ಸಾಗಿವೆ.

ವಿಜಯನಗರ ಜಿಲ್ಲೆಯ ಕೊಟ್ಟೂರಿನ ಯುವ ಪ್ರತಿಭೆ ಎಸ್. ವೆಂಕಟೇಶ್ ಕೊಟ್ಟೂರು ನಿರ್ದೇಶಿಸುತ್ತಿರುವ ಎರಡನೇ ಚಿತ್ರ ಇದಾಗಿದ್ದು, ಡಾ. ಪ್ರವೀಣ್ ಚೌತಿ ಅವರ ‘ಬಯಲು’ ಕಥಾ ಸಂಕಲನದ ಕಥೆಯೊಂದನ್ನು ಆಧರಿಸಿ ಸಿನಿಮಾ ರೂಪಿಸಲಾಗಿದೆ. ಗ್ರಾಮೀಣ ಬದುಕಿನ ಸೂಕ್ಷ್ಮ ಭಾವನೆಗಳು, ಪ್ರೀತಿ, ಮೋಸ ಹಾಗೂ ಬದುಕಿಗಾಗಿ ನಡೆಯುವ ಹೋರಾಟವನ್ನು ಚಿತ್ರವು ತೆರೆದಿಡಲಿದೆ.

ಪ್ರಿಯಕರನ ಮೋಸಕ್ಕೆ ಬಲಿಯಾದ ಗ್ರಾಮೀಣ ಹೆಣ್ಣೊಬ್ಬಳು ಅಸಹಾಯಕಳಾಗಿ ಸಾವಿನ ಮನೆಯ ಕದ ತಟ್ಟುವ ಸಂದರ್ಭದಲ್ಲಿ ಸೈದಪ್ಪ ಆಕೆಗೆ ಹೊಸ ಬದುಕು ಕಟ್ಟಿಕೊಡುತ್ತಾನೆ. ಬದುಕಿನ ತುತ್ತಿನ ಚೀಲ ತುಂಬಿಸಿಕೊಳ್ಳಲು ಎರಡು ಜೀವಗಳು ನಡೆಸುವ ಹೋರಾಟವೇ ಚಿತ್ರದ ಪ್ರಮುಖ ಕಥಾಹಂದರವಾಗಿದೆ.

ರಾಯಚೂರು ನಗರ, ಶಕ್ತಿನಗರ, ಕೊಟ್ಟೂರು, ಹೂವಿನಹಡಗಲಿ, ಮದಲಘಟ್ಟ ಹಾಗೂ ಮರಳವಾಡಿ ಸುತ್ತಮುತ್ತ 18 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ.

ಚಿತ್ರದ ಪ್ರಮುಖ ಪಾತ್ರವಾದ ಸೈದಪ್ಪನಾಗಿ ರಾಮರಾವ್.ಜಿ. ಅಭಿನಯಿಸಿದ್ದಾರೆ. ಅವರು ‘ಕೆಜಿಎಫ್’, ‘ಪೈಲ್ವಾನ್’, ‘ಐರಾವತ’, ‘ರುಸ್ತುಂ’, ‘ಜಗ್ಗು ದಾದ’, ‘ಬಘೀರ’, ‘ಭೈರತಿ ರಣಗಲ್’ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿ ಗಮನ ಸೆಳೆದಿದ್ದಾರೆ. ಚಂದ್ರಿ ಪಾತ್ರದಲ್ಲಿ ವ್ಯೋಮಿ ಸಾಕೆಲ್ ಅಭಿನಯಿಸಿದ್ದಾರೆ.

ಪ್ರಗತಿ ಪ್ರಭು, ಚಕ್ರವರ್ತಿ ದಾವಣಗೆರೆ, ಶಿವಮೊಗ್ಗ ರಾಮಣ್ಣ, ಉಗ್ರಂ ಸುರೇಶ್, ಶಶಿಧರ್, ಡಾ. ಪ್ರವೀಣ್ ಚೌತಿ, ಎಸ್.ಕೆ. ಬಾಬು ಬೆಳಗೊಳ, ಸುರೇಶ್ ದೇವರಮನಿ, ಶಾರದಾ ಕಲ್ಲೂರ್, ಮಂಜೇಶ್ ಸೇರಿದಂತೆ ಕಲಾವಿದರು ತಾರಾಗಣದಲ್ಲಿದ್ದಾರೆ.

ಚಿತ್ರದ ಪ್ರಮುಖ ವಿಶೇಷತೆ ಎಂದರೆ ಸಿಂಕ್ ಸೌಂಡ್‌ನೊಂದಿಗೆ ಚಿತ್ರೀಕರಣ ನಡೆಸಿರುವುದು. ಚಿತ್ರದಲ್ಲಿ ಎರಡು ಹಾಡುಗಳಿದ್ದು, ಅವುಗಳನ್ನು ನಿರ್ದೇಶಕ ಎಸ್. ವೆಂಕಟೇಶ್ ಕೊಟ್ಟೂರು ಅವರೇ ರಚಿಸಿದ್ದಾರೆ.

ಸುನಿಲ್ ಕೆ.ಆರ್.ಎಸ್. ಛಾಯಾಗ್ರಹಣ, ಮಹಾಂತೇಶ್ ನವಲಕಾರ್ ಸಂಭಾಷಣೆ, ಎಸ್.ಕೆ. ಸಹಿಶ್ಯಾಮ್ ಸಂಗೀತ, ಮುತ್ತುರಾಜ್ ಟಿ. ಸಂಕಲನ, ಮೋಹನ್–ಅಜಿತ್ ಯಳಿವಾಳ ಸಿಂಕ್ ಸೌಂಡ್, ರಾಜ ಭಾಸ್ಕರ್ 5.1 ಮಿಕ್ಸಿಂಗ್, ವರುಣ್ ಗೌಡ ಡಿ.ಐ., ಬಸವರಾಜ್ ಆಚಾರ್ ಕಲಾ ವಿಭಾಗದ ಜವಾಬ್ದಾರಿ ನಿರ್ವಹಿಸಿದ್ದಾರೆ.

ಡಾ. ಪ್ರಭು ಗಂಜಿಹಾಳ ಹಾಗೂ ಡಾ. ವೀರೇಶ್ ಹಂಡಿಗಿ ಪಿಆರ್‌ಒಗಳಾಗಿ, ಎಚ್. ಶಶಿಧರ್–ಆರ್ಮುಗಂ ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯನಿರ್ವಹಿಸಿದ್ದಾರೆ. ಚಿತ್ರಕಥೆ ಹಾಗೂ ನಿರ್ದೇಶನ ಎಸ್. ವೆಂಕಟೇಶ್ ಕೊಟ್ಟೂರು ಅವರದ್ದಾಗಿದೆ. ಶ್ರೀಮತಿ ಅನುಷಾ ಸುಪ್ರೀತ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

ಸೆ. 7ರಿಂದ ವರವಿಯಲ್ಲಿ ಮೌನೇಶ್ವರ ಜಾತ್ರಾಮಹೋತ್ಸವ

0

ವಿಜಯಸಾಕ್ಷಿ ಸುದ್ದಿ, ಗದಗ: ಜಿಲ್ಲೆಯ ಶಿರಹಟ್ಟಿ ತಾಲೂಕಿನ ವರವಿ ಪುಣ್ಯಕ್ಷೇತ್ರದ ಶ್ರೀ ಜಗದ್ಗುರು ಮೌನೇಶ್ವರರ ಜಾತ್ರಾಮಹೋತ್ಸವ ಸೆ. 7ರಿಂದ 11ರವರೆಗೆ ಶ್ರದ್ಧಾ-ಭಕ್ತಿಯಿಂದ ಹಾಗೂ ವಿಜೃಂಭಣೆಯಿಂದ ನಡೆಯಲಿದೆ ಎಂದು ದೇವಸ್ಥಾನ ಹಾಗೂ ಮಠದ ವಿಕಾಸ ಟ್ರಸ್ಟ್ ಕಮಿಟಿ ಅಧ್ಯಕ್ಷ ಮೋಹನ ಸಿ. ನರಗುಂದ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆ. 7ರಂದು ಬೆಳಗ್ಗೆ ಧ್ವಜಾರೋಹಣ ಹಾಗೂ ಮಹಾಯಜ್ಞ, ಮಧ್ಯಾಹ್ನ 12.15ಕ್ಕೆ ಜಾತ್ರಾಮಹೋತ್ಸವ ಉದ್ಘಾಟನೆ, ಸಂಜೆ 5.15ಕ್ಕೆ ಮಹಾರಥೋತ್ಸವ ನಡೆಯಲಿದೆ. ಸೆ. 8ರಂದು ಕಡುಬಿನ ಕಾಳಗ, ಸೆ. 9ರಂದು ಸಾಮೂಹಿಕ ಉಪನಯನ, ಸೆ. 10ರಂದು ಪಾಲಕಿ ಅಲಾವಿ ಗುಡ್ಡಕ್ಕೆ ತೆರಳುವ ಕಾರ್ಯಕ್ರಮ ಹಾಗೂ ಸೆ. 11ರಂದು ಮಹಾಪ್ರಸಾದ, ಪ್ರವಚನ, ಸಮಾರೋಪ, ದಾನಿಗಳಿಗೆ ಸನ್ಮಾನ ಮತ್ತು ಪೂಜಾಫಲ ಲಿಲಾವು ನಡೆಯಲಿದೆ. ಪ್ರತಿದಿನ ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಎಂದರು.

ಸೆ. 7ರ ಉದ್ಘಾಟನಾ ಸಮಾರಂಭದ ಸಾನ್ನಿಧ್ಯವನ್ನು ಶ್ರೀ ಮೌನೇಶ್ವರ ಮಹಾಸ್ವಾಮಿಗಳು ವಹಿಸಲಿದ್ದು, ಮೋಹನ ಸಿ. ನರಗುಂದ ಅಧ್ಯಕ್ಷತೆ ವಹಿಸುವರು. ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಉದ್ಘಾಟಿಸುವರು. ಶಾಸಕರಾದ ಡಾ. ಚಂದ್ರು ಲಮಾಣಿ, ಮಾಜಿ ಶಾಸಕರಾದ ಗಂಗಣ್ಣ ಎಂ. ಮಹಾಂತಶೆಟ್ಟರ, ಜಿ.ಎಸ್. ಗಡ್ಡದದೇವರಮಠ, ರಾಮಣ್ಣ ಲಮಾಣಿ, ರಾಮಕೃಷ್ಣ ದೊಡ್ಡಮನಿ, ಜಿಪಂ ಮಾಜಿ ಅಧ್ಯಕ್ಷ ವಿಶ್ವನಾಥ ಕಪ್ಪತ್ತನವರ, ಉಪ ವಿಭಾಗಾಧಿಕಾರಿ ಎಂ. ಗಂಗಪ್ಪ, ತಹಶೀಲ್ದಾರ ಕೆ. ರಾಘವೇಂದ್ರರಾವ್, ಡಿಎಸ್‌ಪಿ ಮರ್ತುಜಾ ಖಾದ್ರಿ, ಸಿಪಿಐ ಬಿ.ವಿ. ನ್ಯಾಮಗೌಡ, ಪಿಎಸ್‌ಐ ಈರಪ್ಪ ರಿತ್ತಿ ಸೇರಿದಂತೆ ಗಣ್ಯರು ಭಾಗವಹಿಸುವರು.

ಜಾತ್ರಾಮಹೋತ್ಸವದ ಮಹತ್ವ ಕುರಿತು ಮಾತನಾಡಿದ ಗದಗ ಜಿಲ್ಲಾ ವಿಶ್ವಕರ್ಮ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರಾಜಗೋಪಾಲ ಡಿ. ಕಡ್ಲಿಕೊಪ್ಪ, ಮೌನೇಶ್ವರರು ಧರ್ಮ ಜಾಗೃತಿ ಹಾಗೂ ಭಾವೈಕ್ಯತೆಯ ಸಂದೇಶ ಸಾರಿದ ಮಹಾತ್ಮರಾಗಿದ್ದು, ವರವಿ ಅವರ ಪ್ರಮುಖ ಪುಣ್ಯಕ್ಷೇತ್ರಗಳಲ್ಲಿ ಒಂದಾಗಿದೆ. ಜಾತ್ರೆಯಲ್ಲಿ ಸರ್ವರೂ ಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು.

ಸೆ. 11ರ ಸಮಾರೋಪ ಸಮಾರಂಭದ ಸಾನ್ನಿಧ್ಯವನ್ನು ಶ್ರೀ ಮೌನೇಶ್ವರ ಮಹಾಸ್ವಾಮಿಗಳು, ಶ್ರೀ ಫಕ್ಕೀರ ದಿಂಗಾಲೇಶ್ವರ ಮಹಾಸ್ವಾಮಿಗಳು ಹಾಗೂ ಶ್ರೀ ಶಿವಕುಮಾರ ಮಹಾಸ್ವಾಮಿಗಳು ವಹಿಸುವರು. ಡಾ. ಎಚ್.ಕೆ. ಪಾಟೀಲ ಘನ ಉಪಸ್ಥಿತರಿರುವರು. ಸಚಿವ ಬಸವರಾಜ ರಾಯರಡ್ಡಿ ಉದ್ಘಾಟಿಸುವರು. ಸಚಿವ ಕೆ.ಎಸ್. ಬಸವಂತಪ್ಪ ಗೌರವ ಉಪಸ್ಥಿತರಿರುವರು ಎಂದು ಟ್ರಸ್ಟ್‌ನ ಕೋಶಾಧ್ಯಕ್ಷ ಚಂದ್ರಕಾಂತ ಸೋನಾರ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಶ್ರೀಧರ ಕೊಣ್ಣೂರ, ಮೌನೇಶ ಸಿ. ಬಡಿಗೇರ, ಉಮೇಶ ಅಕ್ಕಸಾಲಿ, ವೀರಣ್ಣ ಹಲವಾಗಲಿ, ನಾಗರಾಜ ಕಮ್ಮಾರ, ಶಂಕರಾಚಾರ್ಯರ ಪತ್ತಾರ ಹಾಗೂ ಈರಣ್ಣ ಪತ್ತಾರ ಉಪಸ್ಥಿತರಿದ್ದರು.

ಗುರು ಅಗಲಿದರೂ, ಅವರ ಸೇವೆಯ ಬೆಳಕು ಆರಲಿಲ್ಲ: ತೋಂಟದ ಸಿದ್ಧರಾಮ ಸ್ವಾಮಿಗಳು

0

ವಿಜಯಸಾಕ್ಷಿ ಸುದ್ದಿ, ಗದಗ: ಶಿಕ್ಷಣವೆಂದರೆ ಕೇವಲ ಅಕ್ಷರ ಕಲಿಸುವುದಲ್ಲ, ಸಂಸ್ಕಾರ ನೀಡಿ ಮನುಷ್ಯನನ್ನು ನಿರ್ಮಾಣ ಮಾಡುವುದಾಗಿದೆ. ಇಂತಹ ಸಾರ್ಥಕ ಶಿಕ್ಷಣದ ಮೂಲಕ ಮಕ್ಕಳ ಭವಿಷ್ಯ ರೂಪಿಸಿದವರು ಬಿ.ಜಿ. ಅಣ್ಣಿಗೇರಿ ಗುರುಗಳು ಎಂದು ಗದುಗಿನ ತೋಂಟದಾರ್ಯ ಮಠದ ಜ.ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಬಣ್ಣಿಸಿದರು.

ನಗರದ ಬಿ.ಜಿ. ಅಣ್ಣಿಗೇರಿ ಗುರುಗಳ ಆಶ್ರಮದ ಆವರಣದಲ್ಲಿ ಶನಿವಾರ ಬಿ.ಜಿ. ಅಣ್ಣಿಗೇರಿ ಗುರುಗಳ ಪ್ರತಿಭಾ ಪ್ರತಿಷ್ಠಾನ (ರಿ.) ವತಿಯಿಂದ ಆಯೋಜಿಸಿದ್ದ 7ನೇ ಪುಣ್ಯಸ್ಮರಣೆ, ವಾರ್ಷಿಕ ಸರ್ವಸಾಧಾರಣ ಸಭೆ ಹಾಗೂ ಗುರುಶ್ರೀ ಪ್ರಶಸ್ತಿ ಪ್ರದಾನ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಅಣ್ಣಿಗೇರಿ ಗುರುಗಳು ತಮ್ಮ ಇಡೀ ಬದುಕನ್ನು ಮಕ್ಕಳ ಭವಿಷ್ಯ ಹಾಗೂ ವ್ಯಕ್ತಿತ್ವ ರೂಪಣೆಗೆ ಮೀಸಲಿಟ್ಟಿದ್ದರು. ನಿವೃತ್ತಿಯ ನಂತರವೂ ಬಡಮಕ್ಕಳ ಉದ್ಧಾರಕ್ಕಾಗಿ ಶ್ರಮಿಸಿದ ಅವರ ಸೇವೆ ಅಪಾರ. ಯಾವುದೇ ಕ್ಷೇತ್ರದಲ್ಲಿದ್ದರೂ ಸಮರ್ಪಣಾ ಭಾವದಿಂದ ಕಾರ್ಯನಿರ್ವಹಿಸಿದರೆ ಪುಣ್ಯಪುರುಷರಾಗಬಹುದು. ಶಿಕ್ಷಕರ ದಿನದಂದೇ ಲಿಂಗೈಕ್ಯರಾದ ಅಣ್ಣಿಗೇರಿ ಗುರುಗಳ ಪುಣ್ಯಸ್ಮರಣೆಯನ್ನು ಇದೇ ದಿನ ಆಚರಿಸುತ್ತಿರುವುದು ವಿಶೇಷ ಎಂದು ತೋಂಟದ ಶ್ರೀ ಹೇಳಿದರು.

ಅಣ್ಣಿಗೇರಿ ಗುರುಗಳ ಸೇವೆಯ ಸಾರ್ಥಕತೆಯನ್ನು ವಿವರಿಸಿದ ತೋಂಟದ ಶ್ರೀ, ಆಶ್ರಮದ ಮೂಲಕ ಇಂದಿಗೂ ಬಡಮಕ್ಕಳ ಶಿಕ್ಷಣಕ್ಕೆ ನೆರವು ಮುಂದುವರಿದಿರುವುದನ್ನು ಶ್ಲಾಘಿಸಿದರು. ವರ್ಷಕ್ಕೆ ಸುಮಾರು ₹3.40 ಲಕ್ಷ ವಿದ್ಯಾರ್ಥಿವೇತನವನ್ನು ಬಡಮಕ್ಕಳಿಗೆ ನೀಡಲಾಗುತ್ತಿದ್ದು, ಅನೇಕ ಮಕ್ಕಳು ಆಶ್ರಮದಲ್ಲಿ ಆಶ್ರಯ ಪಡೆದು ಪ್ರಸಾದ ಸ್ವೀಕರಿಸಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಅಣ್ಣಿಗೇರಿ ಗುರುಗಳ ಶಿಷ್ಯರು ಉಚಿತವಾಗಿ ಜ್ಞಾನಬೋಧೆ ಮಾಡುತ್ತಿರುವುದು ಅವರ ಸೇವಾ ಪರಂಪರೆ ಜೀವಂತವಾಗಿರುವುದಕ್ಕೆ ಸಾಕ್ಷಿ ಎಂದರು.

ಮರಣೋತ್ತರ ಗುರುಶ್ರೀ ಪ್ರಶಸ್ತಿ

ನಿವೃತ್ತ ಮುಖ್ಯೋಪಾಧ್ಯಾಯ ದಿ. ಶಂಕ್ರಪ್ಪ ಗುರಪ್ಪ ಅಣ್ಣಿಗೇರಿ ಅವರಿಗೆ ಮರಣೋತ್ತರವಾಗಿ ಗುರುಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು. ಅವರ ಧರ್ಮಪತ್ನಿ ಗೌರಮ್ಮ ಅವರಿಗೆ ಪ್ರಶಸ್ತಿ ಹಾಗೂ ₹25 ಸಾವಿರ ಮೊತ್ತದ ಚೆಕ್‌ನ್ನು ಹಸ್ತಾಂತರಿಸಲಾಯಿತು.

ರಾಜಸ್ಥಾನದ ಉದಯಪುರದ ಡಾ. ಅಶೋಕ ಭಜಂತ್ರಿ ಹಾಗೂ ತೋರಣಗಲ್ಲಿನ ಎಂ.ಎಚ್. ಪ್ರದೀಪಕುಮಾರ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ತಮ್ಮ ಗುರುಗಳಾದ ಬಿ.ಜಿ. ಅಣ್ಣಿಗೇರಿ ಅವರ ಶಿಕ್ಷಣ ಸೇವೆಯನ್ನು ಸ್ಮರಿಸಿದರು. ಪ್ರತಿಷ್ಠಾನದ ಅಧ್ಯಕ್ಷ ಶಿವಕುಮಾರ ಪಾಟೀಲ ವೇದಿಕೆಯಲ್ಲಿದ್ದರು. ಆಶ್ರಮದಲ್ಲಿ ವಿವಿಧ ಸೇವೆ ಸಲ್ಲಿಸಿದವರನ್ನು ಸನ್ಮಾನಿಸಿ ಗೌರವಿಸಲಾಯಿತು.

ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಡಾ. ಬಸಯ್ಯ ಬೆಳ್ಳೇರಿಮಠ ಸ್ವಾಗತಿಸಿ ಪರಿಚಯಿಸಿದರು. ಮಂಜುಳಾ ತುಂಬರಮಟ್ಟಿ ನಿರೂಪಿಸಿದರು. ಆಂಜನೇಯ ಕಟಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುಭಾಶ್ಚಂದ್ರ ಬೆಟದೂರ ವರದಿ ವಾಚಿಸಿ ವಂದಿಸಿದರು. ವಿಜಯಲಕ್ಷ್ಮೀ ಅಂಗಡಿ ಲೆಕ್ಕ ಪರಿಶೋಧನಾ ವರದಿ ಮಂಡಿಸಿದರು. ಗಣ್ಯರು ಹಾಗೂ ಹಳೆ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಪ್ರಶಸ್ತಿ ಮೊತ್ತವನ್ನೇ ಶಿಕ್ಷಣಕ್ಕೆ ಅರ್ಪಿಸಿದ ಗೌರಮ್ಮ

ಪತಿಯ ಹೆಸರಿನಲ್ಲಿ ದೊರೆತ ಗೌರವವನ್ನು ಮತ್ತಷ್ಟು ಅರ್ಥಪೂರ್ಣಗೊಳಿಸಿದ ಗೌರಮ್ಮ ಅವರು ₹25 ಸಾವಿರದ ಪ್ರಶಸ್ತಿ ಮೊತ್ತವನ್ನು ತಾವೇ ಇಟ್ಟುಕೊಳ್ಳದೆ, ಬಡಮಕ್ಕಳ ಶಿಕ್ಷಣಕ್ಕೆ ಬಳಸಿಕೊಳ್ಳುವಂತೆ ಪ್ರತಿಷ್ಠಾನಕ್ಕೆ ಮರಳಿಸಿದರು. ಅವರ ಈ ನಡೆ ಸಮಾರಂಭದ ಪ್ರಮುಖ ವಿಶೇಷತೆಯಾಗಿ ಗಮನ ಸೆಳೆಯಿತು.

ನಿಶ್ಯಬ್ದದ ಬದುಕಿನ ಮಹಾ ಬೆಳಕು : ಪೂಜ್ಯ ಶ್ರೀ ಸಿದ್ಧೇಶ್ವರ ಅಪ್ಪಾಜಿ

ವಿಜಯಪುರದ ಜ್ಞಾನಯೋಗಾಶ್ರಮದ ಪೂಜ್ಯ ಶ್ರೀ ಸಿದ್ಧೇಶ್ವರ ಅಪ್ಪಾಜಿಯವರ ಬದುಕೇ ಒಂದು ನಿಶ್ಯಬ್ದ. ಆ ನಿಶ್ಯಬ್ದವನ್ನು ಶಬ್ದಗಳಲ್ಲಿ ಕಟ್ಟಿಕೊಡುವುದು ಅಸಾಧ್ಯ; ಕಟ್ಟಿಕೊಟ್ಟರೂ ಅದು ಅಪೂರ್ಣವೇ. ಏಕೆಂದರೆ ಅವರ ಬದುಕು ಪದಗಳಿಗೆ ನಿಲುಕದಷ್ಟು ವಿಶಾಲ, ವಿವರಣೆಗೆ ಸಿಗದಷ್ಟು ಆಳ ಹಾಗೂ ಅನುಭವಿಸಿದವರಿಗೆ ಮಾತ್ರ ಅರಿವಾಗುವಷ್ಟು ಆತ್ಮೀಯ.

ಭೂಮಾತೆಯ ಮಡಿಲಲ್ಲಿ ತಮ್ಮ ಶುಭ್ರ ಛಾಯೆಯನ್ನು ಬಿಟ್ಟುಹೋದ ಅನೇಕ ಪುಣ್ಯಾತ್ಮರ ಕುರಿತು ನಾವು ಕೇಳಿದ್ದೇವೆ, ಓದಿದ್ದೇವೆ; ಕೆಲವರನ್ನು ಪ್ರತ್ಯಕ್ಷವಾಗಿ ಕಂಡಿದ್ದೇವೆ. ಆದರೆ ಕೆಲವರು ಯಾವುದೇ ಉಪಮೆಗೆ ನಿಲುಕದವರು. ಅಂತಹ ಮಹನೀಯರನ್ನು ಪರಮಾತ್ಮನೇ ಮನುಕುಲಕ್ಕೆ ಕೊಡುಗೆಯಾಗಿ ನೀಡುತ್ತಾನೆ. ಪೂಜ್ಯ ಸಿದ್ಧೇಶ್ವರ ಅಪ್ಪಾಜಿಯವರು ಅಂತಹ ಅಪರೂಪದ ಪುಣ್ಯಾತ್ಮರಲ್ಲಿ ಒಬ್ಬರು.

ಅವರನ್ನು ಶರಣರೆನ್ನಬಹುದು, ಸಂತರೆನ್ನಬಹುದು, ದಾಸರೆನ್ನಬಹುದು, ಜ್ಞಾನಿ ಅಥವಾ ಆಧ್ಯಾತ್ಮಿಕ ಚೇತನರೆನ್ನಬಹುದು. ಆದರೆ ಈ ಪ್ರತಿಯೊಂದು ಪದವೂ ಅವರ ವ್ಯಕ್ತಿತ್ವದ ಒಂದು ಮುಖವನ್ನು ಮಾತ್ರ ಪರಿಚಯಿಸುತ್ತದೆ. ಈ ಎಲ್ಲ ಗುಣಗಳನ್ನೂ ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡು, ಅವುಗಳನ್ನೂ ಮೀರಿದ ಸರಳ, ಸಜ್ಜನಿಕೆಯ ಹಾಗೂ ಶುಭ್ರ ಬದುಕನ್ನು ನಡೆಸಿದ ಅಪೂರ್ವ ವ್ಯಕ್ತಿತ್ವ ಅವರದು.

  • ಅವರ ಸರಳತೆಯೇ ಅವರ ವೈಭವ.
  • ಅವರ ಮೌನವೇ ಅವರ ಸಂದೇಶ.
  • ಅವರ ಜೀವನವೇ ಅವರ ಪ್ರವಚನ.
  • ಅವರ ನಡೆ-ನುಡಿಯೇ ಅವರ ತತ್ವಜ್ಞಾನ.

ದೊಡ್ಡ ದೊಡ್ಡ ಮಾತುಗಳಿಂದ ತಮ್ಮ ಮಹತ್ವವನ್ನು ಸಾರಲಿಲ್ಲ. ಬದಲಾಗಿ, ಬದುಕಿನ ಮೂಲಕವೇ ಮಹತ್ವವೆಂದರೇನು ಎಂಬುದನ್ನು ತೋರಿಸಿದರು. ಜ್ಞಾನವನ್ನು ಪ್ರದರ್ಶಿಸಲಿಲ್ಲ—ಹಂಚಿದರು. ಆಧ್ಯಾತ್ಮವನ್ನು ಕೇವಲ ಬೋಧಿಸಲಿಲ್ಲ—ಬದುಕಿದರು. ವೈರಾಗ್ಯವನ್ನು ವಿವರಿಸಲಿಲ್ಲ—ತಮ್ಮ ಜೀವನದಲ್ಲೇ ಸಾಕಾರಗೊಳಿಸಿದರು.

ಅವರ ಸನ್ನಿಧಿಯಲ್ಲಿ ಕುಳಿತಾಗ ಮನಸ್ಸನ್ನು ಆವರಿಸುತ್ತಿದ್ದ ನೆಮ್ಮದಿ ವಿಶಿಷ್ಟವಾದುದು. ಅವರ ಮಾತುಗಳು ಕಿವಿಗೆ ಬೀಳುವುದಕ್ಕಿಂತ ಮೊದಲು ಹೃದಯವನ್ನು ತಟ್ಟುತ್ತಿದ್ದವು. ಅತ್ಯಂತ ಸರಳವಾಗಿ ಮಾತನಾಡಿದರೂ, ಆ ಮಾತುಗಳ ಆಳವನ್ನು ಅರಿಯಲು ಕೆಲವೊಮ್ಮೆ ಇಡೀ ಬದುಕೇ ಬೇಕೆನಿಸುತ್ತಿತ್ತು.

  • ಅವರನ್ನು ನೋಡುವುದು ಒಂದು ಅನುಭವ.
  • ಅವರನ್ನು ಕೇಳುವುದು ಒಂದು ಪಾಠ.
  • ಅವರೊಂದಿಗೆ ಇರುವುದು ಒಂದು ಸೌಭಾಗ್ಯ.
  • ಅವರನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುವುದು ಒಂದು ಆತ್ಮಯಾನ.
  • ಅಂತಹ ಮಹಾತ್ಮರ ಸನ್ನಿಧಿಯಲ್ಲಿ ಇದ್ದವರು ನಿಜಕ್ಕೂ ಸೌಭಾಗ್ಯಶಾಲಿಗಳು.

ಕಾಲ ಕಳೆಯುತ್ತದೆ. ದೇಹಗಳು ಮರೆಯಾಗುತ್ತವೆ. ಧ್ವನಿಗಳು ಮೌನವಾಗುತ್ತವೆ. ಆದರೆ ಕೆಲವು ವ್ಯಕ್ತಿತ್ವಗಳು ಮಾತ್ರ ಕಾಲವನ್ನು ಮೀರಿ ಉಳಿಯುತ್ತವೆ. ಏಕೆಂದರೆ ಅವರು ಬಿಟ್ಟುಹೋಗುವುದು ಕೇವಲ ನೆನಪುಗಳಲ್ಲ; ಒಂದು ಚಿಂತನೆ, ಒಂದು ದಾರಿ, ಒಂದು ಬೆಳಕು ಹಾಗೂ ಬದುಕಿನ ಮೌಲ್ಯ.

ಸಿದ್ಧೇಶ್ವರ ಅಪ್ಪಾಜಿಯವರು ಅಂತಹ ಬೆಳಕಿನ ಪಥಿಕರು. ಅವರ ಬದುಕನ್ನು ಬರೆಯಲು ಶಬ್ದಗಳು ಸಾಲವು. ಅವರ ವ್ಯಕ್ತಿತ್ವವನ್ನು ಅಳೆಯಲು ಅಳತೆಗೋಲು ಸಾಲದು. ಅವರ ಸರಳತೆಯನ್ನು ವರ್ಣಿಸಲು ವಿಶೇಷಣಗಳು ಸಾಲವು.

ಹೀಗಾಗಿ ಅವರ ಬದುಕಿನ ಮುಂದೆ ನಿಂತಾಗ ಪದಗಳೇ ಮೌನವಾಗುತ್ತವೆ. ಆ ಮೌನದಲ್ಲಿಯೇ ಅವರ ಮಹತ್ವವಿದೆ. ಆ ನಿಶ್ಯಬ್ದದಲ್ಲಿಯೇ ಅವರ ಸಂದೇಶವಿದೆ. ಆ ಸರಳತೆಯಲ್ಲಿಯೇ ಅವರ ದಿವ್ಯತೆಯಿದೆ.

ಪೂಜ್ಯ ಶ್ರೀ ಸಿದ್ಧೇಶ್ವರ ಅಪ್ಪಾಜಿಯವರ ಬದುಕು—ನಿಶ್ಯಬ್ದವಾಗಿ ಹೊತ್ತಿ ಉರಿದ ಒಂದು ಜ್ಞಾನಜ್ಯೋತಿ.

ಡಾ. ವಿಜಯ್ ವಿ. ಮುರದಂಡೆ

ಸಹಾಯಕ ಪ್ರಾಧ್ಯಾಪಕರು,

ಕೆಎಲ್‌ಇ ಸಂಸ್ಥೆಯ ಎಸ್.ಎ. ಮಾನ್ವಿ ಕಾನೂನು ಮಹಾವಿದ್ಯಾಲಯ, ಗದಗ