Home Blog Page 4

ಶಾಲಾ ಸಮಯಕ್ಕೆ ಬಸ್ ಕೊರತೆ : ಲಕ್ಕುಂಡಿಯಲ್ಲಿ ಬಸ್ ತಡೆದು ವಿದ್ಯಾರ್ಥಿಗಳು, ಪಾಲಕರ ಪ್ರತಿಭಟನೆ

0

ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ: ಶಾಲಾ ಸಮಯಕ್ಕೆ ಸಮರ್ಪಕ ಬಸ್ ಸೌಲಭ್ಯ ಇಲ್ಲದೆ ತೊಂದರೆ ಅನುಭವಿಸುತ್ತಿರುವ ವಿದ್ಯಾರ್ಥಿಗಳು, ಪಾಲಕರು ಹಾಗೂ ಕೂಲಿ ಕಾರ್ಮಿಕರು ಶುಕ್ರವಾರ ಲಕ್ಕುಂಡಿ ಬಸ್ ನಿಲ್ದಾಣದಲ್ಲಿ ಬಸ್‌ಗಳನ್ನು ತಡೆದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವಿರುದ್ಧ ಧಿಡೀರ್ ಪ್ರತಿಭಟನೆ ನಡೆಸಿದರು.

ಕಳೆದ ಒಂದು ತಿಂಗಳಿಂದ ಬೆಳಗ್ಗೆ ಶಾಲಾ–ಕಾಲೇಜು ಸಮಯಕ್ಕೆ ಸಮರ್ಪಕ ಬಸ್‌ಗಳು ಸಂಚರಿಸದ ಪರಿಣಾಮ ವಿದ್ಯಾರ್ಥಿಗಳು ಗಂಟೆಗಟ್ಟಲೆ ಬಸ್‌ಗಾಗಿ ಕಾಯುವಂತಾಗಿದೆ. ಇದರಿಂದ ಸಮಯಕ್ಕೆ ಶಾಲೆಗೆ ತೆರಳಲು ಸಾಧ್ಯವಾಗದೆ ಶಿಕ್ಷಕರು ತರಗತಿಯಿಂದ ಹೊರಗೆ ನಿಲ್ಲಿಸುತ್ತಿದ್ದಾರೆ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡರು.

ಪ್ರತಿಭಟನಾಕಾರರು ಬಸ್ ನಿಲ್ದಾಣದಲ್ಲಿ 10ಕ್ಕೂ ಹೆಚ್ಚು ಬಸ್‌ಗಳನ್ನು ತಡೆದು ಸಾರಿಗೆ ಸಂಸ್ಥೆ ವಿರುದ್ಧ ಘೋಷಣೆ ಕೂಗಿದರು. ಎರಡು ಗಂಟೆಗೂ ಹೆಚ್ಚು ಕಾಲ ಪ್ರತಿಭಟನೆ ನಡೆದ ಹಿನ್ನೆಲೆಯಲ್ಲಿ ಗದಗ, ಹುಬ್ಬಳ್ಳಿ, ಕೊಪ್ಪಳ, ವಿಜಯನಗರ, ರಾಯಚೂರು, ಬೆಳಗಾವಿ, ಹಾವೇರಿ ಹಾಗೂ ಬಳ್ಳಾರಿ ಕಡೆಗೆ ತೆರಳುವ ಪ್ರಯಾಣಿಕರು ಪರದಾಡಿದರು.

ಬೆಳಗ್ಗೆ 8ರಿಂದ 10ರವರೆಗೆ ಗದಗ ಹಾಗೂ ಹುಬ್ಬಳ್ಳಿಗೆ ಶಾಲಾ–ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿರುತ್ತದೆ. ಈ ಅವಧಿಯಲ್ಲಿ ಬಸ್ ಕೊರತೆಯಿಂದ ವಿದ್ಯಾರ್ಥಿಗಳು ನೂಕುನುಗ್ಗಲಿನ ನಡುವೆ ಸಂಚರಿಸುವಂತಾಗಿದೆ. ಈ ಕುರಿತು ಹಲವು ಬಾರಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಕ್ರಮ ಕೈಗೊಂಡಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಸ್ಥಳಕ್ಕೆ ಆಗಮಿಸಿದ ಗದಗ ಬಸ್ ನಿಲ್ದಾಣದ ನಿಯಂತ್ರಣಾಧಿಕಾರಿಯನ್ನು ವಿದ್ಯಾರ್ಥಿಗಳು ಹಾಗೂ ಪಾಲಕರು ತರಾಟೆಗೆ ತೆಗೆದುಕೊಂಡರು. ಸಮಸ್ಯೆ ಬಗೆಹರಿಸದಿದ್ದರೆ ಸಾರಿಗೆ ಸಚಿವರು ಹಾಗೂ ಮುಖ್ಯಮಂತ್ರಿಗೆ ದೂರು ನೀಡುವುದಾಗಿ ಎಚ್ಚರಿಸಿದರು.

ಮುಂದಿನ ನಾಲ್ಕೈದು ದಿನಗಳಲ್ಲಿ ವಿದ್ಯಾರ್ಥಿಗಳ ಶಾಲಾ ಸಮಯಕ್ಕೆ ಬಸ್ ವ್ಯವಸ್ಥೆ ಕಲ್ಪಿಸಲು ವಿಭಾಗೀಯ ವ್ಯವಸ್ಥಾಪಕರೊಂದಿಗೆ ಚರ್ಚಿಸುವುದಾಗಿ ಬಸ್ ನಿಲ್ದಾಣದ ಮೇಲ್ವಿಚಾರಕ ತಿಮ್ಮನಗೌಡ ಭರವಸೆ ನೀಡಿದರು. ಬೈಪಾಸ್‌ನಲ್ಲಿ ಸಂಚರಿಸುವ ಬಸ್‌ಗಳನ್ನು ಲಕ್ಕುಂಡಿ ನಿಲ್ದಾಣಕ್ಕೆ ಬರುವಂತೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು.

ಎಂಟು ತಿಂಗಳ ಹಿಂದೆ ಇದೇ ಸಮಸ್ಯೆ ಕುರಿತು ಪ್ರತಿಭಟನೆ ನಡೆಸಿದಾಗ ಸಮರ್ಪಕ ಬಸ್ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿದ್ದರು. ಒಂದು ವಾರ ಮಾತ್ರ ಬಸ್ ಓಡಿಸಿ ಮತ್ತೆ ಸ್ಥಗಿತಗೊಳಿಸಲಾಗಿದೆ. ಒಂದು ವಾರದೊಳಗೆ ಸಮಸ್ಯೆ ಬಗೆಹರಿಸದಿದ್ದರೆ ವಿದ್ಯಾರ್ಥಿಗಳೊಂದಿಗೆ ತೀವ್ರ ಪ್ರತಿಭಟನೆ ನಡೆಸಲಾಗುವುದು.”

— ಬಸವರಾಜ ಮುಳ್ಳಾಳ, ಬಸನಗೌಡ ಬಿರಾದಾರ, ವೀರೇಶ ಮುಸ್ಕಿನಭಾವಿ, ಪಾಲಕರು

ಪೊಲೀಸರ ವಿರುದ್ಧವೂ ಆಕ್ರೋಶ

ಪ್ರತಿಭಟನೆ ವೇಳೆ ಪೊಲೀಸರು ವಿದ್ಯಾರ್ಥಿಗಳಿಗೆ ಅವಾಚ್ಯ ಶಬ್ದ ಬಳಸಿದ್ದಾರೆ ಎಂದು ಆರೋಪಿಸಿ ಪಾಲಕರು ಹಾಗೂ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದರು. ಈ ವೇಳೆ ಪೊಲೀಸರು ಹಾಗೂ ಸಾರ್ವಜನಿಕರ ನಡುವೆ ಕೆಲಕಾಲ ವಾಗ್ವಾದ, ಗದ್ದಲದ ವಾತಾವರಣ ನಿರ್ಮಾಣವಾಯಿತು.

ರೈಲು ಟಿಕೆಟ್ ಬುಕ್ಕಿಂಗ್‌ನಲ್ಲಿ ದಾಖಲೆ: ಒಂದೇ ದಿನ 20,06,353 ಟಿಕೆಟ್ ಕಾಯ್ದಿರಿಸಿದ IRCTC

0

ನವದೆಹಲಿ: ಭಾರತೀಯ ರೈಲ್ವೆ ಆಹಾರ ಮತ್ತು ಪ್ರವಾಸೋದ್ಯಮ ನಿಗಮ ಪೋರ್ಟಲ್‌ನಲ್ಲಿ ಒಂದೇ ದಿನದಲ್ಲಿ 20 ಲಕ್ಷಕ್ಕೂ ಹೆಚ್ಚು ರೈಲು ಟಿಕೆಟ್‌ಗಳು ಬುಕ್ ಆಗುವ ಮೂಲಕ ಹೊಸ ದಾಖಲೆ ನಿರ್ಮಾಣವಾಗಿದೆ.

ಸೆಪ್ಟೆಂಬರ್ 7ರಂದು IRCTC ಮೂಲಕ ಒಟ್ಟು 20,06,353 ರೈಲು ಟಿಕೆಟ್‌ಗಳನ್ನು ಕಾಯ್ದಿರಿಸಲಾಗಿದೆ. IRCTC ಇತಿಹಾಸದಲ್ಲೇ ಒಂದೇ ದಿನದಲ್ಲಿ ನಡೆದ ಅತಿ ಹೆಚ್ಚು ಟಿಕೆಟ್ ಬುಕ್ಕಿಂಗ್ ಇದಾಗಿದೆ. ಈ ಮೂಲಕ ಕಳೆದ ವರ್ಷದ ಹಬ್ಬದ ಋತುವಿನಲ್ಲಿ ದಾಖಲಾಗಿದ್ದ 18,40,203 ಟಿಕೆಟ್‌ಗಳ ದಾಖಲೆಯನ್ನು ಹಿಂದಿಕ್ಕಿದೆ.

ಇದಾದ ಮರುದಿನವೂ ಟಿಕೆಟ್ ಬುಕ್ಕಿಂಗ್ ಪ್ರಮಾಣ ಹೆಚ್ಚಿನ ಮಟ್ಟದಲ್ಲೇ ಮುಂದುವರಿದಿದೆ. ಸೆಪ್ಟೆಂಬರ್ 8ರಂದು IRCTC ಬರೋಬ್ಬರಿ 19,50,699 ಟಿಕೆಟ್ ಬುಕ್ಕಿಂಗ್‌ಗಳನ್ನು ಯಶಸ್ವಿಯಾಗಿ ನಿರ್ವಹಿಸಿದೆ.

ಪ್ರಸ್ತುತ ಕಾಯ್ದಿರಿಸಲಾದ ಒಟ್ಟು ರೈಲ್ವೆ ಟಿಕೆಟ್‌ಗಳಲ್ಲಿ ಸುಮಾರು 89ರಷ್ಟು ಟಿಕೆಟ್‌ಗಳು ಆನ್‌ಲೈನ್ ಮೂಲಕವೇ ಬುಕ್ ಆಗುತ್ತಿವೆ. ದಿನದ ಒಟ್ಟು ಬುಕ್ಕಿಂಗ್‌ನಲ್ಲಿ ಶೇ.8.43ರಿಂದ ಶೇ.14.14ರಷ್ಟು ಬುಕ್ಕಿಂಗ್‌ಗಳು ಮಾತ್ರ ಬೆಳಗ್ಗೆ 8ರಿಂದ 9 ಗಂಟೆಯ ನಡುವಿನ ಮೊದಲ ಒಂದು ಗಂಟೆಯಲ್ಲಿ ಪೂರ್ಣಗೊಳ್ಳುತ್ತವೆ. ಉಳಿದ ಶೇ.85ಕ್ಕೂ ಹೆಚ್ಚು ಬುಕ್ಕಿಂಗ್‌ಗಳು ದಿನದ ನಂತರದ ಅವಧಿಯಲ್ಲಿ ನಡೆಯುತ್ತವೆ.

ವಿಶೇಷವಾಗಿ ಬೆಳಗ್ಗೆ 8ರಿಂದ 8.15ರವರೆಗಿನ ಮೊದಲ 15 ನಿಮಿಷಗಳಲ್ಲಿ ನಿರಂತರವಾಗಿ ಹೆಚ್ಚಿನ ಪ್ರಮಾಣದ ಟಿಕೆಟ್ ಬುಕ್ಕಿಂಗ್ ದಾಖಲಾಗುತ್ತಿದೆ.

ಇಷ್ಟೊಂದು ಪ್ರಮಾಣದಲ್ಲಿ ಟಿಕೆಟ್ ಬುಕ್ಕಿಂಗ್ ನಡೆದರೂ ಹೊಸ ಆನ್‌ಲೈನ್ ಟಿಕೆಟ್ ಬುಕ್ಕಿಂಗ್ ವ್ಯವಸ್ಥೆಯಲ್ಲಿ ಯಾವುದೇ ಪ್ರಮುಖ ತಾಂತ್ರಿಕ ದೋಷ ಅಥವಾ ಸಿಸ್ಟಂ ಸ್ಥಗಿತ ಉಂಟಾಗಿಲ್ಲ ಎಂದು IRCTC ತಿಳಿಸಿದೆ.

ಹೆಚ್ಚುತ್ತಿರುವ ಆನ್‌ಲೈನ್ ಟ್ರಾಫಿಕ್‌ ಅನ್ನು ನಿಭಾಯಿಸಲು ಹೊಸ ಸರ್ವರ್‌ಗಳನ್ನು ಅಳವಡಿಸಲಾಗಿದ್ದು, ಟಿಕೆಟ್ ಬುಕ್ಕಿಂಗ್ ವ್ಯವಸ್ಥೆಯ ಸಾಮರ್ಥ್ಯವನ್ನು ಸುಮಾರು ದುಪ್ಪಟ್ಟುಗೊಳಿಸಲಾಗಿದೆ. ಇದರಿಂದ ಹೆಚ್ಚಿನ ಸಂಖ್ಯೆಯ ಪ್ರಯಾಣಿಕರು ಒಂದೇ ಸಮಯದಲ್ಲಿ ಟಿಕೆಟ್ ಕಾಯ್ದಿರಿಸಲು ಅನುಕೂಲವಾಗಿದೆ.

ಇನ್ನು ಪ್ರಯಾಣಿಕರ ಅನುಕೂಲಕ್ಕಾಗಿ IRCTC ಜುಲೈ 15ರಂದು ಹೊಸ ವೆಬ್‌ಸೈಟ್ ಹಾಗೂ ಬಳಕೆದಾರ ಸ್ನೇಹಿ ಇಂಟರ್‌ಫೇಸ್‌ (UI) ಅನ್ನು ಬಿಡುಗಡೆ ಮಾಡಿತ್ತು. ಒಂದೇ ಪರದೆಯಲ್ಲಿ ವಿವಿಧ ರೈಲು ತರಗತಿಗಳ ಸೀಟ್ ಲಭ್ಯತೆಯನ್ನು ವೀಕ್ಷಿಸಲು ಈ ಹೊಸ ವ್ಯವಸ್ಥೆಯಲ್ಲಿ ಅವಕಾಶ ಕಲ್ಪಿಸಲಾಗಿದೆ.

ಒಟ್ಟಾರೆ, ಹಬ್ಬದ ಋತುವಿನಲ್ಲಿ ರೈಲು ಪ್ರಯಾಣಕ್ಕೆ ಹೆಚ್ಚುತ್ತಿರುವ ಬೇಡಿಕೆಯನ್ನು ಈ ದಾಖಲೆ ಪ್ರಮಾಣದ ಬುಕ್ಕಿಂಗ್ ತೋರಿಸುತ್ತಿದ್ದು, ಹೆಚ್ಚಿನ ಆನ್‌ಲೈನ್ ಟ್ರಾಫಿಕ್ ನಡುವೆಯೂ IRCTC ವ್ಯವಸ್ಥೆ ಯಾವುದೇ ಪ್ರಮುಖ ಅಡಚಣೆಯಿಲ್ಲದೆ ಕಾರ್ಯನಿರ್ವಹಿಸಿರುವುದು ಗಮನ ಸೆಳೆದಿದೆ.

ದೇವನಹಳ್ಳಿಯಲ್ಲಿ ಭೀಕರ ಅಪಘಾತ: ಎಲೆಕ್ಟ್ರಿಕ್ ಬೈಕ್‌ಗೆ ಎರ್ಟಿಗಾ ಡಿಕ್ಕಿ, ಯುವತಿ ಗಂಭೀರ!

0

ದೇವನಹಳ್ಳಿ: ಎರ್ಟಿಗಾ ಕಾರು ಹಾಗೂ ಎಲೆಕ್ಟ್ರಿಕ್ ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿ, ಎಲೆಕ್ಟ್ರಿಕ್ ಬೈಕ್‌ನಲ್ಲಿದ್ದ ಯುವತಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಬೂದಿಗೆರೆ ದರ್ಗಾ ಬಳಿ ನಡೆದಿದೆ.

ಬೂದಿಗೆರೆ–ಬಾಗಲೂರು ರಸ್ತೆಯಲ್ಲಿ ಎಲೆಕ್ಟ್ರಿಕ್ ಬೈಕ್‌ನಲ್ಲಿ ಯುವತಿ ಅರ್ಚಿತಾ ತೆರಳುತ್ತಿದ್ದ ವೇಳೆ ಎರ್ಟಿಗಾ ಕಾರು ಬೈಕ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಎಲೆಕ್ಟ್ರಿಕ್ ಬೈಕ್ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಯುವತಿ ಅರ್ಚಿತಾ ಗಂಭೀರವಾಗಿ ಗಾಯಗೊಂಡಿದ್ದಾರೆ.

ಅಪಘಾತ ಸಂಭವಿಸಿದ ಕೂಡಲೇ ಎರ್ಟಿಗಾ ಕಾರು ಚಾಲಕ ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದಾನೆ ಎನ್ನಲಾಗಿದೆ. ಸ್ಥಳೀಯರು ಕಾರನ್ನು ಹಿಂಬಾಲಿಸಿದಾಗ, ಮತ್ತೊಂದು ಬೈಕ್‌ಗೂ ಡಿಕ್ಕಿ ಹೊಡೆದು ಚಾಲಕ ಮತ್ತೆ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.

ಅಪಘಾತದಲ್ಲಿ ಎರಡು ಬೈಕ್‌ಗಳು ಸಂಪೂರ್ಣ ನಜ್ಜುಗುಜ್ಜಾಗಿವೆ. ಗಂಭೀರವಾಗಿ ಗಾಯಗೊಂಡಿರುವ ಯುವತಿ ಅರ್ಚಿತಾ ಅವರನ್ನು ಸ್ಥಳೀಯರು ಕೂಡಲೇ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಅವರಿಗೆ ಚಿಕಿತ್ಸೆ ಮುಂದುವರಿದಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.

ಘಟನೆ ಕುರಿತು ಮಾಹಿತಿ ಪಡೆದ ಚನ್ನರಾಯಪಟ್ಟಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತಕ್ಕೆ ಕಾರಣವೇನು ಹಾಗೂ ಪರಾರಿಯಾಗಿರುವ ಎರ್ಟಿಗಾ ಕಾರು ಚಾಲಕ ಯಾರು ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇನ್ನು ಅಪಘಾತದ ಬಳಿಕ ಕಾರು ಚಾಲಕ ಸ್ಥಳದಿಂದ ಪರಾರಿಯಾಗಿರುವ ಹಿನ್ನೆಲೆಯಲ್ಲಿ ಆತನ ಪತ್ತೆಗೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ರಸ್ತೆಯಲ್ಲಿನ ಸಿಸಿಟಿವಿ ದೃಶ್ಯಗಳು ಸೇರಿದಂತೆ ವಿವಿಧ ಮಾಹಿತಿಗಳನ್ನು ಆಧರಿಸಿ ತನಿಖೆ ಮುಂದುವರಿಸಿದ್ದಾರೆ.

ಗೌರಿ-ಗಣೇಶ ಹಬ್ಬಕ್ಕೆ KSRTC ಭರ್ಜರಿ ಸಿದ್ಧತೆ: ಊರಿಗೆ ತೆರಳುವ ಪ್ರಯಾಣಿಕರಿಗಾಗಿ 2,400 ವಿಶೇಷ ಬಸ್‌ಗಳ ವ್ಯವಸ್ಥೆ

0

ಬೆಂಗಳೂರು: ಗೌರಿ-ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಊರುಗಳಿಗೆ ತೆರಳುವ ಪ್ರಯಾಣಿಕರ ಅನುಕೂಲಕ್ಕಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ವಿಶೇಷ ಬಸ್‌ಗಳ ವ್ಯವಸ್ಥೆ ಮಾಡಿದೆ.

ಪ್ರಯಾಣಿಕರ ದಟ್ಟಣೆ ಗಮನದಲ್ಲಿಟ್ಟುಕೊಂಡು ರಾಜ್ಯದ ವಿವಿಧ ಜಿಲ್ಲೆಗಳು ಹಾಗೂ ಹೊರರಾಜ್ಯಗಳಿಗೆ 2,400 ವಿಶೇಷ ಬಸ್‌ಗಳನ್ನು ಕಾರ್ಯಾಚರಣೆಗೆ ಸಿದ್ಧಪಡಿಸಲಾಗಿದೆ. ಇದರ ಜೊತೆಗೆ 270 ರಿಸರ್ವೇಶನ್ ಬಸ್‌ಗಳನ್ನು ನಿಯೋಜಿಸಲಾಗಿದ್ದು, ಬೆಂಗಳೂರಿನಲ್ಲಿ 240 ಬಿಎಂಟಿಸಿ ಬಸ್‌ಗಳನ್ನು ಹೆಚ್ಚುವರಿ ಸೇವೆಗೆ ಸಿದ್ಧವಾಗಿರಿಸಲಾಗಿದೆ.

ಸೆಪ್ಟೆಂಬರ್ 11ರಿಂದ 13ರವರೆಗೆ ಬೆಂಗಳೂರಿನಿಂದ ವಿವಿಧ ಜಿಲ್ಲೆಗಳು ಹಾಗೂ ಹೊರರಾಜ್ಯಗಳಿಗೆ ವಿಶೇಷ ಬಸ್‌ಗಳು ಸಂಚರಿಸಲಿವೆ. ಮೆಜೆಸ್ಟಿಕ್, ಸ್ಯಾಟಲೈಟ್‌ ಬಸ್ ನಿಲ್ದಾಣ ಹಾಗೂ ಶಾಂತಿನಗರ ಬಸ್ ನಿಲ್ದಾಣಗಳಿಂದ ಹೆಚ್ಚುವರಿ ಸೇವೆಗಳನ್ನು ನಿರ್ವಹಿಸಲಾಗುತ್ತದೆ.

ಮಂಗಳೂರು, ಶಿವಮೊಗ್ಗ, ಹುಬ್ಬಳ್ಳಿ, ಬೆಳಗಾವಿ, ವಿಜಯಪುರ, ಕಲಬುರಗಿ ಸೇರಿದಂತೆ ಪ್ರಯಾಣಿಕರ ಬೇಡಿಕೆ ಹೆಚ್ಚಿರುವ ಪ್ರಮುಖ ಮಾರ್ಗಗಳಿಗೆ ಹೆಚ್ಚುವರಿ ಬಸ್‌ಗಳನ್ನು ನಿಯೋಜಿಸಲಾಗಿದೆ.

ಹಬ್ಬದ ಹಿನ್ನೆಲೆಯಲ್ಲಿ ಈಗಾಗಲೇ ಪ್ರಮುಖ ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಾಗಿದೆ. ಸ್ವಂತ ಊರುಗಳಿಗೆ ತೆರಳಲು ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಬಸ್ ನಿಲ್ದಾಣಗಳತ್ತ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಯಾವುದೇ ತೊಂದರೆಯಾಗದಂತೆ KSRTC ಹೆಚ್ಚುವರಿ ಬಸ್‌ಗಳ ವ್ಯವಸ್ಥೆ ಮಾಡಿದೆ.

ಇನ್ನು ಹಬ್ಬ ಮುಗಿದ ಬಳಿಕ ಬೆಂಗಳೂರಿಗೆ ವಾಪಸ್ ಆಗುವ ಪ್ರಯಾಣಿಕರ ಸಂಖ್ಯೆಯೂ ಹೆಚ್ಚಾಗುವ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 14ರಿಂದ ಬೆಂಗಳೂರಿಗೆ ಮರಳುವ ಪ್ರಯಾಣಿಕರಿಗಾಗಿ ಕೂಡ ಹೆಚ್ಚುವರಿ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ.

CAR/DAR ಕಾನ್ಸ್‌ಟೇಬಲ್ ಪರೀಕ್ಷೆ ಫಲಿತಾಂಶ ಪ್ರಕಟ: ಆಕ್ಷೇಪಣೆಗೆ ಸೆ.14 ಕೊನೆಯ ದಿನ

0

ಬೆಂಗಳೂರು: ನಗರ ಮತ್ತು ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ಪಡೆಯ ಕಾನ್ಸ್‌ಟೇಬಲ್‌ ಹುದ್ದೆಗಳಿಗೆ ಸೆಪ್ಟೆಂಬರ್ 6ರಂದು ನಡೆದ ಲಿಖಿತ ಪರೀಕ್ಷೆಯ ತಾತ್ಕಾಲಿಕ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಕಟಿಸಿದೆ.

ಪರೀಕ್ಷೆ ನಡೆದ ಕೇವಲ ಐದು ದಿನಗಳಲ್ಲೇ ತಾತ್ಕಾಲಿಕ ಫಲಿತಾಂಶ ಪ್ರಕಟಿಸುವ ಮೂಲಕ ಕೆಇಎ ದಾಖಲೆ ನಿರ್ಮಿಸಿದೆ. ಫಲಿತಾಂಶಕ್ಕೆ ಸಂಬಂಧಿಸಿದಂತೆ ಅಭ್ಯರ್ಥಿಗಳಿಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿದ್ದು, ಸೆಪ್ಟೆಂಬರ್ 14ರ ಸಂಜೆ 5.30ರೊಳಗೆ ನಿಗದಿತ ಲಿಂಕ್ ಮೂಲಕ ಪೂರಕ ದಾಖಲೆಗಳೊಂದಿಗೆ ಆಕ್ಷೇಪಣೆ ಸಲ್ಲಿಸಬಹುದಾಗಿದೆ.

ಪರೀಕ್ಷೆ ನಡೆದ ದಿನವೇ ಅಭ್ಯರ್ಥಿಗಳ OMR ಪ್ರತಿಗಳನ್ನು ಸ್ಕ್ಯಾನ್ ಮಾಡಿ, ಪರೀಕ್ಷಾ ಕೇಂದ್ರವಾರು ಕೆಇಎ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾಗಿತ್ತು. ಬಳಿಕ ಸೆಪ್ಟೆಂಬರ್ 7ರಂದು ಕೀ ಉತ್ತರಗಳನ್ನು ಬಿಡುಗಡೆ ಮಾಡಲಾಗಿತ್ತು.

ಕೀ ಉತ್ತರಗಳಿಗೆ ಆಕ್ಷೇಪಣೆ ಸಲ್ಲಿಸಲು ಸೆಪ್ಟೆಂಬರ್ 9ರವರೆಗೆ ಅವಕಾಶ ನೀಡಲಾಗಿತ್ತು. ಅಭ್ಯರ್ಥಿಗಳಿಂದ ಬಂದ ಆಕ್ಷೇಪಣೆಗಳನ್ನು ಪರಿಶೀಲಿಸಿದ ಬಳಿಕ ಸೆಪ್ಟೆಂಬರ್ 10ರಂದು ಪರಿಷ್ಕೃತ ಕೀ ಉತ್ತರಗಳನ್ನು ಪ್ರಕಟಿಸಲಾಗಿದೆ. ಇದೀಗ ತಾತ್ಕಾಲಿಕ ಫಲಿತಾಂಶವನ್ನು ಪ್ರಕಟಿಸಲಾಗಿದೆ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಫಲಿತಾಂಶಕ್ಕೆ ಸಂಬಂಧಿಸಿದಂತೆ ಆಕ್ಷೇಪಣೆಗಳಿದ್ದರೆ ಅಭ್ಯರ್ಥಿಗಳು ಕೆಇಎ ಅಧಿಕೃತ ವೆಬ್‌ಸೈಟ್ ಮೂಲಕ ನಿಗದಿತ ಅವಧಿಯೊಳಗೆ ಸಲ್ಲಿಸಬಹುದಾಗಿದೆ.

ನಿರ್ಮಾಣ ಹಂತದ ಚರ್ಚ್ ಛಾವಣಿ ಕುಸಿತ: ಮೂವರು ಕಾರ್ಮಿಕರು ಸಾವು!

0

ವೆಲ್ಲೂರು: ತಮಿಳುನಾಡಿನ ವೆಲ್ಲೂರು ಜಿಲ್ಲೆಯಲ್ಲಿ ನಿರ್ಮಾಣ ಹಂತದಲ್ಲಿದ್ದ ಚರ್ಚ್‌ನ ಕಾಂಕ್ರೀಟ್ ಛಾವಣಿ ಕುಸಿದು ಮೂವರು ಕಾರ್ಮಿಕರು ಮೃತಪಟ್ಟಿದ್ದು, 11ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ.

ಚರ್ಚ್‌ನ ಮೇಲ್ಛಾವಣಿಗೆ ಕಾಂಕ್ರೀಟ್ ಹಾಕುವ ಕಾಮಗಾರಿ ನಡೆಯುತ್ತಿದ್ದ ವೇಳೆ ತಾತ್ಕಾಲಿಕವಾಗಿ ಅಳವಡಿಸಿದ್ದ ಸೆಂಟರಿಂಗ್ ಕಂಬಗಳು ಭಾರ ತಡೆಯಲಾಗದೆ ಕುಸಿದಿದ್ದರಿಂದ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.

ಛಾವಣಿ ಕುಸಿದ ಕೂಡಲೇ ಸ್ಥಳೀಯರು, ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು. ಕಾಂಕ್ರೀಟ್ ಮತ್ತು ಕಬ್ಬಿಣದ ರಾಡ್‌ಗಳ ಅಡಿಯಲ್ಲಿ ಸಿಲುಕಿದ್ದ ಕಾರ್ಮಿಕರನ್ನು ರಕ್ಷಿಸಿ ವೆಲ್ಲೂರು ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಗೊಂಡವರ ಪೈಕಿ ಕೆಲವರ ಸ್ಥಿತಿ ಗಂಭೀರವಾಗಿದೆ.

ಮೃತರನ್ನು ಬೆಂಗಳೂರಿನ ಕಟ್ಟಡ ಗುತ್ತಿಗೆದಾರ ಜಾನ್ (39), ಆಂಧ್ರಪ್ರದೇಶದ ಎಮ್ಯಾನುಯೆಲ್ (45) ಹಾಗೂ ಸ್ಯಾಮ್ಯುಯೆಲ್ (45) ಎಂದು ಗುರುತಿಸಲಾಗಿದೆ. ಎಮ್ಯಾನುಯೆಲ್ ಆಸ್ಪತ್ರೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟರೆ, ಸ್ಯಾಮ್ಯುಯೆಲ್ ಅವರ ಮೃತದೇಹವನ್ನು ಅವಶೇಷಗಳಿಂದ ಹೊರತೆಗೆಯಲಾಗಿದೆ.

ಘಟನೆಗೆ ಸಂಬಂಧಿಸಿದಂತೆ ವೆಲ್ಲೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ನಿರ್ಮಾಣ ಕಾಮಗಾರಿಯಲ್ಲಿ ಬಳಸಲಾದ ಸಾಮಗ್ರಿಗಳ ಗುಣಮಟ್ಟ ಹಾಗೂ ಗುತ್ತಿಗೆದಾರರ ನಿರ್ಲಕ್ಷ್ಯದ ಕುರಿತು ತನಿಖೆ ನಡೆಸುತ್ತಿದ್ದಾರೆ. 30 ಸದಸ್ಯರ NDRF ತಂಡ ಹಾಗೂ ಸ್ನಿಫರ್ ನಾಯಿಗಳನ್ನು ರಕ್ಷಣಾ ಕಾರ್ಯಾಚರಣೆಗೆ ನಿಯೋಜಿಸಲಾಗಿತ್ತು.

ಇನ್ನು ಅಪಘಾತದ ವೇಳೆ ಹಲವು ಕಾರ್ಮಿಕರು ಬಿರಿಯಾನಿ ತಿನ್ನಲು ಕಟ್ಟಡದಿಂದ ಹೊರಗೆ ಹೋಗಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ.

ಒಟ್ಟಾರೆ, ನಿರ್ಮಾಣ ಹಂತದಲ್ಲಿದ್ದ ಚರ್ಚ್‌ನ ಛಾವಣಿ ಕುಸಿದು ಮೂವರು ಕಾರ್ಮಿಕರು ಮೃತಪಟ್ಟಿರುವುದು ಭಾರೀ ದುರಂತಕ್ಕೆ ಕಾರಣವಾಗಿದ್ದು, ಘಟನೆ ಕುರಿತು ತನಿಖೆ ಮುಂದುವರಿದಿದೆ.

ಬೆಳಗ್ಗೆ ಹಾಸಿಗೆಯಿಂದ ಎದ್ದಾಗ ತಲೆ ಸುತ್ತುವುದು, ದೇಹ ದುರ್ಬಲವಾಗುವುದು ಏಕೆ? ಕಾರಣ ಮತ್ತು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳಿವು

0

ಮಲಗಿದ್ದಾಗ ಅಥವಾ ಬಹಳ ಹೊತ್ತು ಕೂತಿದ್ದ ಬಳಿಕ ತಕ್ಷಣ ಎದ್ದು ನಿಂತಾಗ ಕೆಲವರಿಗೆ ತಲೆ ಸುತ್ತಿದಂತೆ, ಕಣ್ಣು ಮುಂದೆ ಕತ್ತಲೆ ಬಂದಂತೆ ಅಥವಾ ದೇಹದಲ್ಲಿ ದುರ್ಬಲತೆ ಕಾಣಿಸಿಕೊಳ್ಳುತ್ತದೆ. ಕೆಲವೇ ಸೆಕೆಂಡುಗಳಲ್ಲಿ ಈ ಲಕ್ಷಣ ಕಡಿಮೆಯಾಗಬಹುದು.

ಸಾಮಾನ್ಯವಾಗಿ ದೇಹದ ರಕ್ತದೊತ್ತಡದಲ್ಲಿ ಉಂಟಾಗುವ ತಾತ್ಕಾಲಿಕ ಬದಲಾವಣೆ ಇದಕ್ಕೆ ಕಾರಣವಾಗಿರಬಹುದು.

ಅಷ್ಟಕ್ಕೂ ಎದ್ದು ನಿಂತ ತಕ್ಷಣ ಹೀಗೆ ಆಗುವುದೇಕೆ? ಮಲಗಿರುವಾಗ ದೇಹದಾದ್ಯಂತ ರಕ್ತದ ಹರಿವು ಸಾಮಾನ್ಯವಾಗಿರುತ್ತದೆ. ಆದರೆ ಇದ್ದಕ್ಕಿದ್ದಂತೆ ಎದ್ದು ನಿಂತಾಗ ಗುರುತ್ವಾಕರ್ಷಣೆಯ ಪರಿಣಾಮ ರಕ್ತದ ಒಂದು ಭಾಗ ಕಾಲು ಮತ್ತು ಹೊಟ್ಟೆಯ ಭಾಗದಲ್ಲಿ ತಾತ್ಕಾಲಿಕವಾಗಿ ಸಂಗ್ರಹವಾಗುತ್ತದೆ. ಇದರಿಂದ ಹೃದಯಕ್ಕೆ ಮರಳುವ ರಕ್ತದ ಪ್ರಮಾಣ ಕಡಿಮೆಯಾಗಿ, ಕೆಲ ಕ್ಷಣಗಳ ಕಾಲ ರಕ್ತದೊತ್ತಡ ಕುಸಿಯಬಹುದು.

ಎಸ್, ಸಾಮಾನ್ಯವಾಗಿ ದೇಹ ಇದನ್ನು ತಕ್ಷಣವೇ ಸರಿಪಡಿಸುತ್ತದೆ. ರಕ್ತನಾಳಗಳು ಸಂಕುಚಿತವಾಗುತ್ತವೆ ಹಾಗೂ ಹೃದಯದ ಬಡಿತ ಹೆಚ್ಚಾಗಿ ಮೆದುಳಿಗೆ ಅಗತ್ಯವಾದ ರಕ್ತಪ್ರವಾಹವನ್ನು ಕಾಪಾಡಲು ದೇಹ ಪ್ರಯತ್ನಿಸುತ್ತದೆ. ಆದರೆ ಈ ಹೊಂದಾಣಿಕೆ ತಡವಾದಾಗ ತಲೆ ಸುತ್ತುವುದು, ಕಣ್ಣು ಕತ್ತಲಾಗುವುದು ಅಥವಾ ತಲೆ ಹಗುರವಾದ ಅನುಭವವಾಗಬಹುದು.

ದೇಹದಲ್ಲಿ ನೀರಿನ ಕೊರತೆ ಇದ್ದಾಗ ಈ ಸಮಸ್ಯೆ ಹೆಚ್ಚಾಗಬಹುದು. ಜ್ವರ, ವಾಂತಿ, ಅತಿಸಾರ, ಹೆಚ್ಚು ಬೆವರುವುದು ಅಥವಾ ಸಾಕಷ್ಟು ನೀರು ಕುಡಿಯದಿರುವುದು ಕೂಡ ಕಾರಣವಾಗಬಹುದು. ದೀರ್ಘಕಾಲ ಹಾಸಿಗೆಯಲ್ಲಿರುವುದು, ಕೆಲವು ಔಷಧಿಗಳು ಹಾಗೂ ಕೆಲವು ಆರೋಗ್ಯ ಸಮಸ್ಯೆಗಳೂ ಎದ್ದು ನಿಂತಾಗ ರಕ್ತದೊತ್ತಡ ಕುಸಿಯುವ ಸಾಧ್ಯತೆಯನ್ನು ಹೆಚ್ಚಿಸಬಹುದು.

ತಲೆ ಸುತ್ತಿದಾಗ ತಕ್ಷಣ ನಡೆಯಲು ಮುಂದಾಗಬಾರದು. ಕೂಡಲೇ ಕುಳಿತುಕೊಳ್ಳುವುದು ಅಥವಾ ಸಾಧ್ಯವಾದರೆ ಮಲಗುವುದು ಸುರಕ್ಷಿತ. ಹಾಸಿಗೆಯಿಂದ ಎದ್ದಾಗ ಮೊದಲು ಕುಳಿತು ಕೆಲವು ಕ್ಷಣ ಕಾಯ್ದು, ನಂತರ ನಿಧಾನವಾಗಿ ನಿಲ್ಲುವುದು ಸಹಾಯಕವಾಗಬಹುದು. ಸಾಕಷ್ಟು ನೀರು ಕುಡಿಯುವುದೂ ಮುಖ್ಯ.

ಆದರೆ ಆಗಾಗ ತಲೆ ಸುತ್ತುವುದು, ದೃಷ್ಟಿ ಮಸುಕಾಗುವುದು, ತೀವ್ರ ದುರ್ಬಲತೆ ಕಾಣಿಸಿಕೊಳ್ಳುವುದು ಅಥವಾ ಪ್ರಜ್ಞೆ ತಪ್ಪುವಂತಹ ಲಕ್ಷಣಗಳು ಕಂಡುಬಂದರೆ ನಿರ್ಲಕ್ಷ್ಯ ಮಾಡದೆ ವೈದ್ಯರನ್ನು ಸಂಪರ್ಕಿಸುವುದು ಅಗತ್ಯ.

ಒಟ್ಟಾರೆ, ತಕ್ಷಣ ಎದ್ದು ನಿಲ್ಲುವುದರಿಂದ ಕೆಲ ಕ್ಷಣಗಳ ಕಾಲ ತಲೆ ಸುತ್ತುವುದು ಸಾಮಾನ್ಯವಾಗಿರಬಹುದು. ಆದರೆ ಪದೇಪದೇ ಈ ಸಮಸ್ಯೆ ಕಾಣಿಸಿಕೊಂಡರೆ ಅದರ ಕಾರಣ ತಿಳಿದುಕೊಳ್ಳುವುದು ಮುಖ್ಯ.

ಮೀನಿನ ಭೋಗ್ ಸ್ವೀಕರಿಸಿ ಆಹಾರ ವಿವಾದಕ್ಕೆ ಫುಲ್ ಸ್ಟಾಪ್ ಇಟ್ಟ ಸುವೇಂದು ಅಧಿಕಾರಿ!

0

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರು ಕೋಲ್ಕತ್ತಾದ ಐತಿಹಾಸಿಕ ಕಾಳಿಘಾಟ್ ದೇವಾಲಯಕ್ಕೆ ಭೇಟಿ ನೀಡಿ ಸಾಂಪ್ರದಾಯಿಕ ಮೀನಿನ ಭೋಗ್ ಸ್ವೀಕರಿಸುವ ಮೂಲಕ ಇತ್ತೀಚೆಗೆ ತೀವ್ರ ಚರ್ಚೆಗೆ ಕಾರಣವಾಗಿದ್ದ ಸಸ್ಯಾಹಾರ-ಮಾಂಸಾಹಾರ ವಿವಾದಕ್ಕೆ ಹೊಸ ತಿರುವು ನೀಡಿದ್ದಾರೆ.

ಶಾಕ್ತ ಹಿಂದೂಗಳಿಗೆ ಪವಿತ್ರವಾಗಿರುವ ಕೌಶಿಕಿ ಅಮಾವಾಸ್ಯೆ ಸಂದರ್ಭದಲ್ಲಿ ಕಾಳಿಘಾಟ್ ದೇವಾಲಯಕ್ಕೆ ಭೇಟಿ ನೀಡಿದ ಸುವೇಂದು ಅಧಿಕಾರಿ, ನೆಲದ ಮೇಲೆ ಕುಳಿತು ದೇವಿಗೆ ಅರ್ಪಿಸಲಾದ ಪ್ರಸಾದವನ್ನು ಸ್ವೀಕರಿಸಿದರು. ಭೋಗ್‌ನಲ್ಲಿ ಕಾಳಿಘಾಟ್‌ನ ಸಾಂಪ್ರದಾಯಿಕ ದೊಡ್ಡ ಮೀನಿನ ತಲೆ, ಹುರಿದ ಮೀನು ಹಾಗೂ ಬಸಂತಿ ಪುಲಾವ್ ಇದ್ದವು ಎನ್ನಲಾಗಿದೆ.

ಕಾಳಿಘಾಟ್ ದೇವಾಲಯದಲ್ಲಿ ಕಾಳಿ ದೇವಿಗೆ ಮೀನು ಹಾಗೂ ಬಲಿ ನೀಡಿದ ಮೇಕೆಯ ಮಾಂಸವನ್ನು ನೈವೇದ್ಯವಾಗಿ ಅರ್ಪಿಸಿ, ಬಳಿಕ ಭಕ್ತರಿಗೆ ಪ್ರಸಾದವಾಗಿ ವಿತರಿಸುವುದು ಶತಮಾನಗಳ ಸಂಪ್ರದಾಯವಾಗಿದೆ.

ದುರ್ಗಾಪೂಜೆ ಸಂದರ್ಭದಲ್ಲಿ ಬಂಗಾಳಿ ಹಿಂದೂಗಳು ಮಾಂಸಾಹಾರ ಸೇವಿಸುವುದನ್ನು ತ್ಯಜಿಸಬೇಕು ಎಂದು ಮಧ್ಯಪ್ರದೇಶದ ಬಾಗೇಶ್ವರ ಧಾಮದ ಮುಖ್ಯ ಅರ್ಚಕ ಧೀರೇಂದ್ರ ಕೃಷ್ಣ ಶಾಸ್ತ್ರಿ ಕರೆ ನೀಡಿದ್ದರು. ಪೂಜೆಯ ಸಂದರ್ಭದಲ್ಲಿ ಮಾಂಸಾಹಾರ ಸೇವಿಸುವವರನ್ನು ಪಾಖಂಡಿಗಳು ಎಂದು ಟೀಕಿಸಿದ್ದರು ಎನ್ನಲಾಗಿದೆ.

ಈ ಹೇಳಿಕೆ ಬಂಗಾಳದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿತ್ತು. ದುರ್ಗಾಪೂಜೆ ಸೇರಿದಂತೆ ವಿವಿಧ ಧಾರ್ಮಿಕ ಆಚರಣೆಗಳಲ್ಲಿ ಮೀನು-ಮಾಂಸ ಸೇವಿಸುವ ಹಾಗೂ ದೇವರಿಗೆ ಮಾಂಸಾಹಾರದ ಭೋಗ್ ಅರ್ಪಿಸುವ ಸಂಪ್ರದಾಯ ಹೊಂದಿರುವ ಬಂಗಾಳಿ ಸಮಾಜದಿಂದ ಇದಕ್ಕೆ ವಿರೋಧ ವ್ಯಕ್ತವಾಗಿತ್ತು.

ಈ ನಡುವೆ ಪಶ್ಚಿಮ ಬಂಗಾಳ ಬಿಜೆಪಿ ಘಟಕದ ಅಧ್ಯಕ್ಷ ಸಮಿಕ್ ಭಟ್ಟಾಚಾರ್ಯ, ಬಂಗಾಳಿಗಳು ಏನು ತಿನ್ನಬೇಕು ಎಂಬುದನ್ನು ಯಾವುದೇ ಬಾಬಾಗಳು ನಿರ್ಧರಿಸಲು ಸಾಧ್ಯವಿಲ್ಲ ಎಂದು ಹೇಳಿದ್ದರು. ಬಂಗಾಳಿಗಳು ಮೀನು-ಮಾಂಸ ಸೇವಿಸುತ್ತಾರೆ ಹಾಗೂ ಸ್ವಾಮಿ ವಿವೇಕಾನಂದರೂ ಇದನ್ನು ಸಮರ್ಥಿಸಿದ್ದರು ಎಂದು ಅವರು ಹೇಳಿದ್ದರು.

ಇದೀಗ ಕಾಳಿಘಾಟ್ ದೇವಾಲಯದಲ್ಲಿ ಮೀನಿನ ಭೋಗ್ ಸ್ವೀಕರಿಸಿರುವ ಸುವೇಂದು ಅಧಿಕಾರಿ, ಬಂಗಾಳದ ಸಂಪ್ರದಾಯದ ಪರ ನಿಲುವು ವ್ಯಕ್ತಪಡಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಅವರು, ತಾವು ಸನಾತನಿ ಹಿಂದೂ. ಮಹಾಷ್ಟಮಿ ಹಾಗೂ ಕಾರ್ತಿಕ ಮಾಸದಲ್ಲಿ ಸಾತ್ವಿಕ ಆಹಾರ ಸೇವಿಸುತ್ತೇನೆ. ಅದೇ ಸಂದರ್ಭದಲ್ಲಿ ಮಾತೆ ಕಾಳಿಗೆ ಅರ್ಪಿಸಲಾದ ಮೀನು ಹಾಗೂ ಮಾಂಸದ ಪ್ರಸಾದವನ್ನೂ ಸ್ವೀಕರಿಸುತ್ತೇನೆ ಎಂದು ಹೇಳಿದ್ದಾರೆ.

ಧೀರೇಂದ್ರ ಶಾಸ್ತ್ರಿ ಅವರ ಹೇಳಿಕೆ ಅವರ ವೈಯಕ್ತಿಕ ಅಭಿಪ್ರಾಯ. ಅದನ್ನು ಸ್ವೀಕರಿಸುವುದು ಅಥವಾ ಬಿಡುವುದು ಜನರಿಗೆ ಬಿಟ್ಟ ವಿಚಾರ ಎಂದು ಸುವೇಂದು ಅಧಿಕಾರಿ ಹೇಳಿದ್ದಾರೆ.

ಇನ್ನು ಬಿಜೆಪಿ ರಾಷ್ಟ್ರೀಯ ವಕ್ತಾರ ಪ್ರದೀಪ್ ಭಂಡಾರಿ ಕೂಡ ಪ್ರತಿಕ್ರಿಯಿಸಿ, ಸುವೇಂದು ಅಧಿಕಾರಿ ಕಾಳಿಘಾಟ್‌ನಲ್ಲಿ ಸಾಂಪ್ರದಾಯಿಕ ಮೀನಿನ ಭೋಗ್ ಸ್ವೀಕರಿಸುವ ಮೂಲಕ ಬಂಗಾಳದ ನಂಬಿಕೆ, ಪರಂಪರೆ ಹಾಗೂ ಜೀವನಶೈಲಿಗೆ ಗೌರವ ನೀಡಿದ್ದಾರೆ ಎಂದು ಹೇಳಿದ್ದಾರೆ. ಇದರೊಂದಿಗೆ ಮಾಂಸಾಹಾರದ ಕುರಿತ ಅನಗತ್ಯ ವಿವಾದಕ್ಕೆ ತೆರೆ ಬೀಳಲಿ ಎಂದು ಅವರು ತಿಳಿಸಿದ್ದಾರೆ.

ಮೋದಿ-ಪುಟಿನ್ ಉನ್ನತ ಮಟ್ಟದ ದ್ವಿಪಕ್ಷೀಯ ಸಭೆ; ರಷ್ಯಾ ಅಧ್ಯಕ್ಷರಿಗೆ ತಮಿಳಿನ ಶ್ರೇಷ್ಠ ಕೃತಿ ‘ತಿರುಕ್ಕುರಳ್’ ಗಿಫ್ಟ್

0

ನವದೆಹಲಿ: ದೆಹಲಿಯ ಭಾರತ ಮಂಟಪದಲ್ಲಿ ನಡೆಯುತ್ತಿರುವ ಬ್ರಿಕ್ಸ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಆತ್ಮೀಯವಾಗಿ ಸ್ವಾಗತಿಸಿದರು. ಈ ವೇಳೆ ಉಭಯ ನಾಯಕರು ಪರಸ್ಪರ ಭೇಟಿಯಾಗಿ ಮಾತುಕತೆ ನಡೆಸಿದರು.

ಪ್ರಧಾನಿ ನರೇಂದ್ರ ಮೋದಿ ಹಾಗೂ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನಡುವೆ ಉನ್ನತ ಮಟ್ಟದ ದ್ವಿಪಕ್ಷೀಯ ಸಭೆಯೂ ನಡೆಯಿತು. ಜಾಗತಿಕ ರಾಜಕೀಯ ಮತ್ತು ಆರ್ಥಿಕ ಬೆಳವಣಿಗೆಗಳ ನಡುವೆ ನಡೆದ ಈ ಭೇಟಿ ಭಾರತ-ರಷ್ಯಾ ನಡುವಿನ ದೀರ್ಘಕಾಲದ ರಾಜತಾಂತ್ರಿಕ ಹಾಗೂ ಕಾರ್ಯತಂತ್ರದ ಸಂಬಂಧಗಳಿಗೆ ಮತ್ತಷ್ಟು ಮಹತ್ವ ನೀಡಿದೆ.

ಭೇಟಿಯ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ತಮಿಳು ದಾರ್ಶನಿಕ ಸಂತ ತಿರುವಳ್ಳುವರ್ ಅವರ ಪ್ರಸಿದ್ಧ ಕೃತಿ ‘ತಿರುಕ್ಕುರಳ್’ನ ರಷ್ಯನ್ ಅನುವಾದದ ಪ್ರತಿಯನ್ನು ಪುಟಿನ್ ಅವರಿಗೆ ಉಡುಗೊರೆಯಾಗಿ ನೀಡಿದರು.

ಮಾನವೀಯ ಮೌಲ್ಯಗಳು, ರಾಜನೀತಿ ಹಾಗೂ ಸತ್ಯದಂತಹ ವಿಚಾರಗಳನ್ನು ಸಾರುವ ‘ತಿರುಕ್ಕುರಳ್’ ಭಾರತೀಯ ಸಾಹಿತ್ಯ ಪರಂಪರೆಯ ಪ್ರಮುಖ ಕೃತಿಗಳಲ್ಲಿ ಒಂದಾಗಿದೆ. ಈ ಕೃತಿಯ ರಷ್ಯನ್ ಅನುವಾದವನ್ನು ಪುಟಿನ್ ಅವರಿಗೆ ನೀಡುವ ಮೂಲಕ ಪ್ರಧಾನಿ ಮೋದಿ ಭಾರತೀಯ ಸಾಂಸ್ಕೃತಿಕ ಪರಂಪರೆಯನ್ನು ಜಾಗತಿಕ ವೇದಿಕೆಯಲ್ಲಿ ಪರಿಚಯಿಸಿದ್ದಾರೆ.

ಪ್ರಧಾನಿ ಮೋದಿ ಅವರ ಈ ನಡೆಗೆ ತಮಿಳುನಾಡು ಸೇರಿದಂತೆ ದೇಶದ ವಿವಿಧೆಡೆ ಮೆಚ್ಚುಗೆ ವ್ಯಕ್ತವಾಗಿದೆ. ಮೋದಿ-ಪುಟಿನ್ ಭೇಟಿಯ ವೇಳೆ ಉಭಯ ದೇಶಗಳ ನಡುವಿನ ಸಂಬಂಧಗಳು ಹಾಗೂ ಪ್ರಮುಖ ಜಾಗತಿಕ ವಿಚಾರಗಳ ಕುರಿತು ಚರ್ಚೆ ನಡೆದಿರುವುದು ವಿಶೇಷ ಗಮನ ಸೆಳೆದಿದೆ.

₹2 ಕೋಟಿ ನಮಗೆ ದೊಡ್ಡ ಮೊತ್ತವೇ ಅಲ್ಲ, ಯಾವುದೇ ತಪ್ಪು ಮಾಡಿಲ್ಲ: ಸತೀಶ್ ಜಾರಕಿಹೊಳಿ ಸ್ಪಷ್ಟನೆ

0

ಬೆಂಗಳೂರು: ತಮ್ಮ ಹಾಗೂ ಕುಟುಂಬಸ್ಥರಿಗೆ ಸೇರಿದ ಸಂಸ್ಥೆಗಳ ಮೇಲೆ ಜಾರಿ ನಿರ್ದೇಶನಾಲಯ (ಇ.ಡಿ.) ನಡೆಸಿದ ದಾಳಿ ಕುರಿತು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯಿಸಿದ್ದಾರೆ. ಸಂಸ್ಥೆಗಳ ವಾರ್ಷಿಕ ವಹಿವಾಟು ₹2,000 ಕೋಟಿಗೂ ಅಧಿಕವಾಗಿದ್ದು, ದಾಳಿಯಲ್ಲಿ ಸಿಕ್ಕಿದೆ ಎನ್ನಲಾದ ₹2 ಕೋಟಿ ನಮಗೆ ದೊಡ್ಡ ಮೊತ್ತವೇ ಅಲ್ಲ ಎಂದು ಹೇಳಿದ್ದಾರೆ.

ದಾಳಿ ಕುರಿತು ಸ್ಪಷ್ಟನೆ ನೀಡಿದ ಸತೀಶ್ ಜಾರಕಿಹೊಳಿ, ಪತ್ತೆಯಾಗಿದೆ ಎನ್ನಲಾಗಿರುವ ₹2 ಕೋಟಿ ಹಣ ನಮ್ಮದೇ. ಅದನ್ನು ಕಾನೂನುಬದ್ಧವಾಗಿ ಕ್ಲೈಮ್ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

ಆಫ್ರಿಕಾದಲ್ಲಿ ಮೈನಿಂಗ್ ಮತ್ತು ಟ್ರೇಡಿಂಗ್ ಕಂಪನಿ ಆರಂಭಿಸಲು ಯೋಜನೆ ರೂಪಿಸಲಾಗಿತ್ತು. ಆದರೆ ಈವರೆಗೆ ಯಾವುದೇ ಹೂಡಿಕೆ ಮಾಡಿಲ್ಲ. ಹೂಡಿಕೆ ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ಇದೇ ವಿದೇಶಿ ಹೂಡಿಕೆ ವಿಚಾರವನ್ನು ಮುಂದಿಟ್ಟುಕೊಂಡು ಇ.ಡಿ. ದಾಳಿ ನಡೆಸಿದೆ ಎಂದು ಸಚಿವರು ಹೇಳಿದ್ದಾರೆ.

ತಮ್ಮ ಮಗ ಮತ್ತು ಮಗಳ ಹೆಸರಿನಲ್ಲಿ ಕಂಪನಿ ಸ್ಥಾಪಿಸಿರುವುದು ನಿಜ. ಈ ಸಂಬಂಧ ಆದಾಯ ತೆರಿಗೆ ಇಲಾಖೆಗೆ ಈಗಾಗಲೇ ಅಗತ್ಯ ದಾಖಲೆಗಳನ್ನು ಸಲ್ಲಿಸಲಾಗಿದೆ. ಇ.ಡಿ. ಅಧಿಕಾರಿಗಳು ಕೇಳಿದರೂ ಎಲ್ಲ ದಾಖಲೆಗಳನ್ನು ಒದಗಿಸುವುದಾಗಿ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.

ಇನ್ನು ಪ್ರಕರಣದಲ್ಲಿ ಜಾತಿ ವಿಚಾರವನ್ನು ಮುಂದಿಟ್ಟುಕೊಂಡು ಸಮರ್ಥನೆ ಮಾಡಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ತಪ್ಪು ಮಾಡಿದ್ದರೆ ಜಾತಿಯ ಹೆಸರನ್ನು ಹೇಳಲು ಸಾಧ್ಯವಿಲ್ಲ. ನಾವು ಯಾವುದೇ ತಪ್ಪು ಮಾಡಿಲ್ಲ. ಹೀಗಾಗಿ ಇಡೀ ವಿಚಾರವನ್ನು ಕಾನೂನುಬದ್ಧವಾಗಿಯೇ ಎದುರಿಸುತ್ತೇವೆ ಎಂದು ಹೇಳಿದ್ದಾರೆ.

ಕೇಂದ್ರ ತನಿಖಾ ಸಂಸ್ಥೆಗಳ ಕಾರ್ಯವೈಖರಿ ಕುರಿತು ಅಸಮಾಧಾನ ವ್ಯಕ್ತಪಡಿಸಿದ ಸತೀಶ್ ಜಾರಕಿಹೊಳಿ, ಕಳೆದ 10 ವರ್ಷಗಳಿಂದ ಕಾಂಗ್ರೆಸ್‌, ಆಮ್ ಆದ್ಮಿ ಪಾರ್ಟಿ, ಎನ್‌ಸಿಪಿ ಸೇರಿದಂತೆ ವಿರೋಧ ಪಕ್ಷಗಳ ನಾಯಕರನ್ನೇ ಗುರಿಯಾಗಿಸಿಕೊಂಡು ದಾಳಿ ನಡೆಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಬಿಜೆಪಿ ನಾಯಕರ ಮೇಲೆ ಇಂತಹ ದಾಳಿಗಳು ಏಕೆ ನಡೆಯುತ್ತಿಲ್ಲ ಎಂದು ಪ್ರಶ್ನಿಸಿದ ಅವರು, ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರನ್ನೂ ಗುರಿಯಾಗಿಸಿಕೊಂಡು ತನಿಖಾ ಸಂಸ್ಥೆಗಳ ಕ್ರಮ ನಡೆದಿರುವ ಇತಿಹಾಸವಿದೆ ಎಂದು ಹೇಳಿದ್ದಾರೆ.

ರಾಜಕೀಯವಾಗಿ ನಮ್ಮನ್ನು ಕುಗ್ಗಿಸುವ ಉದ್ದೇಶದಿಂದ ಈ ದಾಳಿ ನಡೆದಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದ ಸತೀಶ್ ಜಾರಕಿಹೊಳಿ, ಆದರೂ ಇ.ಡಿ. ತನಿಖೆಗೆ ಸಂಪೂರ್ಣ ಸಹಕಾರ ನೀಡುತ್ತೇವೆ. ನೋಟಿಸ್ ನೀಡಿದಾಗ ಕಾನೂನುಬದ್ಧವಾಗಿ ಉತ್ತರ ನೀಡುತ್ತೇವೆ ಎಂದು ತಿಳಿಸಿದ್ದಾರೆ.