Home Blog Page 4

ಗಣೇಶೋತ್ಸವಕ್ಕೆ ಮಾತ್ರ ‘ಪೊಲೀಸ್ ಗಿರಿ’ ಏಕೆ? ಶಾಸಕ ಸಿ.ಸಿ. ಪಾಟೀಲ ಆಕ್ರೋಶ

0

ವಿಜಯಸಾಕ್ಷಿ ಸುದ್ದಿ, ಗದಗ: ಗಣೇಶೋತ್ಸವ ಸೇರಿದಂತೆ ಹಿಂದೂಗಳ ಹಬ್ಬಗಳ ಆಚರಣೆಗೆ ಅನಗತ್ಯ ನಿರ್ಬಂಧ ವಿಧಿಸುವುದು, ಧ್ವನಿವರ್ಧಕ, ಪಟಾಕಿ ಹಾಗೂ ಮೆರವಣಿಗೆ ವಿಚಾರದಲ್ಲಿ ತಾರತಮ್ಯ ಮಾಡುವುದು ಸರಿಯಲ್ಲ ಎಂದು ಮಾಜಿ ಸಚಿವ, ಶಾಸಕ ಸಿ.ಸಿ. ಪಾಟೀಲ ಆಕ್ರೋಶ ವ್ಯಕ್ತಪಡಿಸಿದರು.

ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗಣೇಶೋತ್ಸವ ಬಂದಾಗ ಮಾತ್ರ ಪೊಲೀಸರು ವಿವಿಧ ಷರತ್ತುಗಳನ್ನು ವಿಧಿಸುತ್ತಾರೆ. ಇತರ ಸಮುದಾಯಗಳ ಹಬ್ಬಗಳಲ್ಲಿ ಡಿಜೆ, ಬೆಳಕು ಹಾಗೂ ಪೆಂಡಾಲ್‌ಗಳಿಗೆ ಅನುಮತಿ ನೀಡಲಾಗುತ್ತದೆ. ಹೀಗಿರುವಾಗ ಹಿಂದೂಗಳ ಹಬ್ಬಗಳಿಗೆ ಮಾತ್ರ ಹೆಚ್ಚಿನ ನಿಯಮ ಏಕೆ? ಎಲ್ಲ ಧರ್ಮಗಳ ಹಬ್ಬಗಳಿಗೂ ಒಂದೇ ರೀತಿಯ ನಿಯಮ ಅನ್ವಯಿಸಬೇಕು ಎಂದು ಒತ್ತಾಯಿಸಿದರು.

ಪರಿಸರ ಮಾಲಿನ್ಯದ ಹೆಸರಿನಲ್ಲಿ ಗಣೇಶೋತ್ಸವದ ವೇಳೆ ಪಟಾಕಿ ಸಿಡಿಸುವುದಕ್ಕೆ ವಿರೋಧ ವ್ಯಕ್ತಪಡಿಸಲಾಗುತ್ತದೆ. ಆದರೆ ಮಾಲಿನ್ಯಕ್ಕೆ ಕಾರಣವಾಗುವ ಕೈಗಾರಿಕೆಗಳ ವಿಚಾರದಲ್ಲಿ ಇದೇ ರೀತಿಯ ಕಾಳಜಿ ಏಕೆ ತೋರುವುದಿಲ್ಲ ಎಂದು ಪ್ರಶ್ನಿಸಿದರು. ಗದಗ ಜಿಲ್ಲೆಯಲ್ಲಿ ಎಲ್ಲ ಧರ್ಮಗಳ ಹಬ್ಬಗಳನ್ನು ಶಾಂತಿ ಮತ್ತು ಸೌಹಾರ್ದದಿಂದ ಆಚರಿಸುವ ಪರಂಪರೆಯಿದ್ದು, ಅದನ್ನು ಮುಂದುವರಿಸಬೇಕು ಎಂದರು.

ಟಿ. ನರಸೀಪುರದ ಹಿಂದೂ ಕಾರ್ಯಕರ್ತರ ಕುರಿತು ಪೊಲೀಸ್ ಅಧಿಕಾರಿಯೊಬ್ಬರು ನೀಡಿರುವ ಹೇಳಿಕೆ ಹಾಗೂ ನಡೆ ಖಂಡನೀಯ. ಇಂತಹ ನಡೆ ಸಮಾಜದಲ್ಲಿ ವಿಭಜನೆಯ ವಾತಾವರಣಕ್ಕೆ ಕಾರಣವಾಗುತ್ತದೆ ಎಂದು ಆರೋಪಿಸಿದರು. ಸಂಬಂಧಿಸಿದ ಪೊಲೀಸ್ ಅಧಿಕಾರಿಗಳ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರ 25 ವರ್ಷಗಳ ಸಾರ್ವಜನಿಕ ಸೇವೆ ಅಂಗವಾಗಿ ಸೆ.17ರಿಂದ ಅ.17ರವರೆಗೆ ಬಿಜೆಪಿ ವತಿಯಿಂದ ವಿವಿಧ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ರಕ್ತದಾನ ಶಿಬಿರ, ಆರೋಗ್ಯ ತಪಾಸಣೆ, ಸ್ವಚ್ಛತಾ ಅಭಿಯಾನ, ಗಿಡ ನೆಡುವುದು, ಅನಾಥಾಶ್ರಮ ಹಾಗೂ ವೃದ್ಧಾಶ್ರಮಗಳಿಗೆ ಭೇಟಿ, ಬೀದಿ ನಾಟಕ, ಸೇವಾ ಜ್ಯೋತಿ ಯಾತ್ರೆ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಜು ಕುರುಡಗಿ, ಎಂ.ಎಸ್. ಕರಿಗೌಡ್ರ, ಎಂ.ಎಂ. ಹಿರೇಮಠ, ನಿರ್ಮಲಾ ಕೊಳ್ಳಿ, ಉಷಾ ದಾಸರ, ಲಿಂಗರಾಜ ಪಾಟೀಲ ಸೇರಿದಂತೆ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.

ಬರ ಘೋಷಣೆಗೆ ಸೆ.23ರ ನಿರೀಕ್ಷೆ

ಗದಗ ಜಿಲ್ಲೆಯ ಎಲ್ಲ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸುವ ವಿಚಾರದಲ್ಲಿ ಆಶಾಭಾವನೆ ಹೊಂದಿದ್ದೇವೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಜಿಲ್ಲೆಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ರಾಯರಡ್ಡಿ ಅವರೂ ಎಲ್ಲ ತಾಲೂಕುಗಳನ್ನು ಬರಪೀಡಿತ ಪಟ್ಟಿಗೆ ಸೇರಿಸಲು ಪ್ರಯತ್ನಿಸುವುದಾಗಿ ತಿಳಿಸಿದ್ದಾರೆ. ವಿಧಾನಮಂಡಲ ಅಧಿವೇಶನದಲ್ಲಿ ಬರ ಪರಿಸ್ಥಿತಿ ಕುರಿತು ಚರ್ಚೆಯಾಗಲಿದ್ದು, ಸೆ.23ರಂದು ಬರ ಘೋಷಣೆಯಾಗುವ ನಿರೀಕ್ಷೆಯಿದೆ ಎಂದು ಸಿ.ಸಿ. ಪಾಟೀಲ ಹೇಳಿದರು.

ಸಚಿವ ಬಾಲಕೃಷ್ಣ ಹೇಳಿಕೆಗೆ ಮುತ್ತು ರಾಯರಡ್ಡಿ ಆಕ್ರೋಶ

0

ವಿಜಯಸಾಕ್ಷಿ ಸುದ್ದಿ, ನರಗುಂದ: ಕೇಂದ್ರ ಸಚಿವ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರನ್ನು ಗ್ರಾಮ ಪಂಚಾಯಿತಿ ಸದಸ್ಯರಿಗೆ ಹೋಲಿಕೆ ಮಾಡಿ ಸಚಿವ ಎಚ್.ಸಿ. ಬಾಲಕೃಷ್ಣ ಅವರು ನೀಡಿರುವ ಹೇಳಿಕೆಯನ್ನು ತಾಲೂಕಿನ ಚಿಕ್ಕ ನರಗುಂದ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮುತ್ತು ರಾಯರಡ್ಡಿ ತೀವ್ರವಾಗಿ ಖಂಡಿಸಿದ್ದಾರೆ.

ಕುಮಾರಸ್ವಾಮಿ ಅವರು ರಾಜ್ಯದ ಮಾಜಿ ಮುಖ್ಯಮಂತ್ರಿಯಾಗಿ ಹಾಗೂ ಪ್ರಸ್ತುತ ಕೇಂದ್ರ ಸಚಿವರಾಗಿ ಸಾರ್ವಜನಿಕ ಜೀವನದಲ್ಲಿ ಮಹತ್ವದ ಜವಾಬ್ದಾರಿ ಹೊಂದಿದ್ದಾರೆ. ಅಂತಹ ವ್ಯಕ್ತಿಯನ್ನು ಗ್ರಾಮ ಪಂಚಾಯಿತಿ ಸದಸ್ಯರಿಗೆ ಹೋಲಿಕೆ ಮಾಡುವುದು ಅವರ ಸ್ಥಾನಮಾನಕ್ಕೆ ಅಗೌರವ ತೋರಿದಂತಾಗಿದೆ ಎಂದು ಮುತ್ತು ರಾಯರಡ್ಡಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ರಾಜಕೀಯದಲ್ಲಿ ಭಿನ್ನಾಭಿಪ್ರಾಯಗಳು, ಆರೋಪ-ಪ್ರತ್ಯಾರೋಪಗಳು ಸಹಜ. ಆದರೆ ಟೀಕಿಸುವ ಭರದಲ್ಲಿ ವ್ಯಕ್ತಿಯ ಸ್ಥಾನಮಾನವನ್ನು ಹಗುರವಾಗಿ ಕಾಣುವ ರೀತಿಯಲ್ಲಿ ಮಾತನಾಡುವುದು ಸರಿಯಲ್ಲ. ಸಚಿವ ಬಾಲಕೃಷ್ಣ ಅವರು ತಮ್ಮ ಹೇಳಿಕೆಯನ್ನು ಹಿಂಪಡೆದು, ಕುಮಾರಸ್ವಾಮಿ ಅವರ ಬಗ್ಗೆ ಗೌರವಯುತವಾಗಿ ಮಾತನಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಕುಮಾರಸ್ವಾಮಿ ಅವರು ಗ್ರಾಮ ಪಂಚಾಯಿತಿ ಸದಸ್ಯರಲ್ಲ, ರಾಜ್ಯದ ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವರು. ಅವರನ್ನು ಗ್ರಾಮ ಪಂಚಾಯಿತಿ ಸದಸ್ಯರಿಗೆ ಹೋಲಿಕೆ ಮಾಡಿರುವುದು ಖಂಡನೀಯ. ರಾಜಕೀಯ ಟೀಕೆಗಳಿಗೆ ಮಿತಿಯಿರಬೇಕು. ವೈಯಕ್ತಿಕವಾಗಿ ಅಥವಾ ಸ್ಥಾನಮಾನವನ್ನು ಹಗುರಗೊಳಿಸುವ ರೀತಿಯಲ್ಲಿ ಮಾತನಾಡುವುದು ರಾಜಕೀಯ ಸಂಸ್ಕೃತಿಯಲ್ಲ ಎಂದು ಮುತ್ತು ರಾಯರಡ್ಡಿ ತಿಳಿಸಿದ್ದಾರೆ.

ಕುಮಾರಸ್ವಾಮಿ ಅವರ ರಾಜಕೀಯ ಹೇಳಿಕೆಗಳಿಗೆ ಸಚಿವ ಬಾಲಕೃಷ್ಣ ಅವರು ವಿಚಾರಾಧಾರಿತವಾಗಿ ಉತ್ತರಿಸಲಿ. ಆದರೆ ಕೇಂದ್ರ ಸಚಿವರ ಸ್ಥಾನಮಾನವನ್ನು ಕಡೆಗಣಿಸಿ ಗ್ರಾಮ ಪಂಚಾಯಿತಿ ಸದಸ್ಯರಿಗೆ ಹೋಲಿಕೆ ಮಾಡಿರುವುದು ಸರಿಯಾದ ನಡೆಯಲ್ಲ. ಸಾರ್ವಜನಿಕ ಜೀವನದಲ್ಲಿರುವವರು ಪರಸ್ಪರರ ಸ್ಥಾನಮಾನಕ್ಕೆ ಗೌರವ ನೀಡುವ ಮೂಲಕ ಆರೋಗ್ಯಕರ ರಾಜಕೀಯ ಸಂಸ್ಕೃತಿ ಬೆಳೆಸಬೇಕು ಎಂದು ಮುತ್ತು ರಾಯರಡ್ಡಿ ಹೇಳಿದ್ದಾರೆ.

ಕ್ರೀಡೆಯಲ್ಲಿ ನಿರಂತರ ಪ್ರಯತ್ನವೇ ಮುಖ್ಯ: ಚಂದ್ರು ಲಮಾಣಿ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಕ್ರೀಡೆಯಲ್ಲಿ ಸೋಲು-ಗೆಲುವಿಗಿಂತ ಭಾಗವಹಿಸುವಿಕೆ, ಕ್ರೀಡಾಸ್ಫೂರ್ತಿ ಹಾಗೂ ನಿರಂತರ ಪ್ರಯತ್ನವೇ ಮುಖ್ಯ ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.

ಸಮೀಪದ ಒಡೆಯರ ಮಲ್ಲಾಪುರ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಮಂಗಳವಾರ ನಡೆದ ಶಿಗ್ಲಿ ಗ್ರೂಪ್ ಮಟ್ಟದ ಪ್ರೌಢಶಾಲೆಗಳ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.

ಕ್ರೀಡಾಕೂಟಗಳು ವಿದ್ಯಾರ್ಥಿಗಳಿಗೆ ತಮ್ಮ ಪ್ರತಿಭೆ ಪ್ರದರ್ಶಿಸಲು ಉತ್ತಮ ವೇದಿಕೆ ಕಲ್ಪಿಸುವುದರ ಜತೆಗೆ ನಾಯಕತ್ವ ಗುಣ, ಆತ್ಮವಿಶ್ವಾಸ, ಶಿಸ್ತು ಹಾಗೂ ತಂಡಭಾವ ಬೆಳೆಸುತ್ತವೆ. ಸದೃಢ ದೇಹದಲ್ಲಿ ಸದೃಢ ಮನಸ್ಸು ನೆಲೆಸಲು ಸಾಧ್ಯ. ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವುದರಿಂದ ದೈಹಿಕ ಸಾಮರ್ಥ್ಯದ ಜತೆಗೆ ಮಾನಸಿಕ ಸ್ಥೈರ್ಯವೂ ವೃದ್ಧಿಯಾಗುತ್ತದೆ ಎಂದರು.

ಸ್ಪರ್ಧೆಯಲ್ಲಿ ಗೆಲುವು ಸಾಧಿಸಿದಾಗ ಅಹಂಕಾರಪಡದೆ, ಸೋಲು ಎದುರಾದಾಗ ಕುಗ್ಗದೆ, ತಮ್ಮ ತಪ್ಪುಗಳನ್ನು ವಿಶ್ಲೇಷಿಸಿಕೊಂಡು ಮುಂದಿನ ಸಾಧನೆಗೆ ಸಿದ್ಧರಾಗಬೇಕು. ಕ್ರೀಡೆಯಿಂದ ಶಿಸ್ತು, ಸಮಯಪ್ರಜ್ಞೆ, ಸಹಕಾರ ಮನೋಭಾವ ಹಾಗೂ ತಂಡವಾಗಿ ಕಾರ್ಯನಿರ್ವಹಿಸುವ ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಬಹುದು ಎಂದು ಹೇಳಿದರು.

ಗ್ರಾಮೀಣ ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಯನ್ನು ಗುರುತಿಸಿ, ಅವರಿಗೆ ಸೂಕ್ತ ಮಾರ್ಗದರ್ಶನ ಹಾಗೂ ಅವಕಾಶ ಕಲ್ಪಿಸಬೇಕು. ಆಗ ಮಾತ್ರ ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಲು ಸಾಧ್ಯ. ಶಾಲೆಗಳು ಪಠ್ಯ ಚಟುವಟಿಕೆಗಳ ಜತೆಗೆ ಕ್ರೀಡೆಗೂ ಸಮಾನ ಆದ್ಯತೆ ನೀಡಬೇಕು ಎಂದು ಲಮಾಣಿ ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ನಾಗರಾಜ ಕಳಸಾಪುರ ಮಾತನಾಡಿ, ಕ್ರೀಡೆಯು ದೈಹಿಕ ಆರೋಗ್ಯದ ಜತೆಗೆ ಆತ್ಮವಿಶ್ವಾಸ, ಶಿಸ್ತು, ಸಮಯಪ್ರಜ್ಞೆ ಹಾಗೂ ನಾಯಕತ್ವ ಗುಣಗಳನ್ನು ಬೆಳೆಸುತ್ತದೆ. ವಿದ್ಯಾರ್ಥಿಗಳು ವಿದ್ಯಾಭ್ಯಾಸದೊಂದಿಗೆ ಕ್ರೀಡಾ ಚಟುವಟಿಕೆಗಳಲ್ಲೂ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಮೊಬೈಲ್, ಟಿವಿಯಂತಹ ಸಾಧನಗಳಿಗೆ ಹೆಚ್ಚು ಸಮಯ ಮೀಸಲಿಡುವ ಬದಲು ದೈಹಿಕ ಚಟುವಟಿಕೆಗಳಿಗೆ ಆದ್ಯತೆ ನೀಡಬೇಕು ಎಂದರು.

ಬಿಆರ್‌ಸಿ ಎಸ್.ಕೆ. ಹವಾಲ್ದಾರ್, ಬಿ.ಎಂ. ಯರಗುಪ್ಪಿ, ಸಿಆರ್‌ಪಿ ಜ್ಯೋತಿ ಗಾಯಕವಾಡ, ಕೆ.ಆರ್. ಲಮಾಣಿ, ಎಚ್‌ಎಂ ಸಪ್ಪಿನ, ಗಂಗಾಧರ ಮೆಣಸಿನಕಾಯಿ, ಅಶೋಕ ಮೆಣಸಿನಕಾಯಿ, ಭೀಮಣ್ಣ ಯಂಗಾಡಿ ಉಪಸ್ಥಿತರಿದ್ದರು.

ಪ್ರವೀಣ ಗಾಯಕರ್ ಸ್ವಾಗತಿಸಿದರು. ದೈಹಿಕ ಶಿಕ್ಷಕ ಸಿದ್ದಣ್ಣ ಬೆಟಗೇರಿ ಪ್ರತಿಜ್ಞಾವಿಧಿ ಬೋಧಿಸಿದರು. ಅರ್ಜುನ ವಠಾರ ವಂದಿಸಿದರು. ರೂಪಾ ಮನ್ನಂಗಿ ನಿರೂಪಿಸಿದರು. ಒಡೆಯರ ಮಲ್ಲಾಪುರ, ಶಿಗ್ಲಿ ಹಾಗೂ ರಾಮಗೇರಿ ಶಾಲೆಗಳ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಕ್ರೀಡೆಯಲ್ಲಿ ಗೆಲುವು ಸಾಧಿಸಿದಾಗ ಅಹಂಕಾರಪಡದೆ, ಸೋಲಿನಿಂದ ಕುಗ್ಗದೆ ತಪ್ಪುಗಳನ್ನು ವಿಶ್ಲೇಷಿಸಿಕೊಂಡು ಮುಂದಿನ ಸಾಧನೆಗೆ ಸಿದ್ಧರಾಗಬೇಕು.

— ಡಾ. ಚಂದ್ರು ಲಮಾಣಿ, ಶಾಸಕ

ರಿಂಕು ಸಿಂಗ್-ಪ್ರಿಯಾ ಸರೋಜ್ ಮದುವೆಗೆ ದಿನಾಂಕ ಫಿಕ್ಸ್: ಡಿಸೆಂಬರ್ 4ರಂದು ಲಕ್ನೋದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡಲಿರುವ ಜೋಡಿ

0

ಭಾರತೀಯ ಕ್ರಿಕೆಟಿಗ ರಿಂಕು ಸಿಂಗ್ ಹಾಗೂ ಸಮಾಜವಾದಿ ಪಕ್ಷದ ಸಂಸದೆ ಪ್ರಿಯಾ ಸರೋಜ್ ಅವರ ವಿವಾಹದ ದಿನಾಂಕ ನಿಗದಿಯಾಗಿದೆ ಎನ್ನಲಾಗಿದೆ. ಡಿಸೆಂಬರ್ 4ರಂದು ಲಕ್ನೋದ ರಾಮದಾ ಹೋಟೆಲ್‌ನಲ್ಲಿ ಇಬ್ಬರೂ ವೈವಾಹಿಕ ಜೀವನಕ್ಕೆ ಕಾಲಿರಿಸಲಿದ್ದಾರೆ ಎಂದು ವರದಿಯಾಗಿದೆ. ಈಗಾಗಲೇ ವಿವಾಹ ಸಮಾರಂಭದ ಸಿದ್ಧತೆಗಳು ಆರಂಭವಾಗಿದ್ದು, ಎರಡೂ ಕುಟುಂಬಗಳ ಆಪ್ತರು, ಸ್ನೇಹಿತರು ಸೇರಿದಂತೆ ಕ್ರಿಕೆಟ್ ಹಾಗೂ ರಾಜಕೀಯ ಕ್ಷೇತ್ರದ ಹಲವು ಗಣ್ಯರು ಭಾಗವಹಿಸುವ ನಿರೀಕ್ಷೆಯಿದೆ.

ರಿಂಕು ಸಿಂಗ್ ಹಾಗೂ ಪ್ರಿಯಾ ಸರೋಜ್ ಅವರು 2025ರ ಜೂನ್ 8ರಂದು ಲಕ್ನೋದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ನಿಶ್ಚಿತಾರ್ಥದ ಬಳಿಕ 2025ರ ನವೆಂಬರ್‌ನಲ್ಲಿ ವಾರಣಾಸಿಯ ತಾಜ್ ಹೋಟೆಲ್‌ನಲ್ಲಿ ವಿವಾಹ ನಡೆಯಲಿದೆ ಎಂಬ ವರದಿಗಳು ಹರಿದಾಡಿದ್ದವು. ಆದರೆ ರಿಂಕು ಸಿಂಗ್ ಅವರ ಕ್ರಿಕೆಟ್ ಬದ್ಧತೆಗಳ ಹಿನ್ನೆಲೆಯಲ್ಲಿ ವಿವಾಹವನ್ನು ಮುಂದೂಡಲಾಗಿತ್ತು.

ಬಳಿಕ 2026ರ ಫೆಬ್ರವರಿಯಲ್ಲಿ ಮದುವೆ ನಡೆಸಲು ಯೋಜಿಸಲಾಗಿತ್ತು ಎನ್ನಲಾಗಿತ್ತು. ಆದರೆ ಟಿ20 ವಿಶ್ವಕಪ್ ಸೇರಿದಂತೆ ಹಲವು ಪ್ರಮುಖ ಕ್ರಿಕೆಟ್ ಪಂದ್ಯಗಳು ಇದೇ ಅವಧಿಯಲ್ಲಿ ಇದ್ದ ಕಾರಣ ವಿವಾಹವನ್ನು ಮತ್ತೊಮ್ಮೆ ಮುಂದೂಡಲಾಗಿತ್ತು. ಇದೀಗ ಡಿಸೆಂಬರ್ 4ರಂದು ವಿವಾಹ ನೆರವೇರಿಸಲು ಸಿದ್ಧತೆಗಳು ನಡೆಯುತ್ತಿವೆ ಎಂದು ವರದಿಯಾಗಿದೆ.

ಪ್ರಿಯಾ ಸರೋಜ್ ಅವರಿಗೆ ತಮ್ಮ ಸ್ವಗ್ರಾಮದ ವಾತಾವರಣದಲ್ಲಿ ಸಾಂಪ್ರದಾಯಿಕ ರೀತಿಯಲ್ಲಿ ಮದುವೆಯಾಗಬೇಕೆಂಬ ಆಸೆ ಇತ್ತು ಎನ್ನಲಾಗಿದೆ. ಅವರ ಕುಟುಂಬದಲ್ಲಿ ಹಲವು ವಿವಾಹಗಳು ಗ್ರಾಮೀಣ ಶೈಲಿಯಲ್ಲಿ ನಡೆದಿರುವ ಹಿನ್ನೆಲೆಯಲ್ಲಿ, ಬಾಲ್ಯದಿಂದಲೂ ಮಂಟಪ, ಸಂಬಂಧಿಕರು ಹಾಗೂ ಇಡೀ ಕುಟುಂಬದ ಸಮ್ಮುಖದಲ್ಲಿ ಹಳ್ಳಿಯ ವಾತಾವರಣದಲ್ಲಿ ಮದುವೆಯಾಗುವ ಕಲ್ಪನೆ ಹೊಂದಿದ್ದರು ಎಂದು ವರದಿಯಾಗಿದೆ.

ಆದರೆ ರಿಂಕು ಸಿಂಗ್ ಹಾಗೂ ಪ್ರಿಯಾ ಸರೋಜ್ ಇಬ್ಬರೂ ಸಾರ್ವಜನಿಕವಾಗಿ ಹೆಚ್ಚು ಪರಿಚಿತರಾಗಿರುವುದರಿಂದ, ಹೆಚ್ಚಿನ ಅತಿಥಿಗಳಿಗೆ ಅನುಕೂಲವಾಗುವಂತೆ ವಿವಾಹ ಸಮಾರಂಭವನ್ನು ಲಕ್ನೋದಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ ಎನ್ನಲಾಗಿದೆ.

ರಿಂಕು ಸಿಂಗ್ ಮತ್ತು ಪ್ರಿಯಾ ಸರೋಜ್ ಅವರ ನಿಶ್ಚಿತಾರ್ಥ ಸಮಾರಂಭವೂ ಲಕ್ನೋದಲ್ಲಿಯೇ ನಡೆದಿತ್ತು. ಆ ಕಾರ್ಯಕ್ರಮದಲ್ಲಿ ಕ್ರಿಕೆಟ್ ಹಾಗೂ ರಾಜಕೀಯ ಕ್ಷೇತ್ರದ ಹಲವು ಪ್ರಮುಖರು ಭಾಗವಹಿಸಿದ್ದರು. ಹೀಗಾಗಿ ವಿವಾಹಕ್ಕೂ ಲಕ್ನೋವನ್ನೇ ಆಯ್ಕೆ ಮಾಡಲಾಗಿದೆ ಎಂದು ವರದಿಗಳು ತಿಳಿಸಿವೆ.

ಇದರ ಜೊತೆಗೆ ಪ್ರಿಯಾ ಸರೋಜ್ ಉತ್ತರ ಪ್ರದೇಶದ ರಾಜಕೀಯದಲ್ಲಿ ಸಕ್ರಿಯರಾಗಿರುವ ಹಿನ್ನೆಲೆಯಲ್ಲಿ ಲಕ್ನೋದಲ್ಲಿ ವಿವಾಹ ಆಯೋಜಿಸಿರುವುದು ಮತ್ತೊಂದು ಕಾರಣವಾಗಿರಬಹುದು ಎಂಬ ಚರ್ಚೆಯೂ ನಡೆಯುತ್ತಿದೆ. 2027ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗಳು ಸಮೀಪಿಸುತ್ತಿರುವ ಸಂದರ್ಭದಲ್ಲಿ ಈ ವಿವಾಹ ಸಮಾರಂಭದತ್ತ ರಾಜಕೀಯ ವಲಯದ ಗಮನವೂ ಹರಿಯುವ ಸಾಧ್ಯತೆಯಿದೆ.

ಒಟ್ಟಿನಲ್ಲಿ ಹಲವು ಬಾರಿ ಮುಂದೂಡಿಕೆಯಾಗಿದ್ದ ರಿಂಕು ಸಿಂಗ್ ಮತ್ತು ಪ್ರಿಯಾ ಸರೋಜ್ ಅವರ ವಿವಾಹ ಇದೀಗ ಡಿಸೆಂಬರ್ 4ರಂದು ಲಕ್ನೋದಲ್ಲಿ ನಡೆಯಲಿದೆ ಎಂಬ ವರದಿಗಳು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿವೆ.

Crime News: ಇಬ್ಬರು ಯುವಕರ ಜೊತೆ ಟ್ರಿಪ್‌ಗೆ ಬಂದಿದ್ದ ಯುವತಿ ಲಾಡ್ಜ್‌ನಲ್ಲಿ ಅನುಮಾನಾಸ್ಪದ ಸಾವು!

0

ಹಾಸನ: ಲಾಡ್ಜ್‌ನಲ್ಲಿ ಯುವತಿಯೊಬ್ಬಳು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ವಳಲಹಳ್ಳಿ ಕೂಡಿಗೆಯಲ್ಲಿ ನಡೆದಿದೆ.

ಮೃತ ಯುವತಿಯನ್ನು ಬೆಂಗಳೂರಿನ ನಾಗಸಂದ್ರ ನಿವಾಸಿ ವರ್ಷ (23) ಎಂದು ಗುರುತಿಸಲಾಗಿದೆ. ವರ್ಷ ತನ್ನ ಪ್ರಿಯಕರ ರಘು ಹಾಗೂ ಸ್ನೇಹಿತ ದರ್ಶನ್ ಜೊತೆ ಶುಕ್ರವಾರ ಟ್ರಿಪ್‌ಗೆಂದು ಸಕಲೇಶಪುರಕ್ಕೆ ಬಂದಿದ್ದಳು.

ಮೂವರು ಶನಿವಾರ, ಭಾನುವಾರ ಹಾಗೂ ಸೋಮವಾರ ಬೆಟ್ಟದ ಭೈರವೇಶ್ವರ, ಮಜಗಹಳ್ಳಿ ಫಾಲ್ಸ್ ಸೇರಿದಂತೆ ಸಕಲೇಶಪುರದ ಹಲವು ಪ್ರವಾಸಿ ತಾಣಗಳಿಗೆ ತೆರಳಿ ಸುತ್ತಾಡಿದ್ದರು. ಬಳಿಕ ವಳಲಹಳ್ಳಿ ಕೂಡಿಗೆಯಲ್ಲಿರುವ ಲಾಡ್ಜ್‌ನಲ್ಲಿ ಒಂದೇ ಕೊಠಡಿಯಲ್ಲಿ ತಂಗಿದ್ದರು.

ಮಂಗಳವಾರ ಲಾಡ್ಜ್‌ನಲ್ಲಿ ಸ್ನಾನಕ್ಕೆ ತೆರಳಿದ್ದ ವೇಳೆ ವರ್ಷ ಅಸ್ವಸ್ಥಗೊಂಡು ಮೃತಪಟ್ಟಿದ್ದಾಳೆ. ಕೂಡಲೇ ರಘು ಹಾಗೂ ದರ್ಶನ್ ಯುವತಿಯನ್ನು ಸಕಲೇಶಪುರ ತಾಲೂಕು ಕ್ರಾಫರ್ಡ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಪರೀಕ್ಷಿಸಿದ ವೈದ್ಯರು ಯುವತಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

ಯುವತಿ ಸಾವನ್ನಪ್ಪಿರುವ ಕುರಿತು ಆಸ್ಪತ್ರೆ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಸಕಲೇಶಪುರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣದ ಕುರಿತು ತನಿಖೆ ಮುಂದುವರಿಸಿದ್ದಾರೆ.

ಘಟನೆ ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಬೆಸ್ಕಾಂ ಗ್ರಾಹಕರೇ ಗಮನಿಸಿ; 20 ಪಟ್ಟಣಗಳಲ್ಲಿ ಆನ್‌ಲೈನ್ ಸೇವೆ ತಾತ್ಕಾಲಿಕ ಸ್ಥಗಿತ

0

ಬೆಂಗಳೂರು: ಸಾಫ್ಟ್‌ವೇರ್ ಅಪ್‌ಗ್ರೇಡ್ ಹಿನ್ನೆಲೆಯಲ್ಲಿ ಬೆಸ್ಕಾಂ ವ್ಯಾಪ್ತಿಯ 20 ಪಟ್ಟಣಗಳಲ್ಲಿ ಆನ್‌ಲೈನ್ ಸೇವೆಗಳು ತಾತ್ಕಾಲಿಕವಾಗಿ ಲಭ್ಯವಿರುವುದಿಲ್ಲ.

ಸೆಪ್ಟೆಂಬರ್ 15ರ ಮಧ್ಯರಾತ್ರಿಯಿಂದ ಸೆಪ್ಟೆಂಬರ್ 17ರ ಮಧ್ಯರಾತ್ರಿವರೆಗೆ ಸೇವೆಗಳಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.

ಇಂಟಿಗ್ರೇಟೆಡ್ ಪವರ್ ಡೆವಲಪ್‌ಮೆಂಟ್ ಸ್ಕೀಮ್ (IPDS) ಐಟಿ ಹಂತ-2 ಯೋಜನೆಯಡಿ 20 ಪಟ್ಟಣಗಳಲ್ಲಿ ಹೊಸ ಸಾಫ್ಟ್‌ವೇರ್ ಅಪ್ಲಿಕೇಶನ್ ಅಳವಡಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಸ್ತುತ ಬಳಕೆಯಲ್ಲಿರುವ TRM (Total Revenue Management) ಸಾಫ್ಟ್‌ವೇರ್ ಬದಲಾಯಿಸಿ, ಗ್ರಾಹಕರ ದತ್ತಾಂಶವನ್ನು ಹೊಸ ವ್ಯವಸ್ಥೆಗೆ ವರ್ಗಾಯಿಸುವ ಪ್ರಕ್ರಿಯೆ ನಡೆಯಲಿದೆ.

ಈ ಅವಧಿಯಲ್ಲಿ ಹೊಸ ವಿದ್ಯುತ್ ಸಂಪರ್ಕಕ್ಕೆ ಅರ್ಜಿ, ಹೆಸರು ಬದಲಾವಣೆ, ಲೋಡ್ ಹೆಚ್ಚಳಕ್ಕೆ ಮನವಿ ಹಾಗೂ ಆನ್‌ಲೈನ್ ವಿದ್ಯುತ್ ಬಿಲ್ ಪಾವತಿ ಸೇರಿದಂತೆ ಪ್ರಮುಖ ಆನ್‌ಲೈನ್ ಸೇವೆಗಳು ಲಭ್ಯವಿರುವುದಿಲ್ಲ.

ಬಾಗೇಪಲ್ಲಿ, ದೇವನಹಳ್ಳಿ, ಗುಡಿಬಂಡೆ, ಮಾಗಡಿ, ಮಾಲೂರು, ನೆಲಮಂಗಲ, ಶ್ರೀನಿವಾಸಪುರ, ವಿಜಯಪುರ, ಚನ್ನಗಿರಿ, ಚಿಕ್ಕನಾಯಕನಹಳ್ಳಿ, ಗುಬ್ಬಿ, ಹೊಳಲ್ಕೆರೆ, ಹೊನ್ನಾಳಿ, ಹೊಸದುರ್ಗ, ಜಗಳೂರು, ಕೊರಟಗೆರೆ, ಮಧುಗಿರಿ, ಮೊಳಕಾಲ್ಮೂರು, ಪಾವಗಡ ಹಾಗೂ ತುರುವೇಕೆರೆ ಪಟ್ಟಣಗಳಲ್ಲಿ ಈ ವ್ಯತ್ಯಯ ಇರಲಿದೆ.

ಆದರೆ ವಿದ್ಯುತ್‌ಗೆ ಸಂಬಂಧಿಸಿದ ತುರ್ತು ಸಮಸ್ಯೆಗಳಿಗಾಗಿ ಬೆಸ್ಕಾಂನ 24×7 ಸಹಾಯವಾಣಿ 1912ಕ್ಕೆ ಕರೆ ಮಾಡಬಹುದು ಎಂದು ತಿಳಿಸಲಾಗಿದೆ.

ಚೌಡೇಶ್ವರಿ ಪೂಜೆ ಹೆಸರಿನಲ್ಲಿ ಚಿನ್ನ ಪಡೆದುಕೊಂಡ ಜ್ಯೋತಿಷಿ; AI ವಿಡಿಯೋದಿಂದ ಕಳ್ಳಾಟ ಬಯಲು

0

ಬೆಂಗಳೂರು: ಜ್ಯೋತಿಷ್ಯ ಹಾಗೂ ಚೌಡೇಶ್ವರಿ ಪೂಜೆ ಮಾಡುವ ನೆಪದಲ್ಲಿ ವೃದ್ಧೆಯೊಬ್ಬರಿಂದ ಸುಮಾರು ₹40 ಲಕ್ಷ ಮೌಲ್ಯದ ಚಿನ್ನಾಭರಣ ಪಡೆದು ವಂಚಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬ್ಯಾಟರಾಯನಪುರದ 62 ವರ್ಷದ ಶಾಂತಮ್ಮ ವಂಚನೆಗೊಳಗಾದ ಮಹಿಳೆ. ವೆಂಕಟೇಶ್ ಎಂಬಾತ ವಂಚನೆ ನಡೆಸಿದ್ದಾನೆ. ಮೂಲತಃ ವಿಕ್ಟೋರಿಯಾ ಆಸ್ಪತ್ರೆಯ ಫುಟ್‌ಪಾತ್‌ನಲ್ಲಿ ಜ್ಯೋತಿಷ್ಯ ಹೇಳುತ್ತಿದ್ದ ವೆಂಕಟೇಶ್‌ಗೆ, ಅನಾರೋಗ್ಯದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಬರುತ್ತಿದ್ದ ಶಾಂತಮ್ಮ ಅವರ ಪರಿಚಯವಾಗಿತ್ತು.

ಶಾಂತಮ್ಮ ಅವರ ಕೌಟುಂಬಿಕ ಹಾಗೂ ಆರೋಗ್ಯ ಸಮಸ್ಯೆಗಳನ್ನು ತಿಳಿದುಕೊಂಡ ವೆಂಕಟೇಶ್, ಮನೆಗೆ ಬಂದು ಚೌಡೇಶ್ವರಿ ಪೂಜೆ ಮಾಡಿದ್ದ. ಪೂಜೆಯ ಬಳಿಕ ಮಹಿಳೆಯ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿತ್ತು. ಬಳಿಕ ಮಗನ ಕುಡಿತ ಹಾಗೂ ಮಗಳ ಮದುವೆಯ ವಿಚಾರವಾಗಿಯೂ ಮಾತನಾಡಿದ್ದ.

ಮನೆಯಲ್ಲಿರುವ ಚಿನ್ನಾಭರಣಗಳಿಗೆ ಪೂಜೆ ಮಾಡಿದರೆ ದೋಷ ನಿವಾರಣೆಯಾಗುತ್ತದೆ ಎಂದು ಹೇಳಿ, ಪ್ರತಿ ಅಮಾವಾಸ್ಯೆ ಹಾಗೂ ಹುಣ್ಣಿಮೆಯಂದು ಒಡವೆಗಳನ್ನು ಪಡೆದುಕೊಂಡಿದ್ದ. ಹೀಗೆ ಕಳೆದ ಒಂದು ವರ್ಷದಲ್ಲಿ ಹಂತ ಹಂತವಾಗಿ ಸುಮಾರು ₹40 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಪಡೆದುಕೊಂಡಿದ್ದ.

AI ವಿಡಿಯೋ ಮೂಲಕ ಅಪಘಾತದ ನಾಟಕ:

ಆಗಸ್ಟ್ 19ರಂದು ವರಮಹಾಲಕ್ಷ್ಮಿ ಹಬ್ಬದ ಪೂಜೆಗೆ ಚಿನ್ನಾಭರಣಗಳನ್ನು ವಾಪಸ್ ನೀಡುವಂತೆ ಶಾಂತಮ್ಮ ಕೇಳಿದ್ದರು. ಈ ವೇಳೆ ವೆಂಕಟೇಶ್ ತನಗೆ ಭೀಕರ ಅಪಘಾತವಾಗಿದ್ದು, ಆಸ್ಪತ್ರೆಗೆ ದಾಖಲಾಗಿರುವುದಾಗಿ ಬೇರೊಬ್ಬರಿಂದ ಕರೆ ಮಾಡಿಸಿದ್ದ.

ಜೊತೆಗೆ ತಲೆಗೆ ಗಂಭೀರ ಗಾಯವಾಗಿರುವಂತೆ ತೋರಿಸುವ AI ಮೂಲಕ ಸೃಷ್ಟಿಸಿದ ನಕಲಿ ವಿಡಿಯೋವನ್ನು ಶಾಂತಮ್ಮ ಅವರಿಗೆ ಕಳುಹಿಸಿ, ಬಳಿಕ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದ.

ವಿಡಿಯೋ ಬಗ್ಗೆ ಅನುಮಾನಗೊಂಡ ಶಾಂತಮ್ಮ, ಅದನ್ನು ತಮ್ಮ ಮಕ್ಕಳಿಗೆ ತೋರಿಸಿದ್ದಾರೆ. ಪರಿಶೀಲಿಸಿದಾಗ ಅದು AI ಮೂಲಕ ಸೃಷ್ಟಿಸಿದ ನಕಲಿ ವಿಡಿಯೋ ಎಂಬುದು ಗೊತ್ತಾಗಿದೆ.

ಬಳಿಕ ಶಾಂತಮ್ಮ ಬ್ಯಾಟರಾಯನಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವೆಂಕಟೇಶ್‌ಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಮದುವೆಯಾಗಿ ಒಂದೂವರೆ ತಿಂಗಳಲ್ಲೇ ದುರಂತ: ಹಿಟ್ ಅಂಡ್ ರನ್‌ಗೆ ನವದಂಪತಿ ಬಲಿ

0

ತುಮಕೂರು: ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ನವದಂಪತಿ ಸಾವನ್ನಪ್ಪಿರುವ ಘಟನೆ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ದ್ವಾರಾಳು ಸೇತುವೆ ಬಳಿ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ನಡೆದಿದೆ.

ಮೃತರನ್ನು ಶಿರಾ ತಾಲೂಕಿನ ಹುಣಸೇಕಟ್ಟೆ ಗ್ರಾಮದ ದರ್ಶನ್ (25) ಹಾಗೂ ಉಷಾರಾಣಿ (21) ಎಂದು ಗುರುತಿಸಲಾಗಿದೆ. ದಂಪತಿ ಕಳೆದ ಒಂದೂವರೆ ತಿಂಗಳ ಹಿಂದಷ್ಟೇ ವಿವಾಹವಾಗಿದ್ದರು.

ಮಂಗಳವಾರ ಬೈಕ್‌ನಲ್ಲಿ ಬೆಂಗಳೂರಿನತ್ತ ತೆರಳುತ್ತಿದ್ದ ವೇಳೆ ಅಪರಿಚಿತ ವಾಹನ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ದರ್ಶನ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಉಷಾರಾಣಿಯನ್ನು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಅವರು ಮೃತಪಟ್ಟಿದ್ದಾರೆ.

ಘಟನೆ ಸಂಬಂಧ ತಾವರೆಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಪಘಾತಕ್ಕೆ ಕಾರಣವಾದ ವಾಹನ ಹಾಗೂ ಚಾಲಕನ ಪತ್ತೆಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಕಡಿಮೆ ಬೆಲೆಗೆ ಸಿಗುತ್ತೆ ಅಂತ ಆನ್ ಲೈನ್ʼನಲ್ಲಿ ಔಷಧಿ ಖರೀದಿಸ್ತೀರಾ? ಈ ತಪ್ಪುಗಳು ಆರೋಗ್ಯಕ್ಕೆ ಅಪಾಯ ತರಬಹುದು

0

ತರಕಾರಿ ಅಥವಾ ಹಣ್ಣು ಖರೀದಿಸುವಾಗ ಗುಣಮಟ್ಟ ನೋಡಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತೇವೆ. ಆದರೆ ನಮ್ಮ ಆರೋಗ್ಯಕ್ಕೆ ನೇರವಾಗಿ ಸಂಬಂಧಿಸಿದ ಔಷಧಿ ಖರೀದಿಸುವಾಗ ಮಾತ್ರ ಕೆಲವೊಮ್ಮೆ ಗಡಿಬಿಡಿಯಲ್ಲಿ ನಿರ್ಧಾರ ತೆಗೆದುಕೊಳ್ಳುತ್ತೇವೆ. ಎಕ್ಸ್‌ಪೈರಿ ದಿನಾಂಕ ಪರಿಶೀಲಿಸದೇ ಇರುವುದು, ವೈದ್ಯರ ಸಲಹೆಯಿಲ್ಲದೆ ಔಷಧಿ ತೆಗೆದುಕೊಳ್ಳುವುದು ಅಥವಾ ಅಪರಿಚಿತ ಆನ್‌ಲೈನ್‌ ತಾಣಗಳಿಂದ ಮಾತ್ರೆ ಖರೀದಿಸುವುದು ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ.

ಔಷಧಿ ಖರೀದಿಸುವಾಗ ಪ್ರತಿಯೊಬ್ಬರೂ ತಪ್ಪದೇ ಗಮನಿಸಬೇಕಾದ ಕೆಲವು ಪ್ರಮುಖ ಅಂಶಗಳು ಇಲ್ಲಿವೆ.

1. ಎಕ್ಸ್‌ಪೈರಿ ದಿನಾಂಕ ನೋಡದೆ ಮಾತ್ರೆ ಖರೀದಿಸಬೇಡಿ

ಔಷಧಿ ತೆಗೆದುಕೊಳ್ಳುವ ಮೊದಲು ಅದರ ಪ್ಯಾಕೆಟ್‌ನಲ್ಲಿರುವ ತಯಾರಿಕಾ ದಿನಾಂಕ ಮತ್ತು ಎಕ್ಸ್‌ಪೈರಿ ದಿನಾಂಕ ಪರಿಶೀಲಿಸಿ. ಅವಧಿ ಮೀರಿದ ಔಷಧಿಯನ್ನು ಬಳಸುವುದರಿಂದ ಅದರ ಪರಿಣಾಮಕಾರಿತ್ವ ಕಡಿಮೆಯಾಗಬಹುದು ಅಥವಾ ಅನಿರೀಕ್ಷಿತ ಸಮಸ್ಯೆಗಳು ಎದುರಾಗಬಹುದು.

ಹೀಗಾಗಿ ಔಷಧಿಯ ಪ್ಯಾಕೆಟ್ ಕೈಗೆ ಸಿಕ್ಕ ತಕ್ಷಣ ದಿನಾಂಕ ಪರಿಶೀಲಿಸುವ ಅಭ್ಯಾಸ ಬೆಳೆಸಿಕೊಳ್ಳಿ.

2. ವೈದ್ಯರ ಸಲಹೆಯಿಲ್ಲದೆ ಆ್ಯಂಟಿಬಯೋಟಿಕ್ ಬೇಡ

ಜ್ವರ, ಶೀತ, ಗಂಟಲು ನೋವು ಅಥವಾ ಇತರ ಸಾಮಾನ್ಯ ಸಮಸ್ಯೆಗಳಿಗೆ ಸ್ವಯಂ ನಿರ್ಧಾರದಿಂದ ಆ್ಯಂಟಿಬಯೋಟಿಕ್‌ ತೆಗೆದುಕೊಳ್ಳುವುದು ಸರಿಯಲ್ಲ. ಅಗತ್ಯವಿಲ್ಲದೆ ಅಥವಾ ತಪ್ಪಾದ ರೀತಿಯಲ್ಲಿ ಆ್ಯಂಟಿಬಯೋಟಿಕ್‌ ಬಳಸಿದರೆ ಆ್ಯಂಟಿಮೈಕ್ರೋಬಿಯಲ್‌ ರೆಸಿಸ್ಟೆನ್ಸ್‌ (AMR) ಉಂಟಾಗುವ ಅಪಾಯವಿದೆ.

ಅದೇ ರೀತಿ ನಿದ್ದೆ ಮಾತ್ರೆಗಳು ಸೇರಿದಂತೆ ವೈದ್ಯರ ಪ್ರಿಸ್ಕ್ರಿಪ್ಷನ್‌ ಅಗತ್ಯವಿರುವ ಔಷಧಿಗಳನ್ನು ಸ್ವಂತ ನಿರ್ಧಾರದಿಂದ ಖರೀದಿಸಿ ಸೇವಿಸಬಾರದು.

3. ಔಷಧಿ ಖರೀದಿಸಿದರೆ ಬಿಲ್‌ ಪಡೆಯಿರಿ

ಮೆಡಿಕಲ್‌ ಶಾಪ್‌ನಲ್ಲಿ ಔಷಧಿ ಖರೀದಿಸುವಾಗ ಬಿಲ್‌ ಪಡೆಯುವುದನ್ನು ಮರೆಯಬೇಡಿ. ಬಿಲ್‌ನಲ್ಲಿ ಔಷಧಿಯ ಹೆಸರು, ಬೆಲೆ ಹಾಗೂ ಮಾರಾಟದ ವಿವರಗಳಂತಹ ಮಾಹಿತಿಗಳು ಇರುತ್ತವೆ.

ಮುಂದೆ ಔಷಧಿಯಿಂದ ಯಾವುದೇ ಸಮಸ್ಯೆ ಉಂಟಾದರೆ ಅಥವಾ ಉತ್ಪನ್ನದ ಬಗ್ಗೆ ದೂರು ನೀಡಬೇಕಾದ ಪರಿಸ್ಥಿತಿ ಬಂದರೆ ಬಿಲ್‌ ಪ್ರಮುಖ ದಾಖಲೆ ಆಗಬಹುದು. ಆನ್‌ಲೈನ್‌ನಲ್ಲಿ ಖರೀದಿಸಿದರೆ ಡಿಜಿಟಲ್‌ ಇನ್ವಾಯ್ಸ್‌ ಅನ್ನು ಉಳಿಸಿಕೊಳ್ಳಿ.

4. ಕಡಿಮೆ ಬೆಲೆಯ ಆಸೆಗೆ ಅಪರಿಚಿತ ವೆಬ್‌ಸೈಟ್‌ಗಳಿಂದ ಔಷಧಿ ಬೇಡ

ಆನ್‌ಲೈನ್‌ನಲ್ಲಿ ಭಾರಿ ರಿಯಾಯಿತಿ ಸಿಗುತ್ತಿದೆ ಎಂಬ ಕಾರಣಕ್ಕೆ ಅಪರಿಚಿತ ವೆಬ್‌ಸೈಟ್‌, ಸಾಮಾಜಿಕ ಜಾಲತಾಣ ಅಥವಾ ವಾಟ್ಸ್‌ಆ್ಯಪ್‌ ಲಿಂಕ್‌ ಮೂಲಕ ಔಷಧಿ ಖರೀದಿಸುವುದು ಅಪಾಯಕಾರಿ.

ಆನ್‌ಲೈನ್‌ ಮೂಲಕ ಔಷಧಿ ಪಡೆಯುವಾಗ ವಿಶ್ವಾಸಾರ್ಹ ಮತ್ತು ಕಾನೂನುಬದ್ಧವಾಗಿ ಕಾರ್ಯನಿರ್ವಹಿಸುವ ಸೇವೆಯನ್ನು ಬಳಸುವುದರ ಜೊತೆಗೆ, ಪ್ಯಾಕೆಟ್‌ನ ಸೀಲ್‌, ಪ್ಯಾಕಿಂಗ್‌, ಲೇಬಲ್‌ ಮತ್ತು ಔಷಧಿಯ ವಿವರಗಳನ್ನು ಪರಿಶೀಲಿಸಿ. ಪ್ಯಾಕೆಟ್‌ ಹಾನಿಗೊಳಗಾಗಿದ್ದರೆ ಅಥವಾ ಅನುಮಾನಾಸ್ಪದವಾಗಿ ಕಂಡರೆ ಬಳಸಬೇಡಿ.

5. ವೈದ್ಯರು ಬರೆದಿರುವ ಡೋಸ್‌ ಬದಲಿಸಬೇಡಿ

ವೈದ್ಯರು ಸೂಚಿಸಿರುವ ಔಷಧಿಯ ಬದಲಿಗೆ ಬೇರೆ ಬ್ರ್ಯಾಂಡ್‌, ಬೇರೆ ಸಾಮರ್ಥ್ಯ ಅಥವಾ ಬೇರೆ ಡೋಸ್‌ನ ಮಾತ್ರೆಯನ್ನು ಸ್ವತಃ ತೆಗೆದುಕೊಳ್ಳುವುದು ಸರಿಯಲ್ಲ.

ಉದಾಹರಣೆಗೆ, ವೈದ್ಯರು ನಿರ್ದಿಷ್ಟ ಪ್ರಮಾಣದ ಔಷಧಿ ಸೂಚಿಸಿದ್ದರೆ ಅದೇ ಪ್ರಮಾಣವನ್ನು ಪಡೆಯಲಾಗುತ್ತಿದೆಯೇ ಎಂಬುದನ್ನು ಪರಿಶೀಲಿಸಿ. ಪರ್ಯಾಯ ಬ್ರ್ಯಾಂಡ್‌ ಅಥವಾ ಡೋಸ್‌ ಬಗ್ಗೆ ಅನುಮಾನವಿದ್ದರೆ ವೈದ್ಯರು ಅಥವಾ ಫಾರ್ಮಸಿಸ್ಟ್‌ ಬಳಿ ಖಚಿತಪಡಿಸಿಕೊಳ್ಳಿ.

6. ಔಷಧಿಯನ್ನು ಹೇಗೆ ಸಂಗ್ರಹಿಸಬೇಕು ಎಂಬುದನ್ನೂ ತಿಳಿಯಿರಿ

ಎಲ್ಲಾ ಔಷಧಿಗಳನ್ನೂ ಒಂದೇ ರೀತಿಯಲ್ಲಿ ಸಂಗ್ರಹಿಸಲು ಸಾಧ್ಯವಿಲ್ಲ. ಕೆಲವು ಔಷಧಿಗಳಿಗೆ ತಂಪಾದ ವಾತಾವರಣ ಬೇಕಾಗಬಹುದು, ಇನ್ನು ಕೆಲವು ಔಷಧಿಗಳನ್ನು ನೇರ ಸೂರ್ಯನ ಬೆಳಕು ಮತ್ತು ಹೆಚ್ಚಿನ ಉಷ್ಣತೆಯಿಂದ ದೂರವಿಡಬೇಕಾಗುತ್ತದೆ.

ಹೀಗಾಗಿ ಔಷಧಿಯ ಪ್ಯಾಕೆಟ್‌ನಲ್ಲಿ ನೀಡಿರುವ ಸಂಗ್ರಹಣೆ ಸೂಚನೆಗಳನ್ನು ಓದಿ. ಅಗತ್ಯವಿದ್ದರೆ ಫಾರ್ಮಸಿಸ್ಟ್‌ ಅಥವಾ ವೈದ್ಯರಲ್ಲಿ ಔಷಧಿಯನ್ನು ಎಲ್ಲಿ ಮತ್ತು ಹೇಗೆ ಇಡಬೇಕು ಎಂದು ಕೇಳಿ.

ಆರೋಗ್ಯದ ವಿಚಾರದಲ್ಲಿ ಸಣ್ಣ ನಿರ್ಲಕ್ಷ್ಯವೂ ಬೇಡ!

ಔಷಧಿ ಎನ್ನುವುದು ಸಾಮಾನ್ಯ ವಸ್ತುವಲ್ಲ. ಸರಿಯಾದ ಔಷಧಿಯನ್ನು, ಸರಿಯಾದ ಪ್ರಮಾಣದಲ್ಲಿ, ಸರಿಯಾದ ರೀತಿಯಲ್ಲಿ ಬಳಸುವುದು ಬಹಳ ಮುಖ್ಯ. ಖರೀದಿಸುವಾಗಲೇ ಎಕ್ಸ್‌ಪೈರಿ ದಿನಾಂಕ, ಪ್ಯಾಕಿಂಗ್‌, ಡೋಸ್‌ ಮತ್ತು ಸಂಗ್ರಹಣೆ ಸೂಚನೆಗಳನ್ನು ಪರಿಶೀಲಿಸುವ ಅಭ್ಯಾಸ ಬೆಳೆಸಿಕೊಳ್ಳಿ. ವೈದ್ಯರ ಸಲಹೆ ಅಗತ್ಯವಿರುವ ಔಷಧಿಗಳನ್ನು ಸ್ವಯಂ ನಿರ್ಧಾರದಿಂದ ಸೇವಿಸದೆ, ತಜ್ಞರ ಮಾರ್ಗದರ್ಶನ ಪಡೆಯುವುದು ಉತ್ತಮ.

ಪದವಿ, ಸ್ನಾತಕೋತ್ತರ ಪದವಿ ಪಡೆದರೂ ಉದ್ಯೋಗ ಸಿಗುತ್ತಿಲ್ಲ! ರಾಜ್ಯದಲ್ಲಿ ನಿರುದ್ಯೋಗಿ ಯುವಕರ ಸಂಖ್ಯೆ ಎಷ್ಟು ಗೊತ್ತಾ?

0

ಬೆಂಗಳೂರು: ನಿರುದ್ಯೋಗ ರಾಜ್ಯದ ಪ್ರಮುಖ ಸಮಸ್ಯೆಗಳಲ್ಲೊಂದಾಗಿದೆ. ಪದವಿ, ಸ್ನಾತಕೋತ್ತರ ಪದವಿ ಸೇರಿದಂತೆ ಉನ್ನತ ಶಿಕ್ಷಣ ಪಡೆದಿದ್ದರೂ ಸೂಕ್ತ ಉದ್ಯೋಗ ಸಿಗದೆ ಹಲವು ಯುವಕರು ಪರದಾಡುತ್ತಿದ್ದಾರೆ. ರಾಜ್ಯದ ಉದ್ಯೋಗ ವಿನಿಮಯ ಕೇಂದ್ರಗಳಲ್ಲಿ ನೋಂದಾಯಿಸಿಕೊಂಡಿರುವ ಅಂಕಿ-ಅಂಶಗಳು ಕೂಡ ನಿರುದ್ಯೋಗದ ಪ್ರಮಾಣವನ್ನು ತೋರಿಸುತ್ತಿವೆ.

ಪ್ರಸ್ತುತ ರಾಜ್ಯದ ಉದ್ಯೋಗ ವಿನಿಮಯ ಕೇಂದ್ರಗಳಲ್ಲಿ 33,038 ಪದವೀಧರರು ಹಾಗೂ 1,579 ಸ್ನಾತಕೋತ್ತರ ಪದವೀಧರರು ಉದ್ಯೋಗಕ್ಕಾಗಿ ನೋಂದಾಯಿಸಿಕೊಂಡಿದ್ದಾರೆ. ಇದಲ್ಲದೆ ಕಡಿಮೆ ಶಿಕ್ಷಣ ಪಡೆದವರೂ ಸೂಕ್ತ ಉದ್ಯೋಗಕ್ಕಾಗಿ ಅವಕಾಶಗಳನ್ನು ಹುಡುಕುತ್ತಿದ್ದಾರೆ.

ಉದ್ಯೋಗಕ್ಕಾಗಿ ನೋಂದಾಯಿಸಿದವರ ಜಿಲ್ಲಾವಾರು ವಿವರ

  • ಬಾಗಲಕೋಟೆ: 488
  • ಬಳ್ಳಾರಿ: 1,937
  • ಬೆಳಗಾವಿ: 846
  • ಬೆಂಗಳೂರು ಗ್ರಾಮಾಂತರ ಮತ್ತು ನಗರ: 9,273
  • ಬೀದರ್: 2,444
  • ಚಾಮರಾಜನಗರ: 739
  • ಚಿಕ್ಕಬಳ್ಳಾಪುರ: 169
  • ಚಿಕ್ಕಮಗಳೂರು: 370
  • ಚಿತ್ರದುರ್ಗ: 293
  • ದಕ್ಷಿಣ ಕನ್ನಡ: 2,592
  • ದಾವಣಗೆರೆ: 707
  • ಧಾರವಾಡ: 442
  • ಗದಗ: 934
  • ಹಾಸನ: 454
  • ಹಾವೇರಿ: 865
  • ಕಲಬುರಗಿ: 1,487
  • ಕೊಡಗು: 247
  • ಕೋಲಾರ: 506
  • ಕೊಪ್ಪಳ: 724
  • ಮಂಡ್ಯ: 608
  • ಮೈಸೂರು: 1,041
  • ರಾಯಚೂರು: 310
  • ರಾಮನಗರ: 473
  • ತುಮಕೂರು: 1,524
  • ಉಡುಪಿ: 1,000
  • ಉತ್ತರ ಕನ್ನಡ: 1,192
  • ವಿಜಯಪುರ: 644
  • ಯಾದಗಿರಿ: 469

ನಿರುದ್ಯೋಗ ನಿವಾರಣೆಗೆ ಸರ್ಕಾರದ ಕ್ರಮವೇನು?

ನಿರುದ್ಯೋಗಿ ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ ಹಲವು ಕ್ರಮಗಳನ್ನು ಕೈಗೊಂಡಿದೆ. 2025-26ನೇ ಸಾಲಿನಲ್ಲಿ ರಾಜ್ಯದ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರಗಳ ಮೂಲಕ 583 ಮಿನಿ ಉದ್ಯೋಗ ಮೇಳಗಳು ಹಾಗೂ ನೇರ ಸಂದರ್ಶನ ಕಾರ್ಯಕ್ರಮಗಳನ್ನು ಖಾಸಗಿ ವಲಯದ ಸಹಭಾಗಿತ್ವದಲ್ಲಿ ಆಯೋಜಿಸಲಾಗಿದೆ.

ಈ ಉದ್ಯೋಗ ಮೇಳಗಳು ಮತ್ತು ನೇರ ಸಂದರ್ಶನಗಳ ಮೂಲಕ 10,616 ಅಭ್ಯರ್ಥಿಗಳಿಗೆ ಉದ್ಯೋಗದ ಆಹ್ವಾನ ನೀಡಲಾಗಿದೆ. ಇನ್ನು ಕಲ್ಯಾಣ ಕರ್ನಾಟಕ ವೃಂದದಲ್ಲಿ ನೇರ ನೇಮಕಾತಿಗೆ ಒಳಪಡುವ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಪ್ರಕ್ರಿಯೆಯೂ ಮುಂದುವರಿದಿದೆ. ಉಳಿಕೆ ಅನುಮತಿ ಹಾಗೂ ನೇರ ನೇಮಕಾತಿಗೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳಲಾಗುತ್ತಿದ್ದು, ಹುದ್ದೆಗಳ ಭರ್ತಿಗೆ ಆರ್ಥಿಕ ಇಲಾಖೆಯ ಸಹಮತಿ ಪಡೆಯಲು ಕ್ರಮವಹಿಸಲಾಗುತ್ತಿದೆ.

ಯುವನಿಧಿಯಿಂದ ಏನು ಲಾಭ?

ರಾಜ್ಯ ಸರ್ಕಾರದ ಪ್ರಮುಖ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ‘ಯುವನಿಧಿ’ ಯೋಜನೆಯಡಿ ನಿರುದ್ಯೋಗಿ ಪದವೀಧರರಿಗೆ ಆರ್ಥಿಕ ನೆರವು ನೀಡಲಾಗುತ್ತಿದೆ. 2026ರ ಆಗಸ್ಟ್ 18ರ ಅಂತ್ಯಕ್ಕೆ 4,46,779 ಪದವೀಧರ ಅಭ್ಯರ್ಥಿಗಳು ಯುವನಿಧಿ ಯೋಜನೆಯಡಿ ನೋಂದಾಯಿಸಿಕೊಂಡಿದ್ದು, ಅವರಲ್ಲಿ ಅರ್ಹರಾದ 3,91,354 ಪದವೀಧರ ಫಲಾನುಭವಿಗಳಿಗೆ ನಿರುದ್ಯೋಗ ಭತ್ಯೆಯನ್ನು ನೇರ ನಗದು ವರ್ಗಾವಣೆ ಮೂಲಕ ಪಾವತಿಸಲಾಗಿದೆ.

2026-27ನೇ ಸಾಲಿನಲ್ಲಿ ಯುವನಿಧಿ ಯೋಜನೆಗೆ ₹372.40 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಇದರ ಜತೆಗೆ ‘ಯುವನಿಧಿ ಪ್ಲಸ್’ ಉಪಕ್ರಮದಡಿ ಯುವನಿಧಿ ಯೋಜನೆಯಡಿ ಭತ್ಯೆ ಪಡೆಯುತ್ತಿರುವ ಪದವೀಧರರಿಗೆ ಉದ್ಯೋಗ ಮಾರುಕಟ್ಟೆಗೆ ಪೂರಕವಾಗುವಂತೆ ಕೌಶಲ್ಯ ಆಧಾರಿತ ತರಬೇತಿಯನ್ನು ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮದ ವತಿಯಿಂದ ನೀಡಲಾಗುತ್ತಿದೆ. ಉದ್ಯೋಗ ಹುಡುಕುತ್ತಿರುವ ಯುವಕರಿಗೆ ಅಗತ್ಯ ಕೌಶಲ್ಯಗಳನ್ನು ಬೆಳೆಸುವ ಮೂಲಕ ಉದ್ಯೋಗಾವಕಾಶ ಹೆಚ್ಚಿಸುವ ಉದ್ದೇಶವನ್ನು ಈ ಕ್ರಮ ಹೊಂದಿದೆ.