Home Blog Page 4

ಹುಬ್ಬಳ್ಳಿಯಲ್ಲಿ ಲವ್‌ ಜಿಹಾದ್‌ ಆರೋಪ: ಜಿಮ್‌ ಟ್ರೈನರ್‌ ವಿರುದ್ಧ ಹಿಂದೂ ಸಂಘಟನೆಗಳಿಂದ ಪ್ರತಿಭಟನೆ

0

ಹುಬ್ಬಳ್ಳಿ: ಹಳೆ ಹುಬ್ಬಳ್ಳಿಯಲ್ಲಿ ಜಿಮ್‌ ಕೇಂದ್ರವನ್ನು ಸುತ್ತುವರಿದ ವಿವಾದ ಕಾನೂನು-ಸುವ್ಯವಸ್ಥೆಯ ಪ್ರಶ್ನೆಯಾಗಿ ತೀವ್ರಗೊಂಡಿದ್ದು, ಹಿಂದೂಪರ ಸಂಘಟನೆಗಳ ಪ್ರತಿಭಟನೆಗೆ ಕಾರಣವಾಗಿದೆ.

ಜಿಮ್‌ ಟ್ರೈನರ್ ಸಮೀರ್ ವಿರುದ್ಧ “ಲವ್ ಜಿಹಾದ್” ಆರೋಪ ಹೊರಿಸಿ, ಸಂಘಟನೆಗಳ ಕಾರ್ಯಕರ್ತರು ಆತನನ್ನು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಈ ಬೆಳವಣಿಗೆಯ ಬೆನ್ನಲ್ಲೇ ಯುವಕ ಮತ್ತು ಯುವತಿಯ ಕುಟುಂಬಗಳ ನಡುವೆ ಉದ್ವಿಗ್ನ ಪರಿಸ್ಥಿತಿ ಉಂಟಾಗಿ, ಪರಸ್ಪರ ಮನೆಗಳಿಗೆ ತೆರಳಿ ಗಲಾಟೆ ನಡೆಸಿದ ಘಟನೆ ನಡೆದಿದೆ ಎಂಬ ಆರೋಪಗಳು ಕೇಳಿಬಂದಿವೆ.

ಯುವತಿಯ ಮನೆಗೆ ಯುವಕನ ಕುಟುಂಬದವರು ನುಗ್ಗಿ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಎರಡೂ ಕುಟುಂಬಗಳು ಸಂಘರ್ಷಕ್ಕೆ ಇಳಿದ ಪರಿಣಾಮ ಆತಂಕದ ವಾತಾವರಣ ನಿರ್ಮಾಣವಾಗಿದೆ.

ಸ್ಥಳಕ್ಕೆ ಭೇಟಿ ನೀಡಿದ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಅವರು, ಎರಡೂ ಕಡೆಯವರ ನಡುವೆ ಗಲಾಟೆ ನಡೆದಿರುವುದನ್ನು ದೃಢಪಡಿಸಿ, ಇದುವರೆಗೆ ಯಾವುದೇ ಅಧಿಕೃತ ದೂರು ದಾಖಲಾಗಿಲ್ಲ ಎಂದು ತಿಳಿಸಿದ್ದಾರೆ. ದೂರು ಬಂದಲ್ಲಿ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ.

ಈ ನಡುವೆ, ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ನೂರಾರು ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಹಳೆ ಹುಬ್ಬಳ್ಳಿ ಠಾಣೆಗೆ ಮುತ್ತಿಗೆ ಹಾಕಿ, ಟ್ರೈನರ್ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಇನ್ನೊಂದೆಡೆ, ಯುವಕನ ಸಹೋದರಿ, ಯುವತಿ ಮತ್ತು ತನ್ನ ಸಹೋದರ ಕಳೆದ ಮೂರು ವರ್ಷಗಳಿಂದ ಪರಸ್ಪರ ಪರಿಚಯದಲ್ಲಿದ್ದು ಸಂಬಂಧ ಹೊಂದಿದ್ದಾರೆ ಎಂದು ಹೇಳಿಕೆ ನೀಡಿದ್ದು, ಈ ಸಂಬಂಧದ ಬಗ್ಗೆ ಯುವತಿಯ ಮನೆಯವರಿಗೆ ತಿಳಿದಿತ್ತು ಎಂದು ತಿಳಿಸಿದ್ದಾರೆ.

ತಮಿಳುನಾಡು ಚುನಾವಣೆ: ಬಿಜೆಪಿ 27 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ

ಚೆನ್ನೈ: ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಭಾರತೀಯ ಜನತಾ ಪಕ್ಷವು ತನ್ನ ಮೊದಲ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಒಟ್ಟು 27 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಲಾಗಿದೆ.

ಪ್ರಮುಖವಾಗಿ ಅವನಾಶಿ ಕ್ಷೇತ್ರದಿಂದ ಕೇಂದ್ರ ಸಚಿವ ಎಲ್. ಮುರುಗನ್ ಅವರನ್ನು ಕಣಕ್ಕಿಳಿಸಲಾಗಿದ್ದು, ಮೈಲಾಪುರ ಕ್ಷೇತ್ರದಿಂದ ತೆಲಂಗಾಣದ ಮಾಜಿ ರಾಜ್ಯಪಾಲೆ ತಮಿಳಿಸೈ ಸೌಂದರರಾಜನ್ ಅವರಿಗೆ ಟಿಕೆಟ್ ನೀಡಲಾಗಿದೆ.

ಕೊಯಮತ್ತೂರು ಉತ್ತರ ಕ್ಷೇತ್ರದಲ್ಲಿ ಬಿಜೆಪಿ ಮಹಿಳಾ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷೆ ವನತಿ ಶ್ರೀನಿವಾಸನ್ ಸ್ಪರ್ಧಿಸಲಿದ್ದು, ಸತ್ತೂರು ಕ್ಷೇತ್ರದಲ್ಲಿ ರಾಜ್ಯಾಧ್ಯಕ್ಷ ನೈನಾರ್ ನಾಗೇಂದ್ರನ್ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ.

ಇದೇ ವೇಳೆ, ಮೋಡಕುರಿಚಿ ಕ್ಷೇತ್ರದಿಂದ ಕೀರ್ತಿಕಾ ಶಿವಕುಮಾರ್, ವಿಲವಂಕೋಡ್‌ನಿಂದ ಎಸ್. ವಿಜಯಧರಣಿ ಮತ್ತು ಥಳ್ಳಿ ಕ್ಷೇತ್ರದಿಂದ ನಾಗೇಶ್ ಕುಮಾರ್ ಅವರನ್ನು ಅಭ್ಯರ್ಥಿಗಳಾಗಿ ಘೋಷಿಸಲಾಗಿದೆ.

ಎನ್‌ಡಿಎ ಮೈತ್ರಿ ಅಡಿಯಲ್ಲಿ ನಡೆದ ಸೀಟು ಹಂಚಿಕೆಯ ಪ್ರಕಾರ, ಎಐಎಡಿಎಂಕೆ 169 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದ್ದು, ಬಿಜೆಪಿ 27 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ನಿಲ್ಲಿಸಿದೆ. ಜೊತೆಗೆ, ಅನ್ಬುಮಣಿ ರಾಮದಾಸ್ ನೇತೃತ್ವದ ಪಟ್ಟಾಳಿ ಮಕ್ಕಳ್ ಕಚ್ಚಿಗೆ 18 ಸ್ಥಾನಗಳು ಮತ್ತು ಟಿಟಿವಿ ದಿನಕರನ್ ಅವರ ಅಮ್ಮ ಮಕ್ಕಳ್ ಮುನ್ನೇತ್ರ ಕಳಗಕ್ಕೆ 11 ಸ್ಥಾನಗಳನ್ನು ಹಂಚಿಕೆ ಮಾಡಲಾಗಿದೆ.

ಎಲೆಕ್ಟ್ರಿಕ್ ವಾಹನಗಳ ತೆರಿಗೆ ಹಿಂಪಡೆದು ಜನರ ಮೇಲೆ ಬರೆ – ಕರ್ನಾಟಕ ಸರ್ಕಾರ ದಿವಾಳಿ ಸ್ಥಿತಿಯಲ್ಲಿ: ಪ್ರಹ್ಲಾದ್ ಜೋಶಿ ಕಿಡಿ

ನವದೆಹಲಿ: ಕರ್ನಾಟಕ ಕಾಂಗ್ರೆಸ್ ಸರ್ಕಾರ ಆರ್ಥಿಕ ಸಂಕಷ್ಟದಿಂದ ತತ್ತರಿಸಿ, ಸಿಕ್ಕ ಸಿಕ್ಕಲ್ಲಿ ಆದಾಯ ಸಂಗ್ರಹಿಸಲು ತುರ್ತು ಕ್ರಮ ಕೈಗೊಳ್ಳುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತೀವ್ರ ವಾಗ್ದಾಳಿ ನಡೆಸಿದರು.

ದೆಹಲಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ಬೆಲೆ ಏರಿಕೆ ಹಾಗೂ ಹಣ ಸಂಗ್ರಹದ ನೀತಿ ಇದೀಗ ಎಲೆಕ್ಟ್ರಿಕ್ ವಾಹನಗಳ ಮೇಲೂ ಪರಿಣಾಮ ಬೀರಿದ್ದು, ಆತ್ಮನಿರ್ಭರ ಭಾರತದ ದೃಷ್ಟಿಕೋಣಕ್ಕೆ ಧಕ್ಕೆಯಾಗಿದೆ ಎಂದು ಆರೋಪಿಸಿದರು.

ಜಾಗತಿಕ ಮಟ್ಟದಲ್ಲಿ ಮಧ್ಯಪ್ರಾಚ್ಯ ಸಂಘರ್ಷದ ಪರಿಣಾಮ ಗ್ಯಾಸ್, ಕಚ್ಚಾ ತೈಲ ಹಾಗೂ ಪೆಟ್ರೋಲಿಯಂ ಉತ್ಪನ್ನಗಳ ಕೊರತೆ ಉಂಟಾಗುತ್ತಿರುವ ಸಂದರ್ಭದಲ್ಲಿ, ಭಾರತ ನವೀಕರಿಸಬಹುದಾದ ಇಂಧನ ಹಾಗೂ ಎಲೆಕ್ಟ್ರಿಕ್ ವಾಹನಗಳಿಗೆ ಹೆಚ್ಚಿನ ಉತ್ತೇಜನ ನೀಡುತ್ತಿದೆ. ಆದರೆ, ರಾಜ್ಯ ಸರ್ಕಾರ ಈ ಪ್ರಯತ್ನಗಳಿಗೆ ಅಡ್ಡಿಯಾಗುತ್ತಿದೆ ಎಂದು ಟೀಕಿಸಿದರು.

ಎಲೆಕ್ಟ್ರಿಕ್ ವಾಹನಗಳಿಗೆ ನೀಡಿದ್ದ ತೆರಿಗೆ ವಿನಾಯಿತಿಯನ್ನು ಹಿಂಪಡೆದಿರುವುದು ಪರಿಸರ ಸ್ನೇಹಿ ವಾಹನಗಳ ಬಳಕೆಯನ್ನು ಕುಗ್ಗಿಸಿ, ಜನರನ್ನು ಮತ್ತೆ ಪೆಟ್ರೋಲ್-ಡೀಸೆಲ್ ವಾಹನಗಳತ್ತ ತಳ್ಳುವ ನಿರ್ಧಾರವಾಗಿದೆ ಎಂದರು.

ಮೂರೂವರೆ ಲಕ್ಷ ಕೋಟಿ ರೂಪಾಯಿ ಬಜೆಟ್ ಹೊಂದಿರುವ ಸರ್ಕಾರ ಕೇವಲ 250 ಕೋಟಿ ರೂ. ಸಂಗ್ರಹಕ್ಕಾಗಿ ಇಂತಹ ನಿರ್ಧಾರ ಕೈಗೊಂಡಿರುವುದು ಆರ್ಥಿಕ ದಿವಾಳಿತನದ ಸಂಕೇತವಾಗಿದೆ ಎಂದು ಹೇಳಿದರು.

ಇನ್ನು, EV ವಾಹನಗಳಿಗೆ ಲೈಫ್‌ಟೈಮ್ ಟ್ಯಾಕ್ಸ್ ವಿಧಿಸುವ ಮೂಲಕ ಸರ್ಕಾರ ಹೆಚ್ಚುವರಿ ಆದಾಯ ಗಳಿಸಲು ಮುಂದಾಗಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಹೆಚ್ಚುವರಿ ತೆರಿಗೆಗಳಿಂದ ಕಮರ್ಷಿಯಲ್ ಟ್ಯಾಕ್ಸ್ ಹೆಚ್ಚಿಸುವ ಯತ್ನ ಮಾಡುತ್ತಿದೆ ಎಂದು ಆರೋಪಿಸಿದರು.

ಭಾರತ 2030ರೊಳಗೆ ಇಂಗಾಲ ಉತ್ಸವವನ್ನು 50% ಕಡಿಮೆ ಮಾಡುವ ಗುರಿ ಹೊಂದಿದ್ದರೂ, ರಾಜ್ಯ ಸರ್ಕಾರದ ನೀತಿಗಳು ಅದಕ್ಕೆ ವಿರುದ್ಧವಾಗಿವೆ ಎಂದು ಜೋಶಿ ಅಸಮಾಧಾನ ವ್ಯಕ್ತಪಡಿಸಿದರು.

ತಾಂತ್ರಿಕ ದೋಷದಿಂದ ಅಮಿತ್ ಶಾ ಹೆಲಿಕಾಪ್ಟರ್ ಲ್ಯಾಂಡಿಂಗ್ ವಿಫಲ – ಗೋಲಕ್‌ಗುಂಜ್ ರ‍್ಯಾಲಿ ರದ್ದು

ದಿಸ್ಪುರ: ಅಸ್ಸಾಂ ರಾಜ್ಯದ ಗೋಲಕ್‌ಗುಂಜ್‌ನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹೆಲಿಕಾಪ್ಟರ್ ತಾಂತ್ರಿಕ ದೋಷಕ್ಕೆ ಗುರಿಯಾಗಿದ್ದು, ನಿಗದಿತ ಸ್ಥಳದಲ್ಲಿ ಇಳಿಯಲು ಸಾಧ್ಯವಾಗಲಿಲ್ಲ. ಇದರ ಪರಿಣಾಮವಾಗಿ ಆಯೋಜಿಸಲಾಗಿದ್ದ ಮಹತ್ವದ ರಾಜಕೀಯ ರ‍್ಯಾಲಿಯನ್ನು ತಕ್ಷಣವೇ ರದ್ದುಗೊಳಿಸಲಾಯಿತು.

ರ‍್ಯಾಲಿಗೆ ಆಗಮಿಸಿದ್ದ ಬೆಂಬಲಿಗರ ನಿರೀಕ್ಷೆ ಭಂಗವಾಗಿದ್ದು, ಬಳಿಕ ಅಮಿತ್ ಶಾ ಅವರು ದೂರವಾಣಿ ಮೂಲಕ ಮಾತನಾಡಿ ಅಸೌಕರ್ಯಕ್ಕೆ ಕ್ಷಮೆಯಾಚಿಸಿದರು.

ಈ ವೇಳೆ ಅವರು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನಾಯಕತ್ವವನ್ನು ಉಲ್ಲೇಖಿಸಿ, ಬಿಜೆಪಿ ಅಭ್ಯರ್ಥಿ ಅಶ್ವಿನಿ ರೇ ಸರ್ಕಾರ್ ಅವರಿಗೆ ಭಾರೀ ಮತಗಳಿಂದ ಗೆಲುವು ಸಾಧಿಸಲು ಕರೆ ನೀಡಿದರು.

ಇದಾದ ಬಳಿಕ ಅಮಿತ್ ಶಾ ಅವರು ಮುಂದಿನ ಚುನಾವಣಾ ಪ್ರಚಾರ ಕಾರ್ಯಕ್ರಮಕ್ಕಾಗಿ ದುಧ್ನೋಯ್ ಕಡೆಗೆ ಪ್ರಯಾಣ ಬೆಳೆಸಿದರು.

ಗ್ರಾಹಕರ ಸೋಗಿನಲ್ಲಿ ಬಂದು ಲಕ್ಷಾಂತರ ಮೌಲ್ಯದ ಚಿನ್ನದ ಸರ ಲೂಟಿ: ಬುರ್ಖಾ ಧರಿಸಿ ಬಂದವಳಿಂದ ಕೃತ್ಯ

0

ಅಯೋಧ್ಯೆ: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಬುರ್ಖಾ ಧರಿಸಿದ್ದ ಮಹಿಳೆ ನಗರದಲ್ಲಿ ಇರುವ ಆಭರಣ ಅಂಗಡಿಯೊಂದರಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ದೋಚಿದ್ದಾರೆ.

ಜನನಿಬಿಡ ಪ್ರದೇಶದಲ್ಲಿರುವ ಅಂಗಡಿಗೆ ಗ್ರಾಹಕಿ ನೆಪದಲ್ಲಿ ಬಂದ ಆಕೆ, ಅಂಗಡಿಯವರು ತೋರಿಸುತ್ತಿದ್ದ 26 ಗ್ರಾಂ ತೂಕದ ಚಿನ್ನದ ಸರ ಮತ್ತು ನೆಕ್ಲೇಸ್‌ ಅನ್ನು ತನ್ನ ಬಟ್ಟೆಯೊಳಗೆ ಅಡಗಿಸಿಕೊಂಡಿದ್ದಾಳೆ. ಕಳುವಾದ ಆಭರಣಗಳ ಮೌಲ್ಯ ಸುಮಾರು ₹3,80,000ಕ್ಕೂ ಅಧಿಕವಾಗಿದೆ ಎಂದು ಅಂದಾಜಿಸಲಾಗಿದೆ.

ಅಂಗಡಿಯಿಂದ ಹೊರಬಂದ ತಕ್ಷಣ, ಮಹಿಳೆ ತನ್ನ ಸಹಚರನೊಂದಿಗೆ ಬೈಕ್‌ನಲ್ಲಿ ಸ್ಥಳದಿಂದ ಪರಾರಿಯಾಗಿದ್ದಾಳೆ. ಅಂಗಡಿಯ ಸಿಸಿಟಿವಿ ಕ್ಯಾಮೆರಾ ಈ ಕೃತ್ಯದ ದೃಶ್ಯಗಳನ್ನು ಸೆರೆಹಿಡಿದಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಆತ್ಮಹತ್ಯೆಗೆ ಯತ್ನಿಸಿದ್ದ 4 ತಿಂಗಳ ಗರ್ಭಿಣಿ ಚಿಕಿತ್ಸೆ ಫಲಿಸದೇ ಸಾವು! ಇದು ಕೊಲೆ ಎಂದ ಪೋಷಕರು

0

ಶಿವಮೊಗ್ಗ: ಕಳೆದ ಮಾ.29ರಂದು ಹೊಡಬಟ್ಟೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಹೊಡಬಟ್ಟೆ ಗ್ರಾಮದ 4 ತಿಂಗಳ ಗರ್ಭಿಣಿ ಚಿಕಿತ್ಸೆ ಫಲಿಸದೆ ಉಡುಪಿಯ ಮಣಿಪಾಲ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

30 ವರ್ಷದ ಶ್ವೇತಾ ಮೃತ ಮಹಿಳೆ. ಆತ್ಮಹತ್ಯೆಗೆ ಯತ್ನಿಸಿದ ಇವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರೀಗ ಮೃತಪಟ್ಟಿದ್ದಾರೆ.

ಸ್ಟಾಫ್​ ನರ್ಸ್ ಆಗಿ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡ್ತಿದ್ದ ಶ್ವೇತಾ ಅತ್ತೆ ಮತ್ತು ಮಾವನ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡಿರೋದಾಗಿ ಪೋಷಕರು ಗಂಭೀರ ಆರೋಪ ಮಾಡಿದ್ದು, ಘಟನೆ ಸಂಬಂಧ ಸೊರಬ ಠಾಣೆಗೆ ದೂರು ಕೂಡ ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಶ್ವೇತಾ ಮಾವ ಸಣ್ಣಪ್ಪ, ಅತ್ತೆ ಜಾನಕಿ, ಹೇಮಂತ್​, ದಿವ್ಯಾ ಎಂದು ಗುರುತಿಸಲಾಗಿದೆ. ಮಗಳ ಸಾವಿಗೆ ಕಾರಣರಾದವರ ವಿರುದ್ಧ ಕ್ರಮಕ್ಕೆ ಶ್ವೇತಾ ಪೋಷಕರ ಆಗ್ರಹಿಸಿದ್ದು ತನಿಖೆ ಮುಂದುವರಿದಿದೆ. ಇನ್ನು ಮಗಳ ಸಾವಿಗೆ ಶ್ವೇತಾ ಪೋಷಕರು ಮತ್ತು ಸಂಬಂಧಿಕರ ಆಕ್ರಂಧನ ಮುಗಿಲು ಮುಟ್ಟಿದೆ.

ಕೊಡಗಿನಲ್ಲಿ ಟ್ರೆಕ್ಕಿಂಗ್ ಗೆ ತೆರಳಿದ್ದ ಕೇರಳ ಮಹಿಳೆ ಏಕಾಏಕಿ ನಾಪತ್ತೆ!

0

ಮಡಿಕೇರಿ: ಕೊಡಗಿನ ತಡಿಯಂಡಮೋಳ್ ಬೆಟ್ಟಕ್ಕೆ ಟ್ರೆಕ್ಕಿಂಗ್‌ಗೆ ತೆರಳಿದ್ದ ಮಹಿಳೆ ನಾಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ. ನಾಪತ್ತೆಯಾದವರನ್ನು ಶರಣ್ಯ (36) ಎಂದು ಗುರುತಿಸಲಾಗಿದ್ದು, ಅವರು ಯವಕಪಾಡಿ ಗ್ರಾಮದ ಖಾಸಗಿ ಹೋಂಸ್ಟೇನಲ್ಲಿ ತಂಗಿ ಅಲ್ಲಿಂದ ಒಬ್ಬರೇ ಟ್ರೆಕ್ಕಿಂಗ್‌ಗೆ ತೆರಳಿದ್ದರು.

ಈ ಪ್ರದೇಶದಲ್ಲಿ ಕಾಡಾನೆಗಳ ಹಾವಳಿ ಇರುವ ಹಿನ್ನೆಲೆಯಲ್ಲಿ, ಇತರ ಪ್ರವಾಸಿಗರ ಜೊತೆ ಅವರನ್ನು ಕಳುಹಿಸಲಾಗಿತ್ತು. ಆದರೆ, ಟ್ರೆಕ್ಕಿಂಗ್‌ಗೆ ತೆರಳಿದ್ದ ಉಳಿದವರು ಹಿಂತಿರುಗಿದರೂ ಶರಣ್ಯ ಮರಳಿಲ್ಲ.

ಈ ಬಗ್ಗೆ ಸ್ಥಳೀಯ ನಿವಾಸಿ ಮುತ್ತಪ್ಪ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಅರಣ್ಯ ಇಲಾಖೆ ಸಿಬ್ಬಂದಿ, ಪೊಲೀಸರು ಹಾಗೂ ಗ್ರಾಮಸ್ಥರು ಬೆಟ್ಟ ಪ್ರದೇಶದಲ್ಲಿ ಶೋಧ ಕಾರ್ಯ ನಡೆಸಿದರೂ ಮಹಿಳೆಯ ಸುಳಿವು ಸಿಗಲಿಲ್ಲ.

ಇಂದು ಮತ್ತೊಮ್ಮೆ ವ್ಯಾಪಕ ಶೋಧ ಕಾರ್ಯ ಮುಂದುವರಿದಿದೆ. ಶರಣ್ಯ ಅವರ ಮೊಬೈಲ್ ಕೇರಳ ಜಾಲದಲ್ಲಿ ಕಾರ್ಯನಿರ್ವಹಿಸುತ್ತಿರುವುದು ತಿಳಿದುಬಂದಿದೆ. ನಾಪೋಕ್ಲು ಠಾಣಾಧಿಕಾರಿ ರಾಘವೇಂದ್ರ ಅವರ ನೇತೃತ್ವದಲ್ಲಿ ಪೊಲೀಸರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಬೆಟ್ಟ ಪ್ರದೇಶದಲ್ಲಿ ಶಿಬಿರ ಹೂಡಿ ಶೋಧ ಕಾರ್ಯ ಮುಂದುವರೆಸುತ್ತಿದ್ದಾರೆ.

ಸಿದ್ದರಾಮಯ್ಯ ಅವರ ಹೆಸರಷ್ಟೇ ಹಿಂದೂ, ನಡೆ-ನುಡಿಯಲ್ಲಿ ಧರ್ಮದ ಲಕ್ಷಣಗಳು ಕಾಣಿಸುತ್ತಿಲ್ಲ: ಪ್ರತಾಪ ಸಿಂಹ

ಬಾಗಲಕೋಟೆ: ಉಪಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಪರ ಪ್ರಚಾರ ನಡೆಸಿದ ಮಾಜಿ ಸಂಸದ ಪ್ರತಾಪ ಸಿಂಹ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಸಿದ್ದರಾಮಯ್ಯ ಅವರ ಹೆಸರಷ್ಟೇ ಹಿಂದೂ ಆಗಿದ್ದು, ಅವರ ನಡೆನುಡಿಯಲ್ಲಿ ಹಿಂದೂ ಧರ್ಮದ ಲಕ್ಷಣಗಳು ಕಾಣಿಸುತ್ತಿಲ್ಲ ಎಂದು ಪ್ರತಾಪಸಿಂಹ ಆರೋಪಿಸಿದರು. ಯುಗಾದಿ ಹಾಗೂ ದೀಪಾವಳಿ ದಿನಗಳಲ್ಲಿ ಮಾಂಸಾಹಾರ ಸೇವನೆ ವಿಷಯದಲ್ಲಿಯೂ ಟೀಕಿಸಿದರು.

ಇದೀಗ ಕಾಂಗ್ರೆಸ್ ನಾಯಕರು ಹಿಂದುತ್ವದ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಹೇಳಿದ ಅವರು, ನಾಗಮಂಗಲದಲ್ಲಿ ಗಣೇಶ ಶೋಭಾಯಾತ್ರೆ ವೇಳೆ ಕಲ್ಲು ತೂರಾಟ ನಡೆದಾಗ ಅದನ್ನು ಸಣ್ಣ ಘಟನೆ ಎಂದು ಸಿಎಂ ಹೇಳಿದ್ದನ್ನು ಪ್ರಶ್ನಿಸಿದರು. ಮದ್ದೂರು, ಅಣ್ಣಮ್ಮ ಜಾತ್ರೆ ಹಾಗೂ ಶಿವಾಜಿ ಜಯಂತಿ ಸಂದರ್ಭಗಳಲ್ಲಿ ನಡೆದ ಕಲ್ಲು ತೂರಾಟ ಘಟನೆಗಳ ವೇಳೆ ಸರ್ಕಾರದ ಪ್ರತಿಕ್ರಿಯೆ ಏನು ಎಂಬುದರ ಬಗ್ಗೆ ಕೂಡ ಪ್ರಶ್ನೆ ಎತ್ತಿದರು.

ಕಾಂಗ್ರೆಸ್ ನಾಯಕರು ನಿಜವಾದ ಹಿಂದುಗಳಾಗಿದ್ದರೆ ಇಂತಹ ಘಟನೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿದ್ದರು ಎಂದು ಹೇಳಿದರು. ಇದಲ್ಲದೆ, ರಾಜ್ಯದ ಆರ್ಥಿಕ ಪರಿಸ್ಥಿತಿಯ ಮೇಲೂ ಪ್ರತಾಪಸಿಂಹ ಟೀಕಿಸಿದರು. ರಾಜ್ಯದಲ್ಲಿ ಸಾಲದ ಪ್ರಮಾಣ ಹೆಚ್ಚಾಗಿದ್ದು, ಪ್ರತಿ ಮಗುವಿನ ತಲೆಮೇಲೆ ಸುಮಾರು ₹1.17 ಲಕ್ಷ ಸಾಲವಿದೆ ಎಂದು ಅವರು ಹೇಳಿದರು. ಒಟ್ಟು ರಾಜ್ಯ ಸಾಲ ₹8.25 ಲಕ್ಷ ಕೋಟಿ ತಲುಪಿದೆ ಎಂದು ಆರೋಪಿಸಿದರು.

ಕೆಂಗಲ್ ಹನುಮಂತಯ್ಯರಿಂದ ಬಸವರಾಜ್ ಬೊಮ್ಮಾಯಿ ಅವರವರೆಗೆ ಎಲ್ಲಾ ಮುಖ್ಯಮಂತ್ರಿಗಳಿಗಿಂತ ಹೆಚ್ಚು ಸಾಲವನ್ನು ಸಿದ್ದರಾಮಯ್ಯ ಮಾಡಿದ್ದಾರೆ ಎಂದು ಆರೋಪಿಸಿ, “ಸಾಲಾರಾಮಯ್ಯಎಂದು ವ್ಯಂಗ್ಯವಾಡಿದರು.

ಕಳೆದ ಮೂರು ವರ್ಷಗಳಲ್ಲಿ ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ. ರಸ್ತೆ ಮತ್ತು ಕುಡಿಯುವ ನೀರಿನ ವ್ಯವಸ್ಥೆಯಲ್ಲಿಯೂ ಸುಧಾರಣೆ ಕಂಡಿಲ್ಲ ಎಂದು ಪ್ರತಾಪಸಿಂಹ ಆರೋಪಿಸಿದರು.

SSLC ಹಿಂದಿ ಗ್ರೇಡಿಂಗ್ ನಿರ್ಧಾರ ಮರುಪರಿಶೀಲನೆಗೆ ರಾಜ್ಯಪಾಲರ ಸೂಚನೆ

ಬೆಂಗಳೂರು: SSLC ಪರೀಕ್ಷೆಯಲ್ಲಿ ತೃತೀಯ ಭಾಷೆಗೆ ಅಂಕಗಳ ಬದಲು ಗ್ರೇಡ್ ನೀಡುವ ರಾಜ್ಯ ಸರ್ಕಾರದ ನಿರ್ಧಾರವನ್ನು ಮರುಪರಿಶೀಲಿಸುವಂತೆ ರಾಜ್ಯಪಾಲರು ಸೂಚನೆ ನೀಡಿದ್ದಾರೆ.

ಈ ಸಂಬಂಧ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಆರ್. ಪ್ರಭುಶಂಕರ್ ಪತ್ರ ಬರೆದಿದ್ದಾರೆ. ಪತ್ರದಲ್ಲಿ ತೃತೀಯ ಭಾಷೆಗೆ ಅಂಕಗಳ ಬದಲು ಕೇವಲ ಗ್ರೇಡ್ ನೀಡುವುದರಿಂದ ಅದರ ಶೈಕ್ಷಣಿಕ ಪ್ರಾಮುಖ್ಯತೆ ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಉಲ್ಲೇಖಿಸಲಾಗಿದೆ.

ಭಾಷಾ ವೈವಿಧ್ಯತೆ, ಜಾಗೃತಿ ಹಾಗೂ ಬೌದ್ಧಿಕ ಬೆಳವಣಿಗೆಯಲ್ಲಿ ತೃತೀಯ ಭಾಷೆಯು ಮಹತ್ವದ ಪಾತ್ರ ವಹಿಸುತ್ತದೆ. ಆದ್ದರಿಂದ, ಈ ವಿಷಯದಲ್ಲಿ ಸೂಕ್ತ ಪರಿಶೀಲನೆ ಅಗತ್ಯವಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಇದಲ್ಲದೆ, ಸರ್ಕಾರದ ಈ ನಿರ್ಧಾರ ವಿದ್ಯಾರ್ಥಿಗಳ ಕಲಿಕೆಯ ಆಸಕ್ತಿಯ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ ಎಂಬ ಆತಂಕ ಪೋಷಕರಲ್ಲಿ ವ್ಯಕ್ತವಾಗಿದೆ. ಈ ಹಿನ್ನೆಲೆ ಶೈಕ್ಷಣಿಕ ಮತ್ತು ಆಡಳಿತಾತ್ಮಕ ಅಂಶಗಳನ್ನು ಪರಿಗಣಿಸಿ ಸಂಬಂಧಿತ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ.

ಇನ್ನೊಂದೆಡೆ, SSLC ಪರೀಕ್ಷೆಯಲ್ಲಿ ಹಿಂದಿಯನ್ನು ಕಡ್ಡಾಯಗೊಳಿಸಬಾರದು ಮತ್ತು ಅಂಕಪಟ್ಟಿಯಿಂದ ಹೊರಗಿಡಬೇಕು ಎಂದು ವಿವಿಧ ಕನ್ನಡ ಪರ ಸಂಘಟನೆಗಳು ಒತ್ತಾಯಿಸಿದ್ದವು. ಅದರ ಬೆನ್ನಲ್ಲೇ ಸರ್ಕಾರ SSLC ಪರೀಕ್ಷೆಯ ಒಟ್ಟು ಅಂಕಗಳನ್ನು 525ಕ್ಕೆ ನಿಗದಿ ಮಾಡಿ, ತೃತೀಯ ಭಾಷೆಯ ಅಂಕಗಳನ್ನು ಒಟ್ಟು ಫಲಿತಾಂಶದಲ್ಲಿ ಪರಿಗಣಿಸದ ನಿರ್ಧಾರ ಕೈಗೊಂಡಿತ್ತು.

ಇನ್ನು ಮುಂದೆ ಹಿಂದಿ ಸೇರಿದಂತೆ ಅರೇಬಿಕ್, ಉರ್ದು, ಸಂಸ್ಕೃತ, ಕೊಂಕಣಿ, ತುಳು ಮತ್ತು ಮರಾಠಿ ಭಾಷೆಗಳ ಅಂಕಗಳನ್ನು ಗ್ರೇಡ್ ಮೂಲಕ ಮಾತ್ರ ನೀಡಲಾಗುತ್ತದೆ. ಆದರೆ ತೃತೀಯ ಭಾಷೆ ಪರೀಕ್ಷೆ ಬರೆಯುವುದು ಕಡ್ಡಾಯವಾಗಿರುತ್ತದೆ ಎಂದು ಶಿಕ್ಷಣ ಇಲಾಖೆ ತಿಳಿಸಿತ್ತು. ಈ ನಿರ್ಧಾರ ವ್ಯಾಪಕ ಚರ್ಚೆಗೆ ಗ್ರಾಸವಾಗಿದ್ದು, ಕರ್ನಾಟಕ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೂ ಸಲ್ಲಿಕೆಯಾಗಿರುವ ನಡುವೆ ರಾಜ್ಯಪಾಲರ ಈ ಪತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ದೊರೆತಿದೆ.

Gold Price Hike Today: ಮತ್ತೆ ಹೆಚ್ಚಾಯ್ತು ಚಿನ್ನದ ಬೆಲೆ, ಬೆಂಗಳೂರಿನಲ್ಲಿ ಎಷ್ಟಿದೆ?

ಬೆಂಗಳೂರು: ಸೇರಿದಂತೆ ದೇಶಾದ್ಯಂತ ಚಿನ್ನದ ಬೆಲೆ ಮತ್ತೆ ಏರಿಕೆಯ ಹಾದಿ ಹಿಡಿದಿದೆ. ನಿನ್ನೆ 230 ರೂ ಇಳಿಕೆಯಾಗಿದ್ದ ಚಿನ್ನದ ಬೆಲೆ ಇಂದು (ಶುಕ್ರವಾರ) ಸುಮಾರು 180–200 ರೂಗಳಷ್ಟು ಏರಿಕೆಯಾಗಿದೆ. ಈ ವಾರದ ಹೆಚ್ಚಿನ ದಿನಗಳಲ್ಲಿ ಬಂಗಾರದ ಬೆಲೆಯಲ್ಲಿ ಏರಿಳಿತಗಳು ಕಂಡುಬಂದಿವೆ.

ಇಂದಿನ ಪ್ರಮುಖ ದರಗಳು (ಭಾರತ)

  • 10 ಗ್ರಾಂ 22 ಕ್ಯಾರಟ್ ಚಿನ್ನ: ₹1,38,350
  • 10 ಗ್ರಾಂ 24 ಕ್ಯಾರಟ್ ಚಿನ್ನ: ₹1,50,930
  • 100 ಗ್ರಾಂ ಬೆಳ್ಳಿ: ₹25,000

ಗ್ರಾಂವಾರು ಬೆಲೆ (ಏಪ್ರಿಲ್ 3)

  • 24 ಕ್ಯಾರಟ್ (1 ಗ್ರಾಂ): ₹15,093
  • 22 ಕ್ಯಾರಟ್ (1 ಗ್ರಾಂ): ₹13,835
  • 18 ಕ್ಯಾರಟ್ (1 ಗ್ರಾಂ): ₹11,320
  • ಬೆಳ್ಳಿ (1 ಗ್ರಾಂ): ₹250

ಬೆಂಗಳೂರು ದರಗಳು

  • 24 ಕ್ಯಾರಟ್ (1 ಗ್ರಾಂ): ₹15,093
  • 22 ಕ್ಯಾರಟ್ (1 ಗ್ರಾಂ): ₹13,835
  • ಬೆಳ್ಳಿ (1 ಗ್ರಾಂ): ₹250

ಇತರೆ ನಗರಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಂ)

  • ಚೆನ್ನೈ: ₹13,850
  • ಮುಂಬೈ: ₹13,835
  • ದೆಹಲಿ: ₹13,850
  • ಕೋಲ್ಕತಾ: ₹13,835
  • ಕೇರಳ: ₹13,835
  • ಅಹ್ಮದಾಬಾದ್: ₹13,840
  • ಜೈಪುರ್: ₹13,850
  • ಲಕ್ನೋ: ₹13,850
  • ಭುವನೇಶ್ವರ್: ₹13,835

ವಿದೇಶಿ ಮಾರುಕಟ್ಟೆಯಲ್ಲಿನ ಏರಿಳಿತಗಳ ಪರಿಣಾಮವಾಗಿ ಚಿನ್ನದ ಬೆಲೆಯಲ್ಲಿ ನಿರಂತರ ಬದಲಾವಣೆ ಕಾಣಿಸುತ್ತಿದೆ. ಇನ್ನು ಬೆಳ್ಳಿ ದರದಲ್ಲಿ ಇಂದು ಯಾವುದೇ ಬದಲಾವಣೆ ಆಗಿಲ್ಲ.

error: Content is protected !!