Home Blog Page 4

ಶಿವಮೊಗ್ಗದಲ್ಲಿ ಐಪಿಎಲ್ ಜ್ವರ: 5 ಸಾವಿರ ಅಭಿಮಾನಿಗಳಿಗೆ ‘ಫ್ಯಾನ್ಸ್ ಪಾರ್ಕ್’ನಲ್ಲಿ ಲೈವ್ ಮ್ಯಾಚ್ ಅನುಭವ

ಶಿವಮೊಗ್ಗ: ಐಪಿಎಲ್ ಕ್ರಿಕೆಟ್ ಸಂಭ್ರಮವನ್ನು ಅಭಿಮಾನಿಗಳ ಬಳಿಗೆ ತಲುಪಿಸಲು ಶಿವಮೊಗ್ಗದಲ್ಲಿ ಬೃಹತ್ ಮಟ್ಟದ ‘ಐಪಿಎಲ್ ಫ್ಯಾನ್ಸ್ ಪಾರ್ಕ್’ ಸಿದ್ಧವಾಗಿದೆ. ನಗರದ ಎನ್‌ಇಎಸ್ ಮೈದಾನದಲ್ಲಿ ಮೇ 16ರಿಂದ ಆರಂಭವಾಗುವ ಈ ಕಾರ್ಯಕ್ರಮದಲ್ಲಿ ಸಾವಿರಾರು ಮಂದಿ ದೊಡ್ಡ ಪರದೆಯಲ್ಲಿ ಪಂದ್ಯ ವೀಕ್ಷಿಸುವ ಅವಕಾಶ ಪಡೆಯಲಿದ್ದಾರೆ.

ಬಿಸಿಸಿಐ ಮಾಧ್ಯಮ ಪ್ರಮುಖ ರಾಘವೇಂದ್ರ ಮಾಹಿತಿ ನೀಡಿದ್ದು, ಮೇ 16ರಂದು ಸಂಜೆ 6.30ಕ್ಕೆ ಗುಜರಾತ್ ಮತ್ತು ಕೆಕೆಆರ್ ನಡುವಿನ ಪಂದ್ಯ ನೇರಪ್ರಸಾರ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಇದಾದ ಬಳಿಕ ಮೇ 17ರಂದು ಪಂಜಾಬ್ ಕಿಂಗ್ಸ್-ಆರ್‌ಸಿಬಿ ಹಾಗೂ ಡೆಲ್ಲಿ ಕ್ಯಾಪಿಟಲ್ಸ್-ರಾಜಸ್ಥಾನ್ ರಾಯಲ್ಸ್ ಪಂದ್ಯಗಳ ಪ್ರಸಾರವೂ ನಡೆಯಲಿದೆ.

ಸುಮಾರು 5 ಸಾವಿರಕ್ಕೂ ಹೆಚ್ಚು ಕ್ರಿಕೆಟ್ ಅಭಿಮಾನಿಗಳು ಭಾಗವಹಿಸುವ ಸಾಧ್ಯತೆ ಇದ್ದು, ಮೈದಾನದಲ್ಲಿ ವಿಶೇಷ ಸೌಕರ್ಯಗಳನ್ನು ಕಲ್ಪಿಸಲಾಗಿದೆ. ಆಸನ ವ್ಯವಸ್ಥೆಯ ಬದಲು ಕಾರ್ಪೆಟ್ ವ್ಯವಸ್ಥೆ ಮಾಡಲಾಗಿದ್ದು, ಅಭಿಮಾನಿಗಳು ನಿಂತುಕೊಂಡೇ ಅಥವಾ ಕುಳಿತು ಪಂದ್ಯ ವೀಕ್ಷಿಸಬಹುದಾಗಿದೆ.

ಫ್ಯಾನ್ಸ್ ಪಾರ್ಕ್‌ನಲ್ಲಿ ಆಹಾರ ಮಳಿಗೆಗಳು, ಗೇಮ್ ಜೋನ್, ಮುಖ ಪೇಂಟಿಂಗ್, ಘೋಷಣೆಗಳು, ಕ್ರಿಕೆಟ್ ಸಂಭ್ರಮಕ್ಕೆ ತಕ್ಕ ವಿಶೇಷ ಚಟುವಟಿಕೆಗಳನ್ನೂ ಆಯೋಜಿಸಲಾಗಿದೆ. ಕ್ರೀಡಾಂಗಣದಲ್ಲಿ ಪಂದ್ಯ ವೀಕ್ಷಿಸುವ ಅನುಭವವನ್ನು ಅಭಿಮಾನಿಗಳಿಗೆ ನೀಡುವ ಉದ್ದೇಶದಿಂದ ಈ ವ್ಯವಸ್ಥೆ ರೂಪಿಸಲಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.

ಪ್ರವೇಶ ಸಂಪೂರ್ಣ ಉಚಿತವಾಗಿದ್ದು, ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಶಿವಮೊಗ್ಗ ಘಟಕ ಹಾಗೂ ಟಾಟಾ ಐಪಿಎಲ್ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಸುದ್ದಿಗೋಷ್ಠಿಯಲ್ಲಿ ಕೆಎಸ್‌ಸಿಎ ಶಿವಮೊಗ್ಗ ವಲಯದ ಅಧ್ಯಕ್ಷ ನಾಗೇಂದ್ರ ಪಂಡಿತ್ ಉಪಸ್ಥಿತರಿದ್ದರು.

ತೈಲ ಬಿಕ್ಕಟ್ಟು ಆತಂಕ: ಬೆಂಗಾವಲು ವಾಹನ ಕಡಿತಗೊಳಿಸಿದ ಶಾಸಕ ಎ.ಎಸ್. ಪೊನ್ನಣ್ಣ

0

ಮಡಿಕೇರಿ: ಮಧ್ಯಪ್ರಾಚ್ಯದಲ್ಲಿನ ಅಶಾಂತಿ ಹಾಗೂ ಜಾಗತಿಕ ತೈಲ ಕೊರತೆಯ ಆತಂಕದ ನಡುವೆ ಪ್ರಧಾನಿ ನರೇಂದ್ರ ಮೋದಿ ನೀಡಿದ್ದ ಮಿತವ್ಯಯದ ಕರೆಗೆ ವಿರಾಜಪೇಟೆ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಸ್ಪಂದಿಸಿದ್ದಾರೆ.

ಸರ್ಕಾರದಿಂದ ಕ್ಯಾಬಿನೆಟ್ ದರ್ಜೆಯ ಭದ್ರತೆ ಪಡೆದಿರುವ ಪೊನ್ನಣ್ಣ, ತಮ್ಮ ಬೆಂಗಾವಲು ವಾಹನಗಳ ಸಂಖ್ಯೆಯನ್ನು ಕಡಿತಗೊಳಿಸಲು ಸೂಚನೆ ನೀಡಿದ್ದಾರೆ.

ಈ ಕುರಿತು ಪ್ರಕಟಣೆ ಹೊರಡಿಸಿರುವ ಅವರು, ಜಾಗತಿಕ ಆರ್ಥಿಕ ಬಿಕ್ಕಟ್ಟು ಮತ್ತು ತೈಲ ಅಭಾವದ ಸಾಧ್ಯತೆಯಿಂದ ದೇಶದಲ್ಲಿ ಆತಂಕದ ಪರಿಸ್ಥಿತಿ ನಿರ್ಮಾಣವಾಗಿದೆ. ಪರಿಸರ ಮಾಲಿನ್ಯ ನಿಯಂತ್ರಣ ಹಾಗೂ ಇಂಧನ ಉಳಿತಾಯದ ದೃಷ್ಟಿಯಿಂದ ಅನಗತ್ಯ ವಾಹನ ಬಳಕೆಯನ್ನು ತಗ್ಗಿಸುವುದು ಅಗತ್ಯವಾಗಿದೆ ಎಂದು ಹೇಳಿದ್ದಾರೆ.

ಸದ್ಯದ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ತಮ್ಮ ಭದ್ರತಾ ವಾಹನಗಳ ಬಳಕೆಯನ್ನು ಕಡಿಮೆ ಮಾಡುವಂತೆ ಪೊಲೀಸ್ ಇಲಾಖೆಗೆ ಮನವಿ ಮಾಡಿರುವುದಾಗಿ ಪೊನ್ನಣ್ಣ ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ನೀಡಿದ್ದ ಮಿತವ್ಯಯದ ಕರೆ ಹಿನ್ನೆಲೆಯಲ್ಲಿ ರಾಜ್ಯ ರಾಜಕೀಯ ವಲಯದಲ್ಲಿ ಇದು ಗಮನ ಸೆಳೆಯುವ ಬೆಳವಣಿಗೆಯಾಗಿದೆ.

ಪ್ರೀತಿಗಾಗಿ ಧರ್ಮ ಬದಲಿಸಿದ ಯುವತಿ: ವಿಹೆಚ್‌ಪಿ ನೇತೃತ್ವದಲ್ಲಿ ಹಿಂದೂ ಧರ್ಮಕ್ಕೆ ಪುನರ್ಮತಾಂತರ

ಶಿವಮೊಗ್ಗ: ಪ್ರೀತಿಸಿದ ಯುವಕನನ್ನು ಹಿಂದೂ ಸಂಪ್ರದಾಯದಂತೆ ಮದುವೆಯಾಗುವ ಉದ್ದೇಶದಿಂದ ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದ ಯುವತಿಯೊಬ್ಬಳು ಮತ್ತೆ ಹಿಂದೂ ಧರ್ಮಕ್ಕೆ ಮರಳಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ನಡೆದಿದೆ.

ಮೂಲತಃ ಹಿಂದೂ ಧರ್ಮಕ್ಕೆ ಸೇರಿದ ಸಿಗೇಬಾಗಿ ಕುಟುಂಬ ಈ ಹಿಂದೆ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿತ್ತು. ಆದರೆ ಕುಟುಂಬದ ಯುವತಿ ಭದ್ರಾವತಿ ತಾಲೂಕಿನ ಅಂತರಗಂಗೆಯ ನಿವಾಸಿ ಎಂ. ಶಿವಕುಮಾರ್ ಅವರನ್ನು ಪ್ರೀತಿಸುತ್ತಿದ್ದರು. ಧರ್ಮ ಭಿನ್ನತೆಯಿಂದ ಮುಂದಿನ ದಿನಗಳಲ್ಲಿ ಸಮಸ್ಯೆಗಳು ಎದುರಾಗಬಹುದು ಎಂಬ ಕಾರಣ ನೀಡಿ ಯುವತಿ ಪುನಃ ಹಿಂದೂ ಧರ್ಮಕ್ಕೆ ಸೇರುವ ನಿರ್ಧಾರ ತೆಗೆದುಕೊಂಡಿದ್ದಾಳೆ.

ಭದ್ರಾವತಿಯ ವಿಶ್ವ ಹಿಂದೂ ಪರಿಷತ್ ನೇತೃತ್ವದಲ್ಲಿ ಈ ಪುನರ್ಮತಾಂತರ ಕಾರ್ಯಕ್ರಮ ನಡೆದಿದೆ. ಜನ್ನಾಪುರ ಮಹಾಗಣಪತಿ ದೇವಸ್ಥಾನದಲ್ಲಿ ಪ್ರಧಾನ ಅರ್ಚಕ ವೇ.ಬ್ರ. ಕೃಷ್ಣಮೂರ್ತಿ ಸೋಮಯಾಜಿ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಯಿತು.

ಮತಾಂತರದ ಬಳಿಕ ಯುವತಿಯ ಹೆಸರು ‘ಆರೋಗ್ಯಕರ ಪ್ರಿಯಾ’ಯಿಂದ ‘ಪ್ರಿಯಾ’ ಎಂದು ಬದಲಾಯಿಸಲಾಗಿದೆ. ಇದೇ ತಿಂಗಳ 24ರಂದು ವಿಹೆಚ್‌ಪಿ ಆಯೋಜಿಸಿರುವ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಪ್ರಿಯಾ ಮತ್ತು ಶಿವಕುಮಾರ್ ಹಿಂದೂ ಸಂಪ್ರದಾಯದಂತೆ ವಿವಾಹವಾಗಲಿದ್ದಾರೆ.

‘ನಾನು ಸ್ವಇಚ್ಛೆಯಿಂದ ಈ ನಿರ್ಧಾರ ತೆಗೆದುಕೊಂಡಿದ್ದೇನೆ. ಬೇರೆ ಧರ್ಮದಲ್ಲಿ ಇದ್ದರೆ ಭವಿಷ್ಯದಲ್ಲಿ ತೊಂದರೆ ಆಗಬಹುದು ಎಂದು ಅನಿಸಿತು. ಇಲ್ಲಿ ಎಲ್ಲರೂ ನನ್ನನ್ನು ಚೆನ್ನಾಗಿ ನೋಡಿಕೊಂಡಿದ್ದಾರೆ’ ಎಂದು ಪ್ರಿಯಾ ತಿಳಿಸಿದ್ದಾರೆ.

ಪ್ರಿಯಕರ ಶಿವಕುಮಾರ್ ಮಾತನಾಡಿ, ‘ವಿಶ್ವ ಹಿಂದೂ ಪರಿಷತ್ ನೇತೃತ್ವದಲ್ಲಿ ಎಲ್ಲ ವಿಧಿವಿಧಾನಗಳು ನಡೆದಿವೆ. ಪ್ರಿಯಾ ನನಗಾಗಿ ಹಿಂದೂ ಧರ್ಮಕ್ಕೆ ಬಂದಿದ್ದಾಳೆ. ತುಂಬಾ ಸಂತೋಷವಾಗಿದೆ’ ಎಂದು ಹೇಳಿದ್ದಾರೆ.

ಐಪಿಎಲ್ 2026: ವೀಕ್ಷಕರ ಸಂಖ್ಯೆ ಭಾರೀ ಹೆಚ್ಚಳ, ದಾಖಲೆ ಬರೆದ ಜಿಯೋಸ್ಟಾರ್!

ಮುಂಬೈ: IPL 2026 ಟೂರ್ನಿ ಪ್ಲೇಆಫ್ ಹಂತದತ್ತ ಸಾಗುತ್ತಿರುವಂತೆ ಕ್ರಿಕೆಟ್ ಅಭಿಮಾನಿಗಳ ಕುತೂಹಲ ಹೆಚ್ಚಾಗಿದೆ.

ಇದರ ನಡುವೆ ಅಧಿಕೃತ ಪ್ರಸಾರ ಸಂಸ್ಥೆಗಳಾದ ಜಿಯೋಸ್ಟಾರ್, ಟಿವಿ ಮತ್ತು ಡಿಜಿಟಲ್ ಪ್ಲಾಟ್ ಫಾರ್ಮ್‌ಗಳಾದ್ಯಂತ ವೀಕ್ಷಕರ ಸಂಖ್ಯೆಯಲ್ಲಿ ಸಾರ್ವಕಾಲಿಕ ದಾಖಲೆ ಬರೆದಿದೆ.

ಟೂರ್ನಿಯ ಒಟ್ಟಾರೆ ವೀಕ್ಷಕರ ಸಂಖ್ಯೆ 110 ಕೋಟಿ ದಾಟಿದ್ದು, ಇದು ಟೂರ್ನಿ ಇತಿಹಾಸದಲ್ಲೇ ಮಹತ್ವದ ಮೈಲಿಗಲ್ಲಾಗಿದೆ. ಟಿವಿ ವೀಕ್ಷಕರ ಸಂಖ್ಯೆ ಕೂಡ 50 ಕೋಟಿಯತ್ತ ಮುನ್ನಡೆಯುತ್ತಿದೆ ಎಂದು ಸಂಸ್ಥೆ ತಿಳಿಸಿದೆ.

ಡಿಜಿಟಲ್ ವೇದಿಕೆಗಳಲ್ಲಿ ವೀಕ್ಷಕರ ಸಂಖ್ಯೆ ಶೇ.15ರಷ್ಟು ಹೆಚ್ಚಳವಾಗಿದ್ದು, ವೀಕ್ಷಣೆಯ ಸಮಯವೂ ಶೇ.7ರಷ್ಟು ಏರಿಕೆಯಾಗಿದೆ.

ಇದೇ ವೇಳೆ ಕನೆಕ್ಟೆಡ್ ಟಿವಿ ವಿಭಾಗದಲ್ಲೂ ಭಾರೀ ಬೆಳವಣಿಗೆ ಕಂಡುಬಂದಿದೆ. ಈ ವಿಭಾಗದಲ್ಲಿ ವೀಕ್ಷಕರ ಸಂಖ್ಯೆ ಶೇ.25ರಷ್ಟು ಹೆಚ್ಚಳವಾಗಿದ್ದು, ವೀಕ್ಷಣೆಯ ಅವಧಿ ಶೇ.20ರಷ್ಟು ಏರಿಕೆಯಾಗಿದೆ ಎಂದು ಸಂಸ್ಥೆ ಮಾಹಿತಿ ನೀಡಿದೆ.

ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಭಾರೀ ಮಳೆ ಎಚ್ಚರಿಕೆ: 3 ದಿನ ಯೆಲ್ಲೋ ಅಲರ್ಟ್

ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಪರಿಣಾಮ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಮುಂದಿನ ಮೂರು ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ರಾಜಧಾನಿ ಬೆಂಗಳೂರಿಗೆ ಮೂರು ದಿನಗಳ ಕಾಲ ಯೆಲ್ಲೋ ಅಲರ್ಟ್ ಘೋಷಿಸಲಾಗಿದ್ದು, ನಗರದಲ್ಲಿ ಗುಡುಗು-ಮಿಂಚು ಸಹಿತ ಜೋರು ಮಳೆಯಾಗುವ ಸಾಧ್ಯತೆ ಇದೆ. ಅಲ್ಲದೆ ಗಂಟೆಗೆ 30 ರಿಂದ 40 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯೂ ಇದೆ ಎಂದು ಇಲಾಖೆ ತಿಳಿಸಿದೆ.

ರಾಜ್ಯದ ಒಳನಾಡು ಹಾಗೂ ಕರಾವಳಿ ಭಾಗಗಳ ಬಹುತೇಕ ಜಿಲ್ಲೆಗಳಲ್ಲಿ ಮಳೆಯ ಅಬ್ಬರ ಹೆಚ್ಚಾಗುವ ನಿರೀಕ್ಷೆಯಿದೆ. ಯಾದಗಿರಿ, ರಾಯಚೂರು, ಬಾಗಲಕೋಟೆ, ಕೊಪ್ಪಳ, ಧಾರವಾಡ, ಗದಗ, ಬಳ್ಳಾರಿ, ವಿಜಯನಗರ, ಹಾವೇರಿ, ದಾವಣಗೆರೆ, ಶಿವಮೊಗ್ಗ, ಚಿತ್ರದುರ್ಗ, ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಹಾಸನ, ತುಮಕೂರು, ಕೊಡಗು, ಮೈಸೂರು, ಮಂಡ್ಯ, ಚಾಮರಾಜನಗರ, ರಾಮನಗರ, ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ನಗರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಸಾರ್ವಜನಿಕರು ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಹವಾಮಾನ ಇಲಾಖೆ ಮನವಿ ಮಾಡಿದೆ.

ಬೆಂಗಳೂರು ಜನರಿಗೆ ಸಿಹಿ ಸುದ್ದಿ: ಇಂದಿನಿಂದ ಆಸ್ತಿಗಳ ಗೈಡೆನ್ಸ್ ವ್ಯಾಲ್ಯೂ ಇಳಿಕೆ!

ಬೆಂಗಳೂರು: ಸಿಲಿಕಾನ್ ಸಿಟಿ ಜನರಿಗೆ ರಾಜ್ಯ ಸರ್ಕಾರ ಮತ್ತೊಂದು ಗುಡ್ ನ್ಯೂಸ್ ನೀಡಿದೆ.

ಬಿ ಖಾತಾದಿಂದ ಎ ಖಾತಾಗೆ ಆಸ್ತಿ ಪರಿವರ್ತನೆ ಮಾಡಿಸಿಕೊಳ್ಳುವವರಿಗೆ ಗೈಡೆನ್ಸ್ ವ್ಯಾಲ್ಯೂ ದರದಲ್ಲಿ ಇಳಿಕೆ ಸೌಲಭ್ಯ ಇಂದಿನಿಂದ ಜಾರಿಯಾಗಿದೆ.

ಆಸ್ತಿಗಳ ಮೇಲೆ ವಿಧಿಸಲಾಗುತ್ತಿದ್ದ ಗೈಡೆನ್ಸ್ ವ್ಯಾಲ್ಯೂ ಶುಲ್ಕವನ್ನು  5% ನಿಂದ 2%ಗೆ ಇಳಿಕೆ ಮಾಡಲಾಗಿದ್ದು, ಈ ವಿಶೇಷ ಆಫರ್ ಇಂದಿನಿಂದ ಆರಂಭವಾಗಿ ಆಗಸ್ಟ್ 23ರವರೆಗೆ ಲಭ್ಯವಿರಲಿದೆ.

ಈಗಾಗಲೇ ಅರ್ಜಿ ಸಲ್ಲಿಸಿ ಅನುಮೋದನೆ ಪಡೆದಿದ್ದರೂ ಹಣ ಪಾವತಿ ಮಾಡದೇ ಇರುವವರಿಗೂ ಈ ಸೌಲಭ್ಯ ಅನ್ವಯವಾಗಲಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ರಾಜ್ಯ ಸರ್ಕಾರ ನೀಡಿರುವ ಈ 100 ದಿನಗಳ ಗಡುವು ಮುಗಿದ ಬಳಿಕ ಮತ್ತೆ ಹಿಂದಿನಂತೆ 5 ಶೇಕಡಾ ದರವೇ ಜಾರಿಗೆ ಬರಲಿದೆ. ಗಡುವು ಮುಗಿದ ನಂತರವೂ ಅಧಿಕಾರಿಗಳು ಕಡಿತ ದರದಲ್ಲಿ ಸೌಲಭ್ಯ ನೀಡಿದರೆ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸರ್ಕಾರ ಎಚ್ಚರಿಕೆ ನೀಡಿದೆ.

ನಟಿಗೆ ಕೀಳು ಸಂದೇಶ ಕಳಿಸಿ ಸಿಕ್ಕಿಬಿದ್ದ ಪೊಲೀಸ್: ಸ್ಕ್ರೀನ್‌ಶಾಟ್ ಸಮೇತ ಬಹಿರಂಗಪಡಿಸಿದ ಚೈತ್ರಾ ಆಚಾರ್

ಸಾಮಾಜಿಕ ಜಾಲತಾಣಗಳಲ್ಲಿ ಮಹಿಳೆಯರು ಹಾಗೂ ನಟಿಯರ ವಿರುದ್ಧ ನಡೆಯುತ್ತಿರುವ ಆನ್‌ಲೈನ್ ಕಿರುಕುಳ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದೆ. ಈ ಬಾರಿ ಕನ್ನಡ ನಟಿ ಚೈತ್ರಾ ಆಚಾರ್ ಅವರಿಗೆ ಅಸಭ್ಯ ಸಂದೇಶ ಕಳುಹಿಸಿದ್ದ ಆರೋಪದಡಿ ಪೊಲೀಸ್ ಇಲಾಖೆಯ ಸಿಬ್ಬಂದಿಯೊಬ್ಬನೇ ವಿವಾದದ ಕೇಂದ್ರಬಿಂದುವಾಗಿದ್ದಾನೆ.

ನಟಿ ಚೈತ್ರಾ ಆಚಾರ್ ಅವರಿಗೆ ಹೊಸಮನಿ ಎಂಬ ವ್ಯಕ್ತಿ ಕೀಳು ಮಟ್ಟದ ಸಂದೇಶ ಕಳುಹಿಸಿದ್ದಾನೆ ಎನ್ನಲಾಗಿದೆ. ಆತ ಪೊಲೀಸ್ ಇಲಾಖೆಗೆ ಸೇರಿದವನಾಗಿರುವುದು ಪ್ರಕರಣಕ್ಕೆ ಮತ್ತಷ್ಟು ಗಂಭೀರತೆ ತಂದಿದೆ.

ಘಟನೆಯ ನಂತರ ಚೈತ್ರಾ ಆಚಾರ್ ಯಾವುದೇ ಮುಲಾಜಿಲ್ಲದೆ ಆ ವ್ಯಕ್ತಿ ಕಳುಹಿಸಿದ್ದ ಸಂದೇಶಗಳ ಸ್ಕ್ರೀನ್‌ಶಾಟ್ ಹಾಗೂ ಫೋಟೋವನ್ನು ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಬೆಂಗಳೂರು ಪೊಲೀಸರನ್ನು ಟ್ಯಾಗ್ ಮಾಡಿ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ಪ್ರಕರಣ ವೈರಲ್ ಆದ ಬಳಿಕ ಆರೋಪಿಯು ನಟಿಗೆ ಕ್ಷಮೆಯಾಚನೆ ಸಲ್ಲಿಸಿದ್ದಾನೆ. ‘ತಪ್ಪಾಗಿದೆ, ನಿಮ್ಮ ಮೇಲಿನ ಕಾಳಜಿಯಿಂದಲೇ ಸಂದೇಶ ಕಳುಹಿಸಿದ್ದೆ. ಪೋಸ್ಟ್ ಡಿಲೀಟ್ ಮಾಡಿದರೆ ನನ್ನ ಕೆಲಸ ಉಳಿಯುತ್ತದೆ’ ಎಂದು ಮನವಿ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.

ಆದರೆ ನಟಿ ಇದಕ್ಕೂ ಮಣಿಯದೆ, ಆ ಕ್ಷಮೆಯಾಚನೆಯ ಸ್ಕ್ರೀನ್‌ಶಾಟ್‌ನನ್ನೂ ಸಾರ್ವಜನಿಕಗೊಳಿಸಿದ್ದಾರೆ. ‘ನನ್ನ ವೃತ್ತಿಯ ಬಗ್ಗೆ ಅವಹೇಳನ ಮಾಡುವಾಗ ಇದು ನೆನಪಾಗಲಿಲ್ಲವೇ?’ ಎಂದು ಪ್ರಶ್ನಿಸಿ ಆಕ್ರೋಶ ಹೊರಹಾಕಿದ್ದಾರೆ.

ಚೈತ್ರಾ ಆಚಾರ್ ಸಾಮಾಜಿಕ ಜಾಲತಾಣಗಳಲ್ಲಿ ಮಹಿಳೆಯರ ವಿರುದ್ಧ ನಡೆಯುವ ಕಿರುಕುಳದ ವಿರುದ್ಧ ನಿರಂತರವಾಗಿ ಧ್ವನಿ ಎತ್ತುತ್ತಿದ್ದು, ಅಸಭ್ಯ ವರ್ತನೆ ತೋರಿದವರನ್ನು ಸಾರ್ವಜನಿಕವಾಗಿ ಪ್ರಶ್ನಿಸುವ ಮೂಲಕ ಗಮನ ಸೆಳೆಯುತ್ತಿದ್ದಾರೆ.

ಸದ್ಯ ಅವರು ಕನ್ನಡದ ಜೊತೆಗೆ ತಮಿಳು ಹಾಗೂ ತೆಲುಗು ಸಿನಿಮಾಗಳಲ್ಲೂ ಸಕ್ರಿಯರಾಗಿದ್ದು, ಪ್ರಭಾಸ್ ನಟನೆಯ ‘ಫೌಜಿ’ ಸಿನಿಮಾದಲ್ಲೂ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಕಾನ್ ಇತಿಹಾಸದಲ್ಲೇ ಅತಿ ದುಬಾರಿ ಲುಕ್: 1300 ಕೋಟಿ ಮೌಲ್ಯದ ಗೌನ್‌ನಲ್ಲಿ ಊರ್ವಶಿ ಮಿಂಚಿಂಗ್‌

ಕಾನ್ ಚಲನಚಿತ್ರೋತ್ಸವವು ಕಳೆದ ಎರಡು ದಶಕಗಳಲ್ಲಿ ಕೇವಲ ಸಿನಿಮಾ ಹಬ್ಬವಾಗಿರದೆ, ಜಾಗತಿಕ ಫ್ಯಾಷನ್ ವೇದಿಕೆಯಾಗಿಯೂ ರೂಪಾಂತರಗೊಂಡಿದೆ. ಈ ವೇದಿಕೆಯಲ್ಲಿ ಭಾರತೀಯ ನಟಿ ಊರ್ವಶಿ ರೌಟೇಲಾ 2025ರಲ್ಲಿ ಧರಿಸಿದ್ದ ಲುಕ್ ಈಗಲೂ ವಿಶ್ವದ ಅತ್ಯಂತ ದುಬಾರಿ ಸೆಲೆಬ್ರಿಟಿ ರೆಡ್ ಕಾರ್ಪೆಟ್ ಅವತಾರಗಳಲ್ಲಿ ಒಂದಾಗಿ ದಾಖಲಾಗಿದೆ.

ಅಂತಾರಾಷ್ಟ್ರೀಯ ವರದಿಗಳ ಪ್ರಕಾರ, ಊರ್ವಶಿ ಅವರ ಸಂಪೂರ್ಣ ಕಾನ್ ಲುಕ್ ಮೌಲ್ಯ ಬರೋಬ್ಬರಿ 155.9 ಮಿಲಿಯನ್ ಡಾಲರ್, ಅಂದರೆ ಸುಮಾರು 1300 ಕೋಟಿ ರೂಪಾಯಿಗೂ ಅಧಿಕವಾಗಿತ್ತು.

ನಟಿ ಧರಿಸಿದ್ದ ಮೈಕಲ್ ಸಿಂಕೋ ವಿನ್ಯಾಸದ ವಿಶೇಷ ಗೌನ್ ಸಂಪೂರ್ಣ ಮೆಕ್ಸಿಕನ್ ಮೊಸಾಯಿಕ್ ಕಲಾಶೈಲಿಯಲ್ಲಿ ರೂಪುಗೊಂಡಿದ್ದು, ಅದರ ಮೌಲ್ಯ ಮಾತ್ರವೇ ಸುಮಾರು 4.8 ಮಿಲಿಯನ್ ಡಾಲರ್ ಎಂದು ಹೇಳಲಾಗಿದೆ. ಇದಲ್ಲದೇ ಅವರು ಕೈಯಲ್ಲಿ ಹಿಡಿದಿದ್ದ ಗಿಳಿ ಆಕಾರದ ಕ್ಲಚ್ ಬೆಲೆ ಸುಮಾರು 41 ಲಕ್ಷ ರೂಪಾಯಿ ಎಂದು ವರದಿಯಾಗಿತ್ತು.

ಆದರೆ ಈ ಲುಕ್‌ನ ಪ್ರಮುಖ ಆಕರ್ಷಣೆಯಾಗಿದ್ದದ್ದು ಅಪರೂಪದ ವಜ್ರಾಭರಣಗಳು. ಮೌಸಾಯೆಫ್ ರೆಡ್ ಡೈಮಂಡ್, ಒಪೆನ್‌ಹೈಮರ್ ಬ್ಲೂ ಡೈಮಂಡ್, ಡ್ರೆಸ್ಡೆನ್ ಗ್ರೀನ್ ಡೈಮಂಡ್ ಹಾಗೂ ಟಿಫಾನಿ ಯೆಲ್ಲೋ ಡೈಮಂಡ್ ಸೇರಿ ಹಲವು ಅಪರೂಪದ ವಜ್ರಗಳನ್ನು ಊರ್ವಶಿ ಧರಿಸಿದ್ದರು. ಈ ಆಭರಣಗಳ ಒಟ್ಟು ಮೌಲ್ಯವೇ 151 ಮಿಲಿಯನ್ ಡಾಲರ್ ಎಂದು ವರದಿಗಳು ತಿಳಿಸಿವೆ.

ಈ ಮೂಲಕ ಕಿಮ್ ಕರ್ದಾಶಿಯಾನ್ ಧರಿಸಿದ್ದ ಮರ್ಲಿನ್ ಮನ್ರೋ ಐಕಾನಿಕ್ ಡ್ರೆಸ್ ದಾಖಲೆಗೂ ಮೀರಿದ ಲುಕ್‌ನಲ್ಲಿ ಊರ್ವಶಿ ಕಾಣಿಸಿಕೊಂಡಿದ್ದರು ಎಂಬ ಚರ್ಚೆ ಅಂತರಾಷ್ಟ್ರೀಯ ಫ್ಯಾಷನ್ ವಲಯದಲ್ಲಿ ಭಾರೀ ಸದ್ದು ಮಾಡಿತ್ತು.

ಹಾಸನದಲ್ಲಿ ಖಾಸಗಿ ಬಸ್‌ಗೆ ಬೆಂಕಿ: 36 ಪ್ರಯಾಣಿಕರು ಕೂದಲೆಳೆ ಅಂತರದಲ್ಲಿ ಪಾರು!

ಹಾಸನ: ಮಂಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಖಾಸಗಿ ಬಸ್ಸೊಂದರ ಟೈರ್ ಸ್ಫೋಟಗೊಂಡು ಬೆಂಕಿ ಹೊತ್ತಿಕೊಂಡ ಘಟನೆ ಹಾಸನ ತಾಲೂಕಿನ ಶಾಂತಿಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ತಡರಾತ್ರಿ ನಡೆದಿದೆ.

ಬಸ್‌ನಲ್ಲಿ ಸುಮಾರು 36 ಪ್ರಯಾಣಿಕರಿದ್ದು, ಟೈರ್ ಸ್ಫೋಟವಾದ ತಕ್ಷಣ ಚಾಲಕ ಸಮಯಪ್ರಜ್ಞೆ ಮೆರೆದಿದ್ದು, ಬಸ್ ಅನ್ನು ತಕ್ಷಣ ನಿಲ್ಲಿಸಿ ಎಲ್ಲ ಪ್ರಯಾಣಿಕರನ್ನೂ ಸುರಕ್ಷಿತವಾಗಿ ಕೆಳಗಿಳಿಸಿದ್ದರಿಂದ ಭಾರಿ ಅನಾಹುತ ತಪ್ಪಿದಂತಾಗಿದೆ.

ಆದರೆ ಬೆಂಕಿಯ ತೀವ್ರತೆ ಹೆಚ್ಚಾಗಿದ್ದರಿಂದ ಪ್ರಯಾಣಿಕರ ಲಗೇಜ್‌, ಮೊಬೈಲ್‌ಗಳು ಹಾಗೂ ಇತರೆ ಬೆಲೆಬಾಳುವ ವಸ್ತುಗಳು ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿವೆ ಎಂದು ತಿಳಿದುಬಂದಿದೆ.

ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಧಾವಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದರು. ಘಟನೆಯಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಪ್ರಯಾಣಿಕರು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

‘ಮದುವೆಗೆ ಅವಸರ ಬೇಡ, ಮಕ್ಕಳ ಬದಲು ನಾಯಿಗಳನ್ನು ಸಾಕಿ’: ಶೆಫಾಲಿ ಶಾ ಹೇಳಿಕೆ ವೈರಲ್

ಬಾಲಿವುಡ್‌ನ ಖ್ಯಾತ ನಟಿ ಶೆಫಾಲಿ ಶಾ ಮದುವೆ, ಸಂಬಂಧಗಳು ಹಾಗೂ ಪೋಷಕತ್ವದ ಕುರಿತು ನೀಡಿರುವ ನೇರ ಹೇಳಿಕೆಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿವೆ.

ಲಿಲ್ಲಿ ಸಿಂಗ್ ಜೊತೆಗಿನ ಸಂದರ್ಶನದಲ್ಲಿ ಮಾತನಾಡಿದ ಶೆಫಾಲಿ, ಭಾವನಾತ್ಮಕವಾಗಿ ಪ್ರಬುದ್ಧರಾಗುವ ಮುನ್ನ ಯುವಕರು ಮದುವೆಯಂತಹ ಜೀವನದ ನಿರ್ಣಾಯಕ ಹೆಜ್ಜೆ ಇಡಬಾರದು ಎಂದು ಹೇಳಿದ್ದಾರೆ.

‘ಚಿಕ್ಕ ವಯಸ್ಸಿನಲ್ಲಿ ನಿಮಗೆ ನಿಮ್ಮ ಬಗ್ಗೆ ಸರಿಯಾದ ಅರಿವು ಇರುವುದಿಲ್ಲ. ಜೀವನದಲ್ಲಿ ಏನು ಬೇಕು, ಯಾವ ರೀತಿಯ ಸಂಬಂಧ ಬೇಕು ಎಂಬುದನ್ನು ತಿಳಿದುಕೊಳ್ಳುವ ಮುನ್ನ ಮದುವೆಯಾಗುವುದು ಸರಿಯಲ್ಲ. ಮದುವೆ ಎಂಬ ವ್ಯವಸ್ಥೆಯನ್ನು ನಂಬದಿದ್ದರೆ ಅದರಲ್ಲಿ ಕಾಲಿಡಬೇಡಿ’ ಎಂದು ಅವರು ಸ್ಪಷ್ಟವಾಗಿ ಹೇಳಿದ್ದಾರೆ.

ಇದೇ ವೇಳೆ, ‘ನನ್ನ ಮಾತಿಗೆ ಟ್ರೋಲ್ ಆಗಬಹುದು. ಆದರೂ ಹೇಳುತ್ತೇನೆ, ಮಕ್ಕಳನ್ನು ಮಾಡಿಕೊಳ್ಳುವುದಕ್ಕಿಂತ ನಾಯಿಗಳನ್ನು ಸಾಕಿ. ನಾಯಿಗಳು ಮಾತ್ರವೇ ಯಾವುದೇ ಷರತ್ತಿಲ್ಲದ ಪ್ರೀತಿ ಕೊಡುತ್ತವೆ’ ಎಂದು ಶೆಫಾಲಿ ಹೇಳಿಕೆ ನೀಡಿದ್ದಾರೆ.

ಅವರ ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಂಬಂಧಗಳು ಮತ್ತು ಪೋಷಕತ್ವದ ಕುರಿತು ಹೊಸ ಚರ್ಚೆಗೆ ಕಾರಣವಾಗಿದೆ.

ಶೆಫಾಲಿ ಶಾ ತಮ್ಮ ವೈಯಕ್ತಿಕ ಜೀವನದಲ್ಲೂ ಸಾಕಷ್ಟು ಏಳು-ಬೀಳುಗಳನ್ನು ಕಂಡಿದ್ದಾರೆ. ಮೊದಲ ಪತಿ ಹರ್ಷ್ ಛಾಯಾ ಅವರಿಂದ ದೂರಾದ ಬಳಿಕ, 2000ರಲ್ಲಿ ನಿರ್ಮಾಪಕ ವಿಪುಲ್ ಅಮೃತ್ಲಾಲ್ ಶಾ ಅವರನ್ನು ವಿವಾಹವಾಗಿದ್ದರು.

error: Content is protected !!