Home Blog Page 4

15ವರ್ಷ ಅಲೆದ್ರೂ ಸಿಗಲಿಲ್ಲ ಸೂರು!

ವಿಜಯಸಾಕ್ಷಿ ಸುದ್ದಿ, ಮುಳಗುಂದ: ಸ್ಥಳೀಯ ಪಟ್ಟಣ ಪಂಚಾಯಿತಿಯಿಂದ 2012ರಿಂದ ಕಡುಬಡವರು ಹಾಗೂ ನಿರ್ಗತಿಕರಿಗೆ ಹಂಚಿಕೆಯಾಗಬೇಕಿದ್ದ ನಿವೇಶನಗಳು ಇಂದಿಗೂ ವಿತರಣೆಯಾಗದಿರುವುದನ್ನು ಖಂಡಿಸಿ ಪಟ್ಟಣದ ಮಹಿಳೆಯರು ಪಪಂ ಕಾರ್ಯಾಲಯಕ್ಕೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ಕಳೆದ ಹದಿನೈದು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ನಿವೇಶನ ಹಂಚಿಕೆ ಸದಸ್ಯರ ಆಡಳಿತಾವಧಿಯಲ್ಲಿಯೂ ಪೂರ್ಣಗೊಂಡಿಲ್ಲ ಎಂದು ಮಹಿಳೆಯರು ಆರೋಪಿಸಿದರು. ಸುಮಾರು 4000 ಅರ್ಜಿಗಳ ಪೈಕಿ 373 ಫಲಾನುಭವಿಗಳ ಹೆಸರಿನ ತಾತ್ಕಾಲಿಕ ಪಟ್ಟಿ ಪ್ರಕಟಿಸಲಾಗಿತ್ತು. ಆದರೆ ಸರಿಯಾದ ರೀತಿಯಲ್ಲಿ ಹಂಚಿಕೆ ಪ್ರಕ್ರಿಯೆ ನಡೆಯದೇ ತಟಸ್ಥ ಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿದರು.
ಉಸ್ತುವಾರಿ ಸಚಿವರು ಪರಿಶೀಲನೆ ನಡೆಸಿ ನಿವೇಶನ ಹಂಚಿಕೆ ಮಾಡುವಂತೆ ಜಿಲ್ಲಾಧಿಕಾರಿ, ಆಡಳಿತಾಧಿಕಾರಿ ಹಾಗೂ ಮುಖ್ಯಾಧಿಕಾರಿಗಳಿಗೆ ಸೂಚನೆ ನೀಡಿದ್ದರು. ಅವರ ಸೂಚನೆಯಂತೆ ಪರಿಶೀಲನೆಯೂ ನಡೆದಿತ್ತು. ಆದರೆ ಅಂತಿಮ ಹಂಚಿಕೆ ಕಾರ್ಯ ಮಾತ್ರ ಇನ್ನೂ ಆರಂಭವಾಗಿಲ್ಲ ಎಂದು ಮಹಿಳೆಯರು ಕಿಡಿಕಾರಿದರು.
ಕಳೆದ ವಾರ ಪಪಂ ಕಚೇರಿಗೆ ಬಂದಾಗ ಮುಖ್ಯಾಧಿಕಾರಿ ಸೋಮವಾರ ಬರುವಂತೆ ತಿಳಿಸಿದ್ದರು. ಆದರೆ ಸೋಮವಾರ ಬಂದಾಗ ಮುಖ್ಯಾಧಿಕಾರಿಯೇ ಕಾರ್ಯಾಲಯದಲ್ಲಿ ಇರಲಿಲ್ಲ. “ಕಳೆದ ಹಲವು ವರ್ಷಗಳಿಂದ ನಾವು ಹೀಗೆಯೇ ಕಚೇರಿಗೆ ಸುತ್ತಿ ಸಾಕಾಗಿದೆ. ಆದರೆ ಅಂದು ಬಾ, ಇಂದು ಬಾ ಎಂದು ಹೇಳುತ್ತಿದ್ದು, ನಿವೇಶನ ರಹಿತರ ಬಗ್ಗೆ ಅಧಿಕಾರಿಗಳಿಗೆ ಕಾಳಜಿಯೇ ಇಲ್ಲವಾಗಿದೆ” ಎಂದು ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದರು.
ಈ ಹಿಂದೆ ಒಂದು ಪಟ್ಟಿ ಸದಸ್ಯರ ಅವಧಿಯಲ್ಲಿ ಸಿದ್ಧವಾಗಿತ್ತು. ಆದರೆ ನಿವೇಶನ ಹಂಚಿಕೆಯಲ್ಲಿ ಭಾರೀ ಅಕ್ರಮ ನಡೆದಿದೆ ಎಂದು ಆರೋಪಿಸಿದರು. ಈಗಾಗಲೇ ಮನೆ ಹೊಂದಿರುವವರಿಗೆ, ಎರಡು-ಮೂರು ಅಂತಸ್ತಿನ ಕಟ್ಟಡ ಹೊಂದಿರುವವರಿಗೆ, ಒಂದೇ ಕುಟುಂಬದ ಇಬ್ಬರು-ಮೂರು ಜನರಿಗೆ, ಸದಸ್ಯರ ಹಿಂಬಾಲಕರಿಗೆ, ಸದಸ್ಯರ ಸೊಸೆಯಂದಿರು ಹಾಗೂ ಹೆಂಡತಿಯರಿಗೆ ನಿವೇಶನ ನೀಡಲಾಗಿದೆ. ಆದರೆ ನಿಜವಾದ ಬಡವರಿಗೆ ನಿವೇಶನ ನೀಡದೇ ಸರ್ಕಾರದ ನೀತಿ-ನಿಯಮಗಳನ್ನು ಗಾಳಿಗೆ ತೂರಿ ಅವೈಜ್ಞಾನಿಕವಾಗಿ ಹಂಚಿಕೆ ಮಾಡಲಾಗಿದೆ ಎಂದು ದೂರಿದರು.
ಈ ನಿವೇಶನಗಳಿಗಾಗಿ 2012, 2017 ಹಾಗೂ 2024ರಲ್ಲಿ ಹಲವು ಬಾರಿ ಅರ್ಜಿ ಸಲ್ಲಿಸಿ ಸಾವಿರಾರು ರೂಪಾಯಿ ಖರ್ಚು ಮಾಡಿಕೊಂಡಿದ್ದೇವೆ. ಆದರೂ ನಮಗೆ ಸ್ವಂತ ಮನೆ ಇಲ್ಲದೆ ಬಾಡಿಗೆ ಮನೆಯಲ್ಲಿ ಜೀವನ ಸಾಗಿಸುತ್ತಿದ್ದೇವೆ. ಬಾಡಿಗೆ ಮನೆಯ ಕಷ್ಟ ತಪ್ಪಿಸುವಂತೆ ಮಹಿಳೆಯರು ಮನವಿ ಮಾಡಿದರು.
ಮುಖ್ಯಾಧಿಕಾರಿಗಳಿಗೆ ದೂರವಾಣಿ ಕರೆ ಮಾಡಿದಾಗ ಅವರು ಬೆಂಗಳೂರಿಗೆ ತೆರಳಿರುವುದಾಗಿ ತಿಳಿಸಿ, ಶುಕ್ರವಾರ ಬರುವಂತೆ ಹೇಳಿದ್ದಾರೆ. ಅಷ್ಟರೊಳಗೆ ಸಮಸ್ಯೆ ಬಗೆಹರಿಯದಿದ್ದರೆ ಇನ್ನಷ್ಟು ಮಹಿಳೆಯರನ್ನು ಸೇರಿಸಿ ಉಗ್ರ ಹೋರಾಟ ನಡೆಸುವುದಾಗಿ ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದಾರೆ.
“2012ರಿಂದ ಬಾಡಿಗೆ ಮನೆಯಲ್ಲಿದ್ದೇವೆ. ಅಂದಿನಿಂದಲೇ ಅರ್ಜಿ ಸಲ್ಲಿಸುತ್ತಿದ್ದೇವೆ. ದುಡಿಮೆ ಬಿಟ್ಟು ಕಾರ್ಯಾಲಯಕ್ಕೆ ಅಲೆದು ಸಾಕಾಗಿದೆ. ಈ ಬಾರಿ ಪಟ್ಟಿಯಲ್ಲಿ ನನ್ನ ಹೆಸರು ಬಂದರೂ ನಿವೇಶನ ನೀಡಿಲ್ಲ.”
ಯಾಸ್ಮಿನ್ ಬೇಗಂ ಇಬ್ರಾಹಿಂಸಾಬ ಮಕಾಂದಾರ
ವಾರ್ಡ್ ನಂ.17ರ ನಿವಾಸಿ

ಜಿ.ಎಸ್. ಪಾಟೀಲರಿಗೆ ಸಚಿವ ಸ್ಥಾನಕ್ಕಾಗಿ ಅಲೈದೇವರಿಗೆ ಹರಕೆ..!

ವಿಜಯಸಾಕ್ಷಿ ಸುದ್ದಿ, ರೋಣ: ಶಾಸಕ ಜಿ. ಎಸ್. ಪಾಟೀಲ ಅವರಿಗೆ ಈ ಬಾರಿ ಸಚಿವ ಸ್ಥಾನ ದೊರಕಲಿ ಎಂದು ಮುದ್ಗಲ್ ಅಲೈದೇವರಲ್ಲಿ ಹರಕೆ ಹೊತ್ತು 51 ಕೆಜಿ ಸಕ್ಕರೆ ನೈವೇದ್ಯ ಅರ್ಪಿಸುವುದಾಗಿ ಕಾಂಗ್ರೆಸ್ ಮುಖಂಡರು ಘೋಷಿಸಿದ್ದಾರೆ.
ಸೋಮವಾರ ನಿಡಗುಂದಿ ಗ್ರಾಮದ ಕಾಂಗ್ರೆಸ್ ಪಕ್ಷದ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ತಾಪಂ ಮಾಜಿ ಸದಸ್ಯ ಅಂದಪ್ಪ ಬಿಚ್ಚೂರ, “ರಾಜ್ಯದಲ್ಲೇ ಅತ್ಯಂತ ವಿಜೃಂಭಣೆಯಿಂದ ನಡೆಯುವ ಮುದ್ಗಲ್ ಮೊಹರಂ ಹಬ್ಬ ತನ್ನದೇ ಆದ ಇತಿಹಾಸ ಹೊಂದಿದೆ. ಲಕ್ಷಾಂತರ ಭಕ್ತರ ನಂಬಿಕೆಯ ಕೇಂದ್ರವಾಗಿರುವ ಅಲೈದೇವರು ಭಕ್ತರ ಇಚ್ಛೆಗಳನ್ನು ಈಡೇರಿಸುವ ಶಕ್ತಿ ಹೊಂದಿದೆ. ಹೀಗಾಗಿ ಶಾಸಕ ಜಿ. ಎಸ್. ಪಾಟೀಲರಿಗೆ ಸಚಿವ ಸ್ಥಾನ ದೊರಕಲಿ ಎಂದು ಈ ಬಾರಿ ವಿಶೇಷ ಹರಕೆ ಹೊತ್ತಿದ್ದೇವೆ” ಎಂದು ಹೇಳಿದರು.
“ಪ್ರತಿ ವರ್ಷ ಮೊಹರಂ ಸಂದರ್ಭದಲ್ಲಿ ಮುದ್ಗಲ್‌ಗೆ ತೆರಳಿ ಅಲೈದೇವರ ದರ್ಶನ ಪಡೆದುಕೊಳ್ಳುತ್ತೇವೆ. ಈ ಬಾರಿಯೂ ದೇವರ ದರ್ಶನಕ್ಕೆ ತೆರಳುತ್ತಿದ್ದು, ಸಚಿವ ಸ್ಥಾನಕ್ಕಾಗಿ ಪ್ರಾರ್ಥನೆ ಸಲ್ಲಿಸಿ ದೇವರಿಗೆ ಸಕ್ಕರೆ ನೈವೇದ್ಯ ಅರ್ಪಿಸುತ್ತೇವೆ” ಎಂದು ತಿಳಿಸಿದರು.
ಗ್ರಾಪಂ ಮಾಜಿ ಸದಸ್ಯ ಪಕ್ಕೀರಪ್ಪ ಕುಕನೂರ ಮಾತನಾಡಿ, “ಜಿ. ಎಸ್. ಪಾಟೀಲರು ಸಮಾಜಮುಖಿ ಹಾಗೂ ಜಾತ್ಯಾತೀತ ತತ್ವಗಳನ್ನು ಹೊಂದಿರುವ ನಾಯಕರಾಗಿದ್ದಾರೆ. ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಅವರಿಗೆ ಪಕ್ಷದ ವರಿಷ್ಠರು ಸಚಿವ ಸ್ಥಾನ ನೀಡಬೇಕು ಎನ್ನುವುದು ನಮ್ಮ ಆಗ್ರಹ” ಎಂದರು.
“ನಾವು ನಂಬಿಕೊಂಡಿರುವ ಮುದ್ಗಲ್ ಅಲೈದೇವರಿಗೆ ಮೊಹರಂ ಹಬ್ಬದಲ್ಲಿ 51 ಕೆಜಿ ಸಕ್ಕರೆ ನೈವೇದ್ಯ ಸಮರ್ಪಿಸಲು ಹರಕೆ ಹೊತ್ತಿದ್ದೇವೆ. ಅಲೈದೇವರು ಶಾಸಕ ಜಿ. ಎಸ್. ಪಾಟೀಲರಿಗೆ ಆಶೀರ್ವದಿಸಲಿದ್ದಾರೆ ಎಂಬ ವಿಶ್ವಾಸ ನಮಗಿದೆ” ಎಂದು ಹೇಳಿದರು.
“ಜಿ. ಎಸ್. ಪಾಟೀಲರು ದೈವಭಕ್ತಿಯುಳ್ಳ ವ್ಯಕ್ತಿಯಾಗಿದ್ದು, ಈ ಬಾರಿ ಅವರಿಗೆ ಸಚಿವ ಸ್ಥಾನ ಸಿಗಲಿದೆ” ಎಂದು ಅವರು ಆಶಾಭಾವನೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ನಿದ್ರೆಗೆ ಅಡ್ಡಿಯಾಗುತ್ತಿರುವ ಈ ವಿಟಮಿನ್ ಕೊರತೆಗಳು! ತಜ್ಞರ ಸಲಹೆ

ಇತ್ತೀಚಿನ ದಿನಗಳಲ್ಲಿ ಅನೇಕರು ನಿದ್ರಾಹೀನತೆ, ಮಧ್ಯರಾತ್ರಿ ಪದೇ ಪದೇ ಎಚ್ಚರವಾಗುವುದು ಮತ್ತು ಸಾಕಷ್ಟು ನಿದ್ರೆ ಮಾಡಿದರೂ ದಣಿವು ಅನುಭವಿಸುವ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.

ಸಾಮಾನ್ಯವಾಗಿ ಇದನ್ನು ಒತ್ತಡ ಮತ್ತು ಬ್ಯುಸಿ ಜೀವನಶೈಲಿಗೆ ಸಂಬಂಧಿಸಿದಂತೆ ನೋಡಲಾಗುತ್ತದೆ. ಆದರೆ ತಜ್ಞರ ಪ್ರಕಾರ ದೇಹದಲ್ಲಿನ ಕೆಲವು ಅಗತ್ಯ ಪೋಷಕಾಂಶಗಳ ಕೊರತೆಯೂ ನಿದ್ರೆಯ ಗುಣಮಟ್ಟವನ್ನು ಹಾಳು ಮಾಡಬಹುದು.

ವೈದ್ಯರ ಮಾಹಿತಿ ಪ್ರಕಾರ ವಿಟಮಿನ್ ಡಿ, ವಿಟಮಿನ್ ಬಿ12, ಮ್ಯಾಗ್ನೀಶಿಯಂ ಮತ್ತು ಐರನ್ ದೇಹದ ನಿದ್ರೆ ನಿಯಂತ್ರಣ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಇವುಗಳ ಕೊರತೆಯಿಂದ ನಿದ್ರೆ ಸರಿಯಾಗಿ ಬಾರದಿರುವುದು, ದಣಿವು ಮತ್ತು ಮಾನಸಿಕ ಅಸ್ಥಿರತೆ ಕಾಣಿಸಿಕೊಳ್ಳಬಹುದು.

ವಿಟಮಿನ್ ಡಿ ಕೊರತೆಯಿಂದ ನಿದ್ರೆಯ ಅವಧಿ ಹಾಗೂ ಗುಣಮಟ್ಟ ಕಡಿಮೆಯಾಗುವ ಸಾಧ್ಯತೆ ಇದೆ. ವಿಟಮಿನ್ ಬಿ12 ನರಮಂಡಲದ ಆರೋಗ್ಯಕ್ಕೆ ಅಗತ್ಯವಾಗಿದ್ದು, ಇದರ ಕೊರತೆಯಿಂದ ಪದೇ ಪದೇ ನಿದ್ರೆ ಭಂಗವಾಗಬಹುದು. ಮ್ಯಾಗ್ನೀಶಿಯಂ ದೇಹವನ್ನು ಶಾಂತಗೊಳಿಸಲು ಸಹಾಯ ಮಾಡುತ್ತದೆ; ಇದರ ಕೊರತೆಯಿಂದ ಆತಂಕ ಹಾಗೂ ನಿದ್ರಾಹೀನತೆ ಹೆಚ್ಚಾಗಬಹುದು. ಐರನ್ ಕೊರತೆಯಿಂದ ದೇಹಕ್ಕೆ ಆಮ್ಲಜನಕ ಸರಿಯಾಗಿ ಸರಬರಾಜಾಗದೆ ದಣಿವು ಮತ್ತು ಅಶಾಂತಿ ಉಂಟಾಗಬಹುದು.

ನಿರಂತರ ದಣಿವು, ಗಮನ ಕೇಂದ್ರೀಕರಣ ಕಷ್ಟ, ಮನಸ್ಥಿತಿಯಲ್ಲಿ ಬದಲಾವಣೆ, ತಲೆನೋವು ಹಾಗೂ ರಾತ್ರಿ ಸರಿಯಾಗಿ ನಿದ್ರೆ ಬರದಿರುವಂತಹ ಲಕ್ಷಣಗಳು ದೀರ್ಘಕಾಲ ಮುಂದುವರಿದರೆ ವೈದ್ಯರ ಸಲಹೆಯೊಂದಿಗೆ ಅಗತ್ಯ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ ಎಂದು ತಜ್ಞರು ಸಲಹೆ ನೀಡುತ್ತಾರೆ.

ಚೆನ್ನಾಗಿ ನಿದ್ರೆ ಬರಲು ಪ್ರತಿದಿನ ಒಂದೇ ಸಮಯಕ್ಕೆ ಮಲಗುವ ಅಭ್ಯಾಸ ಬೆಳೆಸಿಕೊಳ್ಳುವುದು, ಮಲಗುವ ಮೊದಲು ಮೊಬೈಲ್ ಬಳಕೆ ಕಡಿಮೆ ಮಾಡುವುದು, ಸಮತೋಲಿತ ಆಹಾರ ಸೇವನೆ, ನಿಯಮಿತ ವ್ಯಾಯಾಮ, ಯೋಗ ಹಾಗೂ ಧ್ಯಾನ ಅನುಸರಿಸುವುದು ಸಹಾಯಕವಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.

ಶಾಲೆಯಂಗಳದಲ್ಲಿ ಮತ್ತೆ ಮೊಳಗಿದ ಮಕ್ಕಳ ಕಲರವ..!

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಬೇಸಿಗೆ ರಜೆಯ ಬಳಿಕ ಮತ್ತೆ ಶಾಲೆಯತ್ತ ಮರಳಿದ ಮಕ್ಕಳ ಕಿಲಕಿಲ ನಗು, ಹೂವಿನ ಸ್ವಾಗತ, ಬಣ್ಣಬಣ್ಣದ ರಂಗೋಲಿ ಹಾಗೂ ಸಂಭ್ರಮದ ವಾತಾವರಣದಿಂದ ಸಮೀಪದ ಜಕ್ಕಲಿ ಗ್ರಾಮದ ಶ್ರೀ ಅಂದಾನಪ್ಪ ಜ್ಞಾನಪ್ಪ ದೊಡ್ಡಮೇಟಿ ಸರ್ಕಾರಿ ಪ್ರೌಢಶಾಲೆ ಸೋಮವಾರ ಹಬ್ಬದ ಮನೆಯಂತೆ ಕಂಗೊಳಿಸಿತು.
2026-27ನೇ ಶೈಕ್ಷಣಿಕ ಸಾಲಿನ ಶಾಲಾ ಪ್ರಾರಂಭೋತ್ಸವ, ದಾಖಲಾತಿ ಆಂದೋಲನ ಹಾಗೂ ಪಾಲಕ-ಪೋಷಕರ ಮಹಾಸಭೆ ಶಾಲೆಯಲ್ಲಿ ಅತ್ಯಂತ ಅರ್ಥಪೂರ್ಣವಾಗಿ ಮತ್ತು ಸಡಗರದಿಂದ ನೆರವೇರಿತು.
ಶಾಲಾ ಆವರಣವನ್ನು ತಳಿರು ತೋರಣ, ಹೂವಿನ ಅಲಂಕಾರ, ಸ್ವಾಗತ ಫಲಕ ಹಾಗೂ ಆಕರ್ಷಕ ರಂಗೋಲಿಗಳಿಂದ ಸಿಂಗರಿಸಲಾಗಿತ್ತು. ಶಾಲೆಗೆ ಆಗಮಿಸಿದ ಮಕ್ಕಳನ್ನು ಶಿಕ್ಷಕರು, ಎಸ್‌ಡಿಎಂಸಿ ಸದಸ್ಯರು ಹಾಗೂ ಪಾಲಕರು ಪುಷ್ಪವೃಷ್ಟಿ, ಆರತಿ, ಗುಲಾಬಿ ಹೂವು ಹಾಗೂ ಸಿಹಿ ಹಂಚುವ ಮೂಲಕ ಆತ್ಮೀಯವಾಗಿ ಬರಮಾಡಿಕೊಂಡರು. ಮಕ್ಕಳ ಮುಖದಲ್ಲಿದ್ದ ನಗು ಮತ್ತು ಉತ್ಸಾಹ ಶಾಲೆಯ ಆವರಣಕ್ಕೆ ಹೊಸ ಚೈತನ್ಯ ತುಂಬಿದಂತಿತ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಖ್ಯ ಶಿಕ್ಷಕಿ ಎಂ. ಶಾರದಮ್ಮ ವಹಿಸಿದ್ದರು. ಉದ್ಘಾಟನೆ ನೆರವೇರಿಸಿ ಮಾತನಾಡಿದ ಎಸ್‌ಡಿಎಂಸಿ ಅಧ್ಯಕ್ಷೆ ಸುಜಾತಾ ಕಮ್ಮಾರ, “ಶಿಕ್ಷಣವು ಪ್ರತಿಯೊಬ್ಬ ಮಗುವಿನ ಮೂಲಭೂತ ಹಕ್ಕು. ಗ್ರಾಮೀಣ ಭಾಗದ ಮಕ್ಕಳ ಸರ್ವಾಂಗೀಣ ಬೆಳವಣಿಗೆಯಲ್ಲಿ ಸರ್ಕಾರಿ ಶಾಲೆಗಳು ಮಹತ್ವದ ಪಾತ್ರ ವಹಿಸುತ್ತಿವೆ” ಎಂದು ಹೇಳಿದರು.
ಪಾಲಕರು ತಮ್ಮ ಮಕ್ಕಳ ಶಿಕ್ಷಣದ ಬಗ್ಗೆ ಹೆಚ್ಚಿನ ಗಮನಹರಿಸಿ ಶಾಲೆಯೊಂದಿಗೆ ನಿರಂತರ ಸಂಪರ್ಕದಲ್ಲಿರಬೇಕು ಎಂದು ಅವರು ಸಲಹೆ ನೀಡಿದರು.
ದಾಖಲಾತಿ ಆಂದೋಲನದ ಅಂಗವಾಗಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಗ್ರಾಮದ ಪ್ರಮುಖ ಬೀದಿಗಳಲ್ಲಿ ಪ್ರಭಾತಫೇರಿ ನಡೆಸಿದರು. “ಪ್ರತಿಯೊಬ್ಬ ಮಗು ಶಾಲೆಗೆ – ಪ್ರತಿಯೊಂದು ಮನೆ ಶಿಕ್ಷಣದ ಬೆಳಕಿಗೆ”, “ಶಿಕ್ಷಣವೇ ಜೀವನದ ನಿಜವಾದ ಸಂಪತ್ತು”, “ಓದಿ ಬೆಳೆಯೋಣ – ದೇಶ ಕಟ್ಟೋಣ” ಎಂಬ ಘೋಷಣೆಗಳನ್ನು ಕೂಗುತ್ತ ಶಿಕ್ಷಣದ ಮಹತ್ವದ ಬಗ್ಗೆ ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸಿದರು.
ಗ್ರಾಮಸ್ಥರು ಕೂಡ ಮಕ್ಕಳ ದಾಖಲಾತಿ ಹೆಚ್ಚಿಸಲು ಸಹಕರಿಸುವುದಾಗಿ ಭರವಸೆ ನೀಡಿದರು.
ನಂತರ ನಡೆದ ಪಾಲಕ-ಪೋಷಕರ ಮಹಾಸಭೆಯಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆ, ಹಾಜರಾತಿ, ಕಲಿಕಾ ಗುಣಮಟ್ಟ, ಶಿಸ್ತು, ಕ್ರೀಡೆ ಹಾಗೂ ಪಠ್ಯೇತರ ಚಟುವಟಿಕೆಗಳ ಕುರಿತು ಸವಿಸ್ತಾರ ಚರ್ಚೆ ನಡೆಯಿತು. ಶಾಲೆಯ ಅಭಿವೃದ್ಧಿ ಹಾಗೂ ಮಕ್ಕಳ ಭವಿಷ್ಯದ ಕುರಿತು ಪಾಲಕರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.
ಶಿಕ್ಷಕರು ಮಕ್ಕಳ ನಿಯಮಿತ ಹಾಜರಾತಿ ಹಾಗೂ ಮನೆಯಲ್ಲಿ ಅಧ್ಯಯನದ ವಾತಾವರಣ ನಿರ್ಮಿಸುವ ಅಗತ್ಯವನ್ನು ಪಾಲಕರಿಗೆ ಮನವರಿಕೆ ಮಾಡಿಕೊಟ್ಟರು.
ಹೊಸ ಶೈಕ್ಷಣಿಕ ವರ್ಷದ ಅಂಗವಾಗಿ ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕಗಳನ್ನು ವಿತರಿಸಲಾಯಿತು. ಬಳಿಕ ಮಧ್ಯಾಹ್ನದ ಬಿಸಿಯೂಟ ಯೋಜನೆಗೂ ಚಾಲನೆ ನೀಡಲಾಗಿದ್ದು, ವಿದ್ಯಾರ್ಥಿಗಳು ಒಟ್ಟಾಗಿ ಊಟ ಮಾಡುವ ಮೂಲಕ ಸಹಬಾಳ್ವೆಯ ಮೌಲ್ಯಗಳನ್ನು ಅರಿತುಕೊಂಡರು.
ಕಾರ್ಯಕ್ರಮದಲ್ಲಿ ಶಿಕ್ಷಕರಾದ ವಿ. ವಿ. ಅಣ್ಣಿಗೇರಿ, ಆರ್. ಡಿ. ಬಡಿಗೇರ, ನೆಹರು ಮನೋಳಿ, ಗೌರಮ್ಮ, ಯು. ಎಸ್. ಕಣವಿ, ಎಸ್. ವಿ. ಗುಗ್ಗರಿ, ಎಸ್‌ಡಿಎಂಸಿ ಸದಸ್ಯರು, ಪಾಲಕ-ಪೋಷಕರು, ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಒಟ್ಟಾರೆಯಾಗಿ ಶಿಕ್ಷಣದ ಹಬ್ಬದಂತಿದ್ದ ಈ ಕಾರ್ಯಕ್ರಮವು ಶಾಲೆ, ಪಾಲಕರು ಹಾಗೂ ಗ್ರಾಮಸ್ಥರ ನಡುವಿನ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸಿದ್ದು, ಹೊಸ ಶೈಕ್ಷಣಿಕ ವರ್ಷಕ್ಕೆ ಆಶಾದಾಯಕ ಮತ್ತು ಅರ್ಥಪೂರ್ಣ ಚಾಲನೆ ನೀಡಿದಂತಾಯಿತು.
 “ಪ್ರತಿಯೊಬ್ಬ ಮಗುವೂ ಶಾಲೆಯ ಬೆಳಕಿಗೆ ಬರಬೇಕು. ಶಿಕ್ಷಣವೇ ಮಕ್ಕಳ ಭವಿಷ್ಯ ರೂಪಿಸುವ ಶಕ್ತಿ. ಪಾಲಕರು ಮತ್ತು ಶಿಕ್ಷಕರು ಕೈಜೋಡಿಸಿದಾಗ ಮಾತ್ರ ಗ್ರಾಮೀಣ ಮಕ್ಕಳ ಬದುಕು ಪ್ರಕಾಶಮಾನವಾಗುತ್ತದೆ.”
ಸುಜಾತಾ ಕಮ್ಮಾರ, ಎಸ್‌ಡಿಎಂಸಿ ಅಧ್ಯಕ್ಷೆ

ಸಚಿವ ಸಂಪುಟದಲ್ಲಿ ವಾಲ್ಮೀಕಿ ಸಮುದಾಯಕ್ಕೆ ಆದ್ಯತೆ ನೀಡಿ: ಪವಾಡಿ ಹನುಮಂತಪ್ಪ

ವಿಜಯಸಾಕ್ಷಿ ಸುದ್ದಿ, ಹಗರಿಬೊಮ್ಮನಹಳ್ಳಿ: ರಾಜ್ಯದ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ವಾಲ್ಮೀಕಿ ನಾಯಕ ಸಮುದಾಯದ ನಾಯಕರಿಗೆ ಸಚಿವ ಸಂಪುಟದಲ್ಲಿ ಸೂಕ್ತ ಆದ್ಯತೆ ನೀಡಬೇಕು ಎಂದು ಹಗರಿಬೊಮ್ಮನಹಳ್ಳಿ ತಾಲೂಕು ವಾಲ್ಮೀಕಿ ಸಂಘದ ಅಧ್ಯಕ್ಷ ಹಾಗೂ ಪುರಸಭೆ ಸದಸ್ಯ ಪವಾಡಿ ಹನುಮಂತಪ್ಪ ಆಗ್ರಹಿಸಿದರು.
ಈ ಕುರಿತು ಹೇಳಿಕೆ ನೀಡಿದ ಅವರು, “ಸಿದ್ದರಾಮಯ್ಯ ಅವರು ಎಂಟು ವರ್ಷಗಳ ಸುದೀರ್ಘ ಅವಧಿಯಲ್ಲಿ ಮುಖ್ಯಮಂತ್ರಿ ಆಗಿ ಅನೇಕ ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತಂದು ಯಶಸ್ವಿಯಾಗಿ ಆಡಳಿತ ನಡೆಸಿದ್ದಾರೆ. ಇದೀಗ ಶಾಂತಿಯುತವಾಗಿ ಡಿ. ಕೆ. ಶಿವಕುಮಾರ್ ಅವರಿಗೆ ಅಧಿಕಾರ ಹಸ್ತಾಂತರ ಮಾಡುವ ಮೂಲಕ ಜನರ ಮನ ಗೆದ್ದಿದ್ದಾರೆ” ಎಂದು ಹೇಳಿದರು.
“ಡಿ. ಕೆ. ಶಿವಕುಮಾರ್ ಅವರು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿ ಹೊರಹೊಮ್ಮಿದ್ದು, ಶೀಘ್ರದಲ್ಲೇ ಮುಖ್ಯಮಂತ್ರಿಯಾಗಲಿದ್ದಾರೆ. ಈ ಸಂದರ್ಭದಲ್ಲಿ ನಾಯಕ ಜನಾಂಗ ಹಾಗೂ ಪರಿಶಿಷ್ಟ ಪಂಗಡದ ನಾಯಕರಿಗೆ ಸಚಿವ ಸಂಪುಟದಲ್ಲಿ ಹೆಚ್ಚಿನ ಆದ್ಯತೆ ನೀಡಬೇಕು” ಎಂದು ಒತ್ತಾಯಿಸಿದರು.
ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಸತೀಶ್ ಜಾರಕಿಹೊಳಿ ಅವರಿಗೆ ನೀಡಬೇಕು. ಜೊತೆಗೆ ಕೆ. ಎನ್. ರಾಜಣ್ಣ, ನಾಗೇಂದ್ರ, ಜೆ. ಗಣೇಶ್, ಅನ್ನಪೂರ್ಣ ತುಕಾರಾಂ ಸೇರಿದಂತೆ ಸಮುದಾಯದ ಶಾಸಕರಿಗೆ ಸಚಿವ ಸ್ಥಾನ ನೀಡುವಂತೆ ಅವರು ಆಗ್ರಹಿಸಿದರು.
“ನಾಯಕ ಜನಾಂಗ ರಾಜ್ಯ ರಾಜಕೀಯ ಪ್ರಕ್ರಿಯೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದು, ರಾಜಕೀಯ ಕ್ಷೇತ್ರಕ್ಕೆ ಅಮೋಘ ಕೊಡುಗೆ ನೀಡಿದೆ. ಹೀಗಾಗಿ ಡಿ. ಕೆ. ಶಿವಕುಮಾರ್ ಅವರು ನಮ್ಮ ಸಮುದಾಯಕ್ಕೆ ಹೆಚ್ಚಿನ ಪ್ರಾತಿನಿಧ್ಯ ನೀಡಬೇಕು” ಎಂದು ಹೇಳಿದರು.
ಈ ಸಂದರ್ಭದಲ್ಲಿ ಚಿಂತರಪಳ್ಳಿ ದೇವೇಂದ್ರ, ಸೆರೆಗಾರ ಹುಚ್ಚಪ್ಪ, ವಿ.ಎಸ್.ಎಸ್.ಎನ್ ಅಧ್ಯಕ್ಷ ದಾದಮ್ಮನವರ ಬಸವರಾಜ, ಡಿಶ್ ಮಂಜುನಾಥ, ಚಿಗರಿ ಮಾರುತಿ, ಕಟಗಿ ಮಂಜುನಾಥ್, ದಾದಮ್ಮನವರ ರಾಜಪ್ಪ, ಕಾಟರ್ ಗಾಳೆಪ್ಪ, ಅರಸಿಕೆರೆ ಹನುಮಂತಪ್ಪ, ಬಡಲಡಕಿ ಕಿಟ್ಟಪ್ಪ, ಚಿಗರಿ ಪರಶುರಾಮ್, ವಿರುಪಾಕ್ಷಿ ಲೆಕ್ಕಪ್ಪನವರು ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

ಮಕ್ಕಳ ಭವಿಷ್ಯ ರೂಪಿಸುವ ಹೊಣೆ ಶಿಕ್ಷಕರದು..!

ವಿಜಯಸಾಕ್ಷಿ ಸುದ್ದಿ, ಹಗರಿಬೊಮ್ಮನಹಳ್ಳಿ: “ಸರ್ಕಾರಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಮಕ್ಕಳಿಗೆ ಶಿಕ್ಷಕರು ಹೆಚ್ಚಿನ ಕಾಳಜಿ ವಹಿಸಿ ಗುಣಮಟ್ಟದ ಶಿಕ್ಷಣ ನೀಡಬೇಕು. ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ದೊಡ್ಡ ಜವಾಬ್ದಾರಿ ಶಿಕ್ಷಕರ ಮೇಲಿದೆ” ಎಂದು ಶಾಸಕ ನೇಮಿರಾಜ್ ನಾಯ್ಕ್ ಹೇಳಿದರು.
ತಾಲೂಕಿನ ತಂಬ್ರಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ 2026-27ನೇ ಸಾಲಿನ ಶಾಲಾ ದಾಖಲಾತಿ, ಶಾಲಾ ಪ್ರಾರಂಭೋತ್ಸವ ಹಾಗೂ ಉಚಿತ ಸಮವಸ್ತ್ರ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
“ಹಿಂದೆ ಶಿಕ್ಷಣ ಕೆಲವೇ ಜನರಿಗೆ ಸೀಮಿತವಾಗಿತ್ತು. ಆದರೆ ಈಗ ಸರ್ಕಾರ ಬಿಸಿಯೂಟ, ಸಮವಸ್ತ್ರ, ಮೊಟ್ಟೆ, ಹಾಲು, ಬಾಳೆಹಣ್ಣು ಸೇರಿದಂತೆ ಹಲವು ಸೌಲಭ್ಯಗಳನ್ನು ಮಕ್ಕಳಿಗೆ ನೀಡುತ್ತಿದೆ. ತಂದೆ-ತಾಯಿಗಳು ಮಕ್ಕಳ ಭವಿಷ್ಯಕ್ಕಾಗಿ ಕಷ್ಟಪಟ್ಟು ದುಡಿದು ಶಾಲೆಗೆ ಕಳುಹಿಸುತ್ತಿದ್ದಾರೆ. ಅವರ ನಿರೀಕ್ಷೆಗೆ ತಕ್ಕಂತೆ ಉತ್ತಮ ಶಿಕ್ಷಣ ನೀಡುವುದು ಶಿಕ್ಷಕರ ಕರ್ತವ್ಯ” ಎಂದು ಹೇಳಿದರು.
ವಿದ್ಯಾರ್ಥಿಗಳು ಮೊಬೈಲ್ ಬಳಕೆ ಕಡಿಮೆ ಮಾಡಿ ಪುಸ್ತಕಗಳತ್ತ ಹೆಚ್ಚು ಗಮನ ಹರಿಸಬೇಕು ಎಂದು ಸಲಹೆ ನೀಡಿದ ಅವರು, ಕ್ಷೇತ್ರದ ಸರ್ಕಾರಿ ಶಾಲೆಗಳಿಗೆ ಅಗತ್ಯ ಮೂಲಸೌಲಭ್ಯ ಒದಗಿಸಲು ತಾವು ಬದ್ಧರಾಗಿದ್ದೇವೆ ಎಂದರು.
ಶಾಸಕರ ಅನುದಾನದಡಿ ಸುಮಾರು 3 ಸಾವಿರ ಮಕ್ಕಳು ಎಲ್‌ಕೆಜಿ ಹಾಗೂ ಯುಕೆಜಿ ಶಿಕ್ಷಣ ಪಡೆಯುತ್ತಿದ್ದು, ಕಳೆದ ಮೂರು ವರ್ಷಗಳಲ್ಲಿ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ನೂರಾರು ಕೋಟಿ ರೂಪಾಯಿ ಅನುದಾನ ನೀಡಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಕ್ಕಳಿಗೆ ಉಚಿತ ಸಮವಸ್ತ್ರ ವಿತರಿಸಲಾಯಿತು. ಎಲ್‌ಕೆಜಿ, ಯುಕೆಜಿ ಹಾಗೂ ಪ್ರಥಮ ತರಗತಿಗೆ ದಾಖಲಾದ ಮಕ್ಕಳನ್ನು ಆತ್ಮೀಯವಾಗಿ ಸ್ವಾಗತಿಸಲಾಯಿತು. ಬಳಿಕ ಮಕ್ಕಳಿಗೆ ಗೋದಿ ಹುಗ್ಗಿ ಪಾಯಸದ ಸಿಹಿ ಊಟ ವ್ಯವಸ್ಥೆ ಮಾಡಲಾಗಿತ್ತು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಆರ್. ಕವಿತಾ, ಇಒ ಪಾಲಯ್ಯನಕೋಟೆ ವಿಶ್ವನಾಥ್, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್. ಜಗದೀಶ್, ಕ್ಲಸ್ಟರ್ ಬಿಆರ್‌ಸಿ ಕನಕಪ್ಪ, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ವೈ. ಮಲ್ಲಿಕಾರ್ಜುನ, ಜಿಲ್ಲಾ ಉಪಾಧ್ಯಕ್ಷ ಕೃಷ್ಣಮೂರ್ತಿ ಶೆಟ್ರು, ತಾಲೂಕು ಉಪ್ಪಾರ ಸಂಘದ ಅಧ್ಯಕ್ಷ ಯು. ಕನಕಪ್ಪ, ಬಿ. ಸಿದ್ದರಾಜು, ಗೌರಜ್ಜನವರ ಬಸವರಾಜಪ್ಪ, ಬಣಕಾರ ಕೊಟ್ರೇಶ್, ಕಡ್ಡಿ ಚೆನ್ನಬಸಪ್ಪ, ಎಸ್. ವಿ. ಪಾಟೀಲ, ಕಡ್ಡಿ ಕೊಟ್ರೇಶ್, ಬಣಕಾರ ಮಲ್ಲಿಕಾರ್ಜುನ, ಸೊಬಟಿ ಹರೀಶ್, ಚಿತ್ರ ಕಲಾವಿದ ಚಿಂತ್ರಪಳ್ಳಿ ಕೊಟ್ರೇಶ್, ಬಂಡಿಕ್ಯಾಂಪ ಹನುಮೇಶ್, ಬಿ. ದೇವಿಪ್ರಸಾದ್, ಸಂಡೂರು ಮೆಹಬೂಬ್, ಬ್ಯಾಟಿ ನಾಗರಾಜ್, ಎಸ್‌ಡಿಎಂಸಿ ಅಧ್ಯಕ್ಷ ಹೆಚ್. ನೀಲಗಿರಿ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ರಾಜಕುಮಾರ ನಾಯ್ಕ್, ತಂಬ್ರಹಳ್ಳಿ ಪಿಡಿಒ ಚಂದ್ರಶೇಖರ್, ಮುಖ್ಯ ಶಿಕ್ಷಕ ಹೆಚ್. ಎಂ. ಸಿದ್ದೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಪುಸ್ತಕದ ಜೊತೆಗೆ ಕನಸುಗಳಿಗೂ ಹೊಸ ಆರಂಭ..!

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: 2026-27ನೇ ಶೈಕ್ಷಣಿಕ ಸಾಲಿನ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮವು ಸಮೀಪದ ಜಕ್ಕಲಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳ ಸಂಕೀರ್ಣದಲ್ಲಿ ಸೋಮವಾರ ಸಂಭ್ರಮ, ಸಡಗರ ಹಾಗೂ ಉತ್ಸಾಹದಿಂದ ನೆರವೇರಿತು.
ಹೊಸ ಶೈಕ್ಷಣಿಕ ವರ್ಷದ ಮೊದಲ ದಿನದ ಅಂಗವಾಗಿ ಶಾಲೆಯನ್ನು ತಳಿರು ತೋರಣಗಳು, ಬಣ್ಣಬಣ್ಣದ ಅಲಂಕಾರಗಳು ಹಾಗೂ ಸ್ವಾಗತ ಫಲಕಗಳಿಂದ ನವವಧುವಿನಂತೆ ಸಿಂಗರಿಸಲಾಗಿತ್ತು. ಶಾಲೆಗೆ ಆಗಮಿಸಿದ ವಿದ್ಯಾರ್ಥಿಗಳನ್ನು ಶಿಕ್ಷಕರು ಹಾಗೂ ಎಸ್‌ಡಿಎಂಸಿ ಅಧ್ಯಕ್ಷರು ಗುಲಾಬಿ ಹೂವು ನೀಡಿ, ಸಿಹಿ ಹಂಚುವ ಮೂಲಕ ಆತ್ಮೀಯವಾಗಿ ಸ್ವಾಗತಿಸಿದರು. ಬೇಸಿಗೆ ರಜೆಯ ಬಳಿಕ ಶಾಲೆಗೆ ಮರಳಿದ ವಿದ್ಯಾರ್ಥಿಗಳಲ್ಲಿ ವಿಶೇಷ ಉತ್ಸಾಹ ಕಂಡುಬಂತು.
ಕಾರ್ಯಕ್ರಮದ ಸಾಂಕೇತಿಕ ಉದ್ಘಾಟನೆಯ ಬಳಿಕ ಮಾತನಾಡಿದ ಕೆ.ಜಿ.ಎಸ್. ಜಕ್ಕಲಿಯ ಮುಖ್ಯ ಶಿಕ್ಷಕ ಎಸ್. ಬಿ. ಗವಿ, “ಮಕ್ಕಳು ದೇಶದ ಭವಿಷ್ಯದ ಆಸ್ತಿಯಾಗಿದ್ದು, ಇಂದಿನ ವಿದ್ಯಾರ್ಥಿಗಳೇ ನಾಳಿನ ಪ್ರಜೆಗಳು. ಪ್ರತಿಯೊಬ್ಬ ಮಗುವಿಗೂ ಗುಣಮಟ್ಟದ ಶಿಕ್ಷಣ ದೊರೆಯುವುದು ಮೂಲಭೂತ ಹಕ್ಕಾಗಿದೆ” ಎಂದು ಹೇಳಿದರು.
ಶಿಕ್ಷಣ ಇಲಾಖೆಯು ಮಕ್ಕಳ ಸರ್ವತೋಮುಖ ಅಭಿವೃದ್ಧಿಗಾಗಿ ಹಲವು ಯೋಜನೆಗಳು ಹಾಗೂ ಸೌಲಭ್ಯಗಳನ್ನು ಜಾರಿಗೆ ತಂದಿದ್ದು, ಅವುಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಯಾವುದೇ ಮಗು ಶಿಕ್ಷಣದಿಂದ ವಂಚಿತವಾಗದಂತೆ ಎಲ್ಲರೂ ಕಾಳಜಿ ವಹಿಸಬೇಕು ಎಂದು ಅವರು ತಿಳಿಸಿದರು.
ಸರ್ಕಾರಿ ಶಾಲೆಗಳಲ್ಲಿ ಲಭ್ಯವಿರುವ ಗುಣಮಟ್ಟದ ಶಿಕ್ಷಣ, ಉಚಿತ ಪಠ್ಯಪುಸ್ತಕಗಳು, ಸಮವಸ್ತ್ರ, ಮಧ್ಯಾಹ್ನದ ಬಿಸಿಯೂಟ, ವಿದ್ಯಾರ್ಥಿವೇತನ ಸೇರಿದಂತೆ ವಿವಿಧ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದ ಅವರು, ಗ್ರಾಮದ ಪ್ರತಿಯೊಬ್ಬ ಮಗುವೂ ಶಾಲೆಗೆ ದಾಖಲಾಗುವಂತೆ ಪೋಷಕರು ಹಾಗೂ ಸಾರ್ವಜನಿಕರು ಸಹಕರಿಸಬೇಕು ಎಂದು ಮನವಿ ಮಾಡಿದರು.
ಬಳಿಕ ನಡೆದ ಪೋಷಕರ ಹಾಗೂ ಶಿಕ್ಷಕರ ಮಹಾಸಭೆಯಲ್ಲಿ ಶಾಲೆಯ ಶೈಕ್ಷಣಿಕ ಚಟುವಟಿಕೆಗಳು, ಇಲಾಖೆಯ ಹೊಸ ಉಪಕ್ರಮಗಳು, ಎಲ್‌ಬಿಎ ಕಾರ್ಯಕ್ರಮ, ದ್ವಿಭಾಷಾ ಶಿಕ್ಷಣ ವ್ಯವಸ್ಥೆ ಹಾಗೂ ಮಕ್ಕಳ ಕಲಿಕಾ ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಕೈಗೊಳ್ಳಲಾಗುತ್ತಿರುವ ಕ್ರಮಗಳ ಕುರಿತು ವಿವರವಾದ ಮಾಹಿತಿ ನೀಡಲಾಯಿತು.
ಮಕ್ಕಳ ನಿಯಮಿತ ಹಾಜರಾತಿ, ಶೈಕ್ಷಣಿಕ ಪ್ರಗತಿ ಹಾಗೂ ಶಾಲಾ ಅಭಿವೃದ್ಧಿಗೆ ಪೋಷಕರ ಸಹಕಾರದ ಅಗತ್ಯವನ್ನು ಶಿಕ್ಷಕರು ವಿವರಿಸಿದರು.
ಸಭೆಯಲ್ಲಿ ಮಾತನಾಡಿದ ಶಿಕ್ಷಕರು, ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳಿಗೆ ಸಮಾನವಾಗಿ ಉತ್ತಮ ಶಿಕ್ಷಣ ಹಾಗೂ ಮೂಲಸೌಕರ್ಯಗಳನ್ನು ಒದಗಿಸುತ್ತಿದ್ದು, ಗ್ರಾಮದ ಎಲ್ಲ ಮಕ್ಕಳು ಸರ್ಕಾರಿ ಶಾಲೆಯಲ್ಲಿಯೇ ಶಿಕ್ಷಣ ಪಡೆಯುವಂತೆ ಪಾಲಕರು ಮುಂದಾಗಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಸ್‌ಡಿಎಂಸಿ ಪದಾಧಿಕಾರಿಗಳು ಶಾಲೆಯ ಅಭಿವೃದ್ಧಿಗೆ ಅಗತ್ಯ ಸಹಕಾರ ನೀಡುವುದಾಗಿ ಭರವಸೆ ವ್ಯಕ್ತಪಡಿಸಿದರು. ಮುಖ್ಯ ಶಿಕ್ಷಕ ಹೆಚ್. ಎಸ್. ಬಿಂಗಿ ಸ್ವಾಗತಿಸಿ ಕಾರ್ಯಕ್ರಮದ ಉದ್ದೇಶವನ್ನು ವಿವರಿಸಿದರು. ಎಸ್. ಎ. ಪಲ್ಲೇದ ವಂದಿಸಿದರು. ಎಂ. ವಿ. ತಾಳಿಕೋಟಿ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಶಾಲೆಯ ಎಲ್ಲಾ ಶಿಕ್ಷಕರು, ಎಸ್‌ಡಿಎಂಸಿ ಅಧ್ಯಕ್ಷರು, ಸದಸ್ಯರು, ಪೋಷಕರು ಹಾಗೂ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶಾಲಾ ಪ್ರಾರಂಭೋತ್ಸವವನ್ನು ಯಶಸ್ವಿಗೊಳಿಸಿದರು.

ನಾಳೆ ಡಿ.ಕೆ.ಶಿವಕುಮಾರ್ ಪದಗ್ರಹಣ: ನೆಲಮಂಗಲದಲ್ಲಿ 10 ಲಕ್ಷ ಲಾಡು ತಯಾರಿ!

ನೆಲಮಂಗಲ: ಡಿ.ಕೆ. ಶಿವಕುಮಾರ್ ಅವರು ಕರ್ನಾಟಕದ ಮುಖ್ಯಮಂತ್ರಿ ಆಗುತ್ತಿರುವ ಹಿನ್ನೆಲೆಯಲ್ಲಿ ನೆಲಮಂಗಲ ತಾಲೂಕಿನಲ್ಲಿ ಭರ್ಜರಿ ಸಂಭ್ರಮ ಮನೆ ಮಾಡಿದೆ.

ಈ ಹಿನ್ನಲೆಯಲ್ಲಿ ತಾಲೂಕಿನ ಪ್ರತಿ ಮನೆಗೆ ಲಾಡು ಬಾಕ್ಸ್ ಹಂಚಲು ವಿಶೇಷ ಸಿದ್ಧತೆಗಳು ನಡೆಯುತ್ತಿವೆ.

ತಾಲೂಕಿನಲ್ಲಿ ಸುಮಾರು 9 ರಿಂದ 10 ಲಕ್ಷ ಲಾಡುಗಳನ್ನು ತಯಾರಿಸುವ ಕಾರ್ಯ ಆರಂಭಗೊಂಡಿದ್ದು, 80 ರಿಂದ 90 ಸಾವಿರ ಮನೆಗಳಿಗೆ ಲಾಡು ಬಾಕ್ಸ್ ವಿತರಿಸಲು ಯೋಜನೆ ರೂಪಿಸಲಾಗಿದೆ. ನೆಲಮಂಗಲ ಶಾಸಕ ಶ್ರೀನಿವಾಸ್ ಅವರ ನೇತೃತ್ವದಲ್ಲಿ ಈ ಸಿಹಿ ಹಂಚಿಕೆ ಕಾರ್ಯಕ್ರಮ ನಡೆಯುತ್ತಿದೆ.

ಲಾಡು ತಯಾರಿಕೆಗೆ ಸುಮಾರು 250 ರಿಂದ 300 ಮಂದಿ ಬಾಣಸಿಗರನ್ನು ನಿಯೋಜಿಸಲಾಗಿದ್ದು, ಸ್ವಚ್ಛತೆ ಹಾಗೂ ಗುಣಮಟ್ಟದ ಕುರಿತು ಶಾಸಕ ಶ್ರೀನಿವಾಸ್ ಸ್ವತಃ ಪರಿಶೀಲನೆ ನಡೆಸಿದ್ದಾರೆ. ಯಾವುದೇ ಕೊರತೆಯಾಗದಂತೆ ಅಗತ್ಯ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ ಎಂದು ತಿಳಿದುಬಂದಿದೆ.

ಡಿ.ಕೆ. ಶಿವಕುಮಾರ್ ಅವರು ಜೂನ್ 3ರಂದು ಬೆಂಗಳೂರಿನ ಲೋಕಭವನದ ಗ್ಲಾಸ್‌ಹೌಸ್‌ನಲ್ಲಿ ಸಂಜೆ 4:10ಕ್ಕೆ ಮುಖ್ಯಮಂತ್ರಿ ಪದಗ್ರಹಣ ಮಾಡಲಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಮೂಲಗಳು ತಿಳಿಸಿವೆ. ಈ ಕಾರ್ಯಕ್ರಮದಲ್ಲಿ ಪಕ್ಷದ ಪ್ರಮುಖ ನಾಯಕರು ಹಾಗೂ ಗಣ್ಯರು ಭಾಗವಹಿಸುವ ಸಾಧ್ಯತೆ ಇದೆ.

ಅವರೊಂದಿಗೆ 14 ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆಯೂ ಇದ್ದು, ರಾಜ್ಯ ರಾಜಕೀಯದಲ್ಲಿ ಈ ಬೆಳವಣಿಗೆಗೆ ಭಾರೀ ಮಹತ್ವ ದೊರಕಿದೆ.

ಧಾರಾಕಾರ ಮಳೆಗೆ ಬೆಂಗಳೂರು ರಸ್ತೆಗಳು ಜಲಾವೃತ! ಜನಜೀವನ ಅಸ್ತವ್ಯಸ್ತ

ಬೆಂಗಳೂರು: ನಗರದಲ್ಲಿ ಇಂದು ಸಂಜೆ ಏಕಾಏಕಿ ದಿಢೀರ್ ಮಳೆಯಾಗಿದ್ದು, ಮೆಜೆಸ್ಟಿಕ್ ಸೇರಿದಂತೆ ಹಲವೆಡೆ ವರುಣನ ಆರ್ಭಟದಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ.

ಕಚೇರಿ ಮುಗಿಸಿ ಮನೆಗೆ ತೆರಳುತ್ತಿದ್ದ ಪ್ರಯಾಣಿಕರು ಹಾಗೂ ವಾಹನ ಸವಾರರು ಮಳೆಯ ಹೊಡೆತಕ್ಕೆ ಸಿಲುಕಿ ಪರದಾಟ ನಡೆಸಿದ್ದಾರೆ. ಬಸ್ ನಿಲ್ದಾಣಗಳು, ಅಂಗಡಿ ಮುಂಗಟ್ಟುಗಳು ಮತ್ತು ಮೆಟ್ರೋ ನಿಲ್ದಾಣಗಳ ಬಳಿ ಜನರು ಆಶ್ರಯ ಪಡೆದ ದೃಶ್ಯ ಸಾಮಾನ್ಯವಾಗಿ ಕಂಡುಬಂದಿದೆ.

ಮೆಜೆಸ್ಟಿಕ್, ವಸಂತನಗರ, ಕೆ.ಆರ್. ಸರ್ಕಲ್, ವಿಜಯನಗರ, ಜಯನಗರ, ಬನಶಂಕರಿ, ಕೆಂಗೇರಿ, ರಾಜಾಜಿನಗರ, ಶಿವಾಜಿನಗರ, ಮಲ್ಲೇಶ್ವರಂ, ಬಸವನಗುಡಿ, ಕೋರಮಂಗಲ, ಹೆಚ್‌ಎಸ್‌ಆರ್ ಲೇಔಟ್ ಸೇರಿದಂತೆ ನಗರದ ಹಲವೆಡೆ ಮಳೆಯಾಗಿದ್ದು, ಕೆಲವು ಭಾಗಗಳಲ್ಲಿ ಧಾರಾಕಾರ ಮಳೆ ದಾಖಲಾಗಿದೆ.

ಭಾಗ್ಮನೆ ಟೆಕ್ ಪಾರ್ಕ್ ಹಾಗೂ ಮಾರತಹಳ್ಳಿ ಸುತ್ತಮುತ್ತ ರಸ್ತೆಗಳಲ್ಲಿ ನೀರು ನಿಂತು ವಾಹನ ಸಂಚಾರಕ್ಕೆ ತೊಂದರೆಯಾಗಿದೆ. ದೇವರಬೀಸನಹಳ್ಳಿ ಮೇಲ್ಸೇತುವೆ ರ್ಯಾಂಪ್‌ನಲ್ಲಿ ನೀರು ಜಮಾವಣೆಯಾದ ಕಾರಣ ಕಡುಬೀಸನಹಳ್ಳಿಯಿಂದ ಬೆಳ್ಳಂದೂರು ಮಾರ್ಗದಲ್ಲಿ ಸಂಚಾರ ನಿಧಾನಗೊಂಡಿದೆ.

ಇತ್ತ ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸುತ್ತಮುತ್ತಲೂ ಭಾರೀ ಮಳೆಯಾಗಿದ್ದು, ಗುಡುಗು ಸಹಿತ ವರುಣನ ಆರ್ಭಟದಿಂದ ನವದೆಹಲಿಯಿಂದ ಆಗಮಿಸಿದ್ದ ಇಂಡಿಗೋ ವಿಮಾನವು ಲ್ಯಾಂಡಿಂಗ್ ವಿಳಂಬವಾಗಿ ಕೆಲ ಕಾಲ ಆಕಾಶದಲ್ಲೇ ಸುತ್ತಾಡಿದ ಘಟನೆ ನಡೆದಿದೆ. ಪ್ರಯಾಣಿಕರು ಮಳೆಯ ಕಾರಣದಿಂದ ತೀವ್ರ ಅಸೌಕರ್ಯ ಅನುಭವಿಸಿದ್ದಾರೆ.

ತ್ವಿಶಾ ಶರ್ಮಾ ಆತ್ಮಹತ್ಯೆ ಪ್ರಕರಣ: ಪತಿ-ಅತ್ತೆಗೆ 14 ದಿನ ನ್ಯಾಯಾಂಗ ಬಂಧನ

ಭೋಪಾಲ್ : ಮಾಡೆಲ್ ಹಾಗೂ ನಟಿ ತ್ವಿಶಾ ಶರ್ಮಾ ಆತ್ಮಹತ್ಯೆ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ಸಂಭವಿಸಿದ್ದು, ಪತಿ ಸಮರ್ಥ್ ಸಿಂಗ್ ಹಾಗೂ ಅತ್ತೆ ಗಿರಿಬಾಲಾ ಸಿಂಗ್ ಇಬ್ಬರಿಗೂ ವಿಶೇಷ ಸಿಬಿಐ ಕೋರ್ಟ್ ನ್ಯಾಯಾಂಗ ಬಂಧನ ವಿಧಿಸಿದೆ.

ವರದಕ್ಷಿಣೆ ಕಿರುಕುಳ ಆರೋಪದಡಿ ಬಂಧಿತರಾಗಿದ್ದ ಇಬ್ಬರ ಸಿಬಿಐ ಕಸ್ಟಡಿ ಅವಧಿ ಮುಕ್ತಾಯವಾದ ಹಿನ್ನೆಲೆಯಲ್ಲಿ ಮಂಗಳವಾರ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಈ ವೇಳೆ ವಿಚಾರಣೆ ನಡೆಸಿದ ನ್ಯಾಯಾಲಯವು ಜೂನ್ 16ರವರೆಗೆ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದೆ ಎಂದು ತಿಳಿದುಬಂದಿದೆ.

ವಿಚಾರಣೆ ಸಂದರ್ಭದಲ್ಲಿ ಎರಡೂ ಕಡೆಯ ವಕೀಲರ ನಡುವೆ ತೀವ್ರ ವಾಗ್ವಾದ ನಡೆದಿದ್ದು, ಆರೋಪಿಗಳ ಪರ ವಕೀಲ ಅನುರಾಗ್ ಶ್ರೀವಾಸ್ತವ್ ಜಬಲ್ಪುರ ಕೋರ್ಟ್ ಆವರಣದಲ್ಲಿ ಸಮರ್ಥ್ ಸಿಂಗ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪವನ್ನು ಗಿರಿಬಾಲಾ ಸಿಂಗ್ ಮಾಡಿದ್ದಾರೆ. ಆದರೆ ಈ ಆರೋಪವನ್ನು ವಕೀಲರು ನಿರಾಕರಿಸಿದ್ದು, ಸಿಸಿಟಿವಿ ದೃಶ್ಯಾವಳಿಗಳನ್ನು ಸಾಕ್ಷಿಯಾಗಿ ಉಲ್ಲೇಖಿಸಿದ್ದಾರೆ.

ಇದಷ್ಟೇ ಅಲ್ಲದೆ ಪ್ರಕರಣದ ಪ್ರಮುಖ ಸಾಕ್ಷಿ ನೀರಜ್ ದುಬೆ ಮೇಲೆ ಹಲ್ಲೆ ನಡೆದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಆರೋಪಿಗಳ ವಿರುದ್ಧ ಅನುಮಾನ ಹೆಚ್ಚಿಸಿದೆ. ಮೇ 30ರಂದು ಭೋಪಾಲ್‌ನಲ್ಲಿ ನೀರಜ್ ದುಬೆ ಅವರನ್ನು ನಾಲ್ಕೈದು ಮಂದಿ ಸುತ್ತುವರಿದು ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ನಂತರ ಅವರು ಕಟಾರಾ ಹಿಲ್ಸ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಇತ್ತ, ಸೋಮವಾರ (ಜೂ.1) ಆರೋಪಿಗಳನ್ನು ಸ್ಥಳಕ್ಕೆ ಕರೆದೊಯ್ದು ಅಪರಾಧ ಮರುಸೃಷ್ಟಿ ಮಾಡಿಸಲಾಗಿದ್ದು, ಮೇ 12ರ ರಾತ್ರಿ ನಡೆದ ಘಟನೆ ಕುರಿತು ಸಿಬಿಐ ವಿವರವಾದ ಮಾಹಿತಿ ಸಂಗ್ರಹಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

error: Content is protected !!