ಬೆಂಗಳೂರು: ಬಿಡದಿ ಟೌನ್ಶಿಪ್ ಯೋಜನೆಗೆ ಸಂಬಂಧಿಸಿದಂತೆ ಬಿಜೆಪಿ ಹಾಗೂ ಜೆಡಿಎಸ್ ನಡೆಸುತ್ತಿರುವ ಟೀಕೆಗಳಿಗೆ ಗೃಹಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದು, ಬಿಡದಿ ಟೌನ್ಶಿಪ್ಗಾಗಿ ನಾವು ಸಸಿ ನೆಡುತ್ತಿದ್ದೇವೆ. ಬಿಜೆಪಿ ಮಾಡಿದಂತೆ ಇಡೀ ಅಂಡಮಾನ್ನ್ನೇ ಕಿತ್ತುಹಾಕುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.
ಬಿಡದಿ ವಿಚಾರವಾಗಿ ಜೆಡಿಎಸ್ ನಡೆಸಲು ಉದ್ದೇಶಿಸಿರುವ ಪಾದಯಾತ್ರೆ ಕುರಿತು ಪ್ರತಿಕ್ರಿಯಿಸಿದ ಅವರು, “ಅರಾವಳಿ ಪರ್ವತ ಪ್ರದೇಶಗಳನ್ನು ಅದಾನಿ ಮತ್ತು ಅಂಬಾನಿಗೆ ಮಾರಲು ಮುಂದಾದವರು ಯಾರು? ಪರಿಸರದ ಬಗ್ಗೆ ನಿಜವಾಗಿಯೂ ಕಾಳಜಿ ಇದ್ದರೆ ಜೆಡಿಎಸ್ ನಾಯಕರು ರಾಜಸ್ಥಾನ ಮತ್ತು ಗುಜರಾತ್ನಲ್ಲಿ ಪಾದಯಾತ್ರೆ ನಡೆಸಲಿ” ಎಂದು ಸವಾಲು ಹಾಕಿದರು.
“ನೂರು ಸ್ಮಾರ್ಟ್ ಸಿಟಿಗಳ ಭರವಸೆ ನೀಡಿದ್ದ ಬಿಜೆಪಿ ಅದನ್ನು ಎಷ್ಟರ ಮಟ್ಟಿಗೆ ಜಾರಿಗೊಳಿಸಿದೆ? ಪರಿಸರ ಸಂರಕ್ಷಣೆಯನ್ನು ನಮ್ಮ ಸರ್ಕಾರ ಎಂದಿಗೂ ನಿರ್ಲಕ್ಷ್ಯ ಮಾಡುವುದಿಲ್ಲ. ಬೆಂಗಳೂರಿನಲ್ಲಿ ಈಗಾಗಲೇ 15 ಲಕ್ಷ ಸಸಿಗಳನ್ನು ನೆಡುವ ಮಹತ್ವಾಕಾಂಕ್ಷಿ ಅಭಿಯಾನ ನಡೆಯುತ್ತಿದೆ. ಸಚಿವರಾದ ಹ್ಯಾರಿಸ್ ಹಾಗೂ ಕೃಷ್ಣ ಬೈರೇಗೌಡ ಅವರ ನೇತೃತ್ವದಲ್ಲಿ ದೊಡ್ಡ ಮಟ್ಟದಲ್ಲಿ ಸಸಿ ನೆಡುವ ಕಾರ್ಯ ನಡೆಯುತ್ತಿದೆ” ಎಂದು ಹೇಳಿದರು.
ಬಿಡದಿ ಮತ್ತು ಅಂಡಮಾನ್ಗಳನ್ನು ಹೋಲಿಕೆ ಮಾಡುತ್ತಿರುವವರ ವಿರುದ್ಧವೂ ಪ್ರಿಯಾಂಕ್ ಖರ್ಗೆ ಕಿಡಿಕಾರಿದರು. “ಅಂಡಮಾನ್ ಜೀವವೈವಿಧ್ಯ ಹಾಗೂ ಪರಿಸರ ವೈವಿಧ್ಯದ ದೃಷ್ಟಿಯಿಂದ ಅತ್ಯಂತ ಶ್ರೀಮಂತ ಪ್ರದೇಶವಾಗಿದೆ. ಅಂಡಮಾನ್ ಹಾಗೂ ಬಿಡದಿಯನ್ನು ಹೋಲಿಸುವುದೇ ಅಸಂಬದ್ಧ. ಬಿಜೆಪಿ ನಾಯಕರಿಗೆ ಸಾಮಾನ್ಯ ಜ್ಞಾನ ಇದೆಯೇ ಎಂಬ ಪ್ರಶ್ನೆ ಮೂಡುತ್ತದೆ” ಎಂದು ವ್ಯಂಗ್ಯವಾಡಿದರು.
ಜೆಡಿಎಸ್ ವಿರುದ್ಧವೂ ಟೀಕಿಸಿದ ಅವರು, “ಬ್ರ್ಯಾಂಡ್ ಬೆಂಗಳೂರು ಬಗ್ಗೆ ಮಾತನಾಡುವ ಜೆಡಿಎಸ್, ಅಧಿಕಾರದಲ್ಲಿದ್ದಾಗ ನಗರದಲ್ಲಿ ಎಷ್ಟು ಮರಗಳನ್ನು ನೆಟ್ಟಿತ್ತು? ಉದ್ಯೋಗ ಸೃಷ್ಟಿಯಲ್ಲೂ ವಿಫಲವಾಗಿದೆ. ಅದಕ್ಕಾಗಿಯೇ ರಾಜ್ಯದ ಜನರು ಅವರ ನಾಯಕತ್ವವನ್ನು ತಿರಸ್ಕರಿಸಿ ಕಾಂಗ್ರೆಸ್ಗೆ ಆಶೀರ್ವಾದ ನೀಡಿದ್ದಾರೆ” ಎಂದು ಹೇಳಿದರು.
ಬಿಡದಿ ಟೌನ್ಶಿಪ್ ಯೋಜನೆ ಕುರಿತು ಮಾತನಾಡಿದ ಸಚಿವರು, ಸುಮಾರು 7,500 ಎಕರೆ ಪ್ರದೇಶದಲ್ಲಿ 6 ಸಾವಿರ ಎಕರೆಗೂ ಹೆಚ್ಚು ಭೂಮಿಗೆ ರೈತರ ಒಪ್ಪಿಗೆ ದೊರೆತಿದ್ದು, ಉಳಿದ ಸುಮಾರು 1,500 ಎಕರೆ ಭೂಮಿಗೆ ಮಾತ್ರ ಒಪ್ಪಿಗೆ ಬಾಕಿಯಿದೆ ಎಂದು ತಿಳಿಸಿದರು.
ರೈತರ ಒಪ್ಪಿಗೆ ಇಲ್ಲದೆ ಯಾವುದೇ ಯೋಜನೆಯನ್ನು ಸರ್ಕಾರ ಮುಂದುವರಿಸುವುದಿಲ್ಲ. ನಮ್ಮ ಸರ್ಕಾರ ಯಾವುದೇ ರೀತಿಯ ದಬ್ಬಾಳಿಕೆ ನಡೆಸುವುದಿಲ್ಲ. ಈ ಹಿಂದೆ ಚನ್ನರಾಯಪಟ್ಟಣದಲ್ಲಿ ರೈತರ ಬೇಡಿಕೆಯಂತೆ ಭೂಸ್ವಾಧೀನ ಮಾಡಿಕೊಂಡಿದ್ದ ಜಮೀನನ್ನು ಹಿಂದಿರುಗಿಸಲಾಗಿತ್ತು. ಈಗ ಅದೇ ರೈತರು ಸ್ವಯಂಪ್ರೇರಿತವಾಗಿ ಭೂಸ್ವಾಧೀನಕ್ಕೆ ಒಪ್ಪಿಗೆ ನೀಡುತ್ತಿದ್ದಾರೆ ಎಂದು ಹೇಳಿದರು