Home Blog Page 4

ಚಾಮರಾಜನಗರದಲ್ಲಿ ಸೈಕೋಪಾತ್ ಕಾಟ; ಮಹಿಳೆಯರ ಒಳ ಉಡುಪು ಕಳವು, ಸಿಸಿಟಿವಿಯಲ್ಲಿ ಸೆರೆಯಾದ ವಿಕೃತಿ

ಚಾಮರಾಜನಗರ: ಗಡಿ ಜಿಲ್ಲೆ ಚಾಮರಾಜನಗರದಲ್ಲಿ ವಿಚಿತ್ರ ಸೈಕೋಪಾತ್ ಒಬ್ಬನ ಕೃತ್ಯ ಮಹಿಳೆಯರಲ್ಲಿ ಭೀತಿ ಹುಟ್ಟಿಸಿದೆ.

ಹೌಸಿಂಗ್ ಬೋರ್ಡ್ ಕಾಲೋನಿಯಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಮಹಿಳೆಯರ ಒಳ ಉಡುಪುಗಳನ್ನು ಟಾರ್ಗೆಟ್ ಮಾಡಿ ಕಳವು ಮಾಡುತ್ತಿರುವ ಘಟನೆ ಬೆಳಕಿಗೆ ಬಂದಿದೆ.

ಮನೆಗಳ ಮುಂದೆ ಒಣಗಲು ಹಾಕಿದ್ದ ಒಳ ಉಡುಪುಗಳು ಪದೇ ಪದೇ ನಾಪತ್ತೆಯಾಗುತ್ತಿದ್ದ ಹಿನ್ನೆಲೆಯಲ್ಲಿ ನಿವಾಸಿಗಳು ಅನುಮಾನಗೊಂಡು ಸಿಸಿಟಿವಿ ಪರಿಶೀಲಿಸಿದ್ದಾರೆ. ಈ ವೇಳೆ ತಡರಾತ್ರಿ ಮಹಿಳೆಯ ವೇಷದಲ್ಲಿ ಬರುವ ವ್ಯಕ್ತಿ, ಒಳ ಉಡುಪುಗಳನ್ನು ಕದ್ದು ಸ್ಥಳದಲ್ಲೇ ಧರಿಸಿಕೊಂಡು ವಿಕೃತಿ ತೋರಿಸುತ್ತಿರುವ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿವೆ.

ಈ ಘಟನೆ ಕಾಲೋನಿಯ ಮಹಿಳೆಯರಲ್ಲಿ ಆತಂಕ ಸೃಷ್ಟಿಸಿದ್ದು, ಸುರಕ್ಷತೆ ಬಗ್ಗೆ ಪ್ರಶ್ನೆಗಳು ಎದ್ದಿವೆ. ಸದ್ಯ ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಚಾಮರಾಜನಗರ ಪಟ್ಟಣ ಪೊಲೀಸರು ಆರೋಪಿಗಾಗಿ ಶೋಧ ಕಾರ್ಯ ತೀವ್ರಗೊಳಿಸಿದ್ದಾರೆ.

ಚಂದ್ರದ್ರೋಣ ಪರ್ವತದಲ್ಲಿ ಅಪ್ರಾಪ್ತ ಬಾಲಕಿ ನಾಪತ್ತೆ; ಡ್ರೋನ್ ಮೂಲಕ ಶೋಧ ಕಾರ್ಯ

ಚಿಕ್ಕಮಗಳೂರು: ಕೊಡಗಿನಲ್ಲಿ ಚಾರಣಕ್ಕೆ ತೆರಳಿದ್ದ ಶರಣ್ಯ ನಾಪತ್ತೆ ಪ್ರಕರಣದ ಬೆನ್ನಲ್ಲೇ ಮತ್ತೊಂದು ಆತಂಕಕಾರಿ ಘಟನೆ ಬೆಳಕಿಗೆ ಬಂದಿದೆ.

ಜಿಲ್ಲೆಯ ಚಂದ್ರದ್ರೋಣ ಪರ್ವತ ಸರಣಿಯಲ್ಲಿ ಪ್ರವಾಸಕ್ಕೆ ಬಂದಿದ್ದ 14 ವರ್ಷದ ಬಾಲಕಿ ಶ್ರೀ ನಂದಾ ನಿನ್ನೆ ಸಂಜೆದಿಂದ ಕಾಣೆಯಾಗಿದ್ದಾಳೆ.

ಕೇರಳದ ಪಾಲಕ್ಕಾಡ್ ಮೂಲದ ಈ ಬಾಲಕಿ ಪೋಷಕರೊಂದಿಗೆ ಸುಮಾರು 40 ಜನರ ತಂಡದೊಂದಿಗೆ ಪ್ರವಾಸಕ್ಕೆ ಬಂದಿದ್ದಳು. ಮಾಣಿಕ್ಯಧಾರಾ ಸಮೀಪದಲ್ಲಿ ಆಕೆ ಕಾಣೆಯಾಗಿರುವುದು ತಿಳಿದುಬಂದಿದೆ. ಬಾಲಕಿ ನಾಪತ್ತೆಯಾದ ಕೂಡಲೇ ಸ್ಥಳೀಯರು ಹಾಗೂ ಪ್ರವಾಸಿಗರು ಹುಡುಕಾಟ ಆರಂಭಿಸಿದರೂ ಯಾವುದೇ ಸುಳಿವು ಸಿಗಲಿಲ್ಲ.

ರಾತ್ರಿ ಪೂರ್ತಿ ಅಗ್ನಿಶಾಮಕ ದಳ, ಅರಣ್ಯ ಇಲಾಖೆ ಹಾಗೂ ಪೊಲೀಸ್ ಸಿಬ್ಬಂದಿ ಶೋಧ ಕಾರ್ಯ ನಡೆಸಿದ್ದು, ಇಂದೂ ಡ್ರೋನ್ ಸಹಾಯದಿಂದ ಕಾರ್ಯಾಚರಣೆ ಮುಂದುವರಿದಿದೆ. ಹುಲ್ಲುಗಾವಲು ಹಾಗೂ ಇಳಿಜಾರು ಪ್ರದೇಶಗಳಿಂದ ಕೂಡಿರುವ ಈ ಭಾಗದಲ್ಲಿ ಹುಡುಕಾಟ ಸವಾಲಿನದ್ದಾಗಿದೆ.

ಈ ಘಟನೆ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಬಾಲಕಿ ನಾಪತ್ತೆಯಾಗಿರುವ ಹಿನ್ನೆಲೆ ಹಲವು ಅನುಮಾನಗಳು ವ್ಯಕ್ತವಾಗುತ್ತಿವೆ.

 

ಮೈಸೂರು ರಸ್ತೆ ಸಿಗ್ನಲ್ ಬಳಿ ಎರಡು ಲಾರಿಗಳ ಅಪಘಾತ: ಚಾಲಕ ಸಾವು!

ಬೆಂಗಳೂರು: ಮೈಸೂರು ರಸ್ತೆಯ ಸಾಟಲೈಟ್ ಬಸ್ ನಿಲ್ದಾಣದ ಸಿಗ್ನಲ್ ಬಳಿ ನಿಲ್ಲಿಸಿದ್ದ ಲಾರಿಗೆ ಹಿಂಬದಿಯಿಂದ ಮತ್ತೊಂದು ಲಾರಿ ಡಿಕ್ಕಿ ಹೊಡೆದ ಪರಿಣಾಮ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ ದುರ್ಘಟನೆ ನಡೆದಿದೆ.

ಮೃತರನ್ನು ವಿಜಯ್ ಕುಮಾರ್ (60) ಎಂದು ಗುರುತಿಸಲಾಗಿದೆ. ಇಂದು ಮುಂಜಾನೆ 4 ಗಂಟೆ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ಫ್ಲೈಓವರ್ ಇಳಿಯುವಾಗಲೇ ನಿಯಂತ್ರಣ ಕಳೆದುಕೊಂಡ ಹಿಂಬದಿ ಲಾರಿ, ಸಿಗ್ನಲ್ ಬಳಿ ನಿಂತಿದ್ದ ಲಾರಿಗೆ ಭಾರೀ ವೇಗದಲ್ಲಿ ಗುದ್ದಿದೆ.

ಸ್ವಿಗ್ಗಿ ಇನ್ಸ್ಟಾಮಾರ್ಟ್‌ಗೆ ತರಕಾರಿ ಸಾಗಿಸುತ್ತಿದ್ದ ಈ ಲಾರಿ ಕೋಲಾರದ ಮಾಲೂರಿನಿಂದ ಆರ್‌ಆರ್ ನಗರ ಕಡೆಗೆ ಬರುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಚಾಲಕ ವಿಜಯ್ ಕುಮಾರ್ ಅವರ ದೇಹ ನಜ್ಜುಗುಜ್ಜಾಗಿದೆ.

ಅಪಘಾತದ ಬಳಿಕ ಸಂಚಾರಿ ಪೊಲೀಸರು ವಾಹನವನ್ನು ತೆರವುಗೊಳಿಸಿದ್ದು, ಮೃತದೇಹವನ್ನು ಕೆಆರ್ ಮಾರುಕಟ್ಟೆಯ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಪ್ರಕರಣ ಕುರಿತು ತನಿಖೆ ಮುಂದುವರಿದಿದೆ.

ರಾಜ್ಯದ ಈ ಮೂರು ಜಿಲ್ಲೆಗಳಲ್ಲಿ ಇಂದು ಮಳೆಯ ಮುನ್ಸೂಚನೆ: ಇಲ್ಲೆಲ್ಲಾ ಯೆಲ್ಲೋ ಅಲರ್ಟ್ ಘೋಷಣೆ

ಬೆಂಗಳೂರು: ಕಳೆದ ಕೆಲವು ದಿನಗಳಿಂದ ರಾಜ್ಯದ ವಿವಿಧ ಭಾಗಗಳಲ್ಲಿ ಮಳೆಯ ಆರ್ಭಟ ಕಂಡುಬಂದಿದ್ದರೂ, ಇಂದು ಮಳೆಯ ತೀವ್ರತೆ ಕಡಿಮೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಚಿಕ್ಕಬಳ್ಳಾಪುರ, ಕೋಲಾರ ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ ಮಾತ್ರ ಮಳೆಯಾಗುವ ಸಾಧ್ಯತೆ ಇದ್ದು, ಈ ಮೂರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಉಳಿದಂತೆ ರಾಜ್ಯದ ಬಹುತೇಕ ಭಾಗಗಳಲ್ಲಿ ಒಣ ಹವೆಯ ವಾತಾವರಣ ಮುಂದುವರಿಯಲಿದೆ. ದಕ್ಷಿಣ ಒಳನಾಡಿನ ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿತ್ರದುರ್ಗ, ದಾವಣಗೆರೆ, ಮಂಡ್ಯ, ರಾಮನಗರ, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ಕೊಡಗು, ಮೈಸೂರು, ತುಮಕೂರು ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಶುಷ್ಕ ಹವಾಮಾನ ಇರಲಿದೆ.

ಇನ್ನೂ ಕರಾವಳಿ ಭಾಗಗಳಾದ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿಯೂ ಮಳೆಯ ಲಕ್ಷಣಗಳು ಕಡಿಮೆಯಾಗಿದ್ದು, ಒಣ ಹವೆಯೇ ಮುಂದುವರಿಯಲಿದೆ ಎಂದು ಇಲಾಖೆ ಮಾಹಿತಿ ನೀಡಿದೆ.

ಉತ್ತರ ಒಳನಾಡಿನ ಬೆಳಗಾವಿ, ಬೀದರ್, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ, ಧಾರವಾಡ, ಕಲಬುರಗಿ, ಕೊಪ್ಪಳ, ರಾಯಚೂರು, ಯಾದಗಿರಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಸಹ ಒಣ ಹವಾಮಾನವಿರಲಿದೆ ಎಂದು ತಿಳಿಸಲಾಗಿದೆ.

ಒಟ್ಟಾರೆ, ರಾಜ್ಯದಲ್ಲಿ ಮಳೆಯ ಚಟುವಟಿಕೆ ತಗ್ಗಿ, ಬಹುತೇಕ ಭಾಗಗಳಲ್ಲಿ ಬಿಸಿಲು ಹಾಗೂ ಒಣ ಹವೆಯ ವಾತಾವರಣ ಕಾಣಿಸಿಕೊಳ್ಳಲಿದೆ.

ಗಾಢ ನಿದ್ರೆಯಲ್ಲಿದ್ದವರ ಮೇಲೆ ಮಾರಣಾಂತಿಕ ಹಲ್ಲೆ: ರಕ್ತದ ಮಡುವಿನಲ್ಲಿ ಒದ್ದಾಡಿದ ಗಾಯಾಳುಗಳು, ಸ್ಥಿತಿ ಗಂಭೀರ!

ಗದಗ:- ಗಾಢ ನಿದ್ರೆಯಲ್ಲಿದ್ದ ಆರು ಜನರ ಮೇಲೆ ಕಿರಾತಕನೋರ್ವ ದೊಣ್ಣೆಯಿಂದ ಮಾರಣಾಂತಿಕ ಹಲ್ಲೆ ಮಾಡಿ ಅಟ್ಟಹಾಸ ಮೆರೆದಿರುವ ಘಟನೆ ಜಿಲ್ಲೆಯ ಮುಂಡರಗಿ ತಾಲೂಕಿನ ಡೋಣಿ ತಾಂಡಾದಲ್ಲಿ ನಡುರಾತ್ರಿ ಜರುಗಿದೆ.

ಹರ್ಜಪ್ಪ ಲಮಾಣಿ ಎಂಬ ವ್ಯಕ್ತಿಯೇ ಮಾರಣಾಂತಿಕ ಹಲ್ಲೆ ಮಾಡಿದವ. ಎಗ್ಗಪ್ಪ ಭಜನೆನಾಯಕ, ಶೇಖಪ್ಪ ನಾಯಕ್, ದೇವಕ್ಕ ನಾಯಕ್, ಷಣ್ಮುಖಪ್ಪ ರಾಠೋಡ, ಜಗದೀಶ್ ಲಮಾಣಿ ಹಾಗೂ ಚವಳ್ಳವ್ವ ಲಮಾಣಿ ಗಾಯಗೊಂಡವರು.

ಹರ್ಜಪ್ಪ ಲಮಾಣಿ ಎಂಬ ಕಿರಾತಕ, ತಡರಾತ್ರಿ ಸುಮಾರು 1 ಗಂಟೆಯ ವೇಳೆ ಮನೆ ಮುಂದೆ ಮಲಗಿದ್ದವರ ಮೇಲೆ ದೊಣ್ಣೆಯಿಂದ ಮನಬಂದಂತೆ ಹಲ್ಲೆ ನಡೆಸಿದ ಪರಿಣಾಮ, ಹಲ್ಲೆಗೊಳಗಾದವರು ರಕ್ತದ ಮಡುವಿನಲ್ಲಿ ಒದ್ದಾಡಿದ್ದಾರೆ. ಗಾಯಾಳುಗಳ ಕೂಗಾಟ, ಚೀರಾಟ ಕೇಳಿ ತಾಂಡಾ ನಿವಾಸಿಗಳು ಸ್ಥಳಕ್ಕೆ ಧಾವಿಸಿ, ದೃಶ್ಯ ಕಂಡು ಬೆಚ್ಚಿಬಿದ್ದಿದ್ದಾರೆ.

ಗಂಭೀರವಾಗಿ ಗಾಯಗೊಂಡ ಎಗ್ಗಪ್ಪ ಭಜನೆನಾಯಕ, ಶೇಖಪ್ಪ ನಾಯಕ್, ದೇವಕ್ಕ ನಾಯಕ್, ಷಣ್ಮುಖಪ್ಪ ರಾಠೋಡ, ಜಗದೀಶ್ ಲಮಾಣಿ ಹಾಗೂ ಚವಳ್ಳವ್ವ ಲಮಾಣಿ ಅವರನ್ನು ತಕ್ಷಣ ಗದಗ ಜಿಮ್ಸ್ ಆಸ್ಪತ್ರೆಗೆ ರವಾನಿಸಿ, ಬಳಿಕ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ ದಾಖಲಿಸಲಾಗಿದೆ. ಗಾಯಾಳುಗಳ ತಲೆ, ಕಣ್ಣು ಹಾಗೂ ಮುಖ ಭಾಗಗಳಿಗೆ ಗಂಭೀರ ಗಾಯಗಳಾಗಿದ್ದು, ಕೆಲವರ ಸ್ಥಿತಿ ಚಿಂತಾಜನಕವಾಗಿದೆ.

ಗಾಯಾಳುಗಳ ಸ್ಥಿತಿ ಕಂಡು ಕುಟುಂಬಸ್ಥರು ಕಣ್ಣೀರು ಹಾಕಿದ್ದಾರೆ. ಘಟನೆ ಕುರಿತು ಮುಂಡರಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಕೊಲೆಗೆ ಪ್ರಚೋದನೆ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿರುಧ್ದ ದೂರು ದಾಖಲು!

ದಿಸ್ಪುರ್: ಕೊಲೆಗೆ ಪ್ರಚೋದನೆ ಕೊಟ್ಟ ಆರೋಪದಡಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿರುಧ್ದ ಬೆಂಗಳೂರಿನಲ್ಲಿ ದೂರು ದಾಖಲಾಗಿದೆ.

ಅಸ್ಸಾಂನಲ್ಲಿ ಆರ್‌ಎಸ್‌ಎಸ್ ಮತ್ತು ಬಿಜೆಪಿ ಕಾರ್ಯಕರ್ತರನ್ನು ಕೊಲ್ಲುವಂತೆ ಮುಸ್ಲಿಮರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕರೆ ನೀಡಿದ್ದಾರೆ ಎಂಬ ಆರೋಪದ ಮೇಲೆ ಬೆಂಗಳೂರಿನಲ್ಲಿ ದೂರು ದಾಖಲಾಗಿದೆ.

ಎಸ್, ರಾಜ್ಯ ಬಿಜೆಪಿ ಶಾಸಕರಾದ ಮುನಿರಾಜು, ಸಿಕೆ ರಾಮಮೂರ್ತಿ ನಿಯೋಗ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಡಾ ಎಂ.ಸಲೀಂ ಅವರಿಗೆ ದೂರು ಕೊಟ್ಟಿದ್ದಾರೆ. ಹತ್ಯೆಗೆ ಪ್ರಚೋದನಾಕಾರಿ ಭಾಷಣ ಮಾಡಿರುವ ಖರ್ಗೆ ಅವರನ್ನು ಕೂಡಲೇ ಬಂಧಿಸುವಂತೆ ಬಿಜೆಪಿಗರು ಒತ್ತಾಯಿಸಿದ್ದಾರೆ.

ನಾವೆಂದೂ ಹಿಂಜರಿಯುವುದಿಲ್ಲ, ಅಮೆರಿಕ ಬೆದರಿಕೆಗೆ ಟಾಂಗ್ ಕೊಟ್ಟ ಇರಾನ್!

0

ಟೆಹ್ರಾನ್: ಇಂದು ರಾತ್ರಿ ಇಡೀ ಇರಾನ್ ದೇಶ ನಾಶವಾಗಲಿದೆ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಬೆದರಿಕೆಗೆ ಇರಾನ್ ಪ್ರತ್ಯುತ್ತರ ಕೊಟ್ಟಿದೆ.

ನಾವು ನಿಮ್ಮ ಬೆದರಿಕೆಗೆ ಹೆದರುವುದಿಲ್ಲ, ನಮ್ಮ ದಾಳಿಗಳನ್ನು ದ್ವಿಗುಣಗೊಳಿಸುತ್ತೇವೆ, ನಾವೆಂದೂ ಹಿಂಜರಿಯುವುದಿಲ್ಲ ಎಂದು ಹೇಳಿದೆ. ಅಷ್ಟೇ ಅಲ್ಲದೇ ಟ್ರಂಪ್ ಅವರ ಇತ್ತೀಚಿನ ಬೆದರಿಕೆಗಳ ನಂತರ ಎಲ್ಲಾ ರಾಜತಾಂತ್ರಿಕ ಮಾರ್ಗಗಳು ಮತ್ತು ಪರೋಕ್ಷ ಮಾತುಕತೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಇರಾನ್ ಸ್ಪಷ್ಟಪಡಿಸಿದೆ.

ದಕ್ಷಿಣ ಆಫ್ರಿಕಾದಲ್ಲಿರುವ ಇರಾನಿನ ರಾಯಭಾರ ಕಚೇರಿಯು ಎಕ್ಸ್​ನಲ್ಲಿ ಟ್ರಂಪ್ ಹೇಳಿಕೆಗೆ ಪ್ರತಿಕ್ರಿಯಿಸಿದ್ದು, “ನೀವು ಮತ್ತು ನಿಮ್ಮ ಮಿತ್ರರಾಷ್ಟ್ರಗಳು ಇರಾನ್‌ನ ಪ್ರಾಚೀನ ನಾಗರಿಕತೆಯಿಂದ ಮರೆಯಲಾಗದ ಹೊಡೆತವನ್ನು ಅನುಭವಿಸುವಿರಿ” ಎಂದು ಹೇಳಿದೆ. ಫೆಬ್ರವರಿಯಲ್ಲಿ ಯುಎಸ್-ಇಸ್ರೇಲಿ ದಾಳಿಯ ಸಮಯದಲ್ಲಿ ಮಿನಾಬ್‌ನಲ್ಲಿ ಕೊಲ್ಲಲ್ಪಟ್ಟ ಮಗುವಿನ ದುಃಖಿತ ತಾಯಿಯ ಚಿತ್ರವನ್ನು ಸಹ ರಾಯಭಾರ ಕಚೇರಿ ಹಂಚಿಕೊಂಡಿದೆ.

ಇದು ಅಯತೊಲ್ಲಾ ಅಲಿ ಖಮೇನಿಯವರ ಹತ್ಯೆಯ ನಂತರ ಮತ್ತು ಪ್ರಾಥಮಿಕ ಶಾಲೆಯ ಮೇಲೆ ಕ್ಷಿಪಣಿ ದಾಳಿಗಳನ್ನು ಗುರಿಯಾಗಿಸಿಕೊಂಡ ದಾಳಿಯಾಗಿತ್ತು. ಈ ದಾಳಿಯಲ್ಲಿ ಸುಮಾರು 170 ಶಾಲಾ ಹುಡುಗಿಯರು ಸಾವನ್ನಪ್ಪಿದ್ದರು. “ಈ ದುಃಖ, ಈ ಕೋಪ, ಈ ಮುಖವನ್ನು ನೆನಪಿಟ್ಟುಕೊಳ್ಳಿ. ನಾವು ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ” ಎಂದು ರಾಯಭಾರ ಕಚೇರಿಯು ಎಕ್ಸ್​​ನಲ್ಲಿ ಪೋಸ್ಟ್ ಮಾಡಿದೆ.

“ಅಮೆರಿಕನ್ ಭಯೋತ್ಪಾದಕ ಸೇನೆಯು ಕೆಂಪು ರೇಖೆಗಳನ್ನು ದಾಟಿದರೆ ನಮ್ಮ ಪ್ರತಿಕ್ರಿಯೆಯು ಬೇರೆಯದೇ ರೀತಿ ಇರುತ್ತದೆ. ನಾವು ನಾಗರಿಕ ಸೌಲಭ್ಯಗಳ ಮೇಲಿನ ಹೇಯ ಆಕ್ರಮಣಗಳ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲು ಹಿಂಜರಿಯುವುದಿಲ್ಲ” ಎಂದು IRGC ತಿಳಿಸಿದೆ.

ಕರಿಬೇವಿನ ಎಲೆ ಎಲ್ಲರಿಗೂ ಸೂಕ್ತವಲ್ಲ: ಕೆಲವರಿಗೆ ಆರೋಗ್ಯ ಸಮಸ್ಯೆಗಳ ಅಪಾಯ! ಬಳಸದಿರುವುದೇ ಒಳ್ಳೆಯದು

0

ನಮ್ಮ ದೈನಂದಿನ ಅಡುಗೆಯಲ್ಲಿ ಪ್ರಮುಖ ಸ್ಥಾನ ಹೊಂದಿರುವ ಕರಿಬೇವಿನ ಎಲೆ ರುಚಿ ಮಾತ್ರವಲ್ಲದೆ ಔಷಧೀಯ ಗುಣಗಳಿಗೂ ಪ್ರಸಿದ್ಧವಾಗಿದೆ.

ಆದರೆ, ಇದನ್ನು ಎಲ್ಲರೂ ನಿರಾಳವಾಗಿ ಸೇವಿಸಬಹುದು ಎಂಬುದು ತಪ್ಪು ಕಲ್ಪನೆ ಎಂದು ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ. ಕೆಲ ವಿಶೇಷ ಆರೋಗ್ಯ ಸಮಸ್ಯೆಗಳಿರುವವರು ಕರಿಬೇವಿನ ಎಲೆಗಳನ್ನು ಮಿತವಾಗಿ ಅಥವಾ ವೈದ್ಯರ ಸಲಹೆಯೊಂದಿಗೆ ಮಾತ್ರ ಬಳಸಬೇಕು ಎಂದು ಹೇಳಿದ್ದಾರೆ.

ತಜ್ಞರ ಪ್ರಕಾರ, ರಕ್ತದಲ್ಲಿ ಶುಗರ್ ಮಟ್ಟ ಈಗಾಗಲೇ ಕಡಿಮೆ ಇರುವವರು ಕರಿಬೇವಿನ ಎಲೆಗಳನ್ನು ಹೆಚ್ಚು ಸೇವಿಸಿದರೆ ಹೈಪೋಗ್ಲೈಸೀಮಿಯಾ ಸಮಸ್ಯೆ ಉಂಟಾಗಿ ತಲೆ ಸುತ್ತು, ದೌರ್ಬಲ್ಯ ಕಾಣಿಸಿಕೊಳ್ಳಬಹುದು. ಕೆಲವರಿಗೆ ಅಲರ್ಜಿ ಉಂಟಾಗಿ ಚರ್ಮದಲ್ಲಿ ಉರಿ, ಊತ ಅಥವಾ ಉಸಿರಾಟದ ತೊಂದರೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಗರ್ಭಿಣಿಯರು ಮತ್ತು ಹಾಲುಣಿಸುವ ತಾಯಂದಿರಿಗೆ ಹಾರ್ಮೋನ್ ಬದಲಾವಣೆಗಳಿಂದ ದೇಹ ಸಂವೇದನಾಶೀಲವಾಗಿರುವುದರಿಂದ, ಹೆಚ್ಚು ಪ್ರಮಾಣದಲ್ಲಿ ಸೇವನೆ ಮಾಡಿದರೆ ವಾಂತಿ ಅಥವಾ ಜೀರ್ಣಕ್ರಿಯೆ ಸಮಸ್ಯೆಗಳು ಎದುರಾಗಬಹುದು.

ಇದಲ್ಲದೆ, ಅಲ್ಸರ್ ಅಥವಾ ಗ್ಯಾಸ್ಟ್ರಿಕ್ ಸಮಸ್ಯೆಯಿರುವವರು ಹಸಿ ಕರಿಬೇವಿನ ಎಲೆಗಳನ್ನು ನೇರವಾಗಿ ಸೇವಿಸುವುದನ್ನು ತಪ್ಪಿಸಿಕೊಳ್ಳಬೇಕು. ಕಿಡ್ನಿ ಸಮಸ್ಯೆಯಿರುವವರು ಅಥವಾ ಡಯಾಲಿಸಿಸ್ ಪಡೆಯುತ್ತಿರುವವರು ಯಾವುದೇ ಔಷಧೀಯ ಸಸ್ಯಗಳಂತೆ ಇದನ್ನೂ ಬಳಸುವ ಮೊದಲು ವೈದ್ಯರ ಸಲಹೆ ಪಡೆಯುವುದು ಸೂಕ್ತ ಎಂದು ತಜ್ಞರು ಸಲಹೆ ನೀಡಿದ್ದಾರೆ.

 

ಬೆಂಗಳೂರು ವಿಮಾನ ನಿಲ್ದಾಣದಲ್ಲಿ 5 ಕೋಟಿ ರೂ. ಮೌಲ್ಯದ ಚಿನ್ನ ವಶಕ್ಕೆ: ಐವರು ಅರೆಸ್ಟ್‌

ಬೆಂಗಳೂರು: ಕಂದಾಯ ಗುಪ್ತಚರ ನಿರ್ದೇಶನಾಲಯ ಅಧಿಕಾರಿಗಳು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಸುಮಾರು 5 ಕೋಟಿ ರೂ. ಮೌಲ್ಯದ 2 ಚಿನ್ನದ ಬಿಸ್ಕೆಟ್ ವಶಕ್ಕೆ ಪಡೆದಿದ್ದಾರೆ.

ಈ ಪ್ರಕರಣದಲ್ಲಿ ಐವರು ಆರೋಪಿಗಳನ್ನು ಬಂಧಿಸಲಾಗಿದೆ.

ವರದಿಗಳ ಪ್ರಕಾರ, ಆರೋಪಿಗಳು ಬಾಂಗ್ಲಾದೇಶದ ಮೂಲಕ ಬೆಂಗಳೂರಿಗೆ ಚಿನ್ನವನ್ನು ಕ್ಯಾಪ್ಸುಲ್ ರೂಪದಲ್ಲಿ ಸಾಗಿಸುತ್ತಿದ್ದರು. ಅನುಮಾನಾಸ್ಪದ ವಸ್ತುಗಳನ್ನು ತಪಾಸಣೆ ಮಾಡಿದಾಗ, ಶೌಚಾಲಯದಲ್ಲಿ ಅವರ ದೇಹದ ಖಾಸಗಿ ಭಾಗದಲ್ಲಿ ಚಿನ್ನವನ್ನು ಇಟ್ಟುಕೊಂಡಿರುವುದು ಪತ್ತೆವಾಗಿದೆ.

ಅಧಿಕಾರಿಗಳು ಮುಂದಿನ ವಿಚಾರಣೆ ನಡೆಸುತ್ತಿದ್ದು, ಈ ಪ್ರಕರಣದಲ್ಲಿ ಹೆಚ್ಚಿನ ವಿವರಗಳು ಹೊರಬರುವ ನಿರೀಕ್ಷೆ ಇದೆ.

ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಡೇವಿಡ್ ವಾರ್ನರ್ ಅರೆಸ್ಟ್! ನಡೆದಿದ್ದೇನು?

0

ಸಿಡ್ನಿ: ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಡೇವಿಡ್ ವಾರ್ನರ್ ಅವರು ಡ್ರಿಂಕ್ & ಡ್ರೈವ್‌ ಕೇಸಲ್ಲಿ ಅರೆಸ್ಟ್ ಆಗಿದ್ದಾರೆ.

ಏಪ್ರಿಲ್ 5ರ ಭಾನುವಾರದಂದು ಸಿಡ್ನಿಯ ಮಲಾಬಾರ್ ರೋಡ್‌ನ ಮರೂಬ್ರಾನಲ್ಲಿ ಪೊಲೀಸ್ ಅಧಿಕಾರಿಗಳು ಡ್ರಿಂಕ್ & ಡ್ರೈವ್‌ ಟೆಸ್ಟ್ ಮಾಡುತ್ತಿದ್ದರು. ಇದನ್ನು ಗಮನಿಸಿದ ವಾರ್ನರ್ ಟೆಸ್ಟ್ ಮಾಡುತ್ತಿದ್ದ ಸ್ಥಳದಿಂದ ದೂರದಲ್ಲೇ ಕಾರನ್ನು ಪಾರ್ಕ್ ಮಾಡಿದ್ದಾರೆ. ಇದನ್ನು ಕಂಡ ಪೊಲೀಸ್ ಅಧಿಕಾರಿಗಳು ಅಲ್ಲಿಗೆ ಬಂದು ವಾರ್ನರ್ ಅವರ ಉಸಿರಾಟದ ಪರೀಕ್ಷೆ ಮಾಡಿದ್ದಾರೆ. ಆಗ ಮದ್ಯಸೇವನೆ ಮಾಡಿರುವುದು ದೃಢವಾಗಿದೆ.

ವರದಿಗಳ ಪ್ರಕಾರ, ಆಲ್ಕೋಹಾಲ್ ಲೆವೆಲ್ 0.1 ಆಗಿದ್ದು, ಇದು ಆಸ್ಟ್ರೇಲಿಯಾ ಕಾನೂನುಬದ್ಧ ಮಿತಿಗಿಂತ ಸುಮಾರು ಎರಡು ಪಟ್ಟು ಹೆಚ್ಚು ಎನ್ನಲಾಗಿದೆ. ಕೂಡಲೇ ಪೊಲೀಸರು ವಾರ್ನರ್ ಅವರನ್ನು ಬಂಧಿಸಿ, ಮರೂಬ್ರಾ ಪೊಲೀಸ್ ಸ್ಟೇಷನ್‌ಗೆ ಕರೆದೊಯ್ದಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿಚಾರಣೆ ನಡೆಸಿ, ಬಿಟ್ಟುಕಳುಹಿಸಿದ್ದಾರೆ.

error: Content is protected !!