Home Blog Page 4

ಆಸ್ತಿ ಹಕ್ಕು ವಿವಾದಗಳ ವಿಚಾರಣೆ ಕುಟುಂಬ ನ್ಯಾಯಾಲಯದ ವ್ಯಾಪ್ತಿಗೆ ಬರುವುದಿಲ್ಲ: ಹೈಕೋರ್ಟ್

ಬೆಂಗಳೂರು: ಆಸ್ತಿ ಹಕ್ಕು ಹಾಗೂ ಉತ್ತರಾಧಿಕಾರಕ್ಕೆ ಸಂಬಂಧಿಸಿದ ಸಿವಿಲ್ ವ್ಯಾಜ್ಯಗಳನ್ನು ಕೌಟುಂಬಿಕ ನ್ಯಾಯಾಲಯದ ವ್ಯಾಪ್ತಿಗೆ ವಿಸ್ತರಿಸಲು ಸಾಧ್ಯವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ.

ಕುಟುಂಬ ನ್ಯಾಯಾಲಯಗಳ ಅಧಿಕಾರವನ್ನು ಪ್ರತಿಯೊಂದು ಆಸ್ತಿ ಹಕ್ಕು ಅಥವಾ ಉತ್ತರಾಧಿಕಾರ ವಿವಾದಕ್ಕೂ ಅನ್ವಯಿಸಿದರೆ, ಅವುಗಳ ಸ್ಥಾಪನೆಯ ಮೂಲ ಉದ್ದೇಶವೇ ದುರ್ಬಲಗೊಳ್ಳುವುದಲ್ಲದೆ, ಸಿವಿಲ್ ನ್ಯಾಯಾಲಯಗಳ ನಿಗದಿತ ಅಧಿಕಾರ ವ್ಯಾಪ್ತಿಯ ಮೇಲೆಯೂ ಅತಿಕ್ರಮಣವಾಗುತ್ತದೆ ಎಂದು ನ್ಯಾಯಾಲಯ ತಿಳಿಸಿದೆ.

ಮೃತ ಜೆ.ಪಿ. ನಾರಾಯಣಸ್ವಾಮಿ ಅವರ ಆಸ್ತಿಗೆ ಸಂಬಂಧಿಸಿದ ಪ್ರಕರಣದಲ್ಲಿ, ಮೃತರ ತಾಯಿ ಸಲ್ಲಿಸಿದ್ದ ಅರ್ಜಿಯನ್ನು ಕೌಟುಂಬಿಕ ನ್ಯಾಯಾಲಯ ವಿಚಾರಣೆಗೆ ಸ್ವೀಕರಿಸಿದ್ದನ್ನು ಪ್ರಶ್ನಿಸಿ ಅವರ ಪತ್ನಿ ಹೆಚ್.ಬಿ. ಶೋಭಾ ಹಾಗೂ ಮಕ್ಕಳು ಹೈಕೋರ್ಟ್ ಮೊರೆ ಹೋಗಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ. ಮನ್ಮಧ ರಾವ್ ಅವರಿದ್ದ ಏಕಸದಸ್ಯ ಪೀಠವು ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ರದ್ದುಪಡಿಸಿದೆ.

ತೀರ್ಪಿನಲ್ಲಿ ನ್ಯಾಯಾಲಯ, ಕುಟುಂಬ ನ್ಯಾಯಾಲಯಗಳ ಕಾಯ್ದೆ ಕುಟುಂಬ ಸಂಬಂಧಿತ ವಿವಾದಗಳನ್ನು ತ್ವರಿತವಾಗಿ ಹಾಗೂ ಸಂಧಾನದ ಮೂಲಕ ಬಗೆಹರಿಸುವ ಉದ್ದೇಶದಿಂದ ಜಾರಿಗೆ ತರಲಾಗಿದೆ ಎಂದು ತಿಳಿಸಿದೆ. ಆದರೆ ಸಂಕೀರ್ಣ ಸ್ವರೂಪದ ನಾಗರಿಕ ವ್ಯಾಜ್ಯಗಳು ಮತ್ತು ಆಸ್ತಿ ಹಕ್ಕು ಸಂಬಂಧಿತ ಪ್ರಕರಣಗಳ ವಿಚಾರಣೆಗೆ ಅದರ ಅಧಿಕಾರವನ್ನು ವಿಸ್ತರಿಸಲು ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದೆ.

ಪ್ರಸ್ತುತ ಪ್ರಕರಣದಲ್ಲಿ ದಾಂಪತ್ಯ ಕಲಹ ಅಥವಾ ಕುಟುಂಬ ಸಂಬಂಧಿತ ವಿವಾದವಿಲ್ಲ. ಬದಲಾಗಿ, ಮೃತ ವ್ಯಕ್ತಿಯ ಆಸ್ತಿಯ ಮೇಲಿನ ಹಕ್ಕು ಹಾಗೂ ಸಂಬಂಧಿತ ವ್ಯಕ್ತಿಗಳ ಕಾನೂನು ಸ್ಥಾನಮಾನವನ್ನು ನಿರ್ಧರಿಸುವುದೇ ಮುಖ್ಯ ವಿಚಾರವಾಗಿದೆ. ಹೀಗಾಗಿ ಇದು ಕೌಟುಂಬಿಕ ವಿವಾದವಲ್ಲದೆ, ಸಿವಿಲ್ ಸ್ವರೂಪದ ಸಂಕೀರ್ಣ ವ್ಯಾಜ್ಯವಾಗಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಸಿವಿಲ್ ನ್ಯಾಯಾಲಯಕ್ಕೆ ಹೋಗಲು ಅವಕಾಶ

ಈ ಹಿನ್ನೆಲೆಯಲ್ಲಿ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ರದ್ದುಪಡಿಸಿದ ಹೈಕೋರ್ಟ್, ಪ್ರತಿವಾದಿಗಳ ಕಾನೂನು ಪ್ರತಿನಿಧಿಗಳು ತಮ್ಮ ಹಕ್ಕುಗಳಿಗೆ ಸಂಬಂಧಿಸಿದಂತೆ ಯಾವುದೇ ದೂರು ಅಥವಾ ಹಕ್ಕು ಪ್ರತಿಪಾದನೆ ಹೊಂದಿದ್ದರೆ, ಸಂಬಂಧಿತ ಸಿವಿಲ್ ನ್ಯಾಯಾಲಯದ ಮುಂದೆ ಹೊಸದಾಗಿ ದಾವೆ ಹೂಡುವ ಸ್ವಾತಂತ್ರ್ಯ ಹೊಂದಿದ್ದಾರೆ ಎಂದು ಸೂಚಿಸಿದೆ.

ಪ್ರಕರಣದ ಹಿನ್ನೆಲೆ

ಮೃತ ಜೆ.ಪಿ. ನಾರಾಯಣಸ್ವಾಮಿ ಅವರ ಆಸ್ತಿಗೆ ಸಂಬಂಧಿಸಿದ ವಿವಾದದಲ್ಲಿ, ಅವರ ತಾಯಿ ಪಾರ್ವತಮ್ಮ ಅವರು ಅರ್ಜಿ ಸಲ್ಲಿಸಿ, ಹೆಚ್.ಬಿ. ಶೋಭಾ ಅವರು ನಾರಾಯಣಸ್ವಾಮಿ ಅವರ ಕಾನೂನುಬದ್ಧ ಪತ್ನಿಯಲ್ಲ ಹಾಗೂ ಅವರಿಬ್ಬರು ಮಕ್ಕಳು ಮೃತರ ವಾರಸುದಾರರಲ್ಲ ಎಂದು ಘೋಷಣೆ ನೀಡುವಂತೆ ಕೋರಿದ್ದರು. ಜೊತೆಗೆ, ನಾರಾಯಣಸ್ವಾಮಿ ಅವರ ಆಸ್ತಿಯಲ್ಲಿ ಯಾವುದೇ ಹಕ್ಕು ಕೋರುವುದನ್ನು ತಡೆಯಲು ಶಾಶ್ವತ ತಡೆಯಾಜ್ಞೆ ನೀಡುವಂತೆ ಮನವಿ ಮಾಡಿದ್ದರು.

ಈ ಅರ್ಜಿಯನ್ನು ಕೌಟುಂಬಿಕ ನ್ಯಾಯಾಲಯವು ಕುಟುಂಬ ನ್ಯಾಯಾಲಯಗಳ ಕಾಯ್ದೆಯ ಸೆಕ್ಷನ್ 7(1)(a) ಮತ್ತು 7(1)(b) ಅಡಿಯಲ್ಲಿ ವಿಚಾರಣೆಗೆ ಸ್ವೀಕರಿಸಿತ್ತು. ಇದನ್ನು ಪ್ರಶ್ನಿಸಿ ಶೋಭಾ ಹಾಗೂ ಮಕ್ಕಳು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಯುತ್ತಿದ್ದ ವೇಳೆ ಪಾರ್ವತಮ್ಮ ಅವರು 2020ರ ಫೆಬ್ರವರಿ 24ರಂದು ನಿಧನರಾಗಿದ್ದು, ಬಳಿಕ ಅವರ ಕಾನೂನು ವಾರಸುದಾರರು ಪ್ರಕರಣವನ್ನು ಮುಂದುವರಿಸಿದ್ದರು.

ಅರ್ಜಿದಾರರ ಪರ ವಕೀಲರು, ಇದು ಮೂಲತಃ ಆಸ್ತಿ ಹಕ್ಕುಗಳಿಗೆ ಸಂಬಂಧಿಸಿದ ಸಿವಿಲ್ ವ್ಯಾಜ್ಯವಾಗಿದ್ದು, ಕೌಟುಂಬಿಕ ನ್ಯಾಯಾಲಯಕ್ಕೆ ಇಂತಹ ಪ್ರಕರಣದ ವಿಚಾರಣೆ ನಡೆಸುವ ಅಧಿಕಾರವಿಲ್ಲ ಎಂದು ವಾದಿಸಿದ್ದರು. ಈ ವಾದವನ್ನು ಪರಿಗಣಿಸಿದ ಹೈಕೋರ್ಟ್, ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ರದ್ದುಪಡಿಸಿ ಮಹತ್ವದ ಸ್ಪಷ್ಟನೆ ನೀಡಿದೆ.

ಜನರಿಗೆ ಹೊಸದೇನೂ ಸಿಕ್ಕಿಲ್ಲ. ಭಾರತ್ ಜೋಡೋ ಕಾರ್ಯಕ್ರಮದಿಂದ ಕಾಂಗ್ರೆಸ್ ನಿರಾಶ್ರಿತರಿಗೆ ಲಾಭ: ಆರ್.ಅಶೋಕ್

ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ನೇತೃತ್ವದಲ್ಲಿ ರಚನೆಯಾದ ಹೊಸ ಸರ್ಕಾರ, ರಾಹುಲ್‌ ಗಾಂಧಿ ಮತ್ತು ಸಿದ್ದರಾಮಯ್ಯನವರ ರಿಮೋಟ್‌ ಕಂಟ್ರೋಲ್‌ನಿಂದ ನಡೆಯಲಿದೆ. ಇದರಿಂದ ಜನರಿಗೆ ಏನೂ ಹೊಸತು ಸಿಕ್ಕಿಲ್ಲ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಟೀಕಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾಗಿರುವುದು ಹಳೆ ಸಿನಿಮಾದ ಪೋಸ್ಟರ್‌ ಬದಲಾದಂತಿದೆ. ಮುಖ್ಯಮಂತ್ರಿ ನಿವಾಸದ ಮುಂಭಾಗದ ಫಲಕದಲ್ಲಿ ಹೆಸರು ಬದಲಾಗಿದೆಯೇ ಹೊರತು ಜನರ ಕಷ್ಟಗಳು ನೀಗಿಲ್ಲ. ರಾಜ್ಯಕ್ಕೆ ಹೊಸ ಸಚಿವರು ಸಿಗುತ್ತಾರೆ ಎಂಬ ನಿರೀಕ್ಷೆ ಇದ್ದರೂ, ಹೊಸ ಮುಖಗಳು ಕಂಡಿಲ್ಲ. ಸಿದ್ದರಾಮಯ್ಯನವರ ಮಗ ಯತೀಂದ್ರ ಸಚಿವರಾಗಿ ಬಂದಿದ್ದಾರೆಯೇ ಹೊರತು ಹೊಸದೇನೂ ಇಲ್ಲ ಎಂದರು.

ಮಳೆಯಿಂದಾಗಿ ಬೆಳೆಹಾನಿಯಾಗಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, ಇದರಲ್ಲಿ ರಾಜ್ಯಕ್ಕೆ ಎರಡನೇ ಸ್ಥಾನ ಬಂದಿದೆ. ಐಪಿಎಲ್‌ ಸಂಭ್ರಮಾಚರಣೆಯಲ್ಲಿ ಹನ್ನೊಂದು ಅಮಾಯಕರ ಹತ್ಯೆಯಾಯಿತು. ಭ್ರಷ್ಟಾಚಾರದ ನೋವಿನಿಂದ ಅಧಿಕಾರಿಗಳ ಸಾವು, ಸರ್ಕಾರದ ನಿರ್ಲಕ್ಷ್ಯದಿಂದ ಬಾಣಂತಿಯರ ಸಾವು,

ಮೈಕ್ರೋ ಫೈನಾನ್ಸ್‌ ಒತ್ತಡದಿಂದ ಜನರ ಸಾವು, ಸಂಬಳ ಸಿಗದೆ ನೌಕರರ ಸಾವು, ಆಸ್ಪತ್ರೆ ಗೋಡೆ ಕುಸಿದು ಬೀದಿ ಬದಿ ವ್ಯಾಪಾರಿಗಳ ಸಾವು, ಬೆಂಗಳೂರು ಸೇರಿದಂತೆ ಎಲ್ಲ ಕಡೆ ರಸ್ತೆಗಳಲ್ಲಿ ಗುಂಡಿಗಳ ಹಾವಳಿ ಹೀಗೆ ಅನೇಕ ಸಮಸ್ಯೆಗಳು ಇನ್ನೂ ಇದೆ. ಜನರು ಉತ್ತಮ ಆಡಳಿತ ಕೇಳಿದರೆ, ಕಾಂಗ್ರೆಸ್‌ ಪಕ್ಷ ಕುರ್ಚಿಯ ಬದಲಾವಣೆ ಮಾತ್ರ ಮಾಡಿದೆ ಎಂದರು.

ಬೆಂಗಳೂರಿನಲ್ಲಿ ನೂರಾರು ಕಟೌಟ್‌ಗಳನ್ನು ಅಳವಡಿಸಲಾಗಿದೆ. ಫಲಕ ಹಾಕಬೇಡಿ ಎಂದು ಸಿಎಂ
ಹೇಳಿದರೂ ಅವುಗಳನ್ನು ಅಳವಡಿಸಲಾಗಿದೆ. ಅಂದರೆ ಮುಖ್ಯಮಂತ್ರಿ ಏನೇ ಹೇಳಿದರೂ ಅದು ಅನುಷ್ಠಾನವಾಗುವುದಿಲ್ಲ ಎಂಬುದು ಸಾಬೀತಾಗಿದೆ.

ಮಹಿಳಾ ವಿರೋಧಿ ಕಾಂಗ್ರೆಸ್

ಸಂಸತ್ತಿನಲ್ಲಿ ಮಹಿಳಾ ಮೀಸಲಾತಿಯನ್ನು ಕಾಂಗ್ರೆಸ್‌ ವಿರೋಧಿಸಿದೆ. ನಿನ್ನೆ ನಡೆದ ಪದಗ್ರಹಣ ಸಮಾರಂಭದಲ್ಲಿ ಒಬ್ಬರೇ ಒಬ್ಬ ಮಹಿಳೆಗೆ ಅವಕಾಶ ನೀಡಿಲ್ಲ. ಕಾಂಗ್ರೆಸ್‌ ಮಹಿಳೆಯರಿಗೆ ಮೋಸ ಮಾಡಿದೆ ಎಂದರು.

ಸಂವಿಧಾನದ ಪುಸ್ತಕ ಏಕೆ?

ಪ್ರಮಾಣವಚನದ ವೇಳೆ ಸಿಎಂ ಡಿ.ಕೆ.ಶಿವಕುಮಾರ್‌ ಸಂವಿಧಾನದ ಪುಸ್ತಕ ಹಿಡಿದುಕೊಂಡಿದ್ದರು. ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರು ಸಿಎಂಗೆ ಎಲ್ಲ ಅಧಿಕಾರ ನೀಡಿದ್ದಾರೆ. ಆದರೆ ಸಚಿವ ಸಂಪುಟದಲ್ಲಿ ಡಿ.ಕೆ.ಶಿ ಕಡೆಗಿನ ಯಾವುದೇ ಶಾಸಕರು ಇಲ್ಲ. ಅಂದರೆ ಎಲ್ಲವನ್ನೂ ಸಿದ್ದರಾಮಯ್ಯ ಹಾಗೂ ಹೈಕಮಾಂಡ್‌ ತೀರ್ಮಾನ ಮಾಡಿದೆ. ಡಿ.ಕೆ.ಶಿ ಅವರಿಗೆ ಯಾವುದೇ ಸ್ವಾತಂತ್ರ್ಯ ಸಿಕ್ಕಿಲ್ಲ ಎಂದು ಲೇವಡಿ ಮಾಡಿದರು.

ಬೆಂಗಳೂರಿನಲ್ಲಿ ಈಗಾಗಲೇ ಇ-ಖಾತಾ ಹೆಸರಲ್ಲಿ ದಂಧೆ ನಡೆಯುತ್ತಿದೆ. ಇದನ್ನು ಇಡೀ ರಾಜ್ಯಕ್ಕೆ ವಿಸ್ತರಣೆ ಮಾಡಿದರೆ ಇನ್ನಷ್ಟು ದಂಧೆ ನಡೆಯುತ್ತದೆ. ಸರ್ವರ್‌ ಡೌನ್‌ ಎಂದು ಹೇಳಿ ಜನರನ್ನು ವಂಚಿಸಲಾಗುತ್ತಿದೆ. ಲಂಚ ಕೊಟ್ಟರೆ ಮಾತ್ರ ಸರ್ವರ್‌ ಕೆಲಸ ಮಾಡುತ್ತದೆ ಎಂದು ಹರಿಹಾಯ್ದರು.

ನೇಮಕದ ಬಗ್ಗೆ ಸುಳ್ಳು ಭರವಸೆ

56,000 ಹುದ್ದೆಗಳ ಸರ್ಕಾರಿ ನೇಮಕಾತಿ ಬಗ್ಗೆಯೂ ಸುಳ್ಳು ಹೇಳಲಾಗಿದೆ. ಈ ಹಿಂದೆಯೇ ಇದರ ಬಗ್ಗೆ ತೀರ್ಮಾನವಾಗಿದ್ದರೂ ಅನುಷ್ಠಾನಕ್ಕೆ ಬಂದಿಲ್ಲ. ಇಷ್ಟೊಂದು ನೌಕರರಿಗೆ ಸಂಬಳ ಕೊಡಲು ಸರ್ಕಾರದ ಬಳಿ ಹಣವಿಲ್ಲ. ಸಿದ್ದರಾಮಯ್ಯನವರು ಮಂಡಿಸಿದ ಬಜೆಟ್‌ನಲ್ಲಿ ಹಣಕಾಸು ಕೊರತೆ ಇದೆ. ಇಂತಹ ಸ್ಥಿತಿಯಲ್ಲಿ ಹೊಸ ನೇಮಕಾತಿ ಮಾಡಲು ಸಾಧ್ಯವೇ ಇಲ್ಲ ಎಂದರು.

ಕಾಂಗ್ರೆಸ್ ನಿರಾಶ್ರಿತರಿಗೆ ಭಾರತ್ ಜೋಡೊ ಸಂಘಟನೆ

ಭಾರತ್‌ ಜೋಡೋಗೂ ಸರ್ಕಾರಕ್ಕೂ ಏನು ಸಂಬಂಧವಿದೆ? ಇದರಿಂದ ಕಾಂಗ್ರೆಸ್‌ನ ನಿರಾಶ್ರಿತರಿಗೆ ಪ್ರಯೋಜನವಾಗಲಿದೆಯೇ ಹೊರತು ಯುವಜನರಿಗೆ ಉಪಯೋಗವಿಲ್ಲ. ಈಗಾಗಲೇ ಗುತ್ತಿಗೆದಾರರಿಗೆ ಬಾಕಿ ಕೊಡಬೇಕಿದೆ. ಆ ಹಣವನ್ನು ಕೊಟ್ಟರೆ ಸಾಕಿತ್ತು. ಉತ್ತರ ಕರ್ನಾಟಕದಲ್ಲಿ ಮಕ್ಕಳು ಶಾಲೆಯ ಒಳಗೆ ಹೋಗದಂತಹ ಸ್ಥಿತಿ ಇದೆ. ಇಂತಹ ಶಾಲೆಗಳನ್ನು ಅಭಿವೃದ್ಧಿ ಮಾಡಿದರೆ ಸಾಕಾಗಿದೆ.

ಸುಖಾಸುಮ್ಮನೆ ಘೋಷಣೆಗಳನ್ನು ಮಾಡಿದರೆ ಸಾಲುವುದಿಲ್ಲ. ಅಬಕಾರಿ ಬಿಟ್ಟರೆ ಎಲ್ಲ ಇಲಾಖೆಗಳಲ್ಲಿ ಆದಾಯ ಕಡಿಮೆಯಾಗಿದೆ. ಯೋಜನೆಗಳನ್ನು ಘೋಷಣೆ ಮಾಡಿ, ಅದನ್ನು ಜಾರಿ ಮಾಡದೆ ನಂತರ ಕೇಂದ್ರ ಸರ್ಕಾರ ಅನುದಾನ ನೀಡಿಲ್ಲ ಎಂದು ಆರೋಪ ಮಾಡುತ್ತಾರೆ ಎಂದು ದೂರಿದರು.

ಹಣಕಾಸು ಶ್ವೇತಪತ್ರ ಮಂಡಿಸಿ

ಕೇರಳಂನ ನೂತನ ಮುಖ್ಯಮಂತ್ರಿ ವಿ.ಡಿ.ಸತೀಶನ್‌ ಅವರು ತಮ್ಮ ರಾಜ್ಯದ ಆರ್ಥಿಕ ಸ್ಥಿತಿ- ಗತಿಯ ನೈಜ ಚಿತ್ರಣವನ್ನು ಜನರ ಮುಂದಿಡುವ ಉದ್ದೇಶದಿಂದ ಹಣಕಾಸು ಶ್ವೇತಪತ್ರ ಮಂಡಿಸಿರುವುದು ಸ್ವಾಗತಾರ್ಹ. ಅದೇ ಮಾದರಿಯಲ್ಲಿ ಕರ್ನಾಟಕದ ನೂತನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಕೂಡ ರಾಜ್ಯದ ಹಣಕಾಸಿನ ಸ್ಥಿತಿಗತಿಯ ಕುರಿತು ಶ್ವೇತಪತ್ರ ಮಂಡಿಸಬೇಕು ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಆಗ್ರಹಿಸಿದ್ದಾರೆ.

ಈ ಕುರಿತು ಅಶೋಕ್ ಅವರು ಟ್ವೀಟ್‌ ಮಾಡಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರ್ನಾಟಕಕ್ಕೆ ಬಿಟ್ಟುಹೋಗಿರುವ ಆರ್ಥಿಕ ಬಳುವಳಿ ಏನು ಎಂಬುದನ್ನು ತಿಳಿದುಕೊಳ್ಳುವ ಹಕ್ಕು ರಾಜ್ಯದ ಜನರಿಗಿದೆ. ರಾಜ್ಯದ ಸಾಲ ಎಷ್ಟು ಹೆಚ್ಚಾಗಿದೆ? ಸರ್ಕಾರದ ಖಜಾನೆಯ ನಿಜವಾದ ಸ್ಥಿತಿಗತಿ ಏನು? ಅವೈಜ್ಞಾನಿಕ ಯೋಜನೆಗಳು, ಮತಬ್ಯಾಂಕ್ ರಾಜಕಾರಣ ಮತ್ತು ದುಂದುವೆಚ್ಚಗಳಿಂದ ರಾಜ್ಯದ ಆರ್ಥಿಕತೆಗೆ ಎಷ್ಟು ಹಾನಿಯಾಗಿದೆ? ಮುಂದಿನ ಪೀಳಿಗೆಯ ಹೆಗಲ ಮೇಲೆ ಎಷ್ಟು ಸಾಲದ ಹೊರೆ ಹಾಕಲಾಗಿದೆ ಎಂದು ತಿಳಿಯಬೇಕಿದೆ.

ಮುಚ್ಚಿಡಲು, ಮರೆಮಾಚಲು ಏನೂ ಇಲ್ಲವಾದರೆ ಕಾಂಗ್ರೆಸ್‌ ಸರ್ಕಾರ ತಕ್ಷಣವೇ ವಿಧಾನಸಭೆಯಲ್ಲಿ ಹಣಕಾಸು ಶ್ವೇತಪತ್ರ ಮಂಡಿಸಬೇಕು. ಸತ್ಯವನ್ನು ಹೊರಗೆ ಬರಲು ಬಿಡಬೇಕು. ಕರ್ನಾಟಕಕ್ಕೆ ಪಾರದರ್ಶಕತೆ ಬೇಕು. ಕನ್ನಡಿಗರಿಗೆ ಉತ್ತರದಾಯಿತ್ವ ಬೇಕು. ಎಲ್ಲಕ್ಕಿಂತ ಮುಖ್ಯವಾಗಿ, ಸಿದ್ದರಾಮಯ್ಯ ಸರ್ಕಾರ ರಾಜ್ಯಕ್ಕೆ ಬಿಟ್ಟುಹೋಗಿರುವ ನಿಜವಾದ “ಸಾಕ್ಷಿಗುಡ್ಡೆ” ಏನು ಎಂಬುದು ಜನರಿಗೆ ತಿಳಿಯಬೇಕು ಎಂದು ಅವರು ಒತ್ತಾಯಿಸಿದ್ದಾರೆ.

‘10 ಕೋಟಿ ಸುಪಾರಿ’ ಬೆದರಿಕೆ ನೀಡಿ ಅಪಹರಣ: ದಯಾನಂದ ರೆಡ್ಡಿ ಕೇಸ್‌ನಲ್ಲಿ ನಾಲ್ವರು ಪೊಲೀಸರ ಬಲೆಗೆ

ಆನೇಕಲ್: ಮಾಜಿ ವಿಧಾನ ಪರಿಷತ್ ಸದಸ್ಯ ದಯಾನಂದ ರೆಡ್ಡಿ ಅವರ ಅಪಹರಣ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದ್ದು, 3 ಕೋಟಿ ರೂಪಾಯಿ ಸುಲಿಗೆ ಯತ್ನಿಸಿದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಕೇರಳ ಮೂಲದ ಪ್ರವೀಣ್, ರೋಮಿಯೋ ಮಾರ್ಟಿನ್, ಅಶಿಕ್ ಮತ್ತು ಆದರ್ಶ್ ಎಂದು ಗುರುತಿಸಲಾಗಿದೆ. ಅಪಹರಣಕ್ಕೆ ಬಳಸಿದ್ದ ವಾಹನವನ್ನು ವಶಕ್ಕೆ ಪಡೆದಿರುವ ಪೊಲೀಸರು ಆರೋಪಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.

ಮಧ್ಯರಾತ್ರಿ ವೇಳೆ ಗೋಲ್ಡ್ ಕಾಯಿನ್ ಕ್ಲಬ್‌ನಿಂದ ಹೊರಟಿದ್ದ ದಯಾನಂದ ರೆಡ್ಡಿ ಅವರ ಕಾರನ್ನು ಹಿಲಲಿಗೆ ಗ್ರಾಮದ ಬಳಿ ತಡೆದ ಆರೋಪಿಗಳು, ಉಡುಗೊರೆ ನೀಡುವ ನೆಪದಲ್ಲಿ ಕಾರಿನ ಬಾಗಿಲು ತೆರೆಯುವಂತೆ ಮಾಡಿದ್ದಾರೆ. ಇದೇ ವೇಳೆ ಕಾರಿನೊಳಗೆ ನುಗ್ಗಿದ ಆರೋಪಿ ಗನ್ ತೋರಿಸಿ ಬೆದರಿಕೆ ಹಾಕಿ ವಾಹನವನ್ನು ತನ್ನ ನಿಯಂತ್ರಣಕ್ಕೆ ಪಡೆದಿದ್ದಾನೆ.

ನಂತರ ಅತ್ತಿಬೆಲೆ ಸಮೀಪದ ನಿರ್ಜನ ಪ್ರದೇಶಕ್ಕೆ ಕರೆದೊಯ್ದು, ‘ನಿಮ್ಮ ಹತ್ಯೆಗೆ 10 ಕೋಟಿ ರೂಪಾಯಿ ಸುಪಾರಿ ಬಂದಿದೆ’ ಎಂದು ಬೆದರಿಕೆ ಹಾಕಿದ್ದಾರೆ. ಜೀವ ಉಳಿಸಿಕೊಳ್ಳಲು ಹಣ ನೀಡುವುದಾಗಿ ದಯಾನಂದ ರೆಡ್ಡಿ ಮನವಿ ಮಾಡಿಕೊಂಡಾಗ, ಆರೋಪಿಗಳು 3 ಕೋಟಿ ರೂಪಾಯಿ ಬೇಡಿಕೆ ಇಟ್ಟು ಬಳಿಕ 2 ಕೋಟಿ ರೂಪಾಯಿಗೆ ಇಳಿದಿದ್ದರು.

ಬೆಳಗ್ಗೆ ಬ್ಯಾಂಕ್‌ನಿಂದ ಹಣ ತೆಗೆಯುವುದಾಗಿ ಹೇಳಿದ ದಯಾನಂದ ರೆಡ್ಡಿ ಅವರನ್ನು ಆರೋಪಿಗಳು ಬಿಡುಗಡೆ ಮಾಡಿದ್ದರು. ಬಳಿಕ ಅವರು ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಸಿಸಿಟಿವಿ ದೃಶ್ಯಗಳು ಮತ್ತು ತಾಂತ್ರಿಕ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಕರಣದ ಹಿಂದೆ ಇನ್ನೂ ಯಾರಾದರೂ ಭಾಗಿಯಾಗಿದ್ದಾರೆಯೇ ಎಂಬ ಬಗ್ಗೆ ತನಿಖೆ ಮುಂದುವರಿದಿದೆ.

‘10 ಕೋಟಿ ಸುಪಾರಿ’ ಬೆದರಿಕೆ ನೀಡಿ ಅಪಹರಣ: ದಯಾನಂದ ರೆಡ್ಡಿ ಕೇಸ್‌ನಲ್ಲಿ ನಾಲ್ವರು ಪೊಲೀಸರ ಬಲೆಗೆ

ಆನೇಕಲ್: ಮಾಜಿ ವಿಧಾನ ಪರಿಷತ್ ಸದಸ್ಯ ದಯಾನಂದ ರೆಡ್ಡಿ ಅವರ ಅಪಹರಣ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದ್ದು, 3 ಕೋಟಿ ರೂಪಾಯಿ ಸುಲಿಗೆ ಯತ್ನಿಸಿದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಕೇರಳ ಮೂಲದ ಪ್ರವೀಣ್, ರೋಮಿಯೋ ಮಾರ್ಟಿನ್, ಅಶಿಕ್ ಮತ್ತು ಆದರ್ಶ್ ಎಂದು ಗುರುತಿಸಲಾಗಿದೆ. ಅಪಹರಣಕ್ಕೆ ಬಳಸಿದ್ದ ವಾಹನವನ್ನು ವಶಕ್ಕೆ ಪಡೆದಿರುವ ಪೊಲೀಸರು ಆರೋಪಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.

ಮಧ್ಯರಾತ್ರಿ ವೇಳೆ ಗೋಲ್ಡ್ ಕಾಯಿನ್ ಕ್ಲಬ್‌ನಿಂದ ಹೊರಟಿದ್ದ ದಯಾನಂದ ರೆಡ್ಡಿ ಅವರ ಕಾರನ್ನು ಹಿಲಲಿಗೆ ಗ್ರಾಮದ ಬಳಿ ತಡೆದ ಆರೋಪಿಗಳು, ಉಡುಗೊರೆ ನೀಡುವ ನೆಪದಲ್ಲಿ ಕಾರಿನ ಬಾಗಿಲು ತೆರೆಯುವಂತೆ ಮಾಡಿದ್ದಾರೆ. ಇದೇ ವೇಳೆ ಕಾರಿನೊಳಗೆ ನುಗ್ಗಿದ ಆರೋಪಿ ಗನ್ ತೋರಿಸಿ ಬೆದರಿಕೆ ಹಾಕಿ ವಾಹನವನ್ನು ತನ್ನ ನಿಯಂತ್ರಣಕ್ಕೆ ಪಡೆದಿದ್ದಾನೆ.

ನಂತರ ಅತ್ತಿಬೆಲೆ ಸಮೀಪದ ನಿರ್ಜನ ಪ್ರದೇಶಕ್ಕೆ ಕರೆದೊಯ್ದು, ‘ನಿಮ್ಮ ಹತ್ಯೆಗೆ 10 ಕೋಟಿ ರೂಪಾಯಿ ಸುಪಾರಿ ಬಂದಿದೆ’ ಎಂದು ಬೆದರಿಕೆ ಹಾಕಿದ್ದಾರೆ. ಜೀವ ಉಳಿಸಿಕೊಳ್ಳಲು ಹಣ ನೀಡುವುದಾಗಿ ದಯಾನಂದ ರೆಡ್ಡಿ ಮನವಿ ಮಾಡಿಕೊಂಡಾಗ, ಆರೋಪಿಗಳು 3 ಕೋಟಿ ರೂಪಾಯಿ ಬೇಡಿಕೆ ಇಟ್ಟು ಬಳಿಕ 2 ಕೋಟಿ ರೂಪಾಯಿಗೆ ಇಳಿದಿದ್ದರು.

ಬೆಳಗ್ಗೆ ಬ್ಯಾಂಕ್‌ನಿಂದ ಹಣ ತೆಗೆಯುವುದಾಗಿ ಹೇಳಿದ ದಯಾನಂದ ರೆಡ್ಡಿ ಅವರನ್ನು ಆರೋಪಿಗಳು ಬಿಡುಗಡೆ ಮಾಡಿದ್ದರು. ಬಳಿಕ ಅವರು ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಸಿಸಿಟಿವಿ ದೃಶ್ಯಗಳು ಮತ್ತು ತಾಂತ್ರಿಕ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಕರಣದ ಹಿಂದೆ ಇನ್ನೂ ಯಾರಾದರೂ ಭಾಗಿಯಾಗಿದ್ದಾರೆಯೇ ಎಂಬ ಬಗ್ಗೆ ತನಿಖೆ ಮುಂದುವರಿದಿದೆ.

ಬೆಳಗಿನ ಜಾವ ವಿದ್ಯಾರ್ಥಿನಿ ಮೇಲೆ ಅತ್ಯಾಚಾರಕ್ಕೆ ಯತ್ನ: ವೈಟ್ ಫೀಲ್ಡ್ʼನಲ್ಲಿ ಆರೋಪಿ ಅರೆಸ್ಟ್!

ಬೆಂಗಳೂರು: ಟೀ ಕುಡಿದು ಪಿಜಿಗೆ ಹಿಂದಿರುಗುತ್ತಿದ್ದ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಆರೋಪದಡಿ ಪಶ್ಚಿಮ ಬಂಗಾಳ ಮೂಲದ ಯುವಕನನ್ನು ವೈಟ್‌ಫೀಲ್ಡ್ ಪೊಲೀಸರು ಬಂಧಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬಂಧಿತನನ್ನು ಸೈಪುಲ್ ಮೊಂಡಲ್ ಎಂದು ಗುರುತಿಸಲಾಗಿದೆ. ಜೂನ್ 2ರ ಬೆಳಗಿನ ಜಾವ ಈ ಘಟನೆ ನಡೆದಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಾ ಕೆಲವು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದ ಸೈಪುಲ್ ಮೊಂಡಲ್ ವೈಟ್‌ಫೀಲ್ಡ್ ಪ್ರದೇಶದಲ್ಲಿ ರಸ್ತೆ ಬದಿ ಕಸ ಸಂಗ್ರಹಿಸುವ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.

ಜೂನ್ 2ರ ಮುಂಜಾನೆ ವಿದ್ಯಾರ್ಥಿನಿಯೊಬ್ಬರು ಟೀ ಕುಡಿದು ತಮ್ಮ ಪಿಜಿಗೆ ನಡೆದುಕೊಂಡು ಹೋಗುತ್ತಿದ್ದ ವೇಳೆ, ಆಕೆಯನ್ನು ಗಮನಿಸಿದ ಆರೋಪಿ ಬಲವಂತವಾಗಿ ಎತ್ತಿಕೊಂಡು ಹೋಗಲು ಯತ್ನಿಸಿದ್ದಾನೆ. ಇದರಿಂದ ಭಯಗೊಂಡ ವಿದ್ಯಾರ್ಥಿನಿ ಜೋರಾಗಿ ಕಿರುಚಿಕೊಂಡಿದ್ದು, ಸುತ್ತಮುತ್ತಲಿನ ಜನರು ಸ್ಥಳಕ್ಕೆ ಧಾವಿಸಿದ್ದಾರೆ.

ಸ್ಥಳೀಯರು ಬರುತ್ತಿರುವುದನ್ನು ಗಮನಿಸಿದ ಆರೋಪಿ ಅಲ್ಲಿಂದ ಪರಾರಿಯಾಗಿದ್ದಾನೆ. ಬಳಿಕ ವಿದ್ಯಾರ್ಥಿನಿ ವೈಟ್‌ಫೀಲ್ಡ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.

ಪ್ರಕರಣ ಸಂಬಂಧ ಹೆಚ್ಚಿನ ತನಿಖೆ ಮುಂದುವರಿದಿದ್ದು, ಘಟನೆಯ ಕುರಿತು ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದಾರೆ.

ಯಾವ ಖಾತೆ ಕೊಟ್ಟರೂ ನಿಭಾಯಿಸುತ್ತೇನೆ; ಇಂದು ಸಂಜೆಯೊಳಗೆ ಖಾತೆ ಹಂಚಿಕೆ – ಪ್ರಿಯಾಂಕ್ ಖರ್ಗೆ

ಬೆಂಗಳೂರು: ನೂತನ ಸಚಿವ ಸಂಪುಟದಲ್ಲಿ ಯಾವ ಖಾತೆ ನೀಡಿದರೂ ಸಮರ್ಥವಾಗಿ ನಿಭಾಯಿಸಲು ಸಿದ್ಧನಿದ್ದೇನೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಸದಾಶಿವನಗರದ ನಿವಾಸದಲ್ಲಿ ಭೇಟಿ ಮಾಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು,

ಸಚಿವರ ಖಾತೆ ಹಂಚಿಕೆ ಕುರಿತು ಮುಖ್ಯಮಂತ್ರಿ ಶೀಘ್ರದಲ್ಲೇ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಹೇಳಿದರು. ಗೃಹ ಸಚಿವ ಸ್ಥಾನದ ರೇಸ್‌ನಲ್ಲಿ ತಮ್ಮ ಹೆಸರು ಕೇಳಿಬರುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪ್ರಿಯಾಂಕ್ ಖರ್ಗೆ,

ಇನ್ನೂ ಯಾವುದೇ ಖಾತೆ ಹಂಚಿಕೆ ಆಗಿಲ್ಲ. ಪಕ್ಷ ಅಥವಾ ಸರ್ಕಾರ ಯಾವ ಜವಾಬ್ದಾರಿಯನ್ನು ನೀಡಿದರೂ ಅದನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತೇನೆ. ಕರ್ನಾಟಕದ ಜನರಿಗೆ ಸೇವೆ ಸಲ್ಲಿಸುವುದೇ ಮುಖ್ಯ. ಅದಕ್ಕಾಗಿ ಯಾವುದೇ ಸ್ಥಾನಮಾನ ದೊಡ್ಡದು ಅಥವಾ ಚಿಕ್ಕದು ಎಂಬ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.

ಸಚಿವರ ಖಾತೆ ಹಂಚಿಕೆ ಕುರಿತು ಮುಖ್ಯಮಂತ್ರಿ ಈಗಾಗಲೇ ಚರ್ಚೆ ನಡೆಸಿದ್ದು, ಇಂದು ಸಂಜೆಯೊಳಗೆ ಅಂತಿಮ ಪಟ್ಟಿ ಪ್ರಕಟಿಸುವ ಸಾಧ್ಯತೆ ಇದೆ ಎಂದು ತಿಳಿಸಿದರು.

ಗೃಹ ಸಚಿವ ಸ್ಥಾನ ಕುರಿತು ನಡೆಯುತ್ತಿರುವ ಚರ್ಚೆಗಳ ನಡುವೆ ಮಾತನಾಡಿದ ಅವರು, ಯಾರು ಗೃಹ ಸಚಿವರಾದರೂ ಕಾನೂನು ಮತ್ತು ಸಂವಿಧಾನದ ಚೌಕಟ್ಟಿನಲ್ಲೇ ಕೆಲಸ ಮಾಡಬೇಕು. ಅದನ್ನು ಮೀರಿ ಯಾವುದೇ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

ಸಚಿವ ಸಂಪುಟದಲ್ಲಿ ಮಹಿಳೆಯರಿಗೆ ಸಮರ್ಪಕ ಅವಕಾಶ ನೀಡಿಲ್ಲ ಎಂಬ ಬಿಜೆಪಿ ನಾಯಕರ ಟೀಕೆ ಕುರಿತು ಪ್ರತಿಕ್ರಿಯಿಸಿದ ಪ್ರಿಯಾಂಕ್ ಖರ್ಗೆ, ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.

ಅವರಿಗೆ ಇಷ್ಟ ಬಂದಂತೆ ಮಾತನಾಡಲಿ. ಮೊದಲು ವಿಜಯೇಂದ್ರ ಮತ್ತು ಆರ್. ಅಶೋಕ್ ಅವರು ತಮ್ಮ ಪಕ್ಷದಲ್ಲಿ ಮಹಿಳೆಯರಿಗೆ ಹೆಚ್ಚಿನ ಅವಕಾಶ ನೀಡಲಿ. ಆರ್‌ಎಸ್‌ಎಸ್‌ನಲ್ಲಿ ಮಹಿಳೆಯರನ್ನು ಸಹಸಂಚಾಲಕರನ್ನಾಗಿ ನೇಮಿಸಲಿ. ನಂತರ ಈ ವಿಚಾರದ ಬಗ್ಗೆ ಚರ್ಚೆ ಮಾಡೋಣ ಎಂದು ತಿರುಗೇಟು ನೀಡಿದರು.

ಮಳೆ ಅನಾಹುತಕ್ಕೆ 8 ವರ್ಷದ ಬಾಲಕ ಬಲಿ: ನೆಲಕ್ಕೆ ಬಿದ್ದ ವಿದ್ಯುತ್ ತಂತಿ ತಗುಲಿ ದಾರುಣ ಸಾವು

0

ಬೀದರ್: ಜಿಲ್ಲೆಯಲ್ಲಿ ಸುರಿದ ಭಾರೀ ಮಳೆ ಮತ್ತೊಂದು ಅಮಾಯಕ ಜೀವವನ್ನು ಬಲಿ ಪಡೆದಿದೆ. ಹುಲಸೂರು ಪಟ್ಟಣದಲ್ಲಿ ನೆಲಕ್ಕೆ ಬಿದ್ದಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ 8 ವರ್ಷದ ಬಾಲಕನೊಬ್ಬ ದಾರುಣವಾಗಿ ಸಾವನ್ನಪ್ಪಿದ ಘಟನೆ ನಡೆದಿದೆ.

ಮೃತ ಬಾಲಕನನ್ನು ಅಲಿ ಮೊಮಿನ್ (8) ಎಂದು ಗುರುತಿಸಲಾಗಿದೆ. ಜಿಲ್ಲೆಯಲ್ಲಿ ಬಿರುಗಾಳಿ ಸಹಿತ ಧಾರಾಕಾರ ಮಳೆ ಸುರಿದ ಪರಿಣಾಮ ವಿದ್ಯುತ್ ಕಂಬದಿಂದ ಮನೆಗೆ ನೀಡಲಾಗಿದ್ದ ಸಂಪರ್ಕ ತಂತಿ ತುಂಡಾಗಿ ನೆಲಕ್ಕೆ ಬಿದ್ದಿತ್ತು.

ಘಟನೆಯ ವೇಳೆ ಹೊರಗಡೆ ಆಟವಾಡುತ್ತಿದ್ದ ಅಲಿ ಮೊಮಿನ್, ನೆಲದಲ್ಲಿದ್ದ ವಿದ್ಯುತ್ ತಂತಿಯನ್ನು ಕೈಯಿಂದ ಮುಟ್ಟಿದ್ದಾನೆ. ತಕ್ಷಣವೇ ಭಾರೀ ಪ್ರಮಾಣದ ವಿದ್ಯುತ್ ಪ್ರವಹಿಸಿ ಬಾಲಕ ಗಂಭೀರವಾಗಿ ಗಾಯಗೊಂಡಿದ್ದಾನೆ. ಸ್ಥಳೀಯರು ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.

ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಇತ್ತ ಜೆಸ್ಕಾಂ ಇಲಾಖೆಯ ನಿರ್ಲಕ್ಷ್ಯವೇ ಬಾಲಕನ ಸಾವಿಗೆ ಕಾರಣ ಎಂದು ಆರೋಪಿಸಿರುವ ಕುಟುಂಬಸ್ಥರು ಹಾಗೂ ಸ್ಥಳೀಯರು ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಳೆಯಿಂದ ವಿದ್ಯುತ್ ತಂತಿ ಕಟ್ ಆಗಿ ನೆಲಕ್ಕೆ ಬಿದ್ದಿದ್ದರೂ ಅದನ್ನು ತೆರವುಗೊಳಿಸಲು ಅಥವಾ ಸುರಕ್ಷತಾ ಕ್ರಮ ಕೈಗೊಳ್ಳಲು ಇಲಾಖೆ ವಿಫಲವಾಗಿದೆ ಎಂದು ದೂರಿದ್ದಾರೆ.

ಈ ಘಟನೆ ಹುಲಸೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮೂರನೇ ಮದುವೆಗೆ ಸಜ್ಜಾದ ಅಮೀರ್ ಖಾನ್: ಬೆಂಗಳೂರಿನ ಗೌರಿ ಸ್ಪ್ರ್ಯಾಟ್ ಜೊತೆ ಶೀಘ್ರವೇ ವಿವಾಹ?

ಮುಂಬೈ: ಬಾಲಿವುಡ್‌ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮೀರ್ ಖಾನ್ ವೈಯಕ್ತಿಕ ಬದುಕಿನ ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದ್ದು, ಪ್ರೇಯಸಿ ಗೌರಿ ಸ್ಪ್ರ್ಯಾಟ್ ಜೊತೆ ಶೀಘ್ರದಲ್ಲೇ ವಿವಾಹವಾಗಲಿದ್ದಾರೆ ಎನ್ನುವ ಮಾಹಿತಿ ಹೊರಬಿದ್ದಿದೆ. ಜುಲೈ 5ರಂದು ಆಪ್ತರ ಸಮ್ಮುಖದಲ್ಲಿ ಮದುವೆ ನಡೆಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಆಮೀರ್ ಖಾನ್ ಕಳೆದ ವರ್ಷ ತಮ್ಮ ಹುಟ್ಟುಹಬ್ಬದ ದಿನವೇ ಗೌರಿ ಅವರನ್ನು ಅಧಿಕೃತವಾಗಿ ಪರಿಚಯಿಸಿ ಸಂಬಂಧದ ಬಗ್ಗೆ ಬಹಿರಂಗಪಡಿಸಿದ್ದರು. ಹಲವು ವರ್ಷಗಳ ಸ್ನೇಹ ಪ್ರೀತಿಗೆ ತಿರುಗಿದ್ದು, ಇದೀಗ ಇಬ್ಬರೂ ದಾಂಪತ್ಯ ಜೀವನ ಆರಂಭಿಸಲು ಸಜ್ಜಾಗಿದ್ದಾರೆ ಎನ್ನಲಾಗಿದೆ.

ಆಮೀರ್ ಖಾನ್ ಈಗಾಗಲೇ ಎರಡು ಮದುವೆಗಳನ್ನು ಮಾಡಿಕೊಂಡಿದ್ದಾರೆ. ಮೊದಲ ಪತ್ನಿ ರೀನಾ ದತ್ತಾ ಅವರೊಂದಿಗೆ 16 ವರ್ಷಗಳ ದಾಂಪತ್ಯ ಜೀವನ ನಡೆಸಿದ ಬಳಿಕ ವಿಚ್ಛೇದನ ಪಡೆದಿದ್ದರು. ನಂತರ ಕಿರಣ್ ರಾವ್ ಅವರನ್ನು ವಿವಾಹವಾಗಿದ್ದ ಅವರು, 2021ರಲ್ಲಿ ಬೇರ್ಪಟ್ಟಿದ್ದರು.

ಮೂಲತಃ ಬೆಂಗಳೂರಿನವರಾದ ಗೌರಿ ಸ್ಪ್ರ್ಯಾಟ್ ಫ್ಯಾಶನ್ ಮತ್ತು ಬ್ಯೂಟಿ ಕ್ಷೇತ್ರದಲ್ಲಿ ಗುರುತಿಸಿಕೊಂಡ ಉದ್ಯಮಿಯಾಗಿದ್ದಾರೆ. ಲಂಡನ್‌ನಲ್ಲಿ ಉನ್ನತ ಶಿಕ್ಷಣ ಪಡೆದಿರುವ ಅವರು, ಮುಂಬೈನಲ್ಲಿ ಯಶಸ್ವಿಯಾಗಿ ಸಲೂನ್ ವ್ಯವಹಾರ ನಡೆಸುತ್ತಿದ್ದಾರೆ.

ಸಂಬಂಧವನ್ನು ಬಹಿರಂಗಪಡಿಸಿದ ಬಳಿಕ ಆಮೀರ್ ಖಾನ್, ‘ಗೌರಿ ನನ್ನ ಜೀವನಕ್ಕೆ ಬಂದ ಬಳಿಕ ನಾನು ಹೆಚ್ಚು ಸಂತೋಷವಾಗಿದ್ದೇನೆ. ಜೀವನದಲ್ಲಿ ಮತ್ತೊಮ್ಮೆ ಸಮತೋಲನ ಮತ್ತು ನೆಮ್ಮದಿ ಸಿಕ್ಕಿದೆ’ ಎಂದು ಹೇಳಿಕೊಂಡಿದ್ದರು.

ಈಗ ಅವರ ವಿವಾಹದ ಸುದ್ದಿ ಹೊರಬಿದ್ದಿರುವ ಹಿನ್ನೆಲೆಯಲ್ಲಿ ಬಾಲಿವುಡ್ ವಲಯದಲ್ಲಿ ಭಾರಿ ಕುತೂಹಲ ಮೂಡಿದ್ದು, ಅಧಿಕೃತ ಘೋಷಣೆಯ ನಿರೀಕ್ಷೆ ಹೆಚ್ಚಾಗಿದೆ.

26/11 ಮುಂಬೈ ಉಗ್ರರ ದಾಳಿ ನಡೆದಾಗ ಪಾರ್ಟಿ ಮಾಡುತ್ತಿದೆ: ನಟಿ ಕಂಗನಾ ರಣಾವತ್

ಮುಂಬೈ: 2008ರ ನವೆಂಬರ್ 26ರಂದು ನಡೆದ ಭೀಕರ ಮುಂಬೈ ಉಗ್ರರ ದಾಳಿಯ ಸಮಯದಲ್ಲಿ ತಾವು ಸ್ನೇಹಿತರೊಂದಿಗೆ ಪಾರ್ಟಿಯಲ್ಲಿ ತೊಡಗಿಸಿಕೊಂಡಿದ್ದೆವು ಎಂದು ಬಾಲಿವುಡ್ ನಟಿ ಹಾಗೂ ಸಂಸದೆ ಕಂಗನಾ ರಣಾವತ್ ಬಹಿರಂಗಪಡಿಸಿದ್ದಾರೆ. ‘ಭಾರತ್ ಭಾಗ್ಯ ವಿಧಾತ’ ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶವನ್ನೇ ಬೆಚ್ಚಿಬೀಳಿಸಿದ್ದ ಆ ಕರಾಳ ರಾತ್ರಿಯ ನೆನಪುಗಳನ್ನು ಹಂಚಿಕೊಂಡರು.

ಕಂಗನಾ ಅವರ ಪ್ರಕಾರ, ನಟಿ ಶಹಾನಾ ಗೋಸ್ವಾಮಿ ಹೊಸ ಮನೆಗೆ ಗೃಹಪ್ರವೇಶ ಮಾಡಿಕೊಂಡ ಹಿನ್ನೆಲೆಯಲ್ಲಿ ಯಾರಿ ರೋಡ್‌ನಲ್ಲಿರುವ ನಿವಾಸದಲ್ಲಿ ವಿಶೇಷ್ ಫಿಲ್ಮ್ಸ್‌ಗೆ ಸಂಬಂಧಿಸಿದ ಕಲಾವಿದರಿಗಾಗಿ ಹೌಸ್ ಪಾರ್ಟಿ ಆಯೋಜಿಸಲಾಗಿತ್ತು. ಅಲ್ಲಿ ಎಲ್ಲರೂ ಹಾಡು, ನೃತ್ಯ ಮತ್ತು ಸಂಭ್ರಮದಲ್ಲಿ ತೊಡಗಿಸಿಕೊಂಡಿದ್ದರು.

ಈ ವೇಳೆ ಹಿರಿಯ ನಿರ್ದೇಶಕ ಮಹೇಶ್ ಭಟ್ ಪಾರ್ಟಿಗೆ ಆಗಮಿಸಿ ತಕ್ಷಣ ಟಿವಿ ಆನ್ ಮಾಡುವಂತೆ ಸೂಚಿಸಿದ್ದರು. ಟಿವಿ ತೆರೆದಾಗ ಮುಂಬೈನಲ್ಲಿ ಉಗ್ರರ ದಾಳಿ ನಡೆಯುತ್ತಿರುವ ದೃಶ್ಯಗಳು ನೇರ ಪ್ರಸಾರವಾಗುತ್ತಿದ್ದು, ಅಲ್ಲಿ ಇದ್ದವರು ಆಘಾತಕ್ಕೊಳಗಾದರು ಎಂದು ಕಂಗನಾ ತಿಳಿಸಿದ್ದಾರೆ.

ಆರಂಭದಲ್ಲಿ ಪರಿಸ್ಥಿತಿಯ ಗಂಭೀರತೆ ಅರ್ಥವಾಗದ ಕಾರಣ ಪಾರ್ಟಿ ಮುಂದುವರಿಸಬೇಕೇ ಅಥವಾ ಮನೆಗೆ ತೆರಳಬೇಕೇ ಎಂಬ ಚರ್ಚೆ ನಡೆದಿತ್ತು. ಆದರೆ ಮಹೇಶ್ ಭಟ್ ಪರಿಸ್ಥಿತಿಯ ತೀವ್ರತೆಯನ್ನು ಮನಗಂಡು ಎಲ್ಲರೂ ಕೂಡಲೇ ಮನೆಗೆ ತೆರಳುವಂತೆ ಸೂಚಿಸಿದರು. ಅವರ ಸಲಹೆಯಿಂದಲೇ ನಾವು ಅಲ್ಲಿಂದ ಹೊರಟೆವು ಎಂದು ಕಂಗನಾ ನೆನಪಿಸಿಕೊಂಡರು.

ಇದೇ ವೇಳೆ ತಮ್ಮ ಹೊಸ ಸಿನಿಮಾ ‘ಭಾರತ್ ಭಾಗ್ಯ ವಿಧಾತ’ ಕುರಿತು ಮಾತನಾಡಿದ ಅವರು, 26/11 ಉಗ್ರರ ದಾಳಿಯ ಸಂದರ್ಭದಲ್ಲಿ ಆಸ್ಪತ್ರೆಯ ವೈದ್ಯರು ಹಾಗೂ ನರ್ಸ್‌ಗಳು ತೋರಿದ ಮಾನವೀಯತೆ ಮತ್ತು ಧೈರ್ಯದ ಕಥೆಯನ್ನು ಚಿತ್ರ ಹೇಳಲಿದೆ ಎಂದು ತಿಳಿಸಿದರು. ಚಿತ್ರದಲ್ಲಿ ಕಂಗನಾ ನರ್ಸ್ ಪಾತ್ರದಲ್ಲಿ ಅಭಿನಯಿಸಿದ್ದಾರೆ.

ಖಿನ್ನತೆಗೆ ಜಾರಿದ್ದ ಮಹಿಳೆಯಿಂದ ದಾರುಣ ಕೃತ್ಯ: ಇಬ್ಬರು ಪುಟ್ಟ ಮಕ್ಕಳ ಹತ್ಯೆ

0

ಕೋಲಾರ: ಮುಳಬಾಗಿಲು ತಾಲೂಕಿನ ಆಲಂಗೂರು ಗ್ರಾಮದಲ್ಲಿ ಮನಕಲಕುವ ಘಟನೆ ನಡೆದಿದ್ದು, ಪತಿಯ ಸಾವಿನ ಬಳಿಕ ಖಿನ್ನತೆಗೆ ಒಳಗಾಗಿದ್ದ ಮಹಿಳೆಯೊಬ್ಬಳು ತನ್ನ ಇಬ್ಬರು ಮಕ್ಕಳನ್ನು ಹತ್ಯೆ ಮಾಡಿದ್ದಾಳೆ.

ಆಂಧ್ರಪ್ರದೇಶ ಮೂಲದ ಬುಜ್ಜಮ್ಮ (22) ತನ್ನ ಮೂರು ವರ್ಷದ ಮಗಳು ಸರಸ್ವತಿ ಮತ್ತು ಒಂದು ವರ್ಷದ ಮಗು ಹೇಮಾಶ್ರಿಯ ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ. ಬಳಿಕ ಆತ್ಮಹತ್ಯೆಗೆ ಯತ್ನಿಸಿದ ಆಕೆಯನ್ನು ಸ್ಥಳೀಯರು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಬುಜ್ಜಮ್ಮ ಮತ್ತು ಪತಿ ಬಾಬು ಕಳೆದ ಒಂದು ವರ್ಷದಿಂದ ಆಲಂಗೂರಿನ ಮಾವಿನ ತೋಟದಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು. ಆದರೆ 20 ದಿನಗಳ ಹಿಂದೆ ಸಂಭವಿಸಿದ ಅಪಘಾತದಲ್ಲಿ ಬಾಬು ಮೃತಪಟ್ಟಿದ್ದರು. ಈ ಘಟನೆಯ ಬಳಿಕ ಬುಜ್ಜಮ್ಮ ತೀವ್ರ ಮಾನಸಿಕ ಆಘಾತ ಹಾಗೂ ಖಿನ್ನತೆಗೆ ಒಳಗಾಗಿದ್ದಳು ಎಂದು ತಿಳಿದುಬಂದಿದೆ.

ಕುಟುಂಬದ ಆಧಾರಸ್ತಂಭನನ್ನು ಕಳೆದುಕೊಂಡ ನೋವಿನಿಂದ ಬಳಲುತ್ತಿದ್ದ ಮಹಿಳೆ, ಕೊನೆಗೆ ತನ್ನ ಮಕ್ಕಳ ಜೀವ ಕಸಿದುಕೊಂಡು ತಾನೂ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾಳೆ ಎಂದು ಪೊಲೀಸರು ಶಂಕಿಸಿದ್ದಾರೆ.

ನಂಗಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನೆ ಕುರಿತು ಪೊಲೀಸರು ಸವಿಸ್ತಾರ ತನಿಖೆ ನಡೆಸುತ್ತಿದ್ದಾರೆ.

error: Content is protected !!