Home Blog Page 4

ಕೆಲಸಕ್ಕೆ ಗೈರಾದರೆ ‘ನೋ ವರ್ಕ್, ನೋ ಪೇ’: ಮುಷ್ಕರಕ್ಕೆ ಕರೆ ಕೊಟ್ಟ ಸಿಬ್ಬಂದಿಗೆ ಖಡಕ್ ಎಚ್ಚರಿಕೆ ಕೊಟ್ಟ KSRTC

ಬೆಂಗಳೂರು: ವೇತನ ಪರಿಷ್ಕರಣೆಗೆ ಆಗ್ರಹಿಸಿ ಮೇ 20ರಂದು ಮುಷ್ಕರಕ್ಕೆ ಸಜ್ಜಾಗಿರುವ ಸರ್ಕಾರಿ ಸಾರಿಗೆ ನೌಕರರಿಗೆ ಕೆಎಸ್‌ಆರ್‌ಟಿಸಿ ಆಡಳಿತ ಮಂಡಳಿ ಕಠಿಣ ಎಚ್ಚರಿಕೆ ನೀಡಿದೆ. ನಿಗದಿತ ದಿನ ಕರ್ತವ್ಯಕ್ಕೆ ಹಾಜರಾಗದ ನೌಕರರ ವಿರುದ್ಧ ‘ನೋ ವರ್ಕ್, ನೋ ಪೇ’ ನಿಯಮ ಜಾರಿಗೊಳಿಸುವುದಾಗಿ ತಿಳಿಸಿದೆ.

ಈ ಕುರಿತು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಅಕ್ರಮ್ ಪಾಷಾ ಸ್ಪಷ್ಟನೆ ನೀಡಿದ್ದು, ಎಲ್ಲಾ ಸಾರಿಗೆ ನೌಕರರು ಕಡ್ಡಾಯವಾಗಿ ಕರ್ತವ್ಯಕ್ಕೆ ಹಾಜರಾಗಬೇಕು ಎಂದು ಸೂಚಿಸಿದ್ದಾರೆ.

ಮೇ 20ರಂದು ನಡೆಯಲಿರುವ ಪ್ರತಿಭಟನೆ ಅಥವಾ ಮುಷ್ಕರದಲ್ಲಿ ಭಾಗಿಯಾಗುವ ನೌಕರರ ವಿರುದ್ಧ ಸೇವಾ ನಿಯಮಾವಳಿಗಳ ಅನ್ವಯ ಕಠಿಣ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.

ಸಾರಿಗೆ ಸಂಸ್ಥೆ ಸಾರ್ವಜನಿಕ ಉಪಯುಕ್ತ ಸೇವಾ ಸಂಸ್ಥೆಯಾಗಿರುವುದರಿಂದ ಬಸ್ ಸಂಚಾರದಲ್ಲಿ ಯಾವುದೇ ವ್ಯತ್ಯಯ ಉಂಟಾಗಬಾರದು. ಹೀಗಾಗಿ ಅನಿವಾರ್ಯ ಸಂದರ್ಭಗಳನ್ನು ಹೊರತುಪಡಿಸಿ ಯಾವುದೇ ನೌಕರರಿಗೆ ರಜೆ ಮಂಜೂರು ಮಾಡುವುದಿಲ್ಲ ಎಂದು ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ.

ಮುಷ್ಕರದ ದಿನ ಕರ್ತವ್ಯಕ್ಕೆ ಗೈರಾಗುವ ನೌಕರರ ಪ್ರತ್ಯೇಕ ಪಟ್ಟಿಯನ್ನು ಸಿದ್ಧಪಡಿಸಿ, ಆ ದಿನಗಳ ವೇತನವನ್ನು ಕಡಿತಗೊಳಿಸಲಾಗುವುದು. ‘ಕೆಲಸ ಇಲ್ಲದಿದ್ದರೆ ವೇತನವೂ ಇಲ್ಲ’ ಎಂಬ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುವುದು ಎಂದು ಕೆಎಸ್‌ಆರ್‌ಟಿಸಿ ತಿಳಿಸಿದೆ.

ಇದಲ್ಲದೆ ಕರ್ತವ್ಯ ಲೋಪ ಎಸಗುವ ನೌಕರರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಈ ನಡುವೆ ಸಾರಿಗೆ ನೌಕರರ ಸಂಘಟನೆಗಳು ತಮ್ಮ ಬೇಡಿಕೆ ಈಡೇರಿಕೆಗೆ ಸರ್ಕಾರ ಸ್ಪಂದಿಸದಿದ್ದರೆ ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂದು ಹೇಳಿವೆ.

ಲೀಸ್ ಮನೆ ಕೊಡಿಸುವ ನೆಪದಲ್ಲಿ ₹200 ಕೋಟಿ ವಂಚನೆ: 300ಕ್ಕೂ ಹೆಚ್ಚು ಮಂದಿಗೆ ಟೋಪಿ ಹಾಕಿ ಕಂಪನಿ ಮಾಲೀಕ ಪರಾರಿ

ಬೆಂಗಳೂರು: ನಗರದಲ್ಲಿ ಲೀಸ್ ಮತ್ತು ಬಾಡಿಗೆ ಮನೆಗಳ ಬೇಡಿಕೆಯನ್ನೇ ಬಂಡವಾಳ ಮಾಡಿಕೊಂಡು ನೂರಾರು ಜನರಿಗೆ ಕೋಟ್ಯಂತರ ರೂಪಾಯಿ ವಂಚನೆ ಮಾಡಿರುವ ಆರೋಪ ಕೇಳಿಬಂದಿದೆ.

ಮನೆ ಸಿಗದವರಿಗೆ ಸಹಾಯ ಮಾಡುವ ನೆಪದಲ್ಲಿ ಕಾರ್ಯನಿರ್ವಹಿಸಿದ್ದ ಕಂಪನಿ, ಒಟ್ಟು 300ಕ್ಕೂ ಹೆಚ್ಚು ಜನರಿಗೆ 200 ಕೋಟಿಗೂ ಅಧಿಕ ವಂಚನೆ ಮಾಡಿರುವ ಆರೋಪ ಎದುರಿಸುತ್ತಿದೆ.

ನಗರದಲ್ಲಿ ಲೀಸ್ ಗೆ ಮನೆ ನೀಡುವವರ ಸಂಖ್ಯೆ ಕಡಿಮೆಯಾಗಿದ್ದು, ಬಾಡಿಗೆಗೆ ಮನೆ ನೀಡಲು ಆಸಕ್ತಿ ಹೊಂದಿರುವ ಮನೆ ಮಾಲೀಕರೇ ಹೆಚ್ಚಿದ್ದಾರೆ. ಇದೇ ಪರಿಸ್ಥಿತಿಯನ್ನು ದುರುಪಯೋಗಪಡಿಸಿಕೊಂಡ ಕಂಪನಿ, ಬಾಡಿಗೆ ಕಟ್ಟಲು ಕಷ್ಟಪಡುವ ಜನರನ್ನೇ ಟಾರ್ಗೆಟ್ ಮಾಡಿತ್ತು.

‘ಜಾನ್ಸ್ ಅಸೆಟ್’ ಎಂಬ ಕಂಪನಿ, ಲೀಸ್‌ಗೆ ಮನೆ ಹುಡುಕುತ್ತಿರುವವರನ್ನು ಸಂಪರ್ಕಿಸಿ, “ನಿಮ್ಮ ಲೀಸ್ ಹಣ ನಮಗೆ ನೀಡಿ, ನಿಮ್ಮ ಮನೆ ಬಾಡಿಗೆಯನ್ನು ನಾವು ಪಾವತಿಸುತ್ತೇವೆ” ಎಂದು ನಂಬಿಸುತ್ತಿತ್ತು.

ಇದರಿಂದ ಲೀಸ್ ಹಣವೂ ಸುರಕ್ಷಿತವಾಗಿರುತ್ತದೆ, ಬಾಡಿಗೆ ಕಟ್ಟುವ ಹೊಣೆಗಾರಿಕೆಯೂ ತಪ್ಪುತ್ತದೆ ಎಂದು ನಂಬಿದ ಗ್ರಾಹಕರು, ತಲಾ 10 ಲಕ್ಷದಿಂದ 75 ಲಕ್ಷ ರೂಪಾಯಿ ವರೆಗೆ ಹಣ ಹೂಡಿಕೆ ಮಾಡಿದ್ದರು.

ಕಂಪನಿ ಗ್ರಾಹಕರೊಂದಿಗೆ ಲೀಸ್ ಅಗ್ರಿಮೆಂಟ್ ಮಾಡಿಕೊಂಡು, ಮನೆ ಮಾಲೀಕರ ಜೊತೆ ರೆಂಟಲ್ ಅಗ್ರಿಮೆಂಟ್ ಮಾಡುತ್ತಿತ್ತು. ಆರಂಭದಲ್ಲಿ ಕೆಲ ತಿಂಗಳು ಬಾಡಿಗೆ ಪಾವತಿಸಿ ವಿಶ್ವಾಸ ಗಳಿಸಿದ ಬಳಿಕ, ಹಣ ಪಾವತಿಯನ್ನು ಸ್ಥಗಿತಗೊಳಿಸಿ ವಂಚನೆ ನಡೆಸಿದೆ ಎನ್ನಲಾಗಿದೆ.

ಇದೇ ವೇಳೆ ಮನೆ ಖಾಲಿ ಮಾಡುವಂತೆ ಒತ್ತಾಯಕ್ಕೆ ಒಳಗಾದ ಮಹಿಳೆಯೊಬ್ಬರು ತಮ್ಮ ಹಣ ವಾಪಸ್ ಕೇಳಲು ಕಂಪನಿಯನ್ನು ಸಂಪರ್ಕಿಸಿದ್ದರು.

ಆದರೆ ಹಣ ಹಿಂದಿರುಗಿಸಲು ಸಾಧ್ಯವಿಲ್ಲ, ಅದನ್ನೇ ಕಂಪನಿಯಲ್ಲಿ ಹೂಡಿಕೆ ಮಾಡಿದರೆ ಪ್ರತಿ ತಿಂಗಳು ಲಾಭ ನೀಡುವುದಾಗಿ ಕಂಪನಿ ನಂಬಿಸಿತ್ತು. ಇದನ್ನು ನಂಬಿದ ಮಹಿಳೆ ತಮ್ಮ ಲೀಸ್ ಹಣವನ್ನು ಹೂಡಿಕೆಯಾಗಿಸಿ ಪರಿವರ್ತಿಸಿಕೊಂಡಿದ್ದರು.

ಮೊದಲ ಎರಡು ತಿಂಗಳು ಹಣ ಪಾವತಿಸಿದ ಕಂಪನಿ, ಬಳಿಕ ಪಾವತಿ ನಿಲ್ಲಿಸಿತ್ತು. ಇದೇ ರೀತಿಯಲ್ಲಿ ಹಲವು ಜನರಿಂದ ಲೀಸ್ ಹಣ ಪಡೆದು ವಂಚನೆ ನಡೆಸಿರುವ ಆರೋಪ ಕೇಳಿಬಂದಿದೆ.

ವಂಚನೆ ಬೆಳಕಿಗೆ ಬರುತ್ತಿದ್ದಂತೆ ಕಂಪನಿ ಮುಚ್ಚಿ, ಮಾಲೀಕ ಸ್ಟೀಫನ್ ಅರ್ಥರ್ ತಲೆಮರೆಸಿಕೊಂಡಿದ್ದಾನೆ. ಈ ಹಿಂದೆ ಕೂಡ ಸ್ಟೀಫನ್ ಅರ್ಥರ್ ವಿರುದ್ಧ ವಂಚನೆ ಪ್ರಕರಣ ದಾಖಲಾಗಿದ್ದು, ಸಿಸಿಬಿ ಪೊಲೀಸರು ಬಂಧಿಸಿದ್ದರೆಂಬ ಮಾಹಿತಿ ಇದೆ.

ಹಳೆ ಗ್ರಾಹಕರಿಗೆ ಹೊಸ ಗ್ರಾಹಕರ ಹಣದಿಂದ ಪಾವತಿ ಮಾಡಿ ವಂಚನೆ ಮುಂದುವರಿಸಿದ್ದ ಕಂಪನಿ, ಇದೀಗ ಸಂಪೂರ್ಣವಾಗಿ ನಾಪತ್ತೆಯಾಗಿದೆ. ಈ ಸಂಬಂಧ ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಇಂದು CSK-ಹೈದರಾಬಾದ್ ಮುಖಾಮುಖಿ: ಪ್ಲೇಆಫ್ ಕನಸು ಉಳಿಸಿಕೊಳ್ಳಲು ಚೆನ್ನೈಗೆ ಗೆಲುವು ಅನಿವಾರ್ಯ

ಇಂಡಿಯನ್ ಪ್ರೀಮಿಯರ್ ಲೀಗ್‌ನ 63ನೇ ಪಂದ್ಯ ಇಂದು ಚೆನ್ನೈನ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಲಿವೆ. ಪ್ಲೇಆಫ್‌ ಪ್ರವೇಶದ ದೃಷ್ಟಿಯಿಂದ ಎರಡೂ ತಂಡಗಳಿಗೆ ಈ ಪಂದ್ಯ ಮಹತ್ವ ಪಡೆದಿದೆ.

ಋತುರಾಜ್ ಗಾಯಕ್ವಾಡ್ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಇದು ಮಾಡು ಇಲ್ಲವೇ ಮಡಿ ಪಂದ್ಯವಾಗಿದ್ದು, ತವರಿನಲ್ಲಿ ಗೆಲುವು ಸಾಧಿಸುವ ಒತ್ತಡ ಎದುರಾಗಿದೆ. 12 ಪಂದ್ಯಗಳಲ್ಲಿ 6 ಜಯಗಳೊಂದಿಗೆ 12 ಅಂಕ ಪಡೆದಿರುವ CSK ಪ್ರಸ್ತುತ ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ. ಹೀಗಾಗಿ ಪ್ಲೇಆಫ್‌ ಆಸೆ ಜೀವಂತವಾಗಿರಿಸಲು ಇಂದಿನ ಪಂದ್ಯದಲ್ಲಿ ಗೆಲುವು ಸಾಧಿಸುವುದು ಅನಿವಾರ್ಯವಾಗಿದೆ.

ಒಂದು ವೇಳೆ ಚೆನ್ನೈ ಈ ಪಂದ್ಯದಲ್ಲಿ ಸೋತರೆ ಮುಂದಿನ ಹಂತ ಪ್ರವೇಶಿಸುವ ಹಾದಿ ಅತ್ಯಂತ ಕಠಿಣವಾಗಲಿದೆ. ಇತ್ತ ಪಂಜಾಬ್ ಕಿಂಗ್ಸ್ ತಂಡ ಮುಂದಿನ ಪಂದ್ಯದಲ್ಲೂ ಸೋತರೆ 13 ಅಂಕಗಳೊಂದಿಗೆ ಟೂರ್ನಿಯಿಂದ ಹೊರಬೀಳುವ ಸಾಧ್ಯತೆ ಇದೆ. ಅಲ್ಲದೆ ರಾಜಸ್ಥಾನ್ ರಾಯಲ್ಸ್ ಉಳಿದಿರುವ ಎರಡೂ ಪಂದ್ಯಗಳಲ್ಲಿ ಸೋಲಬೇಕಾದ ಪರಿಸ್ಥಿತಿಯೂ ಸಿಎಸ್ಕೆಗೆ ಅನುಕೂಲಕರವಾಗಬಹುದು. ಈ ಎಲ್ಲ ಲೆಕ್ಕಾಚಾರಗಳ ನಡುವೆ ಚೆನ್ನೈ ತಂಡ ಭಾರೀ ಒತ್ತಡದೊಂದಿಗೆ ಕಣಕ್ಕಿಳಿಯುತ್ತಿದೆ.

ಇನ್ನೊಂದೆಡೆ ಕಳೆದ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಸೋಲು ಕಂಡಿದ್ದ ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೂ ಗೆಲುವು ಅಗತ್ಯವಾಗಿದೆ. ಬಾಕಿ ಇರುವ ಎರಡು ಪಂದ್ಯಗಳ ಪೈಕಿ ಕನಿಷ್ಠ ಒಂದರಲ್ಲಿ ಜಯ ಸಾಧಿಸಬೇಕಾದ ಅನಿವಾರ್ಯತೆ ಹೈದರಾಬಾದ್ ಎದುರಿಸಿದೆ.

ಪಿಚ್ ರಿಪೋರ್ಟ್

ಚೆನ್ನೈನ ಎಂ.ಎ. ಚಿದಂಬರಂ ಮೈದಾನದ ಪಿಚ್ ಸಾಮಾನ್ಯವಾಗಿ ಸ್ಪಿನ್ ಬೌಲರ್‌ಗಳಿಗೆ ಅನುಕೂಲಕರವಾಗಿದೆ. ಮೊದಲ ಇನ್ನಿಂಗ್ಸ್‌ನಲ್ಲಿ 180 ರಿಂದ 200 ರನ್‌ಗಳ ಗಡಿ ದಾಟಿದರೆ ಮಾತ್ರ ಎರಡನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡುವ ತಂಡಕ್ಕೆ ಸವಾಲು ಎದುರಾಗಬಹುದು. ಟಾಸ್ ಗೆಲ್ಲುವ ತಂಡ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ.

ಸಿಎಸ್ಕೆ ಸಂಭವನೀಯ ಪ್ಲೇಯಿಂಗ್-11

ಋತುರಾಜ್ ಗಾಯಕ್ವಾಡ್ (ನಾಯಕ), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಉರ್ವಿಲ್ ಪಟೇಲ್, ಕಾರ್ತಿಕ್ ಶರ್ಮಾ, ಡೆವಾಲ್ಡ್ ಬ್ರೆವಿಸ್, ಶಿವಂ ದುಬೆ, ಪ್ರಶಾಂತ್ ವೀರ್, ಅನ್ಶುಲ್ ಕಾಂಬೋಜ್, ಸ್ಪೆನ್ಸರ್ ಜಾನ್ಸನ್, ನೂರ್ ಅಹ್ಮದ್, ಮುಖೇಶ್ ಚೌಧರಿ.

ಹೈದರಾಬಾದ್ ಸಂಭವನೀಯ ಪ್ಲೇಯಿಂಗ್-11

ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ, ಇಶಾನ್ ಕಿಶನ್ (ವಿಕೆಟ್ ಕೀಪರ್), ಹೆನ್ರಿಚ್ ಕ್ಲಾಸೆನ್, ನಿತೀಶ್ ಕುಮಾರ್ ರೆಡ್ಡಿ, ಆರ್. ಸ್ಮರನ್, ಪ್ಯಾಟ್ ಕಮ್ಮಿನ್ಸ್ (ನಾಯಕ), ಹರ್ಷಲ್ ಪಟೇಲ್, ಹರ್ಷ್ ದುಬೆ, ಈಶಾನ್ ಮಾಲಿಂಗ, ಸಾಕಿಬ್ ಹುಸೇನ್.

ಇಂಧನ ದರ ಮತ್ತಷ್ಟು ಏರಿಕೆ ಆತಂಕ: ಅಕ್ರಮ ಪೆಟ್ರೋಲ್ ಸಂಗ್ರಹ ತಡೆಗೆ ಬಂಕ್ʼಗಳಲ್ಲಿ ಹೊಸ ನಿಯಮ ಜಾರಿ

ಬೆಂಗಳೂರು:  ಮಧ್ಯಪ್ರಾಚ್ಯದಲ್ಲಿ ತೈಲ ಬಿಕ್ಕಟ್ಟು ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆಯಾಗಿದ್ದು, ಮುಂದಿನ ದಿನಗಳಲ್ಲಿ ಇಂಧನ ಕೊರತೆ ಉಂಟಾಗಬಹುದೇ ಎಂಬ ಆತಂಕ ಸಾರ್ವಜನಿಕರಲ್ಲಿ ಹೆಚ್ಚಾಗಿದೆ. ಈ ಬೆಳವಣಿಗೆಯ ನಡುವೆಯೇ ಅಕ್ರಮ ಇಂಧನ ಸಂಗ್ರಹವನ್ನು ತಡೆಯಲು ತೈಲ ಕಂಪನಿಗಳು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿವೆ.

ಇತ್ತೀಚೆಗೆ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಪ್ರತಿ ಲೀಟರ್‌ಗೆ ಸುಮಾರು ಮೂರು ರೂಪಾಯಿ ಹೆಚ್ಚಳವಾಗಿದ್ದು, ಮುಂದಿನ ದಿನಗಳಲ್ಲಿ ದರ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆ ಜನರು ಹೆಚ್ಚುವರಿ ಇಂಧನ ಖರೀದಿಸಿ ಬಾಟಲಿ ಹಾಗೂ ಕ್ಯಾನ್‌ಗಳಲ್ಲಿ ಸಂಗ್ರಹಿಸುವ ಸಾಧ್ಯತೆ ಹೆಚ್ಚಿರುವುದರಿಂದ, ತೈಲ ಕಂಪನಿಗಳು ಪೆಟ್ರೋಲ್ ಬಂಕ್ ಮಾಲೀಕರಿಗೆ ವಿಶೇಷ ಸೂಚನೆಗಳನ್ನು ನೀಡಿವೆ.

ಬಾಟಲಿ ಹಾಗೂ ಕ್ಯಾನ್‌ಗಳಿಗೆ ಪೆಟ್ರೋಲ್ ಮತ್ತು ಡೀಸೆಲ್ ತುಂಬಬಾರದು ಎಂದು ಕಂಪನಿಗಳು ಸೂಚನೆ ನೀಡಿದ್ದು, ಹಲವೆಡೆ ಬಂಕ್‌ಗಳ ಬಳಿ ಇದಕ್ಕೆ ಸಂಬಂಧಿಸಿದ ಬೋರ್ಡ್‌ಗಳನ್ನೂ ಅಳವಡಿಸಲಾಗಿದೆ. ಕೆಲವು ವಾಹನ ಸವಾರರು ಬಾಟಲಿಗಳೊಂದಿಗೆ ಬಂಕ್‌ಗೆ ಬಂದರೂ, ಸಿಬ್ಬಂದಿ ಇಂಧನ ನೀಡದೇ ಹಿಂತಿರುಗಿಸಿರುವ ಘಟನೆಗಳು ವರದಿಯಾಗಿವೆ.

ಇನ್ನೂ ಕೆಲವು ಕಡೆಗಳಲ್ಲಿ ಫ್ಯಾಕ್ಟರಿ, ಜನರೇಟರ್ ಹಾಗೂ ಕೈಗಾರಿಕಾ ಬಳಕೆಗೆ ಅಗತ್ಯವಿರುವ ಕಾರಣ ಕ್ಯಾನ್‌ಗಳಲ್ಲಿ ಇಂಧನ ಕೇಳಲಾಗುತ್ತಿದೆ. ಅಂತಹ ಅಗತ್ಯ ಬಳಕೆದಾರರಿಗೆ ಮಾತ್ರ ಪರಿಶೀಲನೆಯ ಬಳಿಕ ಪೆಟ್ರೋಲ್ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.

ಈ ಮೂಲಕ ಅಕ್ರಮವಾಗಿ ಇಂಧನ ಸಂಗ್ರಹಿಸುವ ಪ್ರವೃತ್ತಿಗೆ ಕಡಿವಾಣ ಹಾಕಲು ತೈಲ ಕಂಪನಿಗಳೊಂದಿಗೆ ಬಂಕ್ ಮಾಲೀಕರೂ ಸಹಕರಿಸುತ್ತಿದ್ದಾರೆ.

ಒಂದು ವೇಳೆ ಮುಂದಿನ ದಿನಗಳಲ್ಲಿ ಮತ್ತೊಮ್ಮೆ ಇಂಧನ ದರ ಏರಿಕೆಯಾಗಿದರೆ ವಾಹನ ಸವಾರರ ಮೇಲಿನ ಆರ್ಥಿಕ ಹೊರೆ ಇನ್ನಷ್ಟು ಹೆಚ್ಚುವ ಸಾಧ್ಯತೆಯಿದೆ. ಈಗಾಗಲೇ ಹೆಚ್ಚುತ್ತಿರುವ ದರಗಳಿಂದ ಜನರು ಸಂಕಷ್ಟ ಅನುಭವಿಸುತ್ತಿದ್ದು, ಭವಿಷ್ಯದ ಬೆಲೆ ಏರಿಕೆ ಆತಂಕ ಇಂಧನ ಮಾರುಕಟ್ಟೆಯಲ್ಲಿ ಅನಿಶ್ಚಿತತೆ ಸೃಷ್ಟಿಸಿದೆ.

BJP-JDS ಮೈತ್ರಿಯಲ್ಲಿ ಬಿಕ್ಕಟ್ಟು ಇಲ್ಲ; 2028ರ ಹೋರಾಟವನ್ನು ಒಟ್ಟಾಗಿ ಎದುರಿಸುತ್ತೇವೆ ಎಂದ ದೇವೇಗೌಡ

ಬೆಂಗಳೂರು: ಬಿಜೆಪಿ ಮತ್ತು ಜೆಡಿಎಸ್ ನಡುವಿನ ಮೈತ್ರಿಯಲ್ಲಿ ಯಾವುದೇ ಬಿಕ್ಕಟ್ಟು ಉಂಟಾಗುವುದಿಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಸ್ಪಷ್ಟಪಡಿಸಿದ್ದಾರೆ.

2028ರ ಚುನಾವಣೆಯನ್ನು ಉಲ್ಲೇಖಿಸಿ ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಎನ್‌ಡಿಎ ಮೈತ್ರಿಕೂಟದ ಭಾಗವಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಉತ್ತಮ ಸಂಬಂಧವಿದೆ ಎಂದು ಹೇಳಿದರು.

ಈ ಹೋರಾಟದ ಸಂದರ್ಭದಲ್ಲಿ ಯಾವುದೇ ಸಮಸ್ಯೆಗಳು ಎದುರಾದರೂ ಪರಸ್ಪರ ಚರ್ಚೆ ಮೂಲಕ ಅವುಗಳನ್ನು ಬಗೆಹರಿಸಿಕೊಂಡು ಮುಂದುವರೆಯುವ ವಿಶ್ವಾಸವಿದೆ ಎಂದು ದೇವೇಗೌಡ ತಿಳಿಸಿದರು.

ಮೋದಿ ಮತ್ತು ಅಮಿತ್ ಶಾ ಅವರೊಂದಿಗೆ ಇರುವ ಆತ್ಮೀಯ ಸಂಬಂಧದಿಂದಾಗಿ ಮೈತ್ರಿ ಕುರಿತು ಯಾವುದೇ ಆತಂಕವಿಲ್ಲ ಎಂದು  ಹೇಳಿದರು.

ದಕ್ಷಿಣ ಭಾರತದಲ್ಲಿ ಕಾಂಗ್ರೆಸ್ ಪ್ರಾಬಲ್ಯ ಕುರಿತು ಪ್ರತಿಕ್ರಿಯಿಸಿದ ಅವರು, ಪ್ರಸ್ತುತ ಕೇರಳ, ತೆಲಂಗಾಣ ಹಾಗೂ ಕರ್ನಾಟಕದಲ್ಲಿ ಕಾಂಗ್ರೆಸ್ ಆಡಳಿತವಿದೆ ಎಂದು ಹೇಳಲಾಗುತ್ತಿದೆ. ಆದರೆ ಮುಂದಿನ ದಿನಗಳಲ್ಲಿ ಏನಾಗುತ್ತದೆ ಎಂಬುದನ್ನು ಕಾದುನೋಡಬೇಕು. ಸೂಕ್ತ ಸಮಯ ಬಂದಾಗ ಈ ಬಗ್ಗೆ ಮಾತನಾಡುತ್ತೇನೆ ಎಂದರು.

ಈ ವೇಳೆ ಪಕ್ಷದ ಕಾರ್ಯಕರ್ತರಿಗೆ ಸಂದೇಶ ನೀಡಿದ ದೇವೇಗೌಡ, ಜೆಡಿಎಸ್ ಕಾರ್ಯಕರ್ತರು ಶಿಸ್ತಿನ ಸಿಪಾಯಿಗಳಂತೆ ನಿಷ್ಠೆಯಿಂದ ಪಕ್ಷದ ಕೆಲಸ ಮಾಡಬೇಕು ಎಂದು ಕರೆ ನೀಡಿದರು.

ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ವಹಿಸಿರುವ ಜವಾಬ್ದಾರಿಗಳನ್ನು ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಕಾರ್ಯಕರ್ತರು ಸಮರ್ಪಕವಾಗಿ ನಿರ್ವಹಿಸಬೇಕು ಎಂದು ಸೂಚಿಸಿದ ಅವರು, ಶಾಸಕರು ಮತ್ತು ಕಾರ್ಯಕರ್ತರು ಪಕ್ಷದ ಸಂಘಟನೆ ಬಲಪಡಿಸುವತ್ತ ಹೆಚ್ಚು ಗಮನಹರಿಸಬೇಕು ಎಂದು ಮನವಿ ಮಾಡಿದರು.

ಗುಡುಗು ಸಿಡಿಲಿನ ಆರ್ಭಟಕ್ಕೆ ಶಿಕ್ಷಕ ಬಲಿ! ಮನೆ ಮುಂದೆ ನಿಂತಿದ್ದಾಗಲೇ ಹೃದಯಾಘಾತ

ದಾವಣಗೆರೆ: ಜಿಲ್ಲೆಯ ಹೊನ್ನಾಳಿ ತಾಲೂಕಿನ ಮಲೆಕುಂಬಳೂರು ಗ್ರಾಮದಲ್ಲಿ ಗುಡುಗು-ಸಿಡಿಲಿನ ಭಾರೀ ಶಬ್ದಕ್ಕೆ ಶಿಕ್ಷಕರೊಬ್ಬರು ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ನಡೆದಿದೆ.

ನಾಗರಾಜಪ್ಪ (56) ಮೃತಪಟ್ಟ ಶಿಕ್ಷಕ. ಅವರು ಗ್ರಾಮದ ಸರ್ಕಾರಿ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು. ಶನಿವಾರ ರಾತ್ರಿ ಮನೆಯ ಮುಂದೆ ನಿಂತಿದ್ದ ವೇಳೆ ಏಕಾಏಕಿ ಭಾರೀ ಸಿಡಿಲು ಬಡಿದಿದೆ.

ಸಿಡಿಲಿನ ಆಘಾತಕಾರಿ ಶಬ್ದಕ್ಕೆ ನಾಗರಾಜಪ್ಪ ಬೆಚ್ಚಿಬಿದ್ದಿದ್ದು, ತಕ್ಷಣವೇ ಹೃದಯಾಘಾತಕ್ಕೊಳಗಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

ಘಟನೆಯಿಂದ ಕುಟುಂಬಸ್ಥರಲ್ಲಿ ಆಕ್ರಂದನ ಮುಗಿಲುಮುಟ್ಟಿದ್ದು, ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ. ಹೊನ್ನಾಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಬೇಲ್ ಶಾಕ್ ಬಳಿಕ ಜೈಲಿನಲ್ಲಿ ಕುಗ್ಗಿದ ದರ್ಶನ್! ದಚ್ಚು ಫೋಟೋ ಹಾಕಿ ಭಾವುಕರಾದ ವಿಜಯಲಕ್ಷ್ಮಿ

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಅವರಿಗೆ ಸುಪ್ರೀಂ ಕೋರ್ಟ್‌ನಿಂದ ಮತ್ತೊಂದು ದೊಡ್ಡ ಆಘಾತ ಎದುರಾಗಿದೆ. ಜಾಮೀನು ಅರ್ಜಿ ತಿರಸ್ಕೃತವಾಗಿರುವ ಹಿನ್ನೆಲೆ, ದರ್ಶನ್ ಇನ್ನೂ ದೀರ್ಘಕಾಲ ಜೈಲಿನಲ್ಲೇ ಇರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಪರಪ್ಪನ ಅಗ್ರಹಾರ ಜೈಲಿನ ಕ್ವಾರಂಟೈನ್ ಬ್ಯಾರಕ್‌ನಲ್ಲಿ ಇರುವ ದರ್ಶನ್, ಇತ್ತೀಚಿನ ದಿನಗಳಲ್ಲಿ ಯಾರೊಂದಿಗೂ ಹೆಚ್ಚು ಮಾತನಾಡದೇ ಮೌನವಾಗಿದ್ದಾರೆ ಎನ್ನಲಾಗಿದೆ. ಬ್ಯಾರಕ್‌ನ ಮೂಲೆಯಲ್ಲಿ ಒಬ್ಬರೇ ಕುಳಿತು ಸಮಯ ಕಳೆಯುತ್ತಿದ್ದು, ಮಾನಸಿಕವಾಗಿ ಬೇಸರಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ಬೆನ್ನುನೋವು ತೀವ್ರವಾಗಿದ್ದು, ಜೈಲಿನ ಊಟವೂ ಒಗ್ಗುತ್ತಿಲ್ಲ. ಸರಿಯಾಗಿ ನಿದ್ದೆ ಬಾರದ ಕಾರಣ ದರ್ಶನ್ ದೈಹಿಕವಾಗಿ ಕುಗ್ಗಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.

ಇತ್ತ ಪತಿಯ ಸಂಕಷ್ಟ ಕಂಡು ಪತ್ನಿ ವಿಜಯಲಕ್ಷ್ಮಿ ಭಾವುಕರಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ದರ್ಶನ್ ಅವರ ಫೋಟೋ ಹಂಚಿಕೊಂಡು ಹಾರ್ಟ್ ಬ್ರೇಕ್ ಇಮೋಜಿ ಪೋಸ್ಟ್ ಮಾಡುವ ಮೂಲಕ ತಮ್ಮ ನೋವನ್ನು ಅಭಿವ್ಯಕ್ತಿಸಿದ್ದಾರೆ.

ಸುಪ್ರೀಂ ಕೋರ್ಟ್‌ನ ನಿರ್ಧಾರದಿಂದ ದರ್ಶನ್ ಕುಟುಂಬಕ್ಕೆ ಭಾರೀ ನಿರಾಸೆ ಉಂಟಾಗಿದ್ದು, ಮುಂದಿನ ಕಾನೂನು ಹೋರಾಟದ ಬಗ್ಗೆ ಅಭಿಮಾನಿಗಳಲ್ಲೂ ಚರ್ಚೆ ಶುರುವಾಗಿದೆ.

ತುಮಕೂರಿನಲ್ಲಿ ನಾಳೆ ರಾಜ್ಯ ಸರ್ಕಾರದ ಸಾಧನಾ ಸಮಾವೇಶ: 1.52 ಲಕ್ಷ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ಮೂರು ವರ್ಷಗಳ ಸಾಧನೆಗಳನ್ನು ಜನರಿಗೆ ಪರಿಚಯಿಸುವ ಉದ್ದೇಶದಿಂದ ತುಮಕೂರಿನಲ್ಲಿ ನಾಳೆ ಸಾಧನಾ ಸಮಾವೇಶ ಆಯೋಜಿಸಲಾಗಿದೆ ಎಂದು ಗೃಹಸಚಿವ ಜಿ. ಪರಮೇಶ್ವರ್ ತಿಳಿಸಿದ್ದಾರೆ. ಇದೇ ಸಮಾವೇಶದಲ್ಲಿ ಸರ್ಕಾರದ ವತಿಯಿಂದ 1.52 ಲಕ್ಷ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ ಮಾಡಲಾಗುವುದು ಎಂದುಹೇಳಿದರು.

ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮೇ 19ರಂದು ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಮೂರು ವರ್ಷಗಳು ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಈ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಸರ್ಕಾರ ಅಧಿಕಾರಕ್ಕೆ ಬಂದಾಗ ನೀಡಿದ್ದ ಹಲವು ಭರವಸೆಗಳನ್ನು ಈ ಮೂರು ವರ್ಷಗಳಲ್ಲಿ ಹೇಗೆ ಈಡೇರಿಸಲಾಗಿದೆ ಎಂಬುದನ್ನು ಸಮಾವೇಶದಲ್ಲಿ ಜನತೆಗೆ ವಿವರಿಸಲಾಗುವುದು ಎಂದು ಪರಮೇಶ್ವರ್ ತಿಳಿಸಿದರು.

ಸಮಾವೇಶವನ್ನು ತಮ್ಮ ಶಕ್ತಿ ಪ್ರದರ್ಶನವೆಂದು ಕೆಲವರು ವ್ಯಾಖ್ಯಾನಿಸುತ್ತಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಇದು ಯಾರೊಬ್ಬರ ವೈಯಕ್ತಿಕ ಶಕ್ತಿ ಪ್ರದರ್ಶನವೂ ಅಲ್ಲ ಎಂದು ಸ್ಪಷ್ಟಪಡಿಸಿದರು. ಸರ್ಕಾರದ ಕಾರ್ಯಕ್ರಮಗಳ ಅನುಷ್ಠಾನ ಹಾಗೂ ಸಾಧನೆಗಳನ್ನು ಜನರ ಮುಂದೆ ಮಂಡಿಸುವ ಉದ್ದೇಶ ಮಾತ್ರ ಇದಾಗಿದೆ ಎಂದರು.

ಇದು ಸರ್ಕಾರದ ಕಾರ್ಯಕ್ರಮವಾಗಿದ್ದು, ಪಕ್ಷದ ಕಾರ್ಯಕ್ರಮವಲ್ಲ. ಆದ್ದರಿಂದ ಹೈಕಮಾಂಡ್ ನಾಯಕರನ್ನು ಆಹ್ವಾನಿಸಲಾಗಿಲ್ಲ ಎಂದು ಅವರು ಹೇಳಿದರು.

ಸಮಾವೇಶದ ಬಳಿಕ ಸರ್ಕಾರದಲ್ಲಿ ಬದಲಾವಣೆಗಳಾಗುವ ಸಾಧ್ಯತೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಪರಮೇಶ್ವರ್, ಸರ್ಕಾರದ ಅಭಿವೃದ್ಧಿ ಕಾರ್ಯಕ್ರಮಗಳ ಕುರಿತ ಸಮಾವೇಶವನ್ನು ಪಕ್ಷದ ಆಂತರಿಕ ವಿಚಾರಗಳೊಂದಿಗೆ ಬೆರೆಸಬಾರದು ಎಂದು ಹೇಳಿದರು.

ಕೇರಳ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಸತೀಶನ್

ತಿರುವನಂತಪುರಂ: ಕೇರಳದ ನೂತನ ಮುಖ್ಯಮಂತ್ರಿಯಾಗಿ ವಿಡಿ ಸತೀಶನ್ ಸೋಮವಾರ ಪ್ರಮಾಣವಚನ ಸ್ವೀಕರಿಸಿದರು. ರಾಜ್ಯಪಾಲ ಆರ್.ವಿ. ಅರ್ಲೇಕರ್ ಅವರು ಅವರಿಗೆ ಪದವಿ ಮತ್ತು ಗೌಪ್ಯತಾ ಪ್ರಮಾಣವಚನ ಬೋಧಿಸಿದರು. ಇದೇ ವೇಳೆ 20 ಮಂದಿ ಸಚಿವರೂ ಸಹ ಪ್ರಮಾಣವಚನ ಸ್ವೀಕರಿಸಿ ನೂತನ ಯುಡಿಎಫ್ ಸರ್ಕಾರ ಅಧಿಕೃತವಾಗಿ ಅಸ್ತಿತ್ವಕ್ಕೆ ಬಂದಿದೆ.

ಇತ್ತೀಚೆಗೆ ನಡೆದ ಕೇರಳ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಭರ್ಜರಿ ಜಯ ಸಾಧಿಸಿ ಅಧಿಕಾರಕ್ಕೆ ಮರಳಿತ್ತು. ಬಳಿಕ ನಡೆದ ಸಭೆಯಲ್ಲಿ ವಿಡಿ ಸತೀಶನ್ ಅವರನ್ನು ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆ ಮಾಡಲಾಗಿದ್ದು, ಇದೀಗ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ.

ನೂತನ ಸಚಿವ ಸಂಪುಟದಲ್ಲಿ ಕಾಂಗ್ರೆಸ್ ಪಕ್ಷದ 11 ಮಂದಿಗೆ ಅವಕಾಶ ನೀಡಲಾಗಿದೆ. ಮುಸ್ಲಿಂ ಲೀಗ್‌ನ ಐವರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಜೊತೆಗೆ ಕೇರಳ ಕಾಂಗ್ರೆಸ್-ಜೋಸೆಫ್‌ನ ಮಾನ್ಸ್ ಜೋಸೆಫ್, ಕ್ರಾಂತಿಕಾರಿ ಸಮಾಜವಾದಿ ಪಕ್ಷದ ಶಿಬು ಬೇಬಿ ಜಾನ್, ಕೇರಳ ಕಾಂಗ್ರೆಸ್-ಜಾಕೋಬ್‌ನ ಅನೂಪ್ ಜಾಕೋಬ್ ಹಾಗೂ ಸಿಪಿ ಜಾನ್ ಅವರಿಗೂ ಸಚಿವ ಸಂಪುಟದಲ್ಲಿ ಸ್ಥಾನ ನೀಡಲಾಗಿದೆ.

ಕಾಂಗ್ರೆಸ್ ಪಕ್ಷದಿಂದ ರಮೇಶ್ ಚೆನ್ನಿತ್ತಲ, ಸನ್ನಿ ಜೋಸೆಫ್, ಕೆ. ಮುರಳೀಧರನ್, ಎ.ಪಿ. ಅನಿಲ್ ಕುಮಾರ್, ಪಿ.ಸಿ. ವಿಷ್ಣುನಾಥ್, ರೋಜಿ ಎಂ ಜಾನ್, ಬಿಂದು ಕೃಷ್ಣ, ಎಂ. ಲಿಜು, ಟಿ. ಸಿದ್ದಿಕ್, ಕೆ.ಎ. ತುಳಸಿ ಮತ್ತು ಒ.ಜೆ. ಜನೀಶ್ ಸಚಿವರಾಗಿದ್ದಾರೆ.

ಮೀನು ಸಾಗಾಟದ ವಾಹನ, ಜೀಪ್ ನಡುವೆ ಭೀಕರ ಅಪಘಾತ: ಕೇರಳ ಮೂಲದ ಇಬ್ಬರು ಪ್ರವಾಸಿಗರು ಸಾವು

0

ಉಡುಪಿ: ಕೊಲ್ಲೂರು ದೇವಿಯ ದರ್ಶನ ಪಡೆದು ಕೊಡಚಾದ್ರಿಗೆ ತೆರಳಿದ್ದ ಕೇರಳ ಮೂಲದ ಪ್ರವಾಸಿಗರಿಗೆ ವಾಪಸ್ ಬರುವ ವೇಳೆ ಭೀಕರ ಅಪಘಾತ ಸಂಭವಿಸಿದೆ. ಮೀನು ಸಾಗಾಟದ ವಾಹನ ಮತ್ತು ಪ್ರವಾಸಿಗರ ಜೀಪ್ ನಡುವೆ ಸಂಭವಿಸಿದ ಡಿಕ್ಕಿಯಲ್ಲಿ ಇಬ್ಬರು ಸಾವನ್ನಪ್ಪಿದ್ದು, ಎಂಟು ಮಂದಿ ಗಾಯಗೊಂಡಿದ್ದಾರೆ.

ಕೊಡಚಾದ್ರಿಯ ದಳಿ ಪ್ರದೇಶದಲ್ಲಿ ಈ ದುರ್ಘಟನೆ ನಡೆದಿದೆ. ಸ್ಥಳೀಯ ಪ್ರವಾಸಿ ಜೀಪ್‌ನಲ್ಲಿ ಪ್ರವಾಸಿಗರು ವಾಪಾಸ್ ಬರುತ್ತಿದ್ದ ವೇಳೆ ಮಲ್ಪೆಯಿಂದ ಶಿವಮೊಗ್ಗಕ್ಕೆ ತೆರಳುತ್ತಿದ್ದ ಮೀನು ಸಾಗಾಟದ ವಾಹನ ಡಿಕ್ಕಿ ಹೊಡೆದಿದೆ. ಇಳಿಜಾರು ಪ್ರದೇಶವಾಗಿದ್ದರಿಂದ ವಾಹನ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ ಎನ್ನಲಾಗಿದೆ.

ಅಪಘಾತದಲ್ಲಿ ಮೂವರು ಮಕ್ಕಳು, ಸ್ಥಳೀಯ ಜೀಪ್ ಚಾಲಕ ಸೇರಿದಂತೆ ಹಲವರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಕುಂದಾಪುರ, ಉಡುಪಿ ಮತ್ತು ಮಣಿಪಾಲ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.

ಕೇರಳ ಮೂಲದ ಪ್ರವಾಸಿಗರು ಟೂರಿಸ್ಟ್ ಬಸ್ ಮೂಲಕ ಕೊಲ್ಲೂರಿಗೆ ಆಗಮಿಸಿದ್ದರು. ಘಟನೆಯ ಬಳಿಕ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಕೊಲ್ಲೂರು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

error: Content is protected !!