ಬೆಂಗಳೂರು: ನಗರ ಹಾಗೂ ಗ್ರಾಮೀಣ ಪ್ರದೇಶಗಳಿಂದ ಉತ್ಪತ್ತಿಯಾಗುತ್ತಿರುವ ಕೊಳಚೆ ನೀರು ವ್ಯಾಪಕ ಪ್ರಮಾಣದಲ್ಲಿ ಜಲಮೂಲಗಳಿಗೆ ಸೇರುತ್ತಿರುವ ಪರಿಣಾಮ ಕರ್ನಾಟಕದಲ್ಲಿ ಕಲುಷಿತ ನದಿಗಳ ಸಂಖ್ಯೆ 12ರಿಂದ 14ಕ್ಕೆ ಏರಿಕೆಯಾಗಿದೆ.
ಜಲಮೂಲಗಳ ಮಾಲಿನ್ಯ ಕುರಿತು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿರುವ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಗೆ (NGT) ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (KSPCB) ಸಲ್ಲಿಸಿರುವ ವರದಿಯಲ್ಲಿ ಈ ಮಾಹಿತಿ ಬಹಿರಂಗವಾಗಿದೆ.
ವರದಿ ಪ್ರಕಾರ, ರಾಜ್ಯದ ನಗರ ಪ್ರದೇಶಗಳಲ್ಲಿ ಪ್ರತಿದಿನ 3,356 ದಶಲಕ್ಷ ಲೀಟರ್ ಕೊಳಚೆ ನೀರು ಉತ್ಪತ್ತಿಯಾಗುತ್ತಿದೆ. ಈ ಪೈಕಿ 43 ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳ (STP) ಮೂಲಕ 621 ದಶಲಕ್ಷ ಲೀಟರ್ ನೀರನ್ನು ಮಾತ್ರ ಸಂಸ್ಕರಿಸಲಾಗುತ್ತಿದೆ. ಉಳಿದ ಕೊಳಚೆ ನೀರು ಸಂಸ್ಕರಣೆಯಾಗದೆ ನೇರವಾಗಿ ನದಿಗಳು ಹಾಗೂ ಇತರ ಜಲಮೂಲಗಳಿಗೆ ಸೇರುತ್ತಿದ್ದು, ಮಾಲಿನ್ಯದ ಪ್ರಮಾಣ ಹೆಚ್ಚಳಕ್ಕೆ ಕಾರಣವಾಗಿದೆ.
ಮಂಡಳಿಯ ವರದಿಯಲ್ಲಿ ಅರ್ಕಾವತಿ ನದಿಯನ್ನು ರಾಜ್ಯದಲ್ಲೇ ಅತ್ಯಂತ ಕಲುಷಿತ ನದಿಯಾಗಿ ಗುರುತಿಸಲಾಗಿದೆ. ಹೆಸರಘಟ್ಟದಿಂದ ಕನಕಪುರದವರೆಗಿನ ಅರ್ಕಾವತಿ ನದಿಯ ಹರಿವಿನ ಪ್ರದೇಶ ತೀವ್ರ ಮಾಲಿನ್ಯಕ್ಕೊಳಗಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಇದಲ್ಲದೆ ತುಂಗಭದ್ರಾ, ಭದ್ರಾ, ಶಿಂಶಾ, ಲಕ್ಷ್ಮಣತೀರ್ಥ, ಕಾವೇರಿ, ಕಬಿನಿ, ಕಾಗಿಣಾ, ಕೃಷ್ಣಾ, ಭೀಮಾ, ತುಂಗಾ, ದಕ್ಷಿಣ ಪಿನಾಕಿನಿ, ಮಲಪ್ರಭಾ ಹಾಗೂ ಘಟಪ್ರಭಾ ನದಿಗಳ ವಿವಿಧ ಭಾಗಗಳೂ ಕಲುಷಿತ ನದಿಗಳ ಪಟ್ಟಿಯಲ್ಲಿ ಸೇರಿವೆ.
ಜಲಮೂಲಗಳ ಸಂರಕ್ಷಣೆಗಾಗಿ ಕೊಳಚೆ ನೀರಿನ ಸಮರ್ಪಕ ಸಂಸ್ಕರಣೆ, ತ್ಯಾಜ್ಯ ನಿರ್ವಹಣೆಗೆ ಹೆಚ್ಚಿನ ಆದ್ಯತೆ ನೀಡುವ ಅಗತ್ಯವಿದೆ ಎಂದು ಪರಿಸರ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

