Home Blog Page 4

ಗೃಹಲಕ್ಷ್ಮಿ ಯೋಜನೆಯಲ್ಲಿ ಭಾರೀ ಗೊಂದಲ ; ಮೃತರ ಖಾತೆಗೆ ಕೋಟ್ಯಂತರ ಹಣ ವರ್ಗಾವಣೆ!

0

ಮಂಗಳೂರು: ಗೃಹಲಕ್ಷ್ಮಿ ಯೋಜನೆಯ ಹಣ ಸರಿಯಾಗಿ ಜಮೆಯಾಗುತ್ತಿಲ್ಲ ಎಂದು ಸಾರ್ವಜನಿಕರಿಂದ ಆರೋಪಗಳು ಕೇಳಿಬರುತ್ತಿರುವ ನಡುವೆಯೇ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೊಂದು ದೊಡ್ಡ ಎಡವಟ್ಟು ಬೆಳಕಿಗೆ ಬಂದಿದೆ. ಮೃತಪಟ್ಟ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಸುಮಾರು 22 ಕೋಟಿ ರೂಪಾಯಿ ಹಣ ವರ್ಗಾವಣೆಯಾಗಿರುವುದು ಜಿಲ್ಲಾ ಮಟ್ಟದ ಸಭೆಯಲ್ಲಿ ಬಹಿರಂಗವಾಗಿದೆ.

ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪರಿಶೀಲನಾ ಸಮಿತಿ ಸಭೆಯಲ್ಲಿ ಈ ವಿಷಯ ಪ್ರಸ್ತಾಪವಾಗಿದ್ದು, ಅಧ್ಯಕ್ಷ ಭರತ್ ಮುಂಡೋಡಿ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮೃತ ಫಲಾನುಭವಿಗಳ ಖಾತೆಗಳಿಗೆ ಜಮೆಯಾದ ಹಣವನ್ನು ಸರ್ಕಾರಕ್ಕೆ ಮರಳಿ ಪಡೆಯಲು ತಕ್ಷಣ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ.

ಬಳಕೆಯಲ್ಲಿಲ್ಲದ ಖಾತೆಗಳಿಗೂ ಹಣ ವರ್ಗಾವಣೆ ಮುಂದುವರಿದಿರುವ ಬಗ್ಗೆ ರಾಜ್ಯ ಕಚೇರಿಯಿಂದ ಮಾಹಿತಿ ಬಂದಿದ್ದು, ಮೃತರ ವಿವರಗಳನ್ನು ಸಂಗ್ರಹಿಸಿ ಬ್ಯಾಂಕ್‌ಗಳ ಮೂಲಕ ಖಾತೆಗಳನ್ನು ಸ್ಥಗಿತಗೊಳಿಸುವ ಪ್ರಕ್ರಿಯೆ ಆರಂಭಿಸಲು ಸೂಚಿಸಲಾಗಿದೆ.

ಸಭೆಯಲ್ಲಿ ಮತ್ತೊಂದು ಆತಂಕಕಾರಿ ಅಂಶವೂ ಬೆಳಕಿಗೆ ಬಂದಿದೆ. ಕೆಲವು ಜೀವಂತ ಫಲಾನುಭವಿಗಳನ್ನು ಇಲಾಖೆಯ ದಾಖಲೆಗಳಲ್ಲಿ ಮೃತಪಟ್ಟವರು ಎಂದು ನಮೂದಿಸಿರುವ ಗಂಭೀರ ದೋಷಗಳು ಪತ್ತೆಯಾಗಿವೆ. ಈ ಹಿನ್ನೆಲೆಯಲ್ಲಿ ಸಮಗ್ರ ತನಿಖೆ ನಡೆಸಿ ಮುಂದಿನ ಸಭೆಗೆ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮಾಹಿತಿ ಪ್ರಕಾರ, ಜಿಲ್ಲೆಯಲ್ಲಿ 4,25,759 ರೇಷನ್ ಕಾರ್ಡ್ ಹೊಂದಿದವರಿದ್ದು, ಅವರಲ್ಲಿ 3,82,178 ಮಂದಿ ಗೃಹಲಕ್ಷ್ಮಿ ಯೋಜನೆಗೆ ನೋಂದಾಯಿತರಾಗಿದ್ದಾರೆ.

ಗ್ರಾಮ ಲೆಕ್ಕಾಧಿಕಾರಿಗಳ ಕಚೇರಿಗಳಲ್ಲಿರುವ ಮರಣ ದಾಖಲೆಗಳನ್ನು ಆಧರಿಸಿ ಸ್ಥಳೀಯ ಆಡಳಿತ ಹಾಗೂ ಬ್ಯಾಂಕ್‌ಗಳ ಸಹಯೋಗದಲ್ಲಿ ಮುಂದಿನ ಹಣ ವರ್ಗಾವಣೆಯನ್ನು ತಡೆಯಲು ಕ್ರಮ ಕೈಗೊಳ್ಳಲಾಗುತ್ತಿದೆ.

ವಿಧಾನಸಭೆಯಲ್ಲೂ 144 ಮತಗಳಿಂದ ವಿಶ್ವಾಸಮತ ಗೆದ್ದ ತಮಿಳುನಾಡು ಸಿಎಂ ವಿಜಯ್!

ಚೆನ್ನೈ: ತಮಿಳುನಾಡು ವಿಧಾನಸಭೆಯಲ್ಲಿ ನಡೆದ ವಿಶ್ವಾಸಮತ ಯಾಚನೆ ಪರೀಕ್ಷೆಯಲ್ಲಿ ಟಿವಿಕೆ ಮುಖ್ಯಸ್ಥ ವಿಜಯ್ ನೇತೃತ್ವದ ಸರ್ಕಾರ ಬಹುಮತ ಸಾಬೀತುಪಡಿಸಿದೆ. ಸರ್ಕಾರದ ಪರ 144 ಮಂದಿ ಶಾಸಕರು ಮತ ಚಲಾಯಿಸುವ ಮೂಲಕ ವಿಜಯ್ ಸರ್ಕಾರಕ್ಕೆ ಸ್ಪಷ್ಟ ಬೆಂಬಲ ವ್ಯಕ್ತವಾಗಿದೆ.

ಟಿವಿಕೆ ಜೊತೆಗೆ ಕಾಂಗ್ರೆಸ್, ಸಿಪಿಎಂ, ಸಿಪಿಐ, ಮುಸ್ಲಿಂ ಲೀಗ್, ವಿಸಿಕೆ ಹಾಗೂ ಎಐಎಡಿಎಂಕೆಯಿಂದ ಬಂಡಾಯವೆದ್ದಿರುವ 27 ಶಾಸಕರು ವಿಜಯ್ ಸರ್ಕಾರದ ಪರವಾಗಿ ನಿಂತಿದ್ದಾರೆ. ವಿಶ್ವಾಸಮತ ಪ್ರಕ್ರಿಯೆ ವೇಳೆ ಡಿಎಂಕೆ ಮತ್ತು ಪಿಎಂಕೆ ಶಾಸಕರು ಸಭಾತ್ಯಾಗ ನಡೆಸಿದರು. ಇನ್ನು ಒಬ್ಬ ಬಿಜೆಪಿ ಶಾಸಕ ಮತದಾನದಿಂದ ದೂರ ಉಳಿದಿದ್ದಾರೆ.

ಇನ್ನೊಂದೆಡೆ, ಸದನದಲ್ಲಿ ಹಾಜರಿದ್ದ 22 ಎಐಎಡಿಎಂಕೆ ಶಾಸಕರು ಸರ್ಕಾರದ ವಿರುದ್ಧ ಮತ ಚಲಾಯಿಸಿದರು. ಒಟ್ಟು 234 ಸದಸ್ಯರ ಬಲ ಹೊಂದಿರುವ ತಮಿಳುನಾಡು ವಿಧಾನಸಭೆಯಲ್ಲಿ ಸಾಮಾನ್ಯವಾಗಿ ಬಹುಮತಕ್ಕೆ 118 ಶಾಸಕರ ಬೆಂಬಲ ಅಗತ್ಯವಿದೆ.

ಆದರೆ ವಿಜಯ್ ತಿರುಚಿ ಪಶ್ಚಿಮ ಹಾಗೂ ಪೆರಂಬೂರು ಎರಡೂ ಕ್ಷೇತ್ರಗಳಿಂದ ಸ್ಪರ್ಧಿಸಿದ್ದ ಹಿನ್ನೆಲೆ ಅದನ್ನು ಒಂದೇ ಸ್ಥಾನವಾಗಿ ಪರಿಗಣಿಸಲಾಗಿದೆ.

ಇದೇ ವೇಳೆ ತಿರುಪತ್ತೂರು ಕ್ಷೇತ್ರದ ಟಿವಿಕೆ ಶಾಸಕ ಶ್ರೀನಿವಾಸ್ ಸೇತುಪತಿ ಅವರಿಗೆ ವಿಶ್ವಾಸಮತ ಪ್ರಕ್ರಿಯೆಯಲ್ಲಿ ಭಾಗವಹಿಸದಂತೆ ಮದ್ರಾಸ್ ಹೈಕೋರ್ಟ್ ಸೂಚನೆ ನೀಡಿದ್ದರಿಂದ ಸದನದ ಬಲ 232ಕ್ಕೆ ಇಳಿದಿತ್ತು.

ಈ ಹಿನ್ನೆಲೆಯಲ್ಲಿ ಬಹುಮತಕ್ಕೆ 116 ಶಾಸಕರ ಬೆಂಬಲ ಸಾಕಾಗಿತ್ತು. ಆದರೆ ವಿಜಯ್ ಸರ್ಕಾರ 144 ಮತಗಳನ್ನು ಪಡೆಯುವ ಮೂಲಕ ಅಗತ್ಯ ಬಹುಮತಕ್ಕಿಂತ ಹೆಚ್ಚಿನ ಬೆಂಬಲದೊಂದಿಗೆ ವಿಶ್ವಾಸಮತ ಗೆದ್ದಿದೆ.

ಸರ್ಕಾರದ ಪರ ಮತ ಹಂಚಿಕೆ ಹೀಗಿದೆ:

  • ಟಿವಿಕೆ 106,
  • ಕಾಂಗ್ರೆಸ್ 5,
  • ಎಡಪಕ್ಷಗಳು 4,
  • ವಿಸಿಕೆ 2,
  • ಮುಸ್ಲಿಂ ಲೀಗ್ 2,
  • ಎಐಎಡಿಎಂಕೆ ಬಂಡಾಯ ಶಾಸಕರು 27

ಈ ಮೂಲಕ ತಮಿಳುನಾಡಿನಲ್ಲಿ ವಿಜಯ್ ನೇತೃತ್ವದ ಸರ್ಕಾರ ತನ್ನ ಅಧಿಕಾರವನ್ನು ಅಧಿಕೃತವಾಗಿ ಗಟ್ಟಿಗೊಳಿಸಿದ್ದು, ರಾಜ್ಯ ರಾಜಕೀಯದಲ್ಲಿ ಹೊಸ ಅಧ್ಯಾಯ ಆರಂಭವಾಗಿದೆ.

ಯುರೋಪಿಯನ್ ಟಿ20 ಲೀಗ್ʼಗೆ ರಾಹುಲ್ ದ್ರಾವಿಡ್ ಎಂಟ್ರಿ; ಡಬ್ಲಿನ್ ಫ್ರಾಂಚೈಸಿ ಖರೀದಿಸಿದ ಮಾಜಿ ನಾಯಕ

ನವದೆಹಲಿ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ಖ್ಯಾತ ಕೋಚ್ ರಾಹುಲ್ ದ್ರಾವಿಡ್ ಇದೀಗ ಯುರೋಪಿಯನ್ ಟಿ20 ಲೀಗ್‌ನಲ್ಲಿ ಹೊಸ ಇನಿಂಗ್ಸ್ ಆರಂಭಿಸಿದ್ದಾರೆ. ಯುರೋಪಿಯನ್ ಟಿ20 ಪ್ರೀಮಿಯರ್ ಲೀಗ್ (ETPL) ಉದ್ಘಾಟನಾ ಆವೃತ್ತಿಯ ತಂಡವೊಂದರ ಸಹ ಮಾಲೀಕರಾಗಿ ದ್ರಾವಿಡ್ ಸೇರ್ಪಡೆಯಾಗಿದ್ದು, ಐರ್ಲೆಂಡ್ ಮೂಲದ ‘ಡಬ್ಲಿನ್ ಗಾರ್ಡಿಯನ್ಸ್’ ಫ್ರಾಂಚೈಸಿಯನ್ನು ಖರೀದಿಸಿದ್ದಾರೆ.

ನಟ ಅಭಿಷೇಕ್ ಬಚ್ಚನ್ ಸಹ-ಸ್ಥಾಪಕರಾಗಿರುವ ಈ ಲೀಗ್ ಆಗಸ್ಟ್ 26ರಿಂದ ಆರಂಭವಾಗಲಿದ್ದು, ಡಬ್ಲಿನ್ ಗಾರ್ಡಿಯನ್ಸ್ ತಂಡಕ್ಕೆ ಭಾರತ ತಂಡದ ಮಾಜಿ ಆಲ್‌ರೌಂಡರ್ ರವಿಚಂದ್ರನ್ ಅಶ್ವಿನ್ ನಾಯಕತ್ವ ವಹಿಸಲಿದ್ದಾರೆ.

ಇದಕ್ಕೂ ಮೊದಲು ರಾಹುಲ್ ದ್ರಾವಿಡ್ ಮತ್ತು ಅಶ್ವಿನ್ ರಾಜಸ್ಥಾನ ರಾಯಲ್ಸ್ ತಂಡದಲ್ಲಿ ಒಟ್ಟಾಗಿ ಕೆಲಸ ಮಾಡಿದ್ದರು. ಇದೀಗ ಯುರೋಪಿಯನ್ ಟಿ20 ಲೀಗ್‌ನಲ್ಲಿ ಈ ಜೋಡಿ ಮತ್ತೊಮ್ಮೆ ಒಂದಾಗುತ್ತಿರುವುದು ಕ್ರಿಕೆಟ್ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.

ಯುರೋಪಿನ ವಿವಿಧ ರಾಷ್ಟ್ರಗಳಲ್ಲಿ ಕ್ರಿಕೆಟ್ ಬೆಳೆಸುವ ಉದ್ದೇಶದಿಂದ ಈ ಟೂರ್ನಿ ಆಯೋಜಿಸಲಾಗುತ್ತಿದೆ. ಐರ್ಲೆಂಡ್ ಸೇರಿದಂತೆ ಯುರೋಪಿನಾದ್ಯಂತ ಉದಯೋನ್ಮುಖ ಪ್ರತಿಭಾವಂತ ಆಟಗಾರರಿಗೆ ವೇದಿಕೆ ಕಲ್ಪಿಸುವುದು ಲೀಗ್‌ನ ಪ್ರಮುಖ ಉದ್ದೇಶವಾಗಿದೆ.

ತಂಡ ಖರೀದಿ ಕುರಿತು ಪ್ರತಿಕ್ರಿಯಿಸಿದ ರಾಹುಲ್ ದ್ರಾವಿಡ್, “ಈ ಲೀಗ್ ಹಿಂದೆ ಇರುವ ದೃಷ್ಟಿಕೋನವೇ ನನ್ನನ್ನು ಹೆಚ್ಚು ಆಕರ್ಷಿಸಿದೆ. ಐರ್ಲೆಂಡ್ ಹಾಗೂ ಯುರೋಪಿನ ಯುವ ಪ್ರತಿಭೆಗಳಿಗೆ ಅವಕಾಶ ಕಲ್ಪಿಸುವ ಮೂಲಕ ಕ್ರಿಕೆಟ್ ಬೆಳವಣಿಗೆಗೆ ಇದು ಸಹಕಾರಿಯಾಗಲಿದೆ,” ಎಂದು ಹೇಳಿದರು.

ಡಬ್ಲಿನ್ ತಂಡದಲ್ಲಿ ಸಾಕಷ್ಟು ಪ್ರತಿಭಾವಂತ ಆಟಗಾರರಿದ್ದಾರೆ. ಮುಂದಿನ ಪೀಳಿಗೆಯ ಕ್ರಿಕೆಟಿಗರನ್ನು ಬೆಳೆಸುವುದು ಅತ್ಯಂತ ಮುಖ್ಯ. ಈ ನಿಟ್ಟಿನಲ್ಲಿ ETPL ಮಹತ್ವದ ಪಾತ್ರ ವಹಿಸಲಿದೆ ಎಂಬ ವಿಶ್ವಾಸವಿದೆ ಎಂದು ಅವರು ಅಭಿಪ್ರಾಯಪಟ್ಟರು.

ಈ ಲೀಗ್‌ನಲ್ಲಿ ಡಬ್ಲಿನ್, ಬೆಲ್‌ಫಾಸ್ಟ್, ಎಡಿನ್‌ಬರ್ಗ್, ಗ್ಲಾಸ್ಗೋ, ರೊಟರ್‌ಡ್ಯಾಮ್ ಮತ್ತು ಆಂಸ್ಟರ್ಡ್ಯಾಮ್ ಸೇರಿ ಒಟ್ಟು ಆರು ತಂಡಗಳು ಭಾಗವಹಿಸಲಿವೆ. ಜೊತೆಗೆ ಕ್ರಿಸ್ ಗೇಲ್, ಸ್ಟೀವ್ ವಾ ಮತ್ತು ಜಾಂಟಿ ರೋಡ್ಸ್‌ ಸೇರಿದಂತೆ ಜಾಗತಿಕ ಕ್ರಿಕೆಟ್ ದಿಗ್ಗಜರು ವಿವಿಧ ತಂಡಗಳ ಮಾಲೀಕರಾಗಿ ಹೂಡಿಕೆ ಮಾಡಿರುವುದು ಲೀಗ್‌ಗೆ ಇನ್ನಷ್ಟು ಮೆರುಗು ತಂದಿದೆ.

Plane Crash: ಮಹಾರಾಷ್ಟ್ರದ ಬಾರಾಮತಿಯಲ್ಲಿ ಮತ್ತೊಂದು ವಿಮಾನ ಪತನ!

ಮುಂಬೈ: ಮಹಾರಾಷ್ಟ್ರದ ಬಾರಾಮತಿ ಪ್ರದೇಶದಲ್ಲಿ ಮತ್ತೆ ವಿಮಾನ ಪತನಗೊಂಡ ಘಟನೆ ಆತಂಕಕ್ಕೆ ಕಾರಣವಾಗಿದೆ. ಈ ವರ್ಷದ ಆರಂಭದಲ್ಲಿ ಇದೇ ಭಾಗದಲ್ಲಿ ಸಂಭವಿಸಿದ್ದ ವಿಮಾನ ದುರಂತದ ನೆನಪು ಮಾಸುವ ಮುನ್ನವೇ ಬುಧವಾರ ಮತ್ತೊಂದು ತರಬೇತಿ ವಿಮಾನ ಪತನಗೊಂಡಿದೆ.

ಬಾರಾಮತಿಯ ಗೋಜ್‌ಬಾಬಿ ಗ್ರಾಮದ ಸಮೀಪ ‘ರೆಡ್‌ಬರ್ಡ್’ ವಿಮಾನಯಾನ ಸಂಸ್ಥೆಗೆ ಸೇರಿದ ತರಬೇತಿ ವಿಮಾನ ಹಾರಾಟದ ವೇಳೆ ತಾಂತ್ರಿಕ ದೋಷ ಕಾಣಿಸಿಕೊಂಡ ಪರಿಣಾಮ ಪತನಗೊಂಡಿದೆ ಎಂದು ಪ್ರಾಥಮಿಕ ಮಾಹಿತಿ ತಿಳಿಸಿದೆ. ವಿಮಾನ ನೆಲಕ್ಕುರುಳಿದ ಪರಿಣಾಮ ಭಾರೀ ಹಾನಿಯಾಗಿದೆ. ಆದರೆ, ಪೈಲಟ್ ಸಮಯಪ್ರಜ್ಞೆಯಿಂದ ಕಾರ್ಯನಿರ್ವಹಿಸಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆಯ ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಪೊಲೀಸರು ಹಾಗೂ ತುರ್ತುಸೇವಾ ಸಿಬ್ಬಂದಿ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ವಿಮಾನ ಪತನದ ನಿಖರ ಕಾರಣ ಪತ್ತೆಹಚ್ಚಲು ತನಿಖೆ ಆರಂಭಿಸಲಾಗಿದೆ.

ಇದೇ ವರ್ಷದ ಜನವರಿ 28ರಂದು ಇದೇ ಗ್ರಾಮದ ವ್ಯಾಪ್ತಿಯಲ್ಲಿ ನಡೆದ ಚಾರ್ಟರ್ ವಿಮಾನ ದುರಂತ ರಾಜ್ಯದ ಗಮನ ಸೆಳೆದಿತ್ತು. ಆ ಘಟನೆಗೆ ಸಂಬಂಧಿಸಿದಂತೆ ಹಲವು ಚರ್ಚೆಗಳು ನಡೆದಿದ್ದವು. ಇದೀಗ ಅದೇ ಪ್ರದೇಶದಲ್ಲಿ ಮತ್ತೊಮ್ಮೆ ವಿಮಾನ ಪತನಗೊಂಡಿರುವುದು ಸ್ಥಳೀಯರಲ್ಲಿ ಆತಂಕ ಹೆಚ್ಚಿಸಿದೆ.

ಹೃದಯಾಘಾತಕ್ಕೆ ಬಲಿಯಾದ ನಟ ದಿಲೀಪ್ ರಾಜ್: ‘ಲವ್ ಮಾಕ್ಟೇಲ್ 3’ ಚಿತ್ರದ ಪಾತ್ರವೇ ಕೊನೆಯ ಅಭಿನಯ

ಕನ್ನಡ ಚಿತ್ರರಂಗದ ಪ್ರತಿಭಾವಂತ ನಟ ದಿಲೀಪ್ ರಾಜ್ ವಿಧಿವಶರಾಗಿದ್ದಾರೆ. ಹೃದಯಾಘಾತದಿಂದ ಅಸ್ವಸ್ಥಗೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ. ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆಯೇ ಸಿನಿರಂಗ ಹಾಗೂ ಅಭಿಮಾನಿಗಳ ವಲಯದಲ್ಲಿ ದುಃಖದ ವಾತಾವರಣ ನಿರ್ಮಾಣವಾಗಿದೆ.

ಸುಮಾರು 20 ವರ್ಷಗಳ ಕಾಲ ಸಿನಿಮಾ ಮತ್ತು ಕಿರುತೆರೆಯಲ್ಲಿ ಸಕ್ರಿಯರಾಗಿದ್ದ ದಿಲೀಪ್ ರಾಜ್, ತಮ್ಮ ನಟನಾ ಜೀವನದ ಕೊನೆಯ ಹಂತದವರೆಗೂ ಹಲವು ಪ್ರಾಜೆಕ್ಟ್‌ಗಳಲ್ಲಿ ತೊಡಗಿಸಿಕೊಂಡಿದ್ದರು. ‘ಮಿಲನ’ ಸಿನಿಮಾದಲ್ಲಿ ಪುನೀತ್ ರಾಜ್‌ಕುಮಾರ್ ಅವರ ಅಣ್ಣನಾಗಿ ಅಭಿನಯಿಸಿ ಅಪಾರ ಜನಪ್ರಿಯತೆ ಪಡೆದಿದ್ದ ಅವರು, ಇತ್ತೀಚೆಗೆ ‘ಲವ್ ಮಾಕ್ಟೇಲ್ 3’ ಸಿನಿಮಾದಲ್ಲಿ ವಕೀಲನ ಪಾತ್ರ ನಿರ್ವಹಿಸಿದ್ದರು.

ಈ ಸಿನಿಮಾದಲ್ಲಿ ಗಂಭೀರ ಹಾಗೂ ಜವಾಬ್ದಾರಿಯುತ ಲಾಯರ್ ಆಗಿ ಅವರು ಕಾಣಿಸಿಕೊಂಡಿದ್ದರು. ಪಾತ್ರದ ತೂಕಕ್ಕೆ ತಕ್ಕ ಅಭಿನಯದ ಮೂಲಕ ಮತ್ತೊಮ್ಮೆ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದರು. ಚಾಕೊಲೇಟ್ ಹೀರೋ ಆಗಿ ಆರಂಭವಾದ ಅವರ ಸಿನಿ ಪಯಣ, ನಂತರ ಪೋಷಕ ಪಾತ್ರಗಳ ಮೂಲಕ ಮತ್ತಷ್ಟು ಗಟ್ಟಿಯಾದದ್ದು ವಿಶೇಷ.

ಡಬ್ಬಿಂಗ್ ಕಲಾವಿದ ಹಾಗೂ ನಿರ್ಮಾಪಕರಾಗಿಯೂ ಗುರುತಿಸಿಕೊಂಡಿದ್ದ ದಿಲೀಪ್ ರಾಜ್, ‘ಹಿಟ್ಲರ್ ಕಲ್ಯಾಣ’ ಧಾರಾವಾಹಿಯ ಮೂಲಕ ಅಪಾರ ಜನಪ್ರಿಯತೆ ಪಡೆದಿದ್ದರು. ಸರಳತೆ, ಶಿಸ್ತು ಮತ್ತು ನಗುಮುಖದಿಂದ ಗುರುತಿಸಿಕೊಂಡಿದ್ದ ಅವರು ಈಗ ಕೇವಲ ನೆನಪಾಗಿ ಉಳಿದಿದ್ದಾರೆ.

ಸಂಗಾತಿಗೆ ಆರ್ಥಿಕ ಬೆಂಬಲ ಮುಖ್ಯ: ಕೌಟುಂಬಿಕ ನ್ಯಾಯಾಲಯದ ಆದೇಶ ರದ್ದುಪಡಿಸಿದ ಹೈಕೋರ್ಟ್

ಬೆಂಗಳೂರು: ಕೌಟುಂಬಿಕ ಕಲಹ ಪ್ರಕರಣಗಳಲ್ಲಿ ಮಧ್ಯಂತರ ಜೀವನಾಂಶದ ಪ್ರಮುಖ ಉದ್ದೇಶ ಸಂಗಾತಿಗೆ ಆರ್ಥಿಕ ಬೆಂಬಲ ಒದಗಿಸುವುದಾಗಿದೆ ಎಂದು ಅಭಿಪ್ರಾಯಪಟ್ಟಿರುವ ಕರ್ನಾಟಕ ಹೈಕೋರ್ಟ್, ಪತ್ನಿ ಸಲ್ಲಿಸಿದ್ದ ಮಧ್ಯಂತರ ಜೀವನಾಂಶ ಅರ್ಜಿಯನ್ನು ತಿರಸ್ಕರಿಸಿದ್ದ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸಿದೆ.

ಹಿಂದೂ ವಿವಾಹ ಕಾಯಿದೆಯ ಸೆಕ್ಷನ್ 24ರಡಿ ತಿಂಗಳಿಗೆ 50 ಸಾವಿರ ರೂ. ಮಧ್ಯಂತರ ಜೀವನಾಂಶ ಹಾಗೂ 1 ಲಕ್ಷ ರೂ. ಮೊಕದ್ದಮೆ ವೆಚ್ಚ ಕೋರಿ ಪತ್ನಿ ಸಲ್ಲಿಸಿದ್ದ ಅರ್ಜಿಯನ್ನು ಕೌಟುಂಬಿಕ ನ್ಯಾಯಾಲಯ ವಜಾಗೊಳಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ. ಮನ್ಮಧ ರಾವ್ ಅವರಿದ್ದ ಏಕಸದಸ್ಯ ಪೀಠ ಮಹತ್ವದ ಆದೇಶ ನೀಡಿದೆ.

ಅರ್ಜಿದಾರರು ಅಂತಿಮವಾಗಿ ಪ್ರಕರಣದಲ್ಲಿ ಯಶಸ್ವಿಯಾಗುವುದಿಲ್ಲ ಎಂಬ ಕಾರಣ ಮಾತ್ರಕ್ಕೆ ಮಧ್ಯಂತರ ಜೀವನಾಂಶ ಮತ್ತು ಮೊಕದ್ದಮೆ ವೆಚ್ಚಗಳನ್ನು ನಿರಾಕರಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.

ಹಿಂದೂ ವಿವಾಹ ಕಾಯಿದೆಯ ಸೆಕ್ಷನ್ 24ರ ಉದ್ದೇಶ, ಆರ್ಥಿಕವಾಗಿ ಹಿಂದುಳಿದ ಸಂಗಾತಿಗೆ ಕಾನೂನು ಹೋರಾಟ ಮುಂದುವರಿಸಲು ಅಗತ್ಯ ನೆರವು ಒದಗಿಸುವುದಾಗಿದೆ. ಜೀವನ ನಿರ್ವಹಣೆ ಮತ್ತು ನ್ಯಾಯಾಲಯದ ಪ್ರಕ್ರಿಯೆಗಳನ್ನು ಪರಿಣಾಮಕಾರಿಯಾಗಿ ಎದುರಿಸಲು ಮಧ್ಯಂತರ ಜೀವನಾಂಶ ನೆರವಾಗಬೇಕು ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಮಧ್ಯಂತರ ಜೀವನಾಂಶದ ಮೊತ್ತ ನಿಗದಿಪಡಿಸಲು ಯಾವುದೇ ಕಟ್ಟುನಿಟ್ಟಿನ ಸೂತ್ರ ಇಲ್ಲ. ಮದುವೆಯ ಅವಧಿ, ದಂಪತಿಗಳ ಆರ್ಥಿಕ ಸ್ಥಿತಿ, ಆದಾಯ ಸಾಮರ್ಥ್ಯ, ಮಕ್ಕಳ ಜವಾಬ್ದಾರಿ, ಶಿಕ್ಷಣ ಹಾಗೂ ಇತರೆ ಪರಿಸ್ಥಿತಿಗಳನ್ನು ಪರಿಗಣಿಸಿ ನ್ಯಾಯಾಲಯ ತೀರ್ಮಾನ ಕೈಗೊಳ್ಳಬೇಕು ಎಂದು ಪೀಠ ತಿಳಿಸಿದೆ.

ಇದೇ ವೇಳೆ, ಕೌಟುಂಬಿಕ ನ್ಯಾಯಾಲಯ ತನ್ನ ವಿವೇಚನಾ ಅಧಿಕಾರವನ್ನು ನ್ಯಾಯಸಮ್ಮತವಾಗಿ ಬಳಸಬೇಕು. ಕಾಯಿದೆಯ ಉದ್ದೇಶ ಹಾಗೂ ವೈವಾಹಿಕ ಕಾನೂನಿನ ಮೂಲ ತತ್ವಗಳನ್ನು ಗಮನದಲ್ಲಿಟ್ಟುಕೊಂಡೇ ತೀರ್ಪು ನೀಡಬೇಕೆಂದು ಹೈಕೋರ್ಟ್ ಸೂಚಿಸಿದೆ.

ಹಾಲಿ ಪ್ರಕರಣದಲ್ಲಿ ಪತ್ನಿಯ ಅರ್ಜಿಯನ್ನು ತಿರಸ್ಕರಿಸಲು ಕೌಟುಂಬಿಕ ನ್ಯಾಯಾಲಯ ಸಮರ್ಪಕ ಕಾರಣಗಳನ್ನು ನೀಡಿಲ್ಲ ಎಂದು ಹೇಳಿದ ಹೈಕೋರ್ಟ್, ಪ್ರಕರಣವನ್ನು ಮರು ವಿಚಾರಣೆಗೆ ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯಕ್ಕೆ ಹಿಂತಿರುಗಿಸಿದೆ. ಜೊತೆಗೆ, ದಂಪತಿಗಳು ಜೂನ್ 10ರಂದು ವೈಯಕ್ತಿಕವಾಗಿ ಅಥವಾ ವಕೀಲರ ಮೂಲಕ ಹಾಜರಾಗುವಂತೆ ನಿರ್ದೇಶನ ನೀಡಿದೆ.

ಇಬ್ಬರೂ ತಮ್ಮ ಆಸ್ತಿ ಹಾಗೂ ಹೊಣೆಗಾರಿಕೆಗಳ ವಿವರಗಳನ್ನು ಸಲ್ಲಿಸಬೇಕು. ಸಾಧ್ಯವಾದಷ್ಟು ಬೇಗ ಪ್ರಕರಣವನ್ನು ಇತ್ಯರ್ಥಗೊಳಿಸಬೇಕು ಎಂದು ಕೌಟುಂಬಿಕ ನ್ಯಾಯಾಲಯಕ್ಕೆ ಸೂಚಿಸಲಾಗಿದೆ.

ಪ್ರಕರಣದ ಹಿನ್ನೆಲೆ ಕುರಿತು ಹೇಳುವುದಾದರೆ, ದಂಪತಿಗಳು ಕೇವಲ ಆರರಿಂದ ಏಳು ತಿಂಗಳುಗಳ ಕಾಲ ಮಾತ್ರ ಒಟ್ಟಿಗೆ ವಾಸಿಸಿದ್ದರು. ಈ ಕಾರಣದಿಂದ ಪತ್ನಿಗೆ ಮಧ್ಯಂತರ ಜೀವನಾಂಶ ಅಥವಾ ಮೊಕದ್ದಮೆ ವೆಚ್ಚಕ್ಕೆ ಅರ್ಹತೆ ಇಲ್ಲ ಎಂದು ಕೌಟುಂಬಿಕ ನ್ಯಾಯಾಲಯ 2025ರ ಸೆಪ್ಟೆಂಬರ್ 17ರಂದು ಅರ್ಜಿ ತಿರಸ್ಕರಿಸಿತ್ತು.

ಆದರೆ, ಪತ್ನಿ ತಾನು ಬಿಕಾಂ ಪದವಿ ಅಧ್ಯಯನ ಮಾಡುತ್ತಿದ್ದು ಪ್ರಸ್ತುತ ನಿರುದ್ಯೋಗಿಯಾಗಿದ್ದೇನೆ. ಪತಿ ದುಬೈನಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದು ತಿಂಗಳಿಗೆ ಸುಮಾರು 8 ಲಕ್ಷ ರೂ. ಆದಾಯ ಹೊಂದಿದ್ದಾರೆ ಎಂದು ಹೈಕೋರ್ಟ್ ಮುಂದೆ ವಾದಿಸಿದ್ದರು.

ತ್ರಿಶಾ ಸಂಭಾವನೆಗೆ ಹೊಸ ಹೈಕ್ ; 10-12 ಕೋಟಿ ಪಡೆಯುತ್ತಿರುವ ಸೌತ್ ಸ್ಟಾರ್ ನಟಿ

ಚೆನ್ನೈ: ಸೌತ್ ಸಿನಿರಂಗದ ಸ್ಟಾರ್ ನಟಿ ತ್ರಿಶಾ ಕೃಷ್ಣನ್ ಇದೀಗ ವೃತ್ತಿಜೀವನದ ಸುವರ್ಣ ಕಾಲವನ್ನು ಅನುಭವಿಸುತ್ತಿದ್ದಾರೆ. ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ತಮ್ಮ ಸ್ಥಾನವನ್ನು ಉಳಿಸಿಕೊಂಡಿರುವ ತ್ರಿಶಾ, ಈಗ ಸಂಭಾವನೆ ವಿಚಾರದಲ್ಲೂ ಹೊಸ ಮಟ್ಟ ತಲುಪಿದ್ದಾರೆ ಎನ್ನಲಾಗುತ್ತಿದೆ.

ಮೂಲಗಳ ಪ್ರಕಾರ, ತ್ರಿಶಾ ಈಗ ಒಂದು ಸಿನಿಮಾಗೆ ಸುಮಾರು 10ರಿಂದ 12 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ. ‘ಪೊನ್ನಿಯಿನ್ ಸೆಲ್ವನ್’, ‘ಲಿಯೋ’ ರೀತಿಯ ದೊಡ್ಡ ಸಿನಿಮಾಗಳ ಯಶಸ್ಸಿನ ಬಳಿಕ ಅವರ ಬೇಡಿಕೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಸದ್ಯ ಕಾಲಿವುಡ್ ಮತ್ತು ಟಾಲಿವುಡ್‌ನ ಪ್ರಮುಖ ನಿರ್ಮಾಪಕರು ಹಾಗೂ ನಿರ್ದೇಶಕರು ತ್ರಿಶಾ ಕಾಲ್‌ಶೀಟ್‌ಗಾಗಿ ಕಾಯುತ್ತಿದ್ದಾರೆ.

ಚಿರಂಜೀವಿ ಅಭಿನಯದ ‘ವಿಶ್ವಂಭರ’, ಸೂರ್ಯ ನಟನೆಯ ‘ಕರುಪ್ಪು’ ಸೇರಿದಂತೆ ಹಲವು ದೊಡ್ಡ ಸಿನಿಮಾಗಳಲ್ಲಿ ತ್ರಿಶಾ ಅಭಿನಯಿಸುತ್ತಿದ್ದಾರೆ. ಜೊತೆಗೆ ಕಮಲ್ ಹಾಸನ್ ಮತ್ತು ರಜನಿಕಾಂತ್ ಕಾಂಬಿನೇಷನ್‌ನ ಹೊಸ ಪ್ರಾಜೆಕ್ಟ್‌ಗೆ ಕೂಡ ಅವರ ಹೆಸರು ಕೇಳಿಬರುತ್ತಿದೆ.

ಹೊಸ ನಟಿಯರ ಪ್ರವೇಶದ ನಡುವೆಯೂ ತ್ರಿಶಾ ತಮ್ಮ ಸ್ಥಾನವನ್ನು ಗಟ್ಟಿಯಾಗಿ ಉಳಿಸಿಕೊಂಡಿದ್ದಾರೆ. ಗ್ಲಾಮರ್ ಮಾತ್ರವಲ್ಲದೇ ನಟನಾ ಸಾಮರ್ಥ್ಯವಿರುವ ಪಾತ್ರಗಳ ಮೂಲಕವೂ ಅವರು ಸಿನಿಪ್ರೇಕ್ಷಕರ ಮನಗೆದ್ದಿದ್ದಾರೆ.

ಇತ್ತೀಚೆಗೆ ತಮಿಳುನಾಡು ಮುಖ್ಯಮಂತ್ರಿ ದಳಪತಿ ವಿಜಯ್ ಜೊತೆಗಿನ ಅವರ ಆಪ್ತತೆ ಮತ್ತೆ ಚರ್ಚೆಗೆ ಕಾರಣವಾಗಿದೆ. ವಿಜಯ್ ರಾಜಕೀಯದಲ್ಲಿ ಭಾರೀ ಯಶಸ್ಸು ಸಾಧಿಸಿದ ಬಳಿಕ ತ್ರಿಶಾ ಜನಪ್ರಿಯತೆ ಮತ್ತು ಡಿಮ್ಯಾಂಡ್ ಇನ್ನಷ್ಟು ಹೆಚ್ಚಾಗಿದೆ ಎನ್ನುವ ಮಾತುಗಳು ಸಿನಿ ವಲಯದಲ್ಲಿ ಹರಿದಾಡುತ್ತಿವೆ.

ರಾಜ್ಯಾದ್ಯಂತ ಬಿರುಗಾಳಿ ಸಹಿತ ಭಾರಿ ಮಳೆ: ಮರಗಳು ಉರುಳಿ ಜನಜೀವನ ಅಸ್ತವ್ಯಸ್ತ

ಬೆಳಗಾವಿ: ಬೆಳಗಾವಿ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಂಗಳವಾರ ಬಿರುಗಾಳಿ ಸಹಿತ ಭಾರಿ ಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.

ಬಿರುಗಾಳಿಯ ಅಬ್ಬರಕ್ಕೆ ಬೃಹತ್ ಮರಗಳು ಹಾಗೂ ವಿದ್ಯುತ್ ಕಂಬಗಳು ನೆಲಕ್ಕುರುಳಿದ್ದು, ಹಲವೆಡೆ ಸಂಚಾರ ಮತ್ತು ವಿದ್ಯುತ್ ವ್ಯವಸ್ಥೆ ಅಸ್ತವ್ಯಸ್ತವಾಗಿದೆ.

ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಕಕ್ಕೇರಿ ಗ್ರಾಮದಲ್ಲಿ ಅತಿ ಹೆಚ್ಚು ಹಾನಿ ಸಂಭವಿಸಿದೆ. ರಸ್ತೆ ಮೇಲೆ ಮರಗಳು ಬಿದ್ದ ಪರಿಣಾಮ ವಾಹನ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗಿದೆ. ವಿದ್ಯುತ್ ಕಂಬಗಳು ಧರೆಗೆ ಉರುಳಿದ ಕಾರಣ ಹಲವೆಡೆ ವಿದ್ಯುತ್ ವ್ಯತ್ಯಯ ಕೂಡ ಉಂಟಾಗಿದೆ.

ಬಾಗಲಕೋಟೆಯ ಬಾದಾಮಿಯಲ್ಲೂ ಇದೇ ರೀತಿಯ ಪರಿಸ್ಥಿತಿ ನಿರ್ಮಾಣವಾಗಿದ್ದು, ಮರಗಳು ಹಾಗೂ ವಿದ್ಯುತ್ ಕಂಬಗಳು ರಸ್ತೆಗೆ ಬಿದ್ದ ಪರಿಣಾಮ ಬಾಗಲಕೋಟೆ-ಬಾದಾಮಿ ರಸ್ತೆ ಸಂಚಾರಕ್ಕೆ ತೊಂದರೆಯಾಗಿದೆ.

ಇನ್ನೂ ಮಂಗಳೂರಿನಲ್ಲಿ ಗುಡುಗು-ಮಿಂಚು ಸಹಿತ ಸುರಿದ ಧಾರಾಕಾರ ಮಳೆಯಿಂದ ವಾಹನ ಸವಾರರು ಸಂಕಷ್ಟ ಅನುಭವಿಸಿದರು. ಕೆಲ ಬೈಕ್ ಸವಾರರು ವಾಹನಗಳನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿ ನಡೆದುಕೊಂಡು ತೆರಳುವ ಪರಿಸ್ಥಿತಿ ಎದುರಾಯಿತು.

ಕಾರವಾರ ಹಾಗೂ ಹುಬ್ಬಳ್ಳಿಯಲ್ಲೂ ಭಾರಿ ಮಳೆಯಿಂದ ರಸ್ತೆಗಳು ಜಲಾವೃತಗೊಂಡು ವಾಹನ ಸಂಚಾರ ನಿಧಾನಗೊಂಡಿತು. ರಾಜ್ಯದ ವಿವಿಧ ಭಾಗಗಳಲ್ಲಿ ಮಳೆಯಿಂದ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದು, ಹಾನಿಗೊಳಗಾದ ಪ್ರದೇಶಗಳಲ್ಲಿ ಸ್ಥಳೀಯ ಆಡಳಿತ ಪರಿಹಾರ ಕಾರ್ಯ ಕೈಗೊಂಡಿದೆ.

ಬೆಂಗಳೂರಿನಲ್ಲಿ ಗುಡುಗು ಸಹಿತ ಮಳೆ ಸಾಧ್ಯತೆ: ಕರಾವಳಿಗೆ ಹೀಟ್‌ವೇವ್ ಅಲರ್ಟ್!

ಬೆಂಗಳೂರು: ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಇಂದು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಇಷ್ಟು ದಿನ ತಂಪಾಗಿದ್ದ ಕರಾವಳಿ ಭಾಗದಲ್ಲಿ ಇದೀಗ ಮತ್ತೆ ಬಿಸಿಗಾಳಿ ಆತಂಕ ಹೆಚ್ಚಾಗಿದ್ದು, ಕೆಲವು ಜಿಲ್ಲೆಗಳಿಗೆ ಹೀಟ್‌ವೇವ್ ಎಚ್ಚರಿಕೆ ನೀಡಲಾಗಿದೆ.

ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಹಲವೆಡೆ ಮುಂದಿನ ಮೂರ್ನಾಲ್ಕು ದಿನಗಳ ಕಾಲ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಈ ಹಿನ್ನೆಲೆ ಎಚ್ಚರಿಕೆ ವಹಿಸುವಂತೆ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಸೂಚಿಸಿದೆ.

ಕರಾವಳಿ ಭಾಗದಲ್ಲಿ ಇಂದು ಬಿಸಿಗಾಳಿ ಅಲರ್ಟ್ ಜಾರಿಯಲ್ಲಿದ್ದು, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಾತ್ರ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ.

ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕೊಪ್ಪಳ ಹಾಗೂ ರಾಯಚೂರು ಜಿಲ್ಲೆಗಳಲ್ಲಿ ಗಂಟೆಗೆ 40 ರಿಂದ 50 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದ್ದು, ಮಳೆಯೂ ಆಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಇನ್ನೂ ದಕ್ಷಿಣ ಒಳನಾಡಿನ ಶಿವಮೊಗ್ಗ, ದಾವಣಗೆರೆ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು, ಚಾಮರಾಜನಗರ ಹಾಗೂ ಮಂಡ್ಯ ಜಿಲ್ಲೆಗಳ ಕೆಲವು ಭಾಗಗಳಲ್ಲಿ 30 ರಿಂದ 40 ಕಿಲೋಮೀಟರ್ ವೇಗದ ಗಾಳಿಯೊಂದಿಗೆ ಮಳೆಯಾಗುವ ಸಾಧ್ಯತೆ ಇದೆ.

ಮೇ 15 ಮತ್ತು 16ರಂದು ದಕ್ಷಿಣ ಒಳನಾಡಿನ ಕೆಲ ಪ್ರದೇಶಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. 64.5 ಮಿ.ಮೀ ರಿಂದ 115.5 ಮಿ.ಮೀ ವರೆಗೆ ಮಳೆಯಾಗುವ ಸಾಧ್ಯತೆ ಇರುವುದರಿಂದ ದಕ್ಷಿಣ ಒಳನಾಡಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಜನರು ಸುರಕ್ಷತಾ ಕ್ರಮಗಳನ್ನು ಪಾಲಿಸಿ, ಗುಡುಗು-ಮಿಂಚಿನ ವೇಳೆ ಮರಗಳ ಕೆಳಗೆ ನಿಲ್ಲದಂತೆ ಹಾಗೂ ಅಗತ್ಯವಿಲ್ಲದೆ ಹೊರಗೆ ತೆರಳದಂತೆ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಮನವಿ ಮಾಡಿದೆ.

PM ಮೋದಿ ಕರೆಗೆ ಬೆಂಗಳೂರಿಗರ ಸ್ಪಂದನೆ: ಮೆಟ್ರೋ, ಬಸ್ ಬಳಕೆ ಹೆಚ್ಚಳ!

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಇಂಧನ ಉಳಿತಾಯ ಹಾಗೂ ಸಾರ್ವಜನಿಕ ಸಾರಿಗೆ ಬಳಕೆಗೆ ನೀಡಿದ ಕರೆಗೆ ಬೆಂಗಳೂರಿನಲ್ಲಿ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.

ಜಾಗತಿಕ ಕಚ್ಚಾ ತೈಲ ಬಿಕ್ಕಟ್ಟಿನ ನಡುವೆಯೇ ಮೆಟ್ರೋ ಮತ್ತು ಬಸ್ ಬಳಕೆ ಹೆಚ್ಚಿಸಲು ನೀಡಿದ ಸಲಹೆಯನ್ನು ನಗರದ ಜನರು ಪಾಸಿಟಿವ್ ಆಗಿ ಸ್ವೀಕರಿಸಿದ್ದಾರೆ. ಹೈದರಾಬಾದ್‌ನಲ್ಲಿ ಇತ್ತೀಚೆಗೆ ಮಾತನಾಡಿದ್ದ ಪ್ರಧಾನಿ ಮೋದಿ, ಜಾಗತಿಕ ಇಂಧನ ಬಿಕ್ಕಟ್ಟಿನ ಸಂದರ್ಭದಲ್ಲಿ ದೇಶ ಒಗ್ಗಟ್ಟಾಗಿ ಸಾಧ್ಯವಾದಷ್ಟು ಸಾರ್ವಜನಿಕ ಸಾರಿಗೆಯನ್ನು ಬಳಸಬೇಕು ಎಂದು ಮನವಿ ಮಾಡಿದ್ದರು. ಇದರ ಪರಿಣಾಮವಾಗಿ ಮೆಜೆಸ್ಟಿಕ್‌ನ ಕೆಂಪೇಗೌಡ ಬಸ್ ನಿಲ್ದಾಣ ಹಾಗೂ ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಳ ಕಂಡಿದೆ.

“ಬೈಕ್ ಬಳಸುವುದಕ್ಕಿಂತ ಮೆಟ್ರೋ ಬಳಕೆ ಮಾಡಿದರೆ ಹಣ ಮತ್ತು ಸಮಯ ಎರಡೂ ಉಳಿಯುತ್ತದೆ” ಎಂದು ಅನೇಕ ಪ್ರಯಾಣಿಕರು ಅಭಿಪ್ರಾಯಪಟ್ಟಿದ್ದಾರೆ. ಕೆಲವರು ಇಷ್ಟು ದಿನ ಖಾಸಗಿ ವಾಹನ ಬಳಸುತ್ತಿದ್ದರೂ, ಈಗ ಕಚೇರಿಗೆ ಮೆಟ್ರೋ ಮೂಲಕವೇ ತೆರಳಲು ನಿರ್ಧರಿಸಿದ್ದೇವೆ ಎಂದು ತಿಳಿಸಿದ್ದಾರೆ.

ಪೆಟ್ರೋಲ್ ಹಾಗೂ ಡೀಸೆಲ್ ಆಮದು ಕಡಿಮೆ ಮಾಡಿದರೆ ದೇಶದ ಆರ್ಥಿಕತೆಗೆ ಬಲ ಸಿಗಲಿದೆ ಎಂಬ ಅರಿವು ಜನರಲ್ಲಿ ಹೆಚ್ಚುತ್ತಿದೆ ಎನ್ನಲಾಗಿದೆ.

ಇನ್ನೊಂದೆಡೆ ದೇಶಾದ್ಯಂತ ಡೀಸೆಲ್ ಕೊರತೆಯ ಎಚ್ಚರಿಕೆ ಕೂಡ ವ್ಯಕ್ತವಾಗಿದೆ. ಬಲ್ಕ್ ಸರಬರಾಜು ದರ ಹಾಗೂ ಚಿಲ್ಲರೆ ಮಾರಾಟ ದರದ ವ್ಯತ್ಯಾಸದಿಂದ ಅನೇಕ ಕೈಗಾರಿಕೆಗಳು ನೇರವಾಗಿ ಪೆಟ್ರೋಲ್ ಬಂಕ್‌ಗಳಿಂದ ಹೈ ಸ್ಪೀಡ್ ಡೀಸೆಲ್ ಖರೀದಿ ಮಾಡುತ್ತಿವೆ. ಇದರಿಂದ ಚಿಲ್ಲರೆ ಬಂಕ್‌ಗಳಲ್ಲಿ ದಾಸ್ತಾನು ನಿರ್ವಹಣೆ ಕಷ್ಟವಾಗುತ್ತಿದೆ ಎಂದು ಇಂಡಿಯನ್ ಆಯಿಲ್ ಪೆಟ್ರೋಲಿಯಂ ಡೀಲರ್ಸ್ ಅಸೋಸಿಯೇಷನ್ ಪ್ರಧಾನಿ ಮೋದಿ ಅವರಿಗೆ ದೂರು ನೀಡಿದೆ.

ಜಾಗತಿಕ ಮಟ್ಟದಲ್ಲಿ ಅಮೆರಿಕ, ಇಸ್ರೇಲ್ ಹಾಗೂ ಇರಾನ್ ನಡುವಿನ ಯುದ್ಧ ಭೀತಿ ಹೆಚ್ಚುತ್ತಿರುವ ಹಿನ್ನೆಲೆ ಇಂಧನ ಉಳಿತಾಯ ಕ್ರಮಗಳು ಅನಿವಾರ್ಯವಾಗುತ್ತಿವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

error: Content is protected !!