Home Blog Page 4

ಬೆಂಗಳೂರಿನಲ್ಲಿ ನಕಲಿ ನಾಗಸಾಧುಗಳ ಕೈಚಳಕ: ಕ್ಷಣಾರ್ಧದಲ್ಲಿ ಉಂಗುರ ಕದ್ದು ಪರಾರಿಯಾದ ಖದೀಮರು

0

ಬೆಂಗಳೂರು: ನಗರದಲ್ಲಿ ನಕಲಿ ನಾಗಸಾಧುಗಳ ವೇಷ ಧರಿಸಿ ಅಮಾಯಕ ಜನರನ್ನು ವಂಚಿಸಿ ಕಳ್ಳತನ ನಡೆಸುತ್ತಿರುವ ಘಟನೆ ಬೆಳಕಿಗೆ ಬಂದಿದೆ. ಆಶೀರ್ವಾದ ಮಾಡುವ ನೆಪದಲ್ಲಿ ವ್ಯಕ್ತಿಯೊಬ್ಬರ ಕೈಯಲ್ಲಿದ್ದ ಚಿನ್ನದ ಉಂಗುರವನ್ನು ಎಗರಿಸಿರುವ ಘಟನೆ ವಿಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಆರ್‌ಪಿಸಿ ಲೇಔಟ್ ನಿವಾಸಿ ಅರುಣ್ ಶ್ರೀಪಾದ್ ವಂಚನೆಗೆ ಒಳಗಾದವರಾಗಿದ್ದಾರೆ. ನಾಗಸಾಧುಗಳ ವೇಷದಲ್ಲಿದ್ದ ಕೆಲವರು ಅರುಣ್ ಶ್ರೀಪಾದ್ ಅವರ ಬಳಿ ಬಂದು ಕಾಶಿ ಹಾಗೂ ಗಂಗಾ ಸ್ನಾನದ ಮಹತ್ವದ ಕುರಿತು ಮಾತನಾಡುತ್ತಾ ಧಾರ್ಮಿಕ ವಿಚಾರಗಳನ್ನು ಪ್ರಸ್ತಾಪಿಸಿದ್ದಾರೆ.

ಮಾತಿನ ಮೂಲಕ ಅವರ ವಿಶ್ವಾಸ ಗಳಿಸಿದ ಬಳಿಕ ಆಶೀರ್ವಾದ ಮಾಡುವುದಾಗಿ ಹೇಳಿ, ಅವರ ಕೈಯಲ್ಲಿದ್ದ ಉಂಗುರವನ್ನು ಚಾಣಾಕ್ಷತನದಿಂದ ಕಳವು ಮಾಡಿಕೊಂಡು ಸ್ಥಳದಿಂದ ಪರಾರಿಯಾಗಿದ್ದಾರೆ.

ಘಟನೆ ನಡೆದ ತಕ್ಷಣ ಅರುಣ್ ಶ್ರೀಪಾದ್ ಅವರಿಗೆ ಉಂಗುರ ಕಳುವಾಗಿರುವುದು ತಿಳಿದಿರಲಿಲ್ಲ. ಮನೆಗೆ ತಲುಪಿದ ಬಳಿಕ ಕೈಯಲ್ಲಿದ್ದ ಉಂಗುರ ಕಾಣಿಸದಿರುವುದನ್ನು ಗಮನಿಸಿ ತಾವು ವಂಚನೆಗೆ ಒಳಗಾಗಿರುವುದು ಗೊತ್ತಾಗಿದೆ.

ಬಳಿಕ ಅವರು ವಿಜಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗೆ ತನಿಖೆ ಆರಂಭಿಸಿದ್ದಾರೆ.

ಅಯೋಧ್ಯೆ ರಾಮಮಂದಿರ ಕಾಣಿಕೆ ಎಣಿಕೆಯಲ್ಲಿ ಅಕ್ರಮ ಆರೋಪ; 40 ಸಿಬ್ಬಂದಿ ವಜಾ, SIT ತನಿಖೆ ಚುರುಕು

0

ಅಯೋಧ್ಯೆ: ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಭಕ್ತರು ನೀಡಿದ ಕಾಣಿಕೆ ಹಣ ಹಾಗೂ ಚಿನ್ನಾಭರಣಗಳ ಎಣಿಕೆ ಪ್ರಕ್ರಿಯೆಯಲ್ಲಿ ಭಾರಿ ಅಕ್ರಮ ಮತ್ತು ಕಳ್ಳತನ ನಡೆದಿದೆ ಎಂಬ ಆರೋಪಗಳು ಕೇಳಿಬಂದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮಾರು 40 ಸಿಬ್ಬಂದಿಯನ್ನು ತಕ್ಷಣದಿಂದಲೇ ಸೇವೆಯಿಂದ ವಜಾಗೊಳಿಸಲಾಗಿದೆ.

ದೇಣಿಗೆ ಎಣಿಕೆ ಕಾರ್ಯದಲ್ಲಿ ತೊಡಗಿದ್ದ ಸಿಬ್ಬಂದಿಯನ್ನು ಬದಲಿಸಿ, ಅವರ ಸ್ಥಾನಕ್ಕೆ ಹೊಸ ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ. ಜೊತೆಗೆ ಹಣ ಹಾಗೂ ಆಭರಣಗಳ ಎಣಿಕೆ ಪ್ರಕ್ರಿಯೆಗೆ ಕಟ್ಟುನಿಟ್ಟಿನ ಮೇಲ್ವಿಚಾರಣೆ ವ್ಯವಸ್ಥೆ ಕಲ್ಪಿಸಲಾಗಿದೆ.

ಪ್ರಕರಣದ ತನಿಖೆಗಾಗಿ ರಚಿಸಲಾಗಿರುವ ಮೂವರು ಸದಸ್ಯರ ವಿಶೇಷ ತನಿಖಾ ತಂಡ (ಎಸ್‌ಐಟಿ) ಕಳೆದ ಆರು ದಿನಗಳಿಂದ ಅಯೋಧ್ಯೆಯಲ್ಲೇ ಬೀಡುಬಿಟ್ಟು ಪರಿಶೀಲನೆ ನಡೆಸಿದೆ. ತನಿಖೆಯ ಪ್ರಾಥಮಿಕ ವರದಿಯನ್ನು ಇಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಸಲ್ಲಿಸುವ ಸಾಧ್ಯತೆ ಇದೆ.

ಎಸ್‌ಐಟಿ ತಂಡವು ದೇಣಿಗೆಯ ಹಳೆಯ ದಾಖಲೆಗಳು, ಸಿಸಿಟಿವಿ ದೃಶ್ಯಾವಳಿಗಳು, ನಗದು ಎಣಿಕೆ ವಿಧಾನ, ಆಭರಣಗಳ ದಾಖಲೆ ಸೇರಿದಂತೆ ಹಲವು ಮಾಹಿತಿಗಳನ್ನು ಪರಿಶೀಲಿಸಿದೆ. ಅಲ್ಲದೆ, ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ಗೆ ಸಂಬಂಧಿಸಿದ ಪ್ರಮುಖರು, ಅರ್ಚಕರು, ಬ್ಯಾಂಕ್ ಅಧಿಕಾರಿಗಳು ಹಾಗೂ ನಗದು ನಿರ್ವಹಣಾ ಸಿಬ್ಬಂದಿ ಸೇರಿದಂತೆ 100ಕ್ಕೂ ಹೆಚ್ಚು ಮಂದಿಯನ್ನು ವಿಚಾರಣೆಗೆ ಒಳಪಡಿಸಲಾಗಿದೆ.

ತನಿಖೆ ಪೂರ್ಣಗೊಳ್ಳುವವರೆಗೆ ವಿಚಾರಣೆಗೆ ಒಳಗಾದ ಯಾರೂ ಅಯೋಧ್ಯೆ ನಗರವನ್ನು ತೊರೆಯಬಾರದು ಎಂದು ಎಸ್‌ಐಟಿ ಅಧಿಕಾರಿಗಳು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರ ಆಪ್ತ ಸಹಚರ ಎಂದು ಹೇಳಲಾಗುತ್ತಿರುವ ರಾಮಶಂಕರ್ ಯಾದವ್ ಅಲಿಯಾಸ್ ಟಿನ್ನು ಅವರನ್ನು ಎಸ್‌ಐಟಿ ಹಲವು ಬಾರಿ ವಿಚಾರಣೆ ನಡೆಸಿದೆ. ಅವರ ಆಪ್ತರು, ಸಂಬಂಧಿಕರು ಹಾಗೂ ಆಸ್ತಿಪಾಸ್ತಿಗಳ ಬಗ್ಗೆಯೂ ಮಾಹಿತಿ ಸಂಗ್ರಹಿಸಲಾಗುತ್ತಿದೆ.

ಇದೇ ವೇಳೆ, ತನಿಖೆ ಕೇವಲ ಕಾಣಿಕೆ ಹಣದ ದುರುಪಯೋಗಕ್ಕೆ ಮಾತ್ರ ಸೀಮಿತವಾಗಿಲ್ಲ. ದೇವಸ್ಥಾನ ನಿರ್ಮಾಣಕ್ಕೆ ಸಂಬಂಧಿಸಿದ ವಿವಿಧ ಖರೀದಿಗಳು, ನಿರ್ಮಾಣ ಸಾಮಗ್ರಿಗಳ ವ್ಯವಹಾರಗಳು ಹಾಗೂ ಟ್ರಸ್ಟ್‌ನ ಹಣಕಾಸು ನಿರ್ವಹಣೆಯ ವಿವಿಧ ಅಂಶಗಳ ಬಗ್ಗೆಯೂ ಎಸ್‌ಐಟಿ ಸಮಗ್ರ ತನಿಖೆ ನಡೆಸುತ್ತಿದೆ.

ರಾಗಿ ರೊಟ್ಟಿ ತಿಂದರೆ ಎಲುಬುಗಳು ಗಟ್ಟಿಯಾಗುತ್ತವೆಯೇ?: ಆರೋಗ್ಯ ತಜ್ಞರು ಹೇಳುವುದೇನು..?

0

ರಾಗಿ ನಮ್ಮ ಸಾಂಪ್ರದಾಯಿಕ ಆಹಾರ ಪದ್ಧತಿಯ ಪ್ರಮುಖ ಧಾನ್ಯಗಳಲ್ಲಿ ಒಂದಾಗಿದ್ದು, ಅತ್ಯಂತ ಪೌಷ್ಟಿಕ ಆಹಾರವೆಂದು ಪರಿಗಣಿಸಲಾಗಿದೆ. ಕ್ಯಾಲ್ಸಿಯಂ, ಕಬ್ಬಿಣಾಂಶ, ಫೈಬರ್, ಪ್ರೋಟೀನ್ ಹಾಗೂ ಇತರ ಅಗತ್ಯ ಪೋಷಕಾಂಶಗಳಿಂದ ಸಮೃದ್ಧವಾಗಿರುವ ರಾಗಿ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರ ಆರೋಗ್ಯಕ್ಕೂ ಪ್ರಯೋಜನಕಾರಿ. ಅದರಲ್ಲೂ ರಾಗಿ ರೊಟ್ಟಿ ನಿಯಮಿತವಾಗಿ ಸೇವಿಸುವುದರಿಂದ ಹಲವು ಆರೋಗ್ಯ ಲಾಭಗಳನ್ನು ಪಡೆಯಬಹುದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.

ರಾಗಿ ರೊಟ್ಟಿ ಸೇವನೆಯಿಂದ ದೊರೆಯುವ ಆರೋಗ್ಯ ಪ್ರಯೋಜನಗಳು

ಎಲುಬು ಮತ್ತು ಹಲ್ಲುಗಳನ್ನು ಬಲಪಡಿಸುತ್ತದೆ

ರಾಗಿಯಲ್ಲಿ ಕ್ಯಾಲ್ಸಿಯಂ ಪ್ರಮಾಣ ಹೆಚ್ಚಿರುವುದರಿಂದ ಎಲುಬು ಮತ್ತು ಹಲ್ಲುಗಳ ಆರೋಗ್ಯವನ್ನು ಕಾಪಾಡಲು ಸಹಕಾರಿ. ನಿಯಮಿತ ಸೇವನೆಯು ಆಸ್ಟಿಯೋಪೊರೋಸಿಸ್‌ (ಎಲುಬು ಸವೆತ) ಅಪಾಯವನ್ನು ಕಡಿಮೆ ಮಾಡಲು ನೆರವಾಗಬಹುದು.

ಜೀರ್ಣಕ್ರಿಯೆ ಸುಧಾರಿಸುತ್ತದೆ

ಫೈಬರ್ ಸಮೃದ್ಧವಾಗಿರುವ ರಾಗಿ ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಕಾರಿಯಾಗಿದೆ. ಇದು ಮಲಬದ್ಧತೆಯನ್ನು ತಡೆಯುವುದರ ಜೊತೆಗೆ ಹೆಚ್ಚು ಹೊತ್ತು ಹೊಟ್ಟೆ ತುಂಬಿದ ಅನುಭವ ನೀಡುವ ಮೂಲಕ ಅತಿಯಾದ ಹಸಿವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

ರಕ್ತಹೀನತೆ ನಿವಾರಣೆಗೆ ನೆರವು

ರಾಗಿಯಲ್ಲಿರುವ ಕಬ್ಬಿಣಾಂಶವು ದೇಹದಲ್ಲಿ ಹಿಮೋಗ್ಲೋಬಿನ್‌ ಉತ್ಪಾದನೆಗೆ ನೆರವಾಗುವ ಮೂಲಕ ರಕ್ತಹೀನತೆಯ ಸಮಸ್ಯೆಯನ್ನು ತಡೆಗಟ್ಟಲು ಸಹಕಾರಿ.

ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣಕ್ಕೆ ಸಹಕಾರಿ

ರಾಗಿ ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್‌ (Low Glycemic Index) ಹೊಂದಿರುವ ಕಾರಣ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಧಾನವಾಗಿ ಹೆಚ್ಚಿಸುತ್ತದೆ. ಆದ್ದರಿಂದ ಮಧುಮೇಹ ಇರುವವರು ವೈದ್ಯರು ಅಥವಾ ಪೌಷ್ಟಿಕ ತಜ್ಞರ ಸಲಹೆಯಂತೆ ರಾಗಿಯನ್ನು ಆಹಾರದಲ್ಲಿ ಸೇರಿಸಬಹುದು.

ಹೃದಯದ ಆರೋಗ್ಯಕ್ಕೂ ಉತ್ತಮ

ರಾಗಿಯಲ್ಲಿರುವ ಫೈಬರ್ ಮತ್ತು ಇತರ ಪೋಷಕಾಂಶಗಳು ಹೃದಯದ ಆರೋಗ್ಯವನ್ನು ಕಾಪಾಡಲು ನೆರವಾಗುತ್ತವೆ. ಜೊತೆಗೆ ದೇಹಕ್ಕೆ ದೀರ್ಘಕಾಲ ಶಕ್ತಿ ಒದಗಿಸುವ ಗುಣವೂ ರಾಗಿಯಲ್ಲಿದೆ. ಬೆಳಗಿನ ಉಪಾಹಾರ ಅಥವಾ ಮಧ್ಯಾಹ್ನ ಹಾಗೂ ರಾತ್ರಿ ಊಟದಲ್ಲಿ ರಾಗಿ ರೊಟ್ಟಿಯನ್ನು ಸೇವಿಸುವುದು ಆರೋಗ್ಯಕರ ಆಯ್ಕೆಯಾಗಬಹುದು.

ಯಾರು ರಾಗಿ ರೊಟ್ಟಿಯನ್ನು ಎಚ್ಚರಿಕೆಯಿಂದ ಸೇವಿಸಬೇಕು?

ರಾಗಿ ಆರೋಗ್ಯಕರ ಆಹಾರವಾಗಿದ್ದರೂ, ಕೆಲವು ಆರೋಗ್ಯ ಸಮಸ್ಯೆಗಳಿರುವವರು ಮಿತ ಪ್ರಮಾಣದಲ್ಲಿ ಅಥವಾ ವೈದ್ಯರ ಸಲಹೆಯೊಂದಿಗೆ ಸೇವಿಸುವುದು ಸೂಕ್ತ.

ಕಿಡ್ನಿ ಸ್ಟೋನ್ ಸಮಸ್ಯೆ ಇರುವವರು

ರಾಗಿಯಲ್ಲಿ ಆಕ್ಸಲೇಟ್‌ (Oxalate) ಅಂಶವಿರುವುದರಿಂದ ಈಗಾಗಲೇ ಕಿಡ್ನಿ ಕಲ್ಲಿನ ಸಮಸ್ಯೆ ಇರುವವರು ಅತಿಯಾಗಿ ಸೇವಿಸುವುದನ್ನು ತಪ್ಪಿಸಬೇಕು.

ಥೈರಾಯ್ಡ್ ಸಮಸ್ಯೆ ಇರುವವರು

ಕೆಲವು ಅಧ್ಯಯನಗಳ ಪ್ರಕಾರ, ರಾಗಿಯಲ್ಲಿರುವ ಕೆಲವು ನೈಸರ್ಗಿಕ ಸಂಯುಕ್ತಗಳು ಥೈರಾಯ್ಡ್‌ ಗ್ರಂಥಿಯ ಕಾರ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ವಿಶೇಷವಾಗಿ ಹೈಪೋಥೈರಾಯ್ಡಿಸಮ್‌ ಇರುವವರು ವೈದ್ಯರ ಸಲಹೆಯಂತೆ ಮಿತವಾಗಿ ಸೇವಿಸುವುದು ಉತ್ತಮ.

ಜೀರ್ಣಕ್ರಿಯೆ ಸಮಸ್ಯೆ ಇರುವವರು

ಫೈಬರ್‌ ಅಧಿಕವಾಗಿರುವುದರಿಂದ ಕೆಲವರಿಗೆ ಹೊಟ್ಟೆ ಉಬ್ಬರ, ಗ್ಯಾಸ್ ಅಥವಾ ಅಜೀರ್ಣದಂತಹ ಸಮಸ್ಯೆಗಳು ಕಾಣಿಸಬಹುದು. ಆದ್ದರಿಂದ ಆರಂಭದಲ್ಲಿ ಕಡಿಮೆ ಪ್ರಮಾಣದಲ್ಲಿ ಸೇವಿಸಿ ದೇಹದ ಪ್ರತಿಕ್ರಿಯೆಯನ್ನು ಗಮನಿಸುವುದು ಸೂಕ್ತ.

ತೂಕ ಹೆಚ್ಚಿಸಿಕೊಳ್ಳಲು ಬಯಸುವವರು

ರಾಗಿ ಹೆಚ್ಚು ಹೊತ್ತು ಹೊಟ್ಟೆ ತುಂಬಿದ ಅನುಭವ ನೀಡುವುದರಿಂದ ತೂಕ ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತಿರುವವರು ಕೇವಲ ರಾಗಿಯನ್ನೇ ಅವಲಂಬಿಸದೆ ಸಮತೋಲನ ಆಹಾರವನ್ನು ಸೇವಿಸಬೇಕು.

ಅಲರ್ಜಿ ಇರುವವರು

ಅಪರೂಪದ ಸಂದರ್ಭಗಳಲ್ಲಿ ಕೆಲವರಿಗೆ ರಾಗಿ ಸೇವನೆಯಿಂದ ಅಲರ್ಜಿ, ಚರ್ಮದ ತುರಿಕೆ ಅಥವಾ ಜೀರ್ಣಕ್ರಿಯೆ ಸಮಸ್ಯೆಗಳು ಕಾಣಿಸಬಹುದು. ಇಂತಹ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು.

ರೌಡಿ ಶೀಟರ್ʼಗಳ ಬಡ್ಡಿ ಜಾಲಕ್ಕೆ ಬಿದ್ದ ರೈತ..! 17 ಲಕ್ಷ ಸಾಲಕ್ಕೆ 5 ಎಕರೆ ಜಮೀನು ಕಬಳಿಕೆ ಆರೋಪ –ಇಬ್ಬರ ಬಂಧನ

ಗದಗ: ಜಿಲ್ಲೆಯಲ್ಲಿ ಅಕ್ರಮ ಬಡ್ಡಿ ದಂಧೆಕೋರರ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಇದೀಗ 17 ಲಕ್ಷ ರೂಪಾಯಿ ಸಾಲದ ಹೆಸರಿನಲ್ಲಿ ರೈತನ 5 ಎಕರೆ ಜಮೀನನ್ನೇ ಕಬಳಿಸಿದ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದೆ.

ಗದಗ ತಾಲೂಕಿನ ಬೆಳಹೋಡ ಗ್ರಾಮದ ರೈತ ಮಹ್ಮದ್ ರಫೀಕ್ ದೊಡ್ಡಮನಿ ಹಾಗೂ ಅವರ ಸಹೋದರರಿಗೆ ಬೆಟಗೇರಿಯ ಬಡ್ಡಿ ದಂಧೆಕೋರರು ಮೋಸ ಮಾಡಿರುವ ಆರೋಪ ಕೇಳಿ ಬಂದಿದೆ. ರೈತ ಕುಟುಂಬಕ್ಕೆ 17 ಲಕ್ಷ ರೂಪಾಯಿ ಸಾಲ ನೀಡುವುದಾಗಿ ಹೇಳಿ, ಮುಂಗಡವಾಗಿಯೇ 5 ಲಕ್ಷ ರೂಪಾಯಿ ಬಡ್ಡಿ ಕಡಿತ ಮಾಡಿಕೊಂಡು ಕೇವಲ 12 ಲಕ್ಷ ರೂಪಾಯಿಯನ್ನು ಮಾತ್ರ ನೀಡಿದ್ದರೆಂದು ದೂರಲಾಗಿದೆ.

ಸಾಲದ ಭದ್ರತೆಯಾಗಿ ರೈತನ 5 ಎಕರೆ ಜಮೀನಿನ ದಾಖಲೆಗಳನ್ನು ಪಡೆದು, ಕೇವಲ ಅಡಮಾನ (ಹಾಪ್) ನೋಂದಣಿ ಮಾಡಿಕೊಳ್ಳುವುದಾಗಿ ನಂಬಿಸಿದ್ದರು. ಆದರೆ ಬಳಿಕ ಅಡಮಾನ ಪತ್ರದ ಬದಲು ಖರೀದಿ ಪತ್ರವೇ ಮಾಡಿಸಿಕೊಂಡು ಜಮೀನನ್ನು ತಮ್ಮ ವಶಕ್ಕೆ ತೆಗೆದುಕೊಂಡಿರುವ ಆರೋಪ ಕೇಳಿಬಂದಿದೆ.

ಪ್ರಕರಣದಲ್ಲಿ ಶೇಷಗೀರಿಸಾ ಬಾಕಳೆ ಹೆಸರಿಗೆ ಖರೀದಿ ಪತ್ರ ಮಾಡಿಸಲಾಗಿದ್ದು, ಇದರ ಹಿಂದೆ ರೌಡಿ ಶೀಟರ್ ಹಾಗೂ ಬಡ್ಡಿ ದಂಧೆಕೋರ ಯುವರಾಜ್ ಕೊರವರನ ಕೈವಾಡವಿದೆ ಎಂದು ರೈತ ಕುಟುಂಬ ಆರೋಪಿಸಿದೆ.

17 ಲಕ್ಷ ರೂಪಾಯಿ ಸಾಲಕ್ಕೆ ಕೋಟ್ಯಾಂತರ ಮೌಲ್ಯದ 5 ಎಕರೆ ಜಮೀನು ಕಳೆದುಕೊಂಡ ರೈತ ಕುಟುಂಬ ನ್ಯಾಯಕ್ಕಾಗಿ ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ಅವರನ್ನು ಸಂಪರ್ಕಿಸಿ ಮೊರೆ ಹೋಗಿತ್ತು. ಪ್ರಕರಣದ ಗಂಭೀರತೆಯನ್ನು ಅರಿತ ಎಸ್ಪಿ ತಕ್ಷಣ ತನಿಖೆಗೆ ಸೂಚನೆ ನೀಡಿದ ಹಿನ್ನೆಲೆ ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ರೌಡಿ ಶೀಟರ್ ಯುವರಾಜ್ ಕೊರವರ ಹಾಗೂ ರವಿ ಕೌಜಗೇರಿ ಅವರನ್ನು ಪೊಲೀಸರು ಬಂಧಿಸಿದ್ದು, ಬಸನಗೌಡ ಕರಮುಡಿ, ಶೇಷಗೀರಿಸಾ ಬಾಕಳೆ ಹಾಗೂ ಜಗದೀಶ ಅಯ್ಯನಗೌಡರ ತಲೆಮರೆಸಿಕೊಂಡಿದ್ದಾರೆ. ಪರಾರಿಯಾಗಿರುವ ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ಜಿಲ್ಲೆಯಲ್ಲಿ ವಾರದ ಹಿಂದಷ್ಟೇ ಬಡ್ಡಿ ಹಣಕ್ಕಾಗಿ ಮನೆಯ ಕಂಪೌಂಡ್ ಧ್ವಂಸಗೊಳಿಸಿದ ಘಟನೆ ಜನರ ಆಕ್ರೋಶಕ್ಕೆ ಕಾರಣವಾಗಿತ್ತು. ಆ ಘಟನೆ ಮಾಸುವ ಮುನ್ನವೇ ಮತ್ತೊಂದು ಬಡ್ಡಿ ಬಕಾಸೂರರ ಕರಾಳ ಮುಖ ಬಯಲಾಗಿರುವುದು ಜನರಲ್ಲಿ ಆತಂಕ ಮೂಡಿಸಿದೆ.

ಟೋಲ್ ಕಟ್ಟಲ್ಲ, ಬ್ಯಾರಿಯರ್ ಒಡೆಯುತ್ತೇವೆ! ಬ್ರಹ್ಮರಕೂಟ್ಲು ಟೋಲ್‌ನಲ್ಲಿ ರಾಜಕೀಯ ಕಾರ್ಯಕರ್ತರ ರೌಡಿಸಂ

0

ಮಂಗಳೂರು: ಬ್ರಹ್ಮರಕೂಟ್ಲು ಟೋಲ್ ಪ್ಲಾಜಾದಲ್ಲಿ ಟೋಲ್ ಶುಲ್ಕ ಪಾವತಿಸುವ ವಿಚಾರವಾಗಿ ನಡೆದ ಗಲಾಟೆ ಹೈಡ್ರಾಮಾಕ್ಕೆ ತಿರುಗಿದ್ದು, ರಾಜಕೀಯ ಪಕ್ಷವೊಂದರ ಕಾರ್ಯಕರ್ತರ ವಿರುದ್ಧ ಟೋಲ್ ಗೇಟ್‌ನಲ್ಲಿ ಗೂಂಡಾಗಿರಿ ನಡೆಸಿದ ಗಂಭೀರ ಆರೋಪ ಕೇಳಿಬಂದಿದೆ.

ಸಿಪಿಐಎಂ ಕಾರ್ಯಕರ್ತರನ್ನು ಸಾಗಿಸುತ್ತಿದ್ದ ಖಾಸಗಿ ಬಸ್ ಟೋಲ್ ಪ್ಲಾಜಾಗೆ ಆಗಮಿಸಿದಾಗ ಸಿಬ್ಬಂದಿ ಟೋಲ್ ಪಾವತಿಸುವಂತೆ ಸೂಚಿಸಿದ್ದರು. ಆದರೆ ಶುಲ್ಕ ನೀಡಲು ನಿರಾಕರಿಸಿದ ಕಾರ್ಯಕರ್ತರು ಮತ್ತು ಚಾಲಕ ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸಿದ್ದಾರೆ ಎನ್ನಲಾಗಿದೆ.

ಪರಿಸ್ಥಿತಿ ತೀವ್ರಗೊಳ್ಳುತ್ತಿದ್ದಂತೆ ಬಸ್ ಚಾಲಕ ವಾಹನವನ್ನು ನೇರವಾಗಿ ಸುರಕ್ಷತಾ ಬೂಮ್ ಬ್ಯಾರಿಯರ್‌ಗೆ ಡಿಕ್ಕಿ ಹೊಡೆದು ಹಾನಿಗೊಳಿಸಿ ಅಲ್ಲಿಂದ ತೆರಳಿದ್ದಾನೆ. ಇದೇ ವೇಳೆ ಕಾರ್ಯಕರ್ತರಿದ್ದ ಇನ್ನೂ ಹಲವು ವಾಹನಗಳು ಟೋಲ್ ಗೇಟ್ ನಿಯಮಗಳನ್ನು ಉಲ್ಲಂಘಿಸಿ ಬ್ಯಾರಿಯರ್‌ಗಳಿಗೆ ಹಾನಿ ಉಂಟುಮಾಡಿರುವ ಆರೋಪವೂ ಕೇಳಿಬಂದಿದೆ.

ಅಷ್ಟೇ ಅಲ್ಲದೆ, ವಾಹನಗಳು ಒನ್‌ವೇ ಮಾರ್ಗದಲ್ಲೇ ನುಗ್ಗಿ ಸಂಚಾರ ನಿಯಮಗಳನ್ನು ಗಾಳಿಗೆ ತೂರಿದ್ದು, ಟೋಲ್ ಸಿಬ್ಬಂದಿಗೆ ಬೆದರಿಕೆ ಒಡ್ಡಿ ಸ್ಥಳದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ಸೃಷ್ಟಿಸಿವೆ ಎಂದು ಮೂಲಗಳು ತಿಳಿಸಿವೆ.

ಟೋಲ್ ಪ್ಲಾಜಾದ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸಂಪೂರ್ಣ ಘಟನೆ ದಾಖಲಾಗಿದ್ದು, ಬ್ಯಾರಿಯರ್ ಧ್ವಂಸ, ವಾಹನಗಳ ನುಗ್ಗಾಟ ಹಾಗೂ ಸಿಬ್ಬಂದಿಯೊಂದಿಗೆ ನಡೆದ ವಾಗ್ವಾದದ ದೃಶ್ಯಗಳು ತನಿಖೆಗೆ ಪ್ರಮುಖ ಸಾಕ್ಷಿಯಾಗಿವೆ.

ಚಲಿಸುತ್ತಿದ್ದ ರೈಲಿನಲ್ಲಿ ಮೊದಲ ಮಗು, ಆಂಬ್ಯುಲೆನ್ಸ್‌ನಲ್ಲಿ ಎರಡನೇ ಮಗು! ಒಡಿಶಾದಲ್ಲಿ ಅವಳಿ ಮಕ್ಕಳ ಜನನದ ಅಪರೂಪದ ಘಟನೆ

0

ಭುವನೇಶ್ವರ: ಸಾಮಾನ್ಯವಾಗಿ ಆಸ್ಪತ್ರೆಯಲ್ಲಿ ಹೆರಿಗೆ ನಡೆಯುವುದು ಸಹಜ. ಆದರೆ ಒಡಿಶಾದಲ್ಲಿ ಮಹಿಳೆಯೊಬ್ಬರು ಎರಡು ವಿಭಿನ್ನ ಚಲಿಸುತ್ತಿರುವ ವಾಹನಗಳಲ್ಲಿ ತಮ್ಮ ಅವಳಿ ಮಕ್ಕಳಿಗೆ ಜನ್ಮ ನೀಡಿರುವ ಅಪರೂಪದ ಹಾಗೂ ಅಚ್ಚರಿಯ ಘಟನೆ ನಡೆದಿದೆ. ಮೊದಲ ಮಗು ಚಲಿಸುತ್ತಿದ್ದ ರೈಲಿನಲ್ಲಿ ಜನಿಸಿದರೆ, ಎರಡನೇ ಮಗು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ಆಂಬ್ಯುಲೆನ್ಸ್‌ನಲ್ಲೇ ಜನಿಸಿದೆ.

ರೂರ್ಕೆಲಾ-ಗುಣುಪುರ್ ರಾಜ್ಯರಾಣಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಗೆ ಏಕಾಏಕಿ ತೀವ್ರ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಸಹ ಪ್ರಯಾಣಿಕರು ಕೂಡಲೇ ‘ರೈಲ್ ಮದದ್’ ಪೋರ್ಟಲ್ ಮೂಲಕ ರೈಲ್ವೆ ಇಲಾಖೆಗೆ ತುರ್ತು ಮಾಹಿತಿ ರವಾನಿಸಿದರು.

ಮಾಹಿತಿ ಪಡೆದ ರೈಲ್ವೆ ಅಧಿಕಾರಿಗಳು ಹಾಗೂ ಆರ್‌ಪಿಎಫ್ ಸಿಬ್ಬಂದಿ ಕಟಕ್ ರೈಲು ನಿಲ್ದಾಣದಲ್ಲಿ ವೈದ್ಯಕೀಯ ನೆರವಿನೊಂದಿಗೆ ಸಜ್ಜಾಗಿದ್ದರು. ಆದರೆ ರೈಲು ನಿಲ್ದಾಣ ತಲುಪುವ ಮೊದಲೇ ಮಹಿಳೆ ಚಲಿಸುತ್ತಿರುವ ರೈಲಿನಲ್ಲೇ ಮೊದಲ ಗಂಡು ಮಗುವಿಗೆ ಜನ್ಮ ನೀಡಿದರು.

ರೈಲು ಕಟಕ್ ನಿಲ್ದಾಣ ತಲುಪುತ್ತಿದ್ದಂತೆಯೇ ರೈಲ್ವೆ ಸಿಬ್ಬಂದಿ ಮಹಿಳೆಯನ್ನು 108 ಆಂಬ್ಯುಲೆನ್ಸ್ ಮೂಲಕ ಎಸ್‌ಸಿಬಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ರವಾನಿಸಿದರು. ಆದರೆ ಆಸ್ಪತ್ರೆ ತಲುಪುವ ಮುನ್ನವೇ ಆಂಬ್ಯುಲೆನ್ಸ್ ಒಳಗೆ ಮತ್ತೊಮ್ಮೆ ಹೆರಿಗೆ ನೋವು ಕಾಣಿಸಿಕೊಂಡು ಮಹಿಳೆ ಎರಡನೇ ಮಗುವಿಗೂ ಜನ್ಮ ನೀಡಿದರು.

ಒಂದು ಮಗು ರೈಲಿನಲ್ಲಿ ಹಾಗೂ ಮತ್ತೊಂದು ಮಗು ಆಂಬ್ಯುಲೆನ್ಸ್‌ನಲ್ಲಿ ಜನಿಸಿರುವ ಈ ಅಪರೂಪದ ಘಟನೆ ವೈದ್ಯಕೀಯ ಸಿಬ್ಬಂದಿಯನ್ನೇ ಅಚ್ಚರಿಗೊಳಿಸಿದೆ. ಆಸ್ಪತ್ರೆಯಲ್ಲಿ ತಾಯಿ ಮತ್ತು ಅವಳಿ ಮಕ್ಕಳ ಆರೋಗ್ಯ ತಪಾಸಣೆ ನಡೆಸಿದ ವೈದ್ಯರು, ಮೂವರೂ ಸುರಕ್ಷಿತವಾಗಿದ್ದು ಆರೋಗ್ಯವಾಗಿದ್ದಾರೆ ಎಂದು ತಿಳಿಸಿದ್ದಾರೆ.

ಸಂಕಷ್ಟದ ಕ್ಷಣದಲ್ಲಿ ಸಮಯಪ್ರಜ್ಞೆ ಮೆರೆದ ಸಹ ಪ್ರಯಾಣಿಕರು, ರೈಲ್ವೆ ಸಿಬ್ಬಂದಿ, ಆರ್‌ಪಿಎಫ್ ಪಡೆ ಹಾಗೂ ಆಂಬ್ಯುಲೆನ್ಸ್ ಸಿಬ್ಬಂದಿಯ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲೂ ಈ ಘಟನೆ ಭಾರೀ ವೈರಲ್ ಆಗಿದ್ದು, ಮಾನವೀಯತೆ ಮತ್ತು ತುರ್ತು ಸೇವೆಗಳ ಪರಿಣಾಮಕಾರಿ ಕಾರ್ಯಾಚರಣೆಗೆ ಜನರು ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ.

ಖ್ಯಾತ ನಟ ಪಂಕಜ್ ತ್ರಿಪಾಠಿ ಅಣ್ಣನ ಮೇಲೆ ಮಾರಣಾಂತಿಕ ದಾಳಿ:  ಆರೋಪಿ ಪತ್ತೆಗೆ ಬಲೆ ಬೀಸಿದ ಪೊಲೀಸರು

ಬಾಲಿವುಡ್ ನಟ ಪಂಕಜ್ ತ್ರಿಪಾಠಿ ಅವರ ಅಣ್ಣ ಬಿಜೇಂದ್ರ ನಾಥ್ ತಿವಾರಿ ಮೇಲೆ ನಡೆದಿರುವ ಭೀಕರ ಹಲ್ಲೆ ಪ್ರಕರಣ ಬಿಹಾರದಲ್ಲಿ ಸಂಚಲನ ಸೃಷ್ಟಿಸಿದೆ. ಹಗಲು ಹೊತ್ತಿನಲ್ಲೇ ನಡೆದ ಈ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಬಿಜೇಂದ್ರ ನಾಥ್ ತಿವಾರಿ ಸದ್ಯ ಪಾಟ್ನಾದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮಾಧೋಪುರದ ಬೆಲ್ಸಂದ್ ಗ್ರಾಮದಲ್ಲಿ ನಡೆದ ಘಟನೆಯಲ್ಲಿ ದುಷ್ಕರ್ಮಿಗಳು ಹರಿತವಾದ ಆಯುಧಗಳಿಂದ ಏಕಾಏಕಿ ದಾಳಿ ನಡೆಸಿದ್ದಾರೆ. ದಾಳಿಯ ತೀವ್ರತೆಗೆ ಬಿಜೇಂದ್ರ ನಾಥ್ ತಿವಾರಿ ತೀವ್ರ ರಕ್ತಸ್ರಾವಗೊಂಡಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಬಳಿಕ ಅವರನ್ನು ಪಾಟ್ನಾಗೆ ರವಾನಿಸಲಾಗಿದೆ.

ಪೊಲೀಸರ ಪ್ರಾಥಮಿಕ ತನಿಖೆ ಪ್ರಕಾರ, ಹಳೆಯ ದ್ವೇಷ ಮತ್ತು ವೈಯಕ್ತಿಕ ವೈಷಮ್ಯವೇ ದಾಳಿಯ ಹಿಂದಿನ ಪ್ರಮುಖ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ. ಈಗಾಗಲೇ ಒಬ್ಬ ಪ್ರಮುಖ ಶಂಕಿತನನ್ನು ಗುರುತಿಸಿರುವ ಪೊಲೀಸರು, ಆತನ ಬಂಧನಕ್ಕಾಗಿ ವಿವಿಧೆಡೆ ದಾಳಿ ನಡೆಸುತ್ತಿದ್ದಾರೆ.

ಘಟನೆ ತಿಳಿಯುತ್ತಿದ್ದಂತೆಯೇ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಇಲಾಖೆ, ಆರೋಪಿಗಳನ್ನು ಶೀಘ್ರವೇ ಬಂಧಿಸುವುದಾಗಿ ಭರವಸೆ ನೀಡಿದೆ.

ಪಂಕಜ್ ತ್ರಿಪಾಠಿ ದೇಶದ ಜನಪ್ರಿಯ ನಟರಲ್ಲಿ ಒಬ್ಬರಾಗಿದ್ದರೂ, ಅವರ ಕುಟುಂಬ ಗ್ರಾಮೀಣ ಪ್ರದೇಶದಲ್ಲೇ ಸಾಮಾನ್ಯ ಜೀವನ ನಡೆಸುತ್ತಿತ್ತು. ಇಂತಹ ಕುಟುಂಬದ ಸದಸ್ಯರ ಮೇಲೆ ನಡೆದಿರುವ ಈ ಮಾರಣಾಂತಿಕ ದಾಳಿ ಈಗ ರಾಜ್ಯದ ಗಮನ ಸೆಳೆದಿದ್ದು, ತನಿಖೆ ತೀವ್ರಗೊಂಡಿದೆ.

ಕತಾರ್ ಗ್ಯಾಸ್ ಸ್ಥಾವರದಲ್ಲಿ ಭೀಕರ ಸ್ಫೋಟ; 54ಕ್ಕೂ ಹೆಚ್ಚು ಕಾರ್ಮಿಕರಿಗೆ ಗಾಯ, 18 ಮಂದಿ ನಾಪತ್ತೆ!

0

ದೋಹಾ: ವಿಶ್ವದ ಪ್ರಮುಖ ನೈಸರ್ಗಿಕ ಅನಿಲ ರಫ್ತು ರಾಷ್ಟ್ರವಾದ ಕತಾರ್‌ನ ರಾಸ್ ಲಫಾನ್ ಕೈಗಾರಿಕಾ ನಗರದಲ್ಲಿರುವ ಬರ್ಜಾನ್ ಅನಿಲ ಸ್ಥಾವರದಲ್ಲಿ ಭಾರಿ ಸ್ಫೋಟ ಸಂಭವಿಸಿದೆ.

ಹೊಸ ಕಾರ್ಯಾಚರಣೆ ಆರಂಭದ ಹಂತದಲ್ಲಿದ್ದಾಗಲೇ ಈ ದುರಂತ ಸಂಭವಿಸಿದ್ದು, ಕನಿಷ್ಠ 54 ಮಂದಿ ಗಾಯಗೊಂಡಿದ್ದಾರೆ ಹಾಗೂ 18 ಕಾರ್ಮಿಕರು ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.

ಘಟನೆ ನಡೆದ ತಕ್ಷಣವೇ ತುರ್ತು ರಕ್ಷಣಾ ಪಡೆಗಳು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯಾಚರಣೆಯನ್ನು ಆರಂಭಿಸಿದ್ದು, ಸದ್ಯ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದೇಶದ ಇಂಧನ ಅಗತ್ಯಗಳನ್ನು ಪೂರೈಸುವ ಪ್ರಮುಖ ಕೇಂದ್ರವಾಗಿರುವ ಈ ಸ್ಥಾವರದಲ್ಲಿ ಕಾರ್ಯಾಚರಣೆ ಆರಂಭವಾಗುತ್ತಿದ್ದಂತೆಯೇ ಸ್ಫೋಟ ಸಂಭವಿಸಿದೆ ಎಂದು ಸರ್ಕಾರಿ ಸ್ವಾಮ್ಯದ ಕತಾರ್ ಎನರ್ಜಿ ಸಂಸ್ಥೆ ದೃಢಪಡಿಸಿದೆ.

ಸ್ಫೋಟದ ಬಳಿಕ ಅವಶೇಷಗಳ ನಡುವೆ ನಾಪತ್ತೆಯಾಗಿರುವ 18 ಕಾರ್ಮಿಕರಿಗಾಗಿ ತೀವ್ರ ಹುಡುಕಾಟ ಮುಂದುವರಿದಿದೆ. ಘಟನೆಯ ನಿಖರ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ತಾಂತ್ರಿಕ ದೋಷವೇ ಅಥವಾ ಇತರ ಕಾರಣಗಳೇ ಎಂಬುದರ ಕುರಿತು ಉನ್ನತ ಮಟ್ಟದ ತನಿಖೆ ಆರಂಭಿಸಲಾಗಿದೆ.

ಈ ಘಟನೆಯಿಂದ ಜಾಗತಿಕ ಇಂಧನ ಮಾರುಕಟ್ಟೆಯ ಮೇಲೆ ಪರಿಣಾಮ ಬೀರುವ ಆತಂಕ ವ್ಯಕ್ತವಾಗಿದ್ದು, ತೈಲ ಹಾಗೂ ಗ್ಯಾಸ್ ಬೆಲೆಗಳು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಆರ್ಥಿಕ ತಜ್ಞರು ಎಚ್ಚರಿಸಿದ್ದಾರೆ.

ಭೀಮಾತೀರದಲ್ಲಿ 6 ಜನರ ಹತ್ಯೆ ಪ್ರಕರಣ – ಆರೋಪಿ ಕಾಲಿಗೆ ಪೊಲೀಸರಿಂದ ಗುಂಡೇಟು

ವಿಜಯಪುರ: ಭೀಮಾತೀರದಲ್ಲಿ ನಡೆದ 6 ಜನರ ಭೀಕರ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಮಹೇಶ್ ತಳವಾರ್ ಕಾಲಿಗೆ ಪೊಲೀಸರು ಗುಂಡು ಹಾರಿಸಿ ಬಂಧಿಸಿರುವ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ.

ಇಟ್ಟಿಂಗಿಹಾಳ ಗ್ರಾಮದ ಹೊರವಲಯದಲ್ಲಿ ಆರೋಪಿ ಪತ್ತೆಯಾದ ವೇಳೆ ಚಡಚಣ ಪೊಲೀಸರು ಬಂಧಿಸಲು ಮುಂದಾದಾಗ ಮಹೇಶ್ ಓಡಿ ಹೋಗಲು ಯತ್ನಿಸಿದ್ದಾನೆ. ಈ ವೇಳೆ ಆತ ಪೊಲೀಸರ ಮೇಲೆ ಕಲ್ಲುಗಳಿಂದ ಹಲ್ಲೆ ನಡೆಸಿದ್ದು, ಸಿಬ್ಬಂದಿ ಮೇಲೆ ದಾಳಿ ಮಾಡಲು ಪ್ರಯತ್ನಿಸಿದ್ದಾನೆ ಎಂದು ತಿಳಿದುಬಂದಿದೆ.

ಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಮೊದಲು ಎರಡು ಬಾರಿ ಗಾಳಿಯಲ್ಲಿ ಗುಂಡು ಹಾರಿಸಿ ಎಚ್ಚರಿಕೆ ನೀಡಿದ್ದಾರೆ. ಆದರೂ ಆರೋಪಿ ಜಗ್ಗದೆ ಹಲ್ಲೆ ಮುಂದುವರಿಸಿದ ಕಾರಣ, ಚಡಚಣ ಸಿಪಿಐ ಪರಶುರಾಮ್ ಮನಗೂಳಿ ಅವರು ಆರೋಪಿ ಬಲಗಾಲಿಗೆ ಗುಂಡು ಹಾರಿಸಿದ್ದಾರೆ. ಬಳಿಕ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ.

ಘಟನೆಯಲ್ಲಿ ಚಡಚಣ ಠಾಣೆ ಸಿಬ್ಬಂದಿ ಶೇಖರ್ ಪವಾರ್ ಹಾಗೂ ವಿಜಯಕುಮಾರ್ ಬನಸೋಡೆ ಗಾಯಗೊಂಡಿದ್ದು, ಇಬ್ಬರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಮೇ 29ರಂದು ಚಡಚಣ ವ್ಯಾಪ್ತಿಯ ಗೋವಿಂದಪುರ ಗ್ರಾಮದ ಜಮೀನಿನಲ್ಲಿ ನಿರಾಳೆ ಕುಟುಂಬದ 5 ಮಂದಿ ಸೇರಿದಂತೆ ಒಟ್ಟು 6 ಜನರ ಭೀಕರ ಹತ್ಯೆ ನಡೆದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹೇಶ್ ತಳವಾರ್ ಮತ್ತು ಆತನ ಗ್ಯಾಂಗ್ 15 ಲಕ್ಷ ರೂಪಾಯಿ ಸುಪಾರಿ ಪಡೆದಿದ್ದರೆಂಬ ಮಾಹಿತಿ ತನಿಖೆಯಲ್ಲಿ ಬಹಿರಂಗವಾಗಿದೆ.

23 ದಿನಗಳಿಂದ ಪೊಲೀಸರಿಂದ ತಪ್ಪಿಸಿಕೊಂಡು ಅಡಗಿದ್ದ ಮಹೇಶ್ ತಳವಾರ್ ಇದೀಗ ಬಂಧಿತನಾಗಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ.

ಒಂದೇ ಬೈಕ್ ಮೇಲೆ 100 ಕೇಸ್; ಸರ್ಕಾರದ ರಿಯಾಯಿತಿ ಬಳಸಿ 27,500 ರೂ. ದಂಡ ಪಾವತಿಸಿದ ಬೈಕ್ ಸವಾರ!

ಬೆಂಗಳೂರು: ನಗರದಲ್ಲಿ ಸಂಚಾರ ನಿಯಮ ಉಲ್ಲಂಘಿಸುವ ವಾಹನ ಸವಾರರ ವಿರುದ್ಧ ಬೆಂಗಳೂರು ಸಂಚಾರ ಪೊಲೀಸರು ಕಠಿಣ ಕ್ರಮ ಮುಂದುವರಿಸಿದ್ದಾರೆ.

ಇದರ ನಡುವೆ ಸರ್ಕಾರ ಘೋಷಿಸಿರುವ ದಂಡ ರಿಯಾಯಿತಿ ಅವಧಿಯಲ್ಲಿ ಸಾರ್ವಜನಿಕರಿಂದ ದಂಡ ವಸೂಲಿ ಚುರುಕುಗೊಂಡಿದೆ.

ರಾಜಾಜಿನಗರ ಸಂಚಾರ ಪೊಲೀಸ್ ಠಾಣೆಗೆ ಆಗಮಿಸಿದ ಬೈಕ್ ಸವಾರನೊಬ್ಬ, ತನ್ನ ದ್ವಿಚಕ್ರ ವಾಹನದ ಮೇಲೆ ದಾಖಲಾಗಿದ್ದ 100 ಸಂಚಾರ ಉಲ್ಲಂಘನೆ ಪ್ರಕರಣಗಳಿಗೆ ಸಂಬಂಧಿಸಿದ ದಂಡವನ್ನು ಒಂದೇ ಬಾರಿಗೆ ಪಾವತಿಸಿದ್ದಾನೆ. ಶೇಕಡಾ 50ರ ರಿಯಾಯಿತಿಯ ಬಳಿಕ ಒಟ್ಟು 27,500 ರೂಪಾಯಿ ದಂಡ ಪಾವತಿಸಿರುವ ಸವಾರ, ಮುಂದಿನ ದಿನಗಳಲ್ಲಿ ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದಾಗಿ ಭರವಸೆ ನೀಡಿದ್ದಾನೆ.

ಇದರ ಜೊತೆಗೆ ಬೆಂಗಳೂರು ಸಂಚಾರ ಪೊಲೀಸರು ನಗರಾದ್ಯಂತ ಡ್ರಂಕ್ ಅಂಡ್ ಡ್ರೈವ್ ಹಾಗೂ ಅತಿವೇಗ ಚಾಲನೆ ವಿರುದ್ಧ ವಿಶೇಷ ಕಾರ್ಯಾಚರಣೆ ಮುಂದುವರಿಸಿದ್ದಾರೆ. ಜೂನ್ 15 ರಿಂದ ಜೂನ್ 26ರವರೆಗೆ 53 ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆಸಲಾಗುತ್ತಿರುವ ಪರಿಶೀಲನೆಯಲ್ಲಿ 43,057 ವಾಹನಗಳನ್ನು ತಪಾಸಣೆ ಮಾಡಲಾಗಿದೆ.

ಈ ಕಾರ್ಯಾಚರಣೆಯಲ್ಲಿ ಮದ್ಯಪಾನ ಮಾಡಿ ವಾಹನ ಚಲಾಯಿಸಿದ 669 ಚಾಲಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಅತಿವೇಗ ಚಾಲನೆ ಮಾಡಿದ 46 ವಾಹನ ಸವಾರರಿಂದ ಒಟ್ಟು 46 ಸಾವಿರ ರೂಪಾಯಿ ದಂಡ ವಸೂಲಾಗಿದೆ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.

 

error: Content is protected !!