ಕಲಬುರಗಿ: ವೈದ್ಯಕೀಯ ಶಿಕ್ಷಣದ ಕನಸು ಹೊತ್ತಿದ್ದ 18 ವರ್ಷದ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಲಬುರಗಿ ನಗರದಲ್ಲಿ ನಡೆದಿದೆ.
ಮೃತ ಯುವತಿಯನ್ನು ಭಾಗ್ಯಶ್ರೀ (18) ಎಂದು ಗುರುತಿಸಲಾಗಿದೆ.
ಮಾಹಿತಿಯ ಪ್ರಕಾರ, ಕಲಬುರಗಿ ನಗರದ ಕೋರ್ಟ್ ವೃತ್ತದ ಬಳಿ ಇರುವ ಅಪಾರ್ಟ್ಮೆಂಟ್ನಲ್ಲಿ ಈ ಘಟನೆ ನಡೆದಿದೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಆಕೆ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಭಾಗ್ಯಶ್ರೀ ಇತ್ತೀಚೆಗೆ ನಡೆದ NEET ಪರೀಕ್ಷೆಯನ್ನು ಬರೆದು ಫಲಿತಾಂಶಕ್ಕಾಗಿ ಕಾಯುತ್ತಿದ್ದಳು. ದ್ವಿತೀಯ ಪಿಯುಸಿಯಲ್ಲಿ ಶೇಕಡಾ 92 ಅಂಕಗಳನ್ನು ಪಡೆದು ಉತ್ತಮ ಸಾಧನೆ ಮಾಡಿದ್ದ ಆಕೆ ವೈದ್ಯಕೀಯ ಶಿಕ್ಷಣದ ಮೇಲೆ ದೊಡ್ಡ ಆಸೆ ಹೊಂದಿದ್ದಳು.
ಆತ್ಮಹತ್ಯೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲವಾದರೂ, ಪರೀಕ್ಷಾ ಫಲಿತಾಂಶದ ಆತಂಕ ಅಥವಾ ಮಾನಸಿಕ ಒತ್ತಡ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ.
ಘಟನೆ ಕುರಿತು ಮೃತಳ ತಂದೆ ರಾಜಶೇಖರ್ ಪ್ರತಿಕ್ರಿಯಿಸಿ, ಮಗಳು ಯಾವುದೇ ಸಮಸ್ಯೆ ಇಲ್ಲದೆ ಸಂತೋಷವಾಗಿದ್ದಳು ಎಂದು ತಿಳಿಸಿದ್ದಾರೆ. “ನಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯ ಇರಲಿಲ್ಲ” ಎಂದು ಅವರು ಕಣ್ಣೀರು ಹಾಕಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿದ ಕಲಬುರಗಿ ಸ್ಟೇಷನ್ ಬಜಾರ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಲಕ್ಷ್ಮೇಶ್ವರ: ಕಳೆದ ಎರಡು-ಮೂರು ತಿಂಗಳಿಂದ ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮ ದೇಶದ ಮೇಲೂ ಬೀಳತೊಡಗಿದ್ದು, ಪೆಟ್ರೋಲ್, ಡಿಸೇಲ್ ಹಾಗೂ ಅಡುಗೆ ಅನಿಲ ಬೆಲೆ ಏರಿಕೆಯ ನಡುವೆಯೇ ಇದೀಗ ಡಿಸೇಲ್ ಕೊರತೆ ರೈತರನ್ನು ಕಂಗಾಲಾಗಿಸಿದೆ.
ಪಟ್ಟಣದಲ್ಲಿ ಶನಿವಾರದಿಂದಲೇ ಪೆಟ್ರೋಲ್ ಬಂಕ್ಗಳ ಮುಂದೆ ಡಿಸೇಲ್ಗಾಗಿ ರೈತರು ಮುಗಿ ಬಿದ್ದ ದೃಶ್ಯ ಕಂಡುಬಂದಿದ್ದು, ಬಹುತೇಕ ಬಂಕ್ಗಳಲ್ಲಿ ಡಿಸೇಲ್ ಸಂಪೂರ್ಣ ಖಾಲಿಯಾಗಿದೆ. “ಮುಂದಿನ ಟ್ಯಾಂಕರ್ ಬರುವವರೆಗೂ ಕಾಯಿರಿ” ಎಂಬ ಉತ್ತರ ಕೇಳಿ ರೈತರು ನಿರಾಶೆಯಿಂದ ಹಿಂದಿರುಗುವ ಸ್ಥಿತಿ ನಿರ್ಮಾಣವಾಗಿದೆ. ಎಲ್ಲೆಡೆ ಡಿಸೇಲ್ ಹಾಹಾಕಾರ ಉಂಟಾಗಿದೆ.
ಈ ಬಾರಿ ಮುಂಗಾರು ಪೂರ್ವ ಮಳೆ ಉತ್ತಮವಾಗಿರುವ ಹಿನ್ನೆಲೆಯಲ್ಲಿ ರೈತರು ಭೂಮಿ ಸಜ್ಜುಗೊಳಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ. ಹಿಂದೆ ಎತ್ತುಗಳ ಮೂಲಕ ಉಳುಮೆ ಮಾಡುತ್ತಿದ್ದ ಪರಿಸ್ಥಿತಿ ಈಗಿಲ್ಲ. ಬಹುತೇಕ ರೈತರು ಟ್ರ್ಯಾಕ್ಟರ್ಗಳನ್ನೇ ಅವಲಂಬಿಸಿದ್ದಾರೆ. ಆದರೆ ಟ್ರ್ಯಾಕ್ಟರ್ಗಳಿಗೆ ಅಗತ್ಯವಾದ ಡಿಸೇಲ್ ಸಿಗದೇ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಶನಿವಾರ ಹಾಗೂ ಭಾನುವಾರ ಡಿಸೇಲ್ ಲಭ್ಯವಿದ್ದ ಪೆಟ್ರೋಲ್ ಬಂಕ್ಗಳ ಮುಂದೆ ಟ್ರ್ಯಾಕ್ಟರ್ಗಳು, ಬೈಕ್ಗಳು, ಆಟೋಗಳು ಮತ್ತು ಕ್ಯಾನ್ಗಳೊಂದಿಗೆ ಜನರು ಸರದಿ ಸಾಲಿನಲ್ಲಿ ನಿಂತ ದೃಶ್ಯ ಸಾಮಾನ್ಯವಾಗಿತ್ತು. ಕೆಲವೆಡೆ ಟ್ರ್ಯಾಕ್ಟರ್ಗಳ ಸಾಲು ಕಿಲೋಮೀಟರ್ಗಳವರೆಗೆ ವಿಸ್ತರಿಸಿತ್ತು.
ಪಟ್ಟಣದಲ್ಲಿ ಸುಮಾರು ೮ ರಿಂದ ೧೦ ಪೆಟ್ರೋಲ್ ಬಂಕ್ಗಳಿದ್ದು, ಭಾನುವಾರ ಮಧ್ಯಾಹ್ನದೊಳಗೆ ಬಹುತೇಕ ಎಲ್ಲ ಬಂಕ್ಗಳಲ್ಲೂ ಡಿಸೇಲ್ ಖಾಲಿಯಾಗಿದೆ. ಶನಿವಾರ ಸಂಜೆದಿಂದ ಭಾನುವಾರ ಮಧ್ಯಾಹ್ನದವರೆಗೆ ಸಾವಿರಾರು ಲೀಟರ್ ಡಿಸೇಲ್ ಮಾರಾಟವಾಗಿದೆ ಎಂದು ತಿಳಿದುಬಂದಿದೆ.
ಕೆಲವು ಬಂಕ್ಗಳಲ್ಲಿ ಶನಿವಾರವೇ ಡಿಸೇಲ್ ಖಾಲಿಯಾಗಿದ್ದರೆ, ಭಾನುವಾರ ಮುಂಜಾನೆಯಿಂದಲೇ ಮತ್ತೆ ಉದ್ದನೆಯ ಕ್ಯೂಗಳು ಆರಂಭವಾಗಿದ್ದವು. ನೂರಾರು ಕ್ಯಾನ್ಗಳೊಂದಿಗೆ ಜನರು ಬಂಕ್ ಮುಂದೆ ಸಾಲಿನಲ್ಲಿ ನಿಂತಿದ್ದು, ಗಂಟೆಗಟ್ಟಲೆ ಕಾಯುವ ಪರಿಸ್ಥಿತಿ ನಿರ್ಮಾಣವಾಗಿತ್ತು.
ಮಧ್ಯಾಹ್ನ ವೇಳೆಗೆ ಡಿಸೇಲ್ ಸಂಪೂರ್ಣ ಖಾಲಿಯಾಗುತ್ತಿದ್ದಂತೆ ಹಲವರು ಬರಿಗೈಯಲ್ಲಿ ಮನೆಗೆ ಮರಳಬೇಕಾಯಿತು. ಕೆಲ ಬಂಕ್ಗಳಲ್ಲಿ ಕ್ಯಾನ್ಗಳಿಗೆ ಕೇವಲ ೨ ಸಾವಿರ ರೂ. ಮೌಲ್ಯದ ಡಿಸೇಲ್ ಮಾತ್ರ ನೀಡಲಾಗುತ್ತಿತ್ತು. ಹೀಗಾಗಿ ರೈತರು ೩-೪ ಕ್ಯಾನ್ಗಳನ್ನು ಹೊತ್ತು ತರುವ ದೃಶ್ಯ ಕಂಡುಬಂತು.
ಲಕ್ಷ್ಮೇಶ್ವರ ಪಟ್ಟಣ ಮಾತ್ರವಲ್ಲದೆ ತಾಲೂಕಿನ ಶಿಗ್ಲಿ, ಸೂರಣಗಿ, ಗೊಜನೂರು, ಬಾಲೇಹೊಸೂರು, ಮಾಡಳ್ಳಿ, ಯಳವತ್ತಿ ಸೇರಿದಂತೆ ಅನೇಕ ಗ್ರಾಮಗಳಲ್ಲೂ ಡಿಸೇಲ್ ಕೊರತೆ ತೀವ್ರವಾಗಿದೆ. ಈ ನಡುವೆ ಕೆಲವರು ಡಿಸೇಲ್ ಸಂಗ್ರಹಿಸಿಟ್ಟುಕೊಂಡಿದ್ದಾರೆ ಎಂಬ ಆರೋಪವೂ ಕೇಳಿಬರುತ್ತಿದೆ.
*ಬಿತ್ತನೆ ಹೊತ್ತಲ್ಲೇ ಇಂಧನ ಸಂಕಷ್ಟ*
ಈಗಾಗಲೇ ಮಳೆಯು ಪೂರಕವಾಗಿ ಸುರಿಯುತ್ತಿರುವ ಹಿನ್ನೆಲೆ ರೈತರು ಹರಗುವುದು ಸೇರಿದಂತೆ ಹೆಸರು, ಶೇಂಗಾ, ಸೋಯಾಬಿನ್, ಉದ್ದು ಬೆಳೆಗಳ ಬಿತ್ತನೆಗೆ ಸಜ್ಜಾಗುತ್ತಿದ್ದಾರೆ. ಬಹುತೇಕ ರೈತರು ಭೂಮಿ ಹರಗಲು, ಬಿತ್ತನೆ ಮಾಡಲು ಹಾಗೂ ಎಡೆ ಹೊಡೆಯಲು ಟ್ರ್ಯಾಕ್ಟರ್ಗಳನ್ನೇ ಅವಲಂಬಿಸಿದ್ದಾರೆ.
ಇಂತಹ ಸಮಯದಲ್ಲೇ ಡಿಸೇಲ್ ಕೊರತೆ ಎದುರಾಗಿರುವುದು ರೈತರ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ. ಇದೇ ತಿಂಗಳಿಂದ ಬಿತ್ತನೆ ಕಾರ್ಯ ಚುರುಕುಗೊಳ್ಳಲಿರುವ ಹಿನ್ನೆಲೆ ಡಿಸೇಲ್ ಸಮಸ್ಯೆ ಮುಂದುವರಿದರೆ ಕೃಷಿ ಚಟುವಟಿಕೆಗಳ ಮೇಲೂ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ.
“ರೈತರು ಬಿತ್ತನೆ ಬೀಜ, ಗೊಬ್ಬರ ಖರೀದಿ, ಬೆಳೆದ ಫಸಲು ಮಾರಾಟ, ಹಣ ಪಡೆಯುವುದು, ಬೆಳೆಹಾನಿ ಹಾಗೂ ವಿಮೆ ಪರಿಹಾರಕ್ಕಾಗಿ ಈಗಾಗಲೇ ನಾನಾ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಕೃಷಿ ಚಟುವಟಿಕೆಗಳು ಭರದಿಂದ ಸಾಗುತ್ತಿರುವ ಸಂದರ್ಭದಲ್ಲಿ ಇದೀಗ ಡಿಸೇಲ್ಗಾಗಿ ಹಗಲು-ರಾತ್ರಿ ಕಾಯುವ ಪರಿಸ್ಥಿತಿ ಬಂದಿದೆ. ಒಟ್ಟಿನಲ್ಲಿ ರೈತರ ಬದುಕು ಹೋರಾಟದಿಂದಲೇ ಕೂಡಿದೆ. ಬಿತ್ತನೆ ಹಂಗಾಮಿನಲ್ಲಿ ಒಂದು ದಿನ ವ್ಯತ್ಯಯವಾದರೂ ದೊಡ್ಡ ಪರಿಣಾಮ ಎದುರಿಸಬೇಕಾಗುತ್ತದೆ. ಸರ್ಕಾರ ರೈತರಿಗೆ ಸಮರ್ಪಕವಾಗಿ ಡಿಸೇಲ್ ಪೂರೈಕೆ ಆಗುವಂತೆ ತಕ್ಷಣ ಕ್ರಮ ಕೈಗೊಳ್ಳಬೇಕು.”
— ನಂದೀಶ ಬಂಡಿವಾಡ, ರೈತ
ಇಂಡಿಯನ್ ಪ್ರೀಮಿಯರ್ ಲೀಗ್ ಹತ್ತೊಂಬತ್ತನೇ ಆವೃತ್ತಿಯ ಲೀಗ್ ಹಂತದ ಪಂದ್ಯಗಳಿಗೆ ಇಂದು ತೆರೆ ಬೀಳಲಿದ್ದು, ಪ್ಲೇಆಫ್ನ ಕೊನೆಯ ಸ್ಥಾನಕ್ಕಾಗಿ ಭಾರೀ ಪೈಪೋಟಿ ಏರ್ಪಟ್ಟಿದೆ.
ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ಮುಖಾಮುಖಿಯಾಗಲಿವೆ. ರಾಜಸ್ಥಾನ್ ರಾಯಲ್ಸ್ ಪಾಲಿಗೆ ಇದು ‘ಮಾಡು ಇಲ್ಲವೇ ಮಡಿ’ ಪಂದ್ಯವಾಗಿದ್ದು, ಪ್ಲೇಆಫ್ ಪ್ರವೇಶಿಸಲು ಗೆಲುವು ಅನಿವಾರ್ಯವಾಗಿದೆ.
ಪ್ರಸ್ತುತ ರಾಜಸ್ಥಾನ್ 14 ಅಂಕಗಳೊಂದಿಗೆ ಐದನೇ ಸ್ಥಾನದಲ್ಲಿದೆ. ಇನ್ನೊಂದೆಡೆ ಈಗಾಗಲೇ ಪೈಪೋಟಿಯಿಂದ ಹೊರಬಿದ್ದಿರುವ ಮುಂಬೈ ಇಂಡಿಯನ್ಸ್ ಕೇವಲ ಔಪಚಾರಿಕ ಪಂದ್ಯವನ್ನಾಡುತ್ತಿದೆ. ಆದರೆ ಮುಂಬೈ ಗೆದ್ದರೆ ಪ್ಲೇಆಫ್ ಲೆಕ್ಕಾಚಾರ ಸಂಪೂರ್ಣ ಬದಲಾಗಲಿದೆ.
ಸದ್ಯ ಪಂಜಾಬ್ ಕಿಂಗ್ಸ್ 15 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದು, ಅದರ ಭವಿಷ್ಯ ರಾಜಸ್ಥಾನ್ ಪಂದ್ಯದ ಫಲಿತಾಂಶದ ಮೇಲೆ ನಿಂತಿದೆ. ರಾಜಸ್ಥಾನ್ ಸೋತರೆ, ಸಂಜೆ ಪಂದ್ಯದಲ್ಲಿ ಪಂಜಾಬ್ ಮತ್ತು ಕೋಲ್ಕತ್ತಾ ನಡುವಿನ ಪಂದ್ಯ ನಿರ್ಣಾಯಕವಾಗಲಿದೆ.
ಒಂದು ವೇಳೆ ಕೋಲ್ಕತ್ತಾ ಗೆದ್ದರೆ ಪಂಜಾಬ್ ಹಾಗೂ ಕೋಲ್ಕತ್ತಾ ಎರಡೂ ತಂಡಗಳು 15 ಅಂಕಗಳನ್ನು ಹೊಂದಲಿವೆ. ಆಗ ರನ್ರೇಟ್ ಮುಖ್ಯವಾಗಲಿದೆ. ಸದ್ಯ ಪಂಜಾಬ್ ರನ್ರೇಟ್ +0.309 ಇದ್ದರೆ, ಕೋಲ್ಕತ್ತಾ ರನ್ರೇಟ್ +0.011 ಇದೆ.
ಹೀಗಾಗಿ ಕೋಲ್ಕತ್ತಾ ಪ್ಲೇಆಫ್ಗೆ ಪ್ರವೇಶಿಸಬೇಕಾದರೆ ಕೇವಲ ಗೆಲುವು ಸಾಲದು, ಭರ್ಜರಿ ಅಂತರದ ಜಯ ಸಾಧಿಸಬೇಕಿದೆ. ಮೊದಲು ಬ್ಯಾಟಿಂಗ್ ಮಾಡಿದರೆ ಕನಿಷ್ಠ 77 ರನ್ಗಳ ಅಂತರದಿಂದ ಗೆಲ್ಲಬೇಕು. ಗುರಿ ಬೆನ್ನಟ್ಟಿದರೆ 12.1 ಓವರ್ಗಳೊಳಗೆ ಪಂದ್ಯ ಮುಗಿಸಬೇಕಿದೆ.
ಇನ್ನೊಂದೆಡೆ ಮಳೆ ಕೂಡ ಲೆಕ್ಕಾಚಾರ ಬದಲಾಯಿಸುವ ಸಾಧ್ಯತೆ ಇದೆ. ಮುಂಬೈ-ರಾಜಸ್ಥಾನ್ ಪಂದ್ಯ ಮಳೆಯಿಂದ ರದ್ದಾದರೆ ಉಭಯ ತಂಡಗಳಿಗೆ ತಲಾ ಒಂದು ಅಂಕ ಸಿಗಲಿದೆ. ಆಗ ರಾಜಸ್ಥಾನ್ 15 ಅಂಕಗಳನ್ನೇರಿದರೂ, ಉತ್ತಮ ರನ್ರೇಟ್ ಹೊಂದಿರುವ ಪಂಜಾಬ್ ಕಿಂಗ್ಸ್ ಯಾವುದೇ ಆತಂಕವಿಲ್ಲದೆ ಪ್ಲೇಆಫ್ ಪ್ರವೇಶಿಸಲಿದೆ.
ಇಂದಿನ ಪಂದ್ಯಗಳ ಫಲಿತಾಂಶದ ಮೇಲೆ ಮೂರು ತಂಡಗಳ ಭವಿಷ್ಯ ನಿಂತಿದ್ದು, ಕ್ರಿಕೆಟ್ ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿದೆ.
ಬೆಂಗಳೂರು; ಬೆಂಗಳೂರಿಗೆ ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ಕೊಟ್ಟಿದ್ದ ವೇಳೆ ಸ್ಫೋಟಕ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸ್ ಇಲಾಖೆಯಲ್ಲಿ ಕ್ರಮ ಕೈಗೊಳ್ಳಲಾಗಿದೆ.
ಕರ್ತವ್ಯಲೋಪ ಆರೋಪದಡಿ ಓರ್ವ ಪಿಎಸ್ಐ, ಓರ್ವ ಸಹಾಯಕ ಉಪನಿರೀಕ್ಷಕ ಹಾಗೂ ನಾಲ್ವರು ಪೊಲೀಸ್ ಸಿಬ್ಬಂದಿಯನ್ನು ಅಮಾನತು ಮಾಡಿ ಬೆಂಗಳೂರು ದಕ್ಷಿಣ ಜಿಲ್ಲಾ ಪೊಲೀಸ್ ಅಧೀಕ್ಷಕ ಶ್ರೀನಿವಾಸ್ ಗೌಡ ಆದೇಶಿಸಿದ್ದಾರೆ.
ಮೇ 10ರಂದು ಪ್ರಧಾನಿ ಮೋದಿ ಅವರು ಆರ್ಟ್ ಆಫ್ ಲಿವಿಂಗ್ ಆಶ್ರಮದ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಪ್ರಧಾನಿ ಸಂಚಾರಕ್ಕೂ ಮುನ್ನ ಬೆಂಗಳೂರು ದಕ್ಷಿಣ ತಾಲೂಕಿನ ವಡೇರಹಳ್ಳಿ ಗೇಟ್ ಸಮೀಪ ರಸ್ತೆ ಬದಿಯಲ್ಲಿ ಅನುಮಾನಾಸ್ಪದ ಪೆಟ್ಟಿಗೆ ಪತ್ತೆಯಾಗಿತ್ತು.
ಬೆಳಿಗ್ಗೆ ಸುಮಾರು 9 ಗಂಟೆ ವೇಳೆಗೆ ಬಂದೋಬಸ್ತ್ ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿಯೊಬ್ಬರು ಈ ಪೆಟ್ಟಿಗೆಯನ್ನು ಗಮನಿಸಿದ್ದರು. ತಕ್ಷಣ ಮಾಹಿತಿ ನೀಡಲಾಗಿದ್ದು, ಬಾಂಬ್ ನಿಷ್ಕ್ರಿಯ ದಳ ಸ್ಥಳಕ್ಕೆ ಧಾವಿಸಿತ್ತು.
ಪೆಟ್ಟಿಗೆಯನ್ನು ಪರಿಶೀಲಿಸಿದ ವೇಳೆ ಅದರೊಳಗೆ ಸ್ಫೋಟಕ ವಸ್ತುಗಳು ಪತ್ತೆಯಾಗಿದ್ದವು. ಬಳಿಕ ಪೊಲೀಸರು ಸ್ಫೋಟಕಗಳನ್ನು ವಶಕ್ಕೆ ಪಡೆದು ಪ್ರಧಾನಿ ಸಂಚರಿಸುವ ಸಂಪೂರ್ಣ ಮಾರ್ಗವನ್ನು ಮರುಪರಿಶೀಲನೆ ನಡೆಸಿದ್ದರು.
ಸ್ಫೋಟಕ ಪತ್ತೆಯಾದ ಪ್ರದೇಶದ ಭದ್ರತಾ ಜವಾಬ್ದಾರಿ ಹೊಂದಿದ್ದ ಅಧಿಕಾರಿಗಳು ಮತ್ತು ಸಿಬ್ಬಂದಿ ಸೂಕ್ತ ಎಚ್ಚರಿಕೆ ವಹಿಸಿಲ್ಲ ಹಾಗೂ ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿದ್ದಾರೆ ಎಂಬ ಕಾರಣಕ್ಕೆ ಇಲಾಖಾ ಕ್ರಮ ಕೈಗೊಳ್ಳಲಾಗಿದೆ.
ಬೆಂಗಳೂರು: ನಗರದಲ್ಲಿ ಡಿಜಿಟಲ್ ಬಂಧನ ಹೆಸರಿನಲ್ಲಿ ಸೈಬರ್ ವಂಚಕರು ವೃದ್ಧೆಯೊಬ್ಬರನ್ನು ಬೆದರಿಸಿ 24 ಕೋಟಿ ರೂಪಾಯಿ ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ.
ಶಿವಾಜಿನಗರ ನಿವಾಸಿ ಲಕ್ಷ್ಮೀ ರಾಮಮೂರ್ತಿ ಎಂಬ ವೃದ್ಧೆಯನ್ನು ಗುರಿಯಾಗಿಸಿಕೊಂಡ ಸೈಬರ್ ವಂಚಕರು, “ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ನಿಮ್ಮ ಹೆಸರು ಇದೆ” ಎಂದು ಬೆದರಿಕೆ ಹಾಕಿ ಹಲವು ತಿಂಗಳುಗಳ ಕಾಲ ಡಿಜಿಟಲ್ ಬಂಧನದಲ್ಲಿರುವಂತೆ ನಂಬಿಸಿದ್ದಾರೆ.
ಆಸ್ತಿ ಮಾರಾಟದಿಂದ ಲಕ್ಷ್ಮೀ ರಾಮಮೂರ್ತಿಗೆ ಕೋಟ್ಯಂತರ ರೂಪಾಯಿ ಬಂದಿದ್ದ ಮಾಹಿತಿ ತಿಳಿದ ವಂಚಕರು, ಕಳೆದ ಜನವರಿಯಿಂದ ಮೇ ತಿಂಗಳವರೆಗೆ ನಿರಂತರವಾಗಿ ಸಂಪರ್ಕದಲ್ಲಿದ್ದು, ಹಣ ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ಈ ಅವಧಿಯಲ್ಲಿ ಬರೋಬ್ಬರಿ 24 ಕೋಟಿ ರೂಪಾಯಿ ವಂಚಕರ ಪಾಲಾಗಿದೆ ಎನ್ನಲಾಗಿದೆ.
ಇಷ್ಟೊಂದು ಹಣ ನೀಡಿದ ಬಳಿಕವೂ ಇನ್ನಷ್ಟು ಹಣ ಕೊಡಬೇಕು ಎಂದು ವಂಚಕರು ಒತ್ತಾಯ ಮಾಡುತ್ತಿದ್ದರು. ಇದರಿಂದ ಆತಂಕಗೊಂಡ ವೃದ್ಧೆ ಮನೆಯಲ್ಲಿದ್ದ ಸುಮಾರು 1.30 ಕಿಲೋ ಚಿನ್ನಾಭರಣವನ್ನು ಅಡ ಇಟ್ಟು ಹಣ ಪಡೆಯಲು ಬ್ಯಾಂಕ್ಗೆ ತೆರಳಿದ್ದರು.
ಈ ವೇಳೆ ವೃದ್ಧೆಯ ವರ್ತನೆ ಅನುಮಾನಾಸ್ಪದವಾಗಿ ಕಂಡ ಹಿನ್ನೆಲೆ ಕಂಟೋನ್ಮೆಂಟ್ ಶಾಖೆಯ ಐಸಿಐಸಿಐ ಬ್ಯಾಂಕ್ ವ್ಯವಸ್ಥಾಪಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಬಂದ ಸಿಸಿಬಿ ಸೈಬರ್ ಅಪರಾಧ ವಿಭಾಗದ ಪೊಲೀಸರು ವೃದ್ಧೆಯನ್ನು ವಿಚಾರಣೆ ನಡೆಸಿದ್ದಾರೆ.
ಆರಂಭದಲ್ಲಿ ವೃದ್ಧೆ ಯಾವುದೇ ಮಾಹಿತಿ ನೀಡಲು ಹಿಂದೇಟು ಹಾಕಿದರೂ, ಬಳಿಕ ಸೈಬರ್ ವಂಚಕರು ಡಿಜಿಟಲ್ ಬಂಧನ ಮಾಡಿ ಹಣ ವಸೂಲಿ ಮಾಡಿರುವ ವಿಚಾರವನ್ನು ಬಹಿರಂಗಪಡಿಸಿದ್ದಾರೆ.
ನಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ವಿದೇಶದಲ್ಲಿರುವ ವೃದ್ಧೆಯ ಮಕ್ಕಳಿಗೂ ಮಾಹಿತಿ ನೀಡಲಾಗಿದೆ.
ಪ್ರಕರಣ ಸಂಬಂಧ ಮುಂಬೈ, ಅಲಹಾಬಾದ್ ಹಾಗೂ ದೆಹಲಿ ಮೂಲದ ಆರೋಪಿಗಳನ್ನು ಬಂಧಿಸಲಾಗಿದ್ದು, ಗೌರವ್ ಕುಮಾರ್, ಓಂ ಪ್ರಕಾಶ್ ರಾಜಪೂತ್ ಸೇರಿದಂತೆ ಐವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಿದ್ದಾರೆ.
ಸೈಬರ್ ವಂಚಕರು 22 ಬ್ಯಾಂಕ್ ಖಾತೆಗಳ ಮೂಲಕ ಹಣ ವರ್ಗಾವಣೆ ಮಾಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಇದುವರೆಗೆ 60 ಲಕ್ಷ ರೂಪಾಯಿ ಇರುವ ಬ್ಯಾಂಕ್ ಖಾತೆಗಳನ್ನು ಪೊಲೀಸರು ಮುಟ್ಟುಗೋಲು ಹಾಕಿಕೊಂಡಿದ್ದಾರೆ.
ಬೆಂಗಳೂರು: ನಗರದ ಕೆ.ಆರ್.ಪುರಂ ಪೊಲೀಸ್ ವಸತಿ ಗೃಹದಲ್ಲಿ ಕಾನ್ಸ್ಟೇಬಲ್ ಪತ್ನಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಹೆಚ್ಎಎಲ್ ಪೊಲೀಸ್ ಠಾಣೆಯ ಕಾನ್ಸ್ಟೇಬಲ್ ರಾಜೇಶ್ ಆರಾಧ್ಯ ಅವರ ಪತ್ನಿ ಲಕ್ಷ್ಮೀಪ್ರಿಯಾ (27) ಮೃತ ಮಹಿಳೆ.
ಮೂಲತಃ ಮಂಡ್ಯ ಜಿಲ್ಲೆಯ ಮಳವಳ್ಳಿಯವರಾದ ರಾಜೇಶ್ ಆರಾಧ್ಯ ಮತ್ತು ಲಕ್ಷ್ಮೀಪ್ರಿಯಾ 2023ರಲ್ಲಿ ಮದುವೆಯಾಗಿದ್ದರು. ದಂಪತಿಗೆ ಎಂಟು ತಿಂಗಳ ಮಗು ಇದ್ದು, ಕೆ.ಆರ್.ಪುರಂ ಪೊಲೀಸ್ ವಸತಿ ಗೃಹದಲ್ಲಿ ವಾಸವಾಗಿದ್ದರು.
ಮೇ 22ರಂದು ದಂಪತಿ ನಡುವೆ ಕೌಟುಂಬಿಕ ವಿಚಾರಕ್ಕೆ ಜಗಳ ಉಂಟಾಗಿದ್ದು, “ನನ್ನ ತಂದೆ-ತಾಯಿಗೆ ನೀನು ಗೌರವ ಕೊಡುವುದಿಲ್ಲ” ಎಂದು ಪತಿ ರಾಜೇಶ್ ಪತ್ನಿಯನ್ನು ಬೈದಿದ್ದಾನೆ ಎನ್ನಲಾಗಿದೆ. ಈ ವಿಚಾರದಿಂದ ಮನನೊಂದ ಲಕ್ಷ್ಮೀಪ್ರಿಯಾ, ಪತಿ ರಾತ್ರಿ ಕರ್ತವ್ಯಕ್ಕೆ ತೆರಳಿದ್ದ ವೇಳೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಘಟನೆಯ ಬಳಿಕ ಮೃತಳ ಪೋಷಕರು ಪತಿ ರಾಜೇಶ್ ಆರಾಧ್ಯ ಹಾಗೂ ಅವರ ಕುಟುಂಬದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಮದುವೆಯಾದ ಬಳಿಕದಿಂದಲೇ ವರದಕ್ಷಿಣೆ ವಿಚಾರವಾಗಿ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಲಾಗುತ್ತಿತ್ತು ಎಂದು ದೂರಿದ್ದಾರೆ.
ಮೃತಳ ಪೋಷಕರು ನೀಡಿದ ದೂರಿನ ಆಧಾರದ ಮೇಲೆ ಕೆ.ಆರ್.ಪುರಂ ಪೊಲೀಸ್ ಠಾಣೆಯಲ್ಲಿ ಪತಿ ರಾಜೇಶ್ ಆರಾಧ್ಯ ಹಾಗೂ ಕುಟುಂಬಸ್ಥರ ವಿರುದ್ಧ ವರದಕ್ಷಿಣೆ ಕಿರುಕುಳ ಮತ್ತು ಆತ್ಮಹತ್ಯೆಗೆ ಪ್ರಚೋದನೆ ಆರೋಪದಡಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ರಾಯಚೂರು: ಜಿಲ್ಲೆಯಾದ್ಯಂತ ಶನಿವಾರ ತಡರಾತ್ರಿ ಗುಡುಗು, ಮಿಂಚು ಹಾಗೂ ಬಿರುಗಾಳಿ ಸಹಿತ ಧಾರಾಕಾರ ಮಳೆಯಾಗಿದ್ದು, ಹಲವು ಪ್ರದೇಶಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ.
ಭಾರೀ ಮಳೆಯ ನಡುವೆ ಸಿಡಿಲು ಬಡಿದು ತೆಂಗಿನ ಮರ ಸುಟ್ಟು ಕರಕಲಾಗಿರುವ ಘಟನೆ ಒಂದೆಡೆ ನಡೆದರೆ, ಮಂತ್ರಾಲಯದಲ್ಲಿ ಮಳೆಯಿಂದ ಸಾವಿರಾರು ಭಕ್ತರು ಸಂಕಷ್ಟಕ್ಕೆ ಸಿಲುಕಿದ ಘಟನೆ ಮತ್ತೊಂದೆಡೆ ನಡೆದಿದೆ.
ಜಿಲ್ಲೆಯ ಅರಕೇರಾ ತಾಲೂಕಿನ ಮುಕ್ಕಲಗುಡ್ಡ ತಾಂಡಾದಲ್ಲಿ ರಾತ್ರಿ ವೇಳೆ ಭೀಕರ ಸಿಡಿಲು ಬಡಿದಿದೆ. ತಾಂಡಾದ ನಿವಾಸಿ ಮನೋಹರ್ ನಾಯ್ಕ್ ಅವರ ಮನೆ ಮುಂದೆ ಇದ್ದ ತೆಂಗಿನ ಮರಕ್ಕೆ ಏಕಾಏಕಿ ಸಿಡಿಲು ಬಡಿದ ಪರಿಣಾಮ, ಮರದಲ್ಲಿದ್ದ ತೆಂಗಿನಕಾಯಿಗಳು ಹಾಗೂ ಗರಿಗಳು ಸಂಪೂರ್ಣ ಸುಟ್ಟು ಭಸ್ಮವಾಗಿವೆ.
ಸಿಡಿಲಿನ ತೀವ್ರತೆಗೆ ಮರ ಹೊತ್ತಿ ಉರಿದ ದೃಶ್ಯ ಕಂಡು ಗ್ರಾಮಸ್ಥರು ಆತಂಕಕ್ಕೊಳಗಾದರು. ದಟ್ಟ ಜನವಸತಿ ಪ್ರದೇಶದಲ್ಲೇ ಈ ಘಟನೆ ಸಂಭವಿಸಿದ್ದರೂ ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಇದರಿಂದ ಇಡೀ ತಾಂಡಾ ದೊಡ್ಡ ಅನಾಹುತದಿಂದ ಪಾರಾಗಿದೆ.
ಇನ್ನೊಂದೆಡೆ ಪ್ರಸಿದ್ಧ ಪುಣ್ಯಕ್ಷೇತ್ರವಾದ ಮಂತ್ರಾಲಯದಲ್ಲೂ ಸುಮಾರು ಎರಡು ಗಂಟೆಗಳ ಕಾಲ ಭಾರೀ ಮಳೆಯಾಗಿದೆ. ವಾರಾಂತ್ಯ ಹಿನ್ನೆಲೆ ರಾಯರ ದರ್ಶನಕ್ಕಾಗಿ ಸಾವಿರಾರು ಭಕ್ತರು ಕ್ಷೇತ್ರಕ್ಕೆ ಆಗಮಿಸಿದ್ದರು.
ಜಾಗದ ಕೊರತೆಯಿಂದ ಮಠದ ಹೊರಪ್ರಾಂಗಣದಲ್ಲಿ ನೂರಾರು ಭಕ್ತರು ಮಲಗಿದ್ದ ವೇಳೆ ತಡರಾತ್ರಿ ಏಕಾಏಕಿ ಮಳೆ ಆರಂಭವಾಗಿದೆ. ಮಳೆಯಿಂದ ತಪ್ಪಿಸಿಕೊಳ್ಳಲು ಭಕ್ತರು ದಿಕ್ಕಾಪಾಲಾಗಿ ಓಡಾಡಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ಸಣ್ಣ ಮಕ್ಕಳು ಹಾಗೂ ವೃದ್ಧರೊಂದಿಗೆ ಭಕ್ತರು ಮಳೆಯಲ್ಲಿ ನೆನೆದು ಪರದಾಡಿದರು.
ಭಕ್ತರು ಸಂಕಷ್ಟಕ್ಕೆ ಸಿಲುಕಿರುವ ಮಾಹಿತಿ ತಿಳಿಯುತ್ತಿದ್ದಂತೆಯೇ ಮಂತ್ರಾಲಯ ಮಠದ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರ ತೀರ್ಥರು ತಡರಾತ್ರಿಯೇ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ಪರಿಶೀಲಿಸಿದರು. ತಕ್ಷಣವೇ ಮಠದ ಕಲ್ಯಾಣ ಮಂಟಪಗಳ ಬಾಗಿಲು ತೆರೆಯಿಸಿ ಭಕ್ತರಿಗೆ ವಸತಿ ವ್ಯವಸ್ಥೆ ಕಲ್ಪಿಸುವ ಮೂಲಕ ಮಾನವೀಯತೆ ಮೆರೆದರು.
ಕೊಪ್ಪಳ: ಜಿಲ್ಲೆಯಲ್ಲಿ ಸುರಿದ ಭಾರಿ ಗಾಳಿ-ಮಳೆಯ ಆರ್ಭಟಕ್ಕೆ ರಸ್ತೆಗೆ ಉರುಳಿಬಿದ್ದಿದ್ದ ಬೇವಿನ ಮರಕ್ಕೆ ಬೈಕ್ ಡಿಕ್ಕಿಯಾದ ಪರಿಣಾಮ ಸವಾರನೊಬ್ಬ ಸ್ಥಳದಲ್ಲೇ ಸಾವನ್ನಪ್ಪಿ, ಮತ್ತೊಬ್ಬ ಯುವಕ ಗಂಭೀರವಾಗಿ ಗಾಯಗೊಂಡಿರುವ ಘಟನೆ ಕೊಪ್ಪಳ ತಾಲೂಕಿನ ಕಾಮನೂರ ಗ್ರಾಮದ ಬಳಿ ಭಾನುವಾರ ಬೆಳಗಿನ ಜಾವ ನಡೆದಿದೆ.
ಮೃತ ಯುವಕನನ್ನು ಕಿರಣ್ ಕರಬಡಗಿ (30) ಎಂದು ಗುರುತಿಸಲಾಗಿದೆ. ಬೈಕ್ನಲ್ಲಿ ಜೊತೆಯಲ್ಲಿದ್ದ ಮಹೇಶ್ ಎಂಬುವವರಿಗೆ ತೀವ್ರ ಗಾಯಗಳಾಗಿದ್ದು, ಅವರನ್ನು ಕೊಪ್ಪಳ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಭಾನುವಾರ ಬೆಳಿಗ್ಗೆ ಸುಮಾರು 5 ಗಂಟೆ ಸುಮಾರಿಗೆ ಈ ದುರ್ಘಟನೆ ಸಂಭವಿಸಿದೆ. ಕಿರಣ್ ಮತ್ತು ಮಹೇಶ್ ವಿಜಯನಗರ ಜಿಲ್ಲೆಯ ಮರಿಯಮ್ಮನಹಳ್ಳಿಗೆ ಕೆಲಸ ನಿಮಿತ್ತ ತೆರಳುತ್ತಿದ್ದರು. ಮೊದಲು ಕಾಮನೂರಿನಿಂದ ಗಿಣಿಗೇರಿಗೆ ಬೈಕ್ನಲ್ಲಿ ತೆರಳಿ, ಅಲ್ಲಿಂದ ಕ್ರಷರ್ ವಾಹನ ಹತ್ತಿ ಕೆಲಸದ ಸ್ಥಳಕ್ಕೆ ಹೋಗುವ ಯೋಜನೆ ಮಾಡಿಕೊಂಡಿದ್ದರು ಎನ್ನಲಾಗಿದೆ.
ಆದರೆ ರಾತ್ರಿ ಸುರಿದ ಭಾರಿ ಗಾಳಿ-ಮಳೆಯಿಂದ ಕಾಮನೂರ ಸಮೀಪ ಬೃಹತ್ ಬೇವಿನ ಮರವೊಂದು ರಸ್ತೆಗೆ ಅಡ್ಡವಾಗಿ ಬಿದ್ದಿತ್ತು. ಬೆಳಗಿನ ಜಾವ ಕತ್ತಲೆ ವಾತಾವರಣ ಮತ್ತು ಕಡಿಮೆ ಬೆಳಕಿನ ಕಾರಣ ರಸ್ತೆಯಲ್ಲಿದ್ದ ಮರ ಕಾಣಿಸದೇ, ಇವರ ಬೈಕ್ ನೇರವಾಗಿ ಮರಕ್ಕೆ ಡಿಕ್ಕಿಯಾಗಿದೆ.
ಡಿಕ್ಕಿಯ ತೀವ್ರತೆಗೆ ಕಿರಣ್ ತಲೆಗೆ ಭಾರೀ ಪೆಟ್ಟು ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮಹೇಶ್ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.
ಘಟನೆ ಕುರಿತು ಮಾಹಿತಿ ತಿಳಿಯುತ್ತಿದ್ದಂತೆಯೇ ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ರಸ್ತೆಗೆ ಬಿದ್ದಿದ್ದ ಮರವನ್ನು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.
ವಿಜಯಸಾಕ್ಷಿ ಸುದ್ದಿ, ಗದಗ: ಗದಗ-ಬೆಟಗೇರಿಯ ವಿದ್ಯುತ್ ಚಾಲಿತ ಮಗ್ಗಗಳಿಗೆ ಸರ್ಕಾರ 10 ಹೆಚ್.ಪಿ ವರೆಗೆ ಉಚಿತ ವಿದ್ಯುತ್ ಯೋಜನೆ ಜಾರಿಗೊಳಿಸಿದ್ದರೂ, ಇತ್ತೀಚೆಗೆ ಹೆಚ್ಚುವರಿ ವಿದ್ಯುತ್ ಬಿಲ್ಗಳು ಬರುತ್ತಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿ ಕರ್ನಾಟಕ ರಾಜ್ಯ ನೇಕಾರ ಸೇವಾ ಸಂಘದ ವತಿಯಿಂದ ಹೆಸ್ಕಾಂ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಮುಳಗುಂದ ನಾಕಾದ ಹೆಸ್ಕಾಂ ಮುಖ್ಯ ಕಾರ್ಯನಿರ್ವಾಹಕ ಅಭಿಯಂತರರಿಗೆ ಸಲ್ಲಿಸಿದ ಮನವಿಯಲ್ಲಿ, ವೃತ್ತಿಪರ ನೇಕಾರರಿಗೆ ಸರ್ಕಾರ ನೀಡಿರುವ ಉಚಿತ ವಿದ್ಯುತ್ ಸೌಲಭ್ಯವನ್ನು ಯಾವುದೇ ಷರತ್ತಿಲ್ಲದೆ ಸಂಪೂರ್ಣ ಜಾರಿಗೆ ತರಬೇಕು ಎಂದು ಆಗ್ರಹಿಸಲಾಯಿತು.
ಈ ವೇಳೆ ಮಾತನಾಡಿದ ರಾಜು ಧಡಿ, ಗದಗ-ಬೆಟಗೇರಿ ಸೇರಿದಂತೆ ರಾಜ್ಯದ ಎಲ್ಲ ವೃತ್ತಿಪರ ನೇಕಾರರಿಗೆ 10 ಹೆಚ್.ಪಿ ವರೆಗೆ ಉಚಿತ ವಿದ್ಯುತ್ ನೀಡುವಂತೆ ಸರ್ಕಾರ ಆದೇಶ ಹೊರಡಿಸಿದೆ ಎಂದು ಹೇಳಿದರು.
10 ಹೆಚ್.ಪಿ ಮೀರಿದ ವಿದ್ಯುತ್ ಚಾಲಿತ ಮಗ್ಗಗಳಿಗೆ ಮಾತ್ರ ಪ್ರತಿ ಯೂನಿಟ್ಗೆ 1 ರೂಪಾಯಿ 25 ಪೈಸೆ ದರ ನಿಗದಿಯಾಗಿದೆ. ಆದರೆ ಇತ್ತೀಚೆಗೆ 10 ಹೆಚ್.ಪಿ ವ್ಯಾಪ್ತಿಯ ಮಗ್ಗ ಘಟಕಗಳಿಗೂ ಹಣ ಪಾವತಿಸುವಂತೆ ಬಿಲ್ಗಳು ಬರುತ್ತಿವೆ ಎಂದು ದೂರಿದರು.
“ಸರ್ಕಾರ ಕೊಟ್ಟು ಕಿತ್ತುಕೊಳ್ಳುವ ನೀತಿ ಅನುಸರಿಸಬಾರದು. ರಾಜ್ಯದ ವಿದ್ಯುತ್ ಚಾಲಿತ ಮಗ್ಗಗಳಿಗೆ ಯಾವುದೇ ಹೆಚ್ಚುವರಿ ಶುಲ್ಕ ವಿಧಿಸದೆ ಸಂಪೂರ್ಣ ಉಚಿತ ಜೀರೋ ಬಿಲ್ ನೀಡಬೇಕು” ಎಂದು ಒತ್ತಾಯಿಸಿದರು.
ಇನ್ನು ಮುಂದೆ ಹೆಸ್ಕಾಂ ಇಲಾಖೆಯಿಂದ ಹಣ ಪಾವತಿಸುವಂತೆ ಬಿಲ್ಗಳು ಬಂದರೆ ಅದಕ್ಕೆ ಸರ್ಕಾರವೇ ಸಂಪೂರ್ಣ ಜವಾಬ್ದಾರಿಯಾಗಿರುತ್ತದೆ. ನೇಕಾರರು ಯಾವುದೇ ಹಣ ಪಾವತಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ವಿರುಪಾಕ್ಷಪ್ಪ ಐಲಿ, ನಗರಸಭಾ ಸದಸ್ಯ ಮಾಧುಸಾ ಮೇರವಾಡೆ, ನಾರಾಯಣಪ್ಪ, ಕೃಷ್ಣ ಕೊಪ್ಪರದ, ಈರಣ್ಣ ಕೋನಾ, ನಾರಾಯಣ ಗೋಟೂರ, ಬಸವರಾಜ ಕರಿ, ಟಿ.ಎಂ. ಮೇರವಾಡೆ, ಪಿ.ಸಿ. ಹೀನಾಯಿ, ರಾಘವೇಂದ್ರ ಕಿನಿಲಿ, ನಾರಾಯಣ ಎಸ್. ಜುಟ್ಲಾ, ವೆಂಕಟೇಶ ಸಿಂಪಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ವಿಜಯಸಾಕ್ಷಿ ಸುದ್ದಿ, ಗದಗ: ಗದಗ-ಬೆಟಗೇರಿ ಭಾಗದಲ್ಲಿ ದಿನದಿಂದ ದಿನಕ್ಕೆ ವಾಹನ ಸಂಚಾರ ಹೆಚ್ಚುತ್ತಿದ್ದು, ಸಾರ್ವಜನಿಕರ ಸುರಕ್ಷತೆ ದೃಷ್ಟಿಯಿಂದ ಬೆಟಗೇರಿಯಲ್ಲಿ ತಕ್ಷಣ ಸಾರಿಗೆ ಪೊಲೀಸ್ ಠಾಣೆ ಆರಂಭಿಸಬೇಕು ಎಂದು ಮುಖಂಡ ಸತೀಶ ಹುಲಿ ಒತ್ತಾಯಿಸಿದ್ದಾರೆ.
ಬೆಟಗೇರಿ ಭಾಗದಲ್ಲಿ ವಾಹನಗಳ ಉಪಟಳ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸ್ಥಳೀಯರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಹುಯಿಲಗೋಳ ಕ್ರಾಸ್, ಬೆಟಗೇರಿ ಬಸ್ ನಿಲ್ದಾಣ ಸೇರಿದಂತೆ ಹಲವು ಪ್ರದೇಶಗಳಲ್ಲಿ ಸಂಭವಿಸುತ್ತಿರುವ ಅಪಘಾತಗಳು ಹಾಗೂ ಸಾವಿನ ಪ್ರಕರಣಗಳು ಸಾರ್ವಜನಿಕರಲ್ಲಿ ಆತಂಕ ಮೂಡಿಸಿವೆ ಎಂದು ಅವರು ತಿಳಿಸಿದ್ದಾರೆ.
ಸಾರಿಗೆ ನಿಯಂತ್ರಣದ ಸಮರ್ಪಕ ವ್ಯವಸ್ಥೆಯ ಕೊರತೆಯಿಂದ ಅಪಘಾತಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ಬೆಟಗೇರಿ ಭಾಗಕ್ಕೆ ಪ್ರತ್ಯೇಕ ಸಾರಿಗೆ ಪೊಲೀಸ್ ಠಾಣೆ ಅಗತ್ಯವಾಗಿದೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ಜನಸಂಚಾರ ಮತ್ತು ವಾಹನ ದಟ್ಟಣೆಗೆ ಅನುಗುಣವಾಗಿ ಬೆಟಗೇರಿಗೆ ಸಾರಿಗೆ ಪೊಲೀಸ್ ಠಾಣೆ ಮಂಜೂರು ಮಾಡಬೇಕು ಎಂದು ಪತ್ರಿಕಾ ಪ್ರಕಟಣೆಯ ಮೂಲಕ ಆಗ್ರಹಿಸಲಾಗಿದೆ.
ಈ ಒತ್ತಾಯಕ್ಕೆ ಆರ್.ಎಲ್. ಮೇಳೆನ್ನವರ, ಮಹಾದೇವ ಚಲವಾದಿ, ಗುರುಮೂರ್ತಿ ಚಲವಾದಿ, ಬೂದಪ್ಪ ಹುಣಸೀಮರದ ಸೇರಿದಂತೆ ಸ್ಥಳೀಯರು ಬೆಂಬಲ ವ್ಯಕ್ತಪಡಿಸಿದ್ದಾರೆ.