Home Blog Page 4

ಕರ್ನಾಟಕ ವಿಧಾನ ಪರಿಷತ್ ಚುನಾವಣೆಗೆ ದಿನಾಂಕ ಘೋಷಣೆ: ಜೂನ್ 18ರಂದು 7 ಸ್ಥಾನಗಳಿಗೆ ಮತದಾನ

ಬೆಂಗಳೂರು: ರಾಜ್ಯಸಭಾ ಚುನಾವಣೆಯ ಘೋಷಣೆಯ ಬೆನ್ನಲ್ಲೇ ಕರ್ನಾಟಕ ವಿಧಾನಪರಿಷತ್ ಚುನಾವಣೆಯ ವೇಳಾಪಟ್ಟಿಯನ್ನೂ ಪ್ರಕಟಿಸಲಾಗಿದೆ. ವಿಧಾನಪರಿಷತ್ತಿನ 7 ಸ್ಥಾನಗಳಿಗೆ ಜೂನ್ 18ರಂದು ಚುನಾವಣೆ ನಡೆಯಲಿದ್ದು, ರಾಜಕೀಯ ಪಕ್ಷಗಳಲ್ಲಿ ಚಟುವಟಿಕೆ ಗರಿಗೆದರಿದೆ.

ಜೂನ್ 26ರಂದು ಅವಧಿ ಪೂರ್ಣಗೊಳ್ಳಲಿರುವ ಸದಸ್ಯರ ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಕಾಂಗ್ರೆಸ್‌ನ 3, ಬಿಜೆಪಿಯ 3 ಹಾಗೂ ಜೆಡಿಎಸ್‌ನ 1 ಸದಸ್ಯರ ಅವಧಿ ಮುಕ್ತಾಯವಾಗಲಿದೆ.

ಚುನಾವಣೆ ದಿನಾಂಕ ಪ್ರಕಟವಾಗುತ್ತಿದ್ದಂತೆಯೇ ವಿವಿಧ ಪಕ್ಷಗಳ ಆಕಾಂಕ್ಷಿಗಳು ಟಿಕೆಟ್‌ಗಾಗಿ ಲಾಬಿ ಆರಂಭಿಸಿದ್ದು, ರಾಜಕೀಯ ವಲಯದಲ್ಲಿ ಚಟುವಟಿಕೆ ಹೆಚ್ಚಾಗಿದೆ.

ವಿಧಾನಪರಿಷತ್ ಚುನಾವಣೆಯ ವೇಳಾಪಟ್ಟಿ ಹೀಗಿದೆ:

  • ಚುನಾವಣೆ ಅಧಿಸೂಚನೆ ಪ್ರಕಟ: ಜೂನ್ 1
  • ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ: ಜೂನ್ 8
  • ನಾಮಪತ್ರ ಪರಿಶೀಲನೆ: ಜೂನ್ 9
  • ನಾಮಪತ್ರ ಹಿಂಪಡೆಯಲು ಕೊನೆಯ ದಿನ: ಜೂನ್ 11
  • ಮತದಾನ: ಜೂನ್ 18
  • ಫಲಿತಾಂಶ ಪ್ರಕಟ: ಜೂನ್ 18

ಈ ಬಾರಿ ಅವಧಿ ಮುಕ್ತಾಯಗೊಳ್ಳಲಿರುವ ಸದಸ್ಯರಲ್ಲಿ ಬಿ.ಕೆ. ಹರಿಪ್ರಸಾದ್, ನಾಸೀರ್ ಅಹ್ಮದ್, ತಿಪ್ಪಣ್ಣ, ಪ್ರತಾಪ್ ಸಿಂಹ ನಾಯಕ್, ಎನ್. ನಾಗರಾಜು (ಎಂಟಿಬಿ), ಸುನಿಲ್ ವಲ್ಯಾಪುರ ಹಾಗೂ ಗೋವಿಂದರಾಜು ಸೇರಿದ್ದಾರೆ.

ವಿಧಾನಸಭೆಯ ಹಾಲಿ ಸಂಖ್ಯಾಬಲವನ್ನು ಪರಿಗಣಿಸಿದರೆ, ತೆರವಾಗಲಿರುವ 7 ಸ್ಥಾನಗಳ ಪೈಕಿ ಕಾಂಗ್ರೆಸ್‌ಗೆ 5 ಸ್ಥಾನಗಳು ಹಾಗೂ ಬಿಜೆಪಿಗೆ 2 ಸ್ಥಾನಗಳು ಸಿಗುವ ಸಾಧ್ಯತೆ ಇದೆ ಎಂದು ರಾಜಕೀಯ ವಲಯದಲ್ಲಿ ಲೆಕ್ಕಾಚಾರ ನಡೆಯುತ್ತಿದೆ.

ಈ ಲೆಕ್ಕಾಚಾರ ಸತ್ಯವಾದರೆ ಕಾಂಗ್ರೆಸ್‌ಗೆ ಪರಿಷತ್ತಿನಲ್ಲಿ 2 ಸ್ಥಾನಗಳ ಹೆಚ್ಚಳವಾಗಲಿದ್ದು, ಬಿಜೆಪಿ ಹಾಗೂ ಜೆಡಿಎಸ್ ತಲಾ ಒಂದು ಸ್ಥಾನ ಕಳೆದುಕೊಳ್ಳುವ ಸಾಧ್ಯತೆ ಇದೆ.

ಗಣಿ ಇಲಾಖೆ ಅಂಧಾ ದರ್ಬಾರ್‌ಗೆ ಸಚಿವ HK ಪಾಟೀಲ ಬ್ರೇಕ್.! ಮರಳು ಟೆಂಡರ್ ಅಕ್ರಮ ಆರೋಪಕ್ಕೆ ಖಡಕ್ ಎಚ್ಚರಿಕೆ

ಗದಗ: ಗದಗ ಜಿಲ್ಲೆಯಲ್ಲಿ ಮರಳು ಗಣಿಗಾರಿಕೆ ಟೆಂಡರ್ ಪ್ರಕ್ರಿಯೆ ಭಾರೀ ವಿವಾದದ ಕೇಂದ್ರಬಿಂದುವಾಗಿ ಪರಿಣಮಿಸಿದ್ದು, ಗಣಿ ಇಲಾಖೆ ವಿರುದ್ಧ ಗೋಲ್ಮಾಲ್ ಹಾಗೂ ಭ್ರಷ್ಟಾಚಾರದ ಗಂಭೀರ ಆರೋಪಗಳು ಕೇಳಿ ಬಂದಿವೆ. ಮುಂಡರಗಿ ಹಾಗೂ ಶಿರಹಟ್ಟಿ ತಾಲೂಕು ವ್ಯಾಪ್ತಿಯ ತುಂಗಭದ್ರಾ ನದಿಯ ಮರಳು ಟೆಂಡರ್‌ನಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಗುತ್ತಿಗೆದಾರರು ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶ ಹೊರಹಾಕಿದರು.

ತಮಗೆ ಬೇಕಾದ ಟೆಂಡರ್ ದಾರರನ್ನು ಆಯ್ಕೆ ಮಾಡಿಕೊಂಡು, ಬೇಡವಾದವರ ಅರ್ಜಿಗಳನ್ನು ಯಾವುದೇ ಸ್ಪಷ್ಟ ಕಾರಣ ನೀಡದೇ ತಿರಸ್ಕರಿಸಲಾಗಿದೆ ಎಂದು ಆರೋಪಿಸಿರುವ ಟೆಂಡರ್ ದಾರರು, “ರಾತ್ರೋರಾತ್ರಿ ಧಂಧೆಕೋರರ ಜೊತೆ ಸೇರಿ ಟೆಂಡರ್ ಫೈನಲ್ ಮಾಡಲಾಗಿದೆ” ಎಂದು ಗಣಿ ಇಲಾಖೆ ವಿರುದ್ಧ ಗಂಭೀರ ಆರೋಪ ಹೊರಿಸಿದ್ದಾರೆ.

ಕಾನೂನು ಸಚಿವರ ತವರಲ್ಲೇ ಗಣಿ ಇಲಾಖೆ ಅಧಿಕಾರಿಗಳ “ಅಂಧಾ ದರ್ಬಾರ್” ನಡೆಯುತ್ತಿದೆ ಎಂದು ಕಿಡಿಕಾರಿದ ಗುತ್ತಿಗೆದಾರರು, ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಹಾಗೂ ಗಣಿ ಇಲಾಖೆ ಅಧಿಕಾರಿ ನಾಗಭೂಷಣ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಟೆಂಡರ್ ಪ್ರಕ್ರಿಯೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ಅನ್ಯಾಯಕ್ಕೊಳಗಾದ ಟೆಂಡರ್ ದಾರರು ಕಾನೂನು ಸಚಿವ ಎಚ್‌.ಕೆ. ಪಾಟೀಲ್ ಅವರನ್ನು ಭೇಟಿ ಮಾಡಿ ದೂರು ಸಲ್ಲಿಸಿದರು. ಈ ವೇಳೆ ಸಚಿವರು ಟೆಂಡರ್ ಪ್ರಕ್ರಿಯೆ ಸಂಪೂರ್ಣ ಪಾರದರ್ಶಕವಾಗಿರಬೇಕು ಎಂದು ಸೂಚನೆ ನೀಡಿ, ಮರು ಟೆಂಡರ್ ಕರೆಯುವಂತೆ ಜಿಲ್ಲಾಧಿಕಾರಿಗಳಿಗೆ ಖಡಕ್ ತಾಕೀತು ಮಾಡಿದರೆಂದು ತಿಳಿದು ಬಂದಿದೆ.

ಭ್ರಷ್ಟಾಚಾರದ ಆರೋಪ ಗಂಭೀರವಾಗಿರುವ ಹಿನ್ನೆಲೆಯಲ್ಲಿ ಗಣಿ ಇಲಾಖೆ ಅಧಿಕಾರಿ ನಾಗಭೂಷಣ ಅವರಿಗೆ ಸಚಿವರು ಸಿಟ್ಟಿನಿಂದಲೇ “ಇದು ಲಾಸ್ಟ್ ವಾರ್ನಿಂಗ್” ಎಂದು ಎಚ್ಚರಿಕೆ ನೀಡಿದರೆಂಬ ಮಾಹಿತಿ ಲಭ್ಯವಾಗಿದೆ.

ಜಿಲ್ಲಾಡಳಿತ ಭವನಕ್ಕೆ ದೌಡಾಯಿಸಿದ ಟೆಂಡರ್ ದಾರರು, ಟೆಂಡರ್ ಪ್ರಕ್ರಿಯೆಯಲ್ಲಿ ನಡೆದ ಅನ್ಯಾಯದ ಬಗ್ಗೆ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಅವರನ್ನು ಪ್ರಶ್ನಿಸಿದರು. ಈ ವೇಳೆ ಡಿಸಿ ಹಾಗೂ ಗುತ್ತಿಗೆದಾರರ ನಡುವೆ ಕೆಲ ಹೊತ್ತು ಮಾತಿನ ಚಕಮಕಿ ನಡೆಯಿತು.

ಪರಿಸ್ಥಿತಿ ನಿಯಂತ್ರಣ ತಪ್ಪುವ ಹಂತಕ್ಕೆ ತಲುಪುತ್ತಿದ್ದಂತೆ ಮಧ್ಯ ಪ್ರವೇಶ ಮಾಡಿದ ಎಸ್ಪಿ ರೋಹನ್ ಜಗದೀಶ್ ಪರಿಸ್ಥಿತಿಯನ್ನು ತಿಳಿಗೊಳಿಸಿದರು.

“ಸಚಿವ ಎಚ್‌.ಕೆ. ಪಾಟೀಲ್ ಮರು ಟೆಂಡರ್ ಮಾಡುವಂತೆ ಸೂಚಿಸಿದ್ದಾರೆ. ಆದರೆ ಜಿಲ್ಲಾಧಿಕಾರಿಗಳು ‘ಮಾಡಲ್ಲ’ ಎಂದು ಹೇಳುತ್ತಿದ್ದಾರೆ. ಸಚಿವರ ಮಾತಿಗೂ ಗೌರವ ಇಲ್ಲದಂತಾಗಿದೆ” ಎಂದು ಟೆಂಡರ್ ದಾರರು ಆಕ್ರೋಶ ವ್ಯಕ್ತಪಡಿಸಿದರು. ಗಣಿ ಇಲಾಖೆ ಹಾಗೂ ಜಿಲ್ಲಾಡಳಿತದ ವಿರುದ್ಧ ಕಾನೂನು ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿರುವ ಟೆಂಡರ್ ದಾರರು, ಟೆಂಡರ್ ಪ್ರಕ್ರಿಯೆಯು ಸಂಪೂರ್ಣ ತನಿಖೆಗೆ ಒತ್ತಾಯಿಸಿದ್ದಾರೆ.

ಹೈವೋಲ್ಟೇಜ್ ಸಭೆಗೂ ಮುನ್ನ ಎಐಸಿಸಿ ಕಚೇರಿಯಲ್ಲಿ CM-DCM ಮುಖಾಮುಖಿ!

ನವದೆಹಲಿ: ಕರ್ನಾಟಕ ರಾಜಕೀಯದಲ್ಲಿ ಭಾರೀ ಕುತೂಹಲ ಹುಟ್ಟಿಸಿರುವ ಕಾಂಗ್ರೆಸ್ ನಾಯಕತ್ವ ವಿಚಾರ ಇದೀಗ ನಿರ್ಣಾಯಕ ಹಂತ ತಲುಪಿದ್ದು, ರಾಷ್ಟ್ರ ರಾಜಧಾನಿ ದೆಹಲಿ ಇಂದು ಮಹತ್ವದ ರಾಜಕೀಯ ಬೆಳವಣಿಗೆಗಳಿಗೆ ಸಾಕ್ಷಿಯಾಗಿದೆ.

ಮುಖ್ಯಮಂತ್ರಿ ಕುರ್ಚಿಗೆ ಸಂಬಂಧಿಸಿದ ಅಂತಿಮ ಹಂತದ ಚರ್ಚೆಗಳು ಕಾಂಗ್ರೆಸ್ ಹೈಕಮಾಂಡ್ ಅಂಗಳದಲ್ಲಿ ಆರಂಭವಾಗಿದ್ದು, ರಾಜ್ಯದ ರಾಜಕೀಯ ವಲಯದ ಸಂಪೂರ್ಣ ಗಮನ ದೆಹಲಿಯತ್ತ ನೆಟ್ಟಿದೆ.

ಹೈವೋಲ್ಟೇಜ್ ಸಭೆಗೆ ಮುನ್ನ ಎಐಸಿಸಿ ಕಚೇರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪರಸ್ಪರ ಮುಖಾಮುಖಿಯಾಗಿ ಕೆಲಕಾಲ ಮಾತುಕತೆ ನಡೆಸಿದ್ದಾರೆ. ರಾಹುಲ್ ಗಾಂಧಿ ಅವರೊಂದಿಗಿನ ಮಹತ್ವದ ಭೇಟಿಗೂ ಮುನ್ನ ಇಬ್ಬರು ನಾಯಕರು ನಡೆಸಿದ ಈ ಚರ್ಚೆ ರಾಜಕೀಯ ವಲಯದಲ್ಲಿ ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ.

ಇಂದು ಹೈಕಮಾಂಡ್ ನಾಯಕರ ಸಮ್ಮುಖದಲ್ಲಿ ಮೂರು ಹಂತದ ಮಹತ್ವದ ಸಭೆಗಳು ನಡೆಯಲಿವೆ ಎಂದು ತಿಳಿದುಬಂದಿದೆ. ಮೊದಲಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಕಾಂಗ್ರೆಸ್ ಹೈಕಮಾಂಡ್ ನಾಯಕರು ಪ್ರತ್ಯೇಕವಾಗಿ ಸಭೆ ನಡೆಸಿ ಅಭಿಪ್ರಾಯ ಆಲಿಸಲಿದ್ದಾರೆ.

ಅದರ ಬಳಿಕ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಒನ್-ಟು-ಒನ್ ಸಭೆಗೆ ಆಹ್ವಾನಿಸಿ ನಾಯಕತ್ವ, ಸಂಪುಟ ಪುನರ್‌ರಚನೆ ಹಾಗೂ ಮುಂದಿನ ರಾಜಕೀಯ ಬೆಳವಣಿಗೆಗಳ ಕುರಿತು ಚರ್ಚೆ ನಡೆಸುವ ಸಾಧ್ಯತೆ ಇದೆ.

ಮೊದಲ ಎರಡು ಹಂತದ ಸಭೆಗಳಲ್ಲಿ ಸಿಎಂ ಹಾಗೂ ಡಿಸಿಎಂ ವ್ಯಕ್ತಪಡಿಸುವ ಅಭಿಪ್ರಾಯಗಳ ಆಧಾರದ ಮೇಲೆ ಮೂರನೇ ಹಂತದ ಸಭೆ ನಡೆಯಲಿದ್ದು, ಅಗತ್ಯವಿದ್ದರೆ ಇಬ್ಬರು ನಾಯಕರನ್ನೂ ಒಟ್ಟಿಗೆ ಕೂರಿಸಿ ಹೈಕಮಾಂಡ್ ಅಂತಿಮ ಸಂಧಾನ ಸೂತ್ರದ ಬಗ್ಗೆ ಚರ್ಚೆ ನಡೆಸಲಿದೆ ಎಂದು ಮೂಲಗಳು ತಿಳಿಸಿವೆ.

ವಿಶೇಷವೆಂದರೆ, ಬೆಳಿಗ್ಗೆ ಇಬ್ಬರೂ ನಾಯಕರು ಕರ್ನಾಟಕ ಭವನದಲ್ಲಿದ್ದರೂ ಪರಸ್ಪರ ಭೇಟಿಯಾಗಿರಲಿಲ್ಲ. ಆದರೆ ಬಳಿಕ ಎಐಸಿಸಿ ಕಚೇರಿಯಲ್ಲಿ ಮುಖಾಮುಖಿಯಾಗಿ ಮಾತುಕತೆ ನಡೆಸಿರುವುದು ಕಾಂಗ್ರೆಸ್ ಒಳರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.

ನಕಲಿ ಬಿಲ್‌, ಕೋಟಿ ಕೋಟಿ ಲೂಟಿ…ಕೊನೆಗೂ ಬಯಲಾಯ್ತು ಪಶು ವಿವಿ ಬಹುಕೋಟಿ ಹಗರಣ – ಮಾಜಿ ಉಪಕುಲಪತಿ ಸೇರಿ ಆರು ಮಂದಿ ಬಂಧನ

0

ಬೀದರ್: ಹಲವು ವರ್ಷಗಳಿಂದ ರಾಜ್ಯ ರಾಜಕಾರಣ ಹಾಗೂ ಶಿಕ್ಷಣ ವಲಯದಲ್ಲಿ ಭಾರೀ ಸಂಚಲನ ಸೃಷ್ಟಿಸಿದ್ದ ಬೀದರ್ ಪಶು ವೈದ್ಯಕೀಯ ವಿಶ್ವವಿದ್ಯಾಲಯದ 45 ಕೋಟಿ ರೂಪಾಯಿ ಹಗರಣದಲ್ಲಿ ಲೋಕಾಯುಕ್ತ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಬಹುಕೋಟಿ ಅವ್ಯವಹಾರ ಪ್ರಕರಣದಲ್ಲಿ ಮಾಜಿ ಉಪಕುಲಪತಿ ಸೇರಿ ಆರು ಮಂದಿಯನ್ನು ಬಂಧಿಸಲಾಗಿದೆ.

2017-18ರ ಅವಧಿಯಲ್ಲಿ ವಿಶ್ವವಿದ್ಯಾಲಯದ ಖರೀದಿ ಪ್ರಕ್ರಿಯೆಯಲ್ಲಿ ನಕಲಿ ಬಿಲ್‌ಗಳನ್ನು ಸೃಷ್ಟಿಸಿ ಸಾರ್ವಜನಿಕ ಹಣವನ್ನು ಲೂಟಿ ಮಾಡಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿತ್ತು. ತನಿಖೆಯಲ್ಲಿ ಆರೋಪಿಗಳು ಸೇರಿ ಸುಮಾರು 45 ಕೋಟಿ ರೂಪಾಯಿಗೂ ಹೆಚ್ಚು ಮೊತ್ತದ ಅವ್ಯವಹಾರ ನಡೆಸಿರುವುದು ಬಹಿರಂಗವಾಗಿದೆ.

ಮಾಜಿ ಉಪಕುಲಪತಿ ಪ್ರೊ. ಹೆಚ್.ಡಿ. ನಾರಾಯಣಸ್ವಾಮಿ, ಹಣಕಾಸು ನಿಯಂತ್ರಣಾಧಿಕಾರಿ ಕೆ.ಎಲ್. ಸುರೇಶ್ ಸೇರಿದಂತೆ ಮೃತ್ಯುಂಜಯ ಹಿರೇಮಠ, ಬೊಪಣ್ಣ, ಮಂಜುನಾಥ ಮತ್ತು ರಾಮಗೊಂಡರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.

ಈ ಪ್ರಕರಣದ ತನಿಖೆ 2021ರಿಂದಲೇ ಆರಂಭವಾಗಿತ್ತು. ಬಳಿಕ 2025ರ ಸೆಪ್ಟೆಂಬರ್‌ನಲ್ಲಿ ರಾಜ್ಯದ 25ಕ್ಕೂ ಹೆಚ್ಚು ಕಡೆ ದಾಳಿ ನಡೆಸಿ ಮಹತ್ವದ ದಾಖಲೆಗಳು ಮತ್ತು ಹಣಕಾಸು ವ್ಯವಹಾರಗಳ ವಿವರಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದರು.

ಸದ್ಯ ಬಂಧಿತರನ್ನು ವಿಚಾರಣೆಗೆ ಒಳಪಡಿಸಿರುವ ಲೋಕಾಯುಕ್ತ ಪೊಲೀಸರು, ಹಗರಣದಲ್ಲಿ ಇನ್ನೂ ಹಲವು ಅಧಿಕಾರಿಗಳು ಮತ್ತು ಖಾಸಗಿ ಕಂಪನಿಗಳ ಪಾತ್ರವಿದೆಯೇ ಎಂಬ ದಿಕ್ಕಿನಲ್ಲಿ ತನಿಖೆ ಮುಂದುವರಿಸಿದ್ದಾರೆ.

ಕಾಶಿಯಾತ್ರೆಗೆ ಹೋಗಿದ್ದವರ ಮನೆಯಲ್ಲಿ ಕಳ್ಳತನ ಮಾಡಿದ್ದ ಮೂವರು ಆರೋಪಿಗಳು ಅರೆಸ್ಟ್.!

ಬೆಂಗಳೂರು: ಕಾಶಿಯಾತ್ರೆಗೆ ಹೋಗಿದ್ದವರ ಮನೆಯಲ್ಲಿ ಕಳ್ಳತನ ಮಾಡಿದ್ದ ಮೂವರನ್ನು ಬ್ಯಾಡರಹಳ್ಳಿ ಪೊಲೀಸರು ಅರೆಸ್ಟ್‌ ಮಾಡಿದ್ದಾರೆ.

ಗಂದಾಧರ ,ಬಸವ ,ಕಿರಣ್ ಬಂಧಿತ ಆರೋಪಿಗಳಾಗಿದ್ದು, ಬ್ಯಾಡರಹಳ್ಳಿ ಸಿಂಡಿಕೇಟ್ ಲೇಔಟ್ ನಲ್ಲಿ ಮಾರ್ಚ್ 26 ರಂದು ಕಳ್ಳತನ ನಡೆದಿತ್ತು. ಮನೆಯವರು ತೀರ್ಥಯಾತ್ರೆಗೆ ತೆರಳಿದ್ದ ವೇಳೆ ಮನೆ ಖಾಲಿ ಇರುವುದನ್ನು ಗಮನಿಸಿದ್ದ ಖದೀಮರು, ಕಳ್ಳತನಕ್ಕೆ ಸಂಚು ರೂಪಿಸಿದ್ದರು.

ಮನೆ ಮುಂದೆ ಬಿದ್ದಿದ್ದ ನ್ಯೂಸ್ ಪೇಪರ್ ಹಾಗೂ ಮನೆಗೆ ಹಾಕಿದ್ದ ಬೀಗವನ್ನು ಗಮನಿಸಿ, ಮನೆಯಲ್ಲಿ ಯಾರೂ ಇಲ್ಲ ಎಂಬುದನ್ನು ಖಚಿತಪಡಿಸಿಕೊಂಡು ಕೃತ್ಯ ಎಸಗುತ್ತಿದ್ದರು ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಕಳ್ಳರು ಮನೆಯೊಳಗೆ ನುಗ್ಗಿ ಲಾಕರ್ ಒಡೆಯಲು ಪ್ರಯತ್ನಿಸಿದ್ದರು. ಆದರೆ ಲಾಕರ್ ತೆರೆಯದ ಹಿನ್ನೆಲೆ ಅದನ್ನು ಹೊರಗೆ ತೆಗೆದುಕೊಂಡು ಹೋಗಿ ಹೊಡೆದು ಒಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಬಂಧಿತರಿಂದ ಸುಮಾರು 500 ಗ್ರಾಂ ಚಿನ್ನಾಭರಣ, 70 ಲಕ್ಷ ರೂಪಾಯಿ ಮೌಲ್ಯದ ಬಂಗಾರ, 1 ಲಕ್ಷ 43 ಸಾವಿರ ರೂಪಾಯಿ ನಗದು ಹಾಗೂ 750 ಗ್ರಾಂ ಬೆಳ್ಳಿ ವಶಪಡಿಸಿಕೊಳ್ಳಲಾಗಿದೆ.

ಕುರಿತು ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಮುಂದುವರಿಸಿದ್ದಾರೆ.

ಡಿಕೆಶಿ ಗುಂಪು ರಾಜಕೀಯ ಮಾಡುವವರಲ್ಲ; ಹೈಕಮಾಂಡ್ ತೀರ್ಮಾನವೇ ಅಂತಿಮ – ಶಾಸಕ ಬಾಲಕೃಷ್ಣ

ನವದೆಹಲಿ: ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಗುಂಪು ಕಟ್ಟಿಕೊಂಡು ರಾಜಕೀಯ ಮಾಡುವ ವ್ಯಕ್ತಿಯಲ್ಲ. ಅವರು ಹೈಕಮಾಂಡ್‌ಗೆ ಸಂಪೂರ್ಣ ನಿಷ್ಠೆಯಿಂದಿರುವ ನಾಯಕ ಎಂದು ಮಾಗಡಿ ಶಾಸಕ ಎಚ್.ಸಿ. ಬಾಲಕೃಷ್ಣ ಹೇಳಿದ್ದಾರೆ.

ದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಹೈಕಮಾಂಡ್ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರನ್ನು ಚರ್ಚೆಗೆ ಕರೆದಿರುವ ಹಿನ್ನೆಲೆಯಲ್ಲಿ ಮಹತ್ವದ ತೀರ್ಮಾನ ಹೊರಬರುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.

ಪಕ್ಷದೊಳಗಿನ ಗೊಂದಲಗಳಿಗೆ ಶೀಘ್ರ ಅಂತ್ಯವಾಗಬೇಕು. ಎಲ್ಲವೂ ಸ್ಪಷ್ಟವಾಗಬೇಕು. ಈ ವಿಚಾರಕ್ಕೆ ಹೈಕಮಾಂಡ್ ತೆರೆ ಎಳೆಯಬೇಕು ಎಂದು ಮನವಿ ಮಾಡಿದರು.

ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಕೆಲ ಆಪ್ತ ಸಚಿವರು ದೆಹಲಿಗೆ ತೆರಳಿರುವ ಕುರಿತು ಪ್ರತಿಕ್ರಿಯಿಸಿದ ಬಾಲಕೃಷ್ಣ, “ಡಿ.ಕೆ. ಶಿವಕುಮಾರ್ ಗುಂಪು ಕಟ್ಟಿಕೊಂಡು ರಾಜಕೀಯ ಮಾಡುವವರಲ್ಲ. ಅವರು ಯಾವಾಗಲೂ ಹೈಕಮಾಂಡ್‌ಗೆ ಬದ್ಧರಾಗಿರುವವರು” ಎಂದು ಹೇಳಿದರು.

ಇನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಯಾರನ್ನೂ ವಿಶೇಷವಾಗಿ ಕರೆದುಕೊಂಡು ಹೋಗಿಲ್ಲ. ರಾಜಕೀಯ ಕುತೂಹಲದಿಂದ ಕೆಲ ಸಚಿವರು ಸ್ವಯಂಪ್ರೇರಿತವಾಗಿ ಹೋಗಿರಬಹುದು. ಈ ಹಿಂದೆ ಸಹ ಸಿಎಂ ದೆಹಲಿಗೆ ತೆರಳಿದಾಗ ಸಚಿವರು ಜೊತೆಯಾಗಿರುವ ಉದಾಹರಣೆಗಳಿವೆ. ಇದು ಹೊಸ ಬೆಳವಣಿಗೆ ಅಲ್ಲ ಎಂದು ಸ್ಪಷ್ಟಪಡಿಸಿದರು.

“ಪಕ್ಷದೊಳಗಿನ ಗೊಂದಲಗಳು ನಿವಾರಣೆಯಾದರೆ 2028ರ ವಿಧಾನಸಭಾ ಚುನಾವಣೆಗೆ ಅನುಕೂಲವಾಗಲಿದೆ. ನಮಗೆ ಮುಂದಿನ ಚುನಾವಣೆ ಮುಖ್ಯ. ಆದರೆ ನಾವು ಮಾತನಾಡಿದ ಕೂಡಲೇ ಏನೂ ಆಗುವುದಿಲ್ಲ. ಅನಗತ್ಯ ಗೊಂದಲ ಸೃಷ್ಟಿಯಾಗಬಾರದು. ಹೈಕಮಾಂಡ್‌ಗೆ ಎಲ್ಲ ವಿಚಾರಗಳೂ ಗೊತ್ತಿವೆ. ಅಂತಿಮವಾಗಿ ಅವರ ತೀರ್ಮಾನವೇ ಪಕ್ಷಕ್ಕೆ ಮಾನ್ಯ” ಎಂದು ಬಾಲಕೃಷ್ಣ ಹೇಳಿದರು.

ಗದಗ-ಬೆಟಗೇರಿಯಲ್ಲಿ ಓಪನ್ ಡ್ರಿಂಕ್ ದಂಧೆ ಬಯಲು! ವೈನ್ ಶಾಪ್ ಹೆಸರಿನಲ್ಲಿ ಓಪನ್ ಬಾರ್ ದಂಧೆ- ಪೊಲೀಸರ ದಾಳಿ

ಗದಗ: ನಗರದಲ್ಲಿ ವೈನ್ ಶಾಪ್‌ಗಳ ಹೆಸರಿನಲ್ಲಿ ಅಕ್ರಮ ಮದ್ಯ ದಂಧೆ ನಡೆಯುತ್ತಿರುವುದು ಬೆಟಗೇರಿ ಪೊಲೀಸರ ಎರಡು ಪ್ರತ್ಯೇಕ ದಾಳಿಗಳಲ್ಲಿ ಬಯಲಾಗಿದೆ. ಅಂಗಡಿಯೊಳಗೇ ಗ್ರಾಹಕರಿಗೆ ಕುಳಿತು ಮದ್ಯ ಸೇವನೆಗೆ ಅವಕಾಶ ನೀಡುವುದು, ಸಾರ್ವಜನಿಕ ರಸ್ತೆಯಲ್ಲೇ ವಿಸ್ಕಿ ಮಾರಾಟಕ್ಕೆ ಸಿದ್ಧತೆ ನಡೆಸುವುದು ಸೇರಿದಂತೆ ಲೈಸೆನ್ಸ್ ಉಲ್ಲಂಘನೆ ಪ್ರಕರಣಗಳು ಬೆಳಕಿಗೆ ಬಂದಿವೆ.

ನಗರದ ವೆಂಕಟೇಶ ಟಾಕೀಸ್ ರಸ್ತೆಯಲ್ಲಿರುವ ರಾಜೇಶ್ ವೈನ್ ಶಾಪ್ ಮೇಲೆ ಬೆಟಗೇರಿ ಬಡಾವಣೆ ಪೊಲೀಸರು ಖಚಿತ ಮಾಹಿತಿ ಮೇರೆಗೆ ನಡೆದ ಕಾರ್ಯಾಚರಣೆಯಲ್ಲಿ ಅಂಗಡಿಯೊಳಗೇ ಗ್ರಾಹಕರು ಮದ್ಯ ಸೇವಿಸುತ್ತಿರುವುದು ಪತ್ತೆಯಾಯಿತು.

ಸ್ಥಳದಲ್ಲೇ ಮದ್ಯದ ಟೆಟ್ರಾ ಪ್ಯಾಕೆಟ್‌ಗಳು, ಬಳಸಿದ ಗ್ಲಾಸ್‌ಗಳು, ಪ್ಲಾಸ್ಟಿಕ್ ಟೇಬಲ್ ಹಾಗೂ ಸ್ಟೂಲ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅಂಗಡಿಯ ಮ್ಯಾನೇಜರ್ ಸುಧಾಕರ ವಿರುಪಣ್ಣ ಈಳಿಗೇರ ಸಾರ್ವಜನಿಕರಿಗೆ ಅಕ್ರಮವಾಗಿ ಮದ್ಯ ಸೇವನೆಗೆ ಅವಕಾಶ ನೀಡುತ್ತಿದ್ದರೆ, ಅಂಗಡಿ ಮಾಲೀಕ ರಾಜೇಶ್ ಮೋಹನ್ ಹುಯಿಲಗೋಳ ಲೈಸೆನ್ಸ್ ನಿಯಮ ಉಲ್ಲಂಘಿಸಿದ್ದಾನೆ ಎಂದು ಆರೋಪಿಸಲಾಗಿದೆ.

ಇನ್ನೊಂದು ಪ್ರಕರಣದಲ್ಲಿ, ಬೆಟಗೇರಿ ಮಂಜುನಾಥ ನಗರ ಕಣವಿ ಪ್ಲಾಟ್ ಪ್ರದೇಶದಲ್ಲಿ ಮನೆ ಮುಂದಿನ ರಸ್ತೆಯಲ್ಲೇ ಮದ್ಯ ಮಾರಾಟಕ್ಕೆ ಸಿದ್ಧತೆ ನಡೆಸುತ್ತಿದ್ದ ಆರೋಪದಡಿ ಬೆಟಗೇರಿ ಪೊಲೀಸರು ದಾಳಿ ನಡೆಸಿದರು.

ಸಿಪಿಐ ಡಿ.ಬಿ. ಶಿಂಧೆ ನೇತೃತ್ವದ ತಂಡ ನಡೆಸಿದ ದಾಳಿಯಲ್ಲಿ, ಶ್ರೀಕಾಂತ್ ಯಲ್ಲೋಸಾ ಪವಾರ್ (48) ಎಂಬಾತನಿಂದ 90 ಎಂ.ಎಲ್ ಗಾತ್ರದ ಡಿ.ಕೆ. ಡಬಲ್ ಕಿಕ್ ನೀಟ್ ವಿಸ್ಕಿ ಕಂಪನಿಯ 31 ಟೆಟ್ರಾ ಪ್ಯಾಕೆಟ್‌ಗಳನ್ನು ಜಪ್ತಿ ಮಾಡಲಾಗಿದೆ. ಜೊತೆಗೆ ಖಾಲಿ ಟೆಟ್ರಾ ಪ್ಯಾಕೆಟ್ ಹಾಗೂ ಎರಡು ಪ್ಲಾಸ್ಟಿಕ್ ಗ್ಲಾಸ್‌ಗಳನ್ನೂ ವಶಕ್ಕೆ ಪಡೆಯಲಾಗಿದೆ.

ಆರೋಪಿ ಅಮೃತ ವೈನ್ ಶಾಪ್‌ನಿಂದ ಮದ್ಯ ಖರೀದಿಸಿ ಸಾರ್ವಜನಿಕರಿಗೆ ಮಾರಾಟ ಮಾಡಲು ವ್ಯವಸ್ಥೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಸಾರ್ವಜನಿಕ ರಸ್ತೆಯಲ್ಲೇ ಮದ್ಯದ ಅಡ್ಡೆ ತೆರೆದು ಜನರ ಸಂಚಾರಕ್ಕೆ ತೊಂದರೆ ಉಂಟು ಮಾಡುತ್ತಿದ್ದ ಆರೋಪವೂ ಕೇಳಿ ಬಂದಿದೆ. ಈ ಕುರಿತು ಬೆಟಗೇರಿ ಬಡಾವಣೆ ಪೊಲೀಸ್ ಠಾಣೆ
ಕರ್ನಾಟಕ ಅಬಕಾರಿ ಕಾಯ್ದೆ-1965ರ ಕಲಂ 32(3), 36 ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನೊಂದು ಬೆಟಗೇರಿ ಪೊಲೀಸ್ ಠಾಣೆಯಲ್ಲಿ ಕ್ರೈಂ ನಂ.45/2026
ಕರ್ನಾಟಕ ಅಬಕಾರಿ ಕಾಯ್ದೆ-1965ರ ಕಲಂ 32(3) ಅಡಿಯಲ್ಲಿ ದಾಖಲಾಗಿದೆ.

ಒಟ್ಟಿನಲ್ಲಿ ಅವಳಿ ನಗರದಲ್ಲಿ ವೈನ್ ಶಾಪ್‌ಗಳ ಹೆಸರಿನಲ್ಲಿ ಮಿನಿ ಬಾರ್‌ಗಳು ಹಾಗೂ ಅಕ್ರಮ ಮದ್ಯ ಮಾರಾಟ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಇಂತಹ ದಂಧೆಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮಕ್ಕೆ ಆಗ್ರಹಿಸಿದ್ದಾರೆ.

‘ನಮ್ಮ ನೆಲದಲ್ಲಿ ಡ್ಯಾಂ ಕಟ್ಟ್ತೀವಿ… ತಡೆಯೋ ಶಕ್ತಿ ಯಾರಿಗೂ ಇಲ್ಲ’: ಗಣಿಗ ರವಿಕುಮಾರ್

0

ಮಂಡ್ಯ: ಮೇಕೆದಾಟು ಯೋಜನೆ ವಿರುದ್ಧ ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಕಾನೂನು ಹೋರಾಟದ ಎಚ್ಚರಿಕೆ ನೀಡಿದ ಬೆನ್ನಲ್ಲೇ, ಕರ್ನಾಟಕ ಕಾಂಗ್ರೆಸ್ ಶಾಸಕ ಗಣಿಗ ರವಿಕುಮಾರ್ ತೀವ್ರ ಪ್ರತಿಕ್ರಿಯೆ ನೀಡಿದ್ದಾರೆ. “ಯಾರು ಏನೇ ಮಾಡಿದರೂ ಮೇಕೆದಾಟು ಡ್ಯಾಂ ನಿರ್ಮಾಣವನ್ನು ತಡೆಯಲು ಸಾಧ್ಯವಿಲ್ಲ” ಎಂದು ಅವರು ಸ್ಪಷ್ಟ ಸಂದೇಶ ರವಾನಿಸಿದ್ದಾರೆ.

ಮಂಡ್ಯದಲ್ಲಿ ಮಾತನಾಡಿದ ಅವರು, “ಮೇಕೆದಾಟು ಯೋಜನೆಯ ಡಿಪಿಆರ್ ಈಗಾಗಲೇ ಸಿದ್ಧವಾಗಿದೆ. ಸುಪ್ರೀಂಕೋರ್ಟ್ ಕೂಡ ಕಾವೇರಿ ಬೋರ್ಡ್ ಮೂಲಕ ವಿಷಯ ಬಗೆಹರಿಸಿಕೊಳ್ಳಿ ಎಂದು ಹೇಳಿದೆ. ಕಾನೂನು ಪ್ರಕ್ರಿಯೆ ನಮ್ಮ ಪರವಾಗಿಯೇ ಸಾಗುತ್ತಿದೆ” ಎಂದರು.

“ತಮಿಳುನಾಡಿಗೆ ನೀಡಬೇಕಾದ ನೀರನ್ನು ಕರ್ನಾಟಕ ಈಗಾಗಲೇ ನೀಡುತ್ತಿದೆ. ನಮ್ಮ ರಾಜ್ಯದ ಗಡಿಯಲ್ಲಿ ನಿರ್ಮಾಣವಾಗುವ ಡ್ಯಾಂ ಬಗ್ಗೆ ತಡೆಯೊಡ್ಡುವ ಹಕ್ಕು ಯಾರಿಗೂ ಇಲ್ಲ” ಎಂದು ಅವರು ತಿರುಗೇಟು ನೀಡಿದರು.

ಇದೇ ವೇಳೆ ಬಿಜೆಪಿ ವಿರುದ್ಧವೂ ವಾಗ್ದಾಳಿ ನಡೆಸಿದ ಅವರು, “ಕಳಸ-ಬಂಡೂರಿ ಯೋಜನೆಗೂ ಬಿಜೆಪಿ ಸರ್ಕಾರವೇ ಅಡ್ಡಿಯಾಗಿದೆ. ಗೋವಾದಲ್ಲೂ ಅವರ ಸರ್ಕಾರವೇ ಇದೆ. ಆದರೂ ಸಮಸ್ಯೆ ಬಗೆಹರಿಸಿಲ್ಲ” ಎಂದು ಆರೋಪಿಸಿದರು.

ಒಟ್ಟಾರೆಯಾಗಿ ಮೇಕೆದಾಟು ಯೋಜನೆ ಮತ್ತೆ ಕರ್ನಾಟಕ-ತಮಿಳುನಾಡು ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದ್ದು, ಎರಡೂ ರಾಜ್ಯಗಳ ನಾಯಕರ ನಡುವೆ ವಾಕ್ಸಮರ ತೀವ್ರಗೊಂಡಿದೆ.

‘ಆ ಕಣ್ಣುಗಳೇ ಸಾಕು…’: ಶಿವಣ್ಣನ ಸ್ಕ್ರೀನ್ ಪ್ರೆಸೆನ್ಸ್ ನೋಡಿ ಫಿದಾ ಆದ ಜಾನ್ಹವಿ ಕಪೂರ್!

‘ಪೆದ್ದಿ’ ಚಿತ್ರದ ಮೂಲಕ ಕನ್ನಡದ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಜೊತೆ ತೆರೆ ಹಂಚಿಕೊಂಡಿರುವ ಬಾಲಿವುಡ್ ನಟಿ ಜಾನ್ಹವಿ ಕಪೂರ್, ಶಿವಣ್ಣನ ನಟನಾ ಶೈಲಿ ಹಾಗೂ ಕಣ್ಣಿನ ಎಕ್ಸ್‌ಪ್ರೆಶನ್ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಬೆಂಗಳೂರುದಲ್ಲಿ ನಡೆದ ಚಿತ್ರದ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ಜಾನ್ಹವಿ, “ಶಿವರಾಜ್ ಕುಮಾರ್ ಸರ್ ಜೊತೆ ನನಗೆ ಒಂದು ಸೀನ್ ಮಾತ್ರ ಇತ್ತು. ಆದರೆ ಆ ಒಂದು ಸೀನ್ನಲ್ಲೇ ಅವರು ಎಷ್ಟು ಅದ್ಭುತ ನಟ ಅನ್ನೋದು ಗೊತ್ತಾಯ್ತು. ಅವರ ಕಣ್ಣುಗಳಲ್ಲೇ ಪವರ್ ಇದೆ. ಅವರು ಡೈಲಾಗ್ ಹೇಳೋದಕ್ಕಿಂತ ಕಣ್ಣಿನಿಂದಲೇ ಸೀನ್ ಹಿಡಿದುಕೊಳ್ಳುತ್ತಾರೆ” ಎಂದು ಹೇಳಿದ್ದಾರೆ.

ಇನ್ನೂ ಅವರ ಜೊತೆ ಹೆಚ್ಚು ನಟಿಸುವ ಅವಕಾಶ ಸಿಗಲಿಲ್ಲ ಎಂಬ ಬೇಸರವನ್ನೂ ವ್ಯಕ್ತಪಡಿಸಿದ ಜಾನ್ಹವಿ, “ಭವಿಷ್ಯದಲ್ಲಿ ಮತ್ತೆ ಅವರ ಜೊತೆ ಕೆಲಸ ಮಾಡುವ ಅವಕಾಶ ಸಿಗಲಿ” ಎಂದು ಆಶಿಸಿದರು.

ಕಾರ್ಯಕ್ರಮದಲ್ಲಿ ಜಾನ್ಹವಿ ಕನ್ನಡದಲ್ಲಿ ಮಾತನಾಡಲು ಪ್ರಯತ್ನಿಸಿದ್ದು ವಿಶೇಷವಾಗಿತ್ತು. ಅಭಿಮಾನಿಗಳ ಚಪ್ಪಾಳೆಗಳ ನಡುವೆ ಅವರು ಕನ್ನಡದಲ್ಲಿ ಮಾತು ಆರಂಭಿಸಿದ್ದು ಗಮನ ಸೆಳೆಯಿತು.

‘ಪೆದ್ದಿ’ ಸಿನಿಮಾದಲ್ಲಿ ರಾಮ್ ಚರಣ್ ನಾಯಕನಾಗಿ ನಟಿಸಿದ್ದು, ಶಿವರಾಜ್ ಕುಮಾರ್ ಗೌಡ ನಾಯ್ಡು ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಜಗಪತಿ ಬಾಬು, ದಿವ್ಯೇಂದು ಸೇರಿದಂತೆ ದೊಡ್ಡ ತಾರಾಬಳಗ ಸಿನಿಮಾದಲ್ಲಿದ್ದು, ಎ.ಆರ್ ರೆಹಮಾನ್ ಸಂಗೀತ ನೀಡಿದ್ದಾರೆ.

ಸೈಬರ್ ಖದೀಮರ ಬಲೆಗೆ ಬಿದ್ದ ಪದ್ಮಶ್ರೀ ವಿಜೇತ: ಮಧ್ಯರಾತ್ರಿ ಬಂದ ಮೆಸೇಜ್ʼನಿಂದ ಕ್ಷಣಾರ್ಧದಲ್ಲಿ ಹಣ ಮಾಯಾ

ಬೆಂಗಳೂರು: ಸೈಬರ್ ವಂಚಕರ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಇದೀಗ ದೇಶದ ಪ್ರತಿಷ್ಠಿತ ಪದ್ಮಶ್ರೀ ಪುರಸ್ಕೃತರನ್ನೂ ಬಿಡದ ಮಟ್ಟಿಗೆ ವಂಚನೆ ಜಾಲ ವಿಸ್ತರಿಸಿದೆ. ಖ್ಯಾತ ಪ್ಯಾರಾ ಅಥ್ಲೀಟ್ ಹಾಗೂ ಪದ್ಮಶ್ರೀ ಪುರಸ್ಕೃತ ಕೆ.ವೈ. ವೆಂಕಟೇಶ್ ಅವರ ಬ್ಯಾಂಕ್ ಖಾತೆಯಿಂದ ಸುಮಾರು ₹90 ಸಾವಿರ ಹಣವನ್ನು ಸೈಬರ್ ಖದೀಮರು ದೋಚಿರುವ ಘಟನೆ ಬೆಳಕಿಗೆ ಬಂದಿದೆ.

ಹುಟ್ಟಿನಿಂದಲೇ ಅಕೊಂಡ್ರೋಪ್ಲಾಸಿಯಾ ಸಮಸ್ಯೆಯಿಂದ ಬಳಲುತ್ತಿದ್ದರೂ ಅದನ್ನು ಸವಾಲಾಗಿ ಸ್ವೀಕರಿಸಿ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿರುವ ಕೆ.ವೈ. ವೆಂಕಟೇಶ್, 50ಕ್ಕೂ ಹೆಚ್ಚು ಕ್ರೀಡಾಕೂಟಗಳಲ್ಲಿ ದೇಶವನ್ನು ಪ್ರತಿನಿಧಿಸಿದ್ದಾರೆ. ಅವರ ಸಾಧನೆಯನ್ನು ಗುರುತಿಸಿ ಕೇಂದ್ರ ಸರ್ಕಾರವು 2021ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತ್ತು.

ಇದೀಗ ಅವರೇ ಸೈಬರ್ ವಂಚಕರ ಬಲೆಗೆ ಬಿದ್ದಿದ್ದಾರೆ. ಕೆಲ ದಿನಗಳ ಹಿಂದೆ ಮಧ್ಯರಾತ್ರಿ ವೇಳೆ ಅವರ ಮೊಬೈಲ್ ಸಂಖ್ಯೆಗೆ ನಿರಂತರವಾಗಿ ಒಟಿಪಿ ಸಂದೇಶಗಳು ಬರುತ್ತಿದ್ದವು. ಅಸಮಯದಲ್ಲಿ ಸತತವಾಗಿ ಒಟಿಪಿ ಬರುತ್ತಿರುವುದರಿಂದ ಅನುಮಾನಗೊಂಡ ವೆಂಕಟೇಶ್, ಮರುದಿನ ಬೆಳಗ್ಗೆ ಬ್ಯಾಂಕ್ ಶಾಖೆಗೆ ತೆರಳಿ ಖಾತೆ ಪರಿಶೀಲಿಸಿದ್ದಾರೆ.

ಈ ವೇಳೆ ಹಂತ ಹಂತವಾಗಿ ಖಾತೆಯಿಂದ ಒಟ್ಟು ₹90 ಸಾವಿರ ಹಣ ಕಡಿತವಾಗಿರುವುದು ಬೆಳಕಿಗೆ ಬಂದಿದೆ. ವಿಶೇಷವೆಂದರೆ, ಯಾವುದೇ ಒಟಿಪಿಯನ್ನು ಯಾರೊಂದಿಗೂ ಹಂಚಿಕೊಳ್ಳದಿದ್ದರೂ ಸಹ ಸೈಬರ್ ವಂಚಕರು ತಾಂತ್ರಿಕ ತಂತ್ರಗಳನ್ನು ಬಳಸಿ ಹಣ ವರ್ಗಾವಣೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಈ ಕುರಿತು ಕೆ.ವೈ. ವೆಂಕಟೇಶ್ ಅವರು ಬೆಂಗಳೂರಿನ ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ವಂಚಕರ ಬ್ಯಾಂಕ್ ಖಾತೆ ಹಾಗೂ ಐಪಿ ಅಡ್ರೆಸ್ ಪತ್ತೆಹಚ್ಚಲು ಸೈಬರ್ ಕ್ರೈಂ ವಿಭಾಗದ ನೆರವಿನೊಂದಿಗೆ ತನಿಖೆ ಮುಂದುವರಿಸಿದ್ದಾರೆ.

error: Content is protected !!