Home Blog Page 4

ಅಗರಬತ್ತಿ ಹೊಗೆ ಆರೋಗ್ಯಕ್ಕೆ ಹಾನಿಕಾರಕ: ಸಮೀಕ್ಷೆಯಲ್ಲಿ ಆತಂಕಕಾರಿ ಮಾಹಿತಿ ಬಹಿರಂಗ

ಮನೆಗಳಲ್ಲಿ ಸೊಳ್ಳೆಗಳಿಂದ ರಕ್ಷಿಸಿಕೊಳ್ಳಲು ಅನೇಕರು ಸೊಳ್ಳೆ ಅಗರಬತ್ತಿ, ಕಾಯಿಲ್ ಮತ್ತು ವಿವಿಧ ಮಸ್ಕಿಟೋ ರಿಪೆಲೆಂಟ್ ಉತ್ಪನ್ನಗಳನ್ನು ಬಳಸುತ್ತಾರೆ. ಇವು ಸೊಳ್ಳೆಗಳನ್ನು ದೂರವಿಡಲು ಸಹಾಯಕವಾಗಿದ್ದರೂ, ಎಲ್ಲಾ ಉತ್ಪನ್ನಗಳು ಸಂಪೂರ್ಣ ಸುರಕ್ಷಿತವಲ್ಲ ಎಂಬುದು ಈಗ ಮತ್ತೆ ಚರ್ಚೆಗೆ ಬಂದಿದೆ. ಇತ್ತೀಚೆಗೆ ಬಿಡುಗಡೆಯಾದ ಎಚ್ಐಸಿಎ ಸಮೀಕ್ಷೆ ಈ ಕುರಿತು ಆತಂಕ ವ್ಯಕ್ತಪಡಿಸಿದ್ದು,

ಕೆಲವು ಅನಧಿಕೃತ ಉತ್ಪನ್ನಗಳು ಸೊಳ್ಳೆಗಳನ್ನು ಸಾಯಿಸುವುದರ ಜೊತೆಗೆ ಮಾನವ ಆರೋಗ್ಯಕ್ಕೂ ಹಾನಿ ಉಂಟುಮಾಡಬಹುದು ಎಂದು ಎಚ್ಚರಿಸಿದೆ. ಸಮೀಕ್ಷೆಯ ಪ್ರಕಾರ, ಸಿಐಆರ್ ನೋಂದಣಿ ಸಂಖ್ಯೆ ಇಲ್ಲದ ಸೊಳ್ಳೆ ನಿವಾರಕ ಉತ್ಪನ್ನಗಳನ್ನು ಬಳಸಬಾರದು ಎಂದು ತಜ್ಞರು ಸಲಹೆ ನೀಡಿದ್ದಾರೆ.

ಎಚ್ಐಸಿಎ ಸಮೀಕ್ಷೆಯಲ್ಲಿ ಬಹಿರಂಗವಾದ ಮಾಹಿತಿ

ಈ ಸಮೀಕ್ಷೆಯನ್ನು ದೇಶದ 12 ನಗರಗಳಲ್ಲಿ ನಡೆಸಲಾಗಿದ್ದು, ಒಟ್ಟು 1,264 ಕುಟುಂಬಗಳು ಮತ್ತು 405 ವೈದ್ಯರು ಭಾಗವಹಿಸಿದ್ದರು. ವರದಿ ಪ್ರಕಾರ, 70 ಶೇಕಡಾ ವೈದ್ಯರು ಅನಧಿಕೃತ ಸೊಳ್ಳೆ ಅಗರಬತ್ತಿಗಳ ಹೊಗೆ ಉಸಿರಾಟದ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ. ಜೊತೆಗೆ 67 ಶೇಕಡಾ ವೈದ್ಯರು ಕೆಲವು ಸೊಳ್ಳೆ ಅಗರಬತ್ತಿಗಳ ಹೊಗೆ ಸಿಗರೇಟ್ ಹೊಗೆಯಷ್ಟೇ ಹಾನಿಕಾರಕವಾಗಿರಬಹುದು ಎಂದು ತಿಳಿಸಿದ್ದಾರೆ.

ವಿಶೇಷವಾಗಿ ಸಿಐಆರ್ ನೋಂದಣಿ ಸಂಖ್ಯೆ ಇಲ್ಲದ ಉತ್ಪನ್ನಗಳ ಬಳಕೆಯನ್ನು ತಪ್ಪಿಸುವುದು ಅತ್ಯಂತ ಅಗತ್ಯ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಸೊಳ್ಳೆ ಅಗರಬತ್ತಿ ಹೊಗೆಯಿಂದ ಉಂಟಾಗುವ ಆರೋಗ್ಯ ಪರಿಣಾಮಗಳು

ನಿರಂತರವಾಗಿ ಸೊಳ್ಳೆ ಅಗರಬತ್ತಿ ಅಥವಾ ಕಾಯಿಲ್ ಬಳಸಿದರೆ ಉಸಿರಾಟದ ತೊಂದರೆ, ಕೆಮ್ಮು, ಗಂಟಲು ಕೆರೆತ ಮತ್ತು ಎದೆ ಉರಿ ಉಂಟಾಗಬಹುದು. ಕೆಲವರಲ್ಲಿ ಕಣ್ಣಿನಲ್ಲಿ ಉರಿ, ತಲೆನೋವು ಮತ್ತು ಅಲರ್ಜಿ ಸಮಸ್ಯೆಗಳೂ ಕಾಣಿಸಬಹುದು.

ಆಸ್ತಮಾ, ಸಿಒಪಿಡಿ ಮತ್ತು ಇತರ ಅಲರ್ಜಿ ಸಮಸ್ಯೆಗಳಿರುವವರಿಗೆ ಈ ಹೊಗೆ ಹೆಚ್ಚು ಅಪಾಯಕಾರಿ ಯಾಗಬಹುದು. ಮಕ್ಕಳ ಹಾಗೂ ವೃದ್ಧರ ಶ್ವಾಸಕೋಶಗಳು ಹೆಚ್ಚು ಸಂವೇದನಾಶೀಲವಾಗಿರುವುದರಿಂದ ಅವರಲ್ಲಿ ಆರೋಗ್ಯ ಸಮಸ್ಯೆಗಳು ಹೆಚ್ಚಾಗುವ ಸಾಧ್ಯತೆ ಇದೆ ಎಂದು ವೈದ್ಯರು ತಿಳಿಸಿದ್ದಾರೆ.

ಸುರಕ್ಷಿತವಾಗಿ ಸೊಳ್ಳೆ ನಿವಾರಣೆಗೆ ತಜ್ಞರ ಸಲಹೆ

ಸೊಳ್ಳೆ ನಿವಾರಕ ಉತ್ಪನ್ನಗಳನ್ನು ಖರೀದಿಸುವಾಗ ಅವುಗಳ ಪ್ಯಾಕ್ ಮೇಲೆ ಸಿಐಆರ್ ನೋಂದಣಿ ಸಂಖ್ಯೆ ಇರುವುದನ್ನು ಖಚಿತಪಡಿಸಿಕೊಳ್ಳಬೇಕು. ಲೇಬಲ್ ಇಲ್ಲದ ಅಥವಾ ಅನಧಿಕೃತ ಉತ್ಪನ್ನಗಳ ಬಳಕೆಯನ್ನು ತಪ್ಪಿಸುವುದು ಉತ್ತಮ.

ಕೊಠಡಿಯಲ್ಲಿ ಸರಿಯಾದ ಗಾಳಿಯ ಹರಿವು ಇರಿಸುವುದು, ಮಕ್ಕಳ ಮತ್ತು ವೃದ್ಧರ ಕೊಠಡಿಗೆ ನಿರಂತರ ಹೊಗೆ ಹೋಗುವುದನ್ನು ತಪ್ಪಿಸುವುದು ಅಗತ್ಯ. ಜೊತೆಗೆ ಮಸ್ಕಿಟೋ ನೆಟ್, ಕಿಟಕಿಗಳಿಗೆ ಜಾಲಿ ಹಾಕುವುದು ಮುಂತಾದ ಸುರಕ್ಷಿತ ಪರ್ಯಾಯಗಳನ್ನು ಬಳಸುವುದು ಹೆಚ್ಚು ಸೂಕ್ತ ಎಂದು ಆರೋಗ್ಯ ತಜ್ಞರು ಸಲಹೆ ನೀಡಿದ್ದಾರೆ.

 

ಎರಡು ಯುದ್ಧ ವಿಮಾನಗಳ ಡಿಕ್ಕಿ: ಅಮೆರಿಕ ಸೇನಾ ನೆಲೆಯಲ್ಲಿ ತಪ್ಪಿದ ದೊಡ್ಡ ದುರಂತ!

ಇಡಾಹೊ: ಅಮೆರಿಕದ ಪಶ್ಚಿಮ ಇಡಾಹೊದಲ್ಲಿರುವ ಮೌಂಟೇನ್ ಹೋಮ್ ವಾಯುಪಡೆ ನೆಲೆಯಲ್ಲಿ ನಡೆದ ವೈಮಾನಿಕ ಪ್ರದರ್ಶನದ ವೇಳೆ ಯುಎಸ್ ನೌಕಾಪಡೆಯ ಎರಡು ಯುದ್ಧ ವಿಮಾನಗಳು ಗಾಳಿಯಲ್ಲೇ ಭೀಕರವಾಗಿ ಡಿಕ್ಕಿ ಹೊಡೆದಿವೆ.

ಅಪಘಾತಕ್ಕೀಡಾದ ವಿಮಾನಗಳನ್ನು ನೌಕಾಪಡೆಯ ಅತ್ಯಾಧುನಿಕ ‘ಇಎ-18ಜಿ ಗ್ರೋಲರ್ಸ್’ ಯುದ್ಧ ವಿಮಾನಗಳು ಎಂದು ಗುರುತಿಸಲಾಗಿದೆ. ಅತಿ ವೇಗದಲ್ಲಿ ಹಾರಾಟ ನಡೆಸುತ್ತಿದ್ದ ವೇಳೆ ಈ ಭೀಕರ ಅವಘಡ ಸಂಭವಿಸಿದೆ.

ಘಟನೆ ಸಂಭವಿಸುತ್ತಿದ್ದಂತೆಯೇ ಎರಡೂ ವಿಮಾನಗಳಲ್ಲಿದ್ದ ನಾಲ್ವರು ಸಿಬ್ಬಂದಿ ತಕ್ಷಣವೇ ಸುರಕ್ಷಿತವಾಗಿ ಹೊರಜಿಗಿದ ಪರಿಣಾಮ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಗೊಂಡ ಸಿಬ್ಬಂದಿಯನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಎಲ್ಲರೂ ಸ್ಥಿರ ಸ್ಥಿತಿಯಲ್ಲಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಅದೃಷ್ಟವಶಾತ್, ಮಿಲಿಟರಿ ನೆಲೆಯಲ್ಲಿದ್ದ ಇತರ ಸಿಬ್ಬಂದಿ ಅಥವಾ ಸಾರ್ವಜನಿಕರಿಗೆ ಯಾವುದೇ ಗಾಯಗಳಾಗಿಲ್ಲ. ಘಟನೆಯ ಬಳಿಕ ಪ್ರದೇಶದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಈ ಭೀಕರ ವೈಮಾನಿಕ ಅಪಘಾತದ ನಿಖರ ಕಾರಣ ತಿಳಿದುಬಂದಿಲ್ಲ. ಸದ್ಯ ಯುಎಸ್ ಸೇನಾ ಅಧಿಕಾರಿಗಳು ಪ್ರಕರಣದ ಕುರಿತು ತನಿಖೆ ಆರಂಭಿಸಿದ್ದಾರೆ.

ಶಿವಮೊಗ್ಗದಲ್ಲಿ ಮಳೆ ರೌದ್ರಾವತಾರ: ರೈಲು ಸಂಚಾರ ಅಸ್ತವ್ಯಸ್ತ, ಸಿಡಿಲಿಗೆ 50 ಕುರಿಗಳ ಸಾವು

ಶಿವಮೊಗ್ಗ: ಜಿಲ್ಲೆಯಾದ್ಯಂತ ಭಾನುವಾರ ಸುರಿದ ಗುಡುಗು-ಸಿಡಿಲು ಸಹಿತ ಭಾರೀ ಮಳೆ ಜನಜೀವನವನ್ನು ಸಂಪೂರ್ಣ ಅಸ್ತವ್ಯಸ್ತಗೊಳಿಸಿದೆ.

ಮಳೆಗಾಳಿಯ ಅಬ್ಬರಕ್ಕೆ ಹಲವು ಅವಾಂತರಗಳು ಸಂಭವಿಸಿದ್ದು, ರೈಲು ಸಂಚಾರಕ್ಕೂ ದೊಡ್ಡ ಮಟ್ಟದ ವ್ಯತ್ಯಯ ಉಂಟಾಗಿದೆ.

ಮೈಸೂರು-ಶಿವಮೊಗ್ಗ ಹಾಗೂ ಶಿವಮೊಗ್ಗ-ತಾಳಗುಪ್ಪ ಪ್ಯಾಸೆಂಜರ್ ರೈಲುಗಳ ಸಂಚಾರದಲ್ಲಿ ತೀವ್ರ ವ್ಯತ್ಯಯ ಉಂಟಾಗಿ ಪ್ರಯಾಣಿಕರು ಗಂಟೆಗಟ್ಟಲೆ ಕಾದು ಪರದಾಡುವಂತಾಯಿತು. ಭಾರೀ ಗಾಳಿಗೆ ರೈಲ್ವೆ ಹಳಿಯ ಮೇಲೆ ಬೃಹತ್ ಮರ ಉರುಳಿಬಿದ್ದ ಪರಿಣಾಮ ವಿದ್ಯುತ್ ಲೈನ್ ತುಂಡಾಗಿ ರೈಲು ಸಂಚಾರ ಸ್ಥಗಿತಗೊಂಡಿತ್ತು.

ಇದರ ಪರಿಣಾಮವಾಗಿ ಶಿವಮೊಗ್ಗ-ಚಿಕ್ಕಮಗಳೂರು ಪ್ಯಾಸೆಂಜರ್ ರೈಲು ಹಾಗೂ ಬೆಂಗಳೂರು-ಶಿವಮೊಗ್ಗ ಜನಶತಾಬ್ಧಿ ರೈಲುಗಳ ಸಂಚಾರಕ್ಕೂ ಅಡಚಣೆ ಎದುರಾಯಿತು. ಬಳಿಕ ಸಿಬ್ಬಂದಿ ಮರ ತೆರವುಗೊಳಿಸಿ, ವಿದ್ಯುತ್ ಲೈನ್ ದುರಸ್ತಿ ಮಾಡಿದ ನಂತರ ರೈಲು ಸಂಚಾರವನ್ನು ಪುನಃ ಆರಂಭಿಸಲಾಯಿತು.

ಇನ್ನೊಂದೆಡೆ, ಭಾರೀ ಮಳೆಯ ನಡುವೆ ಬಡಿದ ಸಿಡಿಲಿಗೆ ಸುಮಾರು 50 ಕುರಿಗಳು ಸಾವನ್ನಪ್ಪಿದ ದುರ್ಘಟನೆ ಭದ್ರಾವತಿ ತಾಲೂಕಿನ ಕಲ್ಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಿರಿಯೂರು ಗ್ರಾಮದಲ್ಲಿ ನಡೆದಿದೆ.

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಮಾರಿಕಣಿವೆ ಮೂಲದ ನರಸಿಂಹಮೂರ್ತಿ ಅವರಿಗೆ ಸೇರಿದ ಕುರಿಗಳು ಮೃತಪಟ್ಟಿವೆ. ಕಳೆದ ನಾಲ್ಕು ತಿಂಗಳಿಂದ ಶಿವಮೊಗ್ಗ ಭಾಗದಲ್ಲಿ ಕುರಿ ಮೇಯಿಸುತ್ತಿದ್ದ ಅವರು, ಸಿರಿಯೂರು ಗ್ರಾಮದ ರವಿಕುಮಾರ್ ಅವರ ತೋಟದಲ್ಲಿ ಕುರಿಗಳನ್ನು ತಂಗಿಸಿದ್ದರು.

ತಡರಾತ್ರಿ ಸುರಿದ ಭಾರೀ ಮಳೆಯ ವೇಳೆ ಕುರಿಗಳು ತೋಟದಲ್ಲಿ ಮಲಗಿದ್ದಾಗ ಸಿಡಿಲು ಬಡಿದು, 400 ಕುರಿಗಳ ಪೈಕಿ 50 ಕುರಿಗಳು ಸ್ಥಳದಲ್ಲೇ ಸಾವನ್ನಪ್ಪಿವೆ. ಘಟನೆ ಸಂಬಂಧ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ರೈಲು ನಿಲ್ದಾಣದಲ್ಲಿ ಬೆಂಕಿ ಅವಘಡ: ತಪ್ಪಿದ ಭಾರಿ ಅನಾಹುತ!

ಪಾಟ್ನಾ: ಬಿಹಾರದ ಸಸಾರಾಮ್ ರೈಲು ನಿಲ್ದಾಣದಲ್ಲಿ ಪಾಟ್ನಾಗೆ ತೆರಳಬೇಕಿದ್ದ ಪ್ಯಾಸೆಂಜರ್ ರೈಲಿನಲ್ಲಿ ಇಂದು ಬೆಳಿಗ್ಗೆ ಅಗ್ನಿ ಅವಘಡ ಸಂಭವಿಸಿದೆ.

ರೈಲಿನ ಬೋಗಿಯಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಸಸಾರಾಮ್-ಪಾಟ್ನಾ ಫಾಸ್ಟ್ ಪ್ಯಾಸೆಂಜರ್ ರೈಲು ಬೆಳಿಗ್ಗೆ 6 ಗಂಟೆಗೆ ಹೊರಡಬೇಕಿದ್ದ ವೇಳೆ, ಅದಕ್ಕೂ ಮುನ್ನವೇ ಬೋಗಿಯಿಂದ ದಟ್ಟ ಹೊಗೆ ಹೊರಬರುತ್ತಿರುವುದು ಗಮನಕ್ಕೆ ಬಂದಿದೆ. ತಕ್ಷಣವೇ ಸಿಬ್ಬಂದಿ ಬೆಂಕಿ ನಿಯಂತ್ರಣಕ್ಕೆ ಹರಸಾಹಸ ಪಟ್ಟಿದ್ದಾರೆ.

ಪ್ರಾಥಮಿಕ ಮಾಹಿತಿ ಪ್ರಕಾರ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಘಟನೆಯ ವೇಳೆ ರೈಲು ನಿಲ್ದಾಣದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾದರೂ, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಅಥವಾ ಗಾಯಗಳ ವರದಿಯಾಗಿಲ್ಲ.

ಘಟನೆಗೆ ಸಂಬಂಧಿಸಿದಂತೆ ರೈಲ್ವೆ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದು, ಬೆಂಕಿ ಕಾಣಿಸಿಕೊಂಡ ನಿಖರ ಕಾರಣ ಪತ್ತೆಹಚ್ಚಲು ತನಿಖೆ ಮುಂದುವರಿದಿದೆ.

ಜಿಮ್ಸ್ ಬಳಿ ಕೂದಲೆಳೆ ಅಂತರದಲ್ಲಿ ತಪ್ಪಿದ ದುರಂತ..! ಮಹಿಳಾ ಹೋಂ ಗಾರ್ಡ್ ಬಚಾವ್-ವಿಡಿಯೋ ವೈರಲ್

ಗದಗ: ಭಾರಿ ಗಾಳಿ, ಗುಡುಗು ಸಹಿತ ಸುರಿದ ಮಳೆಯ ಆರ್ಭಟಕ್ಕೆ ಗದಗ ಜಿಲ್ಲೆ ಭಾನುವಾರ ಸಂಜೆ ಅಲ್ಲೋಲ-ಕಲ್ಲೋಲಗೊಂಡಿತು.

ನಗರದ ಹಲವು ಭಾಗಗಳಲ್ಲಿ ಮರಗಳು ಧರೆಗುರುಳಿದರೆ, ತಗಡಿನ ಶೀಟ್‌ಗಳು ಗಾಳಿಗೆ ಹಾರಿ ಜನರಲ್ಲಿ ಆತಂಕ ಸೃಷ್ಟಿಸಿವೆ.

ಗದಗ ಸಮೀಪದ ಮಲ್ಲಸಮುದ್ರ ಬಳಿಯ ಜಿಮ್ಸ್ ಆಸ್ಪತ್ರೆ ಆವರಣದಲ್ಲಿ ನಡೆದ ಘಟನೆ ಒಂದು ಕ್ಷಣ ಜನರ ಹೃದಯ ಬಡಿತ ಹೆಚ್ಚಿಸುವಂತಿತ್ತು. ಡ್ಯೂಟಿ ಮುಗಿಸಿಕೊಂಡು ಬಸ್ ಹತ್ತಲು ಮಳೆ-ಗಾಳಿಯ ನಡುವೆ ಓಡೋಡಿ ಬರುತ್ತಿದ್ದ ಮಹಿಳಾ ಹೋಂ ಗಾರ್ಡ್ ಅವರತ್ತ ಏಕಾಏಕಿ ಬಿರುಗಾಳಿಯ ರಭಸಕ್ಕೆ ತಗಡಿನ ಶೀಟ್ ಹಾರಿ ಬಂದಿದೆ.

ಅದೃಷ್ಟವಶಾತ್ ಶೀಟ್ ಮಹಿಳೆಗೆ ತಗುಲದೇ ಜಸ್ಟ್ ಮಿಸ್ ಆಗಿದ್ದು, ಅವರು ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ. ಕೆಲ ಕ್ಷಣಗಳ ಕಾಲ ಸ್ಥಳದಲ್ಲಿದ್ದವರು ಬೆಚ್ಚಿಬಿದ್ದಿದ್ದು, ಮಹಿಳಾ ಹೋಂ ಗಾರ್ಡ್ ಕೂಡ ಒಂದು ಕ್ಷಣ ವಿಚಲಿತರಾದರು.

ಈ ಭಯಾನಕ ದೃಶ್ಯವನ್ನು ಅಲ್ಲಿದ್ದವರು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಭಾರಿ ಗಾಳಿ ಮತ್ತು ಮಳೆಯಿಂದ ಗದಗ ಜಿಲ್ಲೆಯ ಹಲವೆಡೆ ವಿದ್ಯುತ್ ವ್ಯತ್ಯಯ, ಮರಗಳು ಉರುಳುವುದು, ತಗಡುಗಳು ಹಾರುವುದು ಸೇರಿದಂತೆ ಹತ್ತಾರು ಅವಾಂತರಗಳು ಸೃಷ್ಟಿಯಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಮುಂಡರಗಿ ರಸ್ತೆಯಲ್ಲಿ ವಿದ್ಯುತ್ ಲೈನ್ ಮೇಲೆಯೇ ತಗಡೊಂದು ಹಾರಾಡುತ್ತಿದ್ದು, ಯಾವ ಕ್ಷಣದಲ್ಲಿ ಏನಾಗುತ್ತೋ ಏನೂ ಎಂಬ ಆತಂಕ ವಾಹನ ಸವಾರರನ್ನು ಕಾಡುತ್ತಿದೆ. ಒಟ್ಟಿನಲ್ಲಿ ಭಾನುವಾರ ಸಂಜೆ ನಡೆದ ಅನಾಹುತ ಹಲವು ಅವಾಂತರ ಸೃಷ್ಟಿ ಮಾಡಿದರೂ ಯಾವುದೇ ಜೀವ ಹಾನಿಯಾಗದೇ ಇರೋದು ಸಮಾಧಾನ ತಂದಿದೆ.

ಸಿಎಂ ಹುದ್ದೆಯಲ್ಲಿ 8 ವರ್ಷ: ಕರ್ನಾಟಕ ರಾಜಕೀಯದಲ್ಲಿ ಸಿದ್ದರಾಮಯ್ಯ ಮೈಲಿಗಲ್ಲು!

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಮೇ 20ರಂದು ಮೂರು ವರ್ಷ ಪೂರ್ಣಗೊಳ್ಳಲಿದ್ದು, ಅದಕ್ಕೂ ನಾಲ್ಕು ದಿನಗಳ ಮುನ್ನವೇ ಸಿದ್ದರಾಮಯ್ಯ ಮತ್ತೊಂದು ಐತಿಹಾಸಿಕ ದಾಖಲೆಗೆ ಪಾತ್ರರಾಗಿದ್ದಾರೆ.

ಕರ್ನಾಟಕದ ಇತಿಹಾಸದಲ್ಲಿ ಒಟ್ಟು 8 ವರ್ಷ ಮುಖ್ಯಮಂತ್ರಿ ಹುದ್ದೆಯಲ್ಲಿ ಕಾರ್ಯನಿರ್ವಹಿಸಿದ ಏಕೈಕ ನಾಯಕ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ.

1977ರಲ್ಲಿ ಮೈಸೂರು ತಾಲೂಕು ಬೋರ್ಡ್ ಚುನಾವಣೆಯ ಮೂಲಕ ಸಾರ್ವಜನಿಕ ಬದುಕಿಗೆ ಕಾಲಿಟ್ಟಿದ್ದ ಸಿದ್ದರಾಮಯ್ಯ, ಇದೀಗ ತಮ್ಮ ರಾಜಕೀಯ ಪಯಣದ 50ನೇ ವರ್ಷಕ್ಕೆ ಕಾಲಿಡುವ ಹಂತದಲ್ಲಿದ್ದಾರೆ. ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಹುದ್ದೆಯಲ್ಲಿ 8 ವರ್ಷಗಳನ್ನು ಪೂರೈಸಿರುವುದು ಅವರ ರಾಜಕೀಯ ಜೀವನದ ಮಹತ್ವದ ಮೈಲಿಗಲ್ಲಾಗಿ ಪರಿಣಮಿಸಿದೆ.

ಕರ್ನಾಟಕ ರಾಜಕೀಯ ಇತಿಹಾಸದಲ್ಲಿ ದೀರ್ಘಾವಧಿ ಮುಖ್ಯಮಂತ್ರಿ ಸ್ಥಾನದಲ್ಲಿ ಉಳಿದು ಆಡಳಿತ ನಡೆಸಿದ ನಾಯಕರ ಪಟ್ಟಿಯಲ್ಲಿ ಸಿದ್ದರಾಮಯ್ಯ ಅಗ್ರಸ್ಥಾನಕ್ಕೇರಿದ್ದಾರೆ. ಸಾಮಾಜಿಕ ಕಲ್ಯಾಣ ಯೋಜನೆಗಳು, ಜನಪರ ಆಡಳಿತ ಹಾಗೂ ಸಂಘಟನಾ ಸಾಮರ್ಥ್ಯದ ಮೂಲಕ ಅವರು ತಮ್ಮದೇ ಆದ ರಾಜಕೀಯ ಛಾಪು ಮೂಡಿಸಿದ್ದಾರೆ.

ಎಬೋಲಾ ಸೋಂಕು ಭೀತಿ; ವಿಶ್ವ ಆರೋಗ್ಯ ಸಂಸ್ಥೆಯಿಂದ ತುರ್ತು ಪರಿಸ್ಥಿತಿ ಘೋಷಣೆ!

ಕಿನ್ಶಾಸಾ: ಆಫ್ರಿಕಾದ ದೇಶಗಳಾದ ಕಾಂಗೋ ಮತ್ತು ಉಗಾಂಡಾದಲ್ಲಿ ಎಬೋಲಾ ಸೋಂಕಿನ ಅಬ್ಬರ ಹೆಚ್ಚಾಗಿದ್ದು, ಇದುವರೆಗೆ 88 ಮಂದಿ ಮೃತಪಟ್ಟಿದ್ದಾರೆ.

300ಕ್ಕೂ ಹೆಚ್ಚು ಮಂದಿಗೆ ಸೋಂಕು ತಗುಲಿರುವ ಶಂಕೆ ವ್ಯಕ್ತವಾಗಿದ್ದು, ಸೋಂಕು ವ್ಯಾಪಕವಾಗುತ್ತಿರುವ ಹಿನ್ನೆಲೆ ವಿಶ್ವ ಆರೋಗ್ಯ ಸಂಸ್ಥೆ ಜಾಗತಿಕ ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸಿದೆ.

ಕಾಂಗೋದ ಪೂರ್ವ ಭಾಗದ ಇಟುರಿ ಪ್ರಾಂತ್ಯ ಎಬೋಲಾ ಸೋಂಕಿನ ಕೇಂದ್ರಬಿಂದುವಾಗಿದೆ. ಅಲ್ಲಿಗೆ ಭೇಟಿ ನೀಡಿದ್ದ ರಾಜಧಾನಿ ಕಿನ್ಶಾಸಾದ ವ್ಯಕ್ತಿಯೊಬ್ಬರಲ್ಲಿ ಸೋಂಕು ದೃಢಪಟ್ಟಿದ್ದು, ಸೋಂಕು ಇತರ ಪ್ರದೇಶಗಳಿಗೂ ಹರಡುವ ಆತಂಕ ಹೆಚ್ಚಾಗಿದೆ. ಉತ್ತರ ಕಿವು ಪ್ರಾಂತ್ಯದಲ್ಲಿಯೂ ಸೋಂಕು ಪ್ರಕರಣಗಳು ಪತ್ತೆಯಾಗಿವೆ.

ಎಬೋಲಾ ವೈರಸ್ ಬುಂಡಿಬುಗ್ಯ ವೈರಸ್‌ನಿಂದ ಹರಡುತ್ತದೆ. ಮೊದಲು ಪ್ರಾಣಿಗಳಲ್ಲಿ ಕಾಣಿಸಿಕೊಳ್ಳುವ ಈ ವೈರಸ್ ಬಳಿಕ ಮನುಷ್ಯರಿಗೆ ಹರಡುತ್ತದೆ. ಸೋಂಕಿತ ವ್ಯಕ್ತಿಗೆ ತೀವ್ರ ಜ್ವರ, ತಲೆನೋವು, ಮೈಕೈ ನೋವು, ವಾಂತಿ, ಗಂಟಲು ಕೆರೆತ ಹಾಗೂ ಹೊಟ್ಟೆನೋವು ಕಾಣಿಸಿಕೊಳ್ಳುತ್ತದೆ. ರೋಗ ಗಂಭೀರ ಹಂತ ತಲುಪಿದರೆ ದೇಹದ ಒಳಭಾಗದಲ್ಲಿ ರಕ್ತಸ್ರಾವವಾಗುವ ಸಾಧ್ಯತೆಯೂ ಇರುತ್ತದೆ.

1976ರಲ್ಲಿ ಕಾಂಗೋದ ಎಬೋಲಾ ನದಿ ತೀರ ಪ್ರದೇಶದಲ್ಲಿ ಈ ವೈರಸ್ ಮೊದಲ ಬಾರಿ ಪತ್ತೆಯಾಗಿತ್ತು. ಕೋತಿ, ಗೊರಿಲ್ಲಾ, ಚಿಂಪಾಂಜಿ ಹಾಗೂ ಬಾವಲಿಗಳ ಮೂಲಕ ಈ ಸೋಂಕು ಹರಡುತ್ತದೆ ಎಂದು ತಜ್ಞರು ತಿಳಿಸಿದ್ದಾರೆ.

ಸೋಂಕಿತ ವ್ಯಕ್ತಿಯ ರಕ್ತ, ಬೆವರು, ವಾಂತಿ, ಮೂತ್ರ ಹಾಗೂ ದೇಹದ ಇತರ ದ್ರವಾಂಶಗಳ ಸಂಪರ್ಕದಿಂದ ವೈರಸ್ ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ. ಸೋಂಕಿನಿಂದ ಮೃತಪಟ್ಟವರ ಮೃತದೇಹವೂ ಅಪಾಯಕಾರಿ ಆಗಿರುವುದರಿಂದ, ಅಂತ್ಯಕ್ರಿಯೆ ಸಂದರ್ಭದಲ್ಲಿಯೂ ಸೋಂಕು ಹರಡುವ ಸಾಧ್ಯತೆ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದೆ.

ಎಬೋಲಾ ಸೋಂಕು ತಗುಲಿದ 10 ಜನರಲ್ಲಿ 9 ಮಂದಿಯ ಜೀವಕ್ಕೆ ಅಪಾಯ ಉಂಟಾಗುವ ಸಾಧ್ಯತೆ ಇರುವುದರಿಂದ ಈ ವೈರಸ್ ಅತ್ಯಂತ ಮಾರಕ ಎಂದು ಪರಿಗಣಿಸಲಾಗಿದೆ. ವೈರಸ್ ದೇಹ ಪ್ರವೇಶಿಸಿದ 2ರಿಂದ 21 ದಿನಗಳೊಳಗೆ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.

ಸೋಂಕು ವ್ಯಾಪಕವಾಗುತ್ತಿರುವ ಹಿನ್ನೆಲೆ ಆರೋಗ್ಯ ಸಿಬ್ಬಂದಿ, ಆಸ್ಪತ್ರೆ ಸಿಬ್ಬಂದಿ, ರೋಗ ನಿರೋಧಕ ಶಕ್ತಿ ಕಡಿಮೆ ಇರುವವರು ಹಾಗೂ ಮಧುಮೇಹ, ಮೂತ್ರಪಿಂಡ ಮತ್ತು ಪಿತ್ತಜನಕಾಂಗ ಸಮಸ್ಯೆ ಹೊಂದಿರುವವರು ಹೆಚ್ಚಿನ ಎಚ್ಚರಿಕೆ ವಹಿಸಬೇಕು ಎಂದು ಆರೋಗ್ಯ ತಜ್ಞರು ಸೂಚಿಸಿದ್ದಾರೆ.

IPL 2026: ಅಕ್ಷರ್-ಅಶುತೋಷ್ ಅಬ್ಬರ; ರಾಜಸ್ಥಾನ ವಿರುದ್ಧ ಡೆಲ್ಲಿಗೆ ರೋಚಕ ಜಯ!

ಡೆಲ್ಲಿ ಕ್ಯಾಪಿಟಲ್ಸ್‌ ತಂಡವು ರೋಚಕ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್‌ ವಿರುದ್ಧ 5 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿದೆ.

ಮೊದಲು ಮಿಚೆಲ್ ಸ್ಟಾರ್ಕ್ ಅವರ ಮಾರಕ ಬೌಲಿಂಗ್‌, ಬಳಿಕ ನಾಯಕ ಅಕ್ಷರ್ ಪಟೇಲ್ ಹಾಗೂ ಅಶುತೋಷ್ ಶರ್ಮಾ ಅವರ ಸ್ಫೋಟಕ ಬ್ಯಾಟಿಂಗ್‌ ಡೆಲ್ಲಿ ತಂಡಕ್ಕೆ ಗೆಲುವು ತಂದುಕೊಟ್ಟಿತು.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ 8 ವಿಕೆಟ್ ನಷ್ಟಕ್ಕೆ 193 ರನ್ ಕಲೆಹಾಕಿತು. ಗುರಿ ಬೆನ್ನಟ್ಟಿದ ಡೆಲ್ಲಿ ಇನ್ನೂ 4 ಎಸೆತ ಬಾಕಿ ಇರುವಾಗಲೇ 5 ವಿಕೆಟ್ ನಷ್ಟಕ್ಕೆ 197 ರನ್ ಸಿಡಿಸಿ ಜಯ ಸಾಧಿಸಿತು.

ಕೊನೆಯ ನಾಲ್ಕು ಓವರ್‌ಗಳಲ್ಲಿ ಡೆಲ್ಲಿಗೆ 43 ರನ್ ಅಗತ್ಯವಿದ್ದಾಗ ಪಂದ್ಯ ತೀವ್ರ ಕುತೂಹಲ ಕೆರಳಿಸಿತು. 18ನೇ ಓವರ್‌ನಲ್ಲಿ 18 ರನ್ ಹಾಗೂ 19ನೇ ಓವರ್‌ನಲ್ಲಿ 12 ರನ್ ಬಂದವು. ಅಂತಿಮ ಓವರ್‌ನ ಮೊದಲ ಎರಡು ಎಸೆತಗಳಲ್ಲೇ ಅಶುತೋಷ್ ಶರ್ಮಾ ಬೌಂಡರಿ ಮತ್ತು ಸಿಕ್ಸರ್ ಸಿಡಿಸಿ ತಂಡಕ್ಕೆ ರೋಚಕ ಜಯ ತಂದುಕೊಟ್ಟರು.

ಅಶುತೋಷ್ ಶರ್ಮಾ ಕೇವಲ 5 ಎಸೆತಗಳಲ್ಲಿ 18 ರನ್ ಸಿಡಿಸಿ ಅಜೇಯರಾಗಿದ್ದರೆ, ನಾಯಕ ಅಕ್ಷರ್ ಪಟೇಲ್ 18 ಎಸೆತಗಳಲ್ಲಿ 34 ರನ್ ಗಳಿಸಿದರು. ಇದಕ್ಕೂ ಮುನ್ನ ಅಭಿಷೇಕ್ ಪೊರೆಲ್ ಮತ್ತು ಕೆಎಲ್ ರಾಹುಲ್ ಮೊದಲ ವಿಕೆಟ್‌ಗೆ 105 ರನ್ ಜೊತೆಯಾಟ ನೀಡಿ ತಂಡಕ್ಕೆ ಭದ್ರ ಅಡಿಪಾಯ ಹಾಕಿದರು. ಅಭಿಷೇಕ್ ಪೊರೆಲ್ 31 ಎಸೆತಗಳಲ್ಲಿ 51 ರನ್ ಹಾಗೂ ಕೆಎಲ್ ರಾಹುಲ್ 42 ಎಸೆತಗಳಲ್ಲಿ 56 ರನ್ ಗಳಿಸಿದರು.

ರಾಜಸ್ಥಾನ ಪರ ವೈಭವ್ ಸೂರ್ಯವಂಶಿ 46 ರನ್, ಧ್ರುವ್ ಜುರೇಲ್ 53 ರನ್ ಹಾಗೂ ನಾಯಕ ರಿಯಾನ್ ಪರಾಗ್ 51 ರನ್ ಸಿಡಿಸಿ ಮಿಂಚಿದರು.

ಡೆಲ್ಲಿ ಪರ ಮಿಚೆಲ್ ಸ್ಟಾರ್ಕ್ 4 ವಿಕೆಟ್ ಪಡೆದು ರಾಜಸ್ಥಾನದ ರನ್ ವೇಗಕ್ಕೆ ಕಡಿವಾಣ ಹಾಕಿದರು. ವಿಶೇಷವಾಗಿ 15ನೇ ಓವರ್‌ನಲ್ಲಿ ರಿಯಾನ್ ಪರಾಗ್, ಫೆರೀರಾ ಮತ್ತು ರವಿ ಸಿಂಗ್ ವಿಕೆಟ್ ಪಡೆದು ಪಂದ್ಯದ ಚಿತ್ರಣವೇ ಬದಲಿಸಿದರು. ಲುಂಗಿ ಎನ್‌ಗಿಡಿ ಮತ್ತು ಮಾಧವ್ ತಿವಾರಿ ತಲಾ ಎರಡು ವಿಕೆಟ್ ಪಡೆದರು.

ಜೈಲಿನಲ್ಲಿ ದರ್ಶನ್‌ಗೆ ವಿಶೇಷ ಟ್ರೀಟ್ಮೆಂಟ್? ಸುಪ್ರೀಂಕೋರ್ಟ್‌ಗೆ ಜೈಲು ಅಧಿಕಾರಿಗಳ ಶಾಕಿಂಗ್ ಮಾಹಿತಿ

ಬೆಂಗಳೂರು: ನಟ ದರ್ಶನ್ ಜಾಮೀನು ಅರ್ಜಿ ವಿಚಾರಣೆಯ ವೇಳೆ ಸುಪ್ರೀಂಕೋರ್ಟ್‌ಗೆ ಸಲ್ಲಿಸಲಾದ ಜೈಲು ದಾಖಲೆಗಳು ಇದೀಗ ದೊಡ್ಡ ಚರ್ಚೆಗೆ ಕಾರಣವಾಗಿವೆ. ಕುಟುಂಬದ ಭೇಟಿಗೆ ಅವಕಾಶ ನೀಡಲಾಗುತ್ತಿಲ್ಲ ಎಂದು ದರ್ಶನ್ ಆರೋಪಿಸಿದ್ದರೂ, ಜೈಲು ಅಧಿಕಾರಿಗಳು ಸಲ್ಲಿಸಿದ ಮಾಹಿತಿಯಲ್ಲಿ ಬೇರೆ ಚಿತ್ರಣ ಹೊರಬಿದ್ದಿದೆ.

ಜೈಲು ದಾಖಲೆಗಳ ಪ್ರಕಾರ, ದರ್ಶನ್ 70ಕ್ಕೂ ಹೆಚ್ಚು ಬಾರಿ ಕುಟುಂಬ ಸದಸ್ಯರನ್ನು ಭೇಟಿ ಮಾಡಿದ್ದಾರೆ. 28 ಬಾರಿ ವಕೀಲರನ್ನು ಭೇಟಿಯಾಗಿದ್ದು, ಜೈಲಿನಿಂದ 73 ಬಾರಿ ಫೋನ್ ಕರೆಗಳನ್ನು ಕೂಡ ಮಾಡಿದ್ದಾರೆ ಎಂದು ನ್ಯಾಯಾಲಯಕ್ಕೆ ಮಾಹಿತಿ ನೀಡಲಾಗಿದೆ.

ಇದಷ್ಟೇ ಅಲ್ಲದೆ, ದರ್ಶನ್ ಅವರಿಗೆ ವಿಶೇಷ ಸೌಲಭ್ಯಗಳನ್ನೂ ನೀಡಲಾಗುತ್ತಿದೆ ಎಂದು ಜೈಲು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಸಾಮಾನ್ಯ ಕೈದಿಗಳಿಗೆ ನೀಡುವ ಆಹಾರದ ಜೊತೆಗೆ ಹೆಚ್ಚುವರಿಯಾಗಿ ಹಾಲು, ಮೊಟ್ಟೆ ಒದಗಿಸಲಾಗುತ್ತಿದೆ. ಹೆಚ್ಚುವರಿ ಬೆಡ್‌ಶೀಟ್, ಬಾಚಣಿಗೆ ಸೇರಿದಂತೆ ನ್ಯಾಯಾಲಯ ಸೂಚಿಸಿದ ಸೌಲಭ್ಯಗಳನ್ನೂ ನೀಡಲಾಗಿದೆ. ಭೇಟಿ ನೀಡುವವರು ತರುವ ಡ್ರೈ ಫ್ರೂಟ್ಸ್ ಮತ್ತು ಹಣ್ಣುಗಳನ್ನು ಸ್ವೀಕರಿಸಲು ಅವಕಾಶ ಇದೆ ಎಂದು ತಿಳಿಸಲಾಗಿದೆ.

ಭದ್ರತೆ ವಿಚಾರದಲ್ಲೂ ವಿಶೇಷ ಕಾಳಜಿ ವಹಿಸಲಾಗಿದೆ. ಹಗಲು ವೇಳೆ ಸಹಾಯಕ ಜೈಲರ್ ಹಾಗೂ ವಾರ್ಡನ್, ರಾತ್ರಿ ವೇಳೆ ಇಬ್ಬರು ಹೆಡ್ ವಾರ್ಡರ್‌ಗಳನ್ನು ನಿಯೋಜಿಸಲಾಗಿದೆ. ಬ್ಯಾರಕ್ ಸುತ್ತಮುತ್ತ ಸಿಸಿಟಿವಿ ಅಳವಡಿಸಿ, ಇತರ ಕೈದಿಗಳ ಸಂಚಾರಕ್ಕೂ ನಿರ್ಬಂಧ ಹೇರಲಾಗಿದೆ.

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧನದಲ್ಲಿರುವ ದರ್ಶನ್, ಜೈಲಿನ ಪರಿಸ್ಥಿತಿಯನ್ನು ಉಲ್ಲೇಖಿಸಿ ಜಾಮೀನು ಕೋರಿದ್ದರು. ಆದರೆ ಜೈಲು ಅಧಿಕಾರಿಗಳ ಪ್ರತಿಕ್ರಿಯೆ ಮತ್ತು ದಾಖಲೆಗಳ ಆಧಾರದ ಮೇಲೆ ಸುಪ್ರೀಂಕೋರ್ಟ್ ಅರ್ಜಿಯನ್ನು ತಿರಸ್ಕರಿಸಿದೆ.

ದಿಲೀಪ್ ರಾಜ್ ಹಠಾತ್ ಸಾವು: ‘ಎದೆ ಉರಿಯನ್ನು ಗ್ಯಾಸ್ಟ್ರಿಕ್ ಅಂತ ನಿರ್ಲಕ್ಷ್ಯ ಮಾಡಿದ್ದರು’ ಎಂದ ಡಾ. ಮಂಜುನಾಥ್

ಬೆಂಗಳೂರು: ನಟ ದಿಲೀಪ್ ರಾಜ್ ಅವರ ಅಕಾಲಿಕ ನಿಧನ ಕನ್ನಡ ಚಿತ್ರರಂಗಕ್ಕೆ ಆಘಾತ ತಂದಿರುವ ಬೆನ್ನಲ್ಲೇ, ಅವರ ಸಾವಿನ ಕುರಿತು ಹೃದ್ರೋಗ ತಜ್ಞ ಹಾಗೂ ಸಂಸದ ಡಾ. ಮಂಜುನಾಥ್ ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ.

ದಿಲೀಪ್ ರಾಜ್ ಅವರಿಗೆ ಹೃದಯಾಘಾತಕ್ಕೂ ಮುನ್ನ ಎದೆ ಉರಿ ಮತ್ತು ಅಸ್ವಸ್ಥತೆ ಕಾಣಿಸಿಕೊಂಡಿತ್ತಂತೆ. ಆದರೆ ಅದನ್ನು ಗ್ಯಾಸ್ಟ್ರಿಕ್ ಎಂದುಕೊಂಡು ನಿರ್ಲಕ್ಷ್ಯ ಮಾಡಲಾಗಿದೆ ಎಂದು ಡಾ. ಮಂಜುನಾಥ್ ತಿಳಿಸಿದ್ದಾರೆ.

“ಈಗ ಹಲವಾರು ಹೃದಯಾಘಾತಗಳು ಗ್ಯಾಸ್ಟ್ರಿಕ್ ರೀತಿಯಲ್ಲಿ ಕಾಣಿಸುತ್ತವೆ. ಜನರು ಅದನ್ನು ಸಾಮಾನ್ಯ ಅಜೀರ್ಣ ಸಮಸ್ಯೆ ಎಂದುಕೊಂಡು ಕಡೆಗಣಿಸುತ್ತಾರೆ. ಅದು ದೊಡ್ಡ ತಪ್ಪು” ಎಂದು ಅವರು ಹೇಳಿದ್ದಾರೆ.

ಇನ್ನೂ ಕೆಲವರಿಗೆ ಗಂಟಲು ನೋವು, ದವಡೆ ನೋವು ಅಥವಾ ಬೆನ್ನಿನ ಮೇಲ್ಭಾಗದಲ್ಲಿ ನೋವು ಕಾಣಿಸಿಕೊಳ್ಳಬಹುದು. ಇವುಗಳೂ ಹೃದಯಾಘಾತದ ಸೂಚನೆಗಳಾಗಿರಬಹುದು ಎಂದು ವೈದ್ಯರು ತಿಳಿಸಿದ್ದಾರೆ. ರಕ್ತದೊತ್ತಡ, ಸಕ್ಕರೆ ಹಾಗೂ ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿಡಬೇಕು ಎಂದು ಸಲಹೆ ನೀಡಿದ್ದಾರೆ.

“ವ್ಯಾಯಾಮ ಒಳ್ಳೆಯದು, ಆದರೆ ಅತಿಯಾದ ವ್ಯಾಯಾಮ ಆರೋಗ್ಯಕ್ಕೆ ಹಾನಿಕಾರಕವಾಗಬಹುದು. ಆರೋಗ್ಯಕರ ಆಹಾರ ಸೇವನೆ, ಉತ್ತಮ ನಿದ್ರೆ ಮತ್ತು ಒತ್ತಡರಹಿತ ಜೀವನ ಬಹಳ ಮುಖ್ಯ. ಇತ್ತೀಚೆಗೆ ಬೇಗ ಯಶಸ್ಸು ಪಡೆಯಬೇಕು ಎನ್ನುವ ಮಾನಸಿಕ ಒತ್ತಡ ಜನರಲ್ಲಿ ಹೆಚ್ಚಾಗಿದೆ. ಅದರಿಂದ ದೇಹದ ಮೇಲೆ ಪರಿಣಾಮ ಬೀಳುತ್ತಿದೆ” ಎಂದು ಡಾ. ಮಂಜುನಾಥ್ ಹೇಳಿದ್ದಾರೆ.

ದಿಲೀಪ್ ರಾಜ್ ಅವರ ಸಾವಿನ ಬಳಿಕ ಸಿನಿಮಾ ಮತ್ತು ಟಿವಿ ಕ್ಷೇತ್ರದ ಒತ್ತಡ, ಆರೋಗ್ಯ ನಿರ್ಲಕ್ಷ್ಯ ಹಾಗೂ ಜೀವನಶೈಲಿಯ ಬಗ್ಗೆ ಮತ್ತೆ ಗಂಭೀರ ಚರ್ಚೆಗಳು ಆರಂಭವಾಗಿವೆ.

error: Content is protected !!