ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ತ್ಯಾಗ, ಬಲಿದಾನ ಹಾಗೂ ಧಾರ್ಮಿಕ ಸೌಹಾರ್ದದ ಸಂಕೇತವಾದ ಮೊಹರಂ ಹಬ್ಬವನ್ನು ಶುಕ್ರವಾರ ಶಿರಹಟ್ಟಿ ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಹಿಂದೂ–ಮುಸ್ಲಿಂ ಬಾಂಧವರು ಶ್ರದ್ಧೆ, ಭಕ್ತಿ ಮತ್ತು ಭಾವೈಕ್ಯತೆಯಿಂದ ಆಚರಿಸಿದರು.
ಹಬ್ಬದ ಅಂಗವಾಗಿ ಪ್ರತಿಷ್ಠಾಪಿಸಲಾದ ಆಲೇ ದೇವರುಗಳು, ಪಾಂಜಾಗಳು ಹಾಗೂ ಡೋಲಿಗಳ ಮೆರವಣಿಗೆಗಳು ಭಕ್ತರ ಗಮನ ಸೆಳೆದವು. ಹೆಜ್ಜೆ ಮೇಳ, ಹರಕೆ ಸೇವೆ, ಅಗ್ನಿ ತುಳಿಯುವುದು ಸೇರಿದಂತೆ ವಿವಿಧ ಧಾರ್ಮಿಕ ಆಚರಣೆಗಳು ಶ್ರದ್ಧಾಭಕ್ತಿಯಿಂದ ನಡೆದವು. ಹರಕೆ ಹೊತ್ತ ಭಕ್ತರು ದೇವರಿಗೆ ಪ್ರಾರ್ಥನೆ ಸಲ್ಲಿಸಿ ತಮ್ಮ ಭಕ್ತಿಯನ್ನು ಸಮರ್ಪಿಸಿದರು.
ಮುಸ್ಲಿಂ ಸಮುದಾಯದ ಭಕ್ತರು ಸಂಪ್ರದಾಯದಂತೆ ಕೆಂಡ ಹಾಯುವ ಸೇವೆ ನೆರವೇರಿಸಿದರೆ, ಹಿಂದೂ ಸಮುದಾಯದ ಭಕ್ತರು ಸಹ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಪೂಜೆ ಸಲ್ಲಿಸಿ ಮೊಹರಂ ಹಬ್ಬದ ಪ್ರತಿಯೊಂದು ಆಚರಣೆಯಲ್ಲೂ ಭಾಗವಹಿಸುವ ಮೂಲಕ ಕೋಮು ಸೌಹಾರ್ದದ ಸಂದೇಶ ಸಾರಿದರು.
ತಾಲೂಕಿನ ಮಾಚೇನಹಳ್ಳಿ ಹಾಗೂ ಪರಸಾಪೂರ ಗ್ರಾಮಗಳಲ್ಲಿ ಮುಸ್ಲಿಂ ಕುಟುಂಬಗಳೇ ಇಲ್ಲದಿದ್ದರೂ, ಹಲವು ವರ್ಷಗಳಿಂದ ಹಿಂದೂ ಸಮುದಾಯದವರು ಸಂಪ್ರದಾಯಬದ್ಧವಾಗಿ ಮೊಹರಂ ಆಚರಿಸಿಕೊಂಡು ಬರುತ್ತಿರುವುದು ವಿಶೇಷವಾಗಿತ್ತು. ಹರಕೆ ಹೊತ್ತ ಭಕ್ತರು ಅಗ್ನಿ ತುಳಿದು ತಮ್ಮ ಭಕ್ತಿಭಾವ ವ್ಯಕ್ತಪಡಿಸಿದರು.
ಮೊಹರಂ ಹಬ್ಬದ ಆಚರಣೆ ಶಿರಹಟ್ಟಿ ತಾಲೂಕಿನಾದ್ಯಂತ ಧರ್ಮಕ್ಕಿಂತ ಮಾನವೀಯತೆ ದೊಡ್ಡದು ಎಂಬ ಸಂದೇಶ ಸಾರುವ ಮೂಲಕ ಹಿಂದೂ–ಮುಸ್ಲಿಂ ಭಾವೈಕ್ಯತೆಗೆ ಮತ್ತೊಮ್ಮೆ ಸಾಕ್ಷಿಯಾಯಿತು.

