Home Blog Page 4

ಡ್ರೆಸ್ಸಿಂಗ್ ರೂಮ್ʼನಲ್ಲಿ ಸ್ಮಾರ್ಟ್ ಗ್ಲಾಸ್ ನಿಷೇಧ: ಕ್ರಿಕೆಟ್ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು BCCI ಪ್ಲಾನ್

ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯಗಳ ವೇಳೆ ಭ್ರಷ್ಟಾಚಾರ ಮತ್ತು ರಹಸ್ಯ ಮಾಹಿತಿ ಸೋರಿಕೆಯನ್ನು ತಡೆಯಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಹೊಸ ಕಟ್ಟುನಿಟ್ಟಿನ ನಿಯಮ ಜಾರಿಗೆ ತಂದಿದೆ. ಆಟಗಾರರು ಹಾಗೂ ಪಂದ್ಯದ ಅಧಿಕಾರಿಗಳು ಮೈದಾನ ಮತ್ತು ಡ್ರೆಸ್ಸಿಂಗ್ ರೂಮ್‌ಗಳಲ್ಲಿ ಅತ್ಯಾಧುನಿಕ ಸ್ಮಾರ್ಟ್ ಸನ್‌ಗ್ಲಾಸ್ ಧರಿಸುವುದನ್ನು ಬಿಸಿಸಿಐನ ಆಂಟಿ-ಕರಪ್ಷನ್ ಯುನಿಟ್ ಸಂಪೂರ್ಣವಾಗಿ ನಿಷೇಧಿಸಿದೆ.

ಕೇವಲ ಮೈದಾನದಲ್ಲಷ್ಟೇ ಅಲ್ಲದೆ, ಕ್ರೀಡಾಂಗಣದ ಸೂಕ್ಷ್ಮ ಪ್ರದೇಶಗಳಾದ ಪಿಎಂಒಎ ವಲಯಕ್ಕೂ ಇಂತಹ ಸ್ಮಾರ್ಟ್ ಗ್ಲಾಸ್‌ಗಳನ್ನು ಕೊಂಡೊಯ್ಯುವುದನ್ನು ಕಟ್ಟುನಿಟ್ಟಾಗಿ ನಿರ್ಬಂಧಿಸಲಾಗಿದೆ.

ಇತ್ತೀಚಿನ ಸ್ಮಾರ್ಟ್ ಸನ್‌ಗ್ಲಾಸ್‌ಗಳಲ್ಲಿ ಲೈವ್ ಸ್ಟ್ರೀಮಿಂಗ್, ಆಡಿಯೋ-ವಿಡಿಯೋ ಕಾಲಿಂಗ್, ರಹಸ್ಯ ಕ್ಯಾಮೆರಾ ಹಾಗೂ ಟೆಕ್ಸ್ಟ್ ಮೆಸೇಜಿಂಗ್‌ ಸೇರಿದಂತೆ ಹಲವು ತಂತ್ರಜ್ಞಾನ ಸೌಲಭ್ಯಗಳಿವೆ. ಹೀಗಾಗಿ ಬಿಸಿಸಿಐ ಇದನ್ನು ಕೇವಲ ಕನ್ನಡಕವಲ್ಲ, ಪ್ರಮುಖ ‘ಸಂವಹನ ಸಾಧನ’ ಎಂದು ಪರಿಗಣಿಸಿದೆ.

ಪಂದ್ಯದ ವೇಳೆ ಡ್ರೆಸ್ಸಿಂಗ್ ರೂಮ್ ಅಥವಾ ಡಗೌಟ್‌ನಿಂದ ಪಿಚ್ ಪರಿಸ್ಥಿತಿ, ತಂಡದ ತಂತ್ರಗಳು ಮತ್ತು ಲೈವ್ ಅಪ್‌ಡೇಟ್‌ಗಳು ಹೊರಗಿನ ಬುಕ್ಕಿಗಳಿಗೆ ಸೋರಿಕೆಯಾಗುವ ಸಾಧ್ಯತೆಯನ್ನು ತಡೆಯುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ.

ಆಟಗಾರರ ಡ್ರೆಸ್ಸಿಂಗ್ ರೂಮ್, ಟೀಮ್ ಡಗೌಟ್, ಅಂಪೈರ್ ಹಾಗೂ ಮ್ಯಾಚ್ ರೆಫರಿಗಳ ಕೊಠಡಿಗಳು ಮತ್ತು ಆಟಗಾರರು ಕುಳಿತುಕೊಳ್ಳುವ ವಿಶೇಷ ಗ್ಯಾಲರಿಗಳಲ್ಲಿಯೂ ಈ ನಿಯಮ ಅನ್ವಯವಾಗಲಿದೆ.

ಹೊಸ ನಿಯಮದ ಪ್ರಕಾರ, ಪಂದ್ಯದ ದಿನ ಆಟಗಾರರು ಹಾಗೂ ಸಪೋರ್ಟ್ ಸ್ಟಾಫ್ ಪಿಎಂಒಎ ವಲಯ ಪ್ರವೇಶಿಸುವ ಮೊದಲು ತಮ್ಮ ಮೊಬೈಲ್ ಫೋನ್, ಸ್ಮಾರ್ಟ್ ವಾಚ್ ಮತ್ತು ಸ್ಮಾರ್ಟ್ ಸನ್‌ಗ್ಲಾಸ್‌ಗಳನ್ನು ಸೆಕ್ಯೂರಿಟಿ ಲೈಸನ್ ಅಧಿಕಾರಿಗಳ ಬಳಿ ಜಮಾ ಮಾಡಬೇಕಾಗುತ್ತದೆ.

ಒಂದು ವೇಳೆ ಈ ನಿಯಮ ಉಲ್ಲಂಘಿಸಿ ಸ್ಮಾರ್ಟ್ ಸಾಧನಗಳನ್ನು ಬಳಸಿರುವುದು ಪತ್ತೆಯಾದರೆ ಸಂಬಂಧಪಟ್ಟ ಆಟಗಾರರು ಅಥವಾ ಸಿಬ್ಬಂದಿ ವಿರುದ್ಧ ಕಠಿಣ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ. ಜೊತೆಗೆ ಭಾರೀ ಮೊತ್ತದ ದಂಡವೂ ವಿಧಿಸಲಾಗುತ್ತದೆ.

ಇತ್ತೀಚೆಗೆ ರಾಜಸ್ಥಾನ್ ರಾಯಲ್ಸ್ ತಂಡದ ಮ್ಯಾನೇಜರ್ ಒಬ್ಬರು ಡಗೌಟ್‌ನಲ್ಲಿ ಮೊಬೈಲ್ ಬಳಸಿದ್ದಕ್ಕಾಗಿ ಬಿಸಿಸಿಐ 1 ಲಕ್ಷ ರೂಪಾಯಿ ದಂಡ ವಿಧಿಸಿದ್ದನ್ನು ಇಲ್ಲಿ ಉಲ್ಲೇಖಿಸಬಹುದು.

ಈ ನಿಷೇಧವು ಬ್ಲೂಟೂತ್, ಕ್ಯಾಮೆರಾ ಅಥವಾ ಇಂಟರ್ನೆಟ್ ಸಂಪರ್ಕ ಹೊಂದಿರುವ ‘ಸ್ಮಾರ್ಟ್’ ಸನ್‌ಗ್ಲಾಸ್‌ಗಳಿಗೆ ಮಾತ್ರ ಅನ್ವಯಿಸುತ್ತದೆ. ಸಾಮಾನ್ಯ ಕ್ರೀಡಾ ಸನ್‌ಗ್ಲಾಸ್‌ಗಳನ್ನು ಆಟಗಾರರು ಫೀಲ್ಡಿಂಗ್ ವೇಳೆ ಬಳಸಲು ಯಾವುದೇ ನಿರ್ಬಂಧ ಇರುವುದಿಲ್ಲ.

ಇದರ ಜೊತೆಗೆ ಮೊಬೈಲ್ ಫೋನ್, ಸ್ಮಾರ್ಟ್‌ಫೋನ್, ಸ್ಮಾರ್ಟ್ ವಾಚ್, ಲ್ಯಾಪ್‌ಟಾಪ್, ಟ್ಯಾಬ್ಲೆಟ್, ಬ್ಲೂಟೂತ್ ಇಯರ್‌ಫೋನ್, ಫಿಟ್ನೆಸ್ ಬ್ಯಾಂಡ್, ಡಿಜಿಟಲ್ ಕ್ಯಾಮೆರಾ, ವಿಡಿಯೋ ರೆಕಾರ್ಡರ್ ಹಾಗೂ ಪೋರ್ಟಬಲ್ ಸ್ಪೀಕರ್‌ಗಳ ಬಳಕೆಯ ಮೇಲೂ ನಿಯಂತ್ರಣ ವಿಧಿಸಲಾಗಿದೆ.

ಆದರೆ ತಂಡದ ಅಧಿಕೃತ ಡೇಟಾ ಅನಾಲಿಸ್ಟ್‌ಗೆ ಪಂದ್ಯ ವಿಶ್ಲೇಷಣೆಗೆ ಒಂದು ಲ್ಯಾಪ್‌ಟಾಪ್ ಬಳಸಲು ಅವಕಾಶ ನೀಡಲಾಗಿದೆ. ಲಾಜಿಸ್ಟಿಕ್ಸ್ ಮತ್ತು ತುರ್ತು ಆಡಳಿತಾತ್ಮಕ ಕೆಲಸಗಳಿಗಾಗಿ ತಂಡದ ಮ್ಯಾನೇಜರ್‌ಗೆ ಫೋನ್ ಬಳಕೆಗೆ ಅನುಮತಿ ಇದ್ದರೂ, ಅದನ್ನು ಡ್ರೆಸ್ಸಿಂಗ್ ರೂಮ್ ಒಳಗಡೆ ಮಾತ್ರ ಬಳಸಬೇಕಿದೆ. ಡಗೌಟ್‌ಗೆ ತರುವಂತಿಲ್ಲ ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ.

ಮಂಗಳೂರಿನಲ್ಲಿ ಪದವೀಧರರಿಗೆ ಉದ್ಯೋಗಾವಕಾಶ: ಮೇ 30ರಂದು ‘ವಿ.ಆರ್.ಎನ್ ಇನ್ನೋಟೆಕ್’ ವತಿಯಿಂದ ನೇರ ಸಂದರ್ಶನ

ಮಂಗಳೂರು: ಉದ್ಯೋಗದ ನಿರೀಕ್ಷೆಯಲ್ಲಿರುವ ಪದವೀಧರ ಯುವಕ-ಯುವತಿಯರಿಗೆ ಕರ್ನಾಟಕ ಸರ್ಕಾರದ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ ಉತ್ತಮ ಅವಕಾಶವನ್ನು ಕಲ್ಪಿಸಿದೆ. ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ (ದಕ್ಷಿಣ ಕನ್ನಡ ಜಿಲ್ಲೆ) ಸಹಯೋಗದಲ್ಲಿ ಪ್ರತಿಷ್ಠಿತ ‘ವಿ.ಆರ್.ಎನ್ ಇನ್ನೋಟೆಕ್’ ಸಂಸ್ಥೆ ಖಾಲಿ ಹುದ್ದೆಗಳ ಭರ್ತಿಗಾಗಿ ನೇರ ಸಂದರ್ಶನ ಕಾರ್ಯಕ್ರಮವನ್ನು ಆಯೋಜಿಸಿದೆ.

ಈ ನೇಮಕಾತಿ ಪ್ರಕ್ರಿಯೆಯಡಿ ಕಸ್ಟಮರ್ ಸಪೋರ್ಟ್ ಎಕ್ಸಿಕ್ಯೂಟಿವ್ ಹಾಗೂ ಟೆಲಿಕಾಲರ್ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದೆ. ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ ಪಡೆದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ.

ಇದೇ ವೇಳೆ ಅಭ್ಯರ್ಥಿಗಳಿಗೆ ಮಲಯಾಳಂ, ಹಿಂದಿ, ಇಂಗ್ಲಿಷ್ ಅಥವಾ ತಮಿಳು ಭಾಷೆಗಳಲ್ಲಿ ಯಾವುದಾದರೂ ಒಂದು ಅಥವಾ ಹೆಚ್ಚು ಭಾಷೆಗಳ ಜ್ಞಾನವಿರುವುದು ಕಡ್ಡಾಯವಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ನೇರ ಸಂದರ್ಶನವು ಮೇ 30ರಂದು (ಶನಿವಾರ) ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ನಡೆಯಲಿದೆ. ಅಭ್ಯರ್ಥಿಗಳು ನಿಗದಿತ ಸಮಯದೊಳಗೆ ಹಾಜರಾಗುವಂತೆ ಸೂಚಿಸಲಾಗಿದೆ.

ಸಂದರ್ಶನ ನಡೆಯುವ ಸ್ಥಳ: ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಕೊಠಡಿ ಸಂಖ್ಯೆ 04, ನೆಲಮಹಡಿ, ಪ್ರಜಾ ಸೌಧ, ಜಿಲ್ಲಾಡಳಿತ ಭವನ ಕಟ್ಟಡ, ಪಡೀಲ್, ಮಂಗಳೂರು – 575007.

ಸಂದರ್ಶನದಲ್ಲಿ ಭಾಗವಹಿಸಲು ಆಸಕ್ತ ಅಭ್ಯರ್ಥಿಗಳು ತಮ್ಮ ಸಂಪೂರ್ಣ ವಿವರಗಳಿರುವ ಅಪ್ಡೇಟೆಡ್ ಬಯೋಡೇಟಾ ಜೊತೆಗೆ ನೇರವಾಗಿ ಸಂದರ್ಶನ ಸ್ಥಳಕ್ಕೆ ಹಾಜರಾಗಬೇಕು. ಈ ಉದ್ಯೋಗ ಸಂದರ್ಶನ ಸಂಪೂರ್ಣ ಉಚಿತವಾಗಿದ್ದು, ಯಾವುದೇ ರೀತಿಯ ಶುಲ್ಕ ಪಾವತಿಸುವ ಅಗತ್ಯವಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು 0824 2457139 ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.

ಆರ್ಥಿಕ ಸಂಕಷ್ಟದಲ್ಲಿರುವ BMTC ಹೊಸ ಪ್ಲಾನ್: ಇದೀಗ ಬಸ್ ಟಿಕೆಟ್ʼಗಳ ಮೇಲೂ ಜಾಹೀರಾತು

ಬೆಂಗಳೂರು: ಆರ್ಥಿಕ ಸಂಕಷ್ಟ ಮತ್ತು ಸಾಲದ ಒತ್ತಡದಿಂದ ಬಳಲುತ್ತಿರುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ), ಇದೀಗ ಹೊಸ ಆದಾಯ ಮೂಲದ ಹುಡುಕಾಟಕ್ಕೆ ಮುಂದಾಗಿದೆ. ಈಗಾಗಲೇ ಬಸ್‌ಗಳ ಮೇಲೆ ಜಾಹೀರಾತು ಪ್ರದರ್ಶಿಸುತ್ತಿರುವ ನಿಗಮ, ಇನ್ನು ಮುಂದೆ ಪ್ರಯಾಣಿಕರಿಗೆ ನೀಡುವ ಟಿಕೆಟ್‌ಗಳ ಮೇಲೂ ಜಾಹೀರಾತು ಮುದ್ರಿಸಲು ಟೆಂಡರ್ ಆಹ್ವಾನಿಸಿದೆ.

ನೌಕರರ ವೇತನ ಪರಿಷ್ಕರಣೆ ಹಾಗೂ ಬಾಕಿ ಪಾವತಿಗೆ ಹಣದ ಕೊರತೆ ಎದುರಿಸುತ್ತಿರುವ ಹಿನ್ನೆಲೆಯಲ್ಲಿ, ಹೆಚ್ಚುವರಿ ಆದಾಯ ಗಳಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.

ಪ್ರತಿದಿನ ಸುಮಾರು 6,275 ಬಸ್‌ಗಳಲ್ಲಿ 45 ಲಕ್ಷಕ್ಕೂ ಅಧಿಕ ಪ್ರಯಾಣಿಕರು ಸಂಚರಿಸುತ್ತಿದ್ದು, ಈ ಬೃಹತ್ ಸಾರಿಗೆ ಜಾಲವನ್ನು ಬಳಸಿಕೊಂಡು ಒಂದು ವರ್ಷದ ಅವಧಿಗೆ ಟಿಕೆಟ್ ಜಾಹೀರಾತು ನೀಡಲು ಅವಕಾಶ ಕಲ್ಪಿಸಲಾಗಿದೆ.

ಸದ್ಯ ಬಿಎಂಟಿಸಿ ಜಾಹೀರಾತುಗಳಿಂದ ವಾರ್ಷಿಕವಾಗಿ ಸುಮಾರು 57.48 ಕೋಟಿ ರೂಪಾಯಿ ಆದಾಯ ಗಳಿಸುತ್ತಿದ್ದು, ಟಿಕೆಟ್‌ಗಳ ಮೇಲಿನ ಜಾಹೀರಾತು ಯೋಜನೆಯಿಂದ ಆದಾಯ ಇನ್ನಷ್ಟು ಹೆಚ್ಚುವ ನಿರೀಕ್ಷೆಯಿದೆ.

ಈ ಕ್ರಮಕ್ಕೆ ಸಾರ್ವಜನಿಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆದಾಯ ಹೆಚ್ಚಿಸಲು ಇದು ಉತ್ತಮ ನಿರ್ಧಾರವಾದರೂ, ಟಿಕೆಟ್‌ಗಳ ಮೇಲೆ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವ ಜಾಹೀರಾತುಗಳನ್ನೇ ಪ್ರಕಟಿಸಬೇಕು ಎಂದು ಪ್ರಯಾಣಿಕರು ಒತ್ತಾಯಿಸಿದ್ದಾರೆ.

ಗುಟ್ಕಾ, ಪಾನ್ ಮಸಾಲಾ, ಮದ್ಯಪಾನ ಅಥವಾ ಯಾವುದೇ ಅಶ್ಲೀಲ ಜಾಹೀರಾತುಗಳನ್ನು ಪ್ರಕಟಿಸಬಾರದು ಎಂಬ ಬೇಡಿಕೆಯೂ ವ್ಯಕ್ತವಾಗಿದೆ.

ಈ ಸಾರ್ವಜನಿಕ ಅಭಿಪ್ರಾಯಕ್ಕೆ ಸ್ಪಂದಿಸಿರುವ ಬಿಎಂಟಿಸಿ, ತಂಬಾಕು ಉತ್ಪನ್ನಗಳು, ಮಾದಕ ದ್ರವ್ಯಗಳು ಹಾಗೂ ಅಶ್ಲೀಲ ವಸ್ತುಗಳಿಗೆ ಸಂಬಂಧಿಸಿದ ಜಾಹೀರಾತುಗಳಿಗೆ ಸಂಪೂರ್ಣ ನಿಷೇಧ ಹೇರಿದೆ.

ಒಟ್ಟಿನಲ್ಲಿ, ನೌಕರರ ಬೇಡಿಕೆಗಳನ್ನು ಈಡೇರಿಸಲು ಹಣಕಾಸಿನ ಸಂಕಷ್ಟ ಎದುರಿಸುತ್ತಿರುವ ಬಿಎಂಟಿಸಿಗೆ ಟಿಕೆಟ್ ಜಾಹೀರಾತಿನ ಹೊಸ ಯೋಜನೆ ಎಷ್ಟು ಮಟ್ಟಿಗೆ ನೆರವಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.

‘ಸಿದ್ದರಾಮಯ್ಯ ಕುರ್ಚಿ ಬಿಡ್ತಾರೆ’ ಎಂದಿತ್ತು ಬೊಂಬೆ! 40 ದಿನಗಳ ಬಳಿಕ ನಿಜವಾದ ಧಾರವಾಡದ ಭವಿಷ್ಯ?

0

ಧಾರವಾಡ: ಯುಗಾದಿ ದಿನ ನುಡಿದ ಭವಿಷ್ಯ ಈಗ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಧಾರವಾಡ ಜಿಲ್ಲೆಯ ಹನುಮನಕೊಪ್ಪ ಗ್ರಾಮದಲ್ಲಿ ಪ್ರತಿ ವರ್ಷ ನಡೆಯುವ ಸಾಂಪ್ರದಾಯಿಕ ‘ಬೊಂಬೆ ಭವಿಷ್ಯ’ದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರ ತ್ಯಜಿಸುವ ಸೂಚನೆ ಸಿಕ್ಕಿತ್ತು ಎಂದು ಗ್ರಾಮಸ್ಥರು ಹೇಳುತ್ತಿದ್ದು, ಇದೀಗ ಅವರ ರಾಜೀನಾಮೆಯೊಂದಿಗೆ ಆ ಭವಿಷ್ಯ ಮತ್ತೆ ಗಮನ ಸೆಳೆದಿದೆ.

ಹನುಮನಕೊಪ್ಪದಲ್ಲಿ ಯುಗಾದಿ ಅಮಾವಾಸ್ಯೆಯಂದು ಗ್ರಾಮಸ್ಥರು ವಿಶೇಷ ಪೂಜೆ ನೆರವೇರಿಸಿ ಮಣ್ಣಿನ ಗದ್ದುಗೆ ಮೇಲೆ ವಿವಿಧ ಸಂಕೇತಾತ್ಮಕ ಬೊಂಬೆಗಳನ್ನು ಸ್ಥಾಪಿಸುತ್ತಾರೆ. ರಾಜಕೀಯ, ಕೃಷಿ, ಮಳೆ ಹಾಗೂ ಸಾಮಾಜಿಕ ಬೆಳವಣಿಗೆಗಳನ್ನು ಸೂಚಿಸುವ ಈ ಬೊಂಬೆಗಳ ಸ್ಥಿತಿಯನ್ನು ಆಧರಿಸಿ ಮುಂದಿನ ವರ್ಷದ ಭವಿಷ್ಯ ನಿರ್ಧರಿಸಲಾಗುತ್ತದೆ.

ಈ ಬಾರಿ ಕರ್ನಾಟಕದ ದಿಕ್ಕನ್ನು ಪ್ರತಿನಿಧಿಸುವ ಬೊಂಬೆಗೆ ಹಾನಿಯಾಗಿದ್ದ ಕಾರಣ ರಾಜ್ಯ ರಾಜಕೀಯದಲ್ಲಿ ದೊಡ್ಡ ಬದಲಾವಣೆ ಸಂಭವಿಸಲಿದೆ ಎಂದು ಹಿರಿಯರು ಅಭಿಪ್ರಾಯಪಟ್ಟಿದ್ದರು. ಅದರ ಬೆನ್ನಲ್ಲೇ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿರುವುದು ಬೊಂಬೆ ಭವಿಷ್ಯದ ಬಗ್ಗೆ ಹೊಸ ಚರ್ಚೆಗೆ ಕಾರಣವಾಗಿದೆ.

ಗ್ರಾಮಸ್ಥರ ಪ್ರಕಾರ, ಈ ಹಿಂದೆ ಇಂದಿರಾ ಗಾಂಧಿ ಹತ್ಯೆ, ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನ ತ್ಯಜಿಸಿದ ಸಂದರ್ಭ ಸೇರಿದಂತೆ ಹಲವು ಬೆಳವಣಿಗೆಗಳಿಗೂ ಬೊಂಬೆ ಭವಿಷ್ಯ ಹೊಂದಿಕೆಯಾಗಿತ್ತು. ಹೀಗಾಗಿ ಈ ಸಂಪ್ರದಾಯದ ಬಗ್ಗೆ ಜನರಲ್ಲಿ ಈಗಲೂ ವಿಶೇಷ ನಂಬಿಕೆ ಮುಂದುವರಿದಿದೆ.

ಹಣ ಡಬ್ಲಿಂಗ್ ದಂಧೆ ಬಯಲಿಗೆಳೆದಿದ್ದ ವ್ಯಕ್ತಿ ಸಾವು: ‘ಖೋಟಾನೋಟ್’ ಚಂದ್ರ ಬಂಧನ

ಚಿತ್ರದುರ್ಗ: ಹಣ ಡಬ್ಲಿಂಗ್ ದಂಧೆಯ ಕರಾಳ ಮುಖವನ್ನು ಬಯಲಿಗೆಳೆದಿದ್ದ ವ್ಯಕ್ತಿಯೊಬ್ಬ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಪ್ರಕರಣ ಇದೀಗ ಕೊಲೆ ಪ್ರಕರಣವಾಗಿ ತಿರುವು ಪಡೆದುಕೊಂಡಿದೆ. ಈ ಸಂಬಂಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಚಂದ್ರಶೇಖರ್ ಅಲಿಯಾಸ್ ‘ಕೋಟಾನೋಟ್’ ಚಂದ್ರನನ್ನು ಚಿತ್ರದುರ್ಗ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.

ಪೊಲೀಸ್ ಮೂಲಗಳ ಪ್ರಕಾರ, ಮಲ್ಲಿಕಾರ್ಜುನ ಅವರಿಗೆ ಸಾಲ ವ್ಯವಸ್ಥೆ ಮಾಡಿಕೊಡುವುದಾಗಿ ನಂಬಿಸಿ, ಅವರ ಬ್ಯಾಂಕ್ ಖಾತೆ ಮೂಲಕ ಅಕ್ರಮ ಹಣಕಾಸು ವ್ಯವಹಾರ ನಡೆಸಲಾಗುತ್ತಿತ್ತು. ಈ ದಂಧೆಗೆ ಸಂಬಂಧಿಸಿದ ಪ್ರಕರಣದಲ್ಲಿ ಮಲ್ಲಿಕಾರ್ಜುನ ಸಾಕ್ಷಿಯಾಗಿದ್ದ ಕಾರಣ ಆರೋಪಿಗಳು ಆತಂಕಗೊಂಡಿದ್ದರು ಎನ್ನಲಾಗಿದೆ.

ಏಪ್ರಿಲ್ 14ರಂದು ಅಪಘಾತದಲ್ಲಿ ಗಾಯಗೊಂಡಿದ್ದ ಮಲ್ಲಿಕಾರ್ಜುನ ಆಸ್ಪತ್ರೆಯಿಂದ ಬಿಡುಗಡೆಯಾದ ಬಳಿಕ ಚಂದ್ರಶೇಖರ್‌ಗೆ ಸೇರಿದ ತೋಟದಲ್ಲಿ ಇರಿಸಲಾಗಿತ್ತು ಎಂಬ ಆರೋಪ ಕೇಳಿಬಂದಿದೆ. ಮೇ 1ರಂದು ಅದೇ ತೋಟದ ಮನೆಯಲ್ಲಿ ಅವರು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.

ಮೃತನ ಪತ್ನಿ ಆಶಾ ನೀಡಿದ ದೂರಿನಲ್ಲಿ, ಅಕ್ರಮ ಹಣಕಾಸು ದಂಧೆಯ ರಹಸ್ಯ ಮುಚ್ಚಿಹಾಕಲು ಹಲ್ಲೆ ನಡೆಸಿ ಕೊಲೆ ಮಾಡಲಾಗಿದೆ ಎಂದು ಆರೋಪಿಸಿದ್ದರು. ಈ ದೂರಿನ ಆಧಾರದ ಮೇಲೆ ಚಂದ್ರಶೇಖರ್ ಮತ್ತು ಸದಾಶಿವ ನಾಯಕರನ್ನು ಬಂಧಿಸಲಾಗಿದೆ.

ಪ್ರಕರಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾನೆ ಎನ್ನಲಾಗಿರುವ ಚಂದ್ರಶೇಖರ್ ಪುತ್ರ ವಿನಾಯಕ್ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕಾಗಿ ಪೊಲೀಸರು ತೀವ್ರ ಶೋಧ ಕಾರ್ಯ ನಡೆಸುತ್ತಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿದ್ದು, ಇನ್ನಷ್ಟು ಅಚ್ಚರಿಯ ಮಾಹಿತಿಗಳು ಹೊರಬರುವ ಸಾಧ್ಯತೆ ಇದೆ.

ರಾಜೀನಾಮೆ ಬೆನ್ನಲ್ಲೇ ಡಿಕೆಶಿ ಭಾವುಕ ಪೋಸ್ಟ್! ‘ಸಿದ್ದರಾಮಯ್ಯರಿಲ್ಲದೆ ಈ ಪಯಣ ಸಾಧ್ಯವಿರಲಿಲ್ಲ’ ಎಂದ ಡಿಸಿಎಂ

ಬೆಂಗಳೂರು: ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಿದ ಬೆನ್ನಲ್ಲೇ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಾಮಾಜಿಕ ಜಾಲತಾಣದಲ್ಲಿ ಭಾವುಕ ಸಂದೇಶ ಹಂಚಿಕೊಂಡಿದ್ದಾರೆ. ಐದು ದಶಕಗಳ ರಾಜಕೀಯ ಹೋರಾಟ, ಸಾಮಾಜಿಕ ನ್ಯಾಯದ ಪರ ಬದ್ಧತೆ ಹಾಗೂ ಜನಪರ ಆಡಳಿತಕ್ಕಾಗಿ ಸಿದ್ದರಾಮಯ್ಯ ಅವರನ್ನು ಮುಕ್ತಕಂಠದಿಂದ ಶ್ಲಾಘಿಸಿರುವ ಡಿಕೆಶಿ, ಮುಂದಿನ ದಿನಗಳಲ್ಲೂ ಅವರ ಮಾರ್ಗದರ್ಶನ ಅಗತ್ಯ ಎಂದು ಹೇಳಿದ್ದಾರೆ.

ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಡಿಕೆ ಶಿವಕುಮಾರ್, “ದೇವರು ವರ ಅಥವಾ ಶಾಪ ನೀಡುವುದಿಲ್ಲ, ಆತ ಅವಕಾಶಗಳನ್ನು ಮಾತ್ರ ನೀಡುತ್ತಾನೆ. ಆ ಅವಕಾಶವನ್ನು ಹೇಗೆ ಬಳಸಿಕೊಳ್ಳುತ್ತೇವೆ ಎಂಬುದೇ ವ್ಯಕ್ತಿಯ ಸಾಧನೆಯನ್ನು ನಿರ್ಧರಿಸುತ್ತದೆ. ಈ ಮಾತಿಗೆ ಸಿದ್ದರಾಮಯ್ಯ ಅವರ ಜೀವನವೇ ಅತ್ಯುತ್ತಮ ಉದಾಹರಣೆ” ಎಂದು ಹೇಳಿದ್ದಾರೆ.

ಮೈಸೂರು ಜಿಲ್ಲೆಯ ಸಣ್ಣ ಹಳ್ಳಿಯಿಂದ ರಾಜಕೀಯ ಪಯಣ ಆರಂಭಿಸಿ, ರಾಜ್ಯದ ಅತ್ಯಂತ ಪ್ರಭಾವಿ ನಾಯಕರಾಗಿ ಬೆಳೆದಿರುವ ಸಿದ್ದರಾಮಯ್ಯ ಅವರು ಸಾಮಾಜಿಕ ನ್ಯಾಯದ ಹರಿಕಾರ ಹಾಗೂ ಬಡವರ ಪರ ಧ್ವನಿಯಾಗಿದ್ದಾರೆ ಎಂದು ಡಿಕೆಶಿ ಬಣ್ಣಿಸಿದ್ದಾರೆ.

“2020ರಲ್ಲಿ ನಾನು ಕೆಪಿಸಿಸಿ ಅಧ್ಯಕ್ಷನಾದ ದಿನದಿಂದ ಇಂದಿನವರೆಗೂ ಸಿದ್ದರಾಮಯ್ಯ ಅವರು ಹೆಗಲಿಗೆ ಹೆಗಲು ಕೊಟ್ಟು ಪಕ್ಷ ಸಂಘಟನೆಯಲ್ಲಿ ಭದ್ರ ಸ್ತಂಭವಾಗಿ ನಿಂತಿದ್ದಾರೆ. ಸಚಿವನಾಗಿ ಹಾಗೂ ಉಪಮುಖ್ಯಮಂತ್ರಿಯಾಗಿ ಅವರ ಅನುಭವ ಮತ್ತು ರಾಜಕೀಯ ದೂರದೃಷ್ಟಿಯಿಂದ ಕಲಿಯುವ ಅವಕಾಶ ನನಗೆ ದೊರಕಿದೆ” ಎಂದು ಅವರು ಉಲ್ಲೇಖಿಸಿದ್ದಾರೆ.

ಕೊನೆಯಲ್ಲಿ “ವೇಗವಾಗಿ ನಡೆಯಬೇಕಾದರೆ ಒಬ್ಬನೇ ನಡೆಯಬೇಕು, ದೂರ ಸಾಗಬೇಕಾದರೆ ಜೊತೆಯಾಗಿ ನಡೆಯಬೇಕು” ಎಂಬ ನಾಣ್ಣುಡಿಯ ಮೂಲಕ ರಾಜ್ಯದ ಅಭಿವೃದ್ಧಿಗಾಗಿ ಎಲ್ಲರೂ ಒಗ್ಗಟ್ಟಾಗಿ ಮುಂದುವರಿಯುವ ಸಂದೇಶ ನೀಡಿದ್ದಾರೆ.

ರಾಜೀನಾಮೆ ಬಳಿಕ ದೆಹಲಿಯಲ್ಲಿ ಸಿದ್ದರಾಮಯ್ಯ ಬ್ಯುಸಿ: ರಾಹುಲ್ ಗಾಂಧಿ, ಖರ್ಗೆ ಜೊತೆ ಮಹತ್ವದ ಚರ್ಚೆ

ಬೆಂಗಳೂರು/ನವದೆಹಲಿ: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಶುಕ್ರವಾರ ದೆಹಲಿಯಲ್ಲಿ ಕಾಂಗ್ರೆಸ್ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿ ರಾಜ್ಯ ರಾಜಕೀಯ ಬೆಳವಣಿಗೆಗಳ ಕುರಿತು ಮಹತ್ವದ ಚರ್ಚೆ ನಡೆಸಿದರು.

ರಾಜೀನಾಮೆ ಬಳಿಕ ದೆಹಲಿಗೆ ತೆರಳಿದ ಸಿದ್ದರಾಮಯ್ಯ ಅವರು ಮೊದಲಿಗೆ ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ ನಿವಾಸಕ್ಕೆ ಭೇಟಿ ನೀಡಿದರು. ಈ ವೇಳೆ ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರೊಂದಿಗೆ ಮಾತುಕತೆ ನಡೆಸಿದರು.

ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಎಐಸಿಸಿ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ, “ಸಿದ್ದರಾಮಯ್ಯ ಅವರು ಇಂದು ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿದ್ದಾರೆ. ಇದು ಆತ್ಮೀಯ ಹಾಗೂ ಸೌಹಾರ್ದಯುತ ಭೇಟಿ ಆಗಿತ್ತು. ಹಲವು ರಾಜಕೀಯ ವಿಚಾರಗಳ ಕುರಿತು ಚರ್ಚೆ ನಡೆಯಿತು” ಎಂದು ತಿಳಿಸಿದರು.

ಅದಾದ ಬಳಿಕ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿ ಕೆಲಕಾಲ ಮಹತ್ವದ ಚರ್ಚೆ ನಡೆಸಿದರು.

ಈ ಸಂದರ್ಭದಲ್ಲಿ ಪುತ್ರ ಡಾ. ಯತೀಂದ್ರ ಸಿದ್ದರಾಮಯ್ಯ, ಶಾಸಕರಾದ ಪ್ರಿಯಾಂಕ್ ಖರ್ಗೆ, ಕೆ.ಜೆ. ಜಾರ್ಜ್ ಸೇರಿದಂತೆ ಹಲವು ನಾಯಕರು ಉಪಸ್ಥಿತರಿದ್ದರು.

ಈ ಕುರಿತು ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಸಿದ್ದರಾಮಯ್ಯ, “ಇಂದು ದೆಹಲಿಯಲ್ಲಿ ಕಾಂಗ್ರೆಸ್ ಹಿರಿಯ ನಾಯಕ ರಾಹುಲ್ ಗಾಂಧಿ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದೆ. ಈ ವೇಳೆ ಕೆ.ಜೆ. ಜಾರ್ಜ್, ಪ್ರಿಯಾಂಕ್ ಖರ್ಗೆ ಹಾಗೂ ಡಾ. ಯತೀಂದ್ರ ಸಿದ್ದರಾಮಯ್ಯ ನನ್ನೊಂದಿಗಿದ್ದರು” ಎಂದು ತಿಳಿಸಿದ್ದಾರೆ.

‘ಗೌರನಾಯ್ಡು’ ಅಸಲಿ ರೋಲ್ ಏನು? ಒಂದೇ ನಗುವಿನಿಂದ ‘ಪೆದ್ದಿ’ ರಹಸ್ಯ ಮತ್ತಷ್ಟು ಗಾಢ ಮಾಡಿದ ಶಿವಣ್ಣ!

‘ಪೆದ್ದಿ’ ಸಿನಿಮಾದಲ್ಲಿ ಶಿವರಾಜ್‌ಕುಮಾರ್ ನಿರ್ವಹಿಸಿರುವ ‘ಗೌರನಾಯ್ಡು’ ಪಾತ್ರವೇ ಈಗ ಚಿತ್ರದ ಅತಿದೊಡ್ಡ ಸಸ್ಪೆನ್ಸ್ ಆಗಿ ಪರಿಣಮಿಸಿದೆ. ಟ್ರೈಲರ್‌ನಲ್ಲಿ ಪಾತ್ರದ ಬಗ್ಗೆ ಯಾವುದೇ ಸ್ಪಷ್ಟ ಸುಳಿವು ನೀಡದ ಚಿತ್ರತಂಡ, ಕುತೂಹಲವನ್ನು ಉದ್ದೇಶಪೂರ್ವಕವಾಗಿ ಜೀವಂತವಾಗಿಟ್ಟಿದೆ.

ಸಂದರ್ಶನವೊಂದರಲ್ಲಿ ಮಾತನಾಡಿದ ಶಿವಣ್ಣ, ಈ ಪಾತ್ರ ತಮ್ಮ ವೃತ್ತಿಜೀವನದಲ್ಲೇ ವಿಭಿನ್ನ ಅನುಭವ ನೀಡಿದ ಪಾತ್ರಗಳಲ್ಲಿ ಒಂದು ಎಂದು ಹೇಳಿದ್ದಾರೆ. ನಿರ್ದೇಶಕ ಬುಚ್ಚಿ ಬಾಬು ಸನಾ ಅವರು ಕಥೆ ಬರೆಯುವ ಹಂತದಲ್ಲೇ ತಮ್ಮನ್ನು ಗಮನದಲ್ಲಿಟ್ಟುಕೊಂಡು ಪಾತ್ರ ರೂಪಿಸಿದ್ದಾಗಿ ಅವರು ತಿಳಿಸಿದ್ದಾರೆ.

ಇದೇ ವೇಳೆ, ಟ್ರೈಲರ್‌ನಲ್ಲಿ ಪಾತ್ರದ ನೈಜ ಸ್ವರೂಪವನ್ನು ಮುಚ್ಚಿಟ್ಟಿರುವ ಕುರಿತು ಪ್ರಶ್ನೆ ಎದುರಾದಾಗ ಶಿವಣ್ಣ ನೀಡಿದ ನಗುವಿನ ಪ್ರತಿಕ್ರಿಯೆ ಅಭಿಮಾನಿಗಳಲ್ಲಿ ಹೊಸ ಕುತೂಹಲ ಹುಟ್ಟುಹಾಕಿದೆ. ಪಾತ್ರ ಹೀರೋ ಪರವೇ? ವಿರೋಧಿಯೇ? ಅಥವಾ ಎರಡರ ಮಧ್ಯೆ ಸಾಗುವ ಗ್ರೇ ಶೇಡ್ ಪಾತ್ರವೇ? ಎಂಬ ಚರ್ಚೆ ಸಾಮಾಜಿಕ ಜಾಲತಾಣಗಳಲ್ಲಿ ಜೋರಾಗಿದೆ.

ಜೂನ್ 4ರಂದು ಬಿಡುಗಡೆಯಾಗಲಿರುವ ‘ಪೆದ್ದಿ’ ಸಿನಿಮಾದಲ್ಲಿ ರಾಮ್ ಚರಣ್, ಜಾನ್ವಿ ಕಪೂರ್, ಜಗಪತಿ ಬಾಬು, ದಿವ್ಯೇಂದು ಶರ್ಮಾ ಮತ್ತು ಬೊಮನ್ ಇರಾನಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಆಸ್ಕರ್ ವಿಜೇತ ಎ.ಆರ್. ರೆಹಮಾನ್ ಸಂಗೀತ ನೀಡಿರುವ ಈ ಚಿತ್ರದಲ್ಲಿ ಶಿವಣ್ಣ ಅವರ ‘ಗೌರನಾಯ್ಡು’ ಪಾತ್ರವೇ ಪ್ರೇಕ್ಷಕರಿಗೆ ದೊಡ್ಡ ಸರ್ಪ್ರೈಸ್ ನೀಡುವ ಸಾಧ್ಯತೆ ಇದೆ.

GT-RR ನಡುವೆ ಇಂದು ಮಾಡು ಇಲ್ಲವೇ ಮಡಿ ಕದನ: ಗೆದ್ದ ತಂಡಕ್ಕೆ RCB ವಿರುದ್ಧ ಫೈನಲ್ ಟಿಕೆಟ್

ಚಂಡೀಗಢ: ಐಪಿಎಲ್ 2026ರ ಫೈನಲ್ ಪ್ರವೇಶಕ್ಕಾಗಿ ಗುಜರಾತ್ ಟೈಟನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು ಇಂದು ಕ್ವಾಲಿಫೈಯರ್-2 ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಈ ಪಂದ್ಯದಲ್ಲಿ ಗೆಲ್ಲುವ ತಂಡ ಮೇ 31ರಂದು ನಡೆಯಲಿರುವ ಫೈನಲ್‌ನಲ್ಲಿ ಆರ್ಸಿಬಿ ವಿರುದ್ಧ ಚಾಂಪಿಯನ್ ಪಟ್ಟಕ್ಕಾಗಿ ಸೆಣಸಾಡಲಿದೆ.

ನ್ಯೂ ಚಂಡೀಗಢದ ಮಹಾರಾಜ ಯದವೀಂದ್ರ ಸಿಂಗ್ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪಂದ್ಯ ಉಭಯ ತಂಡಗಳ ಪಾಲಿಗೆ ‘ಮಾಡು ಇಲ್ಲವೇ ಮಡಿ’ ಹೋರಾಟವಾಗಿದೆ. ಸೋಲುವ ತಂಡ ಟೂರ್ನಿಯಿಂದ ಹೊರಬೀಳಲಿದ್ದು, ಗೆದ್ದ ತಂಡ ಮಾತ್ರ ಫೈನಲ್‌ಗೆ ಹೆಜ್ಜೆ ಇಡಲಿದೆ.

ಟೂರ್ನಿಯ ಆರಂಭದಲ್ಲಿ ಏರುಪೇರು ಕಂಡಿದ್ದ ಗುಜರಾತ್ ಟೈಟನ್ಸ್, ನಂತರದ ಪಂದ್ಯಗಳಲ್ಲಿ ಭರ್ಜರಿ ಪ್ರದರ್ಶನ ನೀಡಿ 18 ಅಂಕಗಳೊಂದಿಗೆ ಪ್ಲೇ-ಆಫ್ ಪ್ರವೇಶಿಸಿತ್ತು. ಮತ್ತೊಂದೆಡೆ, ಆರಂಭಿಕ ನಾಲ್ಕು ಪಂದ್ಯಗಳನ್ನು ಗೆದ್ದು ಅಬ್ಬರಿಸಿದ್ದ ರಾಜಸ್ಥಾನ್ ರಾಯಲ್ಸ್ ಮಧ್ಯದಲ್ಲಿ ಫಾರ್ಮ್ ಕಳೆದುಕೊಂಡರೂ, ಮಹತ್ವದ ಪಂದ್ಯಗಳಲ್ಲಿ ಮತ್ತೆ ಲಯ ಕಂಡುಕೊಂಡಿದೆ.

ಈ ಸೀಸನ್‌ನಲ್ಲಿ ಉಭಯ ತಂಡಗಳು ಈಗಾಗಲೇ ಎರಡು ಬಾರಿ ಮುಖಾಮುಖಿಯಾಗಿವೆ. ಏಪ್ರಿಲ್ 4ರಂದು ನಡೆದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ 6 ರನ್‌ಗಳ ಅಂತರದಲ್ಲಿ ಜಯ ಸಾಧಿಸಿತ್ತು. ಬಳಿಕ ಮೇ 9ರಂದು ನಡೆದ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ 77 ರನ್‌ಗಳ ಭರ್ಜರಿ ಗೆಲುವಿನ ಮೂಲಕ ಸೇಡು ತೀರಿಸಿಕೊಂಡಿತ್ತು.

ಗುಜರಾತ್‌ಗೆ ಬ್ಯಾಟಿಂಗ್-ಬೌಲಿಂಗ್ ಬಲ:

ಗುಜರಾತ್ ಟೈಟನ್ಸ್ ತಂಡದ ಪ್ರಮುಖ ಶಕ್ತಿ ಆರಂಭಿಕ ಜೋಡಿಯಾದ ನಾಯಕ ಶುಭ್ಮನ್ ಗಿಲ್ ಹಾಗೂ ಸಾಯಿ ಸುದರ್ಶನ್. ಮಧ್ಯಮ ಕ್ರಮಾಂಕದಲ್ಲಿ ಜೋಸ್ ಬಟ್ಲರ್, ಜೇಸನ್ ಹೋಲ್ಡರ್ ಹಾಗೂ ರಾಹುಲ್ ತೇವಾಟಿಯಾ ತಂಡಕ್ಕೆ ಬಲ ತುಂಬಲಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಕಗಿಸೋ ರಬಾಡಾ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ ಹಾಗೂ ರಶೀದ್ ಖಾನ್ ಅವರ ಅನುಭವ ರಾಜಸ್ಥಾನ್ ಬ್ಯಾಟರ್‌ಗಳಿಗೆ ಸವಾಲಾಗಲಿದೆ.

ರಾಜಸ್ಥಾನ್‌ಗೆ ವೈಭವ್ ಸೂರ್ಯವಂಶಿ ಆಸರೆ:

ರಾಜಸ್ಥಾನ್ ರಾಯಲ್ಸ್ ತಂಡದ ಯುವ ಆಟಗಾರ ವೈಭವ್ ಸೂರ್ಯವಂಶಿ ಈ ಸೀಸನ್‌ನಲ್ಲಿ ಅದ್ಭುತ ಫಾರ್ಮ್‌ನಲ್ಲಿದ್ದಾರೆ. ಎಲಿಮಿನೇಟರ್ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ 29 ಎಸೆತಗಳಲ್ಲಿ 97 ರನ್ ಸಿಡಿಸಿ ಮಿಂಚಿದ್ದರು. ಯಶಸ್ವಿ ಜೈಸ್ವಾಲ್ ಹಾಗೂ ಧ್ರುವ್ ಜುರೆಲ್ ಅವರೂ ಉತ್ತಮ ಬೆಂಬಲ ನೀಡುತ್ತಿದ್ದಾರೆ.

ಬೌಲಿಂಗ್ ವಿಭಾಗದಲ್ಲಿ ಜೋಫ್ರಾ ಆರ್ಚರ್ ಮೇಲೆ ಹೆಚ್ಚಿನ ನಿರೀಕ್ಷೆ ಇದೆ. ಈಗಾಗಲೇ ಈ ಸೀಸನ್‌ನಲ್ಲಿ 21 ವಿಕೆಟ್ ಪಡೆದು ಮೂರನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಆರ್ಚರ್, ಪವರ್‌ಪ್ಲೇನಲ್ಲೇ ಗುಜರಾತ್ ಆರಂಭಿಕರನ್ನು ಕಟ್ಟಿಹಾಕುವ ಜವಾಬ್ದಾರಿ ಹೊತ್ತಿದ್ದಾರೆ.

ಮುಲ್ಲಾನ್ಪುರ ಪಿಚ್ ಬ್ಯಾಟಿಂಗ್‌ಗೆ ಹೆಚ್ಚು ಅನುಕೂಲಕರವಾಗಿದ್ದು, ಮತ್ತೊಮ್ಮೆ ರನ್ ಮಳೆಯ ನಿರೀಕ್ಷೆ ಇದೆ. ಇತ್ತೀಚೆಗೆ ಇದೇ ಮೈದಾನದಲ್ಲಿ ನಡೆದ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ 243 ರನ್‌ಗಳ ಬೃಹತ್ ಮೊತ್ತ ಪೇರಿಸಿತ್ತು. ಪ್ರತಿಯಾಗಿ ಸನ್‌ರೈಸರ್ಸ್ ಹೈದರಾಬಾದ್ 196 ರನ್‌ಗಳಿಗೆ ಆಲೌಟ್ ಆಗಿತ್ತು. ಹೀಗಾಗಿ ಇಂದಿನ ಪಂದ್ಯದಲ್ಲೂ ಹೈ ಸ್ಕೋರಿಂಗ್ ಕದನ ನಿರೀಕ್ಷಿಸಲಾಗಿದೆ.

ಸಂಭವನೀಯ ತಂಡಗಳು:

ಗುಜರಾತ್ ಟೈಟನ್ಸ್:
ಸಾಯಿ ಸುದರ್ಶನ್, ಶುಭ್ಮನ್ ಗಿಲ್ (ನಾಯಕ), ಜೋಸ್ ಬಟ್ಲರ್ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ನಿಶಾಂತ್ ಸಿಂಧು, ಜೇಸನ್ ಹೋಲ್ಡರ್, ರಶೀದ್ ಖಾನ್, ಕುಲ್ವಂತ್ ಖೆಜ್ರೋಲಿಯಾ, ಕಗಿಸೋ ರಬಾಡಾ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ.

ಇಂಪ್ಯಾಕ್ಟ್ ಸಬ್:
ರಾಹುಲ್ ತೇವಾಟಿಯಾ, ಗ್ಲೆನ್ ಫಿಲಿಪ್ಸ್, ಅನುಜ್ ರಾವತ್, ಕುಮಾರ್ ಕುಶಾಗ್ರಾ, ಸಾಯಿ ಕಿಶೋರ್.

ರಾಜಸ್ಥಾನ್ ರಾಯಲ್ಸ್:
ಯಶಸ್ವಿ ಜೈಸ್ವಾಲ್, ವೈಭವ್ ಸೂರ್ಯವಂಶಿ, ಧ್ರುವ್ ಜುರೆಲ್ (ವಿಕೆಟ್ ಕೀಪರ್), ರಿಯಾನ್ ಪರಾಗ್ (ನಾಯಕ), ಡೊನೊವನ್ ಫೆರೇರಾ, ರವೀಂದ್ರ ಜಡೇಜಾ, ದಸುನ್ ಶನಕ, ಜೋಫ್ರಾ ಆರ್ಚರ್, ನಾಂದ್ರೆ ಬರ್ಗರ್, ಯಶ್ ರಾಜ್ ಪುಂಜಾ, ಬ್ರಿಜೇಶ್ ಶರ್ಮಾ.

ಇಂಪ್ಯಾಕ್ಟ್ ಸಬ್:
ಶುಭಂ ದುಬೆ, ಸುಶಾಂತ್ ಮಿಶ್ರಾ, ಅಮನ್ ರಾವ್ ಪೆರಾಲ, ರವಿ ಬಿಷ್ಣೋಯ್, ತುಷಾರ್ ದೇಶಪಾಂಡೆ.

ರೌಡಿ ಶೀಟ್ ಬಳಿಕವೂ ನಿಲ್ಲದ ಗಾಂಜಾ ದಂಧೆ: ಮಾರುತಿ ಕಾಳೆಗೆ ಈಗ PIT NDPS ಅಸ್ತ್ರ!

ಗದಗ: ಗದಗ-ಬೆಟಗೇರಿ ಭಾಗದಲ್ಲಿ ಹಲವಾರು ವರ್ಷಗಳಿಂದ ಗಾಂಜಾ ಮಾರಾಟ ಜಾಲ ಹಬ್ಬಿಸಿ ಯುವಕರನ್ನು ಮಾದಕ ವ್ಯಸನದತ್ತ ತಳ್ಳುತ್ತಿದ್ದಾನೆ ಎನ್ನಲಾದ ಕುಖ್ಯಾತ ಆರೋಪಿಯ ವಿರುದ್ಧ ಇದೀಗ ಪೊಲೀಸ್ ಇಲಾಖೆ ಕಠಿಣ ಹೆಜ್ಜೆ ಇಟ್ಟಿದೆ. ಬೆಟಗೇರಿ ಗಣೇಶನಗರ ನಿವಾಸಿ ಮಾರುತಿ @ ಮಾರಯ್ಯ ಶೇಖಪ್ಪ ಕಾಳೆ @ ಹರಣಶಿಕಾರಿ ವಿರುದ್ಧ PIT NDPS ಕಾಯ್ದೆಯಡಿ ಕ್ರಮ ಕೈಗೊಳ್ಳಲು ಬೆಟಗೇರಿ ಪೊಲೀಸರು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ.

ಪೊಲೀಸ್ ದಾಖಲೆಗಳ ಪ್ರಕಾರ, ಮಾರುತಿ ಕಾಳೆ ಹಲವು ವರ್ಷಗಳಿಂದ ಗಾಂಜಾ ಸಾಗಾಟ ಮತ್ತು ಮಾರಾಟ ದಂಧೆಯಲ್ಲಿ ತೊಡಗಿಸಿಕೊಂಡಿದ್ದಾನೆ. ಯುವಕರು, ಬಡವರು ಮತ್ತು ಸಾಮಾನ್ಯ ಜನರನ್ನು ಗುರಿಯಾಗಿಸಿಕೊಂಡು ಅಕ್ರಮ ಮಾದಕ ವಸ್ತುಗಳ ಜಾಲ ಹಬ್ಬಿಸಿದ್ದಾನೆ ಎಂಬ ಗಂಭೀರ ಆರೋಪ ಈತನ ಮೇಲಿದೆ. ಈತನ ವಿರುದ್ಧ ಈಗಾಗಲೇ ಬೆಟಗೇರಿ ಹಾಗೂ ಗದಗ ಗ್ರಾಮೀಣ ಪೊಲೀಸ್ ಠಾಣೆಗಳಲ್ಲಿ ಆರು ಪ್ರತ್ಯೇಕ ಎನ್‌ಡಿಪಿಎಸ್ ಪ್ರಕರಣಗಳು ದಾಖಲಾಗಿವೆ.

2017ರಲ್ಲಿ ಮೊದಲ ಬಾರಿಗೆ 160 ಗ್ರಾಂ ಗಾಂಜಾ ಜಪ್ತಿ ಪ್ರಕರಣ ದಾಖಲಾಗಿದ್ದರೆ, ಬಳಿಕ 2019, 2021, 2023, 2025 ಹಾಗೂ 2026ರಲ್ಲೂ ಗಾಂಜಾ ಮಾರಾಟ ಮತ್ತು ಸಾಗಾಟ ಪ್ರಕರಣಗಳಲ್ಲಿ ಈತನ ಹೆಸರು ಕೇಳಿಬಂದಿದೆ. ಇತ್ತೀಚಿನ ಪ್ರಕರಣದಲ್ಲಿ 1051 ಗ್ರಾಂ ಹಾಗೂ 52 ಗ್ರಾಂ ಗಾಂಜಾ ಜಪ್ತಿಯಾಗಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ಮಾದಕ ವಸ್ತು ವಶಪಡಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಪೊಲೀಸರು ಹೇಳುವಂತೆ, ಮಾರುತಿ ಕಾಳೆ ವಿರುದ್ಧ ರೌಡಿ ಶೀಟ್ ತೆರೆಯಲಾಗಿದ್ದರೂ ಆತ ತನ್ನ ಅಕ್ರಮ ಚಟುವಟಿಕೆ ನಿಲ್ಲಿಸಿರಲಿಲ್ಲ. ಸಮಾಜದ ಸ್ವಾಸ್ಥ್ಯಕ್ಕೆ ಧಕ್ಕೆ ಉಂಟುಮಾಡುವ ರೀತಿಯಲ್ಲಿ ನಿರಂತರವಾಗಿ ಗಾಂಜಾ ಮಾರಾಟ ನಡೆಸುತ್ತಿದ್ದ ಹಿನ್ನೆಲೆ ಸಾಮಾನ್ಯ ಕಾನೂನು ಕ್ರಮಗಳು ಪರಿಣಾಮಕಾರಿಯಾಗುತ್ತಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಈ ಹಿನ್ನೆಲೆಯಲ್ಲಿ “Prevention of Illicit Traffic in Narcotic Drugs and Psychotropic Substances Act-1988 (PIT NDPS)” ಅಡಿಯಲ್ಲಿ ಕಠಿಣ ಕ್ರಮ ಜರುಗಿಸಲು ಪೊಲೀಸ್ ಇಲಾಖೆ ಸರ್ಕಾರಕ್ಕೆ ಶಿಫಾರಸು ಮಾಡಿದೆ.

ಗದಗ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ರೋಹನ್ ಜಗದೀಶ್ ಅವರ ಮಾರ್ಗದರ್ಶನದಲ್ಲಿ ಈ ಪ್ರಸ್ತಾವನೆ ಸಿದ್ಧಪಡಿಸಲಾಗಿದ್ದು, ಗದಗ ಉಪವಿಭಾಗದ ಡಿವೈಎಸ್ಪಿ ಮುರ್ತುಜಾ ಖಾದ್ರಿ, ಸಿಪಿಐ ಸಿಂಧೆ, ಪಿಎಸ್‌ಐ ಆರಿ ಹಾಗೂ ಸಿಬ್ಬಂದಿ ಎಲ್ಲಾ ದಾಖಲೆಗಳನ್ನು ಸಂಗ್ರಹಿಸಿ ಸರ್ಕಾರಕ್ಕೆ ಸಲ್ಲಿಸಿದ್ದಾರೆ.

error: Content is protected !!