Home Blog Page 4

ಸತತ ನಾಲ್ಕು ಸೋಲಿನ ಬಳಿಕ ಗೆಲುವಿನ ನಗೆ; ನೆದರ್ಲ್ಯಾಂಡ್ಸ್ ಮಣಿಸಿ ವಿಶ್ವಕಪ್ʼಗೆ ವಿದಾಯ ಹೇಳಿದ ಪಾಕಿಸ್ತಾನ

0

ದುಬೈ: 2026ರ ಮಹಿಳಾ ಟಿ20 ವಿಶ್ವಕಪ್‌ನಲ್ಲಿ ನಿರಾಸಾದಾಯಕ ಪ್ರದರ್ಶನ ನೀಡಿದ್ದ ಪಾಕಿಸ್ತಾನ ಮಹಿಳಾ ತಂಡ, ಕೊನೆಗೂ ತನ್ನ ಗೆಲುವಿನ ಖಾತೆ ತೆರೆದಿದೆ. ‘ಎ’ ಗುಂಪಿನ ಲೀಗ್ ಹಂತದ ತನ್ನ ಕೊನೆಯ ಪಂದ್ಯದಲ್ಲಿ ನೆದರ್ಲ್ಯಾಂಡ್ಸ್ ತಂಡವನ್ನು 37 ರನ್‌ಗಳಿಂದ ಮಣಿಸಿದ ಪಾಕಿಸ್ತಾನ, ಗೆಲುವಿನೊಂದಿಗೆ ಟೂರ್ನಿಗೆ ವಿದಾಯ ಹೇಳಿದೆ.

ಆರು ತಂಡಗಳಿದ್ದ ಗುಂಪಿನಲ್ಲಿ ಆರಂಭಿಕ ನಾಲ್ಕು ಪಂದ್ಯಗಳಲ್ಲೂ ಸೋಲು ಕಂಡಿದ್ದ ಪಾಕಿಸ್ತಾನ ಈಗಾಗಲೇ ಸೆಮಿಫೈನಲ್ ಸ್ಪರ್ಧೆಯಿಂದ ಹೊರಬಿದ್ದಿತ್ತು. ಅಂತಿಮ ಪಂದ್ಯದಲ್ಲಿ ಮಾತ್ರ ಉತ್ತಮ ಪ್ರದರ್ಶನ ನೀಡಿ ತನ್ನ ಅಭಿಯಾನವನ್ನು ಗೆಲುವಿನೊಂದಿಗೆ ಮುಕ್ತಾಯಗೊಳಿಸಿತು.

ಸನಾ ಫಾತಿಮಾ ನಾಯಕತ್ವದ ಪಾಕಿಸ್ತಾನ ತಂಡದಿಂದ ಈ ಬಾರಿ ದೊಡ್ಡ ನಿರೀಕ್ಷೆಗಳಿರಲಿಲ್ಲ. ಆದರೂ ಭಾರತ, ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾದಂತಹ ಬಲಿಷ್ಠ ತಂಡಗಳಿಗೆ ಪೈಪೋಟಿ ನೀಡಲಿದೆ ಎಂಬ ನಿರೀಕ್ಷೆ ಇತ್ತು. ಆದರೆ ಪಾಕಿಸ್ತಾನ ಆ ನಿರೀಕ್ಷೆಯನ್ನು ಈಡೇರಿಸಲು ವಿಫಲವಾಯಿತು. ಬಾಂಗ್ಲಾದೇಶ ವಿರುದ್ಧದ ಮಹತ್ವದ ಪಂದ್ಯದಲ್ಲೂ 23 ರನ್‌ಗಳ ಸೋಲು ಅನುಭವಿಸಿದ್ದರಿಂದ ತಂಡ ಮತ್ತೊಮ್ಮೆ ಲೀಗ್ ಹಂತದಲ್ಲೇ ಹೊರಬೀಳಬೇಕಾಯಿತು.

ನೆದರ್ಲ್ಯಾಂಡ್ಸ್ ವಿರುದ್ಧದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ 20 ಓವರ್‌ಗಳಲ್ಲಿ 126 ರನ್‌ಗಳ ಸಾಧಾರಣ ಮೊತ್ತ ದಾಖಲಿಸಿತು. ಆರಂಭಿಕ ಆಟಗಾರ್ತಿ ಗುಲ್ ಫಿರೋಜಾ ಅಜೇಯ ಅರ್ಧಶತಕ ಸಿಡಿಸಿ ತಂಡಕ್ಕೆ ಆಸರೆಯಾದರು. ಅವರು 52 ಎಸೆತಗಳಲ್ಲಿ ಅಜೇಯ 63 ರನ್ ಗಳಿಸಿದರೆ, ಆಯೇಷಾ ಜಾಫರ್ 32 ರನ್‌ಗಳ ಕೊಡುಗೆ ನೀಡಿದರು. ಇವರಿಬ್ಬರನ್ನು ಹೊರತುಪಡಿಸಿ ಉಳಿದ ಬ್ಯಾಟರ್‌ಗಳು ನಿರೀಕ್ಷಿತ ಪ್ರದರ್ಶನ ನೀಡಲು ವಿಫಲರಾದರು.

ನೆದರ್ಲ್ಯಾಂಡ್ಸ್ ಪರ ವೇಗದ ಬೌಲರ್ ಐರಿಸ್ ಜ್ವಿಲ್ಲಿಂಗ್ ನಾಲ್ಕು ಓವರ್‌ಗಳಲ್ಲಿ ಕೇವಲ 17 ರನ್ ನೀಡಿ ಎರಡು ವಿಕೆಟ್ ಪಡೆದು ಗಮನ ಸೆಳೆದರು.

127 ರನ್‌ಗಳ ಗುರಿ ಬೆನ್ನಟ್ಟಿದ ನೆದರ್ಲ್ಯಾಂಡ್ಸ್ ಆರಂಭದಲ್ಲಿ ಉತ್ತಮ ಪೈಪೋಟಿ ನೀಡಿತು. ಮೊದಲ 10 ಓವರ್‌ಗಳಲ್ಲಿ ಮೂರು ವಿಕೆಟ್ ಕಳೆದುಕೊಂಡು 54 ರನ್ ಗಳಿಸಿದ್ದ ತಂಡ ನಂತರ ಪಾಕಿಸ್ತಾನದ ಶಿಸ್ತುಬದ್ಧ ಬೌಲಿಂಗ್‌ಗೆ ತತ್ತರಿಸಿತು.

ಮಧ್ಯಮ ಹಾಗೂ ಅಂತಿಮ ಓವರ್‌ಗಳಲ್ಲಿ ನಿರಂತರ ವಿಕೆಟ್ ಕಳೆದುಕೊಂಡ ನೆದರ್ಲ್ಯಾಂಡ್ಸ್ 18 ಓವರ್‌ಗಳಲ್ಲಿ ಕೇವಲ 89 ರನ್‌ಗಳಿಗೆ ಆಲೌಟ್ ಆಯಿತು. ಪರಿಣಾಮ ಪಾಕಿಸ್ತಾನ 37 ರನ್‌ಗಳ ಗೆಲುವು ದಾಖಲಿಸಿ, ವಿಶ್ವಕಪ್ ಅಭಿಯಾನವನ್ನು ಒಂದೇ ಒಂದು ಗೆಲುವಿನೊಂದಿಗೆ ಅಂತ್ಯಗೊಳಿಸಿತು.

ಸತತ ನಾಲ್ಕು ಸೋಲುಗಳ ಬಳಿಕ ಕೊನೆಯ ಪಂದ್ಯದಲ್ಲಿ ಬಂದ ಈ ಗೆಲುವು ಪಾಕಿಸ್ತಾನ ತಂಡಕ್ಕೆ ಸಮಾಧಾನದ ಕ್ಷಣವಾಗಿದ್ದರೂ, ಮತ್ತೊಮ್ಮೆ ಲೀಗ್ ಹಂತದಲ್ಲೇ ನಿರ್ಗಮಿಸಿರುವುದು ತಂಡದ ನಿರಾಸಾದಾಯಕ ಅಭಿಯಾನಕ್ಕೆ ಸಾಕ್ಷಿಯಾಗಿದೆ.

ಬಳ್ಳಾರಿಯಲ್ಲಿ ₹6.68 ಲಕ್ಷ ಮೌಲ್ಯದ 15.740 ಕೆ.ಜಿ. ಗಾಂಜಾ ನಾಶ!

ಬಳ್ಳಾರಿ: ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಮಾದಕ ದ್ರವ್ಯ ಪ್ರಕರಣಗಳಲ್ಲಿ ಜಪ್ತಿ ಮಾಡಲಾಗಿದ್ದ 15.740 ಕೆ.ಜಿ. ಗಾಂಜಾವನ್ನು ನ್ಯಾಯಾಲಯಗಳ ಆದೇಶದಂತೆ ವೈಜ್ಞಾನಿಕ ವಿಧಾನದಲ್ಲಿ ನಾಶಪಡಿಸಲಾಯಿತು.

ನಾಶಪಡಿಸಿದ ಗಾಂಜಾದ ಒಟ್ಟು ಮೌಲ್ಯ ಸುಮಾರು ₹6.68 ಲಕ್ಷ ಎಂದು ಪೊಲೀಸ್ ಇಲಾಖೆ ತಿಳಿಸಿದೆ.

ಹರಗಿನಡೋಣಿ ಗ್ರಾಮದ ಸೂರ್ಯಕಾಂತ ಎನ್‌ವಿರಾನ್‌ಮೆಂಟ್ ಟೆಕ್ನಾಲಜೀಸ್ ಘಟಕದಲ್ಲಿ ಜಿಲ್ಲಾ ಮಟ್ಟದ ಮಾದಕ ವಸ್ತುಗಳ ವಿಲೇವಾರಿ ಸಮಿತಿಯ ಸಮ್ಮುಖದಲ್ಲಿ ವಿಲೇವಾರಿ ಪ್ರಕ್ರಿಯೆ ನಡೆಸಲಾಯಿತು. ವಿವಿಧ ಪ್ರಕರಣಗಳಲ್ಲಿ ವಶಪಡಿಸಿಕೊಂಡಿದ್ದ ಗಾಂಜಾವನ್ನು ಸಂಬಂಧಪಟ್ಟ ನ್ಯಾಯಾಲಯಗಳ ನಿರ್ದೇಶನದಂತೆ ಹಾಗೂ ಜಾರಿಯಲ್ಲಿರುವ ನಿಯಮಾವಳಿಗಳನ್ನು ಪಾಲಿಸಿ ಪರಿಸರ ಸ್ನೇಹಿ, ವೈಜ್ಞಾನಿಕ ವಿಧಾನದಲ್ಲಿ ನಾಶಪಡಿಸಲಾಯಿತು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ. ಪೆನ್ನೇಕರ್ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎನ್. ನವೀನ್ ಕುಮಾರ್, ಉಪ ಪೊಲೀಸ್ ವರಿಷ್ಠಾಧಿಕಾರಿಗಳಾದ ವಿ. ಗೋವಿಂದರಾಜುಲು ಮತ್ತು ಪಿ. ಮುರಳಿಧರ ಸೇರಿದಂತೆ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಜಿಲ್ಲಾ ಮಟ್ಟದ ಮಾದಕ ವಸ್ತುಗಳ ವಿಲೇವಾರಿ ಸಮಿತಿಯ ಸದಸ್ಯರು ಭಾಗವಹಿಸಿದ್ದರು.

ಮಾದಕ ದ್ರವ್ಯಗಳ ಅಕ್ರಮ ಜಾಲವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಕೈಗೊಂಡಿರುವ ಕ್ರಮಗಳ ಭಾಗವಾಗಿ ಜಪ್ತಿ ಮಾಡಲಾದ ಮಾದಕ ವಸ್ತುಗಳನ್ನು ನ್ಯಾಯಾಲಯಗಳ ಅನುಮತಿ ಪಡೆದ ಬಳಿಕ ಕಾನೂನುಬದ್ಧವಾಗಿ ನಾಶಪಡಿಸಲಾಗುತ್ತಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.

ಕರ್ಬೂಜ ತಿಂದ ಬಳಿಕ ಬೀಜಗಳನ್ನು ಎಸೆಯುತ್ತೀರಾ? ಅದರಲ್ಲಿರುವ ಪೌಷ್ಟಿಕಾಂಶ ಮತ್ತು ಪ್ರಯೋಜನಗಳೇನು ಗೊತ್ತಾ?

0

ಬೇಸಿಗೆ ಹಾಗೂ ಬಿಸಿಲಿನ ದಿನಗಳಲ್ಲಿ ದೇಹಕ್ಕೆ ತಂಪು ನೀಡುವ ಹಣ್ಣಾಗಿ ಕರ್ಬೂಜ ಸಾಕಷ್ಟು ಜನಪ್ರಿಯವಾಗಿದೆ. ಆದರೆ ಹೆಚ್ಚಿನವರು ಕರ್ಬೂಜ ತಿಂದ ಬಳಿಕ ಅದರ ಬೀಜಗಳನ್ನು ಯಾವುದೇ ಉಪಯೋಗವಿಲ್ಲ ಎಂದು ಭಾವಿಸಿ ಎಸೆಯುತ್ತಾರೆ. ವಾಸ್ತವವಾಗಿ, ಕರ್ಬೂಜದ ಬೀಜಗಳು ಪೋಷಕಾಂಶಗಳ ಆಗರವಾಗಿದ್ದು, ಆರೋಗ್ಯಕ್ಕೆ ಹಲವು ರೀತಿಯಲ್ಲಿ ಪ್ರಯೋಜನಕಾರಿಯಾಗಿವೆ ಎಂದು ಆರೋಗ್ಯ ತಜ್ಞರು ತಿಳಿಸುತ್ತಾರೆ.

ಹೃದಯದ ಆರೋಗ್ಯಕ್ಕೆ ಉತ್ತಮ

ಕರ್ಬೂಜದ ಬೀಜಗಳಲ್ಲಿ ಒಮೆಗಾ–3 ಕೊಬ್ಬಿನಾಮ್ಲಗಳು, ಆರೋಗ್ಯಕರ ಕೊಬ್ಬುಗಳು ಹಾಗೂ ಪೊಟ್ಯಾಸಿಯಂ ಸಮೃದ್ಧವಾಗಿದೆ. ಇವು ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣವನ್ನು ಕಡಿಮೆ ಮಾಡಲು, ರಕ್ತದೊತ್ತಡವನ್ನು ನಿಯಂತ್ರಿಸಲು ಹಾಗೂ ಹೃದಯದ ಆರೋಗ್ಯವನ್ನು ಕಾಪಾಡಲು ಸಹಾಯ ಮಾಡುತ್ತವೆ.

ಪ್ರೋಟೀನ್‌ನ ಉತ್ತಮ ಮೂಲ

ಸಸ್ಯಾಹಾರಿಗಳಿಗೆ ಕರ್ಬೂಜದ ಬೀಜಗಳು ಉತ್ತಮ ಪ್ರೋಟೀನ್ ಮೂಲವಾಗಿದೆ. ದೇಹದ ಸ್ನಾಯುಗಳ ಬೆಳವಣಿಗೆ, ಶಕ್ತಿ ಉತ್ಪಾದನೆ ಹಾಗೂ ದೇಹದ ದುರಸ್ತಿಗೆ ಅಗತ್ಯವಾದ ಪೋಷಕಾಂಶಗಳನ್ನು ಇದು ಒದಗಿಸುತ್ತದೆ.

ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ

ಜಿಂಕ್, ಮೆಗ್ನೀಷಿಯಂ ಮತ್ತು ಆಂಟಿಆಕ್ಸಿಡೆಂಟ್‌ಗಳು ಸಮೃದ್ಧವಾಗಿರುವ ಕರ್ಬೂಜದ ಬೀಜಗಳು ದೇಹದ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತವೆ. ಸೋಂಕುಗಳು ಹಾಗೂ ವೈರಲ್ ಕಾಯಿಲೆಗಳ ವಿರುದ್ಧ ದೇಹ ಹೋರಾಡಲು ಸಹಕಾರಿಯಾಗುತ್ತವೆ.

ಜೀರ್ಣಕ್ರಿಯೆ ಮತ್ತು ಚರ್ಮದ ಆರೋಗ್ಯಕ್ಕೂ ಲಾಭ

ಫೈಬರ್ ಹೆಚ್ಚಿರುವ ಕಾರಣ ಕರ್ಬೂಜದ ಬೀಜಗಳು ಜೀರ್ಣಕ್ರಿಯೆಯನ್ನು ಸುಧಾರಿಸಿ ಮಲಬದ್ಧತೆ ಸಮಸ್ಯೆಯನ್ನು ಕಡಿಮೆ ಮಾಡಲು ನೆರವಾಗುತ್ತವೆ. ಜೊತೆಗೆ ವಿಟಮಿನ್ ಎ, ವಿಟಮಿನ್ ಇ ಸೇರಿದಂತೆ ಹಲವು ಪೋಷಕಾಂಶಗಳು ಚರ್ಮದ ಕಾಂತಿ ಹೆಚ್ಚಿಸಿ, ಕೂದಲಿನ ಆರೋಗ್ಯ ಕಾಪಾಡಲು ಸಹಕಾರಿಯಾಗುತ್ತವೆ.

ಬೀಜಗಳನ್ನು ಹೇಗೆ ಸೇವಿಸಬೇಕು?

ಕರ್ಬೂಜದ ಬೀಜಗಳನ್ನು ಚೆನ್ನಾಗಿ ತೊಳೆದು ಒಣಗಿಸಿದ ನಂತರ ಸ್ವಲ್ಪ ಹುರಿದು ಸೇವಿಸಬಹುದು. ಸ್ಮೂಥಿ, ಮೊಸರು, ಸಲಾಡ್, ಸೂಪ್ ಅಥವಾ ಇತರ ಆಹಾರಗಳಲ್ಲಿ ಸೇರಿಸಿ ತಿನ್ನಬಹುದು. ಆರೋಗ್ಯಕರ ಸ್ನ್ಯಾಕ್ ಆಗಿಯೂ ಬಳಸಬಹುದು.

ಮುಂದಿನ ಬಾರಿ ಕರ್ಬೂಜ ಹಣ್ಣು ತಿನ್ನುವಾಗ ಅದರ ಬೀಜಗಳನ್ನು ಎಸೆಯುವ ಬದಲು ಆಹಾರದಲ್ಲಿ ಸೇರಿಸಿಕೊಳ್ಳಿ. ಇದರಿಂದ ದೇಹಕ್ಕೆ ಅಗತ್ಯವಾದ ಹಲವು ಪೋಷಕಾಂಶಗಳು ದೊರೆಯುವುದರ ಜೊತೆಗೆ ಆರೋಗ್ಯಕ್ಕೂ ಸಾಕಷ್ಟು ಪ್ರಯೋಜನವಾಗಲಿದೆ.

ಕಮಲ–ಹಸ್ತ ಸಂಕೇತ ಪ್ರದರ್ಶನ: ಮಾರನಬಸರಿ ಅಲೈದೇವರ ಭವಿಷ್ಯಕ್ಕೆ ಕುತೂಹಲ

0

ವಿಜಯಸಾಕ್ಷಿ ಸುದ್ದಿ, ರೋಣ: ಐತಿಹಾಸಿಕ ಮೊಹರಂ ಆಚರಣೆಗೆ ಹೆಸರುವಾಸಿಯಾದ ರೋಣ ತಾಲೂಕಿನ ಮಾರನಬಸರಿ ಗ್ರಾಮದಲ್ಲಿ ಅಲೈದೇವರು ನುಡಿದ ಭವಿಷ್ಯವಾಣಿ ಈ ಬಾರಿ ರಾಜಕೀಯ ಹಾಗೂ ಮಳೆಯ ಕುರಿತ ಚರ್ಚೆಗೆ ಕಾರಣವಾಗಿದೆ. ಸಹಸ್ರಾರು ಭಕ್ತರ ಸಮ್ಮುಖದಲ್ಲಿ ನಡೆದ ಮೊಹರಂ ಆಚರಣೆ ಶಾಂತಿಯುತವಾಗಿ ಸಂಪನ್ನಗೊಂಡಿತು.

ಐತಿಹಾಸಿಕ ಮೊಹರಂ ಆಚರಣೆಗೆ ಹೆಸರುವಾಸಿಯಾದ ರೋಣ ತಾಲೂಕಿನ ಮಾರನಬಸರಿ ಗ್ರಾಮದಲ್ಲಿ ಅಲೈದೇವರು ನುಡಿದ ಭವಿಷ್ಯವಾಣಿ ಈ ಬಾರಿ ರಾಜಕೀಯ ಹಾಗೂ ಮಳೆಯ ಕುರಿತ ಚರ್ಚೆಗೆ ಕಾರಣವಾಗಿದೆ. ಸಹಸ್ರಾರು ಭಕ್ತರ ಸಮ್ಮುಖದಲ್ಲಿ ನಡೆದ ಮೊಹರಂ ಆಚರಣೆ ಶಾಂತಿಯುತವಾಗಿ ಸಂಪನ್ನಗೊಂಡಿತು.

ಮೊಹರಂ ಹಬ್ಬದ ಕೊನೆಯ ದಿನ ದೇವರು ಹೊಳೆಗೆ ತೆರಳುವ ವೇಳೆ ಗ್ರಾಮದ ಎರಡು ಮಸೀದಿಗಳ ಅಲೈದೇವರುಗಳು ಸಾಂಕೇತಿಕವಾಗಿ ಭವಿಷ್ಯ ನುಡಿದವು. ಸಣ್ಣ ಮಸೀದಿಯ ದೊಡ್ಡದೇವರು ಕಮಲದ ಚಿಹ್ನೆ ಪ್ರದರ್ಶಿಸಿದರೆ, ದೊಡ್ಡ ಮಸೀದಿಯ ದೊಡ್ಡದೇವರು ಮೊದಲು ಕಮಲ, ಬಳಿಕ ಹಸ್ತದ ಚಿಹ್ನೆ ತೋರಿಸಿ ಉತ್ತತ್ತಿ ಎಸೆದಿರುವುದು ಭಕ್ತರಲ್ಲಿ ಕುತೂಹಲ ಮೂಡಿಸಿತು.

ಗ್ರಾಮದ ಹಿರಿಯರ ಪ್ರಕಾರ, ಮಾರನಬಸರಿಯ ಅಲೈದೇವರುಗಳು ಈ ಹಿಂದೆ ನುಡಿದ ಹಲವು ರಾಜಕೀಯ ಭವಿಷ್ಯಗಳು ನಿಜವಾಗಿವೆ ಎಂಬ ನಂಬಿಕೆ ಇದೆ. ಈ ಬಾರಿ ನೀಡಿದ ಸಂಕೇತಗಳನ್ನು ಭಕ್ತರು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಎಚ್ಚರಿಕೆಯಿಂದ ಆಡಳಿತ ನಡೆಸಬೇಕೆಂಬ ಸಂದೇಶವೆಂದು ವಿಶ್ಲೇಷಿಸುತ್ತಿದ್ದಾರೆ.

ಇದೇ ವೇಳೆ, ಈ ವರ್ಷದ ಮುಂಗಾರು ಮಳೆ ಕಡಿಮೆ ಪ್ರಮಾಣದಲ್ಲಿ ಸುರಿಯಲಿದ್ದು, ಹಿಂಗಾರು ಸ್ವಲ್ಪ ಉತ್ತಮವಾಗಲಿದೆ ಎಂದು ಅಲೈದೇವರು ಭವಿಷ್ಯ ನುಡಿದವು. ಜನರು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗುವುದಿಲ್ಲ ಎಂಬ ಸಂಕೇತವೂ ವ್ಯಕ್ತವಾಯಿತು.

ಮೊಹರಂ ಅಂಗವಾಗಿ ಕತ್ತಲ್ ರಾತ್ರಿ ಹಾಗೂ ದೇವರು ಹೊಳೆಗೆ ತೆರಳುವ ದಿನ ಸಾವಿರಾರು ಭಕ್ತರು ಮಸೀದಿಗಳಿಗೆ ಭೇಟಿ ನೀಡಿ ಸಕ್ಕರೆ ನೈವೇದ್ಯ ಅರ್ಪಿಸಿದರು. ನೂರಾರು ಭಕ್ತರು ದೀಡ ನಮಸ್ಕಾರ, ಉರುಳು ಸೇವೆ ನೆರವೇರಿಸಿ ಹರಕೆ ತೀರಿಸಿದರು. ಮೂರು ದಿನಗಳ ಕಾಲ ಗೀಗಿ ಪದಗಳು, ಧಾರ್ಮಿಕ ಆಚರಣೆಗಳು ಹಾಗೂ ಹಿಂದೂ–ಮುಸ್ಲಿಂ ಸೌಹಾರ್ದದ ವಾತಾವರಣದಲ್ಲಿ ಐತಿಹಾಸಿಕ ಮೊಹರಂ ಹಬ್ಬ ಸಂಪನ್ನಗೊಂಡಿತು.

ಸಾಂಕೇತಿಕ ಭವಿಷ್ಯವಾಣಿ

“ಮುಂಗಾರು ಮಳೆ ಕಡಿಮೆ, ಹಿಂಗಾರು ಸ್ವಲ್ಪ ಉತ್ತಮ; ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಎಚ್ಚರಿಕೆಯಿಂದ ಆಡಳಿತ ನಡೆಸಬೇಕು ಎಂಬ ಸಂಕೇತವನ್ನು ಅಲೈದೇವರು ನೀಡಿದ್ದಾರೆ ಎಂದು ಭಕ್ತರು ಹಾಗೂ ಗ್ರಾಮದ ಹಿರಿಯರು ವಿಶ್ಲೇಷಿಸಿದರು.”

ನಾಡಪ್ರಭು ಕೆಂಪೇಗೌಡ ಜಯಂತಿ ಆಚರಣೆ

0

ವಿಜಯಸಾಕ್ಷಿ ಸುದ್ದಿ, ಗದಗ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ನಾಡಪ್ರಭು ಕೆಂಪೇಗೌಡ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ನಾಡಪ್ರಭು ಕೆಂಪೇಗೌಡ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ನಾಡಪ್ರಭು ಕೆಂಪೇಗೌಡ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಗೌರವ ಅರ್ಪಿಸಲಾಯಿತು.

ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು ಹಾಗೂ ಜಿಲ್ಲಾ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಡಾ. ಬಸವರಾಜ ಬಳ್ಳಾರಿ, ನಿಕಟ ಪೂರ್ವ ಜಿಲ್ಲಾಧ್ಯಕ್ಷ ಡಾ. ರವಿ ಗುಂಜೀಕರ, ವಾರ್ತಾಧಿಕಾರಿ ವಸಂತ ಮಡ್ಲೂರ, ತಾಪಂ ಇಒ ಶ್ರೀಧರ ಚಿನಗುಂಡಿ, ರಾಜು ಕಂಟಿಗೊನ್ನವರ, ರಾಜು ಸೊಪಡ್ಲ, ನವೀನ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

ಗ್ರಾಮೀಣ ಭಾಗಕ್ಕೆ ಬಸ್ ಸೇವೆ ವಿಸ್ತರಿಸಲು ಒತ್ತಾಯ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಲಕ್ಷ್ಮೇಶ್ವರದಿಂದ ಬೂದಿಹಾಳ–ಕೊಕ್ಕರಗೊಂದಿ ಮಾರ್ಗವಾಗಿ ಗುತ್ತಲವರೆಗೆ ಹೊಸ ಬಸ್ ಸೇವೆ ಆರಂಭಿಸುವಂತೆ ಆಗ್ರಹಿಸಿ ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆ, ತಾಲ್ಲೂಕು ಹಿರಿಯ ನಾಗರಿಕರು ಮತ್ತು ನಿವೃತ್ತ ನೌಕರರ ಸಂಘದ ಪದಾಧಿಕಾರಿಗಳು ಸಾರಿಗೆ ಘಟಕದ ವ್ಯವಸ್ಥಾಪಕಿ ಸವಿತಾ ಆದಿ ಅವರಿಗೆ ಶನಿವಾರ ಮನವಿ ಸಲ್ಲಿಸಿದರು.

ಲಕ್ಷ್ಮೇಶ್ವರದಿಂದ ಬೂದಿಹಾಳ–ಕೊಕ್ಕರಗೊಂದಿ ಮಾರ್ಗವಾಗಿ ಗುತ್ತಲವರೆಗೆ ಹೊಸ ಬಸ್ ಸೇವೆ ಆರಂಭಿಸುವಂತೆ ಆಗ್ರಹಿಸಿ ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆ, ತಾಲ್ಲೂಕು ಹಿರಿಯ ನಾಗರಿಕರು ಮತ್ತು ನಿವೃತ್ತ ನೌಕರರ ಸಂಘದ ಪದಾಧಿಕಾರಿಗಳು ಸಾರಿಗೆ ಘಟಕದ ವ್ಯವಸ್ಥಾಪಕಿ ಸವಿತಾ ಆದಿ ಅವರಿಗೆ ಶನಿವಾರ ಮನವಿ ಸಲ್ಲಿಸಿದರು.

ಕರ್ನಾಟಕ ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಸಿ.ಆರ್. ಲಕ್ಕುಂಡಿಮಠ ಮಾತನಾಡಿ, ಗುತ್ತಲ, ಬೆಳ್ಳಟ್ಟಿ, ಹಾವನೂರು ಸೇರಿದಂತೆ ಹಲವು ಗ್ರಾಮಗಳ ಜನರು ಪ್ರತಿದಿನ ಲಕ್ಷ್ಮೇಶ್ವರಕ್ಕೆ ಬರುತ್ತಿದ್ದು, ಸಮರ್ಪಕ ಬಸ್ ವ್ಯವಸ್ಥೆ ಇಲ್ಲದ ಕಾರಣ ವಿದ್ಯಾರ್ಥಿಗಳು, ಮಹಿಳೆಯರು, ಹಿರಿಯ ನಾಗರಿಕರು ಹಾಗೂ ರೋಗಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಆದ್ದರಿಂದ ಶೀಘ್ರ ಬಸ್ ಸೇವೆ ಆರಂಭಿಸಬೇಕು ಎಂದು ಒತ್ತಾಯಿಸಿದರು.

ಹಿರಿಯ ಸದಸ್ಯ ಚಂಬಣ್ಣ ಬಾಳಿಕಾಯಿ ಮಾತನಾಡಿ, ಲಕ್ಷ್ಮೇಶ್ವರ–ಹಾವನೂರು–ಗುತ್ತಲ ಹಾಗೂ ಬೂದಿಹಾಳ–ಕೊಕ್ಕರಗೊಂದಿ, ನಾಗರಮಡುವು–ಬಿಜ್ಜೂರು–ಕೊಂಚಿಗೇರಿ ಮಾರ್ಗಗಳಲ್ಲೂ ಬಸ್‌ಗಳನ್ನು ಓಡಿಸುವಂತೆ ಆಗ್ರಹಿಸಿದರು.

ಈ ಸಂದರ್ಭದಲ್ಲಿ ಐ.ಎಸ್. ಮಡಿವಾಳರ, ಸೂಗೀರಪ್ಪ ವಾಲಿ ಹಾಗೂ ಈರಣ್ಣ ಉಮಚಗಿ ಉಪಸ್ಥಿತರಿದ್ದರು.

ಅಂಗನವಾಡಿಯಲ್ಲೂ ‘ವೆಲ್‌ಕಂ ಡೇ’ ಸಂಭ್ರಮ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ತಾಲೂಕಿನ ಮಾಡಳ್ಳಿ ಗ್ರಾಮದ ಅಂಗನವಾಡಿ ಕೇಂದ್ರ–36ರಲ್ಲಿ ಪುಟಾಣಿ ಮಕ್ಕಳಿಗೆ ಅಕ್ಷರಾಭ್ಯಾಸ, ‘ವೆಲ್‌ಕಂ ಡೇ’ ಹಾಗೂ ಎಲ್‌ಕೆಜಿ–ಯುಕೆಜಿ ಪ್ರವೇಶೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.

ತಾಲೂಕಿನ ಮಾಡಳ್ಳಿ ಗ್ರಾಮದ ಅಂಗನವಾಡಿ ಕೇಂದ್ರ–36ರಲ್ಲಿ ಪುಟಾಣಿ ಮಕ್ಕಳಿಗೆ ಅಕ್ಷರಾಭ್ಯಾಸ, ‘ವೆಲ್‌ಕಂ ಡೇ’ ಹಾಗೂ ಎಲ್‌ಕೆಜಿ–ಯುಕೆಜಿ ಪ್ರವೇಶೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.

ಹೊಸ ಬಟ್ಟೆ ತೊಟ್ಟು ಪೋಷಕರೊಂದಿಗೆ ಆಗಮಿಸಿದ ಮಕ್ಕಳನ್ನು ಆರತಿ ಬೆಳಗಿ, ಕಾಣಿಕೆ ನೀಡಿ ಸ್ವಾಗತಿಸಲಾಯಿತು. ಬಳಿಕ ಗಣೇಶ ಹಾಗೂ ಶಾರದಾ ಮಾತೆಯ ಪೂಜೆ ನೆರವೇರಿಸಿ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಲಾಯಿತು. ಎಲ್‌ಕೆಜಿ ಹಾಗೂ ಯುಕೆಜಿಗೆ ದಾಖಲಾದ ಮಕ್ಕಳಿಗೆ ಇದೇ ವೇಳೆ ಪಠ್ಯಪುಸ್ತಕಗಳನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಯೋಜನಾಧಿಕಾರಿ ಮೃತ್ಯುಂಜಯ ಜಿ., ಅಂಗನವಾಡಿಗಳಲ್ಲಿ ಎಲ್‌ಕೆಜಿ–ಯುಕೆಜಿ ಆರಂಭಿಸಿರುವುದರಿಂದ ಖಾಸಗಿ ಶಾಲೆಗಳ ಮಾದರಿಯಲ್ಲೇ ಗುಣಮಟ್ಟದ ಶಿಕ್ಷಣ, ಪೌಷ್ಟಿಕ ಆಹಾರ ಹಾಗೂ ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಅಗತ್ಯ ತರಬೇತಿ ನೀಡಲಾಗುತ್ತಿದೆ. ಪೋಷಕರು ಮಕ್ಕಳನ್ನು ಅಂಗನವಾಡಿಗೆ ದಾಖಲಿಸಿ ಸರ್ಕಾರದ ಯೋಜನೆಗಳ ಸದುಪಯೋಗ ಪಡೆಯಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಮೇಲ್ವಿಚಾರಕಿ ಶಿಲ್ಪಾ ಹೊಸಮಠ, ರಮಜಾನ್‌ಸಾಬ ನದಾಫ್, ದಾವಲಸಾಬ ನದಾಫ್, ನಿವೃತ್ತ ಶಿಕ್ಷಕ ಹನುಮಂತಪ್ಪ ಸರವಿ, ಅಂಗನವಾಡಿ ಕಾರ್ಯಕರ್ತೆ ಈರಮ್ಮ ಅಂಗಡಿ, ಸಹಾಯಕಿ ಸವಿತಾ ಸರವಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಬಳಿಕ ಮಕ್ಕಳಿಂದ ವಿವಿಧ ಆಟೋಟಗಳು ನಡೆಯಿತು.

“ಅಂಗನವಾಡಿಗಳಲ್ಲೂ ಖಾಸಗಿ ಶಾಲೆಗಳ ಮಾದರಿಯ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ.”

– ಮೃತ್ಯುಂಜಯ ಜಿ.

ಯುವಜನತೆಗೆ ಸೃಷ್ಟಿ ಮೇಟಿ ಮಾದರಿ: ಮಾಜಿ ಸಚಿವ ಬಿ.ಆರ್. ಯಾವಗಲ್ಲ

0

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಸಮೀಪದ ಜಕ್ಕಲಿ ಗ್ರಾಮದ ಯುವ ಪರ್ವತಾರೋಹಕಿ ಸೃಷ್ಟಿ ಮೇಟಿ ಅವರು ಸುಮಾರು 15,500 ಮೀಟರ್ ಎತ್ತರದ ಹರ್ರಾ ಟಾಪ್ ಶಿಖರವನ್ನು ಯಶಸ್ವಿಯಾಗಿ ಏರಿ ಸಾಧನೆ ಮಾಡಿದ ಹಿನ್ನೆಲೆಯಲ್ಲಿ ಅವರ ನಿವಾಸದಲ್ಲಿ ಸನ್ಮಾನಿಸಿ ಮಾಜಿ ಸಚಿವ ಬಿ.ಆರ್. ಯಾವಗಲ್ಲ ಅವರು ಮಾತನಾಡಿದರು.

“ಸಾಧನೆಗೆ ಪುರುಷ–ಮಹಿಳೆ ಎಂಬ ಭೇದವಿಲ್ಲ. ಗುರಿ ಸಾಧಿಸುವ ಛಲ, ಆತ್ಮವಿಶ್ವಾಸ ಮತ್ತು ನಿರಂತರ ಪರಿಶ್ರಮ ಇದ್ದರೆ ಯಾವುದೇ ಶಿಖರವನ್ನೂ ಏರಬಹುದು” ಎಂದು ಮಾಜಿ ಸಚಿವ ಬಿ.ಆರ್. ಯಾವಗಲ್ಲ ಹೇಳಿದರು.

ಸಮೀಪದ ಜಕ್ಕಲಿ ಗ್ರಾಮದ ಯುವ ಪರ್ವತಾರೋಹಕಿ ಸೃಷ್ಟಿ ಮೇಟಿ ಅವರು ಸುಮಾರು 15,500 ಮೀಟರ್ ಎತ್ತರದ ಹರ್ರಾ ಟಾಪ್ ಶಿಖರವನ್ನು ಯಶಸ್ವಿಯಾಗಿ ಏರಿ ಸಾಧನೆ ಮಾಡಿದ ಹಿನ್ನೆಲೆಯಲ್ಲಿ ಅವರ ನಿವಾಸದಲ್ಲಿ ಸನ್ಮಾನಿಸಿ ಅವರು ಮಾತನಾಡಿದರು.

ಸೃಷ್ಟಿ ಅವರ ಸಾಧನೆ ಇಂದಿನ ಯುವಜನತೆಗೆ ಪ್ರೇರಣೆಯಾಗಿದ್ದು, ಗುರಿ ಸಾಧಿಸಲು ಸಮಾಜದ ಬೆಂಬಲವೂ ಅಗತ್ಯವಾಗಿದೆ. ಪರ್ವತಾರೋಹಣದ ಅನುಭವಗಳನ್ನು ದಾಖಲಿಸಿಕೊಳ್ಳುವಂತೆ ಸಲಹೆ ನೀಡಿದರು.

ನಿವೃತ್ತ ಶಿಕ್ಷಕ ಎಂ.ಎಸ್. ಧಡೇಸೂರಮಠ, ಮಾಜಿ ತಾಪಂ ಸದಸ್ಯ ಮಲ್ಲಣ್ಣ ಮೇಟಿ, ನಿವೃತ್ತ ಮುಖ್ಯ ಶಿಕ್ಷಕ ಅರುಣ ಕುಲಕರ್ಣಿ ಮಾತನಾಡಿ ಸೃಷ್ಟಿ ಅವರ ಸಾಧನೆಯನ್ನು ಶ್ಲಾಘಿಸಿದರು.

ಸನ್ಮಾನ ಸ್ವೀಕರಿಸಿದ ಸೃಷ್ಟಿ ಮೇಟಿ ಅವರು ಹರ್ರಾ ಟಾಪ್ ಶಿಖರ ಏರಿದ ಅನುಭವ, ತರಬೇತಿ ಹಾಗೂ ಎದುರಾದ ಸವಾಲುಗಳನ್ನು ಹಂಚಿಕೊಂಡರು.

ಕಾರ್ಯಕ್ರಮದಲ್ಲಿ ಉಮೇಶ ಮೇಟಿ, ಹೇಮಾ ಮೇಟಿ, ಮೇಟಿ ಕುಟುಂಬದ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ಆರ್ಥಿಕ ಸಬಲೀಕರಣದಲ್ಲಿ ಗಾಯತ್ರಿ ಸಂಘ ಮುಂಚೂಣಿ: ಡಿ.ಆರ್. ಪಾಟೀಲ

0

ವಿಜಯಸಾಕ್ಷಿ ಸುದ್ದಿ, ಗದಗ: ಬೆಟಗೇರಿಯ ಶ್ರೀಗಾಯತ್ರಿ ಪತ್ತಿನ ಸಹಕಾರ ಸಂಘ ನಿಯಮಿತದ ಬೆಟಗೇರಿ–ಗದಗ ಶಾಖೆಯ ನೂತನ ಕಟ್ಟಡವನ್ನು ಮಾಜಿ ಶಾಸಕ ಹಾಗೂ ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಡಿ.ಆರ್. ಪಾಟೀಲ ಉದ್ಘಾಟಿಸಿದರು.

ಬೆಟಗೇರಿಯ ಶ್ರೀಗಾಯತ್ರಿ ಪತ್ತಿನ ಸಹಕಾರ ಸಂಘ ನಿಯಮಿತದ ಬೆಟಗೇರಿ–ಗದಗ ಶಾಖೆಯ ನೂತನ ಕಟ್ಟಡವನ್ನು ಮಾಜಿ ಶಾಸಕ ಹಾಗೂ ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಡಿ.ಆರ್. ಪಾಟೀಲ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ನೇಕಾರರ ಶ್ರೇಯೋಭಿವೃದ್ಧಿಗಾಗಿ ಆರಂಭವಾದ ಸಂಘ ಇಂದು ರೈತರು, ಬಡವರು ಹಾಗೂ ವ್ಯಾಪಾರಿಗಳ ಆರ್ಥಿಕ ಸಬಲೀಕರಣದಲ್ಲಿ ಮಹತ್ವದ ಪಾತ್ರ ವಹಿಸಿದೆ. ಠೇವುದಾರರ ವಿಶ್ವಾಸ, ಸಾಲಗಾರರ ಪ್ರಾಮಾಣಿಕತೆ ಹಾಗೂ ಸಿಬ್ಬಂದಿಯ ಕರ್ತವ್ಯನಿಷ್ಠೆಯೇ ಸಂಘದ ಯಶಸ್ಸಿಗೆ ಕಾರಣ ಎಂದರು.

ಲಾಕರ್ ಉದ್ಘಾಟಿಸಿದ ವಿಧಾನಪರಿಷತ್ ಸದಸ್ಯ ಎಸ್.ವಿ. ಸಂಕನೂರ, ಸಂಘದ ಬೆಳವಣಿಗೆ ಶ್ಲಾಘನೀಯವಾಗಿದ್ದು, ಸುಮಾರು 40 ಶಾಖೆಗಳ ಮೂಲಕ ₹300 ಕೋಟಿಗೂ ಅಧಿಕ ಠೇವಣಿ ಸಂಗ್ರಹಿಸಿರುವುದು ಜನರ ವಿಶ್ವಾಸದ ಪ್ರತೀಕ ಎಂದರು.

ಮಾಜಿ ಶಾಸಕ ಎಸ್.ಜಿ. ನಂಜಯ್ಯನಮಠ ಕಾರ್ಯಕ್ರಮ ಉದ್ಘಾಟಿಸಿ, ಸಂಸ್ಥಾಪಕ ಅಧ್ಯಕ್ಷ ರವೀಂದ್ರ ಪಿ. ಕಲಬುರ್ಗಿ ಅವರ ಸಮಾಜಮುಖಿ ಸೇವೆಯನ್ನು ಪ್ರಶಂಸಿಸಿದರು.

ಅಧ್ಯಕ್ಷತೆ ವಹಿಸಿದ್ದ ರವೀಂದ್ರ ಕಲಬುರ್ಗಿ ಮಾತನಾಡಿ, ಗ್ರಾಮೀಣ ಜನರ ಆರ್ಥಿಕ ಅಭಿವೃದ್ಧಿಗೆ ಸಂಘ ಇನ್ನಷ್ಟು ಸೇವೆ ಸಲ್ಲಿಸಲಿದೆ ಎಂದರು. ಕಾರ್ಯಕ್ರಮದಲ್ಲಿ ವಿವಿಧ ಗಣ್ಯರನ್ನು ಸನ್ಮಾನಿಸಲಾಯಿತು.

“ರೈತರು, ಬಡವರು ಹಾಗೂ ವ್ಯಾಪಾರಿಗಳಲ್ಲಿ ಆರ್ಥಿಕ ಶಕ್ತಿ ತುಂಬುವಲ್ಲಿ ಶ್ರೀಗಾಯತ್ರಿ ಪತ್ತಿನ ಸಂಘದ ಸೇವೆ ಸಾರ್ಥಕವಾಗಿದೆ.”

– ಡಿ.ಆರ್. ಪಾಟೀಲ, ಮಾಜಿ ಶಾಸಕ

ಕೆಸರಿನ ಸಂಪ್ರದಾಯದಲ್ಲಿ ಮೆರೆದ ಮೊಹರಂ ಭಾವೈಕ್ಯ

0

ವಿಜಯಸಾಕ್ಷಿ ಸುದ್ದಿ, ಗದಗ: ತಾಲೂಕಿನ ತಿಮ್ಮಾಪೂರ ಗ್ರಾಮದಲ್ಲಿ ಹಿಂದೂ–ಮುಸ್ಲಿಂ ಸೌಹಾರ್ದತೆಯ ಸಂಕೇತವಾದ ಮೊಹರಂ ಹಬ್ಬವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.

ತಾಲೂಕಿನ ತಿಮ್ಮಾಪೂರ ಗ್ರಾಮದಲ್ಲಿ ಹಿಂದೂ–ಮುಸ್ಲಿಂ ಸೌಹಾರ್ದತೆಯ ಸಂಕೇತವಾದ ಮೊಹರಂ ಹಬ್ಬವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.

ಹಜರತ್ ಇಮಾಮ್ ಹುಸೇನ್ ಅವರ ತ್ಯಾಗ ಮತ್ತು ಬಲಿದಾನವನ್ನು ಸ್ಮರಿಸುವ ಅಂಗವಾಗಿ ಗ್ರಾಮದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಮೊಹರಂ ಅಂಗವಾಗಿ ಪೀರರ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಅಲೈ ದೇವರಿಗೆ ಪೂಜೆ ಸಲ್ಲಿಸಲಾಯಿತು.

ತಿಮ್ಮಾಪೂರದ ವಿಶೇಷ ಸಂಪ್ರದಾಯದಂತೆ ಯುವಕರು ಅಗ್ನಿಕುಂಡದ ಸಮೀಪ ನೀರು ಸುರಿದು ಕೆಸರು ಮಾಡಿ ಅದರಲ್ಲಿ ಆಡುವ ಮೂಲಕ ದಶಕಗಳಿಂದ ನಡೆದುಕೊಂಡು ಬಂದಿರುವ ಆಚರಣೆಯನ್ನು ಮುಂದುವರಿಸಿದರು. ಈ ವಿಶಿಷ್ಟ ಸಂಪ್ರದಾಯವನ್ನು ನೋಡಲು ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು.

ಮೊಹರಂ ಆಚರಣೆಯಲ್ಲಿ ಹಿಂದೂ–ಮುಸ್ಲಿಂ ಬಾಂಧವರು ಯಾವುದೇ ಭೇದಭಾವವಿಲ್ಲದೆ ಒಂದಾಗಿ ಪಾಲ್ಗೊಂಡು ಭಾವೈಕ್ಯತೆ ಮೆರೆದರು.