Home Blog Page 4

ಬಸ್ ಚಲಿಸುತ್ತಿದ್ದಾಗಲೇ ಹೃದಯಾಘಾತ: ಚಾಲಕ ಸಾವು, ತಪ್ಪಿದ ದುರಂತ!

ಮಡಿಕೇರಿ: ವಾಹನ ಚಾಲನೆ ವೇಳೆಯೇ ಹೃದಯಾಘಾತ ಸಂಭವಿಸಿದ ಪರಿಣಾಮ ಬಸ್ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಮಡಿಕೇರಿ ತಾಲೂಕಿನ ತಾಳತ್ ಮನೆ ಬಳಿ ನಡೆದಿದೆ.

ಮಡಿಕೇರಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿ 275ರಲ್ಲಿ ‘ಪೂರ್ಣಿಮಾ ಟ್ರಾವೆಲ್ಸ್’ ಬಸ್ ಚಲಿಸುತ್ತಿದ್ದಾಗ ಚಾಲಕನಿಗೆ ತೀವ್ರ ಹೃದಯಾಘಾತ ಸಂಭವಿಸಿದೆ. ಪರಿಣಾಮ ಚಾಲಕನ ನಿಯಂತ್ರಣ ತಪ್ಪಿದ ಬಸ್ ರಸ್ತೆ ಬದಿಯ ದಿಣ್ಣೆಗೆ ಡಿಕ್ಕಿ ಹೊಡೆದಿದೆ.

ಘಟನೆಯ ವೇಳೆ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಎಲ್ಲಾ ಪ್ರಯಾಣಿಕರು ಯಾವುದೇ ಪ್ರಾಣಾಪಾಯವಿಲ್ಲದೆ ಸುರಕ್ಷಿತವಾಗಿ ಪಾರಾಗಿದ್ದಾರೆ. ತಕ್ಷಣ ಸ್ಥಳಕ್ಕೆ ಮಡಿಕೇರಿ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಚಾಲನೆ ವೇಳೆ ಚಾಲಕ ಮೃತಪಟ್ಟಿದ್ದರೂ ಬಸ್ ದಿಕ್ಕು ತಪ್ಪಿ ದೊಡ್ಡ ದುರಂತವಾಗುವ ಸಾಧ್ಯತೆ ಇದ್ದರೂ ದಿಣ್ಣೆಗೆ ಡಿಕ್ಕಿ ಹೊಡೆದ ಪರಿಣಾಮ ಭಾರೀ ಅನಾಹುತ ತಪ್ಪಿದಂತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಲಕ್ನೋ ವಿರುದ್ಧದ ರೋಚಕ ಪಂದ್ಯದಲ್ಲಿ ಹೋರಾಡಿ ಸೋತ RCB: ತವರಲ್ಲಿ LSGಗೆ ಮೊದಲ ಜಯ!

ಮಳೆಯ ಅಡಚಣೆಯ ನಡುವೆಯೇ ಗುರುವಾರ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ (LSG) ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ವಿರುದ್ಧ 9 ರನ್‌ಗಳ ರೋಚಕ ಜಯ ಸಾಧಿಸಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ತಂಡದ ಪರ ಮಿಚೆಲ್ ಮಾರ್ಶ್ ಸ್ಫೋಟಕ ಶತಕ (111 ರನ್, 56 ಎಸೆತ) ಸಿಡಿಸಿ ತಂಡವನ್ನು ಬಲವಾದ ಮೊತ್ತದತ್ತ ಕರೆದೊಯ್ದರು. ಅವರ ಜೊತೆಗೆ ಪೂರನ್ 38 ರನ್ ಮತ್ತು ಕೊನೆಯಲ್ಲಿ ರಿಷಭ್ ಪಂತ್ ಅಜೇಯ 32 ರನ್ ಗಳಿಸಿ ಲಕ್ನೋ 19 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 209 ರನ್ ದಾಖಲಿಸಿತು. ಮಳೆಯ ಅಡಚಣೆಯಿಂದ ಡಕ್‌ವರ್ಥ್ ಲೂಯಿಸ್ ನಿಯಮದಡಿ RCBಗೆ 19 ಓವರ್‌ಗಳಲ್ಲಿ 213 ರನ್‌ಗಳ ಗುರಿ ನೀಡಲಾಯಿತು.

ಗುರಿ ಬೆನ್ನಟ್ಟಿದ RCB ಆರಂಭದಲ್ಲೇ ವಿರಾಟ್ ಕೊಹ್ಲಿ ಹಾಗೂ ಬೆಥಲ್ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆದರೆ ಪಡಿಕ್ಕಲ್ ಮತ್ತು ರಜತ್ ಪಟಿದಾರ್ 93 ರನ್‌ಗಳ ಜೊತೆಯಾಟದ ಮೂಲಕ ತಂಡಕ್ಕೆ ಚೇತರಿಕೆ ನೀಡಿದರು. ಪಟಿದಾರ್ 61 ರನ್, ಟಿಮ್ ಡೇವಿಡ್ 40 ರನ್ ಹಾಗೂ ಕೊನೆಯಲ್ಲಿ ಶೆಪಾರ್ಡ್ ಅಜೇಯ 23 ರನ್ ಗಳಿಸಿದರೂ ತಂಡ 6 ವಿಕೆಟ್ ನಷ್ಟಕ್ಕೆ 203 ರನ್‌ಗಳಷ್ಟೇ ಗಳಿಸಲು ಸಾಧ್ಯವಾಯಿತು.

ಕೊನೆಯ 24 ಎಸೆತಗಳಲ್ಲಿ 63 ರನ್ ಅಗತ್ಯವಿದ್ದ ಹಂತದಲ್ಲಿ ಲಕ್ನೋ ಬೌಲರ್‌ಗಳು ಒತ್ತಡದಲ್ಲಿ ಉತ್ತಮ ಪ್ರದರ್ಶನ ನೀಡಿ ಪಂದ್ಯವನ್ನು ತಮ್ಮ ಕಡೆ ತಿರುಗಿಸಿಕೊಂಡರು. ಈ ಜಯದೊಂದಿಗೆ ತವರು ಮೈದಾನದಲ್ಲಿ ಹ್ಯಾಟ್ರಿಕ್ ಸೋಲು ಅನುಭವಿಸಿದ್ದ ಲಕ್ನೋ ತಂಡಕ್ಕೆ ಮೊದಲ ಗೆಲುವು ಲಭಿಸಿದೆ.

ಅಂಜನಾದ್ರಿ ಆಂಜನೇಯನಿಗೆ 2.5 ಕೋಟಿ ರೂ. ಮೌಲ್ಯದ ಚಿನ್ನದ ದೇಣಿಗೆ ನೀಡಿದ ಉದ್ಯಮಿ

ಕೊಪ್ಪಳ: ಗಂಗಾವತಿ ತಾಲೂಕಿನಲ್ಲಿರುವ ಪವಿತ್ರ ಅಂಜನಾದ್ರಿ ಬೆಟ್ಟದ ಆಂಜನೇಯ ಸ್ವಾಮಿಗೆ ಉದ್ಯಮಿಯೊಬ್ಬರು 2.5 ಕೋಟಿ ರೂ. ಮೌಲ್ಯದ ಚಿನ್ನಾಭರಣವನ್ನು ದೇಣಿಗೆ ನೀಡಿರುವ ಘಟನೆ ನಡೆದಿದೆ.

ಎಎಂಆರ್ ಕನ್‌ಸ್ಟ್ರಕ್ಷನ್ ಕಂಪನಿಯ ಮಾಲೀಕ ಹಾಗೂ ಶಾಸಕ ಜನಾರ್ದನ ರೆಡ್ಡಿ ಅವರ ಆಪ್ತ ಮಹೇಶ್ ರೆಡ್ಡಿ ಅವರು ದಂಪತಿ ಸಮೇತ ಅಂಜನಾದ್ರಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಸಂಕಲ್ಪ ಪೂಜೆ ಹಾಗೂ ಸುಪ್ರಭಾತ ಸೇವೆಯಲ್ಲಿ ಭಾಗವಹಿಸಿದ ಬಳಿಕ ದೇಣಿಗೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಪೂಜೆ ನಂತರ ಸುಮಾರು 2.5 ಕೋಟಿ ರೂ. ಮೌಲ್ಯದ ಚಿನ್ನದ ಪ್ರಭಾವಳಿ, ಚಕ್ರ, ಕಿರೀಟ ಮತ್ತು ಗದೆಯನ್ನು ಆಂಜನೇಯ ಸ್ವಾಮಿಗೆ ದೇಣಿಗೆ ರೂಪದಲ್ಲಿ ಗಂಗಾವತಿ ತಾಲೂಕು ಆಡಳಿತಕ್ಕೆ ಹಸ್ತಾಂತರಿಸಲಾಗಿದೆ. ಈ ಮೂಲಕ ಅಂಜನಾದ್ರಿ ದೇವಸ್ಥಾನಕ್ಕೆ ಮೊದಲ ಬಾರಿಗೆ ಇಷ್ಟು ದೊಡ್ಡ ಮೊತ್ತದ ಬಂಗಾರದ ದೇಣಿಗೆ ದೊರೆತಿದೆ.

ಈ ಸಂದರ್ಭದಲ್ಲಿ ಶಾಸಕ ಜನಾರ್ದನ ರೆಡ್ಡಿ ದಂಪತಿ ಹಾಗೂ ಮಹೇಶ್ ರೆಡ್ಡಿ ದಂಪತಿ ಉಪಸ್ಥಿತರಿದ್ದರು. ದೇವಸ್ಥಾನದ ಅಭಿವೃದ್ಧಿ ಕಾರ್ಯಗಳಿಗೆ ಈ ದೇಣಿಗೆ ಸಹಕಾರಿಯಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೊಪ್ಪಳದಲ್ಲಿ ಮತ್ತೊಂದು ಲವ್ ಜಿಹಾದ್ ಪ್ರಕರಣ? ಪ್ರಶ್ನಿಸಿದ 8 ಭಜರಂಗದಳ ಕಾರ್ಯಕರ್ತರು ಅರೆಸ್ಟ್!

ಕೊಪ್ಪಳ: ಜಿಲ್ಲೆಯಲ್ಲಿ ಇತ್ತೀಚೆಗಷ್ಟೇ ನಡೆದಿದ್ದ ಲವ್ ಜಿಹಾದ್ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಲವ್ ಜಿಹಾದ್ ಪ್ರಕರಣ ನಡೆದಿರುವ ಶಂಕೆ ವ್ಯಕ್ತವಾಗಿದೆ.

ವರದಿಯ ಪ್ರಕಾರ, ನಗರದಲ್ಲಿರುವ ಖಾಸಗಿ ಹೋಟೆಲ್‌ನಲ್ಲಿ ಅಪ್ರಾಪ್ತ ಹಿಂದೂ ಬಾಲಕಿ ಹಾಗೂ ಮುಸ್ಲಿಂ ಯುವಕ ಒಟ್ಟಿಗೆ ಕಂಡುಬಂದಿದ್ದಾರೆ. ಈ ಕುರಿತು ಮಾಹಿತಿ ತಿಳಿದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಬಂದ ಭಜರಂಗದಳ ಕಾರ್ಯಕರ್ತರು ಪ್ರಶ್ನೆ ಮಾಡಿದ ವೇಳೆ ಯುವಕ ಹಾಗೂ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದು ಪರಿಸ್ಥಿತಿ ಗಂಭೀರಗೊಂಡಿದೆ ಎಂದು ತಿಳಿದುಬಂದಿದೆ.

ಈ ಘಟನೆ ಸಂಬಂಧ ಯುವಕ ಸಮೀರ್ ನೀಡಿದ ದೂರಿನ ಆಧಾರದ ಮೇಲೆ ಕೊಪ್ಪಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, 8 ಭಜರಂಗದಳ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣದ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಘಟನೆಯ ಬಳಿಕ ಅಪ್ರಾಪ್ತ ಬಾಲಕಿಯ ಪೋಷಕರು ಆತಂಕ ವ್ಯಕ್ತಪಡಿಸಿದ್ದು, ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ಎಸ್ಪಿ ಡಾ. ರಾಮ್ ಅರಸಿದ್ದಿ ಠಾಣೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇನ್ನು ಘಟನೆಯ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರು ಹಾಗೂ ಹಿಂದೂ ಸಂಘಟನೆಗಳ ಕಾರ್ಯಕರ್ತರು ಠಾಣೆಗೆ ಆಗಮಿಸಿ ಪ್ರತಿಭಟನೆ ನಡೆಸಿದ್ದು, ಪ್ರಕರಣ ಕುರಿತು ಆರೋಪ–ಪ್ರತ್ಯಾರೋಪಗಳು ಮುಂದುವರಿದಿವೆ. ಕೊಪ್ಪಳ ನಗರದಲ್ಲಿ ಭದ್ರತೆ ಹೆಚ್ಚಿಸಲಾಗಿದೆ.

ಗದಗದಲ್ಲಿ ಮನಕಲುಕುವ ದೃಶ್ಯ..! ದಾಹ ತೀರಿಸಿಕೊಳ್ಳಲು ರಸ್ತೆ ಬದಿಯ ನೀರನ್ನೇ ಕುಡಿದ ಮಂಗಗಳು

ಗದಗ: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ತೀವ್ರತೆ ಹೆಚ್ಚಾಗುತ್ತಿದ್ದು, ಮನುಷ್ಯರಷ್ಟೇ ಅಲ್ಲದೆ ಪ್ರಾಣಿ-ಪಕ್ಷಿಗಳೂ ನೀರಿನ ಕೊರತೆಯಿಂದ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಹುಲ್ಲೂರು ಗ್ರಾಮದ ರಸ್ತೆಯಲ್ಲಿ ನೀರಿಗಾಗಿ ಮಂಗಗಳು ಪರದಾಡುತ್ತಿರುವ ದೃಶ್ಯ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಬೇಸಿಗೆಯ ತೀವ್ರ ಉಷ್ಣತೆಯಿಂದ ನೀರು ಮತ್ತು ಆಹಾರದ ಅಭಾವ ಎದುರಿಸುತ್ತಿರುವ ಎರಡು ಮಂಗಗಳು ರಸ್ತೆ ಬದಿಯ ತಗ್ಗಿನಲ್ಲಿ ನಿಂತಿದ್ದ ನೀರನ್ನು ಕುಡಿಯುತ್ತಿರುವ ದೃಶ್ಯವನ್ನು ಸ್ಥಳೀಯರು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ. ದಾಹದಿಂದ ಅಲೆದಾಡುತ್ತಿದ್ದ ಮಂಗಗಳು ಕೊನೆಗೆ ರಸ್ತೆ ಬದಿಯ ನೀರನ್ನೇ ಕುಡಿದು ತಾವು ತಣಿಸಿಕೊಂಡಿರುವ ದೃಶ್ಯ ಮನಕಲುಕುವಂತಾಗಿದೆ.

ಬಿರು ಬೇಸಿಗೆಯಿಂದಾಗಿ ಪ್ರಾಣಿ ಹಾಗೂ ಪಕ್ಷಿಗಳಿಗೆ ನೀರಿನ ಕೊರತೆ ತೀವ್ರವಾಗುತ್ತಿದ್ದು, ಆಹಾರ ಮತ್ತು ನೀರಿಗಾಗಿ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ದೃಶ್ಯ ಸಾರ್ವಜನಿಕರಲ್ಲಿ ಆಘಾತ ಮೂಡಿಸಿದ್ದು, ಪ್ರಾಣಿ-ಪಕ್ಷಿಗಳಿಗಾಗಿ ನೀರಿನ ವ್ಯವಸ್ಥೆ ಮಾಡುವಂತೆ ಮನವಿ ಮಾಡುತ್ತಿದ್ದಾರೆ.

ಹೈಡ್ರಾಮಾ ಮಧ್ಯೆ ಮಮತಾ ಸರ್ಕಾರ ವಿಸರ್ಜನೆ..! ರಾಜ್ಯಪಾಲರ ಆದೇಶ

ಕೋಲ್ಕತ್ತಾ: ಪಶ್ಚಿಮ ಬಂಗಾಳ ರಾಜಕೀಯದಲ್ಲಿ ಭಾರೀ ಬೆಳವಣಿಗೆ ನಡೆದಿದ್ದು, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರವನ್ನು ರಾಜ್ಯಪಾಲ ಆರ್‌.ಎನ್‌. ರವಿ ವಜಾಗೊಳಿಸಿದ್ದಾರೆ.

ವಿಧಾನಸಭಾ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ಸೋಲು ಕಂಡಿದ್ದರೂ ಮಮತಾ ಬ್ಯಾನರ್ಜಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡದೆ ಹೈಡ್ರಾಮಾ ಮುಂದುವರಿಸಿದ್ದರು.

ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಪಡೆದಿದ್ದರೂ, “ಟಿಎಂಸಿ ಸೋತಿಲ್ಲ, ಚುನಾವಣಾ ಆಯೋಗದ ಕಾರಣದಿಂದ ಬಿಜೆಪಿ ಗೆದ್ದಿದೆ” ಎಂದು ಆರೋಪಿಸಿದ್ದ ಮಮತಾ ಬ್ಯಾನರ್ಜಿ, “ಬೇಕಿದ್ದರೆ ರಾಜ್ಯಪಾಲರೇ ನನ್ನನ್ನು ವಜಾ ಮಾಡಲಿ” ಎಂದು ಸವಾಲು ಹಾಕಿದ್ದರು.

ಭಾರತ ಸಂವಿಧಾನದ 172ನೇ ವಿಧಿಯ ಪ್ರಕಾರ, ವಿಧಾನಸಭೆಯ ಮೊದಲ ಸಭೆಯಿಂದ ಐದು ವರ್ಷ ಪೂರ್ಣಗೊಂಡ ಬಳಿಕ ಸಭೆ ಸ್ವಯಂಚಾಲಿತವಾಗಿ ವಿಸರ್ಜನೆಯಾಗುತ್ತದೆ. ಅದರಂತೆ 2021ರಲ್ಲಿ ರಚನೆಯಾಗಿದ್ದ 17ನೇ ವಿಧಾನಸಭೆಯ ಅವಧಿ ಮೇ 07ರಂದು ಅಂತ್ಯಗೊಂಡಿದೆ.

ಈ ಹಿನ್ನೆಲೆ ರಾಜ್ಯಪಾಲ ಆರ್‌.ಎನ್‌. ರವಿ ಅವರು ಸಂವಿಧಾನದ 164(1)ನೇ ವಿಧಿಯಡಿ ಮಮತಾ ಬ್ಯಾನರ್ಜಿ ನೇತೃತ್ವದ ಸಚಿವ ಸಂಪುಟವನ್ನು ವಜಾಗೊಳಿಸಿ ವಿಧಾನಸಭೆ ವಿಸರ್ಜನೆಗೆ ಆದೇಶಿಸಿದ್ದಾರೆ. ಇದರೊಂದಿಗೆ ಮಮತಾ ಬ್ಯಾನರ್ಜಿ ಸೇರಿದಂತೆ ಎಲ್ಲಾ 294 ಶಾಸಕರ ಸದಸ್ಯತ್ವವೂ ರದ್ದಾಗಿದೆ.

ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 207 ಸ್ಥಾನಗಳನ್ನು ಗೆದ್ದು ಸ್ಪಷ್ಟ ಬಹುಮತ ಸಾಧಿಸಿದ್ದು, ಟಿಎಂಸಿ ಕೇವಲ 80 ಸ್ಥಾನಗಳಿಗೆ ಕುಸಿದಿದೆ. ಭವಾನಿಪುರ ಕ್ಷೇತ್ರದಲ್ಲಿ ಮಮತಾ ಬ್ಯಾನರ್ಜಿ ಸುಮಾರು 15 ಸಾವಿರ ಮತಗಳ ಅಂತರದಿಂದ ಸೋಲನುಭವಿಸಿದ್ದಾರೆ ಎನ್ನಲಾಗಿದೆ.

ಇದೀಗ ರಾಜ್ಯಪಾಲರು ಬಿಜೆಪಿ ಪಕ್ಷವನ್ನು ಸರ್ಕಾರ ರಚನೆಗೆ ಆಹ್ವಾನಿಸುವ ಸಾಧ್ಯತೆ ಇದ್ದು, ಮೇ 09ರಂದು ಹೊಸ ಸರ್ಕಾರ ಅಧಿಕಾರ ಸ್ವೀಕರಿಸುವ ಸಾಧ್ಯತೆ ಇದೆ.

ಹಾವೇರಿ, ಶಿವಮೊಗ್ಗದಲ್ಲಿ ಗಾಳಿ ಸಹಿತ ಮಳೆ..! ರೈತರ ಮೊಗದಲ್ಲಿ ಮಂದಹಾಸ

ಶಿವಮೊಗ್ಗ/ಹಾವೇರಿ: ಬಿಸಿಲಿನ ತಾಪಕ್ಕೆ ಕಂಗೆಟ್ಟಿದ್ದ ಶಿವಮೊಗ್ಗ ಹಾಗೂ ಹಾವೇರಿ ಜಿಲ್ಲೆಗಳ ಜನತೆಗೆ ವರುಣ ದೇವ ಕೊಂಚ ತಂಪಿನ ಅನುಭವ ನೀಡಿದ್ದಾನೆ.

ಶಿವಮೊಗ್ಗ ನಗರ ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳಲ್ಲಿ ಉತ್ತಮ ಮಳೆಯಾಗಿದ್ದು, ಹಲವೆಡೆ ಮೋಡ ಕವಿದ ವಾತಾವರಣ ನಿರ್ಮಾಣವಾಗಿದೆ. ರಾತ್ರಿ ವೇಳೆಗೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಸೂಚಿಸಿದೆ.

ಇನ್ನೂ ಹಾವೇರಿ ನಗರ ಸೇರಿದಂತೆ ಜಿಲ್ಲೆಯ ಹಲವೆಡೆ ಭಾರೀ ಗಾಳಿ ಸಹಿತ ಮಳೆಯಾಗಿದೆ. ಕಳೆದ ಕೆಲವು ದಿನಗಳಿಂದ 37 ರಿಂದ 38 ಡಿಗ್ರಿ ಸೆಲ್ಸಿಯಸ್‌ವರೆಗೆ ಏರಿಕೆಯಾಗಿದ್ದ ತಾಪಮಾನದಿಂದ ಜನರು ಬೇಸತ್ತಿದ್ದರು. ಇದೀಗ ಸುರಿದ ಮಳೆಯಿಂದ ಜನರು ಕೊಂಚ ನಿಟ್ಟುಸಿರು ಬಿಡುವಂತಾಗಿದೆ.

ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ಸುಮಾರು 20 ನಿಮಿಷಗಳ ಕಾಲ ಧಾರಾಕಾರ ಮಳೆಯಾಗಿದ್ದು, ಬಿಸಿಲಿನಿಂದ ಒಣಗುತ್ತಿದ್ದ ಬೆಳೆಗಳಿಗೆ ಜೀವ ಬಂದಂತಾಗಿದೆ. ಮಳೆಯಾಗಿದ್ದಕ್ಕೆ ರೈತರು ಸಂತಸ ವ್ಯಕ್ತಪಡಿಸಿದ್ದಾರೆ.

ಪಡಿತರ ಅಕ್ಕಿ ಪಾಲಿಶ್ ಮಾಡಿ ಗುಜರಾತ್‌ಗೆ ಸಾಗಾಟ..!ಅಕ್ರಮ ಜಾಲ ಭೇದಿಸಿದ ಗದಗ ಪೊಲೀಸರು

ಗದಗ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ‘ಅನ್ನಭಾಗ್ಯ’ ಯೋಜನೆಯಡಿ ಬಡವರಿಗೆ ವಿತರಿಸಲಾಗುವ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಭಾರೀ ಜಾಲವನ್ನು ಗದಗ ಪೊಲೀಸರು ಭೇದಿಸಿದ್ದಾರೆ.

ಪಡಿತರ ಅಕ್ಕಿಯನ್ನು ಪಾಲಿಶ್ ಮಾಡಿ, ನಕಲಿ ದಾಖಲೆ ಸೃಷ್ಟಿಸಿ ಗುಜರಾತ್‌ಗೆ ಸಾಗಿಸಲಾಗುತ್ತಿದ್ದ ದಂಧೆಯನ್ನು ಬೆಟಗೇರಿ ಬಡಾವಣೆ ಪೊಲೀಸರು ಪತ್ತೆ ಹಚ್ಚಿದ್ದು, ಕಾರ್ಯಾಚರಣೆಯಲ್ಲಿ ಸುಮಾರು ₹42.88 ಲಕ್ಷ ಮೌಲ್ಯದ ಅಕ್ಕಿ ಹಾಗೂ ಲಾರಿಯನ್ನು ಜಪ್ತಿ ಮಾಡಿದ್ದಾರೆ.

ಗುರುವಾರ ಎಪಿಎಂಸಿ ಆವರಣದಲ್ಲಿರುವ ಆಹಾರ ನಿಗಮದ ಗೋದಾಮಿಗೆ ಭೇಟಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ಜಪ್ತಿ ಮಾಡಲಾದ ಅಕ್ಕಿಯನ್ನು ಪರಿಶೀಲಿಸಿ ಪ್ರಕರಣದ ಮಾಹಿತಿ ನೀಡಿದರು.

ಬುಧವಾರ ಸಂಜೆ ಗದಗ ನಗರದ ಮುಂಡರಗಿ ರಸ್ತೆಯ ತೋಂಟದಾರ್ಯ ಎಂಜಿನಿಯರಿಂಗ್ ಕಾಲೇಜ್ ಎದುರು ಅಕ್ಕಿ ತುಂಬಿದ ಲಾರಿಯೊಂದು ಅನುಮಾನಾಸ್ಪದವಾಗಿ ನಿಂತಿರುವ ಬಗ್ಗೆ ಪೊಲೀಸರಿಗೆ ಖಚಿತ ಮಾಹಿತಿ ಲಭಿಸಿತ್ತು. ತಕ್ಷಣ ಕಾರ್ಯಾಚರಣೆ ನಡೆಸಿದ ಬೆಟಗೇರಿ ಬಡಾವಣೆ ಪೊಲೀಸರು ಲಾರಿಯನ್ನು ತಡೆದು ಪರಿಶೀಲನೆ ನಡೆಸಿದಾಗ, ಬಳ್ಳಾರಿ ಜಿಲ್ಲೆಯ ಹರಪನಹಳ್ಳಿಯಿಂದ ಗುಜರಾತ್‌ಗೆ ಪಡಿತರ ಅಕ್ಕಿ ಅಕ್ರಮವಾಗಿ ಸಾಗಿಸಲಾಗುತ್ತಿರುವುದು ಬೆಳಕಿಗೆ ಬಂದಿದೆ.

ಸರ್ಕಾರದ ಪಡಿತರ ಅಕ್ಕಿಯನ್ನು ಮೇಲ್ನೋಟಕ್ಕೆ ಗುರುತಿಸಲಾಗದಂತೆ ಫ್ಯಾಕ್ಟರಿಯಲ್ಲಿ ಪಾಲಿಶ್ ಮಾಡಲಾಗಿತ್ತು. ಅಲ್ಲದೆ, ಇದು ಪಡಿತರ ಅಕ್ಕಿಯಲ್ಲ ಎಂಬಂತೆ ತೋರಿಸಲು ನಕಲಿ ವೇಬಿಲ್ ಸೇರಿದಂತೆ ಹಲವು ದಾಖಲೆಗಳನ್ನು ಸೃಷ್ಟಿಸಲಾಗಿತ್ತು. ಆದರೆ ಆಹಾರ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಅದು ಸರ್ಕಾರದ ಪಡಿತರ ಅಕ್ಕಿಯೇ ಎಂಬುದು ದೃಢಪಟ್ಟಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಮಧ್ಯಪ್ರದೇಶ ಮೂಲದ ಲಾರಿ ಚಾಲಕನನ್ನು ವಶಕ್ಕೆ ಪಡೆಯಲಾಗಿದೆ. ಲಾರಿಯನ್ನು ಬಾಡಿಗೆಗೆ ಪಡೆದು ಅಕ್ರಮ ಸಾಗಾಟಕ್ಕೆ ಬಳಸಲಾಗುತ್ತಿತ್ತು ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.

ಇನ್ನೂ ಅಕ್ಕಿಯನ್ನು ಪಾಲಿಶ್ ಮಾಡಿದ ಫ್ಯಾಕ್ಟರಿ ಮಾಲೀಕರು, ನಕಲಿ ದಾಖಲೆ ಸೃಷ್ಟಿಸಿದ ಕಿಂಗ್‌ಪಿನ್‌ಗಳು ಹಾಗೂ ಈ ಅಕ್ರಮ ಜಾಲದ ಹಿಂದಿರುವ ಪ್ರಮುಖ ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಲಾಗಿದೆ ಎಂದು ಎಸ್ಪಿ ರೋಹನ್ ಜಗದೀಶ್ ತಿಳಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಡಿವೈಎಸ್ಪಿ ಮುರ್ತುಜಾ ಖಾದ್ರಿ, ಆಹಾರ ನಿರೀಕ್ಷಕ ಜಗದೀಶ ಅಮಾತಿ ಸೇರಿದಂತೆ ಆಹಾರ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.

ಹೆಚ್ಚು ಬೆವರು ಚರ್ಮಕ್ಕೆ ಅಪಾಯಕಾರಿ..! ಫಂಗಲ್ ಇನ್‌ಫೆಕ್ಷನ್ ಬಗ್ಗೆ ತಜ್ಞರ ಸಲಹೆ

ಬೇಸಿಗೆ ಆರಂಭವಾದ ಬಳಿಕ ರಾಜ್ಯಾದ್ಯಂತ ತಾಪಮಾನ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಇದರ ಪರಿಣಾಮವಾಗಿ ಹೆಚ್ಚಿನವರಲ್ಲಿ ಅತಿಯಾಗಿ ಬೆವರು ಕಾಣಿಸಿಕೊಳ್ಳುತ್ತಿದೆ.

ಸಾಮಾನ್ಯವಾಗಿ ಬೆವರು ದೇಹದ ಉಷ್ಣಾಂಶ ನಿಯಂತ್ರಣಕ್ಕೆ ಸಹಾಯಕವಾದರೂ, ಅತಿಯಾಗಿ ಬೆವರು ಬಂದಾಗ ಹಲವು ಚರ್ಮದ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ.

ವೈದ್ಯರ ಪ್ರಕಾರ, ಬೆವರು ಹೆಚ್ಚು ಸಮಯ ಚರ್ಮದ ಮೇಲೆಯೇ ಉಳಿದರೆ ತೇವಾಂಶ ಹೆಚ್ಚಾಗಿ ಬ್ಯಾಕ್ಟೀರಿಯಾ ಹಾಗೂ ಫಂಗಸ್ ವೇಗವಾಗಿ ಬೆಳೆಯಲು ಅನುಕೂಲವಾಗುತ್ತದೆ. ಇದರಿಂದ ಚರ್ಮದಲ್ಲಿ ಉರಿ, ಕೆರೆತ, ಕೆಂಪು ಚುಕ್ಕೆಗಳು ಹಾಗೂ ಫಂಗಲ್ ಇನ್‌ಫೆಕ್ಷನ್ ಸಮಸ್ಯೆಗಳು ಕಾಣಿಸಬಹುದು. ವಿಶೇಷವಾಗಿ ಕುತ್ತಿಗೆ, ಕೈಕುಳಿ, ಬೆನ್ನು ಮತ್ತು ತೊಡೆ ಭಾಗಗಳಲ್ಲಿ ಹೆಚ್ಚು ಬೆವರು ಉಂಟಾದರೆ ಸೋಂಕಿನ ಅಪಾಯ ಹೆಚ್ಚಾಗುತ್ತದೆ ಎಂದು ತಜ್ಞರು ತಿಳಿಸಿದ್ದಾರೆ.

ಧೂಳು ಮತ್ತು ಮಲಿನತೆ ಬೆವರಿನೊಂದಿಗೆ ಸೇರಿ ಚರ್ಮದ ಮೇಲೆ ಉಳಿದರೆ ಸಮಸ್ಯೆ ಮತ್ತಷ್ಟು ಗಂಭೀರವಾಗಬಹುದು. ಜೊತೆಗೆ ಒದ್ದೆಯಾದ ಬಟ್ಟೆಗಳನ್ನು ಹೆಚ್ಚು ಸಮಯ ಧರಿಸುವುದು ಹಾಗೂ ದೇಹದ ಸ್ವಚ್ಛತೆಗೆ ನಿರ್ಲಕ್ಷ್ಯ ವಹಿಸುವುದರಿಂದ ಸೋಂಕು ಹರಡುವ ಸಾಧ್ಯತೆ ಹೆಚ್ಚುತ್ತದೆ. ಸಂವೇದನಾಶೀಲ ಚರ್ಮ ಹೊಂದಿರುವವರಲ್ಲಿ ಈ ಸಮಸ್ಯೆಗಳು ಹೆಚ್ಚಾಗಿ ಕಂಡುಬರುತ್ತವೆ ಎಂದು ವೈದ್ಯರು ತಿಳಿಸಿದ್ದಾರೆ.

ಚರ್ಮದ ಸೋಂಕು ತಡೆಯಲು ಬೇಸಿಗೆಯಲ್ಲಿ ದೇಹವನ್ನು ಸದಾ ಸ್ವಚ್ಛ ಹಾಗೂ ಒಣಗಿರುವಂತೆ ನೋಡಿಕೊಳ್ಳಬೇಕು. ಹೆಚ್ಚು ಬೆವರು ಬಂದಾಗ ಮುಖ ಮತ್ತು ದೇಹವನ್ನು ತೊಳೆಯುವುದು ಉತ್ತಮ. ಗಾಳಿ ಸರಿಯಾಗಿ ಹರಿಯುವ ಸಡಿಲ ಹಾಗೂ ಕಾಟನ್ ಬಟ್ಟೆ ಧರಿಸುವುದರಿಂದ ಬೆವರು ಬೇಗ ಒಣಗಲು ಸಹಕಾರಿಯಾಗುತ್ತದೆ ಎಂದು ತಜ್ಞರು ಸಲಹೆ ನೀಡಿದ್ದಾರೆ.

ಸಾಕಷ್ಟು ನೀರು ಕುಡಿಯುವುದು, ಹೆಚ್ಚು ಸಮಯ ಒದ್ದೆಯಾದ ಬಟ್ಟೆಗಳಲ್ಲಿ ಉಳಿಯದಿರುವುದು ಹಾಗೂ ಇತರರ ಟವೆಲ್, ಬಟ್ಟೆ ಮತ್ತು ವೈಯಕ್ತಿಕ ವಸ್ತುಗಳನ್ನು ಬಳಸುವುದನ್ನು ತಪ್ಪಿಸಬೇಕು. ಚರ್ಮದಲ್ಲಿ ನಿರಂತರ ಉರಿ, ಕೆರೆತ ಅಥವಾ ಕೆಂಪು ಚುಕ್ಕೆಗಳು ಕಾಣಿಸಿಕೊಂಡರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಅಗತ್ಯ ಎಂದು ಆರೋಗ್ಯ ತಜ್ಞರು ಸೂಚಿಸಿದ್ದಾರೆ.

ಲಕ್ಕುಂಡಿಯಲ್ಲಿ ಹೊಯ್ಸಳ ಕಾಲದ ಅಪರೂಪದ ಶಿಲ್ಪಾವಶೇಷ ಪತ್ತೆ..! ಪುರಾತತ್ವ ಪ್ರಿಯರಲ್ಲಿ ಹೆಚ್ಚಿದ ಕುತೂಹಲ

ಗದಗ: ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ನಡೆಯುತ್ತಿರುವ ಪ್ರಾಚ್ಯಾವಶೇಷಗಳ ಅನ್ವೇಷಣೆ ವೇಳೆ ಹೊಯ್ಸಳ ಕಾಲಕ್ಕೆ ಸೇರಿದ ಅಪರೂಪದ ಶಿಲ್ಪಾವಶೇಷಗಳು ಪತ್ತೆಯಾಗಿವೆ.

ಲಕ್ಕುಂಡಿಯ ದುರ್ಗಾದೇವಿ ಕೆರೆಯಲ್ಲಿ ಈ ಮಹತ್ವದ ಶಿಲ್ಪಗಳು ಬೆಳಕಿಗೆ ಬಂದಿದ್ದು, ಇತಿಹಾಸಾಸಕ್ತರು ಹಾಗೂ ಪುರಾತತ್ವ ಪ್ರಿಯರ ಗಮನ ಸೆಳೆಯುತ್ತಿವೆ.

ಈ ಕುರಿತು ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಹಾಗೂ ಲಕ್ಕುಂಡಿ ಪ್ರಾಧಿಕಾರದ ಅಧ್ಯಕ್ಷ ಸಿದ್ಧಲಿಂಗೇಶ್ವರ ಪಾಟೀಲ್ ಮಾಹಿತಿ ನೀಡಿದ್ದು, ಪತ್ತೆಯಾದ ಎರಡು ಶಿಲ್ಪಾವಶೇಷಗಳು ದೇವಾಲಯದ ಕಲಾತ್ಮಕ ಬಿಡಿಭಾಗಗಳಾಗಿವೆ ಎಂದು ತಿಳಿಸಿದ್ದಾರೆ. ಶಿಲ್ಪಗಳಲ್ಲಿ ಹೊಯ್ಸಳ ಶೈಲಿಯ ಅದ್ಭುತ ಕಲಾತ್ಮಕತೆ ಸ್ಪಷ್ಟವಾಗಿ ಗೋಚರಿಸುತ್ತಿದ್ದು, ಸಂಗೀತ ಹಾಗೂ ನೃತ್ಯ ಕಲೆಯ ವೈಭವ ಅನಾವರಣಗೊಂಡಿದೆ.

ಒಂದು ಶಿಲ್ಪದಲ್ಲಿ ಪುರುಷನು ಮದ್ದಳೆ ಬಾರಿಸುತ್ತಿರುವ ದೃಶ್ಯವಿದ್ದು, ಅಲಂಕೃತಳಾದ ಮಹಿಳೆ ತ್ರಿಭಂಗಿಯಲ್ಲಿ ನೃತ್ಯ ಮಾಡುತ್ತಿರುವ ಮನಮೋಹಕ ಚಿತ್ರಣ ಕೆತ್ತಲಾಗಿದೆ. ಮತ್ತೊಂದು ಶಿಲ್ಪದಲ್ಲಿ ಪುರುಷನು ವೇಣುವಾದನದಲ್ಲಿ ತಲ್ಲೀನನಾಗಿದ್ದು, ಮಹಿಳೆ ನೃತ್ಯದಲ್ಲಿ ನಿರತರಾಗಿರುವ ದೃಶ್ಯ ಕಂಡುಬಂದಿದೆ. ಈ ಕೆತ್ತನೆಗಳು ಆ ಕಾಲದ ಸಂಗೀತ ಮತ್ತು ನೃತ್ಯ ಸಂಸ್ಕೃತಿಯ ಶ್ರೀಮಂತಿಕೆಯನ್ನು ಬಿಂಬಿಸುತ್ತವೆ.

ಶಿಲ್ಪಗಳಲ್ಲಿ ಪುರುಷರ ಮೇಲ್ವಸ್ತ್ರ, ಮಹಿಳೆಯರ ಉಡುಪು, ಆಭರಣಗಳು ಹಾಗೂ ವಿಶಿಷ್ಟ ಕೇಶವಿನ್ಯಾಸವನ್ನು ಅತ್ಯಂತ ಸೂಕ್ಷ್ಮವಾಗಿ ಕೆತ್ತಲಾಗಿದ್ದು, ಶಿಲ್ಪಿಯ ಕಲಾತ್ಮಕತೆ ಎದ್ದು ಕಾಣುತ್ತಿದೆ. ಕೆತ್ತನೆಯ ನಾಜೂಕು ಹಾಗೂ ವಿನ್ಯಾಸಗಳನ್ನು ಗಮನಿಸಿದರೆ, ಇವು ಹೊಯ್ಸಳ ಶೈಲಿಯ ಭವ್ಯ ದೇವಾಲಯದ ಭಾಗಗಳಾಗಿರಬಹುದೆಂದು ತಜ್ಞರು ಅಂದಾಜಿಸಿದ್ದಾರೆ.

ಐತಿಹಾಸಿಕ ವೈಭವಕ್ಕೆ ಹೆಸರಾಗಿರುವ ಲಕ್ಕುಂಡಿಯಲ್ಲಿ ಇಂತಹ ಅಪರೂಪದ ಶಿಲ್ಪಾವಶೇಷಗಳ ಪತ್ತೆ ಆ ಭಾಗದ ಸಾಂಸ್ಕೃತಿಕ ಮತ್ತು ಶಿಲ್ಪಕಲೆಯ ಶ್ರೀಮಂತ ಪರಂಪರೆಯನ್ನು ಮತ್ತೊಮ್ಮೆ ಬೆಳಕಿಗೆ ತಂದಿದೆ.

error: Content is protected !!