Home Blog Page 4

2-3 ಪಂದ್ಯಗಳಿಂದ ನಾಯಕನ ಸಾಮರ್ಥ್ಯ ಅಳೆಯಬೇಡಿ: ಶ್ರೇಯಸ್ ಅಯ್ಯರ್ʼಗೆ ಎಬಿ ಡಿವಿಲಿಯರ್ಸ್ ಬೆಂಬಲ

ನವದೆಹಲಿ: ಭಾರತ ಟಿ20 ತಂಡದ ನೂತನ ನಾಯಕ ಶ್ರೇಯಸ್ ಅಯ್ಯರ್ ಸತತ ಸೋಲುಗಳ ಹಿನ್ನೆಲೆಯಲ್ಲಿ ಟೀಕೆಗೆ ಗುರಿಯಾಗಿರುವ ಬೆನ್ನಲ್ಲೇ ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ ಅವರ ಬೆಂಬಲಕ್ಕೆ ನಿಂತಿದ್ದಾರೆ. ಕೇವಲ ಎರಡು ಅಥವಾ ಮೂರು ಪಂದ್ಯಗಳ ಫಲಿತಾಂಶವನ್ನು ಆಧರಿಸಿ ನಾಯಕನ ಸಾಮರ್ಥ್ಯವನ್ನು ಅಳೆಯುವುದು ಸರಿಯಲ್ಲ ಎಂದು ಎಬಿಡಿ ಅಭಿಪ್ರಾಯಪಟ್ಟಿದ್ದಾರೆ.

ಐರ್ಲೆಂಡ್ ವಿರುದ್ಧದ ಟಿ20 ಸರಣಿಯ ಮೂಲಕ ಭಾರತ ತಂಡದ ನಾಯಕನಾಗಿ ಪದಾರ್ಪಣೆ ಮಾಡಿದ ಶ್ರೇಯಸ್ ಅಯ್ಯರ್, ಮೊದಲ ಸರಣಿಯಲ್ಲೇ 2-0 ಅಂತರದ ಸೋಲು ಅನುಭವಿಸಿದ್ದರು. ಬಳಿಕ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಮೊದಲ ಪಂದ್ಯ ಮಳೆಯಿಂದ ರದ್ದಾದರೆ, ಉಳಿದ ಎರಡು ಪಂದ್ಯಗಳಲ್ಲೂ ಭಾರತ ಸೋಲು ಕಂಡಿದೆ. ಇದರೊಂದಿಗೆ ಅಯ್ಯರ್ ನಾಯಕತ್ವದ ಬಗ್ಗೆ ಹಲವು ಪ್ರಶ್ನೆಗಳು ಕೇಳಿಬಂದಿವೆ.

ಈ ಕುರಿತು ಪ್ರತಿಕ್ರಿಯಿಸಿರುವ ಎಬಿ ಡಿವಿಲಿಯರ್ಸ್, ಐಪಿಎಲ್‌ನಲ್ಲಿ ಶ್ರೇಯಸ್ ಅಯ್ಯರ್ ತೋರಿದ ನಾಯಕತ್ವದ ಗುಣಗಳನ್ನು ನೆನಪಿಸಿಕೊಂಡಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್, ಕೋಲ್ಕತಾ ನೈಟ್ ರೈಡರ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳನ್ನು ಯಶಸ್ವಿಯಾಗಿ ಮುನ್ನಡೆಸಿದ ಅನುಭವ ಹೊಂದಿರುವ ಅಯ್ಯರ್, ಒತ್ತಡದ ಸಂದರ್ಭಗಳಲ್ಲೂ ಶಾಂತ ಹಾಗೂ ಸಂಯಮದಿಂದ ನಿರ್ಧಾರ ಕೈಗೊಳ್ಳುವ ನಾಯಕ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕಠಿಣ ಪರಿಸ್ಥಿತಿಯಲ್ಲೂ ತಂಡವನ್ನು ಒಗ್ಗೂಡಿಸಿಕೊಂಡು ಸಾಗಿಸುವ ಸಾಮರ್ಥ್ಯ ಅಯ್ಯರ್ ಅವರ ದೊಡ್ಡ ಶಕ್ತಿಯಾಗಿದೆ. ಆದ್ದರಿಂದ ಆರಂಭಿಕ ವೈಫಲ್ಯಗಳನ್ನೇ ಆಧಾರವಾಗಿಟ್ಟುಕೊಂಡು ಅವರ ನಾಯಕತ್ವವನ್ನು ಟೀಕಿಸುವುದು ನ್ಯಾಯಸಮ್ಮತವಲ್ಲ ಎಂದು ಡಿವಿಲಿಯರ್ಸ್ ಹೇಳಿದ್ದಾರೆ.

“ಒಬ್ಬ ನಾಯಕನ ಸಾಮರ್ಥ್ಯವನ್ನು ಎರಡು ಅಥವಾ ಮೂರು ಪಂದ್ಯಗಳ ಫಲಿತಾಂಶದಿಂದ ನಿರ್ಧರಿಸಲು ಸಾಧ್ಯವಿಲ್ಲ. ಶ್ರೇಯಸ್ ಅಯ್ಯರ್ ಅವರಿಗೆ ಸಾಕಷ್ಟು ಸಮಯ ಮತ್ತು ಅವಕಾಶ ನೀಡಬೇಕು. ಆಗ ಮಾತ್ರ ಅವರ ನಾಯಕತ್ವದ ನಿಜವಾದ ಮೌಲ್ಯಮಾಪನ ಸಾಧ್ಯ” ಎಂದು ಎಬಿ ಡಿವಿಲಿಯರ್ಸ್ ಅಭಿಪ್ರಾಯಪಟ್ಟಿದ್ದಾರೆ.

ರೋಹಿತ್ ಶರ್ಮಾ ಹಾಗೂ ಸೂರ್ಯಕುಮಾರ್ ಯಾದವ್ ಅವರ ನಂತರ ಭಾರತ ಟಿ20 ತಂಡದ ನಾಯಕತ್ವ ವಹಿಸಿಕೊಂಡಿರುವ ಶ್ರೇಯಸ್ ಅಯ್ಯರ್ ಸದ್ಯ ಸವಾಲಿನ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಇಂಗ್ಲೆಂಡ್ ವಿರುದ್ಧದ ಟ್ರೆಂಟ್ ಬ್ರಿಡ್ಜ್ ಪಂದ್ಯದಲ್ಲಿ ಭಾರೀ ಸೋಲು ಕಂಡ ಬಳಿಕ ತಂಡದ ಮೇಲೆ ಒತ್ತಡ ಹೆಚ್ಚಾಗಿದ್ದರೂ, ಅಯ್ಯರ್ ಮೇಲೆ ವಿಶ್ವಾಸ ಕಳೆದುಕೊಳ್ಳುವ ಅಗತ್ಯವಿಲ್ಲ ಎಂದು ಎಬಿಡಿ ಹೇಳಿದ್ದಾರೆ.

ಅಯ್ಯರ್ ಉತ್ತಮ ನಾಯಕನಾಗುವ ಎಲ್ಲಾ ಗುಣಗಳನ್ನು ಹೊಂದಿದ್ದಾರೆ. ಅವರಿಗೆ ಸಮಯ ನೀಡಿದರೆ ತಮ್ಮ ಸಾಮರ್ಥ್ಯವನ್ನು ಖಂಡಿತ ಸಾಬೀತುಪಡಿಸಲಿದ್ದಾರೆ ಎಂದು ಎಬಿ ಡಿವಿಲಿಯರ್ಸ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಖಮೇನಿ ಅಂತ್ಯಕ್ರಿಯೆಗೆ ಅಲೀಪುರದಿಂದ ಹಲವು ಗ್ರಾಮಸ್ಥರ ಪ್ರಯಾಣ: ಗ್ರಾಮದಲ್ಲಿ ನೇರ ಪ್ರಸಾರಕ್ಕೆ ಸಿದ್ಧತೆ

ಚಿಕ್ಕಬಳ್ಳಾಪುರ: ಇರಾನ್‌ನ ಪರಮೋಚ್ಚ ಧಾರ್ಮಿಕ ನಾಯಕ ಆಯತೊಲ್ಲಾ ಖಮೇನಿ ಅವರ ಅಂತಿಮ ವಿಧಿವಿಧಾನ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಅಲೀಪುರ ಗ್ರಾಮದಲ್ಲಿ ವಿಶೇಷ ಧಾರ್ಮಿಕ ವಾತಾವರಣ ನಿರ್ಮಾಣವಾಗಿದೆ. ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಗ್ರಾಮದಿಂದ 20 ರಿಂದ 25 ಮಂದಿ ಈಗಾಗಲೇ ಇರಾನ್‌ಗೆ ತೆರಳಿದ್ದಾರೆ.

ದಕ್ಷಿಣ ಭಾರತದಲ್ಲೇ ಅತಿ ಹೆಚ್ಚು ಶಿಯಾ ಮುಸ್ಲಿಂ ಸಮುದಾಯ ವಾಸಿಸುವ ಅಲೀಪುರದಲ್ಲಿ ನೂರಾರು ಜನರು ಅಂತ್ಯಕ್ರಿಯೆಯ ನೇರ ಪ್ರಸಾರ ವೀಕ್ಷಿಸಲು ಬೃಹತ್ ಎಲ್‌ಇಡಿ ಪರದೆಗಳನ್ನು ಅಳವಡಿಸಲಾಗಿದೆ. ಮಧ್ಯಾಹ್ನ 3 ಗಂಟೆಯ ಬಳಿಕ ನಡೆಯಲಿರುವ ಕಾರ್ಯಕ್ರಮವನ್ನು ಸಾಮೂಹಿಕವಾಗಿ ವೀಕ್ಷಿಸಲು ಗ್ರಾಮಸ್ಥರು ಸಜ್ಜಾಗಿದ್ದಾರೆ.

ಇರಾನ್‌ನಲ್ಲಿ ನಡೆಯಲಿರುವ ಧಾರ್ಮಿಕ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಭಕ್ತಿಭಾವದ ವಾತಾವರಣ ನಿರ್ಮಾಣವಾಗಿದ್ದು, ವಿಶೇಷ ಪ್ರಾರ್ಥನೆ ಹಾಗೂ ನೇರ ಪ್ರಸಾರದ ವ್ಯವಸ್ಥೆಗಳನ್ನು ಸ್ಥಳೀಯರು ಕೈಗೊಂಡಿದ್ದಾರೆ. ಅಂತ್ಯಕ್ರಿಯೆಯ ನೇರ ಪ್ರಸಾರ ವೀಕ್ಷಿಸಲು ಗ್ರಾಮಸ್ಥರು ಕಾತರದಿಂದ ಕಾಯುತ್ತಿದ್ದಾರೆ.

ಬಿಜೆಪಿಯ ಒಬ್ಬ ನಾಯಕನ ಮಗನೂ RSSನಲ್ಲಿ ಪೂರ್ಣಕಾಲಿಕ ಪ್ರಚಾರಕನಾಗಿಲ್ಲ: ಪ್ರಿಯಾಂಕ್ ಖರ್ಗೆ ವಾಗ್ದಾಳಿ

ಬೆಂಗಳೂರು: ಬಿಜೆಪಿಯ ಯಾವುದೇ ಪ್ರಮುಖ ನಾಯಕರ ಮಗ ಕೂಡ ಆರ್‌ಎಸ್‌ಎಸ್‌ನ ಪೂರ್ಣಕಾಲಿಕ ಪ್ರಚಾರಕರಾಗಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.

ಕೊಲೆ ಪ್ರಕರಣಗಳಲ್ಲಿ ಜೈಲು ಸೇರಿದವರಿಗೆ ಸಂಘ ಪರಿವಾರದಿಂದ ಯಾವುದೇ ನೆರವು ಸಿಗುತ್ತಿಲ್ಲ ಎಂಬ ಹಿಂದೂ ಸಂಘಟನೆಗಳ ಆರೋಪದ ಕುರಿತು ಪ್ರತಿಕ್ರಿಯಿಸಿದ ಅವರು, “ಇದೇ ವಿಚಾರವನ್ನು ನಾನು ಬಹಳ ಹಿಂದಿನಿಂದಲೂ ಹೇಳುತ್ತಿದ್ದೇನೆ. ಈಗ ಅದನ್ನೇ ಅವರೇ ಒಪ್ಪಿಕೊಳ್ಳುತ್ತಿರುವಂತಾಗಿದೆ” ಎಂದು ಹೇಳಿದರು.

“ಧರ್ಮ ರಕ್ಷಣೆ, ಗೋ ರಕ್ಷಣೆ, ಸಂಘಟನೆಗಳ ಚಟುವಟಿಕೆಗಳಿಗೆ ಬಡವರ ಮಕ್ಕಳನ್ನು ಕಳುಹಿಸಲಾಗುತ್ತದೆ. ಆದರೆ ಬಿಜೆಪಿ ನಾಯಕರ ಮಕ್ಕಳು ಏನು ಮಾಡುತ್ತಿದ್ದಾರೆ? ಬಿಜೆಪಿಯ ಒಬ್ಬ ನಾಯಕರ ಮಗನಾದರೂ ಆರ್‌ಎಸ್‌ಎಸ್‌ನ ಪೂರ್ಣಕಾಲಿಕ ಪ್ರಚಾರಕರಾಗಿದ್ದರೆ ತೋರಿಸಿ” ಎಂದು ಸವಾಲು ಹಾಕಿದರು.

“ವಿಜಯದಶಮಿ ದಿನ ಮಾತ್ರ ಗಣವೇಷ ಧರಿಸುವುದು ಬೇರೆ, ಪೂರ್ಣಕಾಲಿಕ ಪ್ರಚಾರಕರಾಗಿ ಕೆಲಸ ಮಾಡುವುದು ಬೇರೆ. ಕೋಮು ಗಲಭೆಗಳಲ್ಲಿ ಸಾವಿಗೀಡಾಗುವವರು ಸಾಮಾನ್ಯ ಕುಟುಂಬಗಳ ಯುವಕರೇ ಹೊರತು ನಾಯಕರ ಮಕ್ಕಳು ಅಲ್ಲ” ಎಂದು ಅವರು ಟೀಕಿಸಿದರು.

ಪರೇಶ್ ಮೆಸ್ತಾ ಪ್ರಕರಣವನ್ನು ಉಲ್ಲೇಖಿಸಿದ ಖರ್ಗೆ, “ಅವರ ಹೆಸರಿನಲ್ಲಿ ಚುನಾವಣೆ ಗೆದ್ದರು. ಆದರೆ ನಂತರ ಅವರ ಕುಟುಂಬದವರನ್ನು ಎಷ್ಟು ಬಾರಿ ಭೇಟಿ ಮಾಡಿದ್ದಾರೆ? ಅನೇಕ ಯುವಕರು ಸಾವನ್ನಪ್ಪಿದ್ದಾರೆ. ಆದರೆ ಅವರ ಕುಟುಂಬಗಳ ಕಷ್ಟಕ್ಕೆ ಸ್ಪಂದಿಸುವವರು ಯಾರು?” ಎಂದು ಪ್ರಶ್ನಿಸಿದರು.

ಯುವಕರಿಗೆ ಸಲಹೆ ನೀಡಿದ ಅವರು, “ಉದ್ಯೋಗ ಹುಡುಕಿ, ಕುಟುಂಬಕ್ಕೆ ಆಸರೆಯಾಗಿರಿ. ಕೋಮು ಗಲಭೆಗಳಲ್ಲಿ ಭಾಗಿಯಾಗಬೇಡಿ. ನಿಮ್ಮನ್ನು ರಾಜಕೀಯ ಉದ್ದೇಶಗಳಿಗೆ ಬಳಸಿಕೊಳ್ಳಲಾಗುತ್ತಿದೆ. ದಲಿತರು ಮತ್ತು ಹಿಂದುಳಿದ ವರ್ಗದ ಯುವಕರನ್ನೇ ಹೆಚ್ಚಾಗಿ ಇಂತಹ ಚಟುವಟಿಕೆಗಳಿಗೆ ಬಳಸಲಾಗುತ್ತಿದೆ” ಎಂದು ಹೇಳಿದರು.

“ರೈತರ ಸಮಸ್ಯೆ, ನಿರುದ್ಯೋಗ, ಬೆಲೆ ಏರಿಕೆ ಮೊದಲಾದ ಜನಸಾಮಾನ್ಯರ ವಿಚಾರಗಳಲ್ಲಿ ಸಂಘ ಪರಿವಾರ ಹೋರಾಟ ನಡೆಸಿದೆಯೇ? ಇಂತಹ ವಿಷಯಗಳ ಬದಲಿಗೆ ಬೇರೆ ವಿಚಾರಗಳಿಗೆ ಮಾತ್ರ ಪ್ರಚೋದನೆ ನೀಡಲಾಗುತ್ತಿದೆ” ಎಂದು ಆರೋಪಿಸಿದರು.

“ನನಗೆ ಬೆದರಿಕೆ ಹಾಕಿದ್ದ ಒಬ್ಬ ಯುವಕನಿಗೆ ಕೂಡ ಸಂಘಟನೆಗಳು ವಕೀಲರ ನೆರವು ನೀಡಲಿಲ್ಲ. ಆತನ ತಾಯಿ ಮನವಿ ಮಾಡಿದ ಕಾರಣ ನಾನು ಸಹಾಯ ಮಾಡಿದ್ದೆ. ಯುವಕರನ್ನು ಮುಂದೆ ತಳ್ಳಿದ ಬಳಿಕ ಅವರ ನೆರವಿಗೆ ಯಾರೂ ಬರುವುದಿಲ್ಲ. ಆದ್ದರಿಂದ ಯುವಕರು ಎಚ್ಚರಿಕೆಯಿಂದ ಇರಬೇಕು” ಎಂದು ಪ್ರಿಯಾಂಕ್ ಖರ್ಗೆ ಕರೆ ನೀಡಿದರು.

ಸರ್ಕಾರಿ ಉದ್ಯೋಗಕ್ಕಾಗಿ ತಾಯಿಯ ಹತ್ಯೆ: 7 ಲಕ್ಷ ರೂ. ಸುಪಾರಿ ಕೊಟ್ಟ ಮಗಳು ಸೇರಿ 7 ಮಂದಿ ಅರೆಸ್ಟ್!

ಜೈಪುರ: ಆಸ್ತಿ ಹಾಗೂ ಸರ್ಕಾರಿ ಉದ್ಯೋಗದ ಆಸೆಗೆ 7 ಲಕ್ಷ ರೂ. ಸುಪಾರಿ ನೀಡಿ ತಾಯಿಯನ್ನೇ ಹತ್ಯೆ ಮಾಡಿಸಿದ ಬೆಚ್ಚಿಬೀಳಿಸುವ ಘಟನೆ ರಾಜಸ್ಥಾನದ ಜೈಪುರದಲ್ಲಿ ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತೆಯ ಪುತ್ರಿ ಸೇರಿದಂತೆ ಏಳು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಮತ್ತೋರ್ವ ಪ್ರಮುಖ ಆರೋಪಿ ತಲೆಮರೆಸಿಕೊಂಡಿದ್ದಾನೆ.

ಬಂಧಿತೆ ಆಯುಷಿ ಶರ್ಮಾ (23) ತನ್ನ ಚಿಕ್ಕಪ್ಪ ಮೋಹನ್ ಸ್ವರೂಪ್ ಹಾಗೂ ಸಂಬಂಧಿ ಬಲರಾಮ್ ಅಲಿಯಾಸ್ ರವಿ ಜೊತೆ ಸೇರಿ ಕೊಲೆ ಸಂಚು ರೂಪಿಸಿದ್ದಳು. ಬಳಿಕ ಬಾಡಿಗೆ ಹಂತಕರಿಗೆ 7 ಲಕ್ಷ ರೂ. ಸುಪಾರಿ ನೀಡಿ, ತನ್ನ ತಾಯಿ ನೀರಜ್ ಶರ್ಮಾ ಅವರನ್ನು ಅಪಘಾತದಂತೆ ತೋರಿಸಿ ಹತ್ಯೆ ಮಾಡಿಸಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ಮೃತ ನೀರಜ್ ಶರ್ಮಾ (45) ನ್ಯಾಯಾಲಯದಲ್ಲಿ ಕೆಳ ವಿಭಾಗದ ಗುಮಾಸ್ತರಾಗಿ (LDC) ಕರ್ತವ್ಯ ನಿರ್ವಹಿಸುತ್ತಿದ್ದರು. ಜುಲೈ 3ರಂದು ತಮ್ಮ ಮಗನನ್ನು ಟ್ಯೂಷನ್‌ಗೆ ಬಿಟ್ಟು ಮನೆಗೆ ಹಿಂದಿರುಗುತ್ತಿದ್ದ ವೇಳೆ ಪ್ರತಾಪ್ ನಗರ ಸಮೀಪ ಅತಿ ವೇಗದಲ್ಲಿ ಬಂದ ಸ್ಕಾರ್ಪಿಯೋ ಎಸ್‌ಯುವಿ ಡಿಕ್ಕಿ ಹೊಡೆದಿತ್ತು. ಡಿಕ್ಕಿಯ ರಭಸಕ್ಕೆ ಅವರು ಸುಮಾರು 100 ಅಡಿ ದೂರಕ್ಕೆ ಎಸೆಯಲ್ಪಟ್ಟು ಸ್ಥಳದಲ್ಲೇ ಮೃತಪಟ್ಟಿದ್ದರು. ಘಟನೆ ಬಳಿಕ ಆರೋಪಿಗಳು ಪರಾರಿಯಾಗಿದ್ದರು.

ಆರಂಭದಲ್ಲಿ ಇದನ್ನು ರಸ್ತೆ ಅಪಘಾತವೆಂದು ಭಾವಿಸಲಾಗಿತ್ತು. ಆದರೆ ಘಟನಾ ಸ್ಥಳದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ಪೊಲೀಸರಿಗೆ ಇದು ಪೂರ್ವನಿಯೋಜಿತ ಕೊಲೆ ಎಂಬುದು ಗೊತ್ತಾಗಿದೆ. ಬಳಿಕ ನಡೆಸಿದ ತನಿಖೆಯಲ್ಲಿ ಸಂಪೂರ್ಣ ಸಂಚು ಬಯಲಿಗೆ ಬಂದಿದೆ.

ಪೊಲೀಸರ ಮಾಹಿತಿ ಪ್ರಕಾರ, ಆರೋಪಿಗಳು ಮೊದಲಿಗೆ ಬಾಡಿಗೆಗೆ ಪಡೆದ ಥಾರ್ ಎಸ್‌ಯುವಿ ಮೂಲಕ ನೀರಜ್ ಅವರ ಚಲನವಲನಗಳ ಮೇಲೆ ನಿಗಾ ವಹಿಸಿದ್ದರು. ಆ ಯೋಜನೆ ವಿಫಲವಾದ ಬಳಿಕ ಸ್ಕಾರ್ಪಿಯೋ ವಾಹನ ಬಳಸಿಕೊಂಡು ಅಂತಿಮವಾಗಿ ದಾಳಿ ನಡೆಸಿದ್ದರು.

ಘಟನೆ ನಡೆದ ದಿನ ನೀರಜ್ ಅವರ ಸ್ಥಳದ ಮಾಹಿತಿಯನ್ನು ಒಬ್ಬ ಆರೋಪಿ ನೀಡುತ್ತಿದ್ದರೆ, ಮತ್ತೊಬ್ಬ ಬೈಕ್‌ನಲ್ಲಿ ಸಮೀಪದಲ್ಲೇ ಕಾದಿದ್ದ. ಸ್ಕಾರ್ಪಿಯೋ ಚಾಲನೆ ಮಾಡುತ್ತಿದ್ದ ಆರೋಪಿ ನೀರಜ್ ಅವರಿಗೆ ಡಿಕ್ಕಿ ಹೊಡೆದ ಬಳಿಕ, ಆರೋಪಿಗಳು ವಾಹನ ಬಿಟ್ಟು ಬೈಕ್‌ನಲ್ಲಿ ಪರಾರಿಯಾಗಿದ್ದರು.

ತನಿಖೆ ವೇಳೆ ನೀರಜ್ ಅವರ ಪತಿ ಸುಮಾರು ಒಂದು ವರ್ಷದ ಹಿಂದೆ ಮೃತಪಟ್ಟಿದ್ದು, ಬಳಿಕ ಅನುಕಂಪದ ಆಧಾರದ ಮೇಲೆ ಅವರಿಗೆ ಎಲ್‌ಡಿಸಿ ಹುದ್ದೆ ದೊರೆತಿತ್ತು ಎಂಬುದು ತಿಳಿದುಬಂದಿದೆ. ಆ ಉದ್ಯೋಗ ತನ್ನ ಪಾಲಾಗಬೇಕೆಂದು ಆಯುಷಿ ಬಯಸಿದ್ದಳು. ಅಲ್ಲದೆ ಕಳೆದ ಎರಡು-ಮೂರು ವರ್ಷಗಳಿಂದ ತಾಯಿ-ಮಗಳ ನಡುವೆ ಆಸ್ತಿ ವಿಚಾರದಲ್ಲೂ ಭಿನ್ನಾಭಿಪ್ರಾಯವಿತ್ತು. ಇದೇ ಕೊಲೆಗೆ ಪ್ರಮುಖ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣ ಸಂಬಂಧ ಆಯುಷಿ ಶರ್ಮಾ, ಮೋಹನ್ ಸ್ವರೂಪ್, ಮೋಹಿತ್ ಶರ್ಮಾ, ಆಕಾಶ್ ಶರ್ಮಾ, ಅರವಿಂದ್ ಶರ್ಮಾ, ಹೇಮಂತ್ ಶರ್ಮಾ ಹಾಗೂ ರೋಹಿತ್ ಜಾತವ್ ಅವರನ್ನು ಬಂಧಿಸಲಾಗಿದೆ. ಪ್ರಮುಖ ಸಂಚುಕೋರ ಬಲರಾಮ್ ಅಲಿಯಾಸ್ ರವಿ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕೆ ಪೊಲೀಸರು ಶೋಧ ಮುಂದುವರಿಸಿದ್ದಾರೆ.

ಅರುಣಾಚಲ ಪ್ರದೇಶದಲ್ಲಿ ಭಾರೀ ಭೂಕುಸಿತ: ಇಬ್ಬರು ಸಾವು, ಹಲವರು ಅವಶೇಷಗಳಡಿ ಸಿಲುಕಿರುವ ಶಂಕೆ

ಇಟಾನಗರ್: ಅರುಣಾಚಲ ಪ್ರದೇಶದಲ್ಲಿ ಸುರಿಯುತ್ತಿರುವ ನಿರಂತರ ಮಳೆಯ ಪರಿಣಾಮ ಲೋಹಿತ್ ಜಿಲ್ಲೆಯ ಶಿವಾಜಿ ನಗರದಲ್ಲಿ ಭಾರೀ ಭೂಕುಸಿತ ಸಂಭವಿಸಿದ್ದು, ಕನಿಷ್ಠ ಇಬ್ಬರು ಮೃತಪಟ್ಟಿದ್ದಾರೆ. ಘಟನೆಯಲ್ಲಿ ನಾಲ್ವರು ಗಾಯಗೊಂಡಿದ್ದು, ಇನ್ನೂ ಹಲವರು ಅವಶೇಷಗಳಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ.

ಬೆಟ್ಟದ ಇಳಿಜಾರು ಪ್ರದೇಶದಲ್ಲಿ ಸಂಭವಿಸಿದ ಭೂಕುಸಿತದಿಂದ ಹಲವು ಕಾರ್ಮಿಕರು ಮಣ್ಣಿನಡಿ ಸಿಲುಕಿಕೊಂಡಿದ್ದಾರೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಐವರು ಅವಶೇಷಗಳಡಿ ಸಿಲುಕಿದ್ದು, ಅವರಲ್ಲಿ ಒಬ್ಬರು ಸುರಕ್ಷಿತವಾಗಿ ಹೊರಬಂದಿದ್ದಾರೆ. ರಕ್ಷಣಾ ಸಿಬ್ಬಂದಿ ಇದುವರೆಗೆ ಇಬ್ಬರ ಮೃತದೇಹಗಳನ್ನು ಹೊರತೆಗೆದಿದ್ದಾರೆ.

ದುರಂತದಲ್ಲಿ ಮೃತಪಟ್ಟವರು ಮತ್ತು ಗಾಯಗೊಂಡವರು ಸ್ಥಳೀಯ ನಿರ್ಮಾಣ ಕಾಮಗಾರಿಯಲ್ಲಿ ತೊಡಗಿದ್ದ ವಲಸೆ ಕಾರ್ಮಿಕರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಘಟನಾ ಸ್ಥಳದಲ್ಲಿ ರಾಜ್ಯ ವಿಪತ್ತು ಪ್ರತಿಕ್ರಿಯೆ ಪಡೆ (SDRF) ಹಾಗೂ ಅರುಣಾಚಲ ಪ್ರದೇಶ ಪೊಲೀಸ್ ಸಿಬ್ಬಂದಿ ಜಂಟಿಯಾಗಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಸ್ಥಳೀಯ ನಿವಾಸಿಗಳನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸುವ ಕಾರ್ಯವೂ ಮುಂದುವರಿದಿದೆ.

ಇನ್ನೊಂದೆಡೆ, ನಿರಂತರ ಮಳೆಯಿಂದ ತಿರಪ್ ಜಿಲ್ಲೆಯ ಖೋನ್ಸಾ–ಲಾಜು ರಸ್ತೆಯ ಅಂಚೆ ಕಚೇರಿ ಸಮೀಪ ಸುಮಾರು 110 ಮೀಟರ್ ರಸ್ತೆ ಕುಸಿದಿದೆ. ಇದರ ಪರಿಣಾಮ ಜಿಲ್ಲೆಯ ಹಲವು ಗ್ರಾಮಗಳ ಸಂಪರ್ಕ ಸಂಪೂರ್ಣವಾಗಿ ಕಡಿತಗೊಂಡಿದೆ.

ಭಾರೀ ಮಳೆ, ಹಠಾತ್ ಪ್ರವಾಹ ಹಾಗೂ ಭೂಕುಸಿತ ಸಂಭವಿಸುವ ಸಾಧ್ಯತೆ ಕುರಿತು ಹವಾಮಾನ ಇಲಾಖೆ ಈಗಾಗಲೇ ಎಚ್ಚರಿಕೆ ನೀಡಿತ್ತು. ಮುಂದಿನ ಕೆಲವು ದಿನಗಳಲ್ಲೂ ಮಳೆ ಮುಂದುವರಿಯುವ ಸಾಧ್ಯತೆ ಇರುವುದರಿಂದ ಜನರು ಎಚ್ಚರಿಕೆಯಿಂದ ಇರಲು ಅಧಿಕಾರಿಗಳು ಮನವಿ ಮಾಡಿದ್ದಾರೆ.

ಮೂವರು ಮಕ್ಕಳ ತಾಯಿಯೊಂದಿಗಿನ ಜಿಮ್ ಟ್ರೇನರ್‌ ಲಿವ್-ಇನ್ ಸಂಬಂಧ: ಸುಪಾರಿ ಕೊಲೆ ಎಂದು ಕುಟುಂಬಸ್ಥರ ಆರೋಪ

ಚಿಕ್ಕಬಳ್ಳಾಪುರ: ರಸ್ತೆ ಅಪಘಾತ ಎಂದು ದಾಖಲಾಗಿದ್ದ ಜಿಮ್ ಟ್ರೇನರ್ ದೇವಿಪ್ರಸಾದ್ ಸಾವಿನ ಪ್ರಕರಣ ಈಗ ಕೊಲೆ ಶಂಕೆಯತ್ತ ತಿರುಗಿದೆ. ಪೂರ್ವನಿಯೋಜಿತವಾಗಿ ಸುಪಾರಿ ನೀಡಿ ಹತ್ಯೆ ಮಾಡಲಾಗಿದೆ ಎಂದು ಮೃತನ ಕುಟುಂಬ ಆರೋಪಿಸಿದ್ದು, ಪ್ರಕರಣದ ಮರು ತನಿಖೆಗೆ ಚಿಕ್ಕಬಳ್ಳಾಪುರ ಎಸ್‌ಪಿಗೆ ದೂರು ನೀಡಿದೆ.

ನಾರಾಯಣಪುರ ನಿವಾಸಿ ದೇವಿಪ್ರಸಾದ್ ಮೇ 8ರಂದು ಸಂಬಂಧಿ ವಿಕ್ಕಿ ಹಾಗೂ ಸ್ನೇಹಿತ ಜೋಸ್ವಾ ಜೋಸೆಫ್ ಜೊತೆ ಬೈಕ್‌ನಲ್ಲಿ ಗುಡಿಬಂಡೆ ಕಡೆ ತೆರಳಿದ್ದ ವೇಳೆ ಸೆಟ್‌ದಿನ್ನೆ ಸಮೀಪ ಅಪಘಾತದಲ್ಲಿ ಮೃತಪಟ್ಟಿದ್ದರು. ಆದರೆ ಅವರೊಂದಿಗೆ ತೆರಳಿದ್ದ ಇಬ್ಬರ ಹೇಳಿಕೆಗಳು ಹಾಗೂ ಘಟನೆ ನಡೆದ ಸಂದರ್ಭ ಹಲವು ಅನುಮಾನಗಳಿಗೆ ಕಾರಣವಾಗಿವೆ ಎಂದು ಕುಟುಂಬ ಹೇಳಿದೆ.

ಕುಟುಂಬದ ಆರೋಪದಂತೆ, ದೇವಿಪ್ರಸಾದ್‌ಗೆ ಜಿಮ್‌ಗೆ ಬರುತ್ತಿದ್ದ ಉದ್ಯಮಿ ಹಾಗೂ ಮಾಡೆಲ್ ಆಗಿರುವ ವಿವಾಹಿತ ಮಹಿಳೆಯೊಂದಿಗೆ ಆಪ್ತ ಸಂಬಂಧವಿತ್ತು. ಇಬ್ಬರೂ ಲಿವ್-ಇನ್ ಸಂಬಂಧದಲ್ಲಿದ್ದು, ಖಾಸಗಿ ವಿಡಿಯೋಗಳು ದೇವಿಪ್ರಸಾದ್ ಮೊಬೈಲ್‌ನಲ್ಲಿ ಇದ್ದವು. ಇದೇ ವಿಚಾರಕ್ಕೆ ಆ ಮಹಿಳೆ ಸುಪಾರಿ ನೀಡಿ ಕೊಲೆ ಮಾಡಿಸಿರಬಹುದು ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಇದಲ್ಲದೆ, ಸಂಬಂಧಿ ವಿಕ್ಕಿ ದೇವಿಪ್ರಸಾದ್ ಮನೆಯಲ್ಲಿ ಇದ್ದ ಪ್ರಮುಖ ಸಾಕ್ಷ್ಯಗಳನ್ನು ನಾಶಪಡಿಸಿದ್ದಾನೆ ಎಂಬ ಆರೋಪವನ್ನೂ ಕುಟುಂಬ ಮಾಡಿದೆ. ಪ್ರಕರಣದ ಹಿಂದೆ ದೊಡ್ಡ ಸಂಚು ಇರಬಹುದೆಂಬ ಶಂಕೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ, ಪೊಲೀಸರು ಅಪಘಾತ ಮತ್ತು ಕೊಲೆ ಎರಡೂ ಆಯಾಮಗಳಲ್ಲಿ ತನಿಖೆ ಮುಂದುವರಿಸಿದ್ದಾರೆ.

ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಭಾವನ ಹತ್ಯೆ: ನಾದಿನಿ ಸೇರಿ ನಾಲ್ವರು ಅರೆಸ್ಟ್

ಚಿತ್ರದುರ್ಗ: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಭಾವನನ್ನು ಕಾರು ಬಾಡಿಗೆ ನೆಪದಲ್ಲಿ ಕರೆಸಿ ಕತ್ತು ಕೊಯ್ದು ಹತ್ಯೆ ಮಾಡಿ, ಬಳಿಕ ಶವವನ್ನು ಸುಟ್ಟು ಸಾಕ್ಷ್ಯ ನಾಶಕ್ಕೆ ಯತ್ನಿಸಿದ್ದ ಭೀಕರ ಪ್ರಕರಣವನ್ನು ಚಿತ್ರದುರ್ಗ ಗ್ರಾಮಾಂತರ ಪೊಲೀಸರು ಭೇದಿಸಿದ್ದಾರೆ. ಪ್ರಕರಣದಲ್ಲಿ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದ್ದು, ಮತ್ತೋರ್ವನಿಗಾಗಿ ಬಲೆ ಬೀಸಲಾಗಿದೆ.

ಚಳ್ಳಕೆರೆ ತಾಲೂಕಿನ ಚೌಳೂರು ಗ್ರಾಮದ ನಿವಾಸಿ ಹಾಗೂ ಪಾವಗಡ ಸರ್ಕಾರಿ ಆರೋಗ್ಯ ಕೇಂದ್ರದ ಲ್ಯಾಬ್ ಟೆಕ್ನಿಷಿಯನ್ ಶಿವಮೂರ್ತಿ (49) ಅವರನ್ನು ಜೂನ್ 26ರಂದು ಚನ್ನಗಿರಿಗೆ ಕರೆಸಿಕೊಂಡ ಆರೋಪಿಗಳು, ಪೂರ್ವನಿಯೋಜಿತವಾಗಿ ಹತ್ಯೆಗೈದಿದ್ದರು. ನಂತರ ಶವವನ್ನು ಇಂಗಳದಾಳ್ ಗ್ರಾಮದ ಸಮೀಪಕ್ಕೆ ತಂದು ಬೆಂಕಿ ಹಚ್ಚಿ ಸುಟ್ಟು ಪರಾರಿಯಾಗಿದ್ದರು.

ಜುಲೈ 1ರಂದು ಸುಟ್ಟು ಕರಕಲಾದ ಶವ ಪತ್ತೆಯಾದ ಬಳಿಕ ತನಿಖೆ ಆರಂಭಿಸಿದ ಪೊಲೀಸರು, ಕೊಲೆಯ ಹಿಂದಿನ ಸಂಚನ್ನು ಬಯಲಿಗೆಳೆದಿದ್ದಾರೆ. ಮೃತನ ಸಹೋದರನ ಪತ್ನಿ ಸುಮತಿ ಹಾಗೂ ಆಕೆಯ ಪ್ರಿಯಕರ ನೂರ್ ಅಹ್ಮದ್ ನಡುವಿನ ಅಕ್ರಮ ಸಂಬಂಧಕ್ಕೆ ಶಿವಮೂರ್ತಿ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದ ಹಿನ್ನೆಲೆ ಅವರನ್ನು ದಾರಿ ಮುಳ್ಳಾಗಿಸಿ ಹತ್ಯೆ ಮಾಡಲಾಗಿದೆ ಎಂದು ತನಿಖೆಯಲ್ಲಿ ಗೊತ್ತಾಗಿದೆ.

ಪ್ರಕರಣದಲ್ಲಿ ಸುಮತಿ, ನೂರ್ ಅಹ್ಮದ್, ಅಕ್ಷಯ್ ಮತ್ತು ಜೇಂಕಾರ್ ಅವರನ್ನು ಬಂಧಿಸಲಾಗಿದ್ದು, ಇನ್ನೊಬ್ಬ ಆರೋಪಿಯನ್ನು ಬಂಧಿಸಲು ಪೊಲೀಸರು ಶೋಧ ಮುಂದುವರಿಸಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಪ್ರಕರಣದ ತನಿಖೆ ಇನ್ನೂ ಮುಂದುವರಿದಿದೆ ಎಂದು ತಿಳಿಸಿದ್ದಾರೆ.

ಚಿನ್ನದ ದರದಲ್ಲಿ ಮತ್ತೆ ಭಾರೀ ಏರಿಕೆ! ಬೆಳ್ಳಿ ಬೆಲೆಯಲ್ಲಿ ಭಾರೀ ಕುಸಿತ: ಇಂದಿನ ದರ ಎಷ್ಟು?

ಬೆಂಗಳೂರು: ಜಾಗತಿಕ ಆರ್ಥಿಕ ಬೆಳವಣಿಗೆಗಳ ಪರಿಣಾಮವಾಗಿ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಏರಿಳಿತ ಮುಂದುವರಿದಿದೆ. ಅಮೆರಿಕ–ಇರಾನ್ ನಡುವಿನ ಉದ್ವಿಗ್ನತೆ ಹಾಗೂ ತೈಲ ಮಾರುಕಟ್ಟೆಯಲ್ಲಿನ ಬದಲಾವಣೆಗಳಿಂದ ಹೂಡಿಕೆದಾರರ ಗಮನ ಚಿನ್ನ-ಬೆಳ್ಳಿ ಮಾರುಕಟ್ಟೆಯ ಮೇಲೂ ಪರಿಣಾಮ ಬೀರಿದೆ.

ಈ ನಡುವೆ ಬೆಳ್ಳಿ ದರದಲ್ಲಿ ಭಾರೀ ಕುಸಿತವಾಗಿದ್ದು, ಚಿನ್ನದ ಬೆಲೆಯಲ್ಲಿ ಅಲ್ಪ ಪ್ರಮಾಣದ ಏರಿಕೆ ಕಂಡುಬಂದಿದೆ ಎಂದು ಗುಡ್‌ರಿಟರ್ನ್ಸ್ ವರದಿ ತಿಳಿಸಿದೆ.

ಜುಲೈ 9, 2026 (ಗುರುವಾರ) 24 ಕ್ಯಾರೆಟ್ ಚಿನ್ನದ 1 ಗ್ರಾಂ ಬೆಲೆ 11 ರೂಪಾಯಿ ಏರಿಕೆಯಾಗಿ 14,324 ರೂ.ಗೆ ತಲುಪಿದೆ. 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 110 ರೂಪಾಯಿ ಹೆಚ್ಚಳವಾಗಿ 1,43,240 ರೂ. ಆಗಿದೆ.

22 ಕ್ಯಾರೆಟ್ ಚಿನ್ನದ 1 ಗ್ರಾಂ ಬೆಲೆ 10 ರೂಪಾಯಿ ಏರಿಕೆಯಾಗಿ 13,130 ರೂ. ಆಗಿದ್ದು, 10 ಗ್ರಾಂ ಚಿನ್ನದ ಬೆಲೆ 100 ರೂಪಾಯಿ ಹೆಚ್ಚಳವಾಗಿ 1,31,300 ರೂ.ಗೆ ತಲುಪಿದೆ.

ಬೆಂಗಳೂರು ಮಾರುಕಟ್ಟೆಯಲ್ಲಿ ಶುದ್ಧ ಚಿನ್ನದ (24 ಕ್ಯಾರೆಟ್) ಪ್ರತಿ ಗ್ರಾಂ ದರ 14,526 ರೂ. ದಾಖಲಾಗಿದೆ.

ಇನ್ನು ಬೆಳ್ಳಿ ಬೆಲೆಯಲ್ಲಿ ಭಾರೀ ಇಳಿಕೆ ಕಂಡುಬಂದಿದೆ. ಇಂದು ಬೆಳ್ಳಿ ದರದಲ್ಲಿ 10,000 ರೂ. ಕುಸಿತವಾಗಿದ್ದು, ಪ್ರತಿ ಗ್ರಾಂ ಬೆಲೆ 235 ರೂ. ಆಗಿದೆ. ಅದರಂತೆ, ಒಂದು ಕೆಜಿ ಬೆಳ್ಳಿಯ ದರ 2,35,000 ರೂ.ಗೆ ಇಳಿಕೆಯಾಗಿದೆ.

ಜಾಗತಿಕ ಮಾರುಕಟ್ಟೆಯ ಬೆಳವಣಿಗೆಗಳು ಮುಂದಿನ ದಿನಗಳಲ್ಲೂ ಚಿನ್ನ ಹಾಗೂ ಬೆಳ್ಳಿ ಬೆಲೆಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಬಿಟ್ ಕಾಯಿನ್ ಹಗರಣ: ನಾಲ್ವರು ಪೊಲೀಸ್ ಅಧಿಕಾರಿಗಳಿಗೆ ಬಿಗ್ ರಿಲೀಫ್, ಬಿ-ರಿಪೋರ್ಟ್ ಸಲ್ಲಿಕೆ

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ ಸೃಷ್ಟಿಸಿದ್ದ ಬಹುಕೋಟಿ ಬಿಟ್‌ಕಾಯಿನ್ ಹಗರಣದಲ್ಲಿ ಹೆಸರು ಕೇಳಿಬಂದಿದ್ದ ನಾಲ್ವರು ಪೊಲೀಸ್ ಅಧಿಕಾರಿಗಳಿಗೆ ಗೃಹ ಇಲಾಖೆ ಬಿಗ್ ರಿಲೀಫ್ ನೀಡಿದೆ.

ಅಧಿಕಾರಿಗಳ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಲು ಅಗತ್ಯವಾಗಿದ್ದ ಅಭಿಯೋಜನಾ ಮಂಜೂರಾತಿಯನ್ನು (Prosecution Sanction) ಗೃಹ ಇಲಾಖೆ ನಿರಾಕರಿಸಿರುವ ಹಿನ್ನೆಲೆಯಲ್ಲಿ, ಸಿಐಡಿ–ಎಸ್‌ಐಟಿ ನ್ಯಾಯಾಲಯಕ್ಕೆ ಬಿ-ರಿಪೋರ್ಟ್ ಸಲ್ಲಿಸಿ ಅವರನ್ನು ಪ್ರಕರಣದಿಂದ ಕೈಬಿಟ್ಟಿದೆ.

ಡಿವೈಎಸ್‌ಪಿ ಶ್ರೀಧರ್ ಪೂಜಾರ್, ಪೊಲೀಸ್ ಇನ್ಸ್‌ಪೆಕ್ಟರ್‌ಗಳಾದ ಚಂದ್ರಾಧರ್, ಡಿ.ಎಂ. ಪ್ರಶಾಂತ್ ಬಾಬು ಹಾಗೂ ಲಕ್ಷ್ಮೀ ಕಾಂತಯ್ಯ ವಿರುದ್ಧ ತನಿಖೆ ನಡೆಸಲಾಗುತ್ತಿತ್ತು. ಇದೀಗ ಅಭಿಯೋಜನಾ ಮಂಜೂರಾತಿ ದೊರೆಯದ ಕಾರಣ ಇವರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಲು ಸಾಧ್ಯವಾಗಿಲ್ಲ.

ಏನಿದು ಪ್ರಕರಣ?

2020-21ರಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದ ಬಿಟ್‌ಕಾಯಿನ್ ಹಗರಣದಲ್ಲಿ, ಅಂತರರಾಷ್ಟ್ರೀಯ ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಅವರನ್ನು ಅಕ್ರಮ ಬಂಧನದಲ್ಲಿರಿಸಿ, ಅವರ ಮೂಲಕ ಬಿಟ್‌ಕಾಯಿನ್ ವರ್ಗಾವಣೆ ಮಾಡಿಸಿಕೊಂಡ ಆರೋಪ ಈ ಅಧಿಕಾರಿಗಳ ವಿರುದ್ಧ ಕೇಳಿಬಂದಿತ್ತು.

ಎಸ್‌ಐಟಿ ತನಿಖೆ ಪ್ರಕಾರ, ಈ ಅಧಿಕಾರಿಗಳು ಸೈಬರ್ ತಜ್ಞ ಸಂತೋಷ್ ಕುಮಾರ್ ಅವರೊಂದಿಗೆ ಸೇರಿ, ಶ್ರೀಕಿ ಹಾಗೂ ರಾಬಿನ್ ಖಂಡೇವಾಲ ಅವರ ಕ್ರಿಪ್ಟೋ ವ್ಯಾಲೆಟ್‌ಗಳನ್ನು ದುರ್ಬಳಕೆ ಮಾಡಿಕೊಂಡು ಸುಮಾರು 1 ಕೋಟಿ 83 ಲಕ್ಷ 624 ರೂಪಾಯಿ ಮೌಲ್ಯದ ಬಿಟ್‌ಕಾಯಿನ್ ಅನ್ನು ಅಕ್ರಮವಾಗಿ ವರ್ಗಾವಣೆ ಮಾಡಿಕೊಂಡಿದ್ದಾರೆ ಎಂಬ ಆರೋಪವಿತ್ತು.

ಸರ್ಕಾರಿ ಅಧಿಕಾರಿಗಳ ವಿರುದ್ಧ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಲು ಗೃಹ ಇಲಾಖೆಯ ಪೂರ್ವಾನುಮತಿ ಕಡ್ಡಾಯವಾಗಿದೆ. ಆದರೆ, ಈ ನಾಲ್ವರು ಅಧಿಕಾರಿಗಳ ವಿರುದ್ಧದ ಅಭಿಯೋಜನಾ ಮಂಜೂರಾತಿ ಪ್ರಸ್ತಾವನೆಯನ್ನು ಗೃಹ ಇಲಾಖೆ ತಿರಸ್ಕರಿಸಿದೆ. ಇದರ ಪರಿಣಾಮವಾಗಿ ಸಿಐಡಿ–ಎಸ್‌ಐಟಿ ನ್ಯಾಯಾಲಯಕ್ಕೆ ಬಿ-ರಿಪೋರ್ಟ್ ಸಲ್ಲಿಸಿ ಅಧಿಕಾರಿಗಳನ್ನು ಪ್ರಕರಣದ ದೋಷಾರೋಪ ಪಟ್ಟಿಯಿಂದ ಕೈಬಿಟ್ಟಿದೆ.

ನಾಲ್ವರು ಪೊಲೀಸ್ ಅಧಿಕಾರಿಗಳಿಗೆ ರಿಲೀಫ್ ದೊರೆತಿದ್ದರೂ, ಪ್ರಕರಣದ ಎ-1 ಆರೋಪಿಯಾಗಿರುವ ಸೈಬರ್ ತಜ್ಞ ಸಂತೋಷ್ ಕುಮಾರ್ ವಿರುದ್ಧ ತನಿಖೆ ಮುಂದುವರಿದಿದೆ. ರಾಬಿನ್ ಖಂಡೇವಾಲ ಅವರ ಕ್ರಿಪ್ಟೋ ವ್ಯಾಲೆಟ್‌ನಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಬಿಟ್‌ಕಾಯಿನ್ ಅಕ್ರಮ ವರ್ಗಾವಣೆ, ವಂಚನೆ ಹಾಗೂ ಸಾಕ್ಷ್ಯಾಧಾರ ತಿರುಚಿದ ಆರೋಪಗಳಿಗೆ ಸಂಬಂಧಿಸಿದಂತೆ ಅವರ ವಿರುದ್ಧ ಬಲವಾದ ಸಾಕ್ಷ್ಯಗಳು ಲಭ್ಯವಾಗಿವೆ ಎಂದು ತನಿಖಾ ಮೂಲಗಳು ತಿಳಿಸಿವೆ.

ರಾಜಕೀಯವಾಗಿ ತೀವ್ರ ಚರ್ಚೆಗೆ ಕಾರಣವಾಗಿದ್ದ ಬಿಟ್‌ಕಾಯಿನ್ ಹಗರಣದಲ್ಲಿ ಪೊಲೀಸ್ ಅಧಿಕಾರಿಗಳ ವಿರುದ್ಧದ ತನಿಖೆ ಈ ಹಂತದಲ್ಲಿ ಅಂತ್ಯಗೊಂಡಿರುವುದು ಮತ್ತೆ ರಾಜಕೀಯ ವಾಗ್ವಾದಕ್ಕೆ ಕಾರಣವಾಗುವ ಸಾಧ್ಯತೆ ಇದೆ.

ನಮ್ಮ ಮೆಟ್ರೋ ಗ್ರೀನ್ ಲೈನ್ʼನಲ್ಲಿ ತಾಂತ್ರಿಕ ದೋಷ: ಸಂಚಾರ ತಾತ್ಕಾಲಿಕ ಸ್ಥಗಿತ, ಪ್ರಯಾಣಿಕರ ಪರದಾಟ

ಬೆಂಗಳೂರು: ನಮ್ಮ ಮೆಟ್ರೋದ ಗ್ರೀನ್ ಲೈನ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಮೆಟ್ರೋ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಸಮಸ್ಯೆ ಪರಿಹಾರಕ್ಕಾಗಿ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ತುರ್ತು ಕ್ರಮ ಕೈಗೊಂಡಿದ್ದು, ತಾಂತ್ರಿಕ ಸಿಬ್ಬಂದಿ ದುರಸ್ತಿ ಕಾರ್ಯದಲ್ಲಿ ತೊಡಗಿದ್ದಾರೆ.

ಮಾದಾವರದಿಂದ ತಲಘಟ್ಟಪುರದವರೆಗೆ ಸುಮಾರು 33 ಕಿಲೋಮೀಟರ್ ವ್ಯಾಪ್ತಿಯ ಗ್ರೀನ್ ಲೈನ್‌ನಲ್ಲಿ ಮೆಟ್ರೋ ಸೇವೆಗಳಲ್ಲಿ ವಿಳಂಬ ಉಂಟಾಗಿದೆ. ಬೆಳಗ್ಗೆ 8:50ರ ಸುಮಾರಿಗೆ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ಪೀಕ್ ಅವರ್ ವೇಳೆ ಮೆಟ್ರೋ ಸೇವೆ ವ್ಯತ್ಯಯಗೊಂಡ ಕಾರಣ ಸಾವಿರಾರು ಪ್ರಯಾಣಿಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಮೆಟ್ರೋ ಸೇವೆ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಅನೇಕರು ಬದಲಿ ಸಾರಿಗೆ ವ್ಯವಸ್ಥೆಗಳಾದ ಬಿಎಂಟಿಸಿ ಬಸ್, ಕ್ಯಾಬ್ ಹಾಗೂ ಆಟೋಗಳ ಮೊರೆ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಘಟನೆ ಕುರಿತು ಪ್ರತಿಕ್ರಿಯಿಸಿರುವ BMRCL, ತಾಂತ್ರಿಕ ಸಮಸ್ಯೆಯನ್ನು ಆದ್ಯತೆ ಮೇರೆಗೆ ಪರಿಹರಿಸುವ ಕಾರ್ಯ ನಡೆಯುತ್ತಿದ್ದು, ಆದಷ್ಟು ಬೇಗ ಮೆಟ್ರೋ ಸಂಚಾರವನ್ನು ಪುನರಾರಂಭಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದೆ. ಅಲ್ಲದೆ, ಸಾರ್ವಜನಿಕರಿಗೆ ಉಂಟಾದ ಅನಾನುಕೂಲತೆಗೆ ವಿಷಾದ ವ್ಯಕ್ತಪಡಿಸಿದೆ.

ಗಮನಾರ್ಹ ಸಂಗತಿಯೆಂದರೆ, ಕಳೆದ 15 ದಿನಗಳ ಹಿಂದಷ್ಟೇ ನೇರಳೆ ಮಾರ್ಗದಲ್ಲೂ ಇದೇ ರೀತಿಯ ತಾಂತ್ರಿಕ ದೋಷ ಉಂಟಾಗಿ ಮೆಟ್ರೋ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಇದೀಗ ಮತ್ತೊಮ್ಮೆ ಗ್ರೀನ್ ಲೈನ್‌ನಲ್ಲಿ ಸಮಸ್ಯೆ ಎದುರಾಗಿರುವುದು ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ.