Home Blog Page 4

ದಿಲೀಪ್ ರಾಜ್ ನೆನೆದು ಕಣ್ಣೀರಾದ ನವೀನ್ ಕೃಷ್ಣ; ಗೆಳೆಯನಿಗಾಗಿ ಹಾಡಿದ ಭಾವುಕ ಗಾನ ನಮನ ವೈರಲ್

ಬೆಂಗಳೂರು: ನಟ ದಿಲೀಪ್ ರಾಜ್ ಅಗಲಿಕೆಯ ನೋವಿನಿಂದ ಕನ್ನಡ ಚಿತ್ರರಂಗ ಇನ್ನೂ ಹೊರಬಂದಿಲ್ಲ. ಅವರ ನಿಧನದ ಬಳಿಕ ಸ್ನೇಹಿತರು, ಸಹ ಕಲಾವಿದರು ಹಾಗೂ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾವುಕ ನೆನಪುಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇದೀಗ ನಟ ಹಾಗೂ ನಿರ್ದೇಶಕ ನವೀನ್ ಕೃಷ್ಣ ತಮ್ಮ ಆಪ್ತ ಗೆಳೆಯ ದಿಲೀಪ್ ರಾಜ್ ಅವರಿಗೆ ಹಾಡಿನ ಮೂಲಕ ಭಾವುಕ ನಮನ ಸಲ್ಲಿಸಿದ್ದಾರೆ.

ಕಾಲೇಜು ದಿನಗಳಿಂದಲೂ ದಿಲೀಪ್ ರಾಜ್ ಮತ್ತು ನವೀನ್ ಕೃಷ್ಣ ಆತ್ಮೀಯ ಸ್ನೇಹಿತರಾಗಿದ್ದರು. ಕೇವಲ ನಟನೆಯಲ್ಲ, ಜೀವನದ ಅನೇಕ ಹಂತಗಳಲ್ಲಿ ಇಬ್ಬರೂ ಜೊತೆಯಾಗಿದ್ದರು. ನಿರ್ದೇಶನದತ್ತ ಹೆಜ್ಜೆ ಇಡಲು ಕೂಡ ದಿಲೀಪ್ ರಾಜ್ ಅವರೇ ಪ್ರೇರಣೆ ಎಂದು ನವೀನ್ ಕೃಷ್ಣ ಹಲವು ಬಾರಿ ಹೇಳಿಕೊಂಡಿದ್ದರು.

ಗೆಳೆಯನ ಅಗಲಿಕೆಯಿಂದ ಮನನೊಂದಿರುವ ನವೀನ್ ಕೃಷ್ಣ, ಇದೀಗ ದಿಲೀಪ್ ರಾಜ್ ಅವರ ವ್ಯಕ್ತಿತ್ವ ಮತ್ತು ಮಾನವೀಯತೆಯನ್ನು ಹಾಡಿನ ಮೂಲಕ ಸ್ಮರಿಸಿದ್ದಾರೆ.

“ಕಲೆಯೇ ಅವನ ಉಸಿರಾಯ್ತು.. ನಗುವೇ ಅವನ ಹೆಸರಾಯ್ತು.. ಸಾಧನೆ ರೂಢಿಯಾಯ್ತು.. ಹಸಿದವರ ಅನ್ನದಾತ..” ಎಂಬ ಸಾಲುಗಳು ದಿಲೀಪ್ ರಾಜ್ ಬದುಕಿನ ನೈಜ ಚಿತ್ರಣದಂತಿವೆ.

ಹಾಡಿನ ಕೊನೆಯಲ್ಲಿ “ವಿಧಿಯೂ ಬಂದು ಕರೆದರೂ ಸಾವಿಗೂ ಕೈ ಚಾಚಿದಾತ” ಎಂಬ ಸಾಲು ಕೇಳುಗರನ್ನು ಕಣ್ಣೀರಾಗಿಸುವಂತಿದೆ.

ಈ ಹಾಡಿನ ವಿಡಿಯೋ ಹಂಚಿಕೊಂಡಿರುವ ನವೀನ್ ಕೃಷ್ಣ, “ನೀನಿಲ್ಲ ಅಂತ ನಾನು ಒಪ್ಪಲ್ಲ.. ನೀನು ಎಲ್ಲಿದ್ದರೂ ಎಂದಿನಂತೆ ನಗು ನಗ್ತಾ ಇರು” ಎಂದು ಬರೆದುಕೊಂಡಿದ್ದು, ಆ ಪೋಸ್ಟ್ ಈಗ ಭಾರೀ ವೈರಲ್ ಆಗಿದೆ.

ಚಿತ್ರರಂಗದ ಅನೇಕ ಕಲಾವಿದರು ಈ ಪೋಸ್ಟ್‌ಗೆ ಪ್ರತಿಕ್ರಿಯಿಸಿ ದಿಲೀಪ್ ರಾಜ್ ಅವರನ್ನು ನೆನಪಿಸಿಕೊಂಡಿದ್ದಾರೆ. ಅಭಿಮಾನಿಗಳೂ ಸಹ “ಒಬ್ಬ ನಿಜವಾದ ಸ್ನೇಹಿತ ಮಾತ್ರ ಇಷ್ಟು ಹೃದಯಸ್ಪರ್ಶಿಯಾಗಿ ಗೆಳೆಯನನ್ನು ನೆನಪಿಸಿಕೊಳ್ಳಬಹುದು” ಎಂದು ಕಾಮೆಂಟ್ ಮಾಡುತ್ತಿದ್ದಾರೆ.

ದಿಲೀಪ್ ರಾಜ್ ಅವರ ಸರಳತೆ, ನಗುಮುಖ ಮತ್ತು ಮಾನವೀಯತೆ ಅವರನ್ನು ಇಂದಿಗೂ ಅಭಿಮಾನಿಗಳ ಮನಸ್ಸಿನಲ್ಲಿ ಜೀವಂತವಾಗಿರಿಸಿದೆ.

ವಿಜಯ್ ಟಿವಿಕೆ, ಪವನ್ ಜನಸೇನಾ ಕರ್ನಾಟಕದತ್ತ? ದಕ್ಷಿಣ ರಾಜಕೀಯದಲ್ಲಿ ಹೊಸ ಸಮೀಕರಣ!

ಬೆಂಗಳೂರು: ತಮಿಳು ನಟ ವಿಜಯ್ ನೇತೃತ್ವದ ಟಿವಿಕೆ ಪಕ್ಷ ಕರ್ನಾಟಕ ರಾಜಕೀಯಕ್ಕೆ ಕಾಲಿಡಲಿದೆ ಎಂಬ ಚರ್ಚೆ ಜೋರಾಗಿದ್ದು, ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆಯಲ್ಲಿ ಪಕ್ಷ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಸಾಧ್ಯತೆಗಳ ಕುರಿತು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿದೆ.

ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯ ಐದು ನಗರ ಪಾಲಿಕೆಗಳಿಗೆ 2026ರ ಆಗಸ್ಟ್ ಅಂತ್ಯದೊಳಗೆ ಚುನಾವಣೆ ನಡೆಸಲು ಸುಪ್ರೀಂ ಕೋರ್ಟ್ ಸೂಚನೆ ನೀಡಿದ ಬಳಿಕ, ಹಲವು ಹೊಸ ರಾಜಕೀಯ ಲೆಕ್ಕಾಚಾರಗಳು ಆರಂಭವಾಗಿವೆ. ವಿಶೇಷವಾಗಿ ತಮಿಳು ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಇರುವ ಬೆಂಗಳೂರಿನ ಕೆಲ ವಾರ್ಡ್‌ಗಳಲ್ಲಿ ಟಿವಿಕೆ ಪಕ್ಷ ಸಂಘಟನೆ ಮಾಡುವ ಪ್ರಯತ್ನ ನಡೆಯುತ್ತಿದೆ ಎನ್ನಲಾಗಿದೆ.

ತಮಿಳುನಾಡಿನಲ್ಲಿ ವಿಜಯ್ ಪಕ್ಷ ಸಾಧಿಸಿದ ಜನಪ್ರಿಯತೆಯನ್ನು ಕರ್ನಾಟಕದಲ್ಲೂ ಬಳಸಿಕೊಳ್ಳಲು ಅಭಿಮಾನಿ ಬಳಗ ಮತ್ತು ಕೆಲ ಸಂಘಟಕರು ತೆರೆಮರೆಯಲ್ಲಿ ಚರ್ಚೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಹರಿದಾಡುತ್ತಿದೆ. ಆರಂಭಿಕ ಹಂತದಲ್ಲಿ ಸಣ್ಣ ಮಟ್ಟದಲ್ಲಿ ಪಕ್ಷ ಸಂಘಟನೆ ಮಾಡಿ ನಂತರ ವಿಸ್ತರಣೆ ಮಾಡುವ ಚಿಂತನೆ ಇದೆ ಎಂದು ಹೇಳಲಾಗುತ್ತಿದೆ.

ಇದೇ ಸಮಯದಲ್ಲಿ ಆಂಧ್ರ ಪ್ರದೇಶದ ಜನಸೇನಾ ಪಕ್ಷವೂ ಕರ್ನಾಟಕದಲ್ಲಿ ತನ್ನ ಪ್ರಭಾವ ಹೆಚ್ಚಿಸಲು ಮುಂದಾಗಿದೆ. ಚಿತ್ರದುರ್ಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಾಗಬಾಬು ಭಾಗವಹಿಸಿದ್ದರಿಂದ, ಪವನ್ ಕಲ್ಯಾಣ್ ಪಕ್ಷದ ಚಟುವಟಿಕೆಗಳ ಮೇಲೂ ಗಮನ ಸೆಳೆಯಲಾಗಿದೆ.

ಕರ್ನಾಟಕದಲ್ಲಿ ಬಿಜೆಪಿ-ಕಾಂಗ್ರೆಸ್ ಪ್ರಾಬಲ್ಯ ಮುಂದುವರಿದಿರುವಾಗ, ಪ್ರಾದೇಶಿಕ ರಾಜಕೀಯ ಪರ್ಯಾಯದ ಬಗ್ಗೆ ಮತ್ತೆ ಚರ್ಚೆ ಆರಂಭವಾಗಿದೆ. ಉಪೇಂದ್ರ ಅವರ ಪ್ರಜಾಕೀಯ ಪಕ್ಷದ ಬಗ್ಗೆ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಮರುಚರ್ಚೆ ನಡೆಯುತ್ತಿದೆ.

ದಕ್ಷಿಣ ಭಾರತದ ರಾಜಕೀಯ ಪಕ್ಷಗಳು ಕರ್ನಾಟಕದಲ್ಲಿ ನೆಲೆ ಕಂಡುಕೊಳ್ಳಲು ಪ್ರಯತ್ನಿಸುತ್ತಿರುವುದು ಮುಂದಿನ ದಿನಗಳಲ್ಲಿ ರಾಜ್ಯ ರಾಜಕೀಯದ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎನ್ನುವುದು ಕುತೂಹಲದ ವಿಷಯವಾಗಿದೆ.

‘ಪುನೀತ್ ಜೊತೆಯೇ ಆ ಕಥೆಯೂ ಹೋಯಿತು’: ಅಪ್ಪು ನೆನೆದು ಪ್ರಶಾಂತ್ ನೀಲ್ ಭಾವುಕ

ನಿರ್ದೇಶಕ ಪ್ರಶಾಂತ್ ನೀಲ್ ಮತ್ತು ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಕಾಂಬಿನೇಷನ್‌ನಲ್ಲಿ ಸಿನಿಮಾ ಬರಬೇಕಿತ್ತು ಎಂಬ ವಿಚಾರ ಮತ್ತೆ ಚರ್ಚೆಗೆ ಬಂದಿದೆ. ಅಪ್ಪುಗಾಗಿ ವಿಶೇಷವಾಗಿ ಸಿದ್ಧಪಡಿಸಿದ್ದ ಕಥೆಯನ್ನು ಈಗ ಯಾರಿಗೂ ಮಾಡಲು ಮನಸ್ಸಿಲ್ಲ ಎಂದು ಪ್ರಶಾಂತ್ ನೀಲ್ ಭಾವುಕರಾಗಿ ಹೇಳಿದ್ದು, ಅಭಿಮಾನಿಗಳ ಮನ ಮುಟ್ಟಿದೆ.

‘ಕೆಜಿಎಫ್’ ಸಿನಿಮಾ ಆರಂಭಕ್ಕೂ ಮುನ್ನವೇ ಪ್ರಶಾಂತ್ ನೀಲ್ ಒಂದು ಫ್ಯಾಮಿಲಿ ಡ್ರಾಮಾ ಕಥೆ ಸಿದ್ಧಪಡಿಸಿದ್ದರು. ಆ ಕಥೆಯನ್ನು ಪುನೀತ್ ರಾಜ್‌ಕುಮಾರ್ ಅವರನ್ನು ಗಮನದಲ್ಲಿಟ್ಟುಕೊಂಡೇ ಬರೆಯಲಾಗಿತ್ತು. ಹೊಂಬಾಳೆ ಫಿಲ್ಮ್ಸ್ ಎದುರು ಮೊದಲಿಗೆ ಇದೇ ಕಥೆ ಹೇಳಲಾಗಿತ್ತಾದರೂ, ನಂತರ ‘ಕೆಜಿಎಫ್’ ಕಥೆ ಕೇಳಿದ ನಿರ್ಮಾಪಕರು ಅದನ್ನೇ ಮೊದಲು ಕೈಗೆತ್ತಿಕೊಂಡಿದ್ದರು.

ಈ ಕುರಿತು ಮಾತನಾಡಿರುವ ಪ್ರಶಾಂತ್ ನೀಲ್, ‘ಆ ಕಥೆ ಸಂಪೂರ್ಣವಾಗಿ ಪುನೀತ್ ಸರ್‌ಗಾಗಿ ಮಾಡಿದ್ದೆ. ಅವರ ಅಗಲಿಕೆಯ ನಂತರ ಆ ಕಥೆಯನ್ನು ಮತ್ತಾರಿಗೂ ಮಾಡಲು ಸಾಧ್ಯವೆನಿಸಲಿಲ್ಲ. ಅವರ ಜೊತೆ ಆ ಕಥೆಯೂ ಹೋಗಿಬಿಟ್ಟಿತು’ ಎಂದು ಹೇಳಿದ್ದಾರೆ.

ಪುನೀತ್ ಜೊತೆ ಸಿನಿಮಾ ಮಾಡಲು ಆಗದೇ ಹೋದದ್ದೇ ತಮ್ಮ ವೃತ್ತಿಜೀವನದ ಅತಿ ದೊಡ್ಡ ಬೇಸರ ಎಂದು ನೀಲ್ ಹೇಳಿದ್ದಾರೆ. ಅಪ್ಪು ಅವರ ವ್ಯಕ್ತಿತ್ವ, ಸ್ಕ್ರೀನ್ ಪ್ರೆಸೆನ್ಸ್ ಮತ್ತು ಭಾವನಾತ್ಮಕ ತೂಕವನ್ನು ಮನಸ್ಸಿನಲ್ಲಿ ಇಟ್ಟುಕೊಂಡೇ ಕಥೆ ನಿರ್ಮಿಸಲಾಗಿತ್ತು ಎನ್ನಲಾಗಿದೆ.

ಪ್ರಸ್ತುತ ಪ್ರಶಾಂತ್ ನೀಲ್ ‘ಡ್ರ್ಯಾಗನ್’ ಸಿನಿಮಾದ ಕೆಲಸಗಳಲ್ಲಿ ನಿರತರಾಗಿದ್ದಾರೆ. ಜೂನಿಯರ್ ಎನ್‌ಟಿಆರ್ ನಟನೆಯ ಈ ಚಿತ್ರದ ಗ್ಲಿಂಪ್ಸ್ ಈಗಾಗಲೇ ದೊಡ್ಡ ಮಟ್ಟದಲ್ಲಿ ವೈರಲ್ ಆಗಿದೆ. ಸುಮಾರು 9 ನಿಮಿಷಗಳ ವಿಶೇಷ ಟ್ರೇಲರ್ ಬಿಡುಗಡೆ ಮಾಡಲು ಚಿತ್ರತಂಡ ಯೋಜನೆ ರೂಪಿಸಿದೆ ಎಂಬ ಮಾಹಿತಿ ಹೊರಬಿದ್ದಿದೆ.

‘ಕೆಜಿಎಫ್ 3’ಗೆ ಇನ್ನೂ ಸಮಯ ಬೇಕು: ‘ಸಲಾರ್ 2’ ಬಗ್ಗೆ ದೊಡ್ಡ ಅಪ್ಡೇಟ್ ಕೊಟ್ಟ ಪ್ರಶಾಂತ್ ನೀಲ್

ಹೈದರಾಬಾದ್: ಪ್ಯಾನ್ ಇಂಡಿಯಾ ನಿರ್ದೇಶಕ ಪ್ರಶಾಂತ್ ನೀಲ್ ಇದೀಗ ‘ಸಲಾರ್ 2’ ಸಿನಿಮಾದ ಬಗ್ಗೆ ಸ್ಪಷ್ಟ ಅಪ್ಡೇಟ್ ನೀಡಿ ಸಿನಿಪ್ರೇಕ್ಷಕರ ಕುತೂಹಲ ಹೆಚ್ಚಿಸಿದ್ದಾರೆ. ಆದರೆ ಇದೇ ವೇಳೆ ‘ಕೆಜಿಎಫ್ 3’ ಕುರಿತು ಅವರು ನೀಡಿದ ಪ್ರತಿಕ್ರಿಯೆ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದೆ.

ಪ್ರಭಾಸ್ ಅಭಿನಯದ ‘ಸಲಾರ್: ಪಾರ್ಟ್ 1 – ಸೀಸ್‌ಫೈರ್’ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಯಶಸ್ಸು ಕಂಡಿತ್ತು. ಈಗ ಅದರ ಮುಂದುವರಿದ ಭಾಗ ‘ಸಲಾರ್: ಪಾರ್ಟ್ 2 – ಶೌರ್ಯಾಂಗ ಪರ್ವಂ’ ಯಾವಾಗ ಶುರುವಾಗಲಿದೆ ಎಂಬ ಪ್ರಶ್ನೆಗೆ ಪ್ರಶಾಂತ್ ನೀಲ್ ಉತ್ತರ ನೀಡಿದ್ದಾರೆ.

ಸದ್ಯ ಜೂನಿಯರ್ ಎನ್‌ಟಿಆರ್ ಜೊತೆ ‘ಡ್ರ್ಯಾಗನ್’ ಸಿನಿಮಾ ಮಾಡುತ್ತಿರುವ ಅವರು, ಆ ಚಿತ್ರದ ಕೆಲಸ ಮುಗಿದ ತಕ್ಷಣವೇ ‘ಸಲಾರ್ 2’ ಶೂಟಿಂಗ್ ಆರಂಭವಾಗಲಿದೆ ಎಂದು ಹೇಳಿದ್ದಾರೆ. ‘ಗಲಾಟಾ ಪ್ಲಸ್’ ಸಂದರ್ಶನದಲ್ಲಿ ಮಾತನಾಡಿದ ಅವರು, ‘ಡ್ರ್ಯಾಗನ್ ನಂತರ ನನ್ನ ಸಂಪೂರ್ಣ ಗಮನ ಸಲಾರ್ 2 ಕಡೆ ಇರಲಿದೆ’ ಎಂದು ತಿಳಿಸಿದ್ದಾರೆ.

ಇದೇ ವೇಳೆ ‘ಕೆಜಿಎಫ್ 3’ ಬಗ್ಗೆ ಮಾತನಾಡಿದ ಪ್ರಶಾಂತ್ ನೀಲ್, ‘ಆ ಫ್ರಾಂಚೈಸಿಗೆ ನಾನು ಯಾವಾಗ ಮರಳುತ್ತೇನೆ ಎಂಬುದರ ಬಗ್ಗೆ ಇನ್ನೂ ಅಂತಿಮ ತೀರ್ಮಾನವಾಗಿಲ್ಲ’ ಎಂದು ಹೇಳಿದ್ದಾರೆ.

ಪ್ರಶಾಂತ್ ನೀಲ್ ತಮ್ಮ ಮುಂದಿನ ಸಿನಿಮಾ ಯೋಜನೆಗಳ ಬಗ್ಗೆಯೂ ಮಾಹಿತಿ ಹಂಚಿಕೊಂಡಿದ್ದಾರೆ. ಡಾರ್ಕ್ ಥೀಮ್ ಆ್ಯಕ್ಷನ್ ಸಿನಿಮಾಗಳಿಂದ ಸ್ವಲ್ಪ ಬ್ರೇಕ್ ತೆಗೆದುಕೊಂಡು, ಪೌರಾಣಿಕ ಕಥಾಹಂದರದ ಕಲರ್‌ಫುಲ್ ಸಿನಿಮಾ ಸರಣಿ ಮಾಡಲು ಅವರು ಆಸಕ್ತಿ ತೋರಿದ್ದಾರೆ. ಜೊತೆಗೆ ಸಣ್ಣ ಬಜೆಟ್‌ನ ಭಾವನಾತ್ಮಕ ಕುಟುಂಬ ಕಥೆಯ ಸಿನಿಮಾ ಮಾಡುವ ಕನಸನ್ನೂ ಹೊರಹಾಕಿದ್ದಾರೆ.

‘ಸಲಾರ್ 2’ನಲ್ಲಿ ದೇವ ಮತ್ತು ವರದರಾಜ ಮನ್ನಾರ್ ನಡುವಿನ ಯುದ್ಧ ಮತ್ತಷ್ಟು ತೀವ್ರವಾಗಲಿದೆ. ಮೊದಲ ಭಾಗದಲ್ಲಿ ಕಟ್ಟಿಕೊಡಲಾದ ಸ್ನೇಹ ಮತ್ತು ದ್ರೋಹದ ಕಥೆ, ಎರಡನೇ ಭಾಗದಲ್ಲಿ ರಕ್ತಪಾತದ ಅಧಿಕಾರ ಸಮರವಾಗಿ ಮಾರ್ಪಡಲಿದೆ ಎಂದು ಹೇಳಲಾಗುತ್ತಿದೆ.

ಚಿತ್ರದಲ್ಲಿ ಪ್ರಭಾಸ್, ಪೃಥ್ವಿರಾಜ್ ಸುಕುಮಾರನ್, ಜಗಪತಿ ಬಾಬು, ಬಾಬಿ ಸಿಂಹ, ಶ್ರುತಿ ಹಾಸನ್, ಶ್ರಿಯಾ ರೆಡ್ಡಿ ಸೇರಿದಂತೆ ಹಲವರು ನಟಿಸುತ್ತಿದ್ದಾರೆ.

‘ನಟಿ ಮಾತ್ರವಲ್ಲ, ಸಮಾಜಸೇವಕಿಯೂ ಆಗಬೇಕು’: ಹೊಸ ಮಿಷನ್ ಜೊತೆ ಮೈತ್ರಿಯಾ ಗೌಡ ರೀ-ಎಂಟ್ರಿ

ಬೆಂಗಳೂರು: ನಟನೆಯಿಂದ ಕೆಲವು ವರ್ಷ ದೂರ ಉಳಿದಿದ್ದ ನಟಿ ಮೈತ್ರಿಯಾ ಗೌಡ ಇದೀಗ ನಿರ್ಮಾಪಕಿ ಮತ್ತು ಸಮಾಜಸೇವಕಿಯಾಗಿ ಹೊಸ ಪಯಣ ಆರಂಭಿಸಿದ್ದಾರೆ. ‘ಮೈತ್ರಿಯಾ ಗ್ಲೋಬಲ್ ಟ್ರಸ್ಟ್’ ಮೂಲಕ ಸಮಾಜಮುಖಿ ಕೆಲಸಗಳ ಜೊತೆಗೆ ಹೊಸ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವುದಾಗಿ ಅವರು ಘೋಷಿಸಿದ್ದಾರೆ.

‘ಮೌರ್ಯ’ ಸಿನಿಮಾದಲ್ಲಿ ಪುನೀತ್ ರಾಜ್‌ಕುಮಾರ್ ಅವರ ತಂಗಿ ಪಾತ್ರದಲ್ಲಿ ನಟಿಸುವ ಮೂಲಕ ಗಮನ ಸೆಳೆದಿದ್ದ ಮೈತ್ರಿಯಾ ಗೌಡ, ಬಳಿಕ ಹಲವು ಸಿನಿಮಾಗಳಲ್ಲಿ ನಾಯಕಿಯಾಗಿ ಅಭಿನಯಿಸಿದ್ದರು. ನಂತರ ಕೆಲವು ವರ್ಷ ಚಿತ್ರರಂಗದಿಂದ ದೂರ ಉಳಿದಿದ್ದ ಅವರು ಈಗ ಮತ್ತೆ ಸಕ್ರಿಯರಾಗಿದ್ದಾರೆ.

ಚಿತ್ರರಂಗದ ಹಲವಾರು ಗಣ್ಯರ ಸಮ್ಮುಖದಲ್ಲಿ ‘ಮೈತ್ರಿಯಾ ಗ್ಲೋಬಲ್ ಟ್ರಸ್ಟ್’ ಉದ್ಘಾಟನೆಗೊಂಡಿದೆ. ಕಾರ್ಯಕ್ರಮದಲ್ಲಿ ಅನಿರುದ್ಧ್ ಜತ್ಕರ್, ಉದಯ್ ಮೆಹ್ತಾ, ಶರವಣ, ಯಶಸ್ ಸೂರ್ಯ, ರವಿಚೇತನ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಟ್ರಸ್ಟ್ ಆರಂಭದ ಬಗ್ಗೆ ಮಾತನಾಡಿದ ಮೈತ್ರಿಯಾ ಗೌಡ, ‘ನಾನು ಚಿಕ್ಕವಳಿದ್ದಾಗಲೇ ನಟನೆಯ ಜೊತೆಗೆ ಸಮಾಜ ಸೇವೆ ಮಾಡಬೇಕು ಅನ್ನೋ ಕನಸು ಇತ್ತು. ಅನಿರುದ್ಧ್ ಜತ್ಕರ್ ಅವರ ಸೇವಾ ಕಾರ್ಯಗಳು ಮತ್ತು ಉದಯ್ ಮೆಹ್ತಾ ಅವರ ಕೆಲಸದ ರೀತಿ ನನ್ನ ಮೇಲೆ ದೊಡ್ಡ ಪ್ರಭಾವ ಬೀರಿದೆ’ ಎಂದು ಹೇಳಿದರು.

‘ಮೈತ್ರಿಯಾ ಗ್ಲೋಬಲ್ ಟ್ರಸ್ಟ್ ಮೂಲಕ ಸಿನಿಮಾ ಕ್ಷೇತ್ರದ ಹೊಸ ಪ್ರತಿಭೆಗಳಿಗೆ ಅವಕಾಶ ನೀಡಲಾಗುತ್ತದೆ. ಜೊತೆಗೆ ಅನಾಥಾಶ್ರಮ, ವೃದ್ಧಾಶ್ರಮ, ಗೋಶಾಲೆ ಹಾಗೂ ಬೀದಿ ಪ್ರಾಣಿಗಳ ರಕ್ಷಣೆಯಂತಹ ಸಮಾಜಮುಖಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗುತ್ತದೆ’ ಎಂದು ಅವರು ತಿಳಿಸಿದರು.

ಇತ್ತೀಚೆಗೆ ತಮ್ಮ ಹುಟ್ಟುಹಬ್ಬದ ಸಂದರ್ಭದಲ್ಲೇ ಟ್ರಸ್ಟ್ ಉದ್ಘಾಟನೆಗೊಂಡಿರುವುದು ಮೈತ್ರಿಯಾ ಗೌಡ ಅವರಿಗೆ ಮತ್ತಷ್ಟು ವಿಶೇಷ ಕ್ಷಣವಾಗಿತ್ತು.

‘ಕೆಂಪು ಬೇಡ, ಕಿತ್ತಳೆ ಬೇಕು!’; ಮದುವೆ ಲುಕ್‌ನಲ್ಲಿ ಟ್ರೆಂಡ್ ಬ್ರೇಕ್ ಮಾಡಿದ ರಶ್ಮಿಕಾ ಮಂದಣ್ಣ

ಹೈದರಾಬಾದ್: ನಟಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರ ಮದುವೆ ಬಳಿಕವೂ ಅವರ ವೆಡ್ಡಿಂಗ್ ಸ್ಟೈಲ್ ಈಗಲೂ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆಗುತ್ತಿದೆ. ವಿಶೇಷವಾಗಿ ರಶ್ಮಿಕಾ ಧರಿಸಿದ್ದ ಕಿತ್ತಳೆ ಬಣ್ಣದ ಸೀರೆ ಮತ್ತು ಅವರು ಸ್ವತಃ ವಿನ್ಯಾಸಗೊಳಿಸಿದ್ದ ಮಂಗಳಸೂತ್ರ ಇದೀಗ ಮತ್ತೆ ಚರ್ಚೆಗೆ ಬಂದಿದೆ.

ಸ್ಟೈಲಿಸ್ಟ್ ಪ್ರಿಯಾ ಮಗಂತಿ ಈ ಬಗ್ಗೆ ಮಾತನಾಡಿ ಹಲವು ಕುತೂಹಲಕಾರಿ ಸಂಗತಿಗಳನ್ನು ಬಹಿರಂಗಪಡಿಸಿದ್ದಾರೆ. ‘ರಶ್ಮಿಕಾ ಅವರ ಮಂಗಳಸೂತ್ರ ಸಂಪೂರ್ಣವಾಗಿ ಅವರದೇ ಕಲ್ಪನೆ. ಅವರು ಸ್ವತಃ ಅದನ್ನು ಡಿಸೈನ್ ಮಾಡಿದ್ದರು. ಪ್ರತಿಯೊಂದು ವಿವರಕ್ಕೂ ಅವರು ವೈಯಕ್ತಿಕ ಸ್ಪರ್ಶ ನೀಡಿದ್ದರು’ ಎಂದು ಹೇಳಿದ್ದಾರೆ.

ಸೆಲೆಬ್ರಿಟಿ ಮದುವೆಗಳಲ್ಲಿ ಸಾಮಾನ್ಯವಾಗಿ ಟ್ರೆಂಡಿಂಗ್ ಲುಕ್‌ಗಳನ್ನು ಅನುಸರಿಸಲಾಗುತ್ತದೆ. ಆದರೆ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಾತ್ರ ತಮ್ಮ ಮದುವೆಯನ್ನು ಸಂಪೂರ್ಣವಾಗಿ ವೈಯಕ್ತಿಕ ಭಾವನೆಗಳ ಆಧಾರದಲ್ಲಿ ರೂಪಿಸಿಕೊಂಡಿದ್ದರು ಎನ್ನಲಾಗಿದೆ.

ಮದುವೆ ಸೀರೆ ವಿಚಾರದಲ್ಲೂ ಇದೇ ದೃಷ್ಟಿಕೋನ ಅನುಸರಿಸಲಾಗಿತ್ತು. ಹಲವರು ಕೆಂಪು ಅಥವಾ ಬಿಳಿ ಬಣ್ಣದ ಸೀರೆ ಧರಿಸುವಂತೆ ಸಲಹೆ ನೀಡಿದ್ದರೂ, ರಶ್ಮಿಕಾ ಮಾತ್ರ ಕಿತ್ತಳೆ ಬಣ್ಣಕ್ಕೇ ಒತ್ತಾಯಿಸಿದ್ದರು.

‘ಕಿತ್ತಳೆ ಬಣ್ಣದ ವೆಡ್ಡಿಂಗ್ ಸೀರೆ ಅಪರೂಪ. ಆದರೆ ರಶ್ಮಿಕಾ ಅದನ್ನೇ ಬಯಸಿದ್ದರು. ಇತರರ ಅಭಿಪ್ರಾಯಕ್ಕಿಂತ ತಮ್ಮ ಮನಸ್ಸಿನ ಮಾತಿಗೆ ಹೆಚ್ಚು ಮಹತ್ವ ನೀಡಿದರು’ ಎಂದು ಪ್ರಿಯಾ ಮಗಂತಿ ಹೇಳಿದ್ದಾರೆ.

ಇಂಟರ್ನೆಟ್ ಟ್ರೆಂಡ್‌ಗಿಂತ ವೈಯಕ್ತಿಕ ಖುಷಿಗೆ ಆದ್ಯತೆ ನೀಡಿದ ಈ ಜೋಡಿ, ತಮ್ಮ ಮದುವೆಯನ್ನು ವಿಭಿನ್ನವಾಗಿಸಲು ವಿಶೇಷ ಕಾಳಜಿ ವಹಿಸಿತ್ತು ಎನ್ನಲಾಗಿದೆ.

ಸದ್ಯ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ‘ರಣಬಾಲಿ’ ಸಿನಿಮಾದಲ್ಲಿ ಮತ್ತೆ ಜೋಡಿಯಾಗಿ ನಟಿಸುತ್ತಿದ್ದು, ಅಭಿಮಾನಿಗಳಲ್ಲಿ ಈ ಚಿತ್ರದ ಮೇಲೆ ಈಗಾಗಲೇ ದೊಡ್ಡ ಮಟ್ಟದ ನಿರೀಕ್ಷೆ ಮೂಡಿದೆ.

ಪುರಸಭೆ ಜಾಗದಲ್ಲೇ ಗೋಹತ್ಯೆ ಆರೋಪ!

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದ ಹಳೆ ಆಸಾರ ಓಣಿಯ ಪುರಸಭೆ ಜಾಗೆಯಲ್ಲಿ ಪರವಾನಗಿ ಇಲ್ಲದೆ ಅಕ್ರಮವಾಗಿ ನಡೆಸಲಾಗುತ್ತಿರುವ ಕಸಾಯಿಖಾನೆಯಲ್ಲಿ ಗೋಹತ್ಯೆ ನಡೆಸಿ ಮಾಂಸ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಗುರುವಾರ ಲಕ್ಷ್ಮೇಶ್ವರದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು.

ನೂರಾರು ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಕಸಾಯಿಖಾನೆಯ ಬಳಿ ಜಮಾಯಿಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಅಕ್ರಮ ಕಸಾಯಿಖಾನೆಯನ್ನು ಕೂಡಲೇ ಬಂದ್ ಮಾಡಿಸಿ, ಸಂಬಂಧಪಟ್ಟವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದರು.

ಶ್ರೀರಾಮ ಸೇನೆಯ ತಾಲೂಕು ಅಧ್ಯಕ್ಷ ಈರಣ್ಣ ಪೂಜಾರ ನೀಡಿದ ದೂರಿನ ಪ್ರಕಾರ, ಬಲ್ಲ ಮೂಲಗಳ ಮಾಹಿತಿ ಮೇರೆಗೆ ಯುವಕರೊಂದಿಗೆ ಸ್ಥಳಕ್ಕೆ ತೆರಳಿದಾಗ 8ರಿಂದ 10 ಆಕಳುಗಳನ್ನು ಕಡಿಯಲಾಗುತ್ತಿರುವ ದೃಶ್ಯ ಕಂಡು ಬಂದಿದೆ ಎಂದು ಆರೋಪಿಸಲಾಗಿದೆ. ಪ್ರಶ್ನಿಸಲು ಹೋದಾಗ ಕಸಾಯಿಖಾನೆಯಲ್ಲಿದ್ದವರು ಮಾರಕಾಸ್ತ್ರಗಳಿಂದ ಹಲ್ಲೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ.

ಬಳಿಕ ಪೊಲೀಸರೊಂದಿಗೆ ಸ್ಥಳಕ್ಕೆ ತೆರಳಿದ ಯುವಕರು, ಆಕಳು, ಎತ್ತು ಹಾಗೂ ಎಮ್ಮೆಗಳನ್ನು ಕಡಿಯಲಾಗಿರುವ ದೃಶ್ಯಗಳನ್ನು ತೋರಿಸಿ ಆಕ್ರೋಶ ವ್ಯಕ್ತಪಡಿಸಿದರು.

ಮಾತಿನ ಚಕಮಕಿ, ಉದ್ವಿಗ್ನ ವಾತಾವರಣ

ಘಟನಾ ಸ್ಥಳದಲ್ಲಿ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಹಾಗೂ ಕಸಾಯಿಖಾನೆ ಸಿಬ್ಬಂದಿ ನಡುವೆ ಮಾತಿನ ಚಕಮಕಿ ನಡೆಯಿತು. ಪರಿಸ್ಥಿತಿ ಉದ್ವಿಗ್ನಗೊಂಡ ಹಿನ್ನೆಲೆಯಲ್ಲಿ ಪೊಲೀಸರು ಸ್ಥಳದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಿದರು.

ಈ ವೇಳೆ ಓರ್ವ ಕಸಾಯಿಖಾನೆಯ ಸಿಬ್ಬಂದಿ ಅಂಗಡಿ ಬಂದ್ ಮಾಡಿ ಅಲ್ಲಿಂದ ತೆರಳಿದ್ದಾನೆ ಎಂದು ತಿಳಿದು ಬಂದಿದೆ.

ಬಸವರಾಜ ಚಕ್ರಸಾಲಿ ಮಾತನಾಡಿ, “ಪಟ್ಟಣದಲ್ಲಿ ಹಲವು ವರ್ಷಗಳಿಂದ ಅಕ್ರಮ ಕಸಾಯಿಖಾನೆ, ಗೋ ಸಾಗಾಣಿಕೆ ಹಾಗೂ ಅನಧಿಕೃತ ಮಾಂಸ ಮಾರಾಟ ನಡೆಯುತ್ತಿದ್ದರೂ ಪುರಸಭೆ ಮತ್ತು ಪೊಲೀಸರು ಕಣ್ಮುಚ್ಚಿ ಕುಳಿತಿರುವುದು ಸಾರ್ವಜನಿಕರ ಅನುಮಾನಕ್ಕೆ ಕಾರಣವಾಗಿದೆ” ಎಂದು ಆರೋಪಿಸಿದರು.

ಸ್ಥಳೀಯರ ಪ್ರಕಾರ, ಪುರಸಭೆ ಜಾಗವನ್ನು ಹಲವು ವರ್ಷಗಳಿಂದ ಅಕ್ರಮವಾಗಿ ಬಳಸಲಾಗುತ್ತಿದ್ದು, ಇದರಿಂದ ಪರಿಸರ ಮಾಲಿನ್ಯ ಹಾಗೂ ದುರ್ವಾಸನೆ ಸಮಸ್ಯೆ ಹೆಚ್ಚಾಗಿದೆ ಎಂದು ದೂರಲಾಗಿದೆ.

ಕ್ರಮದ ಭರವಸೆ ನೀಡಿದ ಪೊಲೀಸರು

ಸಿಪಿಐ ಬಿ.ವೈ. ನ್ಯಾಮಗೌಡ ಹಾಗೂ ಪಿಎಸ್‌ಐ ನಾಗರಾಜ ಗಡದ ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನಾಕಾರರನ್ನು ಸಮಾಧಾನಪಡಿಸಿದರು. ಪ್ರಕರಣದ ಕುರಿತು ಪರಿಶೀಲನೆ ನಡೆಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಘಟನೆಯ ಗಂಭೀರತೆ ಅರಿತು ಸ್ಥಳಕ್ಕೆ ಆಗಮಿಸಿದ ಡಿವೈಎಸ್‌ಪಿ ಮುರ್ತುಜಾ ಖಾದ್ರಿ ಸ್ಥಳ ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಮುತ್ತು ಕರ್ಜೆಕಣ್ಣವರ, ಅಮರೀಶ ಗಾಂಜಿ, ಪ್ರತಾಪ ಅಂಕಲಿ, ಪ್ರಾಣೇಶ ವ್ಯಾಪಾರಿ, ನವೀನ ಹಿರೇಮಠ, ಪ್ರವೀಣ ಬೋಮಲೆ, ವಿಜಯ ಕುಂಬಾರ, ಚಿನ್ನು ಹಾಳದೋಳದ, ವಾಸು ಗೋಸಾವಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

“ಹಿಂದೂಗಳ ಪೂಜ್ಯನೀಯ ಆಕಳುಗಳನ್ನು ಹತ್ಯೆ ಮಾಡುತ್ತಿರುವುದನ್ನು ಸಹಿಸುವ ಪ್ರಶ್ನೆಯೇ ಇಲ್ಲ. ಅಕ್ರಮ ಕಸಾಯಿಖಾನೆ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಉಗ್ರ ಹೋರಾಟ ಅನಿವಾರ್ಯವಾಗಲಿದೆ.”

ಈರಣ್ಣ ಪೂಜಾರ

ತಾಲೂಕು ಅಧ್ಯಕ್ಷ, ಶ್ರೀರಾಮ ಸೇನೆ

ಲಸಿಕೆಗಾಗಿ ತಾಯಂದಿರ ಪರದಾಟ

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕ್ಕಮಕ್ಕಳಿಗೆ ನೀಡುವ ಲಸಿಕಾ ಚುಚ್ಚುಮದ್ದು ಪಡೆಯಲು ಬಂದ ತಾಯಂದಿರು ಮತ್ತು ಪಾಲಕರು ಗುರುವಾರ ಗಂಟೆಗಟ್ಟಲೆ ಕಾಯುವಂತಾದ ಘಟನೆ ನಡೆದಿದೆ. ಸಿಬ್ಬಂದಿಯ ನಿರ್ಲಕ್ಷ್ಯ ಹಾಗೂ ಸ್ಪಂದನೆಯ ಕೊರತೆಯಿಂದ ಪಾಲಕರು ಆಕ್ರೋಶ ವ್ಯಕ್ತಪಡಿಸಿದರು.

ಹೆರಿಗೆಯಾದ ಒಂದು ದಿನದ ಮಗುವಿನಿಂದ ಹಿಡಿದು ಐದು ವರ್ಷದೊಳಗಿನ ಮಕ್ಕಳಿಗೆ ನೀಡುವ ಲಸಿಕೆಗಾಗಿ ಸಾಕಷ್ಟು ಸಂಖ್ಯೆಯಲ್ಲಿ ಬಾಣಂತಿಯರು ಹಾಗೂ ತಾಯಂದಿರು ಆಸ್ಪತ್ರೆಗೆ ಆಗಮಿಸಿದ್ದರು. ಆದರೆ ಲಸಿಕೆ ನೀಡುವ ಪ್ರಕ್ರಿಯೆ ವಿಳಂಬವಾಗಿದ್ದರಿಂದ ಹಲವರು ಮಕ್ಕಳೊಂದಿಗೆ ಗಂಟೆಗಳ ಕಾಲ ಕಾಯಬೇಕಾದ ಪರಿಸ್ಥಿತಿ ಎದುರಾಯಿತು ಎಂದು ಪಾಲಕರು ದೂರಿದರು.

ಪಾಲಕರು ಕಾರಣ ಕೇಳಿದಾಗ ಕೆಲ ಸಿಬ್ಬಂದಿ ಉಡಾಫೆಯಾಗಿ ವರ್ತಿಸಿ ಮಾತನಾಡಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. “ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸಬೇಕಾದ ಸಿಬ್ಬಂದಿ ಬೇಜವಾಬ್ದಾರಿತನ ತೋರಿದ್ದಾರೆ” ಎಂದು ಗಿರೀಶ ಅಗಡಿ ಆರೋಪಿಸಿದರು.

ಗಾಳಿಯಾಡದ ಕೊಠಡಿಯಲ್ಲಿ ನೂರಾರು ತಾಯಂದಿರು ಹಸುಗೂಸುಗಳನ್ನು ತೊಡೆಯ ಮೇಲೆ ಹಾಕಿಕೊಂಡು ತಮ್ಮ ಸರದಿಗಾಗಿ ಕಾಯುತ್ತಾ ಕುಳಿತಿದ್ದರು. ಮಕ್ಕಳಿಗೆ ಎದೆಹಾಲುಣಿಸಲು ಸಹ ಪ್ರತ್ಯೇಕ ವ್ಯವಸ್ಥೆ ಇಲ್ಲದ ಕಾರಣ ಮಹಿಳೆಯರು ಮುಜುಗರ ಅನುಭವಿಸುವಂತಾಯಿತು ಎಂದು ತಾಯಂದಿರು ಅಸಮಾಧಾನ ವ್ಯಕ್ತಪಡಿಸಿದರು.

ಆಸ್ಪತ್ರೆಯಲ್ಲಿ ಬಾಣಂತಿಯರು ಮತ್ತು ಹಸುಗೂಸುಗಳಿಗೆ ಅನುಕೂಲವಾಗುವಂತೆ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಬೇಕು ಹಾಗೂ ಇಂತಹ ಘಟನೆಗಳು ಮರುಕಳಿಸದಂತೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪಾಲಕರು ಆಗ್ರಹಿಸಿದರು.

80ರ ಹರೆಯದಲ್ಲೂ ಕೈಬಿಡದ ದುಡಿಮೆ!

ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ: ವಯಸ್ಸು 80 ದಾಟಿದರೂ ದುಡಿದು ತಿನ್ನಬೇಕು ಎನ್ನುವ ಛಲ ಮಾತ್ರ ಕುಂದಿಲ್ಲ. ದೇಹದಲ್ಲಿ ಶಕ್ತಿ ಇರುವವರೆಗೆ ಕೆಲಸ ಮಾಡಲೇಬೇಕು ಎನ್ನುವ ಹಠದಿಂದ ವೀರಾಪುರ ಗ್ರಾಮದ ಹನಮವ್ವ ಹನಮಪ್ಪ ಮೊಹಿತೆ ಕಳೆದ 20 ವರ್ಷಗಳಿಂದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿ ಕೆಲಸ ಮಾಡುತ್ತಿದ್ದಾರೆ.
ಗಜೇಂದ್ರಗಡ ತಾಲೂಕಿನ ರಾಂಪೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವೀರಾಪುರ ಗ್ರಾಮದ ನಿವಾಸಿಯಾದ ಹನಮವ್ವ ಅವರಿಗೆ ಪತಿ ಇಲ್ಲ. ಇಬ್ಬರು ಗಂಡು ಮಕ್ಕಳು ಇದ್ದರೂ ಕುಟುಂಬದ ಸಂಕಷ್ಟ ಮಾತ್ರ ಕಡಿಮೆಯಾಗಿಲ್ಲ. ಒಬ್ಬ ಮಗ ಬೇರೆ ಮನೆ ಮಾಡಿಕೊಂಡಿದ್ದರೆ, ಮತ್ತೊಬ್ಬ ಮಗ ಎಂಟು ವರ್ಷಗಳ ಹಿಂದೆ ಕೆಲಸಕ್ಕೆ ಹೋದವನು ಮರಳಿ ಮನೆಗೆ ಬಂದಿಲ್ಲ. ಇದೀಗ ಸೊಸೆಯೊಂದಿಗೆ ಜೀವನ ಸಾಗಿಸುತ್ತಿರುವ ಹನಮವ್ವ, ತಮ್ಮ ಎರಡು ಎಕರೆ ಒಣಭೂಮಿಯಿಂದ ಜೀವನ ಸಾಗುವುದು ಕಷ್ಟವೆಂದು ಅರಿತು ನರೇಗಾ ಯೋಜನೆಯ ಮೊರೆ ಹೋಗಿದ್ದಾರೆ.
ಬೇಸಿಗೆ ಸಮಯದಲ್ಲಿ ಗ್ರಾಮದಲ್ಲಿ ಕೆಲಸ ಸಿಗದ ಸಂದರ್ಭಗಳಲ್ಲಿ ನರೇಗಾ ಯೋಜನೆಯೇ ಇವರ ಕುಟುಂಬಕ್ಕೆ
ಆಧಾರವಾಗಿದೆ. ಸೊಸೆಯೊಂದಿಗೆ ಕಾಮಗಾರಿಗೆ ತೆರಳಿ ಇಂದಿಗೂ ಉತ್ಸಾಹದಿಂದ ದುಡಿಯುತ್ತಿರುವ ಹನಮವ್ವ ಗ್ರಾಮದಲ್ಲೇ ಇತರರಿಗೆ ಮಾದರಿಯಾಗಿದ್ದಾರೆ.
ಇನ್ನೊಬ್ಬ ಹಿರಿಯ ಮಹಿಳೆ ಹನಮವ್ವ ಯಲ್ಲಪ್ಪ ಮೊಹಿತೆ ಅವರಿಗೂ 78 ವರ್ಷ ವಯಸ್ಸು. ಆದರೂ ಉದ್ಯೋಗ ಖಾತ್ರಿ ಕೆಲಸ ಆರಂಭವಾದರೆ ಸಾಕು, ನಮೂನೆ-6ರಲ್ಲಿ ಹೆಸರು ನೋಂದಾಯಿಸಿಕೊಂಡು ಕೆಲಸಕ್ಕೆ ಬರುತ್ತಾರೆ.

“ಮನೆಯಲ್ಲಿ ಖಾಲಿ ಕುಳಿತುಕೊಳ್ಳುವುದಕ್ಕಿಂತ ಮಕ್ಕಳಿಗೆ ಸಹಾಯ ಮಾಡಬೇಕು” ಎನ್ನುವ ಮನೋಭಾವದಿಂದ ಅವರು ಮಕ್ಕಳ ಹಾಗೂ ಸೊಸೆಯಂದಿರೊಂದಿಗೆ ನರೇಗಾ ಕಾಮಗಾರಿಯಲ್ಲಿ ದುಡಿಯುತ್ತಿದ್ದಾರೆ.

ಗ್ರಾಮೀಣ ಭಾಗದ ವಯೋವೃದ್ಧರು ಮತ್ತು ವಿಶೇಷಚೇತನರಿಗೆ ಕೆಲಸದ ಪ್ರಮಾಣದಲ್ಲಿ ಶೇ.50ರಷ್ಟು ರಿಯಾಯಿತಿ ನೀಡುತ್ತಿರುವುದರಿಂದ ಸಾಕಷ್ಟು ಬಡ ಕೂಲಿಕಾರರಿಗೆ ಯೋಜನೆ ನೆರವಾಗುತ್ತಿದೆ.

“ಬೇಸಿಗೆಯಲ್ಲಿ ಹಳ್ಳಿಯಲ್ಲಿ ಕೆಲಸ ಇರಲ್ಲರೀ… ಉದ್ಯೋಗ ಖಾತ್ರಿ ಕೆಲಸ ಶುರುವಾದರೆ ನಾವು ಕೂಡ ಕೆಲಸಕ್ಕೆ ಬರುತ್ತೀವಿ. ದೇಹದಲ್ಲಿ ಇನ್ನೂ ದುಡಿಯುವ ಶಕ್ತಿ ಇದೆ. ಮನೆಯಲ್ಲಿ ಖಾಲಿ ಕುಳಿತುಕೊಳ್ಳುವುದಕ್ಕಿಂತ ನಾಲ್ಕು ರೂಪಾಯಿ ದುಡಿದರೆ ಬದುಕಿಗೆ ಸಹಾಯವಾಗುತ್ತದೆ.”

 ಹನಮವ್ವ ಮೊಹಿತೆ, ಕೂಲಿಕಾರರು, ವೀರಾಪುರ

“ನರೇಗಾ ಜಾಬ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬರೂ ಕೆಲಸ ಮಾಡಬಹುದು. ಇದರಲ್ಲಿ ಯಾವುದೇ ವಯಸ್ಸಿನ ಮಿತಿ ಇಲ್ಲ. ವಯೋವೃದ್ಧರು ಹಾಗೂ ವಿಕಲಚೇತನರಿಗೆ ಕೆಲಸದ ಪ್ರಮಾಣದಲ್ಲಿ ರಿಯಾಯಿತಿ ನೀಡಲಾಗುತ್ತಿದೆ.”

ವಿಶ್ವನಾಥ ರಾಠೋಡ,

ಸಹಾಯಕ ನಿರ್ದೇಶಕರು (ಗ್ರಾ.ಉ), ತಾ.ಪಂ. ಗಜೇಂದ್ರಗಡ

“ಬೇಸಿಗೆಯಲ್ಲಿ ಗ್ರಾಮೀಣ ಭಾಗದ ಜನರು ಗುಳೆ ಹೋಗುವುದನ್ನು ತಪ್ಪಿಸಲು ಊರಲ್ಲೇ ಕೆಲಸ ನೀಡಲಾಗುತ್ತಿದೆ. ನರೇಗಾ ಯೋಜನೆ ಗ್ರಾಮೀಣ ಕುಟುಂಬಗಳಿಗೆ ಆರ್ಥಿಕ ಬಲ ನೀಡುತ್ತಿದೆ.”

ಚಂದ್ರಶೇಖರ ಬಿ. ಕಂದಕೂರ, ಇಒ, ತಾ.ಪಂ. ಗಜೇಂದ್ರಗಡ

ನರೇಗಾ ಕೆಲಸದಲ್ಲಿ ನಿರ್ಲಕ್ಷ್ಯ ಬೇಡ

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ತಾಲೂಕಿನ ಕಡಕೋಳ ಹಾಗೂ ಛಬ್ಬಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಪ್ರಗತಿಯಲ್ಲಿರುವ ನರೇಗಾ ಹಾಗೂ ವಿವಿಧ ಸಮುದಾಯ ಕಾಮಗಾರಿಗಳ ಪರಿಶೀಲನೆಯನ್ನು ಶಿರಹಟ್ಟಿ ತಾಲೂಕ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಆರ್.ವಿ. ದೊಡ್ಡಮನಿ ಬುಧವಾರ ನಡೆಸಿ, ಕಾಮಗಾರಿಗಳ ಗುಣಮಟ್ಟ ಹಾಗೂ ಕೂಲಿ ಕಾರ್ಮಿಕರ ಹಾಜರಾತಿ ವ್ಯವಸ್ಥೆ ಕುರಿತು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಕಾಮಗಾರಿಗಳ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಸ್ಥಳದಲ್ಲಿದ್ದ ನರೇಗಾ ಕೂಲಿಕಾರ್ಮಿಕರೊಂದಿಗೆ ಚರ್ಚಿಸಿ ಕೆಲಸದ ಪ್ರಮಾಣ, ಕೂಲಿ ಪಾವತಿ ಹಾಗೂ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಿದರು.

ನಂತರ ಮಾತನಾಡಿದ ತಾಪಂ ಇಒ ಆರ್.ವಿ. ದೊಡ್ಡಮನಿ, “ಗ್ರಾಮ ಪಂಚಾಯತ್ ವತಿಯಿಂದ ನಡೆಯುತ್ತಿರುವ ಸಮುದಾಯದ ಕಾಮಗಾರಿಗಳ ಪರಿಶೀಲನೆ ನಡೆಸಲಾಗುತ್ತಿದೆ. ಪ್ರತಿ ಕೂಲಿ ಕಾರ್ಮಿಕರು ಅಳತೆಗೆ ಅನುಗುಣವಾಗಿ ಕೆಲಸ ನಿರ್ವಹಿಸಿದರೆ 370 ರೂ.ಗಳ ಕೂಲಿ ದೊರೆಯುತ್ತದೆ. ಹಿರಿಯ ನಾಗರಿಕರು, ಗರ್ಭಿಣಿಯರು ಹಾಗೂ ಅಂಗವಿಕಲರಿಗೆ ಕೆಲಸದ ಪ್ರಮಾಣದಲ್ಲಿ ರಿಯಾಯಿತಿ ನೀಡಲಾಗುತ್ತದೆ” ಎಂದು ತಿಳಿಸಿದರು.

“ಎಲ್ಲ ಕೂಲಿ ಕಾರ್ಮಿಕರು ನಿಯಮಾನುಸಾರ ಕೆಲಸ ನಿರ್ವಹಿಸಿ ದಿನಕ್ಕೆ ಎರಡು ಬಾರಿ ಹಾಜರಾತಿ ಹಾಕಬೇಕು. ಎರಡು ಬಾರಿ ಹಾಜರಾತಿ ಹಾಕದಿದ್ದರೆ ಕೂಲಿ ಹಣ ಪಾವತಿಯಾಗುವುದಿಲ್ಲ. ಆದ್ದರಿಂದ ಎಲ್ಲರೂ ಜವಾಬ್ದಾರಿಯಿಂದ ಕೆಲಸ ನಿರ್ವಹಿಸಬೇಕು” ಎಂದು ಖಡಕ್ ಸೂಚನೆ ನೀಡಿದರು.

“ಬೇಸಿಗೆ ಹಿನ್ನೆಲೆ ಆರೋಗ್ಯದ ಕಡೆಗೂ ಹೆಚ್ಚಿನ ಗಮನಹರಿಸಬೇಕು. ಬೆಳಗಿನ ಜಾವವೇ ಕೆಲಸಕ್ಕೆ ಆಗಮಿಸಿ ಕೆಲಸದಲ್ಲಿ ತೊಡಗಬೇಕು. ಬಂದಂತಹ ಕೂಲಿ ಹಣವನ್ನು ಕೃಷಿ ಚಟುವಟಿಕೆಗಳು ಹಾಗೂ ಮಕ್ಕಳ ಶಿಕ್ಷಣದ ಅಗತ್ಯತೆಗಳಿಗೆ ಸದ್ಬಳಕೆ ಮಾಡಿಕೊಳ್ಳಬೇಕು” ಎಂದು ಸಲಹೆ ನೀಡಿದರು.

ಪರಿಶೀಲನಾ ವೇಳೆ ಕಡಕೋಳ ಗ್ರಾಮ ಪಂಚಾಯತ್ ಪಿಡಿಓ ಶಿವಾನಂದ ಮಾಳವಾಡ, ಛಬ್ಬಿ ಗ್ರಾಮ ಪಂಚಾಯತ್ ಪಿಡಿಓ ಸುಜಾತಾ ಕಪ್ಪಲಿ, ಟಿಐಇಸಿ ವಿರೇಶ ಪಟ್ಟಣಶೆಟ್ಟಿ, ತಾಂತ್ರಿಕ ಸಹಾಯಕ ಆಂಜನೇಯ, ಲಿಂಗರಾಜ, ಬಿಎಫ್‌ಟಿ, ಡಿಇಓ, ಕಾಯಕ ಬಂಧುಗಳು, ಗ್ರಾಮ ಪಂಚಾಯತ್ ಸಿಬ್ಬಂದಿ ಹಾಗೂ ನರೇಗಾ ಕೂಲಿಕಾರ್ಮಿಕರು ಉಪಸ್ಥಿತರಿದ್ದರು.

error: Content is protected !!