Home Blog Page 4

‘ಕೆವಿಎನ್ ಪ್ರೊಡಕ್ಷನ್ಸ್’ ಸಂಸ್ಥೆಗೆ ಇನ್ನೊಂದು ಸಂಕಷ್ಟ: ಯೂಟ್ಯೂಬ್‌ನಿಂದ ಮಾಯವಾದ ‘ಕೆಡಿ’ ಸಿನಿಮಾ ಟ್ರೇಲರ್

ರಿಲೀಸ್‌ಗೆ ಕೆಲವೇ ದಿನ ಬಾಕಿ ಇರುವಾಗಲೇ KD: The Devil ಸಿನಿಮಾ ಮತ್ತೊಂದು ಸಂಕಷ್ಟಕ್ಕೆ ಸಿಲುಕಿದೆ. ಧ್ರುವ ಸರ್ಜಾ ಅಭಿನಯದ ಈ ಬಹುನಿರೀಕ್ಷಿತ ಚಿತ್ರದ ಟ್ರೇಲರ್ ಎರಡು ದಿನಗಳಲ್ಲೇ ಯೂಟ್ಯೂಬ್‌ನಿಂದ ಅಳಿಸಲಾಗಿದ್ದು, ಸಿನಿ ವಲಯದಲ್ಲಿ ಅನುಮಾನಗಳನ್ನು ಹುಟ್ಟಿಸಿದೆ.

ನಿರ್ಮಾಣ ಸಂಸ್ಥೆ ಕೆವಿಎನ್‌ ಪ್ರೊಡಕ್ಷನ್‌ ನೀಡಿರುವ ಮಾಹಿತಿಯ ಪ್ರಕಾರ, ಟ್ರೇಲರ್‌ನಲ್ಲಿ ಸೆನ್ಸಾರ್ ಪ್ರಮಾಣೀಕರಣಕ್ಕೆ ವಿರುದ್ಧವಾದ ಕೆಲವು ಅಂಶಗಳು ಸೇರಿದ್ದರಿಂದ ಅದನ್ನು ಪ್ರೈವೇಟ್ ಮಾಡಲಾಗಿದೆ. ಇದೀಗ ಮಾರ್ಗಸೂಚಿಗಳಿಗೆ ಅನುಗುಣವಾಗಿ ತಿದ್ದುಪಡಿ ಮಾಡಿ ಮರುಬಿಡುಗಡೆ ಮಾಡಲು ಸಿದ್ಧತೆ ನಡೆಯುತ್ತಿದೆ.

ಇದೇ ವೇಳೆ, KVN ಸಂಸ್ಥೆಗೆ ಇದು ಮತ್ತೊಂದು ಹಿನ್ನಡೆ ಎಂದೇ ಹೇಳಬಹುದು. ಈ ಹಿಂದೆ ವಿಜಯ್ ನಟನೆಯ ‘ಜನ ನಾಯಗನ್’ ಮುಂದೂಡಿಕೆಯಾದರೆ, ಯಶ್ ಅಭಿನಯದ ‘ಟಾಕ್ಸಿಕ್’ ಕೂಡ ಬಿಡುಗಡೆ ದಿನಾಂಕ ಬದಲಾವಣೆ ಕಂಡಿತ್ತು.

‘ಕೆಡಿ’ ಸಿನಿಮಾ ಆರಂಭದಿಂದಲೂ ವಿವಾದಗಳ ನಡುವೆ ಸಾಗುತ್ತಿದ್ದು, ಹಾಡು ವಿರೋಧ, ಸೆನ್ಸಾರ್ ಸಮಸ್ಯೆ ಬಳಿಕ ಇದೀಗ ಟ್ರೇಲರ್ ಡಿಲೀಟ್ ಆಗಿರುವುದು ತಂಡಕ್ಕೆ ದೊಡ್ಡ ಸವಾಲಾಗಿದೆ.

ಏಪ್ರಿಲ್ 30ರಂದು ಬಿಡುಗಡೆ ಗುರಿಯಿಟ್ಟಿರುವ ಈ ಚಿತ್ರದಲ್ಲಿ ದೊಡ್ಡ ತಾರಾಗಣವೇ ಇದ್ದರೂ, ಈ ಬೆಳವಣಿಗೆ ಚಿತ್ರದ ಭವಿಷ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಅಭಿಮಾನಿಗಳು ಇದೀಗ ಹೊಸ ಟ್ರೇಲರ್ ಹಾಗೂ ಅಧಿಕೃತ ಸ್ಪಷ್ಟನೆಗಾಗಿ ಕಾದು ಕುಳಿತಿದ್ದಾರೆ.

ಪ್ರೆಗ್ನೆನ್ಸಿಯಲ್ಲೂ ಬ್ರೇಕ್ ಇಲ್ಲ! ‘ಕಿಂಗ್’ ಸೆಟ್‌ನಲ್ಲಿ ಆಕ್ಷನ್ ಮೋಡ್‌ಗೆ ದೀಪಿಕಾ ಪಡುಕೋಣೆ

ಬಾಲಿವುಡ್‌ನ ಸ್ಟಾರ್ ಜೋಡಿ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ದಂಪತಿ ಇತ್ತೀಚೆಗಷ್ಟೇ ತಾವು ಎರಡನೇ ಬಾರಿಗೆ ಪೋಷಕರಾಗುತ್ತಿರುವ ಸುದ್ದಿಯನ್ನು ಅಧಿಕೃತವಾಗಿ ಹಂಚಿಕೊಂಡಿದ್ದರು. ಮೊದಲ ಮಗಳು ದುವಾ ಜೊತೆಗಿರುವ ಮುದ್ದಾದ ಪೋಸ್ಟ್ ಮೂಲಕ ಈ ಸಿಹಿ ಸುದ್ದಿಯನ್ನು ಅಭಿಮಾನಿಗಳಿಗೆ ತಿಳಿಸಿದ್ದರು.

ದೀಪಿಕಾ ಪ್ರೆಗ್ನೆನ್ಸಿಯಲ್ಲಿದ್ದರೂ ಪ್ರೊಫೆಷನಲ್ ಕಮಿಟ್‌ಮೆಂಟ್‌ಗೆ ತುತ್ತಾಗದೇ ಮುಂದುವರಿದಿರುವ ನಟಿ ಇದೀಗ ಕಿಂಗ್‌ ಸಿನಿಮಾದಲ್ಲಿ ಆಕ್ಷನ್ ಅವತಾರದಲ್ಲಿ ಮಿಂಚುತ್ತಿದ್ದಾರೆ. ಎರಡನೇ ಮಗುವಿನ ನಿರೀಕ್ಷೆಯ ವಿಚಾರವನ್ನು ಹಂಚಿಕೊಂಡ ಕೆಲವೇ ದಿನಗಳಲ್ಲಿ, ಅವರು ಮುಂಬೈನ ಸ್ಟುಡಿಯೋ ಸೆಟ್‌ನಲ್ಲಿ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ. ಶಾರುಖ್ ಖಾನ್ ಜೊತೆಗಿನ ಪ್ರಮುಖ ಸನ್ನಿವೇಶಗಳ ಜೊತೆಗೆ, ಭರ್ಜರಿ ಫೈಟ್ ಸೀಕ್ವೆನ್ಸ್‌ನಲ್ಲಿ ಭಾಗಿಯಾಗಿರುವುದು ಚಿತ್ರತಂಡದ ಬದ್ಧತೆಯನ್ನು ತೋರಿಸುತ್ತದೆ.

‘ಕಿಂಗ್’ ಸಿನಿಮಾ ದೊಡ್ಡ ಮಟ್ಟದಲ್ಲಿ ಮೂಡಿಬರುತ್ತಿದ್ದು, ನಿರ್ದೇಶಕ ಸಿದ್ಧಾರ್ಥ್ ಆನಂದ್ ಮತ್ತೆ ಆಕ್ಷನ್ ಪ್ಯಾಕ್ಡ್ ಕಥೆಯನ್ನು ತೆರೆಗೆ ತರಲು ಸಜ್ಜಾಗಿದ್ದಾರೆ. ಮೀರಾ ರೋಡ್‌ನಲ್ಲಿ ಮರಳುಗಾಡಿನ ಬ್ಯಾಕ್‌ಡ್ರಾಪ್‌ನಲ್ಲಿ ಮತ್ತಷ್ಟು ಸಾಹಸ ದೃಶ್ಯಗಳ ಚಿತ್ರೀಕರಣಕ್ಕೂ ಯೋಜನೆ ರೂಪಿಸಲಾಗಿದೆ.

ಈ ಚಿತ್ರದಲ್ಲಿ ಸುಹಾನಾ ಖಾನ್ ಡೆಬ್ಯೂಗೆ ಸಮಾನವಾದ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಅಭಿಷೇಕ್ ಬಚ್ಚನ್ ವಿಲನ್ ಆಗಿ ಮಿಂಚುವ ನಿರೀಕ್ಷೆ ಇದೆ. ಜೊತೆಗೆ ಅನಿಲ್ ಕಪೂರ್ ಮತ್ತು ಜಾಕಿ ಶ್ರಾಫ್ ಉಪಸ್ಥಿತಿ ಚಿತ್ರದ ತೂಕವನ್ನು ಹೆಚ್ಚಿಸಿದೆ. ಒಟ್ಟಿನಲ್ಲಿ, ‘ಕಿಂಗ್’ ಸಿನಿಮಾ ಭರ್ಜರಿ ಆಕ್ಷನ್, ಸ್ಟಾರ್ ಪವರ್ ಮತ್ತು ಹೈ ಎಕ್ಸ್‌ಪೆಕ್ಟೇಷನ್‌ಗಳೊಂದಿಗೆ ಬಾಲಿವುಡ್‌ನ ಮುಂದಿನ ಬಿಗ್ ಪ್ರಾಜೆಕ್ಟ್ ಆಗಿ ರೂಪುಗೊಳ್ಳುತ್ತಿದೆ.

30 ವರ್ಷಗಳ ಬಳಿಕ ‘ಖಳನಾಯಕ್’ ಸೀಕ್ವೆಲ್ ಘೋಷಣೆ: ಸಂಜಯ್ ದತ್ ಮಾಸ್ ಕಂಬ್ಯಾಕ್ ಟೀಸರ್ ವೈರಲ್

ಬಾಲಿವುಡ್‌ನ ಐಕಾನಿಕ್ ಫ್ರಾಂಚೈಸಿಗಳಲ್ಲಿ ಒಂದಾದ ಖಳನಾಯಕ್ ಮತ್ತೆ ಜೀವಂತವಾಗುತ್ತಿದೆ. ‘ಖಳನಾಯಕ್ ರಿಟರ್ನ್ಸ್’ ಟೀಸರ್ ಬಿಡುಗಡೆಯಾಗಿದ್ದು, ದೀರ್ಘ ವಿರಾಮದ ಬಳಿಕ ಸಂಜಯ್ ದತ್ ತಮ್ಮ ಐಕಾನಿಕ್ ‘ಬಲ್ಲು’ ಪಾತ್ರದೊಂದಿಗೆ ಮರಳುತ್ತಿದ್ದಾರೆ.

ಟೀಸರ್‌ನಲ್ಲಿ ಕಾಣಿಸಿಕೊಂಡಿರುವ ಸಂಜಯ್ ದತ್ ಅವರ ತೀವ್ರ ಅಭಿನಯ, ಗಾಢ ಮನೋಭಾವ ಮತ್ತು ಆ್ಯಕ್ಷನ್ ಭರಿತ ಪ್ರೆಸೆನ್ಸ್ ಚಿತ್ರವು ಹಿಂದಿನ ಭಾಗಕ್ಕಿಂತ ಹೆಚ್ಚು ಗಂಭೀರ ಮತ್ತು ಪ್ರಭಾವಿ ಆಗಿರಲಿದೆಯೆಂಬ ಸೂಚನೆ ನೀಡಿದೆ. ದೃಶ್ಯ ವೈಭವ, ಬ್ಯಾಕ್‌ಗ್ರೌಂಡ್ ಸ್ಕೋರ್ ಮತ್ತು ಶೈಲಿಯ ನಿರೂಪಣೆ ಪ್ರೇಕ್ಷಕರ ನಿರೀಕ್ಷೆಗಳನ್ನು ಮತ್ತಷ್ಟು ಹೆಚ್ಚಿಸಿವೆ.

ಚಿತ್ರದ ಘೋಷಣೆಯೊಂದಿಗೆ, “ಪ್ರತಿ ಕಥೆಗೆ ತನ್ನದೇ ಸಮಯವಿರುತ್ತದೆ” ಎಂಬ ಟ್ಯಾಗ್‌ಲೈನ್ ಮೂಲಕ ತಂಡ ಕುತೂಹಲ ಕೆರಳಿಸಿದೆ. ಮುಂಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪೋಸ್ಟರ್ ಬಿಡುಗಡೆ ಮಾಡಲಾಗಿದ್ದು, ಫ್ರಾಂಚೈಸಿ ಮತ್ತೆ ಬಿಗ್ ಸ್ಕೇಲ್‌ನಲ್ಲಿ ವಾಪಸ್ಸಾಗುತ್ತಿರುವುದು ಸ್ಪಷ್ಟವಾಗಿದೆ.

1993ರಲ್ಲಿ ಸುಭಾಷ್ ಘೈ ನಿರ್ದೇಶನದಲ್ಲಿ ಮೂಡಿಬಂದ ‘ಖಳನಾಯಕ್’ ಚಿತ್ರದಲ್ಲಿ ಜಾಕಿ ಶ್ರಾಫ್ ಹಾಗೂ ಮಾಧುರಿ ದೀಕ್ಷಿತ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. ಇದೀಗ ಸೀಕ್ವೆಲ್‌ನಲ್ಲಿ ಹಳೆಯ ತಾರಾಗಣ ಮುಂದುವರಿಯುತ್ತದೆಯೇ ಅಥವಾ ಹೊಸ ಮುಖಗಳು ಸೇರುತ್ತವೆಯೇ ಎಂಬುದರ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.

ಸದ್ಯದ ಟೀಸರ್ ಪ್ರತಿಕ್ರಿಯೆ ಗಮನಿಸಿದರೆ, ‘ಖಳನಾಯಕ್ ರಿಟರ್ನ್ಸ್’ ಬಾಲಿವುಡ್‌ನಲ್ಲಿ ಮತ್ತೊಂದು ಭಾರೀ ಬಾಕ್ಸ್ ಆಫೀಸ್ ಹಿಟ್ ಆಗುವ ಸೂಚನೆ ನೀಡುತ್ತಿದೆ.

ಥಿಯೇಟರ್ ಬಳಿಕ ಡಿಜಿಟಲ್ ದಾಳಿ: ‘ದಿ ಕೇರಳ ಸ್ಟೋರಿ 2’ ಒಟಿಟಿಗೆ ಎಂಟ್ರಿ

ವಿವಾದ, ವಿರೋಧ ಮತ್ತು ಬಾಕ್ಸ್ ಆಫೀಸ್ ಚರ್ಚೆಗಳ ನಡುವೆ ಸಾಗಿದ ದಿ ಕೇರಳ ಸ್ಟೋರಿ ಸಿನಿಮಾ ಇದೀಗ ಡಿಜಿಟಲ್ ರಿಲೀಸ್‌ಗೆ ಸಿದ್ಧವಾಗಿದೆ. ಇದೇ ವರ್ಷ ಫೆಬ್ರವರಿ ತಿಂಗಳಲ್ಲಿ ‘ದಿ ಕೇರಳ ಸ್ಟೋರಿ 2’ ಸಿನಿಮಾ ಬಿಡುಗಡೆ ಆಗಿದ್ದು ಸಾಕಷ್ಟು ವಿರೋದದ ನಡುವೆಯೂ ಚಿತ್ರ ಉತ್ತಮ ಪ್ರದರ್ಶನ ಕಂಡಿತ್ತು. ಇದೀಗ ಸಿನಿಮಾ ಮೇ 8ರಿಂದ ZEE5ನಲ್ಲಿ ಸ್ಟ್ರೀಮಿಂಗ್ ಆಗಲಿದೆ.

The Kerala Story ಚಿತ್ರದ ಮುಂದುವರಿದ ಭಾಗವಾಗಿ ಬಂದ ಈ ಸಿನಿಮಾ, ಧಾರ್ಮಿಕ ಮತಾಂತರದ ಸನ್ನಿವೇಶವನ್ನು ಆಧಾರವಾಗಿಸಿಕೊಂಡ ಕಥೆಯನ್ನು ಹೇಳುತ್ತದೆ. ಚಿತ್ರ ಬಿಡುಗಡೆಯಾಗುವ ಮೊದಲು ಕಾನೂನು ತಡೆ ಎದುರಿಸಿದರೂ, ನಂತರ ಅದನ್ನು ತೆರವುಗೊಳಿಸಿ ಥಿಯೇಟರ್‌ನಲ್ಲಿ ಬಿಡುಗಡೆ ಮಾಡಲಾಯಿತು.

ಸುಮಾರು 10 ವಾರಗಳ ಥಿಯೇಟ್ರಿಕಲ್ ರನ್ ನಂತರ OTTಗೆ ಬರುತ್ತಿರುವ ಈ ಸಿನಿಮಾ, ಹಿಂದಿ ಸೇರಿದಂತೆ ಹಲವು ಭಾಷೆಗಳಲ್ಲಿ ಲಭ್ಯವಾಗಲಿದೆ. ಬಾಕ್ಸ್ ಆಫೀಸ್‌ನಲ್ಲಿ ಸುಮಾರು 50 ಕೋಟಿ ಗಳಿಕೆ ಮಾಡಿದ ಈ ಚಿತ್ರವು, ಮೊದಲ ಭಾಗದಷ್ಟು ಪ್ರಭಾವ ಬೀರುವಲ್ಲಿ ಯಶಸ್ವಿಯಾಗದಿದ್ದರೂ ತನ್ನದೇ ಆದ ಪ್ರೇಕ್ಷಕರನ್ನು ಸೆಳೆದಿದೆ.

ಚಿತ್ರದಲ್ಲಿ ಉಲ್ಕಾ ಗುಪ್ತಾ, ಅದಿತಿ ಭಾಟಿಯಾ, ಅಲ್ಕಾ ಅಮಿನ್ ಮತ್ತು ಐಶ್ವರ್ಯಾ ಓಜಾ ಅಭಿನಯಿಸಿದ್ದಾರೆ. ಸಂಗೀತವನ್ನು ಮನನ್ ಶಾ ಮತ್ತು ರಾಹುಲ್ ಸುಹಾಸ್ ನೀಡಿದ್ದಾರೆ.

ಒಟ್ಟಿನಲ್ಲಿ, ಥಿಯೇಟರ್‌ನಲ್ಲಿ ಚರ್ಚೆ ಹುಟ್ಟಿಸಿದ ಈ ಸಿನಿಮಾ ಇದೀಗ OTTನಲ್ಲಿ ಮತ್ತೊಮ್ಮೆ ಗಮನ ಸೆಳೆಯಲು ಸಜ್ಜಾಗಿದೆ.

ಮೇಕೆದಾಟು ಬಳಿ ಕಾಡಾನೆ ದಾಳಿ: ಪ್ರವಾಸಿಗರಲ್ಲಿ ಭೀತಿ, ಮಹಿಳೆಗೆ ಗಾಯ!

ರಾಮನಗರ: ಸಂಗಮ ಅರಣ್ಯ ಪ್ರದೇಶದ ಮೇಕೆದಾಟು ಬಳಿಯ ಕಾವೇರಿ ನದಿಯಲ್ಲಿ ಆಟವಾಡುತ್ತಿದ್ದ ಪ್ರವಾಸಿಗರ ಮೇಲೆ ಕಾಡಾನೆ ದಾಳಿ ನಡೆಸಿರುವ ಘಟನೆ ನಡೆದಿದೆ.

ನೀರು ಕುಡಿಯಲು ನದಿಯತ್ತ ಬಂದ ಕಾಡಾನೆ, ಅಲ್ಲಿದ್ದ ಪ್ರವಾಸಿಗರನ್ನು ಕಂಡು ದಾಳಿ ನಡೆಸಿದಾಗ ಜನರು ಎದ್ನೋಬಿದ್ನೋ ಎಂದು ಓಡಿದ್ದಾರೆ. ಈ ವೇಳೆ ಮಹಿಳೆಯೊಬ್ಬರ ಮೇಲೆ ಕಾಡಾನೆ ದಾಳಿ ನಡೆಸಿ ಬಳಿಕ ಕಾಡಿನೊಳಗೆ ಕಾಲ್ಕಿತ್ತಿದೆ.

ದಾಳಿಯಲ್ಲಿ ಮಹಿಳೆಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆಗೆ ಸಂಬಂಧಿಸಿದ ದೃಶ್ಯ ಸ್ಥಳೀಯರ ಮೊಬೈಲ್‌ನಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಘಟನೆ ಕೋಡಿಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಹೊಸಕೋಟೆಯಲ್ಲಿ ಕೆರೆ ಮಣ್ಣು ದಂಧೆ: ರಾಜಾರೋಷವಾಗಿ ಸಾಗಾಟ, ಕಂಡು ಕಾಣದಂತಿರುವ ಅಧಿಕಾರಿಗಳು?

ಬೆಂಗಳೂರು ಗ್ರಾಮಾಂತರ: ಹೊಸಕೋಟೆ ತಾಲೂಕಿನ ಲಕ್ಕೊಂಡಹಳ್ಳಿ ಗ್ರಾಮದಲ್ಲಿ ಕೆರೆಯಿಂದ ಅಕ್ರಮವಾಗಿ ಮಣ್ಣು ತೆಗೆಯುವ ಪ್ರಕರಣ ಬೆಳಕಿಗೆ ಬಂದಿದೆ.

ರಾಜಾರೋಷವಾಗಿ ನಡೆಯುತ್ತಿರುವ ಈ ದಂಧೆಗೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂಬ ಆರೋಪ ಸ್ಥಳೀಯರಿಂದ ಕೇಳಿಬಂದಿದೆ.

ಗ್ರಾಮದ ಕೆರೆಯಿಂದ ನೂರಾರು ಲೋಡ್‌ಗಳಷ್ಟು ಮಣ್ಣು ತೆಗೆದು ಮಾರಾಟ ಮಾಡಲಾಗುತ್ತಿದ್ದು, ಪರಿಸರ ಹಾನಿಯ ಆತಂಕ ಎದುರಾಗಿದೆ. ಈ ಬಗ್ಗೆ ಪ್ರಶ್ನಿಸಿದಾಗ ‘PDOಗೆ ತಿಳಿಸಿದ್ದೇವೆ’ ಎಂದು ಹೇಳಲಾಗುತ್ತಿದ್ದರೂ, ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳುವುದಾಗಿ ಹೇಳಿ ಮೌನ ವಹಿಸಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಸಣ್ಣ ನೀರಾವರಿ ಇಲಾಖೆ ಹಾಗೂ ಗ್ರಾಮ ಆಡಳಿತದ ಗಮನಕ್ಕೆ ವಿಷಯ ತಂದರೂ ಯಾವುದೇ ಕ್ರಮವಾಗದಿರುವುದು ಪ್ರಶ್ನಾರ್ಥಕವಾಗಿದೆ. ವಿಲ್ಲೇಜ್ ಅಕೌಂಟೆಂಟ್‌ ಸಹ ಲಭ್ಯವಾಗದೇ ಇರುವುದರಿಂದ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಅಕ್ರಮ ಚಟುವಟಿಕೆಯನ್ನು ತಕ್ಷಣ ನಿಲ್ಲಿಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ರಾಜ್ಯದಲ್ಲಿಂದು ಗುಡುಗು ಸಹಿತ ಆಲಿಕಲ್ಲು ಮಳೆ: 4 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್​! ಇಂದಿನ ಹವಾಮಾನ ವರದಿ ಹೀಗಿದೆ

ಬೆಂಗಳೂರು: ರಾಜ್ಯದಲ್ಲಿ ತಾಪಮಾನ ಏರಿಕೆಯಾಗುತ್ತಿದ್ದು, ಈಗಾಗಲೇ ಕರಾವಳಿ ಹಾಗೂ ಕಲ್ಯಾಣ ಕರ್ನಾಟಕವು ಬಿಸಿಲಿನ ಬೇಗೆಗೆ ತತ್ತರಿಸಿದೆ.

ಇಂದು ಕರಾವಳಿಯಲ್ಲಿ ಉಷ್ಣ ಅಲೆಯ ಆರ್ಭಟವಿರಲಿದ್ದು ಜೊತೆಗೆ ರಾಜ್ಯದ ಹಲವೆಡೆ ಗುಡುಗು ಸಹಿತ ಆಲಿಕಲ್ಲು ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಉತ್ತರ ಒಳನಾಡಿನ ಕಲಬುರಗಿ, ರಾಯಚೂರು, ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಗುಡುಗು-ಸಿಡಿಲು ಸಹಿತ ಆಲಿಕಲ್ಲು ಮಳೆಯಾಗುವ ಸಾಧ್ಯತೆ ಇದ್ದು, ಈ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಜೊತೆಗೆ 30-40 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯೂ ಇದೆ ಎಂದು ಇಲಾಖೆ ತಿಳಿಸಿದೆ.

ದಕ್ಷಿಣ ಒಳನಾಡಿನ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿಯೂ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಇನ್ನು ಕರಾವಳಿಯ ಉಡುಪಿ, ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಹೀಟ್ ವೇವ್ ಅಲರ್ಟ್ ನೀಡಲಾಗಿದೆ.

ಈ ನಡುವೆ ವೈದ್ಯರು ಜನರಿಗೆ ಎಚ್ಚರಿಕೆ ನೀಡಿದ್ದು, ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ಅನಗತ್ಯವಾಗಿ ಹೊರಗೆ ಹೋಗಬಾರದು, ಹೆಚ್ಚು ನೀರು ಸೇವಿಸಬೇಕು ಎಂದು ಸಲಹೆ ನೀಡಿದ್ದಾರೆ. ಮುಂದಿನ ಐದು ದಿನಗಳವರೆಗೆ ರಾಜ್ಯದ ಹಲವೆಡೆ ಇದೇ ರೀತಿಯ ಮಿಶ್ರ ಹವಾಮಾನ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

IPL 2026: ಕೊಹ್ಲಿ-ಪಡಿಕ್ಕಲ್ ಭರ್ಜರಿ ಬ್ಯಾಟಿಂಗ್: ಗುಜರಾತ್ ವಿರುದ್ದ ಬೆಂಗಳೂರಿಗೆ ಭರ್ಜರಿ ಜಯ!

0

ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಐಪಿಎಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ಗುಜರಾತ್ ಟೈಟನ್ಸ್ ವಿರುದ್ಧ 5 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ.

ವಿರಾಟ್ ಕೊಹ್ಲಿ ಮತ್ತು ದೇವದತ್ತ್ ಪಡಿಕ್ಕಲ್ ಅವರ ಆಕರ್ಷಕ ಬ್ಯಾಟಿಂಗ್ ತಂಡದ ಗೆಲುವಿಗೆ ಪ್ರಮುಖ ಕಾರಣವಾಯಿತು.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟನ್ಸ್ 20 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 205 ರನ್ ಗಳಿಸಿತು. ಸಾಯಿ ಸುದರ್ಶನ್ 58 ಬಾಲ್‌ಗಳಲ್ಲಿ 11 ಫೋರ್ ಹಾಗೂ 5 ಸಿಕ್ಸರ್‌ಗಳೊಂದಿಗೆ ಶತಕ ಸಿಡಿಸಿ ಮಿಂಚಿದರು. ನಾಯಕ ಶುಭಮನ್ ಗಿಲ್ 32, ಜೋಶ್ ಬಟ್ಲರ್ 25, ವಾಷಿಂಗ್ಟನ್ ಸುಂದರ್ 19 ಹಾಗೂ ಜೇಸನ್ ಹೋಲ್ಡರ್ 23 ರನ್‌ಗಳೊಂದಿಗೆ ತಂಡಕ್ಕೆ ಬಲ ತುಂಬಿದರು.

206 ರನ್‌ಗಳ ಗುರಿ ಬೆನ್ನಟ್ಟಿದ ಆರ್‌ಸಿಬಿ ಆರಂಭದಲ್ಲೇ ಜಾಕೋಬ್ ಬೆಥೆಲ್ (14) ವಿಕೆಟ್ ಕಳೆದುಕೊಂಡಿತು. ನಂತರ ಕೊಹ್ಲಿ ಮತ್ತು ಪಡಿಕ್ಕಲ್ ಶತಕದ ಜೊತೆಯಾಟ ಕಟ್ಟುವ ಮೂಲಕ ಪಂದ್ಯವನ್ನು ತಂಡದ ಕಡೆಗೆ ತಿರುಗಿಸಿದರು. ಕೊಹ್ಲಿ 44 ಬಾಲ್‌ಗಳಲ್ಲಿ 81 ರನ್ (8 ಫೋರ್, 4 ಸಿಕ್ಸರ್) ಗಳಿಸಿದರೆ, ಪಡಿಕ್ಕಲ್ 27 ಬಾಲ್‌ಗಳಲ್ಲಿ 55 ರನ್ ಸಿಡಿಸಿ ಗಮನ ಸೆಳೆದರು.

ಕೊನೆಯಲ್ಲಿ ಕೃಣಾಲ್ ಪಾಂಡ್ಯ ಅಜೇಯ 23 ರನ್‌ಗಳೊಂದಿಗೆ ತಂಡವನ್ನು ಗೆಲುವಿನ ದಡ ಸೇರಿಸಿದರು. ಟಿಮ್ ಡೇವಿಡ್ ಹಾಗೂ ಜಿತೇಶ್ ಶರ್ಮಾ ತಲಾ 10 ರನ್‌ಗಳ ಕೊಡುಗೆ ನೀಡಿದರು. ಆರ್‌ಸಿಬಿ 19ನೇ ಓವರ್‌ನಲ್ಲೇ ಗುರಿ ತಲುಪಿ ಗೆಲುವು ಸಾಧಿಸಿತು.

ಸಿಇಟಿ ಪರೀಕ್ಷೆಯಲ್ಲಿ ಜನಿವಾರ ದಂಗಲ್: ಮೂವರನ್ನು ಬಂಧಿಸಿದ ಮಡಿವಾಳ ಪೊಲೀಸ್!

ಬೆಂಗಳೂರು: ಸಿಇಟಿ ಪರೀಕ್ಷೆ ವೇಳೆ ವಿದ್ಯಾರ್ಥಿಗಳಿಂದ ಜನಿವಾರ ತೆಗೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಮಡಿವಾಳ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಮಡಿವಾಳದ ಖಾಸಗಿ ಕೃಪಾನಿಧಿ ಕಾಲೇಜಿನಲ್ಲಿ ನಡೆದ ಸಿಇಟಿ ಪರೀಕ್ಷೆ ಸಂದರ್ಭದಲ್ಲಿ ಮೂವರು ವಿದ್ಯಾರ್ಥಿಗಳಿಗೆ ಜನಿವಾರ ಧರಿಸಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿಲ್ಲ ಎಂಬ ಆರೋಪ ಕೇಳಿಬಂದಿದೆ. ಜನಿವಾರ ತೆಗೆದು ಪರೀಕ್ಷೆ ಬರೆಯಬೇಕು ಅಥವಾ ಮನೆಗೆ ತೆರಳಬೇಕು ಎಂದು ಸಿಬ್ಬಂದಿ ಸೂಚಿಸಿದ ಹಿನ್ನೆಲೆ ವಿದ್ಯಾರ್ಥಿಗಳು ಜನಿವಾರ ತೆಗೆದು ಪರೀಕ್ಷೆ ಬರೆದಿದ್ದಾರೆ ಎಂದು ತಿಳಿದುಬಂದಿದೆ.

ಈ ಘಟನೆ ಕುರಿತು ವಿದ್ಯಾರ್ಥಿ ನೀಡಿದ ದೂರಿನ ಆಧಾರದಲ್ಲಿ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಪರೀಕ್ಷಾ ಪರಿವೀಕ್ಷಕರಾದ ಸರಿತಾ, ಗಿರಿಜಮ್ಮ ಹಾಗೂ ಪರೀಕ್ಷಾ ಕೇಂದ್ರದ ಉಸ್ತುವಾರಿ ಸುಧಾಕರ್ ಅವರನ್ನು ಬಂಧಿಸಲಾಗಿದೆ.

ಬಿಎನ್‌ಎಸ್ 299, 302 ಹಾಗೂ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಪರೀಕ್ಷಾ ಕೇಂದ್ರದಲ್ಲಿ ನಡೆದ ಈ ಘಟನೆ ರಾಜ್ಯಾದ್ಯಂತ ಚರ್ಚೆಗೆ ಕಾರಣವಾಗಿದೆ.

ಕಬ್ಬಿನ ಜ್ಯೂಸ್ ಎಲ್ಲರಿಗೂ ಒಳ್ಳೆಯದಲ್ಲ! ಈ ಆರೋಗ್ಯ ಸಮಸ್ಯೆ ಇದ್ದಲ್ಲಿ ಕುಡಿಯಬೇಡಿ

0

ಬೇಸಿಗೆ ಕಾಲದಲ್ಲಿ ತಂಪು ನೀಡುವ ಜನಪ್ರಿಯ ಪಾನೀಯಗಳಲ್ಲೊಂದು ಕಬ್ಬಿನ ಜ್ಯೂಸ್ ಆಗಿದ್ದು, ಎಳನೀರು ಸೇರಿದಂತೆ ಇತರ ನೈಸರ್ಗಿಕ ಪಾನೀಯಗಳಂತೆ ಇದು ಹೆಚ್ಚು ಸೇವನೆಗೆ ಒಳಗಾಗುತ್ತದೆ.

ಆದರೆ ಕಬ್ಬಿನ ರಸ ಎಲ್ಲರಿಗೂ ಸುರಕ್ಷಿತವಲ್ಲ ಎಂಬ ವೈದ್ಯಕೀಯ ಎಚ್ಚರಿಕೆ ಇದೀಗ ಮತ್ತೆ ಗಮನ ಸೆಳೆದಿದೆ.

ಆರೋಗ್ಯ ತಜ್ಞರ ಪ್ರಕಾರ, ಕಬ್ಬಿನ ಜ್ಯೂಸ್‌ನಲ್ಲಿ ನೈಸರ್ಗಿಕ ಸಕ್ಕರೆ ಪ್ರಮಾಣ ಹೆಚ್ಚಿರುವುದರಿಂದ ಮಧುಮೇಹ ಇರುವವರು ಇದನ್ನು ಸೇವಿಸುವುದು ಅಪಾಯಕಾರಿ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ತಕ್ಷಣ ಏರಿಸಬಹುದಾಗಿ ವೈದ್ಯರು ತಿಳಿಸಿದ್ದಾರೆ.

ಅತಿಯಾದ ತೂಕ (ಒಬಿಸಿಟಿ) ಇರುವವರು ಕೂಡ ಕಬ್ಬಿನ ಜ್ಯೂಸ್ ಸೇವನೆ ವೇಳೆ ಎಚ್ಚರಿಕೆ ವಹಿಸಬೇಕಾಗಿದೆ. ಹೆಚ್ಚಿನ ಕ್ಯಾಲೊರಿ ಇರುವುದರಿಂದ ತೂಕ ಹೆಚ್ಚುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ವಾರಕ್ಕೆ ಒಂದು ಬಾರಿ ಮಿತ ಪ್ರಮಾಣದಲ್ಲಿ ಮಾತ್ರ ಸೇವಿಸುವುದು ಸೂಕ್ತ ಎಂದು ಸಲಹೆ ನೀಡಲಾಗಿದೆ.

ಇದೇ ವೇಳೆ ಜೀರ್ಣಕ್ರಿಯೆ ಸಮಸ್ಯೆ, ಅಜೀರ್ಣ ಅಥವಾ ಗ್ಯಾಸ್ಟ್ರಿಕ್ ಸಮಸ್ಯೆ ಇರುವವರು ಕಬ್ಬಿನ ಜ್ಯೂಸ್ ತಪ್ಪಿಸುವುದು ಉತ್ತಮ ಎಂದು ವೈದ್ಯರು ಸೂಚಿಸಿದ್ದಾರೆ. ಕೆಲವೊಮ್ಮೆ ಇದು ಹೊಟ್ಟೆಯ ಅಸೌಕರ್ಯವನ್ನು ಹೆಚ್ಚಿಸಬಹುದಾಗಿದೆ.

ವೈದ್ಯರ ಪ್ರಕಾರ, ಕಬ್ಬಿನ ಜ್ಯೂಸ್ ಸದಾ ತಾಜಾ ಹಾಗೂ ಸ್ವಚ್ಛವಾಗಿ ತಯಾರಿಸಿದದ್ದಾಗಿರಬೇಕು. ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡುವುದು ಹಾಗೂ ಅತಿಯಾದ ಪ್ರಮಾಣದಲ್ಲಿ ಕುಡಿಯುವುದನ್ನು ತಪ್ಪಿಸಬೇಕು ಎಂದು ಎಚ್ಚರಿಕೆ ನೀಡಲಾಗಿದೆ.

ಒಟ್ಟಿನಲ್ಲಿ ಬೇಸಿಗೆಯಲ್ಲಿ ತಂಪು ನೀಡುವ ಪಾನೀಯವಾಗಿದ್ದರೂ, ಕಬ್ಬಿನ ಜ್ಯೂಸ್ ಎಲ್ಲರಿಗೂ ಸಮಾನವಾಗಿ ಉಪಯುಕ್ತವಲ್ಲ ಎಂದು ತಜ್ಞರು ಸ್ಪಷ್ಟಪಡಿಸಿದ್ದಾರೆ. ಆರೋಗ್ಯ ಸಮಸ್ಯೆಗಳಿರುವವರು ವೈದ್ಯರ ಸಲಹೆಯ ನಂತರವೇ ಇದನ್ನು ಸೇವಿಸುವುದು ಸೂಕ್ತ ಎಂದು ತಿಳಿಸಿದ್ದಾರೆ.

error: Content is protected !!