ಬೀದರ್: ಸರ್ಕಾರಿ ವಸತಿ ನಿಲಯದಲ್ಲಿ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದ್ದ ಕಳಪೆ ಗುಣಮಟ್ಟದ ಆಹಾರದ ವಿರುದ್ಧ ಬಸವಕಲ್ಯಾಣದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ.
ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ವಸತಿ ನಿಲಯದ ವಿದ್ಯಾರ್ಥಿಗಳು ಕಳಪೆ ಅನ್ನ, ಬ್ಯಾಳಿ, ಸಾಂಬರ್, ಕೊಳೆತ ಟೊಮಾಟೋ ಹಾಗೂ ಹಾಳಾದ ತರಕಾರಿಗಳನ್ನು ಕೈಯಲ್ಲಿ ಹಿಡಿದು ನೇರವಾಗಿ ಬಸವಕಲ್ಯಾಣ ಶಾಸಕ ಶರಣು ಸಲಗರ ಅವರ ಕಚೇರಿಗೆ ಧಾವಿಸಿದ ಘಟನೆ ಸಂಚಲನ ಮೂಡಿಸಿದೆ.
ವಿದ್ಯಾರ್ಥಿಗಳು ಕಳೆದ ಒಂದು ತಿಂಗಳಿಂದ ಹಾಸ್ಟೆಲ್ನಲ್ಲಿ ಅತ್ಯಂತ ಕಳಪೆ ಗುಣಮಟ್ಟದ ಆಹಾರ ನೀಡಲಾಗುತ್ತಿದೆ ಎಂದು ಆರೋಪಿಸಿದ್ದು, ತಿನ್ನಲು ಅಸಾಧ್ಯವಾದ ಆಹಾರವನ್ನು ಶಾಸಕರ ಮುಂದೆ ಇಟ್ಟು ಅಳಲು ತೋಡಿಕೊಂಡರು. ವಿದ್ಯಾರ್ಥಿಗಳು ತಂದಿದ್ದ ಕೊಳೆತ ತರಕಾರಿ ಹಾಗೂ ಹಾಳಾದ ಸಾಂಬಾರ್ನ್ನು ಕಂಡ ಶಾಸಕ ಶರಣು ಸಲಗರ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
“ನಿಮ್ಮ ಮಕ್ಕಳಿಗೆ ಇದೇ ಊಟ ಮಾಡಿಸುತ್ತೀರಾ..? ಸರ್ಕಾರ ಹಣ ಕೊಡ್ತಿದೆ, ಆದರೆ ವಿದ್ಯಾರ್ಥಿಗಳ ಹೊಟ್ಟೆಗೆ ಹೋಗಬೇಕಾದ ಅನ್ನವನ್ನು ಯಾಕೆ ಕಸಿದುಕೊಳ್ಳುತ್ತಿದ್ದೀರಿ?” ಎಂದು ಅಧಿಕಾರಿಗಳನ್ನು ದೂರವಾಣಿ ಮೂಲಕ ತರಾಟೆಗೆ ತೆಗೆದುಕೊಂಡ ಶಾಸಕ, ವಸತಿ ನಿಲಯ ವಾರ್ಡನ್ ವಾಣಿ, ಎಸಿ/ಎಸ್ಟಿ ವಸತಿ ನಿಲಯ ಜಿಲ್ಲಾ ಅಧಿಕಾರಿ ಗಿರೀಶ್ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.
ಅಷ್ಟೇ ಅಲ್ಲದೆ, ತಮ್ಮ ಕಚೇರಿಗೆ ಬಂದ ವಿದ್ಯಾರ್ಥಿಗಳಿಗೆ ಮಧ್ಯರಾತ್ರಿ ಅನ್ನ-ಸಾಂಬಾರ್ ವ್ಯವಸ್ಥೆ ಮಾಡಿ ಊಟ ಹಾಕಿದ ಶಾಸಕ ಶರಣು ಸಲಗರ ಮಾನವೀಯತೆ ಮೆರೆದರು. ಬಳಿಕ “ ಬೆಳಿಗ್ಗೆ ಹಾಸ್ಟೆಲ್ಗೆ ಬನ್ನಿ, ಇದೇ ಊಟವನ್ನು ನೀವು ತಿಂದು ತೋರಿಸಿ” ಎಂದು ಅಧಿಕಾರಿಗಳಿಗೆ ಸವಾಲು ಹಾಕಿದ ಅವರು, “ನಿಮ್ಮನ್ನು ಅಮಾನತ್ತು ಮಾಡುವವರೆಗೂ ನಾನು ಬಿಡಲ್ಲ” ಎಂದು ಎಚ್ಚರಿಕೆ ನೀಡಿದರು.
ಸರ್ಕಾರಿ ವಸತಿ ನಿಲಯಗಳಲ್ಲಿ ವಿದ್ಯಾರ್ಥಿಗಳ ಆಹಾರದ ಗುಣಮಟ್ಟ ಕುರಿತು ಮತ್ತೆ ಗಂಭೀರ ಪ್ರಶ್ನೆಗಳು ಎದ್ದಿದ್ದು, ಅಧಿಕಾರಿಗಳ ನಿರ್ಲಕ್ಷ್ಯ ವಿರುದ್ಧ ಕ್ರಮಕ್ಕೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

