ಬೆಂಗಳೂರು: ಸೇವಾ ನಿಯಮಗಳಲ್ಲಿ ತಿದ್ದುಪಡಿ ಮಾಡದೇ, ಕಾನೂನುಬದ್ಧವಾಗಿ ರಚಿಸಲಾದ ವೃಂದ ನಿಯಮಗಳನ್ನು ಸರ್ಕಾರದ ಆದೇಶದ ಮೂಲಕ ರದ್ದುಪಡಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ಇದೇ ವೇಳೆ, 2016ರ ಅಧಿಸೂಚನೆಯ ಆಧಾರದಲ್ಲಿ ವರ್ಕ್ ಇನ್ಸ್ಪೆಕ್ಟರ್ ಹುದ್ದೆಗೆ ಆಯ್ಕೆಯಾದ ಅರ್ಜಿದಾರ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡುವಂತೆ ನ್ಯಾಯಾಲಯ ಸರ್ಕಾರಕ್ಕೆ ನಿರ್ದೇಶಿಸಿದೆ.
ಈ ಸಂಬಂಧ, ಹೆಚ್.ಪಿ. ಹರೀಶ್ ಕುಮಾರ್, ವಿಶ್ವನಾಥ್ ಮತ್ತು ಹಂಪಣ್ಣ ಕೊಲಾಕರ್ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಿಸಿದ ನ್ಯಾಯಮೂರ್ತಿಗಳಾದ ಡಿ.ಕೆ. ಸಿಂಗ್ ಮತ್ತು ಎಸ್. ರಾಚಯ್ಯ ಅವರ ವಿಭಾಗೀಯ ಪೀಠ ಈ ತೀರ್ಪು ನೀಡಿದೆ.
ನ್ಯಾಯಪೀಠದ ಅಭಿಪ್ರಾಯದಂತೆ, ಸರ್ಕಾರಕ್ಕೆ ಆಯ್ಕೆಯಾದ ಅಭ್ಯರ್ಥಿಗಳಿಗೆ ನೇಮಕಾತಿ ನೀಡದಿರುವ ಅಧಿಕಾರ ಇದ್ದರೂ, ಅದು ಸಂವಿಧಾನಾತ್ಮಕ ತತ್ವಗಳು ಮತ್ತು ಕಾನೂನುಬದ್ಧ ನಿಯಮಗಳ ವ್ಯಾಪ್ತಿಯೊಳಗೇ ಇರಬೇಕು. ನೇಮಕಾತಿ ನಿರಾಕರಣೆ ನ್ಯಾಯಸಮ್ಮತವಾಗಿರಬೇಕು ಹಾಗೂ ಸಮರ್ಪಕ ಕಾರಣಗಳ ಆಧಾರದಲ್ಲಿರಬೇಕು; ದುರುದ್ದೇಶದಿಂದ ಆಗಿರಬಾರದು ಎಂದು ತಿಳಿಸಿದೆ.
ಇನ್ನೂ, 2021ರಲ್ಲಿ ಸರ್ಕಾರ ಹೊರಡಿಸಿದ ವರ್ಕ್ ಇನ್ಸ್ಪೆಕ್ಟರ್ ವೃಂದ ರದ್ದುಪಡಿಸುವ ಆದೇಶ ಕೇವಲ ನೀತಿ ನಿರ್ಧಾರವಾಗಿದ್ದು, ಸಂಬಂಧಿತ ನಿಯಮಗಳಲ್ಲಿ ತಿದ್ದುಪಡಿ ಆಗುವವರೆಗೆ ಅದು ಜಾರಿಗೆ ಬರುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.
ಹೀಗಾಗಿ, ನಿಯಮ ತಿದ್ದುಪಡಿ ಆಗುವವರೆಗೆ ವರ್ಕ್ ಇನ್ಸ್ಪೆಕ್ಟರ್ ಹುದ್ದೆಗಳು ಜಾರಿಯಲ್ಲೇ ಇರುತ್ತವೆ. ಆಯ್ಕೆಯಾದವರಿಗೆ ನೇಮಕಾತಿ ಹಕ್ಕು ಸಂಪೂರ್ಣ ಖಚಿತವಲ್ಲದಿದ್ದರೂ, ನೇಮಕಾತಿ ನಿರಾಕರಣೆಗೆ ಕಾನೂನುಬದ್ಧ ಕಾರಣಗಳಿರಬೇಕು ಎಂದು ಪೀಠ ಒತ್ತಿ ಹೇಳಿದೆ.
ಅಲ್ಲದೆ, 211 ಹುದ್ದೆಗಳಿದ್ದರೂ ಕೆಲವರು ಮಾತ್ರ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿರುವ ಹಿನ್ನೆಲೆಯಲ್ಲಿ, ಅವರ ನೇಮಕಾತಿಯನ್ನು ಪರಿಗಣಿಸಬೇಕು ಎಂದು ಸೂಚಿಸಿದೆ. ಭವಿಷ್ಯದಲ್ಲಿ ಈ ವೃಂದವನ್ನು ಕಾನೂನುಬದ್ಧವಾಗಿ ರದ್ದುಪಡಿಸಿದರೆ, ಅರ್ಜಿದಾರರನ್ನು ಸಮಾನ ಹುದ್ದೆಗಳಿಗೆ ವರ್ಗಾಯಿಸಬೇಕು ಎಂದು ನ್ಯಾಯಾಲಯ ನಿರ್ದೇಶಿಸಿದೆ.

