ರಾಮನಗರ: ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ವಿರುದ್ಧ ಕಾಂಗ್ರೆಸ್ ಶಾಸಕ ಇಕ್ಬಾಲ್ ಹುಸೇನ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಹಾರೋಹಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಇಕ್ಬಾಲ್ ಹುಸೇನ್, ನಿಖಿಲ್ ಕುಮಾರಸ್ವಾಮಿ ತಮ್ಮ ವಯಸ್ಸಿಗೆ ಹಾಗೂ ಅನುಭವಕ್ಕೆ ತಕ್ಕಂತೆ ಮಾತನಾಡಿದರೆ ಒಳ್ಳೆಯದು ಎಂದು ಟೀಕಿಸಿದರು.
ನಿಖಿಲ್ಗೆ ಇನ್ನೂ ರಾಜಕೀಯ ಅನುಭವ ಕಡಿಮೆ. ಯಾವ ನೈತಿಕತೆ ಇಟ್ಟುಕೊಂಡು ಮಾತನಾಡುತ್ತಾರೋ ಗೊತ್ತಿಲ್ಲ ಎಂದು ಕಿಡಿಕಾರಿದರು.
ಇದೇ ವೇಳೆ ಡಿ.ಕೆ. ಶಿವಕುಮಾರ್ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಕುರಿತೂ ಪ್ರತಿಕ್ರಿಯಿಸಿದ ಅವರು, ಡಿಕೆಶಿ ಮತ್ತು ಕುಮಾರಸ್ವಾಮಿ ಒಂದೇ ವಯಸ್ಸಿನವರು. ರಾಜಕೀಯದಲ್ಲಿ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ರಾಜಕಾರಣ ಬರುತ್ತದೆ, ಹೋಗುತ್ತದೆ. ಆದರೆ ಮಾತಿನ ಮೇಲೆ ನಿಗಾ ಇಟ್ಟು ಮಾತನಾಡಬೇಕು ಎಂದು ಪರೋಕ್ಷವಾಗಿ ನಿಖಿಲ್ಗೆ ತಿರುಗೇಟು ನೀಡಿದರು.
ಇನ್ನೊಂದೆಡೆ, ರಾಜ್ಯ ಕಾಂಗ್ರೆಸ್ನಲ್ಲಿ ನಾಯಕತ್ವ ಬದಲಾವಣೆ ಕುರಿತ ಚರ್ಚೆಗಳ ಬಗ್ಗೆ ಪ್ರತಿಕ್ರಿಯಿಸಿದ ಇಕ್ಬಾಲ್ ಹುಸೇನ್, ಆದಷ್ಟು ಬೇಗ ಎಲ್ಲವೂ ಒಳ್ಳೆಯದಾಗಲಿದೆ. ಸಿಹಿ ಸುದ್ದಿ ಬರಲಿದೆ. ಸ್ವಲ್ಪ ದಿನ ಕಾಯಬೇಕು ಅಷ್ಟೇ ಎಂದು ಕುತೂಹಲಕಾರಿ ಹೇಳಿಕೆ ನೀಡಿದರು.
ಬೆಂಗಳೂರು: ಮಾದಾವರ-ತುಮಕೂರು ಮೆಟ್ರೋ ರೈಲು ಯೋಜನೆಗೆ ಸಂಬಂಧಿಸಿದಂತೆ ಸಿದ್ಧಪಡಿಸಲಾದ ವಿವರವಾದ ಯೋಜನಾ ವರದಿ (DPR)ಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗಿದೆ.
ವಿಧಾನಸೌಧದಲ್ಲಿ ನಿನ್ನೆ ಸಂಜೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಡಿಪಿಆರ್ ವರದಿಯನ್ನು ಅಧಿಕೃತವಾಗಿ ಸ್ವೀಕರಿಸಿದರು. ಈ ಯೋಜನೆ ಕುರಿತು ಮುಂದಿನ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಯುವ ಸಾಧ್ಯತೆ ಇದೆ.
ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ಸಂಸ್ಥೆಯು ಡಿಪಿಆರ್ ಸಿದ್ಧಪಡಿಸಿದ್ದು, ಯೋಜನೆಗೆ ಸಂಬಂಧಿಸಿದಂತೆ ಮುಂದಿನ ಹಂತದ ಕ್ರಮಗಳನ್ನು ಸರ್ಕಾರ ಕೈಗೊಳ್ಳಲಿದೆ.
ಈ ಕುರಿತು ಮಾತನಾಡಿದ ಡಾ. ಪರಮೇಶ್ವರ್, “ತುಮಕೂರಿಗೆ ಮೆಟ್ರೋ ರೈಲು ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಹಲವು ವರ್ಷಗಳಿಂದ ಪ್ರಯತ್ನಗಳು ನಡೆಯುತ್ತಿವೆ. ಕಳೆದ ಬಜೆಟ್ನಲ್ಲಿ ಮುಖ್ಯಮಂತ್ರಿ ಫೀಸಿಬಿಲಿಟಿ ಅಧ್ಯಯನ ನಡೆಸುವುದಾಗಿ ಘೋಷಿಸಿದ್ದರು” ಎಂದು ಹೇಳಿದರು.
“ಹೈದರಾಬಾದ್ ಮೂಲದ ಸಂಸ್ಥೆಯೊಂದರಿಂದ ₹3.5 ಕೋಟಿ ವೆಚ್ಚದಲ್ಲಿ ಕಾರ್ಯಸಾಧ್ಯತಾ ವರದಿ ಪಡೆಯಲಾಗಿದೆ. ಆ ವರದಿಯಲ್ಲಿ ಮಾದಾವರದಿಂದ ತುಮಕೂರುವರೆಗೆ ಮೆಟ್ರೋ ಯೋಜನೆ ಜಾರಿಗೆ ತರಬಹುದು ಎಂದು ಶಿಫಾರಸು ಮಾಡಲಾಗಿದೆ” ಎಂದು ಮಾಹಿತಿ ನೀಡಿದರು.
ಅದರ ನಂತರ ಡಿಪಿಆರ್ ಸಿದ್ಧಪಡಿಸಲು ಟೆಂಡರ್ ನೀಡಲಾಗಿದ್ದು, ಮೆಟ್ರೋ ಸಂಸ್ಥೆಯ ಮೂಲಕ ಮತ್ತೊಂದು ಏಜೆನ್ಸಿಯಿಂದ ವಿವರವಾದ ಯೋಜನಾ ವರದಿ ತಯಾರಿಸಲಾಗಿದೆ ಎಂದು ತಿಳಿಸಿದ್ದಾರೆ.
ಯೋಜನೆಯನ್ನು ಪಿಪಿಪಿ (Public-Private Partnership) ಮಾದರಿಯಲ್ಲಿ ಜಾರಿಗೊಳಿಸುವ ಉದ್ದೇಶವಿದ್ದು, ಡಿಪಿಆರ್ ಪ್ರಕಾರ ಯೋಜನೆಗೆ ಸುಮಾರು ₹20 ಸಾವಿರ ಕೋಟಿ ವೆಚ್ಚ ಅಂದಾಜಿಸಲಾಗಿದೆ ಎಂದು ಹೇಳಿದ್ದಾರೆ.
“ಈ ಕುರಿತು ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಬಳಿಕ ಟೆಂಡರ್ ಪ್ರಕ್ರಿಯೆ ಆರಂಭಿಸಲಾಗುತ್ತದೆ” ಎಂದು ಪರಮೇಶ್ವರ್ ತಿಳಿಸಿದ್ದಾರೆ.
ಬೆಂಗಳೂರು: ಆಧಾರ್ ಕಾರ್ಡ್ನಲ್ಲಿ ಅಪ್ರಾಪ್ತ ಬಾಲಕಿಯ ಹೆಸರು ಮತ್ತು ಲಿಂಗವನ್ನು ತಪ್ಪಾಗಿ ನಮೂದಿಸಿ, ಹಲವು ಬಾರಿ ಮನವಿ ಮಾಡಿದರೂ ತಿದ್ದುಪಡಿ ಮಾಡದೇ ನಿರ್ಲಕ್ಷ್ಯ ವಹಿಸಿರುವ ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ (ಯುಐಡಿಎಐ) ವಿರುದ್ಧ ಮಹಿಳೆಯೊಬ್ಬರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಬೆಂಗಳೂರಿನ ಸಿಂಗೇನ ಅಗ್ರಹಾರದ ನಿವಾಸಿ ಲಕ್ಷ್ಮಿ ಅವರು ತಮ್ಮ ಮಗಳ ಪರವಾಗಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ನ್ಯಾಯಪೀಠ ನಡೆಸಿದ್ದು, ಮುಂದಿನ ವಿಚಾರಣೆಯನ್ನು ಜೂನ್ 10ಕ್ಕೆ ಮುಂದೂಡಿದೆ.
ಅರ್ಜಿಯ ಪ್ರಕಾರ, ಲಕ್ಷ್ಮಿ ಅವರ ಮಗಳು ತನುಶ್ರೀ 2015ರ ಜುಲೈ 22ರಂದು ಜನಿಸಿದ್ದು, ಜನನ ಪ್ರಮಾಣಪತ್ರ ಹಾಗೂ ಶಾಲಾ ದಾಖಲೆಗಳಲ್ಲಿ ‘ತನುಶ್ರೀ’ ಮತ್ತು ‘ಹೆಣ್ಣು ಮಗು’ ಎಂದೇ ನಮೂದಿಸಲಾಗಿದೆ. ಆದರೆ ಯುಐಡಿಎಐ ನೀಡಿರುವ ಆಧಾರ್ ಕಾರ್ಡ್ನಲ್ಲಿ ಮಗುವಿನ ಹೆಸರನ್ನು ‘ಪೂಜಾ’ ಎಂದು ಹಾಗೂ ಲಿಂಗದ ಜಾಗದಲ್ಲಿ ‘ಗಂಡು’ ಎಂದು ತಪ್ಪಾಗಿ ಮುದ್ರಿಸಲಾಗಿದೆ ಎಂದು ಆರೋಪಿಸಲಾಗಿದೆ.
ಈ ತಪ್ಪನ್ನು ಸರಿಪಡಿಸಲು ತಾಯಿ ಲಕ್ಷ್ಮಿ ಹಲವು ಬಾರಿ ಸಂಬಂಧಿತ ದಾಖಲೆಗಳೊಂದಿಗೆ ಆಧಾರ್ ಕೇಂದ್ರಗಳು ಹಾಗೂ ಯುಐಡಿಎಐ ಪ್ರಾದೇಶಿಕ ಕಚೇರಿಗೆ ಭೇಟಿ ನೀಡಿದ್ದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
2026ರ ಮಾರ್ಚ್ 24ರಂದು ಯುಐಡಿಎಐ ಕೇಂದ್ರ ಕಚೇರಿ ಮತ್ತು ಬೆಂಗಳೂರು ಪ್ರಾದೇಶಿಕ ಕಚೇರಿಗೆ ಕಾನೂನು ನೋಟಿಸ್ ನೀಡಲಾಗಿದ್ದರೂ ಅಧಿಕಾರಿಗಳಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ತಿಳಿಸಲಾಗಿದೆ.
ಅಧಿಕಾರಿಗಳ ನಿರ್ಲಕ್ಷ್ಯದಿಂದ ಬಾಲಕಿಯ ಶಾಲಾ ಪ್ರವೇಶ, ಸರ್ಕಾರಿ ಸೌಲಭ್ಯಗಳು ಹಾಗೂ ಇತರ ಗುರುತಿನ ದಾಖಲೆಗಳಿಗೆ ತೊಂದರೆ ಉಂಟಾಗುತ್ತಿದೆ. ಇದರಿಂದ ತಾಯಿ ಮತ್ತು ಮಗಳು ತೀವ್ರ ಮಾನಸಿಕ ಹಿಂಸೆ ಅನುಭವಿಸುತ್ತಿದ್ದಾರೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.
ಯುಐಡಿಎಐ ಕ್ರಮವು ಸಂವಿಧಾನದ ವಿಧಿ 14 ಮತ್ತು 21ರ ಅಡಿಯಲ್ಲಿ ನಾಗರಿಕರ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ವಾದಿಸಲಾಗಿದ್ದು, ಅಧಿಕಾರಿಗಳ ಕರ್ತವ್ಯ ವೈಫಲ್ಯದಿಂದ ಬಾಲಕಿಯ ಶೈಕ್ಷಣಿಕ ಹಾಗೂ ಸಾಮಾಜಿಕ ಹಕ್ಕುಗಳಿಗೂ ಧಕ್ಕೆಯಾಗಿದೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ.
ಹೀಗಾಗಿ ಆಧಾರ್ ಕಾರ್ಡ್ನಲ್ಲಿರುವ ‘ಪೂಜಾ, ಗಂಡು’ ಎಂಬ ತಪ್ಪು ಮಾಹಿತಿಯನ್ನು ತೆಗೆದುಹಾಕಿ ‘ತನುಶ್ರೀ, ಹೆಣ್ಣು’ ಎಂದು ತಕ್ಷಣ ತಿದ್ದುಪಡಿ ಮಾಡಲು ಯುಐಡಿಎಐಗೆ ನಿರ್ದೇಶನ ನೀಡಬೇಕು ಎಂದು ಮನವಿ ಮಾಡಲಾಗಿದೆ.
ಅಲ್ಲದೇ, ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಅಸಂವಿಧಾನಿಕ ನಡೆಗಾಗಿ ತಪ್ಪಿತಸ್ಥ ಅಧಿಕಾರಿಗಳಿಂದಲೇ ₹10 ಲಕ್ಷ ಪರಿಹಾರ ಕೊಡಿಸಬೇಕು ಎಂದು ಹೈಕೋರ್ಟ್ಗೆ ಅರ್ಜಿದಾರರು ಮನವಿ ಮಾಡಿದ್ದಾರೆ.
ವಿಜಯಪುರ: ಲಾಡ್ಲೆ ಮಶಾಕ್ ಪ್ರಕರಣ ಹಿಂಪಡೆದ ರಾಜ್ಯ ಸರ್ಕಾರದ ಕ್ರಮದ ವಿರುದ್ಧ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತೀವ್ರ ವಾಗ್ದಾಳಿ ನಡೆಸಿದ್ದು, ಇದೇ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಿರುದ್ಧವೂ ಗಂಭೀರ ಆರೋಪಗಳನ್ನು ಮಾಡಿದ್ದಾರೆ.
“ಮುಸ್ಲಿಮರ ಓಲೈಕೆ ಅತಿಯಾದ ಮಟ್ಟಕ್ಕೆ ಹೋಗಿದೆ. ಗಲಭೆ, ಕಲ್ಲು ತೂರಾಟ ಮತ್ತು ಪೊಲೀಸ್ ಠಾಣೆ ಮೇಲೆ ದಾಳಿ ಮಾಡಿದವರ ಮೇಲಿನ ಪ್ರಕರಣಗಳನ್ನು ಸರ್ಕಾರ ಹಿಂಪಡೆಯುತ್ತಿರುವುದು ಅಪರಾಧಿಗಳಿಗೆ ಉತ್ತೇಜನ ನೀಡಿದಂತಾಗಿದೆ” ಎಂದು ಯತ್ನಾಳ್ ಆಕ್ರೋಶ ವ್ಯಕ್ತಪಡಿಸಿದರು.
ವಿಜಯೇಂದ್ರ ವಿರುದ್ಧ ನೇರವಾಗಿ ಆರೋಪ ಮಾಡಿದ ಅವರು, “ವಿಜಯೇಂದ್ರ ಅನೇಕ ವಂಚನೆ ಮತ್ತು ನಕಲಿ ಸಹಿ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ. ಹೀಗಾಗಿ ಇಂತಹ ವಿಚಾರಗಳ ಬಗ್ಗೆ ಮಾತನಾಡುವ ನೈತಿಕ ಹಕ್ಕು ಅವನಿಗಿಲ್ಲ” ಎಂದು ಹೇಳಿದರು.
ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆ ವಿಚಾರದಲ್ಲಿ ಪಕ್ಷದ ಒಳರಾಜಕೀಯದ ಬಗ್ಗೆ ಬಹಿರಂಗವಾಗಿ ಮಾತನಾಡಿದ ಯತ್ನಾಳ್, “ರಾಜ್ಯ ಪದಾಧಿಕಾರಿಗಳಲ್ಲಿ ಬಹುತೇಕರು ವಿಜಯೇಂದ್ರನ ಚೇಲಾಗಳೇ. ಅವರ ಅಭಿಪ್ರಾಯ ಕೇಳಿದರೆ ವಿಜಯೇಂದ್ರ ಪರವಾಗಿಯೇ ಮಾತನಾಡುತ್ತಾರೆ” ಎಂದು ಟೀಕಿಸಿದರು.
“ಯಡಿಯೂರಪ್ಪ ಹಾಗೂ ವಿಜಯೇಂದ್ರ ಕೆಲ ಸ್ವಾಮೀಜಿಗಳನ್ನು ಮುಂದೆ ಮಾಡುತ್ತಿದ್ದಾರೆ. ಅವರನ್ನು ಕೆಳಗಿಳಿಸಿದರೆ ಲಿಂಗಾಯತರು ಬೆಂಬಲಿಸುವುದಿಲ್ಲ ಎಂದು ಅಮಿತ್ ಶಾಗೆ ಕರೆ ಮಾಡಿಸುತ್ತಿದ್ದಾರೆ” ಎಂದು ಗಂಭೀರ ಆರೋಪ ಮಾಡಿದ್ದಾರೆ.
ರಾಜ್ಯಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯಲ್ಲಿ ಎಲ್ಲ ಹಾಲಿ ಮತ್ತು ಮಾಜಿ ಶಾಸಕರು, ಮುಖಂಡರ ಅಭಿಪ್ರಾಯ ಪಡೆಯಬೇಕು ಎಂದು ಯತ್ನಾಳ್ ಒತ್ತಾಯಿಸಿದರು.
ಬೆಂಗಳೂರು: ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷದ ಪರಿಣಾಮ ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯಾಗುತ್ತಿದ್ದು, ಹಣದುಬ್ಬರದ ಆತಂಕವೂ ಹೆಚ್ಚಾಗಿದೆ. ಇದರ ಪರಿಣಾಮ ಅಮೂಲ್ಯ ಲೋಹಗಳ ಮಾರುಕಟ್ಟೆಯ ಮೇಲೂ ಕಂಡುಬಂದಿದ್ದು, ಚಿನ್ನದ ದರದಲ್ಲಿ ಇಳಿಕೆ ದಾಖಲಾಗಿದೆ.
ಮೇ 23, 2026 ಶನಿವಾರದಂದು 24 ಕ್ಯಾರೆಟ್ ಚಿನ್ನದ ದರದಲ್ಲಿ 10 ಗ್ರಾಂಗೆ ₹430 ಇಳಿಕೆಯಾಗಿದ್ದು, ಪ್ರಸ್ತುತ ಬೆಲೆ ₹1,59,060 ಆಗಿದೆ. ಅದೇ ರೀತಿ 1 ಗ್ರಾಂ ಚಿನ್ನದ ದರ ₹43 ಇಳಿಕೆಯಾಗಿ ₹15,906ಕ್ಕೆ ತಲುಪಿದೆ.
22 ಕ್ಯಾರೆಟ್ ಚಿನ್ನದ ದರವೂ ಇಳಿಕೆ ಕಂಡಿದ್ದು, 1 ಗ್ರಾಂಗೆ ₹40 ಕಡಿಮೆಯಾಗಿ ₹14,580 ಆಗಿದೆ. 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ ₹400 ಇಳಿಕೆಯಾಗಿ ₹1,45,800ಕ್ಕೆ ತಲುಪಿದೆ.
ಇನ್ನೊಂದೆಡೆ ಬೆಳ್ಳಿ ದರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಪ್ರತಿ ಗ್ರಾಂ ಬೆಳ್ಳಿ ಬೆಲೆ ₹285 ಆಗಿದ್ದು, ಹಿಂದಿನ ದರವೇ ಮುಂದುವರಿದಿದೆ. ಒಂದು ಕೆಜಿ ಬೆಳ್ಳಿ ಬೆಲೆ ₹2.85 ಲಕ್ಷದಷ್ಟಿದೆ.
ವಿಜಯಸಾಕ್ಷಿ ಸುದ್ದಿ, ಹಗರಿಬೊಮ್ಮನಹಳ್ಳಿ: ವಿಜಯನಗರ ಜಿಲ್ಲೆ ಭಾರತೀಯ ಜನತಾ ಪಾರ್ಟಿ ಎಸ್ಟಿ ಮೋರ್ಚಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಜೋಗಿ ಹನುಮಂತಪ್ಪ ಅವರನ್ನು ನೇಮಕ ಮಾಡಲಾಗಿದೆ.
ಪಕ್ಷದ ಹಿರಿಯ ಮುಖಂಡರು ಹಾಗೂ ಕಾರ್ಯಕರ್ತರು ಈ ನೇಮಕಕ್ಕೆ ಸಂತಸ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ.
ಜೋಗಿ ಹನುಮಂತಪ್ಪ ಅವರು ಹಲವು ವರ್ಷಗಳಿಂದ ಪಕ್ಷ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಸಮಾಜಮುಖಿ ಕಾರ್ಯಗಳ ಮೂಲಕ ಗುರುತಿಸಿಕೊಂಡಿದ್ದಾರೆ. ಅವರ ಸೇವಾ ಮನೋಭಾವ, ಸಂಘಟನಾ ಸಾಮರ್ಥ್ಯ ಹಾಗೂ ಕಾರ್ಯಕರ್ತರೊಂದಿಗೆ ಹೊಂದಿರುವ ಉತ್ತಮ ಬಾಂಧವ್ಯವನ್ನು ಪರಿಗಣಿಸಿ ಈ ಮಹತ್ವದ ಜವಾಬ್ದಾರಿ ನೀಡಲಾಗಿದೆ ಎಂದು ಪಕ್ಷದ ಮುಖಂಡರು ತಿಳಿಸಿದ್ದಾರೆ.
ನನ್ನನ್ನು ಈ ಹುದ್ದೆಗೆ ಆಯ್ಕೆ ಮಾಡಿದ ರಾಜ್ಯ ನಾಯಕರು, ಜಿಲ್ಲಾಧ್ಯಕ್ಷ ಸಂಜೀವ ರೆಡ್ಡಿ, ಸಹ ಪ್ರಭಾರಿ ಚನ್ನಬಸವನಗೌಡ ಪಾಟೀಲ್, ಮಂಡಲ ಅಧ್ಯಕ್ಷ ಬೆಣಕಲ್ ಪ್ರಕಾಶ್ ಹಾಗೂ ಜಿಲ್ಲೆಯ ಎಲ್ಲ ಪದಾಧಿಕಾರಿಗಳಿಗೆ, ಹಗರಿಬೊಮ್ಮನಹಳ್ಳಿ ಕ್ಷೇತ್ರದ ಹಿರಿಯ ಮುಖಂಡರು ಮತ್ತು ಕಾರ್ಯಕರ್ತರಿಗೆ ಧನ್ಯವಾದಗಳನ್ನು ಜೋಗಿ ಹನುಮಂತಪ್ಪ ತಿಳಿಸಿದ್ದಾರೆ.
“ಪಕ್ಷ ನೀಡಿರುವ ಜವಾಬ್ದಾರಿಯನ್ನು ನಿಷ್ಠೆಯಿಂದ ನಿರ್ವಹಿಸಿ ಎಸ್ಟಿ ಸಮುದಾಯದ ಅಭಿವೃದ್ಧಿ ಹಾಗೂ ಪಕ್ಷದ ಬಲವರ್ಧನೆಗೆ ಶ್ರಮಿಸುತ್ತೇನೆ. ಆಶೀರ್ವಾದ ಮಾಡಿದ ಹಗರಿಬೊಮ್ಮನಹಳ್ಳಿ ರಾಮನಗರ–ಕುರದಗಡ್ಡಿ ವಾರ್ಡ್ನ ಸಮಸ್ತ ಮತಬಾಂಧವರಿಗೆ ಕೃತಜ್ಞನಾಗಿದ್ದೇನೆ.”
ಗದಗ: ಮೇ 17ರಂದು ಸುರಿದ ಭಾರಿ ಗಾಳಿ-ಮಳೆಗೆ ಮನೆಗಳ ಮೇಲ್ಚಾವಣಿ ಕಳೆದುಕೊಂಡು ಬೀದಿಗಿಳಿದ ಗಂಗಿಮಡಿ ಪ್ರದೇಶದ ನೂರಾರು ಕುಟುಂಬಗಳಿಗೆ ಜಿಲ್ಲಾಡಳಿತ ಆರಂಭಿಸಿದ್ದ ಕಾಳಜಿ ಕೇಂದ್ರವೇ ಇದೀಗ ವಿವಾದದ ಕೇಂದ್ರಬಿಂದುವಾಗಿದೆ. ಶೆಡ್ಗಳ ದುರಸ್ತಿ ಕಾರ್ಯ ಪೂರ್ಣಗೊಳ್ಳುವ ಮುನ್ನವೇ ಅಧಿಕಾರಿಗಳು ಏಕಾಏಕಿ ಕಾಳಜಿ ಕೇಂದ್ರಕ್ಕೆ ಬೀಗ ಜಡಿದು ಸಂತ್ರಸ್ತರನ್ನು ಹೊರಹಾಕಿರುವ ಆರೋಪ ಕೇಳಿಬಂದಿದ್ದು, ಜಿಲ್ಲಾಡಳಿತದ ಅಮಾನವೀಯ ನಡೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಭಾರಿ ಗಾಳಿ-ಮಳೆಯಿಂದ 30ಕ್ಕೂ ಹೆಚ್ಚು ಶೆಡ್ಗಳ ಶೀಟುಗಳು ಹಾರಿ ಹೋಗಿದ್ದರಿಂದ ಅನೇಕ ಕುಟುಂಬಗಳು ಆಶ್ರಯವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದವು. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಗಂಗಿಮಡಿ ಶಾಲೆಯಲ್ಲಿ ತಾತ್ಕಾಲಿಕ ಕಾಳಜಿ ಕೇಂದ್ರ ಆರಂಭಿಸಿತ್ತು. ಆದರೆ, ಇನ್ನೂ ಮನೆಗಳ ದುರಸ್ತಿ ಪೂರ್ಣಗೊಳ್ಳದಿದ್ದರೂ ಏಕಾಏಕಿ ಕೇಂದ್ರವನ್ನು ಬಂದ್ ಮಾಡಿ ಜನರನ್ನು ಹೊರಹಾಕಲಾಗಿದೆ ಎಂದು ಸಂತ್ರಸ್ತರು ಆರೋಪಿಸಿದ್ದಾರೆ.
ಕಾಳಜಿ ಕೇಂದ್ರದಿಂದ ಹೊರಹಾಕಿದ ಬಳಿಕ ಗರ್ಭಿಣಿ ಮಹಿಳೆಯರು, ವೃದ್ಧರು, ಮಕ್ಕಳು ಸೇರಿ ನೂರಾರು ಮಂದಿ ಶಾಲೆಯ ಆವರಣದಲ್ಲೇ ರಾತ್ರಿಯಿಡೀ ಕಾಲ ಕಳೆಯಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ವಿದ್ಯುತ್ ವ್ಯವಸ್ಥೆಯಿಲ್ಲದೆ ಕತ್ತಲಲ್ಲೇ ಕುಳಿತ ಮಹಿಳೆಯರು ಹಾಗೂ ಮಕ್ಕಳಲ್ಲಿ ವಿಷಜಂತುಗಳ ಭಯ ಹೆಚ್ಚಾಗಿತ್ತು.
ಸಂತ್ರಸ್ತರ ಆರೋಪದ ಪ್ರಕಾರ, ಗದಗ ತಹಸೀಲ್ದಾರ್ ಶ್ರೀನಿವಾಸಮೂರ್ತಿ ಹಾಗೂ ನಗರಸಭೆ ಆಯುಕ್ತ ರಾಜಾರಾಮ ಪವಾರ ಸ್ಥಳಕ್ಕೆ ಬಂದು ಶಾಲೆಗೆ ಬೀಗ ಜಡಿಸಿ ಹೊರಹಾಕಿದ್ದಾರೆ ಎನ್ನಲಾಗಿದೆ.
ಕೆಲವರಿಗೆ ₹5 ಸಾವಿರ ಪರಿಹಾರ ನೀಡಿದ್ದರೂ ಇನ್ನೂ ಅನೇಕ ಕುಟುಂಬಗಳಿಗೆ ಪರಿಹಾರ ತಲುಪಿಲ್ಲ ಎಂದು ಸಂತ್ರಸ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಮಳೆ ಮತ್ತೆ ಬರಬಹುದಾದ ಪರಿಸ್ಥಿತಿ ಇದೆ. ನಮ್ಮ ಶೆಡ್ಗಳು ಇನ್ನೂ ರಿಪೇರಿ ಆಗಿಲ್ಲ. ಇಂತಹ ಸಮಯದಲ್ಲಿ ನಮ್ಮನ್ನು ಹೊರಹಾಕಿರುವುದು ಮಾನವೀಯತೆಯೇ?” ಎಂದು ಮಹಿಳೆಯರು ಕಣ್ಣೀರಿಟ್ಟರು.
ಕಾಳಜಿ ಕೇಂದ್ರದ ಆವರಣದಲ್ಲೇ ಉಪವಾಸ ಸತ್ಯಾಗ್ರಹದಂತ ವಾತಾವರಣ ನಿರ್ಮಾಣವಾಗಿದ್ದು, ಬೆಳಗ್ಗೆ 10 ಗಂಟೆಯಾದರೂ ಯಾವೊಬ್ಬ ಅಧಿಕಾರಿಯೂ ಸ್ಥಳಕ್ಕೆ ಭೇಟಿ ನೀಡದಿರುವುದು ಜನರ ಆಕ್ರೋಶಕ್ಕೆ ಕಾರಣವಾಯಿತು. ಚಹಾ, ನೀರು, ಉಪಹಾರವೂ ಇಲ್ಲದೆ ಮಕ್ಕಳು ಹಾಗೂ ವೃದ್ಧರು ನರಳಾಡಿದ ದೃಶ್ಯ ಮನಕಲಕುವಂತಿತ್ತು. ಈ ವೇಳೆ ಒಬ್ಬ ಮಹಿಳೆ ಅಸ್ವಸ್ಥಗೊಂಡು ಸ್ಥಳದಲ್ಲೇ ಕುಸಿದ ಘಟನೆ ಕೂಡ ಆತಂಕ ಹೆಚ್ಚಿಸಿತು.
ಇದೇ ವೇಳೆ ಸಂತ್ರಸ್ತರು ಶೆಡ್ಗಳ ತುರ್ತು ದುರಸ್ತಿ ಕಾರ್ಯವನ್ನು ಕೂಡಲೇ ಪೂರ್ಣಗೊಳಿಸುವಂತೆ, ಎಲ್ಲ ಕುಟುಂಬಗಳಿಗೆ ಪರಿಹಾರ ವಿತರಿಸುವಂತೆ ಹಾಗೂ ಮಳೆಗಾಲ ಮುಗಿಯುವವರೆಗೂ ಸುರಕ್ಷಿತ ಆಶ್ರಯ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯದ ಕುರಿತು ತನಿಖೆ ನಡೆಸಬೇಕೆಂದು ಕೂಡ ಒತ್ತಾಯಿಸಿದ್ದಾರೆ.
ಗಂಗಿಮಡಿ ಸಂತ್ರಸ್ತರ ಈ ದುಸ್ಥಿತಿ ಜಿಲ್ಲಾಡಳಿತದ ತುರ್ತು ಸ್ಪಂದನೆ ಹಾಗೂ ಮಾನವೀಯ ನಡೆ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದೆ.
“ನಮಗೆ ಊಟ ಕೊಡದಿದ್ದರೂ ಪರವಾಗಿಲ್ಲ. ನಮ್ಮ ಶೆಡ್ಗಳು ರಿಪೇರಿ ಆಗುವವರೆಗೂ ಶಾಲೆಯಲ್ಲಿ ಆಶ್ರಯ ನೀಡಲಿ. ಮಳೆ ಬಂದರೆ ನಾವು ಮಕ್ಕಳೊಂದಿಗೆ ಎಲ್ಲಿಗೆ ಹೋಗಬೇಕು?”
ಬಾದಾಮಿ: ಜಿಲ್ಲೆಯ ಐತಿಹಾಸಿಕ ಅಗಸ್ತ್ಯ ಹೊಂಡದಲ್ಲಿ ಈಜಲು ತೆರಳಿದ್ದ ಯುವಕನೊಬ್ಬ ನಾಪತ್ತೆಯಾಗಿರುವ ಘಟನೆ ಬಾಗಲಕೋಟೆ ಜಿಲ್ಲೆಯಲ್ಲಿ ಭಾರೀ ಆತಂಕಕ್ಕೆ ಕಾರಣವಾಗಿದೆ.
ಜಯನಗರ ನಿವಾಸಿ ಮನೋಜ್ ಪ್ರಕಾಶ್ ಕಂಬ್ಳೇಕರ್ (19) ನಾಪತ್ತೆಯಾದ ಯುವಕ ಎಂದು ಗುರುತಿಸಲಾಗಿದೆ. ಮನೋಜ್ ತನ್ನ ಬಟ್ಟೆಗಳನ್ನು ಹೊಂಡದ ಬದಿಯಲ್ಲಿ ಬಿಟ್ಟು ನೀರಿಗೆ ಇಳಿದಿದ್ದಾನೆ ಎನ್ನಲಾಗಿದೆ. ಆದರೆ ಸಾಕಷ್ಟು ಸಮಯ ಕಳೆದರೂ ಆತ ಮೇಲಕ್ಕೆ ಬರದ ಹಿನ್ನೆಲೆಯಲ್ಲಿ ಸ್ಥಳೀಯರು ಅನುಮಾನಗೊಂಡು ತಕ್ಷಣ 112 ಸಹಾಯವಾಣಿಗೆ ಮಾಹಿತಿ ನೀಡಿದ್ದಾರೆ.
ಘಟನಾ ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಶೀಲನೆ ನಡೆಸಿ, ಕುಟುಂಬ ಸದಸ್ಯರ ಸಹಾಯದಿಂದ ಯುವಕನ ಗುರುತು ದೃಢಪಡಿಸಿದ್ದಾರೆ.
ಇದೀಗ ಅಗ್ನಿಶಾಮಕ ದಳ ಮತ್ತು ಪೊಲೀಸ್ ತಂಡಗಳು ಹೊಂಡದಲ್ಲಿ ತೀವ್ರ ಶೋಧ ಕಾರ್ಯಾಚರಣೆ ಮುಂದುವರಿಸಿದ್ದು, ಇನ್ನೂ ಯುವಕನ ಪತ್ತೆಯಾಗಿಲ್ಲ. ಘಟನೆ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.
ನವದೆಹಲಿ: ದೇಶಾದ್ಯಂತ ಉದ್ಯೋಗಾಕಾಂಕ್ಷಿಗಳ ಗಮನ ಸೆಳೆದಿರುವ 19ನೇ ಆವೃತ್ತಿಯ ರೋಜ್ಗಾರ್ ಮೇಳ ಇಂದು ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ 51,000ಕ್ಕೂ ಹೆಚ್ಚು ಯುವಕರಿಗೆ ನೇಮಕಾತಿ ಪತ್ರ ವಿತರಿಸಲಿದ್ದಾರೆ.
ಬೆಳಗ್ಗೆ 11 ಗಂಟೆಗೆ ವೀಡಿಯೋ ಕಾನ್ಫರೆನ್ಸ್ ಮೂಲಕ ಆರಂಭವಾಗಲಿರುವ ಈ ಉದ್ಯೋಗ ಮೇಳ ದೇಶದ 42 ಕೇಂದ್ರಗಳಲ್ಲಿ ಏಕಕಾಲದಲ್ಲಿ ನಡೆಯಲಿದೆ. ವಿವಿಧ ಸರ್ಕಾರಿ ಇಲಾಖೆ ಹಾಗೂ ಸಂಸ್ಥೆಗಳಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರಧಾನಿ ಮೋದಿ ನೇರವಾಗಿ ನೇಮಕಾತಿ ಪತ್ರ ಹಸ್ತಾಂತರಿಸಲಿದ್ದಾರೆ.
ರೈಲ್ವೇ, ಗೃಹ ವ್ಯವಹಾರಗಳು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಹಣಕಾಸು ಸೇವೆಗಳು, ಉನ್ನತ ಶಿಕ್ಷಣ ಸೇರಿದಂತೆ ಹಲವು ಪ್ರಮುಖ ಸಚಿವಾಲಯಗಳು ಮತ್ತು ಇಲಾಖೆಗಳ ಹುದ್ದೆಗಳಿಗೆ ಯುವಕರು ನೇಮಕಗೊಳ್ಳಲಿದ್ದಾರೆ.
ಪ್ರಧಾನಮಂತ್ರಿ ಕಚೇರಿ ಮಾಹಿತಿ ಪ್ರಕಾರ, ಈವರೆಗೆ ನಡೆದಿರುವ 18 ರೋಜ್ಗಾರ್ ಮೇಳಗಳ ಮೂಲಕ ಸುಮಾರು 12 ಲಕ್ಷಕ್ಕೂ ಹೆಚ್ಚು ನೇಮಕಾತಿ ಪತ್ರಗಳನ್ನು ವಿತರಿಸಲಾಗಿದೆ. ಉದ್ಯೋಗ ಸೃಷ್ಟಿಗೆ ಕೇಂದ್ರ ಸರ್ಕಾರ ಆದ್ಯತೆ ನೀಡುತ್ತಿರುವುದರ ಭಾಗವಾಗಿ ಈ ಕಾರ್ಯಕ್ರಮವನ್ನು ಮುಂದುವರಿಸಲಾಗುತ್ತಿದೆ.
ಈ ಕುರಿತು ಪ್ರಧಾನಿ ಮೋದಿ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದು, “ಯುವಕರ ಸಬಲೀಕರಣ ಮತ್ತು ಅವರ ಉಜ್ವಲ ಭವಿಷ್ಯಕ್ಕಾಗಿ ನಾವು ಬದ್ಧರಾಗಿದ್ದೇವೆ” ಎಂದು ತಿಳಿಸಿದ್ದಾರೆ.
ಬೆಳಗಾವಿ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ಪರೀಕ್ಷಾ ಫಲಿತಾಂಶ ಪ್ರಕಟಣೆಯಲ್ಲಿ ಅಚ್ಚರಿಯ ದಾಖಲೆ ನಿರ್ಮಿಸಿದೆ. ಬೆಳಗಾವಿಯ ವಿಟಿಯು, ಬಿಇ ಮತ್ತು ಬಿಟೆಕ್ ಅಂತಿಮ ವರ್ಷದ ವಿದ್ಯಾರ್ಥಿಗಳ ಫಲಿತಾಂಶವನ್ನು ಪರೀಕ್ಷೆ ಮುಗಿದ ಕೇವಲ 10 ನಿಮಿಷಗಳಲ್ಲಿ ಪ್ರಕಟಿಸಿ ಹೊಸ ಮೈಲಿಗಲ್ಲು ಸಾಧಿಸಿದೆ.
ಇಂದು ನಡೆದ ಅಂತಿಮ ಸೆಮಿಸ್ಟರ್ ಪರೀಕ್ಷೆಗೆ ಒಟ್ಟು 56,192 ವಿದ್ಯಾರ್ಥಿಗಳು ಹಾಜರಾಗಿದ್ದರು. ಸಂಜೆ 5:30ಕ್ಕೆ ಪರೀಕ್ಷೆ ಅಂತ್ಯಗೊಂಡ ತಕ್ಷಣವೇ ಡಿಜಿಟಲ್ ಮೌಲ್ಯಮಾಪನ ಪ್ರಕ್ರಿಯೆ ಪೂರ್ಣಗೊಳಿಸಿದ ವಿವಿ, 5:40ಕ್ಕೆ ಅಧಿಕೃತವಾಗಿ ಫಲಿತಾಂಶ ಪ್ರಕಟಿಸಿದೆ.
ಈ ಬಾರಿ ವಿಶ್ವವಿದ್ಯಾಲಯ ಶೇ.99.98ರಷ್ಟು ಫಲಿತಾಂಶ ದಾಖಲಿಸಿದ್ದು, ತಾಂತ್ರಿಕ ಶಿಕ್ಷಣ ಕ್ಷೇತ್ರದಲ್ಲಿ ವೇಗದ ಮೌಲ್ಯಮಾಪನ ವ್ಯವಸ್ಥೆಗೆ ಹೊಸ ಮಾದರಿಯಾಗಿದೆ. ಫಲಿತಾಂಶವನ್ನು ವಿದ್ಯಾರ್ಥಿಗಳ ವಾಟ್ಸಪ್ ಸಂಖ್ಯೆಗಳಿಗೂ ನೇರವಾಗಿ ಕಳುಹಿಸಿರುವುದು ಮತ್ತೊಂದು ವಿಶೇಷ.
ಡಿಜಿಟಲ್ ಟೆಕ್ನಾಲಜಿ ಮತ್ತು ಸ್ವಯಂಚಾಲಿತ ಮೌಲ್ಯಮಾಪನ ವ್ಯವಸ್ಥೆ ಬಳಸಿ ಈ ಸಾಧನೆ ಸಾಧ್ಯವಾಗಿದೆ ಎಂದು ವಿವಿ ಮೂಲಗಳು ತಿಳಿಸಿವೆ. ಪರೀಕ್ಷಾ ವಿಭಾಗದ ಸಿಬ್ಬಂದಿ ಹಾಗೂ ತಾಂತ್ರಿಕ ತಂಡದ ಕಾರ್ಯಕ್ಕೆ ವಿಟಿಯು ಕುಲಪತಿ ಪ್ರೊ. ವಿದ್ಯಾಶಂಕರ ಅಭಿನಂದನೆ ಸಲ್ಲಿಸಿದ್ದಾರೆ.