Home Blog

ಭಗವಾನ್ ವಿರುದ್ಧ ಕ್ರಮಕ್ಕೆ ಹಿಂದೂ ಜನಜಾಗೃತಿ ಸಮಿತಿ ಆಗ್ರಹ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಹಿಂದೂ ಧರ್ಮ, ಪ್ರಭು ಶ್ರೀರಾಮ ಹಾಗೂ ಹಿಂದೂ ದೇವತೆಗಳ ಕುರಿತು ಅವಹೇಳನಕಾರಿ ಹೇಳಿಕೆ ನೀಡಿರುವ ಆರೋಪದ ಹಿನ್ನೆಲೆಯಲ್ಲಿ ಪ್ರೊ. ಕೆ.ಎಸ್. ಭಗವಾನ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಹಿಂದೂ ಜನಜಾಗೃತಿ ಸಮಿತಿಯ ಕಾರ್ಯಕರ್ತರು ತಹಸೀಲ್ದಾರ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ದಾವಣಗೆರೆ ಜಿಲ್ಲೆಯ ಹರಿಹರದಲ್ಲಿರುವ ಬಿ. ಕೃಷ್ಣಪ್ಪ ಮೈತ್ರಿವನದಲ್ಲಿ ಜೂನ್ 9ರಂದು ನಡೆದ ಕಾರ್ಯಕ್ರಮದಲ್ಲಿ ಪ್ರೊ. ಕೆ.ಎಸ್. ಭಗವಾನ್ ಅವರು ಹಿಂದೂ ಧರ್ಮ, ಶ್ರೀರಾಮ ಹಾಗೂ ಧಾರ್ಮಿಕ ಆಚರಣೆಗಳ ಕುರಿತು ನೀಡಿದ ಹೇಳಿಕೆಗಳು ಕೋಟ್ಯಂತರ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡಿವೆ ಎಂದು ಮನವಿಯಲ್ಲಿ ಆರೋಪಿಸಲಾಗಿದೆ.

ಇಂತಹ ಹೇಳಿಕೆಗಳು ಸಮಾಜದಲ್ಲಿ ಉದ್ವಿಗ್ನತೆ ಹಾಗೂ ಸಮುದಾಯಗಳ ನಡುವೆ ವೈಮನಸ್ಸು ಸೃಷ್ಟಿಸುವ ಸಾಧ್ಯತೆ ಇರುವುದರಿಂದ ಅವರ ಭಾಷಣದ ವಿಡಿಯೋ, ಧ್ವನಿಮುದ್ರಣ ಸೇರಿದಂತೆ ಎಲ್ಲ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿ, ಅನ್ವಯವಾಗುವ ಕಾನೂನು ವಿಧಿಗಳಡಿ ಪ್ರಕರಣ ದಾಖಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗಿದೆ.

ಈ ಸಂದರ್ಭದಲ್ಲಿ ಮಂಜುನಾಥ ಮಾಗಡಿ, ಹೊನ್ನಪ್ಪ ವಡ್ಡರ, ಶಿವರಾಜ ಪಟ್ಟಣಶೆಟ್ಟಿ, ಗಜೇಂದ್ರಗೌಡ ಪಾಟೀಲ, ನಾಗರಾಜ ಚಿಂಚಲಿ, ಎಚ್.ಎಸ್. ವಾಲಿ, ಡಿ.ಎಂ. ಕೋಟಗಿ, ಶಂಕರ ಬ್ಯಾಡಗಿ, ಮಲ್ಲಪ್ಪಗೌಡರ, ಮುತ್ತು ನೀರಲಗಿ, ಜಿ.ಎಸ್. ಮಲ್ಲಪ್ಪಗೌಡರ, ಫಕ್ಕೀರಪ್ಪ ಹಾವನೂರು, ಯಲ್ಲಪ್ಪಗೌಡ ಪಾಟೀಲ ಸೇರಿದಂತೆ ಹಿಂದೂ ಜನಜಾಗೃತಿ ಸಮಿತಿಯ ಕಾರ್ಯಕರ್ತರು ಹಾಗೂ ಧರ್ಮಪ್ರೇಮಿಗಳು ಉಪಸ್ಥಿತರಿದ್ದರು.

ರಥದ ಗಾಲಿಯಲ್ಲಿ ಅನ್ಯಕೋಮಿನ ಮಹಿಳೆ ಹೆಸರು: ಗದಗದಲ್ಲಿ ವಿವಾದ

0

ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಐತಿಹಾಸಿಕ ಗಂಗಾಪುರ ಪೇಟೆಯ ದುರ್ಗಾದೇವಿ ದೇವಸ್ಥಾನ ಹಾಗೂ ವೀರೇಶ್ವರ ಪುಣ್ಯಾಶ್ರಮದ ರಥಗಳ ಗಾಲಿಗಳ ಮೇಲೆ ಅನ್ಯಕೋಮಿನ ಮಹಿಳೆಯ ಹೆಸರನ್ನು ಕೆತ್ತಿಸಿರುವುದು ಭಕ್ತರ ಭಾವನೆಗಳಿಗೆ ಧಕ್ಕೆ ತಂದಿದ್ದು, ಇದು ಅಕ್ಷಮ್ಯ ತಪ್ಪು ಎಂದು ಹಿಂದೂ ಸಂಘಟನೆಗಳ ಮುಖಂಡ ರಾಜೂ ಖಾನಪ್ಪನವರ ಆರೋಪಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಥಗಳ ಗಾಲಿಗಳ ಮೇಲೆ ‘ಜೋಹರಾ ಪೀರಸಾಬ ಕೌತಾಳ’ ಎಂಬ ಹೆಸರು ಕೆತ್ತಿಸಿರುವುದು ಸಮಸ್ತ ಹಿಂದೂ ಭಕ್ತರಿಗೆ ಮಾಡಿದ ಅವಮಾನವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ದೇವಾಲಯಗಳಿಗೆ ದಾನ ನೀಡಿದವರನ್ನು ಸ್ಮರಿಸುವುದಕ್ಕೆ ನಮ್ಮ ವಿರೋಧವಿಲ್ಲ. ಆದರೆ ದಾನಿಗಳ ಹೆಸರನ್ನು ರಥದ ಗಾಲಿಗಳ ಮೇಲೆ ಕೆತ್ತಿಸುವ ಮುನ್ನ ಆಡಳಿತ ಮಂಡಳಿಗಳು ಭಕ್ತರ ಸಭೆ ಕರೆದು ಚರ್ಚಿಸಬೇಕಿತ್ತು. ಸಮಾಜದ ಅಭಿಪ್ರಾಯ ಪಡೆಯದೇ ಏಕಪಕ್ಷೀಯವಾಗಿ ನಿರ್ಧಾರ ಕೈಗೊಂಡಿರುವುದು ಸರಿಯಲ್ಲ ಎಂದು ಹೇಳಿದರು.

ದುರ್ಗಾದೇವಿ ದೇವಸ್ಥಾನ ಮತ್ತು ವೀರೇಶ್ವರ ಪುಣ್ಯಾಶ್ರಮ ಎರಡಕ್ಕೂ ಶತಮಾನಗಳ ಇತಿಹಾಸವಿದೆ. ವೀರೇಶ್ವರ ಪುಣ್ಯಾಶ್ರಮವು ನಾಡಿನ ಅಂಧರ ಸಂಗೀತ ಶಿಕ್ಷಣಕ್ಕೆ ಮಹತ್ವದ ಕೊಡುಗೆ ನೀಡಿದ್ದು, ದುರ್ಗಾದೇವಿ ಜಾತ್ರೆಗೆ ದೇಶದ ವಿವಿಧ ಭಾಗಗಳಿಂದ ಭಕ್ತರು ಆಗಮಿಸುತ್ತಾರೆ. ಇಂತಹ ಐತಿಹಾಸಿಕ ಧಾರ್ಮಿಕ ಕೇಂದ್ರಗಳ ರಥಗಳಲ್ಲಿ ಅನ್ಯಕೋಮಿನ ಮಹಿಳೆಯ ಹೆಸರು ಕೆತ್ತಿಸಿರುವುದು ಭಕ್ತರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ಹೇಳಿದರು.

ವೀರೇಶ್ವರ ಪುಣ್ಯಾಶ್ರಮಕ್ಕೆ ಲಕ್ಷಾಂತರ ರೂಪಾಯಿ ಮೌಲ್ಯದ ಆಸ್ತಿ ಹಾಗೂ ದೇಣಿಗೆ ನೀಡಿದ ಅನೇಕ ದಾನಿಗಳ ಹೆಸರುಗಳನ್ನು ಎಲ್ಲಿಯೂ ಉಲ್ಲೇಖಿಸಿಲ್ಲ. ದಾನ ಎಂಬುದು ಪ್ರಚಾರಕ್ಕಾಗಿ ಅಲ್ಲ, ಸೇವಾ ಮನೋಭಾವಕ್ಕಾಗಿ ಇರಬೇಕು. ಇಂತಹ ಸಂದರ್ಭದಲ್ಲಿ ರಥದ ಗಾಲಿಗಳ ಮೇಲೆ ಹೆಸರು ಕೆತ್ತಿಸಿರುವುದು ಸೂಕ್ತವಲ್ಲ ಎಂದು ಅಭಿಪ್ರಾಯಪಟ್ಟರು.

ಈ ವಿಷಯದಲ್ಲಿ ಆಗಿರುವ ಲೋಪವನ್ನು ಸಂಬಂಧಿಸಿದ ದೇವಾಲಯಗಳ ಆಡಳಿತ ಮಂಡಳಿಗಳು ಕೂಡಲೇ ಸರಿಪಡಿಸಬೇಕು. ಐದು ದಿನಗಳೊಳಗೆ ಕ್ರಮ ಕೈಗೊಳ್ಳದಿದ್ದರೆ ಹಿಂದೂ ಸಂಘಟನೆಗಳ ಸಹಯೋಗದೊಂದಿಗೆ ದೇವಾಲಯಗಳ ಎದುರು ಹಾಗೂ ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ, ಸತ್ಯಾಗ್ರಹ ಮತ್ತು ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಮಹೇಶ ರೋಖಡೆ, ಶಿವಯೋಗಿ ಹಿರೇಮಠ, ಸತೀಶ ಕುಂಬಾರ, ವೆಂಕಟೇಶ ದೊಡ್ಡಮನಿ, ಸಿ.ಬಿ. ಕಾಳೆ, ಶಂಕರ ಕಾರದಕಟ್ಟಿ, ಈರಪ್ಪ ಹೆಬಸೂರ, ಆನಂದ ಅರಕೆರೆ, ಸುನೀಲ ಶಿಂಧೆ, ಸಂಜು ಚಟ್ಟಿ, ವಿಶಾಲ ಗೋಕಾವಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

“ದಾನಿಗಳ ಹೆಸರನ್ನು ಸ್ಮರಿಸುವುದಕ್ಕೆ ವಿರೋಧವಿಲ್ಲ. ಆದರೆ ಐತಿಹಾಸಿಕ ದೇವಾಲಯಗಳ ರಥದ ಗಾಲಿಗಳ ಮೇಲೆ ಅನ್ಯಕೋಮಿನ ಮಹಿಳೆಯ ಹೆಸರು ಕೆತ್ತಿಸಿರುವುದು ಭಕ್ತರ ಭಾವನೆಗಳಿಗೆ ಧಕ್ಕೆ ತಂದಿದೆ.”

– ರಾಜೂ ಖಾನಪ್ಪನವರ, ಹಿಂದೂ ಸಂಘಟನೆಗಳ ಮುಖಂಡ

ಬೈಪಾಸ್ ನಿರ್ಧಾರ ಹಿಂಪಡೆಯಲು ರೈಲ್ವೆ ಇಲಾಖೆಗೆ ಆಗ್ರಹ

0

ವಿಜಯಸಾಕ್ಷಿ ಸುದ್ದಿ, ಗದಗ: ವಿಜಯಪುರ ಮಾರ್ಗಕ್ಕೆ ಸಂಚರಿಸುವ ಎಲ್ಲ ಪ್ರಯಾಣಿಕ ರೈಲುಗಳನ್ನು ಗದಗ ನಗರದ ಮುಖ್ಯ ರೈಲ್ವೆ ನಿಲ್ದಾಣದ ಮೂಲಕವೇ ಓಡಿಸಬೇಕು. ಹೊಂಬಳ ಗೇಟ್ ಸಮೀಪದ ಬೈಪಾಸ್ ನಿಲ್ದಾಣದ ಮೂಲಕ ರೈಲು ಸಂಚಾರ ನಡೆಸುವ ನಿರ್ಧಾರವನ್ನು ರೈಲ್ವೆ ಇಲಾಖೆ ಕೈಬಿಡಬೇಕು ಎಂದು ಬೆಟಗೇರಿ ರೈಲ್ವೆ ಹೋರಾಟ ಸಮಿತಿ ಅಧ್ಯಕ್ಷ ಗಣೇಶಸಿಂಗ್ ಬ್ಯಾಳಿ ಆಗ್ರಹಿಸಿದರು.

ನಗರದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೈಪಾಸ್ ನಿಲ್ದಾಣದಲ್ಲಿ ಸಮರ್ಪಕ ಮೂಲಸೌಕರ್ಯಗಳ ಕೊರತೆಯಿದ್ದು, ಅಲ್ಲಿಂದ ನಗರಕ್ಕೆ ಸಂಪರ್ಕ ಸಾಧಿಸುವುದು ಪ್ರಯಾಣಿಕರಿಗೆ ತೊಂದರೆಯಾಗಲಿದೆ. ಹೀಗಾಗಿ ಪ್ರಯಾಣಿಕರ ಹಿತದೃಷ್ಟಿಯಿಂದ ವಿಜಯಪುರ ಮಾರ್ಗದ ರೈಲುಗಳನ್ನು ಗದಗ ಮುಖ್ಯ ರೈಲ್ವೆ ನಿಲ್ದಾಣದ ಮೂಲಕವೇ ಸಂಚರಿಸಬೇಕು ಎಂದು ಒತ್ತಾಯಿಸಿದರು.

ರೈಲುಗಳನ್ನು ತಿರುಗಿಸಲು ತಾಂತ್ರಿಕ ಸಮಸ್ಯೆಗಳಿವೆ ಎಂಬ ಕಾರಣವನ್ನು ರೈಲ್ವೆ ಇಲಾಖೆ ನೀಡುತ್ತಿದೆ. ಆದರೆ ಲೊಕೊಮೊಟಿವ್ ವ್ಯವಸ್ಥೆ ಅಳವಡಿಸಿಕೊಂಡರೆ ಈ ಸಮಸ್ಯೆ ನಿವಾರಣೆಯಾಗುತ್ತದೆ. ಅಗತ್ಯವಿದ್ದರೆ ಸರಕು ಸಾಗಣೆ ರೈಲುಗಳನ್ನು ಬೈಪಾಸ್ ಮಾರ್ಗದಲ್ಲಿ ಓಡಿಸಬಹುದು. ಆದರೆ ಪ್ರಯಾಣಿಕರ ರೈಲುಗಳನ್ನು ಬೈಪಾಸ್‌ಗೆ ವರ್ಗಾಯಿಸುವುದು ಸಮಂಜಸವಲ್ಲ ಎಂದು ಹೇಳಿದರು.

ಈ ಕುರಿತು ರೈಲ್ವೆ ಸಚಿವರು, ರೈಲ್ವೆ ಮಂಡಳಿ ಅಧ್ಯಕ್ಷರು, ಪ್ರಧಾನ ವ್ಯವಸ್ಥಾಪಕರು ಹಾಗೂ ವಿಭಾಗೀಯ ವ್ಯವಸ್ಥಾಪಕರಿಗೆ ಇ-ಮೇಲ್ ಮೂಲಕ ಮನವಿ ಸಲ್ಲಿಸಲಾಗುವುದು. 15 ದಿನಗಳೊಳಗೆ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಸಮಾನ ಮನಸ್ಕ ಸಂಘ–ಸಂಸ್ಥೆಗಳೊಂದಿಗೆ ಸಭೆ ನಡೆಸಿ ಹೋರಾಟದ ರೂಪುರೇಷೆ ರೂಪಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಸಂಧ್ಯಾ ಗುಂಡಿ, ಮನ್ಸುಖ್‌ಲಾಲ್ ಪುಣೇಕರ್, ಎಸ್.ವಿ. ಸುಲಾಖೆ, ಬೋಜಪ್ಪ ಹೆಗ್ಗಡಿ, ಆಂಜನೇಯ ಗುಂತಕಲ್ ಹಾಗೂ ಅಶೋಕ ಅಂಗಡಿ ಉಪಸ್ಥಿತರಿದ್ದರು.

“ಸರಕು ಸಾಗಣೆ ರೈಲುಗಳನ್ನು ಬೈಪಾಸ್ ಮಾರ್ಗದಲ್ಲಿ ಓಡಿಸಬಹುದು. ಆದರೆ ಪ್ರಯಾಣಿಕರ ಹಿತದೃಷ್ಟಿಯಿಂದ ವಿಜಯಪುರ ಮಾರ್ಗದ ಎಲ್ಲ ರೈಲುಗಳು ಗದಗ ಮುಖ್ಯ ನಿಲ್ದಾಣದ ಮೂಲಕವೇ ಸಂಚರಿಸಬೇಕು.”

– ಗಣೇಶಸಿಂಗ್ ಬ್ಯಾಳಿ, ಅಧ್ಯಕ್ಷರು, ಬೆಟಗೇರಿ ರೈಲ್ವೆ ಹೋರಾಟ ಸಮಿತಿ

ಭಾವೈಕ್ಯತೆಯ ಕೇಂದ್ರಗಳಿಗೆ ಮೂಲಸೌಲಭ್ಯ ಕಲ್ಪಿಸಲು ಆಗ್ರಹ

0

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಪಟ್ಟಣದ ಭಾವೈಕ್ಯತೆಯ ಪ್ರತೀಕಗಳಾದ ಶ್ರೀ ಜ. ಫಕೀರೇಶ್ವರ ಮಠ ಹಾಗೂ ಹಜರತ್ ಮೆಹಬೂಬ ಸುಬಾನಿ ದರ್ಗಾ ಮಧ್ಯದ ಹಳ್ಳದ ದಂಡೆಯ ಬಳಿ ಸಾರ್ವಜನಿಕ ಶೌಚಾಲಯ ಮತ್ತು ಸ್ನಾನಗೃಹ ನಿರ್ಮಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆ ಕಾರ್ಯಕರ್ತರು ಸೋಮವಾರ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ತಾಲೂಕು ಕಾರ್ಯಾಧ್ಯಕ್ಷ ದೇವೇಂದ್ರ ಶಿಂಧೆ ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವರಾಜ ವಡವಿ, ಈ ಎರಡೂ ಧಾರ್ಮಿಕ ಕೇಂದ್ರಗಳಿಗೆ ಪ್ರತಿದಿನ ನೂರಾರು ಹಾಗೂ ವಿಶೇಷ ದಿನಗಳಲ್ಲಿ ಸಾವಿರಾರು ಭಕ್ತರು ಭೇಟಿ ನೀಡುತ್ತಾರೆ. ಆದರೆ ಅಗತ್ಯ ಮೂಲಸೌಲಭ್ಯಗಳ ಕೊರತೆ ಇರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಹೀಗಾಗಿ ಶೌಚಾಲಯ, ಸ್ನಾನಗೃಹ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿ ಶುಚಿತ್ವ ಕಾಪಾಡಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಇಮ್ರಾನ ಬಾವಿಕಟ್ಟಿ, ಮಲಿಕ ನಗಾರಿ, ತೌಸಿಫ ವಡ್ಡಟ್ಟಿ, ಅನ್ವರ್ ಬರದ್ವಾಡ, ಮೋದಿನ ಪರೀಟ, ಆಸಿಫ್ ಪಠಾಣ, ಮಂಜು ಭಜಂತ್ರಿ, ದೀಪಾ ಹರಿಪೂರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ರಸ್ತೆಗಳೇ ಅಭಿವೃದ್ಧಿಯ ಮಾನದಂಡ: ಶಾಸಕ ಕೆ. ನೇಮಿರಾಜ್ ನಾಯ್ಕ

0

ವಿಜಯಸಾಕ್ಷಿ ಸುದ್ದಿ, ಹಗರಿಬೊಮ್ಮನಹಳ್ಳಿ: ರಸ್ತೆಗಳು ಒಂದು ಪ್ರದೇಶದ ಅಭಿವೃದ್ಧಿ ಹಾಗೂ ನಾಗರಿಕತೆಯ ಮಾನದಂಡಗಳಾಗಿದ್ದು, ಉತ್ತಮ ರಸ್ತೆಗಳ ನಿರ್ಮಾಣದಿಂದ ಅಪಘಾತಗಳು ಕಡಿಮೆಯಾಗಿ ಜನರ ಅಮೂಲ್ಯ ಜೀವಗಳು ರಕ್ಷಣೆ ಪಡೆಯುತ್ತವೆ ಎಂದು ಶಾಸಕ ಕೆ. ನೇಮಿರಾಜ್ ನಾಯ್ಕ ಹೇಳಿದರು.

ಪಟ್ಟಣದ ಶ್ರೀ ಪಾಂಡುರಂಗ ದೇವಸ್ಥಾನದಿಂದ ಕೆಚ್ಚಿನಮಂಡೆ ರಸ್ತೆವರೆಗೆ ಸುಮಾರು 3 ಕಿ.ಮೀ. ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ಮುಖ್ಯಮಂತ್ರಿಗಳ ರಸ್ತೆ ಅಭಿವೃದ್ಧಿ ವಿಶೇಷ ಅನುದಾನದಡಿ 1 ಕೋಟಿ 65 ಲಕ್ಷ ರೂಪಾಯಿ ವೆಚ್ಚದಲ್ಲಿ ರಸ್ತೆ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಯಾವುದೇ ಕಾರಣಕ್ಕೂ ಕಳಪೆ ಕಾಮಗಾರಿಗೆ ಅವಕಾಶ ನೀಡಬಾರದು. ಗುತ್ತಿಗೆದಾರರು ಗುಣಮಟ್ಟದ ಸಾಮಗ್ರಿಗಳನ್ನು ಬಳಸಿ ರಸ್ತೆ ನಿರ್ಮಿಸಬೇಕು ಎಂದು ಸೂಚಿಸಿದರು.

ಈ ರಸ್ತೆ ಕಾಮಗಾರಿ ಪೂರ್ಣಗೊಂಡ ಬಳಿಕ ಮುಂದಿನ ಹಂತದಲ್ಲಿ ವಿವಿಧ ಅನುದಾನಗಳನ್ನು ತಂದು ಮಾಗಿ-ಮಾವಿನಹಳ್ಳಿವರೆಗೆ ರಸ್ತೆ ಅಭಿವೃದ್ಧಿ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ವಿಧಾನ ಪರಿಷತ್ ಚುನಾವಣೆಯ ಅಡ್ಡ ಮತದಾನದ ಕುರಿತು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಪಕ್ಷದಲ್ಲಿದ್ದು ಪಕ್ಷಕ್ಕೆ ದ್ರೋಹ ಮಾಡುವವರು ಮಾತೃದ್ರೋಹ ಮಾಡಿದಂತೆ. ತಾನು ಯಾವುದೇ ಸಂದರ್ಭದಲ್ಲೂ ಪಕ್ಷದ್ರೋಹ ಮಾಡುವವನಲ್ಲ ಎಂದು ಸ್ಪಷ್ಟಪಡಿಸಿದರು.

ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾ ಅಧ್ಯಕ್ಷ ಬಾದಾಮಿ ಮೃತ್ಯುಂಜಯ, ತಾಲೂಕು ಅಧ್ಯಕ್ಷ ವೈ. ಮಲ್ಲಿಕಾರ್ಜುನ, ವಿಶ್ವಕರ್ಮ ಸಮಾಜದ ಅಧ್ಯಕ್ಷ ಸಿದ್ಧರಾಜು, ನಾಣ್ಯಪುರ ಕೃಷ್ಣಮೂರ್ತಿ, ಚಿತ್ತವಾಡಗಿ ಪ್ರಕಾಶ್, ಗುತ್ತಿಗೆದಾರ ದೊಡ್ಡಬಸಪ್ಪ, ಶ್ರೀಕಾಂತ್ ಸೇರಿದಂತೆ ಕುರದಗಡ್ಡಿ ಗ್ರಾಮ ಹಾಗೂ ರೈತರ ಓಣಿಯ ನಿವಾಸಿಗಳು ಉಪಸ್ಥಿತರಿದ್ದರು.

“ರಸ್ತೆಗಳು ಅಭಿವೃದ್ಧಿಯ ಕನ್ನಡಿಯಾಗಿವೆ. ಗುಣಮಟ್ಟದ ರಸ್ತೆ ನಿರ್ಮಾಣದಿಂದ ಅಪಘಾತಗಳು ಕಡಿಮೆಯಾಗಿ ಜನರ ಜೀವ ರಕ್ಷಣೆ ಸಾಧ್ಯವಾಗುತ್ತದೆ.”

– ಕೆ. ನೇಮಿರಾಜ್ ನಾಯ್ಕ, ಶಾಸಕ

ಆರೋಗ್ಯವೇ ನಿಜವಾದ ಸಂಪತ್ತು: ಶಾಸಕ ಡಾ. ಚಂದ್ರು ಲಮಾಣಿ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಮನುಷ್ಯನಿಗೆ ಎಲ್ಲ ಸಂಪತ್ತುಗಳಿಗಿಂತ ಆರೋಗ್ಯ ಸಂಪತ್ತು ಅತ್ಯಂತ ಮುಖ್ಯವಾಗಿದ್ದು, ಉತ್ತಮ ಆರೋಗ್ಯವೇ ಅಭಿವೃದ್ಧಿಯ ರಹದಾರಿಯಾಗಿದೆ ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.

ಪಟ್ಟಣದ ಬಾಲಾಜಿ ಆಸ್ಪತ್ರೆಯಲ್ಲಿ ಭಾರತೀಯ ಜನತಾ ಪಾರ್ಟಿ ಶಿರಹಟ್ಟಿ ಮಂಡಲ, ಬಾಲಾಜಿ ಆಸ್ಪತ್ರೆ, ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆ ಹಾಗೂ ಜಯಪ್ರಿಯಾ ಕಣ್ಣಿನ ಆಸ್ಪತ್ರೆ, ಹುಬ್ಬಳ್ಳಿ ಸಹಯೋಗದಲ್ಲಿ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಧಾನಿ ನರೇಂದ್ರ ಮೋದಿ ಅವರ 12 ವರ್ಷಗಳ ಜನಪರ ಆಡಳಿತದ ಅಂಗವಾಗಿ ಹಮ್ಮಿಕೊಂಡಿದ್ದ ಈ ಶಿಬಿರದಲ್ಲಿ ಸಾರ್ವಜನಿಕರಿಗೆ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವ ಉದ್ದೇಶ ಹೊಂದಲಾಗಿದೆ. ಕಲುಷಿತ ವಾತಾವರಣ, ಕಲಬೆರಕೆ ಆಹಾರ ಹಾಗೂ ಒತ್ತಡದ ಜೀವನಶೈಲಿಯಿಂದ ಅನೇಕ ಆರೋಗ್ಯ ಸಮಸ್ಯೆಗಳು ಹೆಚ್ಚುತ್ತಿದ್ದು, ಗ್ರಾಮೀಣ ಭಾಗದ ಜನರಿಗೆ ತಜ್ಞ ವೈದ್ಯರ ಸೇವೆ ತಲುಪಿಸಲು ಇಂತಹ ಶಿಬಿರಗಳು ಸಹಕಾರಿಯಾಗುತ್ತವೆ ಎಂದು ಹೇಳಿದರು.

ಸಪ್ತಗಿರಿ ಆಸ್ಪತ್ರೆಯ ಡಾ. ನಂದಕುಮಾರ ಮಾತನಾಡಿ, ಬಡತನದ ಕಾರಣದಿಂದ ತಜ್ಞ ವೈದ್ಯರ ಚಿಕಿತ್ಸೆ ಪಡೆಯಲು ಸಾಧ್ಯವಾಗದವರಿಗೆ ಉಚಿತ ಆರೋಗ್ಯ ಶಿಬಿರಗಳು ವರದಾನವಾಗಿವೆ. ಜನಸೇವೆಯ ಕಾಳಜಿಯಿಂದ ಶಾಸಕ ಡಾ. ಚಂದ್ರು ಲಮಾಣಿ ಇಂತಹ ಜನಪರ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದಾರೆ ಎಂದು ಶ್ಲಾಘಿಸಿದರು.

ಶಿಬಿರದಲ್ಲಿ ಹೃದಯ, ಮೂಳೆ, ಕಿಡ್ನಿ ಹಾಗೂ ನರರೋಗ ತಜ್ಞರು ಭಾಗವಹಿಸಿ ಆರೋಗ್ಯ ತಪಾಸಣೆ ನಡೆಸಿದರು. ಇಸಿಜಿ, 2-ಡಿ ಇಕೋ ಪರೀಕ್ಷೆಗಳು ಹಾಗೂ ಔಷಧಿಗಳನ್ನು ಉಚಿತವಾಗಿ ವಿತರಿಸಲಾಯಿತು. ಸುಮಾರು 300ರಿಂದ 400ಕ್ಕೂ ಹೆಚ್ಚು ಜನರು ಶಿಬಿರದ ಪ್ರಯೋಜನ ಪಡೆದುಕೊಂಡರು.

ಈ ಸಂದರ್ಭದಲ್ಲಿ ತಾಪಂ ಮಾಜಿ ಅಧ್ಯಕ್ಷ ಅಶೋಕ ಪಲ್ಲೆದ, ಗಿರೀಶ ಚೌರಡ್ಡಿ, ಗಂಗಾಧರ ಮೆಣಸಿನಕಾಯಿ, ನಿಂಗಪ್ಪ ಬನ್ನಿ, ಜಾನು ಲಮಾಣಿ, ಬಸವರಾಜ ಚಕ್ರಸಾಲಿ, ರಮೇಶ ಲಮಾಣಿ, ಹನುಮಂತ ಲಮಾಣಿ, ಈರಣ್ಣ ಅಕ್ಕೂರ, ಡಾ. ವೆಂಕಟೇಶ ಮಾಡೊಳ್ಳಿ, ಡಾ. ಪ್ರಭು, ಡಾ. ಗೋಪಾಲಕೃಷ್ಣ, ಡಾ. ನವೀನ್, ಡಾ. ಭರತ ಹಾಗೂ ಆಸ್ಪತ್ರೆಯ ಸಿಬ್ಬಂದಿ ಉಪಸ್ಥಿತರಿದ್ದರು.

“ಧನ-ಸಂಪತ್ತಿಗಿಂತ ಆರೋಗ್ಯ ಸಂಪತ್ತು ದೊಡ್ಡದು. ಆರೋಗ್ಯವಂತ ಸಮಾಜ ನಿರ್ಮಾಣವೇ ನಮ್ಮ ಗುರಿಯಾಗಿದ್ದು, ಜನರಿಗೆ ಗುಣಮಟ್ಟದ ವೈದ್ಯಕೀಯ ಸೇವೆ ತಲುಪಿಸುವುದು ನಮ್ಮ ಆದ್ಯತೆ.”

– ಡಾ. ಚಂದ್ರು ಲಮಾಣಿ, ಶಾಸಕ

ಯೋಗ ಜೀವನದ ಅವಿಭಾಜ್ಯ ಅಂಗ: ಶ್ರೀ ವಿಮಲರೇಣುಕ ವೀರಮುಕ್ತಿಮುನಿ ಸ್ವಾಮೀಜಿ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಯೋಗವು ನಮ್ಮ ಸಂಸ್ಕೃತಿ ಮತ್ತು ಸಂಪ್ರದಾಯಗಳ ಅವಿಭಾಜ್ಯ ಅಂಗವಾಗಿದ್ದು, ದೇಹ, ಮನಸ್ಸು ಮತ್ತು ಭಾವನೆಗಳನ್ನು ಸಮತೋಲನಗೊಳಿಸುವ ಸಮಗ್ರ ಜೀವನ ಪದ್ಧತಿಯಾಗಿದೆ ಎಂದು ಮುಕ್ತಿಮಂದಿರ ಧರ್ಮಕ್ಷೇತ್ರದ ಪಟ್ಟಾಧ್ಯಕ್ಷ ಶ್ರೀ ವಿಮಲರೇಣುಕ ವೀರಮುಕ್ತಿಮುನಿ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.

ಸಮೀಪದ ಮುಕ್ತಿಮಂದಿರ ಧರ್ಮಕ್ಷೇತ್ರದಲ್ಲಿ ಭಾರತೀಯ ಜನತಾ ಪಾರ್ಟಿ ವತಿಯಿಂದ ಆಯೋಜಿಸಿದ್ದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಯೋಗದ ಮಹತ್ವವನ್ನು ಧರ್ಮಗ್ರಂಥಗಳು ಪ್ರಾಚೀನ ಕಾಲದಿಂದಲೇ ಸಾರಿದ್ದು, ಇಂದು ಅದು ವಿಶ್ವಾದ್ಯಂತ ಮಾನ್ಯತೆ ಪಡೆದಿದೆ. ಯೋಗವನ್ನು ಜೀವನದ ಭಾಗವನ್ನಾಗಿ ಮಾಡಿಕೊಂಡಾಗ ಅದರ ನಿಜವಾದ ಮಹತ್ವ ಅರಿವಾಗುತ್ತದೆ ಎಂದು ಹೇಳಿದರು.

ಶಾಸಕ ಡಾ. ಚಂದ್ರು ಲಮಾಣಿ ಮಾತನಾಡಿ, ಜೂನ್ 21 ವರ್ಷದಲ್ಲಿ ಅತಿ ಹೆಚ್ಚು ಹಗಲು ಇರುವ ದಿನವಾಗಿದ್ದು, ಯೋಗದ ಮಹತ್ವವನ್ನು ಜಗತ್ತಿಗೆ ಸಾರುವ ಉದ್ದೇಶದಿಂದ ಈ ದಿನವನ್ನು ಅಂತಾರಾಷ್ಟ್ರೀಯ ಯೋಗ ದಿನವನ್ನಾಗಿ ಆಚರಿಸಲಾಗುತ್ತಿದೆ.

ಯೋಗವು ಭಾರತವು ವಿಶ್ವಕ್ಕೆ ನೀಡಿದ ಶ್ರೇಷ್ಠ ಕೊಡುಗೆಗಳಲ್ಲಿ ಒಂದಾಗಿದ್ದು, ಅದನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಉತ್ತಮ ಆರೋಗ್ಯ ಪಡೆಯಬೇಕು ಎಂದರು.

ಕಾರ್ಯಕ್ರಮದಲ್ಲಿ ನಸುಕಿನ ಜಾವದಿಂದಲೇ ನೂರಾರು ಕಾರ್ಯಕರ್ತರು ಹಾಗೂ ಸಾರ್ವಜನಿಕರು ಸೇರಿ ಯೋಗಗುರುಗಳ ಮಾರ್ಗದರ್ಶನದಲ್ಲಿ ವಿವಿಧ ಯೋಗಾಸನ ಮತ್ತು ಪ್ರಾಣಾಯಾಮಗಳನ್ನು ಅಭ್ಯಾಸ ಮಾಡಿದರು.

ಶಾಸಕ ಡಾ. ಚಂದ್ರು ಲಮಾಣಿ ಕೂಡ ಕಾರ್ಯಕರ್ತರೊಂದಿಗೆ ಯೋಗಾಭ್ಯಾಸದಲ್ಲಿ ಪಾಲ್ಗೊಂಡರು.

ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಸುನೀಲ ಮಹಾಂತಶೆಟ್ಟರ, ಅನಿಲ ಮುಳಗುಂದ, ಸೋಮೇಶ ಉಪನಾಳ, ವಿಜಯ ಹತ್ತಿಕಾಳ, ಅಶೋಕ ಶಿರಹಟ್ಟಿ, ಮಹಾದೇವಪ್ಪ ಅಣ್ಣಿಗೇರಿ, ಡಿ.ವೈ. ಹುನಗುಂದ, ಕೃಷ್ಣ ಬಿದರಳ್ಳಿ, ನಿಂಗಪ್ಪ ಬನ್ನಿ, ಗಂಗಾಧರ ಮೆಣಸಿನಕಾಯಿ, ದುಂಡೇಶ ಕೊಟಗಿ, ಈರಣ್ಣ ಅಕ್ಕೂರ, ಬಾಬಣ್ಣ ವೇರ್ಣೆಕರ ಸೇರಿದಂತೆ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.

ಮೊಹರಂ ವೇಳೆ ಶಾಂತಿ ಕದಡುವವರ ವಿರುದ್ಧ ಕಠಿಣ ಕ್ರಮ: ಸಿಪಿಐ ವಿಕಾಸ್ ಲಮಾಣಿ

0

ವಿಜಯಸಾಕ್ಷಿ ಸುದ್ದಿ, ಹಗರಿಬೊಮ್ಮನಹಳ್ಳಿ: ಮೊಹರಂ ಆಚರಣೆಯ ಸಂದರ್ಭದಲ್ಲಿ ಎಲ್ಲರೂ ಸೌಹಾರ್ದತೆ ಮತ್ತು ಸಹೋದರತ್ವದಿಂದ ನಡೆದುಕೊಳ್ಳಬೇಕು. ಯಾರೇ ಆಗಲಿ ಮತೀಯ ಭಾವನೆಗಳಿಗೆ ಧಕ್ಕೆ ತಂದು ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಯತ್ನಿಸಿದರೆ ಅಂತಹವರ ವಿರುದ್ಧ ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸರ್ಕಲ್ ಪೊಲೀಸ್ ಇನ್ಸ್‌ಪೆಕ್ಟರ್ ವಿಕಾಸ್ ಲಮಾಣಿ ಎಚ್ಚರಿಕೆ ನೀಡಿದರು.

ಪಟ್ಟಣದ ಪೊಲೀಸ್ ಠಾಣೆಯಲ್ಲಿ ಮೊಹರಂ ಹಬ್ಬದ ಅಂಗವಾಗಿ ಆಯೋಜಿಸಿದ್ದ ಶಾಂತಿ ಸಭೆಯಲ್ಲಿ ಮಾತನಾಡಿದ ಅವರು, ಮೊಹರಂ ಮೆರವಣಿಗೆ ಹಾಗೂ ಅಲೈಕುಣಿ ಕಾರ್ಯಕ್ರಮಗಳ ವೇಳೆ ಎಲ್ಲರೂ ವೈಯಕ್ತಿಕ ಜವಾಬ್ದಾರಿಯಿಂದ ವರ್ತಿಸಬೇಕು. ಮಸೀದಿಗಳ ಸುತ್ತಮುತ್ತ ಸಿಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಸಿಕೊಳ್ಳುವ ಮೂಲಕ ಅಹಿತಕರ ಘಟನೆಗಳನ್ನು ತಡೆಯಲು ಸಹಕಾರಿಯಾಗಲಿದೆ ಎಂದು ಹೇಳಿದರು.

ಪುರಸಭೆ ಸದಸ್ಯ ಗಣೇಶ್ ಮಾತನಾಡಿ, ಮೊಹರಂ ಅತ್ಯಂತ ಭಾವನಾತ್ಮಕ ಹಾಗೂ ಸೂಕ್ಷ್ಮ ಹಬ್ಬವಾಗಿದ್ದು, ಎಲ್ಲರೂ ಸಂಯಮ ಮತ್ತು ಪರಸ್ಪರ ಗೌರವದಿಂದ ಆಚರಿಸಬೇಕು ಎಂದರು.

ಕಾಂಗ್ರೆಸ್ ಮುಖಂಡ ಸೆರೆಗಾರ್ ಹುಚ್ಚಪ್ಪ ಮಾತನಾಡಿ, ಹಗರಿಬೊಮ್ಮನಹಳ್ಳಿ ತಾಲೂಕಿನಲ್ಲಿ ಕೆಲ ಅಪರೂಪದ ಘಟನೆಗಳನ್ನು ಹೊರತುಪಡಿಸಿದರೆ ಎಲ್ಲ ಧರ್ಮದ ಜನರು ಹೊಂದಾಣಿಕೆಯಿಂದ ಹಬ್ಬಗಳನ್ನು ಆಚರಿಸುತ್ತಾ ಬಂದಿದ್ದಾರೆ. ಈ ಬಾರಿಯೂ ಅದೇ ಸೌಹಾರ್ದತೆ ಮುಂದುವರಿಯಬೇಕು ಎಂದು ಹೇಳಿದರು.

ಬಾರಿಕರ ಬಾಪೂಜಿ ಮಾತನಾಡಿ, ಇಂದಿನ ಯುವಕರು ವಿದ್ಯಾವಂತರಾಗಿದ್ದು, ಜವಾಬ್ದಾರಿಯುತವಾಗಿ ವರ್ತಿಸಿದರೆ ಯಾವುದೇ ರೀತಿಯ ವಿವಾದಗಳಿಗೆ ಅವಕಾಶ ಇರುವುದಿಲ್ಲ ಎಂದರು.

ಪತ್ರಕರ್ತ ಸರ್ದಾರ್ ಯಮನೂರಪ್ಪ ಮಾತನಾಡಿ, ಮೊಹರಂ ಹಿಂದೂ-ಮುಸ್ಲಿಂ ಭಾವೈಕ್ಯದ ಸಂಕೇತವಾಗಿದ್ದು, ಹಬ್ಬವನ್ನು ಶಾಂತಿಯುತವಾಗಿ ಆಚರಿಸಬೇಕು. ಇತ್ತೀಚೆಗೆ ಯುವಕರು ಬೈಕ್ ವೀಲಿಂಗ್ ಹಾಗೂ ಸೈಲೆನ್ಸರ್ ಸದ್ದು ಮಾಡುವ ಮೂಲಕ ಸಾರ್ವಜನಿಕರಿಗೆ, ವಿಶೇಷವಾಗಿ ವೃದ್ಧರಿಗೆ ತೊಂದರೆ ಉಂಟುಮಾಡುತ್ತಿರುವುದು ಕಂಡು ಬರುತ್ತಿದೆ. ಇಂತಹ ಚಟುವಟಿಕೆಗಳ ಮೇಲೆ ಕಟ್ಟುನಿಟ್ಟಿನ ನಿಗಾ ವಹಿಸಬೇಕು ಎಂದು ಸಲಹೆ ನೀಡಿದರು.

ಕಡ್ಲೆಬಾಳು ಗ್ರಾಮದ ಮುಸ್ಲಿಂ ಮುಖಂಡರಾದ ಇಮಾಮ್ ಸಾಬ್ ಬಲ್ಲಾಹುಣಿಸಿ ಹಾಗೂ ಕರೀಂಸಾಬ್ ಶಾಂತಿ ಸಭೆಯ ಕುರಿತು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಪ್ರಭಾರಿ ಪಿಎಸ್‌ಐ ಉಮಾಪತಿ ನಾಯಕ್, ನೈರ್ಮಲ್ಯಾಧಿಕಾರಿ ಕೆ. ವಿಜಯಲಕ್ಷ್ಮಿ, ಎಸ್.ಬಿ. ಹನುಮಂತು, ಮಲ್ಲೇಶ್ ನಾಯಕ್ ಸೇರಿದಂತೆ ಪೊಲೀಸ್ ಸಿಬ್ಬಂದಿ ಉಪಸ್ಥಿತರಿದ್ದರು.

ಇದಲ್ಲದೆ ಅರಸೀಕೆರೆ ಹನುಮಂತಪ್ಪ, ಸರ್ದಾರ್ ಅಂಬಣ್ಣ, ಚಿಗರಿ ಮಾರುತಿ, ವಿ. ಸೋಮಣ್ಣ, ಎಂ. ಇಮಾಮ್‌ಸಾಬ್, ಬಿ. ಮೌಲಾಸಾಬ್, ಸಣ್ಣ ಬುಡೇನ್‌ಸಾಬ್, ಅಕ್ಕಂಡಿ ಯಮನೂರ್, ಪುಂಡಿ ಜಮಾಲ್‌ಸಾಬ್, ಮೋರಿಗೇರಿ ನಾಗಪ್ಪ, ಕುರದಗಡ್ಡಿ ಸಿದ್ದಪ್ಪ, ಬಂಡಿ ಮಾಬುಸಾಬ್, ಪೈಂಟರ್ ವೀರೇಶ್, ಶಾಮಣ್ಣ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳ ದೈವಸ್ಥರು, ಮುಖಂಡರು, ಗ್ರಾಮಸ್ಥರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.

“ಮೊಹರಂ ಆಚರಣೆಯಲ್ಲಿ ಎಲ್ಲರೂ ಸ್ನೇಹ, ಸೌಹಾರ್ದತೆಯಿಂದ ನಡೆದುಕೊಳ್ಳಬೇಕು. ಮತೀಯ ಭಾವನೆಗಳಿಗೆ ಧಕ್ಕೆ ತಂದು ಸಮಾಜದ ಶಾಂತಿ ಕದಡುವವರ ವಿರುದ್ಧ ಯಾವುದೇ ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳಲಾಗುವುದು.”

– ವಿಕಾಸ್ ಲಮಾಣಿ, ಸಿಪಿಐ, ಹಗರಿಬೊಮ್ಮನಹಳ್ಳಿ

ಯೋಗ ನಿತ್ಯ ಜೀವನದ ಭಾಗವಾಗಲಿ: ಡಾ. ಸಿದ್ದೇಶ್ವರ ಶಿವಸಾಲಿ

0

ವಿಜಯಸಾಕ್ಷಿ ಸುದ್ದಿ, ಹಗರಿಬೊಮ್ಮನಹಳ್ಳಿ: ಯೋಗವು ಕೇವಲ ಒಂದು ದಿನದ ಆಚರಣೆಗೆ ಸೀಮಿತವಾಗದೆ, ಪ್ರತಿದಿನದ ಜೀವನದ ಅವಿಭಾಜ್ಯ ಅಂಗವಾಗಿರಬೇಕು ಎಂದು ಡಾ. ಸಿದ್ದೇಶ್ವರ ಶಿವಸಾಲಿ ಹೇಳಿದರು.

ಪಟ್ಟಣದ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ಆವರಣದಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯೋಗವು ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ನೆಮ್ಮದಿ, ಏಕಾಗ್ರತೆ ಹಾಗೂ ಆತ್ಮವಿಶ್ವಾಸ ವೃದ್ಧಿಗೆ ಸಹಕಾರಿಯಾಗಿದೆ. ಮಕ್ಕಳಲ್ಲಿ ಚಿಕ್ಕ ವಯಸ್ಸಿನಿಂದಲೇ ಯೋಗಾಭ್ಯಾಸದ ಅಭ್ಯಾಸ ಬೆಳೆಸಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಕಾರ್ಯದರ್ಶಿ ಜಿ. ಬಸವನಗೌಡ ಮಾತನಾಡಿ, ಯೋಗವು ಆರೋಗ್ಯದ ಜೀವಾಳವಾಗಿದ್ದು, ನಿಯಮಿತ ಅಭ್ಯಾಸದಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದರು.

ಕಾರ್ಯಕ್ರಮದಲ್ಲಿ ಯೋಗದ ವಿವಿಧ ಆಸನಗಳ ಪ್ರದರ್ಶನ, ಸಮೂಹ ಯೋಗಾಭ್ಯಾಸ ಹಾಗೂ ಯೋಗದ ಮಹತ್ವದ ಕುರಿತು ಜಾಗೃತಿ ಕಾರ್ಯಕ್ರಮಗಳು ನಡೆದವು. ವಿದ್ಯಾಕೇಂದ್ರದ ವಿವಿಧ ಪ್ರಕಲ್ಪಗಳ 1,118 ವಿದ್ಯಾರ್ಥಿಗಳು ಸಮೂಹ ಯೋಗಾಸನದಲ್ಲಿ ಭಾಗವಹಿಸಿ ಗಮನ ಸೆಳೆದರು.

ಈ ಸಂದರ್ಭದಲ್ಲಿ ಸಹಕಾರ್ಯದರ್ಶಿ ದುರ್ಗಣ್ಣ, ಪ್ರಧಾನಾಚಾರ್ಯ ಹೆಚ್.ಎ. ರಂಗನಾಥ, ಮಂಜುನಾಥ ನಂದಿ, ನಾರಾಯಣ ಕೆರೂರ, ಸೋಮನಗೌಡ, ಪ್ರಭುದೇವ್, ಮಧುಕರ್, ವಿನಯ್, ಕೆ. ನಾಗರಾಜ, ಆನಂದ್ ಕಡ್ಲಿ ಸೇರಿದಂತೆ ಪಾಲಕರು, ಶಿಕ್ಷಕರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

ವೀರೇಶ್ ವಾಲಿ ಸ್ವಾಗತಿಸಿದರು. ಕುಮಾರ್ ಆಚಾರ್ ವಂದಿಸಿದರು. ವಿನಯ್ ಕಾರ್ಯಕ್ರಮ ನಿರೂಪಿಸಿದರು.

ಸೌಹಾರ್ದದ ಹಾದಿಯಲ್ಲಿ ಮೊಹರಂ ಆಚರಿಸಿ: ಸಿಪಿಐ ಅಯ್ಯನಗೌಡ್ರ ಪಾಟೀಲ

0

ವಿಜಯಸಾಕ್ಷಿ ಸುದ್ದಿ, ಡಂಬಳ: ಹಿಂದೂ-ಮುಸ್ಲಿಮರ ಭಾವೈಕ್ಯತೆ ಹಾಗೂ ಸೌಹಾರ್ದದ ಸಂಕೇತವಾಗಿರುವ ಮೊಹರಂ ಹಬ್ಬವನ್ನು ಎಲ್ಲರೂ ಶಾಂತಿಯುತವಾಗಿ ಆಚರಿಸಬೇಕು ಎಂದು ಮುಂಡರಗಿ ಪೊಲೀಸ್ ಠಾಣೆಯ ಸಿಪಿಐ ಅಯ್ಯನಗೌಡ್ರ ಪಾಟೀಲ ಹೇಳಿದರು.

ಗ್ರಾಮದ ಪೊಲೀಸ್ ಹೊರಠಾಣೆಯಲ್ಲಿ ಮೊಹರಂ ಹಬ್ಬದ ಅಂಗವಾಗಿ ಆಯೋಜಿಸಿದ್ದ ಶಾಂತಿ ಪಾಲನಾ ಸಭೆಯಲ್ಲಿ ಅವರು ಮಾತನಾಡಿದರು. ಹಬ್ಬಗಳು ಸಮಾಜದಲ್ಲಿ ಸೌಹಾರ್ದ, ಸಹಬಾಳ್ವೆ ಮತ್ತು ಪರಸ್ಪರ ವಿಶ್ವಾಸವನ್ನು ಬಲಪಡಿಸುವ ಮಾಧ್ಯಮಗಳಾಗಿವೆ. ಪ್ರತಿವರ್ಷದಂತೆ ಈ ಬಾರಿಯೂ ಮೊಹರಂ ಹಬ್ಬವನ್ನು ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ಆಚರಿಸಬೇಕು ಎಂದು ತಿಳಿಸಿದರು.

ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡದೆ, ಹಬ್ಬದ ಆಚರಣೆಯಲ್ಲಿ ಸಾರ್ವಜನಿಕರು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಬೇಕು. ಶಾಂತಿ, ಸೌಹಾರ್ದ ಮತ್ತು ಪರಸ್ಪರ ಗೌರವದ ವಾತಾವರಣದಲ್ಲಿ ಹಬ್ಬವನ್ನು ಆಚರಿಸುವ ಮೂಲಕ ಉತ್ತಮ ಸಂದೇಶ ನೀಡಬೇಕು ಎಂದು ಕರೆ ನೀಡಿದರು.

ಸಭೆಯಲ್ಲಿ ಗ್ರಾಮಸ್ಥರು ಮೊಹರಂ ಆಚರಣೆಗೆ ಸಂಬಂಧಿಸಿದಂತೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿ, ಹಬ್ಬವನ್ನು ಶಾಂತಿಯುತ ಹಾಗೂ ಸುವ್ಯವಸ್ಥಿತವಾಗಿ ನಡೆಸಲು ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಸಿದ್ಧಪ್ಪ ಬಂಡಾರಿ, ಶಿವಾನಂದ ಬಂಡಿ, ರಜಾಕಸಾಬ, ರಾಜೇಸಾಬ ಹಿರೇಮನಿ, ಆರ್. ಆಲೂರ, ರಜಾಸಾಬ ಹುಬ್ಬಳ್ಳಿ, ಸಿದ್ದಪ್ಪ ಹೊಂಬಳ, ಮಳ್ಳಪ್ಪ ಕರಿಗಾರ, ಸೋಮಲಿಂಗಪ್ಪ ತಳಗೇರಿ, ಲಕ್ಷ್ಮಣ ಬೇಟಗೇರಿ, ಕೆ.ಎಂ. ಮಠದ, ಮಹೇಶ ಗುಡ್ಡದ, ಎಸ್.ಐ. ಮಠದ, ಮಹಬೂಬಲಿ ಮೂಲಿಮನಿ, ಹೆಡ್ ಕಾನ್‌ಸ್ಟೇಬಲ್ ಎಸ್.ಎಸ್. ಕಂಚಗಾರ, ಪೊಲೀಸ್ ಸಿಬ್ಬಂದಿಗಳಾದ ಬಾಬುಜಾನ ಕಮ್ಮಾರ, ನಾಗರಾಜ ಪೂಜಾರ ಸೇರಿದಂತೆ ಗ್ರಾಮದ ಹಿರಿಯರು, ಯುವಕರು ಹಾಗೂ ಪೊಲೀಸ್ ಸಿಬ್ಬಂದಿ ಉಪಸ್ಥಿತರಿದ್ದರು.

error: Content is protected !!