Home Blog

ಚೆನ್ನಮ್ಮ ನಿಧನ: ಹಾಸನ ಜಿಲ್ಲೆಯಲ್ಲಿ ಎರಡು ದಿನ ಮದ್ಯ ಮಾರಾಟ ನಿಷೇಧ!

ಹಾಸನ: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ಪತ್ನಿ ಚೆನ್ನಮ್ಮ ಅವರ ನಿಧನದ ಹಿನ್ನೆಲೆಯಲ್ಲಿ ಹಾಸನ ಜಿಲ್ಲಾದ್ಯಂತ ಎರಡು ದಿನ ಮದ್ಯ ಮಾರಾಟ ನಿಷೇಧಿಸಲಾಗಿದೆ.

ಚೆನ್ನಮ್ಮ ಅವರ ಅಂತ್ಯಕ್ರಿಯೆ ಸೋಮವಾರ ಹೊಳೆನರಸೀಪುರ ತಾಲೂಕಿನ ಹರದನಹಳ್ಳಿ ಗ್ರಾಮದ ಸಮೀಪದ ಕ್ಯಾತನಹಳ್ಳಿ ಗ್ರಾಮದ ಜಮೀನಿನಲ್ಲಿ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಇಂದು ಹಾಗೂ ಸೋಮವಾರ ಜಿಲ್ಲೆಯಲ್ಲಿ ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಆದೇಶ ಹೊರಡಿಸಿದ್ದಾರೆ.

ಇನ್ನು ಚೆನ್ನಮ್ಮ ಅವರ ಅಂತ್ಯಸಂಸ್ಕಾರಕ್ಕೆ ಸಿದ್ಧತೆಗಳು ಭರದಿಂದ ಸಾಗಿವೆ. ಶಾಸಕ ಸಿ.ಎನ್. ಬಾಲಕೃಷ್ಣ ಅವರು ಸ್ಥಳದಲ್ಲೇ ಮೊಕ್ಕಾಂ ಹೂಡಿ ಸಿದ್ಧತಾ ಕಾರ್ಯಗಳನ್ನು ಪರಿಶೀಲಿಸುತ್ತಿದ್ದಾರೆ.

ಇಂದು ರಾತ್ರಿ 8 ಗಂಟೆಯಿಂದ ಸೋಮವಾರ ಬೆಳಗ್ಗೆ 11 ಗಂಟೆಯವರೆಗೆ ಹೊಳೆನರಸೀಪುರದಲ್ಲಿರುವ ಮಾಜಿ ಸಚಿವ ಎಚ್.ಡಿ. ರೇವಣ್ಣ ಅವರ ನಿವಾಸದಲ್ಲಿ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

ಬಳಿಕ ಪೂಜಾ ವಿಧಿವಿಧಾನಗಳು ನೆರವೇರಲಿದ್ದು, ನಂತರ ಚೆನ್ನಮ್ಮ ಅವರ ಪಾರ್ಥಿವ ಶರೀರವನ್ನು ಕ್ಯಾತನಹಳ್ಳಿಗೆ ತರಲಾಗುತ್ತದೆ. ಅಲ್ಲಿ ಕೆಲಕಾಲ ಸಾರ್ವಜನಿಕ ಅಂತಿಮ ದರ್ಶನಕ್ಕೆ ಅವಕಾಶ ನೀಡಿದ ಬಳಿಕ ಮಧ್ಯಾಹ್ನ 2 ಗಂಟೆಯ ನಂತರ ಅಂತ್ಯಕ್ರಿಯೆ ನೆರವೇರಲಿದೆ.

ಚೆನ್ನಮ್ಮ ಅವರ ಅಂತ್ಯಸಂಸ್ಕಾರವನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಗುವುದು ಎಂದು ಶಾಸಕ ಸಿ.ಎನ್. ಬಾಲಕೃಷ್ಣ ತಿಳಿಸಿದ್ದಾರೆ.

 

ಗದಗ: ಕರ್ತವ್ಯ ನಿಷ್ಠೆಯೇ ಗೃಹರಕ್ಷಕರ ದೊಡ್ಡ ಶಕ್ತಿ: ಅಪ್ಪಣ್ಣ ಇನಾಮತಿ!

0

ಗದಗ: ಕರ್ತವ್ಯ ನಿಷ್ಠೆ, ಶಿಸ್ತು ಹಾಗೂ ಸೇವಾ ಮನೋಭಾವದಿಂದ ಗೃಹರಕ್ಷಕರು ಸಮಾಜದ ವಿಶ್ವಾಸ ಗಳಿಸಬೇಕು. ಪ್ರಾಮಾಣಿಕ ಸೇವೆಯೇ ಗೃಹರಕ್ಷಕ ದಳದ ನಿಜವಾದ ಶಕ್ತಿಯಾಗಿದೆ ಎಂದು ಸಮಾಜಸೇವಕ ಅಪ್ಪಣ್ಣ ಎ. ಇನಾಮತಿ ಹೇಳಿದರು.

ಗದಗ ತಾಲೂಕಿನ ಕುರ್ತಕೋಟಿ ಗ್ರಾಮದಲ್ಲಿ ಗೃಹರಕ್ಷಕ ದಳ ಘಟಕದ ವತಿಯಿಂದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಿಬ್ಬಂದಿಗೆ ಆಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಗೃಹರಕ್ಷಕ ದಳದ ಸಿಬ್ಬಂದಿ ಪೊಲೀಸ್ ಇಲಾಖೆಗೆ ಪೂರಕವಾಗಿ ಸಾರ್ವಜನಿಕ ಸೇವೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದಾರೆ. ಸಾಧನೆ ಮಾಡಿದ ಸಿಬ್ಬಂದಿಯನ್ನು ಗೌರವಿಸುವುದು ಇತರರಿಗೂ ಪ್ರೇರಣೆಯಾಗಲಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಸಮಾದೇಷ್ಟ ಹಾಗೂ ನ್ಯಾಯವಾದಿ ಸಿ.ಬಿ. ಗೂಳರೆಡ್ಡಿ ಮಾತನಾಡಿ, ಕುರ್ತಕೋಟಿ ಗ್ರಾಮದಲ್ಲಿ ಗೃಹರಕ್ಷಕ ದಳದ ಚಟುವಟಿಕೆಗಳಿಗೆ ಎಪಿಎಂಸಿ ಮಾಜಿ ಸದಸ್ಯ ದಿ. ರವಿ ಇನಾಮತಿ ಅವರು ನೀಡಿರುವ ಪ್ರೋತ್ಸಾಹ ಮತ್ತು ಸಹಕಾರ ಅಪಾರವಾಗಿದೆ. ಅವರ ಸೇವೆ ಮತ್ತು ಬೆಂಬಲವನ್ನು ಸದಾ ಸ್ಮರಿಸಬೇಕಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ಚಿನ್ನದ ಪದಕ ಪುರಸ್ಕೃತ ಹಾಗೂ ಜಿಲ್ಲಾ ಬೋಧಕರಾದ ಕಿರಣ್ ಕುಮಾರ್ ಕಟಗಿ, ರಾಜ್ಯ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ ಗದಗ ಜಿಲ್ಲೆಯನ್ನು ಪ್ರತಿನಿಧಿಸಿ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಟಿ.ಎಲ್. ರಾಜಕುಮಾರ್, ಕಚೇರಿ ಸಿಬ್ಬಂದಿ ಆರ್.ಎಂ. ಹುಡೆದ ಹಾಗೂ ಕುರ್ತಕೋಟಿ ಘಟಕದ ಪ್ರಭಾರ ಘಟಕಾಧಿಕಾರಿ ವಿಜಯಕುಮಾರ್ ಕರ್ಚಿಗಿ ಅವರನ್ನು ಕುರ್ತಕೋಟಿ ಗೃಹರಕ್ಷಕ ದಳ ಘಟಕದ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು.

ಕಾರ್ಯಕ್ರಮದಲ್ಲಿ ಗೃಹರಕ್ಷಕ ದಳದ ಅಧಿಕಾರಿಗಳು, ಸಿಬ್ಬಂದಿ ಬಸವರಾಜ ಹರ್ತಿ ಹಾಗೂ ಗಣ್ಯರು ಉಪಸ್ಥಿತರಿದ್ದರು.

18 ಪ್ರಕರಣಗಳಾದರೂ ಬುದ್ಧಿ ಬರಲಿಲ್ಲ..! ರೌಡಿಶೀಟರ್‌ಗೆ ಜಿಲ್ಲೆಯಿಂದ ಗಡಿಪಾರು ಶಿಕ್ಷೆ

0

ಗದಗ: ಅಕ್ರಮ ಜೂಜಿನ ದಂಧೆಯಲ್ಲಿ ನಿರಂತರವಾಗಿ ತೊಡಗಿ, ಹಲವು ಬಾರಿ ಪ್ರಕರಣ ದಾಖಲಾಗಿ ಶಿಕ್ಷೆಯಾಗಿದ್ದರೂ ತನ್ನ ಚಟುವಟಿಕೆಗಳನ್ನು ನಿಲ್ಲಿಸದ ರೌಡಿಶೀಟರ್ ರಾಜನಸಾ ವಿರುದ್ಧ ಗದಗ ಜಿಲ್ಲಾ ಪೊಲೀಸರು ಕಠಿಣ ಕ್ರಮ ಕೈಗೊಂಡಿದ್ದಾರೆ.

ಸಾರ್ವಜನಿಕ ಶಾಂತಿ ಹಾಗೂ ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟುಮಾಡುತ್ತಿದ್ದ ಹಿನ್ನೆಲೆಯಲ್ಲಿ ಆತನನ್ನು ಗದಗ ಜಿಲ್ಲೆಯಿಂದ ಶಿವಮೊಗ್ಗ ಜಿಲ್ಲೆಗೆ ಗಡಿಪಾರು ಮಾಡಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ಆದೇಶ ಹೊರಡಿಸಿದ್ದಾರೆ.

ಪೊಲೀಸರ ಮಾಹಿತಿ ಪ್ರಕಾರ, ರಾಜನಸಾ ಹಲವು ವರ್ಷಗಳಿಂದ ಬಾಂಬೆ ಮಟ್ಕಾ ಹಾಗೂ ಅಕ್ರಮ ಜೂಜಿನ ದಂಧೆ ನಡೆಸುತ್ತಿದ್ದು, ಆತನ ವಿರುದ್ಧ ಗದಗ ನಗರ ಪೊಲೀಸ್ ಠಾಣೆಯಲ್ಲಿ ಕರ್ನಾಟಕ ಪೊಲೀಸ್ ಕಾಯ್ದೆಯ ಕಲಂ 78(3) ಅಡಿಯಲ್ಲಿ 2013ರಿಂದ 2025ರವರೆಗೆ ಒಟ್ಟು 18 ಪ್ರಕರಣಗಳು ದಾಖಲಾಗಿವೆ.

ಈ ಪೈಕಿ 8 ಪ್ರಕರಣಗಳಲ್ಲಿ ನ್ಯಾಯಾಲಯ ಶಿಕ್ಷೆ ವಿಧಿಸಿದ್ದರೂ, ಆತ ತನ್ನ ಅಕ್ರಮ ಚಟುವಟಿಕೆಗಳನ್ನು ಮುಂದುವರಿಸಿದ್ದ ಎನ್ನಲಾಗಿದೆ.

ದಾಖಲೆಗಳ ಪ್ರಕಾರ, 2013ರಲ್ಲಿ ಎರಡು, 2015ರಲ್ಲಿ ಒಂದು, 2016ರಲ್ಲಿ ಎರಡು, 2017ರಲ್ಲಿ ಮೂರು, 2018ರಲ್ಲಿ ಎರಡು, 2019ರಲ್ಲಿ ಒಂದು, 2022ರಲ್ಲಿ ಮೂರು, 2023ರಲ್ಲಿ ಮೂರು ಹಾಗೂ 2025ರಲ್ಲಿ ಒಂದು ಪ್ರಕರಣ ದಾಖಲಾಗಿವೆ. ಎಲ್ಲ ಪ್ರಕರಣಗಳೂ ಅಕ್ರಮ ಜೂಜಾಟ ನಡೆಸಿದ ಆರೋಪಕ್ಕೆ ಸಂಬಂಧಿಸಿದವು.

ಪುನಃ ಪುನಃ ಪ್ರಕರಣಗಳಲ್ಲಿ ಭಾಗಿಯಾಗುತ್ತಿದ್ದರೂ ವರ್ತನೆ ಬದಲಿಸಿಕೊಳ್ಳದೆ ಸಾರ್ವಜನಿಕ ಶಾಂತಿ ಹಾಗೂ ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟುಮಾಡುತ್ತಿರುವ ಹಿನ್ನೆಲೆಯಲ್ಲಿ, ಗದಗ ನಗರ ಪೊಲೀಸ್ ಠಾಣೆ ಸಲ್ಲಿಸಿದ್ದ ಪ್ರಸ್ತಾವನೆಯನ್ನು ಪರಿಶೀಲಿಸಿದ ಜಿಲ್ಲಾ ಪೊಲೀಸ್ ಆಡಳಿತ, ಕರ್ನಾಟಕ ಪೊಲೀಸ್ ಕಾಯ್ದೆಯ ಗಡಿಪಾರು ಸಂಬಂಧಿತ ವಿಧಿಗಳಡಿ ರಾಜನಸಾನನ್ನು ಶಿವಮೊಗ್ಗ ಜಿಲ್ಲೆಗೆ ಗಡಿಪಾರು ಮಾಡುವ ಆದೇಶ ಹೊರಡಿಸಿದೆ.

ಜಿಲ್ಲೆಯಲ್ಲಿ ಅಕ್ರಮ ಜೂಜು, ಸಮಾಜಘಾತುಕ ಹಾಗೂ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗುವವರ ವಿರುದ್ಧ ಮುಂದೆಯೂ ಇದೇ ರೀತಿಯ ಕಠಿಣ ಕ್ರಮ ಮುಂದುವರಿಯಲಿದ್ದು, ಸಾರ್ವಜನಿಕ ಶಾಂತಿಗೆ ಭಂಗ ತರುವವರನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ಎಚ್ಚರಿಕೆ ನೀಡಿದ್ದಾರೆ.

ಎಸ್‌ಐಆರ್ ಕರ್ತವ್ಯದಲ್ಲಿದ್ದ ಅಂಗನವಾಡಿ ಕಾರ್ಯಕರ್ತೆ ಹೃದಯಾಘಾತದಿಂದ ಸಾವು!

0

ಗದಗ: ಎಸ್‌ಐಆರ್ ಕಾರ್ಯನಿರ್ವಹಿಸುತ್ತಿದ್ದ ಅಂಗನವಾಡಿ ಕಾರ್ಯಕರ್ತೆಯೊಬ್ಬರು ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಬಾಗೆವಾಡಿ ಗ್ರಾಮದಲ್ಲಿ ನಡೆದಿದೆ.

ಮೃತರನ್ನು ಬಾಗೆವಾಡಿ ಗ್ರಾಮದ ರತ್ನಮ್ಮ ಬಳಿಗಾರ (43) ಎಂದು ಗುರುತಿಸಲಾಗಿದೆ. ರತ್ನಮ್ಮ ಅವರು ಎಸ್‌ಐಆರ್ ಹಿನ್ನೆಲೆ ಬಿಎಲ್‌ಒ (BLO) ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಶುಕ್ರವಾರ ಸಂಜೆ ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ ಅವರು ಬಾಗೆವಾಡಿ ಗ್ರಾಮಕ್ಕೆ ಭೇಟಿ ನೀಡಿ ಎಸ್‌ಐಆರ್ ಕಾರ್ಯದ ಪ್ರಗತಿ ಪರಿಶೀಲನೆ ನಡೆಸಿದ್ದರು. ಈ ವೇಳೆ ಗ್ರಾಮದ ಮಹೇಶಗೌಡ ಪಾಟೀಲ ಅವರ ಮನೆಯಲ್ಲಿ ಶಾಸಕರು ಹಾಗೂ ಸಿಬ್ಬಂದಿಗೆ ಚಹಾ ವ್ಯವಸ್ಥೆ ಮಾಡಲಾಗಿತ್ತು.

ಸಭೆ ಮುಗಿದ ಬಳಿಕ ಚಹಾ ಕುಡಿಯುತ್ತಿದ್ದ ವೇಳೆ ರತ್ನಮ್ಮ ಅವರು ಏಕಾಏಕಿ ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ಮುಂದಾದರೂ, ಮಾರ್ಗಮಧ್ಯೆಯೇ ಅವರು ಮೃತಪಟ್ಟಿದ್ದಾರೆ.

ತೀವ್ರ ಹೃದಯಾಘಾತದಿಂದ ರತ್ನಮ್ಮ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಘಟನೆ ಸಂಬಂಧ ಮುಂಡರಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂಡರಗಿ ತಹಶೀಲ್ದಾರ್ ರ‍್ರಿಸ್ವಾಮಿ ಅವರು ತಾಲೂಕು ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ.

ಸಿಗ್ನಲ್‌ನಲ್ಲಿ ನಿಂತಿದ್ದ ಆಟೋಗೆ ಬಿಎಂಟಿಸಿ ಬಸ್ ಡಿಕ್ಕಿ; ಚಿಕಿತ್ಸೆ ಫಲಿಸದೆ ಚಾಲಕ ಸಾವು!

ಬೆಂಗಳೂರು: ಸಿಗ್ನಲ್‌ನಲ್ಲಿ ನಿಂತಿದ್ದ ಆಟೋ ರಿಕ್ಷಾಗೆ ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ಡಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಆಟೋ ಚಾಲಕ ಚಿಕಿತ್ಸೆ ಫಲಿಸದೆ ಮೃತಪಟ್ಟ ಘಟನೆ ಬೆಂಗಳೂರಿನ ಕೆ.ಆರ್. ಸರ್ಕಲ್‌ನಲ್ಲಿ ನಡೆದಿದೆ.

ಸಿಂಗಯ್ಯನಪಾಳ್ಯ ನಿವಾಸಿ ಕೃಷ್ಣಮೂರ್ತಿ (60) ಮೃತಪಟ್ಟ ಆಟೋ ಚಾಲಕರಾಗಿದ್ದಾರೆ. ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ತಕ್ಷಣವೇ ಸೇಂಟ್ ಮಾರ್ಥಾಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.

ಪೊಲೀಸರ ಮಾಹಿತಿ ಪ್ರಕಾರ, ಮಧ್ಯಾಹ್ನ ಸುಮಾರು 3.15 ಗಂಟೆಗೆ ಮೆಜೆಸ್ಟಿಕ್‌ನಿಂದ ಚಂದಾಪುರದತ್ತ ತೆರಳುತ್ತಿದ್ದ ಬಿಎಂಟಿಸಿ ಎಲೆಕ್ಟ್ರಿಕ್ ಬಸ್, ಕೆ.ಆರ್. ಸರ್ಕಲ್ ಇಳಿಜಾರು ರಸ್ತೆಯಲ್ಲಿ ಸಿಗ್ನಲ್‌ನಲ್ಲಿ ನಿಂತಿದ್ದ ಆಟೋ ರಿಕ್ಷಾದ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಆಟೋ ಪಕ್ಕದಲ್ಲೇ ಸಂಚರಿಸುತ್ತಿದ್ದ ಕಾರಿಗೆ ಅಪ್ಪಳಿಸಿದೆ. ಬಳಿಕ ನಿಯಂತ್ರಣ ತಪ್ಪಿದ ಬಸ್ ರಸ್ತೆ ಬದಿಯ ವಿದ್ಯುತ್ ಕಂಬ ಹಾಗೂ ಮರಕ್ಕೆ ಡಿಕ್ಕಿ ಹೊಡೆದು ನಿಂತಿದೆ.

ಅಪಘಾತದ ಬಳಿಕ ಬಸ್ ಚಾಲಕ ಬ್ರೇಕ್ ಫೇಲ್ ಆಗಿದೆ ಎಂದು ಹೇಳಿದ್ದಾನೆ ಎನ್ನಲಾಗಿದೆ. ಆದರೆ ಬಸ್ ಅನ್ನು ಟೋಯಿಂಗ್ ವಾಹನದ ಮೂಲಕ ಸಾಗಿಸದೆ ಚಾಲನೆ ಮಾಡಿಕೊಂಡೇ ಬಿಎಂಟಿಸಿ ಸಿಬ್ಬಂದಿ ಸ್ಥಳದಿಂದ ಕೊಂಡೊಯ್ದಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಘಟನೆ ಸಂಬಂಧ ಪೊಲೀಸರು ಬಿಎಂಟಿಸಿ ಬಸ್ ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಮೃತ ಕೃಷ್ಣಮೂರ್ತಿ ಅವರ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ.

ಸ್ಥಳೀಯರ ಪ್ರಕಾರ, ಫ್ರೀಡಂ ಪಾರ್ಕ್‌ನಿಂದ ಕೆ.ಆರ್. ಸರ್ಕಲ್‌ವರೆಗೆ ಇರುವ ಇಳಿಜಾರು ರಸ್ತೆ ಹಾಗೂ ಹಲವು ರಸ್ತೆಗಳು ಒಂದೇ ಜಂಕ್ಷನ್‌ನಲ್ಲಿ ಸೇರುವುದರಿಂದ ಈ ಪ್ರದೇಶದಲ್ಲಿ ಆಗಾಗ ಅಪಘಾತಗಳು ಸಂಭವಿಸುತ್ತಿವೆ. ಟ್ರಾಫಿಕ್ ಸಿಗ್ನಲ್ ತಪ್ಪಿಸಲು ಕೆಲ ವಾಹನ ಚಾಲಕರು ಅತಿವೇಗದಲ್ಲಿ ಸಂಚರಿಸುವುದು ಅಪಘಾತಗಳಿಗೆ ಪ್ರಮುಖ ಕಾರಣವಾಗುತ್ತಿದೆ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.

ಪೊಲೀಸರು ಪ್ರಕರಣ ದಾಖಲಿಸಿಕೊಂಡು ಅಪಘಾತದ ನಿಖರ ಕಾರಣದ ಕುರಿತು ತನಿಖೆ ಮುಂದುವರಿಸಿದ್ದಾರೆ.

ಬೆಂಗಳೂರಿಗರ ಗಮನಕ್ಕೆ! ಇಂದಿನಿಂದ ಮೂರು ದಿನ ಈ ಏರಿಯಾಗಳಲ್ಲಿ ಪವರ್ ಕಟ್; ಇಲ್ಲಿದೆ ಮಾಹಿತಿ

ಬೆಂಗಳೂರು:- ರಾಜಧಾನಿ ಬೆಂಗಳೂರಿನ ಹಲವೆಡೆ ಇಂದಿನಿಂದ ಮೂರು ದಿನಗಳ ಕಾಲ ಪವರ್ ಕಟ್ ಇರಲಿದೆ ಎಂದು ಬೆಸ್ಕಾಂ ತಿಳಿಸಿದೆ.

ಬೆಸ್ಕಾಂ ಹಾಗೂ ಕೆಪಿಟಿಸಿಎಲ್ ವತಿಯಿಂದ ಕೈಗೊಳ್ಳಲಾಗುತ್ತಿರುವ ನಿರ್ವಹಣಾ ಕಾಮಗಾರಿಗಳ ಹಿನ್ನೆಲೆಯಲ್ಲಿ ಭಾನುವಾರ, ಸೋಮವಾರ ಮತ್ತು ಮಂಗಳವಾರ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ನಿಗದಿತ ಅವಧಿಗೆ ವಿದ್ಯುತ್ ಸರಬರಾಜು ಸ್ಥಗಿತಗೊಳ್ಳಲಿದೆ.

ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಅಗತ್ಯ ಮುನ್ನೆಚ್ಚರಿಕೆ ವಹಿಸಿ, ವಿದ್ಯುತ್ ಅವಲಂಬಿತ ಕೆಲಸಗಳನ್ನು ಮುಂಚಿತವಾಗಿ ಪೂರ್ಣಗೊಳಿಸಿಕೊಳ್ಳುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

ಭಾನುವಾರ ವಿದ್ಯುತ್ ವ್ಯತ್ಯಯ:

ಸೂರ್ಯ ಸಿಟಿ ಫೇಸ್-1, ಮರಸೂರು, ನಾಗನಾಯಕನಹಳ್ಳಿ, ಇಗ್ಗಲೂರು, ಸರ್ಜಾಪುರ, ಇಟ್ಟಗನೂರು, ಕಾಡ ಅಗ್ರಹಾರ, ಸೋಂಪುರ ಗೇಟ್, ಬಿ. ಹೊಸಹಳ್ಳಿ, ದಾಸನಪುರ, ಕಂಬ್ಳಿಪುರ, ಹರೋಹಳ್ಳಿ, ಬೊಮ್ಮಸಂದ್ರ, ಬೊಮ್ಮಸಂದ್ರ ಕೈಗಾರಿಕಾ ಪ್ರದೇಶ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳಿಗ್ಗೆ 9ರಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ಸೋಮವಾರ ಈ ಪ್ರದೇಶಗಳಲ್ಲಿ ಕರೆಂಟ್ ಇರಲ್ಲ:

ಎಲ್ & ಟಿ ಅಪಾರ್ಟ್‌ಮೆಂಟ್, ಯಶೋದನಗರ, ಜಕ್ಕೂರು ಪ್ಲಾಂಟೇಶನ್, ಸೆಂಚುರಿ ಅಪಾರ್ಟ್‌ಮೆಂಟ್, ಬ್ಯಾಟರಾಯನಪುರ, ಸ್ಪಾರ್ಕಲ್ ಒನ್ ಮಾಲ್, ಅಮೃತಹಳ್ಳಿ, ಸಹಕಾರನಗರ ಜಿ ಬ್ಲಾಕ್, ಶಬರಿನಗರ, ಕೆನರಾ ಬ್ಯಾಂಕ್ ಲೇಔಟ್, ಧನಲಕ್ಷ್ಮಿ ಲೇಔಟ್, ತಿಂಡ್ಲು ಮುಖ್ಯರಸ್ತೆ, ಸರ್ ಎಂ.ವಿ. ಲೇಔಟ್, ಫಾರ್ಚೂನಾ ಸೆಂಟರ್ ಪಾರ್ಕ್, ತಿಂಡ್ಲು ಗ್ರಾಮ, ಸಪ್ತಗಿರಿ ಲೇಔಟ್, ಗುರುದರ್ಶನ ಲೇಔಟ್, ವೆಂಕಟಸ್ವಾಮಪ್ಪ ಲೇಔಟ್, ನಂಜಪ್ಪ ಸರ್ಕಲ್, ಎಲ್ & ಜಿ ಎನ್‌ಕ್ಲೇವ್ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳಿಗ್ಗೆ 11ರಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ಇದಲ್ಲದೆ, ರವೀಂದ್ರನಗರ, ಪ್ರಸನ್ನತ್ ನಗರ, ಸಂತೋಷ್ ನಗರ, ಏರ್‌ಫೋರ್ಸ್ ಜಾಲಹಳ್ಳಿ ವೆಸ್ಟ್, ವೈಷ್ಣವಿ ನಕ್ಷತ್ರ ಅಪಾರ್ಟ್‌ಮೆಂಟ್, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ತ್ರಿವೇಣಿ, ಎಚ್‌ಎಚ್‌ವಿ, ಡಿಎಂಜಿ, ಕೃಷ್ಣ ಫ್ಯಾಬ್ರಿಕೇಷನ್ಸ್, ಜೆಮಿನಿ ಇಂಡಸ್ಟ್ರೀಸ್, ರವಿ-ಕಿರ್ಲೋಸ್ಕರ್ ಆಸ್ಪತ್ರೆ, ಎಂಎಸ್‌ಐಎಲ್ ಪ್ರಿಂಟಿಂಗ್ ಪ್ರೆಸ್, ವಿಪ್ರೋ ವೆಲ್‌ಕಾಸ್ಟ್ ಫ್ಯಾಕ್ಟರಿ, ಐಟಿಸಿ, ವೋಲ್ವೋ, ಹಿಟಾಚಿ ಇಂಡಸ್ಟ್ರೀಸ್, ಗೀತಾ ಟಿಂಬರ್ಸ್ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲೂ ವಿದ್ಯುತ್ ಸರಬರಾಜು ಸ್ಥಗಿತವಾಗಲಿದೆ.

ಮಂಗಳವಾರ ವಿದ್ಯುತ್ ವ್ಯತ್ಯಯ:

ಗಂಗಾನಗರ, ವೀವರ್ಸ್ ಕಾಲೋನಿ, ಸಿಬಿಐ ಕ್ವಾರ್ಟರ್ಸ್, ಆರ್‌ಬಿಐ ಕಾಲೋನಿ, ಸಿಪಿಯು ಬ್ಲಾಕ್, ಡಿಜಿಕ್ಯೂ ಕ್ವಾರ್ಟರ್ಸ್, ಯುಎಎಸ್ ಕ್ಯಾಂಪಸ್, ದಿನ್ನೂರು ಮುಖ್ಯರಸ್ತೆ, ಆರ್.ಟಿ.ನಗರ, ಎಚ್‌ಎಂಟಿ ಬ್ಲಾಕ್, ಚಾಮುಂಡಿನಗರ, ಆರ್ಮಿ ವೆಟರನ್ಸ್ ಕಾಲೋನಿ, ಆರ್.ಟಿ.ನಗರ ಪೊಲೀಸ್ ಠಾಣೆ, ಡಾಲರ್ಸ್ ಕಾಲೋನಿ, ಎಂಎಲ್‌ಎ ಲೇಔಟ್, ರತನ್ ಅಪಾರ್ಟ್‌ಮೆಂಟ್, ಗಾಯತ್ರಿ ಅಪಾರ್ಟ್‌ಮೆಂಟ್, ನೃಪತುಂಗ ಎಕ್ಸ್‌ಟೆನ್ಷನ್, ಕೃಷ್ಣಪ್ಪ ಬ್ಲಾಕ್, ಸಿಬಿಐ ಮುಖ್ಯರಸ್ತೆ, ವೇಣುಗೋಪಾಲ ಲೇಔಟ್, ಜಡ್ಜಸ್ ಕಾಲೋನಿ, ಕರಿಯಣ್ಣ ಲೇಔಟ್, ಯೋಗೇಶ್ವರ ನಗರ, ರಿಂಗ್ ರಸ್ತೆ, ಕುವೆಂಪುನಗರ, ನೇತಾಜಿ ನಗರ, ಸ್ಟರ್ಲಿಂಗ್ ಗಾರ್ಡನ್ ಲೇಔಟ್, ಅಲ್ಪೈನ್ ಅಪಾರ್ಟ್‌ಮೆಂಟ್, ಜೈನ್ ಅಪಾರ್ಟ್‌ಮೆಂಟ್, ಗಿದ್ದಪ್ಪ ಬ್ಲಾಕ್, ಎಜಿಎಸ್ ಕಾಲೋನಿ, ಎಸ್‌ಬಿಎಂ ಕಾಲೋನಿ, ಸಂಜಯನಗರ, ಎಇಸಿಎಸ್ ಲೇಔಟ್, ಗೆದ್ದಲಹಳ್ಳಿ, ಭೂಪಸಂದ್ರ, ಸೆಂಟ್ರಲ್ ಎಕ್ಸೈಸ್ ಲೇಔಟ್, ಕಲ್ಪನಾ ಚಾವ್ಲಾ ರಸ್ತೆ, ಮೊಹಮ್ಮದ್ ಲೇಔಟ್, ವಿಎಸ್‌ಎನ್‌ಎಲ್ ವೈಟ್ ಹೌಸ್, ಅಮರಜ್ಯೋತಿ ಲೇಔಟ್, ಸನ್‌ರೈಸ್ ಕಾಲೋನಿ, ಮೈತ್ರಿ ಬಜಾರ್, ತಿಮ್ಮಕ್ಕ ಲೇಔಟ್, ಅಕ್ಕಯ್ಯಮ್ಮ ಲೇಔಟ್, ಗುಡ್ಡದಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳಿಗ್ಗೆ 11ರಿಂದ ಮಧ್ಯಾಹ್ನ 3 ಗಂಟೆಯವರೆಗೆ ವಿದ್ಯುತ್ ಸರಬರಾಜು ಸ್ಥಗಿತಗೊಳ್ಳಲಿದೆ.

ವಿದ್ಯುತ್ ವ್ಯತ್ಯಯದ ಅವಧಿಯಲ್ಲಿ ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಬೆಸ್ಕಾಂ ಅಧಿಕಾರಿಗಳು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.

ಹನಿ ನೀರಾವರಿ ಹೆಸರಲ್ಲಿ ಕಾನೂನು ಉಲ್ಲಂಘನೆ?: ಭೂಸ್ವಾಧೀನ ವಿರೋಧಿಸಿ ವಿವಿಧ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ

0

ಗದಗ: ರಾಜ್ಯ ಹೆದ್ದಾರಿ ನಿಯಮಗಳನ್ನು ಉಲ್ಲಂಘಿಸಿ ಹನಿ ನೀರಾವರಿ ಯೋಜನೆಯ ಕಾಮಗಾರಿ ನಡೆಸಲಾಗುತ್ತಿದೆ ಎಂದು ಆರೋಪಿಸಿ ಹಾಗೂ ನರಸಾಪುರ–ನಾಗಸಮುದ್ರ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಸುಮಾರು 220 ಎಕರೆ ಫಲವತ್ತಾದ ಕೃಷಿಭೂಮಿ ಭೂಸ್ವಾಧೀನ ಪ್ರಕ್ರಿಯೆಯನ್ನು ಕೈಬಿಡುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇಗೌಡ್ರ ಬಣ), ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ಹಾಗೂ ಶ್ರೀ ದಂಡಿನ ದುರ್ಗಾದೇವಿ ದೇವಸ್ಥಾನದ ಭಕ್ತರು ಶನಿವಾರ ದಂಡಿನ ದುರ್ಗಾದೇವಿ ದೇವಸ್ಥಾನದ ಬಳಿ ಬೃಹತ್ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇಗೌಡ್ರ ಬಣ) ಜಿಲ್ಲಾ ಅಧ್ಯಕ್ಷ ಎಂ.ಪಿ. ಪರ್ವತಗೌಡ್ರ, ಹನಿ ನೀರಾವರಿ ಯೋಜನೆಗೆ ನಮ್ಮ ವಿರೋಧವಿಲ್ಲ. ಆದರೆ ಕಾನೂನು ಉಲ್ಲಂಘಿಸಿ, ರಾಜ್ಯ ಹೆದ್ದಾರಿ ಸುರಕ್ಷತಾ ನಿಯಮಗಳನ್ನು ಕಡೆಗಣಿಸಿ ಕಾಮಗಾರಿ ನಡೆಸುತ್ತಿರುವುದು ಖಂಡನೀಯ ಎಂದು ಆರೋಪಿಸಿದರು.

ಕೇಂದ್ರ ಸರ್ಕಾರದ ಅಧೀನದ ಇಂಡಿಯನ್ ರೋಡ್ ಕಾಂಗ್ರೆಸ್ (IRC) ವಿಶೇಷ ಪ್ರಕಟಣೆ-15ರ ಪ್ರಕಾರ ರಾಜ್ಯ ಹೆದ್ದಾರಿಯ ಮಧ್ಯಭಾಗದಿಂದ ಎರಡೂ ಬದಿಗೆ 40 ಮೀಟರ್ ವ್ಯಾಪ್ತಿಯ ಪ್ರದೇಶ ನಿಷೇಧಿತ ವಲಯವಾಗಿದೆ. ಈ ವ್ಯಾಪ್ತಿಯಲ್ಲಿ ಯಾವುದೇ ಶಾಶ್ವತ ಕಾಮಗಾರಿ ಕೈಗೊಳ್ಳಬಾರದು ಎಂಬ ನಿಯಮವಿದ್ದರೂ, ಗದಗ ತಾಲೂಕಿನ ನಾಗಸಮುದ್ರ–ಹಿರೇಕೊಪ್ಪ ಸರಹದ್ದಿನ ಕಾರವಾರ–ಕೈಗಾ–ಇಳಕಲ್ ರಾಜ್ಯ ಹೆದ್ದಾರಿ-06ರ ಪಕ್ಕದಲ್ಲಿ ಕರ್ನಾಟಕ ನೀರಾವರಿ ನಿಗಮದ ವತಿಯಿಂದ ದೊಡ್ಡ ಪ್ರಮಾಣದಲ್ಲಿ ಗುಂಡಿ ತೋಡಿ ಪೈಪ್‌ಲೈನ್ ಅಳವಡಿಸಲಾಗುತ್ತಿದೆ. ಇದಕ್ಕೆ ಲೋಕೋಪಯೋಗಿ ಇಲಾಖೆ ಅನುಮತಿ ನೀಡಿರುವುದು ಕಾನೂನುಬಾಹಿರವಾಗಿದ್ದು, ಕೂಡಲೇ ಅನುಮತಿ ರದ್ದುಪಡಿಸಿ ಕಾಮಗಾರಿ ಸ್ಥಗಿತಗೊಳಿಸಬೇಕು ಎಂದು ಒತ್ತಾಯಿಸಿದರು.

ರಸ್ತೆ ಅಗಲೀಕರಣವಾದರೆ ಈ ಪೈಪ್‌ಲೈನ್ ರಸ್ತೆ ಮಧ್ಯಭಾಗಕ್ಕೆ ಬರುವ ಸಾಧ್ಯತೆ ಇದೆ. ನಮಗೆ ನೀರಾವರಿ ಯೋಜನೆ ಬೇಕು, ಆದರೆ ತಾತ್ಕಾಲಿಕವಲ್ಲ; ಶಾಶ್ವತ ಮತ್ತು ಕಾನೂನುಬದ್ಧ ಯೋಜನೆ ಬೇಕು ಎಂದು ಅವರು ಹೇಳಿದರು.

ಸುಮಾರು 200 ವರ್ಷಗಳ ಇತಿಹಾಸ ಹೊಂದಿರುವ ಶ್ರೀ ದಂಡಿನ ದುರ್ಗಾದೇವಿ ದೇವಸ್ಥಾನದ ಪಕ್ಕದಲ್ಲೇ 20 ಅಡಿಗೂ ಹೆಚ್ಚು ಆಳದಲ್ಲಿ ಪೈಪ್‌ಲೈನ್ ಅಳವಡಿಸಲು ಗುಂಡಿ ತೋಡುತ್ತಿರುವುದರಿಂದ ದೇವಸ್ಥಾನ ಹಾಗೂ ಅರಣ್ಯ ಇಲಾಖೆಯ ದಾಖಲೆಯಲ್ಲಿರುವ 150ರಿಂದ 160 ವರ್ಷ ಹಳೆಯ ಬೇವಿನ ಮರಕ್ಕೆ ಹಾನಿಯಾಗುವ ಆತಂಕವಿದೆ. ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗದಂತೆ ದೇವಸ್ಥಾನದಿಂದ ಸುಮಾರು 300 ಮೀಟರ್ ದೂರದಲ್ಲಿ ಕಾಮಗಾರಿ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಸಂಘಟನಾ ಕಾರ್ಯದರ್ಶಿ ಬಸಯ್ಯ ಗುಡ್ಡಿಮಠ ಮಾತನಾಡಿ, ಬೆಟಗೇರಿ ಹೊರವಲಯದ ನರಸಾಪುರ ಮತ್ತು ನಾಗಸಮುದ್ರ ವ್ಯಾಪ್ತಿಯಲ್ಲಿ ಸುಮಾರು 220 ಎಕರೆ ಫಲವತ್ತಾದ ಕೃಷಿಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದರು.

ಯಾವುದೇ ಕಾರಣಕ್ಕೂ ರೈತರ ಫಲವತ್ತಾದ ಭೂಮಿಯನ್ನು ಬಿಟ್ಟುಕೊಡುವುದಿಲ್ಲ. ಅಗತ್ಯವಿದ್ದರೆ ರಾಜ್ಯಾಧ್ಯಕ್ಷ ಚೂನಪ್ಪ ಪೂಜಾರಿ ಹಾಗೂ ಶಶಿಕಾಂತ ಗುರುಜಿ ನೇತೃತ್ವದಲ್ಲಿ ವಿವಿಧ ಪ್ರಗತಿಪರ ಸಂಘಟನೆಗಳೊಂದಿಗೆ ಗುರ್ಲಾಪುರ ಹೋರಾಟದ ಮಾದರಿಯಲ್ಲಿ ಮತ್ತೊಂದು ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಹಿಂದೂ ಮುಖಂಡ ರಾಜು ಖಾನಪ್ಪನವರ ಮಾತನಾಡಿ, ಈ ಭಾಗದ ರೈತರಿಗೆ ಶಾಶ್ವತ ನೀರಾವರಿ ವ್ಯವಸ್ಥೆ ಕಲ್ಪಿಸಬೇಕು. ಆದರೆ ಅದರ ಹೆಸರಿನಲ್ಲಿ ಶ್ರೀ ದಂಡಿನ ದುರ್ಗಾದೇವಿ ದೇವಸ್ಥಾನ ಹಾಗೂ ಭಕ್ತರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಯಾವುದೇ ಕಾಮಗಾರಿಯನ್ನು ಸಹಿಸುವುದಿಲ್ಲ. ಅಗತ್ಯವಿದ್ದರೆ ಮುಂದಿನ ದಿನಗಳಲ್ಲಿ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಗದಗ ಜಿಲ್ಲಾಧ್ಯಕ್ಷ ವಿಜಯಕುಮಾರ ಸುಂಕದ, ಕರವೇ ಜಿಲ್ಲಾ ಸಂಚಾಲಕ ಸುರೇಶ ಮುಳಗುಂದ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವರಾಜ ಮುಳ್ಳಾಳ, ಯಮನೂರಸಾಬ್ ನದಾಪ್, ಯಲ್ಲಪ್ಪ ದೊಡ್ಡಮನಿ, ಶರಣಪ್ಪ ಅಡ್ನೂರ, ನಂದಪ್ಪ ಹಳ್ಳಿಕೇರಿ, ಶರಣಪ್ಪ ಹೊನ್ನಪ್ಪನವರ, ಮಂಜುನಾಥ ಭಜಂತ್ರಿ, ಹೇಮರಡ್ಡಿ ಸೋಮರಡ್ಡಿ, ಅಪ್ಪಣ್ಣ ಕಾಳೆ, ಹರಣಸಿಕಾರಿ (ಪಾರ್ಥಿ) ಸಮಾಜದ ಜಿಲ್ಲಾಧ್ಯಕ್ಷ ಚಂದ್ರು ಚೌಹಾನ ಸೇರಿದಂತೆ ಸಾವಿರಾರು ರೈತರು, ಕರವೇ ಕಾರ್ಯಕರ್ತರು, ಶ್ರೀ ದಂಡಿನ ದುರ್ಗಾದೇವಿ ದೇವಸ್ಥಾನದ ಭಕ್ತರು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.

 

“ಹನಿ ನೀರಾವರಿ ಯೋಜನೆಗೆ ನಮ್ಮ ವಿರೋಧವಿಲ್ಲ. ಆದರೆ ರಾಜ್ಯ ಹೆದ್ದಾರಿ ನಿಯಮ ಉಲ್ಲಂಘಿಸಿ, ದೇವಸ್ಥಾನ ಹಾಗೂ ಫಲವತ್ತಾದ ಕೃಷಿಭೂಮಿಗೆ ಹಾನಿಯಾಗುವ ರೀತಿಯಲ್ಲಿ ಕಾಮಗಾರಿ ನಡೆಸುವುದನ್ನು ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ.”

– ಎಂ.ಪಿ. ಪರ್ವತಗೌಡ್ರ, ಜಿಲ್ಲಾಧ್ಯಕ್ಷರು, ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇಗೌಡ್ರ ಬಣ)

ಹಳೆ ಪಿಂಚಣಿ ಯೋಜನೆ ಜಾರಿಗೊಳಿಸಿ

0

ಗದಗ: ಕರ್ನಾಟಕ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘದ ಗದಗ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿ ಅವರಿಗೆ ಹಳೆ ಪಿಂಚಣಿ ಯೋಜನೆ (ಒಪಿಎಸ್) ಕಡ್ಡಾಯವಾಗಿ ಜಾರಿಗೊಳಿಸುವಂತೆ ಮನವಿ ಸಲ್ಲಿಸಲಾಯಿತು.

ಮನವಿ ಸಲ್ಲಿಸಿದ ಬಳಿಕ ಸಂಘದ ಜಿಲ್ಲಾಧ್ಯಕ್ಷ ಎಂ.ಕೆ. ಲಮಾಣಿ ಮಾತನಾಡಿ, 2006ರ ನಂತರ ನೇಮಕಗೊಂಡ ಸಿಬ್ಬಂದಿಗೆ ಓಪಿಎಸ್ ಜಾರಿಯಿಲ್ಲದ ಕಾರಣ, 60 ವರ್ಷಗಳ ಕಾಲ ನಿಷ್ಠೆಯಿಂದ ಸೇವೆ ಸಲ್ಲಿಸಿ ನಿವೃತ್ತಿಯಾಗುವ ನೌಕರರಿಗೆ ವೃದ್ಧಾಪ್ಯದಲ್ಲಿ ನಿಶ್ಚಿತ ಪಿಂಚಣಿ ಸೌಲಭ್ಯ ದೊರೆಯದಿರುವುದು ಆಘಾತಕಾರಿ ಹಾಗೂ ಖೇದಕರ ಸಂಗತಿಯಾಗಿದೆ ಎಂದು ಹೇಳಿದರು.

ರಾಜ್ಯ ಸರ್ಕಾರವು ಅನೇಕ ಜನೋಪಯೋಗಿ ಯೋಜನೆಗಳನ್ನು ಜಾರಿಗೆ ತಂದು ಸಾಮಾನ್ಯ ಜನರ ಆಶ್ರಯವಾಗಿ ಕಾರ್ಯನಿರ್ವಹಿಸುತ್ತಿದ್ದು, ಹಳೆ ಪಿಂಚಣಿ ಯೋಜನೆ ಜಾರಿಗೊಳಿಸುವ ಭರವಸೆಯನ್ನೂ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಲಾಗಿತ್ತು. ಆ ಭರವಸೆಯ ಮೇರೆಗೆ ನೌಕರರು ಸರ್ಕಾರಕ್ಕೆ ಸಂಪೂರ್ಣ ಬೆಂಬಲ ನೀಡಿ ಸರ್ಕಾರ ರಚನೆಗೆ ಕಾರಣರಾಗಿದ್ದಾರೆ. ಆದ್ದರಿಂದ ಸರ್ಕಾರ ತನ್ನ ಮಹತ್ವದ ಯೋಜನೆಗಳಲ್ಲಿ ಓಪಿಎಸ್ ಜಾರಿಯನ್ನು ಮೊದಲ ಆದ್ಯತೆಯಾಗಿ ಪರಿಗಣಿಸಿ ಕೂಡಲೇ ಜಾರಿಗೆ ತರಬೇಕು ಎಂದು ಅವರು ಆಗ್ರಹಿಸಿದರು.

ಹಲವಾರು ನೌಕರರ ಸಭೆ-ಸಮಾರಂಭಗಳಲ್ಲಿ ಮುಖ್ಯಮಂತ್ರಿ ಎಲ್ಲರಿಗೂ ನಿಶ್ಚಿತ ಪಿಂಚಣಿ ನೀಡುವುದು ಅನಿವಾರ್ಯ ಎಂದು ಹೇಳಿರುವುದನ್ನು ಉಲ್ಲೇಖಿಸಿದ ಅವರು, ಸರ್ಕಾರದ ದಿಟ್ಟ ನಿರ್ಧಾರಗಳಿಂದ ಅನೇಕ ಯೋಜನೆಗಳು ಯಶಸ್ವಿಯಾಗಿ ಜಾರಿಯಾಗಿರುವಂತೆ, ಲಕ್ಷಾಂತರ ನೌಕರರ ಬಹುದಿನಗಳ ಬೇಡಿಕೆಯಾಗಿರುವ ಓಪಿಎಸ್ ಯೋಜನೆಯನ್ನೂ ತಕ್ಷಣದಿಂದಲೇ ಜಾರಿಗೊಳಿಸಿ ನೌಕರರಿಗೆ ಆಸರೆಯಾಗಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಎಸ್.ವಿ. ಸಂಕನೂರ, ಮೋಹನ ಲಿಂಬಿಕಾಯಿ, ರವಿ ಬಿ. ದಂಡಿನ, ಎ.ಎಸ್. ಪಾಟೀಲ (ಪ್ರಧಾನ ಕಾರ್ಯದರ್ಶಿ), ಬಿ.ಡಿ. ಯರಗೊಪ್ಪ, ಧನೇಶ ನಾಯಕ, ಡಿ.ಜಿ. ಪೂಜಾರ, ಮಂಜುನಾಥ ತೆಗ್ಗಿನಮನಿ, ಬಿ.ಸಿ. ಗುಳೇದ, ಟಿ.ಆರ್. ನಾಯಕ, ಪಿ.ಎನ್. ಹಿರೇಮಠ, ಶರಣು ಡಣಾಪೂರ, ಝಡ್.ಎಂ. ಖಾಜಿ, ಆರ್.ವಿ. ಗೊಂಡಬಾಳ, ಬೂದಪ್ಪ ಅಂಗಡಿ, ಬಿ.ಕೆ. ನಿಂಬನಗೌಡ್ರ, ಬಿ.ಎಚ್. ಕೊರ್ಲಹಳ್ಳಿ, ಹೆಚ್.ಟಿ. ಬಿಜ್ಜೂರ, ಎಲ್.ಎಸ್. ಅರಳಹಳ್ಳಿ, ಗಿರೀಶ ಸುಗಜನಾವರ, ಮಹೇಶ ಕೇರಿ, ಆರ್.ಎಚ್. ನರೇಗಲ್ಲ, ಸುನೀಲ ಲಮಾಣಿ, ಡಿ.ಎನ್. ಮರಡ್ಡಿ ಉಪಸ್ಥಿತರಿದ್ದರು.

“2006ರ ನಂತರ ನೇಮಕಗೊಂಡ ನೌಕರರಿಗೂ ಹಳೆ ಪಿಂಚಣಿ ಯೋಜನೆ ಜಾರಿಗೊಳಿಸಿ ನಿವೃತ್ತಿ ಜೀವನಕ್ಕೆ ಆರ್ಥಿಕ ಭದ್ರತೆ ಒದಗಿಸಬೇಕು. ಸರ್ಕಾರ ನೀಡಿದ್ದ ಭರವಸೆಯನ್ನು ಈಡೇರಿಸಬೇಕು.”

– ಎಂ.ಕೆ. ಲಮಾಣಿ, ಜಿಲ್ಲಾಧ್ಯಕ್ಷ, ಕರ್ನಾಟಕ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘ

ವಿದ್ಯಾರ್ಥಿಗಳೇ ದೇಶದ ಭವಿಷ್ಯದ ಆಧಾರಸ್ತಂಭ: ಎಸ್.ವಿ. ಸಂಕನೂರ

0

ವಿಜಯಸಾಕ್ಷಿ ಸುದ್ದಿ, ಗದಗ: ಇಂದಿನ ವಿದ್ಯಾರ್ಥಿಗಳೇ ನಾಳಿನ ದೇಶದ ಆಧಾರಸ್ತಂಭಗಳಾಗಿದ್ದು, ಪ್ರತಿಯೊಬ್ಬ ವಿದ್ಯಾರ್ಥಿಯೂ ಸ್ಪಷ್ಟ ಗುರಿ ಹೊಂದಿ ಅದನ್ನು ಸಾಧಿಸಲು ನಿರಂತರ ಪರಿಶ್ರಮ ಪಡಬೇಕು. ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ಸಕ್ರಿಯವಾಗಿ ಭಾಗವಹಿಸಿ ವ್ಯಕ್ತಿತ್ವ ವಿಕಸನ ಮಾಡಿಕೊಳ್ಳಬೇಕು ಎಂದು ವಿಧಾನಪರಿಷತ್ ಸದಸ್ಯ ಎಸ್.ವಿ. ಸಂಕನೂರ ಹೇಳಿದರು.

ನಗರದ ಆಂಗ್ಲೋ ಉರ್ದು ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ 2026-27ನೇ ಶೈಕ್ಷಣಿಕ ಸಾಲಿನ ಸಾಂಸ್ಕೃತಿಕ, ಕ್ರೀಡಾ ಹಾಗೂ ಮತದಾರರ ಸಾಕ್ಷರತಾ ಸಂಘಗಳ ಉದ್ಘಾಟನೆ, ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭವನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಜೀವನ ಪ್ರತಿಯೊಬ್ಬ ವಿದ್ಯಾರ್ಥಿಗೂ ಮಾದರಿಯಾಗಿದ್ದು, ತಾಳ್ಮೆ, ಸತತ ಪರಿಶ್ರಮ, ಸಂಸ್ಕಾರ ಹಾಗೂ ದೃಢ ಇಚ್ಛಾಶಕ್ತಿಯನ್ನು ಬೆಳೆಸಿಕೊಂಡಾಗ ಮಾತ್ರ ಯಶಸ್ಸು ಸಾಧ್ಯ. ವಿದ್ಯಾರ್ಥಿಗಳು ತಮ್ಮ ಗುರಿಯತ್ತ ಅಚಲವಾದ ನಂಬಿಕೆಯೊಂದಿಗೆ ಸಾಗಬೇಕು ಎಂದು ಸಲಹೆ ನೀಡಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಗೌರವಾಧ್ಯಕ್ಷ ಸರ್ಫರಾಜ್ ಅಹ್ಮದ್ ಎಸ್. ಉಮಚಿಗಿ ಮಾತನಾಡಿ, ವಿದ್ಯಾರ್ಥಿಗಳು ಭಾಷೆಯನ್ನು ಪ್ರೀತಿಸಿ ಅದರ ಮೇಲೆ ಪಾಂಡಿತ್ಯ ಬೆಳೆಸಿಕೊಳ್ಳಬೇಕು. ಗುಣ-ಅವಗುಣಗಳನ್ನು ಅರಿತು ಅವಗುಣಗಳನ್ನು ತೊರೆದು ಉತ್ತಮ ನಡೆ-ನುಡಿ, ಆಚಾರ-ವಿಚಾರ ಮತ್ತು ಸಂಸ್ಕೃತಿಯನ್ನು ಅಳವಡಿಸಿಕೊಳ್ಳಬೇಕು. ಪ್ರಾಮಾಣಿಕ ಪರಿಶ್ರಮದಿಂದ ಉತ್ತಮ ಅಂಕ ಗಳಿಸುವುದರ ಜೊತೆಗೆ ನೈತಿಕ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ನಾಗರಿಕರಾಗಿ ರೂಪುಗೊಳ್ಳಬೇಕು ಎಂದು ಹೇಳಿದರು.

ಸಂಸ್ಥೆಯ ಆಡಳಿತ ಮಂಡಳಿಯ ನಿರ್ದೇಶಕ ಪ್ರೊ. ಎ.ಎಂ. ಮುಲ್ಲಾ ಮಾತನಾಡಿ, ಜೀವನ ಕೇವಲ ಬದುಕುವುದಕ್ಕಲ್ಲ, ಸಾಧನೆ ಮಾಡುವುದಕ್ಕಾಗಿದೆ. ವಿದ್ಯಾರ್ಥಿಗಳು ಗೌರವ, ಪ್ರೀತಿ, ಸ್ವ-ನಿಯಂತ್ರಣ, ನಂಬಿಕೆ, ಏಕಾಗ್ರತೆ, ಸತ್ಯ ಹಾಗೂ ದೃಢ ನಿರ್ಧಾರದಂತಹ ಸದ್ಗುಣಗಳನ್ನು ಬೆಳೆಸಿಕೊಂಡು ಸಮಾಜದ ಆಸ್ತಿಯಾಗಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ತಿಳಿಸಿದರು.

ಕಾರ್ಯಕ್ರಮವು ಕು. ಸನಾ ನದಾಫ ಅವರ ಕುರಾನ್ ಪಠಣದೊಂದಿಗೆ ಆರಂಭವಾಯಿತು. ಕು. ಫಾತಿಮಾ ಗುಳಗುಂದಿ ಹಮ್ದ್ ಹಾಡಿದರೆ, ಕು. ಆಫ್ರೀನ್ ಸಂಕಲಪುರ ಸಾಥ್ ನೀಡಿದರು. ಕು. ಕವಿತಾ ಹಾಗೂ ಸಂಗಡಿಗರು ಪ್ರಾರ್ಥನಾ ಗೀತೆ ಹಾಡಿದರು.

ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ. ಐ.ಪಿ. ಹಾದಿಮನಿ ಸ್ವಾಗತಿಸಿದರು. ಎಂ.ಎಂ. ಶಿರಹಟ್ಟಿ ಅತಿಥಿಗಳನ್ನು ಪರಿಚಯಿಸಿದರು. ಶ್ರೀಮತಿ ಎಸ್.ಎ. ಬಾರೂದವಾಲೆ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಸಿಕೊಟ್ಟರು. ಶ್ರೀಮತಿ ಎಸ್.ಎಸ್. ಪಾಟೀಲ ವಂದಿಸಿದರು. ಕು. ಮಾರಿಯಾ ಕಿಫ್ತೆ ಎಸ್. ಮಿರ್ಜಿ ಹಾಗೂ ಕು. ಸಮೀನಾ ಆರ್. ಮುಲ್ಲಾ ಕಾರ್ಯಕ್ರಮ ನಿರೂಪಿಸಿದರು.

ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ಉಪಾಧ್ಯಕ್ಷ ಹಾಜಿ ಎ.ಎಂ. ಸೌದಾಗರ, ಸದಸ್ಯರಾದ ಜನಾಬ್ ಶಾಹನವಾಜ್ ಎಸ್. ಉಮಚಗಿ, ಹಾಜಿ ರಾಜೇಸಾಬ ಬಾಗಲಕೋಟ, ಜನಾಬ್ ಜೆ.ಬಿ. ಉಮಚಗಿ, ಹಾಜಿ ಎಂ.ಎ. ಹಣಗಿ, ಜನಾಬ್ ಎಸ್.ಎ. ಬಿಜಾಪೂರ ಹಾಗೂ ಅತಿಥಿಯಾಗಿ ಜನಾಬ್ ಶಾಮಾಜ್ ಎಸ್. ಉಮಚಗಿ ಉಪಸ್ಥಿತರಿದ್ದರು. ಮಹಾವಿದ್ಯಾಲಯದ ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

“ವಿದ್ಯಾರ್ಥಿಗಳು ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ವ್ಯಕ್ತಿತ್ವ ವಿಕಸನ ಮಾಡಿಕೊಳ್ಳಬೇಕು. ತಾಳ್ಮೆ, ಪರಿಶ್ರಮ ಮತ್ತು ದೃಢ ಇಚ್ಛಾಶಕ್ತಿಯೇ ಯಶಸ್ಸಿನ ಗುಟ್ಟು.”

– ಎಸ್.ವಿ. ಸಂಕನೂರ, ವಿಧಾನಪರಿಷತ್ ಸದಸ್ಯ

ಮತಗಳ್ಳತನ ತಡೆಯಿರಿ, ಮತದಾರರನ್ನಲ್ಲ!

0

ವಿಜಯಸಾಕ್ಷಿ ಸುದ್ದಿ, ಹಗರಿಬೊಮ್ಮನಹಳ್ಳಿ: ಇಡೀ ದೇಶದ ಮತದಾರರ ಪಟ್ಟಿಯನ್ನು ಮರು ತಯಾರಿಸುವ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯನ್ನು ಗಡಿಬಿಡಿ ಹಾಗೂ ಗೊಂದಲಮಯ ರೀತಿಯಲ್ಲಿ ನಡೆಸಲಾಗುತ್ತಿದೆ ಎಂದು ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಜೆ.ಎಂ. ವೀರಸಂಗಯ್ಯ ಆರೋಪಿಸಿದರು.

ತಾಲೂಕಿನ ಕೃಷಿಕ ಸಮಾಜದ ಕಚೇರಿಯಲ್ಲಿ ಜಿಲ್ಲಾ ಮತಗಟ್ಟೆ ಕಾವಲು ಸಮಿತಿಯಿಂದ ರೂಪಿಸಲಾದ ಎಸ್‌ಐಆರ್ ಮಾಹಿತಿ ವೆಬ್‌ಸೈಟ್ ಉದ್ಘಾಟಿಸಿ ಅವರು ಮಾತನಾಡಿದರು.

“ಚುನಾವಣಾ ಆಯೋಗ ತಾನು ಹೇಳಿದ್ದೇ ಅಂತಿಮ ಎಂಬ ಧೋರಣೆಯಲ್ಲಿ ಈ ಪ್ರಕ್ರಿಯೆಯನ್ನು ನಡೆಸುತ್ತಿದೆ. ಇದರ ಹಿಂದಿನ ಉದ್ದೇಶಗಳ ಕುರಿತು ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಆದರೆ ಆ ಚರ್ಚೆಗೆ ನಾವು ಹೋಗುವುದಿಲ್ಲ. ಕಳ್ಳ ಮತಗಳನ್ನು ಪತ್ತೆಹಚ್ಚಬೇಕಾದರೆ, ಅದರ ಬದಲು ಸಾಮಾನ್ಯ ಮತದಾರರನ್ನೇ ಅನುಮಾನಿಸಿ ವಿಚಾರಣೆ ನಡೆಸುವಂತಹ ಪರಿಸ್ಥಿತಿ ನಿರ್ಮಾಣವಾಗಿರುವುದು ಆತಂಕಕಾರಿ” ಎಂದು ಹೇಳಿದರು.

ಜಿಲ್ಲಾ ಮತಗಟ್ಟೆ ಕಾವಲು ಸಮಿತಿಯ ಸಂಚಾಲಕ ಹಾಗೂ ಸಮಾಜ ಸೇವಕ ತಿಪ್ಪೇಸ್ವಾಮಿ ವೆಂಕಟೇಶ್ ಮಾತನಾಡಿ, “ನಾಡಿನ ಮತ ನಮ್ಮೆಲ್ಲರ ಹೊಣೆ” ಎಂಬ ಉದ್ದೇಶದಿಂದ ಈ ವೆಬ್‌ಸೈಟ್ ಆರಂಭಿಸಲಾಗಿದೆ. ಪ್ರತಿಯೊಬ್ಬ ಮತದಾರರೂ ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇದೆಯೇ ಎಂಬುದನ್ನು ಪರಿಶೀಲಿಸಿಕೊಳ್ಳಲು ಹಾಗೂ ಮತದಾನದ ಹಕ್ಕು ಸುರಕ್ಷಿತವಾಗಿರುವುದನ್ನು ಖಚಿತಪಡಿಸಿಕೊಳ್ಳಲು ಈ ವೆಬ್‌ಸೈಟ್ ನೆರವಾಗಲಿದೆ ಎಂದು ತಿಳಿಸಿದರು.

ರೈತ ಸಂಘದ ಉಪಾಧ್ಯಕ್ಷ ತಂಬ್ರಹಳ್ಳಿ ರವಿಕುಮಾರ್ ಮಾತನಾಡಿ, ಎಸ್‌ಐಆರ್ ಪ್ರಕ್ರಿಯೆ ಹಾಗೂ ಅದರ ಪರಿಣಾಮಗಳ ಕುರಿತು ನಿರಂತರ ಜನಜಾಗೃತಿ ಮೂಡಿಸಬೇಕಿದೆ. ಜನಮಾಧ್ಯಮಗಳ ಮೂಲಕ ಗೊಂದಲ ನಿವಾರಣೆ ಮಾಡುವುದು ಹಾಗೂ ಜನಸಾಂಸ್ಕೃತಿಕ ಮಾಧ್ಯಮಗಳ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು ಅಗತ್ಯ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಹುರ್ಕಡ್ಲಿ ಶಿವಕುಮಾರ್, ಯು. ಮಂಜುನಾಥ, ಕೆ. ರೋಶನ್, ಹನುಮೇಶ್ ರಾವ್, ಎ.ಬಿ. ಕೊಟ್ರೇಶ್, ಬಂಗಿ ಕರಿಬಸಪ್ಪ, ಹತ್ತಿ ಪ್ರಶಾಂತ್, ವಿ. ನಜೀರ್, ರಾಮರಾಜ್, ಅನಂತು, ಗಣೇಶಪ್ಪ, ಶ್ರೀಮತಿ ಪುಷ್ಪಾವತಿ, ರಾಜಭಕ್ಷಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.