Home Blog

ಜನರ ಹಣದಲ್ಲಿ ಕಾಂಗ್ರೆಸ್ ಸರ್ಕಾರ ಮೋಜು-ಮಸ್ತಿ ಮಾಡುತ್ತಿದೆ: ನಿಖಿಲ್ ಕುಮಾರಸ್ವಾಮಿ ವಾಗ್ದಾಳಿ

ಬೆಂಗಳೂರು:  ರಾಜ್ಯ ಸರ್ಕಾರ ಆಯೋಜಿಸಿರುವ ಸಾಧನಾ ಸಮಾವೇಶವನ್ನು ತೀವ್ರವಾಗಿ ಟೀಕಿಸಿರುವ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಜನರ ತೆರಿಗೆ ಹಣದಲ್ಲಿ ಮೋಜು-ಮಸ್ತಿ ಮಾಡಲು ಕಾಂಗ್ರೆಸ್ ಸರ್ಕಾರ ಈ ಸಮಾವೇಶ ನಡೆಸುತ್ತಿದೆ ಎಂದು ಆರೋಪಿಸಿದ್ದಾರೆ.

ಜೆಪಿ ಭವನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಯಾವ ಸಾಧನೆಗಾಗಿ ಈ ಸಮಾವೇಶ ನಡೆಸುತ್ತಿದ್ದಾರೆ ಎಂಬುದು ಅರ್ಥವಾಗುತ್ತಿಲ್ಲ. ಸರ್ಕಾರದ ವಿರುದ್ಧ ಸಾಮಾನ್ಯ ಜನರೇ ಹೆಚ್ಚು ಪ್ರಶ್ನೆ ಕೇಳುತ್ತಿದ್ದಾರೆ” ಎಂದು ಕಿಡಿಕಾರಿದರು.

ಸಾರಿಗೆ ಇಲಾಖೆಯ ಕಾರ್ಯವೈಖರಿಯನ್ನು ಪ್ರಶ್ನಿಸಿದ ನಿಖಿಲ್, ನೌಕರರ ಬಾಕಿ ವೇತನ ಮತ್ತು ಅರಿಯರ್ಸ್ ಸಮಸ್ಯೆ ಇನ್ನೂ ಬಗೆಹರಿದಿಲ್ಲ ಎಂದು ಹೇಳಿದರು.

“ಸಂಧಾನ ಸಭೆ ನಡೆದರೂ ಯಾವುದೇ ಫಲಿತಾಂಶ ಸಿಕ್ಕಿಲ್ಲ. ಶಕ್ತಿ ಯೋಜನೆಯಡಿ ಉಚಿತ ಬಸ್ ಸೇವೆ ಘೋಷಿಸಿದ ಸರ್ಕಾರ, ಈಗ ಸಾರಿಗೆ ಇಲಾಖೆ ಯಾವ ಸ್ಥಿತಿಗೆ ಬಂದಿದೆ ಎಂಬುದಕ್ಕೆ ಉತ್ತರ ನೀಡಬೇಕು” ಎಂದು ಆಗ್ರಹಿಸಿದರು.

ಬಿಎಂಟಿಸಿ ಮತ್ತು ಕೆಎಸ್‌ಆರ್‌ಟಿಸಿ ಸಂಸ್ಥೆಗಳ ನಿರ್ವಹಣೆಯನ್ನೂ ಟೀಕಿಸಿದ ಅವರು, “ಈ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಒಂದೇ ಒಂದು ಹೊಸ ಬಸ್ ಖರೀದಿಸಿಲ್ಲ. ಬಸ್‌ಗಳಿಗೆ ಟಯರ್ ಬದಲಾಯಿಸುವ ಸ್ಥಿತಿಯೂ ಇಲ್ಲ. ಬಸ್ ನಿರ್ವಹಣೆಗೆ ಬೇಕಾದಷ್ಟು ಹಣ ಸರ್ಕಾರದ ಬಳಿ ಇಲ್ಲ” ಎಂದು ಆರೋಪಿಸಿದರು.

ಸಾರಿಗೆ ನೌಕರರಿಗೆ ಸಂಬಳ ಪಾವತಿ ವಿಚಾರದಲ್ಲೂ ಸರ್ಕಾರ ಸಮರ್ಪಕ ನಿರ್ಧಾರ ಕೈಗೊಂಡಿಲ್ಲ ಎಂದು ಟೀಕಿಸಿದ ಅವರು, “ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು 4,500 ಇವಿ ಬಸ್‌ಗಳನ್ನು ಬೆಂಗಳೂರಿಗೆ ಒದಗಿಸದೇ ಹೋಗಿದ್ದರೆ ಪರಿಸ್ಥಿತಿ ಇನ್ನೂ ಹದಗೆಡುತ್ತಿತ್ತು” ಎಂದರು.

ಬೆಂಗಳೂರಿನ ಕಸ ಸಮಸ್ಯೆ ಕುರಿತು ಮಾತನಾಡಿದ ನಿಖಿಲ್, “ಒಮ್ಮೆ ಸಿಲಿಕಾನ್ ವ್ಯಾಲಿ ಎಂದು ಕರೆಯಲ್ಪಡುತ್ತಿದ್ದ ನಗರ ಇಂದು ಕಸದ ರಾಶಿಯಿಂದ ತುಂಬಿ ಗಾರ್ಬೇಜ್ ಸಿಟಿಯಾಗಿ ಬದಲಾಗಿದೆ. ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ” ಎಂದು ಆರೋಪಿಸಿದರು.

ಉತ್ತರಾಖಂಡ ಮಾಜಿ ಸಿಎಂ ಭುವನ್ ಚಂದ್ರ ಖಂಡೂರಿ ನಿಧನ

ಡೆಹ್ರಾಡೂನ್: ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ, ಹಿರಿಯ ಬಿಜೆಪಿ ನಾಯಕ ಹಾಗೂ ನಿವೃತ್ತ ಮೇಜರ್ ಜನರಲ್ ಭುವನ್ ಚಂದ್ರ ಖಂಡೂರಿ ಅವರು ನಿಧನರಾಗಿದ್ದಾರೆ. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇಂದು ಡೆಹ್ರಾಡೂನ್‌ನ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಸೇನೆಯಲ್ಲಿ ಮಹತ್ವದ ಸೇವೆ ಸಲ್ಲಿಸಿ ನಿವೃತ್ತರಾದ ಬಳಿಕ ರಾಜಕೀಯ ಪ್ರವೇಶಿಸಿದ್ದ ಖಂಡೂರಿ, ಉತ್ತರಾಖಂಡ ರಾಜಕೀಯದಲ್ಲಿ ಪ್ರಾಮಾಣಿಕ ಮತ್ತು ಶಿಸ್ತಿನ ಆಡಳಿತಗಾರರಾಗಿ ಗುರುತಿಸಿಕೊಂಡಿದ್ದರು.

ಅವರು ಎರಡು ಅವಧಿಗೆ ಉತ್ತರಾಖಂಡ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು. ಮೊದಲ ಬಾರಿ 2007ರಿಂದ 2009ರವರೆಗೆ ಹಾಗೂ ಎರಡನೇ ಬಾರಿ 2011ರಿಂದ 2012ರವರೆಗೆ ರಾಜ್ಯದ ಆಡಳಿತ ಚುಕ್ಕಾಣಿ ಹಿಡಿದಿದ್ದರು.

ತಮ್ಮ ಆಡಳಿತಾವಧಿಯಲ್ಲಿ ಭ್ರಷ್ಟಾಚಾರದ ವಿರುದ್ಧ ಕಠಿಣ ನಿಲುವು ತಾಳಿ, ಪಾರದರ್ಶಕ ಹಾಗೂ ಶಿಸ್ತುಬದ್ಧ ಆಡಳಿತ ವ್ಯವಸ್ಥೆ ರೂಪಿಸಲು ಮಹತ್ವದ ಹೆಜ್ಜೆಗಳನ್ನು ಇಟ್ಟಿದ್ದರು. ಅವರ ಆಡಳಿತ ಶೈಲಿ ಜನಸಾಮಾನ್ಯರಲ್ಲಿ ವಿಶ್ವಾಸ ಮೂಡಿಸಿತ್ತು.

ಜನರಲ್ ಖಂಡೂರಿ ಅವರ ನಿಧನಕ್ಕೆ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಸೇರಿದಂತೆ ಹಲವು ರಾಜಕೀಯ ನಾಯಕರು ಸಂತಾಪ ಸೂಚಿಸಿದ್ದಾರೆ.

ಮುಖ್ಯಮಂತ್ರಿ ಧಾಮಿ, “ಭುವನ್ ಚಂದ್ರ ಖಂಡೂರಿ ಅವರ ನಿಧನ ರಾಷ್ಟ್ರೀಯ ರಾಜಕೀಯಕ್ಕೆ ತುಂಬಲಾಗದ ನಷ್ಟ. ರಾಜ್ಯದ ಅಭಿವೃದ್ಧಿ ಹಾಗೂ ಸುಶಾಸನಕ್ಕಾಗಿ ಅವರು ನೀಡಿದ ಕೊಡುಗೆ ಸದಾ ಸ್ಮರಣೀಯ” ಎಂದು ದುಃಖ ವ್ಯಕ್ತಪಡಿಸಿದ್ದಾರೆ.

ಖಂಡೂರಿ ಅವರ ಅಗಲಿಕೆಯಿಂದ ಉತ್ತರಾಖಂಡ ಮಾತ್ರವಲ್ಲದೆ ರಾಷ್ಟ್ರೀಯ ರಾಜಕೀಯ ವಲಯದಲ್ಲೂ ಶೋಕದ ವಾತಾವರಣ ನಿರ್ಮಾಣವಾಗಿದೆ. ಅವರ ಅಂತಿಮ ದರ್ಶನಕ್ಕೆ ರಾಜಕೀಯ ಮುಖಂಡರು, ಕಾರ್ಯಕರ್ತರು ಹಾಗೂ ಅಭಿಮಾನಿಗಳು ಆಗಮಿಸುತ್ತಿದ್ದಾರೆ.

 

‘ನಿಮ್ಮ ಮುಂದೆ ಸಾಯೋಕೆ ಆಗಲ್ಲ’ : ಭಾವುಕ ಪತ್ರ ಬರೆದಿಟ್ಟು ನಾಪತ್ತೆಯಾದ ಅಪ್ರಾಪ್ತ ಅಕ್ಕ-ತಂಗಿ

0

ಮಂಡ್ಯ: ತಾಯಿ ಬೈದಿದ್ದಕ್ಕೆ ಮನನೊಂದು ಇಬ್ಬರು ಅಪ್ರಾಪ್ತ ಸಹೋದರಿಯರು ಮನೆ ಬಿಟ್ಟು ನಾಪತ್ತೆಯಾಗಿರುವ ಘಟನೆ ಶ್ರೀರಂಗಪಟ್ಟಣ ತಾಲೂಕಿನ ಕಾಳೇನಹಳ್ಳಿಯಲ್ಲಿ ಬೆಳಕಿಗೆ ಬಂದಿದೆ. ಮನೆಯಿಂದ ತೆರಳುವ ಮುನ್ನ ಅವರು ಬರೆದಿಟ್ಟಿರುವ ಭಾವುಕ ಪತ್ರ ಪೋಷಕರ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.

ಸುಜಾತಾ (16) ಮತ್ತು ರುಕ್ಮಿಣಿ (14) ಎಂಬ ಸಹೋದರಿಯರು ತಮ್ಮ ತಂದೆ ರಾಮಚಂದ್ರ ಅವರ ಮನೆಯಿಂದ ಕಾಣೆಯಾಗಿದ್ದಾರೆ. ಕುಟುಂಬದವರ ಮಾಹಿತಿ ಪ್ರಕಾರ, ಮನೆಯಲ್ಲಿನ ಸಣ್ಣ ವಿಚಾರಕ್ಕೆ ತಾಯಿ ಬೈದಿದ್ದರು ಎನ್ನಲಾಗಿದೆ.

ಮನೆಯಲ್ಲೇ ಬರೆದಿಟ್ಟು ಹೋಗಿರುವ ಪತ್ರದಲ್ಲಿ, ‘ಅಮ್ಮ-ಅಪ್ಪ ಸಾರಿ… ನಿಮ್ಮ ಕಣ್ಮುಂದೆ ಸಾಯೋಕೆ ಆಗಲ್ಲ. ನಾವು ದೂರ ಹೋಗಿ ಸತ್ತಿದ್ದೇವೆ’ ಎಂದು ಉಲ್ಲೇಖಿಸಲಾಗಿದೆ. ಈ ಬರಹ ಕಂಡ ಕುಟುಂಬಸ್ಥರು ಬೆಚ್ಚಿಬಿದ್ದಿದ್ದಾರೆ.

ತಕ್ಷಣವೇ ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಗೆ ತೆರಳಿದ ಪೋಷಕರು ಮಕ್ಕಳ ಪತ್ತೆಗೆ ಮನವಿ ಮಾಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿವಿಧ ಕಡೆಗಳಲ್ಲಿ ಹುಡುಕಾಟ ಆರಂಭಿಸಿದ್ದಾರೆ.

ಕುಟುಂಬಸ್ಥರು ಮತ್ತು ಗ್ರಾಮಸ್ಥರು ಆತಂಕದಲ್ಲಿದ್ದು, ಬಾಲಕಿಯರು ಸುರಕ್ಷಿತವಾಗಿ ಪತ್ತೆಯಾಗಲಿ ಎಂದು ಪ್ರಾರ್ಥಿಸುತ್ತಿದ್ದಾರೆ.

‘ನನ್ನ ಜಾತಿ ನಿಮಗೆ ಗೊತ್ತೇ?’: ಗಡ್ಕರಿ ವಿರುದ್ಧ ನಾನಾ ಪಾಟೇಕರ್ ಆಕ್ರೋಶ

ನಾಗ್ಪುರ: ನಟ ನಾನಾ ಪಾಟೇಕರ್ ಅವರು ನಾಗ್ಪುರದ ರೇಷ್ಮಿಬಾಗ್‌ನಲ್ಲಿ ನಡೆದ ‘ಜಲಕ್ರಾಂತಿ’ ಸಮಾವೇಶದಲ್ಲಿ ಜಾತಿ ಮತ್ತು ಧರ್ಮದ ರಾಜಕಾರಣದ ವಿರುದ್ಧ ತೀವ್ರವಾಗಿ ಮಾತನಾಡಿದ್ದಾರೆ. ವೇದಿಕೆಯಲ್ಲಿದ್ದ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಉದ್ದೇಶಿಸಿ, ‘ನನ್ನ ಜಾತಿ ನಿಮಗೆ ಗೊತ್ತೇ?’ ಎಂದು ಪ್ರಶ್ನಿಸುವ ಮೂಲಕ ಗಮನ ಸೆಳೆದಿದ್ದಾರೆ.

ತಮ್ಮ ಭಾಷಣದಲ್ಲಿ ಅವರು ಬಾಲ್ಯದ ಶಿಕ್ಷಣ ಮತ್ತು ತಾಯಿಯ ನೈತಿಕ ಬೋಧನೆಗಳನ್ನು ನೆನಪಿಸಿಕೊಂಡರು. ‘ಮಾನವ ಜನ್ಮವೇ ಜಾತಿ, ಮಾನವೀಯತೆಯೇ ಧರ್ಮ’ ಎಂಬ ಸಂದೇಶವನ್ನು ತಾಯಿ ನೀಡಿದ್ದನ್ನು ಅವರು ಉಲ್ಲೇಖಿಸಿದರು.

ಸಮಾಜದಲ್ಲಿ ವ್ಯಕ್ತಿಯ ಗುರುತನ್ನು ಜಾತಿಯಿಂದ ನಿರ್ಧರಿಸುವ ಪ್ರವೃತ್ತಿಯನ್ನು ಅವರು ಕಟುವಾಗಿ ಟೀಕಿಸಿದರು. ಶಿಕ್ಷಣ ಮತ್ತು ಮಾನವೀಯತೆ ಇಲ್ಲದೆ ಜಾತಿವಾದವನ್ನು ನಿರ್ಮೂಲ ಮಾಡುವುದು ಅಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.

ಇದೇ ವೇಳೆ ಅವರು ನಿತಿನ್ ಗಡ್ಕರಿ ಅವರನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದು, ನೀರಿನ ಸಂರಕ್ಷಣೆಯ ವಿವಿಧ ಯೋಜನೆಗಳನ್ನೂ ಮೆಚ್ಚಿದ್ದಾರೆ.

ಸಿನಿಮಾ ಕ್ಷೇತ್ರದಲ್ಲಿ ಇತ್ತೀಚೆಗೆ ನಾನಾ ಪಾಟೇಕರ್ ಅವರು ನಟನೆಯಿಂದ ದೂರ ಸರಿಯುವ ಸೂಚನೆ ನೀಡಿದ್ದು, ಇದು ಅಭಿಮಾನಿಗಳಿಗೆ ಬೇಸರ ತಂದಿತ್ತು.

ಅಭಿಮಾನಿಗಳ ಜೊತೆ 40ನೇ ವಿವಾಹ ವಾರ್ಷಿಕೋತ್ಸವ ಆಚರಿಸಿದ ಶಿವರಾಜ್‌ಕುಮಾರ್-‌ ಗೀತಾ ಜೋಡಿ

ಬೆಂಗಳೂರು: ಸ್ಯಾಂಡಲ್‌ವುಡ್ ನಟ ಶಿವರಾಜ್ ಕುಮಾರ್ ಮತ್ತು ಗೀತಾ ಶಿವರಾಜ್ ಕುಮಾರ್ ಇಂದು ತಮ್ಮ 40ನೇ ವಿವಾಹ ವಾರ್ಷಿಕೋತ್ಸವವನ್ನು ಅಭಿಮಾನಿಗಳ ಸಮ್ಮುಖದಲ್ಲಿ ಸರಳವಾಗಿ ಆಚರಿಸಿಕೊಂಡಿದ್ದಾರೆ. 1986ರಲ್ಲಿ ವಿವಾಹವಾದ ಈ ದಂಪತಿ ನಾಲ್ಕು ದಶಕಗಳ ದಾಂಪತ್ಯ ಜೀವನವನ್ನು ಪೂರೈಸಿದ್ದಾರೆ.

ಈ ವಿಶೇಷ ದಿನದ ಹಿನ್ನೆಲೆಯಲ್ಲಿ ಅಭಿಮಾನಿಗಳು ಶಿವರಾಜ್ ಕುಮಾರ್ ನಿವಾಸದ ಮುಂದೆ ಸೇರಿ ದಂಪತಿಗೆ ಹಾರ, ಹೂವು ಮತ್ತು ಶುಭಾಶಯಗಳನ್ನು ಸಲ್ಲಿಸಿದರು. ಶಿವರಾಜ್ ಮತ್ತು ಗೀತಾ ಇಬ್ಬರೂ ಅಭಿಮಾನಿಗಳನ್ನು ಭೇಟಿಯಾಗಿ ಆತ್ಮೀಯವಾಗಿ ಮಾತನಾಡಿದರು.

ದಂಪತಿ ಅಭಿಮಾನಿಗಳೊಂದಿಗೆ ಫೋಟೋ ತೆಗೆಸಿಕೊಂಡು, ಕೇಕ್ ಕತ್ತರಿಸಿ ಪರಸ್ಪರ ತಿನ್ನಿಸಿ ಸಂತೋಷ ಹಂಚಿಕೊಂಡರು. ಅಭಿಮಾನಿಗಳು ಜೈಕಾರಗಳೊಂದಿಗೆ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿದರು.

ಪ್ರತಿ ವರ್ಷವೂ ಶಿವರಾಜ್ ಕುಮಾರ್ ಅವರ ಹುಟ್ಟುಹಬ್ಬ ಹಾಗೂ ವಿವಾಹ ವಾರ್ಷಿಕೋತ್ಸವವನ್ನು ಅಭಿಮಾನಿಗಳು ಸಂಭ್ರಮದಿಂದ ಆಚರಿಸುತ್ತ ಬಂದಿದ್ದು, ಈ ವರ್ಷವೂ ಅದೇ ಉತ್ಸಾಹ ಮುಂದುವರಿದಿದೆ.

ಕಾನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಮೌನಿ ರಾಯ್ ಗ್ಲಾಮರ್ ಶೋ: ವಿಚ್ಛೇದನದ ಬಳಿಕವೂ ಹೈ-ಫ್ಯಾಶನ್

ಫ್ರಾನ್ಸ್: ವೈಯಕ್ತಿಕ ಜೀವನದ ವಿವಾದಗಳ ನಡುವೆಯೂ ಬಾಲಿವುಡ್ ನಟಿ ಮೌನಿ ರಾಯ್ ತಮ್ಮ ವೃತ್ತಿಜೀವನದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. ಉದ್ಯಮಿ ಸೂರಜ್ ನಂಬಿಯಾರ್ ಜೊತೆಗಿನ ವಿಚ್ಛೇದನದ ಸುದ್ದಿಯ ಬೆನ್ನಲ್ಲೇ ಅವರು ಕಾನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಭಾಗವಹಿಸಿ ಗಮನ ಸೆಳೆದಿದ್ದಾರೆ.

ಫ್ರೆಂಚ್ ರಿವೇರಾದಿಂದ ಮೌನಿ ರಾಯ್ ಹಂಚಿಕೊಂಡಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿವೆ. ‘ಕಾನ್ ಮತ್ತು ಗೊಂದಲಗಳು! ಶುಭೋದಯ’ ಎಂಬ ಕ್ಯಾಪ್ಷನ್‌ ಸಹ ಅಭಿಮಾನಿಗಳ ಗಮನ ಸೆಳೆದಿದೆ.

ಕಪ್ಪು ಮತ್ತು ಬಿಳುಪು ಸಂಯೋಜನೆಯ ಹೈ-ಫ್ಯಾಶನ್ ಡ್ರೆಸ್‌ನಲ್ಲಿ ಮೌನಿ ರಾಯ್ ರೆಡ್ ಕಾರ್ಪೆಟ್‌ನಲ್ಲಿ ಕಾಣಿಸಿಕೊಂಡಿದ್ದು, ಕೋಟ್, ಸ್ಟಾಕಿಂಗ್ಸ್ ಮತ್ತು ಬೂಟುಗಳೊಂದಿಗೆ ಸ್ಟೈಲಿಷ್ ಲುಕ್‌ನಲ್ಲಿ ಮಿಂಚಿದ್ದಾರೆ.

‘ಬಾಂಬೆ ಸ್ಟೋರೀಸ್’ ಸಿನಿಮಾದ ಪ್ರದರ್ಶನಕ್ಕಾಗಿ ಅವರು ಸಹ-ನಟಿ ಅನುಪ್ರಿಯಾ ಗೊಯೆಂಕಾ ಜೊತೆ ಕಾನ್‌ಗೆ ತೆರಳಿದ್ದಾರೆ. ಇದು ಕಾನ್ ಫೆಸ್ಟಿವಲ್‌ನಲ್ಲಿ ಅವರ ಎರಡನೇ ಭಾಗವಹಿಸುವಿಕೆ.

ವಿಚ್ಛೇದನದ ಕುರಿತು ಹರಡಿದ್ದ ವದಂತಿಗಳಿಗೆ ಸೂರಜ್ ನಂಬಿಯಾರ್ ಸ್ಪಷ್ಟನೆ ನೀಡಿದ್ದು, ಎಲ್ಲಾ ಸುದ್ದಿಗಳನ್ನು ಸುಳ್ಳು ಎಂದು ಹೇಳಿ, ಯಾವುದೇ ಆರ್ಥಿಕ ವಿವಾದ ಅಥವಾ ಮೂರನೇ ವ್ಯಕ್ತಿಯ ಹಸ್ತಕ್ಷೇಪವಿಲ್ಲ ಎಂದು ತಿಳಿಸಿದ್ದಾರೆ.

“ರೈತರ ಆತಂಕಕ್ಕೆ ಅಂತ್ಯ: ಚಿಕ್ಕಮಗಳೂರಿನಲ್ಲಿ ದೈತ್ಯ ಕಾಡುಕೋಣ ಸೆರೆ

ಚಿಕ್ಕಮಗಳೂರು: ರೈತರಿಗೆ ತೀವ್ರ ಕಾಟ ನೀಡುತ್ತಿದ್ದ ಕಾಡುಕೋಣಗಳ ಹಾವಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಆರಂಭಿಸಿದ್ದ ‘ಆಪರೇಷನ್ ಕಾಡುಕೋಣ’ ಯಶಸ್ವಿಯಾಗಿ ಮುಕ್ತಾಯವಾಗಿದೆ. ಮೂರು ಕಾಡುಕೋಣಗಳ ಪೈಕಿ ಒಂದು ದೈತ್ಯ ಕಾಡುಕೋಣವನ್ನು ಅಧಿಕಾರಿಗಳು ಸೆರೆ ಹಿಡಿದಿದ್ದಾರೆ.

ಕಳೆದ ಎರಡು ದಿನಗಳಿಂದ ಅರಣ್ಯ ಸಿಬ್ಬಂದಿ ನಡೆಸಿದ ಸಂಘಟಿತ ಕಾರ್ಯಾಚರಣೆ ಬಳಿಕ ಈ ಯಶಸ್ಸು ಸಾಧಿಸಲಾಗಿದ್ದು, ರೈತ ಸಮುದಾಯದಲ್ಲಿ ಆತಂಕದ ವಾತಾವರಣ ಕಡಿಮೆಯಾಗಿದೆ. ಈ ರೀತಿಯ ಕಾರ್ಯಾಚರಣೆ ದಕ್ಷಿಣ ಭಾರತದಲ್ಲೇ ಮೊದಲ ಬಾರಿಗೆ ನಡೆದಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.

ಸೆರೆ ಸಿಕ್ಕ ಕಾಡುಕೋಣವನ್ನು ತಕ್ಷಣವೇ ಶಿವಮೊಗ್ಗದ ತ್ಯಾವರೆಕೊಪ್ಪ ವನ್ಯಜೀವಿ ಉದ್ಯಾನಕ್ಕೆ ಸ್ಥಳಾಂತರಿಸಲಾಗಿದೆ.

ಮಲೆನಾಡಿನ ಹಲವು ಭಾಗಗಳಲ್ಲಿ ಬೆಳೆ ನಾಶ ಹಾಗೂ ಜನರ ಮೇಲೆ ದಾಳಿ ಭೀತಿ ಉಂಟಾಗಿದ್ದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿತ್ತು. ಕಾರ್ಯಾಚರಣೆಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಘಟನೆ ಸ್ಥಳಕ್ಕೆ ಭೇಟಿ ನೀಡಿದ ಶೃಂಗೇರಿ ಶಾಸಕ ಟಿ.ಡಿ. ರಾಜೇಗೌಡ ಅರಣ್ಯ ಸಿಬ್ಬಂದಿಯ ಕಾರ್ಯವನ್ನು ಪ್ರಶಂಸಿಸಿದ್ದಾರೆ.

ಆದರೆ ಪರಿಸರವಾದಿಗಳು ಈ ಕಾರ್ಯಾಚರಣೆಗೆ ವಿರೋಧ ವ್ಯಕ್ತಪಡಿಸಿದ್ದು, ಕಾಡುಕೋಣಗಳು ಒತ್ತಡಕ್ಕೆ ಒಳಗಾದರೆ ಗಂಭೀರ ಪರಿಣಾಮ ಉಂಟಾಗಬಹುದು ಎಂದು ಎಚ್ಚರಿಸಿದ್ದಾರೆ.

ತಾಂತ್ರಿಕ ದೋಷದಿಂದ ಲಿಫ್ಟ್ ಲಾಕ್! ವಿಶಾಲ್ ಮಾರ್ಟ್‌ನಲ್ಲಿ 9 ಜನರ ರೋಚಕ ರೆಸ್ಕ್ಯೂ ಆಪರೇಷನ್

ಶಿವಮೊಗ್ಗ: ನಗರದ ವಿಶಾಲ್ ಮಾರ್ಟ್ ಕಟ್ಟಡದಲ್ಲಿ ಲಿಫ್ಟ್ ಹಠಾತ್ ಸ್ಥಗಿತಗೊಂಡ ಪರಿಣಾಮ 9 ಮಂದಿ ಗ್ರಾಹಕರು ಒಂದು ಗಂಟೆಗೂ ಹೆಚ್ಚು ಕಾಲ ಒಳಗೆ ಸಿಲುಕಿದ ಘಟನೆ ನಡೆದಿದೆ. ಅಗ್ನಿಶಾಮಕ ದಳದ ತ್ವರಿತ ಕ್ರಮದಿಂದ ಎಲ್ಲರೂ ಸುರಕ್ಷಿತವಾಗಿ ರಕ್ಷಿತರಾಗಿದ್ದಾರೆ.

ತಾಂತ್ರಿಕ ದೋಷದಿಂದ ಲಿಫ್ಟ್ ಮೊದಲ ಮಹಡಿಯಲ್ಲಿ ನಿಂತು ಹೋಗಿದ್ದು, ಒಳಗೆ ಭರತ್, ಅನುಷಾ, ಅನೀಸ್ ಫಾತಿಮಾ, ಮುಸರತ್, ಸೂಬಿಯಾ ಸೇರಿದಂತೆ ಒಟ್ಟು 9 ಮಂದಿ ಸಿಲುಕಿದ್ದರು. ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಅವರು ಲಿಫ್ಟ್‌ನಲ್ಲೇ ಸಿಲುಕಿಕೊಂಡಿದ್ದರು.

ಘಟನೆಯ ವೇಳೆ ಕೆಲವರು ಭಯಭೀತರಾಗಿ ಕೂಗಾಡಿದ್ದು, ಮಹಿಳೆಯೊಬ್ಬರ ಆರೋಗ್ಯಕ್ಕೂ ತೊಂದರೆ ಉಂಟಾಗಿದೆ ಎಂದು ತಿಳಿದುಬಂದಿದೆ.

ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ತಂಡ ಹೈಡ್ರಾಲಿಕ್ ಉಪಕರಣಗಳನ್ನು ಬಳಸಿ ಲಿಫ್ಟ್ ತೆರೆಯುವ ಕಾರ್ಯಾಚರಣೆ ನಡೆಸಿದೆ. ನಂತರ ಒಳಗಿದ್ದ ಎಲ್ಲರನ್ನು ಸುರಕ್ಷಿತವಾಗಿ ಹೊರತೆಗೆಯಲಾಗಿದೆ.

ಅಗ್ನಿಶಾಮಕ ದಳದ ತ್ವರಿತ ಕಾರ್ಯಾಚರಣೆ ಹಾಗೂ ಸಿಬ್ಬಂದಿಯ ಸಮಯೋಚಿತ ಕ್ರಮದಿಂದ ದೊಡ್ಡ ಅನಾಹುತ ತಪ್ಪಿದಂತಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಆಖ್ರಿ ಸವಾಲ್’ ಸಿನಿಮಾ ವೀಕ್ಷಕರಿಗೆ ಬಂಪರ್ ಆಫರ್: ಒಂದು ಟಿಕೆಟ್ ಕೊಂಡರೆ ಮತ್ತೊಂದು ಫ್ರೀ

ಮುಂಬೈ: ಭಾರೀ ಚರ್ಚೆಗೆ ಕಾರಣವಾಗಿರುವ ಬಾಲಿವುಡ್ ಸಿನಿಮಾ ‘ಆಖ್ರಿ ಸವಾಲ್’ ಇದೀಗ ಪ್ರೇಕ್ಷಕರನ್ನು ಸೆಳೆಯಲು ವಿಶೇಷ ತಂತ್ರ ಅನುಸರಿಸಿದೆ. ಚಿತ್ರತಂಡ ‘ಒಂದು ಟಿಕೆಟ್ ಖರೀದಿಸಿದರೆ ಮತ್ತೊಂದು ಉಚಿತ’ ಆಫರ್ ಘೋಷಿಸಿದ್ದು, ಸಿನಿಪ್ರೇಮಿಗಳ ಗಮನ ಸೆಳೆಯುತ್ತಿದೆ.

ಚಿತ್ರದ ನಿರ್ಮಾಪಕ ನಿಖಿಲ್ ನಂದಾ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದು, AAKHRISAWAL ಪ್ರೋಮೋ ಕೋಡ್ ಬಳಸಿ ಟಿಕೆಟ್ ಬುಕ್ ಮಾಡಿದರೆ Buy 1 Get 1 Free ಆಫರ್ ದೊರೆಯಲಿದೆ ಎಂದು ತಿಳಿಸಿದ್ದಾರೆ.

ಆರ್‌ಎಸ್‌ಎಸ್ ಹಿನ್ನೆಲೆ, ರಾಜಕೀಯ ಟಚ್ ಮತ್ತು ತನಿಖಾ ಶೈಲಿಯ ಕಥಾಹಂದರದಿಂದ ಸಿನಿಮಾ ಈಗಾಗಲೇ ರಾಷ್ಟ್ರ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದೆ. ಟ್ರೇಲರ್ ಬಿಡುಗಡೆಯಾದ ಕ್ಷಣದಿಂದಲೇ ಸಿನಿಮಾ ಪರ-ವಿರೋಧ ಚರ್ಚೆಗಳು ಜೋರಾಗಿದ್ದವು.

ಆರ್‌ಎಸ್‌ಎಸ್ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಸೇರಿದಂತೆ ಹಲವು ಗಣ್ಯರು ಚಿತ್ರದ ವಿಶೇಷ ಪ್ರದರ್ಶನ ವೀಕ್ಷಿಸಿದ್ದಾರೆ. ದೆಹಲಿಯಲ್ಲಿ ನಡೆದ ಪ್ರೀಮಿಯರ್ ಶೋಗೆ ಪ್ರಮುಖ ರಾಜಕೀಯ ನಾಯಕರು ಭಾಗಿಯಾಗಿದ್ದು, ರಾಷ್ಟ್ರಪತಿ ಭವನದಲ್ಲೂ ಸಿನಿಮಾ ಪ್ರದರ್ಶನಗೊಂಡಿದೆ ಎಂಬ ಮಾಹಿತಿ ಹೊರಬಂದಿದೆ.

ಆದರೆ ಚಿತ್ರದ ವಿರುದ್ಧ ವಿವಾದವೂ ಮುಂದುವರಿದಿದೆ. ಯುಎಇ ಸೆನ್ಸಾರ್ ಮಂಡಳಿ ಕೆಲವು ದೃಶ್ಯಗಳನ್ನು ತೆಗೆದುಹಾಕುವಂತೆ ಸೂಚಿಸಿತ್ತು. ಆದರೆ ಮೂಲ ಕಥೆಗೆ ಧಕ್ಕೆಯಾಗುತ್ತದೆ ಎಂದು ನಿರ್ಮಾಪಕರು ಬದಲಾವಣೆ ಮಾಡಲು ನಿರಾಕರಿಸಿದ ಹಿನ್ನೆಲೆ ಯುಎಇನಲ್ಲಿ ಚಿತ್ರ ಬಿಡುಗಡೆ ಸ್ಥಗಿತಗೊಂಡಿದೆ.

ಚಿತ್ರದ ಕೆಲವು ಅಂಶಗಳನ್ನು ಪ್ರಶ್ನಿಸಿ ನ್ಯಾಯಾಲಯದಲ್ಲೂ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ದಾಖಲಾಗಿದ್ದು, ಸಿನಿಮಾ ಸದ್ಯ ಬಾಕ್ಸ್ ಆಫೀಸ್ ಜೊತೆಗೆ ರಾಜಕೀಯ ವಲಯದಲ್ಲೂ ಚರ್ಚೆಯ ಕೇಂದ್ರಬಿಂದುವಾಗಿದೆ.

ಋಷಿಕೇಶದ ಬಳಿ ಹಳಿ ತಪ್ಪಿದ ಉಜ್ಜಯಿನಿ ಎಕ್ಸ್ ಪ್ರೆಸ್: ತಪ್ಪಿದ ಭಾರೀ ದುರಂತ

ಡೆಹ್ರಾಡೂನ್: ಉತ್ತರಾಖಂಡದ ಋಷಿಕೇಶದ ಖಾಂಡ್ ಗಾಂವ್ ಪ್ರದೇಶದಲ್ಲಿರುವ ಯೋಗ ನಗರಿ ರೈಲು ನಿಲ್ದಾಣದ ಸಮೀಪ ಸೋಮವಾರ ರಾತ್ರಿ ಉಜ್ಜಿಯಿನಿ ಎಕ್ಸ್‌ಪ್ರೆಸ್ ರೈಲಿನ ಮೂರು ಬೋಗಿಗಳು ಹಳಿತಪ್ಪಿದ ಘಟನೆ ನಡೆದಿದೆ. ಅದೃಷ್ಟವಶಾತ್ ಈ ವೇಳೆ ರೈಲಿನಲ್ಲಿ ಯಾವುದೇ ಪ್ರಯಾಣಿಕರು ಇರದ ಕಾರಣ ಭಾರೀ ದುರಂತ ತಪ್ಪಿದೆ.

ಸೋಮವಾರ ರಾತ್ರಿ ಸುಮಾರು 9:30ರ ವೇಳೆಗೆ ಈ ಘಟನೆ ಸಂಭವಿಸಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಅಪಘಾತ ಸಂಭವಿಸಿದ ಸಂದರ್ಭದಲ್ಲಿ ರೈಲು ದಿನನಿತ್ಯದ ನಿರ್ವಹಣಾ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿತ್ತು. ಈ ವೇಳೆ ಬ್ರೇಕ್ ವೈಫಲ್ಯ ಸಂಭವಿಸಿದ ಪರಿಣಾಮ ಬೋಗಿಗಳು ಹಳಿತಪ್ಪಿರುವ ಶಂಕೆ ವ್ಯಕ್ತವಾಗಿದೆ.

ಘಟನೆಯಲ್ಲಿ ಯಾವುದೇ ಪ್ರಯಾಣಿಕರು ಅಥವಾ ಸಿಬ್ಬಂದಿಗೆ ಗಾಯಗಳಾಗಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಅಪಘಾತದ ಮಾಹಿತಿ ದೊರೆಯುತ್ತಿದ್ದಂತೆ ರೈಲ್ವೆ ಅಧಿಕಾರಿಗಳು ಹಾಗೂ ತಾಂತ್ರಿಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ತಕ್ಷಣವೇ ರೈಲು ತೆರವು ಕಾರ್ಯಾಚರಣೆ ಆರಂಭಿಸಿದರು.

ಘಟನೆಗೆ ನಿಖರ ಕಾರಣ ಏನು ಎಂಬುದರ ಕುರಿತು ತನಿಖೆ ಆರಂಭಿಸಲಾಗಿದ್ದು, ತಾಂತ್ರಿಕ ದೋಷವೋ ಅಥವಾ ನಿರ್ವಹಣಾ ಲೋಪವೋ ಎಂಬುದನ್ನು ಪರಿಶೀಲಿಸಲಾಗುತ್ತಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ. ಹಳಿತಪ್ಪಿದ ಬೋಗಿಗಳನ್ನು ಮರುಹಳಿಗೆ ಏರಿಸುವ ಕಾರ್ಯಾಚರಣೆ ಮುಂದುವರಿದಿದ್ದು, ರೈಲು ಸಂಚಾರದ ಮೇಲೆ ಯಾವುದೇ ದೊಡ್ಡ ಮಟ್ಟದ ವ್ಯತ್ಯಯ ಉಂಟಾಗದಂತೆ ಕ್ರಮ ಕೈಗೊಳ್ಳಲಾಗಿದೆ.

error: Content is protected !!