Home Blog

ಗದಗ ಜಿಲ್ಲೆಯ ಸಾಧಕರಿಗೆ ಗೌರವ ಸಮಾರಂಭ: ಸೆ. 9ರಂದು ಗಣ್ಯರ ಸನ್ಮಾನ

0

ವಿಜಯಸಾಕ್ಷಿ ಸುದ್ದಿ, ಗದಗ: ಇತ್ತೀಚೆಗೆ ರಾಜ್ಯದ ವಿವಿಧ ಉನ್ನತ ಹುದ್ದೆಗಳಿಗೆ ಆಯ್ಕೆಯಾಗಿರುವ ಗದಗ ಜಿಲ್ಲೆಯ ಗಣ್ಯರನ್ನು ಗೌರವಿಸುವ ನಿಟ್ಟಿನಲ್ಲಿ ಜಿಲ್ಲಾ ನಾಗರಿಕ ಸಮಿತಿಯಿಂದ ಸೆ. 9ರಂದು ಸನ್ಮಾನ ಸಮಾರಂಭ ಆಯೋಜಿಸಲಾಗಿದೆ ಎಂದು ಮಾಜಿ ಶಾಸಕ ಡಿ.ಆರ್. ಪಾಟೀಲ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಕಾಟನ್ ಸೇಲ್ ಸೊಸೈಟಿ ಆವರಣದಲ್ಲಿ ಸಮಾರಂಭ ನಡೆಯಲಿದ್ದು, ಪ.ಪೂ. ಜಗದ್ಗುರು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳ ದಿವ್ಯ ಸಾನ್ನಿಧ್ಯ ಇರಲಿದೆ. ಶಾಸಕ ಡಾ. ಹೆಚ್.ಕೆ. ಪಾಟೀಲ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.

ರಾಜ್ಯ ವಿಧಾನಸಭೆಯ ಸಭಾಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಯಾಗಿರುವ ರೋಣ ಶಾಸಕ ಜಿ.ಎಸ್. ಪಾಟೀಲ ಹಾಗೂ ರಾಜ್ಯ ವಿಧಾನ ಪರಿಷತ್ ಸಭಾಪತಿಯಾಗಿ ಆಯ್ಕೆಯಾಗಿರುವ ಸಲೀಂ ಅಹ್ಮದ್ ಅವರನ್ನು ಸನ್ಮಾನಿಸಲಾಗುವುದು. ಉನ್ನತ ಶಿಕ್ಷಣ ಸಚಿವ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ರಾಯರೆಡ್ಡಿ ಹಾಗೂ ವಿಧಾನ ಪರಿಷತ್ ಉಪಸಭಾಪತಿಯಾಗಿ ಆಯ್ಕೆಯಾಗಿರುವ ಉಮಾಶ್ರೀ ಅವರನ್ನೂ ಗೌರವಿಸಲಾಗುವುದು ಎಂದು ಹೇಳಿದರು.

ವಿಧಾನಸಭೆ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಮಂಕಾಳ ವೈದ್ಯ ಹಾಗೂ ಕರ್ನಾಟಕ ಚೇಂಬರ್ ಆಫ್ ಕಾಮರ್ಸ್, ಹುಬ್ಬಳ್ಳಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಜಿ.ಕೆ. ಆದಪ್ಪಗೌಡ್ರ ಅವರಿಗೂ ಸನ್ಮಾನ ನಡೆಯಲಿದೆ ಎಂದು ತಿಳಿಸಿದರು.

ಸಮಾರಂಭದಲ್ಲಿ ಸಂಸದ ಬಸವರಾಜ ಬೊಮ್ಮಾಯಿ, ಶಾಸಕರಾದ ಸಿ.ಸಿ. ಪಾಟೀಲ, ಎನ್.ಹೆಚ್. ಕೋನರಡ್ಡಿ, ಡಾ. ಚಂದ್ರು ಲಮಾಣಿ, ವಿಧಾನ ಪರಿಷತ್ ಸದಸ್ಯರಾದ ಪ್ರೊ. ಎಸ್.ವಿ. ಸಂಕನೂರ, ಎಫ್.ಹೆಚ್. ಜಕ್ಕಪ್ಪನವರ, ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ, ರಾಮಕೃಷ್ಣ ದೊಡ್ಡಮನಿ, ರಾಮಣ್ಣ ಲಮಾಣಿ, ಕೃಷ್ಣಾ ಪರಾಪೂರ, ಶಕುಂತಲಾ ಅಕ್ಕಿ, ಸುಜಾತಾ ದೊಡ್ಡಮನಿ, ವಾಸಣ್ಣ ಕುರಡಗಿ, ಸಿದ್ದಲಿಂಗೇಶ್ವರ ಪಾಟೀಲ ಸೇರಿದಂತೆ ಗಣ್ಯರು ಭಾಗವಹಿಸಲಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ, ಸಿದ್ಧಲಿಂಗೇಶ್ವರ ಪಾಟೀಲ, ಸುಜಾತಾ ದೊಡ್ಡಮನಿ, ವಾಸಣ್ಣ ಕುರಡಗಿ, ಕೆ.ಎಚ್. ಪಾಟೀಲ, ರಾಮಕೃಷ್ಣ ದೊಡ್ಡಮನಿ, ಟಿ. ಈಶ್ವರ, ಬಿ.ಬಿ. ಅಸೂಟಿ, ಫಾರೂಕ್ ಹುಬ್ಬಳ್ಳಿ ಹಾಗೂ ವಿವೇಕ ಯಾವಗಲ್ ಉಪಸ್ಥಿತರಿದ್ದರು.

ಒಂದೇ ಜಿಲ್ಲೆಯ ಇಬ್ಬರು ಜನಪ್ರತಿನಿಧಿಗಳು ವಿಧಾನ ಪರಿಷತ್ ಹಾಗೂ ವಿಧಾನಸಭೆಯ ಅಧ್ಯಕ್ಷರಾಗಿರುವುದು ಸಂತಸ ತಂದಿದೆ. ರಾಜ್ಯವನ್ನು ಪ್ರಗತಿಯತ್ತ ಕೊಂಡೊಯ್ಯುವ ದೊಡ್ಡ ಜವಾಬ್ದಾರಿ ಸಲೀಂ ಅಹ್ಮದ್ ಹಾಗೂ ಜಿ.ಎಸ್. ಪಾಟೀಲ ಅವರಿಗೆ ದೊರೆತಿದೆ. ಪಕ್ಷಾತೀತವಾಗಿ ಪ್ರೀತಿ, ವಿಶ್ವಾಸ ಗಳಿಸಿಕೊಂಡು ಇಬ್ಬರೂ ತಮ್ಮ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ.

— ಬಿ.ಆರ್. ಯಾವಗಲ್, ಮಾಜಿ ಸಚಿವ

ಈಶ್ವರಗೌಡ ಬಮ್ಮನಗೌಡ್ರಿಗೆ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ

0

ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ: ಹುಬ್ಬಳ್ಳಿ ಗ್ರಾಮೀಣ ವಲಯದ ಉಣಕಲ್ ಕೆಪಿಎಸ್ ಶಾಲೆಯಲ್ಲಿ ಸಹ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಈಶ್ವರಗೌಡ ಶಂ. ಬಮ್ಮನಗೌಡ್ರ ಅವರಿಗೆ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿದೆ.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸೆ. 5ರಂದು ಧಾರವಾಡದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಮೂಲತಃ ಗದಗ ಜಿಲ್ಲೆ ರೋಣ ತಾಲೂಕಿನ ಗಾಡಗೋಳಿ ಗ್ರಾಮದವರಾದ ಈಶ್ವರಗೌಡ ಬಮ್ಮನಗೌಡ್ರ ಅವರು ಬೆಂಗಳೂರು ಹಾಗೂ ಧಾರವಾಡ ಜಿಲ್ಲೆಗಳ ವಿವಿಧ ಶಾಲೆಗಳಲ್ಲಿ ಸುಮಾರು 28 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿದ್ದಾರೆ.

ಪತ್ರಿಕಾರಂಗದ ಸವಾಲುಗಳ ನಡುವೆಯೂ ದಶಕ ಪೂರೈಸಿದ ‘ವೇರಿ ಗುಡ್ ಮಾರ್ನಿಂಗ್’ : ಎಸ್.ವಿ. ಸಂಕನೂರ

0

ವಿಜಯಸಾಕ್ಷಿ ಸುದ್ದಿ, ಗದಗ: ತಾಂತ್ರಿಕತೆಯ ವೇಗದ ನಡುವೆ ಪತ್ರಿಕಾರಂಗ ಹಲವು ಸವಾಲುಗಳನ್ನು ಎದುರಿಸುತ್ತಿರುವ ಸಂದರ್ಭದಲ್ಲೂ ‘ವೇರಿ ಗುಡ್ ಮಾರ್ನಿಂಗ್’ ಕನ್ನಡ ದಿನಪತ್ರಿಕೆ ಹತ್ತು ವರ್ಷಗಳಿಂದ ಜನಪರ ಹಾಗೂ ಸಾಮಾಜಿಕ ಕಾಳಜಿಯೊಂದಿಗೆ ನಿರಂತರವಾಗಿ ಪತ್ರಿಕಾ ಸೇವೆ ಸಲ್ಲಿಸುತ್ತಿರುವುದು ಶ್ಲಾಘನೀಯ ಎಂದು ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಹೇಳಿದರು.

ನಗರದ ಜಗದ್ಗುರು ತೋಂಟದಾರ್ಯ ಕಲ್ಯಾಣ ಕೇಂದ್ರದಲ್ಲಿ ಗೌತಮ ಬುದ್ಧ ಸೇವಾ ಸಮಿತಿ ವತಿಯಿಂದ ಆಯೋಜಿಸಿದ್ದ ‘ವಾಯ್ಸ್ ಆಫ್ ಗದಗ ಸೀಸನ್-2’ ಕನ್ನಡ ಚಲನಚಿತ್ರ ಗೀತೆಗಳ ರಾಜ್ಯಮಟ್ಟದ ಸ್ಪರ್ಧೆ ಹಾಗೂ ‘ವೇರಿ ಗುಡ್ ಮಾರ್ನಿಂಗ್’ ದಿನಪತ್ರಿಕೆಯ ದಶಮಾನೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಮೊಬೈಲ್ ಹಾಗೂ ಡಿಜಿಟಲ್ ಮಾಧ್ಯಮಗಳ ಪ್ರಾಬಲ್ಯದ ನಡುವೆಯೂ ಸ್ಥಳೀಯ, ಜಿಲ್ಲಾ, ರಾಜ್ಯ ಹಾಗೂ ಅಂತಾರಾಷ್ಟ್ರೀಯ ವಿದ್ಯಮಾನಗಳನ್ನು ಜನರಿಗೆ ತಲುಪಿಸುವ ಮೂಲಕ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗದ ಲೋಪಗಳನ್ನು ತಿದ್ದಿ ಸಮಾಜವನ್ನು ಎಚ್ಚರಿಸುವ ಗುರುತರ ಜವಾಬ್ದಾರಿ ಪತ್ರಿಕಾರಂಗಕ್ಕಿದ್ದು, ಸಂಪಾದಕ ದೇವಪ್ಪ ಎನ್. ಲಿಂಗದಾಳ ಅವರ ನೇತೃತ್ವದಲ್ಲಿ ‘ವೇರಿ ಗುಡ್ ಮಾರ್ನಿಂಗ್’ ಆ ಕಾರ್ಯ ಮಾಡುತ್ತಿದೆ ಎಂದರು.

ಪತ್ರಕರ್ತ ಅನಂತ ಕಾರ್ಕಳ ಮಾತನಾಡಿ, ಹಲವು ಸವಾಲುಗಳ ನಡುವೆಯೂ ‘ವೇರಿ ಗುಡ್ ಮಾರ್ನಿಂಗ್’ ಹತ್ತು ವರ್ಷಗಳ ಪಯಣ ಪೂರ್ಣಗೊಳಿಸಿರುವುದು ಸಂಪಾದಕ ದೇವಪ್ಪ ಎನ್. ಲಿಂಗದಾಳ ಹಾಗೂ ಸಿದ್ದಪ್ಪ ಎನ್. ಲಿಂಗದಾಳ ಅವರ ಪರಿಶ್ರಮದ ಫಲವಾಗಿದೆ. ಪತ್ರಿಕೆ ಜನಪ್ರಿಯವಾಗಿ ಹೊರಹೊಮ್ಮಲು ಅವರ ನಿರಂತರ ಶ್ರಮ ಕಾರಣ. ಪತ್ರಿಕೆಯ ಆರಂಭದ ದಿನಗಳಿಂದಲೂ ತಮ್ಮಿಂದಾದ ಪ್ರೋತ್ಸಾಹ ಹಾಗೂ ಮಾರ್ಗದರ್ಶನ ನೀಡುತ್ತಿದ್ದು, ಮುಂದೆಯೂ ಪತ್ರಿಕೆ ಶತಮಾನೋತ್ಸವ ಆಚರಿಸುವಂತಾಗಲಿ ಎಂದು ಹಾರೈಸಿದರು.

ದಶಮಾನೋತ್ಸವ ವಿಶೇಷ ಸಂಚಿಕೆ ಬಿಡುಗಡೆಗೊಳಿಸಿದ ಕಿತ್ತೂರು ಕರ್ನಾಟಕ ದಿನಪತ್ರಿಕೆ ಸಂಪಾದಕ ಮಂಜುನಾಥ ಅಬ್ಬಿಗೇರಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಪತ್ರಿಕೆಗಳ ಸಂಪಾದಕರು ಒಗ್ಗಟ್ಟಾಗಿ ಸರ್ಕಾರ ಹಾಗೂ ವಾರ್ತಾ ಇಲಾಖೆಯಿಂದ ದೊರೆಯುವ ಸೌಲಭ್ಯಗಳನ್ನು ನ್ಯಾಯಯುತವಾಗಿ ಪಡೆಯಲು ಸಂಘಟಿತ ಪ್ರಯತ್ನ ನಡೆಸಬೇಕು ಎಂದು ಕರೆ ನೀಡಿದರು.

ತೋಂಟದಾರ್ಯ ಮಠದ ಆಡಳಿತಾಧಿಕಾರಿ ಎಸ್.ಎಸ್. ಪಟ್ಟಣಶೆಟ್ಟರ ಮಾತನಾಡಿ, ಸಮಾಜದ ಅಂಕುಡೊಂಕುಗಳನ್ನು ತಿದ್ದುವಲ್ಲಿ ಪತ್ರಿಕಾರಂಗ ಪ್ರಮುಖ ಪಾತ್ರ ವಹಿಸುತ್ತಿದ್ದು, ‘ವೇರಿ ಗುಡ್ ಮಾರ್ನಿಂಗ್’ ಶೋಷಿತ ಸಮುದಾಯದ ಸಮಸ್ಯೆಗಳಿಗೆ ಧ್ವನಿಯಾಗುತ್ತಿರುವುದು ಪ್ರಶಂಸನೀಯ ಎಂದರು.

‘ರತ್ನಾಕರವಾಣಿ’ ಸಂಪಾದಕ ಜಗದೀಶ ಪೂಜಾರ ಮಾತನಾಡಿ, ‘ವೇರಿ ಗುಡ್ ಮಾರ್ನಿಂಗ್’ ಸಂಪಾದಕರು ಸ್ವಾಭಿಮಾನದಿಂದ ತಮ್ಮ ಕಾರ್ಯವನ್ನು ಮುಂದುವರಿಸುತ್ತಿದ್ದು, ಮಾತಿಗಿಂತ ಕಾಯಕದ ಮೂಲಕ ತಮ್ಮ ಸಾಮರ್ಥ್ಯವನ್ನು ತೋರಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ವಾಯ್ಸ್ ಆಫ್ ಗದಗ: ನಾಗರಾಜ ಹುಣಸಿಕಟ್ಟಿ ಪ್ರಥಮ

ರಾಜ್ಯಮಟ್ಟದ ಗೀತಗಾಯನ ಸ್ಪರ್ಧೆಯಲ್ಲಿ ನಾಗರಾಜ ಹುಣಸಿಕಟ್ಟಿ ಪ್ರಥಮ, ಕೀರ್ತನಾ ಜರತಾರೆ ದ್ವಿತೀಯ, ಶ್ರೇಯಾ ರಂಗರೇಜ ತೃತೀಯ ಹಾಗೂ ಜಯಶ್ರೀ ರಾಜೋಳಿ ಚತುರ್ಥ ಸ್ಥಾನ ಪಡೆದರು.

ಸಂಪಾದಕ ದೇವಪ್ಪ ಎನ್. ಲಿಂಗದಾಳ ಅಧ್ಯಕ್ಷತೆ ವಹಿಸಿದ್ದರು. ಸಿದ್ದಪ್ಪ ಎನ್. ಲಿಂಗದಾಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮವನ್ನು ರಾಜಕರಣ್ ನಿರೂಪಿಸಿದರು. ಮಂಜುನಾಥ ಲಿಂಗದಾಳ ಸ್ವಾಗತಿಸಿದರು. ಬಲರಾಜ ಅರಬರ ವಂದಿಸಿದರು.

ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಜು ಹೆಬ್ಬಳ್ಳಿ, ಪತ್ರಕರ್ತ ಆನಂದ ಸಾಲಿಗ್ರಾಮ, ‘ನಾಗರಿಕ’ ಸಂಪಾದಕ ಅಜೀತ್ ಹೊಂಬಾಳಿ, ‘ಚಕ್ರವರ್ತಿ’ ಪತ್ರಿಕೆ ಸಂಪಾದಕ ಎಸ್.ಆರ್. ಬಾಂಡಗೆ, ‘ಸೂಪರ್ ವಾಣಿ’ ಸಂಪಾದಕ ಮಹಾಂತೇಶ ಮದ್ನೂರ, ದಲಿತ ಯುವ ಸೇನಾ ಸಮಿತಿ ಅಧ್ಯಕ್ಷ ವಿಜಯ್ ಎಸ್. ಮುಳಗುಂದ, ಕಾಂಗ್ರೆಸ್ ಎಸ್ಸಿ ಘಟಕದ ಅಧ್ಯಕ್ಷ ಬಸವರಾಜ ಕಡೇಮನಿ, ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ರಾಜೇಂದ್ರ ಗಡಾದ, ರಾಷ್ಟ್ರಪ್ರಶಸ್ತಿ ಪುರಸ್ಕೃತ ಎಸ್.ಎನ್. ಬಳ್ಳಾರಿ, ಕರ್ನಾಟಕ ರಾಜ್ಯ ಸರ್ಕಾರಿ ಎಸ್ಸಿ-ಎಸ್ಟಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಹರೀಶ ಚವ್ಹಾಣ, ನಗರಸಭೆ ಸದಸ್ಯ ಎಲ್.ಡಿ. ಚಂದಾವರಿ, ಮುಖಂಡ ಸತೀಶ್ ಎಚ್. ಹೂಲಿ, ಪ್ರೊ. ಮಲ್ಲೇಶ ಹೊಸೂರ, ರವಿ ಎಲ್. ಗುಂಜೀಕರ, ಮಲ್ಲಿಕಾರ್ಜುನ ಕಲಕಂಬಿ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಉಪಸ್ಥಿತರಿದ್ದರು.

ಪತ್ರಿಕಾರಂಗ ಹಲವು ಸವಾಲುಗಳ ನಡುವೆಯೂ ‘ವೇರಿ ಗುಡ್ ಮಾರ್ನಿಂಗ್’ ಹತ್ತು ವರ್ಷಗಳಿಂದ ಜನಪರವಾಗಿ ಸೇವೆ ಸಲ್ಲಿಸುತ್ತಿರುವುದು ಶ್ಲಾಘನೀಯ. ಪತ್ರಿಕೆ ಇನ್ನಷ್ಟು ಅಭಿವೃದ್ಧಿ ಹೊಂದಿ ಸಾಮಾಜಿಕ ಸೇವೆಯಲ್ಲಿ ಅವಿರತವಾಗಿ ತೊಡಗಲಿ.

— ಎಸ್.ವಿ. ಸಂಕನೂರ, ವಿಧಾನ ಪರಿಷತ್ ಸದಸ್ಯ

ಸಿಎಸ್ ಪರೀಕ್ಷೆಯಲ್ಲಿ ರೀತ್ ಜೈನ್‌ಗೆ 7ನೇ ರ‍್ಯಾಂಕ್

0

ವಿಜಯಸಾಕ್ಷಿ ಸುದ್ದಿ, ಗದಗ: ಆದರ್ಶ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿನಿ ಕು. ರೀತ್ ಸಚಿನ್ ಜೈನ್ ಅವರು ಕಂಪನಿ ಕಾರ್ಯದರ್ಶಿ (ಸಿಎಸ್) ಪರೀಕ್ಷೆಯಲ್ಲಿ ಅಖಿಲ ಭಾರತ ಮಟ್ಟದಲ್ಲಿ 7ನೇ ರ‍್ಯಾಂಕ್ ಗಳಿಸಿ ಗಮನಾರ್ಹ ಸಾಧನೆ ಮಾಡಿದ್ದಾರೆ.

ಆದರ್ಶ ಶಿಕ್ಷಣ ಸಮಿತಿಯ ವತಿಯಿಂದ ಶಿಕ್ಷಕರ ದಿನಾಚರಣೆಯನ್ನು ಅತ್ಯಂತ ಉತ್ಸಾಹದಿಂದ ಆಚರಿಸಲಾಯಿತು. ಇದೇ ಸಂದರ್ಭದಲ್ಲಿ ಸಿಎಸ್ ಪರೀಕ್ಷೆಯಲ್ಲಿ ದೇಶಕ್ಕೆ 7ನೇ ರ‍್ಯಾಂಕ್ ಗಳಿಸಿದ ಕು. ರೀತ್ ಸಚಿನ್ ಜೈನ್ ಅವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು.

ಆದರ್ಶ ಶಿಕ್ಷಣ ಸಮಿತಿ ಕ್ಯಾಂಪಸ್‌ನಲ್ಲಿಯೇ ತಮ್ಮ ಪದವಿಪೂರ್ವ ಹಾಗೂ ಪದವಿ ಶಿಕ್ಷಣವನ್ನು ಪೂರ್ಣಗೊಳಿಸಿರುವ ರೀತ್ ಜೈನ್ ಅವರ ಸಾಧನೆಯನ್ನು ಕಾರ್ಯಕ್ರಮದಲ್ಲಿ ಗಣ್ಯರು ಹಾಗೂ ಬೋಧಕ ವೃಂದದವರು ಕೊಂಡಾಡಿದರು. ಜೈನ್ ಕುಟುಂಬಕ್ಕೂ ಸಂಸ್ಥೆಗೂ ಇರುವ ದೀರ್ಘಕಾಲದ ಸಂಬಂಧವನ್ನು ಸ್ಮರಿಸಿದ ಹಲವಾರು ಬೋಧಕ ವೃಂದದ ಸದಸ್ಯರು, ರೀತ್ ಜೈನ್ ಅವರ ಶೈಕ್ಷಣಿಕ ಸಾಧನೆ ಹಾಗೂ ಪರಿಶ್ರಮದ ಕುರಿತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

ಸಂಸ್ಥೆಯ ಉಪಾಧ್ಯಕ್ಷರಾದ ಶ್ರೀ ಪಿ.ಆರ್. ಅಡವಿಯವರು ಮಾತನಾಡಿ, ಜೈನ್ ಕುಟುಂಬದ ಶೈಕ್ಷಣಿಕ ಸಾಧನೆ ಹಾಗೂ ಸಂಸ್ಥೆಯೊಂದಿಗಿನ ಅವರ ನಂಟನ್ನು ಸ್ಮರಿಸುತ್ತಾ ರೀತ್ ಜೈನ್ ಅವರ ಸಾಧನೆಯನ್ನು ಶ್ಲಾಘಿಸಿದರು.

ಪದವಿಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯರಾದ ಶ್ರೀ ರವೀಂದ್ರಕುಮಾರ ಕುಲಕರ್ಣಿ, ಪದವಿ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ವಿ.ಟಿ. ನಾಯ್ಕರ್ ಹಾಗೂ ಪ್ರೊ. ಶ್ರೀಮತಿ ಅಕ್ಷತಾ ಎಳ್ಳೂರು ಅವರು ರೀತ್ ಜೈನ್ ಅವರ ಕಠಿಣ ಪರಿಶ್ರಮ, ಶೈಕ್ಷಣಿಕ ಬದ್ಧತೆ ಹಾಗೂ ಸಾಧನೆಯನ್ನು ಮೆಚ್ಚಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಕೆ.ವಿ. ಕುಷ್ಟಗಿ ಅವರು ಕು. ರೀತ್ ಜೈನ್ ಅವರನ್ನು ಅಭಿನಂದಿಸಿ, ಅವರ ವೃತ್ತಿಪರ ಜೀವನದಲ್ಲಿಯೂ ಯಶಸ್ಸು ಮುಂದುವರಿಯಲಿ ಎಂದು ಹಾರೈಸಿದರು. ಶಿಕ್ಷಕರ ದಿನದ ಅಂಗವಾಗಿ ಬೋಧಕ ಸಿಬ್ಬಂದಿಗೆ ಶುಭಾಶಯಗಳನ್ನು ಸಲ್ಲಿಸಿದರು.

ಸಂಸ್ಥೆಯ ಕಾರ್ಯದರ್ಶಿ ಶ್ರೀ ಎ.ಡಿ. ಗೊಡಖಿಂಡಿ ಅವರು ರೀತ್ ಜೈನ್ ಹಾಗೂ ಅವರ ಕುಟುಂಬದೊಂದಿಗಿನ ತಮ್ಮ ಹಿಂದಿನ ನೆನಪುಗಳನ್ನು ಸ್ಮರಿಸಿಕೊಂಡು, ಅವರ ಗಮನಾರ್ಹ ಯಶಸ್ಸಿಗೆ ಸಂತಸ ವ್ಯಕ್ತಪಡಿಸಿದರು.

ಶಿಕ್ಷಕರ ಪ್ರೋತ್ಸಾಹವೇ ಯಶಸ್ಸಿನ ಬಲ

ಸನ್ಮಾನ ಸ್ವೀಕರಿಸಿ ಮಾತನಾಡಿದ ಕು. ರೀತ್ ಜೈನ್ ಅವರು ತಮ್ಮ ಕಾಲೇಜು ದಿನಗಳ ಅನುಭವಗಳು ಹಾಗೂ ನೆನಪುಗಳನ್ನು ಹಂಚಿಕೊಂಡರು. ನಿರಂತರ ಪ್ರೋತ್ಸಾಹ, ಮಾರ್ಗದರ್ಶನ ಮತ್ತು ಪ್ರೇರಣೆ ನೀಡಿದ ಬೋಧಕ ವೃಂದಕ್ಕೆ ಕೃತಜ್ಞತೆ ಸಲ್ಲಿಸಿದ ಅವರು, ಶಿಕ್ಷಕರಿಂದ ದೊರೆತ ಪ್ರೇರಣೆ ಹಾಗೂ ಬೆಂಬಲ ತಮ್ಮ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಹೇಳಿದರು. ತಮ್ಮ ಸಾಧನೆಗೆ ಸಹಕರಿಸಿದ ಇಡೀ ತಂಡಕ್ಕೆ ಧನ್ಯವಾದ ಅರ್ಪಿಸಿದರು.

ಸಂಸ್ಥೆಯ ಚೇರ್ಮನ್ ಶ್ರೀ ಆನಂದ್ ಎಲ್. ಪೋತ್ನಿಸ್ ಅವರು ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಆದರ್ಶ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಸಿ.ಎ., ಸಿ.ಎಸ್. ಸೇರಿದಂತೆ ವಿವಿಧ ಶೈಕ್ಷಣಿಕ ಹಾಗೂ ವೃತ್ತಿಪರ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಮಾಡುತ್ತಿರುವುದು ಸಂಸ್ಥೆಗೆ ಸಂತಸ ಹಾಗೂ ಹೆಮ್ಮೆಯ ವಿಷಯವಾಗಿದೆ ಎಂದರು. ಸ್ಪರ್ಧಾತ್ಮಕ ಯುಗದಲ್ಲಿ ಇನ್ನಷ್ಟು ವಿದ್ಯಾರ್ಥಿಗಳು ಉನ್ನತ ಸಾಧನೆ ಮಾಡುವ ಮೂಲಕ ಸಂಸ್ಥೆಗೆ ಕೀರ್ತಿ ತರುವಂತಾಗಲಿ ಎಂದು ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಜಂಟಿ ಕಾರ್ಯದರ್ಶಿ ಶ್ರೀ ಶೈಲೇಶ್ ಬಾಗ್ಮಾರ್, ಶ್ರೀ ಎ.ವೈ. ಇಂಚಲ, ಮೂರು ಅಂಗಸಂಸ್ಥೆಗಳ ಪ್ರಾಚಾರ್ಯರು, ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಪೌರಕಾರ್ಮಿಕರಿಗೆ ಅವಮಾನ: ಕೃಷ್ಣ ಬೈರೇಗೌಡ ಕ್ಷಮೆ ಕೇಳಲಿ

0

ವಿಜಯಸಾಕ್ಷಿ ಸುದ್ದಿ, ಗದಗ: ಕೆಲಸ ಖಾಯಂ ಸೇರಿದಂತೆ ತಮ್ಮ ಹಕ್ಕುಗಳಿಗಾಗಿ ಮನವಿ ಸಲ್ಲಿಸಲು ಬಂದ ಪೌರಕಾರ್ಮಿಕರನ್ನು ಸಚಿವ ಕೃಷ್ಣ ಬೈರೇಗೌಡ ಅವರು ನಡೆಸಿಕೊಂಡ ರೀತಿಯನ್ನು ಖಂಡಿಸಿರುವ ಪತ್ರಕರ್ತರು, ಲೇಖಕರು, ನ್ಯಾಯವಾದಿಗಳು ಹಾಗೂ ಸಾಮಾಜಿಕ ಕಾರ್ಯಕರ್ತರು, ಪೌರಕಾರ್ಮಿಕ ಸಮುದಾಯದ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ.

ಈ ಕುರಿತು ಮಾಧ್ಯಮಗಳಿಗೆ ಬಿಡುಗಡೆ ಮಾಡಿರುವ ಪತ್ರದಲ್ಲಿ, ಸರ್ಕಾರಿ ಕೆಲಸದಲ್ಲಿ ಲೋಪಗಳಿದ್ದರೆ ಜವಾಬ್ದಾರಿಯುತ ಸಚಿವರು ಪ್ರಶ್ನಿಸುವುದು ಸಹಜ. ಆದರೆ ಪೌರಕಾರ್ಮಿಕರನ್ನೇ ಗುರಿಯಾಗಿಸಿ ಪ್ರಶ್ನಿಸುವ ಧೋರಣೆ ಪೂರ್ವಗ್ರಹಪೀಡಿತವಾಗಿದ್ದರೆ ಅದು ಅಕ್ಷಮ್ಯ ಎಂದು ಹೇಳಿದ್ದಾರೆ.

ಪೌರಕಾರ್ಮಿಕರ ಕೆಲಸದ ಪರಿಸ್ಥಿತಿ, ಅವರಿಗೆ ಅಗತ್ಯ ಸುರಕ್ಷತಾ ಪರಿಕರಗಳ ಲಭ್ಯತೆ ಹಾಗೂ ಆರೋಗ್ಯ ತಪಾಸಣೆ ಕುರಿತು ಸರ್ಕಾರ ಗಂಭೀರವಾಗಿ ಗಮನಹರಿಸಬೇಕು. ಕಸ ವಿಲೇವಾರಿ ಸೇರಿದಂತೆ ಅಪಾಯಕಾರಿ ಸ್ವಚ್ಛತಾ ಕಾರ್ಯ ನಿರ್ವಹಿಸುವ ಕಾರ್ಮಿಕರ ಸಮಸ್ಯೆಗಳನ್ನು ಅರಿಯದೆ ಅವರನ್ನೇ ಪ್ರಶ್ನಿಸುವುದು ಸರಿಯಲ್ಲ ಎಂದು ಪತ್ರದಲ್ಲಿ ಆಕ್ಷೇಪಿಸಲಾಗಿದೆ.

ಗುತ್ತಿಗೆದಾರರು ಹಾಗೂ ಅಧಿಕಾರಿಗಳ ಶೋಷಣೆಯಿಂದ ನಲುಗಿರುವ ಪೌರಕಾರ್ಮಿಕರು ತಮ್ಮ ಅಹವಾಲು ಹೇಳಿಕೊಳ್ಳಲು ಬಂದ ಸಂದರ್ಭದಲ್ಲಿ ಸಚಿವರು ಬಳಸಿದ ಭಾಷೆ ಮತ್ತು ಪ್ರಶ್ನಿಸಿದ ರೀತಿ ಸಂವೇದನಾ ರಹಿತವಾಗಿದ್ದು, ನಿರ್ದಯವಾಗಿದೆ. ಅಧಿಕಾರದಲ್ಲಿರುವವರು ಯಾವುದೇ ಸಂದರ್ಭದಲ್ಲೂ ಮಾನವೀಯ ಸಂವೇದನೆ ಕಳೆದುಕೊಳ್ಳಬಾರದು ಎಂದು ಒತ್ತಾಯಿಸಿದ್ದಾರೆ.

ಪೌರಕಾರ್ಮಿಕರನ್ನು ಅವಮಾನಿಸುವ ರೀತಿಯಲ್ಲಿ ನಡೆದುಕೊಂಡಿರುವ ಸಚಿವ ಕೃಷ್ಣ ಬೈರೇಗೌಡ ಅವರು ಕೂಡಲೇ ಪೌರಕಾರ್ಮಿಕ ಸಮುದಾಯದ ಕ್ಷಮೆ ಕೇಳಬೇಕು. ಸಂವೇದನೆ ಕಳೆದುಕೊಂಡಿದ್ದರೆ ಅಧಿಕಾರದಲ್ಲಿ ಮುಂದುವರಿಯುವ ನೈತಿಕ ಹಕ್ಕಿಲ್ಲ, ಅವರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ ಪತ್ರಕ್ಕೆ ರುದ್ರಪ್ಪ ಸಿ., ಎನ್. ರವಿಕುಮಾರ್, ಕೆ.ಪಿ. ಶ್ರೀಪಾಲ್, ವೈ.ಜಿ. ಅಶೋಕ್ ಕುಮಾರ್, ಕೆ.ಎಲ್. ಅಶೋಕ್, ರಶ್ಮಿ ಎಸ್., ಬಸವರಾಜ ಸೂಳಿಭಾವಿ (ಬಸೂ), ಮೀನಾಕ್ಷಿ ಬಾಳಿ, ಡಾ. ಎಚ್.ಎಸ್. ಅನುಪಮಾ, ಸನತಕುಮಾರ ಬೆಳಗಲಿ ಸೇರಿದಂತೆ ವಿವಿಧ ಕ್ಷೇತ್ರಗಳ ಹಲವರು ಸಹಿ ಹಾಕಿದ್ದಾರೆ.

ಅಧಿಕಾರ ಹಂಚಿಕೆಯಲ್ಲಿ ಪ್ರಾದೇಶಿಕ ಸಮತೋಲನ ಇರಲಿ: ಮಹ್ಮದಶಫಿ ನಾಗರಕಟ್ಟಿ

0

ವಿಜಯಸಾಕ್ಷಿ ಸುದ್ದಿ, ಗದಗ: ಉತ್ತರ ಕರ್ನಾಟಕದ ರಾಜಕೀಯ ಹಾಗೂ ಅಧಿಕಾರ ಹಂಚಿಕೆಯಲ್ಲಿ ಪ್ರಾದೇಶಿಕ ಅಸಮತೋಲನ ನಿವಾರಿಸಿ, ಈ ಭಾಗದ ಮುಸ್ಲಿಂ ಸಮುದಾಯಕ್ಕೆ ಸೂಕ್ತ ರಾಜಕೀಯ ಪ್ರಾತಿನಿಧ್ಯ ಕಲ್ಪಿಸಬೇಕು ಎಂದು ಅಖಿಲ ಕರ್ನಾಟಕ ಮುಸ್ಲಿಂ ಮಹಾಸಭಾ (ರಿ.) ಆಗ್ರಹಿಸಿದೆ.

ಹುಬ್ಬಳ್ಳಿಯಲ್ಲಿ ನಡೆದ ಮಹಾಸಭಾದ ಸಭೆಯಲ್ಲಿ ಮಾತನಾಡಿದ ರಾಜ್ಯಾಧ್ಯಕ್ಷ ಮಹ್ಮದಶಫಿ ನಾಗರಕಟ್ಟಿ, ಸಚಿವ ಸಂಪುಟದಲ್ಲಿ ದಕ್ಷಿಣ ಕರ್ನಾಟಕದ ಶಾಸಕರಿಗೆ ಹೆಚ್ಚಿನ ಅವಕಾಶ ದೊರೆತಿದ್ದು, ಉತ್ತರ ಕರ್ನಾಟಕದ ಶಾಸಕರಿಗೆ ಸೂಕ್ತ ಪ್ರಾತಿನಿಧ್ಯ ಸಿಗದಿರುವುದು ಈ ಭಾಗದ ಜನರಲ್ಲಿ ನಿರಾಸೆ ಮೂಡಿಸಿದೆ ಎಂದರು.

ಉತ್ತರ ಕರ್ನಾಟಕದ ಮುಸ್ಲಿಂ ಸಮುದಾಯವು ಕಾಂಗ್ರೆಸ್ ಪಕ್ಷದ ಕಷ್ಟದ ದಿನಗಳಲ್ಲೂ ನಿಷ್ಠೆಯಿಂದ ಬೆಂಬಲಿಸಿ, ಪಕ್ಷದ ಗೆಲುವಿಗೆ ಮಹತ್ವದ ಕೊಡುಗೆ ನೀಡಿದೆ. ಚುನಾವಣಾ ಸಂದರ್ಭದಲ್ಲಿ ಸಮುದಾಯದ ಬೆಂಬಲವನ್ನು ಪಡೆಯುವ ಪಕ್ಷ, ಅಧಿಕಾರ ಮತ್ತು ಅವಕಾಶಗಳ ಹಂಚಿಕೆಯಲ್ಲೂ ಸಮುದಾಯದ ಕೊಡುಗೆಯನ್ನು ಪರಿಗಣಿಸಬೇಕು ಎಂದು ಮಹಾಸಭಾ ಒತ್ತಾಯಿಸಿದೆ.

ಕಿತ್ತೂರು ಕರ್ನಾಟಕ ಭಾಗದಲ್ಲಿ ಹಲವು ವರ್ಷಗಳಿಂದ ಮುಸ್ಲಿಂ ಸಮುದಾಯದ ಶಾಸಕರಿಗೆ ಸಚಿವ ಸ್ಥಾನ ದೊರೆಯದಿರುವುದು ಹಾಗೂ ರಾಜ್ಯಮಟ್ಟದ ನಿಗಮ-ಮಂಡಳಿಗಳಲ್ಲೂ ಸಮರ್ಪಕ ಪ್ರಾತಿನಿಧ್ಯ ಸಿಗದಿರುವುದು ಸಮುದಾಯದಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಈ ಬಾರಿ ಅರ್ಹತೆ, ಸೇವೆ ಹಾಗೂ ಜನಪ್ರತಿನಿಧಿತ್ವದ ಆಧಾರದಲ್ಲಿ ಸಮರ್ಥ ಮುಸ್ಲಿಂ ನಾಯಕರಿಗೆ ಅವಕಾಶ ಕಲ್ಪಿಸಬೇಕು ಎಂದು ಆಗ್ರಹಿಸಲಾಗಿದೆ.

ಮುಖ್ಯಮಂತ್ರಿ, ಎಐಸಿಸಿ ಅಧ್ಯಕ್ಷರು ಹಾಗೂ ಕೆಪಿಸಿಸಿ ಅಧ್ಯಕ್ಷರು ಈ ಬೇಡಿಕೆಯನ್ನು ಗಂಭೀರವಾಗಿ ಪರಿಗಣಿಸಿ, ಉತ್ತರ ಕರ್ನಾಟಕದ ಅರ್ಹ ಮುಸ್ಲಿಂ ನಾಯಕರಿಗೆ ವಿಧಾನ ಪರಿಷತ್ (ಎಂಎಲ್‌ಸಿ) ಸ್ಥಾನ ಹಾಗೂ ರಾಜ್ಯಮಟ್ಟದ ನಿಗಮ-ಮಂಡಳಿಗಳಲ್ಲಿ ಸೂಕ್ತ ಸ್ಥಾನಮಾನ ಕಲ್ಪಿಸುವ ಮೂಲಕ ನ್ಯಾಯ ಒದಗಿಸಬೇಕು ಎಂದು ಮಹಾಸಭಾ ಮನವಿ ಮಾಡಿದೆ.

ಕಾಂಗ್ರೆಸ್‌ನಿಂದ ಆಯ್ಕೆಯಾಗಿರುವ ಉತ್ತರ ಕರ್ನಾಟಕದ ಶಾಸಕರು ಹಾಗೂ ಜನಪ್ರತಿನಿಧಿಗಳು ಪಕ್ಷದ ವರಿಷ್ಠರ ಮುಂದೆ ಈ ಭಾಗದ ಮುಸ್ಲಿಂ ಸಮುದಾಯದ ರಾಜಕೀಯ ಪ್ರಾತಿನಿಧ್ಯದ ಅಗತ್ಯವನ್ನು ಬಲವಾಗಿ ಪ್ರತಿಪಾದಿಸಬೇಕು ಎಂದು ಸಭೆಯಲ್ಲಿ ಕರೆ ನೀಡಲಾಯಿತು.

ಸಭೆಯಲ್ಲಿ ರಾಜ್ಯ ಉಪಾಧ್ಯಕ್ಷ ಆಬೀದ್ ಜೋಡಗೇರಿ, ರಾಜ್ಯ ಸಹ ಕಾರ್ಯದರ್ಶಿ ಎಸ್.ಎಂ. ರೋಣ, ಎಂ.ಡಿ. ರಫೀಕ್ ಜಮಾದಾರ್, ಇಸ್ಮಾಯಿಲ್ ಸಾಬ್ ಆಗಸನಕಟ್ಟಿ, ಎ.ಎಫ್. ರಶ್ಮಿ, ಅಬ್ದುಲ್ ಮುನಾಫ್ ಖಾಜಿ, ಅಸ್ಲಂ ನಾಲಬಂದ, ಮಜೀದ್ ಮನಿಕನಗರ ಸೇರಿದಂತೆ ಮಹಾಸಭಾದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ನಾವು ಯಾರ ಹಕ್ಕನ್ನೂ ಕಸಿದುಕೊಳ್ಳಲು ಬಯಸುವುದಿಲ್ಲ, ನಮ್ಮ ಪಾಲಿನ ನ್ಯಾಯವನ್ನು ಕೇಳುತ್ತಿದ್ದೇವೆ. ಅಧಿಕಾರ ಹಂಚಿಕೆಯಲ್ಲಿ ಪ್ರಾದೇಶಿಕ ಸಮತೋಲನ ಇರಬೇಕು. ಉತ್ತರ ಕರ್ನಾಟಕದ ಧ್ವನಿಗೂ ಅಧಿಕಾರದ ಬಾಗಿಲು ತೆರೆಯಬೇಕು.

— ಮಹ್ಮದಶಫಿ ನಾಗರಕಟ್ಟಿ, ರಾಜ್ಯಾಧ್ಯಕ್ಷ

ಬಾಲ ವಿನಾಯಕ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ

0

ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಬಾಲ ವಿನಾಯಕ ವಿದ್ಯಾನಿಕೇತನ ಶಾಲೆಯಲ್ಲಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಶಿಕ್ಷಕರ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು.

ಮುಖ್ಯ ಅತಿಥಿ ಶಿಕ್ಷಕ ಅಬ್ದುಲ್ ರೆಹಮಾನ್ ನಮಾಜಿ ಮಾತನಾಡಿ, ವಿದ್ಯಾರ್ಥಿಗಳು ಪಾಲಕರು ಒದಗಿಸುವ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಸತತ ಪರಿಶ್ರಮದಿಂದ ವಿದ್ಯಾಭ್ಯಾಸ ಮಾಡಿ ಜ್ಞಾನ ಸಂಪಾದಿಸಬೇಕು. ಗುರುಗಳು ವಿದ್ಯಾರ್ಥಿಗಳಿಂದ ಬಯಸುವ ಅತ್ಯುತ್ತಮ ಉಡುಗೊರೆ ಎಂದರೆ ಉತ್ತಮ ಫಲಿತಾಂಶದೊಂದಿಗೆ ಉಜ್ವಲ ಭವಿಷ್ಯ ರೂಪಿಸಿಕೊಳ್ಳುವುದು ಎಂದರು.

ಶಾಲೆಯ 9 ಮತ್ತು 10ನೇ ತರಗತಿಯ ವಿದ್ಯಾರ್ಥಿಗಳು ಶಿಕ್ಷಕರ ಪಾತ್ರವನ್ನು ವಹಿಸಿಕೊಂಡು ಅರ್ಧ ದಿನದ ತರಗತಿಗಳನ್ನು ನಡೆಸಿದ್ದು ಕಾರ್ಯಕ್ರಮದ ವಿಶೇಷವಾಗಿತ್ತು.

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಂದ ನೃತ್ಯ, ಶಿಕ್ಷಕರ ಕುರಿತ ಹಾಡು, ಕಿರು ನಾಟಕ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಜೀಯಾ ನಮಾಜಿ ಅತಿಥಿಗಳ ಪರಿಚಯ ಮಾಡಿದರು. ನವಿಶಾರದೆ ಗಣಾಚಾರಿ ಶಿಕ್ಷಕರ ದಿನಾಚರಣೆ ಕುರಿತು ಮಾತನಾಡಿದರು.

10ನೇ ತರಗತಿಯ ಯಾಹ್ವಿ ಪೇರೆರಾ ಹಾಗೂ ಸಂಗಡಿಗರು ನೃತ್ಯ ಪ್ರದರ್ಶಿಸಿದರು. ರಾಕೇಶ ಆನೆಗುಂದಿ ಹಾಗೂ ಸಂಗಡಿಗರು ಶಿಕ್ಷಕರ ಕುರಿತು ಹಾಡು ಹಾಡಿದರು. ಅರ್ಪಿತಾ ಕುಲಕರ್ಣಿ ಹಾಗೂ ಸಂಗಡಿಗರು ಕಿರು ನಾಟಕ ಪ್ರದರ್ಶಿಸಿದರು. ಶಾಲೆಯ ಪುಟ್ಟರಾಜ ಗವಾಯಿ ತಂಡದ ದೀಪಾ ಬೆಂತೂರ ಹಾಗೂ ಸಂಗಡಿಗರು ಪ್ರಾರ್ಥಿಸಿದರು.

ಗುರುಮಾತೆ ಸವಿತಾ ತುಕೋಳ ಉಡುಗೊರೆ ವಿತರಣೆ ನೆರವೇರಿಸಿದರು. ಮಾಹೀನ್ ನೀಲಿ ಸ್ವಾಗತಿಸಿದರು. ಶ್ರೇಯಾ ಬಳ್ಳಾರಿ ವಂದಿಸಿದರು. ವೆಂಕಟೇಶ ಕಲ್ಮನಿ ಹಾಗೂ ಪ್ರತೀಕ್ಷಾ ರಂಗಾರೆಡ್ಡಿ ನಿರೂಪಿಸಿದರು. ಪಾರ್ಥ ದಬಾಲಿ ಪ್ರಶಸ್ತಿ ವಿತರಣೆ ಕಾರ್ಯಕ್ರಮ ನಡೆಸಿಕೊಟ್ಟರು.

ಶಾಲೆಯ ನಿರ್ದೇಶಕ ವಿನಾಯಕ ಆರ್., ಉಪನಿರ್ದೇಶಕಿ ಗಾಯತ್ರಿ ವಿ., ಪ್ಲೇಹೋಮ್ ಮುಖ್ಯಸ್ಥೆ ಗಂಗಾ, ಇ.ಎಲ್.ಸಿ. ಮುಖ್ಯಸ್ಥೆ ಮಲ್ಲಿಕಾ ಆರ್., ಪ್ರಾಚಾರ್ಯ ವಿ.ಎಂ. ಅಡ್ನೂರ್, ಉಪಪ್ರಾಚಾರ್ಯ ಪಿ.ಜಿ. ಬ್ಯಾಳಿ ಸೇರಿದಂತೆ ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಪ.ಜಾ.-ಪ.ಪ. ನೌಕರರ ಸಂಘಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ

0

ವಿಜಯಸಾಕ್ಷಿ ಸುದ್ದಿ, ಗದಗ: ಕರ್ನಾಟಕ ರಾಜ್ಯ ಸಮಾಜ ಕಲ್ಯಾಣ ಇಲಾಖಾ ಪರಿಶಿಷ್ಟ ಜಾತಿ/ಪರಿಶಿಷ್ಟ ವರ್ಗಗಳ ನೌಕರರ ಕೇಂದ್ರ ಸಂಘ (ರಿ.), ಬೆಂಗಳೂರು, ಇದರ ಗದಗ ಜಿಲ್ಲಾ ಘಟಕದ ಪುನರ್ ರಚನೆ ಕಾರ್ಯಕ್ರಮ ನಗರದ ಅಂಬೇಡ್ಕರ್ ಭವನದಲ್ಲಿ ಸೆ.6ರಂದು ನಡೆಯಿತು.

ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆ ಗದಗದ ಉಪನಿರ್ದೇಶಕಿ ಡಾ. ನಂದಾ ಹಣಬರಟ್ಟಿ ಗೌರವಾಧ್ಯಕ್ಷರಾಗಿ ಪಾಲ್ಗೊಂಡು, ನೂತನ ಪದಾಧಿಕಾರಿಗಳಿಗೆ ಸಂಘಟನೆಯ ಜವಾಬ್ದಾರಿ ಹಾಗೂ ಕರ್ತವ್ಯಗಳ ಕುರಿತು ಮಾರ್ಗದರ್ಶನ ನೀಡಿದರು.

ವಿಶೇಷ ಆಹ್ವಾನಿತರಾಗಿ ರಾಜ್ಯ ಪ್ರಧಾನ ಕಾರ್ಯದರ್ಶಿ ಗೋವಿಂದರೆಡ್ಡಿ ಹಾಗೂ ಬೆಳಗಾವಿ ವಿಭಾಗದ ಕಾರ್ಯಾಧ್ಯಕ್ಷ, ಸಹಾಯಕ ನಿರ್ದೇಶಕ ಬಸವರಾಜ ಚನ್ನಯ್ಯ ಪಾಲ್ಗೊಂಡು, ಸಂಘಟನೆಯ ಉದ್ದೇಶ, ಕಾರ್ಯವೈಖರಿ ಹಾಗೂ ಸಮಾಜ ಕಲ್ಯಾಣ ಇಲಾಖೆಯಿಂದ ಸಾರ್ವಜನಿಕರಿಗೆ ದೊರೆಯಬೇಕಾದ ಸೌಲಭ್ಯಗಳನ್ನು ತಲುಪಿಸುವಲ್ಲಿ ಸಂಘದ ಪಾತ್ರದ ಕುರಿತು ಮಾತನಾಡಿದರು.

ಪುನರ್ ರಚನೆಯಾದ ಗದಗ ಜಿಲ್ಲಾ ಘಟಕಕ್ಕೆ ಬಾಲಚಂದ್ರ ಸಂಗನಾಳ ಅಧ್ಯಕ್ಷರಾಗಿ, ಗೋಪಾಲ ಲಮಾಣಿ, ಚಂದ್ರಕಾಂತ ವಡ್ಡರಕಲ್ಲ ಹಾಗೂ ವಸಂತ ಲಮಾಣಿ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ವಿಶಾಲ ಅಶೋಕ ಹಾದಿಮನಿ ಪ್ರಧಾನ ಕಾರ್ಯದರ್ಶಿಯಾಗಿ, ವೆಂಕಟೇಶ ದ್ವಾಸಲಕೇರಿ ಕಾರ್ಯಾಧ್ಯಕ್ಷರಾಗಿ, ರಾಘವೇಂದ್ರ ಗೋಕಾಕ ಖಜಾಂಚಿಯಾಗಿ ಹಾಗೂ ಸವಿತಾ ಮೇತ್ರಿ ಸಂಘಟನಾ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ.

ಕುಬೇರ ಲಮಾಣಿ ಹಾಗೂ ಎಲ್.ಎಂ. ಗಚ್ಚಿಮನಿ ಸಹ ಕಾರ್ಯದರ್ಶಿಗಳಾಗಿ ಆಯ್ಕೆಯಾಗಿದ್ದು, ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಈಶ್ವರ ಲೋಕಾಪುರ, ನವೀನಕುಮಾರ್ ಹರಿಜನ, ವೆಂಕಟೇಶ ಪೂಜಾರ, ವೈ.ಡಿ. ದೊಡ್ಡಮನಿ, ಮಂಜುಳಾ ಅರಳಿಗಿಡದ, ಹೇಮಾವತಿ ಗೂಗಲೋತ್ರ ಹಾಗೂ ರೇಣುಕರಾಜ ಹರಿಜನ ಆಯ್ಕೆಯಾಗಿದ್ದಾರೆ ಎಂದು ಅಧ್ಯಕ್ಷ ಬಾಲಚಂದ್ರ ಸಂಗನಾಳ ತಿಳಿಸಿದ್ದಾರೆ.

‘ನಮ್ಮದು ಏನೂ ಪಾತ್ರ ಇಲ್ಲ’: ಇ.ಡಿ ವಿಚಾರಣೆ ಬಳಿಕ ನಾಗೇಂದ್ರ ಸ್ಫೋಟಕ ಹೇಳಿಕೆ!

0

ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಬಿ. ನಾಗೇಂದ್ರ ಅವರು ಜಾರಿ ನಿರ್ದೇಶನಾಲಯ ಅಧಿಕಾರಿಗಳ ಮುಂದೆ ಹಾಜರಾಗಿ ಸುಮಾರು ನಾಲ್ಕು ಗಂಟೆಗಳ ಕಾಲ ವಿಚಾರಣೆ ಎದುರಿಸಿದರು.

ಪ್ರಕರಣದ ಚಾರ್ಜ್‌ಶೀಟ್ ಸಲ್ಲಿಕೆಯಾದ ಬಳಿಕ ಹೆಚ್ಚಿನ ಮಾಹಿತಿ ಹಾಗೂ ಕೆಲವು ಸ್ಪಷ್ಟನೆಗಳನ್ನು ಪಡೆಯುವ ಉದ್ದೇಶದಿಂದ ಇ.ಡಿ ಅಧಿಕಾರಿಗಳು ನಾಗೇಂದ್ರ ಅವರಿಗೆ ಸಮನ್ಸ್ ನೀಡಿದ್ದರು. ಅದರಂತೆ ಮಧ್ಯಾಹ್ನ 2 ಗಂಟೆ ಸುಮಾರಿಗೆ ವಿಚಾರಣೆಗೆ ಹಾಜರಾದ ಅವರು, ವಿಚಾರಣೆ ಮುಗಿದ ಬಳಿಕ ಅಧಿಕಾರಿಗಳಿಗೆ ಅಗತ್ಯ ಸ್ಪಷ್ಟನೆಗಳನ್ನು ನೀಡಿರುವುದಾಗಿ ತಿಳಿಸಿದರು.

ವಿಚಾರಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ನಾಗೇಂದ್ರ, “ಕಳೆದ ಬಾರಿ ಸಮನ್ಸ್ ನೀಡಲಾಗಿತ್ತು. ಆದರೆ ಬರಲು ಸಾಧ್ಯವಾಗಿರಲಿಲ್ಲ. ಕೆಲವು ಸ್ಪಷ್ಟನೆಗಳನ್ನು ನೀಡಬೇಕಿತ್ತು. ಇದೀಗ ಬಂದು ಉತ್ತರಿಸಿದ್ದೇನೆ. ಮತ್ತೊಮ್ಮೆ ಕರೆದರೂ ಹಾಜರಾಗುತ್ತೇನೆ” ಎಂದು ಹೇಳಿದರು.

ವಾಲ್ಮೀಕಿ ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ತಮ್ಮ ಪಾತ್ರವಿಲ್ಲ ಎಂದು ಸ್ಪಷ್ಟಪಡಿಸಿದ ಅವರು, “ನಮ್ಮದು ಏನೂ ಪಾತ್ರ ಇಲ್ಲ. ಇದು ಬ್ಯಾಂಕ್ ಫ್ರಾಡ್. ಯೂನಿಯನ್ ಬ್ಯಾಂಕ್‌ನವರಿಂದ ಆಗಿರುವ ಕೆಲಸ. ರಾಜಕೀಯ ಕಾರಣಕ್ಕಾಗಿ ನನ್ನ ಮೇಲೆ ಆರೋಪ ಮಾಡಲಾಗಿದೆ” ಎಂದು ಆರೋಪಿಸಿದರು. ಪ್ರಕರಣ ಕೋರ್ಟ್‌ನಲ್ಲಿ ನಡೆಯುತ್ತಿರುವುದಾಗಿ ತಿಳಿಸಿದರು.

ತಮ್ಮ ರಾಜೀನಾಮೆ ವಿಚಾರವಾಗಿ ಪ್ರತಿಕ್ರಿಯಿಸಿದ ನಾಗೇಂದ್ರ, ಪಕ್ಷದ ಹಿತದೃಷ್ಟಿಯಿಂದ ತಾವೇ ಸ್ವಯಂಪ್ರೇರಿತವಾಗಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾಗಿ ಹೇಳಿದರು.

ಇದೇ ವೇಳೆ ಬಿಜೆಪಿ ನಡೆಸುತ್ತಿರುವ ಪಾದಯಾತ್ರೆ ಕುರಿತು ಪ್ರತಿಕ್ರಿಯಿಸಿದ ಅವರು, ಪಾದಯಾತ್ರೆಯಿಂದ ಕಾಂಗ್ರೆಸ್ ಮತ್ತಷ್ಟು ಒಗ್ಗಟ್ಟಾಗಿದೆ ಎಂದು ಹೇಳಿದರು. ಬಳ್ಳಾರಿಯಲ್ಲಿ ಕಾಂಗ್ರೆಸ್ ಗಟ್ಟಿಯಾಗಿದ್ದು, ಬಿಜೆಪಿಯ ಪಾದಯಾತ್ರೆಯಿಂದ ಯಾವುದೇ ಪ್ರಯೋಜನವಿಲ್ಲ ಎಂದು ಟೀಕಿಸಿದರು.

ಜನಾರ್ದನ ರೆಡ್ಡಿ ಅವರ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ನಾಗೇಂದ್ರ, “ಅವರು ಯಾಕೆ ಈ ರೀತಿ ಮಾಡುತ್ತಿದ್ದಾರೆ ಎಂಬುದು ಗೊತ್ತಾಗುತ್ತಿಲ್ಲ. ನನಗೆ ಸಚಿವ ಸ್ಥಾನ ನೀಡಿದ್ದನ್ನು ಅವರಿಗೆ ತಡೆಯಲಾಗಲಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರಾಧಾ-ಕೃಷ್ಣ ವೇಷದಲ್ಲಿ ಮಕ್ಕಳ ಕಲರವ

0

ವಿಜಯಸಾಕ್ಷಿ ಸುದ್ದಿ, ಗದಗ: ಪ್ರಕಲ್ಪ ಶಿಕ್ಷಣ ಸಂಸ್ಥೆಯಲ್ಲಿ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಮಕ್ಕಳಿಗೆ ರಾಧಾ-ಕೃಷ್ಣರ ವೇಷಭೂಷಣ ಸ್ಪರ್ಧೆ ಹಾಗೂ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಮಕ್ಕಳಿಗೆ ಬಾಲಕೃಷ್ಣ ಹಾಗೂ ರಾಧೆಯ ವೇಷ ಧರಿಸುವ ಮೂಲಕ ನಮ್ಮ ಧಾರ್ಮಿಕ, ಸಾಂಸ್ಕೃತಿಕ ಪರಂಪರೆಯ ಪರಿಚಯ ಮಾಡಿಸುವುದು ಕಾರ್ಯಕ್ರಮದ ಉದ್ದೇಶವಾಗಿತ್ತು. ಭಕ್ತಿ ಮತ್ತು ಗೌರವದಿಂದ ಆಚರಿಸುವ ಇಂತಹ ಸಂಪ್ರದಾಯಗಳು ಮಕ್ಕಳಲ್ಲಿ ಧರ್ಮ, ಸಂಸ್ಕೃತಿ ಹಾಗೂ ಪರಂಪರೆಯ ಬಗ್ಗೆ ಗೌರವ ಬೆಳೆಸುತ್ತವೆ ಎಂದು ಸಂಸ್ಥೆ ತಿಳಿಸಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಸಂಸ್ಥಾಪಕ ಎಸ್.ವಿ. ಹುಬ್ಬಳ್ಳಿ ವಹಿಸಿದ್ದರು. ಮಾರ್ಗದರ್ಶಕಿ ಎಸ್.ಎನ್. ಹುಬ್ಬಳ್ಳಿ, ಕಾರ್ಯದರ್ಶಿ ಪಿ.ಎಸ್. ಹುಬ್ಬಳ್ಳಿ ಸೇರಿದಂತೆ ಶಿಕ್ಷಕರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು. ಸಹ ಶಿಕ್ಷಕಿ ಪುಷ್ಪ ಪಿ. ಮೇಗೇರಿ ನಿರೂಪಿಸಿದರು.