Home Blog

ವಿಪಕ್ಷಗಳ ಪ್ರತಿಭಟನೆ ನಡುವೆಯೇ ನಾಗೇಂದ್ರಗೆ ಹೆಚ್ಚುವರಿ ಖಾತೆ ನೀಡಿದ ಸರ್ಕಾರ!

0

ಬೆಂಗಳೂರು: ಸಚಿವ ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ವಿಧಾನ ಪರಿಷತ್‌ನಲ್ಲಿ ವಿಪಕ್ಷಗಳ ಪ್ರತಿಭಟನೆ ಐದನೇ ದಿನಕ್ಕೆ ಕಾಲಿಟ್ಟಿದೆ. ಇದರ ನಡುವೆಯೇ ಸರ್ಕಾರ ನಾಗೇಂದ್ರಗೆ ಹೆಚ್ಚುವರಿ ಖಾತೆ ನೀಡಿರುವುದು ವಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದೆ. ಯೋಜನೆ ಮತ್ತು ಸಾಂಖ್ಯಿಕ ಖಾತೆಯ ಜೊತೆಗೆ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಇಲಾಖೆಯ ಜವಾಬ್ದಾರಿಯನ್ನೂ ಅವರಿಗೆ ವಹಿಸಲಾಗಿದೆ.

ಇಂದು ಸದನ ಆರಂಭವಾಗುತ್ತಿದ್ದಂತೆ ಸಭಾಪತಿ ಸಲೀಂ ಅಹಮದ್ ಪ್ರತಿಕ್ರಿಯಿಸಿ, ಐದು ದಿನಗಳಿಂದ ಕಲಾಪ ಸರಿಯಾಗಿ ನಡೆಯುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಈ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗುತ್ತಿದ್ದು, ರಾಜ್ಯದ ಜನರು ಸದನದ ಕಾರ್ಯಕಲಾಪವನ್ನು ಗಮನಿಸುತ್ತಿದ್ದಾರೆ ಎಂದು ತಿಳಿಸಿದ ಅವರು, ಚರ್ಚೆಗೆ ಬಾಕಿಯಿರುವ ಹಲವು ವಿಚಾರಗಳ ಹಿನ್ನೆಲೆಯಲ್ಲಿ ಸುಗಮ ಕಲಾಪಕ್ಕೆ ಅವಕಾಶ ನೀಡುವಂತೆ ಸದಸ್ಯರಲ್ಲಿ ಮನವಿ ಮಾಡಿದರು.

ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ನಾಗೇಂದ್ರ ರಾಜೀನಾಮೆ ನೀಡುವವರೆಗೂ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಆರೋಗ್ಯ ಸಚಿವ ಯು.ಟಿ.ಖಾದರ್, ನಾಗೇಂದ್ರ ರಾಜೀನಾಮೆ ವಿಚಾರವಾಗಿ ಸದನದಲ್ಲೇ ಚರ್ಚೆ ನಡೆಸಬೇಕೆ ಹೊರತು ಪ್ರತಿಭಟನೆ ಮಾಡುವುದು ಸರಿಯಲ್ಲ ಎಂದರು. ರಾಜ್ಯಪಾಲರು ಪ್ರಮಾಣ ವಚನ ಸ್ವೀಕಾರಕ್ಕೆ ಅವಕಾಶ ಮಾಡಿಕೊಟ್ಟಿರುವ ಹಿನ್ನೆಲೆಯಲ್ಲಿ ಈ ರೀತಿಯ ಪ್ರತಿಭಟನೆ ಸೂಕ್ತವಲ್ಲ ಎಂದು ಅಭಿಪ್ರಾಯಪಟ್ಟರು.

ವಿಪಕ್ಷಗಳು ಪ್ರತಿಭಟನೆ ಹಿಂಪಡೆಯದ ಕಾರಣ ಗದ್ದಲದ ನಡುವೆಯೇ ಪ್ರಶ್ನೋತ್ತರ ಕಲಾಪ ನಡೆಯಿತು. ಈ ವೇಳೆ ‘ಗೋವಿಂದ ಗೋವಿಂದ’ ಘೋಷಣೆ ಕೂಗಿದ ವಿಪಕ್ಷ ಸದಸ್ಯರು, ಅಣಕು ಗೀತೆ ಹಾಡುವ ಮೂಲಕ ಸರ್ಕಾರದ ವಿರುದ್ಧ ಒತ್ತಡ ಹೇರಿದರು.

ವಂದೇ ಮಾತರಂ ವಿವಾದ: ಪೂರ್ತಿ ಹಾಡಿದ್ರೆ ರಾಜೀನಾಮೆ ಕೊಡ್ತೀನಿ – ಮೋದಿ, ಅಮಿತ್ ಶಾಗೆ ಪ್ರಿಯಾಂಕ್ ಖರ್ಗೆ ಸವಾಲ್

0

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಟೆಲಿಪ್ರಾಂಪ್ಟರ್‌ ಬಳಸದೆ ವಂದೇ ಮಾತರಂ ಗೀತೆಯನ್ನು ಸಂಪೂರ್ಣವಾಗಿ ಹಾಡಿ ತೋರಿಸಿದರೆ ತಾನು ರಾಜೀನಾಮೆ ನೀಡುವುದಾಗಿ ಸಚಿವ ಪ್ರಿಯಾಂಕ್ ಖರ್ಗೆ ಸವಾಲು ಹಾಕಿದ್ದಾರೆ.

ವಂದೇ ಮಾತರಂ ಗೀತೆಯ ಎರಡು ಪ್ಯಾರಗಳನ್ನು ಮಾತ್ರ ಹಾಡುವ ಕಾಂಗ್ರೆಸ್‌ನ ನಿರ್ಧಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, 1937ರಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್, ಜವಾಹರಲಾಲ್ ನೆಹರೂ, ಸುಭಾಷ್ ಚಂದ್ರ ಬೋಸ್ ಹಾಗೂ ರವೀಂದ್ರನಾಥ ಟ್ಯಾಗೋರ್ ಸೇರಿದಂತೆ ಪ್ರಮುಖ ನಾಯಕರು ಚರ್ಚಿಸಿ ಎರಡು ಪ್ಯಾರಗಳನ್ನು ಹಾಡುವ ನಿರ್ಧಾರಕ್ಕೆ ಬಂದಿದ್ದರು. ಅದನ್ನೇ ಕಾಂಗ್ರೆಸ್ ಮುಂದುವರಿಸಿಕೊಂಡು ಬಂದಿದೆ ಎಂದು ಹೇಳಿದರು.

ಬಿಜೆಪಿ ನಾಯಕರು ವಂದೇ ಮಾತರಂ ಗೀತೆಯನ್ನು ಸಂಪೂರ್ಣವಾಗಿ ಹಾಡಿ ತೋರಿಸಲಿ. ಅವರಿಗೆ ಸಂಪೂರ್ಣ ಗೀತೆ ಬರುತ್ತದೆಯೇ ಎಂಬುದನ್ನು ನೋಡೋಣ ಎಂದು ಪ್ರಿಯಾಂಕ್ ಖರ್ಗೆ ವ್ಯಂಗ್ಯವಾಡಿದರು. ಕನಿಷ್ಠ ಮೊದಲ ಎರಡು ಪ್ಯಾರಗಳನ್ನಾದರೂ ಹಾಡಿ ತೋರಿಸಲಿ ಎಂದು ಸವಾಲು ಹಾಕಿದರು.

ಇದೇ ವೇಳೆ ಆರ್‌ಎಸ್‌ಎಸ್‌ ವಿರುದ್ಧವೂ ವಾಗ್ದಾಳಿ ನಡೆಸಿದ ಅವರು, ದೇಶಭಕ್ತಿಯ ಬಗ್ಗೆ ಮಾತನಾಡುವವರು ಆರ್‌ಎಸ್‌ಎಸ್‌ ಶಾಖೆಗಳಲ್ಲಿ ‘ನಮಸ್ತೇ ಸದಾ ವತ್ಸಲೇ’ ಬದಲಿಗೆ ವಂದೇ ಮಾತರಂ ಹಾಡಲಿ. ರಾಷ್ಟ್ರಧ್ವಜಕ್ಕೆ ಗೌರವ ಸಲ್ಲಿಸಿ ಬಳಿಕ ದೇಶಭಕ್ತಿಯ ಬಗ್ಗೆ ಮಾತನಾಡಲಿ ಎಂದು ಹೇಳಿದರು.

ಸ್ವಾತಂತ್ರ್ಯ ಹೋರಾಟದಲ್ಲಿ ಬಿಜೆಪಿ ಹಾಗೂ ಆರ್‌ಎಸ್‌ಎಸ್‌ನ ಕೊಡುಗೆ ಏನು ಎಂದು ಪ್ರಶ್ನಿಸಿದ ಪ್ರಿಯಾಂಕ್ ಖರ್ಗೆ, ನೆಹರೂ, ಪಟೇಲ್, ಬೋಸ್ ಹಾಗೂ ಟ್ಯಾಗೋರ್ ಅವರಂತಹ ನಾಯಕರ ದೇಶಭಕ್ತಿಯನ್ನು ಪ್ರಶ್ನಿಸುವುದು ಸರಿಯಲ್ಲ ಎಂದರು.

ಇದೇ ವೇಳೆ, ನೀಟ್‌ ಪ್ರಶ್ನೆಪತ್ರಿಕೆ ಸೋರಿಕೆ, ಪಿಎಂ ಕೇರ್ಸ್‌ ಫಂಡ್‌, ರಾಮಮಂದಿರ ಚಂದಾ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚೆಯಾಗದಂತೆ ಮಾಡಲು ವಂದೇ ಮಾತರಂ ವಿಚಾರವನ್ನು ಮುನ್ನೆಲೆಗೆ ತರಲಾಗಿದೆ ಎಂದು ಆರೋಪಿಸಿದರು. ಜೆನ್‌-ಝಡ್‌ ಪ್ರತಿಭಟನೆ, ವಿದೇಶಾಂಗ ನೀತಿ ಹಾಗೂ ರೈತರ ಸಮಸ್ಯೆಗಳ ಬಗ್ಗೆಯೂ ಕೇಂದ್ರ ಸರ್ಕಾರ ಉತ್ತರ ನೀಡಬೇಕು ಎಂದು ಆಗ್ರಹಿಸಿದರು.

ಬಾಲಕಿಗೆ ಲೈಂಗಿಕ ಕಿರುಕುಳ ಆರೋಪ: ಭಾಗ್ಯವಂತಿ ಮಠದ ಪೂಜಾರಿ ವಿರುದ್ಧ ಪೋಕ್ಸೋ ಕೇಸ್

0

ಯಾದಗಿರಿ: ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಭಾಗ್ಯವಂತಿ ಮಠದ ಪೂಜಾರಿ ಅಣ್ಣಪ್ಪ ರೈಟರ್ ವಿರುದ್ಧ ಯಾದಗಿರಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ನೀಡಿದ ದೂರಿನ ಹಿನ್ನೆಲೆಯಲ್ಲಿ ಪೊಲೀಸರು BNS ಹಾಗೂ POCSO ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸುರಪುರ ತಾಲೂಕಿನ ಗ್ರಾಮವೊಂದಕ್ಕೆ ಸೇರಿದ ಬಾಲಕಿ ಹಾಗೂ ಆಕೆಯ ತಂಗಿಯನ್ನು ಆಗಸ್ಟ್ 18ರಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಮತ್ತು ಅಕ್ಕ ಪಡೆ ಸಿಬ್ಬಂದಿ ಸಕ್ರ್ಯ ನಾಯಕ ತಾಂಡಾ ಸಮೀಪದ ಭಾಗ್ಯವಂತಿ ಮಠದಿಂದ ರಕ್ಷಿಸಿದ್ದರು.

ರಕ್ಷಿಸಿದ ಬಳಿಕ ಬಾಲಕಿಯರನ್ನು ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರುಪಡಿಸಿ ವಿಚಾರಣೆ ನಡೆಸಲಾಗಿತ್ತು. ಆಪ್ತ ಸಮಾಲೋಚನೆ ವೇಳೆ ಬಾಲಕಿಯೊಬ್ಬಳು ಪೂಜಾರಿ ಅಣ್ಣಪ್ಪ ರೈಟರ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಾಲಕಿಯ ತಾಯಿ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಇಬ್ಬರು ಮಕ್ಕಳನ್ನು ಸಂಬಂಧಿಕರ ಬಳಿ ಬಿಟ್ಟಿದ್ದರು ಎನ್ನಲಾಗಿದೆ. ಬಳಿಕ ಬಾಲಕಿಯರನ್ನು ಮಠದ ಪೂಜಾರಿ ಬಳಿ ಇರಿಸಲಾಗಿತ್ತು. ಈ ಸಂದರ್ಭದಲ್ಲಿ ಆರೋಪಿ ಲೈಂಗಿಕ ದುರುದ್ದೇಶದಿಂದ ತನ್ನೊಂದಿಗೆ ಅಸಹ್ಯವಾಗಿ ವರ್ತಿಸಿದ್ದಾನೆ ಎಂದು ಬಾಲಕಿ ಹೇಳಿಕೆ ನೀಡಿದ್ದಾಳೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಆಗಸ್ಟ್ 20ರಂದು ನಡೆದ ಆಪ್ತ ಸಮಾಲೋಚನೆಯಲ್ಲಿ ಬಾಲಕಿ ನೀಡಿದ ಮಾಹಿತಿಯ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಆರೋಪಿ ವಿರುದ್ಧ BNS ಕಲಂ 75(2) ಹಾಗೂ POCSO ಕಾಯ್ದೆಯ ಕಲಂ 8 ಮತ್ತು 10ರ ಅಡಿ ಪ್ರಕರಣ ದಾಖಲಾಗಿದ್ದು, ಘಟನೆಯ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಖ್ಯಾತ ನಟಿ ಪದ್ಮಶ್ರೀ ಪುರಸ್ಕೃತೆ ಸಾಹುಕಾರ್ ಜಾನಕಿ ಇನ್ನಿಲ್ಲ

ಚೆನ್ನೈ: ದಕ್ಷಿಣ ಭಾರತೀಯ ಚಿತ್ರರಂಗದ ಹಿರಿಯ ನಟಿ ಹಾಗೂ ಪದ್ಮಶ್ರೀ ಪುರಸ್ಕೃತೆ ಸಾಹುಕಾರ್ ಜಾನಕಿ ಇನ್ನು ನೆನಪು ಮಾತ್ರ. ವಯೋಸಹಜ ಆರೋಗ್ಯ ಸಮಸ್ಯೆ ಮತ್ತು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ 95 ವರ್ಷದ ನಟಿ, ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆರೋಗ್ಯ ಸ್ಥಿತಿ ಗಂಭೀರಗೊಂಡ ಹಿನ್ನೆಲೆಯಲ್ಲಿ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ನಿಧನರಾಗಿದ್ದಾರೆ.

1931ರಲ್ಲಿ ಆಂಧ್ರಪ್ರದೇಶದಲ್ಲಿ ಜನಿಸಿದ ಸಾಹುಕಾರ್ ಜಾನಕಿ ಮೂಲತಃ ಕನ್ನಡಿಗರಾಗಿದ್ದು, ನಾಲ್ಕು ದಶಕಗಳಿಗೂ ಹೆಚ್ಚು ಕಾಲ ದಕ್ಷಿಣ ಭಾರತದ ವಿವಿಧ ಭಾಷೆಗಳ ಸಿನಿಮಾಗಳಲ್ಲಿ ತಮ್ಮ ಅಭಿನಯದ ಛಾಪು ಮೂಡಿಸಿದ್ದರು.

1950ರಲ್ಲಿ ‘ಸಾಹುಕಾರ್’ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಅವರು, ಆ ಸಿನಿಮಾದ ಯಶಸ್ಸಿನಿಂದಲೇ ‘ಸಾಹುಕಾರ್ ಜಾನಕಿ’ ಎಂಬ ಹೆಸರಿನಿಂದ ಖ್ಯಾತರಾದರು. ಬಳಿಕ ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಚಿತ್ರರಂಗಗಳಲ್ಲಿ ನೂರಾರು ಸಿನಿಮಾಗಳಲ್ಲಿ ಅಭಿನಯಿಸಿ ಅಪಾರ ಅಭಿಮಾನಿ ಬಳಗ ಸಂಪಾದಿಸಿದ್ದರು.

ಕನ್ನಡದಲ್ಲಿ ‘ಮಹಿಷಾಸುರ ಮರ್ದಿನಿ’, ‘ಸಾಕುಮಗಳು’, ‘ಕನ್ಯಾರತ್ನ’, ‘ಗೌರಿ’, ‘ರತ್ನಗಿರಿ ರಹಸ್ಯ’, ‘ನವಕೋಟಿ ನಾರಾಯಣ’, ‘ನಿರಪರಾಧಿ’ ಹಾಗೂ ‘ಮನಸಾಕ್ಷಿ’ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದರು. ಡಾ. ರಾಜ್‌ಕುಮಾರ್ ಅವರೊಂದಿಗೆ ನಾಯಕಿಯಾಗಿ ತೆರೆ ಹಂಚಿಕೊಂಡಿದ್ದ ಅವರು, ‘ಶಬ್ದವೇಧಿ’ಯಲ್ಲಿ ತಾಯಿಯ ಪಾತ್ರದ ಮೂಲಕವೂ ಗಮನ ಸೆಳೆದಿದ್ದರು.

ತಮಿಳಿನಲ್ಲಿ ‘ವಲಯಪತಿ’ ಮೂಲಕ ವೃತ್ತಿಜೀವನ ಆರಂಭಿಸಿದ ಸಾಹುಕಾರ್ ಜಾನಕಿ, ‘ಪನಮ್ ಪಡುತುಂ ಪಾಡು’, ‘ಪುತಿಯ ಪರವೈ’, ‘ನೀರ್ಕುಮಿಝಿ’, ‘ಇರು ಕೋಡುಗಲ್’, ‘ದಿಲ್ಲು ಮುಲ್ಲು’ ಸೇರಿದಂತೆ ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದರು. ‘ಬಿಸ್ಕೋತ್’ ಅವರ ಕೊನೆಯ ತಮಿಳು ಚಿತ್ರವಾಗಿತ್ತು.

ಕೇವಲ ಬೆಳ್ಳಿತೆರೆಗೆ ಸೀಮಿತವಾಗದೆ ಕಿರುತೆರೆಯಲ್ಲೂ ಕಾಣಿಸಿಕೊಂಡಿದ್ದ ಸಾಹುಕಾರ್ ಜಾನಕಿ ಅವರ ಸುದೀರ್ಘ ಕಲಾ ಸೇವೆಗೆ 2022ರಲ್ಲಿ ಕೇಂದ್ರ ಸರ್ಕಾರ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತ್ತು.

ಸಾಹುಕಾರ್ ಜಾನಕಿ ಅವರ ನಿಧನಕ್ಕೆ ಚಿತ್ರರಂಗದ ಗಣ್ಯರು ಹಾಗೂ ಅಭಿಮಾನಿಗಳು ಸಂತಾಪ ಸೂಚಿಸುತ್ತಿದ್ದಾರೆ.

ಯಶ್ ‘ಟಾಕ್ಸಿಕ್’ಗೆ ಅಡ್ವಾನ್ಸ್ ಬುಕಿಂಗ್‌ನಲ್ಲೇ ಬಿಗ್ ರೆಸ್ಪಾನ್ಸ್: ಕರ್ನಾಟಕದಲ್ಲಿ ₹5 ಕೋಟಿ ಗಡಿ ಸಮೀಪ!

ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ ಸಿನಿಮಾ ಬಿಡುಗಡೆಯ ಮುನ್ನವೇ ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡಲು ಆರಂಭಿಸಿದೆ. ನಾಲ್ಕೂವರೆ ವರ್ಷಗಳ ಬಳಿಕ ಯಶ್ ಅವರನ್ನು ತೆರೆಮೇಲೆ ಕಾಣಲು ಕಾದಿರುವ ಅಭಿಮಾನಿಗಳ ಕ್ರೇಜ್ ಇದೀಗ ಅಡ್ವಾನ್ಸ್ ಟಿಕೆಟ್ ಬುಕಿಂಗ್‌ನಲ್ಲೇ ಸ್ಪಷ್ಟವಾಗಿ ಗೋಚರಿಸುತ್ತಿದೆ.

ಭಾರತದಲ್ಲಿ ಅಡ್ವಾನ್ಸ್ ಬುಕಿಂಗ್ ಆರಂಭವಾದ ಕೆಲವೇ ಗಂಟೆಗಳಲ್ಲಿ ಬುಕ್‌ಮೈಶೋನಲ್ಲಿ 1 ಲಕ್ಷಕ್ಕೂ ಹೆಚ್ಚು ಟಿಕೆಟ್‌ಗಳು ಮಾರಾಟವಾಗಿವೆ. ಆರಂಭಿಕ ಒಂದು ಗಂಟೆಯಲ್ಲಿ ಸುಮಾರು 3,050 ಟಿಕೆಟ್‌ಗಳು ಮಾರಾಟವಾಗಿದ್ದರೆ, ಬೆಳಗ್ಗೆ 10ರಿಂದ 11ರ ಅವಧಿಯಲ್ಲಿ ಒಂದೇ ಗಂಟೆಯಲ್ಲಿ ಸುಮಾರು 27,000 ಟಿಕೆಟ್‌ಗಳು ಬುಕ್ ಆಗಿವೆ.

ಕರ್ನಾಟಕದಲ್ಲಿ ಚಿತ್ರದ ಕ್ರೇಜ್ ಇನ್ನಷ್ಟು ಜೋರಾಗಿದೆ. ಬಿಡುಗಡೆಗೆ ಐದು ದಿನಗಳ ಮುನ್ನವೇ ರಾಜ್ಯದ ಮುಂಗಡ ಬುಕಿಂಗ್ ₹5 ಕೋಟಿಯ ಗಡಿ ತಲುಪುವ ಹಂತದಲ್ಲಿದೆ. ಶೋ ಹಾಗೂ ಸ್ಕ್ರೀನ್‌ಗಳ ಸಂಖ್ಯೆ ಇನ್ನೂ ಅಂತಿಮಗೊಳ್ಳುತ್ತಿರುವುದರಿಂದ ಬುಕಿಂಗ್ ಮೊತ್ತ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ.

ಅಮೆರಿಕದಲ್ಲೂ ‘ಟಾಕ್ಸಿಕ್’ ಮುಂಗಡ ಬುಕಿಂಗ್ ಗಮನ ಸೆಳೆಯುತ್ತಿದೆ. 260 ಸ್ಥಳಗಳಲ್ಲಿ 709 ಪ್ರದರ್ಶನಗಳಿಂದ 7,545 ಟಿಕೆಟ್‌ಗಳು ಮಾರಾಟವಾಗಿದ್ದು, ಒಟ್ಟು $163,150 ವ್ಯವಹಾರ ನಡೆದಿದೆ. ಪ್ರಸ್ತುತ ಆಕ್ಯುಪೆನ್ಸಿ ಶೇ.9ರಷ್ಟಿದೆ.

ಅಮೆರಿಕದಲ್ಲಿ ಬರೋಬ್ಬರಿ 2,000 ಸ್ಕ್ರೀನ್‌ಗಳಲ್ಲಿ ಸಿನಿಮಾ ಬಿಡುಗಡೆ ಮಾಡುವ ಗುರಿ ಹೊಂದಲಾಗಿದೆ. ಸದ್ಯ ಸುಮಾರು 700 ಪ್ರದರ್ಶನಗಳು ಮಾತ್ರ ಬುಕಿಂಗ್‌ಗೆ ತೆರೆದಿದ್ದು, ಎಎಂಸಿ ಸೇರಿದಂತೆ ಪ್ರಮುಖ ಥಿಯೇಟರ್ ಚೈನ್‌ಗಳು ತಮ್ಮ ಸಂಪೂರ್ಣ ಶೆಡ್ಯೂಲ್‌ಗಳನ್ನು ಇನ್ನಷ್ಟೇ ಪ್ರಕಟಿಸಬೇಕಿದೆ.

ಅಮೆರಿಕದ ರಾಜ್ಯವಾರು ಬುಕಿಂಗ್‌ನಲ್ಲಿ ಟೆಕ್ಸಾಸ್ $56,931 ಗಳಿಕೆಯೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ಕ್ಯಾಲಿಫೋರ್ನಿಯಾ $25,849 ವ್ಯವಹಾರ ದಾಖಲಿಸಿದೆ.

ಭಾಷಾವಾರು ಬುಕಿಂಗ್ ಗಮನಿಸಿದರೆ ತೆಲುಗು ಆವೃತ್ತಿ ಸದ್ಯ ಮುನ್ನಡೆ ಸಾಧಿಸಿದೆ. 4,359 ಟಿಕೆಟ್‌ಗಳಿಂದ ತೆಲುಗು ಆವೃತ್ತಿ $94,706 ಗಳಿಸಿದ್ದರೆ, ಕನ್ನಡ ಆವೃತ್ತಿ 3,173 ಟಿಕೆಟ್‌ಗಳಿಂದ $68,246 ಗಳಿಸಿದೆ. ಹಿಂದಿ ಆವೃತ್ತಿಯ ಬುಕಿಂಗ್ ಸದ್ಯ ನಿಧಾನಗತಿಯಲ್ಲಿದೆ.

ಗೀತು ಮೋಹನ್‌ದಾಸ್ ನಿರ್ದೇಶನದ ಈ ಸಿನಿಮಾದಲ್ಲಿ ಯಶ್ ಜೊತೆ ನಯನತಾರಾ, ಕಿಯಾರಾ ಅಡ್ವಾಣಿ, ತಾರಾ ಸುತಾರಿಯಾ, ರುಕ್ಮಿಣಿ ವಸಂತ್ ಹಾಗೂ ಹುಮಾ ಖುರೇಷಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಯಶ್ ಮತ್ತು ಗೀತು ಮೋಹನ್‌ದಾಸ್ ಚಿತ್ರಕಥೆ ರಚಿಸಿದ್ದಾರೆ.

ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಮತ್ತು ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಿಸಿರುವ ಈ ಪ್ಯಾನ್-ಇಂಡಿಯಾ ಸಿನಿಮಾ ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಚಿತ್ರೀಕರಣಗೊಂಡಿದ್ದು, ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ತೆರೆಕಾಣಲಿದೆ.

ಆಗಸ್ಟ್ 26ರಂದು ವಿಶ್ವಾದ್ಯಂತ ಬಿಡುಗಡೆಯಾಗಲಿರುವ ‘ಟಾಕ್ಸಿಕ್’ಗೆ ಮುಂಗಡ ಬುಕಿಂಗ್‌ನಲ್ಲೇ ಭರ್ಜರಿ ಬೇಡಿಕೆ ಸೃಷ್ಟಿಯಾಗಿರುವುದು ಚಿತ್ರತಂಡದ ಆತ್ಮವಿಶ್ವಾಸ ಹೆಚ್ಚಿಸಿದೆ. ಈಗ ಈ ಆರಂಭಿಕ ಕ್ರೇಜ್ ಥಿಯೇಟರ್ ಕಲೆಕ್ಷನ್‌ಗೆ ಎಷ್ಟರ ಮಟ್ಟಿಗೆ ಪರಿವರ್ತನೆಯಾಗಲಿದೆ ಎಂಬುದೇ ಕುತೂಹಲದ ಕೇಂದ್ರವಾಗಿದೆ.

ಸೊಮಾಲಿಯಾ ಕರಾವಳಿಯಲ್ಲಿ ಟರ್ಕಿಶ್ ಶಸ್ತ್ರಾಸ್ತ್ರ ಹೊತ್ತ ಕಾರ್ಗೋ ಶಿಪ್ ಹೈಜಾಕ್: 6 ಭಾರತೀಯರು ಸೇರಿ 10 ಮಂದಿ ಒತ್ತೆಯಾಳು

0

ನವದೆಹಲಿ: ಟರ್ಕಿಶ್ ಶಸ್ತ್ರಾಸ್ತ್ರಗಳು ಹಾಗೂ ಇತರ ಉಪಕರಣಗಳನ್ನು ಸಾಗಿಸುತ್ತಿದ್ದ ಕಾರ್ಗೋ ಹಡಗನ್ನು ಸೊಮಾಲಿಯಾ ಕರಾವಳಿಯಲ್ಲಿ ಕಡಲ್ಗಳ್ಳರು ಅಪಹರಿಸಿದ್ದಾರೆ. ಹಡಗಿನಲ್ಲಿದ್ದ ಆರು ಭಾರತೀಯರು ಸೇರಿದಂತೆ ಒಟ್ಟು 10 ಸಿಬ್ಬಂದಿ ಕಡಲ್ಗಳ್ಳರ ವಶದಲ್ಲಿದ್ದಾರೆ ಎಂದು ಸೊಮಾಲಿಯಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕ್ಯಾಮರೂನ್ ಧ್ವಜ ಹೊತ್ತ M/V LUTUF ಹಡಗನ್ನು ಸೋಮವಾರ ಸೊಮಾಲಿಯಾದ ಪಂಟ್ಲ್ಯಾಂಡ್‌ನ ಐಲ್ ಜಿಲ್ಲೆಯ ಮರ್ರಾಯದಿಂದ ಸುಮಾರು 3.5 ನಾಟಿಕಲ್ ಮೈಲುಗಳಷ್ಟು ದೂರದಲ್ಲಿ ಕಡಲ್ಗಳ್ಳರು ಹೈಜಾಕ್ ಮಾಡಿದ್ದಾರೆ ಎನ್ನಲಾಗಿದೆ.

ಅಪಹರಣಕ್ಕೊಳಗಾದ ಸಿಬ್ಬಂದಿಯಲ್ಲಿ ಆರು ಭಾರತೀಯರು, ಒಬ್ಬ ಟರ್ಕಿಶ್ ಪ್ರಜೆ, ಒಬ್ಬ ಜಾರ್ಜಿಯನ್ ಪ್ರಜೆ ಹಾಗೂ ಇಬ್ಬರು ಸರ್ಬಿಯನ್ ಭದ್ರತಾ ಸಿಬ್ಬಂದಿ ಇದ್ದಾರೆ ಎಂದು ವರದಿಯಾಗಿದೆ.

ಪೋಲಾರ್ ಮೂವ್‌ಮೆಂಟ್ ಶಿಪ್ಪಿಂಗ್ ಒಡೆತನದ ಈ ಹಡಗು ಮೊಗಾದಿಶುವಿನಲ್ಲಿರುವ ಟರ್ಕಿಶ್ ಮಿಲಿಟರಿಗೆ ಶಸ್ತ್ರಾಸ್ತ್ರಗಳ ಜತೆಗೆ ಸಂವಹನ ಹಾಗೂ ಉಪಗ್ರಹ ಉಪಕರಣಗಳನ್ನು ಸಾಗಿಸುತ್ತಿತ್ತು ಎಂದು ವರದಿಗಳು ತಿಳಿಸಿವೆ. ಸುಮಾರು ಎಂಟು ಮಂದಿ ಕಡಲ್ಗಳ್ಳರು ಹಡಗಿನ ಮೇಲೆ ದಾಳಿ ನಡೆಸಿ ಬಳಿಕ ಅದನ್ನು ಪಂಟ್ಲ್ಯಾಂಡ್‌ನ ಡಂಗೊರೊಯೊ ಜಿಲ್ಲೆಯ ಗರ್ಮಾಲ್ ಬಳಿಯ ಕರಾವಳಿ ಪ್ರದೇಶದತ್ತ ಕೊಂಡೊಯ್ದಿದ್ದಾರೆ ಎನ್ನಲಾಗಿದೆ.

ಏಪ್ರಿಲ್ 26ರಂದು ನಡೆದ M/V ಸ್ವಾರ್ಡ್ ಹಡಗು ಅಪಹರಣದಲ್ಲಿ ಭಾಗಿಯಾಗಿದ್ದ ಕಡಲ್ಗಳ್ಳರೊಂದಿಗೆ ಈ ಗುಂಪಿಗೆ ಸಂಪರ್ಕವಿದೆ ಎಂದು ಸೊಮಾಲಿಯಾ ಅಧಿಕಾರಿ ತಿಳಿಸಿದ್ದಾರೆ.

ಹೈಜಾಕ್ ನಡೆದ ಪ್ರದೇಶದ ಮೇಲೆ ಟರ್ಕಿಯ ಎರಡು ಹಡಗುಗಳು, ಹೆಲಿಕಾಪ್ಟರ್‌ಗಳು ಹಾಗೂ ಡ್ರೋನ್‌ಗಳ ಮೂಲಕ ನಿಗಾ ವಹಿಸಲಾಗಿದೆ ಎಂದು ವರದಿಯಾಗಿದೆ.

ಈವರೆಗೆ M/V LUTUF ಹಡಗು, ಅದರಲ್ಲಿರುವ ಆರು ಭಾರತೀಯರು ಸೇರಿದಂತೆ ಸಿಬ್ಬಂದಿ ಹಾಗೂ ಸರಕುಗಳ ಕುರಿತು ಸಂಪೂರ್ಣ ಮಾಹಿತಿ ಲಭ್ಯವಾಗಿಲ್ಲ. ಭಾರತೀಯ ವಿದೇಶಾಂಗ ಸಚಿವಾಲಯದಿಂದಲೂ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

ಪಶ್ಚಿಮ ಏಷ್ಯಾದ ಸಾಗರ ವಲಯದಲ್ಲಿ ಸಂಘರ್ಷದ ಪರಿಸ್ಥಿತಿ ಮುಂದುವರಿದಿರುವ ಬೆನ್ನಲ್ಲೇ ಸೊಮಾಲಿಯಾ ಕರಾವಳಿಯಲ್ಲಿ ಕಡಲ್ಗಳ್ಳರ ಚಟುವಟಿಕೆ ಹೆಚ್ಚಾಗಿರುವುದು ಆತಂಕ ಮೂಡಿಸಿದೆ. 2026ರ ಮೊದಲ ಐದು ತಿಂಗಳಲ್ಲಿ ಸೊಮಾಲಿ ಸಮುದ್ರದಲ್ಲಿ 17ಕ್ಕೂ ಹೆಚ್ಚು ಹಡಗುಗಳು ಕಡಲ್ಗಳ್ಳರ ದಾಳಿಗೆ ಗುರಿಯಾಗಿರುವುದಾಗಿ ವರದಿಯಾಗಿದೆ.

ಪ್ರಜ್ವಲ್ ರೇವಣ್ಣ ಪ್ರಕರಣದ ಪ್ರಮುಖ ಸಾಕ್ಷಿಗೆ ಜೀವ ಬೆದರಿಕೆ: ಭದ್ರತೆ ನೀಡಲು ಕೋರ್ಟ್‌ ಸೂಚನೆ

0

ಬೆಂಗಳೂರು: ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣದ ವಿಚಾರಣೆ ವೇಳೆ ಪ್ರಮುಖ ಸಾಕ್ಷಿದಾರರಿಗೆ ಬೆದರಿಕೆ ಕರೆಗಳು ಬರುತ್ತಿರುವ ಗಂಭೀರ ವಿಷಯ ನ್ಯಾಯಾಲಯದ ಗಮನಕ್ಕೆ ಬಂದಿದೆ.

ಹೊಳೆನರಸೀಪುರ ಮೂಲದ ಮಹಿಳೆಯೊಬ್ಬರು ಆಗಸ್ಟ್ 20ರಂದು ನಡೆದ ವಿಚಾರಣೆ ವೇಳೆ, ಮುಖ್ಯ ವಿಚಾರಣೆ ಮುಗಿದ ಬಳಿಕ ಅಪರಿಚಿತರಿಂದ ನಿರಂತರವಾಗಿ ದೂರವಾಣಿ ಬೆದರಿಕೆ ಕರೆಗಳು ಬರುತ್ತಿವೆ ಎಂದು ನ್ಯಾಯಾಧೀಶರ ಮುಂದೆ ಅಳಲು ತೋಡಿಕೊಂಡಿದ್ದಾರೆ. ತಮ್ಮೊಂದಿಗೆ ಹಾಗೂ ತಮ್ಮ ಮಗನಿಗೆ ಯಾವುದೇ ಅಪಾಯ ಸಂಭವಿಸಿದರೆ ಪ್ರಕರಣದ ಆರೋಪಿಗಳೇ ಹೊಣೆಗಾರರು ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ, ಬೆದರಿಕೆ ಕರೆಗಳ ಕುರಿತು ಸಮಗ್ರ ತನಿಖೆ ನಡೆಸುವಂತೆ ವಿಶೇಷ ತನಿಖಾ ತಂಡಕ್ಕೆ (SIT) ನಿರ್ದೇಶನ ನೀಡಿದೆ. ಮುಂದಿನ ವಿಚಾರಣೆಯೊಳಗೆ ತನಿಖೆಯ ವಿವರವಾದ ವರದಿ ಸಲ್ಲಿಸುವಂತೆಯೂ ಸೂಚಿಸಿದೆ.

ಅಲ್ಲದೆ, ಸಾಕ್ಷಿದಾರೆಯ ಸುರಕ್ಷತೆಗೆ ಅಗತ್ಯವಿರುವ ಪೊಲೀಸ್ ಭದ್ರತೆ ಒದಗಿಸುವಂತೆ ಎಸ್‌ಐಟಿ ಹಾಗೂ ಸಿಐಡಿ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಿಗೆ ನ್ಯಾಯಾಲಯ ನಿರ್ದೇಶನ ನೀಡಿದೆ.

ಪ್ರಕರಣದ ಹಿನ್ನೆಲೆ ನೋಡಿದರೆ, 2019ರಲ್ಲಿ ಸಂಸದರ ಕೋಟಾದಲ್ಲಿ ಪುತ್ರನಿಗೆ ಕೇಂದ್ರೀಯ ವಿದ್ಯಾಲಯದಲ್ಲಿ ಸೀಟು ಕೊಡಿಸುವ ಸಂಬಂಧ ಮಹಿಳೆ ಪ್ರಜ್ವಲ್ ರೇವಣ್ಣ ಅವರನ್ನು ಸಂಪರ್ಕಿಸಿದ್ದರು. ಈ ವೇಳೆ ಮಹಿಳೆಯ ಮೊಬೈಲ್‌ ಸಂಖ್ಯೆ ಪಡೆದುಕೊಂಡಿದ್ದ ಪ್ರಜ್ವಲ್‌, 2019ರಿಂದ 2021ರ ಅವಧಿಯಲ್ಲಿ ಪದೇಪದೇ ಕರೆ ಮಾಡಿ ಅಶ್ಲೀಲವಾಗಿ ಕಾಣಿಸಿಕೊಳ್ಳುವಂತೆ ಒತ್ತಾಯಿಸಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಮಹಿಳೆಯ ಅನುಮತಿಯಿಲ್ಲದೆ ವಿಡಿಯೊ ಹಾಗೂ ಫೋಟೊಗಳನ್ನು ಸಂಗ್ರಹಿಸಿ, ಕರೆ ಸ್ವೀಕರಿಸದಿದ್ದರೆ ಅವುಗಳನ್ನು ಬಹಿರಂಗಪಡಿಸುವುದಾಗಿ ಬೆದರಿಕೆ ಹಾಕಿದ್ದರು ಎಂಬ ಆರೋಪವೂ ಇದೆ.

ಈ ಸಂಬಂಧ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ಕಿರುಕುಳ, ವಿವಸ್ತ್ರಗೊಳಿಸಲು ಬೆದರಿಕೆ, ಹಿಂಬಾಲಿಸುವಿಕೆ ಹಾಗೂ ಕ್ರಿಮಿನಲ್ ಬೆದರಿಕೆ ಸೇರಿದಂತೆ ಐಪಿಸಿ ವಿವಿಧ ಸೆಕ್ಷನ್‌ಗಳ ಅಡಿ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಪ್ರಜ್ವಲ್ ರೇವಣ್ಣ ವಿರುದ್ಧ ಒಟ್ಟು ನಾಲ್ಕು ಪ್ರಕರಣಗಳು ದಾಖಲಾಗಿದ್ದು, ಅವುಗಳಲ್ಲಿ ಮೂರು ಅತ್ಯಾಚಾರ ಪ್ರಕರಣಗಳು ಹಾಗೂ ಮಹಿಳೆಯನ್ನು ವಿವಸ್ತ್ರಗೊಳಿಸಿದ ಪ್ರಕರಣ ಸೇರಿವೆ. ಒಂದು ಪ್ರಕರಣದ ವಿಚಾರಣೆ ಈಗಾಗಲೇ ಪೂರ್ಣಗೊಂಡು ಶಿಕ್ಷೆ ವಿಧಿಸಲಾಗಿದೆ.

ಸರ್ಕಾರದ ಆದಾಯ ಸಂಗ್ರಹ ಹೆಚ್ಚಳಕ್ಕೆ ಮಾರ್ಗದರ್ಶನ ನೀಡಿ: ಸಿಎಂ ಡಿ ಕೆ ಶಿವಕುಮಾರ್

0

ಬೆಂಗಳೂರು: “ಹಣಕಾಸಿನ ವಿಚಾರದಲ್ಲಿ ಸರ್ಕಾರಕ್ಕೆ ಸಲಹೆ ಹಾಗೂ ಆದಾಯ ಸಂಗ್ರಹ ಹೆಚ್ಚಳಕ್ಕೆ ಮಾರ್ಗದರ್ಶನವಿರಲಿ” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ಕರೆ ನೀಡಿದರು. ಬೆಂಗಳೂರಿನ ಅರಮನೆ ಮೈದಾನದಲ್ಲಿ ದಿ ಇನ್ಸ್ಟಿಟ್ಯೂಟ್ ಆಫ್ ಚಾರ್ಟೆಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ಶುಕ್ರವಾರ ಆಯೋಜಿಸಿದ್ದ “ಸಂವಾದ ಸಮ್ಮೇಳನ” ಕಾರ್ಯಕ್ರಮದಲ್ಲಿ ಸಿಎಂ ಡಿ ಕೆ ಶಿವಕುಮಾರ್ ಅವರು ಮಾತನಾಡಿದರು.

“ನಮ್ಮ ಸರ್ಕಾರ ತೆರೆದ ಪುಸ್ತಕ. ಹೊಸ ವಿಚಾರ, ಪರಿಹಾರಕ್ಕೆ ನಾವು ಮುಕ್ತರಾಗಿದ್ದೇವೆ. ನಮ್ಮ ತಪ್ಪುಗಳು, ಸಂಪನ್ಮೂಲ ಸೋರಿಕೆ ತಡೆಗಟ್ಟಲು ನಿಮ್ಮ ಸಲಹೆಗಳನ್ನು ನೀಡಿ. ನಿಂಬೆಗಿಂತ ಶ್ರೇಷ್ಠವಾದ ಹುಳಿ, ದುಂಬಿಗಿಂತ ಶ್ರೇಷ್ಠವಾದ ಕಪ್ಪು, ಶಿವನಿಗಿಂತ ದೊಡ್ಡ ದೇವರು, ನಂಬಿಕೆಗಿಂತ ದೊಡ್ಡ ಗುಣ ಮತ್ತೊಂದಿಲ್ಲ ಎಂದು ಸರ್ವಜ್ಞ ಹೇಳಿದ್ದಾರೆ. ನೀವು ನಂಬಿಕೆಯ ರಕ್ಷಕರು. ನಂಬಿಕೆ ಎಂಬುದು ನಿಮ್ಮ ರಕ್ತದಲ್ಲೇ ಬಂದಿದ್ದು, ನೀವು ಅದನ್ನು ಉಳಿಸಿಕೊಳ್ಳಬೇಕು. ನೀವು ಹೇಳಿದ್ದನ್ನು ನಾವು ನಂಬುತ್ತೇವೆ. ನೀವು ನಮ್ಮ ಬದುಕು, ಆಸ್ತಿ ರಕ್ಷಿಸಿ ಆದಾಯಕ್ಕೆ ಮಾರ್ಗದರ್ಶನ ನೀಡಬೇಕು. ನಮ್ಮ ತಪ್ಪುಗಳನ್ನು ನಿವಾರಣೆ ಮಾಡುವ ಸಾಮಾರ್ಥ್ಯ ನಿಮಗಿದೆ. ನೀವು ದೇಶ ಕಟ್ಟುತ್ತಿದ್ದು, ನಿಮ್ಮ ಬಗ್ಗೆ ದೇಶಕ್ಕೆ ಹೆಮ್ಮೆ ಇದೆ” ಎಂದು ಪ್ರಶಂಸಿಸಿದರು.

“ಪ್ರಾಮಾಣಿಕ ತೆರಿಗೆ ಪಾವತಿದಾರರಿಗೆ ಅಧಿಕಾರಿಗಳು ಮಾನಸಿಕ ಕಿರುಕುಳ ನೀಡಿ ಕುಗ್ಗಿಸುತ್ತಾರೆ. ಯಾರು ಕಳ್ಳತನ ಮಾಡುತ್ತಾರೆ ಅವರಿಗೆ ಪ್ರಶ್ನೆ ಮಾಡುವುದಿಲ್ಲ. ಈ ದೇಶದಲ್ಲಿ 12 ಲಕ್ಷ ಉದ್ಯಮಿಗಳು ಈ ದೇಶವನ್ನು ತ್ಯಜಿಸಿದ್ದಾರೆ. ಐಟಿ, ಇಡಿ, ಸಿಬಿಐ ಸಹವಾಸ ಸಾಕು ಎಂದು ಹೋಗುತ್ತಿದ್ದಾರೆ. ತೊಂದರೆ ಕೊಡುವುದೇ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಕೆಲಸ. ಕೆಲವು ವರ್ಷಗಳ ಹಿಂದೆ ಗುಜರಾತ್ ಗೆ ಹೋಗಿದ್ದಾಗ ಅಲ್ಲಿ 70% ನಗದಿನಲ್ಲೇ ನಡೆಯುತ್ತಿದೆ. ಕೇವಲ 30% ಮಾತ್ರ ವೈಟ್ ಅಲ್ಲಿ ನಡೆಯುತ್ತಿದೆ. ನಮ್ಮ ಕರ್ನಾಟಕದಲ್ಲಿ 90% ವೈಟ್ ಮೂಲಕ ವ್ಯವಹಾರಗಳು ನಡೆಯುತ್ತಿವೆ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಾವು ಶಿಸ್ತುಬದ್ಧರಾಗಿದ್ದೇವೆ” ಎಂದರು.

“ಕರ್ನಾಟಕ ಆರ್ಥಿಕ ಶಕ್ತಿಯಾಗಿ ಬೆಳೆಯುತ್ತಿದ್ದು, ನಿಮ್ಮ ಮಾರ್ಗದರ್ಶನವಿಲ್ಲದೇ ಅವರು ಯಶಸ್ಸು ಸಾಧಿಸಲು ಸಾಧ್ಯವಿಲ್ಲ. ದಕ್ಷಿಣ ಭಾರತ ಇಡಿ ದೇಶದ ಪ್ರಗತಿಯ ಇಂಧನವಾಗಿದೆ. ದಕ್ಷಿಣ ಭಾರತವಿಲ್ಲದೆ ಭಾರತದ ಪ್ರಗತಿ ಸಾಧ್ಯವಿಲ್ಲ ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ ಅವರ ಮುಂದೆ ವಾದ ಮಂಡಿಸಿದೆವು. ಇಡೀ ವಿಶ್ವ ಭಾರತವನ್ನು ಬೆಂಗಳೂರು ಮೂಲಕ ನೋಡುತ್ತಿದೆ. ಬೆಂಗಳೂರಿನಲ್ಲಿ 2 ಲಕ್ಷ ವಿದೇಶಿ ಪಾಸ್ ಪೋರ್ಟ್ ದಾರರು ಕಾರ್ಯನಿರ್ವಹಿಸುತ್ತಿದ್ದಾರೆ. ಹೊರ ರಾಜ್ಯಗಳಿಂದ ಬರುವ ಬಂಡವಾಳ ಹೂಡಿಕೆದಾರರಿಗೆ ನೀವು ಉತ್ತಮ ಸಲಹೆ ನೀಡುತ್ತಿದ್ದೀರಿ. ಹೊಸ ಹೂಡಿಕೆ, ಉದ್ಯಮ, ಉದ್ಯೋಗ ಸೃಷ್ಟಿ, ಅನ್ವೇಷಣೆ, ರಫ್ತಿಗೆಗೆ ಕರ್ನಾಟಕ ಅತ್ಯುತ್ತಮ ಕೇಂದ್ರವಾಗಿದೆ” ಎಂದು ಹೇಳಿದರು.

“ಈ ಕಾರ್ಯಕ್ರಮಕ್ಕೆ ಒಪ್ಪಿಕೊಂಡಾಗ ಅಧಿವೇಶನ ನಡೆಯುತ್ತದೆ ಎಂದು ನನಗೆ ಗೊತ್ತಿರಲಿಲ್ಲ. ಆದರೆ ಈಗ ಅಧಿವೇಶನ ನಡೆಯುತ್ತಿದೆ. ವಿರೋಧ ಪಕ್ಷದ ಬಿಜೆಪಿ ಸ್ನೇಹಿತರಿಗೆ ನನ್ನನ್ನು ಹಾಗೂ ನನ್ನ ಸರ್ಕಾರವನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನನ್ನ ಆಲೋಚನೆಗಳು ಸ್ಪಷ್ಟವಾಗಿದ್ದು, ನಮ್ಮ ಸರ್ಕಾರ ಜನಸಾಮಾನ್ಯರ ವಿಚಾರದಲ್ಲಿ ಕೈಗೊಳ್ಳುತ್ತಿರುವ ನೀತಿಗಳಿಂದಾಗಿ ಅವರಿಗೆ ನನ್ನ ವಿರುದ್ಧ ಹೋರಾಟ ಮಾಡಲು ಯಾವುದೇ ಅವಕಾಶಗಳಿಲ್ಲ. ಅಸೂಯೆಗೆ ಮದ್ದಿಲ್ಲ. ಹೀಗಾಗಿ ಅವರು ನಮಗೆ ಚರ್ಚೆಗೆ ಅವಕಾಶ ನೀಡುತ್ತಿಲ್ಲ” ಎಂದರು.

“ನಿನ್ನೆ ಚೆನ್ನೈನಲ್ಲಿ ನಡೆದ ದಕ್ಷಿಣ ವಲಯ ಮಂಡಳಿ ಸಭೆಯಲ್ಲಿ ನಮ್ಮ ರಾಜ್ಯದ ಸಮಸ್ಯೆಗಳ ಬಗ್ಗೆ ಪ್ರಸ್ತಾಪ ಮಾಡಿದ್ದೇನೆ. ಕರ್ನಾಟಕ ಸೇರಿದಂತೆ ದಕ್ಷಿಣ ಭಾರತ ದೇಶದ ಪ್ರಗತಿಗೆ ಸಹಕಾರಿಯಾಗಿದೆ. ನಾವು ಹಚ್ಚುವ ಜ್ಯೋತಿ ಹೇಗೆ ಕೆಳಗಿನಿಂದ ಮೇಲಕ್ಕೆ ಬೆಳಗುತ್ತದೆಯೋ ಅದೇ ರೀತಿ ದೇಶದ ಪ್ರಗತಿ ಕೂಡ ದಕ್ಷಿಣ ಭಾರತದಿಂದ ಬೆಳಗುತ್ತಿದೆ. ದೀಪ ಹಚ್ಚಿದಾಗ ಅದರ ಬೆಳಕು ಎಲ್ಲರಿಗೂ ಕಾಣುತ್ತದೆ. ಆದರೆ ಅದರಲ್ಲಿರುವ ಬತ್ತಿ ಹಾಗೂ ಎಣ್ಣೆ ಯಾರಿಗೂ ಕಾಣುವುದಿಲ್ಲ. ನಮಗೆ ನ್ಯಾಯುತ ಪಾಲು ಬೇಕು. ನಾವು ನೀಡುತ್ತಿರುವ ಕೊಡುಗೆ ಹಾಗೂ ಪಡೆಯುತ್ತಿರುವ ಅನುದಾನದಲ್ಲಿರುವ ವ್ಯತ್ಯಾಸದ ಬಗ್ಗೆ ವಿಚಾರ ಮಂಡಿಸಲಾಗಿದೆ. ನಾವು ಹಚ್ಚು ಜ್ಯೋತಿ ಅಷ್ಟು ಸುಲಭವಾಗಿ ಆರುವುದಿಲ್ಲ. ರಾಜ್ಯದ ಜನರ ಬದುಕಿನಲ್ಲಿ ಬೆಳಕು ತರುತ್ತದೆ” ಎಂದು ತಿಳಿಸಿದರು.

“ಕರ್ನಾಟಕ ದೇಶದಲ್ಲೇ ಎರಡನೇ ಅತಿ ಹೆಚ್ಚು ತೆರಿಗೆ ಪಾವತಿಸುತ್ತಿರುವ ರಾಜ್ಯ. ಭಾರತದ ಸಾಫ್ಟ್‌ವೇರ್ ರಪ್ತಿನಲ್ಲಿ ಕರ್ನಾಟಕದ ಕೊಡುಗೆ ಶೇ.42ರಷ್ಟಿದೆ. ಇಲ್ಲಿರುವ ಪ್ರತಿಭೆಗಳನ್ನು ನೋಡಿ ವಿಶ್ವದ ಪ್ರಮುಖ 500 ಕಂಪನಿಗಳು ನಮ್ಮಲ್ಲಿ ಕಾರ್ಯನಿರ್ವಹಿಸುತ್ತಿವೆ. ಐಟಿ ಬಿಟಿ ಸೇರಿದಂತೆ ತಂತ್ರಜ್ಞಾನ, ಏರೋಸ್ಪೇಸ್ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಕರ್ನಾಟಕ ಮುಂದಾಳತ್ವ ವಹಿಸುತ್ತಿದೆ” ಎಂದರು.

“ಈ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ಸಂತೋಷ ತಂದಿದೆ. ನಿಮ್ಮ ಮಾರ್ಗದರ್ಶನವಿಲ್ಲದೆ ರಾಜ್ಯ ಈ ಪ್ರಗತಿ ಸಾಧಿಸುತ್ತಿರಲಿಲ್ಲ. ದೇಶದ ಆರ್ಥಿಕತೆ ಉತ್ತಮವಾಗಿ ನಡೆಯುತ್ತಿರುವುದರ ಹಿಂದೆ ನಿಮ್ಮ ಮಾರ್ಗದರ್ಶನವಿದೆ. ದುಡ್ಡು, ಬ್ಲಡ್ ಎರಡೂ ಹರಿಯುತ್ತಿರಬೇಕು. ಬ್ಲಡ್ ಒಂದೇ ಕಡೆ ಇದ್ದರೆ ಆರೋಗ್ಯ ಹದಗೆಡುತ್ತದೆ, ಹಣ ಒಂದೇ ಕಡೆ ಸೇರಿಕೊಂಡರೆ ಆದಾಯ ತೆರಿಗೆ, ಜಿಎಸ್ ಟಿ, ಕಳ್ಳರು ಬರುತ್ತಾರೆ ಎಂದು ಸಾಯಿಬಾಬಾ ಅವರು ಒಮ್ಮೆ ಹೇಳಿದ್ದರು” ಎಂದು ಸ್ಮರಿಸಿದರು.

ಸಾರ್ವಜನಿಕರ ಸಮ್ಮುಖದಲ್ಲಿ ನಡೆದರೆ ಮಾತ್ರ ಎಸ್ಸಿ/ಎಸ್ಟಿ ಕಾಯ್ದೆ ಅನ್ವಯ: ಸುಪ್ರೀಂ ಕೋರ್ಟ್

0

ನವದೆಹಲಿ: ಸಾರ್ವಜನಿಕರ ಸಮ್ಮುಖದಲ್ಲಿ ಅಥವಾ ಸಾರ್ವಜನಿಕರ ವೀಕ್ಷಣೆಗೆ ಒಳಪಡುವ ಸ್ಥಳದಲ್ಲಿ ಜಾತಿ ನಿಂದನೆ ನಡೆದಿರುವುದು ಸಾಬೀತಾಗದಿದ್ದರೆ, ಅದನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಾಯ್ದೆ ಅಡಿ ಅಪರಾಧವೆಂದು ಪರಿಗಣಿಸಲಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.

ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರನ್ನೊಳಗೊಂಡ ಪೀಠವು ಉತ್ತರ ಪ್ರದೇಶದ ಶಾಲೆಯೊಂದರ ಮ್ಯಾನೇಜರ್ ವಿರುದ್ಧ ಎಸ್ಸಿ/ಎಸ್ಟಿ ಕಾಯ್ದೆಯಡಿ ದಾಖಲಾಗಿದ್ದ ಪ್ರಕರಣದ ವಿಚಾರಣೆ ನಡೆಸಿ, ಕಾಯ್ದೆಯ ಸೆಕ್ಷನ್ 3(2)(r) ಮತ್ತು 3(1)(s) ಅಡಿಯಲ್ಲಿ ನಡೆಯುತ್ತಿದ್ದ ಕಾನೂನು ಪ್ರಕ್ರಿಯೆಯನ್ನು ರದ್ದುಗೊಳಿಸಿದೆ.

ಕಾಯ್ದೆಯ ಪ್ರಕಾರ ಸಾರ್ವಜನಿಕರ ವೀಕ್ಷಣೆಯ ವ್ಯಾಪ್ತಿಯಲ್ಲಿರುವ ಸ್ಥಳ ಎಂದರೆ ಆರೋಪಿಯು ಸಂತ್ರಸ್ತನಿಗೆ ಆಡಿದ ಮಾತುಗಳನ್ನು ಸಾರ್ವಜನಿಕರು ನೋಡಲು ಅಥವಾ ಕೇಳಲು ಸಾಧ್ಯವಾಗುವಂತಹ ತೆರೆದ ಸ್ಥಳವಾಗಿರಬೇಕು ಎಂದು ಪೀಠ ಅಭಿಪ್ರಾಯಪಟ್ಟಿದೆ. ಘಟನೆಯು ಸಾರ್ವಜನಿಕರು ಇಲ್ಲದ ನಾಲ್ಕು ಗೋಡೆಗಳ ಮಧ್ಯೆ ನಡೆದರೆ ಅದನ್ನು ಸಾರ್ವಜನಿಕ ವೀಕ್ಷಣೆಯ ಸ್ಥಳದಲ್ಲಿ ನಡೆದಿದೆ ಎಂದು ಹೇಳಲಾಗದು ಎಂದು ಪೀಠ ಹೇಳಿದೆ.

ಎಫ್‌ಐಆರ್‌ನಲ್ಲಿ ಶಾಲಾ ಮ್ಯಾನೇಜರ್ ಅವರೇ ನಿರ್ದಿಷ್ಟವಾಗಿ ಯಾವುದೇ ಜಾತಿ ನಿಂದನೆಯ ಮಾತುಗಳನ್ನು ಆಡಿದ್ದಾರೆ ಎಂದು ಉಲ್ಲೇಖಿಸಿಲ್ಲ ಎಂದ ಪೀಠ, ಪ್ರಾಸಿಕ್ಯೂಷನ್ ಒದಗಿಸಿರುವ ದಾಖಲೆಗಳು ಗರಿಷ್ಠ ಪಕ್ಷ ಉಭಯ ಬಣಗಳ ನಡುವಿನ ಜಗಳ ಮತ್ತು ಗಲಾಟೆಯನ್ನು ಮಾತ್ರ ತೋರಿಸುತ್ತವೆಯೇ ಹೊರತು ಮ್ಯಾನೇಜರ್ ಯಾವುದೇ ನಿರ್ದಿಷ್ಟ ಜಾತಿ ನಿಂದನೆಯ ಮಾತುಗಳನ್ನಾಡಿರುವುದನ್ನು ದೃಢಪಡಿಸುವುದಿಲ್ಲ ಎಂದು ಹೇಳಿದೆ. ಶಾಲಾ ಮ್ಯಾನೇಜರ್ ವಿರುದ್ಧ ಎಸ್ಸಿ/ಎಸ್ಟಿ (ದೌರ್ಜನ್ಯ ತಡೆ) ಕಾಯ್ದೆಯಡಿ ದಾಖಲಾಗಿದ್ದ ಪ್ರಕ್ರಿಯೆಗಳನ್ನು ರದ್ದುಗೊಳಿಸುವುದಾಗಿ ಪೀಠ ಹೇಳಿದ್ದು, ಆದರೆ ಪ್ರಕರಣದಲ್ಲಿ ದಾಖಲಾಗಿರುವ ಇತರ ಆರೋಪಗಳಿಗೆ ಸಂಬಂಧಿಸಿದ ಕಾನೂನು ಪ್ರಕ್ರಿಯೆಗಳು ಮುಂದುವರಿಯಲಿವೆ ಎಂದು ಸ್ಪಷ್ಟಪಡಿಸಿದೆ.

ಏನಿದು ಪ್ರಕರಣ? ಶಾಲೆಯಲ್ಲಿ ಇಬ್ಬರು ವಿದ್ಯಾರ್ಥಿಗಳ ನಡುವೆ ಜಗಳ ನಡೆದ ಬಳಿಕ ಅವರ ತಂದೆ 2020ರ ಜನವರಿ 24ರಂದು ಶಾಲಾ ಮ್ಯಾನೇಜರ್ ಅವರನ್ನು ಸಂಪರ್ಕಿಸಿದ್ದರು. ಈ ವೇಳೆ ಮ್ಯಾನೇಜರ್ ಹಾಗೂ ಸಿಬ್ಬಂದಿ ತಮ್ಮ ಮೇಲೆ ಹಲ್ಲೆ ನಡೆಸಿ ಜಾತಿ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿದ್ದರು. ಗಲಾಟೆ ನಡೆದ ಮರುದಿನವೇ ಗಲಭೆ, ಗಾಯ, ಅಕ್ರಮ ಬಂಧನ ಮತ್ತು ಉದ್ದೇಶಪೂರ್ವಕ ಅವಮಾನದ ಆರೋಪಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿತ್ತು. ಇದರೊಂದಿಗೆ ಎಸ್ಸಿ/ಎಸ್ಟಿ (ದೌರ್ಜನ್ಯ ತಡೆ) ಕಾಯ್ದೆಯ ಸೆಕ್ಷನ್ 3(1)(r) ಮತ್ತು 3(1)(s) ಅಡಿಯಲ್ಲಿಯೂ ಪ್ರಕರಣ ದಾಖಲಿಸಲಾಗಿತ್ತು.

ಈ ಪ್ರಕ್ರಿಯೆಗಳನ್ನು ಪ್ರಶ್ನಿಸಿ ಶಾಲಾ ಮ್ಯಾನೇಜರ್ ಅಲಹಾಬಾದ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಘಟನೆ ನಡೆದಿದೆ ಎನ್ನಲಾದ ಶಾಲೆಯ ಕೊಠಡಿಯು ಸಂಪೂರ್ಣ ಮುಚ್ಚಲ್ಪಟ್ಟಿದ್ದು, ಕಿಟಕಿಗಳಿಲ್ಲದ ಹಾಗೂ ಸಾರ್ವಜನಿಕರಿಗೆ ಪ್ರವೇಶವಿಲ್ಲದ ಸ್ಥಳವಾಗಿತ್ತು ಎಂದು ಅವರು ವಾದಿಸಿದ್ದರು. ಜಾತಿ ನಿಂದನೆ ನಡೆದಿದೆ ಎನ್ನಲಾದ ಸಮಯದಲ್ಲಿ ತಾವು ಕೊಠಡಿಯೊಳಗೆ ಇರಲಿಲ್ಲ ಎಂದು ಸಾಕ್ಷಿಗಳು ಹೇಳಿರುವುದನ್ನೂ ಅವರು ನ್ಯಾಯಾಲಯದ ಗಮನಕ್ಕೆ ತಂದಿದ್ದರು. ಆದರೆ ಅಲಹಾಬಾದ್ ಹೈಕೋರ್ಟ್ ಎಸ್ಸಿ/ಎಸ್ಟಿ ಕಾಯ್ದೆಯ ಅಡಿ ವಿಚಾರಣೆ ನಡೆಸಲು ಅನುಮತಿ ನೀಡಿತ್ತು. ಈ ಆದೇಶವನ್ನು ಪ್ರಶ್ನಿಸಿ ಮ್ಯಾನೇಜರ್ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು.

ಬರ ವೀಕ್ಷಣೆಯಲ್ಲೂ ಬಣ ರಾಜಕೀಯ ಬಿಸಿ: ಎಂ.ಬಿ. ಪಾಟೀಲ್ ಜೊತೆ ಯಶವಂತರಾಯಗೌಡ ಪಾಟೀಲ್ ಗೈರು

0

ವಿಜಯಪುರ: ರಾಜ್ಯ ಸಚಿವ ಸಂಪುಟ ವಿಸ್ತರಣೆ ವೇಳೆ ಬಹಿರಂಗವಾಗಿದ್ದ ಸಚಿವ ಎಂ.ಬಿ. ಪಾಟೀಲ್ ಹಾಗೂ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್ ನಡುವಿನ ಅಸಮಾಧಾನ ಇದೀಗ ಮತ್ತೆ ಮುನ್ನೆಲೆಗೆ ಬಂದಿದೆ. ಜಿಲ್ಲೆಯ ಬರ ಪರಿಸ್ಥಿತಿ ಪರಿಶೀಲನೆಗೆ ಸಚಿವ ಎಂ.ಬಿ. ಪಾಟೀಲ್ ಆಗಮಿಸಿದ ವೇಳೆ ಶಾಸಕ ಯಶವಂತರಾಯಗೌಡ ಪಾಟೀಲ್ ಗೈರಾಗಿರುವುದು ಕಾಂಗ್ರೆಸ್ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

ನೂತನ ಜಿಲ್ಲಾ ಉಸ್ತುವಾರಿ ಸಚಿವರಿಗೆ ಜಿಲ್ಲೆಯ ಪ್ರತಿಯೊಂದು ವಿಧಾನಸಭಾ ಕ್ಷೇತ್ರದಲ್ಲಿ ಬರ ವೀಕ್ಷಣೆ ನಡೆಸಿ ವರದಿ ಸಲ್ಲಿಸುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೂಚಿಸಿದ್ದರು. ಅದರಂತೆ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ್ ಇಂಡಿ ಕ್ಷೇತ್ರದಲ್ಲಿ ಬರ ಪರಿಸ್ಥಿತಿ ಪರಿಶೀಲನೆ ನಡೆಸಿದರು. ಆದರೆ ಕ್ಷೇತ್ರದ ಶಾಸಕ ಯಶವಂತರಾಯಗೌಡ ಪಾಟೀಲ್ ಕಾರ್ಯಕ್ರಮಕ್ಕೆ ಗೈರಾಗಿದ್ದರು.

ಸಚಿವ ಸ್ಥಾನ ಕೈತಪ್ಪಿದ ಬಳಿಕ ಎಂ.ಬಿ. ಪಾಟೀಲ್ ವಿರುದ್ಧ ಬಹಿರಂಗ ಅಸಮಾಧಾನ ವ್ಯಕ್ತಪಡಿಸಿದ್ದ ಯಶವಂತರಾಯಗೌಡ ಪಾಟೀಲ್, ತಮ್ಮ ರಾಜೀನಾಮೆಯನ್ನೂ ಸಲ್ಲಿಸಿದ್ದರು. ಬಳಿಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಸೇರಿದಂತೆ ಕಾಂಗ್ರೆಸ್‌ನ ಹಲವು ನಾಯಕರು ಮಧ್ಯಪ್ರವೇಶಿಸಿ ಅವರನ್ನು ಮನವೊಲಿಸಿದ್ದರು.

ರಾಜ್ಯ ಮಟ್ಟದಲ್ಲಿ ಅಸಮಾಧಾನ ಶಮನವಾದಂತೆ ಕಂಡುಬಂದಿದ್ದರೂ, ವಿಜಯಪುರ ಜಿಲ್ಲೆಯಲ್ಲಿ ಇಬ್ಬರು ನಾಯಕರ ನಡುವಿನ ಮುನಿಸು ಮುಂದುವರಿದಿರುವುದು ಇದೀಗ ಬರ ವೀಕ್ಷಣೆ ವೇಳೆ ಮತ್ತೆ ಬಹಿರಂಗವಾಗಿದೆ.

ಮೊದಲ ಸಚಿವ ಸಂಪುಟ ವಿಸ್ತರಣೆಯಲ್ಲಿ ವಿಜಯಪುರ ಜಿಲ್ಲೆಯಿಂದ ಎಂ.ಬಿ. ಪಾಟೀಲ್ ಅವರಿಗೆ ಮಾತ್ರ ಸಚಿವ ಸ್ಥಾನ ದೊರೆತಿತ್ತು. ಎರಡನೇ ಹಂತದ ಸಂಪುಟ ವಿಸ್ತರಣೆಯಲ್ಲಿ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್ ಹಾಗೂ ಮುದ್ದೇಬಿಹಾಳ ಶಾಸಕ ಸಿ.ಎಸ್. ನಾಡಗೌಡ ಸಚಿವ ಸ್ಥಾನಕ್ಕಾಗಿ ಪ್ರಯತ್ನ ನಡೆಸಿದ್ದರು. ಆದರೆ ಇಬ್ಬರಿಗೂ ಸಚಿವ ಸ್ಥಾನ ಸಿಗಲಿಲ್ಲ.

ಸಚಿವ ಸ್ಥಾನ ಕೈತಪ್ಪಲು ಎಂ.ಬಿ. ಪಾಟೀಲ್ ಅವರೇ ಕಾರಣ ಎಂದು ಯಶವಂತರಾಯಗೌಡ ಪಾಟೀಲ್ ಈ ಹಿಂದೆ ಬಹಿರಂಗವಾಗಿ ಆರೋಪಿಸಿದ್ದರು. ಇದೀಗ ಬರ ವೀಕ್ಷಣೆಯ ಕಾರ್ಯಕ್ರಮದಿಂದ ದೂರ ಉಳಿದಿರುವುದು ಜಿಲ್ಲೆಯ ಕಾಂಗ್ರೆಸ್ ರಾಜಕೀಯದಲ್ಲಿ ಅಸಮಾಧಾನ ಇನ್ನೂ ಸಂಪೂರ್ಣವಾಗಿ ಶಮನವಾಗಿಲ್ಲ ಎಂಬ ಚರ್ಚೆಗೆ ಕಾರಣವಾಗಿದೆ.

ಮುಂದಿನ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯ ಇಬ್ಬರು ಪ್ರಮುಖ ನಾಯಕರ ನಡುವಿನ ಈ ಭಿನ್ನಾಭಿಪ್ರಾಯ ಕಾಂಗ್ರೆಸ್ ಸಂಘಟನೆಯ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂಬುದು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.