Home Blog

Vijayanagara News: ರೈತನಿಂದ ಹಣ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಗ್ರಾಮ ಲೆಕ್ಕಾಧಿಕಾರಿ!

ವಿಜಯನಗರ: ರೈತನಿಂದ ಲಂಚ ಪಡೆಯುತ್ತಿದ್ದ ಆರೋಪದ ಮೇಲೆ ಮಹಿಳಾ ಗ್ರಾಮ ಲೆಕ್ಕಾಧಿಕಾರಿಯೊಬ್ಬರನ್ನು ಲೋಕಾಯುಕ್ತ ಅಧಿಕಾರಿಗಳು ಬಂಧಿಸಿರುವ ಘಟನೆ ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ನಡೆದಿದೆ.

ಬಂಧಿತ ಮಹಿಳಾ ಅಧಿಕಾರಿಯನ್ನು ಹೊಳಗುಂದಿ ಗ್ರಾಮದ ಗ್ರಾಮ ಲೆಕ್ಕಾಧಿಕಾರಿ ಶಹನಾಜ್ ಬೇಗಂ ಎಂದು ಗುರುತಿಸಲಾಗಿದೆ.

ಕೊಟ್ಟೂರು ಗ್ರಾಮದ ರೈತ ಸಿದ್ಧಲಿಂಗಸ್ವಾಮಿ ಅವರು ಪಹಣಿ ತಿದ್ದುಪಡಿ ಮಾಡಿಸಲು ಬಂದಾಗ, ಕೆಲಸ ಮಾಡಿಕೊಡಲು 10 ಸಾವಿರ ರೂಪಾಯಿ ಲಂಚ ನೀಡುವಂತೆ ಶಹನಾಜ್ ಬೇಗಂ ಕೇಳಿದ್ದರು ಎನ್ನಲಾಗಿದೆ.

ಈ ಕುರಿತು ರೈತರು ಲೋಕಾಯುಕ್ತ ಅಧಿಕಾರಿಗಳಿಗೆ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ಅಧಿಕಾರಿಗಳು, ಹಣ ಸ್ವೀಕರಿಸುತ್ತಿದ್ದ ವೇಳೆ ಶಹನಾಜ್ ಬೇಗಂ ಅವರನ್ನು ಸ್ಥಳದಲ್ಲೇ ಹಿಡಿದಿದ್ದಾರೆ.

ವಿಜಯನಗರ ಜಿಲ್ಲಾ ಲೋಕಾಯುಕ್ತ ಡಿವೈಎಸ್ಪಿ ಸಚಿನ್ ಛಲವಾದಿ ನೇತೃತ್ವದಲ್ಲಿ ಇನ್ಸ್‌ಪೆಕ್ಟರ್‌ಗಳಾದ ರಾಜೇಶ್ ಲಮಾಣಿ ಹಾಗೂ ಅಮರೇಶ್ ಹುಬ್ಬಳ್ಳಿ ಅವರ ತಂಡ ದಾಳಿ ನಡೆಸಿದೆ.

ಸದ್ಯ ಮಹಿಳಾ ಅಧಿಕಾರಿಯನ್ನು ವಶಕ್ಕೆ ಪಡೆದಿರುವ ಲೋಕಾಯುಕ್ತ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಪ್ರಕರಣದ ಕುರಿತು ಮುಂದಿನ ಕ್ರಮ ಕೈಗೊಳ್ಳಲಾಗುತ್ತಿದೆ.

ಜೈಲಿನಿಂದ ಸಿಎಂವರೆಗೆ ವಿಜಯ್ ಜರ್ನಿ: ‘ಜನ ನಾಯಗನ್’ ಟೀಸರ್ ವೈರಲ್

ಚೆನ್ನೈ: ದಳಪತಿ ವಿಜಯ್ ಅವರ ಸಿನಿ ಪಯಣದ ಕೊನೆಯ ಅಧ್ಯಾಯವೆಂದು ಬಣ್ಣಿಸಲಾಗುತ್ತಿರುವ ‘ಜನ ನಾಯಗನ್’ ಸಿನಿಮಾ ಬಿಡುಗಡೆಯ ಕ್ಷಣಗಣನೆ ಆರಂಭವಾಗಿದೆ. ಜುಲೈ 23ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿರುವ ಚಿತ್ರದ ಅನೌನ್ಸ್‌ಮೆಂಟ್ ಟೀಸರ್ ಬಿಡುಗಡೆಯಾಗುತ್ತಿದ್ದಂತೆಯೇ ಅಭಿಮಾನಿಗಳಲ್ಲಿ ಭಾರೀ ಸಂಭ್ರಮ ಮನೆ ಮಾಡಿದೆ.

ಕೆವಿಎನ್ ಪ್ರೊಡಕ್ಷನ್ಸ್ ಬಿಡುಗಡೆ ಮಾಡಿರುವ 18 ಸೆಕೆಂಡುಗಳ ಟೀಸರ್‌ನಲ್ಲಿ ವಿಜಯ್ ಆ್ಯಕ್ಷನ್ ಮೋಡ್‌ನಲ್ಲಿ ಮಿಂಚಿದ್ದು, ಗನ್ ಹಿಡಿದು ಖಳರ ವಿರುದ್ಧ ಹೋರಾಡುವ ದೃಶ್ಯಗಳು ಮತ್ತು ಪೊಲೀಸ್ ಪಡೆಯ ನಡುವೆ ಕಾಣಿಸಿಕೊಳ್ಳುವ ಸನ್ನಿವೇಶಗಳು ಗಮನ ಸೆಳೆಯುತ್ತವೆ. ಆದರೆ ಜೈಲು ಕೈದಿ ಉಡುಪಿನಿಂದ ನೇರವಾಗಿ ಮುಖ್ಯಮಂತ್ರಿಯ ಬಿಳಿ ಶರ್ಟ್–ಕಪ್ಪು ಜಾಕೆಟ್ ಲುಕ್‌ಗೆ ಬದಲಾಗುವ ದೃಶ್ಯವೇ ಟೀಸರ್‌ನ ಪ್ರಮುಖ ಆಕರ್ಷಣೆಯಾಗಿದೆ.

ತಮಿಳುನಾಡಿನ ಮುಖ್ಯಮಂತ್ರಿಯಾದ ಬಳಿಕ ಬಿಡುಗಡೆಯಾಗುತ್ತಿರುವ ವಿಜಯ್ ಅವರ ಮೊದಲ ಸಿನಿಮಾ ಎಂಬ ಕಾರಣಕ್ಕೆ ಚಿತ್ರದ ಮೇಲೆ ನಿರೀಕ್ಷೆ ಮತ್ತಷ್ಟು ಹೆಚ್ಚಿದೆ. “ಇದು ನಟ ವಿಜಯ್‌ಗೆ ಕೊನೆಯ ಸಲ್ಯೂಟ್”, “ಒನ್ ಲಾಸ್ಟ್ ಡ್ಯಾನ್ಸ್”, “ಬಾಕ್ಸ್ ಆಫೀಸ್ ದಾಖಲೆ ಮುರಿಯಲಿದೆ” ಎಂದು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾವನಾತ್ಮಕವಾಗಿ ಪ್ರತಿಕ್ರಿಯಿಸುತ್ತಿದ್ದಾರೆ.

ಹೆಚ್. ವಿನೋದ್ ನಿರ್ದೇಶನದ ಈ ಚಿತ್ರ ಹಲವು ಅಡೆತಡೆಗಳನ್ನು ದಾಟಿ ತೆರೆಗೆ ಬರುತ್ತಿದೆ. ಸಂಕ್ರಾಂತಿ ಬಿಡುಗಡೆ ಯೋಜನೆ ಸೆನ್ಸಾರ್ ಪ್ರಕ್ರಿಯೆಯಿಂದ ಮುಂದೂಡಲ್ಪಟ್ಟಿದ್ದು, ಬಳಿಕ ಕಾನೂನು ಹೋರಾಟದ ನಂತರ ‘ಎ’ ಪ್ರಮಾಣಪತ್ರ ಪಡೆದುಕೊಂಡಿದೆ. ಇದರ ಮಧ್ಯೆಯೇ ಚಿತ್ರದ ಎಚ್‌ಡಿ ಪ್ರಿಂಟ್ ಸೋರಿಕೆಯಾಗಿದ್ದ ಪ್ರಕರಣದಲ್ಲಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದರು.

2023ರ ‘ಭಗವಂತ್ ಕೇಸರಿ’ ಚಿತ್ರದ ಭಾಗಶಃ ರಿಮೇಕ್ ಎನ್ನಲಾಗುತ್ತಿರುವ ‘ಜನ ನಾಯಗನ್’ ಚಿತ್ರದಲ್ಲಿ ವಿಜಯ್ ಜೊತೆಗೆ ಪೂಜಾ ಹೆಗ್ಡೆ, ಬಾಬಿ ಡಿಯೋಲ್, ಮಮಿತಾ ಬೈಜು, ಗೌತಮ್ ವಾಸುದೇವ್ ಮೆನನ್, ಪ್ರಕಾಶ್ ರಾಜ್ ಮತ್ತು ಪ್ರಿಯಾಮಣಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದು, ವರ್ಷದ ಬಹು ನಿರೀಕ್ಷಿತ ಬಿಡುಗಡೆಯಾಗಿ ಗುರುತಿಸಿಕೊಂಡಿದೆ.

Bengaluru Metro Update: ಹಸಿರು ಮಾರ್ಗದಲ್ಲಿ ತಾಂತ್ರಿಕ ದೋಷ; 45 ನಿಮಿಷಗಳ ಬಳಿಕ ಮೆಟ್ರೋ ಸಂಚಾರ ಪುನರಾರಂಭ

ಬೆಂಗಳೂರು: ಬೆಂಗಳೂರಿನ ನಮ್ಮ ಮೆಟ್ರೋ ಹಸಿರು ಮಾರ್ಗದಲ್ಲಿ ವಿದ್ಯುತ್ ಪೂರೈಕೆಯಲ್ಲಿನ ತಾಂತ್ರಿಕ ದೋಷದಿಂದಾಗಿ ಇಂದು ಬೆಳಗ್ಗೆ ಮೆಟ್ರೋ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು.

ಬೆಳಗ್ಗೆ 8 ಗಂಟೆ ಸುಮಾರಿಗೆ ಸಮಸ್ಯೆ ಕಾಣಿಸಿಕೊಂಡಿದ್ದು, ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸಿದರು.

ವಿದ್ಯುತ್ ಸಮಸ್ಯೆಯಿಂದಾಗಿ ಹಸಿರು ಮಾರ್ಗದ ಸಿಲ್ಕ್ ಇನ್‌ಸ್ಟಿಟ್ಯೂಟ್‌ನಿಂದ ಯಶವಂತಪುರದವರೆಗೆ ಮಾತ್ರ ಶಾರ್ಟ್-ಲೂಪ್ ಸೇವೆಯಲ್ಲಿ ರೈಲು ಸಂಚಾರ ನಡೆಸಲಾಗಿತ್ತು.

ಯಶವಂತಪುರದಿಂದ ಮಾದಾವರ (ನಾಗಸಂದ್ರ ವಿಸ್ತರಿತ ಮಾರ್ಗ) ನಡುವಿನ 10 ನಿಲ್ದಾಣಗಳಲ್ಲಿ ಮೆಟ್ರೋ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು.

ತಾಂತ್ರಿಕ ದೋಷ ಸರಿಪಡಿಸಲು ಬಿಎಂಆರ್‌ಸಿಎಲ್  ತುರ್ತು ಕ್ರಮ ಕೈಗೊಂಡಿದ್ದು, ಇದೀಗ ಬೆಳಗ್ಗೆ 8.45ರ ವೇಳೆಗೆ ಮೆಟ್ರೋ ಸಂಚಾರ ಮತ್ತೆ ಆರಂಭಗೊಂಡಿದೆ.

ಈ ಕುರಿತು ಬಿಎಂಆರ್‌ಸಿಎಲ್, ತಾಂತ್ರಿಕ ದೋಷವನ್ನು ಸರಿಪಡಿಸಲು ಸಿಬ್ಬಂದಿ ತುರ್ತು ಕಾರ್ಯಾಚರಣೆ ನಡೆಸಿದ್ದು, ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಗೆ ವಿಷಾದ ವ್ಯಕ್ತಪಡಿಸಿದೆ.

ಹಸಿರು ಮಾರ್ಗವು ಒಟ್ಟು 33.46 ಕಿ.ಮೀ ಉದ್ದ ಹೊಂದಿದ್ದು, 32 ನಿಲ್ದಾಣಗಳ ಮೂಲಕ ನಗರದ ಉತ್ತರ ಮತ್ತು ದಕ್ಷಿಣ ಭಾಗಗಳನ್ನು ಸಂಪರ್ಕಿಸುತ್ತದೆ.

ಬೆಳಗಿನ ಪೀಕ್ ಅವರ್‌ನಲ್ಲಿ ಸಮಸ್ಯೆ ಎದುರಾದ ಕಾರಣ ಕಚೇರಿ, ಕಾಲೇಜು ಹಾಗೂ ಆಸ್ಪತ್ರೆಗಳಿಗೆ ತೆರಳುತ್ತಿದ್ದ ಸಾವಿರಾರು ಪ್ರಯಾಣಿಕರು ಯಶವಂತಪುರ ಸೇರಿದಂತೆ ಹಲವು ನಿಲ್ದಾಣಗಳಲ್ಲಿ ಪರದಾಡುವಂತಾಗಿತ್ತು. ಇದೀಗ ಮೆಟ್ರೋ ಸೇವೆ ಸಹಜ ಸ್ಥಿತಿಗೆ ಮರಳಿದೆ.

ಕಣ್ಣಿನ ದೃಷ್ಟಿ ಕಾಪಾಡಲು ಅಗಸೆ ಬೀಜವೇ? ಕುಂಬಳಕಾಯಿ ಬೀಜವೇ? ಯಾವುದು ಹೆಚ್ಚು ಪ್ರಯೋಜನಕಾರಿ ಎಂಬುದು ಇಲ್ಲಿದೆ

0

ಇತ್ತೀಚಿನ ದಿನಗಳಲ್ಲಿ ಚಿಕ್ಕ ವಯಸ್ಸಿನಲ್ಲೇ ದೃಷ್ಟಿ ಮಸುಕಾಗುವುದು, ಕಣ್ಣಿನ ಆಯಾಸ, ಡ್ರೈ ಐ ಹಾಗೂ ಮೊಬೈಲ್ ಮತ್ತು ಕಂಪ್ಯೂಟರ್ ಬಳಕೆಯಿಂದ ಉಂಟಾಗುವ ಡಿಜಿಟಲ್ ಐ ಸ್ಟ್ರೇನ್ ಸಮಸ್ಯೆಗಳು ಹೆಚ್ಚಾಗುತ್ತಿವೆ. ಹೀಗಾಗಿ ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಹಲವರು ನೈಸರ್ಗಿಕ ಪರಿಹಾರಗಳ ಮೊರೆ ಹೋಗುತ್ತಿದ್ದಾರೆ. ಕೆಲವರು ಕೆಲವು ಆಹಾರಗಳನ್ನು ಸೇವಿಸುವುದರಿಂದ ಕನ್ನಡಕದ ಅಗತ್ಯವೇ ಇರುವುದಿಲ್ಲ ಎಂಬ ನಂಬಿಕೆಯನ್ನೂ ಹೊಂದಿದ್ದಾರೆ.

ಆರೋಗ್ಯ ತಜ್ಞರ ಪ್ರಕಾರ, ಕೆಲವು ಪೌಷ್ಟಿಕ ಆಹಾರಗಳು ಕಣ್ಣಿನ ಆರೋಗ್ಯವನ್ನು ಕಾಪಾಡಲು ಮತ್ತು ಕೆಲವು ದೃಷ್ಟಿ ಸಮಸ್ಯೆಗಳ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡಬಹುದು. ಅದರಲ್ಲೂ ಅಗಸೆ ಬೀಜ ಮತ್ತು ಕುಂಬಳಕಾಯಿ ಬೀಜಗಳು ಕಣ್ಣಿನ ಆರೋಗ್ಯಕ್ಕೆ ಅಗತ್ಯವಾದ ಹಲವು ಪೋಷಕಾಂಶಗಳನ್ನು ಹೊಂದಿವೆ. ಹಾಗಾದರೆ ಈ ಎರಡರಲ್ಲಿ ಯಾವುದು ಹೆಚ್ಚು ಪ್ರಯೋಜನಕಾರಿ?

ಕಣ್ಣಿನ ಆರೋಗ್ಯಕ್ಕೆ ಅಗಸೆ ಬೀಜದ ಪ್ರಯೋಜನಗಳು

ಅಗಸೆ ಬೀಜಗಳಲ್ಲಿ ಒಮೆಗಾ-3 ಕೊಬ್ಬಿನಾಮ್ಲಗಳು, ಫೈಬರ್, ವಿಟಮಿನ್ ಇ ಮತ್ತು ಲಿಗ್ನಾನ್ಸ್ ಸಮೃದ್ಧವಾಗಿವೆ. ಇವು ಕಣ್ಣಿನ ರೆಟಿನಾದ ಆರೋಗ್ಯವನ್ನು ಕಾಪಾಡಲು ನೆರವಾಗುವುದರ ಜೊತೆಗೆ, ಡ್ರೈ ಐ ಸಮಸ್ಯೆಯನ್ನು ಕಡಿಮೆ ಮಾಡಲು ಸಹಾಯ ಮಾಡಬಹುದು.

ಒಮೆಗಾ-3 ಕೊಬ್ಬಿನಾಮ್ಲಗಳು ಕಣ್ಣಿನ ಉರಿಯೂತವನ್ನು ಕಡಿಮೆ ಮಾಡುವುದರ ಜೊತೆಗೆ ಕಣ್ಣೀರಿನ ಗುಣಮಟ್ಟವನ್ನು ಸುಧಾರಿಸಲು ಸಹಕಾರಿಯಾಗಬಹುದು ಎಂದು ಕೆಲವು ಅಧ್ಯಯನಗಳು ಸೂಚಿಸುತ್ತವೆ. ಆದರೆ ಅಗಸೆ ಬೀಜ ಸೇವನೆಯಿಂದ ಕನ್ನಡಕದ ಸಂಖ್ಯೆ ಕಡಿಮೆಯಾಗುತ್ತದೆ ಅಥವಾ ಕನ್ನಡಕದ ಅಗತ್ಯವೇ ಇರುವುದಿಲ್ಲ ಎಂಬುದಕ್ಕೆ ಯಾವುದೇ ಖಚಿತವಾದ ವೈಜ್ಞಾನಿಕ ಸಾಕ್ಷ್ಯವಿಲ್ಲ.

ಕುಂಬಳಕಾಯಿ ಬೀಜದಿಂದ ಕಣ್ಣಿಗೆ ಸಿಗುವ ಪ್ರಯೋಜನಗಳು

ಕುಂಬಳಕಾಯಿ ಬೀಜಗಳಲ್ಲಿ ಜಿಂಕ್, ಮೆಗ್ನೀಷಿಯಂ, ವಿಟಮಿನ್ ಇ ಹಾಗೂ ವಿವಿಧ ಆಂಟಿಆಕ್ಸಿಡೆಂಟ್‌ಗಳು ಸಮೃದ್ಧವಾಗಿವೆ. ಕಣ್ಣಿನ ರೆಟಿನಾದ ಸಾಮಾನ್ಯ ಕಾರ್ಯನಿರ್ವಹಣೆಗೆ ಜಿಂಕ್ ಪ್ರಮುಖ ಪೋಷಕಾಂಶವಾಗಿದೆ. ವಯೋಸಹಜವಾಗಿ ಉಂಟಾಗುವ ಕೆಲವು ದೃಷ್ಟಿ ಸಮಸ್ಯೆಗಳ ಅಪಾಯವನ್ನು ಕಡಿಮೆ ಮಾಡುವಲ್ಲಿಯೂ ಇದು ಸಹಾಯ ಮಾಡಬಹುದು.

ಕುಂಬಳಕಾಯಿ ಬೀಜಗಳನ್ನು ಹುರಿದು ನೇರವಾಗಿ ಸೇವಿಸಬಹುದು. ಅಲ್ಲದೆ ಸಲಾಡ್, ಮೊಸರು, ಸ್ಮೂಥಿ ಅಥವಾ ಓಟ್ಸ್‌ಗೆ ಸೇರಿಸಿಕೊಂಡು ಕೂಡ ಸೇವಿಸಬಹುದು.

ಕಣ್ಣಿನ ಆರೋಗ್ಯಕ್ಕೆ ಸಹಾಯ ಮಾಡುವ ಇತರ ಆಹಾರಗಳು

ಕೇವಲ ಅಗಸೆ ಬೀಜ ಮತ್ತು ಕುಂಬಳಕಾಯಿ ಬೀಜಗಳಷ್ಟೇ ಅಲ್ಲದೆ, ಇತರ ಕೆಲವು ಪೌಷ್ಟಿಕ ಆಹಾರಗಳನ್ನೂ ಆಹಾರದಲ್ಲಿ ಸೇರಿಸಿಕೊಳ್ಳುವುದು ಕಣ್ಣಿನ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಬಹುದು.

  • ಕ್ಯಾರೆಟ್: ಬೀಟಾ ಕ್ಯಾರೋಟಿನ್‌ನ ಉತ್ತಮ ಮೂಲ
  • ಪಾಲಕ್, ಮೆಂತೆ ಮತ್ತು ಇತರ ಸೊಪ್ಪುಗಳು: ಲ್ಯೂಟಿನ್ ಮತ್ತು ಜಿಯಾಕ್ಸಾಂಥಿನ್ ಸಮೃದ್ಧ
  • ಮೊಟ್ಟೆ: ಕಣ್ಣಿನ ಆರೋಗ್ಯಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಹೊಂದಿದೆ
  • ಮೀನು: ಸ್ಯಾಲ್ಮನ್ ಮತ್ತು ಸಾರ್ಡಿನ್‌ಗಳಲ್ಲಿ ಒಮೆಗಾ-3 ಸಮೃದ್ಧವಾಗಿದೆ
  • ಕಿತ್ತಳೆ ಮತ್ತು ನಿಂಬೆ: ವಿಟಮಿನ್ ಸಿ ಉತ್ತಮ ಮೂಲ
  • ಬಾದಾಮಿ ಮತ್ತು ವಾಲ್ನಟ್: ಆರೋಗ್ಯಕರ ಕೊಬ್ಬುಗಳು ಮತ್ತು ಆಂಟಿಆಕ್ಸಿಡೆಂಟ್‌ಗಳನ್ನು ಹೊಂದಿವೆ
  • ಸಿಹಿ ಗೆಣಸು: ಬೀಟಾ ಕ್ಯಾರೋಟಿನ್ ಸಮೃದ್ಧ ಆಹಾರ

ದೃಷ್ಟಿ ಮಸುಕಾಗಲು ಪ್ರಮುಖ ಕಾರಣಗಳೇನು?

ದೃಷ್ಟಿ ಮಸುಕಾಗಲು ಹಲವು ಕಾರಣಗಳಿರಬಹುದು. ಸಮೀಪದೃಷ್ಟಿ ಅಥವಾ ದೂರದೃಷ್ಟಿ, ಡ್ರೈ ಐ ಸಿಂಡ್ರೋಮ್, ಮಧುಮೇಹದಿಂದ ಉಂಟಾಗುವ ಕಣ್ಣಿನ ಸಮಸ್ಯೆಗಳು, ಕ್ಯಾಟರಾಕ್ಟ್, ಗ್ಲೂಕೋಮಾ ಹಾಗೂ ಹೆಚ್ಚು ಸಮಯ ಮೊಬೈಲ್ ಅಥವಾ ಕಂಪ್ಯೂಟರ್ ಬಳಸುವುದು ಪ್ರಮುಖ ಕಾರಣಗಳಾಗಿವೆ.

ದೃಷ್ಟಿ ಹಠಾತ್ ಮಸುಕಾಗುವುದು, ಕಣ್ಣಿನಲ್ಲಿ ನೋವು ಅಥವಾ ಕೆಂಪಾಗುವಿಕೆ ಕಾಣಿಸಿಕೊಳ್ಳುವುದು, ಬೆಳಕನ್ನು ಸಹಿಸಲಾಗದಿರುವುದು ಮುಂತಾದ ಲಕ್ಷಣಗಳು ಕಂಡುಬಂದರೆ ತಡಮಾಡದೆ ನೇತ್ರ ತಜ್ಞರನ್ನು ಸಂಪರ್ಕಿಸುವುದು ಅಗತ್ಯ.

ಕಣ್ಣಿನ ಆರೋಗ್ಯ ಕಾಪಾಡಲು ಈ ಅಭ್ಯಾಸಗಳನ್ನು ರೂಢಿಸಿಕೊಳ್ಳಿ

  • ಪ್ರತಿ 20 ನಿಮಿಷಕ್ಕೊಮ್ಮೆ 20-20-20 ನಿಯಮ ಪಾಲಿಸಿ.
  • ಪ್ರತಿದಿನ ಕನಿಷ್ಠ 7ರಿಂದ 8 ಗಂಟೆಗಳ ಕಾಲ ನಿದ್ರೆ ಮಾಡಿ.
  • ದೇಹಕ್ಕೆ ಅಗತ್ಯವಿರುವಷ್ಟು ನೀರು ಕುಡಿಯಿರಿ.
  • ತೀವ್ರ ಸೂರ್ಯನ ಬೆಳಕಿನಲ್ಲಿ ಯುವಿ ರಕ್ಷಣೆ ಹೊಂದಿರುವ ಸನ್‌ಗ್ಲಾಸ್‌ಗಳನ್ನು ಧರಿಸಿ.
  • ವರ್ಷಕ್ಕೊಮ್ಮೆ ಕಣ್ಣಿನ ತಪಾಸಣೆ ಮಾಡಿಸಿಕೊಳ್ಳಿ.

ಒಟ್ಟಿನಲ್ಲಿ, ಆರೋಗ್ಯಕರ ಮತ್ತು ಪೌಷ್ಟಿಕ ಆಹಾರವು ಕಣ್ಣಿನ ಆರೋಗ್ಯವನ್ನು ಕಾಪಾಡಲು ಸಹಾಯ ಮಾಡುತ್ತದೆ. ಅಗಸೆ ಬೀಜ ಅಥವಾ ಕುಂಬಳಕಾಯಿ ಬೀಜ ಸೇವನೆಯಿಂದ ಕನ್ನಡಕದ ಅಗತ್ಯವೇ ಇರುವುದಿಲ್ಲ ಎಂಬ ಮಾತಿಗೆ ವೈಜ್ಞಾನಿಕ ಆಧಾರವಿಲ್ಲ. ಸಮತೋಲನದ ಆಹಾರ, ನಿಯಮಿತ ಕಣ್ಣಿನ ತಪಾಸಣೆ ಮತ್ತು ಆರೋಗ್ಯಕರ ಜೀವನಶೈಲಿಯೇ ದೀರ್ಘಕಾಲ ಕಣ್ಣಿನ ಆರೋಗ್ಯವನ್ನು ಕಾಪಾಡುವ ಉತ್ತಮ ಮಾರ್ಗವಾಗಿದೆ.

Bangalore Power Cut: ಆನೇಕಲ್ ಭಾಗದ ಜನರಿಗೆ ಬೆಸ್ಕಾಂನಿಂದ ಮಹತ್ವದ ಮಾಹಿತಿ; ನಾಳೆ ಇರಲ್ಲ ಪವರ್!

ಆನೇಕಲ್: ಬೆಸ್ಕಾಂ ಚಂದಾಪುರ ವಿಭಾಗದ ವ್ಯಾಪ್ತಿಯಲ್ಲಿ ಬರುವ ಸಮಂದೂರು ಹಾಗೂ ಆನೇಕಲ್ ವಿದ್ಯುತ್ ಉಪ-ಕೇಂದ್ರಗಳಲ್ಲಿ ತ್ರೈಮಾಸಿಕ ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳಲಾಗುತ್ತಿದೆ.

ಈ ಹಿನ್ನೆಲೆಯಲ್ಲಿ ಜುಲೈ 22ರಂದು ಬುಧವಾರ ಹಲವು ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ಸ್ಥಗಿತಗೊಳ್ಳಲಿದೆ.

ಸಮಂದೂರು ವಿದ್ಯುತ್ ಉಪ-ಕೇಂದ್ರದ ವ್ಯಾಪ್ತಿಗೆ ಬರುವ ಸಮಂದೂರು, ರಾಜಾಪುರಹಳ್ಳಿ, ಗುಡ್ಡನಹಳ್ಳಿ, ಅರವಂಟಿಗೇಪುರ, ಪಿ. ಗೊಲ್ಲಹಳ್ಳಿ, ತೆಲಗರಹಳ್ಳಿ, ವಾಣಕನಹಳ್ಳಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ವಿದ್ಯುತ್ ಇರುವುದಿಲ್ಲ.

ಇನ್ನು ಆನೇಕಲ್ ವಿದ್ಯುತ್ ಉಪ-ಕೇಂದ್ರದ ವ್ಯಾಪ್ತಿಯ ಆನೇಕಲ್ ಪಟ್ಟಣ, ಕಾವಲುಹೊಸಹಳ್ಳಿ, ಗೋರೇನಹಳ್ಳಿ, ಹಾಳೇನಹಳ್ಳಿ, ಹೊಂಪಲಾಘಟ್ಟ, ಚೂಡೇನಹಳ್ಳಿ, ಹೊನ್ನಕಳಶಾಪುರ, ಕರ್ಮೂರು, ಬ್ಯಾಗದದೇನಹಳ್ಳಿ, ವಿ.ಬಿ.ಎಚ್.ಸಿ ಅಪಾರ್ಟ್‌ಮೆಂಟ್, ಕಾಡ ಅಗ್ರಹಾರ, ಚಿಕ್ಕಹಾಗಡೆ, ದೊಡ್ಡಹಾಗಡೆ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್ ಸಂಪರ್ಕ ಕಡಿತವಾಗಲಿದೆ.

ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ ಸಾರ್ವಜನಿಕರು ಅಗತ್ಯ ಕೆಲಸಗಳನ್ನು ಮುಂಚಿತವಾಗಿ ಪೂರ್ಣಗೊಳಿಸಿಕೊಳ್ಳಬೇಕು ಹಾಗೂ ಬೆಸ್ಕಾಂಗೆ ಸಹಕರಿಸಬೇಕು ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.

ರಾಯಚೂರಿನಲ್ಲಿ ಬೀದಿ ನಾಯಿಗಳ ಅಟ್ಟಹಾಸ: 4 ವರ್ಷದ ಬಾಲಕನಿಗೆ ನಾಯಿ ಕಡಿತ!

ರಾಯಚೂರು: ಮನೆ ಮುಂದೆ ಆಟವಾಡುತ್ತಿದ್ದ 4 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿ ಗಂಭೀರವಾಗಿ ಗಾಯಗೊಳಿಸಿರುವ ಘಟನೆ ರಾಯಚೂರು ತಾಲೂಕಿನ ಮಲಿಯಾಬಾದ್ ಗ್ರಾಮದಲ್ಲಿ ನಡೆದಿದೆ.

ಮಲಿಯಾಬಾದ್ ಗ್ರಾಮದ ವೇಣುಗೋಪಾಲ್ ಎಂಬ ಬಾಲಕ ಬೀದಿ ನಾಯಿಗಳ ದಾಳಿಗೆ ಒಳಗಾಗಿದ್ದಾನೆ.

ಮನೆಯ ಮುಂದೆ ಆಟವಾಡುತ್ತಿದ್ದ ವೇಳೆ ಏಕಾಏಕಿ ಬಂದ ಬೀದಿ ನಾಯಿಗಳು ಬಾಲಕನ ಮೇಲೆ ದಾಳಿ ನಡೆಸಿವೆ. ದಾಳಿಯಲ್ಲಿ ಬಾಲಕನ ತಲೆ ಭಾಗಕ್ಕೆ ಗಂಭೀರ ಗಾಯಗಳಾಗಿವೆ.

ತಕ್ಷಣ ಬಾಲಕನನ್ನು ರಾಯಚೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ.

ಘಟನೆಯಿಂದ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಬೀದಿ ನಾಯಿಗಳ ಹಾವಳಿಯಿಂದ ಮಕ್ಕಳನ್ನು ಹೊರಗೆ ಬಿಡಲು ಪೋಷಕರು ಭಯಪಡುತ್ತಿದ್ದಾರೆ.

ಈ ಘಟನೆ ಯರಗೇರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Sikkim Tunnel Collapse: ನಿರ್ಮಾಣ ಹಂತದ ಸುರಂಗ ಕುಸಿತ, 7 ಕಾರ್ಮಿಕರು ಸಾವು!

0

ಗ್ಯಾಂಗ್ಟಾಕ್: ಸಿಕ್ಕಿಂನ ನಾಮ್ಚಿ ಜಿಲ್ಲೆಯಲ್ಲಿ ನಿರ್ಮಾಣ ಹಂತದಲ್ಲಿದ್ದ ಸುರಂಗ ಕುಸಿದು ಭೀಕರ ದುರಂತ ಸಂಭವಿಸಿದೆ.

ಜಲವಿದ್ಯುತ್ ಯೋಜನೆಗೆ ಸಂಬಂಧಿಸಿದ ಸುರಂಗದಲ್ಲಿ ಭೂಕುಸಿತ ಹಾಗೂ ಮೀಥೇನ್ ಅನಿಲ ಸ್ಫೋಟ ಸಂಭವಿಸಿ ಕನಿಷ್ಠ 7 ಕಾರ್ಮಿಕರು ಮೃತಪಟ್ಟಿದ್ದಾರೆ.

ಸಮರ್ಡುಂಗ್ (ಜೋಲುಂಗೆ) ಪ್ರದೇಶದಲ್ಲಿ ಈ ಘಟನೆ ನಡೆದಿದೆ. ರಾಷ್ಟ್ರೀಯ ಜಲವಿದ್ಯುತ್ ನಿಗಮದ ತೀಸ್ತಾ ಸ್ಟೇಜ್-6 ಜಲವಿದ್ಯುತ್ ಯೋಜನೆಗೆ ಸಂಬಂಧಿಸಿದ ಸುರಂಗ ಇದಾಗಿದೆ.

ಜಿಲ್ಲಾಡಳಿತದ ಮಾಹಿತಿ ಪ್ರಕಾರ, ಇದುವರೆಗೆ 7 ಕಾರ್ಮಿಕರ ಮೃತದೇಹಗಳನ್ನು ಹೊರತೆಗೆಯಲಾಗಿದೆ. ಮೃತದೇಹಗಳನ್ನು ಸಿಂಗ್ತಾಮ್, ಗ್ಯಾಂಗ್ಟಾಕ್ ಹಾಗೂ ನಾಮ್ಚಿ ಜಿಲ್ಲಾ ಆಸ್ಪತ್ರೆಗಳಿಗೆ ರವಾನಿಸಲಾಗಿದೆ.

ಸುರಂಗದೊಳಗೆ ಇನ್ನೂ 18ರಿಂದ 27 ಕಾರ್ಮಿಕರು ಸಿಲುಕಿಕೊಂಡಿರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸದ್ಯ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ಹಾಗೂ ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF) ತಂಡಗಳು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿವೆ.

ಸುರಂಗದೊಳಗೆ ಸುಮಾರು 1.5 ಕಿಲೋಮೀಟರ್ ಆಳದಲ್ಲಿ ನೈಸರ್ಗಿಕವಾಗಿ ಸಂಗ್ರಹವಾಗಿದ್ದ ಮೀಥೇನ್ ಅನಿಲವನ್ನು ಹೊರಹಾಕುವ ವೇಳೆ ಸ್ಫೋಟ ಸಂಭವಿಸಿದೆ ಎನ್ನಲಾಗಿದೆ. ಇದರಿಂದ ಭೂಕುಸಿತ ಉಂಟಾಗಿ ಸುರಂಗದ ಪ್ರವೇಶ ದ್ವಾರ ಮುಚ್ಚಿಕೊಂಡಿದೆ.

ರಕ್ಷಣಾ ಕಾರ್ಯಾಚರಣೆ ವೇಳೆ ಸುರಂಗದೊಳಗೆ ಆಮ್ಲಜನಕದ ಕೊರತೆ, ದಟ್ಟ ಹೊಗೆ ಹಾಗೂ ವಿಷಕಾರಿ ಅನಿಲದ ಪ್ರಮಾಣ ಹೆಚ್ಚಿರುವುದು ಸವಾಲಾಗಿ ಪರಿಣಮಿಸಿದೆ. ರಕ್ಷಣಾ ಸಿಬ್ಬಂದಿ ಗ್ಯಾಸ್ ಮಾಸ್ಕ್ ಹಾಗೂ ವಿಶೇಷ ಉಪಕರಣಗಳ ಸಹಾಯದಿಂದ ಕಾರ್ಯಾಚರಣೆ ಮುಂದುವರಿಸಿದ್ದಾರೆ.

ಸೋಮವಾರ ಮಧ್ಯಾಹ್ನ ಸುರಂಗದೊಳಗೆ ಅನಿಲ ಸೋರಿಕೆಯಾದ ಬಳಿಕ ಈ ಘಟನೆ ವರದಿಯಾಗಿದೆ. ಅಪಘಾತಕ್ಕೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

Mysuru Crime: ಮನೆಯಲ್ಲಿ ಒಂಟಿಯಾಗಿದ್ದ ಅಪ್ರಾಪ್ತೆ ಮೇಲೆ ಅತ್ಯಾಚಾರಕ್ಕೆ ಯತ್ನ; ಆರೋಪಿ ಅರೆಸ್ಟ್!

ಮೈಸೂರು: ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಆರೋಪದಡಿ ಯುವಕನೊಬ್ಬನನ್ನು ಪೊಲೀಸರು ಬಂಧಿಸಿರುವ ಘಟನೆ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನಲ್ಲಿ ನಡೆದಿದೆ.

ಬಂಧಿತ ಯುವಕನನ್ನು 23 ವರ್ಷದ ಸುರೇಶ್ ಎಂದು ಗುರುತಿಸಲಾಗಿದೆ.

ಬಾಲಕಿಯ ತಂದೆ-ತಾಯಿ ಕೂಲಿ ಕೆಲಸಕ್ಕೆ ತೆರಳಿದ್ದ ವೇಳೆ ಮನೆಗೆ ನುಗ್ಗಿದ ಆರೋಪಿ, ಒಂಟಿಯಾಗಿದ್ದ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ ಎಂದು ಆರೋಪಿಸಲಾಗಿದೆ.

ಈ ವೇಳೆ ಬಾಲಕಿ ಕೂಗಾಡಿದ್ದು, ಶಬ್ದ ಕೇಳಿ ಅಕ್ಕಪಕ್ಕದ ಮನೆಯವರು ಸ್ಥಳಕ್ಕೆ ಆಗಮಿಸಿದ್ದಾರೆ. ಬಳಿಕ ಯುವಕನನ್ನು ಹಿಡಿದು ಹುಲ್ಲಹಳ್ಳಿ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.

ಘಟನೆ ಕುರಿತು ಹುಲ್ಲಹಳ್ಳಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Bengaluru Metro Delay: ಪಿಂಕ್ ಲೈನ್ ಮೆಟ್ರೋ ಕಾಮಗಾರಿ ವಿಳಂಬ, ಆಗಸ್ಟ್ 15 ಉದ್ಘಾಟನೆ ಅನುಮಾನ?

ಬೆಂಗಳೂರು: ಬೆಂಗಳೂರಿನ ಸಂಚಾರ ದಟ್ಟಣೆಗೆ ಪರಿಹಾರ ನೀಡಬೇಕಿದ್ದ ನಮ್ಮ ಮೆಟ್ರೋ ಯೋಜನೆಗಳ ಕಾಮಗಾರಿ ಮತ್ತೆ ವಿಳಂಬವಾಗುವ ಸಾಧ್ಯತೆ ಇದೆ.

ಬನ್ನೇರುಘಟ್ಟ ರಸ್ತೆಯನ್ನು ಸಂಪರ್ಕಿಸುವ ಮೆಟ್ರೋ ಪಿಂಕ್ ಲೈನ್ ಮೊದಲ ಹಂತದ ಸಂಚಾರವನ್ನು ಆಗಸ್ಟ್ 15ರಂದು ಆರಂಭಿಸುವ ಗುರಿಯನ್ನು ಬಿಎಂಆರ್‌ಸಿಎಲ್ ಹೊಂದಿತ್ತು. ಆದರೆ ಪ್ರಸ್ತುತ ಕಾಮಗಾರಿಯ ವೇಗವನ್ನು ಗಮನಿಸಿದರೆ ಈ ಗಡುವು ತಲುಪುವುದು ಅನುಮಾನವಾಗಿದೆ.

ಪಿಂಕ್ ಲೈನ್ ಯೋಜನೆಯಡಿ ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗಿನ 7.5 ಕಿಲೋಮೀಟರ್ ಮೇಲ್ಸೇತುವೆ ಮಾರ್ಗವನ್ನು ಸ್ವಾತಂತ್ರ್ಯ ದಿನಾಚರಣೆಯ ವೇಳೆಗೆ ಸಾರ್ವಜನಿಕ ಸೇವೆಗೆ ಮುಕ್ತಗೊಳಿಸಲು ಯೋಜಿಸಲಾಗಿತ್ತು.

ಆದರೆ ಕಾಮಗಾರಿ ಬಹುತೇಕ ಅಂತಿಮ ಹಂತದಲ್ಲಿದ್ದರೂ, ರೈಲು ಸೆಟ್‌ಗಳ ಪೂರೈಕೆ, ಸಿಗ್ನಲಿಂಗ್ ವ್ಯವಸ್ಥೆ ಹಾಗೂ ಸುರಕ್ಷತಾ ಪರೀಕ್ಷೆಗಳು ಇನ್ನೂ ಪೂರ್ಣಗೊಂಡಿಲ್ಲ. ಇದರಿಂದ ಯೋಜನೆ ವಿಳಂಬವಾಗುವ ಸಾಧ್ಯತೆ ಹೆಚ್ಚಾಗಿದೆ.

ಕಾಮಗಾರಿ ಸ್ಥಳಗಳಲ್ಲಿ ಅಗತ್ಯ ಪ್ರಮಾಣದ ಕಾರ್ಮಿಕರ ಕೊರತೆ ಹಾಗೂ ಸಣ್ಣಪುಟ್ಟ ನಾಗರಿಕ ಕಾಮಗಾರಿಗಳು ನಿಧಾನಗತಿಯಲ್ಲಿ ನಡೆಯುತ್ತಿರುವುದು ವಿಳಂಬಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ.

ಬನ್ನೇರುಘಟ್ಟ ರಸ್ತೆಯ ಭಾರಿ ಸಂಚಾರ ದಟ್ಟಣೆಯಿಂದ ಮುಕ್ತಿ ಸಿಗಲಿದೆ ಎಂದು ಕಾಯುತ್ತಿದ್ದ ಸಾವಿರಾರು ಪ್ರಯಾಣಿಕರಿಗೆ ಮತ್ತಷ್ಟು ಕಾಯುವ ಪರಿಸ್ಥಿತಿ ಎದುರಾಗುವ ಸಾಧ್ಯತೆ ಇದೆ.

ಇನ್ನು ಪಿಂಕ್ ಲೈನ್‌ನ ಡೈರಿ ಸರ್ಕಲ್‌ನಿಂದ ನಾಗವಾರದವರೆಗಿನ 13.75 ಕಿಲೋಮೀಟರ್ ಭೂಗತ ಮಾರ್ಗದ ಕಾಮಗಾರಿಯೂ ನಿಧಾನಗತಿಯಲ್ಲಿ ಸಾಗುತ್ತಿದೆ. ಮೇಲ್ಸೇತುವೆ ಮಾರ್ಗದ ಸಂಚಾರ ಆರಂಭ 2026ರ ಕೊನೆಯ ಹಂತಕ್ಕೆ ಮುಂದೂಡಿಕೆಯಾಗುವ ಸಾಧ್ಯತೆ ಇದೆ.

ಅದೇ ರೀತಿ ಪಿಂಕ್ ಲೈನ್ ಭೂಗತ ಮಾರ್ಗವು 2027ರ ಮಾರ್ಚ್ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಸಿಲ್ಕ್ ಬೋರ್ಡ್‌ನಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದವರೆಗಿನ ಬ್ಲೂ ಲೈನ್ ಕಾಮಗಾರಿಯೂ ವಿಳಂಬವಾಗುತ್ತಿದ್ದು, 2027ರ ಮಧ್ಯಭಾಗದಲ್ಲಿ ಪೂರ್ಣಗೊಳ್ಳುವ ಸಾಧ್ಯತೆ ಇದೆ.

ಸಂಸದ ಸುಧಾಕರ್, ಶಾಸಕ ಪ್ರದೀಪ್ ಈಶ್ವರ್ ತವರು ಗ್ರಾಮದಲ್ಲೇ ವೈದ್ಯರಿಲ್ಲ! ಸಮಯಕ್ಕೆ ಚಿಕಿತ್ಸೆ ಸಿಗದೇ ಬಾಲಕಿ ಸಾವು?

0

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ತಾಲೂಕಿನ ಪೆರೇಸಂದ್ರ ಗ್ರಾಮದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಕಾಲಕ್ಕೆ ಚಿಕಿತ್ಸೆ ಸಿಗದೆ 8 ವರ್ಷದ ಬಾಲಕಿ ಮೃತಪಟ್ಟಿದ್ದಾಳೆ ಎಂಬ ಆರೋಪ ಕೇಳಿಬಂದಿದೆ.

ಘಟನೆಗೆ ಆಕ್ರೋಶಗೊಂಡ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಮೃತ ಬಾಲಕಿಯನ್ನು ಪೆರೇಸಂದ್ರ ಗ್ರಾಮದ ಚಂದ್ರಿಕಾ ಮತ್ತು ನವೀನ್ ದಂಪತಿಯ ಪುತ್ರಿ ಶಶಿಕಲಾ (8) ಎಂದು ಗುರುತಿಸಲಾಗಿದೆ.

ಭಾನುವಾರ ಸಂಜೆ ಶಶಿಕಲಾ ತೀವ್ರ ಅಸ್ವಸ್ಥಗೊಂಡು ಪ್ರಜ್ಞೆ ತಪ್ಪಿದ್ದಳು. ಕೂಡಲೇ ಆಕೆಯನ್ನು ಸಮೀಪದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತರಲಾಯಿತು. ಆದರೆ ಆಸ್ಪತ್ರೆಯಲ್ಲಿ ವೈದ್ಯರು ಇರಲಿಲ್ಲ. ಅಗತ್ಯ ವೈದ್ಯಕೀಯ ಸೌಲಭ್ಯಗಳೂ ಲಭ್ಯವಿರಲಿಲ್ಲ. ಕರ್ತವ್ಯದಲ್ಲಿದ್ದ ನರ್ಸ್ ಚಿಕಿತ್ಸೆ ನೀಡಿದರೂ ಬಾಲಕಿಯನ್ನು ಉಳಿಸಲು ಸಾಧ್ಯವಾಗಲಿಲ್ಲ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಘಟನೆಯ ನಂತರ ಗ್ರಾಮಸ್ಥರು ಆಸ್ಪತ್ರೆ ಎದುರು ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಆಸ್ಪತ್ರೆಯಲ್ಲಿ ವೈದ್ಯರನ್ನು ನೇಮಿಸಬೇಕು ಹಾಗೂ ಅಗತ್ಯ ಸೌಲಭ್ಯಗಳನ್ನು ಒದಗಿಸಬೇಕು ಎಂದು ಒತ್ತಾಯಿಸಿದರು.

ಮಾಹಿತಿ ತಿಳಿದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಚೇತನ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ವೇಳೆ ಮಾತನಾಡಿದ ಅವರು, “ಬಾಲಕಿಯನ್ನು ಆಸ್ಪತ್ರೆಗೆ ಕರೆತಂದಾಗಲೇ ನಾಡಿ ಮಿಡಿತ ಇರಲಿಲ್ಲ. ಉಸಿರಾಟವೂ ತುಂಬಾ ಕಡಿಮೆಯಾಗಿತ್ತು. ಕರ್ತವ್ಯದಲ್ಲಿದ್ದ ಸಿಬ್ಬಂದಿ ತಕ್ಷಣ ಪ್ರಾಥಮಿಕ ಚಿಕಿತ್ಸೆ ನೀಡಿ ಮೇಲ್ದರ್ಜೆಯ ಆಸ್ಪತ್ರೆಗೆ ಕಳುಹಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ಬಳಿಕವೇ ಸಾವಿನ ನಿಖರ ಕಾರಣ ತಿಳಿಯಲಿದೆ. ಜಿಲ್ಲೆಯಲ್ಲಿ ವೈದ್ಯರ ಕೊರತೆ ಇದೆ,” ಎಂದು ಹೇಳಿದರು.

ಕುಟುಂಬಸ್ಥರು ಆಸ್ಪತ್ರೆಯ ನಿರ್ಲಕ್ಷ್ಯವೇ ಬಾಲಕಿಯ ಸಾವಿಗೆ ಕಾರಣ ಎಂದು ಆರೋಪಿಸುತ್ತಿದ್ದರೆ, ಕರ್ತವ್ಯದಲ್ಲಿದ್ದ ಸಿಬ್ಬಂದಿ ನಿಯಮದಂತೆ ಚಿಕಿತ್ಸೆ ನೀಡಿದ್ದಾರೆ ಎಂದು ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ.

ಪೆರೇಸಂದ್ರ ಗ್ರಾಮವು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಂಸದ ಡಾ. ಕೆ. ಸುಧಾಕರ್ ಹಾಗೂ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರ ತವರು ಗ್ರಾಮವಾಗಿದೆ. ಅಂತಹ ಗ್ರಾಮದಲ್ಲಿಯೇ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಇರುವುದು ಸ್ಥಳೀಯರ ಅಸಮಾಧಾನಕ್ಕೆ ಕಾರಣವಾಗಿದೆ.