Home Blog

ಗ್ರಾಮಸ್ಥರಿಂದ ವಸೂಲಿ ಮಾಡಿದ್ದ ₹80 ಲಕ್ಷ ಹಿಂತಿರುಗಿಸಿದ ಟಿಎಂಸಿ ಕಾರ್ಯಕರ್ತರು

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಭೂ ವಿವಾದ ಬಗೆಹರಿಸುವುದಾಗಿ ಹೇಳಿ ಗ್ರಾಮಸ್ಥರಿಂದ ಸಂಗ್ರಹಿಸಿದ್ದ ಹಣವನ್ನು ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಾಯಕರು ಮತ್ತು ಕಾರ್ಯಕರ್ತರು ಹಿಂತಿರುಗಿಸಿದ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಪಂಚಾಗಢ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಫಕೀರ್ ಕುತ್ತಿ ಪ್ರದೇಶದ ಶಾಲಾ ಮೈದಾನದಲ್ಲಿ ಸಾರ್ವಜನಿಕ ಸಭೆ ನಡೆಸಿದ ಟಿಎಂಸಿ ಮುಖಂಡರು, ಗ್ರಾಮಸ್ಥರಿಗೆ ಹಣ ವಾಪಸ್ ನೀಡಿದ್ದಾರೆ. ಬೂತ್ ಅಧ್ಯಕ್ಷ ತಪನ್ ಡೇ ಅವರು ಹಲವು ಗ್ರಾಮಸ್ಥರಿಂದ ಪಡೆದಿದ್ದ ಹಣವನ್ನು ಹಿಂತಿರುಗಿಸಿದರೆ, ತಲೆಮರೆಸಿಕೊಂಡಿರುವ ಸ್ಥಳೀಯ ಮುಖಂಡ ಬಾಬೈ ಬರ್ಮನ್ ಪರವಾಗಿ ಅವರ ತಂದೆ ಹಣ ಮರಳಿಸಿದ್ದಾರೆ.

ಪಂಚಾಯಿತಿ ಸದಸ್ಯರು ಹಾಗೂ ಕೆಲ ಟಿಎಂಸಿ ನಾಯಕರು ಸೇರಿ ಗ್ರಾಮಸ್ಥರಿಂದ ಸುಮಾರು ₹80 ಲಕ್ಷ ಸಂಗ್ರಹಿಸಿದ್ದರು ಎನ್ನಲಾಗಿದೆ. ಭೂ ವಿವಾದ ಬಗೆಹರಿಸುವ ಭರವಸೆ ನೀಡಿ ಹಣ ಪಡೆದಿದ್ದರೂ ಯಾವುದೇ ಕೆಲಸ ಮಾಡಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಸ್ಥಳೀಯ ಬಿಜೆಪಿ ಅಧ್ಯಕ್ಷ ಸುರೇಂದ್ರ ಬರ್ಮನ್, ಕಾನೂನು ಕ್ರಮದ ಭಯದಿಂದಲೇ ಟಿಎಂಸಿ ನಾಯಕರು ಹಣ ವಾಪಸ್ ನೀಡಲು ಮುಂದಾಗಿದ್ದಾರೆ ಎಂದು ಆರೋಪಿಸಿದ್ದಾರೆ.

ಹಣ ಮರಳಿ ಸಿಕ್ಕಿರುವುದಕ್ಕೆ ಕೆಲ ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದರೆ, ಇನ್ನೂ ಕೆಲವರು ಈ ಬೆಳವಣಿಗೆ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. ಘಟನೆ ಇದೀಗ ರಾಜ್ಯ ರಾಜಕೀಯದಲ್ಲಿ ಚರ್ಚೆಗೆ ಕಾರಣವಾಗಿದ್ದು, ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸುವಂತೆ ಬಿಜೆಪಿ ಆಗ್ರಹಿಸಿದೆ.

ತಮಿಳುನಾಡು ರಾಜಕೀಯದಲ್ಲಿ ಹೊಸ ಸಂಚಲನ: ನಿತಿನ್ ನಬಿನ್‌ಗೆ ರಾಜೀನಾಮೆ ಸಲ್ಲಿಸಿದ ಅಣ್ಣಾಮಲೈ

ನವದೆಹಲಿ: ತಮಿಳುನಾಡು ಬಿಜೆಪಿ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದೆ ಎನ್ನುವ ಚರ್ಚೆ ರಾಜಕೀಯ ವಲಯದಲ್ಲಿ ಜೋರಾಗಿದೆ. ತಮಿಳುನಾಡು ಬಿಜೆಪಿಯ ಮಾಜಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ ಅವರು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅವರನ್ನು ಭೇಟಿ ಮಾಡಿ ರಾಜೀನಾಮೆ ಸಲ್ಲಿಸಿರುವುದಾಗಿ ವರದಿಯಾಗಿದೆ.

ಕಳೆದ ಕೆಲವು ತಿಂಗಳುಗಳಿಂದ ಪಕ್ಷದ ಉನ್ನತ ನಾಯಕತ್ವದೊಂದಿಗೆ ಅಣ್ಣಾಮಲೈ ಅವರ ಭಿನ್ನಾಭಿಪ್ರಾಯಗಳ ಬಗ್ಗೆ ಮಾತುಗಳು ಕೇಳಿಬರುತ್ತಿದ್ದವು. ವಿಶೇಷವಾಗಿ ಎಐಎಡಿಎಂಕೆ ಪಕ್ಷವನ್ನು ಮತ್ತೆ ಎನ್‌ಡಿಎ ಮೈತ್ರಿಕೂಟಕ್ಕೆ ಸೇರಿಸಿಕೊಳ್ಳುವ ನಿರ್ಧಾರದ ಬಳಿಕ ಅಣ್ಣಾಮಲೈ ಅವರನ್ನು ಪಕ್ಷದ ಪ್ರಮುಖ ನಿರ್ಧಾರಗಳಿಂದ ದೂರವಿಡಲಾಗುತ್ತಿದೆ ಎಂಬ ಆರೋಪಗಳು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದ್ದವು.

ಈ ಹಿಂದೆ ತಮಿಳುನಾಡು ವಿಧಾನಸಭಾ ಚುನಾವಣೆಯ ಉಸ್ತುವಾರಿ ಸ್ಥಾನ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ಹುದ್ದೆಗಳಿಂದಲೂ ಅವರು ಹಿಂದೆ ಸರಿದಿದ್ದರು. ಇದಾದ ಬಳಿಕ ಪಕ್ಷದ ಎರಡು ಪ್ರಮುಖ ರಾಜ್ಯ ಕಾರ್ಯಕಾರಿ ಸಭೆಗಳಿಗೆ ಗೈರಾಗಿರುವುದು ಹಲವು ಊಹಾಪೋಹಗಳಿಗೆ ಕಾರಣವಾಗಿತ್ತು.

ಇದೀಗ ಅಣ್ಣಾಮಲೈ ಅವರು ಬಿಜೆಪಿಯಿಂದ ಹೊರಬಂದು ‘ಮಕ್ಕಳ್ ಶಕ್ತಿ ಇಯಕ್ಕಂ’ ಹೆಸರಿನ ಹೊಸ ಜನಪರ ಚಳವಳಿಯನ್ನು ಆರಂಭಿಸುವ ಸಾಧ್ಯತೆ ಇದೆ ಎಂಬ ವರದಿಗಳು ಹರಿದಾಡುತ್ತಿವೆ. ಆದರೆ ಈ ಕುರಿತು ಅವರು ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.

ತ್ರಿಭಾಷಾ ನೀತಿ ಸೇರಿದಂತೆ ಕೆಲವು ವಿಷಯಗಳಲ್ಲಿ ಕೇಂದ್ರ ನಾಯಕತ್ವದ ನಿಲುವಿಗೆ ವಿರುದ್ಧವಾಗಿ ಅಣ್ಣಾಮಲೈ ಸಾರ್ವಜನಿಕವಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದೂ ಅವರ ಮತ್ತು ಪಕ್ಷದ ನಡುವಿನ ಅಂತರ ಹೆಚ್ಚಲು ಕಾರಣವಾಗಿದೆ ಎನ್ನಲಾಗಿದೆ.

ಇದರ ನಡುವೆ ಕೊಯಮತ್ತೂರಿನಲ್ಲಿ ಅಣ್ಣಾಮಲೈ ಭಾವಚಿತ್ರವಿರುವ ಪೋಸ್ಟರ್‌ಗಳು ಕಾಣಿಸಿಕೊಂಡಿದ್ದು, “ಭಯವಿಲ್ಲದ ಮನಸ್ಸಿಗೆ ಮಿತಿಗಳಿಲ್ಲ” ಎಂಬ ಸಂದೇಶ ರಾಜಕೀಯ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ. 2021ರಿಂದ 2025ರವರೆಗೆ ತಮಿಳುನಾಡು ಬಿಜೆಪಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ಅಣ್ಣಾಮಲೈ ರಾಜ್ಯದಲ್ಲಿ ಪಕ್ಷದ ವಿಸ್ತರಣೆಗೆ ಪ್ರಮುಖ ಮುಖವಾಗಿದ್ದರು.

ಜಯಲಲಿತಾ ಸಹೋದರ ಎನ್.ಜೆ. ವಾಸುದೇವನ್ ನಿಧನ

0

ಮೈಸೂರು: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿ. ಜೆ. ಜಯಲಲಿತಾ ಅವರ ಸಹೋದರ ಎನ್.ಜೆ. ವಾಸುದೇವನ್ (92) ಅವರು ಇಂದು ಬೆಳಿಗ್ಗೆ ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ.

ಮೈಸೂರು ಜಿಲ್ಲೆಯ ಬನ್ನೂರು ಸಮೀಪದ ಚಾಮನಹಳ್ಳಿಯಲ್ಲಿರುವ ಸಾಕು ಮಗಳ ಮನೆಯಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ. ಕಳೆದ ಕೆಲ ದಿನಗಳಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ವಾಸುದೇವನ್ ಅವರಿಗೆ ಚಿಕಿತ್ಸೆ ಮುಂದುವರಿಸಲಾಗುತ್ತಿತ್ತು. ಆದರೆ ಇಂದು ಬೆಳಿಗ್ಗೆ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

ಅಂತ್ಯಕ್ರಿಯೆ ಇಂದು ಸಂಜೆ ರಂಗರಾಜಪುರದಲ್ಲಿ ನೆರವೇರಲಿದೆ ಎಂದು ಮಾಹಿತಿ ಲಭ್ಯವಾಗಿದೆ.

ವಿಶೇಷವೆಂದರೆ, ಜಯಲಲಿತಾ ಕುಟುಂಬದ ಆಂತರಿಕ ಸಂಬಂಧಗಳು ಮತ್ತು ಆಸ್ತಿ ವಿವಾದಗಳ ಹಿನ್ನೆಲೆಯಲ್ಲಿ ವಾಸುದೇವನ್ ಅವರ ಹೆಸರು ಹಿಂದೆ ಕಾನೂನು ಚರ್ಚೆಗಳಲ್ಲೂ ಪ್ರಸ್ತಾಪವಾಗಿತ್ತು. ಜಯಲಲಿತಾ ಅವರ ನಿಧನದ ನಂತರ ಅವರು ಮದ್ರಾಸ್ ಹೈಕೋರ್ಟ್‌ನಲ್ಲಿ ಆಸ್ತಿಯಲ್ಲಿ ಪಾಲು ಕೋರಿ ಸಲ್ಲಿಸಿದ್ದ ಅರ್ಜಿ ಗಮನ ಸೆಳೆದಿತ್ತು.

ಕಾನೂನು ಹೋರಾಟದಲ್ಲಿ ಅವರು ಜಯಲಲಿತಾ ಅವರ ನೇರ ವಾರಸುದಾರರು ಎಂದು ಹೇಳಿಕೊಂಡಿದ್ದರು. ಆದರೆ ನ್ಯಾಯಾಲಯವು ಜ. ದೀಪಾ ಮತ್ತು ಜ. ದೀಪಕ್ ಅವರನ್ನು ಕಾನೂನುಬದ್ಧ ವಾರಸುದಾರರು ಎಂದು ಗುರುತಿಸಿತ್ತು.

ಇದೀಗ ಅವರ ನಿಧನದೊಂದಿಗೆ ಜಯಲಲಿತಾ ಕುಟುಂಬದ ಮತ್ತೊಂದು ಅಧ್ಯಾಯ ಅಂತ್ಯಗೊಂಡಂತಾಗಿದೆ ಎಂದು ಹೇಳಲಾಗುತ್ತಿದೆ.

 

ವೀಸಾ ನಿಯಮಗಳಲ್ಲಿ ಬದಲಾವಣೆ: 180 ದಿನಗಳಿಗಿಂತ ಹೆಚ್ಚು ಭಾರತದಲ್ಲಿ ಉಳಿಯಲು ನೋಂದಣಿ ಕಡ್ಡಾಯ

ನವದೆಹಲಿ: ವಿದೇಶಿ ನಾಗರಿಕರ ವಾಸ್ತವ್ಯ ಮತ್ತು ವೀಸಾ ನಿರ್ವಹಣೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮಹತ್ವದ ಬದಲಾವಣೆಗಳನ್ನು ಜಾರಿಗೆ ತಂದಿದ್ದು, ವಲಸೆ ಮತ್ತು ವಿದೇಶಿಗರ ನಿಯಮಗಳು–2025 ಅಡಿಯಲ್ಲಿ ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಿದೆ.

ಕೇಂದ್ರ ಗೃಹ ಸಚಿವಾಲಯ ಹೊರಡಿಸಿರುವ ಅಧಿಸೂಚನೆಯ ಪ್ರಕಾರ, ಭಾರತದಲ್ಲಿ 180 ದಿನಗಳಿಗಿಂತ ಹೆಚ್ಚು ಅವಧಿ ವಾಸಿಸಲು ಬಯಸುವ ವಿದೇಶಿ ನಾಗರಿಕರು ಕಡ್ಡಾಯವಾಗಿ ನೋಂದಣಿ ಮಾಡಿಸಿಕೊಳ್ಳಬೇಕು. ಈ ನೋಂದಣಿಯನ್ನು 180 ದಿನಗಳ ಅವಧಿ ಪೂರ್ಣಗೊಳ್ಳುವ ಮುನ್ನವೇ ಯಾವುದೇ ಸಮಯದಲ್ಲಿ ಮಾಡಿಸಬಹುದಾಗಿದೆ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.

ಹೊಸ ನಿಯಮಗಳ ಅನ್ವಯ, ವೀಸಾ ಅವಧಿ ಮುಗಿದ ಬಳಿಕ ದೇಶದಲ್ಲಿ ಮುಂದುವರೆಯಲು ಬಯಸುವವರು ನಿಗದಿತ ಅವಧಿಯೊಳಗೆ ನೋಂದಣಿ ಹಾಗೂ ವೀಸಾ ವಿಸ್ತರಣೆಗೆ ಅರ್ಜಿ ಸಲ್ಲಿಸಬೇಕಾಗುತ್ತದೆ. 180 ದಿನಗಳ ವಾಸ್ತವ್ಯ ಅವಧಿ ಪೂರ್ಣಗೊಂಡ ನಂತರ 14 ದಿನಗಳೊಳಗೂ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಲು ಅವಕಾಶ ನೀಡಲಾಗಿದೆ.

ವಾಸ್ತವ್ಯ ಮಿತಿಗೆ ಒತ್ತು

ಸಚಿವಾಲಯದ ಪ್ರಕಾರ, ವಿದೇಶಿ ನಾಗರಿಕರು ಭಾರತದಲ್ಲಿ ಒಂದೇ ಬಾರಿ ಅಥವಾ ಒಂದು ಕ್ಯಾಲೆಂಡರ್ ವರ್ಷದಲ್ಲಿ ಒಟ್ಟಾರೆ 180 ದಿನಗಳಿಗಿಂತ ಹೆಚ್ಚು ಕಾಲ ಉಳಿಯಲು ಬಯಸಿದರೆ, ಮುಂಚಿತವಾಗಿ ನೋಂದಣಿ ಮಾಡಿಸಿಕೊಳ್ಳುವುದು ಕಡ್ಡಾಯವಾಗಿದೆ. ಹೊಸ ನಿಯಮದಡಿ ವಿಶೇಷ ಅಥವಾ ತುರ್ತು ಸಂದರ್ಭಗಳಲ್ಲಿ ಮಾತ್ರ ಕೆಲವು ವಿನಾಯಿತಿಗಳನ್ನು ಪರಿಗಣಿಸಲಾಗುತ್ತದೆ ಎಂದು ತಿಳಿಸಲಾಗಿದೆ.

ಮಕ್ಕಳಿಗೆ ನಿಯಮಗಳಲ್ಲಿ ಸಡಿಲಿಕೆ

ಈ ತಿದ್ದುಪಡಿಯಲ್ಲಿ ಭಾರತದಲ್ಲಿ ಜನಿಸುವ ಕೆಲವು ಮಕ್ಕಳಿಗೆ ವಿಶೇಷ ವಿನಾಯಿತಿಯನ್ನೂ ನೀಡಲಾಗಿದೆ. ಪೋಷಕರಲ್ಲಿ ಒಬ್ಬರು ಅಥವಾ ಇಬ್ಬರೂ ವಿದೇಶಿ ನಾಗರಿಕರಾಗಿರುವ ಸಂದರ್ಭಗಳಲ್ಲಿ, ಮಗುವಿನ ನೋಂದಣಿಗೆ ಸಂಬಂಧಿಸಿದ ನಿಯಮಗಳಲ್ಲಿ ಬದಲಾವಣೆ ತರಲಾಗಿದೆ.

ಈ ಹಿಂದೆ, ಮಗುವಿನ ಜನನದ ಬಳಿಕ 30 ದಿನಗಳೊಳಗೆ ಸಂಬಂಧಿತ ಅಧಿಕಾರಿಗಳಿಗೆ ಆನ್‌ಲೈನ್ ಮೂಲಕ ಮಾಹಿತಿ ನೀಡುವುದು ಕಡ್ಡಾಯವಾಗಿತ್ತು. ಜೊತೆಗೆ, ಹೊಸ ವೀಸಾ ಮಂಜೂರು ಹಾಗೂ ನಿರ್ಗಮನ ಅನುಮತಿ ಸೇರಿದಂತೆ ವಿವಿಧ ಸೇವೆಗಳನ್ನು ಸರ್ಕಾರದ ಪೋರ್ಟಲ್ ಅಥವಾ ಮೊಬೈಲ್ ಆ್ಯಪ್ ಮೂಲಕ ಪಡೆಯಬೇಕಾಗುತ್ತಿತ್ತು.

ಭಾರತೀಯ ಪೌರತ್ವ ಹೊಂದಿರುವ ಪೋಷಕರಿಗೆ ವಿನಾಯಿತಿ

ಹೊಸ ಅಧಿಸೂಚನೆಯ ಪ್ರಕಾರ, ಪೋಷಕರಲ್ಲಿ ಒಬ್ಬರು ಭಾರತೀಯ ಪ್ರಜೆಯಾಗಿದ್ದು, ಮಗುವಿಗೆ ಭಾರತೀಯ ಪೌರತ್ವ ಮುಂದುವರಿಸಲು ಬಯಸಿದರೆ ಈ ನಿಯಮ ಅನ್ವಯವಾಗುವುದಿಲ್ಲ. ಅಂದರೆ, ಅಂತಹ ಮಕ್ಕಳಿಗೆ ವಿದೇಶಿಗರ ನೋಂದಣಿ ಸಂಬಂಧಿತ ಕೆಲವು ಕಡ್ಡಾಯ ನಿಯಮಗಳಿಂದ ವಿನಾಯಿತಿ ದೊರೆಯಲಿದೆ.

ವಿದೇಶಿ ಪೌರತ್ವ ಪಡೆದರೆ ಮಾಹಿತಿ ಕಡ್ಡಾಯ

ಭಾರತದಲ್ಲಿರುವ ಮಗುವು ನಂತರದ ಹಂತದಲ್ಲಿ ವಿದೇಶಿ ಪೌರತ್ವ ಪಡೆದರೆ, ಆ ವಿಷಯವನ್ನು 30 ದಿನಗಳೊಳಗೆ ಸಂಬಂಧಿತ ನೋಂದಣಿ ಅಧಿಕಾರಿಗಳಿಗೆ ತಿಳಿಸುವುದು ಕಡ್ಡಾಯವಾಗಿದೆ. ಈ ಜವಾಬ್ದಾರಿಯನ್ನು ಪೋಷಕರಲ್ಲಿ ಯಾರಾದರೂ ಒಬ್ಬರು ನಿರ್ವಹಿಸಬೇಕು ಎಂದು ಹೊಸ ನಿಯಮದಲ್ಲಿ ಉಲ್ಲೇಖಿಸಲಾಗಿದೆ.

ವಿದೇಶಿಗರ ವಾಸ್ತವ್ಯ, ವೀಸಾ ನಿರ್ವಹಣೆ ಹಾಗೂ ನೋಂದಣಿ ಪ್ರಕ್ರಿಯೆಯನ್ನು ಹೆಚ್ಚು ಪಾರದರ್ಶಕ ಮತ್ತು ವ್ಯವಸ್ಥಿತಗೊಳಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಈ ಹೊಸ ನಿಯಮಗಳನ್ನು ಜಾರಿಗೆ ತಂದಿದೆ.

ಬೆಳಗಾವಿಯಲ್ಲಿ ಅಕ್ರಮ ಕಂಟ್ರಿ ಪಿಸ್ತೂಲ್ ಜಾಲ ಬಯಲು; 13 ಆರೋಪಿಗಳ ಬಂಧನ, 9 ಪಿಸ್ತೂಲ್ ಜಪ್ತಿ

ಬೆಳಗಾವಿ: ಗಡಿಜಿಲ್ಲೆ ಬೆಳಗಾವಿಯಲ್ಲಿ ಅಕ್ರಮವಾಗಿ ಕಂಟ್ರಿ ಪಿಸ್ತೂಲ್ ತಯಾರಿಸಿ ಮಾರಾಟ ಮಾಡುತ್ತಿದ್ದ ಜಾಲವನ್ನು ಪೊಲೀಸರು ಭೇದಿಸಿದ್ದು, ಈ ಸಂಬಂಧ 13 ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳಿಂದ ಒಟ್ಟು 9 ಕಂಟ್ರಿ ಪಿಸ್ತೂಲ್‌ಗಳು ಹಾಗೂ ಶಸ್ತ್ರಾಸ್ತ್ರ ತಯಾರಿಕೆಗೆ ಬಳಸಲಾಗುತ್ತಿದ್ದ ವಿವಿಧ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ.

ಬಂಧಿತರನ್ನು ಮಾರುತಿ ಸುತಾರ, ಸೋಮನಾಥ ಚೌಗಲೆ, ಸಂತೋಷ ನಾಯಕ, ಮಾರುತಿ ಗುಡದ್ಯಾಗೋಳ, ಬಾಳು ನಾಯಕ, ಲಕ್ಷ್ಮಣ ಗುಜನಾಳ, ಬಸವರಾಜ ಸಾಲೋಟಗಿ, ಬಸವಂತ ಯರಮಾಳಕರ, ಲಕ್ಷ್ಮಣ ಗುರವ, ಮರಿಯಪ್ಪ ನಾಯಕ, ವಿಶ್ವನಾಥ ದೇಸಾಯಿ ಸೇರಿದಂತೆ 13 ಮಂದಿ ಎಂದು ಗುರುತಿಸಲಾಗಿದೆ.

ಖಾನಾಪುರ ತಾಲೂಕಿನಲ್ಲಿನ ಕೊಲೆ ಪ್ರಕರಣವೊಂದರ ತನಿಖೆ ವೇಳೆ ಕಂಟ್ರಿ ಪಿಸ್ತೂಲ್ ಬಳಸಿ ಹತ್ಯೆ ನಡೆಸಿರುವುದು ಪೊಲೀಸರಿಗೆ ಗೊತ್ತಾಗಿತ್ತು. ಈ ಸುಳಿವಿನ ಆಧಾರದ ಮೇಲೆ ತನಿಖೆ ಮುಂದುವರಿಸಿದಾಗ, ಕಾಟಗಾಳಿ ಗ್ರಾಮದಲ್ಲಿ 2024ರಿಂದಲೇ ಅಕ್ರಮವಾಗಿ ಕಂಟ್ರಿ ಪಿಸ್ತೂಲ್ ತಯಾರಿಕೆ ನಡೆಯುತ್ತಿರುವುದು ಬೆಳಕಿಗೆ ಬಂದಿದೆ.

ತನಿಖೆಯಲ್ಲಿ ಪ್ರಮುಖ ಆರೋಪಿ ಮಾರುತಿ ಸುತಾರ ಸಿಂಗಲ್ ಲೋಡೆಡ್ ಹಾಗೂ ಡಬಲ್ ಲೋಡೆಡ್ ಕಂಟ್ರಿ ಪಿಸ್ತೂಲ್‌ಗಳನ್ನು ತಯಾರಿಸುತ್ತಿದ್ದ ಎನ್ನಲಾಗಿದೆ. ಈ ಅಕ್ರಮ ಚಟುವಟಿಕೆಗೆ ಮರಿಯಪ್ಪ ನಾಯಕ ಆರ್ಥಿಕ ನೆರವು ನೀಡುತ್ತಿದ್ದರೆ, ವಿಶ್ವನಾಥ ದೇಸಾಯಿ ಶಸ್ತ್ರಾಸ್ತ್ರಗಳ ಬಿಡಿಭಾಗಗಳನ್ನು ಪೂರೈಸುತ್ತಿದ್ದ ಎಂಬುದು ಪೊಲೀಸರ ತನಿಖೆಯಲ್ಲಿ ಬಹಿರಂಗವಾಗಿದೆ.

ಇನ್ನೂ ವಿಶ್ವನಾಥ ದೇಸಾಯಿ ತನ್ನ ಬುಕ್‌ಸ್ಟಾಲ್ ಮೂಲಕ ಬಂದೂಕಿನ ಬಿಡಿಭಾಗಗಳು ಹಾಗೂ ಮದ್ದುಗುಂಡುಗಳನ್ನು ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ. ಆತನಿಂದ 21 ಟ್ರಿಗರ್‌ಗಳು, 5 ಹೆಡ್‌ಗಳು, 15 ನಿಪ್ಪಲ್‌ಗಳು, ಒಂದು ಸೀಲಿಂಗ್ ಬೆಲ್ಟ್, 34 ಮದ್ದು ತುಂಬಿದ ಪ್ಯಾಕೆಟ್‌ಗಳು, 499 ಸೀಸದ ಗೋಲಿಗಳು, 420 ಕೇಪ್‌ಗಳು ಹಾಗೂ 48 ಜೀವಂತ ಕಾರ್ತೂಸ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಕಾರ್ಯಾಚರಣೆಯ ವೇಳೆ ತಯಾರಿಕಾ ಹಂತದಲ್ಲಿದ್ದ ಒಂದು ಕಂಟ್ರಿ ಪಿಸ್ತೂಲ್ ಹಾಗೂ ಬೆಳಗಾವಿ ಮತ್ತು ಉತ್ತರ ಕನ್ನಡ ಜಿಲ್ಲೆಯ ವಿವಿಧ ವ್ಯಕ್ತಿಗಳಿಗೆ ಮಾರಾಟ ಮಾಡಲಾಗಿದ್ದ ಎಂಟು ಕಂಟ್ರಿ ಪಿಸ್ತೂಲ್‌ಗಳನ್ನು ಸೇರಿ ಒಟ್ಟು ಒಂಬತ್ತು ಶಸ್ತ್ರಾಸ್ತ್ರಗಳನ್ನು ಜಪ್ತಿ ಮಾಡಲಾಗಿದೆ.

ಪ್ರಾಥಮಿಕ ತನಿಖೆಯ ಪ್ರಕಾರ, ಈ ಕಂಟ್ರಿ ಪಿಸ್ತೂಲ್‌ಗಳನ್ನು ಮುಖ್ಯವಾಗಿ ಬೇಟೆ ಉದ್ದೇಶಕ್ಕಾಗಿ ಬಳಸಲಾಗುತ್ತಿತ್ತು ಎಂದು ತಿಳಿದುಬಂದಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಖಾನಾಪುರ ಪೊಲೀಸರು ಆರೋಪಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಿದ್ದು, ಅಕ್ರಮ ಶಸ್ತ್ರಾಸ್ತ್ರ ಜಾಲದ ಕುರಿತು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಅಮೆರಿಕದಲ್ಲಿ ಅಕ್ರಮ ವಾಸ: 30 ಭಾರತೀಯ ಟ್ರಕ್ ಚಾಲಕರ ಬಂಧನ, ಗಡೀಪಾರಿಗೆ ಸಿದ್ಧತೆ

ನ್ಯೂಯಾರ್ಕ್: ಅಮೆರಿಕದಲ್ಲಿ ಅಕ್ರಮವಾಗಿ ನೆಲೆಸಿದ್ದು ವಾಣಿಜ್ಯ ಟ್ರಕ್ ಚಾಲಕರಾಗಿ ಕೆಲಸ ಮಾಡುತ್ತಿದ್ದ ಸುಮಾರು 30 ಭಾರತೀಯರನ್ನು ಫೆಡರಲ್ ಅಧಿಕಾರಿಗಳು ಬಂಧಿಸಿದ್ದು, ಶೀಘ್ರದಲ್ಲೇ ಅವರನ್ನು ಗಡೀಪಾರು ಮಾಡುವ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ಅಮೆರಿಕದ ಕಸ್ಟಮ್ಸ್ ಮತ್ತು ಗಡಿ ರಕ್ಷಣಾ ಇಲಾಖೆ (CBP) ತಿಳಿಸಿದೆ.

ಈ ಕುರಿತು ಪ್ರಕಟಣೆ ನೀಡಿರುವ ಅಧಿಕಾರಿಗಳು, ಮೇ 11ರಿಂದ 15ರವರೆಗೆ ಅರಿಜೋನಾದ ಯುಮಾ ಗಡಿ ವಲಯದಲ್ಲಿ ನಡೆಸಲಾದ ‘ಆಪರೇಷನ್ ಚೆಕ್‌ಮೇಟ್’ ಕಾರ್ಯಾಚರಣೆಯ ವೇಳೆ ಒಟ್ಟು 52 ಮಂದಿಯನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ. ಬಂಧಿತರ ಪೈಕಿ 36 ಮಂದಿ ವಾಣಿಜ್ಯ ಸೆಮಿ-ಟ್ರಕ್‌ಗಳನ್ನು ಚಾಲನೆ ಮಾಡುತ್ತಿರುವುದು ಪತ್ತೆಯಾಗಿದೆ.

ಈ 36 ಟ್ರಕ್ ಚಾಲಕರಲ್ಲಿ 30 ಮಂದಿ ಭಾರತೀಯ ಮೂಲದವರಾಗಿದ್ದು, ಉಳಿದವರು ಮೆಕ್ಸಿಕೊ, ಎಲ್‌ ಸಾಲ್ವಡಾರ್ ಮತ್ತು ರಷ್ಯಾ ದೇಶಗಳಿಗೆ ಸೇರಿದವರಾಗಿದ್ದಾರೆ. ಇವರಲ್ಲಿ ಕೆಲವರು ಕ್ಯಾಲಿಫೋರ್ನಿಯಾ, ನ್ಯೂಯಾರ್ಕ್, ವಾಷಿಂಗ್ಟನ್ ಹಾಗೂ ವರ್ಜೀನಿಯಾ ರಾಜ್ಯಗಳಲ್ಲಿ ನೀಡಲಾದ ವಾಣಿಜ್ಯ ಚಾಲನಾ ಪರವಾನಗಿಗಳನ್ನು ಹೊಂದಿದ್ದರೆ, ಕೆಲವರ ಬಳಿ ಯಾವುದೇ ಮಾನ್ಯ ಚಾಲನಾ ಪರವಾನಗಿಯೂ ಇರಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಾಥಮಿಕ ತನಿಖೆಯಲ್ಲಿ ಬಂಧಿತರ ಪೈಕಿ ಹಲವರು ಹಿಂದಿನ ಆಡಳಿತದ ಅವಧಿಯಲ್ಲಿ ಪಡೆದಿದ್ದ ಉದ್ಯೋಗ ದೃಢೀಕರಣ ದಾಖಲೆಗಳನ್ನು ಬಳಸಿಕೊಂಡು ಅಮೆರಿಕದಲ್ಲಿ ಉಳಿದುಕೊಂಡಿರುವುದು ಪತ್ತೆಯಾಗಿದೆ. ಆದರೆ ಆ ದಾಖಲೆಗಳ ಮಾನ್ಯತೆ ಈಗ ಮುಕ್ತಾಯಗೊಂಡಿರುವುದಾಗಿ ತಿಳಿಸಲಾಗಿದೆ.

ಫೆಡರಲ್ ಕಾನೂನುಗಳ ಪ್ರಕಾರ ಎಲ್ಲ ಬಂಧಿತರ ವಿರುದ್ಧ ಅಗತ್ಯ ಕಾನೂನು ಕ್ರಮ ಕೈಗೊಳ್ಳಲಾಗಿದ್ದು, ಗಡೀಪಾರು ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ಕಸ್ಟಮ್ಸ್ ಮತ್ತು ಗಡಿ ರಕ್ಷಣಾ ಇಲಾಖೆ ಸ್ಪಷ್ಟಪಡಿಸಿದೆ.

‘ಆಪರೇಷನ್ ಚೆಕ್‌ಮೇಟ್’ ಕಾರ್ಯಾಚರಣೆಯ ಉದ್ದೇಶ ಅಮೆರಿಕದಲ್ಲಿ ಕಾನೂನುಬಾಹಿರವಾಗಿ ವಾಸಿಸುತ್ತಿರುವ ಹಾಗೂ ವಾಣಿಜ್ಯ ವಾಹನಗಳನ್ನು ಚಾಲನೆ ಮಾಡುತ್ತಿರುವ ವ್ಯಕ್ತಿಗಳನ್ನು ಪತ್ತೆಹಚ್ಚಿ ಸಾರ್ವಜನಿಕ ಸುರಕ್ಷತೆಯನ್ನು ಕಾಪಾಡುವುದಾಗಿದೆ. ಈ ಕಾರ್ಯಾಚರಣೆ ಮುಂದುವರಿಯಲಿದ್ದು, ಅಪಾಯಕಾರಿಯಾಗಿ ವಾಹನ ಚಾಲನೆ ಮಾಡುವ ಅಕ್ರಮ ವಲಸಿಗರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಯುಮಾ ಗಡಿ ವಲಯದ ಹಂಗಾಮಿ ಮುಖ್ಯ ಗಡಿ ಗಸ್ತು ಅಧಿಕಾರಿ ಡಸ್ಟಿನ್ ಕೌಡ್ಲ್ ಪ್ರತಿಕ್ರಿಯಿಸಿ, “ಸಾರ್ವಜನಿಕರ ಸುರಕ್ಷತೆಗೆ ಧಕ್ಕೆ ಉಂಟುಮಾಡುವ ಅಕ್ರಮ ಚಾಲಕರ ವಿರುದ್ಧ ಕ್ರಮ ಕೈಗೊಳ್ಳುವುದು ನಮ್ಮ ಆದ್ಯತೆ. ಸಮುದಾಯಗಳ ಸುರಕ್ಷತೆ ಹಾಗೂ ರಸ್ತೆ ಅಪಘಾತಗಳನ್ನು ತಡೆಗಟ್ಟಲು ನಮ್ಮ ಅಧಿಕಾರಿಗಳು ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ” ಎಂದು ಹೇಳಿದ್ದಾರೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇತೃತ್ವದ ಆಡಳಿತವು ವಾಣಿಜ್ಯ ಟ್ರಕ್ ಹಾಗೂ ಬಸ್‌ಗಳನ್ನು ಚಾಲನೆ ಮಾಡಲು ಅರ್ಹತೆ ಇಲ್ಲದ ವಿದೇಶಿ ನಾಗರಿಕರಿಗೆ ಪರವಾನಗಿ ಸಿಗದಂತೆ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೊಳಿಸಿದೆ.

ಕಾರಿನಲ್ಲಿ ಗರ್ಭಿಣಿ ಪತ್ನಿ ಇದ್ದಾಳೆಂದು ನಡುರಸ್ತೆಯಲ್ಲಿ ಯುವಕನ ಡ್ರಾಮಾ: ಪೊಲೀಸರ ತನಿಖೆಯಲ್ಲಿ ಬಯಲಾಯ್ತು ಸತ್ಯ!

ಬೆಂಗಳೂರು: ನಗರದಲ್ಲಿ ರಾಜ್ಯಪಾಲರ ವಿಐಪಿ ಸಂಚಾರದ ವೇಳೆ ಟ್ರಾಫಿಕ್ ತಡೆದ ಕಾರಣ ಗರ್ಭಿಣಿ ಪತ್ನಿಯನ್ನು ಆಸ್ಪತ್ರೆಗೆ ಕರೆದೊಯ್ಯಲು ಅಡ್ಡಿಯಾಗಿದೆ ಎಂದು ಆರೋಪಿಸಿ ರಸ್ತೆಯಲ್ಲೇ ಕುಳಿತು ಪ್ರತಿಭಟನೆ ನಡೆಸಿದ್ದ ಯುವಕನ ಪ್ರಕರಣ ಇದೀಗ ಸಂಪೂರ್ಣ ಹೊಸ ತಿರುವು ಪಡೆದುಕೊಂಡಿದೆ.

ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬೆನ್ನಲ್ಲೇ ಎಚ್ಎಎಲ್ (HAL) ಠಾಣೆ ಪೊಲೀಸರು ತಕ್ಷಣ ಕ್ರಮ ಕೈಗೊಂಡು ಪ್ರತಿಭಟನೆ ನಡೆಸಿದ್ದ ಮೋಹಿತ್ ಎಂಬ ಯುವಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲೇ ಘಟನೆ ಕುರಿತು ಹೇಳಲಾಗಿದ್ದ ‘ಗರ್ಭಿಣಿ ಪತ್ನಿ’ ವಿಚಾರವೇ ಸುಳ್ಳು ಎಂದು ಪೊಲೀಸರು ದೃಢಪಡಿಸಿದ್ದಾರೆ.

ವಿಚಾರಣೆ ವೇಳೆ ಮೋಹಿತ್ ನೀಡಿದ ಹೇಳಿಕೆಯ ಪ್ರಕಾರ, ಘಟನೆ ನಡೆದ ಸಮಯದಲ್ಲಿ ಆತ ಕಾರಿನಲ್ಲಿ ಒಬ್ಬನೇ ಪ್ರಯಾಣಿಸುತ್ತಿದ್ದ. ವಿಐಪಿ ಮೂವ್‌ಮೆಂಟ್ ಹಿನ್ನೆಲೆಯಲ್ಲಿ ಇಸ್ರೋ ಜಂಕ್ಷನ್‌ನಲ್ಲಿ ಸುಮಾರು 15 ನಿಮಿಷ ಟ್ರಾಫಿಕ್‌ನಲ್ಲಿ ಸಿಲುಕಿದ್ದಾಗಿ ಆತ ಒಪ್ಪಿಕೊಂಡಿದ್ದಾನೆ.

ಟ್ರಾಫಿಕ್ ವಿಳಂಬದಿಂದ ಕೋಪಗೊಂಡು ತುರ್ತು ಪರಿಸ್ಥಿತಿ ಇದೆ ಎಂಬಂತೆ ತೋರಿಸಲು ತಾನು ಪತ್ನಿ ಗರ್ಭಿಣಿ ಎಂದು ಸುಳ್ಳು ಹೇಳಿ ಪೊಲೀಸರೊಂದಿಗೆ ವಾಗ್ವಾದ ನಡೆಸಿದ್ದಾಗಿ ಆತ ಸ್ಪಷ್ಟಪಡಿಸಿದ್ದಾನೆ. ಪೊಲೀಸರ ವಿರುದ್ಧ ಯಾವುದೇ ವೈಯಕ್ತಿಕ ದ್ವೇಷ ಅಥವಾ ಉದ್ದೇಶ ಇರಲಿಲ್ಲವೆಂದು ಸಹ ಆತ ಹೇಳಿಕೆ ನೀಡಿದ್ದಾನೆ.

ಸದ್ಯಕ್ಕೆ ಮೋಹಿತ್ ವಿರುದ್ಧ ಯಾವುದೇ ಕ್ರಿಮಿನಲ್ ಪ್ರಕರಣ ದಾಖಲಿಸಿಲ್ಲ. ಪೊಲೀಸರು ಆತನಿಂದ ಲಿಖಿತ ಹೇಳಿಕೆ ಪಡೆದು ಕಠಿಣ ಎಚ್ಚರಿಕೆ ನೀಡಿ ಬಿಡುಗಡೆ ಮಾಡಿದ್ದಾರೆ. ಸಾರ್ವಜನಿಕರು ಇಂತಹ ಘಟನೆಗಳಲ್ಲಿ ದೃಢೀಕರಿಸದ ಮಾಹಿತಿಯನ್ನು ನಂಬಬಾರದು ಎಂದು ಪೊಲೀಸರು ಮನವಿ ಮಾಡಿದ್ದಾರೆ.

ಇರಾನ್ ಜೊತೆ ಮಾತುಕತೆ ತ್ವರಿತಗತಿಯಲ್ಲಿ ಮುಂದುವರಿದಿದೆ: ಡೊನಾಲ್ಡ್ ಟ್ರಂಪ್

ವಾಷಿಂಗ್ಟನ್: ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನ ಪರಿಸ್ಥಿತಿ ಮುಂದುವರಿದಿರುವ ನಡುವೆಯೇ, ಇರಾನ್ ಜೊತೆ ನಡೆಯುತ್ತಿರುವ ಮಾತುಕತೆಗಳು ವೇಗವಾಗಿ ಸಾಗುತ್ತಿವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ. ಕದನ ವಿರಾಮ ಉಲ್ಲಂಘನೆಯ ಆರೋಪಗಳು ಕೇಳಿಬರುತ್ತಿದ್ದರೂ, ಸಂಘರ್ಷಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ರಾಜತಾಂತ್ರಿಕ ಪ್ರಯತ್ನಗಳು ಮುಂದುವರಿದಿವೆ ಎಂದು ಅವರು ಹೇಳಿದ್ದಾರೆ.

ಸಾಮಾಜಿಕ ಜಾಲತಾಣ ‘ಟ್ರೂತ್ ಸೋಶಿಯಲ್’ನಲ್ಲಿ ಪೋಸ್ಟ್ ಮಾಡಿರುವ ಟ್ರಂಪ್, ಇಸ್ಲಾಮಿಕ್ ಗಣರಾಜ್ಯ ಇರಾನ್ ಜೊತೆಗಿನ ಮಾತುಕತೆಗಳು ತ್ವರಿತಗತಿಯಲ್ಲಿ ನಡೆಯುತ್ತಿವೆ ಎಂದು ತಿಳಿಸಿದ್ದಾರೆ.

ಇರಾನ್ ಮತ್ತು ಅಮೆರಿಕ ನಡುವಿನ ಉದ್ವಿಗ್ನತೆ ಕಡಿಮೆ ಮಾಡುವ ಉದ್ದೇಶದಿಂದ ಎರಡೂ ದೇಶಗಳ ಅಧಿಕಾರಿಗಳು ಸಂವಾದ ನಡೆಸುತ್ತಿರುವಾಗಲೇ, ಹಲವು ದಾಳಿಗಳು ನಡೆಯುತ್ತಿರುವುದು ಕದನ ವಿರಾಮದ ಪರಿಣಾಮಕಾರಿತ್ವದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ನಿರಂತರ ದಾಳಿಗಳಿಂದ ಯುದ್ಧವಿರಾಮ ಪದೇಪದೇ ಹಿನ್ನಡೆ ಅನುಭವಿಸುತ್ತಿದೆ ಎಂದು ಟ್ರಂಪ್ ಅಭಿಪ್ರಾಯಪಟ್ಟಿದ್ದಾರೆ.

ಮಾತುಕತೆಗಳು ಅಂತಿಮ ಒಪ್ಪಂದದ ಹಂತಕ್ಕೆ ಎಷ್ಟು ಹತ್ತಿರದಲ್ಲಿವೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ ಯಾವುದೇ ಹೊಸ ದಾಳಿ ಸಂವಾದ ಪ್ರಕ್ರಿಯೆಗೆ ಅಡ್ಡಿಯಾಗುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ.

ಇದೇ ವೇಳೆ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೊಂದಿಗೆ ಮಹತ್ವದ ಮಾತುಕತೆ ನಡೆಸಿರುವುದಾಗಿ ಟ್ರಂಪ್ ತಿಳಿಸಿದ್ದಾರೆ. “ನೆತನ್ಯಾಹು ಅವರೊಂದಿಗೆ ನಡೆದ ಚರ್ಚೆ ಅತ್ಯಂತ ಫಲಪ್ರದವಾಗಿತ್ತು. ಬೈರುತ್‌ಗೆ ತೆರಳಲು ಸಜ್ಜಾಗಿದ್ದ ಸೈನಿಕರನ್ನು ಹಿಂತಿರುಗಿಸಲಾಗಿದೆ. ಅಲ್ಲಿಗೆ ಯಾವುದೇ ಪಡೆಗಳನ್ನು ಕಳುಹಿಸಲಾಗುವುದಿಲ್ಲ” ಎಂದು ಅವರು ಹೇಳಿದ್ದಾರೆ.

ಅಲ್ಲದೆ, ಹೆಜ್ಬೊಲ್ಲಾ ಪ್ರತಿನಿಧಿಗಳೊಂದಿಗೂ ಸಂಪರ್ಕ ಸಾಧಿಸಿರುವುದಾಗಿ ತಿಳಿಸಿರುವ ಟ್ರಂಪ್, “ಎಲ್ಲ ರೀತಿಯ ದಾಳಿಗಳನ್ನು ನಿಲ್ಲಿಸಲು ಅವರು ಒಪ್ಪಿಕೊಂಡಿದ್ದಾರೆ. ಇಸ್ರೇಲ್ ಅವರ ಮೇಲೆ ದಾಳಿ ನಡೆಸುವುದಿಲ್ಲ ಮತ್ತು ಅವರು ಕೂಡ ಇಸ್ರೇಲ್ ವಿರುದ್ಧ ದಾಳಿ ನಡೆಸುವುದಿಲ್ಲ ಎಂಬ ಭರವಸೆ ನೀಡಿದ್ದಾರೆ” ಎಂದು ಹೇಳಿದ್ದಾರೆ.

ಇದಕ್ಕೂ ಮುನ್ನ ಎನ್‌ಬಿಸಿ ನ್ಯೂಸ್‌ಗೆ ಪ್ರತಿಕ್ರಿಯಿಸಿದ್ದ ಟ್ರಂಪ್, ಮಾತುಕತೆಗಳನ್ನು ಸ್ಥಗಿತಗೊಳಿಸುವ ಕುರಿತು ಯಾವುದೇ ಅಧಿಕೃತ ಮಾಹಿತಿ ತಮಗೆ ಲಭ್ಯವಾಗಿಲ್ಲ ಎಂದು ತಿಳಿಸಿದ್ದರು. ಅವರು ಮಾತುಕತೆ ಮುಗಿಸಲು ನಿರ್ಧರಿಸಿದರೂ ಅದು ಅವರ ಆಯ್ಕೆ ಎಂದು ಹೇಳಿದ್ದರು.

ಇತ್ತೀಚಿನ ದಿನಗಳಲ್ಲಿ ಅಮೆರಿಕ ಮತ್ತು ಇರಾನ್ ನಡುವೆ ಪರಸ್ಪರ ದಾಳಿಗಳು ನಡೆದಿರುವ ಹಿನ್ನೆಲೆಯಲ್ಲಿ ಸುಮಾರು ಎರಡು ತಿಂಗಳಿನಿಂದ ಜಾರಿಯಲ್ಲಿದ್ದ ಕದನ ವಿರಾಮ ಒಪ್ಪಂದಕ್ಕೆ ಧಕ್ಕೆ ಉಂಟಾಗಿದೆ. ಯುದ್ಧವಿರಾಮ ಜಾರಿಯಲ್ಲಿದ್ದರೂ, ಲೆಬನಾನ್ ಪ್ರದೇಶದಲ್ಲಿ ಇಸ್ರೇಲ್ ತನ್ನ ಸೇನಾ ಕಾರ್ಯಾಚರಣೆಗಳನ್ನು ಮುಂದುವರಿಸಿದೆ.

ವಾರಾಂತ್ಯದಲ್ಲಿ ಇಸ್ರೇಲ್ ಪಡೆಗಳು ಲೆಬನಾನ್ ಒಳಭಾಗದಲ್ಲಿ ಹಲವು ಕಾರ್ಯಾಚರಣೆಗಳನ್ನು ನಡೆಸಿದ್ದು, ಪರಿಸ್ಥಿತಿಯನ್ನು ಮತ್ತಷ್ಟು ಸೂಕ್ಷ್ಮಗೊಳಿಸಿವೆ. ಸೋಮವಾರ ಹೆಜ್ಬೊಲ್ಲಾ ಪ್ರಭಾವಿತ ಬೈರುತ್‌ನ ದಕ್ಷಿಣ ಉಪನಗರಗಳ ಮೇಲೆ ದಾಳಿ ನಡೆಸಲು ನೆತನ್ಯಾಹು ಆದೇಶ ನೀಡಿದ್ದಾರೆ ಎನ್ನಲಾಗಿದೆ.

ಬೇರೆ ಪುರಾವೆಗಳಿಲ್ಲದಿದ್ದರೆ DNA ಪರೀಕ್ಷೆ ಅಗತ್ಯ: ಪಿತೃತ್ವ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಸ್ಪಷ್ಟನೆ

ನವದೆಹಲಿ: ಪಿತೃತ್ವಕ್ಕೆ ಸಂಬಂಧಿಸಿದ ವಿವಾದಗಳಲ್ಲಿ ಡಿಎನ್‌ಎ ಪರೀಕ್ಷೆಯ ಮಹತ್ವದ ಕುರಿತು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಪ್ರಕರಣದ ಸತ್ಯಾಂಶವನ್ನು ತಿಳಿಯಲು ಡಿಎನ್‌ಎ ಪರೀಕ್ಷೆಯೇ ಏಕೈಕ ಮಾರ್ಗವಾಗಿದ್ದು, ಬೇರೆ ಯಾವುದೇ ದೃಢವಾದ ಪುರಾವೆಗಳು ಲಭ್ಯವಿಲ್ಲದಿದ್ದರೆ ನ್ಯಾಯಾಲಯಗಳು ಡಿಎನ್‌ಎ ಪರೀಕ್ಷೆಗೆ ಆದೇಶಿಸಬಹುದೆಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.

ತಾನು ಜೈವಿಕವಾಗಿ ಯಾರ ಮಗ ಎಂಬುದನ್ನು ತಿಳಿದುಕೊಳ್ಳಲು ಕಾನೂನು ಹೋರಾಟ ನಡೆಸುತ್ತಿರುವ 26 ವರ್ಷದ ಯುವಕನ ಅರ್ಜಿಯ ವಿಚಾರಣೆ ವೇಳೆ ನ್ಯಾಯಮೂರ್ತಿಗಳಾದ ಸಂಜಯ್ ಕರೋಲ್ ಮತ್ತು ಎನ್.ಕೆ. ಸಿಂಗ್ ಅವರಿದ್ದ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಪ್ರಕರಣದಲ್ಲಿ ಪಿತೃತ್ವವನ್ನು ನಿರ್ಧರಿಸಲು ಡಿಎನ್‌ಎ ಪರೀಕ್ಷೆ ನಡೆಸುವಂತೆ ಛತ್ತೀಸ್‌ಗಢದ ಬಸ್ನಾ ನ್ಯಾಯಾಲಯ ಮತ್ತು ಹೈಕೋರ್ಟ್ ನೀಡಿದ್ದ ಆದೇಶಗಳನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿಯನ್ನು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಕೆಳ ನ್ಯಾಯಾಲಯಗಳ ಆದೇಶವನ್ನು ಎತ್ತಿಹಿಡಿದಿದೆ.

ಪ್ರತಿವಾದಿಯಾಗಿರುವ ವ್ಯಕ್ತಿ, ತನ್ನನ್ನು ಡಿಎನ್‌ಎ ಮಾದರಿ ನೀಡುವಂತೆ ಬಲವಂತಪಡಿಸಲಾಗದು ಹಾಗೂ ಈ ಪ್ರಕರಣದಲ್ಲಿ ಡಿಎನ್‌ಎ ಪರೀಕ್ಷೆಯ ಅಗತ್ಯವಿಲ್ಲ ಎಂದು ವಾದಿಸಿದ್ದರು. ಆದರೆ ನ್ಯಾಯಾಲಯ, ಪ್ರಕರಣದ ತೀರ್ಮಾನಕ್ಕೆ ಡಿಎನ್‌ಎ ಪರೀಕ್ಷೆಯ ಫಲಿತಾಂಶವೇ ನಿರ್ಣಾಯಕವಾಗಿರುವಾಗ ಅದನ್ನು ನಿರಾಕರಿಸಲು ಸಾಧ್ಯವಿಲ್ಲ ಎಂದು ಹೇಳಿದೆ.

ನ್ಯಾಯಪೀಠದ ಪ್ರಕಾರ, ಡಿಎನ್‌ಎ ಪರೀಕ್ಷೆಗೆ ಆದೇಶ ನೀಡಬೇಕೇ ಎಂಬುದನ್ನು ನಿರ್ಧರಿಸುವಾಗ ನ್ಯಾಯಾಲಯವು ಒಂದು ಪ್ರಮುಖ ಅಂಶವನ್ನು ಪರಿಗಣಿಸಬೇಕು. ಅಂದರೆ, ಡಿಎನ್‌ಎ ಪರೀಕ್ಷೆಯ ಮೂಲಕವೇ ಸತ್ಯಾಂಶವನ್ನು ಪತ್ತೆಹಚ್ಚಲು ಸಾಧ್ಯವಾಗುತ್ತದೆಯೇ ಮತ್ತು ಅದಕ್ಕೆ ಪರ್ಯಾಯವಾದ ಯಾವುದೇ ಪುರಾವೆಗಳು ಲಭ್ಯವಿಲ್ಲವೇ ಎಂಬುದನ್ನು ಪರಿಶೀಲಿಸಬೇಕು ಎಂದು ತಿಳಿಸಿದೆ.

ಈ ಪ್ರಕರಣದಲ್ಲಿ ಯುವಕನು ತಾನು ಪ್ರತಿವಾದಿಯ ಮಗ ಎಂದು ಘೋಷಿಸುವಂತೆ ಹಾಗೂ ಅವರ ಆಸ್ತಿಯಲ್ಲಿ ಹಕ್ಕು ನೀಡುವಂತೆ ಸಿವಿಲ್ ಮೊಕದ್ದಮೆ ಹೂಡಿರುವುದರಿಂದ ಪಿತೃತ್ವದ ಪ್ರಶ್ನೆ ಪ್ರಕರಣದ ಕೇಂದ್ರಬಿಂದುವಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಸತ್ಯ ತಿಳಿಯುವ ಹಕ್ಕು ಮುಖ್ಯ

ಗೌಪ್ಯತೆಯ ಹಕ್ಕಿನ ವಿಚಾರವನ್ನೂ ಪರಿಗಣಿಸಿದ ನ್ಯಾಯಪೀಠ, ಪ್ರತಿವಾದಿಯ ವೈಯಕ್ತಿಕ ಹಕ್ಕುಗಳಿಗಿಂತಲೂ ತನ್ನ ಜೀವನಪೂರ್ತಿ ಕಾಡುತ್ತಿರುವ ಪಿತೃತ್ವದ ಪ್ರಶ್ನೆಗೆ ಉತ್ತರ ಕಂಡುಕೊಳ್ಳಬೇಕೆಂಬ ಯುವಕನ ಹಕ್ಕು ಈ ಪ್ರಕರಣದಲ್ಲಿ ಹೆಚ್ಚು ಮಹತ್ವದ್ದಾಗಿದೆ ಎಂದು ಹೇಳಿದೆ.

ಬಾಲ್ಯದಿಂದಲೂ ತನ್ನ ತಾಯಿ ಪ್ರತಿವಾದಿಯೇ ತಂದೆ ಎಂದು ಹೇಳುತ್ತಾ ಬಂದಿದ್ದು, ಆದರೆ ಆ ವ್ಯಕ್ತಿ ಅದನ್ನು ನಿರಾಕರಿಸುತ್ತಿರುವ ಕಾರಣ ಯುವಕನು ಸತ್ಯ ತಿಳಿದುಕೊಳ್ಳಲು ಪ್ರಯತ್ನಿಸುತ್ತಿದ್ದಾನೆ. ಈ ಪ್ರಶ್ನೆಗೆ ಉತ್ತರ ದೊರೆಯದಿದ್ದರೆ, ಅವನಿಗೆ ಸಿಗಬೇಕಾದ ಕಾನೂನುಬದ್ಧ ಹಕ್ಕುಗಳಿಂದ ವಂಚಿತನಾಗುವ ಸಾಧ್ಯತೆ ಇದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಪ್ರಕರಣದ ಹಿನ್ನೆಲೆ

ಅರ್ಜಿದಾರ ಯುವಕನ ಪ್ರಕಾರ, 1999ರ ಸೆಪ್ಟೆಂಬರ್ 10ರಂದು ತನ್ನ ತಾಯಿ ಮತ್ತು ಪ್ರತಿವಾದಿ ವ್ಯಕ್ತಿಯ ನಡುವಿನ ಸಂಬಂಧದಿಂದ ತಾನು ಜನಿಸಿದ್ದಾನೆ. ಬಾಲ್ಯದಿಂದಲೂ ತಾಯಿ ಇದೇ ವ್ಯಕ್ತಿಯೇ ತನ್ನ ತಂದೆ ಎಂದು ಹೇಳುತ್ತಾ ಬಂದಿದ್ದರೂ, ಪ್ರತಿವಾದಿ ಪಿತೃತ್ವವನ್ನು ಒಪ್ಪಿಕೊಳ್ಳಲು ನಿರಾಕರಿಸಿದ್ದಾರೆ.

ಈ ಹಿಂದೆ ಯುವಕನ ತಾಯಿ ದಾಖಲಿಸಿದ್ದ ಅತ್ಯಾಚಾರ ಪ್ರಕರಣದಲ್ಲಿ ಪ್ರತಿವಾದಿ ಖುಲಾಸೆಗೊಂಡಿದ್ದರು. ನಂತರ ಹಲವು ವರ್ಷಗಳ ಕಾಲ ಜೀವನಾಂಶ ಸೇರಿದಂತೆ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಎರಡೂ ಕುಟುಂಬಗಳ ನಡುವೆ ಕಾನೂನು ಹೋರಾಟ ನಡೆದಿತ್ತು.

ಬಳಿಕ ಯುವಕನು ತನ್ನ ಪಿತೃತ್ವವನ್ನು ಕಾನೂನುಬದ್ಧವಾಗಿ ಘೋಷಿಸುವಂತೆ ಹಾಗೂ ಆಸ್ತಿಯಲ್ಲಿ ಪಾಲು ನೀಡುವಂತೆ ಸಿವಿಲ್ ದಾವೆ ಹೂಡಿದ್ದ. ಪ್ರಕರಣದ ಸತ್ಯಾಂಶ ನಿರ್ಧರಿಸಲು ಡಿಎನ್‌ಎ ಪರೀಕ್ಷೆಯೇ ಅತ್ಯಂತ ಪರಿಣಾಮಕಾರಿ ಮಾರ್ಗ ಎಂದು ಅಭಿಪ್ರಾಯಪಟ್ಟಿದ್ದ ವಿಚಾರಣಾ ನ್ಯಾಯಾಲಯ ಮತ್ತು ಹೈಕೋರ್ಟ್ ಪರೀಕ್ಷೆಗೆ ಆದೇಶಿಸಿದ್ದವು. ಇದೀಗ ಸುಪ್ರೀಂ ಕೋರ್ಟ್ ಕೂಡ ಆ ಆದೇಶವನ್ನು ಎತ್ತಿಹಿಡಿದು, ಡಿಎನ್‌ಎ ಪರೀಕ್ಷೆಯ ಫಲಿತಾಂಶದ ಆಧಾರದ ಮೇಲೆ ಪ್ರಕರಣದ ಮುಂದಿನ ವಿಚಾರಣೆ ನಡೆಸುವಂತೆ ನಿರ್ದೇಶನ ನೀಡಿದೆ.

“ಮಧು ಅಭಿಷೇಕದ ನಂತರ ರಾಜಕೀಯ ಪಥ ಬದಲಾಯಿತೇ? ನಿಜವಾಯ್ತು ಪಂಚಮುಖಿ ದೇವಾಲಯದ ‘ಭವಿಷ್ಯ ನುಡಿ’

0

ರಾಯಚೂರು: ರಾಜ್ಯ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆ ನಡೆದಿರುವ ಬೆನ್ನಲ್ಲೇ, ರಾಯಚೂರು ತಾಲೂಕಿನ ಪಂಚಮುಖಿ ಆಂಜನೇಯ ದೇವಸ್ಥಾನ ಮತ್ತೆ ಸುದ್ದಿಯ ಕೇಂದ್ರಬಿಂದುವಾಗಿದೆ. ಡಿ.ಕೆ. ಶಿವಕುಮಾರ್ ಅವರು ನೂತನ ಮುಖ್ಯಮಂತ್ರಿಯಾಗಿ ನಿಯೋಜನೆಗೊಂಡಿರುವ ಹಿನ್ನೆಲೆಯಲ್ಲಿ ದೇವಾಲಯದ ಹಿಂದಿನ ಭವಿಷ್ಯ ನುಡಿಗಳು ಮತ್ತೆ ಚರ್ಚೆಗೆ ಬಂದಿವೆ.

ಈ ದೇವಸ್ಥಾನದಲ್ಲಿ ಹಿಂದಿನಿಂದಲೂ ನಡೆದಿರುವ ಘಟನೆಗಳು ರಾಜಕೀಯ ವಲಯದಲ್ಲಿ ಕುತೂಹಲ ಹುಟ್ಟಿಸುತ್ತಿವೆ. ಗುಂಡೂರಾವ್, ಬಂಗಾರಪ್ಪ, ವೀರಪ್ಪ ಮೊಯ್ಲಿ ಮತ್ತು ಯಡಿಯೂರಪ್ಪ ಅವರು ಇಲ್ಲಿ ಪೂಜೆ ಸಲ್ಲಿಸಿದ ಬಳಿಕ ಮುಖ್ಯಮಂತ್ರಿಗಳಾದ ಉದಾಹರಣೆಗಳನ್ನು ದೇವಾಲಯದ ಮೂಲ ಅರ್ಚಕರು ಉಲ್ಲೇಖಿಸುತ್ತಿದ್ದಾರೆ.

ಇದೇ ರೀತಿಯಲ್ಲಿ 2025ರ ಅಕ್ಟೋಬರ್‌ನಲ್ಲಿ ಡಿಸಿಎಂ ಆಗಿದ್ದ ಡಿ.ಕೆ. ಶಿವಕುಮಾರ್ ಅವರು ಪತ್ನಿಯೊಂದಿಗೆ ದೇವಸ್ಥಾನಕ್ಕೆ ಭೇಟಿ ನೀಡಿ ‘ಮಧು ಅಭಿಷೇಕ’ ಹಾಗೂ 42 ಶ್ಲೋಕಗಳ ವಿಶೇಷ ಪೂಜೆ ನೆರವೇರಿಸಿದ್ದರು. ಆ ವೇಳೆಲೇ ಅವರ ಭವಿಷ್ಯ ಕುರಿತು ದೇವಾಲಯದ ಅರ್ಚಕರು ನೀಡಿದ್ದ ಹೇಳಿಕೆಗಳು ಈಗ ಮತ್ತೆ ಸದ್ದು ಮಾಡುತ್ತಿವೆ.

“ಪಂಚಮುಖಿ ಪ್ರಾಣದೇವರ ಆಶೀರ್ವಾದದಿಂದಲೇ ಇಷ್ಟಾರ್ಥಗಳು ಈಡೇರುತ್ತವೆ” ಎಂದು ಹೇಳಿದ್ದ ಅರ್ಚಕರು, ಇದೀಗ ಡಿಕೆಶಿ ಸಿಎಂ ಆಗಿರುವುದನ್ನು ದೈವ ಸಂಕೇತವಾಗಿ ನೋಡುತ್ತಿದ್ದಾರೆ. ದೇವಸ್ಥಾನದಲ್ಲಿ ಭಕ್ತರು ಸಂಭ್ರಮಾಚರಣೆ ನಡೆಸುತ್ತಿದ್ದು, ವಿಶೇಷ ಪೂಜೆಗಳು ಮುಂದುವರಿದಿವೆ.

error: Content is protected !!