ಕೂಡ್ಲಿಗಿ: “ಸರ್ಕಾರದ ಯಶಸ್ಸು ಜಾಹಿರಾತಿನಲ್ಲಿ ಇರುವುದಿಲ್ಲ. ಜನರ ಮುಖದಲ್ಲಿ ನಗು ಮೂಡಿದೆ ಎಂಬುದೇ ಯಶಸ್ಸಿನ ಮಾನದಂಡ” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ತಿಳಿಸಿದರು. ವಿಜಯನಗರ ಜಿಲ್ಲೆಯ ಕೂಡ್ಲಗಿಯಲ್ಲಿ ಸಿಎಂ ಡಿ ಕೆ ಶಿವಕುಮಾರ್ ಅವರು ಪ್ರಜಾಸೇವೆ ಅಭಿಯಾನಕ್ಕೆ ಶನಿವಾರ ಚಾಲನೆ ನೀಡಿ ಮಾತನಾಡಿದರು.
“ಜನ ಸೇವೆಯೇ ಜನಾರ್ಧನ ಸೇವೆ ಎಂದು ಭಾವಿಸಿದ್ದೇವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಿಮ್ಮ ಸೇವೆ ಮಾಡಲು 136 ಸೀಟು ನೀಡಿ ರಾಜ್ಯವನ್ನು ಹೊಸ ದಿಕ್ಕಿನಲ್ಲಿ ಮುನ್ನಡೆಸಲು ಅವಕಾಶ ಕೊಟ್ಟಿದ್ದೀರಿ. ಇದು ಕೇವಲ ಸರ್ಕಾರ ಕಾರ್ಯಕ್ರಮ ಅಲ್ಲ. ಜನ ಸರ್ಕಾರದ ಬಳಿ ಹೋಗುವ ಕಾಲ ಹೋಗಿ, ಸರ್ಕಾರ ಜನರ ಬಳಿಗೆ ಹೋಗುವ ಕಾಲ ಬಂದಿದೆ. ಜನರ ಮನೆ ಬಾಗಿಲಿಗೆ ಆಡಳಿತ ತಲುಪಿಸಲು ಈ ಕಾರ್ಯಕ್ರಮ ಮಾಡಲಾಗುತ್ತಿದೆ” ಎಂದು ಹೇಳಿದರು.
“ವಿಧಾನಸೌಧ, ಜಿಲ್ಲಾ ಹಾಗೂ ತಾಲೂಕು, ಸರ್ಕಾರಿ ಕಚೇರಿಯಲ್ಲಿ ಕೂತು ಅಧಿಕಾರಿಗಳು ಕೆಲಸ ಮಾಡುವುದಲ್ಲ. ಜನರ ಕಷ್ಟ ಕೇಳಿ, ಅವರ ಸಮಸ್ಯೆ ಬಗೆಹರಿಸಲು ಹೊಸ ಇಲಾಖೆ ಆರಂಭೀಸಿದ್ದೇವೆ” ಎಂದರು.
ನನ್ನನ್ನು ಪ್ರಜಾಸೇವಕ ಎಂದು ಕರೆಯಿರಿ
“ಸಂಸದ ಜಿ ಸಿ ಚಂದ್ರಶೇಖರ ಅವರು ನನ್ನನ್ನು ನಾಡಿನ ದೊರೆ ಎಂದು ಸಂಬೋಧನೆ ಮಾಡಿದರು. ಆದರೆ, ನಾನು ನಾಡಿನ ದೊರೆ ಅಲ್ಲ, ಪ್ರಜಾಸೇವಕ ಎಂದು ಕರೆಯಬೇಕು. ನನಗೆ ಅದಕ್ಕಿಂತ ದೊಡ್ಡ ಸಂತೋಷ ಬೇರೆ ಇಲ್ಲ” ಎಂದು ಮನವಿ ಮಾಡಿದರು.
“ದೊರೆಗಳ ಕಾಲ ಹೋಗಿ ಪ್ರಜಾಪ್ರಭುತ್ವ ಬಂದಿದೆ. ಪ್ರಜೆಗಳ ಬದುಕಿನಲ್ಲಿ ಬದಲಾವನೆ ತರಲು ಇಲಾಖೆ ತರಲಾಗಿದೆ. ಇದು ಕೇವಲ ಇಲಾಖೆ ಮಾತ್ರವಲ್ಲ. ಜನರ ಸಮಸ್ಯೆ ಆಲಿಸಿ, ಸ್ಪಂದಿಸಿ ಪರಿಹಾರ ನೀಡಲು ಈ ತೀರ್ಮಾನ ಮಾಡಿದ್ದೇವೆ. ಎಲ್ಲರೂ ಡಿಸಿ ಕಚೇರಿ, ಮಂತ್ರಿ ಕಚೇರಿ, ವಿಧಾನಸೌಧಕ್ಕೆ ಬರಲು ಆಗುವುದಿಲ್ಲ. ನಮ್ಮ ಅವಧಿಯಲ್ಲಿ ಈ ಪರಿಸ್ಥಿತಿ ಬದಲಾಗಿ, ಅಧಿಕಾರಿಗಳು ಜನರನ್ನು ಹುಡುಕಿಕೊಂಡು ಹೋಗಬೇಕು” ಎಂದು ಕರೆ ನೀಡಿದರು.
“ಕೂಡ್ಲಿಗಿಯಲ್ಲಿರುವ ಮಹಾತ್ಮ ಗಾಂಧೀಜಿ ಅವರ ಚಿತಾಭಸ್ಮ ಇರುವ ಜಾಗಕ್ಕೆ ನಾವು ಹೋಗಿ ನಮಿಸಿದ್ದೇವೆ. ಅವರ ಚಿಂತನೆಯ ಹಾದಿಯಲ್ಲಿ ಮುನ್ನಡೆಯಲು ಶಕ್ತಿ ನೀಡುವಂತೆ ಮಹಾತ್ಮನಲ್ಲಿ ಪ್ರಾರ್ಥನೆ ಸಲ್ಲಿಸಿದ್ದೇವೆ. ಆಡಳಿತ ಸಮಾಜದ ಕೊನೆ ವ್ಯಕ್ತಿಯನ್ನು ತಲುಪಬೇಕು ಎಂಬುದು ಗಾಂಧೀಜಿ ಅವರ ಸಂದೇಶ. ನಾವು ಬಸವಣ್ಣನ ನಾಡಿನಲ್ಲಿ ಕೆಲಸ ಮಾಡುತ್ತಿದ್ದು, ನಿನ್ನೆ ಅವರ ಐಕ್ಯ ಸ್ಥಳಕ್ಕೆ ಹೋಗಿ ಪೂಜೆ ಸಲ್ಲಿಸಿ, ಬರ ಪ್ರದೇಶದ ರೈತರ ಸಮಸ್ಯೆ ನೋಡಿ ಇಲ್ಲಿಗೆ ಬದಿರುವೆ” ಎಂದು ತಿಳಿಸಿದರು.
ಟೀಕೆಗಳು ಸಾಯುತ್ತವೆ, ನಮ್ಮ ಕೆಲಸಗಳು ಉಳಿಯುತ್ತವೆ
“ನಾನು ಕೇವಲ ಹೆಲಿಕಾಪ್ಟರ್ ನಲ್ಲಿ ಮಾತ್ರ ಬರ ವೀಕ್ಷಣೆ ಮಾಡಿಲ್ಲ. ಪ್ರಯಾಣ ಮಾಡುವಾಗ ಈ ಭಾಗದ ಜಮೀನುಗಳನ್ನು ನೋಡಿದೆ. ಆದರೆ ವಿರೋಧ ಪಕ್ಷದವರು ಅದನ್ನು ಟೀಕಿಸುತ್ತಾರೆ. ಟೀಕೆಗಳು ಸಾಯುತ್ತವೆ ಕೆಲಸಗಳು ಉಳಿಯುತ್ತವೆ ಎಂಬುದು ನಮ್ಮ ನಂಬಿಕೆ” ಎಂದು ತಿರುಗೇಟು ನೀಡಿದರು.
ಜನರ ಕಷ್ಟಕ್ಕೆ ಸ್ಪಂದಿಸಿ; ಅಧಿಕಾರಿಗಳಿಗೆ ಸೂಚನೆ
“ಪ್ರತಿ ಜಿಲ್ಲಾ ಮಂತ್ರಿ ತಮ್ಮ ಜಿಲ್ಲೆಯ ಎಲ್ಲಾ ತಾಲೂಕುಗಳಿಗೆ ಪ್ರತಿ ತಿಂಗಳ ಮೊದಲ ಹಾಗೂ ಮೂರನೇ ಶನಿವಾರ ಭೇಟಿ ನೀಡಬೇಕು. ಜನರ ಸಮಸ್ಯೆ ಆಲಿಸಬೇಕು ಎಂದು ಸೂಚಿಸಿದ್ದೇನೆ. ನಂತರ ಎರಡನೇ ಹಂತದಲ್ಲಿ ಹೋಬಳಿ ಮಟ್ಟದಲ್ಲಿ ಮಾಡಬೇಕು. ಶಾಸಕರು ಪಂಚಾಯ್ತಿ ಮಟ್ಟದಲ್ಲಿ ಹೋಗಬೇಕು. ಶಾಸಕರು ಹೋಗದಿದ್ದರೆ ಅಧಿಕಾರಿಗಳು ಜನರ ಬಳಿ ಹೋಗಬೇಕು, ಅಧಿಕಾರಿಗಳು ಜನರ ಮಧ್ಯೆ ಇರಬೇಕು. ಜನರ ಕಷ್ಟಕ್ಕೆ ಸ್ಪಂದಿಸಬೇಕು” ಎಂದು ಸೂಚನೆ ನೀಡಿದರು.
“ಎಲ್ಲಾ ಸಮಸ್ಯೆ ಬಗೆಹರಿಸಲು ಆಗದೇ ಇದ್ದರೂ ಕಾನೂನು ಚೌಕಟ್ಟಿನಲ್ಲಿ ಆದಷ್ಟು ಪರಿಹಾರ ನೀಡಲಾಗುವುದು. ಪಿಂಚಣಿ, ಭೂಮಿ ಗ್ಯಾರಂಟಿ, ಖಾತೆ ಸಮಸ್ಯೆ, ನಿವೇಶನ ಹಾಗೂ ಮನೆ ರಹಿತರು, ಸರ್ಕಾರಿ ಯೋಜನೆಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಈ ಇಲಾಖೆ ಮೂಲಕ ಬಗೆಹರಿಸಲಾಗುವುದು” ಎಂದರು.
ಸಮಸ್ಯೆ ಬಗೆಹರಿಸಲು ಕಾನೂನು ಹೋರಾಟಕ್ಕೆ ವಕೀಲರ ಸೇವೆ ಅವಕಾಶ ಬಳಸಿಕೊಳ್ಳಿ
“ನಿಮ್ಮ ಪಂಚಾಯಿತಿಗಳಲ್ಲಿ ನಿಮಗೆ ಅರ್ಜಿ ನೀಡುತ್ತಾರೆ. ನೀವು ಅವುಗಳ ಮೂಲಕ ನಿಮ್ಮ ಮನವಿ ಸಲ್ಲಿಸಬೇಕು. ಸುಮಾರು 50 ಸಾವಿರ ಅರ್ಜಿಗಳು ಸಲ್ಲಿಕೆಯಾಗಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ನೀವು ಅರ್ಜಿ ಕೊಟ್ಟ ನಂತರ ನಾವು ಅದನ್ನು ಮರೆಯುವುದಿಲ್ಲ. ಅದಕ್ಕೆ ಪರಿಹಾರ ಸಿಗುವವರೆಗೆ ಸರ್ಕಾರ ಕೆಲಸ ಮಾಡಲಿದೆ. ಪರಿಹಾರ ಸಿಗದಿದ್ದರೆ ಯಾವ ಕಾರಣಕ್ಕೆ ಆಗುವುದಿಲ್ಲ ಎಂದು ವಿವರಣೆ ನೀಡಲಾಗುವುದು. ಕಾನೂನು ಮೂಲಕ ಬಗೆಹರಿಸಬೇಕಾದ ಸಂದರ್ಭದಲ್ಲಿ ಕೋರ್ಟ್ ನಲ್ಲಿ ನಿಮ್ಮ ಪರ ವಾದ ಮಂಡಿಸಲು ವಕೀಲರ ಸೇವೆ ಒದಗಿಸಲಾಗುವುದು. ಬಡವರಿಗೆ ವಕೀಲರ ಸೇವೆ ನೀಡಲು ಅವಕಾಶವಿದೆ. ಅದನ್ನು ಬಳಸಿಕೊಳ್ಳಿ” ಎಂದು ಕರೆ ನೀಡಿದರು.
“ಇಡೀ ರಾಜ್ಯಕ್ಕೆ ವಿಜಯ ಸಿಗಬೇಕು ಎಂದು ಈ ಕಾರ್ಯಕ್ರಮವನ್ನು ಪವಿತ್ರವಾದ ಕೃಷ್ಣದೇವರಾಯನ ಭೂಮಿ ವಿಜಯನಗರ ಆಯ್ಕೆ ಮಾಡಿರುವೆ. ಇಲ್ಲಿ ಎಷ್ಟು ಜನ ಬಂದಿದ್ದಾರೆ, ಎಷ್ಟು ಸಮಸ್ಯೆ ಅರ್ಜಿ ಕೊಟ್ಟಿದ್ದಾರೆ ಎಂಬುದಕ್ಕಿಂತ, ಎಷ್ಟು ಜನರ ಸಮಸ್ಯೆ ಬಗೆಹರಿದಿದೆ ಎಂಬುದು ಈ ಕಾರ್ಯಕ್ರಮದ ಯಶಸ್ಸನ್ನು ತಿಳಿಸುತ್ತದೆ” ಎಂದರು.