Home Blog

ಕಾಲದೊಂದಿಗೆ ಬೆಳೆದ ವ್ಯಕ್ತಿತ್ವ, ಮೌಲ್ಯಗಳೊಂದಿಗೆ ಅರಳಿದ ಬದುಕು..!

ಬ್ಬ ವ್ಯಕ್ತಿಯ ಸಾಧನೆಯನ್ನು ಅವರು ಅಲಂಕರಿಸಿದ ಹುದ್ದೆಗಳಿಂದ ಅಳೆಯಲು ಸಾಧ್ಯವಿಲ್ಲ. ಅವರು ಸಮಾಜಕ್ಕೆ ನೀಡಿದ ಕೊಡುಗೆ, ಉಳಿಸಿದ ಮೌಲ್ಯಗಳು ಮತ್ತು ಜನರ ಮನಸ್ಸಿನಲ್ಲಿ ಮೂಡಿಸಿದ ವಿಶ್ವಾಸವೇ ಅವರ ವ್ಯಕ್ತಿತ್ವದ ನಿಜವಾದ ಅಳತೆ. ಹಿರಿಯ ಪತ್ರಕರ್ತ ಡಾ. ಅನಂತ ಕಾರ್ಕಳ ಅವರ ಬದುಕು ಈ ಮಾತಿಗೆ ಜೀವಂತ ಸಾಕ್ಷಿಯಾಗಿದೆ.

ಮೂರು ದಶಕಗಳಿಗೂ ಹೆಚ್ಚು ಕಾಲ ಮುದ್ರಣ ಹಾಗೂ ದೃಶ್ಯ ಮಾಧ್ಯಮ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ ಅವರು, ತಮ್ಮ ಲೇಖನಿ, ನೇರ ನುಡಿ ಮತ್ತು ಸಾಮಾಜಿಕ ಬದ್ಧತೆಯ ಮೂಲಕ ಅಸಂಖ್ಯಾತ ಜನರ ವಿಶ್ವಾಸ ಗಳಿಸಿದ್ದಾರೆ. ಅವರ ಪತ್ರಿಕೋದ್ಯಮ ಕೇವಲ ಸುದ್ದಿಗಳ ಪ್ರಸಾರಕ್ಕೆ ಸೀಮಿತವಾಗಿರದೆ, ಸಮಾಜದ ಸಮಸ್ಯೆಗಳಿಗೆ ಧ್ವನಿಯಾಗುವ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿದೆ.

ಗದಗದ ನೆಲದಲ್ಲಿ ಆರಂಭವಾದ ಅವರ ಪತ್ರಿಕೋದ್ಯಮದ ಪಯಣ, ರಾಜ್ಯದ ಪ್ರಮುಖ ಪತ್ರಿಕೆಗಳು ಹಾಗೂ ದೂರದರ್ಶನ ಮಾಧ್ಯಮಗಳವರೆಗೆ ವಿಸ್ತರಿಸಿತು. ವರದಿಗಾರ, ಸಂಪಾದಕ ಮತ್ತು ಹಿರಿಯ ಪತ್ರಕರ್ತರಾಗಿ ವಿವಿಧ ಹಂತಗಳಲ್ಲಿ ಕಾರ್ಯನಿರ್ವಹಿಸಿದ ಅವರು, ಸತ್ಯ, ನಿಷ್ಪಕ್ಷಪಾತತೆ ಮತ್ತು ಜನಪರ ನಿಲುವಿನಿಂದ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.

ಸಮಾಜದ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳುವುದು, ಆಡಳಿತದ ವೈಫಲ್ಯಗಳನ್ನು ಪ್ರಶ್ನಿಸುವುದು ಮತ್ತು ಜನರ ಪರವಾಗಿ ಧ್ವನಿ ಎತ್ತುವುದು ಅವರ ವೃತ್ತಿ ಜೀವನದ ಧ್ಯೇಯವಾಗಿತ್ತು. ಈ ಕಾರಣದಿಂದಲೇ ಅವರ ಲೇಖನಗಳು ಕೇವಲ ಸುದ್ದಿಗಳಾಗಿರದೆ, ಜನರ ಆಶಯಗಳ ಪ್ರತಿಬಿಂಬವಾಗಿ ಗುರುತಿಸಿಕೊಂಡಿವೆ.

ಸ್ನಾತಕೋತ್ತರ ಪದವಿ, ಬಿ.ಎಡ್., ಎಲ್.ಎಲ್.ಬಿ. ಹಾಗೂ ಗೌರವ ಡಾಕ್ಟರೇಟ್ ಪದವಿಗಳನ್ನು ಪಡೆದಿರುವ ಡಾ. ಅನಂತ ಕಾರ್ಕಳ ಅವರು ಜ್ಞಾನ ಮತ್ತು ಅನುಭವದ ಅಪೂರ್ವ ಸಂಗಮವಾಗಿದ್ದಾರೆ. ನಿರಂತರ ಅಧ್ಯಯನ ಹಾಗೂ ವೃತ್ತಿ ಬದ್ಧತೆಯ ಮೂಲಕ ಪತ್ರಿಕೋದ್ಯಮದ ಹೊಸ ತಲೆಮಾರಿಗೆ ಪ್ರೇರಣೆಯಾಗಿದ್ದಾರೆ.

ಪತ್ರಕರ್ತರ ಸಂಘಟನೆಗಳಲ್ಲಿಯೂ ಅವರು ಮಹತ್ವದ ಜವಾಬ್ದಾರಿಗಳನ್ನು ನಿರ್ವಹಿಸಿದ್ದು, ಹೋರಾಟದ ಸಂದರ್ಭದಲ್ಲಿ ನಾಯಕನಾಗಿ, ಮಾರ್ಗದರ್ಶನದ ವೇಳೆ ಹಿರಿಯನಾಗಿ ಹಾಗೂ ಸಂಕಷ್ಟದ ಸಂದರ್ಭಗಳಲ್ಲಿ ಸಹೋದ್ಯೋಗಿಗಳ ಬೆನ್ನೆಲುಬಾಗಿ ನಿಂತಿದ್ದಾರೆ.

ಸರಳತೆ, ಸಜ್ಜನಿಕೆ, ಸತ್ಯನಿಷ್ಠೆ ಮತ್ತು ಮಾನವೀಯ ಮೌಲ್ಯಗಳು ಅವರ ವ್ಯಕ್ತಿತ್ವದ ಪ್ರಮುಖ ಆಧಾರಸ್ತಂಭಗಳಾಗಿವೆ. ಬದಲಾಗುತ್ತಿರುವ ಕಾಲಘಟ್ಟದಲ್ಲಿಯೂ ವೃತ್ತಿಯ ಮೌಲ್ಯಗಳನ್ನು ಉಳಿಸಿಕೊಂಡು ಪತ್ರಿಕೋದ್ಯಮದ ಗೌರವವನ್ನು ಹೆಚ್ಚಿಸಿದ ಅಪರೂಪದ ಪತ್ರಕರ್ತರ ಸಾಲಿನಲ್ಲಿ ಅವರು ಗುರುತಿಸಿಕೊಂಡಿದ್ದಾರೆ.

ಅರವತ್ತು ವರ್ಷಗಳು ಬದುಕಿನ ಒಂದು ಮೈಲಿಗಲ್ಲು ಮಾತ್ರ. ಅನುಭವ, ಚಿಂತನೆ, ಸಾಮಾಜಿಕ ಕಾಳಜಿ ಮತ್ತು ವೃತ್ತಿ ಬದ್ಧತೆಯಿಂದ ಸಮೃದ್ಧವಾಗಿರುವ ಅವರ ಬದುಕು ಇನ್ನಷ್ಟು ಅರ್ಥಪೂರ್ಣವಾಗಲಿ. ಅವರ ಮಾರ್ಗದರ್ಶನ, ಮೌಲ್ಯಗಳು ಮತ್ತು ಲೇಖನಿಯ ಬೆಳಕು ಮುಂದಿನ ಪೀಳಿಗೆಯ ಪತ್ರಕರ್ತರಿಗೆ ಸದಾ ಸ್ಫೂರ್ತಿಯಾಗಲಿ ಎಂಬುದು ಎಲ್ಲರ ಹಾರೈಕೆಯಾಗಿದೆ.

– ಟಿ. ಎನ್. ಭಾಂಡಗೆ
ವಕೀಲರು, ಗದಗ

ಗೂಡ್ಸ್ ವಾಹನ-ಆಟೋ ಮುಖಾಮುಖಿ ಡಿಕ್ಕಿ: ಐವರಿಗೆ ಗಂಭೀರ ಗಾಯ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಗದಗ-ಲಕ್ಷ್ಮೇಶ್ವರ ರಾಜ್ಯ ಹೆದ್ದಾರಿಯ ಗೊಜನೂರ ಸಮೀಪ ಆಟೋರಿಕ್ಷಾ ಹಾಗೂ ಗೂಡ್ಸ್ ವಾಹನ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ, ಆಟೋರಿಕ್ಷಾದಲ್ಲಿದ್ದ ಇಬ್ಬರು ಚಿಕ್ಕ ಮಕ್ಕಳು ಸೇರಿದಂತೆ ಐವರು ಗಂಭೀರವಾಗಿ ಗಾಯಗೊಂಡ ಘಟನೆ ಗುರುವಾರ ಸಂಜೆ ನಡೆದಿದೆ.

ಗದಗ ಮೂಲದ ಒಂದೇ ಕುಟುಂಬದ ಸದಸ್ಯರು ಲಕ್ಷ್ಮೇಶ್ವರದ ದೂದಪೀರಾ ದರ್ಗಾಕ್ಕೆ ಆಟೋರಿಕ್ಷಾದಲ್ಲಿ ತೆರಳುತ್ತಿದ್ದ ವೇಳೆ, ಲಕ್ಷ್ಮೇಶ್ವರದಿಂದ ಗದಗದತ್ತ ಬರುತ್ತಿದ್ದ ಗೂಡ್ಸ್ ವಾಹನ ಎದುರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಆಟೋರಿಕ್ಷಾ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಅದರಲ್ಲಿದ್ದ ಪ್ರಯಾಣಿಕರು ರಸ್ತೆಗೆ ಚದುರಿ ಬಿದ್ದಿದ್ದಾರೆ.

ಅಪಘಾತದಲ್ಲಿ ಅಬೂಬಕರ್ ಹುಬ್ಬಳ್ಳಿ (30), ಮುಸ್ತಾಕ್ ಹುಬ್ಬಳ್ಳಿ (25), ಆಯೇಷಾ ಹುಬ್ಬಳ್ಳಿ (30), ಬಿಸ್ಮಿಲ್ಲಾ ಹುಬ್ಬಳ್ಳಿ (48) ಹಾಗೂ ಮೂರು ವರ್ಷದ ಮಗು ಅಬೂಬಕರ್ ಹುಬ್ಬಳ್ಳಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಮತ್ತೊಬ್ಬರಾದ ದಿಲ್‌ಶ್ಯಾದ್ ಕುನ್ನುಟಗಿ (64) ಗಾಯಗೊಂಡಿದ್ದು, ಎರಡು ವರ್ಷದ ನೂರೈಸ್ ಎಂಬ ಮಗು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದೆ.

ಗಾಯಾಳುಗಳ ತಲೆ, ಮುಖ, ಕಣ್ಣು, ಕೈ-ಕಾಲು ಸೇರಿದಂತೆ ದೇಹದ ವಿವಿಧ ಭಾಗಗಳಿಗೆ ತೀವ್ರ ಪೆಟ್ಟಾಗಿದ್ದು, ಸ್ಥಳೀಯರು ತಕ್ಷಣವೇ ಅವರನ್ನು ಲಕ್ಷ್ಮೇಶ್ವರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರು. ಬಳಿಕ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಗದಗ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಯಿತು.

ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮಗುವನ್ನು ಸ್ಥಳದಲ್ಲಿದ್ದ ಸಾರ್ವಜನಿಕರೊಬ್ಬರು ತಮ್ಮ ವಾಹನದಲ್ಲಿ ಆಸ್ಪತ್ರೆಗೆ ಕರೆದೊಯ್ದು ಮಾನವೀಯತೆ ಮೆರೆದರು.

ಅಪಘಾತದ ಬಳಿಕ ಗೂಡ್ಸ್ ವಾಹನ ಚಾಲಕ ಸ್ಥಳದಿಂದ ಪರಾರಿಯಾಗಿದ್ದು, ಈ ಸಂಬಂಧ ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಹೋರಾಟದ ಹಾದಿಯ ಹಿರಿಯ ಪತ್ರಕರ್ತ

ದಗ ಜಿಲ್ಲೆಯ ಪತ್ರಿಕೋದ್ಯಮಕ್ಕೆ ತನ್ನದೇ ಆದ ಸಮೃದ್ಧ ಇತಿಹಾಸವಿದೆ. ತಮ್ಮ ಲೇಖನಿ, ನಿಷ್ಪಕ್ಷಪಾತ ನಿಲುವು ಮತ್ತು ಸಮಾಜಮುಖಿ ವರದಿಗಳ ಮೂಲಕ ರಾಜ್ಯದ ಗಮನ ಸೆಳೆದ ಹಲವಾರು ಪತ್ರಕರ್ತರನ್ನು ಈ ನೆಲ ನೀಡಿದೆ. ಅಂತಹ ಹಿರಿಯ ಪತ್ರಕರ್ತರ ಸಾಲಿನಲ್ಲಿ ಆತ್ಮೀಯ ಮಿತ್ರ ಡಾ. ಅನಂತ್ ಎಸ್. ಕಾರ್ಕಳ ಅವರ ಹೆಸರು ಗೌರವದಿಂದ ಉಲ್ಲೇಖಿಸಲೇಬೇಕು.

ಸುಮಾರು ಮೂರು ದಶಕಗಳಿಗೂ ಹೆಚ್ಚು ಕಾಲ ಗದಗ ಜಿಲ್ಲೆಯ ಪತ್ರಿಕೋದ್ಯಮದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಅನಂತ್, ಸ್ಥಳೀಯ ಹಾಗೂ ಪ್ರಾದೇಶಿಕ ಪತ್ರಿಕೆಗಳ ವರದಿಗಾರಿಕೆಯಿಂದ ಆರಂಭಿಸಿ, ರಾಜ್ಯಮಟ್ಟದ ಪತ್ರಿಕೆಗಳ ವರದಿಗಾರರಾಗಿ ಸೇವೆ ಸಲ್ಲಿಸಿದರು. ನಂತರ ತಮ್ಮದೇ ಆದ ‘ಇದು ಸತ್ಯ’ ಹಾಗೂ ‘ಅನಂತ ಲೇಖನಿ’ ಪತ್ರಿಕೆಗಳನ್ನು ಆರಂಭಿಸುವ ಮೂಲಕ ಪತ್ರಿಕೋದ್ಯಮದಲ್ಲಿ ಹೊಸ ಪ್ರಯೋಗಗಳಿಗೆ ಕೈಹಾಕಿದರು.

ಅವರ ಬದುಕಿನ ಪಯಣ ಹೂವಿನ ಹಾಸಿಗೆಯಾಗಿರಲಿಲ್ಲ. ಅನೇಕ ಸವಾಲುಗಳು, ಸೋಲುಗಳು ಮತ್ತು ಅವಮಾನಗಳನ್ನು ಮೀರಿ ಇಂದು ಅವರು ತಲುಪಿರುವ ಸ್ಥಾನ, ಅವರ ಹೋರಾಟದ ಮನೋಭಾವಕ್ಕೆ ಸಾಕ್ಷಿಯಾಗಿದೆ.

ಮುದ್ರಣ ಮಾಧ್ಯಮದ ಜೊತೆಗೆ ದೃಶ್ಯ ಮಾಧ್ಯಮದಲ್ಲಿಯೂ ತಮ್ಮ ಛಾಪು ಮೂಡಿಸಿದ ಅವರು, ಸಿ.ಟಿ. ಟಿವಿ ಸಂಪಾದಕರಾಗಿ ಗದಗ ಕೇಂದ್ರವಾಗಿಸಿಕೊಂಡು ಹಲವು ಜನಪ್ರಿಯ ಕಾರ್ಯಕ್ರಮಗಳನ್ನು ರೂಪಿಸಿದರು. ಅವರ ಬರಹ ಹೇಗೆ ನೇರ, ಹರಿತ ಮತ್ತು ವಸ್ತುನಿಷ್ಠವೋ, ಅವರ ಮಾತು ಕೂಡ ಅಷ್ಟೇ ಪ್ರಭಾವಶಾಲಿ.

ಕಳೆದ ಮೂರು ದಶಕಗಳಿಂದ ಅವರನ್ನು ಹತ್ತಿರದಿಂದ ನೋಡಿದ ಸ್ನೇಹಿತನಾಗಿ ಹೇಳುವುದಾದರೆ, ಅನಂತ್ ಅವರ ಸರಳತೆ, ಸ್ನೇಹಪರ ಸ್ವಭಾವ, ಹಾಸ್ಯಪ್ರಜ್ಞೆ ಮತ್ತು ಚಿಂತನಾ ಮನೋಭಾವ ಇಂದಿಗೂ ಬದಲಾಗಿಲ್ಲ. ಕಾಲ ಬದಲಾದರೂ ಸ್ನೇಹವನ್ನು ಉಳಿಸಿಕೊಳ್ಳುವ ಗುಣ ಅವರ ವ್ಯಕ್ತಿತ್ವದ ವಿಶೇಷತೆ.

ಪತ್ರಿಕೋದ್ಯಮದ ಜೊತೆಗೆ ಹಲವು ಕೃತಿಗಳನ್ನು ರಚಿಸಿರುವ ಅವರು, ಉತ್ತಮ ಲೇಖಕರೂ ಹೌದು. ಸಾರ್ವಜನಿಕ ವೇದಿಕೆಗಳಲ್ಲಿ ತಮ್ಮ ಮಾತಿನ ಮೂಲಕ ಜನಮನ ಗೆಲ್ಲುವ ಅಪರೂಪದ ವಾಗ್ಮಿಯೂ ಆಗಿದ್ದಾರೆ.

ಗದಗ ಜಿಲ್ಲೆಯ ಪತ್ರಕರ್ತರನ್ನು ಒಗ್ಗೂಡಿಸಿ ಪತ್ರಿಕಾ ಭವನ ನಿರ್ಮಾಣದಲ್ಲಿ ಅವರು ವಹಿಸಿದ ಪಾತ್ರ ಸದಾ ಸ್ಮರಣೀಯ. ಕೆಲವೊಮ್ಮೆ ನೇರ ಮಾತಿನಿಂದ ವಿವಾದಗಳಿಗೂ ಕಾರಣವಾದರೂ, ತಮ್ಮ ಹೃದಯವಂತಿಕೆ ಮತ್ತು ಆತ್ಮೀಯತೆಯಿಂದ ಎಲ್ಲರನ್ನೂ ಮತ್ತೆ ತನ್ನತ್ತ ಸೆಳೆಯುವ ಅಪರೂಪದ ಗುಣ ಅವರಲ್ಲಿದೆ.

ಡಿಜಿಟಲ್ ಯುಗದಲ್ಲೂ ಹಿಂದೆ ಬೀಳದೆ ‘ಆಸ್ಕ್ ನ್ಯೂಸ್’ ಯೂಟ್ಯೂಬ್ ವಾಹಿನಿಯ ಮೂಲಕ ಹೊಸ ಮಾಧ್ಯಮವನ್ನು ಯಶಸ್ವಿಯಾಗಿ ಅಳವಡಿಸಿಕೊಂಡಿರುವುದು ಅವರ ಕಾಲಾನುಗುಣ ಚಿಂತನೆಗೆ ಸಾಕ್ಷಿಯಾಗಿದೆ. ಇಂದಿನ ಯುವ ಪತ್ರಕರ್ತರಿಗೆ ಅವರ ಅನುಭವ ಮತ್ತು ಮಾರ್ಗದರ್ಶನ ಅತ್ಯಂತ ಅಗತ್ಯವಾಗಿದೆ.

ಕೈಲಾಸ ವರಸಿದ್ಧಿ ವಿನಾಯಕನ ಪರಮಭಕ್ತರಾಗಿರುವ ಅನಂತ್, ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳ ಸಂಘಟನೆಯಲ್ಲೂ ಸಕ್ರಿಯರಾಗಿದ್ದಾರೆ.

ಜುಲೈ 31, 2026ರಂದು 60ನೇ ವಸಂತಕ್ಕೆ ಕಾಲಿಡುತ್ತಿರುವ ಡಾ. ಅನಂತ್ ಎಸ್. ಕಾರ್ಕಳ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ಉತ್ತಮ ಆರೋಗ್ಯ, ದೀರ್ಘಾಯುಷ್ಯ ಮತ್ತು ಇನ್ನಷ್ಟು ಸಮಾಜಮುಖಿ ಸೇವೆ ಸಲ್ಲಿಸುವ ಶಕ್ತಿ ದೇವರು ಕರುಣಿಸಲಿ ಎಂಬುದು ನನ್ನ ಹಾರೈಕೆ.

ಆನಂದ್ ಜಿ. ಸಾಲಿಗ್ರಾಮ
ಹಿರಿಯ ಪತ್ರಕರ್ತರು, ಗದಗ

ಸ್ತ್ರೀ ಸಂವೇದನೆಯ ಶಕ್ತಿ: ಡಾ. ನಾಗಲಕ್ಷ್ಮಿ ಚೌದರಿ

“ಮನೆ ಮನೆಗಳಲ್ಲಿ ದೀಪ ಬೆಳಗಿದಾಕೆ, ನಿನಗೆ ಬೇರೆ ಹೆಸರು ಬೇಕೆ… ಸ್ತ್ರೀ ಎಂದರೆ ಅಷ್ಟೇ ಸಾಕೆ…” ಎಂಬ ಕವಿವಾಣಿಯು ಮಹಿಳೆಯ ಶಕ್ತಿ, ತ್ಯಾಗ ಮತ್ತು ಸಂವೇದನೆಯ ಪ್ರತೀಕವಾಗಿದೆ. ಈ ಸಾಲುಗಳನ್ನು ನೆನಪಿಸಿಕೊಂಡಾಗ ಸಹಜವಾಗಿಯೇ ಮನಸ್ಸಿಗೆ ಬರುವ ವ್ಯಕ್ತಿತ್ವವೆಂದರೆ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌದರಿ.

ಇಂದಿನ ಆಧುನಿಕ ಸಮಾಜದಲ್ಲಿಯೂ ಮಹಿಳೆಯರು ಅನೇಕ ಸಾಮಾಜಿಕ, ಆರ್ಥಿಕ ಹಾಗೂ ಮಾನಸಿಕ ಸವಾಲುಗಳನ್ನು ಎದುರಿಸುತ್ತಿದ್ದಾರೆ. ಶಿಕ್ಷಣ, ಉದ್ಯೋಗ ಮತ್ತು ಸಾರ್ವಜನಿಕ ಜೀವನದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಹೆಚ್ಚಾದರೂ, ದೌರ್ಜನ್ಯ, ಕಿರುಕುಳ, ಶೋಷಣೆ ಮತ್ತು ಅಸಮಾನತೆ ಇನ್ನೂ ಸಂಪೂರ್ಣವಾಗಿ ನಿವಾರಣೆಯಾಗಿಲ್ಲ. ಇಂತಹ ಸಂದರ್ಭದಲ್ಲಿ ಮಹಿಳೆಯರ ಧ್ವನಿಯಾಗಿ, ಅವರ ಹಕ್ಕುಗಳ ರಕ್ಷಕಿಯಾಗಿ ಡಾ. ನಾಗಲಕ್ಷ್ಮಿ ಚೌದರಿ ಅವರು ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಮಹಿಳಾ ಆಯೋಗದ ಕಾರ್ಯವು ಕೇವಲ ದೂರುಗಳನ್ನು ಸ್ವೀಕರಿಸುವುದಕ್ಕೆ ಸೀಮಿತವಾಗಿಲ್ಲ. ಕೌಟುಂಬಿಕ ಹಿಂಸೆ, ಲೈಂಗಿಕ ಕಿರುಕುಳ, ಆರ್ಥಿಕ ಶೋಷಣೆ, ಸಾಮಾಜಿಕ ಅನ್ಯಾಯ ಹಾಗೂ ಮಹಿಳೆಯರ ಮೇಲಿನ ವಿವಿಧ ರೀತಿಯ ದೌರ್ಜನ್ಯಗಳಿಗೆ ಸ್ಪಂದಿಸಿ, ಕಾನೂನುಬದ್ಧ ಹಾಗೂ ಮಾನವೀಯ ನೆಲೆಯಲ್ಲಿ ಪರಿಹಾರ ಕಲ್ಪಿಸುವ ಜವಾಬ್ದಾರಿಯನ್ನು ಆಯೋಗ ಯಶಸ್ವಿಯಾಗಿ ನಿರ್ವಹಿಸುತ್ತಿದೆ. ಈ ಕಾರ್ಯದಲ್ಲಿ ಡಾ. ನಾಗಲಕ್ಷ್ಮಿ ಚೌದರಿ ಅವರ ಸಂವೇದನಾಶೀಲತೆ ವಿಶೇಷವಾಗಿ ಗಮನ ಸೆಳೆಯುತ್ತದೆ.

ಅವರು ಮಹಿಳೆಯರ ಸಮಸ್ಯೆಗಳನ್ನು ಕೇವಲ ಕಡತಗಳಾಗಿ ನೋಡುವುದಿಲ್ಲ. ನೋವಿನ ಹಿಂದಿರುವ ಬದುಕನ್ನು ಅರ್ಥಮಾಡಿಕೊಂಡು ಸ್ಪಂದಿಸುವ ಮಾನವೀಯ ಗುಣವೇ ಅವರ ನಾಯಕತ್ವದ ದೊಡ್ಡ ಶಕ್ತಿಯಾಗಿದೆ.

ನೊಂದ ಮಹಿಳೆಯರಿಗೆ ಧೈರ್ಯ ತುಂಬುವುದು, ತುರ್ತು ನೆರವು ಕಲ್ಪಿಸುವುದು ಹಾಗೂ ನ್ಯಾಯ ದೊರಕಿಸಲು ಶ್ರಮಿಸುವುದು ಅವರ ಕಾರ್ಯವೈಖರಿಯ ಪ್ರಮುಖ ಅಂಶವಾಗಿದೆ.

ಗ್ರಾಮೀಣ ಮಹಿಳೆಯರು, ಕಾರ್ಮಿಕ ಮಹಿಳೆಯರು, ವಿದ್ಯಾರ್ಥಿನಿಯರು ಹಾಗೂ ವಿವಿಧ ಸಾಮಾಜಿಕ ವರ್ಗಗಳ ಮಹಿಳೆಯರೊಂದಿಗೆ ನೇರ ಸಂವಾದ ನಡೆಸುವ ಮೂಲಕ ಅವರ ನೈಜ ಸಮಸ್ಯೆಗಳನ್ನು ಅರಿಯುವ ಪ್ರಯತ್ನವನ್ನು ಅವರು ನಿರಂತರವಾಗಿ ನಡೆಸುತ್ತಿದ್ದಾರೆ. ಮಹಿಳಾ ಸಬಲೀಕರಣಕ್ಕೆ ಸರ್ಕಾರದ ವಿವಿಧ ಯೋಜನೆಗಳು ಫಲಾನುಭವಿಗಳಿಗೆ ತಲುಪುವಂತೆ ಮಾಡುವಲ್ಲಿಯೂ ಅವರು ವಿಶೇಷ ಆಸಕ್ತಿ ತೋರಿದ್ದಾರೆ.

ಇಂದಿನ ಡಿಜಿಟಲ್ ಯುಗದಲ್ಲಿ ಸೈಬರ್ ಅಪರಾಧ, ಆನ್‌ಲೈನ್ ಕಿರುಕುಳ ಹಾಗೂ ಸಾಮಾಜಿಕ ಜಾಲತಾಣಗಳ ದುರುಪಯೋಗ ಮಹಿಳೆಯರಿಗೆ ಹೊಸ ಸವಾಲುಗಳಾಗಿವೆ. ಈ ಹಿನ್ನೆಲೆಯಲ್ಲಿ ಮಹಿಳೆಯರಲ್ಲಿ ಕಾನೂನು ಅರಿವು, ಡಿಜಿಟಲ್ ಸುರಕ್ಷತೆ ಮತ್ತು ಆತ್ಮವಿಶ್ವಾಸ ಬೆಳೆಸುವ ಜಾಗೃತಿ ಕಾರ್ಯಕ್ರಮಗಳಿಗೆ ಮಹಿಳಾ ಆಯೋಗ ಆದ್ಯತೆ ನೀಡುತ್ತಿರುವುದು ಕಾಲದ ಅಗತ್ಯವಾಗಿದೆ.

ಮಹಿಳಾ ಸಬಲೀಕರಣವೆಂದರೆ ಕೇವಲ ಅವಕಾಶ ಕಲ್ಪಿಸುವುದಲ್ಲ; ಅವರ ಸಾಮರ್ಥ್ಯವನ್ನು ಗುರುತಿಸಿ ನಾಯಕತ್ವದ ಸ್ಥಾನಕ್ಕೆ ತರುವುದು. ಮಹಿಳೆಯರ ಶಿಕ್ಷಣ, ಆರೋಗ್ಯ, ಉದ್ಯೋಗ, ಸ್ವಾಭಿಮಾನ ಮತ್ತು ಸುರಕ್ಷತೆಗೆ ನೀಡುವ ಆದ್ಯತೆಯೇ ಸಮಾಜದ ಭವಿಷ್ಯವನ್ನು ರೂಪಿಸುತ್ತದೆ. ಮಹಿಳೆಯರ ಸ್ಥಾನಮಾನ ಬಲಗೊಂಡಷ್ಟೂ ಕುಟುಂಬ, ಸಮಾಜ ಮತ್ತು ರಾಷ್ಟ್ರದ ಪ್ರಗತಿಯೂ ದೃಢವಾಗುತ್ತದೆ.

“ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ” ಎಂಬ ಮಾತಿನಂತೆ, ನಕಾರಾತ್ಮಕ ಟೀಕೆಗಳಿಗೆ ಮಣಿಯದೆ ಸಮಾಜಮುಖಿ ಕಾರ್ಯಗಳ ಮೂಲಕ ಜನಮನದಲ್ಲಿ ಸ್ಥಾನ ಪಡೆದಿರುವ ನಾಯಕತ್ವ ಡಾ. ನಾಗಲಕ್ಷ್ಮಿ ಚೌದರಿಯವರದು. ಅವರ ಕ್ರಿಯಾಶೀಲತೆ, ಬದ್ಧತೆ ಹಾಗೂ ಮಾತೃ ಹೃದಯ ಮಹಿಳೆಯರಲ್ಲಿ ಹೊಸ ಆಶಾಭಾವನೆ ಮೂಡಿಸಿದೆ.

ಜುಲೈ 31 ಮತ್ತು ಆಗಸ್ಟ್ 1ರಂದು ಗದಗ ಜಿಲ್ಲೆಗೆ ಅವರು ಆಗಮಿಸಿದ್ದು ಜಿಲ್ಲೆಯ ಮಹಿಳೆಯರಿಗೆ ಮತ್ತಷ್ಟು ಆತ್ಮವಿಶ್ವಾಸ ತುಂಬುವ ಸಂದರ್ಭವಾಗಿದೆ. ಗದಗ ಜಿಲ್ಲೆಯ ಸಮಸ್ತ ಮಹಿಳಾ ಬಳಗದ ಪರವಾಗಿ ಅವರಿಗೆ ಆತ್ಮೀಯ ಸ್ವಾಗತ ಹಾಗೂ ಹೃತ್ಪೂರ್ವಕ ಅಭಿನಂದನೆಗಳು.

Oplus_16908288

– ಶ್ರೀಮತಿ ಸುಧಾ ಶರಣರೆಡ್ಡಿ ಹುಚ್ಚಣ್ಣವರ
ಜಿಲ್ಲಾಧ್ಯಕ್ಷರು
ಗದಗ ಜಿಲ್ಲಾ ಕದಳಿ ಮಹಿಳಾ ವೇದಿಕೆ

ಶತಮಾನದ ಸಂಭ್ರಮದಲ್ಲಿ ಅರಳಿದ ಬಾಲ್ಯದ ನೆನಪುಗಳು…

ಶಾಲೆಯ ಶತಮಾನೋತ್ಸವದ ಅಂಗವಾಗಿ ಎರಡು ದಿನಗಳ ವಿಶೇಷ ಸಂಭ್ರಮ, ಎರಡು ದಶಕಗಳ ಬಳಿಕ ಮತ್ತೆ ಒಂದಾಗಲಿರುವ ಸಹಪಾಠಿಗಳು, ಭಾವುಕರಾಗಲಿರುವ ಶಿಕ್ಷಕರು-ಹಳೆ ವಿದ್ಯಾರ್ಥಿಗಳು

ಕೆಲವು ಫೋಟೋಗಳು ಕೇವಲ ಚಿತ್ರಗಳಲ್ಲ, ಬದುಕಿನ ಅಮೂಲ್ಯ ನೆನಪುಗಳಾಗಿರುತ್ತವೆ. 2000-2001ನೇ ಸಾಲಿನ 7ನೇ ತರಗತಿಯ ವಿದ್ಯಾರ್ಥಿಗಳ ಈ ಅಪರೂಪದ ಗುಂಪುಚಿತ್ರವೂ ಅಂತಹದ್ದೇ ಒಂದು ನೆನಪಿನ ಭಂಡಾರ. ಮುಗ್ಧ ನಗು, ಸರಳ ಶಾಲಾ ಸಮವಸ್ತ್ರ, ಸ್ನೇಹದ ಆತ್ಮೀಯತೆ ಮತ್ತು ಕನಸುಗಳಿಂದ ತುಂಬಿದ ಬಾಲ್ಯ—ಇವೆಲ್ಲವೂ ಇಂದಿಗೂ ಮನಸ್ಸನ್ನು ಭಾವುಕರನ್ನಾಗಿಸುತ್ತವೆ.

ಸುಮಾರು ಇಪ್ಪತ್ತೈದು ವರ್ಷಗಳ ಬಳಿಕ, ಶಾಲೆಯ ಶತಮಾನೋತ್ಸವದ ಸಂಭ್ರಮದ ಅಂಗವಾಗಿ ಆಗಸ್ಟ್‌ 1 ಮತ್ತು 2ರಂದು ನಡೆಯಲಿರುವ ವಿಶೇಷ ಕಾರ್ಯಕ್ರಮದಲ್ಲಿ ಅಂದಿನ ಸಹಪಾಠಿಗಳು ಮತ್ತೆ ಒಂದೇ ವೇದಿಕೆಯಲ್ಲಿ ಸೇರುತ್ತಿದ್ದಾರೆ. ಇದು ಕೇವಲ ಹಳೆಯ ವಿದ್ಯಾರ್ಥಿಗಳ ಭೇಟಿ ಮಾತ್ರವಲ್ಲ, ಬಾಲ್ಯದ ನೆನಪುಗಳನ್ನು ಮೆಲುಕು ಹಾಕುವ, ಸ್ನೇಹದ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುವ ಹಾಗೂ ತಮ್ಮನ್ನು ರೂಪಿಸಿದ ಶಾಲೆಗೆ ಕೃತಜ್ಞತೆ ಸಲ್ಲಿಸುವ ಅಪರೂಪದ ಕ್ಷಣವಾಗಿದೆ.

ಕಾಲದ ಹರಿವಿನಲ್ಲಿ ಪ್ರತಿಯೊಬ್ಬರೂ ತಮ್ಮ ತಮ್ಮ ಬದುಕಿನ ದಾರಿಯನ್ನು ಹಿಡಿದಿದ್ದಾರೆ. ಉದ್ಯೋಗ, ಕೃಷಿ, ವ್ಯಾಪಾರ, ಕುಟುಂಬದ ಜವಾಬ್ದಾರಿಗಳ ನಡುವೆ ಜೀವನ ಸಾಗಿದರೂ, ಶಾಲೆಯ ಮೇಲಿನ ಅಭಿಮಾನ ಮತ್ತು ಸಹಪಾಠಿಗಳ ಮೇಲಿನ ಪ್ರೀತಿ ಮಾತ್ರ ಎಂದಿಗೂ ಮಸುಕಾಗಿಲ್ಲ. ಈಗ ಶತಮಾನೋತ್ಸವದ ನೆಪದಲ್ಲಿ ಎಲ್ಲರೂ ಮತ್ತೆ ಒಂದಾಗುತ್ತಿರುವುದು ಅವರ ಪಾಲಿಗೆ ಜೀವನದ ಅತ್ಯಂತ ಸಂತಸದ ಕ್ಷಣವಾಗಿದೆ.

ಅಂದಿನ ತರಗತಿ ಕೊಠಡಿಗಳು, ಕಪ್ಪು ಹಲಗೆ, ಶಾಲೆಯ ಗಂಟೆಯ ಶಬ್ದ, ಮಧ್ಯಾಹ್ನದ ಆಟ, ಶಿಕ್ಷಕರ ಪ್ರೀತಿ-ಬೈಗುಳ, ಸ್ನೇಹಿತರೊಂದಿಗೆ ಹಂಚಿಕೊಂಡ ಊಟ, ಪರೀಕ್ಷೆಯ ಆತಂಕ, ಫಲಿತಾಂಶದ ಸಂಭ್ರಮ—ಇವೆಲ್ಲವೂ ಈ ಎರಡು ದಿನಗಳ ಸಂಭ್ರಮದಲ್ಲಿ ಮತ್ತೊಮ್ಮೆ ಜೀವಂತವಾಗಲಿವೆ. ವರ್ಷಗಳ ಬಳಿಕ ಶಿಕ್ಷಕರನ್ನು ಭೇಟಿಯಾಗಿ ಅವರ ಆಶೀರ್ವಾದ ಪಡೆಯುವುದು ಹಾಗೂ ಹಳೆಯ ನೆನಪುಗಳನ್ನು ಹಂಚಿಕೊಳ್ಳುವುದು ಎಲ್ಲರಿಗೂ ಮರೆಯಲಾಗದ ಅನುಭವವಾಗಲಿದೆ.

ಈ ಐತಿಹಾಸಿಕ ಪುನರ್ಮಿಲನದಲ್ಲಿ ಭಾಗವಹಿಸುತ್ತಿರುವ 2000-2001ರ 7ನೇ ತರಗತಿ ವಿದ್ಯಾರ್ಥಿಗಳು: ಶರಣಪ್ಪ ನಾಗೇಂದ್ರಗಡ, ವಿ.ಎನ್. ರೊಟ್ಟಿ, ಶರಣಪ್ಪ ಮುದೇನೂರ್, ಉಮೇಶ್ ಆಡಿನ, ಉಮೇಶ್ ಅಂಗಡಿ, ಭೀಮಪ್ಪ ಬಾರಕೆರ್, ವೀರೇಶ್ ಬೂದಿಹಾಳ್, ಗೀತಾ ಜೇನುಬೇಟಿಗಾರ್, ರೂಪಾ ಜೋಷಿ, ಶಾವು, ಈರಮ್ಮ ಜಾಲಿಹಾಳ್, ಶೈಲಾ ನಗರಹಾಳ್, ರತ್ನ ಬಡಿಗೇರ್, ಮಾನವ್ವ ಕಮ್ಮಾರ್, ಶರಣಪ್ಪ ಹಂಡಿ ಹಾಗೂ ಇನ್ನಿತರ ಸಹಪಾಠಿಗಳು.

ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯರಾದ ಶಿವಾನಂದಯ್ಯ ಮಠದ, ಅಶೋಕ್ ಜಿಗಳೂರು, ಶರಣಪ್ಪ ಕುರಿ, ಪರಶುರಾಮ್ ಹಂಡಿ, ಹುಲ್ಲಪ್ಪ ಹರಿಹರ ಹಾಗೂ ನಿಂಗಪ್ಪ ಹಂಡಿ ಸೇರಿದಂತೆ ಗ್ರಾಮದ ಗುರು-ಹಿರಿಯರು ಹಾಗೂ ಹಳೆ ವಿದ್ಯಾರ್ಥಿಗಳು ಭಾಗವಹಿಸಿ ಶತಮಾನೋತ್ಸವದ ಸಂಭ್ರಮಕ್ಕೆ ಮೆರುಗು ತರಲಿದ್ದಾರೆ.

ಒಬ್ಬ ವ್ಯಕ್ತಿಯ ಬದುಕಿನ ಭದ್ರ ಅಡಿಪಾಯವನ್ನು ಹಾಕುವುದು ಶಾಲೆ. ಅಕ್ಷರ ಜ್ಞಾನ, ಸಂಸ್ಕಾರ, ಶಿಸ್ತು, ಸ್ನೇಹ ಮತ್ತು ಮಾನವೀಯತೆಯ ಮೌಲ್ಯಗಳನ್ನು ಕಲಿಸಿದ ಈ ಶಾಲೆಗೆ ಕೃತಜ್ಞತೆ ಸಲ್ಲಿಸುವ ಸುವರ್ಣ ಅವಕಾಶವೇ ಈ ಶತಮಾನೋತ್ಸವ. ಆಗಸ್ಟ್‌ 1 ಮತ್ತು 2ರಂದು ನಡೆಯಲಿರುವ ಈ ಐತಿಹಾಸಿಕ ಸಮಾರಂಭವು ಕೇವಲ ಹಳೆಯ ವಿದ್ಯಾರ್ಥಿಗಳ ಪುನರ್ಮಿಲನವಲ್ಲ, ಮುಂದಿನ ಪೀಳಿಗೆಗೆ ಶಾಲೆಯ ಪರಂಪರೆ, ಮೌಲ್ಯಗಳು ಹಾಗೂ ಸ್ನೇಹದ ಮಹತ್ವವನ್ನು ಸಾರುವ ಸ್ಮರಣೀಯ ಕ್ಷಣವಾಗಲಿದೆ.

ಬಾಲ್ಯದ ನೆನಪುಗಳು ಎಂದಿಗೂ ಹಸಿರಾಗಿರುತ್ತವೆ. ಆ ನೆನಪುಗಳನ್ನು ಮತ್ತೊಮ್ಮೆ ಜೀವಂತಗೊಳಿಸುತ್ತಿರುವ ಈ ಶತಮಾನೋತ್ಸವವು ಎಲ್ಲರ ಬದುಕಿನ ಸುವರ್ಣ ಅಧ್ಯಾಯವಾಗಿ ಶಾಶ್ವತವಾಗಿ ಉಳಿಯಲಿ ಎಂಬ ಆಶಯದೊಂದಿಗೆ 2000-2001ರ ತಂಡ ಸಂಭ್ರಮದ ಕ್ಷಣಗಳನ್ನು ಎದುರು ನೋಡುತ್ತಿದೆ.

ಅನ್ನ ಸುವಿಧಾ’ ಯೋಜನೆ ಹಿರಿಯರ ಘನತೆಯ ಸಂಕೇತ

0

ವಿಜಯಸಾಕ್ಷಿ ಸುದ್ದಿ, ಗದಗ: 75 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಮನೆ ಬಾಗಿಲಿಗೆ ಪಡಿತರ ತಲುಪಿಸುವ ‘ಅನ್ನ ಸುವಿಧಾ’ ಯೋಜನೆ ಹಿರಿಯರ ಘನತೆಯನ್ನು ಕಾಪಾಡುವ ಜನಪರ ಕಾರ್ಯಕ್ರಮವಾಗಿದ್ದು, ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದೆ ಎಂದು ಗದಗ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಅಶೋಕ ಮಂದಾಲಿ ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ರಾಜ್ಯದಲ್ಲಿ 75 ವರ್ಷ ಮೇಲ್ಪಟ್ಟ 2.65 ಲಕ್ಷಕ್ಕೂ ಹೆಚ್ಚು ಹಿರಿಯ ನಾಗರಿಕರನ್ನು ಗುರುತಿಸಿ, ಅವರಿಗೆ ಯಾವುದೇ ಅಲೆದಾಟವಿಲ್ಲದೆ ಮನೆ ಬಾಗಿಲಿಗೆ ಪಡಿತರ ತಲುಪಿಸಲಾಗುತ್ತಿದೆ. ಅಸಹಾಯಕ ಹಿರಿಯರು ರೇಷನ್ ಅಂಗಡಿಗಳ ಮುಂದೆ ಸರತಿ ಸಾಲಿನಲ್ಲಿ ನಿಲ್ಲಬೇಕಾದ ಪರಿಸ್ಥಿತಿಯನ್ನು ತಪ್ಪಿಸುವುದೇ ಸರ್ಕಾರದ ಉದ್ದೇಶವಾಗಿದೆ ಎಂದು ಹೇಳಿದರು.

ಆಧಾರ್ ಹಾಗೂ ಮೊಬೈಲ್ ಸಂಖ್ಯೆಯನ್ನು ಜೋಡಿಸಿ ಡಿಜಿಟಲ್ ವ್ಯವಸ್ಥೆಯ ಮೂಲಕ ಯೋಜನೆ ಅನುಷ್ಠಾನಗೊಳಿಸಲಾಗಿದ್ದು, ಮನೆ ಬಾಗಿಲಿಗೆ ಪಡಿತರ ತಲುಪಿಸುವ ವಿತರಕರಿಗೆ ₹50 ಸೇವಾ ಶುಲ್ಕ ನಿಗದಿಪಡಿಸಲಾಗಿದೆ. ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಹಿರಿಯರಿಗೆ ದೊರೆಯುವ ಹಕ್ಕನ್ನು ಪರಿಣಾಮಕಾರಿಯಾಗಿ ತಲುಪಿಸಲಾಗುತ್ತಿದೆ ಎಂದು ತಿಳಿಸಿದರು.

ಪ್ರತಿ ತಿಂಗಳು 1ರಿಂದ 5ನೇ ತಾರೀಖಿನೊಳಗೆ ಪಡಿತರ ವಿತರಣೆ ಮಾಡಲಾಗುತ್ತಿದ್ದು, ‘ಅನ್ನ ಸುವಿಧಾ’ ಆ್ಯಪ್ ಮೂಲಕ ವಿತರಣೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲಾಗಿದೆ. 1967 ಸಹಾಯವಾಣಿ ಮೂಲಕ ಫಲಾನುಭವಿಗಳ ದೂರುಗಳಿಗೆ ತ್ವರಿತ ಸ್ಪಂದನೆ ನೀಡಲಾಗುತ್ತಿದೆ ಎಂದು ಹೇಳಿದರು.

ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿ ಅಕ್ರಮಗಳಿಗೆ ಅವಕಾಶ ನೀಡದಂತೆ ಇ-ಪೋಸ್ (e-PoS) ಯಂತ್ರಗಳ ಮೂಲಕ ಪಡಿತರ ವಿತರಣೆ ಕಡ್ಡಾಯಗೊಳಿಸಲಾಗಿದ್ದು, ದಾಸ್ತಾನು ಹಾಗೂ ಪೂರೈಕೆ ವ್ಯವಸ್ಥೆಯ ಮೇಲೂ ನಿರಂತರ ನಿಗಾ ವಹಿಸಲಾಗಿದೆ. ಅರ್ಹ ಫಲಾನುಭವಿಗಳಿಗೆ ಆಹಾರ ಧಾನ್ಯ ಸಮರ್ಪಕವಾಗಿ ತಲುಪುವಂತೆ ಸರ್ಕಾರ ಕ್ರಮ ಕೈಗೊಂಡಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

“ಮನೆ ಬಾಗಿಲಿಗೆ ಪಡಿತರ ತಲುಪಿಸುವ ‘ಅನ್ನ ಸುವಿಧಾ’ ಯೋಜನೆ ಕೇವಲ ಆಹಾರ ವಿತರಣೆಯಲ್ಲ, ಹಿರಿಯ ನಾಗರಿಕರ ಘನತೆ ಮತ್ತು ಹಕ್ಕುಗಳನ್ನು ಗೌರವಿಸುವ ಜನಪರ ಹೆಜ್ಜೆಯಾಗಿದೆ.”

– ಅಶೋಕ ಮಂದಾಲಿ, ಅಧ್ಯಕ್ಷರು, ಗದಗ ಜಿಲ್ಲಾ ಪ್ರಚಾರ ಸಮಿತಿ

ಪಿಎಸ್‌ಐ ಮಾರುತಿ ಜೋಗದಂಡಕರಗೆ ಸನ್ಮಾನ

0

ವಿಜಯಸಾಕ್ಷಿ ಸುದ್ದಿ, ಗದಗ: ಪ್ರತಿಷ್ಠಿತ ರಾಷ್ಟ್ರಪತಿ ಪದಕ ಹಾಗೂ ಡಿಜಿ–ಐಜಿಪಿ ಕಮೆಂಡೇಷನ್ ಡಿಸ್ಕ್ ಪ್ರಶಸ್ತಿಗೆ ಭಾಜನರಾಗಿರುವ ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಯ ಪಿಎಸ್‌ಐ ಮಾರುತಿ ಜೋಗದಂಡಕರ್ ಅವರನ್ನು ಗದಗಿನ ಸಾಮಾಜಿಕ ಸಂಸ್ಥೆಯಾದ ಅಮ್ಮ ಫೌಂಡೇಶನ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಇತ್ತೀಚೆಗೆ ಬೆಂಗಳೂರಿನ ಕೋರಮಂಗಲದ 3ನೇ ಪಡೆ ಕೆಎಸ್‌ಆರ್‌ಪಿ ಮೈದಾನದಲ್ಲಿ ನಡೆದ ರಾಜ್ಯಮಟ್ಟದ ಗೌರವ ಪ್ರದಾನ ಹಾಗೂ ಪಥಸಂಚಲನ ಸಮಾರಂಭದಲ್ಲಿ ರಾಜ್ಯ ಪೊಲೀಸ್ ಮಹಾನಿರ್ದೇಶಕರು ಮತ್ತು ಪೊಲೀಸ್ ಮಹಾನಿರೀಕ್ಷಕರಿಂದ (ಡಿಜಿ–ಐಜಿಪಿ) ಅವರಿಗೆ ಪ್ರತಿಷ್ಠಿತ ಕಮೆಂಡೇಷನ್ ಡಿಸ್ಕ್ ಪ್ರಶಸ್ತಿ ಪ್ರದಾನ ಮಾಡಲಾಗಿತ್ತು. ಇದಕ್ಕೂ ಮುನ್ನ ರಾಷ್ಟ್ರಪತಿ ಪದಕಕ್ಕೂ ಭಾಜನರಾಗಿದ್ದ ಅವರು ಗದಗ ಜಿಲ್ಲೆ ಹಾಗೂ ಜಿಲ್ಲಾ ಪೊಲೀಸ್ ಇಲಾಖೆಗೆ ಹೆಮ್ಮೆ ತಂದಿರುವ ಹಿನ್ನೆಲೆಯಲ್ಲಿ ಈ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಸನ್ಮಾನ ಕಾರ್ಯಕ್ರಮದಲ್ಲಿ ಅಮ್ಮ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷೆ ಲಲಿತಾ ಶರಣಪ್ಪ ಗೋಳಗೊಳಕಿ, ಗದಗ–ಬೆಟಗೇರಿ ನಗರಸಭೆಯ ನಾಮನಿರ್ದೇಶಿತ ಸದಸ್ಯ ಶರಣಪ್ಪ ಗೋಳಗೊಳಕಿ, ಆಶ್ರಯ ಸಮಿತಿ ನಾಮನಿರ್ದೇಶಿತ ಸದಸ್ಯ ಇಮಾಮ್ ಹುಸೇನ್ ರೋಣದ, ಜಾಕೀರಸಾಬ ಅಂಗಡಿ, ಚನ್ನಪ್ಪ ಹರದೊಳ್ಳಿ, ಭಾಷಾಸಾಬ ರೋಣದ, ಹನುಮಂತಪ್ಪ ಕೋಟೆಕಲ್ಲ, ಅನ್ವರಸಾಬ ದೋಟಿಹಾಳ, ಮುನ್ನಾಸಾಬ ಹೆಬಸೂರ, ಯಲ್ಲನಗೌಡ ಸೋಮನಕಟ್ಟಿ, ವಿನಯ್ ಮಂಜರಗಿ, ಸಯ್ಯದ್‌ಸಾಬ್ ತಹಸೀಲ್ದಾರ್, ಫಕ್ರುಸಾಬ್ ಬಡಿಗೇರ, ನಾಗರಾಜ ಹಿರೇಮನಿ ಪಾಟೀಲ್, ಪ್ರಭುಕುಮಾರ ಗೋಳಗೊಳಕಿ, ದೇವೇಂದ್ರ ಗಂಗಪ್ಪನವರ, ಬಸವರಾಜ ಮೈಲಪ್ಪನವರ, ಬಸವರಾಜ ಹೊಟ್ಟಿ ಸೇರಿದಂತೆ ವಾರ್ಡ್ ನಂ. 11ರ ಹಿರಿಯರು, ಹಮಾಲರ ಕಾಲೋನಿಯ ನಿವಾಸಿಗಳು, ಯುವಕರು ಹಾಗೂ ಗಣ್ಯರು ಉಪಸ್ಥಿತರಿದ್ದರು.

ಬರ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ಬೇಡ: ತುಳಸಿ ಮದ್ದಿನೇನಿ

0

ವಿಜಯಸಾಕ್ಷಿ ಸುದ್ದಿ, ಧಾರವಾಡ: ಬರಗಾಲದ ಪರಿಸ್ಥಿತಿಯಲ್ಲಿ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಎಲ್ಲ ಇಲಾಖೆಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಿ, ಜನರಿಗೆ ಗುಣಮಟ್ಟದ ಸೇವೆ ಒದಗಿಸಬೇಕು ಎಂದು ಉನ್ನತ ಶಿಕ್ಷಣ ಇಲಾಖೆಯ ಸರ್ಕಾರದ ಕಾರ್ಯದರ್ಶಿಗಳು ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ತುಳಸಿ ಮದ್ದಿನೇನಿ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (ಕೆಡಿಪಿ) ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಆರೋಗ್ಯ ಇಲಾಖೆಯ ಆರೋಗ್ಯ ತಪಾಸಣಾ ಶಿಬಿರಗಳು, ಅಂಗನವಾಡಿ ಮಕ್ಕಳ ಆರೋಗ್ಯ ತಪಾಸಣೆ, ಡೆಂಗ್ಯೂ ಹಾಗೂ ಮಲೇರಿಯಾ ನಿಯಂತ್ರಣ ಕ್ರಮಗಳ ಕುರಿತು ಪರಿಶೀಲನೆ ನಡೆಸಿದ ಅವರು, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಮನೆ-ಮನೆಗೆ ಭೇಟಿ ನೀಡಿ ಆರೋಗ್ಯ ತಪಾಸಣೆ ನಡೆಸಬೇಕು ಎಂದು ಸೂಚಿಸಿದರು.

ಗೃಹಲಕ್ಷ್ಮಿ ಸೇರಿದಂತೆ ವಿವಿಧ ಯೋಜನೆಗಳಲ್ಲಿ ಮೃತಪಟ್ಟ ಫಲಾನುಭವಿಗಳ ಮಾಹಿತಿಯನ್ನು ಪರಿಶೀಲಿಸಿ, ಅರ್ಹತೆ ಇಲ್ಲದವರ ಹೆಸರನ್ನು ಯೋಜನೆಯಿಂದ ಕೈಬಿಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಶಿಕ್ಷಣ ಕ್ಷೇತ್ರದಲ್ಲಿ ಜಿಲ್ಲೆಯು ರಾಜ್ಯದಲ್ಲೇ ಮುಂಚೂಣಿಯಲ್ಲಿರಬೇಕು ಎಂದು ಸೂಚಿಸಿದ ಅವರು, ಶಾಲೆಗಳಲ್ಲಿ ಎಐ (ಕೃತಕ ಬುದ್ಧಿಮತ್ತೆ) ಪಠ್ಯಕ್ರಮ, ವಿದ್ಯಾರ್ಥಿಗಳ ಹಾಜರಾತಿ, ಅತಿಥಿ ಉಪನ್ಯಾಸಕರ ನೇಮಕ ಹಾಗೂ ಕೌಶಲ್ಯಾಭಿವೃದ್ಧಿ ತರಬೇತಿ ಕುರಿತು ಮಾಹಿತಿ ಪಡೆದರು.

ಅಂಗವಿಕಲರಿಗೆ ಯುಡಿಐಡಿ ಕಾರ್ಡ್ ವಿತರಣೆ, ಸ್ವಯಂ ಉದ್ಯೋಗ ತರಬೇತಿ, ಪಡಿತರ ವಿತರಣೆ ಹಾಗೂ ಸರ್ಕಾರಿ ಅಧಿಕಾರಿಗಳು ಕರ್ತವ್ಯ ಆ್ಯಪ್ ಮೂಲಕ ಕಡ್ಡಾಯವಾಗಿ ಹಾಜರಾತಿ ದಾಖಲಿಸಬೇಕು. ನಿಯಮ ಪಾಲಿಸದ ಅಧಿಕಾರಿಗಳಿಗೆ ನೋಟಿಸ್ ನೀಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಸ್ನೇಹಲ್ ಆರ್. ಮಾಹಿತಿ ನೀಡಿ, ಜೂನ್ 1ರಿಂದ ಜುಲೈ 29ರವರೆಗೆ ಜಿಲ್ಲೆಯಲ್ಲಿ ವಾಡಿಕೆ 265.9 ಮಿ.ಮೀ. ಮಳೆಯ ಬದಲಿಗೆ 176.5 ಮಿ.ಮೀ. ಮಳೆಯಾಗಿದ್ದು, ಶೇ.34ರಷ್ಟು ಮಳೆ ಕೊರತೆ ದಾಖಲಾಗಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಕೃಷಿ ಬೆಳೆಯ 2.82 ಲಕ್ಷ ಹೆಕ್ಟೇರ್ ಗುರಿಯಲ್ಲಿ 2.71 ಲಕ್ಷ ಹೆಕ್ಟೇರ್ ಬಿತ್ತನೆಯಾಗಿದ್ದು, ಶೇ.95.89ರಷ್ಟು ಸಾಧನೆ ಕಂಡಿದೆ. ತೋಟಗಾರಿಕೆ ಬೆಳೆ 22,857 ಹೆಕ್ಟೇರ್ ಗುರಿಯಲ್ಲಿ 16,234 ಹೆಕ್ಟೇರ್ ಬಿತ್ತನೆಯಾಗಿದ್ದು, ಶೇ.71ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದರು.

ಬಿತ್ತನೆ ಬೀಜ ಹಾಗೂ ರಸಗೊಬ್ಬರಕ್ಕೆ ಯಾವುದೇ ಕೊರತೆಯಿಲ್ಲ. ಜಿಲ್ಲೆಯ 18 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, 21 ಖಾಸಗಿ ಕೊಳವೆಬಾವಿಗಳ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಜಾನುವಾರುಗಳಿಗೆ ಮುಂದಿನ 45 ವಾರಗಳಿಗೆ ಸಾಕಾಗುವಷ್ಟು ಮೇವು ಲಭ್ಯವಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ 7 ಮೇವು ಬ್ಯಾಂಕ್‌ಗಳನ್ನು ತೆರೆಯಲು ಸ್ಥಳ ಗುರುತಿಸಲಾಗಿದೆ ಎಂದು ಮಾಹಿತಿ ನೀಡಿದರು.

“ಬರಗಾಲದ ಸಂದರ್ಭದಲ್ಲಿ ಎಲ್ಲ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಿ, ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಪರಿಣಾಮಕಾರಿಯಾಗಿ ಸೇವೆ ಒದಗಿಸಬೇಕು. ಅಧಿಕಾರಿಗಳು ಆತ್ಮಾವಲೋಕನ ಮಾಡಿಕೊಂಡು ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಬೇಕು.”

– ತುಳಸಿ ಮದ್ದಿನೇನಿ, ಧಾರವಾಡ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ

ಗುರುಭಕ್ತಿ, ಶಿಸ್ತು ಜೀವನದ ಶ್ರೇಷ್ಠ ಸಂಪತ್ತು: ಅಭಿನವ ಚನ್ನಬಸವ ಶ್ರೀಗಳು

0

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: “ಗುರು ಎಂದರೆ ಕೇವಲ ಪಾಠ ಬೋಧಿಸುವ ಶಿಕ್ಷಕರಲ್ಲ; ಅಜ್ಞಾನದಿಂದ ಜ್ಞಾನದತ್ತ ಕರೆದೊಯ್ಯುವ ದಾರಿದೀಪ. ವಿದ್ಯಾರ್ಥಿಗಳು ಗುರುಗಳ ಬಗ್ಗೆ ಗೌರವ, ಶಿಸ್ತು, ಸೇವಾಭಾವ ಹಾಗೂ ಉತ್ತಮ ಸಂಸ್ಕಾರಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಶಿಕ್ಷಣ ಸಾರ್ಥಕವಾಗುತ್ತದೆ” ಎಂದು ನಿಡಗುಂದಿಕೊಪ್ಪ ಶಾಖಾ ಶಿವಯೋಗ ಮಂದಿರದ ಅಭಿನವ ಚನ್ನಬಸವ ಶ್ರೀಗಳು ಹೇಳಿದರು.

ಸಮೀಪದ ನಿಡಗುಂದಿಕೊಪ್ಪದ ಚೆನ್ನಚೇತನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಗುರುಪೂರ್ಣಿಮೆ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಗುರು-ಶಿಷ್ಯ ಪರಂಪರೆ ಭಾರತೀಯ ಸಂಸ್ಕೃತಿಯ ಅತ್ಯುನ್ನತ ಮೌಲ್ಯಗಳಲ್ಲಿ ಒಂದಾಗಿದ್ದು, ಗುರುಗಳ ಮಾರ್ಗದರ್ಶನ ವಿದ್ಯಾರ್ಥಿಗಳ ಜೀವನಕ್ಕೆ ದಿಕ್ಕು ತೋರಿಸುವ ಶಕ್ತಿಯಾಗಿದೆ ಎಂದರು.

ವಿದ್ಯಾಭ್ಯಾಸದ ಜೊತೆಗೆ ಸಂಸ್ಕಾರ, ಶಿಸ್ತು, ವಿನಯ ಹಾಗೂ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡಾಗ ಮಾತ್ರ ವಿದ್ಯಾರ್ಥಿಗಳು ಸಮಾಜಕ್ಕೆ ಆದರ್ಶ ನಾಗರಿಕರಾಗಿ ರೂಪುಗೊಳ್ಳಲು ಸಾಧ್ಯ. ಉತ್ತಮ ವ್ಯಕ್ತಿತ್ವ ನಿರ್ಮಾಣದಲ್ಲಿ ಗುರುಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದ ಆರಂಭದಲ್ಲಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ವೇದಮಂತ್ರಗಳ ಘೋಷ, ಪೂರ್ಣಕುಂಭ ಮತ್ತು ಪುಷ್ಪವೃಷ್ಟಿಯೊಂದಿಗೆ ಅಭಿನವ ಚನ್ನಬಸವ ಶ್ರೀಗಳನ್ನು ಭಕ್ತಿಪೂರ್ವಕವಾಗಿ ಸ್ವಾಗತಿಸಿದರು. ಬಳಿಕ ಶ್ರೀಗಳ ಪಾದಪೂಜೆ ನೆರವೇರಿಸಿ ಪುಷ್ಪಾರ್ಚನೆ ಸಲ್ಲಿಸಿ ಆಶೀರ್ವಾದ ಪಡೆದರು.

ಬಳಿಕ ವಿದ್ಯಾರ್ಥಿಗಳು ಭಕ್ತಿಗೀತೆ, ವಚನಗಾಯನ, ಭಾಷಣ, ಸಮೂಹ ನೃತ್ಯ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿದರು. ಗುರುಗಳ ಮಹತ್ವ, ಭಾರತೀಯ ಸಂಸ್ಕೃತಿ ಹಾಗೂ ಶಿಕ್ಷಣದ ಮೌಲ್ಯವನ್ನು ಪ್ರತಿಬಿಂಬಿಸಿದ ಕಾರ್ಯಕ್ರಮಗಳು ನೆರೆದಿದ್ದವರ ಮೆಚ್ಚುಗೆಗೆ ಪಾತ್ರವಾದವು. ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನಗಳು ವಿಶೇಷ ಆಕರ್ಷಣೆಯಾಗಿದ್ದವು.

ಶಾಲೆಯ ಮುಖ್ಯ ಶಿಕ್ಷಕಿ ಜೆ.ಬಿ. ಹಿರೇಮಠ ಸ್ವಾಗತಿಸಿ ಮಾತನಾಡಿ, ಗುರುಪೂರ್ಣಿಮೆ ಕೇವಲ ಆಚರಣೆಯ ದಿನವಲ್ಲ, ಗುರುಗಳ ತ್ಯಾಗ, ಮಾರ್ಗದರ್ಶನ ಹಾಗೂ ಶಿಕ್ಷಣದ ಮಹತ್ವವನ್ನು ಸ್ಮರಿಸುವ ಪವಿತ್ರ ದಿನವಾಗಿದೆ. ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಯಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ಶಿಕ್ಷಣದೊಂದಿಗೆ ಮೌಲ್ಯಾಧಾರಿತ ಬದುಕನ್ನು ರೂಪಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ಹೇಳಿದರು.

ಎಸ್.ಬಿ. ಅಣಗೌಡ್ರ ವಂದಿಸಿದರು.

ಕಾರ್ಯಕ್ರಮದಲ್ಲಿ ಆರ್.ಎಂ. ಬನ್ನಿಗೋಳ, ಆರ್.ಸಿ. ಶಾಂತಗಿರಿಮಠ, ಶಿವಪ್ಪ ಕೊಪ್ಪದ, ಧರ್ಮಪ್ಪ ಕೊಪ್ಪದ, ಪುಲಕೇಶಿ ಸರ್ವಿ, ಮಲ್ಲೇಶಪ್ಪ ಸರ್ವಿ, ಶರಣಪ್ಪ ನವಲಗುಂದ, ಕಲ್ಲಪ್ಪ ಅಣಗೌಡ್ರ, ಗಿರೀಶ್ ಕುಲಕರ್ಣಿ, ವೀರಮ್ಮ ಚಂಪನಗೌಡರ, ಅಮರಪ್ಪ ವಿವೇಕಿ, ತಾರಾನಾಥ ಮೇಟಿ, ವೇದಾ ಸರ್ವಿ, ಪ್ರವೀಣ ಮೇಟಿ ಸೇರಿದಂತೆ ಅನೇಕ ಗಣ್ಯರು, ಶಿಕ್ಷಕರು, ಪಾಲಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

“ಗುರುಗಳ ಮಾರ್ಗದರ್ಶನವು ವಿದ್ಯಾರ್ಥಿಗಳ ಬದುಕಿಗೆ ದಿಕ್ಕು ತೋರಿಸುವ ಬೆಳಕಾಗಿದೆ. ಸಂಸ್ಕಾರ, ಶಿಸ್ತು ಮತ್ತು ಗುರುಭಕ್ತಿಯೊಂದಿಗೆ ಶಿಕ್ಷಣ ಪಡೆದಾಗ ಮಾತ್ರ ಜೀವನ ಸಾರ್ಥಕವಾಗುತ್ತದೆ.”

– ಅಭಿನವ ಚನ್ನಬಸವ ಶ್ರೀಗಳು

ವಿದ್ಯಾರ್ಥಿಗಳಿಗೆ ಮೂಲ ಸೌಲಭ್ಯ ಕಲ್ಪಿಸಲು ಆಗ್ರಹ

0

ವಿಜಯಸಾಕ್ಷಿ ಸುದ್ದಿ, ಗದಗ: ರಾಜ್ಯದಲ್ಲಿ ಶಾಲೆಗಳು ಆರಂಭವಾಗಿ ಎರಡು ತಿಂಗಳು ಕಳೆದಿದ್ದರೂ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ವಿದ್ಯಾರ್ಥಿಗಳಿಗೆ ಅಗತ್ಯ ಮೂಲ ಸೌಲಭ್ಯಗಳು ಇನ್ನೂ ಸಮರ್ಪಕವಾಗಿ ದೊರೆತಿಲ್ಲ ಎಂದು ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿ ಹಾಗೂ ಎಐಡಿಎಸ್ಓ ಗದಗ ಜಿಲ್ಲಾ ಘಟಕ ಆರೋಪಿಸಿವೆ.

ಈ ಕುರಿತು ಪ್ರಕಟಣೆ ನೀಡಿರುವ ಸಂಘಟನೆಗಳು, ವಿದ್ಯಾರ್ಥಿಗಳಿಗೆ ವಿತರಿಸಬೇಕಿರುವ ಶೂ ಮತ್ತು ಸಾಕ್ಸ್ ಇನ್ನೂ ಲಭ್ಯವಾಗಿಲ್ಲ. ಇದೇ ಶೈಕ್ಷಣಿಕ ವರ್ಷದಿಂದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಎಲ್ಲ ವಿದ್ಯಾರ್ಥಿಗಳಿಗೆ ಸರ್ಕಾರವೇ ನೋಟ್‌ಬುಕ್‌ಗಳನ್ನು ಪೂರೈಸುವುದಾಗಿ ಘೋಷಿಸಿದ್ದರೂ, ಇದುವರೆಗೆ ಶಾಲೆಗಳಿಗೆ ನೋಟ್‌ಬುಕ್‌ಗಳು ತಲುಪಿಲ್ಲ ಎಂದು ದೂರಿವೆ.

ಮಧ್ಯಾಹ್ನದ ಬಿಸಿಯೂಟ ಯೋಜನೆಯಡಿ ವಿದ್ಯಾರ್ಥಿಗಳಿಗೆ ವಿತರಿಸಲಾಗುತ್ತಿರುವ ಮೊಟ್ಟೆ ಮತ್ತು ಬಾಳೆಹಣ್ಣಿಗೆ ಸರ್ಕಾರ ನಿಗದಿಪಡಿಸಿರುವ ಅನುದಾನವು ಮಾರುಕಟ್ಟೆ ದರಕ್ಕಿಂತ ಕಡಿಮೆಯಿದ್ದು, ಹೆಚ್ಚುವರಿ ವೆಚ್ಚವನ್ನು ಶಿಕ್ಷಕರೇ ತಮ್ಮ ಜೇಬಿನಿಂದ ಭರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಬೇಕಾದ ಶಿಕ್ಷಣ ಸಚಿವರ ನೇಮಕವೂ ರಾಜ್ಯದಲ್ಲಿ ಇನ್ನೂ ಆಗಿಲ್ಲ ಎಂದು ಸಂಘಟನೆಗಳು ಟೀಕಿಸಿವೆ. ಶಿಕ್ಷಣದ ಬಗ್ಗೆ, ವಿಶೇಷವಾಗಿ ಬಡ ರೈತರು ಹಾಗೂ ಕಾರ್ಮಿಕರ ಮಕ್ಕಳು ವ್ಯಾಸಂಗ ಮಾಡುವ ಸರ್ಕಾರಿ ಶಾಲೆಗಳ ಕುರಿತು ಸರ್ಕಾರ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿವೆ.

ಕೂಡಲೇ ರಾಜ್ಯಕ್ಕೆ ಶಿಕ್ಷಣ ಸಚಿವರನ್ನು ನೇಮಿಸಿ, ವಿದ್ಯಾರ್ಥಿಗಳಿಗೆ ಶೂ, ಸಾಕ್ಸ್, ನೋಟ್‌ಬುಕ್ ಸೇರಿದಂತೆ ಎಲ್ಲ ಮೂಲ ಸೌಲಭ್ಯಗಳನ್ನು ತ್ವರಿತವಾಗಿ ಒದಗಿಸಬೇಕು ಎಂದು ರಾಜ್ಯ ಸರ್ಕಾರ ಹಾಗೂ ಮುಖ್ಯಮಂತ್ರಿಯವರನ್ನು ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿ ಮತ್ತು ಎಐಡಿಎಸ್ಓ ಆಗ್ರಹಿಸಿವೆ.

“ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ವಿದ್ಯಾರ್ಥಿಗಳಿಗೆ ಅಗತ್ಯ ಮೂಲ ಸೌಲಭ್ಯಗಳನ್ನು ಕೂಡಲೇ ಒದಗಿಸಬೇಕು. ಶಿಕ್ಷಣ ಸಚಿವರನ್ನು ಶೀಘ್ರ ನೇಮಿಸಿ ಶಿಕ್ಷಣ ಕ್ಷೇತ್ರದ ಸಮಸ್ಯೆಗಳಿಗೆ ಸರ್ಕಾರ ಆದ್ಯತೆ ನೀಡಬೇಕು.”

– ಪ್ರೊ. ಎ. ಮುರಿಗೆಪ್ಪ, ರಾಜ್ಯಾಧ್ಯಕ್ಷರು, ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿ; ಎಂ. ಶಾಂತಿ, ಜಿಲ್ಲಾ ಸಂಚಾಲಕರು, ಎಐಡಿಎಸ್ಓ ಗದಗ ಜಿಲ್ಲೆ