Home Blog

ಈದ್ ಮಿಲಾದ್ ಮೆರವಣಿಗೆ ವೇಳೆ ಹೈಡ್ರಾಮಾ..! ವ್ಯಕ್ತಿಗೆ ಹಲ್ಲೆ, ಠಾಣೆ ಮುಂದೆ ಜಮಾಯಿಸಿದ ಹಿಂದೂ ಕಾರ್ಯಕರ್ತರು

0

ಬೆಂಗಳೂರು: ಈದ್ ಮಿಲಾದ್ ಮೆರವಣಿಗೆ ವೇಳೆ ಎರಡು ಗುಂಪುಗಳ ನಡುವೆ ಗಲಾಟೆ ನಡೆದ ಘಟನೆ ನಗರದ ಬಸವನಗುಡಿಯ ಕೆ.ಆರ್. ರಸ್ತೆಯಲ್ಲಿ ನಡೆದಿದೆ.

ಪುನೀತ್ ಕೆರೆಹಳ್ಳಿ ಅವರ ಕಚೇರಿ ಎದುರು ಘೋಷಣೆ ಕೂಗಿದ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದಿದೆ ಎನ್ನಲಾಗಿದೆ. ಈ ವೇಳೆ ಮುರಳಿ ಎಂಬ ವ್ಯಕ್ತಿಯ ಮೇಲೆ ಗುಂಪು ಹಲ್ಲೆ ನಡೆಸಿದ್ದು, ಗಾಯಗೊಂಡು ರಕ್ತಸ್ರಾವವಾಗಿರುವ ಹಿನ್ನೆಲೆಯಲ್ಲಿ ಪೊಲೀಸರು ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

ಘಟನೆಯನ್ನು ಖಂಡಿಸಿ ಪುನೀತ್ ಕೆರೆಹಳ್ಳಿ ಪ್ರತಿಭಟನೆ ನಡೆಸಿದ್ದು, ಬಳಿಕ ಹಿಂದೂ ಪರ ಕಾರ್ಯಕರ್ತರು ಬಸವನಗುಡಿ ಪೊಲೀಸ್ ಠಾಣೆ ಎದುರು ಜಮಾಯಿಸಿದ್ದರು. ಸ್ಥಳಕ್ಕೆ ದಕ್ಷಿಣ ವಿಭಾಗದ ಡಿಸಿಪಿ ವಂಶಿಕೃಷ್ಣ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮುಂಜಾಗ್ರತಾ ಕ್ರಮವಾಗಿ ಸ್ಥಳದಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ. ಮೆರವಣಿಗೆ ವೇಳೆ ಎರಡು ಗುಂಪುಗಳ ನಡುವೆ ಮಾತಿಗೆ ಮಾತು ಬೆಳೆದು ಗಲಾಟೆ ಆರಂಭವಾಗಿದೆ ಎನ್ನಲಾಗಿದ್ದು, ಘಟನೆಗೆ ನಿಖರ ಕಾರಣ ತಿಳಿಯಲು ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದಾರೆ.

ಮೆರವಣಿಗೆಯಲ್ಲಿ ಮುಸ್ಲಿಂ ಮುಖಂಡರು ಬೀಸುತ್ತಿದ್ದ ಬಾವುಟ ಮುರಳಿಗೆ ತಾಗಿ ಗಲಾಟೆ ಆರಂಭವಾಗಿರಬಹುದೇ ಎಂಬ ಬಗ್ಗೆಯೂ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಘಟನೆ ನಡೆದ ಸ್ಥಳದ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.

ಮಧ್ಯಪ್ರದೇಶದಲ್ಲಿ ಭೀಕರ ಅಪಘಾತ: 23 ವರ್ಷದ ಯೂಟ್ಯೂಬರ್ ಹಾಗೂ ತಾಯಿ ಸ್ಥಳದಲ್ಲೇ ಸಾವು!

0

ಮಧ್ಯಪ್ರದೇಶ: ಟ್ರಕ್‌ಗೆ ಕಾರು ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಉತ್ತರ ಪ್ರದೇಶದ 23 ವರ್ಷದ ಯೂಟ್ಯೂಬರ್ ಹಾಗೂ ಅವರ ತಾಯಿ ಮೃತಪಟ್ಟಿರುವ ಘಟನೆ ಮಧ್ಯಪ್ರದೇಶದ ಅಗರ್ ಮಾಲ್ವಾ ಜಿಲ್ಲೆಯಲ್ಲಿ ನಡೆದಿದೆ.

ಉಜ್ಜಯಿನಿ-ಗರೋತ್ ಹೆದ್ದಾರಿಯ ರಾಮಖೇಡಿ ಗ್ರಾಮದ ಬಳಿ ಮಂಗಳವಾರ ಬೆಳಗ್ಗೆ ಸುಮಾರು 6 ಗಂಟೆಗೆ ಅಪಘಾತ ಸಂಭವಿಸಿದೆ. ವೇಗವಾಗಿ ಚಲಿಸುತ್ತಿದ್ದ ಎರ್ಟಿಗಾ ಕಾರು ಮುಂದೆ ಸಾಗುತ್ತಿದ್ದ ಟ್ರಕ್‌ನ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಅಪಘಾತದ ಬಳಿಕ ಟ್ರಕ್ ನಿಯಂತ್ರಣ ತಪ್ಪಿ ರಸ್ತೆ ಬದಿಯ ತಡೆಗೋಡೆಗೆ ಡಿಕ್ಕಿ ಹೊಡೆದು ಕೆಳಗೆ ಬಿದ್ದಿದೆ.

ಮೃತರನ್ನು ಉತ್ತರ ಪ್ರದೇಶದ ನಿವಾಸಿಗಳಾದ 50 ವರ್ಷದ ಸಾರಿಕಾ ಹಾಗೂ ಅವರ 23 ವರ್ಷದ ಪುತ್ರಿ ಛವಿ ವರ್ಶ್ನಿ ಎಂದು ಗುರುತಿಸಲಾಗಿದೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಹಾಗೂ ರಕ್ಷಣಾ ಸಿಬ್ಬಂದಿ ಕಾರಿನ ಅವಶೇಷಗಳಲ್ಲಿ ಸಿಲುಕಿದ್ದವರನ್ನು ಹೊರತೆಗೆದಿದ್ದಾರೆ. ಗಾಯಾಳುಗಳನ್ನು ಬರೋಡ್ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಗಿದ್ದು, ಸಾರಿಕಾ ಹಾಗೂ ಛವಿ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.

ಅಪಘಾತದಲ್ಲಿ ಛವಿ ಅವರ ತಂದೆ 54 ವರ್ಷದ ಶ್ಯಾಮಲಾಲ್, ಸಂಬಂಧಿ ಸೂರಜ್‌ಪಾಲ್ ಹಾಗೂ ಕಾರು ಚಾಲಕ ಸಚಿನ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಪ್ರಾಥಮಿಕ ಚಿಕಿತ್ಸೆ ಬಳಿಕ ಮೂವರನ್ನೂ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕುಟುಂಬವು ಸೋಮವಾರ ರಾತ್ರಿ ಉಜ್ಜಯಿನಿಗೆ ತೀರ್ಥಯಾತ್ರೆಗೆ ತೆರಳಿತ್ತು. ಈ ವೇಳೆ ಮಾರ್ಗಮಧ್ಯೆ ಅಪಘಾತ ಸಂಭವಿಸಿದೆ.

ಅಪಘಾತದಲ್ಲಿ ಮೃತಪಟ್ಟ ಛವಿ ವರ್ಶ್ನಿ ಜನಪ್ರಿಯ ಯೂಟ್ಯೂಬರ್ ಆಗಿದ್ದರು. ಅವರ ಯೂಟ್ಯೂಬ್ ಚಾನೆಲ್‌ಗೆ 7 ಲಕ್ಷಕ್ಕೂ ಹೆಚ್ಚು ಚಂದಾದಾರರಿದ್ದು, ಇನ್‌ಸ್ಟಾಗ್ರಾಂನಲ್ಲಿ ಒಂದು ಲಕ್ಷಕ್ಕೂ ಅಧಿಕ ಫಾಲೋವರ್ಸ್ ಹೊಂದಿದ್ದರು.

ಛವಿ ಅವರು 2021ರಲ್ಲಿ ಯೂಟ್ಯೂಬ್ ಚಾನೆಲ್ ಆರಂಭಿಸಿದ್ದರು. ಆರಂಭದಲ್ಲಿ ದೈನಂದಿನ ಜೀವನಕ್ಕೆ ಸಂಬಂಧಿಸಿದ ವ್ಲಾಗ್‌ಗಳನ್ನು ಪ್ರಕಟಿಸುತ್ತಿದ್ದ ಅವರು, ಬಳಿಕ ಆನ್‌ಲೈನ್ ಗೇಮಿಂಗ್‌ಗೆ ಸಂಬಂಧಿಸಿದ ವಿಡಿಯೋಗಳನ್ನೂ ಮಾಡುತ್ತಿದ್ದರು.

ಪದವಿ ಶಿಕ್ಷಣ ಪೂರ್ಣಗೊಳಿಸಿದ್ದ ಛವಿ ವಿದ್ಯಾಭ್ಯಾಸದಲ್ಲೂ ಉತ್ತಮ ಸಾಧನೆ ಮಾಡಿದ್ದರು ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ವಿಭಿನ್ನವಾಗಿ ಏನಾದರೂ ಸಾಧಿಸಬೇಕೆಂಬ ಆಸಕ್ತಿ ಹೊಂದಿದ್ದ ಅವರಿಗೆ ಕುಟುಂಬದವರು ಸಾಮಾಜಿಕ ಜಾಲತಾಣದ ವೃತ್ತಿಜೀವನಕ್ಕೆ ಸಂಪೂರ್ಣ ಬೆಂಬಲ ನೀಡಿದ್ದರು ಎನ್ನಲಾಗಿದೆ.

ಈ ಕುರಿತು ಬರೋಡ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಕಾರು ಟ್ರಕ್‌ಗೆ ಡಿಕ್ಕಿ ಹೊಡೆಯಲು ವೇಗ, ಚಾಲಕರ ನಿರ್ಲಕ್ಷ್ಯ ಸೇರಿದಂತೆ ಇತರ ಕಾರಣಗಳಿದ್ದವೇ ಎಂಬುದನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.

ಹಾಲು, ಪನೀರ್, ಮಸಾಲೆ, ಎಣ್ಣೆ ಖರೀದಿಸುವ ಮುನ್ನ ಎಚ್ಚರ! ಈ ಮಾಹಿತಿ ತಿಳಿಯಿರಿ

0

ಬೆಳಗ್ಗೆ ಎದ್ದ ತಕ್ಷಣ ಬಳಸುವ ಟೂತ್‌ಪೇಸ್ಟ್‌ನಿಂದ ರಾತ್ರಿ ಮಲಗುವ ಮುನ್ನ ಬಳಸುವ ರೂಮ್ ಫ್ರೆಶನರ್‌ವರೆಗೆ ದಿನನಿತ್ಯದ ಹಲವು ವಸ್ತುಗಳ ಗುಣಮಟ್ಟದ ಬಗ್ಗೆ ಗ್ರಾಹಕರು ಎಚ್ಚರಿಕೆ ವಹಿಸುವ ಅಗತ್ಯವಿದೆ.

ಆಹಾರ ಪದಾರ್ಥಗಳಲ್ಲಿನ ಕಲಬೆರಕೆ, ತಪ್ಪು ಲೇಬಲಿಂಗ್, ಕಳಪೆ ಗುಣಮಟ್ಟ ಅಥವಾ ಉತ್ಪನ್ನದ ಬಗ್ಗೆ ನೀಡುವ ತಪ್ಪು ಮಾಹಿತಿ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ.

ವಿಶೇಷವಾಗಿ ಹಾಲು, ಪನೀರ್, ಖೋವಾ, ಮಸಾಲೆ, ಅಡುಗೆ ಎಣ್ಣೆ ಹಾಗೂ ಜೇನುತುಪ್ಪ ಖರೀದಿಸುವಾಗ ಹೆಚ್ಚಿನ ಜಾಗರೂಕತೆ ಅಗತ್ಯ. ‘ಆರ್ಗ್ಯಾನಿಕ್’, ‘ನ್ಯಾಚುರಲ್’, ‘100% ನ್ಯಾಚುರಲ್’, ‘ಫಾರ್ಮ್ ಫ್ರೆಶ್’ ಎಂಬ ಪದಗಳನ್ನು ಕಂಡ ತಕ್ಷಣ ಉತ್ಪನ್ನ ಸುರಕ್ಷಿತ ಎಂದು ಭಾವಿಸದೆ, ಪ್ಯಾಕೆಟ್‌ನಲ್ಲಿರುವ ಲೇಬಲ್, ಪದಾರ್ಥಗಳ ಪಟ್ಟಿ, ಪ್ರಮಾಣ, ತಯಾರಿಕಾ ದಿನಾಂಕ, ಅವಧಿ ಮುಕ್ತಾಯ ದಿನಾಂಕ ಹಾಗೂ ಆಹಾರ ಸುರಕ್ಷತಾ ಮಾಹಿತಿಯನ್ನು ಪರಿಶೀಲಿಸುವುದು ಮುಖ್ಯ.

ಆಹಾರ ಮಾತ್ರವಲ್ಲ, ಇತರ ಉತ್ಪನ್ನಗಳಲ್ಲೂ ಎಚ್ಚರಿಕೆ ಅಗತ್ಯ:

ಕಲಬೆರಕೆ ಎಂಬುದು ಕೇವಲ ಆಹಾರ ಪದಾರ್ಥಗಳಿಗೆ ಸೀಮಿತವಾಗಿಲ್ಲ. ಟೂತ್‌ಪೇಸ್ಟ್, ಸಾಬೂನು, ಶಾಂಪೂ, ಕಾಸ್ಮೆಟಿಕ್ಸ್ ಹಾಗೂ ಸುಗಂಧ ಉತ್ಪನ್ನಗಳನ್ನು ಖರೀದಿಸುವಾಗಲೂ ಅವುಗಳಲ್ಲಿರುವ ಪದಾರ್ಥಗಳು ಮತ್ತು ಲೇಬಲ್ ಮಾಹಿತಿಯನ್ನು ಪರಿಶೀಲಿಸುವುದು ಉತ್ತಮ.

ಟೂತ್‌ಪೇಸ್ಟ್‌ನಲ್ಲಿ ಫ್ಲೋರೈಡ್, ಕ್ಯಾಲ್ಸಿಯಂ ಕಾರ್ಬೊನೇಟ್ ಸೇರಿದಂತೆ ವಿವಿಧ ಪದಾರ್ಥಗಳಿರಬಹುದು. ಸಾಬೂನು ಮತ್ತು ಶಾಂಪೂಗಳಲ್ಲಿ ಸರ್ಫ್ಯಾಕ್ಟೆಂಟ್‌ಗಳು, ಸುಗಂಧ ಪದಾರ್ಥಗಳು, ಸಂರಕ್ಷಕಗಳು ಹಾಗೂ ಇತರ ರಾಸಾಯನಿಕಗಳು ಇರಬಹುದು. ಈ ಪದಾರ್ಥಗಳಿರುವುದೇ ಅಪಾಯಕಾರಿ ಎಂದಲ್ಲ. ಅವು ನಿಗದಿತ ಮಾನದಂಡಗಳಿಗೆ ಅನುಗುಣವಾಗಿವೆಯೇ ಹಾಗೂ ಲೇಬಲ್‌ನಲ್ಲಿ ಸರಿಯಾದ ಮಾಹಿತಿ ನೀಡಲಾಗಿದೆಯೇ ಎಂಬುದು ಮುಖ್ಯ.

ಹಾಲು, ಪನೀರ್, ಖೋವಾ ಖರೀದಿಸುವಾಗ ಎಚ್ಚರಿಕೆ:

ಹಾಲಿನಲ್ಲಿ ನೀರು ಅಥವಾ ಇತರ ಅಸಮರ್ಪಕ ಪದಾರ್ಥಗಳನ್ನು ಸೇರಿಸುವ ಕಲಬೆರಕೆ ಪ್ರಕರಣಗಳು ವರದಿಯಾಗುತ್ತಲೇ ಇವೆ. ಪನೀರ್ ಮತ್ತು ಖೋವಾ ಕೂಡ ಆಹಾರ ಸುರಕ್ಷತಾ ತಪಾಸಣೆಯ ವ್ಯಾಪ್ತಿಗೆ ಬರುತ್ತವೆ. ಹೀಗಾಗಿ ಪ್ಯಾಕ್ ಮಾಡಿದ ಆಹಾರ ಖರೀದಿಸುವಾಗ ಕೇವಲ ಬೆಲೆ ಅಥವಾ ಬ್ರ್ಯಾಂಡ್‌ಗೆ ಆದ್ಯತೆ ನೀಡದೆ, ಲೇಬಲ್ ಮತ್ತು ಆಹಾರ ಸುರಕ್ಷತಾ ವಿವರಗಳನ್ನು ಪರಿಶೀಲಿಸಬೇಕು.

ಮಸಾಲೆಗಳಲ್ಲಿ ಕಲಬೆರಕೆ ಸಾಧ್ಯತೆ:

ಅರಿಶಿನ ಮತ್ತು ಮೆಣಸಿನ ಪುಡಿ ಸೇರಿದಂತೆ ಪುಡಿ ಮಾಡಿದ ಮಸಾಲೆಗಳಲ್ಲಿ ಕಡಿಮೆ ಬೆಲೆಯ ವಸ್ತುಗಳು ಅಥವಾ ಕೃತಕ ಬಣ್ಣಗಳನ್ನು ಸೇರಿಸುವ ಸಾಧ್ಯತೆಯಿದೆ. ಇಂತಹ ಕಲಬೆರಕೆಯನ್ನು ಬರಿಗಣ್ಣಿನಿಂದ ಗುರುತಿಸುವುದು ಕಷ್ಟವಾಗಬಹುದು. ಆದ್ದರಿಂದ ವಿಶ್ವಾಸಾರ್ಹ ಬ್ರ್ಯಾಂಡ್‌ಗಳ ಹಾಗೂ ಸರಿಯಾದ ಲೇಬಲಿಂಗ್ ಹೊಂದಿರುವ ಉತ್ಪನ್ನಗಳನ್ನು ಆಯ್ಕೆ ಮಾಡುವುದು ಉತ್ತಮ.

ಅಡುಗೆ ಎಣ್ಣೆ, ಜೇನುತುಪ್ಪದಲ್ಲೂ ಎಚ್ಚರಿಕೆ:

ದುಬಾರಿ ಅಡುಗೆ ಎಣ್ಣೆಗೆ ಅಗ್ಗದ ಎಣ್ಣೆ ಬೆರೆಸುವುದು ಆಹಾರ ಸುರಕ್ಷತೆಗೆ ಸಂಬಂಧಿಸಿದ ಸಮಸ್ಯೆಯಾಗಬಹುದು. ಜೇನುತುಪ್ಪದಲ್ಲೂ ಸಕ್ಕರೆ ಸಿರಪ್‌ನಂತಹ ಪದಾರ್ಥಗಳನ್ನು ಸೇರಿಸುವ ಬಗ್ಗೆ ಹಲವು ಸಂದರ್ಭಗಳಲ್ಲಿ ಚರ್ಚೆಗಳು ನಡೆದಿವೆ. ಹೀಗಾಗಿ ‘ನ್ಯಾಚುರಲ್’ ಅಥವಾ ‘ಪ್ಯೂರ್’ ಎಂಬ ಪದಗಳನ್ನು ಮಾತ್ರ ನಂಬದೆ ಉತ್ಪನ್ನದ ಸಂಪೂರ್ಣ ಮಾಹಿತಿಯನ್ನು ಓದಬೇಕು.

ಆನ್‌ಲೈನ್‌ನಲ್ಲಿ ಆಹಾರ ಆರ್ಡರ್ ಮಾಡಿದರೂ ಎಚ್ಚರಿಕೆ ಅಗತ್ಯ:

ಆನ್‌ಲೈನ್‌ನಲ್ಲಿ ಆಹಾರ ಆರ್ಡರ್ ಮಾಡುವುದರಿಂದ ಆಹಾರ ಸುರಕ್ಷತೆಯ ಬಗ್ಗೆ ಇರುವ ಎಲ್ಲ ಆತಂಕಗಳು ದೂರವಾಗುವುದಿಲ್ಲ. ಆಹಾರದ ಹೈಜೀನ್, ಸಂಗ್ರಹಣೆ, ತಾಜಾತನ, ಲೇಬಲಿಂಗ್ ಹಾಗೂ ಆಹಾರ ಸುರಕ್ಷತಾ ನಿಯಮಗಳ ಪಾಲನೆ ಕೂಡ ಮುಖ್ಯ. ಆ್ಯಪ್‌ನಲ್ಲಿ ರೆಸ್ಟೋರೆಂಟ್ ಕಾಣಿಸುತ್ತಿದೆ ಎಂಬ ಕಾರಣಕ್ಕೆ ಅಲ್ಲಿನ ಆಹಾರ ಸುರಕ್ಷಿತ ಎಂದು ಖಚಿತಪಡಿಸಿಕೊಳ್ಳಲು ಸಾಧ್ಯವಿಲ್ಲ. ಸಾಧ್ಯವಾದಷ್ಟು ವಿಶ್ವಾಸಾರ್ಹ ಆಹಾರ ಸಂಸ್ಥೆಗಳಿಂದ ಆರ್ಡರ್ ಮಾಡುವುದು ಉತ್ತಮ.

ರೂಮ್ ಫ್ರೆಶನರ್ ಬಳಕೆಯಲ್ಲೂ ಎಚ್ಚರಿಕೆ:

ಮನೆಗೆ ಸುಗಂಧ ನೀಡಲು ರೂಮ್ ಫ್ರೆಶನರ್, ಡಿಫ್ಯೂಸರ್ ಅಥವಾ ಫ್ರೆಗ್ರನ್ಸ್ ಆಯಿಲ್ ಬಳಸುವುದು ಸಾಮಾನ್ಯ. ಕೆಲವು ಸುಗಂಧ ಉತ್ಪನ್ನಗಳಲ್ಲಿ ವಿವಿಧ ರಾಸಾಯನಿಕ ಸಂಯುಕ್ತಗಳಿರಬಹುದು. ಇವು ಎಲ್ಲರಿಗೂ ಅಪಾಯಕಾರಿ ಎಂದಲ್ಲ. ಆದರೆ ತೀವ್ರವಾದ ಸುಗಂಧದಿಂದ ಕೆಲವು ಸೂಕ್ಷ್ಮ ವ್ಯಕ್ತಿಗಳಲ್ಲಿ ತಲೆನೋವು, ಕಿರಿಕಿರಿ ಅಥವಾ ಉಸಿರಾಟದ ತೊಂದರೆ ಉಂಟಾಗುವ ಸಾಧ್ಯತೆಯಿದೆ.

ಹೀಗಾಗಿ ಯಾವುದೇ ಉತ್ಪನ್ನ ಖರೀದಿಸುವ ಮುನ್ನ ಅದರ ಲೇಬಲ್ ಮತ್ತು ಬಳಕೆಯ ಸೂಚನೆಗಳನ್ನು ಓದುವುದು, ಅಗತ್ಯವಿದ್ದಲ್ಲಿ ಸರಿಯಾದ ಗಾಳಿಯ ಸಂಚಾರ ಇರುವಂತೆ ನೋಡಿಕೊಳ್ಳುವುದು ಉತ್ತಮ.

ಯಾವುದೇ ಉತ್ಪನ್ನವನ್ನು ‘ಕಲಬೆರಕೆ’ ಎಂದು ನಿರ್ಧರಿಸುವ ಮೊದಲು ಅಧಿಕೃತ ಆಹಾರ ಸುರಕ್ಷತಾ ಪರೀಕ್ಷೆ ಅಥವಾ ಸಂಬಂಧಿತ ಅಧಿಕಾರಿಗಳ ಮಾಹಿತಿಯನ್ನು ಆಧಾರವಾಗಿಟ್ಟುಕೊಳ್ಳಬೇಕು. ಪ್ರತಿಯೊಂದು ರಾಸಾಯನಿಕ ಪದಾರ್ಥವೂ ಅಪಾಯಕಾರಿ ಎಂದಲ್ಲ; ಅದರ ಪ್ರಮಾಣ, ಬಳಕೆ ಹಾಗೂ ಸುರಕ್ಷತಾ ಮಾನದಂಡಗಳು ಮುಖ್ಯ.

ಬಾಯಲ್ಲೇ ಚಿನ್ನದ ಕ್ಯಾಪ್ಸೂಲ್: ದುಬೈನಿಂದ ಬಂದ ಪ್ರಯಾಣಿಕನಿಂದ 82 ಗ್ರಾಂ ಗೋಲ್ಡ್ ಪತ್ತೆ, ಏರ್‌ಪೋರ್ಟ್‌ನಲ್ಲಿ ಹೈಡ್ರಾಮಾ

0

ಬೆಂಗಳೂರು: ಚಿನ್ನವನ್ನು ಅಕ್ರಮವಾಗಿ ಸಾಗಿಸಲು ಪ್ರಯಾಣಿಕನೊಬ್ಬ ಅನುಸರಿಸಿದ್ದ ವಿಚಿತ್ರ ಮಾರ್ಗ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಯಲಾಗಿದೆ. ದುಬೈನಿಂದ ಬೆಂಗಳೂರಿಗೆ ಬಂದಿದ್ದ ಪ್ರಯಾಣಿಕನ ಬಾಯಿಯಲ್ಲಿ ಬರೋಬ್ಬರಿ 82 ಗ್ರಾಂ ಚಿನ್ನ ಪತ್ತೆಯಾಗಿದ್ದು, CISF ಸಿಬ್ಬಂದಿಯ ಸಮಯೋಚಿತ ಅನುಮಾನದಿಂದ ಕಳ್ಳಸಾಗಣೆ ಪ್ರಯತ್ನ ಬಯಲಾಗಿದೆ.

ಮಹಮ್ಮದ್ ಸಿರಾಜ್ ಎಂಬಾತ ದುಬೈನಿಂದ ಬೆಂಗಳೂರಿಗೆ ವಿಮಾನದಲ್ಲಿ ಬಂದಿಳಿದಿದ್ದ. ಬಳಿಕ ಬೆಂಗಳೂರಿನಿಂದ ಗಾಜಿಯಾಬಾದ್‌ಗೆ ತೆರಳಲು ಸಿದ್ಧತೆ ನಡೆಸುತ್ತಿದ್ದ. ಈ ವೇಳೆ ವಿಮಾನ ನಿಲ್ದಾಣದಲ್ಲಿದ್ದ ಕೇಂದ್ರ ಕೈಗಾರಿಕಾ ಭದ್ರತಾ ಪಡೆ ಸಿಬ್ಬಂದಿಗೆ ಆತನ ವರ್ತನೆ ಅನುಮಾನಾಸ್ಪದವಾಗಿ ಕಂಡುಬಂದಿದೆ.

CISF ಸಿಬ್ಬಂದಿ ಆತನನ್ನು ಪರಿಶೀಲಿಸಿದರೂ ಆರಂಭದಲ್ಲಿ ಯಾವುದೇ ಅನುಮಾನಾಸ್ಪದ ವಸ್ತು ಪತ್ತೆಯಾಗಿರಲಿಲ್ಲ. ಬಳಿಕ ಬಾಯಿಯನ್ನು ಪರಿಶೀಲಿಸಿದಾಗ ಎರಡು ಚಿನ್ನದ ಕ್ಯಾಪ್ಸೂಲ್‌ಗಳು ಪತ್ತೆಯಾಗಿವೆ. ಅವುಗಳಲ್ಲಿ ಒಟ್ಟು 82 ಗ್ರಾಂ ಚಿನ್ನ ಇತ್ತು ಎನ್ನಲಾಗಿದೆ.

ಬಾಡಿ ಸ್ಕ್ಯಾನರ್‌ನಲ್ಲಿ ಚಿನ್ನ ಪತ್ತೆಯಾಗದಂತೆ ಮಾಡಲು ಬಾಯಿಯಲ್ಲಿ ಕ್ಯಾಪ್ಸೂಲ್ ರೂಪದಲ್ಲಿ ಚಿನ್ನವನ್ನು ಅಡಗಿಸಿಕೊಂಡು ಬಂದಿದ್ದ ಎನ್ನಲಾಗಿದೆ. ಆದರೆ CISF ಸಿಬ್ಬಂದಿಯ ಅನುಮಾನದಿಂದಾಗಿ ಕೊನೆಗೂ ಅಕ್ರಮ ಸಾಗಣೆ ಪ್ರಯತ್ನ ಬಯಲಾಗಿದೆ.

ಸದ್ಯ ಮಹಮ್ಮದ್ ಸಿರಾಜ್‌ನನ್ನು ಹೆಚ್ಚಿನ ತನಿಖೆಗಾಗಿ ಕೆಐಎ ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ಚಿನ್ನದ ಮೂಲವೇನು, ಯಾರಿಗಾಗಿ ಅದನ್ನು ಸಾಗಿಸಲಾಗುತ್ತಿತ್ತು ಹಾಗೂ ಇದರ ಹಿಂದೆ ಮತ್ತಾರಾದರೂ ಇದ್ದಾರೆಯೇ ಎಂಬ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

106 ಜೋಡಿಗಳ ಸಾಮೂಹಿಕ ವಿವಾಹ: ಮದುವೆ ಗಿಫ್ಟ್ ಆಗಿ ಸೀಮೆ ಹಸು, ಜೊತೆಗೆ ₹50 ಸಾವಿರ ನಗದು

0

ಚಿಕ್ಕಬಳ್ಳಾಪುರ: ಸಾಮೂಹಿಕ ವಿವಾಹದಲ್ಲಿ ನವಜೋಡಿಗಳಿಗೆ ಸೀಮೆ ಹಸುವನ್ನೇ ಉಡುಗೊರೆಯಾಗಿ ನೀಡಿದ ಅಪರೂಪದ ಘಟನೆ ಬಾಗೇಪಲ್ಲಿಯಲ್ಲಿ ನಡೆದಿದೆ. 23ನೇ ವರ್ಷದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಬರೋಬ್ಬರಿ 106 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಪ್ರತಿ ನವದಂಪತಿಗೂ ಸೀಮೆ ಹಸು ನೀಡಲಾಗಿದೆ.

ಬಾಗೇಪಲ್ಲಿ ತಾಲೂಕಿನ ಗಡಿದಂ ಲಕ್ಷ್ಮಿ ವೆಂಕಟರಮಣಸ್ವಾಮಿ ದೇವಾಲಯದ ಬಳಿ ಎಸ್.ಎನ್. ಚಾರಿಟೇಬಲ್ ಟ್ರಸ್ಟ್ ಈ ಸಾಮೂಹಿಕ ವಿವಾಹವನ್ನು ಆಯೋಜಿಸಿತ್ತು. ಬಾಗೇಪಲ್ಲಿ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಅವರು ನವದಂಪತಿಗಳಿಗೆ ಸೀಮೆ ಹಸುಗಳನ್ನು ಉಡುಗೊರೆಯಾಗಿ ನೀಡಿದರು. ಜತೆಗೆ 50 ಸಾವಿರ ರೂ. ನಗದು ನೆರವು ನೀಡುವ ಘೋಷಣೆಯೂ ಮಾಡಲಾಗಿದೆ.

ನವದಂಪತಿಗಳ ಹೊಸ ಬದುಕಿಗೆ ಆದಾಯದ ಮೂಲ ಕಲ್ಪಿಸುವ ಉದ್ದೇಶದಿಂದ ಈ ರೀತಿಯ ಉಡುಗೊರೆ ನೀಡಲಾಗಿದೆ. ಸಾಮಾನ್ಯವಾಗಿ ಸಾಮೂಹಿಕ ವಿವಾಹಗಳಲ್ಲಿ ನೀಡುವ ಬಟ್ಟೆ, ಆಭರಣಗಳ ಬದಲಿಗೆ ಜೀವನೋಪಾಯಕ್ಕೆ ನೆರವಾಗುವ ಉಡುಗೊರೆ ನೀಡಿರುವುದು ವಿಶೇಷ ಗಮನ ಸೆಳೆದಿದೆ.

ಇದೇ ವೇಳೆ ಶ್ರೀ ತಿರುಮಲ ತಿರುಪತಿ ದೇವಸ್ಥಾನದ ವತಿಯಿಂದ ಶ್ರೀ ಲಕ್ಷ್ಮಿ ವೆಂಕಟೇಶ್ವರ ಕಲ್ಯಾಣೋತ್ಸವವೂ ನಡೆಯಿತು. ಕಾರ್ಯಕ್ರಮದಲ್ಲಿ ಸಚಿವ ಕೆ.ಹೆಚ್. ಮುನಿಯಪ್ಪ, ಮಾಜಿ ಸಂಸದ ಡಿ.ಕೆ. ಸುರೇಶ್, ಬಂಗಾರಪೇಟೆ ಶಾಸಕ ನಾರಾಯಣಸ್ವಾಮಿ, ಮಾಜಿ ಸಚಿವ ಶಿವಶಂಕರ ರೆಡ್ಡಿ, ಮಾಜಿ ಶಾಸಕ ಎನ್. ಸಂಪಂಗಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.

106 ಜೋಡಿಗಳ ಸಾಮೂಹಿಕ ವಿವಾಹಕ್ಕೆ ಸಾಕ್ಷಿಯಾದ ಬಾಗೇಪಲ್ಲಿಯಲ್ಲಿ, ನವದಂಪತಿಗಳ ಭವಿಷ್ಯಕ್ಕೆ ಆರ್ಥಿಕ ಭದ್ರತೆ ಕಲ್ಪಿಸುವ ಉದ್ದೇಶದ ಈ ವಿಭಿನ್ನ ಉಡುಗೊರೆ ಇದೀಗ ವಿಶೇಷ ಚರ್ಚೆಗೆ ಕಾರಣವಾಗಿದೆ.

ಟಿಪ್ಪು ಕಟೌಟ್ ವಿವಾದದ ಬೆನ್ನಲ್ಲೇ ಚಿಕ್ಕಮಗಳೂರಿನಲ್ಲಿ ‘ಐ ಲವ್ ಮೊಹಮ್ಮದ್’: ಈದ್ ಮಿಲಾದ್ ಬ್ಯಾನರ್ ಮತ್ತೆ ಚರ್ಚೆಗೆ

0

ಚಿಕ್ಕಮಗಳೂರು: ಈದ್ ಮಿಲಾದ್ ಮೆರವಣಿಗೆಗೆ ಸಂಬಂಧಿಸಿದಂತೆ ಚಿಕ್ಕಮಗಳೂರಿನಲ್ಲಿ ವಿವಾದದ ಸರಣಿ ಮುಂದುವರಿದಿದೆ. ಟಿಪ್ಪು ಕಟೌಟ್ ವಿಡಿಯೋಗೆ ದೇಶವಿರೋಧಿ ಹಾಡು ಬಳಕೆ ಆರೋಪದ ಕುರಿತು ಆಕ್ರೋಶ ವ್ಯಕ್ತವಾಗಿರುವ ಬೆನ್ನಲ್ಲೇ, ಟಿಪ್ಪು ನಗರದಲ್ಲಿ ‘ಐ ಲವ್ ಮೊಹಮ್ಮದ್’ ಬ್ಯಾನರ್ ಅಳವಡಿಸಿರುವುದು ಇದೀಗ ಹೊಸ ವಿವಾದಕ್ಕೆ ಕಾರಣವಾಗಿದೆ.

ಈದ್ ಮಿಲಾದ್ ಮೆರವಣಿಗೆ ಹಿನ್ನೆಲೆಯಲ್ಲಿ ಬ್ಯಾನರ್ ಅಳವಡಿಸಲಾಗಿದ್ದು, ಕಳೆದ ವರ್ಷ ಉತ್ತರ ಪ್ರದೇಶದ ಕಾನ್ಪುರದಲ್ಲಿ ಇದೇ ಘೋಷವಾಕ್ಯದಿಂದ ಆರಂಭವಾಗಿದ್ದ ವಿವಾದವನ್ನು ಮತ್ತೆ ನೆನಪಿಸಿದೆ.

ಕಾನ್ಪುರದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ‘ಐ ಲವ್ ಮೊಹಮ್ಮದ್’ ಬ್ಯಾನರ್ ಬಳಕೆಯಾದ ಬಳಿಕ ಘೋಷವಾಕ್ಯ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿತ್ತು. ನಂತರ ಮುಂಬೈ, ತೆಲಂಗಾಣ, ಹೈದರಾಬಾದ್, ನಾಗ್ಪುರ ಸೇರಿದಂತೆ ಹಲವು ಪ್ರದೇಶಗಳಲ್ಲಿ ಇದೇ ಹೆಸರಿನಲ್ಲಿ ರ್ಯಾಲಿಗಳು ನಡೆದಿದ್ದವು.

ರಾಜ್ಯದಲ್ಲೂ ‘ಐ ಲವ್ ಮೊಹಮ್ಮದ್’ ಬ್ಯಾನರ್ ಹಾಗೂ ಘೋಷಣೆ ವಿಚಾರ ಇದೇ ಮೊದಲ ಬಾರಿಗೆ ಕಾಣಿಸಿಕೊಂಡಿರುವುದಲ್ಲ. ಬೆಳಗಾವಿ, ದಾವಣಗೆರೆ, ಆಳಂದ ಸೇರಿದಂತೆ ವಿವಿಧೆಡೆ ಈ ಸಂಬಂಧ ವಿವಾದಗಳು ಉಂಟಾಗಿದ್ದವು. ಕೆಲವು ಸಂದರ್ಭಗಳಲ್ಲಿ ಪೊಲೀಸ್ ಪ್ರಕರಣಗಳೂ ದಾಖಲಾಗಿದ್ದು, ರಾಜಕೀಯ ಆರೋಪ-ಪ್ರತ್ಯಾರೋಪಗಳಿಗೆ ಕಾರಣವಾಗಿತ್ತು.

ಇದೀಗ ಚಿಕ್ಕಮಗಳೂರಿನಲ್ಲಿ ಟಿಪ್ಪು ಕಟೌಟ್ ವಿವಾದದ ಬೆನ್ನಲ್ಲೇ ಇದೇ ಘೋಷವಾಕ್ಯದ ಬ್ಯಾನರ್ ಕಾಣಿಸಿಕೊಂಡಿರುವುದು ಮತ್ತಷ್ಟು ಚರ್ಚೆಗೆ ಗ್ರಾಸವಾಗಿದೆ. ಘಟನೆಯ ಕುರಿತು ಮುಂದಿನ ಕ್ರಮ ಹಾಗೂ ಆಡಳಿತದ ಪ್ರತಿಕ್ರಿಯೆ ಏನು ಎಂಬುದು ಇದೀಗ ಕುತೂಹಲ ಮೂಡಿಸಿದೆ.

ತಾಯಿ, 5 ಮಕ್ಕಳ ಸಾವಿನ ಹಿಂದೆ ಕೌಟುಂಬಿಕ ಕಲಹ? ಭೂತನಾಳ ಕೆರೆ ಪ್ರಕರಣದಲ್ಲಿ ಪತಿ ವಿರುದ್ಧ ಕುಟುಂಬಸ್ಥರ ಆರೋಪ

0

ವಿಜಯಪುರ: ಭೂತನಾಳ ಕೆರೆಯಲ್ಲಿ ತಾಯಿ ಸೇರಿದಂತೆ ಐವರು ಮಕ್ಕಳ ಮೃತದೇಹ ಪತ್ತೆಯಾದ ಪ್ರಕರಣ ತೀವ್ರ ಕುತೂಹಲ ಮೂಡಿಸಿದ್ದು, ತನಿಖೆಯಲ್ಲಿ ಕೌಟುಂಬಿಕ ಕಲಹದ ಆಯಾಮ ಪ್ರಮುಖವಾಗಿ ಹೊರಹೊಮ್ಮಿದೆ. ಮೃತರನ್ನು ಶೋಭಾ ಜಾಲಗೇರಿ (45), ವಿದ್ಯಾ (16), ಸುವರ್ಣ (14), ಗೌಡೇಶ್ ಉರ್ಫ್ ತಿಪ್ಪರಾಯ (10), ವಿಕಾಸ (5) ಮತ್ತು ಸಾನಿಕಾ (7) ಎಂದು ಗುರುತಿಸಲಾಗಿದೆ.

ಪೊಲೀಸರ ಪ್ರಾಥಮಿಕ ಮಾಹಿತಿಯಂತೆ, ಆಗಸ್ಟ್ 23ರ ರಾತ್ರಿ ಶೋಭಾ ಹಾಗೂ ಪತಿ ಮಲಕಾರಿ ನಡುವೆ ಜಗಳ ನಡೆದಿತ್ತು. ಶ್ರಾವಣ ಸೋಮವಾರದ ಹಿನ್ನೆಲೆಯಲ್ಲಿ ಪೂಜೆಗೆ ನೈವೇದ್ಯ ಸಿದ್ಧಪಡಿಸುವುದು ಹಾಗೂ ಕೂಲಿ ಕೆಲಸಕ್ಕೆ ತೆರಳಲು ಬುತ್ತಿ ಮಾಡಿಕೊಡುವ ವಿಚಾರದಲ್ಲಿ ದಂಪತಿ ನಡುವೆ ಗಲಾಟೆ ನಡೆದಿತ್ತು ಎನ್ನಲಾಗಿದೆ. ಬಳಿಕ ಶೋಭಾ ಮಕ್ಕಳೊಂದಿಗೆ ಮನೆಯಿಂದ ಹೊರಹೋಗಿದ್ದರು.

ಅವರು ಮರಳಿ ಮನೆಗೆ ಬಾರದ ಹಿನ್ನೆಲೆಯಲ್ಲಿ ಮಲಕಾರಿ ಗ್ರಾಮ ಹಾಗೂ ಸಂಬಂಧಿಕರ ಮನೆಗಳಲ್ಲಿ ಹುಡುಕಾಟ ನಡೆಸಿದ್ದ. ಸುಳಿವು ಸಿಗದ ಹಿನ್ನೆಲೆಯಲ್ಲಿ ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದ. ನಂತರ ಭೂತನಾಳ ಕೆರೆಯಲ್ಲಿ ಆರು ಮಂದಿಯ ಶವಗಳು ಪತ್ತೆಯಾಗಿವೆ.

ಮರಣೋತ್ತರ ಪರೀಕ್ಷೆಗಾಗಿ ಮೃತದೇಹಗಳನ್ನು ಬಿಎಲ್‌ಡಿಇ ಆಸ್ಪತ್ರೆಗೆ ರವಾನಿಸಲಾಗಿದ್ದು, ಸಾವಿನ ನಿಖರ ಕಾರಣ ವರದಿ ಬಂದ ಬಳಿಕ ಸ್ಪಷ್ಟವಾಗಲಿದೆ ಎಂದು ಎಸ್‌ಪಿ ಲಕ್ಷ್ಮಣ ಬಿ. ನಿಂಬರಗಿ ತಿಳಿಸಿದ್ದಾರೆ.

ಇತ್ತ ಶೋಭಾ ಕುಟುಂಬಸ್ಥರು ಮಲಕಾರಿ ವಿರುದ್ಧ ಗಂಭೀರ ಆರೋಪ ಮಾಡಿದ್ದು, ಮದ್ಯಪಾನ ಮಾಡಿ ಹಲ್ಲೆ ನಡೆಸುತ್ತಿದ್ದ ಹಾಗೂ ಮತ್ತೊಬ್ಬ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಎಂದು ದೂರಿದ್ದಾರೆ. ಈ ಹಿನ್ನೆಲೆಯಲ್ಲಿ ಶೋಭಾಗೆ ಕಿರುಕುಳ ನೀಡಲಾಗುತ್ತಿತ್ತು ಎಂದು ಆರೋಪಿಸಿದ್ದಾರೆ.

ಆದರ್ಶ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಕೌಟುಂಬಿಕ ಕಲಹ ಸೇರಿದಂತೆ ಸಾವಿಗೆ ಕಾರಣವಾಗಬಹುದಾದ ಎಲ್ಲ ಸಾಧ್ಯತೆಗಳ ಕುರಿತು ತನಿಖೆ ನಡೆಸುತ್ತಿದ್ದಾರೆ.

ಭೀಕರ ರಸ್ತೆ ಅಪಘಾತ; ನರಗುಂದದ ಮೂವರು ಯುವಕರು ಸ್ಥಳದಲ್ಲೇ ಸಾವು

ಗದಗ/ಕೊಪ್ಪಳ: ಕೊಪ್ಪಳದಲ್ಲಿ ನಡೆಯಲಿರುವ ಈದ್ ಮಿಲಾದ್ ಹಬ್ಬದ ಮೆರವಣಿಗೆ ವೀಕ್ಷಿಸಲು ನರಗುಂದದಿಂದ ಬೈಕ್‌ನಲ್ಲಿ ತೆರಳುತ್ತಿದ್ದ ಮೂವರು ಯುವಕರು ಭೀಕರ ರಸ್ತೆ ಅಪಘಾತದಲ್ಲಿ ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ಕೊಪ್ಪಳ ಜಿಲ್ಲೆಯ ಬನ್ನಿಕೊಪ್ಪ ಗ್ರಾಮದ ಬಳಿ ನಡೆದಿದೆ.

ಇಂದು ಮುಂಜಾನೆ ನರಗುಂದದಿಂದ ಕೊಪ್ಪಳದತ್ತ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ರಸ್ತೆ ಬದಿಯಲ್ಲಿ ಕೆಟ್ಟು ನಿಂತಿದ್ದ ಟಾಟಾ ಏಸ್ ವಾಹನಕ್ಕೆ ಬೈಕ್ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬೈಕ್‌ನಲ್ಲಿದ್ದ ಮೂವರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮೃತರನ್ನು ನರಗುಂದ ಪಟ್ಟಣದ ಹೊರಕೆರೆ ಓಣಿಯ ಶಾನುಸಾಬ ತಂದೆ ಮಕ್ತುಮಸಾಬ ಬಸಾಪೂರ (15) ಮಾಬುಸಾಬ ತಂದೆ ಬುಡನಸಾಬ ಮಟಗೇರಿ (17) ಹಾಗೂ ಹೊಸೂರ ಓಣಿಯ ಫಕ್ರುಸಾಬ್ ತಂದೆ ಹಸನಸಾಬ ಮಟಗೇರಿ (18) ಎಂದು ಪೊಲೀಸರು ತಿಳಿಸಿದ್ದಾರೆ.

ಮೂವರು ಯುವಕರು ಈದ್ ಮಿಲಾದ್ ಹಬ್ಬದ ಮೆರವಣಿಗೆ ವೀಕ್ಷಿಸಲು ಕೊಪ್ಪಳಕ್ಕೆ ತೆರಳುತ್ತಿದ್ದರು ಎನ್ನಲಾಗಿದೆ. ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಮೃತರ ಕುಟುಂಬಸ್ಥರು, ಸಂಬಂಧಿಕರು ಹಾಗೂ ಸ್ನೇಹಿತರ ಆಕ್ರಂದನ ಮುಗಿಲು ಮುಟ್ಟಿದ್ದು, ನರಗುಂದದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.

ವಿಷಯ ತಿಳಿದು ಕುಕನೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕುಕನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ನೇಪಾಳದಲ್ಲಿ ಭೀಕರ ಪ್ರವಾಹ: 16 ಸಾವು, 400 ಮಂದಿ ನಾಪತ್ತೆ; 105 ಭಾರತೀಯ ಪ್ರವಾಸಿಗರಿಗಾಗಿ ತೀವ್ರ ಶೋಧ

0

ಕಠ್ಮಂಡು: ನೇಪಾಳದ ರಸುವಾ ಪ್ರದೇಶದಲ್ಲಿ ಭೋಟೆ ಕೋಶಿ ನದಿಯಲ್ಲಿ ದಿಢೀರ್ ಉಂಟಾದ ಭೀಕರ ಪ್ರವಾಹ ಭಾರೀ ಅವಾಂತರ ಸೃಷ್ಟಿಸಿದೆ. ಪ್ರವಾಹದಲ್ಲಿ ಇದುವರೆಗೆ 16 ಮಂದಿ ಮೃತಪಟ್ಟಿದ್ದು, ನೇಪಾಳ ಪ್ರವಾಸೋದ್ಯಮ ಮಂಡಳಿಯ ಪ್ರಕಾರ ಸುಮಾರು 400 ಮಂದಿ ನಾಪತ್ತೆಯಾಗಿದ್ದಾರೆ.

ನಾಪತ್ತೆಯಾದವರಲ್ಲಿ 291 ಮಂದಿ ವಿದೇಶಿ ಪ್ರಜೆಗಳಾಗಿದ್ದು, ಕನಿಷ್ಠ 105 ಭಾರತೀಯ ಪ್ರವಾಸಿಗರು ಸೇರಿದ್ದಾರೆ. ನಾಪತ್ತೆಯಾದ ವಿದೇಶಿಯರಲ್ಲಿ ಅಮೆರಿಕದ ಮೂವರು, ಮಲೇಷ್ಯಾದ 17, ಬ್ರಿಟನ್‌ನ 12, ದಕ್ಷಿಣ ಆಫ್ರಿಕಾದ ನಾಲ್ವರು, ಆಸ್ಟ್ರೇಲಿಯಾದ ಒಬ್ಬರು ಹಾಗೂ ನೆದರ್ಲೆಂಡ್ಸ್‌ನ ಒಬ್ಬರು ಸೇರಿದ್ದಾರೆ. ಮತ್ತೂ 103 ಮಂದಿಯ ಪೌರತ್ವ ಇನ್ನೂ ದೃಢಪಟ್ಟಿಲ್ಲ.

ಟಿಬೆಟ್ ಗಡಿಗೆ ಹೊಂದಿಕೊಂಡಿರುವ ಮಧ್ಯ ನೇಪಾಳದ ರಸುವಾ ಮತ್ತು ಧಾಡಿಂಗ್ ಜಿಲ್ಲೆಗಳು ಸೇರಿದಂತೆ ನುವಾಕೋಟ್ ಜಿಲ್ಲೆಯ ಮೇಲೂ ಪ್ರವಾಹದ ತೀವ್ರ ಪರಿಣಾಮ ಬೀರಿದೆ. ಬೆಳಗ್ಗೆ ಸುಮಾರು 9 ಗಂಟೆ ವೇಳೆಗೆ ಟಿಬೆಟ್ ಕಡೆಯಿಂದ ಭೋಟೆ ಕೋಶಿ ನದಿಗೆ ಹಠಾತ್ ಭಾರೀ ಪ್ರಮಾಣದಲ್ಲಿ ನೀರು ಹರಿದುಬಂದಿದ್ದು, ನದಿ ತೀರದ ಜನವಸತಿ ಪ್ರದೇಶಗಳು ನಲುಗಿ ಹೋಗಿವೆ.

ರಸುವಾ ಜಿಲ್ಲೆಯ ತಿಮುರೆ ಮತ್ತು ಸ್ಯಾಫ್ರುಬೆಸಿ ಪ್ರದೇಶಗಳಲ್ಲಿ ವ್ಯಾಪಕ ಹಾನಿಯಾಗಿದ್ದು, ವಾಹನಗಳು, ವಸ್ತುಗಳು ಹಾಗೂ ಆಸ್ತಿಪಾಸ್ತಿಗಳು ಪ್ರವಾಹದ ನೀರಿನಲ್ಲಿ ಕೊಚ್ಚಿಹೋಗಿವೆ.

ನೇಪಾಳ ಸೇನೆಯ ನೆರವಿನೊಂದಿಗೆ ರಕ್ಷಣಾ ಹಾಗೂ ಶೋಧ ಕಾರ್ಯಾಚರಣೆ ಭರದಿಂದ ಸಾಗಿದೆ. ರಸುವಾ, ನುವಾಕೋಟ್, ಧಾಡಿಂಗ್ ಮತ್ತು ಚಿತ್ವಾನ್ ಸೇರಿದಂತೆ ನದಿ ತಳಪ್ರದೇಶದ ಹಲವು ಜಿಲ್ಲೆಗಳನ್ನು ಹೈ ಅಲರ್ಟ್‌ನಲ್ಲಿ ಇರಿಸಲಾಗಿದೆ.

ಭಾರತದಿಂದ ಪರಿಹಾರ ನೆರವು

ಪ್ರವಾಹದಿಂದ ತೀವ್ರ ಹಾನಿಗೊಳಗಾದ ನೇಪಾಳಕ್ಕೆ ಶೀಘ್ರವೇ ಪರಿಹಾರ ಸಾಮಗ್ರಿಗಳನ್ನು ಕಳುಹಿಸಲು ಭಾರತ ಸರ್ಕಾರ ಸಿದ್ಧತೆ ನಡೆಸುತ್ತಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.

ಪ್ರವಾಹಕ್ಕೆ ಕಾರಣವೇನು?

ರಸುವಾದಲ್ಲಿ ಸುರಿದ ಸ್ಥಳೀಯ ಮಳೆಯಿಂದ ಈ ದಿಢೀರ್ ಪ್ರವಾಹ ಸಂಭವಿಸಿಲ್ಲ ಎನ್ನಲಾಗಿದ್ದು, ಟಿಬೆಟ್ ಭಾಗದಲ್ಲಿ ಸುರಿದ ಭಾರಿ ಮಳೆ ಅಥವಾ ಹಿಮಪಾತದಿಂದ ನದಿಯಲ್ಲಿ ಹಠಾತ್ ನೀರಿನ ಪ್ರಮಾಣ ಏರಿಕೆಯಾಗಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ಆದರೆ ಪ್ರವಾಹದ ನಿಖರ ಕಾರಣ ಇನ್ನೂ ಸ್ಪಷ್ಟವಾಗಿಲ್ಲ.

ಉತ್ತರಾಖಂಡದಲ್ಲಿ ಹಂದಿಜ್ವರ ಆತಂಕ: 49 ಮಂದಿಗೆ ಸೋಂಕು, ಐವರು ಸಾವು

0

ಡೆಹ್ರಾಡೂನ್: ಉತ್ತರಾಖಂಡದಲ್ಲಿ ಹಂದಿಜ್ವರ (H1N1) ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿದ್ದು, ಆರೋಗ್ಯ ಇಲಾಖೆಯಲ್ಲಿ ಆತಂಕ ಮೂಡಿಸಿದೆ. ಆಗಸ್ಟ್‌ 1ರಿಂದ ಈವರೆಗೆ ರಾಜ್ಯದಲ್ಲಿ 49 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, ಐವರು ಮೃತಪಟ್ಟಿದ್ದಾರೆ. ಮೃತಪಟ್ಟ ಐವರೂ ಈಗಾಗಲೇ ಇತರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಕೆಲವೇ ದಿನಗಳಲ್ಲಿ ಸೋಂಕಿತರ ಸಂಖ್ಯೆ 31ರಿಂದ 49ಕ್ಕೆ ಏರಿಕೆಯಾಗಿದೆ. ಒಟ್ಟು ಸೋಂಕಿತರ ಪೈಕಿ 34 ಮಂದಿ ಡೆಹ್ರಾಡೂನ್‌ನವರೇ ಆಗಿದ್ದಾರೆ. ಸೋಂಕು ಪತ್ತೆಯಾದ ಪ್ರದೇಶಗಳಲ್ಲಿ ಆರೋಗ್ಯ ಇಲಾಖೆ ತಪಾಸಣೆಯನ್ನು ತೀವ್ರಗೊಳಿಸಿದ್ದು, ಎಲ್ಲ ಜಿಲ್ಲೆಗಳಲ್ಲೂ ಕ್ಷಿಪ್ರ ಪ್ರತಿಕ್ರಿಯಾ ತಂಡಗಳನ್ನು ನಿಯೋಜಿಸಲಾಗಿದೆ.

ವೈದ್ಯರು ಹಾಗೂ ತಜ್ಞರು ಸೇರಿದಂತೆ ನಾಲ್ವರು ಸಿಬ್ಬಂದಿಯ ತಂಡಗಳು ಸೋಂಕು ಬಾಧಿತ ಪ್ರದೇಶಗಳಿಗೆ ತೆರಳಿ ಪರಿಶೀಲನೆ ನಡೆಸುತ್ತಿವೆ. ಸೋಂಕಿತರ ಕಳೆದ 10ರಿಂದ 15 ದಿನಗಳ ಪ್ರಯಾಣದ ವಿವರ ಹಾಗೂ ಅವರ ಸಂಪರ್ಕಕ್ಕೆ ಬಂದವರ ಮಾಹಿತಿಯನ್ನೂ ಆರೋಗ್ಯ ಇಲಾಖೆ ಸಂಗ್ರಹಿಸುತ್ತಿದೆ. ಸೋಂಕಿತರ ಸಂಪರ್ಕದಲ್ಲಿದ್ದವರಿಗೂ H1N1 ಪರೀಕ್ಷೆ ನಡೆಸಲಾಗುತ್ತಿದೆ.

ಮಧುಮೇಹ, ರಕ್ತದೊತ್ತಡ, ಉಸಿರಾಟ ಹಾಗೂ ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿರುವವರ ಮೇಲೆ ವಿಶೇಷ ನಿಗಾ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಇಂತಹ ಸಹ-ಅಸ್ವಸ್ಥತೆ ಹೊಂದಿರುವವರಲ್ಲಿ ಸೋಂಕು ಗಂಭೀರ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿರುವುದರಿಂದ ಹೆಚ್ಚಿನ ಎಚ್ಚರಿಕೆ ವಹಿಸಲಾಗುತ್ತಿದೆ. ಮೃತಪಟ್ಟ ಐವರೂ ಇಂತಹ ಆರೋಗ್ಯ ಸಮಸ್ಯೆಗಳನ್ನು ಹೊಂದಿದ್ದರು ಎಂದು ಇಲಾಖೆ ತಿಳಿಸಿದೆ.

ಸೋಂಕಿತರ ಹಾಗೂ ಅವರ ಸಂಪರ್ಕಕ್ಕೆ ಬಂದವರನ್ನು ಅಗತ್ಯವಿದ್ದಲ್ಲಿ ಪ್ರತ್ಯೇಕವಾಗಿರಿಸುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಉಸಿರಾಟದ ತೊಂದರೆ, ದಿಢೀರ್ ಜ್ವರ, ಚಳಿ, ಕೆಮ್ಮು, ಮೂಗು ಸೋರುವಿಕೆ, ಸ್ನಾಯು ನೋವು, ವಾಂತಿ ಅಥವಾ ತೀವ್ರ ಆಯಾಸ ಕಂಡುಬಂದರೆ ತಡ ಮಾಡದೆ ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳುವಂತೆ ಸೂಚಿಸಲಾಗಿದೆ.

ಆಸ್ಪತ್ರೆಗಳಿಗೆ ಈಗಾಗಲೇ H1N1 ನಿಯಂತ್ರಣಕ್ಕೆ ಸಂಬಂಧಿಸಿದ ಮಾರ್ಗಸೂಚಿಗಳನ್ನು ನೀಡಲಾಗಿದ್ದು, ಪರಿಸ್ಥಿತಿ ಎದುರಿಸಲು ಆರೋಗ್ಯ ಇಲಾಖೆ ಸಿದ್ಧವಾಗಿದೆ ಎಂದು ಉತ್ತರಾಖಂಡ ಆರೋಗ್ಯ ಕಾರ್ಯದರ್ಶಿ ವಿಜಯ್ ಶಂಕರ್ ಪಾಂಡೆ ತಿಳಿಸಿದ್ದಾರೆ.