ಗದಗ: ಗದಗ ನಗರದಲ್ಲಿ ಧಾರ್ಮಿಕ ಸಾಮರಸ್ಯ ಹಾಗೂ ದೇವಾಲಯಗಳ ಪಾವಿತ್ರ್ಯ ಕಾಪಾಡುವ ಉದ್ದೇಶದಿಂದ ಸಮಾಜಮುಖಿ ಕಾರ್ಯಕರ್ತ ಪೀರಸಾಬ್ ಎ. ಕೌತಾಳ ಅವರು ಶ್ರೀ ವೀರೇಶ್ವರ ಪುಣ್ಯಾಶ್ರಮ ಮತ್ತು ಗಂಗಾಪುರ ಪೇಟೆಯ ಶ್ರೀ ದುರ್ಗಾದೇವಿ ದೇವಸ್ಥಾನದ ರಥಗಳ ಗಾಲಿಗಳ ಮೇಲೆ ಕೆತ್ತಲಾಗಿರುವ ವಿವಾದಿತ ಹೆಸರನ್ನು ತೆರವುಗೊಳಿಸುವಂತೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.
ಶ್ರೀ ವೀರೇಶ್ವರ ಪುಣ್ಯಾಶ್ರಮದ ಪರಮಪೂಜ್ಯ ಡಾ. ಕಲ್ಲಯ್ಯಜ್ಜನವರ ಮೂಲಕ ಹಾಗೂ ಶ್ರೀ ದುರ್ಗಾದೇವಿ ದೇವಸ್ಥಾನದ ಟ್ರಸ್ಟ್ ಮೂಲಕ ಸಲ್ಲಿಸಲಾದ ಮನವಿಯಲ್ಲಿ, ಎರಡೂ ಧಾರ್ಮಿಕ ಸಂಸ್ಥೆಗಳು ಲಕ್ಷಾಂತರ ಭಕ್ತರ ಆರಾಧನಾ ಕೇಂದ್ರಗಳಾಗಿದ್ದು, ಅವುಗಳ ಪಾವಿತ್ರ್ಯ ಮತ್ತು ಘನತೆಯನ್ನು ಕಾಪಾಡುವುದು ಅಗತ್ಯ ಎಂದು ಉಲ್ಲೇಖಿಸಲಾಗಿದೆ.
ಯಾವುದೇ ವ್ಯಕ್ತಿ ಅಥವಾ ಸಂಘಟನೆಯನ್ನು ಗುರಿಯಾಗಿಸದೆ, ಧಾರ್ಮಿಕ ಸಂಸ್ಥೆಗಳ ಗೌರವ, ಸರ್ವಧರ್ಮ ಸಮಭಾವ ಹಾಗೂ ಸಾಮಾಜಿಕ ಸೌಹಾರ್ದವನ್ನು ಉಳಿಸುವ ಉದ್ದೇಶದಿಂದ ವಿವಾದಕ್ಕೆ ಕಾರಣವಾಗಿರುವ ಹೆಸರುಗಳನ್ನು ಕಾನೂನುಬದ್ಧವಾಗಿ ಪರಿಶೀಲಿಸಿ ತೆರವುಗೊಳಿಸುವಂತೆ ಮನವಿಯಲ್ಲಿ ಆಗ್ರಹಿಸಲಾಗಿದೆ.
ಈ ಕುರಿತು ಶ್ರೀ ವೀರೇಶ್ವರ ಪುಣ್ಯಾಶ್ರಮ ಮಠದ ಪೀಠಾಧಿಪತಿಗಳು, ಟ್ರಸ್ಟ್ನ ಆಡಳಿತ ಮಂಡಳಿ, ಶ್ರೀ ದುರ್ಗಾದೇವಿ ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಸಂಬಂಧಿತ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಪೀರಸಾಬ್ ಎ. ಕೌತಾಳ ಮನವಿ ಮಾಡಿದ್ದಾರೆ.
ಧಾರ್ಮಿಕ ವಿಷಯಗಳಲ್ಲಿ ವಿವಾದಕ್ಕಿಂತ ಸಾಮರಸ್ಯಕ್ಕೆ ಆದ್ಯತೆ ನೀಡುವ ಉದ್ದೇಶದಿಂದ ಕೈಗೊಂಡಿರುವ ಈ ಕ್ರಮ ಸಾರ್ವಜನಿಕರ ಗಮನ ಸೆಳೆದಿದ್ದು, ಧಾರ್ಮಿಕ ಸಂಸ್ಥೆಗಳ ಘನತೆ ಕಾಪಾಡುವ ಪ್ರಯತ್ನವಾಗಿ ಹಲವು ವಲಯಗಳಲ್ಲಿ ಚರ್ಚೆಗೆ ಕಾರಣವಾಗಿದೆ.
ಈ ಸಂದರ್ಭದಲ್ಲಿ ಆನಂದ ಸಾಲಿಗ್ರಾಮ, ರಮೇಶ್ ಚಲವಾದಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಈ ಬಗ್ಗೆ ಪೀರಸಾಬ್ ಎ. ಕೌತಾಳ ಮಾತನಾಡಿ, “ಯಾವುದೇ ವ್ಯಕ್ತಿ ಅಥವಾ ಸಂಘಟನೆಯನ್ನು ಗುರಿಯಾಗಿಸುವ ಉದ್ದೇಶ ನಮ್ಮದಲ್ಲ. ಶ್ರೀ ವೀರೇಶ್ವರ ಪುಣ್ಯಾಶ್ರಮ ಮಠ ಹಾಗೂ ದುರ್ಗಾದೇವಿ ದೇವಸ್ಥಾನದ ಘನತೆ, ಭಕ್ತರ ಧಾರ್ಮಿಕ ಭಾವನೆ ಮತ್ತು ಸಾಮಾಜಿಕ ಸೌಹಾರ್ದ ಕಾಪಾಡುವ ದೃಷ್ಟಿಯಿಂದ ಮಾತ್ರ ಈ ಮನವಿ ಸಲ್ಲಿಸಿದ್ದೇವೆ,” ಎಂದು ತಿಳಿಸಿದ್ದಾರೆ.

