ಗದಗ: ನಗರದಲ್ಲಿ ವೈನ್ ಶಾಪ್ಗಳ ಹೆಸರಿನಲ್ಲಿ ಅಕ್ರಮ ಮದ್ಯ ದಂಧೆ ನಡೆಯುತ್ತಿರುವುದು ಬೆಟಗೇರಿ ಪೊಲೀಸರ ಎರಡು ಪ್ರತ್ಯೇಕ ದಾಳಿಗಳಲ್ಲಿ ಬಯಲಾಗಿದೆ. ಅಂಗಡಿಯೊಳಗೇ ಗ್ರಾಹಕರಿಗೆ ಕುಳಿತು ಮದ್ಯ ಸೇವನೆಗೆ ಅವಕಾಶ ನೀಡುವುದು, ಸಾರ್ವಜನಿಕ ರಸ್ತೆಯಲ್ಲೇ ವಿಸ್ಕಿ ಮಾರಾಟಕ್ಕೆ ಸಿದ್ಧತೆ ನಡೆಸುವುದು ಸೇರಿದಂತೆ ಲೈಸೆನ್ಸ್ ಉಲ್ಲಂಘನೆ ಪ್ರಕರಣಗಳು ಬೆಳಕಿಗೆ ಬಂದಿವೆ.
ನಗರದ ವೆಂಕಟೇಶ ಟಾಕೀಸ್ ರಸ್ತೆಯಲ್ಲಿರುವ ರಾಜೇಶ್ ವೈನ್ ಶಾಪ್ ಮೇಲೆ ಬೆಟಗೇರಿ ಬಡಾವಣೆ ಪೊಲೀಸರು ಖಚಿತ ಮಾಹಿತಿ ಮೇರೆಗೆ ನಡೆದ ಕಾರ್ಯಾಚರಣೆಯಲ್ಲಿ ಅಂಗಡಿಯೊಳಗೇ ಗ್ರಾಹಕರು ಮದ್ಯ ಸೇವಿಸುತ್ತಿರುವುದು ಪತ್ತೆಯಾಯಿತು.
ಸ್ಥಳದಲ್ಲೇ ಮದ್ಯದ ಟೆಟ್ರಾ ಪ್ಯಾಕೆಟ್ಗಳು, ಬಳಸಿದ ಗ್ಲಾಸ್ಗಳು, ಪ್ಲಾಸ್ಟಿಕ್ ಟೇಬಲ್ ಹಾಗೂ ಸ್ಟೂಲ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅಂಗಡಿಯ ಮ್ಯಾನೇಜರ್ ಸುಧಾಕರ ವಿರುಪಣ್ಣ ಈಳಿಗೇರ ಸಾರ್ವಜನಿಕರಿಗೆ ಅಕ್ರಮವಾಗಿ ಮದ್ಯ ಸೇವನೆಗೆ ಅವಕಾಶ ನೀಡುತ್ತಿದ್ದರೆ, ಅಂಗಡಿ ಮಾಲೀಕ ರಾಜೇಶ್ ಮೋಹನ್ ಹುಯಿಲಗೋಳ ಲೈಸೆನ್ಸ್ ನಿಯಮ ಉಲ್ಲಂಘಿಸಿದ್ದಾನೆ ಎಂದು ಆರೋಪಿಸಲಾಗಿದೆ.
ಇನ್ನೊಂದು ಪ್ರಕರಣದಲ್ಲಿ, ಬೆಟಗೇರಿ ಮಂಜುನಾಥ ನಗರ ಕಣವಿ ಪ್ಲಾಟ್ ಪ್ರದೇಶದಲ್ಲಿ ಮನೆ ಮುಂದಿನ ರಸ್ತೆಯಲ್ಲೇ ಮದ್ಯ ಮಾರಾಟಕ್ಕೆ ಸಿದ್ಧತೆ ನಡೆಸುತ್ತಿದ್ದ ಆರೋಪದಡಿ ಬೆಟಗೇರಿ ಪೊಲೀಸರು ದಾಳಿ ನಡೆಸಿದರು.
ಸಿಪಿಐ ಡಿ.ಬಿ. ಶಿಂಧೆ ನೇತೃತ್ವದ ತಂಡ ನಡೆಸಿದ ದಾಳಿಯಲ್ಲಿ, ಶ್ರೀಕಾಂತ್ ಯಲ್ಲೋಸಾ ಪವಾರ್ (48) ಎಂಬಾತನಿಂದ 90 ಎಂ.ಎಲ್ ಗಾತ್ರದ ಡಿ.ಕೆ. ಡಬಲ್ ಕಿಕ್ ನೀಟ್ ವಿಸ್ಕಿ ಕಂಪನಿಯ 31 ಟೆಟ್ರಾ ಪ್ಯಾಕೆಟ್ಗಳನ್ನು ಜಪ್ತಿ ಮಾಡಲಾಗಿದೆ. ಜೊತೆಗೆ ಖಾಲಿ ಟೆಟ್ರಾ ಪ್ಯಾಕೆಟ್ ಹಾಗೂ ಎರಡು ಪ್ಲಾಸ್ಟಿಕ್ ಗ್ಲಾಸ್ಗಳನ್ನೂ ವಶಕ್ಕೆ ಪಡೆಯಲಾಗಿದೆ.
ಆರೋಪಿ ಅಮೃತ ವೈನ್ ಶಾಪ್ನಿಂದ ಮದ್ಯ ಖರೀದಿಸಿ ಸಾರ್ವಜನಿಕರಿಗೆ ಮಾರಾಟ ಮಾಡಲು ವ್ಯವಸ್ಥೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಸಾರ್ವಜನಿಕ ರಸ್ತೆಯಲ್ಲೇ ಮದ್ಯದ ಅಡ್ಡೆ ತೆರೆದು ಜನರ ಸಂಚಾರಕ್ಕೆ ತೊಂದರೆ ಉಂಟು ಮಾಡುತ್ತಿದ್ದ ಆರೋಪವೂ ಕೇಳಿ ಬಂದಿದೆ. ಈ ಕುರಿತು ಬೆಟಗೇರಿ ಬಡಾವಣೆ ಪೊಲೀಸ್ ಠಾಣೆ
ಕರ್ನಾಟಕ ಅಬಕಾರಿ ಕಾಯ್ದೆ-1965ರ ಕಲಂ 32(3), 36 ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನೊಂದು ಬೆಟಗೇರಿ ಪೊಲೀಸ್ ಠಾಣೆಯಲ್ಲಿ ಕ್ರೈಂ ನಂ.45/2026
ಕರ್ನಾಟಕ ಅಬಕಾರಿ ಕಾಯ್ದೆ-1965ರ ಕಲಂ 32(3) ಅಡಿಯಲ್ಲಿ ದಾಖಲಾಗಿದೆ.
ಒಟ್ಟಿನಲ್ಲಿ ಅವಳಿ ನಗರದಲ್ಲಿ ವೈನ್ ಶಾಪ್ಗಳ ಹೆಸರಿನಲ್ಲಿ ಮಿನಿ ಬಾರ್ಗಳು ಹಾಗೂ ಅಕ್ರಮ ಮದ್ಯ ಮಾರಾಟ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಇಂತಹ ದಂಧೆಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮಕ್ಕೆ ಆಗ್ರಹಿಸಿದ್ದಾರೆ.