Home Blog

ಶಿಕ್ಷಕಿ ಬೈದರೆಂದು ಮನನೊಂದು 8ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ!

ಬೆಂಗಳೂರು: ಶಿಕ್ಷಕಿ ಬೈದರು ಎಂಬ ವಿಚಾರಕ್ಕೆ ಮನನೊಂದ 8ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಬೆಂಗಳೂರು ಹೊರವಲಯದ ಆನೇಕಲ್‌ ತಾಲೂಕಿನ ಮರಸೂರು ಮಡಿವಾಳದಲ್ಲಿ ನಡೆದಿದೆ.

ಮೃತ ವಿದ್ಯಾರ್ಥಿನಿಯನ್ನು ಮಧುಶ್ರೀ ಎಂದು ಗುರುತಿಸಲಾಗಿದೆ. ಆಕೆ ಮರಸೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 8ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಳು.

ಮಾಹಿತಿ ಪ್ರಕಾರ, ರಾತ್ರಿ ಮನೆಯಲ್ಲಿ ನೇಣು ಬಿಗಿದುಕೊಂಡು ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಬೆಳಗ್ಗೆ ಪೋಷಕರು ಎದ್ದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಘಟನಾ ಸ್ಥಳದಲ್ಲಿ ವಿದ್ಯಾರ್ಥಿನಿ ಬರೆದಿದ್ದ ಡೆತ್‌ನೋಟ್‌ ಕೂಡ ಪತ್ತೆಯಾಗಿದೆ.

ಡೆತ್‌ನೋಟ್‌ನಲ್ಲಿ ಶಾಲೆಯಲ್ಲಿ ನಡೆದ ಘಟನೆಯಿಂದ ತೀವ್ರ ನೋವಾಗಿದೆ ಎಂದು ವಿದ್ಯಾರ್ಥಿನಿ ಉಲ್ಲೇಖಿಸಿದ್ದಾಳೆ ಎನ್ನಲಾಗಿದೆ. ತನ್ನ ಮೇಲೆ ಇಲ್ಲಸಲ್ಲದ ಆರೋಪ ಮಾಡಲಾಗಿದೆ, ಈ ಅವಮಾನವನ್ನು ಸಹಿಸಿಕೊಂಡು ಬದುಕಲು ಸಾಧ್ಯವಾಗುತ್ತಿಲ್ಲ ಎಂದು ಬರೆದಿದ್ದಾಳೆ ಎಂದು ತಿಳಿದುಬಂದಿದೆ.

ಅಲ್ಲದೆ, ಅಮ್ಮ, ಅಕ್ಕ, ತಂಗಿ ಹಾಗೂ ತಮ್ಮನದ್ದು ಯಾವುದೇ ತಪ್ಪಿಲ್ಲ. ಯಾರೂ ತನ್ನ ತಾಯಿಯನ್ನು ಬೈಯಬಾರದು, ಎಲ್ಲರೂ ತನ್ನನ್ನು ಕ್ಷಮಿಸಬೇಕು ಎಂದು ವಿದ್ಯಾರ್ಥಿನಿ ಡೆತ್‌ನೋಟ್‌ನಲ್ಲಿ ಬರೆದಿದ್ದಾಳೆ ಎನ್ನಲಾಗಿದೆ.

ಘಟನೆ ಕುರಿತು ಮಾಹಿತಿ ತಿಳಿದ ತಕ್ಷಣ ಸೂರ್ಯನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಡೆತ್‌ನೋಟ್‌ ವಶಕ್ಕೆ ಪಡೆದಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ಇನ್ನರ್‌ವೀಲ್‌ಗೆ ಹೊಸ ಸಾರಥಿಗಳ ಪದಗ್ರಹಣ

ವಿಜಯಸಾಕ್ಷಿ ಸುದ್ದಿ, ಗದಗ: ಇನ್ನರ್‌ವೀಲ್ ಕ್ಲಬ್ ಗದಗ-ಬೆಟಗೇರಿಯ 2026-27ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಇಂದು ನಡೆಯಲಿದ್ದು, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಮಹಿಳೆಯರು ಸಂಸ್ಥೆಯ ಜವಾಬ್ದಾರಿಗಳನ್ನು ವಹಿಸಿಕೊಳ್ಳಲಿದ್ದಾರೆ.

ಅಧ್ಯಕ್ಷೆ- ಮಂಜುಳಾ ಅಕ್ಕಿ

ಲಕ್ಷ್ಮೇಶ್ವರ ಮೂಲದ ಶ್ರೀಮತಿ ಮಂಜುಳಾ ಎಫ್. ಅಕ್ಕಿ ಅವರು ಸಂಸ್ಥೆಯ ನೂತನ ಅಧ್ಯಕ್ಷೆಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಬಿ.ಎ., ಬಿ.ಎಡ್. ಹಾಗೂ ಎಂ.ಎ. ಪದವೀಧರರಾಗಿರುವ ಅವರು 2014ರಿಂದ ಇನ್ನರ್‌ವೀಲ್ ಕ್ಲಬ್‌ನ ಸಕ್ರಿಯ ಸದಸ್ಯೆಯಾಗಿದ್ದು, ಐಎಸ್‌ಒ, ಜಂಟಿ ಕಾರ್ಯದರ್ಶಿ, ಕಾರ್ಯದರ್ಶಿ ಹಾಗೂ ಉಪಾಧ್ಯಕ್ಷೆ ಸೇರಿದಂತೆ ವಿವಿಧ ಹುದ್ದೆಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ.

ಕಾರ್ಯದರ್ಶಿ – ಪೂಜಾ ಭೂಮಾ

ಶ್ರೀಮತಿ ಪೂಜಾ ಕಿರಣ್ ಭೂಮಾ ಅವರು ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಲಿದ್ದಾರೆ. ಬಿ.ಕಾಂ. ಹಾಗೂ ಎಂ.ಕಾಂ. ಪದವೀಧರರಾಗಿರುವ ಅವರು ಗದುಗಿನ ಉದ್ಯಮಿಗಳಾದ ಕಿರಣ್ ಭೂಮಾ ಅವರ ಧರ್ಮಪತ್ನಿಯಾಗಿದ್ದು, ಶುಭಂ ಜುವೆಲರ್ಸ್ ಸಂಸ್ಥೆಯ ಪ್ರೊಪ್ರೈಟರ್‌ ಆಗಿದ್ದಾರೆ. ಕ್ಲಬ್‌ನಲ್ಲಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿರುವ ಅವರು ಓದು ಹಾಗೂ ಚಿತ್ರಕಲೆಯಲ್ಲಿ ಆಸಕ್ತಿ ಹೊಂದಿದ್ದಾರೆ.

ಖಜಾಂಚಿ – ವೀಣಾ ಕಾವೇರಿ

ಶ್ರೀಮತಿ ವೀಣಾ ಕಾವೇರಿ ಅವರು ಖಜಾಂಚಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಎಂ.ಎಸ್‌ಸಿ., ಬಿ.ಎಡ್. ಪದವೀಧರರಾಗಿರುವ ಅವರು ಶಿಕ್ಷಕಿಯಾಗಿ ಹಾಗೂ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ಕ್ಲಬ್‌ನ ಸಕ್ರಿಯ ಸದಸ್ಯೆಯಾಗಿದ್ದು, ಕಳೆದ ಸಾಲಿನಲ್ಲಿ ಸಂಪಾದಕಿಯಾಗಿ ಕಾರ್ಯನಿರ್ವಹಿಸಿದ್ದರು.

ಐಎಸ್‌ಒ – ವಿದ್ಯಾ ಶಿವನಗುತ್ತಿ

ಶ್ರೀಮತಿ ವಿದ್ಯಾ ಶಿವನಗುತ್ತಿ ಅವರು ಐಎಸ್‌ಒ ಆಗಿ ಸೇವೆ ಸಲ್ಲಿಸಲಿದ್ದಾರೆ. ವಿದ್ಯಾರ್ಥಿ ಜೀವನದಲ್ಲಿ ಕ್ರೀಡಾ ಕ್ಷೇತ್ರದಲ್ಲಿ ಮಿಂಚಿದ್ದ ಅವರು ರೈಫಲ್ ಶೂಟಿಂಗ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದರು. “ಅಕ್ಕನ ಬಳಗ”ದ ಸಕ್ರಿಯ ಸದಸ್ಯೆಯಾಗಿರುವ ಅವರು ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಸಂಪಾದಕಿ – ಮೀನಾಕ್ಷಿ ಕೊರವನವರ

ಶ್ರೀಮತಿ ಮೀನಾಕ್ಷಿ ಕೊರವನವರ ಅವರು ಸಂಸ್ಥೆಯ ಸಂಪಾದಕಿಯಾಗಿ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ. ಅಧ್ಯಾಪಕಿಯಾಗಿ ಸೇವೆ ಸಲ್ಲಿಸಿರುವ ಅವರು ಇನ್ನರ್‌ವೀಲ್ ಕ್ಲಬ್ ಹಾಗೂ ಕದಳಿ ವೇದಿಕೆಯ ಸಕ್ರಿಯ ಸದಸ್ಯೆಯಾಗಿದ್ದು, ವಿವಿಧ ಸಾಮಾಜಿಕ ಸೇವಾ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದ್ದಾರೆ. ತೋಟಗಾರಿಕೆ ಮತ್ತು ಚಿತ್ರಕಲೆ ಅವರ ಹವ್ಯಾಸಗಳಾಗಿವೆ.

ನೂತನ ಪದಾಧಿಕಾರಿಗಳ ತಂಡದ ನೇತೃತ್ವದಲ್ಲಿ ಇನ್ನರ್‌ವೀಲ್ ಕ್ಲಬ್ ಗದಗ-ಬೆಟಗೇರಿ ಮತ್ತಷ್ಟು ಸಮಾಜಮುಖಿ ಸೇವಾ ಕಾರ್ಯಕ್ರಮಗಳನ್ನು ಕೈಗೊಳ್ಳುವ ವಿಶ್ವಾಸವನ್ನು ಸದಸ್ಯರು ವ್ಯಕ್ತಪಡಿಸಿದ್ದಾರೆ.

ಅರ್ಧಕ್ಕೆ ನಿಂತ ಸೇತುವೆ ಕಾಮಗಾರಿ..!

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಶಿಗ್ಲಿ–ದೊಡ್ಡೂರ ರಸ್ತೆಯ ಮಧ್ಯೆ ನಿರ್ಮಾಣವಾಗುತ್ತಿರುವ ಕಿರು ಸೇತುವೆ ಕಾಮಗಾರಿ ವಿಳಂಬವಾಗಿರುವ ಪರಿಣಾಮ ಸಾರ್ವಜನಿಕರು ಜೀವಭಯದಲ್ಲೇ ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಾಮಗಾರಿಗಾಗಿ ನಿರ್ಮಿಸಿರುವ ತಾತ್ಕಾಲಿಕ ಕಚ್ಚಾ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಪ್ರತಿದಿನ ವಾಹನ ಸವಾರರು, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ.

ಲಕ್ಷ್ಮೇಶ್ವರದಿಂದ ಶಿಗ್ಲಿ, ಸೂರಣಗಿ, ಬಾಳೆಹೊಸೂರು ಮಾರ್ಗವಾಗಿ ಅನ್ಯ ಜಿಲ್ಲೆಗಳು ಹಾಗೂ ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ಈ ಪಿಡಬ್ಲ್ಯುಡಿ ರಸ್ತೆ ಪ್ರಮುಖ ಸಂಚಾರ ಮಾರ್ಗವಾಗಿದೆ. ಲಕ್ಷ್ಮೇಶ್ವರ–ದೊಡ್ಡೂರ ರಸ್ತೆ ಹಾಳಾಗಿರುವ ಕಾರಣ ಹೆಚ್ಚಿನ ವಾಹನಗಳು ಇದೇ ಮಾರ್ಗವನ್ನು ಅವಲಂಬಿಸಿವೆ. ಪ್ರತಿನಿತ್ಯ ನೂರಾರು ವಿದ್ಯಾರ್ಥಿಗಳು, ಸಾರ್ವಜನಿಕರು ಹಾಗೂ ಸರಕು ಸಾಗಣೆ ವಾಹನಗಳು ಇದೇ ರಸ್ತೆಯಲ್ಲಿ ಸಂಚರಿಸುತ್ತಿವೆ.

ಸೇತುವೆ ಕಾಮಗಾರಿಗಾಗಿ ನಿರ್ಮಿಸಿರುವ ಪರ್ಯಾಯ ಕಚ್ಚಾ ರಸ್ತೆಯಲ್ಲಿ ಮರಳು, ಖಡಿ, ಎಂ-ಸ್ಯಾಂಡ್ ಮತ್ತು ಮಣ್ಣನ್ನು ಹೊತ್ತ ಓವರ್‌ಲೋಡ್ ಲಾರಿಗಳ ನಿರಂತರ ಓಡಾಟದಿಂದ ರಸ್ತೆ ಸಂಪೂರ್ಣ ಹಾಳಾಗಿದೆ. ಪರಿಣಾಮ ವಾಹನಗಳು ಗುಂಡಿ-ಗುಂಡಿಗಳಲ್ಲಿ ಎದ್ದುಬಿದ್ದು ಸಾಗುತ್ತಿವೆ. ಮಳೆ ಬಂದರೆ ರಸ್ತೆ ಕೆಸರುಮಯವಾಗಿ ವಾಹನಗಳು ಸಿಲುಕಿಕೊಳ್ಳುತ್ತಿದ್ದು, ಕೆಲವೊಮ್ಮೆ ಗಂಟೆಗಟ್ಟಲೆ ಸಂಚಾರ ಸ್ಥಗಿತಗೊಳ್ಳುವ ಪರಿಸ್ಥಿತಿ ಎದುರಾಗುತ್ತಿದೆ.

ಇತ್ತೀಚೆಗೆ ಇದೇ ರಸ್ತೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್ ಕಂದಕಕ್ಕೆ ಜಾರಿ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ 30ಕ್ಕೂ ಹೆಚ್ಚು ಪ್ರಯಾಣಿಕರು ಹಾಗೂ 15ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಾಯಗೊಂಡಿದ್ದರು. ಇಷ್ಟೊಂದು ಗಂಭೀರ ಅಪಘಾತ ನಡೆದಿದ್ದರೂ ಗುತ್ತಿಗೆದಾರರು, ಪಿಡಬ್ಲ್ಯುಡಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಎಚ್ಚೆತ್ತುಕೊಂಡಿಲ್ಲ ಎಂಬ ಆರೋಪ ಸಾರ್ವಜನಿಕರಿಂದ ಕೇಳಿಬರುತ್ತಿದೆ.

ಸುಮಾರು ₹25 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಕಿರು ಸೇತುವೆ ಕಾಮಗಾರಿಗೆ ಮಾರ್ಚ್ ತಿಂಗಳಲ್ಲೇ ಕಾರ್ಯಾದೇಶ ನೀಡಲಾಗಿತ್ತು. ಇಲಾಖೆಯು ಆರು ತಿಂಗಳ ಕಾಲಾವಕಾಶ ನೀಡಿರುವುದರಿಂದ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದೆ ಎಂಬ ಟೀಕೆ ವ್ಯಕ್ತವಾಗಿದೆ. ಸೇತುವೆ ನಿರ್ಮಾಣದ ಜೊತೆಗೆ ಪರ್ಯಾಯ ರಸ್ತೆಯನ್ನೂ ಸುಗಮವಾಗಿ ನಿರ್ವಹಿಸಬೇಕಿದ್ದರೂ ನಿರ್ಲಕ್ಷ್ಯ ವಹಿಸಿರುವುದರಿಂದ ಸಾರ್ವಜನಿಕರ ಪರದಾಟ ಹೆಚ್ಚಾಗಿದೆ.

ಸೂರಣಗಿ ಗ್ರಾಮದ ಮಾಜಿ ತಾಪಂ ಸದಸ್ಯ ಕೋಟೆಪ್ಪ ವರ್ದಿ ಹಾಗೂ ಬಾಳೆಹೊಸೂರಿನ ಫಕ್ಕಿರೇಶ ಮ್ಯಾಟಣ್ಣವರ ಮಾತನಾಡಿ, ಮತ್ತೊಂದು ಅಪಘಾತ ಸಂಭವಿಸುವ ಮೊದಲು ಸೇತುವೆ ಕಾಮಗಾರಿ ಪೂರ್ಣಗೊಳಿಸಿ ಸಂಚಾರಕ್ಕೆ ಮುಕ್ತಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಪಿಡಬ್ಲ್ಯುಡಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಶಾಂತ ಹೊಸಬಾವಿ, “ಕಿರು ಸೇತುವೆ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಸೇತುವೆ ಮೇಲಿನ ರಸ್ತೆ ನಿರ್ಮಾಣ ಮಾತ್ರ ಬಾಕಿಯಿದ್ದು, ಗುತ್ತಿಗೆದಾರರಿಗೆ ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸಿ ಸಂಚಾರಕ್ಕೆ ಮುಕ್ತಗೊಳಿಸುವಂತೆ ಸೂಚಿಸಲಾಗುವುದು” ಎಂದು ತಿಳಿಸಿದ್ದಾರೆ.

“ಪರ್ಯಾಯ ಕಚ್ಚಾ ರಸ್ತೆ ಸಂಪೂರ್ಣ ಹಾಳಾಗಿದ್ದು, ಶಾಲಾ ಮಕ್ಕಳು, ರೈತರು ಹಾಗೂ ಸಾರ್ವಜನಿಕರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ಅಧಿಕಾರಿಗಳು ಮತ್ತು ಗುತ್ತಿಗೆದಾರರು ಕೂಡಲೇ ಕಾಮಗಾರಿ ಪೂರ್ಣಗೊಳಿಸಬೇಕು.”

– ಫಕ್ಕಿರೇಶ ಮ್ಯಾಟಣ್ಣವರ, ಬಾಳೆಹೊಸೂರು

ಭಗವಂತನಿತ್ತ ಸಂಪತ್ತೇ ಬದುಕಿನ ನಿಜವಾದ ಐಶ್ವರ್ಯ: ರಂಭಾಪುರಿ ಶ್ರೀ

ವಿಜಯಸಾಕ್ಷಿ ಸುದ್ದಿ, ಚಿಕ್ಕಮಗಳೂರು: ದೇಶ ಮತ್ತು ಧರ್ಮವು ಮನುಷ್ಯನ ಎರಡು ಕಣ್ಣುಗಳಾಗಿದ್ದು, ಪ್ರಗತಿಪರ ವಿಚಾರಧಾರೆಗಳ ಹೆಸರಿನಲ್ಲಿ ಭಾರತೀಯ ಆಧ್ಯಾತ್ಮಿಕ ಸಂಸ್ಕೃತಿ ನಾಶವಾಗಬಾರದು. ಭಗವಂತನಿತ್ತ ಸಂಪತ್ತೇ ಬದುಕಿನ ನಿಜವಾದ ಅಮೂಲ್ಯ ಸಂಪತ್ತು ಎಂಬುದನ್ನು ಯಾರೂ ಮರೆಯಬಾರದು ಎಂದು ಬಾಳೆಹೊನ್ನೂರಿನ ಶ್ರೀ ರಂಭಾಪುರಿ ವೀರಸಿಂಹಾಸನ ಮಹಾಸಂಸ್ಥಾನ ಪೀಠದ ಜಗದ್ಗುರು ಡಾ. ವೀರಸೋಮೇಶ್ವರ ಶಿವಾಚಾರ್ಯರು ಹೇಳಿದರು.

ಚಿಕ್ಕಮಗಳೂರು ನಗರದ ವೀರಶೈವ ಲಿಂಗಾಯತ ಸಮುದಾಯ ಭವನದ ಆವರಣದಲ್ಲಿ ನಿರ್ಮಿಸಲಾದ ಶ್ರೀ ಈಶ್ವರ ದೇವಸ್ಥಾನದ ಉದ್ಘಾಟನೆ, ಲಿಂಗ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಅಂಗವಾಗಿ ನಡೆದ ಧರ್ಮಜಾಗೃತಿ ಸಮಾರಂಭದಲ್ಲಿ ಆಶೀರ್ವಚನ ನೀಡಿದ ಅವರು, ದೇವರು ಮತ್ತು ಧರ್ಮವನ್ನು ಮರೆಯದ ಬದುಕೇ ಶಾಶ್ವತ ನೆಮ್ಮದಿಯ ಬದುಕು ಎಂದರು.

ದೇವರ ಮೇಲಿನ ನಂಬಿಕೆ ಮನುಷ್ಯನ ಬದುಕಿಗೆ ನಂದಾದೀಪವಾಗಿದ್ದು, ದೇವರು ಎಲ್ಲರಲ್ಲೂ ಇದ್ದರೂ ದೇವರಲ್ಲಿ ಎಲ್ಲರೂ ಇರುವುದಿಲ್ಲ. ಮಾನವ ಪರಿಪೂರ್ಣತೆಯತ್ತ ಸಾಗುವುದೇ ನಿಜವಾದ ಧರ್ಮ ಎಂಬುದನ್ನು ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ್ದಾರೆ. ಅಖಂಡತೆಗೆ ಇರುವ ಬೆಲೆ ಒಡಕಿಗೆ ಸಿಗುವುದಿಲ್ಲ ಎಂಬ ಸತ್ಯವನ್ನು ಪ್ರತಿಯೊಬ್ಬರೂ ಅರಿಯಬೇಕು ಎಂದು ತಿಳಿಸಿದರು.

ನಗರದಲ್ಲಿ ನಿರ್ಮಾಣಗೊಂಡಿರುವ ಶ್ರೀಮತಿ ಮೈತ್ರಾದೇವಿ–ಬಿ.ಎಸ್. ಯಡಿಯೂರಪ್ಪ ವೀರಶೈವ ಲಿಂಗಾಯತ ಭವನ ಸಮಾಜದ ಐಕ್ಯತೆಯ ಪ್ರತೀಕವಾಗಿದೆ. ಇದರ ನಿರ್ಮಾಣಕ್ಕೆ ಸಹಕರಿಸಿದ ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಸೇರಿದಂತೆ ಎಲ್ಲ ಸಮಾಜಬಾಂಧವರ ಸೇವೆ ಶ್ಲಾಘನೀಯ ಎಂದು ಜಗದ್ಗುರುಗಳು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿ, ಪರಿಪಕ್ವ ಸಮಾಜ ನಿರ್ಮಾಣವೇ ನಿಜವಾದ ಧರ್ಮ. ಸಮಾಜದ ಸಂಘಟಿತ ಪ್ರಯತ್ನದಿಂದ ನಿರ್ಮಾಣಗೊಂಡ ಈ ಭವನ ಇತರರಿಗೆ ಮಾದರಿಯಾಗಿದೆ ಎಂದು ಹೇಳಿದರು.

ಚಿಕ್ಕಮಗಳೂರು ಶಾಸಕ ಎಚ್.ಡಿ. ತಮ್ಮಯ್ಯ ಮಾತನಾಡಿ, ನಗರಕ್ಕೆ ಈ ಭವ್ಯ ಭವನ ಮತ್ತು ದೇವಸ್ಥಾನ ಹೊಸ ಕಳಸವಿಟ್ಟಂತಾಗಿದೆ. ಸಮಾಜವನ್ನು ಒಗ್ಗೂಡಿಸುವ ಕಾರ್ಯಕ್ಕೆ ಧಾರ್ಮಿಕ ಕೇಂದ್ರಗಳು ಪೂರಕವಾಗಿವೆ ಎಂದು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಂ.ಎಲ್. ಮೂರ್ತಿ ಹಾಗೂ ದೇವಸ್ಥಾನದ ದಾನಿಗಳಾದ ಸಂಗೀತಾ–ಎಸ್.ಬಿ. ತಿಪ್ಪಾರೆಡ್ಡಿ ಕುಟುಂಬವನ್ನು ಸನ್ಮಾನಿಸಲಾಯಿತು. ವಿವಿಧ ಮಠಾಧೀಶರು, ಸಮಾಜದ ಮುಖಂಡರು ಹಾಗೂ ನೂರಾರು ಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

“ದೇವರ ಮೇಲಿನ ನಂಬಿಕೆ ಬದುಕಿನ ಶಾಶ್ವತ ನಂದಾದೀಪ; ಭಗವಂತನಿತ್ತ ಸಂಪತ್ತೇ ನಿಜವಾದ ಐಶ್ವರ್ಯ.”

– ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಶಿವಾಚಾರ್ಯರು

“ಧರೆಗೆ ಇಳಿದು ಬಾ ಮಳೆರಾಯ” ಎಂದು ಪ್ರಾರ್ಥಿಸಿದ ರೈತ ಮಹಿಳೆಯರು: ಜಕ್ಕಲಿಯಲ್ಲಿ ವಿಶೇಷ ಪೂಜೆ

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಮುಂಗಾರು ಕೈಕೊಟ್ಟು ಹೊಲಗಳಲ್ಲಿ ಬೆಳೆಗಳು ಒಣಗಲಾರಂಭಿಸಿರುವ ಹಿನ್ನೆಲೆಯಲ್ಲಿ ಸಮೀಪದ ಜಕ್ಕಲಿ ಗ್ರಾಮದ ರೈತ ಮಹಿಳೆಯರು ಶ್ರೀ ಕಲ್ಮೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, “ಧರೆಗೆ ಇಳಿದು ಬೇಗ ಬಾ ಮಳೆರಾಯ” ಎಂದು ವರುಣ ದೇವರಲ್ಲಿ ಪ್ರಾರ್ಥಿಸಿದರು.

ಹೆಸರು, ಜೋಳ, ತೊಗರಿ ಸೇರಿದಂತೆ ವಿವಿಧ ಬೆಳೆಗಳ ಬಿತ್ತನೆ ಮಾಡಿದ ರೈತರು ಮಳೆ ಕೊರತೆಯಿಂದ ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆ, ಮಹಿಳೆಯರು ಶ್ರೀ ಕಲ್ಮೇಶ್ವರ ಹಾಗೂ ಉಕ್ಕಿ ಬಸವಣ್ಣ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಉತ್ತಮ ಮಳೆಯಾಗಿ ರೈತರ ಬದುಕು ಹಸನಾಗಲಿ ಎಂದು ಸಂಕಲ್ಪ ಮಾಡಿದರು. ಕಳೆದ ಹತ್ತು ವರ್ಷಗಳಿಂದ ಈ ಸಂಪ್ರದಾಯವನ್ನು ಗ್ರಾಮದಲ್ಲಿ ನಿರಂತರವಾಗಿ ಆಚರಿಸಲಾಗುತ್ತಿದೆ.

ಕಾರ್ಯಕ್ರಮದಲ್ಲಿ ಮಳೆ ಭವಿಷ್ಯ ತಿಳಿಯುವ ಪಾರಂಪರಿಕ ಆಚರಣೆಗಳಾದ ಸೆಗಣಿಯ ಬೂದಪ್ಪ ಹಾಗೂ ಜೋಳದ ದಂಟುಗಳ ಮೂಲಕ ಮಳೆ ಅಂದಾಜಿಸುವ ಪದ್ಧತಿ ನಡೆಸಲಾಯಿತು. ಬಳಿಕ ಹೂಗಳಿಂದ ಅಲಂಕರಿಸಿದ ತುಂಬಿದ ಕೊಡವನ್ನು ಮಹಿಳೆಯರು ಮತ್ತು ಮಕ್ಕಳು ಸೇರಿ ತಿರುಗಿಸುವ ಮೂಲಕ ಮಳೆಯ ಭವಿಷ್ಯ ತಿಳಿಯುವ ಸಂಪ್ರದಾಯಕ್ಕೂ ಜೀವ ತುಂಬಿದರು.

ಈ ವೇಳೆ ಸುಮ್ಮವ್ವ ಹೂಗಾರ ಅವರು ಉತ್ತಮ ಮಳೆಯಾಗಿ ರೈತರ ಬದುಕು ಸಮೃದ್ಧಿಯಾಗಲಿ ಎಂದು ದೇವರ ಸನ್ನಿಧಿಯಲ್ಲಿ ಐದು ಸುತ್ತು ದೀರ್ಘ ನಮಸ್ಕಾರ ಹಾಕಿ ಹರಕೆ ಸಲ್ಲಿಸಿದ್ದು ಭಕ್ತರ ಗಮನ ಸೆಳೆಯಿತು.

ಮಹಿಳೆಯರು ಮಡಿ ಬಟ್ಟೆ ಧರಿಸಿ ಕೊಡಗಳಲ್ಲಿ ನೀರು ತುಂಬಿಕೊಂಡು “ಓಂ ನಮಃ ಶಿವಾಯ” ಜಪಿಸುತ್ತಾ ಜಲಾಭಿಷೇಕ ನೆರವೇರಿಸಿದರು. ಬಸವಣ್ಣನವರ ವಚನಗಳು, ಭಕ್ತಿಪದಗಳು ಹಾಗೂ ಜನಪದ ಗೀತೆಗಳ ಗಾಯನದೊಂದಿಗೆ ದೇವಸ್ಥಾನದಲ್ಲಿ ಭಕ್ತಿಯ ವಾತಾವರಣ ನಿರ್ಮಾಣವಾಯಿತು. ಬಳಿಕ ಶಿರಾ ಹಾಗೂ ಸಂಗಟಿ-ಸಾರು ಅನ್ನಸಂತರ್ಪಣೆ ನಡೆಯಿತು.

ಇದೇ ಸಂದರ್ಭದಲ್ಲಿ ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯ ಹುರ್ರಾ ಟಾಪ್ ಶಿಖರ ಏರಿ ಸಾಧನೆ ಮಾಡಿದ ಜಕ್ಕಲಿ ಗ್ರಾಮದ ಪ್ರತಿಭಾವಂತ ಯುವತಿ ಸೃಷ್ಟಿ ಉಮೇಶ ಮೇಟಿ ಅವರನ್ನು ಶ್ರೀ ಕಲ್ಮೇಶ್ವರ ದೇವಸ್ಥಾನ ಸಮಿತಿಯಿಂದ ಸನ್ಮಾನಿಸಲಾಯಿತು.

ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಮಲ್ಲಿಕಾರ್ಜುನ ಮೇಟಿ ಹಾಗೂ ಡಾ. ಎ.ವಿ. ನರೇಗಲ್ಲ, ಸೃಷ್ಟಿ ಮೇಟಿ ಅವರ ಸಾಧನೆ ಗ್ರಾಮೀಣ ಯುವಜನತೆಗೆ ಸ್ಫೂರ್ತಿಯಾಗಿದ್ದು, ಹಳ್ಳಿಯ ಪ್ರತಿಭೆಗಳು ರಾಷ್ಟ್ರೀಯ ಮಟ್ಟದಲ್ಲೂ ಸಾಧನೆ ಮಾಡಬಹುದೆಂಬುದನ್ನು ಸಾಬೀತುಪಡಿಸಿದ್ದಾರೆ ಎಂದು ಶ್ಲಾಘಿಸಿದರು.

ಗುರುಲಿಂಗಮೂರ್ತಿ ಮಂಟಯ್ಯನವರಮಠ, ಅಶೋಕಪ್ಪ ಯಾವಗಲ್ಲ, ಪ್ರಭು ರೇಣುಕಮಠ, ಸಂಗಮೇಶ ಮೆಣಸಗಿ, ಶೇಖರ ಯಾವಗಲ್ಲ, ಸುಭಾಷ ಪಲ್ಲೇದ, ಶಿವಪುತ್ರಯ್ಯ ಸರಗಣಾಚಾರಿ, ಮುನಿಯಪ್ಪ ಪಲ್ಲೇದ, ಚನ್ನಬಸವ ಅರಹುಣಸಿ, ಉಮೇಶ ಮೇಟಿ, ಮಂಜುನಾಥ ಪಲ್ಲೇದ, ಕುಬೇರಪ್ಪ ಪಲ್ಲೇದ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ನೀಲಾಂಬಿಕೆ ಮೇಟಿ ಹಾಗೂ ಮಹೇಶಮ್ಮ ಹೈತಾಪೂರ ಅವರ ನೇತೃತ್ವದಲ್ಲಿ ನೂರಾರು ರೈತ ಮಹಿಳೆಯರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಮಳೆಗಾಗಿ “ಕೊಡ ತಿರುಗಿಸುವ” ವಿಶಿಷ್ಟ ಸಂಪ್ರದಾಯ

ಜಕ್ಕಲಿ ಗ್ರಾಮದಲ್ಲಿ ಮಳೆಗಾಗಿ ಪಾರಂಪರಿಕ “ಕೊಡ ತಿರುಗಿಸುವ” ಆಚರಣೆ ವಿಶೇಷ ಆಕರ್ಷಣೆಯಾಗಿತ್ತು. ಹೂಗಳಿಂದ ಅಲಂಕರಿಸಿದ ನೀರು ತುಂಬಿದ ಕೊಡದ ಕೆಳಗೆ ಜೋಳ ಹಾಕಿ, ಮಕ್ಕಳು ಹಾಗೂ ಸುಮಂಗಲಿ ಮಹಿಳೆಯರು ಸೇರಿ ಕೊಡ ತಿರುಗಿಸಿದರು. ಗ್ರಾಮಸ್ಥರ ನಂಬಿಕೆಯಂತೆ ಕೊಡ ವೇಗವಾಗಿ ತಿರುಗಿದರೆ ಉತ್ತಮ ಮಳೆಯಾಗುತ್ತದೆ, ನಿಧಾನವಾಗಿ ತಿರುಗಿದರೆ ಕಡಿಮೆ ಮಳೆಯಾಗುತ್ತದೆ. ಕೊಡದಿಂದ ನೀರು ಹೊರಗೆ ಚೆಲ್ಲಿದರೆ ಶೀಘ್ರದಲ್ಲೇ ಮಳೆಯಾಗುತ್ತದೆ ಎಂಬ ನಂಬಿಕೆ ಇಂದಿಗೂ ಜೀವಂತವಾಗಿದೆ. ಗ್ರಾಮೀಣ ಸಂಪ್ರದಾಯ ಮತ್ತು ರೈತರ ಪ್ರಕೃತಿ ನಂಬಿಕೆಗೆ ಈ ಆಚರಣೆ ಸಾಕ್ಷಿಯಾಯಿತು.

‘ಕಾಂಗ್ರೆಸ್ ಹಠಾವೋ, ತಾಂಡಾ ಬಚಾವೋ’ ಹೋರಾಟದ ಎಚ್ಚರಿಕೆ

ವಿಜಯಸಾಕ್ಷಿ ಸುದ್ದಿ, ಗದಗ: ಕಾಂಗ್ರೆಸ್ ಸರ್ಕಾರದ ಒಳಮೀಸಲಾತಿ ನೀತಿಯಿಂದ ಬಂಜಾರ ಸಮುದಾಯಕ್ಕೆ ಅನ್ಯಾಯವಾಗಿದ್ದು, ಇದನ್ನು ಖಂಡಿಸಿ ಹಾಗೂ ತಾಂಡಾಗಳಲ್ಲಿ ಜಾಗೃತಿ ಮೂಡಿಸಲು ಶೀಘ್ರದಲ್ಲೇ ‘ಕಾಂಗ್ರೆಸ್ ಹಠಾವೋ, ತಾಂಡಾ ಬಚಾವೋ’ ಆಂದೋಲನ ಆರಂಭಿಸಲಾಗುವುದು ಎಂದು ಮಾಜಿ ಸಂಸದ ಡಾ. ಉಮೇಶ್ ಜಾಧವ್ ಹೇಳಿದರು.

ನಗರದ ಬಿಜೆಪಿ ಕಚೇರಿಯಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಗಮೋಹನ್ ದಾಸ್ ವರದಿಯಲ್ಲಿನ ದತ್ತಾಂಶಗಳ ಆಧಾರದ ಮೇಲೆ ಜಾರಿಯಾದ ಒಳಮೀಸಲಾತಿಯಿಂದ ಬಂಜಾರ ಸಮುದಾಯಕ್ಕೆ ತೀವ್ರ ಅನ್ಯಾಯವಾಗಿದೆ ಎಂದು ಆರೋಪಿಸಿದರು.

ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವಧಿಯಲ್ಲಿ ಸಚಿವ ಸಂಪುಟದ ಉಪಸಮಿತಿ ನ್ಯಾಯಯುತವಾಗಿ ಮೀಸಲಾತಿ ಹಂಚಿಕೆ ಮಾಡಿತ್ತು. ಆದರೆ ಈಗಿನ ಕಾಂಗ್ರೆಸ್ ಸರ್ಕಾರ ಆ ವ್ಯವಸ್ಥೆಯನ್ನು ಹಾಳುಮಾಡಿದ್ದು, ತಕ್ಷಣ ಮರುಪರಿಶೀಲನೆ ನಡೆಸಬೇಕು ಎಂದು ಒತ್ತಾಯಿಸಿದರು.

ಹೂವಿನಹಡಗಲಿ ಶಾಸಕ ಪ್ರಭು ಚವ್ಹಾಣ ಮಾತನಾಡಿ, ಒಳಮೀಸಲಾತಿಯಿಂದ ಬಂಜಾರ ಸಮಾಜದ ವಿದ್ಯಾರ್ಥಿಗಳಿಗೆ ಶಿಕ್ಷಣ ಹಾಗೂ ವಸತಿ ನಿಲಯಗಳ ಪ್ರವೇಶದಲ್ಲಿ ಅನ್ಯಾಯವಾಗುತ್ತಿದೆ. ಸರ್ಕಾರ ತಕ್ಷಣ ಕ್ರಮ ಕೈಗೊಳ್ಳದಿದ್ದರೆ ಬಸ್-ರೈಲು ತಡೆ ಹಾಗೂ ಮುಖ್ಯಮಂತ್ರಿ ಮತ್ತು ಸಚಿವರ ಮುತ್ತಿಗೆ ಸೇರಿದಂತೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ ಮಾತನಾಡಿ, ಬಂಜಾರ ಸಮಾಜವನ್ನು ಪರಿಶಿಷ್ಟ ಜಾತಿ ಮೀಸಲಾತಿಯಿಂದ ಬಿಜೆಪಿ ಹೊರಗಿಡಲಿದೆ ಎಂದು ಕಾಂಗ್ರೆಸ್ ಸುಳ್ಳು ಪ್ರಚಾರ ನಡೆಸಿತ್ತು. ಆದರೆ ಈಗ ಅದೇ ಕಾಂಗ್ರೆಸ್ ಸರ್ಕಾರ ಸಮುದಾಯಕ್ಕೆ ಅನ್ಯಾಯ ಮಾಡಿದೆ ಎಂದು ಆರೋಪಿಸಿದರು. ನಾಗಮೋಹನ್ ದಾಸ್ ವರದಿಯಡಿ ಮೀಸಲಾತಿ ಹಂಚಿಕೆಯಿಂದ ಬಂಜಾರ ಸೇರಿದಂತೆ ಹಲವು ಸಮುದಾಯಗಳಿಗೆ ಹಿನ್ನಡೆಯಾಗಿದ್ದು, ಮುಂಬರುವ ಜಂಟಿ ಅಧಿವೇಶನದಲ್ಲಿ ಈ ಲೋಪ ಸರಿಪಡಿಸದಿದ್ದರೆ ರಾಜ್ಯಾದ್ಯಂತ ಹೋರಾಟ ಅನಿವಾರ್ಯ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಹೂವಿನಹಡಗಲಿ ಶಾಸಕ ಕೃಷ್ಣ ನಾಯಕ, ಭೀಮಸಿಂಗ್ ರಾಥೋಡ್, ಬಸವರಾಜ ನಾಯಕ, ಮಣಿಕಂಠ ರಾಥೋಡ್, ಎಸ್.ಪಿ. ಲಿಂಬ್ಯನಾಯಕ್, ಮಂಜಾನಾಯಕ್ ಹಾಗೂ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಲಿಂಗರಾಜ ಪಾಟೀಲ ಉಪಸ್ಥಿತರಿದ್ದರು.

“ನಾಗಮೋಹನ್ ದಾಸ್ ವರದಿಯಡಿ ಮೀಸಲಾತಿ ಹಂಚಿಕೆಯಿಂದ ಬಂಜಾರ ಸೇರಿದಂತೆ ಹಲವು ಸಮುದಾಯಗಳಿಗೆ ಹಿನ್ನಡೆಯಾಗಿದೆ. ಮುಂಬರುವ ಜಂಟಿ ಅಧಿವೇಶನದಲ್ಲಿ ಈ ಲೋಪ ಸರಿಪಡಿಸದಿದ್ದರೆ ರಾಜ್ಯಾದ್ಯಂತ ಹೋರಾಟ ಅನಿವಾರ್ಯ.”

– ಡಾ. ಚಂದ್ರು ಲಮಾಣಿ, ಶಾಸಕ

ಮೀಸಲಾತಿಗೆ ಧಕ್ಕೆ ಆದರೆ ಕಾಂಗ್ರೆಸ್ ವಿರುದ್ಧ ರಾಜ್ಯವ್ಯಾಪಿ ಹೋರಾಟ: ಶಾಸಕ ಡಾ. ಚಂದ್ರು ಕೆ. ಲಮಾಣಿ

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ರಾಜ್ಯ ಸರ್ಕಾರ ಜಾರಿಗೊಳಿಸುತ್ತಿರುವ ಒಳಮೀಸಲಾತಿಯಿಂದ ಬಂಜಾರ ಸಮಾಜಕ್ಕೆ ಅನ್ಯಾಯವಾಗುವ ಸಾಧ್ಯತೆ ಇದೆ. ಸರ್ಕಾರ ತನ್ನ ನಿರ್ಧಾರವನ್ನು ಮರುಪರಿಶೀಲಿಸಿ ಸಮಾಜಕ್ಕೆ ನ್ಯಾಯ ಒದಗಿಸದಿದ್ದರೆ, ರಾಜ್ಯಾದ್ಯಂತ ‘ಕಾಂಗ್ರೆಸ್ ಹಠಾವೋ, ತಾಂಡಾ ಬಚಾವೋ’ ಅಭಿಯಾನ ಆರಂಭಿಸಲಾಗುವುದು ಎಂದು ಶಿರಹಟ್ಟಿ ಶಾಸಕ ಡಾ. ಚಂದ್ರು ಕೆ. ಲಮಾಣಿ ಎಚ್ಚರಿಕೆ ನೀಡಿದರು.

ತಾಲೂಕಿನ ವರವಿಯ ಶ್ರೀ ಮೌನೇಶ್ವರ ಮಠದ ಕಲ್ಯಾಣ ಮಂಟಪದಲ್ಲಿ ಗದಗ ಜಿಲ್ಲಾ ಬಂಜಾರ ಸಮಾಜ ಆಯೋಜಿಸಿದ್ದ ‘ದಿಕ್ಸೂಚಿ ಬಂಜಾರ – ನಮ್ಮ ಮೀಸಲಾತಿ, ನಮ್ಮ ಹಕ್ಕು’ ಚಿಂತನಾ ಸಮಾವೇಶದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಒಳಮೀಸಲಾತಿ ಹಂಚಿಕೆ ವೇಳೆ ಬಂಜಾರ ಸಮಾಜದ ಜನಸಂಖ್ಯೆ, ಸಾಮಾಜಿಕ ಹಾಗೂ ಶೈಕ್ಷಣಿಕ ಹಿಂದುಳಿದಿರುವಿಕೆ ಸೇರಿದಂತೆ ವಾಸ್ತವಾಂಶಗಳನ್ನು ಪರಿಗಣಿಸದೆ ನಿರ್ಧಾರ ಕೈಗೊಳ್ಳಲಾಗಿದೆ. ಇದರಿಂದ ಸಮಾಜದ ವಿದ್ಯಾರ್ಥಿಗಳು ಮತ್ತು ಯುವಕರಿಗೆ ಶಿಕ್ಷಣ ಹಾಗೂ ಸರ್ಕಾರಿ ಉದ್ಯೋಗಗಳಲ್ಲಿ ಅನ್ಯಾಯವಾಗುವ ಸಾಧ್ಯತೆ ಇದೆ. ಬಂಜಾರ ಸಮಾಜದ ಹಕ್ಕುಗಳನ್ನು ರಕ್ಷಿಸುವುದು ಸರ್ಕಾರದ ಜವಾಬ್ದಾರಿಯಾಗಿದ್ದು, ತಕ್ಷಣ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಸರ್ಕಾರ ನಿರ್ಧಾರ ಬದಲಿಸದಿದ್ದರೆ ತಾಂಡಾಗಳಿಂದ ಆರಂಭಿಸಿ ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ಪ್ರತಿಭಟನೆ, ಧರಣಿ, ರಸ್ತೆ ತಡೆ ಸೇರಿದಂತೆ ವಿವಿಧ ಹೋರಾಟಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ಮಾಜಿ ಸಂಸದ ಡಾ. ಉಮೇಶ ಜಾಧವ ಹಾಗೂ ಔರಾದ ಶಾಸಕ ಪ್ರಭು ಚವ್ಹಾಣ ಮಾತನಾಡಿ, ಬಂಜಾರ ಸಮಾಜ ಹಲವು ದಶಕಗಳಿಂದ ಶಿಕ್ಷಣ, ಉದ್ಯೋಗ, ರಾಜಕೀಯ ಪ್ರಾತಿನಿಧ್ಯ ಹಾಗೂ ಮೂಲಭೂತ ಸೌಲಭ್ಯಗಳಿಗಾಗಿ ಹೋರಾಟ ನಡೆಸುತ್ತ ಬಂದಿದೆ. ಸಾಮಾಜಿಕ ನ್ಯಾಯದ ಹೆಸರಿನಲ್ಲಿ ಯಾವುದೇ ಸಮುದಾಯಕ್ಕೆ ಅನ್ಯಾಯವಾಗಬಾರದು. ಬಂಜಾರ ಸಮಾಜದ ನೈಜ ಪರಿಸ್ಥಿತಿಯನ್ನು ಪರಿಗಣಿಸಿ ಸರ್ಕಾರ ನ್ಯಾಯಯುತ ನಿರ್ಧಾರ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಹೂವಿನಹಡಗಲಿ ಶಾಸಕ ಕೃಷ್ಣಾ ನಾಯಕ, ಮುಖಂಡರಾದ ಬಸವರಾಜ ನಾಯಕ, ಮಣಿಕಂಠ ರಾಠೋಡ, ಲಿಂಬು ನಾಯಕ, ರವಿ ಸಾವಕಾರ, ಭೀಮಸಿಂಗ್ ರಾಠೋಡ, ಸುಭಾಷ ಗುಡಿಮನಿ ಸೇರಿದಂತೆ ಹಲವರು ಮಾತನಾಡಿದರು.

ಈ ಸಂದರ್ಭದಲ್ಲಿ ಜಾನು ಲಮಾಣಿ, ಮಲ್ಲೇಶ ಲಮಾಣಿ, ತಿಪ್ಪಣ್ಣ ಲಮಾಣಿ, ಮಂಜು ನಾಯಕ, ಅನಿಲ ಕಾರಬಾರಿ, ಟಿ.ಡಿ. ಲಮಾಣಿ, ಮಾನು ನಾಯಕ, ಪರಮೇಶ ಲಮಾಣಿ, ಆನಂದ ನಾಯಕ, ಸಂತೋಷ ಲಮಾಣಿ, ಮುತ್ತು ಲಮಾಣಿ ಸೇರಿದಂತೆ ಸಮಾಜದ ಮುಖಂಡರು ಹಾಗೂ ನೂರಾರು ಸದಸ್ಯರು ಉಪಸ್ಥಿತರಿದ್ದರು.

ಬೆಳೆ ಹಾನಿ ಸಮೀಕ್ಷೆ ನಿಖರವಾಗಿರಲಿ: ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್

ವಿಜಯಸಾಕ್ಷಿ ಸುದ್ದಿ, ಗದಗ: ಜಿಲ್ಲೆಯಲ್ಲಿ ಮುಂದುವರಿದಿರುವ ಮಳೆ ಕೊರತೆ ಹಾಗೂ ಬೆಳೆಗಳ ಹಾನಿಯ ಹಿನ್ನೆಲೆಯಲ್ಲಿ ನಿಖರ ಬೆಳೆ ಹಾನಿ ಸಮೀಕ್ಷೆ ನಡೆಸಿ ರೈತರಿಗೆ ಅಗತ್ಯ ನೆರವು ಒದಗಿಸಬೇಕು ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜುಲೈ 15ರ ಬಳಿಕವೂ ಮಳೆ ಕೊರತೆ ಮುಂದುವರಿಯುವ ಮುನ್ಸೂಚನೆ ಇರುವುದರಿಂದ ಬಹುತೇಕ ಕಡೆಗಳಲ್ಲಿ ಮರುಬಿತ್ತನೆಗೆ ಅವಕಾಶ ಕಡಿಮೆ ಇದೆ. ಬಿತ್ತನೆ ಆಗದೇ ಉಳಿದ ಜಮೀನುಗಳಲ್ಲಿ ಅಲ್ಪಾವಧಿಯ ಈರುಳ್ಳಿ ಹಾಗೂ ತರಕಾರಿ ಬೆಳೆಗಳ ಕುರಿತು ರೈತರಿಗೆ ಕೃಷಿ ಇಲಾಖೆ ತಕ್ಷಣ ತಾಂತ್ರಿಕ ಮಾರ್ಗದರ್ಶನ ನೀಡಬೇಕು ಎಂದು ಸೂಚಿಸಿದರು.

ಜಿಲ್ಲೆಯಲ್ಲಿ ಅಲ್ಲಲ್ಲಿ ಸುರಿದ ಸಾಧಾರಣ ಮಳೆಯಿಂದ ರೈತರಲ್ಲಿ ಆಶಾಭಾವನೆ ಮೂಡಿದೆಯಾದರೂ, ಕೇವಲ ಶೇ.20ರಿಂದ 30ರಷ್ಟು ಪ್ರದೇಶದಲ್ಲಿ ಮಾತ್ರ ಬೆಳೆಗಳು ಹಸಿರಾಗಿವೆ. ಇನ್ನೂ ಹಲವು ಕಡೆ ಮೊಳಕೆಯೊಡೆದ ಬೆಳೆಗಳು ಒಣಗುತ್ತಿದ್ದು, ಉತ್ತಮ ಮಳೆಯಾದರೆ ಮಾತ್ರ ಶೇ.40ರಿಂದ 50ರಷ್ಟು ಇಳುವರಿ ನಿರೀಕ್ಷಿಸಬಹುದು ಎಂದು ಹೇಳಿದರು.

ರೈತರಿಗೆ ರಸಗೊಬ್ಬರ ವಿತರಣೆಯಲ್ಲಿ ಯಾವುದೇ ಕೊರತೆ ಉಂಟಾಗದಂತೆ ಕ್ರಮ ಕೈಗೊಳ್ಳಬೇಕು. ಕೃತಕ ಅಭಾವ ಸೃಷ್ಟಿಯಾಗದಂತೆ ದಾಸ್ತಾನು ಕಾಯ್ದುಕೊಳ್ಳುವಂತೆ ಜಂಟಿ ಕೃಷಿ ನಿರ್ದೇಶಕರಿಗೆ ಸೂಚಿಸಿದರು.

ಬೆಳೆ ವಿಮೆ ಯೋಜನೆ ಕುರಿತು ರೈತರಿಗೆ ಸಮರ್ಪಕ ಮಾಹಿತಿ ನೀಡಬೇಕು. ವಿಶೇಷವಾಗಿ ‘ಆಪ್ಟ್-ಔಟ್’ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಿ, ಅರ್ಹ ರೈತರು ನಿಗದಿತ ಅವಧಿಯೊಳಗೆ ವಿಮೆ ಸೌಲಭ್ಯ ಪಡೆಯುವಂತೆ ಬ್ಯಾಂಕ್ ಹಾಗೂ ಕೃಷಿ ಇಲಾಖೆ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದರು.

ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಮುನ್ನೆಚ್ಚರಿಕೆ ವಹಿಸುವುದು, ಬೋರ್‌ವೆಲ್‌ಗಳು, ಶುದ್ಧ ಕುಡಿಯುವ ನೀರಿನ ಘಟಕಗಳು, ಡಿಬಿಒಟಿ ಹಾಗೂ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳ ಸ್ಥಿತಿಗತಿಯನ್ನು ನಿರಂತರವಾಗಿ ಪರಿಶೀಲಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಹಾನಿಗೊಳಗಾದ ವಿದ್ಯುತ್ ಕಂಬಗಳು, ತಂತಿಗಳು ಹಾಗೂ ಟ್ರಾನ್ಸ್‌ಫಾರ್ಮರ್‌ಗಳನ್ನು ತಕ್ಷಣ ದುರಸ್ತಿಗೊಳಿಸುವಂತೆ ಹೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಜಂಟಿ ಕೃಷಿ ನಿರ್ದೇಶಕಿ ಚೇತನಾ ಪಾಟೀಲ್ ಮಾಹಿತಿ ನೀಡಿ, ಜಿಲ್ಲೆಯ 3.13 ಲಕ್ಷ ಹೆಕ್ಟೇರ್ ಬಿತ್ತನೆ ಗುರಿಯಲ್ಲಿ 2.39 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಪೂರ್ಣಗೊಂಡಿದ್ದು, ತೇವಾಂಶದ ಕೊರತೆಯಿಂದ ಬೆಳೆಗಳ ಬೆಳವಣಿಗೆ ಕುಂಠಿತವಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್., ಯೋಜನಾ ನಿರ್ದೇಶಕ ಬಸವನಗೌಡ ಕೋಟೂರ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಸ್.ಎಸ್. ನೀಲಗುಂದ, ನಗರಸಭೆ ಪೌರಾಯುಕ್ತ ರಾಜಾರಾಮ ಪವಾರ, ತಹಶೀಲ್ದಾರರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

“ಬೆಳೆ ಹಾನಿ ಸಮೀಕ್ಷೆಯಲ್ಲಿ ಯಾವುದೇ ನಿರ್ಲಕ್ಷ್ಯ ಸಹಿಸುವುದಿಲ್ಲ. ರೈತರಿಗೆ ಬೆಳೆ ವಿಮೆ, ತಾಂತ್ರಿಕ ಮಾರ್ಗದರ್ಶನ ಹಾಗೂ ಕುಡಿಯುವ ನೀರಿನ ವ್ಯವಸ್ಥೆಗೆ ಮೊದಲ ಆದ್ಯತೆ ನೀಡಬೇಕು.”

– ಸಿ.ಎನ್. ಶ್ರೀಧರ್, ಜಿಲ್ಲಾಧಿಕಾರಿ, ಗದಗ

ನರೇಗಾಗೆ ಗುಡ್‌ಬೈ..! ವಿಬಿ-ಜಿ ರಾಮ್ (ಜಿ)ಗೆ ಗದಗ ಜಿಲ್ಲೆ ಸಜ್ಜು

ವಿಜಯಸಾಕ್ಷಿ ಸುದ್ದಿ, ಗದಗ: ಗ್ರಾಮೀಣ ಪ್ರದೇಶದ ಜನರಿಗೆ ಸ್ಥಳೀಯ ಮಟ್ಟದಲ್ಲೇ ಉದ್ಯೋಗ ಭದ್ರತೆ ಕಲ್ಪಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಜಾರಿಗೆ ತರಲಿರುವ ವಿಬಿ-ಜಿ ರಾಮ್ (ಜಿ) – ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಆಜೀವಿಕಾ ಮಿಷನ್ ಯೋಜನೆಗೆ ಗದಗ ಜಿಲ್ಲೆಯಲ್ಲಿ ಭರದ ಸಿದ್ಧತೆ ಆರಂಭವಾಗಿದೆ. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ (ನರೇಗಾ) ಯೋಜನೆಗೆ ಪರ್ಯಾಯವಾಗಿ ಜಾರಿಯಾಗುತ್ತಿರುವ ಈ ಯೋಜನೆ ಗ್ರಾಮೀಣ ಕಾರ್ಮಿಕರಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ.

ಜಿಲ್ಲೆಯಲ್ಲಿ ಇದುವರೆಗೆ ನರೇಗಾ ಯೋಜನೆಯಡಿ ಸುಮಾರು 1.63 ಲಕ್ಷ ಕುಟುಂಬಗಳು ನೋಂದಾಯಿಸಿಕೊಂಡಿದ್ದು, ಅವುಗಳಲ್ಲಿ 1.13 ಲಕ್ಷ ಕುಟುಂಬಗಳು ಸಕ್ರಿಯವಾಗಿವೆ. ಆರಂಭಿಕ ಹಂತದಲ್ಲಿ ಈ ಸಕ್ರಿಯ ಕಾರ್ಮಿಕರಿಗೆ ಈಗಿರುವ ಜಾಬ್ ಕಾರ್ಡ್‌ಗಳ ಆಧಾರದಲ್ಲೇ ಕೆಲಸ ನೀಡಲಾಗುತ್ತದೆ. ಬಳಿಕ ಎಲ್ಲ ಅರ್ಹ ಕಾರ್ಮಿಕರಿಗೆ ‘ಗ್ರಾಮೀಣ ರೋಜ್‌ಗಾರ್ ಗ್ಯಾರಂಟಿ ಕಾರ್ಡ್’ ವಿತರಿಸಲಾಗುತ್ತದೆ. ಇದುವರೆಗೆ ಯಾವುದೇ ಯೋಜನೆಯಲ್ಲಿ ನೋಂದಣಿಯಾಗದ ಗ್ರಾಮೀಣ ಕಾರ್ಮಿಕರು ಹಾಗೂ ಯುವಕರಿಗೂ ಹೊಸದಾಗಿ ಅರ್ಜಿ ಸಲ್ಲಿಸಿ ಯೋಜನೆಯ ಲಾಭ ಪಡೆಯುವ ಅವಕಾಶ ಕಲ್ಪಿಸಲಾಗಿದೆ.

ಜಿಲ್ಲೆಯ ಏಳು ತಾಲೂಕುಗಳ 122 ಗ್ರಾಮ ಪಂಚಾಯಿತಿಗಳಲ್ಲಿ ಯೋಜನೆಯನ್ನು ಏಕಕಾಲದಲ್ಲಿ ಜಾರಿಗೊಳಿಸಲು ಜಿಲ್ಲಾ ಪಂಚಾಯಿತಿ ಸಿದ್ಧತೆ ನಡೆಸಿದೆ. ಗ್ರಾಮ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಮಟ್ಟದ ಅಧಿಕಾರಿಗಳಿಗೆ ತರಬೇತಿ ನೀಡಲಾಗುತ್ತಿದ್ದು, ಆಯುಕ್ತಾಲಯದ ಮಾರ್ಗಸೂಚಿಯಂತೆ ಕ್ರಿಯಾ ಯೋಜನೆ ರೂಪಿಸುವ ಕಾರ್ಯ ಭರದಿಂದ ನಡೆಯುತ್ತಿದೆ.

ಯೋಜನೆಯಡಿ ಕಾರ್ಮಿಕರಿಗೆ ದಿನಕ್ಕೆ ₹382 ಕೂಲಿ ನಿಗದಿಯಾಗಿದ್ದು, ಇದು ಹಿಂದಿನ ಕೂಲಿಗಿಂತ ಹೆಚ್ಚಾಗಿದೆ. ಗ್ರಾಮದಲ್ಲಿಯೇ ಉದ್ಯೋಗ ಲಭ್ಯವಾಗುವುದರಿಂದ ಕೆಲಸಕ್ಕಾಗಿ ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಗೆ ವಲಸೆ ಹೋಗುವವರ ಸಂಖ್ಯೆ ಕಡಿಮೆಯಾಗುವ ನಿರೀಕ್ಷೆಯಿದೆ.

ಹೊಸ ಯೋಜನೆಯಡಿ ಜಲ ಸಂರಕ್ಷಣೆ, ಗ್ರಾಮೀಣ ಮೂಲಸೌಕರ್ಯ, ಜೀವನೋಪಾಯ ಅಭಿವೃದ್ಧಿ, ಹವಾಮಾನ ಬದಲಾವಣೆಗೆ ಹೊಂದಿಕೊಂಡ ಕಾಮಗಾರಿಗಳು ಸೇರಿದಂತೆ 318 ಮಾದರಿಯ ಕಾಮಗಾರಿಗಳಿಗೆ ಅವಕಾಶ ಕಲ್ಪಿಸಲಾಗಿದೆ. ಗ್ರಾಮಸಭೆಯಲ್ಲಿ ಸಿದ್ಧವಾಗುವ ‘ವಿಕಸಿತ ಗ್ರಾಮ ಪಂಚಾಯಿತಿ ಪ್ಲಾನ್’ ಆಧಾರವಾಗಿ ಶಾಲೆ, ಅಂಗನವಾಡಿ, ಆಸ್ಪತ್ರೆ, ಹಾಲು ಉತ್ಪಾದಕರ ಡೈರಿ, ಧಾನ್ಯ ಸಂಗ್ರಹಣಾ ಘಟಕ, ಗ್ರಂಥಾಲಯ, ಸಮುದಾಯ ಗೋದಾಮು ಹಾಗೂ ಕಲ್ಯಾಣ ಮಂಟಪ ಸೇರಿದಂತೆ ಹಲವು ಸಾರ್ವಜನಿಕ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತದೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು 60:40 ಅನುಪಾತದಲ್ಲಿ ಅನುದಾನ ನೀಡಲಿದ್ದು, ಯೋಜನೆ ಜಾರಿಯಾದ ಬಳಿಕ ಗ್ರಾಮೀಣ ಉದ್ಯೋಗ ಸೃಷ್ಟಿಯ ಜೊತೆಗೆ ಮೂಲಸೌಕರ್ಯ ಅಭಿವೃದ್ಧಿಗೂ ಹೊಸ ವೇಗ ಸಿಗುವ ನಿರೀಕ್ಷೆಯಿದೆ.

“ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಅಗತ್ಯ ಎಲ್ಲ ಪೂರ್ವಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕ್ರಿಯಾ ಯೋಜನೆ ರೂಪಿಸುವ ಕೆಲಸ ನಡೆಯುತ್ತಿದ್ದು, ಸ್ಥಳೀಯ ಕಾರ್ಮಿಕರಿಗೆ ಹೆಚ್ಚಿನ ಪ್ರಮಾಣದಲ್ಲಿ ಉದ್ಯೋಗ ಕಲ್ಪಿಸುವ ಗುರಿ ಹೊಂದಿದ್ದೇವೆ.”

– ಸಿ.ಆರ್. ಮುಂಡರಗಿ, ಉಪ ಕಾರ್ಯದರ್ಶಿ, ಜಿಲ್ಲಾ ಪಂಚಾಯಿತಿ, ಗದಗ

ರೈತನ ಕಣ್ಣೀರಿಗೆ ಕೊನೆಯೇ ಇಲ್ಲ!

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಒಂದು ಕಡೆ ಮುಂಗಾರು ಮಳೆ ಕೈಕೊಟ್ಟು ಬೆಳೆ ಒಣಗುವ ಆತಂಕ, ಮತ್ತೊಂದೆಡೆ ಜಿಂಕೆಗಳ ಹಾವಳಿ, ಈಗ ಕುರಿಗಳ ಹಿಂಡಿನಿಂದಲೇ ಬೆಳೆ ಸಂಪೂರ್ಣ ನಾಶ. ಇಂತಹ ದುಸ್ಥಿತಿ ಗದಗ ಜಿಲ್ಲೆಯ ರೋಣ ತಾಲೂಕಿನ ಜಕ್ಕಲಿ ಗ್ರಾಮದ ರೈತನನ್ನು ಕಂಗಾಲಾಗಿಸಿದೆ.

ಗ್ರಾಮದ ರೈತ ಪ್ರಭುರಾಜ ರೇಣುಕಮಠ ಅವರು ಜಿಗಳೂರ ಗ್ರಾಮದ ಸರಹದ್ದಿನಲ್ಲಿರುವ ತಮ್ಮ ಒಂದು ಎಕರೆ ಜಮೀನಿನಲ್ಲಿ ಹೆಸರು ಬೆಳೆ ಬೆಳೆದಿದ್ದರು. ಉತ್ತಮ ಇಳುವರಿ ನಿರೀಕ್ಷೆಯಲ್ಲಿದ್ದ ಸಂದರ್ಭದಲ್ಲಿ ಕುರಿಗಳ ಹಿಂಡು ಹೊಲಕ್ಕೆ ನುಗ್ಗಿ ಇಡೀ ಬೆಳೆ ಮೇಯ್ದು ಹಾಕಿದ್ದು, ರೈತನಿಗೆ ಭಾರೀ ಆರ್ಥಿಕ ನಷ್ಟ ಉಂಟಾಗಿದೆ.

ಈ ವರ್ಷ ಮಳೆಯ ಕೊರತೆಯಿಂದಲೇ ರೈತರು ಸಂಕಷ್ಟದಲ್ಲಿದ್ದಾರೆ. ಸಾಲ-ಸೂಲ ಮಾಡಿ ಬಿತ್ತನೆ ನಡೆಸಿದ ಬೆಳೆಗಳು ಮಳೆ ಇಲ್ಲದೆ ಒಣಗುವ ಹಂತ ತಲುಪಿವೆ. ಇದರ ನಡುವೆ ಕುರಿಗಳಿಂದ ಬೆಳೆ ಹಾನಿಯಾಗಿರುವುದು ರೈತನ ನೋವನ್ನು ಮತ್ತಷ್ಟು ಹೆಚ್ಚಿಸಿದೆ.

ಜಕ್ಕಲಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜಮೀನುಗಳು ಗ್ರಾಮದಿಂದ 6ರಿಂದ 8 ಕಿಲೋಮೀಟರ್ ದೂರದಲ್ಲಿರುವುದರಿಂದ ಹೊರ ಜಿಲ್ಲೆಗಳಿಂದ ಬರುವ ಕುರಿಗಾಹಿಗಳು ಈ ಭಾಗದಲ್ಲಿ ಕುರಿ ಮೇಯಿಸುತ್ತಾರೆ. ಇದರಿಂದ ಕೃಷಿ ಜಮೀನುಗಳಿಗೆ ಆಗಾಗ ಹಾನಿಯಾಗುತ್ತಿದೆ ಎಂದು ರೈತರು ಆರೋಪಿಸಿದ್ದಾರೆ. ಜಿಂಕೆಗಳ ಹಾವಳಿಯೂ ಹೆಚ್ಚಾಗಿದ್ದು, ಬೆಳೆ ಉಳಿಸಿಕೊಳ್ಳುವುದೇ ದೊಡ್ಡ ಸವಾಲಾಗಿದೆ ಎಂದು ತಿಳಿಸಿದ್ದಾರೆ.

ಕುರಿಗಾರರು ಬೆಳೆ ಇರುವ ಜಮೀನುಗಳಿಗೆ ಕುರಿಗಳನ್ನು ನುಗ್ಗಿಸದಂತೆ ಎಚ್ಚರಿಕೆ ವಹಿಸಬೇಕು. ರೈತರ ಶ್ರಮಕ್ಕೆ ಗೌರವ ನೀಡಿ ಜಾನುವಾರುಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು. ಬೆಳೆ ಹಾನಿಯಿಂದ ಉಂಟಾದ ನಷ್ಟಕ್ಕೆ ಸಂಬಂಧಿಸಿದ ಇಲಾಖೆ ಪರಿಹಾರ ಒದಗಿಸಬೇಕು ಹಾಗೂ ಇಂತಹ ಘಟನೆಗಳು ಮರುಕಳಿಸದಂತೆ ಸ್ಥಳೀಯ ಆಡಳಿತ ಕ್ರಮ ಕೈಗೊಳ್ಳಬೇಕು ಎಂದು ರೈತ ಪ್ರಭುರಾಜ ರೇಣುಕಮಠ ಆಗ್ರಹಿಸಿದ್ದಾರೆ.

“ತಿಂಗಳುಗಟ್ಟಲೆ ಶ್ರಮಪಟ್ಟು ಬೆಳೆದ ಹೆಸರು ಬೆಳೆ ಕೆಲವೇ ನಿಮಿಷಗಳಲ್ಲಿ ಕುರಿಗಳು ಮೇಯ್ದು ಹಾಕಿವೆ. ಒಂದು ಕಡೆ ಮಳೆ ಇಲ್ಲ, ಮತ್ತೊಂದು ಕಡೆ ವನ್ಯಜೀವಿಗಳ ಹಾವಳಿ, ಈಗ ಕುರಿಗಳ ಕಾಟ. ರೈತ ಬದುಕುವುದಾದರೂ ಹೇಗೆ?”

– ಪ್ರಭುರಾಜ ರೇಣುಕಮಠ, ರೈತ