Home Blog

ಹಿಜಾಬ್ ಅನುಮತಿ ವಿವಾದ: ಸರ್ಕಾರದ ವಿರುದ್ಧ ಹಿಂದೂ ಸಂಘಟನೆಗಳ ತೀವ್ರ ಆಕ್ರೋಶ, ರಾಜ್ಯವ್ಯಾಪಿ ಹೋರಾಟದ ಎಚ್ಚರಿಕೆ

0

ಉಡುಪಿ: ಶಾಲಾ–ಕಾಲೇಜುಗಳಲ್ಲಿ ಹಿಜಾಬ್ ಧರಿಸಲು ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ ಎಂಬ ವಿಚಾರ ರಾಜಕೀಯ ಮತ್ತು ಸಾಮಾಜಿಕ ವಲಯದಲ್ಲಿ ಹೊಸ ವಿವಾದಕ್ಕೆ ಕಾರಣವಾಗಿದೆ. ಈ ನಿರ್ಧಾರವನ್ನು ಹಿಂದೂ ಸಂಘಟನೆಗಳು ತೀವ್ರವಾಗಿ ವಿರೋಧಿಸಿವೆ.

ಹಿಂದೂ ಮುಖಂಡ ಸುನೀಲ್ ಕೆ.ಆರ್ ಮಾತನಾಡಿ, ಸರ್ಕಾರ ಈ ನಿರ್ಧಾರವನ್ನು ವೋಟ್ ಬ್ಯಾಂಕ್ ರಾಜಕಾರಣದ ಭಾಗವಾಗಿ ತೆಗೆದುಕೊಂಡಿದೆ ಎಂದು ಆರೋಪಿಸಿದರು. ‘ಇದು ಕೇವಲ ಶಿಕ್ಷಣ ವ್ಯವಸ್ಥೆಯ ವಿಚಾರವಲ್ಲ, ಇದರ ಹಿಂದೆ ದೊಡ್ಡ ಷಡ್ಯಂತ್ರ ಇದೆ’ ಎಂದು ಅವರು ಹೇಳಿದ್ದಾರೆ.

ಅವರು ಮುಂದುವರಿದು, ಸರ್ಕಾರ ಇಸ್ಲಾಮಿಕರಣದ ದಾರಿಗೆ ಹೋಗುತ್ತಿದೆ ಎಂಬ ಗಂಭೀರ ಆರೋಪ ಮಾಡಿದ್ದು, ಮೂಲಭೂತವಾದಿ ಸಂಘಟನೆಗಳ ಒತ್ತಡಕ್ಕೆ ಸರ್ಕಾರ ಮಣಿದಿದೆ ಎಂದು ಟೀಕಿಸಿದ್ದಾರೆ.

ಈ ನಿರ್ಧಾರವನ್ನು ತಕ್ಷಣ ಹಿಂಪಡೆಯಬೇಕು, ಇಲ್ಲವಾದರೆ ರಾಜ್ಯಾದ್ಯಂತ ತೀವ್ರ ಹೋರಾಟ ನಡೆಸುವುದಾಗಿ ಹಿಂದೂ ಸಂಘಟನೆಗಳು ಎಚ್ಚರಿಕೆ ನೀಡಿವೆ. ಈ ಬೆಳವಣಿಗೆ ಈಗ ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.

ಬೆಂಗಳೂರುದಲ್ಲಿ ಬೃಹತ್ GST ವಂಚನೆ ಬಯಲು: ₹2,384 ಕೋಟಿ ನಕಲಿ ITC ಜಾಲ ಪತ್ತೆ!

ಬೆಂಗಳೂರು: ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ನಡೆಸಿದ ಭಾರೀ ಕಾರ್ಯಾಚರಣೆಯಲ್ಲಿ ಸಾವಿರಾರು ಕೋಟಿ ರೂಪಾಯಿ ಮೌಲ್ಯದ ನಕಲಿ ITC (ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್) ವಂಚನೆ ಜಾಲ ಬಯಲಾಗಿದೆ. ಸುಮಾರು ₹2,384 ಕೋಟಿ ಸಂಶಯಾಸ್ಪದ ವಹಿವಾಟು ನಡೆಸಿ ₹420 ಕೋಟಿ ನಕಲಿ ITC ಪಡೆದಿದ್ದ ಆರೋಪದ ಮೇಲೆ ಇಬ್ಬರನ್ನು ಬಂಧಿಸಲಾಗಿದೆ.

ಬಂಧಿತ ಆರೋಪಿಗಳನ್ನು ಸಲೀಮುಲ್ಲಾ ಬೇಗ್ (59) ಮತ್ತು ಹಸೇನ್ ಬೇಗ್ (35) ಎಂದು ಗುರುತಿಸಲಾಗಿದೆ. ತನಿಖೆಯಲ್ಲಿ ಸಲೀಮುಲ್ಲಾ ಬೇಗ್ 72 ನಕಲಿ ಸರಬರಾಜು ಸಂಸ್ಥೆಗಳ ಮೂಲಕ ₹2,172 ಕೋಟಿ ವಹಿವಾಟು ತೋರಿಸಿ ₹382 ಕೋಟಿ ನಕಲಿ ITC ಪಡೆದಿರುವುದು ಪತ್ತೆಯಾಗಿದೆ. ಹಸೇನ್ ಬೇಗ್ 55 ಸಂಸ್ಥೆಗಳ ಮೂಲಕ ₹212 ಕೋಟಿ ವಹಿವಾಟು ತೋರಿಸಿ ₹35 ಕೋಟಿ ವಂಚನೆ ನಡೆಸಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆರೋಪಿಗಳು ಟಂಗ್‌ಸ್ಟನ್ ಕಾರ್ಬೈಡ್ ಸ್ಕ್ರ್ಯಾಪ್, ಇ-ವೆಸ್ಟ್ ಹಾಗೂ ಇತರೆ ಸ್ಕ್ರ್ಯಾಪ್ ಹೆಸರಿನಲ್ಲಿ ನಕಲಿ ಬಿಲ್ಲುಗಳನ್ನು ಸೃಷ್ಟಿಸಿ ತೆರಿಗೆ ಕ್ರೆಡಿಟ್ ಪಡೆಯುತ್ತಿದ್ದರು. ಈ ಮೂಲಕ ಸರ್ಕಾರಕ್ಕೆ ಭಾರೀ ನಷ್ಟ ಉಂಟುಮಾಡಿರುವುದು ಬೆಳಕಿಗೆ ಬಂದಿದೆ.

ತನಿಖೆ ವೇಳೆ ಒಟ್ಟು 127 ನಕಲಿ ಸಂಸ್ಥೆಗಳ ಜಾಲ ಪತ್ತೆಯಾಗಿದ್ದು, ಹಲವು ವರ್ಷಗಳಿಂದ ಸಂಘಟಿತವಾಗಿ ವಂಚನೆ ನಡೆಯುತ್ತಿತ್ತು ಎನ್ನಲಾಗಿದೆ. ವಿಶೇಷವಾಗಿ SKS ಟ್ರೇಡರ್ಸ್ ಸಂಸ್ಥೆಯ ವಹಿವಾಟು ಮೂರು ವರ್ಷಗಳಲ್ಲಿ ₹50 ಕೋಟಿಯಿಂದ ₹900 ಕೋಟಿಗೆ ಏರಿಕೆಯಾಗಿದ್ದರೂ, ಅದಕ್ಕೆ ಸಂಬಂಧಿಸಿದ ದಾಖಲೆಗಳು ಇಲ್ಲದಿರುವುದು ಅಧಿಕಾರಿಗಳಿಗೆ ಅನುಮಾನ ಹುಟ್ಟಿಸಿತ್ತು.

GST ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿರುವ ಅಧಿಕಾರಿಗಳು ಆರೋಪಿಗಳನ್ನು ಬಂಧಿಸಿ ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ. ಕಳೆದ ಜನವರಿಯಲ್ಲೂ ₹1,464 ಕೋಟಿ ವಹಿವಾಟು ಸಂಬಂಧ ಐವರನ್ನು ಬಂಧಿಸಲಾಗಿತ್ತು. ಈ ಮೂಲಕ ಈ ವರ್ಷ GST ವಂಚನೆ ಪ್ರಕರಣದಲ್ಲಿ ಬಂಧಿತರ ಸಂಖ್ಯೆ ಏಳಕ್ಕೆ ಏರಿಕೆಯಾಗಿದೆ.

‘ಮೋದಿ ಈಗ ಆಕಾಶದಲ್ಲಿದ್ದಾರೆ’: ಇಂದಿರಾ ಬಳಿಕ ಜನರನ್ನು ಸೆಳೆದ ನಾಯಕ ಎಂದ ರಾಜಣ್ಣ!

0

ತುಮಕೂರು: ಪ್ರಧಾನಿ ನರೇಂದ್ರ ಮೋದಿ ಕುರಿತು ಮಾಜಿ ಸಚಿವ ಕೆ.ಎನ್. ರಾಜಣ್ಣ ನೀಡಿದ ಹೇಳಿಕೆ ರಾಜಕೀಯ ವಲಯದಲ್ಲಿ ಅಚ್ಚರಿ ಮೂಡಿಸಿದೆ. ಇಂದಿರಾ ಗಾಂಧಿ ಬಳಿಕ ದೇಶದಲ್ಲಿ ಜನರನ್ನು ಸೆಳೆದ ಅತ್ಯಂತ ದೊಡ್ಡ ಮಾಸ್ ಲೀಡರ್ ಮೋದಿ ಎಂದು ಅವರು ಹೇಳಿದ್ದಾರೆ.

ಮಧುಗಿರಿ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಾಜಣ್ಣ, ‘ನಾನು ಮೋದಿಯನ್ನು ಹೊಗಳುತ್ತಿಲ್ಲ. ವಾಸ್ತವವನ್ನು ಹೇಳುತ್ತಿದ್ದೇನೆ. ಇಂದಿರಾ ಗಾಂಧಿಯವರ ನಂತರ ಜನರನ್ನು ಆಕರ್ಷಿಸುವ ನಾಯಕ ಎಂದರೆ ಅದು ನರೇಂದ್ರ ಮೋದಿ’ ಎಂದು ಅಭಿಪ್ರಾಯಪಟ್ಟರು.

ರಾಜಕಾರಣದಲ್ಲಿ ಜನಪ್ರಿಯತೆ ಶಾಶ್ವತವಲ್ಲ ಎಂದು ಎಚ್ಚರಿಸಿದ ಅವರು, ‘ಒಂದು ಕಾಲದಲ್ಲಿ ಇಂದಿರಾ ಗಾಂಧಿಯವರ ಹೆಸರಿನಲ್ಲೇ ನೂರಾರು ಸಂಸದರು ಗೆಲ್ಲುತ್ತಿದ್ದರು. ಆದರೆ ಪರಿಸ್ಥಿತಿ ಬದಲಾಗುತ್ತಿದ್ದಂತೆ ಅವರೂ ಸೋಲು ಕಂಡರು’ ಎಂದು ಹೇಳಿದರು.

‘ನೀವು ಮೋದಿಯನ್ನು ಹೊಗಳುತ್ತಿದ್ದೀರಿ ಅಂತ ನಮ್ಮವರೇ ನನ್ನ ಮೇಲೆ ಕಣ್ಣು ಕೆಂಪಾಗಿಸಬಹುದು. ಆದರೆ ನಾನು ನಿಜವನ್ನು ಹೇಳುತ್ತೇನೆ’ ಎಂದು ರಾಜಣ್ಣ ಪ್ರತಿಕ್ರಿಯಿಸಿದರು.

ಇದೇ ವೇಳೆ ಮೋದಿ ಬಗ್ಗೆ ವ್ಯಂಗ್ಯವಾಡಿದ ಅವರು, ‘ಮೋದಿ ಈಗ ಆಕಾಶದಲ್ಲಿದ್ದಾರೆ. ಭೂಮಿಗೆ ಇಳಿದಾಗ ಕಷ್ಟ-ಸುಖ ಗೊತ್ತಾಗುತ್ತದೆ’ ಎಂದರು.

ರಾಜಣ್ಣ ಅವರ ಈ ಹೇಳಿಕೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ರಾಜಕೀಯ ಚರ್ಚೆಗೆ ಹೊಸ ತಿರುವು ನೀಡಿದೆ.

ಬೈಕ್ ಬಾಕ್ಸ್‌ನಲ್ಲಿದ್ದ ₹1 ಲಕ್ಷ ಹಣ ಕಳ್ಳತನ! ಪೊಲೀಸ್ ಠಾಣೆ ಸಮೀಪವೇ ಕಳ್ಳರ ಕೈಚಳಕ

ಕೋಲಾರ: ಕೆಜಿಎಫ್ ತಾಲೂಕಿನ ಬೇತಮಂಗಲದಲ್ಲಿ ಬೈಕ್ ಬಾಕ್ಸ್‌ನಲ್ಲಿದ್ದ ಒಂದು ಲಕ್ಷ ರೂಪಾಯಿ ಹಣವನ್ನು ಕಳ್ಳರು ದೋಚಿ ಪರಾರಿಯಾಗಲು ಯತ್ನಿಸಿದ ಘಟನೆ ನಡೆದಿದೆ.

ಬೇತಮಂಗಲ ನ್ಯೂಟೌನ್ ನಿವಾಸಿ ರಮೇಶ್ ಅವರು ಕೆನರಾ ಬ್ಯಾಂಕ್‌ನಿಂದ ಹಣ ಡ್ರಾ ಮಾಡಿ ಬೈಕ್ ಬಾಕ್ಸ್‌ನಲ್ಲಿ ಇಟ್ಟು ಅಂಗಡಿಗೆ ತೆರಳಿದ್ದ ವೇಳೆ, ಹೊಂಚು ಹಾಕಿದ್ದ ಕಳ್ಳರು ಹಣವನ್ನು ಕದ್ದುಕೊಂಡು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಈ ಘಟನೆ ಪೊಲೀಸ್ ಠಾಣೆಯ ಸಮೀಪವೇ ನಡೆದಿರುವುದು ಗಮನ ಸೆಳೆದಿದೆ.

ಘಟನೆ ವೇಳೆ ರಮೇಶ್ ಅವರ ಮಗ ಕಳ್ಳರನ್ನು ಗಮನಿಸಿ ಜೋರಾಗಿ ಕೂಗಿಕೊಂಡಿದ್ದು, ತಕ್ಷಣ ಸ್ಥಳೀಯರು ಎಚ್ಚೆತ್ತುಕೊಂಡು ಕಳ್ಳರನ್ನು ಬೆನ್ನಟ್ಟಿ ಹಿಡಿದಿದ್ದಾರೆ. ಬಳಿಕ ಆರೋಪಿಗಳನ್ನು ಪೊಲೀಸರಿಗೆ ಒಪ್ಪಿಸಲಾಗಿದೆ.

ಕಳ್ಳತನದ ದೃಶ್ಯಗಳು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಪ್ರಕರಣ ಸಂಬಂಧ ಬೇತಮಂಗಲ ಪೊಲೀಸ್ ಠಾಣೆಯಲ್ಲಿ ತನಿಖೆ ನಡೆಯುತ್ತಿದೆ. ಪೊಲೀಸ್ ಠಾಣೆ ಸಮೀಪವೇ ಘಟನೆ ನಡೆದಿದ್ದರೂ ತಕ್ಷಣ ಕ್ರಮ ಕೈಗೊಳ್ಳಲಿಲ್ಲ ಎಂಬ ಆರೋಪವನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ.

ಟ್ರಂಪ್ ಯೂ-ಟರ್ನ್: ಚೀನಾವನ್ನು ಹಾಡಿ ಹೊಗಳಿದ ಅಮೆರಿಕ ಅಧ್ಯಕ್ಷ!

ಬೀಜಿಂಗ್: ಅಮೆರಿಕ–ಚೀನಾ ಸಂಬಂಧಗಳಲ್ಲಿ ಹೊಸ ತಿರುವು ಕಂಡುಬಂದಿದ್ದು, ಬಹಿರಂಗವಾಗಿ ಚೀನಾವನ್ನು ಟೀಕಿಸುತ್ತಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದೀಗ ಬೀಜಿಂಗ್‌ನಲ್ಲಿ ನಡೆದ ಜಿ-2 (G2) ಶೃಂಗಸಭೆಯಲ್ಲಿ ಚೀನಾವನ್ನು ಮುಕ್ತವಾಗಿ ಶ್ಲಾಘಿಸಿದ್ದಾರೆ.

ಬೀಜಿಂಗ್‌ನ ಗ್ರೇಟ್ ಹಾಲ್ ಆಫ್ ಪೀಪಲ್‌ನಲ್ಲಿ ನಡೆದ ಐತಿಹಾಸಿಕ ಸಭೆಯ ಆರಂಭಿಕ ಮಾತುಕತೆಯಲ್ಲಿ ಮಾತನಾಡಿದ ಟ್ರಂಪ್, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರನ್ನು “ಶ್ರೇಷ್ಠ ನಾಯಕ” ಎಂದು ಬಣ್ಣಿಸಿದ್ದಾರೆ. “ನಿಮ್ಮೊಂದಿಗೆ ಇರುವುದು ಹಾಗೂ ನಿಮ್ಮ ಸ್ನೇಹಿತನಾಗಿರುವುದು ನನಗೆ ಹೆಮ್ಮೆ. ಅಮೆರಿಕ–ಚೀನಾ ಸಂಬಂಧಗಳು ಹಿಂದೆಂದಿಗಿಂತ ಉತ್ತಮವಾಗಲಿದೆ” ಎಂದು ಅವರು ಆಶಾವಾದ ವ್ಯಕ್ತಪಡಿಸಿದರು.

ತಮ್ಮ ಭಾಷಣದಲ್ಲಿ ಜಿನ್‌ಪಿಂಗ್ ಅವರ ನಾಯಕತ್ವವನ್ನು ಶ್ಲಾಘಿಸಿದ ಟ್ರಂಪ್, “ನಾನು ಸದಾ ಸತ್ಯವನ್ನೇ ಹೇಳುತ್ತೇನೆ. ಕೆಲವರಿಗೆ ಇದು ಇಷ್ಟವಾಗದೇ ಇರಬಹುದು, ಆದರೆ ಕ್ಸಿ ಜಿನ್‌ಪಿಂಗ್ ಒಬ್ಬ ಶ್ರೇಷ್ಠ ನಾಯಕ” ಎಂದು ಹೇಳಿದ್ದಾರೆ.

ಸಭೆಗೆ ತನ್ನೊಂದಿಗೆ ಬಂದಿದ್ದ ಎಲಾನ್ ಮಸ್ಕ್, ಆಪಲ್ ಸಿಇಒ ಟಿಮ್ ಕುಕ್ ಮತ್ತು ಎನ್‌ವಿಡಿಯಾ ಮುಖ್ಯಸ್ಥ ಜೆನ್ಸನ್ ಹುವಾಂಗ್ ಸೇರಿದಂತೆ ಪ್ರಮುಖ ಉದ್ಯಮಿಗಳನ್ನು ಪರಿಚಯಿಸಿದ ಟ್ರಂಪ್, “ನಾನು ಜಗತ್ತಿನ ಅತ್ಯುತ್ತಮ ಉದ್ಯಮಿಗಳನ್ನು ಇಲ್ಲಿಗೆ ಕರೆತಂದಿದ್ದೇನೆ” ಎಂದು ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್, ಅಮೆರಿಕ ಮತ್ತು ಚೀನಾ ಪ್ರತಿಸ್ಪರ್ಧಿಗಳಾಗುವ ಬದಲು ಪಾಲುದಾರ ರಾಷ್ಟ್ರಗಳಾಗಿ ಮುಂದುವರಿಯಬೇಕು ಎಂದು ಕರೆ ನೀಡಿದರು. ಜಾಗತಿಕ ಸ್ಥಿರತೆ ಮತ್ತು ಆರ್ಥಿಕ ಅಭಿವೃದ್ಧಿಗಾಗಿ ಎರಡೂ ದೇಶಗಳ ಸಹಕಾರ ಅತ್ಯಗತ್ಯ ಎಂದು ಅವರು ತಿಳಿಸಿದ್ದಾರೆ.

ಸಭೆಯಲ್ಲಿ ವ್ಯಾಪಾರ ಸಂಬಂಧಗಳು, ಸುಂಕ ಸಮರ, ಹಾಗೂ ಮಾರುಕಟ್ಟೆ ತೆರೆಯುವಿಕೆ ಸೇರಿದಂತೆ ಹಲವು ಪ್ರಮುಖ ವಿಚಾರಗಳ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

ಉತ್ತರ ಪ್ರದೇಶದಲ್ಲಿ ಚಂಡಮಾರುತ ಅಬ್ಬರ: 5 ಜಿಲ್ಲೆಗಳಲ್ಲಿ 54 ಮಂದಿ ದುರ್ಮರಣ!

ಲಕ್ನೋ: ಉತ್ತರ ಪ್ರದೇಶದ ಐದು ಜಿಲ್ಲೆಗಳಲ್ಲಿ ಬುಧವಾರ ಭಾರಿ ಮಳೆಯೊಂದಿಗೆ ಬೀಸಿದ ಪ್ರಬಲ ಚಂಡಮಾರುತವು ವ್ಯಾಪಕ ಹಾನಿಯನ್ನುಂಟುಮಾಡಿದ್ದು, ಒಟ್ಟು 54 ಮಂದಿ ಜೀವ ಕಳೆದುಕೊಂಡಿರುವ ದಾರುಣ ಘಟನೆ ವರದಿಯಾಗಿದೆ.

ಪ್ರಯಾಗ್‌ರಾಜ್ ಪ್ರದೇಶದಲ್ಲೇ 16 ಮಂದಿ ಮಳೆ ಸಂಬಂಧಿತ ಅನಾಹುತಗಳಿಂದ ಸಾವನ್ನಪ್ಪಿದ್ದಾರೆ. ಭದೋಹಿ ಜಿಲ್ಲೆಯಲ್ಲಿ 16 ಮಂದಿ, ಫತೇಪುರ್ ಜಿಲ್ಲೆಯಲ್ಲಿ 9 ಮಂದಿ, ಉನ್ನಾವೊದಲ್ಲಿ 4 ಮಂದಿ, ಕಾನ್ಪುರ ದೇಹತ್‌ನಲ್ಲಿ 3 ಮಂದಿ, ಬುದೌನ್ ಜಿಲ್ಲೆಯಲ್ಲಿ 5 ಮಂದಿ, ಚಂದೌಲಿಯಲ್ಲಿ 2 ಮಂದಿ ಹಾಗೂ ಸೋನಭದ್ರಾದಲ್ಲಿ ಒಬ್ಬರು ಮೃತಪಟ್ಟಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಭದೋಹಿ ಜಿಲ್ಲೆಯಲ್ಲಿ ಬಿರುಗಾಳಿ ಪರಿಣಾಮ ಹಲವು ಪ್ರದೇಶಗಳಲ್ಲಿ ಮರಗಳು ಉರುಳಿ ಬಿದ್ದಿದ್ದು, ಮನೆಗಳಿಗೆ ಹಾನಿಯಾಗಿದೆ. ವಿದ್ಯುತ್ ಕಂಬಗಳು ನೆಲಸಮವಾಗಿರುವುದರಿಂದ ಹಲವು ಭಾಗಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದೆ ಎಂದು ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಕುನ್ವರ್ ವೀರೇಂದ್ರ ಕುಮಾರ್ ಮೌರ್ಯ ತಿಳಿಸಿದ್ದಾರೆ.

ಚಂಡಮಾರುತದಿಂದಾಗಿ ಮೊಬೈಲ್ ನೆಟ್‌ವರ್ಕ್ ಸೇವೆಗಳು ಕೂಡ ವ್ಯತ್ಯಯಗೊಂಡಿದ್ದು, ರಕ್ಷಣಾ ಹಾಗೂ ಪರಿಹಾರ ಕಾರ್ಯಾಚರಣೆಗಳಿಗೆ ತೊಂದರೆ ಉಂಟಾಗಿದೆ. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ಪರಿಹಾರ ಕಾರ್ಯಗಳನ್ನು ವೇಗಗೊಳಿಸಲಾಗಿದೆ.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸಂತ್ರಸ್ತ ಕುಟುಂಬಗಳಿಗೆ ತಕ್ಷಣ ಪರಿಹಾರ ಒದಗಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದು, 24 ಗಂಟೆಗಳ ಒಳಗೆ ಅಗತ್ಯ ಕ್ರಮಗಳನ್ನು ಪೂರ್ಣಗೊಳಿಸಲು ನಿರ್ದೇಶನ ನೀಡಿದ್ದಾರೆ.

ಕಾನ್ ರೆಡ್ ಕಾರ್ಪೆಟ್‌ನಲ್ಲಿ ಆಲಿಯಾ ಭಟ್‌ಗೆ ಶಾಕ್? ‘ಯಾರೂ ಗುರುತಿಸಲಿಲ್ಲ’ ವಿಡಿಯೋ ವೈರಲ್!

ಕಾನ್ ಸಿನಿಮೋತ್ಸವದಲ್ಲಿ ಬಾಲಿವುಡ್ ನಟಿ ಆಲಿಯಾ ಭಟ್ ಅವರ ರೆಡ್ ಕಾರ್ಪೆಟ್ ಎಂಟ್ರಿ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಆಲಿಯಾ ಫೋಟೋಗೆ ಪೋಸ್ ನೀಡುತ್ತಿದ್ದ ವೇಳೆ ಛಾಯಾಗ್ರಾಹಕರು ಬೇರೆ ಸೆಲೆಬ್ರಿಟಿಗಳತ್ತ ಗಮನ ಹರಿಸಿದ್ದ ದೃಶ್ಯ ವೈರಲ್ ಆಗಿದ್ದು, ‘ಯಾರೂ ಆಲಿಯಾ ಅವರನ್ನು ಗುರುತಿಸಲಿಲ್ಲವೇ?’ ಎಂಬ ಪ್ರಶ್ನೆ ಮೂಡಿಸಿದೆ.

ವೈರಲ್ ವಿಡಿಯೋದಲ್ಲಿ ಆಲಿಯಾ ಭಟ್ ಗೌನ್ ಧರಿಸಿ ರೆಡ್ ಕಾರ್ಪೆಟ್ ಮೇಲೆ ಆತ್ಮವಿಶ್ವಾಸದಿಂದ ನಡೆದು ಬರುತ್ತಿರುವುದು ಕಾಣಿಸುತ್ತದೆ. ಅವರು ಕ್ಯಾಮೆರಾಗಳಿಗೆ ಕೈ ಬೀಸಿ ಫ್ಲೈಯಿಂಗ್ ಕಿಸ್ ನೀಡುತ್ತಿದ್ದರೂ, ಪಕ್ಕದಲ್ಲಿದ್ದ ಕೆಲವು ಫೋಟೋಗ್ರಾಫರ್‌ಗಳು ಅಂತಾರಾಷ್ಟ್ರೀಯ ತಾರೆಯರ ಫೋಟೋ ತೆಗೆಯುವುದರಲ್ಲಿ ನಿರತರಾಗಿದ್ದರು.

ಇದನ್ನು ನೋಡಿ ಕೆಲ ನೆಟ್ಟಿಗರು ಆಲಿಯಾ ಅವರನ್ನು ಟ್ರೋಲ್ ಮಾಡಿದ್ದು, ‘ಕಾನ್‌ನಲ್ಲಿ ಅವರಿಗೆ ಯಾರೂ ಗಮನವೇ ಕೊಡಲಿಲ್ಲ’ ಎಂದು ಕಾಮೆಂಟ್ ಮಾಡಿದ್ದಾರೆ. ಕೆಲವರು ಇದನ್ನು ಭಾರತೀಯ ಚಿತ್ರರಂಗಕ್ಕೆ ಮುಜುಗರದ ಸಂಗತಿ ಎಂದು ಬರೆದಿದ್ದಾರೆ.

ಆದರೆ ಅಭಿಮಾನಿಗಳು ಮಾತ್ರ ಇದನ್ನು ಒಪ್ಪುತ್ತಿಲ್ಲ. ‘ರೆಡ್ ಕಾರ್ಪೆಟ್‌ನಲ್ಲಿ ನೂರಾರು ಛಾಯಾಗ್ರಾಹಕರು ಇರುತ್ತಾರೆ. ಬೇರೆ ಬೇರೆ ದಿಕ್ಕಿನಿಂದ ಫೋಟೋ ತೆಗೆದುಕೊಳ್ಳುತ್ತಾರೆ. ವೈರಲ್ ಆಗಿರುವ ಕ್ಲಿಪ್ ನೋಡಿ ತೀರ್ಪು ಕೊಡಬಾರದು’ ಎಂದು ಹೇಳಿದ್ದಾರೆ.

ಕಾನ್ ಸಿನಿಮೋತ್ಸವವು ವಿಶ್ವದ ಪ್ರತಿಷ್ಠಿತ ಚಲನಚಿತ್ರೋತ್ಸವಗಳಲ್ಲಿ ಒಂದಾಗಿದ್ದು, ಈ ಬಾರಿ ಕೂಡ ಹಲವು ಭಾರತೀಯ ತಾರೆಯರು ಅದ್ದೂರಿಯಾಗಿ ಭಾಗವಹಿಸಿದ್ದಾರೆ. ಪ್ರಿಯಾಂಕಾ ಉಪೇಂದ್ರ ನಟನೆಯ ‘ಸೆಪ್ಟೆಂಬರ್ 21’ ಸೇರಿದಂತೆ ಕೆಲವು ಭಾರತೀಯ ಸಿನಿಮಾಗಳು ಕೂಡ ಉತ್ಸವದಲ್ಲಿ ಪ್ರದರ್ಶನಗೊಳ್ಳುತ್ತಿವೆ.

ಸಂಬರಗಿಯಲ್ಲಿ ಬಿರುಗಾಳಿ ಅಬ್ಬರ: ಮನೆಗಳ ಮೇಲ್ಛಾವಣಿ ಹಾರಿ ಭಾರಿ ಹಾನಿ!

ಬೆಳಗಾವಿ: ಅಥಣಿ ತಾಲೂಕಿನ ಸಂಬರಗಿ ಗ್ರಾಮದಲ್ಲಿ ಗುರುವಾರ ಸಂಜೆ ಬಿರುಗಾಳಿ ಸಹಿತ ಸುರಿದ ಭಾರಿ ಮಳೆಯಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.

ಹಠಾತ್ ಆರಂಭವಾದ ವರುಣಾರ್ಭಟಕ್ಕೆ ಗ್ರಾಮಸ್ಥರು ಕಂಗಾಲಾಗಿದ್ದು, ಹಲವು ಮನೆಗಳಿಗೆ ವ್ಯಾಪಕ ಹಾನಿ ಸಂಭವಿಸಿದೆ.

ತೀವ್ರ ಗಾಳಿಯ ಪರಿಣಾಮ ಐದಕ್ಕೂ ಹೆಚ್ಚು ಮನೆಗಳ ಮೇಲ್ಛಾವಣಿಗಳು ಹಾರಿಹೋಗಿದ್ದು, ಸುಮಾರು 200 ಅಡಿಯಷ್ಟು ದೂರಕ್ಕೆ ತಗಡಿನ ಶೀಟ್‌ಗಳು ಬಿದ್ದಿರುವುದು ಮಳೆಯ ರೌದ್ರತೆಗೆ ಸಾಕ್ಷಿಯಾಗಿದೆ. ಬಡ ಕುಟುಂಬಗಳು ತಾತ್ಕಾಲಿಕವಾಗಿ ಬೀದಿಗೆ ಬಿದ್ದ ಪರಿಸ್ಥಿತಿ ಉಂಟಾಗಿದೆ.

ಮನೆಯೊಳಗಿನ ದವಸ ಧಾನ್ಯಗಳು, ಬಟ್ಟೆ ಹಾಗೂ ಹಾಸಿಗೆಗಳು ನೀರಿನಿಂದ ಹಾನಿಯಾಗಿದ್ದು, ಮನೆಗಳ ಮೇಲೆ ಅಳವಡಿಸಿದ್ದ ಸೋಲಾರ್ ಪ್ಯಾನಲ್‌ಗಳು ಕೂಡ ಧರೆಗುರುಳಿವೆ. ದನದ ಕೊಟ್ಟಿಗೆಗಳು ನೆಲಸಮವಾಗಿರುವುದರಿಂದ ಗ್ರಾಮದಲ್ಲಿ ದನಸಂಪತ್ತಿಗೂ ಹಾನಿಯಾಗಿದೆ.

ವಿದ್ಯುತ್ ಕಂಬಗಳು ಹಾಗೂ ತೆಂಗಿನ ಮರಗಳು ಉರುಳಿ ಬಿದ್ದ ಪರಿಣಾಮ ಸಂಪೂರ್ಣ ಗ್ರಾಮದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದ್ದು, ಜನರು ಪರದಾಡುವಂತಾಗಿದೆ. ಸಂಕಷ್ಟಕ್ಕೆ ಸಿಲುಕಿರುವ ಗ್ರಾಮಸ್ಥರು ಸರ್ಕಾರದಿಂದ ತಕ್ಷಣ ಪರಿಹಾರ ಮತ್ತು ಪುನರ್ವಸತಿ ಕ್ರಮಗಳನ್ನು ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ಲಕ್ಷ್ಮೀದೇವಿ ಹಾಡಿನಿಂದ ಸೋಪ್ ಪ್ರಚಾರ: ಟ್ರೋಲ್ ಬಳಿಕ ವಿಡಿಯೋ ಡಿಲೀಟ್ ಮಾಡಿ ಕ್ಷಮೆ ಕೇಳಿದ ನಟ ಆಲಿ!

ತೆಲುಗು ಚಿತ್ರರಂಗದ ಖ್ಯಾತ ಹಾಸ್ಯನಟ ಆಲಿ ಹೊಸ ವಿವಾದಕ್ಕೆ ಸಿಲುಕಿದ್ದಾರೆ. ಗರ್ ಸೋಪ್ ಜಾಹೀರಾತಿನಲ್ಲಿ ಲಕ್ಷ್ಮೀದೇವಿಗೆ ಸಂಬಂಧಿಸಿದ ಹಾಡನ್ನು ಬಳಸಿದ ಆರೋಪದ ಹಿನ್ನೆಲೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವಿರೋಧ ವ್ಯಕ್ತವಾಗಿದ್ದು, ಇದೀಗ ನಟ ಆಲಿ ಕ್ಷಮೆ ಕೇಳಿದ್ದಾರೆ.

ಇತ್ತೀಚೆಗೆ ಬಿಡುಗಡೆಯಾದ ಗರ್ ಸೋಪ್ ಜಾಹೀರಾತಿನಲ್ಲಿ ಆಲಿ, ಸೋಪಿಗೆ ಪೂಜೆ ಸಲ್ಲಿಸುವ ದೃಶ್ಯದಲ್ಲಿ ಕಾಣಿಸಿಕೊಂಡಿದ್ದರು. ಈ ವೇಳೆ ಲಕ್ಷ್ಮೀದೇವಿಯ ಕುರಿತ ಹಾಡನ್ನು ಬಳಸಲಾಗಿತ್ತು. ಇದನ್ನು ಕೆಲ ಹಿಂದೂಪರ ಸಂಘಟನೆಗಳು ತೀವ್ರವಾಗಿ ವಿರೋಧಿಸಿದ್ದು, ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿವೆ.

ಈ ದೃಶ್ಯಕ್ಕೆ ಹಿನ್ನೆಲೆ ಕೂಡ ಇದೆ. ಆಲಿ ನಟಿಸಿದ್ದ ‘ದೇವುಡು ಚೇಸಿನ ಮನುಷುಲು’ ಸಿನಿಮಾದಲ್ಲಿ ಅವರು ಲಕ್ಷ್ಮೀದೇವಿಯ ಭಕ್ತನ ಪಾತ್ರ ಮಾಡಿದ್ದರು. ಆ ಚಿತ್ರದ ಜನಪ್ರಿಯ ಹಾಡು ಮತ್ತು ಸನ್ನಿವೇಶವನ್ನೇ ಜಾಹೀರಾತಿನಲ್ಲಿ ಮರುಸೃಷ್ಟಿ ಮಾಡಲಾಗಿತ್ತು. ಆದರೆ ದೇವಿಯ ಹಾಡನ್ನು ವಾಣಿಜ್ಯ ಜಾಹೀರಾತಿಗೆ ಬಳಸಿರುವುದು ವಿವಾದದ ಕಿಡಿ ಹಚ್ಚಿದೆ.

ವಿವಾದ ತೀವ್ರವಾಗುತ್ತಿದ್ದಂತೆ ವಿಡಿಯೋ ಸಂದೇಶ ಬಿಡುಗಡೆ ಮಾಡಿದ ಆಲಿ, ‘ಕಂಪೆನಿ ಹೇಳಿದಂತೆ ನನ್ನ ಹಳೆಯ ಸಿನಿಮಾದ ದೃಶ್ಯವನ್ನು ಸ್ವಲ್ಪ ಬದಲಾವಣೆ ಮಾಡಿ ಅಭಿನಯಿಸಿದ್ದೆ. ಆದರೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹೀಗಾಗಿ ತಕ್ಷಣ ಜಾಹೀರಾತನ್ನು ಡಿಲೀಟ್ ಮಾಡಿದ್ದೇವೆ. ಯಾರಿಗಾದರೂ ಇದರಿಂದ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ’ ಎಂದು ಹೇಳಿದ್ದಾರೆ.

ಸದ್ಯ ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದು, ಜಾಹೀರಾತುಗಳಲ್ಲಿ ಧಾರ್ಮಿಕ ಅಂಶ ಬಳಕೆಯ ಬಗ್ಗೆ ಮತ್ತೆ ಪ್ರಶ್ನೆಗಳು ಎದ್ದಿವೆ.

ಬೆಳಿಗ್ಗೆ ಫುಲ್ ಬಾಡಿ ಚೆಕಪ್‌ಗೆ ಅಪಾಯಿಂಟ್ಮೆಂಟ್: ಅದಕ್ಕೂ ಮುನ್ನವೇ ದಿಲೀಪ್ ರಾಜ್ ಸಾವು!

ಕನ್ನಡದ ಜನಪ್ರಿಯ ನಟ ಮತ್ತು ನಿರ್ಮಾಪಕ ದಿಲೀಪ್ ರಾಜ್ ಅವರ ನಿಧನದ ಬಳಿಕ ಹಲವು ಆಘಾತಕಾರಿ ಮಾಹಿತಿಗಳು ಹೊರಬರುತ್ತಿವೆ. ಇದೀಗ ನಟಿ ಅಭಿನಯ ಅವರು ನೀಡಿರುವ ಹೇಳಿಕೆ ಅಭಿಮಾನಿಗಳ ಮನ ಕಲುಕಿದೆ. ಹೃದಯಾಘಾತಕ್ಕೂ ಮುನ್ನ ದಿಲೀಪ್ ರಾಜ್ ಆರೋಗ್ಯ ತಪಾಸಣೆಗೆ ಸಿದ್ಧತೆ ನಡೆಸಿದ್ದರು ಎಂಬ ಮಾಹಿತಿ ಬಹಿರಂಗವಾಗಿದೆ.

‘ಹಿಟ್ಲರ್ ಕಲ್ಯಾಣ’ ಧಾರಾವಾಹಿಯಲ್ಲಿ ದಿಲೀಪ್ ರಾಜ್ ಜೊತೆ ಅಭಿನಯಿಸಿದ್ದ ನಟಿ ಅಭಿನಯ, ಅವರ ಅಂತಿಮ ದರ್ಶನ ಪಡೆದು ಮಾತನಾಡುವ ವೇಳೆ ಭಾವುಕರಾದರು. ‘ಹಿಟ್ಲರ್ ಕಲ್ಯಾಣದಲ್ಲಿ ನನಗೆ ಉತ್ತಮ ಪಾತ್ರ ನೀಡಿದ್ದರು. ನಂತರ ಬ್ರಹ್ಮಗಂಟು ಸೀರಿಯಲ್‌ನಲ್ಲೂ ಅವಕಾಶ ಕೊಟ್ಟಿದ್ದರು. ನಾವು ಚೆನ್ನಾಗಿ ಕೆಲಸ ಮಾಡ್ತೀವಿ ಅನ್ನೋ ನಂಬಿಕೆ ಅವನಿಗಿತ್ತು. ತುಂಬಾ ಪ್ರೋತ್ಸಾಹ ಕೊಡುತ್ತಿದ್ದ’ ಎಂದು ಹೇಳಿದರು.

ಆ ಬಳಿಕ ಅವರು ದಿಲೀಪ್ ರಾಜ್ ಆರೋಗ್ಯದ ಬಗ್ಗೆ ಮಹತ್ವದ ವಿಚಾರ ಹಂಚಿಕೊಂಡರು. ‘ವರ್ಕ್ ಪ್ರೆಷರ್‌ನಿಂದೋ ಏನೋ ಗೊತ್ತಿಲ್ಲ, ಅವರಿಗೆ ನೋವು ಇತ್ತು ಅಂತ ಹೇಳುತ್ತಿದ್ದರು. ಅದಕ್ಕಾಗಿ ಫುಲ್ ಬಾಡಿ ಚೆಕಪ್ ಮಾಡಿಸಿಕೊಳ್ಳಲು ವೈದ್ಯರ ಅಪಾಯಿಂಟ್ಮೆಂಟ್ ಕೂಡ ತೆಗೆದುಕೊಂಡಿದ್ದರು. ಬೆಳಿಗ್ಗೆ ಆಸ್ಪತ್ರೆಗೆ ಹೋಗಬೇಕಿತ್ತು. ಆದರೆ ಅದಕ್ಕೂ ಮುನ್ನವೇ ಹೃದಯಾಘಾತದಿಂದ ಅವರು ನಮ್ಮನ್ನೆಲ್ಲ ಬಿಟ್ಟು ಹೋದರು’ ಎಂದು ಅಭಿನಯ ಕಣ್ಣೀರಿಟ್ಟರು.

ದಿಲೀಪ್ ರಾಜ್ ನಟನೆಯ ಜೊತೆಗೆ ನಿರ್ಮಾಪಕರಾಗಿಯೂ ಯಶಸ್ಸು ಕಂಡಿದ್ದರು. ‘ಹಿಟ್ಲರ್ ಕಲ್ಯಾಣ’ ಧಾರಾವಾಹಿ ಅವರಿಗೆ ಹೊಸ ಮಟ್ಟದ ಜನಪ್ರಿಯತೆ ತಂದುಕೊಟ್ಟಿತ್ತು. ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆಯೇ ಕಿರುತೆರೆ ಮತ್ತು ಚಿತ್ರರಂಗದ ಅನೇಕರು ಸಂತಾಪ ಸೂಚಿಸಿದ್ದಾರೆ.

error: Content is protected !!