Home Blog

ವಾಕಿಂಗ್ ವೇಳೆ ಪಾದಚಾರಿಗೆ ಬೈಕ್ ಡಿಕ್ಕಿ; ಕೃಷಿ ಇಲಾಖೆಯ ನೌಕರ ಸ್ಥಳದಲ್ಲೇ ಸಾವು

ಗದಗ: ವಾಕಿಂಗ್ ವೇಳೆ ಪಾದಚಾರಿಗೆ ವೇಗವಾಗಿ ಬಂದ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಕೃಷಿ ಇಲಾಖೆಯ ಎಫ್‌ಡಿಎ (ಪ್ರಥಮ ದರ್ಜೆ ಸಹಾಯಕ) ಸುನೀಲ್ ದಾಸರ್ ಸ್ಥಳದಲ್ಲೇ ಮೃತಪಟ್ಟಿರುವ ದುರ್ಘಟನೆ ಬುಧವಾರ ರಾತ್ರಿ ಗದಗ ನಗರದಲ್ಲಿ ನಡೆದಿದೆ.

ನಗರದ ದೋಭಿಘಾಟ್ ಸಮೀಪ ಈ ದುರ್ಘಟನೆ ಸಂಭವಿಸಿದ್ದು, ಸುನೀಲ್ ದಾಸರ್ ಅವರು ವಾಕಿಂಗ್ ಮಾಡುತ್ತಿದ್ದ ವೇಳೆ ಅತಿವೇಗದಲ್ಲಿ ಬಂದ ಬೈಕ್ ಡಿಕ್ಕಿ ಹೊಡೆದಿದೆ ಎಂದು ತಿಳಿದು ಬಂದಿದೆ.

ಡಿಕ್ಕಿಯ ತೀವ್ರತೆಗೆ ಸುನೀಲ್ ದಾಸರ್ ಅವರ ತಲೆಗೆ ಗಂಭೀರ ಗಾಯಗಳಾಗಿದ್ದು, ತೀವ್ರ ರಕ್ತಸ್ರಾವ ಉಂಟಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಘಟನೆ ಬಳಿಕ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಈ ಸಂಬಂಧ ಗದಗ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಮುಂದುವರಿದಿದೆ.

ಪೆಟ್ರೋಲ್, ಡಿಸೇಲ್ ಮೇಲಿನ ತೆರಿಗೆ ಕಡಿತ ಮಾಡುವ ಪ್ರಶ್ನೆಯೇ ಇಲ್ಲ: ಸಿದ್ದರಾಮಯ್ಯ

ಬೆಂಗಳೂರು: ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ರಾಜ್ಯ ತೆರಿಗೆಯನ್ನು ಕಡಿತ ಮಾಡುವ ಪ್ರಶ್ನೆಯೇ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಇಂಧನ ಬೆಲೆ ಏರಿಕೆ ಹಿನ್ನೆಲೆ ರಾಜ್ಯ ಸರ್ಕಾರ ತೆರಿಗೆ ಇಳಿಕೆ ಮಾಡುತ್ತದೆಯೇ ಎಂಬ ಪ್ರಶ್ನೆಗೆ ಅವರು ಕಿಡಿಕಾರುವ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಿಎಂ, “ಕೇಂದ್ರ ಸರ್ಕಾರ ಬೆಲೆ ಏರಿಕೆ ಮಾಡುತ್ತದೆ, ನಾವು ತೆರಿಗೆ ಕಡಿಮೆ ಮಾಡಬೇಕಾ? ಅವರು ಬೆಲೆ ಹೆಚ್ಚಿಸಿದಾಗ ನೀವು ಪ್ರಶ್ನೆ ಕೇಳುವುದೇ ಇಲ್ಲ. ಆದರೆ ರಾಜ್ಯ ಸರ್ಕಾರ ತೆರಿಗೆ ಕಡಿತ ಮಾಡುತ್ತದೆಯಾ ಅಂತ ಕೇಳ್ತೀರಾ” ಎಂದು ಮಾಧ್ಯಮಗಳನ್ನೇ ಪ್ರಶ್ನಿಸಿದರು.

ಇದೇ ವೇಳೆ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅವರು, “ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಪೆಟ್ರೋಲ್ ದರ 70 ರೂ., ಡೀಸೆಲ್ 48 ರೂ. ಇತ್ತು. ಗ್ಯಾಸ್ ಸಿಲಿಂಡರ್ 414 ರೂ.ಗೆ ಸಿಗುತ್ತಿತ್ತು. ಈಗ ಎಷ್ಟು ಆಗಿದೆ? ಯಾರು ಬೆಲೆ ಏರಿಸಿದ್ದಾರೆ ಎಂಬುದನ್ನು ಜನರು ನೋಡಬೇಕು” ಎಂದರು.

ರಾಜ್ಯ ಸರ್ಕಾರ ಜನರಿಗೆ ಪರಿಹಾರ ನೀಡುತ್ತದೆಯೇ ಎಂಬ ಪ್ರಶ್ನೆಗೆ ಮತ್ತಷ್ಟು ಆಕ್ರೋಶ ವ್ಯಕ್ತಪಡಿಸಿದ ಸಿದ್ದರಾಮಯ್ಯ, “ಕೇಂದ್ರ ಸರ್ಕಾರ ಬೆಲೆ ಹೆಚ್ಚಿಸಿದಾಗ ಅವರಿಗೆ ಯಾಕೆ ಪ್ರಶ್ನೆ ಕೇಳಲ್ಲ? ರಾಜ್ಯ ತೆರಿಗೆ ಕಡಿಮೆ ಮಾಡಬೇಕು ಅಂತ ಮಾತ್ರ ಕೇಳ್ತೀರಾ? ನಿಮ್ಮ ಪ್ರಶ್ನೆಗಳಲ್ಲೇ ಯಾರ ಪರ ಇದ್ದೀರೋ ಗೊತ್ತಾಗುತ್ತಿದೆ” ಎಂದು ಮಾಧ್ಯಮಗಳ ವಿರುದ್ಧ ಅಸಮಾಧಾನ ಹೊರಹಾಕಿದರು.

ಪೆಟ್ರೋಲ್-ಡೀಸೆಲ್ ತೆರಿಗೆ ಇಳಿಕೆ ಇಲ್ಲ: ಕೇಂದ್ರ ಸರ್ಕಾರದ ವಿರುದ್ಧ ಸಿಎಂ ಸಿದ್ದರಾಮಯ್ಯ ಕಿಡಿ

ಬೆಂಗಳೂರು: ರಾಜ್ಯದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ತೆರಿಗೆಯನ್ನು ಕಡಿತ ಮಾಡುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಇಂಧನ ದರ ಏರಿಕೆಯ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ತೆರಿಗೆ ಇಳಿಕೆ ಮಾಡುತ್ತದೆಯೇ ಎಂಬ ಪ್ರಶ್ನೆಗೆ ವಿಧಾನಸೌಧದಲ್ಲಿ ಪ್ರತಿಕ್ರಿಯಿಸಿದ ಅವರು, ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಕೇಂದ್ರ ಸರ್ಕಾರ ಇಂಧನ ದರ ಹೆಚ್ಚಿಸಿದಾಗ ನೀವು ಪ್ರಶ್ನೆ ಕೇಳುವುದಿಲ್ಲ. ಆದರೆ ನಾವು ತೆರಿಗೆ ಕಡಿಮೆ ಮಾಡುತ್ತೀರಾ ಎಂದು ಮಾತ್ರ ಕೇಳುತ್ತೀರಿ. ಅವರು ಯಾಕೆ ಬೆಲೆ ಏರಿಸಿದ್ದಾರೆ ಎಂದು ಕೇಳುವುದಿಲ್ಲ ಎಂದು ಸಿಎಂ ಹೇಳಿದರು.

ಇದೇ ವೇಳೆ ಹಿಂದಿನ ಯುಪಿಎ ಸರ್ಕಾರದ ಅವಧಿಯ ದರಗಳನ್ನು ಪ್ರಸ್ತಾಪಿಸಿದ ಸಿದ್ದರಾಮಯ್ಯ, ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಪೆಟ್ರೋಲ್ ದರ 70 ರೂ., ಡೀಸೆಲ್ 48 ರೂ. ಇತ್ತು. ಗ್ಯಾಸ್ ಸಿಲಿಂಡರ್ ದರ 414 ರೂ. ಇತ್ತು. ಈಗ ಎಲ್ಲದರ ಬೆಲೆ ಎಷ್ಟಾಗಿದೆ? ಜನರು ಯಾರು ಹೆಚ್ಚು ಬೆಲೆ ಏರಿಸಿದ್ದಾರೆ ಎಂದು ನೋಡಬೇಕು, ಎಂದು ಕೇಂದ್ರ ಸರ್ಕಾರವನ್ನು ಟೀಕಿಸಿದರು.

ರಾಜ್ಯ ಸರ್ಕಾರ ಜನತೆಗೆ ನೆರವಾಗುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಕೇಂದ್ರ ಸರ್ಕಾರ ದರ ಹೆಚ್ಚಿಸಿದರೆ ನಮ್ಮನ್ನೇ ತೆರಿಗೆ ಕಡಿಮೆ ಮಾಡಿ ಎಂದು ಕೇಳುತ್ತೀರಾ? ನಿಮ್ಮ ಪ್ರಶ್ನೆಗಳಲ್ಲೇ ನೀವು ಕೇಂದ್ರ ಸರ್ಕಾರದ ಪರವಾಗಿದ್ದೀರಿ ಎಂಬುದು ಗೊತ್ತಾಗುತ್ತದೆ ಎಂದು ಮಾಧ್ಯಮಗಳ ಮೇಲೂ ಅಸಮಾಧಾನ ವ್ಯಕ್ತಪಡಿಸಿದರು.

ಪಶ್ಚಿಮ ಬಂಗಾಳದ ಎಲ್ಲಾ ಮದರಸಾಗಳಲ್ಲಿ ‘ವಂದೇ ಮಾತರಂ’ ಕಡ್ಡಾಯ; ಶಿಕ್ಷಣ ಇಲಾಖೆಯಿಂದ ಹೊಸ ಆದೇಶ

ಪಶ್ಚಿಮ ಬಂಗಾಳ: ಪಶ್ಚಿಮ ಬಂಗಾಳ ಸರ್ಕಾರವು ರಾಜ್ಯದ ಎಲ್ಲಾ ಮದರಸಾಗಳಲ್ಲಿ ಬೆಳಗಿನ ಪ್ರಾರ್ಥನಾ ಸಭೆಯ ವೇಳೆ ‘ವಂದೇ ಮಾತರಂ’ ಹಾಡುವುದನ್ನು ಕಡ್ಡಾಯಗೊಳಿಸಿ ಹೊಸ ಆದೇಶ ಹೊರಡಿಸಿದೆ. ಈ ನಿಯಮವನ್ನು ತಕ್ಷಣದಿಂದಲೇ ಜಾರಿಗೆ ತರಲಾಗಿದೆ ಎಂದು ತಿಳಿದುಬಂದಿದೆ.

ರಾಜ್ಯ ಶಿಕ್ಷಣ ಇಲಾಖೆಯ ಪ್ರಧಾನ ಕಚೇರಿಯಾದ ‘ಬಿಕಾಶ್ ಭವನ’ ಹೊರಡಿಸಿರುವ ನಿರ್ದೇಶನದ ಪ್ರಕಾರ, ಮದರಸಾ ಶಿಕ್ಷಣ ಇಲಾಖೆಯ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಮದರಸಾಗಳು, ಶಿಶು ಶಿಕ್ಷಣ ಕೇಂದ್ರಗಳು (SSK) ಹಾಗೂ ಮಾಧ್ಯಮಿಕ್ ಶಿಕ್ಷಣ ಕೇಂದ್ರಗಳು (MSK) ಪ್ರತಿದಿನ ತರಗತಿಗಳು ಆರಂಭವಾಗುವ ಮೊದಲು ನಡೆಯುವ ಪ್ರಾರ್ಥನಾ ಸಭೆಯಲ್ಲಿ ‘ವಂದೇ ಮಾತರಂ’ ಹಾಡಬೇಕು ಎಂದು ಸೂಚಿಸಲಾಗಿದೆ.

ಮದರಸಾ ಶಿಕ್ಷಣ ಇಲಾಖೆಯ ನಿರ್ದೇಶಕರು ಈ ಆದೇಶವನ್ನು ಹೊರಡಿಸಿದ್ದು, ಅದರ ಪ್ರತಿಯನ್ನು ಎಲ್ಲಾ ಜಿಲ್ಲಾ ಮ್ಯಾಜಿಸ್ಟ್ರೇಟ್‌ಗಳು, ಜಿಲ್ಲಾ ಶಿಕ್ಷಣಾಧಿಕಾರಿಗಳು, ಪಶ್ಚಿಮ ಬಂಗಾಳ ಮದರಸಾ ಶಿಕ್ಷಣ ಮಂಡಳಿ ಹಾಗೂ ಸಂಬಂಧಿತ ಇಲಾಖೆಗಳಿಗೂ ರವಾನಿಸಲಾಗಿದೆ. ಸಕ್ಷಮ ಅಧಿಕಾರಿಗಳ ಅನುಮೋದನೆ ಪಡೆದ ಬಳಿಕವೇ ಈ ಆದೇಶ ಜಾರಿಗೊಳಿಸಲಾಗಿದೆ ಎಂದು ತಿಳಿಸಲಾಗಿದೆ.

ಇದಕ್ಕೂ ಮೊದಲು ರಾಜ್ಯದ ಸರ್ಕಾರಿ ಹಾಗೂ ಸರ್ಕಾರಿ ಅನುದಾನಿತ ಶಾಲೆಗಳಲ್ಲಿ ತರಗತಿಗಳು ಆರಂಭವಾಗುವ ಮುನ್ನ ರಾಷ್ಟ್ರಗೀತೆ ಹಾಡುವಂತೆ ಸರ್ಕಾರ ನಿರ್ದೇಶನ ನೀಡಿತ್ತು. ಇದೀಗ ಅದೇ ನಿಯಮವನ್ನು ಮದರಸಾಗಳಿಗೂ ವಿಸ್ತರಿಸಲಾಗಿದೆ.

ಶಾಲಾ ಶಿಕ್ಷಣ ಇಲಾಖೆ ಹೊರಡಿಸಿರುವ ಅಧಿಸೂಚನೆಯಲ್ಲಿ, ವಿದ್ಯಾರ್ಥಿಗಳು ‘ಜನ ಗಣ ಮನ’ ರಾಷ್ಟ್ರಗೀತೆಯೊಂದಿಗೆ ‘ವಂದೇ ಮಾತರಂ’ ಹಾಡಬೇಕು ಎಂದು ಸ್ಪಷ್ಟಪಡಿಸಲಾಗಿದೆ. ಈ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಎಲ್ಲಾ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಿಗೆ ಸೂಚನೆ ನೀಡಲಾಗಿದೆ.

ಪ್ರತಿದಿನ ಗ್ರೀನ್ ಟೀ ಕುಡಿದರೆ ದೇಹದಲ್ಲಿ ಏನಾಗುತ್ತದೆ? ಇಲ್ಲಿದೆ ಸಂಪೂರ್ಣ ಮಾಹಿತಿ

ಇತ್ತೀಚಿನ ದಿನಗಳಲ್ಲಿ ಆರೋಗ್ಯ ಮತ್ತು ಫಿಟ್‌ನೆಸ್ ಬಗ್ಗೆ ಕಾಳಜಿ ವಹಿಸುವವರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆ, ಗ್ರೀನ್ ಟೀ ಬಹುತೇಕರ ದಿನಚರಿಯ ಭಾಗವಾಗಿದೆ. ಬೆಳಿಗ್ಗೆಯ ಆರಂಭವನ್ನು ಗ್ರೀನ್ ಟೀಯೊಂದಿಗೆ ಮಾಡುವ ಅಭ್ಯಾಸ ಅನೇಕರು ರೂಢಿಸಿಕೊಂಡಿದ್ದಾರೆ.

ಆದರೆ, ಪ್ರತಿದಿನ ಗ್ರೀನ್ ಟೀ ಸೇವಿಸುವುದರಿಂದ ದೇಹದ ಮೇಲೆ ಯಾವ ರೀತಿಯ ಪರಿಣಾಮಗಳು ಬೀರುತ್ತವೆ ಎಂಬುದರ ಬಗ್ಗೆ ಸಾಕಷ್ಟು ಜನರಿಗೆ ಸ್ಪಷ್ಟ ಮಾಹಿತಿ ಇರುವುದಿಲ್ಲ.ತಜ್ಞರು ಮತ್ತು ಸಂಶೋಧನೆಗಳ ಪ್ರಕಾರ, ನಿಯಮಿತ ಪ್ರಮಾಣದಲ್ಲಿ ಗ್ರೀನ್ ಟೀ ಸೇವಿಸುವುದರಿಂದ ದೇಹಕ್ಕೆ ಹಲವು ಆರೋಗ್ಯಕರ ಲಾಭಗಳು ದೊರೆಯುತ್ತವೆ.

ಚಯಾಪಚಯ ಕ್ರಿಯೆ ಚುರುಕು

ಗ್ರೀನ್ ಟೀಯಲ್ಲಿ ‘ಎಪಿಗಾಲೊಕಾಟೆಚಿನ್ ಗ್ಯಾಲೇಟ್’ (EGCG) ಎಂಬ ಶಕ್ತಿಶಾಲಿ ಆಂಟಿ-ಆಕ್ಸಿಡೆಂಟ್ ಅಂಶವಿದೆ. ಇದು ದೇಹದ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸಿ, ಕ್ಯಾಲೊರಿಗಳನ್ನು ವೇಗವಾಗಿ ಬರ್ನ್ ಮಾಡಲು ಸಹಾಯ ಮಾಡುತ್ತದೆ. ಹೀಗಾಗಿ ತೂಕ ನಿಯಂತ್ರಣಕ್ಕೆ ಗ್ರೀನ್ ಟೀ ಸಹಕಾರಿ ಎಂದು ಹೇಳಲಾಗುತ್ತದೆ.

ಮೆದುಳಿನ ಕಾರ್ಯಕ್ಷಮತೆ ಹೆಚ್ಚಳ

ಗ್ರೀನ್ ಟೀಯಲ್ಲಿ ಕಡಿಮೆ ಪ್ರಮಾಣದ ಕೆಫೀನ್ ಜೊತೆಗೆ ‘ಎಲ್-ಥಿಯಾನೈನ್’ ಎಂಬ ಅಮೈನೋ ಆಮ್ಲವಿದೆ. ಇವು ಎರಡೂ ಸೇರಿ ಮೆದುಳಿನ ಕಾರ್ಯಕ್ಷಮತೆಯನ್ನು ಉತ್ತೇಜಿಸುತ್ತವೆ. ಇದರಿಂದ ಏಕಾಗ್ರತೆ ಹೆಚ್ಚುವುದು, ನೆನಪಿನ ಶಕ್ತಿ ಸುಧಾರಿಸುವುದು ಹಾಗೂ ದಿನವಿಡೀ ಚುರುಕಾಗಿರುವುದಕ್ಕೆ ನೆರವಾಗುತ್ತದೆ.

ಒತ್ತಡ ಕಡಿಮೆ ಮಾಡಿ ಮನಸ್ಸಿಗೆ ನೆಮ್ಮದಿ

ಇಂದಿನ ಒತ್ತಡಭರಿತ ಜೀವನಶೈಲಿಯಲ್ಲಿ ಗ್ರೀನ್ ಟೀ ಮಾನಸಿಕ ಶಾಂತಿಗೆ ಸಹಕಾರಿ ಎಂದು ಪರಿಗಣಿಸಲಾಗುತ್ತದೆ. ಇದರಲ್ಲಿರುವ ಎಲ್-ಥಿಯಾನೈನ್ ನರಮಂಡಲವನ್ನು ಶಾಂತಗೊಳಿಸಿ, ಒತ್ತಡ ಹಾರ್ಮೋನ್ ಆಗಿರುವ ಕಾರ್ಟಿಸೋಲ್ ಮಟ್ಟವನ್ನು ಕಡಿಮೆ ಮಾಡಲು ನೆರವಾಗುತ್ತದೆ.

ಹೃದಯದ ಆರೋಗ್ಯಕ್ಕೆ ಸಹಕಾರಿ

ಸಂಶೋಧನೆಗಳ ಪ್ರಕಾರ, ಗ್ರೀನ್ ಟೀ ಸೇವನೆ ಹೃದಯ ಸಂಬಂಧಿತ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಬಹುದು. ಇದರಲ್ಲಿರುವ ಪಾಲಿಫೆನಾಲ್ ಅಂಶಗಳು ರಕ್ತನಾಳಗಳ ಆರೋಗ್ಯ ಕಾಪಾಡಿ, ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಇಳಿಸಲು ಸಹಾಯ ಮಾಡುತ್ತವೆ. ಜೊತೆಗೆ ರಕ್ತದೊತ್ತಡ ನಿಯಂತ್ರಣದಲ್ಲಿಡಲು ಸಹಕಾರಿ.

ರೋಗನಿರೋಧಕ ಶಕ್ತಿ ಹೆಚ್ಚಳ

ಗ್ರೀನ್ ಟೀಯಲ್ಲಿ ಆಂಟಿ-ಇನ್ಫ್ಲಮೇಟರಿ ಮತ್ತು ಆಂಟಿಮೈಕ್ರೊಬಿಯಲ್ ಗುಣಗಳಿವೆ. ಇವು ದೇಹದ ಉರಿಯೂತ ಕಡಿಮೆ ಮಾಡಿ, ಉತ್ತಮ ಬ್ಯಾಕ್ಟೀರಿಯಾಗಳ ಬೆಳವಣಿಗೆಗೆ ಸಹಾಯ ಮಾಡುತ್ತವೆ. ಇದರ ಪರಿಣಾಮ ರೋಗನಿರೋಧಕ ಶಕ್ತಿ ಹೆಚ್ಚಾಗಿ, ಸಾಮಾನ್ಯ ಸೋಂಕುಗಳಿಂದ ರಕ್ಷಣೆ ಸಿಗುತ್ತದೆ.

ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣ

ಮಧುಮೇಹ ಅಥವಾ ಪ್ರೀ-ಡಯಾಬಿಟಿಸ್ ಸಮಸ್ಯೆಯಿರುವವರಿಗೆ ಗ್ರೀನ್ ಟೀ ಉಪಯುಕ್ತ ಎಂದು ತಜ್ಞರು ಹೇಳುತ್ತಾರೆ. ಇದು ಇನ್ಸುಲಿನ್ ಸಂವೇದನೆಯನ್ನು ಸುಧಾರಿಸಿ, ಊಟದ ನಂತರ ರಕ್ತದಲ್ಲಿನ ಸಕ್ಕರೆ ಪ್ರಮಾಣ ತಕ್ಷಣ ಏರಿಕೆಯಾಗದಂತೆ ಸಹಾಯ ಮಾಡುತ್ತದೆ.

ಬಾಯಿಯ ಆರೋಗ್ಯಕ್ಕೂ ಲಾಭ

ಗ್ರೀನ್ ಟೀಯಲ್ಲಿರುವ ಕ್ಯಾಟೆಚಿನ್‌ಗಳು ಬಾಯಿಯಲ್ಲಿ ಬ್ಯಾಕ್ಟೀರಿಯಾ ಬೆಳವಣಿಗೆಯನ್ನು ತಡೆಯುತ್ತವೆ. ಇದರಿಂದ ಹಲ್ಲುಗಳ ಕ್ಷಯ, ವಸಡು ಸಮಸ್ಯೆಗಳು ಕಡಿಮೆಯಾಗುವ ಸಾಧ್ಯತೆ ಇದೆ. ಜೊತೆಗೆ ಬಾಯಿಯ ದುರ್ವಾಸನೆ ಕಡಿಮೆ ಮಾಡಿ ಉಸಿರಾಟವನ್ನು ತಾಜಾವಾಗಿಡುತ್ತದೆ.

ಅತಿಯಾಗಿ ಸೇವಿಸಿದರೆ ಏನು ಸಮಸ್ಯೆ?

ಆರೋಗ್ಯಕ್ಕೆ ಒಳ್ಳೆಯದು ಎಂದು ಗ್ರೀನ್ ಟೀ ಅನ್ನು ಅತಿಯಾಗಿ ಸೇವಿಸುವುದು ಸರಿಯಲ್ಲ. ತಜ್ಞರ ಪ್ರಕಾರ, ದಿನಕ್ಕೆ 3 ರಿಂದ 4 ಕಪ್ ಗ್ರೀನ್ ಟೀ ಸೇವಿಸುವುದು ಸುರಕ್ಷಿತ. ಇದಕ್ಕಿಂತ ಹೆಚ್ಚು ಕುಡಿದರೆ ನಿದ್ರಾಹೀನತೆ, ಅಸಿಡಿಟಿ, ಹೊಟ್ಟೆ ತೊಳಸುವಿಕೆ ಸೇರಿದಂತೆ ಕೆಲವು ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

ರೈತರ ನಿದ್ದೆಗೆಡಿಸಿದ್ದ ಚಿರತೆ ಕೊನೆಗೂ ಸೆರೆ

0

ಮಂಡ್ಯ: ಶ್ರೀರಂಗಪಟ್ಟಣ ತಾಲೂಕಿನ ಚಿಂದಗಿರಿಕೊಪ್ಪಲು ಗ್ರಾಮದಲ್ಲಿ ಹಲವು ದಿನಗಳಿಂದ ಜನರನ್ನು ಬೆಚ್ಚಿಬೀಳಿಸುತ್ತಿದ್ದ ಚಿರತೆ ಕೊನೆಗೂ ಅರಣ್ಯ ಇಲಾಖೆಯ ಬೋನಿಗೆ ಬಿದ್ದಿದೆ. ಗ್ರಾಮದ ಜಮೀನು ಪ್ರದೇಶದಲ್ಲಿ ನಿರಂತರವಾಗಿ ಚಿರತೆ ಕಾಣಿಸಿಕೊಳ್ಳುತ್ತಿದ್ದ ಕಾರಣ ರೈತರು ಹಾಗೂ ಗ್ರಾಮಸ್ಥರಲ್ಲಿ ಭಾರೀ ಆತಂಕ ಮನೆ ಮಾಡಿತ್ತು.

ಚಿರತೆ ಓಡಾಟ ಹೆಚ್ಚಾಗುತ್ತಿದ್ದಂತೆ ಗ್ರಾಮಸ್ಥರು ಅರಣ್ಯ ಇಲಾಖೆಗೆ ದೂರು ನೀಡಿ ತಕ್ಷಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದರು. ಅದರಂತೆ ಅರಣ್ಯ ಇಲಾಖೆ ಕಾರ್ಯಾಚರಣೆ ಆರಂಭಿಸಿ ಬೋನು ಅಳವಡಿಸಿತ್ತು.

ಬೋನಿನೊಳಗೆ ನಾಯಿಯನ್ನು ಇರಿಸಲಾಗಿದ್ದು, ಕಳೆದ ರಾತ್ರಿ ಬೇಟೆಯ ಉದ್ದೇಶದಿಂದ ಬಂದ ಚಿರತೆ ನಾಯಿಯ ಮೇಲೆ ದಾಳಿ ಮಾಡಲು ಯತ್ನಿಸುವಾಗ ಬೋನಿನೊಳಗೆ ಸಿಲುಕಿದೆ. ಬೆಳಗ್ಗೆ ಘಟನೆ ತಿಳಿಯುತ್ತಿದ್ದಂತೆ ಗ್ರಾಮಸ್ಥರು ದೊಡ್ಡ ಸಂಖ್ಯೆಯಲ್ಲಿ ಸ್ಥಳಕ್ಕೆ ಆಗಮಿಸಿ ಚಿರತೆಯನ್ನು ನೋಡಲು ಜಮಾಯಿಸಿದರು.

ಚಿರತೆ ಸೆರೆಗೆ ಸಿಕ್ಕಿರುವುದರಿಂದ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಅದನ್ನು ಸುರಕ್ಷಿತವಾಗಿ ಅರಣ್ಯ ಪ್ರದೇಶಕ್ಕೆ ಸ್ಥಳಾಂತರಿಸಲು ಕ್ರಮ ಕೈಗೊಂಡಿದ್ದಾರೆ.

ತಹಶೀಲ್ದಾರ್​ ಕಚೇರಿಯಲ್ಲಿಯಿದ್ದ ಇನಾಂ ಜಮೀನು ದಾಖಲೆ ಮಿಸ್ಸಿಂಗ್: ರಾಜ್ಯ ಮಾಹಿತಿ ಆಯೋಗದ ಸೂಚನೆ ಬೆನ್ನಲ್ಲೇ FIR ದಾಖಲು

0

ತುಮಕೂರು: ತಹಶೀಲ್ದಾರ್ ಕಚೇರಿಯಲ್ಲೇ ಸರ್ಕಾರಿ ದಾಖಲೆಗಳು ನಾಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದ್ದು, ಮಾಹಿತಿ ಆಯೋಗದ ಮಧ್ಯಪ್ರವೇಶದ ಬಳಿಕ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಹೆಬ್ಬೂರು ಹೋಬಳಿಯ ಜೋಡಿ ಕಲ್ಕರೆ ಗ್ರಾಮದ ಇನಾಂ ಜಮೀನಿಗೆ ಸಂಬಂಧಿಸಿದ ಮಹತ್ವದ ಮೂಲ ದಾಖಲೆಗಳು ಕಾಣೆಯಾಗಿರುವ ಹಿನ್ನೆಲೆಯಲ್ಲಿ ತುಮಕೂರು ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ದೊಡ್ಡಶಾನಯ್ಯ ಅವರ ಸಹಿ ಹೊಂದಿದ್ದ ಮೂಲ ಅರ್ಜಿ, ವಂಶವೃಕ್ಷ ದಾಖಲೆಗಳು ಹಾಗೂ ಮರಣ ಪ್ರಮಾಣಪತ್ರಗಳನ್ನು ಒಳಗೊಂಡ ಕಡತ ಕಾಣೆಯಾಗಿರುವುದಾಗಿ ತಿಳಿದುಬಂದಿದೆ. ದಾಖಲೆಗಳಿಗಾಗಿ ಅರ್ಜಿದಾರರು ಪದೇ ಪದೇ ಮನವಿ ಸಲ್ಲಿಸಿದ್ದರೂ ಅಧಿಕಾರಿಗಳು ಸ್ಪಂದಿಸದ ಹಿನ್ನೆಲೆ ವಿಷಯ ರಾಜ್ಯ ಮಾಹಿತಿ ಆಯೋಗದ ಮೆಟ್ಟಿಲೇರಿತ್ತು.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಮಾಹಿತಿ ಆಯೋಗ, ನಾಪತ್ತೆಯಾದ ದಾಖಲೆಗಳ ಕುರಿತು ಅಫಿಡವಿಟ್ ಸಲ್ಲಿಸಲು ಗಡುವು ನೀಡಿತ್ತು. ಈ ಬೆಳವಣಿಗೆಯ ನಂತರ ತಹಶೀಲ್ದಾರ್ ರಾಜೇಶ್ವರಿ ರಾಜ್ಯ ಸಾರ್ವಜನಿಕ ದಾಖಲೆಗಳ ಕಾಯ್ದೆಯಡಿ ಪೊಲೀಸ್ ದೂರು ದಾಖಲಿಸಿದ್ದಾರೆ.

ಈ ಕುರಿತು ಮಾತನಾಡಿದ ತಹಶೀಲ್ದಾರ್ ರಾಜೇಶ್ವರಿ, “2023ರಲ್ಲಿ ಸಲ್ಲಿಸಲಾದ ಅರ್ಜಿಯ ಆಧಾರದಲ್ಲಿ ದಾಖಲೆಗಳನ್ನು ಹುಡುಕಿದಾಗಲೇ ಕಡತ ಕಾಣೆಯಾಗಿರುವುದು ಗೊತ್ತಾಗಿತ್ತು. ಬಳಿಕ ಈ ಬಗ್ಗೆ ಅರ್ಜಿದಾರರಿಗೆ ಲಿಖಿತ ಮಾಹಿತಿ ನೀಡಲಾಗಿತ್ತು. ಮಾಹಿತಿ ಆಯೋಗದ ನಿರ್ದೇಶನದಂತೆ ಈಗ ಪೊಲೀಸ್ ದೂರು ನೀಡಲಾಗಿದೆ” ಎಂದು ಸ್ಪಷ್ಟಪಡಿಸಿದ್ದಾರೆ.

ಆದರೆ ಅರ್ಜಿದಾರ ಶ್ರೀನಿವಾಸ ಕಲ್ಕೆರೆ ಈ ಪ್ರಕರಣದಲ್ಲಿ ಉದ್ದೇಶಪೂರ್ವಕ ಸಂಚು ನಡೆದಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. “ನನಗೆ ಸಿಗಬೇಕಿದ್ದ 5 ಎಕರೆ 28 ಗುಂಟೆ ಇನಾಂ ಜಮೀನಿನ ದಾಖಲೆಗಳನ್ನೇ ಕಾಣೆಯಾಗಿಸಲಾಗಿದೆ. ಆರ್‌ಐ ಮತ್ತು ವಿಎ ಅಧಿಕಾರಿಗಳು ಈ ಕಡತಗಳನ್ನು ಈಗಾಗಲೇ ಪರಿಶೀಲಿಸಿದ್ದರು. ಬಳಿಕವೇ ಅವು ನಾಪತ್ತೆಯಾಗಿವೆ. ಇದು ಸಾಮಾನ್ಯ ನಿರ್ಲಕ್ಷ್ಯ ಅಲ್ಲ” ಎಂದು ಅವರು ಆರೋಪಿಸಿದ್ದಾರೆ.

ಸರ್ಕಾರಿ ಕಚೇರಿಯಲ್ಲೇ ಮೂಲ ದಾಖಲೆಗಳು ಕಾಣೆಯಾಗಿರುವುದು ಆಡಳಿತ ವ್ಯವಸ್ಥೆಯ ಮೇಲಿನ ನಂಬಿಕೆಗೆ ದೊಡ್ಡ ಹೊಡೆತ ನೀಡಿದ್ದು, ಪ್ರಕರಣದ ತನಿಖೆ ಇದೀಗ ಕುತೂಹಲ ಕೆರಳಿಸಿದೆ.

ಜೈಲುಗಳಲ್ಲಿ ಭ್ರಷ್ಟಾಚಾರಕ್ಕೆ ಬ್ರೇಕ್ ಹಾಕಲು ಡಿಜಿಪಿ ಅಲೋಕ್ ಕುಮಾರ್ ಕಠಿಣ ಕ್ರಮ!

ಬೆಂಗಳೂರು: ಕರ್ನಾಟಕ ರಾಜ್ಯದ ಜೈಲುಗಳಲ್ಲಿ ನಡೆಯುತ್ತಿದ್ದ ಅಕ್ರಮ ಚಟುವಟಿಕೆಗಳು ಮತ್ತು ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಕಾರಾಗೃಹ ಡಿಜಿಪಿ ಅಲೋಕ್ ಕುಮಾರ್ ಮಹತ್ವದ ಬದಲಾವಣೆಗಳನ್ನು ಜಾರಿಗೆ ತಂದಿದ್ದಾರೆ.

ರಾಜ್ಯದ ವಿವಿಧ ಜೈಲುಗಳಲ್ಲಿ ಹಲವು ವರ್ಷಗಳಿಂದ ಒಂದೇ ಬ್ಯಾರಕ್‌ನಲ್ಲಿ ಉಳಿದಿದ್ದ ಕೈದಿಗಳಿಗೆ ಇದೀಗ ಬಿಗ್ ಶಾಕ್ ಎದುರಾಗಿದೆ. ಸುಮಾರು 10 ರಿಂದ 20 ವರ್ಷಗಳ ಕಾಲ ಒಂದೇ ಬ್ಯಾರಕ್‌ನಲ್ಲಿ ನೆಲೆಸಿದ್ದ ಕೈದಿಗಳ ಬ್ಯಾರಕ್‌ಗಳನ್ನು ಬದಲಾಯಿಸಲು ಸೂಚನೆ ನೀಡಲಾಗಿದೆ.

ಹೊಸ ನಿಯಮದ ಪ್ರಕಾರ, ಇನ್ನು ಮುಂದೆ ಕೈದಿಗಳಿಗೆ ಆಲ್ಫಾಬೆಟಿಕ್ ಆಧಾರದ ಮೇಲೆ ಬ್ಯಾರಕ್ ಹಂಚಿಕೆ ಮಾಡಲಾಗುತ್ತದೆ. ಇದರಿಂದ ಕೈದಿಗಳು ತಮ್ಮ ಇಚ್ಛೆಯ ಬ್ಯಾರಕ್ ಆಯ್ಕೆ ಮಾಡಿಕೊಳ್ಳುವ ಅವಕಾಶಕ್ಕೆ ತೆರೆ ಬೀಳಲಿದೆ.

ಜೈಲುಗಳಲ್ಲಿ ಮೊಬೈಲ್ ಫೋನ್‌ಗಳ ಅಕ್ರಮ ಬಳಕೆ, ಪ್ರಭಾವಶಾಲಿ ಕೈದಿಗಳ ದಬ್ಬಾಳಿಕೆ ಹಾಗೂ ಕೆಲವು ಜೈಲಾಧಿಕಾರಿಗಳ ಮೂಲಕ ನಡೆಯುತ್ತಿದ್ದ ಭ್ರಷ್ಟಾಚಾರವನ್ನು ನಿಯಂತ್ರಿಸಲು ಈ ಕ್ರಮ ಸಹಾಯಕವಾಗಲಿದೆ ಎಂದು ಮೂಲಗಳು ತಿಳಿಸಿವೆ.

ಹಿರಿಯ ಕೈದಿಗಳು ತಮ್ಮ ಪ್ರಭಾವ ಬಳಸಿ ಅನುಕೂಲಕರ ಸೆಲ್‌ಗಳನ್ನು ಪಡೆಯುವುದು ಹಾಗೂ ಇತರ ಕೈದಿಗಳೊಂದಿಗೆ ಡೀಲ್ ನಡೆಸುವಂತಹ ಚಟುವಟಿಕೆಗಳಿಗೂ ಹೊಸ ವ್ಯವಸ್ಥೆ ಅಡ್ಡಿಯಾಗಲಿದೆ.

ರಾಜ್ಯದ ಎಲ್ಲಾ ಜೈಲುಗಳಲ್ಲಿ ಈ ಹೊಸ ನಿಯಮ ಜಾರಿಗೊಂಡಿದ್ದು, ಬೆಂಗಳೂರು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹವೂ ಈ ಕ್ರಮದ ವ್ಯಾಪ್ತಿಗೆ ಬಂದಿದೆ.

ರಣವೀರ್ ಸಿಂಗ್ ‘ಧುರಂಧರ್’ ವಿರುದ್ಧ ರಾಷ್ಟ್ರ ಭದ್ರತಾ ಆರೋಪ: ಸೇನಾ ರಹಸ್ಯ ಬಿಚ್ಚಿಟ್ಟಿದೆಯೇ ಸಿನಿಮಾ?

ಬಾಲಿವುಡ್ ನಟ ರಣವೀರ್ ಸಿಂಗ್ ಅಭಿನಯದ ‘ಧುರಂಧರ್: ದಿ ರಿವೆಂಜ್’ ಸಿನಿಮಾ ಇದೀಗ ರಾಷ್ಟ್ರ ಭದ್ರತೆಗೆ ಸಂಬಂಧಿಸಿದ ಗಂಭೀರ ಆರೋಪಗಳ ನಡುವೆ ಕಾನೂನು ಸಂಕಷ್ಟಕ್ಕೆ ಸಿಲುಕಿದೆ. ಭಾರತೀಯ ಸೇನೆಯ ಸೂಕ್ಷ್ಮ ಕಾರ್ಯಾಚರಣೆಗಳ ವಿವರಗಳು, ರಕ್ಷಣಾ ತಂತ್ರಗಳು ಮತ್ತು ರಹಸ್ಯ ಮಾಹಿತಿಗಳನ್ನು ಸಿನಿಮಾದಲ್ಲಿ ಬಳಸಲಾಗಿದೆ ಎಂಬ ಆರೋಪದ ಹಿನ್ನೆಲೆ ದೆಹಲಿ ಹೈಕೋರ್ಟ್ ಕೇಂದ್ರ ಸರ್ಕಾರ ಹಾಗೂ ಸೆನ್ಸಾರ್ ಮಂಡಳಿಗೆ ತನಿಖೆ ನಡೆಸುವಂತೆ ಸೂಚಿಸಿದೆ.

ಸಶಸ್ತ್ರ ಸೀಮಾ ಬಲದ ಹೆಡ್ ಕಾನ್ಸ್‌ಟೇಬಲ್ ದೀಪಕ್ ಕುಮಾರ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ವೇಳೆ, ಚಿತ್ರದ ಕೆಲವು ದೃಶ್ಯಗಳು ಅಧಿಕೃತ ರಹಸ್ಯ ಕಾಯ್ದೆಯ ನೇರ ಉಲ್ಲಂಘನೆ ಆಗಬಹುದು ಎಂದು ವಾದಿಸಲಾಯಿತು.

ಅರ್ಜಿಯಲ್ಲಿ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ ರಹಸ್ಯ ಯೋಜನೆಗಳು, ಭಾರತೀಯ ಸೇನೆಯ ಕಾರ್ಯಾಚರಣೆ ಸ್ಥಳಗಳು ಮತ್ತು ಮಿಲಿಟರಿ ತಂತ್ರಗಳನ್ನು ಚಿತ್ರದಲ್ಲಿ ಪ್ರದರ್ಶಿಸಲಾಗಿದೆ ಎಂದು ಆರೋಪಿಸಲಾಗಿದೆ. ಜೊತೆಗೆ ಮೃತ ಯೋಧರು ಹಾಗೂ ಹಿರಿಯ ರಕ್ಷಣಾ ಅಧಿಕಾರಿಗಳಿಂದ ಪ್ರೇರಿತ ಪಾತ್ರಗಳನ್ನು ತಪ್ಪಾಗಿ ಬಿಂಬಿಸಲಾಗಿದೆ ಎಂಬ ಗಂಭೀರ ಆಕ್ಷೇಪವೂ ಕೇಳಿಬಂದಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ದೆಹಲಿ ಹೈಕೋರ್ಟ್, “ರಾಷ್ಟ್ರ ಭದ್ರತೆಗೆ ಸಂಬಂಧಿಸಿದ ಸೂಕ್ಷ್ಮ ಮಾಹಿತಿಗಳನ್ನು ಒಳಗೊಂಡ ಸಿನಿಮಾಗಳನ್ನು ಅತ್ಯಂತ ಎಚ್ಚರಿಕೆಯಿಂದ ಪರಿಶೀಲಿಸಬೇಕು. ಸೃಜನಶೀಲ ಸ್ವಾತಂತ್ರ್ಯದ ಹೆಸರಿನಲ್ಲಿ ಯಾವುದೇ ರೀತಿಯ ಭದ್ರತಾ ಅಪಾಯವನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ” ಎಂದು ಸ್ಪಷ್ಟಪಡಿಸಿದೆ.

ನ್ಯಾಯಾಲಯ ಚಿತ್ರದ ಬಿಡುಗಡೆಗೆ ತಕ್ಷಣದ ತಡೆ ನೀಡದಿದ್ದರೂ, ಅರ್ಜಿಯನ್ನು ಅಧಿಕೃತ ಮನವಿಯಾಗಿ ಪರಿಗಣಿಸಿ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಹಾಗೂ ಸೆನ್ಸಾರ್ ಮಂಡಳಿಗೆ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದೆ.

ಈ ಬೆಳವಣಿಗೆಯಿಂದ ಚಿತ್ರರಂಗದಲ್ಲಿ ಭಾರೀ ಚರ್ಚೆ ಆರಂಭವಾಗಿದ್ದು, ನೈಜ ಮಿಲಿಟರಿ ಘಟನೆಗಳ ಆಧಾರಿತ ಸಿನಿಮಾಗಳಲ್ಲಿ ಎಷ್ಟು ಮಟ್ಟಿಗೆ ಸ್ವಾತಂತ್ರ್ಯ ಇರಬೇಕು ಎಂಬ ಪ್ರಶ್ನೆ ಮತ್ತೆ ಮುನ್ನೆಲೆಗೆ ಬಂದಿದೆ.

14 ವರ್ಷ ಜೈಲಿನಲ್ಲಿದ್ದರೂ ಪೆರೋಲ್ʼಗೆ ಅರ್ಹತೆ ಸಿಗುವುದಿಲ್ಲ: ಅಪರಾಧಿಯ ಅರ್ಜಿ ವಜಾಗೊಳಿಸಿದ ಹೈಕೋರ್ಟ್

ಬೆಂಗಳೂರು: ಜೈಲು ಶಿಕ್ಷೆ ಅನುಭವಿಸಿದ ಅವಧಿಯನ್ನೇ ಆಧಾರವನ್ನಾಗಿ ಮಾಡಿಕೊಂಡು ಅಪರಾಧಿಗಳಿಗೆ ಪೆರೋಲ್ ನೀಡಲು ಸಾಧ್ಯವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ.

ಮುಂಬೈನಿಂದ ಬೆಂಗಳೂರಿನ ಕಾರಾಗೃಹಕ್ಕೆ ಸ್ಥಳಾಂತರಗೊಂಡಿರುವ ಅಪರಾಧಿ ಅಂಬರೀಶ್ ಎಸ್. ಕಪಾಡಿಯಾ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದಂ ಅವರಿದ್ದ ಏಕಸದಸ್ಯ ಪೀಠ, ಅರ್ಜಿಯನ್ನು ವಜಾಗೊಳಿಸಿ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಅರ್ಜಿದಾರ ಕಪಾಡಿಯಾ ಸುಮಾರು 12 ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಕಳೆದ 14 ವರ್ಷಗಳಿಂದ ಜೈಲು ಶಿಕ್ಷೆ ಅನುಭವಿಸುತ್ತಿದ್ದೇನೆ. ಆದ್ದರಿಂದ ಪೆರೋಲ್ ನೀಡಬೇಕು ಎಂದು ಕೋರಿ ಹೈಕೋರ್ಟ್ ಮೊರೆ ಹೋಗಿದ್ದರು.

ವಿಚಾರಣೆ ವೇಳೆ ನ್ಯಾಯಪೀಠ, ಅರ್ಜಿದಾರರು ಆರು ಕ್ರಿಮಿನಲ್ ಪ್ರಕರಣಗಳಲ್ಲಿ ಶಿಕ್ಷೆಗೆ ಒಳಗಾಗಿದ್ದಾರೆ. ಇದು ಪುನರಾವರ್ತಿತ ಅಪರಾಧ ಪ್ರವೃತ್ತಿಯನ್ನು ತೋರಿಸುತ್ತದೆ ಎಂದು ಅಭಿಪ್ರಾಯಪಟ್ಟಿದೆ. ದಾಖಲೆಗಳಲ್ಲಿ ವಂಚನೆ, ನಕಲಿ ದಾಖಲೆ ಸೃಷ್ಟಿ ಹಾಗೂ ದುರುಪಯೋಗದಂತಹ ಗಂಭೀರ ಆರ್ಥಿಕ ಅಪರಾಧಗಳ ಆರೋಪಗಳು ಸಾಬೀತಾಗಿವೆ. ಇಂತಹ ಪ್ರಕರಣಗಳು ಸಾರ್ವಜನಿಕ ವಿಶ್ವಾಸದ ಮೇಲೆ ದುಷ್ಪರಿಣಾಮ ಬೀರುತ್ತವೆ ಎಂದು ಪೀಠ ತಿಳಿಸಿದೆ.

ಇದಲ್ಲದೆ, ಒಂದು ಪ್ರಕರಣ ಸಿಬಿಐ ತನಿಖಾ ವ್ಯಾಪ್ತಿಗೆ ಒಳಪಟ್ಟಿರುವುದೂ ಅಪರಾಧಗಳ ಗಂಭೀರತೆ ಹಾಗೂ ಸಂಕೀರ್ಣತೆಯನ್ನು ಸೂಚಿಸುತ್ತದೆ ಎಂದು ನ್ಯಾಯಾಲಯ ಹೇಳಿದೆ.

ಅರ್ಜಿದಾರರ ಹಿಂದಿನ ನಡವಳಿಕೆಯನ್ನು ಪರಿಗಣಿಸಿದರೆ, ತಾತ್ಕಾಲಿಕ ಪೆರೋಲ್ ಸೌಲಭ್ಯ ನೀಡಲು ವಿಶ್ವಾಸ ಮೂಡುವುದಿಲ್ಲ. 14 ವರ್ಷಗಳ ಕಾಲ ಜೈಲಿನಲ್ಲಿದ್ದೇನೆ ಎಂಬ ವಾದವನ್ನು ಪ್ರತ್ಯೇಕವಾಗಿ ಪರಿಗಣಿಸಲು ಸಾಧ್ಯವಿಲ್ಲ. ಅಪರಾಧದ ಸ್ವರೂಪ, ಹಿನ್ನೆಲೆ ಹಾಗೂ ಗಂಭೀರತೆಯನ್ನು ಗಮನಿಸಬೇಕಾಗುತ್ತದೆ. ಶಿಕ್ಷೆಯ ಅವಧಿಯೇ ಪೆರೋಲ್ ಪಡೆಯಲು ಏಕೈಕ ಮಾನದಂಡವಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, 2020ರ ನವೆಂಬರ್‌ನಲ್ಲಿ ಹೈಕೋರ್ಟ್ ಪೆರೋಲ್ ಅರ್ಜಿಯನ್ನು ಪರಿಗಣಿಸಲು ನಿರ್ದೇಶಿಸಿತ್ತು. ಆದರೆ ಸಿಬಿಐ ಪ್ರಕರಣದ ಹಿನ್ನೆಲೆಯಲ್ಲಿ ಕಪಾಡಿಯಾರನ್ನು ಅಹಮದಾಬಾದ್ ಜೈಲಿಗೆ ವರ್ಗಾಯಿಸಿದ್ದರಿಂದ ಅರ್ಜಿಯ ಬಗ್ಗೆ ಕ್ರಮ ಕೈಗೊಳ್ಳಲಾಗಿಲ್ಲ ಎಂದು ವಾದಿಸಿದರು. ಹೀಗಾಗಿ ಎರಡು ತಿಂಗಳ ಪೆರೋಲ್ ಮಂಜೂರು ಮಾಡಲು ಕಾರಾಗೃಹ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು ಎಂದು ಮನವಿ ಮಾಡಿದರು.

ಇದಕ್ಕೆ ಪ್ರತಿಯಾಗಿ ಸಿಬಿಐ ಪರ ವಕೀಲರು, ಅರ್ಜಿದಾರರು ಆರು ಪ್ರಕರಣಗಳಲ್ಲಿ ಶಿಕ್ಷೆಗೆ ಒಳಗಾಗಿದ್ದು, ಕರ್ನಾಟಕ ಜೈಲು ನಿಯಮಗಳು–1974ರ ನಿಯಮ 192(2)(1)(ಜಿ) ಪ್ರಕಾರ ಪೆರೋಲ್ ಪಡೆಯಲು ಅರ್ಹರಲ್ಲ ಎಂದು ನ್ಯಾಯಾಲಯಕ್ಕೆ ವಾದ ಮಂಡಿಸಿದರು.

error: Content is protected !!