Home Blog

ಮುಮ್ಮಡಿ ನಿರ್ವಾಣ ಮಹಾಸ್ವಾಮಿಗಳಿಗೆ ಕಣ್ಣೀರಿನ ವಿದಾಯ; ಅಂತಿಮ ದರ್ಶನ ಪಡೆದ ಸಿಎಂ, ಕೇಂದ್ರ ಸಚಿವರು

ರಾಮನಗರ: ಕನಕಪುರದ ಐತಿಹಾಸಿಕ ದೇಗುಲ ಮಠದ ಮುಮ್ಮಡಿ ನಿರ್ವಾಣ ಮಹಾಸ್ವಾಮಿಗಳು ಲಿಂಗೈಕ್ಯರಾದ ಹಿನ್ನೆಲೆಯಲ್ಲಿ ಮಠದ ಆವರಣದಲ್ಲಿ ಸಾವಿರಾರು ಭಕ್ತರು, ವಿವಿಧ ಮಠಾಧೀಶರು, ಗಣ್ಯರು ಹಾಗೂ ಸಾರ್ವಜನಿಕರು ಅಂತಿಮ ದರ್ಶನ ಪಡೆದು ಭಾವಪೂರ್ಣ ನಮನ ಸಲ್ಲಿಸಿದರು.

ದೇಶದ ವಿವಿಧ ಭಾಗಗಳಿಂದ ಆಗಮಿಸಿದ್ದ ಭಕ್ತರು ಶ್ರೀಗಳ ಪಾದಗಳಿಗೆ ನಮಸ್ಕರಿಸಿ ಅಂತಿಮ ವಿದಾಯ ಹೇಳಿದರು. ಈ ವೇಳೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ದೇಗುಲ ಮಠಕ್ಕೆ ಭೇಟಿ ನೀಡಿ ಶ್ರೀಗಳ ಅಂತಿಮ ದರ್ಶನ ಪಡೆದರು.

ಬಳಿಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಠಕ್ಕೆ ಆಗಮಿಸಿ ಮುಮ್ಮಡಿ ನಿರ್ವಾಣ ಮಹಾಸ್ವಾಮಿಗಳ ಪಾರ್ಥಿವ ಶರೀರಕ್ಕೆ ಪುಷ್ಪನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಸಚಿವ ಈಶ್ವರ್ ಖಂಡ್ರೆ, ಮಾಜಿ ಸಂಸದ ಡಿ.ಕೆ. ಸುರೇಶ್ ಹಾಗೂ ವಿಧಾನ ಪರಿಷತ್ ಸದಸ್ಯ ಎಸ್. ರವಿ ಕುಮಾರ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಅಂತಿಮ ದರ್ಶನದ ವೇಳೆ ಶ್ರೀಗಳೊಂದಿಗಿನ ಆತ್ಮೀಯ ಒಡನಾಟವನ್ನು ಸ್ಮರಿಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭಾವುಕರಾಗಿ ಕಣ್ಣೀರು ಹಾಕಿದರು. ಬಳಿಕ ಶ್ರೀಗಳ ಪಾರ್ಥಿವ ಶರೀರದ ಮೇಲೆ ತ್ರಿವರ್ಣ ಧ್ವಜ ಹೊದಿಸಿ, ಮೂರು ಸುತ್ತು ಗುಂಡು ಹಾರಿಸುವ ಮೂಲಕ ಸಕಲ ಸರ್ಕಾರಿ ಗೌರವ ಸಲ್ಲಿಸಲಾಯಿತು.

ಸರ್ಕಾರಿ ಗೌರವದ ಅಂಗವಾಗಿ ತ್ರಿವರ್ಣ ಧ್ವಜವನ್ನು ಕಿರಿಯ ಶ್ರೀಗಳಿಗೆ ಹಸ್ತಾಂತರಿಸುವ ವೇಳೆ ಮುಖ್ಯಮಂತ್ರಿ ಗದ್ಗದಿತರಾದರು. ಶ್ರೀಗಳಿಗೆ ಕಣ್ಣೀರಿನ ವಿದಾಯ ಹೇಳಿದ ಬಳಿಕ ಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಸಚಿವ ಈಶ್ವರ್ ಖಂಡ್ರೆ ಮಠದ ಆವರಣದಲ್ಲೇ ಕೆಲಕಾಲ ಕುಳಿತು ಶ್ರೀಗಳ ಸೇವೆ ಮತ್ತು ಕೊಡುಗೆಗಳನ್ನು ಸ್ಮರಿಸಿ ನುಡಿನಮನ ಸಲ್ಲಿಸಿದರು.

ನೀಟ್ ಅಭ್ಯರ್ಥಿ ತಡವಾಗಿ ಬಂದಿದ್ದು ಟ್ರಾಫಿಕ್ ನಿಂದಲ್ಲ; ವದಂತಿಗಳಿಗೆ ಬೆಂಗಳೂರು ಪೊಲೀಸರು ಸ್ಪಷ್ಟನೆ

ಬೆಂಗಳೂರು: ನೀಟ್ (NEET) ಪರೀಕ್ಷೆಯ ಅಭ್ಯರ್ಥಿಯೊಬ್ಬರು ಪರೀಕ್ಷಾ ಕೇಂದ್ರಕ್ಕೆ ತಡವಾಗಿ ತಲುಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ವದಂತಿಗಳಿಗೆ ಬೆಂಗಳೂರು ನಗರ ಪೊಲೀಸ್ ಹಾಗೂ ಬೆಂಗಳೂರು ಸಂಚಾರ ಪೊಲೀಸ್ ಜಂಟಿಯಾಗಿ ಸ್ಪಷ್ಟನೆ ನೀಡಿವೆ.

ಸಾರ್ವಜನಿಕ ಕಾರ್ಯಕ್ರಮದಿಂದ ಉಂಟಾದ ಟ್ರಾಫಿಕ್ ದಟ್ಟಣೆಯ ಕಾರಣ ಅಭ್ಯರ್ಥಿ ಪರೀಕ್ಷಾ ಕೇಂದ್ರಕ್ಕೆ ತಡವಾಗಿ ತಲುಪಿದ್ದಾರೆ ಎಂಬ ಆರೋಪವನ್ನು ಪೊಲೀಸರು ಸಂಪೂರ್ಣವಾಗಿ ತಳ್ಳಿಹಾಕಿದ್ದು, ಸಿಸಿಟಿವಿ ದೃಶ್ಯಾವಳಿ, ಅಭ್ಯರ್ಥಿ ಹಾಗೂ ಪೋಷಕರೊಂದಿಗೆ ನಡೆಸಿದ ಸಂಭಾಷಣೆ ಮತ್ತು ಮಾರ್ಗ ವಿಶ್ಲೇಷಣೆಯ ಆಧಾರದ ಮೇಲೆ ಅಧಿಕೃತ ಫ್ಯಾಕ್ಟ್ ಚೆಕ್ ವರದಿಯನ್ನು ಬಿಡುಗಡೆ ಮಾಡಿದ್ದಾರೆ.

ಘಟನೆಯ ಸಮಯಾವಳಿ

  • ಮಧ್ಯಾಹ್ನ 12:57: ಅಭ್ಯರ್ಥಿ ಆರ್.ಟಿ. ನಗರದಲ್ಲಿರುವ ನಿವಾಸದಿಂದ ಹೊರಟರು.
  • ಮಧ್ಯಾಹ್ನ 1:30: ಪರೀಕ್ಷಾ ಕೇಂದ್ರ ಪ್ರವೇಶಿಸಲು ನಿಗದಿಪಡಿಸಿದ್ದ ಕೊನೆಯ ಸಮಯ.
  • ಮಧ್ಯಾಹ್ನ 1:33: ನಿಗದಿತ ಸಮಯ ಮುಗಿದ ಮೂರು ನಿಮಿಷಗಳ ಬಳಿಕ ಅಭ್ಯರ್ಥಿ ಪರೀಕ್ಷಾ ಕೇಂದ್ರದ ಆವರಣ ತಲುಪಿದರು.

ಪೊಲೀಸರ ಪ್ರಕಾರ, ಪರೀಕ್ಷಾ ಕೇಂದ್ರದ ಪ್ರವೇಶ ಮುಕ್ತಾಯಕ್ಕೆ ಕೇವಲ 33 ನಿಮಿಷ ಬಾಕಿ ಇರುವಾಗ ಅಭ್ಯರ್ಥಿ ಮನೆಯಿಂದ ಹೊರಟಿರುವುದು ಸಿಸಿಟಿವಿ ದೃಶ್ಯಾವಳಿಯಿಂದ ದೃಢಪಟ್ಟಿದೆ.

ತಪ್ಪು ಮಾರ್ಗವೇ ತಡಕ್ಕೆ ಕಾರಣ

ಪರಿಶೀಲನೆಯಲ್ಲಿ, ಕಡಿಮೆ ಸಮಯದಲ್ಲಿ ತಲುಪಬಹುದಾದ ಸುಲಭ ಹಾಗೂ ಹತ್ತಿರದ ಮಾರ್ಗಗಳಿದ್ದರೂ ಅಭ್ಯರ್ಥಿ ಹೆಚ್ಚು ಸಮಯ ತೆಗೆದುಕೊಳ್ಳುವ ಸುದೀರ್ಘ ಮಾರ್ಗವನ್ನು ಆಯ್ಕೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.

ಅಲ್ಲದೆ, ಘಟನೆ ನಡೆದ ದಿನ ನಗರದಲ್ಲಿ ಸಂಚಾರ ಪರಿಸ್ಥಿತಿ ಸಾಮಾನ್ಯವಾಗಿದ್ದು, ಸಾರ್ವಜನಿಕ ಕಾರ್ಯಕ್ರಮದಿಂದ ಯಾವುದೇ ಅಸಹಜ ಟ್ರಾಫಿಕ್ ದಟ್ಟಣೆ ಉಂಟಾಗಿರಲಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಅಭ್ಯರ್ಥಿ ಸಂಚರಿಸಿದ್ದ ಮಾರ್ಗದಲ್ಲಿ ಕರ್ತವ್ಯದಲ್ಲಿದ್ದ ಸಂಚಾರ ಪೊಲೀಸ್ ಸಿಬ್ಬಂದಿ ವಾಹನ ಸುಗಮವಾಗಿ ಸಾಗಲು ಅಗತ್ಯ ನೆರವು ನೀಡಿರುವುದೂ ಪರಿಶೀಲನೆಯಲ್ಲಿ ಕಂಡುಬಂದಿದೆ.

ವದಂತಿಗಳಿಗೆ ಪೊಲೀಸ್ ತೆರೆ

ಲಭ್ಯವಿರುವ ಎಲ್ಲಾ ತಾಂತ್ರಿಕ ಸಾಕ್ಷ್ಯಗಳನ್ನು ಪರಿಶೀಲಿಸಿದ ಬಳಿಕ, ಸಾರ್ವಜನಿಕ ಕಾರ್ಯಕ್ರಮದ ಟ್ರಾಫಿಕ್‌ನಿಂದ ಅಭ್ಯರ್ಥಿ ತಡವಾಗಿ ತಲುಪಿದ್ದಾರೆ ಎಂಬುದಕ್ಕೆ ಯಾವುದೇ ಪುರಾವೆ ಇಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ತಡವಾಗಿ ಮನೆಯಿಂದ ಹೊರಡುವುದು ಹಾಗೂ ಸೂಕ್ತ ಮಾರ್ಗವನ್ನು ಆಯ್ಕೆ ಮಾಡದಿರುವುದೇ ಪರೀಕ್ಷೆಗೆ ತಡವಾಗಲು ಪ್ರಮುಖ ಕಾರಣ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಗಮನಾರ್ಹವಾಗಿ, ಜೂನ್ 21ರಂದು ಅರಮನೆ ಮೈದಾನದಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿ ಆಯ್ಕೆಯಾದ ಬಿ.ಕೆ. ಹರಿಪ್ರಸಾದ್ ಅವರ ಪದಗ್ರಹಣ ಕಾರ್ಯಕ್ರಮ ನಡೆದಿದ್ದು, ಇದೇ ಕಾರ್ಯಕ್ರಮದಿಂದ ನೀಟ್ ಅಭ್ಯರ್ಥಿಗಳಿಗೆ ತೊಂದರೆಯಾಗಿದೆ ಎಂದು ಬಿಜೆಪಿ ಆರೋಪಿಸಿತ್ತು. ಇದೀಗ ಪೊಲೀಸ್ ವರದಿ ಆ ಆರೋಪವನ್ನು ನಿರಾಕರಿಸಿದೆ.

IPL: ಡೆಲ್ಲಿಗೆ ಮರಳಿದ ರಿಷಭ್ ಪಂತ್, ಲಕ್ನೋ ತಂಡ ಸೇರಿದ ಕುಲದೀಪ್ ಯಾದವ್!

0

ಮುಂಬೈ: ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆವೃತ್ತಿಗೆ ಮುನ್ನ ಎರಡು ಫ್ರಾಂಚೈಸಿಗಳ ನಡುವೆ ನಡೆದ ಹೈ-ಪ್ರೊಫೈಲ್ ಆಟಗಾರರ ವಿನಿಮಯದಲ್ಲಿ ಭಾರತದ ಸ್ಟಾರ್ ವಿಕೆಟ್‌ಕೀಪರ್-ಬ್ಯಾಟರ್ ರಿಷಭ್ ಪಂತ್ ಡೆಲ್ಲಿ ಕ್ಯಾಪಿಟಲ್ಸ್‌ಗೆ ಮರಳಿದ್ದು, ಸ್ಪಿನ್ ತಾರೆ ಕುಲದೀಪ್ ಯಾದವ್ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಸೇರಿದ್ದಾರೆ. ಈ ವಿನಿಮಯವನ್ನು ಐಪಿಎಲ್ ಅಧಿಕೃತವಾಗಿ ದೃಢಪಡಿಸಿದೆ.

2025ರ ಮೆಗಾ ಹರಾಜಿನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡ ರಿಷಭ್ ಪಂತ್ ಅವರನ್ನು ದಾಖಲೆಯ 27 ಕೋಟಿ ರೂಪಾಯಿಗೆ ಖರೀದಿಸಿತ್ತು. ಆದರೆ ಇದೀಗ ಅವರು 15 ಕೋಟಿ ರೂಪಾಯಿ ವೇತನಕ್ಕೆ ಡೆಲ್ಲಿ ಕ್ಯಾಪಿಟಲ್ಸ್‌ಗೆ ಮರಳುತ್ತಿದ್ದು, 12 ಕೋಟಿ ರೂಪಾಯಿ ವೇತನ ಕಡಿತವನ್ನು ಒಪ್ಪಿಕೊಂಡಿದ್ದಾರೆ.

ಇನ್ನೊಂದೆಡೆ, ಭಾರತದ ಪ್ರಮುಖ ಸ್ಪಿನ್ನರ್ ಕುಲದೀಪ್ ಯಾದವ್ ಡೆಲ್ಲಿ ಕ್ಯಾಪಿಟಲ್ಸ್ ತೊರೆದು ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಸೇರಿದ್ದಾರೆ. 13.5 ಕೋಟಿ ರೂಪಾಯಿ ವೇತನದಲ್ಲಿ ಅವರನ್ನು ಲಕ್ನೋ ತನ್ನ ತಂಡಕ್ಕೆ ಸೇರ್ಪಡೆ ಮಾಡಿಕೊಂಡಿದ್ದು, ತಂಡದ ಸ್ಪಿನ್ ವಿಭಾಗಕ್ಕೆ ಮತ್ತಷ್ಟು ಬಲ ದೊರೆತಿದೆ.

ಡೆಲ್ಲಿ ಕ್ಯಾಪಿಟಲ್ಸ್‌ಗೆ ಮರಳಿದರೂ ರಿಷಭ್ ಪಂತ್ ತಂಡದ ನಾಯಕತ್ವ ವಹಿಸಿಕೊಳ್ಳುವುದಿಲ್ಲ. ಅವರು ವಿಕೆಟ್‌ಕೀಪರ್-ಬ್ಯಾಟರ್ ಆಗಿಯೇ ತಂಡದಲ್ಲಿ ಆಡಲಿದ್ದು, ನಾಯಕತ್ವದ ಬಗ್ಗೆ ಫ್ರಾಂಚೈಸಿ ಪ್ರತ್ಯೇಕ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.

ಡೆಲ್ಲಿ ಕ್ಯಾಪಿಟಲ್ಸ್ ಕೋಚಿಂಗ್ ವಿಭಾಗದಲ್ಲೂ ಮಹತ್ವದ ಬದಲಾವಣೆಗಳಾಗುವ ಸಾಧ್ಯತೆ ಇದೆ. ಮಾಜಿ ಆಲ್‌ರೌಂಡರ್ ಯುವರಾಜ್ ಸಿಂಗ್ ತಂಡದ ಕೋಚಿಂಗ್ ಸಿಬ್ಬಂದಿಗೆ ಸೇರುವ ಸಾಧ್ಯತೆ ಇದೆ. ಆದರೆ ಅವರು ಮುಖ್ಯ ಕೋಚ್ ಅಲ್ಲ, ಬ್ಯಾಟಿಂಗ್ ಕೋಚ್ ಆಗಿ ಅಥವಾ ಕೋಚಿಂಗ್ ಸ್ಟಾಫ್‌ನ ಪ್ರಮುಖ ಸದಸ್ಯರಾಗಿ ಸೇರುವ ನಿರೀಕ್ಷೆಯಿದೆ ಎಂದು ವರದಿಗಳು ತಿಳಿಸಿವೆ.

ಸಂತ್ರಸ್ತೆ ಮದುವೆಯಾಗಿದ್ದರೂ ಪೋಕ್ಸೊ ಪ್ರಕರಣ ರದ್ದಾಗದು: ಹೈಕೋರ್ಟ್‌ನ ಮಹತ್ವದ ತೀರ್ಪು

ಬೆಂಗಳೂರು: ಸಂತ್ರಸ್ತೆ ಬೇರೊಬ್ಬರನ್ನು ಮದುವೆಯಾಗಿದ್ದಾರೆ ಎಂಬ ಕಾರಣಕ್ಕೆ ಪೋಕ್ಸೊ ಕಾಯ್ದೆಯಡಿ ದಾಖಲಾದ ಪ್ರಕರಣವನ್ನು ರದ್ದುಪಡಿಸಲು ಸಾಧ್ಯವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಸ್ಪಷ್ಟಪಡಿಸಿದೆ.

ದೇವನಹಳ್ಳಿ ತಾಲೂಕಿನ ಪಾಲಾಕ್ಷ ಕುಮಾರ್ ಎಂಬುವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠ, ಪ್ರಕರಣ ರದ್ದುಪಡಿಸಲು ಯಾವುದೇ ಆಧಾರ ಇಲ್ಲ ಎಂದು ಮೌಖಿಕವಾಗಿ ಅಭಿಪ್ರಾಯ ವ್ಯಕ್ತಪಡಿಸಿತು.

ಅರ್ಜಿದಾರರು, ಸಂತ್ರಸ್ತೆ ಈಗ ಬೇರೊಬ್ಬರನ್ನು ಮದುವೆಯಾಗಿದ್ದು, ಪ್ರಕರಣದ ಇತರೆ ಆರೋಪಿಗಳು ಈಗಾಗಲೇ ಖುಲಾಸೆಯಾಗಿರುವುದರಿಂದ ತಮ್ಮ ವಿರುದ್ಧದ ವಿಚಾರಣೆಯನ್ನು ರದ್ದುಪಡಿಸಬೇಕು ಎಂದು ಕೋರಿದ್ದರು. ಆದರೆ ಇದನ್ನು ಪ್ರಶ್ನಿಸಿದ ನ್ಯಾಯಪೀಠ, ಪ್ರಕರಣದಲ್ಲಿ ಮೊದಲನೇ ಆರೋಪಿಯಾಗಿರುವ ಅರ್ಜಿದಾರನಿಗೆ ಇತರೆ ಆರೋಪಿಗಳ ಖುಲಾಸೆ ಹೇಗೆ ಅನ್ವಯಿಸುತ್ತದೆ ಎಂದು ಪ್ರಶ್ನಿಸಿತು.

ಈ ವೇಳೆ ಅರ್ಜಿದಾರರ ಪರ ವಕೀಲರು, ಸಂತ್ರಸ್ತೆ ರಾಜಿ ಸಂಧಾನದ ಮೂಲಕ ಪ್ರಕರಣ ಬಗೆಹರಿಸಿಕೊಳ್ಳಲು ಸಿದ್ಧರಾಗಿದ್ದಾರೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, “ಸಂತ್ರಸ್ತೆ ಅರ್ಜಿದಾರನನ್ನು ಮದುವೆಯಾಗಿಲ್ಲ. ಬೇರೊಬ್ಬರನ್ನು ಮದುವೆಯಾದರೆ ಆರೋಪಿಯ ಮೇಲಿನ ಅಪರಾಧ ಹೇಗೆ ಅಳಿಸಿಹೋಗುತ್ತದೆ?” ಎಂದು ಪ್ರಶ್ನಿಸಿತು.

ಅರ್ಜಿದಾರರ ವಿರುದ್ಧ ಪೋಕ್ಸೊ ಕಾಯ್ದೆಯ ಸೆಕ್ಷನ್ 3 ಮತ್ತು 4 ಅಡಿಯಲ್ಲಿ ಲೈಂಗಿಕ ದೌರ್ಜನ್ಯ ಆರೋಪಗಳಿದ್ದು, ಇಂತಹ ಗಂಭೀರ ಆರೋಪಗಳನ್ನು ರಾಜಿ ಮೂಲಕ ಮುಕ್ತಾಯಗೊಳಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ತಿಳಿಸಿತು.

“ಸಂತ್ರಸ್ತೆ ಮದುವೆಯಾಗಿದ್ದಾರೆ ಎಂಬ ಕಾರಣಕ್ಕೆ ಅಪರಾಧವೇ ಅಳಿಸಿಹೋಗುವುದಿಲ್ಲ. ಅಪ್ರಾಪ್ತೆಯ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣವನ್ನು ಯಾವುದೇ ಕಾರಣಕ್ಕೂ ರಾಜಿ ಮಾಡಿಕೊಳ್ಳಲು ಅಥವಾ ರದ್ದುಪಡಿಸಲು ಅವಕಾಶವಿಲ್ಲ. ಆರೋಪಿಯು ವಿಚಾರಣಾ ನ್ಯಾಯಾಲಯದ ಮುಂದೆ ಹಾಜರಾಗಿ ವಿಚಾರಣೆ ಎದುರಿಸಬೇಕು” ಎಂದು ಪೀಠ ಖಡಕ್ ಅಭಿಪ್ರಾಯ ವ್ಯಕ್ತಪಡಿಸಿತು.

ನ್ಯಾಯಾಲಯ ಅರ್ಜಿಯನ್ನು ವಜಾಗೊಳಿಸುವ ಸೂಚನೆ ನೀಡುತ್ತಿದ್ದಂತೆ, ಅರ್ಜಿದಾರರ ಪರ ವಕೀಲರು ಅರ್ಜಿಯನ್ನು ಹಿಂಪಡೆಯಲು ಅನುಮತಿ ಕೋರಿದರು. ಇದಕ್ಕೆ ನ್ಯಾಯಪೀಠ ಒಪ್ಪಿಗೆ ನೀಡಿ ಅರ್ಜಿ ಹಿಂಪಡೆಯಲು ಅವಕಾಶ ನೀಡಿತು.

ಕೃಷಿ ವಾಹನಗಳಿಗೂ ಟೋಲ್? ಮಂಡ್ಯದಲ್ಲಿ ರೈತರ ಪ್ರತಿಭಟನೆ: ಟೋಲ್ ಸ್ಟಿಕ್‌ಗಳು ಧ್ವಂಸ

0

ಮಂಡ್ಯ: ಬೆಂಗಳೂರು–ಮೈಸೂರು ಎಕ್ಸ್‌ಪ್ರೆಸ್‌ವೇಯ ಗಣಂಗೂರು ಟೋಲ್ ಪ್ಲಾಜಾ ಬಳಿ ಕೃಷಿ ಉತ್ಪನ್ನ ಸಾಗಿಸುವ ವಾಹನಗಳಿಗೆ ಟೋಲ್ ಶುಲ್ಕ ವಿಧಿಸಲಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ರೈತರು ಭಾರೀ ಪ್ರತಿಭಟನೆ ನಡೆಸಿದ್ದಾರೆ.

ಟೋಲ್ ಸಂಗ್ರಹ ನೀತಿಯನ್ನು ಕಾನೂನುಬಾಹಿರ ಎಂದು ಘೋಷಿಸಿದ ರೈತರು ಸ್ಥಳದಲ್ಲಿ ಧ್ವಂಸಾತ್ಮಕ ಪ್ರತಿಭಟನೆ ನಡೆಸಿ ಟೋಲ್ ಸ್ಟಿಕ್‌ಗಳನ್ನು ಮುರಿದು ತಮ್ಮ ಆಕ್ರೋಶವನ್ನು ಹೊರಹಾಕಿದರು. ರೈತರಿಂದ ನಿರ್ಮಿಸಲಾದ ರಸ್ತೆಗಳಲ್ಲಿ ಈಗ ಅವರದೇ ಉತ್ಪನ್ನಗಳಿಗೆ ಟೋಲ್ ವಿಧಿಸುವುದು ಅನ್ಯಾಯ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನಾಕಾರರು ಕೇಂದ್ರ ಸರ್ಕಾರ ಹಾಗೂ ಹೆದ್ದಾರಿ ಪ್ರಾಧಿಕಾರದ ವಿರುದ್ಧ ಘೋಷಣೆ ಕೂಗಿ ಪರಿಸ್ಥಿತಿಯನ್ನು ಉದ್ವಿಗ್ನಗೊಳಿಸಿದರು. ಕೃಷಿ ವಾಹನಗಳಿಗೆ ಸಂಪೂರ್ಣ ಟೋಲ್ ವಿನಾಯಿತಿ ನೀಡಬೇಕು ಅಥವಾ ಪಂಜಾಬ್ ಮಾದರಿಯ ನೀತಿ ಜಾರಿಗೆ ತರಬೇಕು ಎಂದು ರೈತರು ಆಗ್ರಹಿಸಿದರು.

ಟೋಲ್ ಪಾವತಿ ಇಲ್ಲದೆ ಹಲವು ವಾಹನಗಳನ್ನು ಸ್ಥಳದಿಂದ ಕಳುಹಿಸಿದ ಘಟನೆಗಳು ನಡೆದಿದ್ದು, ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಮಧ್ಯಪ್ರವೇಶಿಸಿದರು. ಪ್ರತಿಭಟನೆಯನ್ನು ಹಿಂಪಡೆಯುವಂತೆ ಮನವೊಲಿಸಲು ಪೊಲೀಸರು ಪ್ರಯತ್ನಿಸಿದರು.

ಈ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಯನ್ನು ರೈತರು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಕನ್ನಡ ಭಾಷೆ ತಿಳಿದಿಲ್ಲ ಎಂಬ ಅಧಿಕಾರಿಯ ಹೇಳಿಕೆಯಿಂದ ರೈತರು ಮತ್ತಷ್ಟು ಆಕ್ರೋಶಗೊಂಡರು.

ಸ್ಥಳೀಯ ಆಡಳಿತದಲ್ಲಿ ಕನ್ನಡ ಬಲ್ಲ ಅಧಿಕಾರಿಗಳನ್ನು ನೇಮಿಸಬೇಕು ಎಂದು ರೈತರು ಪಟ್ಟು ಹಿಡಿದಿದ್ದು, ಈ ಘಟನೆ ಮಂಡ್ಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.

ತ್ರಿಷಾ–ವಿಜಯ್ ಸಂಬಂಧಕ್ಕೆ ಬ್ರೇಕ್? ಇನ್‌ಸ್ಟಾಗ್ರಾಮ್ ಅನ್‌ಫಾಲೋ, ಜನ್ಮದಿನದಂದು ಸೈಲೆಂಟ್‌ ಅದ ನಟಿ

ಚೆನ್ನೈ: ದಳಪತಿ ವಿಜಯ್ ಅವರ ಜನ್ಮದಿನದಂದು ನಟಿ ತ್ರಿಷಾ ಕೃಷ್ಣನ್ ಯಾವುದೇ ಶುಭಾಶಯ ಪೋಸ್ಟ್ ಹಂಚಿಕೊಳ್ಳದಿರುವುದು ಹಾಗೂ ಸಾಮಾಜಿಕ ಜಾಲತಾಣದಲ್ಲಿ ವಿಜಯ್ ಅವರನ್ನು ಅನ್‌ಫಾಲೋ ಮಾಡಿರುವುದು ಕಾಲಿವುಡ್‌ನಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

ಅನಗತ್ಯ ಗಾಸಿಪ್‌ಗಳು ಹಾಗೂ ಟ್ರೋಲ್‌ಗಳನ್ನು ತಪ್ಪಿಸಲು ತ್ರಿಷಾ ಈ ರೀತಿಯ ನಿರ್ಧಾರ ತೆಗೆದುಕೊಂಡಿರಬಹುದು ಎಂಬ ಊಹಾಪೋಹಗಳು ಹರಿದಾಡುತ್ತಿದ್ದರೂ, ಈ ಬೆಳವಣಿಗೆ ಸಂಬಂಧಿತ ಕುತೂಹಲವನ್ನು ಹೆಚ್ಚಿಸಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ಅನ್‌ಫಾಲೋ ವಿಷಯ ಬಹಿರಂಗವಾಗುತ್ತಿದ್ದಂತೆಯೇ ಅಭಿಮಾನಿಗಳು ವಿವಿಧ ರೀತಿಯ ಪ್ರತಿಕ್ರಿಯೆ ನೀಡುತ್ತಿದ್ದಾರೆ.

ಹಿಂದಿನ ಕೆಲವು ತಿಂಗಳುಗಳಲ್ಲಿ ವಿಜಯ್ ಮತ್ತು ಅವರ ಪತ್ನಿ ಸಂಗೀತಾ ನಡುವೆ ವೈವಾಹಿಕ ಭಿನ್ನಾಭಿಪ್ರಾಯಗಳ ಸುದ್ದಿಗಳು ಹರಿದಾಡಿದ್ದವು. ಇದೇ ಸಮಯದಲ್ಲಿ ವಿಜಯ್ ಮತ್ತು ತ್ರಿಷಾ ನಡುವೆ ಆಪ್ತತೆ ಹೆಚ್ಚಾಗಿದೆ ಎಂಬ ಗಾಸಿಪ್ ಕೂಡ ಬಲವಾಗಿತ್ತು.

ಇವರಿಬ್ಬರ ಸ್ನೇಹದ ಬಗ್ಗೆ ರಾಜಕೀಯ ವಲಯಕ್ಕೂ ಚರ್ಚೆ ಹರಡಿದ್ದು, ವಿಜಯ್ ಅವರ ‘ತಮಿಳಗ ವೆಟ್ರಿ ಕಳಗಂ’ ಪಕ್ಷದ ಮೂಲಕ ತ್ರಿಷಾ ರಾಜಕೀಯ ಪ್ರವೇಶ ಮಾಡಲಿದ್ದಾರೆ ಎಂಬ ಊಹಾಪೋಹಗಳು ಸಾಮಾಜಿಕ ಹಾಗೂ ಸಿನಿಮಾ ವಲಯದಲ್ಲಿ ಗಮನ ಸೆಳೆದಿದ್ದವು.

ಈಗ ತ್ರಿಷಾ ಅವರ ಮೌನ ಮತ್ತು ಅನ್‌ಫಾಲೋ ನಡೆ ಹಿನ್ನೆಲೆಯಲ್ಲಿ ವಿಜಯ್ ಅವರ ವೈವಾಹಿಕ ಜೀವನ ಸುಧಾರಣೆಯ ಹಂತದಲ್ಲಿದೆ ಎಂಬ ಮತ್ತೊಂದು ಚರ್ಚೆಯೂ ನಡೆಯುತ್ತಿದೆ. ಕುಟುಂಬದ ಹಿರಿಯರ ಮಧ್ಯಸ್ಥಿಕೆಯಲ್ಲಿ ಸಂಬಂಧ ಸುಧಾರಣೆ ಪ್ರಯತ್ನಗಳು ನಡೆಯುತ್ತಿವೆ ಎಂಬ ಮಾತುಗಳು ಹರಿದಾಡುತ್ತಿವೆ.

ಆದರೆ ಈ ಎಲ್ಲಾ ವಿಚಾರಗಳ ಕುರಿತು ಯಾವುದೇ ಅಧಿಕೃತ ಸ್ಪಷ್ಟನೆ ಹೊರಬಂದಿಲ್ಲ. ಕಾಲಿವುಡ್ ವಲಯದಲ್ಲಿ ಈ ವಿಷಯ ಇದೀಗ ಹಾಟ್ ಟಾಪಿಕ್ ಆಗಿದ್ದು, ಮುಂದಿನ ದಿನಗಳಲ್ಲಿ ಸ್ಪಷ್ಟತೆ ದೊರೆಯುವ ನಿರೀಕ್ಷೆಯಿದೆ.

ಉಡುಪಿಯಲ್ಲಿ ಮಕ್ಕಳಿಲ್ಲದ ದಂಪತಿಗೆ ಮಗು ಮಾರಾಟ: ಖ್ಯಾತ ವೈದ್ಯ ಸೇರಿ ಇಬ್ಬರು ಅರೆಸ್ಟ್

0

ಉಡುಪಿ: ನಕಲಿ ದಾಖಲೆಗಳನ್ನು ಸೃಷ್ಟಿಸಿ ಒಂದು ತಿಂಗಳ ಹೆಣ್ಣು ಮಗುವನ್ನು ಕಾನೂನುಬಾಹಿರವಾಗಿ ದತ್ತು ನೀಡಿ ಮಾರಾಟ ಮಾಡಿದ್ದ ಪ್ರಕರಣದಲ್ಲಿ ಉಡುಪಿಯಲ್ಲಿ ವೈದ್ಯ ಸೇರಿದಂತೆ ಇಬ್ಬರು ಪ್ರಮುಖ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಕಾಮತ್ ನರ್ಸಿಂಗ್ ಹೋಮ್‌ನ ಡಾ. ಕೆ. ಸುರೇಂದ್ರ ಕಾಮತ್ ಈ ದಂಧೆಯ ಪ್ರಮುಖ ಪಾತ್ರಧಾರಿ ಎಂದು ಆರೋಪಿಸಲಾಗಿದೆ.

ಬ್ರಹ್ಮಾವರ ಸಿಡಿಪಿಒ ಕಚೇರಿಗೆ ಬಂದ ಗುಪ್ತ ಮಾಹಿತಿಯ ಆಧಾರದ ಮೇಲೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಸಿಡಿಪಿಒ ಅಧಿಕಾರಿಗಳು ಜಂಟಿ ದಾಳಿ ನಡೆಸಿದ್ದಾರೆ. ನೇಜಾರು ಸಂತೆಕಟ್ಟೆಯ ದಂಪತಿ ಕಾನೂನುಬಾಹಿರವಾಗಿ ಮಗುವನ್ನು ಸಾಕುತ್ತಿರುವ ಬಗ್ಗೆ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಮನೆ ಪರಿಶೀಲನೆ ನಡೆಸಲಾಗಿದೆ.

ದಾಳಿ ವೇಳೆ ಮಗುವಿನ ಬಗ್ಗೆ ಸರಿಯಾದ ದಾಖಲೆಗಳನ್ನು ನೀಡಲು ದಂಪತಿ ವಿಫಲರಾಗಿದ್ದು, ನಂತರದ ವಿಚಾರಣೆಯಲ್ಲಿ ಗಂಭೀರ ಅಕ್ರಮ ಬೆಳಕಿಗೆ ಬಂದಿದೆ. ವೈದ್ಯರ ಸಹಕಾರದೊಂದಿಗೆ ನಕಲಿ ಜನನ ಪ್ರಮಾಣ ಪತ್ರ ಸೃಷ್ಟಿಸಿ ಮಗುವನ್ನು ದಂಪತಿಗೆ ನೀಡಲಾಗಿತ್ತು ಎಂಬುದು ತನಿಖೆಯಲ್ಲಿ ಬಹಿರಂಗವಾಗಿದೆ.

ಮಕ್ಕಳಿಲ್ಲದ ದಂಪತಿಗೆ ವೈದ್ಯರು ಮಧ್ಯವರ್ತಿಯಾಗಿ ಮಗುವನ್ನು ನೀಡಿರುವುದು ಹಾಗೂ ದಾಖಲೆಗಳನ್ನು ತಿದ್ದಿ ಅಧಿಕೃತ ಪೋಷಕರಾಗಿ ತೋರಿಸಿರುವುದು ಪ್ರಕರಣವನ್ನು ಗಂಭೀರಗೊಳಿಸಿದೆ. ಜೊತೆಗೆ ಮಗುವಿನ ನಿಜವಾದ ಪೋಷಕರಾದ ಕಾರ್ಕಳದ ಸಂಪತ್ ಮತ್ತು ಸುಪ್ರೀತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪ್ರಕರಣದಲ್ಲಿ ಇನ್ನೂ ಕೆಲವರು ಭಾಗಿಯಾಗಿರುವ ಸಾಧ್ಯತೆ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಉಡುಪಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ ಮತ್ತು ಬಾಲನ್ಯಾಯ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

ತಾಯಿ ಆಗುತ್ತಿರುವ ಸಮಂತಾರನ್ನು ಮನೆಗೆ ಕರೆದು ಸತ್ಕರಿಸಿದ ನಟ ಚಿರಂಜೀವಿ ದಂಪತಿ

ಹೈದರಾಬಾದ್: ಸಮಂತಾ ಋತ್ ಪ್ರಭು ನಟನೆಯ ‘ಮಾ ಇಂಟಿ ಬಂಗಾರಂ’ ಸಿನಿಮಾ ಯಶಸ್ಸಿನ ಅಲೆಯಲ್ಲಿ ಸಾಗುತ್ತಿರುವ ನಡುವೆಯೇ ಚಿತ್ರತಂಡಕ್ಕೆ ತೆಲುಗು ಚಿತ್ರರಂಗದ ಸೂಪರ್ ಸ್ಟಾರ್ ಚಿರಂಜೀವಿ ಅವರಿಂದ ವಿಶೇಷ ಗೌರವ ದೊರೆತಿದೆ. ಚಿತ್ರ ಯಶಸ್ಸನ್ನು ಗುರುತಿಸಿ ಅವರು ಚಿತ್ರತಂಡವನ್ನು ತಮ್ಮ ಮನೆಗೆ ಆಹ್ವಾನಿಸಿ ಆತ್ಮೀಯವಾಗಿ ಸತ್ಕರಿಸಿದ್ದಾರೆ.

ಈ ಸಂದರ್ಭದಲ್ಲಿ ಸಮಂತಾ ಸೇರಿದಂತೆ ಚಿತ್ರತಂಡದ ಪ್ರಮುಖರನ್ನು ಚಿರಂಜೀವಿ ಮತ್ತು ಅವರ ಪತ್ನಿ ಸುರೇಖಾ ಆತ್ಮೀಯವಾಗಿ ಬರಮಾಡಿಕೊಂಡರು. ಸಮಂತಾ ಅವರಿಗೆ ಸಾಂಪ್ರದಾಯಿಕ ಸೀರೆ ಸೇರಿದಂತೆ ಪವಿತ್ರ ಉಡುಗೊರೆಗಳನ್ನು ನೀಡಲಾಗಿದ್ದು, ಶಂಖವನ್ನು ಸಹ ಆಶೀರ್ವಾದ ರೂಪದಲ್ಲಿ ನೀಡಿದ್ದಾರೆ. ಈ ಕ್ಷಣಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಚಿರಂಜೀವಿ ಅವರು ಚಿತ್ರವನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದು, ನಿರ್ದೇಶಕಿ ನಂದಿನಿ ರೆಡ್ಡಿಯ ಕಥನ ಶೈಲಿ, ಭಾವನೆಗಳ ನಿರೂಪಣೆ ಮತ್ತು ಮಹಿಳಾ ಕೇಂದ್ರಿತ ದೃಷ್ಟಿಕೋನವನ್ನು ಶ್ಲಾಘಿಸಿದ್ದಾರೆ. ಚಿತ್ರದಲ್ಲಿ ಆಕ್ಷನ್, ಹಾಸ್ಯ ಹಾಗೂ ಕೌಟುಂಬಿಕ ಭಾವನೆಗಳ ಸಮತೋಲನ ಉತ್ತಮವಾಗಿ ಮೂಡಿಬಂದಿದೆ ಎಂದು ಅವರು ಹೇಳಿದ್ದಾರೆ.

ಸಮಂತಾ ಅವರ ಅಭಿನಯ ವಿಶೇಷವಾಗಿ ಗಮನ ಸೆಳೆದಿದ್ದು, ಸೀರೆಯಲ್ಲಿ ಮಾಡಿದ ಆಕ್ಷನ್ ದೃಶ್ಯಗಳು ಚಿತ್ರಕ್ಕೆ ಹೊಸ ಶಕ್ತಿಯನ್ನು ನೀಡಿವೆ ಎಂದು ಚಿರಂಜೀವಿ ಅಭಿಪ್ರಾಯಪಟ್ಟಿದ್ದಾರೆ. ಜೊತೆಗೆ ರಾಜ್ ನಿಧಿಮೋರು ಸೇರಿದಂತೆ ಚಿತ್ರತಂಡದ ಎಲ್ಲರಿಗೂ ಅಭಿನಂದನೆ ಸಲ್ಲಿಸಿದ್ದಾರೆ.

ಜೀವನದ ಹೊಸ ಅಧ್ಯಾಯಕ್ಕೆ ಕಾಲಿಡುತ್ತಿರುವ ಸಮಂತಾ ಅವರಿಗೆ ಚಿರಂಜೀವಿ ಶುಭ ಹಾರೈಸಿದ್ದು, ಚಿತ್ರರಂಗದಲ್ಲಿ ಉತ್ತಮ ಸಿನಿಮಾಗಳಿಗೆ ಸದಾ ಬೆಂಬಲ ನೀಡುವ ತಮ್ಮ ಪರಂಪರೆಯನ್ನು ಮುಂದುವರೆಸಿದ್ದಾರೆ. ಈ ನಡೆಗೆ ಅಭಿಮಾನಿಗಳು ಮತ್ತು ಚಿತ್ರರಸಿಕರು ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ದಿವ್ಯಾಂಗ ಯುವತಿಯ ಗರ್ಭಾಶಯ ತೆಗೆಯಲು ಹೈಕೋರ್ಟ್ ಗ್ರೀನ್ ಸಿಗ್ನಲ್

ಬೆಂಗಳೂರು: 23 ವರ್ಷದ ದಿವ್ಯಾಂಗ ಯುವತಿಯ ಗರ್ಭಾಶಯ ಶಸ್ತ್ರಚಿಕಿತ್ಸೆಗೆ ಅನುಮತಿ ನೀಡಿ ಕರ್ನಾಟಕ ಹೈಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ. ಈ ಶಸ್ತ್ರಚಿಕಿತ್ಸೆಯನ್ನು ನಗರದ ವಾಣಿ ವಿಲಾಸ್ ಆಸ್ಪತ್ರೆಯಲ್ಲಿ ನಡೆಸುವಂತೆ ನ್ಯಾಯಾಲಯ ಸೂಚಿಸಿದೆ.

ಪ್ರಕರಣದ ವಿವರಗಳ ಪ್ರಕಾರ, ಯುವತಿ ಗಂಭೀರ ಬೌದ್ಧಿಕ ಹಾಗೂ ಅಭಿವೃದ್ಧಿ ಸಂಬಂಧಿತ ಅಸಮರ್ಥತೆಯಿಂದ ಬಳಲುತ್ತಿದ್ದು, ದಿನನಿತ್ಯದ ಜೀವನದ ಮೂಲಭೂತ ಕಾರ್ಯಗಳನ್ನು ನಿರ್ವಹಿಸಲು ಸಹ ಅಸಮರ್ಥಳಾಗಿದ್ದಾಳೆ. ಆಕೆಯ ಬೌದ್ಧಿಕ ವಯಸ್ಸು ಸುಮಾರು 5 ವರ್ಷಗಳ ಮಟ್ಟದಲ್ಲಿದ್ದು, ಐಕ್ಯೂ 36 ಎಂದು ವೈದ್ಯಕೀಯ ದಾಖಲೆಗಳು ಸೂಚಿಸುತ್ತವೆ.

ಪೋಷಕರು ನ್ಯಾಯಾಲಯಕ್ಕೆ ಸಲ್ಲಿಸಿದ ಮನವಿಯಲ್ಲಿ, ಯುವತಿಯ ಆರೋಗ್ಯ ಸಮಸ್ಯೆಗಳು ಹಾಗೂ ಸ್ವಚ್ಛತೆ ನಿರ್ವಹಣೆಯ ಕಷ್ಟಗಳನ್ನು ಉಲ್ಲೇಖಿಸಿದ್ದಾರೆ. ನಿಯಮಿತ ಋತುಚಕ್ರ ಸಮಸ್ಯೆಯಿಂದಾಗಿ ಮರುಮರು ಸೋಂಕುಗಳು ಮತ್ತು ಆರೋಗ್ಯ ಸಂಕೀರ್ಣತೆಗಳು ಉಂಟಾಗುತ್ತಿದ್ದು, ತಾವು ವಯೋವೃದ್ಧರಾಗಿರುವ ಕಾರಣ ಆರೈಕೆ ಮಾಡಲು ತೀವ್ರ ಕಷ್ಟವಾಗುತ್ತಿದೆ ಎಂದು ತಿಳಿಸಿದ್ದಾರೆ.

ವೈದ್ಯಕೀಯ ಮಂಡಳಿ ನೀಡಿದ ವರದಿಯಲ್ಲಿ, ಯುವತಿ ಗ್ಲೋಬಲ್ ಡೆವಲಪ್ಮೆಂಟ್ ಡಿಲೆ ಹಾಗೂ ಮಧ್ಯಮ ಮಟ್ಟದ ಶಾಶ್ವತ ಬೌದ್ಧಿಕ ಮತ್ತು ಅಭಿವೃದ್ಧಿ ಅಸಮರ್ಥತೆಯಿಂದ ಬಳಲುತ್ತಿರುವುದಾಗಿ ಹೇಳಲಾಗಿದೆ. ಜೊತೆಗೆ ಅಪಸ್ಮಾರ ಸಮಸ್ಯೆಯೂ ಇರುವುದನ್ನು ದೃಢಪಡಿಸಲಾಗಿದೆ.

ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರು ಪ್ರಕರಣದ ಎಲ್ಲಾ ವೈದ್ಯಕೀಯ ಹಾಗೂ ಮಾನವೀಯ ಅಂಶಗಳನ್ನು ಪರಿಶೀಲಿಸಿ ಶಸ್ತ್ರಚಿಕಿತ್ಸೆಗೆ ಅನುಮತಿ ನೀಡಿದ್ದಾರೆ. ಈ ಕ್ರಮವನ್ನು ಆರೋಗ್ಯ, ಸ್ವಚ್ಛತೆ, ಘನತೆ ಹಾಗೂ ಜೀವನದ ಗುಣಮಟ್ಟ ಸುಧಾರಣೆಯ ಉದ್ದೇಶದಿಂದ ತೆಗೆದುಕೊಳ್ಳಲಾಗಿದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ನ್ಯಾಯಾಲಯವು ಇದು ಯಾವುದೇ ರೀತಿಯ ಬಲವಂತದ ಕ್ರಮವಲ್ಲ ಹಾಗೂ ಸಂವಿಧಾನಿಕ ಹಕ್ಕುಗಳನ್ನು ಉಲ್ಲಂಘಿಸುವ ಉದ್ದೇಶವೂ ಇಲ್ಲ ಎಂದು ತನ್ನ ತೀರ್ಪಿನಲ್ಲಿ ಹೇಳಿದೆ.

ಪಿಜಿ ಮುಂದೆ ಕುಡಿಯುತ್ತಿದ್ದವರನ್ನ ಪ್ರಶ್ನಿಸಿದ್ದೆ ತಪ್ಪಾಯ್ತಾ? ಮಾಲೀಕನ ಜೀವವೇ ಹೋಯ್ತು!

0

ಬೆಂಗಳೂರು: ಪಿಜಿ ಮುಂದೆ ಮದ್ಯಪಾನ ಮಾಡುತ್ತಿದ್ದವರನ್ನು ಪ್ರಶ್ನಿಸಿದ್ದಕ್ಕೆ ಪಿಜಿ ಮಾಲೀಕನನ್ನು ಬ್ಯಾಟ್‌ನಿಂದ ಹಲ್ಲೆ ನಡೆಸಿ ಕೊಲೆ ಮಾಡಿದ ಘಟನೆ ರಾಮಮೂರ್ತಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಮೃತರನ್ನು ಮಾಧವ್ ಮೆಟ್ಲಿ (40) ಎಂದು ಗುರುತಿಸಲಾಗಿದೆ. ಅವರು ಕಸ್ತೂರಿಬಾ ನಗರದಲ್ಲಿ ಪಿಜಿ ನಡೆಸುತ್ತಿದ್ದರು.

ಮಾಹಿತಿಯ ಪ್ರಕಾರ, ಪಿಜಿ ಮುಂಭಾಗದಲ್ಲಿ ಇಬ್ಬರು ಆರೋಪಿಗಳು ಮದ್ಯಪಾನ ಮಾಡುತ್ತಾ ಮಾತನಾಡುತ್ತಿದ್ದರು. ಇದನ್ನು ಗಮನಿಸಿದ ಮಾಧವ್ ಮೆಟ್ಲಿ, ಸ್ಥಳಕ್ಕೆ ತೆರಳಿ ಪ್ರಶ್ನಿಸಿದ್ದಾರೆ. ಈ ವೇಳೆ ಅವರ ಕೈಯಲ್ಲಿ ಬ್ಯಾಟ್ ಇದ್ದುದಾಗಿ ತಿಳಿದುಬಂದಿದೆ.

ಪ್ರಶ್ನೆ ಮಾಡಿದ ವಿಚಾರಕ್ಕೆ ಆರೋಪಿಗಳು ಹಾಗೂ ಮಾಲೀಕನ ನಡುವೆ ವಾಗ್ವಾದ ನಡೆದಿದ್ದು, ಪರಿಸ್ಥಿತಿ ಕೈಮೀರಿದೆ. ತಾನು ಹಲ್ಲೆಗೆ ಒಳಗಾಗುವ ಭಯದಿಂದ ಆರೋಪಿಗಳು ಮಾಧವ್ ಅವರ ಕೈಯಲ್ಲಿದ್ದ ಬ್ಯಾಟ್ ಕಸಿದುಕೊಂಡು ಅವರ ಮೇಲೆಯೇ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

ಗಂಭೀರವಾಗಿ ಗಾಯಗೊಂಡಿದ್ದ ಮಾಧವ್ ಮೆಟ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.

ಘಟನೆ ಸಂಬಂಧ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ರಾಮಮೂರ್ತಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ.

error: Content is protected !!