Home Blog

Asha Bhosle: ಪದ್ಮವಿಭೂಷಣ ಪುರಸ್ಕೃತೆ ಗಾಯಕಿ ಆಶಾ ಭೋಸ್ಲೆ ನಿಧನ!

0

ಮುಂಬೈ:- ಪದ್ಮವಿಭೂಷಣ ಪುರಸ್ಕೃತ ಖ್ಯಾತ ಹಿನ್ನೆಲೆ ಗಾಯಕಿ ಆಶಾ ಭೋಸ್ಲೆ (92) ಅವರು ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ.

ಹೃದಯಾಘಾತದಿಂದ ಆಸ್ಪತ್ರೆಗೆ ದಾಖಲಾಗಿದ್ದ ಅವರು, ವೈದ್ಯರ ಶ್ರಮದ ನಡುವೆಯೂ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ವಯೋಸಹಜ ಸಮಸ್ಯೆಗಳಿಂದಲೂ ಅವರು ಬಳಲುತ್ತಿದ್ದರು ಎಂದು ತಿಳಿದುಬಂದಿದೆ.

ಹಿಂದಿ ಮಾತ್ರವಲ್ಲದೆ ಕನ್ನಡ ಸೇರಿದಂತೆ ಸುಮಾರು 20ಕ್ಕೂ ಹೆಚ್ಚು ಭಾಷೆಗಳಲ್ಲಿ 12,000ಕ್ಕೂ ಅಧಿಕ ಹಾಡುಗಳನ್ನು ಹಾಡಿರುವ ಆಶಾ ಭೋಸ್ಲೆ ಅವರು, ಪಾಪ್, ಗಜಲ್ ಹಾಗೂ ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲೂ ಅಪಾರ ಹೆಸರು ಗಳಿಸಿದ್ದರು.

ಅವರ ನಿಧನಕ್ಕೆ ಸಂಗೀತ ಕ್ಷೇತ್ರದ ಗಣ್ಯರು ಹಾಗೂ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.

ಆಟೋ ಗ್ಯಾಸ್ ಪೂರೈಕೆ ಸಹಜಸ್ಥಿತಿಗೆ – ಆದರೆ ದರ ಏರಿಕೆ, ಚಾಲಕರಲ್ಲಿ ಅಸಮಾಧಾನ!

ಬೆಂಗಳೂರು: ಮಧ್ಯಪ್ರಾಚ್ಯ ಯುದ್ಧದ ಪರಿಣಾಮದಿಂದ ಉಂಟಾಗಿದ್ದ ಆಟೋ ಎಲ್‌ಪಿಜಿ ಗ್ಯಾಸ್ ಕೊರತೆ ಇದೀಗ ಕ್ರಮೇಣ ಸಹಜಸ್ಥಿತಿಗೆ ಮರಳುತ್ತಿದೆ.

ನಗರ ಸೇರಿದಂತೆ ಹಲವು ಜಿಲ್ಲೆಗಳ ಬಂಕ್‌ಗಳಿಗೆ ಗ್ಯಾಸ್ ಸರಬರಾಜು ಪುನರಾರಂಭವಾಗಿದೆ ಎಂದು ತಿಳಿದುಬಂದಿದೆ.

ಹಿಂದೆ ಗ್ಯಾಸ್ ಸಿಗದೆ ಬಂಕ್‌ಗಳ ಮುಂದೆ ಕಿಲೋಮೀಟರ್‌ಗಟ್ಟಲೆ ಸರತಿ ಸಾಲು ಕಾಣುತ್ತಿದ್ದ ಪರಿಸ್ಥಿತಿ ಈಗ ಕಡಿಮೆಯಾಗಿದ್ದು, ಬಹುತೇಕ ಬಂಕ್‌ಗಳಲ್ಲಿ ಆಟೋ ಗ್ಯಾಸ್ ಲಭ್ಯವಾಗುತ್ತಿದೆ.

ಆದರೆ ಗ್ಯಾಸ್ ದರದಲ್ಲಿ ಭಾರೀ ಏರಿಕೆ ಕಂಡುಬಂದಿದ್ದು ಚಾಲಕರಲ್ಲಿ ಅಸಮಾಧಾನ ವ್ಯಕ್ತವಾಗಿದೆ. ಕೆಲ ಬಂಕ್‌ಗಳಲ್ಲಿ ಲೀಟರ್‌ಗೆ ₹65 ಇದ್ದ ದರ ಈಗ ₹99ರಿಂದ ₹120ರ ವರೆಗೆ ಏರಿಕೆಯಾಗಿದೆ ಎಂದು ವರದಿಯಾಗಿದೆ. ವಿವಿಧ ಬಂಕ್‌ಗಳಲ್ಲಿ ವಿಭಿನ್ನ ದರ ನಿಗದಿಯಾಗುತ್ತಿರುವುದರಿಂದ ಗೊಂದಲವೂ ಉಂಟಾಗಿದೆ.

“ದರವನ್ನು ಸರ್ಕಾರ ನಿಯಂತ್ರಿಸಬೇಕು” ಎಂದು ಆಟೋ ಚಾಲಕರು ಆಗ್ರಹಿಸಿದ್ದಾರೆ.

ಇತ್ತ ರಾಯಚೂರಿನ ಮಸ್ಕಿಯಲ್ಲಿ ಗ್ಯಾಸ್ ಸಿಲಿಂಡರ್ ಅಭಾವದಿಂದ ಗ್ರಾಹಕರು ಇನ್ನೂ ಸಂಕಷ್ಟ ಅನುಭವಿಸುತ್ತಿದ್ದಾರೆ. ಸಿಲಿಂಡರ್ ಪಡೆಯಲು ಗೋದಾಮು ಮುಂದೆ 5–6 ಗಂಟೆಗಳ ಕಾಲ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಮಹಿಳೆಯರು, ಮಕ್ಕಳು ಮತ್ತು ವೃದ್ಧರು ಸರತಿಯಲ್ಲಿ ನಿಂತು ಸಿಲಿಂಡರ್ ಪಡೆಯುತ್ತಿರುವ ದೃಶ್ಯಗಳು ಕಂಡುಬಂದಿವೆ.

ಒಟ್ಟಿನಲ್ಲಿ ಪೂರೈಕೆ ಸಹಜವಾಗುತ್ತಿದ್ದರೂ ದರ ಏರಿಕೆ ಜನರ ಕಷ್ಟವನ್ನು ಹೆಚ್ಚಿಸಿದೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮಂಗಳೂರು ಯುವಕನ ಆತ್ಮಹತ್ಯೆ ಕೇಸ್‌ಗೆ ಟ್ವಿಸ್ಟ್: ಯುವತಿ ಸೇರಿ ಮೂವರ ವಿರುದ್ಧ ಎಫ್‌ಐಆರ್‌

0

ಮಂಗಳೂರು: ಮೂಡುಶೆಡ್ಡೆಯ ಎದುರುಪದವು ನಿವಾಸಿ ಮಹಮ್ಮದ್ ಆಶಿಕ್ (22) ಆತ್ಮಹತ್ಯೆ ಪ್ರಕರಣ ಇದೀಗ ಗಂಭೀರ ಕಾನೂನು ತನಿಖೆಗೆ ಒಳಪಟ್ಟಿದ್ದು, ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಯುವತಿ, ಆಕೆಯ ತಾಯಿ ಸೇರಿದಂತೆ ಮೂವರ ವಿರುದ್ಧ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಾರ್ಚ್ 21ರಂದು ಈದ್ ಹಬ್ಬದ ದಿನವೇ ಆಶಿಕ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಆರಂಭದಲ್ಲಿ ವೈಯಕ್ತಿಕ ಕಾರಣ ಅಥವಾ ಮನನೊಂದು ತೆಗೆದುಕೊಂಡ ನಿರ್ಧಾರವಾಗಿರಬಹುದು ಎಂದು ಅಂದಾಜಿಸಲಾಗಿತ್ತಾದರೂ, ನಂತರ ನಡೆದ ಡಿಜಿಟಲ್ ಸಾಕ್ಷ್ಯ ಪರಿಶೀಲನೆಯಿಂದ ಪ್ರಕರಣದ ದಿಕ್ಕು ಬದಲಾಗಿದೆ.

ಮೊಬೈಲ್ ಚಾಟ್‌ಗಳು, ಕರೆ ದಾಖಲೆಗಳು ಹಾಗೂ ವಿಡಿಯೋ ಕಾಲ್ ವಿವರಗಳ ಪರಿಶೀಲನೆಯ ಬಳಿಕ ಪ್ರೇಮ ಸಂಬಂಧ ಹಾಗೂ ಮಾನಸಿಕ ಒತ್ತಡದ ಅಂಶಗಳು ಬೆಳಕಿಗೆ ಬಂದಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಆಶಿಕ್ ಕಾಲೇಜು ಸಹಪಾಠಿಯಾಗಿದ್ದ ಉಳ್ಳಾಲ ಮೂಲದ ಯುವತಿಯನ್ನು ಪ್ರೀತಿಸುತ್ತಿದ್ದರು ಎಂದು ತಿಳಿದುಬಂದಿದೆ. ಆರಂಭದಲ್ಲಿ ಸಂಬಂಧ ಎರಡೂ ಕುಟುಂಬಗಳಿಗೆ ತಿಳಿದಿದ್ದರೂ, ಬಳಿಕ ಯುವತಿ ದೂರವಾಗಿದ್ದ ಹಿನ್ನೆಲೆಯಲ್ಲಿ ಮನಸ್ಥಿತಿ ಕುಸಿತ ಕಂಡಿತ್ತು ಎನ್ನಲಾಗಿದೆ.

ತನಿಖಾ ಮಾಹಿತಿಯ ಪ್ರಕಾರ, ಸಾವಿಗೂ ಮುನ್ನ ಇಬ್ಬರ ನಡುವೆ ನಡೆದ ಸಂಭಾಷಣೆಗಳಲ್ಲಿ ತೀವ್ರ ನಿಂದನೆ ಹಾಗೂ ಮನೋವೈಕಲ್ಯ ಉಂಟುಮಾಡುವ ರೀತಿಯ ಮಾತುಕತೆಗಳು ನಡೆದಿದ್ದವು ಎಂಬ ಆರೋಪವಿದೆ. ಇದೇ ಹಿನ್ನೆಲೆ ಆತ್ಮಹತ್ಯೆಗೆ ಪ್ರಚೋದನೆ ನೀಡಲಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ.

ಮೃತನ ತಂದೆಯ ದೂರು ಆಧರಿಸಿ ಕಾವೂರು ಪೊಲೀಸರು ಬಿಎನ್‌ಎಸ್ ಸೆಕ್ಷನ್ 108, 352, 351(3), 3(5) ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಗಳ ಪಾತ್ರ ಹಾಗೂ ಡಿಜಿಟಲ್ ಸಾಕ್ಷ್ಯಗಳ ಆಧಾರದಲ್ಲಿ ತನಿಖೆ ಮುಂದುವರಿದಿದೆ.

ಶಕ್ತಿ ಯೋಜನೆ ದುರುಪಯೋಗ: ಬಿಎಂಟಿಸಿಯಲ್ಲಿ ದೊಡ್ಡ ವಂಚನೆ ಬಯಲು!

ಬೆಂಗಳೂರು: ಶಕ್ತಿ ಯೋಜನೆ ಅಡಿಯಲ್ಲಿ ಮಹಿಳಾ ಪ್ರಯಾಣಿಕರಿಗೆ ಉಚಿತ ಟಿಕೆಟ್ ನೀಡುವ ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಂಡು ಬಿಎಂಟಿಸಿಗೆ ಹಣ ವಂಚಿಸಿದ ಆರೋಪದಲ್ಲಿ ಐವರು ನೌಕರರನ್ನು ಅಮಾನತು ಮಾಡಲಾಗಿದೆ.

ತನಿಖೆಯ ಪ್ರಕಾರ, ಕೆಲವು ಕಂಡಕ್ಟರ್‌ಗಳು ವೈಯಕ್ತಿಕ ಯುಪಿಐ ಕ್ಯೂಆರ್ ಕೋಡ್‌ಗಳನ್ನು ಬಳಸಿಕೊಂಡು ನಿಗಮಕ್ಕೆ ಬರಬೇಕಿದ್ದ ಹಣವನ್ನು ತಮ್ಮ ಖಾತೆಗೆ ವರ್ಗಾಯಿಸಿಕೊಂಡಿರುವುದು ಪತ್ತೆಯಾಗಿದೆ. ಈ ಮೂಲಕ ಲಕ್ಷಾಂತರ ರೂಪಾಯಿ ವಂಚನೆ ನಡೆದಿರುವುದು ಬೆಳಕಿಗೆ ಬಂದಿದೆ.

ಕನ್ನಡ ಓದಲು ಬಾರದ ಪ್ರಯಾಣಿಕರನ್ನು ಗುರಿಯಾಗಿಸಿ ಟಿಕೆಟ್ ವಂಚನೆ ಮಾಡುತ್ತಿದ್ದರೆಂಬ ಆರೋಪವೂ ತನಿಖೆಯಲ್ಲಿ ತಿಳಿದುಬಂದಿದೆ.

ಅಮಾನತುಗೊಂಡ ನೌಕರರು ಮತ್ತು ವಂಚನೆ ಮೊತ್ತ:

  • ಸೂರ್ಯನಾರಾಯಣ (ಡಿಪೋ-18): ₹6,117
  • ಬೊಮ್ಮಲಿಂಗೇಶ್ ಸಿ (ಡಿಪೋ-18): ₹16,404
  • ಬ್ರಿಜೇಶ್ ಬಾಬು (ಡಿಪೋ-51): ₹9,795
  • ಮೋಹನ್ (ಡಿಪೋ-18): ₹6,117
  • ಎನ್. ಪ್ರಕಾಶ್ (ಡಿಪೋ-6): ₹6,312

ಒಟ್ಟು ₹1,82,568 ರೂಪಾಯಿ ವಂಚನೆ ನಡೆದಿರುವುದು ದೃಢಪಟ್ಟಿದ್ದು, ಈ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.

ಈ ಹಿಂದೆ ಕೂಡ ಇದೇ ರೀತಿಯ ಪ್ರಕರಣಗಳಲ್ಲಿ ಕೆಲ ನೌಕರರನ್ನು ಅಮಾನತು ಮಾಡಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

IPL 2026: ಸ್ಟಬ್ ಔಟ್ ಬಳಿಕ ಡೆಲ್ಲಿ ಆಲೌಟ್ : ಚೆನ್ನೈ ವಿರುದ್ಧ ಸೋಲಿಗೆ ಅಂಪೈರ್ ನಿರ್ಣಯ ಕಾರಣವಾಯ್ತಾ?

0

ಚೆನ್ನೈ: ಇಲ್ಲಿನ ಚೆಪಾಕ್ ಕ್ರೀಡಾಂಗಣದಲ್ಲಿ ನಡೆದ 2026ರ ಐಪಿಎಲ್ 18ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡವು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರೋಚಕ ಜಯ ಸಾಧಿಸಿದೆ.

ಆದರೆ ಈ ಪಂದ್ಯದ ಅಂತಿಮ ಹಂತದಲ್ಲಿ ವಿವಾದವೊಂದು ಉದ್ಭವಿಸಿದೆ. ಡೆಲ್ಲಿ ಕ್ಯಾಪಿಟಲ್ಸ್ ಬ್ಯಾಟರ್ ಟ್ರಿಸ್ಟನ್ ಸ್ಟಬ್ ಬ್ಯಾಟಿಂಗ್ ವೇಳೆ ಗ್ಲೌಸ್ ಬದಲಾಯಿಸಲು ಅಂಪೈರ್ ಬಳಿ ಮನವಿ ಮಾಡಿದ್ದರು. ಆದರೆ ಅಂಪೈರ್ ಅದಕ್ಕೆ ಅನುಮತಿ ನೀಡಿರಲಿಲ್ಲ ಎಂದು ತಿಳಿದುಬಂದಿದೆ.

ಈ ನಿರ್ಧಾರವೇ ಪಂದ್ಯದ ತಿರುವಿಗೆ ಕಾರಣವಾಯಿತೇ ಎಂಬ ಪ್ರಶ್ನೆ ಇದೀಗ ಕ್ರಿಕೆಟ್ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

ಸಿಎಸ್‌ಕೆ ನೀಡಿದ್ದ 213 ರನ್‌ಗಳ ಗುರಿಯನ್ನು ಬೆನ್ನಟ್ಟುತ್ತಿದ್ದ ಡೆಲ್ಲಿ ತಂಡಕ್ಕೆ ಟ್ರಿಸ್ಟನ್ ಸ್ಟಬ್ ಆಕ್ರಮಣಕಾರಿ ಬ್ಯಾಟಿಂಗ್ ಮೂಲಕ ಭರವಸೆ ನೀಡಿದ್ದರು. ಕೊನೆಯ ಹಂತದಲ್ಲಿ ಗೆಲುವಿಗೆ 10 ಎಸೆತಗಳಲ್ಲಿ 29 ರನ್‌ಗಳ ಅಗತ್ಯವಿದ್ದಾಗ ಈ ಘಟನೆ ನಡೆದಿದೆ.

ಸ್ಟಬ್ 38 ಎಸೆತಗಳಲ್ಲಿ 60 ರನ್‌ (4 ಬೌಂಡರಿ, 3 ಸಿಕ್ಸರ್) ಗಳಿಸಿ ಔಟಾದ ಬಳಿಕ ಡೆಲ್ಲಿ ಬ್ಯಾಟಿಂಗ್ ಕುಸಿತ ಕಂಡು 189 ರನ್‌ಗಳಿಗೆ ಆಲೌಟ್ ಆಯಿತು.

ಈ ಘಟನೆ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಅಂಪೈರ್ ನಿರ್ಧಾರದ ವಿರುದ್ಧ ಹಾಗೂ ಪರವಾಗಿ ಅಭಿಪ್ರಾಯಗಳು ವ್ಯಕ್ತವಾಗುತ್ತಿದ್ದು, ಪಂದ್ಯ ಫಲಿತಾಂಶದ ಮೇಲೆ ಇದರ ಪರಿಣಾಮದ ಬಗ್ಗೆ ಚರ್ಚೆ ಮುಂದುವರಿದಿದೆ.

ಹುಲಿಕಲ್ ಘಾಟ್‌ನಲ್ಲಿ ಮತ್ತೊಮ್ಮೆ ಭೂಕುಸಿತ – ತೀರ್ಥಹಳ್ಳಿ–ಕುಂದಾಪುರ ರಸ್ತೆ ಸಂಪೂರ್ಣ ಬಂದ್

ಶಿವಮೊಗ್ಗ: ಹುಲಿಕಲ್ ಘಾಟಿಯಲ್ಲಿ ಸುಮಾರು 5 ಅಡಿ ಅಗಲದವರೆಗೆ ಮತ್ತೊಮ್ಮೆ ಭೂಕುಸಿತ ಸಂಭವಿಸಿರುವ ಹಿನ್ನೆಲೆಯಲ್ಲಿ ತೀರ್ಥಹಳ್ಳಿ–ಕುಂದಾಪುರ ರಾಜ್ಯ ಹೆದ್ದಾರಿಯಲ್ಲಿ ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಶಿವಮೊಗ್ಗ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರು ಆದೇಶ ಹೊರಡಿಸಿದ್ದು, ಕಾಂಕ್ರೀಟ್ ರಸ್ತೆಯಲ್ಲೂ ಬಿರುಕುಗಳು ಕಂಡುಬಂದಿರುವುದರಿಂದ ಸುರಕ್ಷತಾ ದೃಷ್ಟಿಯಿಂದ ಎಲ್ಲಾ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಘಾಟ್‌ನ ಹೇರ್‌ಪಿನ್ ತಿರುವಿನಲ್ಲಿ ರಕ್ಷಣಾತ್ಮಕ ಕಾಮಗಾರಿ ಪೂರ್ಣಗೊಳ್ಳುವವರೆಗೆ ಈ ಮಾರ್ಗವನ್ನು ಬಳಸಲು ಅವಕಾಶ ಇರುವುದಿಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಪರ್ಯಾಯ ಮಾರ್ಗಗಳಲ್ಲಿ ಸಂಚಾರ ಮಾಡಲು ಸೂಚಿಸಲಾಗಿದೆ.

ತೀರ್ಥಹಳ್ಳಿಯಿಂದ ಕುಂದಾಪುರಕ್ಕೆ ತೆರಳುವ ವಾಹನಗಳು ತೀರ್ಥಹಳ್ಳಿ–ರಾವೆ–ಕಾನುಗೋಡು–ನಗರ–ಕೊಲ್ಲೂರು ಮಾರ್ಗವಾಗಿ ಸಂಚರಿಸಬೇಕು ಎಂದು ಸೂಚಿಸಲಾಗಿದೆ. ಇನ್ನೊಂದು ಮಾರ್ಗವಾಗಿ ತೀರ್ಥಹಳ್ಳಿ–ಯಡೂರು–ಮಾಸ್ತಿಕಟ್ಟೆ–ಕಾನುಗೋಡು–ನಗರ–ಕೊಲ್ಲೂರು ಮಾರ್ಗವನ್ನು ಬಳಸಬಹುದು.

ಶಿವಮೊಗ್ಗ ಮತ್ತು ಸಾಗರ ಭಾಗದಿಂದ ಹೋಗುವವರು ಶಿವಮೊಗ್ಗ–ಹೊನ್ನಾವರ ರಾಷ್ಟ್ರೀಯ ಹೆದ್ದಾರಿ ಮೂಲಕ ಭಟ್ಕಳ–ಬೈಂದೂರು ಮಾರ್ಗವಾಗಿ ಕುಂದಾಪುರಕ್ಕೆ ತೆರಳಲು ಸೂಚಿಸಲಾಗಿದೆ.

ಇತ್ತೀಚೆಗಷ್ಟೇ ಇದೇ ಘಾಟ್‌ನಲ್ಲಿ ನಡೆದ ಭೂಕುಸಿತ ದುರಂತದಲ್ಲಿ ಮೂವರು ಕಾರ್ಮಿಕರು ಸಾವಿಗೀಡಾಗಿದ್ದು, ಈ ಘಟನೆ ಇನ್ನೂ ಜನಮನದಿಂದ ಮಾಸಿಲ್ಲ. ಈಗ ಮತ್ತೊಮ್ಮೆ ಭೂಕುಸಿತ ಸಂಭವಿಸಿರುವುದು ಆತಂಕ ಹೆಚ್ಚಿಸಿದೆ.

ಹಾಸನದಲ್ಲಿ ಮತ್ತೊಂದು ದುರ್ಘಟನೆ: ಕಾಡಾನೆ ದಾಳಿಗೆ ರೈತ ಸಾವು!

ಹಾಸನ: ರಾಜ್ಯದಲ್ಲಿ ಕಾಡು ಪ್ರಾಣಿಗಳು ಮತ್ತು ಮಾನವ ಸಂಘರ್ಷ ಮುಂದುವರಿದಿರುವ ನಡುವೆ, ಹಾಸನ ಜಿಲ್ಲೆಯಲ್ಲಿ ಮತ್ತೊಂದು ದಾರುಣ ಘಟನೆ ನಡೆದಿದೆ.

ಬೇಲೂರು ತಾಲೂಕಿನ ಕಣಗುಪ್ಪೆ ಗ್ರಾಮದ ರೈತ ರಾಜಶೆಟ್ಟಿ (56) ಕಾಡಾನೆ ದಾಳಿಗೆ ಬಲಿಯಾಗಿದ್ದಾರೆ.

ಮಾಹಿತಿ ಪ್ರಕಾರ, ಬೆಳಗ್ಗೆ ತೋಟಕ್ಕೆ ತೆರಳಿದ್ದ ವೇಳೆ ಕಾಡಾನೆ ಏಕಾಏಕಿ ದಾಳಿ ನಡೆಸಿದ್ದು, ಸೊಂಡಿಲಿನಿಂದ ಎತ್ತಿ ಬಿಸಾಡಿ ತುಳಿದು ಅವರನ್ನು ಸ್ಥಳದಲ್ಲೇ ಕೊಂದಿದೆ.

ಘಟನೆ ಬಳಿಕ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಘಟನೆ ಅರೇಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಕಾಡಾನೆಗಳ ಹಾವಳಿ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕೆಂಬ ಆಗ್ರಹ ಕೇಳಿಬರುತ್ತಿದೆ.

ಗೋಲ್ಡ್ ಪ್ರಿಯರ ಗಮನಕ್ಕೆ: ಗ್ರಾಂ ಚಿನ್ನದ ಬೆಲೆ ಎಷ್ಟು ಗೊತ್ತಾ!? ಇಷ್ಟು ಕಮ್ಮಿನಾ!?

0

ಚಿನ್ನದ ಬೆಲೆ ಕಳೆದ ಕೆಲವು ದಿನಗಳಿಂದ ಅಸ್ಥಿರ ಸ್ಥಿತಿಯಲ್ಲಿ ಮುಂದುವರಿದಿದ್ದು, ಅತ್ತಿಂದಿತ್ತ ಏರಿಳಿತ ಕಾಣುತ್ತಿದೆ.

ಕಳೆದ ಎರಡು ವಾರಗಳಿಂದ ಚಿನ್ನದ ದರದಲ್ಲಿ ನಿರಂತರವಾಗಿ ಏರಿಳಿತವಾಗುತ್ತಿದ್ದು, ಕಳೆದ 10 ದಿನಗಳಲ್ಲಿ ಪ್ರತಿ ಗ್ರಾಂಗೆ ಸುಮಾರು ₹355 ರಷ್ಟು ಹೆಚ್ಚಳವಾಗಿದೆ ಎಂದು ವರದಿಯಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲೂ ಇದೇ ರೀತಿಯ ಅಲ್ಪ ಏರಿಳಿತಗಳು ಮುಂದುವರಿದಿವೆ.

ಇದೇ ವೇಳೆ ಬೆಳ್ಳಿ ಬೆಲೆಯಲ್ಲಿಯೂ ಸಣ್ಣ ಪ್ರಮಾಣದ ಏರಿಕೆ ಕಂಡುಬಂದಿದ್ದು, ಕಳೆದ 10 ದಿನಗಳಲ್ಲಿ ಸುಮಾರು ₹10 ರಷ್ಟು ಹೆಚ್ಚಳವಾಗಿದೆ. ಮಾರುಕಟ್ಟೆ ತಜ್ಞರ ಪ್ರಕಾರ, ಜಾಗತಿಕ ಆರ್ಥಿಕ ಪರಿಸ್ಥಿತಿ ಮತ್ತು ಹೂಡಿಕೆದಾರರ ಅಸ್ಥಿರ ಮನೋಭಾವದಿಂದ ಚಿನ್ನ–ಬೆಳ್ಳಿ ದರಗಳಲ್ಲಿ ಈ ರೀತಿಯ ಏರಿಳಿತಗಳು ಕಂಡುಬರುತ್ತಿವೆ.

ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,40,100 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,52,840 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 26,000 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,40,100 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 26,000 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 26,500 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಏಪ್ರಿಲ್ 12ಕ್ಕೆ):

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,284 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,010 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 11,463 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 260 ರೂ.

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,284 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,010 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 260 ರೂ.

ಬೀದಿ ನಾಯಿಗಳ ಕ್ರೌರ್ಯ ಆರೋಪ: ಡಿಆರ್‌ಡಿಒ ಸಂಕೀರ್ಣ ವಿರುದ್ಧ ತೀವ್ರ ಪ್ರತಿಭಟನೆ- ಕಣ್ಣೀರಿಟ್ಟ ನಟಿ ರಮ್ಯಾ ದಿವ್ಯ ಸ್ಪಂದನಾ

ಬೆಂಗಳೂರು: ಕಗ್ಗದಾಸಪುರದಲ್ಲಿ ನಡೆದ ಬೀದಿ ನಾಯಿಗಳ ಮೇಲಿನ ಕ್ರೌರ್ಯದ ಆರೋಪ ಗಂಭೀರ ವಿವಾದಕ್ಕೆ ಕಾರಣವಾಗಿದೆ. ಡಿಆರ್‌ಡಿಒ ಸಂಕೀರ್ಣದಲ್ಲಿ ನಾಯಿಗಳನ್ನು ಚೀಲಗಳಲ್ಲಿ ಕಟ್ಟಿ ಸಾಗಿಸಿದ ಘಟನೆ ಪ್ರಾಣಿ ಹಕ್ಕುಗಳ ಉಲ್ಲಂಘನೆಯಾಗಿ ವ್ಯಾಪಕ ಖಂಡನೆಗೆ ಗುರಿಯಾಗಿದೆ.

ಈ ಘಟನೆ ವಿರುದ್ಧ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಯಿತು. ನಟಿ ರಮ್ಯಾ ದಿವ್ಯ ಸ್ಪಂದನ ಸೇರಿದಂತೆ ಹಲವು ಶ್ವಾನ ಪ್ರಿಯರು ಭಾಗವಹಿಸಿ ಘಟನೆಯನ್ನು ತೀವ್ರವಾಗಿ ಖಂಡಿಸಿದರು. ಮಾತನಾಡುವ ವೇಳೆ ರಮ್ಯಾ ಭಾವುಕರಾಗಿ ಕಣ್ಣೀರು ಹಾಕಿದರು.

“ಇಂತಹ ಅಮಾನವೀಯ ಘಟನೆಗಳು ಸಹಿಸಲಾಗದು. ನಾಪತ್ತೆಯಾಗಿರುವ ನಾಯಿಗಳ ಬಗ್ಗೆ ತಕ್ಷಣ ಸ್ಪಷ್ಟತೆ ನೀಡಬೇಕು,” ಎಂದು ಅವರು ಆಗ್ರಹಿಸಿದರು.

ಸುಮಾರು 20ಕ್ಕೂ ಹೆಚ್ಚು ನಾಯಿಗಳು ಕಾಣೆಯಾಗಿರುವುದಾಗಿ ವರದಿಯಾಗಿದೆ. ಅನಿಮಲ್ ಬರ್ಥ್ ಕಂಟ್ರೋಲ್ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂಬ ಆಗ್ರಹ ಹೆಚ್ಚುತ್ತಿದೆ. ಸಿ.ವಿ. ರಾಮನ್ ನಗರ ಅನಿಮಲ್ ಸ್ಕ್ವಾಡ್ ಮತ್ತು ಪ್ರಿಯಾ ಚೆಟ್ಟಿ ರಾಜಗೋಪಾಲ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.

ಪ್ರಕರಣ ಮಹದೇವಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ವಿಷಯ ಈಗ ಕರ್ನಾಟಕ ಹೈಕೋರ್ಟ್‌ನ ವಿಚಾರಣೆಯಲ್ಲಿದೆ. ಮುಂದಿನ ವಿಚಾರಣೆ ಏಪ್ರಿಲ್ 16ರಂದು ನಡೆಯಲಿದೆ.

ಗದಗದಲ್ಲಿ ಕೆ.ಎಚ್. ಪಾಟೀಲ ಕ್ರಿಕೆಟ್ ಲೀಗ್ ಸೀಸನ್-2 ಆರಂಭ: 20 ತಂಡಗಳ ಪೈಪೋಟಿ!

0

ವಿಜಯಸಾಕ್ಷಿ ಸುದ್ದಿ, ಗದಗ: ಜಿಲ್ಲೆಯ ಕ್ರೀಡಾ ಇತಿಹಾಸದಲ್ಲಿ ಗಮನಸೆಳೆದ ‘ಕೆ.ಎಚ್. ಪಾಟೀಲ ಕ್ರಿಕೆಟ್ ಲೀಗ್’ ಮೊದಲ ಸೀಸನ್ ಯಶಸ್ಸಿನ ಬಳಿಕ ಇದೀಗ ಸೀಸನ್-2 ಭರ್ಜರಿಯಾಗಿ ಆರಂಭಗೊಳ್ಳುತ್ತಿದೆ.

ನಗರದ ವಿದ್ಯಾದಾನ ಸಮಿತಿ ಮೈದಾನದಲ್ಲಿ ಏಪ್ರಿಲ್ 12ರಿಂದ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾವಳಿ ಆರಂಭವಾಗಲಿದ್ದು, ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷ ಕೃಷ್ಣಗೌಡ ಪಾಟೀಲ ಮಾಹಿತಿ ನೀಡಿದರು.

ಉದ್ಘಾಟನಾ ಸಮಾರಂಭಕ್ಕೆ ಕಾನೂನು ಮತ್ತು ಪ್ರವಾಸೋದ್ಯಮ ಸಚಿವ ಹೆಚ್.ಕೆ. ಪಾಟೀಲ, ಶಾಸಕ ಜಿ.ಎಸ್. ಪಾಟೀಲ, ಮಾಜಿ ಶಾಸಕ ಡಿ.ಆರ್. ಪಾಟೀಲ ಸೇರಿದಂತೆ ಗಣ್ಯರು ಆಗಮಿಸಲಿದ್ದಾರೆ. ವಿಶೇಷವಾಗಿ ಅಂತಾರಾಷ್ಟ್ರೀಯ ಮಾಜಿ ಕ್ರಿಕೆಟಿಗರಾದ ಸುನಿಲ್ ಜೋಶಿ, ಸುಜಿತ್ ಸೋಮಶೇಖರ್ ಮತ್ತು ಈರಣ್ಣ ಸವಡಿ ಭಾಗವಹಿಸಲಿದ್ದಾರೆ.

ಈ ಬಾರಿ ಲೀಗ್‌ನಲ್ಲಿ 20 ತಂಡಗಳು ಸ್ಪರ್ಧಿಸುತ್ತಿದ್ದು, ಒಟ್ಟು 456 ಆಟಗಾರರು ನೋಂದಾಯಿತರಾಗಿದ್ದಾರೆ. ಹರಾಜು ಪ್ರಕ್ರಿಯೆಯಲ್ಲಿ 320 ಆಟಗಾರರನ್ನು ಆಯ್ಕೆ ಮಾಡಲಾಗಿದೆ. ನಗರ ಹಾಗೂ ಗ್ರಾಮೀಣ ಪ್ರತಿಭೆಗಳಿಗೆ ಸಮಾನ ಅವಕಾಶ ಕಲ್ಪಿಸುವ ಉದ್ದೇಶದಿಂದ ಪ್ರತಿ ತಂಡದಲ್ಲಿ ಕನಿಷ್ಠ 5 ಗ್ರಾಮೀಣ ಆಟಗಾರರನ್ನು ಸೇರಿಸಲಾಗಿದೆ.

ಮಾರ್ಚ್ 22 ಮತ್ತು 23ರಂದು ನಡೆದ ಹರಾಜಿನಲ್ಲಿ ಆಟಗಾರರು ಭಾರಿ ಮೊತ್ತಕ್ಕೆ ಮಾರಾಟವಾಗಿದ್ದಾರೆ. ಎಡ್ವರ್ಡ್ 44 ಸಾವಿರ ರೂ., ಶಂಕರ 42 ಸಾವಿರ ರೂ., ಯುವರಾಜ್ 36 ಸಾವಿರ ರೂ., ವೈಭವ್ ಮತ್ತು ಫಯಾಜ್ ತಲಾ 34 ಸಾವಿರ ರೂ.ಗೆ ಬಿಡ್ ಆಗಿದ್ದಾರೆ.

ಪ್ರಥಮ ಬಹುಮಾನ 2 ಲಕ್ಷ ರೂ., ದ್ವಿತೀಯ 1.5 ಲಕ್ಷ ರೂ. ಘೋಷಿಸಲಾಗಿದೆ. ಜೊತೆಗೆ ಟೂರ್ನಿಯ ಶ್ರೇಷ್ಠ ಆಟಗಾರನಿಗೆ 25 ಸಾವಿರ ರೂ., ಅತ್ಯುತ್ತಮ ಬ್ಯಾಟ್ಸಮನ್ ಮತ್ತು ಬಾಲರ್‌ಗೆ ತಲಾ 10 ಸಾವಿರ ರೂ. ಸೇರಿದಂತೆ ಅನೇಕ ವೈಯಕ್ತಿಕ ಬಹುಮಾನಗಳನ್ನು ನೀಡಲಾಗುತ್ತದೆ.

ಒಟ್ಟು 18 ದಿನಗಳ ಕಾಲ ನಡೆಯುವ ಈ ಟೂರ್ನಿಯಲ್ಲಿ ಅತ್ಯುತ್ತಮ ಬೆಳಕು ವ್ಯವಸ್ಥೆ, ಸಾಮಾಜಿಕ ಜಾಲತಾಣಗಳಲ್ಲಿ ನೇರ ಪ್ರಸಾರ ಹಾಗೂ ಥರ್ಡ್ ಅಂಪೈರ್ ವ್ಯವಸ್ಥೆ ಸಹ ಇರಲಿದೆ.

ಸುದ್ದಿಗೋಷ್ಠಿಯಲ್ಲಿ ಸಿದ್ಧಲಿಂಗೇಶ್ವರ ಪಾಟೀಲ, ಅಶೋಕ ಮಂದಾಲಿ, ಉಮರಫಾರೂಕ್ ಹುಬ್ಬಳ್ಳಿ, ಸರ್ಫರಾಜ್ ಶೇಖ್, ಅಹ್ಮದ ಖಾಜಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

error: Content is protected !!