ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ14 ಆರೋಪಿ ಪ್ರದೂಷ್ ಸಲ್ಲಿಸಿರುವ ಮಾಫಿ ಸಾಕ್ಷಿ ಅರ್ಜಿ ಇದೀಗ ವಿಚಾರಣೆಯ ಕೇಂದ್ರಬಿಂದುವಾಗಿದೆ. 59ನೇ ಸಿಸಿಹೆಚ್ ಕೋರ್ಟ್ನ ನ್ಯಾಯಾಧೀಶೆ ಸುಜಾತ ಎಂ. ಸಾಂಬ್ರಾಣಿ ಅವರ ಮುಂದೆ ಅರ್ಜಿ ವಿಚಾರಣೆ ಆರಂಭವಾಗಿದ್ದು, ಪ್ರದೂಷ್ ಪರ ವಕೀಲ ದಿವಾಕರ್ ಹಾಗೂ ದರ್ಶನ್ ಪರ ವಕೀಲ ಹಷ್ಮತ್ ಪಾಷಾ ನಡುವೆ ತೀವ್ರ ವಾದ-ಪ್ರತಿವಾದ ನಡೆದಿದೆ.
ವಿಡಿಯೋ ಕಾನ್ಫರೆನ್ಸ್ ಮೂಲಕ ಆರೋಪಿಗಳನ್ನು ಕೋರ್ಟ್ಗೆ ಹಾಜರುಪಡಿಸಲಾಗಿದ್ದು, ಪವಿತ್ರಾ ಗೌಡ, ದರ್ಶನ್, ಪ್ರದೂಷ್ ಸೇರಿದಂತೆ ಆರೋಪಿಗಳು ವಿಚಾರಣೆಯಲ್ಲಿ ಭಾಗಿಯಾಗಿದ್ದಾರೆ.
ಪ್ರದೂಷ್ ಪರ ವಕೀಲ ದಿವಾಕರ್ ಅವರು, ಪ್ರದೂಷ್ ಅಪ್ರೂವರ್ ಆಗಲು ಬಯಸಿದ್ದು, ಅವರ ಹೇಳಿಕೆಯನ್ನು ಕೋರ್ಟ್ ದಾಖಲಿಸಬೇಕು ಎಂದು ವಾದಿಸಿದ್ದಾರೆ. ಈ ಪ್ರಕರಣದಲ್ಲಿ ಕಿಡ್ನಾಪ್, ಕೊಲೆ ಮತ್ತು ಸಾಕ್ಷ್ಯ ನಾಶಕ್ಕೆ ಯತ್ನ ಎಂಬ ಮೂರು ಆಯಾಮಗಳಿವೆ. ಹೀಗಾಗಿ ಪ್ರದೂಷ್ ಅವರ ಅರ್ಜಿಯನ್ನು ವಿಳಂಬ ಮಾಡದೆ ಪರಿಗಣಿಸಿ, ಅವರ ಹೇಳಿಕೆ ದಾಖಲಿಸಲು ಅವಕಾಶ ನೀಡಬೇಕು ಎಂದು ಕೋರ್ಟ್ಗೆ ಮನವಿ ಮಾಡಿದ್ದಾರೆ.
ಅರ್ಜಿ ವಿಚಾರಣೆಯನ್ನು ವಿಳಂಬ ಮಾಡಿದರೆ ಪ್ರಕರಣದ ಮೇಲೆ ಪ್ರಭಾವ ಬೀರುವ ಸಾಧ್ಯತೆಗಳಿವೆ. ಆದ್ದರಿಂದ ಸಾಧ್ಯವಾದಷ್ಟು ಬೇಗ ಅರ್ಜಿ ಪರಿಗಣಿಸಿ ಹೇಳಿಕೆ ದಾಖಲಿಸುವುದು ಅಗತ್ಯ ಎಂದು ದಿವಾಕರ್ ವಾದಿಸಿದ್ದಾರೆ.
ಆದರೆ ದರ್ಶನ್ ಪರ ವಕೀಲ ಹಷ್ಮತ್ ಪಾಷಾ ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ‘ಎ14 ಇನ್ನೂ ಆರೋಪಿಯೇ ಹೊರತು ಸಾಕ್ಷಿಯಲ್ಲ. ಅವರು ಇನ್ನೂ ಸಾಕ್ಷಿಯಾಗಿಲ್ಲ. ಕೋರ್ಟ್ ಕೂಡ ಅವರ ಮಾಫಿ ಸಾಕ್ಷಿ ಅರ್ಜಿಯನ್ನು ಇನ್ನೂ ಪರಿಗಣಿಸಿಲ್ಲ’ ಎಂದು ವಾದಿಸಿದ್ದಾರೆ.
ಸೆಷನ್ಸ್ ಕೋರ್ಟ್ನ ಆದೇಶವನ್ನು ಹೈಕೋರ್ಟ್ನಲ್ಲಿ ಪ್ರಶ್ನಿಸಲು ಅವಕಾಶವಿದೆ. ಒಂದು ವೇಳೆ ಹೈಕೋರ್ಟ್ ಸೆಷನ್ಸ್ ಕೋರ್ಟ್ ಆದೇಶವನ್ನು ಎತ್ತಿಹಿಡಿದರೆ, ನಂತರ ಮುಂದಿನ ಪ್ರಕ್ರಿಯೆ ಮುಂದುವರಿಸಬಹುದು. ಹೀಗಿರುವಾಗ ತಕ್ಷಣವೇ ಪ್ರದೂಷ್ ಅವರ ಹೇಳಿಕೆ ದಾಖಲಿಸುವುದು ಸೂಕ್ತವಲ್ಲ ಎಂದು ಹಷ್ಮತ್ ಪಾಷಾ ಪ್ರತಿವಾದಿಸಿದ್ದಾರೆ.
ಇದಕ್ಕೆ ದಿವಾಕರ್ ತಿರುಗೇಟು ನೀಡಿದ್ದು, ‘ನಾನು ಪ್ರದೂಷ್ ಸಾಕ್ಷಿ ಎಂದು ಹೇಳುತ್ತಿಲ್ಲ. ಅವರು ಸಾಕ್ಷಿಯಾಗಲು ಮನವಿ ಮಾಡಿದ್ದಾರೆ. ಅದಕ್ಕಾಗಿಯೇ ಮಾಫಿ ಸಾಕ್ಷಿಯಾಗಲು ಅರ್ಜಿ ಸಲ್ಲಿಸಿದ್ದಾರೆ’ ಎಂದು ಸ್ಪಷ್ಟಪಡಿಸಿದ್ದಾರೆ.
ಪ್ರದೂಷ್ ಅವರ ಅರ್ಜಿಯನ್ನು ಪುರಸ್ಕರಿಸಿ ಹೇಳಿಕೆ ದಾಖಲಿಸಲು ಅವಕಾಶ ನೀಡಬೇಕು ಎಂದು ದಿವಾಕರ್ ಮತ್ತೆ ಮನವಿ ಮಾಡಿದ್ದಾರೆ. ಪ್ರದೂಷ್ ಅವರ ಹೇಳಿಕೆ ಸಾಕ್ಷಿಯಾಗುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ಪ್ರಾಸಿಕ್ಯೂಷನ್ ನಿರ್ಧರಿಸಲಿದೆ. ಅವರು ಸಾಕ್ಷಿಯಾಗದಿದ್ದರೆ ಆರೋಪಿಯಾಗಿಯೇ ಮುಂದುವರಿಯಲಿದ್ದಾರೆ ಎಂದು ವಾದಿಸಿದ್ದಾರೆ.
ಅಲ್ಲದೆ, ಪ್ರಾಸಿಕ್ಯೂಷನ್ ಈಗಾಗಲೇ ಮಾಫಿ ಸಾಕ್ಷಿಯಾಗಲು ಪ್ರದೂಷ್ಗೆ ಸಮ್ಮತಿ ನೀಡಿದೆ ಎಂಬುದನ್ನೂ ದಿವಾಕರ್ ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ. ಹೀಗಾಗಿ ಅರ್ಜಿ ವಿಚಾರಣೆಯನ್ನು ಮುಂದೂಡದೆ, ಮಾಫಿ ಸಾಕ್ಷಿ ಅರ್ಜಿಯನ್ನು ಪುರಸ್ಕರಿಸಿ ಹೇಳಿಕೆ ದಾಖಲಿಸಲು ಅವಕಾಶ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ವಿಚಾರಣೆಯ ನಡುವೆ ಪ್ರದೂಷ್ ಅವರ ಭದ್ರತೆಯ ಬಗ್ಗೆಯೂ ವಕೀಲ ದಿವಾಕರ್ ಕೋರ್ಟ್ ಮುಂದೆ ಮನವಿ ಮಾಡಿದ್ದಾರೆ. ಪ್ರದೂಷ್ ಅವರನ್ನು ಜೈಲಿನಲ್ಲಿ ಪ್ರತ್ಯೇಕವಾಗಿ ಇರಿಸಿ, ಸೂಕ್ತ ಭದ್ರತೆ ಒದಗಿಸಬೇಕು ಎಂದು ಮನವಿ ಮಾಡಲಾಗಿದೆ.
ಇದನ್ನು ಪರಿಗಣಿಸಿದ ನ್ಯಾಯಾಲಯ, ಪ್ರದೂಷ್ಗೆ ಸೂಕ್ತ ಭದ್ರತೆ ಒದಗಿಸುವಂತೆ ಜೈಲು ಅಧಿಕಾರಿಗಳಿಗೆ ಸೂಚನೆ ನೀಡಿದೆ. ಈ ಸಂಬಂಧ ಒಂದು ವಾರ ಕಾಲಾವಕಾಶ ನೀಡಿರುವ ಕೋರ್ಟ್, ಪ್ರದೂಷ್ ಅವರ ಸುರಕ್ಷತೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದೆ.
ಇದೇ ವೇಳೆ ಪ್ರಕರಣದ ಕುರಿತು ವರದಿ ಮಾಡುವ ಮಾಧ್ಯಮಗಳಿಗೂ ನ್ಯಾಯಾಲಯ ಖಡಕ್ ವಾರ್ನಿಂಗ್ ನೀಡಿದೆ. ಪ್ರಕರಣದ ಬಗ್ಗೆ ಸರಿಯಾದ ಮಾಹಿತಿಯನ್ನೇ ನೀಡಬೇಕು. ಇಲ್ಲಿ ಆಗಿರುವುದು ಒಂದು, ಅಲ್ಲಿ ಪ್ರಕಟವಾಗುವುದು ಮತ್ತೊಂದು ಆಗಬಾರದು ಎಂದು ನ್ಯಾಯಾಲಯ ಎಚ್ಚರಿಕೆ ನೀಡಿದೆ.
ಹೀಗಾಗಿ ಇದೀಗ ಕೋರ್ಟ್ನ ಮುಂದಿರುವ ಪ್ರಮುಖ ಪ್ರಶ್ನೆ ಪ್ರದೂಷ್ ಅವರ ಮಾಫಿ ಸಾಕ್ಷಿ ಅರ್ಜಿಯೇ ಆಗಿದೆ. ಎ14 ಆರೋಪಿಗೆ ಅಪ್ರೂವರ್ ಆಗುವ ಅವಕಾಶ ಸಿಗುತ್ತಾ? ಮಾಫಿ ಸಾಕ್ಷಿ ಅರ್ಜಿಗೆ ಕೋರ್ಟ್ ಒಪ್ಪಿಗೆ ನೀಡುತ್ತಾ? ಅಥವಾ ದರ್ಶನ್ ಪರ ವಕೀಲರ ಆಕ್ಷೇಪದ ಹಿನ್ನೆಲೆಯಲ್ಲಿ ಪ್ರಕ್ರಿಯೆ ಮತ್ತಷ್ಟು ವಿಳಂಬವಾಗುತ್ತಾ? ಎಂಬ ಕುತೂಹಲ ಮೂಡಿದೆ.