Home Blog

ಮೊದಲ ವಿವಾಹ ರದ್ದತಿ ತಡೆಯಾಜ್ಞೆ ಇರುವಾಗ 2ನೇ ಪತ್ನಿಗೆ ಜೀವನಾಂಶ ನೀಡಲಾಗದು; ಹೈಕೋರ್ಟ್

0

ಬೆಂಗಳೂರು: ಮೊದಲ ಪತ್ನಿಯೊಂದಿಗೆ ನಡೆದಿದ್ದ ವಿವಾಹ ವಿಚ್ಛೇದನಕ್ಕೆ ವಿಚಾರಣಾ ನ್ಯಾಯಾಲಯ ನೀಡಿದ್ದ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿರುವ ಸಂದರ್ಭದಲ್ಲಿ ನಡೆದ ಎರಡನೇ ವಿವಾಹವನ್ನು ಕಾನೂನುಬದ್ಧ ವಿವಾಹವೆಂದು ಪರಿಗಣಿಸಲು ಸಾಧ್ಯವಿಲ್ಲ. ಹೀಗಾಗಿ ಅಂತಹ ಎರಡನೇ ಪತ್ನಿಗೆ ಜೀವನಾಂಶ ಪಡೆಯುವ ಹಕ್ಕು ಇರುವುದಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಸ್ಪಷ್ಟಪಡಿಸಿದೆ.

ಎರಡನೇ ಪತ್ನಿಯಾಗಿ ಜೀವನಾಂಶ ನೀಡುವಂತೆ ಕೋರಿ ಮಹಿಳೆಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ಬೆಳಗಾವಿಯ ಕೌಟುಂಬಿಕ ನ್ಯಾಯಾಲಯ ವಜಾಗೊಳಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಮಹಿಳೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ಬಿ. ಗೀತಾ ಅವರಿದ್ದ ಧಾರವಾಡ ಪೀಠ, ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಎತ್ತಿಹಿಡಿದು ಅರ್ಜಿಯನ್ನು ವಜಾಗೊಳಿಸಿದೆ.

ಅರ್ಜಿದಾರ ಮಹಿಳೆ ಕನ್ನಡ ತತ್ವಶಾಸ್ತ್ರ ವಿಷಯದಲ್ಲಿ ಪಿಎಚ್‌ಡಿ ಪದವಿ ಪಡೆದಿದ್ದು, ಕಾಲೇಜಿನಲ್ಲಿ ಉಪನ್ಯಾಸಕಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಹೀಗಾಗಿ ಆಕೆ ಅನಕ್ಷರಸ್ಥೆಯಲ್ಲ ಎಂಬುದು ಸ್ಪಷ್ಟವಾಗುತ್ತದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ವಿವಾಹಕ್ಕೂ ಮುನ್ನ ಪತಿಯ ಮೊದಲ ವಿವಾಹಕ್ಕೆ ಸಂಬಂಧಿಸಿದ ವಿಚ್ಛೇದನ ಆದೇಶವನ್ನು ಪರಿಶೀಲಿಸಿಯೇ ಮದುವೆಯಾಗಿದ್ದಾಗಿ ಮಹಿಳೆ ಹೇಳಿಕೊಂಡಿದ್ದರು. ಆದರೆ, ಮೊದಲ ಪತ್ನಿಯ ವಿಚ್ಛೇದನ ಆದೇಶದ ವಿರುದ್ಧ ಹೈಕೋರ್ಟ್‌ನಲ್ಲಿ ಮೇಲ್ಮನವಿ ಬಾಕಿ ಇತ್ತು ಮತ್ತು ಆ ಆದೇಶಕ್ಕೆ ತಡೆಯಾಜ್ಞೆ ಜಾರಿಯಲ್ಲಿತ್ತು ಎಂಬ ವಿಚಾರವನ್ನು ಅರ್ಜಿದಾರರು ಉಲ್ಲೇಖಿಸಿರಲಿಲ್ಲ.

ಹೀಗಾಗಿ ಮೊದಲ ವಿವಾಹದ ವಿಚ್ಛೇದನಕ್ಕೆ ತಡೆಯಾಜ್ಞೆ ಇತ್ತು ಎಂಬ ವಿಷಯ ಅರ್ಜಿದಾರ ಮಹಿಳೆಗೆ ತಿಳಿದಿರಲಿಲ್ಲ ಎಂದು ಹೇಳಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ತಿಳಿಸಿದೆ.

ಸುಪ್ರೀಂಕೋರ್ಟ್‌ನ ಹಿಂದಿನ ತೀರ್ಪುಗಳನ್ನು ಉಲ್ಲೇಖಿಸಿದ ಹೈಕೋರ್ಟ್, ಮೊದಲ ವಿವಾಹ ಜಾರಿಯಲ್ಲಿರುವ ವಿಷಯವನ್ನು ಮರೆಮಾಚಿ ವಂಚನೆಯಿಂದ ಎರಡನೇ ಮದುವೆಯಾಗಿದ್ದ ಸಂದರ್ಭದಲ್ಲಿ ಮಾತ್ರ ಕೆಲವು ನಿರ್ದಿಷ್ಟ ಪರಿಸ್ಥಿತಿಗಳಲ್ಲಿ ಎರಡನೇ ಪತ್ನಿಗೆ ಜೀವನಾಂಶದ ಹಕ್ಕು ದೊರೆಯಬಹುದು ಎಂದು ಹೇಳಿದೆ.

ಆದರೆ, ಈ ಪ್ರಕರಣದಲ್ಲಿ ಮೊದಲ ಮದುವೆ ಜಾರಿಯಲ್ಲಿರುವ ವಿಚಾರ ಅರ್ಜಿದಾರ ಮಹಿಳೆಗೆ ತಿಳಿದಿತ್ತು ಎಂದು ಪೀಠ ಹೇಳಿದೆ. ಜೊತೆಗೆ, ಹಿಂದೂ ಸಂಪ್ರದಾಯದಂತೆ ವಿವಾಹ ನಡೆದಿತ್ತು ಎಂದು ಮಹಿಳೆ ಹೇಳಿಕೊಂಡಿದ್ದರೂ, ಸಪ್ತಪದಿ ಹಾಗೂ ಪವಿತ್ರ ಅಗ್ನಿಸಾಕ್ಷಿಯಂತಹ ಅಗತ್ಯ ವಿಧಿವಿಧಾನಗಳು ನಡೆದಿಲ್ಲ ಎಂಬುದನ್ನು ಸ್ವತಃ ಒಪ್ಪಿಕೊಂಡಿದ್ದಾರೆ ಎಂದು ನ್ಯಾಯಾಲಯ ಗಮನಿಸಿದೆ.

ವಿವಾಹದ ವೇಳೆ ಮೊಬೈಲ್‌ನಲ್ಲಿ ಕೆಲವು ಛಾಯಾಚಿತ್ರಗಳನ್ನು ತೆಗೆದುಕೊಳ್ಳಲಾಗಿತ್ತು. ಆದರೆ, ಆ ಛಾಯಾಚಿತ್ರಗಳನ್ನು ತೆಗೆದವರು ಯಾರು ಎಂಬುದನ್ನು ಅರ್ಜಿದಾರರು ವಿವರಿಸಿಲ್ಲ ಎಂದು ಪೀಠ ಹೇಳಿದೆ.

ಪ್ರಕರಣದ ಹಿನ್ನೆಲೆ

ಪ್ರಕರಣದ ಪ್ರತಿವಾದಿಯಾಗಿರುವ ಪತಿ ಈ ಹಿಂದೆ ಮತ್ತೊಬ್ಬ ಮಹಿಳೆಯನ್ನು ವಿವಾಹವಾಗಿದ್ದರು. ಇಬ್ಬರ ನಡುವೆ ಕೌಟುಂಬಿಕ ಕಲಹ ಉಂಟಾದ ಹಿನ್ನೆಲೆಯಲ್ಲಿ ವಿಚ್ಛೇದನ ಕೋರಿ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಕೌಟುಂಬಿಕ ನ್ಯಾಯಾಲಯ ವಿಚ್ಛೇದನ ಮಂಜೂರು ಮಾಡಿತ್ತು.

ಈ ನಡುವೆ ಪತಿ ಮತ್ತೊಂದು ವಿವಾಹಕ್ಕಾಗಿ ಹುಡುಗಿಯನ್ನು ಹುಡುಕುತ್ತಿರುವ ವಿಚಾರ ಅರ್ಜಿದಾರ ಮಹಿಳೆಗೆ ತಿಳಿದಿತ್ತು. ಆಗ ಪತಿ ತಾನು ಈಗಾಗಲೇ ವಿವಾಹವಾಗಿದ್ದು, ಕೌಟುಂಬಿಕ ನ್ಯಾಯಾಲಯದಿಂದ ವಿಚ್ಛೇದನ ಪಡೆದಿರುವುದಾಗಿ ತಿಳಿಸಿ, ವಿಚ್ಛೇದನ ಆದೇಶದ ಪ್ರತಿಯನ್ನೂ ನೀಡಿದ್ದರು. ಅದನ್ನು ಪರಿಶೀಲಿಸಿದ ಬಳಿಕ ಮಹಿಳೆಯ ಕುಟುಂಬಸ್ಥರು ಎರಡನೇ ವಿವಾಹಕ್ಕೆ ಒಪ್ಪಿಗೆ ನೀಡಿದ್ದರು.

ನಂತರ ಮಹಿಳೆ ಮತ್ತು ಪತಿ ಹಿಂದೂ ಸಂಪ್ರದಾಯದಂತೆ ವಿವಾಹವಾಗಿದ್ದರು. ವಿವಾಹದ ಬಳಿಕ ಸುಮಾರು ಎಂಟು ದಿನಗಳ ಕಾಲ ಪತಿಯ ಮನೆಯಲ್ಲಿ ಇದ್ದ ವೇಳೆ ತನಗೆ ಹಿಂಸೆ ನೀಡಲಾಗುತ್ತಿತ್ತು ಎಂದು ಮಹಿಳೆ ಆರೋಪಿಸಿದ್ದರು. ಮನೆಯಿಂದ ಹೊರಬಂದ ಬಳಿಕ ಜೀವನ ನಿರ್ವಹಣೆಗಾಗಿ ಪತಿಯಿಂದ ಜೀವನಾಂಶ ಕೊಡಿಸುವಂತೆ ಕೌಟುಂಬಿಕ ನ್ಯಾಯಾಲಯದ ಮೊರೆ ಹೋಗಿದ್ದರು.

ಇದಕ್ಕೆ ಆಕ್ಷೇಪಣೆ ಸಲ್ಲಿಸಿದ್ದ ಪತಿ, ಮೊದಲ ವಿವಾಹದ ವಿಚ್ಛೇದನ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದ್ದು, ಕೌಟುಂಬಿಕ ನ್ಯಾಯಾಲಯದ ವಿಚ್ಛೇದನ ಆದೇಶಕ್ಕೆ ತಡೆಯಾಜ್ಞೆ ನೀಡಲಾಗಿದೆ ಎಂದು ತಿಳಿಸಿದ್ದರು. ಜೊತೆಗೆ, ತಾವು ಅನಾರೋಗ್ಯದಿಂದ ಬಳಲುತ್ತಿದ್ದು ಜೀವನಾಂಶ ನೀಡಲು ಸಾಧ್ಯವಿಲ್ಲ ಎಂದು ವಾದಿಸಿದ್ದರು.

ಸಾಕ್ಷ್ಯಾಧಾರಗಳು ಹಾಗೂ ಎರಡೂ ಕಡೆಯ ವಾದಗಳನ್ನು ಆಲಿಸಿದ ಕೌಟುಂಬಿಕ ನ್ಯಾಯಾಲಯ, ಮಹಿಳೆ ಸಲ್ಲಿಸಿದ್ದ ಜೀವನಾಂಶದ ಅರ್ಜಿಯನ್ನು ವಜಾಗೊಳಿಸಿತ್ತು. ಇದೀಗ ಹೈಕೋರ್ಟ್ ಕೂಡ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಎತ್ತಿಹಿಡಿದಿದ್ದು, ಮೊದಲ ವಿವಾಹದ ವಿಚ್ಛೇದನಕ್ಕೆ ತಡೆಯಾಜ್ಞೆ ಜಾರಿಯಲ್ಲಿದ್ದ ಸಂದರ್ಭದಲ್ಲಿ ನಡೆದ ಎರಡನೇ ವಿವಾಹದ ಆಧಾರದ ಮೇಲೆ ಅರ್ಜಿದಾರೆಯನ್ನು ಕಾನೂನುಬದ್ಧ ಪತ್ನಿ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.

KPSC ಪಶುವೈದ್ಯರ ನೇಮಕಾತಿ ಬೆನ್ನಲ್ಲೇ KASನಲ್ಲೂ ಅಕ್ರಮ ಶಂಕೆ: ಅಭ್ಯರ್ಥಿ ಮಮಿತಾ ಮನೆ ಮೇಲೆ ಸಿಐಡಿ ದಿಢೀರ್ ದಾಳಿ!

0

ಕಲಬುರಗಿ: ಕರ್ನಾಟಕ ಲೋಕಸೇವಾ ಆಯೋಗದ (KPSC) ಪಶುವೈದ್ಯಕೀಯ ಹುದ್ದೆಗಳ ಭಾರಿ ನೇಮಕಾತಿ ಹಗರಣದ ತನಿಖೆ ಕಾವೇರಿರುವ ಬೆನ್ನಲ್ಲೇ, ಇದೀಗ ಪ್ರತಿಷ್ಠಿತ ಕೆಎಎಸ್ (KAS) ಪರೀಕ್ಷೆಯಲ್ಲೂ ಅಕ್ರಮ ನಡೆದಿರುವ ಗಂಭೀರ ಶಂಕೆ ವ್ಯಕ್ತವಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ (CID) ಅಧಿಕಾರಿಗಳು ಕೆಎಎಸ್ ಅಭ್ಯರ್ಥಿ ಮಮಿತಾ ಅವರ ಕಲಬುರಗಿಯ ನಿವಾಸದ ಮೇಲೆ ದಿಢೀರ್ ದಾಳಿ ನಡೆಸಿ ಪ್ರಮುಖ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.

ಕೆಪಿಎಸ್‌ಸಿ ಸದಸ್ಯೆ ಶಾಂತಾ ಹೊಸಮನಿ ಜೊತೆ ಅಕ್ರಮ ಲಿಂಕ್: 2023-24ನೇ ಸಾಲಿನ ಕೆಎಎಸ್ ಪರೀಕ್ಷೆ ಬರೆದು, ಸಂದರ್ಶನವನ್ನೂ ಮುಗಿಸಿ ಅಂತಿಮ ಫಲಿತಾಂಶಕ್ಕಾಗಿ ಕಾಯುತ್ತಿದ್ದ ಅಭ್ಯರ್ಥಿ ಮಮಿತಾ, ಕೆಪಿಎಸ್‌ಸಿ ಸದಸ್ಯೆ ಶಾಂತಾ ಹೊಸಮನಿ ಅವರ ಮೂಲಕ ಅಕ್ರಮ ಮಾರ್ಗದಲ್ಲಿ ಹುದ್ದೆ ಗಿಟ್ಟಿಸಿಕೊಳ್ಳಲು ಯತ್ನಿಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿತ್ತು.

ಈ ಕುರಿತು ಬೆಂಗಳೂರಿನ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಕೆಪಿಎಸ್‌ಸಿ ಸದಸ್ಯೆ ಶಾಂತಾ ಹೊಸಮನಿ ಹಾಗೂ ಅಭ್ಯರ್ಥಿ ಮಮಿತಾ ವಿರುದ್ಧ ಪ್ರಕರಣ ದಾಖಲಾಗಿತ್ತು. ಇದರ ಆಧಾರದ ಮೇಲೆ ತನಿಖೆ ಕೈಗೆತ್ತಿಕೊಂಡಿರುವ ಸಿಐಡಿ ತಂಡವು, ಕಲಬುರಗಿ ನಗರದ ನ್ಯೂ ಓಝಾ ಲೇಔಟ್‌ನಲ್ಲಿರುವ ಮಮಿತಾ ಅವರ ಮನೆ ಮೇಲೆ ದಾಳಿ ನಡೆಸಿದೆ.

ಲ್ಯಾಪ್ಟಾಪ್ ಹಾಗೂ ಪ್ರಮುಖ ದಾಖಲೆಗಳು ಜಫ್ತಿ: ಶೋಧ ಕಾರ್ಯಾಚರಣೆಯ ವೇಳೆ ಕೆಎಎಸ್ ಅಕ್ರಮಕ್ಕೆ ಸಂಬಂಧಿಸಿದ ಹಲವು ಪ್ರಮುಖ ದಾಖಲೆಗಳು ಹಾಗೂ ಲ್ಯಾಪ್ಟಾಪ್ ಒಂದನ್ನು ಸಿಐಡಿ ಅಧಿಕಾರಿಗಳು ಜಫ್ತಿ ಮಾಡಿದ್ದಾರೆ. ಲ್ಯಾಪ್ಟಾಪ್‌ನಲ್ಲಿರುವ ಡಿಜಿಟಲ್ ಡೇಟಾವನ್ನು ರಿಟ್ರೀವ್ (Retrieve) ಮಾಡಿ ಪರಿಶೀಲಿಸಲು ತಜ್ಞರ ನೆರವು ಪಡೆಯಲಾಗುತ್ತಿದೆ.

ಮಮಿತಾ ಅವರು ಪ್ರಸ್ತುತ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿಯಾಗಿರುವ ತಮ್ಮ ಸಹೋದರಿ ವಿಜಯಲಕ್ಷ್ಮಿ ಕೋಬಾಳಕರ್ ಅವರೊಂದಿಗೆ ಕಲಬುರಗಿಯಲ್ಲಿ ವಾಸವಿದ್ದಾರೆ. ಸಿಐಡಿ ದಾಳಿ ನಡೆಸಿದ ಸಂದರ್ಭದಲ್ಲಿ ಮಮಿತಾ ಮನೆಯಲ್ಲಿ ಇರಲಿಲ್ಲ, ಸಹೋದರಿ ವಿಜಯಲಕ್ಷ್ಮಿ ಮಾತ್ರ ಹಾಜರಿದ್ದರು ಎಂದು ಮೂಲಗಳು ಖಚಿತಪಡಿಸಿವೆ.

ಇಡಿ ದಾಳಿ ಬೆನ್ನಲ್ಲೇ ಸಿಐಡಿ ತನಿಖೆ ತೀವ್ರ: ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಗೂ ಅಕ್ರಮ ಹಣ ವರ್ಗಾವಣೆ (Money Laundering) ನಡೆದಿದೆಯೇ ಎಂಬ ಶಂಕೆಯ ಹಿನ್ನೆಲೆಯಲ್ಲಿ ಆಗಸ್ಟ್ 18ರಂದು ಜಾರಿ ನಿರ್ದೇಶನಾಲಯದ (ED) ಅಧಿಕಾರಿಗಳು ಕೂಡ ಇದೇ ನಿವಾಸದ ಮೇಲೆ ದಾಳಿ ನಡೆಸಿ ಶೋಧ ಕಾರ್ಯ ನಡೆಸಿದ್ದರು. ಇದೀಗ ಸಿಐಡಿ ಅಧಿಕಾರಿಗಳು ಕೂಡ ದಾಳಿ ನಡೆಸಿ ತನಿಖೆಯನ್ನು ಮತ್ತಷ್ಟು ತೀವ್ರಗೊಳಿಸಿದ್ದು, ಕೆಪಿಎಸ್‌ಸಿ ಅಕ್ರಮದ ಜಾಲ ಮತ್ತಷ್ಟು ಬಯಲಾಗುವ ಸಾಧ್ಯತೆಯಿದೆ.

KPSC Scamನಲ್ಲಿ ಮತ್ತೊಂದು ಬಿಗ್ ಟ್ವಿಸ್ಟ್; ಗ್ಯಾನೇಂದ್ರ ಅಕ್ರಮದ ಹಣದಲ್ಲಿ ಗರ್ಲ್ʼಫ್ರೆಂಡ್ʼಗೆ ಚಿನ್ನ, ವಿಲ್ಲಾ ಖರೀದಿ?

0

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ (KPSC) ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ಸಿಐಡಿ (CID) ತನಿಖೆ ತೀವ್ರಗೊಂಡಿದ್ದು, ತನಿಖೆ ಮುಂದುವರಿದಂತೆ ಆಘಾತಕಾರಿ ಹಾಗೂ ಸ್ಫೋಟಕ ವಿವರಗಳು ಬಯಲಾಗುತ್ತಿವೆ. ಹಗರಣದ ಪ್ರಮುಖ ಆರೋಪಿಯಾಗಿರುವ ಐಎಎಸ್ ಅಧಿಕಾರಿ ಗ್ಯಾನೇಂದ್ರ ಕುಮಾರ್, ಅಭ್ಯರ್ಥಿಗಳಿಂದ ಅಕ್ರಮವಾಗಿ ವಸೂಲಿ ಮಾಡಿದ ಕೋಟ್ಯಂತರ ರೂಪಾಯಿ ಹಣದಲ್ಲಿ ಐಷಾರಾಮಿ ಜೀವನ ನಡೆಸಿದ್ದು, ಮೋಜು-ಮಸ್ತಿಗೆ ಬಳಸಿಕೊಂಡಿರುವುದು ಸಿಐಡಿ ತನಿಖೆಯಲ್ಲಿ ದೃಢಪಟ್ಟಿದೆ.

ಗೆಳತಿಗೆ 26 ಲಕ್ಷ ರೂ. ಮೌಲ್ಯದ ಚಿನ್ನದ ಆಭರಣ ಗಿಫ್ಟ್: ಬಂಧಿತ ಐಎಎಸ್ ಅಧಿಕಾರಿ ಗ್ಯಾನೇಂದ್ರ ಕುಮಾರ್, ತಮ್ಮ ಅಯೋಧ್ಯೆ ಮೂಲದ ಗರ್ಲ್‌ಫ್ರೆಂಡ್‌ಗೆ ಭಾರಿ ಮೌಲ್ಯದ ಆಭರಣಗಳನ್ನು ಉಡುಗೊರೆಯಾಗಿ ನೀಡಿರುವುದು ಪತ್ತೆಯಾಗಿದೆ. ಬೆಂಗಳೂರಿನ ಡಿಕನ್ಸನ್ ರಸ್ತೆಯಲ್ಲಿರುವ ಪ್ರಸಿದ್ಧ ಜ್ಯುವೆಲ್ಲರಿ ಶಾಪ್‌ಗೆ ಗೆಳತಿಯನ್ನು ಕರೆದುಕೊಂಡು ಹೋಗಿದ್ದ ಗ್ಯಾನೇಂದ್ರ, ಅಲ್ಲಿ ಬರೋಬ್ಬರಿ 26 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಖರೀದಿಸಿ ನೀಡಿದ್ದಾರೆ.

ಬೀದರ್‌ನ ಲಕ್ಷ್ಮಿ ಸೌಹಾರ್ದ ಕೋ-ಆಪರೇಟಿವ್ ಬ್ಯಾಂಕ್ ಖಾತೆಯಲ್ಲಿದ್ದ ಬಸವರಾಜ್ ಎಂಬುವವರ ಅಕೌಂಟ್‌ನಿಂದ ಈ ಆಭರಣ ಖರೀದಿಗೆ ಬಿಲ್ ಪಾವತಿಸಲಾಗಿತ್ತು. ಸದ್ಯ ಈ ಬಿಲ್ ಅನ್ನು ಸಿಐಡಿ ಜಫ್ತಿ ಮಾಡಿದ್ದು, ಆಭರಣ ಖರೀದಿಸುತ್ತಿದ್ದ ವೇಳೆ ತೆಗೆದ ಫೋಟೋ ಸಾಕ್ಷ್ಯಗಳೂ ಲಭ್ಯವಾಗಿವೆ. ಅಷ್ಟೇ ಅಲ್ಲದೆ, ಉಡುಗೊರೆ ಪಡೆದ ಆತನ ಗೆಳತಿಗೆ ವಿಚಾರಣೆಗೆ ಹಾಜರಾಗುವಂತೆ ಸಿಐಡಿ ನೋಟಿಸ್ ಜಾರಿ ಮಾಡಿದೆ.

ವಿಮಾನ ನಿಲ್ದಾಣ ಸಮೀಪ ಐಷಾರಾಮಿ ವಿಲ್ಲಾ ಖರೀದಿ: ಅಕ್ರಮ ಹಣದ ಮೂಲಕ ಗ್ಯಾನೇಂದ್ರ ಕುಮಾರ್ ತಮ್ಮ ಸಹೋದರ ಕಮಲಾಪತಿ ಹೆಸರಿನಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ಐಷಾರಾಮಿ ವಿಲ್ಲಾ ಒಂದನ್ನು ಖರೀದಿಸಿದ್ದಾರೆ ಎಂಬುದು ತನಿಖೆ ವೇಳೆ ಬೆಳಕಿಗೆ ಬಂದಿದೆ. ಈ ವಿಲ್ಲಾವನ್ನು ಅಕ್ರಮ ಹಣದಿಂದಲೇ ಖರೀದಿಸಲಾಗಿದೆಯೇ ಎಂಬ ಆಯಾಮದಲ್ಲಿ ಸಿಐಡಿ ಅಧಿಕಾರಿಗಳು ತೀವ್ರ ತನಿಖೆ ಮುಂದುವರಿಸಿದ್ದಾರೆ.

ಪರಪ್ಪನ ಅಗ್ರಹಾರ ಜೈಲಿನಲ್ಲಿ ಇಡಿ ಡ್ರಿಲ್ ಶುರು: 2024ರ ಫೆಬ್ರವರಿಯಿಂದ 2026ರ ಮಾರ್ಚ್‌ವರೆಗೆ ಕೆಪಿಎಸ್‌ಸಿ ಪರೀಕ್ಷಾ ನಿಯಂತ್ರಕರಾಗಿ (Exam Controller) ಕರ್ತವ್ಯ ನಿರ್ವಹಿಸಿದ್ದ ಗ್ಯಾನೇಂದ್ರ ಕುಮಾರ್, ನೇಮಕಾತಿ ಪ್ರಕ್ರಿಯೆಯಲ್ಲಿ ವ್ಯಾಪಕ ಅಕ್ರಮ ಎಸಗಿರುವ ಆರೋಪ ಎದುರಿಸುತ್ತಿದ್ದಾರೆ. ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಆರೋಪಿಗಳನ್ನು ವಿಚಾರಣೆ ನಡೆಸಲು ನ್ಯಾಯಾಲಯ ಅನುಮತಿ ನೀಡಿದೆ.

ಹೀಗಾಗಿ ಅಕ್ರಮ ಹಣ ವರ್ಗಾವಣೆ (Money Laundering) ಶಂಕೆಯಡಿಯಲ್ಲಿ ಜಾರಿ ನಿರ್ದೇಶನಾಲಯದ (ED) ಅಧಿಕಾರಿಗಳು, ಐಎಎಸ್ ಅಧಿಕಾರಿ ಗ್ಯಾನೇಂದ್ರ ಕುಮಾರ್ ಹಾಗೂ ಬಸವರಾಜ್ ಕನ್ನಾಳೆಗೆ ಎರಡು ದಿನಗಳ ಕಾಲ ಜೈಲಿನಲ್ಲೇ ಸುದೀರ್ಘ ವಿಚಾರಣೆ ನಡೆಸುತ್ತಿದ್ದಾರೆ. ಇಡಿ ಅಧಿಕಾರಿಗಳು ಈಗಾಗಲೇ ಗ್ಯಾನೇಂದ್ರ ಅವರ ಮನೆ ಸೇರಿದಂತೆ ಸುಮಾರು 21 ಸ್ಥಳಗಳಲ್ಲಿ ಶೋಧ ಕಾರ್ಯ ಪೂರ್ಣಗೊಳಿಸಿದ್ದಾರೆ.

ಅಣ್ವಸ್ತ್ರ ಸಿಡಿತಲೆಗಳ ಸಂಖ್ಯೆಯಲ್ಲಿ ಪಾಕಿಸ್ತಾನವನ್ನು ಹಿಂದಿಕ್ಕಿದ ಭಾರತ!

0

ನವದೆಹಲಿ: ಅಣ್ವಸ್ತ್ರ ಸಿಡಿತಲೆಗಳ ಸಂಖ್ಯೆಯಲ್ಲಿ ಭಾರತವು ಪಾಕಿಸ್ತಾನವನ್ನು ಹಿಂದಿಕ್ಕಿದೆ ಎಂದು ಅಮೆರಿಕ ಮೂಲದ ಫೆಡರೇಶನ್ ಆಫ್ ಅಮೆರಿಕನ್ ಸೈಂಟಿಸ್ಟ್ಸ್ (FAS) ನಡೆಸಿದ ಹೊಸ ಅಧ್ಯಯನ ತಿಳಿಸಿದೆ.

FAS ಪ್ರಕಟಿಸಿರುವ ‘ಭಾರತದ ಪರಮಾಣು ಶಸ್ತ್ರಾಸ್ತ್ರಗಳು-2026’ ಎಂಬ ಲೇಖನದ ಪ್ರಕಾರ, ಭಾರತವು ಅಂದಾಜು 190 ಪರಮಾಣು ಸಿಡಿತಲೆಗಳನ್ನು ಹೊಂದಿದೆ. ಇದು ಪಾಕಿಸ್ತಾನದ ಬಳಿಯಿರುವ ಅಂದಾಜು 170 ಸಿಡಿತಲೆಗಳಿಗಿಂತ ಸುಮಾರು 20ರಷ್ಟು ಹೆಚ್ಚಾಗಿದೆ.

FAS ಪರಮಾಣು ಮಾಹಿತಿ ಯೋಜನೆಯ ನಿರ್ದೇಶಕ ಹ್ಯಾನ್ಸ್ ಕ್ರಿಸ್ಟೆನ್ಸೆನ್ ಅವರ ಪ್ರಕಾರ, ಭಾರತವು ಕಾರ್ಯಾಚರಣೆಗೆ ಸಿದ್ಧವಿರುವ ಉಡಾವಣಾ ವ್ಯವಸ್ಥೆಗಳಿಗಾಗಿ 160ಕ್ಕೂ ಹೆಚ್ಚು ಸಿಡಿತಲೆಗಳನ್ನು ಹೊಂದಿದೆ. ಇದರ ಜೊತೆಗೆ ಉತ್ಪಾದನೆಯ ಹಂತದಲ್ಲಿರುವ ಹೊಸ ಕ್ಷಿಪಣಿ ವ್ಯವಸ್ಥೆಗಳಿಗೆ ಸಂಬಂಧಿಸಿದಂತೆ ಹೆಚ್ಚುವರಿ ಸಿಡಿತಲೆಗಳನ್ನೂ ಭಾರತ ಹೊಂದಿದೆ ಎಂದು ವರದಿ ತಿಳಿಸಿದೆ.

ಹೊಸ ತಲೆಮಾರಿನ ಪರಮಾಣು ಸಾಮರ್ಥ್ಯದ ಕ್ಷಿಪಣಿ ವ್ಯವಸ್ಥೆಗಳನ್ನು ಭಾರತ ಅಭಿವೃದ್ಧಿಪಡಿಸುತ್ತಿದ್ದು, ತನ್ನ ಪರಮಾಣು ಶಸ್ತ್ರಾಸ್ತ್ರಗಳ ದಾಸ್ತಾನನ್ನು ಹೆಚ್ಚಿಸಿಕೊಳ್ಳುತ್ತಿದೆ ಎಂದು ಅಧ್ಯಯನದಲ್ಲಿ ಉಲ್ಲೇಖಿಸಲಾಗಿದೆ.

ವರದಿ ಪ್ರಕಾರ, 2023ರ ವೇಳೆಯಲ್ಲೇ ಭಾರತವು ಅಣ್ವಸ್ತ್ರ ಸಿಡಿತಲೆಗಳ ಸಂಖ್ಯೆಯಲ್ಲಿ ಪಾಕಿಸ್ತಾನವನ್ನು ಹಿಂದಿಕ್ಕಿತ್ತು. ಸದ್ಯ ಪಾಕಿಸ್ತಾನದ ಬಳಿ ಸುಮಾರು 170 ಪರಮಾಣು ಸಿಡಿತಲೆಗಳಿವೆ ಎಂದು ಅಂದಾಜಿಸಲಾಗಿದೆ.

ಯಾವ ದೇಶದಲ್ಲಿ ಎಷ್ಟು ಅಣ್ವಸ್ತ್ರ?

  • ರಷ್ಯಾ: 5,420
  • ಅಮೆರಿಕಾ: 5,042
  • ಚೀನಾ: 620
  • ಫ್ರಾನ್ಸ್: 370
  • ಯುನೈಟೆಡ್ ಕಿಂಗ್‌ಡಮ್: 225
  • ಭಾರತ: 190
  • ಪಾಕಿಸ್ತಾನ: 170
  • ಇಸ್ರೇಲ್: 90
  • ಉತ್ತರ ಕೊರಿಯಾ: 60

ಈ ಅಂಕಿಅಂಶಗಳು FAS ಅಧ್ಯಯನದ ಅಂದಾಜುಗಳಾಗಿದ್ದು, ಪರಮಾಣು ಶಸ್ತ್ರಾಸ್ತ್ರಗಳ ನಿಖರ ದಾಸ್ತಾನುಗಳ ಬಗ್ಗೆ ದೇಶಗಳು ಅಧಿಕೃತವಾಗಿ ಸಂಪೂರ್ಣ ಮಾಹಿತಿಯನ್ನು ಬಹಿರಂಗಪಡಿಸುವುದಿಲ್ಲ.

ಮಳೆಗಾಲದಲ್ಲೇ ಬೇಸಿಗೆಯ ಬಿಸಿಲು: ಕರ್ನಾಟಕದಲ್ಲಿ 2-3 ಡಿಗ್ರಿ ಏರಿದ ತಾಪಮಾನ – IMD ಹೇಳಿದ್ದೇನು..?

0

ಬೆಂಗಳೂರು: ಕರ್ನಾಟಕದಲ್ಲಿ ಹವಾಮಾನ ವೈಪರೀತ್ಯದ ಪರಿಣಾಮ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಮಳೆಗಾಲದಲ್ಲೇ ಹಲವು ಜಿಲ್ಲೆಗಳಲ್ಲಿ ಬೇಸಿಗೆಯ ವಾತಾವರಣ ನಿರ್ಮಾಣವಾಗಿದೆ. ‘ಸೂಪರ್ ಎಲ್ ನಿನೊ’ ಪರಿಣಾಮ ರಾಜ್ಯದ ತಾಪಮಾನ ಸಾಮಾನ್ಯಕ್ಕಿಂತ 2ರಿಂದ 3 ಡಿಗ್ರಿ ಸೆಲ್ಸಿಯಸ್‌ನಷ್ಟು ಏರಿಕೆಯಾಗಿದೆ.

ವಿಶೇಷವಾಗಿ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ 34ರಿಂದ 37 ಡಿಗ್ರಿ ಸೆಲ್ಸಿಯಸ್‌ವರೆಗೆ ದಾಖಲಾಗಿದೆ. ಕೊಪ್ಪಳದಲ್ಲಿ ಗರಿಷ್ಠ 37 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದರೆ, ಕಲಬುರಗಿ, ಬಳ್ಳಾರಿ ಮತ್ತು ರಾಯಚೂರಿನಲ್ಲಿ 34 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.

ಇನ್ನು ಕಾರವಾರ, ಬೀದರ್ ಮತ್ತು ಮೈಸೂರಿನಲ್ಲಿ 33 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ರಾಜಧಾನಿ ಬೆಂಗಳೂರಿನಲ್ಲೂ ಉಷ್ಣಾಂಶ ಏರಿಕೆಯಾಗಿದ್ದು, ನಗರದಲ್ಲಿ 30.9 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಇದು ಸಾಮಾನ್ಯ ತಾಪಮಾನಕ್ಕಿಂತ ಸುಮಾರು 2 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಿದೆ.

ಹವಾಮಾನದಲ್ಲಿನ ಈ ಬದಲಾವಣೆ ಕೇವಲ ಬಿಸಿಲಿನ ತೀವ್ರತೆಯನ್ನು ಹೆಚ್ಚಿಸುವುದಷ್ಟೇ ಅಲ್ಲದೆ, ಆರೋಗ್ಯದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ನಿರ್ಜಲೀಕರಣ, ಹೀಟ್‌ಸ್ಟ್ರೋಕ್ ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳು ಎದುರಾಗುವ ಆತಂಕವಿದೆ. ಇದರ ಜೊತೆಗೆ ಸಾಂಕ್ರಾಮಿಕ ರೋಗಗಳ ಹರಡುವಿಕೆಯ ಮೇಲೂ ಆರೋಗ್ಯ ಇಲಾಖೆ ನಿಗಾ ವಹಿಸಿದೆ.

ಈ ಹಿನ್ನೆಲೆಯಲ್ಲಿ ರಾಜ್ಯ ಆರೋಗ್ಯ ಇಲಾಖೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ. ಆಸ್ಪತ್ರೆಗಳಲ್ಲಿ ಅಗತ್ಯ ಸಿದ್ಧತೆ ಮಾಡಿಕೊಳ್ಳುವುದು, ಪ್ರಯೋಗಾಲಯಗಳಲ್ಲಿ ತಪಾಸಣೆಗೆ ವ್ಯವಸ್ಥೆ ಕಲ್ಪಿಸುವುದು ಹಾಗೂ ಸಾರ್ವಜನಿಕರಲ್ಲಿ ಆರೋಗ್ಯ ಜಾಗೃತಿ ಮೂಡಿಸುವ ಕಾರ್ಯಕ್ಕೆ ಒತ್ತು ನೀಡಲಾಗಿದೆ. ವಿಶೇಷವಾಗಿ ಡೆಂಗ್ಯೂ ಸೇರಿದಂತೆ ಸಾಂಕ್ರಾಮಿಕ ರೋಗಗಳ ಬಗ್ಗೆ ಸಾರ್ವಜನಿಕರು ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.

ದೇಹದಲ್ಲಿ ನೀರಿನ ಅಂಶ ಕಡಿಮೆಯಾಗದಂತೆ ಸಾಕಷ್ಟು ನೀರು ಸೇವಿಸುವುದು, ಬಿಸಿಲಿನಲ್ಲಿ ಅನಗತ್ಯವಾಗಿ ಓಡಾಡುವುದನ್ನು ತಪ್ಪಿಸುವುದು ಹಾಗೂ ಆರೋಗ್ಯದಲ್ಲಿ ಯಾವುದೇ ಅಸಹಜ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಅಗತ್ಯವಾಗಿದೆ.

ಹವಾಮಾನ ಇಲಾಖೆ ವಿಜ್ಞಾನಿ ಸಿ.ಎಸ್. ಪಾಟೀಲ್ ಅವರ ಪ್ರಕಾರ, ರಾಜ್ಯಾದ್ಯಂತ ಸಾಮಾನ್ಯ ಉಷ್ಣಾಂಶಕ್ಕಿಂತ 2ರಿಂದ 3 ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚುವರಿ ಉಷ್ಣಾಂಶ ದಾಖಲಾಗುತ್ತಿದೆ. ಹೀಗಾಗಿ ಮಳೆಗಾಲದಲ್ಲೇ ಬೇಸಿಗೆಯ ಅನುಭವವಾಗುತ್ತಿರುವುದು ಹವಾಮಾನ ವೈಪರೀತ್ಯದ ಗಂಭೀರತೆಯನ್ನು ತೋರಿಸುತ್ತಿದೆ.

ಮುಂದಿನ ದಿನಗಳಲ್ಲಿ ತಾಪಮಾನದಲ್ಲಿ ಮತ್ತಷ್ಟು ಬದಲಾವಣೆಗಳಾಗುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಅಗತ್ಯ ಮುನ್ನೆಚ್ಚರಿಕೆ ವಹಿಸುವುದು ಅತ್ಯಂತ ಮುಖ್ಯವಾಗಿದೆ.

ಗಾಂಧೀಜಿ, ಪಟೇಲ್, ನೆಹರೂ, ಬೋಸ್ʼಗಿಂತ ಬಿಜೆಪಿಯವರು ದೊಡ್ಡವರೇ? ಪ್ರಿಯಾಂಕ್ ಖರ್ಗೆ ಕಿಡಿ

0

ಬೆಂಗಳೂರು: ವಂದೇ ಮಾತರಂ ಗಾಯನ ಹಾಗೂ ಭಾರತದ ವಿದೇಶಾಂಗ ನೀತಿಯ ವಿಚಾರವಾಗಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಕರ್ನಾಟಕ ಸರ್ಕಾರದ ಕಾರ್ಯಕ್ರಮಗಳಲ್ಲಿ ವಂದೇ ಮಾತರಂ ಗೀತೆಯ ಎರಡು ಚರಣಗಳನ್ನು ಮಾತ್ರ ಹಾಡಲು ನಿರ್ಧರಿಸಿರುವುದರ ಕುರಿತು ಪ್ರತಿಕ್ರಿಯಿಸಿದ ಪ್ರಿಯಾಂಕ್ ಖರ್ಗೆ, 1937ರಲ್ಲೇ ಸರ್ದಾರ್ ವಲ್ಲಭಭಾಯಿ ಪಟೇಲ್, ಜವಾಹರಲಾಲ್ ನೆಹರೂ, ಮಹಾತ್ಮ ಗಾಂಧೀಜಿ, ಸುಭಾಷ್ ಚಂದ್ರ ಬೋಸ್ ಹಾಗೂ ರವೀಂದ್ರನಾಥ ಟ್ಯಾಗೋರ್ ಸೇರಿದಂತೆ ಎಂಟು ರಾಷ್ಟ್ರನಾಯಕರು ಸಭೆ ಸೇರಿ ಎರಡು ಚರಣಗಳನ್ನು ಹಾಡುವ ನಿರ್ಧಾರ ಕೈಗೊಂಡಿದ್ದರು ಎಂದು ಹೇಳಿದರು.

ಆ ಕಾಲದ ರಾಷ್ಟ್ರನಾಯಕರ ನಿರ್ಧಾರಕ್ಕಿಂತ ಬಿಜೆಪಿಯವರು ದೊಡ್ಡವರೇ ಎಂದು ಪ್ರಶ್ನಿಸಿದ ಅವರು, ಕಳೆದ 10 ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಹಾಗೂ ಅದಕ್ಕೂ ಮೊದಲು ಅಟಲ್ ಬಿಹಾರಿ ವಾಜಪೇಯಿ ನೇತೃತ್ವದಲ್ಲಿ ಸರ್ಕಾರವಿದ್ದಾಗ ಈ ನಿಯಮವನ್ನು ಬದಲಾಯಿಸಲು ಏಕೆ ಮುಂದಾಗಲಿಲ್ಲ ಎಂದು ಪ್ರಶ್ನಿಸಿದರು.

ಸ್ವಾತಂತ್ರ್ಯ ಹೋರಾಟದಲ್ಲಿ ಬಿಜೆಪಿ ಮತ್ತು ಆರ್‌ಎಸ್‌ಎಸ್‌ನ ಕೊಡುಗೆ ಶೂನ್ಯ ಎಂದು ಪ್ರಿಯಾಂಕ್ ಖರ್ಗೆ ಆರೋಪಿಸಿದರು. ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ಬ್ರಿಟಿಷರ ವಿರುದ್ಧ ಸೇನೆ ಕಟ್ಟುತ್ತಿದ್ದ ಸಂದರ್ಭದಲ್ಲಿ ಆರ್‌ಎಸ್‌ಎಸ್ ಹಾಗೂ ಸಾವರ್ಕರ್ ಬ್ರಿಟಿಷ್ ಸೇನೆಗೆ ಜನರನ್ನು ಸೇರಿಸುತ್ತಿದ್ದರು ಎಂದು ಟೀಕಿಸಿದರು. ಬ್ರಿಟಿಷರಿಂದ ಪಿಂಚಣಿ ಪಡೆಯುತ್ತಿದ್ದವರಿಂದ ಇಂದು ದೇಶಭಕ್ತಿಯ ಪಾಠ ಕಲಿಯಬೇಕಾದ ಅಗತ್ಯವಿಲ್ಲ ಎಂದು ವ್ಯಂಗ್ಯವಾಡಿದರು.

ಇದೇ ವೇಳೆ ಬ್ರಿಕ್ಸ್ ಶೃಂಗಸಭೆ ಹಾಗೂ ಚೀನಾ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಅವರ ವಿದೇಶಾಂಗ ನೀತಿಯನ್ನೂ ಪ್ರಿಯಾಂಕ್ ಖರ್ಗೆ ತರಾಟೆಗೆ ತೆಗೆದುಕೊಂಡರು. ಮೋದಿ ಅವರು ಈ ಹಿಂದೆ ಚೀನಾ ಅಧ್ಯಕ್ಷರೊಂದಿಗೆ ಗುಜರಾತ್‌ನಲ್ಲಿ ಜೋಕಾಲಿ ಆಡಿದ್ದರು ಹಾಗೂ ಮಹಾಬಲಿಪುರಂನಲ್ಲಿ ಮಾತುಕತೆ ನಡೆಸಿದ್ದರು ಎಂದು ಉಲ್ಲೇಖಿಸಿದ ಅವರು, ಇದೀಗ ಚೀನಾ ಅರುಣಾಚಲ ಪ್ರದೇಶದ ಮೇಲೆ ಹಕ್ಕು ಸಾಧಿಸುತ್ತಿದೆ ಹಾಗೂ ಭಾರತದ ಗಡಿಯೊಳಗೆ ಗ್ರಾಮಗಳನ್ನು ನಿರ್ಮಿಸುತ್ತಿದೆ ಎಂದು ಆರೋಪಿಸಿದರು.

ಚೀನಾ ವಿಚಾರದಲ್ಲಿ ಕೇಂದ್ರ ಸರ್ಕಾರದ ವಿದೇಶಾಂಗ ನೀತಿ ವಿಫಲವಾಗಿದೆ ಎಂದು ಟೀಕಿಸಿದ ಪ್ರಿಯಾಂಕ್ ಖರ್ಗೆ, ದೇಶದ ಗಡಿ ಹಾಗೂ ರಾಷ್ಟ್ರೀಯ ಭದ್ರತೆಯ ವಿಚಾರದಲ್ಲಿ ಸರ್ಕಾರದ ನಿಲುವಿನ ಬಗ್ಗೆ ಪ್ರಶ್ನೆಗಳನ್ನು ಎತ್ತಿದರು.

ಈರುಳ್ಳಿ ದರ ಏರಿಕೆ ನಡುವೆ ಗುಡ್‌ನ್ಯೂಸ್: ಹಾಫ್‌ರೇಟ್‌ನಲ್ಲಿ SALE!

0

ಬೆಂಗಳೂರು: ಈರುಳ್ಳಿ ದರ ಏರಿಕೆಯಿಂದ ಕಂಗಾಲಾಗಿದ್ದ ಗ್ರಾಹಕರಿಗೆ ಇದೀಗ ಗುಡ್‌ನ್ಯೂಸ್ ಸಿಕ್ಕಿದೆ.

ಮಾರುಕಟ್ಟೆಯಲ್ಲಿ ಕೆ.ಜಿಗೆ 65ರಿಂದ 75 ರೂಪಾಯಿವರೆಗೆ ಮಾರಾಟವಾಗುತ್ತಿದ್ದ ಈರುಳ್ಳಿ, ಬೆಂಗಳೂರಿನಲ್ಲಿ ಇದೀಗ ಕೇವಲ 35 ರೂಪಾಯಿಗೆ ಸಿಗುತ್ತಿದೆ.

ಕೇಂದ್ರ ಸರ್ಕಾರದ ನಾಫೆಡ್ ಮೂಲಕ ಬೆಂಗಳೂರಿಗೆ ಈರುಳ್ಳಿ ತರಲಾಗಿದ್ದು, ನಗರದ ವಿವಿಧ ಭಾಗಗಳಲ್ಲಿ ನಾಫೆಡ್ ವಾಹನಗಳ ಮೂಲಕ ಕೆ.ಜಿಗೆ 35 ರೂಪಾಯಿಯಂತೆ ಈರುಳ್ಳಿ ಮಾರಾಟ ಮಾಡಲಾಗುತ್ತಿದೆ. ಅಗ್ಗದ ದರದಲ್ಲಿ ಈರುಳ್ಳಿ ಸಿಗುತ್ತಿರುವ ಹಿನ್ನೆಲೆಯಲ್ಲಿ ಖರೀದಿಗೆ ಜನರು ಮುಗಿಬಿದ್ದಿದ್ದಾರೆ.

ಅಷ್ಟಕ್ಕೂ ನಾಫೆಡ್ ಎಂದರೇನು? ಈರುಳ್ಳಿ ಬೆಲೆ ನಿಯಂತ್ರಣದಲ್ಲಿ ನಾಫೆಡ್ ಪಾತ್ರವೇನು?

NAFED ಎಂದರೆ National Agricultural Cooperative Marketing Federation of India. ಇದು ರೈತರ ಹಿತಕ್ಕಾಗಿ ಕೆಲಸ ಮಾಡುವ ಸಹಕಾರಿ ಸಂಸ್ಥೆಯಾಗಿದ್ದು, ರೈತರಿಗೆ ಕೃಷಿ ಉತ್ಪನ್ನಗಳಿಗೆ ಉತ್ತಮ ಬೆಲೆ ಸಿಗುವಂತೆ ಮಾಡುವುದರ ಜೊತೆಗೆ ಗ್ರಾಹಕರಿಗೆ ಅಗತ್ಯ ವಸ್ತುಗಳು ನ್ಯಾಯಯುತ ದರದಲ್ಲಿ ಸಿಗುವಂತೆ ಕ್ರಮ ಕೈಗೊಳ್ಳುತ್ತದೆ.

ಮಾರುಕಟ್ಟೆಯಲ್ಲಿ ಈರುಳ್ಳಿ, ಆಲೂಗಡ್ಡೆ, ಧಾನ್ಯಗಳು ಹಾಗೂ ಎಣ್ಣೆಕಾಳುಗಳ ಬೆಲೆ ಕುಸಿದಾಗ ರೈತರಿಗೆ ಬೆಂಬಲ ನೀಡಲು ನಾಫೆಡ್ ಉತ್ಪನ್ನಗಳನ್ನು ಖರೀದಿಸುತ್ತದೆ.

ಇನ್ನು ಅಗತ್ಯ ವಸ್ತುಗಳ ಬೆಲೆ ಮಾರುಕಟ್ಟೆಯಲ್ಲಿ ಹೆಚ್ಚಾದಾಗ, ನಾಫೆಡ್ ಸಂಗ್ರಹಿಸಿಟ್ಟಿರುವ ದಾಸ್ತಾನನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತದೆ. ಇದರಿಂದ ಪೂರೈಕೆ ಹೆಚ್ಚಿಸಿ ಬೆಲೆ ನಿಯಂತ್ರಣಕ್ಕೆ ತರುವ ಪ್ರಯತ್ನ ಮಾಡಲಾಗುತ್ತದೆ.

ಸದ್ಯ ಈರುಳ್ಳಿ ದರ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ನಾಫೆಡ್‌ನಿಂದ ಬೆಂಗಳೂರಿಗೆ ಈರುಳ್ಳಿ ತರಿಸಿ, ಕೆ.ಜಿಗೆ 35 ರೂಪಾಯಿಯಂತೆ ಗ್ರಾಹಕರಿಗೆ ಮಾರಾಟ ಮಾಡಲಾಗುತ್ತಿದೆ.

ಒಟ್ಟಾರೆ, ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ಬೆಂಗಳೂರಿನ ಗ್ರಾಹಕರಿಗೆ ನಾಫೆಡ್ ಮೂಲಕ ಅಗ್ಗದ ದರದಲ್ಲಿ ಈರುಳ್ಳಿ ಸಿಗುತ್ತಿರುವುದು ಕೊಂಚ ನೆಮ್ಮದಿ ತಂದಿದೆ.

ತಿರುಪತಿಗೆ ತೆರಳುವ ಭಕ್ತರೇ ಗಮನಿಸಿ: ಸೆಪ್ಟೆಂಬರ್ 13 ರಂದು ವಿಐಪಿ ದರ್ಶನ ಸಂಪೂರ್ಣ ರದ್ದು!

0

ತಿರುಮಲ: ಸತತ ರಜೆ ಹಾಗೂ ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನಕ್ಕೆ ಭಕ್ತರ ದಟ್ಟಣೆ ಗಣನೀಯವಾಗಿ ಹೆಚ್ಚಾಗಿದೆ. ವೈಕುಂಠಂ ಕ್ಯೂ ಕಾಂಪ್ಲೆಕ್ಸ್ ಸೇರಿದಂತೆ ಸರತಿ ಸಾಲುಗಳು ಭಕ್ತರಿಂದ ಕಿಕ್ಕಿರಿದು ತುಂಬಿವೆ.

ಭಕ್ತರ ದಟ್ಟಣೆ ನಿಯಂತ್ರಿಸಿ ಸಾಮಾನ್ಯ ಭಕ್ತರಿಗೆ ಶೀಘ್ರ ದರ್ಶನ ಕಲ್ಪಿಸುವ ಉದ್ದೇಶದಿಂದ ತಿರುಮಲ ತಿರುಪತಿ ದೇವಸ್ಥಾನಂ (TTD) ಮಹತ್ವದ ನಿರ್ಧಾರ ಕೈಗೊಂಡಿದೆ. ಸೆಪ್ಟೆಂಬರ್ 13ರಂದು ಸಂಪೂರ್ಣವಾಗಿ ವಿಐಪಿ ದರ್ಶನ ರದ್ದುಗೊಳಿಸಲಾಗಿದ್ದು, ಸೆಪ್ಟೆಂಬರ್ 12ರಂದು ಯಾವುದೇ ವಿಐಪಿ ಶಿಫಾರಸು ಪತ್ರಗಳನ್ನು ಸ್ವೀಕರಿಸದಿರಲು ತೀರ್ಮಾನಿಸಲಾಗಿದೆ.

ವಿಐಪಿ ದರ್ಶನದ ಸಮಯವನ್ನು ಸಾಮಾನ್ಯ ಭಕ್ತರಿಗೆ ಮೀಸಲಿಡಲಾಗಿದ್ದು, ಪ್ರಸ್ತುತ ಸರತಿ ಸಾಲಿನಲ್ಲಿರುವ ಭಕ್ತರಿಗೆ ಶ್ರೀವಾರಿಯ ದರ್ಶನ ಪಡೆಯಲು ಸುಮಾರು 24 ಗಂಟೆಗಳ ಸಮಯ ಬೇಕಾಗುತ್ತಿದೆ ಎಂದು ತಿಳಿಸಲಾಗಿದೆ.

ಇದರ ನಡುವೆಯೇ ಶ್ರೀವಾರಿ ಹುಂಡಿ ಕಾಣಿಕೆಯಲ್ಲೂ ದಾಖಲೆ ನಿರ್ಮಾಣವಾಗಿದೆ. ಬುಧವಾರ ಬೆಳಿಗ್ಗೆಯಿಂದ ಮಧ್ಯರಾತ್ರಿವರೆಗೆ ಬಂದ ಕಾಣಿಕೆಗಳ ಎಣಿಕೆಯಲ್ಲಿ ಬರೋಬ್ಬರಿ 6.93 ಕೋಟಿ ರೂಪಾಯಿ ಆದಾಯ ಸಂಗ್ರಹವಾಗಿದೆ. ಟಿಟಿಡಿ ಇತಿಹಾಸದಲ್ಲಿ ಹುಂಡಿ ಆದಾಯ 6 ಕೋಟಿ ರೂಪಾಯಿ ದಾಟಿರುವುದು ಇದು ಮೂರನೇ ಬಾರಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನು ತಿರುಮಲದಲ್ಲಿ ಸೆಪ್ಟೆಂಬರ್ 14ರಿಂದ ಶ್ರೀವಾರಿ ಸಾಲಕಟ್ಲ ಬ್ರಹ್ಮೋತ್ಸವಗಳು ಆರಂಭವಾಗಲಿದ್ದು, ಸೆಪ್ಟೆಂಬರ್ 15ರಿಂದ 23ರವರೆಗೆ ಅದ್ದೂರಿಯಾಗಿ ನಡೆಯಲಿವೆ. ಬ್ರಹ್ಮೋತ್ಸವದ ಒಂಬತ್ತು ದಿನಗಳ ಕಾಲ ಸಕಲ ವಿಶೇಷ ಸೇವೆಗಳು ಹಾಗೂ ವಿಶೇಷ ಪ್ರವೇಶ ದರ್ಶನಗಳನ್ನು ಟಿಟಿಡಿ ರದ್ದುಗೊಳಿಸಿದೆ.

ಇದೇ ಸಂದರ್ಭದಲ್ಲಿ ನವೀಕರಿಸಲಾದ ಆಧುನಿಕ ಎಸ್‌ವಿ ವಸ್ತುಸಂಗ್ರಹಾಲಯವನ್ನು ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಉದ್ಘಾಟಿಸಲಿದ್ದಾರೆ.

ಭಕ್ತರ ಹೆಚ್ಚಿನ ಸಂಖ್ಯೆಯ ಆಗಮನ ಹಿನ್ನೆಲೆಯಲ್ಲಿ ಟಿಟಿಡಿ ಕೈಗೊಂಡಿರುವ ಬದಲಾವಣೆಗಳು ಮತ್ತು ನಿಯಮಾವಳಿಗಳಿಗೆ ಸಹಕರಿಸುವಂತೆ ದೇವಸ್ಥಾನದ ಆಡಳಿತ ಮಂಡಳಿ ಮನವಿ ಮಾಡಿದೆ.

ಜಾಗದ ವಿಚಾರಕ್ಕೆ ವಕೀಲರ ಮೇಲೆ ಹಲ್ಲೆ! ಶೆಡ್ ಬಾಗಿಲು ಒಡೆದು ಮಾರಕಾಸ್ತ್ರಗಳಿಂದ ದಾಳಿ?

0

ಬೆಂಗಳೂರು: ಸಿವಿಲ್ ವ್ಯಾಜ್ಯಕ್ಕೆ ಸಂಬಂಧಿಸಿದ ಜಾಗದ ವಿಚಾರವಾಗಿ ವಕೀಲ ಪುಟ್ಟಭೈರೇಗೌಡ ಅವರ ಮೇಲೆ 30ರಿಂದ 40 ಮಂದಿ ಗುಂಪು ಕಟ್ಟಿಕೊಂಡು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಹುಳಿಮಾವು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ತಮ್ಮದೇ ಜಾಗದಲ್ಲಿ ಅಭಿವೃದ್ಧಿ ಕೆಲಸಕ್ಕಾಗಿ ನಿರ್ಮಿಸಲಾಗಿದ್ದ ಶೆಡ್ ಪರಿಶೀಲಿಸಲು ಪುಟ್ಟಭೈರೇಗೌಡ ತೆರಳಿದ್ದ ವೇಳೆ ಗುಂಪೊಂದು ಅವರನ್ನು ಸುತ್ತುವರೆದಿದೆ ಎನ್ನಲಾಗಿದೆ. ಈ ವೇಳೆ ಅವರು ಶೆಡ್‌ನೊಳಗೆ ಹೋಗಿ ಬಾಗಿಲು ಹಾಕಿಕೊಂಡಿದ್ದಾರೆ. ಆದರೆ ಶೆಡ್‌ನ ಬಾಗಿಲು ಒಡೆದು ಅವರನ್ನು ಹೊರಗೆ ಎಳೆದು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ.

ಸ್ಥಳೀಯ ಬಿಜೆಪಿ ಕಾರ್ಯಕರ್ತ ಅನಿಲ್ ಹಾಗೂ ಅವರ ಸಹಚರರು ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಮಹಿಳೆಯರನ್ನು ಮುಂದೆ ಬಿಟ್ಟು ಹಲ್ಲೆ ಮಾಡಿಸಲಾಗಿದೆ ಹಾಗೂ ಆದಷ್ಟು ಬೇಗ ಜಾಗ ಖಾಲಿ ಮಾಡುವಂತೆ ಬೆದರಿಕೆ ಹಾಕಲಾಗಿದೆ ಎಂದು ದೂರಲಾಗಿದೆ.

ಇನ್ನು ಜಾಗದಲ್ಲಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾ ಕೆಲಸ ಮಾಡುತ್ತಿರಲಿಲ್ಲ ಎನ್ನಲಾಗಿದ್ದು, ಅಭಿವೃದ್ಧಿ ಕೆಲಸಕ್ಕಾಗಿ ಶೆಡ್ ನಿರ್ಮಿಸಲಾಗಿತ್ತು ಎಂದು ತಿಳಿದುಬಂದಿದೆ.

ಈ ಸಂಬಂಧ ಪುಟ್ಟಭೈರೇಗೌಡ ಅವರ ಸ್ನೇಹಿತ ಹುಳಿಮಾವು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸಿವಿಲ್ ವ್ಯಾಜ್ಯದ ಜಾಗದ ವಿಚಾರವೇ ಹಲ್ಲೆಗೆ ಕಾರಣ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಪ್ರಕರಣದ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಟೀ ಕಪ್‌ ಕಸದ ಬುಟ್ಟಿಗೆ ಹಾಕುವಂತೆ ಹೇಳಿದ್ದಕ್ಕೆ ಪೌರಕಾರ್ಮಿಕನ ಮೇಲೆ ಕಲ್ಲು ಎಸೆದ ಯುವತಿ!

0

ಬೆಂಗಳೂರು: ನಗರದ ಪಟ್ಟಂದೂರು ಅಗ್ರಹಾರ ಮುಖ್ಯ ರಸ್ತೆಯಲ್ಲಿ ಪೌರಕಾರ್ಮಿಕನ ಮೇಲೆ ಯುವತಿಯೊಬ್ಬಳು ಕಲ್ಲು ಎಸೆದಿರುವ ಘಟನೆ ನಡೆದಿದೆ.

ಕೇರಳ ಮೂಲದ ವೈದೇಹಿ ಎಂಬ ಯುವತಿ ತನ್ನ ಗೆಳೆಯನೊಂದಿಗೆ ರಸ್ತೆ ಬದಿಯಲ್ಲಿ ಟೀ ಕುಡಿಯುತ್ತಿದ್ದರು. ಈ ವೇಳೆ ಟೀ ಕುಡಿದ ಕಪ್‌ ಅನ್ನು ರಸ್ತೆ ಬದಿಗೆ ಎಸೆಯದೆ, ಕಸದ ಬುಟ್ಟಿಗೆ ಹಾಕುವಂತೆ ಪೌರಕಾರ್ಮಿಕರು ಸೂಚಿಸಿದ್ದಾರೆ ಎನ್ನಲಾಗಿದೆ.

ಇದರಿಂದ ಆಕ್ರೋಶಗೊಂಡ ಯುವತಿ ಪೌರಕಾರ್ಮಿಕನ ಮೇಲೆ ಕಲ್ಲು ಎಸೆದು, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾಳೆ ಹಾಗೂ ಕೈ ಸನ್ನೆ ಮಾಡಿದ್ದಾಳೆ ಎಂದು ಆರೋಪಿಸಲಾಗಿದೆ.

ಘಟನೆ ವೇಳೆ ಯುವತಿ ನಶೆಯಲ್ಲಿದ್ದಳು ಎಂದು ಪ್ರತ್ಯಕ್ಷದರ್ಶಿಗಳು ಆರೋಪಿಸಿದ್ದಾರೆ. ಈ ಸಂಬಂಧ ಪೌರಕಾರ್ಮಿಕ ನೀಡಿದ ದೂರಿನ ಮೇರೆಗೆ ವೈಟ್‌ಫೀಲ್ಡ್‌ ಪೊಲೀಸರು ಯುವಕ ಹಾಗೂ ಯುವತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದು, ತನಿಖೆಯ ಬಳಿಕ ಹೆಚ್ಚಿನ ವಿವರಗಳು ತಿಳಿದುಬರಬೇಕಿದೆ.