Home Blog

Lipstick Side Effects: ಲಿಪ್‌ಸ್ಟಿಕ್ ಖರೀದಿಸುವ ಮುನ್ನ ಎಚ್ಚರ! ಕೆಲ ಮಾದರಿಗಳಲ್ಲಿ ಅಪಾಯಕಾರಿ ರಾಸಾಯನಿಕ, ಲೋಹ ಪತ್ತೆ

ಬೆಂಗಳೂರು: ಲಿಪ್‌ಸ್ಟಿಕ್ ಬಳಸುವವರಿಗೆ ಆಹಾರ ಸುರಕ್ಷತಾ ಇಲಾಖೆಯಿಂದ ಎಚ್ಚರಿಕೆ ನೀಡಲಾಗಿದೆ.

ಬೆಂಗಳೂರಿನಲ್ಲಿ ಮಾರಾಟವಾಗುವ ಕೆಲವು ಲಿಪ್‌ಸ್ಟಿಕ್‌ಗಳ ಮಾದರಿಗಳಲ್ಲಿ ಅಪಾಯಕಾರಿ ರಾಸಾಯನಿಕ ಹಾಗೂ ಲೋಹದ ಅಂಶಗಳು ಪತ್ತೆಯಾಗಿವೆ ಎಂದು ಕರ್ನಾಟಕ ಆಹಾರ ಸುರಕ್ಷತಾ ಇಲಾಖೆ ತಿಳಿಸಿದೆ.

ಬೆಂಗಳೂರಿನ ವಿವಿಧ ಪ್ರದೇಶಗಳಲ್ಲಿ ಮಾರಾಟವಾಗುತ್ತಿದ್ದ ಲಿಪ್‌ಸ್ಟಿಕ್‌ಗಳ ಮಾದರಿಗಳನ್ನು ಅಧಿಕಾರಿಗಳು ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಿದ್ದಾರೆ. ಬ್ರಾಂಡೆಡ್ ಉತ್ಪನ್ನಗಳ ಜೊತೆಗೆ ರಸ್ತೆ ಬದಿ ಹಾಗೂ ಇತರೆಡೆ ಮಾರಾಟವಾಗುತ್ತಿದ್ದ ಲಿಪ್‌ಸ್ಟಿಕ್‌ಗಳ ಮಾದರಿಗಳನ್ನೂ ಪರಿಶೀಲಿಸಲಾಗಿದೆ.

ಪರಿಶೀಲನೆಗೆ ಒಳಪಡಿಸಿದ ಮಾದರಿಗಳ ಪೈಕಿ 23 ಮಾದರಿಗಳಲ್ಲಿ ಅಪಾಯಕಾರಿ ರಾಸಾಯನಿಕ ಅಂಶಗಳು ಪತ್ತೆಯಾಗಿವೆ ಎಂದು ಇಲಾಖೆ ತಿಳಿಸಿದೆ. ಕೆಲವು ಮಾದರಿಗಳಲ್ಲಿ ಕಾರ್ಸಿನೋಜೆನಿಕ್ ಎಂದು ಗುರುತಿಸಲಾದ ಅಂಶಗಳ ಜೊತೆಗೆ ಲೋಹದ ಅಂಶಗಳೂ ಕಂಡುಬಂದಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ದೀರ್ಘಕಾಲ ಬಳಕೆಯಿಂದ ಆರೋಗ್ಯದ ಮೇಲೆ ಪರಿಣಾಮ?

ಅಪಾಯಕಾರಿ ರಾಸಾಯನಿಕ ಅಂಶಗಳನ್ನು ಒಳಗೊಂಡಿರುವ ಸೌಂದರ್ಯ ಉತ್ಪನ್ನಗಳನ್ನು ದೀರ್ಘಕಾಲ ಬಳಸುವುದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ. ವಿಶೇಷವಾಗಿ ಕಾರ್ಸಿನೋಜೆನಿಕ್ ಅಂಶಗಳು ಪತ್ತೆಯಾಗಿರುವ ಉತ್ಪನ್ನಗಳ ಬಳಕೆಯಲ್ಲಿ ಹೆಚ್ಚಿನ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.

ಈಗಾಗಲೇ ಸಂಗ್ರಹಿಸಿರುವ ಲಿಪ್‌ಸ್ಟಿಕ್ ಮಾದರಿಗಳನ್ನು ಹೆಚ್ಚಿನ ಪರೀಕ್ಷೆಗೆ ಕಳುಹಿಸಲಾಗಿದ್ದು, ಪರೀಕ್ಷಾ ವರದಿಗಳ ಆಧಾರದ ಮೇಲೆ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಲಿಪ್‌ಸ್ಟಿಕ್ ಖರೀದಿಸುವಾಗ ಏನು ಗಮನಿಸಬೇಕು?

ಆಹಾರ ಸುರಕ್ಷತಾ ಇಲಾಖೆಯ ಆಯುಕ್ತ ಶ್ರೀನಿವಾಸ್ ಅವರು ಲಿಪ್‌ಸ್ಟಿಕ್ ಖರೀದಿಸುವಾಗ ಗ್ರಾಹಕರು ಉತ್ಪನ್ನದ ಗುಣಮಟ್ಟ ಹಾಗೂ ಪ್ಯಾಕೇಜಿಂಗ್ ಮೇಲಿನ ಮಾಹಿತಿಯನ್ನು ಪರಿಶೀಲಿಸುವಂತೆ ಸಲಹೆ ನೀಡಿದ್ದಾರೆ.

ಉತ್ಪನ್ನದ ಲೇಬಲ್, ತಯಾರಿಕಾ ದಿನಾಂಕ, ಮುಕ್ತಾಯ ದಿನಾಂಕ ಹಾಗೂ ತಯಾರಕರ ವಿವರಗಳನ್ನು ಪರಿಶೀಲಿಸಿ ಖರೀದಿಸಬೇಕು. ಅನುಮಾನಾಸ್ಪದ ಅಥವಾ ಸರಿಯಾದ ಲೇಬಲ್ ಇಲ್ಲದ ಉತ್ಪನ್ನಗಳ ಬಳಕೆಯನ್ನು ತಪ್ಪಿಸುವುದು ಉತ್ತಮ ಎಂದು ಇಲಾಖೆ ಸೂಚಿಸಿದೆ.

ಪರೀಕ್ಷಾ ವರದಿಗಳ ಆಧಾರದ ಮೇಲೆ ಯಾವ ಉತ್ಪನ್ನಗಳಲ್ಲಿ ನಿಯಮ ಉಲ್ಲಂಘನೆ ಕಂಡುಬಂದಿದೆ ಎಂಬುದರ ಕುರಿತು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಯಚೂರಿನಲ್ಲಿ ಗಲಭೆ ಸೃಷ್ಟಿಸಲು ಸಂಚು? ವಿದೇಶಿ ವ್ಯಕ್ತಿಯ ಸಂಪರ್ಕದಲ್ಲಿದ್ದ ಯುವಕ ಬಂಧನ

ರಾಯಚೂರು: ಭಾರತದಲ್ಲಿ ಗಲಭೆ ಸೃಷ್ಟಿಸಲು ವಿದೇಶಿ ವ್ಯಕ್ತಿಯೊಂದಿಗೆ ಸಂಪರ್ಕ ಹೊಂದಿದ್ದ ಆರೋಪದ ಮೇಲೆ ರಾಯಚೂರಿನಲ್ಲಿ 24 ವರ್ಷದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.

ಮೊಹಮ್ಮದ್ ಶಾಹಿಲ್ ಬಂಧಿತ ಆರೋಪಿ. ಈತ ಟೀ ಸ್ಟಾಲ್ ನಡೆಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ರಾಯಚೂರು ನಗರದ ಸದರ್‌ಬಜಾರ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಸಾಮಾಜಿಕ ಜಾಲತಾಣದ ಮೂಲಕ ವಿದೇಶಿ ವ್ಯಕ್ತಿಯೊಂದಿಗೆ ಶಾಹಿಲ್ ಸಂಪರ್ಕದಲ್ಲಿದ್ದ ಎನ್ನಲಾಗಿದೆ.

ಪೊಲೀಸರ ಪ್ರಕಾರ, ಶಾಹಿಲ್ ಇನ್‌ಸ್ಟಾಗ್ರಾಂನಲ್ಲಿ ‘ರಾಣಾ ಭಾಯ್’ ಎಂಬ ಹೆಸರಿನ ಖಾತೆಯೊಂದಿಗೆ ಸಂಪರ್ಕ ಹೊಂದಿದ್ದ. ಆ ಖಾತೆಯಲ್ಲಿನ ಕೆಲವು ಪೋಸ್ಟ್‌ಗಳನ್ನು ಲೈಕ್, ಕಮೆಂಟ್ ಹಾಗೂ ಶೇರ್ ಮಾಡುವ ಮೂಲಕ ಸಂಪರ್ಕ ಬೆಳೆಸಿದ್ದ ಎನ್ನಲಾಗಿದೆ.

ಅನಾಮಧೇಯ ವ್ಯಕ್ತಿಯ ಪೋಸ್ಟ್‌ಗಳಿಂದ ಪ್ರಭಾವಿತನಾಗಿದ್ದ ಶಾಹಿಲ್, ಪಿಸ್ತೂಲ್‌ಗಾಗಿ ಸಾಮಾಜಿಕ ಜಾಲತಾಣದ ಮೂಲಕ ಮನವಿ ಮಾಡಿದ್ದ ಎನ್ನಲಾಗಿದೆ. ಬಳಿಕ ವಿದೇಶಿ ವ್ಯಕ್ತಿ ಶಾಹಿಲ್‌ನ ವಾಟ್ಸ್‌ಆ್ಯಪ್ ಸಂಖ್ಯೆಯನ್ನು ಪಡೆದುಕೊಂಡಿದ್ದು, ಜುಲೈ 14ರಿಂದ ಇಬ್ಬರ ನಡುವೆ ಹಲವು ವಿಚಾರಗಳ ಕುರಿತು ಸಂಭಾಷಣೆ ನಡೆದಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸಂಭಾಷಣೆ ವೇಳೆ ಭಾರತದಲ್ಲಿ ಗಲಭೆ ಸೃಷ್ಟಿಸಲು ಪ್ರಚೋದನೆ ನೀಡಲಾಗಿತ್ತು ಹಾಗೂ ಅದಕ್ಕಾಗಿ ಹಣ ಮತ್ತು ಪಿಸ್ತೂಲ್ ಒದಗಿಸುವುದಾಗಿ ಭರವಸೆ ನೀಡಲಾಗಿತ್ತು ಎಂಬ ಆರೋಪ ಕೇಳಿಬಂದಿದೆ.

ರಾಷ್ಟ್ರೀಯ ಭದ್ರತೆಗೆ ಧಕ್ಕೆ ತರುವ ರೀತಿಯಲ್ಲಿ ಸಂಚು ರೂಪಿಸಿದ ಆರೋಪದಡಿ ಮೊಹಮ್ಮದ್ ಶಾಹಿಲ್ ವಿರುದ್ಧ ಸದರ್‌ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಸದ್ಯ ಪೊಲೀಸರು ಪ್ರಕರಣದ ತನಿಖೆಯನ್ನು ಮುಂದುವರಿಸಿದ್ದು, ಶಾಹಿಲ್ ವಿದೇಶಿ ವ್ಯಕ್ತಿಯ ಹೊರತಾಗಿ ಬೇರೆ ಯಾರೊಂದಿಗಾದರೂ ಸಂಪರ್ಕ ಹೊಂದಿದ್ದನಾ, ಸಂಚಿನಲ್ಲಿ ಮತ್ತಷ್ಟು ಮಂದಿ ಭಾಗಿಯಾಗಿದ್ದಾರೆಯೇ ಹಾಗೂ ಹಣ ಅಥವಾ ಶಸ್ತ್ರಾಸ್ತ್ರದ ವ್ಯವಹಾರ ನಡೆದಿದೆಯೇ ಎಂಬುದರ ಕುರಿತು ತನಿಖೆ ನಡೆಸುತ್ತಿದ್ದಾರೆ.

‘ಶೂಟ್ ಮಾಡ್ಕೊಂಡು ಸಾಯ್ತೀನಿ ಅಂದಿದ್ರಾ ಆರೋಪಿ ದರ್ಶನ್? ನಟನ ಬಗ್ಗೆ ಪ್ರದೋಷ್ ಆತಂಕಕಾರಿ ಹೇಳಿಕೆ!

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮತ್ತೊಂದು ಮಹತ್ವದ ಬೆಳವಣಿಗೆ ನಡೆದಿದೆ.

ಪ್ರಕರಣದ A-14 ಆರೋಪಿ ಪ್ರದೋಷ್‌ ಅವರು ನ್ಯಾಯಾಲಯಕ್ಕೆ ಸಲ್ಲಿಸಿರುವ ಕ್ಷಮಾದಾನ ಅರ್ಜಿಯಲ್ಲಿ A-2 ಆರೋಪಿ ದರ್ಶನ್‌ ಹಾಗೂ ಇತರರ ವಿರುದ್ಧ ಹಲವು ಗಂಭೀರ ಆರೋಪಗಳನ್ನು ಮಾಡಿದ್ದಾರೆ.

ತಾನು ರೇಣುಕಾಸ್ವಾಮಿ ಮೇಲೆ ನಡೆದ ಹಲ್ಲೆಯನ್ನು ತಡೆಯಲು ಪ್ರಯತ್ನಿಸಿದ್ದರೂ ದರ್ಶನ್ ಹಾಗೂ ತಂಡ ತನ್ನ ಮಾತನ್ನು ಕೇಳಲಿಲ್ಲ ಎಂದು ಪ್ರದೋಷ್‌ ಅರ್ಜಿಯಲ್ಲಿ ಹೇಳಿಕೊಂಡಿದ್ದಾರೆ. ರೇಣುಕಾಸ್ವಾಮಿಗೆ ಸಿಗರೇಟ್‌ನಿಂದ ಸುಟ್ಟು ಹಿಂಸೆ ನೀಡಲಾಗಿತ್ತು ಹಾಗೂ ದರ್ಶನ್‌ ಸ್ವತಃ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದರು ಎಂದು ಅವರು ಆರೋಪಿಸಿದ್ದಾರೆ.

ಮೊಬೈಲ್ ಪರಿಶೀಲನೆ ಬಳಿಕ ಹಲ್ಲೆ ಹೆಚ್ಚಾಯಿತೇ?

ರೇಣುಕಾಸ್ವಾಮಿಯ ಮೊಬೈಲ್ ಪರಿಶೀಲಿಸಿದ ವೇಳೆ ಪವಿತ್ರಾ ಗೌಡ ಅವರಿಗೆ ಮಾತ್ರವಲ್ಲದೆ ಇತರ ಮೂವರು ಮಹಿಳೆಯರಿಗೂ ಅಶ್ಲೀಲ ಸಂದೇಶಗಳನ್ನು ಕಳುಹಿಸಿರುವುದು ಗೊತ್ತಾಯಿತು ಎಂದು ಪ್ರದೋಷ್‌ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ. ಇದರಿಂದ ದರ್ಶನ್ ಹಾಗೂ ಇತರರು ಮತ್ತಷ್ಟು ಆಕ್ರೋಶಗೊಂಡು ರೇಣುಕಾಸ್ವಾಮಿ ಮೇಲೆ ಹಲ್ಲೆ ನಡೆಸಿದರು ಎಂದು ಅವರು ಆರೋಪಿಸಿದ್ದಾರೆ.

ಹಲ್ಲೆಯಿಂದ ತೀವ್ರವಾಗಿ ನರಳುತ್ತಿದ್ದ ರೇಣುಕಾಸ್ವಾಮಿಗೆ ತಾನೇ ಊಟ ಮತ್ತು ನೀರು ನೀಡಿದ್ದೆ. ಆದರೆ ಪರಿಸ್ಥಿತಿ ತನ್ನ ಕೈಮೀರಿ ಹೋಗಿತ್ತು ಎಂದು ಪ್ರದೋಷ್‌ ಹೇಳಿದ್ದಾರೆ.

‘ದರ್ಶನ್ ಬೆದರಿಸಿದ್ದರಿಂದ ಶವ ವಿಲೇವಾರಿಗೆ ಸಹಾಯ ಮಾಡಿದೆ’

ಚಾಲಕ ರವಿಶಂಕರ್ ಬಂದು ರೇಣುಕಾಸ್ವಾಮಿ ಮೃತಪಟ್ಟಿರುವುದಾಗಿ ತಿಳಿಸಿದಾಗ ದರ್ಶನ್ ಆತಂಕಗೊಂಡಿದ್ದರು ಎಂದು ಪ್ರದೋಷ್‌ ಅರ್ಜಿಯಲ್ಲಿ ಹೇಳಿದ್ದಾರೆ. ಪ್ರಕರಣದಿಂದ ಪಾರಾಗಲು ಸಹಾಯ ಮಾಡದಿದ್ದರೆ ತಾನು ಗುಂಡು ಹಾರಿಸಿಕೊಂಡು ಸಾಯುವುದಾಗಿ ದರ್ಶನ್ ಬೆದರಿಸಿದ್ದರು ಎಂದು ಅವರು ಆರೋಪಿಸಿದ್ದಾರೆ.

ಈ ಭೀತಿಯಿಂದಲೇ ತಾನು ಶವ ವಿಲೇವಾರಿ ಹಾಗೂ ಪ್ರಕರಣವನ್ನು ಮುಚ್ಚಿಹಾಕುವ ಪ್ರಯತ್ನಗಳಲ್ಲಿ ಭಾಗಿಯಾಗಬೇಕಾಯಿತು ಎಂದು ಪ್ರದೋಷ್‌ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

‘ಜೈಲಿನಲ್ಲೂ ಮಾನಸಿಕ, ದೈಹಿಕ ಕಿರುಕುಳ’

ಕೊಲೆ ಪ್ರಕರಣದ ಬಳಿಕ ಜೈಲು ಸೇರಿದ ನಂತರವೂ ದರ್ಶನ್‌ ತಮ್ಮ ಮೇಲೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಿದ್ದಾರೆ ಎಂದು ಪ್ರದೋಷ್‌ ಆರೋಪಿಸಿದ್ದಾರೆ. ಇದರಿಂದ ತಾನು ಮಾನಸಿಕವಾಗಿ ಕುಗ್ಗಿಹೋಗಿದ್ದೇನೆ ಎಂದು ಅರ್ಜಿಯಲ್ಲಿ ತಿಳಿಸಿದ್ದಾರೆ.

ಈ ಪ್ರಕರಣದಲ್ಲಿ ತನ್ನ ಯಾವುದೇ ನೇರ ತಪ್ಪಿಲ್ಲ. ಸಂದರ್ಭಕ್ಕೆ ಸಿಲುಕಿ ಕೆಲ ಬೆಳವಣಿಗೆಗಳಲ್ಲಿ ಭಾಗಿಯಾಗಬೇಕಾಯಿತು. ಪ್ರಕರಣಕ್ಕೆ ಸಂಬಂಧಿಸಿದಂತೆ ತನಗೆ ತಿಳಿದಿರುವ ಸಂಪೂರ್ಣ ಸತ್ಯವನ್ನು ನ್ಯಾಯಾಲಯದ ಮುಂದೆ ಬಹಿರಂಗಪಡಿಸಲು ಸಿದ್ಧನಿದ್ದೇನೆ. ಹೀಗಾಗಿ ತನಗೆ ಕ್ಷಮಾದಾನ ನೀಡಿ ಅಪ್ರೂವರ್ ಆಗಲು ಅವಕಾಶ ನೀಡಬೇಕು ಎಂದು ಪ್ರದೋಷ್‌ ಮನವಿ ಮಾಡಿದ್ದಾರೆ.

ಪ್ರದೋಷ್‌ ಪಾತ್ರವೇನು?

ಪ್ರದೋಷ್‌ ಅವರು ದರ್ಶನ್‌ ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದರು ಎನ್ನಲಾಗಿದೆ. ವೃತ್ತಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದ ಅವರು ಅಭಿನಯದಲ್ಲೂ ಆಸಕ್ತಿ ಹೊಂದಿದ್ದರು. ದರ್ಶನ್‌ ಅಭಿನಯದ ‘ಬೃಂದಾವನ’ ಮತ್ತು ‘ಬುಲ್‌ಬುಲ್’ ಸೇರಿದಂತೆ ಕೆಲವು ಚಿತ್ರಗಳಲ್ಲಿ ಪ್ರದೋಷ್‌ ನಟಿಸಿದ್ದರು ಎನ್ನಲಾಗಿದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆಯಲ್ಲಿ ಪ್ರದೋಷ್‌ ಅವರ ಪಾತ್ರವೂ ಪ್ರಮುಖವಾಗಿ ಚರ್ಚೆಗೆ ಬಂದಿತ್ತು. ಪ್ರಕರಣದ ಬಳಿಕ ದರ್ಶನ್‌ ಅವರನ್ನು ರಕ್ಷಿಸಲು ಹಾಗೂ ಪ್ರಕರಣವನ್ನು ಮುಚ್ಚಿಹಾಕಲು ಪ್ರದೋಷ್‌ ಪ್ರಯತ್ನಿಸಿದ್ದರು ಎಂಬ ಆರೋಪ ತನಿಖೆಯಲ್ಲಿ ಕೇಳಿಬಂದಿತ್ತು.

ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರದೋಷ್‌ ನಿವಾಸದಿಂದ ₹30 ಲಕ್ಷ ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದರು ಎಂದು ತನಿಖಾ ಸಂಸ್ಥೆಗಳು ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದವು ಎನ್ನಲಾಗಿದೆ.

ಸದ್ಯ ಪ್ರದೋಷ್‌ ಸಲ್ಲಿಸಿರುವ ಕ್ಷಮಾದಾನ ಅರ್ಜಿಯಲ್ಲಿನ ಆರೋಪಗಳು ನ್ಯಾಯಾಲಯದ ಪರಿಶೀಲನೆಗೆ ಒಳಪಟ್ಟಿದ್ದು, ಅವರು ಮಾಡಿರುವ ಆರೋಪಗಳು ಸಾಬೀತಾದ ಸತ್ಯಗಳಲ್ಲ. ಪ್ರಕರಣದ ವಿಚಾರಣೆ ಹಾಗೂ ನ್ಯಾಯಾಲಯದ ಮುಂದಿನ ಕ್ರಮದ ಬಳಿಕ ಈ ಆರೋಪಗಳ ಕುರಿತು ಸ್ಪಷ್ಟತೆ ಸಿಗಬೇಕಿದೆ.

ನಿಖಿಲ್ ನೇತೃತ್ವದಲ್ಲಿ ಬಿಡದಿ ಟೌನ್‌ಶಿಪ್ ವಿರುದ್ಧ ಪಾದಯಾತ್ರೆ; ಹೆಚ್‌ಡಿಕೆ ಹೇಳಿದ್ದೇನು?

ಮೈಸೂರು: ರೈತರು ಮತ್ತು ಹೆಣ್ಣುಮಕ್ಕಳು ಭದ್ರವಾಗಿದ್ದರೆ ಯಾವುದೇ ಕಾರಣಕ್ಕೂ ಬಿಡದಿ ಟೌನ್‌ಶಿಪ್ ಯೋಜನೆ ಜಾರಿಯಾಗಲು ಬಿಡುವುದಿಲ್ಲ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಮೈಸೂರಿನಲ್ಲಿ ಜೆಡಿಎಸ್ ಪಾದಯಾತ್ರೆ ಕುರಿತು ಮಾತನಾಡಿದ ಅವರು, ಇದು ತಮ್ಮ ನೇತೃತ್ವದ ಪಾದಯಾತ್ರೆಯಲ್ಲ. ಜೆಡಿಎಸ್ ಯುವ ಘಟಕದ ವತಿಯಿಂದ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಪಾದಯಾತ್ರೆ ನಡೆಯುತ್ತಿದೆ. ಪಕ್ಷದ ಶಾಸಕರು ಕೂಡ ಪಾದಯಾತ್ರೆಯಲ್ಲಿ ಭಾಗವಹಿಸುತ್ತಿದ್ದಾರೆ ಎಂದು ಹೇಳಿದರು.

ಬಿಡದಿ ಟೌನ್‌ಶಿಪ್ ವಿಚಾರದಲ್ಲಿ ನನಗೆ ಯಾವುದೇ ಹಠವಿಲ್ಲ. ಬಹುಶಃ ಸರ್ಕಾರಕ್ಕೆ ಹಠ ಇರಬಹುದು ಎಂದು ವ್ಯಂಗ್ಯವಾಡಿದ ಕುಮಾರಸ್ವಾಮಿ, ಟೌನ್‌ಶಿಪ್ ಹೆಸರಿನಲ್ಲಿ ಹಣ ಲೂಟಿ ಮಾಡುವ ಯೋಜನೆ ಇದಾಗಿದೆ ಎಂದು ಆರೋಪಿಸಿದರು.

ತಾವು ಯಾವುದೇ ಕಿಕ್‌ಬ್ಯಾಕ್ ಪಡೆದಿದ್ದರೆ ತನಿಖೆ ನಡೆಸಲಿ. ತಮ್ಮನ್ನಾಗಲಿ ಅಥವಾ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರನ್ನಾಗಲಿ ಯಾರಿಂದಲೂ ಕೊಂಡುಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು.

ತಾವು ಲಾಟರಿ ನಿಷೇಧಿಸಿದ ಸಂದರ್ಭದಲ್ಲಿ ತಮಿಳುನಾಡಿನಿಂದ ಬ್ಯಾಗ್ ಹಿಡಿದುಕೊಂಡು ಬಂದವರು ಯಾರು ಎಂಬ ಕಾಂಗ್ರೆಸ್ ನಾಯಕರ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

‘ವಿಪಕ್ಷಗಳಿಗೆ ಗೌರವ ಕೊಡುತ್ತಿಲ್ಲ’:

ಅಧಿಕಾರದ ಮದದಿಂದ ಸರ್ಕಾರ ವಿಪಕ್ಷಗಳ ಮಾತಿಗೆ ಗೌರವ ನೀಡುತ್ತಿಲ್ಲ ಎಂದು ಕುಮಾರಸ್ವಾಮಿ ಆರೋಪಿಸಿದರು. ಬೀದಿ ಬದಿ ವ್ಯಾಪಾರಿಗಳನ್ನು ತೆರವುಗೊಳಿಸಲಾಗಿದೆ. ಆದರೆ ಅವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದೆಯೇ ಎಂದು ಪ್ರಶ್ನಿಸಿದರು.

ಕೃಷ್ಣ ಬೈರೇಗೌಡ ಅವರು ತಾವು ಖರೀದಿಸಿದ ಜಾಗ ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ಎಸ್‌ಐಟಿ ರಚಿಸಲಾಗಿತ್ತು. ಆದರೆ ಸರ್ಕಾರದ ಅಧಿಕಾರಾವಧಿ ಮುಗಿಯಲು ಇನ್ನೂ ಒಂದೂವರೆ ವರ್ಷ ಮಾತ್ರ ಬಾಕಿಯಿದೆ ಎಂದು ಅವರು ಹೇಳಿದರು.

ರೈತರು ಮತ್ತು ಹೆಣ್ಣುಮಕ್ಕಳಿಗೆ ಭದ್ರತೆ ಇದ್ದರೆ ಬಿಡದಿ ಟೌನ್‌ಶಿಪ್ ಯಾವುದೇ ಕಾರಣಕ್ಕೂ ಆಗುವುದಿಲ್ಲ. ಹಣ ಲೂಟಿ ಮಾಡಲು ಮುಂದಾಗಿರುವ ಸರ್ಕಾರಕ್ಕೆ ತಿರುಗೇಟು ನೀಡಲು ಜೆಡಿಎಸ್ ಶಾಸಕರು ಸಿದ್ಧರಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದರು.

ನೈಸ್‌ ರಸ್ತೆ ಟೋಲ್‌ ವಿಚಾರದಲ್ಲೂ ಸರ್ಕಾರದ ವಿರುದ್ಧ ವಾಗ್ದಾಳಿ:

ನೈಸ್‌ ರಸ್ತೆಯಲ್ಲಿ ಕಾನೂನುಬಾಹಿರವಾಗಿ ಟೋಲ್ ಸಂಗ್ರಹಿಸಲಾಗುತ್ತಿದೆ ಎಂದು ಕುಮಾರಸ್ವಾಮಿ ಆರೋಪಿಸಿದರು. ಟೋಲ್ ಸಂಗ್ರಹ ಕಾನೂನುಬದ್ಧವಲ್ಲ ಎಂಬುದನ್ನು ಸರ್ಕಾರದ ಪರ ವಾದ ಮಂಡಿಸಿರುವ ವಕೀಲರೇ ನ್ಯಾಯಾಲಯದಲ್ಲಿ ಹೇಳಿದ್ದಾರೆ ಎಂದು ಅವರು ತಿಳಿಸಿದರು.

ಹೀಗಾಗಿ ರೈತರಿಗೆ ಟೋಲ್ ಕಟ್ಟಬೇಡಿ ಎಂದು ತಾವು ಹೇಳಿದ್ದಾಗಿ ತಿಳಿಸಿದ ಕುಮಾರಸ್ವಾಮಿ, ಸಚಿವ ಪ್ರಿಯಾಂಕ್ ಖರ್ಗೆ ಅವರು ಸ್ಪರ್ಧೆಗೆ ಬಿದ್ದವರಂತೆ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದರು.

ಟೋಲ್ ಸಂಗ್ರಹ ಮಾಡುತ್ತಿರುವವರು ಯಾರು ಎಂಬುದರ ಬಗ್ಗೆ ಮೊದಲು ಅರಿವು ಇರಬೇಕು. ತಮ್ಮನ್ನು ಮತ್ತು ಜೆಡಿಎಸ್‌ನ್ನು ಟೀಕಿಸಲು ಸರ್ಕಾರ ಕೆಲ ಸಚಿವರನ್ನು ಬಳಸಿಕೊಳ್ಳುತ್ತಿದೆ ಎಂದು ಕುಮಾರಸ್ವಾಮಿ ಆರೋಪಿಸಿದರು.

High BP: ಹೈ ಬಿಪಿ ಇರುವವರು ದಿನಕ್ಕೆ ಎಷ್ಟು ಉಪ್ಪು ಸೇವಿಸಬೇಕು? ಈ ಆಹಾರಗಳಲ್ಲಿ ಅಡಗಿದೆ ಹೆಚ್ಚು ಸೋಡಿಯಂ

0

ಅಧಿಕ ರಕ್ತದೊತ್ತಡ ಅಥವಾ ಹೈ ಬಿಪಿ ಇರುವವರು ಆಹಾರದಲ್ಲಿ ಉಪ್ಪಿನ ಪ್ರಮಾಣದ ಬಗ್ಗೆ ವಿಶೇಷ ಗಮನಹರಿಸುವುದು ಅಗತ್ಯ.

ಅಡುಗೆಯಲ್ಲಿ ಬಳಸುವ ಉಪ್ಪಿನ ಜೊತೆಗೆ ಪ್ಯಾಕೇಜ್ಡ್ ಫುಡ್ಸ್, ಚಿಪ್ಸ್, ಉಪ್ಪಿನಕಾಯಿ, ಸಾಸ್ ಹಾಗೂ ಇನ್‌ಸ್ಟಂಟ್ ನೂಡಲ್ಸ್‌ನಂತಹ ಆಹಾರಗಳಲ್ಲೂ ಹೆಚ್ಚಿನ ಪ್ರಮಾಣದ ಸೋಡಿಯಂ ಇರಬಹುದು. ಹೆಚ್ಚು ಸೋಡಿಯಂ ಸೇವನೆಯು ಕೆಲವರಲ್ಲಿ ರಕ್ತದೊತ್ತಡ ನಿಯಂತ್ರಣಕ್ಕೆ ಅಡ್ಡಿಯಾಗಬಹುದು.

ಹೈ ಬಿಪಿ ಇರುವವರು ಎಷ್ಟು ಉಪ್ಪು ಸೇವಿಸಬೇಕು?

ಅಮೆರಿಕನ್ ಹಾರ್ಟ್ ಅಸೋಸಿಯೇಷನ್ ಪ್ರಕಾರ, ಹೈ ಬಿಪಿ ಇರುವ ಬಹುತೇಕ ವಯಸ್ಕರು ದಿನಕ್ಕೆ 1,500 ಮಿಲಿಗ್ರಾಂನಷ್ಟು ಸೋಡಿಯಂ ಅಥವಾ ಅದಕ್ಕಿಂತ ಕಡಿಮೆ ಸೇವಿಸುವ ಗುರಿಯನ್ನು ಹೊಂದಬಹುದು. ಇದು ಸರಿಸುಮಾರು 3.8 ಗ್ರಾಂ ಉಪ್ಪಿಗೆ ಸಮಾನವಾಗಿದೆ.

ಆದರೆ ಸೋಡಿಯಂ ಅಗತ್ಯ ಪ್ರತಿಯೊಬ್ಬರಿಗೂ ಒಂದೇ ಆಗಿರುವುದಿಲ್ಲ. ವಯಸ್ಸು, ಕಿಡ್ನಿ ಮತ್ತು ಹೃದಯದ ಆರೋಗ್ಯ ಸೇರಿದಂತೆ ವಿವಿಧ ಅಂಶಗಳನ್ನು ಪರಿಗಣಿಸಿ ವೈದ್ಯರು ಸೂಕ್ತ ಪ್ರಮಾಣವನ್ನು ಸೂಚಿಸಬಹುದು. ಹೀಗಾಗಿ ವೈಯಕ್ತಿಕ ಆರೋಗ್ಯ ಸ್ಥಿತಿಗೆ ಅನುಗುಣವಾಗಿ ವೈದ್ಯರ ಸಲಹೆ ಪಡೆಯುವುದು ಉತ್ತಮ.

ಹೆಚ್ಚು ಉಪ್ಪು ಸೇವಿಸಿದರೆ ಏನಾಗಬಹುದು?

ಉಪ್ಪಿನಲ್ಲಿರುವ ಸೋಡಿಯಂ ದೇಹದಲ್ಲಿ ನೀರು ಉಳಿಯುವಂತೆ ಮಾಡಬಹುದು. ಇದರಿಂದ ರಕ್ತದ ಪ್ರಮಾಣ ಹೆಚ್ಚಾಗಿ ರಕ್ತದೊತ್ತಡದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ದೀರ್ಘಕಾಲ ಹೆಚ್ಚಿನ ಪ್ರಮಾಣದಲ್ಲಿ ಸೋಡಿಯಂ ಸೇವಿಸುವುದರಿಂದ ಹೈ ಬಿಪಿಯನ್ನು ನಿಯಂತ್ರಿಸುವುದು ಕಷ್ಟವಾಗಬಹುದು. ಹೃದಯ ಮತ್ತು ಕಿಡ್ನಿಗಳ ಮೇಲೂ ಹೆಚ್ಚುವರಿ ಒತ್ತಡ ಉಂಟಾಗುವ ಸಾಧ್ಯತೆಯಿದೆ.

ಈ ಆಹಾರಗಳಲ್ಲಿ ಹೆಚ್ಚು ಸೋಡಿಯಂ ಇರಬಹುದು:

ಮನೆಯಲ್ಲಿ ಅಡುಗೆ ಮಾಡುವಾಗ ಬಳಸುವ ಉಪ್ಪಿಗಿಂತಲೂ ಕೆಲವು ಸಂದರ್ಭಗಳಲ್ಲಿ ಪ್ಯಾಕೇಜ್ಡ್ ಮತ್ತು ಪ್ರೊಸೆಸ್ಡ್ ಆಹಾರಗಳ ಮೂಲಕ ಹೆಚ್ಚಿನ ಸೋಡಿಯಂ ದೇಹಕ್ಕೆ ಸೇರುತ್ತದೆ.

  • ಚಿಪ್ಸ್ ಮತ್ತು ನಮ್ಕೀನ್
  • ಇನ್‌ಸ್ಟಂಟ್ ನೂಡಲ್ಸ್
  • ಪ್ಯಾಕೇಜ್ಡ್ ಸೂಪ್
  • ಸಾಸ್ ಮತ್ತು ಕೆಚಪ್
  • ಉಪ್ಪಿನಕಾಯಿ
  • ಪ್ರೊಸೆಸ್ಡ್ ಮೀಟ್
  • ಪ್ಯಾಕೇಜ್ಡ್ ಸ್ನ್ಯಾಕ್ಸ್
  • ರೆಡಿ-ಟು-ಈಟ್ ಆಹಾರಗಳು
  • ಫಾಸ್ಟ್ ಫುಡ್

ಆದ್ದರಿಂದ ಪ್ಯಾಕೆಟ್ ಆಹಾರ ಖರೀದಿಸುವಾಗ ಅದರ ಲೇಬಲ್‌ನಲ್ಲಿರುವ Sodium ಪ್ರಮಾಣವನ್ನು ಪರಿಶೀಲಿಸುವ ಅಭ್ಯಾಸ ಬೆಳೆಸಿಕೊಳ್ಳುವುದು ಉತ್ತಮ.

ಉಪ್ಪಿನ ಪ್ರಮಾಣ ಕಡಿಮೆ ಮಾಡುವುದು ಹೇಗೆ?

ಆಹಾರದಲ್ಲಿ ಉಪ್ಪನ್ನು ಒಂದೇ ಬಾರಿಗೆ ಸಂಪೂರ್ಣವಾಗಿ ಕಡಿಮೆ ಮಾಡುವ ಬದಲು ಕ್ರಮೇಣ ಪ್ರಮಾಣವನ್ನು ಇಳಿಸಬಹುದು. ರುಚಿಗಾಗಿ ನಿಂಬೆ, ಕೊತ್ತಂಬರಿ, ಕರಿಬೇವು ಹಾಗೂ ಸೂಕ್ತ ಪ್ರಮಾಣದ ಮಸಾಲೆಗಳನ್ನು ಬಳಸಬಹುದು.

ತಾಜಾ ಹಣ್ಣುಗಳು, ತರಕಾರಿಗಳು, ಬೇಳೆಕಾಳುಗಳು ಹಾಗೂ ಕಡಿಮೆ ಸಂಸ್ಕರಿಸಿದ ಆಹಾರಗಳಿಗೆ ಆದ್ಯತೆ ನೀಡುವುದು ಸಹಾಯಕವಾಗಬಹುದು. ಹೊರಗಡೆ ಸಿಗುವ ಹೆಚ್ಚು ಉಪ್ಪಿನ ಆಹಾರ ಮತ್ತು ಪ್ಯಾಕೇಜ್ಡ್ ಸ್ನ್ಯಾಕ್ಸ್ ಸೇವನೆಯನ್ನು ಕಡಿಮೆ ಮಾಡುವುದು ಕೂಡ ಮುಖ್ಯ.

ಆಹಾರ ರುಚಿಯಿಲ್ಲ ಎಂಬ ಕಾರಣಕ್ಕೆ ಹೆಚ್ಚುವರಿ ಉಪ್ಪು ಸೇರಿಸುವ ಅಭ್ಯಾಸವಿದ್ದರೆ ಅದನ್ನು ಮೊದಲು ನಿಲ್ಲಿಸುವುದು ಉತ್ತಮ. ನಾಲಿಗೆ ಕಡಿಮೆ ಉಪ್ಪಿನ ರುಚಿಗೆ ಕ್ರಮೇಣ ಹೊಂದಿಕೊಳ್ಳುತ್ತದೆ.

ಉಪ್ಪು ಕಡಿಮೆ ಮಾಡಿದರೆ ಮಾತ್ರ ಸಾಕೇ?

ಹೈ ಬಿಪಿಯನ್ನು ನಿಯಂತ್ರಿಸಲು ಉಪ್ಪು ಕಡಿಮೆ ಮಾಡುವುದರ ಜೊತೆಗೆ ನಿಯಮಿತ ದೈಹಿಕ ಚಟುವಟಿಕೆ, ಆರೋಗ್ಯಕರ ತೂಕ, ಸಮತೋಲಿತ ಆಹಾರ ಹಾಗೂ ಧೂಮಪಾನದಿಂದ ದೂರವಿರುವುದು ಮುಖ್ಯ. ವೈದ್ಯರು ಸೂಚಿಸಿರುವ ಬಿಪಿ ಔಷಧಿಗಳನ್ನು ನಿಯಮಿತವಾಗಿ ತೆಗೆದುಕೊಳ್ಳಬೇಕು.

ರಕ್ತದೊತ್ತಡ ನಿರಂತರವಾಗಿ ಹೆಚ್ಚಾಗಿದ್ದರೆ ಅಥವಾ ಔಷಧಿ ತೆಗೆದುಕೊಂಡರೂ ನಿಯಂತ್ರಣಕ್ಕೆ ಬರುತ್ತಿಲ್ಲದಿದ್ದರೆ ವೈದ್ಯರನ್ನು ಸಂಪರ್ಕಿಸಬೇಕು. ವೈದ್ಯರ ಸಲಹೆಯಿಲ್ಲದೆ ಬಿಪಿ ಔಷಧಿಯನ್ನು ನಿಲ್ಲಿಸುವುದು ಅಥವಾ ಬದಲಿಸುವುದು ಮಾಡಬಾರದು.

ಸೂಚನೆ: ಮೇಲಿನ ಮಾಹಿತಿಯು ಸಾಮಾನ್ಯ ಆರೋಗ್ಯ ಮಾಹಿತಿಗಾಗಿ ಮಾತ್ರ. ನಿಮ್ಮ ಆರೋಗ್ಯ ಸ್ಥಿತಿಗೆ ಅನುಗುಣವಾದ ಉಪ್ಪು ಮತ್ತು ಸೋಡಿಯಂ ಪ್ರಮಾಣಕ್ಕಾಗಿ ವೈದ್ಯರ ಸಲಹೆ ಪಡೆಯಿರಿ.

ಹಾವೇರಿಯಲ್ಲಿ ಅಪ್ರಾಪ್ತ ಬಾಲಕಿಯರ ಗರ್ಭಧಾರಣೆ ಪ್ರಕರಣ ಹೆಚ್ಚಳ; ಆತಂಕ ಮೂಡಿಸಿದ ಅಂಕಿಅಂಶ

ಹಾವೇರಿ: ಜಿಲ್ಲೆಯಲ್ಲಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಬಾಲಕಿಯರ ಗರ್ಭಧಾರಣೆ ಪ್ರಕರಣಗಳು ಆತಂಕ ಮೂಡಿಸಿವೆ.

2025-26ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಒಟ್ಟು 42 ಅಪ್ರಾಪ್ತ ಬಾಲಕಿಯರ ಗರ್ಭಧಾರಣೆ ಪ್ರಕರಣಗಳು ದಾಖಲಾಗಿದ್ದರೆ, 2026-27ನೇ ಸಾಲಿನ ಮೊದಲ ಮೂರು ತಿಂಗಳಲ್ಲಿ, ಅಂದರೆ ಜೂನ್ ಅಂತ್ಯದವರೆಗೆ 11 ಪ್ರಕರಣಗಳು ವರದಿಯಾಗಿವೆ.

ರಿಪ್ರೊಡಕ್ಟಿವ್ ಆ್ಯಂಡ್ ಚೈಲ್ಡ್ ಹೆಲ್ತ್ (RCH) ಪೋರ್ಟಲ್‌ನ ಅಂಕಿಅಂಶಗಳ ಪ್ರಕಾರ, 2025-26ನೇ ಸಾಲಿನಲ್ಲಿ ರಾಣೇಬೆನ್ನೂರು ತಾಲೂಕಿನಲ್ಲಿ ಅತಿ ಹೆಚ್ಚು 10 ಪ್ರಕರಣಗಳು ದಾಖಲಾಗಿವೆ. ಹಾವೇರಿ ಮತ್ತು ಹಾನಗಲ್ ತಾಲೂಕುಗಳಲ್ಲಿ ತಲಾ 8 ಪ್ರಕರಣಗಳು ವರದಿಯಾಗಿದ್ದರೆ, ಹಿರೇಕೆರೂರು ತಾಲೂಕಿನಲ್ಲಿ 6, ಬ್ಯಾಡಗಿ ಮತ್ತು ಸವಣೂರು ತಾಲೂಕುಗಳಲ್ಲಿ ತಲಾ 5 ಪ್ರಕರಣಗಳು ದಾಖಲಾಗಿವೆ.

ಪ್ರಸಕ್ತ 2026-27ನೇ ಸಾಲಿನಲ್ಲಿ ಜೂನ್ ಅಂತ್ಯದವರೆಗೆ ದಾಖಲಾಗಿರುವ 11 ಪ್ರಕರಣಗಳ ಪೈಕಿ ಹಾವೇರಿ ತಾಲೂಕೊಂದರಲ್ಲೇ 9 ಪ್ರಕರಣಗಳು ವರದಿಯಾಗಿರುವುದು ಗಮನಾರ್ಹವಾಗಿದೆ. ರಾಣೇಬೆನ್ನೂರು ಮತ್ತು ಸವಣೂರು ತಾಲೂಕುಗಳಲ್ಲಿ ತಲಾ ಒಂದು ಪ್ರಕರಣ ದಾಖಲಾಗಿದೆ.

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಶಾಲಾ ಬಾಲಕಿಯರು ಹಾಗೂ ಹಾಸ್ಟೆಲ್‌ಗಳಲ್ಲಿ ವಾಸಿಸುವ ಅಪ್ರಾಪ್ತ ಬಾಲಕಿಯರು ಗರ್ಭಿಣಿಯಾಗುತ್ತಿರುವ ಪ್ರಕರಣಗಳು ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ಹಾವೇರಿಯ ಅಂಕಿಅಂಶಗಳು ಕಳವಳಕ್ಕೆ ಕಾರಣವಾಗಿವೆ.

ಹಲವು ಕಾರಣಗಳಿಂದ ಸಮಸ್ಯೆ:

ಅಪ್ರಾಪ್ತ ಬಾಲಕಿಯರ ಗರ್ಭಧಾರಣೆಗೆ ಹದಿಹರೆಯದವರಲ್ಲಿ ಲೈಂಗಿಕ ಶಿಕ್ಷಣದ ಕೊರತೆ, ಬಾಲ್ಯವಿವಾಹ, ಬಡತನ, ಲೈಂಗಿಕ ದೌರ್ಜನ್ಯ ಹಾಗೂ ಶಾಲೆ ತೊರೆಯುವಿಕೆ ಸೇರಿದಂತೆ ಹಲವು ಕಾರಣಗಳಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಹದಿಹರೆಯದವರ ಆರೋಗ್ಯ, ಸುರಕ್ಷತೆ ಹಾಗೂ ಹಕ್ಕುಗಳ ಕುರಿತು ಜಾಗೃತಿ ಕಾರ್ಯಕ್ರಮಗಳನ್ನು ಮತ್ತಷ್ಟು ಬಲಪಡಿಸುವ ಅಗತ್ಯವಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಅಪ್ರಾಪ್ತ ಬಾಲಕಿಯರ ಗರ್ಭಧಾರಣೆ ಕೇವಲ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಯಲ್ಲ. ಇದರ ಹಿಂದೆ ಬಾಲ್ಯವಿವಾಹ, ಲೈಂಗಿಕ ಶೋಷಣೆ, ಶಿಕ್ಷಣದಿಂದ ವಂಚಿತವಾಗುವಿಕೆ ಹಾಗೂ ಸಾಮಾಜಿಕ ಅಸಮಾನತೆಯಂತಹ ಗಂಭೀರ ಸಮಸ್ಯೆಗಳೂ ಇರಬಹುದಾಗಿದೆ. ಹೀಗಾಗಿ ಪ್ರತಿಯೊಂದು ಪ್ರಕರಣವನ್ನೂ ಸೂಕ್ಷ್ಮವಾಗಿ ಪರಿಶೀಲಿಸಿ, ಅಗತ್ಯವಿದ್ದಲ್ಲಿ ಕಾನೂನು ಕ್ರಮ ಕೈಗೊಳ್ಳಬೇಕಿದೆ.

ಅಪ್ರಾಪ್ತರೊಂದಿಗೆ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ಪೋಕ್ಸೋ ಕಾಯ್ದೆಯಡಿ ಕ್ರಮ ಕೈಗೊಳ್ಳುವ ಅವಕಾಶವಿರುವುದರಿಂದ, ಇಂತಹ ಪ್ರಕರಣಗಳ ಕುರಿತು ಸಂಬಂಧಪಟ್ಟ ಇಲಾಖೆಗಳು ಎಚ್ಚರಿಕೆಯಿಂದ ತನಿಖೆ ನಡೆಸಬೇಕಾಗಿದೆ.

ಹಲವು ಇಲಾಖೆಗಳ ಜಂಟಿ ಕಾರ್ಯಾಚರಣೆ ಅಗತ್ಯ:

ಬಾಲ್ಯವಿವಾಹ ತಡೆಗಟ್ಟುವುದು ಹಾಗೂ ಹದಿಹರೆಯದವರ ಆರೋಗ್ಯ ಮತ್ತು ಸುರಕ್ಷತೆ ಕಾಪಾಡುವ ಉದ್ದೇಶದಿಂದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಶಿಕ್ಷಣ ಹಾಗೂ ಪೊಲೀಸ್ ಇಲಾಖೆಗಳು ಜಂಟಿಯಾಗಿ ಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತಿವೆ.

ಆದರೆ ಸಮಸ್ಯೆಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಸರ್ಕಾರಿ ಇಲಾಖೆಗಳ ಜತೆಗೆ ಕುಟುಂಬಗಳು, ಶಾಲೆಗಳು ಹಾಗೂ ಸಮುದಾಯಗಳು ಕೂಡ ನಿರಂತರವಾಗಿ ಕೈಜೋಡಿಸಬೇಕಿದೆ. ಬಾಲಕಿಯರಿಗೆ ಸುರಕ್ಷಿತ ವಾತಾವರಣ ಕಲ್ಪಿಸುವುದು, ಶಿಕ್ಷಣ ಮುಂದುವರಿಸಲು ಪ್ರೋತ್ಸಾಹಿಸುವುದು ಹಾಗೂ ಅಗತ್ಯ ಆರೋಗ್ಯ ಮತ್ತು ಕಾನೂನು ಅರಿವು ಮೂಡಿಸುವುದು ಅತ್ಯಂತ ಮುಖ್ಯವಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

LPG Gas Cylinder: ಗ್ಯಾಸ್ ಸಿಲಿಂಡರ್ ಗ್ರಾಹಕರೇ ಗಮನಿಸಿ, ತಪ್ಪದೇ ಈ ಕೆಲಸ ಮಾಡಿ, ಇಲ್ಲದಿದ್ದರೆ ಸಮಸ್ಯೆ!

ಬೆಂಗಳೂರು: ಗೃಹ ಬಳಕೆಯ LPG ಸಂಪರ್ಕ ಹೊಂದಿರುವ ಗ್ರಾಹಕರು e-KYC ಪೂರ್ಣಗೊಳಿಸುವಂತೆ ಗ್ಯಾಸ್ ವಿತರಕರು ಸೂಚಿಸಿದ್ದಾರೆ.

ಗ್ರಾಹಕರ ಮಾಹಿತಿ ಪರಿಶೀಲನೆ, ದಾಖಲೆಗಳ ಅಪ್‌ಡೇಟ್ ಹಾಗೂ ನಿಜವಾದ ಫಲಾನುಭವಿಗಳನ್ನು ಗುರುತಿಸುವ ಉದ್ದೇಶದಿಂದ e-KYC ಪ್ರಕ್ರಿಯೆ ನಡೆಸಲಾಗುತ್ತಿದೆ.

ಗ್ಯಾಸ್ ಸಂಪರ್ಕ ನಿಮ್ಮ ಹೆಸರಿನಲ್ಲಿದ್ದರೆ, e-KYC ಪೂರ್ಣಗೊಂಡಿದೆಯೇ ಅಥವಾ ಇಲ್ಲವೇ ಎಂಬುದನ್ನು ಗ್ರಾಹಕರು ಪರಿಶೀಲಿಸಿಕೊಳ್ಳಬೇಕು. e-KYC ಅಗತ್ಯವಿದ್ದಲ್ಲಿ ಸಾಧ್ಯವಾದಷ್ಟು ಬೇಗ ಪ್ರಕ್ರಿಯೆ ಪೂರ್ಣಗೊಳಿಸುವಂತೆ ವಿತರಕರು ಮನವಿ ಮಾಡಿದ್ದಾರೆ.

ಕೆಲವು ಗ್ಯಾಸ್ ವಿತರಕರ ಪ್ರಕಾರ, ದೀರ್ಘಕಾಲ KYC ಪೂರ್ಣಗೊಳಿಸದ ಸಂಪರ್ಕಗಳನ್ನು ತಾತ್ಕಾಲಿಕವಾಗಿ ನಿರ್ಬಂಧಿಸುವ ಅಥವಾ ನಿಷ್ಕ್ರಿಯಗೊಳಿಸುವ ಸಾಧ್ಯತೆಯಿದೆ. ಇಂತಹ ಸಂದರ್ಭದಲ್ಲಿ ಗೃಹ ಬಳಕೆಯ LPG ಸಿಲಿಂಡರ್ ಪಡೆಯುವಲ್ಲಿ ತೊಂದರೆ ಎದುರಾಗಬಹುದು ಎಂದು ಅವರು ತಿಳಿಸಿದ್ದಾರೆ.

ಮನೆಯಲ್ಲೇ e-KYC ಮಾಡುವುದು ಹೇಗೆ?

ಗ್ರಾಹಕರು ತಮ್ಮ LPG ಕಂಪನಿಯ ಅಧಿಕೃತ ಮೊಬೈಲ್ ಅಪ್ಲಿಕೇಶನ್ ಮೂಲಕವೂ e-KYC ಪೂರ್ಣಗೊಳಿಸಬಹುದು. ಇಂಡೇನ್, ಭಾರತ್ ಗ್ಯಾಸ್ ಅಥವಾ HP ಗ್ಯಾಸ್‌ನ ಅಧಿಕೃತ ಆ್ಯಪ್‌ನ್ನು ಮೊಬೈಲ್‌ನಲ್ಲಿ ತೆರೆಯಬೇಕು.

ನೋಂದಾಯಿತ ಮೊಬೈಲ್ ಸಂಖ್ಯೆಯ ಮೂಲಕ ಲಾಗಿನ್ ಮಾಡಿದ ಬಳಿಕ ‘e-KYC’ ಅಥವಾ ‘Aadhaar Verification’ ಆಯ್ಕೆಯನ್ನು ಆರಿಸಬೇಕು. ನಂತರ ಕೇಳಲಾಗುವ ವಿವರಗಳನ್ನು ನಮೂದಿಸಿ, ಮೊಬೈಲ್ ಕ್ಯಾಮೆರಾ ಮೂಲಕ ಮುಖ ದೃಢೀಕರಣ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು. ಬಳಿಕ ಅರ್ಜಿಯನ್ನು ಸಲ್ಲಿಸಿದರೆ e-KYC ಪ್ರಕ್ರಿಯೆ ಪೂರ್ಣಗೊಳ್ಳಲಿದೆ.

ಆದರೆ, e-KYCಗೆ ಸಂಬಂಧಿಸಿದ ಗಡುವು ಹಾಗೂ ನಿಯಮಗಳ ಕುರಿತು ಗ್ರಾಹಕರು ಅಧಿಕೃತ ಮೂಲಗಳಿಂದಲೇ ಮಾಹಿತಿ ಪರಿಶೀಲಿಸಿಕೊಳ್ಳುವುದು ಸೂಕ್ತ. ಯಾವುದೇ ಅನಧಿಕೃತ ಲಿಂಕ್ ಅಥವಾ ಅಪ್ಲಿಕೇಶನ್ ಮೂಲಕ ವೈಯಕ್ತಿಕ ಹಾಗೂ ಆಧಾರ್ ಮಾಹಿತಿಯನ್ನು ಹಂಚಿಕೊಳ್ಳದಂತೆ ಎಚ್ಚರಿಕೆ ವಹಿಸಬೇಕು.

ಗ್ಯಾಸ್ ಸಂಪರ್ಕದ KYC ಸ್ಥಿತಿಯನ್ನು ಮುಂಚಿತವಾಗಿ ಪರಿಶೀಲಿಸಿಕೊಂಡು, ಅಗತ್ಯವಿದ್ದರೆ e-KYC ಪೂರ್ಣಗೊಳಿಸುವ ಮೂಲಕ ಮುಂದಿನ ದಿನಗಳಲ್ಲಿ ಸಿಲಿಂಡರ್ ಪಡೆಯುವಾಗ ಎದುರಾಗಬಹುದಾದ ತೊಂದರೆಗಳನ್ನು ತಪ್ಪಿಸಿಕೊಳ್ಳಬಹುದು.

ಹಾಸ್ಟೆಲ್ ಶೌಚಾಲಯದಲ್ಲಿ ಕುಸಿದು 8ನೇ ತರಗತಿ ವಿದ್ಯಾರ್ಥಿನಿ ಸಾವು: ಹೃದಯಾಘಾತ ಶಂಕೆ?

ತುಮಕೂರು: ತಾಲೂಕಿನ ರಂಗಸಮುದ್ರ ಗ್ರಾಮದ ಬಳಿಯ ಕಸ್ತೂರಿಬಾ ಗಾಂಧಿ ಬಾಲಕಿಯರ ಹಾಸ್ಟೆಲ್‌ನಲ್ಲಿ 8ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ದಿಢೀರ್ ಅಸ್ವಸ್ಥಗೊಂಡು ಮೃತಪಟ್ಟಿರುವ ಘಟನೆ ನಡೆದಿದೆ.

ಕಾರಗಾನಹಟ್ಟಿ ಗ್ರಾಮದ ನರಸಿಂಹಮೂರ್ತಿ ಮತ್ತು ಶಾರದಮ್ಮ ದಂಪತಿಯ 14 ವರ್ಷದ ಪುತ್ರಿ ಪ್ರಿಯಾಂಕಾ ಮೃತಪಟ್ಟ ವಿದ್ಯಾರ್ಥಿನಿ. ಈಕೆ ರಂಗಸಮುದ್ರದ ತ್ರಿಯಂಬಕೇಶ್ವರ ಶಾಲೆಯಲ್ಲಿ 8ನೇ ತರಗತಿ ವ್ಯಾಸಂಗ ಮಾಡುತ್ತಿದ್ದಳು.

ಕಳೆದ ಒಂದು ವಾರದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಪ್ರಿಯಾಂಕಾ ಚಿಕಿತ್ಸೆಗಾಗಿ ಸ್ವಗ್ರಾಮಕ್ಕೆ ತೆರಳಿದ್ದಳು. ಆರೋಗ್ಯ ಸುಧಾರಿಸಿದ ಬಳಿಕ ಆಗಸ್ಟ್ 7ರಂದು ಮತ್ತೆ ಹಾಸ್ಟೆಲ್‌ಗೆ ಮರಳಿದ್ದಳು ಎನ್ನಲಾಗಿದೆ.

ಶನಿವಾರ ಮುಂಜಾನೆ ಹಾಸ್ಟೆಲ್‌ನ ಶೌಚಾಲಯಕ್ಕೆ ತೆರಳಿದ್ದ ವೇಳೆ ಪ್ರಿಯಾಂಕಾ ದಿಢೀರ್ ಅಸ್ವಸ್ಥಗೊಂಡು ಕುಸಿದು ಬಿದ್ದಿದ್ದಾಳೆ. ತಕ್ಷಣ ಹಾಸ್ಟೆಲ್ ಸಿಬ್ಬಂದಿ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲು ಮುಂದಾಗಿದ್ದಾರೆ. ಆದರೆ, ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆಯೇ ಆಕೆ ಮೃತಪಟ್ಟಿದ್ದಾಳೆ.

ಬಾಲಕಿಗೆ ಹೃದಯಾಘಾತವಾಗಿರಬಹುದು ಎಂದು ಶಂಕಿಸಲಾಗಿದ್ದು, ಸಾವಿಗೆ ನಿಖರ ಕಾರಣ ಮರಣೋತ್ತರ ಪರೀಕ್ಷೆಯ ವರದಿ ಬಳಿಕ ತಿಳಿದುಬರಬೇಕಿದೆ.

ಘಟನೆಯ ಬಳಿಕ ಹಾಸ್ಟೆಲ್‌ನಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯಿದೆ ಎಂದು ಪೋಷಕರು ಹಾಗೂ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಷಯ ತಿಳಿದು ಪಾವಗಡ ತಹಶೀಲ್ದಾರ್ ವೈ. ರವಿ ಹಾಗೂ ಪಾವಗಡ ಗ್ರಾಮಾಂತರ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಬಾಲಕಿಯ ಮೃತದೇಹವನ್ನು ಪೋಷಕರಿಗೆ ಹಸ್ತಾಂತರಿಸಲಾಗಿದೆ. ಘಟನೆ ಸಂಬಂಧ ಅರಸೀಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಎರಡನೇ ದಿನವೂ ಬರ ಪರಿಸ್ಥಿತಿ ಅವಲೋಕನ

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಗದಗ ಜಿಲ್ಲೆಯಲ್ಲಿ ಮಳೆ ಕೊರತೆಯಿಂದ ಉಂಟಾಗಿರುವ ಬರ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಸಂಪುಟ ದರ್ಜೆ ಸಚಿವ ಬಸವರಾಜ ರಾಯರಡ್ಡಿ ಅವರು ಸತತ ಎರಡನೇ ದಿನವೂ ಶಿರಹಟ್ಟಿ ಹಾಗೂ ಲಕ್ಷ್ಮೇಶ್ವರ ತಾಲೂಕುಗಳಲ್ಲಿ ಪ್ರವಾಸ ಕೈಗೊಂಡು ಬರ ಪರಿಸ್ಥಿತಿ ಹಾಗೂ ಬೆಳೆ ಹಾನಿಯನ್ನು ಪರಿಶೀಲಿಸಿದರು.

ಶನಿವಾರ ಶಿರಹಟ್ಟಿ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಎರಡೂ ತಾಲೂಕುಗಳ ಬರ ಪರಿಸ್ಥಿತಿ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಚಿವರು, ಮಳೆಯ ಪ್ರಮಾಣ, ಬಿತ್ತನೆ ಪ್ರದೇಶ, ಬೆಳೆಗಳ ಸ್ಥಿತಿ, ಬೆಳೆ ಹಾನಿ ಹಾಗೂ ರೈತರ ಸಮಸ್ಯೆಗಳ ಕುರಿತು ಸಮಗ್ರ ಮಾಹಿತಿ ಪಡೆದರು.

ಮಳೆ ಕೊರತೆಯಿಂದ ಉಂಟಾಗಿರುವ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿದ ಸಚಿವರು, ರೈತರಿಗೆ ಅಗತ್ಯ ಪರಿಹಾರ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಬೆಳೆ ಹಾನಿಯ ವಾಸ್ತವಿಕ ಮಾಹಿತಿ ಸಂಗ್ರಹಿಸಿ ಸಮಗ್ರ ವರದಿ ಸಲ್ಲಿಸುವಂತೆಯೂ ನಿರ್ದೇಶನ ನೀಡಿದರು.

ಸಭೆಯ ಬಳಿಕ ಸಚಿವ ರಾಯರಡ್ಡಿ ಅವರು ಛಬ್ಬಿ ಗ್ರಾಮಕ್ಕೆ ತೆರಳಿ ಮೆಕ್ಕೆಜೋಳದ ಜಮೀನಿನಲ್ಲಿ ಬೆಳೆ ಪರಿಸ್ಥಿತಿಯನ್ನು ಖುದ್ದಾಗಿ ಪರಿಶೀಲಿಸಿದರು. ಮಳೆಯ ಕೊರತೆಯಿಂದ ಬೆಳೆಗಳ ಬೆಳವಣಿಗೆಗೆ ಉಂಟಾಗಿರುವ ಪರಿಣಾಮವನ್ನು ವೀಕ್ಷಿಸಿ, ರೈತರೊಂದಿಗೆ ನೇರವಾಗಿ ಸಂವಾದ ನಡೆಸಿದರು.

ಈ ವೇಳೆ ರೈತರು ಮಳೆ ಕೊರತೆ, ಬೆಳೆ ಹಾನಿ ಹಾಗೂ ಕೃಷಿ ಚಟುವಟಿಕೆಗಳಲ್ಲಿನ ಸಮಸ್ಯೆಗಳನ್ನು ಸಚಿವರ ಗಮನಕ್ಕೆ ತಂದರು. ರೈತರ ಸಮಸ್ಯೆಗಳನ್ನು ಸ್ಥಳೀಯವಾಗಿ ಪರಿಶೀಲಿಸಿ ವಾಸ್ತವಿಕ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ ರಾಯರಡ್ಡಿ, ಬರ ಪರಿಸ್ಥಿತಿಯಿಂದ ರೈತರಿಗೆ ತೊಂದರೆಯಾಗದಂತೆ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಶಾಸಕ ಡಾ. ಚಂದ್ರು ಲಮಾಣಿ, ಶಿರಹಟ್ಟಿ ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ವೀರಯ್ಯ ಮಠಪತಿ, ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್, ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್., ಸಹಾಯಕ ಆಯುಕ್ತ ಗಂಗಪ್ಪ ಎಂ., ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಸಿ.ಆರ್. ಮುಂಡರಗಿ, ಜಂಟಿ ಕೃಷಿ ನಿರ್ದೇಶಕಿ ಚೇತನಾ ಪಾಟೀಲ, ತೋಟಗಾರಿಕೆ ಜಂಟಿ ನಿರ್ದೇಶಕ ಚಿದಾನಂದ, ಶಿರಹಟ್ಟಿ ತಹಶೀಲ್ದಾರ್ ರಾಘವೇಂದ್ರ, ಲಕ್ಷ್ಮೇಶ್ವರ ತಹಶೀಲ್ದಾರ್ ಧನಂಜಯ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ರೈತರು ಉಪಸ್ಥಿತರಿದ್ದರು.

“ರೈತರ ಸಮಸ್ಯೆಗಳನ್ನು ಅಧಿಕಾರಿಗಳು ಸ್ಥಳೀಯವಾಗಿ ಪರಿಶೀಲಿಸಿ ವಾಸ್ತವಿಕ ವರದಿ ಸಲ್ಲಿಸಬೇಕು. ಬರ ಪರಿಸ್ಥಿತಿಯಿಂದ ರೈತರಿಗೆ ತೊಂದರೆಯಾಗದಂತೆ ಸರ್ಕಾರದಿಂದ ಅಗತ್ಯ ಕ್ರಮ ಕೈಗೊಳ್ಳಲಾಗುವುದು.”
ಬಸವರಾಜ ರಾಯರಡ್ಡಿ, ಸಂಪುಟ ದರ್ಜೆ ಸಚಿವ

ಗುಡ್ಡಗಾಡಿನಲ್ಲಿ ಗರ್ಜಿಸಿದ ಸೈಕ್ಲಿಸ್ಟ್‌ಗಳು

0

ವಿಜಯಸಾಕ್ಷಿ ಸುದ್ದಿ, ಮುಳಗುಂದ: ಪಟ್ಟಣದ ಯಲಿಶಿರುಂಜ ಗುಡ್ಡಗಾಡು ಪ್ರದೇಶದಲ್ಲಿ ನಡೆದ ೨೧ನೇ ರಾಜ್ಯ ಮಟ್ಟದ ಸೈಕ್ಲಿಂಗ್‌ ಸ್ಪರ್ಧೆ ಅತ್ಯಂತ ರೋಚಕವಾಗಿ ನಡೆಯಿತು. ಕರ್ನಾಟಕ ರಾಜ್ಯ ಹಾಗೂ ಗದಗ ಜಿಲ್ಲಾ ಅಮೇಚೂರ್ ಸೈಕ್ಲಿಂಗ್ ಅಸೋಸಿಯೇಷನ್ ವತಿಯಿಂದ ಆಯೋಜಿಸಿದ್ದ ಸ್ಪರ್ಧೆಯಲ್ಲಿ ರಾಜ್ಯದ ೧೬ ಜಿಲ್ಲೆಗಳಿಂದ ೧೮೦ ಸೈಕ್ಲಿಸ್ಟ್‌ಗಳು ಪಾಲ್ಗೊಂಡು ತಮ್ಮ ಕ್ರೀಡಾ ಸಾಮರ್ಥ್ಯ ಪ್ರದರ್ಶಿಸಿದರು.

ಸ್ಪರ್ಧೆ ಆರಂಭವಾಗುತ್ತಿದ್ದಂತೆ ಸೈಕ್ಲಿಸ್ಟ್‌ಗಳು ಬಿರುಗಾಳಿಯ ವೇಗದಲ್ಲಿ ಟ್ರ್ಯಾಕ್‌ನಲ್ಲಿ ಮುನ್ನುಗ್ಗಿದರು. ಗುಡ್ಡಗಾಡಿನ ಕಠಿಣ ಹಾದಿ, ತಿರುವುಗಳು ಹಾಗೂ ಏರಿಳಿತಗಳ ನಡುವೆ ಗೆಲುವಿಗಾಗಿ ಕ್ರೀಡಾಪಟುಗಳು ನಡೆಸಿದ ಪೈಪೋಟಿ ಪ್ರತಿ ಕ್ಷಣವೂ ಕುತೂಹಲ ಮೂಡಿಸಿತು.

ಯಾರು ಮುನ್ನಡೆ ಸಾಧಿಸಲಿದ್ದಾರೆ, ಕೊನೆಯ ಕ್ಷಣದಲ್ಲಿ ಗೆಲುವಿನ ಗುರಿ ಮುಟ್ಟುವವರು ಯಾರು ಎಂಬ ಕುತೂಹಲದ ನಡುವೆ ಸೈಕ್ಲಿಸ್ಟ್‌ಗಳು ಪ್ರದರ್ಶಿಸಿದ ಕೌಶಲ್ಯ ನೆರೆದಿದ್ದ ಸಹಸ್ರಾರು ಕ್ರೀಡಾಭಿಮಾನಿಗಳನ್ನು ರೋಮಾಂಚನಗೊಳಿಸಿತು.

ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡಲು ಗದಗ ಜಿಲ್ಲೆಯ ವಿವಿಧ ತಾಲೂಕುಗಳು ಹಾಗೂ ಮುಳಗುಂದ ಸುತ್ತಮುತ್ತಲಿನ ಗ್ರಾಮಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡಾಭಿಮಾನಿಗಳು ಆಗಮಿಸಿದ್ದರು.

ವಿಶೇಷವಾಗಿ ಗ್ರಾಮೀಣ ಭಾಗದ ಮಕ್ಕಳು ಹಾಗೂ ಯುವಕರು ಸೈಕ್ಲಿಂಗ್ ಸ್ಪರ್ಧೆಯನ್ನು ಕಣ್ತುಂಬಿಕೊಂಡು, ತಾವೂ ಮುಂದಿನ ದಿನಗಳಲ್ಲಿ ಈ ಕ್ರೀಡೆಯಲ್ಲಿ ಭಾಗವಹಿಸಬೇಕು ಎಂಬ ಉತ್ಸಾಹ ಪಡೆದುಕೊಂಡರು. ಗುಡ್ಡಗಾಡಿನ ಪ್ರದೇಶದಲ್ಲಿ ನಡೆದ ಸ್ಪರ್ಧೆ ಕ್ರೀಡಾಪಟುಗಳ ಸಾಮರ್ಥ್ಯಕ್ಕೆ ಸವಾಲಾಗುವುದರ ಜೊತೆಗೆ ಪ್ರೇಕ್ಷಕರಿಗೆ ಭರಪೂರ ಮನರಂಜನೆ ನೀಡಿತು.