Home Blog

ಓವರ್ ಟೇಕ್ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ: ಜೆಸಿಬಿ ಚಾಲಕನ ಹೊಡೆತಕ್ಕೆ ಯುವಕ ಸ್ಥಳದಲ್ಲೇ ಸಾವು!

0

ಕಲಬುರಗಿ: ವಾಹನ ಓವರ್‌ಟೇಕ್ ಮಾಡುವ ವಿಚಾರಕ್ಕೆ ಆರಂಭವಾದ ಸಣ್ಣ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಉಡಗಿ ಗ್ರಾಮದಲ್ಲಿ ನಡೆದಿದೆ. ಜೆಸಿಬಿ ಚಾಲಕನೊಬ್ಬ ಯುವಕನಿಗೆ ಹೊಡೆದಿದ್ದು, ಹೊಡೆತದ ರಭಸಕ್ಕೆ ಯುವಕ ಸ್ಥಳದಲ್ಲೇ ಕುಸಿದು ಬಿದ್ದು ಮೃತಪಟ್ಟಿದ್ದಾನೆ.

ಮೃತ ಯುವಕನನ್ನು ಉಡಗಿ ಗ್ರಾಮದ ಭಾಗ್ಯವಂತ (24) ಎಂದು ಗುರುತಿಸಲಾಗಿದೆ. ವಾಹನ ಓವರ್‌ಟೇಕ್ ಮಾಡುವ ವಿಚಾರಕ್ಕೆ ಭಾಗ್ಯವಂತ ಹಾಗೂ ಜೆಸಿಬಿ ಚಾಲಕ ನಬೀ ನಡುವೆ ಜಗಳ ಆರಂಭವಾಗಿತ್ತು.

ಮಾತಿಗೆ ಮಾತು ಬೆಳೆದು ಜಗಳ ತೀವ್ರಗೊಂಡ ವೇಳೆ ಭಾಗ್ಯವಂತ, ನಬೀ ಅವರ ಶರ್ಟ್‌ನ ಕಾಲರ್ ಹಿಡಿದಿದ್ದಾನೆ ಎನ್ನಲಾಗಿದೆ. ಇದರಿಂದ ಕೋಪಗೊಂಡ ನಬೀ, ಭಾಗ್ಯವಂತನ ಕೆನ್ನೆಗೆ ಜೋರಾಗಿ ಹೊಡೆದಿದ್ದಾನೆ ಎಂದು ತಿಳಿದುಬಂದಿದೆ.

ಹೊಡೆತದ ರಭಸಕ್ಕೆ ಭಾಗ್ಯವಂತನ ಕೆನ್ನೆಗೆ ಗಂಭೀರ ಪೆಟ್ಟಾಗಿದ್ದು, ಕೂಡಲೇ ಸ್ಥಳದಲ್ಲೇ ಕುಸಿದು ಬಿದ್ದು ಮೃತಪಟ್ಟಿದ್ದಾನೆ ಎನ್ನಲಾಗಿದೆ.

ಘಟನೆ ಬಳಿಕ ಸೇಡಂ ಪೊಲೀಸರು ಆರೋಪಿ ನಬೀಯನ್ನು ಬಂಧಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸೇಡಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ವಾಹನ ಓವರ್‌ಟೇಕ್ ವಿಚಾರಕ್ಕೆ ಆರಂಭವಾದ ಕ್ಷುಲ್ಲಕ ಜಗಳ ಯುವಕನ ಸಾವಿನಲ್ಲಿ ಅಂತ್ಯವಾಗಿರುವುದು ಗ್ರಾಮದಲ್ಲಿ ಆತಂಕ ಮೂಡಿಸಿದೆ.

ಸ್ವಾತಂತ್ರ್ಯೋತ್ಸವಕ್ಕೂ ಮುನ್ನ ದೆಹಲಿಯಲ್ಲಿ ಹೈ ಅಲರ್ಟ್; 19 ಮೋಸ್ಟ್ ವಾಂಟೆಡ್ ಉಗ್ರರ ಪೋಸ್ಟರ್ ಬಿಡುಗಡೆ ಮಾಡಿದ ಪೊಲೀಸರು

0

ನವದೆಹಲಿ: ದೇಶಾದ್ಯಂತ ಸ್ವಾತಂತ್ರ್ಯೋತ್ಸವದ ಸಂಭ್ರಮಕ್ಕೆ ಸಿದ್ಧತೆ ನಡೆಯುತ್ತಿರುವ ಬೆನ್ನಲ್ಲೇ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ. ಸ್ವಾತಂತ್ರ್ಯೋತ್ಸವಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇರುವ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರು 19 ಮೋಸ್ಟ್ ವಾಂಟೆಡ್ ಭಯೋತ್ಪಾದಕರ ಪೋಸ್ಟರ್‌ಗಳನ್ನು ಬಿಡುಗಡೆ ಮಾಡಿದ್ದಾರೆ.

ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸರು ಸಾರ್ವಜನಿಕ ಸ್ಥಳಗಳು ಹಾಗೂ ಜನದಟ್ಟಣೆ ಇರುವ ಪ್ರದೇಶಗಳಲ್ಲಿ ಈ ಪೋಸ್ಟರ್‌ಗಳನ್ನು ಅಂಟಿಸಿದ್ದಾರೆ. ಪೋಸ್ಟರ್‌ಗಳಲ್ಲಿ ಆರೋಪಿಗಳ ಛಾಯಾಚಿತ್ರ ಹಾಗೂ ಗುರುತಿನ ವಿವರಗಳನ್ನು ಪ್ರಕಟಿಸಲಾಗಿದ್ದು, ಇವರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾದರೆ ತಕ್ಷಣ ಪೊಲೀಸರಿಗೆ ತಿಳಿಸುವಂತೆ ಮನವಿ ಮಾಡಲಾಗಿದೆ.

ಮೋಸ್ಟ್ ವಾಂಟೆಡ್ ಆರೋಪಿಗಳ ಬಂಧನಕ್ಕೆ ನೆರವಾಗುವಂತಹ ವಿಶ್ವಾಸಾರ್ಹ ಮಾಹಿತಿ ನೀಡುವವರಿಗೆ ಸೂಕ್ತ ಬಹುಮಾನ ನೀಡುವುದಾಗಿ ದೆಹಲಿ ಪೊಲೀಸರು ಘೋಷಿಸಿದ್ದಾರೆ. ಮಾಹಿತಿ ನೀಡುವವರ ಗುರುತನ್ನು ಗೌಪ್ಯವಾಗಿ ಇಡಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ.

ದೆಹಲಿ ಪೊಲೀಸರು ಕೇಂದ್ರದ ಭದ್ರತಾ ಸಂಸ್ಥೆಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ರಾಜಧಾನಿಯಲ್ಲಿ ಹೈ ಅಲರ್ಟ್ ಘೋಷಿಸಿದ್ದಾರೆ. ಸೂಕ್ಷ್ಮ ಪ್ರದೇಶಗಳು, ಪ್ರಮುಖ ಮಾರುಕಟ್ಟೆಗಳು, ರೈಲು ನಿಲ್ದಾಣಗಳು, ಬಸ್ ಟರ್ಮಿನಲ್‌ಗಳು ಸೇರಿದಂತೆ ಜನದಟ್ಟಣೆ ಹೆಚ್ಚಿರುವ ಸ್ಥಳಗಳಲ್ಲಿ ಕಣ್ಗಾವಲು ಹೆಚ್ಚಿಸಲಾಗಿದೆ.

ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಸಂಭವನೀಯ ಭದ್ರತಾ ಬೆದರಿಕೆಗಳನ್ನು ಗಮನದಲ್ಲಿಟ್ಟುಕೊಂಡು ದೆಹಲಿಯಾದ್ಯಂತ ಹೆಚ್ಚುವರಿ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಅನುಮಾನಾಸ್ಪದ ಚಟುವಟಿಕೆಗಳ ಮೇಲೆ ಪೊಲೀಸರು ತೀವ್ರ ನಿಗಾ ಇರಿಸಿದ್ದಾರೆ.

ಪೋಸ್ಟರ್‌ನಲ್ಲಿ ಯಾರ್ಯಾರ ಹೆಸರು?

ದೆಹಲಿ ಪೊಲೀಸರು ಬಿಡುಗಡೆ ಮಾಡಿರುವ ಪೋಸ್ಟರ್‌ನಲ್ಲಿ ಇಂಡಿಯನ್ ಮುಜಾಹಿದ್ದೀನ್, ಅಲ್-ಖೈದಾ ಹಾಗೂ ವಿವಿಧ ಖಲಿಸ್ತಾನಿ ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿರುವ ಆರೋಪಿಗಳ ಮಾಹಿತಿ ಒಳಗೊಂಡಿದೆ.

ಇಂಡಿಯನ್ ಮುಜಾಹಿದ್ದೀನ್‌ಗೆ ಸಂಬಂಧಿಸಿದಂತೆ ರಿಯಾಜ್ ಭಟ್ಕಳ್ ಹಾಗೂ ಶಬಂದರಿ ಮೊಹಮ್ಮದ್ ಇಕ್ಬಾಲ್ ಅಲಿಯಾಸ್ ಇಕ್ಬಾಲ್ ಭಟ್ಕಳ್ ಅವರ ಹೆಸರುಗಳನ್ನು ಪೋಸ್ಟರ್‌ನಲ್ಲಿ ಉಲ್ಲೇಖಿಸಲಾಗಿದೆ.

ಅಲ್-ಖೈದಾ ಜತೆಗೆ ಸಂಪರ್ಕ ಹೊಂದಿರುವ ಆರೋಪಿಗಳ ಪಟ್ಟಿಯಲ್ಲಿ ಮೊಹಮ್ಮದ್ ಶಾರ್ಜೀಲ್ ಅಖ್ತರ್, ಅಬು ಸುಫಿಯಾನ್ ಹಾಗೂ ಸೈಯದ್ ಮೊಹಮ್ಮದ್ ಅರ್ಷಿಯಾನ್ ಅವರ ಹೆಸರುಗಳಿವೆ.

ಖಲಿಸ್ತಾನಿ ಭಯೋತ್ಪಾದಕ ಸಂಘಟನೆಗಳಿಗೆ ಸಂಬಂಧಿಸಿದಂತೆ ಖಲಿಸ್ತಾನ್ ಜಿಂದಾಬಾದ್ ಫೋರ್ಸ್‌ನ ರಂಜಿತ್ ಸಿಂಗ್ ಅಲಿಯಾಸ್ ನೀತಾ ಮತ್ತು ಪರಮಜಿತ್ ಸಿಂಗ್ ಪಮ್ಮಾ, ಖಲಿಸ್ತಾನ್ ಟೈಗರ್ ಫೋರ್ಸ್‌ನ ಅರ್ಶ್‌ದೀಪ್ ಸಿಂಗ್ ಅಲಿಯಾಸ್ ಅರ್ಶ್ ದಲಾ ಅವರ ಹೆಸರುಗಳನ್ನು ಪ್ರಮುಖವಾಗಿ ಉಲ್ಲೇಖಿಸಲಾಗಿದೆ.

ಇದಲ್ಲದೆ, ಬಬ್ಬರ್ ಖಾಲ್ಸಾ ಇಂಟರ್‌ನ್ಯಾಷನಲ್‌ಗೆ ಸಂಬಂಧಿಸಿದ ಹರ್ವಿಂದರ್ ಸಿಂಗ್ ಸಂಧು ಅಲಿಯಾಸ್ ರಿಂಡಾ, ವಾಧವಾ ಸಿಂಗ್ ಬಬ್ಬರ್ ಹಾಗೂ ಗುರ್ಮೀತ್ ಸಿಂಗ್ ಬಗ್ಗಾ ಸೇರಿದಂತೆ ಇತರ ಮೋಸ್ಟ್ ವಾಂಟೆಡ್ ಆರೋಪಿಗಳ ಮಾಹಿತಿಯನ್ನೂ ಪೊಲೀಸರು ಪ್ರಕಟಿಸಿದ್ದಾರೆ.

ಸ್ವಾತಂತ್ರ್ಯೋತ್ಸವದ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಭದ್ರತಾ ವ್ಯವಸ್ಥೆಯನ್ನು ಮತ್ತಷ್ಟು ಬಿಗಿಗೊಳಿಸಿದ್ದು, ಸಾರ್ವಜನಿಕರು ಸಹ ಎಚ್ಚರಿಕೆಯಿಂದ ಇರುವಂತೆ ಸೂಚಿಸಿದ್ದಾರೆ.

ರೇಣುಕಾಸ್ವಾಮಿ ಕೇಸ್‌ನಲ್ಲಿ ಟ್ವಿಸ್ಟ್‌ ಮೇಲೆ ಟ್ವಿಸ್ಟ್: ಪ್ರದೂಷ್ ಭದ್ರತೆಗೆ ಕೋರ್ಟ್ ಸೂಚನೆ, ಮಾಧ್ಯಮಗಳಿಗೆ ಕೋರ್ಟ್ ವಾರ್ನಿಂಗ್

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ14 ಆರೋಪಿ ಪ್ರದೂಷ್ ಸಲ್ಲಿಸಿರುವ ಮಾಫಿ ಸಾಕ್ಷಿ ಅರ್ಜಿ ಇದೀಗ ವಿಚಾರಣೆಯ ಕೇಂದ್ರಬಿಂದುವಾಗಿದೆ. 59ನೇ ಸಿಸಿಹೆಚ್ ಕೋರ್ಟ್‌ನ ನ್ಯಾಯಾಧೀಶೆ ಸುಜಾತ ಎಂ. ಸಾಂಬ್ರಾಣಿ ಅವರ ಮುಂದೆ ಅರ್ಜಿ ವಿಚಾರಣೆ ಆರಂಭವಾಗಿದ್ದು, ಪ್ರದೂಷ್ ಪರ ವಕೀಲ ದಿವಾಕರ್ ಹಾಗೂ ದರ್ಶನ್ ಪರ ವಕೀಲ ಹಷ್ಮತ್ ಪಾಷಾ ನಡುವೆ ತೀವ್ರ ವಾದ-ಪ್ರತಿವಾದ ನಡೆದಿದೆ.

ವಿಡಿಯೋ ಕಾನ್ಫರೆನ್ಸ್ ಮೂಲಕ ಆರೋಪಿಗಳನ್ನು ಕೋರ್ಟ್‌ಗೆ ಹಾಜರುಪಡಿಸಲಾಗಿದ್ದು, ಪವಿತ್ರಾ ಗೌಡ, ದರ್ಶನ್, ಪ್ರದೂಷ್ ಸೇರಿದಂತೆ ಆರೋಪಿಗಳು ವಿಚಾರಣೆಯಲ್ಲಿ ಭಾಗಿಯಾಗಿದ್ದಾರೆ.

ಪ್ರದೂಷ್ ಪರ ವಕೀಲ ದಿವಾಕರ್ ಅವರು, ಪ್ರದೂಷ್ ಅಪ್ರೂವರ್ ಆಗಲು ಬಯಸಿದ್ದು, ಅವರ ಹೇಳಿಕೆಯನ್ನು ಕೋರ್ಟ್ ದಾಖಲಿಸಬೇಕು ಎಂದು ವಾದಿಸಿದ್ದಾರೆ. ಈ ಪ್ರಕರಣದಲ್ಲಿ ಕಿಡ್ನಾಪ್, ಕೊಲೆ ಮತ್ತು ಸಾಕ್ಷ್ಯ ನಾಶಕ್ಕೆ ಯತ್ನ ಎಂಬ ಮೂರು ಆಯಾಮಗಳಿವೆ. ಹೀಗಾಗಿ ಪ್ರದೂಷ್ ಅವರ ಅರ್ಜಿಯನ್ನು ವಿಳಂಬ ಮಾಡದೆ ಪರಿಗಣಿಸಿ, ಅವರ ಹೇಳಿಕೆ ದಾಖಲಿಸಲು ಅವಕಾಶ ನೀಡಬೇಕು ಎಂದು ಕೋರ್ಟ್‌ಗೆ ಮನವಿ ಮಾಡಿದ್ದಾರೆ.

ಅರ್ಜಿ ವಿಚಾರಣೆಯನ್ನು ವಿಳಂಬ ಮಾಡಿದರೆ ಪ್ರಕರಣದ ಮೇಲೆ ಪ್ರಭಾವ ಬೀರುವ ಸಾಧ್ಯತೆಗಳಿವೆ. ಆದ್ದರಿಂದ ಸಾಧ್ಯವಾದಷ್ಟು ಬೇಗ ಅರ್ಜಿ ಪರಿಗಣಿಸಿ ಹೇಳಿಕೆ ದಾಖಲಿಸುವುದು ಅಗತ್ಯ ಎಂದು ದಿವಾಕರ್ ವಾದಿಸಿದ್ದಾರೆ.

ಆದರೆ ದರ್ಶನ್ ಪರ ವಕೀಲ ಹಷ್ಮತ್ ಪಾಷಾ ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ‘ಎ14 ಇನ್ನೂ ಆರೋಪಿಯೇ ಹೊರತು ಸಾಕ್ಷಿಯಲ್ಲ. ಅವರು ಇನ್ನೂ ಸಾಕ್ಷಿಯಾಗಿಲ್ಲ. ಕೋರ್ಟ್ ಕೂಡ ಅವರ ಮಾಫಿ ಸಾಕ್ಷಿ ಅರ್ಜಿಯನ್ನು ಇನ್ನೂ ಪರಿಗಣಿಸಿಲ್ಲ’ ಎಂದು ವಾದಿಸಿದ್ದಾರೆ.

ಸೆಷನ್ಸ್ ಕೋರ್ಟ್‌ನ ಆದೇಶವನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಲು ಅವಕಾಶವಿದೆ. ಒಂದು ವೇಳೆ ಹೈಕೋರ್ಟ್ ಸೆಷನ್ಸ್ ಕೋರ್ಟ್ ಆದೇಶವನ್ನು ಎತ್ತಿಹಿಡಿದರೆ, ನಂತರ ಮುಂದಿನ ಪ್ರಕ್ರಿಯೆ ಮುಂದುವರಿಸಬಹುದು. ಹೀಗಿರುವಾಗ ತಕ್ಷಣವೇ ಪ್ರದೂಷ್ ಅವರ ಹೇಳಿಕೆ ದಾಖಲಿಸುವುದು ಸೂಕ್ತವಲ್ಲ ಎಂದು ಹಷ್ಮತ್ ಪಾಷಾ ಪ್ರತಿವಾದಿಸಿದ್ದಾರೆ.

ಇದಕ್ಕೆ ದಿವಾಕರ್ ತಿರುಗೇಟು ನೀಡಿದ್ದು, ‘ನಾನು ಪ್ರದೂಷ್ ಸಾಕ್ಷಿ ಎಂದು ಹೇಳುತ್ತಿಲ್ಲ. ಅವರು ಸಾಕ್ಷಿಯಾಗಲು ಮನವಿ ಮಾಡಿದ್ದಾರೆ. ಅದಕ್ಕಾಗಿಯೇ ಮಾಫಿ ಸಾಕ್ಷಿಯಾಗಲು ಅರ್ಜಿ ಸಲ್ಲಿಸಿದ್ದಾರೆ’ ಎಂದು ಸ್ಪಷ್ಟಪಡಿಸಿದ್ದಾರೆ.

ಪ್ರದೂಷ್ ಅವರ ಅರ್ಜಿಯನ್ನು ಪುರಸ್ಕರಿಸಿ ಹೇಳಿಕೆ ದಾಖಲಿಸಲು ಅವಕಾಶ ನೀಡಬೇಕು ಎಂದು ದಿವಾಕರ್ ಮತ್ತೆ ಮನವಿ ಮಾಡಿದ್ದಾರೆ. ಪ್ರದೂಷ್ ಅವರ ಹೇಳಿಕೆ ಸಾಕ್ಷಿಯಾಗುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ಪ್ರಾಸಿಕ್ಯೂಷನ್ ನಿರ್ಧರಿಸಲಿದೆ. ಅವರು ಸಾಕ್ಷಿಯಾಗದಿದ್ದರೆ ಆರೋಪಿಯಾಗಿಯೇ ಮುಂದುವರಿಯಲಿದ್ದಾರೆ ಎಂದು ವಾದಿಸಿದ್ದಾರೆ.

ಅಲ್ಲದೆ, ಪ್ರಾಸಿಕ್ಯೂಷನ್ ಈಗಾಗಲೇ ಮಾಫಿ ಸಾಕ್ಷಿಯಾಗಲು ಪ್ರದೂಷ್‌ಗೆ ಸಮ್ಮತಿ ನೀಡಿದೆ ಎಂಬುದನ್ನೂ ದಿವಾಕರ್ ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ. ಹೀಗಾಗಿ ಅರ್ಜಿ ವಿಚಾರಣೆಯನ್ನು ಮುಂದೂಡದೆ, ಮಾಫಿ ಸಾಕ್ಷಿ ಅರ್ಜಿಯನ್ನು ಪುರಸ್ಕರಿಸಿ ಹೇಳಿಕೆ ದಾಖಲಿಸಲು ಅವಕಾಶ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ವಿಚಾರಣೆಯ ನಡುವೆ ಪ್ರದೂಷ್ ಅವರ ಭದ್ರತೆಯ ಬಗ್ಗೆಯೂ ವಕೀಲ ದಿವಾಕರ್ ಕೋರ್ಟ್ ಮುಂದೆ ಮನವಿ ಮಾಡಿದ್ದಾರೆ. ಪ್ರದೂಷ್ ಅವರನ್ನು ಜೈಲಿನಲ್ಲಿ ಪ್ರತ್ಯೇಕವಾಗಿ ಇರಿಸಿ, ಸೂಕ್ತ ಭದ್ರತೆ ಒದಗಿಸಬೇಕು ಎಂದು ಮನವಿ ಮಾಡಲಾಗಿದೆ.

ಇದನ್ನು ಪರಿಗಣಿಸಿದ ನ್ಯಾಯಾಲಯ, ಪ್ರದೂಷ್‌ಗೆ ಸೂಕ್ತ ಭದ್ರತೆ ಒದಗಿಸುವಂತೆ ಜೈಲು ಅಧಿಕಾರಿಗಳಿಗೆ ಸೂಚನೆ ನೀಡಿದೆ. ಈ ಸಂಬಂಧ ಒಂದು ವಾರ ಕಾಲಾವಕಾಶ ನೀಡಿರುವ ಕೋರ್ಟ್, ಪ್ರದೂಷ್ ಅವರ ಸುರಕ್ಷತೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದೆ.

ಇದೇ ವೇಳೆ ಪ್ರಕರಣದ ಕುರಿತು ವರದಿ ಮಾಡುವ ಮಾಧ್ಯಮಗಳಿಗೂ ನ್ಯಾಯಾಲಯ ಖಡಕ್ ವಾರ್ನಿಂಗ್ ನೀಡಿದೆ. ಪ್ರಕರಣದ ಬಗ್ಗೆ ಸರಿಯಾದ ಮಾಹಿತಿಯನ್ನೇ ನೀಡಬೇಕು. ಇಲ್ಲಿ ಆಗಿರುವುದು ಒಂದು, ಅಲ್ಲಿ ಪ್ರಕಟವಾಗುವುದು ಮತ್ತೊಂದು ಆಗಬಾರದು ಎಂದು ನ್ಯಾಯಾಲಯ ಎಚ್ಚರಿಕೆ ನೀಡಿದೆ.

ಹೀಗಾಗಿ ಇದೀಗ ಕೋರ್ಟ್‌ನ ಮುಂದಿರುವ ಪ್ರಮುಖ ಪ್ರಶ್ನೆ ಪ್ರದೂಷ್ ಅವರ ಮಾಫಿ ಸಾಕ್ಷಿ ಅರ್ಜಿಯೇ ಆಗಿದೆ. ಎ14 ಆರೋಪಿಗೆ ಅಪ್ರೂವರ್ ಆಗುವ ಅವಕಾಶ ಸಿಗುತ್ತಾ? ಮಾಫಿ ಸಾಕ್ಷಿ ಅರ್ಜಿಗೆ ಕೋರ್ಟ್ ಒಪ್ಪಿಗೆ ನೀಡುತ್ತಾ? ಅಥವಾ ದರ್ಶನ್ ಪರ ವಕೀಲರ ಆಕ್ಷೇಪದ ಹಿನ್ನೆಲೆಯಲ್ಲಿ ಪ್ರಕ್ರಿಯೆ ಮತ್ತಷ್ಟು ವಿಳಂಬವಾಗುತ್ತಾ? ಎಂಬ ಕುತೂಹಲ ಮೂಡಿದೆ.

ಬೆಂಗಳೂರು ಕಂಠೀರವ ಸ್ಟುಡಿಯೋ ಬಳಿ ಭೀಕರ ದುರಂತ: ಮಣ್ಣಿನ ತಡೆಗೋಡೆ ಕುಸಿದು ಕಾರ್ಮಿಕ ಸಾವು

0

ಬೆಂಗಳೂರು: ರಾಜಧಾನಿಯ ಕಂಠೀರವ ಸ್ಟುಡಿಯೋ ಮುಂಭಾಗ ಹಾಗೂ ಡಾ. ರಾಜ್‌ಕುಮಾರ್ ಪುಣ್ಯಭೂಮಿ ಬಳಿ ನಡೆಯುತ್ತಿದ್ದ ಅಂಡರ್‌ಪಾಸ್ ಕಾಮಗಾರಿ ವೇಳೆ ಭೀಕರ ದುರಂತ ಸಂಭವಿಸಿದೆ. ಸುಮಾರು 20 ಅಡಿ ಆಳಕ್ಕೆ ತೋಡಲಾಗಿದ್ದ ಗುಂಡಿಯ ಮಣ್ಣಿನ ತಡೆಗೋಡೆ ಏಕಾಏಕಿ ಕುಸಿದು ಬಿದ್ದ ಪರಿಣಾಮ ಓರ್ವ ಕಾರ್ಮಿಕ ಮೃತಪಟ್ಟಿದ್ದು, ಹಲವು ಕಾರ್ಮಿಕರು ಮಣ್ಣಿನಡಿ ಸಿಲುಕಿಕೊಂಡಿದ್ದಾರೆ.

ಅಂಡರ್‌ಪಾಸ್ ನಿರ್ಮಾಣಕ್ಕಾಗಿ ರಸ್ತೆಯಲ್ಲಿ ಸುಮಾರು 20 ಅಡಿ ಆಳದವರೆಗೆ ಮಣ್ಣು ತೆಗೆಯಲಾಗಿತ್ತು. ಎಂದಿನಂತೆ ಕಾರ್ಮಿಕರು ಕಾಮಗಾರಿಯಲ್ಲಿ ತೊಡಗಿಸಿಕೊಂಡಿದ್ದ ವೇಳೆ ಏಕಾಏಕಿ ಮೇಲ್ಭಾಗದಲ್ಲಿದ್ದ ಮಣ್ಣಿನ ತಡೆಗೋಡೆ ಕುಸಿದು ಬಿದ್ದಿದೆ. ಕ್ಷಣಾರ್ಧದಲ್ಲಿ ಮಣ್ಣು ಕುಸಿದ ಪರಿಣಾಮ ಸ್ಥಳದಲ್ಲಿದ್ದ ಐವರು ಕಾರ್ಮಿಕರು ಮಣ್ಣಿನಡಿ ಸಿಲುಕಿ ಉಸಿರಾಡಲಾಗದೆ ಪರದಾಡಿದ್ದಾರೆ.

ದುರಂತದ ಬೆನ್ನಲ್ಲೇ ಸಿಬ್ಬಂದಿ ಹಾಗೂ ಸಾರ್ವಜನಿಕರು ತಕ್ಷಣ ಕಾರ್ಯಾಚರಣೆಗೆ ಮುಂದಾಗಿದ್ದು, ಮಣ್ಣಿನಡಿ ಸಿಲುಕಿದ್ದ ಮೂವರು ಕಾರ್ಮಿಕರನ್ನು ಸುರಕ್ಷಿತವಾಗಿ ಹೊರತೆಗೆಯಲಾಗಿದೆ. ಘಟನೆಯಲ್ಲಿ ಓರ್ವ ಕಾರ್ಮಿಕ ಮೃತಪಟ್ಟಿರುವುದು ದೃಢಪಟ್ಟಿದ್ದು, ಮತ್ತೋರ್ವ ಕಾರ್ಮಿಕ ಮಣ್ಣಿನಡಿ ಸಿಲುಕಿರುವ ಹಿನ್ನೆಲೆಯಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.

ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಹಾಗೂ ಹೆಚ್ಚುವರಿ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದಾರೆ. ಮಣ್ಣಿನಡಿ ಇನ್ನೂ ಯಾರಾದರೂ ಸಿಲುಕಿಕೊಂಡಿದ್ದಾರೆಯೇ ಎಂಬ ಅನುಮಾನ ಹಿನ್ನೆಲೆಯಲ್ಲಿ ರಕ್ಷಣಾ ಸಿಬ್ಬಂದಿ ವ್ಯಾಪಕ ಶೋಧ ಕಾರ್ಯ ನಡೆಸುತ್ತಿದ್ದಾರೆ. ಘಟನಾ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ರಕ್ಷಣಾ ಕಾರ್ಯಾಚರಣೆ ತೀವ್ರಗೊಳಿಸಲಾಗಿದೆ.

‘ನನ್ನ ಮತವನ್ನೇ ತೆಗೆದುಹಾಕಿದ್ದಾರೆ’: ಎಸ್‌ಐಆರ್‌ ವಿರುದ್ಧ ನಟ ಪ್ರಕಾಶ್ ರೈ ಕಿಡಿ

ಬೆಂಗಳೂರು: ಎಸ್‌ಐಆರ್‌ ಪ್ರಕ್ರಿಯೆ ನಡುವೆ ನಟ ಪ್ರಕಾಶ್ ರೈ ಅವರ ಮತದಾರರ ಪಟ್ಟಿಯಲ್ಲಿನ ಹೆಸರು ಡಿಲೀಟ್ ಆಗಿರುವ ವಿಚಾರ ಮುನ್ನೆಲೆಗೆ ಬಂದಿದೆ. ಬೆಂಗಳೂರಿನಿಂದ ಎಸ್‌ಐಆರ್‌ ಅಡಿಯಲ್ಲಿ ಡಿಲೀಟ್ ಆಗಿರುವ 65 ಲಕ್ಷ ಮತದಾರರಲ್ಲಿ ತಾನೂ ಒಬ್ಬ ಎಂದು ಹೇಳಿಕೊಂಡಿರುವ ಪ್ರಕಾಶ್ ರೈ, ತಮ್ಮ ಹುಟ್ಟೂರು ಹಾಗೂ ಬೆಳೆದ ಕ್ಷೇತ್ರದಿಂದಲೇ ಮತದಾನದ ಹಕ್ಕು ಕಳೆದುಕೊಂಡಿರುವುದಾಗಿ ಇನ್‌ಸ್ಟಾಗ್ರಾಂ ವಿಡಿಯೊ ಮೂಲಕ ತಿಳಿಸಿದ್ದಾರೆ.

2024ರಲ್ಲಿ ಬೆಂಗಳೂರು ಸೆಂಟ್ರಲ್ ಕ್ಷೇತ್ರದ ಸೇಂಟ್ ಜೋಸೆಫ್ ಇಂಡಿಯನ್ ಹೈಸ್ಕೂಲ್‌ನಲ್ಲಿ ಮತ ಚಲಾಯಿಸಿದ್ದಾಗಿ ಹೇಳಿರುವ ಪ್ರಕಾಶ್ ರೈ, ಇದೇ ಕ್ಷೇತ್ರದಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ್ದೆ. ಹೀಗಿದ್ದರೂ ತಮ್ಮ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂದು ಪ್ರಶ್ನಿಸಿದ್ದಾರೆ.

ಪ್ರಕಾಶ್ ರೈ ಅವರ ಮತದಾರರ ಪಟ್ಟಿಯಲ್ಲಿನ ಹೆಸರು ಒಂದಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ಇರುವ ಆರೋಪ ಹೊಸದಲ್ಲ. 2019ರಲ್ಲೇ ಅವರ ವಿರುದ್ಧ ಈ ಸಂಬಂಧ ದೂರು ದಾಖಲಾಗಿತ್ತು. ಬೆಂಗಳೂರಿನ ಶಾಂತಿನಗರದಲ್ಲಿ ಒಂದು, ಚೆನ್ನೈನ ವಲಚೇರಿಯಲ್ಲಿ ಎರಡು ಹಾಗೂ ತೆಲಂಗಾಣದ ಸೆರಿಲಿಂಗಂಪಲ್ಲಿ ಕ್ಷೇತ್ರಗಳ ಮತದಾರರ ಪಟ್ಟಿಯಲ್ಲಿ ಅವರ ಹೆಸರು ಇದೆ ಎಂದು ಆರೋಪಿಸಲಾಗಿತ್ತು.

ಈ ಪ್ರಕರಣದ ವಿಚಾರಣೆಗೆ ಗೈರಾಗಿದ್ದ ಹಿನ್ನೆಲೆಯಲ್ಲಿ 2025ರಲ್ಲಿ ನ್ಯಾಯಾಲಯ ವಾರೆಂಟ್ ಹೊರಡಿಸಿತ್ತು. ಬಳಿಕ ಜುಲೈ 10, 2026ರಂದು ಪ್ರಕಾಶ್ ರೈ ಷರತ್ತುಬದ್ಧ ಜಾಮೀನು ಪಡೆದಿದ್ದಾರೆ. ಪ್ರಕರಣ ಇನ್ನೂ ವಿಚಾರಣೆಯಲ್ಲಿದೆ. ಈ ಹಿನ್ನೆಲೆಯಲ್ಲಿ ಒಂದಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರು ಹೊಂದಿರುವ ಆರೋಪವೇ ಎಸ್‌ಐಆರ್‌ ವೇಳೆ ಅವರ ಮತ ಡಿಲೀಟ್ ಆಗಲು ಕಾರಣವಾಗಿರಬಹುದೇ ಎಂಬ ಚರ್ಚೆ ನಡೆಯುತ್ತಿದೆ.

ಈ ನಡುವೆ ತಮ್ಮ ಮತವನ್ನು ಮರಳಿ ಪಡೆಯಲು ಹೋರಾಟ ನಡೆಸುವುದಾಗಿ ಪ್ರಕಾಶ್ ರೈ ಸ್ಪಷ್ಟಪಡಿಸಿದ್ದಾರೆ. ಎಷ್ಟು ದಾಖಲೆಗಳನ್ನು ನೀಡಬೇಕಾದರೂ ನೀಡುವುದಾಗಿ ಹೇಳಿರುವ ಅವರು, ತಮ್ಮ ಮತವನ್ನು ಡಿಲೀಟ್ ಮಾಡಿರುವ ವಿಚಾರದಲ್ಲಿ ಸುಮ್ಮನೆ ಕೂರುವುದಿಲ್ಲ ಎಂದು ತಿಳಿಸಿದ್ದಾರೆ.

‘ಮಂಗಳ ಗೌರಿ ಮದುವೆ’ ಧಾರಾವಾಹಿಯ ಕಾನ್‌ಸ್ಟೇಬಲ್‌ ಇನ್ನಿಲ್ಲ: ಹಿರಿಯ ನಟ ವಿಜಯಕುಮಾರ್ ಜಿತೂರಿ ಕೊನೆಯುಸಿರು

ಗದಗ: ‘ಮಂಗಳ ಗೌರಿ ಮದುವೆ’ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ಅಭಿನಯಿಸಿ ಕಿರುತೆರೆ ಪ್ರೇಕ್ಷಕರಿಗೆ ಪರಿಚಿತರಾಗಿದ್ದ ಹಿರಿಯ ಕಲಾವಿದ ವಿಜಯಕುಮಾರ್ ಜಿತೂರಿ ನಿಧನರಾಗಿದ್ದಾರೆ. ಸೋಮವಾರ ಸಂಜೆ ಗದಗದ ಬೆಟಗೇರಿಯಲ್ಲಿ ಅವರು ಕೊನೆಯುಸಿರೆಳೆದಿದ್ದು, ಅವರಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು ಎನ್ನಲಾಗಿದೆ.

ವಿಜಯಕುಮಾರ್ ಜಿತೂರಿ ಅವರದ್ದು ಬಹುಮುಖ ಪ್ರತಿಭೆ. ನಟನೆಯೊಂದಿಗೆ ಗಾಯನದಲ್ಲೂ ಆಸಕ್ತಿ ಹೊಂದಿದ್ದ ಅವರು ಕಿರುತೆರೆ ಮಾತ್ರವಲ್ಲದೆ ಹಿರಿತೆರೆ ಹಾಗೂ ರಂಗಭೂಮಿಯಲ್ಲೂ ಅಭಿನಯಿಸಿದ್ದರು. ಹಲವು ವರ್ಷಗಳ ಕಾಲ ಬಣ್ಣದ ಲೋಕದೊಂದಿಗೆ ನಂಟು ಹೊಂದಿದ್ದ ಅವರು, ವಿವಿಧ ಪಾತ್ರಗಳ ಮೂಲಕ ಪ್ರೇಕ್ಷಕರ ಗಮನ ಸೆಳೆದಿದ್ದರು.

ಗಗನ್ ಚಿನ್ನಪ್ಪ ಅಭಿನಯದ ‘ಮಂಗಳ ಗೌರಿ ಮದುವೆ’ ಧಾರಾವಾಹಿಯಲ್ಲಿ ಕಾನ್‌ಸ್ಟೇಬಲ್ ಪಾತ್ರದಲ್ಲಿ ವಿಜಯಕುಮಾರ್ ಜಿತೂರಿ ಕಾಣಿಸಿಕೊಂಡಿದ್ದರು. ಧಾರಾವಾಹಿಯ ಹಲವು ಪ್ರಮುಖ ಸನ್ನಿವೇಶಗಳಲ್ಲಿ ಗಗನ್ ಚಿನ್ನಪ್ಪ ಅವರೊಂದಿಗೆ ಅಭಿನಯಿಸಿ ಗುರುತಿಸಿಕೊಂಡಿದ್ದರು.

ಕಲಾ ಕ್ಷೇತ್ರದಲ್ಲಿ ಹಲವು ವರ್ಷಗಳ ಅನುಭವ ಹೊಂದಿದ್ದರೂ ಇತ್ತೀಚಿನ ದಿನಗಳಲ್ಲಿ ಅವರಿಗೆ ಹೆಚ್ಚಿನ ನಟನಾ ಅವಕಾಶಗಳು ದೊರೆಯಲಿಲ್ಲ ಎನ್ನಲಾಗಿದೆ. ಇದರ ಪರಿಣಾಮವಾಗಿ ಆರ್ಥಿಕ ಸಂಕಷ್ಟ ಎದುರಾಗಿತ್ತು. ಬೆಂಗಳೂರಿನಲ್ಲಿ ಮನೆ ಬಾಡಿಗೆ ಸೇರಿದಂತೆ ಜೀವನ ನಿರ್ವಹಣೆಯ ಸವಾಲುಗಳಿಂದಾಗಿ ಅವರು ಹುಟ್ಟೂರಾದ ಗದಗಕ್ಕೆ ವಾಪಸ್ ಆಗಿದ್ದರು.

ಇದೀಗ ವಿಜಯಕುಮಾರ್ ಜಿತೂರಿ ಅವರ ನಿಧನದಿಂದ ಅವರ ಕುಟುಂಬ, ಆಪ್ತರು ಹಾಗೂ ಕಲಾ ಕ್ಷೇತ್ರದ ಸಹೋದ್ಯೋಗಿಗಳು ಆಘಾತಕ್ಕೊಳಗಾಗಿದ್ದಾರೆ. ನಟ, ಗಾಯಕ ಹಾಗೂ ರಂಗಭೂಮಿ ಕಲಾವಿದನಾಗಿ ಅವರು ನೀಡಿದ ಕೊಡುಗೆಯನ್ನು ಸ್ಮರಿಸುತ್ತಾ ಹಲವರು ಸಂತಾಪ ಸೂಚಿಸಿದ್ದಾರೆ.

ನಮ್ಮ ಮೆಟ್ರೋದಲ್ಲಿ ಹೊಸ ರೆಕಾರ್ಡ್: ಒಂದೇ ದಿನ 11.19 ಲಕ್ಷ ಮಂದಿ ಪ್ರಯಾಣ, ಹಿಂದಿನ ದಾಖಲೆ ಉಡೀಸ್

0

ಬೆಂಗಳೂರು: ನಮ್ಮ ಮೆಟ್ರೋದಲ್ಲಿ ಪ್ರಯಾಣಿಕರ ಸಂಖ್ಯೆ ಹೊಸ ದಾಖಲೆ ನಿರ್ಮಿಸಿದೆ. ಒಂದೇ ದಿನ 11.19 ಲಕ್ಷಕ್ಕೂ ಅಧಿಕ ಮಂದಿ ಮೆಟ್ರೋದಲ್ಲಿ ಸಂಚರಿಸುವ ಮೂಲಕ ಹಿಂದಿನ ದಾಖಲೆಯನ್ನು ಮುರಿದಿದ್ದಾರೆ.

ಆಗಸ್ಟ್ 10ರಂದು, ಸೋಮವಾರ ಒಂದೇ ದಿನ ನಮ್ಮ ಮೆಟ್ರೋದಲ್ಲಿ ಬರೋಬ್ಬರಿ 11,19,815 ಮಂದಿ ಪ್ರಯಾಣಿಸಿದ್ದಾರೆ. ಈ ಮೂಲಕ ಮೆಟ್ರೋ ಆರಂಭವಾದ ಬಳಿಕದ ಅತಿ ಹೆಚ್ಚಿನ ರೈಡರ್‌ಶಿಪ್ ದಾಖಲಾಗಿದ್ದು, ಹೊಸ ಮೈಲಿಗಲ್ಲು ನಿರ್ಮಾಣವಾಗಿದೆ.

ಇದಕ್ಕೂ ಮುನ್ನ ಕಳೆದ ಐದು ತಿಂಗಳ ಹಿಂದೆ, ಯುಗಾದಿ ಹಬ್ಬದ ಸಂದರ್ಭದಲ್ಲಿ ನಮ್ಮ ಮೆಟ್ರೋದಲ್ಲಿ 10.73 ಲಕ್ಷ ಮಂದಿ ಪ್ರಯಾಣಿಸಿದ್ದು ದಾಖಲೆಯಾಗಿತ್ತು. ಇದೀಗ ಈ ದಾಖಲೆಯನ್ನು ಮೀರಿಸುವ ಮೂಲಕ ಹೊಸ ದಾಖಲೆ ಸೃಷ್ಟಿಯಾಗಿದೆ.

ನಮ್ಮ ಮೆಟ್ರೋ ಆರಂಭವಾಗಿ 15 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಒಂದೇ ದಿನ 11 ಲಕ್ಷಕ್ಕೂ ಅಧಿಕ ಪ್ರಯಾಣಿಕರು ಮೆಟ್ರೋ ಸೇವೆ ಬಳಸಿದ್ದಾರೆ.

ನಗರದಲ್ಲಿ ಹೆಚ್ಚುತ್ತಿರುವ ಸಂಚಾರ ದಟ್ಟಣೆ, ಸಾರ್ವಜನಿಕ ಸಾರಿಗೆಯ ಮೇಲಿನ ಅವಲಂಬನೆ ಹಾಗೂ ಮೆಟ್ರೋ ಜಾಲದ ವಿಸ್ತರಣೆಯಿಂದಾಗಿ ಪ್ರಯಾಣಿಕರ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ. ಇದೀಗ ಒಂದೇ ದಿನ 11,19,815 ಮಂದಿ ಮೆಟ್ರೋದಲ್ಲಿ ಸಂಚರಿಸಿರುವುದು ಬೆಂಗಳೂರಿನಲ್ಲಿ ಮೆಟ್ರೋ ಸೇವೆಯ ಮೇಲಿನ ಜನರ ಅವಲಂಬನೆ ಹೆಚ್ಚುತ್ತಿರುವುದಕ್ಕೆ ಸಾಕ್ಷಿಯಾಗಿದೆ.

ಬೈಕ್ ಟ್ಯಾಕ್ಸಿಗಳಿಗೆ ರಾಜ್ಯ ಸರ್ಕಾರದಿಂದ ಬಿಗ್ ಶಾಕ್; ಅನುಮತಿ ನೀಡಲು ಸಾಧ್ಯವಿಲ್ಲ ಎಂದು ಸುಪ್ರೀಂಗೆ ಅಫಿಡವಿಟ್

0

ಬೆಂಗಳೂರು: ನಗರದಲ್ಲಿ ಸದ್ದಿಲ್ಲದೆ ಕಾರ್ಯಾಚರಣೆ ನಡೆಸುತ್ತಿರುವ ಬೈಕ್ ಟ್ಯಾಕ್ಸಿ ಸೇವೆಗಳಿಗೆ ಕರ್ನಾಟಕ ಸರ್ಕಾರ ಹಾಗೂ ಸಾರಿಗೆ ಇಲಾಖೆ ಬಿಗ್ ಶಾಕ್ ನೀಡಿದೆ. ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ ಸೇವೆಗೆ ಅನುಮತಿ ನೀಡಲು ಸಾಧ್ಯವಿಲ್ಲ ಎಂದು ಕರ್ನಾಟಕ ಸರ್ಕಾರ ಸುಪ್ರೀಂಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿದೆ.

ಕರ್ನಾಟಕ ಹೈಕೋರ್ಟ್ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಿರುವ ರಾಜ್ಯ ಸರ್ಕಾರ, ದ್ವಿಚಕ್ರ ವಾಹನಗಳನ್ನು ವಾಣಿಜ್ಯ ಉದ್ದೇಶದ ಟ್ಯಾಕ್ಸಿಗಳಾಗಿ ಬಳಸಲು ಅನುಮತಿ ನೀಡಲು ಸಾಧ್ಯವಿಲ್ಲ ಎಂಬ ತನ್ನ ನಿಲುವನ್ನು ನ್ಯಾಯಾಲಯದ ಮುಂದೆ ಸ್ಪಷ್ಟಪಡಿಸಿದೆ.

ಬೈಕ್ ಟ್ಯಾಕ್ಸಿಗೆ ಸರ್ಕಾರದ ವಿರೋಧಕ್ಕೆ ಕಾರಣಗಳೇನು?

ಬೈಕ್ ಟ್ಯಾಕ್ಸಿ ಸೇವೆಯಿಂದ ಪ್ರಯಾಣಿಕರ ಸುರಕ್ಷತೆಗೆ ಅಪಾಯವಿದೆ ಎಂಬುದನ್ನು ರಾಜ್ಯ ಸರ್ಕಾರ ಪ್ರಮುಖ ಕಾರಣವಾಗಿ ಮುಂದಿಟ್ಟಿದೆ. ಸುರಕ್ಷತೆ ಮತ್ತು ವಿಮೆ ಕೊರತೆ: ಬೈಕ್ ಟ್ಯಾಕ್ಸಿಗಳಲ್ಲಿ ಪ್ರಯಾಣಿಸುವ ಸಾರ್ವಜನಿಕರಿಗೆ ಸೂಕ್ತ ಸುರಕ್ಷತಾ ವ್ಯವಸ್ಥೆ ಇರುವುದಿಲ್ಲ. ಇಂತಹ ವಾಹನಗಳಿಗೆ ಅಧಿಕೃತ ವಾಣಿಜ್ಯ ವಿಮಾ ರಕ್ಷಣೆ ಇಲ್ಲದಿರುವುದರಿಂದ ಅಪಘಾತ ಸಂಭವಿಸಿದ ಸಂದರ್ಭದಲ್ಲಿ ಪ್ರಯಾಣಿಕರ ಹಿತಾಸಕ್ತಿ ಕಾಪಾಡುವುದು ಕಷ್ಟವಾಗಲಿದೆ ಎಂದು ಸರ್ಕಾರ ಹೇಳಿದೆ.

ಅಪಘಾತದ ಅಪಾಯ: ದ್ವಿಚಕ್ರ ವಾಹನಗಳಿಗೆ ಸಂಬಂಧಿಸಿದಂತೆ ಅಪಘಾತಗಳು ಹಾಗೂ ಅವುಗಳಿಂದ ಉಂಟಾಗುವ ಸಾವು-ನೋವುಗಳ ಪ್ರಮಾಣ ಹೆಚ್ಚಾಗಿದೆ. ಹೀಗಾಗಿ ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ಬೈಕ್ ಟ್ಯಾಕ್ಸಿ ಸೇವೆಗೆ ಅನುಮತಿ ನೀಡಲು ಸಾಧ್ಯವಿಲ್ಲ ಎಂದು ಸರ್ಕಾರ ವಾದಿಸಿದೆ.

ಕೇಂದ್ರ ಕಾಯ್ದೆಯಲ್ಲಿ ಸ್ಪಷ್ಟ ಉಲ್ಲೇಖವಿಲ್ಲ: ಕೇಂದ್ರ ಮೋಟಾರು ವಾಹನ ಕಾಯ್ದೆಯಲ್ಲಿ ‘ಬೈಕ್ ಟ್ಯಾಕ್ಸಿ’ ಎಂಬುದಕ್ಕೆ ಯಾವುದೇ ಸ್ಪಷ್ಟ ವ್ಯಾಖ್ಯಾನ ಅಥವಾ ಪ್ರತ್ಯೇಕ ನಿಯಮಾವಳಿಗಳಿಲ್ಲ. ಹೀಗಾಗಿ ದ್ವಿಚಕ್ರ ವಾಹನಗಳನ್ನು ವಾಣಿಜ್ಯ ಟ್ಯಾಕ್ಸಿ ಸೇವೆಗೆ ಬಳಸಲು ಅನುಮತಿ ನೀಡುವ ಕಾನೂನು ಆಧಾರವಿಲ್ಲ ಎಂದು ರಾಜ್ಯ ಸರ್ಕಾರ ಸುಪ್ರೀಂಕೋರ್ಟ್‌ಗೆ ತಿಳಿಸಿದೆ.

ಎರಡನೇ ದಿನವೂ ಮುಂದುವರಿದ ಸಾರಿಗೆ ಇಲಾಖೆ ಕಾರ್ಯಾಚರಣೆ

ಒಂದೆಡೆ ಬೈಕ್ ಟ್ಯಾಕ್ಸಿ ವಿಚಾರವಾಗಿ ಸುಪ್ರೀಂಕೋರ್ಟ್‌ನಲ್ಲಿ ಕಾನೂನು ಹೋರಾಟ ನಡೆಯುತ್ತಿದ್ದರೆ, ಮತ್ತೊಂದೆಡೆ ಅನಧಿಕೃತ ಬೈಕ್ ಟ್ಯಾಕ್ಸಿಗಳ ವಿರುದ್ಧ ಸಾರಿಗೆ ಇಲಾಖೆಯ ಜಾರಿ ವಿಭಾಗದ ಕಾರ್ಯಾಚರಣೆ ಮತ್ತಷ್ಟು ಚುರುಕುಗೊಂಡಿದೆ.

ಪ್ರಾದೇಶಿಕ ಸಾರಿಗೆ ಕಚೇರಿ (RTO) ಅಧಿಕಾರಿಗಳು ಓಲಾ, ಊಬರ್ ಹಾಗೂ ರಾಪಿಡೋ ಸೇರಿದಂತೆ ವಿವಿಧ ಆ್ಯಪ್ ಆಧಾರಿತ ಅನಧಿಕೃತ ಬೈಕ್ ಟ್ಯಾಕ್ಸಿಗಳ ವಿರುದ್ಧ ದಾಳಿ ನಡೆಸುತ್ತಿದ್ದಾರೆ.

ಬೆಂಗಳೂರಿನ ಕೋರಮಂಗಲ ಆರ್‌ಟಿಒ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ತೀವ್ರಗೊಂಡಿದ್ದು, ಒಂದೇ ದಿನ 85ಕ್ಕೂ ಹೆಚ್ಚು ಬೈಕ್ ಟ್ಯಾಕ್ಸಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದುಬಂದಿದೆ.

ಅನಧಿಕೃತ ಬೈಕ್ ಟ್ಯಾಕ್ಸಿ ಸೇವೆಗಳಿಗೆ ಕಡಿವಾಣ ಹಾಕಲು ಸಾರಿಗೆ ಇಲಾಖೆ ಒಟ್ಟು 11 ವಿಶೇಷ ತಂಡಗಳನ್ನು ರಚಿಸಿದೆ. ಈ ತಂಡಗಳು ನಗರದ ವಿವಿಧ ಪ್ರದೇಶಗಳಲ್ಲಿ ತಪಾಸಣೆ ನಡೆಸುತ್ತಿವೆ.

ಈ ಹಿಂದೆ ಕಾರ್ಯಾಚರಣೆಯ ಮೊದಲ ದಿನವೇ 256 ಬೈಕ್ ಟ್ಯಾಕ್ಸಿಗಳನ್ನು ಸೀಜ್ ಮಾಡಲಾಗಿತ್ತು ಎನ್ನಲಾಗಿದೆ. ಇದೀಗ ಎರಡನೇ ದಿನವೂ 85ಕ್ಕೂ ಹೆಚ್ಚು ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಕೇವಲ ಎರಡು ದಿನಗಳಲ್ಲಿ ನೂರಾರು ಬೈಕ್ ಟ್ಯಾಕ್ಸಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.

ಬೈಕ್ ಟ್ಯಾಕ್ಸಿ ಸೇವೆಯ ಕಾನೂನು ಮಾನ್ಯತೆ ಕುರಿತು ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿರುವ ಬೆನ್ನಲ್ಲೇ ಸಾರಿಗೆ ಇಲಾಖೆಯ ಈ ಕಾರ್ಯಾಚರಣೆ ಮಹತ್ವ ಪಡೆದುಕೊಂಡಿದೆ.

ಮುಗಿಸುವುದಾಗಿ ಕಚೇರಿಗೆ ಸರಣಿ ಬೆದರಿಕೆ ಪತ್ರ: ಪೊಲೀಸ್‌ ಠಾಣೆ ಮೆಟ್ಟಿಲೇರಿದ ಗಂಗೂಲಿ ದಂಪತಿ

0

ಕೋಲ್ಕತ್ತಾ: ಟೀಮ್ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ ಹಾಗೂ ಅವರ ಪತ್ನಿ ಡೋನಾ ಗಂಗೂಲಿ ಅವರಿಗೆ ಅಪರಿಚಿತರಿಂದ ನಿರಂತರ ಕೊಲೆ ಬೆದರಿಕೆ ಪತ್ರಗಳು ಬರುತ್ತಿರುವ ಆತಂಕಕಾರಿ ಘಟನೆ ಬೆಳಕಿಗೆ ಬಂದಿದೆ. ಗಂಗೂಲಿ ದಂಪತಿ ಹಾಗೂ ಅವರ ಆಪ್ತರನ್ನು ಕೊಲ್ಲುವುದಾಗಿ ನೇರವಾಗಿ ಎಚ್ಚರಿಕೆ ನೀಡಲಾಗಿದ್ದು, ಈ ಸಂಬಂಧ ದಕ್ಷಿಣ ಕೋಲ್ಕತ್ತಾದ ಠಾಕೂರ್‌ಪುಕುರ್ ಪೊಲೀಸ್ ಠಾಣೆಯಲ್ಲಿ ಅಧಿಕೃತ ದೂರು ದಾಖಲಾಗಿದೆ.

ಕ್ರಿಕೆಟ್ ಅಸೋಸಿಯೇಷನ್ ಆಫ್ ಬೆಂಗಾಲ್ (CAB) ಅಧ್ಯಕ್ಷರಾಗಿರುವ ಸೌರವ್ ಗಂಗೂಲಿ ಅವರ ಕಚೇರಿಗೆ ಇಂಗ್ಲಿಷ್ ಭಾಷೆಯಲ್ಲಿ ಬೆದರಿಕೆ ಪತ್ರಗಳು ಬಂದಿವೆ. ಕಳೆದ ನಾಲ್ಕರಿಂದ ಆರು ತಿಂಗಳಿನಿಂದ ಇಂತಹ ಪತ್ರಗಳು ನಿರಂತರವಾಗಿ ಬರುತ್ತಿದ್ದರೂ, ಆರಂಭದಲ್ಲಿ ಅವುಗಳನ್ನು ಅಭಿಮಾನಿಗಳ ಅತಿರೇಕದ ಸಂದೇಶಗಳು ಅಥವಾ ಸಾಮಾನ್ಯ ದ್ವೇಷದ ಪತ್ರಗಳು ಎಂದು ಪರಿಗಣಿಸಿ ನಿರ್ಲಕ್ಷಿಸಲಾಗಿತ್ತು ಎನ್ನಲಾಗಿದೆ.

ಆದರೆ ಇತ್ತೀಚೆಗೆ ಬಂದ ಎರಡು ಪತ್ರಗಳಲ್ಲಿ ಬೆದರಿಕೆಯ ತೀವ್ರತೆ ಹೆಚ್ಚಾಗಿದೆ. ಗಂಗೂಲಿ ದಂಪತಿ ಹಾಗೂ ಅವರ ಆಪ್ತರನ್ನು ಕೊಲ್ಲುವುದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂಬ ರೀತಿಯಲ್ಲಿ ಉಗ್ರ ಎಚ್ಚರಿಕೆ ನೀಡಲಾಗಿದೆ. ಇದರಿಂದ ಆತಂಕಗೊಂಡ ಕುಟುಂಬಸ್ಥರು ಪೊಲೀಸರ ಮೊರೆ ಹೋಗಿದ್ದಾರೆ.

ಗಂಗೂಲಿ ಅವರ ಖಾಸಗಿ ಕಾರ್ಯದರ್ಶಿ ತಾನಿಯಾ ಭಟ್ಟಾಚಾರ್ಯ ನೀಡಿದ ದೂರಿನ ಆಧಾರದ ಮೇಲೆ, ಆಗಸ್ಟ್ 10ರಂದು ಠಾಕೂರ್‌ಪುಕುರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪ್ರಕರಣದ ಗಂಭೀರತೆಯನ್ನು ಪರಿಗಣಿಸಿರುವ ಕೋಲ್ಕತ್ತಾ ಪೊಲೀಸರ ವಿಶೇಷ ಕಾರ್ಯಪಡೆ (STF) ಹಾಗೂ ಪಶ್ಚಿಮ ಬಂಗಾಳ ಸರ್ಕಾರದ ಭದ್ರತಾ ವಿಭಾಗ ತನಿಖೆ ಆರಂಭಿಸಿದೆ.

ಪ್ರಾಥಮಿಕ ತನಿಖೆಯಲ್ಲಿ ಬೆದರಿಕೆ ಪತ್ರಗಳನ್ನು ಕೊರಿಯರ್ ಮೂಲಕ ಕಳುಹಿಸಿರುವ ಸುಳಿವು ಸಿಕ್ಕಿದೆ. ಪತ್ರದ ಮೇಲಿನ ವಿಳಾಸದಲ್ಲಿ ಉತ್ತರ 24 ಪರಗಣ ಜಿಲ್ಲೆಯ ಬೆಲ್ಘಾರಿಯಾ ಮೂಲದ ‘ಅರುಣ್ ಕುಮಾರ್’ ಎಂಬ ಹೆಸರು ನಮೂದಿಸಿರುವುದು ಪತ್ತೆಯಾಗಿದೆ.

ಕೊರಿಯರ್ ಜಾಡು ಆಧರಿಸಿ ತನಿಖೆ ಮುಂದುವರಿಸಿರುವ STF ತಂಡ, ಗಂಗೂಲಿ ಅವರ ಬೆಹಾಲಾ ನಿವಾಸದಿಂದ ಸುಮಾರು 32 ಕಿಲೋಮೀಟರ್ ದೂರದಲ್ಲಿರುವ ಶಂಕಿತ ಸ್ಥಳವೊಂದನ್ನು ಗುರುತಿಸಿ ದಾಳಿ ನಡೆಸಿದೆ. ಪತ್ರದಲ್ಲಿ ಉಲ್ಲೇಖವಾಗಿದ್ದ ಮೊಬೈಲ್ ಸಂಖ್ಯೆಯ ಲೊಕೇಶನ್ ಹಾಗೂ ಸಿಮ್ ಕಾರ್ಡ್ ಚಲನವಲನಗಳನ್ನೂ ಸೈಬರ್ ಕ್ರೈಂ ವಿಭಾಗ ತಾಂತ್ರಿಕವಾಗಿ ಪರಿಶೀಲಿಸುತ್ತಿದೆ.

ಅರುಣ್ ಕುಮಾರ್ ಅವರೇ ಈ ಬೆದರಿಕೆ ಪತ್ರಗಳನ್ನು ಕಳುಹಿಸಿದ್ದಾರೆಯೇ ಅಥವಾ ಅವರ ಹೆಸರನ್ನು ಯಾರಾದರೂ ದುರುಪಯೋಗಪಡಿಸಿಕೊಂಡಿದ್ದಾರೆಯೇ ಎಂಬುದರ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಬೆದರಿಕೆ ಪ್ರಕರಣದ ಹಿನ್ನೆಲೆಯಲ್ಲಿ ಸೌರವ್ ಗಂಗೂಲಿ, ಅವರ ಪತ್ನಿ ಡೋನಾ ಹಾಗೂ ಅವರ ನಿವಾಸಕ್ಕೆ ಕೋಲ್ಕತ್ತಾ ಪೊಲೀಸರು ಹೆಚ್ಚುವರಿ ಭದ್ರತೆ ಒದಗಿಸಿದ್ದಾರೆ. ಭದ್ರತಾ ವ್ಯವಸ್ಥೆಯನ್ನೂ ಮರುಪರಿಶೀಲಿಸಲಾಗಿದ್ದು, ಆರೋಪಿಯನ್ನು ಶೀಘ್ರ ಪತ್ತೆಹಚ್ಚಲು ತನಿಖೆ ಚುರುಕುಗೊಂಡಿದೆ.

ಪುನೀತ್ ಮೂಲಕ ಸಾಕ್ಷಿಗೆ ಕಿಡ್ನಾಪ್, ಬೆದರಿಕೆ: FSL ರಿಪೋರ್ಟ್‌ನಲ್ಲಿ ಪ್ರಭಾವಿ ಮಹಿಳೆ ಸೇರಿ ನಾಲ್ವರ ಲಿಂಕ್ ಪತ್ತೆ!

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ ಸಾಕ್ಷಿಗಳಿಗೆ ಬೆದರಿಕೆ ಹಾಕಿದ ಪ್ರಕರಣದ ತನಿಖೆಯಲ್ಲಿ ಪೊಲೀಸರಿಗೆ ಮತ್ತೊಂದು ದೊಡ್ಡ ಸುಳಿವು ಸಿಕ್ಕಿದೆ. ಎಫ್‌ಎಸ್‌ಎಲ್ ವರದಿಯಲ್ಲಿ ವಾಟ್ಸ್‌ಆ್ಯಪ್ ಕಾನ್ಫರೆನ್ಸ್ ಕಾಲ್‌ನ ವಿವರಗಳು ಪತ್ತೆಯಾಗಿದ್ದು, ಸಾಕ್ಷಿ ಸಂದೀಪ್‌ಗೆ ಬೆದರಿಕೆ ಹಾಕಿದ ವೇಳೆ ಗೌರವ್ ಶೆಟ್ಟಿ ಹಾಗೂ ಕಿರಣ್ ಸಂಪರ್ಕದಲ್ಲಿದ್ದರು ಎನ್ನಲಾಗಿದೆ. ಪುನೀತ್ ಹಾಗೂ ಆತನ ತಂಡಕ್ಕೆ ಇವರಿಬ್ಬರು ಮಾರ್ಗದರ್ಶನ ನೀಡಿದ್ದರೆಂಬ ಮಾಹಿತಿ ಇದೀಗ ತನಿಖೆಗೆ ಹೊಸ ತಿರುವು ನೀಡಿದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದ 49ನೇ ಸಾಕ್ಷಿ ಸಂದೀಪ್, ಕೋರ್ಟ್‌ನಲ್ಲಿ ತಮ್ಮನ್ನು ಕಿಡ್ನಾಪ್ ಮಾಡಿ ಜೀವ ಬೆದರಿಕೆ ಹಾಕಲಾಗಿತ್ತು ಎಂದು ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಕಾಮಾಕ್ಷಿಪಾಳ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪುನೀತ್, ಸುಹಾಸ್ ಹಾಗೂ ವೇಣು ಅವರನ್ನು ಬಂಧಿಸಿದ್ದರು.

ಪೊಲೀಸರ ತನಿಖೆಯಲ್ಲಿ ಸಾಕ್ಷಿಗೆ ಬೆದರಿಕೆ ಹಾಕುವ ಕಾರ್ಯಾಚರಣೆಯ ವೇಳೆ ವಾಟ್ಸ್‌ಆ್ಯಪ್ ಕಾನ್ಫರೆನ್ಸ್ ಕಾಲ್ ನಡೆದಿರುವುದು ಪತ್ತೆಯಾಗಿದೆ. ಕಿರಣ್ ಹಾಗೂ ಗೌರವ್ ಶೆಟ್ಟಿ ಈ ಕಾಲ್‌ನಲ್ಲಿದ್ದು, ಪುನೀತ್ ಮತ್ತು ಆತನ ತಂಡಕ್ಕೆ ಸೂಚನೆಗಳನ್ನು ನೀಡಿದ್ದರು ಎನ್ನಲಾಗಿದೆ.

ಪುನೀತ್ ಮೂಲಕ ಸಾಕ್ಷಿಯನ್ನು ಕಿಡ್ನಾಪ್ ಮಾಡಿಸಿ ಬೆದರಿಕೆ ಹಾಕಿಸಿದ ಪ್ರಕರಣದಲ್ಲಿ ಇದೀಗ ಗೌರವ್ ಶೆಟ್ಟಿ ಹಾಗೂ ಕಿರಣ್ ಅವರ ಪಾತ್ರದ ಕುರಿತು ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಕೃತ್ಯದ ಸಮಯದಲ್ಲಿ ಇಬ್ಬರೂ ಸಂಪರ್ಕದಲ್ಲಿದ್ದದ್ದು ಎಫ್‌ಎಸ್‌ಎಲ್ ವರದಿಯಿಂದ ದೃಢಪಟ್ಟಿದೆ ಎನ್ನಲಾಗಿದೆ.

ಇದಕ್ಕೂ ಮುನ್ನ ಪುನೀತ್‌ಗೆ ಪ್ರಭಾವಿ ಮಹಿಳೆಯೊಬ್ಬರು ಕರೆ ಮಾಡಿರುವುದು ಪತ್ತೆಯಾಗಿದೆ. ಗೌರವ್ ಶೆಟ್ಟಿ ಹೇಳಿದಂತೆ ನಡೆದುಕೊಳ್ಳುವಂತೆ ಆಕೆ ಪುನೀತ್‌ಗೆ ಸೂಚಿಸಿದ್ದಳು ಎನ್ನಲಾಗಿದ್ದು, ಇದರೊಂದಿಗೆ ಪ್ರಕರಣದ ಹಿಂದೆ ಪ್ರಭಾವಿ ಮಹಿಳೆ, ಗೌರವ್ ಶೆಟ್ಟಿ, ಕಿರಣ್ ಹಾಗೂ ಇತರರ ಸಂಪರ್ಕವಿರುವ ಶಂಕೆ ವ್ಯಕ್ತವಾಗಿದೆ.

ದರ್ಶನ್ ಕುಟುಂಬಕ್ಕೆ ಅತ್ಯಾಪ್ತನಾಗಿದ್ದ ಪುನೀತ್, ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರಮುಖ ಸಾಕ್ಷಿಯಾಗಿದ್ದ. ಇದೀಗ ಅದೇ ಪ್ರಕರಣದ ಸಾಕ್ಷಿಗೆ ಬೆದರಿಕೆ ಹಾಕಿದ ಆರೋಪದಲ್ಲಿ ಪುನೀತ್ ಬಂಧನಕ್ಕೊಳಗಾಗಿದ್ದಾನೆ. ಪುನೀತ್ ಹಾಗೂ ಆತನ ತಂಡ ಸಾಕ್ಷಿಯನ್ನು ಕಿಡ್ನಾಪ್ ಮಾಡಿ ಬೆದರಿಕೆ ಹಾಕಿದ್ದರೆಂಬ ಆರೋಪದ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಪ್ರಕರಣದ ಮುಂದಿನ ಹಂತದಲ್ಲಿ ಗೌರವ್ ಶೆಟ್ಟಿ ಹಾಗೂ ಕಿರಣ್ ಅವರನ್ನು ವಿಚಾರಣೆ ನಡೆಸಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ. ಇವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆಯೂ ಅಧಿಕಾರಿಗಳು ಚರ್ಚೆ ನಡೆಸುತ್ತಿದ್ದಾರೆ.

ಸದ್ಯ ಪೊಲೀಸರ ಕೈಗೆ ಮತ್ತೊಂದು ಟೆಕ್ನಿಕಲ್ ವರದಿ ಬರಬೇಕಿದೆ. ಆ ವರದಿ ಸಿಕ್ಕ ಬಳಿಕ ಕಾನ್ಫರೆನ್ಸ್ ಕಾಲ್‌ನಲ್ಲಿ ಯಾರೆಲ್ಲ ಇದ್ದರು, ಯಾರು ಯಾರಿಗೆ ಸೂಚನೆ ನೀಡಿದ್ದರು ಹಾಗೂ ಸಾಕ್ಷಿಗೆ ಬೆದರಿಕೆ ಹಾಕಿದ ಸಂಪೂರ್ಣ ಜಾಲದಲ್ಲಿ ಯಾರ ಪಾತ್ರ ಏನು ಎಂಬುದರ ಕುರಿತು ಮತ್ತಷ್ಟು ಸತ್ಯಗಳು ಹೊರಬೀಳುವ ಸಾಧ್ಯತೆ ಇದೆ.