Home Blog

Gold Rate Today: ವಾರಾಂತ್ಯದಲ್ಲೂ ಏರಿದ ಚಿನ್ನದ ಬೆಲೆ; ಇಂದಿನ ರೇಟ್ ಇಲ್ಲಿದೆ ನೋಡಿ

0

ಚಿನ್ನದ ಬೆಲೆಯಲ್ಲಿ ಭರ್ಜರಿ ಏರಿಕೆ ಮುಂದುವರಿದಿದ್ದು, ವಾರಾಂತ್ಯದಲ್ಲೂ ಬಂಗಾರದ ದರ ಹೆಚ್ಚಾಗಿದೆ.

ಪ್ರತಿ ಗ್ರಾಂ ಚಿನ್ನದ ಬೆಲೆ ₹240 ಏರಿಕೆಯಾಗಿದ್ದು, ಕಳೆದ ಮೂರು ದಿನಗಳಲ್ಲಿ ಒಟ್ಟು ₹750ರಷ್ಟು ಹೆಚ್ಚಳ ಕಂಡಿದೆ.

ವಿದೇಶಿ ಮಾರುಕಟ್ಟೆಗಳಲ್ಲೂ ಬಹುತೇಕ ಕಡೆ ಚಿನ್ನದ ಬೆಲೆಯಲ್ಲಿ ಏರಿಕೆ ದಾಖಲಾಗಿದೆ. ಸ್ಪಾಟ್ ಗೋಲ್ಡ್ ದರ ಕೂಡ ಸುಮಾರು 2 ಡಾಲರ್ ಹೆಚ್ಚಾಗಿದೆ. ಆದರೆ, ಬೆಳ್ಳಿ ಬೆಲೆಯಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ.

ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,49,500 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,63,090 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 26,000 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,49,500 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 26,000 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದೆಡೆಯೂ ಈ ಲೋಹದ ಬೆಲೆ 27,000 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ:

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 16,309
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,950
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 12,232
  • ಬೆಳ್ಳಿ ಬೆಲೆ 1 ಗ್ರಾಂಗೆ: 260 ರೂ.

ಮಡಿವಾಳದಲ್ಲಿ ಮೆಡಿಕಲ್ ಶಾಪ್ ಮಾಲೀಕನ ಭೀಕರ ಕೊಲೆ: ಶಬ್ಬೀರ್ ಹತ್ಯೆಗೆ ಪ್ರತೀಕಾರದ ಶಂಕೆ!?

0

ಬೆಂಗಳೂರು: ಬೆಂಗಳೂರಿನಲ್ಲಿ ಮತ್ತೆ ರೌಡಿಗಳ ಅಟ್ಟಹಾಸದ ಆರೋಪ ಕೇಳಿಬಂದಿದ್ದು, ಮಡಿವಾಳದ ಅಂಡರ್‌ಪಾಸ್‌ ಸಮೀಪ ಮೆಡಿಕಲ್ ಶಾಪ್ ನಡೆಸುತ್ತಿದ್ದ ವ್ಯಕ್ತಿಯನ್ನು ಜನರ ಎದುರಲ್ಲೇ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ.

ಮಂಗಮ್ಮನ ಪಾಳ್ಯದ ನಿವಾಸಿ ಸುಹೇಲ್ ಮೃತ ವ್ಯಕ್ತಿ.

ನಿನ್ನೆ ರಾತ್ರಿ ಸುಮಾರು 10 ಗಂಟೆಗೆ ಸುಹೇಲ್ ಮಡಿವಾಳದಿಂದ ಕೊರಮಂಗಲದ ಕಡೆಗೆ ತೆರಳುತ್ತಿದ್ದ ವೇಳೆ, ಮುಖ್ಯ ರಸ್ತೆಯಲ್ಲಿ ಟ್ರಾಫಿಕ್ ಜಾಮ್‌ನಿಂದ ಬೈಕ್ ನಿಲ್ಲಿಸಿಕೊಂಡಿದ್ದರು. ಈ ವೇಳೆ ಎರಡು ಬೈಕ್‌ಗಳಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು ಎರಡು ತಲ್ವಾರ್‌ಗಳಿಂದ ಸುಹೇಲ್ ಮೇಲೆ ದಾಳಿ ನಡೆಸಿದ್ದಾರೆ. ತೀವ್ರ ರಕ್ತಸ್ರಾವದಿಂದ ಸುಹೇಲ್ ಸ್ಥಳದಲ್ಲೇ ಮೃತಪಟ್ಟಿದ್ದು, ಹಂತಕರು ಮಾರಕಾಸ್ತ್ರಗಳನ್ನು ಸ್ಥಳದಲ್ಲೇ ಬಿಸಾಕಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.

ಸುಹೇಲ್ ಹತ್ಯೆ ಹಿಂದೆ ಜನವರಿ 13ರಂದು ಬಂಡೆಪಾಳ್ಯದಲ್ಲಿ ನಡೆದಿದ್ದ ರೌಡಿಶೀಟರ್ ಶಬ್ಬೀರ್ ಹತ್ಯೆಯ ಪ್ರತೀಕಾರದ ಶಂಕೆ ವ್ಯಕ್ತವಾಗಿದೆ. ಶಬ್ಬೀರ್ ಕೊಲೆ ಪ್ರಕರಣದಲ್ಲಿ ಸುಹೇಲ್ ಸಹೋದರರಾದ ಖಲೀಂ, ನಜೀರ್ ಸೇರಿದಂತೆ ಮೂವರು ಭಾಗಿಯಾಗಿದ್ದರು ಎನ್ನಲಾಗಿದೆ.

ಆದರೆ, ಶಬ್ಬೀರ್ ಕೊಲೆ ಪ್ರಕರಣಕ್ಕೂ ಸುಹೇಲ್‌ಗೂ ಯಾವುದೇ ಸಂಬಂಧವಿರಲಿಲ್ಲ ಎಂದು ತಿಳಿದುಬಂದಿದೆ. ಅಲ್ಲದೆ, ಸುಹೇಲ್‌ಗೆ ಯಾವುದೇ ಕ್ರಿಮಿನಲ್ ಹಿನ್ನೆಲೆಯೂ ಇರಲಿಲ್ಲ ಎನ್ನಲಾಗಿದೆ. ಹೀಗಾಗಿ ಸಹೋದರರ ಮೇಲಿನ ದ್ವೇಷಕ್ಕೆ ಸುಹೇಲ್‌ನನ್ನೇ ಗುರಿಯಾಗಿಸಿ ಹತ್ಯೆ ಮಾಡಿರುವ ಸಾಧ್ಯತೆ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಘಟನಾ ಸ್ಥಳಕ್ಕೆ ಡಿಸಿಪಿ ಸುಜಿತಾ, ಸಿಸಿಬಿ ಡಿಸಿಪಿ ಹರಿಬಾಬು ಹಾಗೂ ಜಂಟಿ ಪೊಲೀಸ್ ಆಯುಕ್ತ ರಮೇಶ್ ಬಾನತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಅಣ್ಣನ ಕೊಲೆಗೆ ತಮ್ಮನ ರಿವೇಂಜ್ ಪ್ರತಿಜ್ಞೆ:

ಅಣ್ಣ ಸುಹೇಲ್ ಹತ್ಯೆಯ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದಿದ್ದ ಸಹೋದರ ನಜೀರ್, ಹಂತಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾನೆ. “ಸುಹೇಲ್ ನನ್ನ ಅಣ್ಣ ಮಾತ್ರ ಆಗಿರಲಿಲ್ಲ, ಅಪ್ಪನ ರೀತಿಯಲ್ಲಿದ್ದ. ಆತನನ್ನು ಕೊಲೆ ಮಾಡಿದ ಯಾರನ್ನೂ ಸುಮ್ಮನೆ ಬಿಡುವುದಿಲ್ಲ” ಎಂದು ನಜೀರ್ ಪ್ರತೀಕಾರದ ಶಪಥ ಮಾಡಿದ್ದಾನೆ ಎನ್ನಲಾಗಿದೆ.

ಕಳೆದ ಕೆಲ ದಿನಗಳಿಂದಲೇ ಕೊಲೆಗೆ ಸ್ಕೆಚ್?

ಸುಹೇಲ್ ಹತ್ಯೆ ಪೂರ್ವಯೋಜಿತವಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದ್ದು, ಕಳೆದ ಕೆಲ ದಿನಗಳಿಂದಲೇ ಆರೋಪಿಗಳು ಆತನ ಚಲನವಲನಗಳನ್ನು ಗಮನಿಸುತ್ತಿದ್ದರು ಎನ್ನಲಾಗಿದೆ. ಹಾರ್ಲೆ ಡೇವಿಡ್‌ಸನ್ ಬೈಕ್‌ನಲ್ಲಿ ತೆರಳುತ್ತಿದ್ದ ಸುಹೇಲ್‌ನನ್ನು ಹಂತಕರು ಹಿಂಬಾಲಿಸಿ ದಾಳಿ ನಡೆಸಿರುವ ಸಾಧ್ಯತೆ ಇದೆ.

ಹತ್ಯೆ ಬಳಿಕ ಮಾರಕಾಸ್ತ್ರಗಳನ್ನು ಸ್ಥಳದಲ್ಲೇ ಬಿಸಾಕಿ ಆರೋಪಿಗಳು ಪರಾರಿಯಾಗಿದ್ದಾರೆ ಎನ್ನಲಾಗಿದೆ. ಪ್ರಕರಣದ ತನಿಖೆಗಾಗಿ ಪೊಲೀಸರು ಮೂರು ವಿಶೇಷ ತಂಡಗಳನ್ನು ರಚಿಸಿದ್ದಾರೆ. ಘಟನಾ ಸ್ಥಳದ ಸಿಸಿಟಿವಿ ಡಿವಿಆರ್‌ಗಳನ್ನು ವಶಕ್ಕೆ ಪಡೆದುಕೊಂಡಿದ್ದು, ಸಿಸಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ.

ಸುಹೇಲ್ ಮಂಗಮ್ಮನ ಪಾಳ್ಯದಿಂದ ಮಡಿವಾಳ ಮುಖ್ಯರಸ್ತೆಗೆ ಬಂದಿದ್ದೇಕೆ? ಬೊಮ್ಮನಹಳ್ಳಿಯಲ್ಲಿರುವ ಮೆಡಿಕಲ್ ಶಾಪ್‌ನಿಂದ ಹೊರಡುವಾಗ ಕೊನೆಯದಾಗಿ ಸುಹೇಲ್‌ಗೆ ಕರೆ ಮಾಡಿದ್ದು ಯಾರು? ಹಂತಕರು ಆತನ ಚಲನವಲನಗಳನ್ನು ಹೇಗೆ ಗಮನಿಸಿದರು? ಎಂಬ ಹಲವು ಪ್ರಶ್ನೆಗಳ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಹಂತಕರ ಪತ್ತೆಗೆ ಮಡಿವಾಳ ಪೊಲೀಸರು ಹಾಗೂ ಸಿಸಿಬಿ ತಂಡಗಳು ಕಾರ್ಯಾಚರಣೆ ಮುಂದುವರಿಸಿವೆ.

ರಾಯಚೂರು ರಿಮ್ಸ್‌ನಲ್ಲಿ ದುರಂತ! ಹೆರಿಗೆ ವೇಳೆ ಅವಳಿ ಗಂಡು ಮಕ್ಕಳು ಸಾವು, ವೈದ್ಯರ ವಿರುದ್ಧ ಗಂಭೀರ ಆರೋಪ!

0

ರಾಯಚೂರು: ಆಸ್ಪತ್ರೆ ಸಿಬ್ಬಂದಿ ಹಾಗೂ ವೈದ್ಯರ ನಿರ್ಲಕ್ಷ್ಯದಿಂದ ಹೆರಿಗೆ ವೇಳೆ ಅವಳಿ ಗಂಡು ಮಕ್ಕಳು ಮೃತಪಟ್ಟಿದ್ದಾರೆ ಎಂದು ಪೋಷಕರು ಆರೋಪಿಸಿರುವ ಘಟನೆ ರಾಯಚೂರಿನ ರಿಮ್ಸ್ ಬೋಧಕ ಆಸ್ಪತ್ರೆಯಲ್ಲಿ ನಡೆದಿದೆ.

ಮಾನವಿ ತಾಲೂಕಿನ ಚನ್ನಬಸವ ಹಾಗೂ ಕಾವೇರಿ ದಂಪತಿಯ ಅವಳಿ ಮಕ್ಕಳು ಮೃತಪಟ್ಟಿದ್ದಾರೆ. ಕಾವೇರಿ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮೊದಲು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ಬಳಿಕ ಮಾನ್ವಿಯ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದ ಹಿನ್ನೆಲೆಯಲ್ಲಿ ಅಲ್ಲಿನ ವೈದ್ಯರು ಕಾವೇರಿ ಅವರನ್ನು ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ರೆಫರ್ ಮಾಡಿದ್ದರು.

ರಾತ್ರಿ 8.30ರ ಸುಮಾರಿಗೆ ರಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ ಕಾವೇರಿ ಅವರು ತೀವ್ರ ಹೆರಿಗೆ ನೋವಿನಿಂದ ಬಳಲುತ್ತಿದ್ದರು ಎನ್ನಲಾಗಿದೆ. ಈ ವೇಳೆ ಕುಟುಂಬಸ್ಥರು ಸಿಸೇರಿಯನ್ ಮಾಡುವಂತೆ ವೈದ್ಯರಲ್ಲಿ ಮನವಿ ಮಾಡಿದ್ದರು. ಆದರೆ, ವೈದ್ಯರು ಹಾಗೂ ಸಿಬ್ಬಂದಿ ನಾರ್ಮಲ್ ಡೆಲಿವರಿ ಆಗಲಿದೆ ಎಂದು ತಿಳಿಸಿ ಸಿಸೇರಿಯನ್ ಮಾಡದೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಮಧ್ಯರಾತ್ರಿ 3.30ರ ಸುಮಾರಿಗೆ ಕಾವೇರಿ ಅವರ ಆರೋಗ್ಯ ಸ್ಥಿತಿ ಗಂಭೀರವಾಗುತ್ತಿದ್ದಂತೆ ಕುಟುಂಬಸ್ಥರು ಆತಂಕಗೊಂಡಿದ್ದಾರೆ. “ಮಕ್ಕಳು ಹೋದರೂ ಪರವಾಗಿಲ್ಲ, ತಾಯಿಯ ಜೀವ ಉಳಿಸಿ” ಎಂದು ವೈದ್ಯರಲ್ಲಿ ಮನವಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಆದರೆ, ಅಂತಿಮವಾಗಿ ಹೆರಿಗೆ ವೇಳೆ ಅವಳಿ ಗಂಡು ಮಕ್ಕಳು ಮೃತಪಟ್ಟಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಇನ್ನು ಕುಟುಂಬಸ್ಥರ ಆರೋಪವನ್ನು ರಿಮ್ಸ್ ಆಸ್ಪತ್ರೆಯ ಸ್ತ್ರೀರೋಗ ತಜ್ಞೆ ಡಾ. ರಾಧಾ ಸಂಗಾವಿ ನಿರಾಕರಿಸಿದ್ದಾರೆ. “ನಮ್ಮ ಸಿಬ್ಬಂದಿಯ ಕಡೆಯಿಂದ ಯಾವುದೇ ಲೋಪವಾಗಿಲ್ಲ. ಮಾನ್ವಿಯಿಂದ ರೆಫರ್ ಆಗಿ ಬರುವಾಗಲೇ ಕಾವೇರಿ ಅವರ ರಕ್ತದೊತ್ತಡ ಹೆಚ್ಚಾಗಿತ್ತು. ಅಲ್ಲದೆ, ಗರ್ಭದಲ್ಲೇ ಮಕ್ಕಳು ಮೃತಪಟ್ಟಿದ್ದರು. ತಾಯಿಗೆ ಫಿಟ್ಸ್ ಬಾರದಂತೆ ತುರ್ತು ಚಿಕಿತ್ಸೆ ನೀಡಿ, ಗರ್ಭದಲ್ಲೇ ಮೃತಪಟ್ಟಿದ್ದ ಮಕ್ಕಳನ್ನು ಹೊರತೆಗೆಯಲಾಗಿದೆ. ಸದ್ಯ ತಾಯಿಯ ಆರೋಗ್ಯ ಸ್ಥಿರವಾಗಿದ್ದು, ಚಿಕಿತ್ಸೆ ಮುಂದುವರಿದಿದೆ” ಎಂದು ಅವರು ತಿಳಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಪೋಷಕರು ಹಾಗೂ ಆಸ್ಪತ್ರೆ ವೈದ್ಯರ ನಡುವೆ ವಿಭಿನ್ನ ಹೇಳಿಕೆಗಳು ಕೇಳಿಬಂದಿದ್ದು, ಅವಳಿ ಮಕ್ಕಳ ಸಾವಿನ ನಿಖರ ಕಾರಣದ ಕುರಿತು ತನಿಖೆ ನಡೆಸುವಂತೆ ಕುಟುಂಬಸ್ಥರು ಒತ್ತಾಯಿಸಿದ್ದಾರೆ.

ಕ್ಷೇತ್ರದ ಕೆಲಸ ನಿಲ್ಲುವುದಿಲ್ಲ, ಹಿಂಜರಿಯಬೇಡಿ: ಜಿ.ಎಸ್. ಪಾಟೀಲ

0

ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ: ರಾಜ್ಯ ವಿಧಾನಸಭೆಯ ೧೮ನೇ ಸಭಾಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಮೊದಲ ಬಾರಿಗೆ ಗಜೇಂದ್ರಗಡ ಪಟ್ಟಣಕ್ಕೆ ಆಗಮಿಸಿದ ನೂತನ ವಿಧಾನಸಭಾಧ್ಯಕ್ಷ ಜಿ.ಎಸ್. ಪಾಟೀಲ ಅವರಿಗೆ ಶನಿವಾರ ಅಭಿಮಾನಿಗಳು ಹಾಗೂ ಸಾರ್ವಜನಿಕರು ಅದ್ಧೂರಿ ಸ್ವಾಗತ ನೀಡಿ, ಭವ್ಯ ಮೆರವಣಿಗೆ ನಡೆಸಿದರು. ಈ ವೇಳೆ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಯಾರೂ ಆತಂಕಪಡಬೇಕಿಲ್ಲ ಎಂದು ಜಿ.ಎಸ್. ಪಾಟೀಲ ಅಭಯ ನೀಡಿದರು.

ಯಲಬುರ್ಗಾ ಮಾರ್ಗವಾಗಿ ಪಟ್ಟಣಕ್ಕೆ ಆಗಮಿಸುವ ಮುನ್ನ ಹಿರೇಕೊಪ್ಪ, ರಾಮಾಪೂರ ಹಾಗೂ ಉಣಚಗೇರಿ ಗ್ರಾಮಗಳಲ್ಲಿ ಜಿ.ಎಸ್. ಪಾಟೀಲ ಅವರಿಗೆ ಸ್ವಾಗತ ಕೋರಲಾಯಿತು. ಬಳಿಕ ಚೆನ್ನಮ್ಮ ವೃತ್ತಕ್ಕೆ ಆಗಮಿಸುತ್ತಿದ್ದಂತೆ ನೂರಾರು ಸಂಖ್ಯೆಯಲ್ಲಿ ಸೇರಿದ್ದ ಅಭಿಮಾನಿಗಳು ಜೈಕಾರ ಹಾಕಿ, ಪುಷ್ಪವೃಷ್ಟಿ ಮಾಡಿ, ಹಾರ ಹಾಗೂ ಶಾಲು ಹೊದಿಸಿ ಅಭಿನಂದಿಸಿದರು. ಅಲ್ಲಿಂದ ಕಾಲಕಾಲೇಶ್ವರ ವೃತ್ತದವರೆಗೆ ಭವ್ಯ ಮೆರವಣಿಗೆ ನಡೆಯಿತು.

ಮೆರವಣಿಗೆಯುದ್ದಕ್ಕೂ ರಸ್ತೆ ಬದಿಯಲ್ಲಿ ನಿಂತಿದ್ದ ಸಾರ್ವಜನಿಕರಿಗೆ ಕೈಮುಗಿದು ಅಭಿನಂದನೆ ಸ್ವೀಕರಿಸಿದ ಅವರು, ಈದ್ಗಾ ಮೈದಾನದ ಬಳಿ ಅಂಜುಮನ್ ಇಸ್ಲಾಂ ಕಮಿಟಿ ಹಾಗೂ ಎಸ್‌ಬಿಐ ಬಳಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ತಾಲೂಕು ಘಟಕದ ಪದಾಧಿಕಾರಿಗಳಿಂದ ಸನ್ಮಾನ ಸ್ವೀಕರಿಸಿದರು. ಕಾಲಕಾಲೇಶ್ವರ ವೃತ್ತದಲ್ಲಿ ಅಭಿಮಾನಿಗಳು ಬೃಹತ್ ಸೇಬಿನ ಹಾರ ಹಾಕಿ ಗೌರವಿಸಿದರು.

ನಂತರ ಕಾಲಕಾಲೇಶ್ವರ ವೃತ್ತದಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಜಿ.ಎಸ್. ಪಾಟೀಲ, ವಿಧಾನಸಭಾಧ್ಯಕ್ಷರ ಪೀಠ ಪಕ್ಷಾತೀತವಾಗಿದೆ. ಆದರೆ ಕ್ಷೇತ್ರದ ಜನರ ಆಶೋತ್ತರಗಳು, ವೈಯಕ್ತಿಕ ಕೆಲಸಗಳು ಹಾಗೂ ಗ್ರಾಮದ ಅಭಿವೃದ್ಧಿ ವಿಚಾರದಲ್ಲಿ ಯಾರೂ ಹಿಂಜರಿಯಬೇಕಿಲ್ಲ. ತಮಗೆ ದೊರೆತಿರುವ ಉನ್ನತ ಸ್ಥಾನವನ್ನು ಕ್ಷೇತ್ರದ ಸರ್ವಜನಾಂಗದ ಕಲ್ಯಾಣಕ್ಕೆ ಬಳಸುವುದಾಗಿ ಹೇಳಿದರು.

ಕ್ಷೇತ್ರದ ಜನರು ತಮ್ಮ ಮೇಲೆ ಇಟ್ಟಿರುವ ಪ್ರೀತಿ, ವಿಶ್ವಾಸ ಹಾಗೂ ಬೆಂಬಲಕ್ಕಿಂತ ದೊಡ್ಡ ಹುದ್ದೆ ಮತ್ತೊಂದಿಲ್ಲ. ತಮಗೆ ಉನ್ನತ ಸ್ಥಾನ ದೊರೆಯಲಿ ಎಂದು ಕಾಲಕಾಲೇಶ್ವರ ದೇವರು, ಪುಟ್ಟರಾಜರ ಮಠ ಸೇರಿದಂತೆ ವಿವಿಧ ಗ್ರಾಮಗಳ ಗ್ರಾಮ ದೇವತೆಗಳಿಗೆ ಪೂಜೆ, ಪುನಸ್ಕಾರ, ದೀಡ್ ನಮಸ್ಕಾರ ಸಲ್ಲಿಸಿ, ತುಮಕೂರಿನಿಂದ ಬೆಂಗಳೂರಿನವರೆಗೆ ಪಾದಯಾತ್ರೆ ನಡೆಸಿದ್ದನ್ನು ಸ್ಮರಿಸಿದರು.

ನನ್ನನ್ನು ರಾಜ್ಯ ವಿಧಾನಸಭೆಯ ಸಭಾಧ್ಯಕ್ಷ ಸ್ಥಾನದಲ್ಲಿ ಕೂರಿಸಿರುವುದಕ್ಕೆ ಕ್ಷೇತ್ರದ ಜನರೇ ಕಾರಣ. ನಿಮ್ಮ ಪ್ರೀತಿ, ವಿಶ್ವಾಸ ಮತ್ತು ಆಶೀರ್ವಾದಕ್ಕೆ ನಾನು ಆಭಾರಿಯಾಗಿದ್ದೇನೆ. ನಿಮ್ಮ ಋಣ ತೀರಿಸುವ ಅವಕಾಶ ನನಗೆ ದೊರೆತಿದೆ ಎಂದು ಭಾವುಕರಾಗಿ ಹೇಳಿದರು.

ತಮ್ಮ ಭಾಷಣದ ಬಳಿಕ ಜಿ.ಎಸ್. ಪಾಟೀಲ ಅವರು ಕಾಲಕಾಲೇಶ್ವರ ವೃತ್ತದಲ್ಲಿನ ಕಾಲಕಾಲೇಶ್ವರ ದೇವರಿಗೆ ಹೂವಿನ ಹಾರ ಹಾಕಿ ನಮಸ್ಕರಿಸಿದರು.

ಮುಖಂಡ ಎಚ್.ಎಸ್. ಸೋಂಪುರ ಮಾತನಾಡಿ, ಜಿ.ಎಸ್. ಪಾಟೀಲ ಅವರನ್ನು ಸಚಿವ ಸ್ಥಾನದಲ್ಲಿ ನೋಡಬೇಕೆಂಬುದು ಅಭಿಮಾನಿಗಳ ಕನಸಾಗಿತ್ತು. ಆದರೆ ಕಾಲಕಾಲೇಶ್ವರನ ಆಶೀರ್ವಾದದಿಂದ ರಾಜ್ಯದ ಉನ್ನತ ಹುದ್ದೆಯಾದ ವಿಧಾನಸಭಾಧ್ಯಕ್ಷ ಸ್ಥಾನ ಅಲಂಕರಿಸಿದ್ದಾರೆ. ಸರಳ ವ್ಯಕ್ತಿತ್ವದ ಜಿ.ಎಸ್. ಪಾಟೀಲ ಅವರು ಸಭಾಧ್ಯಕ್ಷರಾಗಿ ಆಯ್ಕೆಯಾಗಿರುವುದು ರೋಣ ಕ್ಷೇತ್ರದ ಜನತೆಗೆ ಹೆಮ್ಮೆಯ ಸಂಗತಿಯಾಗಿದೆ ಎಂದರು.

ಸ್ವಾಗತ ಕಾರ್ಯಕ್ರಮದಲ್ಲಿ ಶಿವರಾಜ ಘೋರ್ಪಡೆ, ಅಶೋಕ ಬಾಗಮಾರ, ಸಿದ್ದಪ್ಪ ಬಂಡಿ, ಎ.ಡಿ. ಕೋಲಕಾರ, ಐ.ಎಸ್. ಪಾಟೀಲ, ಎಂ.ಎಚ್. ಕೋಲಕಾರ, ಮುರ್ತುಜಾ ಡಾಲಾಯತ್, ಶಶಿಧರ ಹೂಗಾರ, ಶ್ರೀಧರ ಬಿದರಳ್ಳಿ, ರಫೀಕ್ ತೋರಗಲ್, ಶರಣಪ್ಪ ಬೆಟಗೇರಿ, ಮಿಥುನ ಪಾಟೀಲ, ಅಕ್ಷಯ ಪಾಟೀಲ, ಸುಭಾಸ ಮ್ಯಾಗೇರಿ, ರಾಜು ಸಾಂಗ್ಲೀಕರ, ಅಪ್ಪು ಮತ್ತಿಕಟ್ಟಿ, ಅರಿಹಂತ ಬಾಗಮಾರ, ವೆಂಕಟೇಶ ಮುದಗಲ್, ಅಂದಪ್ಪ ಬಿಚ್ಚೂರ, ಶ್ರೀಕಾಂತ ಅವಧೂತ, ಮಾಬುಸಾಬ ಮ್ಯಾಗೇರಿ, ಚಿದಾನಂದ ಪಾಟೀಲ, ಸಂಗಪ್ಪ ತೇಜಿ, ಅರ್ಜುನ ರಾಠೋಡ, ಇಸ್ಮಾಯಿಲ್ ಹೊರಪೇಟಿ, ಮುತ್ತಣ್ಣ ಕೊಪ್ಪಳ, ಮಲ್ಲಿಕಾರ್ಜುನ ಗಾರಗಿ, ಶ್ರೀಧರ ಗಂಜಿಗೌಡರ, ಅಂದಪ್ಪ ರಾಠೋಡ, ಸಿದ್ದಪ್ಪ ಚೋಳಿನ, ಅಲ್ಲಾಭಕ್ಷಿ , ಪರಶುರಾಮ ಕಲಾಲ, ಸಿದ್ದು ಗೊಂಗಡಶೆಟ್ಟಿಮಠ, ಬಾಲಚಂದ್ರ ವಾಲ್ಮೀಕಿ, ಆರ್.ಎಂ. ಜಾಧವ, ಐ.ಎಚ್. ಬಾಗವಾನ, ತುಳಸಿನಾಥ ಮಾಳೊತ್ತರ ಸೇರಿದಂತೆ ಗಜೇಂದ್ರಗಡ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನರು ಪಾಲ್ಗೊಂಡಿದ್ದರು.

ಮೆರವಣಿಗೆಯ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಸುಗಮ ಸಂಚಾರಕ್ಕೆ ಪೊಲೀಸರು ಮುಂಜಾಗ್ರತಾ ಕ್ರಮ ಕೈಗೊಂಡಿದ್ದರು. ಡಿವೈಎಸ್‌ಪಿ ಪ್ರಭುಗೌಡ ಕೆ., ಸಿಪಿಐ ವಿಜಯಕುಮಾರ, ಪಿಎಸ್‌ಐ ಪ್ರಕಾಶ ಡಿ. ಸೇರಿದಂತೆ ಪೊಲೀಸ್ ಸಿಬ್ಬಂದಿ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದರು.

ನನ್ನ ಪೀಠ ಪಕ್ಷಾತೀತವಾಗಿದೆ. ಆದರೆ ನಿಮ್ಮ ಆಶೋತ್ತರಗಳಿಗೆ, ವೈಯಕ್ತಿಕ ಕೆಲಸ ಕಾರ್ಯಗಳಿಗೆ ಹಾಗೂ ಗ್ರಾಮದ ಅಭಿವೃದ್ಧಿಗೆ ಚಿಂತಿಸಬೇಡಿ. ನೀವು ನನಗೆ ಹೆಚ್ಚಿನ ಶಕ್ತಿಯನ್ನು ನೀಡಿದ್ದೀರಿ. ಕ್ಷೇತ್ರದ ಕೆಲಸಗಳು ಅಲ್ಲಿಯೇ ನಿಂತಿವೆ ಎಂದು ಯಾರೂ ಹಿಂಜರಿಯಬೇಡಿ. ನಿಮ್ಮ ಪ್ರೀತಿ, ವಿಶ್ವಾಸ ಹೀಗೆಯೇ ಇರಲಿ. ಕ್ಷೇತ್ರದ ಸರ್ವಜನಾಂಗದ ಕಲ್ಯಾಣಕ್ಕಾಗಿ ಈ ಪೀಠದಿಂದ ಕೆಲಸ ಮಾಡುವ ಶಕ್ತಿಯನ್ನು ಕಾಲಕಾಲೇಶ್ವರ ನೀಡಲಿ.

ಜಿ.ಎಸ್. ಪಾಟೀಲ, ನೂತನ ವಿಧಾನಸಭಾಧ್ಯಕ್ಷರು

ಅವಳಿ ನಗರದ ಅಭಿವೃದ್ಧಿಗೆ ₹8.75 ಕೋಟಿ ಕಾಮಗಾರಿಗೆ ಚಾಲನೆ

0

ವಿಜಯಸಾಕ್ಷಿ ಸುದ್ದಿ, ಗದಗ:ಗದಗ-ಬೆಟಗೇರಿ ಅವಳಿ ನಗರದ ಮೂಲಸೌಕರ್ಯ ಅಭಿವೃದ್ಧಿಗೆ ರಾಜ್ಯ ಸರ್ಕಾರ ಬದ್ಧವಾಗಿದ್ದು, ನಗರದ ಸರ್ವಾಂಗೀಣ ಪ್ರಗತಿಗೆ ವೇಗ ನೀಡಲಾಗುತ್ತಿದೆ ಎಂದು ಶಾಸಕ ಡಾ. ಎಚ್.ಕೆ. ಪಾಟೀಲ ಹೇಳಿದರು.

ಶನಿವಾರ ಅವಳಿ ನಗರದ ವಿವಿಧ ವಾರ್ಡ್‌ಗಳಲ್ಲಿ 2025-26ನೇ ಸಾಲಿನ ಮುಖ್ಯಮಂತ್ರಿಗಳ ಮೂಲಸೌಕರ್ಯ ಅಭಿವೃದ್ಧಿ ಯೋಜನೆ ಹಾಗೂ ನಗರಸಭೆ ಅನುದಾನದಡಿ ಕೈಗೆತ್ತಿಕೊಳ್ಳಲಾಗಿರುವ ಒಟ್ಟು ₹8.75 ಕೋಟಿ ವೆಚ್ಚದ ರಸ್ತೆ, ಚರಂಡಿ ಹಾಗೂ ಪ್ರಮುಖ ಸಿವಿಲ್ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ಸಾರ್ವಜನಿಕರ ದೈನಂದಿನ ಸಂಚಾರಕ್ಕೆ ಅನುಕೂಲವಾಗುವಂತೆ ಗುಣಮಟ್ಟದ ರಸ್ತೆ ಹಾಗೂ ಸುಸಜ್ಜಿತ ಚರಂಡಿ ವ್ಯವಸ್ಥೆ ನಿರ್ಮಿಸಲಾಗುತ್ತಿದೆ. ಕಾಮಗಾರಿಗಳನ್ನು ನಿಗದಿತ ಕಾಲಮಿತಿಯೊಳಗೆ ಗುಣಮಟ್ಟದಿಂದ ಪೂರ್ಣಗೊಳಿಸಿ ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸಬೇಕು ಎಂದು ಗುತ್ತಿಗೆದಾರರಿಗೆ ಸೂಚಿಸಿದರು.

ಬೆಟಗೇರಿ ಭಾಗದ ಪ್ರಮುಖ ಏಳು ವಾರ್ಡ್‌ಗಳಲ್ಲಿ ತಲಾ ₹1.25 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಇದರಲ್ಲಿ ಮುಖ್ಯಮಂತ್ರಿಗಳ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿ ತಲಾ ₹1 ಕೋಟಿ ಹಾಗೂ ನಗರಸಭೆ ಅನುದಾನದಡಿ ₹25 ಲಕ್ಷ ಸೇರಿದೆ.

ಬೆಟಗೇರಿ ವಾರ್ಡ್ ನಂ. 2, 4 ಹಾಗೂ 8ರಲ್ಲಿ ಸಿಸಿ ರಸ್ತೆ, ಚರಂಡಿ ಹಾಗೂ ವಿವಿಧ ಸಿವಿಲ್ ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು. ವಾರ್ಡ್ ನಂ. 9, 16, 17 ಹಾಗೂ 18ರಲ್ಲಿ ರಸ್ತೆ ಮತ್ತು ಒಳಚರಂಡಿ ಕಾಮಗಾರಿಗಳಿಗೆ ಶಾಸಕರು ಚಾಲನೆ ನೀಡಿದರು.

ಅವಳಿ ನಗರದ ಮೂಲಸೌಕರ್ಯವನ್ನು ಹಂತ ಹಂತವಾಗಿ ಸುಧಾರಿಸುವ ಮೂಲಕ ಜನರಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗುವುದು ಎಂದು ಶಾಸಕ ಎಚ್.ಕೆ. ಪಾಟೀಲ ತಿಳಿಸಿದರು.

ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ ಬಬರ್ಚಿ, ಅಶೋಕ ಮಂದಾಲಿ, ಎಸ್.ಎನ್. ಬಳ್ಳಾರಿ, ಸುರೇಶ ಕಟ್ಟಿಮನಿ, ಶಕುಂತಲಾ ಅಕ್ಕಿ, ಚಂದ್ರು ಕರಿಸೋಮನಗೌಡ್ರ, ನಗರಸಭೆ ಆಯುಕ್ತ ರಾಜಾರಾಮ ಪವಾರ್, ತಹಸೀಲ್ದಾರ್ ಶ್ರೀನಿವಾಸಮೂರ್ತಿ ಕುಲಕರ್ಣಿ ಹಾಗೂ ವಿವಿಧ ವಾರ್ಡ್‌ಗಳ ಸದಸ್ಯರು ಉಪಸ್ಥಿತರಿದ್ದರು.

ನೈಟ್‌ ರೈಡರ್ಸ್‌–ರೂರಲ್‌ ಕಿಂಗ್ಸ್‌ ನಡುವೆ ಆ. 23ರಂದು ಪ್ರಶಸ್ತಿ ಕದನ

0

ವಿಜಯಸಾಕ್ಷಿ ಸುದ್ದಿ, ಗದಗ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ವತಿಯಿಂದ ಪತ್ರಿಕಾ ದಿನಾಚರಣೆ ಅಂಗವಾಗಿ ಆಯೋಜಿಸಿರುವ ಗದಗ ಮೀಡಿಯಾ ಕ್ರಿಕೆಟ್‌ ಲೀಗ್‌ ಅಂತಿಮ ಘಟ್ಟ ತಲುಪಿದ್ದು, ಆ. 23ರಂದು ನಡೆಯುವ ಫೈನಲ್‌ ಪಂದ್ಯದಲ್ಲಿ ನೈಟ್‌ ರೈಡರ್ಸ್‌ ಹಾಗೂ ರೂರಲ್‌ ಕಿಂಗ್ಸ್‌ ತಂಡಗಳು ಪ್ರಶಸ್ತಿಗಾಗಿ ಸೆಣಸಲಿವೆ.

ಲೀಗ್‌ ಹಂತದಲ್ಲಿ ಆಡಿದ ಮೂರು ಪಂದ್ಯಗಳಲ್ಲೂ ಗೆಲುವು ದಾಖಲಿಸಿ ಅಗ್ರಸ್ಥಾನ ಪಡೆದ ನೈಟ್‌ ರೈಡರ್ಸ್‌ ತಂಡ ಫೈನಲ್‌ಗೆ ಲಗ್ಗೆ ಇಟ್ಟಿದೆ. ಮತ್ತೊಂದೆಡೆ, ನೈಟ್‌ ರೈಡರ್ಸ್‌ ವಿರುದ್ಧ ಸೋತರೂ ವಿನ್ನರ್ಸ್‌ ಹಾಗೂ ಆರ್‌ಸಿಬಿ ತಂಡಗಳನ್ನು ಮಣಿಸಿದ ರೂರಲ್‌ ಕಿಂಗ್ಸ್‌ ನಿರ್ಣಾಯಕ ಹಂತದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದೆ.

ಇನ್ನು ಲೀಗ್‌ ಹಂತದ ಮೂರು ಪಂದ್ಯಗಳಲ್ಲೂ ಸೋಲು ಕಂಡ ಆರ್‌ಸಿಬಿ ಹಾಗೂ ಎರಡು ಪಂದ್ಯಗಳಲ್ಲಿ ಸೋಲನುಭವಿಸಿದ ವಿನ್ನರ್ಸ್‌ ತಂಡಗಳು ಪ್ರಶಸ್ತಿ ರೇಸ್‌ನಿಂದ ಹೊರಬಿದ್ದಿವೆ. ಹೀಗಾಗಿ ಚೊಚ್ಚಲ ಚಾಂಪಿಯನ್‌ ಪಟ್ಟಕ್ಕಾಗಿ ನೈಟ್‌ ರೈಡರ್ಸ್‌ ಹಾಗೂ ರೂರಲ್‌ ಕಿಂಗ್ಸ್‌ ನಡುವೆ ತೀವ್ರ ಪೈಪೋಟಿ ನಿರೀಕ್ಷಿಸಲಾಗಿದೆ.

ಆರ್‌ಸಿಬಿ ವಿರುದ್ಧ ನೈಟ್‌ ರೈಡರ್ಸ್‌ಗೆ 27 ರನ್‌ಗಳ ಭರ್ಜರಿ ಗೆಲುವು

ಶನಿವಾರ ನಡೆದ ಲೀಗ್‌ ಹಂತದ ಆರನೇ ಪಂದ್ಯದಲ್ಲಿ ನೈಟ್‌ ರೈಡರ್ಸ್‌ ತಂಡವು ಆರ್‌ಸಿಬಿ ವಿರುದ್ಧ 27 ರನ್‌ಗಳ ಭರ್ಜರಿ ಗೆಲುವು ದಾಖಲಿಸಿತು.

ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ನೈಟ್‌ ರೈಡರ್ಸ್‌ ನಿಗದಿತ 10 ಓವರ್‌ಗಳಲ್ಲಿ 4 ವಿಕೆಟ್‌ ಕಳೆದುಕೊಂಡು 98 ರನ್‌ ಗಳಿಸಿತು. ಪ್ರಭುಸ್ವಾಮಿ ಅರವಟಗಿಮಠ 30 ಎಸೆತಗಳಲ್ಲಿ 39 ರನ್‌ ಗಳಿಸಿ ತಂಡದ ಪರ ಗರಿಷ್ಠ ಸ್ಕೋರರ್‌ ಎನಿಸಿಕೊಂಡರೆ, ಮಂಜು ಪತ್ತಾರ 18 ಎಸೆತಗಳಲ್ಲಿ 35 ರನ್‌ ಗಳಿಸಿ ಸ್ಫೋಟಕ ಬ್ಯಾಟಿಂಗ್‌ ನಡೆಸಿದರು. ಆರ್‌ಸಿಬಿ ಪರ ಮಂಜು ಸಾಳೇರ ಹಾಗೂ ಗೌರೀಶ ತಲಾ ಒಂದು ವಿಕೆಟ್‌ ಪಡೆದರು.

99 ರನ್‌ಗಳ ಗುರಿ ಬೆನ್ನತ್ತಿದ ಆರ್‌ಸಿಬಿ ತಂಡವು ನಿಗದಿತ 10 ಓವರ್‌ಗಳಲ್ಲಿ 71 ರನ್‌ ಗಳಿಸಲಷ್ಟೇ ಶಕ್ತವಾಯಿತು. ವಿನಾಯ ಚೌಡಾಪೂರ 34 ಎಸೆತಗಳಲ್ಲಿ 43 ರನ್‌ ಗಳಿಸಿದರೆ, ಅಜಿತ ಹೊಂಬಾಳಿ 11 ರನ್‌ ಗಳಿಸಿದರು. ನೈಟ್‌ ರೈಡರ್ಸ್‌ ಪರ ಪ್ರಭುಸ್ವಾಮಿ ಅರವಟಗಿಮಠ ಹಾಗೂ ಸಂಗನಗೌಡ ಖಾನಪ್ಪಗೌಡ್ರ ತಲಾ ಒಂದು ವಿಕೆಟ್‌ ಪಡೆದರು.

ಆಲ್‌ರೌಂಡ್‌ ಪ್ರದರ್ಶನ ನೀಡಿದ ಪ್ರಭುಸ್ವಾಮಿ ಅರವಟಗಿಮಠ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ವಿನ್ನರ್ಸ್‌ ಮಣಿಸಿ ಫೈನಲ್‌ಗೇರಿದ ರೂರಲ್‌ ಕಿಂಗ್ಸ್‌

ಶನಿವಾರ ನಡೆದ ಐದನೇ ಪಂದ್ಯದಲ್ಲಿ ರೂರಲ್‌ ಕಿಂಗ್ಸ್‌ ತಂಡವು ವಿನ್ನರ್ಸ್‌ ವಿರುದ್ಧ 8 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿ ಫೈನಲ್‌ಗೆ ಅರ್ಹತೆ ಪಡೆಯಿತು.

ಟಾಸ್‌ ಗೆದ್ದು ಫೀಲ್ಡಿಂಗ್‌ ಆಯ್ಕೆ ಮಾಡಿಕೊಂಡ ರೂರಲ್‌ ಕಿಂಗ್ಸ್‌, ವಿನ್ನರ್ಸ್‌ ತಂಡವನ್ನು 79 ರನ್‌ಗಳಿಗೆ ಕಟ್ಟಿಹಾಕಿತು. ಅಶೋಕ ಹೂಗಾರ 25, ಈಶ್ವರ ತಿಪ್ಪರಡ್ಡಿ 20 ಹಾಗೂ ಪರಮೇಶ ಲಮಾಣಿ 19 ರನ್‌ ಗಳಿಸಿದರು. ರೂರಲ್‌ ಕಿಂಗ್ಸ್‌ ಪರ ಶಿವಾನಂದ ಹಿರೇಮಠ, ಸಂಜೀವ ಪಾಂಡ್ರೆ, ಪ್ರಕಾಶ ಗುದ್ದಿನ, ನಿಂಗನಗೌಡ ಹನಮಗೌಡ್ರ ಹಾಗೂ ಸೂರಜ್‌ ಮಯೇಕರ ತಲಾ ಒಂದು ವಿಕೆಟ್‌ ಪಡೆದರು.

80 ರನ್‌ಗಳ ಗುರಿ ಬೆನ್ನತ್ತಿದ ರೂರಲ್‌ ಕಿಂಗ್ಸ್‌ ಕೇವಲ ಎರಡು ವಿಕೆಟ್‌ ಕಳೆದುಕೊಂಡು ಗೆಲುವಿನ ದಡ ಸೇರಿತು. ನಾಯಕ ನಿಂಗನಗೌಡ 27 ಎಸೆತಗಳಲ್ಲಿ 33 ರನ್‌ ಗಳಿಸಿದರೆ, ಸಂಜೀವ ಪಾಂಡ್ರೆ 26 ಎಸೆತಗಳಲ್ಲಿ 34 ರನ್‌ ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ವಿನ್ನರ್ಸ್‌ ತಂಡದ ಪರಮೇಶ ಲಮಾಣಿ 2 ವಿಕೆಟ್‌ ಪಡೆದರು.

ಬ್ಯಾಟಿಂಗ್‌ ಹಾಗೂ ಬೌಲಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ನಿಂಗನಗೌಡ ಹನಮಗೌಡ್ರ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

ಪಂದ್ಯಶ್ರೇಷ್ಠ ಪ್ರಶಸ್ತಿ ವಿಜೇತರಿಗೆ ಕಾನಿಪ ಜಿಲ್ಲಾ ಘಟಕದ ಅಧ್ಯಕ್ಷ ರಾಜು ಎಂ. ಹೆಬ್ಬಳ್ಳಿ ಟ್ರೋಫಿ ವಿತರಿಸಿದರು.

ಈ ಸಂದರ್ಭದಲ್ಲಿ ಸಂಪಾದಕರ ಸಂಘದ ರಾಜ್ಯ ಉಪಾಧ್ಯಕ್ಷ ಮಂಜುನಾಥ ಅಬ್ಬಿಗೇರಿ, ಕಾನಿಪ ಮಾಜಿ ಅಧ್ಯಕ್ಷರಾದ ಅನಂತ ಕಾರ್ಕಳ, ಎಚ್‌.ಎಂ. ಶರೀಫನವರ, ವಿವಿಧ ತಂಡಗಳ ಮಾಲೀಕರಾದ ಸುನೀಲ ತೆಂಬದಮನಿ, ಟಿ.ಎನ್‌. ಭಾಂಡಗೆ, ಜಗದೀಶ ಪೂಜಾರ, ಅಜಿತ ಹೊಂಬಾಳಿ, ಆನಂದ ಸಾಲಿಗ್ರಾಮ, ಆನಂದಯ್ಯ ವಿರಕ್ತಮಠ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಜಾತ್ರೆ ಯಶಸ್ಸಿಗೆ ಹಿರಿಯರ ಶ್ರಮ: ವಸಂತ ಪಡಗದ

0

ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಗ್ರಾಮ ದೇವಿಯರ ಜಾತ್ರಾ ಮಹೋತ್ಸವವು ಅತ್ಯಂತ ಸಂಭ್ರಮದಿಂದ ನಡೆಯುತ್ತಿದ್ದು, ಇದರ ಯಶಸ್ಸಿಗಾಗಿ ಹಿರಿಯರು ಹಾಗೂ ಮಾರ್ಗದರ್ಶಕರು ಅಪಾರ ಶ್ರಮ ವಹಿಸುತ್ತಿದ್ದಾರೆ ಎಂದು ಬಿಜೆಪಿ ಯುವ ಮುಖಂಡ ವಸಂತ ಪಡಗದ ಹೇಳಿದರು.

ನಗರದ ಒಕ್ಕಲಗೇರಿ ಓಣಿಯ ಶ್ರೀ ದ್ಯಾಮವ್ವ ಹಾಗೂ ದುರ್ಗಮ್ಮ ದೇವಿಯರ ಹರಿ ಜಾತ್ರೋತ್ಸವದ ನಾಲ್ಕನೇ ದಿನದ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಮಹಾಪ್ರಸಾದಕ್ಕೆ ಭಕ್ತಿಸೇವೆಯಾಗಿ ಅಕ್ಕಿ ಸಮರ್ಪಿಸಿದ ಹಿನ್ನೆಲೆಯಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಸುಮಾರು ೧೮ ವರ್ಷಗಳ ಸುದೀರ್ಘ ಅವಧಿಯ ಬಳಿಕ ನಡೆಯುತ್ತಿರುವ ಈ ಐತಿಹಾಸಿಕ ಜಾತ್ರೆಯ ಯಶಸ್ಸಿಗಾಗಿ ಗುರುಹಿರಿಯರು ತಮ್ಮ ವೈಯಕ್ತಿಕ ಕೆಲಸ-ಕಾರ್ಯಗಳನ್ನು ಬದಿಗೊತ್ತಿ ಹಗಲಿರುಳು ಶ್ರಮಿಸುತ್ತಿದ್ದಾರೆ. ವಿಶೇಷವಾಗಿ ಒಕ್ಕಲಗೇರಿ ಓಣಿಯ ಜಾತ್ರಾ ಮಹೋತ್ಸವವು ರಾಜ್ಯಾದ್ಯಂತ ಅಪಾರ ಪ್ರಸಿದ್ಧಿ ಪಡೆದಿದೆ ಎಂದರು.

ಇಂತಹ ಪವಿತ್ರ ಧಾರ್ಮಿಕ ಕಾರ್ಯಕ್ರಮಗಳ ಸಂದರ್ಭದಲ್ಲಿ ಉಂಟಾಗುವ ಸಣ್ಣಪುಟ್ಟ ಮನಸ್ತಾಪಗಳು ಹಾಗೂ ವೈಯಕ್ತಿಕ ಭಿನ್ನಾಭಿಪ್ರಾಯಗಳು ಹಿರಿಯರ ನಿಸ್ವಾರ್ಥ ಶ್ರಮಕ್ಕೆ ಕೆಟ್ಟ ಹೆಸರು ತರುತ್ತವೆ. ಆದ್ದರಿಂದ ಎಲ್ಲರೂ ಒಗ್ಗಟ್ಟಿನಿಂದ ಜಾತ್ರೆಯ ಯಶಸ್ಸಿಗೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ಪ್ರಸ್ತುತ ನಡೆಯುತ್ತಿರುವ ೧೦ ದಿನಗಳ ಗ್ರಾಮ ದೇವಿಯರ ಜಾತ್ರಾ ಮಹೋತ್ಸವ ಜಿಲ್ಲೆಯಷ್ಟೇ ಅಲ್ಲದೆ ರಾಜ್ಯಾದ್ಯಂತ ಗಮನ ಸೆಳೆಯುತ್ತಿದೆ. ಪ್ರತಿನಿತ್ಯ ಸಾವಿರಾರು ಭಕ್ತರು ಆಗಮಿಸಿ ಅನ್ನಪ್ರಸಾದ ಸ್ವೀಕರಿಸುತ್ತಿದ್ದು, ಮಹಾಪ್ರಸಾದ ಸೇವೆಯ ಅಚ್ಚುಕಟ್ಟುತನ ಹಾಗೂ ಸಂಘಟನೆಗೆ ಸಾರ್ವಜನಿಕರು ಮತ್ತು ವಿವಿಧೆಡೆಯಿಂದ ಆಗಮಿಸಿದ ಭಕ್ತರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ ಎಂದರು.

ಇಂತಹ ಅದ್ಭುತ ಧಾರ್ಮಿಕ ವಾತಾವರಣವನ್ನು ಮುಂದುವರಿಸಿಕೊಂಡು ಹೋಗುವುದು ಎಲ್ಲರ ಹೊಣೆ. ಜಾತ್ರೆಯ ಮೂಲಕ ಸೌಹಾರ್ದತೆ, ಭಕ್ತಿ ಹಾಗೂ ಒಗ್ಗಟ್ಟಿನ ಸಂದೇಶ ಮತ್ತಷ್ಟು ಬಲಗೊಳ್ಳಬೇಕು ಎಂದು ವಸಂತ ಪಡಗದ ಹೇಳಿದರು.

ನರೇಗಲ್ಲದ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ, ಓಂಕಾರೇಶ್ವರ ಮಠದ ಫಕೀರೇಶ್ವರ ಸ್ವಾಮೀಜಿ ಹಾಗೂ ನೀಲಮ್ಮತಾಯಿ ಅಸುಂಡಿ ಸಾನ್ನಿಧ್ಯ ವಹಿಸಿದ್ದರು. ಕೊಟ್ರಪ್ಪ ಕಮತರ ಅಧ್ಯಕ್ಷತೆ ವಹಿಸಿದ್ದರು.

ಫಕೀರಪ್ಪ ಹೆಬಸೂರ, ಶಂಕ್ರಪ್ಪ ಖನೋಜ, ಐ.ಎಸ್. ಪೂಜಾರ, ಸದಾಶಿವಯ್ಯ ಮದರಿಮಠ, ಪ್ರೀತಿ ಶಿವಪ್ಪಯ್ಯನಮಠ, ಕೃಷ್ಣಾ ಪರಾಪುರ, ಮಹಾಂತೇಶ ನೆಲವಡಿ, ವಿನೋದ ಮೊರಬದ, ಎಚ್.ಕೆ. ಮುಲ್ಲಾ, ಅಬ್ದುಲ್ ಮುನಾಫ್ ಮುಲ್ಲಾ, ಎಫ್.ಪಿ. ಮರಿಗೌಡರ, ರಾಮಣ್ಣ ಭರಮಣ್ಣವರ ಸೇರಿದಂತೆ ಹಲವರು ಉಪಸ್ಥಿತರಿದ್ದರು. ವಾಣಿ ಅಸುಂಡಿ ಸ್ವಾಗತಿಸಿದರು. ಬಾಹುಬಲಿ ಜೈನರ್ ನಿರೂಪಿಸಿದರು.

೧೮ ವರ್ಷಗಳ ಬಳಿಕ ನಡೆಯುತ್ತಿರುವ ಈ ಐತಿಹಾಸಿಕ ಜಾತ್ರೆ ಹಿರಿಯರ ಪರಿಶ್ರಮ ಹಾಗೂ ಎಲ್ಲರ ಒಗ್ಗಟ್ಟಿನ ಫಲವಾಗಿದೆ. ಈ ಪವಿತ್ರ ವಾತಾವರಣಕ್ಕೆ ಯಾವುದೇ ರೀತಿಯ ಮನಸ್ತಾಪ ಅಥವಾ ಭಿನ್ನಾಭಿಪ್ರಾಯ ಧಕ್ಕೆ ತರದಂತೆ ಪ್ರತಿಯೊಬ್ಬರೂ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು.

— ವಸಂತ ಪಡಗದ, ಬಿಜೆಪಿ ಯುವ ಮುಖಂಡ

ಸಿಸಿ ರಸ್ತೆ ಕಾಮಗಾರಿಗೆ ಶಾಸಕ ಡಾ. ಚಂದ್ರು ಲಮಾಣಿ ಚಾಲನೆ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ತಾಲ್ಲೂಕಿನ ಗೊಜನೂರು ಗ್ರಾಮದಲ್ಲಿ ಸುಮಾರು ೨೦ ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ಸಿಸಿ ರಸ್ತೆ ಕಾಮಗಾರಿಗೆ ಶನಿವಾರ ಶಾಸಕ ಡಾ. ಚಂದ್ರು ಲಮಾಣಿ ಭೂಮಿಪೂಜೆ ನೆರವೇರಿಸಿದರು.

ನಂತರ ಮಾತನಾಡಿದ ಅವರು, ಕಳೆದ ಮೂರು ವರ್ಷಗಳಿಂದ ಕ್ಷೇತ್ರದ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಲಾಗುತ್ತಿದ್ದು, ಕುಡಿಯುವ ನೀರು ಹಾಗೂ ರಸ್ತೆ ನಿರ್ಮಾಣಕ್ಕೆ ಹೆಚ್ಚಿನ ಮಹತ್ವ ನೀಡಲಾಗಿದೆ ಎಂದರು.

ತಾಲ್ಲೂಕಿನ ಹಲವು ರಸ್ತೆಗಳು ಬಹುತೇಕ ಹದಗೆಟ್ಟಿದ್ದು, ಅವುಗಳ ಪುನರ್‌ನಿರ್ಮಾಣಕ್ಕೆ ಹೆಚ್ಚಿನ ಅನುದಾನದ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಲೋಕೋಪಯೋಗಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಸಚಿವರು ಹಾಗೂ ಅಧಿಕಾರಿಗಳಿಗೂ ವಿಶೇಷ ಅನುದಾನಕ್ಕಾಗಿ ಮನವಿ ಸಲ್ಲಿಸಲಾಗಿದೆ. ಅನುದಾನ ಬಿಡುಗಡೆಯಾದ ತಕ್ಷಣ ಹಂತ ಹಂತವಾಗಿ ಹದಗೆಟ್ಟ ರಸ್ತೆಗಳನ್ನು ಪುನರ್‌ನಿರ್ಮಿಸಲಾಗುವುದು ಎಂದು ಹೇಳಿದರು.

ರಸ್ತೆ ನಿರ್ಮಾಣ ಕಾಮಗಾರಿ ಗುಣಮಟ್ಟದಿಂದ ನಡೆಯಬೇಕು. ಕಾಮಗಾರಿಗೆ ಸ್ಥಳೀಯರು ಸಹಕಾರ ನೀಡುವ ಮೂಲಕ ಉತ್ತಮ ಗುಣಮಟ್ಟದ ರಸ್ತೆ ನಿರ್ಮಾಣವಾಗುವಂತೆ ನೋಡಿಕೊಳ್ಳಬೇಕು ಎಂದು ಶಾಸಕ ಡಾ. ಚಂದ್ರು ಲಮಾಣಿ ಮನವಿ ಮಾಡಿದರು.

ಈ ಸಂದರ್ಭದಲ್ಲಿ ರಮೇಶ ದನದಮನಿ, ತಿಮ್ಮರೆಡ್ಡಿ ಮರಡ್ಡಿ, ಕುಮಾರಸ್ವಾಮಿ ಹಿರೇಮಠ, ಗಂಗಾಧರ ಮೆಣಸಿನಕಾಯಿ, ನಿಂಗನಗೌಡ ಪಾಟೀಲ, ನಿಂಗನಗೌಡ ಕಣವಿ, ಪ್ರವೀಣ ಮಾಡಳ್ಳಿ, ಶೇಕಣ್ಣ ಸೊರಟೂರ, ವೀರಭದ್ರಪ್ಪ ವಡಕಣ್ಣವರ, ಬಸವರಾಜ ಚಕ್ರಸಾಲಿ, ಎಸ್.ಡಿ. ಪಾಟೀಲ, ಎಂ.ಎಫ್. ಪಾಟೀಲ, ಫಕ್ಕೀರೇಶ ದನದಮನಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

೩೫ ಎಕರೆ ಜಾಗದಲ್ಲಿ ಗದಗದ ಭವ್ಯ ಬ್ಯುಸಿನೆಸ್ ಸೆಂಟರ್

0

ವಿಜಯಸಾಕ್ಷಿ ಸುದ್ದಿ, ಗದಗ: ಗದಗ ನಗರದ ಹೃದಯ ಭಾಗದಲ್ಲಿರುವ ಸುಮಾರು ೩೫ ಎಕರೆ ಪ್ರದೇಶದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಗದಗ-ಬೆಟಗೇರಿ ಬ್ಯುಸಿನೆಸ್ ಸೆಂಟರ್ ಯೋಜನೆಯ ಕಾಮಗಾರಿಗಳು ಅತ್ಯುತ್ತಮ ಗುಣಮಟ್ಟದಿಂದ ಕೂಡಿರಬೇಕು. ಗುಣಮಟ್ಟದಲ್ಲಿ ಯಾವುದೇ ಕಾರಣಕ್ಕೂ ರಾಜಿಯಾಗಬಾರದು. ಯೋಜನೆಯ ಪ್ರತಿಯೊಂದು ಕಾಮಗಾರಿಯೂ ಜನರಿಗೆ ದೀರ್ಘಕಾಲ ಉಪಯೋಗವಾಗುವಂತಿರಬೇಕು ಎಂದು ಶಾಸಕ ಡಾ. ಎಚ್.ಕೆ. ಪಾಟೀಲ ಅಧಿಕಾರಿಗಳಿಗೆ ಸೂಚಿಸಿದರು.

ಗದಗ-ಬೆಟಗೇರಿ ವ್ಯಾಪಾರ, ಸಂಸ್ಕೃತಿ ಹಾಗೂ ವಸ್ತು ಪ್ರದರ್ಶನ ಪ್ರಾಧಿಕಾರದ ಆಶ್ರಯದಲ್ಲಿ ಶನಿವಾರ ಜಿಲ್ಲಾಡಳಿತ ಭವನದಲ್ಲಿ ಅವರ ಅಧ್ಯಕ್ಷತೆಯಲ್ಲಿ ನಡೆದ ದ್ವಿತೀಯ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಅವರು, ಸಾರ್ವಜನಿಕ-ಖಾಸಗಿ ಸಹಭಾಗಿತ್ವದ (PPP) ಮಾದರಿಯಲ್ಲಿ ಅಭಿವೃದ್ಧಿಪಡಿಸಲು ಉದ್ದೇಶಿಸಿರುವ ಬ್ಯುಸಿನೆಸ್ ಸೆಂಟರ್ ಕುರಿತು ಬಿಡ್‌ದಾರರು, ಉದ್ಯಮಿಗಳು, ವ್ಯಾಪಾರಸ್ಥರು ಹಾಗೂ ಹೂಡಿಕೆದಾರರೊಂದಿಗೆ ಸಮಗ್ರ ಚರ್ಚೆ ನಡೆಸಿದರು.

ಯೋಜನೆಗೆ ರೂಪಿಸಿರುವ ವಿನ್ಯಾಸದಂತೆ ಅತ್ಯಾಕರ್ಷಕ ಹಾಗೂ ಜನೋಪಯೋಗಿ ಕಟ್ಟಡ ನಿರ್ಮಾಣವಾಗಬೇಕು. ಸಾರ್ವಜನಿಕರಿಗೆ ದೀರ್ಘಕಾಲಿಕವಾಗಿ ಸದ್ಬಳಕೆಯಾಗುವ ರೀತಿಯಲ್ಲಿ ಮೂಲಸೌಕರ್ಯ ಕಲ್ಪಿಸಬೇಕು. ಅಧಿಕಾರಿಗಳು ಹೆಚ್ಚಿನ ಮುತುವರ್ಜಿ ವಹಿಸಿ ಯೋಜನೆಯನ್ನು ಪರಿಣಾಮಕಾರಿಯಾಗಿ ಕಾರ್ಯರೂಪಕ್ಕೆ ತರಬೇಕು ಎಂದರು.

ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಮೂಲಕ ಯೋಜನೆ ಅನುಷ್ಠಾನಗೊಳ್ಳುತ್ತಿರುವುದರಿಂದ ಬಿಡ್‌ದಾರರು ಕೇವಲ ಲಾಭದ ದೃಷ್ಟಿಯಿಂದ ಮಾತ್ರ ಯೋಜನೆಯಲ್ಲಿ ಭಾಗವಹಿಸದೆ ಸೇವಾ ಮನೋಭಾವದಿಂದ ಪಾಲ್ಗೊಳ್ಳಬೇಕು. ಸರ್ಕಾರ, ಸಾರ್ವಜನಿಕರು ಹಾಗೂ ಖಾಸಗಿ ಸಂಘ-ಸಂಸ್ಥೆಗಳ ಸಹಭಾಗಿತ್ವದಲ್ಲಿ ರೂಪುಗೊಳ್ಳುತ್ತಿರುವ ಈ ಯೋಜನೆಯ ಮೂಲ ಉದ್ದೇಶ ಜನಸಾಮಾನ್ಯರಿಗೆ ಅತ್ಯುತ್ತಮ ಸೌಲಭ್ಯಗಳನ್ನು ಒದಗಿಸುವುದಾಗಿದೆ ಎಂದು ಹೇಳಿದರು.

ಯೋಜನೆ ಕುರಿತು ಈಗಾಗಲೇ ಬೆಂಗಳೂರಿನಲ್ಲಿ ಸಭೆ ನಡೆಸಲಾಗಿದೆ. ಗದಗ-ಬೆಟಗೇರಿ ವ್ಯಾಪಾರ, ಸಂಸ್ಕೃತಿ ಹಾಗೂ ವಸ್ತು ಪ್ರದರ್ಶನ ಪ್ರಾಧಿಕಾರವು ಸರ್ಕಾರದ ಅಧಿಕೃತ ಸಂಸ್ಥೆಯಾಗಿದ್ದು, ನಗರದ ಹೃದಯ ಭಾಗದಲ್ಲಿರುವ ಸುಮಾರು ೩೫ ಎಕರೆ ಭೂಮಿಯನ್ನು ಪ್ರಾಧಿಕಾರದ ಹೆಸರಿಗೆ ವರ್ಗಾಯಿಸಲಾಗಿದೆ. ಈ ಪ್ರದೇಶದಲ್ಲಿ ಅತ್ಯುತ್ತಮ ವಾಣಿಜ್ಯ ಕೇಂದ್ರ ನಿರ್ಮಿಸುವ ಉದ್ದೇಶ ಹೊಂದಲಾಗಿದೆ ಎಂದು ಡಾ. ಎಚ್.ಕೆ. ಪಾಟೀಲ ವಿವರಿಸಿದರು.

ಹೂಡಿಕೆದಾರರು ಹಾಗೂ ಖಾಸಗಿ ಸಂಸ್ಥೆಗಳನ್ನು ಆಕರ್ಷಿಸುವ ಉದ್ದೇಶದಿಂದ Expression of Interest (EOI) ಆಹ್ವಾನಿಸಲಾಗಿದೆ. ವಾಣಿಜ್ಯ ಚಟುವಟಿಕೆಗಳಿಗೆ ಅತ್ಯಂತ ಸೂಕ್ತ ಸ್ಥಳವಾಗಿರುವ ಈ ಪ್ರದೇಶವನ್ನು ಸಂಪೂರ್ಣವಾಗಿ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

ಐತಿಹಾಸಿಕ ಗದಗಕ್ಕೆ ಹೊಸ ವಾಣಿಜ್ಯ ಗುರುತು

ಗದಗವು ಐತಿಹಾಸಿಕ, ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ವಾಣಿಜ್ಯ ಕ್ಷೇತ್ರಗಳಲ್ಲಿ ತನ್ನದೇ ಆದ ಮಹತ್ವ ಹೊಂದಿರುವ ನಗರವಾಗಿದೆ. ಹಿಂದಿನಿಂದಲೂ ಹತ್ತಿ ವಹಿವಾಟು ಸೇರಿದಂತೆ ವಿವಿಧ ವ್ಯಾಪಾರ ಚಟುವಟಿಕೆಗಳಿಗೆ ಗದಗ ಪ್ರಮುಖ ಕೇಂದ್ರವಾಗಿತ್ತು. ಸ್ವಾತಂತ್ರ್ಯ ಹೋರಾಟ ಹಾಗೂ ಕರ್ನಾಟಕ ಏಕೀಕರಣ ಚಳವಳಿಯಲ್ಲಿಯೂ ಗದಗ ಪ್ರಮುಖ ಪಾತ್ರ ವಹಿಸಿದೆ.

ಲಕ್ಕುಂಡಿ ಸೇರಿದಂತೆ ಹಲವು ಐತಿಹಾಸಿಕ ಹಾಗೂ ಪ್ರವಾಸಿ ತಾಣಗಳನ್ನು ಹೊಂದಿರುವ ಗದಗ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಮತ್ತು ವಾಣಿಜ್ಯ ಕ್ಷೇತ್ರದಲ್ಲಿ ಹೂಡಿಕೆ ಮಾಡಲು ವಿಪುಲ ಅವಕಾಶಗಳಿವೆ. ಈ ಅವಕಾಶಗಳನ್ನು ಹೂಡಿಕೆದಾರರು ಹಾಗೂ ಸ್ಥಳೀಯ ಉದ್ಯಮಿಗಳು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.

ಏಳು ಸೆಕ್ಟರ್‌ಗಳಲ್ಲಿ ಹಂತಹಂತವಾಗಿ ಅಭಿವೃದ್ಧಿ

ಬ್ಯುಸಿನೆಸ್ ಸೆಂಟರ್ ಯೋಜನೆಯನ್ನು ಒಟ್ಟು ಏಳು ಸೆಕ್ಟರ್‌ಗಳಾಗಿ ವಿಂಗಡಿಸಿ ಹಂತಹಂತವಾಗಿ ಅನುಷ್ಠಾನಗೊಳಿಸುವ ಉದ್ದೇಶ ಹೊಂದಲಾಗಿದೆ. ಯೋಜನೆಯಡಿ ಪಂಚತಾರಾ ಹೋಟೆಲ್, ಆಧುನಿಕ ವಾಣಿಜ್ಯ ಮಳಿಗೆಗಳು, ಸಭಾಂಗಣ, ಟೆಕ್ಸ್‌ಟೈಲ್ ಕೇಂದ್ರ, ಮಕ್ಕಳ ಮನರಂಜನಾ ಪ್ರದೇಶ, ಗಾಂಧಿ ಭವನ, ಆಕರ್ಷಕ ವೃತ್ತಗಳು, ಅಗಲವಾದ ರಸ್ತೆಗಳು ಹಾಗೂ ವ್ಯವಸ್ಥಿತ ಸಾರಿಗೆ ಸಂಪರ್ಕ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಕಲ್ಪಿಸಲು ಯೋಜಿಸಲಾಗಿದೆ.

ನಗರದ ಜನರಿಗೆ ಹಾಗೂ ಹೊರ ಜಿಲ್ಲೆಗಳಿಂದ ಆಗಮಿಸುವ ವ್ಯಾಪಾರಸ್ಥರು, ಹೂಡಿಕೆದಾರರು ಮತ್ತು ಪ್ರವಾಸಿಗರಿಗೆ ಅನುಕೂಲವಾಗುವ ರೀತಿಯಲ್ಲಿ ಸಮಗ್ರ ಮೂಲಸೌಕರ್ಯ ಅಭಿವೃದ್ಧಿಪಡಿಸುವ ಆಶಯ ಹೊಂದಲಾಗಿದೆ.

ವಿವಿಧ ಕ್ಷೇತ್ರಗಳ ವ್ಯಾಪಾರಸ್ಥರಿಗೆ ಅಗತ್ಯವಿರುವ ಸೌಲಭ್ಯಗಳ ಕುರಿತು ಸಲಹೆ ನೀಡಲು ಅವಕಾಶ ಕಲ್ಪಿಸಲಾಗಿದೆ. ವಿಶೇಷವಾಗಿ ಬಂಗಾರ ವ್ಯಾಪಾರಸ್ಥರು ಸೇರಿದಂತೆ ವಿವಿಧ ವ್ಯಾಪಾರ ವಲಯಗಳ ಪ್ರತಿನಿಧಿಗಳು ತಮ್ಮ ಅಗತ್ಯತೆಗಳನ್ನು ಲಿಖಿತವಾಗಿ ಸಲ್ಲಿಸಿದರೆ, ಅವುಗಳನ್ನು ಯೋಜನೆಯಲ್ಲಿ ಅಳವಡಿಸುವ ಸಾಧ್ಯತೆಗಳ ಕುರಿತು ಪರಿಶೀಲಿಸಲಾಗುವುದು ಎಂದರು.

ಹೂಡಿಕೆದಾರರು ಹಾಗೂ ವ್ಯಾಪಾರಸ್ಥರು ಸೆಪ್ಟೆಂಬರ್ ೧೦ರೊಳಗಾಗಿ ತಮ್ಮ ಅಗತ್ಯತೆಗಳು ಮತ್ತು ಸಲಹೆಗಳನ್ನು ಲಿಖಿತವಾಗಿ ಸಲ್ಲಿಸುವ ಮೂಲಕ ಯೋಜನೆಯ ಅನುಷ್ಠಾನದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಡಾ. ಎಚ್.ಕೆ. ಪಾಟೀಲ ಮನವಿ ಮಾಡಿದರು.

ಗುಣಮಟ್ಟಕ್ಕೆ ಯಾವುದೇ ರಾಜಿ ಇಲ್ಲ: ಜಿಲ್ಲಾಧಿಕಾರಿ

ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಮಾತನಾಡಿ, ಯೋಜನೆಯ ಅನುಷ್ಠಾನದಲ್ಲಿ ಕಾನೂನು ಪಾಲನೆ ಹಾಗೂ ಗುಣಮಟ್ಟಕ್ಕೆ ಯಾವುದೇ ರಾಜಿ ಮಾಡಿಕೊಳ್ಳಲು ಅವಕಾಶವಿಲ್ಲ. ಯೋಜನೆ ಅಂತಿಮವಾಗಿ ರೂಪುಗೊಳ್ಳುವಾಗ ಈಗಾಗಲೇ ನಿರ್ಧರಿಸಿರುವ ಉದ್ದೇಶ ಹಾಗೂ ಗುಣಮಟ್ಟದ ಮಾನದಂಡಗಳಿಗೆ ಅನುಗುಣವಾಗಿರಬೇಕು ಎಂದರು.

ಸ್ಥಳೀಯ ವ್ಯಾಪಾರಸ್ಥರು ಹಾಗೂ ಹೂಡಿಕೆದಾರರು ಈ ಅವಕಾಶವನ್ನು ಸದ್ಬಳಕೆ ಮಾಡಿಕೊಂಡು ಯೋಜನೆಯಲ್ಲಿ ಪಾಲ್ಗೊಳ್ಳಬೇಕು. ಸ್ಥಳೀಯ ಉದ್ಯಮಿಗಳು ಅವಕಾಶವನ್ನು ಕೈಬಿಟ್ಟರೆ ಹೊರಗಿನಿಂದ ದೊಡ್ಡ ಪ್ರಮಾಣದ ಹೂಡಿಕೆದಾರರು ಬಂದು ಇಲ್ಲಿ ವ್ಯಾಪಾರ ಚಟುವಟಿಕೆ ನಡೆಸುವ ಸಾಧ್ಯತೆಯಿದೆ. ಈಗಾಗಲೇ ಕೆಲವು ವ್ಯಾಪಾರ ಚಟುವಟಿಕೆಗಳಲ್ಲಿ ಇಂತಹ ಅನುಭವವಾಗಿರುವುದನ್ನು ಗಮನದಲ್ಲಿಟ್ಟುಕೊಂಡು ಸ್ಥಳೀಯರು ಯೋಜನೆಯಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಎಂದರು.

ಗದಗ ನಗರದ ಭವಿಷ್ಯದ ವಾಣಿಜ್ಯ ಬೆಳವಣಿಗೆಗೆ ಈ ಯೋಜನೆ ಮಹತ್ವದ ಹೆಜ್ಜೆಯಾಗಲಿದ್ದು, ಯೋಜನೆ ಪೂರ್ಣಗೊಂಡ ನಂತರ ವ್ಯಾಪಾರ, ಉದ್ಯೋಗ, ಹೂಡಿಕೆ, ಪ್ರವಾಸೋದ್ಯಮ ಹಾಗೂ ನಗರ ಮೂಲಸೌಕರ್ಯ ಅಭಿವೃದ್ಧಿಗೆ ಮತ್ತಷ್ಟು ವೇಗ ದೊರೆಯುವ ನಿರೀಕ್ಷೆಯಿದೆ ಎಂದರು.

ಸಭೆಯಲ್ಲಿ ಗದಗ-ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರ್ ಸಾಬ್ ಬಬರ್ಚಿ, ಜಿಪಂ ಮಾಜಿ ಅಧ್ಯಕ್ಷ ವಾಸಣ್ಣ ಕುರಡಗಿ, ಸಿದ್ದು ಪಾಟೀಲ, ಗ್ಯಾರಂಟಿ ಯೋಜನೆಗಳ ತಾಲೂಕು ಅಧ್ಯಕ್ಷ ಅಶೋಕ ಮಂದಾಲಿ, ಡಾ. ಎನ್.ಎಚ್. ನಾಗನೂರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್, ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್., ಸಹಾಯಕ ಆಯುಕ್ತ ಗಂಗಪ್ಪ ಎಂ., ಬಸನಗೌಡ ಕೊಟೂರ, ರಾಜಾರಾಮ ಪವಾರ್, ಕೊಟ್ರೇಶ್ ವಿಭೂತಿ, ವಸಂತ ಮಡ್ಲೂರ, ಜಿ.ಜೆ. ರುದ್ರಣ್ಣಗೌಡ, ನಿಜಾಮುದ್ದೀನ್, ಜಂಟಿ ನಿರ್ದೇಶಕ (ಕೈಗಾರಿಕೆ) ಪ್ರಕಾಶ್, ಗೋಪಾಲ್ ಅಗರವಾಲ್, ಆಕಾಶ್ ಅಗರವಾಲ್, ನವೀನ್ ಸೇರಿದಂತೆ ಚೇಂಬರ್ ಆಫ್ ಕಾಮರ್ಸ್ ಪದಾಧಿಕಾರಿಗಳು, ವ್ಯಾಪಾರಸ್ಥರು, ಸಣ್ಣ ಕಟ್ಟಡ ಹಾಗೂ ಬಡಾವಣೆ ನಿರ್ಮಾಣದಾರರು, ಹೂಡಿಕೆದಾರರು ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ಉಪಸ್ಥಿತರಿದ್ದರು.

ಗದಗ ನಗರದ ಹೃದಯ ಭಾಗದಲ್ಲಿರುವ ೩೫ ಎಕರೆ ಪ್ರದೇಶವನ್ನು ಕೇವಲ ವಾಣಿಜ್ಯ ಚಟುವಟಿಕೆಗಳಿಗೆ ಸೀಮಿತಗೊಳಿಸದೆ, ನಗರದ ಭವಿಷ್ಯದ ಬೆಳವಣಿಗೆಗೆ ಪೂರಕವಾಗುವ ಸಮಗ್ರ ಕೇಂದ್ರವಾಗಿ ಅಭಿವೃದ್ಧಿಪಡಿಸುವ ಆಶಯವಿದೆ. ಸ್ಥಳೀಯ ವ್ಯಾಪಾರಸ್ಥರು ಹಾಗೂ ಹೂಡಿಕೆದಾರರು ತಮ್ಮ ಅಗತ್ಯತೆ ಮತ್ತು ಸಲಹೆಗಳನ್ನು ನೀಡುವ ಮೂಲಕ ಈ ಮಹತ್ವದ ಯೋಜನೆಯ ಭಾಗವಾಗಬೇಕು.

— ಡಾ. ಎಚ್.ಕೆ. ಪಾಟೀಲ, ಶಾಸಕ

ಕೆಪಿಎಂಸಿಯಿಂದ ಯೋಜನೆ ಪ್ರಸ್ತುತಿ

ಸಭೆಯಲ್ಲಿ ಕೆಪಿಎಂಸಿ ಸಂಸ್ಥೆಯ ಪ್ರತಿನಿಧಿಗಳು ಬ್ಯುಸಿನೆಸ್ ಸೆಂಟರ್ ಅಭಿವೃದ್ಧಿಗೆ ಸಂಬಂಧಿಸಿದಂತೆ ಸಿದ್ಧಪಡಿಸಿರುವ ಯೋಜನೆಯ ಸಮಗ್ರ ರೂಪುರೇಷೆ, ಕಟ್ಟಡ ವಿನ್ಯಾಸ, ಮೂಲಸೌಕರ್ಯ, ವಿವಿಧ ಸೆಕ್ಟರ್‌ಗಳ ಅಭಿವೃದ್ಧಿ ಹಾಗೂ ಹಂತಹಂತವಾಗಿ ಕೈಗೊಳ್ಳಬೇಕಾದ ಕಾಮಗಾರಿಗಳ ಕುರಿತು ಪ್ರಾತ್ಯಕ್ಷಿಕೆಯ ಮೂಲಕ ವಿವರಿಸಿದರು.

ವಿದ್ಯಾರ್ಥಿ ಜೀವನವೇ ಭವಿಷ್ಯ ರೂಪಿಸುವ ಪ್ರಮುಖ ಹಂತ: ನಿಂಗಪ್ಪ ಕಟ್ಟಿಮನಿ

0

ವಿಜಯಸಾಕ್ಷಿ ಸುದ್ದಿ, ಗದಗ: ವಿದ್ಯಾರ್ಥಿ ಜೀವನವು ವ್ಯಕ್ತಿಯ ಉತ್ತಮ ಭವಿಷ್ಯವನ್ನು ರೂಪಿಸುವ ಅತ್ಯಂತ ಮಹತ್ವದ ಹಂತವಾಗಿದ್ದು, ಸತ್ಯ, ಪ್ರಾಮಾಣಿಕತೆ, ಶಿಸ್ತು, ದಯೆ, ಸಹಕಾರ ಹಾಗೂ ಗೌರವದಂತಹ ಉತ್ತಮ ಮೌಲ್ಯಗಳನ್ನು ಅಳವಡಿಸಿಕೊಂಡು ವಿದ್ಯಾರ್ಥಿಗಳು ಬದುಕು ರೂಪಿಸಿಕೊಳ್ಳಬೇಕು ಎಂದು ಭಾರತೀಯ ಶ್ರಮಿಕ ಕಾರ್ಮಿಕ ಕರ್ಮಚಾರಿ ಮಹಾಸಂಘದ ಗದಗ ಜಿಲ್ಲಾ ಅಧ್ಯಕ್ಷ ನಿಂಗಪ್ಪ ಕಟ್ಟಿಮನಿ ಹೇಳಿದರು.

ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಹೆಣ್ಣು ಮಕ್ಕಳ ಶಾಲೆ ನಂ. ೨ರಲ್ಲಿ ಗದಗ ಜಿಲ್ಲಾ ಶರಣ ಸಂಕುಲದ ಶರಣೆ ಅಕ್ಕಮಹಾದೇವಿಯ ಕದಳಿಶ್ರೀ ವೇದಿಕೆ ವತಿಯಿಂದ ಶ್ರಾವಣ ಮಾಸದ ಅಂಗವಾಗಿ ಆಯೋಜಿಸಿದ್ದ ‘ಅಮೃತ ಭೋಜನ–ಜ್ಞಾನ ಸಿಂಚನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನೈತಿಕ ಮೌಲ್ಯಗಳು ವಿದ್ಯಾರ್ಥಿಗಳಲ್ಲಿ ಉತ್ತಮ ವ್ಯಕ್ತಿತ್ವ ಬೆಳೆಸುತ್ತವೆ. ಶರಣರ ವಚನಗಳು ಹಾಗೂ ಅವರ ಆದರ್ಶಗಳನ್ನು ಮಕ್ಕಳು ತಿಳಿದುಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಈ ಮೂಲಕ ಆದರ್ಶಪ್ರಾಯ ವಿದ್ಯಾರ್ಥಿ ಜೀವನ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಅತಿಥಿಯಾಗಿ ಆಗಮಿಸಿದ್ದ ಪ್ರಶಸ್ತಿ ವಿಜೇತ ಗಾಯಕಿ ಪದ್ಮಾ ಕಬಾಡಿ ಮಾತನಾಡಿ, ವಚನಗಳು ಹಾಡಲು ಸುಲಭವಾಗಿದ್ದು, ಅತ್ಯಂತ ಅರ್ಥಗರ್ಭಿತವಾಗಿವೆ. ಮಕ್ಕಳು ವಚನಗಳ ಅರ್ಥ ತಿಳಿದುಕೊಂಡು ಹಾಡುವ ರೂಢಿ ಬೆಳೆಸಿಕೊಳ್ಳಬೇಕು. ವಚನಗಳ ಸಂದೇಶವನ್ನು ಬದುಕಿನಲ್ಲಿ ಅಳವಡಿಸಿಕೊಂಡು ಉತ್ತಮ ಜೀವನ ರೂಪಿಸಿಕೊಳ್ಳಬೇಕು ಎಂದರು.

ಸಂಪನ್ಮೂಲ ವ್ಯಕ್ತಿ ಕವಿತಾ ದಂಡಿನ ಪ್ರಾಸ್ತಾವಿಕವಾಗಿ ಮಾತನಾಡಿ, ಕದಳಿಶ್ರೀ ವೇದಿಕೆ ವತಿಯಿಂದ ಪ್ರತಿವರ್ಷ ಶ್ರಾವಣ ಮಾಸದಲ್ಲಿ ಸರ್ಕಾರಿ ಶಾಲೆಗಳಿಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರನ್ನು ಆಹ್ವಾನಿಸಿ, ಮಕ್ಕಳಿಗೆ ಸಿಹಿಭೋಜನ ಉಣಬಡಿಸುವುದು ಹಾಗೂ ಕಲಿಕಾ ಸಾಮಗ್ರಿಗಳನ್ನು ವಿತರಿಸುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ ಎಂದರು. ಈ ಸೇವಾ ಕಾರ್ಯಕ್ಕೆ ಸಹಕರಿಸಿದ ಡಾ. ರಾಧಿಕಾ ಕುಲಕರ್ಣಿ, ಆಶಿಕಾ ಹಾಗೂ ಆಶಿಕ ಖತ್ರಿ, ಸುಮಾ ಪಾಟೀಲ ಮತ್ತು ವಾಣಿ ಅಬ್ಬಿಗೇರಿ (ಪಾಟೀಲ) ಅವರನ್ನು ಅಭಿನಂದಿಸಿದರು.

ಶಾಲೆಯ ಮುಖ್ಯೋಪಾಧ್ಯಾಯಿನಿ ಕಮಲಾಕ್ಷಿ ರೇಶ್ಮಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಕದಳಿಶ್ರೀ ವೇದಿಕೆ ವತಿಯಿಂದ ಉತ್ತಮ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಶಿಕ್ಷಣ ಪ್ರೇಮಿಗಳು ಸಿಹಿಭೋಜನ ಹಾಗೂ ಕಲಿಕಾ ಸಾಮಗ್ರಿಗಳೊಂದಿಗೆ ಸರ್ಕಾರಿ ಶಾಲೆಗೆ ಆಗಮಿಸಿ ಮಕ್ಕಳಿಗೆ ಉಪಯುಕ್ತ ಮಾಹಿತಿ ನೀಡುತ್ತಿರುವುದು ಶ್ಲಾಘನೀಯ ಎಂದರು.

ವಿದ್ಯಾರ್ಥಿಗಳಾದ ಅಮೃತಾ ಮರಾಠಿ, ಕವನಾ ಬರಡಿ ಹಾಗೂ ಸಿಂಧೂ ಹರ್ತಿ ವಚನ ಪ್ರಾರ್ಥನೆ ಸಲ್ಲಿಸಿದರು. ರೇಣುಕಾ ಪಾಟೀಲ ಹಾಗೂ ಸ್ನೇಹಾ ಜಡಿ ವಚನಗಳನ್ನು ಹಾಡಿದರು. ಎಸ್.ವಿ. ಇಂದಿರಾಬಾಯಿ ಸ್ವಾಗತಿಸಿದರು. ಪಿ.ಎಫ್. ನಾಗನೂರ ಪರಿಚಯಿಸಿದರು. ಗೌರಮ್ಮ ಕಮತರ ನಿರೂಪಿಸಿದರು. ಸಂಗಮ್ಮ ಅಲಗೂರ ವಂದಿಸಿದರು.

ಕಾರ್ಯಕ್ರಮದಲ್ಲಿ ಕಲ್ಪನಾ ಅರ್ಕಸಾಲಿ, ಹೊನ್ನಮ್ಮ ಹರಿಜನ, ಶಿಲ್ಪಾ ಕಮ್ಮಾರ, ಸಂಗೀತಾ ಬದಿ, ಗೀತಾ ಮಂಗಳೂರ, ದೀಪಾ ಬೆಟಗೇರಿ, ಲಕ್ಷ್ಮೀ ಜಡಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.