ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಹೈಕೋರ್ಟ್ನಲ್ಲಿ ನಡೆದಿದ್ದು, ಸಾಕ್ಷಿಗಳ ಪಾಟೀ ಸವಾಲಿನ ಸಂದರ್ಭದಲ್ಲಿ ಖುದ್ದು ನ್ಯಾಯಾಲಯಕ್ಕೆ ಹಾಜರಾಗುವ ಅವಕಾಶವನ್ನು ನ್ಯಾಯಾಲಯ ನೀಡಿದೆ. ನ್ಯಾಯಮೂರ್ತಿ ವಿ. ಶ್ರೀಶಾನಂದ ಅವರಿದ್ದ ಪೀಠದ ಮುಂದೆ ಅರ್ಜಿಯ ವಿಚಾರಣೆ ನಡೆಯಿತು.
ಪ್ರಕರಣದ ವಿಚಾರಣೆ ಸದ್ಯ ನ್ಯಾಯಾಲಯದಲ್ಲಿ ಮುಂದುವರಿದಿದ್ದು, ಕೆಲವು ಸಾಕ್ಷಿಗಳ ಹೇಳಿಕೆ ಮತ್ತು ಪಾಟೀ ಸವಾಲಿನ ಸಂದರ್ಭದಲ್ಲಿ ತಾವು ಖುದ್ದಾಗಿ ನ್ಯಾಯಾಲಯದಲ್ಲಿ ಹಾಜರಾಗಲು ಅವಕಾಶ ನೀಡಬೇಕು ಎಂದು ದರ್ಶನ್ ಪರ ವಕೀಲರು ಹೈಕೋರ್ಟ್ ಮೊರೆ ಹೋಗಿದ್ದರು.
ಶುಕ್ರವಾರ ನಡೆದ ವಿಚಾರಣೆಯಲ್ಲಿ ದರ್ಶನ್ ಪರ ವಕೀಲರು, ನಿರ್ದಿಷ್ಟವಾಗಿ ಏಳು ಸಾಕ್ಷಿಗಳ ವಿಚಾರಣೆ ನಡೆಯುವ ಸಂದರ್ಭದಲ್ಲಿ ತಮ್ಮ ಕಕ್ಷಿದಾರರು ನ್ಯಾಯಾಲಯದಲ್ಲಿ ಖುದ್ದಾಗಿ ಹಾಜರಾಗುವುದು ಅಗತ್ಯ ಎಂದು ವಾದಿಸಿದರು. ಸಾಕ್ಷಿಗಳ ಪಾಟೀ ಸವಾಲಿನ ಸಂದರ್ಭದಲ್ಲಿ ಆರೋಪಿಯ ಉಪಸ್ಥಿತಿ ಅಗತ್ಯವಾಗಬಹುದು ಎಂಬ ಅಂಶವನ್ನೂ ನ್ಯಾಯಾಲಯದ ಗಮನಕ್ಕೆ ತಂದರು.
ಮನವಿಯನ್ನು ಪರಿಗಣಿಸಿದ ಹೈಕೋರ್ಟ್, ನಿರ್ದಿಷ್ಟ ಸಾಕ್ಷಿಗಳ ಪಾಟೀ ಸವಾಲಿನ ಸಂದರ್ಭದಲ್ಲಿ ದರ್ಶನ್ ಖುದ್ದು ಹಾಜರಾಗಲು ಅವಕಾಶ ನೀಡಿದೆ. ಆದರೆ ಪ್ರತಿಯೊಂದು ವಿಚಾರಣೆಯ ದಿನವೂ ಆರೋಪಿಯು ತನ್ನ ಇಚ್ಛೆಯಂತೆ ನ್ಯಾಯಾಲಯಕ್ಕೆ ಖುದ್ದಾಗಿ ಹಾಜರಾಗಲು ಸಾಧ್ಯವಿಲ್ಲ ಎಂದು ಪೀಠ ಸ್ಪಷ್ಟಪಡಿಸಿದೆ.
ದರ್ಶನ್ ಅವರ ಖುದ್ದು ಹಾಜರಾತಿ ಕುರಿತು ಪ್ರಾಸಿಕ್ಯೂಷನ್ ಪರ ವಿಶೇಷ ಸರ್ಕಾರಿ ಅಭಿಯೋಜಕ ಎಸ್ಪಿಪಿ ಪ್ರಸನ್ನ ಕುಮಾರ್ ಕೂಡ ವಾದ ಮಂಡಿಸಿದರು. ದರ್ಶನ್ ಯಾವ ದಿನಗಳಲ್ಲಿ ನ್ಯಾಯಾಲಯಕ್ಕೆ ಹಾಜರಾಗಬೇಕು ಎಂಬುದನ್ನು ಸ್ಪಷ್ಟವಾಗಿ ನಿಗದಿಪಡಿಸುವಂತೆ ಅವರು ಮನವಿ ಮಾಡಿದರು.
ವಿಚಾರಣೆಯ ಪ್ರಕ್ರಿಯೆ ಯಾವುದೇ ಕಾರಣಕ್ಕೂ ವಿಳಂಬವಾಗದಂತೆ, ನಿರ್ದಿಷ್ಟ ಸಾಕ್ಷಿಗಳ ವಿಚಾರಣೆ ಮತ್ತು ಪಾಟೀ ಸವಾಲು ನಡೆಯುವ ದಿನಗಳಲ್ಲಿ ಮಾತ್ರ ದರ್ಶನ್ ಖುದ್ದು ಹಾಜರಾಗುವ ವ್ಯವಸ್ಥೆ ಇರಬೇಕು ಎಂಬ ವಿಚಾರವೂ ವಿಚಾರಣೆ ವೇಳೆ ಚರ್ಚೆಯಾಯಿತು.
ಆರೋಪಿಯ ಹಿತದೃಷ್ಟಿಯಿಂದ ನಿರ್ದಿಷ್ಟ ಸಂದರ್ಭಗಳಲ್ಲಿ ಖುದ್ದು ಹಾಜರಾಗಲು ಅವಕಾಶ ನೀಡಬಹುದಾದರೂ, ಈ ಅವಕಾಶವನ್ನು ಬಳಸಿಕೊಂಡು ವಿಚಾರಣೆಯ ದಿನಾಂಕ ಅಥವಾ ಸಾಕ್ಷಿಗಳ ವಿಚಾರಣೆಯ ಕ್ರಮವನ್ನು ಆರೋಪಿಗಳೇ ನಿರ್ಧರಿಸುವಂತಾಗಬಾರದು ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ಸಾಕ್ಷಿಗಳ ವಿಚಾರಣೆ ಯಾವ ದಿನ ನಡೆಯಬೇಕು ಎಂಬುದನ್ನು ಆರೋಪಿಗಳು ನ್ಯಾಯಾಲಯಕ್ಕೆ ಸೂಚಿಸಲು ಸಾಧ್ಯವಿಲ್ಲ. ನ್ಯಾಯಾಲಯ ನಿಗದಿಪಡಿಸುವ ವೇಳಾಪಟ್ಟಿಯಂತೆ ಸಾಕ್ಷಿಗಳ ವಿಚಾರಣೆ ಮುಂದುವರಿಯಬೇಕು ಎಂಬ ಅಂಶವನ್ನು ಪೀಠ ಒತ್ತಿ ಹೇಳಿದೆ.
ಹೀಗಾಗಿ, ರೇಣುಕಾಸ್ವಾಮಿ ಪ್ರಕರಣದ ನಿರ್ದಿಷ್ಟ ಸಾಕ್ಷಿಗಳ ಪಾಟೀ ಸವಾಲಿನ ವೇಳೆ ದರ್ಶನ್ಗೆ ನ್ಯಾಯಾಲಯದಲ್ಲಿ ಖುದ್ದು ಹಾಜರಾಗಲು ಅವಕಾಶ ಸಿಕ್ಕಿದ್ದರೂ, ಈ ಅವಕಾಶವು ನ್ಯಾಯಾಲಯ ನಿಗದಿಪಡಿಸುವ ದಿನಾಂಕ ಮತ್ತು ವಿಚಾರಣಾ ವೇಳಾಪಟ್ಟಿಗೆ ಮಾತ್ರ ಸೀಮಿತವಾಗಿದೆ.