ವಿಜಯಸಾಕ್ಷಿ ಸುದ್ದಿ, ಗದಗ: ಮುಖಕ್ಕೆ ಮಾಸ್ಕ್, ಕೈಗೆ ಗ್ಲೌಸ್ ಧರಿಸಿ ಯಾವುದೇ ಸುಳಿವು ಬಿಡದೆ ಲಾಕ್ ಆಗಿದ್ದ ಮನೆಗಳನ್ನು ಟಾರ್ಗೆಟ್ ಮಾಡಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ, ಬೆಳ್ಳಿ ಸಾಮಾನು ಹಾಗೂ ನಗದು ದೋಚುತ್ತಿದ್ದ ಅಂತರರಾಜ್ಯ ಖತರ್ನಾಕ್ ಮಾಸ್ಕ್ ಗ್ಯಾಂಗ್ ಅನ್ನು ಗದಗ ನಗರ ಪೊಲೀಸರು ಸಿನಿಮೀಯ ರೀತಿಯ ಕಾರ್ಯಾಚರಣೆಯಲ್ಲಿ ಬಂಧಿಸಿ, ₹42.73 ಲಕ್ಷ ಮೌಲ್ಯದ ಕಳುವಾದ ಆಸ್ತಿಯನ್ನು ವಶಪಡಿಸಿಕೊಂಡಿದ್ದಾರೆ.
ಗದಗ ನಗರದ ಉದಯನಗರದಲ್ಲಿ ನಡೆದಿದ್ದ ಸುಮಾರು ₹44 ಲಕ್ಷ ಮೌಲ್ಯದ ಮನೆಗಳ್ಳತನ ಪ್ರಕರಣವನ್ನು ಭೇದಿಸಿರುವ ಕುರಿತು ಜಿಲ್ಲಾ ಪೊಲೀಸ್ ಅಧೀಕ್ಷಕ ರೋಹನ್ ಜಗದೀಶ್ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಮೇ 6ರಿಂದ 8ರ ನಡುವಿನ ಅವಧಿಯಲ್ಲಿ ನಗರದ ಉದಯನಗರ 1ನೇ ಕ್ರಾಸ್, ಕ್ಲರ್ಕ್ಸ್ ಇನ್ ಹಿಂಭಾಗದಲ್ಲಿರುವ ಮಂಜುನಾಥ ತಂದೆ ಷಣ್ಮುಖಸಾ ಬಸವಾ ಅವರ ಮನೆಯನ್ನು ಗುರಿಯಾಗಿಸಿಕೊಂಡಿದ್ದ ಕಳ್ಳರು, ಬೀಗ ಮುರಿದು ಮನೆಯೊಳಗೆ ನುಗ್ಗಿ 342 ಗ್ರಾಂ ಚಿನ್ನಾಭರಣ (₹34.20 ಲಕ್ಷ), 1,970 ಗ್ರಾಂ ಬೆಳ್ಳಿ ಸಾಮಾನು (₹2.20 ಲಕ್ಷ) ಹಾಗೂ ₹8.50 ಲಕ್ಷ ನಗದು ದೋಚಿ ಪರಾರಿಯಾಗಿದ್ದರು. ಒಟ್ಟಾರೆ ಸುಮಾರು ₹44.90 ಲಕ್ಷ ಮೌಲ್ಯದ ಕಳ್ಳತನ ನಡೆದಿತ್ತು.
ಈ ಗ್ಯಾಂಗ್ ಕಾರ್ಯಾಚರಣೆಯ ಶೈಲಿಯೇ ವಿಭಿನ್ನವಾಗಿತ್ತು. ಹಗಲು ವೇಳೆಯಲ್ಲಿ ಬೀಗ ಹಾಕಿದ ಮನೆಗಳನ್ನು ಗುರುತಿಸಿ, ರಾತ್ರಿ ವೇಳೆ ಮುಖಕ್ಕೆ ಮಾಸ್ಕ್ ಹಾಗೂ ಕೈಗೆ ಗ್ಲೌಸ್ ಧರಿಸಿ ಕಳ್ಳತನ ನಡೆಸುತ್ತಿದ್ದರು. ಯಾವುದೇ ಬೆರಳಚ್ಚು ಅಥವಾ ಸುಳಿವು ಸಿಗದಂತೆ ಎಚ್ಚರಿಕೆ ವಹಿಸುತ್ತಿದ್ದ ಕಾರಣ ಪ್ರಕರಣ ಭೇದಿಸುವುದು ಪೊಲೀಸರಿಗೆ ಸವಾಲಾಗಿತ್ತು.
ಆದರೆ, ಘಟನಾ ಸ್ಥಳದ ಸಮೀಪದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದ ಅನುಮಾನಾಸ್ಪದ ಕಾರಿನ ಚಲನವಲನ ತನಿಖೆಗೆ ಮಹತ್ವದ ಸುಳಿವಾಯಿತು. ಅದನ್ನೇ ಆಧಾರವಾಗಿಟ್ಟುಕೊಂಡು ಗದಗ ಪೊಲೀಸರು ವಿವಿಧ ಜಿಲ್ಲೆಗಳಲ್ಲಿ ತಾಂತ್ರಿಕ ಮಾಹಿತಿ ಕಲೆಹಾಕಿ ಕಾರ್ಯಾಚರಣೆ ನಡೆಸಿ, ಅಂತರರಾಜ್ಯ ಕಳ್ಳರ ಜಾಲವನ್ನು ಭೇದಿಸಿದರು.
ಬಂಧಿತ ಆರೋಪಿಗಳನ್ನು ಮಹಮ್ಮದರಫೀಕ್ (36, ಬಂಟ್ವಾಳ – ದಕ್ಷಿಣ ಕನ್ನಡ), ಇಮ್ರಾನ್ ತಿಗಡಿ (40, ಬೈಲಹೊಂಗಲ – ಬೆಳಗಾವಿ) ಹಾಗೂ ಮೌಲಾಲಿ ದರ್ಗಾ (34, ಹಾನಗಲ್ – ಹಾವೇರಿ) ಎಂದು ಗುರುತಿಸಲಾಗಿದೆ.

ವಿಚಾರಣೆ ವೇಳೆ ಆರೋಪಿಗಳು ಉದಯನಗರದ ಮನೆಯಲ್ಲೇ ಕಳ್ಳತನ ನಡೆಸಿರುವುದನ್ನು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳಿಂದ 330 ಗ್ರಾಂ ಚಿನ್ನಾಭರಣ (₹33.33 ಲಕ್ಷ), 750 ಗ್ರಾಂ ಬೆಳ್ಳಿ ಸಾಮಾನು (₹90 ಸಾವಿರ), ಕಳ್ಳತನಕ್ಕೆ ಬಳಸಿದ್ದ ಮಾರೂತಿ ಸುಜುಕಿ ಎರ್ಟಿಗಾ ಕಾರು (₹8 ಲಕ್ಷ) ಹಾಗೂ ಕಳುವಿನ ಹಣದಿಂದ ಖರೀದಿಸಿದ್ದ ಮಾರೂತಿ ಸುಜುಕಿ ಆಲ್ಟೋ ಎಲ್ಎಕ್ಸ್ಐ ಕಾರು (₹50 ಸಾವಿರ) ಸೇರಿದಂತೆ ಒಟ್ಟು ₹42.73 ಲಕ್ಷ ಮೌಲ್ಯದ ಆಸ್ತಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಬಂಧಿತ ಆರೋಪಿಗಳು ಗದಗ ಜಿಲ್ಲೆ ಮಾತ್ರವಲ್ಲದೆ ರಾಜ್ಯದ ವಿವಿಧ ಜಿಲ್ಲೆಗಳು ಹಾಗೂ ಕೇರಳ, ತಮಿಳುನಾಡಿನಲ್ಲಿಯೂ ಇದೇ ರೀತಿಯ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವ ಮಾಹಿತಿ ತನಿಖೆ ವೇಳೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ತನಿಖಾ ತಂಡಕ್ಕೆ ಎಸ್ಪಿ ಅಭಿನಂದನೆ
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾ ಪೊಲೀಸ್ ಅಧೀಕ್ಷಕ ರೋಹನ್ ಜಗದೀಶ್ ಹಾಗೂ ಡಿವೈಎಸ್ಪಿ ಮುರ್ತುಜಾ ಖಾದ್ರಿ ಅವರ ಮಾರ್ಗದರ್ಶನದಲ್ಲಿ ವಿಶೇಷ ತನಿಖಾ ತಂಡ ರಚಿಸಲಾಗಿತ್ತು.
ನಗರ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಸಂಗಮೇಶ ವಿ. ಶಿವಯೋಗಿ, ಬೆಟಗೇರಿ ವೃತ್ತದ ಇನ್ಸ್ಪೆಕ್ಟರ್ ಧೀರಜ್ ಶಿಂಧೆ, ಮಹಿಳಾ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಎಲ್.ಕೆ. ಜೂಲಕಟ್ಟಿ, ಪಿಎಸ್ಐ ಬಿ.ಟಿ. ರಿತ್ತಿ, ಪಿಎಸ್ಐ ರೇಣುಕಾ ಮುಂಡೇವಾಡಗಿ, ಎಆರ್ ಎಸ್ ಐ ಗುರು ಬೂದಿಹಾಳ, ಆನಂದ್ ಸಿಂಗ್ ದೊಡ್ಡಮನಿ, ವಿ.ಎಸ್. ಶೆಟ್ಟೆಣ್ಣವರ, ಎಸ್.ಎಸ್. ಮಾವಿನಕಾಯಿ, ಉಮೇಶ್ ಸುಣಗಾರ, ಶರಣಪ್ಪ ನಾಗೇಂದ್ರಗಡ, ಕುಮಾರ ತಿಗರಿ, ಕಲಂದರ್ ನದಾಫ್, ಲಕ್ಷ್ಮೇಶ್ವರ ಠಾಣೆಯ ಸಿಬ್ಬಂದಿ, ಸಂಜೀವ ಕೊರಡೂರು (ಟೆಕ್ನಿಕಲ್ ಸೆಲ್), ಅಣ್ಣಪ್ಪ ಕವಲೂರು, ಹನುಮಂತ ಯಾಡಿಯಾಪೂರ, ಪ್ರಕಾಶ ಉಮಚಗಿ, ವೀರಪ್ಪ ಗೌಡನಾಯ್ಕರ, ಗಣೇಶ್ ತಳವಾರ, ಕಾರ್ತಿಕ ಮಂಗಳಿ ಸೇರಿದಂತೆ ನಗರ ಠಾಣೆ, ತಾಂತ್ರಿಕ ವಿಭಾಗ, ಸಿಇಎನ್ ಠಾಣೆ ಹಾಗೂ ಇತರ ಸಿಬ್ಬಂದಿ ನಿರಂತರ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದರು.
ಅಲ್ಪಾವಧಿಯಲ್ಲೇ ಪ್ರಕರಣವನ್ನು ಭೇದಿಸಿದ ತನಿಖಾ ತಂಡದ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಎಸ್ಪಿ ರೋಹನ್ ಜಗದೀಶ್ ಅಭಿನಂದಿಸಿದರು.
“ಯಾವುದೇ ಸುಳಿವು ಸಿಗದಿದ್ದರೂ ಸಿಸಿ ಕ್ಯಾಮೆರಾದಲ್ಲಿ ಕಂಡುಬಂದ ಕಾರಿನ ಜಾಡು ಹಿಡಿದು ತನಿಖೆ ನಡೆಸಿದ ಪರಿಣಾಮ ಅಂತರರಾಜ್ಯ ಕಳ್ಳರ ಗ್ಯಾಂಗ್ ಬಂಧಿಸಲು ಸಾಧ್ಯವಾಯಿತು. ಆರೋಪಿಗಳ ವಿರುದ್ಧ ಕೋಕಾ ಕಾಯ್ದೆಯಡಿ ಕ್ರಮ ಕೈಗೊಳ್ಳಲಾಗಿದೆ.”
ರೋಹನ್ ಜಗದೀಶ್, ಜಿಲ್ಲಾ ಪೊಲೀಸ್ ಅಧೀಕ್ಷಕರು, ಗದಗ
ಮಹಾಲಕ್ಷ್ಮೀ ದೇವಸ್ಥಾನ ಕಳ್ಳತನದ ಆರೋಪಿಯೂ ಬಂಧನ
ಇದೇ ಕಾರ್ಯಾಚರಣೆಯಲ್ಲಿ ಗದಗ ನಗರದ ಹಾತಲಗೇರಿ ನಾಕಾದ ಮಹಾಲಕ್ಷ್ಮೀ ದೇವಸ್ಥಾನ ಕಳ್ಳತನ ಪ್ರಕರಣವನ್ನೂ ಪೊಲೀಸರು ಭೇದಿಸಿದ್ದಾರೆ. ದೇವಿಗೆ ಹಾಕುವ ₹1.25 ಲಕ್ಷ ಮೌಲ್ಯದ ಚಿನ್ನದ ತಾಳಿ, ಬೆಳ್ಳಿಯ ಕಿರೀಟ ಹಾಗೂ ಇತರೆ ಬೆಳ್ಳಿ ವಸ್ತುಗಳನ್ನು ವಶಪಡಿಸಿಕೊಂಡಿದ್ದು, ಈ ಪ್ರಕರಣದಲ್ಲಿ ಮಂಡ್ಯ ಜಿಲ್ಲೆಯ ಪೃಥ್ವಿರಾಜ್ ಎಂಬ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಎಸ್ಪಿ ಮಾಹಿತಿ ನೀಡಿದರು.