Home Blog

ವೆನೆಜುವೆಲಾ ಜೊತೆ ಐತಿಹಾಸಿಕ ತೈಲ ಒಪ್ಪಂದ: 65 ಶತಕೋಟಿ ಬ್ಯಾರಲ್ ನಿಕ್ಷೇಪದ ಮೇಲೆ ಅಮೆರಿಕ ಹಿಡಿತ

0

ವಾಷಿಂಗ್ಟನ್: ಅಮೆರಿಕ ವೆನೆಜುವೆಲಾದೊಂದಿಗೆ ವಿಶ್ವದ ಇತಿಹಾಸದಲ್ಲೇ ಅತಿದೊಡ್ಡ ತೈಲ ಒಪ್ಪಂದ ಮಾಡಿಕೊಂಡಿದೆ. ಈ ಒಪ್ಪಂದದ ಅನ್ವಯ ವೆನೆಜುವೆಲಾದ 65 ಶತಕೋಟಿ ಬ್ಯಾರಲ್ ತೈಲ ನಿಕ್ಷೇಪಗಳ ಮೇಲೆ ಅಮೆರಿಕ ಹಿಡಿತ ಸಾಧಿಸಲಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ವೆನೆಜುವೆಲಾದ ಮಾಜಿ ಅಧ್ಯಕ್ಷ ನಿಕೋಲಸ್ ಮಡುರೊ ಅವರ ಸರ್ಕಾರವನ್ನು ಅಮೆರಿಕ ಉರುಳಿಸಿದ ಬಹುದಿನಗಳ ನಂತರ ಈ ಮಹತ್ವದ ಬೆಳವಣಿಗೆ ಸಂಭವಿಸಿದೆ. ಈ ಒಪ್ಪಂದಕ್ಕಾಗಿ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಮತ್ತು ಯುದ್ಧ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಹಾಗೂ ವೆನೆಜುವೆಲಾದ ಅಧ್ಯಕ್ಷ ಡೆಲ್ಸಿ ರೊಡ್ರಿಗಸ್ ಅವರೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಿರುವುದಾಗಿಯೂ,

ಈ ಒಪ್ಪಂದ ಉಭಯ ದೇಶಗಳ ನಡುವಿನ ಸಂಬಂಧವನ್ನು ಮತ್ತಷ್ಟು ಬಲಪಡಿಸಲಿದೆ ಎಂದೂ ಟ್ರಂಪ್ ತಿಳಿಸಿದ್ದಾರೆ. ಈ ಐತಿಹಾಸಿಕ ಒಪ್ಪಂದ ಅಮೆರಿಕದ ತೈಲ ನಿಕ್ಷೇಪಗಳ ಸಾಮರ್ಥ್ಯವನ್ನು ದ್ವಿಗುಣಗೊಳಿಸಲಿದ್ದು, ತೈಲ ಪೂರೈಕೆ ಗಣನೀಯವಾಗಿ ಹೆಚ್ಚಿಸುವ ಜೊತೆಗೆ ಭವಿಷ್ಯದಲ್ಲಿ ಪ್ರತಿಯೊಬ್ಬ ಅಮೆರಿಕನ್ನರಿಗೆ ಕಡಿಮೆ ಬೆಲೆಯಲ್ಲಿ ತೈಲ ಮತ್ತು ಅನಿಲ ದೊರಕಿಸಿಕೊಡಲು ಸಹಾಯ ಮಾಡುತ್ತದೆ ಎಂದು ಟ್ರಂಪ್ ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆ ಟ್ರೂತ್ ಸೋಷಿಯಲ್‌ನಲ್ಲಿ ಬರೆದುಕೊಂಡಿದ್ದಾರೆ.

ಇದಕ್ಕಿಂತ ಮುಖ್ಯವಾಗಿ ಈ ಒಪ್ಪಂದ ವೆನೆಜುವೆಲಾವನ್ನು ಸಮೃದ್ಧಿಯತ್ತ ಸಾಗಿಸಲು ಸಹಾಯ ಮಾಡುತ್ತದೆ ಎಂದೂ, ವೆನೆಜುವೆಲಾದೊಂದಿಗಿನ ಈ ಒಪ್ಪಂದ ವಿಶ್ವ ಇತಿಹಾಸದಲ್ಲೇ ಇದುವರೆಗಿನ ಅತಿದೊಡ್ಡ ತೈಲ ಒಪ್ಪಂದ ಎಂದೂ ಅವರು ಪುನರುಚ್ಚರಿಸಿದ್ದಾರೆ.

ವೆನೆಜುವೆಲಾ ವಿಶ್ವದ ಅತಿದೊಡ್ಡ ತೈಲ ನಿಕ್ಷೇಪಗಳಲ್ಲಿ ಒಂದಾಗಿದೆ. ಅಮೆರಿಕದ ಇಂಧನ ಮಾಹಿತಿ ಆಡಳಿತದ ಅಂದಾಜಿನ ಪ್ರಕಾರ, ದಕ್ಷಿಣ ಅಮೆರಿಕದ ಈ ದೇಶ ಸುಮಾರು 303 ಶತಕೋಟಿ ಬ್ಯಾರಲ್ ಕಚ್ಚಾ ತೈಲ ಹೊಂದಿದ್ದು, ಇದು ವಿಶ್ವದ ಒಟ್ಟು ಪೂರೈಕೆಯ ಸರಿಸುಮಾರು ಶೇ.17ರಷ್ಟಿದೆ. ಆದರೆ ಕಳಪೆ ಮೂಲಸೌಕರ್ಯದಿಂದಾಗಿ ವೆನೆಜುವೆಲಾ ವಿಶ್ವದ ತೈಲದ ಸುಮಾರು ಶೇ.1ರಷ್ಟನ್ನಷ್ಟೇ ಉತ್ಪಾದಿಸುತ್ತಿದೆ. ಇದೀಗ ಹೊಸ ಒಪ್ಪಂದಗಳ ಅಡಿಯಲ್ಲಿ ಅಮೆರಿಕ ವೆನೆಜುವೆಲಾ ತೈಲ ನಿಕ್ಷೇಪಗಳನ್ನು ಅಭಿವೃದ್ಧಿಪಡಿಸಲು ಅವಕಾಶ ನೀಡಲಿದ್ದು, ಇದಕ್ಕೆ ಪ್ರತಿಯಾಗಿ ಹೆಚ್ಚಿನ ಪಾಲನ್ನು ಅಮೆರಿಕ ಪಡೆಯಲಿದೆ ಎಂದು ತಿಳಿದುಬಂದಿದೆ.

ಕರ್ನಾಟಕದಲ್ಲಿ ಮುಂಗಾರು ಅಬ್ಬರ: ಕರಾವಳಿ, ಮಲೆನಾಡು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ

0

ಬೆಂಗಳೂರು: ರಾಜ್ಯದ ವಿವಿಧ ಭಾಗಗಳಲ್ಲಿ ಮುಂಗಾರು ಮಳೆಯ ಚಟುವಟಿಕೆ ಮುಂದುವರಿದಿದ್ದು, ಕರಾವಳಿ, ಮಲೆನಾಡು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮುಂದಿನ ಎರಡು ದಿನವೂ ಮಳೆ ಮುಂದುವರಿಯುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಕರಾವಳಿ ಕರ್ನಾಟಕದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಹೆಚ್ಚಿನ ಭಾಗಗಳಲ್ಲಿ ಇಂದು ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಇದೇ ವೇಳೆ ಗಂಟೆಗೆ 30ರಿಂದ 40 ಕಿ.ಮೀ. ವೇಗದಲ್ಲಿ ನಿರಂತರ ಬಲವಾದ ಗಾಳಿ ಬೀಸುವ ಸಾಧ್ಯತೆಯಿದೆ.

ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ ಹಾಗೂ ಹಾವೇರಿ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ. ಈ ಭಾಗಗಳಲ್ಲಿ ಗಂಟೆಗೆ 40ರಿಂದ 50 ಕಿ.ಮೀ. ವೇಗದಲ್ಲಿ ಬಲವಾದ ಗಾಳಿ ಬೀಸುವ ಸಾಧ್ಯತೆಯಿರುವುದರಿಂದ ಸಾರ್ವಜನಿಕರು ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.

ದಕ್ಷಿಣ ಒಳನಾಡಿನ ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಹಾಗೂ ಹಾಸನ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದ್ದು, ಗಂಟೆಗೆ 30ರಿಂದ 40 ಕಿ.ಮೀ. ವೇಗದಲ್ಲಿ ಗಾಳಿ ಬೀಸಬಹುದು.

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ ಹಾಗೂ ತುಮಕೂರು ಜಿಲ್ಲೆಗಳಲ್ಲಿ ಮೇಘಾವೃತ ವಾತಾವರಣದೊಂದಿಗೆ ಗಂಟೆಗೆ 30ರಿಂದ 40 ಕಿ.ಮೀ. ವೇಗದ ಗಾಳಿಯ ನಡುವೆ ಹಗುರ ಮಳೆಯಾಗುವ ಸಾಧ್ಯತೆಯಿದೆ.

ಆ.30ರಂದು ಎಲ್ಲೆಲ್ಲಿ ಮಳೆ?

ನಾಳೆ (ಆ.30) ಕೂಡ ಕರಾವಳಿ ಕರ್ನಾಟಕದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮಳೆಯ ಅಬ್ಬರ ಮುಂದುವರಿಯಲಿದ್ದು, ಹಲವೆಡೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.

ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ ಹಾಗೂ ಹಾವೇರಿ ಜಿಲ್ಲೆಗಳಲ್ಲಿ ಗಾಳಿಯ ವೇಗ ತಗ್ಗಲಿದ್ದು, ಸಾಧಾರಣ ಮಳೆಯಾಗುವ ಮುನ್ಸೂಚನೆ ಇದೆ.

ದಕ್ಷಿಣ ಒಳನಾಡಿನ ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಹಾಗೂ ಹಾಸನ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಇನ್ನು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ಮೈಸೂರು, ರಾಮನಗರ ಹಾಗೂ ತುಮಕೂರು ಜಿಲ್ಲೆಗಳಲ್ಲಿ ಕೆಲವೆಡೆ ಹಗುರ ಮಳೆಯಾಗಬಹುದು.

ಹೀಗಾಗಿ ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಸಂಚರಿಸುವವರು ಮಳೆ ಮತ್ತು ಬಲವಾದ ಗಾಳಿಯ ಮುನ್ಸೂಚನೆಯನ್ನು ಗಮನದಲ್ಲಿಟ್ಟುಕೊಂಡು ಮುನ್ನೆಚ್ಚರಿಕೆ ವಹಿಸುವುದು ಸೂಕ್ತವಾಗಿದೆ.

ಹೆಸರು ಸೇರಿಸದಿದ್ದರೆ ಶೀಟ್ʼಗೆ ಸಹಿ ಹಾಕಲ್ಲ: ಟೀಂ ಇಂಡಿಯಾ ಆಯ್ಕೆ ವೇಳೆ ಕುಂಬ್ಳೆಗಾಗಿ ಪಟ್ಟು ಹಿಡಿದಿದ್ದ ಗಂಗೂಲಿ!

0

ನವದೆಹಲಿ: ಭಾರತೀಯ ಕ್ರಿಕೆಟ್ ಕಂಡ ಅತ್ಯಂತ ಯಶಸ್ವಿ ನಾಯಕರಲ್ಲಿ ಒಬ್ಬರಾದ ಸೌರವ್ ಗಂಗೂಲಿ, ಮೈದಾನದಲ್ಲಿ ತಮ್ಮ ಆಕ್ರಮಣಕಾರಿ ನಾಯಕತ್ವದ ಮೂಲಕ ಗಮನ ಸೆಳೆದಿದ್ದಷ್ಟೇ ಅಲ್ಲದೆ, ತಂಡದ ಆಯ್ಕೆ ವಿಚಾರದಲ್ಲೂ ತಮ್ಮ ನಿಲುವಿಗೆ ಬದ್ಧರಾಗಿದ್ದರು. ಇದೀಗ 2003ರ ಆಸ್ಟ್ರೇಲಿಯಾ ಪ್ರವಾಸಕ್ಕೂ ಮುನ್ನ ನಡೆದ ಟೀಂ ಇಂಡಿಯಾ ಆಯ್ಕೆ ಸಭೆಯ ಕುತೂಹಲಕಾರಿ ಘಟನೆಯೊಂದನ್ನು ಗಂಗೂಲಿ ಹಂಚಿಕೊಂಡಿದ್ದಾರೆ.

ಅನಿಲ್ ಕುಂಬ್ಳೆ ಅವರನ್ನು 2003ರ ಆಸ್ಟ್ರೇಲಿಯಾ ಪ್ರವಾಸದ ತಂಡದಿಂದ ಕೈಬಿಡಲು ಆಯ್ಕೆಗಾರರು ನಿರ್ಧರಿಸಿದ್ದರು. ಆದರೆ ಗಂಗೂಲಿ ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿ, ಕುಂಬ್ಳೆ ಅವರನ್ನು ತಂಡದಲ್ಲಿ ಸೇರಿಸಿಕೊಳ್ಳುವಂತೆ ಪಟ್ಟು ಹಿಡಿದಿದ್ದರು. ಅಷ್ಟೇ ಅಲ್ಲದೆ, ಅವರ ಹೆಸರನ್ನು ತಂಡದಲ್ಲಿ ಸೇರಿಸದಿದ್ದರೆ ಸೆಲೆಕ್ಷನ್ ಶೀಟ್‌ಗೆ ಸಹಿ ಹಾಕುವುದಿಲ್ಲ ಎಂದು ಆಯ್ಕೆಗಾರರಿಗೆ ಸ್ಪಷ್ಟವಾಗಿ ತಿಳಿಸಿದ್ದರು.

ಕೆಲ ತಿಂಗಳ ಹಿಂದೆ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸೌರವ್ ಗಂಗೂಲಿ, ಆ ಘಟನೆಯ ಸಂಪೂರ್ಣ ವಿವರವನ್ನು ಹಂಚಿಕೊಂಡಿದ್ದಾರೆ. 2003ರ ಆಸ್ಟ್ರೇಲಿಯಾ ಪ್ರವಾಸಕ್ಕೂ ಮುನ್ನ ಹೈದರಾಬಾದ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯವನ್ನು ಭಾರತ ಗೆದ್ದಿತ್ತು. ಅದೇ ರಾತ್ರಿ ಸುಮಾರು 11.30ಕ್ಕೆ ಆಸ್ಟ್ರೇಲಿಯಾ ಪ್ರವಾಸಕ್ಕೆ ತಂಡವನ್ನು ಆಯ್ಕೆ ಮಾಡಲು ಹೋಟೆಲ್‌ನಲ್ಲಿ ಸಭೆ ಕರೆಯಲಾಗಿತ್ತು.

ತಾವು ಸಭೆಯ ಕೊಠಡಿಗೆ ಪ್ರವೇಶಿಸಿದಾಗಲೇ ಆಯ್ಕೆಗಾರರು ಅನಿಲ್ ಕುಂಬ್ಳೆ ಅವರನ್ನು ತಂಡದಿಂದ ಕೈಬಿಡಲು ನಿರ್ಧರಿಸಿರುವುದು ತಿಳಿಯಿತು ಎಂದು ಗಂಗೂಲಿ ಹೇಳಿದ್ದಾರೆ. ಈ ವೇಳೆ ತಮ್ಮೊಂದಿಗೆ ಇದ್ದ ಅಂದಿನ ಕೋಚ್ ಜಾನ್ ರೈಟ್ ಕೂಡ ಆತಂಕಗೊಂಡಿದ್ದರು. ಆಯ್ಕೆಗಾರರು ಯಾವುದೇ ಕಾರಣಕ್ಕೂ ಕುಂಬ್ಳೆ ಅವರನ್ನು ತಂಡಕ್ಕೆ ಸೇರಿಸಲು ಸಿದ್ಧರಿರಲಿಲ್ಲ ಎಂದು ಗಂಗೂಲಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಗಂಗೂಲಿ, ಕುಂಬ್ಳೆ ಅವರನ್ನು ತಂಡದಿಂದ ಕೈಬಿಟ್ಟರೆ ಬಹುಶಃ ಅವರು ಮತ್ತೆ ಟೀಂ ಇಂಡಿಯಾ ಪರ ಆಡಲು ಸಾಧ್ಯವಾಗದೇ ಹೋಗಬಹುದು ಎಂಬ ಆತಂಕವನ್ನು ವ್ಯಕ್ತಪಡಿಸಿದ್ದರು. ಭಾರತದ ಪ್ರಮುಖ ಪಂದ್ಯ ಗೆಲ್ಲಿಸುವ ಬೌಲರ್ ಆಗಿದ್ದ ಕುಂಬ್ಳೆ ಅವರನ್ನು ಯಾವುದೇ ಕಾರಣಕ್ಕೂ ಆಸ್ಟ್ರೇಲಿಯಾ ಪ್ರವಾಸದಿಂದ ಕೈಬಿಡಬಾರದು ಎಂದು ಆಯ್ಕೆಗಾರರ ಮುಂದೆ ಗಂಗೂಲಿ ವಾದಿಸಿದ್ದರು.

ಆದರೂ ಆಯ್ಕೆಗಾರರು ತಮ್ಮ ನಿರ್ಧಾರದಿಂದ ಹಿಂದೆ ಸರಿಯದಿದ್ದಾಗ, ಗಂಗೂಲಿ ಮತ್ತಷ್ಟು ಕಠಿಣ ನಿಲುವು ತಾಳಿದರು. ಕುಂಬ್ಳೆ ಅವರ ಹೆಸರನ್ನು ತಂಡಕ್ಕೆ ಸೇರಿಸದಿದ್ದರೆ ಸೆಲೆಕ್ಷನ್ ಶೀಟ್‌ಗೆ ತಾವು ಸಹಿ ಹಾಕುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದರು.

ಕುಂಬ್ಳೆ ಭಾರತದ ಅತಿ ದೊಡ್ಡ ಮ್ಯಾಚ್ ವಿನ್ನರ್ ಎಂದ ಗಂಗೂಲಿ

ಅನಿಲ್ ಕುಂಬ್ಳೆ ಅವರ ಕೊಡುಗೆಯನ್ನು ಸ್ಮರಿಸಿದ ಸೌರವ್ ಗಂಗೂಲಿ, ಭಾರತೀಯ ಕ್ರಿಕೆಟ್‌ನ ಕಳೆದ 20-25 ವರ್ಷಗಳ ಇತಿಹಾಸದಲ್ಲಿ ಕುಂಬ್ಳೆ ಅವರಿಗಿಂತ ದೊಡ್ಡ ಮ್ಯಾಚ್ ವಿನ್ನರ್ ಮತ್ತೊಬ್ಬರಿಲ್ಲ ಎಂದು ಶ್ಲಾಘಿಸಿದ್ದಾರೆ.

ಸಚಿನ್ ತೆಂಡುಲ್ಕರ್, ವೇಗವಾಗಿ 300 ವಿಕೆಟ್‌ಗಳ ಗಡಿ ದಾಟಿದ ರವಿಚಂದ್ರನ್ ಅಶ್ವಿನ್ ಹಾಗೂ ಈ ಕಾಲದ ಪ್ರಮುಖ ರನ್ ಸ್ಕೋರರ್ ವಿರಾಟ್ ಕೊಹ್ಲಿ ಅವರಂತಹ ದಿಗ್ಗಜರ ಬಗ್ಗೆ ನಾವು ಮಾತನಾಡುತ್ತೇವೆ. ಆದರೆ ಭಾರತಕ್ಕೆ ಕುಂಬ್ಳೆ ಅವರಿಗಿಂತ ಹೆಚ್ಚು ಪಂದ್ಯಗಳನ್ನು ಗೆಲ್ಲಿಸಿಕೊಟ್ಟ ಆಟಗಾರ ಮತ್ತೊಬ್ಬರಿಲ್ಲ ಎಂದು ಗಂಗೂಲಿ ಹೇಳಿದ್ದಾರೆ.

ಗಂಗೂಲಿ ನಿರ್ಧಾರ ಸರಿ ಎಂದು ಸಾಬೀತುಪಡಿಸಿದ ಕುಂಬ್ಳೆ

ಇತ್ತ, ಆಯ್ಕೆಗಾರರು ಕುಂಬ್ಳೆ ಅವರನ್ನು ತಂಡಕ್ಕೆ ಸೇರಿಸುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಒಂದು ವೇಳೆ ಆಸ್ಟ್ರೇಲಿಯಾ ಪ್ರವಾಸದಲ್ಲಿ ಕುಂಬ್ಳೆ ವಿಫಲರಾದರೆ, ಅವರಿಗಿಂತ ಮೊದಲು ತಂಡದಿಂದ ಹೊರಬೀಳುವ ವ್ಯಕ್ತಿ ಸೌರವ್ ಗಂಗೂಲಿ ಆಗಿರುತ್ತಾರೆ ಎಂಬ ಎಚ್ಚರಿಕೆಯನ್ನೂ ನೀಡಲಾಗಿತ್ತು.

ಆದರೆ ಪ್ರವಾಸದಲ್ಲಿ ಅನಿಲ್ ಕುಂಬ್ಳೆ ತಮ್ಮ ಸಾಮರ್ಥ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದರು. ಆಸ್ಟ್ರೇಲಿಯಾ ಪ್ರವಾಸದಲ್ಲಿ ಉತ್ತಮ ಪ್ರದರ್ಶನ ನೀಡಿದ ಅವರು, ಆ ವರ್ಷ ಟೆಸ್ಟ್ ಕ್ರಿಕೆಟ್‌ನಲ್ಲಿ 80ಕ್ಕೂ ಅಧಿಕ ವಿಕೆಟ್‌ಗಳನ್ನು ಕಬಳಿಸಿದ್ದರು. ಇದರೊಂದಿಗೆ ಒಂದೇ ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ಟೆಸ್ಟ್ ವಿಕೆಟ್ ಪಡೆದ ಸ್ಪಿನ್ನರ್ ಎಂಬ ವಿಶೇಷ ದಾಖಲೆಯನ್ನೂ ನಿರ್ಮಿಸಿದ್ದರು ಎಂದು ಗಂಗೂಲಿ ತಿಳಿಸಿದ್ದಾರೆ.

ಹೀಗಾಗಿ 2003ರ ಆಸ್ಟ್ರೇಲಿಯಾ ಪ್ರವಾಸಕ್ಕೂ ಮುನ್ನ ಸೌರವ್ ಗಂಗೂಲಿ ತೆಗೆದುಕೊಂಡಿದ್ದ ಕಠಿಣ ನಿರ್ಧಾರ, ಅನಿಲ್ ಕುಂಬ್ಳೆ ಅವರ ವೃತ್ತಿಜೀವನದ ಮಹತ್ವದ ತಿರುವಾಗಿ ಪರಿಣಮಿಸಿತು. ನಾಯಕನಾಗಿ ಆಟಗಾರನ ಸಾಮರ್ಥ್ಯದ ಮೇಲೆ ನಂಬಿಕೆ ಇಟ್ಟು ಆಯ್ಕೆಗಾರರ ವಿರುದ್ಧವೂ ನಿಂತಿದ್ದ ಗಂಗೂಲಿ ಅವರ ಈ ನಡೆ ಇದೀಗ ಮತ್ತೊಮ್ಮೆ ಚರ್ಚೆಗೆ ಬಂದಿದೆ.

ಸಹೋದರರ ಕೈಗೆ ರಾಖಿ ಕಟ್ಟಿದ ಅಕ್ಕ–ತಂಗಿ: ಮಲ್ಲಸಮುದ್ರದಲ್ಲಿ ರಕ್ಷಾ ಬಂಧನ ಸಂಭ್ರಮ

0
ಗದಗ: ರಕ್ಷಾ ಬಂಧನ ಹಬ್ಬದ ಅಂಗವಾಗಿ ತಾಲೂಕಿನ ಮಲ್ಲಸಮುದ್ರ ಗ್ರಾಮದ ಅಕ್ಕತಂಗಿಯರಾದ ಶ್ರೇಯಾ ಕಡ್ಲಿಮಟ್ಟಿ ಹಾಗೂ ಅಶ್ವಿನಿ ಹುಣಸಿಮರದ ಅವರು ಸಹೋದರರಾದ ಶ್ರೇಯಂ ಕಡ್ಲಿಮಟ್ಟಿ ಮತ್ತು ಅಭಿಷೇಕ ಕಟ್ಟಿಮನಿ ಅವರಿಗೆ ರಾಖಿ ಕಟ್ಟಿ ಹಬ್ಬ ಆಚರಿಸಿದರು.

ಕೆಲಸ ಬೇಕೇ? ನಮೂನೆ–6 ಸಲ್ಲಿಸಿ, ಜಾಬ್ ಕಾರ್ಡ್ ಪಡೆಯಿರಿ: ಚಂದ್ರಶೇಖರ ಕಂದಕೂರ

0

ವಿಜಯಸಾಕ್ಷಿ ಸುದ್ದಿ, ರೋಣ: ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗದ ಅಗತ್ಯವಿರುವ ಕೂಲಿ ಕಾರ್ಮಿಕರು ಹಾಗೂ ಕುಟುಂಬಗಳು ಸರ್ಕಾರದ ವಿಬಿಜಿ ರಾಮ್ ಜಿ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು. ಉದ್ಯೋಗಕ್ಕಾಗಿ ಸಂಬಂಧಪಟ್ಟ ಗ್ರಾಮ ಪಂಚಾಯಿತಿಯಲ್ಲಿ ನಮೂನೆ–6 ಸಲ್ಲಿಸಿ ಜಾಬ್ ಕಾರ್ಡ್ ಮಾಡಿಸಿಕೊಳ್ಳುವಂತೆ ರೋಣ ಹಾಗೂ ಗಜೇಂದ್ರಗಡ ತಾಲೂಕುಗಳ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ ಬಿ. ಕಂದಕೂರ ಕರೆ ನೀಡಿದರು.

ಗ್ರಾಮೀಣ ಜನರಿಗೆ ತಮ್ಮ ಊರಿನಲ್ಲಿಯೇ ಉದ್ಯೋಗಾವಕಾಶ ಕಲ್ಪಿಸುವ ಉದ್ದೇಶದಿಂದ ಯೋಜನೆ ಜಾರಿಗೊಳಿಸಲಾಗಿದೆ. ಯೋಜನೆಯಡಿ ಗ್ರಾಮೀಣ ಕುಟುಂಬಗಳ ವಯಸ್ಕ ಸದಸ್ಯರು ಉದ್ಯೋಗಕ್ಕೆ ಮುಂದೆ ಬಂದಲ್ಲಿ ನಿಯಮಾನುಸಾರ ಕೂಲಿ ಆಧಾರಿತ ಉದ್ಯೋಗ ಒದಗಿಸಲಾಗುತ್ತದೆ. ಇದರಿಂದ ಕುಟುಂಬಗಳಿಗೆ ಆದಾಯದ ಮೂಲ ಕಲ್ಪಿಸುವುದರ ಜತೆಗೆ ಗ್ರಾಮಗಳ ಅಭಿವೃದ್ಧಿಗೂ ಸಹಕಾರಿಯಾಗಲಿದೆ ಎಂದು ಅವರು ತಿಳಿಸಿದರು.

ಜಾಬ್ ಕಾರ್ಡ್ ಹೊಂದಿರುವ ಕುಟುಂಬದ ಸದಸ್ಯರು ಉದ್ಯೋಗ ಪಡೆಯಲು ಗ್ರಾಮ ಪಂಚಾಯಿತಿಯಲ್ಲಿ ನಮೂನೆ–6 ಮೂಲಕ ಉದ್ಯೋಗದ ಬೇಡಿಕೆ ಸಲ್ಲಿಸುವುದು ಕಡ್ಡಾಯವಾಗಿದೆ. ಇನ್ನೂ ಜಾಬ್ ಕಾರ್ಡ್ ಮಾಡಿಸಿಕೊಳ್ಳದ ಅರ್ಹ ಕುಟುಂಬಗಳು ಕೂಡಲೇ ಸಂಬಂಧಪಟ್ಟ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬೇಕು. ಜಾಬ್ ಕಾರ್ಡ್ ಪಡೆದ ಬಳಿಕ ಕೆಲಸದ ಅಗತ್ಯವಿದ್ದಾಗ ನಮೂನೆ–6 ಸಲ್ಲಿಸಿ ಉದ್ಯೋಗಕ್ಕಾಗಿ ಬೇಡಿಕೆ ಸಲ್ಲಿಸಬಹುದು ಎಂದು ಹೇಳಿದರು.

ರಸ್ತೆ, ಚರಂಡಿ, ಕೆರೆ ಅಭಿವೃದ್ಧಿ, ಜಲ ಸಂರಕ್ಷಣೆ, ಮಳೆ ನೀರು ಸಂಗ್ರಹಣೆ, ಕೃಷಿ ಹಾಗೂ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿಗೆ ಪೂರಕವಾದ ವಿವಿಧ ಕಾಮಗಾರಿಗಳನ್ನು ಯೋಜನೆಯಡಿ ಕೈಗೆತ್ತಿಕೊಳ್ಳಲಾಗುತ್ತದೆ. ಈ ಕಾಮಗಾರಿಗಳ ಮೂಲಕ ಸ್ಥಳೀಯರಿಗೆ ಉದ್ಯೋಗಾವಕಾಶ ಕಲ್ಪಿಸಲಾಗುತ್ತಿದ್ದು, ಅರ್ಹರು ಇದರ ಪ್ರಯೋಜನ ಪಡೆಯಬೇಕು ಎಂದು ಕಂದಕೂರ ಹೇಳಿದರು.

ಯೋಜನೆಯ ಸೌಲಭ್ಯ ಪಡೆಯಲು ಸಾರ್ವಜನಿಕರು ಯಾವುದೇ ಮಧ್ಯವರ್ತಿಗಳ ಮೊರೆ ಹೋಗದೆ ನೇರವಾಗಿ ಗ್ರಾಮ ಪಂಚಾಯಿತಿಯನ್ನು ಸಂಪರ್ಕಿಸಬೇಕು. ಜಾಬ್ ಕಾರ್ಡ್ ಪಡೆಯುವ ಹಾಗೂ ಉದ್ಯೋಗಕ್ಕಾಗಿ ಬೇಡಿಕೆ ಸಲ್ಲಿಸುವ ಪ್ರಕ್ರಿಯೆ ಕುರಿತು ಪಂಚಾಯಿತಿ ಸಿಬ್ಬಂದಿಯಿಂದ ಮಾಹಿತಿ ಪಡೆದುಕೊಳ್ಳಬಹುದು ಎಂದರು.

ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗದ ಅಗತ್ಯವಿರುವ ಕುಟುಂಬಗಳನ್ನು ಗುರುತಿಸಿ ಯೋಜನೆಯ ಕುರಿತು ಮಾಹಿತಿ ನೀಡಬೇಕು. ಹೆಚ್ಚಿನ ಸಂಖ್ಯೆಯ ಅರ್ಹರಿಗೆ ಉದ್ಯೋಗ ದೊರಕಿಸುವ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ಕೆಲಸ ಬೇಕಿರುವವರು ಅರ್ಜಿ ಸಲ್ಲಿಸಲು ಹಿಂಜರಿಯಬೇಡಿ. ಒಂದು ತಿಂಗಳ ಕಾಲ ನಡೆಯುವ ಜಾಬ್ ಕಾರ್ಡ್ ಮೇಳದ ಪ್ರಯೋಜನ ಪಡೆದು ಜಾಬ್ ಕಾರ್ಡ್ ಮಾಡಿಸಿಕೊಳ್ಳಿ. ನಂತರ ನಮೂನೆ–6 ಸಲ್ಲಿಸಿ ಉದ್ಯೋಗಕ್ಕಾಗಿ ಬೇಡಿಕೆ ನೀಡಿ ಸರ್ಕಾರದ ಯೋಜನೆಯ ಸದುಪಯೋಗ ಪಡೆಯಿರಿ.

— ಚಂದ್ರಶೇಖರ ಬಿ. ಕಂದಕೂರ, ಕಾರ್ಯನಿರ್ವಾಹಕ ಅಧಿಕಾರಿ, ರೋಣ ಹಾಗೂ ಗಜೇಂದ್ರಗಡ ತಾಲೂಕು

ಗದಗ–ಯಲವಿಗಿ ರೈಲು ಮಾರ್ಗಕ್ಕೆ ಭೂಸ್ವಾಧೀನ ವಿಳಂಬ: ಶೀಘ್ರ ಪೂರ್ಣಗೊಳಿಸಲು ಆಗ್ರಹಿಸಿ ಮನವಿ

0

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಬಹುನಿರೀಕ್ಷಿತ ಗದಗ–ಯಲವಿಗಿ ರೈಲು ಮಾರ್ಗ ಯೋಜನೆಯ ಭೂಸ್ವಾಧೀನ ಪ್ರಕ್ರಿಯೆಯನ್ನು ಶೀಘ್ರ ಪೂರ್ಣಗೊಳಿಸಿ ಕಾಮಗಾರಿಗೆ ವೇಗ ನೀಡಬೇಕು ಎಂದು ಗದಗ–ಶಿರಹಟ್ಟಿ–ಯಲವಿಗಿ ರೈಲ್ವೆ ಮಾರ್ಗ ಹೋರಾಟ ಸಮಿತಿ ವತಿಯಿಂದ ವಿಧಾನಸಭಾಧ್ಯಕ್ಷ ಜಿ.ಎಸ್. ಪಾಟೀಲ ಅವರಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷ ಈರಣ್ಣ ಕೋಟಿ ಹಾಗೂ ಉಪಾಧ್ಯಕ್ಷ ರಾಯೇಸಾಬ ಢಾಲಾಯತ ಮಾತನಾಡಿ, ೨೦೨೧–೨೨ನೇ ಸಾಲಿನ ಬಜೆಟ್‌ನಲ್ಲಿ ಗದಗ–ಯಲವಿಗಿ ರೈಲು ಮಾರ್ಗ ಯೋಜನೆ ಘೋಷಣೆಯಾಗಿತ್ತು. ಆದರೆ, ಯೋಜನೆಯ ಅನುಷ್ಠಾನಕ್ಕೆ ಅಗತ್ಯವಾದ ಭೂಸ್ವಾಧೀನ ಪ್ರಕ್ರಿಯೆ ನಿರೀಕ್ಷಿತ ವೇಗದಲ್ಲಿ ಪೂರ್ಣಗೊಂಡಿಲ್ಲ ಎಂದು ತಿಳಿಸಿದರು.

ಭೂಸ್ವಾಧೀನ ಪ್ರಕ್ರಿಯೆ ವಿಳಂಬವಾಗುತ್ತಿರುವುದರಿಂದ ರೈಲು ಮಾರ್ಗದ ಕಾಮಗಾರಿ ಆರಂಭಕ್ಕೂ ಹಿನ್ನಡೆಯಾಗುವ ಆತಂಕವಿದೆ. ಹೀಗಾಗಿ ಯೋಜನೆಯ ಮಹತ್ವವನ್ನು ಪರಿಗಣಿಸಿ ಸಂಬಂಧಪಟ್ಟ ಇಲಾಖೆಗಳೊಂದಿಗೆ ಚರ್ಚಿಸಿ ಭೂಸ್ವಾಧೀನ ಪ್ರಕ್ರಿಯೆಯನ್ನು ಶೀಘ್ರ ಪೂರ್ಣಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ರಾಜ್ಯದ ಜ್ವಲಂತ ಸಮಸ್ಯೆಗಳಿಗೆ ಅನುಭವ ಹಾಗೂ ಮಾರ್ಗದರ್ಶನದ ಮೂಲಕ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುತ್ತಿರುವ ವಿಧಾನಸಭಾಧ್ಯಕ್ಷರು, ತಮ್ಮ ಅವಧಿಯಲ್ಲಿ ಈ ಮಹತ್ವಾಕಾಂಕ್ಷಿ ಯೋಜನೆಯ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳ್ಳುವಂತೆ ವಿಶೇಷ ಗಮನ ಹರಿಸಬೇಕು ಎಂದು ಹೋರಾಟ ಸಮಿತಿಯ ಪದಾಧಿಕಾರಿಗಳು ವಿನಂತಿಸಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ವಿಶ್ವನಾಥ ಕಪ್ಪತ್ತನವರ, ಹುಮಾಯೂನ್ ಮಾಗಡಿ, ಸಿ.ಸಿ. ನೂರಶೆಟ್ಟರ, ಡಾ. ಸುನೀಲ ಬುರಬುರೆ, ಅತ್ತಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ನುಲಿಯ ಚಂದಯ್ಯನವರ ಕಾಯಕನಿಷ್ಠೆ ಯುವಜನತೆಗೆ ಮಾದರಿ: ಸಿ.ಎನ್. ಶ್ರೀಧರ್

0

ವಿಜಯಸಾಕ್ಷಿ ಸುದ್ದಿ, ಗದಗ: ೧೨ನೇ ಶತಮಾನದ ಶಿವಶರಣ ನುಲಿಯ ಚಂದಯ್ಯನವರು ತಮ್ಮ ಬದುಕಿನ ಮೂಲಕ ಸಾರಿದ ಕಾಯಕನಿಷ್ಠೆ ಹಾಗೂ ‘ದುಡಿಮೆಯೇ ದೇವರು’ ಎಂಬ ಸಂದೇಶ ಇಂದಿನ ಆಧುನಿಕ ಸಮಾಜದಲ್ಲಿಯೂ ಅತ್ಯಂತ ಪ್ರಸ್ತುತವಾಗಿದೆ ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಹೇಳಿದರು.

ನಗರದ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಜಿಲ್ಲಾಡಳಿತ ಭವನದ ಅಡಿಟೋರಿಯಂ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ನುಲಿಯ ಚಂದಯ್ಯ ಜಯಂತಿ–೨೦೨೬ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಬಸವಣ್ಣನವರ ಸಮಕಾಲೀನರಾಗಿದ್ದ ನುಲಿಯ ಚಂದಯ್ಯನವರು ಕಾಯಕದ ಮೂಲಕ ಜೀವನ ಸಾಗಿಸುತ್ತಿದ್ದರು. ತಮ್ಮ ದುಡಿಮೆಯಿಂದ ಗಳಿಸಿದ ಸಂಪತ್ತಿನಲ್ಲಿಯೇ ಇತರರಿಗೆ ದಾಸೋಹ ಮಾಡುತ್ತಾ, ‘ಕಾಯಕವೇ ಕೈಲಾಸ’ ಎಂಬ ತತ್ವವನ್ನು ಬದುಕಿನಲ್ಲಿ ಅಳವಡಿಸಿಕೊಂಡ ಮಹಾನ್ ಶಿವಶರಣರಾಗಿದ್ದರು ಎಂದು ಹೇಳಿದರು.

ಕಾಯಕಕ್ಕೆ ಗೌರವ ನೀಡುವುದು, ಸ್ವಾವಲಂಬಿಯಾಗಿ ಬದುಕುವುದು, ಪ್ರಾಮಾಣಿಕವಾಗಿ ದುಡಿಯುವುದು ಹಾಗೂ ಸಮಾಜದ ಒಳಿತಿಗಾಗಿ ತಮ್ಮದೇ ಆದ ಕೊಡುಗೆ ನೀಡುವುದು ನುಲಿಯ ಚಂದಯ್ಯನವರ ಜೀವನದ ಪ್ರಮುಖ ಸಂದೇಶಗಳಾಗಿವೆ. ಇಂತಹ ಮಹನೀಯರ ಜೀವನಾದರ್ಶಗಳನ್ನು ಇಂದಿನ ಯುವಜನತೆ ಅಳವಡಿಸಿಕೊಂಡು ಮುನ್ನಡೆಯಬೇಕು ಎಂದು ಕರೆ ನೀಡಿದರು.

ಹುಲ್ಲಿನಿಂದ ಹಗ್ಗ ಹೊಸೆದು ಅದನ್ನು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದ ನುಲಿಯ ಚಂದಯ್ಯನವರು ತಮ್ಮ ಕಾಯಕದ ಜತೆಗೆ ದಾಸೋಹ ಹಾಗೂ ಶರಣರ ತತ್ವಗಳನ್ನು ಸಮಾಜದಲ್ಲಿ ಪಸರಿಸುವ ಕಾರ್ಯದಲ್ಲಿಯೂ ನಿರತರಾಗಿದ್ದರು. ಕಲ್ಯಾಣ ಕ್ರಾಂತಿಯ ನಂತರ ಒಂದೆಡೆ ನೆಲೆಸದ ಅವರು ನಾಡಿನಾದ್ಯಂತ ಸಂಚರಿಸಿ ವಚನ ಸಾಹಿತ್ಯ ಹಾಗೂ ಶರಣರ ವಿಚಾರಧಾರೆಗಳನ್ನು ಜನಸಾಮಾನ್ಯರಿಗೆ ತಲುಪಿಸಿದರು ಎಂದು ತಿಳಿಸಿದರು.

ನಾಗಲಾಂಬಿಕೆ, ಹರಳಯ್ಯ ಸೇರಿದಂತೆ ಹಲವು ಶಿವಶರಣರೊಂದಿಗೆ ಒಡನಾಟ ಹೊಂದಿದ್ದ ಚಂದಯ್ಯನವರು ತಮ್ಮ ತತ್ವಗಳ ಪ್ರಚಾರದ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲೆಯ ನುಲೇನೂರಿಗೆ ಆಗಮಿಸಿದ್ದರು. ಅಲ್ಲಿ ಸಾಮಾನ್ಯ ಚಮ್ಮಾರರೊಬ್ಬರ ಮನೆಯಲ್ಲಿ ಆಶ್ರಯ ಪಡೆದಿದ್ದ ಅವರು ತಮ್ಮ ಜೀವನದ ಕೊನೆಯ ದಿನಗಳನ್ನು ಅಲ್ಲಿಯೇ ಕಳೆದರು ಎಂದು ಹೇಳಿದರು.

ಅವರ ವ್ಯಕ್ತಿತ್ವ ಹಾಗೂ ತತ್ವಗಳಿಂದ ಪ್ರಭಾವಿತರಾದ ಸ್ಥಳೀಯರು ಕೆರೆಯ ದಂಡೆಯ ಮೇಲೆ ಅವರಿಗೆ ಸಣ್ಣ ಮಠವೊಂದನ್ನು ನಿರ್ಮಿಸಿಕೊಟ್ಟಿದ್ದರು. ಅಂತಿಮ ದಿನಗಳವರೆಗೂ ಜನಸಾಮಾನ್ಯರಿಗೆ ಕಾಯಕದ ಮಹತ್ವವನ್ನು ಬೋಧಿಸುತ್ತಲೇ ಅವರು ಬದುಕಿದರು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಚಿಕ್ಕ ಕೆಲಸವಾಗಲಿ ಅಥವಾ ದೊಡ್ಡ ಕೆಲಸವಾಗಲಿ, ಶ್ರದ್ಧೆ ಮತ್ತು ಭಕ್ತಿಯಿಂದ ಮಾಡಿದಾಗ ಮಾತ್ರ ಕಾಯಕದಲ್ಲಿ ದೇವರನ್ನು ಕಾಣಲು ಸಾಧ್ಯ. ೧೨ನೇ ಶತಮಾನದಲ್ಲಿ ಶಿವಶರಣರು ಪ್ರತಿಪಾದಿಸಿದ ಶ್ರಮಸಂಸ್ಕೃತಿಯನ್ನು ಇಂದಿನ ಯುವಜನತೆ ಹಾಗೂ ಸಮಾಜ ಅಳವಡಿಸಿಕೊಂಡು ಮುನ್ನಡೆಯಬೇಕು ಎಂದು ಸಿ.ಎನ್. ಶ್ರೀಧರ್ ಹೇಳಿದರು.

ಗದಗ ಶಾಖೆಯ ದಲಿತ ಸಾಹಿತ್ಯ ಅಕಾಡೆಮಿ ಕಾರ್ಯಾಧ್ಯಕ್ಷ ಡಾ. ಶಾಂತಕುಮಾರ ಬಿ. ಭಜಂತ್ರಿ ಉಪನ್ಯಾಸ ನೀಡಿ, ಬಸವಾದಿ ಶರಣರು ಪ್ರತಿಪಾದಿಸಿದ ಸಮಾನತೆ, ಕಾಯಕ ಹಾಗೂ ಸಾಮಾಜಿಕ ನ್ಯಾಯದ ಆಶಯಗಳು ಇಂದಿಗೂ ಸಮಾಜಕ್ಕೆ ದಾರಿದೀಪವಾಗಿವೆ ಎಂದರು.

ಶರಣರ ವಿಚಾರಧಾರೆಗಳು ಸಾಮಾಜಿಕ ಪರಿವರ್ತನೆ ಹಾಗೂ ಸಮಾನತೆಯ ಸಮಾಜ ನಿರ್ಮಾಣಕ್ಕೆ ಪ್ರೇರಣೆಯಾಗಿವೆ. ಸುಮಾರು ೭೦ ವರ್ಷಗಳ ಕಾಲ ಬದುಕಿದ್ದ ನುಲಿಯ ಚಂದಯ್ಯನವರ ಕಾಲಘಟ್ಟ ಹಾಗೂ ಜೀವನದ ಕುರಿತು ಇನ್ನಷ್ಟು ಸಮಗ್ರ ಸಂಶೋಧನೆಗಳು ನಡೆಯಬೇಕಿದೆ ಎಂದು ಅಭಿಪ್ರಾಯಪಟ್ಟರು.

ಕಾಯಕವೇ ದೇವರೆಂದು ಸಾರಿದ ನುಲಿಯ ಚಂದಯ್ಯನವರ ಕಾಯಕನಿಷ್ಠೆಯನ್ನು ವಿವರಿಸಿದ ಅವರು, ಹಗ್ಗ ಹೊಸೆಯುವ ಕಾರ್ಯದಲ್ಲಿ ಅವರು ಎಷ್ಟರಮಟ್ಟಿಗೆ ತಲ್ಲೀನರಾಗಿದ್ದರು ಎಂಬುದನ್ನು ತಿಳಿಸಿದರು. ಕಾಯಕಕ್ಕೆ ತಕ್ಕ ಪ್ರತಿಫಲ ಮಾತ್ರ ಪಡೆಯುತ್ತಿದ್ದ ಅವರು ಪ್ರಾಮಾಣಿಕತೆ ಮತ್ತು ಶ್ರಮದ ಮೌಲ್ಯಕ್ಕೆ ತಮ್ಮ ಬದುಕಿನ ಮೂಲಕವೇ ಹೊಸ ಅರ್ಥ ನೀಡಿದ್ದರು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳು ಹಾಗೂ ಕ್ರೀಡಾಕೂಟಗಳಲ್ಲಿ ವಿಜೇತರಾದ ಕ್ರೀಡಾಪಟುಗಳನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಡಾ. ದುರ್ಗೇಶ್ ಕೆ.ಆರ್., ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ್ ಬಬರ್ಚಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಸವರಾಜ ವಿ. ಬಳ್ಳಾರಿ ಸೇರಿದಂತೆ ಸಮಾಜದ ಮುಖಂಡರು ಉಪಸ್ಥಿತರಿದ್ದರು.

ಬಾಹುಬಲಿ ಜೈನ್ ಕಾರ್ಯಕ್ರಮ ನಿರೂಪಿಸಿ, ವಂದನಾರ್ಪಣೆ ಸಲ್ಲಿಸಿದರು.

ಚಿಕ್ಕ ಕೆಲಸ ಅಥವಾ ದೊಡ್ಡ ಕೆಲಸ ಎಂಬ ಭೇದವಿಲ್ಲದೆ, ಪ್ರತಿಯೊಂದು ಕಾಯಕವನ್ನೂ ಶ್ರದ್ಧೆ ಮತ್ತು ಪ್ರಾಮಾಣಿಕತೆಯಿಂದ ಮಾಡಿದಾಗ ಅದರಲ್ಲಿ ದೇವರನ್ನು ಕಾಣಲು ಸಾಧ್ಯ. ನುಲಿಯ ಚಂದಯ್ಯನವರ ಕಾಯಕನಿಷ್ಠೆ, ಸ್ವಾವಲಂಬನೆ ಮತ್ತು ದಾಸೋಹದ ಬದುಕು ಇಂದಿನ ಯುವಜನತೆಗೆ ಆದರ್ಶವಾಗಬೇಕು.

— ಸಿ.ಎನ್. ಶ್ರೀಧರ್, ಜಿಲ್ಲಾಧಿಕಾರಿ

ಗದಗ ತಾಲೂಕನ್ನು ಬರಪೀಡಿತ ಘೋಷಿಸಿ: ಎಕರೆಗೆ ₹50 ಸಾವಿರ ಪರಿಹಾರಕ್ಕೆ ಬಿಜೆಪಿ ಒತ್ತಾಯ

0

ಗದಗ: ಮಳೆ ಕೊರತೆಯಿಂದ ಮುಂಗಾರು ಬೆಳೆಗಳು ಒಣಗುತ್ತಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆಯಲ್ಲಿ ಗದಗ ತಾಲೂಕನ್ನು ಕೂಡಲೇ ಬರಪೀಡಿತ ಪ್ರದೇಶವೆಂದು ಘೋಷಿಸಿ, ರೈತರಿಗೆ ಪ್ರತಿ ಎಕರೆಗೆ ₹50 ಸಾವಿರ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ಬಿಜೆಪಿ ಗದಗ ವಿಧಾನಸಭಾ ಕ್ಷೇತ್ರದ ವತಿಯಿಂದ ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

ಮಳೆಯ ಕೊರತೆಯಿಂದ ತಾಲೂಕಿನಾದ್ಯಂತ ಕೃಷಿ ಚಟುವಟಿಕೆಗಳು ತೀವ್ರ ಹೊಡೆತಕ್ಕೊಳಗಾಗಿದ್ದು, ಸಾವಿರಾರು ರೂಪಾಯಿ ಖರ್ಚು ಮಾಡಿ ಬಿತ್ತನೆ ಮಾಡಿರುವ ರೈತರು ಬೆಳೆ ನಷ್ಟದ ಭೀತಿಯಲ್ಲಿ ಸಿಲುಕಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರ ಕೂಡಲೇ ರೈತರ ನೆರವಿಗೆ ಧಾವಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಬಿಜೆಪಿ ಗದಗ ಗ್ರಾಮೀಣ ಮಂಡಲ ಅಧ್ಯಕ್ಷ ಬೂದಪ್ಪ ಹಳ್ಳಿ, ಗದಗ ತಾಲೂಕಿನಲ್ಲಿ ಸಮರ್ಪಕ ಮಳೆಯಾಗದೆ ರೈತರು ಅಪಾರ ನಷ್ಟ ಅನುಭವಿಸುತ್ತಿದ್ದಾರೆ. ಹೆಸರು, ಗೋವಿನಜೋಳ, ಹತ್ತಿ, ಈರುಳ್ಳಿ, ಸೋಯಾಬಿನ್, ಉದ್ದು ಹಾಗೂ ಶೇಂಗಾ ಸೇರಿದಂತೆ ವಿವಿಧ ಮುಂಗಾರು ಬೆಳೆಗಳನ್ನು ರೈತರು ಬಿತ್ತನೆ ಮಾಡಿದ್ದರು. ಆದರೆ ನಿರೀಕ್ಷಿತ ಮಳೆ ಸುರಿಯದ ಪರಿಣಾಮ ಬೆಳೆಗಳು ಒಣಗುತ್ತಿದ್ದು, ರೈತರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

ಬಿತ್ತನೆ ಬೀಜ, ರಸಗೊಬ್ಬರ, ಕೀಟನಾಶಕ ಹಾಗೂ ಕೃಷಿ ಕಾರ್ಮಿಕರ ಕೂಲಿಗಾಗಿ ರೈತರು ಸಾವಿರಾರು ರೂಪಾಯಿ ವೆಚ್ಚ ಮಾಡಿದ್ದಾರೆ. ಸಾಲ ಮಾಡಿ ಕೃಷಿಯಲ್ಲಿ ಹಣ ಹೂಡಿದ ಅನೇಕ ರೈತರು ಈಗ ಬೆಳೆ ನಷ್ಟದಿಂದ ಕಂಗಾಲಾಗಿದ್ದಾರೆ. ಬೆಳೆ ಉಳಿಯದಿದ್ದರೆ ರೈತ ಕುಟುಂಬಗಳ ಬದುಕಿನ ಮೇಲೆಯೇ ಗಂಭೀರ ಪರಿಣಾಮ ಬೀಳಲಿದೆ ಎಂದು ಹೇಳಿದರು.

ಗದಗ ತಾಲೂಕಿನ ವಾಸ್ತವ ಬರ ಪರಿಸ್ಥಿತಿಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಯಾವುದೇ ವಿಳಂಬ ಮಾಡದೆ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಬೇಕು. ಜೊತೆಗೆ ನಷ್ಟ ಅನುಭವಿಸಿರುವ ರೈತರಿಗೆ ಪ್ರತಿ ಎಕರೆಗೆ ₹50 ಸಾವಿರ ಪರಿಹಾರ ನೀಡಿ ಅವರ ಬದುಕಿಗೆ ಆಸರೆಯಾಗಬೇಕು ಎಂದು ಆಗ್ರಹಿಸಿದರು.

ಬಿಜೆಪಿ ಗದಗ ಜಿಲ್ಲಾ ಅಧ್ಯಕ್ಷ ತೋಟಪ್ಪ (ರಾಜು) ಕುರುಡಗಿ ಮಾತನಾಡಿ, ರೈತರ ಸಂಕಷ್ಟದ ಸಂದರ್ಭದಲ್ಲಿ ಸರ್ಕಾರ ನಿರ್ಲಕ್ಷ್ಯ ಧೋರಣೆ ಅನುಸರಿಸಿದರೆ ಬಿಜೆಪಿ ಸಹಿಸುವುದಿಲ್ಲ ಎಂದು ಎಚ್ಚರಿಸಿದರು.

ರೈತರ ಬೇಡಿಕೆಗಳಿಗೆ ಸರ್ಕಾರ ಮತ್ತು ಜಿಲ್ಲಾಡಳಿತ ಕೂಡಲೇ ಸ್ಪಂದಿಸಬೇಕು. ಗದಗ ತಾಲೂಕಿನ ಬರ ಪರಿಸ್ಥಿತಿಯನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ರೈತರೊಂದಿಗೆ ಸೇರಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಬೃಹತ್ ಪ್ರತಿಭಟನೆ ಹಾಗೂ ಧರಣಿ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಪಕ್ಷದ ಹಿರಿಯ ಮುಖಂಡ ಎಂ.ಎಸ್. ಕರಿಗೌಡ್ರ ಸಂದರ್ಭೋಚಿತವಾಗಿ ಮಾತನಾಡಿದರು.

ಪ್ರತಿಭಟನೆಯಲ್ಲಿ ವಿವಿಧ ಮೋರ್ಚಾಗಳ ಜಿಲ್ಲಾ ಅಧ್ಯಕ್ಷರಾದ ಡಿ.ವೈ. ಹುನಗುಂದ, ವೈ.ಪಿ. ಅಡ್ನೂರ, ಪ್ರಧಾನ ಕಾರ್ಯದರ್ಶಿಗಳಾದ ಮಹೇಶ ಶಿರಹಟ್ಟಿ, ಅಶೋಕ ಬ್ಯಾಹಟ್ಟಿ, ನಗರ ಮಂಡಲ ಅಧ್ಯಕ್ಷ ಸುರೇಶ ಮರಳಪ್ಪನವರ, ಜಿಲ್ಲಾ ಉಪಾಧ್ಯಕ್ಷರಾದ ನಿಂಗಪ್ಪ ಹುಗ್ಗಿ, ಶೇಖಣ್ಣ ಕನ್ಯಾಳ ಸೇರಿದಂತೆ ಪಕ್ಷದ ಪ್ರಮುಖರಾದ ಸಿದ್ದು ಪಲ್ಲೇದ, ಅಶೋಕ ಕರೂರ, ರವಿಕಾಂತ ಅಂಗಡಿ, ಡಿ.ಬಿ. ಕರೀಗೌಡ್ರ, ಅರವಿಂದ ಹುಲ್ಲೂರ, ನಾಗರಾಜ ಕುಲಕರ್ಣಿ, ನಾಗರಾಜ ಮದ್ನೂರ, ದಾವಲಸಾಬ ಅಣ್ಣಿಗೇರಿ, ರವಿ ವಗ್ಗನವರ, ಸೋಮರೆಡ್ಡಿ ನಡೂರ, ಸಿದ್ದಪ್ಪ ಜೊಂಡಿ, ವೆಂಕಟೇಶ ಸೂರಣಗಿ ಹಾಗೂ ಮಾಂತೇಶ ಬಾತಾಖಾನಿ ಉಪಸ್ಥಿತರಿದ್ದರು.

ರೈತ ಮೋರ್ಚಾ ಗ್ರಾಮೀಣ ಅಧ್ಯಕ್ಷ ನಿಂಗಯ್ಯ ಇಟಗಿಮಠ, ಪ್ರಧಾನ ಕಾರ್ಯದರ್ಶಿ ಸಿದ್ದಪ್ಪ ಈರಗಾರ, ಪಕ್ಕಿರೇಶ ಗುಗ್ಗರಿ, ಮಂಜುನಾಥ ಮರಿಯಪ್ಪಗೌಡ್ರ, ನೀಲಪ್ಪ ಮಹಾಲಿಂಗಪುರ, ಶಂಕರ ಕರಿಬಿಷ್ಟಿ, ಈರಪ್ಪ ಹಡಪದ, ಮಲ್ಲಾರೆಪ್ಪ ಬೆಂತೂರ, ಅಪ್ಪು ನಮಸ್ತೆಮಠ, ಬಸವರಾಜ ಅಕ್ಕಿ, ವಿರೂಪಾಕ್ಷಪ್ಪ ಹಾದಿಮನಿ, ಅಲ್ಲಾಸಾಬ ಪಿರಕಾನವರ, ಮಂಜುನಾಥ, ವಿನೋದ ಹಂಸನೂರ ಸೇರಿದಂತೆ ಹಲವಾರು ಮುಖಂಡರು ಹಾಗೂ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಮಳೆ ಕೈಕೊಟ್ಟು ರೈತರು ಕಂಗಾಲಾಗಿದ್ದಾರೆ. ಸಾವಿರಾರು ರೂಪಾಯಿ ಖರ್ಚು ಮಾಡಿ ಬೆಳೆದ ಬೆಳೆಗಳು ಕಣ್ಣೆದುರೇ ಒಣಗುತ್ತಿವೆ. ಇಂತಹ ಸಂಕಷ್ಟದ ಸಂದರ್ಭದಲ್ಲಿ ಸರ್ಕಾರ ರೈತರ ನೆರವಿಗೆ ಧಾವಿಸಬೇಕು. ಕೂಡಲೇ ಗದಗ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿ, ರೈತರಿಗೆ ಪ್ರತಿ ಎಕರೆಗೆ ₹50 ಸಾವಿರ ಪರಿಹಾರ ನೀಡಬೇಕು. ಇಲ್ಲವಾದರೆ ರೈತರೊಂದಿಗೆ ಸೇರಿ ಇನ್ನಷ್ಟು ತೀವ್ರ ಹೋರಾಟ ನಡೆಸುವುದು ಅನಿವಾರ್ಯವಾಗಲಿದೆ.

— ತೋಟಪ್ಪ (ರಾಜು) ಕುರುಡಗಿ, ಬಿಜೆಪಿ ಗದಗ ಜಿಲ್ಲಾ ಅಧ್ಯಕ್ಷ

ಬೆಂಡೆಕಾಯಿ ಎಲ್ಲರಿಗೂ ಒಳ್ಳೆಯದಲ್ಲವೇ? ಈ ಆರೋಗ್ಯ ಸಮಸ್ಯೆಗಳಿದ್ದವರು ಎಚ್ಚರ ವಹಿಸಿ!

0

ಬೆಂಡೆಕಾಯಿ ಬಹುತೇಕ ಮನೆಗಳಲ್ಲಿ ನಿಯಮಿತವಾಗಿ ಬಳಸುವ ತರಕಾರಿಗಳಲ್ಲಿ ಒಂದಾಗಿದೆ.

ಇದರಲ್ಲಿ ಫೈಬರ್, ವಿಟಮಿನ್‌ಗಳು, ಖನಿಜಾಂಶಗಳು ಹಾಗೂ ಆಂಟಿಆಕ್ಸಿಡೆಂಟ್‌ಗಳು ಇರುವುದರಿಂದ ಸಮತೋಲಿತ ಆಹಾರದ ಭಾಗವಾಗಿ ಸೇವಿಸಬಹುದು. ಆದರೆ ಯಾವುದೇ ಆಹಾರ ಎಲ್ಲರಿಗೂ ಒಂದೇ ರೀತಿಯಲ್ಲಿ ಪರಿಣಾಮ ಬೀರುತ್ತದೆ ಎನ್ನಲಾಗುವುದಿಲ್ಲ. ಕೆಲವು ಆರೋಗ್ಯ ಸಮಸ್ಯೆಗಳಿರುವವರು ಬೆಂಡೆಕಾಯಿಯನ್ನು ಸೇವಿಸುವ ಪ್ರಮಾಣದ ಬಗ್ಗೆ ಗಮನ ಹರಿಸುವುದು ಅಗತ್ಯ.

ಬೆಂಡೆಕಾಯಿಯಲ್ಲಿರುವ ಫೈಬರ್ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಆದರೆ ಇದರಲ್ಲಿ ಆಕ್ಸಲೇಟ್‌ಗಳೂ ಇರುವುದರಿಂದ ಕಿಡ್ನಿಯಲ್ಲಿ ಕಲ್ಲಿನ ಸಮಸ್ಯೆ ಇರುವವರು ಆಹಾರದಲ್ಲಿ ಬೆಂಡೆಕಾಯಿಯ ಪ್ರಮಾಣದ ಬಗ್ಗೆ ವೈದ್ಯರು ಅಥವಾ ಆಹಾರ ತಜ್ಞರ ಸಲಹೆ ಪಡೆಯುವುದು ಉತ್ತಮ.

ಕಿಡ್ನಿಯಲ್ಲಿ ಕಲ್ಲು ಇದ್ದವರು ಬೆಂಡೆಕಾಯಿ ತಿನ್ನಬಹುದೇ?

ಕಿಡ್ನಿಯಲ್ಲಿ ಕಲ್ಲು ಕಂಡುಬಂದಿರುವ ಪ್ರತಿಯೊಬ್ಬರೂ ಬೆಂಡೆಕಾಯಿಯನ್ನು ಸಂಪೂರ್ಣವಾಗಿ ತ್ಯಜಿಸಬೇಕು ಎನ್ನುವುದು ಸರಿಯಲ್ಲ. ವಿಶೇಷವಾಗಿ ಕ್ಯಾಲ್ಸಿಯಂ ಆಕ್ಸಲೇಟ್ ಕಲ್ಲಿನ ಇತಿಹಾಸವಿರುವವರ ಆಹಾರದಲ್ಲಿನ ಆಕ್ಸಲೇಟ್ ಪ್ರಮಾಣವನ್ನು ಅವರ ಆರೋಗ್ಯ ಸ್ಥಿತಿಗೆ ಅನುಗುಣವಾಗಿ ವೈದ್ಯರು ಅಥವಾ ಡಯಟಿಷಿಯನ್ ನಿರ್ಧರಿಸಬಹುದು.

ನೀರಿನ ಸೇವನೆ, ಆಹಾರ ಪದ್ಧತಿ ಹಾಗೂ ಕಲ್ಲಿನ ಪ್ರಕಾರ ಸೇರಿದಂತೆ ಹಲವು ಅಂಶಗಳನ್ನು ಪರಿಗಣಿಸಿ ಆಹಾರದಲ್ಲಿ ಬದಲಾವಣೆ ಮಾಡಲಾಗುತ್ತದೆ.

ಗೌಟ್ ಇರುವವರು ಬೆಂಡೆಕಾಯಿ ತಿನ್ನಬಹುದೇ?

ರಕ್ತದಲ್ಲಿ ಯೂರಿಕ್ ಆಸಿಡ್ ಹೆಚ್ಚಾಗುವ ಗೌಟ್ ಸಮಸ್ಯೆ ಇರುವವರು ಆಹಾರದಲ್ಲಿನ ಪ್ಯೂರಿನ್ ಅಂಶದ ಬಗ್ಗೆ ಸಾಮಾನ್ಯವಾಗಿ ಹೆಚ್ಚು ಗಮನ ಕೊಡುತ್ತಾರೆ. ಆದರೆ ಬೆಂಡೆಕಾಯಿಯಲ್ಲಿರುವ ಆಕ್ಸಲೇಟ್‌ಗಳು ಗೌಟ್ ಸಮಸ್ಯೆಯನ್ನು ಹೆಚ್ಚಿಸುತ್ತವೆ ಎಂಬುದಕ್ಕೆ ಬಲವಾದ ಸಾಕ್ಷ್ಯವಿಲ್ಲ.

ಹೀಗಾಗಿ ಬೆಂಡೆಕಾಯಿ ಸೇವನೆಯಿಂದ ಗೌಟ್ ಹೆಚ್ಚಾಗುತ್ತದೆ ಎಂದು ನೇರವಾಗಿ ಹೇಳಲು ಸಾಧ್ಯವಿಲ್ಲ. ಗೌಟ್ ಇರುವವರು ವೈದ್ಯರು ಸೂಚಿಸಿರುವ ಆಹಾರ ಪದ್ಧತಿ ಹಾಗೂ ಔಷಧಿಗಳನ್ನು ಮುಂದುವರಿಸುವುದು ಮುಖ್ಯ.

IBS ಅಥವಾ ಹೊಟ್ಟೆ ಉಬ್ಬರ ಇರುವವರು ಎಚ್ಚರಿಕೆ ವಹಿಸಿ:

ಬೆಂಡೆಕಾಯಿಯಲ್ಲಿ ಫೈಬರ್ ಇರುವುದರಿಂದ ಸಾಮಾನ್ಯವಾಗಿ ಜೀರ್ಣಕ್ರಿಯೆಗೆ ನೆರವಾಗಬಹುದು. ಆದರೆ ಕೆಲವರಿಗೆ ಹೆಚ್ಚಿನ ಪ್ರಮಾಣದ ಫೈಬರ್ ಸೇವನೆಯಿಂದ ಗ್ಯಾಸ್, ಹೊಟ್ಟೆ ಉಬ್ಬರ ಅಥವಾ ಅಸಹಜತೆ ಉಂಟಾಗಬಹುದು.

IBS ಇರುವವರು ಬೆಂಡೆಕಾಯಿ ಸೇವಿಸಿದ ಬಳಿಕ ತಮ್ಮಲ್ಲಿ ಯಾವುದೇ ಲಕ್ಷಣಗಳು ಹೆಚ್ಚಾಗುತ್ತಿವೆಯೇ ಎಂಬುದನ್ನು ಗಮನಿಸುವುದು ಉತ್ತಮ. ಆಹಾರದ ಪರಿಣಾಮ ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು.

ರಕ್ತ ತೆಳುವಾಗಿಸುವ ಔಷಧಿ ಸೇವಿಸುವವರು?

ಬೆಂಡೆಕಾಯಿಯಲ್ಲಿ ವಿಟಮಿನ್ ಕೆ ಇದೆ. ಇದು ರಕ್ತ ಹೆಪ್ಪುಗಟ್ಟುವ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ವಾರ್ಫರಿನ್‌ನಂತಹ ಕೆಲವು ರಕ್ತ ತೆಳುವಾಗಿಸುವ ಔಷಧಿಗಳನ್ನು ಸೇವಿಸುವವರು ವಿಟಮಿನ್ ಕೆ ಇರುವ ಆಹಾರವನ್ನು ಏಕಾಏಕಿ ಹೆಚ್ಚು ಅಥವಾ ಕಡಿಮೆ ಮಾಡುವುದರಿಂದ ಔಷಧಿಯ ಪರಿಣಾಮದಲ್ಲಿ ಬದಲಾವಣೆಯಾಗುವ ಸಾಧ್ಯತೆ ಇದೆ.

ಆದ್ದರಿಂದ ಇಂತಹವರು ಬೆಂಡೆಕಾಯಿಯನ್ನು ಸಂಪೂರ್ಣವಾಗಿ ನಿಲ್ಲಿಸುವ ಅಗತ್ಯವಿಲ್ಲ. ಬದಲಾಗಿ ಆಹಾರದಲ್ಲಿ ವಿಟಮಿನ್ ಕೆ ಪ್ರಮಾಣವನ್ನು ಸ್ಥಿರವಾಗಿರಿಸಿಕೊಂಡು ವೈದ್ಯರ ಸಲಹೆ ಪಾಲಿಸುವುದು ಮುಖ್ಯ.

ಬೆಂಡೆಕಾಯಿಯಿಂದ ಅಲರ್ಜಿ ಉಂಟಾಗಬಹುದೇ?

ಯಾವುದೇ ಆಹಾರದಂತೆ ಬೆಂಡೆಕಾಯಿಯಿಂದಲೂ ಕೆಲವರಿಗೆ ಅಲರ್ಜಿ ಉಂಟಾಗುವ ಸಾಧ್ಯತೆ ಇದೆ. ಬೆಂಡೆಕಾಯಿ ಸೇವಿಸಿದ ಬಳಿಕ ಚರ್ಮದಲ್ಲಿ ದದ್ದು, ಕೆಂಪಾಗುವುದು, ತುರಿಕೆ, ತುಟಿ ಅಥವಾ ಮುಖದಲ್ಲಿ ಊತ, ವಾಂತಿ ಅಥವಾ ಹೊಟ್ಟೆಯ ಅಸಹಜತೆ ಕಂಡುಬಂದರೆ ವೈದ್ಯರನ್ನು ಸಂಪರ್ಕಿಸಬೇಕು.

ಮುಖ ಅಥವಾ ಗಂಟಲಿನಲ್ಲಿ ತೀವ್ರ ಊತ, ಉಸಿರಾಟದ ತೊಂದರೆ ಕಂಡುಬಂದರೆ ತಕ್ಷಣ ವೈದ್ಯಕೀಯ ನೆರವು ಪಡೆಯುವುದು ಅಗತ್ಯ.

ಬೆಂಡೆಕಾಯಿ ಎಲ್ಲರೂ ತಪ್ಪಿಸಬೇಕೇ?

ಬೆಂಡೆಕಾಯಿ ಆರೋಗ್ಯಕರ ತರಕಾರಿಯಾಗಿದ್ದು, ಎಲ್ಲರೂ ಅದನ್ನು ತಪ್ಪಿಸಬೇಕು ಎನ್ನುವುದು ಸರಿಯಲ್ಲ. ಆದರೆ ಕಿಡ್ನಿ ಕಲ್ಲು, ಗೌಟ್, IBS ಅಥವಾ ರಕ್ತ ತೆಳುವಾಗಿಸುವ ಔಷಧಿಗಳಂತಹ ನಿರ್ದಿಷ್ಟ ಆರೋಗ್ಯ ಪರಿಸ್ಥಿತಿಗಳಲ್ಲಿ ಆಹಾರದ ಪ್ರಮಾಣವನ್ನು ವೈಯಕ್ತಿಕವಾಗಿ ನಿರ್ಧರಿಸುವ ಅಗತ್ಯವಿರಬಹುದು.

ಹೀಗಾಗಿ ಯಾವುದೇ ತರಕಾರಿಯನ್ನು ಭಯದಿಂದ ಸಂಪೂರ್ಣವಾಗಿ ಆಹಾರದಿಂದ ತೆಗೆದುಹಾಕುವ ಬದಲು, ನಿಮ್ಮ ಆರೋಗ್ಯ ಸ್ಥಿತಿಗೆ ಅನುಗುಣವಾಗಿ ವೈದ್ಯರು ಅಥವಾ ಅರ್ಹ ಡಯಟಿಷಿಯನ್‌ರ ಸಲಹೆ ಪಡೆಯುವುದು ಸೂಕ್ತ.

ಸೂಚನೆ: ಈ ಮಾಹಿತಿ ಸಾಮಾನ್ಯ ಆರೋಗ್ಯ ಜಾಗೃತಿಗಾಗಿ ಮಾತ್ರ. ಯಾವುದೇ ಆರೋಗ್ಯ ಸಮಸ್ಯೆ ಅಥವಾ ಔಷಧಿ ಸೇವನೆಯ ಸಂದರ್ಭದಲ್ಲಿ ವೈಯಕ್ತಿಕ ಆಹಾರ ಸಲಹೆಗಾಗಿ ವೈದ್ಯರು ಅಥವಾ ಅರ್ಹ ಆಹಾರ ತಜ್ಞರನ್ನು ಸಂಪರ್ಕಿಸಿ.

ಗದಗ ಜಿಲ್ಲೆಯ ಅಭಿವೃದ್ಧಿಯೇ ನನ್ನ ಆದ್ಯತೆ: ಜಿ.ಎಸ್. ಪಾಟೀಲ

0

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಜಿಲ್ಲೆಯ ಜನತೆ ಹಾಗೂ ಮಠ-ಮಾನ್ಯಗಳ ಪೂಜ್ಯರ ಆಶೀರ್ವಾದದಿಂದ ತನಗೆ ಕರ್ನಾಟಕ ವಿಧಾನಸಭಾಧ್ಯಕ್ಷರ ಅತ್ಯುನ್ನತ ಹುದ್ದೆ ದೊರೆತಿದ್ದು, ಈ ಜವಾಬ್ದಾರಿಯನ್ನು ಗದಗ ಜಿಲ್ಲೆಯ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಹಾಗೂ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಬಳಸಿಕೊಳ್ಳುವುದಾಗಿ ವಿಧಾನಸಭಾಧ್ಯಕ್ಷ ಜಿ.ಎಸ್. ಪಾಟೀಲ ಹೇಳಿದರು.

ಶಿರಹಟ್ಟಿಯ ಜಗದ್ಗುರು ಫಕೀರೇಶ್ವರ ಮಠಕ್ಕೆ ಆಗಮಿಸಿದ ಅವರು, ಕರ್ತೃ ಶ್ರೀ ಜಗದ್ಗುರು ಫಕೀರೇಶ್ವರರ ಗದ್ದುಗೆಯ ದರ್ಶನ ಪಡೆದು, ಉಭಯ ಶ್ರೀಗಳಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ವಿಧಾನಸಭಾಧ್ಯಕ್ಷರಾಗಿ ಆಯ್ಕೆಯಾದ ಕೂಡಲೇ ಮೊದಲ ಅಧಿವೇಶನವನ್ನು ಯಶಸ್ವಿಯಾಗಿ ನಿರ್ವಹಿಸಿದ್ದೇನೆ. ಈ ಸಂದರ್ಭದಲ್ಲಿ ವಿವಿಧ ಹೋರಾಟಗಳ ಮುಖಂಡರ ಸಮಸ್ಯೆಗಳ ಪರಿಹಾರದ ಕುರಿತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಹಾಗೂ ವಿರೋಧ ಪಕ್ಷಗಳ ಮುಖಂಡರೊಂದಿಗೆ ಚರ್ಚಿಸಿದ್ದೇನೆ ಎಂದು ಹೇಳಿದರು.

ಸದನದಲ್ಲಿ ಜನಪರ ಸಮಸ್ಯೆಗಳ ಕುರಿತು ವಿಸ್ತೃತ ಚರ್ಚೆ ನಡೆಯಬೇಕು. ಆಡಳಿತ ವ್ಯವಸ್ಥೆಯಲ್ಲಿ ಅಗತ್ಯ ಬದಲಾವಣೆ ತರಬೇಕು. ವಿಶೇಷವಾಗಿ ಗಣಕೀಕರಣ ಹಾಗೂ ಕಾಗದರಹಿತ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಬೆಳಗಾವಿಯ ಸುವರ್ಣಸೌಧದಲ್ಲಿ ಉಪಸಮಿತಿಗಳ ಸಭೆಗಳು ಪ್ರತಿತಿಂಗಳು ನಡೆಯುವಂತಾಗಬೇಕು ಎಂಬ ಉದ್ದೇಶವಿದೆ. ಅಲ್ಲದೆ, ಬೆಂಗಳೂರಿನ ಮಾದರಿಯಲ್ಲಿಯೇ ಬೆಳಗಾವಿಯಲ್ಲೂ ಶಾಸಕರ ಭವನ ನಿರ್ಮಿಸುವ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿದ್ದು, ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಹೇಳಿದರು.

ಮಂತ್ರಿ ಆಗಿದ್ದರೆ ಒಂದೇ ಇಲಾಖೆಗೆ ಸೀಮಿತವಾಗುತ್ತಿದ್ದೆ

ಮಂತ್ರಿ ಆಗಿದ್ದರೆ ಕೇವಲ ಒಂದು ಇಲಾಖೆಯ ಜವಾಬ್ದಾರಿಗೆ ಸೀಮಿತವಾಗಬೇಕಾಗುತ್ತಿತ್ತು. ಆದರೆ, ಜನರ ಪ್ರೀತಿ ಮತ್ತು ಬೆಂಬಲದಿಂದ ಇಂದು ವಿಧಾನಸಭಾಧ್ಯಕ್ಷರಂತಹ ಅತ್ಯುನ್ನತ ಹುದ್ದೆ ದೊರೆತಿದೆ. ಈ ಸ್ಥಾನದಲ್ಲಿ ಎಲ್ಲ ಸಚಿವರು ಹಾಗೂ ಸರ್ಕಾರದ ಕಾರ್ಯದರ್ಶಿಗಳೊಂದಿಗೆ ಚರ್ಚಿಸಿ ಜನರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಅವಕಾಶವಿದೆ ಎಂದು ಜಿ.ಎಸ್. ಪಾಟೀಲ ಹೇಳಿದರು.

ಈ ಅಧಿಕಾರವನ್ನು ಜಿಲ್ಲೆಯ ಸರ್ವಾಂಗೀಣ ಪ್ರಗತಿಗೆ ಬಳಸಿಕೊಂಡು, ವಿಧಾನಸಭಾಧ್ಯಕ್ಷರ ಹುದ್ದೆಯ ಗೌರವವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಅವರು ಭರವಸೆ ನೀಡಿದರು.

ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಮಾತನಾಡಿ, ರಾಜ್ಯದಲ್ಲಿಯೇ ಅವಿಭಕ್ತ ಕುಟುಂಬದ ಮೌಲ್ಯಗಳನ್ನು ಕಾಣಬೇಕಾದರೆ ಜಿ.ಎಸ್. ಪಾಟೀಲ ಅವರ ಮನೆತನವನ್ನು ನೋಡಬೇಕು. ಅವರಿಗೆ ಇಂತಹ ಮಹತ್ವದ ಹುದ್ದೆ ಬಹಳ ಹಿಂದೆಯೇ ದೊರೆಯಬೇಕಿತ್ತು. ತಡವಾಗಿಯಾದರೂ ಅವರ ವ್ಯಕ್ತಿತ್ವಕ್ಕೆ ತಕ್ಕಂತಹ ಜವಾಬ್ದಾರಿ ದೊರೆತಿರುವುದು ಗದಗ ಜಿಲ್ಲೆಯ ಜನತೆಯ ಸೌಭಾಗ್ಯವಾಗಿದೆ ಎಂದರು.

ಜಗದ್ಗುರು ಫಕೀರೇಶ್ವರ ದಿಂಗಾಲೇಶ್ವರ ಸ್ವಾಮೀಜಿ ಮಾತನಾಡಿ, ಜಿ.ಎಸ್. ಪಾಟೀಲರ ಮನೆತನ ಭಕ್ತಿ ಮತ್ತು ದಾಸೋಹಕ್ಕೆ ಹೆಸರುವಾಸಿಯಾಗಿದೆ. ಹಾಲಿ ಶಾಸಕರಾಗಿದ್ದಾಗಲೂ, ಮಾಜಿ ಶಾಸಕರಾಗಿದ್ದಾಗಲೂ ಒಂದೇ ರೀತಿಯ ಸರಳ ವ್ಯಕ್ತಿತ್ವವನ್ನು ಉಳಿಸಿಕೊಂಡವರು ಅವರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ನಾಡಿನ ಪೂಜ್ಯರ ಆಶೀರ್ವಾದ ಜಿ.ಎಸ್. ಪಾಟೀಲರ ಮೇಲಿರಲಿದೆ. ಅವರು ವಿಧಾನಸಭಾಧ್ಯಕ್ಷರಾಗಿ ಸದನವನ್ನು ನಿರ್ವಿವಾದವಾಗಿ ಹಾಗೂ ಸಮರ್ಥವಾಗಿ ಮುನ್ನಡೆಸುತ್ತಾರೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಜಗದ್ಗುರು ಫಕೀರೇಶ್ವರ ಸಿದ್ದರಾಮ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಮಾಜಿ ಸಂಸದ ಐ.ಜಿ. ಸನದಿ, ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ, ಡಿ.ಎನ್. ಡಬಾಲಿ, ಹುಮಾಯೂನ್ ಮಾಗಡಿ, ವಿಶ್ವನಾಥ ಕಪ್ಪತ್ತನವರ, ಶಿವಪ್ರಕಾಶ ಮಹಾಜನಶೆಟ್ಟರ, ಗುರನಾಥ ದಾನಪ್ಪನವರ, ಡಿ.ಕೆ. ಹೊನ್ನಪ್ಪನವರ, ಎಲ್.ಡಿ. ಪಾಟೀಲ, ವೀರಣ್ಣ ಅಂಗಡಿ, ಸಿ.ಸಿ. ನೂರಶೆಟ್ಟರ, ಡಾ. ಎಸ್.ಎಂ. ಬುರಬುರೆ, ಪರಮೇಶ ಪರಬ, ಹೊನ್ನಪ್ಪ ಶಿರಹಟ್ಟಿ, ಡಾ. ವಿಜಯದತ್ತ ಮಂಗಸೂಳಿ, ಮಹಾಂತೇಶ ದಶಮನಿ, ವೀರಯ್ಯ ಮಠಪತಿ, ಚಾಂದಸಾಬ ಮುಳಗುಂದ, ಬುಡನಶ್ಯಾ ಮಕಾನದಾರ, ತಹಶೀಲ್ದಾರ ಕೆ. ರಾಘವೇಂದ್ರ ರಾವ್, ಪಿಎಸ್‌ಐ ಈರಪ್ಪ ರಿತ್ತಿ, ಮುಖ್ಯಾಧಿಕಾರಿ ಎನ್.ಎಂ. ಹಾದಿಮನಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಜನತೆಯ ಪ್ರೀತಿ, ವಿಶ್ವಾಸ ಮತ್ತು ಪೂಜ್ಯರ ಆಶೀರ್ವಾದದಿಂದ ವಿಧಾನಸಭಾಧ್ಯಕ್ಷರಂತಹ ಅತ್ಯುನ್ನತ ಜವಾಬ್ದಾರಿ ದೊರೆತಿದೆ. ಈ ಹುದ್ದೆಯನ್ನು ಕೇವಲ ಸ್ಥಾನಮಾನಕ್ಕಾಗಿ ಬಳಸದೆ, ಗದಗ ಜಿಲ್ಲೆಯ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಹಾಗೂ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಬಳಸಿಕೊಳ್ಳುತ್ತೇನೆ.

– ಜಿ.ಎಸ್. ಪಾಟೀಲ, ವಿಧಾನಸಭಾಧ್ಯಕ್ಷರು