Home Blog Page 3

ಲೋಕಭವನಕ್ಕೆ ಟೈಮ್ ಕೇಳಿದ ಸಿದ್ದರಾಮಯ್ಯ: ರಾಜೀನಾಮೆಗೆ ಕ್ಷಣಗಣನೆ, ಹೋಗುವ ಮುನ್ನ ‘ಜಾತಿಗಣತಿ’ ಅಸ್ತ್ರ!

ಬೆಂಗಳೂರು: ಕರ್ನಾಟಕದ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡುವುದು ಇದೀಗ ಕೇವಲ ಅಧಿಕೃತ ಪ್ರಕ್ರಿಯೆಯಷ್ಟೇ ಬಾಕಿ ಉಳಿದಿದೆ. ಇದಕ್ಕೆ ಪುಷ್ಟಿ ನೀಡುವಂತೆ, ಮುಖ್ಯಮಂತ್ರಿ ಕಚೇರಿಯಿಂದ ಲೋಕಭವನ (ರಾಜಭವನ) ಭೇಟಿಗೆ ಸಮಯ ಕೋರಿ ಅಧಿಕೃತ ಮಾಹಿತಿ ರವಾನೆಯಾಗಿದೆ.

ಮುಖ್ಯಮಂತ್ರಿಗಳ ಸಚಿವಾಲಯದಿಂದ ಲೋಕಭವನಕ್ಕೆ ಸಂದೇಶ ಕಳುಹಿಸಲಾಗಿದ್ದು, ನಾಳೆ (ಗುರುವಾರ) ಮಧ್ಯಾಹ್ನ ಸಿದ್ದರಾಮಯ್ಯ ಅವರು ಭೇಟಿ ನೀಡಲಿದ್ದಾರೆ ಎಂದು ತಿಳಿಸಲಾಗಿದೆ. ಆದರೆ ಭೇಟಿಯ ನಿಖರ ಸಮಯವನ್ನು ಇನ್ನೂ ಬಹಿರಂಗಪಡಿಸಿಲ್ಲ. ರಾಜಕೀಯ ವಲಯದಲ್ಲಿ ನಡೆಯುತ್ತಿರುವ ಚರ್ಚೆಗಳ ಪ್ರಕಾರ, ಬೆಳಗ್ಗೆ ಜಂಟಿ ಸುದ್ದಿಗೋಷ್ಠಿ ಬಳಿಕ ಮಧ್ಯಾಹ್ನ ಸಿದ್ದರಾಮಯ್ಯ ಅವರು ರಾಜೀನಾಮೆ ಪತ್ರ ಸಲ್ಲಿಸುವ ಸಾಧ್ಯತೆ ಇದೆ.

ಈ ಬೆಳವಣಿಗೆಯ ನಡುವೆಯೇ ಸಚಿವ ಚಲುವರಾಯಸ್ವಾಮಿ ಸಿಎಂ ನಿವಾಸಕ್ಕೆ ಭೇಟಿ ನೀಡಿ ಮಹತ್ವದ ಚರ್ಚೆ ನಡೆಸಿದ್ದಾರೆ.

ಇದರ ಜೊತೆಗೆ, ತಮ್ಮ ರಾಜೀನಾಮೆಗೆ ಮುನ್ನ ‘ಜಾತಿಗಣತಿ ವರದಿ’ಯನ್ನು ಅಧಿಕೃತವಾಗಿ ಸ್ವೀಕರಿಸಲು ಸಿದ್ದರಾಮಯ್ಯ ನಿರ್ಧರಿಸಿದ್ದಾರೆ. ಇಂದು ಸಂಜೆ 5 ಗಂಟೆಗೆ ವಿಧಾನಸೌಧಕ್ಕೆ ಆಗಮಿಸಲಿರುವ ಅವರು, ಹಿಂದುಳಿದ ವರ್ಗಗಳ ಆಯೋಗದಿಂದ ವರದಿ ಸ್ವೀಕರಿಸಲಿದ್ದಾರೆ.

ಈ ಕುರಿತು ಮಾತನಾಡಿದ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಮಧುಸೂದನ್ ಆರ್. ನಾಯ್ಕ್, “ವರದಿ ಒಂದು ತಿಂಗಳ ಹಿಂದೆಯೇ ಸಿದ್ಧವಾಗಿತ್ತು. ಸದಸ್ಯರ ಲಭ್ಯತೆ ಸಮಸ್ಯೆಯಿಂದ ಸಲ್ಲಿಕೆ ತಡವಾಯಿತು. ರಾಜಕೀಯ ಬೆಳವಣಿಗೆಗಳಿಗೂ ವರದಿ ಸಲ್ಲಿಕೆಗೆ ಯಾವುದೇ ಸಂಬಂಧವಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.

4ರ ಹರೆಯದಲ್ಲೇ ನ್ಯಾಷನಲ್ ಅವಾರ್ಡ್: ಕಮಲ್ ಹಾಸನ್ ದಾಖಲೆ ಮುರಿದ ಪುಟ್ಟ ಹುಡುಗಿ ಯಾರು?

ಖ್ಯಾತ ನಟ ಕಮಲ್ ಹಾಸನ್ ಹೆಸರಿನಲ್ಲಿದ್ದ ಅತಿ ಕಿರಿಯ ವಯಸ್ಸಿನಲ್ಲಿ ರಾಷ್ಟ್ರ ಪ್ರಶಸ್ತಿ ಪಡೆದ ಬಾಲನಟ ಎಂಬ ದಾಖಲೆಯನ್ನು ಇದೀಗ ಮರಾಠಿ ಬಾಲ ನಟಿ ತ್ರೀಶಾ ವಿವೇಕ್ ಥೋಸರ್ ಮುರಿದಿದ್ದಾಳೆ.

‘ನಾಳ್ 2’ ಸಿನಿಮಾದಲ್ಲಿನ ಅಭಿನಯಕ್ಕಾಗಿ ತ್ರೀಶಾ ಕೇವಲ ನಾಲ್ಕನೇ ವಯಸ್ಸಿನಲ್ಲೇ ಅತ್ಯುತ್ತಮ ಬಾಲ ನಟಿ ರಾಷ್ಟ್ರ ಪ್ರಶಸ್ತಿ ಗೆದ್ದಿದ್ದಾಳೆ. ಈ ಮೂಲಕ 6ನೇ ವಯಸ್ಸಿನಲ್ಲಿ ರಾಷ್ಟ್ರ ಪ್ರಶಸ್ತಿ ಪಡೆದಿದ್ದ ಕಮಲ್ ಹಾಸನ್ ಅವರ 60 ವರ್ಷದ ಹಳೆಯ ದಾಖಲೆಯನ್ನು ಆಕೆ ಹಿಂದಿಕ್ಕಿದ್ದಾಳೆ.

ಇದೀಗ ತ್ರೀಶಾಳ ಪ್ರಶಸ್ತಿ ಸ್ವೀಕಾರದ ವಿಡಿಯೋ ಮತ್ತೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಪುಟ್ಟ ಬಾಲಕಿಯ ಆತ್ಮವಿಶ್ವಾಸಕ್ಕೆ ಫಿದಾ ಆಗಿದ್ದಾರೆ. ಸೀರೆ ಉಟ್ಟು ರಾಷ್ಟ್ರಪತಿಗಳ ಮುಂದೆ ಅತ್ಯಂತ ಧೈರ್ಯವಾಗಿ ನಡೆದು ಹೋಗಿ ಪ್ರಶಸ್ತಿ ಸ್ವೀಕರಿಸಿದ ದೃಶ್ಯ ಹಲವರ ಮೆಚ್ಚುಗೆಗೆ ಪಾತ್ರವಾಗಿದೆ.

ತ್ರೀಶಾಳ ಸಾಧನೆಯನ್ನು ಕಮಲ್ ಹಾಸನ್ ಕೂಡ ವಿಶೇಷವಾಗಿ ಅಭಿನಂದಿಸಿದ್ದರು. ‘ನೀನು ನನ್ನ ದಾಖಲೆಯನ್ನು ಮುರಿದಿದ್ದೀಯ, ನಿನ್ನ ಪ್ರತಿಭೆ ಇನ್ನೂ ಎತ್ತರಕ್ಕೆ ಏರಲಿ’ ಎಂದು ಅವರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು.

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಪ್ರಶಸ್ತಿ ಸ್ವೀಕರಿಸಿದ ನಂತರ ಮಾತನಾಡಿದ್ದ ತ್ರೀಶಾ, ‘ರಾಷ್ಟ್ರಪತಿಗಳು ಅಭಿನಂದಿಸಿದ್ದು ನನಗೆ ತುಂಬಾ ಖುಷಿಯಾಯಿತು’ ಎಂದು ಹೇಳಿದ್ದಳು.

ಹೈಕಮಾಂಡ್ ಸಭೆಯಲ್ಲಿ ಮಹತ್ವದ ಚರ್ಚೆ ನಡೆದಿದ್ದು ನಿಜ: ಸಚಿವ ಸತೀಶ್ ಜಾರಕಿಹೊಳಿ

ನವದೆಹಲಿ: ರಾಜ್ಯ ಕಾಂಗ್ರೆಸ್ ನಾಯಕತ್ವ ಬದಲಾವಣೆ ಕುರಿತ ಚರ್ಚೆಗಳು ಜೋರಾಗಿರುವ ನಡುವೆಯೇ, ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಮಹತ್ವದ ಪ್ರತಿಕ್ರಿಯೆ ನೀಡಿದ್ದಾರೆ. ಹೈಕಮಾಂಡ್ ನೇತೃತ್ವದಲ್ಲಿ ಮಹತ್ವದ ಚರ್ಚೆಗಳು ನಡೆದಿರುವುದು ಸತ್ಯ. ಆದರೆ ಇನ್ನೂ ಯಾವುದೇ ಅಧಿಕೃತ ಮಾಹಿತಿ ನೀಡಲಾಗಿಲ್ಲ ಎಂದು ತಿಳಿಸಿದ್ದಾರೆ.

ನವದೆಹಲಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸತೀಶ್ ಜಾರಕಿಹೊಳಿ, ಮುಖ್ಯಮಂತ್ರಿ ಮಾತನಾಡಿದ ಬಳಿಕವೇ ಎಲ್ಲವೂ ಸ್ಪಷ್ಟವಾಗಲಿದೆ. ಹೈಕಮಾಂಡ್ ಸಭೆಯಲ್ಲಿ ಏನು ಚರ್ಚೆಯಾಯಿತು, ಯಾವ ರೀತಿಯ ಸೂಚನೆ ನೀಡಲಾಗಿದೆ ಎಂಬುದರ ಬಗ್ಗೆ ನಮಗೆ ಇನ್ನೂ ಮಾಹಿತಿ ಇಲ್ಲ ಎಂದು ಹೇಳಿದರು.

ಗುರುವಾರ ನಡೆಯಲಿರುವ ಬ್ರೇಕ್‌ಫಾಸ್ಟ್ ಸಭೆಯ ಬಳಿಕ ಮುಖ್ಯಮಂತ್ರಿ ಈ ವಿಚಾರವಾಗಿ ಮಾತನಾಡಲಿದ್ದಾರೆ. ಬೆಂಗಳೂರಿನಲ್ಲಿ ಉಪಾಹಾರ ಕೂಟ ಆಯೋಜಿಸಲಾಗಿದೆ. ನಾವು ಕೂಡ ಅದರಲ್ಲಿ ಭಾಗವಹಿಸುತ್ತೇವೆ. ಅಲ್ಲಿ ಮುಖ್ಯಮಂತ್ರಿ ಏನು ಹೇಳುತ್ತಾರೆ ಎಂಬುದರ ಬಳಿಕವೇ ಮುಂದಿನ ಬೆಳವಣಿಗೆಗಳು ತಿಳಿಯಲಿವೆ ಎಂದು ಹೇಳಿದರು.

ಹೈಕಮಾಂಡ್ ನಮ್ಮ ಅಭಿಪ್ರಾಯ ಕೇಳಿದರೆ, ನಮ್ಮ ಬೇಡಿಕೆಗಳು ಮತ್ತು ಅಭಿಪ್ರಾಯಗಳನ್ನು ತಿಳಿಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು. ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ತಮ್ಮ ಹೆಸರು ಕೇಳಿಬರುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಸತೀಶ್ ಜಾರಕಿಹೊಳಿ,

ಈ ಬಗ್ಗೆ ನನಗೆ ಯಾವುದೇ ಸ್ಪಷ್ಟ ಮಾಹಿತಿ ಇಲ್ಲ. ಇನ್ನೂ ನಿರ್ದಿಷ್ಟ ಚರ್ಚೆಯೂ ನಡೆದಿಲ್ಲ. ಕೆಲವು ಮಟ್ಟದ ಚರ್ಚೆಗಳು ನಡೆಯುತ್ತಿವೆ. ಆದರೆ ಹಿರಿಯ ನಾಯಕರು ಇದುವರೆಗೆ ವೈಯಕ್ತಿಕವಾಗಿ ನನ್ನೊಂದಿಗೆ ಮಾತನಾಡಿಲ್ಲ ಎಂದು ತಿಳಿಸಿದರು.

‘ಜನ ನಾಯಗನ್’ ರಿಲೀಸ್ ಫಿಕ್ಸ್?: ವಿಜಯ್ ಎಂಟ್ರಿಯಿಂದ ಸಮಂತಾ ಸಿನಿಮಾ ಡೇಂಜರ್‌ನಲ್ಲಿ!

ದಳಪತಿ ವಿಜಯ್ ಅಭಿನಯದ ಕೊನೆಯ ಸಿನಿಮಾ ‘ಜನ ನಾಯಗನ್’ ಬಿಡುಗಡೆಯ ಕುರಿತು ಹೊಸ ಅಪ್‌ಡೇಟ್ ಹೊರಬಿದ್ದಿದ್ದು, ಸಿನಿಮಾ ಜೂನ್ 19ರಂದು ತೆರೆಗೆ ಬರಲಿದೆ ಎನ್ನುವ ಸುದ್ದಿ ಕಾಲಿವುಡ್‌ನಲ್ಲಿ ಭಾರೀ ಸಂಚಲನ ಮೂಡಿಸಿದೆ.

ರಾಜಕೀಯ ಪ್ರವೇಶದ ಬಳಿಕ ಚಿತ್ರರಂಗಕ್ಕೆ ವಿದಾಯ ಹೇಳಿದ್ದ ವಿಜಯ್, ‘ಜನ ನಾಯಗನ್’ ನನ್ನ ಅಂತಿಮ ಸಿನಿಮಾ ಎಂದು ಘೋಷಿಸಿದ್ದರು. ಆದರೆ ಹಲವು ಕಾರಣಗಳಿಂದ ಚಿತ್ರದ ಬಿಡುಗಡೆ ವಿಳಂಬವಾಗಿತ್ತು. ಇದೀಗ ಸೆನ್ಸಾರ್ ಪ್ರಕ್ರಿಯೆ ಅಂತಿಮ ಹಂತ ತಲುಪಿದ್ದು, ನಿರ್ಮಾಪಕರು ಬಿಡುಗಡೆ ದಿನಾಂಕ ನಿಗದಿ ಮಾಡಿದ್ದಾರೆ ಎನ್ನಲಾಗಿದೆ.

ಈ ಚಿತ್ರದ ಮತ್ತೊಂದು ವಿಶೇಷವೆಂದರೆ, ವಿಜಯ್ ಸರ್ಕಾರ ಇತ್ತೀಚೆಗೆ ಹೊಸ ಸಿನಿಮಾಗಳಿಗೆ ಮೊದಲ ವಾರ ದಿನಕ್ಕೆ ಐದು ಪ್ರದರ್ಶನಗಳಿಗೆ ಅನುಮತಿ ನೀಡಿರುವುದು. ಇದರಿಂದ ‘ಜನ ನಾಯಗನ್’ಗೆ ಭರ್ಜರಿ ಓಪನಿಂಗ್ ಸಿಗುವ ನಿರೀಕ್ಷೆ ಇದೆ.

ಆದರೆ ಈ ಬೆಳವಣಿಗೆ ಸಮಂತಾ ನಟನೆಯ ‘ಮಾ ಇಂಟಿ ಬಂಗಾರಂ’ ತಂಡಕ್ಕೆ ತಲೆನೋವಾಗಿ ಪರಿಣಮಿಸಿದೆ. ಎರಡೂ ಸಿನಿಮಾಗಳು ಒಂದೇ ದಿನ ಬಿಡುಗಡೆಯಾದರೆ ಬಾಕ್ಸ್ ಆಫೀಸ್‌ನಲ್ಲಿ ನೇರ ಪೈಪೋಟಿ ಎದುರಾಗಲಿದೆ. ಹೀಗಾಗಿ ಸಮಂತಾ ಚಿತ್ರದ ಬಿಡುಗಡೆ ದಿನಾಂಕ ಮತ್ತೆ ಬದಲಾಗಬಹುದು ಎನ್ನಲಾಗುತ್ತಿದೆ.

‘ಜನ ನಾಯಗನ್’ ಚಿತ್ರವನ್ನು ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಿಸಿದ್ದು, ಎಚ್ ವಿನೋದ್ ನಿರ್ದೇಶಿಸಿದ್ದಾರೆ. ಪೂಜಾ ಹೆಗ್ಡೆ ನಾಯಕಿಯಾಗಿದ್ದು, ಬಾಬಿ ಡಿಯೋಲ್ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅನಿರುದ್ಧ್ ರವಿಚಂದ್ರನ್ ಸಂಗೀತ ನಿರ್ದೇಶನ ಮಾಡಿದ್ದಾರೆ.

‘ದೇವಿ‌ ಮಹಾತ್ಮೆ’ ಸಿನಿಮಾದ ಆಡಿಯೋ ರೈಟ್ಸ್ ಖರೀದಿಸಿದ ‘ಹೊಂಬಾಳೆ ಮ್ಯೂಸಿಕ್’: ಚಿತ್ರರಂಗದಲ್ಲಿ ಹೊಸ ಅಧ್ಯಾಯ ಆರಂಭ!

ಭಾರತೀಯ ಚಿತ್ರರಂಗದ ಪ್ರಮುಖ ನಿರ್ಮಾಣ ಸಂಸ್ಥೆಗಳಲ್ಲಿ ಒಂದಾದ ‘ಹೊಂಬಾಳೆ ಫಿಲ್ಮ್ಸ್’ ಈಗ ಮ್ಯೂಸಿಕ್ ಕ್ಷೇತ್ರಕ್ಕೂ ಅಧಿಕೃತವಾಗಿ ಕಾಲಿಟ್ಟಿದೆ. ‘ಹೊಂಬಾಳೆ ಮ್ಯೂಸಿಕ್’ ಮೂಲಕ ಸಿನಿಮಾಗಳ ಆಡಿಯೋ ಹಕ್ಕುಗಳನ್ನು ಖರೀದಿಸುವ ಕಾರ್ಯ ಆರಂಭಿಸಿರುವ ಸಂಸ್ಥೆ, ತನ್ನ ಮೊದಲ ಖರೀದಿಯಾಗಿ ‘ದೇವಿ ಮಹಾತ್ಮೆ’ ಸಿನಿಮಾದ ಆಡಿಯೋ ಹಕ್ಕುಗಳನ್ನು ಪಡೆದುಕೊಂಡಿದೆ.

‘ಕೆಜಿಎಫ್’, ‘ಕಾಂತಾರ’, ‘ಸಲಾರ್’ ಸೇರಿದಂತೆ ಬಿಗ್ ಬಜೆಟ್ ಚಿತ್ರಗಳನ್ನು ನಿರ್ಮಿಸಿ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿರುವ ಹೊಂಬಾಳೆ, ಈಗ ಸಂಗೀತ ಮಾರುಕಟ್ಟೆಯಲ್ಲೂ ತನ್ನ ಹಾಜರಾತಿಯನ್ನು ಗಟ್ಟಿಗೊಳಿಸುತ್ತಿದೆ. ‘ದೇವಿ ಮಹಾತ್ಮೆ’ ಚಿತ್ರದ ಆಡಿಯೋ ಹಕ್ಕು ಹೊಂಬಾಳೆ ಮ್ಯೂಸಿಕ್‌ಗೆ ಸೇರುವುದರಿಂದ ಚಿತ್ರತಂಡಕ್ಕೆ ದೊಡ್ಡ ಮಟ್ಟದ ಬಲ ಸಿಕ್ಕಿದೆ ಎಂದು ಹೇಳಲಾಗುತ್ತಿದೆ.

ನಾಗರಾಜ ಸೋಮಯಾಜಿ ನಿರ್ದೇಶನದ ಈ ಚಿತ್ರವು ಕಾಮಿಡಿ ಥ್ರಿಲ್ಲರ್ ಕಥಾಹಂದರ ಹೊಂದಿದ್ದು, ಲಿಖಿತ್ ಪ್ರಸಾದ್ ಕೆ. ಶೆಟ್ಟಿ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಯುವಿಜಿ ಸ್ಟುಡಿಯೋ ಬ್ಯಾನರ್ ಅಡಿಯಲ್ಲಿ ವಿದ್ಯಾ ಗಾಂಧಿರಾಜನ್ ಅವರು ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

ಚಿತ್ರದ ತಾಂತ್ರಿಕ ವಿಭಾಗದಲ್ಲೂ ಬಲವಾದ ತಂಡ ಕೆಲಸ ಮಾಡುತ್ತಿದ್ದು, ಉಜ್ವಲ್ ಚಂದ್ರ ಅವರ ಸಂಕಲನ ಮತ್ತು ಎಸ್.ಕೆ. ರಾವ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ. ಬರವಣಿಗೆಯಲ್ಲಿ ಅರವಿಂದ್ ಕುಪ್ಳೀಕರ್ ಸೇರಿದಂತೆ ಹಲವು ಲೇಖಕರು ಕೈಜೋಡಿಸಿದ್ದಾರೆ.

GT ವಿರುದ್ಧ ಭರ್ಜರಿ ಗೆಲುವಿನೊಂದಿಗೆ ಫೈನಲ್ ಗೆ ಲಗ್ಗೆ ಇಟ್ಟ RCB; ವಿಜಯ್ ಮಲ್ಯ ಪೋಸ್ಟ್ ವೈರಲ್

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸತತ ಎರಡನೇ ಬಾರಿ ಐಪಿಎಲ್ ಫೈನಲ್ ಪ್ರವೇಶಿಸಿದ ಬೆನ್ನಲ್ಲೇ, ತಂಡದ ಮಾಜಿ ಮಾಲೀಕ ವಿಜಯ್ ಮಲ್ಯ ಮಾಡಿರುವ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.

ಆರ್ಸಿಬಿಯ ಭರ್ಜರಿ ಗೆಲುವಿಗೆ ಸಂತಸ ವ್ಯಕ್ತಪಡಿಸಿರುವ ವಿಜಯ್ ಮಲ್ಯ, ತಮ್ಮ ಎಕ್ಸ್ ಖಾತೆಯಲ್ಲಿ ಕನ್ನಡದಲ್ಲೇ “ನಮ್ಮ ದೊಡ್ಡ ಸಿಂಹಗಳಿಗೆ ಅಭಿನಂದನೆಗಳು” ಎಂದು ಬರೆದುಕೊಂಡಿದ್ದಾರೆ. ಜೊತೆಗೆ, “ಧರ್ಮಶಾಲಾದಲ್ಲಿ ಅದ್ಭುತ ಗೆಲುವು ಸಾಧಿಸಿದ್ದೀರಿ. ಬೆಂಗಳೂರಿನ ಸಿಂಹಗಳಂತೆ ಗರ್ಜಿಸಿ ಐಪಿಎಲ್ ಫೈನಲ್‌ಗೆ ಪ್ರವೇಶಿಸಿದ್ದೀರಿ” ಎಂದು ತಂಡಕ್ಕೆ ಶುಭಾಶಯ ತಿಳಿಸಿದ್ದಾರೆ.

ಐಪಿಎಲ್ ಕ್ವಾಲಿಫೈಯರ್-1 ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಆರ್ಸಿಬಿ 92 ರನ್‌ಗಳ ಭರ್ಜರಿ ಜಯ ಸಾಧಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿ 5 ವಿಕೆಟ್ ನಷ್ಟಕ್ಕೆ 254 ರನ್ ಕಲೆಹಾಕಿತು. ತಂಡದ ನಾಯಕ ರಜತ್ ಪಾಟಿದಾರ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿ ಕೇವಲ 33 ಎಸೆತಗಳಲ್ಲಿ ಅಜೇಯ 93 ರನ್ ಸಿಡಿಸಿದರು. ಅವರ ಇನ್ನಿಂಗ್ಸ್‌ನಲ್ಲಿ 9 ಸಿಕ್ಸರ್ ಹಾಗೂ 5 ಬೌಂಡರಿಗಳು ಸೇರಿದ್ದವು. ಕೊನೆಯ ಓವರ್‌ಗಳಲ್ಲಿ ಆರ್ಸಿಬಿ ಬ್ಯಾಟರ್‌ಗಳು ಅಬ್ಬರಿಸಿ ತಂಡದ ಮೊತ್ತವನ್ನು 250ರ ಗಡಿ ದಾಟಿಸಿದರು.

255 ರನ್‌ಗಳ ಬೃಹತ್ ಗುರಿ ಬೆನ್ನತ್ತಿದ ಗುಜರಾತ್ ಟೈಟಾನ್ಸ್ ಆರಂಭದಲ್ಲೇ ಕುಸಿತ ಕಂಡಿತು. ಸಾಯಿ ಸುದರ್ಶನ್ ಹಾಗೂ ನಾಯಕ ಶುಭಮನ್ ಗಿಲ್ ಬೇಗನೇ ವಿಕೆಟ್ ಕಳೆದುಕೊಂಡರು.

ಆರ್ಸಿಬಿ ಬೌಲರ್‌ಗಳ ದಾಳಿಗೆ ತತ್ತರಿಸಿದ ಗುಜರಾತ್ ತಂಡ 162 ರನ್‌ಗೆ ಆಲೌಟ್ ಆಯಿತು. ಭುವನೇಶ್ವರ್ ಕುಮಾರ್, ಜಾಕೋಬ್ ಡಫಿ, ಜೋಶ್ ಹ್ಯಾಜಲ್ವುಡ್ ಹಾಗೂ ರಸಿಖ್ ಸಲಾಂ ಆರ್ಸಿಬಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಈ ಭರ್ಜರಿ ಗೆಲುವಿನೊಂದಿಗೆ ಆರ್ಸಿಬಿ ಐಪಿಎಲ್ ಇತಿಹಾಸದಲ್ಲಿ ಐದನೇ ಬಾರಿ ಫೈನಲ್‌ಗೆ ಪ್ರವೇಶಿಸಿದ್ದು, ಅಭಿಮಾನಿಗಳಲ್ಲಿ ಸಂಭ್ರಮ ಮನೆಮಾಡಿದೆ.

45 ವರ್ಷಗಳ ಆರ್ಟ್ ಆಫ್ ಲಿವಿಂಗ್ ಸಂಭ್ರಮ: ಬಾಲಿವುಡ್-ರಾಜಕೀಯ ತಾರೆಯರ ನಡುವೆ ಗುರೂಜಿ ಮಹೋತ್ಸವ!

ಬೆಂಗಳೂರಿನಲ್ಲಿ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ 45 ವರ್ಷಗಳ ಸಂಭ್ರಮಾಚರಣೆ ಭವ್ಯವಾಗಿ ನಡೆಯಿತು. ಕನಕಪುರ ರಸ್ತೆಯಲ್ಲಿರುವ ಅಂತರರಾಷ್ಟ್ರೀಯ ಕೇಂದ್ರದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ದೇಶದ ಚಿತ್ರರಂಗದ ಪ್ರಮುಖ ತಾರೆಯರು, ನಿರ್ದೇಶಕರು ಹಾಗೂ ರಾಜಕೀಯ ಗಣ್ಯರು ಭಾಗವಹಿಸಿದರು.

ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರ ಸೇವಾ ಕಾರ್ಯಗಳನ್ನು ಗೌರವಿಸಲು ಆಯೋಜಿಸಲಾದ ಈ ಕಾರ್ಯಕ್ರಮದಲ್ಲಿ ಕೇರಳ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್, ನಿರ್ದೇಶಕ ರಾಜ್ ಕುಮಾರ್ ಹಿರಾನಿ, ನಟ ವಿಕ್ರಾಂತ್ ಮಾಸ್ಸಿ, ಹಾಸ್ಯನಟ ಸುನಿಲ್ ಗ್ರೋವರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ವಿಕ್ರಾಂತ್ ಮಾಸ್ಸಿ ಅವರು ಗುರೂಜಿ ಅವರ ಜೀವನಾಧಾರಿತ ‘ವೈಟ್’ ಸಿನಿಮಾದಲ್ಲಿ ನಟಿಸುತ್ತಿರುವುದಾಗಿ ತಿಳಿಸಿ ಭಾವುಕರಾದರೆ, ರಾಜ್ ಕುಮಾರ್ ಹಿರಾನಿ ಅವರು ತಮ್ಮ ತಂಡಕ್ಕೆ ಸುದರ್ಶನ ಕ್ರಿಯೆ ಕಲಿಸುವ ಅನುಭವವನ್ನು ಹಂಚಿಕೊಂಡರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ ಗಣ್ಯರು ಗುರೂಜಿ ಅವರ ಮಾನವೀಯ ಕಾರ್ಯವನ್ನು ಶ್ಲಾಘಿಸಿದರು. ವಿಶೇಷವಾಗಿ ನಡೆದ ‘ಇಂಟ್ಯೂಷನ್ ಫೆಸ್ಟ್’ನಲ್ಲಿ ಸಾವಿರಾರು ಮಕ್ಕಳು ಭಾಗವಹಿಸಿ ತಮ್ಮ ವಿಶಿಷ್ಟ ಪ್ರತಿಭೆಯನ್ನು ಪ್ರದರ್ಶಿಸುವ ಮೂಲಕ ಕಾರ್ಯಕ್ರಮಕ್ಕೆ ವಿಶೇಷ ಆಕರ್ಷಣೆ ತಂದರು.

ವಿಜಯ್ ಸಿಎಂ ಗೆಲುವು ನೋಡಿ ಪವನ್ ಕಲ್ಯಾಣ್ ಶಾಕ್: ‘ನನಗೆ ಸ್ವಲ್ಪ ಅಸೂಯೆ ಆಯ್ತು’ ಎಂದ ಡಿಸಿಎಂ!

ತಮಿಳುನಾಡು ಮುಖ್ಯಮಂತ್ರಿ ಹಾಗೂ ನಟ ವಿಜಯ್ ಅವರ ರಾಜಕೀಯ ಯಶಸ್ಸಿನ ಬಗ್ಗೆ ಆಂಧ್ರಪ್ರದೇಶ ಡಿಸಿಎಂ ಪವನ್ ಕಲ್ಯಾಣ್ ನೀಡಿದ ತಮಾಷೆಯ ಹೇಳಿಕೆ ಇದೀಗ ಭಾರೀ ವೈರಲ್ ಆಗಿದೆ. ಸಾರ್ವಜನಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ವಿಜಯ್ ಅವರ ರಾಜಕೀಯ ಗೆಲುವನ್ನು ನೋಡಿ ತಮಗೆ “ಸ್ವಲ್ಪ ಅಸೂಯೆ ಆಯಿತು” ಎಂದು ಹೇಳಿದ್ದಾರೆ.

ಪವನ್ ಕಲ್ಯಾಣ್ ತಮ್ಮ ಭಾಷಣದಲ್ಲಿ, ವಿಜಯ್ ಅವರು ತಮಿಳುನಾಡು ಚುನಾವಣೆಯಲ್ಲಿ ಆರಾಮವಾಗಿ ಗೆದ್ದ ರೀತಿಯನ್ನು ಉಲ್ಲೇಖಿಸಿ ಹಾಸ್ಯಭರಿತವಾಗಿ ಪ್ರತಿಕ್ರಿಯಿಸಿದ್ದಾರೆ. ‘ಕಟೌಟ್‌ಗಳು ಮತ್ತು ಹೊಲೊಗ್ರಾಮ್‌ಗಳ ಮೂಲಕವೂ ಗೆದ್ದು ಸಿಎಂ ಆದರು, ಆದರೆ ನಾನು 15 ವರ್ಷ ಹೋರಾಟ ಮಾಡಿದ್ದೇನೆ’ ಎಂದು ಅವರು ಹೇಳಿದ್ದಾರೆ.

ಅದೇ ವೇಳೆ ರಾಜಕೀಯ ಹಾದಿ ಮತ್ತು ರಾಜ್ಯಗಳ ಪರಿಸ್ಥಿತಿಗಳನ್ನು ಹೋಲಿಸುವುದು ಸರಿಯಲ್ಲ ಎಂದು ಪವನ್ ಸ್ಪಷ್ಟಪಡಿಸಿದ್ದಾರೆ. ಆಂಧ್ರ ಮತ್ತು ತಮಿಳುನಾಡು ರಾಜಕೀಯ ಸ್ವಭಾವ ವಿಭಿನ್ನವಾಗಿರುವುದರಿಂದ ಹೋಲಿಕೆ ಅರ್ಥಹೀನ ಎಂದು ಹೇಳಿದ್ದಾರೆ.

ಅವರ ಈ ಹೇಳಿಕೆ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಗೆ ಕಾರಣವಾಗಿದ್ದು, ಅಭಿಮಾನಿಗಳು ವಿಭಿನ್ನ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ.

ರಾಜ್ಯದ ಶಂಕಿತ ಎಬೋಲಾ ಪ್ರಕರಣ ನೆಗೆಟಿವ್: ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟನೆ

ಬೆಂಗಳೂರು: ರಾಜ್ಯದಲ್ಲಿ ಆತಂಕಕ್ಕೆ ಕಾರಣವಾಗಿದ್ದ ಶಂಕಿತ ಎಬೋಲಾ ವೈರಸ್ ಪ್ರಕರಣದ ಲ್ಯಾಬ್ ಪರೀಕ್ಷಾ ವರದಿ ನೆಗೆಟಿವ್ ಬಂದಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ಉಗಾಂಡದಿಂದ ಬೆಂಗಳೂರಿಗೆ ಬಂದಿದ್ದ ಮಹಿಳೆಯೊಬ್ಬರಲ್ಲಿ ಎಬೋಲಾ ವೈರಸ್‌ಗೆ ಸಂಬಂಧಿಸಿದ ಕೆಲವು ರೋಗಲಕ್ಷಣಗಳು ಕಂಡುಬಂದ ಹಿನ್ನೆಲೆ ಆರೋಗ್ಯ ಇಲಾಖೆ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿತ್ತು.

ಮಹಿಳೆಯನ್ನು ಬೆಂಗಳೂರಿನ ರಾಜೀವ್ ಗಾಂಧಿ ಆಸ್ಪತ್ರೆಗೆ ದಾಖಲಿಸಿ ಕ್ವಾರಂಟೈನ್‌ನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಜೊತೆಗೆ ಅವರ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯ ಪರೀಕ್ಷೆಗೆ ಕಳುಹಿಸಲಾಗಿತ್ತು.

ಇದೀಗ ಲ್ಯಾಬ್ ವರದಿ ನೆಗೆಟಿವ್ ಬಂದಿದ್ದು, ಮಹಿಳೆಗೆ ಎಬೋಲಾ ಸೋಂಕು ತಗುಲಿಲ್ಲ ಎಂಬುದನ್ನು ಆರೋಗ್ಯ ಇಲಾಖೆಯ ತಜ್ಞ ವೈದ್ಯರು ಖಚಿತಪಡಿಸಿದ್ದಾರೆ ಎಂದು ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ಈ ಬೆಳವಣಿಗೆಯಿಂದ ರಾಜ್ಯದ ಜನರಲ್ಲಿ ಮೂಡಿದ್ದ ಆತಂಕ ಕಡಿಮೆಯಾಗಿದ್ದು, ಆರೋಗ್ಯ ಇಲಾಖೆ ಪರಿಸ್ಥಿತಿಯನ್ನು ನಿಕಟವಾಗಿ ಗಮನಿಸುತ್ತಿದೆ.

ಪದ್ಮನಾಭಸ್ವಾಮಿ ದೇವಸ್ಥಾನದಲ್ಲಿ ಭದ್ರತಾ ಲೋಪ; 78 ಗ್ರಾಂ ಚಿನ್ನ ಮತ್ತು ಅಮೂಲ್ಯ ವಜ್ರಾಭರಣ ನಾಪತ್ತೆ

ತಿರುವನಂತಪುರಂ: ಕೇರಳದ ಪ್ರಸಿದ್ಧ ಶ್ರೀ ಪದ್ಮನಾಭಸ್ವಾಮಿ ದೇವಸ್ಥಾನದಲ್ಲಿ ಅಮೂಲ್ಯ ಚಿನ್ನಾಭರಣ ಹಾಗೂ ವಜ್ರಾಭರಣ ನಾಪತ್ತೆಯಾಗಿರುವ ಘಟನೆ ಭಕ್ತರಲ್ಲಿ ಆತಂಕ ಮೂಡಿಸಿದೆ. ದೇವಸ್ಥಾನದ ಖಜಾನೆ ಭದ್ರತೆ ಹಾಗೂ ನಿರ್ವಹಣೆ ಕುರಿತಾಗಿ ಇದೀಗ ಗಂಭೀರ ಪ್ರಶ್ನೆಗಳು ಕೇಳಿಬರುತ್ತಿವೆ.

ಪೊಲೀಸ್ ಮಹಾನಿರ್ದೇಶಕರು ಗೃಹ ಕಾರ್ಯದರ್ಶಿಗೆ ಸಲ್ಲಿಸಿರುವ ವರದಿ ಪ್ರಕಾರ, ದೇವಸ್ಥಾನದ ಸಂಗ್ರಹದಲ್ಲಿದ್ದ ಸುಮಾರು 78 ಗ್ರಾಂ ಚಿನ್ನಾಭರಣಗಳು ಹಾಗೂ ‘ವೈರಂ ನಾಮ’ ಎಂದು ಕರೆಯಲಾಗುವ ಅಮೂಲ್ಯ ವಜ್ರಾಭರಣ ಪತ್ತೆಯಾಗಿಲ್ಲ ಎಂದು ತಿಳಿದುಬಂದಿದೆ. ಜೊತೆಗೆ ದೇವಸ್ಥಾನದ ಪ್ರಸ್ತುತ ಭದ್ರತಾ ವ್ಯವಸ್ಥೆಯ ಮೇಲೂ ವರದಿಯಲ್ಲಿ ಆತಂಕ ವ್ಯಕ್ತಪಡಿಸಲಾಗಿದೆ.

ದೇವಸ್ಥಾನದ ದಾಖಲೆಗಳ ಪ್ರಕಾರ, ‘ವೈರಂ ನಾಮ’ ವಜ್ರಾಭರಣವನ್ನು ಕೆಲವು ತಿಂಗಳುಗಳ ಹಿಂದೆ ದುರಸ್ತಿಗಾಗಿ ಹೊರಗೆ ತೆಗೆದುಕೊಂಡು ಹೋಗಲಾಗಿತ್ತು. ಆದರೆ ಇದುವರೆಗೆ ಅದನ್ನು ದೇವಸ್ಥಾನಕ್ಕೆ ಮರಳಿ ತಂದು ಒಪ್ಪಿಸಿಲ್ಲ ಎಂದು ತಿಳಿದುಬಂದಿದೆ. ಇದೇ ರೀತಿ, ಆರು ತಿಂಗಳ ಹಿಂದೆ ದುರಸ್ತಿಗೆ ಕಳುಹಿಸಿದ್ದ ಚಿನ್ನದ ದೀಪವೂ ನಾಪತ್ತೆಯಾಗಿರುವ ಮಾಹಿತಿ ಬಹಿರಂಗವಾಗಿದೆ.

ಶತಮಾನಗಳ ಇತಿಹಾಸ ಹೊಂದಿರುವ ಈ ದೇವಸ್ಥಾನದ ಅಮೂಲ್ಯ ವಸ್ತುಗಳು ಕಾಣೆಯಾಗಿರುವುದು ಭಕ್ತರು ಹಾಗೂ ಆಡಳಿತ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ದೇವಸ್ಥಾನದ ಖಜಾನೆ ನಿರ್ವಹಣೆ, ಮೇಲ್ವಿಚಾರಣೆ ಹಾಗೂ ಭದ್ರತಾ ಕ್ರಮಗಳ ಬಗ್ಗೆ ಈಗ ಪ್ರಶ್ನೆಗಳು ಎದ್ದಿವೆ.

ಈ ಹಿನ್ನೆಲೆಯಲ್ಲಿ ದೇವಸ್ಥಾನದ ಭದ್ರತೆಯನ್ನು ಮತ್ತಷ್ಟು ಬಲಪಡಿಸಲು ಪೊಲೀಸ್ ಮಹಾನಿರ್ದೇಶಕರು ಹಲವು ಶಿಫಾರಸುಗಳನ್ನು ಮಾಡಿದ್ದಾರೆ. ದೇವಸ್ಥಾನದಲ್ಲಿರುವ ಚಿನ್ನ ಹಾಗೂ ಬೆಳ್ಳಿ ವಸ್ತುಗಳನ್ನು ಸುರಕ್ಷಿತ ಭೂಗತ ಕೊಠಡಿಗಳಿಗೆ ಸ್ಥಳಾಂತರಿಸುವುದು, ಭಕ್ತರ ಕಾಣಿಕೆಗಳನ್ನು ವಿಶೇಷ ಲಾಕರ್‌ಗಳಲ್ಲಿ ಸಂಗ್ರಹಿಸುವುದು ಹಾಗೂ ದೇವಸ್ಥಾನದ ಎಲ್ಲಾ ಪ್ರವೇಶ ದ್ವಾರಗಳಲ್ಲಿ ಕಡ್ಡಾಯ ಭದ್ರತಾ ತಪಾಸಣೆ ನಡೆಸುವಂತೆ ಸಲಹೆ ನೀಡಲಾಗಿದೆ.

error: Content is protected !!