Home Blog

ಮೂರು ದಿನಗಳ ಆಪರೇಷನ್‌ ಸಕ್ಸಸ್‌: ನರಹಂತಕ ಕಾಡಾನೆ ಸೆರೆ

0

ಹಾಸನ: ಕಾನಳ್ಳಿ ಅರಣ್ಯ ಪ್ರದೇಶದಲ್ಲಿ ಭೀತಿಯ ವಾತಾವರಣ ಸೃಷ್ಟಿಸಿದ್ದ ದೈತ್ಯಾಕಾರದ ನರಹಂತಕ ಕಾಡಾನೆ ಕೊನೆಗೂ ಅರಣ್ಯ ಇಲಾಖೆಯ ಬಲೆಗೆ ಬಿದ್ದಿದೆ.

ಮೂರು ದಿನಗಳಿಂದ ಮುಂದುವರಿದಿದ್ದ ಕಾರ್ಯಾಚರಣೆಯಲ್ಲಿ ಇಟಿಎಫ್ ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಕಾಡಾನೆಯ ಹಾದಿಯನ್ನು ಪತ್ತೆಹಚ್ಚಿ, ಮುಂಜಾನೆಲೇ ಆಪರೇಷನ್ ಆರಂಭಿಸಿದರು. ಕಾಡಾನೆ ಜೊತೆ ಮತ್ತೊಂದು ‘ಕ್ಯಾಪ್ಟನ್’ ಆನೆ ಇರುವುದರಿಂದ ಪರಿಸ್ಥಿತಿ ಮತ್ತಷ್ಟು ಸಂಕೀರ್ಣವಾಗಿತ್ತು.

ಕುಮ್ಕಿ ಆನೆಗಳ ನೆರವಿನಿಂದ ಕಾಡಾನೆಗೆ ಅರವಳಿಕೆ ಚುಚ್ಚುಮದ್ದು ನೀಡಿದ ಬಳಿಕ, ಅದು ಓಡಲು ಯತ್ನಿಸಿತು. ಆದರೆ ಕಾರ್ಯಾಚರಣೆ ತಂಡ ಅದನ್ನು ಬೆನ್ನಟ್ಟಿ, ಎರಡೂ ಆನೆಗಳನ್ನು ಬೇರ್ಪಡಿಸಿತು.

ಸ್ವಲ್ಪ ದೂರ ಓಡಿದ ಬಳಿಕ ಕಾಡಾನೆ ಪ್ರಜ್ಞೆ ತಪ್ಪಿ ಬಿದ್ದಿದ್ದು, ಕುಮ್ಕಿ ಆನೆಗಳು ಅದನ್ನು ಸುತ್ತುವರಿದು ಸಂಪೂರ್ಣ ನಿಯಂತ್ರಣಕ್ಕೆ ತಂದವು. ಬಳಿಕ ನೀರು ಹಾಕಿ ಆರೈಕೆ ಮಾಡಿ ಹಗ್ಗದಲ್ಲಿ ಕಟ್ಟಲಾಗಿದೆ.

ಈ ಯಶಸ್ವಿ ಕಾರ್ಯಾಚರಣೆ ಬಳಿಕ ಸ್ಥಳೀಯರಲ್ಲಿ ಇದ್ದ ಭೀತಿ ದೂರವಾಗಿದ್ದು, ಜನರು ನಿಟ್ಟುಸಿರು ಬಿಟ್ಟಿದ್ದಾರೆ. ಈಗ ಕಾಡಾನೆಯನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸುವ ಪ್ರಕ್ರಿಯೆ ಮುಂದುವರಿದಿದೆ.

ಸಾಮಾನ್ಯ ಜನರು ಹೇಗೆ ಬದುಕುತ್ತಾರೆ?: ವಿದ್ಯುತ್ ದರ ಏರಿಕೆ ವಿರುದ್ಧ ಯಡಿಯೂರಪ್ಪ ಆಕ್ರೋಶ

ಚಿಕ್ಕಮಗಳೂರು: ರಾಜ್ಯ ಸರ್ಕಾರ ವಿದ್ಯುತ್ ದರವನ್ನು ಅತಿಯಾದ ಮಟ್ಟಿಗೆ ಹೆಚ್ಚಿಸಿರುವುದು ಸರಿಯಾದ ನಿರ್ಧಾರವಲ್ಲ ಎಂದು ಮಾಜಿ ಮುಖ್ಯಮಂತ್ರಿ B. S. ಯಡಿಯೂರಪ್ಪ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಚಿಕ್ಕಮಗಳೂರಿನಲ್ಲಿ ವೀರಶೈವ-ಲಿಂಗಾಯತ ಸಮುದಾಯ ಭವನ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವರು, ಮಾಧ್ಯಮಗಳೊಂದಿಗೆ ಮಾತನಾಡಿ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ವಿದ್ಯುತ್ ದರ ಏರಿಕೆಯು ಸಾಮಾನ್ಯ ಜನರ ಜೀವನವನ್ನು ಸಂಕಷ್ಟಕ್ಕೆ ತಳ್ಳುತ್ತದೆ. ಹೀಗೆ ದರ ಏರಿಸಿದರೆ ಜನರು ಹೇಗೆ ಬದುಕುತ್ತಾರೆ ಎಂದು ಪ್ರಶ್ನಿಸಿದರು.

ಸರ್ಕಾರ ಸರಿಯಾದ ಆಡಳಿತ ನೀಡಲು ವಿಫಲವಾಗಿದೆ. ಅದರಿಂದಲೇ ಇಂತಹ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಟೀಕಿಸಿದ ಅವರು, ಕೂಡಲೇ ವಿದ್ಯುತ್ ದರ ಏರಿಕೆ ನಿರ್ಧಾರವನ್ನು ಹಿಂತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು. ಜನರು ನೆಮ್ಮದಿಯಿಂದ ಬದುಕಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದರು.

ಮಕ್ಕಳ ದೂರುಗಳಿಂದ ಸಂಕಷ್ಟದಲ್ಲಿ ವಚನಾನಂದ ಶ್ರೀ – ಪೋಕ್ಸೋ ಕೇಸ್ ಭೀತಿ

ದಾವಣಗೆರೆ: ಹನಗವಾಡಿಯಲ್ಲಿರುವ ಪಂಚಮಸಾಲಿ ಗುರುಪೀಠ ಈಗ ರಾಜ್ಯದ ಗಮನ ಸೆಳೆದಿದೆ. ಮಠದೊಳಗಿನ ಬೆಳವಣಿಗೆಗಳು ಗಂಭೀರ ತಿರುವು ಪಡೆದಿದ್ದು, ವಚನಾನಂದ ಶ್ರೀ ವಿರುದ್ಧ ಗಂಭೀರ ಆರೋಪಗಳು ಕೇಳಿಬಂದಿವೆ.

ಮಠದಲ್ಲಿ ವಾಸಿಸುತ್ತಿದ್ದ ಮಕ್ಕಳು, ಸ್ವಾಮೀಜಿ ತಮ್ಮ ಮೇಲೆ ಹಲ್ಲೆ ನಡೆಸುತ್ತಿದ್ದರು, ಬೈಯುತ್ತಿದ್ದರು ಮತ್ತು ಅನಾರೋಗ್ಯದಲ್ಲಿದ್ದಾಗ ಸಹಾಯ ಮಾಡುತ್ತಿರಲಿಲ್ಲ ಎಂದು ದೂರು ನೀಡಿದ್ದಾರೆ ಎನ್ನಲಾಗಿದೆ. ಇನ್ನೂ ಕೆಲವರು ಸ್ವಾಮೀಜಿ ತಮ್ಮಿಂದ ಮಸಾಜ್ ಮಾಡಿಸಿಕೊಳ್ಳುತ್ತಿದ್ದರು ಎಂಬ ಆರೋಪ ಕೂಡ ಕೇಳಿಬರುತ್ತಿದೆ.

ಈ ಬೆಳವಣಿಗೆ ಹಿನ್ನೆಲೆಯಲ್ಲಿ ಮಕ್ಕಳ ಕಲ್ಯಾಣ ಸಮಿತಿ ಮಠಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಧಿಕಾರಿಗಳು ಸ್ವಾಮೀಜಿಯನ್ನು ವಿಚಾರಣೆಗೂ ಒಳಪಡಿಸಿದ್ದಾರೆ. ಇದೀಗ ಮಕ್ಕಳ ಕೌನ್ಸೆಲಿಂಗ್ ನಡೆಯಲಿದ್ದು, ಅವರ ಹೇಳಿಕೆಗಳು ಪ್ರಕರಣದ ಮುಂದಿನ ದಿಕ್ಕು ನಿರ್ಧರಿಸಲಿದೆ.

ಒಂದು ವೇಳೆ ಮಕ್ಕಳಿಂದ ಗಂಭೀರ ಹೇಳಿಕೆಗಳು ದಾಖಲಾಗಿದ್ರೆ, ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗುವ ಸಾಧ್ಯತೆ ಇದೆ. ಇದರಿಂದ ಮಠದ ವಿವಾದ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ.

ಇನ್ನೊಂದೆಡೆ, ಮಠದ ಆಡಳಿತ ಮಂಡಳಿ ಆರೋಪಗಳನ್ನು ತಳ್ಳಿಹಾಕಿ, ಇದು ಸಂಚು ಎಂದು ಹೇಳುತ್ತಿದೆ. ವಚನಾನಂದ ಶ್ರೀ ಕೂಡ ಸಮಯವೇ ಸತ್ಯ ಹೊರತರುತ್ತದೆ ಎಂದು ಪ್ರತಿಕ್ರಿಯಿಸಿದ್ದಾರೆ.

UPI ಪಾವತಿಯಲ್ಲಿ ಹೊಸ ನಿಯಮ: ₹10,000 ವರ್ಗಾವಣೆಗೆ 1 ಗಂಟೆ ವಿಳಂಬ!

0

ನವದೆಹಲಿ: ಡಿಜಿಟಲ್ ಪಾವತಿಗಳಲ್ಲಿ ನಡೆಯುತ್ತಿರುವ ಅಕ್ರಮಗಳನ್ನು ತಡೆಯಲು, ಯುಪಿಐ (UPI) ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ತರಲು ಭಾರತೀಯ ರಿಸರ್ವ್ ಬ್ಯಾಂಕ್ (RBI) ಮುಂದಾಗಿದೆ.

ಹೊಸ ಪ್ರಸ್ತಾವನೆಯ ಪ್ರಕಾರ, ಇನ್ನು ಮುಂದೆ ₹10,000 ಕ್ಕಿಂತ ಹೆಚ್ಚಿನ ಮೊತ್ತವನ್ನು ಯುಪಿಐ ಮೂಲಕ ಪಾವತಿಸಿದಾಗ, ಆ ಹಣ ತಕ್ಷಣವೇ ಕಡಿತವಾಗುವುದಿಲ್ಲ. ಬದಲಾಗಿ, ಬ್ಯಾಂಕ್ ಆ ಮೊತ್ತವನ್ನು ಸುಮಾರು ಒಂದು ಗಂಟೆ ಕಾಲ ಹಿಡಿದಿಟ್ಟುಕೊಂಡು, ನಂತರ ಮಾತ್ರ ಗುರಿ ಖಾತೆಗೆ ಜಮಾ ಮಾಡಲಿದೆ.

ಈ ಕ್ರಮದ ಮೂಲಕ, ತಪ್ಪಾಗಿ ಅಥವಾ ಅಜ್ಞಾತವಾಗಿ ಹಣ ವರ್ಗಾವಣೆ ನಡೆದಿದ್ದರೆ, ಗ್ರಾಹಕರಿಗೆ ಒಂದು ಗಂಟೆಯ ಅವಧಿಯಲ್ಲಿ ಆ ಟ್ರಾನ್ಸಾಕ್ಷನ್ ಅನ್ನು ರದ್ದುಪಡಿಸುವ ಅವಕಾಶ ದೊರೆಯಲಿದೆ.

ಇತ್ತೀಚಿನ ಅಂಕಿಅಂಶಗಳ ಪ್ರಕಾರ, ಕಳೆದ ವರ್ಷ ಭಾರತದಲ್ಲಿ ₹22,931 ಕೋಟಿ ಮೌಲ್ಯದ ಡಿಜಿಟಲ್ ವಂಚನೆ ಪ್ರಕರಣಗಳು ದಾಖಲಾಗಿವೆ. ವಿಶೇಷವಾಗಿ ₹10,000 ಕ್ಕಿಂತ ಹೆಚ್ಚಿನ ಹಣ ವರ್ಗಾವಣೆಗಳಲ್ಲಿ ಹೆಚ್ಚು ವಂಚನೆ ಮತ್ತು ತಪ್ಪು ಪಾವತಿಗಳ ವರದಿ ಕಂಡುಬಂದ ಹಿನ್ನೆಲೆಯಲ್ಲಿ, ಆರ್‌ಬಿಐ ಈ ಕ್ರಮವನ್ನು ಪರಿಗಣಿಸಿದೆ.

ಆದರೆ, ಈ ಹೊಸ ನಿಯಮವು ದೈನಂದಿನ ಪಾವತಿಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಅಂಗಡಿಗಳ ಖರೀದಿ ಪಾವತಿಗಳು, EMI, ಮ್ಯೂಚುವಲ್ ಫಂಡ್ SIP, LIC ಪ್ರೀಮಿಯಂ ಹಾಗೂ ವಿವಿಧ ಸಬ್‌ಸ್ಕ್ರಿಪ್ಶನ್ ಪಾವತಿಗಳು ಹಳೆಯದಂತೆಯೇ ಮುಂದುವರಿಯಲಿವೆ.

ಇದಲ್ಲದೆ, ಬಳಕೆದಾರರು ವಿಶ್ವಾಸಾರ್ಹ ವ್ಯಕ್ತಿಗಳ ಪಟ್ಟಿಯನ್ನು (trusted list) ಸೃಷ್ಟಿಸುವ ಮೂಲಕ, ಅವರಿಗೆ ಹಣ ವರ್ಗಾವಣೆ ಮಾಡುವಾಗ ಯಾವುದೇ ವಿಳಂಬವಾಗದಂತೆ ವ್ಯವಸ್ಥೆ ಮಾಡಿಕೊಳ್ಳಬಹುದಾಗಿದೆ. ಈ ನಿಯಮವು ಮುಖ್ಯವಾಗಿ ಹೊಸ ಅಥವಾ ಅನುಮಾನಾಸ್ಪದ ಟ್ರಾನ್ಸಾಕ್ಷನ್‌ಗಳಿಗೆ ಮಾತ್ರ ಅನ್ವಯವಾಗಲಿದೆ.

16 ಕೋಟಿ ವಂಚನೆ ಆರೋಪಿ ಪೊಲೀಸ್ ಠಾಣೆಯಿಂದಲೇ ಎಸ್ಕೇಪ್! ಸಿನಿಮಾವನ್ನೇ ಮೀರಿಸಿದ ಬಳ್ಳಾರಿ ಡ್ರಾಮಾ

ಬಳ್ಳಾರಿ: ದೊಡ್ಡ ಮಟ್ಟದ ಹಣಕಾಸು ವಂಚನೆ ಪ್ರಕರಣದಲ್ಲಿ ಬಂಧನಕ್ಕೊಳಗಾದ ಆರೋಪಿ, ಪೊಲೀಸ್ ಕಸ್ಟಡಿಯಲ್ಲಿದ್ದಾಗಲೇ ತಪ್ಪಿಸಿಕೊಂಡು ಮತ್ತೆ 24 ಗಂಟೆಗಳೊಳಗೆ ಸಿಕ್ಕಿಬಿದ್ದ ಘಟನೆ ಜಿಲ್ಲೆಯಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಸಂತೋಷ್ ಎಂಬ ಆರೋಪಿ, ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಕಸ್ಟಡಿಯಲ್ಲಿದ್ದಾಗಲೇ ಪರಾರಿಯಾಗಿದ್ದು, ಪೊಲೀಸರು ತಡರಾತ್ರಿ ನಡೆಸಿದ ಕಾರ್ಯಾಚರಣೆಯಲ್ಲಿ ಮತ್ತೆ ಬಂಧಿಸಿದ್ದಾರೆ. ಈ ಘಟನೆ ಪೊಲೀಸ್ ಭದ್ರತೆ ಕುರಿತು ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದೆ.

ಸಂತೋಷ್ ವಿರುದ್ಧ 16.17 ಕೋಟಿ ರೂಪಾಯಿ ಅಕ್ರಮ ವರ್ಗಾವಣೆ ಆರೋಪವಿದ್ದು, ಆತ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಕಚೇರಿಯಲ್ಲಿ ಗುತ್ತಿಗೆ ನೌಕರನಾಗಿ ಕೆಲಸ ಮಾಡುತ್ತಿದ್ದ. ಅಧಿಕಾರಿಗಳ ನಕಲಿ ಸಹಿಗಳನ್ನು ಬಳಸಿ ಚೆಕ್‌ಗಳ ಮೂಲಕ ಹಣವನ್ನು ವಿವಿಧ ಖಾತೆಗಳಿಗೆ ವರ್ಗಾಯಿಸಿರುವುದು ತನಿಖೆಯಲ್ಲಿ ಬಹಿರಂಗವಾಗಿದೆ.

ಇದು ಒಬ್ಬನೇ ನಡೆಸಿದ ಕೃತ್ಯವಲ್ಲ ಎಂಬ ಶಂಕೆ ಇದೆ. ಖಾಸಗಿ ಬ್ಯಾಂಕ್ ಮ್ಯಾನೇಜರ್ ಸೇರಿದಂತೆ ಒಟ್ಟು ಏಳು ಮಂದಿ ಈ ವಂಚನೆ ಜಾಲದಲ್ಲಿ ಭಾಗಿಯಾಗಿರಬಹುದು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.

2022ರಿಂದಲೇ ಹಂತ ಹಂತವಾಗಿ ಹಣ ದುರ್ಬಳಕೆ ನಡೆದಿದ್ದು, 2026 ಮಾರ್ಚ್ 3ರಂದು ಪ್ರಕರಣ ಬೆಳಕಿಗೆ ಬಂದಿದೆ. ಬಂಧನದ ಬಳಿಕ ಸಿಐಡಿಗೆ ಒಪ್ಪಿಸುವ ಮುನ್ನವೇ ಆರೋಪಿ ಠಾಣೆಯಿಂದ ತಪ್ಪಿಸಿಕೊಂಡಿರುವುದು ಪ್ರಕರಣವನ್ನು ಇನ್ನಷ್ಟು ಗಂಭೀರಗೊಳಿಸಿದೆ.

ಟ್ರೇಡಿಂಗ್ ಹೆಸರಲ್ಲಿ ಕೋಟಿ ರೂ. ದೋಖಾ ಆರೋಪ: ಕ್ರಿಸ್ಟಲ್ ಎಐ ಎಂ.ಡಿ ವಶಕ್ಕೆ!

0

ಬೆಂಗಳೂರು: ನಗರದಲ್ಲಿ ಟ್ರೇಡಿಂಗ್ ಕಂಪನಿ ಹೆಸರಿನಲ್ಲಿ ಭಾರೀ ವಂಚನೆ ನಡೆದಿರುವುದು ಬೆಳಕಿಗೆ ಬಂದಿದೆ. ಕ್ರಿಸ್ಟಲ್ ಎಐ ಸಂಸ್ಥೆಯ ಮೂಲಕ ನೂರಾರು ಹೂಡಿಕೆದಾರರಿಂದ ಕೋಟ್ಯಾಂತರ ರೂಪಾಯಿ ಸಂಗ್ರಹಿಸಿ ಮೋಸ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ರಾಜೇಶ್ ಕಾಮತ್ ಅವರನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

ರೋಬೋಟ್ ಟ್ರೇಡಿಂಗ್ ಪ್ಲಾಟ್‌ಫಾರ್ಮ್ ಮೂಲಕ ಹೂಡಿಕೆ ಮಾಡಿದ ಹಣವನ್ನು ದ್ವಿಗುಣಗೊಳಿಸಲಾಗುತ್ತದೆ ಎಂದು ನಂಬಿಸಿ ಜನರನ್ನು ಮೋಸಗೊಳಿಸಿರುವುದು ಪ್ರಾಥಮಿಕ ತನಿಖೆಯಲ್ಲಿ ಬಹಿರಂಗವಾಗಿದೆ.

ಕಮಿಷನರ್ ಕಚೇರಿಯಲ್ಲಿ ಸಿಸಿಬಿ ಪೊಲೀಸರಿಂದ ವಿಚಾರಣೆ ಮುಂದುವರಿದಿದ್ದು, ಪ್ರಾಥಮಿಕ ಅಂದಾಜು ಪ್ರಕಾರ 5ರಿಂದ 6 ಕೋಟಿಗೂ ಅಧಿಕ ವಂಚನೆ ನಡೆದಿರುವ ಸಾಧ್ಯತೆ ಇದೆ. ಆದರೆ ನಿಜವಾದ ವಂಚನೆ ಮೊತ್ತ ನೂರಾರು ಕೋಟಿಗಳಿಗೆ ತಲುಪಿರಬಹುದೆಂಬ ಶಂಕೆಯನ್ನೂ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ಬೆಂಗಳೂರು ನಗರ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಇದಲ್ಲದೆ, ಆರೋಪಿಗಳು ದುಬೈನಲ್ಲಿ ಕಚೇರಿ ತೆರೆಯುವ ಮೂಲಕ ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ವಂಚನೆ ಜಾಲ ವಿಸ್ತರಿಸಿರುವ ಮಾಹಿತಿ ಲಭ್ಯವಾಗಿದೆ. ರಾಜೇಶ್ ಕಾಮತ್ ಸೇರಿದಂತೆ ಮೂವರು ಆರೋಪಿಗಳು ಸಂಘಟಿತ ಸಂಚು ರೂಪಿಸಿ ಹೂಡಿಕೆದಾರರನ್ನು ಮೋಸಗೊಳಿಸಿರುವುದಾಗಿ ಪೊಲೀಸರು ಶಂಕಿಸಿದ್ದಾರೆ.

ಜಿಬಿಎ ಚುನಾವಣೆ ಅವಧಿಯನ್ನು ಮುಂದೂಡುವಂತೆ ಆಯೋಗಕ್ಕೆ ಸರ್ಕಾರ ಪತ್ರ!

ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರದೇಶದ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಜೂನ್ 30ರೊಳಗೆ ನಡೆಸುವಂತೆ ಸುಪ್ರೀಂಕೋರ್ಟ್ ಈಗಾಗಲೇ ಆದೇಶಿಸಿದ್ದರೂ, ಇದೀಗ ರಾಜ್ಯ ಸರ್ಕಾರ ಚುನಾವಣೆಯನ್ನು ಮುಂದೂಡಲು ಮನವಿ ಮಾಡಿದೆ.

ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಈ ಕುರಿತು ರಾಜ್ಯ ಚುನಾವಣಾ ಆಯೋಗಕ್ಕೆ ಪತ್ರ ಬರೆದು, ಜನಗಣತಿ ಕಾರ್ಯವನ್ನು ಕಾರಣವಾಗಿ ಉಲ್ಲೇಖಿಸಿದೆ. ಜನಗಣತಿ ಕಾರ್ಯದಲ್ಲಿ ಆಡಳಿತ ಯಂತ್ರ ಸಂಪೂರ್ಣವಾಗಿ ತೊಡಗಿಸಿಕೊಂಡಿರುವುದರಿಂದ ಚುನಾವಣೆಗೆ ಅಗತ್ಯ ಸಿದ್ಧತೆ ಮಾಡಲು ಸಮಯದ ಅಭಾವ ಇದೆ ಎಂದು ಸರ್ಕಾರ ತಿಳಿಸಿದೆ.

ಜನಗಣತಿ ಪ್ರಕ್ರಿಯೆಯ ಭಾಗವಾಗಿ ತರಬೇತಿ, ಮೇಲ್ವಿಚಾರಣೆ ಹಾಗೂ ಲಾಜಿಸ್ಟಿಕ್ಸ್ ಕಾರ್ಯಗಳಿಗೆ ದೊಡ್ಡ ಪ್ರಮಾಣದ ಸಿಬ್ಬಂದಿ ಅಗತ್ಯವಿದೆ. ಇದೇ ಸಮಯದಲ್ಲಿ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (SIR) ಕೂಡ ನಡೆಯಬೇಕಿದ್ದು, ಇದಕ್ಕೂ ಅದೇ ಸಿಬ್ಬಂದಿಯನ್ನು ಬಳಸಬೇಕಾಗುತ್ತದೆ. ಜೊತೆಗೆ ಮೇ-ಜೂನ್ ಅವಧಿಯಲ್ಲಿ ಶೈಕ್ಷಣಿಕ ಪರೀಕ್ಷಾ ಕರ್ತವ್ಯಗಳಿಗೂ ಸಿಬ್ಬಂದಿ ನಿಯೋಜನೆ ಇರುವುದರಿಂದ ಮಾನವ ಸಂಪನ್ಮೂಲ ಕೊರತೆ ಉಂಟಾಗುವ ಸಾಧ್ಯತೆ ಇದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ಈ ಎಲ್ಲಾ ಕಾರಣಗಳನ್ನು ಮುಂದಿಟ್ಟು, ಚುನಾವಣಾ ಸಿದ್ಧತೆಗಳನ್ನು ಸಮರ್ಪಕವಾಗಿ ನಡೆಸಲು ಹೆಚ್ಚುವರಿ ಕಾಲಾವಕಾಶ ಅಗತ್ಯವಿದ್ದು, ಚುನಾವಣೆಯನ್ನು ಸೆಪ್ಟೆಂಬರ್ 30, 2026ರವರೆಗೆ ಮುಂದೂಡಲು ಅನುಮತಿ ನೀಡುವಂತೆ ಸರ್ಕಾರ ಮನವಿ ಮಾಡಿದೆ.

ಇದಕ್ಕೂ ಮೊದಲು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಜೋಯ್ಮಲ್ಯ ಬಾಗ್ಚಿ ಅವರ ಪೀಠ, ಜಿಬಿಎ ವ್ಯಾಪ್ತಿಯ ಐದು ನಗರ ಪಾಲಿಕೆಗಳ ಚುನಾವಣೆಯನ್ನು ಜೂನ್ 30ರೊಳಗೆ ಪೂರ್ಣಗೊಳಿಸುವಂತೆ ಗಡುವು ವಿಧಿಸಿತ್ತು.

ಗಮನಾರ್ಹವಾಗಿ, ಹಿಂದಿನ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ 2015ರ ಆಗಸ್ಟ್‌ನಲ್ಲಿ ನಡೆದಿದ್ದು, ಅದರ ಅವಧಿ 2020ರ ಸೆಪ್ಟೆಂಬರ್‌ನಲ್ಲಿ ಅಂತ್ಯಗೊಂಡಿದೆ. ಅದಾದ ಬಳಿಕ ಇಂದಿನವರೆಗೆ ಚುನಾವಣೆ ನಡೆದಿಲ್ಲ. ಇದೀಗ ಮತ್ತೊಮ್ಮೆ ಮುಂದೂಡಿಕೆ ಮನವಿ ಮಾಡಿರುವ ಹಿನ್ನೆಲೆಯಲ್ಲಿ, ರಾಜ್ಯ ಚುನಾವಣಾ ಆಯೋಗ ಏನು ನಿರ್ಧಾರ ಕೈಗೊಳ್ಳುತ್ತದೆ ಎಂಬುದನ್ನು ಕಾದುನೋಡಬೇಕಾಗಿದೆ.

IPL 2026: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಗ್ರೀನ್‌ ಜೆರ್ಸಿ ಹವಾ: ಡೆಲ್ಲಿ ವಿರುದ್ಧ ಗೆಲುವಿಗೆ RCB ಭರ್ಜರಿ ಸಿದ್ಧತೆ!

0

ಬೆಂಗಳೂರು: ಪ್ರತಿ ಐಪಿಎಲ್ ಸೀಸನ್‌ನಲ್ಲಿ ಒಂದು ಪಂದ್ಯವನ್ನು ಹಸಿರು ಜೆರ್ಸಿಯಲ್ಲಿ ಆಡುವ ಪರಂಪರೆಯನ್ನು ಮುಂದುವರಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಇಂದು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆಯಲಿರುವ ಪಂದ್ಯದಲ್ಲಿ ಗ್ರೀನ್ ಜೆರ್ಸಿಯಲ್ಲಿ ಕಣಕ್ಕಿಳಿಯಲಿದೆ.

ಪ್ರತಿ ಆವೃತ್ತಿಯಲ್ಲೂ ಹಸಿರು ಜೆರ್ಸಿ ಧರಿಸುವ ಮೂಲಕ ಆರ್ಸಿಬಿ ತಂಡ ಪರಿಸರ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸುತ್ತದೆ. ವಿಶೇಷವಾಗಿ, ಆಟಗಾರರು ಧರಿಸುವ ಈ ಜೆರ್ಸಿಗಳು ಮರುಬಳಕೆಯಾಗುವ ವಸ್ತುಗಳಿಂದ ತಯಾರಾಗಿರುವುದು ಗಮನಾರ್ಹ. ಪರಿಸರದ ಬಗ್ಗೆ ಕಾಳಜಿ ಮೂಡಿಸುವ ಉದ್ದೇಶದಿಂದ 2011ರಿಂದಲೇ ಆರ್ಸಿಬಿ ತಂಡ ಪ್ರತಿ ಸೀಸನ್‌ನ ಒಂದು ಪಂದ್ಯದಲ್ಲಿ ಹಸಿರು ಜೆರ್ಸಿ ಧರಿಸುವ ಪದ್ಧತಿಯನ್ನು ಅನುಸರಿಸುತ್ತಿದೆ.

ಈ ಕುರಿತು ಆರ್ಸಿಬಿ ತನ್ನ X ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ. “ಇದು ವಿಶೇಷ ದಿನ. ಆಟಗಾರರು ಹಸಿರು ಜೆರ್ಸಿಯಲ್ಲಿ ಕಾಣಿಸಿಕೊಳ್ಳುವ ಜೊತೆಗೆ, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಡುತ್ತಿರುವ ನಮ್ಮ 100ನೇ ಪಂದ್ಯವೂ ಇದಾಗಿದೆ. ಈ ಸಂಪ್ರದಾಯ ನಮಗೆ ಹೆಮ್ಮೆ ತಂದಿದೆ” ಎಂದು ತಂಡ ತಿಳಿಸಿದೆ.

ಈ ಸೀಸನ್‌ನಲ್ಲಿ ಆರ್ಸಿಬಿ ಈಗಾಗಲೇ 5 ಪಂದ್ಯಗಳನ್ನು ಆಡಿದ್ದು, ಅವುಗಳಲ್ಲಿ 4ರಲ್ಲಿ ಗೆಲುವು ಸಾಧಿಸಿದೆ. ಇದರೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಕಾಯ್ದಿರಿಸಿಕೊಂಡಿದೆ.

ರನ್‌ವೇ ಮೇಲೆ ನಿಂತ ಯುದ್ಧ ವಿಮಾನ: ಪುಣೆಯಲ್ಲಿ ವಿಮಾನ ಸಂಚಾರ ಸ್ಥಗಿತ

ಪುಣೆ: ಮಹಾರಾಷ್ಟ್ರದ ಪುಣೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾರತೀಯ ವಾಯುಪಡೆಯ ಯುದ್ಧ ವಿಮಾನ ತಾಂತ್ರಿಕ ದೋಷದಿಂದ ರನ್‌ವೇ ಮೇಲೆ ಸ್ಥಗಿತಗೊಂಡ ಪರಿಣಾಮ ದೇಶೀಯ ವಿಮಾನ ಸಂಚಾರದಲ್ಲಿ ಭಾರೀ ವ್ಯತ್ಯಯ ಉಂಟಾಯಿತು.

ಶುಕ್ರವಾರ ರಾತ್ರಿ ಸುಮಾರು 10:25ರ ವೇಳೆಗೆ ವಾಡಿಕೆಯ ತರಬೇತಿ ಹಾರಾಟ ಮುಗಿಸಿ ಭೂಸ್ಪರ್ಶಿಸುವಾಗ ಯುದ್ಧ ವಿಮಾನದ ಅಡಿಭಾಗದ ಚಕ್ರ ವ್ಯವಸ್ಥೆಯಲ್ಲಿ ತಾಂತ್ರಿಕ ವೈಫಲ್ಯ ಉಂಟಾಗಿ ವಿಮಾನ ರನ್‌ವೇ ಮೇಲೆಯೇ ನಿಂತುಬಿಟ್ಟಿತು. ಆದರೆ, ವಿಮಾನದಲ್ಲಿದ್ದ ಪೈಲಟ್‌ಗಳು ಸುರಕ್ಷಿತವಾಗಿದ್ದು ಯಾವುದೇ ಜೀವಹಾನಿ ಸಂಭವಿಸಿಲ್ಲ ಎಂದು ಭಾರತೀಯ ವಾಯುಪಡೆ ಸ್ಪಷ್ಟಪಡಿಸಿದೆ.

ಈ ಘಟನೆ ಹಿನ್ನೆಲೆ ಸುರಕ್ಷತಾ ಕ್ರಮವಾಗಿ ಎಲ್ಲಾ ನಾಗರಿಕ ವಿಮಾನ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು. ರನ್‌ವೇ ಕ್ಲಿಯರಿಂಗ್ ಕಾರ್ಯಾಚರಣೆ ಪೂರ್ಣಗೊಳ್ಳಲು ಹಲವು ಗಂಟೆಗಳು ಹಿಡಿದಿದ್ದು, ನಂತರ ಅಗತ್ಯ ತಾಂತ್ರಿಕ ಪರಿಶೀಲನೆಗಳ ಬಳಿಕ ಸೇವೆಗಳು ಪುನರಾರಂಭಗೊಂಡವು.

ಈ ವ್ಯತ್ಯಯದಿಂದ ಅನೇಕ ವಿಮಾನಗಳ ಆಗಮನ ಹಾಗೂ ನಿರ್ಗಮನಗಳು ರದ್ದುಪಡಿಸಲ್ಪಟ್ಟಿದ್ದು, ಪ್ರಯಾಣಿಕರು ಭಾರೀ ಸಂಕಷ್ಟಕ್ಕೆ ಸಿಲುಕಿದರು.

‘ಕ್ರಿಸ್ಟಲ್ ಎಐ’ ಟ್ರೇಡಿಂಗ್ ಸ್ಕ್ಯಾಂ: ಕೋಟಿ ಕೋಟಿ ವಂಚನೆ, ಎಂ.ಡಿ ರಾಜೇಶ್ ಕಾಮತ್ ಪೊಲೀಸರ ವಶಕ್ಕೆ

ಬೆಂಗಳೂರು: ನಗರದ ಹೂಡಿಕೆದಾರರನ್ನು ಗುರಿಯಾಗಿಸಿಕೊಂಡು “ಡಬಲ್ ಹಣ” ಆಮಿಷದಡಿ ಭಾರೀ ವಂಚನೆ ನಡೆದಿರುವುದು ಬಹಿರಂಗವಾಗಿದೆ. ಕ್ರಿಸ್ಟಲ್ ಎಐ ಎಂಬ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಂಸ್ಥೆ, ನೂರಾರು ಮಂದಿಯಿಂದ ಕೋಟ್ಯಾಂತರ ರೂಪಾಯಿ ಸಂಗ್ರಹಿಸಿ ಮೋಸ ಮಾಡಿರುವ ಆರೋಪ ಕೇಳಿಬಂದಿದೆ.

ಈ ಪ್ರಕರಣ ಸಂಬಂಧ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ರಾಜೇಶ್ ಕಾಮತ್ರ ಅವರನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ರೋಬೋಟ್ ಟ್ರೇಡಿಂಗ್ ಪ್ಲಾಟ್‌ಫಾರ್ಮ್ ಮೂಲಕ ಹೂಡಿಕೆ ಮಾಡಿದ ಹಣವನ್ನು ಕಡಿಮೆ ಅವಧಿಯಲ್ಲಿ ಡಬಲ್ ಮಾಡಿಕೊಡಲಾಗುತ್ತದೆ ಎಂದು ನಂಬಿಸಿ ಜನರನ್ನು ಸೆಳೆದಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಪ್ರಾಥಮಿಕ ತನಿಖೆಯ ಪ್ರಕಾರ 5ರಿಂದ 6 ಕೋಟಿ ರೂಪಾಯಿ ವಂಚನೆ ನಡೆದಿರುವುದು ತಿಳಿದುಬಂದಿದ್ದರೂ, ನಿಜವಾದ ಮೊತ್ತ ನೂರಾರು ಕೋಟಿಗಳಿಗೆ ತಲುಪಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಬೆಂಗಳೂರು ನಗರ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಚುರುಕುಗೊಂಡಿದೆ.

error: Content is protected !!