Home Blog

‘ಹೆಲ್ದಿ’ ಅಂತಾ ತಿನ್ನುವ ಆಹಾರದಲ್ಲೇ ಅಡಗಿದ ಸಕ್ಕರೆ, ಕೊಬ್ಬು..! ಬೆಚ್ಚಿಬೀಳಿಸುವ ಮಾಹಿತಿ

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ “ಹೆಲ್ದಿ”, “ಲೋ ಫ್ಯಾಟ್”, “ಶುಗರ್ ಫ್ರೀ” ಎಂಬ ಹೆಸರಿನ ಆಹಾರ ಉತ್ಪನ್ನಗಳ ಬಳಕೆ ಹೆಚ್ಚಾಗುತ್ತಿದೆ.

ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುವ ಜನರು ಇಂತಹ ಉತ್ಪನ್ನಗಳನ್ನು ನಂಬಿಕೊಂಡು ತಮ್ಮ ದೈನಂದಿನ ಆಹಾರದಲ್ಲಿ ಸೇರಿಸಿಕೊಳ್ಳುತ್ತಿದ್ದಾರೆ. ಆದರೆ ಮಾರುಕಟ್ಟೆಯಲ್ಲಿ ದೊರೆಯುವ ಎಲ್ಲಾ ‘ಹೆಲ್ದಿ’ ಉತ್ಪನ್ನಗಳೂ ನಿಜವಾಗಿಯೂ ಆರೋಗ್ಯಕರವಾಗಿಲ್ಲ ಎಂಬ ಎಚ್ಚರಿಕೆಯನ್ನು ಆರೋಗ್ಯ ತಜ್ಞರು ನೀಡಿದ್ದಾರೆ.

ಪ್ಯಾಕೇಜಿಂಗ್ ಮೇಲಿನ ಆಕರ್ಷಕ ಪದಗಳು ಮತ್ತು ಜಾಹೀರಾತುಗಳಿಗೆ ಮೋಸ ಹೋಗಬಾರದು ಎಂದು ತಜ್ಞರು ಸಲಹೆ ನೀಡಿದ್ದು, ಕೆಲವು ಉತ್ಪನ್ನಗಳಲ್ಲಿ “ಹೆಲ್ದಿ” ಎಂದು ಬರೆದಿದ್ದರೂ ಅದರೊಳಗೆ ಅಧಿಕ ಪ್ರಮಾಣದ ಸಕ್ಕರೆ, ಉಪ್ಪು, ಅನಾರೋಗ್ಯಕರ ಕೊಬ್ಬು ಹಾಗೂ ಪ್ರಿಸರ್ವೇಟಿವ್‌ಗಳು ಅಡಗಿರಬಹುದು ಎಂದು ತಿಳಿಸಿದ್ದಾರೆ. ಇವುಗಳನ್ನು ನಿರಂತರವಾಗಿ ಸೇವಿಸಿದರೆ ದೀರ್ಘಾವಧಿಯಲ್ಲಿ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಿದ್ದಾರೆ.

ಫ್ಲೇವರ್ಡ್ ಯೋಗರ್ಟ್, ಪ್ಯಾಕೇಜ್ಡ್ ಜ್ಯೂಸ್, ಎನರ್ಜಿ ಬಾರ್, ಡಯಟ್ ಸ್ನ್ಯಾಕ್ಸ್ ಹಾಗೂ ಇನ್‌ಸ್ಟಂಟ್ ಓಟ್ಸ್‌ಗಳಲ್ಲಿ ಹೆಚ್ಚುವರಿ ಸಕ್ಕರೆ ಮತ್ತು ರಿಫೈನ್ಡ್ ಕಾರ್ಬೊಹೈಡ್ರೇಟ್‌ಗಳ ಪ್ರಮಾಣ ಹೆಚ್ಚು ಇರಬಹುದಾಗಿದೆ. ಇಂತಹ ಆಹಾರಗಳನ್ನು ಹೆಚ್ಚು ಸೇವಿಸುವುದರಿಂದ ಬೊಜ್ಜು, ಮಧುಮೇಹ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳ ಅಪಾಯ ಹೆಚ್ಚಾಗುತ್ತದೆ ಎಂದು ತಜ್ಞರು ತಿಳಿಸಿದ್ದಾರೆ.

ಯಾವುದೇ ಆಹಾರ ಉತ್ಪನ್ನ ಖರೀದಿಸುವ ಮೊದಲು ಅದರ ನ್ಯೂಟ್ರಿಷನ್ ಲೇಬಲ್ ಪರಿಶೀಲಿಸುವುದು ಅಗತ್ಯವಾಗಿದೆ. ಸಕ್ಕರೆ, ಉಪ್ಪು, ಕೊಬ್ಬು ಹಾಗೂ ಕ್ಯಾಲೊರಿಗಳ ಪ್ರಮಾಣವನ್ನು ಗಮನಿಸುವ ಜೊತೆಗೆ ಇಂಗ್ರಿಡಿಯಂಟ್ಸ್ ಪಟ್ಟಿಯನ್ನೂ ಓದಬೇಕು. ಹೆಚ್ಚು ಪ್ರೊಸೆಸ್ಡ್ ಆಹಾರಗಳಿಂದ ದೂರವಿರುವುದು ಆರೋಗ್ಯದ ದೃಷ್ಟಿಯಿಂದ ಉತ್ತಮ ಎಂದು ವೈದ್ಯರು ಸಲಹೆ ನೀಡಿದ್ದಾರೆ.

ಇದೇ ವೇಳೆ ಮನೆಯಲ್ಲೇ ತಯಾರಿಸಿದ ಆಹಾರ ಸಾಮಾನ್ಯವಾಗಿ ಹೆಚ್ಚು ಸುರಕ್ಷಿತ ಮತ್ತು ಆರೋಗ್ಯಕರವಾಗಿರುತ್ತದೆ. ಮನೆಯ ಆಹಾರದಲ್ಲಿ ಸಕ್ಕರೆ, ಉಪ್ಪು ಹಾಗೂ ಎಣ್ಣೆಯ ಪ್ರಮಾಣವನ್ನು ನಿಯಂತ್ರಿಸಬಹುದಾಗಿದ್ದು, ಪ್ರಿಸರ್ವೇಟಿವ್‌ಗಳ ಬಳಕೆ ಕೂಡ ಕಡಿಮೆ ಇರುತ್ತದೆ. ಹೀಗಾಗಿ ಸಾಧ್ಯವಾದಷ್ಟು ಮನೆ ಆಹಾರಕ್ಕೆ ಆದ್ಯತೆ ನೀಡುವುದು ಉತ್ತಮ ಎಂದು ಆರೋಗ್ಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ವಿಕಿರಣ ರಕ್ಷಾ ಕವಚ ಹೊತ್ತ ವಾಹನ ಉರುಳಿ ಬಿದ್ದು ಆತಂಕ..!ತಪ್ಪಿದ ಭಾರೀ ಅನಾಹುತ

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಹಟುಗಾ ಗ್ರಾಮದ ಸಮೀಪ ಇಂದು ಭಾರೀ ಅವಘಡವೊಂದು ಸಂಭವಿಸಿದ್ದು, ಕೈಗಾ ಅಣುಸ್ಥಾವರಕ್ಕೆ ಸಾಗಿಸಲಾಗುತ್ತಿದ್ದ ಮಹತ್ವದ ಉಪಕರಣ ಹೊತ್ತ ಭಾರೀ ವಾಹನ ಪಲ್ಟಿಯಾಗಿದೆ.

ಕೈಗಾ ಅಣುಸ್ಥಾವರದ 5 ಹಾಗೂ 6ನೇ ಘಟಕಗಳ ನಿರ್ಮಾಣ ಕಾಮಗಾರಿಗಾಗಿ ಸೂರತ್‌ನಿಂದ ವಿಶೇಷ ರೀತಿಯಲ್ಲಿ ಸಾಗಿಸಲಾಗುತ್ತಿದ್ದ ಸುಮಾರು 140 ಟನ್ ತೂಕದ ವಿಕಿರಣ ರಕ್ಷಾ ಕವಚವನ್ನು ಹೊತ್ತಿದ್ದ ವಾಹನವೇ ಅಪಘಾತಕ್ಕೀಡಾಗಿದೆ.

ಅತ್ಯಂತ ಭದ್ರತಾ ಕ್ರಮಗಳೊಂದಿಗೆ ರಸ್ತೆಯ ಮೂಲಕ ಸಾಗಿಸಲಾಗುತ್ತಿದ್ದ ಈ ಭಾರೀ ವಾಹನ ಮಲೆನಾಡಿನ ತಿರುವುಮಯ ರಸ್ತೆಯಲ್ಲಿ ಸಾಗುವಾಗ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ ಎಂದು ತಿಳಿದುಬಂದಿದೆ. ಘಟನೆಯಿಂದ ಕೆಲಕಾಲ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದ್ದು, ಸ್ಥಳೀಯರು ಆತಂಕಕ್ಕೊಳಗಾದರು. ಆದರೆ ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಅಥವಾ ಸೋರಿಕೆ ಸಂಭವಿಸಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಕೈಗಾ ಅಣುಸ್ಥಾವರದ ವಿಸ್ತರಣಾ ಯೋಜನೆಗೆ ಈ ವಿಕಿರಣ ರಕ್ಷಾ ಕವಚ ಅತ್ಯಂತ ಪ್ರಮುಖವಾಗಿದ್ದು, ಇದರ ಸುರಕ್ಷಿತ ಸಾಗಣೆಗೆ ವಿಶೇಷ ತಾಂತ್ರಿಕ ವ್ಯವಸ್ಥೆ ಮಾಡಲಾಗಿತ್ತು. ಆದರೆ ದುರ್ಗಮ ಹಾಗೂ ತಿರುವುಗಳಿಂದ ಕೂಡಿದ ರಸ್ತೆಯಲ್ಲಿ ಸಾಗುವ ವೇಳೆ ವಾಹನ ಸಮತೋಲನ ಕಳೆದುಕೊಂಡು ಪಲ್ಟಿಯಾದ ಪರಿಣಾಮ ಕಾರ್ಯಾಚರಣೆ ಸಂಕೀರ್ಣಗೊಂಡಿದೆ.

ಅಪಘಾತದ ಮಾಹಿತಿ ತಿಳಿಯುತ್ತಿದ್ದಂತೆ ಕೈಗಾ ಅಣುಸ್ಥಾವರದ ಹಿರಿಯ ಅಧಿಕಾರಿಗಳು, ತಾಂತ್ರಿಕ ತಜ್ಞರ ತಂಡ ಹಾಗೂ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ಸುಮಾರು 140 ಟನ್ ಭಾರ ಇರುವ ವಾಹನವನ್ನು ಮೇಲಕ್ಕೆತ್ತಲು ಬೃಹತ್ ಸಾಮರ್ಥ್ಯದ ಕ್ರೇನ್‌ಗಳನ್ನು ಕರೆಸುವ ಕಾರ್ಯ ನಡೆಯುತ್ತಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.

ಈ ಘಟನೆ ಹಿನ್ನೆಲೆ ಕೈಗಾ ಅಣುಸ್ಥಾವರದ ಭದ್ರತೆ ಹಾಗೂ ಭಾರೀ ಉಪಕರಣಗಳ ಸಾಗಣೆ ಕ್ರಮಗಳ ಬಗ್ಗೆ ಮತ್ತೆ ಚರ್ಚೆ ಆರಂಭವಾಗಿದೆ. ಘಟನೆ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

ಕನಸಿನಲ್ಲಿ ಕೂದಲು ಉದುರಿದರೆ ಎಚ್ಚರ..! ಭವಿಷ್ಯದ ಬಗ್ಗೆ ಸಿಗುತ್ತೆ ಮಹತ್ವದ ಸುಳಿವು

ನಿದ್ರೆಯಲ್ಲಿ ಕಾಣುವ ಪ್ರತಿಯೊಂದು ಕನಸಿಗೂ ತನ್ನದೇ ಆದ ವಿಶೇಷ ಅರ್ಥವಿದೆ ಎಂದು ಸ್ವಪ್ನ ಶಾಸ್ತ್ರ ಹೇಳುತ್ತದೆ.

ಕನಸುಗಳು ಭವಿಷ್ಯದಲ್ಲಿ ನಡೆಯಬಹುದಾದ ಘಟನೆಗಳ ಮುನ್ಸೂಚನೆ ನೀಡುತ್ತವೆ ಎನ್ನುವ ನಂಬಿಕೆ ಇದೆ. ಅದರಲ್ಲೂ ಕನಸಿನಲ್ಲಿ ಕೂದಲು ಉದುರುತ್ತಿರುವ ದೃಶ್ಯ ಕಂಡರೆ, ಅದು ಸಾಮಾನ್ಯ ಸಂಗತಿಯಲ್ಲ ಎಂದು ಪರಿಗಣಿಸಲಾಗುತ್ತದೆ. ನಿಜ ಜೀವನದಲ್ಲಿ ಕೂದಲು ಉದುರುವುದು ಹೇಗೆ ಆತಂಕಕ್ಕೆ ಕಾರಣವಾಗುತ್ತದೋ, ಕನಸಿನಲ್ಲಿಯೂ ಇದು ಹಲವು ಮಹತ್ವದ ಸೂಚನೆಗಳನ್ನು ಒಳಗೊಂಡಿರುತ್ತದೆ.

ಸ್ವಪ್ನ ಶಾಸ್ತ್ರದ ಪ್ರಕಾರ, ಕೂದಲು ವ್ಯಕ್ತಿಯ ಸೌಂದರ್ಯ, ಆತ್ಮವಿಶ್ವಾಸ ಮತ್ತು ಆಂತರಿಕ ಶಕ್ತಿಯ ಸಂಕೇತವಾಗಿದೆ. ಹೀಗಾಗಿ, ಕನಸಿನಲ್ಲಿ ಕೂದಲು ಉದುರುತ್ತಿರುವಂತೆ ಕಂಡರೆ, ಅದು ವ್ಯಕ್ತಿಯ ಮನಸ್ಸಿನ ಅಶಾಂತಿ, ಅಸುರಕ್ಷತೆ ಅಥವಾ ಆತ್ಮವಿಶ್ವಾಸದ ಕೊರತೆಯನ್ನು ಸೂಚಿಸುತ್ತದೆ. ಜೊತೆಗೆ ಜೀವನದಲ್ಲಿ ಅತ್ಯಂತ ಮುಖ್ಯವಾದ ಯಾವುದನ್ನಾದರೂ ಕಳೆದುಕೊಳ್ಳುವ ಭಯ ಮನಸ್ಸಿನಲ್ಲಿ ಮನೆ ಮಾಡಿರುವುದನ್ನೂ ಈ ಕನಸು ಪ್ರತಿಬಿಂಬಿಸಬಹುದು.

ಹಠಾತ್‌ವಾಗಿ ಮತ್ತು ವೇಗವಾಗಿ ಕೂದಲು ಉದುರುವ ಕನಸು ಕಂಡರೆ, ಅದನ್ನು ಅಶುಭ ಸಂಕೇತವೆಂದು ಹೇಳಲಾಗುತ್ತದೆ. ಭವಿಷ್ಯದಲ್ಲಿ ಎದುರಾಗಬಹುದಾದ ಆರ್ಥಿಕ ಸಮಸ್ಯೆಗಳು, ಕುಟುಂಬದೊಳಗಿನ ಉದ್ವಿಗ್ನತೆ ಅಥವಾ ಮಾನಸಿಕ ಒತ್ತಡಗಳ ಬಗ್ಗೆ ಇದು ಎಚ್ಚರಿಕೆ ನೀಡುತ್ತದೆ ಎನ್ನಲಾಗುತ್ತದೆ. ಇದೇ ವೇಳೆ ಜೀವನದಲ್ಲಿ ದೊಡ್ಡ ಬದಲಾವಣೆ ಸಂಭವಿಸುವ ಸಾಧ್ಯತೆಯೂ ಇದರಿಂದ ಸೂಚನೆಯಾಗಿರಬಹುದು.

ಇನ್ನೊಂದೆಡೆ, ಕೂದಲು ನಿಧಾನವಾಗಿ ಉದುರುತ್ತಿರುವ ಕನಸು ಕಂಡರೆ, ಅದು ದೀರ್ಘಕಾಲದ ಮಾನಸಿಕ ಒತ್ತಡ, ಆಯಾಸ ಅಥವಾ ಅಸ್ಥಿರ ಜೀವನಶೈಲಿಯ ಸಂಕೇತವಾಗಿರಬಹುದು. ವ್ಯಕ್ತಿ ತನ್ನ ಜೀವನದಲ್ಲಿ ಸಮತೋಲನ ಕಳೆದುಕೊಳ್ಳುತ್ತಿರುವುದನ್ನು ಇದು ಸೂಚಿಸುತ್ತಿದ್ದು, ಆರೋಗ್ಯ ಮತ್ತು ಮನಸ್ಸಿನ ಶಾಂತಿಯ ಕಡೆ ಹೆಚ್ಚಿನ ಗಮನ ಹರಿಸಬೇಕೆಂಬ ಸಂದೇಶವನ್ನೂ ನೀಡುತ್ತದೆ.

ಆರೋಗ್ಯದ ದೃಷ್ಟಿಯಿಂದ ನೋಡಿದರೆ, ಇಂತಹ ಕನಸುಗಳು ದೈಹಿಕ ದೌರ್ಬಲ್ಯ, ನಿದ್ರಾಹೀನತೆ ಅಥವಾ ಅಸಮರ್ಪಕ ದಿನಚರಿಯನ್ನು ಸೂಚಿಸುವ ಸಾಧ್ಯತೆಯಿದೆ. ಸರಿಯಾದ ಆಹಾರ ಪದ್ಧತಿ, ಸಮರ್ಪಕ ವಿಶ್ರಾಂತಿ ಮತ್ತು ನಿಯಮಿತ ಜೀವನಶೈಲಿ ಅನುಸರಿಸುವ ಅಗತ್ಯವಿದೆ ಎಂಬುದನ್ನು ಸುಪ್ತ ಮನಸ್ಸು ಕನಸುಗಳ ಮೂಲಕ ತಿಳಿಸುತ್ತಿದೆ ಎಂದು ಹೇಳಲಾಗುತ್ತದೆ.

ಆದರೆ ಪ್ರತಿಯೊಂದು ಕನಸೂ ನಕಾರಾತ್ಮಕ ಅರ್ಥವನ್ನೇ ಹೊಂದಿರಬೇಕೆಂದಿಲ್ಲ. ಕೆಲವು ಸಂದರ್ಭಗಳಲ್ಲಿ ಕೂದಲು ಉದುರುವ ಕನಸು, ಜೀವನದಲ್ಲಿ ಹೊಸ ಆರಂಭ ಮತ್ತು ಬದಲಾವಣೆಯ ಸಂಕೇತವಾಗಿಯೂ ಪರಿಗಣಿಸಲಾಗುತ್ತದೆ. ಹಳೆಯ ಸಮಸ್ಯೆಗಳು ಮತ್ತು ಆಲೋಚನೆಗಳನ್ನು ತೊರೆದು ಹೊಸ ದಾರಿಗೆ ಹೆಜ್ಜೆ ಇಡುವ ಸನ್ನದ್ಧತೆಯನ್ನೂ ಇದು ಸೂಚಿಸಬಹುದು.

ಬಿಟುಮಿನ್ ಇಲ್ಲ ಅಂತ ರಸ್ತೆ ಕೆಲಸ ಸ್ಟಾಪ್… ಕಾರವಾರದಲ್ಲಿ ಮಾತ್ರ ಒಳ್ಳೆ ರಸ್ತೆಯನ್ನೇ ಕಿತ್ತು ಹಾಳು ಮಾಡಿದ ಅವಾಂತರ!

ಕಾರವಾರ: ರಾಜ್ಯದ ಹಲವು ಜಿಲ್ಲೆಗಳಲ್ಲಿ ಡಾಂಬರು ಕೊರತೆಯಿಂದ ರಸ್ತೆ ಕಾಮಗಾರಿಗಳು ನಿಂತು ಹೋಗಿದ್ದರೆ, ಕಾರವಾರದಲ್ಲಿ ಮಾತ್ರ ಗುತ್ತಿಗೆದಾರರ ಎಡವಟ್ಟಿಗೆ ಭದ್ರವಾಗಿದ್ದ ಕಾಂಕ್ರೀಟ್ ರಸ್ತೆಯನ್ನೇ ಹಾಳು ಮಾಡಿರುವ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ.

ಕಾರವಾರ ಬಸ್ ನಿಲ್ದಾಣದಿಂದ ಕೈಗಾ ಅಣುಸ್ಥಾವರಕ್ಕೆ ಹೋಗುವ ಸುಸಜ್ಜಿತ ಕಾಂಕ್ರೀಟ್ ರಸ್ತೆಯ ಮೇಲೆ ಏಕಾಏಕಿ ಡಾಂಬರು ಹಾಕಲು ಆರಂಭಿಸಲಾಗಿತ್ತು. ರಸ್ತೆ ಈಗಾಗಲೇ ಉತ್ತಮ ಸ್ಥಿತಿಯಲ್ಲಿದ್ದರೂ ಅನಗತ್ಯ ಕಾಮಗಾರಿ ನಡೆಸುತ್ತಿರುವುದನ್ನು ಕಂಡ ಸಾರ್ವಜನಿಕರು ಗುತ್ತಿಗೆದಾರರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಸ್ಥಳೀಯರ ಆಕ್ರೋಶ ಹೆಚ್ಚುತ್ತಿದ್ದಂತೆಯೇ ಗುತ್ತಿಗೆದಾರರು ಕಾಮಗಾರಿ ಸ್ಥಗಿತಗೊಳಿಸಿ ಅಲ್ಲಿಂದ ತೆರಳಿದ್ದಾರೆ. ಆದರೆ ಬಳಿಕ ಹಾಕಿದ್ದ ಡಾಂಬರನ್ನು ಜೆಸಿಬಿ ಮೂಲಕ ಕಿತ್ತು ಹಾಕುವ ವೇಳೆ ಕಾಂಕ್ರೀಟ್ ರಸ್ತೆಯ ಮೇಲ್ಭಾಗವೇ ಹಾನಿಗೊಳಗಾಗಿದೆ. ಇದರಿಂದ ಸಾರ್ವಜನಿಕರು ಇನ್ನಷ್ಟು ಕಿಡಿಕಾರಿದ್ದಾರೆ.

ಕೆಶಿಪ್ ಯೋಜನೆಯಡಿ ಮಂಜೂರಾದ ಕಾಮಗಾರಿಯಿದು ಎನ್ನಲಾಗುತ್ತಿದೆ. ಆದರೆ ಸ್ಥಳದ ವಾಸ್ತವ ಸ್ಥಿತಿ ತಿಳಿಯದೇ ಗುತ್ತಿಗೆದಾರರು ಕೆಲಸ ಆರಂಭಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಸ್ಥಳೀಯ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯವೂ ಈ ಅವಾಂತರಕ್ಕೆ ಕಾರಣ ಎನ್ನಲಾಗುತ್ತಿದೆ.

ಒಟ್ಟಾರೆ ರಾಜ್ಯದ ಅನೇಕ ಕಡೆ ರಸ್ತೆ ಅಭಿವೃದ್ಧಿಗೆ ಹಣವಿಲ್ಲ ಎಂದು ಜನರು ಪರದಾಡುತ್ತಿದ್ದರೆ, ಕಾರವಾರದಲ್ಲಿ ಮಾತ್ರ ಚೆನ್ನಾಗಿದ್ದ ರಸ್ತೆಗೆ ಡಾಂಬರು ಹಾಕಿ ಮತ್ತೆ ಕಿತ್ತು ಹಾಳು ಮಾಡುತ್ತಿರುವುದು ಸಾರ್ವಜನಿಕ ಹಣದ ದುರ್ಬಳಕೆ ಅಲ್ಲವೇ ಎಂಬ ಪ್ರಶ್ನೆ ಕೇಳಿಬರುತ್ತಿದೆ.

ಸರ್ಕಾರಿ ಜಾಬ್ ಗ್ಯಾರಂಟಿ ಅಂತ ಲಕ್ಷ ಲಕ್ಷ ದೋಚಿದ ಖದೀಮ: ಹಣ ಕೇಳಿದ್ರೆ ಎಸ್ಕೇಪ್ ಆದ ಕಿಲಾಡಿ

ಕಲಬುರಗಿ: “ಸರ್ಕಾರಿ ನರ್ಸಿಂಗ್ ಕೆಲಸ ಫಿಕ್ಸ್” ಎಂಬ ಮಾತಿಗೆ ಮೋಸ ಹೋಗಿ ಹತ್ತಾರು ಯುವಕರು ಲಕ್ಷಾಂತರ ರೂಪಾಯಿ ಕಳೆದುಕೊಂಡಿರುವ ಬೆಚ್ಚಿಬೀಳಿಸುವ ಘಟನೆ ಕಲಬುರಗಿಯಲ್ಲಿ ಬೆಳಕಿಗೆ ಬಂದಿದೆ. ಇಎಸ್ಐ ಆಸ್ಪತ್ರೆಯಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಭಾರೀ ವಂಚನೆ ನಡೆಸಿದ ಆರೋಪ ಹೈದರಾಬಾದ್ ಮೂಲದ ಪ್ರದೀಪ್ ಎಂಬಾತನ ವಿರುದ್ಧ ಕೇಳಿಬಂದಿದೆ.

ಸರ್ಕಾರಿ ಉದ್ಯೋಗದ ಆಸೆ ಹೊತ್ತ ಯುವಜನರನ್ನೇ ಟಾರ್ಗೆಟ್ ಮಾಡಿಕೊಂಡಿದ್ದ ಪ್ರದೀಪ್, “ಒಳಗಡೆ ಸೆಟ್ಟಿಂಗ್ ಇದೆ, ಕೆಲಸ ಪಕ್ಕಾ” ಎಂದು ಹೇಳಿ ಲಕ್ಷ ಲಕ್ಷ ರೂಪಾಯಿ ಹಣ ವಸೂಲಿ ಮಾಡಿದ್ದಾನೆ. ಕೆಲವರಿಗೆ ಈಗಾಗಲೇ ಕೆಲಸ ಕೊಡಿಸಿದ್ದೇನೆ ಎಂದು ನಂಬಿಸಿ, ಅಭ್ಯರ್ಥಿಗಳ ವಿಶ್ವಾಸ ಗೆದ್ದಿದ್ದಾನೆ.

ಒಂದೊಂದು ಉದ್ಯೋಗಕ್ಕೆ 2 ಲಕ್ಷದಿಂದ 4 ಲಕ್ಷ ರೂಪಾಯಿ ತನಕ ಹಣ ಪಡೆದಿದ್ದರೂ, ತಿಂಗಳುಗಳು ಕಳೆದರೂ ಕೆಲಸ ಸಿಗಲಿಲ್ಲ. ಹಣ ವಾಪಸ್ ಕೇಳಿದವರಿಗೆ ಮಾತ್ರ “ಪ್ರಕ್ರಿಯೆ ನಡೆಯುತ್ತಿದೆ” ಎಂದು ಹೇಳಿ ತಳ್ಳಾಡಿಸುತ್ತಿದ್ದ ಎನ್ನಲಾಗಿದೆ.

ಇಂದು ಮತ್ತೆ ಕೆಲ ಅಭ್ಯರ್ಥಿಗಳಿಗೆ ಪರೀಕ್ಷೆ ಇದೆ ಎಂದು ಕರೆಸಿಕೊಂಡಿದ್ದ ವೇಳೆ, ಈಗಾಗಲೇ ಮೋಸಕ್ಕೊಳಗಾದವರು ಸ್ಥಳಕ್ಕೆ ಬಂದು ಪ್ರದೀಪ್‌ನನ್ನು ಪ್ರಶ್ನಿಸಿದ್ದಾರೆ. ಟಿವಿ9 ಕ್ಯಾಮೆರಾ ಎದುರು ಸಿಕ್ಕಿಬಿದ್ದ ಆತ, ಉತ್ತರ ಕೊಡುತ್ತೇನೆ ಎಂದು ಹೇಳಿ ಕ್ಷಣಾರ್ಧದಲ್ಲೇ ಅಲ್ಲಿಂದ ಕಾಲ್ಕಿತ್ತಿದ್ದಾನೆ.

ಈ ಪ್ರಕರಣದಲ್ಲಿ ಇಎಸ್ಐ ಆಸ್ಪತ್ರೆಯ ಕೆಲ ಸಿಬ್ಬಂದಿಯ ಪಾತ್ರದ ಮೇಲೂ ಅನುಮಾನ ಗಟ್ಟಿಯಾಗಿದ್ದು, ಆಸ್ಪತ್ರೆ ಆವರಣದಲ್ಲೇ ಹಣದ ಡೀಲ್ ನಡೆದಿರುವ ಆರೋಪ ಕೇಳಿಬಂದಿದೆ. ಇಷ್ಟೆಲ್ಲಾ ಬೆಳವಣಿಗೆಯಾದರೂ ಇನ್ನೂ ಅಧಿಕೃತ ದೂರು ದಾಖಲಾಗದಿರುವುದು ಮತ್ತಷ್ಟು ಅನುಮಾನಕ್ಕೆ ಕಾರಣವಾಗಿದೆ.

ಒಟ್ಟಾರೆ ಸರ್ಕಾರಿ ಕೆಲಸದ ಕನಸು ಕಂಡ ಯುವಕರು ಹಣ ಕಳೆದುಕೊಂಡು ಬೀದಿಗೆ ಬಂದರೆ, ವಂಚಕರು ಮಾತ್ರ ಲಕ್ಷ ಲಕ್ಷ ಹಣ ಪಡೆದು ಮಾಯವಾಗುತ್ತಿರುವುದು ಆತಂಕ ಮೂಡಿಸಿದೆ.

ಮೀಟರ್ ಬಡ್ಡಿ ಜಾಲದ ವಿರುದ್ಧ ಎಸ್ಪಿ ದೀಪನ್ ವಾರ್! ಜಮೀರ್ ಮೊಬೈಲ್ ತನಿಖೆಯಿಂದ ಪೊಲೀಸರಿಗೆ ಟೆನ್ಷನ್

ಕಾರವಾರ: ಮುಂಡಗೋಡಿನಲ್ಲಿ ಮೀಟರ್ ಬಡ್ಡಿ ದಂಧೆ ಮತ್ತೆ ತಲೆಎತ್ತಿರುವ ಬೆನ್ನಲ್ಲೇ ಉತ್ತರ ಕನ್ನಡ ಪೊಲೀಸ್ ಇಲಾಖೆ ಕಠಿಣ ಕ್ರಮಕ್ಕೆ ಮುಂದಾಗಿದೆ. ಮೀಟರ್ ಬಡ್ಡಿ ದಂಧೆಯ ಪ್ರಮುಖ ಮುಖಂಡ ಜಮೀರ್ ಅಹ್ಮದ್ ದರ್ಗಾವಾಲೆ ಹತ್ಯೆ ಪ್ರಕರಣ ರಾಜ್ಯಾದ್ಯಂತ ಸದ್ದು ಮಾಡುತ್ತಿದ್ದರೆ, ಇದೀಗ ಅದರ ಹಿಂದಿನ ಜಾಲವನ್ನು ಬಯಲಿಗೆಳೆಯಲು ಪೊಲೀಸರು ದೊಡ್ಡ ಮಟ್ಟದ ತನಿಖೆ ಆರಂಭಿಸಿದ್ದಾರೆ.

ಜಮೀರ್ ಕೊಲೆ ಪ್ರಕರಣದಲ್ಲಿ ಈಗಾಗಲೇ 7 ಆರೋಪಿಗಳನ್ನು ಬಂಧಿಸಲಾಗಿದೆ. ತನಿಖೆ ನಡೆಸುತ್ತಿರುವ ಶಿರಸಿ ಡಿವೈಎಸ್ಪಿ ಗೀತಾ ಪಾಟೀಲ್ ತಂಡ, ಕೊಲೆ ಮತ್ತು ಮೀಟರ್ ಬಡ್ಡಿ ವ್ಯವಹಾರಗಳ ನಡುವಿನ ನಂಟಿನ ಬಗ್ಗೆ ಮಾಹಿತಿ ಕಲೆಹಾಕುತ್ತಿದೆ.

ಇದೀಗ ಎಸ್ಪಿ ದೀಪನ್ ನೇರವಾಗಿ ಮೈದಾನಕ್ಕಿಳಿದು ಮುಂಡಗೋಡು, ಹಳಿಯಾಳ ಹಾಗೂ ದಾಂಡೇಲಿ ಭಾಗಗಳಲ್ಲಿ ಸಕ್ರಿಯವಾಗಿರುವ ದಂಧೆಕೋರರ ವಿರುದ್ಧ ಕಠಿಣ ಕ್ರಮಕ್ಕೆ ಸಜ್ಜಾಗಿದ್ದಾರೆ. ಕೆಲವರನ್ನು ಗಡಿಪಾರು ಮಾಡಲು ಸಿದ್ಧತೆ ನಡೆದಿದ್ದು, ವಾರದೊಳಗೆ ಅಧಿಕೃತ ಆದೇಶ ಹೊರಬೀಳುವ ಸಾಧ್ಯತೆ ಇದೆ.

ಇನ್ನೊಂದೆಡೆ, ಜಮೀರ್ ಜೊತೆ ಕೆಲ ಸ್ಥಳೀಯ ಪೊಲೀಸರ ಸಂಪರ್ಕವಿತ್ತು ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಹಿನ್ನೆಲೆ ಜಮೀರ್ ಮೊಬೈಲ್ ಕಾಲ್ ಡೀಟೇಲ್ಸ್ ಮತ್ತು ವಾಟ್ಸಪ್ ಚಾಟ್‌ಗಳ ಪರಿಶೀಲನೆಗೆ ಎಸ್ಪಿ ದೀಪನ್ ಸೂಚನೆ ನೀಡಿದ್ದಾರೆ.

ಈ ಬೆಳವಣಿಗೆಗಳಿಂದ ಜಮೀರ್ ಜೊತೆ ಸಂಪರ್ಕದಲ್ಲಿದ್ದರೆನ್ನಲಾದ ಕೆಲ ಪೊಲೀಸರಲ್ಲಿ ಭಾರೀ ಆತಂಕ ಶುರುವಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಮೀಟರ್ ಬಡ್ಡಿ ದಂಧೆ ವಿರುದ್ಧ ಇದೀಗ ಪೊಲೀಸ್ ಇಲಾಖೆ ಸಂಪೂರ್ಣ ಸಮರ ಘೋಷಿಸಿದಂತಾಗಿದೆ.

‘ಪುಷ್ಪ 2’ ದುರಂತದ ಬಾಲಕನಿಗೆ ಅಲ್ಲು ಕುಟುಂಬದ ಬೆಂಬಲ! ಶಿಕ್ಷಣದಿಂದ ಭವಿಷ್ಯವರೆಗೂ ಸಂಪೂರ್ಣ ಜವಾಬ್ದಾರಿ

‘ಪುಷ್ಪ 2’ ಪ್ರೀಮಿಯರ್ ವೇಳೆ ನಡೆದ ದುರಂತದಲ್ಲಿ ಗಾಯಗೊಂಡಿದ್ದ ಬಾಲಕ ಶ್ರೀತೇಜ್ ಕುಟುಂಬಕ್ಕೆ ಅಲ್ಲು ಕುಟುಂಬ ಮತ್ತೆ ಬೆನ್ನೆಲುಬಾಗಿ ನಿಂತಿದೆ. ನಟ ಅಲ್ಲು ಅರ್ಜುನ್ ಪತ್ನಿ ಸ್ನೇಹಾ ರೆಡ್ಡಿ ಹಾಗೂ ತಂದೆ ಅಲ್ಲು ಅರವಿಂದ್ ಬಾಲಕನ ಮನೆಗೆ ಭೇಟಿ ನೀಡಿ ಕುಟುಂಬದ ಸ್ಥಿತಿಗತಿ ವಿಚಾರಿಸಿದ್ದಾರೆ.

ಹೈದರಾಬಾದ್‌ನ ಸಂಧ್ಯಾ ಥಿಯೇಟರ್‌ನಲ್ಲಿ ನಡೆದ ಕಾಲ್ತುಳಿತದಲ್ಲಿ ಶ್ರೀತೇಜ್ ತೀವ್ರವಾಗಿ ಗಾಯಗೊಂಡಿದ್ದನು. ಈ ದುರ್ಘಟನೆಯಲ್ಲಿ ಆತನ ತಾಯಿ ಮೃತಪಟ್ಟಿದ್ದರು. ಮೆದುಳಿಗೆ ಪೆಟ್ಟು ಬಿದ್ದಿದ್ದ ಕಾರಣ ಹಲವು ತಿಂಗಳುಗಳ ಕಾಲ ಶ್ರೀತೇಜ್ ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ಪಡೆದಿದ್ದನು. ಇದೀಗ ಪುನರ್ವಸತಿ ಕೇಂದ್ರದಲ್ಲಿ ಚಿಕಿತ್ಸೆ ಮುಂದುವರಿದಿದೆ.

ಬಾಲಕನ ಆರೋಗ್ಯದ ಬಗ್ಗೆ ಮಾಹಿತಿ ಪಡೆದ ಅಲ್ಲು ಅರವಿಂದ್, ಕುಟುಂಬಕ್ಕೆ ಎಲ್ಲಾ ರೀತಿಯ ಸಹಾಯ ಮುಂದುವರಿಸುವುದಾಗಿ ಭರವಸೆ ನೀಡಿದ್ದಾರೆ. ಶ್ರೀತೇಜ್ ತಂಗಿಯ ವಿದ್ಯಾಭ್ಯಾಸದ ಸಂಪೂರ್ಣ ವೆಚ್ಚವನ್ನು ತಾವು ಭರಿಸುವುದಾಗಿ ಘೋಷಿಸಿರುವುದು ಗಮನ ಸೆಳೆದಿದೆ.

ಘಟನೆ ಬಳಿಕದಿಂದಲೇ ಅಲ್ಲು ಅರ್ಜುನ್ ಕುಟುಂಬ ಮತ್ತು ಮೈತ್ರಿ ಮೂವಿ ಮೇಕರ್ಸ್ ಬಾಲಕನ ವೈದ್ಯಕೀಯ ವೆಚ್ಚವನ್ನು ನೋಡಿಕೊಳ್ಳುತ್ತಿವೆ. ಇದೇ ವೇಳೆ ಶ್ರೀತೇಜ್ ಭವಿಷ್ಯಕ್ಕಾಗಿ 2 ಕೋಟಿ ರೂಪಾಯಿ ಫಿಕ್ಸ್‌ಡ್ ಡೆಪಾಸಿಟ್ ಇಡಲಾಗಿದ್ದು, ಅದರ ಬಡ್ಡಿಯಿಂದ ತಿಂಗಳಿಗೆ ಸುಮಾರು 1.5 ಲಕ್ಷ ರೂಪಾಯಿ ಆದಾಯ ಸಿಗುವಂತೆ ವ್ಯವಸ್ಥೆ ಮಾಡಲಾಗಿದೆ.

ಈ ಭೇಟಿಯ ಮೂಲಕ ದುರಂತದ ನೋವಿನ ನಡುವೆ ಸಂತ್ರಸ್ತ ಕುಟುಂಬಕ್ಕೆ ಅಲ್ಲು ಕುಟುಂಬ ಮಾನವೀಯ ಸ್ಪರ್ಶ ನೀಡಿದೆ.

‘ಡ್ರ್ಯಾಗನ್’ಗೆ ಮತ್ತೊಂದು ದೊಡ್ಡ ಬಲ! ಜೂ ಎನ್‌ಟಿಆರ್ ಜೊತೆ ಮತ್ತೆ ಸ್ಕ್ರೀನ್ ಶೇರ್ ಮಾಡಲಿರುವ ಪ್ರಕಾಶ್ ರಾಜ್

ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಜೂ ಎನ್‌ಟಿಆರ್ ಅವರ ಬಹುನಿರೀಕ್ಷಿತ ಸಿನಿಮಾ ‘ಡ್ರ್ಯಾಗನ್’ ದಿನದಿಂದ ದಿನಕ್ಕೆ ಭಾರೀ ಕುತೂಹಲ ಹುಟ್ಟಿಸುತ್ತಿದೆ. ಅಧಿಕೃತ ಹೆಸರು ಇನ್ನೂ ಘೋಷಣೆ ಆಗದಿದ್ದರೂ, ಚಿತ್ರದ ಪ್ರತಿಯೊಂದು ಅಪ್ಡೇಟ್ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆಗುತ್ತಿದೆ. ಇದೀಗ ಚಿತ್ರತಂಡಕ್ಕೆ ಹಿರಿಯ ನಟ ಪ್ರಕಾಶ್ ರಾಜ್ ಸೇರ್ಪಡೆಯಾಗಿರುವ ಸುದ್ದಿ ಸಿನಿಪ್ರಿಯರಲ್ಲಿ ಹೈಪ್ ಹೆಚ್ಚಿಸಿದೆ.

ಪ್ರಶಾಂತ್ ನೀಲ್ ಸಿನಿಮಾಗಳ ವಿಶೇಷತೆ ಎಂದರೆ ವಿಭಿನ್ನ ಭಾಷೆಗಳ ಕಲಾವಿದರ ಸಮಾಗಮ. ‘ಕೆಜಿಎಫ್’, ‘ಸಲಾರ್’ ಬಳಿಕ ಈಗ ಈ ಸಿನಿಮಾದಲ್ಲೂ ಕನ್ನಡದ ಪ್ರತಿಭೆಗಳಿಗೆ ವಿಶೇಷ ಅವಕಾಶ ಸಿಕ್ಕಿದೆ. ರುಕ್ಮಿಣಿ ವಸಂತ್ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿರುವ ಈ ಚಿತ್ರದಲ್ಲಿ ಪ್ರಕಾಶ್ ರಾಜ್ ಪ್ರಮುಖ ಪಾತ್ರ ನಿರ್ವಹಿಸಲಿದ್ದಾರೆ.

ಬಹುಭಾಷಾ ನಟನಾಗಿ ದಶಕಗಳಿಂದ ಭಾರತೀಯ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿರುವ ಪ್ರಕಾಶ್ ರಾಜ್, ಯಾವುದೇ ಪಾತ್ರವನ್ನೂ ತಮ್ಮ ಅಭಿನಯದಿಂದ ಜೀವಂತಗೊಳಿಸುವ ಸಾಮರ್ಥ್ಯ ಹೊಂದಿದ್ದಾರೆ. ‘ಕೆಜಿಎಫ್ 2’ ಬಳಿಕ ಮತ್ತೆ ಪ್ರಶಾಂತ್ ನೀಲ್ ಜೊತೆ ಕೈಜೋಡಿಸಿರುವುದು ಚಿತ್ರದ ಮೇಲೆ ಮತ್ತಷ್ಟು ನಿರೀಕ್ಷೆ ಹುಟ್ಟಿಸಿದೆ.

ಜೂ ಎನ್‌ಟಿಆರ್ ಮತ್ತು ಪ್ರಕಾಶ್ ರಾಜ್ ಕಾಂಬಿನೇಷನ್ ಈಗಾಗಲೇ ಹಲವು ಹಿಟ್ ಸಿನಿಮಾಗಳಲ್ಲಿ ವರ್ಕೌಟ್ ಆಗಿದೆ. ‘ಟೆಂಪರ್’ ಸಿನಿಮಾದಲ್ಲಿನ ಇವರಿಬ್ಬರ ತೀವ್ರ ಸನ್ನಿವೇಶಗಳು ಇಂದಿಗೂ ಅಭಿಮಾನಿಗಳ ಫೇವರಿಟ್. ಇದೀಗ ‘ಡ್ರ್ಯಾಗನ್’ನಲ್ಲಿ ಈ ಜೋಡಿ ಮತ್ತೆ ಮುಖಾಮುಖಿಯಾಗಲಿದ್ದು, ಸಿನಿಮಾ ಭಾರೀ ಮಟ್ಟದಲ್ಲಿ ಸದ್ದು ಮಾಡುವ ಲಕ್ಷಣ ಕಾಣುತ್ತಿದೆ.

‘ಸರ್ಕೆ ಚುನರಿ’ ವಿವಾದಕ್ಕೆ ಕೊನೆ! NCW ಮುಂದೆ ನೋರಾ ಕ್ಷಮೆ, ಹೆಣ್ಣು ಮಕ್ಕಳ ಶಿಕ್ಷಣಕ್ಕೆ ನೆರವು ಘೋಷಣೆ

‘ಕೆಡಿ’ ಸಿನಿಮಾದ ‘ಸರ್ಸೆ ಸೆರಗು’ ಹಾಡಿನಿಂದ ಉಂಟಾಗಿದ್ದ ಭಾರೀ ವಿವಾದಕ್ಕೆ ಸಂಬಂಧಿಸಿ ನಟಿ ನೋರಾ ಫತೇಹಿ ಕೊನೆಗೂ ಮೌನ ಮುರಿದಿದ್ದಾರೆ. ರಾಷ್ಟ್ರೀಯ ಮಹಿಳಾ ಆಯೋಗದ ಮುಂದೆ ಹಾಜರಾದ ಅವರು ಲಿಖಿತ ಕ್ಷಮೆ ಸಲ್ಲಿಸಿದ್ದು, ಸಮಾಜಮುಖಿ ಹೆಜ್ಜೆಯೊಂದನ್ನೂ ಘೋಷಿಸಿದ್ದಾರೆ.

ಹಿಂದಿಯಲ್ಲಿ ‘ಸರ್ಕೆ ಚುನರಿ’ ಹೆಸರಿನಲ್ಲಿ ಬಿಡುಗಡೆಯಾಗಿದ್ದ ಈ ಹಾಡು ಮಹಿಳೆಯರನ್ನು ಅಶ್ಲೀಲವಾಗಿ ಚಿತ್ರಿಸಿದೆ ಎಂಬ ಆರೋಪದಡಿ ದೇಶಾದ್ಯಂತ ಟೀಕೆಗೆ ಗುರಿಯಾಗಿತ್ತು. ಹಾಡಿನ ದೃಶ್ಯಗಳು ಮತ್ತು ಸಾಹಿತ್ಯದ ವಿರುದ್ಧ ಸಾರ್ವಜನಿಕ ಆಕ್ರೋಶ ಹೆಚ್ಚಾದ ಬಳಿಕ ರಾಷ್ಟ್ರೀಯ ಮಹಿಳಾ ಆಯೋಗ ಪ್ರಕರಣ ದಾಖಲಿಸಿಕೊಂಡಿತ್ತು.

ಗುರುವಾರ ವಿಚಾರಣೆಗೆ ಹಾಜರಾದ ನೋರಾ ಫತೇಹಿ, ‘ಯಾರ ಭಾವನೆಗೂ ಧಕ್ಕೆ ತರುವ ಉದ್ದೇಶ ಇರಲಿಲ್ಲ. ಆದರೆ ಕಲಾವಿದೆಯಾಗಿ ನನ್ನ ಜವಾಬ್ದಾರಿಯನ್ನು ಅರಿತು ಕ್ಷಮೆ ಕೇಳುತ್ತಿದ್ದೇನೆ’ ಎಂದು ಹೇಳಿದ್ದಾರೆ.

ಅಲ್ಲದೆ, ವಿವಾದಕ್ಕೆ ಪ್ರಾಯಶ್ಚಿತ್ತವಾಗಿ ಕೆಲವು ಅನಾಥ ಹೆಣ್ಣು ಮಕ್ಕಳ ಶಿಕ್ಷಣ ವೆಚ್ಚವನ್ನು ಭರಿಸುವುದಾಗಿ ಘೋಷಿಸಿದ್ದಾರೆ. ಸಮಾಜಕ್ಕೆ ಮರಳಿ ಕೊಡುವ ಮನೋಭಾವದಿಂದ ಈ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದ್ದಾರೆ.

ಈ ಪ್ರಕರಣದಲ್ಲಿ ಈಗಾಗಲೇ ನಟ ಸಂಜಯ್ ದತ್ ಕೂಡ ಕ್ಷಮೆಯಾಚಿಸಿ 50 ಬುಡಕಟ್ಟು ಹೆಣ್ಣು ಮಕ್ಕಳ ಶಿಕ್ಷಣದ ಜವಾಬ್ದಾರಿ ಹೊತ್ತಿದ್ದರು.

ವಿವಾದ ತಾರಕ್ಕೇರಿದ ಬಳಿಕ ‘ಸರ್ಕೆ ಚುನರಿ’ ಹಾಡನ್ನು ಯೂಟ್ಯೂಬ್‌ನಿಂದ ತೆಗೆದುಹಾಕಲಾಗಿತ್ತು. ಇದೀಗ ಬಿಡುಗಡೆಯಾಗಿರುವ ‘ಕೆಡಿ’ ಸಿನಿಮಾದಲ್ಲೂ ಆ ಹಾಡಿಗೆ ಜಾಗ ನೀಡಲಾಗಿಲ್ಲ.

ಕಾಂಗ್ರೆಸ್‌ ಸ್ಥಿತಿ ಭಿಕ್ಷುಕರ ರೀತಿ ಆಗಿದೆ: ಛಲವಾದಿ ನಾರಾಯಣ ಸ್ವಾಮಿ ವ್ಯಂಗ್ಯ

ಬೆಂಗಳೂರು: ತಮಿಳುನಾಡಿನಲ್ಲಿ ಡಿಎಂಕೆ ಜೊತೆ ಇದ್ದ ಕಾಂಗ್ರೆಸ್‌, ನಟ ವಿಜಯ್‌ ನೇತೃತ್ವದ ಟಿವಿಕೆ ಪಕ್ಷ ಹೆಚ್ಚಿನ ಸ್ಥಾನ ಪಡೆದ ಕೂಡಲೇ ರಾತ್ರೋರಾತ್ರಿ ಆ ಪಕ್ಷದ ಮುಂದೆ ಹೋಗಿ ಸಚಿವ ಸ್ಥಾನಕ್ಕೆ ಭಿಕ್ಷೆ ಬೇಡುತ್ತಿದೆ. ಡಿಎಂಕೆ ಸಖ್ಯ ಬಿಟ್ಟು ಕಾಂಗ್ರೆಸ್‌ ಸ್ಥಿತಿ ಭಿಕ್ಷುಕರ ರೀತಿ ಆಗಿದೆ ಎಂದು ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ ವ್ಯಂಗ್ಯವಾಡಿದ್ದಾರೆ.

ರಾಜ್ಯ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಷ್ಟ್ರೀಯ ಪಕ್ಷ ಕಾಂಗ್ರೆಸ್‌ಗೆ ಇಂತಹ ಹೀನಾಯ ಸ್ಥಿತಿ ಬಂದಿದೆ. ಪಂಚರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಮುಸ್ಲಿಮರು ಸಾಕಷ್ಟು ಬೆಂಬಲ ನೀಡಿದ್ದಾರೆ. ಕಾಂಗ್ರೆಸ್‌ಗೆ ಮುಸ್ಲಿಮರು ಇಲ್ಲದಿದ್ದರೆ ತಿಪ್ಪೆಗುಂಡಿಗೆ ಹಾಕುವ ಕಸಕ್ಕೆ ಸಮ ಎಂದರು.

ಪಂಚ ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿಗೆ ಅಭೂತಪೂರ್ವವಾದ ಜಯ ಸಿಕ್ಕಿದೆ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿಗೆ ದೊಡ್ಡ ಮಟ್ಟದಲ್ಲಿ ಆಶೀರ್ವಾದ ಮಾಡಿದ್ದಾರೆ. ಆ ರಾಜ್ಯದಲ್ಲಿ ಟಿಎಂಸಿ ಆಡಳಿತದಲ್ಲಿ ಜನರು ನರಕಯಾತನೆ ಅನುಭವಿಸುತ್ತಿದ್ದರು. ಆ ನರಕದಿಂದ ಮೋದಿ ಅವರು ಜನರನ್ನು ಹೊರತಂದಿದ್ದಾರೆ. ಈ ಬಾರಿಯೂ ಬಿಜೆಪಿ ಗೆಲ್ಲದೇ ಇದ್ದಿದ್ದರೆ ಅಲ್ಲಿನ ಜನರ ಸ್ಥಿತಿ ಏನಾಗುತ್ತಿತ್ತು ಎಂದು ಊಹಿಸಿ ಎಂದರು.

ಪಶ್ಚಿಮ ಬಂಗಾಳದಲ್ಲಿ ಗೆದ್ದ ಶಾಸಕರು ಯಾವುದಾದರೂ ರಸ್ತೆಗೆ ಈಗ ಬಂದರೆ ಹೆಣ್ಣು ಮಕ್ಕಳು ಕೈ ಮುಗಿದು ನಮ್ಮನ್ನು ರಕ್ಷಿಸಿ ಎಂದು ಮನವಿ ಮಾಡುತ್ತಿದ್ದಾರೆ. ಮಮತಾ ಅವರ ಆಡಳಿತದಲ್ಲಿ ನಾವು ನರಕ ಅನುಭವಿಸಿದ್ದೇವೆ ಇನ್ನು ಮುಂದೆ ಇಂತಹ ಸ್ಥಿತಿ ಬರದಿರಲಿ ಎಂದು ಹೇಳುತ್ತಿದ್ದಾರೆ. ಅಂದರೆ ಅಲ್ಲಿ ಯಾವ ಸ್ಥಿತಿ ಇತ್ತು ಎಂದು ಯೋಚಿಸಿ ಎಂದು ಹೇಳಿದರು.

ಅಸ್ಸಾಂ ಮತ್ತು ಪುದುಚೇರಿಯಲ್ಲಿ ನಮ್ಮ ಪಕ್ಷಕ್ಕೆ ಜನ ಬೆಂಬಲ ನೀಡಿದ್ದಾರೆ. ತಮಿಳುನಾಡು ಮತ್ತು ಕೇರಳದಲ್ಲಿ ನಮ್ಮ ಪಕ್ಷದ ಕಾರ್ಯಕರ್ತರ ಬೆಂಬಲದಿಂದ ಮತಬ್ಯಾಂಕ್‌ ಹೆಚ್ಚಿಸಿಕೊಂಡಿದ್ದೇವೆ. ಇನ್ನೂ ಅಲ್ಲಿ ಮುಂದಿನ ಚುನಾವಣೆಯಲ್ಲಿ ಎಲ್ಲಾ ಪಕ್ಷಗಳಂತೆ ಬಿಜೆಪಿ ಶಕ್ತಿ ಹೆಚ್ಚಲಿದೆ. ಸ್ವತಂತ್ರ ಸರ್ಕಾರ ಮಾಡುವ ಶಕ್ತಿಯನ್ನು ಜನರು ಕೊಡ್ತಾರೆ. ಕೇರಳದಲ್ಲಿ ಕಾಂಗ್ರೆಸ್‌ ಯುಡಿಎಫ್‌ ಏಳು ಪಕ್ಷಗಳ ಜೊತೆಗೂಡಿದೆ. ತುಂಡು ತುಂಡು ಪಕ್ಷ ಸೇರಿ ಖಿಚಡಿ ಪಕ್ಷ ಆಗಿದೆ ಎಂದು ಗೇಲಿ ಮಾಡಿದರು.

error: Content is protected !!