Home Blog

ಗರ್ಭಿಣಿ ಸೊಸೆಯ ಕತ್ತು ಸೀಳಿ ಕೊಂದ ಮಾವ: ಆಸ್ತಿ ಲಾಲಸೆ ಬಿಚ್ಚಿಟ್ಟ ಪೊಲೀಸ್ ತನಿಖೆ

0

ರಾಯಚೂರು: ಚಿಕ್ಕ ಹಣಗಿ ಗ್ರಾಮದಲ್ಲಿ ಗರ್ಭಿಣಿ ಸೊಸೆ ರೇಖಾಳನ್ನು ಕತ್ತು ಸೀಳಿ ಹತ್ಯೆ ಮಾಡಿರುವ ಘಟನೆ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ಈ ಪ್ರಕರಣದಲ್ಲಿ ಕೇವಲ ಕೌಟುಂಬಿಕ ಕಲಹವಲ್ಲ, ಆಸ್ತಿ ಲಾಲಸೆ ಮತ್ತು ಅಮಾನುಷ ಮನೋಭಾವವೇ ಕಾರಣ ಎಂಬುದು ಪೊಲೀಸರ ತನಿಖೆಯಿಂದ ಸ್ಪಷ್ಟವಾಗಿದೆ.

ಆರೋಪಿ ಸಿದ್ದಪ್ಪ ತನ್ನ ಸೊಸೆ ರೇಖಾ ತನ್ನ ಮಾತು ಕೇಳುತ್ತಿಲ್ಲ, ಆಸ್ತಿಗಾಗಿ ಪೋಷಕರ ಬಳಿ ಕೇಳುತ್ತಿಲ್ಲ ಎಂಬ ಕಾರಣಕ್ಕೆ ನಿತ್ಯ ಕಿರುಕುಳ ನೀಡುತ್ತಿದ್ದ ಎಂದು ತನಿಖೆಯಲ್ಲಿ ತಿಳಿದುಬಂದಿದೆ. ನಾಲ್ಕು ತಿಂಗಳ ಗರ್ಭಿಣಿಯಾಗಿದ್ದರೂ ಆಕೆಯನ್ನು ಮಾನಸಿಕವಾಗಿ ಹಾಗೂ ದೈಹಿಕವಾಗಿ ಹಿಂಸಿಸಲಾಗುತ್ತಿತ್ತು ಎಂಬ ಅಂಶಗಳು ಬೆಳಕಿಗೆ ಬಂದಿವೆ.

ಮೃತಳ ತಂದೆ ಬಸವರಾಜ್ ಟಿವಿ9 ಸುದ್ದಿವಾಹಿನಿಗೆ ಪ್ರತಿಕ್ರಿಯಿಸಿ, “ನನ್ನ ಮಗಳು ಅನುಭವಿಸುತ್ತಿದ್ದ ಹಿಂಸೆಯನ್ನು ನಮ್ಮ ಬಳಿ ಹೇಳದೆ ಮೌನವಾಗಿ ಸಹಿಸಿಕೊಂಡಿದ್ದಳು. ಆಕೆಗೆ ಹುಟ್ಟುವ ಮಗು ನಮಗೆ ಬೇಡ ಎಂದು ಹೇಳಿದ್ದೇ ಅವರ ಕ್ರೂರ ಮನಸ್ಥಿತಿಯನ್ನು ತೋರಿಸುತ್ತದೆ” ಎಂದು ಕಣ್ಣೀರಿಟ್ಟಿದ್ದಾರೆ.

ಮಗುವಿನೊಂದಿಗೆ ತಾಯಿ ಬಲಿಯಾಗಿರುವ ಈ ಹತ್ಯೆ ಮಾನವೀಯತೆ ಇಲ್ಲದ ಕೃತ್ಯವಾಗಿದ್ದು, ಆರೋಪಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಪ್ರಕರಣ ಸಂಬಂಧ ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

ಮಲೆನಾಡಿನಲ್ಲಿ ಮಂಗನಕಾಯಿಲೆ ಆತಂಕ: ಚಿಕ್ಕಮಗಳೂರಿನಲ್ಲಿ 9 ಕೇಸ್ ಪತ್ತೆ, ಹೆಚ್ಚಿದ ಆತಂಕ!

0

ಚಿಕ್ಕಮಗಳೂರು: ಮಲೆನಾಡು ಭಾಗದಲ್ಲಿ ಚಳಿ ಕಡಿಮೆಯಾಗುತ್ತಿದ್ದಂತೆ ಈ ಪ್ರದೇಶದ ಜನರನ್ನು ಪ್ರತಿ ವರ್ಷ ಕಾಡುವ ಮಂಗನಕಾಯಿಲೆ ಮತ್ತೆ ಆತಂಕಕ್ಕೆ ಕಾರಣವಾಗಿದೆ.

ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಈ ರೋಗ ಪತ್ತೆಯಾಗಿದ್ದು, ಈಗಾಗಲೇ ಶಿವಮೊಗ್ಗದಲ್ಲಿ ವರ್ಷದ ಮೊದಲ ಬಲಿ ಸಂಭವಿಸಿರುವುದು ಸಾರ್ವಜನಿಕರಲ್ಲಿ ಭೀತಿ ಹೆಚ್ಚಿಸಿದೆ.
ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್. ಪುರ, ಶೃಂಗೇರಿ, ಕೊಪ್ಪ ಮತ್ತು ಚಿಕ್ಕಮಗಳೂರು ತಾಲೂಕುಗಳಲ್ಲಿ ಕೆ.ಎಫ್.ಡಿ ಲಕ್ಷಣಗಳು ಕಾಣಿಸಿಕೊಂಡಿವೆ. ಜಿಲ್ಲೆಯಲ್ಲಿ ಒಟ್ಟು 9 ಪ್ರಕರಣಗಳು ದೃಢಪಟ್ಟಿದ್ದು, ಇವತ್ತಿಗೆ 6 ಮಂದಿ ಗುಣಮುಖರಾಗಿದ್ದಾರೆ. ಉಳಿದ ಮೂವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಬ್ಬರು ಕೊಪ್ಪ ಸರ್ಕಾರಿ ಆಸ್ಪತ್ರೆಯ ಕೆ.ಎಫ್.ಡಿ ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಒಬ್ಬರನ್ನು ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ್ ಆಸ್ಪತ್ರೆಗೆ ಕಳುಹಿಸಲಾಗಿದೆ.

ಎನ್.ಆರ್. ಪುರ ತಾಲ್ಲೂಕಿನ ಬಾಳೆಹೊನ್ನೂರು ಮತ್ತು ಕೊಪ್ಪದ ಅರಳಿಕೊಪ್ಪದಲ್ಲಿ ಪ್ರತ್ಯೇಕ ಪ್ರಕರಣಗಳು ವರದಿಯಾಗಿವೆ. ವಿಶೇಷವಾಗಿ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮೂವರು ಎನ್.ಆರ್. ಪುರ ತಾಲ್ಲೂಕಿನ ಮೇಗರಮಕ್ಕಿ ಗ್ರಾಮದವರು. ರೋಗ ಹರಡುವುದನ್ನು ತಡೆಯಲು ಆರೋಗ್ಯ ಇಲಾಖೆ ಜಾಗೃತಿ ಕಾರ್ಯಾಚರಣೆ ನಡೆಸುತ್ತಿದೆ. ಈಗಾಗಲೇ ಸುಮಾರು 595ಕ್ಕೂ ಹೆಚ್ಚು ಜನರ ರಕ್ತದ ಮಾದರಿಗಳನ್ನು ಶಿವಮೊಗ್ಗದ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಕಾಡಂಚಿನ ಗ್ರಾಮಗಳಲ್ಲಿ ಸಿಬ್ಬಂದಿಯನ್ನು ನಿಯೋಜಿಸಿ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.

ಆರೋಗ್ಯ ಇಲಾಖೆ ಸೂಚನೆ:-

ಜ್ವರ, ವಿಪರೀತ ಮೈ–ಕೈ ನೋವು ಪ್ರಮುಖ ಲಕ್ಷಣಗಳು. ಲಕ್ಷಣ ಕಾಣಿಸಿದರೆ ತಕ್ಷಣ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಬೇಕು. ಕಾಡು ಅಥವಾ ತೋಟಗಳಿಗೆ ಹೋಗುವ ಮುನ್ನ ಮೈ ಪೂರ್ತಿ ಮುಚ್ಚುವ ಬಟ್ಟೆ ಧರಿಸಬೇಕು ಮತ್ತು ಅರಣ್ಯ ಇಲಾಖೆಯ ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸಬೇಕು.

ಲಕ್ಕುಂಡಿ ಉತ್ಖನನ ಸ್ಥಳದಲ್ಲಿ ನಿಜ ಹಾವು ಪತ್ತೆ: ಮೂರು ಹೆಡೆ ನಾಗರ ಶಿಲೆಯ ಬಳಿಕ ಮತ್ತೊಂದು ಅಚ್ಚರಿ

0

ಗದಗ: ಐತಿಹಾಸಿಕ ಲಕ್ಕುಂಡಿಯ ಉತ್ಖನನ ಸ್ಥಳದಲ್ಲಿ ನಿಜವಾದ ಹಾವು ಪತ್ತೆಯಾಗಿರುವ ಘಟನೆ ತೀವ್ರ ಕುತೂಹಲ ಹಾಗೂ ಆತಂಕಕ್ಕೆ ಕಾರಣವಾಗಿದೆ. ಲಕ್ಕುಂಡಿ ಉತ್ಖನನ ಪ್ರದೇಶದ ಬ್ಲಾಕ್–ಎ ವಿಭಾಗದಲ್ಲಿ ಹಾವು ಪತ್ತೆಯಾಗಿದ್ದು, ಸ್ಥಳೀಯರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.

ನಿನ್ನೆ ಮಾತ್ರ ಉತ್ಖನನ ಸ್ಥಳದಲ್ಲಿ ಮೂರು ಹೆಡೆಗಳಿರುವ ನಾಗರ ಶಿಲೆ ಪತ್ತೆಯಾಗಿತ್ತು. ಅದರ ಬೆನ್ನಲ್ಲೇ ಇದೀಗ ನಿಜವಾದ ಹಾವು ಪತ್ತೆಯಾಗಿರುವುದು ಹಲವು ಅನುಮಾನಗಳು ಮತ್ತು ಚರ್ಚೆಗಳಿಗೆ ಕಾರಣವಾಗಿದೆ. ಈ ಬೆಳವಣಿಗೆ ಲಕ್ಕುಂಡಿಯ ಉತ್ಖನನ ಕಾರ್ಯಕ್ಕೆ ಮತ್ತಷ್ಟು ಮಹತ್ವ ತಂದಿದೆ.

ಹಾವು ಪತ್ತೆಯಾದ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯರು ಹಾಗೂ ಉತ್ಖನನ ಕಾರ್ಯದಲ್ಲಿ ತೊಡಗಿರುವ ಸಿಬ್ಬಂದಿಯಲ್ಲಿ ಆತಂಕ ಹೆಚ್ಚಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುವ ಸಾಧ್ಯತೆ ಇದೆ.

ಐತಿಹಾಸಿಕ ಹಿನ್ನೆಲೆ ಹೊಂದಿರುವ ಲಕ್ಕುಂಡಿಯಲ್ಲಿ ನಡೆಯುತ್ತಿರುವ ಉತ್ಖನನ ಕಾರ್ಯದ ನಡುವೆ ಇಂತಹ ಬೆಳವಣಿಗೆಗಳು ಸ್ಥಳೀಯರ ಗಮನ ಸೆಳೆಯುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನೇನು ಅಚ್ಚರಿಗಳು ಎದುರಾಗಲಿವೆ ಎಂಬ ಪ್ರಶ್ನೆ ಉದ್ಭವಿಸಿದೆ.

3 ಮದುವೆ…ಶ್ರೀಮಂತ ಹುಡುಗರೇ ಈಕೆ ಟಾರ್ಗೆಟ್; ಲಕ್ಷಾಂತರ ರೂ. ಲೂಟಿ, ಠಾಣೆ ಮೆಟ್ಟಿಲೇರಿದ ಗಂಡಂದಿರು!

0

ದೊಡ್ಡಬಳ್ಳಾಪುರ: ಪ್ರೀತಿ ಮತ್ತು ಮದುವೆ ಎಂಬ ವೇಷದಲ್ಲಿ ಪುರುಷರನ್ನು ನಂಬಿಸಿ ಅವರಿಂದ ಲಕ್ಷಾಂತರ ರೂಪಾಯಿ ಹಣ ವಂಚಿಸಿರುವ ಕಿರಾತಕ ಮಹಿಳೆಯೊಬ್ಬಳ ಅಸಲಿ ಮುಖ ದೊಡ್ಡಬಳ್ಳಾಪುರದಲ್ಲಿ ಬಯಲಾಗಿದೆ.

ಅಣಬೆ ಗ್ರಾಮದ ಸುಧಾರಾಣಿ ವಿರುದ್ಧ ಮೊದಲ ಮತ್ತು ಎರಡನೇ ಪತಿಯರಿಂದ ತನಿಖೆಗಾಗಿ ದೂರು ನೀಡಲಾಗಿದೆ. ಸುಧಾರಾಣಿ, ಹಣವಿರುವ ಪುರಷರನ್ನು ಗುರಿಯಾಗಿಸಿಕೊಂಡು ವಂಚಿಸುತ್ತಿದ್ದಾಳೆ ಎಂದು ಸಂತ್ರಸ್ತರು ಹೇಳಿದ್ದಾರೆ. ಈಗಾಗಲೇ ಮೂವರನ್ನು ಮದುವೆಯಾಗಿರುವ ಈಕೆ, ಇಬ್ಬರು ಪತಿಯರಿಗೆ ಲಕ್ಷಾಂತರ ರೂಪಾಯಿ ವಂಚನೆ ಮಾಡಿದ್ದಾಳೆ ಎನ್ನಲಾಗಿದೆ.

ಮೊದಲ ಪತಿ ವೀರೆಗೌಡನೊಂದಿಗೆ ಇಬ್ಬರು ಮಕ್ಕಳು ಹುಟ್ಟಿದರೂ, “ಕಾರು ಮತ್ತು ಬುಲೆಟ್ ಓಡಿಸಲು ಬರಲ್ಲ” ಎಂಬ ಕ್ಷುಲ್ಲಕ ಕಾರಣವನ್ನು ಹೇಳಿ ಪತಿಯನ್ನೂ ಮಕ್ಕಳನ್ನೂ ತೊರೆದು ಹೋಗಿದ್ದಾಳೆ. ನಂತರ, ಡೆಲಿವರಿ ಬಾಯ್ ಅನಂತಮೂರ್ತಿಯನ್ನು ನಂಬಿಸಿ, ದೇವಸ್ಥಾನದಲ್ಲಿ ಮದುವೆಯಾಗಿದ್ದು, ಸುಮಾರು ಒಂದೂಕಾಲು ವರ್ಷಗಳ ಅವಧಿಯಲ್ಲಿ 15-20 ಲಕ್ಷ ರೂಪಾಯಿ ವಂಚನೆ ಮಾಡಿದ ಆರೋಪಗಳಿವೆ.

ಅನಂತಮೂರ್ತಿಯಿಂದ ಹಣ ಪಡೆದ ನಂತರ, ಮತ್ತೊಂದು ಮದುವೆಯಾಗಿದ್ದಾಳೆ ಎಂಬ ಮಾಹಿತಿ ಬಂದಿದೆ. ಇದೀಗ ಮೊದಲ ಮತ್ತು ಎರಡನೇ ಪತಿ ಒಟ್ಟಿಗೆ ದೊಡ್ಡಬಳ್ಳಾಪುರ ಪೊಲೀಸ್ ಠಾಣೆಗೆ ತೆರಳಿ ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ. ಸಂತ್ರಸ್ತರು ಸುಧಾರಾಣಿ ಕೇವಲ ಹಣಕ್ಕಾಗಿ ಶ್ರೀಮಂತರನ್ನು ಮತ್ತು ಅಮಾಯಕರನ್ನು ಗುರಿಯಾಗಿಸಿಕೊಂಡು ವಂಚಿಸುತ್ತಿದ್ದಾಳೆ ಎಂದು ತಿಳಿಸಿದ್ದಾರೆ. ದೊಡ್ಡಬಳ್ಳಾಪುರ ಪೊಲೀಸ್ ಠಾಣೆ ಈ ಬಗ್ಗೆ ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದೆ.

ಸಿನಿಮಾ ಮನರಂಜನೆ ಮಾತ್ರ ಅಲ್ಲ, ಸಮಾಜದ ಅಸಮಾನತೆಗೆ ಕನ್ನಡಿಯಾಗಬೇಕು: ಸಿಎಂ ಸಿದ್ದರಾಮಯ್ಯ

ಬೆಂಗಳೂರು: 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಉದ್ಘಾಟನಾ ವೇದಿಕೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಿನಿಮಾ ಹಾಗೂ ಸಮಾಜದ ನಡುವಿನ ಸಂಬಂಧದ ಬಗ್ಗೆ ಗಂಭೀರ ಚರ್ಚೆಗೆ ವೇದಿಕೆ ಸಿದ್ಧಪಡಿಸಿದರು. ಈ ಬಾರಿ 70 ದೇಶಗಳ 240ಕ್ಕೂ ಹೆಚ್ಚು ಸಿನಿಮಾಗಳ ಪ್ರದರ್ಶನ ನಡೆಯಲಿದೆ ಎಂದು ಅವರು ಘೋಷಿಸಿದರು.

ಚಿತ್ರೋತ್ಸವದ ರಾಯಭಾರಿಯಾಗಿ ಪ್ರಕಾಶ್ ರಾಜ್ ಅವರನ್ನು ಆಯ್ಕೆ ಮಾಡಿರುವುದನ್ನು ಸಮರ್ಥಿಸಿಕೊಂಡ ಸಿಎಂ, “ಅವರು ಕೇವಲ ನಟರಲ್ಲ, ಸಾಮಾಜಿಕ ಹೋರಾಟಗಾರರೂ ಹೌದು. ಸಿನಿಮಾ ಮತ್ತು ಸಮಾಜದ ನಡುವಿನ ಸೇತುವೆಯಾಗುವ ಸಾಮರ್ಥ್ಯ ಅವರಿಗೆ ಇದೆ” ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಈ ಬಾರಿ ‘ಸ್ರೀ ಎಂದರೆ ಅಷ್ಟೇ ಸಾಕೆ’ ಎಂಬ ಥೀಮ್ ಆಯ್ಕೆ ಮಾಡಲಾಗಿದೆ. ಸಿನಿಮಾ ಮನರಂಜನೆಯಷ್ಟೇ ಅಲ್ಲ, ಸಮಾಜದಲ್ಲಿರುವ ಅಸಮಾನತೆ, ಬಡತನ ಮತ್ತು ಅನ್ಯಾಯಗಳನ್ನು ಪ್ರಶ್ನಿಸುವ ಶಕ್ತಿ ಹೊಂದಿರಬೇಕು ಎಂದು ಸಿದ್ದರಾಮಯ್ಯ ಹೇಳಿದರು.

ದಲಿತರು, ರೈತರು, ಕಾರ್ಮಿಕರು, ಮಹಿಳೆಯರು, ಹಿಂದುಳಿದವರು ಹಾಗೂ ಅಲ್ಪಸಂಖ್ಯಾತರ ಬದುಕಿನ ವಾಸ್ತವ ಚಿತ್ರಣ ಸಿನಿಮಾಗಳ ಮೂಲಕ ಜಗತ್ತಿನ ಮುಂದೆ ಬರಬೇಕು ಎಂದು ಒತ್ತಾಯಿಸಿದರು. ಈ ಜವಾಬ್ದಾರಿಯನ್ನು ಡಾ. ರಾಜ್‌ಕುಮಾರ್ ಅವರ ಸಿನಿಮಾಗಳು ಯಶಸ್ವಿಯಾಗಿ ನಿರ್ವಹಿಸಿದ್ದನ್ನು ಅವರು ಸ್ಮರಿಸಿದರು.

ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳ ಉದ್ದೇಶ ಕೇವಲ ಸಿನಿಮಾ ಪ್ರದರ್ಶನವಲ್ಲ. ಬೇರೆ ದೇಶಗಳ ಸಮಾಜ, ರಾಜಕೀಯ, ಸಂಸ್ಕೃತಿ ಹಾಗೂ ಮಾನವ ಸಂಬಂಧಗಳನ್ನು ಅರ್ಥಮಾಡಿಕೊಳ್ಳುವ ಅವಕಾಶವೇ ಅದರ ಆತ್ಮ ಎಂದು ಸಿಎಂ ಅಭಿಪ್ರಾಯಪಟ್ಟರು. ಸಮಾಜದಲ್ಲಿ ಬದಲಾವಣೆ ಆಗದೇ ಇದ್ದರೆ ಸಿನಿಮಾಗಳು ಕೇವಲ ಮನರಂಜನೆಯ ವಸ್ತುಗಳಾಗಿಬಿಡುತ್ತವೆ ಎಂದು ಎಚ್ಚರಿಸಿದರು.

ಪ್ರತಿ ವ್ಯಕ್ತಿಯನ್ನು ಪ್ರೀತಿ ಮತ್ತು ಸ್ನೇಹದಿಂದ ನೋಡುವ ಮನೋಭಾವ ಬೆಳೆದರೆ ಮಾತ್ರ ಸಮಾನತೆಯ ಸಮಾಜ ನಿರ್ಮಾಣ ಸಾಧ್ಯ. ಅಸಮಾನತೆಯನ್ನು ಹೋಗಲಾಡಿಸುವ ಶಕ್ತಿಯನ್ನು ಸಿನಿಮಾ ಮಾಧ್ಯಮ ಹೊಂದಿದೆ ಎಂದು ಸಿದ್ದರಾಮಯ್ಯ ಹೇಳಿದರು.

ಕನ್ನಡ ಸಿನಿಮಾರಂಗದ ಅಭಿವೃದ್ಧಿಗೆ ಸರ್ಕಾರ ಸಂಪೂರ್ಣ ಸಹಕಾರ ನೀಡಲಿದೆ ಎಂದು ಭರವಸೆ ನೀಡಿದ ಸಿಎಂ, ಸಮಾಜವನ್ನು ಹಸನು ಮಾಡುವಂತಹ ಸಿನಿಮಾಗಳು ಕನ್ನಡದಲ್ಲಿ ಮೂಡಿಬರಲಿ ಎಂದು ಆಶಿಸಿದರು. “ಜೈಹಿಂದ್, ಜೈ ಕರ್ನಾಟಕ, ಜೈ ಸಂವಿಧಾನ” ಎಂಬ ಘೋಷಣೆಯೊಂದಿಗೆ ಭಾಷಣ ಮುಕ್ತಾಯಗೊಳಿಸಿದರು.

ತಾಯಿ ಅಂಜನಾ ದೇವಿ ಹುಟ್ಟುಹಬ್ಬಕ್ಕೆ ಜಿರಾಫೆ ದತ್ತು ಪಡೆದ ಪವನ್ ಕಲ್ಯಾಣ್

ಆಂಧ್ರಪ್ರದೇಶ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರು ಗುರುವಾರ ವಿಶಾಖಪಟ್ಟಣದ ಇಂದಿರಾ ಗಾಂಧಿ ಪ್ರಾಣಿ ಉದ್ಯಾನವನಕ್ಕೆ ಭೇಟಿ ನೀಡಿ, ಪ್ರಾಣಿ ಸಂರಕ್ಷಣೆಯತ್ತ ತಮ್ಮ ಬದ್ಧತೆಯನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ತಮ್ಮ ತಾಯಿ ಅಂಜನಾ ದೇವಿಯ ಹುಟ್ಟುಹಬ್ಬದ ನೆನಪಿಗಾಗಿ ಮೃಗಾಲಯದಲ್ಲಿರುವ ಎರಡು ಜಿರಾಫೆಗಳನ್ನು ಒಂದು ವರ್ಷದ ಅವಧಿಗೆ ದತ್ತು ಪಡೆಯುವುದಾಗಿ ಘೋಷಿಸಿ, ಅವುಗಳ ನಿರ್ವಹಣೆಯ ಸಂಪೂರ್ಣ ವೆಚ್ಚವನ್ನು ಭರಿಸುವುದಾಗಿ ತಿಳಿಸಿದ್ದಾರೆ.

ಮೃಗಾಲಯಕ್ಕೆ ಭೇಟಿ ನೀಡಿದ ವೇಳೆ ಪವನ್ ಕಲ್ಯಾಣ್, ಹೊಸದಾಗಿ ನಿರ್ಮಿಸಲಾದ ಕರಡಿ ಆವರಣವನ್ನು ಉದ್ಘಾಟಿಸಿದರು. ನಂತರ ನೀರಾನೆ, ಕೃಷ್ಣಮೃಗ, ಹುಲಿ ಹಾಗೂ ಸಿಂಹಗಳನ್ನು ಇರಿಸಿರುವ ವಲಯಗಳಿಗೆ ಭೇಟಿ ನೀಡಿ, ಪ್ರಾಣಿಗಳ ಆಹಾರ ವ್ಯವಸ್ಥೆ, ಆರೋಗ್ಯ ಹಾಗೂ ಸಂರಕ್ಷಣಾ ಕ್ರಮಗಳ ಕುರಿತು ಮೃಗಾಲಯದ ಕ್ಯುರೇಟರ್ ಅವರಿಂದ ಮಾಹಿತಿ ಪಡೆದರು. ಅಲ್ಲದೇ ಆನೆ ಮತ್ತು ಜಿರಾಫೆಗಳಿಗೆ ಸ್ವತಃ ಆಹಾರ ನೀಡುವ ಮೂಲಕ ಪ್ರಾಣಿಪ್ರೇಮ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪವನ್ ಕಲ್ಯಾಣ್, “ಮೃಗಾಲಯಗಳು ವನ್ಯಜೀವಿ ಸಂರಕ್ಷಣೆಯಲ್ಲಿ ಅತ್ಯಂತ ಪ್ರಮುಖವಾದ ಪಾತ್ರ ವಹಿಸುತ್ತವೆ. ಅಳಿವಿನಂಚಿನಲ್ಲಿರುವ ಪ್ರಭೇದಗಳನ್ನು ಉಳಿಸುವ ಹೊಣೆ ನಮ್ಮೆಲ್ಲರ ಮೇಲಿದೆ. ಸುಮಾರು 650 ಎಕರೆ ಪ್ರದೇಶದಲ್ಲಿ ವಿಸ್ತರಿಸಿರುವ ವಿಶಾಖಪಟ್ಟಣ ಮೃಗಾಲಯದಲ್ಲಿ ನೂರಾರು ಕಾಡು ಪ್ರಾಣಿಗಳು ಹಾಗೂ ಪಕ್ಷಿಗಳು ಸುರಕ್ಷಿತ ಮತ್ತು ಸ್ವಚ್ಛ ವಾತಾವರಣದಲ್ಲಿ ವಾಸಿಸುತ್ತಿವೆ” ಎಂದು ಹೇಳಿದರು.

ಇದೇ ವೇಳೆ ಅವರು ಕಾರ್ಪೊರೇಟ್ ಸಂಸ್ಥೆಗಳಿಗೆ ಪ್ರಾಣಿ ಸಂರಕ್ಷಣೆಯಲ್ಲಿ ಪಾಲುದಾರರಾಗುವಂತೆ ಮನವಿ ಮಾಡಿ, “ಕಾರ್ಪೊರೇಟ್‌ಗಳು ತಮ್ಮ ಇಷ್ಟದ ಪ್ರಾಣಿಗಳನ್ನು ದತ್ತು ಪಡೆದು ಮೃಗಾಲಯಗಳ ಅಭಿವೃದ್ಧಿಗೆ ಕೈಜೋಡಿಸಬೇಕು. ನಮ್ಮ ಇಡೀ ಕುಟುಂಬವೇ ಪ್ರಾಣಿ ಪ್ರಿಯರು. ಪ್ರಾಣಿ ಕಲ್ಯಾಣ ನಮ್ಮ ಆದ್ಯತೆಯಾಗಿದೆ” ಎಂದು ಹೇಳಿದರು.

ಸಿನಿಮಾ ವೇದಿಕೆಯಲ್ಲಿ ರಾಜಕೀಯ ಗೋಡೆ? BIFFESನಲ್ಲಿ ಪ್ರಕಾಶ್ ರಾಜ್‌ರ ತೀವ್ರ ಪ್ರತಿರೋಧ

ಬೆಂಗಳೂರು: 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಉದ್ಘಾಟನಾ ವೇದಿಕೆ ಈ ಬಾರಿ ಕೇವಲ ಸಿನಿಮಾಗಳ ಸಂಭ್ರಮಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. ಉತ್ಸವದ ರಾಯಭಾರಿಯಾಗಿ ನಟ ಪ್ರಕಾಶ್ ರಾಜ್, ಚಲನಚಿತ್ರೋತ್ಸವದ ಮೂಲ ಆಶಯ, ಮಾನವೀಯತೆಯ ಪ್ರಶ್ನೆ ಮತ್ತು ರಾಜಕೀಯ ಹಸ್ತಕ್ಷೇಪದ ವಿರುದ್ಧ ಗಂಭೀರ ಧ್ವನಿಯಲ್ಲಿ ಮಾತನಾಡಿದರು.

‘16 ವರ್ಷಗಳ ಹಿಂದೆ ನಾನು ಈ ಉತ್ಸವವನ್ನು ಉದ್ಘಾಟಿಸಿದ್ದೆ. ಆಗ ಇದು ಸಂಸ್ಕೃತಿಗಳ ಸಂಗಮವಾಗಬೇಕು ಎಂಬ ಕನಸಿನಿಂದ ಹುಟ್ಟಿದ ಪ್ರಯತ್ನವಾಗಿತ್ತು. ಇಂದು ಅದೇ ವೇದಿಕೆಯಲ್ಲಿ ನಾನು ನಟನಾಗಿ ಮಾತ್ರವಲ್ಲ, ನಿರ್ಮಾಪಕ, ವಿತರಕ ಮತ್ತು ರಾಯಭಾರಿಯಾಗಿ ನಿಂತಿದ್ದೇನೆ’ ಎಂದು ಅವರು ಹೇಳಿದರು.

ಅಂತರಿಕ್ಷದಿಂದ ಭೂಮಿಯನ್ನು ಕಂಡ ಅನುಭವದ ಬಗ್ಗೆ ಗಗನಯಾತ್ರಿ ಸುನಿತಾ ವಿಲಿಯಮ್ಸ್ ನೀಡಿದ ಉತ್ತರವನ್ನು ಉಲ್ಲೇಖಿಸಿದ ಪ್ರಕಾಶ್ ರಾಜ್, ‘ಈ ಭೂಮಿ ಮನುಷ್ಯರಿಗಿಂತ ಪ್ರಾಣಿಗಳದ್ದು ಹೆಚ್ಚು. ಆದರೂ ನಾವು ಜಗಳ, ಯುದ್ಧಗಳಲ್ಲಿ ತೊಡಗಿದ್ದೇವೆ’ ಎಂಬ ಮಾತುಗಳು ತಮ್ಮನ್ನು ತಟ್ಟಿದವು ಎಂದು ಹೇಳಿದರು.

ಅಂತರಾಷ್ಟ್ರೀಯ ಚಿತ್ರೋತ್ಸವಗಳು ಗಡಿಗಳನ್ನು ಮೀರಿ ಮಾನವೀಯತೆಯನ್ನು ಬೆಳೆಸಬೇಕಾದ ವೇದಿಕೆಗಳಾಗಬೇಕು. ಆದರೆ ಇತ್ತೀಚೆಗೆ ಬೆಂಗಳೂರು ಚಲನಚಿತ್ರೋತ್ಸವದಲ್ಲಿ ರಾಜಕೀಯ ಪ್ರವೇಶ ಮಾಡಿರುವುದು ದುಃಖಕರ ಸಂಗತಿ ಎಂದು ಅವರು ಕಟುವಾಗಿ ಟೀಕಿಸಿದರು. ಪ್ಯಾಲೆಸ್ತೀನ್ ಸಿನಿಮಾಗಳ ಪ್ರದರ್ಶನಕ್ಕೆ ಅವಕಾಶ ನೀಡದಿರುವುದು ಕೇವಲ ಕಲೆಯ ಮೇಲೆ ಮಾತ್ರವಲ್ಲ, ಮಾನವೀಯತೆಯ ಮೇಲೆಯೂ ಹಸ್ತಕ್ಷೇಪವಾಗಿದೆ ಎಂದು ಹೇಳಿದರು.

‘ನಮ್ಮ ಕಥೆಗಳು ಜಗತ್ತಿನ ವೇದಿಕೆಗೆ ಹೋದಾಗ ನಾವು ಹೆಮ್ಮೆಪಡುತ್ತೇವೆ. ಆದರೆ ಜಗತ್ತಿನ ನೋವಿನ ಕಥೆಗಳು ನಮ್ಮ ನೆಲಕ್ಕೆ ಬರಬಾರದು ಎನ್ನುವುದು ಯಾವ ತರ್ಕ?’ ಎಂದು ಪ್ರಶ್ನಿಸಿದ ಅವರು, ಕೇರಳ ಸರ್ಕಾರ ಪ್ಯಾಲೆಸ್ತೀನ್ ಸಿನಿಮಾಗಳ ಪ್ರದರ್ಶನಕ್ಕೆ ಅವಕಾಶ ನೀಡಿರುವುದನ್ನು ಉದಾಹರಿಸಿದರು.

‘ನಮ್ಮ ಕಣ್ಣೀರಿನ ಪರಿಚಯ ನಮ್ಮ ನೋವಿಗೆ ಮಾತ್ರ ಸೀಮಿತವಾಗಿರಬಾರದು. ಇತರರ ನೋವಿಗೂ ನಾವು ಅಳಬೇಕು. ಇಲ್ಲದಿದ್ದರೆ ನಾವು ಮನುಷ್ಯರಾಗಿರೋದಕ್ಕೆ ಅರ್ಥವಿಲ್ಲ’ ಎಂದು ಹೇಳಿದ ಪ್ರಕಾಶ್ ರಾಜ್, ಪ್ಯಾಲೆಸ್ತೀನ್ ಸಿನಿಮಾಗಳಿಗೆ ಅವಕಾಶ ನಿರಾಕರಿಸಿದರೆ, ವೇದಿಕೆಯಲ್ಲೇ ಪದ್ಯ ಓದುತ್ತೇನೆ ಎಂದು ತಮ್ಮ ಪ್ರತಿರೋಧವನ್ನು ಘೋಷಿಸಿದರು.

ಸಂಗೀತದಿಂದ ಜನಸೇವೆ ಕಡೆಗೆ? ಅರಿಜಿತ್ ಸಿಂಗ್ ರಾಜಕೀಯದ ಹೊಸ ರಾಗ

ಕೋಟಿ ಕೋಟಿ ಅಭಿಮಾನಿಗಳನ್ನು ಹೊಂದಿರುವ ಬಾಲಿವುಡ್ ಗಾಯಕ ಅರಿಜಿತ್ ಸಿಂಗ್ ಗಾಯನ ಕ್ಷೇತ್ರಕ್ಕೆ ಫುಲ್ ಸ್ಟಾಪ್ ಹಾಕಿದ ನಿರ್ಧಾರವೇ ಅಚ್ಚರಿ ಮೂಡಿಸಿದ ಬೆನ್ನಲ್ಲೇ, ಇದೀಗ ಇನ್ನೊಂದು ಸಂಚಲನಕಾರಿ ಸುದ್ದಿ ಹೊರಬಿದ್ದಿದೆ. ಅರಿಜಿತ್ ಸಿಂಗ್ ರಾಜಕೀಯ ಪಕ್ಷ ಸ್ಥಾಪಿಸಿ ಪಶ್ಚಿಮ ಬಂಗಾಳದ ರಾಜಕೀಯದಲ್ಲಿ ಸಕ್ರಿಯ ಪಾತ್ರ ವಹಿಸುವ ಚಿಂತನೆಯಲ್ಲಿದ್ದಾರೆ ಎಂಬ ವರದಿ ಭಾರೀ ಚರ್ಚೆಗೆ ಕಾರಣವಾಗಿದೆ.

ಎನ್‌ಡಿಟಿವಿ ವರದಿ ಪ್ರಕಾರ, ಈ ವರ್ಷ ನಡೆಯಲಿರುವ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಅರಿಜಿತ್ ಸಿಂಗ್ ಸ್ಪರ್ಧಿಸುವುದಿಲ್ಲ. ಆದರೆ, ರಾಜಕೀಯ ಪಕ್ಷವನ್ನು ಕಟ್ಟಿಬಳೆಸಲು ದೀರ್ಘಾವಧಿಯ ಸಿದ್ಧತೆ ನಡೆಸುವ ಉದ್ದೇಶ ಅವರದ್ದಾಗಿದೆ. ರಾಜಕೀಯ ಕಣಕ್ಕೆ ಇಳಿಯುವುದು ಕೇವಲ ಘೋಷಣೆಯಿಂದ ಸಾಧ್ಯವಲ್ಲ ಎಂಬ ಅರಿವಿನೊಂದಿಗೆ ಅವರು ಮುಂದಿನ ಹೆಜ್ಜೆ ಇಡಲು ಸಜ್ಜಾಗಿದ್ದಾರೆ.

ಭಾರತದಲ್ಲಿ ಸಿನಿಮಾ ಕ್ಷೇತ್ರದ ಅನೇಕರು ರಾಜಕೀಯಕ್ಕೆ ಬಂದಿದ್ದಾರೆ. ಕೆಲವು ಗಾಯಕರು ರಾಜಕೀಯ ಪಕ್ಷಗಳ ಟಿಕೆಟ್ ಪಡೆದು ಸ್ಪರ್ಧಿಸಿದ್ದಾರೆ. ಆದರೆ, ಒಬ್ಬ ಗಾಯಕ ಸ್ವತಂತ್ರವಾಗಿ ಪಕ್ಷ ಸ್ಥಾಪಿಸಿ ರಾಜಕೀಯ ಭೂಮಿಕೆಗೆ ಇಳಿಯಲು ಮುಂದಾಗಿರುವುದು ಅಪರೂಪದ ಬೆಳವಣಿಗೆಯಾಗಿದೆ. ಈ ಕಾರಣದಿಂದಲೇ ಅರಿಜಿತ್ ಸಿಂಗ್ ಅವರ ನಿರ್ಧಾರ ವಿಭಿನ್ನವಾಗಿ ಕಾಣುತ್ತಿದೆ.

ಅರಿಜಿತ್ ಸಿಂಗ್ ಅವರ ವ್ಯಕ್ತಿತ್ವ ಸಂಗೀತಕ್ಕಷ್ಟೇ ಸೀಮಿತವಲ್ಲ. ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ನವರಾದ ಅವರು, ತಮ್ಮ ಊರಿನ ಬಡವರಿಗಾಗಿ ಹಲವು ಸಾಮಾಜಿಕ ಯೋಜನೆಗಳನ್ನು ಕೈಗೊಂಡಿದ್ದಾರೆ. ಒಂದು ಹೊತ್ತಿನ ಊಟಕ್ಕೂ ಪರದಾಡುವ ಜನರಿಗಾಗಿ 40 ರೂಪಾಯಿಗೆ ಊಟ ನೀಡುವ ರೆಸ್ಟೋರೆಂಟ್ ಆರಂಭಿಸಿರುವುದು ಅವರ ಮಾನವೀಯ ಮುಖವನ್ನು ತೋರಿಸುತ್ತದೆ.

ಸಾಮಾಜಿಕ ಸೇವೆಯನ್ನು ವ್ಯವಸ್ಥಿತವಾಗಿ ಮತ್ತು ವ್ಯಾಪಕವಾಗಿ ಮುಂದುವರಿಸಲು ರಾಜಕೀಯವೇ ಪರಿಣಾಮಕಾರಿ ಮಾರ್ಗ ಎಂಬ ನಿರ್ಣಯಕ್ಕೆ ಅವರು ಬಂದಿರಬಹುದು ಎಂಬ ಮಾತುಗಳು ಕೇಳಿಬರುತ್ತಿವೆ. ಇದೇ ಕಾರಣಕ್ಕೆ ಸಂಗೀತ ಜಗತ್ತಿನಿಂದ ಹಿಂದೆ ಸರಿದು ಜನಸೇವೆ ಹಾಗೂ ರಾಜಕೀಯದತ್ತ ಅವರು ಮುಖ ಮಾಡಿದ್ದಾರೆ ಎಂಬ ವಿಶ್ಲೇಷಣೆಗಳು ಇದೀಗ ಜೋರಾಗಿವೆ.

WPL 2026; 8 ವಿಕೆಟ್ ಗಳ ಭರ್ಜರಿ ಜಯದೊಂದಿಗೆ ಫೈನಲ್‌ಗೆ RCB ಎಂಟ್ರಿ!

0

ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ತಂಡವು ಮಹಿಳಾ ಪ್ರೀಮಿಯರ್ ಲೀಗ್ 2ನೇ ಆವೃತ್ತಿಯ ಕೊನೆಯ ಲೀಗ್ ಪಂದ್ಯದಲ್ಲಿ ಯುಪಿ ವಾರಿಯರ್ಸ್ ವಿರುದ್ಧ 8 ವಿಕೆಟ್‌ ಭರ್ಜರಿ ಜಯ ಸಾಧಿಸಿ ನೇರವಾಗಿ ಫೈನಲ್‌ಗೆ ಪ್ರವೇಶಿಸಿದೆ.

ಈ ಜಯವು ತಂಡದ ಇತಿಹಾಸದಲ್ಲಿ ಫಸ್ಟ್ ಟೈಮ್ ಸಾಧನೆಯಾಗಿದೆ. ಯುಪಿ ವಾರಿಯರ್ಸ್ ಮೊದಲು ಬ್ಯಾಟಿಂಗ್ ಆರಂಭಿಸಿ 8 ವಿಕೆಟ್ ನಷ್ಟಕ್ಕೆ 143 ರನ್‌ಗಳನ್ನಷ್ಟೇ ಗಳಿಸಿತು. ವಾರಿಯರ್ಸ್‌ ಪರ ದೀಪ್ತಿ ಶರ್ಮಾ 55 ರನ್, ನಾಯಕಿ ಮೆಗ್ ಲ್ಯಾನಿಂಗ್ 41 ರನ್ ಗಳಿಸಿದರೂ ಇತರ ಆಟಗಾರರು ಅಲ್ಪ ಮೊತ್ತಕ್ಕೆ ಔಟಾದರು. ಆರ್‌ಸಿಬಿ ಅಲ್ಪ ಗುರಿ ಬೆನ್ನಟ್ಟಿ ಚೇಸ್‌ಗೆ ಎದ್ದಾಗ, ಗ್ರೇಸ್ ಹ್ಯಾರಿಸ್ ಮೊದಲ ಓವರ್‌ನಿಂದಲೇ ಬ್ಯಾಟಿಂಗ್ ಪ್ರಾರಂಭಿಸಿ 37 ಎಸೆತಗಳಲ್ಲಿ 75 ರನ್ (2 ಸಿಕ್ಸರ್‌, 13 ಬೌಂಡರಿ) ಗಳಿಸಿದರು. ಜೊತೆಗೆ ನಾಯಕಿ ಸ್ಮೃತಿ ಮಂಧಾನ 27 ಎಸೆತಗಳಲ್ಲಿ 54 ರನ್ (2 ಸಿಕ್ಸರ್‌, 8 ಬೌಂಡರಿ) ಗಳಿಸಿ ತಂಡದ ಗೆಲುವಿಗೆ ಮಹತ್ವಪೂರ್ಣ ಪಾತ್ರ ವಹಿಸಿದರು. ಜಾರ್ಜಿಯಾ ವೋಲ್ 16 ರನ್ ನೀಡಿ ಮಿಂಚಿದರು.

ಪಂದ್ಯದ ಪ್ರಾರಂಭದಲ್ಲಿ ಮೆಗ್ ಲ್ಯಾನಿಂಗ್ ಮತ್ತು ದೀಪ್ತಿ ಶರ್ಮಾ ಪವರ್‌ ಪ್ಲೇ‌ನಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೆ 50 ರನ್‌ ಕಲೆಹಾಕಿದರು. ಆದರೆ 9ನೇ ಓವರ್‌ನಲ್ಲಿ ನಾಡಿನ್ ಡಿ ಕ್ಲರ್ಕ್ ಮೊದಲ ಎಸೆತದಲ್ಲಿ ಮೆಗ್ ಲ್ಯಾನಿಂಗ್ ವಿಕೆಟ್ ಕಿತ್ತರು, ನಂತರ 5ನೇ ಎಸೆತದಲ್ಲಿ ಜೋನ್ಸ್ ವಿಕೆಟ್ ಉರುಳಿದರು. ಆದರೆ ಆರ್‌ಸಿಬಿ ಬ್ಯಾಟಿಂಗ್ ಆರ್ಭಟ ಮುಂದುವರಿದು, ಕೊನೆಗೆ ಕೇವಲ 13.1 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 147 ರನ್‌ ಬಾರಿಸಿ ಜಯವನ್ನು ಖಚಿತಪಡಿಸಿಕೊಂಡಿತು. ಬೌಲಿಂಗ್‌ನಲ್ಲಿ ಗ್ರೇಸ್ ಹ್ಯಾರಿಸ್ 2 ವಿಕೆಟ್, ಲೂರೆನ್ ಬೆಲ್ ಮತ್ತು ಶ್ರೇಯಾಂಕ ಪಾಟೀಲ್ ತಲಾ ಒಂದು ವಿಕೆಟ್ ಪಡೆದು ಮಿಂಚಿದರು.

ಸೋಫಿ ಎಕ್ಲಿಸ್ಟೋನ್ ಮತ್ತು ಸಿಮ್ರನ್ ಶೈಖಾ ಯುಪಿ ವಾರಿಯರ್ಸ್‌ ಪರ ಪ್ರಮುಖ ವಿಕೆಟ್‌ಗಳನ್ನು ಪಡೆದರು.
ಈ ಜಯದೊಂದಿಗೆ ಆರ್‌ಸಿಬಿ ಮಹಿಳಾ ತಂಡ ನೇರವಾಗಿ WPL ಫೈನಲ್‌ಗೆ ಲಗ್ಗೆಯಿಟ್ಟಿದೆ.

ಚಾಮರಾಜನಗರ| ಆರತಕ್ಷತೆಗೆ ತೆರಳುತ್ತಿದ್ದ ವರನಿಗೆ ಚಾಕು ಇರಿತ; ಅದೃಷ್ಟವಶಾತ್ ತಪ್ಪಿದ ಅನಾಹುತ!

0

ಚಾಮರಾಜನಗರ: ಕೊಳ್ಳೇಗಾಲ ಪಟ್ಟಣದಲ್ಲಿ ವಿವಾಹ ಆರತಕ್ಷತೆಗೆ ತೆರಳುತ್ತಿದ್ದ ವರ ಚಾಕು ಇರಿತಕ್ಕೊಳಗಾಗಿ ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ.

34 ವರ್ಷದ ಎಲ್.ರವೀಶ್ ಚಾಕು ಇರಿತಕ್ಕೊಳಗಾದ ಯುವಕ. ಈತ ತಾಲೂಕಿನ ಕುಣಗಳ್ಳಿ ನಿವಾಸಿ. ಅದೃಷ್ಟವಶಾತ್ ರವೀಶ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ರವೀಶ್​ಗೆ ಕೊಳ್ಳೇಗಾಲ ತಾಲೂಕಿನ ಹೊಸ ಅಣಗಳ್ಳಿ ಗ್ರಾಮದ ಯುವತಿಯೊಬ್ಬಳೊಂದಿಗೆ ಮದುವೆ ನಿಶ್ಚಯವಾಗಿತ್ತು. ಜ.30 ರಂದು ವೆಂಕಟೇಶ್ವರ ಮಹಲ್‌ನಲ್ಲಿ ಆರತಕ್ಷತೆ ನಡೆಯಬೇಕಾಗಿತ್ತು.

ಸುದ್ದಿಯ ಪ್ರಕಾರ, ಆರತಕ್ಷತೆಗೆ ತಮ್ಮ ಗ್ರಾಮದಿಂದ ಕಾರಿನಲ್ಲಿ ಕುಟುಂಬ ಸದಸ್ಯರೊಂದಿಗೆ ತೆರಳುವಾಗ ಕೊಳ್ಳೇಗಾಲದ ಎಂಜಿಎಸ್​ವಿ ಕಾಲೇಜು ರಸ್ತೆಯ ಬಳಿ ವರ ತೆರಳುತ್ತಿದ್ದ ಕಾರನ್ನು ಹಿಂಬಾಲಿಸಿ ದುಷ್ಕರ್ಮಿಗಳು ಕಾರನ್ನು ಅಡ್ಡಗಟ್ಟಿ ಏಕಾಏಕಿ ಹಲ್ಲೆ ನಡೆಸಿದ್ದಾರೆ. ಎಲ್. ರವೀಶ್ ಮೇಲೆ ಚಾಕುವಿನಿಂದ ಇರಿಯಲು ಯತ್ನಿಸಿದ್ದು, ಎಡಗೈ ತೊಳಿಗೆ ಚಾಕು ಇರಿದು ರಕ್ತಸ್ರಾವವಾಗಿದೆ. ಸದ್ಯ ಸರ್ಕಾರಿ ಉಪವಿಭಾಗ ಆಸ್ಪತ್ರೆಯಲ್ಲಿ ರವೀಶ್ ಚಿಕಿತ್ಸೆ ಪಡೆಯುತ್ತಿದ್ದಾರೆ.

ರವೀಶ್ ಈ ಬಗ್ಗೆ ಮಾಧ್ಯಮದವರ ಜತೆ ಮಾತನಾಡಿ, “6 ತಿಂಗಳ ಹಿಂದೆಯಷ್ಟೇ ನನ್ನ ಎಂಗೇಜ್ಮೆಂಟ್ ನಿಶ್ಚಿತವಾಯಿತು. ಆರತಕ್ಷತೆಗೆ ತೆರಳುವಾಗ ಹಿಂಬದಿಯಿಂದ ಬಂದ ಕಾರಿನಲ್ಲಿ ದುಷ್ಕರ್ಮಿಗಳು ಹಲ್ಲೆ ನಡೆಸಿದರು. ಯಾರಿದ್ದಾರೆ ಎಂಬುದು ತಿಳಿಯುತ್ತಿಲ್ಲ” ಎಂದು ಹೇಳಿದರು. ಘಟನೆ ಸಂಬಂಧ ಕೊಳ್ಳೇಗಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

error: Content is protected !!