Home Blog

ವಕೀಲರ ಉಡುಪಿನಲ್ಲಿ ಮಮತಾ ಬ್ಯಾನರ್ಜಿ: ಮಾಜಿ ಸಿಎಂಗೆ ಶಾಕ್ ಕೊಟ್ಟ ಬಾರ್ ಕೌನ್ಸಿಲ್!

ನವದೆಹಲಿ: ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರು ಕೊಲ್ಕತ್ತಾ ಹೈಕೋರ್ಟ್‌ನಲ್ಲಿ ವಕೀಲರ ಉಡುಪಿನಲ್ಲಿ ಹಾಜರಾಗಿರುವ ಘಟನೆ ರಾಜಕೀಯ ಮತ್ತು ಕಾನೂನು ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

ಮಮತಾ ಬ್ಯಾನರ್ಜಿ ಅವರು ಚುನಾವಣೋತ್ತರ ಹಿಂಸಾಚಾರಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆಯಲ್ಲಿ ಟಿಎಂಸಿ ಪರವಾಗಿ ವಾದ ಮಂಡಿಸಿದರೆಂದು ತಿಳಿದುಬಂದಿದೆ. ಅವರೊಂದಿಗೆ ಟಿಎಂಸಿ ಹಿರಿಯ ನಾಯಕರು ಹಾಗೂ ವಕೀಲರು ಕೂಡ ನ್ಯಾಯಾಲಯಕ್ಕೆ ಆಗಮಿಸಿದ್ದರು.

2026ರ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ಬಳಿಕ ನಡೆದ ಹಿಂಸಾಚಾರದಲ್ಲಿ ಟಿಎಂಸಿ ಕಾರ್ಯಕರ್ತರ ಮೇಲೆ ದಾಳಿ ನಡೆದಿದೆ ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಆರೋಪಿಸಲಾಗಿದ್ದು, ಈ ಕುರಿತು ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಯಿತು.

ವಿಚಾರಣೆ ಬಳಿಕ ನ್ಯಾಯಾಲಯದ ಆವರಣದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಮಮತಾ ಬ್ಯಾನರ್ಜಿ ಅವರನ್ನು ಕೆಲ ವಕೀಲರು “ಕಳ್ಳಿ” ಎಂದು ಕರೆಯಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ. ನಂತರ ಅವರನ್ನು ಭದ್ರತೆಯೊಂದಿಗೆ ಕೋರ್ಟ್ ಆವರಣದಿಂದ ಹೊರತರಲಾಯಿತು ಎಂದು ವರದಿಯಾಗಿದೆ.

ಈ ನಡುವೆ ಮಮತಾ ಬ್ಯಾನರ್ಜಿ ಅವರ ಕಾನೂನು ಅರ್ಹತೆ ಹಾಗೂ ವಕೀಲರಾಗಿ ನೋಂದಣಿ ಕುರಿತು ಬಾರ್ ಕೌನ್ಸಿಲ್ ಆಫ್ ಇಂಡಿಯಾ (BCI) ವಿವರ ಕೇಳಿದ್ದು, ಅವರ ವಕೀಲರ ದಾಖಲಾತಿ ಮತ್ತು ಅಭ್ಯಾಸಕ್ಕೆ ಸಂಬಂಧಿಸಿದ ಮಾಹಿತಿಯನ್ನು ಎರಡು ದಿನಗಳಲ್ಲಿ ಸಲ್ಲಿಸುವಂತೆ ರಾಜ್ಯ ಬಾರ್ ಕೌನ್ಸಿಲ್‌ಗೆ ಸೂಚಿಸಲಾಗಿದೆ.

ಮಮತಾ ಬ್ಯಾನರ್ಜಿ ಅವರ ಹೈಕೋರ್ಟ್ ಹಾಜರಾತಿ ಕುರಿತು ಉಂಟಾದ ವಿವಾದ ಇದೀಗ ಕಾನೂನು ಮತ್ತು ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.

ದಾವಣಗೆರೆ ಟಿಕೆಟ್ ವಿವಾದ: ರಾಜ್ಯ ರಾಜಕೀಯದಲ್ಲಿ ಸಂಚಲನ, ಮುಸ್ಲಿಂ ಸಂಘಟನೆಗಳ ಶಕ್ತಿ ಪ್ರದರ್ಶನ

ಬೆಂಗಳೂರು: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಟಿಕೆಟ್ ಹಂಚಿಕೆ ವಿಚಾರವಾಗಿ ಕಾಂಗ್ರೆಸ್ ಹಾಗೂ ಅಲ್ಪಸಂಖ್ಯಾತ ಸಮುದಾಯದ ನಡುವೆ ಅಸಮಾಧಾನ ಉಂಟಾಗಿರುವ ಹಿನ್ನೆಲೆ, ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆ ಆರಂಭವಾಗಿದೆ.

ಟಿಕೆಟ್ ನೀಡದ ಹಿನ್ನೆಲೆಯಲ್ಲಿ ಅಲ್ಪಸಂಖ್ಯಾತ ಸಮುದಾಯದ ಕೆಲ ಮುಖಂಡರು ಕಾಂಗ್ರೆಸ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದು, ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುವುದಾಗಿ ಎಚ್ಚರಿಕೆ ನೀಡಿರುವುದಾಗಿ ತಿಳಿದುಬಂದಿದೆ. ಈ ಬೆಳವಣಿಗೆಯಿಂದ ಕಾಂಗ್ರೆಸ್ ಪಕ್ಷದಲ್ಲಿ ಒಳಗಣ್ಣಿನ ಅಸಮಾಧಾನ ಹೆಚ್ಚುತ್ತಿರುವುದಾಗಿ ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ.

ಇದರ ನಡುವೆ ಅಲ್ಪಸಂಖ್ಯಾತ ಸಂಘಟನೆಗಳು ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದು, ಮೇ 16ರಂದು ಬೆಂಗಳೂರಿನ ಟೌನ್‌ಹಾಲ್‌ನಲ್ಲಿ ‘ಕರ್ನಾಟಕ ಮುಸ್ಲಿಂ ಸಮಾವೇಶ’ ಆಯೋಜಿಸಲಾಗಿದೆ. ಈ ಸಮಾವೇಶದಲ್ಲಿ ಕಾಂಗ್ರೆಸ್ ಸರ್ಕಾರದ ಮೂರು ವರ್ಷದ ಕಾರ್ಯವೈಖರಿ ಹಾಗೂ ಸಮುದಾಯಕ್ಕೆ ನೀಡಿದ ಭರವಸೆಗಳ ಅನುಷ್ಠಾನದ ಕುರಿತು ಸಮಗ್ರ ವರದಿ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಲಾಗಿದೆ.

ಸಭೆಗೆ ಮೊದಲು ಶಿವಾಜಿನಗರದ ಎಜೆ ಇಂಟರ್‌ನ್ಯಾಷನಲ್ ಹೋಟೆಲ್‌ನಲ್ಲಿ ವಿವಿಧ ಮುಸ್ಲಿಂ ಸಂಘಟನೆಗಳು, ಉಲೇಮಾಗಳು, ಜಮಾತ್‌ಗಳು ಹಾಗೂ ತಜ್ಞರ ಸಭೆ ನಡೆದಿದ್ದು, ‘ಕಾಂಗ್ರೆಸ್ ಸರ್ಕಾರ ಹೇಳಿದ್ದೇನು? ಮಾಡಿದ್ದೇನು? ಮುಂದೇನು?’ ಎಂಬ ವರದಿ ಮಂಡಿಸಲಾಗಿದೆ. ಈ ವರದಿಯಲ್ಲಿ ರಾಜಕೀಯ ಪ್ರಾತಿನಿಧ್ಯ, ಹಿಜಾಬ್ ವಿವಾದ, ಮೀಸಲಾತಿ, ದ್ವೇಷ ಭಾಷಣ, ಶಿಕ್ಷಣ ಅನುದಾನ ಸೇರಿದಂತೆ ಹಲವು ವಿಷಯಗಳನ್ನು ವಿಶ್ಲೇಷಿಸಲಾಗಿದೆ.

ಸಮಾವೇಶಕ್ಕೆ ಯಾವುದೇ ರಾಜಕಾರಣಿಗಳಿಗೆ ಆಹ್ವಾನ ನೀಡಿಲ್ಲ ಎಂದು ಆಯೋಜಕರು ತಿಳಿಸಿದ್ದಾರೆ. ವರದಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಸಚಿವರು ಹಾಗೂ ಶಾಸಕರಿಗೆ ತಲುಪಿಸಲಾಗುವುದು ಎಂದು ತಿಳಿಸಲಾಗಿದೆ.

ಬೆಂಗಳೂರಿಗೆ ಮತ್ತೆ ಮಳೆ ಎಂಟ್ರಿ: ವಾರಾಂತ್ಯದಲ್ಲಿ ಭಾರೀ ಮಳೆಯ ಮುನ್ಸೂಚನೆ!

ಬೆಂಗಳೂರು: ಬಿಸಿಲಿನ ಬೇಗೆಯಿಂದ ತತ್ತರಿಸುತ್ತಿರುವ ಬೆಂಗಳೂರಿಗೆ ಈ ವಾರಾಂತ್ಯದಲ್ಲಿ ಮುಂಗಾರು ಪೂರ್ವ ಮಳೆಯ ತಂಪು ಸಿಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಮೇ 15ರಿಂದ 17ರವರೆಗೆ ನಗರದಲ್ಲಿ ಮಧ್ಯಮದಿಂದ ಭಾರೀ ಮಳೆಯಾಗುವ ನಿರೀಕ್ಷೆ ವ್ಯಕ್ತವಾಗಿದೆ.

ಕಳೆದ ಒಂದು ವಾರದಿಂದ ಮಳೆಯ ಚಟುವಟಿಕೆ ಕಡಿಮೆಯಾಗಿದ್ದರಿಂದ ತಾಪಮಾನ ಏರಿಕೆಯಾಗಿ ಜನರು ತೀವ್ರ ಬಿಸಿಲಿಗೆ ತೊಂದರೆ ಅನುಭವಿಸುತ್ತಿದ್ದರು. ಆದರೆ ಇದೀಗ ಹವಾಮಾನದಲ್ಲಿ ಬದಲಾವಣೆ ಕಂಡುಬರುತ್ತಿದ್ದು, ವರುಣ ಮತ್ತೆ ಸಕ್ರಿಯವಾಗುವ ಸೂಚನೆಗಳು ಕಂಡುಬಂದಿವೆ.

ಮಾಹಿತಿಯ ಪ್ರಕಾರ, ಏಪ್ರಿಲ್ 30ರಂದು ಬೆಂಗಳೂರಿನಲ್ಲಿ ಸುಮಾರು 111 ಮಿ.ಮೀ. ಭಾರೀ ಮಳೆಯಾಗಿತ್ತು. ಆ ಬಳಿಕ ಮಳೆಯ ಪ್ರಮಾಣ ಗಣನೀಯವಾಗಿ ಕುಸಿದಿದ್ದು, ಮೇ ಮೊದಲ 13 ದಿನಗಳಲ್ಲಿ ನಗರ ವೀಕ್ಷಣಾಲಯದಲ್ಲಿ ಕೇವಲ 31 ಮಿ.ಮೀ. ಮಳೆಯಾಗಿದೆ. HAL ವೀಕ್ಷಣಾಲಯದಲ್ಲಿ ಮಾಸಿಕ ಸರಾಸರಿ ಕೇವಲ 8.2 ಮಿ.ಮೀ. ಮಳೆಯಾಗಿರುವುದು ದಾಖಲಾಗಿದೆ.

ಈ ನಡುವೆ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರ (KSNDMC) ರಾಜ್ಯದ ಹಲವೆಡೆ ಗುಡುಗು ಸಹಿತ ಮಳೆಯ ಎಚ್ಚರಿಕೆ ನೀಡಿದೆ. ಮೇ 16ರವರೆಗೆ ದಕ್ಷಿಣ ಒಳನಾಡಿನಲ್ಲಿ ಗಂಟೆಗೆ 40–50 ಕಿಮೀ ವೇಗದ ಗಾಳಿಯೊಂದಿಗೆ ಮಳೆ ಸಾಧ್ಯತೆ ಇದೆ ಎಂದು ತಿಳಿಸಿದೆ.

ಕರಾವಳಿ ಕರ್ನಾಟಕದಲ್ಲಿಯೂ ಮೇ 17ರವರೆಗೆ ಮಿಂಚು-ಗುಡುಗು ಸಹಿತ ಮಳೆಯ ಸಾಧ್ಯತೆ ಇದ್ದು, ಜನರು ಎಚ್ಚರಿಕೆಯಿಂದ ಇರುವಂತೆ ಅಧಿಕಾರಿಗಳು ಸಲಹೆ ನೀಡಿದ್ದಾರೆ.

ಮಲಗುವ ಮುನ್ನ ನೀರು ಕುಡಿಯುವುದು ಸರಿಯೇ? ಆರೋಗ್ಯ ತಜ್ಞರ ಎಚ್ಚರಿಕೆ ತಿಳಿಯಿರಿ!

ಇಂದಿನ ವೇಗದ ಜೀವನಶೈಲಿಯಲ್ಲಿ ಹಲವರಿಗೆ ಮಲಗುವ ಮುನ್ನ ನೀರು ಅಥವಾ ಇತರ ಲಿಕ್ವಿಡ್ ಪಾನೀಯಗಳನ್ನು ಸೇವಿಸುವ ಅಭ್ಯಾಸ ಹೆಚ್ಚಾಗಿದೆ.

ಇದರಿಂದ ದೇಹ ಹೈಡ್ರೇಟ್ ಆಗುತ್ತದೆ ಎಂಬ ನಂಬಿಕೆ ಇದ್ದರೂ, ಕೆಲವು ಸಂದರ್ಭಗಳಲ್ಲಿ ಇದು ನಿದ್ರೆ ಗುಣಮಟ್ಟಕ್ಕೆ ಅಡ್ಡಿಯಾಗುವ ಸಾಧ್ಯತೆ ಇದೆ ಎಂದು ಆರೋಗ್ಯ ತಜ್ಞರು ತಿಳಿಸಿದ್ದಾರೆ.

ರಾತ್ರಿ ವೇಳೆ ಅತಿಯಾಗಿ ನೀರು, ಚಹಾ ಅಥವಾ ಕಾಫಿ ಸೇವಿಸಿದರೆ ಪದೇಪದೇ ಮೂತ್ರಕ್ಕೆ ಹೋಗುವ ಸಮಸ್ಯೆ ಉಂಟಾಗಿ ನಿದ್ರೆ ಭಂಗವಾಗಬಹುದು ಎಂದು ವೈದ್ಯರು ಎಚ್ಚರಿಸಿದ್ದಾರೆ. ವಿಶೇಷವಾಗಿ ಕ್ಯಾಫಿನ್ ಇರುವ ಪಾನೀಯಗಳು ನಿದ್ರೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತವೆ ಎಂದು ಹೇಳಲಾಗಿದೆ.

ತಜ್ಞರ ಪ್ರಕಾರ, ಮಲಗುವ ಮುನ್ನ ಸುಮಾರು 100 ರಿಂದ 200 ಮಿಲಿ ಲೀಟರ್‌ವರೆಗೆ ನೀರು ಸೇವಿಸುವುದು ಸಾಮಾನ್ಯವಾಗಿ ಸುರಕ್ಷಿತ ಎಂದು ಪರಿಗಣಿಸಲಾಗುತ್ತದೆ. ಆದರೆ ಇದು ವ್ಯಕ್ತಿಯ ಆರೋಗ್ಯ ಸ್ಥಿತಿ ಹಾಗೂ ದಿನವಿಡೀ ತೆಗೆದುಕೊಂಡ ನೀರಿನ ಪ್ರಮಾಣದ ಮೇಲೆ ಅವಲಂಬಿತವಾಗಿರುತ್ತದೆ.

ಕಿಡ್ನಿ, ಹೃದಯ ಅಥವಾ ಮೂತ್ರಾಶಯ ಸಂಬಂಧಿತ ಸಮಸ್ಯೆ ಇರುವವರು ಹಾಗೂ ಮಧುಮೇಹಿಗಳು ಮಲಗುವ ಮುನ್ನ ಲಿಕ್ವಿಡ್ ಸೇವನೆ ಕುರಿತು ವಿಶೇಷ ಎಚ್ಚರಿಕೆ ವಹಿಸಬೇಕು ಎಂದು ವೈದ್ಯರು ಸಲಹೆ ನೀಡಿದ್ದಾರೆ.

ಆರೋಗ್ಯ ಕಾಪಾಡಲು ಮಲಗುವ ಒಂದು ಗಂಟೆ ಮೊದಲು ಹೆಚ್ಚು ನೀರು ಕುಡಿಯುವುದನ್ನು ತಪ್ಪಿಸಬೇಕು, ರಾತ್ರಿ ಕ್ಯಾಫಿನ್ ಪಾನೀಯಗಳನ್ನು ಕಡಿಮೆ ಮಾಡಬೇಕು ಹಾಗೂ ದಿನವಿಡೀ ಸಮರ್ಪಕವಾಗಿ ನೀರು ಸೇವಿಸುವ ಅಭ್ಯಾಸ ಬೆಳೆಸಿಕೊಳ್ಳಬೇಕು ಎಂದು ತಜ್ಞರು ಸೂಚಿಸಿದ್ದಾರೆ.

ಹಿಜಾಬ್ ವಿಚಾರ ಮತ್ತೆ ಮುಂದಿಟ್ಟು ಮತೀಯ ವಿಷ ಬೀಜ ಬಿತ್ತುತ್ತಿದೆ: ಸರ್ಕಾರದ ವಿರುದ್ಧ ಮಹೇಶ್ ಟೆಂಗಿನಕಾಯಿ ವಾಗ್ದಾಳಿ

ಬೆಂಗಳೂರು: ಕಾಂಗ್ರೆಸ್ ಸರ್ಕಾರ ಹಿಜಾಬ್ ವಿಚಾರವನ್ನು ಮತ್ತೆ ಮುನ್ನೆಲೆಗೆ ತಂದು ಮಕ್ಕಳಲ್ಲಿ ಮತೀಯ ಭಾವನೆಗಳನ್ನು ಬಿತ್ತಲು ಯತ್ನಿಸುತ್ತಿದೆ ಎಂದು ಶಾಸಕ ಮಹೇಶ್ ಟೆಂಗಿನಕಾಯಿ ಆರೋಪಿಸಿದ್ದಾರೆ. ಹಿಜಾಬ್‌ಗೆ ಅವಕಾಶ ನೀಡುವ ಸರ್ಕಾರದ ನಿರ್ಧಾರವನ್ನು ತೀವ್ರವಾಗಿ ವಿರೋಧಿಸಿದ ಅವರು, ಇದು ಅಲ್ಪಸಂಖ್ಯಾತರ ಓಲೈಕೆಯ ರಾಜಕೀಯದ ಭಾಗ ಎಂದು ಟೀಕಿಸಿದರು.

ರಾಜ್ಯ ಬಿಜೆಪಿ ಕಾರ್ಯಾಲಯದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “2022ರಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಶಾಲೆಗಳಲ್ಲಿ ವಸ್ತ್ರಸಂಹಿತೆ ಅಗತ್ಯ ಎಂಬುದನ್ನು ನ್ಯಾಯಾಲಯವೂ ಎತ್ತಿಹಿಡಿದಿತ್ತು. ಆದರೆ ಇದೀಗ ಕಾಂಗ್ರೆಸ್ ಸರ್ಕಾರ ಹಿಜಾಬ್ ಧರಿಸಲು ಅವಕಾಶ ನೀಡುವ ನಿರ್ಧಾರ ಕೈಗೊಂಡಿದೆ” ಎಂದು ದೂರಿದರು.

ದಾವಣಗೆರೆ ಉಪಚುನಾವಣೆಯ ಬಳಿಕ ಸರ್ಕಾರದಲ್ಲಿ ಆತಂಕ ಮತ್ತು ಗೊಂದಲ ಹೆಚ್ಚಾಗಿದ್ದು, ಅದನ್ನು ಮುಚ್ಚಿಹಾಕಲು ಈ ರೀತಿಯ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಅವರು ಆರೋಪಿಸಿದರು. “ಅಲ್ಪಸಂಖ್ಯಾತರನ್ನು ಓಲೈಸುವ ಉದ್ದೇಶದಿಂದ ಸರ್ಕಾರ ಈ ರೀತಿಯ ಕ್ರಮ ಕೈಗೊಳ್ಳುತ್ತಿದೆ” ಎಂದರು.

ಶಿಕ್ಷಣ ಸಚಿವರು ಮತ್ತು ಸರ್ಕಾರ ಮಕ್ಕಳಲ್ಲಿ ಮತೀಯ ಭಾವನೆಗಳನ್ನು ಬಿತ್ತಬಾರದು ಎಂದು ಎಚ್ಚರಿಸಿದ ಅವರು, “ಶಿಕ್ಷಣ ಪಡೆಯಲು ಬರುವ ವಿದ್ಯಾರ್ಥಿಗಳು ಜಾತಿ, ಧರ್ಮ ಮತ್ತು ಪಂಥಗಳನ್ನು ಬದಿಗಿಟ್ಟು ಬರಬೇಕು. ಒಂದೇ ರೀತಿಯ ಸಮವಸ್ತ್ರ ಧರಿಸಿದಾಗ ಎಲ್ಲರೂ ಸಮಾನರು ಎಂಬ ಭಾವನೆ ಮೂಡುತ್ತದೆ. ಇದರಿಂದ ವಿದ್ಯಾರ್ಥಿಗಳಲ್ಲಿ ಏಕತೆಯ ಮನೋಭಾವ ಬೆಳೆಸಬಹುದು” ಎಂದು ಹೇಳಿದರು.

ಯಾವುದೇ ಅಲ್ಪಸಂಖ್ಯಾತ ಸಮುದಾಯದಿಂದ ಬೇಡಿಕೆ ಇಲ್ಲದಿದ್ದರೂ ಸರ್ಕಾರ ಹಿಜಾಬ್ ವಿಚಾರವನ್ನು ಮತ್ತೆ ಮುಂದಕ್ಕೆ ತರುತ್ತಿದೆ ಎಂದು ಆರೋಪಿಸಿದ ಅವರು, “ಶಾಲೆಗಳಲ್ಲಿ ಹಿಜಾಬ್‌ಗೆ ಯಾರೂ ಅವಕಾಶ ಕೇಳಿಲ್ಲ. ಕಾಂಗ್ರೆಸ್ ಸರ್ಕಾರವೇ ಹಳೆಯ ವಿವಾದವನ್ನು ಜೀವಂತಗೊಳಿಸಲು ಈ ಪ್ರಯತ್ನ ಮಾಡುತ್ತಿದೆ” ಎಂದು ಟೀಕಿಸಿದರು.

ದಾವಣಗೆರೆ ಉಪಚುನಾವಣೆಯ ನಂತರ ಉಂಟಾದ ಆಂತರಿಕ ಭಿನ್ನಾಭಿಪ್ರಾಯಗಳನ್ನು ಮುಚ್ಚಿಹಾಕಲು ಸರ್ಕಾರ ಹಿಜಾಬ್ ವಿಚಾರ ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದ ಅವರು, “ಈ ನಿರ್ಧಾರಕ್ಕೆ ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸುತ್ತದೆ. ಇದರ ವಿರುದ್ಧ ಹೋರಾಟ ನಡೆಸುತ್ತೇವೆ” ಎಂದು ಎಚ್ಚರಿಕೆ ನೀಡಿದರು.

ಶಾಲೆಗಳಲ್ಲಿ ವಸ್ತ್ರಸಂಹಿತೆ ಇರಬೇಕೋ ಬೇಡವೋ ಸ್ಪಷ್ಟಪಡಿಸಲಿ: ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

ಬೆಂಗಳೂರು: ಶಾಲೆಗಳಲ್ಲಿ ವಸ್ತ್ರಸಂಹಿತೆ ಇರಬೇಕೇ ಅಥವಾ ಬೇಡವೇ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕು ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಆಗ್ರಹಿಸಿದ್ದಾರೆ. ಹಿಜಾಬ್ ವಿಚಾರವಾಗಿ ರಾಜ್ಯ ಸರ್ಕಾರ ಹೊರಡಿಸಿರುವ ಸುತ್ತೋಲೆಯನ್ನು ಟೀಕಿಸಿದ ಅವರು, ಇದು ಮತೀಯ ಓಲೈಕೆಯ ರಾಜಕೀಯದ ಭಾಗವಾಗಿದೆ ಎಂದು ಆರೋಪಿಸಿದರು.

ರಾಜ್ಯ ಬಿಜೆಪಿ ಕಾರ್ಯಾಲಯದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಸಿ.ಟಿ.ರವಿ, “ಹಿಜಾಬ್‌ಗೆ ಅವಕಾಶ ನೀಡಿ, ಜನಿವಾರ ಹಾಗೂ ರುದ್ರಾಕ್ಷಿಯನ್ನೂ ಅದಕ್ಕೆ ಸೇರಿಸಿ, ಕೇಸರಿ ಶಾಲಿಗೆ ನಿಷೇಧ ಹೇರುವ ರೀತಿಯಲ್ಲಿ ಸರ್ಕಾರ ಸುತ್ತೋಲೆ ಹೊರಡಿಸಿದೆ” ಎಂದು ಹೇಳಿದರು.

ಇದೇ ವೇಳೆ ಬಿಜೆಪಿ ಹಿಜಾಬ್ ವಿರೋಧಿಯಲ್ಲ ಎಂದು ಸ್ಪಷ್ಟಪಡಿಸಿದ ಅವರು, ನಾವು ಹಿಜಾಬ್ ಅನ್ನು ವಿರೋಧಿಸಿಲ್ಲ. ಆದರೆ ಶಾಲೆಗಳಲ್ಲಿ ಯೂನಿಫಾರಂ ವ್ಯವಸ್ಥೆಯ ಉದ್ದೇಶವೇನು ಎಂಬುದನ್ನು ಅರ್ಥಮಾಡಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.

“ಯಾವಾಗಿನಿಂದ ಯೂನಿಫಾರಂ ವ್ಯವಸ್ಥೆ ಜಾರಿಗೆ ಬಂದಿದೆ? ಅದರ ಉದ್ದೇಶವೇನು?” ಎಂದು ಪ್ರಶ್ನಿಸಿದ ಅವರು, ಶಿಕ್ಷಣ ಸಚಿವರಿಗೆ ಅದರ ಇತಿಹಾಸ ಮತ್ತು ಉದ್ದೇಶದ ಬಗ್ಗೆ ಸ್ಪಷ್ಟತೆ ಇಲ್ಲ ಎಂದು ಟೀಕಿಸಿದರು. “ಅಕ್ಷರ ಮತ್ತು ಜ್ಞಾನ ಹೆಚ್ಚಿಸಬೇಕಾದ ಶಿಕ್ಷಣ ಸಚಿವರು ಮತೀಯ ಓಲೈಕೆಯ ರಾಜಕೀಯದ ಭಾಗವಾಗಿ ಶಾಲೆಗಳಲ್ಲಿ ಧಾರ್ಮಿಕ ಭಾವನೆಗಳಿಗೆ ಜಾತ್ಯತೀತತೆಯ ಹೆಸರಿನಲ್ಲಿ ಅವಕಾಶ ನೀಡಿದ್ದಾರೆ” ಎಂದು ಆರೋಪಿಸಿದರು.

ಶಾಲೆ ಹಾಗೂ ಕಾಲೇಜುಗಳಲ್ಲಿ ಎಲ್ಲ ವಿದ್ಯಾರ್ಥಿಗಳೂ ಸಮಾನರು ಎಂಬ ಭಾವನೆ ಬೆಳೆಸಲು ವಸ್ತ್ರಸಂಹಿತೆ ಜಾರಿಗೆ ತರಲಾಗಿದೆ ಎಂದು ಸಿ.ಟಿ.ರವಿ ಹೇಳಿದರು. ವಿದ್ಯಾರ್ಥಿಗಳು ಬೇರೆ ಬೇರೆ ಧರ್ಮ ಮತ್ತು ಸಂಪ್ರದಾಯಗಳಿಗೆ ಸೇರಿದವರಾಗಿದ್ದರೂ, ಶಾಲೆಯಲ್ಲಿ ಎಲ್ಲರೂ ಸಮಾನವಾಗಿ ಗುರುತಿಸಿಕೊಳ್ಳಬೇಕು ಎಂಬ ಉದ್ದೇಶದಿಂದ ಯೂನಿಫಾರಂ ವ್ಯವಸ್ಥೆ ಅಳವಡಿಸಲಾಗಿದೆ ಎಂದು ವಿವರಿಸಿದರು.

ಸ್ವಾತಂತ್ರ್ಯ ಪೂರ್ವದಲ್ಲಿಯೇ ಮಿಷನರಿಗಳು ಹಾಗೂ ಮೈಸೂರು ಸಂಸ್ಥಾನದ ಕಾಲಘಟ್ಟದಲ್ಲೇ ಯೂನಿಫಾರಂ ವ್ಯವಸ್ಥೆ ಜಾರಿಗೆ ಬಂದಿತ್ತು ಎಂದು ತಿಳಿಸಿದ ಅವರು, ಆ ಸಮಯದಲ್ಲಿಯೂ ಯೂನಿಫಾರಂ ಒಳಗೆ ಹಿಜಾಬ್ ಪ್ರವೇಶ ಮಾಡಿರಲಿಲ್ಲ ಎಂದು ಹೇಳಿದರು.

ಸ್ಮಾರ್ಟ್ ವಾಚ್ ನಂಬಿ ಎದೆ ನೋವು ನಿರ್ಲಕ್ಷ್ಯ ಮಾಡಿದ ನಟ ದಿಲೀಪ್ ರಾಜ್?

ಫಿಟ್ನೆಸ್ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ನಟ ದಿಲೀಪ್ ರಾಜ್ ಹೃದಯಾಘಾತದಿಂದ ನಿಧನರಾಗಿರುವುದು ಅನೇಕರನ್ನು ಬೆಚ್ಚಿಬೀಳಿಸಿದೆ. ಎದೆನೋವು ಕಾಣಿಸಿಕೊಂಡರೂ ಸ್ಮಾರ್ಟ್ ವಾಚ್ ತೋರಿಸಿದ ವರದಿ ನಂಬಿ ಅವರು ನಿರ್ಲಕ್ಷ್ಯ ಮಾಡಿದ್ದರೆಂಬ ಮಾಹಿತಿ ಈಗ ಚರ್ಚೆಗೆ ಗ್ರಾಸವಾಗಿದೆ.

ಮೇ 12ರ ರಾತ್ರಿ ದಿಲೀಪ್ ರಾಜ್ ಅವರಿಗೆ ಎದೆನೋವು ಕಾಣಿಸಿಕೊಂಡಿತ್ತು. ಈ ವೇಳೆ ಸ್ಮಾರ್ಟ್ ವಾಚ್‌ನಲ್ಲಿ ಹೃದಯ ಬಡಿತ ಪರಿಶೀಲಿಸಿದಾಗ ಎಲ್ಲವೂ ನಾರ್ಮಲ್ ಎಂದು ತೋರಿಸಿತ್ತು. ಇದರಿಂದ ಅವರು ಆಸ್ಪತ್ರೆಗೆ ಹೋಗದೆ ವಿಶ್ರಾಂತಿ ಪಡೆದಿದ್ದಾರೆ ಎನ್ನಲಾಗಿದೆ.

ಮೇ 13ರ ಬೆಳಿಗ್ಗೆ ವೈದ್ಯರ ಅಪಾಯಿಂಟ್ಮೆಂಟ್ ಪಡೆದಿದ್ದರೂ, ಚಿಕಿತ್ಸೆ ಪಡೆಯುವ ಮುನ್ನವೇ ಅವರಿಗೆ ತೀವ್ರ ಹೃದಯಾಘಾತ ಸಂಭವಿಸಿದೆ. ವೈದ್ಯಕೀಯ ತಪಾಸಣೆಗೆ ಬದಲು ತಂತ್ರಜ್ಞಾನವನ್ನು ಅತಿಯಾಗಿ ನಂಬುವುದು ಎಷ್ಟು ಅಪಾಯಕಾರಿ ಎಂಬ ಪ್ರಶ್ನೆ ಇದೀಗ ಮೂಡಿದೆ.

ಸ್ಮಾರ್ಟ್ ವಾಚ್‌ಗಳು ಆರೋಗ್ಯದ ಮೂಲಭೂತ ಮಾಹಿತಿಗಳನ್ನು ನೀಡಬಹುದಾದರೂ, ಅವು ವೈದ್ಯಕೀಯ ಪರೀಕ್ಷೆಗೆ ಪರ್ಯಾಯವಲ್ಲ ಎಂದು ತಜ್ಞರು ಹೇಳುತ್ತಾರೆ. ಎದೆನೋವು, ಉಸಿರಾಟ ತೊಂದರೆಗಳಂತಹ ಲಕ್ಷಣಗಳನ್ನು ಎಂದಿಗೂ ನಿರ್ಲಕ್ಷ್ಯ ಮಾಡಬಾರದು ಎಂಬ ಎಚ್ಚರಿಕೆಯೂ ವ್ಯಕ್ತವಾಗಿದೆ.

ದಿಲೀಪ್ ರಾಜ್ ಅವರು ನಟ, ನಿರ್ಮಾಪಕ ಮತ್ತು ಡಬ್ಬಿಂಗ್ ಕಲಾವಿದರಾಗಿ ಕನ್ನಡ ಮನರಂಜನಾ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಿದ್ದರು.

‘ನಿನ್ನನ್ನು ಮತ್ತೆ ನೋಡುವವರೆಗೂ ನೆಮ್ಮದಿ ಇಲ್ಲ’: ದಿಲೀಪ್ ರಾಜ್ ಪತ್ನಿ ಭಾವುಕ ಪೋಸ್ಟ್

ನಟ ದಿಲೀಪ್ ರಾಜ್ ನಿಧನದ ಬಳಿಕ ಅವರ ಪತ್ನಿ ಶ್ರೀವಿದ್ಯಾ ಹಂಚಿಕೊಂಡ ಭಾವುಕ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 25 ವರ್ಷಗಳ ದಾಂಪತ್ಯ ಬದುಕಿನ ನೆನಪುಗಳ ನಡುವೆ ಪತಿಯನ್ನು ಕಳೆದುಕೊಂಡ ನೋವನ್ನು ಅವರು ಮನಮುಟ್ಟುವ ಸಾಲುಗಳಲ್ಲಿ ವ್ಯಕ್ತಪಡಿಸಿದ್ದಾರೆ.

“ದಿಲೀಪ್ ಅವರು ನಮ್ಮೊಂದಿಗೇ ಇರುತ್ತಾರೆ. ಅವರ ಕಲೆ, ಸಿನಿಮಾ ಮತ್ತು ಒಳ್ಳೆಯತನದ ರೂಪದಲ್ಲಿ ಅವರು ಸದಾ ಜೀವಂತ” ಎಂದು ಶ್ರೀವಿದ್ಯಾ ಬರೆದುಕೊಂಡಿದ್ದಾರೆ.

ಇನ್ನೂ ಪತಿಯ ಅಗಲಿಕೆಯ ನೋವನ್ನು ಹೇಳಿಕೊಂಡ ಅವರು, “ಅವರ ಆತ್ಮಕ್ಕೆ ಶಾಂತಿ ಸಿಗಲಿ. ಆದರೆ ನಾನು ಅವರನ್ನು ಮತ್ತೆ ನೋಡುವವರೆಗೂ ನನ್ನ ಆತ್ಮಕ್ಕೆ ಶಾಂತಿ ಸಿಗುವುದಿಲ್ಲ” ಎಂದು ಬರೆದಿರುವುದು ಓದುಗರ ಕಣ್ಣೀರಾಗಿಸಿದೆ.

ದಿಲೀಪ್ ರಾಜ್ ಹಾಗೂ ಶ್ರೀವಿದ್ಯಾ ಇಬ್ಬರೂ ಸೇರಿ ಹಲವು ಧಾರಾವಾಹಿಗಳನ್ನು ನಿರ್ಮಿಸಿದ್ದರು. ‘ಕೃಷ್ಣ ರುಕ್ಕು’ ಸೇರಿ ಅನೇಕ ಜನಪ್ರಿಯ ಧಾರಾವಾಹಿಗಳ ಯಶಸ್ಸಿನ ಹಿಂದೆ ಈ ಜೋಡಿಯ ಶ್ರಮ ಇತ್ತು.

ಶ್ರೀವಿದ್ಯಾ ಅವರ ಈ ಭಾವುಕ ಸಂದೇಶಕ್ಕೆ ಅಭಿಮಾನಿಗಳು ಮತ್ತು ಸಿನಿರಂಗದ ಗಣ್ಯರು ಸಾಂತ್ವನ ಸೂಚಿಸುತ್ತಿದ್ದಾರೆ.

ಬಿಡದಿ ಟೌನ್ ಶಿಪ್ ಯೋಜನೆ ವಿರುದ್ಧ ಮತ್ತೆ ದನಿಯೆತ್ತಿದ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ

ಬೆಂಗಳೂರು: ರಿಯಲ್ ಎಸ್ಟೇಟ್ ಮಾಡುವುದು ರಾಜ್ಯ ಸರ್ಕಾರದ ಕೆಲಸವಲ್ಲ ಎಂದು ಸಿದ್ದರಾಮಯ್ಯ ಸರಕಾರದ ಮೇಲೆ ಹರಿಹಾಯ್ದಿರುವ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು, ರೈತರಿಗೆ ಬೇಡವಾಗಿರುವ ಬಿಡದಿ ಟೌನ್ ಶಿಪ್ ಯೋಜನೆಯನ್ನು ಕೂಡಲೇ ಕೈಬಿಡಬೇಕು ಎಂದು ಒತ್ತಾಯಿಸಿದ್ದಾರೆ.

ಪಕ್ಷದ ರಾಜ್ಯ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತಾಡಿಸಿದ ಕೇಂದ್ರ ಸಚಿವರು; ರೈತರು ಜಮೀನು ನೀಡಲ್ಲ ಎಂದು ಬೀದಿಯಲ್ಲಿ ಕೂತಿದ್ದಾರೆ. ಆದರೆ, ರಾಜ್ಯ ಸರ್ಕಾರದಲ್ಲಿರುವ ರಿಯಲ್ ಎಸ್ಟೇಟ್ ದಂಧೆಕೋರರು ಭೂಮಿಯನ್ನು ಕಿತ್ತುಕೊಂಡು ವ್ಯವಹಾರ ಮಾಡಿಯೇ ಸಿದ್ಧ ಎಂದು ಹೊರಟಿದ್ದಾರೆ. ಇದು ಯಾರಪ್ಪನ ಭೂಮಿ ಅವರು ಧಮ್ಕಿ ಹಾಕಿ ಕಿತ್ತುಕೊಳ್ಳುವುದಕ್ಕೆ ಎಂದು ಕಿಡಿಕಾರಿದರು.

ಜನರ ಆಡಳಿತ ನಡೆಸಬೇಕಾದ ಈ ಸರ್ಕಾರ ಬ್ರೋಕರ್ ಕೆಲಸ ಮಾಡಲು ಹೊರಟಿದೆ. ಬಡ ರೈತರಿಂದ ಜಮೀನು ಕಿತ್ತುಕೊಂಡು ರಿಯಲ್ ಎಸ್ಟೇಟ್ ಮಾಫಿಯಾ ಮಾಡಲು ಹೊರಟಿದೆ. ಚದರ ಅಡಿ ವ್ಯವಹಾರದಲ್ಲಿ ದಂಧೆ ಮಾಡಲು ಮುಂದಾಗಿದೆ. ಇದರ ಬ್ರೋಕರ್ ಗಿರಿಯನ್ನು ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ವಹಿಸಿಕೊಂಡಿದ್ದಾರೆ ಎಂದು ಸಚಿವ ಕುಮಾರಸ್ವಾಮಿ ಅವರು ಆರೋಪ ಮಾಡಿದರು.

ಎಂಟು ಹಳ್ಳಿಗಳ ರೈತರ ಅತ್ಯಂತ ಫಲವತ್ತಾದ ತೋಟಗಾರಿಕೆ ಬೆಳೆಗಳನ್ನು ಬೆಳೆಯುವ ಕೃಷಿ ಭೂಮಿಯನ್ನು ಲಪಟಾಯಿಸಿ ರಿಯಲ್ ಎಸ್ಟೇಟ್ ಮಾಡಲು ಹೊರಟಿರುವ ರಾಜ್ಯ ಸರ್ಕಾರವು ನೇರವಾಗಿ ದಂಧೆಯಲ್ಲಿ ಮುಳುಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಈ ದಂಡಕೋರರ ಕೈಗೊಂಬೆಯಾಗಿ ವರ್ತಿಸುತ್ತಿದ್ದಾರೆ ಎಂದು ಸಚಿವ ಕುಮಾರಸ್ವಾಮಿ ಅವರು ಗಂಭೀರ ಆರೋಪ ಮಾಡಿದರು.

ಯಾವುದೇ ಕಾರಣಕ್ಕೂ ಭೂಮಿ ಕೊಡುವುದಿಲ್ಲ ಎನ್ನುವುತ್ತಿರುವ ರೈತರನ್ನು ಬೆದರಿಸಿ ಹೆದರಿಸುವ, ಬೆದರಿಸುವ ಕೆಲಸ ಆಗುತ್ತಿದೆ. ಇಂತಹವರ ಬೆದರಿಕೆಯ ಆಟ ನಮ್ಮ ಮುಂದೆ ನಡೆಯುವುದಿಲ್ಲ. ಭೂಮಿ ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ. ಯಾವ ರೈತರು ಕೂಡ ಭೂಮಿ ಬಿಟ್ಟುಕೊಡಲು ತಯಾರಿಲ್ಲ. ಅದು ಹೇಗೆ ಭೂಮಿ ವಶಪಡಿಸಿಕೊಳ್ಳುತ್ತಿರೋ ಬಂದು ವಶಪಡಿಸಿಕೊಳ್ಳಲಿ ನೋಡೋಣ ಎಂದು ಕುಮಾರಸ್ವಾಮಿ ಅವರು ನೇರ ಸವಾಲು ಹಾಕಿದರು.

ಯಾರ ಯಾರ ಕಾಲದಲ್ಲಿ ಯಾರ ಯಾರ ಕಾಲು ಕಟ್ತೀರಿ ಎನ್ನುವುದು ನನಗೆ ಗೊತ್ತಿದೆ ಗೊತ್ತಿದೆ ಎಂದು ಹೇಳುತ್ತಲೇ ಕೆಲವರ ಹೆಸರು ಹೇಳದೆ ಆಕ್ರೋಶ ವ್ಯಕ್ತಪಡಿಸಿದ ಕೇಂದ್ರ ಸಚಿವರು, ಇದೇ ಸಂದರ್ಭದಲ್ಲಿ ರಾಮನಗರದ ಜಿಲ್ಲಾಧಿಕಾರಿಗೆ ಕಟುವಾದ ಶಬ್ದಗಳಿಂದ ಎಚ್ಚರಿಕೆ ನೀಡಿದರು.

ರಾಮನಗರ ಜಿಲ್ಲಾಧಿಕಾರಿಗೆ ನೇರ ಎಚ್ಚರಿಕೆ:

ರೈತರ ಭೂಮಿ ಕಿತ್ತುಕೊಂಡು ರಿಯಲ್ ಎಸ್ಟೇಟ್ ದಂಧೆ ಮಾಡುವ ವ್ಯಕ್ತಿಗಳ ಹೇಳುವುದಕ್ಕೆಲ್ಲ ಈ ಜಿಲ್ಲಾಧಿಕಾರಿ ಕುಣಿಯುತ್ತಿದ್ದಾರೆ. ಅವರು ಹೇಳಿದ್ದಕ್ಕೆಲ್ಲಾ ಈ ಡಿಸಿ ಸೈನ್ ಹೊಡೆದುಕೊಂಡು ಕೂತಿದ್ದಾರೆ. ಒಂದು ಗ್ರಾಮಕ್ಕೆ ಹೋಗಿ ರೈತರ ಕಷ್ಟ ಸುಖ ಕೇಳಿಲ್ಲ, ಸಭೆ ನಡೆಸಿಲ್ಲ. ನನ್ನ ನಂಬರ್‌ನಿಂದ ಫೋನ್ ಹೋದರೆ ಡಿಸಿ ಫೋನೇ ತೆಗೆಯಲ್ಲ. ಏನೇನು ಮಾಡುತ್ತಿದ್ದಾರೆ ಎಂಬುದನ್ನು ನಾನು ಕೂಡ ನೋಡುತ್ತಿದ್ದೇನೆ. ಸಮಯ ಬಂದಾಗ ಉತ್ತರ ಕೊಡುತ್ತೇನೆ ಎಂದು ಅವರು ಎಚ್ಚರಿಕೆ ನೀಡಿದರು.

ಮುಖ್ಯಮಂತ್ರಿಗಳಿಗೆ ಒಂದು ಮಾತು ಹೇಳಲು ಬಯಸುತ್ತೇನೆ, ಕುರ್ಚಿ ಸಿಕ್ಕಿದರೆ ಸಾಕು ಎಂದು ಇಂಥ ದಂಧೆಕೋರನ ಮಾತು ಕಟ್ಟಿಕೊಂಡು ರಿಯಲ್ ಎಸ್ಟೇಟ್ ದಲ್ಲಾಳಿ ಆಗಬೇಡಿ. ಕೊನೆಗಾಲದಲ್ಲಿ ಹೋಗಬೇಕಾದರೆ ಸಿದ್ದರಾಮಯ್ಯನವರೇ ಗೌರವಯುತವಾಗಿ ಒಳ್ಳೆಯ ಹೆಸರು ತೆಗೆದುಕೊಂಡು ಹೋಗಿ. ಹಲವಾರು ಭಾಗ್ಯ ಕೊಟ್ಟರೂ 2018ರಲ್ಲಿ 85 ಸೀಟಿಗೆ ಇಳಿಸಿದರು ಜನರು. ಇಂಥ ಗ್ಯಾರಂಟಿ ಕೊಟ್ಟು ಜನ ಈಗ ಹೇಗೆ ಉಳಿಸ್ತಾರೆ ಅಂತ ಭಾವಿಸಬೇಡಿ ಎಂದು ಕುಮಾರಸ್ವಾಮಿ ಅವರು ತೀವ್ರ ತರಾಟೆಗೆ ತೆಗೆದುಕೊಂಡರು.

ಸಂಪುಟ ಸಭೆಯ ನಿರ್ಧಾರಗಳ ಬಗ್ಗೆ ತೀವ್ರ ಕಿಡಿಕಾರಿದ ಅವರು; ಬೇಕಾಬಿಟ್ಟಿ ನಿರ್ಧಾರಗಳನ್ನು ಕೈಗೊಳ್ಳುವ ಇದನ್ನು ಕ್ಯಾಬಿನೆಟ್ ಎನ್ನುತ್ತೀರಾ? ಕ್ಯಾಬಿನೆಟ್ ಎನ್ನೋದು ಹೆಸರಿಗೆ ಮಾತ್ರ. ಕ್ಯಾಬಿನೆಟ್ ನಲ್ಲಿ ಹೇಳೋರು ಕೇಳೋರು ಯಾರೂ ಇಲ್ಲ. ಕ್ಯಾಬಿನೆಟ್ ಅಂದ್ರೆ ಎಲ್ಲವನ್ನೂ ಹರಾಜು ಹಾಕುವ ಮನೆ ಎನ್ನಬಹುದಾ? ಎಂದು ಅವರು ಲೇವಡಿ ಮಾಡಿದರು.

ತಾಯಿಯನ್ನು ನೋಡಿಕೊಳ್ಳುವುದು ಮಗಳ ಜವಾಬ್ದಾರಿ: ಆಸ್ತಿ ಹಿಂದಿರುಗಿಸುವ ಆದೇಶ ಎತ್ತಿಹಿಡಿದ ಹೈಕೋರ್ಟ್

ಬೆಂಗಳೂರು: ಮಗಳು ತನ್ನ ತಾಯಿಯನ್ನು ನೋಡಿಕೊಳ್ಳುವ ಕಾನೂನು, ನೈತಿಕ ಹಾಗೂ ಸಾಮಾಜಿಕ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿರುವ ಕರ್ನಾಟಕ ಹೈಕೋರ್ಟ್, ಮಗಳ ಹೆಸರಿಗೆ ವರ್ಗಾಯಿಸಲಾಗಿದ್ದ ತಾಯಿಯ ಆಸ್ತಿಯನ್ನು ಮರುಹಿಂತಿರುಗಿಸಲು ನೀಡಿದ್ದ ಆದೇಶವನ್ನು ಎತ್ತಿಹಿಡಿದಿದೆ.

ಪೋಷಕರು ಮತ್ತು ಹಿರಿಯ ನಾಗರಿಕರ ನಿರ್ವಹಣೆ ಹಾಗೂ ಕಲ್ಯಾಣ ಕಾಯ್ದೆಯಡಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದಂ ಅವರಿದ್ದ ನ್ಯಾಯಪೀಠ ಈ ಮಹತ್ವದ ತೀರ್ಪು ನೀಡಿದೆ.

ದಾನಪತ್ರದಲ್ಲಿ ತಾಯಿಯನ್ನು ನೋಡಿಕೊಳ್ಳಬೇಕೆಂಬ ಷರತ್ತು ಸ್ಪಷ್ಟವಾಗಿ ಉಲ್ಲೇಖಿಸದಿದ್ದರೂ, ಆಸ್ತಿ ವರ್ಗಾವಣೆಯ ಹಿಂದೆ ಅಂತಹ ನಂಬಿಕೆ ಅಡಕವಾಗಿರುತ್ತದೆ ಎಂಬುದು ಕಾನೂನಿನ ಆಶಯ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಮಗಳು ಆರ್. ಪವಿತ್ರಾ ಅವರಿಗೆ ಸ್ವಂತ ಮನೆ ಇದ್ದರೂ, ವೃದ್ಧ ತಾಯಿ ಬಾಡಿಗೆ ಮನೆಯಲ್ಲಿ ವಾಸಿಸುವಂತಾಗಿರುವುದು ಬೇಜವಾಬ್ದಾರಿತನವನ್ನು ತೋರಿಸುತ್ತದೆ ಎಂದು ಪೀಠ ಹೇಳಿದೆ. ಹಿರಿಯ ನಾಗರಿಕರ ಪೋಷಣೆ ಮತ್ತು ಕಲ್ಯಾಣ ಕಾಯ್ದೆಯ ಉದ್ದೇಶವೇ ಅಸಹಾಯಕ ಪೋಷಕರನ್ನು ರಕ್ಷಿಸುವುದಾಗಿದ್ದು, ತಾಂತ್ರಿಕ ಕಾರಣಗಳನ್ನು ಮುಂದಿಟ್ಟುಕೊಂಡು ಕಾಯ್ದೆಯ ಆಶಯವನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.

ಪೋಷಕರು ಮತ್ತು ಹಿರಿಯ ನಾಗರಿಕರ ನಿರ್ವಹಣೆ ಹಾಗೂ ಕಲ್ಯಾಣ ಕಾಯ್ದೆ ಹಿರಿಯ ನಾಗರಿಕರನ್ನು ಬಡತನ ಮತ್ತು ನಿರ್ಲಕ್ಷ್ಯದಿಂದ ರಕ್ಷಿಸಲು ರೂಪುಗೊಂಡ ಪ್ರಯೋಜನಕಾರಿ ಕಾನೂನು ಎಂದು ಪೀಠ ಉಲ್ಲೇಖಿಸಿದೆ. ಪ್ರತಿಯೊಂದು ಪ್ರಕರಣದಲ್ಲೂ ಕಾಯ್ದೆಯ ಆಶಯವನ್ನು ಕಡೆಗಣಿಸಿದರೆ ಶಾಸನಬದ್ಧ ರಕ್ಷಣೆಯ ಉದ್ದೇಶವೇ ವಿಫಲವಾಗುತ್ತದೆ ಎಂದು ಅಭಿಪ್ರಾಯಪಟ್ಟಿದೆ.

ಪ್ರಕರಣದಲ್ಲಿ ಹಿರಿಯ ನಾಗರಿಕರಾದ ನಿವೃತ್ತ ಸರ್ಕಾರಿ ಶಾಲಾ ಶಿಕ್ಷಕಿ ಜಿ. ಹೇಮಾ ಅವರು ತಮ್ಮ ಸ್ವಂತ ಸಂಪಾದನೆಯ ಆಸ್ತಿಗಳನ್ನು ಮಗ ಆರ್. ವೇಣುಗೋಪಾಲ್ ಮತ್ತು ಮಗಳು ಆರ್. ಪವಿತ್ರಾ ಹೆಸರಿಗೆ ದಾನಪತ್ರದ ಮೂಲಕ ವರ್ಗಾಯಿಸಿದ್ದರು. ವೃದ್ಧಾಪ್ಯದಲ್ಲಿ ಮಕ್ಕಳು ಆಸರೆಯಾಗುತ್ತಾರೆ ಹಾಗೂ ಆಸ್ತಿಯ ಬಾಡಿಗೆಯಿಂದ ಜೀವನ ಸಾಗಿಸಲು ನೆರವಾಗುತ್ತಾರೆ ಎಂಬ ನಂಬಿಕೆಯಿಂದ ಈ ನಿರ್ಧಾರ ಕೈಗೊಂಡಿದ್ದರು.

ಆದರೆ ನಂತರ ಮಕ್ಕಳು ಮನೆಯ ಬಾಡಿಗೆ ಹಣ ವಸೂಲಿ ಮಾಡುತ್ತಿದ್ದರೂ, ತಾಯಿಯ ಆರೈಕೆ ಮತ್ತು ಅಗತ್ಯ ಸೌಲಭ್ಯಗಳ ಕಡೆ ಗಮನಹರಿಸಿರಲಿಲ್ಲ ಎಂದು ಆರೋಪಿಸಲಾಗಿದೆ. ಇದರಿಂದ ಬೇಸತ್ತ ಜಿ. ಹೇಮಾ ಅವರು ಹಿರಿಯ ನಾಗರಿಕರ ನಿರ್ವಹಣಾ ನ್ಯಾಯಮಂಡಳಿಗೆ ಅರ್ಜಿ ಸಲ್ಲಿಸಿ, ಮಕ್ಕಳ ಹೆಸರಿಗೆ ಮಾಡಿದ್ದ ದಾನಪತ್ರವನ್ನು ರದ್ದುಪಡಿಸುವಂತೆ ಮನವಿ ಮಾಡಿದ್ದರು.

ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮಂಡಳಿ ಆಸ್ತಿ ವರ್ಗಾವಣೆಯನ್ನು ರದ್ದುಪಡಿಸಿ, ಆಸ್ತಿಯನ್ನು ಮರುಕಳಿಸಿ ತಾಯಿ ಹೆಸರಿಗೆ ನೋಂದಣಿ ಮಾಡಿಸಿತ್ತು. ಬಳಿಕ ಮಗಳು ಸಲ್ಲಿಸಿದ್ದ ಮೇಲ್ಮನವಿಯನ್ನೂ ಉಪವಿಭಾಗಾಧಿಕಾರಿಗಳು ವಜಾಗೊಳಿಸಿದ್ದರು. ಇದನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದ ಮಗಳಿಗೆ ಇದೀಗ ಹಿನ್ನಡೆಯಾಗಿದೆ.

error: Content is protected !!