ಉತ್ತರ ಪ್ರದೇಶ: ಉತ್ತರ ಪ್ರದೇಶದ ಮೀರತ್ನಿಂದ ಪ್ರಯಾಗ್ರಾಜ್ವರೆಗೆ ಸಂಪರ್ಕ ಕಲ್ಪಿಸುವ 594 ಕಿಲೋಮೀಟರ್ ಉದ್ದದ ಮಹತ್ವಾಕಾಂಕ್ಷಿ ಗಂಗಾ ಎಕ್ಸ್ಪ್ರೆಸ್ವೇಯನ್ನು ಪ್ರಧಾನಿ ನರೇಂದ್ರ ಮೋದಿ ಇಂದು ಉದ್ಘಾಟಿಸಿದರು. ಇದೇ ವೇಳೆ ಎರಡು ಅಮೃತ ಭಾರತ್ ಎಕ್ಸ್ಪ್ರೆಸ್ ರೈಲುಗಳಿಗೂ ಚಾಲನೆ ನೀಡಿದರು.
ಕಾರ್ಯಕ್ರಮಕ್ಕೂ ಮುನ್ನ ಪ್ರಧಾನಿ ಮೋದಿ ವಾರಾಣಸಿಯ ಶ್ರೀ ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಬಾಬಾ ವಿಶ್ವನಾಥ ಧಾಮದವರೆಗೆ ರೋಡ್ ಶೋ ನಡೆಸಿ ಭಕ್ತರ ಅಭಿವಾದನ ಸ್ವೀಕರಿಸಿದರು. ನಂತರ ಸರ್ವತ್ರ ಸಿದ್ಧಿ ಯೋಗದಲ್ಲಿ ವಿಶ್ವನಾಥನಿಗೆ ಪ್ರಾರ್ಥನೆ ಸಲ್ಲಿಸಿದರು.
ಹರ್ದೊಯಿ ಜಿಲ್ಲೆಯಲ್ಲಿ ನಿರ್ಮಾಣಗೊಂಡಿರುವ ಈ ಆರು ಪಥಗಳ ಗ್ರೀನ್ಫೀಲ್ಡ್ ಹೈ-ಸ್ಪೀಡ್ ಕಾರಿಡಾರ್ 36,230 ಕೋಟಿ ರೂಪಾಯಿ ವೆಚ್ಚದಲ್ಲಿ ಪೂರ್ಣಗೊಂಡಿದೆ. ಮೀರತ್, ಉನ್ನಾವೊ, ರಾಯ್ಬರೇಲಿ, ಪ್ರತಾಪ್ಗಢ, ಪ್ರಯಾಗ್ರಾಜ್, ಬುಲಂದ್ಶಹರ್, ಹಾಪುರ್, ಅಮ್ರೋಹಾ, ಸಂಭಲ್, ಬದೌನ್ ಹಾಗೂ ಶಹಜಹಾನ್ಪುರ ಸೇರಿದಂತೆ ಒಟ್ಟು 13 ಜಿಲ್ಲೆಗಳ ಮೂಲಕ ಈ ಎಕ್ಸ್ಪ್ರೆಸ್ವೇ ಹಾದು ಹೋಗುತ್ತದೆ.
ಉತ್ತರ ಪ್ರದೇಶದ ಪಶ್ಚಿಮ, ಮಧ್ಯ ಮತ್ತು ಪೂರ್ವ ಭಾಗಗಳನ್ನು ವೇಗವಾಗಿ ಸಂಪರ್ಕಿಸುವ ಈ ಕಾರಿಡಾರ್ ರಾಜ್ಯದ ಸಾರಿಗೆ ಮೂಲಸೌಕರ್ಯಕ್ಕೆ ಹೊಸ ಆಯಾಮ ನೀಡಲಿದೆ ಎಂದು ಪ್ರಧಾನಿ ಕಚೇರಿ ತಿಳಿಸಿದೆ.
ಈ ಯೋಜನೆಯಿಂದ ಮೀರತ್ನಿಂದ ಪ್ರಯಾಗ್ರಾಜ್ವರೆಗೆ ಪ್ರಯಾಣ ಸಮಯವು ಈಗಿನ 10ರಿಂದ 12 ಗಂಟೆಗಳ ಬದಲಿಗೆ ಕೇವಲ 6 ಗಂಟೆಗೆ ಇಳಿಕೆಯಾಗಲಿದೆ. ಇದರಿಂದ ಸರಕು ಹಾಗೂ ಪ್ರಯಾಣಿಕರ ಸಂಚಾರ ಹೆಚ್ಚು ಸುಗಮವಾಗಲಿದೆ.
ಶಹಜಹಾನ್ಪುರ ಜಿಲ್ಲೆಯಲ್ಲಿ 3.5 ಕಿಲೋಮೀಟರ್ ಉದ್ದದ ತುರ್ತು ವಿಮಾನ ಲ್ಯಾಂಡಿಂಗ್ ಸೌಲಭ್ಯವನ್ನು ಈ ಯೋಜನೆಯಲ್ಲಿ ಕಲ್ಪಿಸಲಾಗಿದೆ. ರಾಷ್ಟ್ರೀಯ ಭದ್ರತೆ ದೃಷ್ಟಿಯಿಂದಲೂ ಇದು ಮಹತ್ವದ್ದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗಂಗಾ ಎಕ್ಸ್ಪ್ರೆಸ್ವೇ ಕೇವಲ ರಸ್ತೆ ಯೋಜನೆಯಷ್ಟೇ ಅಲ್ಲದೆ, ಪ್ರಮುಖ ಆರ್ಥಿಕ ಕಾರಿಡಾರ್ ಆಗಿಯೂ ಬೆಳೆಯಲಿದೆ. ಸುಮಾರು 2,635 ಹೆಕ್ಟೇರ್ ಪ್ರದೇಶದಲ್ಲಿ ಲಾಜಿಸ್ಟಿಕ್ಸ್ ಹಾಗೂ ಉತ್ಪಾದನಾ ಕೇಂದ್ರಗಳ ಅಭಿವೃದ್ಧಿಗೆ ಇದು ನೆರವಾಗಲಿದೆ. ಇದರಿಂದ ಲಾಜಿಸ್ಟಿಕ್ಸ್ ವೆಚ್ಚ ಕಡಿಮೆಯಾಗುವುದರ ಜೊತೆಗೆ ಪೂರೈಕೆ ಸರಪಳಿ ದಕ್ಷತೆ ಹೆಚ್ಚಲಿದೆ.
ಇದರ ಜೊತೆಗೆ ರೈತರಿಗೆ ನಗರ ಹಾಗೂ ರಫ್ತು ಮಾರುಕಟ್ಟೆಗಳಿಗೆ ನೇರ ಸಂಪರ್ಕ ದೊರೆಯಲಿದ್ದು, ಉತ್ತಮ ಬೆಲೆ ಮತ್ತು ಹೆಚ್ಚುವರಿ ಆದಾಯ ಸಿಗುವ ನಿರೀಕ್ಷೆಯಿದೆ. ಪ್ರವಾಸೋದ್ಯಮಕ್ಕೂ ಉತ್ತೇಜನ ಸಿಗಲಿದ್ದು, ಸಾವಿರಾರು ನೇರ ಮತ್ತು ಪರೋಕ್ಷ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ ಎಂದು ಅಂದಾಜಿಸಲಾಗಿದೆ.



