ಸೂರ್ಯ ಅಭಿನಯದ ‘ಕರುಪ್ಪು’ ಸಿನಿಮಾ ಈಗ ಭಾರತೀಯ ಚಿತ್ರರಂಗದ ದೊಡ್ಡ ಸೆನ್ಸೇಶನ್ ಆಗಿದೆ. ಆರಂಭದಲ್ಲಿ ವಿವಾದ, ಆರ್ಥಿಕ ಸಂಕಷ್ಟ ಮತ್ತು ಪ್ರೀಮಿಯರ್ ರದ್ದತಿ ಸುದ್ದಿಗಳಿಂದ ಸುತ್ತುವರಿದಿದ್ದ ಈ ಸಿನಿಮಾ, ಇದೀಗ ವಿಶ್ವಾದ್ಯಂತ 300 ಕೋಟಿ ರೂಪಾಯಿ ಗಳಿಕೆಯತ್ತ ದೌಡಾಯಿಸುತ್ತಿದೆ.
ಎರಡನೇ ವಾರಾಂತ್ಯದಲ್ಲೂ ಚಿತ್ರದ ಕಲೆಕ್ಷನ್ ಕುಸಿಯದೇ ಭರ್ಜರಿಯಾಗಿ ಮುಂದುವರಿದಿದೆ. ವಿಶೇಷವಾಗಿ ಕಳೆದ ಭಾನುವಾರದ ಗಳಿಕೆ ಮೊದಲ ದಿನದ ಕಲೆಕ್ಷನ್ಗಿಂತ ಹೆಚ್ಚಾಗಿರುವುದು ಟ್ರೇಡ್ ವಲಯವನ್ನೇ ಅಚ್ಚರಿಗೊಳಿಸಿದೆ. ಬಕ್ರೀದ್ ಹಬ್ಬದ ರಜೆ ಹಿನ್ನೆಲೆ ಮುಂದಿನ ವಾರ ಮತ್ತಷ್ಟು ದೊಡ್ಡ ಮಟ್ಟದ ಬಿಸಿನೆಸ್ ನಿರೀಕ್ಷಿಸಲಾಗಿದೆ.
ಸೂರ್ಯ ಅವರ ಕರಿಯರ್ನಲ್ಲಿ ‘ಕರುಪ್ಪು’ ಸಿನಿಮಾ ದೊಡ್ಡ ಟರ್ನಿಂಗ್ ಪಾಯಿಂಟ್ ಆಗಿದೆ. ಹಲವು ವರ್ಷಗಳಿಂದ ಬಾಕ್ಸ್ ಆಫೀಸ್ನಲ್ಲಿ ನಿರೀಕ್ಷಿತ ಯಶಸ್ಸು ಕಾಣದೇ ಟ್ರೋಲ್ ಆಗುತ್ತಿದ್ದ ಸೂರ್ಯ, ಈ ಚಿತ್ರದ ಮೂಲಕ ಸ್ಟ್ರಾಂಗ್ ಕಮ್ಬ್ಯಾಕ್ ನೀಡಿದ್ದಾರೆ.
ಆರ್.ಜೆ. ಬಾಲಾಜಿ ನಿರ್ದೇಶಿಸಿರುವ ಈ ಆ್ಯಕ್ಷನ್ ಡ್ರಾಮಾವನ್ನು ಡ್ರೀಮ್ ವಾರಿಯರ್ ಪಿಕ್ಚರ್ಸ್ ನಿರ್ಮಿಸಿದೆ. ತ್ರಿಶಾ ಕೃಷ್ಣನ್ ನಾಯಕಿಯಾಗಿ ನಟಿಸಿದ್ದು, ಆರ್.ಜೆ. ಬಾಲಾಜಿ, ಇಂದ್ರನ್ಸ್, ನಟ್ಟಿ ಸುಬ್ರಮಣಿಯನ್, ಸ್ವಾಸಿಕಾ ಹಾಗೂ ಅನಘಾ ಮಾಯಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸಾಯಿ ಅಭ್ಯಂಕರ್ ಸಂಗೀತ ಚಿತ್ರಕ್ಕೆ ದೊಡ್ಡ ಪ್ಲಸ್ ಆಗಿದೆ.
ಆದರೆ ಸಿನಿಮಾ ಬಿಡುಗಡೆಗೂ ಮುನ್ನ ಪರಿಸ್ಥಿತಿ ಗಂಭೀರವಾಗಿತ್ತು. ನಿರ್ಮಾಣ ಸಂಸ್ಥೆ ಹಣಕಾಸಿನ ಬಿಕ್ಕಟ್ಟಿನಿಂದ ಬಳಲುತ್ತಿದ್ದು, ವಿತರಕರಿಗೆ ಹಣ ಪಾವತಿಸಲು ಸಾಧ್ಯವಾಗಿರಲಿಲ್ಲ. ಇದೇ ಕಾರಣಕ್ಕೆ ಮೇ 14ರ ಪ್ರೀಮಿಯರ್ ಮತ್ತು ಮುಂಜಾನೆ ಶೋಗಳು ಕೊನೆ ಕ್ಷಣದಲ್ಲಿ ರದ್ದುಪಡಿಸಲಾಗಿತ್ತು.
ಇದಲ್ಲದೆ, ಇಳಯರಾಜ ಹೆಸರಿನ ಬಳಕೆ ಕುರಿತ ವಿವಾದವೂ ಚಿತ್ರತಂಡಕ್ಕೆ ತಲೆನೋವಾಗಿತ್ತು. ಸೋಶಿಯಲ್ ಮೀಡಿಯಾದಲ್ಲಿ ಟೀಕೆಗಳು ಹೆಚ್ಚಾದ ಬಳಿಕ ಚಿತ್ರತಂಡ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕಾಯಿತು. ಆದರೆ ಈ ಎಲ್ಲಾ ವಿವಾದಗಳನ್ನು ಹಿಂದಿಕ್ಕಿ ‘ಕರುಪ್ಪು’ ಈಗ ಗಲ್ಲಾಪೆಟ್ಟಿಗೆಯಲ್ಲಿ ಹೊಸ ಇತಿಹಾಸ ಬರೆಯುತ್ತಿದೆ.

