Home Blog

ರೈತರ ನಿದ್ದೆಗೆಡಿಸಿದ್ದ ಚಿರತೆ ಕೊನೆಗೂ ಸೆರೆ

0

ಮಂಡ್ಯ: ಶ್ರೀರಂಗಪಟ್ಟಣ ತಾಲೂಕಿನ ಚಿಂದಗಿರಿಕೊಪ್ಪಲು ಗ್ರಾಮದಲ್ಲಿ ಹಲವು ದಿನಗಳಿಂದ ಜನರನ್ನು ಬೆಚ್ಚಿಬೀಳಿಸುತ್ತಿದ್ದ ಚಿರತೆ ಕೊನೆಗೂ ಅರಣ್ಯ ಇಲಾಖೆಯ ಬೋನಿಗೆ ಬಿದ್ದಿದೆ. ಗ್ರಾಮದ ಜಮೀನು ಪ್ರದೇಶದಲ್ಲಿ ನಿರಂತರವಾಗಿ ಚಿರತೆ ಕಾಣಿಸಿಕೊಳ್ಳುತ್ತಿದ್ದ ಕಾರಣ ರೈತರು ಹಾಗೂ ಗ್ರಾಮಸ್ಥರಲ್ಲಿ ಭಾರೀ ಆತಂಕ ಮನೆ ಮಾಡಿತ್ತು.

ಚಿರತೆ ಓಡಾಟ ಹೆಚ್ಚಾಗುತ್ತಿದ್ದಂತೆ ಗ್ರಾಮಸ್ಥರು ಅರಣ್ಯ ಇಲಾಖೆಗೆ ದೂರು ನೀಡಿ ತಕ್ಷಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದರು. ಅದರಂತೆ ಅರಣ್ಯ ಇಲಾಖೆ ಕಾರ್ಯಾಚರಣೆ ಆರಂಭಿಸಿ ಬೋನು ಅಳವಡಿಸಿತ್ತು.

ಬೋನಿನೊಳಗೆ ನಾಯಿಯನ್ನು ಇರಿಸಲಾಗಿದ್ದು, ಕಳೆದ ರಾತ್ರಿ ಬೇಟೆಯ ಉದ್ದೇಶದಿಂದ ಬಂದ ಚಿರತೆ ನಾಯಿಯ ಮೇಲೆ ದಾಳಿ ಮಾಡಲು ಯತ್ನಿಸುವಾಗ ಬೋನಿನೊಳಗೆ ಸಿಲುಕಿದೆ. ಬೆಳಗ್ಗೆ ಘಟನೆ ತಿಳಿಯುತ್ತಿದ್ದಂತೆ ಗ್ರಾಮಸ್ಥರು ದೊಡ್ಡ ಸಂಖ್ಯೆಯಲ್ಲಿ ಸ್ಥಳಕ್ಕೆ ಆಗಮಿಸಿ ಚಿರತೆಯನ್ನು ನೋಡಲು ಜಮಾಯಿಸಿದರು.

ಚಿರತೆ ಸೆರೆಗೆ ಸಿಕ್ಕಿರುವುದರಿಂದ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಅದನ್ನು ಸುರಕ್ಷಿತವಾಗಿ ಅರಣ್ಯ ಪ್ರದೇಶಕ್ಕೆ ಸ್ಥಳಾಂತರಿಸಲು ಕ್ರಮ ಕೈಗೊಂಡಿದ್ದಾರೆ.

ತಹಶೀಲ್ದಾರ್​ ಕಚೇರಿಯಲ್ಲಿಯಿದ್ದ ಇನಾಂ ಜಮೀನು ದಾಖಲೆ ಮಿಸ್ಸಿಂಗ್: ರಾಜ್ಯ ಮಾಹಿತಿ ಆಯೋಗದ ಸೂಚನೆ ಬೆನ್ನಲ್ಲೇ FIR ದಾಖಲು

0

ತುಮಕೂರು: ತಹಶೀಲ್ದಾರ್ ಕಚೇರಿಯಲ್ಲೇ ಸರ್ಕಾರಿ ದಾಖಲೆಗಳು ನಾಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದ್ದು, ಮಾಹಿತಿ ಆಯೋಗದ ಮಧ್ಯಪ್ರವೇಶದ ಬಳಿಕ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಹೆಬ್ಬೂರು ಹೋಬಳಿಯ ಜೋಡಿ ಕಲ್ಕರೆ ಗ್ರಾಮದ ಇನಾಂ ಜಮೀನಿಗೆ ಸಂಬಂಧಿಸಿದ ಮಹತ್ವದ ಮೂಲ ದಾಖಲೆಗಳು ಕಾಣೆಯಾಗಿರುವ ಹಿನ್ನೆಲೆಯಲ್ಲಿ ತುಮಕೂರು ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ದೊಡ್ಡಶಾನಯ್ಯ ಅವರ ಸಹಿ ಹೊಂದಿದ್ದ ಮೂಲ ಅರ್ಜಿ, ವಂಶವೃಕ್ಷ ದಾಖಲೆಗಳು ಹಾಗೂ ಮರಣ ಪ್ರಮಾಣಪತ್ರಗಳನ್ನು ಒಳಗೊಂಡ ಕಡತ ಕಾಣೆಯಾಗಿರುವುದಾಗಿ ತಿಳಿದುಬಂದಿದೆ. ದಾಖಲೆಗಳಿಗಾಗಿ ಅರ್ಜಿದಾರರು ಪದೇ ಪದೇ ಮನವಿ ಸಲ್ಲಿಸಿದ್ದರೂ ಅಧಿಕಾರಿಗಳು ಸ್ಪಂದಿಸದ ಹಿನ್ನೆಲೆ ವಿಷಯ ರಾಜ್ಯ ಮಾಹಿತಿ ಆಯೋಗದ ಮೆಟ್ಟಿಲೇರಿತ್ತು.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಮಾಹಿತಿ ಆಯೋಗ, ನಾಪತ್ತೆಯಾದ ದಾಖಲೆಗಳ ಕುರಿತು ಅಫಿಡವಿಟ್ ಸಲ್ಲಿಸಲು ಗಡುವು ನೀಡಿತ್ತು. ಈ ಬೆಳವಣಿಗೆಯ ನಂತರ ತಹಶೀಲ್ದಾರ್ ರಾಜೇಶ್ವರಿ ರಾಜ್ಯ ಸಾರ್ವಜನಿಕ ದಾಖಲೆಗಳ ಕಾಯ್ದೆಯಡಿ ಪೊಲೀಸ್ ದೂರು ದಾಖಲಿಸಿದ್ದಾರೆ.

ಈ ಕುರಿತು ಮಾತನಾಡಿದ ತಹಶೀಲ್ದಾರ್ ರಾಜೇಶ್ವರಿ, “2023ರಲ್ಲಿ ಸಲ್ಲಿಸಲಾದ ಅರ್ಜಿಯ ಆಧಾರದಲ್ಲಿ ದಾಖಲೆಗಳನ್ನು ಹುಡುಕಿದಾಗಲೇ ಕಡತ ಕಾಣೆಯಾಗಿರುವುದು ಗೊತ್ತಾಗಿತ್ತು. ಬಳಿಕ ಈ ಬಗ್ಗೆ ಅರ್ಜಿದಾರರಿಗೆ ಲಿಖಿತ ಮಾಹಿತಿ ನೀಡಲಾಗಿತ್ತು. ಮಾಹಿತಿ ಆಯೋಗದ ನಿರ್ದೇಶನದಂತೆ ಈಗ ಪೊಲೀಸ್ ದೂರು ನೀಡಲಾಗಿದೆ” ಎಂದು ಸ್ಪಷ್ಟಪಡಿಸಿದ್ದಾರೆ.

ಆದರೆ ಅರ್ಜಿದಾರ ಶ್ರೀನಿವಾಸ ಕಲ್ಕೆರೆ ಈ ಪ್ರಕರಣದಲ್ಲಿ ಉದ್ದೇಶಪೂರ್ವಕ ಸಂಚು ನಡೆದಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. “ನನಗೆ ಸಿಗಬೇಕಿದ್ದ 5 ಎಕರೆ 28 ಗುಂಟೆ ಇನಾಂ ಜಮೀನಿನ ದಾಖಲೆಗಳನ್ನೇ ಕಾಣೆಯಾಗಿಸಲಾಗಿದೆ. ಆರ್‌ಐ ಮತ್ತು ವಿಎ ಅಧಿಕಾರಿಗಳು ಈ ಕಡತಗಳನ್ನು ಈಗಾಗಲೇ ಪರಿಶೀಲಿಸಿದ್ದರು. ಬಳಿಕವೇ ಅವು ನಾಪತ್ತೆಯಾಗಿವೆ. ಇದು ಸಾಮಾನ್ಯ ನಿರ್ಲಕ್ಷ್ಯ ಅಲ್ಲ” ಎಂದು ಅವರು ಆರೋಪಿಸಿದ್ದಾರೆ.

ಸರ್ಕಾರಿ ಕಚೇರಿಯಲ್ಲೇ ಮೂಲ ದಾಖಲೆಗಳು ಕಾಣೆಯಾಗಿರುವುದು ಆಡಳಿತ ವ್ಯವಸ್ಥೆಯ ಮೇಲಿನ ನಂಬಿಕೆಗೆ ದೊಡ್ಡ ಹೊಡೆತ ನೀಡಿದ್ದು, ಪ್ರಕರಣದ ತನಿಖೆ ಇದೀಗ ಕುತೂಹಲ ಕೆರಳಿಸಿದೆ.

ಜೈಲುಗಳಲ್ಲಿ ಭ್ರಷ್ಟಾಚಾರಕ್ಕೆ ಬ್ರೇಕ್ ಹಾಕಲು ಡಿಜಿಪಿ ಅಲೋಕ್ ಕುಮಾರ್ ಕಠಿಣ ಕ್ರಮ!

ಬೆಂಗಳೂರು: ಕರ್ನಾಟಕ ರಾಜ್ಯದ ಜೈಲುಗಳಲ್ಲಿ ನಡೆಯುತ್ತಿದ್ದ ಅಕ್ರಮ ಚಟುವಟಿಕೆಗಳು ಮತ್ತು ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಕಾರಾಗೃಹ ಡಿಜಿಪಿ ಅಲೋಕ್ ಕುಮಾರ್ ಮಹತ್ವದ ಬದಲಾವಣೆಗಳನ್ನು ಜಾರಿಗೆ ತಂದಿದ್ದಾರೆ.

ರಾಜ್ಯದ ವಿವಿಧ ಜೈಲುಗಳಲ್ಲಿ ಹಲವು ವರ್ಷಗಳಿಂದ ಒಂದೇ ಬ್ಯಾರಕ್‌ನಲ್ಲಿ ಉಳಿದಿದ್ದ ಕೈದಿಗಳಿಗೆ ಇದೀಗ ಬಿಗ್ ಶಾಕ್ ಎದುರಾಗಿದೆ. ಸುಮಾರು 10 ರಿಂದ 20 ವರ್ಷಗಳ ಕಾಲ ಒಂದೇ ಬ್ಯಾರಕ್‌ನಲ್ಲಿ ನೆಲೆಸಿದ್ದ ಕೈದಿಗಳ ಬ್ಯಾರಕ್‌ಗಳನ್ನು ಬದಲಾಯಿಸಲು ಸೂಚನೆ ನೀಡಲಾಗಿದೆ.

ಹೊಸ ನಿಯಮದ ಪ್ರಕಾರ, ಇನ್ನು ಮುಂದೆ ಕೈದಿಗಳಿಗೆ ಆಲ್ಫಾಬೆಟಿಕ್ ಆಧಾರದ ಮೇಲೆ ಬ್ಯಾರಕ್ ಹಂಚಿಕೆ ಮಾಡಲಾಗುತ್ತದೆ. ಇದರಿಂದ ಕೈದಿಗಳು ತಮ್ಮ ಇಚ್ಛೆಯ ಬ್ಯಾರಕ್ ಆಯ್ಕೆ ಮಾಡಿಕೊಳ್ಳುವ ಅವಕಾಶಕ್ಕೆ ತೆರೆ ಬೀಳಲಿದೆ.

ಜೈಲುಗಳಲ್ಲಿ ಮೊಬೈಲ್ ಫೋನ್‌ಗಳ ಅಕ್ರಮ ಬಳಕೆ, ಪ್ರಭಾವಶಾಲಿ ಕೈದಿಗಳ ದಬ್ಬಾಳಿಕೆ ಹಾಗೂ ಕೆಲವು ಜೈಲಾಧಿಕಾರಿಗಳ ಮೂಲಕ ನಡೆಯುತ್ತಿದ್ದ ಭ್ರಷ್ಟಾಚಾರವನ್ನು ನಿಯಂತ್ರಿಸಲು ಈ ಕ್ರಮ ಸಹಾಯಕವಾಗಲಿದೆ ಎಂದು ಮೂಲಗಳು ತಿಳಿಸಿವೆ.

ಹಿರಿಯ ಕೈದಿಗಳು ತಮ್ಮ ಪ್ರಭಾವ ಬಳಸಿ ಅನುಕೂಲಕರ ಸೆಲ್‌ಗಳನ್ನು ಪಡೆಯುವುದು ಹಾಗೂ ಇತರ ಕೈದಿಗಳೊಂದಿಗೆ ಡೀಲ್ ನಡೆಸುವಂತಹ ಚಟುವಟಿಕೆಗಳಿಗೂ ಹೊಸ ವ್ಯವಸ್ಥೆ ಅಡ್ಡಿಯಾಗಲಿದೆ.

ರಾಜ್ಯದ ಎಲ್ಲಾ ಜೈಲುಗಳಲ್ಲಿ ಈ ಹೊಸ ನಿಯಮ ಜಾರಿಗೊಂಡಿದ್ದು, ಬೆಂಗಳೂರು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹವೂ ಈ ಕ್ರಮದ ವ್ಯಾಪ್ತಿಗೆ ಬಂದಿದೆ.

ರಣವೀರ್ ಸಿಂಗ್ ‘ಧುರಂಧರ್’ ವಿರುದ್ಧ ರಾಷ್ಟ್ರ ಭದ್ರತಾ ಆರೋಪ: ಸೇನಾ ರಹಸ್ಯ ಬಿಚ್ಚಿಟ್ಟಿದೆಯೇ ಸಿನಿಮಾ?

ಬಾಲಿವುಡ್ ನಟ ರಣವೀರ್ ಸಿಂಗ್ ಅಭಿನಯದ ‘ಧುರಂಧರ್: ದಿ ರಿವೆಂಜ್’ ಸಿನಿಮಾ ಇದೀಗ ರಾಷ್ಟ್ರ ಭದ್ರತೆಗೆ ಸಂಬಂಧಿಸಿದ ಗಂಭೀರ ಆರೋಪಗಳ ನಡುವೆ ಕಾನೂನು ಸಂಕಷ್ಟಕ್ಕೆ ಸಿಲುಕಿದೆ. ಭಾರತೀಯ ಸೇನೆಯ ಸೂಕ್ಷ್ಮ ಕಾರ್ಯಾಚರಣೆಗಳ ವಿವರಗಳು, ರಕ್ಷಣಾ ತಂತ್ರಗಳು ಮತ್ತು ರಹಸ್ಯ ಮಾಹಿತಿಗಳನ್ನು ಸಿನಿಮಾದಲ್ಲಿ ಬಳಸಲಾಗಿದೆ ಎಂಬ ಆರೋಪದ ಹಿನ್ನೆಲೆ ದೆಹಲಿ ಹೈಕೋರ್ಟ್ ಕೇಂದ್ರ ಸರ್ಕಾರ ಹಾಗೂ ಸೆನ್ಸಾರ್ ಮಂಡಳಿಗೆ ತನಿಖೆ ನಡೆಸುವಂತೆ ಸೂಚಿಸಿದೆ.

ಸಶಸ್ತ್ರ ಸೀಮಾ ಬಲದ ಹೆಡ್ ಕಾನ್ಸ್‌ಟೇಬಲ್ ದೀಪಕ್ ಕುಮಾರ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ವೇಳೆ, ಚಿತ್ರದ ಕೆಲವು ದೃಶ್ಯಗಳು ಅಧಿಕೃತ ರಹಸ್ಯ ಕಾಯ್ದೆಯ ನೇರ ಉಲ್ಲಂಘನೆ ಆಗಬಹುದು ಎಂದು ವಾದಿಸಲಾಯಿತು.

ಅರ್ಜಿಯಲ್ಲಿ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ ರಹಸ್ಯ ಯೋಜನೆಗಳು, ಭಾರತೀಯ ಸೇನೆಯ ಕಾರ್ಯಾಚರಣೆ ಸ್ಥಳಗಳು ಮತ್ತು ಮಿಲಿಟರಿ ತಂತ್ರಗಳನ್ನು ಚಿತ್ರದಲ್ಲಿ ಪ್ರದರ್ಶಿಸಲಾಗಿದೆ ಎಂದು ಆರೋಪಿಸಲಾಗಿದೆ. ಜೊತೆಗೆ ಮೃತ ಯೋಧರು ಹಾಗೂ ಹಿರಿಯ ರಕ್ಷಣಾ ಅಧಿಕಾರಿಗಳಿಂದ ಪ್ರೇರಿತ ಪಾತ್ರಗಳನ್ನು ತಪ್ಪಾಗಿ ಬಿಂಬಿಸಲಾಗಿದೆ ಎಂಬ ಗಂಭೀರ ಆಕ್ಷೇಪವೂ ಕೇಳಿಬಂದಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ದೆಹಲಿ ಹೈಕೋರ್ಟ್, “ರಾಷ್ಟ್ರ ಭದ್ರತೆಗೆ ಸಂಬಂಧಿಸಿದ ಸೂಕ್ಷ್ಮ ಮಾಹಿತಿಗಳನ್ನು ಒಳಗೊಂಡ ಸಿನಿಮಾಗಳನ್ನು ಅತ್ಯಂತ ಎಚ್ಚರಿಕೆಯಿಂದ ಪರಿಶೀಲಿಸಬೇಕು. ಸೃಜನಶೀಲ ಸ್ವಾತಂತ್ರ್ಯದ ಹೆಸರಿನಲ್ಲಿ ಯಾವುದೇ ರೀತಿಯ ಭದ್ರತಾ ಅಪಾಯವನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ” ಎಂದು ಸ್ಪಷ್ಟಪಡಿಸಿದೆ.

ನ್ಯಾಯಾಲಯ ಚಿತ್ರದ ಬಿಡುಗಡೆಗೆ ತಕ್ಷಣದ ತಡೆ ನೀಡದಿದ್ದರೂ, ಅರ್ಜಿಯನ್ನು ಅಧಿಕೃತ ಮನವಿಯಾಗಿ ಪರಿಗಣಿಸಿ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಹಾಗೂ ಸೆನ್ಸಾರ್ ಮಂಡಳಿಗೆ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದೆ.

ಈ ಬೆಳವಣಿಗೆಯಿಂದ ಚಿತ್ರರಂಗದಲ್ಲಿ ಭಾರೀ ಚರ್ಚೆ ಆರಂಭವಾಗಿದ್ದು, ನೈಜ ಮಿಲಿಟರಿ ಘಟನೆಗಳ ಆಧಾರಿತ ಸಿನಿಮಾಗಳಲ್ಲಿ ಎಷ್ಟು ಮಟ್ಟಿಗೆ ಸ್ವಾತಂತ್ರ್ಯ ಇರಬೇಕು ಎಂಬ ಪ್ರಶ್ನೆ ಮತ್ತೆ ಮುನ್ನೆಲೆಗೆ ಬಂದಿದೆ.

14 ವರ್ಷ ಜೈಲಿನಲ್ಲಿದ್ದರೂ ಪೆರೋಲ್ʼಗೆ ಅರ್ಹತೆ ಸಿಗುವುದಿಲ್ಲ: ಅಪರಾಧಿಯ ಅರ್ಜಿ ವಜಾಗೊಳಿಸಿದ ಹೈಕೋರ್ಟ್

ಬೆಂಗಳೂರು: ಜೈಲು ಶಿಕ್ಷೆ ಅನುಭವಿಸಿದ ಅವಧಿಯನ್ನೇ ಆಧಾರವನ್ನಾಗಿ ಮಾಡಿಕೊಂಡು ಅಪರಾಧಿಗಳಿಗೆ ಪೆರೋಲ್ ನೀಡಲು ಸಾಧ್ಯವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ.

ಮುಂಬೈನಿಂದ ಬೆಂಗಳೂರಿನ ಕಾರಾಗೃಹಕ್ಕೆ ಸ್ಥಳಾಂತರಗೊಂಡಿರುವ ಅಪರಾಧಿ ಅಂಬರೀಶ್ ಎಸ್. ಕಪಾಡಿಯಾ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದಂ ಅವರಿದ್ದ ಏಕಸದಸ್ಯ ಪೀಠ, ಅರ್ಜಿಯನ್ನು ವಜಾಗೊಳಿಸಿ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಅರ್ಜಿದಾರ ಕಪಾಡಿಯಾ ಸುಮಾರು 12 ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಕಳೆದ 14 ವರ್ಷಗಳಿಂದ ಜೈಲು ಶಿಕ್ಷೆ ಅನುಭವಿಸುತ್ತಿದ್ದೇನೆ. ಆದ್ದರಿಂದ ಪೆರೋಲ್ ನೀಡಬೇಕು ಎಂದು ಕೋರಿ ಹೈಕೋರ್ಟ್ ಮೊರೆ ಹೋಗಿದ್ದರು.

ವಿಚಾರಣೆ ವೇಳೆ ನ್ಯಾಯಪೀಠ, ಅರ್ಜಿದಾರರು ಆರು ಕ್ರಿಮಿನಲ್ ಪ್ರಕರಣಗಳಲ್ಲಿ ಶಿಕ್ಷೆಗೆ ಒಳಗಾಗಿದ್ದಾರೆ. ಇದು ಪುನರಾವರ್ತಿತ ಅಪರಾಧ ಪ್ರವೃತ್ತಿಯನ್ನು ತೋರಿಸುತ್ತದೆ ಎಂದು ಅಭಿಪ್ರಾಯಪಟ್ಟಿದೆ. ದಾಖಲೆಗಳಲ್ಲಿ ವಂಚನೆ, ನಕಲಿ ದಾಖಲೆ ಸೃಷ್ಟಿ ಹಾಗೂ ದುರುಪಯೋಗದಂತಹ ಗಂಭೀರ ಆರ್ಥಿಕ ಅಪರಾಧಗಳ ಆರೋಪಗಳು ಸಾಬೀತಾಗಿವೆ. ಇಂತಹ ಪ್ರಕರಣಗಳು ಸಾರ್ವಜನಿಕ ವಿಶ್ವಾಸದ ಮೇಲೆ ದುಷ್ಪರಿಣಾಮ ಬೀರುತ್ತವೆ ಎಂದು ಪೀಠ ತಿಳಿಸಿದೆ.

ಇದಲ್ಲದೆ, ಒಂದು ಪ್ರಕರಣ ಸಿಬಿಐ ತನಿಖಾ ವ್ಯಾಪ್ತಿಗೆ ಒಳಪಟ್ಟಿರುವುದೂ ಅಪರಾಧಗಳ ಗಂಭೀರತೆ ಹಾಗೂ ಸಂಕೀರ್ಣತೆಯನ್ನು ಸೂಚಿಸುತ್ತದೆ ಎಂದು ನ್ಯಾಯಾಲಯ ಹೇಳಿದೆ.

ಅರ್ಜಿದಾರರ ಹಿಂದಿನ ನಡವಳಿಕೆಯನ್ನು ಪರಿಗಣಿಸಿದರೆ, ತಾತ್ಕಾಲಿಕ ಪೆರೋಲ್ ಸೌಲಭ್ಯ ನೀಡಲು ವಿಶ್ವಾಸ ಮೂಡುವುದಿಲ್ಲ. 14 ವರ್ಷಗಳ ಕಾಲ ಜೈಲಿನಲ್ಲಿದ್ದೇನೆ ಎಂಬ ವಾದವನ್ನು ಪ್ರತ್ಯೇಕವಾಗಿ ಪರಿಗಣಿಸಲು ಸಾಧ್ಯವಿಲ್ಲ. ಅಪರಾಧದ ಸ್ವರೂಪ, ಹಿನ್ನೆಲೆ ಹಾಗೂ ಗಂಭೀರತೆಯನ್ನು ಗಮನಿಸಬೇಕಾಗುತ್ತದೆ. ಶಿಕ್ಷೆಯ ಅವಧಿಯೇ ಪೆರೋಲ್ ಪಡೆಯಲು ಏಕೈಕ ಮಾನದಂಡವಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, 2020ರ ನವೆಂಬರ್‌ನಲ್ಲಿ ಹೈಕೋರ್ಟ್ ಪೆರೋಲ್ ಅರ್ಜಿಯನ್ನು ಪರಿಗಣಿಸಲು ನಿರ್ದೇಶಿಸಿತ್ತು. ಆದರೆ ಸಿಬಿಐ ಪ್ರಕರಣದ ಹಿನ್ನೆಲೆಯಲ್ಲಿ ಕಪಾಡಿಯಾರನ್ನು ಅಹಮದಾಬಾದ್ ಜೈಲಿಗೆ ವರ್ಗಾಯಿಸಿದ್ದರಿಂದ ಅರ್ಜಿಯ ಬಗ್ಗೆ ಕ್ರಮ ಕೈಗೊಳ್ಳಲಾಗಿಲ್ಲ ಎಂದು ವಾದಿಸಿದರು. ಹೀಗಾಗಿ ಎರಡು ತಿಂಗಳ ಪೆರೋಲ್ ಮಂಜೂರು ಮಾಡಲು ಕಾರಾಗೃಹ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು ಎಂದು ಮನವಿ ಮಾಡಿದರು.

ಇದಕ್ಕೆ ಪ್ರತಿಯಾಗಿ ಸಿಬಿಐ ಪರ ವಕೀಲರು, ಅರ್ಜಿದಾರರು ಆರು ಪ್ರಕರಣಗಳಲ್ಲಿ ಶಿಕ್ಷೆಗೆ ಒಳಗಾಗಿದ್ದು, ಕರ್ನಾಟಕ ಜೈಲು ನಿಯಮಗಳು–1974ರ ನಿಯಮ 192(2)(1)(ಜಿ) ಪ್ರಕಾರ ಪೆರೋಲ್ ಪಡೆಯಲು ಅರ್ಹರಲ್ಲ ಎಂದು ನ್ಯಾಯಾಲಯಕ್ಕೆ ವಾದ ಮಂಡಿಸಿದರು.

ಲಸಿಕೆ ಇಲ್ಲದ ಅಪರೂಪದ ಎಬೋಲಾ ತಳಿ ಪತ್ತೆ: WHO ಜಾಗತಿಕ ಆರೋಗ್ಯ ತುರ್ತುಸ್ಥಿತಿ ಘೋಷಣೆ ಬಳಿಕ ಭಾರತದಲ್ಲೂ ಎಚ್ಚರಿಕೆ!

ದೆಹಲಿ: ಜಗತ್ತು ಕೋವಿಡ್ ಮಹಾಮಾರಿಯ ಪರಿಣಾಮಗಳಿಂದ ನಿಧಾನವಾಗಿ ಚೇತರಿಸಿಕೊಳ್ಳುತ್ತಿರುವ ನಡುವೆಯೇ, ಇದೀಗ ಮತ್ತೊಂದು ಅಪಾಯಕಾರಿ ವೈರಸ್ ಜಾಗತಿಕ ಮಟ್ಟದಲ್ಲಿ ಆತಂಕ ಸೃಷ್ಟಿಸಿದೆ. ಆಫ್ರಿಕಾ ಖಂಡದಲ್ಲಿ ವೇಗವಾಗಿ ಹರಡುತ್ತಿರುವ ಎಬೋಲಾ ವೈರಸ್‌ನ ಬುಂಡಿಬುಗ್ಯೊ ತಳಿ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಈ ಹಿನ್ನೆಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ (WHO) ಅಂತಾರಾಷ್ಟ್ರೀಯ ಕಾಳಜಿಯ ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿಯನ್ನು ಘೋಷಿಸಿದೆ.

ಆರೋಗ್ಯ ತಜ್ಞರ ಪ್ರಕಾರ, ಪ್ರಸ್ತುತ ಹರಡುತ್ತಿರುವ ಎಬೋಲಾ ಬುಂಡಿಬುಗ್ಯೊ ತಳಿಗೆ ಅಧಿಕೃತ ಲಸಿಕೆ ಅಥವಾ ನಿರ್ದಿಷ್ಟ ಚಿಕಿತ್ಸೆ ಲಭ್ಯವಿಲ್ಲ. ಸೋಂಕಿನ ತೀವ್ರತೆ ಹೆಚ್ಚಿದರೆ ಸಾವಿನ ಪ್ರಮಾಣವೂ ಗಂಭೀರವಾಗಿರಬಹುದು ಎಂದು ಎಚ್ಚರಿಕೆ ನೀಡಲಾಗಿದೆ.

ಆದರೆ, ಈ ವೈರಸ್ ಕೋವಿಡ್‌ನಂತೆ ಗಾಳಿಯ ಮೂಲಕ ವೇಗವಾಗಿ ಹರಡುವ ಸಾಧ್ಯತೆ ಕಡಿಮೆ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ. ಎಬೋಲಾ ವೈರಸ್ ಮುಖ್ಯವಾಗಿ ಫ್ರೂಟ್ ಬಾವಲಿಗಳಿಂದ ಮನುಷ್ಯರಿಗೆ ಹರಡುತ್ತದೆ. ಸೋಂಕಿತ ವ್ಯಕ್ತಿಯ ರಕ್ತ ಅಥವಾ ಶರೀರದ ದ್ರವಗಳ ನೇರ ಸಂಪರ್ಕದಿಂದ ಮತ್ತೊಬ್ಬರಿಗೆ ಸೋಂಕು ತಗುಲುವ ಸಾಧ್ಯತೆ ಇದೆ.

ಸದ್ಯಕ್ಕೆ ಭಾರತದಲ್ಲಿ ಯಾವುದೇ ಎಬೋಲಾ ಪ್ರಕರಣಗಳು ವರದಿಯಾಗಿಲ್ಲ. ಆದರೂ ಕಾಂಗೋ, ಉಗಾಂಡ ಸೇರಿದಂತೆ ಅಪಾಯ ಹೆಚ್ಚಿರುವ ಆಫ್ರಿಕಾ ರಾಷ್ಟ್ರಗಳಿಂದ ಭಾರತಕ್ಕೆ ಆಗಮಿಸುವ ಪ್ರಯಾಣಿಕರ ಮೇಲೆ ತೀವ್ರ ನಿಗಾ ವಹಿಸುವ ಅಗತ್ಯವಿದೆ ಎಂದು ಆರೋಗ್ಯ ತಜ್ಞರು ಸೂಚಿಸಿದ್ದಾರೆ.

ವಿಮಾನ ನಿಲ್ದಾಣಗಳಲ್ಲಿ ಕಡ್ಡಾಯ ಆರೋಗ್ಯ ತಪಾಸಣೆ, ಅಗತ್ಯವಿದ್ದರೆ ಕ್ವಾರಂಟೈನ್ ವ್ಯವಸ್ಥೆ ಜಾರಿಗೊಳಿಸುವುದು ಅತ್ಯಗತ್ಯ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಜೊತೆಗೆ ಸಾರ್ವಜನಿಕರು ಸದ್ಯಕ್ಕೆ ಆಫ್ರಿಕಾ ದೇಶಗಳ ಪ್ರವಾಸದ ಬಗ್ಗೆ ಎಚ್ಚರಿಕೆ ವಹಿಸುವಂತೆ ಸಲಹೆ ನೀಡಲಾಗಿದೆ.

ಎಬೋಲಾ ವೈರಸ್‌ನ ಪ್ರಮುಖ ಲಕ್ಷಣಗಳು:
ಎಬೋಲಾ ಸೋಂಕಿನ ಆರಂಭಿಕ ಲಕ್ಷಣಗಳಲ್ಲಿ ತೀವ್ರ ಜ್ವರ, ತಲೆನೋವು, ಮೈಕೈನೋವು, ವಾಂತಿ ಹಾಗೂ ಭೇದಿ ಸೇರಿವೆ. ಸೋಂಕು ಗಂಭೀರ ಸ್ವರೂಪ ಪಡೆದರೆ ಲಿವರ್ ಮತ್ತು ಶ್ವಾಸಕೋಶ ವೈಫಲ್ಯ ಉಂಟಾಗಿ ಜೀವಾಪಾಯ ಸಂಭವಿಸುವ ಸಾಧ್ಯತೆ ಇದೆ.

“ಆನ್‌ಲೈನ್ ಔಷಧ ಮಾರಾಟ ಬಂದ್ ಮಾಡಿ”

ವಿಜಯಸಾಕ್ಷಿ ಸುದ್ದಿ, ಹಗರಿಬೊಮ್ಮನಹಳ್ಳಿ: ರಾಜ್ಯಾದ್ಯಂತ ನಡೆದ ಔಷಧ ವ್ಯಾಪಾರ ಬಂದ್‌ಗೆ ಹಗರಿಬೊಮ್ಮನಹಳ್ಳಿ ತಾಲೂಕು ಔಷಧ ವ್ಯಾಪಾರಿಗಳ ಸಂಘ ಸಂಪೂರ್ಣ ಬೆಂಬಲ ಸೂಚಿಸಿದ್ದು, ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಬಹುತೇಕ ಮೆಡಿಕಲ್ ಶಾಪ್‌ಗಳು ಬಂದ್ ಆಗಿ ವ್ಯಾಪಾರ ಸ್ಥಗಿತಗೊಂಡಿತು. ಆನ್‌ಲೈನ್ ಮೂಲಕ ನಿಯಂತ್ರಣರಹಿತ ಔಷಧ ಮಾರಾಟ ನಡೆಯುತ್ತಿರುವುದನ್ನು ಖಂಡಿಸಿ ವ್ಯಾಪಾರಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ತಾಲೂಕು ಔಷಧ ಮಾರಾಟಗಾರರ ಸಂಘದ ಅಧ್ಯಕ್ಷ ಬಸವರಾಜ್ ರೆಡ್ಡಿ ಮಾತನಾಡಿ, “ಆನ್‌ಲೈನ್ ಮೂಲಕ ಔಷಧ ಮಾರಾಟ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಂಪ್ರದಾಯಿಕ ಔಷಧ ಅಂಗಡಿಗಳಿಗೆ ಭಾರೀ ಹೊಡೆತ ಬೀಳುತ್ತಿದೆ. ಸಾವಿರಾರು ಸಣ್ಣ ಹಾಗೂ ಮಧ್ಯಮ ಮಟ್ಟದ ಔಷಧ ವ್ಯಾಪಾರಿಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಸರ್ಕಾರ ತಕ್ಷಣ ಮಧ್ಯಪ್ರವೇಶಿಸಿ ಸ್ಥಳೀಯ ವ್ಯಾಪಾರಿಗಳ ಹಿತ ಕಾಪಾಡಬೇಕು” ಎಂದು ಆಗ್ರಹಿಸಿದರು.

ತಾಲೂಕು ಉಪಾಧ್ಯಕ್ಷ ಚಂದ್ರಶೇಖರ್ ರೆಡ್ಡಿ ಮಾತನಾಡಿ, “ಆನ್‌ಲೈನ್‌ನಲ್ಲಿ ನಿಯಮ ಉಲ್ಲಂಘಿಸಿ ಔಷಧ ಮಾರಾಟ ಮಾಡುತ್ತಿರುವುದು ಸಾರ್ವಜನಿಕ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತಿದೆ. ವೈದ್ಯರ ಸಲಹೆ ಇಲ್ಲದೆ ಔಷಧ ಖರೀದಿ ಮಾಡುವ ಪ್ರವೃತ್ತಿ ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಇದರಿಂದ ಆರೋಗ್ಯ ಸಮಸ್ಯೆಗಳು ಗಂಭೀರ ಸ್ವರೂಪ ಪಡೆಯುವ ಸಾಧ್ಯತೆ ಇದೆ” ಎಂದು ಎಚ್ಚರಿಕೆ ನೀಡಿದರು.

ಔಷಧ ವ್ಯಾಪಾರಿಗಳ ಹಿತಾಸಕ್ತಿ ಹಾಗೂ ಸಾರ್ವಜನಿಕರ ಆರೋಗ್ಯ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ರಾಜ್ಯಾದ್ಯಂತ ಬಂದ್‌ಗೆ ಕರೆ ನೀಡಲಾಗಿದ್ದು, ಹಗರಿಬೊಮ್ಮನಹಳ್ಳಿ ತಾಲೂಕಿನ ಎಲ್ಲಾ ಔಷಧ ಅಂಗಡಿಗಳು ಬಂದ್‌ಗೆ ಬೆಂಬಲ ಸೂಚಿಸಿ ಸಹಕರಿಸಿವೆ ಎಂದು ಸಂಘ ತಿಳಿಸಿದೆ.

ಆನ್‌ಲೈನ್ ಔಷಧ ಮಾರಾಟದ ಮೇಲೆ ಸರ್ಕಾರ ಕಠಿಣ ನಿಯಂತ್ರಣ ಹೇರಬೇಕು. ನಿಯಮಬಾಹಿರ ಮಾರಾಟ ತಡೆಯುವ ಜೊತೆಗೆ ಸ್ಥಳೀಯ ಔಷಧ ವ್ಯಾಪಾರಿಗಳ ಹಿತ ಕಾಪಾಡಲು ಸ್ಪಷ್ಟ ಕ್ರಮ ಕೈಗೊಳ್ಳಬೇಕು ಎಂದು ಸಂಘದ ಪದಾಧಿಕಾರಿಗಳು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಸಂಘಟನೆಯ ಪದಾಧಿಕಾರಿಗಳಾದ ವೆಂಕಟೇಶ್, ವಾಹಿದ್ ಸಾಹೇಬ್ (ಕಾರ್ಯದರ್ಶಿ), ಬಂಡ್ರಿ ವಿನಾಯಕ, ಈಕೆ ರಾಘವೇಂದ್ರ, ವಿರುಪಾಕ್ಷಪ್ಪ ರೆಡ್ಡಿ, ಕೆ. ಬಸವರಾಜ್, ಸತೀಶ್ ಜಿ., ಗುರುರಾಜ, ಗೋಪಾಲಕೃಷ್ಣ, ಪ್ರವೀಣ್ ಕಡ್ಲಿ ಸೇರಿದಂತೆ ವಿವಿಧ ಮೆಡಿಕಲ್ ಶಾಪ್ ಅಂಗಡಿ ಮಾಲೀಕರು ಹಾಗೂ ವ್ಯಾಪಾರಿಗಳು ಉಪಸ್ಥಿತರಿದ್ದರು.

ಮತ್ತೊಂದು ಪೈಶಾಚಿಕ ಕೃತ್ಯ : ಪಾರ್ಟಿಗೆ ತೆರಳಿದ್ದ ಕಾಲೇಜು ವಿದ್ಯಾರ್ಥಿನಿ ಮೇಲೆ ಅತ್ಯಾಚಾರ!

ಬೆಂಗಳೂರು: ರಾಜಧಾನಿ ಬೆಂಗಳೂರಿನ ಮಡಿವಾಳ ಪ್ರದೇಶದಲ್ಲಿ ಕಾಲೇಜು ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿದ ಆರೋಪ ಕೇಳಿಬಂದಿದ್ದು, ಘಟನೆ ಸಂಬಂಧ ಮಡಿವಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಯುವತಿ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ಜೊತೆಗೆ ಮೋಮೋಸ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಳು ಎಂದು ತಿಳಿದುಬಂದಿದೆ. ಈ ವೇಳೆ ಗೋಶ್ ಮತ್ತು ಅತುಲ್ ಎಂಬವರೊಂದಿಗೆ ಆಕೆಗೆ ಪರಿಚಯವಾಗಿತ್ತು ಎನ್ನಲಾಗಿದೆ.

ಮೂವರು ಸೇರಿ ಪಾರ್ಟಿ ಮಾಡಿದ್ದ ವೇಳೆ ಘಟನೆ ನಡೆದಿರುವ ಆರೋಪ ಕೇಳಿಬಂದಿದೆ. ಪಾರ್ಟಿ ಬಳಿಕ ಗೋಶ್ ಹಾಗೂ ಅತುಲ್ ಊಟ ತರಲು ಹೊರಗೆ ತೆರಳಿದ್ದ ಸಂದರ್ಭದಲ್ಲಿ, ಹೈನಾಸ್ ಎಂಬ ವ್ಯಕ್ತಿ ಯುವತಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಪ್ರಕರಣ ದಾಖಲಿಸಿಕೊಂಡಿರುವ ಮಡಿವಾಳ ಪೊಲೀಸರು ಆರೋಪಿಗಳ ವಿರುದ್ಧ ತನಿಖೆ ಮುಂದುವರಿಸಿದ್ದು, ಘಟನೆಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿ ಸಂಗ್ರಹಿಸುತ್ತಿದ್ದಾರೆ.

ವಕ್ಫ್ ಹಗರಣದ ಬಗ್ಗೆ ಲೋಕಾಯುಕ್ತಕ್ಕೆ ದೂರು ನೀಡಿದ್ದ ವ್ಯಕ್ತಿಯ ಮೇಲೆ ದಾಳಿ

0

ರಾಯಚೂರು: ವಕ್ಫ್ ಅನುದಾನ ದುರ್ಬಳಕೆ ಬಗ್ಗೆ ಲೋಕಾಯುಕ್ತಕ್ಕೆ ದೂರು ನೀಡಿದ್ದ ವ್ಯಕ್ತಿಯ ಮೇಲೆ ದ್ವೇಷದಿಂದ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ರಾಯಚೂರಿನಲ್ಲಿ ಭಾರೀ ಆತಂಕ ಸೃಷ್ಟಿಸಿದೆ.

ತಲಮಾರಿ ಗ್ರಾಮದ ಸನಾವುಲ್ಲಾ ಎಂಬುವವರು, ಮಸೀದಿ ಹಾಗೂ ಈದ್ಗಾ ಮೈದಾನದ ಅಭಿವೃದ್ಧಿಗೆ ಬಿಡುಗಡೆಯಾಗಿದ್ದ 26 ಲಕ್ಷ ರೂಪಾಯಿ ಅನುದಾನದಲ್ಲಿ ಅಕ್ರಮ ನಡೆದಿದೆ ಎಂದು ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಈ ಕುರಿತು ಇತ್ತೀಚೆಗೆ ಲೋಕಾಯುಕ್ತ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದರು.

ತನಿಖೆ ನಡೆದ ಬೆನ್ನಲ್ಲೇ, ಪ್ರಕರಣವನ್ನು ರಾಜಿ ಮಾಡಿಕೊಳ್ಳುವ ನೆಪದಲ್ಲಿ ಸನಾವುಲ್ಲಾನನ್ನು ತಹಶಿಲ್ದಾರ್ ಕಚೇರಿ ಬಳಿ ಕರೆಸಿಕೊಳ್ಳಲಾಗಿದೆ ಎಂದು ಆರೋಪಿಸಲಾಗಿದೆ. ಅಲ್ಲಿ ಮೊದಲೇ ಸಂಚು ರೂಪಿಸಿಕೊಂಡು ಬಂದಿದ್ದ ಸುಮಾರು 30 ಜನರ ಗುಂಪು ಏಕಾಏಕಿ ದಾಳಿ ನಡೆಸಿದೆ.

ಚಾಕು, ಭರ್ಜಿ ಮತ್ತು ಕಲ್ಲುಗಳಿಂದ ನಡೆದ ದಾಳಿಯಲ್ಲಿ ಸನಾವುಲ್ಲಾ ತೀವ್ರವಾಗಿ ಗಾಯಗೊಂಡಿದ್ದು, ಅವರ ದೇಹಕ್ಕೆ 24 ಹೊಲಿಗೆ ಹಾಕಲಾಗಿದೆ. ಜೊತೆಗೆ ಅವರ ಸ್ನೇಹಿತರಿಗೂ ಗಾಯಗಳಾಗಿವೆ.

ಪ್ರಸ್ತುತ ಸನಾವುಲ್ಲಾಗೆ ಓಪೆಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಪೊಲೀಸ್ ಭದ್ರತೆ ಒದಗಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಪ್ರಮುಖ ಆರೋಪಿಗಳ ವಿರುದ್ಧ ಸದರ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆರೋಪಿಗಳ ಕಡೆಯವರೂ ಕೌಂಟರ್ ಕೇಸ್ ದಾಖಲಿಸಿದ್ದು, ಎರಡೂ ಪ್ರಕರಣಗಳ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ನಾಗರಹೊಳೆ ಸಫಾರಿಯಲ್ಲಿ ಜೋಡಿ ಹುಲಿಗಳ ದರ್ಶನ; ಪ್ರವಾಸಿಗರು ಫುಲ್ ಖುಷ್!

ಮೈಸೂರು: ಪ್ರಕೃತಿ ಪ್ರೇಮಿಗಳು ಮತ್ತು ವನ್ಯಜೀವಿ ಆಸಕ್ತರಿಗೆ ಖುಷಿ ನೀಡುವ ಬೆಳವಣಿಗೆಯೊಂದು ರಾಜ್ಯದ ಅರಣ್ಯ ವಲಯದಲ್ಲಿ ಗಮನ ಸೆಳೆದಿದೆ.

ಕಳೆದ ಕೆಲವು ವರ್ಷಗಳಿಂದ ಅರಣ್ಯ ಇಲಾಖೆಯ ಕಠಿಣ ಸುರಕ್ಷತಾ ಕ್ರಮಗಳು, ಅರಣ್ಯ ಸಂರಕ್ಷಣೆ ಹಾಗೂ ಪೂರಕ ಪರಿಸರ ವ್ಯವಸ್ಥೆಯ ಪರಿಣಾಮವಾಗಿ ರಾಜ್ಯದ ಪ್ರಮುಖ ರಾಷ್ಟ್ರೀಯ ಉದ್ಯಾನವನಗಳಲ್ಲಿ ಹುಲಿಗಳ ಸಂಖ್ಯೆ ಗಮನಾರ್ಹವಾಗಿ ಹೆಚ್ಚಳವಾಗಿದೆ. ಇದರ ಪರಿಣಾಮವಾಗಿ ಸಫಾರಿಗೆ ತೆರಳುವ ಪ್ರವಾಸಿಗರಿಗೆ ಹುಲಿಗಳ ದರ್ಶನವೂ ಹೆಚ್ಚಾಗಿ ಸಿಗತೊಡಗಿದೆ.

ಇತ್ತೀಚೆಗೆ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಸಫಾರಿಗೆ ತೆರಳಿದ್ದ ಪ್ರವಾಸಿಗರಿಗೆ ಅಪರೂಪದ ಮತ್ತು ರೋಮಾಂಚನಕಾರಿ ದೃಶ್ಯವೊಂದು ಕಣ್ಮನ ಸೆಳೆದಿದೆ. ಅರಣ್ಯದ ಹಸಿರು ವಾತಾವರಣದ ಮಧ್ಯೆ ಎರಡು ಭಾರೀ ಗಾತ್ರದ ಹುಲಿಗಳು ರಾಜಗಾಂಭೀರ್ಯದಿಂದ ವಿಹರಿಸುತ್ತಿದ್ದ ದೃಶ್ಯ ಪ್ರವಾಸಿಗರನ್ನು ಮಂತ್ರಮುಗ್ಧರನ್ನಾಗಿಸಿದೆ.

ಸಫಾರಿ ವಾಹನ ಸಮೀಪದಲ್ಲಿದ್ದರೂ ಯಾವುದೇ ಆತಂಕವಿಲ್ಲದೆ ಈ ಜೋಡಿ ಹುಲಿಗಳು ನಿಧಾನವಾಗಿ ಹೆಜ್ಜೆ ಹಾಕುತ್ತಾ ಕ್ಯಾಮೆರಾಗಳಿಗೆ ಬಿಂದಾಸ್ ಪೋಸ್ ನೀಡಿವೆ. ಸಾಮಾನ್ಯವಾಗಿ ದಟ್ಟ ಕಾಡಿನಲ್ಲಿ ಹುಲಿಗಳ ದರ್ಶನ ಸಿಗುವುದೇ ಅಪರೂಪ. ಅದರಲ್ಲೂ ಒಂದೇ ವೇಳೆ ಎರಡು ಹುಲಿಗಳು ಹತ್ತಿರದಿಂದ ಕಾಣಿಸಿಕೊಂಡು ಕೆಲಕಾಲ ಅರಣ್ಯ ಪ್ರದೇಶದಲ್ಲೇ ಸಂಚರಿಸಿದ್ದರಿಂದ ಪ್ರವಾಸಿಗರ ಸಂತಸಕ್ಕೆ ಪಾರವೇ ಇರಲಿಲ್ಲ.

ಸಫಾರಿಯಲ್ಲಿ ಭಾಗವಹಿಸಿದ್ದ ಹಲವರು ತಮ್ಮ ಮೊಬೈಲ್ ಹಾಗೂ ವೃತ್ತಿಪರ ಕ್ಯಾಮೆರಾಗಳಲ್ಲಿ ಈ ಅಪರೂಪದ ಕ್ಷಣಗಳನ್ನು ಸೆರೆಹಿಡಿದಿದ್ದಾರೆ. ಇದೀಗ ಈ ಫೋಟೋ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದ್ದು, ವನ್ಯಜೀವಿ ಪ್ರೇಮಿಗಳ ಗಮನ ಸೆಳೆಯುತ್ತಿವೆ.

ಇನ್ನು ಬಂಡೀಪುರ ರಾಷ್ಟ್ರೀಯ ಉದ್ಯಾನವನ ಹಾಗೂ ನಾಗರಹೊಳೆ ಪ್ರದೇಶಗಳಲ್ಲಿ ಹುಲಿಗಳ ಸಂಖ್ಯೆ ಹೆಚ್ಚುತ್ತಿರುವುದು ಪ್ರವಾಸೋದ್ಯಮಕ್ಕೂ ಹೊಸ ಉತ್ತೇಜನ ನೀಡಿದೆ. ದೇಶ-ವಿದೇಶಗಳಿಂದ ಆಗಮಿಸುವ ಪ್ರವಾಸಿಗರ ಸಂಖ್ಯೆಯೂ ಹೆಚ್ಚಾಗುತ್ತಿದ್ದು, ರಾಜ್ಯದ ಅರಣ್ಯ ಪ್ರವಾಸೋದ್ಯಮಕ್ಕೆ ಇದು ಮತ್ತಷ್ಟು ಬಲ ತುಂಬುತ್ತಿದೆ.

error: Content is protected !!