Home Blog

ಸರ್ಕಾರದ ಯೋಜನೆಗಳು ಜನರ ಮೆಚ್ಚುಗೆಗೆ ಪಾತ್ರವಾಗಿದೆ: ಮುಖ್ಯಮಂತ್ರಿ ಸಿದ್ದರಾಮಯ್ಯ

ಮೈಸೂರು: ಕಾಂಗ್ರೆಸ್ ಸರ್ಕಾರದ ಯೋಜನೆಗಳು ಜನಮೆಚ್ಚುಗೆಗೆ ಪಾತ್ರವಾಗಿದ್ದು, ಜನಾಶೀರ್ವಾದದಿಂದ ರಾಜ್ಯದ ಉಪಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅಭೂತಪೂರ್ವ ಗೆಲುವು ಸಾಧಿಸಲು ಸಾಧ್ಯವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ಮೈಸೂರಿನ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.

ದಾವಣಗೆರೆ ಮತ್ತು ಬಾಗಲಕೋಟೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ರಾಜ್ಯದ ಜನರು ಕಾಂಗ್ರೆಸ್ ಸರ್ಕಾರದ ಯೋಜನೆಗಳನ್ನು ಮೆಚ್ಚಿಕೊಂಡಿರುವುದನ್ನು ಸೂಚಿಸುತ್ತದೆ .ವಿಪಕ್ಷಗಳ ಯಾವುದೇ ತಂತ್ರಗಾರಿಕೆ ನಡೆಯುವುದಿಲ್ಲ. ಅವರು ಕೇವಲ ಕುತಂತ್ರಗಳನ್ನಷ್ಟೇ ಮಾಡುತ್ತಾರೆ ಎಂದರು.

ಸಿಎಂ ಬದಲಾವಣೆ-ವರಿಷ್ಠರ ತೀರ್ಮಾನಕ್ಕೆ ಬದ್ಧ

ಮುಖ್ಯಮಂತ್ರಿ ಬದಲಾವಣೆ ವಿಷಯದ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿ, ಕಾಂಗ್ರೆಸ್ ಸರ್ಕಾರ ತನ್ನ ಐದು ವರ್ಷದ ಅವಧಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಿದೆ. ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಪಕ್ಷದ ವರಿಷ್ಠರು ತೀರ್ಮಾನಕ್ಕೆ ಬದ್ಧವಾಗಿರುತ್ತೇನೆ. ಸಿಎಂ ಬದಲಾವಣೆ ಮಾಡುವ ಬಗ್ಗೆ ನನಗೆ ಯಾವುದೇ ಮಾಹಿತಿಯಿಲ್ಲ. ವರಿಷ್ಠರ ಭೇಟಿಗೆ ಕರೆ ಬಂದರೆ ನವದೆಹಲಿಗೆ ತೆರಳುವುದಾಗಿ ತಿಳಿಸಿದರು.

ಸ್ಥಳೀಯ ಸಂಸ್ಥೆಗಳ ಚುನಾವಣೆ

ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ನಡೆಸುವ ಬಗ್ಗೆ ಉತ್ತರಿಸಿ, ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಸಧ್ಯದಲ್ಲಿಯೇ ನಡೆಸಲಾಗುವುದು ಎಂದರು.

ಶೃಂಗೇರಿ ಚುನಾವಣಾ ಫಲಿತಾಂಶ-ಬಿಜೆಪಿಯಿಂದ ಕ್ರಿಮಿನಲ್ ಸಂಚು

ಶೃಂಗೇರಿಯ ಚುನಾವಣಾ ಫಲಿತಾಂಶದ ಬಗ್ಗೆ ಪ್ರತಿಕ್ರಿಯೆ ನೀಡಿ, ಮತಎಣಿಕೆ ವಿಚಾರದಲ್ಲಿ ಬಿಜೆಪಿ ಕ್ರಿಮಿನಲ್ ಸಂಚು ನಡೆಸಿದೆ. ರಾಜೇಗೌಡರಿಗೆ ಬಿದ್ದಿದ್ದ 255 ಅರ್ಹವಾಗಿದ್ದ ಮತಗಳನ್ನು ಅನರ್ಹ ಮಾಡಲಾಗಿದೆ. ಮತ ಎಣಿಕೆಯಾಗುವಾಗ ಬಿಜೆಪಿ ಸರ್ಕಾರವಿತ್ತು. ಬಿಜೆಪಿಯವರು ಮತ್ತು ಸಿಬ್ಬಂದಿ ಮೂಲಕ ಮತಪತ್ರಗಳನ್ನು ತಿದ್ದಲಾಗಿದ್ದು, ಇದು ಕ್ರಿಮಿನಲ್ ಸಂಚು. ಆದ್ದರಿಂದ ಶೃಂಗೇರಿ ಫಲಿತಾಂಶವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲಾಗುವುದು ಎಂದರು.

ರೈಲ್ವೆ ಇಲಾಖೆಯ ಹುದ್ದೆಗಳಿಗೆ ಕನ್ನಡಿಗರನ್ನು ಪರಿಗಣಿಸಲಾಗುತ್ತಿಲ್ಲ, ರಾಜ್ಯಸರ್ಕಾರ ಇದರಲ್ಲಿ ಮಧ್ಯಪ್ರವೇಶಿಸಬಹುದೇ ಎಂಬ ಪ್ರಶ್ನೆಗೆ ಉತ್ತರಿಸಿ, ಈ ಪರೀಕ್ಷೆಗಳನ್ನು ಕೇಂದ್ರ ಸರ್ಕಾರ ನಡೆಸುತ್ತಿದ್ದು, ಈ ನಡವಳಿಕೆಯು ಕನ್ನಡಿಗರ ಪರ ಅವರ ಧೋರಣೆಯನ್ನು ಬಿಂಬಿಸುತ್ತದೆ ಎಂದರು.

HIV ನಿಂದನೆ ಆರೋಪ: ವಿಚ್ಛೇದನ ಆದೇಶ ರದ್ದು ಮಾಡಿದ ಹೈಕೋರ್ಟ್

ಬೆಂಗಳೂರು: ಹೆಚ್‌ಐವಿ ಸೋಂಕಿನಿಂದ ಬಳಲುತ್ತಿದ್ದೇನೆ ಎಂದು ಪತ್ನಿ ಹಾಗೂ ಆಕೆಯ ಕುಟುಂಬಸ್ಥರು ನಿಂದಿಸಿದ್ದಾರೆ ಎಂಬ ಆರೋಪದ ಆಧಾರದ ಮೇಲೆ ಪತಿಗೆ ಕೌಟುಂಬಿಕ ನ್ಯಾಯಾಲಯ ನೀಡಿದ್ದ ವಿಚ್ಛೇದನ ಆದೇಶವನ್ನು ಹೈಕೋರ್ಟ್ ರದ್ದುಗೊಳಿಸಿದೆ.

ಪತಿ ಪರವಾಗಿ ನೀಡಲಾಗಿದ್ದ ವಿಚ್ಛೇದನ ಆದೇಶವನ್ನು ಪ್ರಶ್ನಿಸಿ ಪತ್ನಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ ಕಲಬುರಗಿ ವಿಭಾಗೀಯ ಪೀಠ ಈ ಮಹತ್ವದ ಆದೇಶ ನೀಡಿದೆ. ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಹಾಗೂ ನ್ಯಾಯಮೂರ್ತಿ ಡಾ. ಚಿಲ್ಲಕೂರ್ ಸುಮಲತಾ ಅವರನ್ನೊಳಗೊಂಡ ಪೀಠ ಪ್ರಕರಣವನ್ನು ಮರುಪರಿಶೀಲನೆಗಾಗಿ ವಿಚಾರಣಾಧೀನ ಕೌಟುಂಬಿಕ ನ್ಯಾಯಾಲಯಕ್ಕೆ ಹಿಂತಿರುಗಿಸಿದೆ.

ಗಂಭೀರ ಸ್ವರೂಪದ ಆರೋಪಗಳನ್ನು ಯಾವುದೇ ದಾಖಲೆಗಳಿಲ್ಲದೆ ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.

ಹೆಚ್‌ಐವಿ ಅಥವಾ ಏಡ್ಸ್ ಸೋಂಕು ತಗಲಿರುವುದಾಗಿ ಆರೋಪಿಸುವುದು ಸಾಬೀತಾದರೆ ಅದು ಮಾನಸಿಕ ಕ್ರೌರ್ಯಕ್ಕೆ ಒಳಪಡಬಹುದು. ಆದರೆ ಅಂತಹ ಆರೋಪಕ್ಕೆ ಪೂರಕವಾದ ದಾಖಲೆಗಳು ಸಲ್ಲಿಕೆಯಾಗಿಲ್ಲ. ಕೇವಲ ಪತಿಯ ಹೇಳಿಕೆಗಳನ್ನೇ ಆಧರಿಸಿ ಆದೇಶ ನೀಡಲು ಅವಕಾಶವಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಪತಿಯು ತಮ್ಮ ಆರೋಪವನ್ನು ಸಾಬೀತುಪಡಿಸಲು ಅಗತ್ಯ ದಾಖಲೆಗಳು ಅಥವಾ ಸಮರ್ಪಕ ಸಾಕ್ಷ್ಯ ಒದಗಿಸಿಲ್ಲ ಎಂದು ಹೈಕೋರ್ಟ್ ತಿಳಿಸಿದೆ. ಇದೇ ವೇಳೆ, ಯಾವುದೇ ದೃಢ ಸಾಕ್ಷ್ಯವಿಲ್ಲದೆ ಪತಿಯ ಆರೋಪವನ್ನು ಒಪ್ಪಿಕೊಂಡು ಪತ್ನಿಯ ವಾದವನ್ನು ತಳ್ಳಿಹಾಕಿರುವ ಕೌಟುಂಬಿಕ ನ್ಯಾಯಾಲಯದ ಕ್ರಮವನ್ನು ಹೈಕೋರ್ಟ್ ಪ್ರಶ್ನಿಸಿದೆ.

ವಿಚಾರಣೆ ವೇಳೆ ಪತ್ನಿಯ ಪರ ವಕೀಲರು, ಪತಿಯ ಅನೈತಿಕ ಸಂಬಂಧದ ಕಾರಣದಿಂದಲೇ ಪತ್ನಿ ತನ್ನ ಪೋಷಕರ ಮನೆಯಲ್ಲಿ ವಾಸಿಸುತ್ತಿದ್ದಾರೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು.

ಪ್ರಕರಣದ ಹಿನ್ನೆಲೆ:
ದಂಪತಿ 2002ರ ಜೂನ್ 16ರಂದು ವಿವಾಹವಾಗಿದ್ದು, ಅವರಿಗೆ ಇಬ್ಬರು ಪುತ್ರರು ಇದ್ದಾರೆ. ಪತ್ನಿ ಖಾಸಗಿ ಶಾಲೆಯ ಪ್ರಿನ್ಸಿಪಾಲ್ ಆಗಿದ್ದು, ಪತಿ ಸಾಂಖ್ಯಿಕ ಇನ್‌ಸ್ಪೆಕ್ಟರ್ ಆಗಿದ್ದಾರೆ.

ಮದುವೆಯ ಆರಂಭದಲ್ಲಿ ಜೀವನ ಸುಗಮವಾಗಿದ್ದರೂ ಬಳಿಕ ಪತ್ನಿ ಮಕ್ಕಳೊಂದಿಗೆ ತವರು ಮನೆಗೆ ತೆರಳಿದ್ದರು. ಹಲವು ಬಾರಿ ಮನವೊಲಿಸಿದರೂ ಮರಳಿ ಬಾರದ ಹಿನ್ನೆಲೆಯಲ್ಲಿ ಹಾಗೂ ನಿಂದನೆ ಆರೋಪದ ಆಧಾರದಲ್ಲಿ ಪತಿ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿಯನ್ನು ಬೀದರ್ ಕೌಟುಂಬಿಕ ನ್ಯಾಯಾಲಯ ಪುರಸ್ಕರಿಸಿ ವಿಚ್ಛೇದನ ಮಂಜೂರು ಮಾಡಿತ್ತು. ಅದನ್ನು ಪ್ರಶ್ನಿಸಿ ಪತ್ನಿ ಹೈಕೋರ್ಟ್ ಮೆಟ್ಟಿಲೇರಿದ್ದರು.

ಡಾ. ರಾಜ್‌ಕುಮಾರ್ ಸಮಾಧಿ ವಿವಾದ: ನಟ ಚೇತನ್ ಅಹಿಂಸಾ ವಿರುದ್ಧ FIR ದಾಖಲು

ಬೆಂಗಳೂರು: ಡಾ. ರಾಜ್‌ಕುಮಾರ್ ಸಮಾಧಿ ವಿಚಾರವಾಗಿ ಉಂಟಾದ ವಿವಾದಕ್ಕೆ ಸಂಬಂಧಿಸಿದಂತೆ ನಟ ಚೇತನ್ ಅಹಿಂಸಾ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಈಗಾಗಲೇ ಚೇತನ್ ಅವರು ಶೇಷಾದ್ರಿಪುರಂ ಪೊಲೀಸ್ ಠಾಣೆ ಯಲ್ಲಿ ಹಿರಿಯ ನಿರ್ಮಾಪಕ ಸಾ.ರಾ. ಗೋವಿಂದು ವಿರುದ್ಧ ದೂರು ನೀಡಿದ್ದರು. ಆ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿತ್ತು. ಇದೀಗ ಸಾ.ರಾ. ಗೋವಿಂದು ಕೂಡ ಚೇತನ್ ವಿರುದ್ಧ ದೂರು ನೀಡಿದ್ದು, ಪೊಲೀಸರು ಅದನ್ನೂ ದಾಖಲಿಸಿಕೊಂಡಿದ್ದಾರೆ.

ಎರಡೂ ಪಕ್ಷಗಳಿಂದ ಬಂದ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ವಿಡಿಯೋ ಸಾಕ್ಷ್ಯಗಳನ್ನು ಸಂಗ್ರಹಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿದ ನಂತರ ಸಂಬಂಧಪಟ್ಟವರಿಗೆ ನೋಟಿಸ್ ನೀಡಿ ಹೇಳಿಕೆ ಪಡೆಯುವ ಪ್ರಕ್ರಿಯೆ ಮುಂದುವರಿಯಲಿದೆ.

ವಿವಾದದ ಹಿನ್ನೆಲೆ:
ಏಪ್ರಿಲ್ 24ರಂದು ಡಾ. ರಾಜ್‌ಕುಮಾರ್ ಜನ್ಮದಿನದಂದು, ಚೇತನ್ ಅಹಿಂಸಾ ಸಾಮಾಜಿಕ ಜಾಲತಾಣದಲ್ಲಿ ಸಮಾಧಿಗೆ ನೀಡಿರುವ 2.5 ಎಕರೆ ಭೂಮಿ ಕುರಿತು ಪ್ರಶ್ನೆ ಎತ್ತಿದ್ದರು. “ಸಾರ್ವಜನಿಕ ಭೂಮಿಯನ್ನು ಜನರ ಉಪಯೋಗಕ್ಕೆ ಬಳಸಬೇಕು, ಮತಗಳ ಲಾಭಕ್ಕಾಗಿ ಹಂಚಬಾರದು” ಎಂದು ಅವರು ಪೋಸ್ಟ್ ಮಾಡಿದ್ದರು. ಈ ಹೇಳಿಕೆಗೆ ಅಭಿಮಾನಿಗಳಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು.

ಈ ಹಿನ್ನೆಲೆ, ರಾಜ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದು, ಸಾ.ರಾ. ಗೋವಿಂದು, ಜಯಮಾಲ ಮತ್ತು ಸುಂದರ್ ರಾಜ್ ಸೇರಿದಂತೆ ಹಲವರು ಚೇತನ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಜೊತೆಗೆ, ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಕೆಲ ಅಭಿಮಾನಿಗಳು ಚೇತನ್ ನಿವಾಸದ ಮುಂದೆ ಪ್ರತಿಭಟನೆ ನಡೆಸಿದ್ದರು.

ಈ ಬೆಳವಣಿಗೆಗಳ ಬಳಿಕ, ಚೇತನ್ ಅಹಿಂಸಾ ತಮ್ಮ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸಿ ಕ್ಷಮೆ ಕೋರಿದ್ದರು. ತಮ್ಮ ಉದ್ದೇಶ ಯಾರನ್ನೂ ನೋಯಿಸುವುದಲ್ಲ ಎಂದು ಸ್ಪಷ್ಟಪಡಿಸಿ, ತಾನೂ ಡಾ. ರಾಜ್‌ಕುಮಾರ್ ಅಭಿಮಾನಿ ಎಂದು ತಿಳಿಸಿದ್ದಾರೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಫೈನಲ್ʼಗೆ ಅನುಮಾನ: ಜನಪ್ರತಿನಿಧಿಗಳ ಟಿಕೆಟ್ ಒತ್ತಡದಿಂದ BCCIಗೆ ತಲೆನೋವು

ಬೆಂಗಳೂರು: 2026ರ ಐಪಿಎಲ್ ಫೈನಲ್ ಪಂದ್ಯ ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವುದು ಅನುಮಾನಾಸ್ಪದವಾಗಿದ್ದು, ಪಂದ್ಯವನ್ನು ಬೇರೆಡೆಗೆ ಸ್ಥಳಾಂತರಿಸುವ ಸಾಧ್ಯತೆ ಇದೆ ಎಂಬ ಮಾಹಿತಿ ಮೂಲಗಳಿಂದ ಲಭ್ಯವಾಗಿದೆ.

ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡದ ತವರೂರಾದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈ ಬಾರಿಯ ಫೈನಲ್ ಹಾಗೂ ಒಂದು ಪ್ಲೇಆಫ್ ಪಂದ್ಯ ನಡೆಯಬೇಕೆಂದು ನಿರೀಕ್ಷಿಸಲಾಗಿತ್ತು. ಆದರೆ ಉಚಿತ ಟಿಕೆಟ್ ವಿತರಣೆಗೆ ಸಂಬಂಧಿಸಿದ ವಿವಾದ ಇದೀಗ ಈ ನಿರ್ಧಾರಕ್ಕೆ ಅಡ್ಡಿಯಾಗುತ್ತಿದೆ ಎನ್ನಲಾಗಿದೆ.

ಐಪಿಎಲ್ ಸಂಪ್ರದಾಯದಂತೆ ಹಾಲಿ ಚಾಂಪಿಯನ್ ತಂಡದ ತವರು ಕ್ರೀಡಾಂಗಣದಲ್ಲೇ ಫೈನಲ್ ಪಂದ್ಯ ಆಯೋಜಿಸಲಾಗುತ್ತದೆ. ಈ ಹಿನ್ನಲೆಯಲ್ಲಿ ಬೆಂಗಳೂರಿನಲ್ಲೇ ಫೈನಲ್ ನಡೆಯಲಿದೆ ಎಂಬ ನಿರೀಕ್ಷೆ ಇತ್ತು.

ಆದರೆ ರಾಜ್ಯದ ಶಾಸಕರು, ವಿಧಾನ ಪರಿಷತ್ ಸದಸ್ಯರು ಹಾಗೂ ಸಂಸದರಾಗಿ ಒಟ್ಟು ಸುಮಾರು 299 ಜನಪ್ರತಿನಿಧಿಗಳಿಗೆ ತಲಾ ಎರಡು ಉಚಿತ ಟಿಕೆಟ್‌ಗಳನ್ನು ನೀಡಲಾಗುತ್ತಿದೆ. ಇದೀಗ ಈ ಸಂಖ್ಯೆಯನ್ನು ತಲಾ ನಾಲ್ಕುರಿಂದ ಐದು ಟಿಕೆಟ್‌ಗಳಿಗೆ ಹೆಚ್ಚಿಸುವಂತೆ ಒತ್ತಡ ಕೇಳಿಬರುತ್ತಿದೆ ಎಂದು ತಿಳಿದುಬಂದಿದೆ.

ಈ ಬೆಳವಣಿಗೆಯಿಂದಾಗಿ ಹೆಚ್ಚುವರಿ ಟಿಕೆಟ್ ವ್ಯವಸ್ಥೆ ಮಾಡುವುದು ಕ್ರಿಕೆಟ್ ಸಂಸ್ಥೆಗಳಿಗೆ ಸವಾಲಾಗಿದ್ದು, ಈ ‘ಎಂಎಲ್ಎ ಟಿಕೆಟ್ ಕಿರಿಕಿರಿ’ಯಿಂದ ದೂರ ಉಳಿಯಲು ಬಿಸಿಸಿಐ ಫೈನಲ್ ಪಂದ್ಯವನ್ನು ಬೇರೆ ಕ್ರೀಡಾಂಗಣಕ್ಕೆ ಸ್ಥಳಾಂತರಿಸುವ ಆಯ್ಕೆಯನ್ನು ಪರಿಗಣಿಸುತ್ತಿದೆ ಎನ್ನಲಾಗಿದೆ.

ಕಳೆದ ಸೀಸನ್‌ನಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ್ದ ಕಾಲ್ತುಳಿತ ದುರಂತದಲ್ಲಿ 11 ಮಂದಿ ಸಾವಿಗೀಡಾದ ಬಳಿಕ ಪ್ರಮುಖ ಪಂದ್ಯಗಳಿಗೆ ತಾತ್ಕಾಲಿಕ ನಿರ್ಬಂಧ ಹೇರಲಾಗಿತ್ತು. ಇತ್ತೀಚೆಗೆ ಮತ್ತೆ ಪಂದ್ಯ ಆಯೋಜನೆಗೆ ಅನುಮತಿ ದೊರೆತಿದ್ದರೂ, ಈಗ ಉಚಿತ ಟಿಕೆಟ್ ವಿವಾದ ಹೊಸ ತಲೆನೋವಾಗಿ ಪರಿಣಮಿಸಿದೆ.

ವಿಜಯ್ ಜನಪ್ರಿಯತೆ ಮತವಾಗಿ ಬದಲಾಗುತ್ತದೆ ಎಂದು ನಿರೀಕ್ಷಿಸಿರಲಿಲ್ಲ: ಪರಮೇಶ್ವರ್

ಬೆಂಗಳೂರು: ತಮಿಳುನಾಡಿನಲ್ಲಿ ನಟ ವಿಜಯ್ ಅವರ ಜನಪ್ರಿಯತೆ ಇಷ್ಟು ವೇಗವಾಗಿ ಮತವಾಗಿ ಪರಿವರ್ತನೆ ಆಗಿರುವುದು ಅಚ್ಚರಿಯ ಸಂಗತಿಯಾಗಿದೆ ಎಂದು ಗೃಹಸಚಿವ ಡಾ. ಜಿ. ಪರಮೇಶ್ವರ್ ಹೇಳಿದ್ದಾರೆ.

ತಮಿಳುನಾಡು ವಿಧಾನಸಭಾ ಚುನಾವಣಾ ಫಲಿತಾಂಶ ಕುರಿತು ಬೆಂಗಳೂರಿನಲ್ಲಿ ಮಾತನಾಡಿದ ಅವರು, ವಿಜಯ್ ಅವರ ಜನಪ್ರಿಯತೆ ಇಷ್ಟು ಪರಿಣಾಮಕಾರಿಯಾಗಿ ಮತಗಳಲ್ಲಿ ಪ್ರತಿಫಲಿಸುತ್ತದೆ ಎಂದು ಯಾವುದೇ ವಿಶ್ಲೇಷಣೆಯಲ್ಲಿಯೂ ಊಹಿಸಲಾಗಿರಲಿಲ್ಲ ಎಂದು ತಿಳಿಸಿದ್ದಾರೆ.

ಜನರು ಸ್ಪಷ್ಟ ತೀರ್ಮಾನ ಕೈಗೊಂಡಿದ್ದು, ಯುವ ಸಮುದಾಯವು ಈ ಬದಲಾವಣೆಗೆ ಮಹತ್ತರ ಸಹಕಾರ ನೀಡಿದೆ. ಇದೊಂದು ಹೊಸ ರಾಜಕೀಯ ಪರಿವರ್ತನೆಯ ಸೂಚನೆ ಎಂದು ಅಭಿಪ್ರಾಯಪಟ್ಟರು.

ಇಲ್ಲಿಯವರೆಗೆ ತಮಿಳುನಾಡಿನಲ್ಲಿ ದ್ರಾವಿಡ ಪಕ್ಷಗಳಾದ ಡಿಎಂಕೆ ಮತ್ತು ಎಐಎಡಿಎಂಕೆ ಪರ್ಯಾಯವಾಗಿ ಆಡಳಿತ ನಡೆಸುತ್ತಿದ್ದವು. ಆದರೆ, ಜನರು ಮೂರನೇ ಪರ್ಯಾಯದ ಹುಡುಕಾಟದಲ್ಲಿದ್ದರು ಎಂದು ಪರಮೇಶ್ವರ್ ಹೇಳಿದ್ದಾರೆ.

ಕಾಂಗ್ರೆಸ್ ಪಕ್ಷವನ್ನು ಮೂರನೇ ಆಯ್ಕೆಯಾಗಿ ಸ್ಥಾಪಿಸಲು ಸಾಧ್ಯವಾಗದಿರುವುದನ್ನು ಅವರು ಉಲ್ಲೇಖಿಸಿ, ಅದು ಸಾಧ್ಯವಾಗಿದ್ದರೆ ಫಲಿತಾಂಶ ಬೇರೆಯಾಗಿರಬಹುದಿತ್ತು ಎಂದು ಹೇಳಿದ್ದಾರೆ. ಆದರೆ, ಆ ಅವಕಾಶವನ್ನು ಬಳಸಿಕೊಳ್ಳಲಾಗಲಿಲ್ಲ ಎಂದರು.

ದೇಶದ ಅತ್ಯಂತ ಹಿರಿಯ ಮುಖ್ಯಮಂತ್ರಿ ಸಿದ್ದರಾಮಯ್ಯ: ಪಿಣರಾಯಿ ವಿಜಯನ್ ಬಳಿಕ ಅಗ್ರಸ್ಥಾನಕ್ಕೇರಿದ ಕರ್ನಾಟಕ ಸಿಎಂ

ನವದೆಹಲಿ/ಬೆಂಗಳೂರು: ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಇದೀಗ ದೇಶದ ಅತ್ಯಂತ ಹಿರಿಯ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ರಾಜೀನಾಮೆ ಸಲ್ಲಿಸಿದ ಹಿನ್ನೆಲೆಯಲ್ಲಿ 77 ವರ್ಷದ ಸಿದ್ದರಾಮಯ್ಯ ಹಿರಿಯ ಮುಖ್ಯಮಂತ್ರಿಗಳ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ.

ಈ ಮೊದಲು 82 ವರ್ಷದ ಪಿಣರಾಯಿ ವಿಜಯನ್ ದೇಶದ ಅತ್ಯಂತ ಹಿರಿಯ ಸಿಎಂ ಆಗಿದ್ದರು. ಆದರೆ ಪಂಚರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸೋಲು ಅನುಭವಿಸಿದ ಬಳಿಕ ಅವರು ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ. ಇದರಿಂದ ಸಿದ್ದರಾಮಯ್ಯ ದೇಶದ ಹಿರಿಯ ಮುಖ್ಯಮಂತ್ರಿಯಾಗಿ ಹೊರಹೊಮ್ಮಿದ್ದಾರೆ.

ಸಿದ್ದರಾಮಯ್ಯ ಇತ್ತೀಚೆಗಷ್ಟೇ ಕರ್ನಾಟಕದ ಇತಿಹಾಸದಲ್ಲಿ ಸುದೀರ್ಘಾವಧಿ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ನಾಯಕ ಎಂಬ ಮತ್ತೊಂದು ದಾಖಲೆ ನಿರ್ಮಿಸಿದ್ದರು.

ಎರಡನೇ ಬಾರಿಗೆ ಮುಖ್ಯಮಂತ್ರಿ ಆಗಿರುವ ಅವರು, 2026ರ ಜನವರಿ 6ರಂದು 2,792 ದಿನಗಳ ಕಾಲ ಮುಖ್ಯಮಂತ್ರಿಯಾಗಿದ್ದ ದಿವಂಗತ ದೇವರಾಜ ಅರಸ್ ಅವರ ದಾಖಲೆಯನ್ನು ಸರಿಗಟ್ಟಿದ್ದರು. ಬಳಿಕ ಆ ದಾಖಲೆಯನ್ನು ಮೀರಿ ರಾಜ್ಯದಲ್ಲಿ ಅತಿ ಹೆಚ್ಚು ಅವಧಿ ಆಡಳಿತ ನಡೆಸಿದ ಮುಖ್ಯಮಂತ್ರಿಗಳ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದ್ದಾರೆ.

ದೇಶದ ಹಿರಿಯ ಮುಖ್ಯಮಂತ್ರಿಗಳ ಪಟ್ಟಿಯಲ್ಲಿ ಸಿದ್ದರಾಮಯ್ಯನಂತರ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು (75), ಮಿಜೋರಂ ಮುಖ್ಯಮಂತ್ರಿ ಲಾಲ್ ದುಹೋಮಾ (74), ನಾಗಾಲ್ಯಾಂಡ್ ಮುಖ್ಯಮಂತ್ರಿ ನೆಫಿಯು ರಿಯೋ (74) ಹಾಗೂ ಪುದುಚೇರಿಯ ಮುಖ್ಯಮಂತ್ರಿ ಎನ್. ರಂಗಸ್ವಾಮಿ (74) ಸ್ಥಾನ ಪಡೆದಿದ್ದಾರೆ.

ಇನ್ನೊಂದೆಡೆ, ಅರುಣಾಚಲ ಪ್ರದೇಶ ಮುಖ್ಯಮಂತ್ರಿ ಪೇಮಾ ಖಂಡು (46) ದೇಶದ ಅತಿ ಕಿರಿಯ ಮುಖ್ಯಮಂತ್ರಿ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.

ರಾಜ್ಯವನ್ನು ಅತಿ ಹಿರಿಯ ವಯಸ್ಸಿನಲ್ಲಿ ಆಳಿದ ನಾಯಕ ಎಂಬ ದಾಖಲೆಯು ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತ ಎಂ. ಕರುಣಾನಿಧಿ ಅವರ ಹೆಸರಿನಲ್ಲಿದ್ದು, ಅವರು 92ನೇ ವಯಸ್ಸಿನವರೆಗೂ ಆಡಳಿತ ನಡೆಸಿದ್ದರು.

ಬಳ್ಳಾರಿಯಲ್ಲಿ 7ನೇ ಶತಮಾನಕ್ಕೆ ಸೇರಿದ ಬಂಡೆಗಲ್ಲು ಶಾಸನ ಪತ್ತೆ!

ಬಳ್ಳಾರಿ: ಜಿಲ್ಲೆಯ ಸಿರಗುಪ್ಪ ತಾಲೂಕಿನ ನಿಟ್ಟೂರು ಗ್ರಾಮದಲ್ಲಿ ಅಪರೂಪದ ಬಂಡೆಗಲ್ಲು ಶಾಸನವೊಂದು ಪತ್ತೆಯಾಗಿದ್ದು, ಇದು ಮೌರ್ಯರ ಆಳ್ವಿಕೆಯ ಇತಿಹಾಸ ಅಧ್ಯಯನಕ್ಕೆ ಮಹತ್ವದ ಸಾಕ್ಷ್ಯವಾಗಿ ಪರಿಣಮಿಸಿದೆ.

ನಿಟ್ಟೂರು ಗ್ರಾಮದ ಸುಕ್ರದಪ್ಪನ ಬೆಟ್ಟದ ಹೊಲದಲ್ಲಿ ಈ ಬಂಡೆಗಲ್ಲು ಶಾಸನ ಪತ್ತೆಯಾಗಿದ್ದು, ಧಾರವಾಡದ ಲಿಪಿತಜ್ಞ ಮಾರುತಿ ಭಜಂತ್ರಿ ಅವರ ನೇತೃತ್ವದ ಸಂಶೋಧನಾ ತಂಡ ಇದನ್ನು ಗುರುತಿಸಿದೆ.

ಇತಿಹಾಸ ಸಂಶೋಧಕ ಗಂಗಾವತಿಯ ಶರಣಬಸಪ್ಪ ಕೋಲ್ಕಾರ್ ಅವರ ಮಾರ್ಗದರ್ಶನದಲ್ಲಿ ಶಾಸನದ ಅಧ್ಯಯನ ನಡೆಸಲಾಗಿದ್ದು, ಬಂಡೆಯ ಮೇಲೆ ಪ್ರಾಚೀನ ಲಿಪಿಯಲ್ಲಿ ಏಳು ಸಾಲುಗಳ ಶಾಸನ ಕೆತ್ತಲಾಗಿದೆ.

ಪ್ರಾಥಮಿಕ ಅಧ್ಯಯನದ ಪ್ರಕಾರ, ಈ ಶಾಸನವು ಮೌರ್ಯರ ಆಳ್ವಿಕೆಗೆ ಸಂಬಂಧಿಸಿದ ಮಾಹಿತಿಯನ್ನು ಒಳಗೊಂಡಿದ್ದು, 7ನೇ ಶತಮಾನದ ಬಾದಾಮಿ ಚಾಲುಕ್ಯರ ಕಾಲದಿಂದ ರಾಷ್ಟ್ರಕೂಟರ ಕಾಲಘಟ್ಟದ ನಡುವಿನ ಅವಧಿಗೆ ಸೇರಿರಬಹುದು ಎಂದು ಅಂದಾಜಿಸಲಾಗಿದೆ.

ಈ ಪತ್ತೆ ಇತಿಹಾಸಕಾರರಲ್ಲಿ ಕುತೂಹಲ ಮೂಡಿಸಿದ್ದು, ದಕ್ಷಿಣ ಭಾರತದಲ್ಲಿ ಮೌರ್ಯರ ಪ್ರಭಾವ ಮತ್ತು ನಂತರದ ರಾಜವಂಶಗಳ ಆಡಳಿತದ ಕುರಿತ ಅಧ್ಯಯನಕ್ಕೆ ಹೊಸ ಆಯಾಮ ನೀಡುವ ಸಾಧ್ಯತೆ ಇದೆ.

ವಿಶೇಷವೆಂದರೆ, ಇದೇ ನಿಟ್ಟೂರು ಪ್ರದೇಶದಲ್ಲಿ ಈ ಹಿಂದೆ ಅಶೋಕನ ಶಿಲಾಶಾಸನವೂ ಪತ್ತೆಯಾಗಿತ್ತು. ಈಗ ಪತ್ತೆಯಾದ ಈ ಹೊಸ ಬಂಡೆಗಲ್ಲು ಶಾಸನವು ಅಶೋಕ ಶಿಲಾಶಾಸನ ಪತ್ತೆಯಾದ ಸ್ಥಳದಿಂದ ಕೇವಲ ಒಂದು ಕಿಲೋಮೀಟರ್ ದೂರದಲ್ಲಿರುವುದು ಮತ್ತಷ್ಟು ಮಹತ್ವ ಪಡೆದಿದೆ.

ತಮಿಳುನಾಡಲ್ಲಿ ಸರ್ಕಾರ ರಚನೆಗೆ ವಿಜಯ್ ಕಾಂಗ್ರೆಸ್ ಬೆಂಬಲ ಕೋರಿದ್ದಾರೆ: ಕೆ.ಸಿ.ವೇಣುಗೋಪಾಲ್

ಚೆನ್ನೈ: ತಮಿಳುನಾಡಿನಲ್ಲಿ ಸರ್ಕಾರ ರಚನೆಗೆ ರಾಜಕೀಯ ಚಟುವಟಿಕೆಗಳು ವೇಗ ಪಡೆದುಕೊಂಡಿದ್ದು, ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷ ಕಾಂಗ್ರೆಸ್ ಬೆಂಬಲವನ್ನು ಕೋರಿದೆ ಎಂದು ಕೆ.ಸಿ. ವೇಣುಗೋಪಾಲ್ ತಿಳಿಸಿದ್ದಾರೆ.

ಈ ಹಿನ್ನೆಲೆ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ತಮಿಳುನಾಡು ಘಟಕ ನಾಳೆ ಬೆಳಗ್ಗೆ ಚೆನ್ನೈನಲ್ಲಿ ಸಭೆ ಸೇರಿ ಈ ವಿಷಯದ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಿದೆ. ರಾಜ್ಯದಲ್ಲಿ ಜಾತ್ಯತೀತ ಸರ್ಕಾರಕ್ಕೆ ಜನಾದೇಶ ದೊರೆತಿದೆ ಎಂದು ಹೇಳಿದ ಕಾಂಗ್ರೆಸ್, ಬಿಜೆಪಿ ಆಡಳಿತವನ್ನು ಬಯಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಟಿವಿಕೆಗೆ ಕಾಂಗ್ರೆಸ್ ಬೆಂಬಲ ನೀಡುವ ಸಾಧ್ಯತೆ ಹೆಚ್ಚಿದ್ದು, ಈ ಬಗ್ಗೆ ರಾಜ್ಯ ಘಟಕಕ್ಕೆ ಕೇಂದ್ರ ನಾಯಕತ್ವ ಸಂಪೂರ್ಣ ಸ್ವಾಯತ್ತತೆ ನೀಡಿದೆ ಎಂದು ಮೂಲಗಳು ತಿಳಿಸಿವೆ. ಜೊತೆಗೆ, ಇತರ ಪಕ್ಷಗಳೂ ಹೊಸ ಸರ್ಕಾರದ ಭಾಗವಾಗುವ ಸಾಧ್ಯತೆ ಇದ್ದರೂ, ಅವರ ವಿವರಗಳು ಇನ್ನೂ ಬಹಿರಂಗವಾಗಿಲ್ಲ.

ಇದಕ್ಕಾಗಿ ವಿಜಯ್ ಅವರು ಅಧಿಕೃತವಾಗಿ ಸರ್ಕಾರ ರಚಿಸಲು ಹಕ್ಕು ಮಂಡಿಸಬೇಕಿದ್ದು, ನಂತರವೇ ಪ್ರಮಾಣ ವಚನ ಸ್ವೀಕಾರ ಪ್ರಕ್ರಿಯೆ ನಡೆಯಲಿದೆ. ಈ ನಡುವೆ, ಕಾಂಗ್ರೆಸ್ ಬೆಂಬಲ ಕೋರಿ ವಿಜಯ್ ಅವರು ಪತ್ರ ಬರೆದಿರುವುದನ್ನು ತಮಿಳುನಾಡು ಕಾಂಗ್ರೆಸ್ ಉಸ್ತುವಾರಿ ಗಿರೀಶ್ ಚೋಡಂಕರ್ ದೃಢಪಡಿಸಿದ್ದಾರೆ.

234 ಸದಸ್ಯರ ತಮಿಳುನಾಡು ವಿಧಾನಸಭೆಯಲ್ಲಿ ಟಿವಿಕೆ 108 ಸ್ಥಾನಗಳನ್ನು ಗೆದ್ದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ, ಬಹುಮತಕ್ಕೆ ಅಗತ್ಯವಾದ 118 ಸ್ಥಾನಗಳು ಯಾರಿಗೂ ಲಭ್ಯವಾಗಿಲ್ಲ. ಇದರಿಂದ ರಾಜ್ಯದಲ್ಲಿ ಮೈತ್ರಿ ಸರ್ಕಾರ ರಚನೆಗೆ ಮಾತುಕತೆಗಳು ಜೋರಾಗಿವೆ.

ಮಠದ ಹಾಸ್ಟೆಲ್ ಮಕ್ಕಳ ಮೇಲೆ ದೌರ್ಜನ್ಯ ಆರೋಪ: ವಚನಾನಂದ ಶ್ರೀಗೆ ಜಾಮೀನು ಮಂಜೂರು!

ದಾವಣಗೆರೆ: ಮಠದ ಹಾಸ್ಟೆಲ್ ಮಕ್ಕಳ ಮೇಲೆ ದೌರ್ಜನ್ಯ ಎಸಗಿದ ಆರೋಪಕ್ಕೆ ಸಂಬಂಧಿಸಿದಂತೆ ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿಯವರಿಗೆ ದಾವಣಗೆರೆ ವಿಶೇಷ ಜಿಲ್ಲಾ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಹಾಸ್ಟೆಲ್‌ನಲ್ಲಿ ಮಕ್ಕಳ ಮೇಲೆ ದೌರ್ಜನ್ಯ ನಡೆದಿದೆ ಎಂದು ಮಠದಲ್ಲಿದ್ದ ಮೂವರು ಮಕ್ಕಳು ಮಕ್ಕಳ ಕಲ್ಯಾಣ ಸಮಿತಿ (CWC) ಮುಂದೆ ದೂರು ನೀಡಿದ್ದರು. ಈ ದೂರಿನ ಆಧಾರದ ಮೇಲೆ ಸ್ವಾಮೀಜಿ ಹಾಗೂ ಅವರ ಬೆಂಬಲಿಗರ ವಿರುದ್ಧ ದೌರ್ಜನ್ಯದ ಆರೋಪಗಳು ಕೇಳಿಬಂದಿದ್ದವು.

ಬಂಧನದ ಭೀತಿಯಲ್ಲಿದ್ದ ವಚನಾನಂದ ಶ್ರೀಗಳು ಏಪ್ರಿಲ್ 21ರಂದು ನಿರೀಕ್ಷಣಾ ಜಾಮೀನು ಕೋರಿ ವಿಶೇಷ ಜಿಲ್ಲಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಪರಿಗಣಿಸಿದ ನ್ಯಾಯಾಲಯವು ಅವರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

ಜಾಮೀನು ಮಂಜೂರು ಮಾಡುವ ವೇಳೆ ನ್ಯಾಯಾಲಯವು ಕೆಲ ಕಠಿಣ ಷರತ್ತುಗಳನ್ನು ವಿಧಿಸಿದೆ. ಪ್ರಕರಣದ ಸಾಕ್ಷಿಗಳಿಗೆ ಯಾವುದೇ ರೀತಿಯ ಬೆದರಿಕೆ ಹಾಕಬಾರದು ಹಾಗೂ ನ್ಯಾಯಾಲಯದ ಪೂರ್ವ ಅನುಮತಿ ಇಲ್ಲದೆ ವ್ಯಾಪ್ತಿಯನ್ನು ಬಿಟ್ಟು ತೆರಳಬಾರದು ಎಂದು ಸ್ಪಷ್ಟವಾಗಿ ಸೂಚಿಸಲಾಗಿದೆ.

ಈ ಪ್ರಕರಣ ಸಂಬಂಧ ಮುಂದಿನ ತನಿಖೆ ಮುಂದುವರಿದಿದ್ದು, ಕಾನೂನು ಕ್ರಮಗಳು ಮುಂದುವರಿಯಲಿವೆ ಎಂದು ತಿಳಿದುಬಂದಿದೆ.

ಪೂಜೆ ವೇಳೆ ಕರ್ಪೂರ ಆರಿಹೋದರೆ ಅಶುಭವೇ? ಜ್ಯೋತಿಷ್ಯ ತಜ್ಞರು ಹೇಳುವುದೇನು?

ಹಿಂದೂ ಧರ್ಮದ ಪ್ರತಿಯೊಂದು ಸಂಪ್ರದಾಯಕ್ಕೂ ತನ್ನದೇ ಆದ ಆಧ್ಯಾತ್ಮಿಕ ಅರ್ಥ ಹಾಗೂ ವೈಜ್ಞಾನಿಕ ಹಿನ್ನೆಲೆ ಇದೆ.

ಪೂಜೆಯ ಧೂಪ, ದೀಪ ಮತ್ತು ನೈವೇದ್ಯಗಳ ನಂತರ ಸಮರ್ಪಿಸಲಾಗುವ ಆರತಿ, ಭಕ್ತಿಯ ಪರಮ ಹಂತವಾಗಿ ಪರಿಗಣಿಸಲಾಗುತ್ತದೆ. ದೇವರ ಮುಂದೆ ಬೆಳಗುವ ಈ ದೀಪ ಕೇವಲ ಒಂದು ವಿಧಿವಿಧಾನವಲ್ಲ, ಅದು ಭಕ್ತರ ಜೀವನದಲ್ಲಿ ದೈವಿಕ ಸಾನ್ನಿಧ್ಯವನ್ನು ಪ್ರತಿನಿಧಿಸುವ ಪವಿತ್ರ ಕ್ಷಣವಾಗಿದೆ.

ಆಧ್ಯಾತ್ಮಿಕ ನಂಬಿಕೆಯ ಪ್ರಕಾರ, ಆರತಿಯ ಜ್ಯೋತಿ ಮಾನವನ ಮನಸ್ಸಿನ ಅಜ್ಞಾನವೆಂಬ ಕತ್ತಲೆಯನ್ನು ನಿವಾರಿಸಿ ಜ್ಞಾನದ ಬೆಳಕನ್ನು ಮೂಡಿಸುತ್ತದೆ. ಜೊತೆಗೆ, ಇದು ನಕಾರಾತ್ಮಕ ಆಲೋಚನೆಗಳನ್ನು ದೂರಮಾಡಿ ಮನಸ್ಸಿನಲ್ಲಿ ಶಾಂತಿ ಹಾಗೂ ಸಕಾರಾತ್ಮಕತೆಯನ್ನು ಹೆಚ್ಚಿಸುತ್ತದೆ ಎಂದು ನಂಬಲಾಗುತ್ತದೆ.

ಕರ್ಪೂರದ ವಿಶೇಷ ಮಹತ್ವ

ಆರತಿಯಲ್ಲಿ ಬಳಸುವ ಕರ್ಪೂರಕ್ಕೆ ವಿಶೇಷ ಸ್ಥಾನವಿದೆ. ಕರ್ಪೂರ ಉರಿದಾಗ ಸಂಪೂರ್ಣವಾಗಿ ಕರಗಿ ಹೋಗುವುದರಿಂದ ಯಾವುದೇ ಅವಶೇಷ ಉಳಿಯುವುದಿಲ್ಲ. ಇದು ಮನುಷ್ಯನ ಅಹಂಕಾರ ಮತ್ತು ಲೌಕಿಕ ಆಸೆಗಳ ನಾಶವನ್ನು ಸೂಚಿಸುತ್ತದೆ ಎಂದು ಶಾಸ್ತ್ರಗಳು ಹೇಳುತ್ತವೆ. ಅಂದರೆ, ಭಕ್ತನು ತನ್ನ ಅಹಂಕಾರವನ್ನು ತ್ಯಜಿಸಿ ದೇವರಲ್ಲಿ ಲೀನವಾಗಬೇಕು ಎಂಬ ಸಂದೇಶವನ್ನು ಇದು ನೀಡುತ್ತದೆ.

ವೈಜ್ಞಾನಿಕ ದೃಷ್ಟಿಯಿಂದಲೂ ಕರ್ಪೂರದ ದಹನದಿಂದ ಉಂಟಾಗುವ ಸುಗಂಧ ವಾತಾವರಣವನ್ನು ಶುದ್ಧಗೊಳಿಸಿ ಕೆಲವು ಕ್ರಿಮಿಕೀಟಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ ಎಂದು ಹೇಳಲಾಗುತ್ತದೆ.

ಆರತಿ ಬೆಳಗುವ ಕ್ರಮ

ಆರತಿ ಮಾಡುವ ವಿಧಾನಕ್ಕೂ ಶಾಸ್ತ್ರೀಯ ಕ್ರಮವಿದೆ. ಶುದ್ಧ ಪಾತ್ರೆಯಲ್ಲಿ ಕರ್ಪೂರವನ್ನು ಬೆಳಗಿಸಿ ದೇವರ ಪಾದ, ಹೊಕ್ಕುಳ ಹಾಗೂ ಮುಖದ ಬಳಿ ಚಲಿಸುವ ಮೂಲಕ ಸಂಪೂರ್ಣ ವಿಗ್ರಹಕ್ಕೆ ಆರತಿ ಸಲ್ಲಿಸಲಾಗುತ್ತದೆ. ಕೆಲವೊಮ್ಮೆ ಮಧ್ಯದಲ್ಲಿ ಜ್ಯೋತಿ ಆರಿಹೋಗದಂತೆ ಹೆಚ್ಚುವರಿ ಕರ್ಪೂರವನ್ನು ಬಳಸುವುದು ರೂಢಿಯಾಗಿದೆ.

ಪೂಜೆಯ ಕೊನೆಯಲ್ಲಿ ಆರತಿಯ ಜ್ಯೋತಿಯನ್ನು ಕಣ್ಣುಗಳಿಗೆ ಹಚ್ಚಿಕೊಳ್ಳುವ ಮೂಲಕ ದೇವರ ಆಶೀರ್ವಾದವನ್ನು ಸ್ವೀಕರಿಸಲಾಗುತ್ತದೆ. ಸಂಪ್ರದಾಯಗಳಲ್ಲಿ ಏಕ ಆರತಿ ಮತ್ತು ಪಂಚ ಆರತಿ ಎಂಬ ವಿಧಗಳಿದ್ದು, ಪಂಚ ಆರತಿಯನ್ನು ಪಂಚಭೂತಗಳ ಸಂಕೇತವೆಂದು ಪರಿಗಣಿಸಲಾಗುತ್ತದೆ.

ಕರ್ಪೂರ ಆರಿಹೋದರೆ ಅಶುಭವೇ?

ಆರತಿಯ ವೇಳೆ ಕರ್ಪೂರ ಮಧ್ಯದಲ್ಲೇ ಆರಿಹೋದರೆ ಅಥವಾ ಕೆಳಗೆ ಬಿದ್ದರೆ ಅದು ಅಶುಭವೆಂಬ ಭಯ ಕೆಲವರಲ್ಲಿ ಕಂಡುಬರುತ್ತದೆ. ಆದರೆ ವಾಸ್ತವದಲ್ಲಿ ಇದು ಗಾಳಿಯ ಚಲನೆ, ಕರ್ಪೂರದ ಗುಣಮಟ್ಟ ಅಥವಾ ತಾಂತ್ರಿಕ ಕಾರಣಗಳಿಂದ ಸಂಭವಿಸುವ ಸಹಜ ಘಟನೆ ಮಾತ್ರವಾಗಿದೆ.

ಇಂತಹ ಸಂದರ್ಭಗಳಲ್ಲಿ ಗಾಬರಿಗೊಳ್ಳದೇ ಮತ್ತೆ ಭಕ್ತಿಯಿಂದ ಆರತಿಯನ್ನು ಪೂರ್ಣಗೊಳಿಸುವುದು ಸೂಕ್ತ ಎಂದು ಧಾರ್ಮಿಕ ತಜ್ಞರು ಹೇಳುತ್ತಾರೆ. ದೇವರಿಗೆ ಮುಖ್ಯವಾದದ್ದು ಭಕ್ತಿ ಮಾತ್ರ; ವಿಧಿವಿಧಾನದ ಸಣ್ಣ ಅಸಮರ್ಪಕತೆಗಳಲ್ಲ ಎಂದು ಶ್ರದ್ಧೆಯಿಂದ ನಂಬಲಾಗಿದೆ.

error: Content is protected !!