ಹಾಸನ: ಕಾನಳ್ಳಿ ಅರಣ್ಯ ಪ್ರದೇಶದಲ್ಲಿ ಭೀತಿಯ ವಾತಾವರಣ ಸೃಷ್ಟಿಸಿದ್ದ ದೈತ್ಯಾಕಾರದ ನರಹಂತಕ ಕಾಡಾನೆ ಕೊನೆಗೂ ಅರಣ್ಯ ಇಲಾಖೆಯ ಬಲೆಗೆ ಬಿದ್ದಿದೆ.
ಮೂರು ದಿನಗಳಿಂದ ಮುಂದುವರಿದಿದ್ದ ಕಾರ್ಯಾಚರಣೆಯಲ್ಲಿ ಇಟಿಎಫ್ ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಕಾಡಾನೆಯ ಹಾದಿಯನ್ನು ಪತ್ತೆಹಚ್ಚಿ, ಮುಂಜಾನೆಲೇ ಆಪರೇಷನ್ ಆರಂಭಿಸಿದರು. ಕಾಡಾನೆ ಜೊತೆ ಮತ್ತೊಂದು ‘ಕ್ಯಾಪ್ಟನ್’ ಆನೆ ಇರುವುದರಿಂದ ಪರಿಸ್ಥಿತಿ ಮತ್ತಷ್ಟು ಸಂಕೀರ್ಣವಾಗಿತ್ತು.
ಕುಮ್ಕಿ ಆನೆಗಳ ನೆರವಿನಿಂದ ಕಾಡಾನೆಗೆ ಅರವಳಿಕೆ ಚುಚ್ಚುಮದ್ದು ನೀಡಿದ ಬಳಿಕ, ಅದು ಓಡಲು ಯತ್ನಿಸಿತು. ಆದರೆ ಕಾರ್ಯಾಚರಣೆ ತಂಡ ಅದನ್ನು ಬೆನ್ನಟ್ಟಿ, ಎರಡೂ ಆನೆಗಳನ್ನು ಬೇರ್ಪಡಿಸಿತು.
ಸ್ವಲ್ಪ ದೂರ ಓಡಿದ ಬಳಿಕ ಕಾಡಾನೆ ಪ್ರಜ್ಞೆ ತಪ್ಪಿ ಬಿದ್ದಿದ್ದು, ಕುಮ್ಕಿ ಆನೆಗಳು ಅದನ್ನು ಸುತ್ತುವರಿದು ಸಂಪೂರ್ಣ ನಿಯಂತ್ರಣಕ್ಕೆ ತಂದವು. ಬಳಿಕ ನೀರು ಹಾಕಿ ಆರೈಕೆ ಮಾಡಿ ಹಗ್ಗದಲ್ಲಿ ಕಟ್ಟಲಾಗಿದೆ.
ಈ ಯಶಸ್ವಿ ಕಾರ್ಯಾಚರಣೆ ಬಳಿಕ ಸ್ಥಳೀಯರಲ್ಲಿ ಇದ್ದ ಭೀತಿ ದೂರವಾಗಿದ್ದು, ಜನರು ನಿಟ್ಟುಸಿರು ಬಿಟ್ಟಿದ್ದಾರೆ. ಈಗ ಕಾಡಾನೆಯನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸುವ ಪ್ರಕ್ರಿಯೆ ಮುಂದುವರಿದಿದೆ.

