ವಿಜಯಸಾಕ್ಷಿ ಸುದ್ದಿ, ರೋಣ: ರೋಣ ಶಾಸಕ ಜಿ. ಎಸ್. ಪಾಟೀಲ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂಬ ಒತ್ತಾಯ ಇದೀಗ ಭಾವನಾತ್ಮಕ ರಾಜಕೀಯ ಒತ್ತಡದ ರೂಪ ಪಡೆದಿದ್ದು, ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಮಳೆಯಲ್ಲೇ ದೀರ್ಘದಂಡ ನಮಸ್ಕಾರ ಹಾಕಿ ಕಾಂಗ್ರೆಸ್ ಹೈಕಮಾಂಡ್ ಗಮನ ಸೆಳೆಯುವ ಪ್ರಯತ್ನ ನಡೆಸಿದರು.
ಗದಗ ಜಿಲ್ಲೆಯ ರೋಣ ಪಟ್ಟಣದ ವೀರಭದ್ರೇಶ್ವರ ದೇವಸ್ಥಾನದಿಂದ ದರ್ಗಾವರೆಗೆ ಸುಮಾರು ಒಂದು ಕಿಲೋಮೀಟರ್ ದೂರದವರೆಗೆ ಕಾರ್ಯಕರ್ತರು ದೀರ್ಘದಂಡ ನಮಸ್ಕಾರ ಹಾಕಿ ಭಕ್ತಿ ಹಾಗೂ ರಾಜಕೀಯ ನಿಷ್ಠೆಯನ್ನು ಪ್ರದರ್ಶಿಸಿದರು. ಸುರಿಯುವ ಮಳೆಯನ್ನೂ ಲೆಕ್ಕಿಸದೆ ದೀರ್ಘದಂಡ ನಮಸ್ಕಾರ ಹಾಕಿದ ಕಾರ್ಯಕರ್ತರು “ಈ ಬಾರಿ ಜಿ. ಎಸ್. ಪಾಟೀಲರಿಗೆ ಸಚಿವ ಸ್ಥಾನ ನೀಡಲೇಬೇಕು” ಎಂದು ಘೋಷಣೆ ಕೂಗಿದರು.
“ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಲೆಲ್ಲಾ ರೋಣ ಕ್ಷೇತ್ರಕ್ಕೆ ಅನ್ಯಾಯವಾಗುತ್ತಿದೆ. ನಾಲ್ಕು ಬಾರಿ ಶಾಸಕರಾಗಿ ಗೆದ್ದು ಪಕ್ಷಕ್ಕಾಗಿ ದುಡಿದ ಜಿ. ಎಸ್. ಪಾಟೀಲರಿಗೆ ಇದುವರೆಗೆ ಸಚಿವ ಸ್ಥಾನ ಸಿಕ್ಕಿಲ್ಲ. ಈ ಬಾರಿ ಶತಾಯಗತಾಯ ಸಚಿವ ಸ್ಥಾನ ನೀಡಬೇಕು” ಎಂದು ಕಾರ್ಯಕರ್ತರು ಆಗ್ರಹಿಸಿದರು.
ದೀರ್ಘದಂಡ ನಮಸ್ಕಾರದ ವೇಳೆ ದಾರಿಯುದ್ದಕ್ಕೂ ಜಿ. ಎಸ್. ಪಾಟೀಲ ಪರ ಘೋಷಣೆಗಳು ಮೊಳಗಿದವು. ಬಳಿಕ ವೀರಭದ್ರೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಶಾಸಕ ಜಿ. ಎಸ್. ಪಾಟೀಲರಿಗೆ ಸಚಿವ ಸ್ಥಾನ ದೊರಕಲೆಂದು ಪ್ರಾರ್ಥಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡ ಸಂಜಯ ದೊಡ್ಡಮನಿ, “ಜಿ. ಎಸ್. ಪಾಟೀಲರು ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದು, ಕಾಂಗ್ರೆಸ್ ಪಕ್ಷದ ಸಂಘಟನೆಗಾಗಿ ಸಾಕಷ್ಟು ಶ್ರಮಿಸಿದ್ದಾರೆ. ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳ ಜೊತೆಗೆ ಪಕ್ಷವನ್ನು ಬಲಪಡಿಸುವ ಕೆಲಸ ಮಾಡಿದ್ದಾರೆ. ಆದರೆ ಪ್ರತೀ ಬಾರಿ ಸಚಿವ ಸಂಪುಟ ರಚನೆ ವೇಳೆ ರೋಣ ಕ್ಷೇತ್ರವನ್ನು ಕಡೆಗಣಿಸಲಾಗುತ್ತಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ಈ ಬಾರಿ ಜಿ. ಎಸ್. ಪಾಟೀಲರಿಗೆ ಸಚಿವ ಸ್ಥಾನ ನೀಡದಿದ್ದರೆ ರೋಣ ಕ್ಷೇತ್ರದ ಜನತೆ ತೀವ್ರ ಹೋರಾಟಕ್ಕೆ ಇಳಿಯಲಿದ್ದಾರೆ. ಹೈಕಮಾಂಡ್ ಉತ್ತರ ಕರ್ನಾಟಕದ ಭಾವನೆಗಳಿಗೆ ಗೌರವ ನೀಡಬೇಕು” ಎಂದು ಎಚ್ಚರಿಕೆ ನೀಡಿದರು.
ಮಳೆಯ ನಡುವೆಯೂ ನಡೆದ ಈ ದೀರ್ಘದಂಡ ನಮಸ್ಕಾರ ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು, ಕಾಂಗ್ರೆಸ್ ಹೈಕಮಾಂಡ್ಗೆ ರೋಣ ಕ್ಷೇತ್ರದ ಕಾರ್ಯಕರ್ತರು ಸ್ಪಷ್ಟ ಸಂದೇಶ ರವಾನಿಸಿದಂತಾಗಿದೆ.
ಈ ಸಂದರ್ಭದಲ್ಲಿ ಮಹೇಶ ಕಳಸಣ್ಣವರ, ಅಸ್ಲಮ್ ಕೊಪ್ಪಳ, ಯಲ್ಲಪ್ಪ ಕಿರೇಸೂರ, ಅಸ್ಫಾಕ್ ಮುಲ್ಲಾ, ಶಹಬಾಜ್ ಗದಗಕರ್, ತೋಹಿದ್ ಜಲಾವರ್, ಬಸೀರ್ ಕಟ್ಟಿಮನಿ, ವೀರಣ್ಣ ಸಾಕಾ, ಮುತ್ತು ನವಲಗುಂದ, ನಿಂಬಣ್ಣ ಗಾಣಿಗೇರ, ರಿಯಾಜ್ ಮುಲ್ಲಾ, ದಾವಲಸಾಬ್ ಬಾಡಿನ, ದುರಗಪ್ಪ ಹಿರೇಮನಿ, ಮಾದೇವ ತೆಗ್ಗಿನಮನಿ, ರಾಜು ಪಿಂಜಾರ ಸೇರಿದಂತೆ ಹಲವಾರು ಕಾರ್ಯಕರ್ತರು ಭಾಗವಹಿಸಿದ್ದರು.
“ರೋಣ ಕ್ಷೇತ್ರಕ್ಕೆ ಈ ಬಾರಿ ನ್ಯಾಯ ಸಿಗಲೇಬೇಕು. ಜಿ. ಎಸ್. ಪಾಟೀಲರಿಗೆ ಸಚಿವ ಸ್ಥಾನ ನೀಡುವುದು ಉತ್ತರ ಕರ್ನಾಟಕದ ಜನರ ಭಾವನೆಗೆ ಗೌರವ ನೀಡಿದಂತಾಗುತ್ತದೆ.”
ಸಂಜಯ ದೊಡ್ಡಮನಿ, ಕಾಂಗ್ರೆಸ್ ಮುಖಂಡ
- ಮಳೆಯಲ್ಲೂ ನಿಲ್ಲದ ಕಾರ್ಯಕರ್ತರ ಜೋಶ್
- ವೀರಭದ್ರೇಶ್ವರ ದೇವಸ್ಥಾನದಿಂದ ದರ್ಗಾವರೆಗೆ ದೀರ್ಘದಂಡ ನಮಸ್ಕಾರ
- ಸುಮಾರು 1 ಕಿಮೀ ದೂರ ಮಳೆಯಲ್ಲೇ ಉರುಳಿ ಸಾಗಿದ ಅಭಿಮಾನಿಗಳು
- “ಜಿ. ಎಸ್. ಪಾಟೀಲರಿಗೆ ಸಚಿವ ಸ್ಥಾನ ಕೊಡಿ” ಎಂಬ ಘೋಷಣೆಗಳು
- ವಿಶೇಷ ಪೂಜೆ ಸಲ್ಲಿಸಿ ಸಚಿವ ಸ್ಥಾನಕ್ಕಾಗಿ ಪ್ರಾರ್ಥನೆ
- ಸಚಿವ ಸ್ಥಾನ ಸಿಗದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ








