Home Blog

8 ತಿಂಗಳ ಬಳಿಕ ನಾಪತ್ತೆಯಾಗಿದ್ದ ಬೆಂಗಳೂರಿನ ಇಬ್ಬರು ಪಿಯು ವಿದ್ಯಾರ್ಥಿನಿಯರು ಪತ್ತೆ: ಒಬ್ಬಳು ಗರ್ಭಿಣಿ

0

ಬೆಂಗಳೂರು: ಎಂಟು ತಿಂಗಳ ಹಿಂದೆ ನಾಪತ್ತೆಯಾಗಿದ್ದ ವಿದ್ಯಾರಣ್ಯಪುರ ಮೂಲದ ಇಬ್ಬರು ಪಿಯು ವಿದ್ಯಾರ್ಥಿನಿಯರನ್ನು ಸಿಐಡಿ ಅಧಿಕಾರಿಗಳು ಕೊನೆಗೂ ಪತ್ತೆಹಚ್ಚಿದ್ದಾರೆ. ಜನವರಿ 31ರಂದು ಇಬ್ಬರೂ ನಾಪತ್ತೆಯಾಗಿದ್ದು, ಅವರಲ್ಲಿ ಒಬ್ಬರು ದ್ವಿತೀಯ ಪಿಯುಸಿ ಹಾಗೂ ಮತ್ತೊಬ್ಬರು ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದರು. ಸದ್ಯ ಇಬ್ಬರೂ ಪತ್ತೆಯಾಗಿದ್ದು, ಅವರಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಮದುವೆಯಾಗಿದ್ದು ಗರ್ಭಿಣಿಯಾಗಿರುವುದು ಸಿಐಡಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ವಿದ್ಯಾರ್ಥಿನಿಯರು ನಾಪತ್ತೆಯಾದ ಬಳಿಕ ಪೋಷಕರು ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಪ್ರಕರಣ ದಾಖಲಿಸಿದ್ದರು. ಪೊಲೀಸರು ಹುಡುಕಾಟ ನಡೆಸಿದರೂ ಆರಂಭದಲ್ಲಿ ಇಬ್ಬರ ಸುಳಿವು ಸಿಕ್ಕಿರಲಿಲ್ಲ. ಬಳಿಕ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳಿದ್ದ ವೇಳೆ ಇಬ್ಬರು ವಿದ್ಯಾರ್ಥಿನಿಯರು ಮಗುವಿನೊಂದಿಗೆ ಆಟವಾಡುತ್ತಿರುವುದು ಕಂಡುಬಂದಿತ್ತು. ಆ ಸಂದರ್ಭದಲ್ಲಿ ಮಗುವಿನ ತಾಯಿ ಹಾಗೂ ಇಬ್ಬರು ವಿದ್ಯಾರ್ಥಿನಿಯರೊಂದಿಗೆ ಸೆಲ್ಫಿ ತೆಗೆದುಕೊಂಡಿದ್ದರು. ಇದಾದ ಬಳಿಕ ವಿದ್ಯಾರ್ಥಿನಿಯರ ಬಗ್ಗೆ ಯಾವುದೇ ಸುಳಿವು ಲಭ್ಯವಾಗಿರಲಿಲ್ಲ.

ತಮ್ಮ ಮಕ್ಕಳ ಪತ್ತೆಯಾಗದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಹೈಕೋರ್ಟ್ ಮೊರೆ ಹೋಗಿದ್ದರು. ಸುಮಾರು ಐದಾರು ತಿಂಗಳ ಬಳಿಕ ಪ್ರಕರಣವನ್ನು ಹೈಕೋರ್ಟ್ ಸಿಐಡಿಗೆ ವರ್ಗಾವಣೆ ಮಾಡಿತ್ತು. ಕಳೆದ ಮೂರು ತಿಂಗಳಿಂದ ಸಿಐಡಿ ಅಧಿಕಾರಿಗಳು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿ ವಿದ್ಯಾರ್ಥಿನಿಯರ ಪತ್ತೆಗೆ ಕಾರ್ಯಾಚರಣೆ ನಡೆಸಿದ್ದರು.

ಈ ನಡುವೆ ದ್ವಿತೀಯ ಪಿಯುಸಿ ಓದುತ್ತಿದ್ದ ವಿದ್ಯಾರ್ಥಿನಿ ಸಿಮ್ ಕಾರ್ಡ್ ಖರೀದಿಸಲು ತೆರಳಿದ್ದಳು. ಈ ವೇಳೆ ಆಧಾರ್ ಕಾರ್ಡ್ ಸಂಖ್ಯೆ ಬಳಸಿದಾಗ ಸರ್ವಿಸ್ ಪ್ರೊವೈಡರ್ ಮೂಲಕ ಸಿಐಡಿ ಅಧಿಕಾರಿಗಳಿಗೆ ಮಾಹಿತಿ ಲಭ್ಯವಾಗಿದೆ. ಈ ಸುಳಿವಿನ ಆಧಾರದ ಮೇಲೆ ತನಿಖೆ ಮುಂದುವರಿಸಿದ ಅಧಿಕಾರಿಗಳು ಇಬ್ಬರು ವಿದ್ಯಾರ್ಥಿನಿಯರನ್ನು ಪತ್ತೆಹಚ್ಚಿದ್ದಾರೆ.

ವಿಚಾರಣೆ ವೇಳೆ ಇಬ್ಬರು ವಿದ್ಯಾರ್ಥಿನಿಯರಿಗೆ ಮಲೆ ಮಹದೇಶ್ವರ ಬೆಟ್ಟದಲ್ಲಿ ಕನಕಪುರ ತಾಲೂಕಿನ ಯುವಕನೊಬ್ಬನ ಪರಿಚಯವಾಗಿರುವುದು ತಿಳಿದುಬಂದಿದೆ. ಕುಟುಂಬದಲ್ಲಿ ಸಮಸ್ಯೆಗಳಿದ್ದ ಹಿನ್ನೆಲೆಯಲ್ಲಿ ದೊಡ್ಡ ವಿದ್ಯಾರ್ಥಿನಿ ತನ್ನ ತಂಗಿ, ತಂದೆ-ತಾಯಿ ಹಾಗೂ ಕುಟುಂಬಸ್ಥರು ಯಾರೂ ಇಲ್ಲ ಎಂದು ಯುವಕನಿಗೆ ಸುಳ್ಳು ಹೇಳಿದ್ದಳು ಎನ್ನಲಾಗಿದೆ. ಬಳಿಕ ಇಬ್ಬರೂ ಆ ಯುವಕನೊಂದಿಗೆ ತೆರಳಿದ್ದರು.

ನಂತರ ದೊಡ್ಡ ವಿದ್ಯಾರ್ಥಿನಿ ಆ ಯುವಕನನ್ನು ಮದುವೆಯಾಗಿದ್ದು, ಇಬ್ಬರೂ ಒಟ್ಟಿಗೆ ಜೀವನ ನಡೆಸುತ್ತಿದ್ದರು ಎನ್ನಲಾಗಿದೆ. ಸದ್ಯ ಆಕೆ ಗರ್ಭಿಣಿಯಾಗಿರುವುದು ತನಿಖೆಯಲ್ಲಿ ತಿಳಿದುಬಂದಿದೆ. ಇಬ್ಬರು ವಿದ್ಯಾರ್ಥಿನಿಯರನ್ನು ಪೊಲೀಸರು ಇಂದು ಹೈಕೋರ್ಟ್ ಮುಂದೆ ಹಾಜರುಪಡಿಸಲಿದ್ದಾರೆ.

ಬೆಳ್ಳಂಬೆಳಗ್ಗೆಯೇ ಸಚಿವ ಸತೀಶ್ ಜಾರಕಿಹೊಳಿ ಮನೆಗಳ ಮೇಲೆ ಇಡಿ ದಾಳಿ! ರೇಡ್ʼಗೆ ಅಸಲಿ ಕಾರಣವೇನು?

0

ಬೆಂಗಳೂರು: ಕಾಂಗ್ರೆಸ್‌ನ ಪ್ರಭಾವಿ ನಾಯಕ ಹಾಗೂ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ಬೆಂಗಳೂರು ಮತ್ತು ಗೋಕಾಕ್‌ನಲ್ಲಿರುವ ನಿವಾಸಗಳ ಮೇಲೆ ಜಾರಿ ನಿರ್ದೇಶನಾಲಯ (ಇ.ಡಿ.) ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅಬಕಾರಿ ಪರವಾನಗಿ ಹಗರಣಕ್ಕೆ ಸಂಬಂಧಿಸಿದ ಪ್ರಕರಣದ ತನಿಖೆಯ ಭಾಗವಾಗಿ ಈ ಕಾರ್ಯಾಚರಣೆ ನಡೆದಿದೆ ಎನ್ನಲಾಗಿದೆ.

ಸತೀಶ್ ಜಾರಕಿಹೊಳಿ ಅವರ ಬಾಮೈದ ಮಂಜುನಾಥ್ ಅವರ ವಿರುದ್ಧ ಕೇಳಿಬಂದಿರುವ ಆರೋಪಗಳಿಗೆ ಸಂಬಂಧಿಸಿದಂತೆ ಇ.ಡಿ. ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಮಂಜುನಾಥ್ ಅವರು ಬೆಳಗಾವಿಗೆ ವರ್ಗಾವಣೆಯಾಗುವ ವಿಚಾರದಲ್ಲಿ ಸತೀಶ್ ಜಾರಕಿಹೊಳಿ ಪ್ರಭಾವ ಬೀರಿದ್ದರು ಎಂಬ ಆರೋಪವೂ ಕೇಳಿಬಂದಿದೆ.

ಇದಲ್ಲದೆ, ಮಂಜುನಾಥ್ ಅವರು ತಮ್ಮ ಸಂಬಂಧಿಕರು ಹಾಗೂ ಆಪ್ತರ ಹೆಸರಿನಲ್ಲಿ ಅಬಕಾರಿ ಪರವಾನಗಿಗಳನ್ನು ಪಡೆದುಕೊಂಡಿದ್ದರು ಎಂಬ ಆರೋಪವಿದೆ. ಈ ಮೂಲಕ ಅಕ್ರಮವಾಗಿ ಸಂಗ್ರಹಿಸಲಾದ ಹಣವನ್ನು ವಿವಿಧ ಕಡೆಗಳಲ್ಲಿ ಹೂಡಿಕೆ ಮಾಡಲಾಗಿತ್ತು ಎಂಬ ಆರೋಪದ ಬಗ್ಗೆಯೂ ತನಿಖೆ ನಡೆಯುತ್ತಿದೆ.

ಈ ಪ್ರಕರಣದ ತನಿಖೆ ವೇಳೆ ಮಂಜುನಾಥ್ ಅವರ ನಿವಾಸದಲ್ಲಿ ಡೈರಿಯೊಂದು ಪತ್ತೆಯಾಗಿತ್ತು ಎನ್ನಲಾಗಿದೆ. ಈ ಡೈರಿಯಲ್ಲಿರುವ ಮಾಹಿತಿಯನ್ನು ಆಧರಿಸಿ ಜೂನ್ 24ರಿಂದ ಇ.ಡಿ. ಅಧಿಕಾರಿಗಳು ಪ್ರಕರಣದ ಕುರಿತು ಕೂಲಂಕುಷ ತನಿಖೆ ನಡೆಸುತ್ತಿದ್ದಾರೆ. ತನಿಖೆಯ ವೇಳೆ ಕೆಲವು ಮಹತ್ವದ ಸುಳಿವುಗಳು ದೊರೆತಿವೆ ಎನ್ನಲಾಗಿದ್ದು, ಡೈರಿಯಲ್ಲಿನ ದಾಖಲೆಗಳ ಆಧಾರದ ಮೇಲೆ ಸತೀಶ್ ಜಾರಕಿಹೊಳಿ ಅವರ ಪಾತ್ರದ ಬಗ್ಗೆಯೂ ಅಧಿಕಾರಿಗಳು ಪರಿಶೀಲನೆ ಮುಂದುವರಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಇ.ಡಿ. ಅಧಿಕಾರಿಗಳ ತನಿಖೆ ಮತ್ತಷ್ಟು ಚುರುಕುಗೊಂಡಿದ್ದು, ದಾಳಿ ಹಾಗೂ ಪರಿಶೀಲನೆಯ ವೇಳೆ ಲಭ್ಯವಾಗುವ ದಾಖಲೆಗಳು ಮತ್ತು ಮಾಹಿತಿಗಳ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ.

ಜೈಲು ಶಿಕ್ಷೆಯಿಂದ ತಾತ್ಕಾಲಿಕ ರಿಲೀಫ್: ರಾಜ್‌ಪಾಲ್ ಯಾದವ್‌ಗೆ ₹5 ಕೋಟಿ ಠೇವಣಿ ಷರತ್ತು

ನವದೆಹಲಿ: ಚೆಕ್ ಬೌನ್ಸ್ ಪ್ರಕರಣದಲ್ಲಿ ಜೈಲು ಶಿಕ್ಷೆ ಎದುರಿಸುತ್ತಿದ್ದ ಬಾಲಿವುಡ್ ನಟ ರಾಜ್‌ಪಾಲ್ ಯಾದವ್ ಅವರಿಗೆ ಸುಪ್ರೀಂ ಕೋರ್ಟ್ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಆದರೆ ಈ ರಿಲೀಫ್‌ಗೆ ₹5 ಕೋಟಿ ಠೇವಣಿ ಷರತ್ತು ವಿಧಿಸಲಾಗಿದ್ದು, ಬುಧವಾರದೊಳಗೆ ಸುಪ್ರೀಂ ಕೋರ್ಟ್ ರಿಜಿಸ್ಟ್ರಿಯಲ್ಲಿ ಹಣ ಠೇವಣಿ ಮಾಡಬೇಕಾಗಿದೆ. ನಿಗದಿತ ಮೊತ್ತ ಪಾವತಿಸಿದರೆ ಮಾತ್ರ ಜಾಮೀನಿನ ಪ್ರಯೋಜನ ದೊರೆಯಲಿದೆ.

ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿ ಜೋಯ್ಮಾಲ್ಯ ಬಾಗ್ಚಿ ಮತ್ತು ನ್ಯಾಯಮೂರ್ತಿ ವಿ. ಮೋಹನಾ ಅವರ ಪೀಠ, ರಾಜ್‌ಪಾಲ್ ಯಾದವ್ ಹಾಗೂ ಅವರ ಪತ್ನಿ ರಾಧಾ ಯಾದವ್ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿ ಈ ಆದೇಶ ನೀಡಿದೆ.

ಮುರಳಿ ಪ್ರಾಜೆಕ್ಟ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯಿಂದ ಪಡೆದ ಸಾಲದ ಹಣವನ್ನು ಮರುಪಾವತಿ ಮಾಡದ ಹಿನ್ನೆಲೆಯಲ್ಲಿ ರಾಜ್‌ಪಾಲ್ ಯಾದವ್ ನೀಡಿದ್ದ ಚೆಕ್‌ಗಳು ಬೌನ್ಸ್ ಆಗಿದ್ದವು. ಈ ಹಿನ್ನೆಲೆಯಲ್ಲಿ ನಟನ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿದ್ದು, ಪ್ರಕರಣದ ಕಾನೂನು ಹೋರಾಟದ ಭಾಗವಾಗಿ ವಿಷಯ ಸುಪ್ರೀಂ ಕೋರ್ಟ್‌ವರೆಗೆ ತಲುಪಿತ್ತು.

ಈ ಹಿಂದೆ ಹೈಕೋರ್ಟ್ ಏಳು ಪ್ರಕರಣಗಳಲ್ಲಿ ನಟನಿಗೆ ವಿಧಿಸಲಾಗಿದ್ದ ಶಿಕ್ಷೆಯನ್ನು ಒಟ್ಟಿಗೆ ಅನುಭವಿಸುವಂತೆ ಆದೇಶಿಸಿತ್ತು. ಪ್ರತಿ ಪ್ರಕರಣದ ದೂರುದಾರರಿಗೆ ತಲಾ ₹1.05 ಕೋಟಿ ಪಾವತಿಸುವಂತೆ ಸೂಚಿಸಲಾಗಿತ್ತು. ಜತೆಗೆ ಪ್ರತಿ ಪ್ರಕರಣದಲ್ಲಿ ₹25,000 ದಂಡವನ್ನು ರಾಜ್ಯ ಸರ್ಕಾರಕ್ಕೆ ಪಾವತಿಸಬೇಕಿತ್ತು. ರಾಧಾ ಯಾದವ್ ಅವರಿಗೆ ಪ್ರತಿ ಪ್ರಕರಣಕ್ಕೂ ₹5.51 ಲಕ್ಷ ಪಾವತಿಸುವಂತೆ ಪ್ರತ್ಯೇಕ ನಿರ್ದೇಶನ ನೀಡಲಾಗಿತ್ತು.

ಈ ನಡುವೆ ರಾಜ್‌ಪಾಲ್ ಯಾದವ್ ಈಗಾಗಲೇ ದೂರುದಾರರಿಗೆ ₹2.25 ಕೋಟಿ ಪಾವತಿಸಿರುವುದು ವಿಚಾರಣೆ ವೇಳೆ ಗಮನಕ್ಕೆ ಬಂದಿತ್ತು. ಈ ಮೊತ್ತವನ್ನು ಬಾಕಿ ಹಣದಲ್ಲಿ ಹೊಂದಿಸಿಕೊಳ್ಳುವಂತೆ ಹೈಕೋರ್ಟ್ ಸೂಚಿಸಿತ್ತು. ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ ಮೊರೆ ಹೋಗಲು ನಟನಿಗೆ ಎರಡು ತಿಂಗಳ ಕಾಲಾವಕಾಶ ನೀಡಲಾಗಿದ್ದು, ಅಷ್ಟರ ಅವಧಿಗೆ ಶಿಕ್ಷೆಯನ್ನು ಅಮಾನತಿನಲ್ಲಿಡಲಾಗಿತ್ತು.

ಐಪಿಎಲ್ ಸೀಸನ್-20ಕ್ಕೂ ಮುನ್ನ ಕೆಎಲ್ ರಾಹುಲ್ ತಂಡ ಬದಲಾವಣೆ ವದಂತಿಗೆ ಬ್ರೇಕ್!

0

ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-20 ಆರಂಭಕ್ಕೂ ಮುನ್ನ ಕೆಎಲ್ ರಾಹುಲ್ ತಂಡ ಬದಲಾಯಿಸಲಿದ್ದಾರೆ ಎಂಬ ವದಂತಿಗಳಿಗೆ ಇದೀಗ ತೆರೆ ಬಿದ್ದಿದೆ. ಕೆಎಲ್ ರಾಹುಲ್ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ತೊರೆದು ಕೋಲ್ಕತಾ ನೈಟ್ ರೈಡರ್ಸ್ ತಂಡ ಸೇರಲಿದ್ದಾರೆ ಎಂಬ ಸುದ್ದಿ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿತ್ತು. ಆದರೆ ಈ ಸುದ್ದಿಗಳು ಸುಳ್ಳು ಎಂಬುದನ್ನು ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯ ಸಹ-ಮಾಲೀಕ ಪಾರ್ಥ್ ಜಿಂದಾಲ್ ಸ್ಪಷ್ಟಪಡಿಸಿದ್ದಾರೆ.

ಕಳೆದ ಕೆಲ ದಿನಗಳಿಂದ ಕೆಎಲ್ ರಾಹುಲ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಮ್ಯಾನೇಜ್‌ಮೆಂಟ್ ನಡುವೆ ಭಿನ್ನಾಭಿಪ್ರಾಯ ಮೂಡಿದೆ ಎಂಬ ಚರ್ಚೆಗಳು ನಡೆದಿದ್ದವು. ಅದರಲ್ಲೂ ರಿಷಭ್ ಪಂತ್ ಮತ್ತೆ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಮರಳಿರುವ ಹಿನ್ನೆಲೆಯಲ್ಲಿ, ರಾಹುಲ್ ಅವರನ್ನು ಮತ್ತೊಂದು ಫ್ರಾಂಚೈಸಿಗೆ ಟ್ರೇಡ್ ಮಾಡಬಹುದು ಎಂಬ ಊಹಾಪೋಹಗಳು ಜೋರಾಗಿದ್ದವು.

ಈ ಎಲ್ಲ ವದಂತಿಗಳಿಗೆ ಪಾರ್ಥ್ ಜಿಂದಾಲ್ ಸಾಮಾಜಿಕ ಜಾಲತಾಣದ ಮೂಲಕ ಸ್ಪಷ್ಟನೆ ನೀಡಿದ್ದಾರೆ. ಕೆಎಲ್ ರಾಹುಲ್ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪ್ರಮುಖ ಆಟಗಾರರಾಗಿದ್ದು, ಅವರು ತಂಡದಲ್ಲೇ ಮುಂದುವರಿಯಲಿದ್ದಾರೆ ಎಂದು ಜಿಂದಾಲ್ ತಿಳಿಸಿದ್ದಾರೆ.

“ಕೆಎಲ್ ರಾಹುಲ್ ಡೆಲ್ಲಿ ಕ್ಯಾಪಿಟಲ್ಸ್ ಪಾಲಿಗೆ ಪ್ರಮುಖ ಆಟಗಾರ. ನಾನು ಕಂಡ ಅತ್ಯಂತ ಪ್ರಾಮಾಣಿಕ ಆಟಗಾರರಲ್ಲಿ ಅವರೂ ಒಬ್ಬರು. ಅವರು ಯಾವಾಗಲೂ ವೈಯಕ್ತಿಕ ಹಿತಾಸಕ್ತಿಗಿಂತ ತಂಡದ ಹಿತಾಸಕ್ತಿಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ. ನಮ್ಮ ಮುಂದೆ ಇನ್ನೂ ಸಾಧಿಸಬೇಕಾದ ಕೆಲಸಗಳಿವೆ. ಡೆಲ್ಲಿ ಕ್ಯಾಪಿಟಲ್ಸ್ ತಂಡವು ಹೆಮ್ಮೆಪಡುವಂತೆ ಮಾಡಲು ನಾವೆಲ್ಲರೂ ಒಟ್ಟಾಗಿ ಶ್ರಮಿಸುತ್ತೇವೆ” ಎಂದು ಪಾರ್ಥ್ ಜಿಂದಾಲ್ ಹೇಳಿದ್ದಾರೆ.

ಇದರ ಬೆನ್ನಲ್ಲೇ ಡೆಲ್ಲಿ ಕ್ಯಾಪಿಟಲ್ಸ್ ಕೂಡ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದೆ. ಡೆಲ್ಲಿ ಕ್ಯಾಪಿಟಲ್ಸ್ ಜರ್ಸಿ ಧರಿಸಿದ್ದ ಕೆಎಲ್ ರಾಹುಲ್ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದ್ದು, “ನಾನು ನನ್ನ ಮನೆಯಲ್ಲಿದ್ದೇನೆ” ಎಂದು ಹೇಳುವ ಮೂಲಕ ತಂಡದಿಂದ ಹೊರಬರುವ ವದಂತಿಗಳಿಗೆ ತೆರೆ ಎಳೆದಿದ್ದಾರೆ.

ಹೀಗಾಗಿ ಕೆಎಲ್ ರಾಹುಲ್ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ತೊರೆಯಲಿದ್ದಾರೆ ಎಂಬ ಸುದ್ದಿಗೆ ಸದ್ಯಕ್ಕೆ ಬ್ರೇಕ್ ಬಿದ್ದಿದೆ. ಮುಂಬರುವ ಐಪಿಎಲ್ ಟೂರ್ನಿಯಲ್ಲಿ ಕೆಎಲ್ ರಾಹುಲ್ ಹಾಗೂ ರಿಷಭ್ ಪಂತ್ ಡೆಲ್ಲಿ ಕ್ಯಾಪಿಟಲ್ಸ್ ಪರ ಒಟ್ಟಿಗೆ ಕಣಕ್ಕಿಳಿಯುವ ನಿರೀಕ್ಷೆ ಇದೀಗ ಹೆಚ್ಚಾಗಿದೆ.

ಕನ್ನಡದ ಬಗ್ಗೆ ನನ್ನ ಗೌರವ ಮೊದಲ ಸ್ಥಾನದಲ್ಲಿದೆ: ‘ರಾಷ್ಟ್ರಭಾಷೆ’ ಹೇಳಿಕೆಗೆ ಶಿವರಾಜ್‌ಕುಮಾರ್ ಕ್ಷಮೆ

ಬೆಂಗಳೂರು: ಹಿಂದಿಯನ್ನು ‘ರಾಷ್ಟ್ರೀಯ ಭಾಷೆ’ ಎಂದು ಉಲ್ಲೇಖಿಸಿದ್ದ ನಟ ಶಿವರಾಜ್‌ಕುಮಾರ್ ಅವರ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವಿವಾದಕ್ಕೆ ಕಾರಣವಾದ ಬೆನ್ನಲ್ಲೇ ಅವರು ಸ್ಪಷ್ಟನೆ ನೀಡಿ ಕ್ಷಮೆಯಾಚಿಸಿದ್ದಾರೆ. ‘ಒರಿಜಿನಲ್ ಮಾನ್‌ಸ್ಟರ್’ ಚಿತ್ರದ ಶೀರ್ಷಿಕೆ ಬಿಡುಗಡೆ ಕಾರ್ಯಕ್ರಮದ ವೇಳೆ ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯಿಸಿರುವ ಶಿವಣ್ಣ, ಸಂವಿಧಾನಾತ್ಮಕ ಅರ್ಥದಲ್ಲಿ ಹಿಂದಿಯನ್ನು ರಾಷ್ಟ್ರಭಾಷೆ ಎಂದು ಹೇಳಿಲ್ಲ ಎಂದು ತಿಳಿಸಿದ್ದಾರೆ.

ಚಿತ್ರ ಹಿಂದಿಯಲ್ಲೂ ಬಿಡುಗಡೆಯಾಗುತ್ತಿರುವ ಹಿನ್ನೆಲೆಯಲ್ಲಿ ಹಿಂದಿ ಡಬ್ಬಿಂಗ್ ಕುರಿತು ಪತ್ರಿಕಾಗೋಷ್ಠಿಯಲ್ಲಿ ಶಿವರಾಜ್‌ಕುಮಾರ್ ಅವರಿಗೆ ಪ್ರಶ್ನೆ ಕೇಳಲಾಗಿತ್ತು. ಈ ವೇಳೆ ಕಾಲೇಜು ದಿನಗಳಲ್ಲಿ ಹಿಂದಿ ತಮ್ಮ ಎರಡನೇ ಭಾಷೆಯಾಗಿತ್ತು. ಹಿಂದಿ ಸುಲಭವಾದ ಭಾಷೆ ಹಾಗೂ ನಮ್ಮ ರಾಷ್ಟ್ರೀಯ ಭಾಷೆ ಎಂದು ಅವರು ಹೇಳಿದ್ದರು. ಈ ಮಾತಿನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಕನ್ನಡಿಗರು ಸೇರಿದಂತೆ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದರು.

ಇದೀಗ ತಮ್ಮ ಹೇಳಿಕೆಯ ಕುರಿತು ವಿವರಣೆ ನೀಡಿರುವ ಶಿವರಾಜ್‌ಕುಮಾರ್, ದೇಶದಾದ್ಯಂತ ವ್ಯಾಪಕವಾಗಿ ಮಾತನಾಡಲ್ಪಡುವ ಮತ್ತು ಜನಪ್ರಿಯವಾಗಿರುವ ಭಾಷೆ ಎಂಬ ಸರಳ ಅರ್ಥದಲ್ಲಿ ಆ ಪದ ಬಳಸಿದ್ದಾಗಿ ಹೇಳಿದ್ದಾರೆ. ರಾಷ್ಟ್ರಭಾಷೆ ಎಂಬುದನ್ನು ಸಂವಿಧಾನಾತ್ಮಕ ಅಥವಾ ತಾಂತ್ರಿಕ ಅರ್ಥದಲ್ಲಿ ಬಳಸಿರಲಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಕನ್ನಡ ನಾಡು, ನುಡಿ ಹಾಗೂ ಭಾಷೆಯ ಬಗ್ಗೆ ತಮ್ಮ ಗೌರವ ಮತ್ತು ಪ್ರೀತಿ ಸದಾ ಮೊದಲ ಸ್ಥಾನದಲ್ಲಿರುತ್ತದೆ ಎಂದು ಶಿವಣ್ಣ ಹೇಳಿದ್ದಾರೆ. ಸಿನಿಮಾ ಪ್ರಚಾರದ ವೇಳೆ ಹಿಂದಿ ಸಂಭಾಷಣೆ ಹಾಗೂ ಡಬ್ಬಿಂಗ್ ಕುರಿತು ಕೇಳಲಾದ ಪ್ರಶ್ನೆಗೆ ತಕ್ಷಣ ಸರಳವಾಗಿ ಉತ್ತರಿಸುವ ಸಂದರ್ಭದಲ್ಲಿ ಈ ಮಾತು ಬಂದಿತ್ತೇ ಹೊರತು ಯಾವುದೇ ಭಾಷಾ ಹೇರಿಕೆಯನ್ನು ಬೆಂಬಲಿಸುವ ಉದ್ದೇಶ ಇರಲಿಲ್ಲ ಎಂದು ತಿಳಿಸಿದ್ದಾರೆ.

ಹೇಳಿಕೆಯಿಂದ ಉಂಟಾದ ಗೊಂದಲಕ್ಕೆ ಕ್ಷಮೆಯಾಚಿಸಿರುವ ಶಿವರಾಜ್‌ಕುಮಾರ್, ತಮ್ಮ ಮಾತನ್ನು ತಿದ್ದಿಕೊಂಡಿದ್ದಾರೆ. ಅವರ ಸ್ಪಷ್ಟನೆಗೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹಲವು ರೀತಿಯ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.

ಸಿಂಹ ಅಟ್ಯಾಕ್‌ ಸುದ್ದಿ ಸುಳ್ಳು: ವೈರಲ್ ವಿಡಿಯೋ ಬಗ್ಗೆ ಕಿರಣ್ ರಾಜ್ ಸ್ಪಷ್ಟನೆ

ಬೆಂಗಳೂರು: ನಟ ಕಿರಣ್ ರಾಜ್ ಅವರಿಗೆ ಸಿಂಹ ದಾಳಿ ಮಾಡಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ವೈರಲ್ ವಿಡಿಯೋ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಇದೀಗ ಈ ಸುದ್ದಿಯ ಹಿಂದಿನ ಅಸಲಿಯತ್ತನ್ನು ಕಿರಣ್ ರಾಜ್ ಅವರೇ ಬಹಿರಂಗಪಡಿಸಿದ್ದಾರೆ. ಮುಂದಿನ ಸಿನಿಮಾಕ್ಕಾಗಿ ಸಿಂಹದೊಂದಿಗೆ ತರಬೇತಿ ಪಡೆಯುತ್ತಿರುವ ವೇಳೆ ನಡೆದ ಘಟನೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಕಿರಣ್ ರಾಜ್ ಹಲವು ಸಿನಿಮಾಗಳಲ್ಲಿ ನಟಿಸುತ್ತಿದ್ದು, ಪ್ರತಿಯೊಂದು ಪಾತ್ರಕ್ಕೂ ತಯಾರಿ ನಡೆಸುವ ಮೂಲಕ ಗಮನ ಸೆಳೆಯುತ್ತಿದ್ದಾರೆ. ಸದ್ಯ ಮುಂದಿನ ಚಿತ್ರಕ್ಕಾಗಿ ಸಿಂಹದೊಂದಿಗೆ ತರಬೇತಿ ಪಡೆಯುತ್ತಿದ್ದಾರೆ. ಈ ಸಂದರ್ಭದ ವಿಡಿಯೋವನ್ನು ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದರು.

ವಿಡಿಯೋದಲ್ಲಿ ಕಿರಣ್ ರಾಜ್ ಸಿಂಹದ ಬಳಿ ಬರುತ್ತಿದ್ದಂತೆ ಅದು ಅವರತ್ತ ಮುನ್ನುಗ್ಗುತ್ತದೆ. ಸಿಂಹ ದಾಳಿ ಮಾಡಲು ಬರುತ್ತಿರುವಂತೆ ಕಾಣುವ ದೃಶ್ಯದಲ್ಲಿ, ಅಲ್ಲಿದ್ದ ವ್ಯಕ್ತಿಯೊಬ್ಬರು ತಕ್ಷಣ ಮಧ್ಯಪ್ರವೇಶಿಸಿ ನಟನನ್ನು ದೂರ ಸರಿಸುತ್ತಾರೆ. ಇದನ್ನೇ ಕೆಲವರು ಸಿಂಹದ ದಾಳಿ ಎಂದು ಬಿಂಬಿಸಿ ಸುದ್ದಿ ಹರಡಿದ್ದರು.

ಆದರೆ ಇದು ಯಾವುದೇ ಗಂಭೀರ ದಾಳಿ ಅಲ್ಲ ಎಂದು ಕಿರಣ್ ರಾಜ್ ತಿಳಿಸಿದ್ದಾರೆ. ತರಬೇತಿಯ ಮೊದಲ ದಿನ ನಡೆದ ಫ್ರೆಂಡ್ಲಿ ಅಟ್ಯಾಕ್ ಇದಾಗಿದ್ದು, ತಾವು ಸಂಪೂರ್ಣ ಆರೋಗ್ಯವಾಗಿರುವುದಾಗಿ ಹೇಳಿದ್ದಾರೆ. ತಪ್ಪು ಸುದ್ದಿಗಳನ್ನು ಹಬ್ಬಿಸದಂತೆ ಮನವಿ ಮಾಡಿರುವ ಅವರು, ತರಬೇತಿ ಮತ್ತು ಸಿನಿಮಾಗಾಗಿ ತಾವು ಮಾಡುತ್ತಿರುವ ಸಿದ್ಧತೆಯ ಬಗ್ಗೆ ಮಾಹಿತಿ ನೀಡಿದ್ದಾರೆ.

ವೈರಲ್ ವಿಡಿಯೋಗೆ ಸಾಮಾಜಿಕ ಜಾಲತಾಣಗಳಲ್ಲಿ ವಿವಿಧ ರೀತಿಯ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದ್ದು, ಸಿನಿಮಾಗಾಗಿ ಕಿರಣ್ ರಾಜ್ ಮಾಡುತ್ತಿರುವ ಸಿದ್ಧತೆಗೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಅವರು ‘ಜಾಕಿ 42’ ಸಿನಿಮಾದಲ್ಲೂ ಅಭಿನಯಿಸುತ್ತಿದ್ದು, ಕುದುರೆ ಓಡಿಸುವ ಜಾಕಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದ ಟ್ರೇಲರ್ ಈಗಾಗಲೇ ಗಮನ ಸೆಳೆದಿದೆ.

ಗಣೇಶ ಹಬ್ಬ ಆಚರಿಸುವವರಿಗೆ GBA ಹೊಸ ರೂಲ್ಸ್; ತಪ್ಪಿದ್ರೆ ಕ್ರಿಮಿನಲ್ ಕೇಸ್!

0

ಬೆಂಗಳೂರು: ಗಣೇಶ ಹಬ್ಬಕ್ಕೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಹಲವು ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತಂದಿದೆ.

ಪರಿಸರ ಸಂರಕ್ಷಣೆ ಹಾಗೂ ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮತ್ತು ವಿಸರ್ಜನೆಗೆ ಸಂಬಂಧಿಸಿದಂತೆ ಸುತ್ತೋಲೆ ಹೊರಡಿಸಲಾಗಿದೆ.

ಮುಖ್ಯವಾಗಿ ಪಿಓಪಿ ಗಣೇಶ ಮೂರ್ತಿಗಳ ತಯಾರಿಕೆ ಹಾಗೂ ಮಾರಾಟವನ್ನು ಸಂಪೂರ್ಣ ನಿಷೇಧಿಸಲಾಗಿದೆ. ನಿಯಮ ಉಲ್ಲಂಘಿಸಿ ಪಿಓಪಿ ಮೂರ್ತಿಗಳ ತಯಾರಿಕೆ ಅಥವಾ ಮಾರಾಟ ಮಾಡುವುದು ಕಂಡುಬಂದರೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು GBA ಎಚ್ಚರಿಕೆ ನೀಡಿದೆ.

ಇನ್ನು ಸಾರ್ವಜನಿಕವಾಗಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಲು ಆಯೋಜಕರು ಕಡ್ಡಾಯವಾಗಿ ಅನುಮತಿ ಪಡೆಯಬೇಕು. ಇದಕ್ಕಾಗಿ ವಾರ್ಡ್‌ವಾರು ನೋಡಲ್ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಅರ್ಜಿ ಸಲ್ಲಿಸಿದ ಒಂದೇ ದಿನದಲ್ಲಿ ಪರಿಶೀಲನೆ ನಡೆಸಿ ಅನುಮತಿ ನೀಡುವ ವ್ಯವಸ್ಥೆ ಮಾಡಲಾಗಿದೆ. ಸಿಂಗಲ್ ವಿಂಡೋ ಮೂಲಕ ಅರ್ಜಿ ವಿಲೇವಾರಿಗೆ ಅವಕಾಶ ಕಲ್ಪಿಸಲಾಗಿದೆ.

ಮನೆಯಲ್ಲೇ ವಿಸರ್ಜನೆ ಮಾಡುವ ಮೂರ್ತಿಗಳ ಮಣ್ಣನ್ನು ಹೊರಗೆ ಎಸೆಯದೆ ಮನೆಯಲ್ಲೇ ವಿಲೇವಾರಿ ಮಾಡುವಂತೆ ಸೂಚಿಸಲಾಗಿದೆ. ಈ ಮಣ್ಣನ್ನು ಹೂಕುಂಡಗಳು ಹಾಗೂ ಕೈತೋಟಗಳಲ್ಲಿ ಮರುಬಳಕೆ ಮಾಡುವಂತೆ GBA ಮನವಿ ಮಾಡಿದೆ.

ಅದೇ ರೀತಿ, GBA ನಿಗದಿಪಡಿಸಿರುವ ಸ್ಥಳಗಳನ್ನು ಹೊರತುಪಡಿಸಿ ಬೇರೆಡೆ ಗಣೇಶ ಮೂರ್ತಿ ವಿಸರ್ಜನೆ ಮಾಡಿದರೆ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ಖಡಕ್ ಎಚ್ಚರಿಕೆ ನೀಡಲಾಗಿದೆ.

ಇನ್ನು ಗಣೇಶ ಹಬ್ಬದ ಆಚರಣೆಯಲ್ಲಿ ಪ್ಲಾಸ್ಟಿಕ್ ಬಳಕೆಯನ್ನೂ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ನಿಯಮ ಉಲ್ಲಂಘಿಸಿ ಪ್ಲಾಸ್ಟಿಕ್ ಬಳಕೆ ಮಾಡುವುದು ಕಂಡುಬಂದರೆ ಆಯೋಜಕರಿಗೆ ದಂಡ ವಿಧಿಸಲಾಗುವುದು ಎಂದು ತಿಳಿಸಲಾಗಿದೆ.

ಗಣೇಶೋತ್ಸವದ ವೇಳೆ ಪೆಂಡಾಲ್ ಅಳವಡಿಕೆ ಹಾಗೂ ಧ್ವನಿವರ್ಧಕ ಬಳಕೆಗೆ ಶುಲ್ಕ ಪಾವತಿಸುವುದು ಕಡ್ಡಾಯವಾಗಿದೆ. ಸ್ಥಳೀಯ ಪೊಲೀಸ್ ಠಾಣೆ ಅಥವಾ ಬೆಂಗಳೂರು ಒನ್ ಕೇಂದ್ರಗಳಲ್ಲಿ ಶುಲ್ಕ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ.

ಶುಲ್ಕ ಪಾವತಿಯ ರಸೀದಿಯನ್ನು ಅರ್ಜಿಯೊಂದಿಗೆ ಸಲ್ಲಿಸಿದ ಬಳಿಕವಷ್ಟೇ ಸಾರ್ವಜನಿಕವಾಗಿ ಗಣೇಶ ಹಬ್ಬ ಆಚರಿಸಲು GBA ಅನುಮತಿ ನೀಡಲಿದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಒಟ್ಟಾರೆ, ಗಣೇಶ ಹಬ್ಬದ ಆಚರಣೆಗೆ ಯಾವುದೇ ಅಡ್ಡಿಯಾಗದಂತೆ ನೋಡಿಕೊಳ್ಳುವುದರ ಜೊತೆಗೆ ಪರಿಸರ ಸಂರಕ್ಷಣೆ ಹಾಗೂ ನಿಯಮ ಪಾಲನೆಗೆ GBA ಈ ಬಾರಿ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ.

ದಿನಕ್ಕೆ ಕೇವಲ 15 ನಿಮಿಷ ಬರಿಗಾಲಲ್ಲಿ ನಡೆದರೆ ಸಾಕು; ಆರೋಗ್ಯಕ್ಕೆ ಸಿಗುತ್ತೆ ಹಲವು ಅದ್ಭುತ ಲಾಭಗಳು!

0

ಮನೆಯಿಂದ ಹೊರಗೆ ಹೋಗುವಾಗ ಶೂ ಅಥವಾ ಸ್ಲೀಪರ್ ಧರಿಸುವುದು ನಮ್ಮ ದಿನನಿತ್ಯದ ಅಭ್ಯಾಸ. ಮನೆಯೊಳಗೂ ಸ್ಲೀಪರ್‌ ಬಳಸುವವರ ಸಂಖ್ಯೆ ಕಡಿಮೆಯೇನಿಲ್ಲ. ಆದರೆ ಕೆಲವರು ಪ್ರತಿದಿನ ಸ್ವಲ್ಪ ಸಮಯ ಬರಿಗಾಲಿನಲ್ಲಿ ನೆಲ, ಮಣ್ಣು ಅಥವಾ ಹಸಿರು ಹುಲ್ಲಿನ ಮೇಲೆ ನಡೆಯುವುದರಿಂದ ದೇಹ ಮತ್ತು ಮನಸ್ಸಿಗೆ ಹಲವು ಪ್ರಯೋಜನಗಳು ಸಿಗುತ್ತವೆ ಎಂದು ಹೇಳುತ್ತಾರೆ.

ಭೂಮಿಯೊಂದಿಗೆ ದೇಹದ ನೇರ ಸಂಪರ್ಕವನ್ನು ‘ಅರ್ಥಿಂಗ್’ ಅಥವಾ ‘ಗ್ರೌಂಡಿಂಗ್’ ಎಂದು ಕರೆಯಲಾಗುತ್ತದೆ. ಬರಿಗಾಲಿನಲ್ಲಿ ನಡೆಯುವುದರಿಂದ ಪಾದಗಳಿಗೆ ವಿಭಿನ್ನ ರೀತಿಯ ಸಂವೇದನೆ ದೊರೆಯುವುದು, ಸಮತೋಲನ ಮತ್ತು ಪಾದದ ಸ್ನಾಯುಗಳ ಚಟುವಟಿಕೆಗೆ ಸಹಾಯವಾಗುವುದು ಸಾಧ್ಯ. ಆದರೆ ಬರಿಗಾಲಿನಲ್ಲಿ ನೆಲವನ್ನು ಸ್ಪರ್ಶಿಸುವುದರಿಂದ ಹೃದಯದ ಕಾಯಿಲೆ, ರಕ್ತ ಹೆಪ್ಪುಗಟ್ಟುವಿಕೆ ಅಥವಾ ರಕ್ತದೊತ್ತಡ ನೇರವಾಗಿ ನಿಯಂತ್ರಣಕ್ಕೆ ಬರುತ್ತದೆ ಎಂಬ ಹೇಳಿಕೆಗಳಿಗೆ ಇನ್ನಷ್ಟು ದೃಢವಾದ ವೈಜ್ಞಾನಿಕ ಪುರಾವೆಗಳ ಅಗತ್ಯವಿದೆ.

ನಿಯಮಿತ ನಡಿಗೆ ಹೃದಯಕ್ಕೆ ಏಕೆ ಮುಖ್ಯ?

ಬರಿಗಾಲಿನಲ್ಲಿ ನಡೆಯುವುದಕ್ಕಿಂತ ನಿಯಮಿತವಾಗಿ ನಡೆಯುವ ದೈಹಿಕ ಚಟುವಟಿಕೆಯೇ ಹೃದಯದ ಆರೋಗ್ಯಕ್ಕೆ ಪ್ರಮುಖವಾದ ಅಂಶ. ನಡಿಗೆ ರಕ್ತಸಂಚಾರವನ್ನು ಸುಧಾರಿಸಲು, ದೇಹದ ತೂಕವನ್ನು ನಿಯಂತ್ರಿಸಲು ಮತ್ತು ರಕ್ತದೊತ್ತಡವನ್ನು ಆರೋಗ್ಯಕರ ಮಟ್ಟದಲ್ಲಿ ಕಾಪಾಡಿಕೊಳ್ಳಲು ಸಹಾಯ ಮಾಡಬಹುದು.

ಪ್ರತಿದಿನ 15ರಿಂದ 30 ನಿಮಿಷಗಳಷ್ಟು ಆರಾಮದಾಯಕ ಅಥವಾ ವೇಗದ ನಡಿಗೆಯನ್ನು ಅಭ್ಯಾಸ ಮಾಡಿಕೊಳ್ಳುವುದು ದೇಹವನ್ನು ಚಟುವಟಿಕೆಯಿಂದ ಇರಿಸಲು ಸಹಕಾರಿ. ಉದ್ಯಾನವನ ಅಥವಾ ಪ್ರಕೃತಿಯ ನಡುವೆ ನಡೆಯುವುದರಿಂದ ಮನಸ್ಸಿಗೆ ನೆಮ್ಮದಿ ಸಿಗಬಹುದು ಮತ್ತು ಒತ್ತಡವೂ ಕಡಿಮೆಯಾಗುವ ಸಾಧ್ಯತೆ ಇದೆ.

ಬರಿಗಾಲಿನಲ್ಲಿ ನಡೆಯುವುದರಿಂದ ಏನು ಲಾಭ?

ಸುರಕ್ಷಿತವಾದ ಹುಲ್ಲು ಅಥವಾ ಮೃದುವಾದ ನೆಲದ ಮೇಲೆ ಬರಿಗಾಲಿನಲ್ಲಿ ನಡೆಯುವಾಗ ಪಾದದ ಅಡಿಭಾಗದಲ್ಲಿರುವ ಸಂವೇದನಾ ನರಗಳಿಗೆ ವಿವಿಧ ರೀತಿಯ ಪ್ರಚೋದನೆ ಸಿಗುತ್ತದೆ. ಇದರಿಂದ ಪಾದಗಳ ಸ್ನಾಯುಗಳ ಚಟುವಟಿಕೆ ಮತ್ತು ದೇಹದ ಸಮತೋಲನಕ್ಕೆ ಸಹಾಯವಾಗಬಹುದು.

ಆದರೆ ಭೂಮಿಯ ಸಂಪರ್ಕದಿಂದ ಕೆಂಪು ರಕ್ತಕಣಗಳ ವಿದ್ಯುತ್ ಆವೇಶ ಬದಲಾಗುತ್ತದೆ, ರಕ್ತ ಹೆಪ್ಪುಗಟ್ಟುವಿಕೆ ತಡೆಯುತ್ತದೆ ಅಥವಾ ಹೃದಯಾಘಾತ ಮತ್ತು ಪಾರ್ಶ್ವವಾಯು ಅಪಾಯವನ್ನು ಕಡಿಮೆ ಮಾಡುತ್ತದೆ ಎಂಬಂತಹ ಹೇಳಿಕೆಗಳಿಗೆ ಸಾಕಷ್ಟು ಗುಣಮಟ್ಟದ ವೈದ್ಯಕೀಯ ಸಾಕ್ಷ್ಯವಿಲ್ಲ.

ಅದೇ ರೀತಿ, ಭೂಮಿಯಿಂದ ದೇಹಕ್ಕೆ ಎಲೆಕ್ಟ್ರಾನ್‌ಗಳು ಪ್ರವೇಶಿಸಿ ಫ್ರೀ ರಾಡಿಕಲ್‌ಗಳನ್ನು ನಾಶಪಡಿಸುತ್ತವೆ ಅಥವಾ ಹೃದಯದ ಜೀವಕೋಶಗಳ ವಿದ್ಯುತ್ ಸಮತೋಲನವನ್ನು ಮರುಸ್ಥಾಪಿಸುತ್ತವೆ ಎಂಬ ‘ಅರ್ಥಿಂಗ್’ ಕುರಿತ ಕೆಲವು ಸಿದ್ಧಾಂತಗಳೂ ಪ್ರಚಲಿತದಲ್ಲಿವೆ. ಆದರೆ ಇವುಗಳನ್ನು ಹೃದಯ ಸಂಬಂಧಿತ ಕಾಯಿಲೆಗಳಿಗೆ ಸಾಬೀತಾದ ಚಿಕಿತ್ಸೆಯೆಂದು ಪರಿಗಣಿಸಲು ಸಾಧ್ಯವಿಲ್ಲ.

ಒತ್ತಡ ಕಡಿಮೆಯಾದರೆ ಹೃದಯಕ್ಕೂ ಸಹಾಯ

ಬೆಳಗಿನ ಸಮಯದಲ್ಲಿ ಉದ್ಯಾನವನದಲ್ಲಿ ನಡೆಯುವುದು, ಪ್ರಕೃತಿಯ ನಡುವೆ ಸಮಯ ಕಳೆಯುವುದು ಮತ್ತು ನಿಯಮಿತ ದೈಹಿಕ ಚಟುವಟಿಕೆ ಮಾಡುವುದು ಒತ್ತಡ ಕಡಿಮೆ ಮಾಡಲು ಸಹಾಯ ಮಾಡಬಹುದು. ದೀರ್ಘಕಾಲದ ಒತ್ತಡವನ್ನು ನಿಯಂತ್ರಿಸುವುದು ಒಟ್ಟಾರೆ ಹೃದಯ ಆರೋಗ್ಯಕ್ಕೆ ಸಹಕಾರಿ.

ಹೀಗಾಗಿ, ನಿಮಗೆ ಸುರಕ್ಷಿತ ಮತ್ತು ಆರಾಮದಾಯಕವೆನಿಸಿದರೆ ಹುಲ್ಲಿನಂತಹ ಸ್ವಚ್ಛವಾದ ಮೇಲ್ಮೈಯಲ್ಲಿ ಕೆಲವು ನಿಮಿಷ ಬರಿಗಾಲಿನಲ್ಲಿ ನಡೆಯಬಹುದು. ಆದರೆ ಇದನ್ನು ಹೃದಯದ ಕಾಯಿಲೆ, ಅಧಿಕ ರಕ್ತದೊತ್ತಡ ಅಥವಾ ರಕ್ತ ಹೆಪ್ಪುಗಟ್ಟುವಿಕೆಗೆ ಚಿಕಿತ್ಸೆಯ ಪರ್ಯಾಯವಾಗಿ ನೋಡಬಾರದು.

ಮಧುಮೇಹ, ಪಾದದಲ್ಲಿ ಗಾಯ ಅಥವಾ ಸಂವೇದನೆ ಕಡಿಮೆಯಾಗಿರುವವರು ಬರಿಗಾಲಿನಲ್ಲಿ ನಡೆಯುವ ಮೊದಲು ವಿಶೇಷ ಎಚ್ಚರಿಕೆ ವಹಿಸಬೇಕು. ಯಾವುದೇ ಆರೋಗ್ಯ ಸಮಸ್ಯೆ ಇದ್ದರೆ ವೈದ್ಯರ ಸಲಹೆ ಪಡೆಯುವುದು ಸೂಕ್ತ.

ಒಟ್ಟಿನಲ್ಲಿ, ಬರಿಗಾಲಿನ ನಡಿಗೆಗಿಂತ ನಿಯಮಿತ ನಡಿಗೆ ಮತ್ತು ಒಟ್ಟಾರೆ ಆರೋಗ್ಯಕರ ಜೀವನಶೈಲಿಯೇ ಹೃದಯದ ಆರೋಗ್ಯಕ್ಕೆ ಹೆಚ್ಚು ಮುಖ್ಯ. ಪ್ರತಿದಿನ ದೈಹಿಕ ಚಟುವಟಿಕೆ, ಸಮತೋಲಿತ ಆಹಾರ, ಉತ್ತಮ ನಿದ್ರೆ ಮತ್ತು ಒತ್ತಡ ನಿಯಂತ್ರಣಕ್ಕೆ ಆದ್ಯತೆ ನೀಡುವುದು ಹೃದಯವನ್ನು ಆರೋಗ್ಯವಾಗಿಡಲು ಸಹಕಾರಿ.

ಕೃತಕ ಗಿಡಗಳಿಂದ ಮನೆ ಅಲಂಕರಿಸ್ತೀರಾ? ವಾಸ್ತು ಏನು ಹೇಳುತ್ತೆ ಗೊತ್ತಾ?

ಮನೆ ಸುಂದರವಾಗಿ ಕಾಣಬೇಕು, ಜೊತೆಗೆ ಹಸಿರಿನ ವಾತಾವರಣವೂ ಇರಬೇಕು ಅನ್ನೋ ಕಾರಣಕ್ಕೆ ಇತ್ತೀಚೆಗೆ ಹಲವರು ಕೃತಕ ಗಿಡಗಳನ್ನು ಅಲಂಕಾರಕ್ಕಾಗಿ ಬಳಸುತ್ತಿದ್ದಾರೆ.

ವಿಶೇಷವಾಗಿ ಸೂರ್ಯನ ಬೆಳಕು ಕಡಿಮೆ ಇರುವ ಕೋಣೆಗಳು ಹಾಗೂ ಸಣ್ಣ ಅಪಾರ್ಟ್‌ಮೆಂಟ್‌ಗಳಲ್ಲಿ ಕೃತಕ ಗಿಡಗಳ ಬಳಕೆ ಹೆಚ್ಚಾಗಿದೆ. ಆದರೆ ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಇವುಗಳನ್ನು ಇಡುವಾಗ ಕೆಲವು ವಿಚಾರಗಳನ್ನು ಗಮನಿಸುವುದು ಅಗತ್ಯ.

ವಾಸ್ತು ಪ್ರಕಾರ ಎಲ್ಲಾ ಕೃತಕ ಗಿಡಗಳನ್ನೂ ಅಶುಭ ಎಂದು ಹೇಳಲಾಗುವುದಿಲ್ಲ. ಉತ್ತಮ ಗುಣಮಟ್ಟದ ಹಾಗೂ ಸ್ವಚ್ಛವಾಗಿರುವ ಕೃತಕ ಗಿಡಗಳನ್ನು ಅಲಂಕಾರಕ್ಕಾಗಿ ಬಳಸಬಹುದು. ಆದರೆ ಧೂಳು ಹಿಡಿದ, ಮುರಿದ ಅಥವಾ ಬಣ್ಣ ಕಳೆದುಕೊಂಡ ಗಿಡಗಳನ್ನು ಮನೆಯಲ್ಲಿ ಇಟ್ಟುಕೊಳ್ಳುವುದು ಒಳ್ಳೆಯದಲ್ಲ ಎನ್ನಲಾಗುತ್ತದೆ.

ಇನ್ನು ಜೀವಂತ ಗಿಡಗಳಿಗೆ ವಾಸ್ತುದಲ್ಲಿ ಹೆಚ್ಚಿನ ಪ್ರಾಮುಖ್ಯತೆ ಇದೆ. ನೈಸರ್ಗಿಕ ಸಸ್ಯಗಳು ಬೆಳವಣಿಗೆ, ತಾಜಾತನ ಮತ್ತು ಹಸಿರನ್ನು ಪ್ರತಿನಿಧಿಸುತ್ತವೆ ಎಂಬ ನಂಬಿಕೆ ಇದೆ. ತುಳಸಿ ಹಾಗೂ ಮನಿ ಪ್ಲಾಂಟ್‌ನಂತಹ ಗಿಡಗಳನ್ನು ಮನೆಯಲ್ಲಿ ಬೆಳೆಸುವುದರಿಂದ ಸಕಾರಾತ್ಮಕ ವಾತಾವರಣ ಮತ್ತು ಸಮೃದ್ಧಿ ಹೆಚ್ಚುತ್ತದೆ ಎಂದು ವಾಸ್ತು ನಂಬಿಕೆ ಹೇಳುತ್ತದೆ.

ದೇವರ ಕೋಣೆಯಲ್ಲಿ ಕೃತಕ ಗಿಡ ಬೇಡ:

ಮನೆಯ ಪೂಜಾ ಅಥವಾ ಪ್ರಾರ್ಥನಾ ಕೊಠಡಿಯನ್ನು ಪವಿತ್ರ ಸ್ಥಳವೆಂದು ಪರಿಗಣಿಸಲಾಗುತ್ತದೆ. ಹೀಗಾಗಿ ಇಲ್ಲಿ ಕೃತಕ ಗಿಡಗಳ ಬದಲಿಗೆ ತಾಜಾ ಹೂವುಗಳು ಅಥವಾ ನೈಸರ್ಗಿಕ ಹಸಿರನ್ನು ಬಳಸುವುದು ಉತ್ತಮ ಎನ್ನಲಾಗುತ್ತದೆ. ದೇವರ ಕೋಣೆಯನ್ನು ಅನಗತ್ಯ ಅಲಂಕಾರಿಕ ವಸ್ತುಗಳಿಂದ ತುಂಬಿಸದೆ ಸ್ವಚ್ಛವಾಗಿಟ್ಟುಕೊಳ್ಳುವುದು ಮುಖ್ಯ.

ಬೆಡ್‌ರೂಮ್‌ನಲ್ಲೂ ಎಚ್ಚರಿಕೆ:

ಮಲಗುವ ಕೋಣೆಯಲ್ಲಿ ಹೆಚ್ಚು ಕೃತಕ ಗಿಡಗಳನ್ನು ಇಡುವುದನ್ನು ತಪ್ಪಿಸುವುದು ಉತ್ತಮ ಎಂದು ವಾಸ್ತು ಹೇಳುತ್ತದೆ. ನೋಟಕ್ಕೆ ಆಕರ್ಷಕವಾಗಿದ್ದರೂ, ನೈಸರ್ಗಿಕ ಸಸ್ಯಗಳಲ್ಲಿರುವ ಚೈತನ್ಯ ಕೃತಕ ಗಿಡಗಳಲ್ಲಿ ಇರುವುದಿಲ್ಲ ಎಂಬ ನಂಬಿಕೆ ಇದೆ.

ಮುಖ್ಯ ದ್ವಾರದಲ್ಲಿ ಹಾಳಾದ ಗಿಡ ಬೇಡ:

ಮನೆಯ ಮುಖ್ಯ ದ್ವಾರವನ್ನು ಶಕ್ತಿಯ ಪ್ರವೇಶದ್ವಾರವೆಂದು ಪರಿಗಣಿಸಲಾಗುತ್ತದೆ. ಹೀಗಾಗಿ ಇಲ್ಲಿ ಧೂಳು ಹಿಡಿದ, ಮುರಿದ ಅಥವಾ ಹಾಳಾದ ಕೃತಕ ಗಿಡಗಳನ್ನು ಇಡುವುದು ಅಶುಭ ಎನ್ನಲಾಗುತ್ತದೆ. ಅಲಂಕಾರಕ್ಕಾಗಿ ಗಿಡಗಳನ್ನು ಇಡುತ್ತಿದ್ದರೆ ಸ್ವಚ್ಛವಾಗಿರುವ ಹಾಗೂ ಉತ್ತಮ ಸ್ಥಿತಿಯಲ್ಲಿರುವ ಗಿಡಗಳನ್ನೇ ಬಳಸುವುದು ಸೂಕ್ತ.

ಒಟ್ಟಾರೆ, ಮನೆಯ ಸೌಂದರ್ಯಕ್ಕಾಗಿ ಕೃತಕ ಗಿಡಗಳನ್ನು ಬಳಸುವುದರಲ್ಲಿ ತಪ್ಪಿಲ್ಲ ಎನ್ನಲಾಗುತ್ತದೆಯಾದರೂ, ಅವುಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದು ಹಾಗೂ ಯಾವ ಸ್ಥಳದಲ್ಲಿ ಇಡಬೇಕು ಎಂಬುದರ ಬಗ್ಗೆ ಗಮನ ಹರಿಸುವುದು ಮುಖ್ಯ. ಇವೆಲ್ಲವೂ ವಾಸ್ತು ನಂಬಿಕೆಗಳ ಆಧಾರಿತ ಸಲಹೆಗಳಾಗಿದ್ದು, ವೈಜ್ಞಾನಿಕವಾಗಿ ಸಾಬೀತಾದ ನಿಯಮಗಳಲ್ಲ.

ಕಾವೇರಿ ವನ್ಯಧಾಮ ಶೂಟೌಟ್ ಪ್ರಕರಣ; ಮೂವರು ಅರಣ್ಯ ಸಿಬ್ಬಂದಿಗೆ ನಿರೀಕ್ಷಣಾ ಜಾಮೀನು!

0

ಚಾಮರಾಜನಗರ: ಕಾವೇರಿ ವನ್ಯಧಾಮದ ಹೊಳೆ ಮುರಿದಟ್ಟಿ ಕರಿಕಲ್ಲು ಗುಡ್ಡದಲ್ಲಿ ನಡೆದ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಅರಣ್ಯ ಸಿಬ್ಬಂದಿಗೆ ನಿರೀಕ್ಷಣಾ ಜಾಮೀನು ಮಂಜೂರಾಗಿದೆ.

ಅರಣ್ಯ ರಕ್ಷಕ ಶಿವರಾಜ್ ಸಾಸಲವಾಡೆ ಹಾಗೂ ವಾಚರ್‌ಗಳಾದ ಶಿವಲಿಂಗ ನಾಯ್ಕ ಮತ್ತು ಗಿರೀಶ್ ಅವರಿಗೆ ಕೊಳ್ಳೇಗಾಲದ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನಿರೀಕ್ಷಣಾ ಜಾಮೀನು ನೀಡಿದೆ.

ಆಗಸ್ಟ್ 15ರ ಮುಂಜಾನೆ ಕಾವೇರಿ ವನ್ಯಜೀವಿಧಾಮದ ಹೊಳೆ ಮುರಿದಟ್ಟಿ ಅರಣ್ಯ ಪ್ರದೇಶದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಅಂತೋಣಿಸ್ವಾಮಿ, ಡೇವಿಡ್ ಕುಮಾರ್ ಹಾಗೂ ಜಾನ್ ರೋಸ್ ಪೀಟರ್ ಮೃತಪಟ್ಟಿದ್ದರು. ಪ್ರಕರಣದಲ್ಲಿ ಗುಂಡು ಹಾರಿಸಿದ್ದಾರೆ ಎನ್ನಲಾದ ಅರಣ್ಯ ಸಿಬ್ಬಂದಿಯನ್ನು ಸಿಐಡಿ ಅಧಿಕಾರಿಗಳು ವಿಚಾರಣೆ ನಡೆಸಿದ್ದರು.

ಇದೀಗ ಪೊಲೀಸರು ದಾಖಲಿಸಿರುವ ಅಪರಾಧ ಸಂಖ್ಯೆ 166/2026ಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಕೆಲ ಷರತ್ತುಗಳೊಂದಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

ಜಾಮೀನಿನ ಷರತ್ತುಗಳೇನು?

ಅರಣ್ಯ ಸಿಬ್ಬಂದಿ ಆದೇಶದ ದಿನಾಂಕದಿಂದ 25 ದಿನಗಳೊಳಗೆ ತನಿಖಾಧಿಕಾರಿ ಮುಂದೆ ಹಾಜರಾಗಬೇಕು. ಬಂಧಿಸಿದಲ್ಲಿ ತಲಾ ₹1 ಲಕ್ಷದ ವೈಯಕ್ತಿಕ ಬಾಂಡ್ ಹಾಗೂ ಒಬ್ಬ ಜಾಮೀನುದಾರರನ್ನು ಪಡೆದು ಜಾಮೀನಿನ ಮೇಲೆ ಬಿಡುಗಡೆ ಮಾಡಬೇಕು.

ತನಿಖೆಗೆ ಸಂಪೂರ್ಣ ಸಹಕಾರ ನೀಡಬೇಕು. ಚಾರ್ಜ್‌ಶೀಟ್ ಸಲ್ಲಿಸುವವರೆಗೆ ಪ್ರತಿ ಶನಿವಾರ ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ಹಾಜರಾತಿ ನೀಡಬೇಕು.

ಅಲ್ಲದೆ, ಸಾಕ್ಷಿಗಳಿಗೆ ಬೆದರಿಕೆ, ಪ್ರಚೋದನೆ ಅಥವಾ ಯಾವುದೇ ರೀತಿಯ ಪ್ರಭಾವ ಬೀರಬಾರದು ಹಾಗೂ ಸಾಕ್ಷ್ಯ ತಿರುಚಬಾರದು ಎಂದು ನ್ಯಾಯಾಲಯ ಸೂಚಿಸಿದೆ.

ಒಟ್ಟಾರೆ, ಕಾವೇರಿ ವನ್ಯಧಾಮ ಶೂಟೌಟ್ ಪ್ರಕರಣದಲ್ಲಿ ಆರೋಪ ಎದುರಿಸುತ್ತಿದ್ದ ಮೂವರು ಅರಣ್ಯ ಸಿಬ್ಬಂದಿಗೆ ನಿರೀಕ್ಷಣಾ ಜಾಮೀನು ಸಿಕ್ಕಿದ್ದು, ನ್ಯಾಯಾಲಯದ ಷರತ್ತುಗಳೊಂದಿಗೆ ಅವರು ಸದ್ಯ ನಿಟ್ಟುಸಿರು ಬಿಟ್ಟಿದ್ದಾರೆ.