ಮೈಸೂರು: ನಂಜನಗೂಡು ಪಟ್ಟಣದ ಪ್ರಸಿದ್ಧ ಶ್ರೀ ನಂಜುಂಡೇಶ್ವರ ದೇವಾಲಯದ 2024-25ನೇ ಸಾಲಿನ ಆದಾಯ-ವೆಚ್ಚದ ಲೆಕ್ಕಪತ್ರದಲ್ಲಿ ಹಣಕಾಸಿನ ಅಕ್ರಮ ನಡೆದಿರುವ ಶಂಕೆ ವ್ಯಕ್ತವಾಗಿದೆ.
ಲೆಕ್ಕದಲ್ಲಿ ಹಲವು ವ್ಯತ್ಯಾಸಗಳು ಕಂಡುಬಂದಿರುವ ಹಿನ್ನೆಲೆಯಲ್ಲಿ ಸಮಗ್ರ ತನಿಖೆ ನಡೆಸುವಂತೆ ದೇವಾಲಯದ ವ್ಯವಸ್ಥಾಪನ ಸಮಿತಿ ಸಭೆಯಲ್ಲಿ ಆದೇಶಿಸಲಾಗಿದೆ.
2024-25ನೇ ಸಾಲಿನಲ್ಲಿ ದೇವಾಲಯಕ್ಕೆ ₹25.86 ಕೋಟಿ ಆದಾಯ ಬಂದಿದ್ದು, ₹25.68 ಕೋಟಿ ವೆಚ್ಚವಾಗಿದೆ ಎಂದು ಲೆಕ್ಕದಲ್ಲಿ ಉಲ್ಲೇಖಿಸಲಾಗಿದೆ. ಇದರಿಂದ ಕೇವಲ ₹17.84 ಲಕ್ಷ ಉಳಿತಾಯ ಉಳಿದಿದೆ. ಹಿಂದಿನ ವರ್ಷಗಳಲ್ಲಿ ಸುಮಾರು ₹4 ಕೋಟಿಗೂ ಹೆಚ್ಚು ಉಳಿತಾಯವಾಗುತ್ತಿದ್ದ ಹಿನ್ನೆಲೆಯಲ್ಲಿ ಈ ಬಾರಿ ಉಳಿತಾಯ ಪ್ರಮಾಣ ಇಷ್ಟು ಕಡಿಮೆಯಾಗಿರುವುದಕ್ಕೆ ಸ್ಥಳೀಯರು ಹಾಗೂ ರೈತ ಮುಖಂಡರು ಪ್ರಶ್ನೆ ಎತ್ತಿದ್ದಾರೆ.
ಪ್ರಸಾದ, ಲಾಡು ತಯಾರಿಕೆ ವೆಚ್ಚದ ಬಗ್ಗೆ ಅನುಮಾನ:
ದೇವಾಲಯದ ವಿವಿಧ ವೆಚ್ಚಗಳ ಬಗ್ಗೆಯೂ ಅನುಮಾನ ವ್ಯಕ್ತವಾಗಿದೆ. ಒಂದೇ ಹೊತ್ತು ಪ್ರಸಾದ ವಿತರಿಸಿದ ವರ್ಷದಲ್ಲಿ ಸುಮಾರು ₹73 ಲಕ್ಷ ವೆಚ್ಚವಾಗಿದ್ದರೆ, ಮೂರು ಹೊತ್ತು ಪ್ರಸಾದ ವಿತರಿಸಿದ ವರ್ಷದಲ್ಲಿ ಕೇವಲ ₹46 ಲಕ್ಷ ವೆಚ್ಚವಾಗಿದೆ ಎಂದು ಲೆಕ್ಕದಲ್ಲಿ ಉಲ್ಲೇಖಿಸಲಾಗಿದೆ.
ಅದೇ ರೀತಿ, ಭಕ್ತರಿಂದ ಹಾಲು ಮತ್ತು ಮೊಸರು ಕೊಡುಗೆಯಾಗಿ ಬರುತ್ತಿದ್ದರೂ ₹3.18 ಲಕ್ಷ ಮೌಲ್ಯದ ಹಾಲು-ಮೊಸರು ಖರೀದಿ ಮಾಡಿರುವ ಲೆಕ್ಕದ ಬಗ್ಗೆಯೂ ಪ್ರಶ್ನೆಗಳು ಎದ್ದಿವೆ.
ಲಾಡು ತಯಾರಿಕೆಗೆ ₹3.50 ಕೋಟಿ, ಬಾಳೆಹಣ್ಣಿಗೆ ₹6.55 ಲಕ್ಷ, ಶಾಮಿಯಾನಕ್ಕೆ ₹17.84 ಲಕ್ಷ, ಪಾರ್ಕಿಂಗ್ಗೆ ₹37.88 ಲಕ್ಷ ಹಾಗೂ ಸಿಸಿ ಕ್ಯಾಮೆರಾ ದುರಸ್ತಿಗೆ ₹29.89 ಲಕ್ಷ ವೆಚ್ಚ ತೋರಿಸಲಾಗಿದೆ. ಈ ಎಲ್ಲ ವೆಚ್ಚಗಳನ್ನು ಸಮಗ್ರವಾಗಿ ಪರಿಶೀಲಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಕಳಲೆ ದೇವಸ್ಥಾನದ ಲೆಕ್ಕದಲ್ಲೂ ಪ್ರಶ್ನೆ:
ನಂಜನಗೂಡು ತಾಲೂಕಿನ ಕಳಲೆ ದೇವಸ್ಥಾನದಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿ ನಡೆದಿಲ್ಲ ಎನ್ನಲಾಗುತ್ತಿದ್ದರೂ ₹18 ಲಕ್ಷ ವೆಚ್ಚ ತೋರಿಸಿರುವ ಬಗ್ಗೆ ಪ್ರಶ್ನೆಗಳು ಕೇಳಿಬಂದಿವೆ. ಇದರಲ್ಲಿ ₹14 ಲಕ್ಷ ಕಾಮಗಾರಿಗೆ ಹಾಗೂ ₹4 ಲಕ್ಷ ಜಾತ್ರೆ ಖರ್ಚಿಗೆ ಸಂಬಂಧಿಸಿದೆ ಎಂದು ಮಾಹಿತಿ ನೀಡಲಾಗಿದೆ.
ಒಟ್ಟಾರೆ 2024-25ನೇ ಸಾಲಿನ ಲೆಕ್ಕಪತ್ರದಲ್ಲಿ ₹4ರಿಂದ ₹5 ಕೋಟಿ ದುರುಪಯೋಗವಾಗಿರುವ ಶಂಕೆ ಇದೆ ಎಂದು ರೈತ ಮುಖಂಡರು ಹಾಗೂ ಸಾರ್ವಜನಿಕರು ಆರೋಪಿಸಿದ್ದಾರೆ. ದೇವಾಲಯದ ಆದಾಯ-ವೆಚ್ಚದ ಪ್ರತಿಯೊಂದು ಅಂಶವನ್ನೂ ಪರಿಶೀಲಿಸಿ, ಲೋಪ ಅಥವಾ ಅಕ್ರಮ ಕಂಡುಬಂದರೆ ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ದೇವಾಲಯದ ವ್ಯವಸ್ಥಾಪನ ಸಮಿತಿ ಸಮಗ್ರ ತನಿಖೆಗೆ ಆದೇಶಿಸಿರುವುದು ಮುಂದಿನ ಬೆಳವಣಿಗೆಗಳ ಬಗ್ಗೆ ಕುತೂಹಲ ಮೂಡಿಸಿದೆ.


