Home Blog Page 3

ಒಂದೇ ವೇದಿಕೆಯಲ್ಲಿ ಹಲವಾರು ಆಯ್ಕೆಗೆ ಅವಕಾಶ

ವಿಜಯಸಾಕ್ಷಿ ಸುದ್ದಿ, ಗದಗ: ಹಾಲುಮತ ಮಹಾಸಭಾ ಜಿಲ್ಲಾ ಘಟಕ ಹಾಗೂ ಪ್ರದೇಶ ಕುರುಬರ ಸಂಘ ಜಿಲ್ಲಾ ಘಟಕದ ಸಹಯೋಗದಲ್ಲಿ ಆಗಸ್ಟ್ 3ರಂದು ಬೆಳಿಗ್ಗೆ 10 ಗಂಟೆಗೆ ನಗರದ ಮುಳಗುಂದ ರಸ್ತೆಯಲ್ಲಿರುವ ಶ್ರೀ ಕನಕ ಭವನದಲ್ಲಿ ಹಾಲುಮತ (ಕುರುಬ) ಸಮಾಜದ 7ನೇ ರಾಜ್ಯಮಟ್ಟದ ವಧು-ವರರ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಹಾಲುಮತ ಮಹಾಸಭಾದ ರಾಜ್ಯಾಧ್ಯಕ್ಷ ರುದ್ರಣ್ಣ ಗುಳಗುಳಿ ಹೇಳಿದರು.

ನಗರದ ಪತ್ರಿಕಾಭವನದಲ್ಲಿ ಗುರುವಾರ ಜರುಗಿದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಈ ಸಮಾವೇಶದಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಿಂದಲೂ ಹಾಗೂ ಗದಗ ಜಿಲ್ಲೆಯ ಸುತ್ತಮುತ್ತಲಿನ ಪ್ರದೇಶಗಳಿಂದ ಸುಮಾರು 250ಕ್ಕೂ ಹೆಚ್ಚು ವಧು-ವರರು ಆಗಮಿಸಲಿದ್ದಾರೆ. ಈ ಸಮಾವೇಶದಲ್ಲಿ ವಧು-ವರರಿಗೆ ಹಾಲುಮತದ ಸಂಪ್ರದಾಯದಂತೆ ಉಡಿತುಂಬಿ ಪರಿಚಯಿಸಲಾಗುವದು. ಇದೇ ಸಂದರ್ಭದಲ್ಲಿ ಸಮಾಜದ ಐವರು ಹಿರಿಯರಿಗೆ ಜೀವಮಾನ ಸಾಧನೆಗಾಗಿ ಸನ್ಮಾನಿಸಲಾಗುವುದು ಎಂದು ಹೇಳಿದರು.

ಈ ಸಮಾವೇಶದಲ್ಲಿ ಬೇರೆ ಬೇರೆ ಊರುಗಳಿಂದ ವಧು-ವರರು ಆಗಮಿಸುವದರಿಂದ ಒಂದೇ ವೇದಿಕೆಯಲ್ಲಿ ಹಲವಾರು ಆಯ್ಕೆಗಳಿಗಾಗಿ ಇಲ್ಲಿ ಅವಕಾಶ ಕಲ್ಪಿಸಲಾಗುತ್ತದೆ. ಪಾಲಕರಿಗೆ ಸಮಯದ ಉಳಿತಾಯ ಹಾಗೂ ಸೂಕ್ತ ವಧು-ವರರನ್ನು ಆಯ್ಕೆ ಮಾಡುವ ಸದವಕಾಶವನ್ನು ಇಲ್ಲಿ ನಿರ್ಮಿಸಲಾಗುತ್ತದೆ. ಈಗಾಗಲೇ ಹೆಸರು ನೋಂದಣಿ ಕಾರ್ಯ ಆರಂಭವಾಗಿದ್ದು, ಆಸಕ್ತರು ಶ್ರೀ ದುರ್ಗಾದೇವಿ ಶಿಕ್ಷಣ ಸಮಿತಿ ಶ್ರೀ ಬನಶಂಕರಿ ದೇವಿ ದೇವಸ್ಥಾನದ ಆವರಣ ಗಂಗಾಪುರ ಪೇಟೆ ಗದಗದಲ್ಲಿ ಸದಸ್ಯತ್ವ ಶುಲ್ಕದೊಂದಿಗೆ ಹೆಸರನ್ನು ನೋಂದಾಯಿಸಬೇಕು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಪ್ರದೇಶ ಕುರುಬ ಸಂಘದ ಗದಗ ತಾಲೂಕಾಧ್ಯಕ್ಷ ನಾಗಪ್ಪ ಗುಗ್ಗರಿ, ಹಾಲುಮತ ಮಹಾಸಭಾದ ರಾಜ್ಯ ಸಂಘಟನಾ ಕಾರ್ಯದರ್ಶಿ ಉಮಾ ದ್ಯಾವನೂರ, ಕುರುಬರ ಸಂಘದ ರಾಜ್ಯ ನಿರ್ದೇಶಕಿ ಚನ್ನಮ್ಮ ಹುಳಕಣ್ಣವರ, ಹಾಲುಮತ ಮಹಾಸಭಾದ ಜಿಲ್ಲಾ ಗೌರವಾಧ್ಯಕ್ಷ ನಾಗರಾಜ ಮೆಣಸಗಿ, ಜಿಲ್ಲಾಧ್ಯಕ್ಷ ಬಸವರಾಜ ನೀಲಗಾರ, ಉಪಾಧ್ಯಕ್ಷ ಸೋಮನಗೌಡ ಪಾಟೀಲ, ರಾಘು ವಗ್ಗನವರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುತ್ತು ಜಡಿ, ಸತೀಶ ಗಿಡ್ಡಹನಮಣ್ಣವರ, ಮಂಜುನಾಥ ಜಡಿ, ಹೇಮಂತ ಗಿಡ್ಡಹನಮಣ್ಣವರ, ಉಮೇಶ ಪೂಜಾರ, ಬಸವರಾಜ ಕುರಿ, ಕುಮಾರ ಮಾರನಬಸರಿ, ರವಿ ವಗ್ಗನವರ ಮುಂತಾದವರು ಉಪಸ್ಥಿತರಿದ್ದರು.

ನೋಂದಣಿಗಾಗಿ ವೆಂಕಟೇಶ ಇಮರಾಪೂರ-9742842133 ಮುತ್ತು ಜಡಿ-9880831983 ಅವರನ್ನು ಹಾಗೂ ಹೆಚ್ಚಿನ ಮಾಹಿತಿಗಾಗಿ ನಾಗರಾಜ ಮೆಣಸಗಿ-9448746400, ಬಸವರಾಜ ನೀಲಗಾರ-8970974959, ಸೋಮನಗೌಡ ಪಾಟೀಲ-9845636775 ಅವರನ್ನು ಸಂಪರ್ಕಿಸಬಹುದು ಎಂದು ರುದ್ರಣ್ಣ ಗುಳಗುಳಿ ಹೇಳಿದರು.

`ಸಿರಿಸಿಂಗಾರಿ ಭಾಗ್ಯದಂಬಾರಿ’ ಯಕ್ಷಗಾನ ಪ್ರದರ್ಶನ

ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಶ್ರೀ ವೀರನಾರಾಯಣ ಕಲ್ಯಾಣ ಮಂಟಪದಲ್ಲಿ ಶ್ರೀ ಸಿದ್ಧಿವಿನಾಯಕ ಪ್ರಸಾದಿತ ಯಕ್ಷಗಾನ ಮಂಡಳಿ ಶ್ರೀ ಕ್ಷೇತ್ರ ಹಟ್ಟಿಯಂಗಡಿ ಇವರು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯಕ್ಷಕವಿ ಬೇಳೂರು ವಿಷ್ಣುಮೂರ್ತಿ ನಾಯಕ್ ವಿರಚಿತ `ಸಿರಿಸಿಂಗಾರಿ ಭಾಗ್ಯದಂಬಾರಿ’ ಎಂಬ ಯಕ್ಷಗಾನವನ್ನು ಪ್ರದರ್ಶಿಸಿದರು.

ವಿ.ಆ. ವೀರಚಂದ್ರಹಾಸ ಚಲನಚಿತ್ರದ ಕಥಾನಾಯಕ ಶಿಥಿಲ್ ಶೆಟ್ಟಿ, ನಾಯಕ ನಟಿ ನಾಗಶ್ರೀ ಅಭಿನಯಿಸಿದ ಈ ಯಕ್ಷಗಾನವನ್ನು ಹೊಟೇಲ್ ಒಡೆಯರ ಸಂಘದ ಗದಗ ಜಿಲ್ಲಾಧ್ಯಕ್ಷ ವಿಶ್ವನಾಥ ಶೆಟ್ಟಿ ಉದ್ಘಾಟಿಸಿ ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷವೂ ಹೊಟೇಲ್ ಒಡೆಯರ ಸಂಘದಿಂದ ಗದಗ ನಗರದಲ್ಲಿ ಕರಾವಳಿಯ ಪ್ರಸಿದ್ಧ ಯಕ್ಷಗಾನ ಕಲೆಯನ್ನು ಗದಗ ಜನತೆಗೆ ಪ್ರದರ್ಶಿಸಲು ಆಗಮಿಸಿದ ಈ ತಂಡಕ್ಕೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುವೆ ಎಂದರು.

ಇದೇ ಸಂದರ್ಭದಲ್ಲಿ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಕಾವೆಂಶ್ರೀರವರ ನಿಧನಕ್ಕೆ 2 ನಿಮಿಷ ಮೌನಾಚರಣೆ ಮಾಡಿ ಗೌರವ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ಸುಧಾಕರ ಶೆಟ್ಟಿ, ರಂಜಿತ ಶೆಟ್ಟಿ, ಯು.ಬಿ. ಹುಬ್ಬಳ್ಳಿ, ಸುಕುಮಾರ ಶೆಟ್ಟಿ, ಜಯಪಾಲಶೆಟ್ಟಿ, ಶಿವಯ್ಯ ನಾಲ್ವಾತಡಮಠ, ನಾಗಶ್ರೀ ಜಿ.ಎಸ್., ಶಿಥಿಲ್ ಶೆಟ್ಟಿ, ಜಯದೇವ ಭಟ್ಟ ಸೇರಿದಂತೆ ಚೇಂಬರ್ ಆಫ್ ಕಾಮರ್ಸ್ ಅಸೋಸಿಯೇಶನ್ ಗದಗ, ಬಾರ್ ಅಸೋಸಿಯೇಶನ್ ಗದಗ, ರೋಟರಿ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಜ್ಞಾನ ಸಾಧನೆಯೆಂಬುದು ತಪಸ್ಸಿದ್ದಂತೆ

ವಿಜಯಸಾಕ್ಷಿ ಸುದ್ದಿ, ಮುಳಗುಂದ: ಪ್ರವಚನ ಬದುಕಿಗೆ ಬೆಳಕು ನೀಡುತ್ತದೆ. ಉತ್ತರ ಕರ್ನಾಟಕದ ಜನರಲ್ಲಿ ಭಕ್ತಿ ಭಾವ ಹೆಚ್ಚು ಕಾಣುತ್ತದೆ ಎಂದು ಮಾಜಿ ಶಾಸಕ ಡಿ.ಆರ್. ಪಾಟೀಲ ಅಭಿಪ್ರಾಯಪಟ್ಟರು.

ಅವರು ಬುಧವಾರ ಪಟ್ಟಣದ ಬಾಲಲೀಲಾ ಮಹಾಂತ ಶಿವಯೋಗಿ ಕಲಾಭವನದಲ್ಲಿ ವಾದಿರಾಜ ರಾಯ್ಕರ ಅವರು ಆಯೋಜಿಸಿದ್ದ ಸಂಕಷ್ಟಹರ ಗಣಪತಿ ವೃತದ ಉದ್ಯಾಪನಾ ಮಹಾಯಾಗದ ಉದ್ಘಾಟನಾ ನೆರವೇರಿಸಿ ಮಾತನಾಡಿದರು.

ನೀಲಗುಂದದ ಗುದ್ನೇಶ್ವರ ಮಠದ ಪ್ರಭುಲಿಂಗದೇವರು ಮಾತನಾಡಿ, ಜ್ಞಾನ ಸಾಧನೆ ಪರಿಶ್ರಮದಿಂದ ಬರುತ್ತದೆ. ಅದೊಂದು ತಪಸ್ಸು. ಅವರ ತಪಸ್ಸಿನ ಫಲ ನಮಗೂ ಪ್ರಾಪ್ತಿಯಾಗುತ್ತದೆ. ರಾಯ್ಕರ ಕುಟುಂಬ ಜ್ಞಾನ ಹಂಚುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದರು.

ಆಶೀರ್ವಚನ ನೀಡಿದ ಧಾರವಾಡ ಮುರುಘಾಮಠ ಹಾಗೂ ಮುಳಗುಂದ ಗವಿಮಠದ ಅಧ್ಯಕ್ಷರಾದ ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ನಾಡು ಕಂಡ ಅದ್ವಿತೀಯ ಪ್ರವಚನಕಾರ ಪಾವಗಡ ಪ್ರಕಾಶ ರಾವ್. ಇಂದು ಮಹಾಕಾವ್ಯಗಳನ್ನು ಓದುವವರೇ ಇಲ್ಲ. ಆಧ್ಯಾತ್ಮ ಪ್ರವಚನ ಎಂದರೆ ಸತ್ಯದ ಅರಿವು. ಮುನಿಗಳು ವಾಸಿಸಿದ ಈ ಮುನಿಪುರದಲ್ಲಿ ಅದೇ ಸಂಸ್ಕಾರ ಮುಂದುವರೆದಿದೆ. ಮನುಷ್ಯನಲ್ಲಿ ಜ್ಞಾನವಿದ್ದಾಗ ಬದುಕು ಬಂಗಾರ. ಅಧ್ಯಾತ್ಮದಲ್ಲಿ ನಿಮ್ಮನ್ನೂ ತೊಡಗಿಸಿಕೊಳ್ಳಿ ಎಂದರು.

ಮುಖ್ಯ ಆಹ್ವಾನಿತರಾಗಿ ಪಾವಗಡ ಪ್ರಕಾಶ ರಾವ್, ಸಾಗರದ ರವೀಂದ್ರ ಮುದ್ರಣಾಲಯದ ವಾಯ್.ಎ. ದಂತಿ, ವೈದ್ಯರಾದ ಡಾ. ಎಸ್.ಸಿ. ಚವಡಿ, ಗದಗ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಗುರಣ್ಣ ಬಳಗಾನೂರ, ಎಸ್‌ಜೆಜೆಎಂ ಸಂಯುಕ್ತ ಮಹಾವಿದ್ಯಾಲಯದ ಚೇರಮನ್ ಎಂ.ಡಿ. ಬಟ್ಟೂರ ಭಾಗವಹಿಸಿದ್ದರು. ಸಿದ್ದು ವೈ.ಕೆ ಸ್ವಾಗತಿಸಿದರು. ಪ್ರಾಚಾರ್ಯ ಎಸ್.ಎ. ಯಳವತ್ತಿ ನಿರೂಪಿಸಿದರು.

‘ಮುನ್ನುಡಿ’ ಚಲನಚಿತ್ರ ಪ್ರದರ್ಶನ

ವಿಜಯಸಾಕ್ಷಿ ಸುದ್ದಿ, ಗದಗ: ಮಹಾವಿದ್ಯಾಲಯದ ವಿದ್ಯಾರ್ಥಿಗಳ ಸರ್ವಾಂಗೀಣ ಪ್ರಗತಿಗೆ ಕೇವಲ ಕ್ಲಾಸ್ ರೂಮ್, ಪಾಠ-ಪ್ರವಚನಗಳಷ್ಟೇ ಅಲ್ಲ, ವಿದ್ಯಾರ್ಥಿಗಳ ಸಾಧನೆಗೆ ಪ್ರೇರಣೆಯಾಗುವ ಚಿತ್ರ ವೀಕ್ಷಣೆಯೂ ಬಲು ಅಗತ್ಯ ಎಂಬುದನ್ನು ಮನಗಂಡು ನಮ್ಮ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಗೆ `ಮುನ್ನುಡಿ’ ಚಲನಚಿತ್ರ ಪ್ರದರ್ಶನಕ್ಕೆ ಅನುಮತಿ ನೀಡಲಾಗಿದೆ ಎಂದು ಮಹಾವಿದ್ಯಾಲಯದ ಚೇರಮನ್ ಪ್ರೊ. ರಾಜೇಶ ಕುಲಕರ್ಣಿ ಹೇಳಿದರು.

ಸನ್ಮಾರ್ಗ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ‘ಮುನ್ನುಡಿ’ ಚಲನಚಿತ್ರ ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಸಂಸ್ಥೆಯ ನಿರ್ದೇಶಕ ಪ್ರೊ. ಸೈಯ್ಯದ್ ಮತೀನ್ ಮುಲ್ಲಾ ಸಾಂದರ್ಭಿಕವಾಗಿ ಮಾತನಾಡಿದರು. ಮಹಾ ವಿದ್ಯಾಲಯದ ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದ ಎಲ್ಲ ವಿದ್ಯಾರ್ಥಿಗಳೂ ಚಿತ್ರವನ್ನು ವೀಕ್ಷಿಸಿ ಮೆಚ್ಚಿ, ಸಾಧನೆಗೆ ಪಣ ತೊಟ್ಟರು.

ವೇದಿಕೆಯ ಮೇಲೆ ಸಂಸ್ಥೆಯ ಚೇರಮನ್ ಪ್ರೊ. ರಾಜೇಶ ಕುಲಕರ್ಣಿ, ನಿರ್ದೇಶಕರಾದ ಪ್ರೊ. ರೋಹಿತ್ ಒಡೆಯರ್, ಪ್ರೊ. ರಾಹುಲ್ ಒಡೆಯರ್, ಪ್ರೊ. ಪುನೀತ್ ದೇಶಪಾಂಡೆ, ಪ್ರೊ. ಸೈಯ್ಯದ್ ಮತೀನ್ ಮುಲ್ಲಾ, ಆಡಳಿತಾಧಿಕಾರಿ ಎಮ್.ಸಿ. ಹಿರೇಮಠ, ಪ್ರಾಚಾರ್ಯ ಪ್ರೊ. ಪ್ರೇಮಾನಂದ ರೋಣದ, ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಭಾರತೀಯ ಸೇನೆಗೆ ಆಯ್ಕೆ: ಸನ್ಮಾನ

ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ: ಭಾರತಾಂಬೆಯ ಸೇವೆ ಮಾಡಲು ನಮ್ಮ ತನು, ಮನ, ಧನ ಅರ್ಪಿಸಿಕೊಳ್ಳುವುದು ಅವಶ್ಯಕವೆಂದು ಅಂಜುಮನ್ ಇಸ್ಲಾಂ ಕಮಿಟಿ ಮಾಜಿ ಕಾರ್ಯದರ್ಶಿ ಮಾಸುಮಲಿ ಮದಗಾರ ಹೇಳಿದರು.

ಸ್ಥಳೀಯ ಕಟ್ಟಿಬಸವೇಶ್ವರ ರಂಗಮಂದಿರ ನಿವಾಸಿ ಸಂಗಪ್ಪ ವಡಗೇರಿ ಇವರ ಮೊಮ್ಮಗ ಆಕಾಶ ಕವಡಿಮಟ್ಟಿ ಭಾರತೀಯ ಸೇನೆಗೆ ನೇಮಕಗೊಂಡಿರುವ ನಿಮಿತ್ತ ಅವರನ್ನು ಕುಟುಂಬ ಸಹಿತವಾಗಿ ಸನ್ಮಾನಿಸಿ ಮಾತನಾಡಿದರು.

ಭಾರತೀಯ ಸೇನೆಗೆ ಸೇರಲು ಅನೇಕ ಯುವಕರು ವರ್ಷಾನುಗಟ್ಟಲೆ ಸಾಕಷ್ಟು ಕಷ್ಟಪಡುತ್ತಾರೆ. ಭಾರತಾಂಬೆಯ ಸೇವೆ ಮಾಡಲು ಪೂರ್ವಜರ ಆಶಿರ್ವಾದ ಹಾಗೂ ಸ್ವಂತ ಶ್ರಮ ಅಗತ್ಯ. ಯುವಕರು ದೈಹಿಕವಾಗಿ, ಮಾನಸಿಕವಾಗಿ ಸದಾ ತಾಯ್ನಾಡಿನ ಸೇವೆ ಮಾಡಲು ಮುಂದಾಗಬೇಕು ಎಂದರು.

ಈ ಸಂದರ್ಭದಲ್ಲಿ ಕಮಿಟಿಯ ಮಾಜಿ ಕಾರ್ಯದರ್ಶಿ ದಾವಲಸಾಬ ತಾಳಿಕೋಟಿ ಸೇರಿದಂತೆ ಮದಗಾರ ಕುಟುಂಬದ ಸದಸ್ಯರು ಇದ್ದರು.

ನಗರೇಶ್ವರ ದೇವಸ್ಥಾನದ ವಾರ್ಷಿಕೋತ್ಸವ

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಪಟ್ಟಣದ ಶ್ರೀ ನಗರೇಶ್ವರ ದೇವಸ್ಥಾನದ ವಾರ್ಷಿಕೋತ್ಸವವನ್ನು ಇಲ್ಲಿನ ಆರ್ಯವೈಶ್ಯ ಸಮಾಜದವರು ಶೃದ್ಧಾಭಕ್ತಿಯಿಂದ ಆಚರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಮಾಜದ ಅಧ್ಯಕ್ಷ ರಾಮಣ್ಣ ನವಲಿ, ಸಮಾಜದ ಎಲ್ಲ ಬಂಧುಗಳ ಸಹಕಾರದಿಂದ ನರೇಗಲ್ಲ ಪಟ್ಟಣದಲ್ಲಿ ಒಂದು ವರ್ಷದ ಕೆಳಗೆ ನಾವು ಈ ಭವ್ಯ ದೇವಸ್ಥಾನವನ್ನು ನಿರ್ಮಿಸಿದೆವು. ಈ ಕಾರ್ಯದಲ್ಲಿ ಕೇವಲ ನಮ್ಮೂರಿನ ಸಮಾಜ ಬಾಂಧವರಲ್ಲದೆ, ಪರ ಊರಿನ ಎಲ್ಲ ಬಾಂಧವರು ಮತ್ತು ನಮ್ಮೂರಿನ ಇತರೆ ಸಮಾಜದ ಎಲ್ಲ ಬಂಧುಗಳು ಸಾಕಷ್ಟು ಸಹಕಾರ ನೀಡಿದರು ಎಂದರು.

ಉಪಾಧ್ಯಕ್ಷ ಚಂದ್ರಹಾಸ ಇಲ್ಲೂರ ಮಾತನಾಡಿ, ಈ ಒಂದು ವರ್ಷದ ಅವಧಿಯಲ್ಲಿ ಈ ದೇವಸ್ಥಾನದಲ್ಲಿ ಅನೇಕ ಧಾರ್ಮಿಕ ಕಾರ್ಯಗಳು ನಡೆದಿವೆ. ನಮ್ಮ ಸಮಾಜದ ಸುಮಂಗಲೆಯರು ಎಲ್ಲ ಹಬ್ಬ ಹರಿದಿನಗಳಲ್ಲಿ ಇಲ್ಲಿ ಸೇರಿ ಉಡಿ ತುಂಬುವ, ಲಕ್ಷ್ಮೀ ಸೋಬಾನೆ, ಕುಂಕುಮಾರ್ಚನೆ ಇತ್ಯಾದಿ ಕಾರ್ಯಕ್ರಮಗಳನ್ನು ಅತ್ಯಂತ ಶೃದ್ಧಾಭಕ್ತಿಗಳಿಂದ ಮಾಡುತ್ತ ಬಂದಿದ್ದಾರೆ. ಈ ಕಾರ್ಯಗಳು ಹೀಗೆಯೇ ಮುನ್ನಡೆಯಲಿ ಎಂದು ಆಶಿಸಿದರು.

ವೇ. ಮೂ. ವಿಶ್ವನಾಥಭಟ್ಟ ಗ್ರಾಮಪುರೋಹಿತರ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಗಳು ನಡೆದವು. ಶ್ರೀ ಕನ್ನಿಕಾ ಪರಮೇಶ್ವರಿಗೆ ಪಾಲಕೀ ಸೇವೆ ಜರುಗಿತು. ಅಶೋಕ ನವಲಿ, ರಾಜೇಂದ್ರ ದೇವರಂಗಡಿ, ಚಂದ್ರಹಾಸ ಇಂಗಳಳ್ಳಿ, ವೆಂಕಟೇಶ ಕಣವಿಹಳ್ಳಿ, ಈರಣ್ಣ ಇಲ್ಲೂರ, ಮುತ್ತಣ್ಣ ದೇವರಂಗಡಿ, ಶರಣಪ್ಪ ಬಿಜಾಪೂರ, ಬೆಟದೂರ ಸಹೋದರರು, ಮನೋಹರ ಗುಡಿಸಾಗರ, ನಾಗೇಶ ಗುಡಿಸಾಗರ, ಮಂಜುನಾಥ ನವಲಿ, ಮಹೇಶ ನವಲಿ ಹಾಗೂ ಸಮಾಜದ ಎಲ್ಲ ಸುಮಂಗಲೆಯರು ಪಾಲ್ಗೊಂಡಿದ್ದರು.

ಬಸವರಾಜ ಸರಕಾರಿ ನೌಕರರ `ರಾಜ’

ವಿಜಯಸಾಕ್ಷಿ ಸುದ್ದಿ, ಗದಗ: ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಗದಗ ಜಿಲ್ಲಾ ಘಟಕದಲ್ಲಿ ಡಾ. ರವಿ ಗುಂಜೀಕರ್ ಅವರ ಸೇವಾ ನಿವೃತ್ತಿಯಿಂದ ತೆರವಾದ ಅಧ್ಯಕ್ಷ ಸ್ಥಾನಕ್ಕೆ ಗುರುವಾರ ನಡೆದ ಚುನಾವಣೆಯಲ್ಲಿ ಡಾ. ಬಸವರಾಜ ಬಳ್ಳಾರಿ ಅಭೂತಪೂರ್ವ ಗೆಲುವು ಸಾಧಿಸಿದ್ದಾರೆ.

ಈ ಹಿಂದೆ ಡಾ. ಬಸವರಾಜ ಬಳ್ಳಾರಿ ಅವರನ್ನು ಹಂಗಾಮಿ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು. ಪೂರ್ಣಾವಧಿಗೂ ಬಸವರಾಜ ಬಳ್ಳಾರಿ ಅವರನ್ನು ಅಧ್ಯಕ್ಷರನ್ನಾಗಿ ಘೋಷಣೆ ಮಾಡಲು ಕೆಲವರು ವಿರೋಧ ವ್ಯಕ್ತಪಡಿಸಿದ್ದ ಹಿನ್ನೆಲೆಯಲ್ಲಿ ಗುರುವಾರ ಚುನಾವಣೆ ನಿಗದಿಯಾಗಿತ್ತು. ಅಧಿಸೂಚನೆಯಂತೆ ನೌಕರರ ಭವನದಲ್ಲಿ ಗುರುವಾರ ಚುನಾವಣೆ ಪ್ರಕ್ರಿಯೆಗಳು ಪ್ರಾರಂಭವಾದವು. ಡಾ. ಬಸವರಾಜ ಬಳ್ಳಾರಿ ಹಾಗೂ ಮುಂಡರಗಿ ತಾಲೂಕು ಘಟಕದ ಅಧ್ಯಕ್ಷ ನಾಗರಾಜ ಹಳ್ಳಿಕೇರಿ ನಾಮಪತ್ರ ಸಲ್ಲಿಸಿದರು. ಮತದಾನ ಹಕ್ಕು ಹೊಂದಿದ್ದ 69 ಜನ ಸದಸ್ಯರ ಪೈಕಿ 68 ಜನ ಮತ ಚಲಾಯಿಸಿದರು. ಆ ಪೈಕಿ 55 ಮತಗಳನ್ನು ಪಡೆದು ಬಸವರಾಜ ಬಳ್ಳಾರಿ ಅಧ್ಯಕ್ಷರಾಗಿ ಆಯ್ಕೆಯಾದರೆ, 13 ಮತಗಳನ್ನು ಪಡೆದ ನಾಗರಾಜ ಹಳ್ಳಿಕೇರಿ ಪರಾಭವಗೊಂಡರು. ಈ ಕುರಿತು ಚುನಾವಣಾಧಿಕಾರಿ ಸಿ. ಬಸವರಾಜ ಅಧಿಕೃತವಾಗಿ ಘೋಷಣೆ ಮಾಡಿ, ಬಸವರಾಜ ಬಳ್ಳಾರಿ ಅವರಿಗೆ ಪ್ರಮಾಣಪತ್ರ ವಿತರಣೆ ಮಾಡಿದರು.

ಸೇವಾ ನಿವೃತ್ತಿ ಹೊಂದಿರುವ ಡಾ. ರವಿ ಗುಂಜೀಕರ್ ಮೂರು ಅವಧಿಗೂ ಅವಿರೋಧವಾಗಿ ಸರಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಇದೇ ಮೊದಲ ಬಾರಿಗೆ ಅಧ್ಯಕ್ಷರ ಹುದ್ದೆಗೆ ಚುನಾವಣೆ ನಿಗದಿಯಾಗಿದ್ದರಿಂದ ಭಾರೀ ಕುತೂಹಲ ಮೂಡಿಸಿತ್ತು. ಬಸವರಾಜ ಬಳ್ಳಾರಿ ಆಯ್ಕೆ ಘೋಷಣೆಯಾಗುತ್ತಿದ್ದಂತೆ ಡಾ. ರವಿ ಗುಂಜೀಕರ್ ಹಾಗೂ ಅವರ ಅಪಾರ ಅಭಿಮಾನಿಗಳು ಪಟಾಕಿ ಸಿಡಿಸಿ, ಸಿಹಿ ವಿತರಿಸಿ, ಪರಸ್ಪರ ಬಣ್ಣ ಎರಚಿ ಸಂಭ್ರಮಿಸಿದರು. ನೌಕರರ ಭವನದ ಮುಂದಿನ ಪಂ. ಪುಟ್ಟರಾಜರ ದೇವಸ್ಥಾನದ ಆವರಣದಲ್ಲಿ ವಿಜಯೋತ್ಸವ ಆಚರಿಸಿದರು.

ಈ ಅಭೂತಪೂರ್ವ ಗೆಲುವಿಗೆ ಜಿಲ್ಲೆಯ ಎಲ್ಲ ಸರಕಾರಿ ನೌಕರರು ಮತ್ತು ನೌಕರರ ಸಂಘದ ಪದಾಧಿಕಾರಿಗಳು ಕಾರಣರಾಗಿದ್ದಾರೆ. ಜಿಲ್ಲಾಧ್ಯಕ್ಷ ಸ್ಥಾನದ ಈ ಜವಾಬ್ದಾರಿಯನ್ನು ಸಮರ್ಥವಾಗಿ ಬಳಸಿಕೊಂಡು, ಎಲ್ಲರನ್ನೂ ಒಗ್ಗೂಡಿಸಿಕೊಂಡು ಸರಕಾರಿ ನೌಕರರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡುವೆ.

– ಡಾ. ಬಸವರಾಜ ಬಳ್ಳಾರಿ.

ನೌಕರರ ಸಂಘದ ನೂತನ ಜಿಲ್ಲಾಧ್ಯಕ್ಷರು.

ವಚನ ಸಾಹಿತ್ಯಕ್ಕೆ ಮರುಜೀವ ಕೊಟ್ಟವರು ಫ.ಗು. ಹಳಕಟ್ಟಿ

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಕಣ್ಮರೆಯಾಗಿ ಹೋಗುವ ವಚನ ಸಾಹಿತ್ಯಕ್ಕೆ ಮರುಜೀವನ ಕೊಟ್ಟು ಕನ್ನಡ ಸಾಹಿತ್ಯದ ಅಮೂಲ್ಯ ಆಸ್ತಿಯನ್ನು ಉಳಿಸಿದ ಮಹಾನ್ ಪುರುಷ ಫ.ಗು. ಹಳಕಟ್ಟಿ ಎಂದರೆ ತಪ್ಪಾಗಲಾರದು ಎಂದು ಶಿಕ್ಷಕ ಜೆ.ಎಸ್. ರಾಮಶೆಟ್ಟರ ಹೇಳಿದರು.

ಬುಧವಾರ ಸಮೀಪದ ಶಿಗ್ಲಿ ಗ್ರಾಮದ ಗ್ರಾಮಾಂತರ ಶಿಕ್ಷಣ ಸಂಸ್ಥೆಯಲ್ಲಿ ಶರಣ ಸಾಹಿತ್ಯ ಪರಿಷತ್ತು, ಕದಳಿ ಮಹಿಲಾ ವೇದಿಕೆ ಇವುಗಳ ಆಶ್ರಯದಲ್ಲಿ ವಚನ ಪಿತಾಮಹ ಫ.ಗು. ಹಳಕಟ್ಟಿ ಅವರ ಜನ್ಮ ದಿನಾಚರಣೆ ಅಂಗವಾಗಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು.

12ನೇ ಶತಮಾನದಲ್ಲಿ ಬಸವಾದಿ ಶರಣರು ಸಾವಿರಾರು ವಚನಗಳನ್ನು ರಚನೆ ಮಾಡಿ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದರು. ಕನ್ನಡ ಸಾಹಿತ್ಯದ ಅಮೂಲ್ಯ ರತ್ನಗಳಂತಿದ್ದ ವಚನ ಸಾಹಿತ್ಯವು ಶರಣರ ಕಾಲಾನಂತರದಲ್ಲಿ ಅಲ್ಲಲ್ಲಿ ಕಣ್ಮರೆಯಾಗಿ ಹೋಗುತ್ತಿದ್ದವು. ಓಲೆ ಗರಿಯಲ್ಲಿದ್ದ ವಚನ ಸಾಹಿತ್ಯವನ್ನು ರಕ್ಷಣೆ ಮಾಡಿ ಅವುಗಳಿಗೆ ಜೀವ ತುಂಬಿ ಕನ್ನಡ ಸಾಹಿತ್ಯಕ್ಕೆ ಅಮೋಘ ಕಾಣಿಕೆ ನೀಡಿದ್ದು ಫ.ಗು. ಹಳಕಟ್ಟಿಯವರು. ಹಳಕಟ್ಟಿಯವರು ವಚನ ಸಾಹಿತ್ಯದ ರಕ್ಷಣೆ ಹಾಗೂ ಅವುಗಳ ಪ್ರಸಾರಕ್ಕೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟವರು ಎಂದರು.

ಸಮಾರಂಭ ಉದ್ಘಾಟಿಸಿದ ಬಸಣ್ಣ ಬೆಂಡಿಗೇರಿ ಮಾತನಾಡಿ, ಶರಣರ ವಚನಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದು ಅಗತ್ಯವಾಗಿದೆ. 12ನೇ ಶತಮಾನದಲ್ಲಿ ರಚಿಸಿದ ವಚನಗಳು ಸಮಾಜದ ಅಂಕು-ಡೊಂಕು ತಿದ್ದುವ ಸಾಹಿತ್ಯವಾಗಿದೆ. ಇಂತಹ ಶರಣರ ವಚನಗಳನ್ನು ಸಂರಕ್ಷಣೆ ಮಾಡಿದ ಕೀರ್ತಿ ಫ.ಗು. ಹಳಕಟ್ಟಿ ಅವರಿಗೆ ಸಲ್ಲುತ್ತದೆ ಎಂದು ಹೇಳಿದರು.

ಈ ವೇಳೆ ರಂಜನ ಪಾಟೀಲ, ಸೋಮಣ್ಣ ಡಾಣಗಲ್ಲ, ರಾಜರತ್ನ ಹುಲಗೂರ, ನಿರ್ಮಲಾ ಅರಳಿ, ಎಲ್.ಎಸ್. ಅರಳಹಳ್ಳಿ ಇದ್ದರು. ಮಾಲಾದೇವಿ ದಂದರಗಿ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಎಂ.ಕೆ. ಕಳ್ಳಿಮಠ ವಂದಿಸಿದರು.

ನಿಲ್ದಾಣದ ಸ್ವಚ್ಛತೆಗೆ ಆದ್ಯತೆ ನೀಡಿ

ವಿಜಯಸಾಕ್ಷಿ ಸುದ್ದಿ, ಗದಗ: ಹೊಸ ಬಸ್ ನಿಲ್ದಾಣದ ಸ್ವಚ್ಛತೆಗೆ ಅಧಿಕಾರಿಗಳು ಆದ್ಯತೆ ನೀಡಿ ಸಾರ್ವಜನಿಕರ ಆರೋಗ್ಯವನ್ನು ಕಾಪಾಡುವ ಉತ್ತಮ ವಾತವರಣ ಕಲ್ಪಿಸಬೇಕು ಎಂದು ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ ಬಿ.ಬಿ. ಅಸೂಟಿ ಹೇಳಿದರು.

ನಗರದ ಹೊಸ ಬಸ್ ನಿಲ್ದಾಣದಲ್ಲಿ ಜುಲೈ 2ರಿಂದ 4ರವರೆಗೆ ಹಮ್ಮಿಕೊಂಡಿರುವ ಕರ್ನಾಟಕ ಸರ್ಕಾರದ 2 ವರ್ಷಗಳ ಸಾಧನೆ ಬಿಂಬಿಸುವ ವಸ್ತು ಪ್ರದರ್ಶನವನ್ನು ಉದ್ಘಾಟಿಸಿದ ನಂತರ ಬಸ್ ನಿಲ್ದಾಣವನ್ನು ವೀಕ್ಷಿಸಿ ಅವರು ಮಾತನಾಡಿದರು.

ಶಕ್ತಿ ಯೋಜನೆಯಿಂದ ದಿನಕ್ಕೆ ಸಾವಿರಾರು ಮಹಿಳೆಯರು ಉಚಿತ ಪ್ರಯಾಣ ಮಾಡುವಂತಾಗಿದೆ. ಹಾಗಾಗಿ ಬಸ್ ನಿಲ್ದಾಣದಲ್ಲಿರುವ ಶೌಚಾಲಯಗಳು, ಅದಕ್ಕೆ ಅಳವಡಿಸಿರುವ ನಳಗಳು ಸುಸಿತ್ಥಿಯಲ್ಲಿ ಕಾರ್ಯನಿರ್ವಹಿಸುವಂತೆ ಅಧಿಕಾರಿಗಳು ಗಮನಹರಿಸಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ಸಾರ್ವಜನಿಕರು ಕೂರುವ ಆಸನಗಳು ಹಾಳಾಗಿದ್ದು, ಸಾರ್ವಜನಿಕರಿಗೆ ಸೂಕ್ತ ಆಸನ ವ್ಯವಸ್ಥೆಯನ್ನು ಕಲ್ಪಿಸಬೇಕು. ಬಸ್ ನಿಲ್ದಾಣದ ಒಳಗಡೆ ಇರುವ ಅಂಗಡಿಗಳ ತ್ಯಾಜ್ಯವನ್ನು ಸರಿಯಾಗಿ ವಿಲೇವಾರಿ ಮಾಡುವಂತೆ ಕ್ರಮ ವಹಿಸಬೇಕು. ಇಲ್ಲದಿದ್ದಲ್ಲಿ ಅಂಗಡಿಯವರಿಗೆ ನೋಟಿಸ್ ನೀಡಬೇಕು. ಅಂದಾಗ ಮಾತ್ರ ಬಸ್ ನಿಲ್ದಾಣದಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಕಡಿಮೆ ಆಗುತ್ತದೆ ಎಂದು ಹೇಳಿದರು.

ಈ ವೇಳೆ ಬಸ್ ನಿಲ್ದಾಣದಲ್ಲಿ ಕುಳಿತ ಮಹಿಳೆಯರೊಂದಿಗೆ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗಳ ಕುರಿತು ಅಭಿಪ್ರಾಯ ಕೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಮಹಿಳೆಯರು, ಶಕ್ತಿ ಯೋಜನೆಯಿಂದ ಉಚಿತವಾಗಿ ಸ್ವಾವಲಂಬನೆಯೊಂದಿಗೆ ಬಸ್‌ನಲ್ಲಿ ಓಡಾಡಲು ಅನುಕೂಲವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕಬರ್‌ಸಾಬ್ ಬಬರ್ಚಿ, ಗದಗ ತಾಲೂಕು ಪಂಚ ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಅಶೋಕ ಮಂದಾಲಿ, ನೀಲಮ್ಮ ಬೋಳಣ್ಣನವರ, ಬಸವರಾಜ ಕಡೇಮನಿ, ಶಂಭು ಕಾಳೆ, ಸಂಗಮೇಶ ಕೆರಕಲಮಟ್ಟಿ, ಸಾವಿತ್ರಿ ಹೂಗಾರ, ದೇವರಡ್ಡಿ ತಿರ್ಲಾಪುರ, ಗಣೇಶ ಮಟ್ಟಾಲಿ, ಸಂಗಮೇಶ ಹಾದಿಮನಿ, ವಾರ್ತಾಧಿಕಾರಿ ವಸಂತ ಮಡ್ಲೂರ, ಮಹಿಳಾ ಮತ್ತು ಮಕ್ಕಳ ನಿರೂಪಣಾಧಿಕಾರಿ ರಾಧಾ ಮಣ್ಣೂರು, ಹುಲಿಗೆಮ್ಮ ಜೋಗೆರ ಹಾಜರಿದ್ದರು.

ಶಕ್ತಿ ಯೋಜನೆಯಿಂದಾಗಿ ಪ್ರತಿದಿನ ಸಾವಿರಾರು ಮಹಿಳೆಯರು ಸ್ವಾವಲಂಬನೆಯಿಂದ ಓಡಾಟ ನಡೆಸುತ್ತಿದ್ದಾರೆ. ಹಾಗಾಗಿ ಬಸ್ ನಿಲ್ದಾಣದಲ್ಲಿರುವ ಶೌಚಾಲಯಗಳು ಸುವ್ಯವಸ್ಥಿತವಾಗಿ ಕಾರ್ಯನಿರ್ವಹಿಸುವಂತೆ ಅಧಿಕಾರಿಗಳು ಗಮನ ಹರಿಸಬೇಕು. ಬಸ್ ನಿಲ್ದಾಣದಲ್ಲಿರುವ ಆಸನ ವ್ಯವಸ್ಥೆಯನ್ನು ಸರಿಪಡಿಸಬೇಕು ಹಾಗೂ ಪ್ಲಾಸ್ಟಿಕ್ ಮುಕ್ತ ಬಸ್ ನಿಲ್ದಾಣ ಮಾಡಬೇಕು.

– ಕೃಷ್ಣಗೌಡ ಎಚ್.ಪಾಟೀಲ.

ಗ್ಯಾರಂಟಿ ಪ್ರಾಧಿಕಾರದ ಸದಸ್ಯರು.

ಧಾರ್ಮಿಕ ಗ್ರಂಥಗಳು ಮನುಕುಲದ ಒಳಿತು ಬಯಸಿವೆ

ವಿಜಯಸಾಕ್ಷಿ ಸುದ್ದಿ, ಗದಗ: ವೇದಗಳ ತತ್ವ-ಸಂದೇಶಗಳ ತಳಹದಿಯ ಮೇಲೆ ರಚನೆಗೊಂಡ ಎಲ್ಲ ಧಾರ್ಮಿಕ ಗ್ರಂಥಗಳು ಮನುಕುಲದ ಒಳಿತನ್ನು ಬಯಸಿವೆ ಎಂದು ಜಂಗಮವಾಡಿಮಠ ವಾರಣಾಸಿ ಕಾಶೀ ಮಹಾಪೀಠದ ಶ್ರೀಮತ್ ಕಾಶೀ ಜ್ಞಾನಸಿಂಹಾಸನಾಧೀಶ್ವರ ಜ. ಡಾ. ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಭಗವತ್ಪಾದಂಗಳವರು ಹೇಳಿದರು.

ಅವರು ಬುಧವಾರ ನಗರದ ಗಾಣಿಗ ಭವನದಲ್ಲಿ ಗದಗ-ಬೆಟಗೇರಿ ಶ್ರೀ ಸಿದ್ಧಾಂತ ಶಿಖಾಮಣಿ ಆಧ್ಯಾತ್ಮಿಕ ಪ್ರವಚನ ಸಮಿತಿ ಹಮ್ಮಿಕೊಂಡಿರುವ ಆಷಾಢ ಮಾಸದ ಇಷ್ಟಲಿಂಗ ಮಹಾಪೂಜೆ ಹಾಗೂ ಶ್ರೀ ಸಿದ್ಧಾಂತ ಶಿಖಾಮಣಿ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಮನುಕುಲಕ್ಕೆ ಉಪದೇಶ ಮಾಡುವ ಸಿದ್ಧಾಂತ ಶಿಖಾಮಣಿ ಪವಿತ್ರ ಗ್ರಂಥವನ್ನು ವೀರಶೈವ ಧರ್ಮಗ್ರಂಥ ಎಂದು ಬಣ್ಣಿಸಲಾಗಿದ್ದರೂ ಅದು ವೀರಶೈವರಿಗೆ ಅಷ್ಟೇ ಸೀಮಿತವಾಗಿಲ್ಲ. ಎಲ್ಲ ಧರ್ಮದವರಿಗೂ ಒಳ್ಳೆಯ ಸಂದೇಶ ನೀಡಿ ಮಾರ್ಗದರ್ಶಿ ಆಗಬಲ್ಲ ಗ್ರಂಥವಾಗಿದೆ ಎಂದು ಬಣ್ಣಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ನರೇಗಲ್ ಹಿರೇಮಠದ ಪೂಜ್ಯ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳು, ಮನುಷ್ಯನನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯುವ, ಮನುಷ್ಯನ ಮನೋಸ್ಥಿತಿಯನ್ನು ದೈವತ್ವದೆಡೆಗೆ ಸಾಗಿಸುವ ಸನಾತನ ಧರ್ಮ ಗ್ರಂಥ ಸಿದ್ಧಾಂತ ಶಿಖಾಮಣಿಯಾಗಿದೆ ಎಂದರು.

ಡಾ. ಶೇಖರ ಸಜ್ಜನರ ಹಾಗೂ ಕೆಎಸ್‌ಆರ್‌ಟಿಸಿ ಉಪಾಧ್ಯಕ್ಷ ಪೀರಸಾಬ ಕೌತಾಳ ಅವರು ಧರ್ಮ, ದೇವರು, ಭಕ್ತಿ ಹಾಗೂ ಭಾರತೀಯ ಸಂಸ್ಕೃತಿ, ಪರಂಪರೆ ಕುರಿತು ಮಾತನಾಡಿದರು. ಅತಿಥಿಗಳಾಗಿ ಹಾಲಪ್ಪ ಬಣವಿ, ತೋಟಪ್ಪ ಗಾಣಿಗೇರ, ಅಶೋಕ ಮಂದಾಲಿ, ಗಿರಿಯಪ್ಪ ಅಸೂಟಿ, ಸುರೇಶ ಮರಳಪ್ಪನವರ, ಬಿ.ಎಸ್. ವಡ್ಡಟ್ಟಿ, ಬಸವಂತಪ್ಪ ನ್ಯಾವಳ್ಳಿ, ಈಶಪ್ಪ ಕಿರೇಸೂರ, ಗಂಗಾಧರ ಗಾಣಿಗೇರ, ರಮೇಶ ಮಂದಾಲಿ, ಶಿವಣ್ಣ ಹಿಟ್ನಳ್ಳಿ, ಎಸ್.ವ್ಹಿ. ಪವಾಡಿಗೌಡ್ರ, ಸೋಮನಗೌಡ ಪಾಟೀಲ ಆಗಮಿಸಿದ್ದರು.

ಪ್ರಶಾಂತ ಶಾಬಾದಿಮಠ, ಸಂತೋಷ ಅಬ್ಬಿಗೇರಿ, ಜ್ಯೋತಿ ಚಳಗೇರಿ, ಉಮಾಪತಿ ಭೂಸನೂರಮಠ, ಮಹಾಂತೇಶ ಮುಧೋಳ, ಗಿರಿಜಮ್ಮ ಅಬ್ಬಿಗೇರಿ, ಶಂಕರಗೌಡ ಸಂಕನಗೌಡರ, ಡಾ.ವಾಣಿ ಶಿವಪೂರ, ಶೈಲಾ ಹಿರೇಮಠ, ಗುರುಸ್ವಾಮಿಮಠ, ಶಾರದಾ ತಡಸದ ಸೇರಿದಂತೆ ಅತಿಥಿಗಳನ್ನು ಪೂಜ್ಯರು ಸನ್ಮಾನಿಸಿ ಗೌರವಿಸಿದರು.

ದೀಪ್ತಿ ಪಾಠಕ ಅವರಿಂದ ಪ್ರಾರ್ಥನೆ, ಸಂಗೀತ ಜರುಗಿತು. ಎಂ.ಸಿ. ಐಲಿ ಸ್ವಾಗತಿಸಿದರು. ವ್ಹಿ.ಕೆ. ಗುರುಮಠ ನಿರೂಪಿಸಿ ವಂದಿಸಿದರು.

ನೇತೃತ್ವ ವಹಿಸಿದ್ದ ವೀರೇಶ್ವರ ಪುಣ್ಯಾಶ್ರಮದ ಪೂಜ್ಯ ಕಲ್ಲಯ್ಯಜ್ಜನವರು ಮಾತನಾಡಿ, ಗದಗ-ಬೆಟಗೇರಿಯ ಶ್ರೀ ಸಿದ್ಧಾಂತ ಶಿಖಾಮಣಿ ಆಧ್ಯಾತ್ಮಿಕ ಪ್ರವಚನ ಸಮಿತಿ ಪ್ರತಿ ವರ್ಷ ಕಾಶೀ ಜಗದ್ಗುರುಗಳಿಂದ ಆಷಾಢ ಮಾಸದ ಇಷ್ಟಲಿಂಗ ಮಹಾಪೂಜೆ ಹಾಗೂ ಶ್ರೀ ಸಿದ್ಧಾಂತ ಶಿಖಾಮಣಿ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮ ಏರ್ಪಡಿಸಿ ಗದಗ ಪರಿಸರದ ಜನರನ್ನು ಧರ್ಮದ ಸನ್ಮಾರ್ಗದಲ್ಲಿ ಮುನ್ನಡೆಯುವಂತೆ ಜಾಗೃತಗೊಳಿಸಿದ್ದಾರೆ. ಪೂಜ್ಯರ ಪ್ರವಚನದಿಂದಾಗಿ ಧರ್ಮ ಜಾಗೃತಿ, ಜನ ಜಾಗೃತಿಯಾಗಿದೆ ಎಂದರು.

error: Content is protected !!