ಹಾವೇರಿ: ಖ್ಯಾತ ಬಹುಭಾಷಾ ಗಾಯಕಿ ಎಸ್. ಜಾನಕಿ ಅವರ ಅಗಲಿಕೆ ಸಂಗೀತ ಲೋಕಕ್ಕೆ ತುಂಬಲಾರದ ನಷ್ಟ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಸಂತಾಪ ಸೂಚಿಸಿದ್ದಾರೆ.
ಹಾವೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸ್. ಜಾನಕಿ ಅವರು ದೈಹಿಕವಾಗಿ ನಮ್ಮನ್ನು ಅಗಲಿದ್ದರೂ, ಅವರು ಹಾಡಿರುವ ಅಮೂಲ್ಯ ಗೀತೆಗಳ ಮೂಲಕ ಎಂದಿಗೂ ಜನರ ಹೃದಯದಲ್ಲಿ ಜೀವಂತವಾಗಿರುತ್ತಾರೆ ಎಂದು ಹೇಳಿದರು.
ಸಂಗೀತ ಕ್ಷೇತ್ರಕ್ಕೆ ಎಸ್. ಜಾನಕಿ ಅವರು ನೀಡಿರುವ ಕೊಡುಗೆ ಅಪಾರವಾಗಿದೆ. ಐದು ದಶಕಗಳಿಗೂ ಹೆಚ್ಚು ಕಾಲ ಸಂಗೀತ ಸೇವೆ ಸಲ್ಲಿಸಿದ ಅವರು, ಕನ್ನಡ ಸೇರಿದಂತೆ ತಮಿಳು, ತೆಲುಗು ಹಾಗೂ ಹಲವು ಭಾಷೆಗಳಲ್ಲಿ ಸಾವಿರಾರು ಹಾಡುಗಳನ್ನು ಹಾಡಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ ಎಂದು ಬೊಮ್ಮಾಯಿ ಸ್ಮರಿಸಿದರು.
ಜಾನಕಿ ಅವರ ಧ್ವನಿಯ ಏರಿಳಿತ ಮತ್ತು ಗಾಯನದ ವೈಶಿಷ್ಟ್ಯ ಅಪರೂಪವಾಗಿತ್ತು. ಮಗುವಿನ ಧ್ವನಿಯಿಂದ ಹಿಡಿದು ವಯೋವೃದ್ಧರ ಧ್ವನಿಯವರೆಗೂ ವಿವಿಧ ರೀತಿಯ ಭಾವನೆಗಳನ್ನು ಹಾಡಿನ ಮೂಲಕ ವ್ಯಕ್ತಪಡಿಸುವ ಅದ್ಭುತ ಸಾಮರ್ಥ್ಯ ಅವರಿಗೆ ಇತ್ತು. ಅವರು ಸಾಕ್ಷಾತ್ ಸರಸ್ವತಿಯ ಪ್ರತಿರೂಪದಂತಿದ್ದರು ಎಂದು ಬಣ್ಣಿಸಿದರು.
ಎಸ್. ಜಾನಕಿ ಅವರಿಗೆ ಮೈಸೂರಿನ ಬಗ್ಗೆ ವಿಶೇಷ ಪ್ರೀತಿ ಇತ್ತು. ತಮ್ಮ ಜೀವನದ ಕೊನೆಯ ದಿನಗಳನ್ನು ಮೈಸೂರಿನಲ್ಲೇ ಕಳೆದ ಅವರು, ಅಂತಿಮ ಸಂಸ್ಕಾರವೂ ಮೈಸೂರಿನಲ್ಲೇ ನಡೆಯಬೇಕೆಂಬ ಇಚ್ಛೆ ಹೊಂದಿದ್ದರು. ಇದು ಕನ್ನಡ ನಾಡಿನ ಮೇಲಿನ ಅವರ ಪ್ರೀತಿಗೆ ಸಾಕ್ಷಿಯಾಗಿದೆ ಎಂದು ಹೇಳಿದರು.
ಮೈಸೂರಿನಲ್ಲಿ ಎಸ್. ಜಾನಕಿ ಅವರ ನೆನಪಿಗಾಗಿ ಸರ್ಕಾರ ಸುಸಜ್ಜಿತ ಸ್ಮಾರಕ ನಿರ್ಮಿಸಬೇಕು ಎಂದು ಬಸವರಾಜ ಬೊಮ್ಮಾಯಿ ಸಲಹೆ ನೀಡಿದರು. ಸ್ಮಾರಕದಲ್ಲಿ ಅವರು ಹಾಡಿದ ಗೀತೆಗಳ ಸಂಗ್ರಹ, ಅವರ ಗಾಯನ ಶೈಲಿಯ ಕುರಿತು ಸಂಶೋಧನೆ ಹಾಗೂ ಯುವ ಸಂಗೀತ ಪ್ರತಿಭೆಗಳಿಗೆ ತರಬೇತಿ ನೀಡುವಂತಹ ವ್ಯವಸ್ಥೆ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಜಾನಕಿ ಅವರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಅವರ ಕುಟುಂಬದವರಿಗೆ ದುಃಖ ಭರಿಸುವ ಶಕ್ತಿ ದೊರೆಯಲಿ ಎಂದು ಪ್ರಾರ್ಥಿಸಿದರು.

