Home Blog

ಕಬ್ಬಿಣದ ಕೊರತೆ ಹೆಚ್ಚಳ: ಹಾಗಿದ್ರೆ ಈ ಆಹಾರಗಳನ್ನು ನೀವು ತಪ್ಪದೇ ಸೇವಿಸಿ!

0

ಇತ್ತೀಚಿನ ದಿನಗಳಲ್ಲಿ ದೇಹದಲ್ಲಿ ಕಬ್ಬಿಣದ ಕೊರತೆ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ವಿಶೇಷವಾಗಿ ಮಹಿಳೆಯರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತಿದ್ದು, ಆರೋಗ್ಯ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.

ಸರಿಯಾದ ಆಹಾರ ಪದ್ಧತಿ ಇಲ್ಲದಿರುವುದು, ಪೋಷಕಾಂಶಗಳ ಕೊರತೆ ಹಾಗೂ ದೇಹದ ಹೆಚ್ಚಿದ ಅಗತ್ಯತೆಗಳು ಇದರ ಪ್ರಮುಖ ಕಾರಣಗಳಾಗಿವೆ. ಕಬ್ಬಿಣದ ಕೊರತೆಯಿಂದ ರಕ್ತದಲ್ಲಿನ ಹಿಮೋಗ್ಲೋಬಿನ್ ಪ್ರಮಾಣ ಕಡಿಮೆಯಾಗುತ್ತದೆ. ಇದರಿಂದ ದಣಿವು, ದುರ್ಬಲತೆ, ತಲೆ ಸುತ್ತು, ಉಸಿರಾಟದ ತೊಂದರೆ ಸೇರಿದಂತೆ ಹಲವು ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಆದರೆ ಈ ಲಕ್ಷಣಗಳನ್ನು ನಿರ್ಲಕ್ಷ್ಯ ಮಾಡುವವರ ಸಂಖ್ಯೆ ಹೆಚ್ಚುತ್ತಿರುವುದು ಸಮಸ್ಯೆಯನ್ನು ಮತ್ತಷ್ಟು ಗಂಭೀರಗೊಳಿಸುತ್ತಿದೆ.

ಆಹಾರವೇ ಉತ್ತಮ ಪರಿಹಾರ
ಕಬ್ಬಿಣದ ಕೊರತೆಯನ್ನು ನಿವಾರಿಸಲು ದಿನನಿತ್ಯದ ಆಹಾರದಲ್ಲಿ ಕಬ್ಬಿಣ ಸಮೃದ್ಧ ಪದಾರ್ಥಗಳನ್ನು ಸೇರಿಸಬೇಕು. ಪಾಲಕ್, ಮೆಂತೆ, ಸಾಸಿವೆ ಸೊಪ್ಪುಗಳಂತಹ ಹಸಿರು ತರಕಾರಿಗಳು ಉತ್ತಮ ಮೂಲಗಳಾಗಿವೆ. ಬೀಟ್‌ರೂಟ್, ದಾಳಿಂಬೆ, ಖರ್ಜೂರ ಹಾಗೂ ಒಣದ್ರಾಕ್ಷಿ ಹಿಮೋಗ್ಲೋಬಿನ್ ಹೆಚ್ಚಿಸಲು ಸಹಕಾರಿ. ಜೊತೆಗೆ ದಾಳ್, ಕಡಲೆ, ರಾಜ್ಮಾ ಹಾಗೂ ಸೋಯಾಬೀನ್ ಸೇವನೆಯೂ ಉಪಯುಕ್ತವಾಗಿದೆ.

ಮಾಂಸಾಹಾರ ಸೇವಿಸುವವರು ಮೊಟ್ಟೆ, ಮೀನು ಮತ್ತು ಕೋಳಿ ಮಾಂಸವನ್ನು ಆಹಾರದಲ್ಲಿ ಸೇರಿಸಬಹುದು.

ವಿಟಮಿನ್ ‘ಸಿ’ ಮಹತ್ವ
ಕಬ್ಬಿಣ ಇರುವ ಆಹಾರ ಸೇವಿಸುವುದಷ್ಟೇ ಸಾಕಾಗುವುದಿಲ್ಲ, ಅದು ದೇಹದಲ್ಲಿ ಸರಿಯಾಗಿ ಅವಶೋಷಣೆಯಾಗಬೇಕು. ಇದಕ್ಕಾಗಿ ನಿಂಬೆ, ಕಿತ್ತಳೆ ಮತ್ತು ನೆಲ್ಲಿಕಾಯಿ ಮುಂತಾದ ವಿಟಮಿನ್ ‘ಸಿ’ ಇರುವ ಆಹಾರಗಳನ್ನು ಸೇವಿಸುವುದು ಉತ್ತಮ. ಇದು ಕಬ್ಬಿಣದ ಶೋಷಣೆಯನ್ನು ಹೆಚ್ಚಿಸುತ್ತದೆ. ಆದರೆ ಕಬ್ಬಿಣ ಸಮೃದ್ಧ ಆಹಾರಗಳ ಜೊತೆ ಚಹಾ ಅಥವಾ ಕಾಫಿ ಸೇವಿಸುವುದನ್ನು ತಪ್ಪಿಸಬೇಕು.

ಜೀವನಶೈಲಿ ಮುಖ್ಯ
ಸರಿಯಾದ ಸಮಯಕ್ಕೆ ಆಹಾರ ಸೇವನೆ, ಸಮರ್ಪಕ ನಿದ್ರೆ ಹಾಗೂ ದೈನಂದಿನ ವ್ಯಾಯಾಮ ದೇಹದ ಆರೋಗ್ಯವನ್ನು ಉತ್ತಮವಾಗಿಡುತ್ತವೆ. ಕಬ್ಬಿಣದ ಕೊರತೆ ಹೆಚ್ಚಿದ್ದರೆ ವೈದ್ಯರ ಸಲಹೆಯೊಂದಿಗೆ ಪೂರಕ ಔಷಧಿಗಳನ್ನು ತೆಗೆದುಕೊಳ್ಳಬಹುದು.

ಒಟ್ಟಾರೆ, ಸಮತೋಲನ ಆಹಾರ ಮತ್ತು ಆರೋಗ್ಯಕರ ಜೀವನಶೈಲಿಯಿಂದ ಕಬ್ಬಿಣದ ಕೊರತೆಯನ್ನು ನಿಯಂತ್ರಿಸಬಹುದು. ನಿಯಮಿತ ಆರೋಗ್ಯ ತಪಾಸಣೆ ಮೂಲಕ ದೇಹವನ್ನು ಶಕ್ತಿಯುತವಾಗಿಡುವುದು ಅತ್ಯಂತ ಮುಖ್ಯವಾಗಿದೆ.

ಸಿಎಂ ಅಸಹಾಯಕರಂತೆ ವರ್ತಿಸುತ್ತಿದ್ದಾರೆ: ಕೆ.ಎನ್. ರಾಜಣ್ಣ ಅಸಮಾಧಾನ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅಸಹಾಯಕರಂತೆ ವರ್ತಿಸುತ್ತಿದ್ದಾರೆ. ಅವರು ಗಟ್ಟಿಯಾಗಿ ನಿಲ್ಲಬೇಕಾದ ಸಂದರ್ಭದಲ್ಲಿ ನಿಲ್ತಿಲ್ಲ ಎಂದು ಮಾಜಿ ಸಚಿವ ಕೆ.ಎನ್. ರಾಜಣ್ಣ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ಸಿಎಂರಿಂದ ಇಂತಹ ಅಸಹಾಯಕತೆ ನಿರೀಕ್ಷಿಸಿರಲಿಲ್ಲ. ಅವರಿಗೆ ಯಾವ ಅಡೆತಡೆ ಇದೆ ಎಂಬುದು ತಿಳಿಯುತ್ತಿಲ್ಲ. ಏಕೆ ತಟಸ್ಥ ಧೋರಣೆ ತಾಳುತ್ತಿದ್ದಾರೆ ಎಂಬುದೂ ಗೊತ್ತಿಲ್ಲ. ಈ ಬಗ್ಗೆ ಅವರು ನಮಗೆ ಯಾವುದೇ ಮಾಹಿತಿ ನೀಡುತ್ತಿಲ್ಲ ಎಂದು ಹೇಳಿದರು.

ಸಿಎಂ ಪರ ಇರುವವರನ್ನೇ ಗುರಿಯಾಗಿಸಲಾಗುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಪಕ್ಷಕ್ಕೆ ನಿಷ್ಠೆಯಿಂದ ಕೆಲಸ ಮಾಡುವವರ ವಿರುದ್ಧ ಪಟ್ಟಭದ್ರ ಹಿತಾಸಕ್ತಿಗಳು ಹುನ್ನಾರ ಮಾಡುತ್ತಿರುವುದರಿಂದ ಇಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅಭಿಪ್ರಾಯಪಟ್ಟರು.

ಇಂತಹ ಸಂದರ್ಭಗಳಲ್ಲಿ ಮುಖ್ಯಮಂತ್ರಿ ಗಟ್ಟಿಯಾಗಿ ನಿಲ್ಲಬೇಕಿತ್ತು ಎಂದು ಅವರು ಒತ್ತಿಹೇಳಿದರು. ಇದೇ ವೇಳೆ, ಕೆಲವರು ಪಕ್ಷದ ವಿರುದ್ಧ ಮಾತನಾಡಿದ್ದರೂ ಅಥವಾ ನಡೆದುಕೊಂಡಿದ್ದರೂ ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ಆದರೆ ಕೆಲವರ ವಿರುದ್ಧ ಮಾತ್ರ ಕ್ರಮ ಕೈಗೊಳ್ಳುವುದು ಸರಿಯೇ ಎಂದು ಪ್ರಶ್ನಿಸಿದರು.

ಪಕ್ಷವಿರೋಧಿ ಹೇಳಿಕೆ ನೀಡಿದವರ ವಿರುದ್ಧ ಕ್ರಮ ಯಾಕೆ ಇಲ್ಲ ಎಂಬುದರ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ರಾಜಣ್ಣ ಆಗ್ರಹಿಸಿದರು.

ಮಹಿಳಾ ಮೀಸಲಾತಿ ಮಸೂದೆಗೆ ಬೆಂಬಲ ನೀಡಿ: ಸಂಸದರಿಗೆ ಪ್ರಧಾನಿ ಮೋದಿ ಮನವಿ

0

ನವದೆಹಲಿ: ಲೋಕಸಭೆಯಲ್ಲಿ ಪ್ರಮುಖ ಮತದಾನಕ್ಕೂ ಮುನ್ನ ಪ್ರಧಾನಿ ಮೋದಿ ಎಲ್ಲಾ ರಾಜಕೀಯ ಪಕ್ಷಗಳು ಮಹಿಳಾ ಮೀಸಲಾತಿ ಕಾನೂನಿಗೆ ಬೆಂಬಲ ನೀಡುವಂತೆ ಮನವಿ ಮಾಡಿದ್ದಾರೆ.

ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡ ಅವರು, ಸಂಸತ್ತಿನಲ್ಲಿ ಮಸೂದೆ ಕುರಿತಂತೆ ಸವಿಸ್ತಾರ ಚರ್ಚೆಗಳು ನಡೆದಿದ್ದು, ತಡರಾತ್ರಿ ತನಕ ಹಾಗೂ ಮುಂದಿನ ದಿನವೂ ಚರ್ಚೆ ಮುಂದುವರಿದಿದೆ ಎಂದು ತಿಳಿಸಿದ್ದಾರೆ. ಸರ್ಕಾರವು ಉದ್ಭವಿಸಿದ ಎಲ್ಲ ಆತಂಕಗಳು ಮತ್ತು ತಪ್ಪು ಕಲ್ಪನೆಗಳನ್ನು ವಾಸ್ತವಾಂಶಗಳ ಮೂಲಕ ಸ್ಪಷ್ಟಪಡಿಸಿದೆ ಎಂದರು.

ಮಹಿಳಾ ಮೀಸಲಾತಿ ವಿಚಾರವು ಸುಮಾರು ನಾಲ್ಕು ದಶಕಗಳಿಂದ ಬಾಕಿಯಲ್ಲಿದೆ. ಶಾಸಕಾಂಗಗಳಲ್ಲಿ ಮಹಿಳೆಯರಿಗೆ ಸಮಾನ ಹಾಗೂ ನ್ಯಾಯಯುತ ಪ್ರತಿನಿಧಿತ್ವ ನೀಡುವುದು ಅತ್ಯಂತ ಅಗತ್ಯವಾಗಿದೆ ಎಂದು ಮೋದಿ ಒತ್ತಿ ಹೇಳಿದರು.

ದೇಶದ ಅರ್ಧ ಜನಸಂಖ್ಯೆಗೆ ನ್ಯಾಯ ಒದಗಿಸುವ ಸಮಯ ಬಂದಿದೆ. ಎಲ್ಲಾ ರಾಜಕೀಯ ಪಕ್ಷಗಳು ಜವಾಬ್ದಾರಿಯಿಂದ ಯೋಚಿಸಿ, ಮಹಿಳಾ ಮೀಸಲಾತಿಯ ಪರವಾಗಿ ಮತ ಚಲಾಯಿಸುವ ಮೂಲಕ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಅವರು ಕೋರಿದರು.

“ದೇಶದ ಕೋಟ್ಯಂತರ ಮಹಿಳೆಯರು ನಮ್ಮತ್ತ ಗಮನ ಹರಿಸಿದ್ದಾರೆ. ಅವರ ಭಾವನೆಗಳಿಗೆ ಧಕ್ಕೆ ಉಂಟಾಗುವಂತೆ ನಡೆದುಕೊಳ್ಳಬಾರದು. ‘ನಾರಿ ಶಕ್ತಿ ವಂದನ್ ಅಧಿನಿಯಮ’ ತಿದ್ದುಪಡಿಗೆ ಎಲ್ಲರೂ ಬೆಂಬಲ ನೀಡಬೇಕು” ಎಂದು ಪ್ರಧಾನಿ ಮನವಿ ಮಾಡಿದ್ದಾರೆ.

ಧರ್ಮಸ್ಥಳದಲ್ಲಿ ದರ್ಶನ ಸಮಯ ಬದಲಾವಣೆ: ಏ.22 ರವರೆಗೆ ಹೊಸ ನಿಯಮ

ಮಂಗಳೂರು: ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ದೇವರ ದರ್ಶನ ಸಮಯದಲ್ಲಿ ತಾತ್ಕಾಲಿಕ ಬದಲಾವಣೆ ಮಾಡಲಾಗಿದೆ.

ವಿಷು ಜಾತ್ರೆ ಪ್ರಯುಕ್ತ ನಡೆಯುವ ವಿಶೇಷ ಪೂಜಾ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ, ಇಂದಿನಿಂದ ಏಪ್ರಿಲ್ 22ರವರೆಗೆ ದರ್ಶನ ವೇಳೆಯಲ್ಲಿ ಬದಲಾವಣೆ ಜಾರಿಗೆ ತಂದಿರುವುದಾಗಿ ಆಡಳಿತ ಮಂಡಳಿ ತಿಳಿಸಿದೆ.

ಹೊಸ ವೇಳಾಪಟ್ಟಿಯ ಪ್ರಕಾರ, ಬೆಳಗ್ಗೆ 8:30 ನಂತರ ಮಾತ್ರ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ. ರಾತ್ರಿ 8 ಗಂಟೆಯ ಬಳಿಕ ದೇವಸ್ಥಾನದ ಹೊರಾಂಗಣದಿಂದ ಮಾತ್ರ ದರ್ಶನ ವ್ಯವಸ್ಥೆ ಇರಲಿದೆ. ಈ ಹಿನ್ನೆಲೆಯಲ್ಲಿ ಭಕ್ತಾದಿಗಳು ಸಹಕರಿಸುವಂತೆ ಆಡಳಿತ ಮಂಡಳಿ ಮನವಿ ಮಾಡಿದೆ.

ಬೆಂಗಳೂರು ಕಾಮಿಡಿ ಶೋ ವಿವಾದ: ಮುನಾವರ್ ಫಾರುಕಿ ಕಾರ್ಯಕ್ರಮ ರದ್ದುಪಡಿಸಲು ಆಗ್ರಹ!

ಬೆಂಗಳೂರು: ನಗರದಲ್ಲಿ ನಾಳೆ ನಡೆಯಬೇಕಿರುವ ಮುನಾವರ್ ಫಾರುಕಿ ಅವರ ಸ್ಟ್ಯಾಂಡ್‌ಅಪ್ ಕಾಮಿಡಿ ಶೋ ಇದೀಗ ವಿವಾದದ ಕೇಂದ್ರಬಿಂದುವಾಗಿದೆ.

ಹಿಂದೂ ಜನಜಾಗೃತಿ ಸಮಿತಿ ಬೆಂಗಳೂರು ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಿ, ಕಾರ್ಯಕ್ರಮಕ್ಕೆ ಅನುಮತಿ ನೀಡಬಾರದು ಅಥವಾ ರದ್ದುಪಡಿಸಬೇಕು ಎಂದು ಆಗ್ರಹಿಸಿದೆ. ಹಿಂದಿನ ವಿವಾದಗಳು ಹಾಗೂ ಕಾನೂನು ಸುವ್ಯವಸ್ಥೆ ಹಿನ್ನಲೆ ಈ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದೆ.

ಸಮಿತಿ 2021ರ ಇಂದೋರ್ ಪ್ರಕರಣವನ್ನು ಉಲ್ಲೇಖಿಸಿದ್ದು, ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದಡಿ ದಾಖಲಾಗಿದ್ದ ಪ್ರಕರಣ ಇನ್ನೂ ನ್ಯಾಯಾಲಯದಲ್ಲಿ ಬಾಕಿಯಿದೆ ಎಂದು ಹೇಳಿದೆ. ಈ ಹಿನ್ನೆಲೆ ಸಾರ್ವಜನಿಕ ಭದ್ರತೆ ದೃಷ್ಟಿಯಿಂದ ಶೋ ಅಪಾಯಕಾರಿಯಾಗಬಹುದು ಎಂದು ಆತಂಕ ವ್ಯಕ್ತಪಡಿಸಲಾಗಿದೆ.

ಇದೇ ವೇಳೆ ದೇಶದ ವಿವಿಧ ನಗರಗಳಲ್ಲಿ ಅವರ ಶೋಗಳು ಹಿಂದೆ ವಿವಾದಕ್ಕೆ ಒಳಗಾಗಿ ರದ್ದಾಗಿರುವ ಉದಾಹರಣೆಗಳನ್ನೂ ಮನವಿಯಲ್ಲಿ ಉಲ್ಲೇಖಿಸಲಾಗಿದೆ. ಬೆಂಗಳೂರಿನಲ್ಲಿಯೂ ಶಾಂತಿ ಮತ್ತು ಸೌಹಾರ್ದತೆ ಕಾಪಾಡುವ ದೃಷ್ಟಿಯಿಂದ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಲಾಗಿದೆ.

ಯೋಗೀಶ್‌ ಗೌಡ ಕೊಲೆ ಪ್ರಕರಣ: ವಿನಯ್‌ ಕುಲಕರ್ಣಿ ಸೇರಿ 16 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

ಬೆಂಗಳೂರು: ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಅಪರಾಧಿಗಳಿಗೆ ಶಿಕ್ಷೆ ಪ್ರಕಟವಾಗಿದ್ದು, ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಸೇರಿದಂತೆ 16 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.

82ನೇ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಈ ಮಹತ್ವದ ತೀರ್ಪು ನೀಡಿದ್ದು, ಪ್ರಕರಣದ 15ನೇ ಆರೋಪಿ ವಿನಯ್ ಕುಲಕರ್ಣಿಗೂ ಜೀವಾವಧಿ ಶಿಕ್ಷೆ ವಿಧಿಸಿದೆ. ಜೊತೆಗೆ 19ನೇ ಆರೋಪಿ ಚನ್ನಕೇಶವ ಟಿಂಗರಿಕರ್‌ಗೆ 7 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.

ಎ1 ಬಸವರಾಜ ಮುತ್ತಗಿಯನ್ನು ಮಾಫಿ ಸಾಕ್ಷಿಯಾಗಿ ನ್ಯಾಯಾಲಯ ಪರಿಗಣಿಸಿದೆ. ಇದಲ್ಲದೆ, ಮೃತ ಯೋಗೇಶ್ ಗೌಡ ಅವರ ಮಕ್ಕಳಿಗೆ 16 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಕೋರ್ಟ್ ಆದೇಶಿಸಿದೆ.

ಈ ತೀರ್ಪು ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ ಮೂಡಿಸಿದ್ದು, ಪ್ರಜಾಪ್ರತಿನಿಧಿ ಕಾಯ್ದೆಯಡಿ ವಿನಯ್ ಕುಲಕರ್ಣಿ ಅವರ ಶಾಸಕ ಸ್ಥಾನಕ್ಕೂ ಧಕ್ಕೆಯಾಗುವ ಸಾಧ್ಯತೆ ಇದೆ.

ಪ್ರಕರಣದಲ್ಲಿ ಒಟ್ಟು 21 ಆರೋಪಿಗಳಿದ್ದು, ಅವರಲ್ಲಿ ಇಬ್ಬರು ಮಾಫಿ ಸಾಕ್ಷಿಗಳಾಗಿದ್ದಾರೆ. ಉಳಿದ 19 ಮಂದಿಯನ್ನು ಕೋರ್ಟ್ ದೋಷಿಗಳೆಂದು ತೀರ್ಮಾನಿಸಿದೆ. ಎ17 ಶಿವಾನಂದ ಮಾಫಿ ಸಾಕ್ಷಿಯಾದ ಬಳಿಕ ಪ್ರತಿಕೂಲ ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ, ಅವರನ್ನು ಮರುಆರೋಪಿಯಾಗಿ ಪರಿಗಣಿಸುವಂತೆ ಸಿಬಿಐ ಮನವಿ ಸಲ್ಲಿಸಿದೆ.

ಇನ್ನು ಎ20 ವಾಸುದೇವ ನಿಲೇಕಣಿ ಮತ್ತು ಎ21 ಸೋಮಶೇಖರ ಅವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಇತರೆ ಆರೋಪಿಗಳಾದ ವಿಕ್ರಮ್, ಕೀರ್ತಿ ಕುಮಾರ್, ಸಂದೀಪ್, ವಿನಾಯಕ, ಮಹಾಬಲೇಶ್ವರ್, ಸಂತೋಷ್, ದಿನೇಶ್, ಅಶ್ವತ್, ಸುನಿಲ್, ನಜೀರ್ ಅಹಮದ್, ಷಾನವಾಜ್, ನೂತನ್, ಹರ್ಷಿತ್, ಚಂದ್ರು ಮಾಮ, ವಿಕಾಸ್ ಕಲಬುರ್ಗಿ ಸೇರಿದಂತೆ ಹಲವರನ್ನು ದೋಷಿಗಳೆಂದು ಘೋಷಿಸಿ ಶಿಕ್ಷೆ ವಿಧಿಸಲಾಗಿದೆ.

4 ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಮಾಜಿ ಪೊಲೀಸ್ ಅಧಿಕಾರಿಗೆ 20 ವರ್ಷ ಜೈಲು

0

ಜೈಪುರ್: ನಾಲ್ಕು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ವಜಾಗೊಂಡ ರಾಜಸ್ಥಾನ ಪೊಲೀಸ್ ಸಬ್‌-ಇನ್ಸ್ಪೆಕ್ಟರ್ ಭೂಪೇಂದ್ರ ಸಿಂಗ್ ಯಾದವ್‌ಗೆ ದೌಸಾ ಜಿಲ್ಲೆಯ ಪೋಕ್ಸೊ ನ್ಯಾಯಾಲಯ 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿದೆ.

ನ್ಯಾಯಾಲಯವು ಆರೋಪಿಗೆ 2 ಲಕ್ಷ ರೂ. ದಂಡ ವಿಧಿಸಿದ್ದು, ಆ ಮೊತ್ತವನ್ನು ಸಂತ್ರಸ್ತೆಗೆ ನೀಡಲು ಆದೇಶಿಸಿದೆ. ಜೊತೆಗೆ ಸಂತ್ರಸ್ತೆಗೆ 3 ಲಕ್ಷ ರೂ. ಪರಿಹಾರ ನೀಡುವಂತೆ ಶಿಫಾರಸು ಮಾಡಿದೆ.

2023ರಲ್ಲಿ ರಾಹುವಾಸ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ದುರ್ಘಟನೆ ನಡೆದಿತ್ತು. ಆ ಸಂದರ್ಭದಲ್ಲಿ ಚುನಾವಣಾ ಕರ್ತವ್ಯದಲ್ಲಿದ್ದ ಭೂಪೇಂದ್ರ ಸಿಂಗ್ ಯಾದವ್, ಬಾಲಕಿಗೆ ಕ್ಯಾಂಡಿ ಕೊಡಿಸುವುದಾಗಿ ಹೇಳಿ ತನ್ನ ಕೊಠಡಿಗೆ ಕರೆದುಕೊಂಡು ಹೋಗಿ ದೌರ್ಜನ್ಯ ಎಸಗಿದ್ದಾನೆ ಎಂಬುದು ತನಿಖೆಯಲ್ಲಿ ಬಹಿರಂಗವಾಗಿದೆ.

ಘಟನೆ ಬೆಳಕಿಗೆ ಬಂದ ತಕ್ಷಣ, ಕುಟುಂಬದ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಿದ್ದರು. ನಂತರ ಪೊಲೀಸ್ ಇಲಾಖೆ ಕೂಡ ಅವನನ್ನು ಸೇವೆಯಿಂದ ವಜಾಗೊಳಿಸಿತು. ತ್ವರಿತವಾಗಿ ತನಿಖೆ ಪೂರ್ಣಗೊಳಿಸಿ ಪೋಕ್ಸೊ ಕಾಯ್ದೆಯಡಿ ಆರೋಪಪಟ್ಟಿ ಸಲ್ಲಿಸಲಾಯಿತು.

ವಿಚಾರಣೆ ವೇಳೆ ಸಂತ್ರಸ್ತೆ ಪರವಾಗಿ 33 ಸಾಕ್ಷಿಗಳು ಹಾಗೂ 46 ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು. ಎಲ್ಲಾ ಸಾಕ್ಷ್ಯಾಧಾರಗಳನ್ನು ಪರಿಗಣಿಸಿದ ನ್ಯಾಯಾಧೀಶೆ ರೇಖಾ ರಾಥೋಡ್ ಅವರು ಆರೋಪಿಯನ್ನು ತಪ್ಪಿತಸ್ಥ ಎಂದು ಘೋಷಿಸಿದರು.

ಶಿಕ್ಷೆ ಪ್ರಕಟವಾದ ಬಳಿಕ, ಯಾದವ್ ತಾನು ನಿರಪರಾಧಿ ಎಂದು ಹೇಳಿಕೊಂಡಿದ್ದು, ತೀರ್ಪು ವಿರುದ್ಧ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವುದಾಗಿ ತಿಳಿಸಿದ್ದಾರೆ. ವಿಶೇಷ ಸಾರ್ವಜನಿಕ ಅಭಿಯೋಜಕ ಜಿತೇಂದ್ರ ಕುಮಾರ್ ಸೈನಿ ಈ ಪ್ರಕರಣವನ್ನು ಅತ್ಯಂತ ಗಂಭೀರ ಮತ್ತು ಮನಕಲಕುವ ಘಟನೆ ಎಂದು ವಿವರಿಸಿದ್ದಾರೆ.

ರಾಜ್ಯದಲ್ಲಿ ತಾಪಮಾನ ಏರಿಕೆ ಜೊತೆಗೆ ಮಳೆ ಭೀತಿ: ಹವಾಮಾನ ಇಲಾಖೆಯ ಮುನ್ಸೂಚನೆ

ಬೆಂಗಳೂರು: ರಾಜ್ಯದಲ್ಲಿ ದಿನೇದಿನೇ ಬಿಸಿಲಿನ ತಾಪಮಾನ ಹೆಚ್ಚಾಗುತ್ತಿದ್ದರೂ, ಇದೇ ವೇಳೆ ಏಪ್ರಿಲ್ 21ರವರೆಗೆ ಹಲವು ಭಾಗಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ವಿಭಾಗದ ಮುನ್ಸೂಚನೆ ಪ್ರಕಾರ, ಏಪ್ರಿಲ್ 20ರವರೆಗೆ ಉತ್ತರ ಒಳನಾಡು ಪ್ರದೇಶಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಅದೇ ವೇಳೆ ದಕ್ಷಿಣ ಒಳನಾಡಿನ ಭಾಗಗಳಲ್ಲೂ ಮಳೆ ಮುಂದುವರಿಯುವ ಸಾಧ್ಯತೆ ಇದೆ. ಕೆಲವು ಪ್ರದೇಶಗಳಲ್ಲಿ ಆಲಿಕಲ್ಲು ಮಳೆಯೂ ಸಂಭವಿಸಬಹುದು ಎಂದು ತಿಳಿಸಲಾಗಿದೆ.

ಇದರ ನಡುವೆ ರಾಜ್ಯದಲ್ಲಿ ಸಾಮಾನ್ಯಕ್ಕಿಂತ 1 ರಿಂದ 3 ಡಿಗ್ರಿ ಸೆಲ್ಸಿಯಸ್ ಮಟ್ಟಿಗೆ ತಾಪಮಾನ ಏರಿಕೆಯಾಗಿದೆ. ಬೆಂಗಳೂರಿನಲ್ಲಿ 36 ರಿಂದ 37 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗುತ್ತಿದ್ದು, ಜನರು ಬಿಸಿಲಿನ ತಾಪಕ್ಕೆ ಬಳಲುತ್ತಿದ್ದಾರೆ.

ಏಪ್ರಿಲ್ ತಿಂಗಳಲ್ಲೇ ಹೆಚ್ಚು ಉಷ್ಣಾಂಶ ದಾಖಲಾಗಿದ್ದು, ಮುಂದಿನ ಮೇ ತಿಂಗಳಲ್ಲಿ ಇನ್ನಷ್ಟು ಬಿಸಿಲು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಡಂಬಳದಲ್ಲಿ ಗಾಡಾ ಓಟದ ಜೋಶ್: ಬಸವ ಜಯಂತಿಗೆ ಎತ್ತುಗಳ ಶರವೇಗದ ಸವಾರಿ!

0

ಗದಗ: ಜಿಲ್ಲೆಯ ಮುಂಡರಗಿ ತಾಲೂಕಿನ ಡಂಬಳ ಗ್ರಾಮದಲ್ಲಿ ಬಸವ ಜಯಂತಿ ಅಂಗವಾಗಿ ರಾಜ್ಯಮಟ್ಟದ ಖಾಲಿ ಗಾಡಾ ಓಟ ಸ್ಪರ್ಧೆ ಭರ್ಜರಿಯಾಗಿ ನಡೆಯಿತು. ಗ್ರಾಮೀಣ ಸಂಸ್ಕೃತಿಯ ಸೊಗಡನ್ನು ಪ್ರತಿಬಿಂಬಿಸಿದ ಈ ಕಾರ್ಯಕ್ರಮ ರೈತ ಬಾಂಧವರ ಸ್ವಯಂಪ್ರೇರಿತ ಪ್ರಯತ್ನದಿಂದ ಗಮನ ಸೆಳೆಯಿತು.

ರಾಜ್ಯದ ವಿವಿಧ ಜಿಲ್ಲೆಗಳಿಂದ ಭಾಗವಹಿಸಿದ ಎತ್ತುಗಳ ಜೋಡಿಗಳು ಸ್ಪರ್ಧೆಗೆ ವಿಶೇಷ ಮೆರುಗು ತಂದವು. ಅಖಾಡಕ್ಕೆ ಎಂಟ್ರಿ ಕೊಟ್ಟ ಎತ್ತುಗಳ ಗಂಭೀರ ನಡೆ ಹಾಗೂ ಶರವೇಗದ ಓಟ ನೋಡುಗರನ್ನು ಮಂತ್ರಮುಗ್ಧರನ್ನಾಗಿಸಿತು. ಕಟ್ಟು ಮಸ್ತಾಗಿ ಬೆಳೆಸಿದ ಎತ್ತುಗಳು ಧೂಳೆಬ್ಬಿಸುತ್ತಾ ಓಡಿದ ದೃಶ್ಯಗಳು ಹಬ್ಬದ ಸಂಭ್ರಮವನ್ನು ಇನ್ನಷ್ಟು ಹೆಚ್ಚಿಸಿತು.

ಸ್ಪರ್ಧೆಯಲ್ಲಿ ಒಂದು ನಿಮಿಷದಲ್ಲಿ ಹೆಚ್ಚು ದೂರ ಓಡಿದ ಎತ್ತುಗಳ ಜೋಡಿಯನ್ನು ವಿಜೇತರಾಗಿ ಘೋಷಿಸಲಾಯಿತು. ಪ್ರಥಮ ಬಹುಮಾನ ₹51 ಸಾವಿರ, ದ್ವಿತೀಯ ₹41 ಸಾವಿರ ಹಾಗೂ ತೃತೀಯ ₹31 ಸಾವಿರ ರೂಪಾಯಿ ನೀಡಲಾಗಿದ್ದು, ಒಟ್ಟು 9 ಬಹುಮಾನಗಳನ್ನು ವಿತರಿಸಲಾಯಿತು.

ಎತ್ತುಗಳ ಮಾಲೀಕರು ವಿಶೇಷ ಆಹಾರಗಳಾದ ಹುರುಳಿ, ಜೋಳದ ನುಚ್ಚು, ಹಿಂಡಿ ನೀಡಿ ಎತ್ತುಗಳನ್ನು ತಯಾರಿಸುತ್ತಾರೆ. ಕೃಷಿಯ ಜೊತೆಗೆ ಈ ಕ್ರೀಡೆಗೂ ಹೆಚ್ಚಿನ ಸಮಯ ಮೀಸಲಿಡುವ ರೈತರ ಅಭಿರುಚಿ ಇಲ್ಲಿ ಸ್ಪಷ್ಟವಾಗಿ ಗೋಚರಿಸಿತು.

ಸಾವಿರಾರು ಜನರು ಸ್ಪರ್ಧೆ ವೀಕ್ಷಿಸಿ ಕೇಕೆ, ಸಿಳ್ಳೆ ಹಾಗೂ ಚಪ್ಪಾಳೆಗಳಿಂದ ಎತ್ತುಗಳಿಗೆ ಹುಮ್ಮಸ್ಸು ತುಂಬಿದರು. ಗ್ರಾಮೀಣ ಕ್ರೀಡೆಗಳ ಜೀವಂತಿಕೆ ಮತ್ತು ಜನರ ಒಲವು ಈ ಕಾರ್ಯಕ್ರಮದಲ್ಲಿ ಸ್ಪಷ್ಟವಾಗಿ ಕಾಣಿಸಿತು.

‘ಕಾಂತಾರ’ ಗೆ ತ್ರಿಪಲ್ ಅವಾರ್ಡ್: ನಿರ್ಮಾಪಕರಿಗೆ ಧನ್ಯವಾದ ಹೇಳದ ರಿಷಬ್ ಶೆಟ್ಟಿ

ಬೆಂಗಳೂರು: ರಿಷಬ್ ಶೆಟ್ಟಿ ಅಭಿನಯ ಹಾಗೂ ನಿರ್ದೇಶನದ ಕಾಂತಾರ ಸರಣಿ ಮತ್ತೊಮ್ಮೆ ಪ್ರಶಸ್ತಿ ವೇದಿಕೆಯಲ್ಲಿ ಜಯಭೇರಿ ಬಾರಿಸಿದ್ದು, ಐಎನ್ಸಿಎ ಅವಾರ್ಡ್‌ನಲ್ಲಿ ತ್ರಿಪಲ್ ಗೆಲುವು ಸಾಧಿಸಿದೆ.

ಅತ್ಯುತ್ತಮ ನಟ, ಅತ್ಯುತ್ತಮ ನಿರ್ದೇಶಕ ಹಾಗೂ ಅತ್ಯುತ್ತಮ ಸಿನಿಮಾ ವಿಭಾಗಗಳಲ್ಲಿ ಪ್ರಶಸ್ತಿ ಪಡೆದ ರಿಷಬ್ ಶೆಟ್ಟಿ, ತಮ್ಮ ನಾಲ್ಕು ವರ್ಷದ ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿದೆ ಎಂದು ಸಂತಸ ವ್ಯಕ್ತಪಡಿಸಿದರು. ಈ ಯಶಸ್ಸನ್ನು ತಂಡದ ಶ್ರಮಕ್ಕೆ ಅರ್ಪಿಸಿದ ಅವರು, ಕುಟುಂಬದ ಬೆಂಬಲವನ್ನು ಸ್ಮರಿಸಿದರು.

ಆದರೆ, ಚಿತ್ರ ನಿರ್ಮಿಸಿದ ಹೊಂಬಾಳೆ ಫಿಲಮ್ಸ್ ಹಾಗೂ ನಿರ್ಮಾಪಕ ವಿಜಯ್ ಕಿರಗಂದೂರು ಅವರಿಗೆ ಧನ್ಯವಾದ ಸಲ್ಲಿಸದಿರುವುದು ವಿವಾದಕ್ಕೆ ಕಾರಣವಾಗಿದೆ. ಇತ್ತೀಚೆಗೆ ಇವರಿಬ್ಬರ ನಡುವಿನ ಸಂಬಂಧಗಳಲ್ಲಿ ಬಿರುಕು ಮೂಡಿದೆ ಎಂಬ ಮಾತುಗಳು ಕೇಳಿಬರುತ್ತಿರುವುದರಿಂದ ಈ ನಡೆ ಇನ್ನಷ್ಟು ಸಂಶಯ ಹುಟ್ಟಿಸಿದೆ.

ಇದೇ ವೇಳೆ ರಿಷಬ್ ಶೆಟ್ಟಿ ತೆಲುಗಿನ ಪ್ಯಾನ್ ಇಂಡಿಯಾ ಸಿನಿಮಾ ಜೈ ಹನುಮಾನ್ ನಲ್ಲಿ ನಟಿಸುತ್ತಿದ್ದು, ಪ್ರಶಾಂತ್ ವರ್ಮಾ ನಿರ್ದೇಶನದಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ. ರಾಣಾ ದಗ್ಗುಬಾಟಿ ಕೂಡ ಈ ಸಿನಿಮಾದ ಭಾಗವಾಗಿದ್ದಾರೆ.

ರಿಷಬ್ ಶೆಟ್ಟಿ ತಮ್ಮದೇ ನಿರ್ಮಾಣ ಸಂಸ್ಥೆಯಡಿ ಹೊಸ ಸಿನಿಮಾವನ್ನು ಘೋಷಿಸಿರುವುದು, ಅವರ ಮುಂದಿನ ಹೆಜ್ಜೆಗಳ ಬಗ್ಗೆ ಕುತೂಹಲ ಹೆಚ್ಚಿಸಿದೆ.

error: Content is protected !!