Home Blog

ಗದಗದಲ್ಲಿ ಸಮಾಜವಿರೋಧಿ ಚಟುವಟಿಕೆಗಳಿಗೆ ಬ್ರೇಕ್; ಜಿಲ್ಲೆಯಿಂದ ಮೂವರು ಗಡಿಪಾರು!

0

ಗದಗ: ಕೊಲೆ ಯತ್ನ, ಜೀವ ಬೆದರಿಕೆ, ಸಾರ್ವಜನಿಕ ಶಾಂತಿಭಂಗ ಹಾಗೂ ಜೂಜಾಟ–ಮಟ್ಕಾ ದಂಧೆಯಲ್ಲಿ ನಿರಂತರವಾಗಿ ತೊಡಗಿಕೊಂಡಿದ್ದ ಮೂವರನ್ನು ಗದಗ ಜಿಲ್ಲೆಯಿಂದ ಗಡಿಪಾರು ಮಾಡಿ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ.

ಜಿಲ್ಲೆಯಲ್ಲಿ ಸಮಾಜವಿರೋಧಿ ಹಾಗೂ ಕಾನೂನುಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ಅವರ ನೇತೃತ್ವದಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಮೂವರು ಪ್ರತ್ಯೇಕ ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಈ ಹಿಂದೆ ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರುಗಿಸಿದ್ದರೂ ತಮ್ಮ ಚಟುವಟಿಕೆಗಳನ್ನು ಮುಂದುವರಿಸಿದ ಹಿನ್ನೆಲೆಯಲ್ಲಿ ಗಡಿಪಾರು ಮಾಡಲಾಗಿದೆ.

ಸಾಹಿಲ್ ರಾಯಚೂರು ಜಿಲ್ಲೆಗೆ:

ಗದಗ ನಗರದ ದಾಸರ ಓಣಿಯ ಹುಸೇನಸಾಬ್ ಹಣಗಿ ಅವರ ಪುತ್ರ ಸಾಹಿಲ್ ವಿರುದ್ಧ ಕೊಲೆ ಯತ್ನ, ಜೀವ ಬೆದರಿಕೆ ಹಾಗೂ ಸಾರ್ವಜನಿಕ ಶಾಂತಿಭಂಗಕ್ಕೆ ಕಾರಣವಾಗುವಂತಹ ಕೃತ್ಯಗಳಿಗೆ ಸಂಬಂಧಿಸಿದಂತೆ ಪ್ರಕರಣಗಳು ದಾಖಲಾಗಿದ್ದವು. ಆತನ ನಿರಂತರ ಅಪರಾಧ ಚಟುವಟಿಕೆಗಳಿಂದ ಸಾರ್ವಜನಿಕರಲ್ಲಿ ಭಯದ ವಾತಾವರಣ ನಿರ್ಮಾಣವಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಸಾಹಿಲ್‌ನ ದುರ್ವರ್ತನೆ ನಿಯಂತ್ರಿಸುವ ಉದ್ದೇಶದಿಂದ ಸಂಬಂಧಪಟ್ಟ ಪೊಲೀಸ್ ಠಾಣೆಯಿಂದ ಗಡಿಪಾರು ಪ್ರಸ್ತಾವನೆ ಸಲ್ಲಿಸಲಾಗಿತ್ತು. ವಿಚಾರಣೆ ನಡೆಸಿದ ಬಳಿಕ ಆತನನ್ನು ಗದಗ ಜಿಲ್ಲೆಯಿಂದ ರಾಯಚೂರು ಜಿಲ್ಲೆಗೆ ಗಡಿಪಾರು ಮಾಡಿ ಆದೇಶಿಸಲಾಗಿದೆ.

ಸಾಹಿಲ್ ವಿರುದ್ಧ ಗದಗ ನಗರ ಪೊಲೀಸ್ ಠಾಣೆಯಲ್ಲಿ ಎರಡು ಪ್ರಕರಣಗಳಿವೆ. ಗುನ್ನೆ ನಂ.172/2025ರಲ್ಲಿ ಬಿಎನ್‌ಎಸ್‌-2023ರ ಕಲಂ 109(1), 351(2) ಜೊತೆಗೆ 3(5) ಅಡಿ ಪ್ರಕರಣ ದಾಖಲಾಗಿದ್ದು, ಪಿಆರ್ ನಂ.07/2026ರಲ್ಲಿ ಬಿಎನ್‌ಎಸ್‌ಎಸ್‌-2023ರ ಕಲಂ 126 ಅಡಿ ಪ್ರಕರಣ ದಾಖಲಾಗಿದೆ.

ಓಸಿ–ಮಟ್ಕಾ ದಂಧೆ: ಶರೀಫ್ ಧಾರವಾಡಕ್ಕೆ:

ಬೆಳವಣಿಕೆ ಗ್ರಾಮದ ಪಕೀರಸಾಬ್ ಕೋಲಕಾರ ಅವರ ಪುತ್ರ ಶರೀಫ್ ಓಸಿ–ಮಟ್ಕಾ ಜೂಜಾಟವನ್ನು ವೃತ್ತಿಯನ್ನಾಗಿಸಿಕೊಂಡು ಸಮಾಜದ ಮೇಲೆ ದುಷ್ಪರಿಣಾಮ ಬೀರುತ್ತಿದ್ದ ಆರೋಪ ಎದುರಿಸುತ್ತಿದ್ದ. ಈತನ ಚಟುವಟಿಕೆಗಳಿಂದ ಬಡವರು ಹಾಗೂ ದುಡಿಯುವ ವರ್ಗದ ಜನರ ಆರ್ಥಿಕ ಪರಿಸ್ಥಿತಿಗೆ ಧಕ್ಕೆಯಾಗುವುದರ ಜತೆಗೆ ಯುವಜನತೆಯ ಮೇಲೂ ದುಷ್ಪರಿಣಾಮ ಬೀರುತ್ತಿತ್ತು ಎಂದು ಪೊಲೀಸ್ ಇಲಾಖೆ ತಿಳಿಸಿದೆ.

ಶರೀಫ್ ವಿರುದ್ಧ ಈ ಹಿಂದೆ ಪ್ರಕರಣಗಳನ್ನು ದಾಖಲಿಸಿ ಶಿಕ್ಷೆಗೆ ಒಳಪಡಿಸಿದ್ದರೂ ತನ್ನ ಚಟುವಟಿಕೆಗಳನ್ನು ಮುಂದುವರಿಸಿದ್ದ ಹಿನ್ನೆಲೆಯಲ್ಲಿ ಗಡಿಪಾರು ಪ್ರಸ್ತಾವನೆ ಸಲ್ಲಿಸಲಾಗಿತ್ತು. ವಿಚಾರಣೆ ಬಳಿಕ ಆತನನ್ನು ಗದಗ ಜಿಲ್ಲೆಯಿಂದ ಧಾರವಾಡ ಜಿಲ್ಲೆಗೆ ಗಡಿಪಾರು ಮಾಡಲಾಗಿದೆ.

ಶರೀಫ್ ವಿರುದ್ಧ ರೋಣ ಪೊಲೀಸ್ ಠಾಣೆಯಲ್ಲಿ ಮೂರು ಪ್ರಕರಣಗಳಿವೆ. ಗುನ್ನೆ ನಂ.23/2023, ಗುನ್ನೆ ನಂ.178/2024 ಹಾಗೂ ಗುನ್ನೆ ನಂ.33/2025 ಪ್ರಕರಣಗಳು ದಾಖಲಾಗಿದ್ದು, ಮೂರೂ ಪ್ರಕರಣಗಳಲ್ಲಿ ಕೆ.ಪಿ. ಕಾಯ್ದೆಯ ಕಲಂ 78(3) ಅಡಿ ಪ್ರಕರಣ ದಾಖಲಿಸಲಾಗಿದೆ.

ಮೂರು ಜೂಜಾಟ ಪ್ರಕರಣ: ಚೆನ್ನಯ್ಯ ಕೊಪ್ಪಳಕ್ಕೆ:

ರೋಣ ತಾಲೂಕಿನ ಸವಡಿ ಗ್ರಾಮದ ಚೆನ್ನಯ್ಯ ಅಲಿಯಾಸ್ ಚೆನ್ನಬಸಯ್ಯ ವಿರೂಪಾಕ್ಷಯ್ಯ ಚರಂತಿಮಠ ಕೂಡ ಜೂಜಾಟ ಹಾಗೂ ಮಟ್ಕಾ ದಂಧೆಯಲ್ಲಿ ತೊಡಗಿಕೊಂಡಿದ್ದ ಆರೋಪದ ಮೇಲೆ ಗಡಿಪಾರಿಗೆ ಒಳಗಾಗಿದ್ದಾನೆ. ಜೂಜಾಟವನ್ನು ವೃತ್ತಿಯಾಗಿಸಿಕೊಂಡಿದ್ದ ಆತನ ಚಟುವಟಿಕೆಗಳಿಂದ ಬಡವರು, ದುಡಿಯುವ ವರ್ಗ ಹಾಗೂ ಯುವಜನತೆಯ ಮೇಲೆ ದುಷ್ಪರಿಣಾಮ ಬೀರುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಚೆನ್ನಯ್ಯ ವಿರುದ್ಧ ರೋಣ ಪೊಲೀಸ್ ಠಾಣೆಯಲ್ಲಿ ಜೂಜಾಟಕ್ಕೆ ಸಂಬಂಧಿಸಿದಂತೆ ಮೂರು ಪ್ರಕರಣಗಳು ದಾಖಲಾಗಿವೆ. ಗುನ್ನೆ ನಂ.152/2024, ಗುನ್ನೆ ನಂ.26/2025 ಹಾಗೂ ಪಿಆರ್ ನಂ.125/2025 ಪ್ರಕರಣಗಳಲ್ಲಿ ಕೆ.ಪಿ. ಆ್ಯಕ್ಟ್‌ನ ಕಲಂ 78(3) ಅಡಿ ಪ್ರಕರಣ ದಾಖಲಿಸಲಾಗಿದೆ.

ಹಿಂದಿನ ಪ್ರಕರಣಗಳಿದ್ದರೂ ತನ್ನ ಚಟುವಟಿಕೆಗಳನ್ನು ಮುಂದುವರಿಸಿದ್ದರಿಂದ ಆತನ ದುರ್ವರ್ತನೆ ನಿಯಂತ್ರಿಸುವ ಉದ್ದೇಶದಿಂದ ರೋಣ ಪೊಲೀಸ್ ಠಾಣೆಯಿಂದ ಗಡಿಪಾರು ಪ್ರಸ್ತಾವನೆ ಸಲ್ಲಿಸಲಾಗಿತ್ತು. ವಿಚಾರಣೆ ಬಳಿಕ ಚೆನ್ನಯ್ಯನನ್ನು ಗದಗ ಜಿಲ್ಲೆಯಿಂದ ಕೊಪ್ಪಳ ಜಿಲ್ಲೆಗೆ ಗಡಿಪಾರು ಮಾಡಲಾಗಿದೆ.

ಜಿಲ್ಲೆಯಲ್ಲಿ ಅಪರಾಧ ಚಟುವಟಿಕೆ, ಜೂಜಾಟ, ಮಟ್ಕಾ ಸೇರಿದಂತೆ ಸಮಾಜವಿರೋಧಿ ಹಾಗೂ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿರುವವರಿಗೆ ಈ ಗಡಿಪಾರು ಕ್ರಮ ಎಚ್ಚರಿಕೆಯಾಗಿದೆ. ಸಾರ್ವಜನಿಕ ಶಾಂತಿ ಮತ್ತು ಸುವ್ಯವಸ್ಥೆಗೆ ಧಕ್ಕೆ ತರುವವರ ವಿರುದ್ಧ ಮುಂದೆಯೂ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಸ್‌ಪಿ ರೋಹನ್ ಜಗದೀಶ್ ಎಚ್ಚರಿಕೆ ನೀಡಿದ್ದಾರೆ.

Yash Toxic: ವರಮಹಾಲಕ್ಷ್ಮಿ ಹಬ್ಬದಂದೇ ಟಿಕೆಟ್ ಬುಕ್ಕಿಂಗ್ ಆರಂಭ; ಆಗಸ್ಟ್ 26ಕ್ಕೆ ಸಿನಿಮಾ ರಿಲೀಸ್!

0

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾ ಬಿಡುಗಡೆಗೆ ದಿನಗಣನೆ ಆರಂಭವಾಗಿದೆ.

ಆಗಸ್ಟ್ 26ರಂದು ಚಿತ್ರ ಅದ್ದೂರಿಯಾಗಿ ತೆರೆಕಾಣಲಿದ್ದು, ಅದಕ್ಕೂ ಮುನ್ನ ಆಗಸ್ಟ್ 21ರಂದು ವರಮಹಾಲಕ್ಷ್ಮಿ ಹಬ್ಬದ ದಿನವೇ ಟಿಕೆಟ್ ಬುಕ್ಕಿಂಗ್ ಆರಂಭವಾಗಲಿದೆ.

ಚಿತ್ರದ ಬಿಡುಗಡೆ ಹಿನ್ನೆಲೆಯಲ್ಲಿ ಕನ್ನಡ ಚಿತ್ರರಂಗ ಮಾತ್ರವಲ್ಲದೆ ದೇಶದಾದ್ಯಂತ ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿದೆ. ಈಗಾಗಲೇ ಹಲವು ಚಿತ್ರಮಂದಿರಗಳ ಎದುರು ಯಶ್ ಅವರ ‘ಟಾಕ್ಸಿಕ್’ ಚಿತ್ರದ ಕಟೌಟ್‌ಗಳು ರಾರಾಜಿಸಲು ಸಿದ್ಧವಾಗುತ್ತಿವೆ. ಕರ್ನಾಟಕದ ಹೊರತಾಗಿಯೂ ಹಲವು ರಾಜ್ಯಗಳಲ್ಲಿ ಸಿನಿಮಾಗೆ ಉತ್ತಮ ಕ್ರೇಜ್ ಸೃಷ್ಟಿಯಾಗಿದೆ.

ವಿದೇಶದಲ್ಲೂ ‘ಟಾಕ್ಸಿಕ್’ ಹವಾ:

‘ಟಾಕ್ಸಿಕ್’ ಸಿನಿಮಾ ವಿದೇಶಗಳಲ್ಲೂ ದೊಡ್ಡ ಮಟ್ಟದಲ್ಲಿ ಬಿಡುಗಡೆಯಾಗಲು ಸಜ್ಜಾಗಿದೆ. ಭಾರತೀಯ ಚಿತ್ರರಂಗದಲ್ಲಿ ಭಾರೀ ನಿರೀಕ್ಷೆ ಮೂಡಿಸಿರುವ ಈ ಸಿನಿಮಾ ಅಂತರರಾಷ್ಟ್ರೀಯ ಮಟ್ಟದಲ್ಲೂ ಗಮನ ಸೆಳೆಯುವ ನಿರೀಕ್ಷೆ ಇದೆ.

ಚಿತ್ರದ ಪ್ರಚಾರ ಹಾಗೂ ಬಿಡುಗಡೆಗೆ ಸಂಬಂಧಿಸಿದ ಸಿದ್ಧತೆಗಳು ಭರದಿಂದ ಸಾಗುತ್ತಿದ್ದು, ನೂರಾರು ಚಿತ್ರಮಂದಿರಗಳ ಎದುರು ಯಶ್ ಅವರ ಕಟೌಟ್‌ಗಳು ಅಭಿಮಾನಿಗಳ ಗಮನ ಸೆಳೆಯಲಿವೆ.

ಆಗಸ್ಟ್ 21ರಿಂದ ಅಡ್ವಾನ್ಸ್ ಬುಕ್ಕಿಂಗ್:

ವರಮಹಾಲಕ್ಷ್ಮಿ ಹಬ್ಬದ ದಿನವಾದ ಆಗಸ್ಟ್ 21ರಿಂದ ‘ಟಾಕ್ಸಿಕ್’ ಚಿತ್ರದ ಟಿಕೆಟ್‌ಗಳ ಮುಂಗಡ ಬುಕ್ಕಿಂಗ್ ಆರಂಭವಾಗಲಿದೆ. ಹೀಗಾಗಿ ಯಶ್ ಅಭಿಮಾನಿಗಳು ಮೊದಲ ದಿನವೇ ಸಿನಿಮಾ ವೀಕ್ಷಿಸಲು ಟಿಕೆಟ್ ಕಾಯ್ದಿರಿಸಲು ಸಜ್ಜಾಗಿದ್ದಾರೆ.

ಆಗಸ್ಟ್ 26ರಂದು ಸಿನಿಮಾ ತೆರೆಕಾಣಲಿದ್ದು, ಭಾರೀ ಸಂಖ್ಯೆಯ ಪರದೆಗಳಲ್ಲಿ ಚಿತ್ರ ಪ್ರದರ್ಶನಗೊಳ್ಳುವ ನಿರೀಕ್ಷೆ ಇದೆ.

‘ಕೆಜಿಎಫ್’ ಸರಣಿಯ ಬಳಿಕ ಯಶ್ ಅವರ ಮತ್ತೊಂದು ಸಿನಿಮಾ ಆಗಿರುವುದರಿಂದ ‘ಟಾಕ್ಸಿಕ್’ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಸಿನಿಮಾ ಬಿಡುಗಡೆಯಾದ ಬಳಿಕ ಪ್ರೇಕ್ಷಕರಿಂದ ಯಾವ ರೀತಿಯ ಪ್ರತಿಕ್ರಿಯೆ ಸಿಗಲಿದೆ ಎಂಬುದು ಕುತೂಹಲ ಮೂಡಿಸಿದೆ.

ವರಮಹಾಲಕ್ಷ್ಮಿ ಹಬ್ಬದ ಖರೀದಿ ಭರಾಟೆ; ಬೆಲೆ ಏರಿಕೆಯ ಬಿಸಿ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಶ್ರಾವಣ ಮಾಸದ ಎರಡನೇ ಶುಕ್ರವಾರ ಆಚರಿಸುವ ವರಮಹಾಲಕ್ಷ್ಮಿ ವ್ರತದ ಹಿನ್ನೆಲೆಯಲ್ಲಿ ಪಟ್ಟಣದ ಮಾರುಕಟ್ಟೆಯಲ್ಲಿ ಗುರುವಾರ ಖರೀದಿ ಭರಾಟೆ ಜೋರಾಗಿತ್ತು. ಹೂವು, ಹಣ್ಣು, ಪೂಜಾ ಸಾಮಗ್ರಿ, ಲಕ್ಷ್ಮಿ ಮೂರ್ತಿ ಹಾಗೂ ಅಲಂಕಾರಿಕ ವಸ್ತುಗಳ ಖರೀದಿಗೆ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರಿಂದ ಮಾರುಕಟ್ಟೆ ಜನದಟ್ಟಣೆಯಿಂದ ಕೂಡಿತ್ತು.

ಹಬ್ಬದ ಸಂಭ್ರಮದ ನಡುವೆಯೇ ಅಗತ್ಯ ವಸ್ತುಗಳ ಬೆಲೆ ಏರಿಕೆ ಗ್ರಾಹಕರಿಗೆ ಬಿಸಿ ಮುಟ್ಟಿಸಿದೆ. ಸೇವಂತಿ ಹೂವಿನ ದರ ಕೆಜಿಗೆ ₹800ಕ್ಕೆ ತಲುಪಿದ್ದು, ದುಬಾರಿ ದರದಿಂದಾಗಿ ಗ್ರಾಹಕರು ಕೆಜಿ ಅಥವಾ ಅರ್ಧ ಕೆಜಿ ಬದಲಾಗಿ 50ರಿಂದ 100 ಗ್ರಾಂನಷ್ಟು ಮಾತ್ರ ಖರೀದಿಸುತ್ತಿರುವುದು ಕಂಡುಬಂತು.

ಹಣ್ಣು, ಪೂಜಾ ಸಾಮಗ್ರಿಗೂ ದರ ಏರಿಕೆ

ಬಾಳೆ, ಸೇಬು, ಕಿತ್ತಳೆ, ಚಿಕ್ಕೂ ಹಾಗೂ ಮೋಸಂಬಿ ಒಳಗೊಂಡ ಹಣ್ಣುಗಳ ಸೆಟ್ ₹150ರಿಂದ ₹200ರವರೆಗೆ ಮಾರಾಟವಾಯಿತು. ಬಾಳೆಕಂಬಕ್ಕೆ ₹50 ದರವಿತ್ತು. ವೀಳ್ಯದೆಲೆ, ಹೂವು, ಬಾಳೆ, ಕಬ್ಬು, ದಿನಸಿ ಹಾಗೂ ಅಲಂಕಾರಿಕ ವಸ್ತುಗಳ ಬೆಲೆಯಲ್ಲೂ ಏರಿಕೆಯಾಗಿದೆ.

ವರಮಹಾಲಕ್ಷ್ಮಿ ಮೂರ್ತಿಗಳಿಗೆ ಬೇಡಿಕೆ ಹೆಚ್ಚಾಗಿದ್ದು, ವಿವಿಧ ಗಾತ್ರದ ಮೂರ್ತಿಗಳನ್ನು ಮಹಿಳೆಯರು ಖರೀದಿಸಿದರು. ಅರಿಶಿಣ, ಕುಂಕುಮ, ಅಕ್ಷತೆ, ಕರ್ಪೂರ ಸೇರಿದಂತೆ ಪೂಜಾ ಸಾಮಗ್ರಿಗಳ ಸಿದ್ಧ ಕಿಟ್‌ಗಳಿಗೂ ಬೇಡಿಕೆ ಕಂಡುಬಂತು. ಹೊಸ ಸೀರೆ, ಬಳೆ ಹಾಗೂ ಅಲಂಕಾರಿಕ ವಸ್ತುಗಳ ಖರೀದಿಯಲ್ಲೂ ಮಹಿಳೆಯರು ಆಸಕ್ತಿ ತೋರಿದರು.

ಬೆಲೆ ಏರಿಕೆಯ ಹಿನ್ನೆಲೆಯಲ್ಲಿ ಮಧ್ಯಮ ವರ್ಗದ ಕುಟುಂಬಗಳು ಅಗತ್ಯ ವಸ್ತುಗಳಿಗೆ ಮಾತ್ರ ಆದ್ಯತೆ ನೀಡಿ ಖರೀದಿ ಪ್ರಮಾಣ ಕಡಿಮೆ ಮಾಡುತ್ತಿರುವುದು ಕಂಡುಬಂತು. ಆದರೂ ಹಬ್ಬದ ಸಂಪ್ರದಾಯಕ್ಕೆ ಧಕ್ಕೆಯಾಗದಂತೆ ತಮ್ಮ ಆರ್ಥಿಕ ಸಾಮರ್ಥ್ಯಕ್ಕೆ ತಕ್ಕಂತೆ ಸರಳವಾಗಿ ಪೂಜೆ ನೆರವೇರಿಸಲು ಕುಟುಂಬಗಳು ಸಜ್ಜಾಗಿವೆ.

ಮಾರುಕಟ್ಟೆಯ ಮುಂದುವರಿದ ಭಾಗದಲ್ಲಿ ದುರಸ್ತಿ ಕಾಮಗಾರಿ ನಡೆಯುತ್ತಿರುವುದರ ಜತೆಗೆ ಹಬ್ಬದ ಖರೀದಿಗೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರಿಂದ ಮಾರುಕಟ್ಟೆ ರಸ್ತೆಯಲ್ಲಿ ಸಂಚಾರ ದಟ್ಟಣೆ ಉಂಟಾಯಿತು. ಪೊಲೀಸರು ಸಂಚಾರ ನಿಯಂತ್ರಿಸಲು ಹರಸಾಹಸಪಟ್ಟರು. ಗ್ರಾಮೀಣ ಭಾಗಗಳಿಂದಲೂ ಜನರು ಪಟ್ಟಣಕ್ಕೆ ಆಗಮಿಸಿದ್ದರಿಂದ ಹೂವು, ಹಣ್ಣು, ಬಟ್ಟೆ, ಬಳೆ ಹಾಗೂ ಪೂಜಾ ಸಾಮಗ್ರಿಗಳ ಮಾರಾಟ ಚುರುಕುಗೊಂಡಿತ್ತು.

ದ್ಯಾಮಮ್ಮ–ದುರ್ಗಮ್ಮ ಹರಿಜಾತ್ರೆ: ಇಂದು ಜೋಗುತಿ, ದೀಪ ನೃತ್ಯ ಪ್ರದರ್ಶನ

0

ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಗ್ರಾಮದೇವತೆಗಳಾದ ಶ್ರೀ ದ್ಯಾಮಮ್ಮ ಹಾಗೂ ಶ್ರೀ ದುರ್ಗಮ್ಮ ದೇವಿಯರ ಹರಿಜಾತ್ರೆ ಮಹೋತ್ಸವದ ಅಂಗವಾಗಿ ಆ.21ರಂದು ಸಂಜೆ 7 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದೆ.

ನರೇಗಲ್‌ನ ಪೂಜ್ಯಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯರು ದಿವ್ಯ ಸಾನ್ನಿಧ್ಯ ವಹಿಸುವರು. ಟ್ರಸ್ಟ್ ಕಮಿಟಿ ಅಧ್ಯಕ್ಷ ಕೊಟ್ರಪ್ಪ ಕಮತರ ಅಧ್ಯಕ್ಷತೆ ವಹಿಸುವರು. ಜಾತ್ರಾ ಕಮಿಟಿ ಕಾರ್ಯಾಧ್ಯಕ್ಷ ಫಕ್ಕೀರಪ್ಪ ಹೆಬಸೂರ ಉಪಸ್ಥಿತರಿರುವರು.

ಲೆಕ್ಕಪರಿಶೋಧಕ ಶಂಕ್ರಪ್ಪ ಕನೋಜ, ಜೆ.ಜೆ. ಕಾಲೇಜಿನ ಐ.ಎಸ್. ಪೂಜಾರ, ಉಸಿರು ಫೌಂಡೇಶನ್ ಸಂಸ್ಥಾಪಕ ಶರಣು ಪಾಟೀಲ, ವ್ಯಾಪಾರಸ್ಥರಾದ ಸದಾಶಿವಯ್ಯ ಮದರಿಮಠ, ವಿಶ್ವನಾಥಯ್ಯ ಶಿವಪ್ಪಯ್ಯನಮಠ, ಯುವ ಧುರೀಣ ವಸಂತ ಪಡಗದ ಸೇರಿದಂತೆ ಗಣ್ಯರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.

ನಗರಸಭಾ ಸದಸ್ಯರಾದ ಕೃಷ್ಣ ಪರಾಪೂರ, ಆಸ್ಮಾ ರೇಷ್ಮಿ, ಜೈನುಲಾಲುದ್ದೀನ್ ನಮಾಜಿ, ಮಹಾಂತೇಶ ನಲವಡಿ, ಪರವೀನಬಾನು ಮುಲ್ಲಾ, ವ್ಯಾಪಾರಸ್ಥ ಎಚ್.ಕೆ. ಮುಲ್ಲಾ, ಗುತ್ತಿಗೆದಾರ ಎಫ್.ವಿ. ಮರಿಗೌಡರ ಸೇರಿದಂತೆ ಹಲವರು ಭಾಗವಹಿಸುವರು.

ಸಭಾ ಕಾರ್ಯಕ್ರಮದ ಬಳಿಕ ರಾತ್ರಿ 8.30ಕ್ಕೆ ಶಂಕ್ರಣ್ಣ ಸಂಕಣ್ಣವರ ನೇತೃತ್ವದ ಕೊತಬಾಳದ ಅರುಣೋದಯ ಕಲಾತಂಡದಿಂದ ಜೋಗುತಿ ನೃತ್ಯ ಹಾಗೂ ದೀಪ ನೃತ್ಯ ಪ್ರದರ್ಶನ ನಡೆಯಲಿದೆ ಎಂದು ಜಾತ್ರೋತ್ಸವ ಕಮಿಟಿ ಪ್ರಕಟಣೆಯಲ್ಲಿ ತಿಳಿಸಿದೆ.

ಜಾನಪದ ಆಟಗಳು ಉಳಿಯಬೇಕು: ಶಂಕರಣ್ಣ ಸಂಕಣ್ಣನವರ

0

ವಿಜಯಸಾಕ್ಷಿ ಸುದ್ದಿ, ಗದಗ: ಜಾನಪದ ಕಲೆ, ಸಂಸ್ಕೃತಿ ಹಾಗೂ ಸಾಂಪ್ರದಾಯಿಕ ಆಟಗಳನ್ನು ಉಳಿಸಿ ಮುಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಆ.22ರಂದು ನಗರದ ಎ.ಎಸ್.ಎಸ್. ಕಾಮರ್ಸ್ ಕಾಲೇಜಿನಲ್ಲಿ ವಿಶ್ವ ಜಾನಪದ ದಿನಾಚರಣೆ ಅಂಗವಾಗಿ ‘ಪಂಚಮ ಪಗಡಂ’ ಜಾನಪದ ಆಟ–ನೃತ್ಯಗಳ ಸಂಭ್ರಮ ಆಯೋಜಿಸಲಾಗಿದೆ ಎಂದು ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ಶಂಕರಣ್ಣ ಸಂಕಣ್ಣನವರ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗ್ಗೆ 10 ಗಂಟೆಗೆ ಕಾರ್ಯಕ್ರಮ ನಡೆಯಲಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕರ್ನಾಟಕ ಜಾನಪದ ಅಕಾಡೆಮಿ ಸಹಯೋಗದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಜಾನಪದ ಪರಂಪರೆ ಹಾಗೂ ಮೂಲ ಜನಪದ ಆಟಗಳನ್ನು ಉಳಿಸಿ ಬೆಳೆಸುವ ಆಶಯದಿಂದ ಕಾರ್ಯಕ್ರಮ ರೂಪಿಸಲಾಗಿದೆ ಎಂದರು.

ಇಡಲಕಿ, ಕುಂಟಬಿಲ್ಲೆ, ಬಗರಿ, ಲಗೋರಿ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಹಿಂದೆ ಜನಪ್ರಿಯವಾಗಿದ್ದ ಸಾಂಪ್ರದಾಯಿಕ ಆಟಗಳನ್ನು ಆಡಿಸಲಾಗುವುದು. ಅಗತ್ಯ ಪರಿಕರಗಳನ್ನು ಸಿದ್ಧಪಡಿಸಲಾಗಿದ್ದು, ಸಂಪನ್ಮೂಲ ವ್ಯಕ್ತಿಗಳು ಹಾಗೂ ಅಧ್ಯಾಪಕರ ಸಂಘದ ಸಹಕಾರ ಪಡೆಯಲಾಗಿದೆ ಎಂದರು.

ವಿವಿಧ ಜಿಲ್ಲೆಗಳ ಕಲಾತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದ್ದು, ತಂಜಾವೂರು ಸೌತ್‌ಜೋನ್ ಸಿದ್ಧಿಕುಣಿತ, ನಂದಿಧ್ವಜ, ಪುರವಂತಿಕೆ, ಹಗಲು ವೇಷ, ವೀರಗಾಸೆ ಸೇರಿದಂತೆ ವಿವಿಧ ಜಾನಪದ ಕಲಾ ಪ್ರಕಾರಗಳು ಪ್ರದರ್ಶನಗೊಳ್ಳಲಿವೆ.

ಸುದ್ದಿಗೋಷ್ಠಿಯಲ್ಲಿ ಡಾ. ಜಿ.ಬಿ. ಪಾಟೀಲ, ಮೌನೇಶ ಬಡಿಗೇರ, ಗೌಡಪ್ಪ ಬೊಮ್ಮಪ್ಪನವರ, ಶಿವು ಭಜಂತ್ರಿ, ಸೋಮು ಚಿಕ್ಕಮಠ ಉಪಸ್ಥಿತರಿದ್ದರು. ಬಾಹುಬಲಿ ಜೈನರ ಕಾರ್ಯಕ್ರಮ ನಿರೂಪಿಸಲಿದ್ದಾರೆ.

“ಜಾನಪದ ಆಟಗಳು ಕೇವಲ ಮನರಂಜನೆಯಲ್ಲ. ಮಕ್ಕಳ ದೈಹಿಕ ಚಟುವಟಿಕೆ, ಚಿಂತನಾ ಸಾಮರ್ಥ್ಯ ಹಾಗೂ ಮೆದುಳಿನ ಬೆಳವಣಿಗೆಗೂ ಇವು ಸಹಕಾರಿಯಾಗುತ್ತವೆ. ಇಂತಹ ಆಟಗಳನ್ನು ಉಳಿಸಿ ಮುಂದಿನ ಪೀಳಿಗೆಗೆ ತಲುಪಿಸುವ ಅಗತ್ಯವಿದೆ.”

— ಶಂಕರಣ್ಣ ಸಂಕಣ್ಣನವರ, ಸದಸ್ಯ, ಕರ್ನಾಟಕ ಜಾನಪದ ಅಕಾಡೆಮಿ

ಸಾವಿನಲ್ಲೂ ಸಾರ್ಥಕತೆ ಮೆರೆದ ನಿವೃತ್ತ ಮುಖ್ಯೋಪಾಧ್ಯಾಯ

0

ವಿಜಯಸಾಕ್ಷಿ ಸುದ್ದಿ, ಗದಗ: ನಿವೃತ್ತ ಮುಖ್ಯೋಪಾಧ್ಯಾಯ ರಾಚಪ್ಪ ವ್ಹಿ. ಕೋರಿ ಅವರು ನಿಧನದ ಬಳಿಕವೂ ಮತ್ತೊಬ್ಬರ ಬದುಕಿಗೆ ಬೆಳಕಾಗುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.

ನಗರದ ವಿವೇಕಾನಂದ ನಗರದ ಕರಿಯಮ್ಮಕಲ್ಲು ಬಡಾವಣೆಯ ನಿವಾಸಿ ರಾಚಪ್ಪ ಕೋರಿ ಅವರು ಆ.17ರಂದು ನಿಧನರಾಗಿದ್ದು, ಅವರ ಸ್ವಇಚ್ಛೆಯಂತೆ ಕುಟುಂಬದವರು ನೇತ್ರದಾನ ಹಾಗೂ ದೇಹದಾನ ನೆರವೇರಿಸಿದ್ದಾರೆ.

ನಿಧನದ ಬಳಿಕ ತಜ್ಞ ವೈದ್ಯರ ತಂಡ ನೇತ್ರದಾನದ ಪ್ರಕ್ರಿಯೆ ಪೂರ್ಣಗೊಳಿಸಿತು. ಬಳಿಕ ಆ.18ರಂದು ಮೃತರ ದೇಹವನ್ನು ವೈದ್ಯಕೀಯ ವಿದ್ಯಾರ್ಥಿಗಳ ಅಂಗರಚನಾ ಶಾಸ್ತ್ರ ಅಧ್ಯಯನಕ್ಕಾಗಿ ಗದಗದ ಡಿ.ಜಿ.ಎಂ. ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯಕ್ಕೆ ದಾನ ಮಾಡಲಾಯಿತು.

ಮೃತರ ಅಂತಿಮ ಇಚ್ಛೆಯನ್ನು ಗೌರವಿಸಿದ ಕುಟುಂಬದ ಈ ಮಾನವೀಯ ಕಾರ್ಯ ಸಾರ್ವಜನಿಕರಲ್ಲಿ ನೇತ್ರದಾನ ಹಾಗೂ ದೇಹದಾನದ ಕುರಿತು ಜಾಗೃತಿ ಮೂಡಿಸುವಂತಾಗಿದೆ. ಮರಣದ ನಂತರವೂ ತಮ್ಮ ದೇಹ ಹಾಗೂ ಅಂಗಾಂಗಗಳು ಮತ್ತೊಬ್ಬರ ಬದುಕಿಗೆ ಮತ್ತು ವೈದ್ಯಕೀಯ ಶಿಕ್ಷಣಕ್ಕೆ ನೆರವಾಗುವಂತೆ ಮಾಡಿರುವುದು ಮಾದರಿ ಕಾರ್ಯವಾಗಿದೆ.

ಈ ಸಂದರ್ಭದಲ್ಲಿ ಗದಗ-ಬೆಟಗೇರಿ ಲಯನ್ಸ್ ಕ್ಲಬ್ ಅಧ್ಯಕ್ಷ ಪ್ರವೀಣ ವಾರಕರ, ಕಾರ್ಯದರ್ಶಿ ಲಿಂಗರಾಜ ತೋಟದ, ರಮೇಶ ಶಿಗ್ಲಿ, ರಾಜಣ್ಣ ಮಲ್ಲಾಡದ, ಅಶ್ವಥ್ ಸುಲಾಖೆ ಸೇರಿದಂತೆ ಕುಟುಂಬದ ಸದಸ್ಯರು ಹಾಗೂ ಬಂಧು-ಬಳಗದವರು ಉಪಸ್ಥಿತರಿದ್ದರು.

ಸದ್ಭಾವನೆ, ಸೌಹಾರ್ದಕ್ಕೆ ಪ್ರತಿಯೊಬ್ಬರ ಕೊಡುಗೆ ಅಗತ್ಯ

0

ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಸದ್ಭಾವನಾ ದಿನಾಚರಣೆಯನ್ನು ಆಚರಿಸಲಾಯಿತು.

ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಅವರು ಸದ್ಭಾವನಾ ದಿನದ ಪ್ರತಿಜ್ಞಾ ವಿಧಿ ಬೋಧಿಸಿ, ಜಾತಿ, ಧರ್ಮ, ಪ್ರದೇಶ, ಮತ ಹಾಗೂ ಭಾಷೆಯ ಭೇದವಿಲ್ಲದೆ ದೇಶದ ಎಲ್ಲ ಜನರ ನಡುವೆ ಭಾವೈಕ್ಯತೆ ಮತ್ತು ಸೌಹಾರ್ದ ಬೆಳೆಸಲು ಪ್ರತಿಯೊಬ್ಬರೂ ಶ್ರಮಿಸಬೇಕು ಎಂದರು.

ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ಭಾರತದಲ್ಲಿ ಎಲ್ಲ ಸಮುದಾಯಗಳ ನಡುವೆ ಪರಸ್ಪರ ಗೌರವ ಮತ್ತು ವಿಶ್ವಾಸ ಬೆಳೆಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ ಎಂದು ತಿಳಿಸಿದರು.

ಅಪರ ಜಿಲ್ಲಾಧಿಕಾರಿ ಡಾ. ದುರ್ಗೇಶ್ ಕೆ.ಆರ್., ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಶರಣು ಗೋಗೇರಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

ಹರಿ ಜಾತ್ರೆಯ ಅನ್ನದಾಸೋಹಕ್ಕೆ ಅಕ್ಕಿ ಸೇವೆ ಸಮರ್ಪಿಸಿದ ವಸಂತ ಪಡಗದ

0

ವಿಜಯಸಾಕ್ಷಿ ಸುದ್ದಿ, ಗದಗ: ಅವಳಿ ನಗರದ ಒಕ್ಕಲಗೇರಿ ಓಣಿಯ ಗ್ರಾಮದೇವತೆಗಳಾದ ಶ್ರೀ ದ್ಯಾಮವ್ವ ಹಾಗೂ ದುರ್ಗಮ್ಮ ದೇವಿಯರ ಐತಿಹಾಸಿಕ ಹರಿಜಾತ್ರಾ ಮಹೋತ್ಸವದ ಅಂಗವಾಗಿ ಭಕ್ತರಿಗೆ ಏರ್ಪಡಿಸಿರುವ ಮಹಾ ಅನ್ನಪ್ರಸಾದ ಸೇವೆಗೆ ಬಿಜೆಪಿ ಯುವ ಮುಖಂಡ ವಸಂತ ಪಡಗದ ಅವರು ಭಕ್ತಿಸೇವೆಯಾಗಿ ಅಕ್ಕಿ ಸಮರ್ಪಿಸಿದ್ದಾರೆ.

18 ವರ್ಷಗಳ ಬಳಿಕ ವಿಜೃಂಭಣೆಯಿಂದ ನಡೆಯುತ್ತಿರುವ ಹರಿಜಾತ್ರಾ ಮಹೋತ್ಸವ ಆ.18ರಿಂದ 28ರವರೆಗೆ ನಡೆಯುತ್ತಿದ್ದು, ಜಾತ್ರೆಗೆ ಆಗಮಿಸುವ ಸಾವಿರಾರು ಭಕ್ತರಿಗೆ ಪ್ರತಿದಿನ ದಾಸೋಹದ ವ್ಯವಸ್ಥೆ ಮಾಡಲಾಗಿದೆ.

ಮಹಾ ಅನ್ನಪ್ರಸಾದಕ್ಕೆ ಅಗತ್ಯವಿರುವ ಅಕ್ಕಿಯನ್ನು ಶುಕ್ರವಾರದಿಂದ ಸತತ ಏಳು ದಿನಗಳ ಕಾಲ ವಸಂತ ಪಡಗದ ಅವರು ಭಕ್ತಿಸೇವೆಯಾಗಿ ಒದಗಿಸಲಿದ್ದಾರೆ. ಇದರ ಮೊದಲ ಹಂತವಾಗಿ ಗುರುವಾರ 50ಕ್ಕೂ ಹೆಚ್ಚು ಅಕ್ಕಿ ಚೀಲಗಳನ್ನು ಜಾತ್ರಾ ಸಮಿತಿಯ ಪ್ರಮುಖರಿಗೆ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ವಿನೋದ ಮೊರಬದ, ಪ್ರವೀಣ ಕರಿಬಿಷ್ಟಿ, ಮೋಹನ ವರವಿ, ಸುನೀಲ ಮುದೇನಗುಡಿ, ಸೋಮು ಮುಳಗುಂದ, ಬಸವರಾಜ ತುಪ್ಪದ, ಕುಮಾರ ಮಾರನಬಸರಿ, ಶ್ರೀಕಾಂತ ರಾಮಗಿರಿ, ಪ್ರವೀಣ ಹಂದೇಲಿ, ವಿನಾಯಕ ಹೊರಕೇರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

“18 ವರ್ಷಗಳ ಬಳಿಕ ನಡೆಯುತ್ತಿರುವ ಗ್ರಾಮ ದೇವಿಯರ ಹರಿಜಾತ್ರೋತ್ಸವದಲ್ಲಿ ವಸಂತ ಪಡಗದ ಹಾಗೂ ಗೆಳೆಯರು ಮಹಾಪ್ರಸಾದಕ್ಕೆ ಅಗತ್ಯವಿರುವ ಅಕ್ಕಿಯನ್ನು ಭಕ್ತಿಸೇವೆಯಾಗಿ ನೀಡುತ್ತಿದ್ದಾರೆ. ಊರಿನ ಗುರು-ಹಿರಿಯರು ಹಾಗೂ ಜಾತ್ರಾ ಸಮಿತಿಯ ಸಹಕಾರದಿಂದ ಈ ಸೇವೆ ನಡೆಯುತ್ತಿದೆ.”

— ವಿನೋದ ಮೊರಬದ

ನಮ್ಮ ಆಚರಣೆಗಳಲ್ಲೂ ವಿಜ್ಞಾನ ಅಡಗಿದೆ: ಡಾ. ರಾಚೋಟೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು

0

ವಿಜಯಸಾಕ್ಷಿ ಸುದ್ದಿ, ಗದಗ: ಭಾರತದಲ್ಲಿ ಪಾರಂಪರಿಕವಾಗಿ ಆಚರಿಸಿಕೊಂಡು ಬರುತ್ತಿರುವ ಪ್ರತಿಯೊಂದು ಆಚರಣೆಯ ಹಿಂದೆಯೂ ವಿಶಿಷ್ಟ ಕಾರಣವಿದ್ದು, ಅವು ವೈಜ್ಞಾನಿಕ ಅಂಶಗಳನ್ನು ಒಳಗೊಂಡಿವೆ. ವಿಜ್ಞಾನ ಮತ್ತು ಆಧ್ಯಾತ್ಮ ಪರಸ್ಪರ ವಿರೋಧಿಗಳಲ್ಲ, ವಿಜ್ಞಾನದೊಂದಿಗೆ ಹೊಂದಿಕೊಂಡು ಸಾಗುವುದೇ ಆಧ್ಯಾತ್ಮದ ಆಶಯ ಎಂದು ಅಂತೂರ-ಬೆಂತೂರ ಬೂದೀಶ್ವರ ಸಂಸ್ಥಾನ ಮಠದ ಡಾ. ರಾಚೋಟೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.

ನಗರದ ಒಕ್ಕಲಗೇರಿ ಓಣಿಯ ದ್ಯಾಮವ್ವನ ಕಟ್ಟೆ ದೇವಸ್ಥಾನದ ಆವರಣದಲ್ಲಿ ನಡೆಯುತ್ತಿರುವ ಶ್ರೀ ದ್ಯಾಮವ್ವ ಹಾಗೂ ದುರುಗಮ್ಮ ದೇವಿಯರ ಹರಿಜಾತ್ರೋತ್ಸವದ ಎರಡನೇ ದಿನದ ಸಭಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ವಿಜ್ಞಾನ ವಸ್ತುಗಳ ಮೇಲೆ ಪ್ರಯೋಗ ನಡೆಸಿದರೆ, ಆಧ್ಯಾತ್ಮ ಸ್ವಯಂ ಅನುಭವ, ಜ್ಞಾನ ಹಾಗೂ ತಪಸ್ಸಿನ ಮೂಲಕ ಸತ್ಯವನ್ನು ಅರಿಯುವ ಮಾರ್ಗವಾಗಿದೆ. 12 ವರ್ಷಕ್ಕೊಮ್ಮೆ ನಡೆಯುವ ಕುಂಭಮೇಳ ಹಾಗೂ ಜಾತ್ರೆಗಳ ಹಿಂದೆಯೂ ವೈಜ್ಞಾನಿಕ ಕಾರಣಗಳಿವೆ. ತುಳಸಿ, ಬಿಲ್ವಪತ್ರೆ ಹಾಗೂ ಬೇವಿನ ಬಳಕೆಯಿಂದಾಗುವ ಪ್ರಯೋಜನಗಳೇ ನಮ್ಮ ಪೂರ್ವಜರ ವೈಜ್ಞಾನಿಕ ಜ್ಞಾನಕ್ಕೆ ಸಾಕ್ಷಿ ಎಂದರು.

ಭಾರತ ವೇದ ಜ್ಞಾನದ ಮೂಲಕ ಜಗತ್ತಿಗೆ ಜ್ಞಾನದ ಗಂಗೆಯನ್ನು ಹರಿಸಿದೆ. ಇಂದಿನ ಎಐ ಯುಗದಲ್ಲಿಯೂ ಮಾನವ ನಿರ್ಮಿತ ಜ್ಞಾನವೇ ಆಧಾರವಾಗಿದೆ. ಹೀಗಾಗಿ ನಮ್ಮ ಆಚರಣೆ, ಸಂಸ್ಕಾರ ಹಾಗೂ ಪರಂಪರೆಯನ್ನು ಅಧ್ಯಯನ ಮಾಡಿ ಮುಂದಿನ ಪೀಳಿಗೆಗೆ ತಲುಪಿಸಬೇಕು. ಜಾತ್ರೆಗಳು ಸಮುದಾಯದ ಒಗ್ಗಟ್ಟು, ಪರಸ್ಪರ ಪ್ರೀತಿ ಮತ್ತು ವಿಶ್ವಾಸಕ್ಕೆ ನಾಂದಿಯಾಗಲಿ ಎಂದು ಆಶಿಸಿದರು.

ಜಾತ್ರಾ ಸಮಿತಿ ಕಾರ್ಯಾಧ್ಯಕ್ಷ ಫಕೀರಪ್ಪ ಹೆಬಸೂರ ಮಾತನಾಡಿ, ದ್ಯಾಮವ್ವ-ದುರುಗಮ್ಮ ದೇವಿಯರ ಜಾತ್ರೆಯ ಇತಿಹಾಸವನ್ನು ವಿವರಿಸಿ, ಭವಿಷ್ಯದಲ್ಲಿ ಭವ್ಯ ಸಮುದಾಯ ಭವನ ನಿರ್ಮಾಣಕ್ಕೆ ಎಲ್ಲರೂ ಸಹಕರಿಸಬೇಕು ಎಂದರು.

ಬಣಜಿಗ ಸಮಾಜದ ಜಿಲ್ಲಾಧ್ಯಕ್ಷ ಈಶಣ್ಣ ಮುನವಳ್ಳಿ ಮಾತನಾಡಿ, ಜಾತ್ರೆಯ ಯಶಸ್ಸಿನಲ್ಲಿ ತಾಯಂದಿರು ಹಾಗೂ ಯುವಕರ ಪರಿಶ್ರಮ ಪ್ರಮುಖವಾಗಿದೆ. ಜಾತ್ರೆಯ ಇತಿಹಾಸವನ್ನು ಪುಸ್ತಕ ರೂಪದಲ್ಲಿ ದಾಖಲಿಸಿ ಮುಂದಿನ ಪೀಳಿಗೆಗೆ ಪರಿಚಯಿಸಬೇಕು ಎಂದು ಹೇಳಿದರು.

ನಗರಸಭಾ ಸದಸ್ಯ ರಾಘವೇಂದ್ರ ಯಳವತ್ತಿ ಸೇರಿದಂತೆ ಗಣ್ಯರು ಮಾತನಾಡಿದರು. ಕಾರ್ಯಕ್ರಮದಲ್ಲಿ ಪೂಜ್ಯಶ್ರೀ ಶಿವಶರಣೆ ನೀಲಮ್ಮ ತಾಯಿ ಅಸುಂಡಿ, ಕೊಟ್ರಪ್ಪ ಕಮತರ, ಡಾ. ಡಿ.ಬಿ. ಬಿಡಿನಹಾಳ, ಆರುಣಕುಮಾರ ಚವ್ಹಾಣ, ಆರ್.ಡಿ. ಕಡ್ಡಿಕೊಪ್ಪ, ಪ್ರಕಾಶ ಕರಿ, ನಗರಸಭಾ ಸದಸ್ಯರಾದ ಲಕ್ಷ್ಮವ್ವ ಭಜಂತ್ರಿ, ಪೂರ್ಣಿಮಾ ಭರದ್ವಾಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಸುರೇಶ ಮರಳಪ್ಪನವರ ಸ್ವಾಗತಿಸಿದರು. ಬಾಹುಬಲಿ ಜೈನರ ನಿರೂಪಿಸಿದರು. ವಿರೂಪಾಕ್ಷಪ್ಪ ಅಕ್ಕಿ ವಂದಿಸಿದರು. ಬಳಿಕ ಕಾಮಿಡಿ ಕಿಲಾಡಿಯ ಸಂಜು ಬಸಯ್ಯ ಹಾಗೂ ಗದುಗಿನ ನಟರಂಗ ಕಲಾ ಸಂಸ್ಥೆಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

“ವಿಜ್ಞಾನ ಮತ್ತು ಆಧ್ಯಾತ್ಮ ಪರಸ್ಪರ ವಿರೋಧಿಗಳಲ್ಲ. ನಮ್ಮ ಆಚರಣೆಗಳಲ್ಲಿಯೂ ವೈಜ್ಞಾನಿಕ ಅಂಶಗಳಿದ್ದು, ಅವುಗಳ ಹಿಂದಿನ ಜ್ಞಾನವನ್ನು ಅರಿತು ಪರಂಪರೆಯನ್ನು ಮುಂದಿನ ಪೀಳಿಗೆಗೆ ತಲುಪಿಸಬೇಕು.”

— ಡಾ. ರಾಚೋಟೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು

ಅರಸು ಆದರ್ಶ ಅಳವಡಿಸಿಕೊಳ್ಳಿ: ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ

0

ವಿಜಯಸಾಕ್ಷಿ ಸುದ್ದಿ, ಗದಗ: ಹಿಂದುಳಿದ ವರ್ಗಗಳ ಏಳಿಗೆ ಹಾಗೂ ಸಾಮಾಜಿಕ ಸಮಾನತೆಗೆ ಭದ್ರ ಬುನಾದಿ ಹಾಕಿದ ದಿ. ಡಿ. ದೇವರಾಜ ಅರಸು ಅವರ ಕೊಡುಗೆ ಕರ್ನಾಟಕಕ್ಕೆ ಅಪಾರ. ಅವರು ತೋರಿದ ಸಾಮಾಜಿಕ ನ್ಯಾಯದ ಹಾದಿಯಲ್ಲಿ ಇಂದಿನ ಪೀಳಿಗೆ ಸಾಗಬೇಕು ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ ಕರೆ ನೀಡಿದರು.

ನಗರದ ಮುಳಗುಂದ ರಸ್ತೆಯ ಕನಕ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಗುರುವಾರ ನಡೆದ ದಿ. ಡಿ. ದೇವರಾಜ ಅರಸು ಅವರ 111ನೇ ಜನ್ಮದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ದೊರಕಬೇಕು ಎಂಬ ದೂರದೃಷ್ಟಿಯಿಂದ ಆಡಳಿತ ನಡೆಸಿದ ಅರಸು ಅವರು ‘ಉಳುವವನೇ ಭೂಮಿಯ ಒಡೆಯ’ ಎಂಬ ಐತಿಹಾಸಿಕ ಭೂಸುಧಾರಣಾ ಕಾಯ್ದೆ ಜಾರಿಗೆ ತಂದು ಲಕ್ಷಾಂತರ ಬಡ ರೈತರಿಗೆ ಭೂಮಿಯ ಹಕ್ಕು ಕಲ್ಪಿಸಿದರು. ಹಿಂದುಳಿದ ವರ್ಗಗಳಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಸೂಕ್ತ ಪ್ರಾತಿನಿಧ್ಯ ದೊರಕಿಸಲು ಮೀಸಲಾತಿ ಜಾರಿಗೆ ತಂದರು. ವಿದ್ಯಾರ್ಥಿಗಳ ಶಿಕ್ಷಣಕ್ಕೆ ಉತ್ತೇಜನ ನೀಡಲು ವಸತಿ ನಿಲಯಗಳ ಸ್ಥಾಪನೆ ಸೇರಿದಂತೆ ಹಲವು ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದರು ಎಂದು ಶ್ರೀಧರ್ ಹೇಳಿದರು.

ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿ ಹಾಗೂ ಉಪನ್ಯಾಸಕ ಪ್ರಭಾಕರ ಉಳ್ಳಾಗಡ್ಡಿ ಮಾತನಾಡಿ, ಅರಸು ಅವರು ಶೋಷಿತರು ಹಾಗೂ ಹಿಂದುಳಿದವರನ್ನು ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಹಲವು ಸಾಮಾಜಿಕ ಸುಧಾರಣೆಗಳನ್ನು ಜಾರಿಗೆ ತಂದಿದ್ದರು. ಅವರ ಆಡಳಿತದ ಅವಧಿಯಲ್ಲಿ ಕೈಗೊಂಡ ಜನಪರ ಕ್ರಮಗಳು ಇಂದಿಗೂ ಪ್ರಸ್ತುತವಾಗಿವೆ ಎಂದರು.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಬಸವರಾಜ ವಿ. ಬಳ್ಳಾರಿ ಮಾತನಾಡಿ, ಅರಸು ಅವರು ಹಿಂದುಳಿದ ವರ್ಗಗಳ ಶೈಕ್ಷಣಿಕ ಪ್ರಗತಿಗೆ ಒತ್ತು ನೀಡಿ ವಸತಿ ನಿಲಯಗಳನ್ನು ಆರಂಭಿಸುವ ಮೂಲಕ ಸಾವಿರಾರು ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದ ಅವಕಾಶ ಕಲ್ಪಿಸಿದರು. ಗದಗ ಜಿಲ್ಲೆಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾಡಳಿತದ ಸಹಕಾರದಿಂದ 48ಕ್ಕೂ ಹೆಚ್ಚು ವಸತಿ ನಿಲಯಗಳು ಮತ್ತು ವಸತಿ ಶಾಲೆಗಳು ಕಾರ್ಯನಿರ್ವಹಿಸುತ್ತಿದ್ದು, ಸಾವಿರಾರು ಬಡ ವಿದ್ಯಾರ್ಥಿಗಳಿಗೆ ಆಸರೆಯಾಗಿವೆ ಎಂದರು.

ಜಿಲ್ಲಾ ಹಾಲುಮತ ಸಂಘದ ಅಧ್ಯಕ್ಷ ಫಕೀರಪ್ಪ ಹೆಬಸೂರ ಮಾತನಾಡಿ, ಅರಸು ಅವರ ಭೂಸುಧಾರಣೆ ಹಾಗೂ ಸಾಮಾಜಿಕ ನ್ಯಾಯದ ಯೋಜನೆಗಳು ಬಡವರು ಮತ್ತು ಶೋಷಿತರಲ್ಲಿ ಆತ್ಮಗೌರವದ ಬದುಕಿಗೆ ದಾರಿ ಮಾಡಿಕೊಟ್ಟಿವೆ. ಇಂದಿನ ಮಕ್ಕಳು ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರಂತಹ ವಿಜ್ಞಾನಿಗಳು ಹಾಗೂ ದೇಶಪ್ರೇಮಿಗಳಾಗಿ ಬೆಳೆಯಲು ಪೋಷಕರು ಶಿಕ್ಷಣದ ಜತೆಗೆ ಸಂಸ್ಕಾರ ನೀಡಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ ಬಬರ್ಚಿ, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಸಿ.ಆರ್. ಮುಂಡರಗಿ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಡಾ. ನಂದಾ ಹಣಬರಟ್ಟಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಅಮಿತ್ ಬಿದರಿ, ತಹಶೀಲ್ದಾರ್ ಶ್ರೀನಿವಾಸ ಕುಲಕರ್ಣಿ, ರಾಜ್ಯ ಹಾಲುಮತ ಸಂಘದ ಅಧ್ಯಕ್ಷ ರುದ್ರಣ್ಣ ಗುಳಗುಳಿ, ಅಲೆಮಾರಿ ಸಂಘದ ಜಿಲ್ಲಾಧ್ಯಕ್ಷ ಹರೀಶ್ ಪೂಜಾರ ಸೇರಿದಂತೆ ಅಧಿಕಾರಿಗಳು, ಮುಖಂಡರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ

ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಸತಿ ನಿಲಯದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ರಾಜ್ಯ ಪ್ರಶಸ್ತಿ ವಿಜೇತ ಜನಪದ ಕಲಾವಿದ ವೀರಣ್ಣ ಅಂಗಡಿ ಹಾಗೂ ಸಂಗಡಿಗರು ದೇವರಾಜ ಅರಸು ಅವರ ಕುರಿತು ಸ್ವರಚಿತ ಗೀತೆ ಹಾಗೂ ನಾಡಗೀತೆ ಪ್ರಸ್ತುತಪಡಿಸಿದರು.

“ಅರಸು ಅವರ ಸಾಧನೆಗಳನ್ನು ಸ್ಮರಿಸುವುದಷ್ಟೇ ಅಲ್ಲ, ಅವರು ತೋರಿದ ಹಾದಿಯಲ್ಲಿ ಸಾಗುವುದು ಹಾಗೂ ಸಮಾಜದ ಏಳಿಗೆಗೆ ಶ್ರಮಿಸುವುದೇ ಅವರಿಗೆ ಸಲ್ಲಿಸುವ ನಿಜವಾದ ಗೌರವ.”

— ಸಿ.ಎನ್. ಶ್ರೀಧರ್, ಜಿಲ್ಲಾಧಿಕಾರಿ