Home Blog

ಸಹಕಾರ ಕ್ಷೇತ್ರದಿಂದ ಆರ್ಥಿಕ ಅಭಿವೃದ್ಧಿಗೆ ಬಲ

0

ವಿಜಯಸಾಕ್ಷಿ ಸುದ್ದಿ, ಗದಗ: ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ಸಹಕಾರ ಕ್ಷೇತ್ರ ಮಹತ್ವದ ಪಾತ್ರ ವಹಿಸುತ್ತಿದ್ದು, ಕೃಷಿ, ಹೈನುಗಾರಿಕೆ, ಬ್ಯಾಂಕಿಂಗ್, ಗ್ರಾಮೀಣ ಉದ್ಯೋಗ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಹಕಾರ ಸಂಘಗಳು ಪ್ರಮುಖ ಕೊಡುಗೆ ನೀಡುತ್ತಿವೆ ಎಂದು ಗದಗ ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕ ಎಸ್.ಎಸ್. ಪಟ್ಟಣಶೆಟ್ಟಿ ಹೇಳಿದರು.

ಸಹಕಾರ ಇಲಾಖೆ, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಹಾಗೂ ಗದಗ ಜಿಲ್ಲಾ ಸಹಕಾರ ಯೂನಿಯನ್ ಸಹಯೋಗದಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರಬಂಧ ಹಾಗೂ ಚರ್ಚಾ ಸ್ಪರ್ಧೆಗಳ ಬಹುಮಾನ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಸಹಕಾರ ಕ್ಷೇತ್ರ ಕೇವಲ ಗ್ರಾಮೀಣ ಸಾಲ ಅಥವಾ ಹಾಲು ಉತ್ಪಾದನೆಗೆ ಸೀಮಿತವಲ್ಲ. ರೈತರು, ಕಾರ್ಮಿಕರು, ಮಹಿಳೆಯರು ಹಾಗೂ ಸಣ್ಣ ಉದ್ಯಮಿಗಳನ್ನು ಒಗ್ಗೂಡಿಸಿ ಉದ್ಯೋಗ, ಉತ್ಪಾದನೆ ಮತ್ತು ಗ್ರಾಮೀಣ ಸಮೃದ್ಧಿಗೆ ವೇಗ ನೀಡುವ ಆರ್ಥಿಕ ಮಾದರಿಯಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಯೂನಿಯನ್ ಅಧ್ಯಕ್ಷ ಸಿ.ಎಂ. ಪಾಟೀಲ ಮಾತನಾಡಿ, “ಯುವಕರು ತಂತ್ರಜ್ಞಾನ ಮತ್ತು ಡಿಜಿಟಲೀಕರಣದಲ್ಲಿ ಪರಿಣತಿ ಪಡೆದು ಸಹಕಾರ ಸಂಘಗಳನ್ನು ಆಧುನಿಕಗೊಳಿಸಬೇಕು. ಯುವಶಕ್ತಿ ಮತ್ತು ಸಹಕಾರ ಶಕ್ತಿ ಒಂದಾದಾಗ ‘ಸಹಕಾರದಿಂದ ಸಮೃದ್ಧಿ’ ಘೋಷಣೆಯಾಗದೆ ಆರ್ಥಿಕ ಅಭಿವೃದ್ಧಿಯ ಶಕ್ತಿಯಾಗಲಿದೆ” ಎಂದು ಹೇಳಿದರು.

ಪ್ರಬಂಧ ಸ್ಪರ್ಧೆಯಲ್ಲಿ ಕಣವಿ ಸರ್ಕಾರಿ ಪ್ರೌಢಶಾಲೆಯ ವಿನಾಯಕ ಎಂ. ಕೋರಿ ಪ್ರಥಮ, ಕಲಕೇರಿಯ ಎಸ್.ಜಿ.ಎಂ. ಪ್ರೌಢಶಾಲೆಯ ಸಿಂಧೂ ಮೌನೇಶ ಅಂಗಡಿ ದ್ವಿತೀಯ ಹಾಗೂ ಗದಗದ ಸಿದ್ಧಲಿಂಗನಗರ ಸರ್ಕಾರಿ ಪ್ರೌಢಶಾಲೆಯ ಕೃಷ್ಣಪ್ರಿಯಾ ಆನಂದ ಬದಿ ತೃತೀಯ ಸ್ಥಾನ ಪಡೆದರು.

ಚರ್ಚಾ ಸ್ಪರ್ಧೆಯ ವಿಷಯದ ಪರವಾಗಿ ಭುವನೇಶ್ವರಿ ಆರ್. ಬಳ್ಳಾರಿ ಪ್ರಥಮ, ಅರ್ಚನಾ ದ್ವಿತೀಯ ಹಾಗೂ ಭರತಕುಮಾರ ಎಂ. ಬಿಳೆಯಲಿ ತೃತೀಯ ಸ್ಥಾನ ಪಡೆದರೆ, ವಿರೋಧವಾಗಿ ಕಾವ್ಯಾ ಬಸನಗೌಡ ಬೆಳ್ಳಿಗೌಡ್ರ ಪ್ರಥಮ, ಲೇಖನಾ ಎ.ಪಿ. ದ್ವಿತೀಯ ಹಾಗೂ ಐಶ್ವರ್ಯ ಕೊಡಗಲಿ ತೃತೀಯ ಸ್ಥಾನ ಪಡೆದರು.

ವಿಜೇತರಿಗೆ ನಗದು ಬಹುಮಾನ, ಪದಕ ಹಾಗೂ ಪ್ರಮಾಣಪತ್ರ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಸಹಕಾರ ಇಲಾಖೆಯ ಅಧಿಕಾರಿಗಳು, ಕಾಲೇಜು ಪ್ರಾಚಾರ್ಯರು, ತೀರ್ಪುಗಾರರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಗದಗ ಅಭಿವೃದ್ಧಿಗೆ ಆಗ್ರಹಿಸಿ ಹೀರಾಲಾಲ್ ಸಿಂಗ್ರಿ ಪಾದಯಾತ್ರೆ

0

ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಸಮಗ್ರ ಅಭಿವೃದ್ಧಿಗೆ ಆಗ್ರಹಿಸಿ ಸಾಮಾಜಿಕ ಕಾರ್ಯಕರ್ತ ಹೀರಾಲಾಲ್ ಬಿ. ಸಿಂಗ್ರಿ ಅವರು ಗದಗ-ಬೆಟಗೇರಿ ನಗರಸಭೆಯಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪಾದಯಾತ್ರೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ನಗರಸಭೆಯಿಂದ ತೆರವುಗೊಳಿಸಲಾದ ೫೪ ವಕಾರಗಳು ಇಂದಿಗೂ ಪಾಳುಬಿದ್ದಿದ್ದು, ಅಲ್ಲಿನ ಜಾಗದಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಹೆಸರಿನಲ್ಲಿ ವಾಣಿಜ್ಯ ಮಳಿಗೆ ನಿರ್ಮಿಸಿ ನಗರಸಭೆಗೆ ಶಾಶ್ವತ ಆದಾಯ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಹಳೇ ಬಸ್ ನಿಲ್ದಾಣದಿಂದ ಬ್ಯಾಂಕ್ ರಸ್ತೆ, ಟಾಂಗಾಕೂಟ ರಸ್ತೆವರೆಗೆ ಬೀದಿ ವ್ಯಾಪಾರಿಗಳ ತಳ್ಳುಗಾಡಿಗಳಿಂದ ಸಂಚಾರಕ್ಕೆ ತೊಂದರೆಯಾಗುತ್ತಿದೆ. ವ್ಯಾಪಾರಿಗಳನ್ನು ಪರ್ಯಾಯ ಸ್ಥಳಕ್ಕೆ ಸ್ಥಳಾಂತರಿಸಿ ರಸ್ತೆಗಳನ್ನು ಸ್ವಚ್ಛಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು. ಗಟಾರ ದುರಸ್ತಿ ಕಾರ್ಯವನ್ನೂ ತ್ವರಿತವಾಗಿ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಇಂದ್ರವನ ರದ್ದುಪಡಿಸಿ ಎಸ್.ಎಂ. ಕೃಷ್ಣಾ ನಗರದವರೆಗೆ ರಸ್ತೆ ನಿರ್ಮಿಸಬೇಕು. ಈ ಕುರಿತು ನಗರಸಭೆ, ಪೊಲೀಸ್ ಇಲಾಖೆ, ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.

ಹೊಂಡ-ಗುಂಡಿಗಳ ರಸ್ತೆಯಲ್ಲಿ ಬಡಾವಣೆಯ ನರಕಯಾತನೆ!

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದ ಹುಬ್ಬಳ್ಳಿ ರಸ್ತೆಯ ಪಕ್ಕದಲ್ಲಿರುವ ಮಲ್ಲಾಡದ ಕಾಲೋನಿ, ಅಗ್ನಿ ಸೋಮೇಶ್ವರ ನಗರ ಹಾಗೂ ಯಲಿಗಾರ ಬಡಾವಣೆಯ ರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದು, ಮಳೆ ಬಂದರೆ ರಸ್ತೆಯೋ ಕೆಸರಿನ ಹೊಂಡವೋ ಎಂಬಂತಾಗುತ್ತಿದೆ. ರಸ್ತೆ ದುರಸ್ತಿ ಸೇರಿದಂತೆ ಮೂಲಸೌಕರ್ಯ ಕಲ್ಪಿಸುವಂತೆ ಆಗ್ರಹಿಸಿ ಬಡಾವಣೆಯ ನಿವಾಸಿಗಳು ಗುರುವಾರ ಪುರಸಭೆಗೆ ತೆರಳಿ ಮುಖ್ಯಾಧಿಕಾರಿ ಪರಶುರಾಮ ಗುಡದಾರಿ ಅವರಿಗೆ ಮನವಿ ಸಲ್ಲಿಸಿದರು.

ಕಳೆದ ೮-೧೦ ವರ್ಷಗಳಿಂದ ಬಡಾವಣೆಯಲ್ಲಿ ವಾಸಿಸುತ್ತಿರುವ ನಿವಾಸಿಗಳು ಮನೆ ಹಾಗೂ ನೀರಿನ ಕರವನ್ನು ನಿಯಮಿತವಾಗಿ ಪಾವತಿಸುತ್ತಿದ್ದರೂ, ಬಡಾವಣೆಗೆ ಮಾತ್ರ ಸಮರ್ಪಕ ರಸ್ತೆ ಸೌಲಭ್ಯ ಕಲ್ಪಿಸಿಲ್ಲ ಎಂದು ನಿವೃತ್ತ ಶಿಕ್ಷಕ ಅರುಣಾಚಲ ಮಠದ ಹಾಗೂ ಯುವ ಮುಖಂಡ ಭೂಪಾಲ ಘೋಂಗಡಿ ಅಸಮಾಧಾನ ವ್ಯಕ್ತಪಡಿಸಿದರು.

ಮುಖ್ಯ ಹಾಗೂ ಉಪರಸ್ತೆಗಳು ಸಂಪೂರ್ಣ ಹಾಳಾಗಿದ್ದು, ರಸ್ತೆಯುದ್ದಕ್ಕೂ ದೊಡ್ಡ ದೊಡ್ಡ ಗುಂಡಿಗಳು ಬಿದ್ದಿವೆ. ಮಳೆಗಾಲದಲ್ಲಿ ಗುಂಡಿಗಳಲ್ಲಿ ನೀರು ನಿಂತು ಕೆಸರು ತುಂಬಿಕೊಳ್ಳುವುದರಿಂದ ಸಾರ್ವಜನಿಕರು ಹಾಗೂ ವಾಹನ ಸವಾರರು ಸಂಚರಿಸಲು ಪರದಾಡುತ್ತಿದ್ದಾರೆ. ಶಾಲಾ ವಿದ್ಯಾರ್ಥಿಗಳು ಇದೇ ರಸ್ತೆಯಲ್ಲಿ ಪ್ರತಿದಿನ ಸಂಚರಿಸುತ್ತಿದ್ದು, ಕೆಲವರು ಕೆಸರಿನಲ್ಲಿ ಬಿದ್ದು ಶಾಲೆಗೆ ಹೋಗಲಾಗದೆ ಮನೆಗೆ ಮರಳಿದ ಉದಾಹರಣೆಗಳಿವೆ ಎಂದು ನಿವಾಸಿಗಳು ದೂರಿದರು.

ರಸ್ತೆ ಹದಗೆಟ್ಟಿರುವುದರಿಂದ ಕಸ ಸಾಗಿಸುವ ವಾಹನ, ಆಟೊ, ಶಾಲಾ ವಾಹನ ಸೇರಿದಂತೆ ಹಲವು ವಾಹನಗಳು ಮನೆಗಳವರೆಗೆ ಬರುತ್ತಿಲ್ಲ. ಇದರಿಂದ ವೃದ್ಧರು, ಮಕ್ಕಳು ಹಾಗೂ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುವಂತಾಗಿದೆ. ಬಡಾವಣೆಯ ಚರಂಡಿಗಳ ಸ್ವಚ್ಛತಾ ಕಾರ್ಯವೂ ಸಮರ್ಪಕವಾಗಿ ನಡೆಯುತ್ತಿಲ್ಲ ಎಂದು ಅವರು ಆರೋಪಿಸಿದರು.

ಮನವಿ ಸ್ವೀಕರಿಸಿದ ಪುರಸಭೆ ಮುಖ್ಯಾಧಿಕಾರಿ ಪರಶುರಾಮ ಗುಡದಾರಿ ಮಾತನಾಡಿ, ಪಟ್ಟಣದ ಅನೇಕ ಬಡಾವಣೆಗಳಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಬೇಕಿದೆ. ಮುಖ್ಯಮಂತ್ರಿಗಳ ವಿಶೇಷ ನಿಧಿಯಲ್ಲಿ ಎಲ್ಲ ಬಡಾವಣೆಗಳ ಅಭಿವೃದ್ಧಿ ಕಾಮಗಾರಿಗಳ ನೀಲನಕ್ಷೆ ಸಿದ್ಧಪಡಿಸಲಾಗಿದೆ. ಆದಷ್ಟು ಶೀಘ್ರ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಎಸ್.ಎ. ಬಣಗಾರ, ಜೆ.ಪಿ. ಕಡೆಮನಿ, ಡಿ.ಪಿ. ನದಾಫ, ಶ್ರೀಕಾಂತ ಕದಡಿ, ಜೆ.ಪಿ. ಕರಮಡಿ, ಎಚ್.ವೈ. ಹಂಜಗಿ, ಬಸವರಾಜ ಬೆಲಹುಣಸಿ, ನೀಲಕಂಠಪ್ಪ ದ್ಯಾಮಣಸಿ, ವಿಜಯ ಹಿರೇಮಠ, ಶ್ರೀಪಾಲ ಘೋಂಗಡಿ, ತಮ್ಮನಗೌಡ ಪಾಟೀಲ, ಟಿಪ್ಪೂಸಾಬ್ ನದಾಫ, ಆಕಾಶ ದೇಶಪಾಂಡೆ, ನಾಗರತ್ನ ಮಠದ, ಹೇಮಾ ಕದಡಿ, ಮಂಜುಳಾ ಘೋಂಗಡಿ ಸೇರಿದಂತೆ ಹಲವರು ಇದ್ದರು.

ಮನವಿ ಕೊಟ್ಟರೂ ಕ್ರಮವಿಲ್ಲ; ೩೦ ದಿನದ ಗಡುವು

ರಸ್ತೆ ಮತ್ತು ಚರಂಡಿ ಸಮಸ್ಯೆ ಕುರಿತು ಈಗಾಗಲೇ ಹಲವು ಬಾರಿ ಲಿಖಿತವಾಗಿ ಮನವಿ ಸಲ್ಲಿಸಿದ್ದೇವೆ. ಆದರೂ ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಮುಂದಿನ ೩೦ ದಿನಗಳೊಳಗೆ ಸಮಸ್ಯೆ ಪರಿಹರಿಸದಿದ್ದರೆ ನಿವಾಸಿಗಳೆಲ್ಲರೂ ಸೇರಿ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.

Gold Silver Rate Hike Today: ಮತ್ತೆ ಏರಿಕೆ ಕಂಡ ಚಿನ್ನ, ಬೆಳ್ಳಿ ದರ! 10 ಗ್ರಾಂ ಚಿನ್ನದ ಬೆಲೆ ಎಷ್ಟಿದೆ ಗೊತ್ತಾ?

0

ನವದೆಹಲಿ: ಅಮೆರಿಕ ಡಾಲರ್ ದುರ್ಬಲತೆ, ಅಮೆರಿಕದ ಬಡ್ಡಿದರಗಳಲ್ಲಿನ ಬದಲಾವಣೆ ಹಾಗೂ ಸುರಕ್ಷಿತ ಹೂಡಿಕೆಯ ಹುಡುಕಾಟ ಸೇರಿದಂತೆ ಹಲವು ಕಾರಣಗಳಿಂದ ಚಿನ್ನ ಮತ್ತು ಬೆಳ್ಳಿಯ ದರದಲ್ಲಿ ಮತ್ತೆ ಏರಿಕೆ ಕಂಡುಬಂದಿದೆ. ಮಲ್ಟಿ ಕಮಾಡಿಟಿ ಎಕ್ಸ್‌ಚೇಂಜ್ (ಎಂಸಿಎಕ್ಸ್)ನಲ್ಲಿ ಫ್ಯೂಚರ್ ಚಿನ್ನ ಮತ್ತು ಬೆಳ್ಳಿ ದರ ಏರಿಕೆಯಾಗಿದೆ.

ಶುಕ್ರವಾರ ಮಧ್ಯಾಹ್ನ 3:10ರ ವೇಳೆಗೆ ಚಿನ್ನದ (Gold) ಫ್ಯೂಚರ್ಸ್ ಬೆಲೆ 10 ಗ್ರಾಂಗೆ ಸುಮಾರು 1,61,196 ರೂ.ಗೆ ತಲುಪಿತ್ತು. ಹಿಂದಿನ ಮುಕ್ತಾಯದ ಬೆಲೆಗೆ ಹೋಲಿಸಿದರೆ 1,771 ರೂ. ಅಥವಾ 1.11% ಏರಿಕೆ ದಾಖಲಾಗಿದೆ.

ಇದೇ ವೇಳೆ ಬೆಳ್ಳಿ (Silver) ಫ್ಯೂಚರ್ಸ್ ಕೂಡ ಏರಿಕೆ ಕಂಡಿದ್ದು, ಕೆಜಿಗೆ ಸುಮಾರು 2,46,371 ರೂ.ಗೆ ವಹಿವಾಟು ನಡೆದಿದೆ. ಹಿಂದಿನ ಬೆಲೆಗೆ ಹೋಲಿಸಿದರೆ 3,128 ರೂ. ಅಥವಾ 1.29% ಏರಿಕೆ ದಾಖಲಾಗಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಕಳೆದ 3 ತಿಂಗಳ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದ್ದು, ಸತತ ಮೂರನೇ ವಾರವೂ ಚಿನ್ನದ ಬೆಲೆಯಲ್ಲಿ ಏರಿಕೆ ಕಂಡುಬಂದಿದೆ. ಇದಕ್ಕೂ ಮೊದಲು ಇದೇ ವರ್ಷದ ಜನವರಿಯಲ್ಲಿ ಭಾರತದಲ್ಲಿ ಚಿನ್ನದ ಬೆಲೆ 10 ಗ್ರಾಂಗೆ ಸುಮಾರು 1.80 ಲಕ್ಷ ರೂ. ದಾಖಲೆ ಮಟ್ಟಕ್ಕೆ ತಲುಪಿತ್ತು. ಬೆಳ್ಳಿ ಬೆಲೆಯೂ ಪ್ರತಿ ಕೆ.ಜಿಗೆ ಸುಮಾರು 4.25 ಲಕ್ಷ ರೂ. ಗರಿಷ್ಠ ಮಟ್ಟ ಕಂಡಿತ್ತು.

ಕಾಂಗ್ರೆಸ್ ಭ್ರಷ್ಟಾಚಾರ ಖಂಡಿಸಿ ಬಿಜೆಪಿಯಿಂದ 20 ದಿನಗಳ ಪಾದಯಾತ್ರೆ, ಶ್ರೀರಾಮುಲುಗೆ ಸಂಘಟನಾ ಹೊಣೆ

0

ಬೆಂಗಳೂರು: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಬಹುಕೋಟಿ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಬಿ. ನಾಗೇಂದ್ರ ಅವರ ರಾಜೀನಾಮೆಗೆ ಆಗ್ರಹಿಸಿ, ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರವನ್ನು ಖಂಡಿಸಿ ರಾಜ್ಯ ಬಿಜೆಪಿ ಬೃಹತ್ ಪಾದಯಾತ್ರೆ ನಡೆಸಲು ಸಜ್ಜಾಗಿದೆ.

ಬಿಜೆಪಿ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಬಿಜೆಪಿ ನಾಯಕ ಬಿ. ಶ್ರೀರಾಮುಲು, ಪಾದಯಾತ್ರೆಯ ರೂಪುರೇಷೆಗಳ ಬಗ್ಗೆ ಪಕ್ಷದ ಮಟ್ಟದಲ್ಲಿ ತೀವ್ರ ಚರ್ಚೆಗಳು ನಡೆಯುತ್ತಿವೆ ಎಂದು ತಿಳಿಸಿದರು. ಇನ್ನೆರಡು ದಿನಗಳಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಅಧಿಕೃತ ದಿನಾಂಕ ಮತ್ತು ಸಂಪೂರ್ಣ ವಿವರಗಳನ್ನು ಪ್ರಕಟಿಸಲಿದ್ದಾರೆ ಎಂದು ಅವರು ಹೇಳಿದರು.

ದಾವಣಗೆರೆ ಜಿಲ್ಲೆಯ ಜಗಳೂರು ವಿಧಾನಸಭಾ ಕ್ಷೇತ್ರದಿಂದ ಆರಂಭವಾಗಲಿರುವ ಈ ಪಾದಯಾತ್ರೆ ಬಳ್ಳಾರಿಯವರೆಗೆ ಸಾಗಲಿದ್ದು, ಸುಮಾರು 170 ಕಿಲೋಮೀಟರ್ ವ್ಯಾಪ್ತಿಯನ್ನು ಒಳಗೊಂಡಿರಲಿದೆ. ಒಟ್ಟು 20 ದಿನಗಳ ಕಾಲ ನಡೆಯಲಿರುವ ಈ ಯಾತ್ರೆಗೆ ಮುಂದಿನ ವಾರಾಂತ್ಯದಲ್ಲಿ ಚಾಲನೆ ನೀಡಲು ಸಿದ್ಧತೆಗಳು ನಡೆದಿವೆ.

ಜಗಳೂರಿನಲ್ಲಿ ನಡೆಯಲಿರುವ ಉದ್ಘಾಟನಾ ಸಮಾರಂಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಪಕ್ಷ ನಾಯಕರು ಸೇರಿದಂತೆ ರಾಜ್ಯದ ಪ್ರಮುಖ ಮುಖಂಡರು ಭಾಗವಹಿಸಲಿದ್ದಾರೆ. ಸಹಸ್ರಾರು ಸಂಖ್ಯೆಯಲ್ಲಿ ಜನರನ್ನು ಸೇರಿಸುವ ಗುರಿಯನ್ನು ಪಕ್ಷ ಹೊಂದಿದೆ.

ಇಡೀ 170 ಕಿ.ಮೀ ಉದ್ದದ ಪಾದಯಾತ್ರೆಯ ಸಂಪೂರ್ಣ ಸಂಘಟನೆ ಮತ್ತು ಉಸ್ತುವಾರಿಯ ಹೊಣೆಯನ್ನು ಮಾಜಿ ಸಚಿವ ಶ್ರೀರಾಮುಲು ಅವರೇ ವಹಿಸಿಕೊಳ್ಳಲಿದ್ದಾರೆ.

ವಿಪಕ್ಷಗಳ ಪ್ರತಿಭಟನೆ ನಡುವೆಯೇ ನಾಗೇಂದ್ರಗೆ ಹೆಚ್ಚುವರಿ ಖಾತೆ ನೀಡಿದ ಸರ್ಕಾರ!

0

ಬೆಂಗಳೂರು: ಸಚಿವ ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ವಿಧಾನ ಪರಿಷತ್‌ನಲ್ಲಿ ವಿಪಕ್ಷಗಳ ಪ್ರತಿಭಟನೆ ಐದನೇ ದಿನಕ್ಕೆ ಕಾಲಿಟ್ಟಿದೆ. ಇದರ ನಡುವೆಯೇ ಸರ್ಕಾರ ನಾಗೇಂದ್ರಗೆ ಹೆಚ್ಚುವರಿ ಖಾತೆ ನೀಡಿರುವುದು ವಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದೆ. ಯೋಜನೆ ಮತ್ತು ಸಾಂಖ್ಯಿಕ ಖಾತೆಯ ಜೊತೆಗೆ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಇಲಾಖೆಯ ಜವಾಬ್ದಾರಿಯನ್ನೂ ಅವರಿಗೆ ವಹಿಸಲಾಗಿದೆ.

ಇಂದು ಸದನ ಆರಂಭವಾಗುತ್ತಿದ್ದಂತೆ ಸಭಾಪತಿ ಸಲೀಂ ಅಹಮದ್ ಪ್ರತಿಕ್ರಿಯಿಸಿ, ಐದು ದಿನಗಳಿಂದ ಕಲಾಪ ಸರಿಯಾಗಿ ನಡೆಯುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಈ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗುತ್ತಿದ್ದು, ರಾಜ್ಯದ ಜನರು ಸದನದ ಕಾರ್ಯಕಲಾಪವನ್ನು ಗಮನಿಸುತ್ತಿದ್ದಾರೆ ಎಂದು ತಿಳಿಸಿದ ಅವರು, ಚರ್ಚೆಗೆ ಬಾಕಿಯಿರುವ ಹಲವು ವಿಚಾರಗಳ ಹಿನ್ನೆಲೆಯಲ್ಲಿ ಸುಗಮ ಕಲಾಪಕ್ಕೆ ಅವಕಾಶ ನೀಡುವಂತೆ ಸದಸ್ಯರಲ್ಲಿ ಮನವಿ ಮಾಡಿದರು.

ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ನಾಗೇಂದ್ರ ರಾಜೀನಾಮೆ ನೀಡುವವರೆಗೂ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಆರೋಗ್ಯ ಸಚಿವ ಯು.ಟಿ.ಖಾದರ್, ನಾಗೇಂದ್ರ ರಾಜೀನಾಮೆ ವಿಚಾರವಾಗಿ ಸದನದಲ್ಲೇ ಚರ್ಚೆ ನಡೆಸಬೇಕೆ ಹೊರತು ಪ್ರತಿಭಟನೆ ಮಾಡುವುದು ಸರಿಯಲ್ಲ ಎಂದರು. ರಾಜ್ಯಪಾಲರು ಪ್ರಮಾಣ ವಚನ ಸ್ವೀಕಾರಕ್ಕೆ ಅವಕಾಶ ಮಾಡಿಕೊಟ್ಟಿರುವ ಹಿನ್ನೆಲೆಯಲ್ಲಿ ಈ ರೀತಿಯ ಪ್ರತಿಭಟನೆ ಸೂಕ್ತವಲ್ಲ ಎಂದು ಅಭಿಪ್ರಾಯಪಟ್ಟರು.

ವಿಪಕ್ಷಗಳು ಪ್ರತಿಭಟನೆ ಹಿಂಪಡೆಯದ ಕಾರಣ ಗದ್ದಲದ ನಡುವೆಯೇ ಪ್ರಶ್ನೋತ್ತರ ಕಲಾಪ ನಡೆಯಿತು. ಈ ವೇಳೆ ‘ಗೋವಿಂದ ಗೋವಿಂದ’ ಘೋಷಣೆ ಕೂಗಿದ ವಿಪಕ್ಷ ಸದಸ್ಯರು, ಅಣಕು ಗೀತೆ ಹಾಡುವ ಮೂಲಕ ಸರ್ಕಾರದ ವಿರುದ್ಧ ಒತ್ತಡ ಹೇರಿದರು.

ವಂದೇ ಮಾತರಂ ವಿವಾದ: ಪೂರ್ತಿ ಹಾಡಿದ್ರೆ ರಾಜೀನಾಮೆ ಕೊಡ್ತೀನಿ – ಮೋದಿ, ಅಮಿತ್ ಶಾಗೆ ಪ್ರಿಯಾಂಕ್ ಖರ್ಗೆ ಸವಾಲ್

0

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಟೆಲಿಪ್ರಾಂಪ್ಟರ್‌ ಬಳಸದೆ ವಂದೇ ಮಾತರಂ ಗೀತೆಯನ್ನು ಸಂಪೂರ್ಣವಾಗಿ ಹಾಡಿ ತೋರಿಸಿದರೆ ತಾನು ರಾಜೀನಾಮೆ ನೀಡುವುದಾಗಿ ಸಚಿವ ಪ್ರಿಯಾಂಕ್ ಖರ್ಗೆ ಸವಾಲು ಹಾಕಿದ್ದಾರೆ.

ವಂದೇ ಮಾತರಂ ಗೀತೆಯ ಎರಡು ಪ್ಯಾರಗಳನ್ನು ಮಾತ್ರ ಹಾಡುವ ಕಾಂಗ್ರೆಸ್‌ನ ನಿರ್ಧಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, 1937ರಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್, ಜವಾಹರಲಾಲ್ ನೆಹರೂ, ಸುಭಾಷ್ ಚಂದ್ರ ಬೋಸ್ ಹಾಗೂ ರವೀಂದ್ರನಾಥ ಟ್ಯಾಗೋರ್ ಸೇರಿದಂತೆ ಪ್ರಮುಖ ನಾಯಕರು ಚರ್ಚಿಸಿ ಎರಡು ಪ್ಯಾರಗಳನ್ನು ಹಾಡುವ ನಿರ್ಧಾರಕ್ಕೆ ಬಂದಿದ್ದರು. ಅದನ್ನೇ ಕಾಂಗ್ರೆಸ್ ಮುಂದುವರಿಸಿಕೊಂಡು ಬಂದಿದೆ ಎಂದು ಹೇಳಿದರು.

ಬಿಜೆಪಿ ನಾಯಕರು ವಂದೇ ಮಾತರಂ ಗೀತೆಯನ್ನು ಸಂಪೂರ್ಣವಾಗಿ ಹಾಡಿ ತೋರಿಸಲಿ. ಅವರಿಗೆ ಸಂಪೂರ್ಣ ಗೀತೆ ಬರುತ್ತದೆಯೇ ಎಂಬುದನ್ನು ನೋಡೋಣ ಎಂದು ಪ್ರಿಯಾಂಕ್ ಖರ್ಗೆ ವ್ಯಂಗ್ಯವಾಡಿದರು. ಕನಿಷ್ಠ ಮೊದಲ ಎರಡು ಪ್ಯಾರಗಳನ್ನಾದರೂ ಹಾಡಿ ತೋರಿಸಲಿ ಎಂದು ಸವಾಲು ಹಾಕಿದರು.

ಇದೇ ವೇಳೆ ಆರ್‌ಎಸ್‌ಎಸ್‌ ವಿರುದ್ಧವೂ ವಾಗ್ದಾಳಿ ನಡೆಸಿದ ಅವರು, ದೇಶಭಕ್ತಿಯ ಬಗ್ಗೆ ಮಾತನಾಡುವವರು ಆರ್‌ಎಸ್‌ಎಸ್‌ ಶಾಖೆಗಳಲ್ಲಿ ‘ನಮಸ್ತೇ ಸದಾ ವತ್ಸಲೇ’ ಬದಲಿಗೆ ವಂದೇ ಮಾತರಂ ಹಾಡಲಿ. ರಾಷ್ಟ್ರಧ್ವಜಕ್ಕೆ ಗೌರವ ಸಲ್ಲಿಸಿ ಬಳಿಕ ದೇಶಭಕ್ತಿಯ ಬಗ್ಗೆ ಮಾತನಾಡಲಿ ಎಂದು ಹೇಳಿದರು.

ಸ್ವಾತಂತ್ರ್ಯ ಹೋರಾಟದಲ್ಲಿ ಬಿಜೆಪಿ ಹಾಗೂ ಆರ್‌ಎಸ್‌ಎಸ್‌ನ ಕೊಡುಗೆ ಏನು ಎಂದು ಪ್ರಶ್ನಿಸಿದ ಪ್ರಿಯಾಂಕ್ ಖರ್ಗೆ, ನೆಹರೂ, ಪಟೇಲ್, ಬೋಸ್ ಹಾಗೂ ಟ್ಯಾಗೋರ್ ಅವರಂತಹ ನಾಯಕರ ದೇಶಭಕ್ತಿಯನ್ನು ಪ್ರಶ್ನಿಸುವುದು ಸರಿಯಲ್ಲ ಎಂದರು.

ಇದೇ ವೇಳೆ, ನೀಟ್‌ ಪ್ರಶ್ನೆಪತ್ರಿಕೆ ಸೋರಿಕೆ, ಪಿಎಂ ಕೇರ್ಸ್‌ ಫಂಡ್‌, ರಾಮಮಂದಿರ ಚಂದಾ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚೆಯಾಗದಂತೆ ಮಾಡಲು ವಂದೇ ಮಾತರಂ ವಿಚಾರವನ್ನು ಮುನ್ನೆಲೆಗೆ ತರಲಾಗಿದೆ ಎಂದು ಆರೋಪಿಸಿದರು. ಜೆನ್‌-ಝಡ್‌ ಪ್ರತಿಭಟನೆ, ವಿದೇಶಾಂಗ ನೀತಿ ಹಾಗೂ ರೈತರ ಸಮಸ್ಯೆಗಳ ಬಗ್ಗೆಯೂ ಕೇಂದ್ರ ಸರ್ಕಾರ ಉತ್ತರ ನೀಡಬೇಕು ಎಂದು ಆಗ್ರಹಿಸಿದರು.

ಬಾಲಕಿಗೆ ಲೈಂಗಿಕ ಕಿರುಕುಳ ಆರೋಪ: ಭಾಗ್ಯವಂತಿ ಮಠದ ಪೂಜಾರಿ ವಿರುದ್ಧ ಪೋಕ್ಸೋ ಕೇಸ್

0

ಯಾದಗಿರಿ: ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಭಾಗ್ಯವಂತಿ ಮಠದ ಪೂಜಾರಿ ಅಣ್ಣಪ್ಪ ರೈಟರ್ ವಿರುದ್ಧ ಯಾದಗಿರಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ನೀಡಿದ ದೂರಿನ ಹಿನ್ನೆಲೆಯಲ್ಲಿ ಪೊಲೀಸರು BNS ಹಾಗೂ POCSO ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸುರಪುರ ತಾಲೂಕಿನ ಗ್ರಾಮವೊಂದಕ್ಕೆ ಸೇರಿದ ಬಾಲಕಿ ಹಾಗೂ ಆಕೆಯ ತಂಗಿಯನ್ನು ಆಗಸ್ಟ್ 18ರಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಮತ್ತು ಅಕ್ಕ ಪಡೆ ಸಿಬ್ಬಂದಿ ಸಕ್ರ್ಯ ನಾಯಕ ತಾಂಡಾ ಸಮೀಪದ ಭಾಗ್ಯವಂತಿ ಮಠದಿಂದ ರಕ್ಷಿಸಿದ್ದರು.

ರಕ್ಷಿಸಿದ ಬಳಿಕ ಬಾಲಕಿಯರನ್ನು ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರುಪಡಿಸಿ ವಿಚಾರಣೆ ನಡೆಸಲಾಗಿತ್ತು. ಆಪ್ತ ಸಮಾಲೋಚನೆ ವೇಳೆ ಬಾಲಕಿಯೊಬ್ಬಳು ಪೂಜಾರಿ ಅಣ್ಣಪ್ಪ ರೈಟರ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಾಲಕಿಯ ತಾಯಿ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಇಬ್ಬರು ಮಕ್ಕಳನ್ನು ಸಂಬಂಧಿಕರ ಬಳಿ ಬಿಟ್ಟಿದ್ದರು ಎನ್ನಲಾಗಿದೆ. ಬಳಿಕ ಬಾಲಕಿಯರನ್ನು ಮಠದ ಪೂಜಾರಿ ಬಳಿ ಇರಿಸಲಾಗಿತ್ತು. ಈ ಸಂದರ್ಭದಲ್ಲಿ ಆರೋಪಿ ಲೈಂಗಿಕ ದುರುದ್ದೇಶದಿಂದ ತನ್ನೊಂದಿಗೆ ಅಸಹ್ಯವಾಗಿ ವರ್ತಿಸಿದ್ದಾನೆ ಎಂದು ಬಾಲಕಿ ಹೇಳಿಕೆ ನೀಡಿದ್ದಾಳೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಆಗಸ್ಟ್ 20ರಂದು ನಡೆದ ಆಪ್ತ ಸಮಾಲೋಚನೆಯಲ್ಲಿ ಬಾಲಕಿ ನೀಡಿದ ಮಾಹಿತಿಯ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಆರೋಪಿ ವಿರುದ್ಧ BNS ಕಲಂ 75(2) ಹಾಗೂ POCSO ಕಾಯ್ದೆಯ ಕಲಂ 8 ಮತ್ತು 10ರ ಅಡಿ ಪ್ರಕರಣ ದಾಖಲಾಗಿದ್ದು, ಘಟನೆಯ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಖ್ಯಾತ ನಟಿ ಪದ್ಮಶ್ರೀ ಪುರಸ್ಕೃತೆ ಸಾಹುಕಾರ್ ಜಾನಕಿ ಇನ್ನಿಲ್ಲ

ಚೆನ್ನೈ: ದಕ್ಷಿಣ ಭಾರತೀಯ ಚಿತ್ರರಂಗದ ಹಿರಿಯ ನಟಿ ಹಾಗೂ ಪದ್ಮಶ್ರೀ ಪುರಸ್ಕೃತೆ ಸಾಹುಕಾರ್ ಜಾನಕಿ ಇನ್ನು ನೆನಪು ಮಾತ್ರ. ವಯೋಸಹಜ ಆರೋಗ್ಯ ಸಮಸ್ಯೆ ಮತ್ತು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ 95 ವರ್ಷದ ನಟಿ, ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆರೋಗ್ಯ ಸ್ಥಿತಿ ಗಂಭೀರಗೊಂಡ ಹಿನ್ನೆಲೆಯಲ್ಲಿ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ನಿಧನರಾಗಿದ್ದಾರೆ.

1931ರಲ್ಲಿ ಆಂಧ್ರಪ್ರದೇಶದಲ್ಲಿ ಜನಿಸಿದ ಸಾಹುಕಾರ್ ಜಾನಕಿ ಮೂಲತಃ ಕನ್ನಡಿಗರಾಗಿದ್ದು, ನಾಲ್ಕು ದಶಕಗಳಿಗೂ ಹೆಚ್ಚು ಕಾಲ ದಕ್ಷಿಣ ಭಾರತದ ವಿವಿಧ ಭಾಷೆಗಳ ಸಿನಿಮಾಗಳಲ್ಲಿ ತಮ್ಮ ಅಭಿನಯದ ಛಾಪು ಮೂಡಿಸಿದ್ದರು.

1950ರಲ್ಲಿ ‘ಸಾಹುಕಾರ್’ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಅವರು, ಆ ಸಿನಿಮಾದ ಯಶಸ್ಸಿನಿಂದಲೇ ‘ಸಾಹುಕಾರ್ ಜಾನಕಿ’ ಎಂಬ ಹೆಸರಿನಿಂದ ಖ್ಯಾತರಾದರು. ಬಳಿಕ ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಚಿತ್ರರಂಗಗಳಲ್ಲಿ ನೂರಾರು ಸಿನಿಮಾಗಳಲ್ಲಿ ಅಭಿನಯಿಸಿ ಅಪಾರ ಅಭಿಮಾನಿ ಬಳಗ ಸಂಪಾದಿಸಿದ್ದರು.

ಕನ್ನಡದಲ್ಲಿ ‘ಮಹಿಷಾಸುರ ಮರ್ದಿನಿ’, ‘ಸಾಕುಮಗಳು’, ‘ಕನ್ಯಾರತ್ನ’, ‘ಗೌರಿ’, ‘ರತ್ನಗಿರಿ ರಹಸ್ಯ’, ‘ನವಕೋಟಿ ನಾರಾಯಣ’, ‘ನಿರಪರಾಧಿ’ ಹಾಗೂ ‘ಮನಸಾಕ್ಷಿ’ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದರು. ಡಾ. ರಾಜ್‌ಕುಮಾರ್ ಅವರೊಂದಿಗೆ ನಾಯಕಿಯಾಗಿ ತೆರೆ ಹಂಚಿಕೊಂಡಿದ್ದ ಅವರು, ‘ಶಬ್ದವೇಧಿ’ಯಲ್ಲಿ ತಾಯಿಯ ಪಾತ್ರದ ಮೂಲಕವೂ ಗಮನ ಸೆಳೆದಿದ್ದರು.

ತಮಿಳಿನಲ್ಲಿ ‘ವಲಯಪತಿ’ ಮೂಲಕ ವೃತ್ತಿಜೀವನ ಆರಂಭಿಸಿದ ಸಾಹುಕಾರ್ ಜಾನಕಿ, ‘ಪನಮ್ ಪಡುತುಂ ಪಾಡು’, ‘ಪುತಿಯ ಪರವೈ’, ‘ನೀರ್ಕುಮಿಝಿ’, ‘ಇರು ಕೋಡುಗಲ್’, ‘ದಿಲ್ಲು ಮುಲ್ಲು’ ಸೇರಿದಂತೆ ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದರು. ‘ಬಿಸ್ಕೋತ್’ ಅವರ ಕೊನೆಯ ತಮಿಳು ಚಿತ್ರವಾಗಿತ್ತು.

ಕೇವಲ ಬೆಳ್ಳಿತೆರೆಗೆ ಸೀಮಿತವಾಗದೆ ಕಿರುತೆರೆಯಲ್ಲೂ ಕಾಣಿಸಿಕೊಂಡಿದ್ದ ಸಾಹುಕಾರ್ ಜಾನಕಿ ಅವರ ಸುದೀರ್ಘ ಕಲಾ ಸೇವೆಗೆ 2022ರಲ್ಲಿ ಕೇಂದ್ರ ಸರ್ಕಾರ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತ್ತು.

ಸಾಹುಕಾರ್ ಜಾನಕಿ ಅವರ ನಿಧನಕ್ಕೆ ಚಿತ್ರರಂಗದ ಗಣ್ಯರು ಹಾಗೂ ಅಭಿಮಾನಿಗಳು ಸಂತಾಪ ಸೂಚಿಸುತ್ತಿದ್ದಾರೆ.

ಯಶ್ ‘ಟಾಕ್ಸಿಕ್’ಗೆ ಅಡ್ವಾನ್ಸ್ ಬುಕಿಂಗ್‌ನಲ್ಲೇ ಬಿಗ್ ರೆಸ್ಪಾನ್ಸ್: ಕರ್ನಾಟಕದಲ್ಲಿ ₹5 ಕೋಟಿ ಗಡಿ ಸಮೀಪ!

ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ ಸಿನಿಮಾ ಬಿಡುಗಡೆಯ ಮುನ್ನವೇ ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡಲು ಆರಂಭಿಸಿದೆ. ನಾಲ್ಕೂವರೆ ವರ್ಷಗಳ ಬಳಿಕ ಯಶ್ ಅವರನ್ನು ತೆರೆಮೇಲೆ ಕಾಣಲು ಕಾದಿರುವ ಅಭಿಮಾನಿಗಳ ಕ್ರೇಜ್ ಇದೀಗ ಅಡ್ವಾನ್ಸ್ ಟಿಕೆಟ್ ಬುಕಿಂಗ್‌ನಲ್ಲೇ ಸ್ಪಷ್ಟವಾಗಿ ಗೋಚರಿಸುತ್ತಿದೆ.

ಭಾರತದಲ್ಲಿ ಅಡ್ವಾನ್ಸ್ ಬುಕಿಂಗ್ ಆರಂಭವಾದ ಕೆಲವೇ ಗಂಟೆಗಳಲ್ಲಿ ಬುಕ್‌ಮೈಶೋನಲ್ಲಿ 1 ಲಕ್ಷಕ್ಕೂ ಹೆಚ್ಚು ಟಿಕೆಟ್‌ಗಳು ಮಾರಾಟವಾಗಿವೆ. ಆರಂಭಿಕ ಒಂದು ಗಂಟೆಯಲ್ಲಿ ಸುಮಾರು 3,050 ಟಿಕೆಟ್‌ಗಳು ಮಾರಾಟವಾಗಿದ್ದರೆ, ಬೆಳಗ್ಗೆ 10ರಿಂದ 11ರ ಅವಧಿಯಲ್ಲಿ ಒಂದೇ ಗಂಟೆಯಲ್ಲಿ ಸುಮಾರು 27,000 ಟಿಕೆಟ್‌ಗಳು ಬುಕ್ ಆಗಿವೆ.

ಕರ್ನಾಟಕದಲ್ಲಿ ಚಿತ್ರದ ಕ್ರೇಜ್ ಇನ್ನಷ್ಟು ಜೋರಾಗಿದೆ. ಬಿಡುಗಡೆಗೆ ಐದು ದಿನಗಳ ಮುನ್ನವೇ ರಾಜ್ಯದ ಮುಂಗಡ ಬುಕಿಂಗ್ ₹5 ಕೋಟಿಯ ಗಡಿ ತಲುಪುವ ಹಂತದಲ್ಲಿದೆ. ಶೋ ಹಾಗೂ ಸ್ಕ್ರೀನ್‌ಗಳ ಸಂಖ್ಯೆ ಇನ್ನೂ ಅಂತಿಮಗೊಳ್ಳುತ್ತಿರುವುದರಿಂದ ಬುಕಿಂಗ್ ಮೊತ್ತ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ.

ಅಮೆರಿಕದಲ್ಲೂ ‘ಟಾಕ್ಸಿಕ್’ ಮುಂಗಡ ಬುಕಿಂಗ್ ಗಮನ ಸೆಳೆಯುತ್ತಿದೆ. 260 ಸ್ಥಳಗಳಲ್ಲಿ 709 ಪ್ರದರ್ಶನಗಳಿಂದ 7,545 ಟಿಕೆಟ್‌ಗಳು ಮಾರಾಟವಾಗಿದ್ದು, ಒಟ್ಟು $163,150 ವ್ಯವಹಾರ ನಡೆದಿದೆ. ಪ್ರಸ್ತುತ ಆಕ್ಯುಪೆನ್ಸಿ ಶೇ.9ರಷ್ಟಿದೆ.

ಅಮೆರಿಕದಲ್ಲಿ ಬರೋಬ್ಬರಿ 2,000 ಸ್ಕ್ರೀನ್‌ಗಳಲ್ಲಿ ಸಿನಿಮಾ ಬಿಡುಗಡೆ ಮಾಡುವ ಗುರಿ ಹೊಂದಲಾಗಿದೆ. ಸದ್ಯ ಸುಮಾರು 700 ಪ್ರದರ್ಶನಗಳು ಮಾತ್ರ ಬುಕಿಂಗ್‌ಗೆ ತೆರೆದಿದ್ದು, ಎಎಂಸಿ ಸೇರಿದಂತೆ ಪ್ರಮುಖ ಥಿಯೇಟರ್ ಚೈನ್‌ಗಳು ತಮ್ಮ ಸಂಪೂರ್ಣ ಶೆಡ್ಯೂಲ್‌ಗಳನ್ನು ಇನ್ನಷ್ಟೇ ಪ್ರಕಟಿಸಬೇಕಿದೆ.

ಅಮೆರಿಕದ ರಾಜ್ಯವಾರು ಬುಕಿಂಗ್‌ನಲ್ಲಿ ಟೆಕ್ಸಾಸ್ $56,931 ಗಳಿಕೆಯೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ಕ್ಯಾಲಿಫೋರ್ನಿಯಾ $25,849 ವ್ಯವಹಾರ ದಾಖಲಿಸಿದೆ.

ಭಾಷಾವಾರು ಬುಕಿಂಗ್ ಗಮನಿಸಿದರೆ ತೆಲುಗು ಆವೃತ್ತಿ ಸದ್ಯ ಮುನ್ನಡೆ ಸಾಧಿಸಿದೆ. 4,359 ಟಿಕೆಟ್‌ಗಳಿಂದ ತೆಲುಗು ಆವೃತ್ತಿ $94,706 ಗಳಿಸಿದ್ದರೆ, ಕನ್ನಡ ಆವೃತ್ತಿ 3,173 ಟಿಕೆಟ್‌ಗಳಿಂದ $68,246 ಗಳಿಸಿದೆ. ಹಿಂದಿ ಆವೃತ್ತಿಯ ಬುಕಿಂಗ್ ಸದ್ಯ ನಿಧಾನಗತಿಯಲ್ಲಿದೆ.

ಗೀತು ಮೋಹನ್‌ದಾಸ್ ನಿರ್ದೇಶನದ ಈ ಸಿನಿಮಾದಲ್ಲಿ ಯಶ್ ಜೊತೆ ನಯನತಾರಾ, ಕಿಯಾರಾ ಅಡ್ವಾಣಿ, ತಾರಾ ಸುತಾರಿಯಾ, ರುಕ್ಮಿಣಿ ವಸಂತ್ ಹಾಗೂ ಹುಮಾ ಖುರೇಷಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಯಶ್ ಮತ್ತು ಗೀತು ಮೋಹನ್‌ದಾಸ್ ಚಿತ್ರಕಥೆ ರಚಿಸಿದ್ದಾರೆ.

ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಮತ್ತು ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಿಸಿರುವ ಈ ಪ್ಯಾನ್-ಇಂಡಿಯಾ ಸಿನಿಮಾ ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಚಿತ್ರೀಕರಣಗೊಂಡಿದ್ದು, ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ತೆರೆಕಾಣಲಿದೆ.

ಆಗಸ್ಟ್ 26ರಂದು ವಿಶ್ವಾದ್ಯಂತ ಬಿಡುಗಡೆಯಾಗಲಿರುವ ‘ಟಾಕ್ಸಿಕ್’ಗೆ ಮುಂಗಡ ಬುಕಿಂಗ್‌ನಲ್ಲೇ ಭರ್ಜರಿ ಬೇಡಿಕೆ ಸೃಷ್ಟಿಯಾಗಿರುವುದು ಚಿತ್ರತಂಡದ ಆತ್ಮವಿಶ್ವಾಸ ಹೆಚ್ಚಿಸಿದೆ. ಈಗ ಈ ಆರಂಭಿಕ ಕ್ರೇಜ್ ಥಿಯೇಟರ್ ಕಲೆಕ್ಷನ್‌ಗೆ ಎಷ್ಟರ ಮಟ್ಟಿಗೆ ಪರಿವರ್ತನೆಯಾಗಲಿದೆ ಎಂಬುದೇ ಕುತೂಹಲದ ಕೇಂದ್ರವಾಗಿದೆ.