Home Blog

ಕುಡಿದು ಮರ್ಸಿಡಿಸ್ ಚಲಾಯಿಸಿದ ಪೊಲೀಸ್ ಅಧಿಕಾರಿಯ ಪುತ್ರ: ವೃದ್ಧೆ ಬಲಿ, ಆರೋಪಿ ಅರೆಸ್ಟ್

0

ನವದೆಹಲಿ: ಕುಡಿದ ಅಮಲಿನಲ್ಲಿ ವೇಗವಾಗಿ ಮರ್ಸಿಡಿಸ್ ಕಾರು ಚಲಾಯಿಸಿದ ಆರೋಪದಲ್ಲಿ ಪೊಲೀಸ್ ಅಧಿಕಾರಿಯ ಪುತ್ರನೊಬ್ಬನ ವಿರುದ್ಧ ಪ್ರಕರಣ ದಾಖಲಾಗಿದ್ದು, ಕಾರು ಡಿಕ್ಕಿಯಾಗಿ 70 ವರ್ಷದ ವೃದ್ಧೆ ಮೃತಪಟ್ಟಿರುವ ಘಟನೆ ದೆಹಲಿಯ ನರೇಲಾದಲ್ಲಿ ನಡೆದಿದೆ. ಮೃತರನ್ನು ಊರ್ಮಿಳಾ ಎಂದು ಗುರುತಿಸಲಾಗಿದೆ.

ಮಾಮುರ್‌ಪುರದ ಹಿಮಾಲಯ ಅಪಾರ್ಟ್‌ಮೆಂಟ್ ಹೊರಭಾಗದಲ್ಲಿ ಇಂದು ಬೆಳಗ್ಗೆ ಸುಮಾರು 8 ಗಂಟೆಗೆ ಅಪಘಾತ ಸಂಭವಿಸಿದೆ. ಬೆಳಗಿನ ವಾಕಿಂಗ್‌ಗೆ ತೆರಳಿದ್ದ ಊರ್ಮಿಳಾ ಅವರಿಗೆ ವೇಗವಾಗಿ ಬಂದ ಮರ್ಸಿಡಿಸ್ ಕಾರು ಡಿಕ್ಕಿ ಹೊಡೆದಿದೆ. ಬಳಿಕ ಕಾರು ಮತ್ತೊಂದು ವಾಹನಕ್ಕೂ ಡಿಕ್ಕಿ ಹೊಡೆದಿದೆ.

ಮರ್ಸಿಡಿಸ್ ಕಾರನ್ನು ಹರಿಯಾಣ ಪೊಲೀಸ್ ಇಲಾಖೆಯ ಸಬ್‌ಇನ್ಸ್‌ಪೆಕ್ಟರ್ ಪುತ್ರ ಶುಭಂ ಚಲಾಯಿಸುತ್ತಿದ್ದ ಎನ್ನಲಾಗಿದೆ. ಅಪಘಾತದ ವೇಳೆ ಶುಭಂ ಕುಡಿದಿದ್ದರು ಎಂದು ಪ್ರತ್ಯಕ್ಷದರ್ಶಿಗಳು ಆರೋಪಿಸಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಆತನನ್ನು ಬಂಧಿಸಿ ವೈದ್ಯಕೀಯ ತಪಾಸಣೆಗೆ ಒಳಪಡಿಸಿದ್ದಾರೆ.

ಪೊಲೀಸರ ಪ್ರಕಾರ, ಮರ್ಸಿಡಿಸ್ ಕಾರು ವ್ಯಾಗನ್‌ಆರ್ ಕಾರಿಗೆ ಮುಖಾಮುಖಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ವ್ಯಾಗನ್‌ಆರ್ ಕಾರು ಹಿಂದಕ್ಕೆ ಎಸೆಯಲ್ಪಟ್ಟು, ದೂರದಲ್ಲಿ ನಿಲ್ಲಿಸಿದ್ದ ತ್ರಿಚಕ್ರ ವಾಹನ ಲೋಡಿಂಗ್ ವ್ಯಾನ್‌ಗೆ ಡಿಕ್ಕಿ ಹೊಡೆದಿದೆ.

ಈ ವೇಳೆ ಊರ್ಮಿಳಾ ಅವರು ತ್ರಿಚಕ್ರ ವಾಹನ ಮತ್ತು ವ್ಯಾಗನ್‌ಆರ್ ನಡುವೆ ಸಿಲುಕಿಕೊಂಡು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಪಘಾತದಲ್ಲಿ ಕಾರು ಚಾಲಕನಿಗೂ ಸಣ್ಣಪುಟ್ಟ ಗಾಯಗಳಾಗಿವೆ.

ಕುಡಿದು ವಾಹನ ಚಲಾಯಿಸಿದ್ದ ಆರೋಪದಡಿ ಪೊಲೀಸ್ ಅಧಿಕಾರಿಯ ಪುತ್ರ ಶುಭಂನನ್ನು ಬಂಧಿಸಿರುವ ಪೊಲೀಸರು, ಅಪಘಾತದ ನಿಖರ ಕಾರಣ ಹಾಗೂ ಚಾಲಕನ ವಿರುದ್ಧದ ಆರೋಪಗಳ ಕುರಿತು ತನಿಖೆ ಮುಂದುವರಿಸಿದ್ದಾರೆ.

ವಿಬಿಜಿ ರಾಮ್ ಜಿ ಯೋಜನೆಯಡಿ ಉದ್ಯೋಗ: ಒಂದು ವಾರದಲ್ಲಿ ಜಾಬ್ ಕಾರ್ಡ್ ಮೇಳ ನಡೆಸಲು ಈಶ್ವರ ಖಂಡ್ರೆ ಸೂಚನೆ

ಬೆಂಗಳೂರು: ಮನ್ರೇಗಾದ ಬದಲಾದ ರೂಪವಾದ ವಿಬಿಜಿ ರಾಮ್ ಜಿ ಯೋಜನೆಯಡಿ ಅರ್ಹ ಗ್ರಾಮೀಣ ಕುಟುಂಬಗಳಿಗೆ ಉದ್ಯೋಗ ಒದಗಿಸುವ ನಿಟ್ಟಿನಲ್ಲಿ ಒಂದು ವಾರದೊಳಗೆ ಜಾಬ್ ಕಾರ್ಡ್ ಮೇಳ ಆಯೋಜಿಸುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ. ಖಂಡ್ರೆ ಸೂಚಿಸಿದ್ದಾರೆ.

ಈ ಸಂಬಂಧ ಇಲಾಖೆಯ ಕಾರ್ಯದರ್ಶಿಗೆ ಲಿಖಿತ ಸೂಚನೆ ನೀಡಿರುವ ಸಚಿವರು, ನಿಷ್ಕ್ರಿಯವಾಗಿದ್ದ ಹಲವು ಉದ್ಯೋಗ ಚೀಟಿಗಳನ್ನು (ಜಾಬ್ ಕಾರ್ಡ್) ರದ್ದುಪಡಿಸಲಾಗಿದೆ. ಆದರೆ, ಈ ಪ್ರಕ್ರಿಯೆಯಿಂದ ಬಡ ಗ್ರಾಮೀಣ ಕುಟುಂಬಗಳಿಗೆ ಯಾವುದೇ ರೀತಿಯ ಅನ್ಯಾಯವಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ನಿರ್ದೇಶಿಸಿದ್ದಾರೆ.

ಹೊಸದಾಗಿ ಉದ್ಯೋಗ ಬಯಸುವ ಅರ್ಹ ಗ್ರಾಮೀಣ ಕುಟುಂಬಗಳಿಗೆ ತಕ್ಷಣ ಜಾಬ್ ಕಾರ್ಡ್ ವಿತರಿಸುವಂತೆ ಸೂಚಿಸಲಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಲ್ಪಸಂಖ್ಯಾತರು, ವಿಶೇಷಚೇತನರು, ಮಹಿಳಾ ನೇತೃತ್ವದ ಕುಟುಂಬಗಳು, ಭೂರಹಿತ ಕೂಲಿ ಕಾರ್ಮಿಕರು ಸೇರಿದಂತೆ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸುವ ಎಲ್ಲ ಅರ್ಹರಿಗೆ ಜಾಬ್ ಕಾರ್ಡ್ ನೀಡಬೇಕು ಎಂದು ಸಚಿವರು ತಿಳಿಸಿದ್ದಾರೆ.

ರಾಜ್ಯದ 5,927 ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಒಂದು ವಾರದೊಳಗೆ ಜಾಬ್ ಕಾರ್ಡ್ ಮೇಳಗಳನ್ನು ಆಯೋಜಿಸಿ, ಅರ್ಹರಿಗೆ ಜಾಬ್ ಕಾರ್ಡ್ ವಿತರಿಸುವುದರ ಜತೆಗೆ ಉದ್ಯೋಗ ಒದಗಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ವಿಬಿಜಿ ರಾಮ್ ಜಿ ಯೋಜನೆಯಡಿ ಕೇಂದ್ರ ಸರ್ಕಾರದ ಶೇ.60ರಷ್ಟು ಅನುದಾನವಾಗಿ ₹1,700 ಕೋಟಿ ಹಾಗೂ ರಾಜ್ಯ ಸರ್ಕಾರದ ಶೇ.40ರಷ್ಟು ಅನುದಾನವಾಗಿ ₹1,200 ಕೋಟಿ ಸೇರಿದಂತೆ ಒಟ್ಟು ₹2,900 ಕೋಟಿ ಅನುದಾನ ಒದಗಿಸಲಾಗಿದೆ. ಇದರಲ್ಲಿ ಕೂಲಿ ಪಾವತಿಗಾಗಿ ರಾಜ್ಯದ ಎಲ್ಲ ಗ್ರಾಮ ಪಂಚಾಯತಿಗಳಿಗೆ ₹1,000 ಕೋಟಿ ಬಿಡುಗಡೆ ಮಾಡಲಾಗಿದೆ ಎಂದು ಈಶ್ವರ ಖಂಡ್ರೆ ತಿಳಿಸಿದ್ದಾರೆ.

ಯೋಜನೆಗೆ ಹಣದ ಕೊರತೆ ಇಲ್ಲದಿದ್ದರೂ ಕೆಲವು ಗ್ರಾಮ ಪಂಚಾಯತಿಗಳಲ್ಲಿ ವಿಬಿಜಿ ರಾಮ್ ಜಿ ಯೋಜನೆಯ ಅನುಷ್ಠಾನ ತೃಪ್ತಿಕರವಾಗಿಲ್ಲ ಎಂಬುದು ಸರ್ಕಾರದ ಗಮನಕ್ಕೆ ಬಂದಿದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಸಚಿವರು, ಗ್ರಾಮೀಣ ಜನರಿಗೆ ಉದ್ಯೋಗ ಖಾತ್ರಿ ಕಲ್ಪಿಸುವಲ್ಲಿ ಯಾವುದೇ ನಿರ್ಲಕ್ಷ್ಯ ವಹಿಸದಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

‘ನಮಗೆ ನಿಮ್ಮ ಮೇಲೆ ನಂಬಿಕೆಯಿದೆ, ದೇಶಕ್ಕೆ ನಿಮ್ಮ ಅಗತ್ಯವಿದೆ’: ಜೆನ್‌-ಝಿಗೆ ಮೋದಿ ಕಿವಿಮಾತು

0

ನವದೆಹಲಿ: ‘ನಮಗೆ ನಿಮ್ಮ ಮೇಲೆ ನಂಬಿಕೆಯಿದೆ, ದೇಶಕ್ಕೆ ನಿಮ್ಮ ಅಗತ್ಯವೂ ಇದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಜೆನ್‌-ಝಿ ಪೀಳಿಗೆಗೆ ಸಂದೇಶ ನೀಡಿದ್ದಾರೆ. ದೆಹಲಿಯ ಭಾರತೀಯ ತಂತ್ರಜ್ಞಾನ ಸಂಸ್ಥೆಯ 57ನೇ ಘಟಿಕೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಬದಲಾಗುತ್ತಿರುವ ತಂತ್ರಜ್ಞಾನ, ಜಾಗತಿಕ ಬೆಳವಣಿಗೆಗಳು ಹಾಗೂ ಭವಿಷ್ಯದ ಸವಾಲುಗಳನ್ನು ಎದುರಿಸಲು ಯುವಕರು ನಿರಂತರವಾಗಿ ಕಲಿಯುತ್ತಿರಬೇಕು ಎಂದು ಕರೆ ನೀಡಿದರು.

ಕಾಕ್ರೋಚ್‌ ಜನತಾ ಪಾರ್ಟಿ (CJP) ಪ್ರತಿಭಟನೆ ಬಳಿಕ ಜೆನ್‌-ಝಿಗಳನ್ನು ಉದ್ದೇಶಿಸಿ ಪ್ರಧಾನಿ ಮೋದಿ ನೀಡಿದ ಮೊದಲ ಭಾಷಣ ಇದಾಗಿದೆ. ಜಗತ್ತು ವೇಗವಾಗಿ ಬದಲಾಗುತ್ತಿದ್ದು, ತಂತ್ರಜ್ಞಾನ ಮತ್ತು ಜಾಗತಿಕ ಚಲನಶೀಲತೆಗಳು ಕೈಗಾರಿಕೆ ಹಾಗೂ ವೃತ್ತಿಗಳ ಸ್ವರೂಪವನ್ನು ಅಭೂತಪೂರ್ವ ವೇಗದಲ್ಲಿ ಬದಲಾಯಿಸುತ್ತಿವೆ. ಹೀಗಾಗಿ ವಿದ್ಯಾರ್ಥಿಗಳು ತಮ್ಮ ಕುತೂಹಲ ಹಾಗೂ ಕಲಿಯುವ ಆಸಕ್ತಿಯನ್ನು ಜೀವಂತವಾಗಿರಿಸಿಕೊಳ್ಳಬೇಕು ಎಂದು ಮೋದಿ ಹೇಳಿದರು.

ಮುಂದಿನ 20ರಿಂದ 30 ವರ್ಷಗಳಲ್ಲಿ ಜಗತ್ತು ಯಾವ ಸ್ವರೂಪ ಪಡೆಯಲಿದೆ ಎಂಬುದನ್ನು ಯಾರಿಗೂ ನಿಖರವಾಗಿ ಊಹಿಸಲು ಸಾಧ್ಯವಿಲ್ಲ. ಹೀಗಾಗಿ ಜೀವನದುದ್ದಕ್ಕೂ ಕಲಿಯುವ ಮನೋಭಾವ ಬೆಳೆಸಿಕೊಳ್ಳಬೇಕು. ಹೊಸದನ್ನು ಕಲಿಯುವ ಪ್ರವೃತ್ತಿಯನ್ನು ಮುಂದುವರಿಸುವವರು ಮಾತ್ರ ಬದಲಾಗುತ್ತಿರುವ ಜಗತ್ತಿನಲ್ಲಿ ಯಶಸ್ವಿಯಾಗಲು ಸಾಧ್ಯ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಪ್ರತಿಯೊಂದು ಪೀಳಿಗೆಯೂ ತನ್ನದೇ ಆದ ಸವಾಲುಗಳನ್ನು ಎದುರಿಸುತ್ತದೆ. ಮುಂದಿನ ಮೂರರಿಂದ ನಾಲ್ಕು ದಶಕಗಳಲ್ಲಿ ಜೆನ್‌-ಝಿ ಪೀಳಿಗೆ ತೆಗೆದುಕೊಳ್ಳುವ ನಿರ್ಧಾರಗಳು ಮತ್ತು ನೀಡುವ ಕೊಡುಗೆಗಳು ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ರೂಪಿಸುವ ಪ್ರಯಾಣದಲ್ಲಿ ನಿರ್ಣಾಯಕ ಪಾತ್ರ ವಹಿಸಲಿವೆ ಎಂದು ಮೋದಿ ಹೇಳಿದರು.

ತಮ್ಮ ವೃತ್ತಿಪರ ಹಾಗೂ ವೈಯಕ್ತಿಕ ಜೀವನದಲ್ಲಿ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ರಾಷ್ಟ್ರೀಯ ಹಿತಾಸಕ್ತಿಯನ್ನು ಪರಿಗಣಿಸಬೇಕು. ತಮ್ಮ ಕೆಲಸ ದೇಶದ ಅಗತ್ಯಗಳನ್ನು ಪೂರೈಸಲು ಹೇಗೆ ಕೊಡುಗೆ ನೀಡಬಹುದು ಎಂಬುದನ್ನು ಪ್ರತಿಯೊಬ್ಬರೂ ತಮ್ಮನ್ನು ತಾವು ಪ್ರಶ್ನಿಸಿಕೊಳ್ಳಬೇಕು ಎಂದು ಪ್ರಧಾನಿ ಕರೆ ನೀಡಿದರು.

ಜಾಗತಿಕ ಕಾರ್ಯತಂತ್ರದ ಸಮೀಕರಣಗಳು ವೇಗವಾಗಿ ಬದಲಾಗುತ್ತಿವೆ. ಜಾಗತಿಕ ಶಕ್ತಿಯ ಸಮತೋಲನ ಕ್ಷಣಕ್ಷಣಕ್ಕೂ ಬದಲಾಗುತ್ತಿರುವ ಸಂದರ್ಭದಲ್ಲಿ, ಸ್ಪರ್ಧಾತ್ಮಕ ಜಗತ್ತಿಗೆ ಪ್ರವೇಶಿಸುತ್ತಿರುವ ಪದವೀಧರರು ತಂತ್ರಜ್ಞಾನ, ಕೈಗಾರಿಕೆ ಮತ್ತು ವೃತ್ತಿ ಕ್ಷೇತ್ರಗಳಲ್ಲಿ ಮಹತ್ವದ ಪರಿವರ್ತನೆಗಳನ್ನು ಎದುರಿಸಲಿದ್ದಾರೆ ಎಂದರು.

ಕೆಲಸದ ಸ್ವರೂಪ ಮುಂದಿನ ದಿನಗಳಲ್ಲಿ ಗಮನಾರ್ಹವಾಗಿ ಬದಲಾಗಬಹುದು. ಆದರೆ ನಿರಂತರ ಕಲಿಕೆಯೇ ಭವಿಷ್ಯದಲ್ಲೂ ಪ್ರಸ್ತುತವಾಗಿರಲು ಮತ್ತು ಯಶಸ್ಸು ಸಾಧಿಸಲು ಪ್ರಮುಖ ಅಸ್ತ್ರವಾಗಿರಲಿದೆ ಎಂದು ಮೋದಿ ಹೇಳಿದರು.

ಭಾರತದ ಯುವ ಪ್ರತಿಭೆಗಳಿಗೆ ಸಂಶೋಧನೆ ಮತ್ತು ನಾವೀನ್ಯತೆ ದೊಡ್ಡ ಅವಕಾಶಗಳನ್ನು ಒದಗಿಸುತ್ತಿವೆ. ದೇಶದ ವೈಜ್ಞಾನಿಕ ಮತ್ತು ತಾಂತ್ರಿಕ ಪ್ರಗತಿಗೆ ಯುವ ಪದವೀಧರರು ಕೊಡುಗೆ ನೀಡಬೇಕು ಎಂದು ಕರೆ ನೀಡಿದ ಪ್ರಧಾನಿ, ಪ್ರತಿಭಾವಂತ ವಿದ್ಯಾರ್ಥಿಗಳು ಸಂಶೋಧನೆಯನ್ನು ಮುಂದುವರಿಸಲು ಅವಕಾಶ ಕಲ್ಪಿಸುವ ಪ್ರಧಾನ ಮಂತ್ರಿಗಳ ಸಂಶೋಧನಾ ಫೆಲೋಶಿಪ್ ಸೇರಿದಂತೆ ಯುವ ಸಂಶೋಧಕರನ್ನು ಉತ್ತೇಜಿಸುವ ವಿವಿಧ ಸರ್ಕಾರಿ ಯೋಜನೆಗಳ ಬಗ್ಗೆಯೂ ಪ್ರಸ್ತಾಪಿಸಿದರು.

4 ತಿಂಗಳು ವೀಕ್‌ಆಫ್ ಇಲ್ಲ, ತುರ್ತು ರಜೆಗೂ ನೋ: ಸೂಪರ್‌ವೈಸರ್ ವಿರುದ್ಧ ಆರೋಪಿಸಿ ಮಹಿಳೆ ಆತ್ಮಹತ್ಯೆ

0

ಮೈಸೂರು: ಕೆಲಸದ ಸ್ಥಳದಲ್ಲಿ ಕಿರುಕುಳ ನೀಡಲಾಗಿದೆ ಎಂದು ಆರೋಪಿಸಿ ಖಾಸಗಿ ಕಂಪನಿಯ ಮಹಿಳಾ ಉದ್ಯೋಗಿಯೊಬ್ಬರು ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಿನಕಲ್‌ನಲ್ಲಿ ನಡೆದಿದೆ. ಆತ್ಮಹತ್ಯೆಗೂ ಮುನ್ನ ನಾಗೇಶ್ವರಿ ಬರೆದಿಟ್ಟಿದ್ದಾರೆ ಎನ್ನಲಾದ ಡೆತ್‌ನೋಟ್‌ನಲ್ಲಿ ಕಂಪನಿಯ ಲೇಡಿ ಸೂಪರ್‌ವೈಸರ್ ವಿರುದ್ಧ ಹಲವು ಗಂಭೀರ ಆರೋಪಗಳನ್ನು ಮಾಡಲಾಗಿದೆ.

ಖಾಸಗಿ ಕಂಪನಿಯಲ್ಲಿ ಪ್ರಮೋಟರ್ ಆಗಿದ್ದ ನಾಗೇಶ್ವರಿ, ನಾಲ್ಕು ದಿನಗಳ ಹಿಂದೆ ‘ಡಾಲಿ’ ಎಂಬ ಮಹಿಳೆ ಸೂಪರ್‌ವೈಸರ್ ಆಗಿ ಬಂದ ಬಳಿಕ ತಮ್ಮ ಮೇಲೆ ಕಿರುಕುಳ ಹೆಚ್ಚಾಯಿತು ಎಂದು ಡೆತ್‌ನೋಟ್‌ನಲ್ಲಿ ಆರೋಪಿಸಿದ್ದಾರೆ. ತನ್ನದಲ್ಲದ ತಪ್ಪುಗಳಿಗೂ ತಮ್ಮನ್ನೇ ಹೊಣೆ ಮಾಡಿ ಟಾರ್ಗೆಟ್ ಮಾಡಲಾಗುತ್ತಿತ್ತು ಎಂದು ಅವರು ತಿಳಿಸಿದ್ದಾರೆ.

ಕಳೆದ ನಾಲ್ಕು ತಿಂಗಳಿನಿಂದ ಒಂದು ದಿನವೂ ವೀಕ್‌ಆಫ್ ನೀಡಿರಲಿಲ್ಲ. ತುರ್ತು ಸಂದರ್ಭದಲ್ಲೂ ರಜೆ ಕೇಳಿದರೂ ಅವಕಾಶ ನೀಡಲಿಲ್ಲ. ಈ ಬಗ್ಗೆ ಪ್ರಶ್ನೆ ಮಾಡಿದ ಬಳಿಕ ತಮ್ಮನ್ನು ಕೆಲಸದಿಂದ ತೆಗೆದುಹಾಕಲಾಗಿತ್ತು. ವಜಾಗೊಳಿಸಿದ ನಂತರ ನೋಟಿಸ್ ಪಿರಿಯಡ್ ಕೂಡ ಮಾಡಿಸಿರಲಿಲ್ಲ ಎಂದು ನಾಗೇಶ್ವರಿ ಆರೋಪಿಸಿದ್ದಾರೆ.

‘ಡಾಲಿ ಮೇಡಂ ನೀಡಿದ ಕಿರುಕುಳದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನನ್ನ ಸಾವಿಗೆ ನ್ಯಾಯ ಕೊಡಿಸಿ’ ಎಂದು ಡೆತ್‌ನೋಟ್‌ನಲ್ಲಿ ಮನವಿ ಮಾಡಿರುವುದಾಗಿ ತಿಳಿದುಬಂದಿದೆ.

ಘಟನೆ ಬಳಿಕ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ನಾಗೇಶ್ವರಿಯ ಡೆತ್‌ನೋಟ್ ಅನ್ನು ಪ್ರಮುಖ ಸಾಕ್ಷ್ಯವಾಗಿ ಪರಿಗಣಿಸಿ, ಅದರಲ್ಲಿರುವ ಆರೋಪಗಳ ಸತ್ಯಾಸತ್ಯತೆ ಪರಿಶೀಲಿಸಲಾಗುತ್ತಿದೆ.

ಕೆಲಸದ ಒತ್ತಡ, ವೃತ್ತಿಪರ ಸಮಸ್ಯೆಗಳು ಅಥವಾ ಸೂಪರ್‌ವೈಸರ್‌ನಿಂದ ಆಗಿದೆ ಎನ್ನಲಾದ ಕಿರುಕುಳ—ನಾಗೇಶ್ವರಿಯ ಆತ್ಮಹತ್ಯೆಗೆ ನಿಖರ ಕಾರಣ ಯಾವುದು ಎಂಬುದು ತನಿಖೆಯಿಂದ ಹೊರಬರಬೇಕಿದೆ. ಡೆತ್‌ನೋಟ್‌ನಲ್ಲಿನ ಆರೋಪಗಳಿಗೆ ಸಂಬಂಧಿಸಿದಂತೆ ಸೂಪರ್‌ವೈಸರ್ ಡಾಲಿ ಅವರ ಪಾತ್ರವೇನು ಎಂಬುದನ್ನೂ ಪೊಲೀಸರು ಪರಿಶೀಲಿಸುತ್ತಿದ್ದಾರೆ.

ಶಿವಗಂಗೆ ಬೆಟ್ಟದಲ್ಲಿ ಟ್ರೆಕ್ಕಿಂಗ್‌ಗೆ ಹೋಗಿದ್ದ ಟೆಕ್ಕಿ ನಾಪತ್ತೆ: ಶಾಂತಲಾ ಡ್ರಾಪ್‌ನಲ್ಲಿ ಶೋಧ!

ನೆಲಮಂಗಲ: ಶಿವಗಂಗೆ ಬೆಟ್ಟದಲ್ಲಿ ಟ್ರೆಕ್ಕಿಂಗ್‌ಗೆ ತೆರಳಿದ್ದ 31 ವರ್ಷದ ಪ್ರತೀಕ್ ಉಪಾಧ್ಯಾಯ ನಾಪತ್ತೆಯಾಗಿರುವ ಪ್ರಕರಣ ತೀವ್ರ ಕುತೂಹಲ ಹಾಗೂ ಆತಂಕಕ್ಕೆ ಕಾರಣವಾಗಿದೆ. ನಿನ್ನೆ ಬೆಳಗ್ಗೆ ಬೆಟ್ಟಕ್ಕೆ ತೆರಳಿದ್ದ ಯುವಕ, ಪಾರ್ಕಿಂಗ್‌ನಲ್ಲಿ ಬುಲೆಟ್ ಬೈಕ್ ಬಿಟ್ಟು ಟ್ರೆಕ್ಕಿಂಗ್ ಆರಂಭಿಸಿದ್ದರು. ಆದರೆ ಬಳಿಕ ಅವರ ಸುಳಿವು ಸಿಗದ ಹಿನ್ನೆಲೆಯಲ್ಲಿ ಪೊಲೀಸರು ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ.

ಬೆಟ್ಟ ಏರುತ್ತಿದ್ದ ಪ್ರತೀಕ್ ಅವರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆದರೆ ಅವರು ಬೆಟ್ಟ ಹತ್ತಿದ ಬಳಿಕ ಮತ್ತೆ ಕೆಳಗೆ ಬಂದಿರುವುದು ಕ್ಯಾಮೆರಾ ದೃಶ್ಯಗಳಲ್ಲಿ ಪತ್ತೆಯಾಗಿಲ್ಲ ಎನ್ನಲಾಗಿದೆ. ಹೀಗಾಗಿ ಅವರು ಯಾವ ಮಾರ್ಗದಲ್ಲಿ ತೆರಳಿದರು, ಬೆಟ್ಟದಿಂದ ವಾಪಸ್ ಬಂದರೇ ಅಥವಾ ಬೆಟ್ಟದ ಯಾವುದೇ ಅಪಾಯಕಾರಿ ಪ್ರದೇಶದಲ್ಲಿ ಸಿಲುಕಿದ್ದಾರೆಯೇ ಎಂಬ ಪ್ರಶ್ನೆಗಳು ಎದುರಾಗಿವೆ.

ಪ್ರತೀಕ್ ಐದು ದಿನಗಳ ಹಿಂದೆ ವೈಟ್‌ಫೀಲ್ಡ್‌ನಲ್ಲಿ ಬುಲೆಟ್ ಬೈಕ್ ಬಾಡಿಗೆಗೆ ಪಡೆದಿದ್ದರು. ಅದೇ ಬೈಕ್ ಶಿವಗಂಗೆ ಬೆಟ್ಟದ ಪಾರ್ಕಿಂಗ್‌ನಲ್ಲಿ ಪತ್ತೆಯಾಗಿದೆ. ಮತ್ತೊಂದೆಡೆ, ಅವರ ಮೊಬೈಲ್ ಫೋನ್ ಬೇರೆ ಸ್ಥಳದಲ್ಲಿ ಸ್ವಿಚ್ ಆಫ್ ಆಗಿರುವುದು ಪ್ರಕರಣದ ತನಿಖೆಗೆ ಮತ್ತೊಂದು ತಿರುವು ನೀಡಿದೆ.

ಯುವಕನ ಪತ್ತೆಗಾಗಿ ಪೊಲೀಸರು ಶಿವಗಂಗೆ ಬೆಟ್ಟದ ಶಾಂತಲಾ ಡ್ರಾಪ್ ಪ್ರದೇಶವನ್ನು ಕೇಂದ್ರೀಕರಿಸಿ ಶೋಧ ನಡೆಸುತ್ತಿದ್ದಾರೆ. ಡ್ರೋನ್ ಕ್ಯಾಮೆರಾ ಬಳಸಿ ಕಲ್ಲುಬಂಡೆಗಳು, ದಟ್ಟ ಮರಗಿಡಗಳು ಹಾಗೂ ಬೆಟ್ಟದ ಅಪಾಯಕಾರಿ ಪ್ರದೇಶಗಳ ಮೇಲೆ ನಿಗಾ ಇರಿಸಲಾಗಿದೆ.

ಸಮುದ್ರ ಮಟ್ಟದಿಂದ ಸುಮಾರು 4,800 ಅಡಿ ಎತ್ತರದಲ್ಲಿರುವ ಶಿವಗಂಗೆ ಬೆಟ್ಟದ ಶಾಂತಲಾ ಡ್ರಾಪ್ ಕಡಿದಾದ ಹಾಗೂ ಅಪಾಯಕಾರಿ ಪ್ರದೇಶವಾಗಿದೆ. ಹೀಗಾಗಿ ಪ್ರತೀಕ್ ಅವರು ಆ ಭಾಗದಲ್ಲಿ ತೆರಳಿರುವ ಸಾಧ್ಯತೆಯನ್ನೂ ಪೊಲೀಸರು ಗಂಭೀರವಾಗಿ ಪರಿಶೀಲಿಸುತ್ತಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ವೈಟ್‌ಫೀಲ್ಡ್ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಾಗಿದೆ. ಸಿಸಿಟಿವಿ ದೃಶ್ಯಗಳು, ಮೊಬೈಲ್ ಫೋನ್‌ನ ಕೊನೆಯ ಸ್ಥಳ ಹಾಗೂ ಬೆಟ್ಟದ ವಿವಿಧ ಪ್ರದೇಶಗಳ ಪರಿಶೀಲನೆಯ ಆಧಾರದಲ್ಲಿ ಪೊಲೀಸರು ತನಿಖೆ ಮುಂದುವರಿಸಿದ್ದು, ಪ್ರತೀಕ್ ಅವರ ಪತ್ತೆಗೆ ಶೋಧ ಕಾರ್ಯಾಚರಣೆ ತೀವ್ರಗೊಳಿಸಿದ್ದಾರೆ.

ಜ್ಞಾನಭಾರತಿ ರಸ್ತೆ ಅಪಘಾತದಲ್ಲಿ ವಿದ್ಯಾರ್ಥಿನಿ ಸಾವು: ಕುಟುಂಬಕ್ಕೆ ಸರ್ಕಾರದಿಂದ 10 ಲಕ್ಷ ರೂ. ಪರಿಹಾರ

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಕ್ಯಾಂಪಸ್‌ನಲ್ಲಿ ರಸ್ತೆ ದಾಟುತ್ತಿದ್ದ ವೇಳೆ ಆಟೋರಿಕ್ಷಾ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡು ಮೃತಪಟ್ಟ ವಿದ್ಯಾರ್ಥಿನಿ ಮಾನಸ ಅವರ ಕುಟುಂಬಕ್ಕೆ ಸರ್ಕಾರದಿಂದ ಒಟ್ಟು ₹10 ಲಕ್ಷ ಪರಿಹಾರ ನೀಡಲಾಗಿದೆ.

ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ₹3 ಲಕ್ಷ ಹಾಗೂ ಚಿಕಿತ್ಸಾ ವೆಚ್ಚದ ರೂಪದಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಿಂದ ₹7 ಲಕ್ಷ ಸೇರಿದಂತೆ ಒಟ್ಟು ₹10 ಲಕ್ಷವನ್ನು ಮೃತ ವಿದ್ಯಾರ್ಥಿನಿಯ ಪೋಷಕರಿಗೆ ನೀಡಲಾಗಿದೆ.

ಮೈಸೂರು ಜಿಲ್ಲೆಯ ನಂಜನಗೂಡು ಮೂಲದ 23 ವರ್ಷದ ಮಾನಸ, ಬೆಂಗಳೂರು ವಿಶ್ವವಿದ್ಯಾಲಯದ ದೃಶ್ಯಕಲಾ ವಿಭಾಗದಲ್ಲಿ ಪ್ರಥಮ ವರ್ಷದ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿದ್ದರು.

ಕಳೆದ ಜುಲೈ 30ರಂದು ಜ್ಞಾನಭಾರತಿ ಕ್ಯಾಂಪಸ್‌ನ ಗಾಂಧಿ ಮಾರ್ಗದಲ್ಲಿರುವ ಕ್ಯಾಂಟೀನ್ ಸಮೀಪ ಮಾನಸ ರಸ್ತೆ ದಾಟುತ್ತಿದ್ದ ಸಂದರ್ಭದಲ್ಲಿ ವೇಗವಾಗಿ ಬಂದ ಆಟೋರಿಕ್ಷಾ ಅವರಿಗೆ ಡಿಕ್ಕಿ ಹೊಡೆದಿತ್ತು. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ತಕ್ಷಣ ನಾಗರಭಾವಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ತೀವ್ರವಾಗಿ ಗಾಯಗೊಂಡಿದ್ದ ಮಾನಸ ಅವರನ್ನು ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಕಳೆದ ಗುರುವಾರ (ಆ.6) ಅವರು ಮೃತಪಟ್ಟಿದ್ದರು.

ಯುವ ವಿದ್ಯಾರ್ಥಿನಿಯ ಅಕಾಲಿಕ ನಿಧನಕ್ಕೆ ಸಂತಾಪ ಸೂಚಿಸಿರುವ ಸರ್ಕಾರ, ಸಂಕಷ್ಟಕ್ಕೆ ಸಿಲುಕಿರುವ ಅವರ ಕುಟುಂಬಕ್ಕೆ ನೆರವಾಗುವ ಉದ್ದೇಶದಿಂದ ಪರಿಹಾರ ನೀಡಿದೆ. ವಿದ್ಯಾರ್ಥಿನಿಯ ಕುಟುಂಬಕ್ಕೆ ಸರ್ಕಾರ ಹಾಗೂ ಬೆಂಗಳೂರು ವಿಶ್ವವಿದ್ಯಾಲಯದಿಂದ ಒಟ್ಟು ₹10 ಲಕ್ಷ ನೆರವು ದೊರೆತಿದೆ.

ಹಿಮಾಚಲ ಪ್ರದೇಶದಲ್ಲಿ ಭೀಕರ ಬಸ್ ಅಪಘಾತ; ಚಾಲಕ-ಕಂಡಕ್ಟರ್ ಸೇರಿ 8 ಮಂದಿ ಸಾವು, 6 ಜನರ ಸ್ಥಿತಿ ಗಂಭೀರ

0

ಶಿಮ್ಲಾ: ಹಿಮಾಚಲ ಪ್ರದೇಶದ ಚಂಬಾ ಜಿಲ್ಲೆಯಲ್ಲಿ ಖಾಸಗಿ ಬಸ್‌ವೊಂದು ನಿಯಂತ್ರಣ ತಪ್ಪಿ ಪಲ್ಟಿಯಾಗಿ ಕೆಳಗಿನ ರಸ್ತೆಗೆ ಬಿದ್ದ ಪರಿಣಾಮ ಚಾಲಕ ಮತ್ತು ಕಂಡಕ್ಟರ್ ಸೇರಿದಂತೆ 8 ಮಂದಿ ಮೃತಪಟ್ಟಿದ್ದು, 10 ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರ ಪೈಕಿ 6 ಜನರ ಸ್ಥಿತಿ ಗಂಭೀರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಸ್‌ ಇಂದು ಬೆಳಗ್ಗೆ ಬೈರಾಗರ್‌ನಿಂದ ಚಂಬಾ ಕಡೆಗೆ ತೆರಳುತ್ತಿತ್ತು. ಬೈರಾಗರ್-ಟಿಸ್ಸಾ ಮಾರ್ಗದ ದೇವಿಕೋಥಿ ಪ್ರದೇಶದ ಚಲುಂಜ್ ಮೋರ್ ಬಳಿ ಬಸ್‌ ಪಲ್ಟಿಯಾಗಿದೆ. ಅಪಘಾತ ಸಂಭವಿಸಿದ ಸಂದರ್ಭದಲ್ಲಿ ಬಸ್‌ನಲ್ಲಿ ಒಟ್ಟು 18 ಮಂದಿ ಪ್ರಯಾಣಿಸುತ್ತಿದ್ದರು ಎಂದು ತಿಳಿದುಬಂದಿದೆ.

ಬಸ್‌ ನಿಯಂತ್ರಣ ಕಳೆದುಕೊಂಡು ಕೆಳಗಿನ ರಸ್ತೆಗೆ ಉರುಳಿ ಬಿದ್ದಿದ್ದು, ಕೆಲವು ಪ್ರಯಾಣಿಕರು ಬಸ್‌ನ ಅಡಿಯಲ್ಲಿ ಸಿಲುಕಿಕೊಂಡು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಪಘಾತದ ಬಳಿಕ ಗಾಯಾಳುಗಳ ಚೀರಾಟ ಕೇಳಿದ ಸ್ಥಳೀಯರು ತಕ್ಷಣ ಸ್ಥಳಕ್ಕೆ ಧಾವಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಮಾಹಿತಿ ಲಭ್ಯವಾಗುತ್ತಿದ್ದಂತೆ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ತಂಡಗಳು ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿವೆ. ಬಸ್‌ನ್ನು ಮೇಲಕ್ಕೆತ್ತಿ ಅದರ ಅಡಿಯಲ್ಲಿ ಸಿಲುಕಿದ್ದವರನ್ನು ಹೊರತೆಗೆಯಲಾಗಿದ್ದು, ಗಾಯಗೊಂಡವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಪಘಾತದಲ್ಲಿ ಮೃತಪಟ್ಟವರ ಗುರುತುಗಳನ್ನು ಅಧಿಕಾರಿಗಳು ಇನ್ನೂ ಅಧಿಕೃತವಾಗಿ ಬಹಿರಂಗಪಡಿಸಿಲ್ಲ. ಬಸ್‌ ಅಪಘಾತಕ್ಕೆ ನಿಖರ ಕಾರಣವೇನು ಎಂಬುದನ್ನು ಪತ್ತೆಹಚ್ಚಲು ಪೊಲೀಸರು ಹಾಗೂ ಸಂಬಂಧಿತ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.

ಭೀಕರ ಅಪಘಾತದ ಸುದ್ದಿ ತಿಳಿದ ಬಳಿಕ ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದಾರೆ. ಗಾಯಾಳುಗಳಿಗೆ ಅಗತ್ಯ ಹಾಗೂ ಸೂಕ್ತ ವೈದ್ಯಕೀಯ ಚಿಕಿತ್ಸೆ ದೊರೆಯುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದಾರೆ.

ಇದರ ನಡುವೆ ಹಿಮಾಚಲ ಪ್ರದೇಶದಲ್ಲಿ ಧಾರಾಕಾರ ಮಳೆಯ ಪರಿಣಾಮ ಜನಜೀವನವೂ ಅಸ್ತವ್ಯಸ್ತಗೊಂಡಿದೆ. ರಾಜ್ಯದ ವಿವಿಧೆಡೆ 185 ರಸ್ತೆಗಳು ಬಂದ್ ಆಗಿವೆ ಎಂದು ವರದಿಯಾಗಿದೆ. ಶಿಮ್ಲಾ ಹವಾಮಾನ ಇಲಾಖೆ, ಆಗಸ್ಟ್ 10 ಮತ್ತು 11ರಂದು ರಾಜ್ಯದ ಕೆಲವು ಪ್ರದೇಶಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಮುನ್ಸೂಚನೆ ನೀಡಿದೆ. ಹೀಗಾಗಿ ಗುಡ್ಡಗಾಡು ಪ್ರದೇಶಗಳಲ್ಲಿ ಸಂಚರಿಸುವವರು ಮುನ್ನೆಚ್ಚರಿಕೆ ವಹಿಸುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.

ಜಮೀನು ಖಾತೆ ಬದಲಾವಣೆಗೆ ಸರ್ಕಾರಿ ನಿಯಮದಂತೆ ಶುಲ್ಕ ಸಂಗ್ರಹಿಸಿದರೆ ಲಂಚವಲ್ಲ; ನಿವೃತ್ತ ಗ್ರಾಮ ಲೆಕ್ಕಾಧಿಕಾರಿಗೆ ಹೈಕೋರ್ಟ್‌ ರಿಲೀಫ್

ಬೆಂಗಳೂರು: ಜಮೀನು ಖಾತೆ ಬದಲಾವಣೆಗೆ ಸರ್ಕಾರಿ ನಿಯಮದಂತೆ ಮುದ್ರಾಂಕ ಶುಲ್ಕ ಸಂಗ್ರಹಿಸಿ, ಅದನ್ನು ಅಧಿಕೃತವಾಗಿ ಖಜಾನೆಗೆ ಜಮೆ ಮಾಡಿದ್ದರೆ ಅದನ್ನು ಲಂಚ ಅಥವಾ ಅಕ್ರಮ ಹಣ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಇದೇ ಪ್ರಕರಣದಲ್ಲಿ 68 ವರ್ಷದ ನಿವೃತ್ತ ಗ್ರಾಮ ಲೆಕ್ಕಾಧಿಕಾರಿ ವಿ.ಎಸ್. ಅಲ್ಬಾಲ್ ಅವರಿಗೆ ವಿಧಿಸಲಾಗಿದ್ದ ಶಿಕ್ಷೆಯನ್ನು ರದ್ದುಪಡಿಸಿರುವ ಹೈಕೋರ್ಟ್, ತಡೆಹಿಡಿಯಲಾಗಿದ್ದ ಅವರ ಸಂಪೂರ್ಣ ಪಿಂಚಣಿಯನ್ನು ಯಾವುದೇ ವಿಳಂಬವಿಲ್ಲದೆ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ನಿವೃತ್ತ ಗ್ರಾಮ ಲೆಕ್ಕಾಧಿಕಾರಿ ವಿ.ಎಸ್. ಅಲ್ಬಾಲ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್. ಸುನಿಲ್ ದತ್ ಯಾದವ್ ಮತ್ತು ನ್ಯಾಯಮೂರ್ತಿ ಕೆ.ಜಿ. ಶಾಂತಿ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿದೆ. ಇದೇ ವೇಳೆ ಕರ್ನಾಟಕ ಆಡಳಿತ ನ್ಯಾಯಮಂಡಳಿ (ಕೆಎಟಿ) ನೀಡಿದ್ದ ಆದೇಶವನ್ನೂ ಹೈಕೋರ್ಟ್ ರದ್ದುಪಡಿಸಿದೆ.

1999ರ ಕರ್ನಾಟಕ ಮುದ್ರಾಂಕ (ಎರಡನೇ ತಿದ್ದುಪಡಿ) ಕಾಯ್ದೆ ಹಾಗೂ ಸರ್ಕಾರದ ಸುತ್ತೋಲೆಯ ಪ್ರಕಾರ ಕೃಷಿ ಜಮೀನು ವಿಭಜನೆಯ ಸಂದರ್ಭದಲ್ಲಿ ಪ್ರತಿ ಭಾಗಕ್ಕೆ ₹250ರಂತೆ ಮುದ್ರಾಂಕ ಶುಲ್ಕ ಸಂಗ್ರಹಿಸುವುದು ಕಡ್ಡಾಯವಾಗಿತ್ತು. ಅರ್ಜಿದಾರರು ಮೂರು ಭಾಗಗಳಿಗೆ ತಲಾ ₹250ರಂತೆ ಒಟ್ಟು ₹750 ಸಂಗ್ರಹಿಸಿ, ಅದಕ್ಕೆ ಸೂಕ್ತ ರಸೀದಿ ನೀಡಿ ಅಧಿಕೃತ ಖಜಾನೆಗೆ ಹಣ ಜಮೆ ಮಾಡಿರುವುದು ದಾಖಲೆಗಳಿಂದ ಸಾಬೀತಾಗಿದೆ ಎಂದು ನ್ಯಾಯಪೀಠ ಗಮನಿಸಿದೆ.

ಸರ್ಕಾರದ ನಿಯಮದಂತೆ ಕಾನೂನುಬದ್ಧವಾಗಿ ಶುಲ್ಕ ಸಂಗ್ರಹಿಸುವುದನ್ನು ‘ಲಂಚ’ ಅಥವಾ ‘ಅಕ್ರಮ ಸ್ವತ್ತು’ ಎಂದು ಪರಿಗಣಿಸಲು ಸಾಧ್ಯವಿಲ್ಲ. ಅದನ್ನು ಕರ್ತವ್ಯಲೋಪವೆಂದೂ ಹೇಳಲಾಗುವುದಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.

ಪ್ರಕರಣದ ಹಿನ್ನೆಲೆ

ಬಾಗಲಕೋಟೆ ಜಿಲ್ಲೆಯ ಬಿಳಗಿ ತಾಲೂಕಿನ ಗ್ರಾಮ ಲೆಕ್ಕಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ವಿ.ಎಸ್. ಅಲ್ಬಾಲ್ ಅವರು 2012ರಲ್ಲಿ ನಿವೃತ್ತರಾಗಿದ್ದರು. ಅದಕ್ಕೂ ಮುನ್ನ 1999ರಲ್ಲಿ ಬಿಳಗಿ ತಾಲೂಕಿನಲ್ಲಿ ಪ್ರಭಾರ ಗ್ರಾಮ ಲೆಕ್ಕಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.

ಈ ವೇಳೆ ಹಂಚಿನಾಳ ಗ್ರಾಮದ ಮಹದೇವಪ್ಪ ಸಂಗಪ್ಪ ಕಂಬೋಗಿ ಅವರು ತಮ್ಮ ಹಾಗೂ ಇಬ್ಬರು ಮಕ್ಕಳ ಹೆಸರಿಗೆ ಜಮೀನು ಖಾತೆ ಬದಲಾವಣೆ ಮಾಡುವಂತೆ 1999ರ ಮೇ 18ರಂದು ಅರ್ಜಿ ಸಲ್ಲಿಸಿದ್ದರು. ನಿಯಮದಂತೆ ಮೂರು ಭಾಗಗಳಿಗೆ ತಲಾ ₹250ರಂತೆ ಒಟ್ಟು ₹750 ಮುದ್ರಾಂಕ ಶುಲ್ಕ ಪಾವತಿಸುವಂತೆ ಗ್ರಾಮ ಲೆಕ್ಕಾಧಿಕಾರಿಯಾಗಿದ್ದ ಅಲ್ಬಾಲ್ ಸೂಚಿಸಿದ್ದರು.

ಆದರೆ, ದೂರುದಾರರು ಈ ಮೊತ್ತವನ್ನು ಲಂಚದ ಬೇಡಿಕೆ ಎಂದು ತಪ್ಪಾಗಿ ಭಾವಿಸಿ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ತನಿಖೆ ಬಳಿಕ ವಿಶೇಷ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು.

ವಿಚಾರಣೆ ನಡೆಸಿದ ವಿಶೇಷ ನ್ಯಾಯಾಲಯ ಅರ್ಜಿದಾರರನ್ನು ಖುಲಾಸೆಗೊಳಿಸಿತ್ತು. ಆದರೆ, ಪ್ರಕರಣಕ್ಕೆ ಸಂಬಂಧಿಸಿದ ಉಪಲೋಕಾಯುಕ್ತರ ವಿಚಾರಣೆಯಲ್ಲಿ ಆರೋಪ ಸಾಬೀತಾಗಿದೆ ಎಂದು ಹೇಳಿ ಸರ್ಕಾರ ಅಲ್ಬಾಲ್ ಅವರನ್ನು ಸೇವೆಯಿಂದ ವಜಾಗೊಳಿಸಿತ್ತು.

ಇದನ್ನು ಪ್ರಶ್ನಿಸಿ ಅವರು ಕೆಎಟಿಗೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ್ದ ಕೆಎಟಿ ಲೋಕಾಯುಕ್ತ ವರದಿಯನ್ನು ರದ್ದುಪಡಿಸಿ, ಅವರನ್ನು ಸೇವೆಗೆ ಮರುಸೇರ್ಪಡೆಗೊಳಿಸುವಂತೆ ನಿರ್ದೇಶನ ನೀಡಿತ್ತು. ಆದರೆ, ಪ್ರಕರಣದ ಕುರಿತು ಹೊಸದಾಗಿ ವಿಚಾರಣೆ ನಡೆಸಲು ಅವಕಾಶ ನೀಡಿತ್ತು.

ಮರು ವಿಚಾರಣೆ ವೇಳೆ ಉಪಲೋಕಾಯುಕ್ತರ ಮುಂದೆ ಹಾಜರಾದ ಅಲ್ಬಾಲ್, ದೂರುದಾರರಿಂದ ಸಂಗ್ರಹಿಸಿದ್ದ ₹750 ಮುದ್ರಾಂಕ ಶುಲ್ಕವಾಗಿದ್ದು, ಅದನ್ನು ಸರ್ಕಾರದ ಖಜಾನೆಗೆ ಜಮೆ ಮಾಡಿರುವುದಾಗಿ ದಾಖಲೆಗಳ ಸಮೇತ ವಿವರಿಸಿದ್ದರು.

ದಾಖಲೆಗಳನ್ನು ಪರಿಶೀಲಿಸಿದ ಬಳಿಕ ಉಪಲೋಕಾಯುಕ್ತರು ಅವರ ಶೇ.50ರಷ್ಟು ಪಿಂಚಣಿಯನ್ನು ಶಾಶ್ವತವಾಗಿ ತಡೆಹಿಡಿಯುವಂತೆ ಶಿಫಾರಸು ಮಾಡಿದ್ದರು. ಅದರಂತೆ ಸರ್ಕಾರವೂ ಆದೇಶ ಹೊರಡಿಸಿತ್ತು. ಇದನ್ನು ಪ್ರಶ್ನಿಸಿ ಅಲ್ಬಾಲ್ ಮತ್ತೆ ಕೆಎಟಿಗೆ ಅರ್ಜಿ ಸಲ್ಲಿಸಿದ್ದರು. ಕೆಎಟಿ ಅರ್ಜಿಯನ್ನು ವಜಾಗೊಳಿಸಿದ ಹಿನ್ನೆಲೆಯಲ್ಲಿ ಅವರು ಹೈಕೋರ್ಟ್ ಮೊರೆ ಹೋಗಿದ್ದರು.

ಪ್ರಕರಣದ ಸಂಪೂರ್ಣ ದಾಖಲೆಗಳನ್ನು ಪರಿಶೀಲಿಸಿದ ಹೈಕೋರ್ಟ್, ಸರ್ಕಾರದ ನಿಯಮದಂತೆ ಸಂಗ್ರಹಿಸಿ ಖಜಾನೆಗೆ ಜಮೆ ಮಾಡಿರುವ ಮುದ್ರಾಂಕ ಶುಲ್ಕವನ್ನು ಲಂಚವೆಂದು ಪರಿಗಣಿಸಲಾಗದು ಎಂದು ಸ್ಪಷ್ಟಪಡಿಸಿ, ನಿವೃತ್ತ ಗ್ರಾಮ ಲೆಕ್ಕಾಧಿಕಾರಿಗೆ ವಿಧಿಸಿದ್ದ ಶಿಕ್ಷೆಯನ್ನು ರದ್ದುಪಡಿಸಿದೆ. ಅಲ್ಲದೆ, ತಡೆಹಿಡಿಯಲಾಗಿದ್ದ ಸಂಪೂರ್ಣ ಪಿಂಚಣಿಯನ್ನು ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

6 ರನ್ʼಗಳ ರೋಚಕ ಗೆಲುವು.. ಕೊನೆಯ ಓವರ್ʼವರೆಗೂ ಕುತೂಹಲ ಕೆರಳಿಸಿದ ಪಂದ್ಯದಿಂದ CPLಗೆ ಭರ್ಜರಿ ಚಾಲನೆ!

0

ಕಿಂಗ್ಸ್‌ಟೌನ್: ಕೆರಿಬಿಯನ್ ಪ್ರೀಮಿಯರ್ ಲೀಗ್‌ನ 14ನೇ ಆವೃತ್ತಿಗೆ ರೋಚಕ ಪಂದ್ಯವೊಂದರೊಂದಿಗೆ ಚಾಲನೆ ದೊರೆತಿದೆ. ಕಿಂಗ್ಸ್‌ಟೌನ್‌ನ ಅರ್ನೋಸ್ ವೇಲ್ ಮೈದಾನದಲ್ಲಿ ನಡೆದ ಉದ್ಘಾಟನಾ ಪಂದ್ಯದಲ್ಲಿ ಜಮೈಕಾ ಕಿಂಗ್ಸ್‌ಮೆನ್ ಹಾಗೂ ಅಂಟಿಗುವಾ ಅಂಡ್ ಬಾರ್ಬುಡಾ ಫಾಲ್ಕನ್ಸ್ ತಂಡಗಳು ಮುಖಾಮುಖಿಯಾಗಿದ್ದು, ಕೊನೆಯ ಎಸೆತದವರೆಗೂ ನಡೆದ ರೋಚಕ ಹೋರಾಟದಲ್ಲಿ ಫಾಲ್ಕನ್ಸ್ ತಂಡ 2 ವಿಕೆಟ್‌ಗಳಿಂದ ಗೆಲುವು ಸಾಧಿಸಿದೆ.

ಟಾಸ್ ಗೆದ್ದ ಅಂಟಿಗುವಾ ಅಂಡ್ ಬಾರ್ಬುಡಾ ಫಾಲ್ಕನ್ಸ್ ನಾಯಕ ಫ್ಯಾಬಿಯನ್ ಅಲೆನ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಅದರಂತೆ ಮೊದಲು ಬ್ಯಾಟ್ ಮಾಡಿದ ಜಮೈಕಾ ಕಿಂಗ್ಸ್‌ಮೆನ್ ತಂಡ ಉತ್ತಮ ಆರಂಭ ಪಡೆಯಿತು.

ಆರಂಭಿಕ ಬ್ಯಾಟರ್ ರೀಝ ಹೆಂಡ್ರಿಕ್ಸ್ ಕೇವಲ 25 ಎಸೆತಗಳಲ್ಲಿ 42 ರನ್ ಸಿಡಿಸಿದರೆ, ನಾಯಕ ರೋವ್‌ಮನ್ ಪೊವೆಲ್ 47 ರನ್‌ಗಳ ಮಹತ್ವದ ಕೊಡುಗೆ ನೀಡಿದರು. ಇವರಿಬ್ಬರ ಬ್ಯಾಟಿಂಗ್ ನೆರವಿನಿಂದ ಜಮೈಕಾ ಕಿಂಗ್ಸ್‌ಮೆನ್ ತಂಡ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 167 ರನ್ ಗಳಿಸಿತು.

ಕೊನೆಯ ಎಸೆತದವರೆಗೂ ನಡೆದ ರೋಚಕ ಹೋರಾಟ

168 ರನ್‌ಗಳ ಗುರಿ ಬೆನ್ನತ್ತಿದ ಅಂಟಿಗುವಾ ಅಂಡ್ ಬಾರ್ಬುಡಾ ಫಾಲ್ಕನ್ಸ್ ತಂಡಕ್ಕೆ ಆರಂಭಿಕ ಹಂತದಲ್ಲಿ ಟಿಮ್ ರಾಬಿನ್ಸನ್ 40 ರನ್ ಗಳಿಸಿ ಆಸರೆಯಾದರು. ಬಳಿಕ ತಜಿಂದರ್ ಧಿಲ್ಲೋನ್ ಸ್ಫೋಟಕ ಬ್ಯಾಟಿಂಗ್ ನಡೆಸಿ ಕೇವಲ 37 ಎಸೆತಗಳಲ್ಲಿ 62 ರನ್ ಬಾರಿಸಿದರು.

ಆದರೂ ಅಂತಿಮ ಹಂತದಲ್ಲಿ ಜಮೈಕಾ ಬೌಲರ್‌ಗಳು ಪಂದ್ಯವನ್ನು ತಮ್ಮತ್ತ ತಿರುಗಿಸಿಕೊಂಡರು. ಕೊನೆಯ ಓವರ್‌ನಲ್ಲಿ ಫಾಲ್ಕನ್ಸ್ ತಂಡಕ್ಕೆ ಗೆಲ್ಲಲು ಕೇವಲ 6 ರನ್‌ಗಳ ಅಗತ್ಯವಿತ್ತು.

ಕೊನೆಯ ಓವರ್ ಎಸೆದ ಹುನೈನ್ ಶಾ ಮೊದಲ ಎರಡು ಎಸೆತಗಳಲ್ಲಿ ಕೇವಲ 3 ರನ್ ನೀಡಿದರು. ಮೂರನೇ ಎಸೆತದಲ್ಲಿ ಜಹ್ಮರ್ ಹ್ಯಾಮಿಲ್ಟನ್ 3 ರನ್ ಗಳಿಸಿ ಔಟಾದರೆ, ನಾಲ್ಕನೇ ಎಸೆತದಲ್ಲಿ ಉಸಾಮಾ ಮಿರ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು.

ಇದರಿಂದ ಕೊನೆಯ ಎರಡು ಎಸೆತಗಳಲ್ಲಿ ಫಾಲ್ಕನ್ಸ್ ತಂಡಕ್ಕೆ 3 ರನ್‌ಗಳ ಅಗತ್ಯವಾಯಿತು. ಐದನೇ ಎಸೆತದಲ್ಲಿ ಹುನೈನ್ ಶಾ ಕೇವಲ ಒಂದು ರನ್ ನೀಡಿದರು. ಹೀಗಾಗಿ ಕೊನೆಯ ಎಸೆತದಲ್ಲಿ ಗೆಲುವಿಗೆ 2 ರನ್ ಬೇಕಾಯಿತು.

ಅಂತಿಮ ಎಸೆತದಲ್ಲಿ ಶಮರ್ ಸ್ಪ್ರಿಂಗರ್ 2 ರನ್ ಕಲೆಹಾಕುವ ಮೂಲಕ ಅಂಟಿಗುವಾ ಅಂಡ್ ಬಾರ್ಬುಡಾ ಫಾಲ್ಕನ್ಸ್ ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟರು. ಇದರೊಂದಿಗೆ ಫಾಲ್ಕನ್ಸ್ ತಂಡ 19 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ ಗುರಿ ತಲುಪಿ, ಸಿಪಿಎಲ್‌ನ 14ನೇ ಆವೃತ್ತಿಯನ್ನು ಗೆಲುವಿನೊಂದಿಗೆ ಆರಂಭಿಸಿತು. ಇತ್ತ ಜಮೈಕಾ ಕಿಂಗ್ಸ್‌ಮೆನ್ ತಂಡವು ಕೊನೆಯವರೆಗೂ ಹೋರಾಡಿದರೂ ಕೇವಲ 2 ವಿಕೆಟ್‌ಗಳಿಂದ ಸೋಲೊಪ್ಪಿಕೊಳ್ಳಬೇಕಾಯಿತು.

ಜಮೈಕಾ ಕಿಂಗ್ಸ್‌ಮೆನ್ ಪ್ಲೇಯಿಂಗ್ 11

ಶಯಾನ್ ಜಹಾಂಗೀರ್ (ವಿಕೆಟ್ ಕೀಪರ್), ರೀಝ ಹೆಂಡ್ರಿಕ್ಸ್, ಶಕ್ಕೆರೆ ಪ್ಯಾರಿಸ್, ಕೀಸಿ ಕಾರ್ಟಿ, ರೋವ್‌ಮನ್ ಪೊವೆಲ್ (ನಾಯಕ), ಆ್ಯಂಡ್ರೆ ರಸೆಲ್, ಹಸನ್ ಖಾನ್, ಕೀಮೊ ಪಾಲ್, ಹುನೈನ್ ಶಾ, ವಿಟೆಲ್ ಲಾವೆಸ್, ಜೀವರ್ ರಾಯಲ್.

ಅಂಟಿಗುವಾ ಅಂಡ್ ಬಾರ್ಬುಡಾ ಫಾಲ್ಕನ್ಸ್ ಪ್ಲೇಯಿಂಗ್ 11

ಎವಿನ್ ಲೆವಿಸ್, ರಹಕೀಮ್ ಕಾರ್ನ್‌ವಾಲ್, ಟಿಮ್ ರಾಬಿನ್ಸನ್, ಜಹ್ಮರ್ ಹ್ಯಾಮಿಲ್ಟನ್ (ವಿಕೆಟ್ ಕೀಪರ್), ತಜಿಂದರ್ ಧಿಲ್ಲೋನ್, ಕರೀಮಾ ಗೋರ್, ಫ್ಯಾಬಿಯನ್ ಅಲೆನ್ (ನಾಯಕ), ಶಮರ್ ಸ್ಪ್ರಿಂಗರ್, ಉಸಾಮಾ ಮಿರ್, ಅಲ್ಜಾರಿ ಜೋಸೆಫ್, ಜೇಡನ್ ಸೀಲ್ಸ್.

Bengaluru: ಹಿಂದಿ ಮಾತನಾಡದಿದ್ದಕ್ಕೆ ಯುವತಿ, ಯುವಕರಿಂದ ಹಲ್ಲೆ! ಕೇಸ್ ದಾಖಲು

ಬೆಂಗಳೂರು: ಹಿಂದಿ ಮಾತನಾಡದಿದ್ದಕ್ಕೆ ಡೆಲಿವರಿ ಬಾಯ್‌ ಮೇಲೆ ಯುವಕರ ಗುಂಪೊಂದು ಹಲ್ಲೆ ನಡೆಸಿದ ಆರೋಪ ಬೆಂಗಳೂರಿನ ಯಲಹಂಕ ನ್ಯೂ ಟೌನ್‌ನಲ್ಲಿ ಕೇಳಿಬಂದಿದೆ. ಇಂದು ಮುಂಜಾನೆ ನಡೆದ ಘಟನೆಗೆ ಸಂಬಂಧಿಸಿದಂತೆ ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಸಂತ್ರಸ್ತನನ್ನು 25 ವರ್ಷದ ಬಸವರಾಜ್ ಎಂದು ಗುರುತಿಸಲಾಗಿದೆ. ವಿದ್ಯಾಭ್ಯಾಸದ ಜೊತೆಗೆ ಅವರು ಕ್ವಿಕ್-ಕಾಮರ್ಸ್ ಡೆಲಿವರಿ ಪ್ಲಾಟ್‌ಫಾರ್ಮ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಸವರಾಜ್ ಅವರು ಆರ್ಡರ್‌ವೊಂದನ್ನು ತಲುಪಿಸಿದ ಬಳಿಕ ಯಲಹಂಕ ನ್ಯೂ ಟೌನ್‌ನ 4ನೇ ಹಂತದಿಂದ ಸಂತೋಷ್ ನಗರದ ಕಡೆಗೆ ತೆರಳುತ್ತಿದ್ದರು. ಈ ವೇಳೆ ಬೆಳಗಿನ ಜಾವ ಸುಮಾರು 4.40ರ ವೇಳೆಗೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಕೆಲವು ಯುವತಿಯರು ತಮ್ಮನ್ನು ನಿಂದಿಸಿದ್ದಾರೆ ಎಂದು ಅವರು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ.

ಇದರಿಂದಾಗಿ ಯುವತಿಯರ ಬಳಿ ತೆರಳಿದ ಬಸವರಾಜ್, ತಮಗೆ ಹಿಂದಿ ಭಾಷೆ ಬರುವುದಿಲ್ಲ. ಏಕೆ ನಿಂದಿಸುತ್ತಿದ್ದೀರಿ ಎಂಬುದನ್ನು ಕನ್ನಡದಲ್ಲಿ ತಿಳಿಸುವಂತೆ ಕೇಳಿಕೊಂಡಿದ್ದಾರೆ ಎನ್ನಲಾಗಿದೆ. ಈ ವೇಳೆ ಯುವತಿಯರು ತಮ್ಮನ್ನು ಮತ್ತೆ ನಿಂದಿಸಿ, ಟೋಪಿಯನ್ನು ಎಳೆದು ಹಲ್ಲೆಗೆ ಯತ್ನಿಸಿದ್ದಾರೆ ಎಂದು ಬಸವರಾಜ್ ದೂರಿನಲ್ಲಿ ತಿಳಿಸಿದ್ದಾರೆ.

ನಂತರ ಬಸವರಾಜ್ ಅವರು ಪೊಲೀಸ್ ಸಹಾಯವಾಣಿ 112ಕ್ಕೆ ಹಾಗೂ ತಮ್ಮ ಪರಿಚಯಸ್ಥ ಅಶೋಕ್ ಅವರಿಗೆ ಕರೆ ಮಾಡಿದ್ದಾರೆ. ಈ ನಡುವೆ ಬಸವರಾಜ್ ಅವರನ್ನು ತಡೆದ ಯುವತಿಯರು ಸ್ಥಳಕ್ಕೆ ಕೆಲವು ಯುವಕರನ್ನು ಕರೆಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.

ಬಳಿಕ ಸುಮಾರು ನಾಲ್ಕೈದು ಮಂದಿ ಯುವಕ-ಯುವತಿಯರು ಸೇರಿಕೊಂಡು ಬಸವರಾಜ್ ಮೇಲೆ ಕೈಗಳಿಂದ ಹಾಗೂ ರಸ್ತೆಯಲ್ಲಿದ್ದ ಮರದ ದೊಣ್ಣೆಯಿಂದ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಹಲ್ಲೆಯಿಂದ ಬೆನ್ನು, ತಲೆ ಹಾಗೂ ಮೂಗಿನ ಭಾಗಕ್ಕೆ ಗಾಯಗಳಾಗಿದ್ದು, ರಕ್ತಸ್ರಾವವಾಗಿದೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

ಬಸವರಾಜ್ ಅವರನ್ನು ರಕ್ಷಿಸಲು ಅಶೋಕ್ ಮಧ್ಯಪ್ರವೇಶಿಸಿದಾಗ ಅವರ ತಲೆಯ ಮೇಲೂ ಹಲ್ಲೆ ನಡೆಸಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಆರೋಪಿಗಳು ಅವಾಚ್ಯ ಶಬ್ದಗಳಿಂದ ನಿಂದಿಸಿ, ತಮ್ಮನ್ನು ಸುಮ್ಮನೆ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ ಎಂದು ಬಸವರಾಜ್ ತಿಳಿಸಿದ್ದಾರೆ.

ಬಸವರಾಜ್ ನೀಡಿದ ದೂರಿನ ಆಧಾರದ ಮೇಲೆ ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ಗುರುತಿಸದ ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್‌ಗಳಾದ 118(1), 126(2), 351(2), 352 ಹಾಗೂ 3(5) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ತನಿಖೆ ನಡೆಯುತ್ತಿದ್ದು, ಹಲ್ಲೆ ನಡೆಸಿದ ಆರೋಪಿಗಳ ಗುರುತು ಪತ್ತೆಹಚ್ಚಲು ಪೊಲೀಸರು ಕ್ರಮ ಕೈಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.