Home Blog

ಗದಗ: ಹರಿಜಾತ್ರೋತ್ಸವ ಯಶಸ್ಸಿಗೆ ಶ್ರಮಿಸಿದ ಸೇವಕರಿಗೆ ಅದ್ದೂರಿ ಸನ್ಮಾನ!

0

ಗದಗ: ಅವಳಿ ನಗರದ ಗ್ರಾಮ ದೇವತೆಯರಾದ ಶ್ರೀ ದ್ಯಾಮವ್ವ ಹಾಗೂ ಶ್ರೀ ದುರ್ಗಮ್ಮ ದೇವಿಯರ ಹರಿಜಾತ್ರೋತ್ಸವ ಕಾರ್ಯಕ್ರಮ ಒಂಬತ್ತು ದಿನಗಳ ಕಾಲ ಅದ್ದೂರಿಯಾಗಿ ಸಂಭ್ರಮ-ಸಡಗರದಿಂದ ಜರುಗಿತು.

ಜಾತ್ರಾ ಮಹೋತ್ಸವದುದ್ದಕ್ಕೂ ಹಗಲು-ರಾತ್ರಿ ನಿರಂತರವಾಗಿ ಶ್ರಮಿಸಿ ಜಾತ್ರೆ ಯಶಸ್ವಿಯಾಗಲು ಕಾರಣರಾದ ದಾನಿಗಳು, ಶ್ರಮಿಕರು ಹಾಗೂ ಸೇವಕರನ್ನು ಜಾತ್ರಾ ಸಮಿತಿಯು ಸನ್ಮಾನಿಸಿ ಗೌರವಿಸಿತು.

ಓಕ್ಕಲಗೇರಿ ಓಣಿಯಲ್ಲಿರುವ ದ್ಯಾಮವ್ವನ ಕಟ್ಟಿಯ ಆವರಣದಲ್ಲಿ ಜಾತ್ರಾ ಸಮಿತಿಯಿಂದ ವಿಶೇಷ ಗೌರವ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸ್ವಚ್ಛತೆಯ ಮೂಲಕ ಒಂಬತ್ತು ದಿನಗಳ ಕಾಲ ಗ್ರಾಮ ದೇವತೆಯರ ಸೇವೆ ಸಲ್ಲಿಸಿದ ಪೌರಕಾರ್ಮಿಕರು, ಛಾಯಾಗ್ರಾಹಕರು, ಕೆ.ಇ.ಬಿ. ಸಿಬ್ಬಂದಿ, ಅಡುಗೆ ಭಟ್ಟರು ಹಾಗೂ ಅವರ ಸಹಾಯಕರು, ಪಾತ್ರೆ ಸ್ವಚ್ಛಗೊಳಿಸುವವರು, ಪ್ರಸಾದ ಉಣಬಡಿಸಿದವರು ಹಾಗೂ ತೆಂಗಿನಕಾಯಿ ಒಡೆಯುವವರಿಗೆ ಸನ್ಮಾನಿಸಿ ನೆನಪಿನ ಕಾಣಿಕೆ ನೀಡಲಾಯಿತು.

ಜಾತ್ರೆಯಲ್ಲಿ ಅವಿರತವಾಗಿ ದುಡಿದ ಗಂಜೀ ಬಸವೇಶ್ವರ ಮಿತ್ರ ಮಂಡಳಿಯ ಸದಸ್ಯರು, ದೇವಸ್ಥಾನದ ಅರ್ಚಕರು ಹಾಗೂ ಕಾರ್ಯಕರ್ತರಿಗೂ ಗೌರವ ಸಮರ್ಪಿಸಲಾಯಿತು. ಹರಿಜಾತ್ರೋತ್ಸವ ಕಮಿಟಿಯ ಈ ಕಾರ್ಯದಿಂದ ಭಕ್ತಿ-ಭಾವದಿಂದ ಸೇವೆ ಸಲ್ಲಿಸಿದವರೆಲ್ಲರೂ ಸಂತಸದಿಂದ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಧನ ಸಹಾಯ ಮಾಡಿದವರ ಜೊತೆಗೆ ತನು-ಮನದಿಂದ ಜಾತ್ರೆಯಲ್ಲಿ ಭಾಗಿಯಾಗಿ ಸೇವೆ ಸಲ್ಲಿಸಿದವರನ್ನೂ ಗುರುತಿಸಿ ಗೌರವಿಸಿರುವ ಕೀರ್ತಿ ಜಾತ್ರಾ ಕಮಿಟಿಯ ಸದಸ್ಯರಿಗೆ ಸಲ್ಲುತ್ತದೆ. ಜಾತ್ರೆಯ ಯಶಸ್ಸಿನ ಹಿಂದೆ ತೆರೆಮರೆಯಲ್ಲಿ ಶ್ರಮಿಸಿದ ಪ್ರತಿಯೊಬ್ಬರ ಸೇವೆಯನ್ನು ಸ್ಮರಿಸಿ ಗೌರವಿಸಿರುವುದು ವಿಶೇಷವಾಗಿತ್ತು.

ಪ್ರತಿ ಹನ್ನೆರಡು ವರ್ಷಕ್ಕೊಮ್ಮೆ ನಡೆಯಬೇಕಿದ್ದ ಈ ಜಾತ್ರೆ ಪ್ರಸಕ್ತ ವರ್ಷ ಹದಿನೆಂಟು ವರ್ಷಗಳ ಬಳಿಕ ಅದ್ದೂರಿಯಾಗಿ ಜರುಗಿತು. ಭಕ್ತರು ನಿರೀಕ್ಷೆಗೂ ಮೀರಿ ತನು-ಮನ-ಧನದಿಂದ ಭಾಗಿಯಾಗಿ ನಾಡಿನಾದ್ಯಂತ ಗದಗ-ಬೆಟಗೇರಿಯ ಗ್ರಾಮ ದೇವತೆಯರ ಜಾತ್ರೆ ವಿಜೃಂಭಣೆಯಿಂದ ನಡೆಯಲು ಪ್ರಮುಖ ಕಾರಣರಾದರು.

ಉಡಿ ತುಂಬುವ ಕಾರ್ಯಕ್ರಮದಲ್ಲಂತೂ ಸಹಸ್ರಾರು ಸಂಖ್ಯೆಯಲ್ಲಿ ಮುತೈದೆಯರು ಭಾಗವಹಿಸಿದ್ದು ಜಾತ್ರೆಯ ಮತ್ತೊಂದು ವಿಶೇಷವಾಗಿತ್ತು. ಭಕ್ತಿ, ಸಂಭ್ರಮ ಮತ್ತು ಸಾಂಪ್ರದಾಯಿಕ ವೈಭವದೊಂದಿಗೆ ನಡೆದ ಹರಿಜಾತ್ರೋತ್ಸವ ಜನಮನ ಸೆಳೆಯುವಲ್ಲಿ ಯಶಸ್ವಿಯಾಯಿತು.

ನಾಡಿನ ಗಮನ ಸೆಳೆದ ಭಂಡಾರ ಜಾತ್ರೆ:

2026ರ ಹರಿಜಾತ್ರೋತ್ಸವದಲ್ಲಿ ಈ ಬಾರಿ ಭಂಡಾರ ಜಾತ್ರೆ ನಾಡಿನ ಗಮನ ಸೆಳೆಯಿತು. ಭಕ್ತರು ನೀಡಿದ ಸುಮಾರು 17 ಟನ್‌ಗೂ ಅಧಿಕ ಭಂಡಾರದಲ್ಲಿ ಭಕ್ತರು ಮಿಂದೆದ್ದರು. ಪ್ರತಿ ಗಲ್ಲಿ-ಗಲ್ಲಿಗಳೂ ಹಳದಿ ಭಂಡಾರಮಯವಾಗಿದ್ದು, ಜಾತ್ರೆಯ ವೈಭವಕ್ಕೆ ಮತ್ತಷ್ಟು ಮೆರುಗು ನೀಡಿತು.

ಹೀಗೆ ಹತ್ತು-ಹಲವಾರು ಕಾರ್ಯಕ್ರಮಗಳ ಯಶಸ್ವಿಗಾಗಿ ಶ್ರಮಿಸಿದವರನ್ನು ಗುರುತಿಸಿ ಗೌರವಿಸಿರುವುದು ಜಾತ್ರೋತ್ಸವದ ಅವಿಸ್ಮರಣೀಯ ಕ್ಷಣವಾಗಿತ್ತು.

ಶ್ರೀಧರ ವಜ್ರಬಂಡಿ, ರಾಜು ಖಾನಪ್ಪನವರ, ವೀರಣ್ಣ ಮೇಟಿ, ಮಂಜು ಅಂತರಗೊಂಡ, ಚೇತನ್ ಅಬ್ಬಿಗೇರಿ, ಮಲ್ಲು ಮಹಾಂತಶೆಟ್ಟರ, ಮಂಜುನಾಥ ಕುರ್ತಕೋಟಿ, ಈಶ್ವರ ಹಳ್ಳಿ, ಕಿರಣ್ ಕಮತರ, ಪರಶುರಾಮ ಹಳ್ಳದ, ನರಸಪ್ಪ ತುಕ್ಕಪ್ಪನವರ, ಬಸವರಾಜ ಹುಬ್ಬಳ್ಳಿ, ನಾಗರಾಜ ಮೇಣಸಗಿ, ವೀರೂಪಾಕ್ಷಪ್ಪ ಹೆಬ್ಬಳ್ಳಿ, ಮಹೇಶ ರೋಖಡೆ, ಸುರೇಶ ಹೆಬಸೂರ, ಪಂಚಾಕ್ಷರಿ ಅಂಗಡಿ ಸೇರಿದಂತೆ ನೂರಾರು ಕಾರ್ಯಕರ್ತರು ತಮ್ಮ ಅಮೂಲ್ಯ ಸೇವೆ ಸಲ್ಲಿಸುವ ಮೂಲಕ ಜಾತ್ರೆಯ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಈ ಬಗ್ಗೆ ಜಾತ್ರಾ ಕಮಿಟಿ ಸಹ ಕಾರ್ಯದರ್ಶಿ ನವೀನ ನಾಲ್ವಾಡ ಮಾತನಾಡಿ, “ಹರಿಜಾತ್ರೋತ್ಸವದಲ್ಲಿ ಭಾಗವಹಿಸಿ ಗ್ರಾಮ ದೇವತೆಯರ ಸೇವೆ ಸಲ್ಲಿಸುವ ಅವಕಾಶ ದೊರಕಿದ್ದು ನನ್ನ ಪೂರ್ವಜನ್ಮದ ಪುಣ್ಯ ಎಂದು ಭಾವಿಸುತ್ತೇನೆ. ನಾಡಿನಾದ್ಯಂತ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿ ಜಾತ್ರೆಯನ್ನು ಯಶಸ್ವಿಗೊಳಿಸಿದ್ದಾರೆ” ಎಂದು ಹೇಳಿದರು.

ಈ ಬಗ್ಗೆ ಜಾತ್ರಾ ಕಮಿಟಿಯ ಸಹ ಸಂಘಟನಾ ಕಾರ್ಯದರ್ಶಿ ಹೇಮಂತ ಗಿಡ್ಡಹನುಮಣ್ಣನವರ ಮಾತನಾಡಿ, “12 ವರ್ಷಕ್ಕೊಮ್ಮೆ ನಡೆಯಬೇಕಿದ್ದ ಜಾತ್ರೆ ಈ ವರ್ಷ 18 ವರ್ಷಗಳ ಬಳಿಕ ಸಂಪನ್ನವಾಗಿದೆ. ಹಿರಿಯರ ಮಾರ್ಗದರ್ಶನ ಹಾಗೂ ಭಕ್ತರ ಸಹಕಾರದೊಂದಿಗೆ ಜಾತ್ರೆ ಯಶಸ್ವಿಯಾಗಿದೆ. ಯಾವುದೇ ಜಾತಿ-ಧರ್ಮದ ಭೇದವಿಲ್ಲದೆ ಜಾತ್ರೆ ಅದ್ದೂರಿಯಾಗಿ ನಡೆದಿರುವುದು ಮತ್ತೊಂದು ವಿಶೇಷ. ಮುಂಬರುವ ಜಾತ್ರೆ ಇನ್ನಷ್ಟು ಅದ್ದೂರಿಯಾಗಿ ನಡೆಯಲಿ” ಎಂದು ಹೇಳಿದರು.

ಈ ಬಗ್ಗೆ ಜಾತ್ರಾ ಕಮಿಟಿ ಸಹ ಕಾರ್ಯದರ್ಶಿ ಬಸವರಾಜ ಮಡಿವಾಳರ ಮಾತನಾಡಿ, “ಅವಳಿ ನಗರದ ಗ್ರಾಮ ದೇವತೆಯರ ಜಾತ್ರೆ ನಾಡಿನ ಹೆಸರಾಂತ ಜಾತ್ರೆಗಳಲ್ಲಿ ಒಂದಾಗಿದೆ. ಹಿಂದಿನ ಎಲ್ಲ ಜಾತ್ರೆಗಳಿಗಿಂತ ಈ ಬಾರಿಯ ಜಾತ್ರೆ ವಿಶಿಷ್ಟವಾಗಿ ಪೂರ್ಣಗೊಂಡಿದೆ. ಜಾತ್ರೆಯ ಯಶಸ್ಸಿನ ಹಿಂದೆ ಮಹಿಳೆಯರ ಪಾತ್ರ ಬಹಳ ಪ್ರಮುಖವಾಗಿತ್ತು. ಪ್ರತಿದಿನ ಸಾಂಸ್ಕೃತಿಕ ಕಾರ್ಯಕ್ರಮಗಳು ಯಶಸ್ವಿಯಾಗಿ ಜರುಗಿದವು. ನಿರೀಕ್ಷೆಗೂ ಮೀರಿ ಜಾತ್ರೆ ಯಶಸ್ವಿಯಾಗಿದೆ” ಎಂದು ಹೇಳಿದರು.

‘ಸಂಘಟಿತ ಅಪರಾಧ ಸಹಿಸಲ್ಲ, ಸದೆಬಡಿಯುತ್ತೇವೆ’; ಗದಗದ ನೂತನ ಎಸ್‌ಪಿ ಮಿಥುನ್ ಎಚ್.ಎನ್. ಖಡಕ್ ವಾರ್ನಿಂಗ್!

0

ಗದಗ: ಜಿಲ್ಲೆಯಲ್ಲಿ ಸಂಘಟಿತ ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕಿ, ಸಮಾಜದ ಶಾಂತಿ ಹಾಗೂ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ರೌಡಿಗಳ ವಿರುದ್ಧ ಯಾವುದೇ ಮುಲಾಜಿಲ್ಲದೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಗದಗ ಜಿಲ್ಲೆಯ ನೂತನ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಐಪಿಎಸ್ ಅಧಿಕಾರಿ ಮಿಥುನ್ ಎಚ್.ಎನ್. ಎಚ್ಚರಿಸಿದರು.

ಭಾನುವಾರ ಗದಗ ಜಿಲ್ಲೆಯ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು,
ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವುದು ತಮ್ಮ ಪ್ರಮುಖ ಆದ್ಯತೆಯಾಗಿದ್ದು, ಅಪರಾಧ ಚಟುವಟಿಕೆಗಳನ್ನು ಹತ್ತಿಕ್ಕಲು ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿದೆ ಎಂದು ಅವರು ತಿಳಿಸಿದರು.

ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದವರಾದ ಮಿಥುನ್ ಎಚ್.ಎನ್. ಅವರು ದಾವಣಗೆರಿ ಜಿಲ್ಲೆಯಲ್ಲಿ ಪ್ರೊಬೇಷನರಿ ಅಧಿಕಾರಿಯಾಗಿ ತಮ್ಮ ಪೊಲೀಸ್ ಸೇವೆ ಆರಂಭಿಸಿದ್ದರು. ಬಳಿಕ ಮಂಗಳೂರಿನಲ್ಲಿ ಸುಮಾರು ಒಂದೂವರೆ ವರ್ಷಗಳ ಕಾಲ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿಯಾಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ.

ಗದಗ ಜಿಲ್ಲೆ ಸಾಂಸ್ಕೃತಿಕ ಹಾಗೂ ಸಾಹಿತ್ಯಿಕವಾಗಿ ಶ್ರೀಮಂತ ಜಿಲ್ಲೆಯಾಗಿದೆ. ಜಿಲ್ಲೆಯ ವಾಸ್ತವ ಸ್ಥಿತಿ ಹಾಗೂ ಪೊಲೀಸ್ ವ್ಯವಸ್ಥೆಯ ಕಾರ್ಯವೈಖರಿಯನ್ನು ಅರಿಯುವ ಉದ್ದೇಶದಿಂದ ವಾರದ ಅವಧಿಯಲ್ಲಿ ಜಿಲ್ಲೆಯ ಎಲ್ಲ ತಾಲ್ಲೂಕುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗುವುದು ಎಂದು ಅವರು ತಿಳಿಸಿದರು.

ಆಯಾ ಪ್ರದೇಶಗಳ ಸಮಸ್ಯೆಗಳನ್ನು ಖುದ್ದಾಗಿ ಅರಿತು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು. ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವ ಪರಿಣಾಮಕಾರಿ ಪೊಲೀಸ್ ವ್ಯವಸ್ಥೆ ರೂಪಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಾಗುವುದು ಎಂದು ಹೇಳಿದರು.

ಮುಂದಿನ ದಿನಗಳಲ್ಲಿ ಸಾಲುಸಾಲು ಹಬ್ಬಗಳು ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗುವುದು. ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶವಾಗದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು ಶಾಂತಿ ಹಾಗೂ ಸೌಹಾರ್ದತೆ ಕಾಪಾಡಲು ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.

500 ರೌಡಿ ಶೀಟರ್‌ಗಳ ಮೇಲೆ ನಿಗಾ:

ಜಿಲ್ಲೆಯಲ್ಲಿ ಸುಮಾರು 500 ರೌಡಿ ಶೀಟರ್‌ಗಳು ಇರುವ ಮಾಹಿತಿ ಲಭ್ಯವಾಗಿದೆ. ಸಮಾಜದ ಶಾಂತಿ ಕದಡುವ ಅಥವಾ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ರೌಡಿಗಳ ಮೇಲೆ ನಿರಂತರ ನಿಗಾ ವಹಿಸಲಾಗುವುದು. ಅಗತ್ಯವಿದ್ದಲ್ಲಿ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಸ್‌ಪಿ ಎಚ್ಚರಿಸಿದರು.

ಜಿಲ್ಲೆಯಲ್ಲಿ ಗಾಂಜಾ ಸಾಗಾಟ ಮತ್ತು ಮಾರಾಟವನ್ನು ಸಂಪೂರ್ಣವಾಗಿ ನಿಯಂತ್ರಿಸಲು ಪೊಲೀಸ್ ಇಲಾಖೆ ಬದ್ಧವಾಗಿದೆ. ಮಾದಕ ವಸ್ತುಗಳ ಜಾಲದ ಕುರಿತು ಸಮಗ್ರ ಮಾಹಿತಿ ಸಂಗ್ರಹಿಸಿ, ಮಾರಾಟ ಹಾಗೂ ಸಾಗಾಟದಲ್ಲಿ ತೊಡಗಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಆನ್‌ಲೈನ್ ವಂಚನೆ ಪ್ರಕರಣಗಳಲ್ಲಿ ಸಾರ್ವಜನಿಕರು ಹೆಚ್ಚಿನ ಎಚ್ಚರಿಕೆ ವಹಿಸಬೇಕು ಎಂದು ಎಸ್‌ಪಿ ಮಿಥುನ್ ಎಚ್.ಎನ್. ಮನವಿ ಮಾಡಿದರು.

ಹಣ ಕಳೆದುಕೊಂಡ ತಕ್ಷಣವೇ 1930 ಸೈಬರ್ ಕ್ರೈಂ ಸಹಾಯವಾಣಿ ಸಂಖ್ಯೆಗೆ ದೂರು ನೀಡಬೇಕು. ವಂಚನೆಯಾದ ಬಳಿಕ ಆರಂಭಿಕ ಕೆಲವು ಗಂಟೆಗಳಲ್ಲಿಯೇ ದೂರು ನೀಡಿದರೆ ಹಣದ ವಹಿವಾಟನ್ನು ತಡೆಹಿಡಿಯುವ ಸಾಧ್ಯತೆ ಹೆಚ್ಚಿರುತ್ತದೆ. ಹೀಗಾಗಿ ಯಾವುದೇ ವಿಳಂಬ ಮಾಡದೆ ತಕ್ಷಣ ದೂರು ದಾಖಲಿಸುವಂತೆ ಅವರು ಸಾರ್ವಜನಿಕರಿಗೆ ಸಲಹೆ ನೀಡಿದರು.

ಜಿಲ್ಲೆಯಲ್ಲಿ ರಸ್ತೆ ಅಪಘಾತಗಳ ಪ್ರಮಾಣ ಕಡಿಮೆ ಮಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು. ಅಪಘಾತಗಳಿಗೆ ಕಾರಣವಾಗುವ ಸ್ಥಳಗಳನ್ನು ಗುರುತಿಸಿ, ಸಂಬಂಧಪಟ್ಟ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸುವ ಮೂಲಕ ರಸ್ತೆ ಸುರಕ್ಷತೆಗೆ ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.

ಪೊಲೀಸ್ ಇಲಾಖೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಸಾರ್ವಜನಿಕರ ಸಹಕಾರ ಅತ್ಯಂತ ಅಗತ್ಯವಾಗಿದೆ. ಜನಸಾಮಾನ್ಯರು ತಮ್ಮ ಸಮಸ್ಯೆಗಳನ್ನು ಮುಕ್ತ ಮನಸ್ಸಿನಿಂದ ಪೊಲೀಸರೊಂದಿಗೆ ಹಂಚಿಕೊಳ್ಳಬಹುದು. ಸಾರ್ವಜನಿಕರು ನೀಡುವ ಮಾಹಿತಿಯ ಗೌಪ್ಯತೆಯನ್ನು ಕಾಪಾಡಲಾಗುವುದು ಎಂದು ಅವರು ಭರವಸೆ ನೀಡಿದರು.

ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ, ಶಾಂತಿ ಮತ್ತು ಸುರಕ್ಷತೆ ಕಾಪಾಡುವುದು ನಮ್ಮ ಮೊದಲ ಆದ್ಯತೆಯಾಗಿದೆ. ಸಂಘಟಿತ ಅಪರಾಧ, ಮಾದಕ ವಸ್ತುಗಳ ಜಾಲ ಹಾಗೂ ಸಮಾಜದ ಶಾಂತಿಗೆ ಧಕ್ಕೆ ತರುವವರ ವಿರುದ್ಧ ಯಾವುದೇ ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕರು ತಮ್ಮ ಸಮಸ್ಯೆಗಳು ಹಾಗೂ ಮಾಹಿತಿಯನ್ನು ಮುಕ್ತವಾಗಿ ಪೊಲೀಸರೊಂದಿಗೆ ಹಂಚಿಕೊಳ್ಳಬೇಕು. ಪೊಲೀಸ್ ಇಲಾಖೆ ಹಾಗೂ ಸಾರ್ವಜನಿಕರು ಪರಸ್ಪರ ಸಹಕಾರದಿಂದ ಕಾರ್ಯನಿರ್ವಹಿಸಿದಾಗ ಮಾತ್ರ ಉತ್ತಮ ಕಾನೂನು ಸುವ್ಯವಸ್ಥೆ ಸಾಧ್ಯವಾಗುತ್ತದೆ” ಎಂದು ಎಸ್‌ಪಿ ಮಿಥುನ್ ಎಚ್.ಎನ್. ಹೇಳಿದರು.

ರೇಷನ್‌ಗೆ ಕೊನೆಯ ದಿನವೇ ಸರ್ವರ್ ಕೈಕೊಟ್ಟಿತು; ಬೆಳಗಾವಿಯಲ್ಲಿ ಪಡಿತರಕ್ಕಾಗಿ ಜನರ ಪರದಾಟ

0

ಬೆಳಗಾವಿ: ಜಿಲ್ಲೆಯಾದ್ಯಂತ ಪಡಿತರ ವಿತರಣಾ ವ್ಯವಸ್ಥೆಯಲ್ಲಿ ಸರ್ವರ್ ಸಮಸ್ಯೆ ತಲೆದೋರಿದ್ದು, ನ್ಯಾಯಬೆಲೆ ಅಂಗಡಿಗಳ ಮುಂದೆ ಪಡಿತರ ಪಡೆಯಲು ಬಂದಿರುವ ಕಾರ್ಡುದಾರರು ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಲ್ಲುವಂತಾಗಿದೆ.

ಇಂದು ಪಡಿತರ ವಿತರಣೆಗಾಗಿ ಕೊನೆಯ ದಿನವಾಗಿರುವ ಹಿನ್ನೆಲೆಯಲ್ಲಿ ಸಮಸ್ಯೆ ಮತ್ತಷ್ಟು ಗಂಭೀರವಾಗಿದ್ದು, ಸಾರ್ವಜನಿಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಕೊಣ್ಣೂರು, ಯರಗಟ್ಟಿ ತಾಲೂಕಿನ ಮುಗಳಿಹಾಳ ಸೇರಿದಂತೆ ಹಲವು ಗ್ರಾಮಗಳಲ್ಲಿ ಪಡಿತರ ಪಡೆಯಲು ಬೆಳಗ್ಗೆಯಿಂದಲೇ ಜನರು ನ್ಯಾಯಬೆಲೆ ಅಂಗಡಿಗಳ ಮುಂದೆ ಜಮಾಯಿಸಿದ್ದಾರೆ. ಆದರೆ ಸರ್ವರ್ ಸಂಪರ್ಕ ನಿಧಾನಗತಿಯಲ್ಲಿ ಕಾರ್ಯನಿರ್ವಹಿಸುತ್ತಿರುವುದರಿಂದ ವಿತರಣಾ ಪ್ರಕ್ರಿಯೆ ವಿಳಂಬವಾಗುತ್ತಿದೆ.

ಸರ್ಕಾರ ಬಯೋಮೆಟ್ರಿಕ್ ಆಧಾರಿತ ಪಡಿತರ ವಿತರಣೆಯನ್ನು ಕಡ್ಡಾಯಗೊಳಿಸಿದೆ. ಆದರೆ ತಾಂತ್ರಿಕ ದೋಷದಿಂದಾಗಿ ಬಯೋಮೆಟ್ರಿಕ್ ಯಂತ್ರದಲ್ಲಿ ಕಾರ್ಡುದಾರರ ಹೆಬ್ಬೆರಳಿನ ಗುರುತು ಸರಿಯಾಗಿ ಸ್ವೀಕರಿಸುತ್ತಿಲ್ಲ. ಇದರಿಂದ ಒಬ್ಬೊಬ್ಬ ಕಾರ್ಡುದಾರರ ಪಡಿತರ ವಿತರಿಸಲು ಹೆಚ್ಚಿನ ಸಮಯ ಬೇಕಾಗುತ್ತಿದೆ.

ಶೇ.50ರಷ್ಟು ಕಾರ್ಡುದಾರರಿಗೆ ಮಾತ್ರ ಪಡಿತರ:

ಸರ್ವರ್ ಹಾಗೂ ಬಯೋಮೆಟ್ರಿಕ್ ಸಮಸ್ಯೆಯಿಂದಾಗಿ ಜಿಲ್ಲೆಯ ಹಲವು ಭಾಗಗಳಲ್ಲಿ ಇದುವರೆಗೆ ಸುಮಾರು ಶೇ.50ರಷ್ಟು ಕಾರ್ಡುದಾರರಿಗೆ ಮಾತ್ರ ಪಡಿತರ ವಿತರಿಸಲಾಗಿದೆ ಎನ್ನಲಾಗಿದೆ. ಉಳಿದ ಕಾರ್ಡುದಾರರು ಕಳೆದ ನಾಲ್ಕೈದು ದಿನಗಳಿಂದ ನ್ಯಾಯಬೆಲೆ ಅಂಗಡಿಗಳಿಗೆ ಅಲೆದಾಡುತ್ತಿದ್ದರೂ ಪಡಿತರ ಪಡೆಯಲು ಸಾಧ್ಯವಾಗುತ್ತಿಲ್ಲ.

ಇಂದು ಪಡಿತರ ಪಡೆಯಲು ಕೊನೆಯ ದಿನವಾಗಿರುವುದರಿಂದ ಉಳಿದ ಕಾರ್ಡುದಾರರಲ್ಲಿ ಆತಂಕ ಹೆಚ್ಚಾಗಿದೆ. ಒಂದೇ ದಿನದಲ್ಲಿ ಹೆಚ್ಚಿನ ಸಂಖ್ಯೆಯ ಜನರು ಪಡಿತರ ಪಡೆಯಲು ಮುಂದಾಗಿರುವ ಹಿನ್ನೆಲೆಯಲ್ಲಿ ನ್ಯಾಯಬೆಲೆ ಅಂಗಡಿಗಳ ಮುಂದೆ ಉದ್ದನೆಯ ಸರತಿ ಸಾಲುಗಳು ಕಂಡುಬಂದಿವೆ.

ಕೂಲಿ ಕೆಲಸಕ್ಕೂ ಹೋಗಲಾಗದೆ ಸಂಕಷ್ಟ:

ಪಡಿತರಕ್ಕಾಗಿ ಬೆಳಗ್ಗೆಯಿಂದಲೇ ಸರತಿ ಸಾಲಿನಲ್ಲಿ ಕಾಯಬೇಕಾದ ಪರಿಸ್ಥಿತಿಯಿಂದ ಕೂಲಿ ಕಾರ್ಮಿಕರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ.

“ಪಡಿತರ ಪಡೆಯಲು ಬೆಳಗ್ಗೆಯಿಂದಲೇ ಅಂಗಡಿಯ ಮುಂದೆ ನಿಂತಿದ್ದೇವೆ. ಸರ್ವರ್ ಸರಿಯಾಗಿ ಕೆಲಸ ಮಾಡದ ಕಾರಣ ಗಂಟೆಗಟ್ಟಲೆ ಕಾಯಬೇಕಾಗಿದೆ. ಇದರಿಂದ ಕೂಲಿ ಕೆಲಸಕ್ಕೆ ಹೋಗಲು ಸಾಧ್ಯವಾಗುತ್ತಿಲ್ಲ. ಒಂದು ದಿನದ ಸಂಪಾದನೆಯೂ ಕೈತಪ್ಪುತ್ತಿದೆ” ಎಂದು ಕಾರ್ಮಿಕರು ಅಳಲು ತೋಡಿಕೊಂಡಿದ್ದಾರೆ.

ಅಧಿಕಾರಿಗಳ ವಿರುದ್ಧ ಜನರ ಆಕ್ರೋಶ:

ಸರ್ವರ್ ಸಮಸ್ಯೆ ಹಲವು ದಿನಗಳಿಂದ ಮುಂದುವರಿದಿದ್ದರೂ ತಾಂತ್ರಿಕ ದೋಷವನ್ನು ಸರಿಪಡಿಸಲು ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಪಡಿತರ ವಿತರಣೆಗೆ ಕೊನೆಯ ದಿನ ಸಮೀಪಿಸುತ್ತಿದ್ದರೂ ಸಮಸ್ಯೆ ಬಗೆಹರಿಯದಿರುವುದು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾಕ್ಷಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಡಿತರ ಪಡೆಯಲು ಅರ್ಹರಾಗಿರುವ ಯಾವುದೇ ಕಾರ್ಡುದಾರರು ತಾಂತ್ರಿಕ ಸಮಸ್ಯೆಯಿಂದ ವಂಚಿತರಾಗಬಾರದು. ಕೂಡಲೇ ಸರ್ವರ್ ಸಮಸ್ಯೆ ಹಾಗೂ ಬಯೋಮೆಟ್ರಿಕ್ ತಾಂತ್ರಿಕ ದೋಷವನ್ನು ಸರಿಪಡಿಸಿ, ಬಾಕಿ ಉಳಿದಿರುವ ಎಲ್ಲ ಕಾರ್ಡುದಾರರಿಗೆ ಪಡಿತರ ವಿತರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಸದ್ಯ ಜಿಲ್ಲೆಯ ವಿವಿಧೆಡೆ ನ್ಯಾಯಬೆಲೆ ಅಂಗಡಿಗಳ ಮುಂದೆ ಜನರು ಪಡಿತರಕ್ಕಾಗಿ ಕಾಯುತ್ತಿದ್ದು, ಸಮಸ್ಯೆಯನ್ನು ಅಧಿಕಾರಿಗಳು ಎಷ್ಟು ಬೇಗ ಬಗೆಹರಿಸುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.

ನಾಗೇಂದ್ರರನ್ನು ಮುಗಿಸಲು ಬಿಜೆಪಿ ಷಡ್ಯಂತ್ರ ಮಾಡಿದೆ: ಬಿಕೆ ಹರಿಪ್ರಸಾದ್ ಆರೋಪ

0

ಬೀದರ್: ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಬಿ. ನಾಗೇಂದ್ರ ಅವರ ವಿಚಾರದಲ್ಲಿ ಬಿಜೆಪಿ ಷಡ್ಯಂತ್ರ ನಡೆಸಿದ್ದು, ಒಬ್ಬ ದಲಿತ ನಾಯಕನನ್ನು ರಾಜಕೀಯವಾಗಿ ಮುಗಿಸುವ ಪ್ರಯತ್ನ ಮಾಡಿದೆ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಆರೋಪಿಸಿದ್ದಾರೆ.

ಬೀದರ್‌ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿ. ನಾಗೇಂದ್ರ ರಾಜೀನಾಮೆ ವಿಚಾರ ಸೇರಿದಂತೆ ಹಲವು ವಿಷಯಗಳ ಕುರಿತು ಬಿಜೆಪಿ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಕೆಪಿಎಸ್‌ಸಿಗೆ ಐಎಎಸ್ ಅಧಿಕಾರಿ ಗ್ಯಾನೇಂದ್ರ ಕುಮಾರ್ ಅವರನ್ನು ನೇಮಕ ಮಾಡಿದ್ದು ಯಾರು ಎಂಬ ಪ್ರಶ್ನೆ ಕೇಳಿದ ಹರಿಪ್ರಸಾದ್, ಬಿಜೆಪಿ ಆಡಳಿತಾವಧಿಯಲ್ಲಿಯೇ ಇಂತಹ ನೇಮಕಾತಿಗಳು ನಡೆದಿವೆ ಎಂದು ಆರೋಪಿಸಿದರು.

“ನಾವು ಬಿಜೆಪಿಯಿಂದ ನೈತಿಕತೆಯ ಪಾಠ ಕಲಿಯಬೇಕಿಲ್ಲ. ಬಿಜೆಪಿಯಲ್ಲಿರುವ ಅನೇಕ ನಾಯಕರ ವಿರುದ್ಧವೇ ವಿವಿಧ ಆರೋಪಗಳು ಹಾಗೂ ಪ್ರಕರಣಗಳಿವೆ” ಎಂದು ಅವರು ಕಿಡಿಕಾರಿದರು.

ನಾಗೇಂದ್ರ ವಿಚಾರದಲ್ಲಿ ಬಿಜೆಪಿ ಕುತಂತ್ರ ಎಂದ ಹರಿಪ್ರಸಾದ್:

ಬಿ. ನಾಗೇಂದ್ರ ಅವರು ಯಾವುದೇ ತಪ್ಪು ಮಾಡಿದ್ದರೆ ಚಾರ್ಜ್‌ಶೀಟ್‌ನಲ್ಲಿ ಅವರ ಹೆಸರಿರಬೇಕಿತ್ತು. ಆದರೆ, ನಾಗೇಂದ್ರರ ಹೆಸರು ಚಾರ್ಜ್‌ಶೀಟ್‌ನಲ್ಲಿ ಎಲ್ಲೂ ಇಲ್ಲ ಎಂದು ಹೇಳಿದ ಹರಿಪ್ರಸಾದ್, ಅವರ ವಿರುದ್ಧ ಬಿಜೆಪಿ ರಾಜಕೀಯ ಷಡ್ಯಂತ್ರ ನಡೆಸಿದೆ ಎಂದು ಆರೋಪಿಸಿದರು.

“ಬಿಜೆಪಿಯವರು ಏನು ನ್ಯಾಯಾಧೀಶರಾ? ನಾಗೇಂದ್ರ ತಪ್ಪು ಮಾಡಿದ್ದರೆ ಚಾರ್ಜ್‌ಶೀಟ್‌ನಲ್ಲಿ ಅವರ ಹೆಸರು ಇರಬೇಕಿತ್ತು. ಒಬ್ಬ ದಲಿತ ನಾಯಕನನ್ನು ಮುಗಿಸಲು ಬಿಜೆಪಿ ಕುತಂತ್ರ ನಡೆಸಿದೆ. ಬಿಜೆಪಿಯ ಷಡ್ಯಂತ್ರದಿಂದಲೇ ನಾಗೇಂದ್ರರಿಂದ ರಾಜೀನಾಮೆ ಪಡೆಯಲಾಗಿದೆ” ಎಂದು ಅವರು ವಾಗ್ದಾಳಿ ನಡೆಸಿದರು.

ಬಿಜೆಪಿಯವರು ನಾಗೇಂದ್ರರನ್ನು ತಮ್ಮ ಪಕ್ಷಕ್ಕೆ ಸೇರಿಸಿಕೊಳ್ಳಲು ಹಲವು ಪ್ರಯತ್ನಗಳನ್ನು ಮಾಡಿದ್ದರು. ಆದರೆ, ಅದು ಸಾಧ್ಯವಾಗಲಿಲ್ಲ. ನಾಗೇಂದ್ರ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದಂತೆ ಚಾರ್ಜ್‌ಶೀಟ್‌ನಲ್ಲಿ ಅವರ ಹೆಸರು ಇಲ್ಲದ ಕಾರಣಕ್ಕೆ ಅವರನ್ನು ಮತ್ತೆ ಸಚಿವರನ್ನಾಗಿ ಮಾಡಲಾಗಿತ್ತು ಎಂದು ಅವರು ಸಮರ್ಥಿಸಿಕೊಂಡರು.

‘ಮೊದಲ ವಿಕೆಟ್ ಪತನ ಇದು ಐಪಿಎಲ್ ಅಲ್ಲ’

ಬಿಜೆಪಿಯವರು ಸರ್ಕಾರದ ವಿರುದ್ಧ ಪಾದಯಾತ್ರೆ ಮಾಡಲಿ ಎಂದು ಹೇಳಿದ ಹರಿಪ್ರಸಾದ್, “ಪಾದಯಾತ್ರೆ ಮಾಡಿದರೆ ಅವರ ಆರೋಗ್ಯ ಸುಧಾರಿಸಬಹುದು. ಆದರೆ ಮೊದಲ ವಿಕೆಟ್ ಪತನ ಎನ್ನುವುದಕ್ಕೆ ಇದು ಐಪಿಎಲ್ ಅಲ್ಲ. ಬಿಜೆಪಿಯಲ್ಲಿಯೇ ಈಗಾಗಲೇ ಎಷ್ಟು ವಿಕೆಟ್‌ಗಳು ಪತನವಾಗಿವೆ? ಎಷ್ಟು ಜನರ ವಿರುದ್ಧ ಕ್ರಿಮಿನಲ್ ಪ್ರಕರಣಗಳಿವೆ ಎಂಬುದನ್ನು ಮೊದಲು ನೋಡಿಕೊಳ್ಳಲಿ” ಎಂದು ತಿರುಗೇಟು ನೀಡಿದರು.

ಯಾರ ವಿರುದ್ಧವಾದರೂ ಕಾನೂನು ಪ್ರಕಾರ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಲಿ. ನಾವು ನ್ಯಾಯಾಲಯದಲ್ಲಿ ಹಾಗೂ ಈ ನೆಲದ ಕಾನೂನಿನ ಚೌಕಟ್ಟಿನೊಳಗೆ ಹೋರಾಟ ನಡೆಸುತ್ತೇವೆ ಎಂದು ಹೇಳಿದರು.

ಬಿಜೆಪಿ ಸರ್ಕಾರದ ಅವಧಿಯಲ್ಲಿ ಭ್ರಷ್ಟಾಚಾರದ ಗಂಭೀರ ಆರೋಪಗಳು ಕೇಳಿಬಂದಿದ್ದವು ಎಂದು ಆರೋಪಿಸಿದ ಹರಿಪ್ರಸಾದ್, “40 ಪ್ರತಿಶತದ ಆರೋಪ ಮಾತ್ರವಲ್ಲ, ಅದಕ್ಕಿಂತ ಹೆಚ್ಚಿನ ಭ್ರಷ್ಟಾಚಾರ ನಡೆದಿರುವ ಬಗ್ಗೆ ಜನರಲ್ಲೇ ಚರ್ಚೆ ಇದೆ. ಕೆ.ಎಸ್. ಈಶ್ವರಪ್ಪ ಅವರು ರಾಜೀನಾಮೆ ನೀಡಿದ ಪ್ರಕರಣವನ್ನು ಜನ ಮರೆತಿಲ್ಲ” ಎಂದು ಹೇಳಿದರು.

ಹಲವು ಪ್ರಕರಣಗಳನ್ನು ಎದುರಿಸುತ್ತಿರುವ ನಾಯಕರನ್ನು ಬಿಜೆಪಿ ಪಕ್ಷಕ್ಕೆ ಸೇರಿಸಿಕೊಂಡು ತಮ್ಮ ‘ವಾಷಿಂಗ್ ಮಿಷನ್’ ಮೂಲಕ ಕ್ಲೀನ್ ಮಾಡುವ ಕೆಲಸ ಮಾಡುತ್ತಿದೆ ಎಂದು ಅವರು ಆರೋಪಿಸಿದರು.

ಸಚಿವ ಸಂಪುಟ ವಿಸ್ತರಣೆ ಕುರಿತು ಪ್ರತಿಕ್ರಿಯಿಸಿದ ಬಿ.ಕೆ. ಹರಿಪ್ರಸಾದ್, ಈ ಬಗ್ಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದರು.

ಸಚಿವ ಸಂಪುಟದಲ್ಲಿ ಮಹಿಳೆಯರಿಗೆ ಅವಕಾಶ ನೀಡಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ ಅವರು, ಸಮುದಾಯದ ಆಧಾರದ ಮೇಲೆ ಅಲ್ಲದೆ ಅರ್ಹತೆ ಹಾಗೂ ರಾಜಕೀಯ ಸಮತೋಲನದ ಆಧಾರದ ಮೇಲೆ ತೀರ್ಮಾನವಾಗಬೇಕು ಎಂದು ಹೇಳಿದರು.

ಒಟ್ಟಾರೆ, ನಾಗೇಂದ್ರ ರಾಜೀನಾಮೆ ವಿಚಾರವನ್ನು ಬಿಜೆಪಿ ರಾಜಕೀಯವಾಗಿ ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿರುವ ಹರಿಪ್ರಸಾದ್, ಚಾರ್ಜ್‌ಶೀಟ್‌ನಲ್ಲಿ ಹೆಸರು ಇಲ್ಲದ ವ್ಯಕ್ತಿಯನ್ನು ತಪ್ಪಿತಸ್ಥ ಎಂದು ಬಿಂಬಿಸುವುದು ಸರಿಯಲ್ಲ ಎಂದು ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ್ದಾರೆ.

ಗುರುಗ್ರಾಮ್‌ನಲ್ಲಿ ದಾರುಣ ಘಟನೆ! ಕ್ರಿಕೆಟ್ ಆಡುತ್ತಿದ್ದ 8 ವರ್ಷದ ಬಾಲಕನ ಮೇಲೆ ಪಿಚ್ ರೋಲರ್ ಹರಿದು ಸಾವು

0

ಚಂಡೀಗಢ: ಕ್ರಿಕೆಟ್ ಅಕಾಡೆಮಿ ಆವರಣದಲ್ಲಿ ಇತರ ಮಕ್ಕಳೊಂದಿಗೆ ಆಟವಾಡುತ್ತಿದ್ದ 8 ವರ್ಷದ ಬಾಲಕನ ಮೇಲೆ ಮಿನಿ ಪಿಚ್ ರೋಲರ್ ಹರಿದು ಮೃತಪಟ್ಟಿರುವ ದಾರುಣ ಘಟನೆ ಗುರುಗ್ರಾಮ್‌ನಲ್ಲಿ ನಡೆದಿದೆ.

ಮೃತ ಬಾಲಕನನ್ನು ಆಕಾಶ್ ಕುಮಾರ್ ಎಂದು ಗುರುತಿಸಲಾಗಿದೆ. ಮೂಲತಃ ಬಿಹಾರದ ನಳಂದಾ ನಿವಾಸಿಯಾಗಿದ್ದ ಆಕಾಶ್, ತನ್ನ ಸಹೋದರ ನೀಲ್ ಹಾಗೂ ಇತರ ಮಕ್ಕಳೊಂದಿಗೆ ಕ್ರಿಕೆಟ್ ಅಕಾಡೆಮಿ ಆವರಣದಲ್ಲಿ ಆಟವಾಡುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.

ಏಕಾಏಕಿ ಚಲಿಸಿದ ಪಿಚ್ ರೋಲರ್

ಪೊಲೀಸರ ಪ್ರಾಥಮಿಕ ಮಾಹಿತಿಯ ಪ್ರಕಾರ, ಅಕಾಡೆಮಿ ಆವರಣದಲ್ಲಿ ನಿಲ್ಲಿಸಲಾಗಿದ್ದ ಮಿನಿ ಪಿಚ್ ರೋಲರ್ ಏಕಾಏಕಿ ಚಲಿಸಲು ಆರಂಭಿಸಿದೆ. ಬಾಲಕನೊಬ್ಬನ ಕೈ ಯಂತ್ರದಲ್ಲಿದ್ದ ಸರ್ಕ್ಯೂಟ್ ಬ್ರೇಕರ್‌ಗೆ ತಾಗಿದ್ದರಿಂದ ರೋಲರ್ ಚಾಲನೆಯಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ರೋಲರ್ ಚಲಿಸಲು ಆರಂಭಿಸಿದ ಸಂದರ್ಭದಲ್ಲಿ ಆಕಾಶ್ ಅದರ ಮುಂಭಾಗಕ್ಕೆ ಬಿದ್ದಿದ್ದಾನೆ. ಬಳಿಕ ಚಲಿಸುತ್ತಿದ್ದ ಯಂತ್ರ ಬಾಲಕನ ಮೇಲೆ ಹರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ನಡೆದ ಕೂಡಲೇ ಸ್ಥಳದಲ್ಲಿದ್ದ ಇತರ ಮಕ್ಕಳು ಭಯಭೀತರಾಗಿ ಅಲ್ಲಿಂದ ಓಡಿ ಹೋಗಿದ್ದಾರೆ. ಬಳಿಕ ಆಕಾಶ್‌ನ ಕುಟುಂಬಸ್ಥರಿಗೆ ವಿಷಯ ತಿಳಿದು, ತಕ್ಷಣವೇ ಬಾಲಕನನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಆದರೆ, ಆಸ್ಪತ್ರೆಯಲ್ಲಿ ಬಾಲಕನನ್ನು ಪರೀಕ್ಷಿಸಿದ ವೈದ್ಯರು ಆತ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

ಪಿಚ್ ರೋಲರ್‌ಗೆ ಮೇಲ್ವಿಚಾರಣೆ ಇರಲಿಲ್ಲ:

ಘಟನೆ ಕುರಿತು ತನಿಖೆ ನಡೆಸುತ್ತಿರುವ ಪೊಲೀಸರ ಪ್ರಾಥಮಿಕ ಪರಿಶೀಲನೆಯಲ್ಲಿ, ದುರ್ಘಟನೆ ಸಂಭವಿಸಿದ ಸಂದರ್ಭದಲ್ಲಿ ಪಿಚ್ ರೋಲರ್ ಅನ್ನು ಮೇಲ್ವಿಚಾರಣೆ ಮಾಡಲು ಸ್ಥಳದಲ್ಲಿ ಯಾರೂ ಇರಲಿಲ್ಲ ಎಂಬುದು ಬೆಳಕಿಗೆ ಬಂದಿದೆ.

ಪಿಚ್ ರೋಲರ್ ಹೇಗೆ ಚಲಿಸಿತು? ಯಂತ್ರದ ಸುರಕ್ಷತಾ ವ್ಯವಸ್ಥೆ ಸರಿಯಾಗಿ ಕಾರ್ಯನಿರ್ವಹಿಸುತ್ತಿತ್ತೇ? ಘಟನೆಯ ಸಂದರ್ಭದಲ್ಲಿ ಅಕಾಡೆಮಿ ಸಿಬ್ಬಂದಿ ಎಲ್ಲಿದ್ದರು? ಎಂಬ ಹಲವು ಪ್ರಶ್ನೆಗಳ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಬಾಲಕನ ಕುಟುಂಬಸ್ಥರು ಪೊಲೀಸರಿಗೆ ಲಿಖಿತ ಹೇಳಿಕೆ ನೀಡಿದ್ದಾರೆ. ಸದ್ಯ ಆ ಹೇಳಿಕೆಯ ಆಧಾರದ ಮೇಲೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಕುಟುಂಬಸ್ಥರು ಈವರೆಗೆ ಯಾವುದೇ ನಿರ್ದಿಷ್ಟ ವ್ಯಕ್ತಿಯ ವಿರುದ್ಧ ನಿರ್ಲಕ್ಷ್ಯದ ಆರೋಪ ಮಾಡಿಲ್ಲ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ಮರಣೋತ್ತರ ಪರೀಕ್ಷೆ ಪೂರ್ಣಗೊಂಡ ಬಳಿಕ ಆಕಾಶ್ ಕುಮಾರ್ ಅವರ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ.

ಸದ್ಯ ಪೊಲೀಸರು ಬಾಲಕನ ಸಾವಿಗೆ ಕಾರಣವಾದ ನಿಖರ ಪರಿಸ್ಥಿತಿಗಳು ಹಾಗೂ ಪಿಚ್ ರೋಲರ್ ಏಕಾಏಕಿ ಹೇಗೆ ಚಾಲನೆಯಾಯಿತು ಎಂಬುದರ ಕುರಿತು ತನಿಖೆ ಮುಂದುವರಿಸಿದ್ದಾರೆ.

ಕ್ರಿಕೆಟ್ ಕಲಿಯಲು ಹಾಗೂ ಆಟವಾಡಲು ಅಕಾಡೆಮಿಗೆ ತೆರಳಿದ್ದ 8 ವರ್ಷದ ಬಾಲಕ ದಾರುಣವಾಗಿ ಮೃತಪಟ್ಟಿರುವ ಘಟನೆ ಕುಟುಂಬಸ್ಥರು ಹಾಗೂ ಸ್ಥಳೀಯರಲ್ಲಿ ತೀವ್ರ ಆಘಾತ ಮೂಡಿಸಿದೆ.

ಬಿಸಿಲಿಗೆ ಹೋದ ಬಳಿಕ ಮುಖ ಕಪ್ಪಾಗುತ್ತಿದೆಯಾ? ಟ್ಯಾನಿಂಗ್‌ ಮತ್ತು ಪಿಗ್ಮೆಂಟೇಶನ್ ನಡುವಿನ ವ್ಯತ್ಯಾಸ ತಿಳಿಯಿರಿ

ಬಿಸಿಲಿನಲ್ಲಿ ಹೆಚ್ಚು ಸಮಯ ಕಳೆಯುವುದರಿಂದ ಮುಖ, ಕೈ, ಕುತ್ತಿಗೆ ಸೇರಿದಂತೆ ಸೂರ್ಯನಿಗೆ ಹೆಚ್ಚು ಒಡ್ಡಿಕೊಳ್ಳುವ ಭಾಗಗಳ ಚರ್ಮ ಕಪ್ಪಾಗುವುದು ಸಾಮಾನ್ಯ.

ಆದರೆ ಚರ್ಮ ಕಪ್ಪಾದಾಗಲೆಲ್ಲ ಅದನ್ನು ಟ್ಯಾನಿಂಗ್ ಎಂದುಕೊಳ್ಳುವುದು ಸರಿಯಲ್ಲ. ಕೆಲವೊಮ್ಮೆ ಚರ್ಮದ ಬಣ್ಣ ಬದಲಾವಣೆಗೆ ಪಿಗ್ಮೆಂಟೇಶನ್ ಕೂಡ ಕಾರಣವಾಗಿರಬಹುದು.

ಟ್ಯಾನಿಂಗ್ ಮತ್ತು ಪಿಗ್ಮೆಂಟೇಶನ್ ಎರಡರಲ್ಲೂ ಮೆಲನಿನ್ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ಇವೆರಡಕ್ಕೂ ಕಾರಣ, ಕಾಣಿಸಿಕೊಳ್ಳುವ ರೀತಿ ಹಾಗೂ ಕಡಿಮೆಯಾಗಲು ತೆಗೆದುಕೊಳ್ಳುವ ಸಮಯದಲ್ಲಿ ವ್ಯತ್ಯಾಸವಿದೆ. ಹೀಗಾಗಿ ಮುಖ ಅಥವಾ ದೇಹದ ಯಾವುದೇ ಭಾಗ ಕಪ್ಪಾಗಿರುವುದಕ್ಕೆ ನಿಖರ ಕಾರಣವೇನು ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯ.

ಟ್ಯಾನಿಂಗ್ ಎಂದರೇನು?

ಸೂರ್ಯನ ಬೆಳಕಿಗೆ ಚರ್ಮ ಹೆಚ್ಚು ಸಮಯ ಒಡ್ಡಿಕೊಂಡಾಗ ಟ್ಯಾನಿಂಗ್ ಉಂಟಾಗಬಹುದು. ಸೂರ್ಯನಲ್ಲಿರುವ ಯುವಿ ಕಿರಣಗಳಿಂದ ಚರ್ಮವನ್ನು ರಕ್ಷಿಸಿಕೊಳ್ಳಲು ದೇಹ ಹೆಚ್ಚಿನ ಪ್ರಮಾಣದಲ್ಲಿ ಮೆಲನಿನ್ ಉತ್ಪಾದಿಸುತ್ತದೆ. ಇದರ ಪರಿಣಾಮವಾಗಿ ಮುಖ, ಕೈ, ಕುತ್ತಿಗೆ ಹಾಗೂ ಸೂರ್ಯನಿಗೆ ಹೆಚ್ಚು ಒಡ್ಡಿಕೊಳ್ಳುವ ಭಾಗಗಳು ಕಂದು ಅಥವಾ ಕಪ್ಪಾಗಿ ಕಾಣಿಸಿಕೊಳ್ಳಬಹುದು.

ಸಾಮಾನ್ಯವಾಗಿ ಟ್ಯಾನಿಂಗ್ ಕೆಲವು ಗಂಟೆಗಳು ಅಥವಾ ಕೆಲವು ದಿನಗಳವರೆಗೆ ಕಾಣಿಸಿಕೊಳ್ಳಬಹುದು. ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದನ್ನು ಕಡಿಮೆ ಮಾಡಿದಂತೆ ಅದು ಕ್ರಮೇಣ ಕಡಿಮೆಯಾಗುವ ಸಾಧ್ಯತೆಯಿದೆ.

ಪಿಗ್ಮೆಂಟೇಶನ್ ಎಂದರೇನು?

ಪಿಗ್ಮೆಂಟೇಶನ್‌ನಲ್ಲಿ ಚರ್ಮದ ನಿರ್ದಿಷ್ಟ ಭಾಗಗಳಲ್ಲಿ ಮೆಲನಿನ್ ಹೆಚ್ಚು ಉತ್ಪತ್ತಿಯಾಗುವುದು ಅಥವಾ ಸಂಗ್ರಹವಾಗುವುದರಿಂದ ಕಂದು ಅಥವಾ ಕಪ್ಪು ಕಲೆಗಳು ಹಾಗೂ ಪ್ಯಾಚ್‌ಗಳು ಕಾಣಿಸಿಕೊಳ್ಳಬಹುದು.

ಪಿಗ್ಮೆಂಟೇಶನ್‌ಗೆ ಸೂರ್ಯನ ಬೆಳಕು ಮಾತ್ರ ಕಾರಣವಲ್ಲ. ಹಾರ್ಮೋನ್‌ಗಳ ಬದಲಾವಣೆ, ಮೊಡವೆ, ಮೊಡವೆಯ ನಂತರ ಉಳಿಯುವ ಕಲೆಗಳು, ಚರ್ಮದಲ್ಲಿ ಉರಿಯೂತ, ಗಾಯ ಅಥವಾ ಚರ್ಮಕ್ಕೆ ಉಂಟಾದ ಹಾನಿ, ಕೆಲವು ಔಷಧಿಗಳ ಪರಿಣಾಮ ಸೇರಿದಂತೆ ಹಲವು ಕಾರಣಗಳು ಇರಬಹುದು.

ಇಂತಹ ಕಲೆಗಳು ದೀರ್ಘಕಾಲ ಉಳಿಯುವ ಸಾಧ್ಯತೆಯಿದ್ದು, ಟ್ಯಾನಿಂಗ್‌ಗೆ ಹೋಲಿಸಿದರೆ ಕಡಿಮೆಯಾಗಲು ಹೆಚ್ಚು ಸಮಯ ತೆಗೆದುಕೊಳ್ಳಬಹುದು.

ಟ್ಯಾನಿಂಗ್‌ನಾ, ಪಿಗ್ಮೆಂಟೇಶನ್‌ನಾ ಹೇಗೆ ಗುರುತಿಸುವುದು?

ಸೂರ್ಯನಿಗೆ ಹೆಚ್ಚು ಹೊತ್ತು ಒಡ್ಡಿಕೊಂಡ ಬಳಿಕ ಮುಖ, ಕೈ ಅಥವಾ ಕುತ್ತಿಗೆಯಂತಹ ದೊಡ್ಡ ಭಾಗ ಒಂದೇ ರೀತಿಯಲ್ಲಿ ಕಪ್ಪಾಗಿದ್ದರೆ, ಅದು ಟ್ಯಾನಿಂಗ್ ಆಗಿರುವ ಸಾಧ್ಯತೆಯಿದೆ.

ಆದರೆ ಚರ್ಮದ ನಿರ್ದಿಷ್ಟ ಭಾಗಗಳಲ್ಲಿ ಮಾತ್ರ ಕಂದು ಅಥವಾ ಕಪ್ಪು ಕಲೆಗಳು, ಪ್ಯಾಚ್‌ಗಳು ಕಾಣಿಸಿಕೊಂಡು ದೀರ್ಘಕಾಲ ಹಾಗೆಯೇ ಉಳಿದಿದ್ದರೆ, ಅದು ಪಿಗ್ಮೆಂಟೇಶನ್ ಆಗಿರುವ ಸಾಧ್ಯತೆಯಿದೆ.

ಆದರೆ ಕೇವಲ ಹೊರನೋಟದಿಂದಲೇ ಚರ್ಮದ ಸಮಸ್ಯೆಯ ನಿಖರ ಕಾರಣವನ್ನು ನಿರ್ಧರಿಸಲು ಸಾಧ್ಯವಿಲ್ಲ. ಅನುಮಾನವಿದ್ದರೆ ಚರ್ಮರೋಗ ತಜ್ಞರ ಸಲಹೆ ಪಡೆಯುವುದು ಉತ್ತಮ.

ಪಿಗ್ಮೆಂಟೇಶನ್‌ಗೆ ಕಾರಣವಾಗುವ ಪ್ರಮುಖ ಅಂಶಗಳು:

  • ಅತಿಯಾದ ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದು
  • ಹಾರ್ಮೋನ್‌ಗಳಲ್ಲಿ ಬದಲಾವಣೆ
  • ಮೊಡವೆ ಮತ್ತು ಮೊಡವೆಯ ನಂತರ ಉಳಿಯುವ ಕಲೆಗಳು
  • ಚರ್ಮದಲ್ಲಿ ಉರಿಯೂತ
  • ಗಾಯ ಅಥವಾ ಚರ್ಮಕ್ಕೆ ಉಂಟಾದ ಹಾನಿ
  • ಕೆಲವು ಔಷಧಿಗಳ ಪರಿಣಾಮ
  • ಚರ್ಮದ ಕೆಲವು ಕಾಯಿಲೆಗಳು

ಟ್ಯಾನಿಂಗ್ ಕಡಿಮೆ ಮಾಡಲು ಏನು ಮಾಡಬೇಕು?

ಟ್ಯಾನಿಂಗ್ ಕಡಿಮೆಯಾಗಲು ಸೂರ್ಯನ ಯುವಿ ಕಿರಣಗಳಿಂದ ಚರ್ಮವನ್ನು ರಕ್ಷಿಸಿಕೊಳ್ಳುವುದು ಮುಖ್ಯ. ಹೊರಗೆ ಹೋಗುವಾಗ ಸೂಕ್ತವಾದ ಸನ್‌ಸ್ಕ್ರೀನ್ ಬಳಸುವುದು, ಸಾಧ್ಯವಾದಷ್ಟು ನೆರಳಿನಲ್ಲಿ ಇರುವುದು ಹಾಗೂ ಅಗತ್ಯವಿದ್ದರೆ ಟೋಪಿ ಅಥವಾ ದೇಹವನ್ನು ಮುಚ್ಚುವ ಬಟ್ಟೆ ಧರಿಸುವುದು ಸಹಾಯಕವಾಗಬಹುದು.

ಚರ್ಮದ ಕಪ್ಪು ಬಣ್ಣವನ್ನು ತಕ್ಷಣ ಕಡಿಮೆ ಮಾಡಿಕೊಳ್ಳುವ ಉದ್ದೇಶದಿಂದ ಬಲವಾಗಿ ಸ್ಕ್ರಬ್ ಮಾಡುವುದು ಅಥವಾ ಅತಿಯಾಗಿ ಮನೆಮದ್ದುಗಳನ್ನು ಬಳಸುವುದು ಸೂಕ್ತವಲ್ಲ. ಇದರಿಂದ ಚರ್ಮದಲ್ಲಿ ಉರಿಯೂತ ಉಂಟಾಗಿ ಕಲೆಗಳು ಮತ್ತಷ್ಟು ಗಾಢವಾಗುವ ಸಾಧ್ಯತೆಯಿದೆ.

ಯಾವಾಗ ವೈದ್ಯರನ್ನು ಸಂಪರ್ಕಿಸಬೇಕು?

ಚರ್ಮದಲ್ಲಿನ ಕಪ್ಪು ಕಲೆಗಳು ಅಥವಾ ಪ್ಯಾಚ್‌ಗಳು ದೀರ್ಘಕಾಲ ಉಳಿದಿದ್ದರೆ, ವೇಗವಾಗಿ ಹೆಚ್ಚಾಗುತ್ತಿದ್ದರೆ ಅಥವಾ ಅವುಗಳ ಬಣ್ಣ ಮತ್ತು ಆಕಾರದಲ್ಲಿ ಬದಲಾವಣೆ ಕಂಡುಬಂದರೆ ಚರ್ಮರೋಗ ತಜ್ಞರನ್ನು ಸಂಪರ್ಕಿಸುವುದು ಉತ್ತಮ.

ಯಾವುದೇ ಸ್ಪಷ್ಟ ಕಾರಣವಿಲ್ಲದೆ ಚರ್ಮದಲ್ಲಿ ಹೊಸದಾಗಿ ಬಣ್ಣ ಬದಲಾವಣೆ ಕಾಣಿಸಿಕೊಂಡರೂ ವೈದ್ಯರ ಸಲಹೆ ಪಡೆಯುವುದು ಸೂಕ್ತ.

ಒಟ್ಟಿನಲ್ಲಿ, ಪ್ರತಿಯೊಂದು ಕಪ್ಪು ಕಲೆ ಪಿಗ್ಮೆಂಟೇಶನ್ ಎಂದೂ, ಚರ್ಮ ಕಪ್ಪಾಗುವುದನ್ನೆಲ್ಲ ಟ್ಯಾನಿಂಗ್ ಎಂದೂ ಹೇಳಲು ಸಾಧ್ಯವಿಲ್ಲ. ಚರ್ಮದ ಬಣ್ಣ ಬದಲಾವಣೆಯ ನಿಖರ ಕಾರಣ ತಿಳಿದುಕೊಂಡ ನಂತರವೇ ಸೂಕ್ತ ಆರೈಕೆ ಅಥವಾ ಚಿಕಿತ್ಸೆಯ ವಿಧಾನವನ್ನು ಆಯ್ಕೆ ಮಾಡಬೇಕು.

ಮಂಡ್ಯದ ಪಾವನಾ ಜೊತೆ ಸಪ್ತಪದಿ ತುಳಿದ ಚಿಕ್ಕಣ್ಣ; ಅದ್ಧೂರಿ ಮದುವೆಗೆ ಸಾಕ್ಷಿಯಾದ ಗಣ್ಯರು!

0

ಕನ್ನಡ ಚಿತ್ರರಂಗದ ಜನಪ್ರಿಯ ಹಾಸ್ಯನಟ ಚಿಕ್ಕಣ್ಣ ಹಾಗೂ ಮಂಡ್ಯ ಮೂಲದ ಪಾವನಾ ಅವರ ವಿವಾಹ ಅದ್ಧೂರಿಯಾಗಿ ನೆರವೇರಿದೆ.

ಇಂದು ಬೆಳಗ್ಗೆ 10.45ರಿಂದ 11.25ರವರೆಗೆ ನಿಗದಿಯಾಗಿದ್ದ ಶುಭಮುಹೂರ್ತದಲ್ಲಿ ತುಲಾ ಲಗ್ನದಲ್ಲಿ ಚಿಕ್ಕಣ್ಣ ಅವರು ಪಾವನಾ ಅವರ ಕೊರಳಿಗೆ ಮಾಂಗಲ್ಯಧಾರಣೆ ಮಾಡುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಕುಟುಂಬಸ್ಥರು, ಆಪ್ತರು ಹಾಗೂ ಚಿತ್ರರಂಗದ ಗಣ್ಯರ ಸಮ್ಮುಖದಲ್ಲಿ ವಿವಾಹ ಸಮಾರಂಭ ನೆರವೇರಿತು. ನವಜೋಡಿ ಚಿಕ್ಕಣ್ಣ ಹಾಗೂ ಪಾವನಾ ಅವರಿಗೆ ಅಭಿಮಾನಿಗಳು, ಸ್ನೇಹಿತರು ಮತ್ತು ಚಿತ್ರರಂಗದ ಗಣ್ಯರು ಶುಭಾಶಯ ಕೋರಿದ್ದಾರೆ.

ಅದ್ಧೂರಿಯಾಗಿ ನಡೆದ ಆರತಕ್ಷತೆ:

ಚಿಕ್ಕಣ್ಣ ಅವರ ಮದುವೆಗೂ ಮುನ್ನ ನಿನ್ನೆ ಅದ್ಧೂರಿಯಾಗಿ ಆರತಕ್ಷತೆ ಕಾರ್ಯಕ್ರಮ ನಡೆದಿತ್ತು. ಈ ಸಮಾರಂಭದಲ್ಲಿ ಕನ್ನಡ ಚಿತ್ರರಂಗದ ಹಲವು ಗಣ್ಯರು ಭಾಗವಹಿಸಿ ಚಿಕ್ಕಣ್ಣ ಹಾಗೂ ಪಾವನಾ ಅವರಿಗೆ ಶುಭ ಹಾರೈಸಿದರು.

ನಟರಾದ ಡಾಲಿ ಧನಂಜಯ್, ಶ್ರೀಮುರಳಿ, ರಂಗಾಯಣ ರಘು, ಹಿರಿಯ ನಟಿ ತಾರಾ ಅನುರಾಧ, ನಟಿ ಮೇಘನಾ ಗಾಂವ್ಕರ್ ಸೇರಿದಂತೆ ಹಲವು ಕಲಾವಿದರು ಆರತಕ್ಷತೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಚಿತ್ರರಂಗದ ಸ್ನೇಹಿತರು, ಆಪ್ತರು ಹಾಗೂ ಕುಟುಂಬಸ್ಥರ ಸಮ್ಮುಖದಲ್ಲಿ ನಡೆದ ಆರತಕ್ಷತೆ ಕಾರ್ಯಕ್ರಮದಲ್ಲಿ ನವಜೋಡಿಯೊಂದಿಗೆ ಗಣ್ಯರು ಫೋಟೋ ತೆಗೆಸಿಕೊಂಡು ಶುಭಾಶಯಗಳನ್ನು ತಿಳಿಸಿದರು.

ಪಾವನಾ ಜೊತೆ ಹೊಸ ಬದುಕು ಆರಂಭಿಸಿದ ಚಿಕ್ಕಣ್ಣ:

ತಮ್ಮ ವಿಭಿನ್ನ ಹಾಸ್ಯ ಶೈಲಿ ಹಾಗೂ ಅಭಿನಯದ ಮೂಲಕ ಕನ್ನಡಿಗರ ಮನಗೆದ್ದಿರುವ ಚಿಕ್ಕಣ್ಣ ಇದೀಗ ಪಾವನಾ ಅವರೊಂದಿಗೆ ಹೊಸ ಜೀವನ ಆರಂಭಿಸಿದ್ದಾರೆ.

ಚಿತ್ರರಂಗದಲ್ಲಿ ಹಾಸ್ಯನಟನಾಗಿ ಸಾಕಷ್ಟು ಜನಪ್ರಿಯತೆ ಗಳಿಸಿರುವ ಚಿಕ್ಕಣ್ಣ ಅವರ ವೈವಾಹಿಕ ಜೀವನದ ಹೊಸ ಅಧ್ಯಾಯಕ್ಕೆ ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ.

ಮದುವೆ ಸಮಾರಂಭದ ಸಂಭ್ರಮದ ಕ್ಷಣಗಳು ಸಾಮಾಜಿಕ ಜಾಲತಾಣಗಳಲ್ಲೂ ಗಮನ ಸೆಳೆಯುತ್ತಿವೆ. ಚಿಕ್ಕಣ್ಣ-ಪಾವನಾ ಜೋಡಿಯ ಮದುವೆ ಫೋಟೋಗಳು ಹಾಗೂ ವಿಡಿಯೋಗಳು ಅಭಿಮಾನಿಗಳಲ್ಲಿ ಸಂತಸ ಮೂಡಿಸಿವೆ.

ಒಟ್ಟಿನಲ್ಲಿ, ಹಲವು ವರ್ಷಗಳಿಂದ ತಮ್ಮ ಹಾಸ್ಯದ ಮೂಲಕ ಪ್ರೇಕ್ಷಕರನ್ನು ರಂಜಿಸಿರುವ ಚಿಕ್ಕಣ್ಣ ಅವರ ಬದುಕಿನಲ್ಲಿ ಇದೀಗ ಹೊಸ ಅಧ್ಯಾಯ ಆರಂಭವಾಗಿದೆ. ‘ಸಿಂಗಲ್‌ ಸೀನ್‌’ಗೆ ಫುಲ್‌ಸ್ಟಾಪ್ ಬಿದ್ದು, ವೈವಾಹಿಕ ಜೀವನ ಎಂಬ ಹೊಸ ‘ಸಿನಿಮಾ’ ಶುರುವಾಗಿದೆ!

ನವದಂಪತಿ ಚಿಕ್ಕಣ್ಣ ಹಾಗೂ ಪಾವನಾ ಅವರಿಗೆ ಚಿತ್ರರಂಗದ ಗಣ್ಯರು, ಸ್ನೇಹಿತರು ಮತ್ತು ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.

ಜೈಲಿನೊಳಗೇ ಕೈದಿಗಳ ಮಾರಾಮಾರಿ: ಜಗಳ ಬಿಡಿಸಲು ಹೋದ ಸಿಬ್ಬಂದಿ ಮೇಲೂ ಹಲ್ಲೆ!

0

ಹಾಸನ: ಜೈಲಿನೊಳಗೆ ವಿಚಾರಣಾಧೀನ ಕೈದಿಗಳ ನಡುವೆ ಮಾರಾಮಾರಿ ನಡೆದಿದ್ದು, ಜಗಳ ಬಿಡಿಸಲು ಮುಂದಾದ ಜೈಲು ಸಿಬ್ಬಂದಿ ಮೇಲೂ ಹಲ್ಲೆ ನಡೆಸಿರುವ ಘಟನೆ ಹಾಸನ ನಗರದ ಸಂತೇಪೇಟೆಯಲ್ಲಿರುವ ಜಿಲ್ಲಾ ಕಾರಾಗೃಹದಲ್ಲಿ ನಡೆದಿದೆ.

ಫೋನ್ ಮಾಡಲು ಸರತಿ ಸಾಲಿನಲ್ಲಿ ನಿಂತಿದ್ದ ವಿಚಾರಣಾಧೀನ ಕೈದಿಗಳಾದ ಮೋಹನಕುಮಾರ್ ಹಾಗೂ ರಂಗಸ್ವಾಮಿ ನಡುವೆ ಮೊದಲು ಫೋನ್ ಕರೆ ಮಾಡುವ ವಿಚಾರಕ್ಕೆ ಜಗಳ ಆರಂಭವಾಗಿದೆ. ಬಳಿಕ ಇಬ್ಬರ ನಡುವಿನ ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿದ್ದು, ಪರಸ್ಪರ ಬಡಿದಾಡಿಕೊಂಡಿದ್ದಾರೆ.

ಈ ವೇಳೆ ಜೈಲು ಮುಖ್ಯ ವೀಕ್ಷಕರಾದ ಪರಶುರಾಮ ಹಾಗೂ ವೀರೇಶ್ ಸಂಗಮದ್ ಅವರು ಜಗಳ ಬಿಡಿಸಲು ಮುಂದಾಗಿದ್ದಾರೆ. ಆದರೆ ಇದೇ ಸಂದರ್ಭದಲ್ಲಿ ಪರಿಸ್ಥಿತಿ ಮತ್ತಷ್ಟು ವಿಕೋಪಕ್ಕೆ ತಿರುಗಿದೆ.

ಏಕಾಏಕಿ ಕೊಠಡಿಗೆ ನುಗ್ಗಿ ಹಲ್ಲೆ:

ಜೈಲಿನ ಪಿಸಿಎಸ್ ಕೊಠಡಿಯೊಳಗೆ ಏಕಾಏಕಿ ನುಗ್ಗಿದ ಒಂಬತ್ತು ಮಂದಿ ವಿಚಾರಣಾಧೀನ ಕೈದಿಗಳು ರಂಗಸ್ವಾಮಿ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ಹಲ್ಲೆ ನಡೆಸಿದವರನ್ನು ಶಶಿಧರ, ರಾಕೇಶ್, ಯಲ್ಲಾಲಿಂಗ, ಆಕಾಶ, ಉಮೇಶ್, ಸಾಯಿನಾಥ, ನಿರೂಪ್, ಭರತ ಹಾಗೂ ಚೇತನ್ ಎಂದು ಗುರುತಿಸಲಾಗಿದೆ.

ಕೈದಿಗಳ ನಡುವಿನ ಗಲಾಟೆ ತಡೆಯಲು ಮುಂದಾದ ಜೈಲು ಸಿಬ್ಬಂದಿಯ ಮೇಲೂ ಆರೋಪಿಗಳು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

ಜೈಲು ಸಿಬ್ಬಂದಿಗೂ ಗಾಯ:

ಜೈಲು ಸಿಬ್ಬಂದಿಗಳಾದ ವೀರೇಶ್ ಸಂಗಮದ್, ಶಿವಕುಮಾರ್ ಹಾಗೂ ಪರಶುರಾಮ ಹೆಚ್. ಅವರ ಮೇಲೂ ಹಲ್ಲೆ ನಡೆದಿದೆ. ವೀರೇಶ್ ಸಂಗಮದ್ ಅವರನ್ನು ತಳ್ಳಿ ಕೆಳಗೆ ಬೀಳಿಸಿ ಹಲ್ಲೆ ನಡೆಸಲಾಗಿದೆ ಎಂದು ತಿಳಿದುಬಂದಿದೆ.

ಘಟನೆಯಲ್ಲಿ ಗಾಯಗೊಂಡ ವೀರೇಶ್ ಸಂಗಮದ್ ಅವರನ್ನು ಚಿಕಿತ್ಸೆಗಾಗಿ ಹಾಸನ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆದಿದ್ದಾರೆ.

ಕೊಲೆ ಪ್ರಕರಣದ ಆರೋಪಿಗಳಿಂದ ಕೃತ್ಯ?

ಹಲ್ಲೆ ನಡೆಸಿದ ಆರೋಪಿಗಳು ನಟೋರಿಯಸ್ ರೌಡಿಶೀಟರ್ ಮಂಜೇಶ್ ಕೊಲೆ ಪ್ರಕರಣದ ಆರೋಪಿಗಳು ಎಂದು ತಿಳಿದುಬಂದಿದೆ.

ಜೈಲಿನೊಳಗೆ ವಿಚಾರಣಾಧೀನ ಕೈದಿಗಳ ನಡುವೆ ನಡೆದ ಮಾರಾಮಾರಿ ಹಾಗೂ ಜೈಲು ಸಿಬ್ಬಂದಿ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸನ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆಗೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಮುಂದುವರಿಸಿದ್ದು, ಜೈಲಿನೊಳಗೆ ಕೈದಿಗಳ ನಡುವೆ ಗಲಾಟೆ ಉಂಟಾಗಲು ಕಾರಣವೇನು ಹಾಗೂ ಸಿಬ್ಬಂದಿ ಮೇಲಿನ ಹಲ್ಲೆಯ ಹಿಂದಿನ ನಿಖರ ಕಾರಣಗಳೇನು ಎಂಬುದರ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದಾರೆ.

5,000 ಕೋಟಿ ಲೆಕ್ಕ ಕೊಡಿ, ಇಲ್ಲವೇ ಮಂಪರು ಪರೀಕ್ಷೆ ಮಾಡಿಸಿ!’ ಸರ್ಕಾರಕ್ಕೆ ಆರ್. ಅಶೋಕ್ ಸವಾಲ್

0

ಬೆಂಗಳೂರು: ಗೃಹಲಕ್ಷ್ಮಿ ಯೋಜನೆಯ ಹಣದ ವಿಚಾರವಾಗಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಮತ್ತೊಮ್ಮೆ ವಾಗ್ದಾಳಿ ನಡೆಸಿದ್ದಾರೆ.

2025ರ ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಗೃಹಲಕ್ಷ್ಮಿ ಕಂತಿನ ಸುಮಾರು ₹5,000 ಕೋಟಿ ಹಣದ ಲೆಕ್ಕ ಎಲ್ಲಿ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿರುವ ಅವರು, ಲೆಕ್ಕ ನೀಡಲು ಸಾಧ್ಯವಾಗದಿದ್ದರೆ ಸಂಬಂಧಿಸಿದವರ ಮಂಪರು ಪರೀಕ್ಷೆ ನಡೆಸುವಂತೆ ಸವಾಲ್ ಹಾಕಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಆರ್. ಅಶೋಕ್, ಗೃಹಲಕ್ಷ್ಮಿ ಯೋಜನೆಯ ಎರಡು ತಿಂಗಳ ಕಂತಿಗೆ ಸಂಬಂಧಿಸಿದ ಸುಮಾರು ₹5,000 ಕೋಟಿ ಹಣದ ಬಗ್ಗೆ ಸರ್ಕಾರದಿಂದ ಸ್ಪಷ್ಟ ಉತ್ತರ ಸಿಗುತ್ತಿಲ್ಲ ಎಂದು ಆರೋಪಿಸಿದ್ದಾರೆ.

‘ವಿಧಾನಸಭೆಯಲ್ಲಿ ಕೇಳಿದರೆ ಕಟ್ಟುಕಥೆ ಹೇಳುತ್ತಾರೆ’:

ಗೃಹಲಕ್ಷ್ಮಿ ಯೋಜನೆಯ ಹಣದ ಕುರಿತು ವಿಧಾನಸಭೆಯಲ್ಲಿ ಪ್ರಶ್ನಿಸಿದಾಗ ತಾಂತ್ರಿಕ ದೋಷ, ಅಚಾತುರ್ಯ, ಪ್ರಕ್ರಿಯೆ ಸೇರಿದಂತೆ ವಿವಿಧ ಕಾರಣಗಳನ್ನು ಸರ್ಕಾರ ನೀಡುತ್ತಿದೆ ಎಂದು ಆರ್. ಅಶೋಕ್ ಟೀಕಿಸಿದ್ದಾರೆ.

ಆದರೆ, ಈ ಕಾರಣಗಳು ಜನರ ಪ್ರಶ್ನೆಗೆ ಉತ್ತರ ನೀಡುವುದಿಲ್ಲ. ಕರ್ನಾಟಕದ ಜನರು ಕೇಳುತ್ತಿರುವ ಪ್ರಮುಖ ಪ್ರಶ್ನೆ ‘₹5,000 ಕೋಟಿ ಎಲ್ಲಿ ಹೋಯಿತು?’ ಎಂಬುದಾಗಿದೆ ಎಂದು ಅವರು ಹೇಳಿದ್ದಾರೆ.

ಸರ್ಕಾರ ಈ ಹಣದ ಬಗ್ಗೆ ಸ್ಪಷ್ಟ ಲೆಕ್ಕ ಹಾಗೂ ಮಾಹಿತಿ ನೀಡಬೇಕು ಎಂದು ಆಗ್ರಹಿಸಿರುವ ಆರ್. ಅಶೋಕ್, ಉತ್ತರ ನೀಡಲು ಸಾಧ್ಯವಾಗದಿದ್ದರೆ ಪ್ರಕರಣದ ಸತ್ಯ ಹೊರಬರಲು ಮಂಪರು ಪರೀಕ್ಷೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.

ಮಾಜಿ ಸಚಿವೆ ಸೇರಿ ಮೂವರ ಹೆಸರು ಪ್ರಸ್ತಾಪ:

ಆರ್. ಅಶೋಕ್ ತಮ್ಮ ಪೋಸ್ಟ್‌ನಲ್ಲಿ ಮಾಜಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಹೆಚ್.ಎಂ. ರೇವಣ್ಣ ಹಾಗೂ ಉಪಾಧ್ಯಕ್ಷ ದಿನೇಶ್ ಗೂಳಿಗೌಡ ಅವರ ಹೆಸರುಗಳನ್ನು ಪ್ರಸ್ತಾಪಿಸಿದ್ದಾರೆ.

ಈ ಮೂವರಿಗೂ ಮಂಪರು ಪರೀಕ್ಷೆ ನಡೆಸಿದರೆ ಗೃಹಲಕ್ಷ್ಮಿ ಯೋಜನೆಯ ₹5,000 ಕೋಟಿ ಹಣದ ವಿಚಾರದಲ್ಲಿನ ರಹಸ್ಯಕ್ಕೆ ಉತ್ತರ ಸಿಗಬಹುದೇನೋ ಎಂದು ಅವರು ಹೇಳಿದ್ದಾರೆ.

ಆದರೆ, ಈ ವ್ಯಕ್ತಿಗಳ ವಿರುದ್ಧ ಆರ್. ಅಶೋಕ್ ಮಾಡಿರುವುದು ರಾಜಕೀಯ ಆರೋಪ ಹಾಗೂ ತನಿಖೆಗೆ ಒತ್ತಾಯವಾಗಿದ್ದು, ಅವರ ವಿರುದ್ಧದ ಯಾವುದೇ ತಪ್ಪು ಕೃತ್ಯ ಇಲ್ಲಿ ಸಾಬೀತಾಗಿದೆ ಎಂದು ಪರಿಗಣಿಸಲಾಗದು.

‘ಲೆಕ್ಕ ಕೊಡಿ… ಇಲ್ಲವೇ ಮಂಪರು ಪರೀಕ್ಷೆ ಮಾಡಿಸಿ’:

‘ನಮ್ಮ ಆಗ್ರಹ ಸರಳ. ಲೆಕ್ಕ ಕೊಡಿ… ಇಲ್ಲವೇ ಮಂಪರು ಪರೀಕ್ಷೆ ಮಾಡಿಸಿ’ ಎಂದು ಆರ್. ಅಶೋಕ್ ಸರ್ಕಾರಕ್ಕೆ ನೇರ ಸವಾಲ್ ಹಾಕಿದ್ದಾರೆ.

ಗೃಹಲಕ್ಷ್ಮಿ ಯೋಜನೆಯ ಸುಮಾರು ₹5,000 ಕೋಟಿ ಹಣದ ವಿಚಾರವಾಗಿ ಪ್ರಶ್ನೆ ಎತ್ತಿರುವ ಅವರು, ಈ ಹಣದ ಲೆಕ್ಕ ಕೇಳಿ ಸುಮಾರು ಎರಡು ವರ್ಷವಾಗುತ್ತಾ ಬಂದಿದೆ ಎಂದು ಹೇಳಿದ್ದಾರೆ. ಹಣ ಮಂಗಮಾಯವಾಗುವುದರ ಜೊತೆಗೆ ಸತ್ಯವೂ ಮಂಗಮಾಯವಾಗಲು ಬಿಡುವುದಿಲ್ಲ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯ ಸರ್ಕಾರದ ಪ್ರಮುಖ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ಗೃಹಲಕ್ಷ್ಮಿ ಯೋಜನೆಯಡಿ ಅರ್ಹ ಮಹಿಳೆಯರಿಗೆ ಪ್ರತಿ ತಿಂಗಳು ಆರ್ಥಿಕ ನೆರವು ನೀಡಲಾಗುತ್ತಿದೆ. ಯೋಜನೆಯ ಪಾವತಿ, ಬಾಕಿ ಕಂತು ಹಾಗೂ ಫಲಾನುಭವಿಗಳ ವಿವರಗಳ ಕುರಿತು ಹಲವು ಬಾರಿ ರಾಜಕೀಯ ಚರ್ಚೆಗಳು ನಡೆದಿವೆ.

ಇದೀಗ ಸುಮಾರು ₹5,000 ಕೋಟಿ ಹಣದ ಲೆಕ್ಕದ ಕುರಿತು ಆರ್. ಅಶೋಕ್ ಮಾಡಿರುವ ಆರೋಪ ಹಾಗೂ ಸರ್ಕಾರಕ್ಕೆ ಹಾಕಿರುವ ಸವಾಲ್ ರಾಜಕೀಯ ವಲಯದಲ್ಲಿ ಮತ್ತಷ್ಟು ಚರ್ಚೆಗೆ ಕಾರಣವಾಗಿದೆ.

ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದ ಹಣದ ಕುರಿತು ಸರ್ಕಾರದಿಂದ ಅಧಿಕೃತ ಸ್ಪಷ್ಟನೆ ಏನು ಬರಲಿದೆ ಎಂಬುದನ್ನು ಇದೀಗ ಕಾದು ನೋಡಬೇಕಿದೆ.

ಮುಖ್ಯಮಂತ್ರಿಗಳ ಬೆದರಿಕೆಯ ಧಾಟಿಯಿಂದ ರಾಜೀನಾಮೆ ಪಡೆಯಲಾಯಿತು: ಬಸವರಾಜ ಹೊರಟ್ಟಿ

0

ಗದಗ: ನನ್ನ ರಾಜೀನಾಮೆ ಪಡೆಯುವ ಸಲುವಾಗಿ ಸ್ವತಃ ಮುಖ್ಯಮಂತ್ರಿಗಳು ಸ್ಪೀಕರ್ ಕಚೇರಿಗೆ ಬಂದು, ಕಚೇರಿಯ ಬಾಗಿಲು ಹಾಕಿಕೊಂಡು ಸುಮಾರು ಒಂದೂವರೆ ಗಂಟೆಗಳ ಕಾಲ ಕುಳಿತು ಬೆದರಿಕೆ ಹಾಗೂ ದೌರ್ಜನ್ಯದ ಧಾಟಿಯಲ್ಲಿ ರಾಜೀನಾಮೆ ಪಡೆದರು. ಈ ಘಟನೆ ನನಗೆ ಅಪಾರ ನೋವು ತಂದಿದೆ ಎಂದು ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಗಂಭೀರ ಆರೋಪ ಮಾಡಿದರು.

ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಬೆಳ್ಳಟ್ಟಿ ಗ್ರಾಮದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಜುಲೈ 24ರಂದು ರಾತ್ರಿ 11 ಗಂಟೆ ಸುಮಾರಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಕರೆ ಮಾಡಿ, ಸ್ಪೀಕರ್ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಸೂಚಿಸಿದ್ದರು ಎಂದು ತಿಳಿಸಿದರು.

ಆದರೆ, ಆಗಸ್ಟ್ 14ರಂದು ವಿಧಾನ ಪರಿಷತ್ ಅಧಿವೇಶನವನ್ನು ಕರೆದು, ಸದನದ ಎಲ್ಲ ಸದಸ್ಯರಿಗೆ ಕೃತಜ್ಞತೆ ಹಾಗೂ ಧನ್ಯವಾದ ಅರ್ಪಿಸಿದ ಬಳಿಕವೇ ರಾಜೀನಾಮೆ ನೀಡಬೇಕೆಂದು ನಾನು ನಿರ್ಧರಿಸಿದ್ದೆ. ಆದರೆ, ನನಗೆ ಆ ಅವಕಾಶವೂ ದೊರೆಯಲಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ನನ್ನ ಆಪ್ತ ಕಾರ್ಯದರ್ಶಿಗೆ ನನ್ನ ಶಿರೋನಾಮೆಯ ಲೆಟರ್ ತರಲು ಹೇಳಿ, ಯಾವುದೇ ಸೂಕ್ತ ಕಾರಣವನ್ನು ತಿಳಿಸದೇ ತಾವೇ ರಾಜೀನಾಮೆ ಪತ್ರವನ್ನು ಟೈಪ್ ಮಾಡಿಸಿ ನನ್ನಿಂದ ಸಹಿ ಪಡೆಯಲಾಯಿತು. ಈ ರೀತಿಯಲ್ಲಿ ರಾಜೀನಾಮೆ ಪಡೆಯುವುದು ನನಗೆ ನಿಜಕ್ಕೂ ಅತ್ಯಂತ ನೋವುಂಟು ಮಾಡಿದೆ ಎಂದು ಬಸವರಾಜ ಹೊರಟ್ಟಿ ಹೇಳಿದರು.

ಸದನದ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿ ಗೌರವಯುತವಾಗಿ ಸ್ಥಾನದಿಂದ ನಿರ್ಗಮಿಸಬೇಕೆಂಬುದು ನನ್ನ ಆಶಯವಾಗಿತ್ತು. ಆದರೆ, ಅದಕ್ಕೆ ಅವಕಾಶ ನೀಡದೆ ಬೆದರಿಕೆಯ ಹಾಗೂ ಒತ್ತಡದ ವಾತಾವರಣದಲ್ಲಿ ರಾಜೀನಾಮೆ ಪಡೆಯಲಾಯಿತು. ಈ ಘಟನೆ ನನ್ನ ಮನಸ್ಸಿಗೆ ತುಂಬಾ ನೋವು ತಂದಿದೆ ಎಂದು ಬಸವರಾಜ ಹೊರಟ್ಟಿ ಬೇಸರದಿಂದ ಹೇಳಿದರು.