ವಿಜಯಸಾಕ್ಷಿ ಸುದ್ದಿ, ಗದಗ: ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ಸಹಕಾರ ಕ್ಷೇತ್ರ ಮಹತ್ವದ ಪಾತ್ರ ವಹಿಸುತ್ತಿದ್ದು, ಕೃಷಿ, ಹೈನುಗಾರಿಕೆ, ಬ್ಯಾಂಕಿಂಗ್, ಗ್ರಾಮೀಣ ಉದ್ಯೋಗ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಹಕಾರ ಸಂಘಗಳು ಪ್ರಮುಖ ಕೊಡುಗೆ ನೀಡುತ್ತಿವೆ ಎಂದು ಗದಗ ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕ ಎಸ್.ಎಸ್. ಪಟ್ಟಣಶೆಟ್ಟಿ ಹೇಳಿದರು.
ಸಹಕಾರ ಇಲಾಖೆ, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಹಾಗೂ ಗದಗ ಜಿಲ್ಲಾ ಸಹಕಾರ ಯೂನಿಯನ್ ಸಹಯೋಗದಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರಬಂಧ ಹಾಗೂ ಚರ್ಚಾ ಸ್ಪರ್ಧೆಗಳ ಬಹುಮಾನ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಸಹಕಾರ ಕ್ಷೇತ್ರ ಕೇವಲ ಗ್ರಾಮೀಣ ಸಾಲ ಅಥವಾ ಹಾಲು ಉತ್ಪಾದನೆಗೆ ಸೀಮಿತವಲ್ಲ. ರೈತರು, ಕಾರ್ಮಿಕರು, ಮಹಿಳೆಯರು ಹಾಗೂ ಸಣ್ಣ ಉದ್ಯಮಿಗಳನ್ನು ಒಗ್ಗೂಡಿಸಿ ಉದ್ಯೋಗ, ಉತ್ಪಾದನೆ ಮತ್ತು ಗ್ರಾಮೀಣ ಸಮೃದ್ಧಿಗೆ ವೇಗ ನೀಡುವ ಆರ್ಥಿಕ ಮಾದರಿಯಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಯೂನಿಯನ್ ಅಧ್ಯಕ್ಷ ಸಿ.ಎಂ. ಪಾಟೀಲ ಮಾತನಾಡಿ, “ಯುವಕರು ತಂತ್ರಜ್ಞಾನ ಮತ್ತು ಡಿಜಿಟಲೀಕರಣದಲ್ಲಿ ಪರಿಣತಿ ಪಡೆದು ಸಹಕಾರ ಸಂಘಗಳನ್ನು ಆಧುನಿಕಗೊಳಿಸಬೇಕು. ಯುವಶಕ್ತಿ ಮತ್ತು ಸಹಕಾರ ಶಕ್ತಿ ಒಂದಾದಾಗ ‘ಸಹಕಾರದಿಂದ ಸಮೃದ್ಧಿ’ ಘೋಷಣೆಯಾಗದೆ ಆರ್ಥಿಕ ಅಭಿವೃದ್ಧಿಯ ಶಕ್ತಿಯಾಗಲಿದೆ” ಎಂದು ಹೇಳಿದರು.
ಪ್ರಬಂಧ ಸ್ಪರ್ಧೆಯಲ್ಲಿ ಕಣವಿ ಸರ್ಕಾರಿ ಪ್ರೌಢಶಾಲೆಯ ವಿನಾಯಕ ಎಂ. ಕೋರಿ ಪ್ರಥಮ, ಕಲಕೇರಿಯ ಎಸ್.ಜಿ.ಎಂ. ಪ್ರೌಢಶಾಲೆಯ ಸಿಂಧೂ ಮೌನೇಶ ಅಂಗಡಿ ದ್ವಿತೀಯ ಹಾಗೂ ಗದಗದ ಸಿದ್ಧಲಿಂಗನಗರ ಸರ್ಕಾರಿ ಪ್ರೌಢಶಾಲೆಯ ಕೃಷ್ಣಪ್ರಿಯಾ ಆನಂದ ಬದಿ ತೃತೀಯ ಸ್ಥಾನ ಪಡೆದರು.
ಚರ್ಚಾ ಸ್ಪರ್ಧೆಯ ವಿಷಯದ ಪರವಾಗಿ ಭುವನೇಶ್ವರಿ ಆರ್. ಬಳ್ಳಾರಿ ಪ್ರಥಮ, ಅರ್ಚನಾ ದ್ವಿತೀಯ ಹಾಗೂ ಭರತಕುಮಾರ ಎಂ. ಬಿಳೆಯಲಿ ತೃತೀಯ ಸ್ಥಾನ ಪಡೆದರೆ, ವಿರೋಧವಾಗಿ ಕಾವ್ಯಾ ಬಸನಗೌಡ ಬೆಳ್ಳಿಗೌಡ್ರ ಪ್ರಥಮ, ಲೇಖನಾ ಎ.ಪಿ. ದ್ವಿತೀಯ ಹಾಗೂ ಐಶ್ವರ್ಯ ಕೊಡಗಲಿ ತೃತೀಯ ಸ್ಥಾನ ಪಡೆದರು.
ವಿಜೇತರಿಗೆ ನಗದು ಬಹುಮಾನ, ಪದಕ ಹಾಗೂ ಪ್ರಮಾಣಪತ್ರ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಸಹಕಾರ ಇಲಾಖೆಯ ಅಧಿಕಾರಿಗಳು, ಕಾಲೇಜು ಪ್ರಾಚಾರ್ಯರು, ತೀರ್ಪುಗಾರರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

