ಗದಗದ ಯೋಗಪಟುಗಳ ರಾಜ್ಯಮಟ್ಟದ ಸಾಧನೆ
ಡಿಎಸ್ಎಸ್ ತಾಲೂಕು ಸಂಚಾಲಕರಾಗಿ ಸದಾನಂದ ನಂದೆಣ್ಣವರ ನೇಮಕ
ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪ್ರೊ. ಬಿ. ಕೃಷ್ಣಪ್ಪ ಸ್ಥಾಪಿಸಿರುವ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಲಕ್ಷ್ಮೇಶ್ವರ ತಾಲೂಕು ಸಂಚಾಲಕರಾಗಿ ಸದಾನಂದ ನಂದೆಣ್ಣವರ ಅವರನ್ನು ನೇಮಕ ಮಾಡಲಾಗಿದೆ.
ಶನಿವಾರ ಗದಗದಲ್ಲಿ ರಾಜ್ಯ ಸಂಘಟನೆಯ ವತಿಯಿಂದ ನಡೆದ ಪದಾಧಿಕಾರಿಗಳ ಸಭೆಯಲ್ಲಿ ಗದಗ ಜಿಲ್ಲಾ ಸಂಚಾಲಕ ದುರ್ಗಪ್ಪ ಎಲ್.ಎಚ್. ಅವರು ನೇಮಕಾತಿ ಆದೇಶ ಪತ್ರ ವಿತರಿಸಿದರು.
ಶಿಕ್ಷಣವೇ ಸಮಾಜದ ಶಕ್ತಿ; 135 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗಾಣಿಗ ಸಮಾಜದಿಂದ ಸನ್ಮಾನ
ವಿಜಯಸಾಕ್ಷಿ ಸುದ್ದಿ, ಗದಗ: ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಶಿಕ್ಷಣವೇ ಮೂಲಾಧಾರವಾಗಿದ್ದು, ಪಾಲಕರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿ ಉನ್ನತ ಗುರಿ ಸಾಧನೆಗೆ ಪ್ರೋತ್ಸಾಹಿಸಬೇಕು ಎಂದು ಶಿವಾನಂದ ಬ್ರಹ್ಮನ್ಮಠದ ಸದಾಶಿವಾನಂದ ಸ್ವಾಮೀಜಿ ಹೇಳಿದರು.
ನಗರದ ವಿವೇಕಾನಂದ ನಗರದ ಗಾಣಿಗ ಸಮುದಾಯ ಭವನದಲ್ಲಿ ಶನಿವಾರ ಅಖಿಲ ಭಾರತ ಗಾಣಿಗ ವಿದ್ಯಾ ಹಾಗೂ ಉದ್ಯೋಗವರ್ಧಕ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ, ನಿವೃತ್ತ ನೌಕರರ ಸನ್ಮಾನ, ವಾರ್ಷಿಕ ಸಭೆ ಹಾಗೂ ವಧು-ವರರ ಸಮಾವೇಶ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಶಿಕ್ಷಣವು ವ್ಯಕ್ತಿಯ ಬೌದ್ಧಿಕ ಬೆಳವಣಿಗೆಗೆ ಮಾತ್ರ ಸೀಮಿತವಾಗಿಲ್ಲ. ಅದು ಆರ್ಥಿಕ ಸ್ವಾವಲಂಬನೆ, ಉತ್ತಮ ಆರೋಗ್ಯ, ಸಂಸ್ಕಾರ ಮತ್ತು ಸಮಾಜದ ಪ್ರಗತಿಗೆ ದಾರಿಯಾಗುತ್ತದೆ. ಸಮಾಜದ ಮಕ್ಕಳ ಭವಿಷ್ಯ ಉಜ್ವಲಗೊಳಿಸುವ ನಿಟ್ಟಿನಲ್ಲಿ ಸಮುದಾಯ ಭವನದಲ್ಲಿ ಎಸ್ಎಸ್ಎಲ್ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಕೋಚಿಂಗ್ ತರಗತಿಗಳನ್ನು ಆರಂಭಿಸಬೇಕು. ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉತ್ತಮ ಮಾರ್ಗದರ್ಶನ ನೀಡುವ ಕೆಲಸವನ್ನು ಸಮಾಜದ ಮುಖಂಡರು ಕೈಗೆತ್ತಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಂಸ್ಕಾರವಿಲ್ಲದ ಶಿಕ್ಷಣ ಅಪೂರ್ಣ: ಬೆನಕೊಪ್ಪ
ನಿವೃತ್ತ ಡಿಡಿಪಿಐ ಐ.ಬಿ. ಬೆನಕೊಪ್ಪ ಮಾತನಾಡಿ, ಆಧುನಿಕ ಜೀವನಶೈಲಿಯಿಂದ ಮಾನಸಿಕ ನೆಮ್ಮದಿ ಕಳೆದುಕೊಳ್ಳುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಯುವಜನತೆ ದಾರಿ ತಪ್ಪದಂತೆ ಪಾಲಕರು ಮಕ್ಕಳಿಗೆ ಉತ್ತಮ ಸಂಸ್ಕಾರ ಹಾಗೂ ಮೌಲ್ಯಗಳನ್ನು ಕಲಿಸಬೇಕು ಎಂದು ಹೇಳಿದರು.
“ಅಂಕಗಳು ಮಾತ್ರ ಪ್ರತಿಭೆಯ ಮಾನದಂಡವಲ್ಲ. ಪ್ರತಿಯೊಬ್ಬ ಮಗುವಿನಲ್ಲೂ ವಿಶಿಷ್ಟ ಪ್ರತಿಭೆ ಅಡಗಿದೆ. ಅದನ್ನು ಗುರುತಿಸಿ ಬೆಳೆಸುವ ಜವಾಬ್ದಾರಿ ಶಿಕ್ಷಕರು ಹಾಗೂ ಪಾಲಕರ ಮೇಲಿದೆ” ಎಂದು ಅಭಿಪ್ರಾಯಪಟ್ಟರು.
ಶಿಕ್ಷಣವೇ ಯಶಸ್ಸಿನ ಮೆಟ್ಟಿಲು: ಬಸವರಾಜ ಕೆಂಪವಾಡ
ಭಾರತೀಯ ಅರಣ್ಯ ಸೇವೆಯಲ್ಲಿ ರಾಷ್ಟ್ರ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ಬಸವರಾಜ ಕೆಂಪವಾಡ ಮಾತನಾಡಿ, ಉತ್ತಮ ಶಿಕ್ಷಣ ವ್ಯಕ್ತಿಯನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯುತ್ತದೆ. ಪೋಷಕರು ಮಕ್ಕಳ ಮೇಲೆ ಅನಗತ್ಯ ಒತ್ತಡ ಹೇರದೇ, ಅವರ ಆಸಕ್ತಿ ಮತ್ತು ಸಾಮರ್ಥ್ಯಕ್ಕೆ ತಕ್ಕಂತೆ ಶಿಕ್ಷಣ ಪಡೆಯಲು ಅವಕಾಶ ಕಲ್ಪಿಸಬೇಕು ಎಂದರು.
ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಲು ಶಿಸ್ತು, ಪರಿಶ್ರಮ ಹಾಗೂ ಸ್ಪಷ್ಟ ಗುರಿ ಅಗತ್ಯ. ಸಮಾಜಕ್ಕೆ ಏನಾದರೂ ಕೊಡುಗೆ ನೀಡುವ ಮನೋಭಾವ ಪ್ರತಿಯೊಬ್ಬ ಯುವಕರಲ್ಲೂ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಹತ್ತು ವರ್ಷಗಳಿಂದ ಪ್ರತಿಭೆಗೆ ಪ್ರೋತ್ಸಾಹ
ಜಿಲ್ಲಾ ಗಾಣಿಗ ಸಮಾಜದ ಅಧ್ಯಕ್ಷ ಬಸವರಾಜ ಬಿಂಗಿ ಮಾತನಾಡಿ, ಕಳೆದ ಹತ್ತು ವರ್ಷಗಳಿಂದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ನಿರಂತರವಾಗಿ ಆಯೋಜಿಸಲಾಗುತ್ತಿದೆ. ಸಮಾಜದ ವಿದ್ಯಾರ್ಥಿಗಳನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿ ಪ್ರೋತ್ಸಾಹಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ವಿದ್ಯಾರ್ಥಿಗಳು ಸ್ಪಷ್ಟ ಗುರಿ ಇಟ್ಟುಕೊಂಡು ಅಧ್ಯಯನ ಮಾಡಿದರೆ ಮಾತ್ರ ಉನ್ನತ ಸಾಧನೆ ಸಾಧ್ಯ. ಗಾಣಿಗ ಸಮಾಜದ ವಿದ್ಯಾರ್ಥಿಗಳು ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡುವಂತಾಗಬೇಕು ಎಂದು ಆಶಿಸಿದರು.
135 ಪ್ರತಿಭಾವಂತರಿಗೆ ಗೌರವ
ಕಾರ್ಯಕ್ರಮದಲ್ಲಿ ಎಸ್ಎಸ್ಎಲ್ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಉತ್ತಮ ಅಂಕ ಗಳಿಸಿದ ಸುಮಾರು 135 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಭಾರತೀಯ ಅರಣ್ಯ ಸೇವೆಯಲ್ಲಿ ರಾಷ್ಟ್ರಕ್ಕೆ ಪ್ರಥಮ ಸ್ಥಾನ ಪಡೆದ ಬಸವರಾಜ ಕೆಂಪವಾಡ ಅವರನ್ನು ವಿಶೇಷವಾಗಿ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಗೌರವಾಧ್ಯಕ್ಷ ಷಣ್ಮಖಪ್ಪ ಬಡ್ನಿ, ಕಟ್ಟಡ ಸಮಿತಿ ಅಧ್ಯಕ್ಷ ಹಾಗೂ ಜಿಪಂ ಮಾಜಿ ಅಧ್ಯಕ್ಷ ನಿಂಗಪ್ಪ ಕೆಂಗಾರ, ಜಿಲ್ಲಾ ಗಾಣಿಗ ಸಮಾಜದ ಉಪಾಧ್ಯಕ್ಷ ಬಿ.ಬಿ. ಐನಾಪೂರ, ಸಮಾಜದ ಮುಖಂಡರಾದ ಅಶೋಕ ಮಂದಾಲಿ, ಸಿದ್ದು ಪಾಟೀಲ ಸೇರಿದಂತೆ ಅಖಿಲ ಭಾರತ ಗಾಣಿಗ ವಿದ್ಯಾ ಹಾಗೂ ಉದ್ಯೋಗವರ್ಧಕ ಟ್ರಸ್ಟ್ನ ಪದಾಧಿಕಾರಿಗಳಾದ ಮುರುಘರಾಜೇಂದ್ರ ಬಡ್ನಿ, ಸುರೇಶ ಮರಳಪ್ಪನವರ, ಎಸ್.ವಿ. ಪವಾಡಿಗೌಡ್ರ, ಗಿರಿಯಪ್ಪ ಅಸೂಟಿ, ಗಂಗಾಧರ ಗಾಣಿಗೇರ, ರಮೇಶ ಮಂದಾಲಿ, ಬಿ.ಎಸ್. ವಡವಟ್ಟಿ, ದಶರಥ ಗಾಣಿಗೇರ, ಬಸವರಾಜ ಸುಂಕದ, ಫಕೀರಪ್ಪ ಸಿಂಧಗಿ, ಹಾಲಪ್ಪ ಬಣವಿ, ಅಮರೇಶ ಹಾದಿ, ಶ್ರೀಕಾಂತ ಲಕ್ಕುಂಡಿ, ತೋಟಪ್ಪ ಗಾಣಿಗೇರ, ಐ.ಎಂ. ಕಿರೇಸೂರ, ಬಸವಂತಪ್ಪ ನವಲಳ್ಳಿ, ಸಂದೀಪ ಬೆಳವಟಗಿ, ಬಸವರಾಜ ನಲವಗುಂದ ಸೇರಿದಂತೆ ಸಮಾಜದ ಮುಖಂಡರು ಉಪಸ್ಥಿತರಿದ್ದರು.
“ಸಮಾಜದ ಪ್ರಗತಿಗೆ ಶಿಕ್ಷಣವೇ ಅಡಿಪಾಯ. ಬಡ ಹಾಗೂ ಪ್ರತಿಭಾವಂತ ಮಕ್ಕಳ ಶಿಕ್ಷಣಕ್ಕೆ ಸಮಾಜವೇ ಬೆನ್ನೆಲುಬಾಗಿ ನಿಲ್ಲಬೇಕು; ಆಗ ಮಾತ್ರ ಉಜ್ವಲ ಭವಿಷ್ಯದ ಸಮಾಜ ನಿರ್ಮಾಣ ಸಾಧ್ಯ.”
ಸದಾಶಿವಾನಂದ ಸ್ವಾಮೀಜಿ
ಶಿವಾನಂದ ಬ್ರಹ್ಮನ್ಮಠ
ಜಿ.ಎಸ್. ಪಾಟೀಲರಿಗೆ ಸಚಿವ ಸ್ಥಾನಕ್ಕೆ ಕಾರ್ಮಿಕರ ಹಕ್ಕೊತ್ತಾಯ: ವಿಷ ಸೇವನೆ ಯತ್ನದಿಂದ ಹೈಡ್ರಾಮಾ!
ವಿಜಯಸಾಕ್ಷಿ ಸುದ್ದಿ, ರೋಣ: ಶಾಸಕ ಜಿ.ಎಸ್. ಪಾಟೀಲರಿಗೆ ಸಚಿವ ಸ್ಥಾನ ನೀಡಬೇಕು ಎಂದು ಆಗ್ರಹಿಸಿ ತಾಲೂಕು ಕಟ್ಟಡ ಮತ್ತು ಕೂಲಿ ಕಾರ್ಮಿಕರ ಸಂಘಟನೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಹಕ್ಕೊತ್ತಾಯ ಪ್ರತಿಭಟನೆ ಹಾಗೂ ಬೃಹತ್ ಮೆರವಣಿಗೆ ನೂರಾರು ಕಾರ್ಮಿಕರ ಭಾಗವಹಿಸುವಿಕೆಯಿಂದ ಗಮನ ಸೆಳೆಯಿತು.
ಪಟ್ಟಣದ ಸಿದ್ದಾರೂಢ ಮಠದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆಗೆ ವಿವಿಧ ಮಠಾಧೀಶರು ಹಾಗೂ ದರ್ಗಾದ ಅಜ್ಜನವರು ಚಾಲನೆ ನೀಡಿದರು. ಸಚಿವ ಸಂಪುಟದಲ್ಲಿ ಈ ಬಾರಿ ಜಿ.ಎಸ್. ಪಾಟೀಲರಿಗೆ ಸ್ಥಾನ ನೀಡಲೇಬೇಕು ಎಂದು ಕಾರ್ಮಿಕರು ಘೋಷಣೆಗಳನ್ನು ಕೂಗಿ ಒತ್ತಾಯಿಸಿದರು.
ಮೆರವಣಿಗೆಯು ಸೂಡಿ ವೃತ್ತ, ಮುಲ್ಲಾನ ಭಾವಿ ಮಾರ್ಗವಾಗಿ ಪೋತರಾಜನ ಕಟ್ಟೆ ತಲುಪಿದ ವೇಳೆ ಪ್ರತಿಭಟನಾಕಾರರು ಮಾನವ ಸರಪಳಿ ನಿರ್ಮಿಸಿ ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಜಿ.ಎಸ್. ಪಾಟೀಲರಿಗೆ ಕೊಟ್ಟ ಮಾತಿನಂತೆ ಸಚಿವ ಸ್ಥಾನ ನೀಡಬೇಕು. ಇಲ್ಲವಾದಲ್ಲಿ ಮುಂದಿನ ಚುನಾವಣೆಗಳಲ್ಲಿ ಮತದಾನ ಬಹಿಷ್ಕರಿಸುವ ಬಗ್ಗೆ ಚಿಂತನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ಸಂದೇಶ ರವಾನಿಸಿದರು.
ವಿಷ ಸೇವನೆ ಯತ್ನ; ಕೆಲಕಾಲ ಉದ್ವಿಗ್ನತೆ
ಪ್ರತಿಭಟನೆ ಪೋತರಾಜನ ಕಟ್ಟೆ ತಲುಪುತ್ತಿದ್ದಂತೆ ಶಾಸಕ ಜಿ.ಎಸ್. ಪಾಟೀಲರ ಅಭಿಮಾನಿಗಳಾದ ಸಂಗಪ್ಪ ಜಿಡ್ಡಿಬಾಗಿಲ, ಶಾಭಾಜ್ ಗದಗಕರ್ ಹಾಗೂ ದಾವಲಸಾಬ ಬಾಡಿನ ಅವರು ಕ್ರಿಮಿನಾಶಕ ಸೇವಿಸಲು ಮುಂದಾದ ಘಟನೆ ಕೆಲಕಾಲ ಉದ್ವಿಗ್ನ ವಾತಾವರಣ ಸೃಷ್ಟಿಸಿತು.
“ರೋಣ ಮತಕ್ಷೇತ್ರಕ್ಕೆ ನಿರಂತರ ಅನ್ಯಾಯವಾಗುತ್ತಿದೆ. ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಜಿ.ಎಸ್. ಪಾಟೀಲರು ಪಕ್ಷವನ್ನು ಬಲಪಡಿಸಲು ಅಪಾರ ಶ್ರಮವಹಿಸಿದ್ದಾರೆ. ಆದರೂ ಸಚಿವ ಸ್ಥಾನ ನೀಡುವಲ್ಲಿ ವಿಳಂಬ ಧೋರಣೆ ಅನುಸರಿಸಲಾಗುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ ಅಭಿಮಾನಿಗಳು ವಿಷ ಸೇವಿಸಲು ಮುಂದಾದರು. ಕೂಡಲೇ ಪಕ್ಷದ ಮುಖಂಡರು ಮಧ್ಯಪ್ರವೇಶಿಸಿ ಅವರನ್ನು ಸಮಾಧಾನಪಡಿಸಿ ಕ್ರಿಮಿನಾಶಕವನ್ನು ವಶಪಡಿಸಿಕೊಂಡರು.
ಪ್ರತಿಭಟನೆಯ ಬಳಿಕ ಶ್ರೀಗಳು ಹಾಗೂ ಕಾರ್ಯಕರ್ತರು ಪೋತರಾಜನ ಕಟ್ಟೆ ಸಮೀಪದ ದರ್ಗಾದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಹಜರತ್ ಸುಲೇಮಾನ್ ಶಾವಲಿ ಅಜ್ಜನವರು, ಶಿವಮುನಿ ಶ್ರೀಗಳು, ಮರುಳ ಸಿದ್ದೇಶ್ವರ ಶ್ರೀಗಳು, ದಿವಾನ್ ಶರೀಫ್ ಶ್ರೀಗಳು, ಬಸವರಾಜ ಶರಣರು, ಹುಚ್ಚಯ್ಯ ಶ್ರೀಗಳು, ವಿಶ್ವನಾಥ ಶ್ರೀಗಳು, ಗದಿಗೇಪ್ಪ ಕಿರೇಸೂರ, ಯೂಸುಫ್ ಇಟಗಿ, ಬಾವಾಸಾಬ ಬಟಗೇರಿ, ಆನಂದ ಚಂಗಳಿ, ದುರ್ಗಪ್ಪ ಹಿರೇಮನಿ, ಮಲೀಕ ಯಲಿಗಾರ, ಹನ್ಮಂತಪ್ಪ ತಳ್ಳಿಕೇರಿ, ಅಸ್ಲಂ ಕೊಪ್ಪಳ, ಬಶೀರ ಕಟ್ಟಿಮನಿ, ಮೌನೇಶ ಹಾದಿಮನಿ, ಮಕ್ತುಂಸಾಬ ಮುಲ್ಲಾ, ಕೆ.ಕೆ. ಮುಲ್ಲಾ, ಸಂಜಯ ದೊಡ್ಡಮನಿ ಸೇರಿದಂತೆ ನೂರಾರು ಕಾರ್ಮಿಕರು ಪಾಲ್ಗೊಂಡಿದ್ದರು.
“ಶಾಸಕ ಜಿ.ಎಸ್. ಪಾಟೀಲರು ಕಳೆದ 50 ವರ್ಷಗಳಿಂದ ಪಕ್ಷಕ್ಕೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ್ದಾರೆ. ಅವರ ಸೇವೆಯನ್ನು ಪರಿಗಣಿಸಿ ಸಚಿವ ಸ್ಥಾನ ನೀಡಬೇಕು. ಇದು ನಮ್ಮ ನ್ಯಾಯಯುತ ಬೇಡಿಕೆ. ಇದಕ್ಕೆ ಸ್ಪಂದಿಸದಿದ್ದರೆ ನಾವು ಪ್ರಾಣತ್ಯಾಗಕ್ಕೂ ಸಿದ್ಧರಿದ್ದೇವೆ. ಮುಂದಾಗುವ ಯಾವುದೇ ಅನಾಹುತಕ್ಕೆ ಪಕ್ಷದ ವರಿಷ್ಠರೇ ಹೊಣೆ.”
ವಿನಾಯಕ ಜಕ್ಕಣಗೌಡ್ರ, ಕಾಂಗ್ರೆಸ್ ಮುಖಂಡ
ಸಚಿವ ಸ್ಥಾನ ನೀಡದಿದ್ದರೆ ವಿಧಾನಸೌಧ ಚಲೋ
ಮರುಳ ಸಿದ್ದೇಶ್ವರ ಪುಣ್ಯಾಶ್ರಮದ ಶ್ರೀ ಶಿವಶರಣ ಗದಿಗೆಪ್ಪಜ್ಜನವರು ಮಾತನಾಡಿ, “ಜಿ.ಎಸ್. ಪಾಟೀಲರು ಎಲ್ಲ ಸಮುದಾಯಗಳನ್ನು ಒಗ್ಗೂಡಿಸಿಕೊಂಡು ಹೋಗುವ ಹೃದಯವಂತ ನಾಯಕ. ಪಕ್ಷ ನೀಡಿದ ಎಲ್ಲ ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ. ಅವರ ಪ್ರಾಮಾಣಿಕ ಸೇವೆಯನ್ನು ಗುರುತಿಸಿ ಸಚಿವ ಸ್ಥಾನ ನೀಡಬೇಕು. ಇಲ್ಲವಾದಲ್ಲಿ ಶ್ರೀಗಳ ನೇತೃತ್ವದಲ್ಲಿ ‘ವಿಧಾನಸೌಧ ಚಲೋ’ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ” ಎಂದು ಎಚ್ಚರಿಕೆ ನೀಡಿದರು.
ಶಿಕ್ಷಣದಿಂದ ಯಾವ ಮಗುವೂ ವಂಚಿತರಾಗಬಾರದು: ದಿವಾಣಿ ನ್ಯಾಯಾಧೀಶ ಸತೀಶ್ ಎಂ
ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ವಿಶ್ವ ಬಾಲಕಾರ್ಮಿಕ ವಿರೋಧಿ ದಿನಾಚರಣೆ ಅಂಗವಾಗಿ ಶಿರಹಟ್ಟಿ ಪಟ್ಟಣದ ಸಿಸಿಎನ್ ಸರ್ಕಾರಿ ಪ್ರೌಢಶಾಲೆಯಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ ಲಕ್ಷ್ಮೇಶ್ವರ, ತಾಲೂಕು ಆಡಳಿತ ಶಿರಹಟ್ಟಿ, ಪೊಲೀಸ್ ಇಲಾಖೆ, ಕಾರ್ಮಿಕ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ಜಾಗೃತಿ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಲಕ್ಷ್ಮೇಶ್ವರ–ಶಿರಹಟ್ಟಿ ತಾಲೂಕು ಕಾನೂನು ಸೇವಾ ಸಮಿತಿ ಸದಸ್ಯ ಕಾರ್ಯದರ್ಶಿ ಹಾಗೂ ದಿವಾಣಿ ನ್ಯಾಯಾಧೀಶ ಸತೀಶ್ ಎಂ. ಅವರು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, “ಶಿಕ್ಷಣದಿಂದ ಯಾವ ಮಗುವೂ ವಂಚಿತರಾಗಬಾರದು. ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಸಮಾಜದಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವ ಅಗತ್ಯವಿದೆ. ಮಕ್ಕಳಿಗೆ ಶಿಕ್ಷಣದ ಹಕ್ಕು ದೊರಕುವಂತೆ ಪ್ರತಿಯೊಬ್ಬರೂ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು” ಎಂದು ಹೇಳಿದರು.
ತಹಸೀಲ್ದಾರ್ ಕೆ. ರಾಘವೇಂದ್ರ ರಾವ್, ಸರ್ಕಾರಿ ಸಹಾಯಕ ಅಭಿಯೋಜಕಿ ಕು. ಹೀನಾಕೌಸರ ಗಂಜಿಹಾಳ ಹಾಗೂ ಪಿಎಸ್ಐ ಈರಪ್ಪ ರಿತ್ತಿ ಅವರು ಬಾಲಕಾರ್ಮಿಕ ಪದ್ಧತಿಯ ದುಷ್ಪರಿಣಾಮಗಳು ಮತ್ತು ಮಕ್ಕಳ ಹಕ್ಕುಗಳ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ವಕೀಲರ ಸಂಘದ ಉಪಾಧ್ಯಕ್ಷ ಅನಿಲ ಮಾನೆ, ಬಿ.ಎಸ್. ಭಜಂತ್ರಿ, ವೀರನಗೌಡ ಪೊಲೀಸ್ ಪಾಟೀಲ, ಎಚ್.ಎಂ. ದೇವಗಿರಿ, ಅಭಿನಂದನ ಖವಟಕೊಪ್ಪ, ವೆಂಕಟೇಶ ಗುಡಗುಂಡಿ, ಸುಮಯ್ಯ ಸಯ್ಯದ, ಎಸ್.ಎಸ್. ಡೊಳ್ಳಿನ, ಉಮೇಶ ಹುಚ್ಚಯ್ಯನಮಠ, ವಿ.ಎಚ್. ಡಿಯಾಳಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಮಳೆ ಹೆಚ್ಚಾದರೂ ಆತಂಕ ಬೇಡ: ಜಿಲ್ಲಾಧಿಕಾರಿ ಸ್ನೇಹಲ್ ಆರ್
ವಿಜಯಸಾಕ್ಷಿ ಸುದ್ದಿ, ಧಾರವಾಡ: ಮುಂಗಾರು ಮಳೆಯ ತೀವ್ರತೆ ಹೆಚ್ಚುತ್ತಿರುವ ನಡುವೆಯೂ ಧಾರವಾಡ ಜಿಲ್ಲೆಯಲ್ಲಿ ಕುಡಿಯುವ ನೀರು ಹಾಗೂ ಜಾನುವಾರುಗಳ ಮೇವಿನ ಕೊರತೆ ಉಂಟಾಗದಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್. ತಿಳಿಸಿದ್ದಾರೆ.
ಗ್ರಾಮೀಣ ಪ್ರದೇಶದ 21 ಗ್ರಾಮಗಳಿಗೆ 25 ಖಾಸಗಿ ಕೊಳವೆಬಾವಿಗಳ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದ್ದು, ಜಿಲ್ಲೆಯ ಯಾವುದೇ ಭಾಗದಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವ ಪರಿಸ್ಥಿತಿ ಎದುರಾಗಿಲ್ಲ. ನವಲಗುಂದ, ಅಣ್ಣಿಗೇರಿ, ಹುಬ್ಬಳ್ಳಿ ಹಾಗೂ ಕುಂದಗೋಳ ತಾಲೂಕುಗಳಲ್ಲಿ ಮಲಪ್ರಭಾ ಜಲಾಶಯದಿಂದ 60 ಕುಡಿಯುವ ನೀರಿನ ಕೆರೆಗಳನ್ನು ಭರ್ತಿ ಮಾಡಲಾಗಿದ್ದು, ಜನ-ಜಾನುವಾರುಗಳಿಗೆ ನೀರಿನ ಕೊರತೆ ಉಂಟಾಗದಂತೆ ಕ್ರಮ ವಹಿಸಲಾಗಿದೆ.
ಜಿಲ್ಲೆಯ ಐದು ನಗರ ಸ್ಥಳೀಯ ಸಂಸ್ಥೆಗಳ 100 ವಾರ್ಡ್ಗಳಲ್ಲಿಯೂ ನೀರಿನ ಲಭ್ಯತೆ ಸಮರ್ಪಕವಾಗಿದೆ. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ 13 ವಾರ್ಡ್ಗಳಲ್ಲಿ 24×7 ನೀರು ಪೂರೈಕೆ ವ್ಯವಸ್ಥೆ ಜಾರಿಯಲ್ಲಿದ್ದು, ಉಳಿದ ವಾರ್ಡ್ಗಳಿಗೂ ನಿಯಮಿತವಾಗಿ ನೀರು ಸರಬರಾಜು ಮಾಡಲಾಗುತ್ತಿದೆ.
ಜಿಲ್ಲೆಯಲ್ಲಿ 2.33 ಲಕ್ಷಕ್ಕೂ ಅಧಿಕ ಜಾನುವಾರುಗಳಿಗೆ 45 ವಾರಗಳಷ್ಟು ಮೇವು ಲಭ್ಯವಿದ್ದು, ಮೇವಿನ ಕೊರತೆ ಎದುರಾಗದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಜೂನ್ 1ರಿಂದ 11ರವರೆಗೆ ಜಿಲ್ಲೆಯಲ್ಲಿ 66.4 ಮಿ.ಮೀ. ಮಳೆ ದಾಖಲಾಗಿದ್ದು, ವಾಡಿಕೆ ಮಳೆಯಾದ 40.6 ಮಿ.ಮೀ.ಗೆ ಹೋಲಿಸಿದರೆ ಶೇ.64ರಷ್ಟು ಅಧಿಕ ಮಳೆಯಾಗಿದೆ.
ಗುಡುಗು-ಸಿಡಿಲು ಅವಘಡದಲ್ಲಿ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ₹5 ಲಕ್ಷ ಪರಿಹಾರ ಹಾಗೂ ಮೃತಪಟ್ಟ ಜಾನುವಾರುಗಳ ಮಾಲೀಕರಿಗೆ ₹6.60 ಲಕ್ಷ ಪರಿಹಾರ ವಿತರಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
“ಮುಂಗಾರು ಹಂಗಾಮಿನಲ್ಲಿ ಕುಡಿಯುವ ನೀರು, ಮೇವು ಹಾಗೂ ಅಗತ್ಯ ಮೂಲಸೌಕರ್ಯಗಳ ಕೊರತೆ ಉಂಟಾಗದಂತೆ ಜಿಲ್ಲಾಡಳಿತ ಎಲ್ಲ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ. ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ.”
ಸ್ನೇಹಲ್ ಆರ್., ಜಿಲ್ಲಾಧಿಕಾರಿ, ಧಾರವಾಡ
ಮುಳ್ಳಯ್ಯನಗಿರಿ ತಪ್ಪಲಿನಲ್ಲಿ ಉರುಳಿಗೆ ಸಿಕ್ಕು ಗಾಯಗೊಂಡ ಹುಲಿ ಸಂಚಾರ: ಗ್ರಾಮಸ್ಥರಿಗೆ ಎಚ್ಚರಿಕೆ
ಚಿಕ್ಕಮಗಳೂರು: ಮುಳ್ಳಯ್ಯನಗಿರಿ ತಪ್ಪಲಿನಲ್ಲಿ ಉರುಳಿಗೆ ಸಿಕ್ಕು ಗಾಯಗೊಂಡ ಹುಲಿ ಕಳೆದ ಕೆಲವು ದಿನಗಳಿಂದ ಸಂಚರಿಸುತ್ತಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಗ್ರಾಮಸ್ಥರು ಹಾಗೂ ಪ್ರವಾಸಿಗರಿಗೆ ಎಚ್ಚರಿಕೆ ನೀಡಿದೆ.
ಮಾಹಿತಿಯ ಪ್ರಕಾರ, ಹುಲಿಯ ಸೊಂಟದಲ್ಲಿ ಉರುಳು ಸಿಲುಕಿದ್ದು ಅದು ಇನ್ನೂ ನೇತಾಡುತ್ತಿರುವ ಸ್ಥಿತಿಯಲ್ಲಿದೆ. ಈ ಕಾರಣದಿಂದ ಹುಲಿ ತೀವ್ರ ನೋವಿನಲ್ಲಿದ್ದರೂ ಕಳೆದ ನಾಲ್ಕೈದು ದಿನಗಳಿಂದ ಪ್ರದೇಶದಲ್ಲಿ ಓಡಾಡುತ್ತಿದೆ. ಈ ಅವಧಿಯಲ್ಲಿ ಅದು ಜಿಂಕೆ ಮತ್ತು ಕಡವೆಯನ್ನು ಬೇಟೆಯಾಡಿರುವುದು ಸಹ ದೃಢಪಟ್ಟಿದೆ. ಸುತ್ತಮುತ್ತ ಪ್ರಾಣಿಗಳ ಅವಶೇಷಗಳು ಪತ್ತೆಯಾಗಿವೆ.
ಸ್ಥಳೀಯ ನಿವಾಸಿಗಳ ಭದ್ರತೆಗಾಗಿ ಅರಣ್ಯ ಇಲಾಖೆ ತೋಟ ಕಾರ್ಮಿಕರಿಗೆ ಕೆಲಸಕ್ಕೆ ತೆರಳದಂತೆ ಸೂಚನೆ ನೀಡಿದ್ದು, ಪಂಡರವಳ್ಳಿ, ಕೊಳಗಾಮೆ ಹಾಗೂ ಏಳುನೂರ್ ಖಾನ್ ಗ್ರಾಮಗಳಲ್ಲಿ ಜನರು ಆತಂಕದಲ್ಲಿ ಇದ್ದಾರೆ.
ಹುಲಿಯನ್ನು ಸೆರೆಹಿಡಿಯಲು ಅರಣ್ಯ ಇಲಾಖೆ ಕಳೆದ ಮೂರ್ನಾಲ್ಕು ದಿನಗಳಿಂದ ಕಾರ್ಯಾಚರಣೆ ನಡೆಸುತ್ತಿದ್ದು, ಕ್ಯಾಮೆರಾ ಟ್ರ್ಯಾಪ್ಗಳನ್ನು ಅಳವಡಿಸಿ ಅದರ ಚಲನವಲನವನ್ನು ನಿಗಾ ವಹಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಉರುಳು ಹಾಕಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಮತ್ತು ಪರಿಸರವಾದಿಗಳು ಆಗ್ರಹಿಸಿದ್ದಾರೆ.
ಮನೆಯ ಮುಂದಿನ ಸಂಪ್ಗೆ ಬಿದ್ದು 2 ವರ್ಷದ ಮಗು ದುರ್ಮರಣ
ಮಂಡ್ಯ: ಪಾಂಡವಪುರ ತಾಲೂಕಿನ ಲಕ್ಷ್ಮೀಸಾಗರ ಗ್ರಾಮದಲ್ಲಿ ಮನೆಯ ಮುಂದಿನ ನೀರಿನ ಸಂಪ್ಗೆ ಬಿದ್ದು ಎರಡು ವರ್ಷದ ಬಾಲಕ ಮೃತಪಟ್ಟಿರುವ ದುರ್ಘಟನೆ ನಡೆದಿದೆ. ಮೃತ ಬಾಲಕನನ್ನು ಹರೀಶ್ ಮತ್ತು ಸುಷ್ಮಾ ದಂಪತಿಯ ಪುತ್ರ ವಿನು ಎಂದು ಗುರುತಿಸಲಾಗಿದೆ.
ಮಾಹಿತಿಯ ಪ್ರಕಾರ, ಮನೆಯ ಮುಂದೆ ಆಟವಾಡುತ್ತಿದ್ದ ವೇಳೆ ಮಗು ಅಚಾನಕ್గా ನೀರಿನ ಸಂಪ್ಗೆ ಬಿದ್ದುದು ಈ ದುರಂತಕ್ಕೆ ಕಾರಣವಾಗಿದೆ. ಘಟನೆಯ ಸಮಯದಲ್ಲಿ ಮನೆಯವರು ಗಮನಿಸದೇ ಇದ್ದುದರಿಂದ ತಕ್ಷಣ ರಕ್ಷಣೆ ಸಾಧ್ಯವಾಗಿಲ್ಲ ಎಂದು ತಿಳಿದುಬಂದಿದೆ.
ಘಟನೆ ತಿಳಿಯುತ್ತಿದ್ದಂತೆ ಸ್ಥಳೀಯರು ಹಾಗೂ ಕುಟುಂಬಸ್ಥರು ಮಗುನ್ನು ರಕ್ಷಿಸಲು ಯತ್ನಿಸಿದರೂ ಫಲಕಾರಿಯಾಗಿಲ್ಲ. ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ದೃಢಪಡಿಸಲಾಗಿದೆ.
ಪಾಂಡವಪುರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಶಿವಮೊಗ್ಗದಲ್ಲಿ ಮನೆ ಒಳಗೆ ಮಹಿಳೆ ಮತ್ತು ಸಾಕು ನಾಯಿಯ ಕೊಳೆತ ಶವ ಪತ್ತೆ
ಶಿವಮೊಗ್ಗ: ನಗರದ ರವೀಂದ್ರ ನಗರದ ಮನೆಯೊಂದರಲ್ಲಿ ಮಹಿಳೆ ಹಾಗೂ ಅವರ ಸಾಕು ನಾಯಿಯ ಮೃತದೇಹಗಳು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಸ್ಥಳೀಯವಾಗಿ ಆತಂಕ ಮೂಡಿಸಿದೆ. ಮೃತರನ್ನು 57 ವರ್ಷದ ಪ್ರಭಾವತಿ ಎಂದು ಗುರುತಿಸಲಾಗಿದೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಪ್ರಭಾವತಿ ಅವರು ಕೆಲವು ದಿನಗಳ ಹಿಂದೆಯೇ ಮನೆಯಲ್ಲಿ ಮೃತಪಟ್ಟಿದ್ದಾರೆ ಎಂದು ಶಂಕಿಸಲಾಗಿದೆ. ಅವರೊಂದಿಗೆ ಮನೆಯೊಳಗೆ ಇದ್ದ ಸಾಕು ನಾಯಿ ಕೂಡ ಅದೇ ಅವಧಿಯಲ್ಲಿ ಸಾವನ್ನಪ್ಪಿದೆ. ಇಬ್ಬರ ಮೃತದೇಹಗಳು ದೀರ್ಘಕಾಲದಿಂದ ಪತ್ತೆಯಾಗದೆ ಕೊಳೆತ ಸ್ಥಿತಿಗೆ ತಲುಪಿದ್ದವು.
ಮನೆಯಿಂದ ತೀವ್ರ ದುರ್ವಾಸನೆ ಬರುತ್ತಿದ್ದ ಹಿನ್ನೆಲೆಯಲ್ಲಿ ಅಕ್ಕಪಕ್ಕದ ನಿವಾಸಿಗಳು ಜಯನಗರ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಮನೆ ಬಾಗಿಲು ತೆರೆಯಿಸಿ ಪರಿಶೀಲನೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಮೃತದೇಹಗಳನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಸಾವಿಗೆ ನಿಖರ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಎಲ್ಲಾ ಆಯಾಮಗಳಲ್ಲಿ ತನಿಖೆ ಮುಂದುವರಿಸಿದ್ದಾರೆ.
ಜೋರ್ಹತ್ ವಾಯುನೆಲೆಯಲ್ಲಿ ದುರಂತ: ಎಎನ್-32 ವಿಮಾನ ಪತನ, ಐವರು IAF ಸಿಬ್ಬಂದಿ ಹುತಾತ್ಮ
ದಿಸ್ಪುರ: ಭಾರತೀಯ ವಾಯುಪಡೆಯ ಎಎನ್-32 ಸಾರಿಗೆ ವಿಮಾನ ಅಸ್ಸಾಂನ ಜೋರ್ಹತ್ ವಾಯುನೆಲೆಯಲ್ಲಿ ಪತನಗೊಂಡು ಐವರು ವಾಯುಪಡೆ ಸಿಬ್ಬಂದಿ ಹುತಾತ್ಮರಾಗಿರುವ ದುರ್ಘಟನೆ ನಡೆದಿದೆ. ಘಟನೆಯಲ್ಲಿ ಸಹ ಪೈಲಟ್ ಗಾಯಗೊಂಡಿದ್ದಾರೆ.
ಜೋರ್ಹತ್ ಜಿಲ್ಲೆಯ ರೌರಿಯಾ ಪ್ರದೇಶದಲ್ಲಿರುವ ವಾಯುನೆಲೆಯಲ್ಲಿ ವಿಮಾನ ಲ್ಯಾಂಡಿಂಗ್ ವೇಳೆ ಅಪಘಾತ ಸಂಭವಿಸಿದೆ. ಪತನದ ರಭಸಕ್ಕೆ ವಿಮಾನದಲ್ಲಿದ್ದ ಐವರು ಸಿಬ್ಬಂದಿ ಸ್ಥಳದಲ್ಲೇ ಹುತಾತ್ಮರಾಗಿದ್ದಾರೆ.
ದುರಂತದಲ್ಲಿ ಸ್ಕ್ವಾಡ್ರನ್ ಲೀಡರ್ ಪ್ರಶಾಂತ್ ಸಿಂಗ್, ಫ್ಲೈಟ್ ಲೆಫ್ಟಿನೆಂಟ್ ಶುಭಮ್ ಕುಮಾರ್, ಸಾರ್ಜೆಂಟ್ ಜಿತೇಂದ್ರ ಶರ್ಮಾ, ಅಗ್ನಿವೀರ್ವಾಯು ಖೇಮರಾಮ್ ಕುಮಾವತ್ ಮತ್ತು ಅಗ್ನಿವೀರ್ವಾಯು ಡ್ಯಾನಿಶ್ ಆಲಂ ಪ್ರಾಣ ಕಳೆದುಕೊಂಡಿದ್ದಾರೆ.
ಘಟನೆ ಕುರಿತು ಭಾರತೀಯ ವಾಯುಪಡೆ ಅಧಿಕೃತವಾಗಿ ಮಾಹಿತಿ ನೀಡಿದ್ದು, ಅಪಘಾತದ ಕಾರಣ ತಿಳಿಯಲು ತನಿಖೆ ಆರಂಭಿಸಲಾಗಿದೆ. ಸಂಪೂರ್ಣ ವರದಿ ಬಳಿಕ ಹೆಚ್ಚಿನ ಮಾಹಿತಿ ಬಹಿರಂಗವಾಗಲಿದೆ ಎಂದು ವಾಯುಪಡೆ ತಿಳಿಸಿದೆ.

