Home Blog

ಎಲ್‌ಪಿಜಿ ಪೂರೈಕೆ ಗೊಂದಲಕ್ಕೆ ಬ್ರೇಕ್: ಹೋಟೆಲ್ ಉದ್ಯಮಕ್ಕೆ ಬಿಗ್ ರಿಲೀಫ್!

ಬೆಂಗಳೂರು: ಎಲ್‌ಪಿಜಿ ಪೂರೈಕೆ ಸಂಬಂಧಿತ ಗೊಂದಲಗಳಿಂದ ಸಂಕಷ್ಟಕ್ಕೀಡಾಗಿದ್ದ ಹೋಟೆಲ್ ಮತ್ತು ರೆಸ್ಟೋರೆಂಟ್ ಉದ್ಯಮಕ್ಕೆ ಕೇಂದ್ರ ಸರ್ಕಾರದಿಂದ ಬಿಗ್ ರಿಲೀಫ್ ಸಿಕ್ಕಿದೆ.

ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ವಾಣಿಜ್ಯ ಬಳಕೆದಾರರಿಗೆ ತಮ್ಮ ಎಲ್‌ಪಿಜಿ ಅವಶ್ಯಕತೆಯಲ್ಲಿ 70% ವರೆಗೆ ಪೂರೈಕೆ ಪುನಃಸ್ಥಾಪಿಸುವ ನಿರ್ಧಾರವನ್ನು ಪ್ರಕಟಿಸಿದೆ. ಈ ಕ್ರಮದಿಂದ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಹಾಗೂ ಆಹಾರ ಸೇವಾ ವಲಯಗಳಿಗೆ ದೊಡ್ಡ ಮಟ್ಟದ ನೆರವು ದೊರೆಯಲಿದೆ ಎಂದು ನಿರೀಕ್ಷಿಸಲಾಗಿದೆ.

ಕಳೆದ ಕೆಲವು ದಿನಗಳಿಂದ ಗೃಹ ಬಳಕೆ ಮತ್ತು ವಾಣಿಜ್ಯ ಬಳಕೆಗೆ ಆದ್ಯತೆ ನೀಡುವ ಕ್ರಮಗಳಿಂದಾಗಿ ಹಲವು ರೆಸ್ಟೋರೆಂಟ್‌ಗಳು ಹಾಗೂ ತಿನಿಸು ಕೇಂದ್ರಗಳು ತಾತ್ಕಾಲಿಕವಾಗಿ ಮುಚ್ಚಬೇಕಾದ ಪರಿಸ್ಥಿತಿ ಉಂಟಾಗಿತ್ತು. ಇದರಿಂದ ಉದ್ಯಮ ಕ್ಷೇತ್ರದಲ್ಲಿ ತೀವ್ರ ಸಂಕಷ್ಟ ಉಂಟಾಗಿತ್ತು.

ಹೊಸ ನಿರ್ದೇಶನದ ಪ್ರಕಾರ, ಕೈಗಾರಿಕಾ ಘಟಕಗಳು ಈಗ ಮಾರ್ಚ್ 2026ರ ಮೊದಲು ದಾಖಲಾದ ದೇಶೀಯವಲ್ಲದ ಎಲ್‌ಪಿಜಿ ಬಳಕೆಯ 70% ವರೆಗೆ ಪೂರೈಕೆ ಪಡೆಯಲಿವೆ. ಆಹಾರ ಸಂಸ್ಕರಣೆ, ಔಷಧ, ಕೃಷಿ, ಪ್ಯಾಕೇಜಿಂಗ್ ಸೇರಿದಂತೆ ಹಲವು ಪ್ರಮುಖ ವಲಯಗಳಿಗೆ ಇದು ಅನ್ವಯವಾಗಲಿದೆ ಎಂದು ಸಚಿವಾಲಯ ತಿಳಿಸಿದೆ.

ಇದರ ಜೊತೆಗೆ ವಲಸೆ ಕಾರ್ಮಿಕರಿಗೆ ಸಹಾಯವಾಗುವಂತೆ 5 ಕೆಜಿ ಎಲ್‌ಪಿಜಿ ಸಿಲಿಂಡರ್‌ಗಳ ಪೂರೈಕೆಯನ್ನು ಹೆಚ್ಚಿಸಲು ಸರ್ಕಾರ ಸೂಚಿಸಿದೆ. ಈ ಸಣ್ಣ ಸಿಲಿಂಡರ್‌ಗಳು ಉಚಿತ ವ್ಯಾಪಾರ ಎಲ್‌ಪಿಜಿ (FTL) ವರ್ಗದಲ್ಲಿ ಲಭ್ಯವಾಗಲಿದ್ದು, ಆಯ್ದ ಪೆಟ್ರೋಲ್ ಪಂಪ್‌ಗಳು ಹಾಗೂ ವಿತರಣೆ ಕೇಂದ್ರಗಳಲ್ಲಿ ಖರೀದಿಗೆ ಅವಕಾಶ ಇರಲಿದೆ.

ಹೊಸ ನಿರ್ಧಾರದಿಂದ ಇಂಧನ ಪೂರೈಕೆ ಒತ್ತಡ ಕಡಿಮೆಯಾಗುವ ಜೊತೆಗೆ ಹೋಟೆಲ್ ಮತ್ತು ಕೈಗಾರಿಕಾ ವಲಯದಲ್ಲಿ ಉತ್ಪಾದನೆ ಹಾಗೂ ಸೇವಾ ಕಾರ್ಯಗಳು ಸರಾಗವಾಗಿ ಮುಂದುವರಿಯಲಿವೆ ಎಂದು ನಿರೀಕ್ಷಿಸಲಾಗಿದೆ.

ಇ-ಖಾತೆ ಮಾಡಿಕೊಡಲು 2 ಲಕ್ಷಕ್ಕೆ ಲಂಚದ ಬೇಡಿಕೆ: ‘ಲೋಕಾ’ ಬಲೆಗೆ ಬಿದ್ದ ಅಧಿಕಾರಿ!

ರಾಯಚೂರು: ಸಿರವಾರ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದ ಘಟನೆ ನಡೆದಿದೆ.

ಇ-ಖಾತೆ ಮಾಡಿಕೊಡಲು 2 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದ ಅಧಿಕಾರಿ ಸುರೇಶ್ ಶೆಟ್ಟಿ, ರಾಘವೇಂದ್ರ ರೆಡ್ಡಿ ಎಂಬವರಿಂದ 1 ಲಕ್ಷ ರೂ. ಅಡ್ವಾನ್ಸ್ ಹಣ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ದಾಳಿ ನಡೆದಿದೆ. ಹಣ ಸ್ವೀಕರಿಸುವಾಗಲೇ ದಾಳಿ ನಡೆದಿದ್ದು, ಅಧಿಕಾರಿಯನ್ನು ಸ್ಥಳದಲ್ಲೇ ಹಿಡಿಯಲಾಗಿದೆ.

ಲೋಕಾಯುಕ್ತರು ದಾಳಿ ನಡೆಸುತ್ತಿದ್ದಂತೆಯೇ ತಪ್ಪಿಸಿಕೊಳ್ಳಲು ಯತ್ನಿಸಿದ ಸುರೇಶ್ ಶೆಟ್ಟಿ, ಸಿರವಾರದಿಂದ ಕವಿತಾಳ ಪಟ್ಟಣದ ಕಡೆಗೆ ಕಾರಿನಲ್ಲಿ ಪರಾರಿಯಾಗಲು ಪ್ರಯತ್ನಿಸಿದ್ದಾನೆ. ಆದರೆ ಸಿನಿಮೀಯ ರೀತಿಯಲ್ಲಿ ಚೇಸ್ ಮಾಡಿದ ಲೋಕಾಯುಕ್ತ ಅಧಿಕಾರಿಗಳು ಆರೋಪಿಯನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಸದ್ಯ ಆರೋಪಿಯನ್ನು ಕವಿತಾಳ ಪ್ರವಾಸಿ ಮಂದಿರದಲ್ಲಿ ವಿಚಾರಣೆ ನಡೆಸಲಾಗುತ್ತಿದ್ದು, ಪಂಚನಾಮೆ ಕಾರ್ಯ ನಡೆಯುತ್ತಿದೆ.

ಈ ಕಾರ್ಯಾಚರಣೆಯನ್ನು ಲೋಕಾಯುಕ್ತ ಎಸ್‌ಪಿ ಸಿದ್ದರಾಜು ನೇತೃತ್ವದಲ್ಲಿ ಇನ್ಸ್‌ಪೆಕ್ಟರ್ ರವಿ ಪುರುಷೋತ್ತಮ್ ಹಾಗೂ ಸಿಬ್ಬಂದಿ ವಿಜಯಕುಮಾರ್, ಅಮರೇಶ್ ನಡೆಸಿದ್ದಾರೆ.

ಹಾಡಹಗಲೇ ಬೈಕ್ ಎಗರಿಸಿದ ಕಳ್ಳ! ಮಾಲೀಕನ ನಿರ್ಲಕ್ಷ್ಯವೇ ಕೃತ್ಯಕ್ಕೆ ಕಾರಣ

ಬೆಂಗಳೂರು: ಲಕ್ಕಸಂದ್ರದಲ್ಲಿ ಮನೆ ಮುಂಭಾಗ ನಿಲ್ಲಿಸಿದ್ದ ಬೈಕ್ ಅನ್ನು ಕಳ್ಳನೊಬ್ಬ ಹಾಡಹಗಲೇ ಕದ್ದೊಯ್ದ ಘಟನೆ ಬೆಳಕಿಗೆ ಬಂದಿದೆ.

ಮಾಲೀಕರ ಸಣ್ಣ ನಿರ್ಲಕ್ಷ್ಯವೇ ಕಳ್ಳನಿಗೆ ಅವಕಾಶ ನೀಡಿದಂತಾಗಿದೆ.

ಏಪ್ರಿಲ್ 9ರಂದು ಮಧ್ಯಾಹ್ನ ಸುಮಾರು 2 ಗಂಟೆ ಸಮಯದಲ್ಲಿ ಲಕ್ಕಸಂದ್ರದ 16ನೇ ಕ್ರಾಸ್ ಬಳಿ ಈ ಘಟನೆ ನಡೆದಿದ್ದು, ನಿವಾಸಿಯೊಬ್ಬರು ತಮ್ಮ ಸುಜುಕಿ ಆಕ್ಸೆಸ್ 125 ಬೈಕ್ ಅನ್ನು ಮನೆ ಮುಂದೆ ನಿಲ್ಲಿಸಿದ್ದರು. ಆದರೆ ಕೀ ತೆಗೆದುಕೊಳ್ಳದೇ ಮರೆತು ಹೋಗಿದ್ದರಿಂದ ಬೈಕ್ ಅಲ್ಲಿಯೇ ನಿಂತಿತ್ತು.

ಈ ವೇಳೆ ಅದೇ ಪ್ರದೇಶದಲ್ಲಿ ತಿರುಗುತ್ತಿದ್ದ ಕಳ್ಳನೊಬ್ಬ ಪರಿಸ್ಥಿತಿಯನ್ನು ಗಮನಿಸಿ, ಯಾರೂ ಇಲ್ಲದ ಅವಕಾಶವನ್ನು ಬಳಸಿಕೊಂಡು ಬೈಕ್ ಸ್ಟಾರ್ಟ್ ಮಾಡಿ ಸುಲಭವಾಗಿ ಪರಾರಿಯಾಗಿದ್ದಾನೆ. ಈ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಇದೀಗ ವೈರಲ್ ಆಗಿವೆ.

ಬೈಕ್ ಕಳುವಾಗಿರುವುದನ್ನು ಗಮನಿಸಿದ ಮಾಲೀಕರು ಸಿಸಿಟಿವಿ ಪರಿಶೀಲಿಸಿದಾಗ ಕಳ್ಳತನದ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಆಡುಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸಿಸಿಟಿವಿ ಆಧಾರದ ಮೇಲೆ ಆರೋಪಿಯ ಪತ್ತೆಗೆ ಮುಂದಾಗಿದ್ದಾರೆ.

ಇಂದಿನಿಂದ ಎರಡು ದಿನ ಕರಾವಳಿ ಜಿಲ್ಲೆಗಳಲ್ಲಿ ಬಿಸಿಗಾಳಿ! ಯೆಲ್ಲೋ ಅಲರ್ಟ್ ಘೋಷಣೆ

ಕಾರವಾರ: ರಾಜ್ಯದ ಕರಾವಳಿ ಭಾಗದಲ್ಲಿ ಮುಂದಿನ ಎರಡು ದಿನಗಳ ಕಾಲ ಅಧಿಕ ಉಷ್ಣಾಂಶ ಮತ್ತು ಬಿಸಿಗಾಳಿ ಬೀಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ (IMD) ಎಚ್ಚರಿಕೆ ನೀಡಿದೆ.

ಉತ್ತರ ಕನ್ನಡ, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಏಪ್ರಿಲ್ 10 ರಿಂದ 12 ರವರೆಗೆ ಉಷ್ಣಾಂಶ ಹೆಚ್ಚಳವಾಗುವ ಸೂಚನೆ ನೀಡಲಾಗಿದ್ದು, ಈ ಹಿನ್ನೆಲೆಯಲ್ಲಿ ಕರಾವಳಿ ಭಾಗಕ್ಕೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಜನರು ಮಧ್ಯಾಹ್ನ ಸಮಯದಲ್ಲಿ ಅಗತ್ಯವಿಲ್ಲದೆ ಹೊರಗೆ ಹೋಗಬಾರದೆಂದು ಹವಾಮಾನ ಇಲಾಖೆ ಸಲಹೆ ನೀಡಿದೆ.

ಇದರ ಜೊತೆಗೆ ಅರಬ್ಬಿ ಸಮುದ್ರವೂ ಪ್ರಕ್ಷುಬ್ಧವಾಗಿದ್ದು, ಉತ್ತರ ಕನ್ನಡ ಕರಾವಳಿ ಭಾಗದಲ್ಲಿ ಗಂಟೆಗೆ 30 ರಿಂದ 40 ಕಿ.ಮೀ ವೇಗದಲ್ಲಿ ಗಾಳಿಯು ಬೀಸುತ್ತಿದೆ. ಗಾಳಿ ಒತ್ತಡ ಹೆಚ್ಚಾದ ಪರಿಣಾಮ ಕಾರವಾರ ಸೇರಿದಂತೆ ಹಲವು ಕಡೆ ಮೀನುಗಾರರು ಮೀನುಗಾರಿಕೆಯನ್ನು ಸ್ಥಗಿತಗೊಳಿಸಿದ್ದಾರೆ.

ಆಳ ಸಮುದ್ರಕ್ಕೆ ತೆರಳುವ ಪರ್ಶಿಯನ್ ಬೋಟುಗಳು ಬಂದರಿನಲ್ಲಿ ಲಂಗರು ಹಾಕಿದ್ದು, ಮುಂದಿನ ಹವಾಮಾನ ಸುಧಾರಣೆಯ ನಿರೀಕ್ಷೆಯಲ್ಲಿ ಮೀನುಗಾರರು ಕಾಯುತ್ತಿದ್ದಾರೆ. ಅಧಿಕಾರಿಗಳು ಮೀನುಗಾರರಿಗೆ ಎಚ್ಚರಿಕೆಯಿಂದ ಇರಲು ಸೂಚನೆ ನೀಡಿದ್ದಾರೆ.

ಹುಲಿಕಲ್ ಘಾಟ್ ಭೂಕುಸಿತ ಪ್ರಕರಣ: ಮೂವರು ಕಾರ್ಮಿಕರ ಶವ ಪತ್ತೆ, ರಕ್ಷಣಾ ಕಾರ್ಯ ಅಂತ್ಯ

ಶಿವಮೊಗ್ಗ: ಜಿಲ್ಲೆಯ ಹುಲಿಕಲ್ ಘಾಟ್ ಪ್ರದೇಶದಲ್ಲಿ ಸಂಭವಿಸಿದ ಭೂಕುಸಿತ ದುರಂತದಲ್ಲಿ ಮೃತಪಟ್ಟ ಮೂರನೇ ಕಾರ್ಮಿಕನ ಶವ ಇಂದು ಮುಂಜಾನೆ ಪತ್ತೆಯಾಗಿದೆ.

ಇದರೊಂದಿಗೆ ಅವಘಡದಲ್ಲಿ ಸಾವನ್ನಪ್ಪಿದ ಮೂವರು ಕಾರ್ಮಿಕರ ಮೃತದೇಹಗಳು ಪತ್ತೆಯಾದಂತಾಗಿದೆ.

ಮುಂಜಾನೆ ಸುಮಾರು 3 ಗಂಟೆ ವೇಳೆಗೆ ಕಾರ್ಮಿಕ ಶಬ್ಬೀರ್ (40) ಮೃತದೇಹವನ್ನು ರಕ್ಷಣಾ ಸಿಬ್ಬಂದಿ ಪತ್ತೆ ಮಾಡಿದ್ದಾರೆ. ಹುಲಿಕಲ್ ಘಾಟ್‌ನ ಹೇರ್ ಪಿನ್ ಕ್ರಾಸ್ ಬಳಿ ಕಾಂಕ್ರೀಟ್ ಗೋಡೆ ದುರಸ್ತಿ ಕಾಮಗಾರಿ ನಡೆಯುತ್ತಿದ್ದ ವೇಳೆ ಭೂ ಕುಸಿತ ಸಂಭವಿಸಿ ಕಾರ್ಮಿಕರು ಮಣ್ಣಿನಡಿ ಸಿಲುಕಿದ್ದರು.

ಈ ಅವಘಡದಲ್ಲಿ ಕಾಮಗಾರಿ ಮೇಲ್ವಿಚಾರಕ ಚಕ್ಕಾರು ಗ್ರಾಮದ ರಾಘು (37) ಹಾಗೂ ಹಾವೇರಿ ಜಿಲ್ಲೆಯ ನೆಲಗಲು ಗ್ರಾಮದ ರಾಜು (30) ಸ್ಥಳದಲ್ಲೇ ಮೃತಪಟ್ಟಿದ್ದರು. ಇವರಿಬ್ಬರ ಮೃತದೇಹಗಳನ್ನು ನಿನ್ನೆ ಪತ್ತೆ ಮಾಡಲಾಗಿತ್ತು.

ಮೂರು ಮೃತದೇಹಗಳನ್ನು ನಗರ ಆಸ್ಪತ್ರೆಯ ಶವಾಗಾರಕ್ಕೆ ರವಾನೆ ಮಾಡಲಾಗಿದೆ. ಘಟನೆಯಲ್ಲಿ ಗಾಯಗೊಂಡ ಮೂವರಿಗೆ ಚಿಕಿತ್ಸೆ ಮುಂದುವರಿದಿದೆ.

ಘಟನಾ ಸ್ಥಳದಲ್ಲಿ ಎಸ್‌ಡಿಆರ್‌ಎಫ್, ಅಗ್ನಿಶಾಮಕ ದಳ ಹಾಗೂ ಪೊಲೀಸ್ ಸಿಬ್ಬಂದಿ ನಡೆಸುತ್ತಿದ್ದ ರಕ್ಷಣಾ ಕಾರ್ಯ ಇದೀಗ ಪೂರ್ಣಗೊಂಡಿದೆ. ದುರಂತದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.

ರಾಜ್ಯದಲ್ಲಿ ವಾಯು ಗುಣಮಟ್ಟ ಸುಧಾರಣೆ! ಆದ್ರೂ ಅಪಾಯ ಎನ್ನುತ್ತಿದ್ದಾರೆ ತಜ್ಞರು

ಬೆಂಗಳೂರು: ಕಳೆದ ಕೆಲವು ದಿನಗಳಿಂದ ರಾಜ್ಯದ ಹಲವು ಭಾಗಗಳಲ್ಲಿ ವಾಯು ಗುಣಮಟ್ಟದಲ್ಲಿ ಸ್ವಲ್ಪ ಮಟ್ಟಿನ ಸುಧಾರಣೆ ಕಂಡುಬಂದಿದೆ.

ಬೆಂಗಳೂರಿನಲ್ಲೂ ಗಾಳಿಯ ಗುಣಮಟ್ಟದಲ್ಲಿ ಏರಿಕೆ ಕಂಡುಬಂದಿದ್ದು, ನಾಗರಿಕರಿಗೆ ಸ್ವಲ್ಪಮಟ್ಟಿನ ನಿರಾಳತೆ ನೀಡಿದೆ. ಆದಾಗ್ಯೂ, ತಜ್ಞರು ಇನ್ನೂ ಎಚ್ಚರಿಕೆಯಿಂದ ಇರಬೇಕೆಂದು ಸೂಚಿಸಿದ್ದಾರೆ.

ಕೆಲ ದಿನಗಳ ಹಿಂದೆ ತೀವ್ರ ಕಳಪೆ ಮಟ್ಟಕ್ಕೆ ಇಳಿದಿದ್ದ ಬೆಂಗಳೂರಿನ ವಾಯು ಗುಣಮಟ್ಟ ಸೂಚ್ಯಂಕ (AQI) ಇಂದು 109ಕ್ಕೆ ತಲುಪಿದೆ. ಇದು ಹಿಂದಿನ ದಿನಗಳಿಗೆ ಹೋಲಿಸಿದರೆ ಸುಧಾರಣೆಯಾಗಿದ್ದರೂ, ಆರೋಗ್ಯದ ದೃಷ್ಟಿಯಿಂದ ಇನ್ನೂ ಕಳಪೆ ವರ್ಗದಲ್ಲಿಯೇ ಉಳಿದಿದೆ. ವಿಶ್ವ ಆರೋಗ್ಯ ಸಂಸ್ಥೆ (WHO) ಮಾನದಂಡಗಳ ಪ್ರಕಾರ ಈ ಮಟ್ಟದ ಗಾಳಿಯೂ ಆರೋಗ್ಯಕ್ಕೆ ಹಾನಿಕರವಾಗಿಯೇ ಪರಿಗಣಿಸಲಾಗಿದೆ.

ರಾಜ್ಯದ ಇತರ ನಗರಗಳಲ್ಲಿಯೂ ವಾಯು ಗುಣಮಟ್ಟದಲ್ಲಿ ಸ್ವಲ್ಪ ಮಟ್ಟಿನ ಬದಲಾವಣೆ ಕಂಡುಬಂದಿದೆ. ಮಂಗಳೂರು (92), ಉಡುಪಿ (96), ಶಿವಮೊಗ್ಗ (95) ನಗರಗಳಲ್ಲಿ ಮಧ್ಯಮ ಮಟ್ಟದ ಗುಣಮಟ್ಟ ದಾಖಲಾಗಿದ್ದರೆ, ಬೆಳಗಾವಿ (72) ಹಾಗೂ ಹುಬ್ಬಳ್ಳಿ (83) ನಗರಗಳಲ್ಲಿ ಗಾಳಿ ಸ್ವಲ್ಪ ಉತ್ತಮ ಸ್ಥಿತಿಯಲ್ಲಿದೆ. ಇನ್ನೊಂದೆಡೆ, ಮೈಸೂರು (109), ಬಳ್ಳಾರಿ (104), ವಿಜಯಪುರ (99) ಮತ್ತು ಕಲಬುರ್ಗಿ (111) ನಗರಗಳಲ್ಲಿ ಗಾಳಿಯ ಗುಣಮಟ್ಟ ಇನ್ನೂ ಕಳಪೆ ಮಟ್ಟದಲ್ಲಿಯೇ ಇದೆ.

ವಾಯು ಗುಣಮಟ್ಟ ಸೂಚ್ಯಂಕದ ಪ್ರಕಾರ 0 ರಿಂದ 50ರವರೆಗೆ ಉತ್ತಮ, 50 ರಿಂದ 100 ಮಧ್ಯಮ, 100 ರಿಂದ 150 ಕಳಪೆ, 150 ರಿಂದ 200 ಅನಾರೋಗ್ಯಕರ, 200 ರಿಂದ 300 ಗಂಭೀರ ಮತ್ತು 300ಕ್ಕಿಂತ ಹೆಚ್ಚು ಅಪಾಯಕಾರಿ ಮಟ್ಟ ಎಂದು ಪರಿಗಣಿಸಲಾಗುತ್ತದೆ.

ಒಟ್ಟಾರೆ, ರಾಜ್ಯದಲ್ಲಿ ಗಾಳಿಯ ಗುಣಮಟ್ಟದಲ್ಲಿ ಸ್ವಲ್ಪ ಸುಧಾರಣೆ ಕಂಡುಬಂದಿದ್ದರೂ, ಸಂಪೂರ್ಣ ಸುರಕ್ಷಿತ ಮಟ್ಟ ತಲುಪಿಲ್ಲ. ಹೀಗಾಗಿ ಮಕ್ಕಳು, ವೃದ್ಧರು ಹಾಗೂ ಉಸಿರಾಟ ಸಮಸ್ಯೆ ಹೊಂದಿರುವವರು ಹೆಚ್ಚಿನ ಜಾಗ್ರತೆ ವಹಿಸುವುದು ಅಗತ್ಯ ಎಂದು ತಜ್ಞರು ಸಲಹೆ ನೀಡಿದ್ದಾರೆ.

ಹಾರ್ಮುಜ್ ಜಲಸಂಧಿಯಲ್ಲಿ ಟ್ಯಾಂಕರ್ ಗಳಿಗೆ ಶುಲ್ಕ! ಇರಾನ್ ಗೆ ಅಮೆರಿಕ ಕಠಿಣ ಎಚ್ಚರಿಕೆ

0

ವಾಷಿಂಗ್ಟನ್: ಜಾಗತಿಕ ತೈಲ ಸಾಗಣೆಯ ಪ್ರಮುಖ ದಾರಿಯಾಗಿರುವ ಹಾರ್ಮುಜ್ ಜಲಸಂಧಿಯನ್ನು ಕೇಂದ್ರವಾಗಿಸಿಕೊಂಡು ಅಮೆರಿಕ ಮತ್ತು ಇರಾನ್ ನಡುವೆ ಉದ್ವಿಗ್ನತೆ ಮತ್ತಷ್ಟು ತೀವ್ರಗೊಂಡಿದೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇರಾನ್ ನಡುವಿನ ಈ ಸಂಘರ್ಷವು ಜಾಗತಿಕ ಆರ್ಥಿಕತೆಯ ಮೇಲೆ ಆತಂಕದ ನೆರಳು ಬೀರುವಂತಾಗಿದೆ.

ಇತ್ತೀಚೆಗೆ ಎರಡು ರಾಷ್ಟ್ರಗಳ ನಡುವೆ ಕದನ ವಿರಾಮ ಒಪ್ಪಂದ ಜಾರಿಗೆ ಬಂದಿದ್ದರೂ, ಹಾರ್ಮುಜ್ ಜಲಸಂಧಿ ಮೂಲಕ ಸಂಚರಿಸುವ ತೈಲ ಟ್ಯಾಂಕರ್‌ಗಳ ಮೇಲೆ ಇರಾನ್ ಶುಲ್ಕ ವಿಧಿಸುತ್ತಿದೆ ಎಂಬ ವರದಿಗಳು ಹೊಸ ವಿವಾದಕ್ಕೆ ಕಾರಣವಾಗಿವೆ. ಈ ಕ್ರಮವನ್ನು ಅಮೆರಿಕ ತೀವ್ರವಾಗಿ ಖಂಡಿಸಿದ್ದು, ಅಧ್ಯಕ್ಷ ಟ್ರಂಪ್ ಇರಾನ್‌ಗೆ ಎಚ್ಚರಿಕೆ ನೀಡಿದ್ದಾರೆ.

“ಇರಾನ್ ಟ್ಯಾಂಕರ್‌ಗಳ ಮೇಲೆ ಶುಲ್ಕ ವಿಧಿಸುತ್ತಿದ್ದರೆ ತಕ್ಷಣವೇ ನಿಲ್ಲಿಸಬೇಕು. ಇದು ಒಪ್ಪಂದದ ಉಲ್ಲಂಘನೆ” ಎಂದು ಟ್ರಂಪ್ ಹೇಳಿದ್ದಾರೆ. ಅಲ್ಲದೆ, ಇರಾನ್ ನಡವಳಿಕೆಯನ್ನು “ಅವಮಾನಕರ” ಎಂದು ಕರೆದ ಅವರು, ಕದನ ವಿರಾಮದ ನಿಯಮಗಳನ್ನು ಇರಾನ್ ಪಾಲಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ.

ಪರ್ಷಿಯನ್ ಕೊಲ್ಲಿ ಮತ್ತು ಓಮನ್ ಕೊಲ್ಲಿಯನ್ನು ಸಂಪರ್ಕಿಸುವ ಸುಮಾರು 167 ಕಿಲೋಮೀಟರ್ ಉದ್ದದ ಹಾರ್ಮುಜ್ ಜಲಸಂಧಿಯು ವಿಶ್ವದ ತೈಲ ಸರಬರಾಜಿನಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸುತ್ತದೆ. ಆದರೆ ಒಪ್ಪಂದದ ಬಳಿಕವೂ ಈವರೆಗೆ ಅಲ್ಪ ಸಂಖ್ಯೆಯ ಟ್ಯಾಂಕರ್‌ಗಳು ಮಾತ್ರ ಸಂಚರಿಸಿರುವುದಾಗಿ ವರದಿಗಳು ತಿಳಿಸಿವೆ. ಇದರಿಂದ ಜಾಗತಿಕ ತೈಲ ಸರಬರಾಜು ವ್ಯತ್ಯಯಗೊಳ್ಳುವ ಭೀತಿ ಮೂಡಿದೆ.

ಈ ಬಿಕ್ಕಟ್ಟನ್ನು ಶಮನಗೊಳಿಸಲು ಅಮೆರಿಕ ತನ್ನ ರಾಜತಾಂತ್ರಿಕ ಪ್ರಯತ್ನಗಳನ್ನು ತೀವ್ರಗೊಳಿಸಿದ್ದು, ಬರುವ ಶನಿವಾರ ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ಇರಾನ್ ಅಧಿಕಾರಿಗಳೊಂದಿಗೆ ಮಹತ್ವದ ಮಾತುಕತೆ ನಡೆಯಲಿದೆ. ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ನೇತೃತ್ವದ ನಿಯೋಗದಲ್ಲಿ ಜೇರೆಡ್ ಕುಶ್ನರ್ ಹಾಗೂ ವಿಶೇಷ ರಾಯಭಾರಿ ಸ್ಟೀವ್ ವಿಟ್ಕಾಫ್ ಭಾಗವಹಿಸಲಿದ್ದಾರೆ.

ಇದರ ಮಧ್ಯೆ, ಲೆಬನಾನ್ ವಿಷಯವನ್ನೂ ಶಾಂತಿ ಒಪ್ಪಂದದಲ್ಲಿ ಸೇರಿಸಬೇಕೆಂಬ ಇರಾನ್‌ನ ಹಠ ಸಂಧಾನ ಪ್ರಕ್ರಿಯೆಗೆ ಅಡ್ಡಿಯಾಗುತ್ತಿದೆ. ಇತ್ತೀಚೆಗೆ ಇಸ್ರೇಲ್ ಲೆಬನಾನ್ ಮೇಲೆ ನಡೆಸಿದ ದಾಳಿಯೂ ಪರಿಸ್ಥಿತಿಯನ್ನು ಮತ್ತಷ್ಟು ಸಂಕೀರ್ಣಗೊಳಿಸಿದೆ.

ಒಂದು ಕಡೆ ಮಾತುಕತೆಗಳ ಸಿದ್ಧತೆ ನಡೆಯುತ್ತಿದ್ದರೆ, ಇನ್ನೊಂದೆಡೆ ಅಮೆರಿಕದ ಸೇನಾ ಎಚ್ಚರಿಕೆಗಳು ಇರಾನ್ ಮೇಲೆ ಒತ್ತಡವನ್ನು ಹೆಚ್ಚಿಸುತ್ತಿವೆ. ಹಾರ್ಮುಜ್ ಜಲಸಂಧಿಯಲ್ಲಿ ಉದ್ಭವಿಸಿರುವ ಈ ಬಿಕ್ಕಟ್ಟು ಜಾಗತಿಕ ತೈಲ ಬೆಲೆಗಳ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ.

ದತ್ತಪೀಠದಲ್ಲಿ ಬಾಲಕಿ ನಾಪತ್ತೆ: ಪ್ರಕರಣಕ್ಕೆ ಹೊಸ ತಿರುವು ಕೊಟ್ಟ ತಾಯಿ ಹೇಳಿಕೆ!

ಚಿಕ್ಕಮಗಳೂರು: ರಾಜ್ಯದ ಅತ್ಯಂತ ಎತ್ತರದ ಪ್ರದೇಶವೆಂದು ಪರಿಗಣಿಸಲ್ಪಡುವ ಕಾಫಿನಾಡ ದತ್ತಪೀಠದ ಮಾಣಿಕ್ಯಾಧಾರ ಬಳಿ ಬಾಲಕಿ ನಾಪತ್ತೆಯಾದ ಪ್ರಕರಣ ಇದೀಗ ಹೊಸ ತಿರುವು ಪಡೆದುಕೊಂಡಿದೆ.

ನಾಪತ್ತೆಯಾದ ಬಾಲಕಿ ಶ್ರೀನಂದಾ ತಾಯಿ ರೋಹಿಣಿ ನೀಡಿದ ಹೇಳಿಕೆ, ಪ್ರಕರಣದ ತನಿಖೆಯ ದಿಕ್ಕನ್ನೇ ಬದಲಿಸುವಂತಾಗಿದೆ.

ಮಗಳು ಆಕಸ್ಮಿಕವಾಗಿ ಜಾರಿಬಿದ್ದು ಕಾಣೆಯಾಗಿರುವ ಸಾಧ್ಯತೆ ಇಲ್ಲ. ಯಾರೋ ಮಾದಕ ದ್ರವ್ಯ ನೀಡಿ ಅಪಹರಿಸಿರುವ ಶಂಕೆ ಇದೆ ಎಂದು ತಾಯಿ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆಯಿಂದ ಪ್ರಕರಣದಲ್ಲಿ ಹೊಸ ಅನುಮಾನಗಳು ಮೂಡಿವೆ.

ಕೇರಳದ ಪಾಲಕ್ಕಾಡ್ ಮೂಲದ 10ನೇ ತರಗತಿ ವಿದ್ಯಾರ್ಥಿನಿ ಶ್ರೀನಂದಾ, ಮಂಗಳವಾರ ಸಂಜೆ ಜಲಪಾತ ವೀಕ್ಷಣೆಗೆ ತೆರಳಿದ ವೇಳೆ ನಾಪತ್ತೆಯಾಗಿದ್ದಳು. 41 ಮಂದಿ ಕುಟುಂಬ ಸದಸ್ಯರೊಂದಿಗೆ ಹಂಪಿ ಪ್ರವಾಸ ಮುಗಿಸಿ ಚಿಕ್ಕಮಗಳೂರಿಗೆ ಬಂದಿದ್ದಳು. ನಾಪತ್ತೆಯಾಗುವ ಕೆಲವೇ ನಿಮಿಷಗಳ ಮೊದಲು ತಂದೆಯ ಮೊಬೈಲ್‌ನಲ್ಲಿ ಸಂತೋಷದಿಂದ ರೀಲ್ಸ್ ಮಾಡಿದ್ದಳು ಎಂಬ ಮಾಹಿತಿ ಲಭ್ಯವಾಗಿದೆ.

ಘಟನೆಯ ನಂತರ ತಕ್ಷಣವೇ ಜಿಲ್ಲಾಡಳಿತ, ಪೊಲೀಸ್, ಅಗ್ನಿಶಾಮಕ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಸಮರೋಪಾದಿಯಲ್ಲಿ ಶೋಧ ಕಾರ್ಯ ಆರಂಭಿಸಿದ್ದಾರೆ. ನೂರಾರು ಸಿಬ್ಬಂದಿ ಸೊಂಟಕ್ಕೆ ಹಗ್ಗ ಕಟ್ಟಿ ಸುಮಾರು 300 ಅಡಿ ಆಳಕ್ಕೆ ಇಳಿದು ಬಾಲಕಿಯ ಶೋಧ ನಡೆಸುತ್ತಿದ್ದಾರೆ. ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್ ಕೂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದರ ಮಧ್ಯೆ, ಶೋಧ ಕಾರ್ಯದ ವೇಳೆ ಕಾಡಿನೊಳಗೆ 28 ಮಂದಿ ಪ್ರವಾಸಿಗರ ತಂಡ ಮಕ್ಕಳ ಸಮೇತ ಕಾನೂನು ಬಾಹಿರವಾಗಿ ಚಾರಣ ನಡೆಸುತ್ತಿರುವುದು ಪತ್ತೆಯಾಗಿದೆ. ತಕ್ಷಣವೇ ಸಿಬ್ಬಂದಿ ಅವರಿಗೆ ಎಚ್ಚರಿಕೆ ನೀಡಿ ಹಿಂದಕ್ಕೆ ಕಳುಹಿಸಿದ್ದಾರೆ.

ಪ್ರಸ್ತುತ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಎಲ್ಲಾ ಆಯಾಮಗಳಲ್ಲಿ ತನಿಖೆ ಮುಂದುವರೆಸಿದ್ದು, ಬಾಲಕಿಯ ಪತ್ತೆಗೆ ತೀವ್ರ ಶೋಧ ಕಾರ್ಯ ಮುಂದುವರಿದಿದೆ.

ಪಿಯುಸಿ ಫಲಿತಾಂಶ ದಿನವೇ ವಿದ್ಯಾರ್ಥಿನಿ ನಿಗೂಢ ಸಾವು! ತಾಯಿ ಮೇಲೆ ಶಂಕೆ!?

ಬೆಂಗಳೂರು: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾದ ದಿನವೇ ರಾಜಧಾನಿ ಬೆಂಗಳೂರಿನ ಹೆಬ್ಬಾಳ ವ್ಯಾಪ್ತಿಯಲ್ಲಿ ವಿದ್ಯಾರ್ಥಿನಿಯೊಬ್ಬಳು ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.

ಮನೋರಾಯನಪಾಳ್ಯದಲ್ಲಿ ವಾಸವಾಗಿದ್ದ ತನುಶ್ರೀ (18) ಮೃತಪಟ್ಟ ವಿದ್ಯಾರ್ಥಿನಿಯಾಗಿದ್ದಾರೆ.

ಗುರುವಾರ ಮಧ್ಯಾಹ್ನ ಸುಮಾರು 3 ಗಂಟೆ ವೇಳೆಗೆ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ತನುಶ್ರೀ ಶವ ಪತ್ತೆಯಾಗಿದೆ. ಪ್ರಾಥಮಿಕವಾಗಿ ಪಿಯುಸಿ ಪರೀಕ್ಷೆಯಲ್ಲಿ ಅನುತ್ತೀರ್ಣಳಾದ ಕಾರಣ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದೆ ಎಂದು ತಾಯಿ ಆಶಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಆದರೆ, ಈ ಪ್ರಕರಣಕ್ಕೆ ಇದೀಗ ತಿರುವು ಸಿಕ್ಕಿದ್ದು, ಮೃತಳ ಸಂಬಂಧಿಕರು ತಾಯಿಯ ಮೇಲೆಯೇ ಅನುಮಾನ ವ್ಯಕ್ತಪಡಿಸಿದ್ದಾರೆ. ಘಟನೆ ಮಧ್ಯಾಹ್ನವೇ ನಡೆದಿದ್ದರೂ, ರಾತ್ರಿ 10 ಗಂಟೆಯವರೆಗೂ ಪೊಲೀಸರಿಗೆ ಮಾಹಿತಿ ನೀಡದೇ ಇರುವುದರ ಬಗ್ಗೆ ಪ್ರಶ್ನೆಗಳು ಕೇಳಿಬಂದಿವೆ. ಅಲ್ಲದೆ, ಪೊಲೀಸರಿಗೆ ತಿಳಿಸದೇ ಕೆಲವರ ಸಹಾಯದಿಂದ ತಾಯಿಯೇ ಮೃತದೇಹವನ್ನು ಕೆಳಗಿಳಿಸಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ.

ಮೃತಳ ಸಹೋದರ ಧನುಷ್ ಮಾತನಾಡಿ, ತನುಶ್ರೀ ಮಾನಸಿಕವಾಗಿ ಬಲಿಷ್ಠಳಾಗಿದ್ದು, ಆತ್ಮಹತ್ಯೆ ಮಾಡಿಕೊಳ್ಳುವಂತಹ ಹುಡುಗಿ ಅಲ್ಲ ಎಂದು ಹೇಳಿದ್ದಾರೆ. ತಾಯಿ ಆಶಾ ಅವರ ನಡೆ ಸಂಶಯಾಸ್ಪದವಾಗಿದ್ದು, ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸಬೇಕೆಂದು ಅವರು ಆಗ್ರಹಿಸಿದ್ದಾರೆ.

ಇನ್ನೊಂದೆಡೆ, ಕುಟುಂಬದಲ್ಲಿ ವೈಯಕ್ತಿಕ ಕಲಹಗಳಿದ್ದವು ಎಂಬುದೂ ಬೆಳಕಿಗೆ ಬಂದಿದ್ದು, ಇದೇ ಹಿನ್ನೆಲೆ ಘಟನೆ ನಡೆದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ಸದ್ಯ ಮೃತದೇಹವನ್ನು ಕೆ.ಜಿ. ಹಳ್ಳಿಯ ಅಂಬೇಡ್ಕರ್ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಇರಿಸಲಾಗಿದೆ. ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರೆಸಿದ್ದಾರೆ.

ಲಗ್ನಪತ್ರಿಕೆ ಕೊಡಲು ಹೋದ ಯುವಕ ಜಾತ್ರೆಯಲ್ಲಿ ದುರ್ಮರಣ!

ಬೆಂಗಳೂರು: ಮದುವೆ ಸಂಭ್ರಮಕ್ಕೆ ತೆರಳಿದ್ದ ಯುವಕನೊಬ್ಬ ಜಾತ್ರೆಯಲ್ಲಿ ಸಂಭವಿಸಿದ ದುರ್ಘಟನೆಯಲ್ಲಿ ಮೃತಪಟ್ಟ ಹೃದಯವಿದ್ರಾವಕ ಘಟನೆ ಬೆಂಗಳೂರು ನಗರದ ಹುಳಿಮಾವುನಲ್ಲಿ ನಡೆದಿದೆ.

ಬನಶಂಕರಿ ನಿವಾಸಿ ಅಕ್ಷತ್ ಮೃತ ದುರ್ದೈವಿ. ಏಪ್ರಿಲ್ 29ರಂದು ವಿವಾಹವಾಗಬೇಕಿದ್ದ ಹಿನ್ನೆಲೆಯಲ್ಲಿ ಸಂಬಂಧಿಕರಿಗೆ ಲಗ್ನಪತ್ರಿಕೆ ನೀಡಲು ಯುವಕ ಹುಳಿಮಾವಿನಲ್ಲಿನ ಸಂಬಂಧಿಕರ ಮನೆಗೆ ತೆರಳಿದ್ದನು. ಈ ವೇಳೆ ಜಾತ್ರೆ ನಡೆಯುತ್ತಿದ್ದುದರಿಂದ ಸಂಬಂಧಿಕರು ಬೆಳಿಗ್ಗೆ ಹೋಗುವಂತೆ ಹೇಳಿ ಅಲ್ಲಿಯೇ ಉಳಿಸಿಕೊಂಡಿದ್ದರು.

ಇದರಂತೆ ಯುವಕ ಶ್ರೀ ಕೋದಂಡ ರಾಮಸ್ವಾಮಿ ದೇವಾಲಯದ ಬ್ರಹ್ಮರಥೋತ್ಸವಕ್ಕೆ ತೆರಳಿ ಪಲ್ಲಕ್ಕಿ ನೋಡುತ್ತ ನಿಂತಿದ್ದಾಗ, ಪಲ್ಲಕ್ಕಿ ಹೊತ್ತ ಟ್ರಾಕ್ಟರ್ ಚಾಲಕನ ಅಜಾಗರೂಕತೆಯಿಂದ ಆತನ ಮೇಲೆ ವಾಹನ ಹರಿದುಹೋಗಿದೆ. ಗಂಭೀರವಾಗಿ ಗಾಯಗೊಂಡ ಅಕ್ಷತ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗಮಧ್ಯೆಯೇ ಮೃತಪಟ್ಟಿದ್ದಾರೆ.

ಘಟನೆಯ ಬಳಿಕ ಟ್ರಾಕ್ಟರ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಈ ದುರ್ಘಟನೆ ನಡೆದಿದ್ದರೂ ದೇವಾಲಯದ ಟ್ರಸ್ಟಿಗಳು ಸ್ಥಳಕ್ಕೆ ಆಗಮಿಸದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಘಟನಾ ಸ್ಥಳಕ್ಕೆ ಬೆಂಗಳೂರು ದಕ್ಷಿಣ ಸಂಚಾರಿ ವಿಭಾಗದ ಡಿಸಿಪಿ ಗೋಪಾಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಹುಳಿಮಾವು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಟ್ರಾಕ್ಟರ್ ಚಾಲಕನನ್ನು ವಶಕ್ಕೆ ಪಡೆದು ತನಿಖೆ ಮುಂದುವರಿಸಲಾಗಿದೆ. ಪ್ರಾಥಮಿಕವಾಗಿ ಚಾಲಕ ಅಚಾನಕ್ ಬ್ರೇಕ್ ಹಾಕಿದ ವೇಳೆ ನಿಯಂತ್ರಣ ತಪ್ಪಿ ಅವಘಡ ಸಂಭವಿಸಿದೆ ಎಂದು ತಿಳಿದುಬಂದಿದೆ.

error: Content is protected !!