Home Blog

ಸಂಭ್ರಮದ ಕೆಂಪೇಗೌಡ ಜಯಂತಿ; ನಾಡಪ್ರಭುವಿಗೆ ವಂದಿಸಿದ ಸಿಎಂ ಡಿ.ಕೆ. ಶಿವಕುಮಾರ್

ಬೆಂಗಳೂರು: ಬೆಂಗಳೂರು ನಿರ್ಮಾತೃ, ಸರ್ವ ಜನಾಂಗದ ನಾಯಕ, ಬೆಂದಕಾಳೂರು ಕಟ್ಟಿದ ದೂರದೃಷ್ಟಿಯ ನಾಯಕ, ಕೆರೆಗಳನ್ನು ನಿರ್ಮಿಸಿದ ಮಣ್ಣಿನ ಮಗ, ಕೋಟೆ ಕೊತ್ತಲಗಳನ್ನು ಕಟ್ಟಿದ ಕಲಿ ವೀರ ಕೆಂಪೇಗೌಡರ 517 ನೇ ಜಯಂತಿಯನ್ನು ಸಿಎಂ‌ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ‌ಅತ್ಯಂತ ಅರ್ಥಪೂರ್ಣವಾಗಿ, ವಿಜೃಂಭಣೆಯಿಂದ ಆಚರಿಸಲಾಯಿತು.

ದೇವನಹಳ್ಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇರುವ ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಕಂಚಿನ ಬೃಹತ್ ಪ್ರತಿಮೆಗೆ ಪುಷ್ಪಾರ್ಚನೆ ಮಾಡುವ ಮೂಲಕ ಸಿಎಂ ಡಿ.ಕೆ. ಶಿವಕುಮಾರ್ ಅವರು 517 ನೇ ಕೆಂಪೇಗೌಡ ಜಯಂತಿಗೆ ಚಾಲನೆ ನೀಡಿದರು.

ಪ್ರತಿಮೆಯ ಪಾದಗಳಿಗೆ ಸಾಂಕೇತಿಕವಾಗಿ ಡಿ.ಕೆ.ಶಿವಕುಮಾರ್ ಅವರು ಪುಷ್ಪಾರ್ಚನೆ ಮಾಡಿದರು. ಆದಿಚುಂಚನಗಿರಿಯ ಸ್ವಾಮೀಜಿಗಳಾದ ನಿರ್ಮಲಾನಂದನಾಥ ಸ್ವಾಮೀಜಿಯವರು ಹಾಗೂ ಸಿರಾ ತಾಲ್ಲೂಕಿನ ಸ್ಪಟಿಕಪುರಿಯ ನಂಜಾವಧೂತ ಸ್ವಾಮೀಜಿ ಹಾಗೂ ವಿಶ್ವ ಒಕ್ಕಲಿಗರ ಸಂಸ್ಥಾನದ ನಿಶ್ಚಲಾನಂದನಾಥ ಮಹಾಸ್ವಾಮೀಜಿ ಈ ವೇಳೆ ಜೊತೆಯಾದರು. ನಂತರ ಪ್ರತಿಮೆಯ ಪಕ್ಕದಲ್ಲಿ ನಿರ್ಮಾಣ‌ ಮಾಡಿರುವ ಥೀಮ್ ಪಾರ್ಕ್ ಅನ್ನು ವೀಕ್ಷಿಸಿದರು. ನಂತರ ಶಿವಕುಮಾರ್ ಅವರು ಮಾತನಾಡಿದರು.

“ನಾಡಿನ ಸಮಸ್ತ ಜನರಿಗೆ ಕೆಂಪೇಗೌಡ ಜಯಂತಿ ಶುಭಾಶಯಗಳು. ದೂರದೃಷ್ಟಿಯ ಮಹಾಚೇತನ ಕೆಂಪೇಗೌಡರನ್ನು ಸ್ಮರಿಸುವ ಭಾಗ್ಯ ನಮ್ಮೆಲ್ಲರಿಗೂ ಲಭಿಸಿದೆ. ಕೆಂಪೇಗೌಡರ, ಚಿಂತನೆ, ಆಚಾರ, ವಿಚಾರ ಎಲ್ಲವನ್ನು ಗಮನಲ್ಲಿಟ್ಟುಕೊಂಡು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಮ್ಯಾರಥಾನ್ ಓಟ, ಬೆಂಗಳೂರಿನಲ್ಲಿ 15 ಲಕ್ಷ ಸಸಿ ನೆಡುವ ಕಾರ್ಯಕ್ರಮ, ಮಾಗಡಿಯಲ್ಲಿ 100 ಕೋಟಿ ರೂ. ವೆಚ್ಚದಲ್ಲಿ ಕೆಂಪೇಗೌಡರ ಕೋಟೆ ಸಮಗ್ರ ಅಭಿವೃದ್ಧಿ ಕಾರ್ಯ ಹಮ್ಮಿಕೊಂಡಿದ್ದೇವೆ. ಮಾಗಡಿಯಲ್ಲಿರುವ ಕೆಂಪೇಗೌಡರ ಸಮಾಧಿ ಬಳಿ 10 ಎಕರೆ ಜಮೀನು ಸ್ವಾಧೀನ ಪ್ರಕ್ರಿಯೆ ಆರಂಭವಾಗಿದ್ದು, ಈಗಾಗಲೇ ಐದೂವರೆ ಎಕರೆ ಖರೀದಿ ಮಾಡಲಾಗಿದೆ” ಎಂದು ಮಾಹಿತಿ ನೀಡಿದರು.

ಕೆಂಪೇಗೌಡರ ಇತಿಹಾಸ ಪರಿಚಯಕ್ಕೆ ಕಾರ್ಯಯೋಜನೆ ರೂಪಿಸಲು ಸೂಚನೆ:

“ಬೆಂಗಳೂರಿಗೆ ಬರುವವರಿಗೆ ಕೆಂಪೇಗೌಡರ ಗುರುತು ಪರಿಚಯಿಸಲು, ಟ್ರಂಪೆಟ್ ವೃತ್ತದಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ವಿಮಾನ ನಿಲ್ದಾಣ ಪ್ರಾಧಿಕಾರದವರಿಗೆ ಸೂಚನೆ ನೀಡಿದ್ದೇವೆ. ಅವರು ಸಧ್ಯದಲ್ಲೇ ಕಾರ್ಯಯೋಜನೆ ರೂಪಿಸಿ ಸರ್ಕಾರಕ್ಕೆ ಸಲ್ಲಿಸಲಿದ್ದಾರೆ. ಆ ಮೂಲಕ ಬೆಂಗಳೂರಿಗೆ ಬರುವವರು ಕೆಂಪೇಗೌಡರನ್ನು ಸ್ಮರಿಸುವಂತೆ ಮಾಡಲಾಗುವುದು” ಎಂದು ತಿಳಿಸಿದರು.

“ಕಳೆದ ವರ್ಷ ಸುಮ್ಮನಹಳ್ಳಿ ಬಳಿ ಕೆಂಪೇಗೌಡ ಭವನ ನಿರ್ಮಾಣಕ್ಕೆ ಐದು ಎಕರೆ ಜಾಗವನ್ನು ನೀಡಿ ಭೂಮಿ ಪೂಜೆ ಮಾಡಿದ್ದೆವು. ಜೊತೆಗೆ ಅಲ್ಲಿ ಕೆಂಪೇಗೌಡರ ಹೆಸರಿನಲ್ಲಿ ಟೌನ್ ಪ್ಲಾನಿಂಗ್ ಕಾಲೇಜು ಮಾಡಲು ಮಾರ್ಗದರ್ಶನ ನೀಡಲಾಗಿದೆ.

ಹಿಂದಿನ ಸರ್ಕಾರ ಈ ಪ್ರತಿಮೆಯನ್ನು ಚೆನ್ನಾಗಿ ಕಟ್ಟಿದೆ. ಆದರೆ ವಿಮಾನ ನಿಲ್ದಾಣಕ್ಕೆ ಬರುವವರಿಗೆ ಈ ಪ್ರತಿಮೆ ಕಾಣುತ್ತಿಲ್ಲ. ಇದರ ಬಗ್ಗೆ ಯಾವ ರೀತಿ ಕ್ರಮ ಕೈಗೊಳ್ಳಬಹುದು ಎಂದು ನಾನು, ಸ್ವಾಮೀಜಿಗಳು ಹಾಗೂ ಕೃಷ್ಣ ಬೈರೇಗೌಡರೊಂದಿಗೆ ಚರ್ಚೆ ಮಾಡಿ ವಿಮಾನ ನಿಲ್ದಾಣ ಪ್ರಾಧಿಕಾರವರಿಗೆ ನಿರ್ದೇಶನ ನೀಡಲಾಗಿದೆ” ಎಂದು ತಿಳಿಸಿದರು.

“108 ಅಡಿಯ ಈ ಕಂಚಿನ ಪ್ರತಿಮೆ ಬಳಿ ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚು ಹಸಿರು ರೂಪಿಸಲಾಗಿದೆ. ಇಲ್ಲಿನ ಕಾಮಗಾರಿ ಮುಗಿದ ಬಳಿಕ ಇದನ್ನು ಉದ್ಘಾಟನೆ ಮಾಡುತ್ತೇವೆ. ಈ ಥೀಮ್ ಪಾರ್ಕ್ ಅನ್ನು ವಿಮಾನ ನಿಲ್ದಾಣ ಪ್ರಾಧಿಕಾರ ನಿರ್ವಹಣೆ ಮಾಡಲು ಸೂಚಿಸಿದ್ದೇನೆ. ಇದಕ್ಕೆ ಪ್ರಾಧಿಕಾರವೂ ಒಪ್ಪಿದ್ದು ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ” ಎಂದರು.

ಪ್ರತಿ ವರ್ಷ ಒಂದೊಂದು ವಿಧಾನಸಭಾ ಕ್ಷೇತ್ರಗಳಲ್ಲಿ ಕಾರ್ಯಕ್ರಮ

“ಇನ್ನು ಮುಂದೆ ಕೆಂಪೇಗೌಡ ಜಯಂತಿ ಕಾರ್ಯಕ್ರಮವನ್ನು ಕೇವಲ ವಿಧಾನಸೌಧ ಹೊರತಾಗಿ, ಬೆಂಗಳೂರಿನ 28 ಕ್ಷೇತ್ರಗಳಲ್ಲಿ ಮಾಡಲು ತೀರ್ಮಾನಿಸಿದ್ದೇವೆ. ಇಂದು ಯಶವಂತಪುರದಲ್ಲಿ ಈ ಕಾರ್ಯಕ್ರಮ ಮಾಡುತ್ತಿದ್ದು, ಮುಂದಿನ ವರ್ಷ ಶಾಸಕರೊಂದಿಗೆ ಚರ್ಚಿಸಿ ಬ್ಯಾಟರಾಯನಪುರ, ಯಲಹಂಕ, ಕೆ.ಆರ್ ಪುರ ಅಥವಾ ಬೇರೆ ಕ್ಷೇತ್ರಗಳಲ್ಲಿ ಈ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಚರಿಸಲಾಗುವುದು.

ಅದರೊಂದಿಗೆ ಮುಂದಿನ 28 ವರ್ಷಗಳ ಕಾಲ ಒಂದೊಂದು ಕ್ಷೇತ್ರದಲ್ಲಿ ಆಚರಣೆ ಮಾಡಲಾಗುವುದು. ಇನ್ನು ರಾಜ್ಯಾದ್ಯಂತ ಎಲ್ಲಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಹಾಗೂ ವಾರ್ಡ್ ಮಟ್ಟದಲ್ಲಿ ಈ ಕಾರ್ಯಕ್ರಮ ಆಚರಣೆಗೆ ಜಿಬಿಎ ವತಿಯಿಂದ ಆದೇಶ ಮಾಡಲಾಗಿದೆ. ಕೆಂಪೇಗೌಡರ ಆಚಾರ ವಿಚಾರ ಅಳವಡಿಸಿಕೊಂಡು ಬೆಂಗಳೂರಿನ ಅಭಿವೃದ್ಧಿಗೆ ಯೋಜನೆ ರೂಪಿಸಲಾಗುವುದು. ಬೆಂಗಳೂರಿಗೆ ಹೊಸ ರೂಪ ನೀಡಲು ಕ್ರಮ ಕೈಗೊಳ್ಳಲಾಗುವುದು” ಎಂದು ಹೇಳಿದರು.

ಕೆಂಪೇಗೌಡರು ಎಲ್ಲಾ ವರ್ಗದ ಆಸ್ತಿ

“ಬೆಂಗಳೂರಿನಲ್ಲಿ 1.40 ಕೋಟಿ ಜನಸಂಖ್ಯೆ ಇದ್ದು, 1.30 ಕೋಟಿ ವಾಹನಗಳ ಸಂಖ್ಯೆ ಇವೆ. ನಾವು ಎಷ್ಟೇ ಮೆಟ್ರೋ, ಸಾರ್ವಜನಿಕ ಸಾರಿಗೆ ತಂದರೂ ಒಬ್ಬರು ಒಂದೊಂದು ವಾಹನ ಇಟ್ಟುಕೊಂಡಿದ್ದಾರೆ. ಮುಂದಿನ ಒಂದು ವರ್ಷದಲ್ಲಿ ವಿಮಾನ ನಿಲ್ದಾಣಕ್ಕೆ ಮೆಟ್ರೋ ಸಂಪರ್ಕ ಸಾಧಿಸಲು ಮುಂದಾಗಿದ್ದೇವೆ.

ನಮ್ಮ ಮುಂದಿನ 2 ವರ್ಷಗಳ ಅವಧಿಯಲ್ಲಿ 500 ಕಿ.ಮೀ ಉದ್ದದ ಮೆಟ್ರೋ ವಿಸ್ತರಣೆಗೆ ಆಲೋಚನೆ ಮಾಡಿದ್ದು, ಕೃಷ್ಣ ಬೈರೇಗೌಡರು ಈ ಬಗ್ಗೆ ಚಿಂತನೆ ಮಾಡಲಿದ್ದಾರೆ. ಈ ಕಾರ್ಯಕ್ರಮ ಒಂದು ಜಾತಿಗೆ ಸೀಮಿತವಲ್ಲ. ಇದು ಕೆಂಪೇಗೌಡರ ದೂರದೃಷ್ಟಿ, ಆಚಾರ, ವಿಚಾರಗಳ, ನೀತಿಯನ್ನು ಬಳಸಿಕೊಳ್ಳುವ ಕಾರ್ಯಕ್ರಮವಾಗಿದೆ. ಕೆಂಪೇಗೌಡರು ಎಲ್ಲಾ ವರ್ಗದ ಆಸ್ತಿಯಾಗಿದ್ದಾರೆ” ಎಂದು ತಿಳಿಸಿದರು.

ಬೆಂಗಳೂರಿಗೆ ವಿಶ್ವಮಟ್ಟದ ಗುರುತು ತಂದವರು ನಾಡಪ್ರಭು ಕೆಂಪೇಗೌಡ: ಬಿ.ವೈ. ವಿಜಯೇಂದ್ರ

ಬೆಂಗಳೂರು: ಬೆಂಗಳೂರು ನಗರವನ್ನು ರಾಷ್ಟ್ರಮಟ್ಟ ಮಾತ್ರವಲ್ಲದೆ ಅಂತರರಾಷ್ಟ್ರೀಯ ಮಟ್ಟದಲ್ಲೂ ಗುರುತಿಸುವಂತೆ ಮಾಡಿದ ಶ್ರೇಯಸ್ಸು ನಾಡಪ್ರಭು ಕೆಂಪೇಗೌಡರಿಗೆ ಸಲ್ಲುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.

ಸದಾಶಿವನಗರದ ಕೆಂಪೇಗೌಡ ಗಡಿ ಗೋಪುರ ಉದ್ಯಾನವನದಲ್ಲಿ ನಾಡಪ್ರಭು ಕೆಂಪೇಗೌಡ ಪ್ರತಿಷ್ಠಾನ ಆಯೋಜಿಸಿದ್ದ ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಸಮಾಜಸೇವಕ ಆರ್.ಪಿ. ರವಿಶಂಕರ್ ಅವರನ್ನು ಸನ್ಮಾನಿಸಿ ಮಾತನಾಡಿದ ಅವರು,

517 ವರ್ಷಗಳ ಬಳಿಕವೂ ಕೆಂಪೇಗೌಡರನ್ನು ನಾವು ಸ್ಮರಿಸುತ್ತಿದ್ದೇವೆ ಎಂದರೆ, ಬೆಂಗಳೂರು ಹಾಗೂ ನಾಡಿಗೆ ಅವರು ನೀಡಿರುವ ಕೊಡುಗೆ ಎಷ್ಟೊಂದು ಮಹತ್ತರ ಎಂಬುದನ್ನು ಅರ್ಥಮಾಡಿಕೊಳ್ಳಬಹುದು ಎಂದು ಹೇಳಿದರು.

ನಾಡಪ್ರಭು ಕೆಂಪೇಗೌಡರ ಹೆಸರನ್ನು ಕರ್ನಾಟಕ ಮಾತ್ರವಲ್ಲದೆ ದೇಶ ಹಾಗೂ ವಿಶ್ವದಾದ್ಯಂತ ಪರಿಚಯಿಸುವ ಉದ್ದೇಶದಿಂದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಅಧ್ಯಯನ ಕೇಂದ್ರಕ್ಕೆ 50 ಕೋಟಿ ರೂಪಾಯಿ ಅನುದಾನ ನೀಡಿದ್ದರು ಎಂದು ವಿಜಯೇಂದ್ರ ತಿಳಿಸಿದರು.

ಕೆಂಪೇಗೌಡರ ಪ್ರತಿಮೆ ನಿರ್ಮಾಣಕ್ಕೆ ಮಾತ್ರವಲ್ಲದೆ ಉದ್ಯಾನವನ ನಿರ್ಮಾಣಕ್ಕೂ ಯಡಿಯೂರಪ್ಪ ಅವರು ವಿಶೇಷ ಆದ್ಯತೆ ನೀಡಿದ್ದರು. ಅಲ್ಲದೆ, ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಾಡಪ್ರಭು ಕೆಂಪೇಗೌಡರ ಹೆಸರನ್ನೇ ಇಡಬೇಕು ಎಂಬ ಮಹತ್ವದ ನಿರ್ಧಾರವನ್ನೂ ಅವರೇ ಕೈಗೊಂಡಿದ್ದರು ಎಂದು ಹೇಳಿದರು.

ರಾಜ್ಯದಲ್ಲಿ ಮತ್ತೆ ಬಸ್‌ ಟಿಕೆಟ್‌ ದರ ಏರಿಕೆಯಾಗುತ್ತಾ? ಸುಳಿವು ನೀಡಿದ ಸಚಿವ ಬೈರತಿ ಸುರೇಶ್‌

ಬೆಂಗಳೂರು: ರಾಜ್ಯದಲ್ಲಿ ಸಾರಿಗೆ ಬಸ್‌ಗಳ ಪ್ರಯಾಣ ದರ ಹೆಚ್ಚಳಕ್ಕೆ ಸರ್ಕಾರ ಚಿಂತನೆ ನಡೆಸಿದ್ದು, ಈ ಕುರಿತು ಪ್ರಸ್ತಾವನೆ ಪರಿಶೀಲನೆಯಲ್ಲಿದೆ ಎಂದು ಸಾರಿಗೆ ಸಚಿವ ಬೈರತಿ ಸುರೇಶ್ ತಿಳಿಸಿದ್ದಾರೆ. ಮುಖ್ಯಮಂತ್ರಿ ಜತೆ ಚರ್ಚಿಸಿದ ಬಳಿಕ ಸರ್ಕಾರ ಅಂತಿಮ ತೀರ್ಮಾನ ಕೈಗೊಳ್ಳಲಿದೆ ಎಂದಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತೈಲ ದರ ಏರಿಕೆಯಿಂದ ಸಾರಿಗೆ ನಿಗಮಗಳ ಮೇಲೆ ಹೆಚ್ಚುವರಿ ಆರ್ಥಿಕ ಹೊರೆ ಬಿದ್ದಿದ್ದು, ಅದಕ್ಕೆ ಅನುಗುಣವಾಗಿ ಬಸ್ ಟಿಕೆಟ್ ದರ ಪರಿಷ್ಕರಣೆ ಮಾಡುವ ಪ್ರಸ್ತಾವನೆ ಸರ್ಕಾರದ ಮುಂದಿದೆ ಎಂದು ಹೇಳಿದರು.

ಇದು ಕೇಂದ್ರ ಅಥವಾ ರಾಜ್ಯ ಸರ್ಕಾರದ ವಿಚಾರವಲ್ಲ. ದೇಶಾದ್ಯಂತ ತೈಲ ದರ ಏರಿಕೆಯಾಗಿದೆ. ಅದರ ಪರಿಣಾಮ ಸಾರಿಗೆ ನಿಗಮಗಳ ವೆಚ್ಚವೂ ಹೆಚ್ಚಾಗಿದೆ. ಪ್ರಸ್ತಾವನೆ ಇನ್ನೂ ಪರಿಶೀಲನೆಯಲ್ಲಿದ್ದು, ಮುಖ್ಯಮಂತ್ರಿ ಜತೆ ಚರ್ಚಿಸಿ ಸರ್ಕಾರ ಸೂಕ್ತ ತೀರ್ಮಾನ ಕೈಗೊಳ್ಳಲಿದೆ ಎಂದು ತಿಳಿಸಿದರು.

ಬಸ್ ಟಿಕೆಟ್ ದರ ಹೆಚ್ಚಳವನ್ನು ವಿರೋಧಿಸುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ ಸಚಿವರು, “ತೈಲ ದರ ಏರಿಕೆಯ ಬಗ್ಗೆ ಬಿಜೆಪಿಗೂ ತಿಳಿದಿದೆ. ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳು ಒಟ್ಟು ಸುಮಾರು ₹5 ಸಾವಿರ ಕೋಟಿ ನಷ್ಟದಲ್ಲಿ ಕಾರ್ಯನಿರ್ವಹಿಸುತ್ತಿವೆ. ಸಿಬ್ಬಂದಿಗೆ ವೇತನ ನೀಡಬೇಕು, ಬಸ್‌ಗಳಿಗೆ ಡೀಸೆಲ್ ಖರೀದಿಸಬೇಕು. ಈ ಎಲ್ಲ ಅಂಶಗಳನ್ನು ಪರಿಗಣಿಸಿ ಚರ್ಚೆಯ ಬಳಿಕ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.

ವಿದ್ಯಾರ್ಥಿಗಳ ಬಸ್ ಪಾಸ್ ವಿತರಣೆಯಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದು ಸ್ಪಷ್ಟಪಡಿಸಿದ ಅವರು, “ಪಾಸ್ ವಿತರಣಾ ವ್ಯವಸ್ಥೆಯನ್ನು ಇನ್ನಷ್ಟು ಸುಗಮಗೊಳಿಸಲಾಗುವುದು. ಎಲ್ಲ ಅರ್ಹ ವಿದ್ಯಾರ್ಥಿಗಳಿಗೂ ಉಚಿತ ಬಸ್ ಪಾಸ್ ನೀಡಲಾಗುತ್ತದೆ ಎಂದು ಹೇಳಿದರು.

ಪರಿಷತ್ ಚುನಾವಣೆಯ ಅಡ್ಡ ಮತದಾನ ಪ್ರಕರಣ: ಸಿ.ಟಿ. ರವಿ ನೇತೃತ್ವದ ಸಮಿತಿಯಿಂದ ಬಿ.ವೈ. ವಿಜಯೇಂದ್ರಗೆ ವರದಿ ಸಲ್ಲಿಕೆ

ಬೆಂಗಳೂರು: ವಿಧಾನ ಪರಿಷತ್ ಚುನಾವಣೆಯಲ್ಲಿ ನಡೆದ ಅಡ್ಡ ಮತದಾನ ಪ್ರಕರಣದ ಕುರಿತು ತನಿಖೆ ನಡೆಸಿದ್ದ ಬಿಜೆಪಿ ಸತ್ಯಶೋಧನಾ ಸಮಿತಿಯು ತನ್ನ ಮಧ್ಯಂತರ ವರದಿಯನ್ನು ಇಂದು ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರಿಗೆ ಸಲ್ಲಿಸಿದೆ. ಪರಿಷತ್ ಸದಸ್ಯ ಸಿ.ಟಿ. ರವಿ ನೇತೃತ್ವದ ತ್ರಿಸದಸ್ಯ ಸಮಿತಿಯು ನಾಲ್ಕು ದಿನಗಳ ಆಂತರಿಕ ತನಿಖೆ ನಡೆಸಿ ವರದಿ ಸಿದ್ಧಪಡಿಸಿದೆ.

ಸಿ.ಟಿ. ರವಿ, ಶಾಸಕ ಮಹೇಶ್ ಟೆಂಗಿನಕಾಯಿ ಹಾಗೂ ಎನ್. ಮಹೇಶ್ ಅವರನ್ನೊಳಗೊಂಡ ಸಮಿತಿಯು ಸಾಂದರ್ಭಿಕ ಸಾಕ್ಷ್ಯಗಳು, ಮೂಲಗಳಿಂದ ಸಂಗ್ರಹಿಸಿದ ಮಾಹಿತಿ, ಅನುಮಾನಾಸ್ಪದ ಬೆಳವಣಿಗೆಗಳು ಹಾಗೂ ಶಂಕಿತ ಶಾಸಕರಿಂದ ಪಡೆದ ಮಾಹಿತಿಯ ಆಧಾರದ ಮೇಲೆ ಮೂರು ಪುಟಗಳ ವರದಿ ಸಿದ್ಧಪಡಿಸಿದೆ. ಈ ವರದಿಯನ್ನು ಬಿಜೆಪಿ ರಾಜ್ಯ ಕಚೇರಿಯಲ್ಲಿ ಸೀಲ್ಡ್ ಕವರ್‌ನಲ್ಲಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರಿಗೆ ಸಲ್ಲಿಸಲಾಯಿತು.

ವರದಿ ಸಲ್ಲಿಕೆಯ ಬಳಿಕ ಸಿ.ಟಿ. ರವಿ ಹಾಗೂ ಬಿ.ವೈ. ವಿಜಯೇಂದ್ರ ಅವರು ಪ್ರತ್ಯೇಕವಾಗಿ ಸಭೆ ನಡೆಸಿ ವರದಿಯ ಪ್ರಮುಖ ಅಂಶಗಳ ಕುರಿತು ಚರ್ಚೆ ನಡೆಸಿದರು.

ಸಮಿತಿ ಸಲ್ಲಿಸಿರುವ ಮಧ್ಯಂತರ ವರದಿಯಲ್ಲಿ ಮೈತ್ರಿ ಪಕ್ಷಗಳ ಒಟ್ಟು 12 ಶಾಸಕರು ಅಡ್ಡ ಮತದಾನ ನಡೆಸಿರುವ ಶಂಕೆ ವ್ಯಕ್ತಪಡಿಸಲಾಗಿದೆ. ಈ ಪೈಕಿ ಒಂದು ಅಸಿಂಧು ಮತ ದಾಖಲಾಗಿದ್ದು, ಬಿಜೆಪಿಯಿಂದ ಒಂದು ಅಸಿಂಧು ಮತ ಸೇರಿದಂತೆ ಒಟ್ಟು ನಾಲ್ಕು ಅಡ್ಡ ಮತಗಳು ದಾಖಲಾಗಿವೆ ಎಂದು ಉಲ್ಲೇಖಿಸಲಾಗಿದೆ. ಉಳಿದ ಅಡ್ಡ ಮತಗಳು ಜೆಡಿಎಸ್‌ನಿಂದ ಆಗಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ ಎನ್ನಲಾಗಿದೆ.

ಆದರೆ, ಅಡ್ಡ ಮತದಾನ ಮಾಡಿದ ಶಾಸಕರ ಹೆಸರುಗಳನ್ನು ವರದಿಯಲ್ಲಿ ಉಲ್ಲೇಖಿಸಿಲ್ಲ. ಕೇವಲ ಅಡ್ಡ ಮತಗಳ ಸಂಖ್ಯೆಯನ್ನು ಮಾತ್ರ ದಾಖಲಿಸಲಾಗಿದ್ದು, ಅನುಮಾನ ಇರುವ ಶಾಸಕರ ಮೇಲೆ ಮುಂದಿನ ದಿನಗಳಲ್ಲಿ ತೀವ್ರ ನಿಗಾ ವಹಿಸುವಂತೆ ಸಮಿತಿ ಶಿಫಾರಸು ಮಾಡಿದೆ.

ವರದಿ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಟಿ. ರವಿ, “ಅಡ್ಡ ಮತದಾನ ಪ್ರಕರಣದ ಕುರಿತು ಆಂತರಿಕ ಸತ್ಯಶೋಧನೆ ನಡೆಸಲು ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಮೂವರು ಸದಸ್ಯರ ಸಮಿತಿಯನ್ನು ರಚಿಸಿದ್ದರು. ಶೀಘ್ರ ವರದಿ ಸಲ್ಲಿಸುವಂತೆ ಸೂಚಿಸಿದ್ದ ಹಿನ್ನೆಲೆಯಲ್ಲಿ ನಾಲ್ಕು ದಿನಗಳಲ್ಲೇ ತನಿಖೆ ಪೂರ್ಣಗೊಳಿಸಿ ವರದಿ ನೀಡಿದ್ದೇವೆ. ಸಮಿತಿಯ ಮೂವರು ಸದಸ್ಯರಿಗೂ ಒಮ್ಮತವಾಗಿರುವ ಅಂಶಗಳನ್ನು ಮಾತ್ರ ವರದಿಯಲ್ಲಿ ದಾಖಲಿಸಿದ್ದೇವೆ” ಎಂದು ತಿಳಿಸಿದರು.

“ಅಡ್ಡ ಮತದಾನ ಪ್ರಜಾಪ್ರಭುತ್ವ ವಿರೋಧಿ ನಡೆ. ಇಂತಹ ಘಟನೆಗಳ ಬಗ್ಗೆ ಕಾಂಗ್ರೆಸ್ ಪ್ರಶ್ನಿಸುವ ನೈತಿಕತೆ ಹೊಂದಿಲ್ಲ. ಮುಂದಿನ ಕ್ರಮದ ಬಗ್ಗೆ ರಾಜ್ಯಾಧ್ಯಕ್ಷರು ಹಾಗೂ ಬಿಜೆಪಿ ಕೋರ್ ಕಮಿಟಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಿದ್ದಾರೆ. ಅಗತ್ಯವಿದ್ದರೆ ವರದಿಯನ್ನು ಪಕ್ಷದ ಹೈಕಮಾಂಡ್‌ಗೂ ಸಲ್ಲಿಸಲಾಗುತ್ತದೆ” ಎಂದು ಸಿ.ಟಿ. ರವಿ ಹೇಳಿದರು.

8 ತಿಂಗಳ ಕಂದಮ್ಮನ ಗಂಟಲಲ್ಲಿ ಸಿಲುಕಿದ್ದ LED ಬಲ್ಬ್: ಯಶಸ್ವಿಯಾಗಿ ಹೊರತೆಗೆದ ವೈದ್ಯರು – ತಪ್ಪಿದ ಅನಾಹುತ

ಮಡಿಕೇರಿ: ಕೊಡಗು ಜಿಲ್ಲೆಯ ಮಡಿಕೇರಿಯಲ್ಲಿ ಎಂಟು ತಿಂಗಳ ಕಂದಮ್ಮ ಎಲ್ಇಡಿ ಬಲ್ಬ್ ನುಂಗಿದ ಅಪರೂಪದ ಘಟನೆ ನಡೆದಿದ್ದು, ವೈದ್ಯರ ಸಮಯೋಚಿತ ಚಿಕಿತ್ಸೆಯಿಂದ ಮಗುವಿನ ಜೀವ ಉಳಿದಿದೆ.

ಮನೆಯಲ್ಲಿದ್ದ ವೇಳೆ ಮಗು ಏಕಾಏಕಿ ವಿಪರೀತವಾಗಿ ಅಳಲು ಆರಂಭಿಸಿತ್ತು. ಮಗುವಿನ ಅಳುವಿಗೆ ಕಾರಣವೇನು ಎಂಬುದು ತಿಳಿಯದೇ ಆತಂಕಗೊಂಡ ಪೋಷಕರು ತಕ್ಷಣವೇ ಮಡಿಕೇರಿ ನಗರದ ಆಸ್ಪತ್ರೆಗೆ ಕರೆತಂದಿದ್ದರು.

ಆಸ್ಪತ್ರೆಯಲ್ಲಿ ವೈದ್ಯರು ಮಗುವಿನ ಆರೋಗ್ಯ ಪರೀಕ್ಷೆ ನಡೆಸಿದ ಬಳಿಕ ಎಕ್ಸ್‌ರೇ ಮಾಡಿಸಿದಾಗ, ಗಂಟಲು ಭಾಗದಲ್ಲಿ ಲೋಹದ ವಸ್ತುವೊಂದು ಸಿಲುಕಿರುವುದು ಪತ್ತೆಯಾಯಿತು. ಆರಂಭದಲ್ಲಿ ಮಗು ಪಿನ್ ಅಥವಾ ಬೇರೆ ಯಾವುದೇ ಲೋಹದ ವಸ್ತು ನುಂಗಿರಬಹುದೆಂದು ವೈದ್ಯರು ಶಂಕಿಸಿದ್ದರು.

ಬಳಿಕ ಲ್ಯಾರಿಂಗೊಸ್ಕೋಪ್ ಪರೀಕ್ಷೆ ನಡೆಸಿದಾಗ, ಮಗುವಿನ ಗಂಟಲಲ್ಲಿ ಎಲ್ಇಡಿ ಬಲ್ಬ್ ಸಿಲುಕಿರುವುದು ದೃಢಪಟ್ಟಿತು. ಕೂಡಲೇ ಇಎನ್‌ಟಿ ತಜ್ಞೆ ಡಾ. ರಾಜಶ್ರಿ ಹಾಗೂ ಮಕ್ಕಳ ತಜ್ಞ ಡಾ. ಖುಶ್ವಂತ್ ನೇತೃತ್ವದ ವೈದ್ಯರ ತಂಡ ಯಾವುದೇ ಶಸ್ತ್ರಚಿಕಿತ್ಸೆ ನಡೆಸದೆ ಸುರಕ್ಷಿತವಾಗಿ ಬಲ್ಬ್ ಅನ್ನು ಹೊರತೆಗೆದು ಮಗುವಿನ ಜೀವ ಉಳಿಸಿದರು.

ಆಟವಾಡುವ ವೇಳೆ ಮಗು ಎಲ್ಇಡಿ ಬಲ್ಬ್ ಅನ್ನು ಬಾಯಿಗೆ ಹಾಕಿಕೊಂಡು ನುಂಗಿರುವ ಸಾಧ್ಯತೆ ಇದೆ ಎಂದು ವೈದ್ಯರು ತಿಳಿಸಿದ್ದಾರೆ. ಸದ್ಯ ಮಗು ಪ್ರಾಣಾಪಾಯದಿಂದ ಪಾರಾಗಿದ್ದು, ಆರೋಗ್ಯ ಸ್ಥಿರವಾಗಿದೆ.

ಪೋಷಕರು ಸಮಯ ವ್ಯರ್ಥ ಮಾಡದೆ ಮಗುವನ್ನು ಆಸ್ಪತ್ರೆಗೆ ದಾಖಲಿಸಿದ್ದರಿಂದ ಹಾಗೂ ವೈದ್ಯರು ತಕ್ಷಣ ಚಿಕಿತ್ಸೆ ನೀಡಿದ್ದರಿಂದ ಸಂಭವಿಸಬಹುದಾಗಿದ್ದ ದೊಡ್ಡ ಅನಾಹುತ ತಪ್ಪಿದೆ. ಮಕ್ಕಳ ಕೈಗೆ ಸಣ್ಣ ವಸ್ತುಗಳು ಸಿಗದಂತೆ ಪೋಷಕರು ಹೆಚ್ಚಿನ ಎಚ್ಚರಿಕೆ ವಹಿಸಬೇಕು ಎಂದು ವೈದ್ಯರು ಸಲಹೆ ನೀಡಿದ್ದಾರೆ.

ತಮಿಳು ಚಿತ್ರರಂಗಕ್ಕೆ ಆಘಾತ; ಹಿರಿಯ ನಿರ್ದೇಶಕ, ನಟ ಕೆ. ಭಾಗ್ಯರಾಜ್ ಹೃದಯಾಘಾತದಿಂದ ನಿಧನ

ಚೆನ್ನೈ: ತಮಿಳು ಚಿತ್ರರಂಗದ ಹಿರಿಯ ನಿರ್ದೇಶಕ, ಖ್ಯಾತ ಚಿತ್ರಕಥೆಗಾರ ಹಾಗೂ ನಟ ಕೆ. ಭಾಗ್ಯರಾಜ್ ಅವರು ಶನಿವಾರ (ಜೂನ್ 27) ಹೃದಯಾಘಾತದಿಂದ ನಿಧನರಾಗಿದ್ದಾರೆ. ಚೆನ್ನೈನ ನಿವಾಸದಲ್ಲಿ ಅಸ್ವಸ್ಥಗೊಂಡಿದ್ದ ಅವರನ್ನು ರಕ್ಷಿಸಲು ಪ್ರಯತ್ನಿಸಿದರೂ ಫಲಕಾರಿಯಾಗಲಿಲ್ಲ. ನಿಧನದ ವೇಳೆ ಅವರಿಗೆ 73 ವರ್ಷ ವಯಸ್ಸಾಗಿತ್ತು.

ಕೆ. ಭಾಗ್ಯರಾಜ್ ಅವರ ನಿಧನದಿಂದ ತಮಿಳು ಚಿತ್ರರಂಗಕ್ಕೆ ಅಪಾರ ನಷ್ಟ ಉಂಟಾಗಿದ್ದು, ಅವರ ಅಗಲಿಕೆಗೆ ಚಿತ್ರರಂಗದ ಗಣ್ಯರು, ರಾಜಕೀಯ ನಾಯಕರು ಹಾಗೂ ಅಭಿಮಾನಿಗಳು ತೀವ್ರ ಸಂತಾಪ ವ್ಯಕ್ತಪಡಿಸುತ್ತಿದ್ದಾರೆ. ಮಧ್ಯಮ ವರ್ಗದ ಕುಟುಂಬಗಳ ಬದುಕನ್ನು ಆಧರಿಸಿದ ಕಥೆಗಳ ಮೂಲಕ ಅವರು ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿದ್ದರು. ಸರಳ ಕಥಾಹಂದರ, ಪರಿಣಾಮಕಾರಿ ಚಿತ್ರಕಥೆ ಮತ್ತು ಮನಸಿಗೆ ಹತ್ತಿರವಾಗುವ ಪಾತ್ರಗಳ ಮೂಲಕ ಅವರು ಲಕ್ಷಾಂತರ ಸಿನಿಪ್ರೇಕ್ಷಕರ ಮನ ಗೆದ್ದಿದ್ದರು.

ಭಾಗ್ಯರಾಜ್ ಅವರ ಪತ್ನಿ ಪೂರ್ಣಿಮಾ ಮಾಜಿ ನಟಿಯಾಗಿದ್ದು, ಪುತ್ರ ಶಂತನು ಭಾಗ್ಯರಾಜ್ ಹಾಗೂ ಪುತ್ರಿ ಶರಣ್ಯ ಕುಟುಂಬದ ಸದಸ್ಯರಾಗಿದ್ದಾರೆ. ಪುತ್ರ ಶಂತನು ಕೂಡ ತಮಿಳು ಚಿತ್ರರಂಗದಲ್ಲಿ ನಟನಾಗಿ ಗುರುತಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಗೋವಾದಲ್ಲಿ ನಡೆದ ನಟಿ ಹಾಗೂ ರಾಜಕಾರಣಿ ಖುಷ್ಬೂ ಸುಂದರ್ ಅವರ ಪುತ್ರಿಯ ವಿವಾಹ ಸಮಾರಂಭದಲ್ಲಿ ಭಾಗ್ಯರಾಜ್ ಭಾಗವಹಿಸಿದ್ದರು.

ಸಿನಿಮಾ ಬದುಕಿನ ಪಯಣ

ಕೃಷ್ಣಸ್ವಾಮಿ ಭಾಗ್ಯರಾಜ್ ಎಂಬುದು ಅವರ ಪೂರ್ಣ ಹೆಸರು. ತಮಿಳುನಾಡಿನ ಈರೋಡ್ ಜಿಲ್ಲೆಯಲ್ಲಿ ಜನಿಸಿದ ಅವರು, ಆರಂಭದಲ್ಲಿ ಸಹಾಯಕ ನಿರ್ದೇಶಕರಾಗಿ ಸಿನಿ ಪಯಣ ಆರಂಭಿಸಿದ್ದರು. ಖ್ಯಾತ ನಿರ್ದೇಶಕ ಭಾರತೀರಾಜ ಅವರ ಬಳಿ ಸಿನಿಮಾ ಕಲೆ ಕಲಿತ ಬಳಿಕ ಸ್ವತಂತ್ರ ನಿರ್ದೇಶಕರಾಗಿ ಗುರುತಿಸಿಕೊಂಡರು. 1980 ಮತ್ತು 1990ರ ದಶಕಗಳಲ್ಲಿ ತಮಿಳು ಚಿತ್ರರಂಗದ ಅತ್ಯಂತ ಯಶಸ್ವಿ ನಿರ್ದೇಶಕರಲ್ಲಿ ಒಬ್ಬರಾಗಿ ಹೊರಹೊಮ್ಮಿದರು.

ತಮ್ಮ ವೃತ್ತಿಜೀವನದಲ್ಲಿ 25ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ದೇಶಿಸಿರುವ ಭಾಗ್ಯರಾಜ್, 75ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅತ್ಯುತ್ತಮ ಚಿತ್ರಕಥೆಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಅವರು, ಹಲವು ಯಶಸ್ವಿ ಹಾಗೂ ಕ್ಲಾಸಿಕ್ ಚಿತ್ರಗಳನ್ನು ಚಿತ್ರರಂಗಕ್ಕೆ ನೀಡಿದ್ದಾರೆ.

ಅವರ ನಿರ್ದೇಶನದ ‘ಮುಂದಾನೈ ಮುಡಿಚ್ಚು’, ‘ಅಂದ 7 ನಾಟ್ಕಳ್’ ಹಾಗೂ ‘ಡಾರ್ಲಿಂಗ್ ಡಾರ್ಲಿಂಗ್ ಡಾರ್ಲಿಂಗ್’ ಚಿತ್ರಗಳು ಇಂದಿಗೂ ತಮಿಳು ಸಿನಿರಂಗದ ಶ್ರೇಷ್ಠ ಕೃತಿಗಳಲ್ಲಿ ಒಂದಾಗಿ ಪರಿಗಣಿಸಲ್ಪಡುತ್ತವೆ.

ಕನ್ನಡ ಚಿತ್ರರಂಗದ ಜೊತೆಯೂ ನಂಟು

ಕೆ. ಭಾಗ್ಯರಾಜ್ ಅವರಿಗೆ ಕನ್ನಡ ಚಿತ್ರರಂಗದೊಂದಿಗೂ ಒಡನಾಟವಿತ್ತು. 2015ರಲ್ಲಿ ಬಿಡುಗಡೆಯಾದ ‘ರೆಡ್ ಅಲರ್ಟ್’ ಚಿತ್ರದಲ್ಲಿ ಅವರು ಅತಿಥಿ ಪಾತ್ರದಲ್ಲಿ ಅಭಿನಯಿಸಿದ್ದರು. 2025ರಲ್ಲಿ ಬಿಡುಗಡೆಯಾದ ‘ಕುಬೇರ’ ಅವರ ನಟನೆಯ ಕೊನೆಯ ಸಿನಿಮಾ ಎನ್ನಲಾಗಿದೆ.

ಕೆ. ಭಾಗ್ಯರಾಜ್ ಅವರ ಅಗಲಿಕೆಯಿಂದ ಭಾರತೀಯ ಚಿತ್ರರಂಗದ ಒಬ್ಬ ಅಪರೂಪದ ಕಥೆಗಾರ, ನಿರ್ದೇಶಕ ಮತ್ತು ನಟನ ಅಧ್ಯಾಯ ಅಂತ್ಯಗೊಂಡಂತಾಗಿದೆ.

ನಾನು 13 ಸಿಕ್ಸರ್ ಹೊಡೆಯುತ್ತೇನೆ ಎಂದಿದ್ದ: ವೈಭವ್ ಸೂರ್ಯವಂಶಿಯ ಆತ್ಮವಿಶ್ವಾಸದ ಕಥೆ ಬಿಚ್ಚಿಟ್ಟ ಕುಮಾರ್ ಸಂಗಕ್ಕಾರ

0

ಭಾರತದ ಉದಯೋನ್ಮುಖ ಯುವ ಕ್ರಿಕೆಟಿಗ ವೈಭವ್ ಸೂರ್ಯವಂಶಿ ಅವರ ಪ್ರತಿಭೆ ಮತ್ತು ಆತ್ಮವಿಶ್ವಾಸದ ಬಗ್ಗೆ ಕ್ರಿಕೆಟ್ ವಲಯದಲ್ಲಿ ಚರ್ಚೆಗಳು ಮುಂದುವರಿದಿವೆ.

ಈ ಬಾರಿ ಅವರ ಬಗ್ಗೆ ವಿಶೇಷವಾಗಿ ಮಾತನಾಡಿರುವುದು ರಾಜಸ್ಥಾನ್ ರಾಯಲ್ಸ್ ತಂಡದ ಮುಖ್ಯ ಕೋಚ್ ಕುಮಾರ್ ಸಂಗಕ್ಕಾರ. ಇಂಗ್ಲೆಂಡ್ ಹಾಗೂ ನ್ಯೂಝಿಲೆಂಡ್ ನಡುವಿನ ಟೆಸ್ಟ್ ಪಂದ್ಯದ ವೇಳೆ ‘ಸ್ಕೈ ಕ್ರಿಕೆಟ್’ಗೆ ನೀಡಿದ ಸಂದರ್ಶನದಲ್ಲಿ ಸಂಗಕ್ಕಾರ, ವೈಭವ್ ಅವರ ಅಸಾಧಾರಣ ಆತ್ಮವಿಶ್ವಾಸದ ಘಟನೆಯನ್ನು ಹಂಚಿಕೊಂಡಿದ್ದಾರೆ.

ಐಪಿಎಲ್ 2026ರ 64ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ತಂಡ ಕಣಕ್ಕಿಳಿದಿತ್ತು. ಮೊದಲು ಬ್ಯಾಟ್ ಮಾಡಿದ ಲಕ್ನೋ ತಂಡ 220 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತ್ತು. ಪ್ಲೇಆಫ್ ಆಸೆ ಜೀವಂತವಾಗಿರಿಸಿಕೊಳ್ಳಬೇಕಿದ್ದ ರಾಜಸ್ಥಾನ್‌ಗೆ ಈ ಪಂದ್ಯ ಗೆಲ್ಲುವುದು ಅತ್ಯಗತ್ಯವಾಗಿತ್ತು.

ಇಂತಹ ಒತ್ತಡದ ಸಂದರ್ಭದಲ್ಲಿ ಕೇವಲ 15 ವರ್ಷದ ವೈಭವ್ ಸೂರ್ಯವಂಶಿ ಬ್ಯಾಟಿಂಗ್‌ಗೆ ತೆರಳುವ ಮುನ್ನ ಕೋಚ್ ಕುಮಾರ್ ಸಂಗಕ್ಕಾರ ಅವರ ಬಳಿ ಬಂದು, “ಕೋಚ್, ನೀವು ಚಿಂತಿಸಬೇಡಿ… ಪಂದ್ಯ ಮುಗಿದಂತೆಯೇ,” ಎಂದು ಆತ್ಮವಿಶ್ವಾಸದಿಂದ ಹೇಳಿ ಮೈದಾನಕ್ಕಿಳಿದಿದ್ದರು ಎಂದು ಸಂಗಕ್ಕಾರ ನೆನಪಿಸಿಕೊಂಡಿದ್ದಾರೆ.

ಅಷ್ಟೇ ಅಲ್ಲ, ಡಗೌಟ್‌ನಲ್ಲಿದ್ದ ಸಹ ಆಟಗಾರರಾದ ಡೊನೊವನ್ ಫೆರೇರಾ ಹಾಗೂ ಲುಹಾನ್-ಡ್ರೆ ಪ್ರಿಟೋರಿಯಸ್ ಅವರ ಬಳಿಗೂ ತೆರಳಿ, “ಇಂದು ನಾನು 13 ಸಿಕ್ಸರ್‌ಗಳನ್ನು ಹೊಡೆಯುತ್ತೇನೆ. ನಾನು ಔಟಾದ ನಂತರ ಉಳಿದ ರನ್‌ಗಳನ್ನು ನೀವು ಪೂರ್ಣಗೊಳಿಸಿ,” ಎಂದು ಹೇಳಿದ್ದರಂತೆ.

ವೈಭವ್ ಬ್ಯಾಟಿಂಗ್ ಆರಂಭಿಸಿದ ಕೆಲವೇ ಕ್ಷಣಗಳಲ್ಲಿ ಸತತ ಸಿಕ್ಸರ್‌ಗಳ ಸುರಿಮಳೆ ಆರಂಭವಾಗಿತ್ತು. ಆರಂಭದಲ್ಲೇ ಐದು ಸಿಕ್ಸರ್‌ಗಳನ್ನು ಸಿಡಿಸುತ್ತಿದ್ದಂತೆ, ಡಗೌಟ್‌ನಲ್ಲಿದ್ದ ಆಟಗಾರರು ಅಚ್ಚರಿಗೊಂಡಿದ್ದರು. “ಈ ಹುಡುಗ ಹೇಳಿದ್ದನ್ನೇ ಮಾಡುತ್ತಿದ್ದಾನೆ. ಈಗ ಇವನು ಎಷ್ಟು ಸಿಕ್ಸರ್ ಹೊಡೆಯುತ್ತಾನೆ ಎಂಬುದನ್ನು ಎಣಿಸಲು ಶುರು ಮಾಡೋಣ,” ಎಂದು ತಮ್ಮೊಳಗೆ ಮಾತನಾಡಿಕೊಂಡಿದ್ದರು ಎಂದು ಸಂಗಕ್ಕಾರ ತಿಳಿಸಿದ್ದಾರೆ.

ಆ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಕೇವಲ 48 ಎಸೆತಗಳಲ್ಲಿ 93 ರನ್‌ಗಳ ಸ್ಫೋಟಕ ಇನ್ನಿಂಗ್ಸ್ ಆಡಿದ್ದರು. ಅವರ ಬ್ಯಾಟ್‌ನಿಂದ 10 ಸಿಕ್ಸರ್ ಹಾಗೂ ಹಲವು ಬೌಂಡರಿಗಳು ಮೂಡಿಬಂದಿದ್ದವು. 13 ಸಿಕ್ಸರ್ ಹೊಡೆಯುವ ತಮ್ಮ ಮಾತನ್ನು ಮೂರು ಸಿಕ್ಸರ್‌ಗಳಿಂದ ತಪ್ಪಿಸಿಕೊಂಡರೂ, ತಂಡಕ್ಕೆ ಏಳು ವಿಕೆಟ್‌ಗಳ ಅಮೋಘ ಗೆಲುವು ತಂದುಕೊಡುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.

ವೈಭವ್ ಅವರ ಆತ್ಮವಿಶ್ವಾಸವನ್ನು ಶ್ಲಾಘಿಸಿದ ಕುಮಾರ್ ಸಂಗಕ್ಕಾರ, “ಇಂತಹ ಆತ್ಮವಿಶ್ವಾಸ ಎಲ್ಲರಲ್ಲೂ ಇರುವುದಿಲ್ಲ. ವೈಭವ್ ಕೇವಲ ಪ್ರತಿಭಾವಂತ ಆಟಗಾರ ಮಾತ್ರವಲ್ಲ, ಮುಂದಿನ ದಿನಗಳಲ್ಲಿ ವಿಶ್ವ ಕ್ರಿಕೆಟ್‌ನಲ್ಲಿ ದೊಡ್ಡ ಮಟ್ಟದ ಸಾಧನೆ ಮಾಡುವ ಸಾಮರ್ಥ್ಯ ಹೊಂದಿರುವ ಆಟಗಾರ. ಭವಿಷ್ಯದಲ್ಲಿ ಕ್ರಿಕೆಟ್ ಜಗತ್ತಿನ ಸೂಪರ್‌ಸ್ಟಾರ್ ಆಗುವ ಎಲ್ಲಾ ಗುಣಗಳು ಆತನಲ್ಲಿವೆ,” ಎಂದು ಪ್ರಶಂಸಿಸಿದ್ದಾರೆ.

ಐರ್ಲೆಂಡ್ ವಿರುದ್ಧ ಸೋಲು ಕಂಡ ಟೀಮ್ ಇಂಡಿಯಾ: ಸೋಲಿನ ಕಾರಣ ಬಿಚ್ಚಿಟ್ಟ ನಾಯಕ ಶ್ರೇಯಸ್ ಅಯ್ಯರ್

0

ಬೆಲ್‌ಫಾಸ್ಟ್: ಭಾರತ ಮತ್ತು ಐರ್ಲೆಂಡ್ ನಡುವಿನ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ಆಘಾತಕಾರಿ ಸೋಲು ಕಂಡಿದೆ. ಬೆಲ್‌ಫಾಸ್ಟ್‌ನಲ್ಲಿ ನಡೆದ ಪಂದ್ಯದಲ್ಲಿ 34 ರನ್‌ಗಳ ಗೆಲುವು ಸಾಧಿಸಿದ ಐರ್ಲೆಂಡ್, ಭಾರತ ವಿರುದ್ಧ ಟಿ20 ಕ್ರಿಕೆಟ್‌ನಲ್ಲಿ ಮೊದಲ ಬಾರಿಗೆ ಐತಿಹಾಸಿಕ ಜಯ ದಾಖಲಿಸಿದೆ.

ಟಾಸ್ ಗೆದ್ದ ಭಾರತ ತಂಡದ ನಾಯಕ ಶ್ರೇಯಸ್ ಅಯ್ಯರ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದರು. ಅದರಂತೆ ಬ್ಯಾಟಿಂಗ್ ಆರಂಭಿಸಿದ ಐರ್ಲೆಂಡ್ ತಂಡ ನಿಗದಿತ 20 ಓವರ್‌ಗಳಲ್ಲಿ 182 ರನ್ ಕಲೆಹಾಕಿತು. 183 ರನ್‌ಗಳ ಗುರಿ ಬೆನ್ನತ್ತಿದ ಭಾರತ ತಂಡ 148 ರನ್‌ಗಳಿಗೆ ಸೀಮಿತವಾಗಿ ಸೋಲೊಪ್ಪಿಕೊಂಡಿತು.

ಪಂದ್ಯದ ಬಳಿಕ ಮಾತನಾಡಿದ ನಾಯಕ ಶ್ರೇಯಸ್ ಅಯ್ಯರ್, ಬೌಲರ್‌ಗಳು ಮಧ್ಯದ ಓವರ್‌ಗಳಲ್ಲಿ ರನ್ ನಿಯಂತ್ರಿಸುವಲ್ಲಿ ವಿಫಲವಾದದ್ದೇ ಸೋಲಿಗೆ ಪ್ರಮುಖ ಕಾರಣ ಎಂದು ಹೇಳಿದ್ದಾರೆ.

“ಆರಂಭದಲ್ಲಿ ನಮ್ಮ ಬೌಲರ್‌ಗಳು ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಪಿಚ್‌ನಲ್ಲಿದ್ದ ಸ್ವಿಂಗ್ ಮತ್ತು ಲ್ಯಾಟರಲ್ ಮೂವ್‌ಮೆಂಟ್ ಅನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಕೇವಲ 36 ರನ್‌ಗಳಿಗೆ ಮೂರು ವಿಕೆಟ್ ಕಬಳಿಸಿದ್ದೆವು. ಆ ಹಂತದಲ್ಲಿ ಪಂದ್ಯ ಸಂಪೂರ್ಣವಾಗಿ ನಮ್ಮ ಹಿಡಿತದಲ್ಲಿತ್ತು. ಆದರೆ ನಂತರ ನಾವು ಲಯ ಕಳೆದುಕೊಂಡೆವು,” ಎಂದು ಅಯ್ಯರ್ ಹೇಳಿದ್ದಾರೆ.

“ಮಧ್ಯದ ಓವರ್‌ಗಳಲ್ಲಿ ಸರಿಯಾದ ಯೋಜನೆಗಳನ್ನು ಅನುಷ್ಠಾನಗೊಳಿಸಲು ಸಾಧ್ಯವಾಗಲಿಲ್ಲ. ಈ ಮೈದಾನದಲ್ಲಿ ಮುಂಭಾಗದ ಬೌಂಡರಿಗಳು ಚಿಕ್ಕದಾಗಿವೆ ಎಂಬುದು ಗೊತ್ತಿದ್ದರೂ, ಬ್ಯಾಟರ್‌ಗಳಿಗೆ ನೇರವಾಗಿ ಶಾಟ್‌ಗಳನ್ನು ಆಡಲು ಅವಕಾಶ ನೀಡಿದೆವು. ಅದೇ ನಮ್ಮ ಮೇಲೆ ಭಾರಿಯಾಗಿ ಬಿತ್ತು,” ಎಂದು ಬೇಸರ ವ್ಯಕ್ತಪಡಿಸಿದರು.

ಇದೇ ವೇಳೆ, “ನಾವು ಪಡೆದ ಆರಂಭವನ್ನು ಗಮನಿಸಿದರೆ ಐರ್ಲೆಂಡ್ ತಂಡವನ್ನು 140 ರನ್‌ಗಳೊಳಗೆ ನಿಯಂತ್ರಿಸಬೇಕಿತ್ತು. ಆ ಮೊತ್ತವನ್ನು ಈ ಪಿಚ್‌ನಲ್ಲಿ ಸುಲಭವಾಗಿ ಬೆನ್ನಟ್ಟಬಹುದಿತ್ತು. ಆದರೆ ಡೆತ್ ಓವರ್‌ಗಳಲ್ಲಿ ಅಗತ್ಯಕ್ಕಿಂತ ಹೆಚ್ಚು ರನ್ ಬಿಟ್ಟುಕೊಟ್ಟಿದ್ದರಿಂದ ಎದುರಾಳಿ 182 ರನ್‌ಗಳ ಸ್ಪರ್ಧಾತ್ಮಕ ಮೊತ್ತ ದಾಖಲಿಸಲು ಸಾಧ್ಯವಾಯಿತು,” ಎಂದು ಅಯ್ಯರ್ ಅಭಿಪ್ರಾಯಪಟ್ಟರು.

ಮೊದಲ ಪಂದ್ಯದಲ್ಲೇ ಸೋಲು ಕಂಡಿರುವ ಭಾರತ ತಂಡ, ಸರಣಿಯಲ್ಲಿ ಸಮಬಲ ಸಾಧಿಸುವ ಉದ್ದೇಶದಿಂದ ಮುಂದಿನ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡುವ ಸವಾಲನ್ನು ಎದುರಿಸಲಿದೆ.

ಪತ್ನಿ ದೂರು ಕೊಟ್ಟ ತಕ್ಷಣ ಪತಿಯನ್ನು ಜೈಲಿಗೆ ಕಳುಹಿಸಬೇಡಿ; ಪೊಲೀಸರ ವಿರುದ್ಧ ಹೈಕೋರ್ಟ್‌ ತೀವ್ರ ಆಕ್ರೋಶ

ಬೆಂಗಳೂರು: ಪತ್ನಿ ನೀಡಿದ ದೂರಿನ ಆಧಾರದ ಮೇಲೆ ಕಾನೂನು ಪ್ರಕ್ರಿಯೆಯನ್ನು ಸಮರ್ಪಕವಾಗಿ ಪಾಲಿಸದೆ ಪತಿಯನ್ನು ಬಂಧಿಸಿ ಜೈಲಿಗೆ ಕಳುಹಿಸಿದ ಬಾಗಲೂರು ಪೊಲೀಸರ ಕ್ರಮವನ್ನು ಕರ್ನಾಟಕ ಹೈಕೋರ್ಟ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ಕಳೆದ ಏಪ್ರಿಲ್‌ನಿಂದ ಜೈಲಿನಲ್ಲಿದ್ದ ಅರ್ಜಿದಾರರನ್ನು ತಕ್ಷಣ ಬಿಡುಗಡೆ ಮಾಡುವಂತೆ ನ್ಯಾಯಾಲಯ ಆದೇಶಿಸಿದೆ.

ಬಾಗಲೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವನ್ನು ರದ್ದುಪಡಿಸುವಂತೆ ಹಾಗೂ ಬಂಧನದಿಂದ ಬಿಡುಗಡೆ ಕೋರಿ ರಾಮಕೃಷ್ಣಂ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ, ತಪ್ಪಿತಸ್ಥ ಪೊಲೀಸ್ ಅಧಿಕಾರಿಯ ವಿರುದ್ಧ 12 ವಾರಗಳೊಳಗೆ ಇಲಾಖಾ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಿದೆ.

ವಿಚಾರಣೆ ವೇಳೆ ಹಾಜರಾಗಿದ್ದ ತನಿಖಾಧಿಕಾರಿಯನ್ನು ಪ್ರಶ್ನಿಸಿದ ನ್ಯಾಯಪೀಠ, ಯಾವ ಪ್ರಕರಣದಲ್ಲಿ ಬಂಧಿಸಬೇಕು, ಯಾವ ಪ್ರಕರಣದಲ್ಲಿ ಬಂಧಿಸಬಾರದು ಎಂಬ ಮೂಲಭೂತ ಅರಿವೂ ಇಲ್ಲವೇ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿತು.

ಇದಕ್ಕೆ ಉತ್ತರಿಸಿದ ತನಿಖಾಧಿಕಾರಿ, ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿತ್ತು. ಆದರೆ ಅರ್ಜಿದಾರರು ಹಾಜರಾಗಿರಲಿಲ್ಲ ಎಂದು ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ನಿಜವಾಗಿಯೂ ನೋಟಿಸ್ ನೀಡಲಾಗಿತ್ತೇ ಅಥವಾ ಕೇವಲ ದಾಖಲೆಗಾಗಿ ಸೃಷ್ಟಿಸಲಾಗಿತ್ತೇ ಎಂದು ಪ್ರಶ್ನಿಸಿತು.

ಐಪಿಸಿ ಸೆಕ್ಷನ್ 498ಎ ಅಡಿ ಪತ್ನಿ ದೂರು ನೀಡಿದ ತಕ್ಷಣ ಪತಿಯನ್ನು ಬಂಧಿಸಿ ಜೈಲಿಗೆ ಕಳುಹಿಸಬೇಕು ಎಂದು ಕಾನೂನಿನಲ್ಲಿ ಎಲ್ಲಿದೆ ಎಂದು ಪ್ರಶ್ನಿಸಿದ ನ್ಯಾಯಾಲಯ, ಪಾಲುದಾರಿಕೆ ಒಪ್ಪಂದದಲ್ಲಿ ಸಹಿ ನಕಲಿ ಮಾಡಿರುವ ಆರೋಪವಿದ್ದರೆ ಮಾತ್ರಕ್ಕೆ ಬಂಧಿಸುವುದು ನ್ಯಾಯಸಮ್ಮತವಲ್ಲ ಎಂದು ಅಭಿಪ್ರಾಯಪಟ್ಟಿತು.

“ಜೈಲಿಗೆ ಕಳುಹಿಸುವುದೆಂದರೆ ಆಟವಾಗಿಬಿಟ್ಟಿದೆಯೇ? ಅಪರಾಧ ಸಾಬೀತಾದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಿ. ಆದರೆ ಅಮಾಯಕರನ್ನು ವಿಚಾರಣೆ ನಡೆಸದೇ ಜೈಲಿಗೆ ಕಳುಹಿಸುವುದು ಅಧಿಕಾರ ದುರುಪಯೋಗ” ಎಂದು ನ್ಯಾಯಪೀಠ ಕಿಡಿಕಾರಿತು.

ಇತ್ತೀಚಿನ ದಿನಗಳಲ್ಲಿ ಪತ್ನಿಯರಿಂದ ದೂರು ಬಂದ ತಕ್ಷಣ ಪೊಲೀಸರು ಯಾವುದೇ ಪ್ರಾಥಮಿಕ ಪರಿಶೀಲನೆ ನಡೆಸದೆ ಪತಿಯನ್ನು ನೇರವಾಗಿ ಬಂಧಿಸುತ್ತಿದ್ದಾರೆ. ಕಾನೂನು ಪ್ರಕ್ರಿಯೆ ಪಾಲಿಸದೆ ನಾಗರಿಕರ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವುದು ಒಪ್ಪಲಾಗದು ಎಂದು ನ್ಯಾಯಾಲಯ ಹೇಳಿದೆ.

ಇದೇ ವೇಳೆ, “ಪೊಲೀಸರು ಎಂದರೆ ಏನು ಬೇಕಾದರೂ ಮಾಡಬಹುದು ಎಂದುಕೊಂಡಿದ್ದೀರಾ? ನಿಮ್ಮ ವಿರುದ್ಧ ಇಲಾಖಾ ತನಿಖೆಗೆ ಆದೇಶಿಸಲಾಗುವುದು. ಈ ಬಂಧನದಿಂದ ಅರ್ಜಿದಾರರಿಗೆ ಉಂಟಾದ ಹಾನಿಗೆ ಒಂದು ಲಕ್ಷ ರೂಪಾಯಿ ನಿಮ್ಮ ವೈಯಕ್ತಿಕ ಜೇಬಿನಿಂದಲೇ ಪಾವತಿಸುವ ಪರಿಸ್ಥಿತಿ ಬರಬಹುದು” ಎಂದು ನ್ಯಾಯಪೀಠ ಮೌಖಿಕವಾಗಿ ಎಚ್ಚರಿಕೆ ನೀಡಿತು.

ಪತ್ನಿಯಿಂದ ದೈಹಿಕ ಅಥವಾ ವರದಕ್ಷಿಣೆ ಕಿರುಕುಳದ ಆರೋಪವಿಲ್ಲದಿದ್ದರೂ, ಕೇವಲ ಪಾಲುದಾರಿಕೆ ಒಪ್ಪಂದದಲ್ಲಿ ಸಹಿ ನಕಲಿ ಮಾಡಿದ ಆರೋಪಕ್ಕೆ ಜೈಲಿಗೆ ಕಳುಹಿಸಿರುವುದು ಸರಿಯಲ್ಲ. ಪತ್ನಿ ಪ್ರಭಾವಿ ವ್ಯಕ್ತಿಯಾಗಿರುವ ಕಾರಣಕ್ಕೆ ಪತಿಯನ್ನು ಬಂಧಿಸಲಾಗಿದೆ ಎಂಬ ಅನುಮಾನ ಮೂಡುತ್ತದೆ. ಬಂಧನಕ್ಕೂ ಮುನ್ನವೇ ನೋಟಿಸ್ ನೀಡಿರುವಂತೆ ದಾಖಲೆ ಸೃಷ್ಟಿಸಿರುವುದು ನಾಗರಿಕರ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ನ್ಯಾಯಾಲಯ ಆಕ್ರೋಶ ವ್ಯಕ್ತಪಡಿಸಿತು.

ಅರ್ಜಿದಾರರು ಈ ಹಿಂದೆ ಒಂದು ಪ್ರಕರಣದಲ್ಲಿ ಜೈಲಿಗೆ ಹೋಗಿದ್ದರು ಎಂಬ ಕಾರಣಕ್ಕೆ ಮತ್ತೆ ಜೈಲಿಗೆ ಕಳುಹಿಸಬೇಕು ಎನ್ನುವ ಮನೋಭಾವ ಸರಿಯಲ್ಲ. ಒಮ್ಮೆ ಜೈಲು ಸೇರಿದ್ದರೆ ಜೀವನಪೂರ್ತಿ ಅಲ್ಲೇ ಇರಬೇಕೆಂಬ ಕಾನೂನು ಇಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿತು.

ದೂರು ದಾಖಲಾಗಿ ಐದು ತಿಂಗಳಾದ ಬಳಿಕ ಬಂಧಿಸಿರುವುದು, ಮೂರು ತಿಂಗಳು ಯಾವುದೇ ತನಿಖೆ ನಡೆಸದೆ ಇದ್ದದ್ದು ಹಾಗೂ ತನಿಖಾಧಿಕಾರಿ ಬದಲಾದ ತಕ್ಷಣ ನೋಟಿಸ್ ನೀಡಿ ತನಿಖೆಗೆ ಸಹಕರಿಸಿಲ್ಲ ಎಂಬ ನೆಪದಲ್ಲಿ ಬಂಧಿಸಿರುವುದು ಕಾನೂನುಬಾಹಿರ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಬಂಧನಕ್ಕೆ ಅನುಮತಿ ನೀಡುವ ವೇಳೆ ಮ್ಯಾಜಿಸ್ಟ್ರೇಟ್ ಕೂಡ ಸೂಕ್ತ ವಿವೇಚನೆ ಬಳಸಿಲ್ಲ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ.

ಪ್ರಕರಣದ ಹಿನ್ನೆಲೆ

ಸುಮಾರು 12 ವರ್ಷಗಳ ಹಿಂದೆ ರಾಮಕೃಷ್ಣಂ ಹಾಗೂ ದೂರುದಾರರ ವಿವಾಹವಾಗಿತ್ತು. ಬಳಿಕ ದಂಪತಿ ನಡುವೆ ವರದಕ್ಷಿಣೆ ಕಿರುಕುಳ ಹಾಗೂ ವಿಚ್ಛೇದನಕ್ಕೆ ಸಂಬಂಧಿಸಿದ ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿವೆ. ಇದೇ ವೇಳೆ ಪತಿ ತನ್ನ ಸಹಿಯನ್ನು ನಕಲು ಮಾಡಿ ಬ್ಯಾಂಕ್ ಚಾಲ್ತಿ ಖಾತೆ ತೆರೆದಿದ್ದಾರೆ ಎಂದು ಪತ್ನಿ ದೂರು ನೀಡಿದ್ದರು.

ನಂತರ ತನಿಖಾಧಿಕಾರಿ ಬದಲಾದ ಬಳಿಕ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿಎನ್‌ಎಸ್‌ಎಸ್) ಸೆಕ್ಷನ್ 35ರ ಅಡಿಯಲ್ಲಿ ಪೊಲೀಸರು ಅರ್ಜಿದಾರರನ್ನು ಬಂಧಿಸಿದ್ದರು. ಇದೀಗ ಈ ಬಂಧನವನ್ನು ಪ್ರಶ್ನಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ಬಂಧನ ಕ್ರಮವನ್ನು ಪ್ರಶ್ನಿಸಿ ಅರ್ಜಿದಾರರ ಬಿಡುಗಡೆಗೆ ಆದೇಶಿಸಿದೆ.

ಕೋತಿಗಳ ದಾಳಿಗೆ ಬೆಚ್ಚಿಬಿದ್ದ ನವವಿವಾಹಿತೆ ಬೆಟ್ಟದಿಂದ ಬಿದ್ದು ಸಾವು: ಪತಿಯ ಕಣ್ಣೆದುರೇ ದುರಂತ

0

ತೂತುಕುಡಿ: ತಮಿಳುನಾಡಿನ ತೂತುಕುಡಿ ಜಿಲ್ಲೆಯ ಕಜುಗುಮಲೈನಲ್ಲಿ ಕೋತಿಗಳ ಹಿಂಡಿನಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ನವವಿವಾಹಿತೆಯೊಬ್ಬರು ಬೆಟ್ಟದ ತುದಿಯಿಂದ ಕಂದಕಕ್ಕೆ ಬಿದ್ದು ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಶನಿವಾರ ನಡೆದಿದೆ.

ದಕ್ಷಿಣ ತಿಟ್ಟಂಕುಳಂ ನಿವಾಸಿ ಅನಿತಾ ಮೃತ ದುರ್ದೈವಿ. ಕಳೆದ ತಿಂಗಳಷ್ಟೇ ವಿದೇಶದಲ್ಲಿ ಉದ್ಯೋಗದಲ್ಲಿರುವ ಸುರೇಶ್ (29) ಅವರೊಂದಿಗೆ ವಿವಾಹವಾಗಿದ್ದ ಅವರು, ಪತಿಯೊಂದಿಗೆ ವಿಶೇಷ ಪೂಜೆ ಸಲ್ಲಿಸಲು ಕಜುಗುಮಲೈನ ಪ್ರಸಿದ್ಧ ಕಲುಗಸಲಮೂರ್ತಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರು.

ಮುಖ್ಯ ದೇವಸ್ಥಾನದಲ್ಲಿ ಪೂಜೆ ಮುಗಿಸಿದ ಬಳಿಕ ದಂಪತಿ ಬೆಟ್ಟದ ಮೇಲಿರುವ ಉಚಿಪಿಳ್ಳಯಾರ್ ದೇವಸ್ಥಾನಕ್ಕೆ ತೆರಳಿದ್ದರು. ಈ ವೇಳೆ ಅಲ್ಲಿದ್ದ ಕೋತಿಗಳಿಗೆ ಹಣ್ಣು ನೀಡಲು ಮುಂದಾಗಿದ್ದರು. ಹಣ್ಣುಗಳಿಗಾಗಿ ಏಕಾಏಕಿ ಹತ್ತಾರು ಕೋತಿಗಳು ಅನಿತಾ ಅವರನ್ನು ಸುತ್ತುವರೆದಿದ್ದು, ಭಯಗೊಂಡ ಅವರು ಹಿಂದೆ ಸರಿಯುವಾಗ ಕಾಲು ಜಾರಿ ಬೆಟ್ಟದ ತುದಿಯಿಂದ ಆಳವಾದ ಕಂದಕಕ್ಕೆ ಬಿದ್ದಿದ್ದಾರೆ.

ತೀವ್ರವಾಗಿ ಗಾಯಗೊಂಡ ಅನಿತಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಪತ್ನಿ ಕಣ್ಣೆದುರೇ ಕಂದಕಕ್ಕೆ ಬಿದ್ದು ಸಾವನ್ನಪ್ಪಿದ್ದನ್ನು ಕಂಡ ಪತಿ ಸುರೇಶ್ ಆಘಾತಕ್ಕೊಳಗಾಗಿದ್ದು, ಸ್ಥಳದಲ್ಲಿ ಅವರ ಆಕ್ರಂದನ ಮುಗಿಲು ಮುಟ್ಟಿದೆ.

ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಕಜುಗುಮಲೈ ಅಗ್ನಿಶಾಮಕ ದಳ ಹಾಗೂ ಪೊಲೀಸರು ಮೃತದೇಹವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಘಟನೆಯ ಕುರಿತು ತನಿಖೆ ಮುಂದುವರಿಸಿದ್ದಾರೆ.