ಹುಬ್ಬಳ್ಳಿ, ಜೂನ್ 9: ಡೀಸೆಲ್ ದರ ಏರಿಕೆಯಿಂದ ಪ್ರತಿ ತಿಂಗಳು ಸುಮಾರು 4 ಕೋಟಿ ರೂ. ನಷ್ಟ ಅನುಭವಿಸುತ್ತಿರುವ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ಈಗ ಮತ್ತೊಂದು ಗಂಭೀರ ಬಿಕ್ಕಟ್ಟು ಎದುರಾಗಿದೆ. ಬಸ್ಗಳ ಬಿಡಿಭಾಗಗಳ ಬೆಲೆ ಗಗನಕ್ಕೇರಿರುವುದು ಹಾಗೂ ಪೂರೈಕೆ ಸಂಪೂರ್ಣ ಸ್ಥಗಿತಗೊಂಡಿರುವುದು ನಿಗಮದ ದೈನಂದಿನ ಕಾರ್ಯಾಚರಣೆಯನ್ನು ತೀವ್ರವಾಗಿ ಅಸ್ತವ್ಯಸ್ತಗೊಳಿಸಿದೆ.
ಸಾರಿಗೆ ಸಂಸ್ಥೆಯ ಅಡಿಯಲ್ಲಿ ಸುಮಾರು 5000ಕ್ಕೂ ಹೆಚ್ಚು ಬಸ್ಗಳು ಕಾರ್ಯನಿರ್ವಹಿಸುತ್ತಿದ್ದು, ಅವುಗಳ ನಿರ್ವಹಣೆಗೆ ಪ್ರತಿ ತಿಂಗಳು ಸುಮಾರು 8 ಕೋಟಿ ರೂ. ಬಿಡಿಭಾಗಗಳಿಗೆ ಖರ್ಚಾಗುತ್ತಿತ್ತು. ಆದರೆ ಇದೀಗ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ವಸ್ತುಗಳ ಬೆಲೆ ಏರಿಕೆಯ ನೆಪವೊಡ್ಡಿ ಟೆಂಡರ್ದಾರರು ಹಳೆಯ ಒಪ್ಪಂದದ ದರದಲ್ಲಿ ಟೈರ್, ನಟ್-ಬೋಲ್ಟ್, ಸ್ಟೀಲ್ ಹಾಗೂ ಮಾಲಿನ್ಯ ನಿಯಂತ್ರಣದ ‘ಆಡ್ ಬ್ಲೂ’ ಪೂರೈಕೆಯನ್ನು ನಿಲ್ಲಿಸಿದ್ದಾರೆ.
ದರ ಪರಿಷ್ಕರಣೆ ಬೇಡಿಕೆಯನ್ನು ಮುಂದಿಟ್ಟಿರುವ ಪೂರೈಕೆದಾರರು ಹೊಸ ದರ ನೀಡದ ಹೊರತು ಸರಬರಾಜು ಮುಂದುವರಿಸುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಇದರ ಪರಿಣಾಮವಾಗಿ ಬಿಡಿಭಾಗಗಳ ಪೂರೈಕೆ ಸಂಪೂರ್ಣವಾಗಿ ಸ್ಥಗಿತಗೊಂಡಿದ್ದು, ಗ್ಯಾರೇಜ್ಗಳಲ್ಲಿ ಬಸ್ ರಿಪೇರಿ ಕಾರ್ಯ ವಿಳಂಬವಾಗುತ್ತಿದೆ.
ವಾಯುವ್ಯ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಪ್ರಿಯಾಂಕಾ ಎಂ. ಅವರ ಪ್ರಕಾರ, ಹಳೆಯ ದರಕ್ಕೆ ವಸ್ತುಗಳನ್ನು ನೀಡಲು ಪೂರೈಕೆದಾರರು ಒಪ್ಪುತ್ತಿಲ್ಲ. ಅವರನ್ನು ಮನವೊಲಿಸಿ ಅಗತ್ಯ ಬಿಡಿಭಾಗಗಳನ್ನು ಪಡೆಯುವುದು ದೊಡ್ಡ ಸವಾಲಾಗಿ ಪರಿಣಮಿಸಿದೆ.
ಶಕ್ತಿ ಯೋಜನೆಯಿಂದ ಬಸ್ಗಳ ಸಂಚಾರ ಹೆಚ್ಚಾದ ಹಿನ್ನೆಲೆಯಲ್ಲಿ ತಾಂತ್ರಿಕ ದೋಷಗಳ ಪ್ರಮಾಣವೂ ಹೆಚ್ಚಾಗಿದೆ. ಆದರೆ ರಿಪೇರಿಗೆ ಅಗತ್ಯವಾದ ಬಿಡಿಭಾಗಗಳ ಕೊರತೆಯಿಂದಾಗಿ ಬಸ್ಗಳು ಮಾರ್ಗ ಮಧ್ಯದಲ್ಲೇ ಕೆಟ್ಟು ನಿಲ್ಲುವ ಅಪಾಯ ಎದುರಾಗಿದೆ. ಆದಾಯ ಸ್ಥಿರವಾಗಿದ್ದರೂ ಖರ್ಚು ಹೆಚ್ಚುತ್ತಿರುವುದು ನಿಗಮವನ್ನು ಆರ್ಥಿಕ ಒತ್ತಡಕ್ಕೆ ತಳ್ಳಿದೆ.

