Home Blog

ಅಡಕೆ ತೋಟದಲ್ಲಿ ಉಪನ್ಯಾಸಕನ ಶವ ಬೆಂಕಿಯಲ್ಲಿ ಹೊತ್ತಿ ಉರಿಯುತ್ತಿರುವ ಸ್ಥಿತಿಯಲ್ಲಿ ಪತ್ತೆ! ಸಾವಿನ ಸುತ್ತ ಅನುಮಾನಗಳ ಹುತ್ತ

0

ಶಿವಮೊಗ್ಗ: ಖಾಸಗಿ ಕಾಲೇಜಿನ ಉಪನ್ಯಾಸಕರೊಬ್ಬರ ಮೃತದೇಹ ಬೆಂಕಿಯಲ್ಲಿ ಹೊತ್ತಿ ಉರಿಯುತ್ತಿದ್ದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಭದ್ರಾವತಿ ತಾಲೂಕಿನ ಹನುಮಂತಾಪುರ ಗ್ರಾಮದ ಅಡಕೆ ತೋಟವೊಂದರಲ್ಲಿ ಜರುಗಿದೆ.

58 ವರ್ಷದ ಸುರೇಶ್ ಅನುಮಾನಾಸ್ಪದ ಸ್ಥಿತಿಯಲ್ಲಿ ಮೃತಪಟ್ಟ ಉಪನ್ಯಾಸಕ. ಸುರೇಶ್ ಅವರು, ಶಿವಮೊಗ್ಗದ ಖಾಸಗಿ ಕಾಲೇಜೊಂದರಲ್ಲಿ ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದರು. ಅವರ ತೋಟದಲ್ಲೇ ಶವ ಬೆಂಕಿ ಹೊತ್ತಿ ಉರಿಯುತ್ತಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅಕ್ಕಪಕ್ಕದ ತೋಟದವರು ಬೆಂಕಿಯಲ್ಲಿ ದೇಹ ಉರಿಯುತ್ತಿರುವುದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಹೊಳೆಹೊನ್ನೂರು ಠಾಣೆ ಪೊಲೀಸರು ಬೆಂಕಿ ನಂದಿಸಿದ್ದಾರೆ. ಅಷ್ಟರಲ್ಲಾಗಲೇ ಮೃತದೇಹ ಭಾಗಶಃ ಸುಟ್ಟು ಕರಕಲಾಗಿತ್ತು.

ಸ್ಥಳಕ್ಕೆ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣದ ಸುತ್ತ ಸಂಪೂರ್ಣ ನಿಗೂಢತೆ ಆವರಿಸಿದ್ದು, ಆತ್ಮಹತ್ಯೆಯೋ? ಕೊಲೆಯೋ? ಎಂಬುದು ಪೊಲೀಸರ ತನಿಖೆಯ ನಂತರ ಸ್ಪಷ್ಟವಾಗಬೇಕಾಗಿದೆ.

ಶ್ರೀರಾಮನವಮಿ ಪ್ರಯುಕ್ತ ವಿತರಿಸಿದ ಪ್ರಸಾದ ತಿಂದು ಭಕ್ತರು ಅಸ್ವಸ್ಥ: ಆಸ್ಪತ್ರೆಗೆ ದಾಖಲು!

ದೇವನಹಳ್ಳಿ: ಶ್ರೀರಾಮನವಮಿ ಅಂಗವಾಗಿ ವಿತರಿಸಿದ ಅನ್ನಪ್ರಸಾದ ಸೇವಿಸಿದ ಭಕ್ತರು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ತಾಲೂಕಿನ ಬೆಟ್ಟೇನಹಳ್ಳಿ ಗ್ರಾಮದಲ್ಲಿ ಜರುಗಿದೆ.

ಮಾರ್ಚ್ 28ರ ಶನಿವಾರ, ದೇವಸ್ಥಾನದಲ್ಲಿ ನೀಡಿದ ಪ್ರಸಾದ ಸೇವಿಸಿದ ಬಳಿಕ ಹಲವರಿಗೆ ವಾಂತಿ, ಬೇಧಿ ಸಮಸ್ಯೆ ಕಾಣಿಸಿಕೊಂಡು ಬಹುತೇಕರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಪ್ರತಿವರ್ಷ ನಡೆಯುವಂತೆ ಈ ವರ್ಷವೂ ಅನ್ನಪ್ರಸಾದ ವಿತರಣೆ ಮಾಡಲಾಗಿತ್ತು. ಆದರೆ ಈ ಬಾರಿ ಪ್ರಸಾದ ಸೇವಿಸಿದ ಅನೇಕ ಭಕ್ತರು ಅಸ್ವಸ್ಥಗೊಂಡಿರುವುದು ಆತಂಕ ಮೂಡಿಸಿದೆ.

ಮುಂಜಾಗ್ರತಾ ಕ್ರಮವಾಗಿ ಆರೋಗ್ಯ ಸಿಬ್ಬಂದಿ ಗ್ರಾಮದಲ್ಲೇ ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ. ತೀವ್ರ ಅಸ್ವಸ್ಥರಾದವರನ್ನು ಆಂಬುಲೆನ್ಸ್ ಮೂಲಕ ಸಮೀಪದ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಕೊಡಲಾಗಿದೆ ಎಂದು ತಿಳಿದು ಬಂದಿದೆ.

ಒಂದೆಡೆ 1.28 ಕೋಟಿ ಆನ್‌ಲೈನ್ ವಂಚನೆ, ಮತ್ತೊಂದೆಡೆ ಸರಣಿ ಕಳ್ಳತನ: ರಾಜ್ಯದಲ್ಲಿ ಅಪರಾಧಗಳ ಅಬ್ಬರ!

ಚಿಕ್ಕಮಗಳೂರು/ಬೆಂಗಳೂರು: ರಾಜ್ಯದ ವಿವಿಧ ಭಾಗಗಳಲ್ಲಿ ಸೈಬರ್ ವಂಚನೆ ಮತ್ತು ಮನೆಗಳ್ಳತನ ಪ್ರಕರಣಗಳು ಹೆಚ್ಚುತ್ತಿರುವ ಆತಂಕಕಾರಿ ಚಿತ್ರಣ ಬೆಳಕಿಗೆ ಬಂದಿದೆ. ಒಂದೆಡೆ ಆನ್‌ಲೈನ್ ಟ್ರೇಡಿಂಗ್ ಹೆಸರಿನಲ್ಲಿ ಕೋಟಿ ಕೋಟಿ ವಂಚನೆ ನಡೆದಿದ್ದರೆ, ಮತ್ತೊಂದೆಡೆ ಸರಣಿ ಮನೆ ಕಳ್ಳತನ ಪ್ರಕರಣಗಳು ಜನರಲ್ಲಿ ಭಯ ಹುಟ್ಟಿಸಿವೆ.

ಚಿಕ್ಕಮಗಳೂರಿನಲ್ಲಿ ಕಡೂರು ತಾಲೂಕಿನ ಶಿವಪುರ ಗ್ರಾಮದ ನಿವಾಸಿ ಕಲ್ಲೇಗೌಡ ಅವರು ಫೇಸ್ಬುಕ್ ಜಾಹೀರಾತಿಗೆ ಮೋಸ ಹೋಗಿ ₹1.28 ಕೋಟಿ ಕಳೆದುಕೊಂಡಿದ್ದಾರೆ. ‘FYERS’ ಟ್ರೇಡಿಂಗ್ ಹೆಸರಿನಲ್ಲಿ ವಂಚಕರು ವಾಟ್ಸಾಪ್ ಗುಂಪಿನ ಮೂಲಕ ಹೆಚ್ಚಿನ ಲಾಭದ ಭರವಸೆ ನೀಡಿ ಹಣ ಪಡೆದು, ನಂತರ ಯಾವುದೇ ಲಾಭ ನೀಡದೇ ವಂಚನೆ ನಡೆಸಿದ್ದಾರೆ. ಈ ಸಂಬಂಧ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಇದರ ನಡುವೆಯೇ, ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ತಡರಾತ್ರಿ ಎರಡು ಕಡೆ ಮನೆಗಳ್ಳತನ ನಡೆದಿದೆ. ಮೊದಲಿಗೆ ರಾಮನಗರದ ಭುವನೇಶ್ವರಿನಗರದಲ್ಲಿ ನಂಜುಂಡಯ್ಯ ಅವರ ಮನೆಯಲ್ಲಿ 68 ಗ್ರಾಂ ಚಿನ್ನಾಭರಣ ಕಳ್ಳತನ ಮಾಡಲಾಗಿದೆ.

ನಂತರ ಚನ್ನಪಟ್ಟಣ ತಾಲೂಕಿನ ಅಪ್ಪಗೆರೆ ಗ್ರಾಮದಲ್ಲಿ ವಕೀಲ ಪ್ರವೀಣ್ ಅವರ ಮನೆಯನ್ನು ಗುರಿಯಾಗಿಸಿಕೊಂಡು ಬಂದ ಖದೀಮರು 240 ಗ್ರಾಂ ಚಿನ್ನ, 1 ಕೆಜಿ ಬೆಳ್ಳಿ ಹಾಗೂ ₹20 ಲಕ್ಷ ನಗದು ದೋಚಿ ಪರಾರಿಯಾಗಿದ್ದಾರೆ. ಬೈಕ್‌ನಲ್ಲಿ ಬಂದ ಇಬ್ಬರು ಆರೋಪಿಗಳು ಮುಖಕ್ಕೆ ಮಾಸ್ಕ್ ಹಾಗೂ ಕೈಗೆ ಗ್ಲೋವ್ಸ್ ಧರಿಸಿ ಕೃತ್ಯ ಎಸಗಿರುವುದು ಸಿಸಿಟಿವಿಯಲ್ಲಿ ಪತ್ತೆಯಾಗಿದೆ.

ಚನ್ನಪಟ್ಟಣ ಗ್ರಾಮಾಂತರ ಹಾಗೂ ಐಜೂರು ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಬಂಧನಕ್ಕೆ ಪೊಲೀಸರು ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಈ ಸರಣಿ ಘಟನೆಗಳು ರಾಜ್ಯದಲ್ಲಿ ಸೈಬರ್ ಅಪರಾಧ ಮತ್ತು ಆಸ್ತಿಯ ವಿರುದ್ಧದ ಅಪರಾಧಗಳು ಹೆಚ್ಚುತ್ತಿರುವುದಕ್ಕೆ ಸಾಕ್ಷಿಯಾಗಿದೆ. ಜನರು ಆನ್‌ಲೈನ್ ವ್ಯವಹಾರಗಳಲ್ಲಿ ಮತ್ತು ಮನೆ ಭದ್ರತೆಯಲ್ಲಿ ಹೆಚ್ಚಿನ ಎಚ್ಚರಿಕೆ ವಹಿಸುವ ಅಗತ್ಯವಿದೆ.

ಚಾಕೊಲೇಟ್‌ ಕದ್ದಳೆಂದು 12 ವರ್ಷದ ಮಗಳನ್ನು ಕೋಲಿನಿಂದ ಹೊಡೆದು ಕೊಂದ ತಂದೆ

ಬುಲಂದ್ಶಹರ್: ಅಪ್ರಾಪ್ತ ಮಕ್ಕಳ ಮೇಲಿನ ಹಿಂಸಾಚಾರ ಮತ್ತೊಮ್ಮೆ ದೇಶವನ್ನೇ ಬೆಚ್ಚಿಬೀಳಿಸಿದೆ. ಉತ್ತರ ಪ್ರದೇಶದ ಬುಲಂದ್ಶಹರ್‌ನಲ್ಲಿ ಚಾಕೊಲೇಟ್ ಕಳ್ಳತನದ ಅನುಮಾನದಲ್ಲಿ ತಂದೆಯೊಬ್ಬ ತನ್ನ ಮಗಳನ್ನು ಹೊಡೆದು ಕೊಂದಿರುವ ಘಟನೆ ಬೆಳಕಿಗೆ ಬಂದಿದೆ.

ನರೋರಾದ ರತನ್‌ಪುರ ಗ್ರಾಮದಲ್ಲಿ ನಡೆದ ಈ ಪ್ರಕರಣದಲ್ಲಿ, ಪುಷ್ಪೇಂದ್ರ ತನ್ನ ಮಗಳು ಪೂಜಾಳ ಮೇಲೆ ಮದ್ಯದ ಪ್ರಭಾವದಲ್ಲೇ ಮರದ ಕೋಲಿನಿಂದ ನಿರ್ದಯವಾಗಿ ಹಲ್ಲೆ ನಡೆಸಿದ್ದಾನೆ. ಅಂಗಡಿಯವನ ಆರೋಪದಿಂದ ಉಂಟಾದ ಕೋಪವೇ ಈ ದುರಂತಕ್ಕೆ ಕಾರಣವಾಗಿದ್ದು, ತಾಯಿ ಮಧ್ಯಪ್ರವೇಶಿಸಿದರೂ ಹಲ್ಲೆ ನಿಲ್ಲಿಸಲಿಲ್ಲ ಎಂದು ಪೊಲೀಸ್ ವರದಿಗಳು ತಿಳಿಸಿವೆ.

ಹಲ್ಲೆಯಿಂದ ತಲೆಗೆ ಗಂಭೀರ ಗಾಯಗೊಂಡ ಬಾಲಕಿ ಪ್ರಜ್ಞಾಹೀನಳಾಗಿದ್ದಳು. ಆದರೆ, ಸಹಾಯ ಮಾಡುವ ಬದಲು ಆರೋಪಿಯು ಸ್ಥಳದಿಂದ ಪರಾರಿಯಾಗಿದ್ದು, ಪತ್ನಿಯನ್ನು ಮನೆಯೊಳಗೆ ಕೂಡಿ ಹಾಕಿದ ಆರೋಪವೂ ಕೇಳಿಬಂದಿದೆ. ನೆರೆಹೊರೆಯವರು ಆಸ್ಪತ್ರೆಗೆ ಕರೆದೊಯ್ದಾಗ, ವೈದ್ಯರು ಆಕೆಯನ್ನು ಮೃತಳಾಗಿ ಘೋಷಿಸಿದರು. ಮರಣೋತ್ತರ ವರದಿಯಲ್ಲಿ 10–12 ಗಾಯಗಳ ಗುರುತುಗಳು ಪತ್ತೆಯಾಗಿವೆ.

ಇದೇ ರೀತಿಯ ಮತ್ತೊಂದು ಬೆಚ್ಚಿಬೀಳಿಸುವ ಘಟನೆ ಇತ್ತೀಚೆಗೆ ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ನಡೆದಿತ್ತು. ದಾದು ಹೈಬತ್ ಯಮ್ಗರ್ ಎಂಬಾತ ತನ್ನ ಇಬ್ಬರು ಅಪ್ರಾಪ್ತ ಹೆಣ್ಣುಮಕ್ಕಳನ್ನು ಕಳ್ಳತನದ ಅನುಮಾನದಲ್ಲಿ ಕಟ್ಟಿಹಾಕಿ ತಲೆಕೆಳಗಾಗಿ ನೇತುಹಾಕಿ ಹಿಂಸಿಸಿದ್ದ. ಈ ಘಟನೆಯಲ್ಲಿ 10 ವರ್ಷದ ಸಾನಿಕಾ ಸಾವನ್ನಪ್ಪಿದ್ದಳು, ಮತ್ತೊಬ್ಬಳು ಗಂಭೀರ ಸ್ಥಿತಿಗೆ ತಲುಪಿದ್ದಳು.

ಈ ಎರಡು ಘಟನೆಗಳು ಸಮಾಜದಲ್ಲಿ ಹೆಚ್ಚುತ್ತಿರುವ ಪೋಷಕರ ಕ್ರೂರತೆ ಮತ್ತು ಮಕ್ಕಳ ಮೇಲಿನ ಹಿಂಸಾಚಾರದ ಭಯಾನಕ ಚಿತ್ರಣವನ್ನು ಬಯಲಿಗೆಳೆಯುತ್ತಿವೆ. ಮಕ್ಕಳ ರಕ್ಷಣೆಗೆ ಕಠಿಣ ಕಾನೂನುಗಳ ಜಾರಿಗೆ ಒತ್ತಾಯಗಳು ಕೇಳಿಬರುತ್ತಿವೆ.

ಭಾರತ ನಮ್ಮ ಮೊದಲ ಶತ್ರು ಎಂದಿದ್ದ ಪಾಕ್‌ ಮಾಜಿ ಸೇನಾ ಮುಖ್ಯಸ್ಥ ಬಾಜ್ವಾ ಸಾವು!

0

ಇಸ್ಲಾಮಾಬಾದ್: ಕಳೆದ ಫೆಬ್ರವರಿಯಲ್ಲಿ ಸ್ನಾನಗೃಹದಲ್ಲಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಪಾಕಿಸ್ತಾನದ ಮಾಜಿ ಸೇನಾ ಮುಖ್ಯಸ್ಥ ಜನರಲ್ ಜಾವೇದ್ ಬಾಜ್ವಾ ಇದೀಗ ನಿಧನರಾಗಿದ್ದಾರೆ.

ಗಾಯಗೊಂಡಿದ್ದ ಅವರು ರಾವಲ್ಪಿಂಡಿ ಮಿಲಿಟರಿ ಆಸ್ಪತ್ರೆಯ ತೀವ್ರಾ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇದೀಗ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.

ಶಕ್ತಿಶಾಲಿ ಸೇನಾ ನಾಯಕರಲ್ಲೊಬ್ಬರಾಗಿ ಗುರುತಿಸಿಕೊಂಡಿದ್ದ ಬಾಜ್ವಾ, 2016 ನವೆಂಬರ್ ರಿಂದ 2022 ನವೆಂಬರ್ ರವರೆಗೆ ಸೇನಾ ಮುಖ್ಯಸ್ಥರಾಗಿದ್ದರು. ಈ ಅವಧಿಯಲ್ಲೇ ಭಾರತ ಬಾಲಕೋಟ್ ಮೇಲೆ ಏರ್‌ಸ್ಟ್ರೈಕ್ ನಡೆಯಿತು. ಆಗ ಬಜ್ವಾ ತಮ್ಮ ಸಾರ್ವಜನಿಕ ಭಾಷಣದಲ್ಲಿ ಭಾರತ ನಮ್ಮ ಪ್ರಮುಖ ಶತ್ರು ಎಂದು ಹೇಳಿದ್ದರು.

ನಿವೃತ್ತಿ ನಂತರ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ, ಸಂಪನ್ಮೂಲ ಮತ್ತು ಇಂಧನ ಕೊರತೆಯಿಂದ ಪಾಕಿಸ್ತಾನ ಭಾರತ ವಿರುದ್ಧ ಯುದ್ಧ ಮಾಡುವ ಸ್ಥಿತಿಯಲ್ಲಿಲ್ಲ ಎಂದು ಹೇಳಿದ್ದರು.

ಹೋಟೆಲ್ ಗಳಲ್ಲಿ ಸಿಲಿಂಡರ್ ಅಭಾವ: ಭಾನುವಾರದ ಬಾಡೂಟಕ್ಕೆ ಹೊಸ ಕಿಚನ್ ಸೆಟ್ ಆಪ್!

ಬೆಂಗಳೂರು: ರಾಜ್ಯದಲ್ಲಿ ಕಮರ್ಷಿಯಲ್ ಸಿಲಿಂಡರ್ ಕೊರತೆ ಹೆಚ್ಚಾಗಿದ್ದು, ಬೆಂಗಳೂರಿನ ಹೋಟೆಲ್‌ಗಳಲ್ಲಿ ಗ್ಯಾಸ್ ಸಮಸ್ಯೆ ತೀವ್ರವಾಗಿದೆ.

ಸಂಡೇ-ಸಂಡೇ ಬಾಡೂಟಕ್ಕಾಗಿ ಅಡುಗೆ ತಯಾರಿಸುವ ಹೋಟೆಲ್‌ ಸಿಬ್ಬಂದಿ ಹೊಸ ಕಿಚನ್ ಸೆಟ್ ಮತ್ತು ಪರ್ಯಾಯ ವ್ಯವಸ್ಥೆಗಳನ್ನು ಬಳಸಿ ಗ್ರಾಹಕರಿಗೆ ಸೇವೆ ನೀಡುತ್ತಿದ್ದಾರೆ.

ಯಶವಂತಪುರದ ಹೋಟೆಲ್ ಆಸರೆಯಲ್ಲಿ ಹೊಸ ಕಿಚನ್ ಸೆಟ್‌ ಆಪ್ ಮಾಡಿ ತಯಾರಿ ಮಾಡಲಾಗಿದೆ, ಮಹಾಲಕ್ಷ್ಮಿ ಲೇಔಟ್ ಆದಿತ್ಯ ಹೋಟೆಲ್‌ಗೂ ಸಿಲಿಂಡರ್ ಸಮಸ್ಯೆ ಎದುರಾಗಿದೆ. ಹೋಟೆಲ್ ಮಾಲೀಕರು ಸೌದೆ ಒಲೆ, ಎಲೆಕ್ಟ್ರಿಕ್ ಸ್ಟೌ ಬಳಸಿ ಖಾದ್ಯಗಳ ತಯಾರಿಯನ್ನು ಮುಂದುವರಿಸುತ್ತಿದ್ದಾರೆ. ರಾಜಾಜಿನಗರದ ರಾಜಣ್ಣ ಮಿಲಿಟರಿ ಹೋಟೆಲ್‌ನಲ್ಲಿಯೂ ಗ್ಯಾಸ್ ಸಿಲಿಂಡರ್ ಗೋಳು ಇನ್ನೂ ಮುಂದುವರಿದಿದೆ..

ಅಡುಗೆ ಅನಿಲದ ಕೊರತೆಯಿಂದ ಕೆಲ ಹೋಟೆಲ್‌ಗಳು ತಾತ್ಕಾಲಿಕ ಬಂದ್: KH ಮುನಿಯಪ್ಪ

ಬೆಂಗಳೂರು: ಹಳ್ಳಿಗಳಲ್ಲಿ ಗೃಹ ಬಳಕೆಯವರಿಗೆ 45 ದಿನಕ್ಕೆ 1 ಸಿಲಿಂಡರ್ ಕೊಡಲಾಗುತ್ತಿದೆ ಎಂದು ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಸಚಿವ KH ಮುನಿಯಪ್ಪ ಹೇಳಿದ್ದಾರೆ.

ಈ ಸಂಬಂಧ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಹೋಟೆಲ್‌ಗಳಿಗೆ ಹೆಚ್ಚುವರಿ ಅಡುಗೆ ಅನಿಲ ನೀಡುವ ವಿಚಾರ ಮಂಗಳವಾರ ನಡೆಯುವ ಸಭೆಯಲ್ಲಿ ಚರ್ಚೆ ನಡೆಯಲಿದೆ. ಅಡುಗೆ ಅನಿಲದ ಕೊರತೆಯಿಂದ ಕೆಲ ಹೋಟೆಲ್‌ಗಳು ತಾತ್ಕಾಲಿಕವಾಗಿ ಬಂದ್ ಆಗಿದೆ. ಹೋಟೆಲ್‌ಗಳಿಗೆ ಈಗಾಗಲೇ 20% ಪ್ರಮಾಣದಲ್ಲಿ ಅನಿಲ ಹಂಚಿಕೆ ಆಗುತ್ತಿದೆ, ಹಾಸ್ಪಿಟಲ್‌ಗಳಿಗೆ 100% ಲಭ್ಯವಾಗಿದೆ ಎಂದು ಸ್ಪಷ್ಟಪಡಿಸಿದರು. ಮಂಗಳವಾರ ನಿರ್ಧಾರಾತ್ಮಕ ಸಭೆ ನಡೆಯಲಿದ್ದು, ಅದರಲ್ಲಿ ಹೋಟೆಲ್‌ಗಳಿಗೆ ಹೆಚ್ಚುವರಿ ಸಿಲಿಂಡರ್‌ ನೀಡುವ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ಸಚಿವರು ಹೇಳಿದ್ದಾರೆ.

ಡೊಮೆಸ್ಟಿಕ್ ಗ್ರಾಹಕರಿಗೆ ನಗರದಲ್ಲಿ 25 ದಿನಕ್ಕೆ 1 ಸಿಲಿಂಡರ್, ಹಳ್ಳಿಗಳಲ್ಲಿ 45 ದಿನಕ್ಕೆ 1 ಸಿಲಿಂಡರ್ ನೀಡಲಾಗುತ್ತಿದೆ. ವಾಣಿಜ್ಯ ಸಿಲಿಂಡರ್‌ ಸಮಸ್ಯೆ ಪರಿಹರಿಸುವಂತೆ ನಿರ್ದೇಶನ ನೀಡಲಾಗಿದೆ. ಈ ಸಂದರ್ಭದಲ್ಲಿ, ಬಂಕ್‌ಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಹೆಚ್ಚಳದ ವಿಚಾರವೂ ಚರ್ಚೆಗೆ ಒಳಪಡಿಸಲಾಗಲಿದೆ ಎಂದು ಮಾಹಿತಿ ನೀಡಿದ್ದಾರೆ.

ಡಾ. ವಿಷ್ಣುವರ್ಧನ್ ರಸ್ತೆಯಲ್ಲಿ ಕಸದ ರಾಶಿ: ವಿಡಿಯೋ ಮಾಡಿ ಅಧಿಕಾರಿಗಳ ಗಮನ ಸೆಳೆದ ಅನಿರುದ್ಧ್ ಜತ್ಕರ್!

ಬೆಂಗಳೂರು: ನಟ ಅನಿರುದ್ಧ್ ಜತ್ಕರ್ ಕಳೆದ ಐದು ವರ್ಷಗಳಿಂದ “ಸ್ವಚ್ಛತೆಗಾಗಿ ನಾನೂ ಸಹಭಾಗಿ” ಅಭಿಯಾನ ನಡೆಸುತ್ತಿದ್ದಾರೆ.

ನಗರದಲ್ಲಿ ಎಲ್ಲೆಡೆ ಬಿದ್ದ ಕಸದ ರಾಶಿಗಳನ್ನು ಗಮನಿಸಿ, ಅಧಿಕಾರಿಗಳ ಗಮನಕ್ಕೆ ತರುವ ಮೂಲಕ ಸಮಸ್ಯೆ ಪರಿಹಾರಕ್ಕೆ ಮನವಿ ಮಾಡುತ್ತಾರೆ.

ಸಿನಿಮಾ ಮತ್ತು ಸೀರಿಯಲ್ ಕೆಲಸಗಳ ನಡುವೆ ತಮ್ಮ ಅಭಿಯಾನವನ್ನು ನಿರಂತರವಾಗಿ ಮುಂದುವರಿಸುತ್ತಿರುವ ಅವರು, ಬೆಂಗಳೂರಿನ ‘ಡಾ. ವಿಷ್ಣುವರ್ಧನ್ ರಸ್ತೆ’ಯಲ್ಲಿ ಬಿದ್ದ ಕಸದ ರಾಶಿಯ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಕಸ ಹಾಕಬಾರದು ಎಂಬ ಎಚ್ಚರಿಕೆ ಇರುವ ಸ್ಥಳದಲ್ಲಿಯೇ ಜನರು ಕಸ ಸುರಿಸುತ್ತಿರುವುದನ್ನು ಅನಿರುದ್ಧ್ ಟೀಕಿಸಿದ್ದಾರೆ.

ಈ ವಿಡಿಯೋ ವೈರಲ್ ಆದ ನಂತರ, ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಂಡಿದ್ದಾರೆ.

ಕೃಷಿ ಹೊಂಡದಲ್ಲಿ ಈಜಲು ಹೋದ ನಾಲ್ಕು ಮಕ್ಕಳು ಜಲಸಮಾಧಿ: ಮುಗಿಲು ಮುಟ್ಟಿದ ಪೋಷಕರ ಆಕ್ರಂದನ!

ಯಾದಗಿರಿ: ಜಿಲ್ಲೆಯ ಸುರಪುರ ತಾಲೂಕಿನ ನಗನೂರು ಗ್ರಾಮದಲ್ಲಿ ಕೃಷಿ ಹೊಂಡಕ್ಕೆ ಈಜಲು ಹೋಗಿದ್ದ ನಾಲ್ವರು ಮಕ್ಕಳು ದಾರುಣ ಅಂತ್ಯ ಕಂಡಿರುವ ಘಟನೆ ಜರುಗಿದೆ.

6 ವರ್ಷದ ಕಿರಣ್​​​, 11 ವರ್ಷದ ಬಸಮ್ಮ, 6 ವರ್ಷದ ಶರತ್, 7 ವರ್ಷದ ಹನುಮೇಶ್ ಮೃತರು. ಶಾಲೆಗೆ ರಜೆ ಇದ್ದಿದ್ದರಿಂದ ನಾಲ್ವರು ಮಕ್ಕಳು ಒಟ್ಟಾಗಿ ಈಜಲು ಹೋಗಿದ್ದರು ಎನ್ನಲಾಗಿದೆ. ಈ ವೇಳೆ ದುರಂತ ಸಂಭವಿಸಿದೆ.

ಮೃತ ಮಕ್ಕಳೆಲ್ಲರೂ ತೀರಾ ಚಿಕ್ಕ ವಯಸ್ಸಿನವರಾಗಿದ್ದು, ಗ್ರಾಮದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. ಕೆಂಭಾವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ದುರ್ಘಟನೆ ನಡೆದಿದೆ.

ಕೊಪ್ಪಳದಲ್ಲಿ ಪೆಟ್ರೋಲ್-ಡೀಸೆಲ್ ಅಭಾವ ವದಂತಿ: ಡ್ರಮ್, ಕ್ಯಾನ್‌ ಹಿಡಿದು ಬಂಕ್‌ಗಳಿಗೆ ಮುಗಿಬಿದ್ದ ಜನ!

ಕೊಪ್ಪಳ:- ಮಧ್ಯಪ್ರಾಚ್ಯ ಸಂಘರ್ಷದಿಂದ ಪೆಟ್ರೋಲ್-ಡೀಸೆಲ್ ಸಿಗಲ್ಲ ಎಂಬ ವದಂತಿ ಹರಿದಾಡ್ತಿದೆ.

ರಾಜ್ಯದ ಹಲವು ಜಿಲ್ಲೆಗಳಲ್ಲಿ ಬಂಕ್ ಗಳ ಮುಂದೆ ರಾತ್ರಿಯಿಡಿ ಕ್ಯೂ ನಿಂತು ಜನತೆ ಪೆಟ್ರೋಲ್ ಸ್ಟಾಕ್ ಮಾಡಿಕೊಳ್ತಿದ್ದಾರೆ. ಇದೀಗ ಕೊಪ್ಪಳದಲ್ಲಿಯೂ ಡ್ರಮ್, ಕ್ಯಾನ್ ಗಳಿಗೆ ಡೀಸೆಲ್, ಪೆಟ್ರೋಲ್ ಹಾಕಿಸಿಕೊಂಡು ಸ್ಟಾಕ್ ಮಾಡಲು ಮುಂದಾಗಿದ್ದಾರೆ.

ಗಂಗಾವತಿ ತಾಲ್ಲೂಕಿನ ಪೆಟ್ರೋಲ್ ಬಂಕ್‌ಗಳಿಗೆ ಜನರು ಡ್ರಮ್, ಕ್ಯಾನ್ ತಂದು, ಹೆಚ್ಚಿನ ಪ್ರಮಾಣದಲ್ಲಿ ಡಿಸೇಲ್ ತುಂಬಿಸಿಕೊಂಡಿದ್ದಾರೆ. ಪೆಟ್ರೋಲ್ ಸಿಬ್ಬಂದಿ ಯಾವುದೇ ಸಮಸ್ಯೆ ಇಲ್ಲ ಅಂತ ಹೇಳುತ್ತಿದ್ದರೂ ಜನ ಮಾತ್ರ ಅದಕ್ಕೆ ಕಿವಿಗೊಡದೆ ಪೆಟ್ರೋಲ್, ಡೀಸೆಲ್ ತುಂಬಿಸಿಕೊಳ್ಳುತ್ತಿದ್ದಾರೆ.

ಸ್ಥಳೀಯ ಅಧಿಕಾರಿಗಳು ಮತ್ತು ಪೆಟ್ರೋಲ್ ಬಂಕ್ ವ್ಯವಸ್ಥಾಪಕರು ಪರಿಸ್ಥಿತಿಯನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿದ್ದಾರೆ, ಜನರನ್ನು ಅಗತ್ಯಕ್ಕಿಂತ ಹೆಚ್ಚಾಗಿ ಸಂಗ್ರಹಿಸಿಕೊಳ್ಳಬೇಡಿ ಎಂದು ಎಚ್ಚರಿಸುತ್ತಿದ್ದಾರೆ.

error: Content is protected !!