Home Blog

ಬಾಲಿವುಡ್‌ನಲ್ಲಿ ಸಂಭ್ರಮದ ಸುದ್ದಿ: ದೀಪಿಕಾ-ರಣವೀರ್ ದಂಪತಿಯಿಂದ ಎರಡನೇ ಮಗುವಿನ ಘೋಷಣೆ

ಬಾಲಿವುಡ್‌ನ ಪವರ್ ಕಪಲ್ ದೀಪಿಕಾ ಪಡುಕೋಣೆ ಮತ್ತು ರಣವೀರ್‌ ಸಿಂಗ್‌ ತಮ್ಮ ಕುಟುಂಬದಲ್ಲಿ ಮತ್ತೊಂದು ಸದಸ್ಯರ ಆಗಮನದ ಸುಳಿವು ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ವಿಶೇಷ ಪೋಸ್ಟ್ ಮೂಲಕ ಈ ದಂಪತಿ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದೇವೆ ಎಂದು ತಿಳಿಸಿದ್ದಾರೆ.

ಹಂಚಿಕೊಂಡಿರುವ ಫೋಟೋದಲ್ಲಿ ಮಗಳು ದುವ ಕಾಣಿಸಿಕೊಂಡಿದ್ದು, ಈ ಕ್ರಿಯೇಟಿವ್ ಅನೌನ್ಸ್‌ಮೆಂಟ್ ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿದೆ. ಈ ಸುದ್ದಿ ಹೊರಬಂದ ತಕ್ಷಣವೇ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರ ಹರಿದುಬಂದಿದೆ.

2018ರಲ್ಲಿ ವಿವಾಹವಾದ ಈ ಜೋಡಿ, 2024ರಲ್ಲಿ ಮೊದಲ ಮಗುವಿಗೆ ಸ್ವಾಗತ ಕೋರಿತ್ತು. ಈಗ ಮತ್ತೆ ಪೋಷಕರಾಗುತ್ತಿರುವ ಸಂತೋಷದಲ್ಲಿ ತೇಲುತ್ತಿರುವ ದಂಪತಿ, ತಮ್ಮ ವೈಯಕ್ತಿಕ ಜೀವನದ ಈ ಹೊಸ ಅಧ್ಯಾಯವನ್ನು ಬಹಿರಂಗಪಡಿಸಿದ್ದಾರೆ.

ಇದಕ್ಕೂ ನಡುವೆ, ರಣವೀರ್ ಸಿಂಗ್ ತಮ್ಮ ಇತ್ತೀಚಿನ ಸಿನಿಮಾದ ಯಶಸ್ಸನ್ನು ಸವಿಯುತ್ತಿದ್ದು, ದೀಪಿಕಾ ಪಡುಕೋಣೆ ಮುಂದಿನ ದೊಡ್ಡ ಪ್ರಾಜೆಕ್ಟ್‌ಗಳತ್ತ ಗಮನ ಹರಿಸಿದ್ದಾರೆ. ವೈಯಕ್ತಿಕ ಮತ್ತು ವೃತ್ತಿ ಜೀವನದ ಸಮತೋಲನವನ್ನು ಕಾಯ್ದುಕೊಂಡು ಸಾಗುತ್ತಿರುವ ಈ ಜೋಡಿ, ಇದೀಗ ಮತ್ತೊಂದು ಸಂತಸದ ಕ್ಷಣವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದೆ.

2: 5 ಕೋಟಿ ಸ್ಮಾರ್ಟ್ ಕ್ಲಾಸ್ ಯೋಜನೆಯಲ್ಲಿ ಭಾರೀ ಅವ್ಯವಹಾರ? ಕುವೆಂಪು ವಿವಿ ಪ್ರಕರಣಕ್ಕೆ ಹೈಲೇವಲ್ ತನಿಖೆ

0

ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯದಲ್ಲಿ ಸ್ಮಾರ್ಟ್ ಕ್ಲಾಸ್ ರೂಮ್ ಯೋಜನೆಯಲ್ಲಿ ಬಹುಕೋಟಿ ಅವ್ಯವಹಾರ ನಡೆದಿದೆ ಎಂಬ ಆರೋಪಕ್ಕೆ ಗಂಭೀರ ತಿರುವು ಸಿಕ್ಕಿದ್ದು, ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರು ಹೈಲೇವಲ್ ತನಿಖೆಗೆ ಆದೇಶಿಸಿದ್ದಾರೆ.

ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಯೋಜನೆಯಡಿ 5 ಕೋಟಿ ರೂ. ಅನುದಾನ ನೀಡಲಾಗಿದ್ದು, ಅದರಲ್ಲಿ 4.25 ಕೋಟಿ ರೂ. ಕಾಮಗಾರಿಗೆ ಖರ್ಚು ಮಾಡಲಾಗಿದೆ. ಆದರೆ ನಿಯಮ ಉಲ್ಲಂಘನೆ, ಕಳಪೆ ಕಾಮಗಾರಿ ಹಾಗೂ ದುಬಾರಿ ಬೆಲೆಗೆ ಪರಿಕರ ಖರೀದಿ ಆರೋಪಗಳು ಪ್ರಕರಣವನ್ನು ಗಂಭೀರಗೊಳಿಸಿವೆ.

ಈ ಹಿಂದೆ ನಿವೃತ್ತ ನ್ಯಾಯಾಧೀಶ ಎಚ್.ಬಿ. ರವೀಂದ್ರನಾಥ್ ನಡೆಸಿದ ತನಿಖೆಯಲ್ಲಿ ಆರೋಪಗಳು ಸತ್ಯ ಎಂದು ಪತ್ತೆಯಾಗಿತ್ತು. ಇದರ ಬೆನ್ನಲ್ಲೇ ಇದೀಗ ನಿವೃತ್ತ ನ್ಯಾಯಮೂರ್ತಿ ಆರ್. ಗುರುರಾಜನ್ ನೇತೃತ್ವದಲ್ಲಿ ಏಕಸದಸ್ಯ ಸಮಿತಿ ರಚನೆಗೊಂಡಿದ್ದು, ಒಂದು ತಿಂಗಳೊಳಗೆ ಸಂಪೂರ್ಣ ವರದಿ ಸಲ್ಲಿಸಲು ಸೂಚಿಸಲಾಗಿದೆ.

ಪ್ರಕರಣ ರಾಜ್ಯದ ಶಿಕ್ಷಣ ವ್ಯವಸ್ಥೆಯ ಮೇಲೆಯೇ ಪ್ರಶ್ನೆ ಎಬ್ಬಿಸಿದ್ದು, ತನಿಖಾ ವರದಿ ಮೇಲೆ ಮುಂದಿನ ಕಾನೂನು ಕ್ರಮ ನಿರ್ಧಾರವಾಗಲಿದೆ.

ಹಸೆಮಣೆ ಏರಬೇಕಿದ್ದ ಹಿಂದಿನ ದಿನವೇ ಸಾವು: ಪತ್ನಿ ಸಹೋದರಿಯ ಜೊತೆ ಮದುವೆಗೆ ಸಿದ್ಧವಾಗಿದ್ದ ಡಾ. ರಮೇಶ್ ಕೊಲೆ

ಕಾರವಾರ: ಮದುವೆ ಸಂಭ್ರಮದ ನಡುವೆ ದಾರುಣ ಅಂತ್ಯ ಕಂಡ ವೈದ್ಯನ ಹತ್ಯೆ ಪ್ರಕರಣ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಬೆಳಕಿಗೆ ಬಂದಿದೆ. ಡಾ. ರಮೇಶ್ ಕಲಗುಟಕರ್ (51) ತಮ್ಮ ಮನೆಯಲ್ಲಿ ಮೃತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ.

ಪತ್ನಿ ನಿಧನವಾದ ಬಳಿಕ, ಅವರ ಸಹೋದರಿಯೊಂದಿಗೆ ಮದುವೆಯಾಗಲು ರಮೇಶ್ ನಿರ್ಧರಿಸಿದ್ದರು. ಇಂದು ಮದುವೆ ನಡೆಯಬೇಕಿದ್ದ ಹಿನ್ನೆಲೆ ಮನೆದಲ್ಲಿ ಸಿದ್ಧತೆಗಳು ಜೋರಾಗಿದ್ದವು. ಇದೇ ವೇಳೆ ಮದುವೆಗಾಗಿ ತರಲಾಗಿದ್ದ ಬಂಗಾರದ ಒಡವೆಗಳ ನಡುವೆ ರಮೇಶ್ ಹತ್ಯೆಯಾಗಿರುವುದು ಪ್ರಕರಣಕ್ಕೆ ಮತ್ತಷ್ಟು ಅನುಮಾನ ಮೂಡಿಸಿದೆ.

ಮೃತ ರಮೇಶ್ ಪತ್ನಿ ಕಳೆದ ಎಂಟು ತಿಂಗಳ ಹಿಂದೆ ಮೃತಪಟ್ಟಿದ್ದರು. ದಂಪತಿಯ ಇಬ್ಬರು ಗಂಡು ಮಕ್ಕಳ ಪೈಕಿ ಓರ್ವ ವೈದ್ಯನಾಗಿದ್ದರೆ ಮತ್ತೊಬ್ಬ ಎಂಜಿನಿಯರಿಂಗ್‌ ಓದುತ್ತಿದ್ದಾನೆಘಟನಾ ಸ್ಥಳಕ್ಕೆ ಭೇಟಿ ನೀಡಿದ ಸಿಪಿಐ ಶಶಿಕಾಂತ ವರ್ಮಾ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರಿಸಿದ್ದಾರೆ. ಮದುವೆ ದಿನವೇ ವೈದ್ಯನ ಜೀವ ಕಳೆದುಕೊಂಡಿರುವುದು ಸ್ಥಳೀಯರಲ್ಲಿ ಆಘಾತ ಮೂಡಿಸಿದೆ.

ಕನ್ನಡಿಗ ಅಧಿಕಾರಿಗಳಿಗೆ ಟಾರ್ಚರ್? ಮಂಗಳೂರು ಕಮಿಷನರ್ ವಿರುದ್ಧ ಎಸ್‌ಪಿ ಕಾಶಿ ಗಂಭೀರ ಆರೋಪ

ಮಂಗಳೂರು/ಬೆಂಗಳೂರು: ಮಂಗಳೂರು ಪೊಲೀಸ್ ಕಮಿಷನರ್ ವಿರುದ್ಧ ಮಾನಸಿಕ ಕಿರುಕುಳ ಮತ್ತು ತಾರತಮ್ಯ ಆರೋಪಗಳು ಕೇಳಿಬಂದಿದ್ದು, ಎಸ್‌ಪಿ ಎಸ್ ಎಸ್ ಕಾಶಿ ಡಿಜಿಪಿ ಸಲೀಂ ಅವರಿಗೆ ದೂರು ಸಲ್ಲಿಸಿದ್ದಾರೆ. ತಮ್ಮ ದೂರಿನಲ್ಲಿ ಕಾಶಿ, ಅಧಿಕಾರ ದುರುಪಯೋಗ, ದರ್ಪ ಮತ್ತು ಸ್ವಜನಪಕ್ಷಪಾತದ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಅಧಿಕಾರಿಗಳ ಮೇಲೆ ಅನಾವಶ್ಯಕ ಒತ್ತಡ ಹಾಕಿ, ತಾವು ಹೇಳಿದಂತೆ ಕೆಲಸ ಮಾಡದಿದ್ದರೆ ಮೆಮೊಗಳ ಮೂಲಕ ಹಿಂಸೆ ನೀಡಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ವಿಶೇಷವಾಗಿ ಕನ್ನಡಿಗ ಅಧಿಕಾರಿಗಳನ್ನು ಟಾರ್ಗೆಟ್ ಮಾಡಿ ಕಿರುಕುಳ ನೀಡಲಾಗುತ್ತಿದೆ ಎಂಬ ಅಂಶ ಪ್ರಕರಣಕ್ಕೆ ಹೊಸ ತಿರುವು ನೀಡಿದೆ.

ರಾಜ್ಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕೆಲ ಐಪಿಎಸ್ ಅಧಿಕಾರಿಗಳು ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಕೆಳಹಂತದ ಸಿಬ್ಬಂದಿ ಮೇಲೆ ದೌರ್ಜನ್ಯ ತೋರಿಸುತ್ತಿದ್ದಾರೆ. ಹೊರರಾಜ್ಯಗಳಿಂದ ಬಂದ ಅಧಿಕಾರಿಗಳು ಕನ್ನಡಿಗರ ಮೇಲೆ ಪ್ರಭಾವ ಬೀರುವ ಪ್ರಯತ್ನ ಮಾಡುತ್ತಿದ್ದಾರೆ ಎಂಬುದನ್ನೂ ಕಾಶಿ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಮಂಗಳೂರು ಕಮಿಷನರ್‌ನ ಕಿರುಕುಳ ಹಾಗೂ ಇತರೆ ಅಕ್ರಮಗಳ ಸಂಪೂರ್ಣ ವಿವರವನ್ನು ನೀಡಲು ಅವಕಾಶ ನೀಡುವಂತೆ ಕೋರಿರುವ ಕಾಶಿ, ಒಂದು ವಾರದೊಳಗೆ ಡಿಜಿಪಿ ಭೇಟಿಗೆ ಸಮಯ ನೀಡಬೇಕು ಎಂದು ಮನವಿ ಮಾಡಿದ್ದಾರೆ. ಈ ಪ್ರಕರಣ ಪೊಲೀಸ್ ಇಲಾಖೆಯಲ್ಲಿ ಗಂಭೀರ ಚರ್ಚೆಗೆ ಕಾರಣವಾಗಿದ್ದು, ಮುಂದಿನ ಕ್ರಮಗಳತ್ತ ಎಲ್ಲರ ಗಮನ ಕೇಂದ್ರೀಕರಿಸಿದೆ.

RR ವಿರುದ್ಧ ಜಯ ಸಾಧಿಸಿದ KKR: ಗಳಗಳನೆ ಕಣ್ಣೀರಿಟ್ಟ ಸೂರ್ಯವಂಶಿ! ವಿಡಿಯೋ ವೈರಲ್

0

ಇಂಡಿಯನ್ ಪ್ರೀಮಿಯರ್ ಲೀಗ್‌ನ 29ನೇ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ತಂಡ ಸೋಲು ಕಂಡಿದೆ. ಈ ಸೋಲಿನ ಬಳಿಕ ಎಲ್ಲರ ಗಮನ 15 ವರ್ಷದ ಯುವ ಆಟಗಾರ ವೈಭವ್ ಸೂರ್ಯವಂಶಿ ಅವರತ್ತ ಹರಿದಿದೆ.

ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ರಾಯಲ್ಸ್ 20 ಓವರ್‌ಗಳಲ್ಲಿ 155 ರನ್ ಗಳಿಸಿತು. ಗುರಿ ಬೆನ್ನತ್ತಿದ ಕೆಕೆಆರ್ 19.4 ಓವರ್‌ಗಳಲ್ಲಿ 161 ರನ್ ಗಳಿಸಿ 4 ವಿಕೆಟ್‌ಗಳ ಜಯ ಸಾಧಿಸಿತು.

ಕೆಕೆಆರ್ ಆಟಗಾರರು ಗೆಲುವಿನ ಸಂಭ್ರಮದಲ್ಲಿದ್ದರೆ, ಆರ್‌ಆರ್ ಪರ ಆಡಿದ ಯುವ ಆಟಗಾರ ವೈಭವ್ ಸೂರ್ಯವಂಶಿ ಸೋಲಿನ ನೋವಿನಲ್ಲಿ ಭಾವುಕರಾಗಿ ಕಣ್ಣೀರಿಟ್ಟರು.ಈ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಈ ಪಂದ್ಯದಲ್ಲಿ ವೈಭವ್ ಕೇವಲ 28 ಎಸೆತಗಳಲ್ಲಿ 46 ರನ್ ಸಿಡಿಸಿ ತಂಡಕ್ಕೆ ಉತ್ತಮ ಆರಂಭ ನೀಡಿದ್ದರು. ಅವರ ಇನ್ನಿಂಗ್ಸ್‌ನಲ್ಲಿ 6 ಬೌಂಡರಿ ಹಾಗೂ 2 ಸಿಕ್ಸರ್‌ಗಳು ಸೇರಿದ್ದವು. ಆದರೆ ವರುಣ್ ಚಕ್ರವರ್ತಿ ಎಸೆದ 9ನೇ ಓವರ್‌ನಲ್ಲಿ ದೊಡ್ಡ ಹೊಡೆತಕ್ಕೆ ಪ್ರಯತ್ನಿಸಿ ಔಟ್ ಆದದ್ದು ಪಂದ್ಯದ ತಿರುವಾಗಿತು.

ವೈಭವ್ ಔಟಾದ ಬಳಿಕ ರಾಜಸ್ಥಾನ್ ತಂಡದ ರನ್‌ಗತಿ ಕುಸಿತ ಕಂಡು, ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳು ವೈಫಲ್ಯ ಅನುಭವಿಸಿದರು. ಪರಿಣಾಮ ತಂಡ 155 ರನ್‌ಗಳಿಗೆ ಸೀಮಿತವಾಯಿತು.

ಅಲ್ಪ ಮೊತ್ತವಿದ್ದರೂ ಆರ್‌ಆರ್ ಬೌಲರ್‌ಗಳು ಹೋರಾಟ ನಡೆಸಿದರು. ಕೊನೆಯ ಮೂರು ಓವರ್‌ಗಳಿಗೆ ಕೆಕೆಆರ್‌ಗೆ 28 ರನ್ ಬೇಕಿದ್ದ ಸಂದರ್ಭದಲ್ಲಿ ಪಂದ್ಯ ರೋಚಕ ಘಟ್ಟ ತಲುಪಿತ್ತು. ಆದರೆ ಅಂತಿಮ ಓವರ್‌ನಲ್ಲಿ ಅಗತ್ಯ ರನ್‌ಗಳನ್ನು ಸುಲಭವಾಗಿ ಗಳಿಸಿದ ಕೆಕೆಆರ್ ಗೆಲುವು ಸಾಧಿಸಿತು.

ಪಂದ್ಯ ಅಂತ್ಯಗೊಂಡ ಬಳಿಕ ಭಾವುಕರಾದ ವೈಭವ್ ಮೈದಾನದ ಹೊರಗೆ ಕುಳಿತು ಕಣ್ಣೀರಿಟ್ಟರು. ಈ ವೇಳೆ ಎರಡೂ ತಂಡದ ಆಟಗಾರರು ಅವರನ್ನು ಸಮಾಧಾನಪಡಿಸಿದರು. ಯುವ ಆಟಗಾರನ ಈ ಭಾವುಕ ಕ್ಷಣದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.

ಮೋದಿ ಕಿವಿಯಲ್ಲಿ ಕೇಳಿದ ಪ್ರಶ್ನೆ ಬಹಿರಂಗಪಡಿಸಿದ ಸಿಎಂ ಸಿದ್ದರಾಮಯ್ಯ

0

ಮೈಸೂರು: ರಾಜ್ಯ ಭೇಟಿ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಕಿವಿಯಲ್ಲಿ ಕೇಳಿದ ಪ್ರಶ್ನೆಯ ಗುಟ್ಟನ್ನು ಸಿಎಂ ಸಿದ್ದರಾಮಯ್ಯ ಬಹಿರಂಗಪಡಿಸಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಸಿಎಂ, ಮಹಿಳಾ ಮೀಸಲಾತಿ ಕುರಿತಾಗಿ ನಿಮ್ಮ ನಿಲುವು ಏನು ಎಂದು ಪ್ರಧಾನಿ ಮೋದಿ ಕಿವಿಯಲ್ಲಿ ಕೇಳಿದ್ದರು ಎಂದು ತಿಳಿಸಿದ್ದಾರೆ. ಅದಕ್ಕೆ ತಾವು ಮಹಿಳಾ ಮೀಸಲಾತಿಗೆ ಬೆಂಬಲವಾಗಿದ್ದೇನೆ ಎಂದು ಉತ್ತರ ನೀಡಿದ್ದಾಗಿ ಹೇಳಿದ್ದಾರೆ.

ಇದೇ ವೇಳೆ ಇಡಿ ದಾಳಿ ವಿಚಾರವಾಗಿ ಪ್ರತಿಕ್ರಿಯಿಸಿದ ಸಿಎಂ, ಈ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ ಎಂದು ಸ್ಪಷ್ಟಪಡಿಸಿದರು. ಪಂಚರಾಜ್ಯ ಚುನಾವಣೆ ಕುರಿತು ಮಾತನಾಡಿದ ಅವರು, ತಮಿಳುನಾಡಿನಲ್ಲಿ ಪ್ರಚಾರಕ್ಕೆ ಹೋಗುವುದಿಲ್ಲ ಎಂದು ತಿಳಿಸಿ, ಅಲ್ಲಿ ಡಿಎಂಕೆ ಗೆಲುವು ಸಾಧಿಸುವ ಸಾಧ್ಯತೆ ಇದೆ ಎಂದು ಹೇಳಿದರು.

ಬಿಜೆಪಿಯ ವಿರುದ್ಧ ವಾಗ್ದಾಳಿ ನಡೆಸಿದ ಸಿದ್ದರಾಮಯ್ಯ, ಕಾಂಗ್ರೆಸ್ ಸರ್ಕಾರ ಜಾರಿಗೆ ತಂದ ಗ್ಯಾರಂಟಿ ಯೋಜನೆಗಳನ್ನು ಬಿಜೆಪಿ ಮೊದಲು ವಿರೋಧಿಸಿ ಈಗ ಅದನ್ನೇ ಅನುಸರಿಸುತ್ತಿದೆ ಎಂದು ಟೀಕಿಸಿದರು. ಮಹಿಳಾ ಮೀಸಲಾತಿ ವಿಷಯದಲ್ಲಿ ಕಾಂಗ್ರೆಸ್ ವಿರೋಧದಲ್ಲಿಲ್ಲ, ಆದರೆ ಕ್ಷೇತ್ರ ಪುನರ್‌ವಿಂಗಡಣೆ ವಿಚಾರದಲ್ಲಿ ಮಾತ್ರ ತಕರಾರು ಇದೆ ಎಂದು ಸ್ಪಷ್ಟಪಡಿಸಿದರು.

ಮಹಿಳಾ ಮೀಸಲಾತಿ ವಿಚಾರವನ್ನು ಬಿಜೆಪಿ ರಾಜಕೀಯವಾಗಿ ಬಳಸುತ್ತಿದೆ, ಆದರೆ ಅದನ್ನು ಜಾರಿಗೆ ತರುವ ಬದ್ಧತೆ ಕಾಣುತ್ತಿಲ್ಲ ಎಂದು ಆರೋಪಿಸಿದ ಸಿಎಂ, 2023ರಲ್ಲೇ ವಿಧೇಯಕ ಜಾರಿಗೆ ತರಬಹುದಾಗಿದ್ದರೂ ಯಾಕೆ ವಿಳಂಬ ಮಾಡಿದರು ಎಂದು ಪ್ರಶ್ನಿಸಿದರು.

ಹೊಸ ಜನಗಣತಿ ಆಧಾರದ ಮೇಲೆ ಕ್ಷೇತ್ರ ಪುನರ್‌ವಿಂಗಡಣೆ ಅಗತ್ಯವಿದೆ ಎಂದು ಒತ್ತಿ ಹೇಳಿದ ಅವರು, ಹಳೆಯ ಜನಗಣತಿ ಆಧಾರವಾಗಿದ್ದರೆ ಕರ್ನಾಟಕಕ್ಕೆ ಅನ್ಯಾಯವಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಿದರು. ಉತ್ತರ ಭಾರತದ ರಾಜ್ಯಗಳು ಜನಸಂಖ್ಯೆ ನಿಯಂತ್ರಣ ಮಾಡದೇ ಇದ್ದರೆ, ದಕ್ಷಿಣ ರಾಜ್ಯಗಳಿಗೆ ನಷ್ಟವಾಗಬಾರದು ಎಂಬುದು ನಮ್ಮ ನಿಲುವು ಎಂದು ಹೇಳಿದ್ದಾರೆ.

ಪ್ರಧಾನಿ ಮೋದಿಯವರು ಸಿಎಂ ಕಿವಿಯಲ್ಲಿ ಹೇಳಿದ ಗುಟ್ಟೇನು? ಸಿದ್ದರಾಮಯ್ಯರಿಂದಲೇ ಸಿಕ್ತು ಉತ್ತರ

ಮೈಸೂರು: ಕ್ಷೇತ್ರ ಮರುವಿಂಗಡನೆಯನ್ನು ಹೊಸ ಜನಗಣತಿಯಾದ ನಂತರ ಮಾಡುವುದು ಸೂಕ್ತ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು. ಎರಡು ದಿನಗಳ ಪ್ರವಾಸ ನಿಮಿತ್ತ ಮೈಸೂರಿಗೆ ಆಗಮಿಸಿದ ಸಂದರ್ಭದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದರು.

ನಾವು ಅದಕ್ಕಾಗಿಯೇ ಕ್ಷೇತ್ರ ಮರು ವಿಂಗಡಣೆಯನ್ನು ವಿರೋಧ ಮಾಡಿದೆವು. ನಾವು ಎಂದಿಗೂ ಮಹಿಳಾ ಮೀಸಲಾತಿಯ ಪರವಾಗಿಯೇ ಇದ್ದೇವೆ ಎಂದರು.

ಇಲ್ಲಿಯವರೆಗೆ ಕಾಯಬೇಕಿರಲಿಲ್ಲ

ಸಂವಿಧಾನಕ್ಕೆ 73, 74ನೇ ತಿದ್ದುಪಡಿಯನ್ನು ತಂದಿದ್ದು ಕಾಂಗ್ರೆಸ್ ಪಕ್ಷ. ಸ್ಥಳೀಯ ಸಂಸ್ಥೆಗಳಲ್ಲಿ 50% ಮಹಿಳಾ ಮೀಸಲಾತಿ ತಂದಿದ್ದು ಕೂಡ ಕಾಂಗ್ರೆಸ್ ಪಕ್ಷವೇ. 2023 ರಲ್ಲಿಯೇ ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರವಾಗಿದ್ದು ಆಗಲೇ ಅದನ್ನು ಜಾರಿ ಮಾಡಬೇಕಿತ್ತು, ಇಲ್ಲಿಯವರೆಗೆ ಏಕೆ ಕಾಯಬೇಕಿತ್ತು ಎಂದರು.

ವಿರೋಧಿಸಿದವರೇ ಗ್ಯಾರಂಟಿ ಕೊಡುತ್ತಿದ್ದಾರೆ

ಗ್ಯಾರಂಟಿಗಳನ್ನು ಎಲ್ಲಾ ಪಕ್ಷಗಳು ತಮ್ಮ ಪ್ರಣಾಳಿಕೆಯಲ್ಲಿ ಸೇರಿಸಿರುವ ಬಗ್ಗೆ ಮಾತನಾಡಿ 2023 ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ವಿರೋಧಿಸಿದ್ದರು. ಈಗ ಅವರೇ ಯೋಜನೆಗಳನ್ನು ಘೋಷಿಸುತ್ತಿದ್ದಾರೆ ಎಂದರು.

ಮಹಿಳಾ ಮೀಸಲಾತಿ ಪರವಾಗಿದ್ದೇವೆ ಎಂದು ಪ್ರಧಾನಿಗಳಿಗೆ ತಿಳಿಸಿದೆ

ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿಯವರು ಬೆಂಗಳೂರಿಗೆ ಆಗಮಿಸಿದ ಸಂದರ್ಭದಲ್ಲಿ ಮುಖ್ಯಮಂತ್ರಿ ಹಾಗೂ ಪ್ರಧಾನಿಗಳ ನಡುವೆ ಆದ ಮಾತುಕತೆಯ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿಗಳು ಮಹಿಳಾ ಮೀಸಲಾತಿ ಬಗ್ಗೆ ನಿಮ್ಮ ನಿಲುವೇನು ಎಂದು ಪ್ರಧಾನಿಗಳು ಕೇಳಿದ್ದರು. ನಾವು ಮಹಿಳಾ ಮೀಸಲಾತಿಯ ಪರವಾಗಿದ್ದೇವೆ ಎಂದು ತಿಳಿಸಿದ್ದಾಗಿ ಮುಖ್ಯಮಂತ್ರಿಗಳು ಹೇಳಿದರು.

ಪ್ರಧಾನಿಗಳು ಸಾಮಾಜಿಕ ನ್ಯಾಯದ ಪರವಾಗಿಲ್ಲ

ಮಹಿಳಾ ಮೀಸಲಾತಿ ಮಸೂದೆಯನ್ನು ತಿರಸ್ಕರಿಸುವ ಮೂಲಕ ಕಾಂಗ್ರೆಸ್ ಭ್ರೂಣ ಹತ್ಯೆ ಮಾಡಿದೆ ಎಂದು ಪ್ರಧಾನಿಗಳು ಆರೋಪಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ಪ್ರಧಾನಿಗಳದ್ದು ತಾರತಮ್ಯದ ಧೋರಣೆಯಾಗಿದ್ದು, ಅವರು ಸಾಮಾಜಿಕ ನ್ಯಾಯದ ಪರವಾಗಿಲ್ಲ ಎಂದರು.

ಅವರು ಅಧಿಕಾರಕ್ಕೆ ಬಂದು 12 ವರ್ಷಗಳಲ್ಲಿ ಮಹಿಳಾ ಮೀಸಲಾತಿ ಏಕೆ ಜಾರಿಮಾಡಲಿಲ್ಲ ಎಂದು ಪ್ರಶ್ನಿಸಿದರು. ಈಗಲೂ 2023ರ ಪ್ರಕಾರ ಜಾರಿ ಮಾಡಲಿ. ಕ್ಷೇತ್ರ ಮರು ವಿಂಗಡನೆಯನ್ನು ಜನಗಣತಿಯಾದ ನಂತರ ಮಾಡಿದರೆ ಸೂಕ್ತ ಎಂದರು. ಲೋಕಸಭಾ ಸ್ಥಾನಗಳನ್ನು ಶೇಕಡ 50% ರಷ್ಟು ಹೆಚ್ಚು ಮಾಡುವುದಾಗಿ ಹೇಳಿದ್ದು, ದಕ್ಷಿಣ ಭಾರತದ ರಾಜ್ಯಗಳಿಗೆ ಅನ್ಯಾಯವಾಗುತ್ತದೆ. ಜನಗಣತಿ ಮಾಡಿ ಎಲ್ಲರಿಗೂ ಸಮಾನವಾಗಿ ಸ್ಥಾನಗಳನ್ನು ಕೊಡಬೇಕು ಎಂದರು.

ಕ್ಷೇತ್ರ ಮರು ವಿಂಗಡಣೆಯಿಂದ ದಕ್ಷಿಣ ಭಾರತದ ರಾಜ್ಯಗಳಿಗೆ ಅನ್ಯಾಯ

ಜನಸಂಖ್ಯೆ ನಿಯಂತ್ರಣವನ್ನು ದಕ್ಷಿಣ ಭಾರತದ ರಾಜ್ಯಗಳು ಉತ್ತಮವಾಗಿ ಮಾಡಿದ್ದು, ಉತ್ತರ ಭಾರತದ ರಾಜ್ಯಗಳು ಮಾಡಿಲ್ಲ. ಸಹಜವಾಗಿಯೇ ಅವರಿಗೆ ಅನುಕೂಲ ಹಾಗೂ ದಕ್ಷಿಣ ಭಾರತದ ರಾಜ್ಯಗಳಿಗೆ ಅನಾನುಕೂಲವಾಗಲಿದೆ ಎಂದರು.

ಬಹುಮತ ವಿಲ್ಲ ಎಂದು ಗೊತ್ತಿದ್ದು ಮಸೂದೆಯನ್ನು ಮಂಡಿಸಬಾರದಿತ್ತು

ಮುಂದಿನ ದಿನಗಳಲ್ಲಿ ಕಾಂಗ್ರೆಸ್ಸಿಗೆ ಜನ ಪಾಠ ಕಲಿಸಲಿದ್ದಾರೆ ಎಂಬ ಪ್ರಧಾನಿಗಳ ಹೇಳಿಕೆಗೆ ಪ್ರತಿಕ್ರಿಯೆ ನೀಡಿ ಪ್ರಧಾನಿಗಳು ರಾಜಕೀಯ ಮಾಡುತ್ತಿದ್ದಾರೆ. ಮೂರನೇ ಎರಡರಷ್ಟು ಬಹುಮತವಿಲ್ಲ ಎಂದು ಗೊತ್ತಿದ್ದೂ ಮಹಿಳಾ ಮೀಸಲಾತಿ, ಕ್ಷೇತ್ರ ಮರು ವಿಂಗಡಣೆಯನ್ನು ಒಟ್ಟಿಗೆ ತರಬೇಕಾದ ಅಗತ್ಯವಿರಲಿಲ್ಲ ಎಂದು ಹೇಳಿದರು.

ಇಡಿ ದಾಳಿ ಬಗ್ಗೆ ತಿಳಿದಿಲ್ಲ

ಶಾಸಕ ಎನ್.ಎ ಹ್ಯಾರೀಸ್ ಅವರ ಮನೆಯ ಮೇಲೆ ಇಡಿ ದಾಳಿಯಾಗಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ ಈ ಬಗ್ಗೆ ನನಗೆ ತಿಳಿದಿಲ್ಲ ಎಂದರು.

ಕೇರಳದಲ್ಲಿ ಕಾಂಗ್ರೆಸ್ ಗೆಲ್ಲಲಿದೆ

ಮೂಲಗಳ ಪ್ರಕಾರ ತಮಿಳುನಾಡಿನಲ್ಲಿ ಡಿಎಂಕೆ ಮತ್ತು ಮಿತ್ರ ಪಕ್ಷಗಳು ಗೆಲ್ಲಲಿದ್ದು ಕೇರಳದಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.

ಒಳ್ಳೆಯ ಮುಹೂರ್ತ ನೋಡಿ ಹೊಸ ರಾಜಕೀಯ ಪ್ರಾರಂಭ: ಶಾಸಕ ಬಸನಗೌಡ ಯತ್ನಾಳ್

ವಿಜಯಪುರ: ಮುಂದಿನ ತಿಂಗಳಲ್ಲಿ ಶುಭ ಮುಹೂರ್ತ ನೋಡಿ ಹೊಸ ರಾಜಕೀಯ ಚಟುವಟಿಕೆ ಆರಂಭಿಸುವುದಾಗಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಿಳಿಸಿದ್ದಾರೆ.  ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ರಾಜ್ಯಾದ್ಯಂತ ಜಿಲ್ಲಾವಾರು ಹಿಂದುತ್ವ ಸಭೆಗಳನ್ನು ನಡೆಸಲು ಯೋಜನೆ ರೂಪಿಸಿದ್ದೇನೆ. ಈ ಸಭೆಗಳನ್ನು ಕೋಲಾರ ಜಿಲ್ಲೆಯ ಐತಿಹಾಸಿಕ ವಿಘ್ನೇಶ್ವರ ದೇವಸ್ಥಾನದಿಂದ ಆರಂಭಿಸುತ್ತೇನೆ” ಎಂದು ಹೇಳಿದರು.

ಹಿಂದುತ್ವ, ನಿರುದ್ಯೋಗ ಮತ್ತು ಅಭಿವೃದ್ಧಿ ಎಂಬ ಮೂರು ಪ್ರಮುಖ ವಿಷಯಗಳನ್ನು ಆಧಾರವಾಗಿಟ್ಟುಕೊಂಡು ಈ ಸಭೆಗಳು ನಡೆಯಲಿವೆ. ಜನರ ಅಭಿಪ್ರಾಯ ಸಂಗ್ರಹಿಸಿ ಮುಂದಿನ ದಿನಗಳಲ್ಲಿ ಪ್ರಾದೇಶಿಕ ಪಕ್ಷ ಸ್ಥಾಪನೆ ಕುರಿತು ನಿರ್ಧಾರ ಕೈಗೊಳ್ಳುವುದಾಗಿ ಅವರು ತಿಳಿಸಿದ್ದಾರೆ.

ಮೇ ತಿಂಗಳಲ್ಲಿ ಶುಭ ಮುಹೂರ್ತ ನೋಡಿ ರಾಜ್ಯದಾದ್ಯಂತ ಪ್ರವಾಸ ಕೈಗೊಳ್ಳುತ್ತೇನೆ. ಮೊದಲು ಜಿಲ್ಲಾ ಕೇಂದ್ರಗಳು, ಬಳಿಕ ತಾಲೂಕು ಮಟ್ಟದಲ್ಲಿ ಸಭೆಗಳನ್ನು ಆಯೋಜಿಸಲಾಗುತ್ತದೆ” ಎಂದರು.

ಹಿಂದೂಪರ ಚಿಂತನೆ ಹೊಂದಿರುವವರು, ನಿರುದ್ಯೋಗಿ ಯುವಕರು ಮತ್ತು ಅಭಿವೃದ್ಧಿ ಪರ ಜನರನ್ನು ಒಗ್ಗೂಡಿಸುವ ಉದ್ದೇಶ ಹೊಂದಿದ್ದೇನೆ. ಜನರ ಅಭಿಪ್ರಾಯದ ಆಧಾರದಲ್ಲಿ ಪ್ರಾದೇಶಿಕ ಪಕ್ಷ ಸ್ಥಾಪನೆ ಕುರಿತು ಮುಂದಿನ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.

ಇದಲ್ಲದೆ, ಪಕ್ಷ ಸ್ಥಾಪನೆಯಾದರೆ ಚುನಾವಣಾ ಆಯೋಗ ಯಾವ ಚಿಹ್ನೆ ನೀಡುತ್ತದೆ ಎಂಬುದನ್ನು ಕಾದು ನೋಡಬೇಕಿದೆ ಎಂದು ಯತ್ನಾಳ್ ಹೇಳಿದರು.

ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದ ಬಸ್: 15 ಮಂದಿ ಸಾವು, ಹಲವರಿಗೆ ಗಾಯ

0

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಉಧಂಪುರ ಜಿಲ್ಲೆಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ನಿಯಂತ್ರಣ ತಪ್ಪಿದ ಬಸ್ ಕಂದಕಕ್ಕೆ ಉರುಳಿಬಿದ್ದ ಪರಿಣಾಮ ಕನಿಷ್ಠ 15 ಮಂದಿ ಸಾವನ್ನಪ್ಪಿದ್ದಾರೆ. ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಸೋಮವಾರ ಬೆಳಗ್ಗೆ ಸುಮಾರು 10 ಗಂಟೆಯ ವೇಳೆಗೆ ಈ ಘಟನೆ ನಡೆದಿದೆ. ರಾಮನಗರದಿಂದ ಉಧಂಪುರಕ್ಕೆ ತೆರಳುತ್ತಿದ್ದ ಬಸ್ ತಿರುವಿನಲ್ಲಿ ನಿಯಂತ್ರಣ ಕಳೆದುಕೊಂಡು ಕಂದಕಕ್ಕೆ ಬಿದ್ದಿದೆ ಎಂದು ತಿಳಿದುಬಂದಿದೆ.

ಘಟನಾ ಸ್ಥಳದಲ್ಲಿ ಸೇನೆ, ಪೊಲೀಸರು ಹಾಗೂ ಸ್ಥಳೀಯರು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹಲವರ ಸ್ಥಿತಿ ಚಿಂತಾಜನಕವಾಗಿದೆ.

ಘಟನೆ ಕುರಿತು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಜಿಲ್ಲಾಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದು, ಗಂಭೀರವಾಗಿ ಗಾಯಗೊಂಡವರನ್ನು ವಿಮಾನ ಮೂಲಕ ಸ್ಥಳಾಂತರಿಸುವ ವ್ಯವಸ್ಥೆ ಸೇರಿದಂತೆ ಅಗತ್ಯ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ.

ಬಿಟ್‌ಕಾಯಿನ್ ಪ್ರಕರಣ: ಶಾಸಕ ಹ್ಯಾರಿಸ್ ಮನೆ ಸೇರಿ 17 ಕಡೆ ಇಡಿ ದಾಳಿ

ಬೆಂಗಳೂರು: ಕಾಂಗ್ರೆಸ್ ಶಾಸಕ ಎನ್.ಎ. ಹ್ಯಾರಿಸ್ ಅವರಿಗೆ ಬೆಳ್ಳಂಬೆಳಗ್ಗೆ ಜಾರಿ ನಿರ್ದೇಶನಾಲಯ (ED) ಶಾಕ್ ನೀಡಿದ್ದು, ಅವರ ನಿವಾಸ ಸೇರಿ ಒಟ್ಟು 17 ಸ್ಥಳಗಳಲ್ಲಿ ದಾಳಿ ನಡೆಸಿದೆ.

ಹ್ಯಾರಿಸ್ ಬಿಡಿಎ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಪುತ್ರ ಮೊಹಮ್ಮದ್ ನಲಪಾಡ್ ಕಾಂಗ್ರೆಸ್ ಯುವ ಮುಖಂಡರಾಗಿದ್ದಾರೆ. ನಲಪಾಡ್ ನಿವಾಸದಲ್ಲೂ ಅಧಿಕಾರಿಗಳು ಪರಿಶೀಲನೆ ನಡೆಸಿ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ.

ಈ ದಾಳಿ ಬಿಟ್‌ಕಾಯಿನ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆದಿದ್ದು, ಹ್ಯಾಕರ್ ಶ್ರೀಕಿ ಜೊತೆ ಆರ್ಥಿಕ ವ್ಯವಹಾರ ಹೊಂದಿದ್ದ ಆರೋಪದ ಹಿನ್ನೆಲೆಯಲ್ಲಿ ಇಡಿ ತನಿಖೆ ಕೈಗೊಂಡಿದೆ.

ನಲಪಾಡ್ ಮತ್ತು ಶ್ರೀಕಿ ನಡುವೆ ಸುಮಾರು ಆರು ವರ್ಷಗಳ ಕಾಲ ಆರ್ಥಿಕ ಸಂಪರ್ಕ ಇದ್ದು, ಇಬ್ಬರೂ ಸೇರಿ ಸುಮಾರು 4.5 ಕೋಟಿ ರೂ. ವಹಿವಾಟು ನಡೆಸಿದ್ದಾರೆ ಎನ್ನಲಾಗಿದೆ.

error: Content is protected !!