ಗದಗ: ನಗರದಲ್ಲಿ ಮೀಟರ್ ಬಡ್ಡಿ ದಂಧೆಕೋರರ ಅಟ್ಟಹಾಸ ಮಿತಿಮೀರಿದ್ದು, ಸಾಲದ ಹಣಕ್ಕಾಗಿ ಮನೆಗೆ ನುಗ್ಗಿ ಕಂಪೌಂಡ್ ಗೋಡೆ ಧ್ವಂಸಗೊಳಿಸಿ, ಸಿಸಿ ಕ್ಯಾಮೆರಾಗಳನ್ನು ಒಡೆದು ಹಾಕಿ, ಕುಟುಂಬ ಸದಸ್ಯರಿಗೆ ಜೀವ ಬೆದರಿಕೆ ಹಾಕಿರುವ ಗಂಭೀರ ಆರೋಪ ಕೇಳಿ ಬಂದಿದೆ.
ಗದಗ ನಗರದ ಕಳಸಾಪೂರ ರಿಂಗ್ರೋಡ್ನ ಅಭಿನವ ಬಡಾವಣೆಯಲ್ಲಿ ಈ ಘಟನೆ ನಡೆದಿದ್ದು, ಬಡ್ಡಿ ಸಾಲದ ಕಾಟದಿಂದ ಇಡೀ ಕುಟುಂಬವೇ ಊರು ತೊರೆದು ಅಲೆದಾಡುವಂತಾಗಿದೆ ಎಂದು ಆರೋಪಿಸಲಾಗಿದೆ.
ಕೋಟೇಶ್ ಬಾಗಲಿ ಎಂಬಾತ ವಿವಿಧ ವ್ಯಕ್ತಿಗಳಿಂದ ಹೆಚ್ಚಿನ ಬಡ್ಡಿದರದಲ್ಲಿ ಹಣ ಪಡೆದಿದ್ದಾನೆ ಎನ್ನಲಾಗಿದ್ದು, ದರ್ಶನ್ ಎಂಬಾತನಿಂದ 8 ಲಕ್ಷ ರೂ., ಶ್ರೀಕಾಂತ ಎಂಬಾತನಿಂದ 12.80 ಲಕ್ಷ ರೂ. ಹಾಗೂ ಜೀವನ ಎಂಬಾತನಿಂದ 3 ಲಕ್ಷ ರೂ. ಸಾಲ ಪಡೆದಿದ್ದಾನೆ ಎಂದು ತಿಳಿದು ಬಂದಿದೆ. ವಾರಕ್ಕೆ ಶೇ.10 ಹಾಗೂ ತಿಂಗಳಿಗೆ ಶೇ.20ರಷ್ಟು ಬಡ್ಡಿ ವಸೂಲಿ ಮಾಡಲಾಗುತ್ತಿತ್ತು ಎಂಬ ಆರೋಪವೂ ಕೇಳಿ ಬಂದಿದೆ.
ಎರಡು ತಿಂಗಳಿಂದ ಬಡ್ಡಿ ಪಾವತಿ ನಿಲ್ಲಿಸಿದ್ದ ಹಿನ್ನೆಲೆಯಲ್ಲಿ ಸಾಲದ ಮೊತ್ತದ ದುಪ್ಪಟ್ಟು ಹಣ ನೀಡುವಂತೆ ಒತ್ತಡ ಹೇರಲಾಗಿತ್ತು ಎನ್ನಲಾಗಿದೆ. ಈ ನಡುವೆ ಕೋಟೇಶ್ ಮನೆಯಲ್ಲಿ ಇಲ್ಲದ ಸಂದರ್ಭದಲ್ಲಿ ಕೆಲವರು ಮನೆಗೆ ನುಗ್ಗಿ ಪತ್ನಿ ಸುಧಾ ಬಾಗಲಿ, ತಂದೆ ನಿಂಗಪ್ಪ ಬಾಗಲಿ ಹಾಗೂ ತಾಯಿ ಹುಲಿಗೆಮ್ಮ ಬಾಗಲಿ ಅವರಿಗೆ ಮಾರಕಾಸ್ತ್ರ ತೋರಿಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಕುಟುಂಬದವರು ದೂರಿದ್ದಾರೆ.
ಅಷ್ಟೇ ಅಲ್ಲದೆ, ಜೆಸಿಬಿ ಯಂತ್ರದ ಮೂಲಕ ಮನೆ ಕಂಪೌಂಡ್ ಗೋಡೆಯನ್ನು ಧ್ವಂಸಗೊಳಿಸಿ, ಸಿಸಿ ಕ್ಯಾಮೆರಾಗಳನ್ನು ಒಡೆದು ಹಾಕಿರುವ ಆರೋಪವೂ ಕೇಳಿ ಬಂದಿದೆ. ದರ್ಶನ್ ಎಂಬಾತ 14.50 ಲಕ್ಷ ರೂ. ಮೊತ್ತದ ಖಾಲಿ ಚೆಕ್ಗೆ ಸಹಿ ಹಾಕಿಸಿಕೊಂಡಿದ್ದಾನೆ ಹಾಗೂ ಜೀವನ ಎಂಬಾತ ಎರಡು ಖಾಲಿ ಚೆಕ್ಗಳನ್ನು ಪಡೆದುಕೊಂಡಿದ್ದಾನೆ ಎಂದು ಕೋಟೇಶ್ ಬಾಗಲಿ ಆರೋಪಿಸಿದ್ದಾನೆ.
ಕ್ಯಾಸಿನೋ ಚಟದಿಂದ ಸಾಲದ ಸುಳಿಯಲ್ಲಿ ಸಿಲುಕಿದ ಕೋಟೇಶ್ ಒಂದು ವರ್ಷದಿಂದ ಗೋವಾ ಕ್ಯಾಸಿನೋ ಚಟಕ್ಕೆ ಬಿದ್ದಿದ್ದ ಕೋಟೇಶ್ ಬಾಗಲಿ, ಲಕ್ಷಾಂತರ ರೂಪಾಯಿ ಸಾಲ ಮಾಡಿದ್ದಾನೆ ಎನ್ನಲಾಗಿದೆ. ಸಾಲದ ಹೊರೆ ತಾಳಲಾರದೆ ತಂದೆಯ ನಾಲ್ಕು ಎಕರೆ ಜಮೀನನ್ನು ಮಾರಾಟ ಮಾಡಲಾಗಿದ್ದು, ಮನೆಯ ಮೇಲೆಯೇ ಸುಮಾರು 50 ಲಕ್ಷ ರೂ. ಸಾಲವಿದೆ ಎಂದು ಮೂಲಗಳು ತಿಳಿಸಿವೆ.
ಕ್ಯಾಸಿನೋ ವ್ಯಸನ, ಖಾಸಗಿ ಸಾಲಗಾರರು ಹಾಗೂ ಮೀಟರ್ ಬಡ್ಡಿ ದಂಧೆಕೋರರ ಕಾಟದಿಂದ ಕೋಟ್ಯಂತರ ರೂಪಾಯಿ ಸಾಲದ ಸುಳಿಯಲ್ಲಿ ಸಿಲುಕಿರುವ ಕುಟುಂಬ ಇದೀಗ ಸಂಕಷ್ಟದ ಪರಿಸ್ಥಿತಿಯಲ್ಲಿ ದಿನ ಕಳೆಯುತ್ತಿದೆ.
ಈ ಸಂಬಂಧ ಗದಗ ಶಹರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿತ ಬಡ್ಡಿ ದಂಧೆಕೋರರ ಬಂಧನಕ್ಕಾಗಿ ಪೊಲೀಸರು ಜಾಲ ಬೀಸಿದ್ದಾರೆ. ಪ್ರಕರಣ ನಗರದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದ್ದು, ತನಿಖೆ ಮುಂದುವರಿದಿದೆ.

