ಬೆಂಗಳೂರು: ಮಧ್ಯಪ್ರಾಚ್ಯ ಯುದ್ಧದ ಪರಿಣಾಮದಿಂದ ಉಂಟಾಗಿದ್ದ ಆಟೋ ಎಲ್ಪಿಜಿ ಗ್ಯಾಸ್ ಕೊರತೆ ಇದೀಗ ಕ್ರಮೇಣ ಸಹಜಸ್ಥಿತಿಗೆ ಮರಳುತ್ತಿದೆ.
ನಗರ ಸೇರಿದಂತೆ ಹಲವು ಜಿಲ್ಲೆಗಳ ಬಂಕ್ಗಳಿಗೆ ಗ್ಯಾಸ್ ಸರಬರಾಜು ಪುನರಾರಂಭವಾಗಿದೆ ಎಂದು ತಿಳಿದುಬಂದಿದೆ.
ಹಿಂದೆ ಗ್ಯಾಸ್ ಸಿಗದೆ ಬಂಕ್ಗಳ ಮುಂದೆ ಕಿಲೋಮೀಟರ್ಗಟ್ಟಲೆ ಸರತಿ ಸಾಲು ಕಾಣುತ್ತಿದ್ದ ಪರಿಸ್ಥಿತಿ ಈಗ ಕಡಿಮೆಯಾಗಿದ್ದು, ಬಹುತೇಕ ಬಂಕ್ಗಳಲ್ಲಿ ಆಟೋ ಗ್ಯಾಸ್ ಲಭ್ಯವಾಗುತ್ತಿದೆ.
ಆದರೆ ಗ್ಯಾಸ್ ದರದಲ್ಲಿ ಭಾರೀ ಏರಿಕೆ ಕಂಡುಬಂದಿದ್ದು ಚಾಲಕರಲ್ಲಿ ಅಸಮಾಧಾನ ವ್ಯಕ್ತವಾಗಿದೆ. ಕೆಲ ಬಂಕ್ಗಳಲ್ಲಿ ಲೀಟರ್ಗೆ ₹65 ಇದ್ದ ದರ ಈಗ ₹99ರಿಂದ ₹120ರ ವರೆಗೆ ಏರಿಕೆಯಾಗಿದೆ ಎಂದು ವರದಿಯಾಗಿದೆ. ವಿವಿಧ ಬಂಕ್ಗಳಲ್ಲಿ ವಿಭಿನ್ನ ದರ ನಿಗದಿಯಾಗುತ್ತಿರುವುದರಿಂದ ಗೊಂದಲವೂ ಉಂಟಾಗಿದೆ.
“ದರವನ್ನು ಸರ್ಕಾರ ನಿಯಂತ್ರಿಸಬೇಕು” ಎಂದು ಆಟೋ ಚಾಲಕರು ಆಗ್ರಹಿಸಿದ್ದಾರೆ.
ಇತ್ತ ರಾಯಚೂರಿನ ಮಸ್ಕಿಯಲ್ಲಿ ಗ್ಯಾಸ್ ಸಿಲಿಂಡರ್ ಅಭಾವದಿಂದ ಗ್ರಾಹಕರು ಇನ್ನೂ ಸಂಕಷ್ಟ ಅನುಭವಿಸುತ್ತಿದ್ದಾರೆ. ಸಿಲಿಂಡರ್ ಪಡೆಯಲು ಗೋದಾಮು ಮುಂದೆ 5–6 ಗಂಟೆಗಳ ಕಾಲ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಮಹಿಳೆಯರು, ಮಕ್ಕಳು ಮತ್ತು ವೃದ್ಧರು ಸರತಿಯಲ್ಲಿ ನಿಂತು ಸಿಲಿಂಡರ್ ಪಡೆಯುತ್ತಿರುವ ದೃಶ್ಯಗಳು ಕಂಡುಬಂದಿವೆ.
ಒಟ್ಟಿನಲ್ಲಿ ಪೂರೈಕೆ ಸಹಜವಾಗುತ್ತಿದ್ದರೂ ದರ ಏರಿಕೆ ಜನರ ಕಷ್ಟವನ್ನು ಹೆಚ್ಚಿಸಿದೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

