Home Blog

ಮಿಶ್ರ ಪ್ರತಿಕ್ರಿಯೆಗೂ ಮಣಿಯದ ‘ಭೂತ್ ಬಂಗ್ಲ’: 100 ಕೋಟಿ ದಾಟಿದ ಅಕ್ಷಯ್ ಸಿನಿಮಾ

ಮಿಶ್ರ ವಿಮರ್ಶೆಗಳ ನಡುವೆಯೂ ಅಕ್ಷಯ್ ಕುಮಾರ್ ನಟನೆಯ ‘ಭೂತ್ ಬಂಗ್ಲ’ ಸಿನಿಮಾ ವಾಣಿಜ್ಯವಾಗಿ ತನ್ನ ಶಕ್ತಿ ಪ್ರದರ್ಶಿಸಿದೆ. 9 ದಿನಗಳಲ್ಲೇ 100 ಕೋಟಿ ರೂಪಾಯಿಗಳ ಕ್ಲಬ್ ಸೇರ್ಪಡೆಯಾಗಿರುವ ಈ ಚಿತ್ರ, ಸ್ಟಾರ್ ಪವರ್ ಮತ್ತು ಜನಪ್ರಿಯ ಶೈಲಿಯ ಮೇಲೆ ನಿಂತು ಬಾಕ್ಸ್‌ಆಫೀಸ್‌ನಲ್ಲಿ ಹಿಡಿತ ಸಾಧಿಸಿದೆ.

Sacnilk ಅಂಕಿಅಂಶಗಳ ಪ್ರಕಾರ, ಎರಡನೇ ಶನಿವಾರ ಚಿತ್ರ 10.75 ಕೋಟಿ ರೂ. ಗಳಿಸಿದ್ದು, ಒಟ್ಟು ನೆಟ್ ಕಲೆಕ್ಷನ್ 100.90 ಕೋಟಿ ರೂ. ತಲುಪಿದೆ. ಭಾರತದಲ್ಲೇ ಗ್ರಾಸ್ ಕಲೆಕ್ಷನ್ 120.10 ಕೋಟಿ ರೂ. ತಲುಪಿರುವುದು ಚಿತ್ರಕ್ಕೆ ಭದ್ರ ನೆಲೆ ಒದಗಿಸಿದೆ.

ಇನ್ನೊಂದೆಡೆ, ಓವರ್‌ಸೀಸ್ ಮಾರುಕಟ್ಟೆಯಲ್ಲೂ ‘ಭೂತ್ ಬಂಗ್ಲ’ 3.8 ಮಿಲಿಯನ್ ಡಾಲರ್ ಗಳಿಕೆ ಮಾಡಿ, ಜಾಗತಿಕ ಮಟ್ಟದಲ್ಲಿ 135 ಕೋಟಿ ರೂಪಾಯಿ ದಾಟಿದೆ. ಇದು ಚಿತ್ರಕ್ಕೆ ಮಲ್ಟಿ-ಮಾರ್ಕೆಟ್ ಆಕರ್ಷಣೆ ಇರುವುದನ್ನು ದೃಢಪಡಿಸಿದೆ.

ಬಾಲಾಜಿ ಮೋಷನ್ ಪಿಕ್ಚರ್ಸ್ ಅಡಿಯಲ್ಲಿ ನಿರ್ಮಾಣಗೊಂಡ ಈ ಚಿತ್ರದಲ್ಲಿ ಟಬು, ವಾಮಿಕಾ ಗಬ್ಬಿ, ಮಿಥಿಲಾ ಪಾಲ್ಕರ್, ರಾಜ್‌ಪಾಲ್ ಯಾದವ್ ಹಾಗೂ ಜಿಸ್ಶು ಸೇನ್‌ಗುಪ್ತಾ ಅಭಿನಯಿಸಿದ್ದು, ಹಾರರ್-ಕಾಮಿಡಿ ಜಾನರ್‌ನಲ್ಲಿ ಮತ್ತೆ ಅಕ್ಷಯ್–ಪ್ರಿಯದರ್ಶನ್ ಜೋಡಿ ಮರುಜೀವ ಪಡೆದಿದೆ. ಬಿಡುಗಡೆ ವಿಳಂಬದ ನಡುವೆಯೂ ಪ್ರೇಕ್ಷಕರನ್ನು ಥಿಯೇಟರ್‌ಗೆ ಸೆಳೆಯುತ್ತಿರುವ ಈ ಚಿತ್ರ, ಮುಂದಿನ ವಾರಗಳಲ್ಲಿ ಇನ್ನಷ್ಟು ಕಲೆಕ್ಷನ್ ಮಾಡುವ ಸೂಚನೆ ನೀಡುತ್ತಿದೆ.

ಬೆಂಗಳೂರು 10ಕೆ ಮ್ಯಾರಥಾನ್: ಈ ಪ್ರಮುಖ ರಸ್ತೆಗಳ ಸಂಚಾರದಲ್ಲಿಂದು ಭಾರಿ ಬದಲಾವಣೆ!

ಬೆಂಗಳೂರು: ನಗರದಲ್ಲಿ ಇಂದು ನಡೆಯುತ್ತಿರುವ ಟಿಸಿಎಸ್ ವರ್ಲ್ಡ್ 10ಕೆ ಮ್ಯಾರಥಾನ್ ಹಿನ್ನೆಲೆ ಬೆಳಿಗ್ಗೆ 5 ಗಂಟೆಯಿಂದ 11 ಗಂಟೆಯವರೆಗೆ ಹಲವು ಪ್ರಮುಖ ರಸ್ತೆಗಳಲ್ಲಿ ಸಂಚಾರ ನಿರ್ಬಂಧ ವಿಧಿಸಲಾಗಿದೆ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.

ಸುಮಾರು 30,000ಕ್ಕೂ ಹೆಚ್ಚು ಮಂದಿ ಈ ಮ್ಯಾರಥಾನ್‌ನಲ್ಲಿ ಭಾಗವಹಿಸುವ ನಿರೀಕ್ಷೆ ಇದೆ.

ಮ್ಯಾರಥಾನ್ ಆರ್‌ಎಸ್‌ಎಒಐ ಮೈದಾನದಿಂದ ಆರಂಭವಾಗಿ ಅಲ್ಲಿಯೇ ಮುಕ್ತಾಯಗೊಳ್ಳಲಿದೆ. ಕಬ್ಬನ್ ರಸ್ತೆ, ಕಾಮರಾಜ್ ರಸ್ತೆ, ರಾಜಭವನ ರಸ್ತೆ ಮತ್ತು ಅಂಬೇಡ್ಕರ್ ರಸ್ತೆಗಳಲ್ಲಿ ಸ್ಪರ್ಧೆ ನಡೆಯಲಿದ್ದು, ಹಲಸೂರು, ಫ್ರೇಸರ್ ಟೌನ್ ಹಾಗೂ ಶಿವಾಜಿನಗರ ಪ್ರದೇಶಗಳ ಮೂಲಕ ಸಾಗಲಿದೆ.

ಕಬ್ಬನ್ ರಸ್ತೆಯಲ್ಲಿ ಸಿಟಿಒ ಜಂಕ್ಷನ್‌ನಿಂದ ಮಣಿಪಾಲ್ ಸೆಂಟರ್‌ವರೆಗೆ ಸಂಚಾರ ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ. ವಿಧಾನಸೌಧದ ಕಡೆಗೆ ಎಲ್ಲಾ ವಾಹನಗಳ ಪ್ರವೇಶಕ್ಕೂ ನಿರ್ಬಂಧ ಹೇರಲಾಗಿದೆ. ಜೊತೆಗೆ ಸೇಂಟ್ ಜಾನ್ಸ್ ರಸ್ತೆ, ಕಾಮರಾಜ್ ರಸ್ತೆ, ಇನ್ಫ್ಯಾಂಟ್ರಿ ರಸ್ತೆ ಹಾಗೂ ಲೇಡಿ ಕರ್ಝನ್ ರಸ್ತೆಯ ಕೆಲವು ಭಾಗಗಳಲ್ಲಿಯೂ ಸಂಚಾರಕ್ಕೆ ಅವಕಾಶ ಇರುವುದಿಲ್ಲ.

ಪರ್ಯಾಯ ಮಾರ್ಗವಾಗಿ ಕ್ವೀನ್ಸ್ ರಸ್ತೆಯಿಂದ ವಾಹನಗಳು ಬಾಳೇಕುಂದ್ರಿ ಜಂಕ್ಷನ್ ಮೂಲಕ ಕನ್ನಿಂಗ್‌ಹ್ಯಾಮ್ ರಸ್ತೆ ಸಂಪರ್ಕಿಸಿ ಚಾಲುಕ್ಯ ಸರ್ಕಲ್ ಮುಖಾಂತರ ಮೆಜೆಸ್ಟಿಕ್ ಅಥವಾ ಸಿಟಿ ಮಾರ್ಕೆಟ್ ಕಡೆಗೆ ತೆರಳುವಂತೆ ಸೂಚಿಸಲಾಗಿದೆ. ಶಿವಾಜಿನಗರ ಬಸ್ ನಿಲ್ದಾಣದಿಂದ ಮೆಜೆಸ್ಟಿಕ್ ಮತ್ತು ಕೆ.ಆರ್. ಮಾರ್ಕೆಟ್ ಕಡೆಗೆ ಹೋಗುವ ಬಿಎಂಟಿಸಿ ಬಸ್‌ಗಳು ವೆಂಕಟಸ್ವಾಮಿ ನಾಯ್ಡು ರಸ್ತೆ ಹಾಗೂ ಕನ್ನಿಂಗ್‌ಹ್ಯಾಮ್ ರಸ್ತೆಯ ಮೂಲಕ ಸಂಚರಿಸಲಿವೆ.

ಎಂಜಿ ರಸ್ತೆಯಿಂದ ಹಲಸೂರು ಕಡೆಗೆ ತೆರಳುವವರು ವೆಬ್ಸ್ ಜಂಕ್ಷನ್, ಟ್ರಿನಿಟಿ ಜಂಕ್ಷನ್ ಹಾಗೂ ಸ್ವಾಮಿ ವಿವೇಕಾನಂದ ರಸ್ತೆಯನ್ನು ಬಳಸುವಂತೆ ಸಲಹೆ ನೀಡಲಾಗಿದೆ. ಭಾರಿ ವಾಹನಗಳಿಗೆ ಕೇಂದ್ರ ವ್ಯಾಪಾರ ಪ್ರದೇಶಕ್ಕೆ ಪ್ರವೇಶವಿಲ್ಲ. ಓಲ್ಡ್ ಮದ್ರಾಸ್ ರಸ್ತೆಯಿಂದ ಬರುವವರು ಎನ್‌ಜಿಇಎಫ್ ಜಂಕ್ಷನ್ ಮತ್ತು ಸುರಂಜನ್ ದಾಸ್ ರಸ್ತೆಯ ಮೂಲಕ ಓಲ್ಡ್ ಏರ್‌ಪೋರ್ಟ್ ರಸ್ತೆಗೆ ತೆರಳಬೇಕು.

ಕಸ್ತೂರಬಾ ರಸ್ತೆ, ಸೇಂಟ್ ಮಾರ್ಕ್ಸ್ ರಸ್ತೆ ಹಾಗೂ ಕಬ್ಬನ್ ಪಾರ್ಕ್ ಸುತ್ತಮುತ್ತ ನೋ-ಪಾರ್ಕಿಂಗ್ ಜೋನ್ ಘೋಷಿಸಲಾಗಿದೆ. ಮ್ಯಾರಥಾನ್‌ನಲ್ಲಿ ಭಾಗವಹಿಸುವವರು ಮತ್ತು ಪ್ರೇಕ್ಷಕರು ಯುಬಿ ಸಿಟಿ, ಶಿವಾಜಿನಗರ ಬಸ್ ನಿಲ್ದಾಣ ಹಾಗೂ ಚರ್ಚ್ ಸ್ಟ್ರೀಟ್ ಪ್ರದೇಶಗಳಲ್ಲಿ ಪಾವತಿಸಬಹುದಾದ ಪಾರ್ಕಿಂಗ್ ಸೌಲಭ್ಯವನ್ನು ಬಳಸಬಹುದು. ಎಂಎಸ್ ಬಿಲ್ಡಿಂಗ್ ಹಾಗೂ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನದಲ್ಲೂ ಅಧಿಕೃತ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.

ಬೇಸಿಗೆಯಲ್ಲಿ ಖಾಲಿ ಹೊಟ್ಟೆ ವಾಕ್ ಸುರಕ್ಷಿತವೇ? ತಜ್ಞರು ಈ ಬಗ್ಗೆ ಏನ್ ಹೇಳ್ತಾರೆ ನೋಡಿ!

0

ಬೇಸಿಗೆ ಶಾಖ ತೀವ್ರವಾಗುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವ ಅಗತ್ಯವಿದೆ ಎಂದು ತಜ್ಞರು ಸೂಚಿಸಿದ್ದಾರೆ.

ವಿಶೇಷವಾಗಿ ಖಾಲಿ ಹೊಟ್ಟೆಯಲ್ಲಿ ಬೆಳಗಿನ ವಾಕ್ ಮಾಡುವವರು ಕೆಲವು ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕು ಎಂದು ಸಲಹೆ ನೀಡಿದ್ದಾರೆ.

ತಜ್ಞರ ಪ್ರಕಾರ, ಖಾಲಿ ಹೊಟ್ಟೆಯಲ್ಲಿ ವಾಕ್ ಮಾಡುವುದು ವ್ಯಕ್ತಿಯ ಆರೋಗ್ಯ ಸ್ಥಿತಿಯ ಮೇಲೆ ಅವಲಂಬಿತವಾಗಿದೆ. ಯಾವುದೇ ಗಂಭೀರ ಆರೋಗ್ಯ ಸಮಸ್ಯೆಗಳಿಲ್ಲದವರು ಹಾಗೂ ದೇಹದಲ್ಲಿ ನೀರಿನ ಕೊರತೆ ಇಲ್ಲದಿದ್ದರೆ ಬೆಳಗಿನ ವಾಕ್ ಮಾಡಬಹುದು. ಆದರೆ ಎಲ್ಲರಿಗೂ ಇದು ಸೂಕ್ತವಾಗುವುದಿಲ್ಲ ಎಂದು ಎಚ್ಚರಿಸಲಾಗಿದೆ.

ವಾಕ್ ಮಾಡುವ ವೇಳೆ ಹೆಚ್ಚು ಆಯಾಸ, ದಣಿವು ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಅಗತ್ಯ. ವಿಶೇಷವಾಗಿ ಮಧುಮೇಹ ಇರುವವರು ಖಾಲಿ ಹೊಟ್ಟೆಯಲ್ಲಿ ವಾಕ್ ಮಾಡುವುದನ್ನು ತಪ್ಪಿಸಬೇಕು. ಇದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ತಕ್ಷಣ ಕಡಿಮೆಯಾಗುವ ಸಾಧ್ಯತೆ ಇದ್ದು, ತಲೆಸುತ್ತು ಅಥವಾ ದುರ್ಬಲತೆ ಉಂಟಾಗಬಹುದು.

ಇಂತಹವರು ಬೆಳಿಗ್ಗೆ ಸ್ವಲ್ಪ ಪ್ರೋಟೀನ್‌ಯುಕ್ತ ಆಹಾರ ಸೇವಿಸಿ ವಾಕ್‌ಗೆ ಹೋಗುವುದು ಉತ್ತಮ. ಉದಾಹರಣೆಗೆ ನೆನೆಸಿದ ಕಡಲೆ ಸೇವನೆ ಮಾಡಬಹುದು ಎಂದು ತಜ್ಞರು ಸಲಹೆ ನೀಡಿದ್ದಾರೆ.

ಬೇಸಿಗೆಯಲ್ಲಿ ಹೆಚ್ಚು ಬೆವರು ಬರುತ್ತಿರುವುದರಿಂದ ದೇಹದಲ್ಲಿ ನೀರಿನ ಪ್ರಮಾಣ ಕಡಿಮೆಯಾಗುವ ಅಪಾಯ ಹೆಚ್ಚಿರುತ್ತದೆ. ಖಾಲಿ ಹೊಟ್ಟೆಯಲ್ಲಿ ಇದು ಇನ್ನಷ್ಟು ಪರಿಣಾಮ ಬೀರುತ್ತದೆ. ತಲೆನೋವು, ದಣಿವು ಮತ್ತು ನೀರಿನ ಕೊರತೆ ಸಮಸ್ಯೆಗಳು ಕಾಣಿಸಬಹುದಾದ್ದರಿಂದ ವಾಕ್‌ಗೆ ಹೊರಡುವ ಮೊದಲು ಸಾಕಷ್ಟು ನೀರು ಕುಡಿಯುವುದು ಅಗತ್ಯ.

ಇದಲ್ಲದೆ, ಬೆಳಗ್ಗೆ 5ರಿಂದ 6 ಗಂಟೆಯೊಳಗೆ ವಾಕ್ ಮಾಡುವುದು ಸೂಕ್ತ. ನಂತರ ಸೂರ್ಯನ ತಾಪಮಾನ ಹೆಚ್ಚಾಗುವುದರಿಂದ ಆರೋಗ್ಯದ ಮೇಲೆ ಹಾನಿ ಉಂಟಾಗುವ ಸಾಧ್ಯತೆ ಇದೆ ಎಂದು ತಜ್ಞರು ತಿಳಿಸಿದ್ದಾರೆ.

ಮದುವೆ ಸಂಭ್ರಮದಲ್ಲಿದ್ದವರಿಗೆ ಆಘಾತ: ಮಂಟಪದಿಂದ 1 ಕೋಟಿ ರೂ. ಮೌಲ್ಯದ ಬಂಗಾರ ಕಳವು, ದೂರು ದಾಖಲು!

ಬೆಂಗಳೂರು: ಖದೀಮರು ಮದುವೆ ಮನೆಯಲ್ಲಿ ಬರೋಬ್ಬರಿ 1 ಕೋಟಿ ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿರುವ ಘಟನೆ ರಾಜಧಾನಿ ಬೆಂಗಳೂರಿನ ಅವಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.

ಅಮೆರಿಕದಲ್ಲಿ ವಾಸವಿರುವ 52 ವರ್ಷದ ಮಹಿಳಾ ವೈದ್ಯೆ ಸಿರುವೆಲ್ಲ ಶ್ರೀದೇವಿ ಎಂಬವರಿಗೆ ಸೇರಿದ ಚಿನ್ನಾಭರಣವನ್ನು ಮದುವೆ ಮಂಟಪದಲ್ಲಿ ಬುಧವಾರ ಸಂಜೆ ದೋಚಿರೋದು ತಡವಾಗಿ ಬೆಳಕಿಗೆ ಬಂದಿದೆ. ಘಟನೆಯಿಂದ ಮದುವೆ ಸಂಭ್ರಮದಲ್ಲಿದ್ದ ಕುಟುಂಬಸ್ಥರಿಗೆ ದೊಡ್ಡ ಆಘಾತವಾಗಿದೆ.

ತಮ್ಮ ಸಹೋದರನ ಮಗನ ಮದುವೆಗೆ ಏಪ್ರಿಲ್ 18ರಂದು ಬೆಂಗಳೂರಿಗೆ ಬಂದಿದ್ದ ಶ್ರೀದೇವಿ ಅವರು, ಗಂಗಾನಗರದಲ್ಲಿರುವ ತಮ್ಮ ಸಹೋದರರ ಮನೆಯಲ್ಲಿ ತಂಗಿದ್ದರು. ಬುಧವಾರ ಬೆಳಗ್ಗೆ 11.30ರ ಸುಮಾರಿಗೆ ಬಿಡರಹಳ್ಳಿಯ ಓಲ್ಡ್ ಮದ್ರಾಸ್ ರಸ್ತೆಯ ಎಸ್‌ಡಿಪಿ ಪ್ಯಾಲೆಸ್ ಮಂಟಪಕ್ಕೆ ತೆರಳಿದ್ದರು. ಸಂಜೆ 6.30ರ ವೇಳೆಗೆ ಅವರ ಸಹೋದರರು ಚಿನ್ನಾಭರಣಗಳಿದ್ದ ಪೆಟ್ಟಿಗೆಯನ್ನು ಮಂಟಪದಲ್ಲೇ ನೀಡಿದ್ದಾರೆ. ಆ ಪೈಕಿ ಸ್ವಲ್ಪ ಆಭರಣಗಳನ್ನು ಧರಿಸಿ ಉಳಿದವುಗಳನ್ನು ಕೊಠಡಿಯಲ್ಲಿ ಇಟ್ಟು ಬಾಗಿಲು ಲಾಕ್ ಮಾಡಿ ಸ್ವಾಗತ ಕಾರ್ಯಕ್ರಮಕ್ಕೆ ಅವರು ಹೋಗಿದ್ದರು. ಕೊಠಡಿಗೆ ಲಾಕ್ ಮಾಡಿದ್ದರೂ ಈ ಆಭರಣಗಳು ಕಳವಾಗಿರೋದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಇನ್ನು ಘಟನೆ ಸಂಬಂಧ ಸಿರುವೆಲ್ಲ ಶ್ರೀದೇವಿ ಅವರು ಗುರುವಾರ ಮಧ್ಯಾಹ್ನ ದೂರು ನೀಡಿದ್ದಾರೆ. ಕಳುವಾಗಿರೋದು ಸುಮಾರು 725 ಗ್ರಾಂ ಚಿನ್ನಾಭರಣಗಳು ಎನ್ನಲಾಗಿದ್ದು, ದೂರುದಾರರಿಗೆ ಪರಿಚಿತರಾದವರು ಅಥವಾ ಕುಟುಂಬದವರಲ್ಲಿ ಯಾರಾದರೂ ಕೃತ್ಯ ಎಸಗಿರಬಹುದೆಂಬ ಶಂಕೆಯೂ ಇದೆ. ಹೀಗಾಗಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುವ ಜೊತೆಗೆ ಕೊಠಡಿಗೆ ಪ್ರವೇಶ ಹೊಂದಿದ್ದವರ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

IPL: ವೈಭವ್ ಶತಕ ವ್ಯರ್ಥ; ರಾಜಸ್ಥಾನ್ ವಿರುದ್ಧ SRH ಗೆ 5 ವಿಕೆಟ್‌ಗಳ ಜಯ!

0

ಜೈಪುರದಲ್ಲಿ ಶನಿವಾರ ನಡೆದ ಐಪಿಎಲ್ ಪಂದ್ಯದಲ್ಲಿ ,ಸನ್ ರೈಸರ್ಸ್ ಹೈದರಾಬಾದ್ ತಂಡವು ರಾಜಸ್ಥಾನ್ ರಾಯಲ್ಸ್ ವಿರುದ್ಧ 5 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ರಾಯಲ್ಸ್ ತಂಡವು ಯುವ ಬ್ಯಾಟ್ಸ್‌ಮನ್ ವೈಭವ್ ಸೂರ್ಯವಂಶಿ ಅವರ ಸ್ಫೋಟಕ ಶತಕದ ನೆರವಿನಿಂದ 6 ವಿಕೆಟ್ ನಷ್ಟಕ್ಕೆ 228 ರನ್ ಗಳಿಸಿತು. ಕೇವಲ 37 ಬಾಲ್‌ಗಳಲ್ಲಿ 103 ರನ್ ಗಳಿಸಿದ ವೈಭವ್ 12 ಸಿಕ್ಸರ್ ಮತ್ತು 5 ಫೋರ್‌ಗಳೊಂದಿಗೆ ಅಬ್ಬರದ ಪ್ರದರ್ಶನ ನೀಡಿದರು. ಧ್ರುವ್ ಜುರೆಲ್ ಅರ್ಧಶತಕ ಗಳಿಸಿದರೆ, ಡೊನೊವನ್ ಫೆರೀರಾ 33 ರನ್ ಕೊಡುಗೆ ನೀಡಿದರು.

ಗುರಿ ಬೆನ್ನತ್ತಿದ ಸನ್‌ರೈಸರ್ಸ್ ಹೈದರಾಬಾದ್ ಆರಂಭದಲ್ಲೇ ಟ್ರಾವಿಸ್ ಹೆಡ್ (6) ವಿಕೆಟ್ ಕಳೆದುಕೊಂಡರೂ, ಇಶಾನ್ ಕಿಶನ್ ಮತ್ತು ಅಭಿಷೇಕ್ ಶರ್ಮಾ ಜೋಡಿ ಪಂದ್ಯವನ್ನು ತಿರುಗಿಸಿತು. ಇಶಾನ್ ಕಿಶನ್ 71 ರನ್ (31 ಬಾಲ್, 11 ಫೋರ್, 3 ಸಿಕ್ಸರ್) ಸಿಡಿಸಿದರೆ, ಅಭಿಷೇಕ್ ಶರ್ಮಾ ಸಹ ಅರ್ಧಶತಕದ ಕೊಡುಗೆ ನೀಡಿದರು. ಇವರಿಬ್ಬರು ಸೇರಿ 55 ಬಾಲ್‌ಗಳಲ್ಲಿ 132 ರನ್‌ಗಳ ಭರ್ಜರಿ ಜೊತೆಯಾಟ ನಡೆಸಿ ತಂಡವನ್ನು ಗೆಲುವಿನ ದಡಕ್ಕೆ ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಹಾನಗಲ್ ತಾಲೂಕು ಆಸ್ಪತ್ರೆಯಲ್ಲಿ ಅಗ್ನಿ ಅವಘಡ: 1 ಕೋಟಿ ರೂ. ಮೌಲ್ಯದ ಔಷಧಿ ಸುಟ್ಟು ಭಸ್ಮ!

ಹಾವೇರಿ: ಜಿಲ್ಲೆಯ ಹಾನಗಲ್ ತಾಲೂಕು ಆಸ್ಪತ್ರೆಯಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದ್ದು, ಸುಮಾರು 1 ಕೋಟಿ ರೂ. ಮೌಲ್ಯದ ಔಷಧಿ, ಮಾತ್ರೆಗಳು ಹಾಗೂ ವೈದ್ಯಕೀಯ ಉಪಕರಣಗಳು ಸುಟ್ಟು ಭಸ್ಮವಾಗಿವೆ.

ಮಾಹಿತಿಯ ಪ್ರಕಾರ, ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಆಸ್ಪತ್ರೆಯ 2ನೇ ಮಹಡಿಯಲ್ಲಿ ಏಕಾಏಕಿ ಬೆಂಕಿ ಹೊತ್ತಿಕೊಂಡಿದೆ. ಇದರಿಂದ ಸುಮಾರು 40 ಲಕ್ಷ ರೂ. ಮೌಲ್ಯದ ಔಷಧಿಗಳು, 50 ಲಕ್ಷ ರೂ. ಮೌಲ್ಯದ ಮಾತ್ರೆಗಳು ಹಾಗೂ ವೈದ್ಯಕೀಯ ಉಪಕರಣಗಳು ಸಂಪೂರ್ಣವಾಗಿ ನಾಶವಾಗಿವೆ.

ಘಟನೆ ಬಗ್ಗೆ ತಿಳಿದು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಅದೃಷ್ಟವಶಾತ್ ಆಸ್ಪತ್ರೆಯಲ್ಲಿದ್ದ ರೋಗಿಗಳಿಗೆ ಯಾವುದೇ ತೊಂದರೆ ಆಗಿಲ್ಲ ಎಂದು ತಿಳಿದುಬಂದಿದೆ.

ಸ್ಥಳಕ್ಕೆ ಹಾನಗಲ್ ಶಾಸಕ ಶ್ರೀನಿವಾಸ ಮಾನೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಹಾನಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.

ಕುರಿಗಳು ತೋಟಕ್ಕೆ ನುಗ್ಗಿದ್ದಕ್ಕೆ ಮಾಲೀಕರ ಅಟ್ಟಹಾಸ: ಕುರಿಗಾಹಿಗಳಿಗೆ ಮನಸೋ ಇಚ್ಛೆ ಥಳಿತ!

ದಾವಣಗೆರೆ:- ದಾವಣಗೆರೆ ತಾಲೂಕಿನ ನಾಗರಸನಹಳ್ಳಿ ಬಳಿ ಕುರಿಗಳು ತೋಟಕ್ಕೆ ನುಗ್ಗಿದವು ಎಂಬ ಕ್ಷುಲ್ಲಕ ಕಾರಣಕ್ಕಾಗಿ ಜಮೀನು ಮಾಲೀಕರು ಕುರಿಗಾಹಿ ತಂದೆ-ಮಗನ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ ಘಟನೆ ನಡೆದಿದೆ.

ಘಟನೆಯಲ್ಲಿ ನಾಗರಾಜ್(18) ಮತ್ತು ಬಾಳಪ್ಪ(40) ಎಂಬ ಕುರಿಗಾಹಿಗಳು ಹಲ್ಲೆಗೊಳಗಾಗಿದ್ದಾರೆ. ಆರೋಪಿಗಳು, ಹಲ್ಲೆ ಮಾಡಿದ್ದಲ್ಲದೆ ಜೆಸಿಬಿಯಿಂದ ಗುಂಡಿ ತೆಗೆದು ಹೂತು ಹಾಕುವುದಾಗಿ ಬೆದರಿಕೆ ಕೂಡ ಹಾಕಲಾಗಿದೆ. ಘಟನೆ ಸಂಬಂಧ ಹದಡಿ ಪೊಲೀಸ್ ಠಾಣೆಗೆ ಗಾಯಾಳು ಬಾಳಪ್ಪ ದೂರು ನೀಡಿದ್ದಾರೆ. ಕಾರಿಗನೂರು ಗ್ರಾಮದ ನಿವಾಸಿಗಳಾದ ಪ್ರಕಾಶ್ ಮತ್ತು ವೀರೇಶ್ ಎಂಬುವವರು ಮೊದಲು ನಾಗರಾಜ್ ಮೇಲೆ ಮನಸೋಇಚ್ಛೆ ಹಲ್ಲೆ ಮಾಡಿದ್ದಾರೆ.

ಜಮೀನು ಮಾಲೀಕರು ಮನಸೋಇಚ್ಛೆ ಥಳಿಸಿದಕ್ಕೆ ನಾಗರಾಜ್ ಸ್ಥಳದಲ್ಲೇ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ. ಮಗನ ಸ್ಥಿತಿ ಕಂಡು ಗಾಬರಿಯಾಗಿ ಪ್ರಶ್ನಿಸಲು ಹೋದ ತಂದೆ ಬಾಳಪ್ಪ ಅವರ ಮೇಲೂ ಜಮೀನು ಮಾಲೀಕರು ಹಲ್ಲೆ ನಡೆಸಿ ಅಟ್ಟಹಾಸ ಮೆರೆದಿದ್ದಾರೆ. ಇನ್ನೊಮ್ಮೆ ಕುರಿಗಳು ಅಡಕೆ ತೋಟಕ್ಕೆ ನುಗ್ಗಿದರೆ ನಿಮ್ಮನ್ನು ಬಿಡುವುದಿಲ್ಲ. ಜೆಸಿಬಿಯಿಂದ ಗುಂಡಿ ತೆಗೆದು ಇಲ್ಲೇ ಹೂತು ಹಾಕಿಬಿಡುತ್ತೇವೆ ಎಂದು ಜಮೀನು ಮಾಲೀಕರು ಕುರಿಗಾಹಿಗಳಿಗೆ ಜೀವ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.

ಸದ್ಯ ಗಂಭೀರವಾಗಿ ಗಾಯಗೊಂಡಿರುವ ನಾಗರಾಜ್ ನಗರದ ಎಸ್.ಎಸ್. ಹೈಟೆಕ್ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ತಮ್ಮ ಮೇಲೆ ಹಲ್ಲೆ ನಡೆಸಿ ಪ್ರಾಣ ಬೆದರಿಕೆ ಹಾಕಿರುವ ಪ್ರಕಾಶ್ ಮತ್ತು ವೀರೇಶ್ ವಿರುದ್ಧ ಗಾಯಾಳು ಬಾಳಪ್ಪ ಅವರು ಹದಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Crime News: ಕುಡಿತದ ಚಟಕ್ಕೆ ದಾಸನಾಗಿದ್ದ ಮಗನನ್ನೇ ಕೊಲೆಗೈದ ಹೆತ್ತ ತಾಯಿ!

0

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮನಕಲಕುವ ಘಟನೆ ನಡೆದಿದೆ.

ಕುಡಿತದ ಚಟಕ್ಕೆ ಬಿದ್ದು ನಿರಂತರವಾಗಿ ತಾಯಿಗೆ ಕಿರುಕುಳ ನೀಡುತ್ತಿದ್ದ ಮಗನನ್ನೇ ಹೆತ್ತ ತಾಯಿಯೇ ಕಲ್ಲಿನಿಂದ ಹೊಡೆದು ಕೊಲೆ ಮಾಡಿದ ಘಟನೆ ನಗರವನ್ನು ಬೆಚ್ಚಿಬೀಳಿಸಿದೆ.

ಮೈಸೂರಿನ ಎನ್.ಆರ್. ಮೊಹಲ್ಲಾ ನಿವಾಸಿ ರಮೇಶ್ (43) ಮೃತ ವ್ಯಕ್ತಿಯಾಗಿದ್ದು, ಈತನನ್ನು ಕೊಲೆ ಮಾಡಿದವರು ತಾಯಿ ಮಂಜುಳಾ ಎಂದು ಪೊಲೀಸರು ತಿಳಿಸಿದ್ದಾರೆ. ಮಂಜುಳಾ ಬೇರೆಯವರ ಮನೆಗಳಲ್ಲಿ ಕೆಲಸ ಮಾಡುತ್ತ ಜೀವನ ಸಾಗಿಸುತ್ತಿದ್ದರು.

ಮಗ ರಮೇಶ್‌ಗೆ ಕುಡಿತದ ಚಟವಿದ್ದು, ಕೆಲಸಕ್ಕೂ ಹೋಗದೆ ಪ್ರತಿದಿನ ಕುಡಿಯಲು ಹಣಕ್ಕಾಗಿ ತಾಯಿಯನ್ನು ಪೀಡಿಸುತ್ತಿದ್ದ. ಈ ಕಾರಣದಿಂದ ಮನೆಯಲ್ಲಿ ನಿರಂತರವಾಗಿ ತಾಯಿ-ಮಗನ ನಡುವೆ ಜಗಳ ನಡೆಯುತ್ತಿತ್ತು ಎಂದು ತಿಳಿದುಬಂದಿದೆ.

ಘಟನೆಯ ದಿನ ತಾಯಿ ಮಂಜುಳಾ ಮಗನನ್ನು ಚಾಮುಂಡಿ ಬೆಟ್ಟದ ತಪ್ಪಲಿಗೆ ಕರೆದುಕೊಂಡು ಹೋಗಿದ್ದು, ಅಲ್ಲಿ ಇಬ್ಬರ ನಡುವೆ ತೀವ್ರ ವಾಗ್ವಾದ ನಡೆದಿದೆ. ಗಲಾಟೆ ವಿಕೋಪಕ್ಕೆ ತಲುಪಿದಾಗ, ತಾಯಿ ಅಲ್ಲಿದ್ದ ಕಲ್ಲಿನಿಂದ ಮಗನ ತಲೆಗೆ ಹೊಡೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ತೀವ್ರ ರಕ್ತಸ್ರಾವದಿಂದ ರಮೇಶ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಘಟನೆಯ ಬಗ್ಗೆ ಮಾಹಿತಿ ಸಿಕ್ಕ ನಂತರ ನಜರ್‌ಬಾದ್ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದು, ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ತನಿಖೆ ನಡೆಸಿದ್ದಾರೆ. ಬಳಿಕ ತಾಯಿ ಮಂಜುಳಾಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅವರು ತಪ್ಪನ್ನು ಒಪ್ಪಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಸದ್ಯ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. ಈ ಘಟನೆ ಕುಟುಂಬ ಸಂಬಂಧಗಳು ಹಾಗೂ ಕುಡಿತದ ಚಟದಿಂದ ಉಂಟಾಗುವ ಭೀಕರ ಪರಿಣಾಮಗಳ ಬಗ್ಗೆ ಮತ್ತೆ ಚರ್ಚೆಗೆ ಕಾರಣವಾಗಿದೆ.

IPL ಇತಿಹಾಸದಲ್ಲಿ ಹೊಸ ದಾಖಲೆ: ಅತಿದೊಡ್ಡ ಗುರಿ ಬೆನ್ನಟ್ಟಿ ಡೆಲ್ಲಿ ಮಣಿಸಿದ ಪಂಜಾಬ್!

0

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಐಪಿಎಲ್ 2026 ರ 35ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಇತಿಹಾಸ ಸೃಷ್ಟಿಸಿದೆ.

ಡೆಲ್ಲಿಯ 265 ರನ್​ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಪಂಜಾಬ್, ಐಪಿಎಲ್ ಇತಿಹಾಸದಲ್ಲೇ ಅತಿ ದೊಡ್ಡ ರನ್ ಚೇಸ್ ಮಾಡಿದ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ 20 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 264 ರನ್‌ಗಳ ಭಾರೀ ಮೊತ್ತ ಪೇರಿಸಿತು. ಕೆಎಲ್ ರಾಹುಲ್ ಅಬ್ಬರದ ಶತಕ ಸಿಡಿಸಿ 67 ಎಸೆತಗಳಲ್ಲಿ 152 ರನ್ ಗಳಿಸಿದರು. ನಿತೀಶ್ ರಾಣಾ 44 ಎಸೆತಗಳಲ್ಲಿ 91 ರನ್ ಗಳಿಸಿ ಭರ್ಜರಿ ಜೊತೆಯಾಟ ನೀಡಿದರು. ಈ ಇಬ್ಬರೂ ಸೇರಿ 200ಕ್ಕೂ ಹೆಚ್ಚು ರನ್‌ಗಳ ಜೊತೆಯಾಟ ಆಡಿದರು.

ಸವಾಲಿನ 265 ರನ್ ಗುರಿ ಬೆನ್ನಟ್ಟಿದ ಪಂಜಾಬ್ ಕಿಂಗ್ಸ್ ಆರಂಭದಲ್ಲೇ ಆಕ್ರಮಣಕಾರಿ ಆಟ ಪ್ರದರ್ಶಿಸಿತು. ಪ್ರಭುಸಿಮ್ರಾನ್ ಸಿಂಗ್ 26 ಎಸೆತಗಳಲ್ಲಿ 76 ರನ್ ಹಾಗೂ ಪ್ರಿಯಾಂಶ್ ಆರ್ಯ 17 ಎಸೆತಗಳಲ್ಲಿ 43 ರನ್ ಗಳಿಸಿ ತಂಡಕ್ಕೆ ಭರ್ಜರಿ ಆರಂಭ ನೀಡಿದರು.

ಮಧ್ಯದ ಓವರ್‌ಗಳಲ್ಲಿ ಮೂರು ವಿಕೆಟ್ ಕಳೆದುಕೊಂಡರೂ, ನಾಯಕ ಶ್ರೇಯಸ್ ಅಯ್ಯರ್ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿದರು. ಅವರು 36 ಎಸೆತಗಳಲ್ಲಿ 71 ರನ್ ಸಿಡಿಸಿ ತಂಡವನ್ನು ಗೆಲುವಿನ ದಡಕ್ಕೆ ಕರೆದೊಯ್ದರು. ಕೂಪರ್ ಕೊನೊಲಿ 27 ರನ್ ಮತ್ತು ನೆಹಲ್ ವದೇರಾ 25 ರನ್ ಗಳಿಸಿ ಬೆಂಬಲ ನೀಡಿದರು.

ಪಂಜಾಬ್ ಕಿಂಗ್ಸ್ 18.5 ಓವರ್‌ಗಳಲ್ಲಿ 265 ರನ್ ಗಳಿಸಿ 7 ಎಸೆತಗಳು ಬಾಕಿ ಇರುವಾಗಲೇ ಗೆಲುವು ಸಾಧಿಸಿತು.

ಡೆಲ್ಲಿ ಪರ ಕುಲ್‌ದೀಪ್ ಯಾದವ್ 2 ವಿಕೆಟ್ ಪಡೆದರೆ, ಅಕ್ಷರ್ ಪಟೇಲ್ ಮತ್ತು ವಿಪ್ರಜ್ ನಿಗಮ್ ತಲಾ ಒಂದು ವಿಕೆಟ್ ಪಡೆದರು. ಪಂಜಾಬ್ ಪರ ಅರ್ಶದೀಪ್ ಸಿಂಗ್ ಮತ್ತು ಕ್ಸೇವಿಯರ್ ಬಾರ್ಟ್ಲೆಟ್ ತಲಾ ಒಂದು ವಿಕೆಟ್ ಕಿತ್ತರು.

ಈ ಗೆಲುವಿನೊಂದಿಗೆ ಪಂಜಾಬ್ ಕಿಂಗ್ಸ್ ಐಪಿಎಲ್ ಇತಿಹಾಸದಲ್ಲೇ ಅತ್ಯಂತ ದೊಡ್ಡ ರನ್ ಚೇಸ್ ಸಾಧಿಸಿದ ಪಂದ್ಯವಾಗಿ ಹೊಸ ದಾಖಲೆ ನಿರ್ಮಿಸಿದೆ.

ಬಳ್ಳಾರಿ| ಭೀಕರ ಅಗ್ನಿ ಅವಘಡಕ್ಕೆ ಮೂರು ಗಣಿಗಾರಿಕೆ ಲಾರಿಗಳು ಸುಟ್ಟು ಭಸ್ಮ

ಬಳ್ಳಾರಿ: ಜಿಲ್ಲೆಯ ಸಂಡೂರು ಪೊಲೀಸ್ ಠಾಣೆ ವ್ಯಾಪ್ತಿಯ ಸೀನ್ ಬಸಪ್ಪ ಕ್ಯಾಂಪಿನಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದ್ದು, ಮೂರು ಗಣಿಗಾರಿಕೆ ಲಾರಿಗಳು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿರುವ ಘಟನೆ ನಡೆದಿದೆ.

ಪೊಲೀಸ್ ಮೂಲಗಳ ಪ್ರಕಾರ, ಸ್ಥಳದಲ್ಲಿ ವೆಲ್ಡಿಂಗ್ ಕಾರ್ಯ ನಡೆಯುತ್ತಿದ್ದ ವೇಳೆ ಹಾರಿದ ಕಿಡಿ ಸಮೀಪದಲ್ಲಿದ್ದ ಲಾರಿಯ ಡೀಸೆಲ್ ಟ್ಯಾಂಕ್‌ಗೆ ತಗುಲಿದೆ. ಕ್ಷಣಾರ್ಧದಲ್ಲೇ ಬೆಂಕಿ ಹೊತ್ತಿಕೊಂಡು ವೇಗವಾಗಿ ಹಬ್ಬಿ ಮೂರು ಲಾರಿಗಳನ್ನು ಆವರಿಸಿಕೊಂಡಿದೆ.

ಬೆಂಕಿಯ ತೀವ್ರತೆ ಹೆಚ್ಚಾದ ಹಿನ್ನೆಲೆಯಲ್ಲಿ ಸ್ಥಳೀಯರು ತಕ್ಷಣ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಆದರೆ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸುವಷ್ಟರಲ್ಲಿ ಲಾರಿಗಳು ಸಂಪೂರ್ಣವಾಗಿ ಸುಟ್ಟು ಹೋಗಿದ್ದವು.

ಈ ಘಟನೆಯಲ್ಲಿ ಮೂವರು ಚಾಲಕರು ಹಾಗೂ ವೆಲ್ಡಿಂಗ್ ಕಾರ್ಯದಲ್ಲಿ ತೊಡಗಿದ್ದ ಸಿಬ್ಬಂದಿಗೆ ಗಾಯಗಳಾಗಿದ್ದು, ಅವರನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳಿಗೆ ಚಿಕಿತ್ಸೆ ಮುಂದುವರಿದಿದೆ ಎಂದು ತಿಳಿದುಬಂದಿದೆ.

ಘಟನೆಯ ಕುರಿತು ಸಂಡೂರು ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದು, ಅಗ್ನಿ ಅವಘಡದ ನಿಖರ ಕಾರಣಗಳ ಕುರಿತು ತನಿಖೆ ಆರಂಭಿಸಿದ್ದಾರೆ. ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಅಪಾರ ನಷ್ಟ ಸಂಭವಿಸಿರುವುದಾಗಿ ಅಂದಾಜಿಸಲಾಗಿದೆ.

error: Content is protected !!