Home Blog

ತೋಂಟದಾರ್ಯ ಜಾತ್ರೆಯಲ್ಲಿ ಭಾರಿ ಅವಘಡ: ಟೋರಾ-ಟೋರಾ ತೊಟ್ಟಿಲು ಮುರಿದು 18 ಮಂದಿಗೆ ಗಾಯ, ಇಬ್ಬರ ಸ್ಥಿತಿ ಗಂಭೀರ

ಗದಗ: ತೋಂಟದಾರ್ಯ ಮಠ ಜಾತ್ರೆಯಲ್ಲಿ ಭಾನುವಾರ ರಾತ್ರಿ ಭಾರಿ ಅವಘಡ ಸಂಭವಿಸಿದ್ದು, ಮಕ್ಕಳು ಹಾಗೂ ಮಹಿಳೆಯರು ಸೇರಿದಂತೆ 18 ಮಂದಿಗೆ ಗಾಯಗಳಾಗಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ.

ಜಾತ್ರೆಯಲ್ಲಿ ಜನಪ್ರಿಯವಾಗಿರುವ ‘ಟೋರಾ-ಟೋರಾ’ (ಡ್ಯಾನ್ಸಿಂಗ್ ಫ್ಲೈ ಜೋಕಾಲಿ) ಆಟದಲ್ಲಿ ತೊಟ್ಟಿಲುಗಳ ವೀಲ್ ಏಕಾಏಕಿ ಕಟ್ ಆದ ಪರಿಣಾಮ ಈ ದುರಂತ ಸಂಭವಿಸಿದೆ. ಘಟನೆಯಲ್ಲಿ ಸುಮಾರು 20ಕ್ಕೂ ಹೆಚ್ಚು ತೊಟ್ಟಿಲುಗಳು ಮುರಿದು ಬಿದ್ದಿದ್ದು, ಅಲ್ಲಿ ಇದ್ದ ಜನರಲ್ಲಿ ಆತಂಕದ ವಾತಾವರಣ ನಿರ್ಮಾಣವಾಯಿತು.

ಗಾಯಾಳುಗಳನ್ನು ತಕ್ಷಣವೇ ಅಂಬುಲೆನ್ಸ್ ಮೂಲಕ ಗದಗ ಜಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ. ಸ್ಥಳದಲ್ಲಿ ಇದ್ದ ಪೋಷಕರು ಹಾಗೂ ಸಾರ್ವಜನಿಕರು ಗಾಯಾಳುಗಳನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ರವಾನಿಸಿದರು.

ಘಟನೆ ನಡೆದ ಸ್ಥಳಕ್ಕೆ ಗದಗ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಘಟನೆ ಗದಗ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ದಾಂಡೇಲಿಯ ಕಾಳಿ ನದಿಯಲ್ಲಿ ಮೊಸಳೆ ದಾಳಿ: ವ್ಯಕ್ತಿಗೆ ಗಂಭೀರ ಗಾಯ

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ಸಮೀಪದ ಕಾಳಿ ನದಿಯಲ್ಲಿ ಮೊಸಳೆ ದಾಳಿ ನಡೆಸಿದ ಪರಿಣಾಮ ವ್ಯಕ್ತಿಯೊಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಭಾನುವಾರ ಬೆಳಗ್ಗೆ ನಡೆದಿದೆ.

ದಾಂಡೇಲಿಯ ಕುಳಗಿ ರಸ್ತೆಯ ನಿವಾಸಿ ಆನಂದ ಲಲ್ಲೂಜಿ ಮಣ್ಣವಡ್ಡರ (42) ದಾಳಿಗೆ ಒಳಗಾದವರು. ಸಾರ್ವಜನಿಕ ಶೌಚಾಲಯ ಹದಗೆಟ್ಟಿರುವ ಹಿನ್ನೆಲೆ ನಿತ್ಯಕರ್ಮಕ್ಕಾಗಿ ಅವರು ಕಾಳಿ ನದಿಗೆ ಇಳಿದಿದ್ದ ವೇಳೆ ಮೊಸಳೆ ಏಕಾಏಕಿ ದಾಳಿ ನಡೆಸಿದೆ.

ದಾಳಿಯಿಂದ ಗಾಯಗೊಂಡ ಆನಂದ ಕಿರುಚಾಡಿದ ಧ್ವನಿ ಕೇಳಿ ಸ್ಥಳೀಯರು ತಕ್ಷಣ ಸ್ಥಳಕ್ಕೆ ಧಾವಿಸಿ ಮೊಸಳೆಯನ್ನು ಓಡಿಸಿ ಅವರನ್ನು ರಕ್ಷಿಸಿದ್ದಾರೆ. ದಾಳಿಯಲ್ಲಿ ಅವರ ಕಾಲು ಸೇರಿದಂತೆ ದೇಹದ ಹಲವು ಭಾಗಗಳಿಗೆ ಗಾಯಗಳಾಗಿವೆ.

ಗಾಯಾಳುವಿಗೆ ದಾಂಡೇಲಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಲಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಧಾರವಾಡಕ್ಕೆ ರವಾನಿಸಲಾಗಿದೆ.

ಘಟನಾ ಸ್ಥಳಕ್ಕೆ ಸಿಪಿಐ ಶಿವಾನಂದ ಅಂಬಿಗೇರ, ಪಿಎಸ್‌ಐ ಅಮೀನ್ ಅತ್ತಾರ ಹಾಗೂ ಪೊಲೀಸ್ ಸಿಬ್ಬಂದಿ, ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ರಕ್ತಹೀನತೆ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ: ಪೋಷಕರೇ ನಿಮ್ಮ ಮಕ್ಕಳ ಮೇಲಿರಲಿ ಜಾಗ್ರತೆ!

ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ಅನಿಮಿಯಾ ಅಂದರೆ ರಕ್ತಹೀನತೆ ಸಮಸ್ಯೆ ಹೆಚ್ಚುತ್ತಿರುವುದು ವೈದ್ಯರಲ್ಲಿ ಚಿಂತೆಗೆ ಕಾರಣವಾಗಿದೆ.

ಈ ಸಮಸ್ಯೆ ಕೇವಲ ದೌರ್ಬಲ್ಯಕ್ಕೆ ಮಾತ್ರ ಸೀಮಿತವಾಗದೆ, ಮಕ್ಕಳ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಯ ಮೇಲೂ ಪರಿಣಾಮ ಬೀರುತ್ತಿದೆ. ತಜ್ಞರ ಪ್ರಕಾರ, ಮಕ್ಕಳಲ್ಲಿ ರಕ್ತಹೀನತೆಗೆ ಪ್ರಮುಖ ಕಾರಣ ಐರನ್ ಕೊರತೆ. ಹೀಮೋಗ್ಲೋಬಿನ್ ಉತ್ಪಾದನೆಗೆ ಐರನ್ ಅಗತ್ಯವಾಗಿದ್ದು, ಆಹಾರದಲ್ಲಿ ಇದರ ಕೊರತೆ ಇದ್ದರೆ ಸಮಸ್ಯೆ ಉಂಟಾಗುತ್ತದೆ. ಜೊತೆಗೆ ವಿಟಮಿನ್ ಬಿ-12 ಹಾಗೂ ಫೋಲಿಕ್ ಆಮ್ಲದ ಕೊರತೆಯೂ ರಕ್ತಹೀನತೆಗೆ ಕಾರಣವಾಗಬಹುದು. ಸರಿಯಾದ ಪೌಷ್ಟಿಕಾಂಶವಿಲ್ಲದ ಆಹಾರ ಪದ್ಧತಿ, ಅತಿಯಾದ ತಿನಿಸು ಆಹಾರ ಸೇವನೆ ಹಾಗೂ ಅಸಮತೋಲನ ಆಹಾರವೂ ಸಮಸ್ಯೆಯನ್ನು ಹೆಚ್ಚಿಸುತ್ತದೆ.

ಇನ್ನೂ ಪುನಃಪುನಃ ಸೋಂಕುಗಳು, ಅಜೀರ್ಣ ಸಮಸ್ಯೆಗಳು, ಹೊಟ್ಟೆಯಲ್ಲಿ ಹುಳುಗಳಿರುವುದು, ಸಮಯಕ್ಕಿಂತ ಮೊದಲು ಜನನ ಅಥವಾ ಕಡಿಮೆ ತೂಕದ ಮಕ್ಕಳಲ್ಲಿಯೂ ಈ ಸಮಸ್ಯೆ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚು.

ಲಕ್ಷಣಗಳು ಹೇಗಿರುತ್ತವೆ?

ರಕ್ತಹೀನತೆಯ ಆರಂಭಿಕ ಲಕ್ಷಣಗಳಲ್ಲಿ ಸುಸ್ತು, ದೌರ್ಬಲ್ಯ, ಆಟದಲ್ಲಿ ಆಸಕ್ತಿ ಕಡಿಮೆಯಾಗುವುದು ಸಾಮಾನ್ಯ. ಚರ್ಮ ಬಿಳಿಯಾಗುವುದು, ತುಟಿಗಳ ಬಣ್ಣ ಕಡಿಮೆಯಾಗುವುದು ಪ್ರಮುಖ ಸೂಚನೆಗಳಾಗಿವೆ. ಕೆಲವೊಮ್ಮೆ ತಲೆ ಸುತ್ತುವುದು, ಉಸಿರಾಟದ ತೊಂದರೆ, ಹೃದಯ ಬಡಿತ ಹೆಚ್ಚಾಗುವುದು ಕಾಣಿಸಬಹುದು. ಜೊತೆಗೆ ಚಿಡಿಚಿಡಿ ಸ್ವಭಾವ, ಆಹಾರ ಆಸಕ್ತಿ ಕಡಿಮೆಯಾಗುವುದು ಮತ್ತು ಓದಿನಲ್ಲಿ ಗಮನ ಕಡಿಮೆಯಾಗುವುದು ಕೂಡ ಲಕ್ಷಣಗಳಾಗಿವೆ.

ತಡೆಗೆ ಏನು ಮಾಡಬೇಕು?

ಮಕ್ಕಳಿಗೆ ಸಮತೋಲನ ಆಹಾರ ನೀಡುವುದು ಅತ್ಯಂತ ಮುಖ್ಯ. ಹಸಿರು ತರಕಾರಿಗಳು, ಬೇಳೆಕಾಳುಗಳು, ಹಣ್ಣುಗಳು ಹಾಗೂ ಐರನ್ ಸಮೃದ್ಧ ಆಹಾರಗಳನ್ನು ನೀಡಬೇಕು. ವಿಟಮಿನ್ ಸಿ ಇರುವ ಆಹಾರಗಳು ಐರನ್ ಶೋಷಣೆಗೆ ಸಹಕಾರಿ. ಜೊತೆಗೆ ಸ್ವಚ್ಛತೆ ಕಾಪಾಡುವುದು ಮತ್ತು ನಿಯಮಿತ ಆರೋಗ್ಯ ತಪಾಸಣೆ ಮಾಡಿಸುವುದು ಅಗತ್ಯ.

ಸರಿಯಾದ ಆಹಾರ ಮತ್ತು ಆರೈಕೆಯಿಂದ ಮಕ್ಕಳಲ್ಲಿ ರಕ್ತಹೀನತೆ ಸಮಸ್ಯೆಯನ್ನು ನಿಯಂತ್ರಿಸಬಹುದು ಎಂದು ತಜ್ಞರು ತಿಳಿಸಿದ್ದಾರೆ.

ಚಿಕ್ಕಬಳ್ಳಾಪುರ ದ್ರಾಕ್ಷಿಗೆ ಭಾರೀ ಬೇಡಿಕೆ: ‘ದಿಲ್ ಖುಷ್’ ತಳಿಯಿಂದ ರೈತರಿಗೆ ಲಾಭ!

ಚಿಕ್ಕಬಳ್ಳಾಪುರ: ಹಣ್ಣು ಹಾಗೂ ತರಕಾರಿ ಬೆಳೆಗೆ ಪ್ರಸಿದ್ಧಿ ಪಡೆದಿರುವ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಈ ಬಾರಿ ದ್ರಾಕ್ಷಿ ಬೆಳೆ ರೈತರಿಗೆ ಸಂತಸ ತಂದಿದೆ.

ಜಿಲ್ಲೆಯಾದ್ಯಂತ ಸುಮಾರು 5,000 ಹೆಕ್ಟೇರ್ ಪ್ರದೇಶದಲ್ಲಿ ವಿವಿಧ ತಳಿಯ ದ್ರಾಕ್ಷಿ ಬೆಳೆಯಲಾಗಿದ್ದು, ‘ದಿಲ್ ಖುಷ್’ ತಳಿಗೆ ವಿಶೇಷ ಬೇಡಿಕೆ ವ್ಯಕ್ತವಾಗಿದೆ. ತೀವ್ರ ಬಿಸಿಲಿನ ನಡುವೆಯೂ ಈ ತಳಿಯ ದ್ರಾಕ್ಷಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಆಕರ್ಷಣೆ ಕಂಡುಬಂದಿದೆ. ಇದರ ಪರಿಣಾಮವಾಗಿ ರೈತರಿಗೆ ಉತ್ತಮ ಬೆಲೆ ದೊರೆಯುತ್ತಿದ್ದು, ವ್ಯಾಪಾರಿಗಳು ನೇರವಾಗಿ ತೋಟಗಳಿಗೆ ಭೇಟಿ ನೀಡಿ ಪ್ರತಿ ಕಿಲೋಗ್ರಾಂ ದ್ರಾಕ್ಷಿಗೆ 50 ರೂಪಾಯಿ ನೀಡಿ ಖರೀದಿ ಮಾಡುತ್ತಿದ್ದಾರೆ.

ಮಹಾರಾಷ್ಟ್ರದಲ್ಲಿ ದ್ರಾಕ್ಷಿಯ ಇಳುವರಿ ಕಡಿಮೆಯಾಗಿರುವ ಹಿನ್ನೆಲೆ, ಅಲ್ಲಿನ ವ್ಯಾಪಾರಿಗಳು ಇದೀಗ ಚಿಕ್ಕಬಳ್ಳಾಪುರದ ರೈತರತ್ತ ಮುಖ ಮಾಡಿದ್ದಾರೆ. ಇದು ಸ್ಥಳೀಯ ರೈತರಿಗೆ ವರದಾನವಾಗಿ ಪರಿಣಮಿಸಿದೆ.

ಇನ್ನೂ ಈ ದ್ರಾಕ್ಷಿಗೆ ಬಾಂಗ್ಲಾದೇಶ ಸೇರಿದಂತೆ ನೆರೆಯ ದೇಶಗಳಲ್ಲಿ ಭಾರೀ ಬೇಡಿಕೆ ಇದೆ. ವ್ಯಾಪಾರಿಗಳು ಮುಂಗಡ ಹಣ ನೀಡಿ ತೋಟದಲ್ಲೇ ದ್ರಾಕ್ಷಿಯನ್ನು ಖರೀದಿಸುತ್ತಿರುವುದು ರೈತರ ಆದಾಯವನ್ನು ಹೆಚ್ಚಿಸಿದೆ.

ದ್ರಾಕ್ಷಿ ಬೆಳೆಗಾರರಾದ ವೆಂಕಟರೆಡ್ಡಿ ಹಾಗೂ ಚಿಕ್ಕನಾಗವಳ್ಳಿ ಗ್ರಾಮದ ಕೊಂಡಪ್ಪನವರಂತಹ ಅನೇಕ ರೈತರು ಈ ಬಾರಿ ಉತ್ತಮ ಬೆಲೆ ಮತ್ತು ಬೇಡಿಕೆಯಿಂದ ಸಂತಸ ವ್ಯಕ್ತಪಡಿಸಿದ್ದಾರೆ.

ಅಂತರಗಂಗೆ ಅರಣ್ಯದಲ್ಲಿ ಬೆಂಕಿ: ಅಪಾರ ಕಾಡು ನಾಶ, ಪ್ರಾಣಿ ಸಂಕುಲಕ್ಕೆ ಆತಂಕ

ಕೋಲಾರ: ಜಿಲ್ಲೆಯ ಹೊರವಲಯದಲ್ಲಿರುವ ಪ್ರಸಿದ್ಧ ಅಂತರಗಂಗೆ ಪ್ರದೇಶದಲ್ಲಿ ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಘಟನೆ ನಡೆದಿದೆ.

ಈ ಅವಘಡದಿಂದ ಅಪಾರ ಪ್ರಮಾಣದ ಕಾಡು ಸಂಪತ್ತು ನಾಶವಾಗಿರುವುದು ಆತಂಕಕ್ಕೆ ಕಾರಣವಾಗಿದೆ.

ಪ್ರತಿದಿನ ಸಾವಿರಾರು ಭಕ್ತರು ಹಾಗೂ ಪ್ರವಾಸಿಗರು ಭೇಟಿ ನೀಡುವ ಈ ಪ್ರದೇಶದಲ್ಲಿ, ಜನರು ನಡೆದುಕೊಂಡು ಹೋಗುವ ದಾರಿಯ ಮಧ್ಯೆ ಬೆಟ್ಟದ ಕೆಲವು ಭಾಗಗಳಲ್ಲಿ ಕಿಡಿಗೇಡಿಗಳು ಬೆಂಕಿ ಹಚ್ಚಿರುವುದು ತಿಳಿದುಬಂದಿದೆ. ಪರಿಣಾಮವಾಗಿ ದೊಡ್ಡ ಪ್ರಮಾಣದ ಕಾಡು ಬೆಂಕಿಗಾಹುತಿಯಾಗಿದ್ದು, ಅಲ್ಲಿದ್ದ ಸಣ್ಣಪುಟ್ಟ ಪ್ರಾಣಿ–ಪಕ್ಷಿಗಳೂ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.

ವಿಷಯ ತಿಳಿದ ಕೂಡಲೇ ಅರಣ್ಯ ಇಲಾಖೆ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ತೆರಳಿ ಬೆಂಕಿ ನಂದಿಸುವ ಕಾರ್ಯಾಚರಣೆ ಕೈಗೊಂಡರು.

ಅಂತರಗಂಗೆ ಬೆಟ್ಟ ಪ್ರದೇಶದಲ್ಲಿ ವಾಸಿಸುವ ಪ್ರಾಣಿ ಸಂಕುಲಕ್ಕೆ ಈ ಘಟನೆ ಭಾರೀ ಆತಂಕ ಉಂಟುಮಾಡಿದ್ದು, ಪದೇಪದೇ ಇಂತಹ ಘಟನೆಗಳು ನಡೆಯುತ್ತಿರುವುದು ಪರಿಸರದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಕಿಡಿಗೇಡಿಗಳ ಇಂತಹ ಕೃತ್ಯಗಳಿಂದ ಅಪಾರ ಕಾಡು ಸಂಪತ್ತು ನಾಶವಾಗುತ್ತಿರುವುದರಿಂದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಅವಘಡ: ಡಿಕೆ ಶಿವಕುಮಾರ್ ತೆರಳಿದ ಬೆನ್ನಲ್ಲೇ ಬೆಂಕಿ!

ರಾಯಚೂರು: ಜಿಲ್ಲೆಯ ಸಿಂಧನೂರಿನಲ್ಲಿ ನಡೆದ 151 ಜೋಡಿಗಳ ಉಚಿತ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಅವಘಡವೊಂದು ಸಂಭವಿಸಿದೆ.

ಕಾರ್ಯಕ್ರಮದ ವೇದಿಕೆ ಮೇಲಿಂದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತೆರಳಿದ ಬೆನ್ನಲ್ಲೇ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿದೆ.

ಅದೇ ವೇಳೆ ಸಚಿವ ಈಶ್ವರ ಖಂಡ್ರೆ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದ ವೇಳೆ ಸಿಬ್ಬಂದಿ ತಕ್ಷಣವೇ ಅವರನ್ನು ಸುರಕ್ಷಿತ ಸ್ಥಳಕ್ಕೆ ಕರೆದುಕೊಂಡು ಹೋದರು. ಬೆಂಕಿ ಕಾಣಿಸಿಕೊಂಡ ತಕ್ಷಣ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಹೊಗೆ ಹೆಚ್ಚಾದ ಹಿನ್ನೆಲೆ ಸ್ಥಳೀಯರು ಗಾಬರಿಗೊಂಡರು.

ತಕ್ಷಣವೇ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಕಾರ್ಯಾಚರಣೆ ನಡೆಸಿ ಫೈರ್ ಉಪಕರಣಗಳ ಸಹಾಯದಿಂದ ಬೆಂಕಿಯನ್ನು ನಿಯಂತ್ರಣಕ್ಕೆ ತಂದರು. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಸಮಾರಂಭದಲ್ಲಿ ಭಾಗವಹಿಸಿದ್ದವರು ಹಾಗೂ ಅಧಿಕಾರಿಗಳು ತಕ್ಷಣದ ಕ್ರಮದಿಂದ ದೊಡ್ಡ ದುರಂತ ತಪ್ಪಿದ ಹಿನ್ನೆಲೆಯಲ್ಲಿ ನೆಮ್ಮದಿ ವ್ಯಕ್ತಪಡಿಸಿದ್ದಾರೆ.

ಸುಡು ಬೇಸಿಗೆಯಲ್ಲಿ ಬೈಕ್ ಚಲಾಯಿಸುವಾಗ ಈ ವಿಚಾರಗಳನ್ನು ನೆನಪಿನಲ್ಲಿಡಿ!

ರಾಜ್ಯದಲ್ಲಿ ದಿನದಿಂದ ದಿನಕ್ಕೆ ತಾಪಮಾನ ಏರಿಕೆಯಾಗುತ್ತಿರುವ ಹಿನ್ನೆಲೆ, ತೀವ್ರ ಬಿಸಿಲಿನಲ್ಲಿ ದ್ವಿಚಕ್ರ ವಾಹನ ಸವಾರಿ ಮಾಡುವುದು ಚಾಲಕರಿಗೆ ಸವಾಲಿನ ಕೆಲಸವಾಗಿದೆ.

ಮಧ್ಯಾಹ್ನದ ಹೊತ್ತಿನಲ್ಲಿ ಹೆಚ್ಚಾಗುವ ಶಾಖ ದೇಹವನ್ನು ಬೇಗನೆ ದಣಿಗೊಳಿಸಿ, ಗಮನ ವಿಚಲಿತಗೊಳಿಸುವ ಮೂಲಕ ಅಪಘಾತದ ಸಾಧ್ಯತೆಯನ್ನು ಹೆಚ್ಚಿಸುತ್ತಿದೆ. ವೈದ್ಯರು ಮತ್ತು ತಜ್ಞರ ಪ್ರಕಾರ, ಮಧ್ಯಾಹ್ನ 12ರಿಂದ ಸಂಜೆ 4 ಗಂಟೆಯವರೆಗೆ ಸಾಧ್ಯವಾದಷ್ಟು ಬೈಕ್ ಅಥವಾ ಸ್ಕೂಟರ್‌ನಲ್ಲಿ ಪ್ರಯಾಣಿಸುವುದನ್ನು ತಪ್ಪಿಸುವುದು ಒಳಿತು. ತುರ್ತು ಪರಿಸ್ಥಿತಿಯಲ್ಲಿ ಮಾತ್ರ ಈ ಸಮಯದಲ್ಲಿ ಹೊರಡಬೇಕು ಎಂದು ಸಲಹೆ ನೀಡಿದ್ದಾರೆ.

ಬಿಸಿಲಿನ ಹೊಡೆತದಿಂದ ರಕ್ಷಣೆಗಾಗಿ ಚಾಲಕರು ಉತ್ತಮ ಗುಣಮಟ್ಟದ ಹೆಲ್ಮೆಟ್ ಧರಿಸುವುದು ಅತ್ಯಗತ್ಯ. ಜೊತೆಗೆ ಧೂಳು ಹಾಗೂ ಅಲ್ಟ್ರಾವಯೊಲೆಟ್ ಕಿರಣಗಳಿಂದ ಕಣ್ಣುಗಳನ್ನು ರಕ್ಷಿಸಲು ಸನ್‌ಗ್ಲಾಸ್ ಬಳಸುವುದು ಅಗತ್ಯವಾಗಿದೆ. ಬಿಸಿ ಗಾಳಿಯಿಂದ ದೇಹದಲ್ಲಿ ನೀರಿನ ಕೊರತೆ ಉಂಟಾಗುವ ಸಾಧ್ಯತೆ ಇರುವುದರಿಂದ, ಪ್ರಯಾಣದ ವೇಳೆ ನೀರಿನ ಬಾಟಲಿ ಕೊಂಡೊಯ್ಯುವುದು ಹಾಗೂ ಆಗಾಗ್ಗೆ ನೀರು, ORS ಅಥವಾ ಎಳನೀರು ಸೇವಿಸುವುದು ಆರೋಗ್ಯಕ್ಕೆ ಸಹಕಾರಿ.

ದೀರ್ಘ ಪ್ರಯಾಣ ಮಾಡುವವರು ಮಧ್ಯ ಮಧ್ಯದಲ್ಲಿ ವಿರಾಮ ತೆಗೆದುಕೊಳ್ಳಬೇಕು. ತಲೆತಿರುಗುವಿಕೆ, ತಲೆನೋವು, ಅತಿಯಾದ ಬೆವರುವುದು ಅಥವಾ ಹಠಾತ್ ಆಯಾಸ ಕಂಡುಬಂದರೆ ಅವುಗಳನ್ನು ನಿರ್ಲಕ್ಷಿಸದೇ ತಕ್ಷಣ ವಾಹನ ನಿಲ್ಲಿಸಿ ನೆರಳಿನ ಸ್ಥಳದಲ್ಲಿ ವಿಶ್ರಾಂತಿ ಪಡೆಯುವುದು ಮುಖ್ಯ ಎಂದು ತಜ್ಞರು ಸೂಚಿಸಿದ್ದಾರೆ.

ಇದಲ್ಲದೆ, ಬೇಸಿಗೆಯಲ್ಲಿ ಹಗುರವಾದ ಹಾಗೂ ಬೆಳಕು ಪ್ರತಿಬಿಂಬಿಸುವ ಬಟ್ಟೆಗಳನ್ನು ಧರಿಸುವುದು ಉತ್ತಮ. ಮೆಶ್ ರೈಡಿಂಗ್ ಜಾಕೆಟ್, ಪೂರ್ಣ ತೋಳಿನ ಟೀ-ಶರ್ಟ್, ಕೈಗವಸುಗಳು ಮತ್ತು ಆರಾಮದಾಯಕ ಪಾದರಕ್ಷೆಗಳು ಬಳಸುವುದರಿಂದ ಬಿಸಿಲಿನ ಪರಿಣಾಮವನ್ನು ಕಡಿಮೆ ಮಾಡಬಹುದು. ಚರ್ಮದ ರಕ್ಷಣೆಗಾಗಿ ಸನ್‌ಸ್ಕ್ರೀನ್ ಬಳಕೆ ಮಾಡುವುದು ಸಹ ಅಗತ್ಯವಾಗಿದೆ.

ಒಟ್ಟಾರೆ, ಬೇಸಿಗೆಯ ತೀವ್ರ ಬಿಸಿಲಿನಲ್ಲಿ ಸ್ವಲ್ಪ ಜಾಗ್ರತೆ ಮತ್ತು ಮುನ್ನೆಚ್ಚರಿಕೆ ತೆಗೆದುಕೊಂಡರೆ, ಸುರಕ್ಷಿತವಾಗಿ ದ್ವಿಚಕ್ರ ವಾಹನ ಸವಾರಿ ಮಾಡಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಅಕ್ರಮ ಸಂಬಂಧಕ್ಕೆ ಅಡ್ಡಿ: 6 ತಿಂಗಳ ಗರ್ಭಿಣಿ ಪತ್ನಿಯನ್ನೇ ಮನೆಯಿಂದ ಹೊರಹಾಕಿದ ಪತಿ

ಬೆಂಗಳೂರು: ಅಕ್ರಮ ಸಂಬಂಧ ಬಯಲಾದ ನಂತರ ತನ್ನ ಆರು ತಿಂಗಳ ಗರ್ಭಿಣಿ ಪತ್ನಿಯನ್ನೇ ಮನೆಯಿಂದ ಹೊರಹಾಕಿದ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ. ಬಿಎಂಟಿಸಿ ಸೆಕ್ಯೂರಿಟಿ ಇನ್‌ಚಾರ್ಜ್ ಜಗದೀಪ್ (42) ವಿರುದ್ಧ ಪತ್ನಿ ಶ್ವೇತಾ (32) ಗಂಭೀರ ಆರೋಪಗಳನ್ನು ಮಾಡಿದ್ದಾರೆ.

14 ವರ್ಷಗಳ ದಾಂಪತ್ಯ ಜೀವನ ನಡೆಸುತ್ತಿದ್ದ ಈ ದಂಪತಿಗಳು ಜಯನಗರ ಸರ್ಕಾರಿ ಕ್ವಾರ್ಟರ್ಸ್‌ನಲ್ಲಿ ವಾಸವಾಗಿದ್ದರು. ಆದರೆ ಇತ್ತೀಚೆಗೆ ಪತಿಯ ವರ್ತನೆಯಲ್ಲಿ ಬದಲಾವಣೆ ಕಂಡುಬಂದಿದ್ದು, ಶ್ವೇತಾ ಅನುಮಾನಗೊಂಡಿದ್ದಾರೆ.

ವಾಟ್ಸಾಪ್ ಸಂದೇಶಗಳ ಪರಿಶೀಲನೆಯಲ್ಲಿ ಜಗದೀಪ್‌ಗೆ ಮತ್ತೊಬ್ಬ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಇರುವ ವಿಷಯ ಬೆಳಕಿಗೆ ಬಂದಿದೆ. ಪ್ರಶ್ನಿಸಿದ ವೇಳೆ ಪತ್ನಿಯ ಮೇಲೆ ಹಲ್ಲೆ ನಡೆದಿದ್ದು, ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಲಾಗಿದೆ ಎಂದು ಆರೋಪಿಸಲಾಗಿದೆ.

ಆರು ತಿಂಗಳ ಗರ್ಭಿಣಿಯಾಗಿರುವ ಶ್ವೇತಾಗೆ “ಮಗು ತೆಗೆಸಿಬಿಡು, ನೀನು ನನಗೆ ಬೇಡ” ಎಂದು ಹೇಳಿ ಮನೆಯಿಂದ ಹೊರಹಾಕಿರುವುದು ಪ್ರಕರಣವನ್ನು ಮತ್ತಷ್ಟು ಗಂಭೀರಗೊಳಿಸಿದೆ.

ಈಗ ಪತಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಶ್ವೇತಾ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

ಪ್ರತ್ಯೇಕ ಪಾಲಿಕೆ ವಿವಾದ ತಿರುವು: ಹುಬ್ಬಳ್ಳಿ-ಧಾರವಾಡ ವಿಭಜನೆಗೆ ಬಿಜೆಪಿ ಬ್ರೇಕ್

0

ಧಾರವಾಡ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವಿಭಜನೆ ವಿಚಾರದಲ್ಲಿ ಹೊಸ ರಾಜಕೀಯ ತಿರುವು ಕಾಣಿಸಿಕೊಂಡಿದೆ. ಧಾರವಾಡಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆ ರಚನೆಗೆ ಸಿಎಂ ಸಿದ್ದರಾಮಯ್ಯ ಒಪ್ಪಿಗೆ ನೀಡಿದ್ದರೂ, ಈಗ ಬಿಜೆಪಿ ಆಡಳಿತದಲ್ಲೇ ವಿರೋಧದ ನಿರ್ಣಯ ಹೊರಬಿದ್ದಿದೆ.

ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಬಿಜೆಪಿ ಸದಸ್ಯರು ಪ್ರತ್ಯೇಕ ಪಾಲಿಕೆ ಬೇಡ ಎಂದು ಸ್ಪಷ್ಟ ನಿರ್ಣಯ ಕೈಗೊಂಡಿದ್ದು, ಬದಲಾಗಿ ಇಡೀ ಅವಳಿ ನಗರವನ್ನು “ಬೃಹತ್ ಮಹಾನಗರ ಪಾಲಿಕೆ” ಆಗಿಯೇ ಮುಂದುವರಿಸುವಂತೆ ಒತ್ತಾಯಿಸಿದ್ದಾರೆ. ಈ ನಿರ್ಧಾರ ಧಾರವಾಡ ಭಾಗದಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.

82 ವಾರ್ಡ್‌ಗಳು ಹಾಗೂ 13 ಲಕ್ಷ ಜನಸಂಖ್ಯೆಯಿರುವ ಈ ಪಾಲಿಕೆಯಲ್ಲಿ ಧಾರವಾಡಕ್ಕೆ ಅನುದಾನ ಕಡಿಮೆ ಸಿಗುತ್ತಿದೆ ಎಂಬುದು ದೀರ್ಘಕಾಲದ ಆರೋಪವಾಗಿತ್ತು. ಇದೇ ಕಾರಣದಿಂದಲೇ ಪ್ರತ್ಯೇಕ ಪಾಲಿಕೆ ಬೇಡಿಕೆ ಬಲವಾಗಿತ್ತು.

ಆದರೆ ಬಿಜೆಪಿ ವಾದದ ಪ್ರಕಾರ, ವಿಭಜನೆಯಾದರೆ ಎರಡೂ ಪಾಲಿಕೆಗಳ ಜನಸಂಖ್ಯೆ 10 ಲಕ್ಷಕ್ಕಿಂತ ಕೆಳಗೆ ಇಳಿಯಲಿದೆ. ಇದರಿಂದ ಕೇಂದ್ರದ 16ನೇ ಹಣಕಾಸು ಆಯೋಗದಿಂದ ಬರುವ ಸಾವಿರಾರು ಕೋಟಿ ಅನುದಾನಕ್ಕೆ ಹೊಡೆತ ಬೀಳುವ ಸಾಧ್ಯತೆ ಇದೆ ಎಂದು ಅವರು ಎಚ್ಚರಿಸಿದ್ದಾರೆ.

ಇದಲ್ಲದೆ, ಧಾರವಾಡಕ್ಕೆ ಸೇರಿಸಬೇಕಿದ್ದ ಗ್ರಾಮ ಪಂಚಾಯತ್‌ಗಳ ವಿರೋಧ, ಹಾಗೂ ಆಡಳಿತಾತ್ಮಕ ಗೊಂದಲಗಳು ಯೋಜನೆಗೆ ಅಡ್ಡಿಯಾಗಿವೆ.

ಮೈಸೂರು ಪಾಲಿಕೆಯನ್ನು ಬೃಹತ್ ಮಹಾನಗರ ಪಾಲಿಕೆ ಮಾಡುವ ಸರ್ಕಾರದ ಯೋಜನೆಯ ನಡುವೆಯೇ, ಹುಬ್ಬಳ್ಳಿ-ಧಾರವಾಡ ವಿಚಾರವು ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.

ತಂದೆಯ ಸ್ಮರಣೆ ಉಳಿಸಿದ ಶಾಂತಿವನ: ಸಿದ್ದು ಪಾಟೀಲ ಕಾರ್ಯಕ್ಕೆ ಸಚಿವ ಎಚ್.ಕೆ. ಪಾಟೀಲ ಮೆಚ್ಚುಗೆ

ಗದಗ: ಮಗನು ತಂದೆಯ ಅಸ್ತಿತ್ವದ ಮುಂದುವರಿಕೆಯ ವಾರಸುದಾರನಾಗಿದ್ದನ್ನು ಮಕ್ಕಳು ಮರೆಯಬಾರದು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರ ಹಾಗೂ ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ ಹೇಳಿದರು. “ಮಗ ತಂದೆಯ ಪ್ರತಿರೂಪ” ಎಂಬುದು ಕೇವಲ ದೈಹಿಕ ಹೋಲಿಕೆಯಲ್ಲ, ಅದು ಆಳವಾದ ಭಾವನಾತ್ಮಕ ಮತ್ತು ಅನುವಂಶೀಯ ಬಂಧನವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಐತಿಹಾಸಿಕ ಲಕ್ಕುಂಡಿ ಗ್ರಾಮದ ಹೊರವಲಯದಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಸಿದ್ದು ಪಾಟೀಲರು ತಮ್ಮ ತಂದೆಯ ಹೆಸರಲ್ಲಿ ನಿರ್ಮಿಸಿದ ದಿ. ಅಜ್ಜಣ್ಣ ಕೆ. ಪಾಟೀಲ ಶಾಂತಿವನವನ್ನು ಉದ್ಘಾಟಿಸಿ ಮಾತನಾಡಿದ ಸಚಿವರು, ದಿ. ಅಜ್ಜಣ್ಣ ಪಾಟೀಲ ಹಾಗೂ ರೇಣುಕಾ ಅಜ್ಜಣ್ಣ ಪಾಟೀಲರ ಗದ್ದುಗೆಗೆ ಪುಷ್ಪ ನಮನ ಸಲ್ಲಿಸಿದರು.

ತಂದೆಯಂತೆ ಸಿದ್ದು ಪಾಟೀಲರು ನಡೆ-ನುಡಿಗಳಲ್ಲಿ ಮಾತ್ರವಲ್ಲದೆ ಸಾಮಾಜಿಕ, ರಾಜಕೀಯ, ಧಾರ್ಮಿಕ, ಕೌಟುಂಬಿಕ, ಶೈಕ್ಷಣಿಕ ಹಾಗೂ ವ್ಯವಹಾರಿಕ ಚಿಂತನೆಗಳನ್ನು ಅಳವಡಿಸಿಕೊಂಡಿರುವುದು ಹೆಮ್ಮೆಗೇ ಕಾರಣವಾಗಿದೆ ಎಂದು ಅವರು ಹೇಳಿದರು.

ತಂದೆಯ ಗುಣಲಕ್ಷಣಗಳು ಮತ್ತು ಸ್ವಭಾವಗಳು ಮಗನಿಗೆ ಅನುವಂಶೀಯವಾಗಿ ವರ್ಗಾವಣೆಯಾಗುತ್ತವೆ ಎಂಬುದನ್ನು ಸಿದ್ದು ಪಾಟೀಲರ ವ್ಯಕ್ತಿತ್ವ ಸ್ಪಷ್ಟಪಡಿಸುತ್ತದೆ. ತಂದೆಯ ಹೆಸರಲ್ಲಿ ಶಾಂತಿವನ ನಿರ್ಮಿಸಿ, ಅದರೊಳಗೆ ತಂದೆ-ತಾಯಿಯ ಗದ್ದುಗೆ ನಿರ್ಮಿಸುವ ಮೂಲಕ ಪೂರ್ವಜರ ಅಸ್ತಿತ್ವವನ್ನು ಉಳಿಸಿ ಬೆಳೆಸುತ್ತಿರುವುದು ಕುಟುಂಬದ ಆದರ್ಶತೆಯ ಸಂಕೇತವಾಗಿದೆ ಎಂದು ಸಚಿವರು ಹೇಳಿದರು.

ಸುಮಾರು 6 ಎಕರೆ ಪಿತ್ರಾರ್ಜಿತ ಆಸ್ತಿಯನ್ನು ಹಾಳು ಮಾಡದೆ ಶಾಂತಿವನವಾಗಿ ರೂಪಿಸಿರುವ ಸಿದ್ದು ಪಾಟೀಲರು, 3 ಬೋರ್‌ವೆಲ್‌ಗಳನ್ನು ತೆಗೆದು, ತೋಟದ ಬಾವಿಯ ನೀರನ್ನು ಬಳಸಿಕೊಂಡು ಅಡಿಕೆ, ಪಪ್ಪಾಯ, ಬಾಳೆ, ಗಂಧ, ನೆರಳೆ, ದ್ರಾಕ್ಷಿ, ಮಹಾಗಣಿ, ಆಬಾಲಿ, ಮಲ್ಲಿಗೆ ಮತ್ತು ಸೇವಂತಿಗೆ ಹೂವಿನ ಬೆಳೆಗಳನ್ನು ಬೆಳೆಸುತ್ತಿದ್ದಾರೆ. ಇದರಿಂದ ಅವರು ತಂದೆಯಂತೆ ಅನುಕರಣೀಯ ಕೃಷಿಕರಾಗಿದ್ದಾರೆ ಎಂದು ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು.

ತಂದೆಯು ಕುಟುಂಬದ ಹೊಣೆಗಾರಿಕೆ ಮತ್ತು ನೈತಿಕ ಮೌಲ್ಯಗಳನ್ನು ಮಕ್ಕಳಿಗೆ ಕಲಿಸುತ್ತಾನೆ. ಅದೇ ಹಾದಿಯಲ್ಲಿ ಮಗ ಸಾಗುತ್ತಾನೆ ಎಂಬುದಕ್ಕೆ ಸಿದ್ದು ಪಾಟೀಲರು ಉತ್ತಮ ಉದಾಹರಣೆ ಎಂದು ಹೇಳಿದರು.

ತಂದೆ-ಮಗನ ನಡುವಿನ ಪ್ರೀತಿ ಮತ್ತು ಗೌರವವು ಅಪರೂಪದ, ಹೃದಯಸ್ಪರ್ಶಿ ಬಾಂಧವ್ಯವಾಗಿದ್ದು, ಅದನ್ನು ಅರಿತುಕೊಂಡರೆ ಕುಟುಂಬದ ನೆಲೆಗಟ್ಟು ಇನ್ನಷ್ಟು ಗಟ್ಟಿಯಾಗುತ್ತದೆ ಎಂದು ಸಚಿವರು ಅಭಿಪ್ರಾಯಪಟ್ಟರು.

ಈ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಜನಪ್ರಿಯ ಮಾಜಿ ಶಾಸಕ ಡಿ.ಆರ್. ಪಾಟೀಲ, ಜಿಪಂ ಮಾಜಿ ಅಧ್ಯಕ್ಷ ವಾಸಣ್ಣ ಕುರುಡಗಿ, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪ್ರಭು ಬುರಬುರೆ, ಕಾಂಗ್ರೆಸ್ ನಾಯಕ ದಶರಥ ಗಾಣಿಗೇರ ಹಾಗೂ ಜಿಪಂ ಮಾಜಿ ಅಧ್ಯಕ್ಷ ಸಿದ್ದು ಪಾಟೀಲ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಉಪಸ್ಥಿತರಿದ್ದರು.

error: Content is protected !!