Home Blog

ಕಡಲ ತೀರದಲ್ಲಿ ಯಶ್-ರಾಧಿಕಾ ಭರ್ಜರಿ ಹೂಡಿಕೆ: ಅಲಿಬಾಗ್‌ನಲ್ಲಿ ₹24 ಕೋಟಿ ಆಸ್ತಿ ಖರೀದಿ

ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ದಂಪತಿ ಮಹಾರಾಷ್ಟ್ರದ ಅಲಿಬಾಗ್‌ನಲ್ಲಿ 24 ಕೋಟಿ ರೂಪಾಯಿ ಮೌಲ್ಯದ ಪ್ರೀಮಿಯಂ ಆಸ್ತಿಯನ್ನು ಖರೀದಿಸುವ ಮೂಲಕ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಭಾರಿ ಹೂಡಿಕೆ ಮಾಡಿದ್ದಾರೆ.

ರಾಯಗಢ ಜಿಲ್ಲೆಯ ಕಾಮತ್ ಗ್ರಾಮದಲ್ಲಿರುವ ಈ ಆಸ್ತಿ ಸಮುದ್ರಕ್ಕೆ ಮುಖಮಾಡಿರುವ ಪ್ರಮುಖ ಸ್ಥಳದಲ್ಲಿದೆ. ಸುಮಾರು 5,289 ಚದರ ಮೀಟರ್ ವಿಸ್ತೀರ್ಣದ ಕೃಷಿ ಭೂಮಿಯ ಜೊತೆಗೆ ವಸತಿ ಕಟ್ಟಡವೂ ಈ ವ್ಯವಹಾರದಲ್ಲಿ ಒಳಗೊಂಡಿದೆ ಎಂದು ಆಸ್ತಿ ದಾಖಲೆಗಳು ತಿಳಿಸಿವೆ.

ಕಿಹಿಮ್ ಬೀಚ್ ಸಮೀಪದಲ್ಲಿರುವ ಈ ಜಾಗ ಅಲಿಬಾಗ್‌ನ ಅತ್ಯಂತ ಬೇಡಿಕೆಯ ಪ್ರದೇಶಗಳಲ್ಲಿ ಒಂದಾಗಿದೆ. ಪಶ್ಚಿಮ ಭಾಗದಲ್ಲಿ ಸಮುದ್ರ, ಪೂರ್ವ ಭಾಗದಲ್ಲಿ ರಸ್ತೆ ಹಾಗೂ ಬೀಚ್‌ಗೆ ನೇರ ಸಂಪರ್ಕ ಕಲ್ಪಿಸುವ ಮಾರ್ಗ ಈ ಆಸ್ತಿಯ ವಿಶೇಷತೆಯಾಗಿದೆ.

ಮೇ 18ರಂದು ಆಸ್ತಿ ಹಸ್ತಾಂತರ ಪ್ರಕ್ರಿಯೆ ಪೂರ್ಣಗೊಂಡಿದ್ದು, ಯಶ್ ಮತ್ತು ರಾಧಿಕಾ ಪಂಡಿತ್ ಈ ವ್ಯವಹಾರಕ್ಕಾಗಿ 1.44 ಕೋಟಿ ರೂಪಾಯಿ ಸ್ಟ್ಯಾಂಪ್ ಡ್ಯೂಟಿ ಪಾವತಿಸಿದ್ದಾರೆ. ಜೊತೆಗೆ ನೋಂದಣಿ ಮತ್ತು ದಾಖಲೆ ನಿರ್ವಹಣಾ ಶುಲ್ಕವನ್ನೂ ಪಾವತಿಸಲಾಗಿದೆ.

ಭಾರತೀಯ ಚಿತ್ರರಂಗದ ಹಲವು ಗಣ್ಯರು ಆಸ್ತಿ ಹೊಂದಿರುವ ಅಲಿಬಾಗ್‌ನಲ್ಲಿ ಇದೀಗ ಯಶ್-ರಾಧಿಕಾ ದಂಪತಿಯೂ ಸೇರ್ಪಡೆಯಾಗಿದ್ದು, ಇದು ಅವರ ಪ್ರಮುಖ ಹೂಡಿಕೆಗಳಲ್ಲಿ ಒಂದಾಗಿದೆ. ಸದ್ಯ ‘ಟಾಕ್ಸಿಕ್’ ಚಿತ್ರದ ಕೆಲಸಗಳಲ್ಲಿ ನಿರತರಾಗಿರುವ ಯಶ್, ಈ ಆಸ್ತಿ ಖರೀದಿಯ ಮೂಲಕವೂ ಗಮನ ಸೆಳೆದಿದ್ದಾರೆ.

ನಿಮ್ಮ ಮಕ್ಕಳಿಗೆ ಇದೇ ಊಟ ಕೊಡ್ತೀರಾ..?: ಕಳಪೆ ಆಹಾರಕ್ಕೆ ಕಿಡಿಕಾರಿದ ಶಾಸಕ!

ಬೀದರ್: ಸರ್ಕಾರಿ ವಸತಿ ನಿಲಯದಲ್ಲಿ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದ್ದ ಕಳಪೆ ಗುಣಮಟ್ಟದ ಆಹಾರದ ವಿರುದ್ಧ ಬಸವಕಲ್ಯಾಣದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ.

ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ವಸತಿ ನಿಲಯದ ವಿದ್ಯಾರ್ಥಿಗಳು ಕಳಪೆ ಅನ್ನ, ಬ್ಯಾಳಿ, ಸಾಂಬರ್, ಕೊಳೆತ ಟೊಮಾಟೋ ಹಾಗೂ ಹಾಳಾದ ತರಕಾರಿಗಳನ್ನು ಕೈಯಲ್ಲಿ ಹಿಡಿದು ನೇರವಾಗಿ ಬಸವಕಲ್ಯಾಣ ಶಾಸಕ ಶರಣು ಸಲಗರ ಅವರ ಕಚೇರಿಗೆ ಧಾವಿಸಿದ ಘಟನೆ ಸಂಚಲನ ಮೂಡಿಸಿದೆ.

ವಿದ್ಯಾರ್ಥಿಗಳು ಕಳೆದ ಒಂದು ತಿಂಗಳಿಂದ ಹಾಸ್ಟೆಲ್‌ನಲ್ಲಿ ಅತ್ಯಂತ ಕಳಪೆ ಗುಣಮಟ್ಟದ ಆಹಾರ ನೀಡಲಾಗುತ್ತಿದೆ ಎಂದು ಆರೋಪಿಸಿದ್ದು, ತಿನ್ನಲು ಅಸಾಧ್ಯವಾದ ಆಹಾರವನ್ನು ಶಾಸಕರ ಮುಂದೆ ಇಟ್ಟು ಅಳಲು ತೋಡಿಕೊಂಡರು. ವಿದ್ಯಾರ್ಥಿಗಳು ತಂದಿದ್ದ ಕೊಳೆತ ತರಕಾರಿ ಹಾಗೂ ಹಾಳಾದ ಸಾಂಬಾರ್‌ನ್ನು ಕಂಡ ಶಾಸಕ ಶರಣು ಸಲಗರ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

“ನಿಮ್ಮ ಮಕ್ಕಳಿಗೆ ಇದೇ ಊಟ ಮಾಡಿಸುತ್ತೀರಾ..? ಸರ್ಕಾರ ಹಣ ಕೊಡ್ತಿದೆ, ಆದರೆ ವಿದ್ಯಾರ್ಥಿಗಳ ಹೊಟ್ಟೆಗೆ ಹೋಗಬೇಕಾದ ಅನ್ನವನ್ನು ಯಾಕೆ ಕಸಿದುಕೊಳ್ಳುತ್ತಿದ್ದೀರಿ?” ಎಂದು ಅಧಿಕಾರಿಗಳನ್ನು ದೂರವಾಣಿ ಮೂಲಕ ತರಾಟೆಗೆ ತೆಗೆದುಕೊಂಡ ಶಾಸಕ, ವಸತಿ ನಿಲಯ ವಾರ್ಡನ್ ವಾಣಿ, ಎಸಿ/ಎಸ್ಟಿ ವಸತಿ ನಿಲಯ ಜಿಲ್ಲಾ ಅಧಿಕಾರಿ ಗಿರೀಶ್ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.

ಅಷ್ಟೇ ಅಲ್ಲದೆ, ತಮ್ಮ ಕಚೇರಿಗೆ ಬಂದ ವಿದ್ಯಾರ್ಥಿಗಳಿಗೆ ಮಧ್ಯರಾತ್ರಿ ಅನ್ನ-ಸಾಂಬಾರ್ ವ್ಯವಸ್ಥೆ ಮಾಡಿ ಊಟ ಹಾಕಿದ ಶಾಸಕ ಶರಣು ಸಲಗರ ಮಾನವೀಯತೆ ಮೆರೆದರು. ಬಳಿಕ “ ಬೆಳಿಗ್ಗೆ ಹಾಸ್ಟೆಲ್‌ಗೆ ಬನ್ನಿ, ಇದೇ ಊಟವನ್ನು ನೀವು ತಿಂದು ತೋರಿಸಿ” ಎಂದು ಅಧಿಕಾರಿಗಳಿಗೆ ಸವಾಲು ಹಾಕಿದ ಅವರು, “ನಿಮ್ಮನ್ನು ಅಮಾನತ್ತು ಮಾಡುವವರೆಗೂ ನಾನು ಬಿಡಲ್ಲ” ಎಂದು ಎಚ್ಚರಿಕೆ ನೀಡಿದರು.

ಸರ್ಕಾರಿ ವಸತಿ ನಿಲಯಗಳಲ್ಲಿ ವಿದ್ಯಾರ್ಥಿಗಳ ಆಹಾರದ ಗುಣಮಟ್ಟ ಕುರಿತು ಮತ್ತೆ ಗಂಭೀರ ಪ್ರಶ್ನೆಗಳು ಎದ್ದಿದ್ದು, ಅಧಿಕಾರಿಗಳ ನಿರ್ಲಕ್ಷ್ಯ ವಿರುದ್ಧ ಕ್ರಮಕ್ಕೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

ಕರ್ನಾಟಕದಲ್ಲಿ ಮಳೆ ಅಬ್ಬರ: 10 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ!

ಬೆಂಗಳೂರು: ಕರ್ನಾಟಕದಾದ್ಯಂತ ಮುಂದಿನ ಕೆಲ ದಿನಗಳ ಕಾಲ ಮಳೆಯ ಅಬ್ಬರ ಹೆಚ್ಚಾಗುವ ಸಾಧ್ಯತೆ ಇದ್ದು, ಭಾರತೀಯ ಹವಾಮಾನ ಇಲಾಖೆ ರಾಜ್ಯದ ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದೆ.

ದಕ್ಷಿಣ ಕನ್ನಡ, ಉಡುಪಿ, ಧಾರವಾಡ, ಗದಗ, ಹಾವೇರಿ, ಕೊಪ್ಪಳ, ಚಾಮರಾಜನಗರ, ಹಾಸನ, ಕೊಡಗು ಹಾಗೂ ಮೈಸೂರು ಜಿಲ್ಲೆಗಳಲ್ಲಿ ಗುಡುಗು–ಸಿಡಿಲು ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇರುವುದರಿಂದ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಸೂಚಿಸಲಾಗಿದೆ.

ಕರಾವಳಿ ಭಾಗದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಒಂದೆರಡು ಕಡೆಗಳಲ್ಲಿ ತೀವ್ರ ಮಳೆಯೊಂದಿಗೆ ಸಿಡಿಲು ಬೀಳುವ ಸಾಧ್ಯತೆ ಇರುವುದರಿಂದ ಕಟ್ಟೆಚ್ಚರ ವಹಿಸಲು ಸೂಚಿಸಲಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಹಗುರದಿಂದ ಸಾಧಾರಣ ಮಳೆಯ ನಿರೀಕ್ಷೆ ಇದ್ದು, ಮೀನುಗಾರರು ಸಮುದ್ರಕ್ಕಿಳಿಯದಂತೆ ಎಚ್ಚರಿಕೆ ನೀಡಲಾಗಿದೆ.

ಉತ್ತರ ಒಳನಾಡಿನ ಧಾರವಾಡ, ಗದಗ, ಹಾವೇರಿ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಗಂಟೆಗೆ 40 ರಿಂದ 50 ಕಿ.ಮೀ ವೇಗದ ಬಿರುಗಾಳಿಯೊಂದಿಗೆ ಮಳೆಯಾಗುವ ಸಾಧ್ಯತೆ ಇದೆ. ಉಳಿದ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯ ಮುನ್ಸೂಚನೆ ನೀಡಲಾಗಿದೆ.

ದಕ್ಷಿಣ ಒಳನಾಡಿನ ಕೊಡಗು, ಮೈಸೂರು, ಹಾಸನ ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಗುಡುಗು–ಸಿಡಿಲು ಸಹಿತ ಭಾರಿ ಮಳೆಯಾಗುವ ನಿರೀಕ್ಷೆಯಿಂದ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಅದೇ ರೀತಿ ಬೆಂಗಳೂರು ಸೇರಿದಂತೆ ಬೆಂಗಳೂರು ನಗರ, ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ಶಿವಮೊಗ್ಗ, ದಾವಣಗೆರೆ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಗಾಳಿ ಸಹಿತ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.

ಮಳೆ ಮತ್ತು ಸಿಡಿಲಿನ ಸಂದರ್ಭದಲ್ಲಿ ಸಾರ್ವಜನಿಕರು ಸುರಕ್ಷಿತ ಸ್ಥಳಗಳಲ್ಲಿ ಆಶ್ರಯ ಪಡೆಯಬೇಕು ಹಾಗೂ ಮರಗಳ ಕೆಳಗೆ ನಿಲ್ಲುವುದನ್ನು ತಪ್ಪಿಸಬೇಕು ಎಂದು ಹವಾಮಾನ ಇಲಾಖೆ ಸೂಚಿಸಿದೆ.

ಗ್ರಾಹಕರಿಗೆ ಬಿಗ್ ಶಾಕ್! ಊಟ-ತಿಂಡಿ, ಕಾಫಿ-ಟೀ ದರ ಹೆಚ್ಚಳ!? ಬೆಲೆ ಏರಿಕೆಗೆ ಮಾಲೀಕರು ಸಜ್ಜು!

ಬೆಂಗಳೂರು: ಮಧ್ಯಪ್ರಾಚ್ಯ ಸಂಘರ್ಷ ಹಾಗೂ ಜಾಗತಿಕ ಇಂಧನ ಮಾರುಕಟ್ಟೆಯ ಅಸ್ಥಿರತೆಯ ಪರಿಣಾಮವಾಗಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ದರ ನಿರಂತರವಾಗಿ ಏರಿಕೆಯಾಗುತ್ತಿದ್ದು, ಇದೀಗ ನೇರ ಪರಿಣಾಮ ಹೋಟೆಲ್ ಉದ್ಯಮದ ಮೇಲೆ ಕಾಣಿಸಿಕೊಳ್ಳುತ್ತಿದೆ.

ಬೆಂಗಳೂರು ನಗರದ ಬಹುತೇಕ ಹೋಟೆಲ್‌ಗಳ ಮಾಲೀಕರು ಊಟ, ತಿಂಡಿ, ಟೀ ಹಾಗೂ ಕಾಫಿ ದರಗಳನ್ನು ಹೆಚ್ಚಿಸಲು ಮುಂದಾಗಿದ್ದಾರೆ. ಈಗಾಗಲೇ ಕೆಲವು ಹೋಟೆಲ್‌ಗಳು ಹೊಸ ದರಪಟ್ಟಿಯನ್ನು ಜಾರಿಗೆ ತಂದಿದ್ದು, ಉಳಿದ ಹೋಟೆಲ್‌ಗಳು ಮುಂದಿನ ಕೆಲ ದಿನಗಳಲ್ಲಿ ದರ ಏರಿಕೆ ಮಾಡಲು ಸಿದ್ಧತೆ ನಡೆಸಿವೆ.

ಮಾಹಿತಿಯಂತೆ, ಕಳೆದ ಮೂರು ತಿಂಗಳಲ್ಲಿ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ದರದಲ್ಲಿ ಸುಮಾರು ₹1,240ರಷ್ಟು ಏರಿಕೆ ದಾಖಲಾಗಿದೆ. ಇತ್ತೀಚಿನ ತಿಂಗಳಲ್ಲಿ ಮಾತ್ರ ₹991 ಹಾಗೂ ನಂತರ ₹46ರಷ್ಟು ಹೆಚ್ಚಳ ಕಂಡುಬಂದಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಏರಿಕೆಯ ಸಾಧ್ಯತೆ ಇರುವುದರಿಂದ ಸಿಲಿಂಡರ್ ಬೆಲೆ ₹4,000 ಗಡಿ ತಲುಪುವ ಭೀತಿ ಹೋಟೆಲ್ ಉದ್ಯಮವನ್ನು ಕಾಡುತ್ತಿದೆ.

ದರ ಏರಿಕೆಯಿಂದಾಗಿ ಇಡ್ಲಿ–ವಡೆ, ದೋಸೆ ಸೇರಿದಂತೆ ವಿವಿಧ ತಿಂಡಿ ಪದಾರ್ಥಗಳ ಮೇಲೆ ₹5 ರಿಂದ ₹10ರವರೆಗೆ ಹಾಗೂ ಊಟದ ಮೇಲೆ ₹10 ರಿಂದ ₹20ರವರೆಗೆ ಹೆಚ್ಚಳ ಮಾಡಲಾಗಿದೆ. ಇದರಿಂದ ಕಚೇರಿ ನೌಕರರು, ಮಧ್ಯಮ ವರ್ಗ ಹಾಗೂ ಬ್ಯಾಚುಲರ್ ಗ್ರಾಹಕರ ಮೇಲೆ ಹೆಚ್ಚುವರಿ ಆರ್ಥಿಕ ಹೊರೆ ಉಂಟಾಗಿದೆ.

ಹೋಟೆಲ್ ಮಾಲೀಕರ ಪ್ರಕಾರ, ಇಂಧನ ಮತ್ತು ಕಾರ್ಯಾಚರಣೆ ವೆಚ್ಚಗಳ ಹೆಚ್ಚಳದಿಂದ ಅನಿವಾರ್ಯವಾಗಿ ದರ ಪರಿಷ್ಕರಣೆ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ.

ಡಿಕೆ ಶಿವಕುಮಾರ್ ಸಿಎಂ ಪಟ್ಟಾಭಿಷೇಕಕ್ಕೆ ಕ್ಷಣಗಣನೆ! ಇಂದು ಬೆಂಗಳೂರಿನ ಪ್ರಮುಖ ಮಾರ್ಗಗಳಲ್ಲಿ ರಸ್ತೆ ಸಂಚಾರ ಬಂದ್!

ಬೆಂಗಳೂರು: ನೂತನ ಮುಖ್ಯಮಂತ್ರಿ ಆಗಿ ಡಿಕೆ ಶಿವಕುಮಾರ್ ಇಂದು ಸಂಜೆ ಲೋಕಭವನದ ಗ್ಲಾಸ್ ಹೌಸ್‌ನಲ್ಲಿ ಪ್ರಮಾಣವಚನ ಸ್ವೀಕರಿಸಲಿರುವ ಹಿನ್ನೆಲೆಯಲ್ಲಿ ಬೆಂಗಳೂರು ನಗರದಲ್ಲಿ ಭದ್ರತೆ ಹಾಗೂ ಸಂಚಾರ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಗಳನ್ನು ಮಾಡಲಾಗಿದೆ.

ಪೊಲೀಸ್ ಅಧಿಕಾರಿಗಳ ಮಾಹಿತಿಯಂತೆ, ಇಂದು ಮಧ್ಯಾಹ್ನ 12 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ನಗರ ಕೇಂದ್ರ ಭಾಗದ ಪ್ರಮುಖ ರಸ್ತೆಗಳಲ್ಲಿ ಸಂಚಾರ ನಿರ್ಬಂಧ ವಿಧಿಸಲಾಗಿದೆ. ಕಬ್ಬನ್ ರಸ್ತೆ, ಕ್ವೀನ್ಸ್ ರಸ್ತೆ, ಡಾ. ಬಿ.ಆರ್. ಅಂಬೇಡ್ಕರ್ ರಸ್ತೆ, ರೇಸ್ ಕೋರ್ಸ್ ರಸ್ತೆ ಸೇರಿದಂತೆ ಹಲವು ಪ್ರಮುಖ ಮಾರ್ಗಗಳಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ಇರಲಿದೆ.

ಸಂಚಾರ ದಟ್ಟಣೆ ತಪ್ಪಿಸಲು ಶಿವಾಜಿನಗರ, ಕನ್ನಿಂಗ್ಹ್ಯಾಮ್ ರಸ್ತೆ, ನೃಪತುಂಗ ರಸ್ತೆ, ಶಿವಾನಂದ ವೃತ್ತ, ಹೆಬ್ಬಾಳ ಹಾಗೂ ಔಟರ್ ರಿಂಗ್ ರಸ್ತೆ ಮಾರ್ಗಗಳನ್ನು ಬಳಸುವಂತೆ ಟ್ರಾಫಿಕ್ ಪೊಲೀಸರು ಸಾರ್ವಜನಿಕರಿಗೆ ಸೂಚನೆ ನೀಡಿದ್ದಾರೆ.

ಭಾರಿ ವಾಹನಗಳ ಸಂಚಾರವನ್ನು ಇಂದು ಮಧ್ಯಾಹ್ನ 12 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಪ್ರಮುಖ ರಸ್ತೆಗಳಲ್ಲಿ ವಾಹನ ನಿಲುಗಡೆಗೂ ನಿರ್ಬಂಧ ವಿಧಿಸಲಾಗಿದೆ.

ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರ ನೇತೃತ್ವದಲ್ಲಿ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗಿದ್ದು, ವಿವಿಐಪಿ, ಗಣ್ಯರು ಹಾಗೂ ಸಾರ್ವಜನಿಕರಿಗಾಗಿ ಪ್ರತ್ಯೇಕ ಬಂದೋಬಸ್ತ್ ರೂಪಿಸಲಾಗಿದೆ. ಲೋಕಭವನದ ಬಳಿ ನಿಯಂತ್ರಿತ ಪ್ರವೇಶ ವ್ಯವಸ್ಥೆ ಜಾರಿಗೆ ತರಲಾಗಿದ್ದು, ಪಾಸ್ ಇರುವವರಿಗೆ ಮಾತ್ರ ಒಳ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ.

ಕಾರ್ಯಕ್ರಮ ಹಿನ್ನೆಲೆಯಲ್ಲಿ ನಗರದಲ್ಲಿ ಟ್ರಾಫಿಕ್ ಜಾಮ್ ಉಂಟಾಗುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.

25ನೇ ಮುಖ್ಯಮಂತ್ರಿಯಾಗಿ ಇಂದು ಡಿಕೆ ಶಿವಕುಮಾರ್ ಪದಗ್ರಹಣ: ಐತಿಹಾಸಿಕ ಕ್ಷಣಕ್ಕೆ ಕೆಲವೇ ಗಂಟೆಗಳು ಬಾಕಿ, ಸಿದ್ಧಗೊಂಡ ಬೆಂಗಳೂರು!

ಬೆಂಗಳೂರು:- ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಅವರು ಇಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ಬೆಂಗಳೂರಿನ ಲೋಕಭವನದ ಗಾಜಿನ ಮನೆಯಲ್ಲಿ ನಡೆಯಲಿರುವ ಪದಗ್ರಹಣ ಸಮಾರಂಭಕ್ಕೆ ಭರ್ಜರಿ ಸಿದ್ಧತೆಗಳನ್ನು ಮಾಡಲಾಗಿದೆ. ವೇದಿಕೆಯಲ್ಲಿ ಸೀಮಿತ ಗಣ್ಯರಿಗೆ 20 ಆಸನಗಳ ವ್ಯವಸ್ಥೆ ಮಾಡಲಾಗಿದ್ದು, ಸರ್ವಧರ್ಮ ಸಮನ್ವಯತೆಯ ಪ್ರತೀಕವಾಗಿ ಸ್ವಾಮೀಜಿಗಳು, ಫಾದರ್‌ಗಳು ಹಾಗೂ ಮೌಲ್ವಿಗಳು ಸೇರಿದಂತೆ ಸುಮಾರು 55 ಧಾರ್ಮಿಕ ಮುಖಂಡರಿಗೆ ಆಹ್ವಾನ ನೀಡಲಾಗಿದೆ.

ಸಮಾರಂಭದಲ್ಲಿ ಡಿ.ಕೆ. ಶಿವಕುಮಾರ್ ಜೊತೆಗೆ ಸುಮಾರು 10ಕ್ಕೂ ಹೆಚ್ಚು ಸಚಿವರು ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಇದೆ. ಸಚಿವ ಸಂಪುಟ ಪಟ್ಟಿ ಅಂತಿಮಗೊಳಿಸುವ ಪ್ರಕ್ರಿಯೆ ಕೊನೆಯ ಹಂತದಲ್ಲಿದ್ದು, ದೆಹಲಿ ಮತ್ತು ಬೆಂಗಳೂರು ಮಟ್ಟದಲ್ಲಿ ನಡೆದ ಸರಣಿ ಸಭೆಗಳ ಬಳಿಕ ಹೆಸರುಗಳನ್ನು ಅಂತಿಮಗೊಳಿಸಲಾಗಿದೆ.

ಕಾಂಗ್ರೆಸ್ ಹೈಕಮಾಂಡ್ ನಾಯಕರು ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಕೆ.ಸಿ. ವೇಣುಗೋಪಾಲ್ ಹಾಗೂ ರಣದೀಪ್ ಸಿಂಗ್ ಸುರ್ಜೇವಾಲ ಸೇರಿದಂತೆ ಹಲವು ನಾಯಕರು ಕಾರ್ಯಕ್ರಮಕ್ಕೆ ಆಹ್ವಾನಿತರಾಗಿದ್ದಾರೆ.

ರಾಜಕೀಯ ಅನುಭವ, ದೀರ್ಘ ಹೋರಾಟದ ಹಿನ್ನೆಲೆ ಹಾಗೂ ಪಕ್ಷ ಸಂಘಟನೆಯಲ್ಲಿ ನೀಡಿದ ಕೊಡುಗೆಯ ಹಿನ್ನೆಲೆಯಲ್ಲಿ ಡಿಕೆಶಿಯವರ ಪದಗ್ರಹಣವನ್ನು ರಾಜ್ಯ ರಾಜಕೀಯದಲ್ಲಿ ಹೊಸ ಅಧ್ಯಾಯವೆಂದು ಪರಿಗಣಿಸಲಾಗುತ್ತಿದೆ. ಸಚಿವ ಸಂಪುಟ ಹಂಚಿಕೆ ಕುರಿತು ಅಂತಿಮ ಘಟ್ಟದ ಚರ್ಚೆಗಳು ಮುಂದುವರಿದಿದ್ದು, ಇಂದು ಮಧ್ಯಾಹ್ನದೊಳಗೆ ಅಧಿಕೃತ ಘೋಷಣೆ ಸಾಧ್ಯತೆ ಇದೆ.

ಡಿಕೆ ಸಂಪುಟ ಸೇರುವ ಸಂಭಾವ್ಯ ಸಚಿವರು ಯಾರು?
ಕೆಜೆ ಜಾರ್ಜ್​
ಡಾ. ಜಿ ಪರಮೇಶ್ವರ್​
ರಾಮಲಿಂಗಾರೆಡ್ಡಿ
ಕೃಷ್ಣಬೈರೇಗೌಡ
ಯುಟಿ ಖಾದರ್
ಎಂಬಿ ಪಾಟೀಲ್
ಪ್ರಿಯಾಂಕ ಖರ್ಗೆ
ಈಶ್ವರ್ ಖಂಡ್ರೆ
ಸಿದ್ದರಾಮಯ್ಯ ಪುತ್ರ, ಮುನಿಯಪ್ಪ ಪುತ್ರಿಗೆ ಸ್ಥಾನ
ಇನ್ನು ಸಿದ್ದರಾಮಯ್ಯ ಪುತ್ರ ಡಾ. ಯತೀಂದ್ರ ಸಿದ್ದರಾಮಯ್ಯಗೆ ಡಿಕೆಶಿ ಸಂಪುಟದಲ್ಲಿ ಸ್ಥಾನ ಸಿಗಲಿದೆ. ಅತ್ತ ಸಿದ್ದರಾಮಯ್ಯ ಆಪ್ತ ಕೆಹೆಚ್‌ ಮುನಿಯಪ್ಪ ಅವರ ಪುತ್ರಿ ರೂಪಾ ಶಶಿಧರ್ ಅವರಿಗೂ ಡಿಕೆ ಶಿವಕುಮಾರ್ ಸಂಪುಟದಲ್ಲಿ ಸಚಿವೆ ಸ್ಥಾನ ಸಿಗುವ ಸಾಧ್ಯತೆ ದಟ್ಟವಾಗಿದೆ.

ಜಿ. ಎಸ್. ಪಾಟೀಲರಿಗೆ ಸಚಿವ ಸ್ಥಾನಕ್ಕಾಗಿ ಮಳೆಯಲ್ಲೇ ಮಹಾ ಹರಕೆ..!

ವಿಜಯಸಾಕ್ಷಿ ಸುದ್ದಿ, ರೋಣ: ರೋಣ ಶಾಸಕ ಜಿ. ಎಸ್. ಪಾಟೀಲ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂಬ ಒತ್ತಾಯ ಇದೀಗ ಭಾವನಾತ್ಮಕ ರಾಜಕೀಯ ಒತ್ತಡದ ರೂಪ ಪಡೆದಿದ್ದು, ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಮಳೆಯಲ್ಲೇ ದೀರ್ಘದಂಡ ನಮಸ್ಕಾರ ಹಾಕಿ ಕಾಂಗ್ರೆಸ್ ಹೈಕಮಾಂಡ್ ಗಮನ ಸೆಳೆಯುವ ಪ್ರಯತ್ನ ನಡೆಸಿದರು.

ಗದಗ ಜಿಲ್ಲೆಯ ರೋಣ ಪಟ್ಟಣದ ವೀರಭದ್ರೇಶ್ವರ ದೇವಸ್ಥಾನದಿಂದ ದರ್ಗಾವರೆಗೆ ಸುಮಾರು ಒಂದು ಕಿಲೋಮೀಟರ್ ದೂರದವರೆಗೆ ಕಾರ್ಯಕರ್ತರು ದೀರ್ಘದಂಡ ನಮಸ್ಕಾರ ಹಾಕಿ ಭಕ್ತಿ ಹಾಗೂ ರಾಜಕೀಯ ನಿಷ್ಠೆಯನ್ನು ಪ್ರದರ್ಶಿಸಿದರು. ಸುರಿಯುವ ಮಳೆಯನ್ನೂ ಲೆಕ್ಕಿಸದೆ ದೀರ್ಘದಂಡ ನಮಸ್ಕಾರ ಹಾಕಿದ ಕಾರ್ಯಕರ್ತರು “ಈ ಬಾರಿ ಜಿ. ಎಸ್. ಪಾಟೀಲರಿಗೆ ಸಚಿವ ಸ್ಥಾನ ನೀಡಲೇಬೇಕು” ಎಂದು ಘೋಷಣೆ ಕೂಗಿದರು.

“ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಲೆಲ್ಲಾ ರೋಣ ಕ್ಷೇತ್ರಕ್ಕೆ ಅನ್ಯಾಯವಾಗುತ್ತಿದೆ. ನಾಲ್ಕು ಬಾರಿ ಶಾಸಕರಾಗಿ ಗೆದ್ದು ಪಕ್ಷಕ್ಕಾಗಿ ದುಡಿದ ಜಿ. ಎಸ್. ಪಾಟೀಲರಿಗೆ ಇದುವರೆಗೆ ಸಚಿವ ಸ್ಥಾನ ಸಿಕ್ಕಿಲ್ಲ. ಈ ಬಾರಿ ಶತಾಯಗತಾಯ ಸಚಿವ ಸ್ಥಾನ ನೀಡಬೇಕು” ಎಂದು ಕಾರ್ಯಕರ್ತರು ಆಗ್ರಹಿಸಿದರು.

ದೀರ್ಘದಂಡ ನಮಸ್ಕಾರದ ವೇಳೆ ದಾರಿಯುದ್ದಕ್ಕೂ ಜಿ. ಎಸ್. ಪಾಟೀಲ ಪರ ಘೋಷಣೆಗಳು ಮೊಳಗಿದವು. ಬಳಿಕ ವೀರಭದ್ರೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಶಾಸಕ ಜಿ. ಎಸ್. ಪಾಟೀಲರಿಗೆ ಸಚಿವ ಸ್ಥಾನ ದೊರಕಲೆಂದು ಪ್ರಾರ್ಥಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡ ಸಂಜಯ ದೊಡ್ಡಮನಿ, “ಜಿ. ಎಸ್. ಪಾಟೀಲರು ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದು, ಕಾಂಗ್ರೆಸ್ ಪಕ್ಷದ ಸಂಘಟನೆಗಾಗಿ ಸಾಕಷ್ಟು ಶ್ರಮಿಸಿದ್ದಾರೆ. ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳ ಜೊತೆಗೆ ಪಕ್ಷವನ್ನು ಬಲಪಡಿಸುವ ಕೆಲಸ ಮಾಡಿದ್ದಾರೆ. ಆದರೆ ಪ್ರತೀ ಬಾರಿ ಸಚಿವ ಸಂಪುಟ ರಚನೆ ವೇಳೆ ರೋಣ ಕ್ಷೇತ್ರವನ್ನು ಕಡೆಗಣಿಸಲಾಗುತ್ತಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

“ಈ ಬಾರಿ ಜಿ. ಎಸ್. ಪಾಟೀಲರಿಗೆ ಸಚಿವ ಸ್ಥಾನ ನೀಡದಿದ್ದರೆ ರೋಣ ಕ್ಷೇತ್ರದ ಜನತೆ ತೀವ್ರ ಹೋರಾಟಕ್ಕೆ ಇಳಿಯಲಿದ್ದಾರೆ. ಹೈಕಮಾಂಡ್ ಉತ್ತರ ಕರ್ನಾಟಕದ ಭಾವನೆಗಳಿಗೆ ಗೌರವ ನೀಡಬೇಕು” ಎಂದು ಎಚ್ಚರಿಕೆ ನೀಡಿದರು.

ಮಳೆಯ ನಡುವೆಯೂ ನಡೆದ ಈ ದೀರ್ಘದಂಡ ನಮಸ್ಕಾರ ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು, ಕಾಂಗ್ರೆಸ್ ಹೈಕಮಾಂಡ್‌ಗೆ ರೋಣ ಕ್ಷೇತ್ರದ ಕಾರ್ಯಕರ್ತರು ಸ್ಪಷ್ಟ ಸಂದೇಶ ರವಾನಿಸಿದಂತಾಗಿದೆ.

ಈ ಸಂದರ್ಭದಲ್ಲಿ ಮಹೇಶ ಕಳಸಣ್ಣವರ, ಅಸ್ಲಮ್ ಕೊಪ್ಪಳ, ಯಲ್ಲಪ್ಪ ಕಿರೇಸೂರ, ಅಸ್ಫಾಕ್ ಮುಲ್ಲಾ, ಶಹಬಾಜ್ ಗದಗಕರ್, ತೋಹಿದ್ ಜಲಾವರ್, ಬಸೀರ್ ಕಟ್ಟಿಮನಿ, ವೀರಣ್ಣ ಸಾಕಾ, ಮುತ್ತು ನವಲಗುಂದ, ನಿಂಬಣ್ಣ ಗಾಣಿಗೇರ, ರಿಯಾಜ್ ಮುಲ್ಲಾ, ದಾವಲಸಾಬ್ ಬಾಡಿನ, ದುರಗಪ್ಪ ಹಿರೇಮನಿ, ಮಾದೇವ ತೆಗ್ಗಿನಮನಿ, ರಾಜು ಪಿಂಜಾರ ಸೇರಿದಂತೆ ಹಲವಾರು ಕಾರ್ಯಕರ್ತರು ಭಾಗವಹಿಸಿದ್ದರು.

“ರೋಣ ಕ್ಷೇತ್ರಕ್ಕೆ ಈ ಬಾರಿ ನ್ಯಾಯ ಸಿಗಲೇಬೇಕು. ಜಿ. ಎಸ್. ಪಾಟೀಲರಿಗೆ ಸಚಿವ ಸ್ಥಾನ ನೀಡುವುದು ಉತ್ತರ ಕರ್ನಾಟಕದ ಜನರ ಭಾವನೆಗೆ ಗೌರವ ನೀಡಿದಂತಾಗುತ್ತದೆ.”

ಸಂಜಯ ದೊಡ್ಡಮನಿ, ಕಾಂಗ್ರೆಸ್ ಮುಖಂಡ

  • ಮಳೆಯಲ್ಲೂ ನಿಲ್ಲದ ಕಾರ್ಯಕರ್ತರ ಜೋಶ್
  • ವೀರಭದ್ರೇಶ್ವರ ದೇವಸ್ಥಾನದಿಂದ ದರ್ಗಾವರೆಗೆ ದೀರ್ಘದಂಡ ನಮಸ್ಕಾರ
  • ಸುಮಾರು 1 ಕಿಮೀ ದೂರ ಮಳೆಯಲ್ಲೇ ಉರುಳಿ ಸಾಗಿದ ಅಭಿಮಾನಿಗಳು
  • “ಜಿ. ಎಸ್. ಪಾಟೀಲರಿಗೆ ಸಚಿವ ಸ್ಥಾನ ಕೊಡಿ” ಎಂಬ ಘೋಷಣೆಗಳು
  • ವಿಶೇಷ ಪೂಜೆ ಸಲ್ಲಿಸಿ ಸಚಿವ ಸ್ಥಾನಕ್ಕಾಗಿ ಪ್ರಾರ್ಥನೆ
  • ಸಚಿವ ಸ್ಥಾನ ಸಿಗದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ

ಸಾವಿನಲ್ಲೂ ಬೆಳಕಾದ ಉಳವೇಶ ಅಂಗಡಿ..!

ವಿಜಯಸಾಕ್ಷಿ ಸುದ್ದಿ, ಗದಗ: ಗದಗ-ಬೆಟಗೇರಿ ನಗರಸಭೆಯ ನಿವೃತ್ತ ವ್ಯವಸ್ಥಾಪಕ ಹಾಗೂ ಹಿರಿಯ ಕ್ರೀಡಾಪಟು ಉಳವೇಶ ದಾನಪ್ಪ ಅಂಗಡಿ (94) ಅವರು ಜೂನ್ 1ರ ಸೋಮವಾರ ರಾತ್ರಿ ನಿಧನರಾದರು. ಅವರ ಕುಟುಂಬಸ್ಥರು ನೇತ್ರದಾನಕ್ಕೆ ಒಪ್ಪಿಗೆ ಸೂಚಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಮೂಲತಃ ಗದಗ ತಾಲೂಕಿನ ಹೊಸಳ್ಳಿ ಗ್ರಾಮದವರಾದ ಉಳವೇಶ ಅಂಗಡಿ ಅವರು ಹಾಲಿ ಗದಗ ನಗರದಲ್ಲಿ ವಾಸವಾಗಿದ್ದರು. ಜೂನ್ 2ರಂದು ಅವರ ಅಂತ್ಯಕ್ರಿಯೆ ನೆರವೇರಿತು. ಮೃತರು ಮೂವರು ಪುತ್ರರು, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಮೃತರ ನಿಧನದ ಸುದ್ದಿ ತಿಳಿದ ಗದಗ-ಬೆಟಗೇರಿ ಲಯನ್ಸ್ ಕ್ಲಬ್ ಪದಾಧಿಕಾರಿಗಳು ನಿವಾಸಕ್ಕೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು. ಬಳಿಕ ಮೃತರ ನೇತ್ರಗಳನ್ನು ದಾನ ಮಾಡುವಂತೆ ಮನವಿ ಮಾಡಿದಾಗ ಕುಟುಂಬಸ್ಥರು ಉದಾರ ಮನಸ್ಸಿನಿಂದ ಒಪ್ಪಿಗೆ ಸೂಚಿಸಿದರು.

ತಕ್ಷಣ ಗದಗ ಜಿಮ್ಸ್ ಆಸ್ಪತ್ರೆಯ ತಜ್ಞ ವೈದ್ಯರ ತಂಡ ಆಗಮಿಸಿ ನೇತ್ರದಾನ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿತು.

94 ವರ್ಷಗಳ ತುಂಬು ಜೀವನ ನಡೆಸಿದ್ದ ಉಳವೇಶ ಅಂಗಡಿ ಅವರು ನಗರಸಭೆಯ ವ್ಯವಸ್ಥಾಪಕರಾಗಿ ಸುದೀರ್ಘ ಸೇವೆ ಸಲ್ಲಿಸಿದ್ದರು. ಸಾವಿನ ನಂತರವೂ ಅಂಧರ ಬಾಳಿಗೆ ಬೆಳಕಾಗುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ.

ಈ ಸಂದರ್ಭದಲ್ಲಿ ಬಸವರಾಜ ಉಳವೇಶ ಅಂಗಡಿ, ಲಯನ್ಸ್ ಕ್ಲಬ್ ಅಧ್ಯಕ್ಷ ರಾಜು ವೇರ್ಣೆಕರ, ಕಾರ್ಯದರ್ಶಿ ರಾಜಣ್ಣ ಮಲ್ಲಾಡದ, ಖಜಾಂಚಿ ರೇಣುಕಪ್ರಸಾದ ಹಿರೇಮಠ, ರಮೇಶ ಶಿಗ್ಲಿ, ಶೇಖಣ್ಣ ಕವಳಿಕಾಯಿ, ಅಶೋಕ ಬರಗುಂಡಿ, ಮುತ್ತು ಮುಲ್ಕಿಪಾಟೀಲ, ಗಿರೀಶ್ ಪಾಟೀಲ, ಜಗದೀಶ ಹೊಸಮನಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

“ಉಳವೇಶ ಅಂಗಡಿ ಅವರ ನೇತ್ರದಾನ ಮತ್ತೊಬ್ಬರ ಬದುಕಿಗೆ ಬೆಳಕಾಗಿದ್ದು, ಇದು ಸಮಾಜಕ್ಕೆ ಮಾದರಿಯಾದ ಮಾನವೀಯ ಕಾರ್ಯ.”

ರಾಜಣ್ಣ ಮಲ್ಲಾಡದ, ಕಾರ್ಯದರ್ಶಿ, ಗದಗ-ಬೆಟಗೇರಿ ಲಯನ್ಸ್ ಕ್ಲಬ್

ನೆಲಮಂಗಲದಲ್ಲಿ ಹಾಡಹಗಲೇ ಜ್ಯುವೆಲ್ಲರಿ ಶಾಪ್ ದರೋಡೆ! 30 ಸೆಕೆಂಡ್‌ನಲ್ಲಿ 35 ಗ್ರಾಂ ಚಿನ್ನ ಕಳವು

ನೆಲಮಂಗಲ: ತಾಲೂಕಿನ ಟಿ.ಬೇಗೂರು ಗ್ರಾಮದಲ್ಲಿ ಹಾಡಹಗಲೇ ಜ್ಯುವೆಲ್ಲರಿ ಅಂಗಡಿಯಲ್ಲಿ ದರೋಡೆ ನಡೆದ ಘಟನೆ ನಡೆದಿದೆ.

ಬೈಕಿನಲ್ಲಿ ಬಂದಿದ್ದ ಮೂವರು ದರೋಡೆಕೋರರು ಕೈಯಲ್ಲಿ ಚಾಕು ಹಿಡಿದು ಅಂಗಡಿಗೆ ನುಗ್ಗಿ ಕೆಲವೇ ಸೆಕೆಂಡ್‌ಗಳಲ್ಲಿ ಚಿನ್ನಾಭರಣ ಕಳವು ಮಾಡಿದ್ದಾರೆ.

ಮಹಾಲಕ್ಷ್ಮಿ ಜ್ಯುವೆಲ್ಲರ್ಸ್ ಅಂಗಡಿಯಲ್ಲಿ ನಡೆದ ಈ ಘಟನೆಯಲ್ಲಿ ಸುಮಾರು 4.5 ಲಕ್ಷ ರೂ. ಮೌಲ್ಯದ 35 ಗ್ರಾಂ ಚಿನ್ನಾಭರಣ ಕಳುವಾಗಿರುವುದಾಗಿ ತಿಳಿದುಬಂದಿದೆ. ಕೇವಲ 30 ಸೆಕೆಂಡ್‌ಗಳಲ್ಲೇ ದರೋಡೆ ನಡೆದಿದ್ದು, ದರೋಡೆಕೋರರು ಶೋ-ಗ್ಲಾಸ್‌ನಲ್ಲಿ ಇಟ್ಟಿದ್ದ ರಿಂಗ್ ಟ್ರೇನನ್ನು ಎತ್ತಿಕೊಂಡು ಪರಾರಿಯಾಗಿದ್ದಾರೆ.

ಅಂಗಡಿಯಲ್ಲಿ ಸುಮಾರು 20 ಉಂಗುರಗಳಿದ್ದ ಟ್ರೇ ಇಡಲಾಗಿದ್ದು, ದರೋಡೆ ವೇಳೆ ಕೆಲವು ಉಂಗುರಗಳು ರಸ್ತೆಯಲ್ಲಿ ಬಿದ್ದಿರುವುದಾಗಿ ವರದಿಯಾಗಿದೆ. ನಂತರದ ಪರಿಶೀಲನೆಯಲ್ಲಿ ಸುಮಾರು 5 ಉಂಗುರಗಳು ಕಳುವಾಗಿರುವುದು ದೃಢಪಟ್ಟಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಘಟನೆಯ ನಂತರ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ದರೋಡೆಕೋರರ ಪತ್ತೆಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಯೆಲ್ಲೋ ಲೈನ್ ಮೆಟ್ರೋಗೆ ಗುಡ್‌ನ್ಯೂಸ್: ಹೆಚ್ಚುವರಿ 2 ರೈಲು ಸೇರ್ಪಡೆ

ಬೆಂಗಳೂರು: ಯೆಲ್ಲೋ ಲೈನ್ ಮೆಟ್ರೋ ಪ್ರಯಾಣಿಕರಿಗೆ ಬಿಎಂಆರ್‌ಸಿಎಲ್ ಸಂತಸದ ಸುದ್ದಿ ನೀಡಿದೆ.

ಬುಧವಾರದಿಂದ ಈ ಮಾರ್ಗದಲ್ಲಿ ಹೆಚ್ಚುವರಿ 2 ರೈಲುಗಳನ್ನು ಸೇರ್ಪಡೆಗೊಳಿಸಲಾಗುತ್ತಿದ್ದು, ಸೇವಾ ಆವರ್ತನೆ ಹೆಚ್ಚಿಸಲಾಗುತ್ತಿದೆ.

ಹೊಸ ಬದಲಾವಣೆಯ ಪ್ರಕಾರ ಪೀಕ್ ಅವರ್‌ನಲ್ಲಿ ಇನ್ಮುಂದೆ 7 ನಿಮಿಷಕ್ಕೊಂದು ರೈಲು ಸಂಚರಿಸಲಿದೆ. ಈವರೆಗೆ ಪೀಕ್ ಅವರ್‌ನಲ್ಲಿ 9 ನಿಮಿಷಕ್ಕೊಂದು ರೈಲು ಸಂಚಾರವಿತ್ತು. ಸಾಮಾನ್ಯ ಸಮಯದಲ್ಲಿ ರೈಲುಗಳ ನಡುವಿನ ಅವಧಿಯನ್ನು 14 ನಿಮಿಷದಿಂದ 10 ನಿಮಿಷಕ್ಕೆ ಇಳಿಸಲಾಗಿದೆ.

ವಾರಾಂತ್ಯದಲ್ಲಿ ದಿನವಿಡೀ 10 ನಿಮಿಷಕ್ಕೊಂದು ರೈಲು ಸಂಚರಿಸಲಿದ್ದು, ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.

ಎರಡು ಹೆಚ್ಚುವರಿ ರೈಲುಗಳ ಸೇರ್ಪಡೆಯೊಂದಿಗೆ ಯೆಲ್ಲೋ ಲೈನ್‌ನಲ್ಲಿ ಪ್ರತಿದಿನ ಒಟ್ಟು 10 ರೈಲುಗಳು ಕಾರ್ಯನಿರ್ವಹಿಸಲಿದ್ದು, ಇದರಿಂದ ನಿರೀಕ್ಷಾ ಸಮಯ ಕಡಿಮೆಯಾಗುವ ಜೊತೆಗೆ ಸೇವಾ ದಕ್ಷತೆ ಹೆಚ್ಚಲಿದೆ ಎಂದು ಸಂಸ್ಥೆ ಹೇಳಿದೆ.

error: Content is protected !!