Home Blog Page 3

ಆಯಾಸ, ಒತ್ತಡವಿಲ್ಲದೆ ನೆಮ್ಮದಿಯಿಂದ ನಿದ್ರೆ ಮಾಡಲು ಈ ಅಭ್ಯಾಸಗಳನ್ನು ಪಾಲಿಸಿ!

0

ಇಂದಿನ ವೇಗದ ಜೀವನಶೈಲಿಯಲ್ಲಿ ದೇಹಕ್ಕೆ ತಕ್ಕಷ್ಟು ವಿಶ್ರಾಂತಿ ದೊರಕುವುದು ಕಷ್ಟವಾಗುತ್ತದೆ, ಮತ್ತು ನಿದ್ರೆಯ ಕೊರತೆಯಿಂದ ಆಯಾಸ ಮತ್ತು ಒತ್ತಡ ಹೆಚ್ಚಾಗುತ್ತವೆ.

ಆದರೆ ಕೆಲವು ಅಭ್ಯಾಸಗಳನ್ನು ಅಳವಡಿಸಿಕೊಂಡರೆ ಉತ್ತಮ ನಿದ್ರೆ ಪಡೆಯಬಹುದು. ರಾತ್ರಿ ಮಲಗುವ ಮುನ್ನ ಸ್ನಾನ ಮಾಡುವುದರಿಂದ ದೇಹ ತಾಜಾವಾಗುತ್ತದೆ ಮತ್ತು ಚರ್ಮದ ರಂಧ್ರಗಳು ಸ್ವಚ್ಛಗೊಳ್ಳುತ್ತವೆ, ಆಯಾಸ ಕಡಿಮೆಯಾಗುತ್ತದೆ. ನಿದ್ರೆಗೆ ಮುಂಚೆ ಸಾಕಷ್ಟು ನೀರು ಕುಡಿಯುವುದು ದೇಹದ ನೀರಿನ ಸಮತೋಲನವನ್ನು ಕಾಪಾಡುತ್ತದೆ ಮತ್ತು ಆಯಾಸ ತಪ್ಪಿಸುತ್ತದೆ.

ಚಹಾ, ಕಾಫಿ ಮುಂತಾದ ಕ್ಯಾಫೈನ್ ಸೇವನೆಯಿಂದ ದೂರವಿರುವುದು ನಿದ್ರೆಗೆ ಸಹಾಯ ಮಾಡುತ್ತದೆ. ರಾತ್ರಿಯ ಊಟದ ನಂತರ ಕನಿಷ್ಠ ಅರ್ಧ ಗಂಟೆ ವಾಕಿಂಗ್ ಮಾಡುವುದು ದೇಹದ ಶಕ್ತಿಯನ್ನು ಸಮತೋಲಕ್ಕೆ ತರುತ್ತದೆ. ಮೊಬೈಲ್, ಟಿವಿ, ಲ್ಯಾಪ್‌ಟಾಪ್ ಬಳಕೆಯಿಂದ ದೂರವಿರುವುದರಿಂದ ನೀಲಿ ಬೆಳಕು ನಿದ್ರೆಯನ್ನು ವ್ಯತ್ಯಯಗೊಳಿಸುವುದನ್ನು ತಡೆಯಬಹುದು. ಬದಲಾಗಿ ಪುಸ್ತಕ ಓದುವುದು ಅಥವಾ ಶಾಂತ ಸಂಗೀತ ಕೇಳುವುದು ಶಿಫಾರಸು ಮಾಡಲ್ಪಡುತ್ತದೆ. ಮಲಗುವ ಮುನ್ನ ಧ್ಯಾನ ಅಥವಾ ಯೋಗ ಮಾಡುವುದರಿಂದ ದೇಹ ಮತ್ತು ಮನಸ್ಸು ಶಾಂತವಾಗುತ್ತವೆ.

ಪಾದಗಳಿಗೆ ಮಸಾಜ್ ಮಾಡುವುದರಿಂದ ನರಗಳು ಸಡಿಲವಾಗುತ್ತವೆ. ಈ ಎಲ್ಲಾ ಅಭ್ಯಾಸಗಳನ್ನು ಪಾಲಿಸುವುದರಿಂದ ಆಯಾಸ ನಿವಾರಣೆ ಮತ್ತು ಆಳವಾದ, ಗುಣಮಟ್ಟದ ನಿದ್ರೆ ಪಡೆಯಬಹುದು.

ಸೂರ್ಯ ನಮಸ್ಕಾರ ಸಾಧನೆಯಿಂದ ಆರೋಗ್ಯ ಭಾಗ್ಯ: ಡಾ. ಎಂ.ವಿ. ಐಹೊಳ್ಳಿ

0

ವಿಜಯಸಾಕ್ಷಿ ಸುದ್ದಿ, ಗದಗ: ಆರೋಗ್ಯ ಸಂಪತ್ತಿಗಿಂತ ಮಿಗಿಲಾದ ಸಂಪತ್ತು ಬೇರೊಂದಿಲ್ಲ. ಆಸ್ತಿ-ಪಾಸ್ತಿ, ಧನ-ಕನಕಾದಿಗಳ ಸಂಪತ್ತನ್ನು ನಾವು ವ್ಯವಹಾರಿಕವಾಗಿ ಗಳಿಸಬಹುದು. ಆದರೆ ಆರೋಗ್ಯ ಸಂಪತ್ತನ್ನು ಗಳಿಸಲು ನಾವು ಸ್ವತಃ ಸಾಧನೆ ಮಾಡಬೇಕಾಗುತ್ತದೆ. ಸಾಧನೆ ಸಾಕಷ್ಟಿದ್ದರೂ ಸೂರ್ಯನಮಸ್ಕಾರ ಸಾಧನೆ ಸರ್ವಶ್ರೇಷ್ಠವಾಗಿದೆ ಎಂದು ಡಿ.ಜಿ.ಎಂ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಡಾ. ಎಂ.ವಿ. ಐಹೊಳ್ಳಿ ಅಭಿಪ್ರಾಯಪಟ್ಟರು.

ಎಸ್.ವಾಯ್.ಬಿ.ಎಂ.ಎಸ್ ಯೋಗಪಾಠಶಾಲೆಯ ಬಸವ ಯೋಗ ಮಹಾವಿದ್ಯಾಲಯ ಮತ್ತು ಅಕ್ಕಮಹಾದೇವಿ ಯೋಗ ವಿಜ್ಞಾನ ಕೇಂದ್ರ ಮತ್ತು ಯೋಗ ಚಿಂತನ ಕೂಟ ಗದಗ ಇವರುಗಳ ಸಂಯುಕ್ತಾಶ್ರಯದಲ್ಲಿ ಸಿದ್ಧಲಿಂಗ ನಗರದಲ್ಲಿನ ಬಸವ ಯೋಗ ಮಂದಿರದಲ್ಲಿ ರಥಸಪ್ತಮಿ ಆಚರಣೆ ಪ್ರಯುಕ್ತ ಆಯೋಜಿಸಿದ್ದ ಸಾಮೂಹಿಕ ಸೂರ್ಯನಮಸ್ಕಾರ ಯಜ್ಞ ಮತ್ತು ಸೂರ್ಯಾಷ್ಟೋತ್ತರ ಶತನಾಮಾವಳಿ ಪಠಣ ಕಾರ್ಯಕ್ರಮಗಳ ನೇತೃತ್ವ ವಹಿಸಿ ಅವರು ಮಾತನಾಡಿದರು.

ಸೂರ್ಯ ನಮಸ್ಕಾರವು ಯೋಗದ ಪ್ರಕ್ರಿಯೆಗಳಾದ ಆಸನ, ಪ್ರಾಣಾಯಾಮ, ಧ್ಯಾನ, ಮಂತ್ರ ಪಠಣಗಳ ಸಂಯೋಜನೆಯುಕ್ತ 12 ಹಂತಗಳ ವ್ಯಾಯಾಮ ಪದ್ಧತಿಯಾಗಿದೆ. ಆಧ್ಯಾತ್ಮಿಕವಾಗಿ ಸೂರ್ಯದೇವನಿಗೆ ವಂದನೆ ಸಲ್ಲಿಸುವುದು ಧಾರ್ಮಿಕ ಆಚರಣೆಯಾಗಿದೆ. ಈ ಸೂರ್ಯನಮಸ್ಕಾರ ಸಾಧನೆಯಿಂದ ನಾವು ದೈಹಿಕ, ಮಾನಸಿಕ, ಆಧ್ಯಾತ್ಮಿಕ, ಭಾವನಾತ್ಮಕ, ನೈತಿಕ ಮತ್ತು ಸಾಮಾಜಿಕವಾಗಿ ಆರೋಗ್ಯವಂತರಾಗಿರಬಹುದು. ಹೀಗಾಗಿ ಸೂರ್ಯ ನಮಸ್ಕಾರ ಸಾಧನೆ ಆರೋಗ್ಯ ಭಾಗ್ಯದ ಅಡಿಪಾಯವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಭಾಗಿಯಾದ ನಿವೃತ್ತ ಮುಖ್ಯೋಪಾಧ್ಯಾಯ ಶಿವನಗೌಡ ಗೌಡರ ಸೂರ್ಯಾಷ್ಟೋತ್ತರ ಶತನಾಮಾವಳಿಯನ್ನು ಪಠಣ ಮಾಡಿಸಿ ಯೋಗ ಗಾರುಡಿಗರಾದ ಮಾಳಾಡಿಹಳ್ಳಿ ದಿ. ಶ್ರೀ ರಾಘವೇಂದ್ರ ಸ್ವಾಮಿಗಳು ಮಾಡಿದ ಸೂರ್ಯನಮಸ್ಕಾರ ಸಾಧನೆಯನ್ನು ಪರಿಚಯಿಸಿದರು.

ಕಾರ್ಯಕ್ರಮದಲ್ಲಿ ಇ. ಪ್ರಶಾಂತ, ಜಯಶ್ರೀ ಡಾವಣಗೇರಿ, ವೀಣಾ ಗೌಡರ, ರೇಷ್ಮಾ ಹಡಪದ, ಗಿರಿಜಾ ಅಂಗಡಿ ಸೇರಿದಂತೆ ಯೋಗಪಾಠಶಾಲೆಯ ಸದಸ್ಯರು ಪಾಲ್ಗೊಂಡಿದ್ದರು. ಪ್ರಾರಂಭದಲ್ಲಿ ಪ್ರಾರ್ಥನೆ, ಸಾಮೂಹಿಕ ಸೂರ್ಯ ನಮಸ್ಕಾರ ಯಜ್ಞ ನಡೆದವು. ಷಡಕ್ಷರಿ ಮೆಣಸಿನಕಾಯಿ ಸರ್ವರನ್ನು ಸ್ವಾಗತಿಸಿದರು. ಬಸವ ಯೋಗ ಮಹಾವಿದ್ಯಾಲಯದ ಪ್ರಾಚಾರ್ಯ ಕೆ.ಎಸ್. ಪಾಳೆದ ಪ್ರಾಸ್ತಾವಿಕ ನುಡಿಗಳನ್ನಾಡಿದರು. ರವಿ ಹುಡೇದ ಕಾರ್ಯಕ್ರಮ ನಿರೂಪಿಸಿದರು. ಸುಲೋಚನಾ ಐಹೊಳ್ಳಿ ವಂದಿಸಿದರು.

ಎಲ್.ಟಿ.ಎಂ.ಎಸ್ ಹೆಸ್ಕಾಂನ ಅಸಿಸ್ಟಂಟ್ ಇಂಜಿನಿಯರ್ ಸುನಿತಾ ಓಲಿ ರಥಸಪ್ತಮಿ ದಿನ ಪ್ರಾರಂಭಿಸಿದ ಕಾರ್ಯಗಳ ಫಲ ಏಳು ಪಟ್ಟು ಹೆಚ್ಚುವದೆಂದು ತಿಳಿಸಿದರು. ರಥಸಪ್ತಮಿ ಮತ್ತು ಸೂರ್ಯನಮಸ್ಕಾರ ಕುರಿತು ಅಶೋಕ ಬಾರಕೇರ, ವಿಜಯಲಕ್ಷ್ಮೀ ಆನೆಹೊಸೂರ, ಮಂಜುಳಾ ಬುಳ್ಳಾ, ವಿಜಯಾ ಚನ್ನಶೆಟ್ಟಿ, ಗೌರಿ ಜಿರಂಕಳಿ ಮಾತನಾಡಿದರು. ವೀಣಾಶ್ರೀ ಮಾಲಿಪಾಟೀಲ ಸೂರ್ಯ ದೇವರ ಮಹತ್ವ ತಿಳಿಸುವ ಗೀತೆ ಹಾಡಿದರು.

ಜಿಲ್ಲಾ ಬ್ಯಾಂಕ್ ನೌಕರ ಸಂಘದಿಂದ ಧರಣಿ

0

ವಿಜಯಸಾಕ್ಷಿ ಸುದ್ದಿ, ಗದಗ: ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ (ಯುಎಫ್‌ಬಿಯು) ರಾಷ್ಟ್ರವ್ಯಾಪಿ ಒಂದು ದಿನದ ಮುಷ್ಕರಕ್ಕೆ ಕರೆ ನೀಡಿದ್ದ ಹಿನ್ನೆಲೆಯಲ್ಲಿ ಗದಗ ಜಿಲ್ಲಾ ಘಟಕವು ನಗರದ ಗಾಂಧಿ ಸರ್ಕಲ್ ಬಳಿ ಕೆನರಾ ಬ್ಯಾಂಕ್ ಮುಂಭಾಗದಲ್ಲಿ ಮುಷ್ಕರ ನಡೆಸಿದರು.

ಗದಗ ಜಿಲ್ಲಾ ಬ್ಯಾಂಕ್ ನೌಕರರ ಪ್ರಧಾನ ಕಾರ್ಯದರ್ಶಿ ಕಾಮ್ರೆಡ್ ಹನುಮೇಶ್ ಎಮ್. ಗಂಗರಾಹುತರ ಹಾಗೂ ಗದಗ ಜಿಲ್ಲಾ ಯುಎಫ್‌ಬಿಯು ಘಟಕದ ಕನ್ವೀನರ್ ಕಾಮ್ರೆಡ್ ಅಮರೇಶ್ವರ ಕೆ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

5 ದಿನಗಳ ಬ್ಯಾಂಕಿಂಗ್ ವ್ಯವಸ್ಥೆ ಜಾರಿಗೊಳಿಸುವಂತೆ ಕೇಂದ್ರ ಸರ್ಕಾರ ಮತ್ತು ಹಣಕಾಸು ಸಚಿವಾಲಯವನ್ನು ಒತ್ತಾಯಿಸಿ ಈಗಾಗಲೇ ಐಬಿಎ ಹಾಗೂ ಬ್ಯಾಂಕ್ ಕಾರ್ಮಿಕ ಸಂಘಗಳ ನಡುವೆ ಒಪ್ಪಿಗೆಯಾಗಿ ಅದರ ಅನುಮೋದನೆಗಾಗಿ ಕೇಂದ್ರ ಹಣಕಾಸು ಸೇವೆಗಳ ಇಲಾಖೆಗೆ ಕಳುಹಿಸಲಾಗಿದೆ. ಆದರೆ ಒಪ್ಪಂದವಾಗಿ ಎರಡು ವರ್ಷಗಳು ಕಳೆದರೂ ಅಲ್ಲಿ ಅನಗತ್ಯವಾಗಿ ವಿಳಂಬ ಧೋರಣೆಯನ್ನು ಅನುಸರಿಸಲಾಗುತ್ತಿದೆ. ಆದ್ದರಿಂದ ಕೇಂದ್ರ ಸರ್ಕಾರ ಈ ಕೂಡಲೇ ಮಧ್ಯಪ್ರವೇಶಿಸಿ ಬ್ಯಾಂಕ್ ಉದ್ಯೋಗಿಗಳ ನ್ಯಾಯಯುತವಾದ ಬೇಡಿಕೆಯನ್ನು ಈಡೇರಿಸಬೇಕೆಂದು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದರು.

ಮುಷ್ಕರದಲ್ಲಿ ಕಾಮ್ರೆಡ್ ಬಾಲಾಜಿ ಕುಲಕರ್ಣಿ, ಕಾಮ್ರೆಡ್ ಮಂಜುನಾಥ ಭಜಂತ್ರಿ, ಕಾಮ್ರೆಡ್ ಮಂಜುನಾಥ ದೊಡ್ಡಮನಿ, ಕಾಮ್ರೆಡ್ ಶಿವಾನಂದ್, ಕಾಮ್ರೆಡ್ ಯಚ್ಚರಸ್ವಾಮಿ ನಾಯಕ, ಕಾಮ್ರೆಡ್ ಅಶೋಕ ಗೌಡ್ರ, ಕಾಮ್ರೆಡ್ ಪ್ರೇಮ್, ಕಾಮ್ರೆಡ್ ಸೂರ್ಯ ಕುಮಾರ್, ಕಾಮ್ರೆಡ್ ಹರೀಶ್ ಲೋಕಾಪುರ್, ಕಾಮ್ರೆಡ್ ರಾಜು ಸಿಂಗಾಡಿ, ಕಾಮ್ರೆಡ್ ದೀಪಕ್ ಕೊಲ್ಲಾಪುರಿ, ಕಾಮ್ರೆಡ್ ದೀಪು ಮಾಲಾ, ನೇಹಾ, ಸುಧಾರಾಣಿ, ಪ್ರೀತಿ, ಲೋಕೇಶ್, ಕಾಮ್ರೆಡ್ ವಿಜಯ್, ಕಾಮ್ರೆಡ್ ವಿನೋದ್ ಹೊಸೂರ, ಮೌಲಾಸಾಬ್, ಗಾಯತ್ರಿ, ಶಿಲ್ಪಾ, ಪ್ರಿಯ ಸಜ್ಜನ್, ಚೈತ್ರ, ಪ್ರದೀಪ್, ಮಂಜುನಾಥ ಭಜಂತ್ರಿ ಮುಂತಾದವರು ಪಾಲ್ಗೊಂಡಿದ್ದರು.

ಶರಣರ ಪರಂಪರೆಯಲ್ಲಿ ಮುನ್ನಡೆಯೋಣ: ರಾಮಣ್ಣ ಇರಕಲ್ಲ 

0

ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಸುಣಗಾರ ಓಣಿಯಲ್ಲಿ ಗದಗ ಜಿಲ್ಲಾ ನಿಜಶರಣ ಅಂಬಿಗರ ಚೌಡಯ್ಯ ಸಮಾಜ ಟ್ರಸ್ಟ್ ವತಿಯಿಂದ 12ನೇ ಶತಮಾನದ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತು.

ಯುವ ಮುಖಂಡ, ಗದಗ ಜಿಲ್ಲಾ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೃಷ್ಣಗೌಡ ಪಾಟೀಲ ಮಾತನಾಡಿ, 12ನೇ ಶತಮಾನದ ಶರಣರು ಜಾತಿ ರಹಿತ, ಸಮ ಸಮಾಜ ಕಟ್ಟುವ ಕನಸು ಕಂಡಿದ್ದರು. ಸಮಾಜದಲ್ಲಿರುವ ಮೂಢನಂಬಿಕೆಯನ್ನು ಬೇರು ಸಮೇತ ಕಿತ್ತಹಾಕಲು ವಚನಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದ ನಿಜಶರಣ ಅಂಬಿಗರ ಚೌಡಯ್ಯನವರು ಎಂದು ಸ್ಮರಿಸಿದರು.

ಅಧ್ಯಕ್ಷತೆ ವಹಿಸಿದ್ದ ಗದಗ ಜಿಲ್ಲಾ ನಿಜಶರಣ ಅಂಬಿಗರ ಚೌಡಯ್ಯ ಸಮಾಜ ಟ್ರಸ್ಟ್ ಜಿಲ್ಲಾಧ್ಯಕ್ಷ ರಾಮಣ್ಣ ಇರಕಲ್ಲ ಮಾತನಾಡಿ, ಶರಣರ ಪರಂಪರೆಯಲ್ಲಿ ಮುನ್ನಡೆಯೋಣ. ಪಾಶ್ಚಾತ್ಯ ಸಂಸ್ಕೃತಿಗಳನ್ನು ಬಿಟ್ಟು ಶರಣ ಸಂಸ್ಕೃತಿಗೆ ಅಂಟಿಕೊಳ್ಳಲಿ ಎಂದರು.

ಗದಗ ಜಿಲ್ಲಾ ಕೆಪಿಸಿಸಿ ಮೀನುಗಾರರ ವಿಭಾಗದ ಜಿಲ್ಲಾಧ್ಯಕ್ಷ ಗುರಪ್ಪ ತಿರ್ಲಾಪೂರ ಮಾತನಾಡಿ, ಸಮುದಾಯದ ಜನ ಸಂಘಟನೆ, ಹೋರಾಟ, ಶಿಕ್ಷಣ ಮಾನವೀಯ ಮೌಲ್ಯವನ್ನು ಮಕ್ಕಳಿಗೆ ಕಲಿಸೋಣ. ಅಂದಾಗ ಶರಣರ ಪರಂಪರೆಗೆ ಮೆರುಗು ಬರುತ್ತದೆ ಎಂದರು.

ಸಮಾಜದ ಮಹಿಳಾ ಅಧ್ಯಕ್ಷರಾದ ಸುಜಾತ ಗುಡಿಸಾಗರ ನೇತೃತ್ವದಲ್ಲಿ ಮಹಿಳೆಯರು ಕುಂಭ ಮೆರವಣಿಗೆಗೆ ಶೋಭೆ ತಂದರು. ಈ ಸಂದರ್ಭದಲ್ಲಿ ಅಂಬಿಗರ ಸಮಾಜ ಟ್ರಸ್ಟ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಗಮೇಶ ಹಾದಿಮನಿ, ಉಪಾಧ್ಯಕ್ಷ ಪ್ರವೀಣ ನೀಲಣ್ಣವರ, ಯುವ ಘಟಕದ ಅಧ್ಯಕ್ಷ ಮಂಜುನಾಥ ಗುಡಿಸಾಗರ, ಖಜಾಂಚಿ ಹನಮಂತ ಅಂಬಿಗೇರ, ರಾಜು ಪೂಜಾರ, ರಮೇಶ ಬೆನಕಲ್ಲ, ಬಸವರಾಜ ಗುಡಿಸಾಗರ, ಮಲ್ಲಿಕಾರ್ಜುನ ಬಾರಕೇರ, ನಾಗರಾಜ ಬಾರಕೇರ, ನಾರಾಯಣ ನರಗುಂದ, ಪ್ರಕಾಶ ಬಿನ್ನಾಳ, ರಾಜು ಗುಡಿಸಾಗರ, ಅಶೋಕ ಜಕನೂರ, ಅಮಿತ ಪೂಜಾರ, ಮಧು ಪೂಜಾರ, ಹರೀಶ ಬಾರಕೇರ, ಸಮಾಜದ ಮುಖಂಡರು ಪಾಲ್ಗೊಂಡಿದ್ದರು.

ಕಾಂಗ್ರೆಸ್ಸಿನವರಿಗೆ ಮಹಾತ್ಮ ಗಾಂಧಿಯವರ ಬಗ್ಗೆ ಮಾತನಾಡುವ ಯಾವುದೇ ಯೋಗ್ಯತೆ ಇಲ್ಲ: ವಿಜಯೇಂದ್ರ

0

ಬೆಂಗಳೂರು: ರಾಜ್ಯದ ಕಾಂಗ್ರೆಸ್ ಸರಕಾರ ಜಾಹೀರಾತಿನಲ್ಲಿ ಎಲ್ಲ ಸುಳ್ಳು ಮಾಹಿತಿಯನ್ನು ನೀಡುವ ಕೆಲಸವನ್ನು ಮಾಡಿದೆ. ಇದೇ ಜಾಹೀರಾತನ್ನು ಕಾಂಗ್ರೆಸ್ ಪಕ್ಷದ ವತಿಯಿಂದ ನೀಡಿದರೆ ನಮ್ಮ ವಿರೋಧ ಇರಲಿಲ್ಲ.

ರಾಜ್ಯದ ತೆರಿಗೆದಾರರ ಹಣವನ್ನು ದುರುಪಯೋಗ ಮಾಡಿ ಕೇಂದ್ರ ಸರ್ಕಾರದ ವಿರುದ್ಧ ಜನರನ್ನು ಎತ್ತಿ ಕಟ್ಟುವ ಕೆಲಸ ಮಾಡುತ್ತಿದ್ದಾರೆ. ಇದು ಅಕ್ಷಮ್ಯ ಅಪರಾಧ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಟೀಕಿಸಿದ್ದಾರೆ.

ಮಾಧ್ಯಮಗಳ ಜೊತೆ ಇಂದು ಮಾತನಾಡಿದ ಅವರು, ಈ ಕಾಂಗ್ರೆಸ್ ಸರಕಾರಕ್ಕೆ ಮಾನ ಮರ್ಯಾದೆ ಇಲ್ಲ. ಕೇಂದ್ರ ಸರಕಾರದ ವಿಬಿ ಜಿ ರಾಮ್ ಜಿ ಕಾಯ್ದೆಯ ವಿರುದ್ಧ ಪತ್ರಿಕೆಗಳ ಮುಖಪುಟದಲ್ಲಿ ರಾಜ್ಯ ಸರಕಾರ ಜಾಹೀರಾತು ನೀಡಿದ್ದನ್ನು ನಾವು ವಿರೋಧಿಸುತ್ತೇವೆ ಎಂದು ತಿಳಿಸಿದರು.

ಈ ಕಾಂಗ್ರೆಸ್ಸಿನವರಿಗೆ ಮಹಾತ್ಮ ಗಾಂಧಿಯವರ ಬಗ್ಗೆ ಗೌರವ ಇಲ್ಲ. ಇವತ್ತು ಕೊಟ್ಟಿರುವ ಜಾಹೀರಾತಿನ ಮೂಲಕ ಅಕ್ಷರಶಃ ಸಂಪೂರ್ಣ ತಪ್ಪು ಮಾಹಿತಿಯನ್ನು ರಾಜ್ಯದ ಜನತೆಗೆ ಕೊಡುವ ಕೆಲಸಕ್ಕೆ ಕಾಂಗ್ರೆಸ್ ಸರಕಾರ ಕೈಹಾಕಿದೆ. ಈ ಜಾಹೀರಾತಿನ ಮುಖೇನ ಕಾಂಗ್ರೆಸ್ ಸರಕಾರವು ರಾಜ್ಯದಲ್ಲಿ ಅರಾಜಕತೆ ಸೃಷ್ಟಿ ಮಾಡುವ ದುಸ್ಸಾಹಸಕ್ಕೆ ಕೈ ಹಾಕಿದೆ ಎಂದು ಖಂಡಿಸಿದರು.

ಕೆ.ಪಿ. ಅಗ್ರಹಾರ ಠಾಣೆ ಪೊಲೀಸ್ ಇನ್ಸ್‌ʼಪೆಕ್ಟರ್ ಲೋಕಾಯುಕ್ತ ಬಲೆಗೆ!

0

ಬೆಂಗಳೂರು: ಕೆ.ಪಿ. ಅಗ್ರಹಾರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಗೋವಿಂದರಾಜು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಚೀಟಿ ವ್ಯವಹಾರ ಸಂಬಂಧಿತ ಪ್ರಕರಣದಲ್ಲಿ ವ್ಯಕ್ತಿಯೊಬ್ಬನನ್ನು ಪ್ರಕರಣದಲ್ಲಿ ಸೇರಿಸುವುದಾಗಿ ಬೆದರಿಸಿ ಲಂಚಕ್ಕೆ ಬೇಡಿಕೆ ಇಟ್ಟ ಆರೋಪದ ಮೇಲೆ ಬಂಧಿಸಲಾಗಿದೆ.

ಇನ್ಸ್‌ಪೆಕ್ಟರ್ ಗೋವಿಂದರಾಜು ₹4 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟು, ಅದೇ ಮೊತ್ತವನ್ನು ಸ್ವೀಕರಿಸುವ ವೇಳೆ ಲೋಕಾಯುಕ್ತ ಅಧಿಕಾರಿಗಳು ರೆಡ್ ಹ್ಯಾಂಡ್ ಆಗಿ ಬಂಧಿಸಿದ್ದಾರೆ.

ಸಿರಸಿ ಸರ್ಕಲ್ ಬಳಿಯ ಕಾರ್ ಗ್ರೌಂಡ್ ಬಳಿ ಈ ಕಾರ್ಯಾಚರಣೆ ನಡೆದಿದೆ. ಲೋಕಾಯುಕ್ತ ಎಸ್‌ಪಿ ಶಿವಪ್ರಕಾಶ್  ನೇತೃತ್ವದಲ್ಲಿ ಈ ದಾಳಿ ನಡೆದಿದ್ದು, ಸದ್ಯ ಇನ್ಸ್‌ಪೆಕ್ಟರ್ ಗೋವಿಂದರಾಜುರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

ಮಹಿಳಾ ನೌಕರರಿಗೆ ಋತುಚಕ್ರ ರಜೆ ನೀಡಲು ಶಿಕ್ಷಣ ಇಲಾಖೆ ಆದೇಶ

0

ಬೆಂಗಳೂರು: ಉದ್ಯೋಗಸ್ಥ ಮಹಿಳೆಯರಿಗೆ ಋತುಚಕ್ರ ರಜೆ (Menstrual Leave) ನೀಡುವ ರಾಜ್ಯ ಸರ್ಕಾರದ ಆದೇಶದ ಹಿನ್ನೆಲೆಯಲ್ಲಿ, ಶಾಲಾ ಶಿಕ್ಷಣ ಇಲಾಖೆಯಲ್ಲಿ ಋತುಚಕ್ರ ರಜೆ ಕಡ್ಡಾಯಗೊಳಿಸಿ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ಈ ಸಂಬಂಧ ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರು ಅಧಿಕೃತ ಆದೇಶ ಹೊರಡಿಸಿದ್ದು, ರಜೆ ಪಡೆಯಲು ಕೆಲವು ನಿರ್ದಿಷ್ಟ ಷರತ್ತುಗಳನ್ನು ವಿಧಿಸಲಾಗಿದೆ.

ಈ ಆದೇಶದಂತೆ, ಶಿಕ್ಷಣ ಇಲಾಖೆಯ ಮಹಿಳಾ ಸರ್ಕಾರಿ ನೌಕರರು ಪ್ರತೀ ತಿಂಗಳು ಒಂದು ದಿನದ ಋತುಚಕ್ರ ರಜೆಯನ್ನು ಪಡೆಯಬಹುದಾಗಿದೆ. ಈ ರಜೆಗೆ ಯಾವುದೇ ವೈದ್ಯಕೀಯ ಪ್ರಮಾಣ ಪತ್ರ ಸಲ್ಲಿಸುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ಆದೇಶದಲ್ಲಿ 18 ರಿಂದ 52 ವರ್ಷ ವಯೋಮಿತಿಯೊಳಗಿನ ಋತುಚಕ್ರ ಹೊಂದಿರುವ ಮಹಿಳಾ ನೌಕರರು ಮಾತ್ರ ಈ ರಜೆಗೆ ಅರ್ಹರು ಎಂದು ತಿಳಿಸಲಾಗಿದೆ. ಅಲ್ಲದೆ, ಈ ರಜೆಯನ್ನು ಬೇರೆ ಯಾವುದೇ ರಜೆಯೊಂದಿಗೆ ಸಂಯೋಜಿಸಲು ಅವಕಾಶವಿರುವುದಿಲ್ಲ ಎಂದು ಸೂಚಿಸಲಾಗಿದೆ.

ಶಾಲಾ ಶಿಕ್ಷಣ ಇಲಾಖೆಯಲ್ಲಿ ಕಾರ್ಯನಿರ್ವಹಿಸುವ ಮಹಿಳಾ ನೌಕರರ ಆರೋಗ್ಯ ಮತ್ತು ಕೆಲಸದ ಒತ್ತಡವನ್ನು ಮನಗಂಡು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಇಲಾಖಾ ಮೂಲಗಳು ತಿಳಿಸಿವೆ.

ಭಾರತ-ಕೆನಡಾ ನಡುವೆ ಎಲೆಕ್ಟ್ರಿಕ್ ವಾಹನ್‌ ಕ್ಷೇತ್ರದ ಕುರಿತು ಮಹತ್ವದ ದ್ವಿಪಕ್ಷೀಯ ಚರ್ಚೆ

0

ನವದೆಹಲಿ: ನಿರ್ಣಾಯಕ ಅಪರೂಪದ ಖನಿಜಗಳು, ಇವಿ ಚಲನಶೀಲತೆ, ಉತ್ಪಾದನೆ ಮತ್ತು ಸುಸ್ಥಿರ ಕೈಗಾರಿಕಾ ಅಭಿವೃದ್ಧಿ ಕ್ಷೇತ್ರಗಳಲ್ಲಿನ ಸಹಕಾರವನ್ನು ಬಲಪಡಿಸಲು ಕೇಂದ್ರದ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಕೆನಡಾದ ನೈಸರ್ಗಿಕ ಸಂಪನ್ಮೂಲಗಳ ಖಾತೆ ಸಚಿವ ಟಿಮ್ ಹಾಡ್ಗಸನ್‌ ನೇತೃತ್ವದ ಉನ್ನತ ಮಟ್ಟದ ನಿಯೋಗದೊಂದಿಗೆ ಮಹತ್ವದ ದ್ವಿಪಕ್ಷೀಯ ಮಾತುಕತೆ ನಡೆಸಿದರು.

ನವದೆಹಲಿಯ ಉದ್ಯೋಗ ಭವನದಲ್ಲಿ ನಡೆದ ದ್ವಿಪಕ್ಷೀಯ ಸಭೆಯಲ್ಲಿ ಉಭಯ ಸಚಿವರು, ಎರಡೂ ದೇಶಗಳ ನಡುವಿನ ಕೈಗಾರಿಕೆ ಕ್ಷೇತ್ರದಲ್ಲಿ ಹೊಂದಬಹುದಾದ ಸಗಕಾರಗಳ ಬಗ್ಗೆ ಪರಸ್ಪರ ಚರ್ಚಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯತಂತ್ರದ ಭಾಗವಾಗಿ ಹಲವಾರು ಕ್ಷೇತ್ರಗಳಲ್ಲಿ ಸುಸ್ಥಿರ ಬೆಳವಣಿಗೆ, ತಾಂತ್ರಿಕ ನಾಯಕತ್ವ ಮತ್ತು ಸ್ವಾವಲಂಬನೆಗೆ ಒತ್ತು ನೀಡುವ ಬಗ್ಗೆ ಕುಮಾರಸ್ವಾಮಿ ಅವರು ಕೆನಡಾ ಸಚಿವರೊಂದಿಗೆ ಮಾತುಕತೆ ನಡೆಸಿದರು.

“ಪ್ರಧಾನಿ ನರೇಂದ್ರ ಮೋದಿ ಅವರು 2047ರ ವೇಳೆಗೆ ವಿಕಸಿತ ಭಾರತ ಕನಸು ಸಾಕಾರ ಆಗಿಸುವ ನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ. 2070ರ ವೇಳೆಗೆ ಆಟೋಬೊಮೈಲ್‌ ಕ್ಷೇತ್ರದಲ್ಲಿ ಇಂಗಾಲದ ನಿವ್ವಳ ಹೊಸಸೂಸುವಿಕೆಯ ಗುರಿ ಸಾಧಿಸುವ ನಿಟ್ಟಿನಲ್ಲಿ ಭಾರತ ದಾಪುಗಾಲಿಡುತ್ತಿದೆ. ಆಟೋಮೋಟಿವ್, ಭಾರೀ ಎಲೆಕ್ಟ್ರಿಕಲ್ ಮತ್ತು ಬಂಡವಾಳ ಸರಕುಗಳ ವಲಯಗಳು ಈ ಸುಸ್ಥಿರ ಬೆಳವಣಿಗೆಯ ಪಥವನ್ನು ಬೆಂಬಲಿಸುವ ಪ್ರಮುಖ ಸ್ತಂಭಗಳಾಗಿವೆ” ಎಂದು ಸಚಿವ ಕುಮಾರಸ್ವಾಮಿ ಹೇಳಿದರು.

“ಜಗತ್ತಿನ ಪ್ರಮುಖ ಆಟೋಮೊಬೈಲ್ ತಯಾರಕ ದೇಶಗಳಲ್ಲಿ ಮುಂಚೂಣಿಯಲ್ಲಿರುವ ಭಾರತವು ಫೇಮ್‌ -೨ (FAME-II) ಯೋಜನೆಯ ಮೂಲಕ ಇವಿ ವಾಹನಗಳನ್ನು ತ್ವರಿತವಾಗಿ ಅಳವಡಿಸಿಕೊಂಡಿದೆ. ಈ ಯೋಜನೆ ಮೂಲಕ 16 ಲಕ್ಷಕ್ಕೂ ಹೆಚ್ಚು ಇವಿ ವಾಹನಗಳು ರಸ್ತೆಗೆ ಇಳಿಯುವಂತೆ ಮಾಡಿತು ಮತ್ತು ದೇಶಾದ್ಯಂತ 10,900ಕ್ಕೂ ಹೆಚ್ಚು ಸಾರ್ವಜನಿಕ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಲು ಸಹಕಾರಿ ಆಯಿತು” ಎಂದು ಕುಮಾರಸ್ವಾಮಿ ಅವರು ಕೆನಡಾ ಸಚಿವರಿಗೆ ಮಾಹಿತಿ ನೀಡಿದರು.

ಆ ನಂತರ ಪಿಎಂ ಇ-ಡ್ರೈವ್‌ (PM E-DRIVE) ಯೋಜನೆ ಮತ್ತು ಪಿಎಂ ಇ-ಬಸ್‌ ಸೇವಾ ಉಪಕ್ರಮಗಳ ಮೂಲಕ ಇವಿ ದ್ವಿಚಕ್ರ ವಾಹನಗಳು, ತ್ರಿಚಕ್ರ ವಾಹನಗಳು, ಬಸ್‌ಗಳು, ಟ್ರಕ್ಕುಗಳು, ಚಾರ್ಜಿಂಗ್ ಮೂಲಸೌಕರ್ಯ ಮತ್ತು ಪರೀಕ್ಷಾ ಸೌಲಭ್ಯಗಳನ್ನು ಬೆಂಬಲಿಸುವ ಪರಿವರ್ತನಾತ್ಮಕ ಯೋಜನೆಯಾಗಿ ಅನುಷ್ಠಾನಕ್ಕೆ ಬಂದಿತು ಎಂದು ಹೇಳಿದ ಸಚಿವರು; ಈ ಉಪಕ್ರಮಗಳ ಮೂಲಕ ನಾವು ನಮ್ಮ ದೇಶೀಯ ಉತ್ಪಾದನಾ ಸಾಮರ್ಥ್ಯಗಳನ್ನು ಬಲಪಡಿಸುತ್ತಿದ್ದೇವೆ ಮತ್ತು ನಮ್ಮ ಉತ್ಪನ್ನಗಳು ಜಾಗತಿಕ ಸುರಕ್ಷತೆ ಮತ್ತು ಕಾರ್ಯಕ್ಷಮತೆಯ ಮಾನದಂಡಗಳನ್ನು ಪೂರೈಸುತ್ತಿವೆ ಎಂದು ಖಚಿತಪಡಿಸಿಕೊಳ್ಳುತ್ತಿದ್ದೇವೆ ಎಂದರು.

ಈ ದ್ವಿಪಕ್ಷೀಯ ಚರ್ಚೆಯ ಪ್ರಮುಖ ಗಮನವು ದೃಢವಾದ ಮತ್ತು ಸುರಕ್ಷಿತ ಬ್ಯಾಟರಿ ಉತ್ಪಾದನಾ ಪರಿಸರ ವ್ಯವಸ್ಥೆಯ ಅಭಿವೃದ್ಧಿ ಮತ್ತು ಶುದ್ಧ ಇಂಧನ ತಂತ್ರಜ್ಞಾನಗಳಿಗೆ ಅಗತ್ಯವಾದ ನಿರ್ಣಾಯಕ ಖನಿಜಗಳ ಉತ್ಪಾದನೆ, ಬಳಕೆ ಬಗ್ಗೆ ಕೇಂದ್ರೀಕೃತವಾಗಿತ್ತು.

ಹಾಗೆಯೇ; ಭಾರತದ ಉಕ್ಕು ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಲು ಮತ್ತು ದೀರ್ಘಕಾಲೀನ ಇಂಧನ ಭದ್ರತೆಯನ್ನು ಬಲಪಡಿಸಲು ರಾಷ್ಟ್ರೀಯ ಖನಿಜಾಭಿವೃದ್ಧಿ ನಿಗಮ (ಎನ್‌ಎಂಡಿಸಿ) ಕೆನಡಾದಲ್ಲಿ ಕಲ್ಲಿದ್ದಲು ನಿಕ್ಷೇಪಗಳನ್ನು ಸಕ್ರಿಯವಾಗಿ ಅನ್ವೇಷಿಸುತ್ತಿದೆ ಎಂದು ಇದೇ ವೇಳೆ ಕೆನಡಾ ಸಚಿವರೊಂದಿಗೆ ಚರ್ಚಿಸುತ್ತಾ ಸಚಿವರು ಹೇಳಿದರು.

ಸಚಿವ ಟಿಮ್ ಹಾಡ್ಗಸನ್‌ ನೇತೃತ್ವದ ಕೆನಡಾದ ನಿಯೋಗವು ನವೀನ ತಂತ್ರಜ್ಞಾನಗಳು ಮತ್ತು ಕೈಗಾರಿಕಾ ನಾವೀನ್ಯತೆಯಲ್ಲಿ ಭಾರತದ ತ್ವರಿತ ಪ್ರಗತಿ ಬಗ್ಗೆ ಕುತೂಹಲದ, ಆಶಾದಾಯಕ ಪ್ರತಿಕ್ರಿಯೆ ತೋರಿತು. ಬ್ಯಾಟರಿ ತಂತ್ರಜ್ಞಾನಗಳು ಮತ್ತು ಇವಿ ಸಾರಿಗೆ ಪರಿಹಾರಗಳಲ್ಲಿ ಭಾರತವನ್ನು ಜಾಗತಿಕ ನಾಯಕ ಎಂದು ಈ ಸಂದರ್ಭದಲ್ಲಿ ಕೆನಡಾ ಸಚಿವರು ಬಣ್ಣಿಸಿದರು ಹಾಗೂ ಭಾರತೀಯ ಪಾಲುದಾರರೊಂದಿಗೆ ಸುಧಾರಿತ ಬ್ಯಾಟರಿ ತಂತ್ರಜ್ಞಾನಗಳನ್ನು ಹಂಚಿಕೊಳ್ಳಲು ಕೆನಡಾದ ಇಚ್ಛೆಯನ್ನು ವ್ಯಕ್ತಪಡಿಸಿದರು.

ಇವಿ ಚಲನಶೀಲತೆ ಮತ್ತು ಉತ್ಪಾದನಾ ವಲಯಗಳಲ್ಲಿ ಭಾರತೀಯ ಖಾಸಗಿ ವಲಯದ ಉದ್ಯಮಿಗಳು ನಡೆಸುತ್ತಿರುವ ಗಮನಾರ್ಹ ಕೆಲಸವನ್ನು ಅವರು ಶ್ಲಾಘಿಸಿದರು ಮತ್ತು ಭಾರತೀಯ ಮಾರುಕಟ್ಟೆಗಳಿಗೆ ಹೆಚ್ಚಿನ ಪ್ರವೇಶಕ್ಕಾಗಿ ಕೆನಡಾದ ಬೇಡಿಕೆಗಳ ಬಗ್ಗೆ ಚರ್ಚಿಸಿದರು. ಅಲ್ಲದೆ; ಇಂಗಾಲ ಹೊರಸೂವಿಕೆಯನ್ನು ಕೊನೆಗಾಣಿಸುವ ನಿಟ್ಟಿನಲ್ಲಿ ನಿರ್ಣಾಯಕವಾಗಿರುವ ಲಿಥಿಯಂ, ಕೋಬಾಲ್ಟ್, ಗ್ರ್ಯಾಫೈಟ್ ಮತ್ತು ಅಪರೂಪದ ಭೂಮಿಯ ಅಂಶಗಳಿಗೆ ಭಾರತದ ಅವಶ್ಯಕತೆಗಳನ್ನು ಬೆಂಬಲಿಸಲು ಕೆನಡಾದ ಓಲವನ್ನು ಅವರು ಪುನರುಚ್ಚರಿಸಿದರು.

ಬ್ಯಾಟರಿ ಕೋಶ ಮತ್ತು ಘಟಕ ಉತ್ಪಾದನೆಯಲ್ಲಿ ಜಂಟಿ ಸಮನ್ವಯ ಚೌಕಟ್ಟುಗಳು ಮತ್ತು ಸಹಯೋಗದ ಅವಕಾಶಗಳು, ಮುಂದಿನ ಪೀಳಿಗೆಯ ಬ್ಯಾಟರಿಗಳ ಕುರಿತು ಸಂಶೋಧನೆ ಮತ್ತು ಅಭಿವೃದ್ಧಿ, ನಿರ್ಣಾಯಕ ಖನಿಜ ಪೂರೈಕೆ ಸರಪಳಿಗಳು, ಪರೀಕ್ಷೆ ಮತ್ತು ಪ್ರಮಾಣೀಕರಣ ಮೂಲಸೌಕರ್ಯ, ಕ್ಲೀನ್ ಮೊಬಿಲಿಟಿ ಪರಿಹಾರಗಳು ಮತ್ತು ಸುಸ್ಥಿರ ಉತ್ಪಾದನಾ ಪ್ರಕ್ರಿಯೆಗಳ ಕುರಿತು ಸಭೆಯು ವಿವರವಾದ ಚರ್ಚೆಗಳು ಈ ಸಂದರ್ಭದಲ್ಲಿ ನಡೆಯಿತು.

ಈ ಚರ್ಚೆಯ ಸಂದರ್ಭದಲ್ಲಿ ಬೃಹತ್‌ ಕೈಗಾರಿಕೆ ಸಚಿವಾಲಯ ಮತ್ತು ಉಕ್ಕು ಸಚಿವಾಲಯದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು, ಅವರಲ್ಲಿ ಬೃಹತ್‌ ಕೈಗಾರಿಕೆ ಸಚಿವಲಾಯದ ಕಾರ್ಯದರ್ಶಿ ಕಮ್ರನ್ ರಿಜ್ವಿ, ಹೆಚ್ಚುವರಿ ಕಾರ್ಯದರ್ಶಿ ಹನೀಫ್ ಖುರೇಷಿ, ಜಂಟಿ ಕಾರ್ಯದರ್ಶಿ ವಿಜಯ್ ಮಿತ್ತಲ್, ಉಕ್ಕು ಸಚಿವಾಲಯದ ಜಂಟಿ ಕಾರ್ಯದರ್ಶಿ ವಿನೋದ್ ಕುಮಾರ್ ತ್ರಿಪಾಠಿ, ಎನ್‌ಎಂಡಿಸಿ ಸಿಎಂಡಿ ಅಮಿತವ್ ಮುಖರ್ಜಿ, ಬಿಎಚ್‌ಇಎಲ್ ಸಿಎಂಡಿ ಕೆ.ಎಸ್. ಮೂರ್ತಿ ಮತ್ತು ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.‌

ಕಾರ್ಮಿಕ ಹೋರಾಟದಲ್ಲಿ ಅಂತಿಮ ಉಸಿರಿನವರೆಗೂ ಸಕ್ರಿಯರಾಗಿದ್ದರು: ಅನಂತ ಸುಬ್ಬರಾವ್ʼಗೆ ಸಿಎಂ ಸಿದ್ದರಾಮಯ್ಯ ನಮನ

0

ಬೆಂಗಳೂರು: ಕಾರ್ಮಿಕರ ಹೋರಾಟದಲ್ಲಿ ತಮ್ಮ ಜೀವಿತದ ಕೊನೆಕ್ಷಣದವರೆಗೂ ಸಕ್ರಿಯರಾಗಿದ್ದ ಅನಂತ ಸುಬ್ಬಾರಾವ್ ಅವರೊಬ್ಬ ಬದ್ಧತೆಯ ಸಿಪಿಐ ನಾಯಕರಾಗಿದ್ದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ದಿವಂಗತ ಕಾಮ್ರೇಡ್ ಹೆಚ್ ವಿ ಅನಂತ ಸುಬ್ಬರಾವ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.

ಕಾರ್ಮಿಕರ ಧ್ವನಿಯಾಗಿ ಹಲವು ಹೋರಾಟಗಳಲ್ಲಿ ಭಾಗಿ

ಕಾಮ್ರೆಡ್ ಅನಂತ ಸುಬ್ಬರಾವ್ ಅವರು ಕಾರ್ಮಿಕರ ಧ್ವನಿಯಾಗಿ ಹಲವು ಹೋರಾಟಗಳಲ್ಲಿ ಸಕ್ರಿಯರಾಗಿದ್ದರು. ತಿಂಗಳ ಹಿಂದೆ ನಡೆದ ಕೆಎಸ್ ಆರ್ ಟಿಸಿ ನೌಕರರ ಪ್ರತಿನಿಧಿಯಾಗಿ ಅವರನ್ನು ಭೇಟಿ ಮಾಡಿದ್ದರು. ಅವರು ಕೆಎಸ್ ಆರ್ ಟಿಸಿಯ ಜಂಟಿ ಕ್ರಿಯಾ ಸಮಿತಿಯ ಅಧ್ಯಕ್ಷರಾಗಿ, ಸಿಬ್ಬಂದಿ ಯೂನಿಯನ್ ನ ಅಧ್ಯಕ್ಷರಾಗಿದ್ದರು. ಬದ್ಧತೆಯ ಜಾತ್ಯಾತೀತ ಹಾಗೂ ಸಿಪಿಐ ನಾಯಕರಾಗಿದ್ದರು.

ಅವರ ಸಾವಿನಿಂದ ರಾಜ್ಯಕ್ಕೆ ನಷ್ಟವುಂಟಾಗಿದ್ದು, ಅವರ ಆತ್ಮಕ್ಕೆ ಶಾಂತಿಯನ್ನು ಕೋರುತ್ತಾ, ಸಾವಿನ ದು:ಖವನ್ನು ಭರಿಸುವ ಶಕ್ತಿಯನ್ನು ಭರಿಸಲು ಅವರ ಕುಟುಂಬ ಮತ್ತು ಬೆಂಬಲಿಗರಿಗೆ ಭಗವಂತ ನೀಡಲಿ ಎಂದು ಪ್ರಾರ್ಥಿಸುವುದಾಗಿ ತಿಳಿಸಿದರು.

ಅನಂತ ಸುಬ್ಬಾರಾವ್ ಅವರು ನನಗೆ ಚಿರಪರಿಚಿತರು

ಕಾರ್ಮಿಕರ ಹೋರಾಟದಲ್ಲಿ ತಮ್ಮ ಜೀವಿತದ ಕೊನೆಕ್ಷಣದವರೆಗೂ ಸಕ್ರಿಯರಾಗಿದ್ದ ಅನಂತ ಸುಬ್ಬಾರಾವ್ ಅವರು ನನಗೆ ಚಿರಪರಿಚಿತರು. ನಾನು ಸಾರಿಗೆ ಸಚಿವನಾಗಿದ್ದ ಸಂದರ್ಭದಿಂದಲೂ ಅವರೊಂದಿಗೆ ಉತ್ತಮ ಸಂಬಂಧ ಹೊಂದಿರುವುದಾಗಿ ತಿಳಿಸಿದರು.

ಕುಮಟಾ ಬಳಿ KSRTC ಬಸ್, ಬೊಲೆರೋ ಮುಖಾಮುಖಿ ಡಿಕ್ಕಿ: 8 ಮಂದಿಗೆ ಗಾಯ

0

ಉತ್ತರ ಕನ್ನಡ: ಜಿಲ್ಲೆಯ ಕುಮಟಾ ತಾಲೂಕಿನ ರಾಷ್ಟ್ರೀಯ ಹೆದ್ದಾರಿ–66ರಲ್ಲಿ ಮಾನೀರು ದೇವಸ್ಥಾನದ ಬಳಿ ಕೆಎಸ್‌ಆರ್‌ಟಿಸಿ ಬಸ್ ಮತ್ತು ಬೊಲೆರೋ ವಾಹನ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಬೊಲೆರೋ ವಾಹನ ಚಾಲಕ ಸೇರಿದಂತೆ ಒಟ್ಟು ಎಂಟು ಮಂದಿ ಗಾಯಗೊಂಡಿದ್ದಾರೆ.

ಬೊಲೆರೋ ವಾಹನ ಚಾಲಕ ಕಾರವಾರ ನಿವಾಸಿ ಡೇವಿಡ್ ಪಾಸ್ಕಲ್ ಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಸ್‌ನಲ್ಲಿದ್ದ ಉಳಿದ ಏಳು ಗಾಯಾಳುಗಳನ್ನು ಕುಮಟಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಕಾರವಾರದಿಂದ ಕುಮಟಾಗೆ ಮೀನು ಸಾಗಿಸಿಕೊಂಡು ತೆರಳುತ್ತಿದ್ದ ಬೊಲೆರೋ ವಾಹನ, ಕುಮಟಾದಿಂದ ಕಾರವಾರದತ್ತ ಮರಳುತ್ತಿದ್ದ ವೇಳೆ ಗೋಕರ್ಣದ ಕಡೆಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಘಟನೆಯ ಕುರಿತು ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

error: Content is protected !!