Home Blog

ಜನತಾ ದರ್ಶನದಲ್ಲಿ ಸಾಮಾಜಿಕ ಭದ್ರತಾ ಯೋಜನೆಗಳ ಆದೇಶ ಪ್ರತಿಗಳ ವಿತರಣೆ

0

ಗದಗ: ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲರು ಶುಕ್ರವಾರ ಜಿಲ್ಲಾ ಮಟ್ಟದ ಜನತಾ ದರ್ಶನ ಕಾರ್ಯಕ್ರಮದಲ್ಲಿ ಸಾಮಾಜಿಕ ಭದ್ರತಾ ಯೋಜನೆಗಳ ಆದೇಶದ ಪ್ರತಿಗಳನ್ನು ಫಲಾನುಭವಿಗಳಿಗೆ ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ಗದಗ ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ ಬರ್ಚಿ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಬಿ.ಬಿ. ಅಸೂಟಿ, ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷ್ ಕೆ, ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್, ತಾಲೂಕು ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಅಶೋಕ ಮಂದಾಲಿ, ಗಣ್ಯರಾದ ಸಿದ್ದು ಪಾಟೀಲ, ಎಸ್.ಎನ್. ಬಳ್ಳಾರಿ, ಸುಜಾತಾ ದೊಡ್ಡಮನಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

ಜನತಾ ದರ್ಶನದಲ್ಲಿ ವಿಕಲಚೇತನರಿಗೆ ತ್ರಿಚಕ್ರ ವಾಹನ ವಿತರಣೆ

0

ಗದಗ: ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲ ಅವರು ಶುಕ್ರವಾರ ಜಿಲ್ಲಾ ಮಟ್ಟದ ಜನತಾ ದರ್ಶನ ಕಾರ್ಯಕ್ರಮದಲ್ಲಿ ವಿಕಲಚೇತನರಿಗೆ ತ್ರಿಚಕ್ರ ವಾಹನ ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ ಬರ್ಚಿ, ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್, ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್, ತಾಲೂಕು ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಅಶೋಕ ಮಂದಾಲಿ, ಜಿಲ್ಲಾ ವಿಕಲಚೇತನರ ಕಲ್ಯಾಣ ಇಲಾಖೆ ಅಧಿಕಾರಿ ಮಹಾಂತೇಶ ಕೆ, ಗಣ್ಯರಾದ ಎಸ್.ಎನ್. ಬಳ್ಳಾರಿ, ಸುಜಾತಾ ದೊಡ್ಡಮನಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

ಮಾ. 1ರಂದು ಕನಕ ಸಾಹಿತ್ಯ ಸಂಭ್ರಮ

0

ವಿಜಯಸಾಕ್ಷಿ ಸುದ್ದಿ, ಗದಗ: ಬೆಂಗಳೂರಿನ ಕನಕದಾಸರ ಸಾಹಿತ್ಯ ಪ್ರಚಾರ ಸಮಿತಿಯ ಸಹಯೋಗದೊಂದಿಗೆ ಮಾ. 1ರಂದು ಬೆಳಗ್ಗೆ 9.30ಕ್ಕೆ ನಗರದ ಕನಕ ಭವನದಲ್ಲಿ ಕನಕ ಸಾಹಿತ್ಯ ಸಂಭ್ರಮ ಹಾಗೂ 100ನೇ ಉಪನ್ಯಾಸದ ವೇದಿಕೆಯ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ಜಿಲ್ಲಾ ಕುರುಬರ ಸಂಘದ ಜಿಲ್ಲಾಧ್ಯಕ್ಷ ಫಕೀರಪ್ಪ ಹೆಬಸೂರ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ರಾಮಕೃಷ್ಣ ಯೋಗಾಶ್ರಮದ ಜಗದ್ಗುರು ಸ್ವಾಮಿ ಯೋಗೇಶ್ವರಾನಂದ ಸ್ವಾಮೀಜಿ, ಮನಸೂರ ಜ. ಡಾ. ಬಸವರಾಜ ದೇವರು ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಜಿಲ್ಲಾ ಕುರುಬರ ಸಂಘದ ಜಿಲ್ಲಾಧ್ಯಕ್ಷ ಫಕೀರಪ್ಪ ಹೆಬಸೂರ ಅಧ್ಯಕ್ಷತೆ ವಹಿಸುವರು. ಹಾಲುಮತ ಭಾಸ್ಕರ ರಾಜ್ಯ ಕನಕಶ್ರೀ ಪ್ರಶಸ್ತಿ ಪುರಸ್ಕೃತ ಡಾ. ಲಿಂಗದಾಳ ಹಾಲಪ್ಪ ಕಾರ್ಯಕ್ರಮ ಉದ್ಘಾಟನೆ ಮಾಡುವರು.

ಕೆ.ಎಚ್. ಪಾಟೀಲ ಕಾಲೇಜು ಪ್ರಾಧ್ಯಾಪಕಿ ಡಾ. ಸುಧಾ ಕೌಜಗೇರಿ ಉಪನ್ಯಾಸ ನೀಡುವರು. ಹಸ್ತಪ್ರತಿ ಶಾಸ್ತ್ರ ಪ್ರಾಧ್ಯಾಪಕ ಪ್ರೊ. ಎಫ್.ಟಿ. ಹಳ್ಳಿಕೇರಿ, ಮಂಜುನಾಥ ಹೊನ್ನಣ್ಣವರ, ಡಾ. ಹನಮಗೌಡ ಪಾಟೀಲ, ವಾಸಣ್ಣ ಕುರಡಗಿ, ಹಾಲುಮತ ಮಹಾಸಭಾದ ರಾಜ್ಯಾಧ್ಯಕ್ಷ ರುದ್ರಣ್ಣ ಗುಳಗುಳಿ, ರವಿ ದಂಡಿನ, ಪ್ರಕಾಶ ಕರಿ, ಸುರೇಶ ಕೊಪ್ಪದ, ರಾಜಶೇಖರ ಕಲ್ಲೂರ, ಸಿದ್ಧಲಿಂಗ ಬಂಡು, ಆರ್.ಎಸ್. ಬುರಡಿ, ರಾಮಕೃಷ್ಣ ರೊಳ್ಳಿ ಮುಂತಾದವರು ಭಾಗವಹಿಸುವರು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಹಾಲುಮತ ಮಹಾಸಭಾದ ರಾಜ್ಯಾಧ್ಯಕ್ಷ ರುದ್ರಣ್ಣ ಗುಳಗುಳಿ, ಆರ್.ಜಿ. ಕಲ್ಲೂರ, ಬಿ.ಎಸ್. ಕೆರಿ, ಈರಪ್ಪ ಹಳ್ಯಾಳ, ಸಿದ್ದು ಸತ್ಯಣ್ಣವರ, ಪ್ರೊ. ಮಾರುತಿ ಮಡ್ಡಿ, ಸಿದ್ಧಲಿಂಗೇಶ್ವರ ಯಂಡಿಗೇರಿ, ಹೇಮಂತ ಗಿಡ್ಡಹಣ್ಣಮನವರ, ಸೋಮನಗೌಡ ಪಾಟೀಲ, ಮುತ್ತು ಜಡಿ, ರಾಘು ವಗ್ಗನವರ ಇತರರು ಇದ್ದರು.

ಇದೇ ಸಂದರ್ಭದಲ್ಲಿ ಗದಗ, ರೋಣ, ಮುಂಡರಗಿ, ನರಗುಂದ, ಶಿರಹಟ್ಟಿ, ಲಕ್ಷ್ಮೇಶ್ವರ ಮತ್ತು ಗಜೇಂದ್ರಗಡ ಪದವಿಪೂರ್ವ ಕಾಲೇಜಿನ ಮತ್ತು ಪ್ರೌಢಶಾಲೆಯ ಹಂತದ ಕನಕದಾಸರ ಸಾಹಿತ್ಯ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಹಾಗೂ 76ರಿಂದ 100ನೇ ಆನ್‌ಲೈನ್ ಗೂಗಲ್ ಮೀಟ್‌ನಲ್ಲಿ ಕನಕದಾಸರ ಸಾಹಿತ್ಯದ ಉಪನ್ಯಾಸ ನೀಡಿದವರಿಗೆ ಸನ್ಮಾನ ಮಾಡಲಾಗುತ್ತದೆ. ಕನಕದಾಸರ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿದ 42 ವಿದ್ಯಾರ್ಥಿಗಳಿಗೆ ನಗದು ಬಹುಮಾನ, ಪ್ರಮಾಣ ಪತ್ರ ವಿತರಣೆ ಮಾಡಲಾಗುತ್ತದೆ ಎಂದು ಫಕೀರಪ್ಪ ಹೆಬಸೂರ ತಿಳಿಸಿದರು.

ಜನತಾ ದರ್ಶನದಲ್ಲಿ 1067 ಅಹವಾಲುಗಳ ಸ್ವೀಕೃತಿ

0

ವಿಜಯಸಾಕ್ಷಿ ಸುದ್ದಿ, ಗದಗ: ಶುಕ್ರವಾರ ಜರುಗಿದ ಜಿಲ್ಲಾ ಮಟ್ಟದ ಜನತಾ ದರ್ಶನದಲ್ಲಿ ಜನಸಾಮಾನ್ಯರಿಂದ ಅಹವಾಲುಗಳ ಮಹಾಪೂರವೇ ಹರಿದು ಬಂದಿದೆ. ಸಾರ್ವಜನಿಕರಿಂದ 767 ಅಹವಾಲುಗಳು ನೇರವಾಗಿ ದಾಖಲಾಗಿವೆ, 300 ಆನ್‌ಲೈನ್ ಮೂಲಕ ಅರ್ಜಿಗಳು ಬಂದಿದ್ದು, ಒಟ್ಟು 1067 ವಿವಿಧ ರೀತಿಯ ಅಹವಾಲುಗಳು ಜನತಾ ದರ್ಶನದಲ್ಲಿ ಸ್ವೀಕೃತವಾಗಿವೆ.

ಇವುಗಳಲ್ಲಿ 900 ಅರ್ಜಿಗಳನ್ನು ಪರಿಶೀಲನೆ ಮಾಡಲಾಗಿದೆ. 150 ಅಹವಾಲುಗಳನ್ನು ವಿವರವಾಗಿ ಪರಿಶೀಲನೆ ನಡೆಸಲಾಗಿದೆ. ಜನತಾ ದರ್ಶನ ಕಾರ್ಯಕ್ರಮ ಅತ್ಯಂತ ಶಾಂತಿ, ಶಿಸ್ತಿನಿಂದ ಜರುಗಿದ್ದು, ಇದಕ್ಕೆ ಡಿಸಿ ಸಿ.ಎನ್. ಶ್ರೀಧರ, ಎಸ್‌ಪಿ ರೋಹನ್ ಜಗದೀಶ್, ಡಿಸಿಎಫ್ ಸಂತೋಷ ಕುಮಾರ ಸೇರಿದಂತೆ ಎಲ್ಲ ಅಧಿಕಾರಿಗಳು ಕಾರಣರಾಗಿದ್ದಾರೆ, ಎಲ್ಲರಿಗೂ ಅಭಿನಂದನೆಗಳು ಎಂದು ಸಚಿವ ಎಚ್.ಕೆ. ಪಾಟೀಲ ಹೇಳಿದರು.

ಡಾ. ವೆಂಕಟೇಶ ಆಲ್ಕೊಡ್ ತಂಡದ ಪ್ರಾರ್ಥನೆ, ನಾಡಗೀತೆಯೊಂದಿಗೆ ಆರಂಭವಾದ ಜನತಾ ದರ್ಶನ ಅಂತಿಮವಾಗಿ ಪೊಲೀಸ್ ಬ್ಯಾಂಡ್‌ನ ರಾಷ್ಟ್ರಗೀತೆಯೊಂದಿಗೆ ಮುಕ್ತಾಯವಾಯಿತು.

ಸೂರತ್‌ನಲ್ಲಿ ಹೃದಯವಿದ್ರಾವಕ ಘಟನೆ; ಡೆತ್‌ನೋಟ್‌ ಬರೆದಿಟ್ಟು ಒಂದೇ ಕುಟುಂಬದ ಮೂವರು ಆತ್ಮಹತ್ಯೆ!

0

ಗಾಂಧೀನಗರ: ಕ್ರೆಡಿಟ್ ಕಾರ್ಡ್ ವಂಚನೆ ಮತ್ತು ನಿರಂತರ ಮಾನಸಿಕ ಕಿರುಕುಳದಿಂದ ಬೇಸತ್ತು ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸೂರತ್ನಲ್ಲಿ ನಡೆದಿದೆ.

ಬಲ್ಮುಕುಂದ್ ಖೇತಾನ್, ಅವರ ಪತ್ನಿ ಪ್ರಿಯಾಂಕಾ ಹಾಗೂ ಹಿರಿಯ ಮಗಳು ಭವ್ಯಾ ಮೃತಪಟ್ಟಿದ್ದಾರೆ. ಏಳು ವರ್ಷದ ಕಿರಿಯ ಮಗಳು ಪೃಥ್ವಿ ಬದುಕುಳಿದಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಪೊಲೀಸರ ತನಿಖೆಯಲ್ಲಿ ಆರ್ಥಿಕ ದುರುಪಯೋಗದ ಅಂಶಗಳು ಬೆಳಕಿಗೆ ಬಂದಿವೆ. ಮೃತರು ಬರೆದಿಟ್ಟಿರುವ ಮೂರು ಪುಟಗಳ ಪತ್ರದಲ್ಲಿ ವೈಭವ್ ರುಂಗ್ತಾ ಎಂಬಾತ ಖೇತಾನ್ ಅವರ ಕ್ರೆಡಿಟ್ ಕಾರ್ಡ್‌ಗಳನ್ನು ದುರುಪಯೋಗಪಡಿಸಿಕೊಂಡಿರುವುದಾಗಿ ಉಲ್ಲೇಖಿಸಲಾಗಿದೆ. ಹಣವನ್ನು ಹಿಂತಿರುಗಿಸುವಂತೆ ಕೇಳಿದಾಗ ಆರೋಪಿಯು ನಿಂದನೆ ಹಾಗೂ ಕೊಲೆ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.

ಘಟನೆಯ ಬಳಿಕ ಆರೋಪಿಯನ್ನು ದೆಹಲಿಯಲ್ಲಿ ಬಂಧಿಸಲಾಗಿದೆ. ನಿರಂತರ ಮಾನಸಿಕ ಮತ್ತು ಆರ್ಥಿಕ ಒತ್ತಡದಿಂದ ಕುಟುಂಬ ಈ ದುರ್ಘಟನೆಗೆ ಮುಂದಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೊದಲು ಮಕ್ಕಳಿಗೆ ವಿಷಾಹಾರ ನೀಡಿ ಬಳಿಕ ದಂಪತಿ ತಾವೂ ಸೇವಿಸಿದ್ದರೆಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಆಸ್ಪತ್ರೆಗೆ ದಾಖಲಿಸಿದರೂ ಮೂವರು ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಪ್ರಕರಣ ಸಂಬಂಧ ಹೆಚ್ಚಿನ ತನಿಖೆ ಮುಂದುವರಿದಿದೆ.

ಜನತಾ ದರ್ಶನ ಬಡವರ ಪಾಲಿನ ಆಶಾಕಿರಣ

0

ವಿಜಯಸಾಕ್ಷಿ ಸುದ್ದಿ, ಗದಗ: ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಅವರ ನೇತೃತ್ವದಲ್ಲಿ ಜಿಲ್ಲಾಡಳಿತ ಭವನದ ಆವರಣದಲ್ಲಿ ಶುಕ್ರವಾರ ನಡೆದ ಜಿಲ್ಲಾ ಮಟ್ಟದ ಜನತಾ ದರ್ಶನ ಕಾರ್ಯಕ್ರಮವು ಜನಸಾಮಾನ್ಯರ ಪಾಲಿಗೆ ನಿಜವಾದ ಆಶಾಕಿರಣವಾಗಿ ಪರಿಣಮಿಸಿತು. ಜಿಲ್ಲೆಯ ವಿವಿಧ ಗ್ರಾಮಗಳಿಂದ ಆಗಮಿಸಿದ ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ನೇರವಾಗಿ ಸಚಿವರು ಹಾಗೂ ಅಧಿಕಾರಿಗಳ ಮುಂದಿಡುವ ಮೂಲಕ ತ್ವರಿತ ಪರಿಹಾರ ಕೋರಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಶಿರಹಟ್ಟಿ ತಾಲೂಕಿನ ವಡವಿ ಹೊಸೂರು ಗ್ರಾಮದ ಪ್ರಭುಗೌಡ ಪಾಟೀಲ್, ತಮ್ಮ ಹೊಲದ ಬೋರ್‌ವೆಲ್‌ಗೆ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಅಹವಾಲು ಸಲ್ಲಿಸಿ, ಜನತಾ ದರ್ಶನ ಕಾರ್ಯಕ್ರಮದಿಂದ ಬಡವರಿಗೆ ಮತ್ತು ರೈತರಿಗೆ ಬಹಳ ಅನುಕೂಲವಾಗಿದೆ. ಸರ್ಕಾರದ ದಿಟ್ಟ ಹೆಜ್ಜೆಯಿಂದ ಸಾಮಾನ್ಯರಿಗೆ ನ್ಯಾಯ ಸಿಗುವ ವೇದಿಕೆ ಸಿಕ್ಕಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಅದೇ ಗ್ರಾಮದ ನರಸಿಂಹಗೌಡ ಪಾಟೀಲರು ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಗ್ರೂಪ್-ಡಿ ಹುದ್ದೆಗೆ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ನೀಡುವಂತೆ ಅರ್ಜಿ ಸಲ್ಲಿಸಿ, ಜನತಾ ದರ್ಶನದ ಮೂಲಕ ಅಧಿಕಾರಿಗಳು ಜನರ ಸಮಸ್ಯೆಗಳನ್ನು ಕೇಳಿ ತ್ವರಿತವಾಗಿ ಸ್ಪಂದಿಸುತ್ತಿದ್ದಾರೆ. ಇದರಿಂದ ಸಾರ್ವಜನಿಕರಿಗೆ ನೇರ ಪರಿಹಾರ ದೊರೆಯುತ್ತಿದೆ ಎಂದರು.

ಮುಂಡರಗಿ ತಾಲೂಕಿನ ಕದಾಂಪುರ ಗ್ರಾಮದ ಬಸವರೆಡ್ಡಿ ಕೆ.ನಾಗನೂರು ಅವರು ತಮ್ಮ ಜಮೀನಿನಲ್ಲಿ ನೀರಿನ ಪೂರೈಕೆಯಿಂದ ಸುತ್ತಮುತ್ತಲಿನ ರೈತರಿಗೆ ಉಂಟಾಗಿರುವ ತೊಂದರೆ ಪರಿಹರಿಸಲು 25 ವೋಲ್ಟ್ ಸಾಮರ್ಥ್ಯದ ಟ್ರಾನ್ಸ್‌ಫಾರ್ಮರ್ ಅನ್ನು 63 ವೋಲ್ಟ್ ಸಾಮರ್ಥ್ಯಕ್ಕೆ ಹೆಚ್ಚಿಸುವಂತೆ ಮನವಿ ಮಾಡಿದರು. ರೈತರ ಸಮಸ್ಯೆಗಳಿಗೆ ಇಂತಹ ಕಾರ್ಯಕ್ರಮಗಳು ಸ್ಪೂರ್ತಿಯಾಗುತ್ತವೆ. ಕುಂದುಕೊರತೆಗಳನ್ನು ಬಗೆಹರಿಸಿದರೆ ಗ್ರಾಮೀಣ ಜನರಿಗೆ ಹೆಚ್ಚು ಪ್ರಯೋಜನವಾಗುತ್ತದೆ ಎಂದು ಹೇಳಿದರು.

ಮುಂಡರಗಿ ತಾಲೂಕಿನ ಹೆಸರೂರು ಗ್ರಾಮದ ಮಂಜುನಾಥಯ್ಯ ಹಳ್ಳಿ ಅವರು ಭೂಸ್ವಾಧೀನ ಕುರಿತ ಅಹವಾಲು ಸಲ್ಲಿಸಿ, ಜನತಾ ದರ್ಶನ ಕಾರ್ಯಕ್ರಮದಿಂದ ಜನಸಾಮಾನ್ಯರಿಗೆ ಅನುಕೂಲಕರ ವಾತಾವರಣ ನಿರ್ಮಾಣವಾಗಿದೆ. ಇಂತಹ ಕಾರ್ಯಕ್ರಮಗಳು ತಾಲೂಕು ಮಟ್ಟದಲ್ಲಿಯೂ ನಡೆಯಬೇಕು ಎಂದು ಸಲಹೆ ನೀಡಿದರು.

ಲಕ್ಷೆö್ಮÃಶ್ವರ ತಾಲೂಕಿನ ಬಾಲೆಹೊಸೂರು ಗ್ರಾಮದ ಮಲ್ಲಿಕಾರ್ಜುನ ವಿ.ದೊಡ್ಡಮನಿ ಅವರು ರೇಷ್ಮೆ ಇಲಾಖೆಯಿಂದ ರೈತರಿಗೆ ಸಹಾಯಧನ ಒದಗಿಸುವಂತೆ ಮನವಿ ಸಲ್ಲಿಸಿದರೆ, ರೋಣ ಗ್ರಾಮದ ಮೆಹಬೂಬ್ ಬಾಬು ಸಾಬ್ ಅವರು ಪಡಿತರ ಚೀಟಿಯಲ್ಲಿ ನೌಕರರ ಹೆಸರು ಇರುವ ಕಾರಣ ವಿಧಿಸಲಾದ 86 ಸಾವಿರ ರೂ. ದಂಡ ರದ್ದುಪಡಿಸುವಂತೆ ಕೋರಿದರು.

ಎಲ್ಲಾ ಅಹವಾಲುಗಳನ್ನು ಸಮಾಧಾನದಿಂದ ಆಲಿಸಿದ ಸಚಿವ ಎಚ್.ಕೆ. ಪಾಟೀಲ, ಸಂಬಂಧಿತ ಅಧಿಕಾರಿಗಳಿಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಸೂಚಿಸಿ, ತ್ವರಿತ ಪರಿಹಾರ ಒದಗಿಸುವ ಭರವಸೆ ನೀಡಿದರು.

ಒಟ್ಟಾರೆ, ಜನತಾ ದರ್ಶನ ಕಾರ್ಯಕ್ರಮವು ಜನಸಾಮಾನ್ಯರ ಸಮಸ್ಯೆಗಳಿಗೆ ನೇರ ಸ್ಪಂದನೆ ದೊರಕಿಸುವ ವೇದಿಕೆಯಾಗಿ ರೂಪುಗೊಂಡಿದ್ದು, ಬಡವರು ಮತ್ತು ರೈತರ ಪಾಲಿಗೆ ಆಶಾಕಿರಣವಾಗಿ ಪರಿಣಮಿಸಿದೆ ಎಂಬ ಅಭಿಪ್ರಾಯ ಸಾರ್ವಜನಿಕರಿಂದ ವ್ಯಕ್ತವಾಯಿತು.

ಬಾಕ್ಸ್
ಗಜೇಂದ್ರಗಡ ತಾಲೂಕಿನ ನಾಗರಸಕೊಪ್ಪದ ಗ್ರಾಮದ ಶರಣು ಎಸ್.ಸೊಬರದ ಅವರು ಕೇಂದ್ರೀಯ ವಿದ್ಯಾಲಯ ನಿರ್ಮಾಣಕ್ಕೆ ಸಂಬಂಧಿಸಿದಂತೆ ಮನವಿ ಸಲ್ಲಿಸಿ, ಜನತಾ ದರ್ಶನ ಜನರ ಅಹವಾಲುಗಳಿಗೆ ಸ್ಪಂದಿಸುವ ಪರಿಣಾಮಕಾರಿ ವೇದಿಕೆಯಾಗಲಿ ಎಂದು ಆಶಿಸಿದರು. ಅದೇ ಗ್ರಾಮದ ಭಾಗ್ಯಶ್ರೀ ಅಂಗಡಿ ಗೃಹಲಕ್ಷ್ಮಿ ಯೋಜನೆಯ ಹಣ ಜಮೆಯಾಗದಿರುವ ಕುರಿತು ಅಹವಾಲು ನೀಡಿ ತ್ವರಿತ ಪರಿಹಾರ ಕೋರಿದರು.

ಛಬ್ಬಿ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ

0

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಶುಕ್ರವಾರ ಶಿರಹಟ್ಟಿ ತಾಲೂಕಿನ ಗುಡ್ಡದಪೂರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಛಬ್ಬಿ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ ನಡೆಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಗದಗ ಡಯಟ್‌ನ ಉಪನಿರ್ದೇಶಕ (ಅಭಿವೃದ್ಧಿ) ಜಿ.ಎಂ. ಮುಂದಿನಮನಿ, ಮಕ್ಕಳ ಕಲಿಕಾ ಸುಧಾರಣೆಗೆ ಇಲಾಖೆಯು ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಿದ್ದು, ಇದರ ಸದುಪಯೋಗವನ್ನು ಪಡೆದುಕೊಂಡು ಎಲ್ಲರೂ ಶೈಕ್ಷಣಿಕವಾಗಿ ಮುಖ್ಯವಾಹಿನಿಗೆ ಬರಬೇಕೆಂದು ಕರೆ ನೀಡಿದರು.

ಬಿಇಓ ಎಚ್.ಎನ್. ನಾಯಕ, ಗದಗ ಡಯಟ್‌ನ ಹಿರಿಯ ಉಪನ್ಯಾಸಕ ಎಚ್.ಬಿ. ರಡ್ಡೇರ, ಅರವಟಗಿ, ಕ್ಷೇತ್ರ ಸಮನ್ವಯಾಧಿಕಾರಿ ಬಿ.ಎಸ್. ಭಜಂತ್ರಿ, ಇಸಿಓ, ಎಸ್‌ಡಿಎಂಸಿ ಪದಾಧಿಕಾರಿಗಳು ಹಾಗೂ ಕ್ಲಸ್ಟರ್ ವ್ಯಾಪ್ತಿಯ ಮುಖ್ಯೋಪಾಧ್ಯಾಯರು ಭಾಗವಹಿಸಿದ್ದರು.

ಕರ್ನಾಟಕ ರಾಜ್ಯ ನ್ಯಾಯಾಂಗ ಇಲಾಖೆ ನೌಕರರ ಸಂಘದ ಸದಸ್ಯರಿಗೆ ಸಾಹಿತಿ ಮಕಾನದಾರ ಕರೆ

0

ಸರ್ಕಾರಿ ನೌಕರರಲ್ಲಿ ಕರ್ತವ್ಯ ನಿಷ್ಠೆ, ಜವಾಬ್ದಾರಿ, ಸಮಯಪ್ರಜ್ಞೆ, ದಕ್ಷತೆ, ಸಾರ್ವಜನಿಕ ಸೇವೆಯ ಮಹತ್ವ ಮತ್ತು ಹೊಣೆಗಾರಿಕೆ ಪಾರದರ್ಶಕವಾಗಿರಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಇಲಾಖೆಗಳಿಗಿಂತ ನ್ಯಾಯಾಂಗ ಇಲಾಖೆಯೇ ನೌಕರ ಬಂಧುಗಳು. ಕಾರ್ಯದ ಒತ್ತಡ ನಡುವೆಯೂ ಸೇವೆಗೆ ಕಂಕಣ ಬದ್ಧರಾಗಿದ್ದಾರೆ ಎಂಬುದು ದಿಟ.

ಆಡಳಿತ ಸೇವಕರು ನಿರ್ವಹಣಾತ್ಮಕ ಯಂತ್ರದ ಹೃದಯ ಭಾಗವೆಂದು ಸರ್ದಾರ್ ವಲ್ಲಭ ಭಾಯಿ ಪಟೇಲರು 1947ರಲ್ಲಿ ಹೇಳಿದ ಮಾತು ಸರ್ವಕಾಲಿಕ ಸತ್ಯ. ನೌಕರ ಬಂಧುಗಳ ದೂರದೃಷ್ಟಿತ್ವದ ಫಲವಾಗಿ 25 ವರ್ಷಗಳ ಹಿಂದೆಯೇ ಕರ್ನಾಟಕ ರಾಜ್ಯ ನ್ಯಾಯಾಂಗ ಇಲಾಖೆ ನೌಕರರ ಸಂಘ ಅಸ್ತಿತ್ವಕ್ಕೆ ಬಂತು. ಸಂಬAಧ ಮಾಸಪತ್ರಿಕೆ ನ್ಯಾಯಿಕ ಮಿತ್ರರ ಮುಖವಾಣಿಯಾಗಿ ಕಾರ್ಯನಿರ್ವಹಿಸಿದೆ. ಸಂಘ ಕಟ್ಟುವಲ್ಲಿ ಅನೇಕ ಹಿರಿಯರ ಶ್ರಮ, ಬೆವರಿನ ಪಾಲು ಕೂಡ ಅಲ್ಲಗಳೆಯುವಂತಿಲ್ಲ. ಬೇರೆ ಇಲಾಖೆ ನೌಕರ ಬಂಧುಗಳ ಒಗ್ಗಟ್ಟಿನ ಮುಂದೆ ನ್ಯಾಯಂಗ ಇಲಾಖೆಯ ಒಗ್ಗಟ್ಟು, ಸಂಘಟನಾ ಶಕ್ತಿ ಸ್ವಲ್ಪ ಕುಂದಿದೆ ಅಂತಲೇ ಹೇಳಬೇಕು.

ಅದಕ್ಕೆಲ್ಲ ಹಲವು ಕಾರಣಗಳಿವೆ. ದಿನಾಂಕ 28ರಂದು ರಾಜ್ಯ ಕಾರ್ಯಕಾರಿ ಸಮಿತಿಯ ಚುನಾವಣೆ ಮಹತ್ವದ ಘಟ್ಟ ತಲುಪಿದೆ. ನಿನ್ನೆಯಾದ ಲೋಪಗಳು ನಾಳೆಗೆ ಮರುಕಳಿಸಬಾರದು. ನೌಕರ ಬಂಧುಗಳ ಶ್ರೇಯಸ್ಸಿಗಾಗಿ ತಪಸ್ಸಿನ ರೀತಿಯಲ್ಲಿ ಹೋರಾಟ ಮಾಡುವ ಸಂಘದ ಸದಸ್ಯರ ಹಿತ ಕಾಯುವ ಪ್ರಾಮಾಣಿಕ ವ್ಯಕ್ತಿಗಳ ಕೈಗೆ ಅಧಿಕಾರದ ಚುಕ್ಕಾಣಿ ಕೊಡಬೇಕಿದೆ. ಹೊಸ ಕನಸುಗಳನ್ನು ನನಸು ಮಾಡಲು ಸಂಕಲ್ಪ ಹೊಂದಿರುವ ಅಭ್ಯರ್ಥಿಗಳ ಆಯ್ಕೆ ಮಾಡಬೇಕಾದರೆ ಜವಾಬ್ದಾರಿ ಕೂಡ ಇದೆ. ಮತದಾರ ಬಂಧುಗಳು ವಿವೇಚನೆಯಿಂದ ಆತ್ಮಸಾಕ್ಷಿಯ ಅನುಗುಣವಾಗಿ ಸಮರ್ಥ ನಾಯಕತ್ವ ಗುಣದ ಅಭ್ಯರ್ಥಿಗಳ ಗೆಲುವಿಗಾಗಿ ಮತದಾನ ಮಾಡಬೇಕಾಗಿದೆ.

ಓಪಿಎಸ್ ಜಾರಿಗಾಗಿ ರಾಷ್ಟ್ರವ್ಯಾಪ್ತಿ ಹೋರಾಟ ಮಾಡಿದ್ದು ಇತಿಹಾಸ. ನ್ಯಾಯಾಂಗ ಇಲಾಖೆಯ ಬಂಧುಗಳ ಏಕರೂಪ ವೇತನ, ಇಲಾಖೆ ಬಡ್ತಿ, ಶಿಶುಪಾಲನಾ ರಜೆ, ಖಾಲಿ ಹುದ್ದೆಗಳ ಭರ್ತಿ, ಹಿರಿಯ ಶಿರಸ್ತೇದಾರ ಹುದ್ದೆಗೆ ಪತ್ರಾಂಕಿತ ಸ್ಥಾನಮಾನ, ಅಧೀನ ನ್ಯಾಯಾಲಯಗಳಲ್ಲಿ ಮೂಲಭೂತ ಸೌಲಭ್ಯ ಕಲ್ಪಿಸಿಕೊಡುವುದು, ಅಂತರ್ಜಿಲ್ಲಾ ವರ್ಗಾವಣೆ ಪದೋನ್ನತಿ, ವಾರ್ಷಿಕ ವೈದ್ಯಕೀಯ ತಪಾಸಣೆ, ಪಾರದರ್ಶಕ ಆಡಳಿತ, ಎಫ್‌ಎನ್‌ಜೆಪಿಸಿ ಅನುಷ್ಠಾನದಲ್ಲಿರುವ ಕೆಲ ತಾಂತ್ರಿಕ ತೊಂದರೆಗಳ ನಿವಾರಣೆ, ಅಧೀನ ನ್ಯಾಯಾಲಯಗಳ ಸಿಬ್ಬಂದಿ ಸಮಸ್ಯೆ, ಸಾಮಾಜಿಕ ನ್ಯಾಯ, ಪ್ರಾದೇಶಿಕ ನ್ಯಾಯ, ಲಿಂಗ ತಾರತಮ್ಯ ನಿವಾರಣೆ ಹೀಗೆ ಹಲವಾರು ಸಮಸ್ಯೆಗಳಿಗೆ ನಾಡಿನ ತುಂಬೆಲ್ಲ ಯಾವುದೇ ಮಹಿಳಾ ನೌಕರರ ಕಷ್ಟಗಳಿಗೆ ಸ್ಪಂದಿಸುವ ತಾಯಿಗುಣ ಹೊಂದಿದವರು ಎಂ. ಮಲ್ಲಿಕಾ.

ಇಂತಹ ಅಪರೂಪದ ಸಂಘಟನಾ ಚತುರ ನಾಯಕಿಗೆ ನಮ್ಮ ಬೆಂಬಲ ಅವಶ್ಯವಾಗಿದೆ. ಮಹತ್ವಾಕಾಂಕ್ಷೆಯು ಕಾರ್ಯಕ್ಷಮತೆಯನ್ನು ಮೀರಿಸಿದಾಗ ಅದು ಹತಾಶೆಗೆ ಕಾರಣವಾಗುತ್ತದೆ. ಆದರೆ, ಕಾರ್ಯಕ್ಷಮತೆಯು ಮಹತ್ವಾಕಾಂಕ್ಷಿಯನ್ನು ಮೀರಿಸಿದಾಗ ಅದನ್ನು ಯಶಸ್ಸು ಎಂದು ಕರೆಯುತ್ತಾರೆ. ಇಂತಹ ಯಶಸ್ಸಿಗೆ ಮುನ್ನುಡಿ ಬರೆಯಲು ಎಂ. ಮಲ್ಲಿಕಾ ಅವರ ತಂಡವನ್ನು ಬೆಂಬಲಿಸಿ.

ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘದ ಉಪಾಧ್ಯಕ್ಷರಾಗಿ, ಎನ್‌ಪಿಎಸ್ ಹೋರಾಟದ ಮುಂಚೂಣಿಯಲ್ಲಿದ್ದು ದೇಶದ ತುಂಬ ತಿರುಗಾಡಿ ನೌಕರರ ಬಂಧುಗಳಲ್ಲಿ ಜಾಗೃತಿ ಮೂಡಿಸಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಋತುಚಕ್ರ ರಜೆ ಮಂಜೂರಾತಿಗಾಗಿ ಶ್ರಮಿಸಿ, ಕಳೆದ ಎರಡು ದಶಕಗಳಿಂದ ಹೋರಾಟದ ಹಾದಿಯಲ್ಲಿ ಕಾಲಿಗೆ ಚಕ್ರ ಕಟ್ಟಿಕೊಂಡು ಹೆಜ್ಜೆ ಹಾಕುತ್ತಿರುವ ಎಂ. ಮಲ್ಲಿಕಾ ಒಬ್ಬ ಸಮರ್ಥ ನಾಯಕತ್ವ ಗುಣದ ಅಭ್ಯರ್ಥಿ ಎಂಬುದರಲ್ಲಿ ಎರಡು ಮಾತಿಲ್ಲ ಎಂದು ಮಕಾನದಾರ ಅಭಿಪ್ರಾಯಪಟ್ಟಿದ್ದಾರೆ.

  • ಎ.ಎಸ್. ಮಕಾನದಾರ.

ಕೋಟುಮಚಗಿಯಲ್ಲಿ ಅಬಕಾರಿ ದಾಳಿ: 345 ಗ್ರಾಂ ಗಾಂಜಾ ವಶ – ಮಹಿಳೆ ಬಂಧನ

0

ಗದಗ: ಗದಗ ತಾಲೂಕಿನ ಕೋಟುಮಚಗಿ ಗ್ರಾಮದಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳು ನಡೆಸಿದ ಮಿಂಚಿನ ದಾಳಿಯಲ್ಲಿ 345 ಗ್ರಾಂ ಒಣ ಗಾಂಜಾವನ್ನು ವಶಪಡಿಸಿಕೊಂಡು ಮಹಿಳೆಯನ್ನು ಬಂಧಿಸಲಾಗಿದೆ.

ಖಚಿತ ಮಾಹಿತಿ ಮೇರೆಗೆ ಶುಕ್ರವಾರ ಬೆಳಿಗ್ಗೆ ಗಸ್ತು ಕಾರ್ಯದಲ್ಲಿದ್ದ ಅಧಿಕಾರಿಗಳು ತಕ್ಷಣ ಕಾರ್ಯಾಚರಣೆ ಕೈಗೊಂಡರು. ಅಬಕಾರಿ ಉಪ ಅಧೀಕ್ಷಕ ಭೀಮಣ್ಣ ರಾಠೋಡ್ ನೇತೃತ್ವದಲ್ಲಿ, ವಲಯ ನಿರೀಕ್ಷಕರಾದ ಸುಮಾ ಜಿ.ಎಂ., ಸುವರ್ಣ ಕೋಟೆ ಹಾಗೂ ಉಪ ನಿರೀಕ್ಷಕ ಎನ್.ಆರ್. ಸಾಳುಂಕೆ ಸೇರಿದಂತೆ ಸಿಬ್ಬಂದಿ ಮತ್ತು ಪಂಚರ ಸಮ್ಮುಖದಲ್ಲಿ ಕಿಲ್ಲಾ ಓಣಿಯ ನಿವಾಸಿ ಗಿರಿಜವ್ವ (44) ಅವರ ಮನೆಯಲ್ಲಿ ಶೋಧ ನಡೆಸಲಾಯಿತು.

ಶೋಧ ಕಾರ್ಯಾಚರಣೆಯ ವೇಳೆ ಮಾರಾಟ ಉದ್ದೇಶದಿಂದ ಸಂಗ್ರಹಿಸಿಟ್ಟಿದ್ದ ಎಲೆ, ತೆನೆ ಹಾಗೂ ಬೀಜಗಳಿಂದ ಕೂಡಿದ ಒಣ ಗಾಂಜಾವನ್ನು 41 ಸಣ್ಣ ಪ್ಲಾಸ್ಟಿಕ್ ಪೌಚ್‌ಗಳಲ್ಲಿ ಪತ್ತೆ ಹಚ್ಚಲಾಗಿದೆ. ವಶಪಡಿಸಿಕೊಂಡ ಗಾಂಜಾದ ಒಟ್ಟು ತೂಕ 345 ಗ್ರಾಂ ಆಗಿದ್ದು, ಅಂದಾಜು ಮೌಲ್ಯ ಸುಮಾರು ₹15,000 ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಸಂಬಂಧ ಎನ್‌ಡಿಪಿಎಸ್ ಕಾಯ್ದೆ 1985ರ ಸೆಕ್ಷನ್ 8(c), 20(b)(ii)(A) ಹಾಗೂ 25ರ ಅಡಿಯಲ್ಲಿ ಪ್ರಕರಣ ದಾಖಲಿಸಿ ಆರೋಪಿತಳನ್ನು ಬಂಧಿಸಲಾಗಿದೆ. ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುವುದಾಗಿ ತಿಳಿದುಬಂದಿದೆ.

ಮಾದಕ ವಸ್ತುಗಳ ವಿರುದ್ಧ ಇಲಾಖೆಯ ಕ್ರಮ ಮುಂದುವರಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿದೇಶಿ ಸೈಬರ್ ಕ್ರೈಂ ಜಾಲ ಭೇದಿಸಿದ ಮಂಗಳೂರು ಪೊಲೀಸರು: 6 ಮಂದಿ ಬಂಧನ

0

ಮಂಗಳೂರು: ವಿದೇಶದಲ್ಲಿರುವ ಸೈಬರ್ ಅಪರಾಧಿಗಳೊಂದಿಗೆ ಕೈಜೋಡಿಸಿ ಆನ್‌ಲೈನ್ ವಂಚನೆ ನಡೆಸುತ್ತಿದ್ದ ಆರು ಮಂದಿಯನ್ನು ಹೈದರಾಬಾದ್ನಲ್ಲಿ ಮಂಗಳೂರು ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಶೇಖ್ ಕರೀಮುಲ್ಲಾ, ಬುಡಿದಿನ್ನೆ ವಂಶಿ, ಬಡೆ ಶ್ರೀನಿವಾಸ್, ಪಂಡಿತಿ ಕ್ರಾಂತಿ ಕುಮಾರ್, ಇಬ್ರಾಹಿಂ ಪ್ರಾಯ ಹಾಗೂ ಉತ್ಸಲ ಸಂತೋಷ್ ಕೃಷ್ಣ ಎಂದು ಗುರುತಿಸಲಾಗಿದೆ. ಆರೋಪಿಗಳು ಒಂದೇ ದಿನದಲ್ಲಿ ಸುಮಾರು 2 ಕೋಟಿ ರೂಪಾಯಿ ವಹಿವಾಟು ನಡೆಸಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಆರೋಪಿಗಳು ಬ್ಯಾಂಕ್ ಖಾತೆದಾರರಿಗೆ 4ರಿಂದ ಶೇಕಡಾ 6 ರಷ್ಟು ಕಮಿಷನ್ ನೀಡುವುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಜಾಹಿರಾತು ನೀಡಿ ಜನರನ್ನು ಸೆಳೆಯುತ್ತಿದ್ದರು. ಈ ಜಾಹಿರಾತನ್ನು ನಂಬಿದವರಿಂದ ಒಟಿಪಿ ಪಡೆದು, ಅದನ್ನು ವಿದೇಶದಲ್ಲಿರುವ ಸೈಬರ್ ಅಪರಾಧಿಗಳಿಗೆ ರವಾನಿಸುತ್ತಿದ್ದರು. ನಂತರ ವಿದೇಶದಲ್ಲಿದ್ದ ಖದೀಮರು ಹಣವನ್ನು ಎಗರಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಮಂಗಳೂರಿನ ಮೊಹಮ್ಮದ್ ಇಕ್ಬಾಲ್ ನೀಡಿದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು, ಅವರಿಂದ 18 ಮೊಬೈಲ್ ಫೋನ್‌ಗಳು, 12 ಸಿಮ್ ಕಾರ್ಡ್‌ಗಳು, ಒಂದು ಲ್ಯಾಪ್‌ಟಾಪ್, 15 ಚೆಕ್ ಬುಕ್‌ಗಳು, 18 ಡೆಬಿಟ್ ಕಾರ್ಡ್‌ಗಳು ಹಾಗೂ 12 ಬ್ಯಾಂಕ್ ಪಾಸ್‌ಬುಕ್‌ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ಮುಂದುವರಿದಿದೆ.

error: Content is protected !!