Home Blog

ಸಿಎಂ ಸಿದ್ದರಾಮಯ್ಯರಿಗೆ ರೈತರಿಂದ ಸನ್ಮಾನ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದ ಸ್ಕೂಲ್ ಚಂದನದಲ್ಲಿ ಶನಿವಾರ ನಡೆದ ಭಾರತರತ್ನ ಪ್ರೊ. ಸಿ.ಎನ್. ರಾವ್ ಅವರ 10ನೇ ವರ್ಷದ ವಿಜ್ಞಾನ ವಿಸ್ತೃತ ಕಾರ್ಯಕ್ರಮದ ಉದ್ಘಾಟನೆಗೆ ಆಗಮಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಸಮಗ್ರ ರೈತಪರ ಸಂಘಟನೆಗಳ ಒಕ್ಕೂಟ ಹಾಗೂ ವಿವಿಧ ಸಂಘಟನೆಗಳ ವತಿಯಿಂದ ಸನ್ಮಾನಿಸಲಾಯಿತು.

ಮೆಕ್ಕೆಜೋಳವನ್ನು 2400 ರೂ ಬೆಂಬಲ ಬೆಲೆಯಡಿ ಖರೀದಿಗೆ ಆಗ್ರಹಿಸಿ ಸಮಗ್ರ ರೈತಪರ ಸಂಘಟನೆಗಳ ಒಕ್ಕೂಟದಿಂದ 18 ದಿನಗಳ ಕಾಲ ಅಹೋರಾತ್ರಿ ಧರಣಿ ಸತ್ಯಾಗ್ರಹ ಮಾಡಿದ್ದರು. ಪರಿಣಾಮ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ರೈತರ ಈ ಹೋರಾಟವನ್ನು ಪರಿಗಣಿಸಿ ಮೆಕ್ಕೆಜೋಳ ಖರೀದಿ ಕೇಂದ್ರ ಪ್ರಾರಂಭಿಸಿದ್ದಲ್ಲದೇ 5 ಕ್ವಿಂಟಲ್ ಬದಲಾಗಿ ಪ್ರತಿ ರೈತರಿಂದ 50 ಕ್ವಿಂಟಲ್ ಮೆಕ್ಕೆಜೋಳ ಖರೀದಿಗೆ ರಾಜ್ಯ ಸರಕಾರದ ಮೂಲಕ ಆದೇಶಿಸಿದ್ದರು. ಇದರಿಂದ ಸಂತುಷ್ಟರಾದ ರೈತ ಹೋರಾಟಗಾರರು ಸಿಎಂ ಸಿದ್ದರಾಮಯ್ಯನವರಿಗೆ ಜೋಡು ಎತ್ತಿನ ಚಕ್ಕಡಿ ಕಾಣಿಕೆ ನೀಡಿ ಗೌರವಿಸಿ ಕೃತಜ್ಞತೆ ಸಲ್ಲಿಸಿದರು. ಇದೇ ವೇಳೆ ಇದಕ್ಕೆ ಕಾರಣೀಕರ್ತರಾದ ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಕೆ. ಪಾಟೀಲರನ್ನು ಸನ್ಮಾನಿಸಿದರು.

ಮಾಜಿ ಶಾಸಕರಾದ ರಾಮಣ್ಣ ಲಮಾಣಿ, ರಾಮಕೃಷ್ಣ, ಆನಂದ ಗಡ್ಡದೇವರಮಠ, ಸುಜಾತಾ ದೊಡ್ಡಮನಿ, ಎಸ್.ಪಿ. ಬಳಿಗಾರ, ರೈತ ಮುಖಂಡರಾದ ಮಂಜುನಾಥ ಮಾಗಡಿ, ನಾಗರಾಜ ಚಿಂಚಲಿ, ಎಂ.ಎಸ್. ದೊಡ್ಡಗೌಡ್ರ, ನೀಲಪ್ಪ ಶೇರಸೂರಿ, ದಾದಾಪೀರ ಮುಚ್ಚಾಲೆ, ಹೊನ್ನಪ್ಪ ವಡ್ಡರ, ಅಭಯ ಜೈನ ಸೇರಿ ಸಮಗ್ರ ರೈತಪರ ಸಂಘಟನೆಗಳ ಒಕ್ಕೂಟ ರೈತ ಮುಖಂಡರು ಇದ್ದರು.

ಹೆಚ್.ಸಿ. ರಟಗೇರಿ ಕಂಚಿನ ಪುತ್ಥಳಿ ಲೋಕಾರ್ಪಣೆ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದ ಸ್ಕೂಲ್ ಚಂದನದ ರೂವಾರಿಯಾಗಿ ಶಾಲೆಯನ್ನು ರಾಷ್ಟ್ರಮಟ್ಟದಲ್ಲಿ ಬೆಳಗುವಂತೆ ಮಾಡಿದ ಕೀರ್ತಿ ನಿರ್ದೇಶಕ ದಿ. ಎಚ್.ಸಿ. ರಟಗೇರಿಯವರಿಗೆ ಸಲ್ಲುತ್ತದೆ. ಎಚ್.ಸಿ. ರಟಗೇರಿಯವರು 1996ರಲ್ಲಿ ನಿವೃತ್ತಿ ಹೊಂದಿದ್ದು, ಟಿ.ಈಶ್ವರ ಅವರು ಲಕ್ಷ್ಮೇಶ್ವರದಲ್ಲಿ 2003ರಲ್ಲಿ ಸ್ಕೂಲ್ ಚಂದನ ಸಿಬಿಎಸ್‌ಸಿ ಶಾಲೆ ಪ್ರಾರಂಭಿಸಲು ಮುನ್ನುಡಿ ಬರೆದರು. 89ರ ಇಳಿವಯಸ್ಸಿನಲ್ಲಿಯೂ ಸೇರಿ ಒಟ್ಟು 22 ವರ್ಷಗಳ ಕಾಲ ಯಾವುದೇ ವೇತನ, ಗೌರವಧನ ಪಡೆಯದೆ ಗೌರವ ನಿರ್ದೇಶಕರ ಜೊತೆ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ತರಬೇತಿ ನೀಡುತ್ತಿದ್ದರು.

ರಟಗೇರಿಯವರು ಇದೇ ವರ್ಷ ಅ. 20ರಂದು ಇಹಲೋಕ ತ್ಯಜಿಸಿದ್ದಾರೆ. ಶಿಕ್ಷಣ ಕ್ಷೇತ್ರದ ಜೊತೆ ಚಂದನ ಸ್ಕೂಲ್‌ಗೆ ತುಂಬಲಾರದ ನಷ್ಟ. ಇಂತಹ ಮಹಾನ್ ವ್ಯಕ್ತಿಯಿಂದ ಬೆಳೆದು ನಿಂತ ಚಂದನ ಶಾಲೆಯ ಅಧ್ಯಕ್ಷರಾದಿಯಾಗಿ ಮಕ್ಕಳ ಮನದಲ್ಲಿ ನೆಲೆ ನಿಂತಿದ್ದು, ಅವರ ಸವಿನೆನಪಿಗಾಗಿ ಶಾಲೆಯ ಆವರಣದಲ್ಲಿ ದಿ. ಎಚ್.ಸಿ. ರಟಗೇರಿ ಅವರ ಕಂಚಿನ ಪುತ್ಥಳಿ ಸ್ಥಾಪಿಸುವ ಮೂಲಕ ಚಂದನ ಸಂಸ್ಥೆ ಗೌರವ ಸಮರ್ಪಿಸಿದೆ.

ಶನಿವಾರ ಶಾಲೆಯ ಆವರಣದಲ್ಲಿ ಸಿಎನ್‌ಆರ್ ರಾವ್ ಅವರ ವಿಜ್ಞಾನ ವಿಸ್ತೃತ ಕಾರ್ಯಕ್ರಮದ ದಶಮಾನೋತ್ಸವ ಸಮಾರಂಭಕ್ಕೆ ಆಗಮಿಸಿದ್ದ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ದಿ. ಎಚ್.ಸಿ. ರಟಗೇರಿಯವರ ಕಂಚಿನ ಪುತ್ಥಳಿಯನ್ನು ಅನಾವರಣಗೊಳಿಸಿ, ದಿವಂಗತರ ಗುಣಗಾನ ಮಾಡಿದರು.

ಸಿಎಂ ಸಿದ್ದರಾಮಯ್ಯರಿಂದ ಅಹವಾಲು ಸ್ವೀಕಾರ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪಟ್ಟಣದ ಸ್ಕೂಲ್ ಚಂದನದಲ್ಲಿ ಶನಿವಾರ ನಡೆದ ವಿಜ್ಞಾನ ವಿಸ್ತೃತ, ಚಂದನ ಶ್ರೀ ಪ್ರಶಸ್ತಿ ಪ್ರದಾನ ಮತ್ತು ಪುತ್ಥಳಿ ಅನಾವರಣ ಕಾರ್ಯಕ್ರಮಕ್ಕೆ ಆಗಮಿಸಿದ ಸಂದರ್ಭದಲ್ಲಿ ರೈತರು, ಗುಡಿಸಲು ವಾಸಿಗಳು, ಕನ್ನಡಪರ, ರೈತಪರ ಸಂಘಟನೆಯವರು, ಸಾರ್ವಜನಿಕರ ವಿವಿಧ ಬೇಡಿಕೆಗಳ ಮನವಿ ಪತ್ರವನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಿದರು.

ಮಧ್ಯಾಹ್ನ 12 ಗಂಟೆಗೆ ಕಾರ್ಯಕ್ರಮಕ್ಕೆ ಬಂದ ಮುಖ್ಯಮಂತ್ರಿಗಳು ಕಾರ್ಯಕ್ರಮ ಮುಗಿಸಿ 4 ಗಂಟೆಗೆ ಹೊರಡುವ ವೇಳೆ ಮನವಿ ಸಲ್ಲಿಕೆಗಾಗಿ ನಿಗದಿಪಡಿಸಿದ್ದ ಸ್ಥಳದಲ್ಲಿ ಕಾಯ್ದು ಕುಳಿತಿದ್ದ ಜನರಿದ್ದ ಸ್ಥಳಕ್ಕೆ ತಾವೇ ಬಂದು ಮನವಿ ಸ್ವೀಕರಿಸಿದರು.

ಕಾರ್ಯಕ್ರಮ ನಡೆದ ಸ್ಥಳಕ್ಕೆ ಹೊಂದಿಕೊಂಡು ಕಳೆದ ಅನೇಕ ವರ್ಷಗಳಿಂದ ವಾಸಿಸುತ್ತಿರುವ ಗುಡಿಸಲುವಾಸಿ ಮಹಿಳೆಯರು ಆಶ್ರಯ ನಿವೇಶನಕ್ಕಾಗಿ ತಮಗೆ ತಿಳಿದಂತೆ ನಾಲ್ಕೈದು ಸಾಲುಗಳಲ್ಲಿ ಬರೆದ ಮನವಿ ಪತ್ರವನ್ನು ಸಲ್ಲಿಸಿದರು. ಲಕ್ಷ್ಮೇಶ್ವರ ಪಟ್ಟಣದಲ್ಲಿ 8 ವರ್ಷಗಳ ಹಿಂದೆ ಆಶ್ರಯ ಫಲಾನುಭವಿಗಳಿಗೆ ನಿವೇಶನದ ಹಕ್ಕುಪತ್ರ ಕೊಟ್ಟಿದ್ದರೂ ನಿವೇಶನ ಕಲ್ಪಿಸಿಲ್ಲ ಎಂದು, ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಮಂಜುನಾಥ ಅಬ್ಬಿಗೇರಿ ಸಮ್ಮುಖದಲ್ಲಿ ಕರವೇ ಕಾರ್ಯಕರ್ತರ ಮೇಲಿನ ಮೊಕದ್ದಮೆಗಳನ್ನು ಖುಲಾಸೆ ಮಾಡುವಂತೆ, ಪರವಾನಗಿ ಪಡೆದ ದಸ್ತು ಬರಹಗಾರರ ಒಕ್ಕೂಟದಿಂದ ಕಾವೇರಿ-2 ತಂತ್ರಾಂಶದಲ್ಲಿ ಪ್ರತ್ಯೇಕ ಡೀಡ್ ರೈಟರ್ ಲಾಗಿನ್ ವ್ಯವಸ್ಥೆ ಕಲ್ಪಿಸುವಂತೆ, ತಾಲೂಕಿನ ಶೆಟ್ಟಿಕೆರಿ ಗ್ರಾಮಸ್ಥರು ಶೆಟ್ಟಿಕೆರಿ-ಕುಂದ್ರಳ್ಳಿ ಗ್ರಾಮದ ಕೆರೆಗಳನ್ನು ಸೇರಿಸಬೇಕೆಂದು, ಹಸಿರುಸೇನೆ ರೈತ ಸಂಘದವರು, ಭೂ ಮಾಲೀಕತ್ವ ಅರ್ಜಿ ಮಂಜೂರು ಮಾಡುವುದು, ತಾಲೂಕಿನ ಹಿರೇಮಲ್ಲಾಪುರ ಗ್ರಾಮದಲ್ಲಿ ಪ್ರಾರಂಭಗೊಳ್ಳುತ್ತಿರುವ ಇಥೆನಾಲ್ ಫ್ಯಾಕ್ಟರಿ ಪ್ರಾರಂಭಿಸದಂತೆ, ಅಸ್ಪೃಶ್ಯ ಅಲೆಮಾರಿ ಸಮುದಾಯ ಒಕ್ಕೂಟದಿಂದ ಒಳಮೀಸಲಾತಿ ಕಲ್ಪಿಸುವಂತೆ, ತಾಲೂಕಿನ ರಸ್ತೆಗಳ ಅಭಿವೃದ್ಧಿಗಾಗಿ ಹೀಗೆ ಅನೇಕ ಮನವಿ ಪತ್ರಗಳನ್ನು ಸರದಿ ಸಾಲಿನಲ್ಲಿ ನಿಂತು ಸಲ್ಲಿಸಿದರು. ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಕೆ. ಪಾಟೀಲ ಸೇರಿದಂತೆ ಮುಖಂಡರಿದ್ದರು.

ಆಳಂದ ಕ್ಷೇತ್ರದಲ್ಲಿ ಮತಗಳ್ಳತನ ನಡೆದಿರುವುದು ಸತ್ಯ: ಡಿಕೆ ಶಿವಕುಮಾರ್

0

ಬೆಂಗಳೂರು:- ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ಮತಗಳ್ಳತನ ನಡೆದಿರುವುದು ಸತ್ಯ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ಮತಗಳ್ಳತನ ನಡೆದಿರುವುದು ಸತ್ಯ. ಹೀಗಾಗಿ ಬಿಜೆಪಿ ಮಾಜಿ ಶಾಸಕ ಗುತ್ತೇದಾರ್ ಅವರ ವಿರುದ್ಧ ಆರೋಪ ಪಟ್ಟಿ ಸಲ್ಲಿಕೆ ಮಾಡುವ ಮೂಲಕ ಮತಗಳ್ಳತನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗಿದೆ.

ಆಳಂದ ಕ್ಷೇತ್ರದ ಬಿಜೆಪಿ ಪರಾಜಿತ ಅಭ್ಯರ್ಥಿ ಸುಭಾಷ್ ಗುತ್ತೇದಾರ್ ಅವರ ಮೇಲೆ ಚಾರ್ಜ್ಶೀಟ್ ಸಲ್ಲಿಕೆಯಾಗಿರುವ ಬಗ್ಗೆ ಕೇಳಿದಾಗ, ಈ ಪ್ರಕರಣದಲ್ಲಿ ಯಾವುದೇ ಮುಚ್ಚುಮರೆಯಿಲ್ಲ. ಅಕ್ರಮ ನಡೆದಿರುವುದು ಸತ್ಯ. ಗಂಭೀರವಾದ ತನಿಖೆ ನಡೆಸಿ, ಚಾರ್ಜ್ಶೀಟ್ ಹಾಕಿದ್ದಾರೆ. ಈ ವಿಚಾರದ ಬಗ್ಗೆ ನಮ್ಮ ಶಾಸಕರು ಸದನದಲ್ಲಿ ದನಿ ಎತ್ತಲಿದ್ದಾರೆ. ಇದು ಕೇವಲ ಕರ್ನಾಟಕದ ದನಿಯಲ್ಲ. ಇಡೀ ಭಾರತದ ದನಿ. ಜನರ ಕೃಪೆಯಿಂದ ನಾವು ಇಲ್ಲಿ ಅಧಿಕಾರಕ್ಕೆ ಬಂದಿದ್ದೇವೆ ಎಂದರು.

ತನಿಖೆ ನಡೆಸಿ, ಕ್ರಮ ತೆಗದುಕೊಂಡಿದ್ದಾರೆ. ಫೋನ್‌ನಲ್ಲಿ ದಾಖಲೆಗಳು ಡಿಲೀಟ್ ಆಗಿವೆ ಎಂದು ಇದೆ. ಇದರ ಬಗ್ಗೆ ವರದಿ ತರಿಸಿಕೊಂಡು ನೋಡಿ ಆನಂತರ ಮಾತನಾಡುತ್ತೇನೆ. ರಾಹುಲ್ ಗಾಂಧಿ ಅವರ ಸಲಹೆಯಂತೆ ಲೀಗಲ್ ಬ್ಯಾಂಕ್ ಅನ್ನು ಪ್ರತಿ ಕ್ಷೇತ್ರದಲ್ಲೂ ಪ್ರಾರಂಭ ಮಾಡಬೇಕು. ಈ ವಿಚಾರದ ಬಗ್ಗೆ ನಾವು ಹೋರಾಟ ಮಾಡುತ್ತೇವೆ ಎಂದು ತಿಳಿಸಿದರು.

ಜನವರಿಯಲ್ಲಿ‌ ದರ್ಶನ್‌ ಅಣ್ಣನಿಗೆ ಬೇಲ್‌ ಸಿಗುವ ನಿರೀಕ್ಷೆಯಿದೆ: ನಟ ಝೈದ್‌ ಖಾನ್‌ ವಿಶ್ವಾಸ

ಜನವರಿಯಲ್ಲಿ ದರ್ಶನ್ ಅಣ್ಣನಿಗೆ ಜಾಮೀನು ಸಿಗಲಿದೆ ಎಂಬ ನಂಬಿಕೆ ಇದೆ. ಒಂದು ವೇಳೆ ಬೇಲ್ ಸಿಗದಿದ್ರೆ ನಾನೇ ಜೈಲಿಗೆ ಹೋಗಿ ಆಶೀರ್ವಾದ ಪಡೆದು ಬರ್ತೀನಿ” ಎಂದು ನಟ ಝೈದ್‌ ಖಾನ್‌ ಭಾವುಕರಾಗಿ ಹೇಳಿದ್ದಾರೆ.

ಹಾವೇರಿಯಲ್ಲಿ ನಡೆದ ಕಲ್ಟ್‌ ಸಿನಿಮಾದ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ದರ್ಶನ್ ಬಗ್ಗೆ ತಮ್ಮ ಭಾವನೆಗಳನ್ನು ತೆರೆದಿಟ್ಟರು. ನೋವಿನ ಮಧ್ಯೆಯೂ ಅಭಿಮಾನಿಗಳಿಗೆ ಸಕ್ಸಸ್ ಸಿನಿಮಾ ಕೊಟ್ಟಿರುವುದು ದರ್ಶನ್ ಅಣ್ಣನ ದೊಡ್ಡತನ. ‘ದರ್ಶನ್’ ಅನ್ನೋ ಹೆಸರೇ ಸಿನಿಮಾಗೆ ಶಕ್ತಿ. ಡೆವಿಲ್ ಸಿನಿಮಾ ತುಂಬಾ ಚೆನ್ನಾಗಿದೆ” ಎಂದು ಝೈದ್‌ ಖಾನ್ ಪ್ರಶಂಸಿಸಿದರು.

ಇನ್ನು ತಂದೆ ಜಮೀರ್ ಅಹ್ಮದ್ ಅವರ ರಾಜಕೀಯ ವಿವಾದಗಳು ತಮ್ಮ ಸಿನಿಮಾಗೆ ಹೊಡೆತ ನೀಡಿದೆಯೇ ಎಂಬ ಪ್ರಶ್ನೆಗೆ, “ಹೌದು, ಅದರ ಪರಿಣಾಮ ಆಯ್ತು. ನನ್ನ ಸಿನಿಮಾಗೆ ಬಾಯ್ಕಾಟ್ ಕೂಡ ಆಯ್ತು. ಆದರೆ ಗೆದ್ದ ಮೇಲೆ ಮಾತನಾಡಿದ್ರೆ ಅದರ ತೂಕ ಬೇರೆ ಇರುತ್ತೆ” ಎಂದು ಹೇಳಿದರು.

ಪೈರಸಿ ಮಾಡುವವರ ಬಗ್ಗೆ ಎಚ್ಚರಿಕೆ ನೀಡಿದ ಅವರು, “ಮಾಡುವವರು ಮಾಡ್ತಾರೆ. ಆದರೆ ಸಿಕ್ಕಿಬಿದ್ರೆ ಬಿಡಲ್ಲ” ಎಂದು ಕಠಿಣ ಸಂದೇಶ ನೀಡಿದರು.

ದರ್ಶನ್‌ ಅಣ್ಣನಿಗೆ ಜನವರಿಯಲ್ಲಿ ಬೇಲ್‌ ಸಿಗುವ ನಿರೀಕ್ಷೆಯಿದೆ: ಝೈದ್ ಖಾನ್

0

ಹಾವೇರಿ: ಹಾವೇರಿ ನಗರದಲ್ಲಿ ನಡೆದ ‘ಕಲ್ಟ್’ ಸಿನಿಮಾದ ಪ್ರಚಾರ ಕಾರ್ಯಕ್ರಮದಲ್ಲಿ ಸಚಿವ ಜಮೀರ್ ಅಹ್ಮದ್ ಪುತ್ರ ಝೈದ್ ಖಾನ್ ಮಾತನಾಡಿದರು. ಈ ವೇಳೆ ನಟ ದರ್ಶನ್ ಕುರಿತು ಹೇಳಿಕೆ ನೀಡಿದ್ದು, ಜನವರಿಯಲ್ಲಿ ದರ್ಶನ್ ಅವರಿಗೆ ಜಾಮೀನು ಸಿಗುವ ನಿರೀಕ್ಷೆಯಿದೆ ಎಂದು  ಝೈದ್ ಖಾನ್ ಹೇಳಿದರು.

ಒಂದು ವೇಳೆ ಜಾಮೀನು ಸಿಗದಿದ್ದರೆ, ನಾನೇ ಖುದ್ದು ಜೈಲಿಗೆ ಹೋಗಿ ದರ್ಶನ್ ಅಣ್ಣನಿಂದ ಆಶೀರ್ವಾದ ಪಡೆದು ಬರುತ್ತೇನೆ ಎಂದು ಝೈದ್ ಖಾನ್ ಹೇಳಿದರು. ನೋವಿನ ನಡುವೆಯೂ ದರ್ಶನ್ ಅಭಿಮಾನಿಗಳಿಗೆ ಸಕ್ಸಸ್ ಸಿನಿಮಾ ನೀಡಿರುವುದು ಅವರ ವ್ಯಕ್ತಿತ್ವದ ದೊಡ್ಡ ಗುಣವಾಗಿದೆ ಎಂದು ಪ್ರಶಂಸಿಸಿದರು.

‘ದರ್ಶನ್’ ಎಂಬ ಹೆಸರೇ ಸಿನಿಮಾ ಯಶಸ್ಸಿಗೆ ಸಾಕು. ಈ ಸಂಗತಿಯನ್ನು ‘ಡೆವಿಲ್’ ಸಿನಿಮಾ ನೋಡಿ ನಾನು ಕಲಿತಿದ್ದೇನೆ. ‘ಕಲ್ಟ್’ ಸಿನಿಮಾ ಕೂಡ ಬಹಳ ಚೆನ್ನಾಗಿ ಮೂಡಿ ಬಂದಿದೆ ಎಂದು ಝೈದ್ ಖಾನ್ ಹೇಳಿದರು. ಇನ್ನು ಸಚಿವ ಜಮೀರ್ ಅಹ್ಮದ್ ರಾಜಕೀಯ ವಿವಾದಗಳು ನಿಮ್ಮ ಸಿನಿಮಾಗೆ ಪರಿಣಾಮ ಬೀರಿದೆಯೇ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು,

ಖಂಡಿತವಾಗಿಯೂ ಪರಿಣಾಮವಾಗಿದೆ ಎಂದು ಹೇಳಿದರು. ತಮ್ಮ ಹಿಂದಿನ ಸಿನಿಮಾಗೆ ತಂದೆಯ ರಾಜಕೀಯ ಬೆಳವಣಿಗೆಗಳಿಂದ ತೊಂದರೆಯಾಗಿದೆ. ಜಮೀರ್ ಅಹ್ಮದ್ ಅವರ ರಾಜಕೀಯ ವಿವಾದಗಳ ಕಾರಣ ತಮ್ಮ ಸಿನಿಮಾವನ್ನು ಬಾಯ್ಕಾಟ್ ಮಾಡಲಾಗಿದೆ ಎಂದು ಅವರು ಹೇಳಿದರು.

ದೇಶದಲ್ಲಿ ಜಾತ್ಯತೀತ ಮೌಲ್ಯಗಳನ್ನು ಬಲಪಡಿಸುವ ಅಗತ್ಯವಿದೆ: ಮುಖ್ಯಮಂತ್ರಿ ಸಿದ್ದರಾಮಯ್ಯ

0

ಗದಗ: ದೇಶದಲ್ಲಿ ಜಾತ್ಯತೀತ ಮೌಲ್ಯಗಳನ್ನು ಬಲಪಡಿಸುವ ಅಗತ್ಯವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಗದಗ ಜಿಲ್ಲೆ ಲಕ್ಷ್ಮೇಶ್ವರ ಪಟ್ಟಣದಲ್ಲಿ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ದೇಶದಲ್ಲಿ ಜಾತ್ಯತೀತ ಮೌಲ್ಯಗಳನ್ನು ಬಲಪಡಿಸುವ ಅಗತ್ಯವಿದ್ದು, ಜಾತೀಯತೆ ಮತ್ತು ಅಸಮಾನತೆ ಇನ್ನೂ ಸಮಾಜದಲ್ಲಿ ಉಳಿದಿರುವುದು ದುರ್ದೈವ ಎಂದು ಹೇಳಿದರು.

ನಮ್ಮ ದೇಶದಲ್ಲಿ ಜಾತಿಯತೆ ಮತ್ತು ಅಸಮಾನತೆ ಇದೆ. ಸ್ವಾತಂತ್ರ್ಯ ದೊರೆತು ಇಷ್ಟು ವರ್ಷಗಳಾದರೂ ಕೂಡ ಕಂದಾಚಾರ ಮತ್ತು ಜಾತೀಯತೆ ಸಂಪೂರ್ಣವಾಗಿ ಹೋಗಿಲ್ಲ ಎಂದು ಸಿಎಂ ವಿಷಾದ ವ್ಯಕ್ತಪಡಿಸಿದ್ದು, ವಿಶೇಷವಾಗಿ ಶಿಕ್ಷಿತರಲ್ಲಿಯೇ ಸಾಕಷ್ಟು ಜಾತೀಯತೆ ಇರುವುದನ್ನು ನೋಡಿದರೆ ದುಃಖವಾಗುತ್ತದೆ ಎಂದು ಹೇಳಿದರು.

ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಯಬೇಕು. ಬಸವಣ್ಣನವರು 800 ವರ್ಷಗಳ ಹಿಂದೆಯೇ ಸಮಾನತೆ ಮತ್ತು ಮಾನವತೆಯ ಕುರಿತು ಸಂದೇಶ ನೀಡಿದ್ದರು ಎಂದು ಸಿದ್ದರಾಮಯ್ಯ ಉಲ್ಲೇಖಿಸಿದರು. ಶಿಕ್ಷಣವನ್ನು ಕೇವಲ ಉದ್ಯೋಗಕ್ಕಾಗಿ ಮಾತ್ರವಲ್ಲ, ಮನುಷ್ಯತ್ವ ಬೆಳೆಸಿಕೊಳ್ಳಲು ಪಡೆಯಬೇಕು ಎಂದು ಹೇಳಿದರು.

ಇನ್ನೂ ತಮ್ಮ ಹೆಸರಿನ ಕುರಿತು ಮಾತನಾಡಿದ ಸಿಎಂ, ‘ಸಿದ್ದ’ ಎಂದರೆ ಈಶ್ವರ ಎಂಬ ಅರ್ಥವಿದೆ. ರಾಮ, ವಿಷ್ಣು ಎಂಬ ಉಲ್ಲೇಖಗಳ ಜೊತೆಗೆ ‘ಸಿದ್ದ-ರಾಮ’ ಎಂಬ ದ್ವಂದ್ವ ನಾಮದಿಂದ ಸಿದ್ದರಾಮಯ್ಯ ಎಂಬ ಹೆಸರು ಬಂದಿದೆ ಎಂದು ವಿವರಿಸಿದರು. ದೇವರಿಗೆ ಭಯಪಡುವುದು ಒಂದು ವಿಷಯ, ಆದರೆ ದೇವರನ್ನು ನಮಗೆ ಇಷ್ಟ ಬಂದಂತೆ ಬಳಸಿಕೊಳ್ಳಲು ಸಾಧ್ಯವಿಲ್ಲ.

ದೇವರು ಎಂದಿಗೂ ಮನುಷ್ಯರಾಗಿರಿ ಎಂದು ಹೇಳುತ್ತಾನೆ, ಅಸಮಾನತೆ ಬೆಳೆಸಿರಿ ಎಂದು ಹೇಳಿಲ್ಲ ಎಂದು ಹೇಳಿದರು. ನಮ್ಮ ದೇಶದಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತ, ಜೈನ್, ಬೌದ್ಧ, ಸಿಖ್ ಸೇರಿದಂತೆ ಅನೇಕ ಧರ್ಮಗಳಿವೆ. ಯಾವುದೇ ಧರ್ಮವೂ ದ್ವೇಷವನ್ನು ಬೋಧಿಸುವುದಿಲ್ಲ. ಎಲ್ಲಾ ಧರ್ಮಗಳು ಪ್ರೀತಿ ಮತ್ತು ಸಹಬಾಳ್ವೆಯನ್ನು ಬಯಸುತ್ತವೆ. ದ್ವೇಷವನ್ನು ಬಿತ್ತುವಂತಹ ಕೆಲಸ ಮಾಡಬಾರದು ಎಂದು ಸಿಎಂ ಸಿದ್ದರಾಮಯ್ಯ ಕರೆ ನೀಡಿದರು.

ಮೆಸ್ಸಿಯ ಕಾರ್ಯಕ್ರಮದಲ್ಲಿ ನಡೆದ ಗಲಾಟೆಗೆ ಕ್ಷಮೆಯಾಚಿಸಿದ ಸಿಎಂ ಮಮತಾ ಬ್ಯಾನರ್ಜಿ!

0

ಕೋಲ್ಕತ್ತಾದ ಸಾಲ್ಟ್ ಲೇಕ್ ಸ್ಟೇಡಿಯಂನಲ್ಲಿ ಫುಟ್ಬಾಲ್ ತಾರೆ ಲಿಯೋನಲ್ ಮೆಸ್ಸಿ ಕಾರ್ಯಕ್ರಮದಲ್ಲಿ ದೊಡ್ಡ ದಾಂಧಲೆ ನಡೆದಿದೆ. ನೆಚ್ಚಿನ ಆಟಗಾರನ ನೋಡಲು ಅವಕಾಶ ಸಿಗದಿದ್ದಕ್ಕೆ ಅಭಿಮಾನಿಗಳು ರೊಚ್ಚಿಗೆದ್ದು, ದೊಡ್ಡ ಗಲಾಟೆ ಮಾಡಿದ್ದಾರೆ. ಇನ್ನೂ ಈ ಸಂಬಂಧ ಸಿಎಂ ಮಮತಾ ಬ್ಯಾನರ್ಜಿ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದಾರೆ.

ಈ ಬಗ್ಗೆ ಎಕ್ಸ್​​ನಲ್ಲಿ ಪೋಸ್ಟ್ ಮಾಡಿರುವ ಸಿಎಂ ಮಮತಾ ಬ್ಯಾನರ್ಜಿ, ಇಂದು ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ನಡೆದ ಘಟನೆಯಿಂದ ನಾನು ತೀವ್ರವಾಗಿ ವಿಚಲಿತಳಾಗಿದ್ದೇನೆ ಮತ್ತು ಆಘಾತಕ್ಕೊಳಗಾಗಿದ್ದೇನೆ. ತಮ್ಮ ನೆಚ್ಚಿನ ಫುಟ್ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿಯನ್ನು ನೋಡಲು ನೆರೆದಿದ್ದ ಸಾವಿರಾರು ಕ್ರೀಡಾ ಪ್ರೇಮಿಗಳು ಮತ್ತು ಅಭಿಮಾನಿಗಳೊಂದಿಗೆ ನಾನು ಕಾರ್ಯಕ್ರಮದಲ್ಲಿ ಭಾಗವಹಿಸಲು ಕ್ರೀಡಾಂಗಣಕ್ಕೆ ಹೋಗುತ್ತಿದ್ದೆ ಎಂದು ಬರೆದಿದ್ದಾರೆ.

ಇಂದು ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವ್ಯವಸ್ಥೆ ಉಂಟಾದ ನಂತರ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಲಿಯೋನೆಲ್ ಮೆಸ್ಸಿ ಮತ್ತು ಅಭಿಮಾನಿಗಳಿಗೆ ಕ್ಷಮೆ ಯಾಚಿಸಿದ್ದಾರೆ. ಅರ್ಜೆಂಟೀನಾ ವಿಶ್ವಕಪ್ ವಿಜೇತ ನಾಯಕ ಮೆಸ್ಸಿ ಇಂದು ಮಧ್ಯಾಹ್ನ ಕ್ರೀಡಾಂಗಣಕ್ಕೆ ಆಗಮಿಸಿದ್ದರು. ಅವರನ್ನು ನೋಡಲು ಉತ್ಸುಕರಾಗಿದ್ದ ಅಭಿಮಾನಿಗಳು ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದರು.

ಆದರೆ, ಹೆಚ್ಚಿನ ಟಿಕೆಟ್ ಬೆಲೆಗಳನ್ನು ಪಾವತಿಸಿದರೂ ಅನೇಕ ಅಭಿಮಾನಿಗಳಿಗೆ ಮೆಸ್ಸಿಯನ್ನು ನೋಡಲು ಸಾಧ್ಯವಾಗಲಿಲ್ಲ. ಮಂತ್ರಿಗಳು, ಕ್ಲಬ್ ಅಧಿಕಾರಿಗಳು, ಮಾಜಿ ಫುಟ್ಬಾಲ್ ಆಟಗಾರರು, ಮಾಧ್ಯಮ ಸಿಬ್ಬಂದಿ ಮತ್ತು ಭದ್ರತಾ ಸಿಬ್ಬಂದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರಿಂದ ಮೆಸ್ಸಿಯ ಸುತ್ತಲೂ ಜನರು ಮುತ್ತಿಕೊಂಡಿದ್ದರು. ಇದರಿಂದ ಕ್ರೀಡಾಂಗಣದ ಸೀಟ್​​​ಗಳಲ್ಲಿ ಕುಳಿತಿದ್ದವರಿಗೆ ಮೆಸ್ಸಿಯನ್ನು ನೋಡಲು ಸಾಧ್ಯವಾಗಲೇ ಇಲ್ಲ.

ತಮ್ಮ ನೆಚ್ಚಿನ ಆಟಗಾರನನ್ನು ನೋಡಲು ಹೆಚ್ಚು ಬೆಲೆ ತೆತ್ತು ಟಿಕೆಟ್ ಖರೀದಿಸಿದ್ದರೂ ಆತನನ್ನು ನೋಡಲು ಸಾಧ್ಯವಾಗದೆ ಹತಾಶೆಗೊಂಡ ಅಭಿಮಾನಿಗಳು ಗಲಾಟೆಯೆಬ್ಬಿಸಿದರು. ಇದರಿಂದ ಮೆಸ್ಸಿ ಬೇಗನೆ ಮೈದಾನದಿಂದ ಹೊರಗೆ ಹೋದರು. ಇದರಿಂದ ಮೆಸ್ಸಿಯ ಅಭಿಮಾನಿಗಳು ಇನ್ನಷ್ಟು ಕೆರಳಿ ಮುರಿದ ಕುರ್ಚಿಗಳು, ಬಾಟಲಿಗಳನ್ನು ಎಸೆದು ಕ್ರೀಡಾಂಗಣದಲ್ಲಿ ದಾಂಧಲೆ ಎಬ್ಬಿಸಿದರು. ಇದರಿಂದ ಪರಿಸ್ಥಿತಿ ಹದಗೆಟ್ಟು, ಕ್ರೀಡಾಂಗಣದೊಳಗೆ ಆತಂಕದ ವಾತಾವರಣ ಸೃಷ್ಟಿಯಾಯಿತು.

ಈ ಘಟನೆಗೆ ಪ್ರತಿಕ್ರಿಯೆಯಾಗಿ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಡೆದ ವಿಷಾದ ವ್ಯಕ್ತಪಡಿಸಿದ್ದಾರೆ. ಮೆಸ್ಸಿ ಮತ್ತು ಮೆಸ್ಸಿಯ ಅಭಿಮಾನಿಗಳಿಗೆ ಸಿಎಂ ಕ್ಷಮೆ ಯಾಚಿಸಿದ್ದಾರೆ. ಕಳಪೆ ಕಾರ್ಯಕ್ರಮ ನಿರ್ವಹಣೆಯೇ ಅವ್ಯವಸ್ಥೆಗೆ ಕಾರಣವೆಂದು ಅವರು ಹೇಳಿದ್ದಾರೆ. ಕ್ರೀಡಾಂಗಣದ ವ್ಯವಸ್ಥೆಗಳನ್ನು ಪರಿಶೀಲಿಸಲು ಮತ್ತು ಲೋಪಗಳನ್ನು ಪತ್ತೆಹಚ್ಚಲು ತನಿಖೆ ನಡೆಸಲಾಗುವುದು ಎಂದು ಅವರು ಘೋಷಿಸಿದ್ದಾರೆ.

 

ಪರಮೇಶ್ವರ್ ಅವರು ಈ ರಾಜ್ಯದ ಮುಖ್ಯಮಂತ್ರಿ ಆಗಲಿ: ಕೇಂದ್ರ ಸಚಿವ ವಿ ಸೋಮಣ್ಣ

0

ತುಮಕೂರು: ಪರಮೇಶ್ವರ್ ಅವರು ಈ ರಾಜ್ಯದ ಮುಖ್ಯಮಂತ್ರಿ ಆಗಲಿ ಎಂದು ಕೇಂದ್ರ ಸಚಿವ ವಿ ಸೋಮಣ್ಣಹೇಳಿದ್ದಾರೆ. ಹೆಗ್ಗೆರೆ ಮೇಲುಸೇತುವೆ ಕಾಮಗಾರಿ ಉದ್ಘಾಟನಾ ಭಾಷಣದಲ್ಲಿ ಮಾತನಾಡಿದ ಅವರು, ಪರಮೇಶ್ವರ್ ಅದೃಷ್ಟದ ಗೃಹ ಮಂತ್ರಿಯಾಗಿದ್ದಾರೆ.

ಎಲ್ಲೋ ಒಂದು ಕಡೆ ಅವರು ಈ ರಾಜ್ಯದ ಮುಖ್ಯಮಂತ್ರಿ ಆಗಲಿ ಅನ್ನೋ ಆಸೆ ಇದೆ ಎಂದು ಹೇಳಿದರಲ್ಲದೇ ಇದನ್ನ ನಾನೊಬ್ಬನೇ ಹೇಳುತ್ತಿಲ್ಲ ತುಮಕೂರಿನ ಮಹಾಜನತೆಯ ಅಭಿಪ್ರಾಯ ಎಂದು ಹೇಳಿದರು. ಈ ವೇಳೆ ಮಧ್ಯ ಪ್ರವೇಶ ಮಾಡಿದ ಶಾಸಕ ಸುರೇಶ್ ಗೌಡ, ಡಿಕೆಶಿ ಕೂಡಾ ಇದ್ದಾರೆ ಎಂದರು. ಅದಕ್ಕೆ ಪ್ರತಿಕ್ರಿಯಿಸಿದ ಸೋಮಣ್ಣ ಹಣೆಬರಹ ಯಾರಿಗೆ ಗೊತ್ತು, ಹಣೆ ಬರಹದಂತೆ ಆಗಲಿ ಎಂದರು.

ಬೆಂಗಳೂರು-ತುಮಕೂರು ಮೆಟ್ರೊ ಯೋಜನೆಗೆ ಕಾಂಗ್ರೆಸ್ ನಾಯಕರು ವಿರೋಧ ಮಾಡುತಿದ್ದಾರೆ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಆರೋಪ ಮಾಡಿದ್ದಾರೆ. ತುಮಕೂರಿನ ಪಂಡಿತನಹಳ್ಳಿಯಲ್ಲಿ ರೇಲ್ವೆ ಮೇಲ್ಸೆತುವೆ ಕಾಮಗಾರಿಗೆ ಶಂಕುಸ್ಥಾಪನೆ ಮಾಡಿ ಮಾತನಾಡಿದ ಅವರು, ನಿನ್ನೆ ಒಬ್ಬ ಕಾಂಗ್ರೆಸ್ ನಾಯಕರು ನನ್ನ ಬಳಿ ಬಂದು ತುಮಕೂರು ಮೆಟ್ರೋಗೆ ವಿರೋಧ ವ್ಯಕ್ತಪಡಿಸಿದರು.

ನಾಳೆ ಭಾರತ vs ಸೌತ್ ಆಫ್ರಿಕಾ 3ನೇ ಟಿ20 ಪಂದ್ಯ: ಟೀಮ್ ಇಂಡಿಯಾದಲ್ಲಿ ಬದಲಾವಣೆ ಸಾಧ್ಯತೆ

0

ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೂರನೇ ಟಿ20 ಪಂದ್ಯ ನಾಳೆ (ಡಿ.14) ಧರ್ಮಶಾಲಾದ ಹೆಚ್‌ಪಿಸಿಎ ಸ್ಟೇಡಿಯಂನಲ್ಲಿ ನಡೆಯಲಿದೆ. ಈ ಪಂದ್ಯಕ್ಕೆ ಟೀಮ್ ಇಂಡಿಯಾ ತನ್ನ ಪ್ಲೇಯಿಂಗ್ ಇಲೆವೆನ್‌ನಲ್ಲಿ ಮಹತ್ವದ ಬದಲಾವಣೆಗಳನ್ನು ಮಾಡುವ ಸಾಧ್ಯತೆ ಇದೆ.

ಮೋಹಾಲಿಯ ಮುಲ್ಲನ್‌ಪುರ್‌ನಲ್ಲಿ ನಡೆದ ದ್ವಿತೀಯ ಟಿ20 ಪಂದ್ಯದಲ್ಲಿ ಭಾರತ ಹೀನಾಯ ಸೋಲು ಕಂಡ ಹಿನ್ನೆಲೆ, ತಂಡದ ಸಂಯೋಜನೆಯಲ್ಲಿ ಬದಲಾವಣೆ ಅನಿವಾರ್ಯವಾಗಿದೆ. ಕಳೆದ ಎರಡು ಪಂದ್ಯಗಳಲ್ಲಿ ನಿರೀಕ್ಷಿತ ಪ್ರದರ್ಶನ ನೀಡದ ಶುಭ್‌ಮನ್ ಗಿಲ್ ಅವರನ್ನು ಕೈ ಬಿಟ್ಟು ಸಂಜು ಸ್ಯಾಮ್ಸನ್‌ಗೆ ಅವಕಾಶ ನೀಡುವ ಸಾಧ್ಯತೆ ಇದೆ.

ಸಂಜು ಸ್ಯಾಮ್ಸನ್ ಮತ್ತು ಅಭಿಷೇಕ್ ಶರ್ಮಾ ಆರಂಭಿಕರಾಗಿ ಕಣಕ್ಕಿಳಿಯುವ ಸಾಧ್ಯತೆ ಇದ್ದು, ಮೂರನೇ ಕ್ರಮಾಂಕದಲ್ಲಿ ನಾಯಕ ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್ ಮಾಡುವ ನಿರೀಕ್ಷೆಯಿದೆ. ನಾಲ್ಕನೇ ಕ್ರಮಾಂಕದಲ್ಲಿ ತಿಲಕ್ ವರ್ಮಾ ಸ್ಥಾನ ಪಡೆಯುವ ಸಾಧ್ಯತೆ ಇದ್ದು, ಆಲ್‌ರೌಂಡರ್‌ಗಳಾಗಿ ಶಿವಂ ದುಬೆ ಮತ್ತು ಹಾರ್ದಿಕ್ ಪಾಂಡ್ಯ ಕಣಕ್ಕಿಳಿಯಬಹುದು. ವಿಕೆಟ್ ಕೀಪರ್ ಆಗಿ ಜಿತೇಶ್ ಶರ್ಮಾರನ್ನು ಮುಂದುವರೆಸುವ ಸಾಧ್ಯತೆ ಇದೆ.

ಇನ್ನು ಬೌಲಿಂಗ್ ವಿಭಾಗದಲ್ಲಿ ಅಕ್ಷರ್ ಪಟೇಲ್ ಅವರನ್ನು ಕೈ ಬಿಟ್ಟು ಕುಲ್ದೀಪ್ ಯಾದವ್ ಅಥವಾ ಹರ್ಷಿತ್ ರಾಣಾಗೆ ಅವಕಾಶ ನೀಡಬಹುದು. ಅಕ್ಷರ್ ಪಟೇಲ್ ಕಳೆದ ಎರಡು ಪಂದ್ಯಗಳಲ್ಲಿ ನಿರೀಕ್ಷಿತ ಪ್ರದರ್ಶನ ನೀಡದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಅನುಭವದ ಹಿನ್ನೆಲೆಯಲ್ಲಿ ಕುಲ್ದೀಪ್ ಯಾದವ್‌ಗೆ ಪ್ಲೇಯಿಂಗ್ ಇಲೆವೆನ್‌ನಲ್ಲಿ ಅವಕಾಶ ಸಿಗುವ ಸಾಧ್ಯತೆ ಹೆಚ್ಚಿದೆ. ಉಳಿದಂತೆ ವರುಣ್ ಚಕ್ರವರ್ತಿ, ಜಸ್‌ಪ್ರೀತ್ ಬುಮ್ರಾ ಮತ್ತು ಅರ್ಷದೀಪ್ ಸಿಂಗ್ ತಂಡದ ಬೌಲಿಂಗ್ ದಾಳಿಯನ್ನು ಮುನ್ನಡೆಸಲಿದ್ದಾರೆ.

ಪ್ಲೇಯಿಂಗ್ ಇಲೆವೆನ್ ಈ ಕೆಳಗಿನಂತಿರಲಿದೆ

  • ಅಭಿಷೇಕ್ ಶರ್ಮಾ
  • ಸಂಜು ಸ್ಯಾಮ್ಸನ್
  • ತಿಲಕ್ ವರ್ಮಾ
  • ಸೂರ್ಯಕುಮಾರ್ ಯಾದವ್ (ನಾಯಕ)
  • ಜಿತೇಶ್ ಶರ್ಮಾ (ವಿಕೆಟ್ ಕೀಪರ್)
  • ಹಾರ್ದಿಕ್ ಪಾಂಡ್ಯ
  • ಶಿವಂ ದುಬೆ
  • ವರುಣ್ ಚಕ್ರವರ್ತಿ
  • ಅರ್ಷ್‌ದೀಪ್ ಸಿಂಗ್
  • ಜಸ್ಪ್ರೀತ್ ಬುಮ್ರಾ
  • ಕುಲ್ದೀಪ್ ಯಾದವ್.
error: Content is protected !!