Home Blog

ಚಾಲಕನ ನಿಯಂತ್ರಣ ತಪ್ಪಿ ಕಲ್ಲಂಗಡಿ‌ ಸಾಗಿಸುತ್ತಿದ್ದ ಕ್ಯಾಂಟರ್ ಪಲ್ಟಿ: ಚಾಲಕ ಗಂಭೀರ!

ದೊಡ್ಡಬಳ್ಳಾಪುರ:- ಚಾಲಕನ ನಿಯಂತ್ರಣ ತಪ್ಪಿ ಕಲ್ಲಂಗಡಿ‌ ತುಂಬಿಕೊಂಡು ಹೋಗುತ್ತಿದ್ದ ಕ್ಯಾಂಟರ್ ಪಲ್ಟಿ ಹೊಡೆದಿರುವ ಘಟನೆ ದೊಡ್ಡಬಳ್ಳಾಪುರದ ಮೇಷ್ಟ್ರು ಮನೆ ಸರ್ಕಲ್‌ ಬಳಿ ಜರುಗಿದೆ.

ಘಟನೆಯಲ್ಲಿ ಕ್ಯಾಂಟರ್ ಚಾಲಕ ವೇದಮೂರ್ತಿ (22) ಗಂಭೀರ ಗಾಯಗೊಂಡಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಚೆನೈನಿಂದ ದಾವಣಗೆರೆಗೆ ಕಲ್ಲಂಗಡಿ‌ ತುಂಬಿಕೊಂಡು ಕ್ಯಾಂಟರ್ ಹೋಗುತ್ತಿತ್ತು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಮೂರು ಡಿವೈಡರ್ ದಾಟಿ ಹಳ್ಳಕ್ಕೆ ಬಂದು ಬಿದ್ದಿದೆ. ಕ್ಯಾಂಟರ್ ಪಲ್ಟಿ ಹೊಡೆದ ಪರಿಣಾಮ ಚಾಲಕನಿಗೆ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಸರಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ವಿದೇಶ ಪ್ರವಾಸ ಮುಗಿಸಿ ಕಾಂಗ್ರೆಸ್ ಶಾಸಕರು ವಾಪಸ್: ಒಬ್ಬೊಬ್ಬರು ಒಂದೊಂದು ಹೇಳಿಕೆ!?

ಬೆಂಗಳೂರು: ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ಪ್ರವಾಸ ಮುಗಿಸಿ ಕಾಂಗ್ರೆಸ್ ಶಾಸಕರು ಇಂದು ಬೆಂಗಳೂರಿಗೆ ವಾಪಸ್ಸಾಗಿದ್ದಾರೆ. ವಿದೇಶ ಪ್ರವಾಸದ ಉದ್ದೇಶದ ಬಗ್ಗೆ ಭಿನ್ನ ಅಭಿಪ್ರಾಯಗಳು ಕೇಳಿಬಂದಿವೆ.

ಸಿರಗುಪ್ಪ ಶಾಸಕ ಬಿಎಂ ನಾಗರಾಜ್ ಮಾಧ್ಯಮಗಳೊಂದಿಗೆ ಮಾತನಾಡಿ, “ನಾವು ಕುಟುಂಬ ಸಮೇತ ಪ್ರವಾಸಕ್ಕೆ ಹೋಗಿದ್ದೆವು. ಯಾವುದೇ ರಾಜಕೀಯ ಚರ್ಚೆ ನಡೆಸಿಲ್ಲ. ಅಧಿಕೃತ ಸರ್ಕಾರಿ ಪ್ರವಾಸವಾಗಿರಲಿಲ್ಲ. ಕೆಲವು ತೋಟಗಳಿಗೆ ಭೇಟಿ ನೀಡಿದ್ದೇವೆ. ಕೆಲ ಕಡೆಗಳಿಗೆ ಅವಕಾಶ ಸಿಗಲಿಲ್ಲ,” ಎಂದು ಸ್ಪಷ್ಟಪಡಿಸಿದರು. ರಾಜಕೀಯ ನಾಯಕರಿಂದ ಯಾವುದೇ ಕರೆ ಬಂದಿಲ್ಲ ಎಂದೂ ಹೇಳಿದರು.

ಇದಕ್ಕೆ ವಿರುದ್ಧವಾಗಿ ಜಗಳೂರು ಶಾಸಕ ದೇವೇಂದ್ರಪ್ಪ ಪ್ರತಿಕ್ರಿಯಿಸಿ, “ಪ್ರವಾಸದ ಜೊತೆಗೆ ಅಧ್ಯಯನವೂ ಮಾಡಿದ್ದೇವೆ. ಹೈನುಗಾರಿಕೆ, ಕಾನೂನು ಹಾಗೂ ಅಲ್ಲಿನ ವ್ಯವಸ್ಥೆಗಳ ಕುರಿತು ತಿಳಿದುಕೊಂಡಿದ್ದೇವೆ. ಆ ದೇಶಗಳ ಕೆಲವು ಮಾದರಿಗಳನ್ನು ನಮ್ಮ ಕ್ಷೇತ್ರಗಳಲ್ಲಿ ಅಳವಡಿಸಿಕೊಳ್ಳುವ ಅಗತ್ಯವಿದೆ,” ಎಂದು ಹೇಳಿದರು. ರಾಜಕೀಯ ಚರ್ಚೆ ಈ ಪ್ರವಾಸದೊಂದಿಗೆ ಯಾವುದೇ ಸಂಬಂಧ ಹೊಂದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಚಾಮರಾಜನಗರ ಶಾಸಕ ಪುಟ್ಟರಂಗಶೆಟ್ಟಿ ಕೂಡ ಮಾತನಾಡಿ, “ಹೈನುಗಾರಿಕೆ ಮತ್ತು ರಸ್ತೆ ವ್ಯವಸ್ಥೆಗಳನ್ನು ನೋಡಲು ಹೋಗಿದ್ದೆವು. ಸರ್ಕಾರಕ್ಕೆ ಉತ್ತಮ ರಸ್ತೆ ನಿರ್ಮಾಣದ ಬಗ್ಗೆ ಸಲಹೆ ನೀಡುತ್ತೇವೆ. ರಾಜಕೀಯ ಇಲ್ಲಿ ಬಂದ ಮೇಲೆ ಮಾಡುತ್ತೇವೆ, ವಿದೇಶದಲ್ಲಿ ಅಲ್ಲ,” ಎಂದು ತಿಳಿಸಿದರು.

ಒಟ್ಟಿನಲ್ಲಿ, ವಿದೇಶ ಪ್ರವಾಸದ ಉದ್ದೇಶ ಕುರಿತು ಶಾಸಕರಿಂದಲೇ ವಿಭಿನ್ನ ಹೇಳಿಕೆಗಳು ಹೊರಬಿದ್ದಿರುವುದು ಚರ್ಚೆಗೆ ಕಾರಣವಾಗಿದೆ.

ಮೈಸೂರು! ನಂಜನಗೂಡು ದೇವಸ್ಥಾನದ ದಾಸೋಹ ಭವನದ ಬಳಿ ಮಾಂಸಾಹಾರ ಸೇವನೆ!

ಮೈಸೂರು: ದಕ್ಷಿಣ ಕಾಶಿ ಎಂದೇ ಪ್ರಸಿದ್ಧಿಯಾದ ನಂಜನಗೂಡು ನಂಜುಂಡೇಶ್ವರ ದೇವಸ್ಥಾನದ ದಾಸೋಹ ಭವನದ ದ್ವಾರದ ಬಳಿ ಸ್ಥಳೀಯ ವ್ಯಾಪಾರಿಯೊಬ್ಬರು ಮಾಂಸಾಹಾರ ಸೇವಿಸಿರುವ ಘಟನೆ ಬೆಳಕಿಗೆ ಬಂದಿದೆ.

ಹೂವಿನ ವ್ಯಾಪಾರಿ ಪ್ರದೀಪ್ ಎಂಬಾತ ದೇವಸ್ಥಾನದ ಆವರಣದ ಸಮೀಪದಲ್ಲೇ ಮಾಂಸಾಹಾರ ಸೇವಿಸಿದ್ದಾನೆ ಎಂದು ತಿಳಿದುಬಂದಿದೆ. ಇದನ್ನು ಗಮನಿಸಿದ ಭದ್ರತಾ ಸಿಬ್ಬಂದಿ ತಕ್ಷಣವೇ ಆತನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಭದ್ರತಾ ಸಿಬ್ಬಂದಿ ಪ್ರದೀಪ್‌ಗೆ ತರಾಟೆ ತೆಗೆದುಕೊಂಡ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ಘಟನೆ ಕುರಿತಂತೆ ಸಾರ್ವಜನಿಕ ವಲಯದಲ್ಲಿ ಚರ್ಚೆ ನಡೆಯುತ್ತಿದೆ.

ಮಲ್ಪೆ ಮೀನುಗಾರರ ಮುಖಂಡನಿಗೆ ಚಾಕು ಇರಿತ: ಪ್ರೇಮ ಪ್ರಕರಣದ ರಾಜಿ ಪಂಚಾಯಿತಿ ವೇಳೆ ದುರಂತ!

ಉಡುಪಿ: ಪ್ರೇಮ ಪ್ರಕರಣದ ರಾಜಿ ಪಂಚಾಯ್ತಿ ವೇಳೆ ಮೀನುಗಾರರ ಮುಖಂಡನಿಗೆ ಚಾಕು ಇರಿದ ಘಟನೆ ಜಿಲ್ಲೆಯ ಮಲ್ಪೆಯಲ್ಲಿ ನಡೆದಿದೆ. ಮಂಜು ಕೊಳ ಯಾನೆ ಮಂಜುನಾಥ ಸಾಲಿಯಾನ್ ಗಾಯಗೊಂಡ ವ್ಯಕ್ತಿ ಎಂದು ಗುರುತಿಸಲಾಗಿದೆ.

ಮಲ್ಪೆ ಮೂಲದ ಯುವಕ ಹಾಗೂ ಪಡುಬಿದ್ರಿ ಪಲಿಮಾರು ಭಾಗದ ಯುವತಿಯ ಪ್ರೇಮ ಸಂಬಂಧದ ಕುರಿತು ಮಾತುಕತೆ ನಡೆಸಲು ಯುವತಿಯ ಕಡೆಯವರು ಬಂದಿದ್ದರು. ಈ ವೇಳೆ ಉಂಟಾದ ವಾಗ್ವಾದ ತೀವ್ರಗೊಂಡು ಮಂಜು ಕೊಳ ಅವರಿಗೆ ಚಾಕು ಇರಿಯಲಾಗಿದೆ ಎಂದು ತಿಳಿದುಬಂದಿದೆ.

ಗಾಯಾಳುವನ್ನು ತಕ್ಷಣ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಣಾಪಾಯ ಇಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಆರೋಪಿಗಳನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದು, ಸದ್ಯ ಅವರು ಪೊಲೀಸ್ ವಶದಲ್ಲಿದ್ದಾರೆ. ಘಟನೆ ಸಂಬಂಧ ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಥೈಲ್ಯಾಂಡ್ನಲ್ಲಿ ವಿಚಿತ್ರ ವಿವಾಹ: ಇಬ್ಬರು ವರರೊಂದಿಗೆ ಒಂದೇ ಮಂಟಪದಲ್ಲಿ ಮದುವೆ

0

ಥೈಲ್ಯಾಂಡ್‌ನಲ್ಲಿ ನಡೆದ ಒಂದು ವಿಶಿಷ್ಟ ವಿವಾಹ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ.

37 ವರ್ಷದ ಥಾಯ್ ಮಹಿಳೆ ಡುವಾಂಗ್ಡುವಾನ್ ಕೆಟ್ಸಾರೊ ಎಂಬವರು ಆಸ್ಟ್ರಿಯಾದ ಇಬ್ಬರು ಪುರುಷರನ್ನು ಒಂದೇ ಮಂಟಪದಲ್ಲಿ ವಿವಾಹವಾಗಿದ್ದಾರೆ. ಈ ಅಸಾಮಾನ್ಯ ಮದುವೆ ಕುತೂಹಲದ ಜೊತೆಗೆ ಹಲವು ಪ್ರಶ್ನೆಗಳನ್ನೂ ಹುಟ್ಟುಹಾಕಿದೆ.

ಪ್ರವಾಸೋದ್ಯಮಕ್ಕೆ ಪ್ರಸಿದ್ಧಿಯಾದ ಕರಾವಳಿ ನಗರ ಪಟ್ಟಾಯದಲ್ಲಿ ಕೆಲಸ ಮಾಡುತ್ತಿದ್ದಾಗ ಡುವಾಂಗ್ಡುವಾನ್ ಮೊದಲಿಗೆ ಆಸ್ಟ್ರಿಯಾದ ನಿವೃತ್ತ ಪೊಲೀಸ್ ಅಧಿಕಾರಿ ರೋಮನ್ ಅವರನ್ನು ಭೇಟಿಯಾದರು. ಐದು ವರ್ಷಗಳ ಕಾಲ ಇಬ್ಬರೂ ಒಟ್ಟಿಗೆ ವಾಸಿಸುತ್ತಿದ್ದರು. ನಂತರ ಆಕೆ ಆಸ್ಟ್ರಿಯಾದ ಮತ್ತೊಬ್ಬ ಪೊಲೀಸ್ ಅಧಿಕಾರಿ ಮ್ಯಾಕಿಯನ್ನು ಪರಿಚಯಿಸಿಕೊಂಡಳು. ಈ ವಿಷಯವನ್ನು ರೋಮನ್‌ಗೆ ತಿಳಿಸಿದರೂ, ಮೂವರೂ ಜಗಳವಾಡದೇ ಪರಸ್ಪರ ಒಪ್ಪಿಗೆ ನೀಡಿ ಒಟ್ಟಿಗೆ ಜೀವನ ನಡೆಸಲು ನಿರ್ಧರಿಸಿದರು.

ಮದುವೆ ಕುರಿತು ನಿರ್ಧಾರ ಕೈಗೊಳ್ಳುವ ಮೊದಲು ಡುವಾಂಗ್ಡುವಾನ್ ತನ್ನ ಕುಟುಂಬದವರೊಂದಿಗೆ ಮಾತುಕತೆ ನಡೆಸಿದ್ದಳು. ಮೂರು ಹೆಣ್ಣುಮಕ್ಕಳ ತಾಯಿ ಆಗಿರುವ ಆಕೆ, ಹಿಂದಿನ ವಿವಾಹದಿಂದ ಇಬ್ಬರು ಮಕ್ಕಳನ್ನು ಹೊಂದಿದ್ದಾಳೆ. ಮೊದಲ ಮದುವೆ ಮುರಿದುಬಿದ್ದ ಬಳಿಕ ಕುಟುಂಬವನ್ನು ಪೋಷಿಸಲು ಪಟ್ಟಾಯದಲ್ಲಿ ಕೆಲಸ ಪ್ರಾರಂಭಿಸಿದ್ದಳು. ಈ ಅವಧಿಯಲ್ಲಿ ಇಬ್ಬರೂ ಪುರುಷರು ಕುಟುಂಬದ ಜವಾಬ್ದಾರಿಗಳನ್ನು ಹಂಚಿಕೊಂಡು ನೆರವಾಗಿದ್ದಾರೆ ಎಂದು ತಿಳಿದುಬಂದಿದೆ.

ಇಬ್ಬರೂ ಸಂಗಾತಿಗಳ ಬದ್ಧತೆ ಮತ್ತು ಬೆಂಬಲವನ್ನು ಕಂಡ ಬಳಿಕ ಆಕೆಯ ಸಂಬಂಧಿಕರೂ ಈ ಸಂಬಂಧವನ್ನು ಒಪ್ಪಿಕೊಂಡಿದ್ದಾರೆ. ಮದುವೆ ಸಮಾರಂಭ ಸಣ್ಣ ಹಾಗೂ ಆತ್ಮೀಯ ವಾತಾವರಣದಲ್ಲಿ ನಡೆಯಿತು. ಸಾಂಪ್ರದಾಯಿಕ ಥಾಯ್ ಮದುವೆಯ ವಿಧಿವಿಧಾನಗಳನ್ನೂ ಈ ಕಾರ್ಯಕ್ರಮದಲ್ಲಿ ಪಾಲಿಸಲಾಯಿತು.

ವರದಿಗಳ ಪ್ರಕಾರ, ಇಬ್ಬರು ವರರು ತಲಾ ಒಂದು ಮಿಲಿಯನ್ ಥಾಯ್ ಬಹ್ತ್ ವಧುದಕ್ಷಿಣೆಯಾಗಿ ನೀಡಿದ್ದಾರೆ. ಇದು ಒಟ್ಟು ಸುಮಾರು 29 ಲಕ್ಷ ರೂಪಾಯಿಗಳಿಗೆ ಸಮಾನವಾಗುತ್ತದೆ. ವಿಚಿತ್ರ ಸ್ವರೂಪದ ಈ ವಿವಾಹ ಇದೀಗ ಅಂತರರಾಷ್ಟ್ರೀಯ ಮಟ್ಟದಲ್ಲೂ ಚರ್ಚೆಗೆ ಗ್ರಾಸವಾಗಿದೆ.

ಬಿ-ರಿಪೋರ್ಟ್‌ಗೆ ಲಕ್ಷದ ಲಂಚ! 70 ಸಾವಿರ ಸ್ವೀಕರಿಸುವಾಗ ಪಿಎಸ್ಐ–ಎಎಸ್‌ಐ ಲೋಕಾಯುಕ್ತ ಬಲೆಗೆ!

ಚಿಕ್ಕಬಳ್ಳಾಪುರ: ಪ್ರಕರಣವೊಂದರಲ್ಲಿ ‘ಬಿ-ರಿಪೋರ್ಟ್’ ಸಲ್ಲಿಸಲು ರೂ.1 ಲಕ್ಷ ಲಂಚ ಬೇಡಿಕೆ ಇಟ್ಟಿದ್ದ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್ಐ ಶರಣಪ್ಪ ಹಾಗೂ ಎಎಸ್‌ಐ ವೆಂಕಟೇಶಪ್ಪ ಅವರು ಕರ್ನಾಟಕ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಮೊಟ್ಲೂರು ಗ್ರಾಮದ ರಘು ಎಂಬಾತನ ವಿರುದ್ಧ ದಾಖಲಾಗಿದ್ದ ಪ್ರಕರಣದಲ್ಲಿ ‘ಬಿ-ರಿಪೋರ್ಟ್’ ಸಲ್ಲಿಸಿ ಪ್ರಕರಣವನ್ನು ಮುಚ್ಚುವ ಭರವಸೆ ನೀಡಿ ಇಬ್ಬರು ಪೊಲೀಸರು ರೂ.1 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರೆಂದು ತಿಳಿದು ಬಂದಿದೆ. ಮಾತುಕತೆ ಬಳಿಕ ರೂ.70 ಸಾವಿರಕ್ಕೆ ಒಪ್ಪಂದವಾಗಿದ್ದು, ಅದರಂತೆ ಕನ್ನಡ ಭವನದ ಸಮೀಪ ಹಣ ಹಸ್ತಾಂತರಿಸುವ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದರು.

ಹಣ ಸ್ವೀಕರಿಸುವ ಕ್ಷಣದಲ್ಲೇ ಆರೋಪಿಗಳನ್ನು ವಶಕ್ಕೆ ಪಡೆದು, ಸ್ಥಳದಲ್ಲೇ ಮಹಜರು ನಡೆಸಲಾಗಿದೆ. ಲಂಚದ ಹಣವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ಚಿಕ್ಕಬಳ್ಳಾಪುರ ಲೋಕಾಯುಕ್ತ ಪೊಲೀಸರ ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಅಧಿಕಾರ ದುರುಪಯೋಗ ಹಾಗೂ ಭ್ರಷ್ಟಾಚಾರದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ.

ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿ ಮುಂದಿನ ತನಿಖೆ ಮುಂದುವರಿಸಲಾಗಿದೆ.

ನವ ದಂಪತಿಗಳು ನಡೆ-ನುಡಿಗಳ ಪರಿಶುದ್ಧತೆಯೊಂದಿಗೆ ಬಾಳಿ: ತೊಂಟದಾರ್ಯ ಶ್ರೀ

0

ವಿಜಯಸಾಕ್ಷಿ ಸುದ್ದಿ, ಗದಗ: ಯಾವ ವ್ಯಕ್ತಿ ತನ್ನನ್ನು ತಾನು ಸಮಾಜಕ್ಕೆ ಅರ್ಪಿಸಿಕೊಳ್ಳುತ್ತಾನೋ ಅಂತಹ ಮಹಾನ್ ವ್ಯಕ್ತಿಗಳನ್ನು ಸಮಾಜವು ಸದಾ ಸ್ಮರಿಸುತ್ತದೆ. ಅಂತಹ ಮಹನೀಯರ ಸಾಲಿನಲ್ಲಿ ಪಂ. ಪುಟ್ಟರಾಜ ಕವಿಗವಾಯಿಗಳು ಪ್ರಮುಖರಾಗಿದ್ದಾರೆ ಎಂದು ತೋಂಟದಾರ್ಯ ಶ್ರೀಮಠದ ಪೂಜ್ಯಶ್ರೀ ಡಾ. ಸಿದ್ದರಾಮ ಮಹಾಸ್ವಾಮಿಗಳು ಹೇಳಿದರು.

ಅವರು ನಗರದ ಎಪಿಎಂಸಿ ಯಾರ್ಡ್‌ನಲ್ಲಿ ಪಂ. ಪುಟ್ಟರಾಜ ಕವಿ ಗವಾಯಿಗಳವರ 112ನೇ ಜಯಂತಿ ಮತ್ತು ಸರ್ವಧರ್ಮ ಸಾಮೂಹಿಕ ವಿವಾಹ ಮಹೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು.

ಕಳೆದ 12 ವರ್ಷಗಳಿಂದ ಪೀರಸಾಬ ಕೌತಾಳ ದಂಪತಿಗಳು ಕೆ.ಎಚ್. ಪಾಟೀಲ ಅಭಿಮಾನಿ ಬಳಗದ ವತಿಯಿಂದ ಪಂ. ಪುಟ್ಟರಾಜ ಗವಾಯಿಗಳವರ ಜಯಂತಿ ಹಾಗೂ ಸರ್ವಧರ್ಮೀಯರ ಸಾಮೂಹಿಕ ವಿವಾಹವನ್ನು ಅರ್ಥವಂತಿಕೆಯಿಂದ ಆಚರಿಸಿಕೊಂಡು ಬರುತ್ತಿದ್ದಾರೆ. ನೂತನ ದಂಪತಿಗಳು ಬಸವಾದಿ ಶರಣರಂತೆ ನಡೆ-ನುಡಿಗಳನ್ನು ಪರಿಶುದ್ಧವಾಗಿಟ್ಟುಕೊಂಡು ಪ್ರೀತಿ, ವಿಶ್ವಾಸದಿಂದ ಬದುಕನ್ನು ಸಾಗಿಸಬೇಕು ಎಂದು ಹೇಳಿದರು.

ಕಪೋತಗಿರಿ ನಂದಿವೇರಿ ಶ್ರೀಮಠದ ಪೂಜ್ಯಶ್ರೀ ಶಿವಕುಮಾರ ಸ್ವಾಮಿಗಳು ಮಾತನಾಡಿ, ಹಿಂದೆ ಅವಿಭಕ್ತ ಕುಟುಂಬಗಳಲ್ಲಿ ಭಯಭಕ್ತಿ ಇದ್ದುದರಿಂದ ಅವರು ಗೌರವಯುತವಾಗಿ ಜೀವನ ನಡೆಸುತ್ತಿದ್ದರು. ಇಂದು ಹಿರಿಯರು ಇಲ್ಲದೆ, ಗಂಡ-ಹೆಂಡತಿ ಮಾತ್ರ ಇರಲು ಬಯಸಿ ಪರಸ್ಪರ ಅರಿತುಕೊಳ್ಳದೆ ಇರುವುದರಿಂದ ವಿಚ್ಛೇದನಗಳು ಹೆಚ್ಚಾಗಲು ಕಾರಣವಾಗಿದೆ ಎಂದು ಹೇಳಿದರು.

ಅಡ್ನೂರ-ರಾಜೂರ-ಗದಗ ದಾಸೋಹಮಠದ ಪೂಜ್ಯಶ್ರೀ ಅಭಿನವ ಪಂಚಾಕ್ಷರ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ, ಪಂ. ಪುಟ್ಟರಾಜ ಗವಾಯಿಗಳು ಅಂಧ-ಅನಾಥರಿಗಾಗಿ ತಮ್ಮ ಇಡೀ ಜೀವನವನ್ನು ಅರ್ಪಿಸಿ ಅವರ ಭಿಕ್ಷೆ ಪಾತ್ರೆ ಬಿಡಿಸಿ ಅವರಿಗೆ ಅಕ್ಷಯ ಪಾತ್ರೆ ನೀಡಿ ಮಹಾನ್ ಯೋಗಿಯಾಗಿದ್ದಾರೆ ಎಂದು ಹೇಳಿದರು.

ವೇದಿಕೆ ಮೇಲೆ ತುಮಕೂರಿನ ನೋಣವಿನಕೇರಿ ಕಾಡಸಿದ್ದೇಶ್ವರ ಶ್ರೀಮಠದ ಅಭಿನವ ಕಾಡಸಿದ್ದೇಶ್ವರ ಸ್ವಾಮಿಗಳು, ಮಲ್ಲಸಮುದ್ರದ ಓಂಕಾರೇಶ್ವರ ಶ್ರೀಮಠದ ಪೂಜ್ಯಶ್ರೀ ಪಕ್ಕಿರೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ವೀರೇಶ್ವರ ಪುಣ್ಯಾಶ್ರಮದ ಪೂಜ್ಯಶ್ರೀ ಕಲ್ಲಯ್ಯಜ್ಜನವರು, ಶರಣೆ ನೀಲಮ್ಮ ತಾಯಿಯವರು, ಲಿಂಗಸೂರ ಮಾಣಿಕೇಶ್ವರಿ ಮಠದ ಉಜ್ಜಯನಿ ನಂದೀಶ್ವರಿ ಅಮ್ಮನವರು, ಮೌಲಾನಾ ಇನಾಯತವುಲ್ಲಾ ಫೀರಜಾದೆ, ಯುವ ಮುಖಂಡ ಸಚಿನ್ ಪಾಟೀಲ, ಕೆ.ಎಚ್. ಪಾಟೀಲ ಅಭಿಮಾನಿ ಬಳಗದ ಅಧ್ಯಕ್ಷ ಪೀರಸಾಬ ಕೌತಾಳ ಮುಂತಾದವರು ಉಪಸ್ಥಿತರಿದ್ದರು.

ವೀರೇಶ್ವರ ಪುಣ್ಯಾಶ್ರಮದ ವ್ಯವಸ್ಥಾಪಕರಾದ ಹೇಮರಾಜ ಶಾಸ್ತ್ರಿಗಳು ಪ್ರಾಸ್ತಾವಿಕವಾಗಿ ಮಾತನಾಡಿದರು. ದಿಯಾ ಪೀರಸಾಬ ಕೌತಾಳ ಪ್ರಾರ್ಥಿಸಿದರು. ಜೋಹರಾ ಪೀರಸಾಬ ಕೌತಾಳ ಗವಾಯಿಗಳವರ ಗದ್ದುಗೆಗೆ ಪುಷ್ಪಸೇವೆ ಸಲ್ಲಿಸಿದರು. ಪತ್ರಕರ್ತರಾದ ಆನಂದಯ್ಯ ವಿರಕ್ತಮಠ ಕಾರ್ಯಕ್ರಮ ನಿರೂಪಿಸಿದರು.

ಇದಕ್ಕೂ ಮುನ್ನ ವೀರೇಶ್ವರ ಪುಣ್ಯಾಶ್ರಮದಿಂದ 1012 ಕುಂಭೋತ್ಸವ ಮೆರವಣಿಗೆಗೆ ಜೋಹರಾ ಕೌತಾಳ ಅವರು ಚಾಲನೆ ನೀಡಿದರು.

ಯುವ ಮುಖಂಡ ಕೃಷ್ಣಗೌಡ ಪಾಟೀಲ ಮಾತನಾಡಿ, ಪಂ. ಪುಟ್ಟರಾಜ ಕವಿ ಗವಾಯಿಗಳು ಅಂಧರಿಗೆ ಕಣ್ಣಾಗಿ ಬದುಕಿ, ನಮ್ಮೆಲ್ಲರಿಗೂ ಪ್ರೇರಣಾ ದೀಪವಾಗಿದ್ದಾರೆ. ಇಂತಹ ಪವಿತ್ರವಾದ ದಿನದಲ್ಲಿ ಕೆ.ಎಚ್. ಪಾಟೀಲ ಅಭಿಮಾನಿ ಬಳಗದಿಂದ ಸತತ 12 ವರ್ಷಗಳಿಂದ ಪುಟ್ಟರಾಜ ಗವಾಯಿಗಳವರ ಜಯಂತಿ ಆಚರಣೆ ಮತ್ತು ಸಾಮೂಹಿಕ ವಿವಾಹ ಮಾಡುತ್ತ ಬಂದಿರುವ ಪೀರಸಾಬ ಕೌತಾಳ ದಂಪತಿಗಳಿಗೆ ಈಗ ಇದು ಕಾರ್ಯವಾಗಿ ಉಳಿದಿಲ್ಲ, ಸಂಸ್ಕಾರವಾಗಿ ಬೆಳೆದು ಬಂದಿದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಪಂ. ಪುಟ್ಟರಾಜ ಗವಾಯಿಗಳವರು ರಚಿಸಿದ ವೀರಭದ್ರೇಶ್ವರ ಪುರಾಣ ಗ್ರಂಥವನ್ನು ಲೋಕಾರ್ಪಣೆ ಮಾಡಲಾಯಿತು. ಕಲ್ಲಯ್ಯಜ್ಜನವರಿಗೆ 3067ನೇ ತುಲಾಭಾರ ಸೇವೆ ಸಲ್ಲಿಸಲಾಯಿತು. 112 ಕೆ.ಜಿ ತೂಕದ ಕೇಕ್‌ನ್ನು ಕತ್ತರಿಸಲಾಯಿತು. 19 ಜೋಡಿಗಳು ನೂತನ ದಾಂಪತ್ಯಕ್ಕೆ ಕಾಲಿಟ್ಟರು. ದಿ. ಕೆ.ಎಚ್. ಪಾಟೀಲ ಪ್ರಶಸ್ತಿಯನ್ನು ಕೊಪ್ಪಳದ ಸಂಗೀತ ಕಲಾವಿದರಾದ ಸದಾಶಿವ ಪಾಟೀಲ ಅವರಿಗೆ ನೀಡಲಾಯಿತು. ಧಾರವಾಡದ ನ್ಯಾಯವಾದಿ ಗುರು ಹಿರೇಮಠ, ಗದಗ ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ಡಾ. ಬಸವರಾಜ ಬಳ್ಳಾರಿ, ಪತ್ರಕರ್ತರಾದ ರಘೋತ್ತಮ ಕೊಪ್ಪರ, ವಿಕಸಿತ ಯುವ ಸಂಸತ್ ಮಹೋತ್ಸವದಲ್ಲಿ ರಾಜ್ಯವನ್ನು ಪ್ರತಿನಿಧಿಸಿದ ತೋಂಟದಾರ್ಯ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿ ಬಿ. ಮಾನ್ಯ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.

ಬದ್ಧತೆ, ಪ್ರಾಮಾಣಿಕತೆಯಿಂದ ಸೇವೆ ಮಾಡುವೆ: ಮೋಹನ ಲಿಂಬಿಕಾಯಿ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಶ್ಚಿಮ ಪದವೀಧರರ ಕ್ಷೇತ್ರ ಧಾರವಾಡ, ಹಾವೇರಿ, ಗದಗ, ಕಾರವಾರ ಜಿಲ್ಲೆಗಳನ್ನೊಳಗೊಂಡ ವಿಶಾಲ ಕ್ಷೇತ್ರವಾಗಿದ್ದು, ಈ ಬಾರಿ ಪದವೀಧರ ಕ್ಷೇತ್ರದಿಂದ ಸ್ಪರ್ಧಿಸಲು ಕಾಂಗ್ರೆಸ್ ಪಕ್ಷ ನನಗೆ ಅವಕಾಶ ನೀಡಿದ್ದು, ಬದ್ಧತೆ, ಪ್ರಾಮಾಣಿಕತೆಯಿಂದ ಜನರ ಸೇವೆ ಮಾಡುವ ಹಾಗೂ ಪದವೀಧರರ ದ್ವನಿಯಾಗಿ ಕಾರ್ಯ ಮಾಡುವ ಉದ್ದೇಶವನ್ನು ಹೊಂದಿದ್ದೇನೆ ಎಂದು ಪಶ್ಚಿಮ ಪದವೀಧರ ಕ್ಷೇತ್ರದ ಕಾಂಗ್ರೆಸ್ ಪಕ್ಷದ ನಿಯೋಜಿತ ಅಭ್ಯರ್ಥಿ ಮೋಹನ ಲಿಂಬಿಕಾಯಿ ಹೇಳಿದರು.

ಅವರು ಪಟ್ಟಣದ ತಾಯಿ ಪಾರ್ವತಿ ಮಕ್ಕಳ ಬಳಗದ ಸಭಾಂಗಣದಲ್ಲಿ ಲಕ್ಷ್ಮೇಶ್ವರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಮುಂಬರುವ ಪಶ್ಚಿಮ ಪದವೀಧರ ವಿಧಾನ ಪರಿಷತ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪರ ನಡೆದ ಚುನಾವಣಾ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ಈ ಕ್ಷೇತ್ರದಲ್ಲಿ ಈಗಾಗಲೇ 88 ಸಾವಿರಕ್ಕೂ ಅಧಿಕ ಪದವೀಧರರು ನೋಂದಣಿಯಾಗಿದ್ದು, 1984ರಿಂದ 2008ರವರೆಗೆ ಈಗಿನ ಸಚಿವ ಡಾ. ಎಚ್.ಕೆ. ಪಾಟೀಲ ಪ್ರತಿನಿಧಿಸುತ್ತಾ ಬಂದಿದ್ದರು. ಅವರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ನಾನು ಸಹ ಕ್ಷೇತ್ರದಲ್ಲಿ ಉತ್ತಮ ಕಾರ್ಯವನ್ನು ಮಾಡುವ ಉದ್ದೇಶವನ್ನು ಹೊಂದಿದ್ದು, ಬದ್ಧತೆ, ಪ್ರಾಮಾಣಿಕತೆಯಿಂದ ಜನರ ಸೇವೆ ಮಾಡಿದ್ದು, ಪದವೀಧರರ ಕುಂದು-ಕೊರತೆಗಳನ್ನು ಸರ್ಕಾರ ಮಟ್ಟದಲ್ಲಿ ಪ್ರಶ್ನಿಸುವ ನಿಟ್ಟಿನಲ್ಲಿ ವಿಶೇಷವಾಗಿ ಕಾರ್ಯ ಮಾಡಿದ್ದು, ಮುಂದಿನ ದಿನಗಳಲ್ಲಿಯೂ ಈ ಕಾರ್ಯವನ್ನು ಮುಂದುವರೆಸುತ್ತೇನೆ. ಮುಂಬರುವ ಪಶ್ಚಿಮ ಪದವೀಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದು, ಎಲ್ಲರೂ ಮತ ನೀಡಿ ಆಶೀರ್ವಾದಿಸಿದರೆ, ಎಲ್ಲರ ಪ್ರೀತಿ ವಿಶ್ವಾಸ, ನಂಬಿಕೆಗೆ ದ್ರೋಹ ಬಗೆಯದಂತೆ ಕೆಲಸ ನಿರ್ವಹಿಸುವುದಾಗಿ ಹೇಳಿದರು.

ಮಾಜಿ ಶಾಸಕರುಗಳಾದ ರಾಮಣ್ಣ ಲಮಾಣಿ, ರಾಮಕೃಷ್ಣ ದೊಡ್ಡಮನಿ, ಜಿ.ಪಂ ಮಾಜಿ ಅಧ್ಯಕ್ಷ ಎಸ್.ಪಿ. ಬಳಿಗಾರ ಮಾತನಾಡಿ, ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್ ಹೆಚ್ಚು ಮತಗಳನ್ನು ಪಡೆದು ಕ್ರಿಯಾಶೀಲ ವ್ಯಕ್ತಿತ್ವದ ಮೋಹನ ಲಿಂಬಿಕಾಯಿ ಆಯ್ಕೆಯಾಗುವಂತೆ ಎಲ್ಲರೂ ವಿಶೇಷವಾಗಿ ಕಾರ್ಯನಿರ್ವಹಿಸುತ್ತೇವೆ ಎಂದರು.

ಹಾವೇರಿ ಲೋಕಸಭಾ ಕ್ಷೇತ್ರದ ಯುವ ಮುಖಂಡ ಆನಂದಸ್ವಾಮಿ ಗಡ್ಡದೇವರಮಠ ಮಾತನಾಡಿ, ಪಶ್ಚಿಮ ಪದವೀಧರ ಚುನಾವಣೆ ಒಂದು ರೀತಿ ಮಾರ್ಗಸೂಚಿ ಚುನಾವಣೆ ಇದ್ದಂತೆ. ಈ ಚುನಾವಣೆ ವ್ಯಕ್ತಿತ್ವದ ಮೇಲೆ ಅವಲಂಬಿತವಾಗಿದ್ದು, ಪದವೀಧರರ ಮತಗಳು ಪೊಳ್ಳು ಭರವಸೆಗಳಿಗೆ ಬಲಿಯಾಗದೆ ಅರ್ಹ ಮತ್ತು ಜನಮುಖಿ ವ್ಯಕ್ತಿ ಮೋಹನ್ ಲಿಂಬಿಕಾಯಿಯವರಿಗೆ ನೀಡಲು ಮುಂದಾಗಬೇಕು ಎಂದು ಮನವಿ ಮಾಡಿದರು.

ಸಭೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿ.ಆರ್. ಕೊಪ್ಪದ, ನಗರ ಘಟಕ ಅಧ್ಯಕ್ಷ ಅಮರೇಶ ತೆಂಬದಮನಿ, ಸೋಮಣ್ಣ ಬೆಟಗೇರಿ, ಎಂ.ಎನ್. ಗದಗ, ಸುರೇಶ ನಾವಿ, ಗುರುನಾಥ ದಾನಪ್ಪನವರ, ಮಹೇಶ ಹೊಗೆಸೊಪ್ಪಿನ, ಶರಣು ಗೋಡಿ, ರಂಜನ್ ಪಾಟೀಲ, ಯಲ್ಲಪ್ಪ ತಳವಾರ, ವಿ.ಜಿ. ಪಡಗೇರಿ, ದೀಪಕ ಲಮಾಣಿ, ರಾಜು ಪಾಟೀಲ, ಆದಪ್ಪಗೌಡ್ರ ಪಾಟೀಲ, ಎಂ.ಆರ್. ಸೋಂಪೂರ, ಅಂದಾನಯ್ಯ ಕುರ್ತಕೋಟಿಮಠ, ಮಹೇಶ ಹಾರೋಗೇರಿ, ಎಸ್.ಕೆ. ಹವಾಲ್ದಾರ, ಡಿ.ಜೆ. ಮುಚ್ಚಾಲೆ, ಸತೀಶ ಪಾಟೀಲ, ಪದ್ಮರಾಜ ಪಾಟೀಲ, ಕಮತದ, ರಮೇಶ ಕಲಬುರ್ಗಿ ಸೇರಿದಂತೆ ಅನೇಕರು ಹಾಜರಿದ್ದರು. ಕಿರಣ ನವಲೆ ಕಾರ್ಯಕ್ರಮ ನಿರೂಪಿಸಿದರು.

ಹಿರಿಯ ಮುಖಂಡ ಹಾಗೂ ನಿಗಮ ಮಂಡಳಿ ಅಧ್ಯಕ್ಷ ನಂಜಯ್ಯನಮಠ ಮಾತನಾಡಿ, ಮೋಹನ ಲಿಂಬಿಕಾಯಿಯವರು ಕ್ರಿಯಾಶೀಲ ವ್ಯಕ್ತಿಯಾಗಿದ್ದಾರೆ. ಸಾಮಾಜಿಕ ಕಳಕಳಿ, ಸಮಾಜದ ಬಗ್ಗೆ ಚಿಂತನೆಗಳ ಬಗ್ಗೆ ಕಾಳಜಿ ಹೊಂದಿರುವ ಅಭ್ಯರ್ಥಿಯಾಗಿದ್ದು, ಇವರ ಆಯ್ಕೆ ಪದವೀಧರರಿಗೆ ದೊಡ್ಡ ದ್ವನಿಯಾಗಲಿದೆ ಎಂದರು.

ಬಂಜಾರ ಸಮುದಾಯದ ಚಿಂತನೆ ಅನುಕರಣೀಯ: ಮಿಥುನ್ ಜಿ. ಪಾಟೀಲ

0

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಬಂಜಾರ ಜನಾಂಗವು ತನ್ನ ವಿಶಿಷ್ಟ ಭಾಷೆ ಹಾಗೂ ಸಂಸ್ಕೃತಿಯಿಂದ ಶ್ರೀಮಂತವಾಗಿದೆ. ಸದಾ ಒಳಿತನ್ನು ಬಯಸುವ ಬಂಜಾರ ಸಮುದಾಯದ ಚಿಂತನೆ ಅನುಕರಣೀಯ ಎಂದು ರೋಣ ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಮಿಥುನ್ ಜಿ. ಪಾಟೀಲ ಹೇಳಿದರು.

ಪಟ್ಟಣದ ಬಂಜಾರ ಸಮಾಜದ ವತಿಯಿಂದ ಜಕ್ಕಲಿ ರಸ್ತೆಯ ಆಶ್ರಯ ಕಾಲೋನಿಯಲ್ಲಿ ನಡೆದ ಸಂತ ಶ್ರೀ ಸೇವಾಲಾಲ್ ಮಾಹಾರಾಜರ 287ನೇ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಲಂಬಾಣಿ ಸಮಾಜದವರು ಶ್ರಮಜೀವಿ, ಪ್ರಾಮಾಣಿಕತೆಗೆ ಹೆಸರುವಾಸಿಯಾದವರು. ಸಂತ ಸೇವಾಲಾಲ್‌ರು ಸಮಾಜಕ್ಕೆ ನೀಡಿದ ಕೊಡುಗೆ ಅಪಾರ. ನರೇಗಲ್ಲ ಪಟ್ಟಣದ ಬಂಜಾರ ಜನಾಂಗದ ಅಭಿವೃದ್ಧಿಗಾಗಿ ಶಾಸಕರ ಗಮನಕ್ಕೆ ತಂದು ಅಗತ್ಯತೆಗಳ ಪೂರೈಕೆಗೆ ಪ್ರಯತ್ನಿಸುತ್ತೇನೆ ಎಂದರು.

ರಾಜ್ಯ ಯುವ ಕಾಂಗ್ರೆಸ್ ಘಟಕದ ಪ್ರಧಾನ ಕಾರ್ಯದರ್ಶಿ ಅಕ್ಷಯ ಐ. ಪಾಟೀಲ ಮಾತನಾಡಿ, ಈ ಸಮುದಾಯದ ಸಂಸ್ಕೃತಿ ಶ್ರೀಮಂತವಾಗಿದೆ. ಇಂದಿಗೂ ತಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸಿಕೊಂಡು ಸಾಗುತ್ತಿರುವ ಈ ಸಮುದಾಯದವರು ವಿದ್ಯಾವಂತರಾಗಿ ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದರು.

ಆಶೀರ್ವಚನ ನೀಡಿದ ನರೇಗಲ್ಲ ಹಿರೇಮಠದ ಮಲ್ಲಿಕಾರ್ಜುನ ಶಿವಾಚಾರ್ಯರು, ಸೇವಾಲಾಲ್ ಮಹಾರಾಜರು ಈ ಸಮುದಾಯವನ್ನು ಸತ್ಯದ ಹಾದಿಯಲ್ಲಿ ಮುನ್ನಡೆಸಿದರು. ಅವರು ಸಮಾಜದ ಏಳಿಗೆಗೆ ನಿಸ್ವಾರ್ಥ ಸೇವೆ ಸಲ್ಲಿಸಿದ ಮಹಾನ್ ಸಂತರು. ಬಡವರಿಗಾಗಿ, ಸಮಾಜದ ಹಿತಕ್ಕಾಗಿ ನಿಸ್ವಾರ್ಥ ಸೇವೆ ಸಲ್ಲಿಸಿದ ದಾರ್ಶನಿಕರು ಎಂದರು.

ಕೊಡಗಲಿಯ ಸಂತೋಷ ಮಹಾರಾಜ್ ಮತ್ತು ನಿವೃತ್ತ ಶಿಕ್ಷಕ ತಾರಾಸಿಂಗ್ ರಾಠೋಡ ವಿಶ್ವ ಶಾಂತಿಗಾಗಿ ಭೋಗ್ ಸಮರ್ಪಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಉಪನ್ಯಾಸ ನೀಡಿದರು. ವಿವಿಧ ಕ್ಷೇತ್ರದ ಸಾಧಕರನ್ನು, ದಾನಿಗಳನ್ನು ಸನ್ಮಾನಿಸಲಾಯಿತು. ಮುಖಂಡರಾದ ನಿಂಗನಗೌಡ ಲಕ್ಕನಗೌಡ್ರ, ವೀರನಗೌಡ ಪಾಟೀಲ, ಅಲ್ಲಾಬಕ್ಷಿ ನದಾಫ್, ಮೈಲಾರಪ್ಪ ಚಳ್ಳಮರದ, ಹನಮಂತಪ್ಪ ಅಬ್ಬಿಗೇರಿ, ಕಳಕನಗೌಡ ಪೊಲೀಸ್ ಪಾಟೀಲ, ಮೃತ್ಯುಂಜಯ ಧಡೇಸೂರಮಠ, ಉದ್ಯಮಿ ಬಸವರಾಜ ವಂಕಲಕುಂಟಿ, ಕುಮಾರಸ್ವಾಮಿ ಕೋರಧಾನ್ಯಮಠ, ದಾದಾಸಾಬ್ ನದಾಫ್, ಗುಡದಪ್ಪ ಗೋಡಿ, ಸದ್ದಾಂ ನಶೇಖಾನ್, ದೇವಕ್ಕ ರಾಠೋಡ ಇದ್ದರು. ಚಂದ್ರು ರಾಠೋಡ ನಿರ್ವಹಿಸಿದರು.

ಕೊಪ್ಪಳ ಬಹದ್ದೂರಬಂಡಾ ಬಂಜಾರ ಪೀಠದ ಗುರು ಗೋಸಾಯಿಬಾವ ಸ್ವಾಮೀಜಿ ಮಾತನಾಡಿ, ಬಂಜಾರ ಸಮುದಾಯದ ಪವಾಡ ಪುರುಷ ಸೇವಾಲಾಲ್ ಸಮಾಜದಲ್ಲಿನ ಮೌಢ್ಯತೆ ತೊಡೆದು ಹಾಕಿದ ಸಂತರು. ಪ್ರಕೃತಿಯಲ್ಲಿನ ಪ್ರಾಣಿ-ಪಕ್ಷಿಗಳೊಂದಿಗೆ ಸಂಭಾಷಣೆ ನಡೆಸುತ್ತಿದ್ದ ಅವರು ಸಕಲ ಜೀವಜಂತುಗಳಿಗೆ ಒಳ್ಳೆಯದಾಗಲಿ ಎಂದು ಬಯಸಿದರು ಎಂದರು.

ಭವಿಷ್ಯದ ಕಾರ್ಯಯೋಜನೆಗಳ ಕುರಿತು ಸಭೆ

0

ವಿಜಯಸಾಕ್ಷಿ ಸುದ್ದಿ, ಧಾರವಾಡ: ವಿದ್ಯಾಪೋಷಕ ವತಿಯಿಂದ ಧಾರವಾಡ ಮತ್ತು ಗದಗ ಜಿಲ್ಲೆಗಳ ಸ್ವಯಂಸೇವಕರ ಸಭೆಯನ್ನು ಧಾರವಾಡದ ಜೆಎಸ್‌ಎಸ್ ಕಾಲೇಜು ಆವರಣದಲ್ಲಿರುವ ಉತ್ಸವ ಹಾಲ್‌ನಲ್ಲಿ ಆಯೋಜಿಸಲಾಗಿತ್ತು.

ಕಾರ್ಯಕ್ರಮವನ್ನು ವಿದ್ಯಾಪೋಷಕದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಶರತ್ ಐರಣಿ ಉದ್ಘಾಟಿಸಿ ಮಾತನಾಡಿ, ಆರ್ಥಿಕವಾಗಿ ಹಿಂದುಳಿದ ಸಾವಿರಾರು ಬಡ ಪ್ರತಿಭಾನ್ವಿತ ವಿದ್ಯಾರ್ಥಿಗಳ ಬದುಕಿಗೆ ಆರ್ಥಿಕವಾಗಿ ಸಹಾಯವನ್ನು ನೀಡುವ ಮೂಲಕ ಬೆಳಕಾದ ಈ ಸಂಸ್ಥೆ 25 ವರ್ಷಗಳನ್ನು ನಿಸ್ವಾರ್ಥ ಸೇವೆಯಿಂದ ಪೂರೈಸಿದ್ದು, ಇದಕ್ಕೆ ಸಮಾಜದ ಭವಿಷ್ಯವನ್ನು ರೂಪಿಸಿದ ಸಾವಿರಾರು ಕೈಗಳ ಸಮೂಹದ ಪ್ರಯತ್ನವೇ ಕಾರಣವಾಗಿದೆ ಎಂದರು.

ವಿದ್ಯಾಪೋಷಕ ಸಂಸ್ಥೆಯ ಗೌರವ ಅಧ್ಯಕ್ಷರಾದ ಡಾ. ರವೀಂದ್ರ ಗುರುವಣ್ಣವರ ಸಂಸ್ಥೆಯ ಕಾರ್ಯಚಟುವಟಿಕೆಗಳು, ಭವಿಷ್ಯದ ಯೋಜನೆಗಳು ಹಾಗೂ ಸ್ವಯಂಸೇವಕರ ಪಾತ್ರದ ಕುರಿತು ಸಮಗ್ರ ಮಾಹಿತಿಯನ್ನು ನೀಡಿದರು. ಸಭೆಯಲ್ಲಿ ಎರಡೂ ಜಿಲ್ಲೆಗಳ ಸಮರ್ಪಿತ ಹಿರಿಯ ಸ್ವಯಂಸೇವಕರು, ದಾನಿಗಳು, ವಿದ್ಯಾಪೋಷಕದ ಮಾಜಿ ಸಿಬ್ಬಂದಿಗಳು ಹಾಗೂ ಯುವ (ಅಲ್ಯೂಮ್ನಿ) ಸದಸ್ಯರು ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಗದಗ ಜಿಲ್ಲೆಯಿಂದ ಡಾ. ಸಂಗಮೇಶ ಸಜ್ಜನರ, ಡಾ. ಪಿ.ಎಸ್. ಕಣವಿ, ಡಾ. ಪ್ರಭು ಗಂಜಿಹಾಳ, ಆರ್.ಕೆ. ಭಾಗವಾನ, ಪ್ರೊ. ಮಂಜುನಾಥ ಹೊಳ್ಳಿಯವರ, ಪ್ರೊ. ಎಚ್.ಎನ್. ಕಾಳೆ, ವಿಜಯಕುಮಾರ ಸಜ್ಜನರ, ಶಶಿಧರ ಮಳಲಿ ಮೊದಲಾದವರು ಭಾಗವಹಿಸಿದ್ದರು. ವಿದ್ಯಾಪೋಷಕ ಸಂಸ್ಥೆಯ ಫಾತಿಮಾ ಪಠಾಣ, ರತ್ನಾ ಹಿಪ್ಪರಗಿ, ಅನ್ನಪೂರ್ಣ ಯಡ್ರಾವಿ ಮತ್ತು ಸಿಬ್ಬಂದಿವರ್ಗ ಸಕ್ರಿಯವಾಗಿ ಪಾಲ್ಗೊಂಡಿದ್ದರು.

error: Content is protected !!