Home Blog

ಡಿಸಿ, ಎಡಿಸಿ ಡಿಜಿಟಲ್ ಸಹಿ ದುರುಪಯೋಗ! ಸಿಬ್ಬಂದಿ ಸೇರಿ 6 ಜನರ ಮೇಲೆ FIR

ಚಿತ್ರದುರ್ಗ: ಜಿಲ್ಲಾಧಿಕಾರಿ ಹಾಗೂ ಹೆಚ್ಚುವರಿ ಜಿಲ್ಲಾಧಿಕಾರಿ (ಎಡಿಸಿ) ಅವರ ಡಿಜಿಟಲ್ ಸಹಿಯನ್ನು ದುರುಪಯೋಗಪಡಿಸಿಕೊಂಡು ನಕಲಿ ಬಿಲ್ ಸಲ್ಲಿಸಿದ ಆರೋಪದಲ್ಲಿ ಚಿತ್ರದುರ್ಗ ನಗರಾಭಿವೃದ್ಧಿ ಕೋಶದ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಾಗಿದೆ.

ಈ ಸಂಬಂಧ ನಗರಾಭಿವೃದ್ಧಿ ಕೋಶದ ಐವರು ಸಿಬ್ಬಂದಿ ಸೇರಿ ಒಟ್ಟು ಆರು ಜನರ ವಿರುದ್ಧ ಚಿತ್ರದುರ್ಗ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.

ಜಿಲ್ಲಾ ನಗರಾಭಿವೃದ್ಧಿ ಕೋಶದ ಸಿಟಿ ಲೆವಲ್ ಟೆಕ್ನಿಕಲ್ ಸೆಲ್ ಸಿಬ್ಬಂದಿಗಳ ವೇತನದ ಹೆಸರಿನಲ್ಲಿ ಸುಮಾರು 15 ಲಕ್ಷ ರೂ. ಮೌಲ್ಯದ ನಕಲಿ ಬಿಲ್ ಸಲ್ಲಿಸಿರುವುದು ಬೆಳಕಿಗೆ ಬಂದಿದೆ. ಖಜಾನೆ ಇಲಾಖೆಯು ಡಿಜಿಟಲ್ ಸಹಿ ಬಗ್ಗೆ ಆಕ್ಷೇಪಣೆ ವ್ಯಕ್ತಪಡಿಸಿದ ಬಳಿಕ ಈ ಅಕ್ರಮ ಬಯಲಾಗಿದೆ.

ನಗರಾಭಿವೃದ್ಧಿ ಕೋಶದ ನಿರ್ದೇಶಕಿ ರೇಷ್ಮಾ ಹಾನಗಲ್ ನೀಡಿದ ದೂರಿನ ಮೇರೆಗೆ ಹೊರಗುತ್ತಿಗೆ ನೌಕರರಾದ ಸೈಯದ್ ಸಾದಿಕ್, ವಿನಯ್ ಶರ್ಮಾ, ವಿಜಯ್ ಕುಮಾರ್, ಬಸವರಾಜ, ಮೆಹಬೂಬ್ ಭಾಷಾ ಹಾಗೂ VMH ಎಂಟರ್‌ಪ್ರೈಸಸ್‌ನ ವೆಂಕಟೇಶ್ ವಿರುದ್ಧ ಪ್ರಕರಣ ದಾಖಲಾಗಿದೆ. ಪ್ರಕರಣ ಸಂಬಂಧ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಪ್ರಮುಖ ಆರೋಪಿ ಸೈಯದ್ ಸಾದಿಕ್ ಪರಾರಿಯಾಗಿದ್ದಾನೆ.

ಜಿಲ್ಲಾಧಿಕಾರಿ ಹಾಗೂ ಎಡಿಸಿ ಅವರ ಡಿಜಿಟಲ್ ಸಿಗ್ನೇಚರ್ ಸೆರ್ಟಿಫಿಕೆಟ್ (DSC) ಕೀ ಕಳವು ಮಾಡಿ ದುರುಪಯೋಗಪಡಿಸಿಕೊಂಡಿರುವ ಆರೋಪವೂ ಹೊರಬಂದಿದೆ. ಈ ಕುರಿತು ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಮಾಹಿತಿ ನೀಡಿ, ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಯುತ್ತಿದ್ದು ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.

ವೈರ್ ನಿಂದ ಕುತ್ತಿಗೆ ಬಿಗಿದು, ಪ್ರಿಯತಮೆಯನ್ನು ಹತ್ಯೆಗೈದ ಪ್ರಿಯತಮ ಅರೆಸ್ಟ್!

0

ಬೆಂಗಳೂರು: ಲಿವ್ಇನ್ ಸಂಬಂಧದಲ್ಲಿದ್ದ ಯುವತಿಯನ್ನು ವೈಯರ್ನಿಂದ ಕತ್ತು ಬಿಗಿದು ಕೊಲೆ ಮಾಡಿರುವ ಘಟನೆ ಬೆಂಗಳೂರಿನ ವರ್ತೂರು ಪ್ರದೇಶದಲ್ಲಿ ನಡೆದಿದೆ.

ಮೃತ ಯುವತಿಯನ್ನು ಕೊಡಗು ಮೂಲದ ರಂಜಿತಾ (23) ಎಂದು ಗುರುತಿಸಲಾಗಿದೆ. ಆರೋಪಿಯಾಗಿರುವ ಅಯ್ಯಪ್ಪ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ರಂಜಿತಾ ಮತ್ತು ಅಯ್ಯಪ್ಪ ಇಬ್ಬರೂ ಕೆಲಕಾಲದಿಂದ ಲಿವ್ಇನ್ ಸಂಬಂಧದಲ್ಲಿ ವಾಸಿಸುತ್ತಿದ್ದರು. ಆದರೆ ಅಯ್ಯಪ್ಪ ಈಗಾಗಲೇ ವಿವಾಹಿತನಾಗಿದ್ದು, ವಿಷಯವನ್ನು ರಂಜಿತಾಗೆ ತಿಳಿಸಿರಲಿಲ್ಲ ಎಂದು ತಿಳಿದುಬಂದಿದೆ.

ಇತ್ತೀಚೆಗೆ ವಿಷಯ ಯುವತಿಗೆ ತಿಳಿದ ಬಳಿಕ ಇಬ್ಬರ ನಡುವೆ ಜಗಳ ಆರಂಭವಾಗಿತ್ತು. ಗಲಾಟೆ ತಾರಕಕ್ಕೇರಿದ ವೇಳೆ ಆರೋಪಿ ವೈಯರ್ನಿಂದ ಯುವತಿಯ ಕತ್ತು ಬಿಗಿದು ಕೊಲೆ ಮಾಡಿದ್ದಾನೆ ಎನ್ನಲಾಗಿದೆ.

ಸಂಬಂಧ ವರ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ರಷ್ಯಾ ತೈಲ ಖರೀದಿಗೆ ಅಮೆರಿಕವೇ ಭಾರತಕ್ಕೆ ಮನವಿ ಮಾಡಿದೆ: ಇರಾನ್ ಸಚಿವರ ಟೀಕೆ

0

ಟೆಹ್ರಾನ್: ರಷ್ಯಾದಿಂದ ಕಚ್ಚಾ ತೈಲ ಖರೀದಿಯನ್ನು ನಿಲ್ಲಿಸುವಂತೆ ಹಿಂದೆ ಒತ್ತಡ ಹೇರಿದ್ದ ಅಮೆರಿಕ ಈಗ ಭಾರತ ಸೇರಿದಂತೆ ಜಗತ್ತಿನ ದೇಶಗಳಿಗೆ ರಷ್ಯಾದಿಂದ ತೈಲ ಖರೀದಿಸಲು ಮನವಿ ಮಾಡುತ್ತಿದೆ ಎಂದು ಇರಾನ್ ವಿದೇಶಾಂಗ ಸಚಿವ ಸಯ್ಯದ್ ಅಬ್ಬಾಸ್ ಅರಘ್ಚಿ ಟೀಕಿಸಿದ್ದಾರೆ.

ಎಕ್ಸ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು, ರಷ್ಯಾದಿಂದ ತೈಲ ಖರೀದಿಯನ್ನು ನಿಲ್ಲಿಸುವಂತೆ ಅಮೆರಿಕ ಒಂದು ತಿಂಗಳ ಕಾಲ ಜಗತ್ತಿನ ರಾಷ್ಟ್ರಗಳಿಗೆ ಬೆದರಿಕೆ ಹಾಕಿತ್ತು ಎಂದು ಹೇಳಿದ್ದಾರೆ. ಆದರೆ ಇರಾನ್ ಜೊತೆ ನಡೆದ ಎರಡು ವಾರಗಳ ಯುದ್ಧದ ನಂತರ ಅಮೆರಿಕ ತನ್ನ ನಿಲುವು ಬದಲಿಸಿ ಭಾರತ ಸೇರಿದಂತೆ ಹಲವು ದೇಶಗಳಿಗೆ ರಷ್ಯಾದಿಂದ ಕಚ್ಚಾ ತೈಲ ಖರೀದಿಸಲು ಹೇಳುತ್ತಿದೆ ಎಂದು ಆರೋಪಿಸಿದ್ದಾರೆ.

ಇರಾನ್ ಮೇಲೆ ನಡೆಯುತ್ತಿರುವ ಅಕ್ರಮ ಯುದ್ಧಕ್ಕೆ ಯುರೋಪ್ ಬೆಂಬಲ ನೀಡುತ್ತಿರುವುದಾಗಿ ಹೇಳಿದ ಅವರು, ರಷ್ಯಾ ವಿರುದ್ಧದ ಹೋರಾಟದಲ್ಲಿ ಅಮೆರಿಕದ ಬೆಂಬಲ ಪಡೆಯುವ ಉದ್ದೇಶದಿಂದ ಯುರೋಪ್ ಈ ರೀತಿಯ ನಿಲುವು ತಾಳಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ಶೋಚನೀಯ ಬೆಳವಣಿಗೆ ಎಂದು ಅವರು ಹೇಳಿದ್ದಾರೆ.

ಇದಕ್ಕೂ ಮೊದಲು ಭಾರತ–ಅಮೆರಿಕ ನಡುವಿನ ವ್ಯಾಪಾರ ಒಪ್ಪಂದದ ಮಾತುಕತೆ ಹಲವು ತಿಂಗಳಿಂದ ನಡೆಯುತ್ತಿದ್ದರೂ ಅಂತಿಮವಾಗಿರಲಿಲ್ಲ. ಭಾರತ ರಷ್ಯಾದಿಂದ ಕಚ್ಚಾ ತೈಲ ಖರೀದಿ ನಿಲ್ಲಿಸಬೇಕು ಎಂದು ಅಮೆರಿಕ ಷರತ್ತು ವಿಧಿಸಿತ್ತು.

ಆದರೆ ಕಳೆದ ವಾರ ಅಮೆರಿಕ, ರಷ್ಯಾದಿಂದ ಕಚ್ಚಾ ತೈಲ ಖರೀದಿಸಲು ಭಾರತಕ್ಕೆ 30 ದಿನಗಳ ಕಾಲ ಅನುಮತಿ ನೀಡಿರುವುದಾಗಿ ತಿಳಿಸಿತ್ತು. ಈಗ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಷ್ಯಾದಿಂದ ಯಾವುದೇ ದೇಶಗಳು ತೈಲ ಖರೀದಿಸಬಹುದು ಎಂದು ಅಮೆರಿಕ ಹೇಳಿರುವುದಾಗಿ ವರದಿಯಾಗಿದೆ.

ಬಿಡದಿ ರೆಸಾರ್ಟ್ ನಿಂದ ಮೈಸೂರು ಪ್ರವಾಸಕ್ಕೆ ಹೊರಟ ಒಡಿಶಾ ಕಾಂಗ್ರೆಸ್ ಶಾಸಕರು!

ರಾಮನಗರ: ಬಿಡದಿ ಸಮೀಪದ ರೆಸಾರ್ಟ್‌ನಲ್ಲಿ ತಂಗಿರುವ ಒಡಿಶಾ ಕಾಂಗ್ರೆಸ್ ಶಾಸಕರು ಇಂದು ಮೈಸೂರು ಪ್ರವಾಸ ಕೈಗೊಂಡಿದ್ದಾರೆ.

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೂಚನೆ ಹಿನ್ನೆಲೆಯಲ್ಲಿ 8 ಮಂದಿ ಶಾಸಕರು, ಪಿಸಿಸಿ ಅಧ್ಯಕ್ಷರು ಹಾಗೂ ಪ್ರಧಾನ ಕಾರ್ಯದರ್ಶಿ ಸೇರಿ ಒಟ್ಟು 15ಕ್ಕೂ ಹೆಚ್ಚು ಮಂದಿ ಮೈಸೂರಿಗೆ ತೆರಳಿದ್ದಾರೆ. ಸ್ಥಳೀಯ ಕಾಂಗ್ರೆಸ್ ಮುಖಂಡರ ನೇತೃತ್ವದಲ್ಲಿ ಅವರು ಇಂದು ಸಂಜೆವರೆಗೆ ಮೈಸೂರಿನ ಪ್ರಮುಖ ಪ್ರವಾಸಿ ತಾಣಗಳನ್ನು ವೀಕ್ಷಿಸಲಿದ್ದಾರೆ.

ಮಾರ್ಚ್ 16ರಂದು ರಾಜ್ಯಸಭೆಯ 37 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, 10 ರಾಜ್ಯಗಳ ಶಾಸಕರು ಮತದಾನ ಮಾಡುವರು. ಈ ಪೈಕಿ ಒಡಿಶಾದಿಂದ ನಾಲ್ವರು ರಾಜ್ಯಸಭಾ ಸದಸ್ಯರನ್ನು ಆಯ್ಕೆ ಮಾಡಲಾಗುತ್ತದೆ.

ಚುನಾವಣೆಯಲ್ಲಿ ಅಡ್ಡ ಮತದಾನ ನಡೆಯದಂತೆ ತಡೆಯುವ ಉದ್ದೇಶದಿಂದ ಒಡಿಶಾ ಕಾಂಗ್ರೆಸ್ ಶಾಸಕರನ್ನು ರಾಮನಗರ ಜಿಲ್ಲೆಯ ಬಿಡದಿಯಲ್ಲಿರುವ ವಂಡರ್ ಲಾ ರೆಸಾರ್ಟ್‌ಗೆ ಕರೆತರಲಾಗಿದೆ ಎಂದು ತಿಳಿದುಬಂದಿದೆ.

ನಾಲ್ಕನೇ ರಾಜ್ಯಸಭಾ ಸ್ಥಾನಕ್ಕೆ ಯಾವುದೇ ಪಕ್ಷಕ್ಕೂ ಸ್ಪಷ್ಟ ಬಹುಮತ ಇಲ್ಲದ ಹಿನ್ನೆಲೆಯಲ್ಲಿ ಒಡಿಶಾ ರಾಜಕೀಯದಲ್ಲಿ ಅಡ್ಡ ಮತದಾನದ ಭೀತಿ ಎದುರಾಗಿದೆ. ಆಡಳಿತಾರೂಢ ಬಿಜೆಪಿ ‘ಆಪರೇಷನ್ ಕಮಲ’ದ ಮೂಲಕ ಅಡ್ಡ ಮತದಾನಕ್ಕೆ ಯತ್ನಿಸಬಹುದು ಎಂಬ ಚರ್ಚೆಗಳು ನಡೆಯುತ್ತಿವೆ.

ನಾಲ್ಕನೇ ಸ್ಥಾನಕ್ಕಾಗಿ ಬಿಜೆಡಿ ಮತ್ತು ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿದ್ದು, ಖ್ಯಾತ ಮೂತ್ರಪಿಂಡ ತಜ್ಞ ದತ್ತೇಶ್ವರ ಹೋಟಾ ಅವರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಿವೆ. ಮತ್ತೊಂದೆಡೆ, ಹೋಟೆಲ್ ಉದ್ಯಮಿ ಹಾಗೂ ಮಾಜಿ ಕೇಂದ್ರ ಸಚಿವ ದಿಲೀಪ್ ರೇ ಬಿಜೆಪಿ ಬೆಂಬಲದೊಂದಿಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ.

ವಿಶ್ವಕಪ್ ಗೆದ್ದಿರುವ ಟೀಂ ಇಂಡಿಯಾ ಏಕಕಾಲದಲ್ಲಿ ಎರಡು ಸರಣಿಗಳನ್ನು ಆಡಲಿದೆ!

0

ಟಿ20 ವಿಶ್ವಕಪ್ ಗೆದ್ದು ಸಂತಸದಲ್ಲಿರುವ ಟೀಂ ಇಂಡಿಯಾ ಈಗ ವಿಶ್ರಾಂತಿ ಮೋಡ್‌ನಲ್ಲಿ ಇದೆ.

ವಿಶ್ವಕಪ್ ಮುಗಿದ ನಂತರ ಎಲ್ಲಾ ಆಟಗಾರರು ತಮ್ಮ ತಮ್ಮ ಮನೆಗಳಿಗೆ ತೆರಳಿ, ಕೆಲವು ದಿನಗಳಲ್ಲಿ ಆರಂಭವಾಗಲಿರುವ ಐಪಿಎಲ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸುಮಾರು ಎರಡು ತಿಂಗಳ ಕಾಲ ನಡೆಯಲಿರುವ ಐಪಿಎಲ್ ಮುಗಿದ ನಂತರ, ಆಟಗಾರರು ರಾಷ್ಟ್ರೀಯ ಕರ್ತವ್ಯಕ್ಕೆ ವಾಪಸ್ಸಾಗುವರು.

ಟಿ20 ವಿಶ್ವಕಪ್ ಮುಗಿದ ನಂತರ ಭಾರತ ತಂಡ ಮತ್ತೆ ಜೂನ್ ತಿಂಗಳಲ್ಲಿ ಅಫ್ಘಾನಿಸ್ತಾನದ ವಿರುದ್ಧ ಏಕದಿನ ಸರಣಿಯಲ್ಲಿ ಕಣಕ್ಕಿಳಿಯಲಿದೆ. ಈ ಏಕದಿನ ಸರಣಿಯೊಂದಿಗೆ ಭಾರತ ತಂಡದ ಬ್ಯುಸಿಯಾಗಿರುವ ದಿನಚರಿ ಆರಂಭವಾಗಲಿದೆ. ವರದಿಗಳ ಪ್ರಕಾರ, ಅಕ್ಟೋಬರ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯ ಜೊತೆಗೆ ಭಾರತ ತಂಡ ಏಷ್ಯನ್ ಕ್ರೀಡಾಕೂಟದಲ್ಲಿ ಭಾಗವಹಿಸಲಿದೆ. ಏಷ್ಯನ್ ಕ್ರೀಡಾಕೂಟ ಜಪಾನ್‌ನಲ್ಲಿ ನಡೆಯಲಿದೆ,

ಕ್ರಿಕ್‌ಬಜ್ ವರದಿಯ ಪ್ರಕಾರ, ಈ ಎರಡೂ ಸರಣಿಗಳಿಗಾಗಿ ಬಿಸಿಸಿಐ 30 ಭಾರತೀಯ ಆಟಗಾರರನ್ನು ಆಯ್ಕೆ ಮಾಡಲಿದೆ. ಈ ಪೈಕಿ 15 ಆಟಗಾರರು ಏಷ್ಯನ್ ಕ್ರೀಡಾಕೂಟದಲ್ಲಿ ಭಾಗವಹಿಸುವರು, ಉಳಿದ 15 ಆಟಗಾರರು ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ಆಡಲಿದ್ದಾರೆ. ಟೀಂ ಇಂಡಿಯಾ ಹಿಂದೆಯೂ ಎರಡು ಸರಣಿಗಳನ್ನು ಏಕಕಾಲದಲ್ಲಿ ಆಡಿದ್ದು, 2021 ರಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ತಂಡ ಡಬ್ಲ್ಯೂಟಿಸಿ ಫೈನಲ್ ಮತ್ತು ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು ಇಂಗ್ಲೆಂಡ್‌ನಲ್ಲಿ ಆಡಿದರೆ, ಶಿಖರ್ ಧವನ್ ನೇತೃತ್ವದ ಇನ್ನೊಂದು ತಂಡ ಶ್ರೀಲಂಕಾದಲ್ಲಿ ಏಕದಿನ ಮತ್ತು ಟಿ20 ಸರಣಿಗಳನ್ನು ನಡೆಸಿತ್ತು.

ಬಿಸಿಸಿಐಗೆ ಪ್ರತಿಭಾನ್ವಿತ ಆಟಗಾರರಿಗೆ ಕೊರತೆಯಿಲ್ಲದ ಕಾರಣ, ಆಟಗಾರರನ್ನು ಆಯ್ಕೆ ಮಾಡಲು ಯಾವುದೇ ಸಮಸ್ಯೆ ಇರುವುದಿಲ್ಲ. 2026 ರ ಏಷ್ಯನ್ ಕ್ರೀಡಾಕೂಟ ಸೆಪ್ಟೆಂಬರ್ 19 ರಿಂದ ಅಕ್ಟೋಬರ್ 4 ರವರೆಗೆ ಜಪಾನ್‌ನಲ್ಲಿ ನಡೆಯಲಿದೆ. ಟಿ20 ಸ್ವರೂಪದಲ್ಲಿ ನಡೆಯುವ ಈ ಕ್ರೀಡಾಕೂಟದಲ್ಲಿ ನಾಯಕ ಸೂರ್ಯಕುಮಾರ್ ಯಾದವ್ ನೇತೃತ್ವದ ಭಾರತ ತಂಡ ಭಾಗವಹಿಸಲಿದ್ದು, ಚೀನಾದಲ್ಲಿ ನಡೆದ 2022 ರ ಏಷ್ಯನ್ ಕ್ರೀಡಾಕೂಟದಲ್ಲಿ ರುತುರಾಜ್ ಗಾಯಕ್ವಾಡ್ ನಾಯಕತ್ವದಲ್ಲಿ ಭಾರತ ತಂಡ ಚಿನ್ನದ ಪದಕ ಗೆದ್ದದ್ದು ಇಲ್ಲಿ ಉಲ್ಲೇಖಾರ್ಹವಾಗಿದೆ.

 

PM ಕಿಸಾನ್ ಸ್ಕೀಮ್: 22ನೇ ಕಂತಿನ ಹಣ ಬಿಡುಗಡೆ, ಫಲಾನುಭವಿಗಳ ಸಂಖ್ಯೆ 4 ಲಕ್ಷದಷ್ಟು ಕಡಿಮೆ!

0

ದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಅಸ್ಸಾಂನ ಗುವಾಹಟಿ‌ನಲ್ಲಿ ಪಿಎಂ ಕಿಸಾನ್ ಯೋಜನೆಯ 22ನೇ ಕಂತಿನ ಹಣ ಬಿಡುಗಡೆ ಮಾಡಿದ್ದಾರೆ.

ಈ ವೇಳೆ 9.32 ಕೋಟಿ ರೈತರಿಗೆ ತಲಾ 2,000 ರೂ. ನೀಡಲಾಗಿದ್ದು, ಒಟ್ಟಿನಲ್ಲಿ 18,640 ಕೋಟಿ ರೂ. ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಜಮೆ ಮಾಡಲಾಗಿದೆ. ಕಳೆದ ಕಂತಿನ ಹೋಲಿಕೆಗೆ ಈ ಬಾರಿ ಫಲಾನುಭವಿಗಳ ಸಂಖ್ಯೆ ಸುಮಾರು 3.8 ಲಕ್ಷದಷ್ಟು ಕಡಿಮೆ  ಆಗಿದೆ. ಇದಕ್ಕೆ ಮುಖ್ಯ ಕಾರಣಗಳೆಂದರೆ ಇಕೆವೈಸಿ ದೃಢೀಕರಣವಾಗದಿರುವುದು ಮತ್ತು ಇತರ ವ್ಯವಸ್ಥಾಪನಾತ್ಮಕ ಅಡಚಣೆಗಳು, ಇದರಿಂದ ಲಕ್ಷಾಂತರ ರೈತರಿಗೆ ಯೋಜನೆಯ ಲಾಭ ತಲುಪದೇ ಉಳಿದಿದೆ.

ಹಿಂದಿನ 21ನೇ ಕಂತಿನ ಹಣವನ್ನು 9,35,79,869 ರೈತರು ಪಡೆದಿದ್ದರು. ಪಿಎಂ ಕಿಸಾನ್ ಯೋಜನೆಯು ರೈತರಿಗೆ ಸರ್ಕಾರದಿಂದ ನೀಡುವ ಸಹಾಯಧನ ಸ್ಕೀಮ್ ಆಗಿದ್ದು, ವರ್ಷಕ್ಕೆ 6,000 ರೂ. ತಲಾ ಮೂರು ಕಂತುಗಳಲ್ಲಿ ವಿತರಿಸಲಾಗುತ್ತದೆ. ಈ ಯೋಜನೆಯ ಪ್ರಮುಖ ವೈಶಿಷ್ಟ್ಯವೆಂದರೆ ಹಣ ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ಜಮೆ ಆಗುವುದು, ಮಧ್ಯವರ್ತಿಗಳ ಭಾಗವಹಿಸುವಿಕೆಯನ್ನು ತಡೆಯುತ್ತದೆ. ಸರ್ಕಾರದ ಈ ಕ್ರಮವು ಹಣ ವಿತರಣೆ ಪ್ರಕ್ರಿಯೆಯನ್ನು ಸರಳಗೊಳಿಸುತ್ತದೆ ಮತ್ತು ರೈತರ ಕೃಷಿ ಚಟುವಟಿಕೆಗಳಿಗೆ ನಿರಂತರ ಬೆಂಬಲ ನೀಡುತ್ತದೆ.

ಕಾರವಾರ ಬಂದರಿಗೆ ಯುಎಇ ಹಡಗು: 3,100 ಟನ್ ಕಚ್ಚಾ ಡಾಂಬರ್ ಹೊತ್ತು ಬಂದ ‘ಚೆಂಗ್ ಎಕ್ಸ್’!

ಕಾರವಾರ: ಮಧ್ಯಪ್ರಾಚ್ಯದ ಯುದ್ಧದ ಪರಿಣಾಮದಿಂದ ಸಮುದ್ರ ಮಾರ್ಗದ ವಾಣಿಜ್ಯ ಚಟುವಟಿಕೆಗಳು ಸಂಕಷ್ಟಕ್ಕೆ ಒಳಗಾಗಿರುವ ಸಂದರ್ಭದಲ್ಲಿ, ಯುನೈಟೆಡ್ ಅರಬ್ ಎಮಿರೇಟ್ಸ್ ನಿಂದ ಕಚ್ಚಾ ಡಾಂಬರ್ ಹೊತ್ತ ಹಡಗು ಕಾರವಾರದ ವಾಣಿಜ್ಯ ಬಂದರಿಗೆ ಆಗಮಿಸಿದೆ.

‘ಚೆಂಗ್ ಎಕ್ಸ್’ ಎನ್ನುವ ಸರಕು ಸಾಗಣೆ ಹಡಗು ಸುಮಾರು 3,100 ಟನ್ ಬಿಟುಮಿನ್ ಸಾಗಿಸಿ ಬಂದಿದ್ದು, ಸಾಮಾನ್ಯವಾಗಿ ಇದಕ್ಕೆ 5,500 ಟನ್ ಸಾಮರ್ಥ್ಯವಿದೆ. ಹಡಗು ಮಾರ್ಚ್ 3 ರಂದು ಯುಎಇಯಿಂದ ಹೊರಟಿದ್ದು, ಹಾರ್ಮುಜ್ ಜಲಸಂಧಿ ಪಕ್ಕದ ಮಾರ್ಗವನ್ನು ಹಾದು ಕಾರವಾರ ಬಂದರಿಗೆ ತಲುಪಿದೆ.

ಮಧ್ಯಪ್ರಾಚ್ಯ ಯುದ್ಧದ ಹಿನ್ನೆಲೆಯಲ್ಲಿ ಸಮುದ್ರ ಮಾರ್ಗಗಳಲ್ಲಿ ಭದ್ರತಾ ಕ್ರಮಗಳು ಹೆಚ್ಚಾಗಿದ್ದು, ಹಡಗು ಸಂಚಾರಕ್ಕೆ ಅನೇಕ ಅಡಚಣೆಗಳು ಎದುರಾಗಿವೆ. ಹಾರ್ಮುಜ್ ಜಲಸಂಧಿ ಭಾಗದಲ್ಲಿ ಇರಾನ್ ನಿರ್ಬಂಧಗಳು ಮತ್ತು ಉದ್ವಿಗ್ನ ಪರಿಸ್ಥಿತಿ ಕಾರಣವಾಗಿ ಹಡಗುಗಳ ಪ್ರಯಾಣದಲ್ಲಿ ಅನಿಶ್ಚಿತತೆ ಉಂಟಾಗಿದೆ. ಹಡಗು ಬಿಟುಮಿನ್ ಡಂಪ್ ಮಾಡಿದ ಬಳಿಕ ಮರಳಿ ಯುಎಇಗೆ ಹಿಂತಿರುಗುವ ವಿಚಾರದಲ್ಲಿ ಇನ್ನೂ ಸ್ಪಷ್ಟ ಮಾಹಿತಿ ದೊರಕಿಲ್ಲವೆಂದು ಹಡಗಿನ ಸಿಬ್ಬಂದಿ ಹೇಳಿದ್ದಾರೆ.

ಇದು ಮಧ್ಯಪ್ರಾಚ್ಯ ಯುದ್ಧದ ನಂತರ ಯುಎಇಯಿಂದ ಕಾರವಾರ ಬಂದರಿಗೆ ಆಗಮಿಸಿದ ಮೊದಲ ಹಡಗು ಆಗಿದ್ದು, ಬಂದರು ವಾಣಿಜ್ಯ ಚಟುವಟಿಕೆಗಳಿಗೆ ಸ್ವಲ್ಪ ಮಟ್ಟಿಗೆ ಚೈತನ್ಯ ನೀಡಿರುವಂತಾಗಿದೆ. ಕಳೆದ 12 ದಿನಗಳಿಂದ ಕಾರವಾರ ಬಂದರಿನಲ್ಲಿ ವಹಿವಾಟು ಸ್ಥಗಿತವಾಗಿದ್ದು, 80 ಲಕ್ಷಕ್ಕೂ ಹೆಚ್ಚು ನಷ್ಟ ಉಂಟಾಗಿತ್ತು. ಇತ್ತೀಚೆಗೆ ಯುಎಇ ಹಡಗು ಮತ್ತು ಗುಜರಾತ್‌ನಿಂದ ಬಂದ ಹಡಗಿನಿಂದ ವಾಣಿಜ್ಯ ಚಟುವಟಿಕೆಗಳಲ್ಲಿ ಚೇತರಿಕೆ ಕಂಡು ಬಂದಿದೆ, ಆದರೆ ಮುಂದಿನ ದಿನಗಳಲ್ಲಿ ಸಮುದ್ರ ಮಾರ್ಗದ ಪರಿಸ್ಥಿತಿ ಹೇಗಿರಲಿದೆ ಎಂಬುದು ಇನ್ನೂ ಅನಿಶ್ಚಿತವಾಗಿದೆ.

 

ಪತಿಯ ಕಣ್ಣೆದುರಲ್ಲೇ ಪತ್ನಿ ನೇಣಿಗೆ ಶರಣು: ತಮಾಷೆ ಎಂದು ವಿಡಿಯೋ ಮಾಡಿದ ಗಂಡ!

ಅಮರಾವತಿ:- ಆಂಧ್ರಪ್ರದೇಶ ಕಡಪ ಜಿಲ್ಲೆಯ ಬೋಯಿನಪಲ್ಲಿ ಗ್ರಾಮದಲ್ಲಿ ಪತಿಯ ಕಣ್ಣೆದುರಲ್ಲೇ ಪತ್ನಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಜರುಗಿದೆ.

ಕೃಷ್ಣವೇಣಿ ನೇಣಿಗೆ ಶರಣಾದ ಮಹಿಳೆ. ಹೆಂಡ್ತಿ ನೇಣು ಬಿಗಿದುಕೊಳ್ಳುವಾಗ ಪತಿ ಕಾಪಾಡದೇ ತನ್ನ ಮೊಬೈಲ್‍ನಲ್ಲಿ ವಿಡಿಯೋ ಸೆರೆಹಿಡಿದಿದ್ದಾನೆ. ಕೌಟುಂಬಿಕ ಕಲಹದಿಂದ ಮಹಿಳೆ ಆತ್ಮಹತ್ಯೆಗೆ ಯತ್ನಿಸಿದ್ದಳು. ಈ ವೇಳೆ ಪತಿ ಶ್ರೀರಾಮ್ ಶ್ರೀನಿವಾಸ್ ತಡೆಯಲು ಪ್ರಯತ್ನಿಸುವ ಬದಲು, ಘಟನೆಯ ವಿಡಿಯೋವನ್ನು ರೆಕಾರ್ಡ್ ಮಾಡಿ, ನೀನು ಹಾಗೆ ಕುಣಿಕೆ ಕಟ್ಟಬಾರದು. ಅದನ್ನು ಹೀಗೆ ಮಾಡಬೇಕು ಎಂದು ಅವಳಿಗೆ ಸೂಚನೆ ನೀಡಿದ್ದ ಎಂದು ತಿಳಿದು ಬಂದಿದೆ.

ಆರಂಭದಲ್ಲಿ ತಮಾಷೆ ಮಾಡುತ್ತಿದ್ದಾಳೆ ಎಂದು ಗ್ರಹಿಸಿದ್ದರಿಂದ ಶ್ರೀನಿವಾಸ್ ತನ್ನ ಹೆಂಡತಿಯ ಪ್ರಾಣ ಉಳಿಸಲು ವಿಫಲನಾಗಿದ್ದಾನೆ ಎಂದು ತಿಳಿದುಬಂದಿದೆ. ಸದ್ಯ ಪತ್ನಿ ಕೃಷ್ಣವೇಣಿ ಮೃತಪಟ್ಟಿದ್ದು, ಪತಿಯನ್ನು ಪೊಲೀಸರು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.

KSRTC ರಾಜಹಂಸ- ಕಾರು ಮುಖಾಮುಖಿ ಡಿಕ್ಕಿ: ಮೂವರು ಸಾವು, ಓರ್ವನ ಸ್ಥಿತಿ ಗಂಭೀರ!

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲ್ಲೂಕಿನ ಶಿರಾಡಿಘಾಟ್ನ ಗುಂಡ್ಯ ಸಮೀಪ KSRTC ರಾಜಹಂಸ ಬಸ್ ಹಾಗೂ ಕಾರಿನ ನಡುವೆ ಭೀಕರ ಮುಖಾಮುಖಿ ಅಪಘಾತ ಸಂಭವಿಸಿದ್ದು, ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಮೃತರು ಉಜಿರೆ ನಿವಾಸಿಗಳಾದ ಶ್ರೀಧರ ಮರಕಡ, ಜನಾರ್ದನ ಕೆರಿಮಾರ್ ಮತ್ತು ಕೊಕ್ಕಡ ನಿವಾಸಿ ಚಂದ್ರಶೇಖರ ಗೌಡರಾಗಿದ್ದಾರೆ. ಕಾರಿನಲ್ಲಿ ಮತ್ತೊಬ್ಬ ಸುರೇಶ್ ಗಂಭೀರ ಗಾಯಗೊಂಡು ಮಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದೆ.

ನಾಲ್ವರು ಕಾರಿನಲ್ಲಿ ಸಕಲೇಶಪುರದಲ್ಲಿ ಮದುವೆ ಮುಗಿಸಿಕೊಂಡು ಉಜಿರೆ ಕಡೆಗೆ ವಾಪಸ್ ಪ್ರಯಾಣಿಸುತ್ತಿದ್ದರು. ಬಸ್ ಮಂಗಳೂರು ಕಡೆಯಿಂದ ಧರ್ಮಸ್ಥಳ-ತಿರುಪತಿ ಮಾರ್ಗದಲ್ಲಿ ಬಂದಿದ್ದು, ಶಿರಾಡಿಘಾಟ್ನ ಗುಂಡ್ಯ ಸಮೀಪ ಕಾರಿನೊಂದಿಗೆ ಮುಖಾಮುಖಿಯಾಗಿ ಡಿಕ್ಕಿ ಸಂಭವಿಸಿದೆ. ಅಪಘಾತದಿಂದ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ತಕ್ಷಣ ಸ್ಥಳಕ್ಕೆ ಉಪ್ಪಿನಂಗಡಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಘಟನೆ ಬೆನ್ನಲ್ಲೇ ಫುಲ್ ಟ್ರಾಫಿಕ್ ಜಾಮ್ ಉಂಟಾಗಿತ್ತು, ನಂತರ ಪೊಲೀಸರು ವಾಹನ ಸಂಚಾರಕ್ಕೆ ಪುನಃ ಅನುಮತಿ ನೀಡಿದ್ದಾರೆ.

ರಾಜ್ಯದಲ್ಲಿ ಸೈಬರ್ ಕ್ರೈಂ ಪ್ರಕರಣಗಳ ಸಂಖ್ಯೆ ಇಳಿಕೆ: ಸಚಿವ ಡಾ.ಜಿ. ಪರಮೇಶ್ವರ್

ಬೆಂಗಳೂರು: ಇತ್ತೀಚೆಗೆ ಕರ್ನಾಟಕದಲ್ಲಿ ಸೈಬರ್ ಕ್ರೈಂ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿದ್ದು, 2023ರಲ್ಲಿ ದಾಖಲಾಗಿದ್ದ 22,225 ಪ್ರಕರಣಗಳು 2025 ರ ವೇಳೆಗೆ 14,899ಕ್ಕೆ ಇಳಿಕೆಯಾಗಿವೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ತಿಳಿಸಿದ್ದಾರೆ.

ಪೊಲೀಸ್ ಇಲಾಖೆ ಕೈಗೊಂಡ ಪರಿಣಾಮಕಾರಿ ಕ್ರಮಗಳು, ಪ್ರಕರಣಗಳ ತ್ವರಿತ ಪತ್ತೆ ಮತ್ತು ಸಾರ್ವಜನಿಕರಲ್ಲಿ ಮೂಡಿಸಿದ ಜಾಗೃತಿ ಇದರ ಪ್ರಮುಖ ಕಾರಣವಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಆದರೂ, ಸೈಬರ್ ಖದೀಮರು ತಮ್ಮ ವಂಚನೆ ಕಾರ್ಯವನ್ನು ಇನ್ನೂ ತಂತ್ರಜ್ಞಾನದ ಹೊಸ ಮಾರ್ಗಗಳಲ್ಲಿ ಮುಂದುವರೆಸುತ್ತಿದ್ದಾರೆ. ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಘಟನೆ ಇದರ ತಾಜಾ ಉದಾಹರಣೆಯಾಗಿದೆ. ಮಹಿಳೆಯೊಬ್ಬರಿಗೆ ನಯನಾ ಪ್ರಕಾಶ್ ಎಂಬ ಹೆಸರಲ್ಲಿ ನಕಲಿ ದಾಖಲೆ ಸೃಷ್ಟಿಸಿ ಕರೆಮಾಡಿದ ಖದೀಮರು, ಮೊದಲು ಆಡಿಯೋ ಕಾಲ್ ಮೂಲಕ “ನಿಮ್ಮ ತಾಯಿ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ” ಎಂದು ಭಯಪಟ್ಟು ಹೇಳಿದರು. ನಂತರ ಕರೆಯನ್ನು ವಿಡಿಯೋ ಕಾಲ್‌ಗೆ ಪರಿವರ್ತಿಸಿ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು.

ಅವರ ಧೈರ್ಯ ಎಷ್ಟೆಂದರೆ, ಬೆಂಗಳೂರು ನಗರ ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಅವರ ನಕಲಿ ಸೀಲ್ ಮತ್ತು ಸಹಿ, ಕರ್ನಾಟಕ ಸಿಐಡಿ ಹೆಸರಲ್ಲಿ ಅರೆಸ್ಟ್ ವಾರಂಟ್, ಹಾಗೂ ಸುಪ್ರೀಂ ಕೋರ್ಟ್ ಆದೇಶ ಎನ್ನುವ ನಕಲಿ ದಾಖಲೆಗಳನ್ನು ಸಹ ಬಳಸಿದರು. ಮಹಿಳೆಯು ದಾಖಲೆಗಳನ್ನು ಪರಿಶೀಲಿಸಿ ಅನುಮಾನಗೊಂಡು ಎಚ್ಚೆತ್ತುಕೊಂಡರು ಮತ್ತು ತಕ್ಷಣ ಬೆಂಗಳೂರು ಸೈಬರ್ ಕ್ರೈಂ ವಿಭಾಗದ ಅಧಿಕೃತ ಮೇಲ್ ಐಡಿಗೆ ಹಾಗೂ ಸೈಬರ್ ಕ್ರೈಂ ಪೋರ್ಟಲ್‌ನಲ್ಲಿ ದೂರು ದಾಖಲಿಸಿದರು.

“ಪೋಲಿಸ್ ಎಂದಿಗೂ ವಿಡಿಯೋ ಕಾಲ್ ಮೂಲಕ ಹಣ ಕೇಳುವುದಿಲ್ಲ ಅಥವಾ ಡಿಜಿಟಲ್ ಅರೆಸ್ಟ್ ಮಾಡುವುದಿಲ್ಲ. ಯಾವುದೇ ನಕಲಿ ಆದೇಶ ಪತ್ರಗಳಿಗೆ ಸಾರ್ವಜನಿಕರು ಮರುಳಾಗಬಾರದು. ಅನುಮಾನ ಬಂದರೆ ಕೂಡಲೇ 1930 ಗೆ ಕರೆ ಮಾಡಿ ದೂರು ಸಲ್ಲಿಸಬೇಕು.” ಇಂತಹ ಸೈಬರ್ ವಂಚನೆ ಜಾಲಕ್ಕೆ ಅನೇಕರು ಈಗಾಗಲೇ ಹಣ ಕಳೆದುಕೊಂಡಿದ್ದಾರೆ. ಪೊಲೀಸ್ ಹೆಸರಲ್ಲೇ ವಂಚನೆ ನಡೆಸುತ್ತಿರುವ ಸೈಬರ್ ಖದೀಮರ ವಿರುದ್ಧ ಸಾರ್ವಜನಿಕರು ಹೆಚ್ಚು ಜಾಗ್ರತೆ ವಹಿಸುವುದು ಅತ್ಯಂತ ಅಗತ್ಯವಾಗಿದೆ ಎಂದು ಡಿಸಿಪಿ ರಾಜಾ ಇಮಾಮ್ ಖಾಸಿಂ ಹೇಳಿದ್ದಾರೆ.

 

error: Content is protected !!