Home Blog

ಕರ್ನಾಟಕದ 9 ಜೈಲಿನಿಂದ 31 ಕೈದಿಗಳನ್ನು ಸನ್ನಡತೆ ಆಧಾರದ ಮೇಲೆ ಬಿಡುಗಡೆ!

ಬೆಂಗಳೂರು: ರಾಜ್ಯದ ವಿವಿಧ ಜೈಲಿನಿಂದ ಸನ್ನಡತೆ ಆಧಾರದ ಮೇಲೆ 31 ಕೈದಿಗಳನ್ನು ಬಿಡುಗಡೆ ಮಾಡುವ ಆದೇಶ ಹೊರಡಿಸಲಾಗಿದೆ. ಈ ಆದೇಶದಡಿ, ಶುಕ್ರವಾರ ವಿವಿಧ ಜೈಲಿನಿಂದ ಬಿಡುಗಡೆಯಾಗಲಿರುವ ಕೈದಿಗಳ ವಿವರ ಈ ಕೆಳಗಿನಂತಿವೆ:

  • ಪರಪ್ಪನ ಅಗ್ರಹಾರ ಜೈಲು – 14 ಮಂದಿ
  • ಮೈಸೂರು – 2 ಮಂದಿ
  • ಬೆಳಗಾವಿ – 2 ಮಂದಿ
  • ಕಲಬುರಗಿ – 2 ಮಂದಿ
  • ಶಿವಮೊಗ್ಗ – 1 ಮಂದಿ
  • ವಿಜಯಪುರ – 5 ಮಂದಿ
  • ಬಳ್ಳಾರಿ – 3 ಮಂದಿ
  • ಧಾರವಾಡ – 1 ಮಂದಿ
  • ಶಿವಮೊಗ್ಗ ಮಹಿಳಾ ಬ್ಯಾರೆಕ್ – 1 ಮಂದಿ

ರಾಜ್ಯದ ಒಟ್ಟು 9 ಕಾರಾಗೃಹಗಳಿಂದ ಬಿಡುಗಡೆ ಆದೇಶ ನೀಡಲಾಗಿದೆ. 54 ಜೀವಾವಧಿ ಶಿಕ್ಷೆ ಸಹಿತ ಬಂಧಿಗಳ ವ್ಯಕ್ತಿತ್ವ ಮತ್ತು ನಡತೆಯನ್ನು ಪರಿಶೀಲಿಸಿ, 31 ಕೈದಿಗಳಿಗೆ ಸನ್ನಡತೆ ಆಧಾರದ ಮೇಲೆ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ.

ಬಿಡುಗಡೆಗೊಂಡವರಲ್ಲಿ ಪ್ರಮುಖರು: ಶ್ರೀನಿವಾಸ್ ಅಲಿಯಾಸ್ ಡ್ರೈವರ್ ಶ್ರೀನಿವಾಸ್, ಬಾಲರಾಜು, ವೆಂಕಟೇಶ್, ರಂಜಿತ್ @ ಬಟ್ಟ, ಭುವನೇಶ್ವರ ಟಿಪಿ, ಛತ್ರಪತಿ ನಾಯಕ್, ಲಿಂಗರಾಜು, ಶ್ರೀನಿವಾಸ್ ಮೂರ್ತಿ, ಯಮನಪ್ಪ, ನಿಲಕಂಠಾಚಾರ್ @ ಶಂಕರ್, ಬಾಬು, ರಾಜಾಚಾರಿ, ನಾರಾಯಣಗೌಡ, ವೆಂಕಟೇಶ್, ಚಂದ್ರಮ್ಮ, ತುಕಾರಾಮ್, ಜಯಮ್ಮ, ಸುಭಾಷ್, ತಿಮ್ಮಪ್ಪ, ಅಶೋಕ್, ಶಿವಪ್ಪ, ಆನಂದ, ಪ್ರಕಾಶ್, ಸುರೇಶ್, ಹೆಚ್‌ಕೆ ರವಿಕುಮಾರ್, ಜಿ.ಎಲ್ ಮೋಹನ್ ಕುಮಾರ್, ಮಂಜೆ ನಾಯ್ಕ್, ಲಕ್ಷ್ಮಿ ಕಾಂತ್, ಸರಸ್ವತಿ.

ಈ ಕ್ರಮವು ಜೈಲಿನ ಅತಿರೇಕ ಜನಸಂಖ್ಯೆಯನ್ನು ನಿಯಂತ್ರಿಸಲು ಮತ್ತು ಉತ್ತಮ ನಡತೆಯ ಖ್ಯಾತಿಯನ್ನು ಹೊಂದಿರುವ ಕೈದಿಗಳಿಗೆ ಅವಕಾಶ ಒದಗಿಸಲು ಸಹಾಯಕವಾಗಿದೆ.

ರಸ್ತೆ ಅಪಘಾತ: ಅಜ್ಜ–ಮೊಮ್ಮಗಳು ದಾರುಣ ಸಾವು!

ಬಳ್ಳಾರಿ: ಭೀಕರ ರಸ್ತೆ ಅಪಘಾತದಲ್ಲಿ ಅಜ್ಜ ಮತ್ತು ಮೊಮ್ಮಗಳು ಸ್ಥಳದಲ್ಲೇ ಮೃತಪಟ್ಟ ಘಟನೆ ವಿಜಯನಗರ ಜಿಲ್ಲೆ, ಕೂಡ್ಲಿಗಿ ತಾಲೂಕು, ಕ್ಯಾಸನಕೆರೆ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ನಡೆದಿದೆ.

ಕರ್ನಾರಹಟ್ಟಿ ಗ್ರಾಮದ ಈಶ್ವರಪ್ಪ (55) ಮತ್ತು ಅವರ ಮೊಮ್ಮಗಳು ಸೃಷ್ಟಿ (14) ಮೃತ ದುರ್ದೈವಿಗಳಾಗಿದ್ದಾರೆ.

ಸೃಷ್ಟಿ ಕೂಡ್ಲಿಗಿ ಪಟ್ಟಣದ ಶಾಲೆಯಲ್ಲಿ 8ನೇ ತರಗತಿ ಓದುತ್ತಿದ್ದಳು. ಪರೀಕ್ಷೆ ಮುಗಿದ ಬಳಿಕ ತಾತನೊಂದಿಗೆ ಬೈಕ್‌ನಲ್ಲಿ ಸ್ವಗ್ರಾಮಕ್ಕೆ ಹೊರಟಿದ್ದಳು.

ಘಟನೆಯ ವೇಳೆ ಹೆದ್ದಾರಿಯಲ್ಲಿ ರೈತರು ರಾಗಿ ಒಣಗಿಸಲು ಹಾಕಿದ್ದ ಕಾರಣ ಬೈಕ್ ಸ್ಕಿಡ್ ಆಗಿದೆ. ಬೈಕ್ ಕೆಳಗೆ ಬಿದ್ದಿದ್ದು, ಹಿಂಬದಿಯಿಂದ ಬರುತ್ತಿದ್ದ ಲಾರಿ ಹರಿದು ತಾತ ಮತ್ತು ಮೊಮ್ಮಗಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಘಟನಾ ಸ್ಥಳಕ್ಕೆ ಕೂಡ್ಲಿಗಿ ಪಿಎಸ್‌ಐ ಮತ್ತು ಸಿಪಿಐ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣವನ್ನು ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ದಾಖಲಿಸಿ ತನಿಖೆ ಆರಂಭಿಸಲಾಗಿದೆ.

 

ಬೆಂಗಳೂರು: ಎಲ್‌ಪಿಜಿ ಕೊರತೆ ಸುಳ್ಳು ವದಂತಿ, ಗ್ಯಾಸ್ ಬಗ್ಗೆ ಜಿಲ್ಲಾಧಿಕಾರಿ ಸ್ಪಷ್ಟನೆ!

ಬೆಂಗಳೂರು: ಗಲ್ಫ್ ದೇಶಗಳಲ್ಲಿ ನಡೆಯುತ್ತಿರುವ ಯುದ್ಧದಿಂದಾಗಿ ಜಾಗತಿಕ ತೈಲ ಬೆಲೆ ಏರಿಕೆ ಮತ್ತು ಗ್ಯಾಸ್ ಪೂರೈಕೆಯಲ್ಲಿ ಅಸ್ಥಿರತೆ ಉಂಟಾಗಿದೆ.

ಈ ಹಿನ್ನೆಲೆಯಲ್ಲಿ ಬೆಂಗಳೂರು ನಗರದಲ್ಲಿ LPG ಸಿಲಿಂಡರ್ ಕೊರತೆ ಇದೆ ಎಂಬ ಸುಳ್ಳು ಸುದ್ದಿ ಹರಡುತ್ತಿದ್ದು, ಸಾರ್ವಜನಿಕರಲ್ಲಿ ಭಯ ಸೃಷ್ಟಿಯಾಗುತ್ತಿದೆ.

ಈ ಬಗ್ಗೆ ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ.ಜಿ ಮಾತನಾಡಿ, “ನಗರದಲ್ಲಿ ಗೃಹಬಳಕೆ ಅಡುಗೆ ಅನಿಲ ಸಿಲಿಂಡರ್‌ಗಳು ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿದ್ದು, ಕೊರತೆ ಇರುವುದಿಲ್ಲ. ಸುಳ್ಳು ವದಂತಿಗಳಿಗೆ ಗಮನ ಕೊಡಬೇಡಿ. ಗೃಹಬಳಕೆ ಅನಿಲಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಗಳಿಗೆ ಸಹಾಯವಾಣಿ 9611404384 ಸಂಪರ್ಕಿಸಬಹುದು” ಎಂದು ಹೇಳಿದರು.

ಈ ಬಗ್ಗೆ ಹೋಟೆಲ್ ಮಾಲೀಕರ ಸಂಘದ ಗೌರವಾಧ್ಯಕ್ಷ ಪಿಸಿ ರಾವ್ ಮಾತನಾಡಿ, “ಬ್ಯಾಂಕ್, ಐಟಿ ಕಂಪನಿಗಳು, ಆಸ್ಪತ್ರೆಗಳಿಗೆ ಹೋಟೆಲ್‌ಗಳು ಪ್ರಮುಖ ಸೇವೆ ನೀಡುತ್ತಿವೆ. ಹೋಟೆಲ್‌ಗಳು ಬಂದ್ ಆಗುವುದಿಲ್ಲ. ಬಾಗಿಲು ಮುಚ್ಚಿದ ಹೋಟೆಲ್‌ಗಳನ್ನು ಕೂಡ ಶೀಘ್ರದಲ್ಲಿಯೇ ತೆರೆಯಲಾಗುತ್ತದೆ. 98% ಹೋಟೆಲ್‌ಗಳು ಈ ಸಮಯದಲ್ಲಿ ಬೆಲೆ ಏರಿಸುವುದಿಲ್ಲ” ಎಂದಿದ್ದಾರೆ.

ಸ್ವಲ್ಪ ನಡೆಯುತ್ತಲೇ ಹೃದಯ ಬಡಿತ ಹೆಚ್ಚಾಗುತ್ತಾ? ಈ ರೀತಿ ಆಗುವುದಕ್ಕೆ ರೀಸನ್ ಏನು ಗೊತ್ತಾ?

0

ಮೆಟ್ಟಿಲು ಏರಿದಾಗ ಅಥವಾ ಸ್ವಲ್ಪ ದೂರ ನಡೆದು ಹೋದಾಗ ಹೃದಯ ಬಡಿತ ಹೆಚ್ಚಾಗುವುದು ಕೆಲವರಿಗೆ ಸಾಮಾನ್ಯವಾಗಿ ಕಾಣಿಸಬಹುದು. ಆದರೆ ಕೆಲವರಿಗೆ ಸ್ವಲ್ಪ ದೂರ ನಡೆದರೂ ಉಸಿರಾಟ ಹೆಚ್ಚಾಗಿ ಹೃದಯ ಬಡಿತ ವೇಗವಾಗುವುದನ್ನು ಅವರು ಗಮನಿಸುತ್ತಾರೆ.

ಇದನ್ನು ಕೆಲವರು ಉಸಿರಾಟದ ಸಮಸ್ಯೆ ಎಂದು ಭಾವಿಸುತ್ತಾರೆ, ಮತ್ತೊಬ್ಬರು ಹೃದಯ ಸಂಬಂಧಿತ ಸಮಸ್ಯೆ ಎಂದುಕೊಂಡು ಚಿಕಿತ್ಸೆ ಪಡೆಯಲು ಪ್ರಯತ್ನಿಸುತ್ತಾರೆ.

ಮೆಟ್ಟಿಲು ಏರಿದಾಗ ಹೃದಯ ಬಡಿತ ತುಂಬಾ ವೇಗವಾಗಿ ಹೋಗಿ ಉಸಿರಾಟ ಹೆಚ್ಚಾದರೆ ಅದು ಹೃದಯ ಸಂಬಂಧಿತ ಸಮಸ್ಯೆಯ ಸೂಚನೆ ಆಗಬಹುದು. ಹೃದಯದ ರಕ್ತನಾಳಗಳಲ್ಲಿ ಬ್ಲಾಕ್ ಆದಾಗ ಹೃದಯಕ್ಕೆ ಸಮರ್ಪಕವಾಗಿ ಆಮ್ಲಜನಕ ತಲುಪುವುದಿಲ್ಲ. ಇದರಿಂದ ಹೃದಯ ಹೆಚ್ಚು ಕೆಲಸ ಮಾಡಬೇಕಾಗುತ್ತದೆ, ಪರಿಣಾಮವಾಗಿ ಉಸಿರಾಟ ಹೆಚ್ಚಾಗುತ್ತದೆ. ಇಂತಹ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಅಗತ್ಯ ಎಂದು ತಜ್ಞರು ಹೇಳಿದ್ದಾರೆ.

ಇದೇ ವೇಳೆ, ಕೆಲವರಿಗೆ ಹೃದಯ ಬಡಿತ ಹೆಚ್ಚಾಗುವುದಕ್ಕೆ ಆತಂಕ ಅಥವಾ ಮಾನಸಿಕ ಒತ್ತಡವೂ ಕಾರಣವಾಗಬಹುದು. ಉದಾಹರಣೆಗೆ, ಯಾವುದಾದರೂ ಸ್ಥಳಕ್ಕೆ ಹೋಗುವ ಮೊದಲು ಭಯವು, ಕಚೇರಿ ಸಭೆಗೂ ಮುನ್ನ ಹೃದಯ ಬಡಿತ ಹೆಚ್ಚಾಗುವುದು, ಅಥವಾ ಸದಾ ಚಿಂತೆ ಮಾಡುವುದು – ಇವು ಮಾನಸಿಕ ಆರೋಗ್ಯ ಸಮಸ್ಯೆಯ ಲಕ್ಷಣಗಳಾಗಬಹುದು. ಇಂತಹ ಸಂದರ್ಭಗಳಲ್ಲಿ ಮನೋವೈದ್ಯರನ್ನು ಸಂಪರ್ಕಿಸುವುದು ಸೂಕ್ತವಾಗಿದೆ.

ಹೃದಯ ಬಡಿತ ಹೆಚ್ಚಾಗಲು ದೇಹದಲ್ಲಿ ಹಿಮೋಗ್ಲೋಬಿನ್ ಕೊರತೆ ಇದ್ದರೆ (ಅನಿಮಿಯಾ), ಅಥವಾ ಥೈರಾಯ್ಡ್ ಸಮಸ್ಯೆಯಿದ್ದರೆ ಸಹ ಕಾರಣವಾಗಬಹುದು. ಮಹಿಳೆಯರಲ್ಲಿ ಈ ಲಕ್ಷಣಗಳು ಹೆಚ್ಚು ಕಾಣಿಸಬಹುದು.

ತಡೆಗಟ್ಟಲು ಏನು ಮಾಡಬೇಕು?

  • ಪ್ರತಿದಿನ ಕನಿಷ್ಠ 30 ನಿಮಿಷ ನಡೆದು ವ್ಯಾಯಾಮ ಮಾಡುವುದು.
  • ಆರೋಗ್ಯಕರ ಆಹಾರ ಸೇವಿಸುವುದು.
  • ಯೋಗ ಅಥವಾ ಧ್ಯಾನದಿಂದ ಒತ್ತಡ ಕಡಿಮೆ ಮಾಡುವುದು.
  • ನಿಯಮಿತ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು.

ಬಿಕ್ಲು ಶಿವ ಕೊಲೆ ಪ್ರಕರಣ: ಶಾಸಕ ಬೈರತಿ ಬಸವರಾಜ್‌ಗೆ ಷರತ್ತುಬದ್ಧ ಜಾಮೀನು!

ಬೆಂಗಳೂರು: ಭಾರೀ ಸಂಚಲನ ಮೂಡಿಸಿದ್ದ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಕೆಆರ್ ಪುರಂ ಕ್ಷೇತ್ರದ ಬಿಜೆಪಿ ಶಾಸಕ ಬೈರತಿ ಬಸವರಾಜ್ ಅವರಿಗೆ ಕೊನೆಗೂ ಜಾಮೀನು ದೊರೆತಿದೆ.

ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಇಂದು ಕೆಲವು ಷರತ್ತುಗಳೊಂದಿಗೆ ಜಾಮೀನು ಮಂಜೂರು ಮಾಡಿದೆ. ಈ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರೂ ಅವರಿಗೆ ಜಾಮೀನು ಸಿಕ್ಕಿರಲಿಲ್ಲ. ಬಳಿಕ ಪೊಲೀಸರ ಬಂಧನ ಭೀತಿಯಿಂದ ತಲೆಮರೆಸಿಕೊಂಡಿದ್ದ ಬೈರತಿ ಬಸವರಾಜ್ ಫೆಬ್ರವರಿ 13ರಂದು ಬೆಂಗಳೂರಿಗೆ ಆಗಮಿಸುವ ವೇಳೆ ವಿಮಾನ ನಿಲ್ದಾಣದಲ್ಲೇ ಸಿಐಡಿ ಅಧಿಕಾರಿಗಳು ಅವರನ್ನು ಬಂಧಿಸಿದ್ದರು.

ಈಗ ನ್ಯಾಯಾಲಯವು 2 ಲಕ್ಷ ರೂಪಾಯಿ ಬಾಂಡ್ ಹಾಗೂ ಇಬ್ಬರು ಶ್ಯೂರಿಟಿಗಳನ್ನು ಒದಗಿಸುವಂತೆ ಸೂಚಿಸಿ ಜಾಮೀನು ಮಂಜೂರು ಮಾಡಿದೆ. ಜೊತೆಗೆ ಸಾಕ್ಷ್ಯಾಧಾರಗಳನ್ನು ನಾಶಪಡಿಸಬಾರದು, ಸಾಕ್ಷಿಗಳಿಗೆ ಬೆದರಿಕೆ ಹಾಕಬಾರದು ಹಾಗೂ ನ್ಯಾಯಾಲಯದ ಅನುಮತಿ ಇಲ್ಲದೆ ತನ್ನ ವ್ಯಾಪ್ತಿಯನ್ನು ಬಿಟ್ಟು ಹೊರಗೆ ಹೋಗಬಾರದು ಎಂಬ ಷರತ್ತುಗಳನ್ನು ವಿಧಿಸಿದೆ.

2025ರ ಜುಲೈ 15ರಂದು ಹಲಸೂರು ಕೆರೆ ಸಮೀಪ ರೌಡಿ ಶೀಟರ್ ಬಿಕ್ಲು ಶಿವ ಅಲಿಯಾಸ್ ಶಿವಪ್ರಕಾಶ್ ಅವರನ್ನು ಕೊಲೆ ಮಾಡಲಾಗಿತ್ತು. ಜಮೀನು ವಿವಾದದ ಹಿನ್ನೆಲೆಯಲ್ಲಿ ಈ ಕೊಲೆ ನಡೆದಿರಬಹುದು ಎಂದು ಶಂಕಿಸಲಾಗಿದೆ.

ಈ ಪ್ರಕರಣದಲ್ಲಿ ಶಾಸಕ ಬೈರತಿ ಬಸವರಾಜ್ ಸೇರಿದಂತೆ ಜಗದೀಶ್, ಕಿರಣ್, ವಿಮಲ್ ಮತ್ತು ಅನಿಲ್ ವಿರುದ್ಧ ಭಾರತೀನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ಈ ಪ್ರಕರಣದಲ್ಲಿ ಬೈರತಿ ಬಸವರಾಜ್ ಐದನೇ ಆರೋಪಿಯಾಗಿದ್ದಾರೆ.

ಕೊಲೆಯಾದ ಶಿವಪ್ರಕಾಶ್ ಅವರ ತಾಯಿ ವಿಜಯಲಕ್ಷ್ಮಿ ನೀಡಿದ ದೂರಿನ ಆಧಾರದಲ್ಲಿ ಸಿಐಡಿ ಪೊಲೀಸರು ಪ್ರಕರಣದ ತನಿಖೆ ಮುಂದುವರೆಸಿದ್ದಾರೆ.

 

ಟಿ20 ವಿಶ್ವಕಪ್ ವೇಳೆ ಮಾಡಿದ ತಪ್ಪು ಒಪ್ಪಿಕೊಂಡ ಸೂರ್ಯಕುಮಾರ್ ಯಾದವ್!

0

2026ರ ಟಿ20 ವಿಶ್ವಕಪ್ ಫೈನಲ್‌ನಲ್ಲಿ ನ್ಯೂಜಿಲೆಂಡ್ ತಂಡವನ್ನು 96 ರನ್‌ಗಳಿಂದ ಸೋಲಿಸಿ ಟೀಂ ಇಂಡಿಯಾ ಸತತ ಎರಡನೇ ಬಾರಿ ವಿಶ್ವಕಪ್ ಕಿರೀಟ ಗೆದ್ದುಕೊಂಡಿದೆ.

ಈ ಭರ್ಜರಿ ಗೆಲುವಿನ ನಂತರ ದೇಶಾದ್ಯಂತ ಭಾರಿ ಸಂಭ್ರಮಾಚರಣೆ ನಡೆದಿತ್ತು. ಇದೀಗ ವಿಶ್ವಕಪ್ ಮುಗಿದು ನಾಲ್ಕು ದಿನಗಳ ಬಳಿಕ ಟೀಂ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ತಂಡದ ಉಪನಾಯಕ ಅಕ್ಷರ್ ಪಟೇಲ್ ಬಳಿ ಬಹಿರಂಗವಾಗಿ ಕ್ಷಮೆಯಾಚಿಸಿರುವ ವಿಚಾರ ಬೆಳಕಿಗೆ ಬಂದಿದೆ.

ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ಒಟ್ಟು 9 ಪಂದ್ಯಗಳನ್ನು ಆಡಿತ್ತು. ಆದರೆ ಈ ಪಂದ್ಯಗಳಲ್ಲಿ ಎರಡು ಪಂದ್ಯಗಳಿಂದ ಅಕ್ಷರ್ ಪಟೇಲ್ ಅವರನ್ನು ಪ್ಲೇಯಿಂಗ್ ಇಲೆವೆನ್‌ನಿಂದ ಕೈಬಿಡಲಾಗಿತ್ತು. ಅದರಲ್ಲೂ ಸೂಪರ್-8 ಹಂತದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಮಹತ್ವದ ಪಂದ್ಯಕ್ಕೂ ಅಕ್ಷರ್ ಪಟೇಲ್ ಅವರನ್ನು ತಂಡದಿಂದ ಹೊರಗಿಡಲಾಗಿತ್ತು.

ಅಕ್ಷರ್ ಬದಲಿಗೆ ಅವಕಾಶ ಪಡೆದ ವಾಷಿಂಗ್ಟನ್ ಸುಂದರ್ ಬೌಲಿಂಗ್ ಹಾಗೂ ಬ್ಯಾಟಿಂಗ್ ಎರಡರಲ್ಲೂ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲರಾದರು. ಪರಿಣಾಮವಾಗಿ ಟೀಂ ಇಂಡಿಯಾ ಆ ಪಂದ್ಯದಲ್ಲಿ 76 ರನ್‌ಗಳಿಂದ ಸೋಲು ಅನುಭವಿಸಿತು. ಈ ಸೋಲಿನ ಬಳಿಕ ಅಭಿಮಾನಿಗಳು ಹಾಗೂ ಕ್ರಿಕೆಟ್ ತಜ್ಞರು ನಾಯಕ ಸೂರ್ಯಕುಮಾರ್ ಯಾದವ್ ಹಾಗೂ ಕೋಚ್ ಗೌತಮ್ ಗಂಭೀರ್ ವಿರುದ್ಧ ಟೀಕೆ ವ್ಯಕ್ತಪಡಿಸಿದ್ದರು.

ಇದೇ ವೇಳೆ ತಂಡದಿಂದ ಹೊರಗಿಟ್ಟಿದ್ದಕ್ಕೆ ಅಕ್ಷರ್ ಪಟೇಲ್ ಕೂಡ ಅಸಮಾಧಾನಗೊಂಡಿದ್ದರು ಎಂದು ತಿಳಿದುಬಂದಿದೆ. ಇದೀಗ ವಿಶ್ವಕಪ್ ಗೆಲುವಿನ ನಂತರ ಈ ಘಟನೆಯ ಬಗ್ಗೆ ಮಾತನಾಡಿರುವ ಸೂರ್ಯಕುಮಾರ್ ಯಾದವ್, ತಮ್ಮ ನಿರ್ಧಾರ ತಪ್ಪಾಗಿತ್ತು ಎಂದು ಒಪ್ಪಿಕೊಂಡಿದ್ದಾರೆ.

‘ನಾನು ತೆಗೆದುಕೊಂಡ ಆ ನಿರ್ಧಾರದಿಂದ ಅಕ್ಷರ್ ತುಂಬಾ ಕೋಪಗೊಂಡಿದ್ದರು. ಅವರು ಕೋಪಗೊಂಡಿದ್ದರಲ್ಲಿ ತಪ್ಪೇನಿಲ್ಲ. ಅಕ್ಷರ್ ಅನುಭವಿ ಆಟಗಾರ. ಐಪಿಎಲ್ ಫ್ರಾಂಚೈಸಿಯನ್ನೂ ಮುನ್ನಡೆಸುತ್ತಿದ್ದಾರೆ. ಅಂತಹ ಆಟಗಾರನನ್ನು ತಂಡದಿಂದ ಹೊರಗಿಡುವುದರಿಂದ ಅವರಿಗೆ ನೋವಾಗುವುದು ಸಹಜ. ಪಂದ್ಯದ ಬಳಿಕ ನಾನು ಅವರೊಂದಿಗೆ ಮಾತನಾಡಿ ನನ್ನ ನಿರ್ಧಾರಕ್ಕೆ ಕ್ಷಮೆಯಾಚಿಸಿದ್ದೆ’ ಎಂದು ಸೂರ್ಯಕುಮಾರ್ ಯಾದವ್ ತಿಳಿಸಿದ್ದಾರೆ.

ತಂಡದ ಹಿತದೃಷ್ಟಿಯಿಂದ ನಿರ್ಧಾರ ತೆಗೆದುಕೊಳ್ಳಲಾಗಿದ್ದರೂ ಅದು ಸರಿಯಾದ ನಿರ್ಧಾರವಾಗಿರಲಿಲ್ಲ. ಆದರೆ ಅಕ್ಷರ್ ಪಟೇಲ್ ಅದಕ್ಕೆ ಬಹಳ ಪ್ರಬುದ್ಧವಾಗಿ ಪ್ರತಿಕ್ರಿಯಿಸಿದರು ಎಂದು ಸೂರ್ಯಕುಮಾರ್ ಯಾದವ್ ಸಂದರ್ಶನದಲ್ಲಿ ಹೇಳಿದ್ದಾರೆ.

 

ಸಣ್ಣ ವಿಷಯಕ್ಕೂ ಹೆಚ್ಚು ಚಿಂತೆ ಮಾಡುತ್ತೀರಾ? ಇದು ಓವರ್‌ಥಿಂಕಿಂಗ್ ಲಕ್ಷಣ!

0

ಇತ್ತೀಚಿನ ದಿನಗಳಲ್ಲಿ ಅತಿಯಾಗಿ ಯೋಚಿಸುವವರ ಸಂಖ್ಯೆ ಹೆಚ್ಚಾಗುತ್ತಿರುವುದು ಗಮನಾರ್ಹವಾಗಿದೆ.

ಕೆಲಸದ ಒತ್ತಡ, ಭವಿಷ್ಯದ ಬಗ್ಗೆ ಚಿಂತೆ, ಕುಟುಂಬದ ಜವಾಬ್ದಾರಿಗಳು ಹಾಗೂ ದೈನಂದಿನ ಸಮಸ್ಯೆಗಳು ಜನರನ್ನು ಅಗತ್ಯಕ್ಕಿಂತ ಹೆಚ್ಚು ಯೋಚಿಸುವಂತೆ ಮಾಡುತ್ತಿವೆ. ಸಣ್ಣ ವಿಷಯಗಳನ್ನೂ ದೀರ್ಘಕಾಲ ಯೋಚಿಸುವುದರಿಂದ ಮೆದುಳಿಗೆ ಬೇಕಾದಷ್ಟು ವಿಶ್ರಾಂತಿ ಸಿಗದೆ, ಇದು ಕ್ರಮೇಣ ವ್ಯಕ್ತಿಯ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

ತಜ್ಞರ ಪ್ರಕಾರ ನಿರಂತರವಾಗಿ ಹೆಚ್ಚು ಯೋಚಿಸುವುದು ಮನಸ್ಸಿನ ಮೇಲೆ ಮಾತ್ರವಲ್ಲದೆ ದೇಹದ ಮೇಲೂ ಪರಿಣಾಮ ಬೀರುತ್ತದೆ. ದೆಹಲಿಯ ನ್ಯೂರಾಲಜಿಸ್ಟ್ ಡಾ. ರಾಜೇಶ್ ಕುಮಾರ್ ಅವರ ಪ್ರಕಾರ, ಅತಿಯಾಗಿ ಯೋಚಿಸುವುದರಿಂದ ಮಾನಸಿಕ ಒತ್ತಡ ಹೆಚ್ಚಾಗುತ್ತದೆ. ಇದು ದೀರ್ಘಕಾಲ ಮುಂದುವರಿದರೆ ದೇಹದಲ್ಲಿನ ಹಾರ್ಮೋನ್ ಸಮತೋಲನಕ್ಕೂ ವ್ಯತ್ಯಾಸ ಉಂಟಾಗಬಹುದು. ಪರಿಣಾಮವಾಗಿ ತಲೆನೋವು, ದಣಿವು ಮತ್ತು ದುರ್ಬಲತೆ ಕಾಣಿಸಬಹುದು.

ಹೆಚ್ಚಾಗಿ ಯೋಚಿಸುವವರಲ್ಲಿ ನಿದ್ರೆ ಸಂಬಂಧಿತ ಸಮಸ್ಯೆಗಳೂ ಕಾಣಿಸಬಹುದು. ತಡವಾಗಿ ನಿದ್ರೆ ಬರುವುದು, ಮಧ್ಯರಾತ್ರಿ ಪದೇ ಪದೇ ಎಚ್ಚರವಾಗುವುದು ಸಾಮಾನ್ಯ ಲಕ್ಷಣಗಳಾಗಿವೆ. ಜೊತೆಗೆ ಈ ಅಭ್ಯಾಸದಿಂದ ಕೆಲಸ ಅಥವಾ ಓದಿನ ಮೇಲೆ ಗಮನ ಕಡಿಮೆಯಾಗಬಹುದು. ಕೆಲವರಲ್ಲಿ ಅಶಾಂತಿ, ಆತಂಕ ಕೂಡ ಹೆಚ್ಚಾಗುವ ಸಾಧ್ಯತೆ ಇದೆ. ದೀರ್ಘಕಾಲದ ಮಾನಸಿಕ ಒತ್ತಡದಿಂದ ಜೀರ್ಣಕ್ರಿಯೆ ಸಂಬಂಧಿತ ಸಮಸ್ಯೆಗಳೂ ಉಂಟಾಗಬಹುದು ಎಂದು ತಜ್ಞರು ತಿಳಿಸಿದ್ದಾರೆ.

ಹೆಚ್ಚಾಗಿ ಯೋಚಿಸುವವರಲ್ಲಿ ಸಣ್ಣ ವಿಷಯಗಳಿಗೂ ಅತಿಯಾಗಿ ಚಿಂತೆ ಮಾಡುವುದು, ಮನಸ್ಸನ್ನು ಶಾಂತವಾಗಿಡಲು ಕಷ್ಟವಾಗುವುದು, ಸರಿಯಾದ ನಿದ್ರೆ ಬಾರದಿರುವುದು, ದಣಿವು ಹಾಗೂ ಕೆಲಸದ ಮೇಲೆ ಗಮನ ಕೆಂದ್ರೀಕರಿಸಲು ಆಗದಿರುವುದು ಪ್ರಮುಖ ಲಕ್ಷಣಗಳಾಗಿವೆ.

ಈ ಸಮಸ್ಯೆಯನ್ನು ನಿಯಂತ್ರಿಸಲು ಜೀವನಶೈಲಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡುವುದು ಅಗತ್ಯ. ನಿಯಮಿತವಾಗಿ ವ್ಯಾಯಾಮ, ಯೋಗ ಮತ್ತು ಧ್ಯಾನ ಮಾಡುವುದರಿಂದ ಮನಸ್ಸು ಶಾಂತವಾಗಿರಲು ಸಹಾಯವಾಗುತ್ತದೆ. ಸಾಕಷ್ಟು ನಿದ್ರೆ ಪಡೆಯುವುದು ಮತ್ತು ಸಮತೋಲನಯುತ ದಿನಚರಿಯನ್ನು ಪಾಲಿಸುವುದು ಕೂಡ ಮುಖ್ಯ. ಒತ್ತಡ ಅಥವಾ ಆತಂಕ ದೀರ್ಘಕಾಲ ಮುಂದುವರೆದರೆ ವೈದ್ಯರ ಸಲಹೆ ಪಡೆಯುವುದು ಉತ್ತಮ ಎಂದು ತಜ್ಞರು ಸಲಹೆ ನೀಡಿದ್ದಾರೆ.

ಕರ್ನಾಟಕ ಮಾದರಿ ಬಳಸಿ ಅಸ್ಸಾಂ ಚುನಾವಣೆ ಗೆಲ್ಲಬಹುದು ಎಂದು AI ಹೇಳುತ್ತದೆ: ಡಿ.ಕೆ. ಶಿವಕುಮಾರ್

ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯಲ್ಲಿ 388 ಹಳೆಯ ಶೌಚಾಲಯಗಳ ಜತೆಗೆ ಹೊಸದಾಗಿ 441 ಶೌಚಾಲಯಗಳನ್ನು ನಿರ್ಮಾಣ ಮಾಡಲಾಗುತ್ತಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.

ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯೆ ಆರತಿ ಕೃಷ್ಣ ಅವರು ಜಿಬಿಎ ವ್ಯಾಪ್ತಿಯ ಸಾರ್ವಜನಿಕ ಶೌಚಾಲಯಗಳು ಬಳಕೆಗೆ ಯೋಗ್ಯವಿಲ್ಲ, ಜನಸ್ನೇಹಿಯಾಗಿಲ್ಲ, ಎಐ ಬಳಸಿ ಸ್ವಚ್ಛತೆ ಪರಿಶೀಲನೆ ಮಾಡಬೇಕು ಎಂದು ಕೇಳಿದಾಗ ಶಿವಕುಮಾರ್ ಅವರು ಗುರುವಾರ ಉತ್ತರಿಸಿದರು.

“ನಗರದಾದ್ಯಂತ 380 ಸಾರ್ವಜನಿಕ ಶೌಚಾಲಯಗಳಿವೆ. 65 ಶೌಚಾಲಯಗಳನ್ನು ನಿವೃತ್ತ ಪೌರಕಾರ್ಮಿಕರಿಗೆ ನಡೆಸಲು ನೀಡಿದ್ದೇವೆ. 20 ಶೌಚಾಲಯಗಳನ್ನು ವಿಶೇಷ ಚೇತನರು ನಡೆಸುತ್ತಿದ್ದಾರೆ. ಶುಭ್ರ ಬೆಂಗಳೂರು ಯೋಜನೆ ಅಡಿ 60 ಶೌಚಾಲಯಗಳನ್ನು ನಿರ್ಮಾಣ ಮಾಡಲಾಗುವುದು. 191 ಶೌಚಾಲಯಗಳು ಹೊಸದಾಗಿ ನಿರ್ಮಾಣವಾಗುತ್ತಿವೆ. ಸ್ವಚ್ಚ ಭಾರತ ಮಿಷನ್ ಅಡಿ ಕೇಂದ್ರ ಸರ್ಕಾರ 13.5 ಕೋಟಿ ಹಣ ನೀಡಿದ್ದಾರೆ.

ಅದರಲ್ಲಿ 90 ಶೌಚಾಲಯ ನಿರ್ಮಿಸುತ್ತಿದ್ದು, ಬ್ರಾಂಡ್ ಬೆಂಗಳೂರು ಯೋಜನೆಯಡಿ 100 ಶೌಚಾಲಯ ನಿರ್ಮಾಣ ಮಾಡಲಾಗುತ್ತಿದೆ. ಇದು ಮಹಿಳೆಯರಿಗಾಗಿ ನಿರ್ಮಾಣ ಮಾಡಲಾಗುತ್ತಿದೆ. 441 ಹೊಸ ಶೌಚಾಲಯಗಳು ಹಾಗೂ 388 ಹಳೆಯ ಶೌಚಾಲಯಗಳಿವೆ. ಇವುಗಳ ಜತೆಗೆ ಯಾವುದಾದರೂ ನಿರ್ದಿಷ್ಟ ಸ್ಥಳಗಳಲ್ಲಿ ಶೌಚಾಲಯಗಳ ಅಗತ್ಯತೆ ಬಗ್ಗೆ ನಮ್ಮ ಗಮನಕ್ಕೆ ತಂದರೆ ಅಲ್ಲೂ ಜಾಗ ಲಭ್ಯತೆ ನೋಡಿಕೊಂಡು, ಶೌಚಾಲಯ ನಿರ್ಮಾಣ ಮಾಡಲಾಗುವುದು” ಎಂದು ತಿಳಿಸಿದರು.

ಕರ್ನಾಟಕ ಮಾದರಿ ಬಳಸಿ ಅಸ್ಸಾಂ ಚುನಾವಣೆ ಗೆಲ್ಲಬಹುದು ಎಂದು ಎಐ ಹೇಳುತ್ತದೆ

ಬಿಜೆಪಿ ಸದಸ್ಯೆ ಭಾರತಿ ಶೆಟ್ಟಿ ಅವರು ರಾಜ್ಯದಲ್ಲಿ ಆಡಳಿತ ಸುಧಾರಣೆ ಕುರಿತು ಕೃತಕ ಬುದ್ಧಿಮತ್ತೆ ಬಳಕೆ ಬಗ್ಗೆ ಕೇಳಿದ ಪ್ರಶ್ನೆಗೆ, “ಈಗ ನಾವೆಲ್ಲರೂ ಕೃತಕ ಬುದ್ಧಿಮತ್ತೆಯ ಹೊಸಯುಗಕ್ಕೆ ಕಾಲಿಡುತ್ತಿದ್ದೇವೆ. ಈ ಬಗ್ಗೆ ಪ್ರಪಂಚದೆಲ್ಲೆಡೆ ಚರ್ಚೆಯಾಗುತ್ತಿದ್ದು, ಪ್ರಧಾನಮಂತ್ರಿಗಳು ಈ ವಿಚಾರವಾಗಿ ದೊಡ್ಡ ಸಮ್ಮೇಳನ ನಡೆಸಿದರು. ಕೋರ್ಟ್ ಗಳಲ್ಲಿ ಇದರ ಬಳಕೆ ಬಗ್ಗೆ ಚರ್ಚೆ ಮಾಡಲಾಗಿದೆ. ಸಿಬಿಎಸ್ಸಿಯಲ್ಲಿ 3ರಿಂದ 8ನೇ ತರಗತಿವರೆಗೆ ಈ ವಿಚಾರವನ್ನು ಪಠ್ಯದಲ್ಲಿ ಸೇರಿಸಲು ತಿಳಿಸಲಾಗಿದೆ.

ಆಡಳಿತದಲ್ಲಿ ಈ ಕೃತಕಬುದ್ಧಿಮತ್ತೆ ಬಳಕೆ ಬಗ್ಗೆ ತೀರ್ಮಾನ ಮಾಡುವ ಮುನ್ನ ದೊಡ್ಡ ಸಂಶೋಧನೆ ಆಗಬೇಕು. ಸಂಶೋಧನೆಯಾಗದೇ ಈ ಬಗ್ಗೆ ತೀರ್ಮಾನ ಮಾಡುವುದು ಕಷ್ಟ. ಪರಿಷತ್ ಸಭಾಪತಿಗಳು ಸದನದ ಕಡತಗಳನ್ನು ಸ್ಕ್ಯಾನ್ ಮಾಡಿ ಕಂಪ್ಯೂಟರ್ ಗೆ ಹಾಕಿದರೆ ಅಲ್ಲವೇ ಡಿಜಿಟಲ್ ಆಗಿ ರೂಪುಗೊಳ್ಳುವು. ಅದೇ ರೀತಿ ಕೃತಕಬುದ್ಧಿಮತ್ತೆಯಲ್ಲಿ ಹೊಸದಾಗಿ ಏನನ್ನೂ ಸೃಷ್ಟಿ ಮಾಡಲು ಆಗುವುದಿಲ್ಲ. ನೀವು ಅದರಲ್ಲಿ ಏನು ಹಾಕುತ್ತೀರೋ ಅದೇ ಹೊರಗೆ ಬರುತ್ತದೆ. ಈ ವಿಚಾರವಾಗಿ ತೀರ್ಮಾನ ಮಾಡುವುದು ಕಷ್ಟ” ಎಂದು ತಿಳಿಸಿದ್ದಾರೆ.

“ನಾನು ಭಾಷಣ ವಿಚಾರವಾಗಿ ನನ್ನ ಪಿಎಗೆ ಕರೆ ಮಾಡಿ ಕೇಳುವಾಗ, ನೀವು ಅದನ್ನು ಯಾಕೆ ಕೇಳುತ್ತೀರಿ, ಚಾಟ್ ಜಿಪಿಟಿಯಲ್ಲಿ ಹಾಕಿ ಎಂದು ನನ್ನ ಮಗಳು ಹೇಳಿದಳು. ಆಗ ನನಗೆ ಸಾಕಷ್ಟು ಮಾಹಿತಿಗಳು ಸಿಕ್ಕವು. ನಾನು ಈ ರೀತಿ ಕೃತಕಬುದ್ಧಿಮತ್ತೆ ಬಳಕೆ ವಿಚಾರದಲ್ಲಿ ಸಾಕಷ್ಟು ಪ್ರಯೋಗ ಮಾಡಿದ್ದೇನೆ. ಆದರೆ ನಿಖರತೆ ಇನ್ನಷ್ಟು ಸುಧಾರಿಸಬೇಕಾಗಿದೆ.

ಈ ವಿಚಾರದ ಬಗ್ಗೆ ಸಭಾಪತಿಗಳೇ ಸಂಶೋಧನೆ ಮಾಡಲಿ. ಸದನದಲ್ಲಿರುವ ದಾಖಲೆಗಳನ್ನು ಕಂಪ್ಯೂಟರ್ ಗೆ ಅಪ್ ಲೋಡ್ ಮಾಡದೇ ನಿಮಗೆ ಮಾಹಿತಿ ಸಿಗಲು ಹೇಗೆ ಸಾಧ್ಯ? ಕೋರ್ಟ್ ನಲ್ಲಿ ಈ ಹಿಂದೆ ಬಂದಿರುವ ತೀರ್ಪುಗಳನ್ನು ಅಪ್ ಲೋಡ್ ಮಾಡಿದಾಗ ಮಾತ್ರ ಅದರಲ್ಲಿ ಮಾಹಿತಿ ಸಿಗುತ್ತದೆ. ಹಾಗೆಂದು ಅವುಗಳನ್ನೇ ಆಧರಿಸಿ ತೀರ್ಪು ಬರೆಯಲು ಆಗುವುದಿಲ್ಲ” ಎಂದು ವಿವರಿಸಿದರು.

“ನಾನು ಚುನಾವಣೆ ಹಿನ್ನೆಲೆಯಲ್ಲಿ ಅಸ್ಸಾಂಗೆ ಹೋದಾಗ, ಅಲ್ಲಿನ ಚುನಾವಣೆ ಗೆಲ್ಲುವುದು ಹೇಗೆ ಎಂದು ಎಐ ಮೂಲಕ ಪ್ರಶ್ನೆ ಕೇಳಿದೆ, ಅದಕ್ಕೆ ಅದು ನೀವು ಕರ್ನಾಟಕ ಮಾದರಿ ಅನುಸರಿಸಿ ಅಸ್ಸಾಂ ಚುನಾವಣೆ ಗೆಲ್ಲುತ್ತೀರಿ ಎಂದು ಹೇಳುತ್ತದೆ” ಎಂದು ತಿಳಿಸಿದರು.

ರಾಜ್ಯ ಸರ್ಕಾರ ಮಂಡಿಸಿರುವ ಬಜೆಟ್ ತಮಗೆ ಸಮಾಧಾನಕರವಾಗಿಲ್ಲ: ಶಾಸಕ ಇಕ್ಬಾಲ್ ಹುಸೇನ್

ರಾಮನಗರ: ರಾಜ್ಯ ಸರ್ಕಾರ ಮಂಡಿಸಿರುವ ಬಜೆಟ್ ತಮಗೆ ಸಮಾಧಾನಕರವಾಗಿಲ್ಲ ಎಂದು ಶಾಸಕ ಇಕ್ಬಾಲ್ ಹುಸೇನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರಾಮನಗರ ಜಿಲ್ಲೆಯ ಮೊಟ್ಟೆದೊಡ್ಡಿ ಗ್ರಾಮದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತಮ್ಮ ಕ್ಷೇತ್ರದ ಹಲವು ಸಮಸ್ಯೆಗಳ ಕುರಿತು ಮುಖ್ಯಮಂತ್ರಿಗೆ ಮನವಿ ಮಾಡಿದ್ದರೂ ಬಜೆಟ್ನಲ್ಲಿ ಸೂಕ್ತ ಅನುದಾನ ನೀಡಲಾಗಿಲ್ಲ ಎಂದು ಹೇಳಿದರು.

ಭಕ್ಷಿಕೆರೆ ಒಡೆದು ಉಂಟಾದ ಪ್ರವಾಹ ಸಮಸ್ಯೆ ಕುರಿತು ಫೋಟೋಗಳನ್ನು ತೋರಿಸಿ ಮಾಹಿತಿ ನೀಡಿದ್ದೆ. ಹಿಂದಿನ ಜನಪ್ರತಿನಿಧಿಗಳು ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮಾಡಿಲ್ಲ ಎಂದು ಹೇಳಿದರು.

ರಸ್ತೆ, ಚರಂಡಿ ಮತ್ತು ನೀರಾವರಿ ಸಮಸ್ಯೆಗಳ ಕುರಿತು ನಾಲ್ಕೈದು ಬಾರಿ ಮನವಿ ಮಾಡಿದ್ದೆ. ಕ್ಷೇತ್ರಕ್ಕೆ ವಿಶೇಷ ಅನುದಾನ ನೀಡುವಂತೆ ಕೇಳಿದ್ದರೂ ಮುಖ್ಯಮಂತ್ರಿ ಯಾವುದೇ ಕ್ರಮ ಕೈಗೊಂಡಿಲ್ಲ. ಪಾರದರ್ಶಕವಾಗಿ ಅನುದಾನ ದೊರೆಯುತ್ತದೆ ಎಂಬ ನಂಬಿಕೆ ಇತ್ತು, ಆದರೆ ಅದು ನೆರವೇರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಈಗ ಕ್ಷೇತ್ರದ ಅಭಿವೃದ್ಧಿಗಾಗಿ ಉಪ ಮುಖ್ಯಮಂತ್ರಿ ಅವರನ್ನೇ ಸಂಪರ್ಕಿಸಬೇಕಾಗಿದೆ. ಹಿಂದೆ ಅವರ ಸಹಕಾರದಿಂದ ಅಭಿವೃದ್ಧಿ ಕೆಲಸಗಳನ್ನು ಮಾಡಿಸಿಕೊಂಡಿದ್ದೆ. ಇದು ಅವರ ಜಿಲ್ಲೆಯೂ ಆಗಿರುವುದರಿಂದ ಮುಂದೆಯೂ ಅವರ ಮೇಲೆಯೇ ಜವಾಬ್ದಾರಿ ಇರಲಿದೆ ಎಂದು ಶಾಸಕ ಇಕ್ಬಾಲ್ ಹುಸೇನ್ ಹೇಳಿದರು.

ಯುವತಿ ಆತ್ಮಹತ್ಯೆ ಪ್ರಕರಣ: ಜೆಡಿಎಸ್ ಮುಖಂಡೆ ಪುತ್ರನಿಗೆ ಜಾಮೀನು ಮಂಜೂರು!

0

ಕಾರವಾರ: ಕಿರುಕುಳಕ್ಕೆ ಬೇಸತ್ತು ಯುವತಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣದಲ್ಲಿ ಜೆಡಿಎಸ್ ಮುಖಂಡೆಯ ಪುತ್ರನಿಗೆ ಧಾರವಾಡ ವಿಭಾಗೀಯ ಪೀಠ ಜಾಮೀನು ಮಂಜೂರು ಮಾಡಿದೆ.

ಆರೋಪಿ ಚಿರಾಗ್ ಕೊಠಾರಕರ್ಗೆ ನ್ಯಾಯಾಲಯ ಜಾಮೀನು ನೀಡಿದೆ. ಯುವತಿ ಆತ್ಮಹತ್ಯೆ ಪ್ರಕರಣದಲ್ಲಿ ಅವರನ್ನು ಜನವರಿ 29ರಂದು ಕದ್ರಾ ಪೊಲೀಸರು ಚೆನ್ನೈನಲ್ಲಿ ಬಂಧಿಸಿದ್ದರು. ಕಳೆದ ಸುಮಾರು ಒಂದೂವರೆ ತಿಂಗಳಿನಿಂದ ಜೈಲಿನಲ್ಲಿ ಇದ್ದರು.

ರಿಶೇಲ್ ಡಿಸೋಜಾ ಎಂಬ ಯುವತಿಯನ್ನು ಚಿರಾಗ್ ಪ್ರೀತಿಸುತ್ತಿದ್ದ ಎಂದು ತಿಳಿದುಬಂದಿದೆ. ಜನವರಿ 10ರಂದು ಕದ್ರಾದ ಕೆಪಿಸಿ ಕಾಲೊನಿಯಲ್ಲಿ ರಿಶೇಲ್ ಡಿಸೋಜಾ ಆತ್ಮಹತ್ಯೆ ಮಾಡಿಕೊಂಡಿದ್ದಳು.

ನಮ್ಮ ಪುತ್ರಿಗೆ ಕಿರುಕುಳ ನೀಡಿ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಿ ಚಿರಾಗ್ ವಿರುದ್ಧ ಯುವತಿಯ ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದರು.

ಚಿರಾಗ್ ಬಂಧಿಸುವಂತೆ ಆಗ್ರಹಿಸಿ ರಿಶೇಲ್ ಕುಟುಂಬದವರು ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಸಿದ್ದರು. ಪ್ರಕರಣ ಸಂಬಂಧ ಎರಡು ಬಾರಿ ಮರಣೋತ್ತರ ಪರೀಕ್ಷೆ ನಡೆಸಿ ಪೊಲೀಸರು ಪ್ರಕರಣ ದಾಖಲಿಸಿದ್ದರು.

error: Content is protected !!