ಕೊಲ್ಕತ್ತಾ: ಟಿ20 ವಿಶ್ವಕಪ್ನ ನಿರ್ಣಾಯಕ ಸೂಪರ್-8 ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿ ಗೆಲುವು ಸಾಧಿಸಿ ಸೆಮಿಫೈನಲ್ಗೆ ಪ್ರವೇಶಿಸಿದೆ. ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಭಾರತ ರಾಷ್ಟ್ರೀಯ ಕ್ರಿಕೆಟ್ ತಂಡ 5 ವಿಕೆಟ್ಗಳ ಜಯ ಸಾಧಿಸಿದೆ.
ಟಾಸ್ ಗೆದ್ದ ನಾಯಕ ಸೂರ್ಯಕುಮಾರ್ ಯಾದವ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡ 20 ಓವರ್ಗಳಲ್ಲಿ 195 ರನ್ಗಳ ಸವಾಲಿನ ಮೊತ್ತ ಕಲೆಹಾಕಿತು.
196 ರನ್ಗಳ ಗುರಿ ಬೆನ್ನತ್ತಿದ ಭಾರತ ಪರ ಸಂಜು ಸ್ಯಾಮ್ಸನ್ ಅಜೇಯ 97 ರನ್ಗಳ ಅದ್ಭುತ ಇನ್ನಿಂಗ್ಸ್ ಆಡಿದರು. ಅವರ ಹೊನಲು ಬ್ಯಾಟಿಂಗ್ ನೆರವಿನಿಂದ ಭಾರತ 19.2 ಓವರ್ಗಳಲ್ಲಿ 199 ರನ್ಗಳಿಸಿ 5 ವಿಕೆಟ್ಗಳ ಭರ್ಜರಿ ಗೆಲುವು ದಾಖಲಿಸಿತು.
ಪಂದ್ಯದ ಬಳಿಕ ಮಾತನಾಡಿದ ಸೂರ್ಯಕುಮಾರ್ ಯಾದವ್, ಇದು ‘ಮಾಡು ಇಲ್ಲವೇ ಮಡಿ’ ಪಂದ್ಯವಾಗಿತ್ತು. ಇಂತಹ ಒತ್ತಡದ ಸಂದರ್ಭದಲ್ಲಿ ಆಟಗಾರರು ತೋರಿದ ಧೈರ್ಯ ಹಾಗೂ ತಂಡದ ಆಟ ಪ್ರಶಂಸನೀಯ ಎಂದು ಹೇಳಿದರು.
ಸಂಜು ಸ್ಯಾಮ್ಸನ್ ಕುರಿತು ಮಾತನಾಡಿದ ಅವರು, “ಒಳ್ಳೆಯವರಿಗೆ ಒಳ್ಳೆಯದೇ ಆಗುತ್ತದೆ ಎಂಬುದು ನನ್ನ ನಂಬಿಕೆ. ಸಂಜು ಕಠಿಣ ಪರಿಶ್ರಮ ಪಟ್ಟಿದ್ದಾರೆ. ಅವಕಾಶ ಸಿಕ್ಕಾಗ ಅದನ್ನು ಸಮರ್ಥವಾಗಿ ಬಳಸಿಕೊಂಡಿದ್ದಾರೆ,” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಬೌಲರ್ಗಳ ಪ್ರದರ್ಶನಕ್ಕೂ ನಾಯಕ ಮೆಚ್ಚುಗೆ ಸೂಚಿಸಿದರು. ಯೋಜನೆಗಳ ಪ್ರಕಾರ ಬೌಲಿಂಗ್ ಮಾಡಿರುವುದು ತಂಡಕ್ಕೆ ಲಾಭವಾಗಿದೆ. ಈಡನ್ ಗಾರ್ಡನ್ಸ್ನಲ್ಲಿ ಇಬ್ಬನಿಯ ನಡುವೆ 200 ರನ್ ಬೆನ್ನಟ್ಟುವುದು ಕಷ್ಟಕರವಲ್ಲ ಎಂಬುದು ನಮಗೆ ತಿಳಿದಿತ್ತು ಎಂದು ಹೇಳಿದರು.
ಎರಡನೇ ಇನ್ನಿಂಗ್ಸ್ನಲ್ಲಿ ಪಿಚ್ ಬ್ಯಾಟಿಂಗ್ಗೆ ಸಹಕಾರಿಯಾಗಿದ್ದು, ಬ್ಯಾಟರ್ಗಳು ಸಣ್ಣ-ಸಣ್ಣ ಪಾಲುದಾರಿಕೆಗಳನ್ನು ಕಟ್ಟಿಕೊಂಡು ಪಂದ್ಯವನ್ನು ಆಳಕ್ಕೆ ತೆಗೆದುಕೊಂಡರು. ಇದರ ಫಲವಾಗಿ ಗುರಿಯನ್ನು ಯಶಸ್ವಿಯಾಗಿ ಸಾಧಿಸಲು ಸಾಧ್ಯವಾಯಿತು ಎಂದರು.
ಈ ಗೆಲುವಿನೊಂದಿಗೆ ಭಾರತ ಸೆಮಿಫೈನಲ್ಗೆ ಪ್ರವೇಶಿಸಿದ್ದು, ಮುಂದಿನ ಪಂದ್ಯ ಮುಂಬೈನಲ್ಲಿ ನಡೆಯಲಿದೆ. ಆದರೆ ಅದಕ್ಕಿಂತ ಮೊದಲು ವಿಶ್ರಾಂತಿ ಪಡೆದು ನಂತರ ಸೆಮಿಫೈನಲ್ ಬಗ್ಗೆ ಚಿಂತನೆ ನಡೆಸುವುದಾಗಿ ನಾಯಕ ತಿಳಿಸಿದ್ದಾರೆ.
ತವರಿನಲ್ಲಿ ಆಡುತ್ತಿರುವುದರಿಂದ ಒತ್ತಡ ಇರುವುದು ಸಹಜ. ಆದರೆ ಆ ಒತ್ತಡವನ್ನು ಸರಿಯಾಗಿ ನಿಭಾಯಿಸುವುದು ಮುಖ್ಯ. ನಿರ್ಣಾಯಕ ಪಂದ್ಯದಲ್ಲಿ ಅದನ್ನು ಸಾಧಿಸಿದ್ದೇವೆ ಎಂದು ಸೂರ್ಯಕುಮಾರ್ ಯಾದವ್ ಹೇಳಿದರು.


