Home Blog

ಅಡ್ಡದಾರಿ ಅಲ್ಲ, ಪ್ರಾಮಾಣಿಕತೆಯೇ ಯಶಸ್ಸಿನ ದಾರಿ: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿವಾದದ ನಡುವೆ ಮೌನ ಮುರಿದ ಸಚಿನ್!

0

ನೀಟ್ (NEET) ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಆರೋಪದ ಹಿನ್ನೆಲೆಯಲ್ಲಿ ದೇಶಾದ್ಯಂತ ಚರ್ಚೆ ಮುಂದುವರಿದಿರುವ ನಡುವೆ, ಭಾರತ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಈ ವಿಚಾರವಾಗಿ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ವಿದ್ಯಾರ್ಥಿಗಳ ಆತಂಕ ಮತ್ತು ನಿರಾಶೆಯನ್ನು ಅರ್ಥಮಾಡಿಕೊಳ್ಳುವುದಾಗಿ ಹೇಳಿರುವ ಅವರು, ಪ್ರಾಮಾಣಿಕತೆ ಹಾಗೂ ಕಠಿಣ ಪರಿಶ್ರಮವೇ ಯಶಸ್ಸಿನ ನಿಜವಾದ ಮಾರ್ಗ ಎಂದು ಸಂದೇಶ ನೀಡಿದ್ದಾರೆ.

ತಮ್ಮ ಎಕ್ಸ್ (X) ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಸಚಿನ್, ತಮ್ಮ ತಂದೆ ನೀಡಿದ ಜೀವನ ಪಾಠವನ್ನು ನೆನಪಿಸಿಕೊಂಡಿದ್ದಾರೆ.

“ನನ್ನ ತಂದೆ ಪ್ರಾಧ್ಯಾಪಕರಾಗಿದ್ದರು. ಬಾಲ್ಯದಲ್ಲಿಯೇ ಅವರು ನನಗೆ ಒಂದು ಅಮೂಲ್ಯ ಪಾಠ ಕಲಿಸಿದ್ದರು. ವಿಫಲತೆ ತಪ್ಪಲ್ಲ, ಆದರೆ ಮೋಸ ಮಾಡುವುದು ದೊಡ್ಡ ತಪ್ಪು. ಯಾವತ್ತೂ ಅಡ್ಡದಾರಿ ಹಿಡಿಯಬೇಡ ಎಂದು ಅವರು ಹೇಳುತ್ತಿದ್ದರು,” ಎಂದು ಸಚಿನ್ ಬರೆದುಕೊಂಡಿದ್ದಾರೆ.

ಸಮಾಜದಲ್ಲಿ ಕಠಿಣ ಪರಿಶ್ರಮಕ್ಕೆ ಗೌರವ ಸಿಗುವ ಸಂಸ್ಕೃತಿ ನಿರ್ಮಾಣವಾಗಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಫಲಿತಾಂಶಕ್ಕಿಂತ ಶ್ರಮ ಮತ್ತು ಅರ್ಹತೆಗೆ ಹೆಚ್ಚಿನ ಮೌಲ್ಯ ನೀಡುವ ವ್ಯವಸ್ಥೆ ನಿರ್ಮಿಸುವುದು ಎಲ್ಲರ ಜವಾಬ್ದಾರಿ ಎಂದಿದ್ದಾರೆ.

ವಿದ್ಯಾರ್ಥಿಗಳ ನಿರಾಶೆ ಸಹಜ. ಕಠಿಣ ಪರಿಶ್ರಮದ ಬಳಿಕವೂ ನಿರೀಕ್ಷಿತ ಫಲಿತಾಂಶ ಸಿಗದಿದ್ದಾಗ ಉಂಟಾಗುವ ನೋವನ್ನು ಅರ್ಥಮಾಡಿಕೊಳ್ಳಬಹುದು. ಆದರೆ ಇಂತಹ ಪರಿಸ್ಥಿತಿ ಮತ್ತೆ ಮರುಕಳಿಸದಂತೆ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದು ಸಚಿನ್ ಕರೆ ನೀಡಿದ್ದಾರೆ.

ಯುವ ಭಾರತ ಅಪಾರ ಕನಸುಗಳು ಮತ್ತು ಸಾಮರ್ಥ್ಯ ಹೊಂದಿದೆ. ದೇಶದ ಭವಿಷ್ಯ ಯುವಕರ ಕೈಯಲ್ಲಿದ್ದು, ಅವರಿಗೆ ಸರಿಯಾದ ಮಾರ್ಗದರ್ಶನ ಮತ್ತು ಪ್ರೋತ್ಸಾಹ ನೀಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಅವರು ಹೇಳಿದ್ದಾರೆ.

ಪೋಷಕರು, ಶಿಕ್ಷಕರು, ಸ್ನೇಹಿತರು ಹಾಗೂ ಬಂಧುಗಳು ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸ ತುಂಬುವ ಕೆಲಸ ಮಾಡಬೇಕು. ಯುವಕರು ಸದಾ ಉತ್ಸಾಹದಿಂದ ಮುನ್ನಡೆಯಲು ಸಹಕಾರ ನೀಡಬೇಕು. ಕಠಿಣ ಪರಿಶ್ರಮಕ್ಕೆ ಯೋಗ್ಯ ಗೌರವ ದೊರೆಯುವ ಹಾಗೂ ಪ್ರಾಮಾಣಿಕತೆಯನ್ನು ಪ್ರೋತ್ಸಾಹಿಸುವ ಸಮಾಜವನ್ನು ನಿರ್ಮಿಸಬೇಕಾಗಿದೆ ಎಂದು ಅವರು ಒತ್ತಿಹೇಳಿದ್ದಾರೆ.

“ಅಂತಿಮವಾಗಿ ಅರ್ಹತೆಯೇ ಗೆಲ್ಲುವಂತಹ ವ್ಯವಸ್ಥೆ ರೂಪಿಸಬೇಕು. ಮಕ್ಕಳ ಕನಸುಗಳು ಮತ್ತು ಭವಿಷ್ಯವನ್ನು ರಕ್ಷಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಶಾಶ್ವತ ಪರಿಹಾರಕ್ಕಾಗಿ ಎಲ್ಲರೂ ಒಂದಾಗಿ ಕೆಲಸ ಮಾಡೋಣ. ಜೈ ಹಿಂದ್,” ಎಂದು ಸಚಿನ್ ತಮ್ಮ ಸಂದೇಶವನ್ನು ಮುಕ್ತಾಯಗೊಳಿಸಿದ್ದಾರೆ.

₹5 ಸಾವಿರ ಕೇಳಿದ್ದಕ್ಕೆ ಪತ್ನಿಗೆ ಹಲ್ಲೆ; ವೃದ್ಧ ಪತಿಗೆ ಹೈಕೋರ್ಟ್ʼನಿಂದ ತಿಂಗಳಿಗೆ ₹10 ಸಾವಿರ ನೀಡುವಂತೆ ಆದೇಶ

ಬೆಂಗಳೂರು: ಮನೆ ಖರ್ಚಿಗೆ ₹5 ಸಾವಿರ ಕೇಳಿದ್ದ ವಿಚಾರಕ್ಕೆ ಪತ್ನಿಯ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ 73 ವರ್ಷದ ವೃದ್ಧ ಪತಿಯ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಪ್ರಕರಣದ ತನಿಖೆಗೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ. ಆದರೆ, ತಪ್ಪಿಗೆ ಪ್ರಾಯಶ್ಚಿತ್ತವಾಗಿ ಅರ್ಜಿಯ ಮುಂದಿನ ವಿಚಾರಣೆವರೆಗೆ ಪತ್ನಿಗೆ ಪ್ರತಿ ತಿಂಗಳು ₹10 ಸಾವಿರ ಪಾವತಿಸುವಂತೆ ನ್ಯಾಯಾಲಯ ನಿರ್ದೇಶಿಸಿದೆ.

ಬಸವೇಶ್ವರನಗರ ನಿವಾಸಿಯಾಗಿರುವ 73 ವರ್ಷದ ವ್ಯಕ್ತಿಯೊಬ್ಬರು ತಮ್ಮ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣವನ್ನು ರದ್ದುಪಡಿಸುವಂತೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಏಕಸದಸ್ಯ ಪೀಠ ನಡೆಸಿ ಈ ಮಧ್ಯಂತರ ಆದೇಶ ನೀಡಿದೆ.

ಅರ್ಜಿದಾರರ ಪರ ವಕೀಲರು, ಪತಿ (73) ಮತ್ತು ಪತ್ನಿ (65) ವಯೋವೃದ್ಧ ದಂಪತಿಯಾಗಿದ್ದು, ಅವರಿಗೆ ವಯಸ್ಕ ಪುತ್ರ ಹಾಗೂ ಪುತ್ರಿಯಿದ್ದಾರೆ ಎಂದು ನ್ಯಾಯಾಲಯಕ್ಕೆ ವಿವರಿಸಿದರು. ಮನೆ ಖರ್ಚಿಗೆ ಹಣ ಕೇಳಿದ ವಿಚಾರಕ್ಕೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದ್ದು, ಪ್ರಕರಣ ಸಂಧಾನದ ಮೂಲಕ ಬಗೆಹರಿಯುವ ಸಾಧ್ಯತೆ ಇದೆ ಎಂದು ವಾದ ಮಂಡಿಸಿದರು.

ಈ ವೇಳೆ ನ್ಯಾಯಪೀಠ, “ಮನೆ ಖರ್ಚಿಗೆ ಹಣ ಕೇಳಿದರೆ 73 ವರ್ಷದವರಾಗಿದ್ದರೂ ಪತ್ನಿಗೆ ಬೈದು, ಹಲ್ಲೆ ಮಾಡುತ್ತಾರೆಯೇ? ಹೊಡೆಯುವುದಕ್ಕೂ ಬೈಯುವುದಕ್ಕೂ ವಯಸ್ಸಿನ ಮಿತಿ ಇಲ್ಲವೇ?” ಎಂದು ತೀಕ್ಷ್ಣವಾಗಿ ಪ್ರಶ್ನಿಸಿತು.

65 ವರ್ಷದ ಪತ್ನಿ ಹಲ್ಲೆ ಮತ್ತು ಕಿರುಕುಳದ ಆರೋಪ ಮಾಡಿರುವುದನ್ನು ಉಲ್ಲೇಖಿಸಿದ ನ್ಯಾಯಾಲಯ, “ಈ ವಯಸ್ಸಿನಲ್ಲೇ ಪತಿ ಈ ರೀತಿಯಾಗಿ ವರ್ತಿಸುತ್ತಿದ್ದರೆ, ಹಿಂದೆ ಹೇಗೆ ನಡೆದುಕೊಂಡಿರಬಹುದು?” ಎಂದು ಕೂಡ ಪ್ರಶ್ನಿಸಿತು.

ವಿಚಾರಣೆ ವೇಳೆ ಪತ್ನಿ ಮನೆ ಖರ್ಚಿಗೆ ಎಷ್ಟು ಹಣ ಕೇಳಿದ್ದರು ಎಂದು ನ್ಯಾಯಪೀಠ ಪ್ರಶ್ನಿಸಿದಾಗ, ಅರ್ಜಿದಾರರ ಪರ ವಕೀಲರು ₹5 ಸಾವಿರ ಕೇಳಿದ್ದರು ಎಂದು ಉತ್ತರಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳು, “ತನಿಖೆಗೆ ತಡೆಯಾಜ್ಞೆ ನೀಡಬೇಕಾದರೆ, ಪತ್ನಿ ಕೇಳಿದ್ದಕ್ಕಿಂತ ಹೆಚ್ಚು ಹಣ ಕೊಡುತ್ತೀರಾ?” ಎಂದು ಪ್ರಶ್ನಿಸಿದರು. ಇದಕ್ಕೆ ಅರ್ಜಿದಾರರ ಪರ ವಕೀಲರು ಒಪ್ಪಿಗೆ ಸೂಚಿಸಿದರು.

ಇದಾದ ಬಳಿಕ ನ್ಯಾಯಪೀಠ, ಅರ್ಜಿಯ ಮುಂದಿನ ವಿಚಾರಣೆ ನಡೆಯುವವರೆಗೆ ಅರ್ಜಿದಾರರು ತಮ್ಮ ಪತ್ನಿಗೆ ಪ್ರತಿ ತಿಂಗಳು ₹10 ಸಾವಿರ ಪಾವತಿಸಬೇಕು ಎಂದು ನಿರ್ದೇಶಿಸಿತು. ಜೊತೆಗೆ, ಪತಿಯ ವಿರುದ್ಧ ನಡೆಯುತ್ತಿರುವ ತನಿಖೆಗೆ ಮಧ್ಯಂತರ ತಡೆಯಾಜ್ಞೆ ನೀಡಿ ಪ್ರಕರಣದ ವಿಚಾರಣೆಯನ್ನು ಮುಂದೂಡಿತು.

ಖೋಟಾ ನೋಟು ಚಲಾವಣೆಗೆ ಯತ್ನ: ₹18 ಸಾವಿರ ನಕಲಿ ಕರೆನ್ಸಿಯೊಂದಿಗೆ ಇಬ್ಬರ ಬಂಧನ

ಚಿಕ್ಕಮಗಳೂರು: ಖೋಟಾ ನೋಟು ಚಲಾವಣೆಗೆ ಯತ್ನಿಸುತ್ತಿದ್ದ ಇಬ್ಬರನ್ನು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಪೊಲೀಸರು ಬಂಧಿಸಿದ್ದು, ಅವರಿಂದ ₹18 ಸಾವಿರ ಮುಖಬೆಲೆಯ ನಕಲಿ ಕರೆನ್ಸಿ ವಶಪಡಿಸಿಕೊಳ್ಳಲಾಗಿದೆ.

ಬಂಧಿತರನ್ನು ಮಂಗಳೂರಿನ ಮಹಮದ್ ಅಲಿ ಹಾಗೂ ಮೂಡಿಗೆರೆಯ ಮಹೇಶ್ ಎಂದು ಗುರುತಿಸಲಾಗಿದೆ. ಮೂಡಿಗೆರೆ ಪಟ್ಟಣದ ನೂತನ ಲೇಔಟ್ ಪ್ರದೇಶದಲ್ಲಿ ಖೋಟಾ ನೋಟುಗಳನ್ನು ಚಲಾವಣೆಗೆ ತರಲು ಯತ್ನಿಸುತ್ತಿದ್ದ ವೇಳೆ ಪೊಲೀಸರು ಕಾರ್ಯಾಚರಣೆ ನಡೆಸಿ ಇಬ್ಬರನ್ನೂ ವಶಕ್ಕೆ ಪಡೆದಿದ್ದಾರೆ.

ಆರೋಪಿಗಳಿಂದ ₹200 ಮುಖಬೆಲೆಯ ಒಟ್ಟು 90 ಖೋಟಾ ನೋಟುಗಳು, ಅಂದರೆ ₹18 ಸಾವಿರ ಮೌಲ್ಯದ ನಕಲಿ ಕರೆನ್ಸಿ ಪತ್ತೆಯಾಗಿದೆ. ವಿಶೇಷವೆಂದರೆ, ನೋಟುಗಳ ಮೇಲೆ “Reserve Bank of India” ಬದಲಾಗಿ “Bisarv Bank of India” ಎಂದು ಮುದ್ರಿಸಿರುವುದು ಬೆಳಕಿಗೆ ಬಂದಿದೆ.

ಈ ಸಂಬಂಧ ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಖೋಟಾ ನೋಟುಗಳ ಮೂಲ ಹಾಗೂ ಜಾಲದ ಹಿಂದೆ ಇರುವವರ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಟೈಯರ್ ಬ್ಲಾಸ್ಟ್‌ಗೆ ಬಿಯರ್ ಲಾರಿ ಪಲ್ಟಿ; ₹15 ಲಕ್ಷ ಮೌಲ್ಯದ ಮದ್ಯ ರಸ್ತೆಪಾಲು, ಸಂಚಾರ ಅಸ್ತವ್ಯಸ್ತ

0

ಹಾಸನ: ಹಾಸನದ ದೊಡ್ಡಪುರ ಗ್ರಾಮದ ಸಮೀಪ ಬಿಯರ್ ಸಾಗಿಸುತ್ತಿದ್ದ ಲಾರಿಯೊಂದು ಟೈಯರ್ ಸಿಡಿದು ಪಲ್ಟಿಯಾಗಿದ್ದು, ಸುಮಾರು ₹15 ಲಕ್ಷ ಮೌಲ್ಯದ ಬಿಯರ್ ರಸ್ತೆ ಮೇಲೆ ಚೆಲ್ಲಾಪಿಲ್ಲಿಯಾಗಿ ಬಿದ್ದಿದೆ. ಘಟನೆಯಿಂದ ಒಂದು ಬದಿಯ ರಸ್ತೆ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.

ಹಾಸನ ಕೈಗಾರಿಕಾ ಪ್ರದೇಶದಲ್ಲಿರುವ ವುಡ್ ಪಿಕರ್ ಕಂಪನಿಯಿಂದ ಕೊಪ್ಪಳಕ್ಕೆ ಸುಮಾರು 1,100 ಬಿಯರ್ ಬಾಟಲ್‌ಗಳನ್ನು ಸಾಗಿಸುತ್ತಿದ್ದ ಲಾರಿ ದೊಡ್ಡಪುರ ಗ್ರಾಮದ ಬಳಿ ತಲುಪುತ್ತಿದ್ದಂತೆ ಟೈಯರ್ ಬ್ಲಾಸ್ಟ್ ಆಗಿದೆ. ಪರಿಣಾಮ ಚಾಲಕನ ನಿಯಂತ್ರಣ ತಪ್ಪಿದ ಲಾರಿ ಡಿವೈಡರ್ ಏರಿ ಪಲ್ಟಿಯಾಗಿದೆ.

ಅಪಘಾತದ ರಭಸಕ್ಕೆ ಲಾರಿಯಲ್ಲಿದ್ದ ಲೆಜೆಂಡ್, ರಾಯಲ್, ಪವರ್ ಕೂಲ್ ಹಾಗೂ ಸನ್ನಿ ಬೀಚಸ್ ಬ್ರ್ಯಾಂಡ್‌ನ ಬಿಯರ್ ಬಾಟಲ್‌ಗಳು ಮತ್ತು ಟಿನ್‌ಗಳು ರಸ್ತೆಯುದ್ದಕ್ಕೂ ಚೆಲ್ಲಾಪಿಲ್ಲಿಯಾಗಿದ್ದು, ಬಹುತೇಕ ಮದ್ಯ ನಷ್ಟವಾಗಿದೆ.

ಮಾಹಿತಿ ತಿಳಿಯುತ್ತಿದ್ದಂತೆ ಹಾಸನ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ವಾಹನ ತೆರವು ಹಾಗೂ ಸಂಚಾರ ಪುನಃಸ್ಥಾಪನೆಗೆ ಕ್ರಮ ಕೈಗೊಂಡಿದ್ದಾರೆ.

ಸಿಜೆಪಿ ಪ್ರತಿಭಟನಾಕಾರರ ಪಾಸ್ ಪೋರ್ಟ್ ರದ್ದು ಎಂಬ ವೈರಲ್ ಸುದ್ದಿ ಸುಳ್ಳು: ದೆಹಲಿ ಪೊಲೀಸರಿಂದ ಸ್ಪಷ್ಟನೆ

0

ನವದೆಹಲಿ: ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನೇತೃತ್ವದ ಪ್ರತಿಭಟನೆ ಹಿನ್ನೆಲೆಯಲ್ಲಿ ಪ್ರತಿಭಟನಾಕಾರರ ಪಾಸ್‌ಪೋರ್ಟ್‌ಗಳನ್ನು ರದ್ದುಗೊಳಿಸಲಾಗುತ್ತದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದರೂ, ಈ ಕುರಿತು ಯಾವುದೇ ಅಧಿಕೃತ ನಿರ್ಧಾರ ಕೈಗೊಂಡಿಲ್ಲ ಎಂದು ದೆಹಲಿ ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಪೋಸ್ಟ್‌ಗಳಲ್ಲಿ, ಪ್ರತಿಭಟನೆ ವೇಳೆ ಹಿಂಸಾಚಾರ, ಗಲಭೆ ಹಾಗೂ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಮಾಡಿರುವವರನ್ನು ಗುರುತಿಸಿ ಅವರ ಪಾಸ್‌ಪೋರ್ಟ್‌ಗಳನ್ನು ರದ್ದುಗೊಳಿಸುವ ಪ್ರಕ್ರಿಯೆಯನ್ನು ದೆಹಲಿ ಪೊಲೀಸರು ಆರಂಭಿಸಲಿದ್ದಾರೆ ಎಂದು ಹೇಳಲಾಗಿತ್ತು. ಈ ಸಂಬಂಧ ಸಿಸಿಟಿವಿ ದೃಶ್ಯಾವಳಿ, ವಿಡಿಯೊ ದಾಖಲೆಗಳು ಹಾಗೂ ಇತರೆ ತಾಂತ್ರಿಕ ಸಾಕ್ಷ್ಯಗಳನ್ನು ಪರಿಶೀಲಿಸಲಾಗುತ್ತಿದೆ ಎಂಬ ಮಾಹಿತಿಯೂ ಹರಿದಾಡಿತ್ತು.

ಆದರೆ ಈ ಎಲ್ಲ ಸುದ್ದಿಗಳನ್ನು ದೆಹಲಿ ಪೊಲೀಸರು ಸ್ಪಷ್ಟವಾಗಿ ತಳ್ಳಿಹಾಕಿದ್ದಾರೆ. ಸಿಜೆಪಿ ಪ್ರತಿಭಟನಾಕಾರರ ಪಾಸ್‌ಪೋರ್ಟ್‌ಗಳನ್ನು ರದ್ದುಗೊಳಿಸುವ ಕುರಿತು ಯಾವುದೇ ಅಧಿಕೃತ ಆದೇಶ ಅಥವಾ ನಿರ್ಧಾರ ಕೈಗೊಳ್ಳಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಇದಲ್ಲದೆ, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಇಂತಹ ಆಧಾರರಹಿತ ಹಾಗೂ ದಾರಿತಪ್ಪಿಸುವ ಮಾಹಿತಿಯನ್ನು ನಂಬಬಾರದು ಮತ್ತು ಇತರರೊಂದಿಗೆ ಹಂಚಿಕೊಳ್ಳಬಾರದು ಎಂದು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.

ಯಾವುದೇ ಮಹತ್ವದ ಮಾಹಿತಿ ಅಥವಾ ಕ್ರಮಗಳ ಕುರಿತು ಅಧಿಕೃತ ಮೂಲಗಳಿಂದ ಪ್ರಕಟವಾಗುವ ಮಾಹಿತಿಯನ್ನೇ ನಂಬುವಂತೆ ದೆಹಲಿ ಪೊಲೀಸರು ನಾಗರಿಕರಿಗೆ ಸಲಹೆ ನೀಡಿದ್ದಾರೆ.

ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ಕೇಂದ್ರದ ಬಿಗ್ ಸ್ಟೆಪ್: 10 ವರ್ಷ ಜೈಲು, ₹1 ಕೋಟಿ ದಂಡಕ್ಕೆ ಕಠಿಣ ಕಾನೂನು!

0

ನವದೆಹಲಿ: ದೇಶಾದ್ಯಂತ ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಪರೀಕ್ಷಾ ಅಕ್ರಮಗಳಿಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಮತ್ತಷ್ಟು ಕಠಿಣ ಕಾನೂನು ಜಾರಿಗೆ ಮುಂದಾಗಿದೆ. ಸಾರ್ವಜನಿಕ ಪರೀಕ್ಷೆಗಳ (ಅಕ್ರಮ ತಡೆ) ಕಾಯ್ದೆ–2024ಕ್ಕೆ ತಿದ್ದುಪಡಿ ತರಲು ಸರ್ಕಾರ ಸಿದ್ಧತೆ ನಡೆಸಿದ್ದು, ತಪ್ಪಿತಸ್ಥರಿಗೆ ಗರಿಷ್ಠ 10 ವರ್ಷ ಜೈಲು ಶಿಕ್ಷೆ ಹಾಗೂ ₹1 ಕೋಟಿ ದಂಡ ವಿಧಿಸುವ ಪ್ರಸ್ತಾವಕ್ಕೆ ಕೇಂದ್ರ ಸಚಿವ ಸಂಪುಟ ಶೀಘ್ರವೇ ಅನುಮೋದನೆ ನೀಡುವ ಸಾಧ್ಯತೆ ಇದೆ.

ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ವಿಡಿಯೋ ಸಂದೇಶದಲ್ಲಿ ಘೋಷಿಸಿದ ಬೆನ್ನಲ್ಲೇ ಈ ಮಹತ್ವದ ಬೆಳವಣಿಗೆ ನಡೆದಿದೆ.

ಮೂಲಗಳ ಪ್ರಕಾರ, ಸಾರ್ವಜನಿಕ ಪರೀಕ್ಷೆಗಳ (ಅಕ್ರಮ ತಡೆ) ಕಾಯ್ದೆ–2024ಕ್ಕೆ ತಿದ್ದುಪಡಿ ತರುವ ಪ್ರಸ್ತಾವವನ್ನು ಶುಕ್ರವಾರ ನಡೆಯಲಿರುವ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಮಂಡಿಸುವ ಸಾಧ್ಯತೆ ಇದೆ. ತಿದ್ದುಪಡಿ ಜಾರಿಯಾದರೆ ಪರೀಕ್ಷಾ ಅಕ್ರಮಗಳ ತನಿಖೆ ಮತ್ತು ವಿಚಾರಣೆಯನ್ನು ತ್ವರಿತಗೊಳಿಸಲು ವಿಶೇಷ ಫಾಸ್ಟ್ ಟ್ರ್ಯಾಕ್ ಕೋರ್ಟ್‌ಗಳ ಸ್ಥಾಪನೆಗೂ ಕಾನೂನು ಮಾನ್ಯತೆ ಸಿಗಲಿದೆ.

ಪ್ರಸ್ತುತ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳಲ್ಲಿ ತಪ್ಪಿತಸ್ಥರಿಗೆ 3 ರಿಂದ 5 ವರ್ಷಗಳ ಜೈಲು ಶಿಕ್ಷೆ ಹಾಗೂ ₹10 ಲಕ್ಷದವರೆಗೆ ದಂಡ ವಿಧಿಸುವ ಅವಕಾಶವಿದೆ. ಆದರೆ ಹೊಸ ತಿದ್ದುಪಡಿಯಡಿ ಶಿಕ್ಷೆಯನ್ನು 5 ರಿಂದ 10 ವರ್ಷಗಳಿಗೆ ಹೆಚ್ಚಿಸುವ ಜೊತೆಗೆ, ದಂಡವನ್ನು ₹1 ಕೋಟಿವರೆಗೆ ಏರಿಸಲು ಸರ್ಕಾರ ಮುಂದಾಗಿದೆ.

ಬೆಂಗಳೂರು ಮೆಟ್ರೋ ದರ ಮತ್ತೆ ಹೆಚ್ಚಳವಾಗುತ್ತಾ? BMRCL ಹೊಸ ಲೆಕ್ಕಾಚಾರ ಏನು?

ಬೆಂಗಳೂರು: ನಮ್ಮ ಮೆಟ್ರೋ ಪ್ರಯಾಣ ದರ ಏರಿಕೆ ವಿಚಾರ ಮತ್ತೆ ಚರ್ಚೆಗೆ ಬಂದಿದೆ.

ಈಗಾಗಲೇ ದುಬಾರಿಯಾಗಿರುವ ಮೆಟ್ರೋ ಪ್ರಯಾಣ ದರವನ್ನು ಮತ್ತಷ್ಟು ಹೆಚ್ಚಿಸುವ ಕುರಿತು ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಹೊಸ ಲೆಕ್ಕಾಚಾರ ನಡೆಸುತ್ತಿದೆ ಎನ್ನಲಾಗಿದೆ.

ಮೆಟ್ರೋ ಹಂತ-3ಎ (Phase 3A) ಯೋಜನೆಗಾಗಿ ಸಿದ್ಧಪಡಿಸಲಾಗಿರುವ ಪರಿಷ್ಕೃತ ಸಮಗ್ರ ಯೋಜನಾ ವರದಿ (DPR)ಯಲ್ಲಿ ಮುಂದಿನ ವರ್ಷಗಳಲ್ಲಿ ದರ ಪರಿಷ್ಕರಣೆಗೆ ಹೊಸ ಸೂತ್ರವನ್ನು ಪ್ರಸ್ತಾಪಿಸಲಾಗಿದೆ. ಇದರ ಪ್ರಕಾರ ಪ್ರತಿ ವರ್ಷ ದರ ಹೆಚ್ಚಿಸುವ ಬದಲು, ಮೂರು ವರ್ಷಕ್ಕೊಮ್ಮೆ ಒಟ್ಟಿಗೆ ಶೇ.12ರಷ್ಟು ದರ ಹೆಚ್ಚಳ ಮಾಡುವ ಪ್ರಸ್ತಾವನೆ ಮಾಡಲಾಗಿದೆ.

ಪ್ರಸ್ತುತ ಜಾರಿಯಲ್ಲಿರುವ ವಾರ್ಷಿಕ ದರ ಹೆಚ್ಚಳದ ನಿಯಮಗಳ ನಡುವೆ BMRCL ಮುಂದಿಟ್ಟಿರುವ ಈ ಹೊಸ ಪ್ರಸ್ತಾವನೆ ಪ್ರಯಾಣಿಕರಲ್ಲಿ ಚರ್ಚೆಗೆ ಕಾರಣವಾಗಿದೆ.

ಬೆಂಗಳೂರು ಮೆಟ್ರೋ ದೇಶದ ದುಬಾರಿ ಮೆಟ್ರೋ ಸೇವೆಗಳಲ್ಲಿ ಒಂದಾಗಿದೆ. 2025ರ ಫೆಬ್ರವರಿಯಲ್ಲಿ ಮೆಟ್ರೋ ಟಿಕೆಟ್ ದರವನ್ನು ಸರಾಸರಿ ಶೇ.51.55ರಷ್ಟು ಹೆಚ್ಚಿಸಲಾಗಿತ್ತು. ದರ ಏರಿಕೆಗೆ ಭಾರಿ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಬಳಿಕ BMRCL ಶೇ.5ರಷ್ಟು ದರ ಕಡಿತ ಮಾಡಿತ್ತು. ಆದರೂ ಪ್ರಯಾಣಿಕರ ಮೇಲಿನ ಹೊರೆ ಕಡಿಮೆಯಾಗಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು.

ಇದೀಗ ಹೊಸ DPRನಲ್ಲಿ ಪ್ರತಿ ಮೂರು ವರ್ಷಕ್ಕೊಮ್ಮೆ ಪ್ರಯಾಣ ದರವನ್ನು ಶೇ.12ರಷ್ಟು ಹೆಚ್ಚಿಸುವ ಕುರಿತು ಸಮಿತಿ ಶಿಫಾರಸು ಮಾಡಿದೆ. ಈ ಪ್ರಸ್ತಾವನೆಗೆ ಸಂಬಂಧಿಸಿದಂತೆ BMRCL ಮುಂದಿನ ದಿನಗಳಲ್ಲಿ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬುದು ಕುತೂಹಲ ಮೂಡಿಸಿದೆ.

ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯಕ್ಕೆ ಸಲ್ಲಿಸಿರುವ ಪರಿಷ್ಕೃತ ಯೋಜನಾ ವರದಿಯಲ್ಲಿ ಈ ದರ ಪರಿಷ್ಕರಣೆ ಪ್ರಸ್ತಾಪವನ್ನು ಉಲ್ಲೇಖಿಸಲಾಗಿದೆ. ಮೆಟ್ರೋ ಹಂತ-3ಎ ಕಾಮಗಾರಿಯನ್ನು 2033ರೊಳಗೆ ಪೂರ್ಣಗೊಳಿಸುವ ಗುರಿಯನ್ನು ಹೊಂದಲಾಗಿದೆ.

ದರ ಏರಿಕೆ ಜಾರಿಯಾದರೆ ಬೆಂಗಳೂರಿನ ಲಕ್ಷಾಂತರ ನಿತ್ಯ ಮೆಟ್ರೋ ಪ್ರಯಾಣಿಕರ ಮೇಲೆ ನೇರ ಪರಿಣಾಮ ಬೀರುವ ಸಾಧ್ಯತೆ ಇದೆ.

ಕುಂಭಮೇಳದ ವೈರಲ್ ಚೆಲುವೆ ಮೋನಾಲಿಸಾ ಬದುಕಿಗೆ ಹೊಸ ತಿರುವು: ಮದುವೆ ವಿವಾದದ ನಡುವೆ ಜೀವ ಬೆದರಿಕೆ, ಪೊಲೀಸ್ ಭದ್ರತೆಗೆ ಹೈಕೋರ್ಟ್ ಆದೇಶ

ಕೊಚ್ಚಿ: ಕುಂಭಮೇಳದಲ್ಲಿ ರುದ್ರಾಕ್ಷಿ ಮಾರಾಟ ಮಾಡುತ್ತಿದ್ದ ವೇಳೆ ವೈರಲ್ ಆಗಿ ದೇಶಾದ್ಯಂತ ಗಮನ ಸೆಳೆದಿದ್ದ ಮೋನಾಲಿಸಾ ಜೀವನ ಇದೀಗ ಮತ್ತೊಂದು ತಿರುವು ಪಡೆದುಕೊಂಡಿದೆ. ಸಿನಿಮಾ ಅವಕಾಶಗಳ ಮೂಲಕ ಹೊಸ ಬದುಕು ಕಟ್ಟಿಕೊಳ್ಳುವ ಹಾದಿಯಲ್ಲಿದ್ದ ಮೋನಾಲಿಸಾ, ನಟ ಫರ್ಮಾನ್ ಖಾನ್ ಅವರನ್ನು ವಿವಾಹವಾದ ಬಳಿಕ ವಿವಾದಗಳ ಸುಳಿಯಲ್ಲಿ ಸಿಲುಕಿದ್ದು, ಇದೀಗ ಜೀವ ಬೆದರಿಕೆ ಆರೋಪದ ಹಿನ್ನೆಲೆಯಲ್ಲಿ ಕೇರಳ ಹೈಕೋರ್ಟ್ ಪೊಲೀಸ್ ಭದ್ರತೆ ನೀಡುವಂತೆ ಆದೇಶಿಸಿದೆ.

ಕುಂಭಮೇಳದಲ್ಲಿ ವೈರಲ್ ಆದ ನಂತರ ಮೋನಾಲಿಸಾಗೆ ಹಲವು ಸಿನಿಮಾ ಅವಕಾಶಗಳು ಬಂದಿದ್ದವು. ಇದೇ ವೇಳೆ ಸಿನಿಮಾ ಚಿತ್ರೀಕರಣದ ಸಂದರ್ಭದಲ್ಲಿ ನಟ ಫರ್ಮಾನ್ ಖಾನ್ ಅವರೊಂದಿಗೆ ಪರಿಚಯ ಬೆಳೆದು ಅದು ಪ್ರೀತಿಗೆ ತಿರುಗಿ, ಬಳಿಕ ಕುಟುಂಬದ ವಿರೋಧದ ನಡುವೆಯೇ ಇಬ್ಬರೂ ವಿವಾಹವಾಗಿದ್ದರು.

ಆದರೆ ಮದುವೆಯ ಬಳಿಕ ಈ ಸಂಬಂಧ ‘ಲವ್ ಜಿಹಾದ್’ ಆರೋಪ, ಕುಟುಂಬದ ತೀವ್ರ ವಿರೋಧ ಹಾಗೂ ಬಾಲ್ಯವಿವಾಹದ ಆರೋಪ ಸೇರಿದಂತೆ ಹಲವು ವಿವಾದಗಳಿಗೆ ಕಾರಣವಾಯಿತು. ಈ ಬೆಳವಣಿಗೆಗಳ ನಡುವೆ ತಮ್ಮ ಜೀವಕ್ಕೆ ಅಪಾಯವಿದೆ ಎಂದು ಆರೋಪಿಸಿದ ಮೋನಾಲಿಸಾ, ಕೇರಳ ಹೈಕೋರ್ಟ್ ಮೊರೆ ಹೋಗಿ ಪೊಲೀಸ್ ರಕ್ಷಣೆ ಕೋರಿ ಅರ್ಜಿ ಸಲ್ಲಿಸಿದ್ದರು.

ಅರ್ಜಿಯ ವಿಚಾರಣೆ ನಡೆಸಿದ ಕೇರಳ ಹೈಕೋರ್ಟ್, ಮೋನಾಲಿಸಾಗೆ ಅಗತ್ಯ ಪೊಲೀಸ್ ಭದ್ರತೆ ಒದಗಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ. ಈ ಆದೇಶದೊಂದಿಗೆ ಮೋನಾಲಿಸಾ ಪ್ರಕರಣ ಮತ್ತೊಮ್ಮೆ ರಾಷ್ಟ್ರಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದೆ.

‘2001ರ ಆಸಿಡ್ ದಾಳಿ ಆಗದೇ ಇದ್ದಿದ್ದರೆ ಅಮ್ಮ ಇಷ್ಟು ಬೇಗ ಹೋಗುತ್ತಿರಲಿಲ್ಲ’: ಕಣ್ಣೀರಿಟ್ಟ ಹೆಚ್.ಡಿ. ರೇವಣ್ಣ

0

ಹಾಸನ: ತಾಯಿ ಚೆನ್ನಮ್ಮ ಅವರ ನಿಧನದ ಬಳಿಕ ಮೊದಲ ಬಾರಿಗೆ ಸುದ್ದಿಗೋಷ್ಠಿ ನಡೆಸಿದ ಮಾಜಿ ಸಚಿವ ಹೆಚ್.ಡಿ. ರೇವಣ್ಣ (H.D. Revanna), 2001ರ ಆಸಿಡ್ ದಾಳಿ ಪ್ರಕರಣವನ್ನು ನೆನೆದು ಭಾವುಕರಾಗಿ ಕಣ್ಣೀರಿಟ್ಟರು. ಆ ದಾಳಿ ಆಗದೇ ಇದ್ದಿದ್ದರೆ ತಮ್ಮ ತಾಯಿಗೆ ಇಷ್ಟು ಬೇಗ ಸಾವಾಗುತ್ತಿರಲಿಲ್ಲ ಎಂದು ಹೇಳಿದ ಅವರು, ಹಲವು ಬಾರಿ ಭಾವುಕರಾಗಿ ಮಾತು ನಿಲ್ಲಿಸಿದರು.

“2001ರಲ್ಲಿ ಆಸಿಡ್ ದಾಳಿ ಆಗದೇ ಹೋಗಿದ್ದರೆ ನಮ್ಮ ತಾಯಿಗೆ ಇಷ್ಟು ಬೇಗ ಸಾವು ಬರ್ತಿರಲಿಲ್ಲ. ನನ್ನನ್ನು ಮುಗಿಸಬೇಕು ಎಂಬ ಸಂಚು ರೂಪಿಸಲಾಗಿತ್ತು. ಅಂದು ನಾನು ಅಲ್ಲಿದ್ದರೆ ದಾಳಿ ನನ್ನ ಮೇಲೆಯೇ ಆಗುತ್ತಿತ್ತು. ನಾನು ಇರಲಿಲ್ಲ ಎಂಬ ಕಾರಣಕ್ಕೆ ನಮ್ಮ ತಾಯಿ ಆ ನೋವನ್ನು ಅನುಭವಿಸಬೇಕಾಯಿತು. ನಮ್ಮ ತಾಯಿ ದೇವತೆಯಂತೆ ಇಡೀ ಕುಟುಂಬವನ್ನು ಸಾಕಿದರು,” ಎಂದು ರೇವಣ್ಣ ಕಣ್ಣೀರಿಟ್ಟರು.

ತಮ್ಮ ತಂಗಿಯರು ತಾಯಿಯನ್ನು ಕೊನೆಯವರೆಗೂ ಆರೈಕೆ ಮಾಡಿದ್ದು, ತಾವು ಮತ್ತು ಕುಮಾರಸ್ವಾಮಿ ಆಗಾಗ ಭೇಟಿ ನೀಡಿ ಆರೋಗ್ಯ ವಿಚಾರಿಸುತ್ತಿದ್ದೆವು ಎಂದು ಹೇಳಿದರು.

ತಾಯಿ ಚೆನ್ನಮ್ಮ ಅವರ ಕೊನೆಯ ಕ್ಷಣಗಳನ್ನು ಸ್ಮರಿಸಿದ ಅವರು, “ನಮ್ಮ ತಂದೆ ಬಂದು ತಾಯಿಗೆ ಕುಂಕುಮ ಇಟ್ಟು ಹೂ ಮುಡಿಸಿದ ತಕ್ಷಣವೇ ಅವರು ಕೊನೆಯುಸಿರೆಳೆದರು. ಇಂತಹ ಸಾವು ಎಲ್ಲರಿಗೂ ಸಿಗುವುದಿಲ್ಲ. ತಂದೆ-ತಾಯಿ 72 ವರ್ಷಗಳ ಸುದೀರ್ಘ ದಾಂಪತ್ಯ ಜೀವನ ನಡೆಸಿದ್ದರು. ತಂದೆಯ ರಾಜಕೀಯ ಏಳಿಗೆಯಲ್ಲಿ ತಾಯಿಯ ಪಾತ್ರ ಅಪಾರ. ನಾನು ಮತ್ತು ಕುಮಾರಸ್ವಾಮಿ ಈ ಮಟ್ಟಕ್ಕೆ ಬೆಳೆಯಲು ಅವರೇ ಕಾರಣ,” ಎಂದು ಭಾವುಕರಾದರು.

1962ರಲ್ಲಿ ತಮ್ಮ ತಂದೆ ಎಚ್.ಡಿ. ದೇವೇಗೌಡ ಅವರು ತಿಂಗಳಿಗೆ 10 ರೂಪಾಯಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ನೆನಪುಗಳನ್ನು ಹಂಚಿಕೊಂಡ ರೇವಣ್ಣ, “ಕೊನೆಯ ಮಗಳು ಹುಟ್ಟಿದ್ದು ತಂದೆ ಶಾಸಕನಾದ ಬಳಿಕ. ಅದಕ್ಕಾಗಿ ತಾಯಿಯ ಪಾರ್ಥಿವ ಶರೀರವನ್ನು ಆ ಹಳೆಯ ಬಾಡಿಗೆ ಮನೆಯ ಬಳಿಗೂ ಕೊಂಡೊಯ್ದೆವು,” ಎಂದು ಹೇಳಿದರು.

ಅಂತಿಮ ದರ್ಶನ, ಮೆರವಣಿಗೆ ಮತ್ತು ಅಂತ್ಯಕ್ರಿಯೆ ವ್ಯವಸ್ಥೆಯಲ್ಲಿ ಜಿಲ್ಲಾಡಳಿತ ಉತ್ತಮ ಸಹಕಾರ ನೀಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಅವರು, “ರಾಜಕೀಯ ಬೇರೆ, ಮಾನವೀಯತೆ ಬೇರೆ. ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನಡೆಸಲು ಸಹಕರಿಸಿದ ಸರ್ಕಾರ, ಜಿಲ್ಲಾಧಿಕಾರಿ, ಎಸ್‌ಪಿ ಸೇರಿದಂತೆ ಎಲ್ಲ ಅಧಿಕಾರಿಗಳಿಗೆ ಧನ್ಯವಾದಗಳು,” ಎಂದರು.

ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ ಕೇಂದ್ರ ಸಚಿವರು, ರಾಜ್ಯ ಸಚಿವರು, ಶಾಸಕರು, ಮಾಜಿ ಶಾಸಕರು ಹಾಗೂ ಜಿಲ್ಲೆಯ ಜನತೆಗೆ ಕೃತಜ್ಞತೆ ಸಲ್ಲಿಸಿದ ರೇವಣ್ಣ, ಜುಲೈ 30ರಂದು ನಡೆಯಲಿರುವ ಆರಾಧನಾ ಮಹೋತ್ಸವಕ್ಕೆ ಪಕ್ಷಾತೀತವಾಗಿ ಎಲ್ಲರೂ ಆಗಮಿಸಬೇಕು ಎಂದು ಮನವಿ ಮಾಡಿದರು.

ಒಲೆಯ ಮೇಲಿನ ಹಾಲು ಇನ್ನು ಚೆಲ್ಲಲ್ಲ! ಈ ಸಿಂಪಲ್ ಟ್ರಿಕ್ಸ್ ಫಾಲೋ ಮಾಡಿ!

0

ಬಹುತೇಕ ಮನೆಗಳಲ್ಲಿ ಅಡುಗೆ ಮಾಡುವುದಕ್ಕಿಂತ ಹಾಲು ಕುದಿಸುವುದೇ ಕೆಲವೊಮ್ಮೆ ದೊಡ್ಡ ಸವಾಲಾಗುತ್ತದೆ.

ಒಲೆಯ ಮೇಲೆ ಹಾಲು ಇಟ್ಟ ಕೆಲವೇ ಕ್ಷಣಗಳಲ್ಲಿ ಗಮನ ಬೇರೆಡೆ ಹೋದರೆ ಹಾಲು ಉಕ್ಕಿ ಚೆಲ್ಲಿ ಹೋಗುತ್ತದೆ. ಇದರಿಂದ ಹಾಲು ವ್ಯರ್ಥವಾಗುವುದರ ಜೊತೆಗೆ ಗ್ಯಾಸ್ ಸ್ಟೌವ್ ಹಾಗೂ ಅಡುಗೆ ಮನೆಯ ಸ್ವಚ್ಛತೆ ಕಾಪಾಡುವುದು ಕಷ್ಟವಾಗುತ್ತದೆ.

ಆದರೆ ಕೆಲವು ಸರಳ ಉಪಾಯಗಳನ್ನು ಅನುಸರಿಸಿದರೆ ಹಾಲು ಉಕ್ಕಿ ಚೆಲ್ಲುವುದನ್ನು ಸುಲಭವಾಗಿ ತಪ್ಪಿಸಬಹುದು.

1. ಪಾತ್ರೆಯ ಅಂಚಿಗೆ ತುಪ್ಪ ಅಥವಾ ಬೆಣ್ಣೆ ಹಚ್ಚಿ:

ಹಾಲು ಕುದಿಸುವ ಪಾತ್ರೆಯ ಮೇಲ್ಭಾಗದ ಅಂಚಿಗೆ ಸ್ವಲ್ಪ ತುಪ್ಪ ಅಥವಾ ಬೆಣ್ಣೆಯನ್ನು ಹಚ್ಚಿ. ಹಾಲು ಕುದಿಯುವಾಗ ಮೇಲೇಳುವ ನೊರೆ ಅಂಚಿಗೆ ಬಂದರೂ, ತುಪ್ಪದ ಪದರದಿಂದಾಗಿ ಹಾಲು ಹೊರಗೆ ಚೆಲ್ಲುವ ಸಾಧ್ಯತೆ ಕಡಿಮೆಯಾಗುತ್ತದೆ.

2. ಪಾತ್ರೆಯ ಮೇಲೆ ಚಮಚವನ್ನು ಅಡ್ಡಲಾಗಿ ಇಡಿ:

ಹಾಲು ಕಾಯಿಸುವಾಗ ಪಾತ್ರೆಯ ಮೇಲೆ ಒಂದು ಚಮಚವನ್ನು ಅಡ್ಡಲಾಗಿ ಇಡುವುದು ಸಹ ಉಪಯುಕ್ತ. ಹಾಲು ಕುದಿಯುವ ವೇಳೆ ಉಂಟಾಗುವ ನೊರೆ ಚಮಚಕ್ಕೆ ತಾಗುವುದರಿಂದ, ಅದು ತಕ್ಷಣವೇ ಉಕ್ಕಿ ಹೊರಗೆ ಬರುವುದನ್ನು ತಡೆಯಬಹುದು.

3. ಹೆಚ್ಚಿನ ಉರಿಯಲ್ಲಿ ಹಾಲು ಕುದಿಸಬೇಡಿ:

ಹಾಲನ್ನು ಜೋರಾದ ಉರಿಯಲ್ಲಿ ಕಾಯಿಸಿದರೆ ಅದು ಬೇಗ ಕುದಿದು ಹೆಚ್ಚು ನೊರೆ ಉಂಟುಮಾಡುತ್ತದೆ. ಇದರಿಂದ ಹಾಲು ಏಕಾಏಕಿ ಉಕ್ಕಿ ಚೆಲ್ಲಬಹುದು. ಆದ್ದರಿಂದ ಯಾವಾಗಲೂ ಕಡಿಮೆ ಅಥವಾ ಮಧ್ಯಮ ಉರಿಯಲ್ಲಿ ಹಾಲನ್ನು ಕುದಿಸುವುದು ಉತ್ತಮ.

4. ಅಗಲವಾದ ಪಾತ್ರೆ ಬಳಸಿ:

ಹಾಲು ಕುದಿಸಲು ಅಗಲವಾದ ಬಾಯಿ ಹೊಂದಿರುವ ದೊಡ್ಡ ಪಾತ್ರೆಯನ್ನು ಬಳಸುವುದು ಸೂಕ್ತ. ಇದರಲ್ಲಿ ನೊರೆ ಹರಡಲು ಹೆಚ್ಚಿನ ಜಾಗ ಸಿಗುವುದರಿಂದ ಹಾಲು ಹೊರಗೆ ಚೆಲ್ಲುವ ಸಾಧ್ಯತೆ ಕಡಿಮೆಯಾಗುತ್ತದೆ.

5. ಪಾತ್ರೆಯನ್ನು ಸಂಪೂರ್ಣವಾಗಿ ಮುಚ್ಚಬೇಡಿ:

ಹಾಲು ಕುದಿಸುವಾಗ ಪಾತ್ರೆಯನ್ನು ಸಂಪೂರ್ಣವಾಗಿ ಮುಚ್ಚುವುದರಿಂದ ಒಳಗಿನ ಶಾಖ ಹೆಚ್ಚಾಗಿ ನೊರೆ ಬೇಗ ಉಂಟಾಗುತ್ತದೆ. ಇದರಿಂದ ಹಾಲು ಉಕ್ಕಿ ಹೊರಗೆ ಬೀಳಬಹುದು. ಬದಲಾಗಿ ಪಾತ್ರೆಯ ಮೇಲೆ ಚಮಚವನ್ನು ಅಡ್ಡಲಾಗಿ ಇಟ್ಟು ಹಾಲು ಕಾಯಿಸುವುದು ಉತ್ತಮ.

ಈ ಸರಳ ವಿಧಾನಗಳನ್ನು ಅನುಸರಿಸಿದರೆ ಹಾಲು ವ್ಯರ್ಥವಾಗುವುದನ್ನು ತಪ್ಪಿಸುವುದರ ಜೊತೆಗೆ ಅಡುಗೆ ಮನೆಯ ಸ್ವಚ್ಛತೆಯನ್ನೂ ಸುಲಭವಾಗಿ ಕಾಪಾಡಿಕೊಳ್ಳಬಹುದು.