Home Blog

ಬಾಗಲಕೋಟೆ: ಲಂಚ ಸ್ವೀಕರಿಸುತ್ತಿದ್ದ PSI, ಕಾನ್ಸ್ಟೇಬಲ್ ಲೋಕಾಯುಕ್ತ ಬಲೆಗೆ!

ಬಾಗಲಕೋಟೆ: ಜಿಲ್ಲೆಯ ಬಾದಾಮಿ ತಾಲೂಕಿನ ಕೆರೂರಿನಲ್ಲಿ ಲಂಚ ಸ್ವೀಕರಿಸುತ್ತಿದ್ದ ಪಿಎಸ್ಐ ಹಾಗೂ ಪೇದೆ ಇಬ್ಬರು ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಬಂಧಿತರನ್ನು ಕೆರೂರು ಪೊಲೀಸ್ ಠಾಣೆಯ ಪಿಎಸ್ಐ ಭೀಮಪ್ಪ ರಬಕವಿ ಮತ್ತು ಪೇದೆ ಸಂತೋಷ್ ಬಿರಾದರ್ ಎಂದು ಗುರುತಿಸಲಾಗಿದೆ. ಇಸ್ಪೀಟ್ ಆಟದ ವೇಳೆ ಸಿಕ್ಕಿಬಿದ್ದಿದ್ದ ಆರೋಪಿಯನ್ನು ಪ್ರಕರಣದಿಂದ ಬಿಡುಗಡೆ ಮಾಡಲು ಹಾಗೂ ಆತನ ಬೈಕ್ ವಾಪಸ್ ನೀಡಲು 2 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.

ದೂರುದಾರ ಮುತ್ತಪ್ಪ ನಾಯ್ಕರ್ ನೀಡಿದ ಮಾಹಿತಿಯ ಮೇರೆಗೆ, 1.70 ಲಕ್ಷ ರೂಪಾಯಿ ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಇಬ್ಬರನ್ನು ರೆಡ್‌ಹ್ಯಾಂಡ್ ಆಗಿ ಬಂಧಿಸಿದರು. ಫೋನ್ ಕರೆ ರೆಕಾರ್ಡಿಂಗ್ ಆಧಾರದಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ.

ಈ ದಾಳಿ ಕರ್ನಾಟಕ ಲೋಕಾಯುಕ್ತದ ಎಸ್‌ಪಿ ಮಹಾಲಿಂಗ್ ನಂದಗಾಂವಿ ಅವರ ಮಾರ್ಗದರ್ಶನದಲ್ಲಿ, ಡಿವೈಎಸ್ಪಿ ಸುರೇಶ್ ರೆಡ್ಡಿ ನೇತೃತ್ವದಲ್ಲಿ ನಡೆದಿದೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.

ಏ. 23-24 CET ಪರೀಕ್ಷೆ: ಡ್ರೆಸ್ ಕೋಡ್ ಸೇರಿದಂತೆ ಕಟ್ಟುನಿಟ್ಟಿನ ನಿಯಮಗಳು ಕಡ್ಡಾಯ

ಬೆಂಗಳೂರು: ರಾಜ್ಯದಲ್ಲಿ ಏಪ್ರಿಲ್ 23 ಮತ್ತು 24ರಂದು ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ನಡೆಯಲಿದ್ದು, ಸುಮಾರು 3.30 ಲಕ್ಷ ವಿದ್ಯಾರ್ಥಿಗಳು 750 ಪರೀಕ್ಷಾ ಕೇಂದ್ರಗಳಲ್ಲಿ ಭಾಗವಹಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ವಸ್ತ್ರ ಸಂಹಿತೆ ಸೇರಿದಂತೆ ಹಲವು ಕಟ್ಟುನಿಟ್ಟಿನ ನಿಯಮಗಳನ್ನು ಪಾಲಿಸುವಂತೆ ಸೂಚಿಸಲಾಗಿದೆ.

ಪರೀಕ್ಷಾ ಪ್ರಾಧಿಕಾರವು ಡ್ರೆಸ್ ಕೋಡ್‌ನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದೆ. ಜೊತೆಗೆ, ಪರೀಕ್ಷಾ ಕೇಂದ್ರಗಳಲ್ಲಿ ಕರ್ತವ್ಯ ನಿರ್ವಹಿಸುವ ಹಿರಿಯ ಪ್ರಾಧ್ಯಾಪಕರಿಗೆ ಈ ಕುರಿತು ಈಗಾಗಲೇ ವಿಶೇಷ ತರಬೇತಿ ನೀಡಲಾಗಿದೆ.

ವಸ್ತ್ರ ಸಂಹಿತೆ:
ವಿದ್ಯಾರ್ಥಿಗಳು ಅರ್ಧ ತೋಳಿನ ಶರ್ಟ್ ಅಥವಾ ಟಿ-ಶರ್ಟ್ ಧರಿಸುವುದು ಸೂಕ್ತ. ಉದ್ದ ತೋಳಿನ ಅಂಗಿಗಳು ಅಥವಾ ದೊಡ್ಡ ಬಟನ್ ಇರುವ ಬಟ್ಟೆಗಳಿಗೆ ಅವಕಾಶ ಇರುವುದಿಲ್ಲ. ವಿದ್ಯಾರ್ಥಿನಿಯರು ಸರಳ ಉಡುಪು ಧರಿಸಬೇಕು; ಕಿವಿಯೋಲೆ, ಸರ ಸೇರಿದಂತೆ ಆಭರಣಗಳನ್ನು ಧರಿಸದಿರುವುದು ಉತ್ತಮ.

ಪಾದರಕ್ಷೆ:
ಪರೀಕ್ಷಾ ಕೊಠಡಿಯಲ್ಲಿ ಶೂ ಧರಿಸಲು ಅನುಮತಿ ಇಲ್ಲ. ವಿದ್ಯಾರ್ಥಿಗಳು ಸರಳ ಚಪ್ಪಲಿ ಧರಿಸಬೇಕು.

ಪ್ರವೇಶ ಪತ್ರ:
ಅಧಿಕೃತ ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡಿದ ಹಾಲ್ ಟಿಕೆಟ್ ಹಾಗೂ ಸರ್ಕಾರ ಮಾನ್ಯತೆ ಪಡೆದ ಗುರುತಿನ ಚೀಟಿ (ಆಧಾರ್ ಕಾರ್ಡ್ ಅಥವಾ ಕಾಲೇಜು ಐಡಿ) ಕಡ್ಡಾಯವಾಗಿ ತರಬೇಕು.

ನಿಷೇಧಿತ ವಸ್ತುಗಳು:
ಮೊಬೈಲ್ ಫೋನ್, ಸ್ಮಾರ್ಟ್ ವಾಚ್, ಕ್ಯಾಲ್ಕುಲೇಟರ್ ಸೇರಿದಂತೆ ಯಾವುದೇ ಎಲೆಕ್ಟ್ರಾನಿಕ್ ಸಾಧನಗಳನ್ನು ಪರೀಕ್ಷಾ ಕೇಂದ್ರಕ್ಕೆ ತರುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಪರೀಕ್ಷಾ ಸಮಯ ಮತ್ತು ಸೂಚನೆಗಳು:
ಅಭ್ಯರ್ಥಿಗಳು ಪರೀಕ್ಷೆ ಆರಂಭಕ್ಕೂ ಕನಿಷ್ಠ ಒಂದು ಗಂಟೆ ಮೊದಲು ಕೇಂದ್ರದಲ್ಲಿ ಹಾಜರಾಗಬೇಕು. ಪರೀಕ್ಷೆ ಆರಂಭವಾದ ಬಳಿಕ ಪ್ರವೇಶ ನೀಡುವುದಿಲ್ಲ.

ಒಎಂಆರ್ ಶೀಟ್ ಭರ್ತಿ ಮಾಡುವಾಗ ವಿಶೇಷ ಎಚ್ಚರಿಕೆ ವಹಿಸಬೇಕು. ಕೇವಲ ಕಪ್ಪು ಅಥವಾ ನೀಲಿ ಬಾಲ್ ಪಾಯಿಂಟ್ ಪೆನ್ ಬಳಸಬೇಕು ಎಂದು ಸೂಚಿಸಲಾಗಿದೆ.

ಇಂದು IPL ಹೈವೋಲ್ಟೇಜ್ ಪಂದ್ಯ: LSG vs RR ನಡುವೆ ಕದನ! ಯಾರು ಮೇಲುಗೈ?

0

ಹೈದರಾಬಾದ್: ಲಕ್ನೋದ ಅಟಲ್ ಬಿಹಾರಿ ವಾಜಪೇಯಿ ಏಕಾನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಇಂದು ಸಂಜೆ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ 32ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ (LSG) ಮತ್ತು ರಾಜಸ್ಥಾನ ರಾಯಲ್ಸ್ (RR) ತಂಡಗಳು ಮುಖಾಮುಖಿಯಾಗಲಿವೆ.

ರಾಜಸ್ಥಾನ ರಾಯಲ್ಸ್ ತಂಡ ಈ ಸೀಸನ್‌ನಲ್ಲಿ ಉತ್ತಮ ಪ್ರದರ್ಶನ ತೋರಿಸುತ್ತಿದ್ದು, ಐದನೇ ಗೆಲುವಿನೊಂದಿಗೆ ಪಾಯಿಂಟ್ಸ್ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಲು ಉತ್ಸುಕವಾಗಿದೆ. ಇತ್ತ ಲಕ್ನೋ ಸೂಪರ್ ಜೈಂಟ್ಸ್ ತಂಡ ನಿರೀಕ್ಷಿತ ಮಟ್ಟದಲ್ಲಿ ಪ್ರದರ್ಶನ ನೀಡದೆ ಹಿನ್ನಡೆಯಲ್ಲಿದ್ದು, ಆರು ಪಂದ್ಯಗಳಲ್ಲಿ ಕೇವಲ ಎರಡು ಗೆಲುವುಗಳೊಂದಿಗೆ ಏಳನೇ ಸ್ಥಾನದಲ್ಲಿದೆ.

LSG ಪರ ಐಡೆನ್ ಮಾರ್ಕ್ರಾಮ್ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದು, ಆರು ಇನ್ನಿಂಗ್ಸ್‌ಗಳಲ್ಲಿ 162 ರನ್ ಗಳಿಸಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಪ್ರಿನ್ಸ್ ಯಾದವ್ 11 ವಿಕೆಟ್ ಪಡೆದು ಗಮನಸೆಳೆದಿದ್ದಾರೆ.

RR ಪರ ಆರಂಭಿಕ ಆಟಗಾರರಾದ ಯಶಸ್ವಿ ಜೈಸ್ವಾಲ್ ಮತ್ತು ವೈಭವ್ ಸೂರ್ಯವಂಶಿ ಅದ್ಭುತ ಫಾರ್ಮ್‌ನಲ್ಲಿ ಇದ್ದು, ಕ್ರಮವಾಗಿ 223 ಮತ್ತು 246 ರನ್ ಗಳಿಸಿದ್ದಾರೆ. ಬೌಲಿಂಗ್‌ನಲ್ಲಿ ರವಿ ಬಿಷ್ಣೋಯ್ 10 ವಿಕೆಟ್ ಪಡೆದು ಪ್ರಮುಖ ಪಾತ್ರವಹಿಸಿದ್ದಾರೆ.

ಎರಡೂ ತಂಡಗಳ ನಡುವಿನ ಹಿಂದಿನ ಮುಖಾಮುಖಿಗಳಲ್ಲಿ RR ಮೇಲುಗೈ ಸಾಧಿಸಿದೆ. ಆರು ಪಂದ್ಯಗಳಲ್ಲಿ ನಾಲ್ಕು ಪಂದ್ಯಗಳಲ್ಲಿ RR ಗೆಲುವು ಸಾಧಿಸಿದ್ದರೆ, LSG ಕೇವಲ ಎರಡು ಪಂದ್ಯಗಳಲ್ಲಿ ಜಯ ಗಳಿಸಿದೆ. ಕಳೆದ ಸೀಸನ್‌ನಲ್ಲಿ ನಡೆದ ಪಂದ್ಯದಲ್ಲಿ LSG ಎರಡು ರನ್‌ಗಳ ಅಂತರದಿಂದ ಗೆದ್ದಿತ್ತು. ಹೀಗಾಗಿ, ಇಂದಿನ ಪಂದ್ಯದಲ್ಲಿ ಎರಡೂ ತಂಡಗಳ ನಡುವೆ ಕಠಿಣ ಪೈಪೋಟಿ ನಿರೀಕ್ಷಿಸಲಾಗಿದೆ.

ಕೇದಾರನಾಥ ದೇಗುಲದ ಬಾಗಿಲು ತೆರೆದು ಭಕ್ತರಿಗೆ ದರ್ಶನ: ‘ಹರ ಹರ ಮಹಾದೇವ’ ಘೋಷಣೆ

ಉತ್ತರಾಖಂಡ್: ಪವಿತ್ರ ಕೇದಾರನಾಥ ದೇವಸ್ಥಾನದ ದ್ವಾರವನ್ನು ಇಂದು ಶಾಸ್ತ್ರೋಕ್ತವಾಗಿ ಭಕ್ತರಿಗೆ ತೆರೆಯಲಾಯಿತು. ಈ ವೇಳೆ ಭಕ್ತರಿಂದ ‘ಹರ ಹರ ಮಹಾದೇವ’ ಹಾಗೂ ‘ಜೈ ಬಾಬಾ ಕೇದಾರ’ ಘೋಷಣೆಗಳು ಮೊಳಗಿದವು. ಬೆಳಗ್ಗೆ 8 ಗಂಟೆಗೆ ವೈದಿಕ ಮಂತ್ರೋಚ್ಚಾರಣೆಗಳ ನಡುವೆ ಧಾರ್ಮಿಕ ಆಚರಣೆಗಳೊಂದಿಗೆ ದೇಗುಲದ ಬಾಗಿಲು ತೆರೆಯಲಾಯಿತು.

ದೇಗುಲವನ್ನು 51 ಕ್ವಿಂಟಾಲ್ ಹೂವುಗಳಿಂದ ಅಲಂಕರಿಸಲಾಗಿದ್ದು, ಈ ಕ್ಷಣ ಭವ್ಯ, ರೋಮಾಂಚಕ ಹಾಗೂ ದೈವಿಕ ವಾತಾವರಣವನ್ನು ಸೃಷ್ಟಿಸಿತು. ಪವಿತ್ರ ಚಾರ್ಧಾಮ್ ಯಾತ್ರೆಯ ಭಾಗವಾಗಿರುವ ಈ ಕ್ಷೇತ್ರದಲ್ಲಿ ಶಿವನ ಆಶೀರ್ವಾದ ಪಡೆಯಲು ದೇಶ-ವಿದೇಶಗಳಿಂದ ಸಾವಿರಾರು ಭಕ್ತರು ಕಠಿಣ ಯಾತ್ರೆಯನ್ನು ಕೈಗೊಳ್ಳುತ್ತಾರೆ.

ಕೇದಾರನಾಥ ದೇಗುಲದ ಉದ್ಘಾಟನೆ ವಾರ್ಷಿಕ ಧಾರ್ಮಿಕ ಕ್ಯಾಲೆಂಡರ್‌ನಲ್ಲಿ ಅತ್ಯಂತ ಪ್ರಮುಖ ಕ್ಷಣವಾಗಿದೆ. ಚಳಿಗಾಲದಲ್ಲಿ ಆರು ತಿಂಗಳ ಕಾಲ ಮುಚ್ಚಿರುವ ದೇಗುಲ ಇದೀಗ ಪುನಃ ತೆರೆಯಲ್ಪಟ್ಟಿದ್ದು, ಹಿಮಾಲಯ ಪ್ರದೇಶದಲ್ಲಿ ಆಧ್ಯಾತ್ಮಿಕ ಚಟುವಟಿಕೆಗಳಿಗೆ ಹೊಸ ಚೈತನ್ಯವನ್ನು ನೀಡಿದೆ.

ಏಪ್ರಿಲ್ 19ರಂದು ಅಕ್ಷಯ ತೃತೀಯ ದಿನ ಗಂಗೋತ್ರಿ ದೇವಸ್ಥಾನ ಹಾಗೂ ಯಮುನೋತ್ರಿ ದೇವಸ್ಥಾನಗಳನ್ನು ತೆರೆಯುವುದರೊಂದಿಗೆ ಚಾರ್ ಧಾಮ್ ಯಾತ್ರೆ ಆರಂಭವಾಗಿತ್ತು. ಕೇದಾರನಾಥ ದೇಗುಲ ಇದೀಗ ತೆರೆದಿರುವ ಹಿನ್ನೆಲೆ, ಬದರಿನಾಥ ದೇವಸ್ಥಾನದ ಬಾಗಿಲುಗಳು ಏಪ್ರಿಲ್ 23ರಂದು ತೆರೆಯಲಿವೆ.

ಬೇಸಿಗೆಯ ತಾಪಕ್ಕೆ ಶ್ವಾನದಳಕ್ಕೂ ಕಷ್ಟ: ರಾಯಚೂರಿನಲ್ಲಿ ಪೊಲೀಸ್ ನಾಯಿಗಳಿಗೆ ಕೂಲರ್ ಸೌಲಭ್ಯ

ರಾಯಚೂರು: ಜಿಲ್ಲೆಯಲ್ಲಿ ಏರಿಕೆಯಾಗುತ್ತಿರುವ ಬೇಸಿಗೆಯ ತಾಪಮಾನದಿಂದ ಮನುಷ್ಯರು ಮಾತ್ರವಲ್ಲ, ಪೊಲೀಸ್ ಇಲಾಖೆಯ ಶ್ವಾನದಳವೂ ತತ್ತರಿಸಿದೆ. ಈ ಹಿನ್ನೆಲೆ ಶ್ವಾನಗಳ ಆರೈಕೆಗೆ ಪೊಲೀಸ್ ಅಧಿಕಾರಿಗಳು ವಿಶೇಷ ಕ್ರಮ ಕೈಗೊಂಡಿದ್ದಾರೆ.

ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಶ್ವಾನದಳದ ಐದು ನಾಯಿಗಳಿಗೆ ಪ್ರತ್ಯೇಕವಾಗಿ ಕೂಲರ್ ವ್ಯವಸ್ಥೆ ಮಾಡಲಾಗಿದೆ. ಹೆಚ್ಚುತ್ತಿರುವ ಉಷ್ಣಾಂಶದಿಂದ ರಕ್ಷಿಸಲು ಈ ಕ್ರಮ ಕೈಗೊಳ್ಳಲಾಗಿದ್ದು, ಶ್ವಾನಗಳಿಗೆ ವಿಶೇಷ ಆರೈಕೆ ನೀಡಲಾಗುತ್ತಿದೆ.

ಲೂಸಿ, ರೀಟಾ, ಚೆರ್ರಿ, ಡಾರ್ಬಿ ಹಾಗೂ ಸಿರಿ ಎಂಬ ಹೆಸರಿನ ಐದು ಶ್ವಾನಗಳನ್ನು ಪ್ರತ್ಯೇಕ ಕೊಠಡಿಗಳಲ್ಲಿ ಇರಿಸಿ, ಪ್ರತಿಯೊಂದಕ್ಕೂ ಕೂಲರ್ ಅಳವಡಿಸಲಾಗಿದೆ. ಎಕ್ಸ್‌ಪ್ಲೋಸಿವ್ ಡಿಟೆಕ್ಷನ್ ಮತ್ತು ಕ್ರೈಂ ಡಿಟೆಕ್ಷನ್ ತರಬೇತಿ ಪಡೆದಿರುವ ಈ ಶ್ವಾನಗಳು ಪ್ರಮುಖ ಪ್ರಕರಣಗಳ ಭೇದನೆಯಲ್ಲಿ ಸಹಕಾರಿಯಾಗಿವೆ.

ಬೇಸಿಗೆಯನ್ನು ಮನಗಂಡು ಶ್ವಾನಗಳ ಆಹಾರ ಕ್ರಮದಲ್ಲೂ ಬದಲಾವಣೆ ಮಾಡಲಾಗಿದೆ. ಜಿಲ್ಲೆಯಲ್ಲಿ ಸರಾಸರಿ 42 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗುತ್ತಿರುವ ಹಿನ್ನೆಲೆಯಲ್ಲಿ, ವಿಶೇಷವಾಗಿ ವಿದೇಶಿ ತಳಿಯ ಶ್ವಾನಗಳು ಬಿಸಿಲಿಗೆ ಹೆಚ್ಚು ತೊಂದರೆ ಅನುಭವಿಸುತ್ತಿವೆ.

ಶ್ವಾನದಳದಲ್ಲಿರುವ ಲ್ಯಾಬ್ರಡಾರ್, ರಿಟ್ರೀವರ್ ಮತ್ತು ಡೊಬರ್ಮನ್ ಪಿನ್ಷರ್ ತಳಿಯ ನಾಯಿಗಳಿಗೆ ಬಿಸಿಲಿನ ತಾಪದಿಂದ ರಕ್ಷಣೆ ನೀಡಲು ಈ ಕೂಲರ್ ವ್ಯವಸ್ಥೆ ಮಾಡಲಾಗಿದೆ. ಪೊಲೀಸ್ ಇಲಾಖೆ ಶ್ವಾನಗಳ ಆರೋಗ್ಯ ಕಾಪಾಡಲು ಹೆಚ್ಚಿನ ಒತ್ತು ನೀಡುತ್ತಿದೆ.

ಭಾರಿ ಇಳಿಕೆ ಕಂಡ ಚಿನ್ನದ ಬೆಲೆ: ಖರೀದಿಗೆ ಇದೇ ಸುವರ್ಣಾವಕಾಶ! ಹೀಗಿದೆ ನೋಡಿ ಬಂಗಾರದ ದರ

ಬೆಂಗಳೂರು: ಜಾಗತಿಕ ರಾಜಕೀಯ ಬೆಳವಣಿಗೆಗಳ ಪರಿಣಾಮವಾಗಿ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಏರುಪೇರಾಗುತ್ತಿದ್ದು, ಬುಧವಾರ ಚಿನ್ನದ ಬೆಲೆಯಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ.

ಅಮೆರಿಕ ಕದನ ವಿರಾಮ ವಿಸ್ತರಿಸಿರುವುದು ಮತ್ತು ಇರಾನ್ ಜಲದಿಗ್ಬಂಧನಕ್ಕೆ ವಿರೋಧ ವ್ಯಕ್ತಪಡಿಸಿ ಸಂಧಾನ ಮಾತುಕತೆಗಳಿಂದ ಹಿಂದೆ ಸರಿದಿರುವ ಬೆಳವಣಿಗೆಗಳ ನಡುವೆ ತೈಲ ಬೆಲೆ ಏರಿಕೆಯಾಗಿದೆ. ಇದರ ಪರಿಣಾಮವಾಗಿ ಚಿನ್ನದ ಬೆಲೆಯಲ್ಲಿ ಕುಸಿತ ದಾಖಲಾಗಿದೆ.

ಇಂದು 24 ಕ್ಯಾರೆಟ್ ಚಿನ್ನದ 10 ಗ್ರಾಂ ಬೆಲೆಯಲ್ಲಿ ₹540 ಇಳಿಕೆಯಾಗಿದ್ದು, ₹1,54,750ಕ್ಕೆ ತಲುಪಿದೆ. 1 ಗ್ರಾಂ ಚಿನ್ನದ ಬೆಲೆ ₹54 ಇಳಿಕೆಯಾಗಿದ್ದು, ₹15,475 ಆಗಿದೆ.

22 ಕ್ಯಾರೆಟ್ ಚಿನ್ನದ 1 ಗ್ರಾಂ ಬೆಲೆ ₹50 ಇಳಿಕೆಯಾಗಿದ್ದು, ₹14,185 ಆಗಿದೆ. ಇದೇ ವೇಳೆ 10 ಗ್ರಾಂ ಬೆಲೆಯಲ್ಲಿ ₹500 ಇಳಿಕೆಯಾಗಿದ್ದು, ₹1,41,850ಕ್ಕೆ ತಲುಪಿದೆ.

ಬೆಳ್ಳಿ ಬೆಲೆಯಲ್ಲಿ ಯಾವುದೇ ದೊಡ್ಡ ಬದಲಾವಣೆ ಕಂಡುಬಂದಿಲ್ಲ. ಪ್ರತಿ ಗ್ರಾಂ ಬೆಲೆ ₹265 ಇದ್ದು, ಪ್ರತಿ ಕಿಲೋಗ್ರಾಂ ಬೆಲೆ ₹2,65,000 ಆಗಿದೆ.

ನಕಲಿ ಫ್ಯಾನ್ಸಿ ನಂಬರ್ ಪ್ಲೇಟ್ ಪ್ರಕರಣ: ರಿಕ್ಕಿ ರೈ ವಿರುದ್ಧ ತ್ವರಿತ ಕ್ರಮ ಬೇಡ – ಹೈಕೋರ್ಟ್ ಸೂಚನೆ

ಬೆಂಗಳೂರು: ಐಷಾರಾಮಿ ಲ್ಯಾಂಬೊರ್ಗಿನಿ ಕಾರಿಗೆ ನಕಲಿ ಫ್ಯಾನ್ಸಿ ನಂಬರ್ ಪ್ಲೇಟ್ ಅಳವಡಿಸಿರುವ ಆರೋಪಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ಪ್ರಕರಣದಲ್ಲಿ, ಮುತ್ತಪ್ಪ ರೈ ಅವರ ಪುತ್ರ ರಿಕ್ಕಿ ರೈ ವಿರುದ್ಧ ಆತುರದ ಕ್ರಮ ಕೈಗೊಳ್ಳಬಾರದು ಎಂದು ಕರ್ನಾಟಕ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ.

ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ದೂರು ಮತ್ತು ಎಫ್‌ಐಆರ್ ರದ್ದುಪಡಿಸುವಂತೆ ಕೋರಿ ರಿಕ್ಕಿ ರೈ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಸಾರಿಗೆ ಪ್ರಾಧಿಕಾರದಿಂದ ಫ್ಯಾನ್ಸಿ ನಂಬರ್ ಮಾನ್ಯವಾಗಿ ನೀಡಲಾಗಿದ್ದು, ಅದಕ್ಕಾಗಿ ರಿಕ್ಕಿ ರೈ ನಾಲ್ಕು ಲಕ್ಷ ರೂಪಾಯಿ ಪಾವತಿಸಿರುವುದಕ್ಕೆ ದಾಖಲೆಗಳಿವೆ ಎಂದು ತಿಳಿಸಿದರು. ಆದ್ದರಿಂದ ನಕಲಿ ನಂಬರ್ ಪ್ಲೇಟ್ ಬಳಕೆ ಆರೋಪ ಅನ್ವಯಿಸುವುದಿಲ್ಲ ಎಂದು ವಾದಿಸಿದರು.

ಇನ್ನೂ, ಲ್ಯಾಂಬೊರ್ಗಿನಿ ಕಾರು ರಸ್ತೆ ಮೇಲೆ ಸದ್ದು ಮಾಡುತ್ತಾ ಹೋಗುತ್ತಿರುವುದರಿಂದ ಕಿರಿಕಿರಿಗೆ ಒಳಗಾದ ವ್ಯಕ್ತಿಯೊಬ್ಬರು ವಿಡಿಯೋ ಚಿತ್ರೀಕರಿಸಿದ್ದರಿಂದ ಪ್ರಕರಣ ದಾಖಲಾಗಿದೆ. ಮೋಟಾರ್ ವಾಹನ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ದಂಡ ಕಟ್ಟಲು ನ್ಯಾಯಾಲಯಕ್ಕೆ ಹೋಗಲು ಸಿದ್ಧತೆ ಇದೆ. ಹೀಗಿರುವಾಗ ಎರಡನೇ ಎಫ್‌ಐಆರ್ ದಾಖಲಿಸುವ ಅಗತ್ಯವಿಲ್ಲ ಎಂದು ವಕೀಲರು ತಿಳಿಸಿದರು.

ಇದಕ್ಕೆ ಪ್ರತಿಯಾಗಿ ಸರ್ಕಾರದ ಪರ ವಕೀಲರು, ರಿಕ್ಕಿ ರೈ ಖರೀದಿಸಿರುವ ವಾಹನಕ್ಕೆ ಫ್ಯಾನ್ಸಿ ನಂಬರ್ ಅಧಿಕೃತವಾಗಿ ಹಂಚಿಕೆ ಮಾಡಲಾಗಿಲ್ಲ ಎಂದು ವಾದಿಸಿದರು. ದೆಹಲಿಯಲ್ಲಿ ವಾಹನ ಖರೀದಿಸಿ, ಬೆಂಗಳೂರಿನಲ್ಲಿ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸದೇ ಇಂತಹ ನಂಬರ್ ಪ್ಲೇಟ್ ಬಳಕೆ ಮಾಡಿರುವುದು ವಂಚನೆ ಹಾಗೂ ದಾಖಲೆ ತಿರುಚಿದ ಪ್ರಕರಣವಾಗುತ್ತದೆ ಎಂದು ಹೇಳಿದರು.

ಇರುವ ಎರಡೂ ವಾದಗಳನ್ನು ಆಲಿಸಿದ ನ್ಯಾಯಾಲಯ, ಪ್ರಕರಣದ ತನಿಖೆಗೆ ರಿಕ್ಕಿ ರೈ ಸಹಕರಿಸಬೇಕು ಎಂದು ಸೂಚಿಸಿತು. ಜೊತೆಗೆ ತನಿಖೆ ನೆಪದಲ್ಲಿ ಪೊಲೀಸರು ತ್ವರಿತ ಅಥವಾ ಕಠಿಣ ಕ್ರಮ ಕೈಗೊಳ್ಳಬಾರದು ಎಂದು ತಿಳಿಸಿ, ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿ ವಿಚಾರಣೆಯನ್ನು ಮುಂದೂಡಿತು.

ಕೊಡಗಿನಲ್ಲಿ ವಿದೇಶಿ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಆರೋಪ: ಇಬ್ಬರು ಬಂಧನ

0

ಕೊಡಗು: ಜಿಲ್ಲೆಯ ಕುಟ್ಟ ಗ್ರಾಮದಲ್ಲಿರುವ ಖಾಸಗಿ ಹೋಂಸ್ಟೇನಲ್ಲಿ ವಿದೇಶಿ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂಬ ಗಂಭೀರ ಆರೋಪ ಕೇಳಿಬಂದಿದ್ದು, ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊನ್ನಂಪೇಟೆ ತಾಲೂಕಿನ ಕುಟ್ಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಈ ಪ್ರಕರಣದಲ್ಲಿ, ಅಮೆರಿಕದ ವಾಷಿಂಗ್ಟನ್ ಮೂಲದ ಮಹಿಳೆ ಏಪ್ರಿಲ್ 19ರಂದು ಹೋಂಸ್ಟೇನಲ್ಲಿ ವಾಸ್ತವ್ಯ ಹೂಡಿದ್ದ ವೇಳೆ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ. ಜಾರ್ಖಂಡ್ ಮೂಲದ ವೃಜೇಶ್ ಕುಮಾರ್ ಎಂಬಾತ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂಬ ಆರೋಪ ಕೇಳಿಬಂದಿದೆ.

ಈ ಸಂಬಂಧ ಕುಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯಾಗಿರುವ ವೃಜೇಶ್ ಕುಮಾರ್‌ರನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹೋಂಸ್ಟೇ ಮಾಲೀಕ ವಿಶಾಲ್ ಮೇಲೂ ಆರೋಪಗಳು ಕೇಳಿಬಂದಿದ್ದು, ಅವರನ್ನು ಸಹ ಬಂಧಿಸಲಾಗಿದೆ ಎಂದು ತಿಳಿದುಬಂದಿದೆ. ಘಟನೆಯ ಸಂಪೂರ್ಣ ವಿವರಗಳನ್ನು ತಿಳಿಯಲು ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.

ಬೆಳಗಾವಿಯಲ್ಲಿ ದಾರುಣ ಘಟನೆ: ನೈಟ್ ಧರಿಸಿದ್ದಕ್ಕೆ ಪತ್ನಿಗೆ ಬೆಂಕಿ ಹಚ್ಚಿದ ಕ್ರೂರ ಪತಿ!

0

ಬೆಳಗಾವಿ: ಪತ್ನಿ ನೈಟಿ ಧರಿಸಿದ್ದ ವಿಚಾರಕ್ಕೆ ಕೋಪಗೊಂಡ ಪತಿಯೋರ್ವಳು ಆಕೆಗೆ ಬೆಂಕಿ ಹಚ್ಚಿದ ದಾರುಣ ಘಟನೆ ಬೆಳಗಾವಿ ಜಿಲ್ಲೆಯ ಖಾನಾಪೂರ ತಾಲ್ಲೂಕಿನ ನಂದಗಡದಲ್ಲಿ ನಡೆದಿದೆ.

ಆರೋಪಿಯನ್ನು ಕೃಷ್ಣಾಜಿ ಪಾಟೀಲ್ ಎಂದು ಗುರುತಿಸಲಾಗಿದ್ದು, ಪತ್ನಿ ಮಂಜುಳಾ ಪಾಟೀಲ್ ಗಂಭೀರವಾಗಿ ಸುಟ್ಟ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಘಟನೆಯಲ್ಲಿ ಆಕೆಗೆ ಸುಮಾರು 80 ಶೇಕಡಾ ಸುಟ್ಟ ಗಾಯಗಳಾಗಿವೆ. ಆರಂಭದಲ್ಲಿ ಬೆಳಗಾವಿ ಬಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದರು ಸಹ ಹೆಚ್ಚಿನ ಚಿಕಿತ್ಸೆಗಾಗಿ ನಂತರ ಗೋವಾಕ್ಕೆ ಸ್ಥಳಾಂತರಿಸಲಾಗಿದೆ.

ಮಂಜುಳಾ ಮತ್ತು ಕೃಷ್ಣಾಜಿ ಸುಮಾರು ಎಂಟು ವರ್ಷಗಳ ಹಿಂದೆ ಮದುವೆಯಾಗಿದ್ದರು. ಮನೆಯಲ್ಲಿ ಪತ್ನಿ ಸೀರೆ ಬದಲು ನೈಟಿ ಅಥವಾ ಗೌನ್ ಧರಿಸುವ ವಿಚಾರಕ್ಕೆ ಇಬ್ಬರ ನಡುವೆ ಆಗಾಗ ಜಗಳ ಉಂಟಾಗುತ್ತಿತ್ತು.ವಾಗ್ವಾದ ಅತೀರೇಖಕ್ಕೆ ಹೋಗಿ ಪತಿ ಪತ್ನಿಗೆ ಬೆಂಕಿ ಹಚ್ಚಿದ್ದಾನೆ. ಗಲಾಟೆ ಶಬ್ದ ಕೇಳಿ ಸ್ಥಳೀಯರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.

ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು, ಗಾಯಗೊಂಡ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಘಟನೆ ನಂದಗಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.

ಪಾಕಿಸ್ತಾನದ ಮನವಿ ಮೇರೆಗೆ ಕದನ ವಿರಾಮ ವಿಸ್ತರಣೆ: ಟ್ರಂಪ್ ಘೋಷಣೆ

0

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಪಾಕಿಸ್ತಾನದ ಮನವಿ ಹಿನ್ನೆಲೆಯಲ್ಲಿ ಕದನ ವಿರಾಮವನ್ನು ಮತ್ತಷ್ಟು ದಿನಗಳ ಕಾಲ ವಿಸ್ತರಿಸಿರುವುದಾಗಿ ತಿಳಿಸಿದ್ದಾರೆ. ಈ ಹಿಂದೆ ಘೋಷಿಸಿದ್ದ ಕದನ ವಿರಾಮದ ಗಡುವು ಮುಕ್ತಾಯವಾಗುತ್ತಿದ್ದ ಹಿನ್ನೆಲೆಯಲ್ಲಿ, ಅಮೆರಿಕ ಅದನ್ನು ಮುಂದುವರಿಸಲು ನಿರ್ಧರಿಸಿದೆ. ಆದರೆ ಹಾರ್ಮುಜ್ ಜಲಸಂಧಿಯ ದಿಗ್ಬಂಧನ ಮುಂದುವರಿಯಲಿದೆ ಎಂದು ಟ್ರಂಪ್ ಸ್ಪಷ್ಟಪಡಿಸಿದ್ದಾರೆ.

ಸುಮಾರು ಏಳು ವಾರಗಳ ಕಾಲ ನಡೆದ ಯುದ್ಧದಲ್ಲಿ ಸಾವಿರಾರು ಮಂದಿ ಸಾವನ್ನಪ್ಪಿದ್ದು, ಜಾಗತಿಕ ಆರ್ಥಿಕತೆಯ ಮೇಲೂ ಗಂಭೀರ ಪರಿಣಾಮ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಯುದ್ಧಕ್ಕೆ ತೆರೆ ಎಳೆಯಲು ಅಮೆರಿಕ ಸಂಧಾನ ಮಾತುಕತೆಗಳಿಗೆ ಮುಂದಾಗಿದೆ. ಸದ್ಯಕ್ಕೆ ಸೈನಿಕ ಕಾರ್ಯಾಚರಣೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಕದನ ವಿರಾಮ ವಿಸ್ತರಣೆ ಬಗ್ಗೆ ಮಾತನಾಡಿದ ಟ್ರಂಪ್, “ಪಾಕಿಸ್ತಾನದ ಮನವಿಯನ್ನು ಸ್ವೀಕರಿಸಿ, ಅದರ ಮಧ್ಯಸ್ಥಿಕೆಯಲ್ಲಿ ಮಾತುಕತೆ ನಡೆಸಲಾಗುತ್ತಿದೆ. ಇರಾನ್ ನಾಯಕರು ಒಪ್ಪಂದಕ್ಕೆ ಮುಂದಾಗುವವರೆಗೂ ದಾಳಿಗಳನ್ನು ನಿಲ್ಲಿಸಲಾಗುತ್ತದೆ” ಎಂದು ಹೇಳಿದ್ದಾರೆ.

ಇದೇ ವೇಳೆ, ಇರಾನ್ ಬಂದರುಗಳ ಮೇಲೆ ಅಮೆರಿಕದ ನೌಕಾಪಡೆಯ ದಿಗ್ಬಂಧನ ಕ್ರಮ ಮುಂದುವರಿಯಲಿದೆ ಎಂದು ತಿಳಿಸಿದ್ದಾರೆ.

ಈ ಬೆಳವಣಿಗೆಗೆ ಇರಾನ್ ನಾಯಕರು ತಕ್ಷಣ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ಮಾಧ್ಯಮ ವರದಿಗಳ ಪ್ರಕಾರ, ಕದನ ವಿರಾಮಕ್ಕಾಗಿ ಟೆಹ್ರಾನ್ ಯಾವುದೇ ಮನವಿ ಮಾಡಿಲ್ಲವೆಂದು ತಿಳಿದುಬಂದಿದೆ. ಇರಾನ್ ಜೊತೆಗಿನ ಸಂಧಾನ ಪೂರ್ಣಗೊಳ್ಳುವವರೆಗೆ ಕದನ ವಿರಾಮ ಮುಂದುವರಿಯಲಿದೆ ಎಂದು ಟ್ರಂಪ್ ಹೇಳಿದ್ದಾರೆ.

error: Content is protected !!