Home Blog

ಪ್ರಧಾನಿ ನಿವಾಸದ ಬಳಿ ಕಾಂಗ್ರೆಸ್ ಪ್ರತಿಭಟನೆ ಪ್ರಾಮಾಣಿಕತೆಯಿಂದ ಕೂಡಿಲ್ಲ; ವಾಂಗ್ಚುಕ್ ಪತ್ನಿ ವಾಗ್ದಾಳಿ

0

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸದ ಬಳಿ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ನಾಯಕರು ನಡೆಸಿದ ಪ್ರತಿಭಟನೆಗೆ ಶಿಕ್ಷಣ ತಜ್ಞೆ ಹಾಗೂ ಸಾಮಾಜಿಕ ಉದ್ಯಮಿಯಾಗಿರುವ ಗೀತಾಂಜಲಿ ಜೆ. ಅಂಗ್ಮೊ ತೀವ್ರ ಟೀಕೆ ವ್ಯಕ್ತಪಡಿಸಿದ್ದಾರೆ. ಪ್ರಸಿದ್ಧ ಹೋರಾಟಗಾರ ಸೋನಮ್ ವಾಂಗ್ಚುಕ್ ಅವರ ಪತ್ನಿಯಾಗಿರುವ ಅವರು, ಈ ಪ್ರತಿಭಟನೆ ಪ್ರಾಮಾಣಿಕತೆಯಿಂದ ಕೂಡಿರಲಿಲ್ಲ ಎಂದು ಆರೋಪಿಸಿದ್ದಾರೆ.

ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಗೀತಾಂಜಲಿ, ಜುಲೈ 21ರಂದು ನಡೆದ ಪ್ರತಿಭಟನೆಯಲ್ಲಿ ರಾಹುಲ್ ಗಾಂಧಿ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರನ್ನು ಪೊಲೀಸರು ವಶಕ್ಕೆ ಪಡೆದ ಘಟನೆಗೆ ಪ್ರತಿಕ್ರಿಯಿಸಿ, ರಾಜಕೀಯ ಪ್ರದರ್ಶನ ಮಾಡುವ ಬದಲು ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳ ಜೊತೆ ಕಾಂಗ್ರೆಸ್ ನಾಯಕರು ಸೇರಬೇಕಿತ್ತು ಎಂದು ಹೇಳಿದ್ದಾರೆ.

ಅಲ್ಲದೆ, ಸೋನಮ್ ವಾಂಗ್ಚುಕ್ ಅವರ ಹೆಸರು ಮತ್ತು ಪ್ರತಿಷ್ಠೆಯನ್ನು ಕೆಲವು ರಾಜಕಾರಣಿಗಳು ತಮ್ಮ ರಾಜಕೀಯ ಸ್ವಾರ್ಥಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ ಅವರು, ದೇಶದ ಜನರನ್ನು ಇನ್ನು ಮುಂದೆ ಈ ರೀತಿಯಾಗಿ ದಾರಿ ತಪ್ಪಿಸಲು ಸಾಧ್ಯವಿಲ್ಲ ಎಂದು ಹೇಳಿದರು.

“ನಮಗೆ ಆಡಳಿತ ಪಕ್ಷವೂ ಇಲ್ಲ, ವಿರೋಧ ಪಕ್ಷವೂ ಇಲ್ಲ. ನಮ್ಮ ಪಾಲಿಗೆ ಸಂಸತ್ತೇ ಅತ್ಯುನ್ನತ ಸಂಸ್ಥೆ. ಶಿಕ್ಷಣವನ್ನು ರಾಷ್ಟ್ರದ ಅತ್ಯಂತ ಪ್ರಮುಖ ವಿಷಯವಾಗಿ ಸಂಸತ್ತು ಪರಿಗಣಿಸಬೇಕು ಎಂಬುದೇ ನಮ್ಮ ಆಶಯ” ಎಂದು ಗೀತಾಂಜಲಿ ಅಂಗ್ಮೊ ತಿಳಿಸಿದರು.

ಇದೇ ವೇಳೆ, ಪ್ರಾಮಾಣಿಕತೆ ಇಲ್ಲದ ರಾಜಕಾರಣಿಗಳನ್ನು ದೇಶದ ಯುವಜನತೆಯೇ ತಿರಸ್ಕರಿಸಲಿದ್ದಾರೆ ಎಂದು ಅಭಿಪ್ರಾಯಪಟ್ಟ ಅವರು, ಯಾವುದೇ ರಾಜಕೀಯ ಉದ್ದೇಶವಿಲ್ಲದೆ ವಿದ್ಯಾರ್ಥಿ ಚಳವಳಿಗೆ ಬೆಂಬಲ ನೀಡಲು ಬರುವ ಎಲ್ಲರನ್ನೂ ಸ್ವಾಗತಿಸಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.

ಮೇಘಾಲಯ ಹನಿಮೂನ್ ಹತ್ಯೆ ಪ್ರಕರಣ: ಸೋನಂ ರಘುವಂಶಿ ಜಾಮೀನು ರದ್ದುಪಡಿಸಿದ ಸುಪ್ರೀಂ ಕೋರ್ಟ್

ನವದೆಹಲಿ: ದೇಶಾದ್ಯಂತ ಸಂಚಲನ ಮೂಡಿಸಿದ್ದ ಮೇಘಾಲಯ ಹನಿಮೂನ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸೋನಂ ರಘುವಂಶಿಗೆ ಸುಪ್ರೀಂ ಕೋರ್ಟ್ ಭಾರೀ ಹಿನ್ನಡೆ ನೀಡಿದ್ದು, ಅವರಿಗೆ ನೀಡಲಾಗಿದ್ದ ಜಾಮೀನನ್ನು ರದ್ದುಪಡಿಸಿದೆ.

ವಿಚಾರಣಾ ನ್ಯಾಯಾಲಯ ನೀಡಿದ್ದ ಜಾಮೀನು ಆದೇಶವನ್ನು ಮೇಘಾಲಯ ಹೈಕೋರ್ಟ್ ಎತ್ತಿಹಿಡಿದಿತ್ತು. ಈ ತೀರ್ಪನ್ನು ಪ್ರಶ್ನಿಸಿ ಮೇಘಾಲಯ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಂ.ಎಂ. ಸುಂದ್ರೇಶ್ ಹಾಗೂ ಪಿ.ಬಿ. ವರಾಲೆ ಅವರನ್ನೊಳಗೊಂಡ ಪೀಠ ಜಾಮೀನು ರದ್ದುಪಡಿಸಿ ಆದೇಶ ಹೊರಡಿಸಿದೆ.

ಆರೋಪಿ ಸೋನಂ ರಘುವಂಶಿ ಅವರು ಮೂರು ವಾರಗಳೊಳಗೆ ತನಿಖಾ ಸಂಸ್ಥೆ ಅಥವಾ ಸಂಬಂಧಪಟ್ಟ ನ್ಯಾಯಾಲಯದ ಮುಂದೆ ಶರಣಾಗಬೇಕು ಎಂದು ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ.

ತೀರ್ಪು ನೀಡುವ ವೇಳೆ ನ್ಯಾಯಪೀಠ, ಸೋನಂ ರಘುವಂಶಿ ವಿರುದ್ಧದ ಆರೋಪಗಳು ಅತ್ಯಂತ ಗಂಭೀರ ಸ್ವರೂಪದ್ದಾಗಿವೆ ಎಂದು ಅಭಿಪ್ರಾಯಪಟ್ಟಿದೆ. ಪ್ರಕರಣದ ವಿಚಾರಣೆ ಪೂರ್ಣಗೊಳ್ಳುವವರೆಗೆ ಜಾಮೀನು ನೀಡಲು ಅವಕಾಶವಿಲ್ಲ ಎಂದು ತಿಳಿಸಿದೆ.

ಆದರೆ, ವಿಚಾರಣೆಯಲ್ಲಿ ವಿಳಂಬವಾದರೆ ಆರು ತಿಂಗಳ ಬಳಿಕ ಮತ್ತೆ ಜಾಮೀನಿಗಾಗಿ ಅರ್ಜಿ ಸಲ್ಲಿಸಲು ಅವಕಾಶವಿದೆ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

ಏನಿದು ಪ್ರಕರಣ?

ಮಧ್ಯಪ್ರದೇಶದ ಇಂದೋರ್ ಮೂಲದ ಸೋನಂ ರಘುವಂಶಿ ಮತ್ತು ರಾಜಾ ರಘುವಂಶಿ ದಂಪತಿ 2025ರ ಮೇ 23ರಂದು ಹನಿಮೂನ್‌ಗಾಗಿ ಮೇಘಾಲಯದ ಸೋಹ್ರಾ (ಚೆರಾಪುಂಜಿ) ಪ್ರದೇಶಕ್ಕೆ ತೆರಳಿದ್ದರು. ಬಳಿಕ ಇಬ್ಬರೂ ನಾಪತ್ತೆಯಾಗಿದ್ದು, ಜೂನ್ 2ರಂದು ರಾಜಾ ರಘುವಂಶಿ ಅವರ ಮೃತದೇಹ ಆಳವಾದ ಕಂದಕದಲ್ಲಿ ಪತ್ತೆಯಾಗಿತ್ತು.

ತನಿಖೆ ವೇಳೆ, ಆರ್ಥಿಕ ಲಾಭದ ಉದ್ದೇಶದಿಂದ ಸೋನಂ ರಘುವಂಶಿ ಬಾಡಿಗೆ ಹಂತಕರೊಂದಿಗೆ ಸೇರಿ ಪತಿಯ ಕೊಲೆಗೆ ಸಂಚು ರೂಪಿಸಿದ್ದರು ಎಂದು ಮೇಘಾಲಯ ಪೊಲೀಸರು ಆರೋಪಿಸಿದ್ದಾರೆ. ಈ ಪ್ರಕರಣ ದೇಶಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿತ್ತು.

ಪ್ರಶ್ನೆ ಪತ್ರಿಕೆ ಸೋರಿಕೆ ಬಗ್ಗೆ ಮೋದಿ ಮೊದಲೇ ಮಾತನಾಡಬೇಕಿತ್ತು: ಸಿಎಂ ಡಿ.ಕೆ. ಶಿವಕುಮಾರ್ ಕಿಡಿ

ಬೆಂಗಳೂರು: ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ಪ್ರಧಾನಿ ನರೇಂದ್ರ ಮೋದಿಯವರು ಈಗ ಮಾತನಾಡುವ ಬದಲು ಪ್ರಾರಂಭದಲ್ಲೇ ಮಾತನಾಡಬೇಕಿತ್ತು. ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಯಾರನ್ನೂ ಕಾಪಾಡುವ ಪ್ರಶ್ನೆಯೇ ಕೇಂದ್ರ ಸರ್ಕಾರದ ಮುಂದಿರಬಾರದು” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ಆಗ್ರಹಿಸಿದರು. ಬೆಂಗಳೂರಿನ ಕೆ ಜಿ ರಸ್ತೆ ಬಳಿ ಮಾಧ್ಯಮಗಳಿಗೆ ಶಿವಕುಮಾರ್ ಅವರು ಗುರುವಾರ ಪ್ರತಿಕ್ರಿಯೆ ನೀಡಿದರು.

“ಬಿಜೆಪಿಯವರೇ ನಿಮ್ಮ ಮಕ್ಕಳೂ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ದೇಶದ ಯುವ ಜನತೆಯ ಭವಿಷ್ಯ ಹಾಳಾಗುತ್ತಿದೆ. ವೈಫಲ್ಯವನ್ನು ಬಿಜೆಪಿಯವರು ಒಪ್ಪಿಕೊಳ್ಳಬೇಕು. ಒಬ್ಬ ವ್ಯಕ್ತಿ ರಾಜಿನಾಮೆ ಕೊಡುವುದರಿಂದ ಏನಾಗಲಿದೆ? ಪ್ರಶ್ನೆ ಪತ್ರಿಕೆಗಳು ಸೋರಿಕೆಯಾದಾಗ ಇಂತಹ ಘಟನೆ ಬಗ್ಗೆ ಯಾರಾದರೂ ಜವಾಬ್ದಾರಿ ಹೊರಬೇಕಲ್ಲವೇ? ಇದಕ್ಕೆ ಯಾರು ಹೊಣೆ?” ಎಂದು ಕಿಡಿಕಾರಿದರು.

“ಪ್ರಶ್ನೆ ಪತ್ರಿಕೆ ಸೋರಿಕೆ ಬಗ್ಗೆ ಸಂಸತ್ತಿನಲ್ಲಿ ಚರ್ಚೆಯಾಗಲಿ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲವೂ ಚರ್ಚೆಯಾಗಬೇಕು. ಟೀಕೆ ಮಾಡಿದಾಗ ನಾವು ಹಾಗೂ ನೀವು ಇಬ್ಬರೂ ಒಪ್ಪಿ ತಿದ್ದಿಕೊಳ್ಳಬೇಕು. ನಾವು ಯುವಕರ ಭವಿಷ್ಯದ ಬಗ್ಗೆ ಆಲೋಚನೆ ಮಾಡುತ್ತಿದ್ದೇವೆ. ಈಗಾಗಲೇ ಸುಮಾರು 100 ಕ್ಕೂ ಹೆಚ್ಚು ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗಿವೆ” ಎಂದರು.

ಪ್ರಶ್ನೆ ಪತ್ರಿಕೆ ಸೋರಿಕೆ ರಾಜಕೀಯ ವಿಚಾರವಲ್ಲ

“ಪ್ರಶ್ನೆ ಪತ್ರಿಕೆ ಸೋರಿಕೆ ಎಂಬುದು ರಾಜಕೀಯ ಪಕ್ಷಗಳ ವಿಚಾರವಲ್ಲ, ದೇಶದ ಭವಿಷ್ಯದ ವಿಚಾರ. ಪಾರದರ್ಶಕ, ಶಕ್ತಿಯುತ, ಉತ್ತಮ ಗುಣಮಟ್ಟದ ಶಿಕ್ಷಣ ದೊರೆಯುವಂತೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿ. ಯಾವುದೇ ಪರೀಕ್ಷೆಗಳು ನಡೆದರು ಅವು ಪಾರದರ್ಶಕವಾಗಿರಬೇಕು. ಇಡೀ ಪ್ರಪಂಚ ಭಾರತದ ಯುವ ಜನತೆಯ ಭವಿಷ್ಯದ ಬಗ್ಗೆ ಆಲೋಚನೆ ಮಾಡುತ್ತಿದೆ. ನಮ್ಮ ದೇಶ ಪ್ರತಿಭಾವಂತರ ದೇಶ. ಇಡೀ ಪ್ರಪಂಚದಲ್ಲಿಯೇ ನಮ್ಮಲ್ಲಿ ಇರುವಷ್ಟು ಪ್ರತಿಭೆಗಳು ಎಲ್ಲಿಯೂ ಇಲ್ಲ ಎಂದು ಅನೇಕರು ಒಪ್ಪಿಕೊಂಡಿದ್ದಾರೆ. ನಮ್ಮನ್ನು ಇಡೀ ಪ್ರಪಂಚವೇ ನೋಡುತ್ತಿರುವ ಹೊತ್ತಿನಲ್ಲಿ ನಮ್ಮ ಶಿಕ್ಷಣದ ಗುಣಮಟ್ಟವನ್ನು ನಾವು ಕಾಪಾಡಬೇಕಿದೆ” ಎಂದರು.

ಮಾಧ್ಯಮಗಳು ಪ್ರಶ್ನೆ ಮಾಡಬೇಕಿತ್ತು

“ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಭಟನೆ ಮಾಡುವುದು ಪ್ರತಿಪಕ್ಷಗಳ, ಎಲ್ಲರ, ಯುಜನತೆಯ ಹಕ್ಕು. ಇಂತಹ ಸಂದರ್ಭದಲ್ಲಿ ಅವರ ಮೇಲೆ ಲಾಠಿಚಾರ್ಜ್ ಮಾಡಲಾಗಿದೆ, ತೊಂದರೆ ನೀಡಲಾಗಿದೆ. ಸುದ್ದಿ ಮಾಧ್ಯಮಗಳ ಮೇಲೆ ನಿರ್ಬಂದ ಹೇರಿ, ಧಮ್ಕಿ ಹಾಕಿ ಪ್ರಸಾರ ಆಗದಂತೆ ನೋಡಿಕೊಳ್ಳಲಾಗಿದೆ. ಅಲ್ಲಿದ್ದವರು ಮಾಡಿದ ವಿಡಿಯೋಗಳು ಯೂಟ್ಯೂಬ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿವೆ. ಮಾಧ್ಯಮಗಳು ಪ್ರಜಾಪ್ರಭುತ್ವದ ಅಂಗ. ಹೀಗಿದ್ದಾಗ ಮಾಧ್ಯಮಗಳು ಪ್ರಶ್ನೆ ಮಾಡದೇ ಏನು ಮಾಡುತ್ತಿದ್ದವು. ನೀವುಗಳು ಏಕೆ ಪ್ರತಿಭಟನೆ ಮಾಡಲಿಲ್ಲ. ಪ್ರಶ್ನೆ ಮಾಡದ ನಿಮ್ಮಗಳ ತಪ್ಪೂ ಇದೇ. ಸಾಮಾಜಿಕ ಜಾಲತಾಣದಲ್ಲಿ ಬಂದ ಮೇಲೆ ಮಾಧ್ಯಮಗಳು ವಿಷಯಗಳನ್ನು ಎತ್ತಿಕೊಂಡಿವೆ. ಇದು ಹೊಸ ತಲೆಮಾರಿನ ಹೋರಾಟ” ಎಂದರು.

ಮೊಟ್ಟೆ ಹೊಡೆದಿದ್ದು ಸರಿಯಲ್ಲ

“ನಾವೂ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ಪ್ರತಿಭಟನೆ ಮಾಡಿದ್ದೇವೆ. ಮಂಗಳವಾರದಂದು ಕಾಂಗ್ರೆಸ್ ಕಚೇರಿ ಬಳಿ ಮೊಟ್ಟೆ ಹೊಡೆದಿದ್ದನ್ನು ಸರಿ ಎಂದು ಹೇಳುವುದಿಲ್ಲ. ಕಾನೂನಿನ ಪ್ರಕಾರ ಯಾವ ಕ್ರಮ ತೆಗೆದುಕೊಳ್ಳಲಾಗುವುದು ಎಂದು ನಮ್ಮ ಗೃಹಸಚಿವರು ಈಗಾಗಲೇ ತಿಳಿಸಿದ್ದಾರೆ. ಬಿಜೆಪಿಯವರು ಹಿಂದೆ ಏನೇನು ಮಾಡಿದ್ದರು ಎಂದು ಅವರೂ ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಲಾಠಿ, ಮಚ್ಚು, ರೈಫಲ್ ಗಳು ಸಿಕ್ಕಿದ್ದವು. ಪೊನ್ನಂಪೇಟೆಯ ಶಾಲೆಯ ಆವರಣದಲ್ಲಿ ರೈಫಲ್ ತರಭೇತಿ ನೀಡಿದ್ದರು. ನಿಮ್ಮದೂ ಇತಿಹಾಸಗಳಿವೆ” ಎಂದರು.

ರಾಜ್ಯದಲ್ಲಿ ಕೊತ್ವಾಲ್ ಆಡಳಿತ ನಡೆಯುತ್ತಿದೆ ಎನ್ನುವ ಬಿಜೆಪಿ ಹೇಳಿಕೆ ಬಗ್ಗೆ ಕೇಳಿದಾಗ, “ಅವರ ಖುಷಿಗೆ ಏನು ಬೇಕಾದರೂ, ಹೆಂಗೆ ಬೇಕಾದರೂ ಮಾತನಾಡಿಕೊಳ್ಳಲಿ. ನಾನು ಈ ಸ್ಥಾನಕ್ಕೆ ಬರಲು ವಿದ್ಯಾರ್ಥಿ ನಾಯಕನಾಗಿ ಬೆಳೆದವನು. ಹಳ್ಳಿಯಲ್ಲಿ ಹುಟ್ಟಿದ ನಾನು ಪರಿಶುದ್ಧವಾದ ರಾಜಕಾರಣ, ಆಡಳಿತ ಮಾಡುತ್ತಿದ್ದೇನೆ. ಇದನ್ನು ಅವರ ಕೈಯಲ್ಲಿ ತಡೆದುಕೊಳ್ಳಲು ಆಗುತ್ತಿಲ್ಲ ಎಂದರೆ ಏನು ಮಾಡಲು ಆಗುವುದಿಲ್ಲ” ಎಂದು ವ್ಯಂಗ್ಯವಾಡಿದರು.

ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ವಿದ್ಯಾರ್ಥಿಗಳ ಹೋರಾಟಕ್ಕೆ ಆಲಿಯಾ ಭಟ್ ಬೆಂಬಲ!

ನೀಟ್ ಯುಜಿ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣವನ್ನು ಖಂಡಿಸಿ ದೆಹಲಿಯ ಜಂತರ್ ಮಂತರ್‌ನಲ್ಲಿ ವಿದ್ಯಾರ್ಥಿಗಳು ನಡೆಸುತ್ತಿರುವ ಪ್ರತಿಭಟನೆಗೆ ಬಾಲಿವುಡ್ ನಟಿ ಆಲಿಯಾ ಭಟ್ ಬೆಂಬಲ ಸೂಚಿಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ವಿದ್ಯಾರ್ಥಿಗಳ ಹೋರಾಟದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಆಲಿಯಾ ಭಟ್ ತಮ್ಮ ಪೋಸ್ಟ್‌ನಲ್ಲಿ, ಇತ್ತೀಚಿನ ಬೆಳವಣಿಗೆಗಳನ್ನು ನೋಡಿದಾಗ ಬೇಸರವಾಗುತ್ತಿದೆ ಎಂದು ಹೇಳಿದ್ದು, ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳು ತೋರಿಸುತ್ತಿರುವ ಧೈರ್ಯ ಮತ್ತು ಭರವಸೆ ಪ್ರೇರಣಾದಾಯಕವಾಗಿದೆ ಎಂದು ತಿಳಿಸಿದ್ದಾರೆ.

ಪ್ರತಿಯೊಬ್ಬ ವಿದ್ಯಾರ್ಥಿಯ ಹಿಂದೆ ಒಂದು ಕನಸು, ಕುಟುಂಬದ ನಿರೀಕ್ಷೆ ಹಾಗೂ ಹಲವು ವರ್ಷಗಳ ಪರಿಶ್ರಮ ಇರುತ್ತದೆ. ಅವರು ತಮ್ಮ ಸ್ವಂತ ಭವಿಷ್ಯಕ್ಕಾಗಿ ಮಾತ್ರವಲ್ಲದೆ, ಮುಂದಿನ ಪೀಳಿಗೆಯ ವಿದ್ಯಾರ್ಥಿಗಳಿಗೆ ಉತ್ತಮ ವ್ಯವಸ್ಥೆ ಸಿಗಬೇಕು ಎಂಬ ಉದ್ದೇಶದಿಂದ ಹೋರಾಟ ನಡೆಸುತ್ತಿದ್ದಾರೆ ಎಂದು ಆಲಿಯಾ ಹೇಳಿದ್ದಾರೆ.

“ವಿದ್ಯಾರ್ಥಿಗಳ ಧೈರ್ಯ ನನಗೆ ಪ್ರೇರಣೆ ನೀಡಿದೆ. ದೇಶದ ಭವಿಷ್ಯ ರೂಪಿಸುವ ಯುವಕರ ಮಾತನ್ನು ನಾವು ನಿಜವಾಗಿಯೂ ಕೇಳುತ್ತಿದ್ದೇವೆಯೇ ಎಂಬ ಪ್ರಶ್ನೆಯನ್ನು ಎಲ್ಲರೂ ಕೇಳಿಕೊಳ್ಳಬೇಕು. ಭವಿಷ್ಯ ಅವರದ್ದು” ಎಂದು ಆಲಿಯಾ ಭಟ್ ತಮ್ಮ ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ.

ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ತನಿಖೆ ನಡೆಸಬೇಕು, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಹಾಗೂ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ದೆಹಲಿಯ ಜಂತರ್ ಮಂತರ್‌ನಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ಮುಂದುವರಿಸಿದ್ದಾರೆ. ಈ ಪ್ರತಿಭಟನೆಗೆ ವಿವಿಧ ಕ್ಷೇತ್ರಗಳ ಗಣ್ಯರಿಂದ ಬೆಂಬಲ ವ್ಯಕ್ತವಾಗುತ್ತಿದೆ.

ಪ್ರಧಾನಿ ಮೋದಿಯನ್ನು ನಿಂದಿಸಿ ವಿಡಿಯೋ ಹರಿಬಿಟ್ಟ ಯುವಕ ಪೊಲೀಸ್ ವಶಕ್ಕೆ!

0

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಅವಾಚ್ಯ ಪದಗಳನ್ನು ಬಳಸಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ ಆರೋಪದ ಮೇಲೆ ಯುವಕನನ್ನು ಬಾಣಸವಾಡಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ನಗರದ ಹಡ್ಸನ್ ಎಂಬಾತನ ವಿರುದ್ಧ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಪ್ರಧಾನಿ ಮೋದಿ ಅವರನ್ನು ನಿಂದಿಸಿ ವಿಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಆರೋಪ ಎದುರಿಸುತ್ತಿದ್ದಾನೆ. ವಿಡಿಯೋ ವೈರಲ್ ಆದ ಬಳಿಕ ಪ್ರಕರಣ ಗಮನ ಸೆಳೆದಿತ್ತು.

ಈ ವಿಡಿಯೋ ವಿರುದ್ಧ ಸರ್ವಜ್ಞನಗರ ಬಿಜೆಪಿ ಘಟಕ ಬಾಣಸವಾಡಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಿತ್ತು. ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ವೈರಲ್ ವಿಡಿಯೋದ ಮೂಲ, ಉದ್ದೇಶ ಹಾಗೂ ಇತರರ ಪಾತ್ರವಿದೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ತನಿಖೆಯ ವರದಿ ಆಧರಿಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಮನಕಲಕುವ ಘಟನೆ: ಬೆಂಗಳೂರಿನಲ್ಲಿ ವಿಷ ಸೇವಿಸಿ ವೃದ್ಧ ದಂಪತಿ ಆತ್ಮಹತ್ಯೆ!

0

ಬೆಂಗಳೂರು: ಬೆಂಗಳೂರಲ್ಲಿ ವಿಷ ಸೇವಿಸಿ ವೃದ್ದ ದಂಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಸವೇಶ್ವರನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮಂಜುನಾಥ ನಗರದಲ್ಲಿ ನಡೆದಿದೆ. ಮೃತರನ್ನು ಈಶ್ವರ್ ಆಚಾರಿ (73) ಹಾಗೂ ಅವರ ಪತ್ನಿ ಗೌರಿ (66) ಎಂದು ಗುರುತಿಸಲಾಗಿದೆ. ದಂಪತಿಗೆ ಇಬ್ಬರು ಹೆಣ್ಣುಮಕ್ಕಳಿದ್ದು, ಇಬ್ಬರಿಗೂ ಮದುವೆಯಾಗಿದೆ.

ಗೌರಿ ಅವರು ದೀರ್ಘಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಸೊಂಟದ ಸಮಸ್ಯೆಯಿಂದ ಸ್ವಾಧೀನ ಕಳೆದುಕೊಂಡು ಹಾಸಿಗೆ ಹಿಡಿದಿದ್ದರು. ಅವರ ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ಇಬ್ಬರು ಹೆಣ್ಣುಮಕ್ಕಳೇ ಭರಿಸುತ್ತಿದ್ದರು ಎನ್ನಲಾಗಿದೆ.

ಮಕ್ಕಳಿಗೆ ತಮ್ಮಿಂದ ಕಷ್ಟವಾಗುತ್ತಿದೆ ಎಂಬ ನೋವನ್ನು ಮನಸ್ಸಿನಲ್ಲಿ ಇಟ್ಟುಕೊಂಡಿದ್ದ ದಂಪತಿ, ಇದೇ ಕಾರಣಕ್ಕೆ ತೀವ್ರ ಮನನೊಂದು ರಾತ್ರಿ ವೇಳೆ ಮನೆಯಲ್ಲಿ ವಿಷ ಸೇವಿಸಿ ಮಲಗಿದ್ದಾರೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.

ಬೆಳಿಗ್ಗೆ ಮಗಳು ಕರೆ ಮಾಡಿದಾಗ ಇಬ್ಬರೂ ಕರೆ ಸ್ವೀಕರಿಸದ ಹಿನ್ನೆಲೆಯಲ್ಲಿ ಮನೆಗೆ ಬಂದು ನೋಡಿದಾಗ, ದಂಪತಿ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.

ಮಾಹಿತಿ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಬಸವೇಶ್ವರನಗರ ಪೊಲೀಸರು ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಫಾಸ್ಟ್-ಟ್ರ್ಯಾಕ್ ಕೋರ್ಟ್ ಅಲ್ಲ, ಶಿಕ್ಷಣ ಸಚಿವರ ರಾಜೀನಾಮೆ ಬೇಕು: ಪ್ರಧಾನಿ ಮೋದಿ ಹೇಳಿಕೆಗೆ CJP ತೀಕ್ಷ್ಣ ಪ್ರತಿಕ್ರಿಯೆ

0

ನವದೆಹಲಿ: ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳಿಗೆ ತ್ವರಿತಗತಿ (ಫಾಸ್ಟ್‌ ಟ್ರ್ಯಾಕ್‌) ನ್ಯಾಯಾಲಯಗಳನ್ನು ಸ್ಥಾಪಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ನೀಡಿರುವ ಭರವಸೆಯನ್ನು ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ತಿರಸ್ಕರಿಸಿದೆ. ಈ ಘೋಷಣೆಯಿಂದ ತೃಪ್ತರಾಗದ ಪಕ್ಷ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಮತ್ತೊಮ್ಮೆ ಆಗ್ರಹಿಸಿದೆ.

ಪ್ರಧಾನಿ ನರೇಂದ್ರ ಮೋದಿ ಎಕ್ಸ್ (X) ಜಾಲತಾಣದಲ್ಲಿ ಫಾಸ್ಟ್‌ ಟ್ರ್ಯಾಕ್‌ ನ್ಯಾಯಾಲಯಗಳ ಕುರಿತು ಘೋಷಣೆ ಮಾಡಿದ ಬೆನ್ನಲ್ಲೇ ಸಿಜೆಪಿ ತನ್ನ ಅಧಿಕೃತ ಪ್ರತಿಕ್ರಿಯೆ ಪ್ರಕಟಿಸಿದೆ. ನೀಟ್ ಪರೀಕ್ಷೆ ಅಕ್ರಮ ಪ್ರಕರಣದ ನೈತಿಕ ಹೊಣೆಗಾರಿಕೆಯನ್ನು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಹೊತ್ತು ತಕ್ಷಣವೇ ರಾಜೀನಾಮೆ ನೀಡಬೇಕು ಎಂಬ ತನ್ನ ಪ್ರಮುಖ ಬೇಡಿಕೆಯನ್ನು ಪಕ್ಷ ಪುನರುಚ್ಚರಿಸಿದೆ.

ಸಾಮಾಜಿಕ ಜಾಲತಾಣದ ಮೂಲಕ ಪ್ರತಿಕ್ರಿಯಿಸಿರುವ ಸಿಜೆಪಿ, ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ರಾಜಕೀಯ ಹೊಣೆಗಾರಿಕೆಯನ್ನು ನಿಗದಿಪಡಿಸದೆ ಕೇವಲ ಕಾನೂನು ಕ್ರಮಗಳ ಘೋಷಣೆ ಮಾಡಿದರೆ ಸಾಕಾಗುವುದಿಲ್ಲ ಎಂದು ಅಭಿಪ್ರಾಯಪಟ್ಟಿದೆ.

ಸಚಿವ ಧರ್ಮೇಂದ್ರ ಪ್ರಧಾನ್ ಅವರನ್ನು ವಜಾಗೊಳಿಸುವವರೆಗೆ ಅಥವಾ ಅವರು ರಾಜೀನಾಮೆ ನೀಡುವವರೆಗೆ ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ ಧರಣಿಯನ್ನು ಹಿಂಪಡೆಯುವುದಿಲ್ಲ ಎಂದು ಸಿಜೆಪಿ ಮುಖಂಡರು ಸ್ಪಷ್ಟಪಡಿಸಿದ್ದಾರೆ.

ಒಂದೆಡೆ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳಿಗೆ ತ್ವರಿತ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಫಾಸ್ಟ್‌ ಟ್ರ್ಯಾಕ್‌ ನ್ಯಾಯಾಲಯಗಳಂತಹ ಕ್ರಮಗಳನ್ನು ಘೋಷಿಸುತ್ತಿದ್ದರೆ, ಮತ್ತೊಂದೆಡೆ ವಿದ್ಯಾರ್ಥಿಗಳು ಮತ್ತು ಸಿಜೆಪಿ ಪ್ರತಿಭಟನಾಕಾರರು ರಾಜಕೀಯ ಹೊಣೆಗಾರಿಕೆ ನಿಗದಿಪಡಿಸುವಂತೆ ಒತ್ತಾಯಿಸಿ ತಮ್ಮ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಿದ್ದಾರೆ.

ಸೋಲಿನ ಭಯ ಬಿಟ್ಟು ಆಡಿದರೆ ಮಾತ್ರ ಗೆಲುವು ಸಾಧ್ಯ: ಜಿಂಬಾಬ್ವೆ ಸರಣಿಗೂ ಮುನ್ನ ಯುವ ಆಟಗಾರರಿಗೆ ಶ್ರೇಯಸ್ ಅಯ್ಯರ್ ಖಡಕ್ ಸಂದೇಶ

0

ಭಾರತ ಮತ್ತು ಜಿಂಬಾಬ್ವೆ ನಡುವಿನ ಮೂರು ಪಂದ್ಯಗಳ ಟಿ20 ಸರಣಿ ಇಂದು ಆರಂಭವಾಗಲಿದ್ದು, ಸರಣಿಗೂ ಮುನ್ನ ಟೀಮ್ ಇಂಡಿಯಾ ನಾಯಕ ಶ್ರೇಯಸ್ ಅಯ್ಯರ್ ತಮ್ಮ ಯುವ ಆಟಗಾರರಿಗೆ ಮಹತ್ವದ ಸಂದೇಶ ನೀಡಿದ್ದಾರೆ. ಗೆಲುವಿಗಾಗಿ ಕಣಕ್ಕಿಳಿಯುವ ಪ್ರತಿಯೊಬ್ಬ ಆಟಗಾರ ಮೊದಲು ಸೋಲಿನ ಭಯವನ್ನು ಮನಸ್ಸಿನಿಂದ ದೂರ ಮಾಡಬೇಕು ಎಂದು ಸಲಹೆ ನೀಡಿದ್ದಾರೆ.

ಹರಾರೆಯಲ್ಲಿ ನಡೆದ ಪಂದ್ಯಪೂರ್ವ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶ್ರೇಯಸ್ ಅಯ್ಯರ್, ಭಯದ ಮನಸ್ಥಿತಿ ಆಟಗಾರರ ನೈಜ ಸಾಮರ್ಥ್ಯ ಹೊರಹೊಮ್ಮುವುದನ್ನು ತಡೆಯುತ್ತದೆ ಎಂದು ಹೇಳಿದ್ದಾರೆ.

“ಆಟಗಾರರು ಸೋಲಿಗೆ ಹೆದರಬಾರದು. ಮನಸ್ಸಿನಲ್ಲಿ ಸೋಲಿನ ಭಯ ಇದ್ದರೆ ಆಟದಲ್ಲಿ ಸಹಜತೆ ಇರುವುದಿಲ್ಲ. ಅಂತಹ ಸಂದರ್ಭದಲ್ಲಿ ಆಟಗಾರ ತನ್ನನ್ನು ತಾನು ರಕ್ಷಿಸಿಕೊಳ್ಳುವ ರೀತಿಯಲ್ಲಿ ಆಡಲು ಪ್ರಯತ್ನಿಸುತ್ತಾನೆ. ಆದರೆ ಭಯವಿಲ್ಲದೆ ಆಡಿದಾಗ ಮಾತ್ರ ಅತ್ಯುತ್ತಮ ಪ್ರದರ್ಶನ ನೀಡಲು ಸಾಧ್ಯ,” ಎಂದು ಶ್ರೇಯಸ್ ಅಯ್ಯರ್ ಹೇಳಿದ್ದಾರೆ.

ಇತ್ತೀಚಿನ ಸರಣಿ ಸೋಲುಗಳ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗುತ್ತಿರುವ ಟೀಕೆಗಳು ಮತ್ತು ಹೊರಗಿನ ಅಭಿಪ್ರಾಯಗಳಿಗೆ ಹೆಚ್ಚಿನ ಮಹತ್ವ ನೀಡಬಾರದು ಎಂದೂ ಅವರು ಆಟಗಾರರಿಗೆ ಸಲಹೆ ನೀಡಿದ್ದಾರೆ. ಪ್ರಸ್ತುತ ಕ್ಷಣದ ಮೇಲೆ ಮಾತ್ರ ಗಮನ ಕೇಂದ್ರೀಕರಿಸಿ, ತಂಡದ ಗೆಲುವಿಗಾಗಿ ಎಲ್ಲರೂ ಒಗ್ಗಟ್ಟಿನಿಂದ ಆಡಬೇಕು ಎಂದು ನಾಯಕ ಕರೆ ನೀಡಿದ್ದಾರೆ.

ಅಯ್ಯರ್ ಅವರ ಪ್ರಕಾರ, ವೈಯಕ್ತಿಕ ಪ್ರದರ್ಶನಕ್ಕಿಂತ ತಂಡದ ಯಶಸ್ಸು ಮುಖ್ಯವಾಗಿದ್ದು, ಪ್ರತಿಯೊಬ್ಬ ಆಟಗಾರ ತಂಡದ ಅಗತ್ಯಕ್ಕೆ ತಕ್ಕಂತೆ ತನ್ನ ಪಾತ್ರವನ್ನು ನಿರ್ವಹಿಸಬೇಕು. ವೈಯಕ್ತಿಕ ದಾಖಲೆಗಳು ನಂತರದ ವಿಚಾರವಾಗಿದ್ದು, ಸದ್ಯ ತಂಡವಾಗಿ ಉತ್ತಮ ಪ್ರದರ್ಶನ ನೀಡುವುದೇ ಗುರಿಯಾಗಬೇಕು ಎಂದು ಅವರು ಹೇಳಿದ್ದಾರೆ.

ಪ್ರಸ್ತುತ ಟೀಮ್ ಇಂಡಿಯಾ ಟಿ20 ತಂಡವು ಪರಿವರ್ತನೆಯ ಹಂತದಲ್ಲಿದೆ. ಇಂಗ್ಲೆಂಡ್ ಹಾಗೂ ಐರ್ಲೆಂಡ್ ವಿರುದ್ಧದ ಸರಣಿಗಳಲ್ಲಿ ಸೋಲು ಕಂಡಿರುವ ಭಾರತ ತಂಡದ ಮೇಲೆ ಒತ್ತಡ ಹೆಚ್ಚಿದೆ. ಅದರಲ್ಲೂ ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ ಇದುವರೆಗೆ ಗೆಲುವಿನ ಖಾತೆ ತೆರೆಯಲು ಸಾಧ್ಯವಾಗಿಲ್ಲ. ಹೀಗಾಗಿ ಜಿಂಬಾಬ್ವೆ ವಿರುದ್ಧದ ಈ ಸರಣಿ ಭಾರತಕ್ಕೆ ಮಹತ್ವದ್ದಾಗಿದೆ.

ಇನ್ನೊಂದೆಡೆ, ಮೊದಲ ಪಂದ್ಯಕ್ಕೂ ಮುನ್ನವೇ ಭಾರತ ತಂಡ ಜಿಂಬಾಬ್ವೆ ತಲುಪಿರುವುದರಿಂದ ಹರಾರೆ ಸ್ಪೋರ್ಟ್ಸ್ ಕ್ಲಬ್‌ನ ಪಿಚ್ ಹಾಗೂ ಸ್ಥಳೀಯ ಹವಾಮಾನಕ್ಕೆ ಹೊಂದಿಕೊಳ್ಳುವುದು ಕೂಡ ಸವಾಲಾಗಿದೆ. ಸೀಮಿತ ಸಮಯದಲ್ಲೇ ಪರಿಸ್ಥಿತಿಗೆ ಹೊಂದಿಕೊಂಡು ಉತ್ತಮ ಪ್ರದರ್ಶನ ನೀಡಬೇಕಾದ ಒತ್ತಡ ತಂಡದ ಮೇಲಿದೆ.

ಸತತ ಸೋಲುಗಳ ಬಳಿಕ ಜಿಂಬಾಬ್ವೆ ವಿರುದ್ಧದ ಸರಣಿಯಲ್ಲಿ ಭಾರತ ಗೆಲುವಿನ ಹಳಿಗೆ ಮರಳುವ ನಿರೀಕ್ಷೆಯಿದೆ. ಯುವ ಆಟಗಾರರಿಂದ ಕೂಡಿರುವ ಶ್ರೇಯಸ್ ಅಯ್ಯರ್ ಪಡೆ ಮೊದಲ ಪಂದ್ಯದಲ್ಲೇ ಆತ್ಮವಿಶ್ವಾಸದ ಪ್ರದರ್ಶನ ನೀಡಿ ಸರಣಿಗೆ ಶುಭಾರಂಭ ಮಾಡುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.

ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳಿಗೆ ತ್ವರಿತ ನ್ಯಾಯ: ಫಾಸ್ಟ್ ಟ್ರ್ಯಾಕ್ ಕೋರ್ಟ್ ಸ್ಥಾಪನೆಗೆ ಪ್ರಧಾನಿ ಮೋದಿ ಘೋಷಣೆ

0

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಗಳ ನಡುವೆ ಪ್ರಧಾನಿ ನರೇಂದ್ರ ಮೋದಿ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದು, ಇಂತಹ ಪ್ರಕರಣಗಳಲ್ಲಿ ಭಾಗಿಯಾಗುವವರಿಗೆ ತ್ವರಿತ ಹಾಗೂ ಕಠಿಣ ಶಿಕ್ಷೆ ವಿಧಿಸುವ ಉದ್ದೇಶದಿಂದ ಫಾಸ್ಟ್‌ ಟ್ರ್ಯಾಕ್‌ (ತ್ವರಿತಗತಿ) ನ್ಯಾಯಾಲಯಗಳನ್ನು ಸ್ಥಾಪಿಸಲಾಗುವುದು ಎಂದು ಘೋಷಿಸಿದ್ದಾರೆ.

https://x.com/narendramodi/status/2080135258142617785

ಈ ಕುರಿತು ಎಕ್ಸ್ (X) ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ಮೋದಿ, “ವಿದ್ಯಾರ್ಥಿಗಳ ಕಲ್ಯಾಣ ಮತ್ತು ಅವರ ಭವಿಷ್ಯಕ್ಕಿಂತ ಮುಖ್ಯವಾದುದು ಮತ್ತೊಂದಿಲ್ಲ. ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳಲ್ಲಿ ಭಾಗಿಯಾಗುವವರಿಗೆ ತ್ವರಿತ ಹಾಗೂ ಕಠಿಣ ಶಿಕ್ಷೆ ಖಚಿತಪಡಿಸಲು ಫಾಸ್ಟ್‌ ಟ್ರ್ಯಾಕ್‌ ನ್ಯಾಯಾಲಯಗಳನ್ನು ಸ್ಥಾಪಿಸಲು ಸರ್ಕಾರ ನಿರ್ಧರಿಸಿದೆ” ಎಂದು ತಿಳಿಸಿದ್ದಾರೆ.

ಈ ಸಂಬಂಧ ಅಗತ್ಯ ಕ್ರಮಗಳನ್ನು ತಕ್ಷಣ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿರುವುದಾಗಿ ತಿಳಿಸಿರುವ ಅವರು, ವಿದ್ಯಾರ್ಥಿಗಳ ಹಿತಾಸಕ್ತಿಯನ್ನು ಕಾಪಾಡುವ ನಿಟ್ಟಿನಲ್ಲಿ ಸರ್ಕಾರ ಇನ್ನಷ್ಟು ಕ್ರಮಗಳನ್ನು ಮುಂದಿನ ದಿನಗಳಲ್ಲಿ ಕೈಗೊಳ್ಳಲಿದೆ ಎಂದು ಭರವಸೆ ನೀಡಿದ್ದಾರೆ.

ಇದೇ ವೇಳೆ, “ದೇಶದ ಯುವಜನರ ಭವಿಷ್ಯಕ್ಕೆ ಧಕ್ಕೆ ತರಲು ಯತ್ನಿಸುವವರನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ” ಎಂದು ಪ್ರಧಾನಿ ಮೋದಿ ಎಚ್ಚರಿಕೆ ನೀಡಿದ್ದಾರೆ.

ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಪರೀಕ್ಷಾ ಅಕ್ರಮಗಳನ್ನು ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ (CJP) ನೇತೃತ್ವದಲ್ಲಿ ಜೂನ್ 28ರಿಂದ ನವದೆಹಲಿಯಲ್ಲಿ ಪ್ರತಿಭಟನೆ ನಡೆಯುತ್ತಿದ್ದು, ದೇಶದ ವಿವಿಧ ಭಾಗಗಳಿಂದ ವಿದ್ಯಾರ್ಥಿಗಳು ಇದಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ‘ಸಂಸತ್ ಚಲೋ’ ಮೆರವಣಿಗೆಯ ಬಳಿಕ ಈ ಪ್ರತಿಭಟನೆ ಮತ್ತಷ್ಟು ತೀವ್ರಗೊಂಡಿದ್ದು, ಸಂಸತ್ತಿನ ಮುಂಗಾರು ಅಧಿವೇಶನದ ಮೇಲೂ ಅದರ ಪರಿಣಾಮ ಬೀರಿದೆ.

ಪ್ರತಿಭಟನಾಕಾರರು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸುವುದರ ಜೊತೆಗೆ, ಪರೀಕ್ಷಾ ಅಕ್ರಮಗಳಿಂದ ಮೃತಪಟ್ಟ ನೀಟ್ ಪರೀಕ್ಷಾರ್ಥಿಗಳ ಕುಟುಂಬಗಳಿಗೆ ₹1 ಕೋಟಿ ಪರಿಹಾರ ನೀಡುವಂತೆ ಒತ್ತಾಯಿಸಿದ್ದಾರೆ. ಈ ಬೆಳವಣಿಗೆಗಳ ನಡುವೆ ಕೇಂದ್ರ ಸರ್ಕಾರದ ಫಾಸ್ಟ್‌ ಟ್ರ್ಯಾಕ್‌ ನ್ಯಾಯಾಲಯಗಳ ಘೋಷಣೆ ಮಹತ್ವದ ಬೆಳವಣಿಗೆಯಾಗಿ ಪರಿಗಣಿಸಲಾಗುತ್ತಿದೆ.

QR ಸ್ಕ್ಯಾನ್ ಬೇಡ, ನೆಟ್ ವರ್ಕ್ ಅಗತ್ಯವಿಲ್ಲ.. ಇಂಟರ್ನೆಟ್ ಇಲ್ಲದಿದ್ದರೂ UPI ಪಾವತಿ ಮಾಡಬಹುದು..!

0

ಭಾರತದಲ್ಲಿ ಡಿಜಿಟಲ್ ಪಾವತಿ ವ್ಯವಸ್ಥೆಯಲ್ಲಿ ಕ್ರಾಂತಿ ತಂದಿರುವ ಯುಪಿಐ (UPI) ಈಗ ಮತ್ತೊಂದು ಮಹತ್ವದ ಬದಲಾವಣೆಗೆ ಸಜ್ಜಾಗಿದೆ. ಇಂಟರ್ನೆಟ್ ಸಂಪರ್ಕವಿಲ್ಲದೆಯೇ ಯುಪಿಐ ಪಾವತಿಗಳನ್ನು ಮಾಡಲು ಅನುಕೂಲವಾಗುವ ಹೊಸ ತಂತ್ರಜ್ಞಾನವನ್ನು ಭಾರತೀಯ ರಾಷ್ಟ್ರೀಯ ಪಾವತಿ ನಿಗಮ (NPCI) ಅಭಿವೃದ್ಧಿಪಡಿಸುತ್ತಿದೆ.

ಈ ಹೊಸ ವ್ಯವಸ್ಥೆ ಜಾರಿಗೆ ಬಂದರೆ ಕಳಪೆ ನೆಟ್‌ವರ್ಕ್ ಅಥವಾ ಇಂಟರ್ನೆಟ್ ಸಂಪರ್ಕದ ಕೊರತೆಯಿಂದ ಉಂಟಾಗುವ ಪಾವತಿ ವೈಫಲ್ಯಗಳಿಗೆ ಪರಿಹಾರ ಸಿಗುವ ನಿರೀಕ್ಷೆಯಿದೆ.

NFC ತಂತ್ರಜ್ಞಾನ ಆಧಾರಿತ ಹೊಸ ವ್ಯವಸ್ಥೆ

ಮಾಧ್ಯಮ ವರದಿಗಳ ಪ್ರಕಾರ, ಈ ಹೊಸ ವ್ಯವಸ್ಥೆ ನಿಯರ್ ಫೀಲ್ಡ್ ಕಮ್ಯುನಿಕೇಷನ್ (NFC) ತಂತ್ರಜ್ಞಾನವನ್ನು ಆಧರಿಸಿದೆ. ಇದರಲ್ಲಿ QR ಕೋಡ್ ಸ್ಕ್ಯಾನ್ ಮಾಡುವ ಅಗತ್ಯವಿರುವುದಿಲ್ಲ. ಬದಲಾಗಿ, NFC ಸೌಲಭ್ಯ ಹೊಂದಿರುವ ಸ್ಮಾರ್ಟ್‌ಫೋನ್ ಅನ್ನು ಪಾವತಿ ಯಂತ್ರದ (POS ಟರ್ಮಿನಲ್) ಬಳಿ ಟ್ಯಾಪ್ ಮಾಡಿದರೆ ವಹಿವಾಟು ಪೂರ್ಣಗೊಳ್ಳುತ್ತದೆ.

ಈ ಪ್ರಕ್ರಿಯೆಯ ವಿಶೇಷತೆ ಎಂದರೆ ಗ್ರಾಹಕರ ಮೊಬೈಲ್ ಅಥವಾ ವ್ಯಾಪಾರಿಯ POS ಯಂತ್ರಕ್ಕೆ ಇಂಟರ್ನೆಟ್ ಸಂಪರ್ಕದ ಅಗತ್ಯ ಇರುವುದಿಲ್ಲ. ಇದರಿಂದ ನೆಟ್‌ವರ್ಕ್ ಸಮಸ್ಯೆಯಿರುವ ಪ್ರದೇಶಗಳಲ್ಲೂ ಸುಲಭವಾಗಿ ಡಿಜಿಟಲ್ ಪಾವತಿ ಮಾಡಲು ಸಾಧ್ಯವಾಗಲಿದೆ.

ಆರಂಭದಲ್ಲಿ ₹2,000ವರೆಗೆ ಮಾತ್ರ ವಹಿವಾಟು

ಆರಂಭಿಕ ಹಂತದಲ್ಲಿ ಈ ವ್ಯವಸ್ಥೆಯ ಮೂಲಕ ಒಂದು ವಹಿವಾಟಿಗೆ ಗರಿಷ್ಠ ₹2,000ವರೆಗೆ ಪಾವತಿ ಮಾಡಲು ಅವಕಾಶ ನೀಡುವ ಸಾಧ್ಯತೆಯಿದೆ. ಈ ಸೇವೆಯನ್ನು ಬಳಸಲು ಗ್ರಾಹಕರು ಮೊದಲು ಇಂಟರ್ನೆಟ್ ಲಭ್ಯವಿರುವಾಗ ತಮ್ಮ UPI Lite Walletಗೆ ಹಣವನ್ನು ಲೋಡ್ ಮಾಡಬೇಕು. ಬಳಿಕ ಅದೇ ಬ್ಯಾಲೆನ್ಸ್ ಬಳಸಿ ಇಂಟರ್ನೆಟ್ ಇಲ್ಲದೆಯೇ ಪಾವತಿ ಮಾಡಬಹುದು.

ಇದರ ಜೊತೆಗೆ, ಸಣ್ಣ ಮೊತ್ತದ ವಹಿವಾಟುಗಳಿಗೆ ಪ್ರತಿ ಬಾರಿ UPI PIN ನಮೂದಿಸುವ ಅಗತ್ಯವಿಲ್ಲದಂತೆ ಆಯ್ಕೆಯನ್ನೂ ಒದಗಿಸುವ ಸಾಧ್ಯತೆ ಇದೆ.

ವಿಮಾನ ಮತ್ತು ಮೆಟ್ರೋ ಪ್ರಯಾಣಿಕರಿಗೆ ಹೆಚ್ಚು ಅನುಕೂಲ

ವಿಮಾನ ಪ್ರಯಾಣದ ವೇಳೆ ಅಥವಾ ಭೂಗತ ಮೆಟ್ರೋ ನಿಲ್ದಾಣಗಳಲ್ಲಿ ಇಂಟರ್ನೆಟ್ ಸಂಪರ್ಕ ಸಿಗದಿರುವುದು ಸಾಮಾನ್ಯ. ಇಂತಹ ಸಂದರ್ಭಗಳಲ್ಲಿ ಡಿಜಿಟಲ್ ಪಾವತಿಗಳು ಕಷ್ಟಕರವಾಗುತ್ತವೆ. ಹೊಸ ಆಫ್‌ಲೈನ್ UPI ವ್ಯವಸ್ಥೆ ಜಾರಿಗೆ ಬಂದರೆ ವಿಮಾನದಲ್ಲಿ ಆಹಾರ ಖರೀದಿಸುವುದು, ಮೆಟ್ರೋ ನಿಲ್ದಾಣಗಳಲ್ಲಿ ಪಾವತಿ ಮಾಡುವುದು ಸೇರಿದಂತೆ ಹಲವು ಸೇವೆಗಳಿಗೆ ಇಂಟರ್ನೆಟ್ ಇಲ್ಲದೆಯೇ ಹಣ ಪಾವತಿಸಲು ಸಾಧ್ಯವಾಗಲಿದೆ.

ಈ ಸೇವೆ ಬಳಸಲು ಏನು ಬೇಕು?

ಈ ಸೌಲಭ್ಯ ಪಡೆಯಲು ಬಳಕೆದಾರರ ಮೊಬೈಲ್‌ನಲ್ಲಿ NFC ಸೌಲಭ್ಯ ಇರಬೇಕು. ಜೊತೆಗೆ ವ್ಯಾಪಾರಿಗಳ POS ಟರ್ಮಿನಲ್‌ಗಳನ್ನೂ ಹೊಸ ವ್ಯವಸ್ಥೆಗೆ ಹೊಂದುವಂತೆ ಪ್ರಮಾಣೀಕರಿಸಬೇಕಾಗುತ್ತದೆ. ಈ ಸಂಬಂಧ NPCI ಶೀಘ್ರದಲ್ಲೇ ಹೊಸ POS ಟರ್ಮಿನಲ್‌ಗಳಿಗೆ ಪ್ರಮಾಣೀಕರಣ ಪ್ರಕ್ರಿಯೆ ಆರಂಭಿಸುವ ಸಾಧ್ಯತೆ ಇದೆ. ಬಳಿಕ ಬ್ಯಾಂಕುಗಳು ಹಾಗೂ ವಿವಿಧ UPI ಆ್ಯಪ್‌ಗಳು ಈ ವೈಶಿಷ್ಟ್ಯವನ್ನು ತಮ್ಮ ಸೇವೆಗಳಲ್ಲಿ ಅಳವಡಿಸಲಿವೆ.

ಯಾವಾಗ ಲಭ್ಯವಾಗಲಿದೆ?

ಪ್ರಸ್ತುತ ಈ ವೈಶಿಷ್ಟ್ಯ ಅಭಿವೃದ್ಧಿ ಹಂತದಲ್ಲಿದ್ದು, ಸಾರ್ವಜನಿಕ ಬಳಕೆಗೆ ಇನ್ನೂ ಬಿಡುಗಡೆಯಾಗಿಲ್ಲ. NPCI ಅಧಿಕೃತ ಬಿಡುಗಡೆ ದಿನಾಂಕವನ್ನು ಪ್ರಕಟಿಸಿಲ್ಲ. ಆದರೆ ತಂತ್ರಜ್ಞಾನದ ಅಭಿವೃದ್ಧಿ ವೇಗವಾಗಿ ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಜಾರಿಗೆ ಬರಬಹುದು ಎಂದು ವರದಿಗಳು ತಿಳಿಸಿವೆ.

ಈ ಹೊಸ ವ್ಯವಸ್ಥೆ ಜಾರಿಗೆ ಬಂದರೆ ಇಂಟರ್ನೆಟ್ ಇಲ್ಲದ ಪರಿಸ್ಥಿತಿಯಲ್ಲೂ ಸುರಕ್ಷಿತ, ವೇಗವಾದ ಹಾಗೂ ಸುಲಭ ಡಿಜಿಟಲ್ ಪಾವತಿಗಳನ್ನು ಮಾಡುವ ಅವಕಾಶ ದೊರೆಯಲಿದ್ದು, ಭಾರತದಲ್ಲಿ ಯುಪಿಐ ಬಳಕೆ ಮತ್ತಷ್ಟು ವಿಸ್ತಾರವಾಗುವ ನಿರೀಕ್ಷೆಯಿದೆ.