ಗದಗ: ಕ್ಷುಲ್ಲಕ ವಿಚಾರಕ್ಕೆ ನಡೆದ ಗಲಾಟೆ ವಿಕೋಪಕ್ಕೆ ತಿರುಗಿ ಇಬ್ಬರ ಮೇಲೆ ಗುಂಪೊಂದು ಬಿಯರ್ ಬಾಟಲಿಯಿಂದ ಹಲ್ಲೆ ನಡೆಸಿರುವ ಘಟನೆ ಗದಗದ ಡ್ರಿಂಕ್ ಫ್ಯಾಕ್ಟರಿ ಬಾರ್ ನಲ್ಲಿ ಜರುಗಿದೆ.
ಮಲ್ಲಸಮುದ್ರ ಗ್ರಾಮದ ನಿಂಗಪ್ಪ ಹಾಗೂ ಕೊಟ್ರೇಶ್ ಹಲ್ಲೆಗೊಳಗಾದವರು. ಘಟನೆ ಸಂಬಂಧ ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿದೆ.
ಇದೇ ಮಾರ್ಚ್ ತಿಂಗಳ ಕಳೆದ 26 ರಂದು ರಾತ್ರಿ ಸುಮಾರು 8.45ರಿಂದ 9.30ರ ನಡುವೆ ನಿಂಗಪ್ಪ (35) ತನ್ನ ಸ್ನೇಹಿತರೊಂದಿಗೆ ಬಾರ್ನಲ್ಲಿ ಕುಳಿತಿದ್ದಾಗ ಪಕ್ಕದ ಟೇಬಲ್ನಲ್ಲಿ ಕೆಲವರು ಗದ್ದಲ ಮಾಡಿದ್ದಾರೆ. ಈ ವೇಳೆ ನಿಂಗಪ್ಪ “ಶಾಂತವಾಗಿರಿ” ಎಂದು ಹೇಳಿದ್ದಾರೆ. ಇಷ್ಟಕ್ಕೆ ಆರೋಪಿತರು ಆಕ್ರೋಶಗೊಂಡು ಅವಾಚ್ಯ ಶಬ್ದಗಳಿಂದ ಗಲಾಟೆ ಶುರು ಮಾಡಿದ್ದಾರೆ. ನಂತರ ನಿಂಗಪ್ಪ ಹಾಗೂ ಅವನ ಸ್ನೇಹಿತ ಕೊಟ್ರೇಶ್ ಬಾರ್ನಿಂದ ಹೊರಬಂದಾಗ ಆರೋಪಿತರು ಹಿಂಬಾಲಿಸಿ ಹೊರಗಡೆ ಗುಂಪಾಗಿ ಸೇರಿ ಹಲ್ಲೆ ನಡೆಸಿದ್ದಾರೆ. ವಿಶೇಷವಾಗಿ ನಿಂಗಪ್ಪನ ಮೇಲೆ ಬಿಯರ್ ಬಾಟಲಿಗಳಿಂದ ತಲೆ, ಮುಖ ಹಾಗೂ ದೇಹದ ಭಾಗಗಳಿಗೆ ಹೊಡೆದು ಗಂಭೀರವಾಗಿ ಗಾಯಗೊಳಿಸಿದ್ದಾರೆ.
ಘಟನೆ ಸಂಬಂಧ ಗಾಯಾಳುಗಳು ದೂರು ನೀಡಿದ್ದು, ಕೊಲೆ ಮಾಡಲು ಯತ್ನಿಸಿರುವುದಾಗಿ ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ. ಇದೇ ವೇಳೆ ಜೀವ ಬೆದರಿಕೆ ಹಾಕಿರುವುದೂ ತಿಳಿದು ಬಂದಿದೆ.
ಪ್ರಕರಣದಲ್ಲಿ ಪ್ರಜ್ವಲ್ ಅಯ್ಯನಗೌಡ್ರ, ಆಸೀಪ್ ಬಾಗೋಡಿ, ತೋಹಿದ್ ಪಾಮಡಿ, ಶಾಹಿದ್ ಸುರಪುರ ಸೇರಿದಂತೆ ಹಲವರ ವಿರುದ್ಧ ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿದೆ. ಹಾಗೂ ಎಸ್ಸಿ/ಎಸ್ಟಿ ಕಾಯ್ದೆ ಸೇರಿದಂತೆ ಕ್ರೈಂ ನಂ. 72/2026 ಹಾಗೂ ವಿವಿಧ ಕಲಂಗಳಡಿ ಕೇಸ್ ದಾಖಲಾಗಿದೆ.
ಘಟನೆ ಸಂಬಂಧ ಪಿ.ಎಸ್.ಐ. ವಿ.ಜಿ. ಪವಾರ್ ಅವರ ನೇತೃತ್ವದಲ್ಲಿ ತನಿಖೆ ಮುಂದುವರಿದಿದೆ. ಸಣ್ಣ ಮಾತಿನ ಗಲಾಟೆ ದೊಡ್ಡ ದುರಂತಕ್ಕೆ ತಿರುಗಿದ ಈ ಘಟನೆ ಸಾರ್ವಜನಿಕರಲ್ಲಿ ಆತಂಕ ಹುಟ್ಟಿಸಿದೆ.

