Home Blog

ಕರಿ ಹರಿದ ಸಂಭ್ರಮಕ್ಕೆ ಮಳೆರಾಯನ ಸಾಥ್..!

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಮುಂಗಾರು ಆರಂಭದ ರೈತರ ಮೊದಲ ಹಬ್ಬವಾದ ಕಾರ ಹುಣ್ಣಿಮೆಯನ್ನು ಸೋಮವಾರ ಲಕ್ಷ್ಮೇಶ್ವರ ಪಟ್ಟಣ ಹಾಗೂ ಗ್ರಾಮೀಣ ಭಾಗಗಳಲ್ಲಿ ಸಂಭ್ರಮ, ಸಡಗರ ಮತ್ತು ಸಂಪ್ರದಾಯಬದ್ಧವಾಗಿ ಆಚರಿಸಲಾಯಿತು. ಉತ್ತಮ ಮುಂಗಾರು ಮಳೆ ಮತ್ತು ಸಮೃದ್ಧ ಬೆಳೆಗಾಗಿ ರೈತ ಸಮುದಾಯ ಆಚರಿಸುವ ಈ ಹಬ್ಬದಲ್ಲಿ ಕರಿ ಹರಿಯುವ ಸಂಪ್ರದಾಯ ವಿಶೇಷ ಆಕರ್ಷಣೆಯಾಗಿತ್ತು.

ಮುಂಗಾರು ಆರಂಭದ ರೈತರ ಮೊದಲ ಹಬ್ಬವಾದ ಕಾರ ಹುಣ್ಣಿಮೆಯನ್ನು ಸೋಮವಾರ ಲಕ್ಷ್ಮೇಶ್ವರ ಪಟ್ಟಣ ಹಾಗೂ ಗ್ರಾಮೀಣ ಭಾಗಗಳಲ್ಲಿ ಸಂಭ್ರಮ, ಸಡಗರ ಮತ್ತು ಸಂಪ್ರದಾಯಬದ್ಧವಾಗಿ ಆಚರಿಸಲಾಯಿತು. ಉತ್ತಮ ಮುಂಗಾರು ಮಳೆ ಮತ್ತು ಸಮೃದ್ಧ ಬೆಳೆಗಾಗಿ ರೈತ ಸಮುದಾಯ ಆಚರಿಸುವ ಈ ಹಬ್ಬದಲ್ಲಿ ಕರಿ ಹರಿಯುವ ಸಂಪ್ರದಾಯ ವಿಶೇಷ ಆಕರ್ಷಣೆಯಾಗಿತ್ತು.

ಸಂಪ್ರದಾಯದಂತೆ ಹುಲಗೇರಿಬಣದಲ್ಲಿ ಪಾಟೀಲಕುಲಕರ್ಣಿ ಮನೆತನದವರು ನಂದೆಣ್ಣವರ ಕುಟುಂಬಕ್ಕೆ ಕರಿ ಕಟ್ಟಲು ನೀಡಿ, ಸೊಪ್ಪಿನಕೇರಿ ಓಣಿಯ ಹಿರಿಯರು ಕರಿ ಹರಿಯುವ ಆಚರಣೆಗೆ ಚಾಲನೆ ನೀಡಿದರು.

ಬೆಳಗ್ಗೆಯೇ ರೈತರು ತಮ್ಮ ಎತ್ತುಗಳಿಗೆ ಸ್ನಾನ ಮಾಡಿಸಿ, ಎಳ್ಳೆಣ್ಣೆ, ಮಜ್ಜಿಗೆ, ಅರಿಶಿಣ, ಉಪ್ಪು ಹಾಗೂ ತತ್ತಿಯನ್ನು ಹಚ್ಚಿ, ರೋಗರುಜಿನಗಳಿಂದ ರಕ್ಷಣೆ ಸಿಗಲಿ ಎಂಬ ನಂಬಿಕೆಯಿಂದ ಪೂಜೆ ಸಲ್ಲಿಸಿದರು. ಬಳಿಕ ಕೋಡಿನ ತುದಿಗೆ ತಾಮ್ರದ ಕೊಂಬೆಣಸು ಅಳವಡಿಸಿ, ರಿಬ್ಬನ್, ಬಲೂನ್ ಹಾಗೂ ಗಜ್ಜೆಪಟ್ಟಿಗಳಿಂದ ಎತ್ತುಗಳನ್ನು ಅಲಂಕರಿಸಿದರು.

ಗೋಧೂಳಿ ವೇಳೆಯಲ್ಲಿ ವಿಶೇಷವಾಗಿ ಸಿಂಗರಿಸಿದ ಎತ್ತು ಹಾಗೂ ಹೋರಿಗಳನ್ನು ಊರ ಅಗಸಿ ರಸ್ತೆಯಲ್ಲಿ ಓಡಿಸಲಾಯಿತು. ಮೊದಲು ಕೊಬ್ಬರಿ ಸರವನ್ನು ಹರಿದು ಮುಂದೆ ಸಾಗುವ ಎತ್ತನ್ನೇ “ಕರಿ ಹರಿದ ಎತ್ತು” ಎಂದು ಪರಿಗಣಿಸುವ ಸಂಪ್ರದಾಯವಿದೆ. ಬಿಳಿ ಎತ್ತು ಕರಿ ಹರಿದರೆ ಹಿಂಗಾರು ಉತ್ತಮ, ಕರಿ ಎತ್ತು ಕರಿ ಹರಿದರೆ ಮುಂಗಾರು ಉತ್ತಮವಾಗಲಿದೆ ಎಂಬ ನಂಬಿಕೆ ರೈತರಲ್ಲಿದೆ.

ಪಟ್ಟಣದ ದೇಸಾಯಿಬಣ, ಹುಲಗೇರಿ ಬಣ, ಪೇಠಬಣ ಹಾಗೂ ಹಿರೇಬಣ ಅಗಸಿ ಬಾಗಿಲುಗಳಲ್ಲಿ ಕರಿ ಹರಿಯುವ ಸಂಪ್ರದಾಯ ನೆರವೇರಿತು. ರೈತರು ತಮ್ಮ ಎತ್ತುಗಳ ಮೈಮೇಲೆ “ರಾಮಧೂತ”, “ಭೂಮಿತಾಯಿ ಚೊಚ್ಚಲ ಮಗ”, “ಪುಣ್ಯಕೋಟಿ”, “ಮನೆದೇವ್ರು”, “ರಾಜಕುಮಾರ”, “ಒಡಹುಟ್ಟಿದವರು”, “ಮುಂಗಾರು ಮಳೆ”, “ನಮ್ಮ ಬಸವ” ಮೊದಲಾದ ಬರಹಗಳನ್ನು ಬರೆದು ಪ್ರೀತಿ ವ್ಯಕ್ತಪಡಿಸಿದರು.

ಬಳಿಕ ಪಟ್ಟಣದ ಆರಾಧ್ಯದೈವ ಸೋಮೇಶ್ವರ ದೇವಸ್ಥಾನದ ಸನ್ನಿಧಿಯಲ್ಲಿ ಗಿರೀಶ ಅಣ್ಣಿಗೇರಿಯವರ ಎತ್ತುಗಳು ಕರಿ ಹರಿದವು. ಎತ್ತುಗಳ ಓಟವನ್ನು ಕಣ್ತುಂಬಿಕೊಳ್ಳಲು ಸಾವಿರಾರು ರೈತರು, ಯುವಕರು ಹಾಗೂ ಮಕ್ಕಳು ಸೇರಿದ್ದರು. ನಂತರ ಕರಿ ಹರಿದ ಎತ್ತುಗಳೊಂದಿಗೆ ನೂರಾರು ಎತ್ತುಗಳ ಭವ್ಯ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ವಾದ್ಯ ವೈಭವದೊಂದಿಗೆ ನಡೆಯಿತು. ಇದೇ ವೇಳೆ ಸುರಿದ ಮಳೆ ಹಬ್ಬದ ಸಂಭ್ರಮವನ್ನು ಮತ್ತಷ್ಟು ಇಮ್ಮಡಿಗೊಳಿಸಿತು.

ಈ ಸಂದರ್ಭದಲ್ಲಿ ಗುರುರಾಜ ಪಾಟೀಲಕುಲಕರ್ಣಿ, ಚನ್ನಪ್ಪ ಜಗಲಿ, ಶಿವಯೋಗಿ ಅಂಕಲಕೋಟಿ, ಚಂದ್ರಣ್ಣ ಮೆಕ್ಕಿ, ಚನ್ನಪ್ಪ ಚಿಂಚಲಿ, ಬಸವರಾಜ ಮೆಣಸಿನಕಾಯಿ, ವಿರುಪಾಕ್ಷ ಆದಿ, ಅಪ್ಪಣ್ಣ ಮುಳಗುಂದ, ಮಯೂರಗೌಡ ಪಾಟೀಲ, ನಂದೀಶ ಬಂಡಿವಾಡ, ರಾಮಣ್ಣ ಗೌರಿ, ಸೋಮಣ್ಣ ಸುತಾರ, ಸುರೇಶ ಚೌಕನವರ, ಸೋಮಣ್ಣ ಉಮಚಗಿ, ಸುರೇಶ ರಾಚನಾಯ್ಕರ, ಮುತ್ತಣ್ಣ ಕಟ್ಟಿಗೌಡ್ರ, ಗಂಗಪ್ಪ ಮೇವುಂಡಿ, ಈರಪ್ಪ ಗುಡಗೇರಿ, ಬಸವರಾಜ ಅಣ್ಣಿಗೇರಿ, ಬಸವರಾಜ ಆದಿ, ರಮೇಶ ಹೆಬ್ಬಾಳ ಸೇರಿದಂತೆ ರೈತ ಮುಖಂಡರು ಉಪಸ್ಥಿತರಿದ್ದರು.

ಏಕೆ ಆಚರಿಸುತ್ತಾರೆ ಕಾರ ಹುಣ್ಣಿಮೆ?

ಮುಂಗಾರು ಉತ್ತಮವಾಗಲಿ, ಜಾನುವಾರುಗಳು ಆರೋಗ್ಯವಾಗಿರಲಿ ಹಾಗೂ ಸಮೃದ್ಧ ಬೆಳೆ ಬರಲಿ ಎಂಬ ಆಶಯದಿಂದ ರೈತರು ಕಾರ ಹುಣ್ಣಿಮೆಯನ್ನು ಆಚರಿಸುತ್ತಾರೆ. ಕರಿ ಹರಿಯುವ ಸಂಪ್ರದಾಯವು ಪ್ರಕೃತಿ, ಕೃಷಿ ಮತ್ತು ರೈತನ ಬದುಕಿನ ನಡುವಿನ ಅವಿನಾಭಾವ ಸಂಬಂಧದ ಸಂಕೇತವಾಗಿದೆ.

ಪರೀಕ್ಷೆ ವೇಳೆ ಬಾಗಿಲು ಲಾಕ್, ಮೊಬೈಲ್ ಬಳಕೆ! ಗದಗ ಕೇಂದ್ರದ ವಿರುದ್ಧ ಗಂಭೀರ ಆರೋಪ

0

ಗದಗ: ಸೀನಿಯರ್ ಸೆಕೆಂಡರಿ ನೇರ ಪರೀಕ್ಷೆಯ ಹೆಸರಿನಲ್ಲಿ ಗದಗ ನಗರದ ಪರೀಕ್ಷಾ ಕೇಂದ್ರವೊಂದರಲ್ಲಿ ಭಾರೀ ಅಕ್ರಮ ನಡೆದಿರುವ ಆರೋಪ ಕೇಳಿಬಂದಿದ್ದು, ಪರೀಕ್ಷಾ ನಿಯಮಗಳನ್ನು ಸಂಪೂರ್ಣವಾಗಿ ಉಲ್ಲಂಘಿಸಿ ಅಭ್ಯರ್ಥಿಗಳಿಂದ ಹಣ ಪಡೆದು ಪರೀಕ್ಷೆ ನಡೆಸಲಾಗಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ.

ಬೆಂಗಳೂರು ಮೂಲದ ಭಾರತ್ ಇನ್ಸ್ಟಿಟ್ಯೂಟ್ ಆಫ್ ಸ್ಕೂಲಿಂಗ್ ಎಜುಕೇಷನ್ ಮಂಡಳಿ ನಡೆಸುತ್ತಿರುವ ಪರೀಕ್ಷೆಗೆ ಕಳಸಾಪುರ ರಸ್ತೆಯ ಆರ್ಯಭಟ ಸ್ವತಂತ್ರ ಪದವಿ ಪೂರ್ವ ಕಾಲೇಜು ಕೇಂದ್ರವಾಗಿ ಕಾರ್ಯನಿರ್ವಹಿಸುತ್ತಿತ್ತು. ಆದರೆ ಪರೀಕ್ಷಾ ವ್ಯವಸ್ಥೆ ಪ್ರಶ್ನಾರ್ಹವಾಗಿದ್ದು, ಅಭ್ಯರ್ಥಿಗಳನ್ನು ಚಿಕ್ಕ ಕೊಠಡಿಗಳಲ್ಲಿ ಕಿಕ್ಕಿರಿದು ಕೂರಿಸಲಾಗಿದೆ ಎಂದು ಆರೋಪಿಸಲಾಗಿದೆ.

ಒಂದೇ ಕೊಠಡಿಯಲ್ಲಿ ಸುಮಾರು 48 ಅಭ್ಯರ್ಥಿಗಳನ್ನು ಕೂರಿಸಿ ಪರೀಕ್ಷೆ ನಡೆಸಲಾಗಿದ್ದು, ಒಟ್ಟು ಐದು ಕೊಠಡಿಗಳಲ್ಲಿ ಸುಮಾರು 240 ಮಂದಿ ಪರೀಕ್ಷೆ ಬರೆದಿದ್ದಾರೆ. ಪರೀಕ್ಷೆ ನಡೆಯುತ್ತಿದ್ದ ವೇಳೆ ಕೊಠಡಿಗಳ ಬಾಗಿಲುಗಳನ್ನು ಹೊರಗಿನಿಂದಲೇ ಲಾಕ್ ಮಾಡಲಾಗಿತ್ತು ಎಂಬ ಆರೋಪವೂ ಕೇಳಿಬಂದಿದೆ.

ಇಂಗ್ಲಿಷ್ ಪರೀಕ್ಷೆಯ ವೇಳೆ ಮೇಲ್ವಿಚಾರಕರು ಪರೀಕ್ಷಾ ಕೊಠಡಿಯೊಳಗೇ ಮೊಬೈಲ್ ಫೋನ್ ಬಳಸುತ್ತಿದ್ದರು ಎನ್ನಲಾಗಿದ್ದು, ಇದು ಪರೀಕ್ಷಾ ನಿಯಮಗಳಿಗೆ ವಿರುದ್ಧವಾಗಿದೆ. ಅಭ್ಯರ್ಥಿಗಳಿಂದ ಹಣ ಪಡೆದು ಮನಬಂದಂತೆ ಪರೀಕ್ಷೆ ನಡೆಸಲಾಗಿದೆ ಎಂಬ ಆರೋಪವೂ ಇದೀಗ ಗಂಭೀರ ಸ್ವರೂಪ ಪಡೆದುಕೊಂಡಿದೆ.

ಘಟನೆ ಕುರಿತು ಮಾಹಿತಿ ತಿಳಿದು ಮಾಧ್ಯಮದವರು ಸ್ಥಳಕ್ಕೆ ತೆರಳಿದಾಗ ಸಿಬ್ಬಂದಿ ಚಿತ್ರೀಕರಣಕ್ಕೆ ಅಡ್ಡಿಪಡಿಸಿ, “ಇಲ್ಲಿ ಬರಬೇಡಿ, 100 ಮೀಟರ್ ದೂರ ನಿಲ್ಲಿ” ಎಂದು ವಾಗ್ವಾದ ನಡೆಸಿದ್ದಾರೆ. ಬಳಿಕ ಪೊಲೀಸರು ಸ್ಥಳಕ್ಕೆ ಆಗಮಿಸಿದ ನಂತರವೇ ಪರೀಕ್ಷಾ ಕೊಠಡಿಗಳ ಬಾಗಿಲು ತೆರೆಯಲಾಯಿತು.

ಬಾಗಿಲು ತೆರೆದ ಬಳಿಕ ಪರೀಕ್ಷಾ ಕೇಂದ್ರದ ಒಳಗಿನ ವ್ಯವಸ್ಥೆ ಬಹಿರಂಗವಾಗಿದ್ದು, ನಿಯಮ ಉಲ್ಲಂಘನೆಯ ಹಲವು ಆರೋಪಗಳು ಮತ್ತಷ್ಟು ಬಲಗೊಂಡಿವೆ. ಈ ಕುರಿತು ಪ್ರಶ್ನಿಸಿದಾಗ, “ನಮಗೆ ಯಾವುದೇ ಅಧಿಕಾರಿಗಳು ಸಂಬಂಧಿಸುವುದಿಲ್ಲ. ನಾವು ಮತ್ತು ನಮ್ಮ ಇನ್‌ಸ್ಟಿಟ್ಯೂಟ್‌ವೇ ಇಲ್ಲಿ ಸುಪ್ರೀಂ” ಎಂದು ಸಿಬ್ಬಂದಿ ಪ್ರತಿಕ್ರಿಯಿಸಿದ್ದಾರೆ ಎನ್ನಲಾಗಿದ್ದು, ಪ್ರಕರಣದ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಆಗ್ರಹ ಕೇಳಿಬರುತ್ತಿದೆ.

ಖ್ಯಾತ ಚಿತ್ರಕಲಾವಿದ ಕೆ.ಟಿ. ಶಿವಪ್ರಸಾದ್ ಇನ್ನಿಲ್ಲ: ಕಲಾ ಲೋಕಕ್ಕೆ ಭಾರೀ ನಷ್ಟ!

ಹಾಸನ: ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ, ಗ್ರಾಮೀಣ ಸೊಗಡು ಮತ್ತು ಆಧುನಿಕ ಕಲೆಯನ್ನು ಸಮನ್ವಯಗೊಳಿಸಿದ ಖ್ಯಾತ ಚಿತ್ರಕಲಾವಿದ ಕೆ.ಟಿ. ಶಿವಪ್ರಸಾದ್ ಅವರು ನಿಧನರಾಗಿದ್ದಾರೆ.

ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

1947ರಲ್ಲಿ ಕೊಡಗಿನ ಮಡಿಕೇರಿ ತಾಲೂಕಿನ ಬಡ ಕೃಷಿ ಕುಟುಂಬದಲ್ಲಿ ಜನಿಸಿದ ಶಿವಪ್ರಸಾದ್, ಬಾಲ್ಯದಿಂದಲೇ ಚಿತ್ರಕಲೆಯತ್ತ ಅಪಾರ ಆಸಕ್ತಿ ಹೊಂದಿದ್ದರು. ಕುಟುಂಬದ ಒತ್ತಾಯದ ಕಾರಣ ಇಂಜಿನಿಯರಿಂಗ್ ಓದಿಗೆ ಸೇರಿದ್ದರೂ, ಬಳಿಕ ಕಲೆಯ ಮೇಲಿನ ಒಲವಿನಿಂದ ಮುಂಬೈನ ಪ್ರತಿಷ್ಠಿತ ‘ಸರ್ ಜೆ.ಜೆ. ಸ್ಕೂಲ್ ಆಫ್ ಆರ್ಟ್’ನಲ್ಲಿ ಅಧ್ಯಯನ ಮಾಡಿ 1973ರಲ್ಲಿ ಚಿತ್ರಕಲೆಯಲ್ಲಿ ಡಿಪ್ಲೊಮಾ ಪಡೆದಿದ್ದರು.

ತಮ್ಮ ಕಲಾಕೃತಿಗಳ ಮೂಲಕ ಶೋಷಿತರು, ರೈತರು ಹಾಗೂ ಗ್ರಾಮೀಣ ಜನರ ಬದುಕನ್ನು ಚಿತ್ರಿಸಿದ ಅವರು, ಸಾಮಾಜಿಕ ಚಳವಳಿಗಳಲ್ಲೂ ಸಕ್ರಿಯವಾಗಿ ಭಾಗವಹಿಸಿದ್ದರು. ಅವರ ಚಿತ್ರಕಲೆಗಳಿಗೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಪಾರ ಮೆಚ್ಚುಗೆ ದೊರೆತಿತ್ತು. ಬ್ರಿಟನ್‌ನ ಪ್ರಸಿದ್ಧ ಕಲಾವಿದ ಲುಸಿಯನ್ ಫ್ರಾಯ್ಡ್ ಅವರಿಗೆ ಹೋಲಿಸಲ್ಪಟ್ಟಿದ್ದರು.

ಬೆಂಗಳೂರು, ಮೈಸೂರು, ಮುಂಬೈ ಹಾಗೂ ನವದೆಹಲಿಯಲ್ಲಿ ನಡೆದ ಅನೇಕ ಏಕವ್ಯಕ್ತಿ ಹಾಗೂ ಸಮೂಹ ಕಲಾ ಪ್ರದರ್ಶನಗಳಲ್ಲಿ ಭಾಗವಹಿಸಿದ್ದ ಅವರ ಕೃತಿಗಳು ಜಹಾಂಗೀರ್ ಆರ್ಟ್ ಗ್ಯಾಲರಿ, ಸಾಕ್ಷಿ ಗ್ಯಾಲರಿ ಸೇರಿದಂತೆ ಹಲವು ಪ್ರಮುಖ ಕಲಾ ಕೇಂದ್ರಗಳಲ್ಲಿ ಪ್ರದರ್ಶನಗೊಂಡಿದ್ದವು.

ಕಲಾ ಕ್ಷೇತ್ರಕ್ಕೆ ನೀಡಿದ ಅಪಾರ ಕೊಡುಗೆಯನ್ನು ಗುರುತಿಸಿ ಕರ್ನಾಟಕ ಸರ್ಕಾರವು 2001ರಲ್ಲಿ ಅವರಿಗೆ ‘ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ’ ನೀಡಿ ಗೌರವಿಸಿತ್ತು. ಅವರ ನಿಧನದಿಂದ ಭಾರತೀಯ ಕಲಾ ಲೋಕದಲ್ಲಿ ದೊಡ್ಡ ಶೂನ್ಯ ಉಂಟಾಗಿದೆ.

ಕುಂಚದ ಮೂಲಕ ಕ್ರಾಂತಿ ಬರೆದ ಕಲಾ ದಿಗ್ಗಜ ಕೆ.ಟಿ. ಶಿವಪ್ರಸಾದ್ ನಿಧನ: ರೈತರ ಧ್ವನಿಯಾಗಿದ್ದ ಚಿತ್ರಕಲಾವಿದ ಇನ್ನು ನೆನಪು ಮಾತ್ರ

0

ಹಾಸನ: ಕರ್ನಾಟಕದ ಹೆಮ್ಮೆಯ ಅಂತಾರಾಷ್ಟ್ರೀಯ ಚಿತ್ರಕಲಾವಿದ ಕೆ.ಟಿ. ಶಿವಪ್ರಸಾದ್ ಅವರು ಮಂಗಳವಾರ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಅನಾರೋಗ್ಯದಿಂದ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಗ್ರಾಮೀಣ ಬದುಕು, ರೈತರ ಸಂಕಷ್ಟ, ತಳಸಮುದಾಯಗಳ ಹೋರಾಟ ಹಾಗೂ ಸಾಮಾಜಿಕ ಅಸಮಾನತೆಯನ್ನು ತಮ್ಮ ಕಲೆಯ ಮೂಲಕ ಜಾಗತಿಕ ಮಟ್ಟದಲ್ಲಿ ಪ್ರತಿಬಿಂಬಿಸಿದ್ದ ಈ ಮಹಾನ್ ಕಲಾವಿದರ ಅಗಲಿಕೆ ಭಾರತೀಯ ಚಿತ್ರಕಲಾ ಕ್ಷೇತ್ರಕ್ಕೆ ಭಾರೀ ಆಘಾತ ತಂದಿದೆ.

ಕೊಡಗಿನ ಮಡಿಕೇರಿ ತಾಲೂಕಿನ ಕೃಷಿಕ ಕುಟುಂಬದಲ್ಲಿ 1947ರಲ್ಲಿ ಜನಿಸಿದ್ದ ಶಿವಪ್ರಸಾದ್, ಬಾಲ್ಯದಲ್ಲೇ ಚಿತ್ರಕಲೆಯತ್ತ ಒಲವು ಬೆಳೆಸಿಕೊಂಡಿದ್ದರು. ಕುಟುಂಬದ ಆಶಯದಂತೆ ಇಂಜಿನಿಯರಿಂಗ್ ಶಿಕ್ಷಣ ಆರಂಭಿಸಿದರೂ, ಕಲೆಯ ಕರೆಗೆ ಸ್ಪಂದಿಸಿ ವ್ಯಾಸಂಗವನ್ನು ಅರ್ಧದಲ್ಲೇ ತೊರೆದು ಮುಂಬೈನ ಪ್ರತಿಷ್ಠಿತ ಸರ್ ಜೆ.ಜೆ. ಸ್ಕೂಲ್ ಆಫ್ ಆರ್ಟ್ನಲ್ಲಿ ಶಿಕ್ಷಣ ಪಡೆದು 1973ರಲ್ಲಿ ಚಿತ್ರಕಲೆಯಲ್ಲಿ ಡಿಪ್ಲೊಮಾ ಪಡೆದರು. ಅಲ್ಲಿಂದ ಆರಂಭವಾದ ಅವರ ಕಲಾ ಪಯಣ ಅಂತಾರಾಷ್ಟ್ರೀಯ ಮಟ್ಟದ ಗುರುತಿನವರೆಗೆ ಸಾಗಿತು.

ಸಾಮಾಜಿಕ ಬದ್ಧತೆಯೇ ಅವರ ಕಲೆಯ ಜೀವಾಳವಾಗಿತ್ತು. ರೈತರು, ಕಾರ್ಮಿಕರು, ದಲಿತರು ಹಾಗೂ ಶೋಷಿತರ ಬದುಕನ್ನು ತಮ್ಮ ಚಿತ್ರಗಳಲ್ಲಿ ಜೀವಂತಗೊಳಿಸಿದ ಅವರು, ಕಲೆಯನ್ನು ಸಮಾಜ ಪರಿವರ್ತನೆಯ ಸಾಧನವನ್ನಾಗಿ ಬಳಸಿದರು. ದಲಿತ, ರೈತ ಹಾಗೂ ಸೋಷಿಯಲಿಸ್ಟ್ ಚಳವಳಿಗಳೊಂದಿಗೆ ಸಕ್ರಿಯವಾಗಿ ಗುರುತಿಸಿಕೊಂಡಿದ್ದ ಅವರು, ಕುಂಚದ ಮೂಲಕವೇ ಸಾಮಾಜಿಕ ಜಾಗೃತಿ ಮೂಡಿಸುವ ಕೆಲಸ ಮಾಡಿದರು.

ಅವರ ಕಲಾಕೃತಿಗಳು ಬ್ರಿಟನ್‌ನ ಖ್ಯಾತ ಕಲಾವಿದ ಲುಸಿಯನ್ ಫ್ರಾಯ್ಡ್ ಅವರ ಶೈಲಿಗೆ ಹೋಲಿಕೆ ಪಡೆಯುವಷ್ಟು ಪ್ರಭಾವ ಬೀರಿದ್ದವು. ಬೆಂಗಳೂರು, ಮೈಸೂರು, ಮುಂಬೈ, ನವದೆಹಲಿ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಏಕವ್ಯಕ್ತಿ ಪ್ರದರ್ಶನಗಳನ್ನು ಆಯೋಜಿಸಿದ್ದ ಅವರು, ಜಹಾಂಗೀರ್ ಆರ್ಟ್ ಗ್ಯಾಲರಿ, ಸಾಕ್ಷಿ ಗ್ಯಾಲರಿ, ಆರ್ಟ್ ಟುಡೇ ಸೇರಿದಂತೆ ಪ್ರತಿಷ್ಠಿತ ವೇದಿಕೆಗಳಲ್ಲಿ ತಮ್ಮ ಕಲೆಯನ್ನು ಅನಾವರಣಗೊಳಿಸಿದ್ದರು. ಭೋಪಾಲ್ ಬಿನ್ನಾಲೆ, ಬಾಂಬೆ ಆರ್ಟ್ ಸೊಸೈಟಿ ಶತಮಾನೋತ್ಸವ ಪ್ರದರ್ಶನ ಹಾಗೂ ಹಾಂಗ್‌ಕಾಂಗ್ ಸೇರಿದಂತೆ ಹಲವು ಅಂತರರಾಷ್ಟ್ರೀಯ ಪ್ರದರ್ಶನಗಳಲ್ಲೂ ಭಾಗವಹಿಸಿ ಜಾಗತಿಕ ಮನ್ನಣೆ ಗಳಿಸಿದ್ದರು.

ಚಿತ್ರಕಲೆಯ ಜೊತೆಗೆ ಛಾಯಾಗ್ರಾಹಕ ಹಾಗೂ ಆರ್ಕಿಟೆಕ್ಚರಲ್ ಕನ್ಸಲ್ಟೆಂಟ್ ಆಗಿಯೂ ಗುರುತಿಸಿಕೊಂಡಿದ್ದ ಶಿವಪ್ರಸಾದ್ ಅವರ ಸೇವೆಯನ್ನು ಗೌರವಿಸಿ ಕರ್ನಾಟಕ ಸರ್ಕಾರ 2001ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಿ ಸನ್ಮಾನಿಸಿತ್ತು. ಸಾಮಾಜಿಕ ಕಳಕಳಿ, ಕಲಾತ್ಮಕ ವೈಶಿಷ್ಟ್ಯ ಹಾಗೂ ಜಾಗತಿಕ ಮನ್ನಣೆಯ ಮೂಲಕ ಕನ್ನಡ ನಾಡಿನ ಹೆಸರನ್ನು ವಿಶ್ವದಾದ್ಯಂತ ಪಸರಿಸಿದ್ದ ಈ ಮಹಾನ್ ಕಲಾವಿದರ ಅಗಲಿಕೆ ಕಲಾ ಲೋಕಕ್ಕೆ ಎಂದಿಗೂ ತುಂಬಲಾರದ ನಷ್ಟವಾಗಿದೆ.

ಶಿವಮೊಗ್ಗದಲ್ಲಿ ದುರಂತ: ಮದುವೆಯಾದ 2 ತಿಂಗಳಿಗೆ ನವವಿವಾಹಿತೆ ಆತ್ಮಹತ್ಯೆ

ಶಿವಮೊಗ್ಗ: ಮದುವೆಯಾದ ಕೇವಲ ಎರಡು ತಿಂಗಳಲ್ಲೇ ನವವಿವಾಹಿತೆಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ದುರಂತ ಘಟನೆ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಹಣಜಿ ಗ್ರಾಮದಲ್ಲಿ ನಡೆದಿದೆ.

ಆತ್ಮಹತ್ಯೆಗೆ ಶರಣಾದ ಮಹಿಳೆಯನ್ನು ಸ್ವಾತಿ (24) ಎಂದು ಗುರುತಿಸಲಾಗಿದೆ. ಶಿಕಾರಿಪುರ ತಾಲೂಕಿನ ಕಾಳೇನಹಳ್ಳಿ ಗ್ರಾಮದ ಸ್ವರೂಪ್ ಅವರನ್ನು ಸ್ವಾತಿ ಮದುವೆಯಾಗಿದ್ದರು.

ಮೂಲಗಳ ಪ್ರಕಾರ, ಸ್ವಾತಿಗೆ ಗರ್ಭಧಾರಣೆ ಹಿನ್ನೆಲೆಯಲ್ಲಿ ಆರೋಗ್ಯ ಸಮಸ್ಯೆಗಳು ಉಂಟಾಗಿದ್ದವು. ಕಳೆದ 20 ದಿನಗಳ ಹಿಂದೆ ಅವರು ತವರು ಮನೆ ಹಣಜಿ ಗ್ರಾಮಕ್ಕೆ ಬಂದಿದ್ದರು. ಘಟನೆ ನಡೆದ ವೇಳೆ ಪೋಷಕರು ಜಮೀನಿನ ಕೆಲಸಕ್ಕೆ ತೆರಳಿದ್ದಾಗ, ಸ್ವಾತಿ ಮನೆಯಲ್ಲಿ ಸೀರೆಯಿಂದ ನೇಣು ಬಿಗಿದುಕೊಂಡಿದ್ದಾರೆ.

ಸ್ಥಳೀಯರು ಇದನ್ನು ಗಮನಿಸಿ ಕುಟುಂಬದವರಿಗೆ ಮಾಹಿತಿ ನೀಡಿದ್ದು, ಬಳಿಕ ಬಾಗಿಲು ಮುರಿದು ಅವರನ್ನು ಕೆಳಗಿಳಿಸಿ ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸ್ವಾತಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಸ್ಥಳಕ್ಕೆ ಸೊರಬ ಪೊಲೀಸ್ ಠಾಣೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಕುಟುಂಬದವರ ಪ್ರಕಾರ, ಸ್ವಾತಿಗೆ ತೀವ್ರ ವಾಂತಿ ಮತ್ತು ಆರೋಗ್ಯ ಸಮಸ್ಯೆ ಇದ್ದು, ಸರಿಯಾಗಿ ಆಹಾರ ಸೇವಿಸದ ಸ್ಥಿತಿಯಲ್ಲಿದ್ದರು. ಇದೇ ಕಾರಣದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ಗಿಡ ನೆಡುವ ಯೋಜನೆ ವೆಚ್ಚದಲ್ಲಿ ಭ್ರಷ್ಟಾಚಾರ ಆರೋಪ: ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸಚಿವ ಕೃಷ್ಣಭೈರೇಗೌಡ!

ಬೆಂಗಳೂರು: ನಗರ ಹಸಿರೀಕರಣ ಹಾಗೂ ಗಿಡ ನೆಡುವ ಕಾರ್ಯಕ್ರಮಗಳಲ್ಲಿ ಬಿಬಿಎಂಪಿ ಅಧಿಕಾರಿಗಳು ಅತಿಯಾದ ವೆಚ್ಚ ಮತ್ತು ಅವ್ಯವಹಾರದಲ್ಲಿ ತೊಡಗಿದ್ದಾರೆ ಎಂದು ನಗರಾಭಿವೃದ್ಧಿ ಸಚಿವ ಕೃಷ್ಣಭೈರೇಗೌಡ ಗಂಭೀರ ಆರೋಪ ಮಾಡಿದ್ದಾರೆ.

ಇತ್ತೀಚೆಗೆ ನಡೆದ ಸಭೆಯಲ್ಲಿ ಮಾತನಾಡಿದ ಸಚಿವರು, ಬಿಬಿಎಂಪಿ ವತಿಯಿಂದ ಒಂದು ಗಿಡ ನೆಡಲು ಸುಮಾರು 3,300 ರೂಪಾಯಿ ವೆಚ್ಚವಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿರುವುದನ್ನು ಉಲ್ಲೇಖಿಸಿದರು. ಅದರಲ್ಲಿ ಕೇವಲ ಗುಂಡಿ ತೋಡಲು 300 ರೂಪಾಯಿ ಮೀಸಲಿಡಲಾಗಿದೆ ಎಂದು ತಿಳಿಸಲಾಗಿದೆ.

ಆದರೆ ತಮ್ಮ ಕ್ಷೇತ್ರದಲ್ಲಿ ನೆಡಲಾದ ಗಿಡಗಳ ಸ್ಥಳ ಪರಿಶೀಲನೆ ಮಾಡಿದಾಗ, ಯಾವುದೇ ಗಿಡಕ್ಕೆ ನಿಯಮಾನುಸಾರ ಗುಂಡಿ ತೋಡಿಲ್ಲ ಎಂದು ಸಚಿವರು ಆರೋಪಿಸಿದ್ದಾರೆ. ಫುಟ್‌ಪಾತ್ ಮತ್ತು ಮೀಡಿಯನ್‌ಗಳಲ್ಲಿ ಮೇಲ್ನೋಟಕ್ಕೆ ಮಾತ್ರ ಗಿಡಗಳನ್ನು ಇರಿಸಲಾಗುತ್ತಿದ್ದು, ನಿಗದಿತ ಮಾನದಂಡಗಳನ್ನು ಪಾಲಿಸಿಲ್ಲ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಗುಂಡಿ ತೋಡಲು ಮೀಸಲಿಟ್ಟ ಹಣವನ್ನು ಅಧಿಕಾರಿಗಳು ದುರ್ಬಳಕೆ ಮಾಡಿಕೊಂಡಿರುವ ಶಂಕೆ ಇದೆ ಎಂದು ಸಚಿವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದೇ ವೇಳೆ, ಕಳೆದ 20 ವರ್ಷಗಳಲ್ಲಿ ಬಿಬಿಎಂಪಿ ಮತ್ತು ಹಿಂದಿನ ಬಿಬಿಎಂಪಿ ಎಷ್ಟು ಗಿಡಗಳನ್ನು ನೆಟ್ಟಿದೆ, ಮರಗಣತಿ ಎಷ್ಟು ಬಾರಿ ನಡೆದಿದೆ ಮತ್ತು ನೆಟ್ಟ ಗಿಡಗಳು ನಿಜವಾಗಿ ಉಳಿದಿವೆಯೇ ಎಂಬ ಬಗ್ಗೆ ಸಚಿವರು ಸರಣಿ ಪ್ರಶ್ನೆಗಳನ್ನು ಎತ್ತಿದ್ದಾರೆ.

ಆದರೆ ಈ ಪ್ರಶ್ನೆಗಳಿಗೆ ಅಧಿಕಾರಿಗಳಿಂದ ಸಮರ್ಪಕ ಉತ್ತರ ಸಿಗಲಿಲ್ಲ ಎಂದು ಸಚಿವರು ಹೇಳಿದ್ದಾರೆ. ಸಾರ್ವಜನಿಕ ಹಣದ ದುರ್ಬಳಕೆ ಮತ್ತು ನಿರ್ಲಕ್ಷ್ಯದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಅವರು, ಈ ವಿಚಾರದಲ್ಲಿ ಪಾರದರ್ಶಕತೆ ಹಾಗೂ ಹೊಣೆಗಾರಿಕೆ ಕಡ್ಡಾಯವಾಗಬೇಕು ಎಂದು ಒತ್ತಾಯಿಸಿದ್ದಾರೆ.

ಕುರಿ ಕದಿಯಲು ಹೋಗಿ ಸಿಕ್ಕಿಬಿದ್ದ ಆರೋಪಿ, ಗ್ರಾಮಸ್ಥರಿಂದ ಥಳಿತ; ಇನ್ನಿಬ್ಬರು ಎಸ್ಕೇಪ್!

ಕೋಲಾರ: ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಗಡಿ ಗ್ರಾಮ ಎಬ್ಬರಿಯಲ್ಲಿ ಕುರಿ ಕದಿಯಲು ಹೋಗಿ ಸಿಕ್ಕಿಬಿದ್ದ ಯುವಕನನ್ನು ಗ್ರಾಮಸ್ಥರು ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ.

ಬಂಧಿತ ಆರೋಪಿಯನ್ನು ಬಂಗಾರಪೇಟೆ ತಾಲೂಕಿನ ಚಿನ್ನಕೋಟೆ ಗ್ರಾಮದ ರಾಘವೇಂದ್ರ (36) ಎಂದು ಗುರುತಿಸಲಾಗಿದೆ. ಕುರಿ ಕದಿಯಲು ತೆರಳಿದ್ದ ಮೂವರ ಪೈಕಿ ಓರ್ವ ಸಿಕ್ಕಿಬಿದ್ದಿದ್ದು, ಇನ್ನಿಬ್ಬರು ಪರಾರಿಯಾಗಿದ್ದಾರೆ. ಪೊಲೀಸರು ಅವರಿಗಾಗಿ ಶೋಧ ನಡೆಸುತ್ತಿದ್ದಾರೆ.

ಪೊಲೀಸರ ಮಾಹಿತಿ ಪ್ರಕಾರ, ರಾಘವೇಂದ್ರ ತನ್ನ ಇಬ್ಬರು ಸಹಚರರೊಂದಿಗೆ ದ್ವಿಚಕ್ರ ವಾಹನದಲ್ಲಿ ಎಬ್ಬಿರಿ ಗ್ರಾಮಕ್ಕೆ ತೆರಳಿ, ಗ್ರಾಮದ ಸುಂದರಪ್ಪ ಅವರಿಗೆ ಸೇರಿದ ಕುರಿಗಳ ಹಟ್ಟಿಯಿಂದ ಕುರಿಗಳನ್ನು ಕಳವು ಮಾಡಲು ಯತ್ನಿಸಿದ್ದಾನೆ. ಈ ವೇಳೆ ಹಟ್ಟಿಯಲ್ಲೇ ಮಲಗಿದ್ದ ಸುಂದರಪ್ಪ ಎಚ್ಚರಗೊಂಡು ಕೂಗಿಕೊಂಡಿದ್ದಾರೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಗ್ರಾಮಸ್ಥರು ರಾಘವೇಂದ್ರನನ್ನು ಹಿಡಿದಿದ್ದಾರೆ. ಆತನೊಂದಿಗೆ ಬಂದಿದ್ದ ಉಳಿದ ಇಬ್ಬರು ಆರೋಪಿಗಳು ದ್ವಿಚಕ್ರ ವಾಹನದಲ್ಲಿ ಪರಾರಿಯಾಗಿದ್ದಾರೆ. ಸಿಕ್ಕಿಬಿದ್ದ ಆರೋಪಿಯನ್ನು ಥಳಿಸಿ ಗ್ರಾಮಸ್ಥರು ವೆಪನಪಲ್ಲಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಪರಾರಿಯಾಗಿರುವ ಇಬ್ಬರು ಆರೋಪಿಗಳ ಪತ್ತೆಗೆ ಪೊಲೀಸರು ಶೋಧ ನಡೆಸಿದ್ದಾರೆ.

ಘಟನೆ ಸಂಬಂಧ ವೆಪನಪಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸುರಭಿ ಸಾವಿನ ತನಿಖೆಗೆ ಹೊಸ ತಿರುವು; ಸಂಜೀತ್ ಅಲಿಯಿಂದ ದೂರವಾದ ಬಳಿಕ ಬರೆದಿದ್ದ ಜರ್ನಲ್‌ನಲ್ಲಿ ಸ್ಪೋಟಕ ಸಾಲುಗಳು!

ಚಿಕ್ಕಬಳ್ಳಾಪುರ: ಮುದ್ದೇನಹಳ್ಳಿ ಹೋಂಸ್ಟೇನಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಸಾಯಿ ಸುರಭಿ ಪ್ರಕರಣದಲ್ಲಿ ತನಿಖೆಗೆ ಮಹತ್ವದ ಸಾಕ್ಷ್ಯ ಸಿಕ್ಕಿದೆ. ಸಾವಿಗೂ ಮುನ್ನ ಆಕೆ ಬರೆದಿದ್ದ ಗ್ರಾಟಿಟ್ಯೂಡ್ ಜರ್ನಲ್ ಇದೀಗ ಬಹಿರಂಗವಾಗಿದ್ದು, ಆಕೆಯ ಮನಸ್ಥಿತಿ, ಭವಿಷ್ಯದ ಕನಸುಗಳು ಹಾಗೂ ಹಳೆಯ ಸಂಬಂಧದ ಬಗ್ಗೆ ಬರೆದಿರುವ ಸಾಲುಗಳು ತನಿಖೆಗೆ ಹೊಸ ತಿರುವು ನೀಡಿವೆ.

2025ರ ಡಿಸೆಂಬರ್ 30ರಂದು ಬರೆದಿರುವ ದಿನಚರಿಯಲ್ಲಿ, ಸಂಜೀತ್ ಅಲಿಯಿಂದ ದೂರವಾದ ಬಳಿಕ ತನ್ನ ಬದುಕು ಬದಲಾಗಿದೆ ಎಂದು ಸುರಭಿ ಉಲ್ಲೇಖಿಸಿದ್ದಾಳೆ. ಜೀವ ಉಳಿದಿರುವುದಕ್ಕೆ, ಮತ್ತೊಂದು ಅವಕಾಶ ಸಿಕ್ಕಿರುವುದಕ್ಕೆ ಹಾಗೂ ತಪ್ಪುಗಳನ್ನು ತಿದ್ದಿಕೊಳ್ಳುವ ಅವಕಾಶ ದೊರೆತಿರುವುದಕ್ಕೆ ದೇವರಿಗೆ ಧನ್ಯವಾದ ಅರ್ಪಿಸಿದ್ದಾಳೆ.

ತನ್ನ ಹಿಂದಿನ ನಿರ್ಧಾರಗಳಿಂದ ಪಾಠ ಕಲಿತಿರುವುದಾಗಿ, ಕುಟುಂಬದೊಂದಿಗೆ ಹೊಸ ಬದುಕು ಕಟ್ಟಿಕೊಳ್ಳುವ ಆಶಯವಿದ್ದುದಾಗಿ ಹಾಗೂ ದೇವರ ಮೇಲಿನ ನಂಬಿಕೆ ಮತ್ತಷ್ಟು ಗಟ್ಟಿಯಾಗಿರುವುದಾಗಿ ಜರ್ನಲ್‌ನಲ್ಲಿ ದಾಖಲಿಸಿದ್ದಾಳೆ. ಈ ಬರಹಗಳು ಆಕೆ ಹೊಸ ಆರಂಭದ ನಿರೀಕ್ಷೆಯಲ್ಲಿದ್ದಳು ಎಂಬುದನ್ನು ಸೂಚಿಸುತ್ತವೆ.

ಆದರೆ ತನಿಖಾಧಿಕಾರಿಗಳ ಗಮನ ಸೆಳೆದಿರುವುದು ಜರ್ನಲ್‌ನಲ್ಲಿರುವ ಒಂದು ಮಹತ್ವದ ಸಾಲು. “ನನ್ನ ತಪ್ಪಾದ ಆಯ್ಕೆಯಿಂದ ದೂರವಿಟ್ಟಿದ್ದಕ್ಕೆ ಹಾಗೂ ದುಷ್ಟ ವ್ಯಕ್ತಿಯನ್ನು ಮದುವೆಯಾಗದಂತೆ ಕಾಪಾಡಿದ್ದಕ್ಕೆ ದೇವರಿಗೆ ಕೃತಜ್ಞತೆ” ಎಂದು ಸುರಭಿ ಬರೆದಿದ್ದಾಳೆ.

ಈ ಜರ್ನಲ್ ಬೆಳಕಿಗೆ ಬಂದಿರುವ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆಗೆ ಹೊಸ ಆಯಾಮ ಸಿಕ್ಕಿದ್ದು, ಆಕೆಯ ಸಾವಿನ ಹಿಂದಿನ ನೈಜ ಕಾರಣವೇನು ಎಂಬುದನ್ನು ಪತ್ತೆಹಚ್ಚಲು ಪೊಲೀಸರು ಎಲ್ಲಾ ಸಾಧ್ಯತೆಗಳನ್ನೂ ಪರಿಶೀಲಿಸುತ್ತಿದ್ದಾರೆ. ಹೊಸ ಬದುಕಿನ ಕನಸು ಕಂಡಿದ್ದ ಯುವತಿಯ ಅಂತ್ಯ ಅನುಮಾನಾಸ್ಪದ ಸಾವಿನಲ್ಲಿ ಆಗಿರುವುದು ಪ್ರಕರಣವನ್ನು ಮತ್ತಷ್ಟು ಗಂಭೀರಗೊಳಿಸಿದೆ.

ನೇಹಾ ಹಿರೇಮಠ ಕೊಲೆ ಪ್ರಕರಣ: ಆರೋಪಿ ಫಯಾಜ್ ಜಾಮೀನು ಅರ್ಜಿ ವಜಾಗೊಳಿಸಿದ ಹೈಕೋರ್ಟ್!

ಧಾರವಾಡ: ರಾಜ್ಯಾದ್ಯಂತ ಭಾರೀ ಸಂಚಲನ ಮೂಡಿಸಿದ್ದ ಹುಬ್ಬಳ್ಳಿಯ ನೇಹಾ ಹಿರೇಮಠ ಕೊಲೆ ಪ್ರಕರಣದ ಪ್ರಮುಖ ಆರೋಪಿ ಫಯಾಜ್‌ಗೆ ಕರ್ನಾಟಕ ಹೈಕೋರ್ಟ್‌ನ ಧಾರವಾಡ ಪೀಠದಿಂದ ಮತ್ತೆ ಹಿನ್ನಡೆಯಾಗಿದೆ.

ಆರೋಪಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ನ್ಯಾಯಾಲಯ ಮಂಗಳವಾರ ವಜಾಗೊಳಿಸಿದೆ.

ಈ ಹಿಂದೆ ಹುಬ್ಬಳ್ಳಿಯ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವೂ ಫಯಾಜ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು. ಆ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದ ಆರೋಪಿ, ಜಾಮೀನು ನೀಡುವಂತೆ ಕೋರಿದ್ದನು.

ಪ್ರಕರಣಕ್ಕೆ ಸಂಬಂಧಿಸಿದಂತೆ ಉಭಯಪಕ್ಷಗಳ ವಾದ-ಪ್ರತಿವಾದಗಳನ್ನು ಆಲಿಸಿದ ಹೈಕೋರ್ಟ್, ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಆರೋಪಿಗೆ ಜಾಮೀನು ನೀಡಲು ಯಾವುದೇ ಆಧಾರಗಳಿಲ್ಲ ಎಂದು ಅಭಿಪ್ರಾಯಪಟ್ಟು ಅರ್ಜಿಯನ್ನು ವಜಾಗೊಳಿಸಿದೆ.

ಮೃತ ನೇಹಾ ಹಿರೇಮಠ ಪರವಾಗಿ ಹಿರಿಯ ವಕೀಲ ರಾಘವೇಂದ್ರ ಮುತ್ತಗಿ ವಾದ ಮಂಡಿಸಿ, ಆರೋಪಿ ಎಸಗಿರುವ ಕೃತ್ಯ ಅತ್ಯಂತ ಕ್ರೂರವಾಗಿದ್ದು, ಜಾಮೀನು ನೀಡಿದರೆ ಸಮಾಜಕ್ಕೆ ತಪ್ಪು ಸಂದೇಶ ರವಾನೆಯಾಗುವುದರ ಜೊತೆಗೆ ಸಾಕ್ಷ್ಯ ನಾಶಪಡಿಸುವ ಸಾಧ್ಯತೆಯೂ ಇದೆ ಎಂದು ನ್ಯಾಯಾಲಯದ ಗಮನಕ್ಕೆ ತಂದರು. ಈ ವಾದವನ್ನು ಪರಿಗಣಿಸಿದ ನ್ಯಾಯಪೀಠ ಜಾಮೀನು ಅರ್ಜಿಯನ್ನು ತಿರಸ್ಕರಿಸಿತು.

ಪ್ರಕರಣದ ತನಿಖೆಯನ್ನು ಸಿಐಡಿ ಮುಂದುವರಿಸಿದ್ದು, ಹೈಕೋರ್ಟ್‌ನ ಈ ಆದೇಶವು ನೇಹಾ ಕುಟುಂಬದ ಕಾನೂನು ಹೋರಾಟಕ್ಕೆ ಮಹತ್ವದ ಬೆಂಬಲವಾಗಿದೆ.

ಪ್ರಕರಣದ ಹಿನ್ನೆಲೆ:

2024ರ ಏಪ್ರಿಲ್ 18ರಂದು ಹುಬ್ಬಳ್ಳಿಯ ಬಿವಿಬಿ ಕಾಲೇಜು ಆವರಣದಲ್ಲಿ ಎಂಸಿಎ ವಿದ್ಯಾರ್ಥಿನಿ ಹಾಗೂ ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆಯ ಕಾಂಗ್ರೆಸ್ ಸದಸ್ಯ ನಿರಂಜನ ಹಿರೇಮಠ ಅವರ ಪುತ್ರಿ ನೇಹಾ ಹಿರೇಮಠ ಅವರನ್ನು ಆರೋಪಿ ಫಯಾಜ್ ಚಾಕುವಿನಿಂದ ಹಲವು ಬಾರಿ ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದನು. ಪ್ರೀತಿಯನ್ನು ನಿರಾಕರಿಸಿದ್ದೇ ಕೊಲೆಗೆ ಕಾರಣ ಎಂದು ತನಿಖೆಯಲ್ಲಿ ತಿಳಿದುಬಂದಿತ್ತು.

ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಬಂಧಿಸಿದ್ದ ಪೊಲೀಸರು, ಬಳಿಕ ಪ್ರಕರಣದ ತನಿಖೆಯನ್ನು ಸಿಐಡಿಗೆ ವರ್ಗಾಯಿಸಿದ್ದರು. ಹತ್ಯೆ ಪ್ರಕರಣದ ವಿಚಾರಣೆ ಮುಂದುವರಿದಿದೆ.

‘ಅಡ್ಡಮತದಾನ ಮಾಡಿಲ್ಲ, ಬಿಜೆಪಿಯಲ್ಲೇ ಇರುತ್ತೇನೆ’! ಧರ್ಮಸ್ಥಳದಲ್ಲಿ ಮಂಜುನಾಥನ ಮುಂದೆ ಪ್ರಮಾಣ ಮಾಡಿದ ಶಾಸಕ ಸುರೇಶ್

0

ಮಂಗಳೂರು: ವಿಧಾನಪರಿಷತ್ ಚುನಾವಣೆಯಲ್ಲಿ ಅಡ್ಡಮತದಾನ ಆರೋಪ ಎದುರಿಸುತ್ತಿರುವ ಹಾಸನ ಜಿಲ್ಲೆಯ ಬೇಲೂರು ಬಿಜೆಪಿ ಶಾಸಕ ಹೆಚ್.ಕೆ. ಸುರೇಶ್, ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಶ್ರೀ ಮಂಜುನಾಥ ಸ್ವಾಮಿಯ ಸನ್ನಿಧಿಯಲ್ಲಿ ಆಣೆ-ಪ್ರಮಾಣ ಮಾಡುವ ಮೂಲಕ ತಮ್ಮ ವಿರುದ್ಧದ ಆರೋಪಗಳನ್ನು ತಳ್ಳಿಹಾಕಿದ್ದಾರೆ.

ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದ ಬಳಿಕ ದೇವರ ಮುಂದೆ ಮುಷ್ಟಿ ಕಾಣಿಕೆ ಅರ್ಪಿಸಿ ಪ್ರಾರ್ಥನೆ ಸಲ್ಲಿಸಿದ ಸುರೇಶ್, “ನಾನು ಯಾವುದೇ ಅಡ್ಡಮತದಾನ ಮಾಡಿಲ್ಲ. ನನ್ನ ಮೇಲೆ ಕೇಳಿಬಂದಿರುವ ಆರೋಪಗಳು ಸತ್ಯವಲ್ಲ. ನಾನು ಈಗಲೂ ಬಿಜೆಪಿಯಲ್ಲಿದ್ದೇನೆ, ಮುಂದೆಯೂ ಬಿಜೆಪಿಯಲ್ಲೇ ಇರುತ್ತೇನೆ. ಶಾಸಕನಾದ ದಿನದಿಂದ ಪಕ್ಷದ ಪರವಾಗಿ ನಿಷ್ಠೆಯಿಂದ ಕೆಲಸ ಮಾಡುತ್ತಿದ್ದೇನೆ” ಎಂದು ಪ್ರಮಾಣ ಮಾಡಿದರು.

ವಿಧಾನಪರಿಷತ್ ಚುನಾವಣೆಯ ಬಳಿಕ ಬಿಜೆಪಿ ಶಾಸಕರ ಕ್ರಾಸ್‌ ವೋಟಿಂಗ್ ಕುರಿತು ರಾಜಕೀಯ ವಲಯದಲ್ಲಿ ಭಾರೀ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲೇ, ಧರ್ಮಸ್ಥಳದಲ್ಲಿ ದೇವರ ಸನ್ನಿಧಿಯಲ್ಲಿ ಆಣೆ-ಪ್ರಮಾಣ ಮಾಡುವ ಮೂಲಕ ಸುರೇಶ್ ತಮ್ಮ ನಿಲುವನ್ನು ಬಹಿರಂಗಪಡಿಸಿದ್ದಾರೆ.