Home Blog

ಮೊಸರು ಕುಡಿಕೆ ಕಾರ್ಯಕ್ರಮದಲ್ಲಿ ಎರಡು ಗುಂಪುಗಳ ನಡುವೆ ಮಾರಾಮಾರಿ!

0

ಬಾಗಲಕೋಟೆ: ನಗರದ ವಿದ್ಯಾಗಿರಿ ಇಂಜಿನಿಯರಿಂಗ್ ಕಾಲೇಜು ಸರ್ಕಲ್ ಬಳಿ ಭಾನುವಾರ ರಾತ್ರಿ ಆಯೋಜಿಸಿದ್ದ ಶ್ರೀಕೃಷ್ಣ ಜನ್ಮಾಷ್ಟಮಿ ಮೊಸರು ಕುಡಿಕೆ ಕಾರ್ಯಕ್ರಮದಲ್ಲಿ ಎರಡು ಯುವಕರ ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ.

ವೇದಿಕೆಯ ಮೇಲೆ ಹಾಡು ಹಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ಆರಂಭವಾಗಿದ್ದು, ಕೆಲವೇ ಕ್ಷಣಗಳಲ್ಲಿ ವಾಗ್ವಾದ ತಾರಕಕ್ಕೇರಿ ಕೈಕೈ ಮಿಲಾಯಿಸುವ ಹಂತ ತಲುಪಿದೆ. ಉತ್ಸವ ವೀಕ್ಷಿಸಲು ನೂರಾರು ಮಂದಿ ಸೇರಿದ್ದರಿಂದ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಪರಿಸ್ಥಿತಿ ಕೈಮೀರುತ್ತಿರುವುದನ್ನು ಗಮನಿಸಿದ ಪೊಲೀಸರು ತಕ್ಷಣ ಮಧ್ಯಪ್ರವೇಶಿಸಿ ಲಾಠಿ ಬೀಸಿ ಗುಂಪನ್ನು ಚದುರಿಸಿದ್ದಾರೆ. ಪೊಲೀಸರ ಸಮಯೋಚಿತ ಕ್ರಮದಿಂದ ಯಾವುದೇ ಭಾರಿ ಅಹಿತಕರ ಘಟನೆ ಸಂಭವಿಸದೆ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ.

ಮೆಜೆಸ್ಟಿಕ್‌ನಲ್ಲಿ ಹೊತ್ತಿ ಉರಿದ ರೈಲು ಬೋಗಿ! ತಪ್ಪಿದ ಭಾರೀ ಅನಾಹುತ

0

ಬೆಂಗಳೂರು: ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದ ಪ್ಲಾಟ್‌ಫಾರ್ಮ್‌ ನಂ.1ರಲ್ಲಿ ನಿಲ್ಲಿಸಲಾಗಿದ್ದ ಖಾಲಿ ರೈಲು ಬೋಗಿಗೆ ಭಾನುವಾರ ತಡರಾತ್ರಿ ಬೆಂಕಿ ಹೊತ್ತಿಕೊಂಡಿದೆ.

ರಾತ್ರಿ ಸುಮಾರು 11.30ರ ವೇಳೆಗೆ ಬೋಗಿಯಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ಕ್ಷಣಾರ್ಧದಲ್ಲೇ ಇಡೀ ಬೋಗಿಯನ್ನು ಆವರಿಸಿದೆ. ದಟ್ಟ ಹೊಗೆ ಆವರಿಸಿದ್ದರೂ ಬೋಗಿಯಲ್ಲಿ ಪ್ರಯಾಣಿಕರು ಇಲ್ಲದ ಕಾರಣ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಆದರೆ ಬೋಗಿ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ.

ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ರೈಲ್ವೆ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಕುರಿತು ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ತಾವರೆಕೆರೆ ಗೇಟ್ ಬಳಿ ಭೀಕರ ಅಪಘಾತ; ಮಹಿಳೆ ಸ್ಥಳದಲ್ಲೇ ಸಾವು, ನಾಲ್ವರಿಗೆ ಗಾಯ!

0

ಮಂಡ್ಯ: ಚಲಿಸುತ್ತಿದ್ದ ಕಾರಿಗೆ ಹಿಂಬದಿಯಿಂದ ಮತ್ತೊಂದು ಕಾರು ಅತೀವೇಗವಾಗಿ ಡಿಕ್ಕಿ ಹೊಡೆದ ಪರಿಣಾಮ ಮಹಿಳೆಯೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ನಾಲ್ವರು ಗಾಯಗೊಂಡಿರುವ ಘಟನೆ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ತಾವರೆಕೆರೆ ಗೇಟ್ ಸಮೀಪದ ಪೆಟ್ರೋಲ್ ಬಂಕ್ ಬಳಿ ನಡೆದಿದೆ.

ಗುಜರಾತ್ ಮೂಲದ ಹಾಗೂ ಬೆಂಗಳೂರಿನ ನಿವಾಸಿಯಾಗಿದ್ದ ಸುಧಾ ಜೈನ್ (58) ಮೃತ ಮಹಿಳೆ. ಕುಟುಂಬ ಸಮೇತ ಶ್ರವಣಬೆಳಗೊಳದಿಂದ ಬೆಂಗಳೂರಿಗೆ ವಾಪಸ್ಸಾಗುತ್ತಿದ್ದ ವೇಳೆ, ಹಿಂದಿನಿಂದ ಬಂದ ಮತ್ತೊಂದು ಕಾರು ಓವರ್‌ಟೇಕ್ ಮಾಡುವ ಭರದಲ್ಲಿ ಅತೀವೇಗವಾಗಿ ಬಂದು ಸ್ವಿಫ್ಟ್ ಡಿಸೈರ್ ಕಾರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರಿನಲ್ಲಿದ್ದ ಸುಧಾ ಜೈನ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಅಪಘಾತದ ವೇಳೆ ರಸ್ತೆ ಬದಿ ಕೆಲಸ ಮಾಡುತ್ತಿದ್ದ ಪೆಟ್ರೋಲ್ ಬಂಕ್ ಮಾಲೀಕರಿಗೂ ಕಾಲಿಗೆ ಗಂಭೀರ ಗಾಯವಾಗಿದ್ದು, ಗಾಯಾಳುಗಳನ್ನು ಬಿ.ಜಿ.ನಗರದ ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಭೀಕರ ಅಪಘಾತದ ದೃಶ್ಯ ಮತ್ತೊಂದು ಕಾರಿನ ಡ್ಯಾಶ್‌ಬೋರ್ಡ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅಪಘಾತದ ಬಳಿಕ ಕಾರನ್ನು ಸ್ಥಳದಲ್ಲೇ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ.

ಘಟನೆ ಸಂಬಂಧ ಬೆಳ್ಳೂರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಎರಡೂ ಕಾರುಗಳನ್ನು ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ. ಮೃತ ಮಹಿಳೆಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಶವಾಗಾರಕ್ಕೆ ರವಾನಿಸಲಾಗಿದೆ.

ಪರವಾನಗಿ ಇಲ್ಲದೆ ಔಷಧ ದಾಸ್ತಾನು; ಅಮೆಜಾನ್‌ನ ಗೋದಾಮುಗಳ ಮೇಲೆ FDA ದಾಳಿ!

0

ಬೆಂಗಳೂರು: ಯಾವುದೇ ಅಧಿಕೃತ ಪರವಾನಗಿ ಇಲ್ಲದೆ ಅಕ್ರಮವಾಗಿ ಔಷಧಗಳನ್ನು ಸಂಗ್ರಹಿಸಿ, ವಿತರಣೆ ಮಾಡುತ್ತಿದ್ದ ಇ-ಕಾಮರ್ಸ್ ಸಂಸ್ಥೆಗಳ ಗೋದಾಮುಗಳ ಮೇಲೆ ಕರ್ನಾಟಕ ಆಹಾರ ಸುರಕ್ಷತೆ ಹಾಗೂ ಔಷಧ ನಿಯಂತ್ರಣ ಇಲಾಖೆ ಏಕಕಾಲದಲ್ಲಿ ದಾಳಿ ನಡೆಸಿದೆ.

ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಗಳಲ್ಲಿ ಲಭ್ಯವಾದ ನಿಖರ ಗುಪ್ತಚರ ಮಾಹಿತಿ ಆಧರಿಸಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದು, ಒಟ್ಟು ₹4,02,352 ಮೌಲ್ಯದ ಔಷಧಗಳನ್ನು ಜಪ್ತಿ ಮಾಡಿದ್ದಾರೆ.

ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ತಟ್ಟನಹಳ್ಳಿಯಲ್ಲಿರುವ ಅಮೆಜಾನ್ ಸೆಲ್ಲರ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್‌ನ ಪರವಾನಗಿ ರಹಿತ ಆವರಣದ ಮೇಲೆ ರಾಜ್ಯ ಗುಪ್ತದಳ ವಿಭಾಗದ ಸಹಾಯಕ ಔಷಧ ನಿಯಂತ್ರಕ ಮನೋಹರ್ ನೇತೃತ್ವದ ತಂಡ ದಾಳಿ ನಡೆಸಿದೆ. ಈ ವೇಳೆ ಯಾವುದೇ ಪರವಾನಗಿ ಇಲ್ಲದೆ ದಾಸ್ತಾನು ಮಾಡಲಾಗಿದ್ದ ₹2,45,352 ಮೌಲ್ಯದ ಔಷಧಗಳನ್ನು ವಶಪಡಿಸಿಕೊಳ್ಳಲಾಗಿದೆ.

ಇದೇ ವೇಳೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯ ಏರೋಸ್ಪೇಸ್ ಪ್ರದೇಶದಲ್ಲಿರುವ ಅಮೆಜಾನ್ ಸಂಸ್ಥೆಯ ಮತ್ತೊಂದು ಪರವಾನಗಿ ರಹಿತ ಆವರಣದ ಮೇಲೂ ದಾಳಿ ನಡೆಸಲಾಗಿದೆ. ಜಿಲ್ಲಾ ಔಷಧ ಪರಿವೀಕ್ಷಕಿ ವಿಭಾ ನೇತೃತ್ವದ ತಂಡ ಪರಿಶೀಲನೆ ನಡೆಸಿ ₹1,57,000 ಮೌಲ್ಯದ ಔಷಧಗಳನ್ನು ಜಪ್ತಿ ಮಾಡಿದೆ.

ಎರಡೂ ಆವರಣಗಳಲ್ಲಿ ಔಷಧ ಸಂಗ್ರಹಣೆಗೆ ಅಗತ್ಯವಿರುವ ಮಾನ್ಯ ದಾಖಲೆಗಳು ಇಲ್ಲದಿರುವುದು ಪರಿಶೀಲನೆ ವೇಳೆ ಬೆಳಕಿಗೆ ಬಂದಿದೆ. ಔಷಧಗಳ ಮಾರಾಟ ಹಾಗೂ ದಾಸ್ತಾನಿನಲ್ಲಿ ಕಡ್ಡಾಯವಾಗಿ ನಿಯಮಗಳನ್ನು ಪಾಲಿಸುವಂತೆ ಇಲಾಖೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.

ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳ ಹೆಸರಿನಲ್ಲಿ ನಿಯಮಬಾಹಿರವಾಗಿ ಔಷಧಗಳನ್ನು ದಾಸ್ತಾನು ಮಾಡುವ ಸಂಸ್ಥೆಗಳ ವಿರುದ್ಧ ಮುಂದಿನ ದಿನಗಳಲ್ಲೂ ಇಂತಹ ಕಾರ್ಯಾಚರಣೆ ಮುಂದುವರಿಸಲಾಗುವುದು ಎಂದು ಆಹಾರ ಸುರಕ್ಷತೆ ಹಾಗೂ ಔಷಧ ನಿಯಂತ್ರಣ ಇಲಾಖೆ ತಿಳಿಸಿದೆ.

ಶಿವಮೊಗ್ಗ: ವಯೋಸಹಜ ಕಾಯಿಲೆಗೆ 17 ವರ್ಷದ ಹೆಣ್ಣು ಹುಲಿ ‘ದಶಮಿ’ ಬಲಿ

0

ಶಿವಮೊಗ್ಗ: ನಗರದ ಹೊರವಲಯದ ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮದಲ್ಲಿದ್ದ 17 ವರ್ಷದ ಹೆಣ್ಣು ಹುಲಿ ‘ದಶಮಿ’ ವಯೋಸಹಜ ಕಾಯಿಲೆಯಿಂದ ಮೃತಪಟ್ಟಿದೆ.

ವೃದ್ಧಾಪ್ಯದ ಕಾರಣದಿಂದ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದ ದಶಮಿ, ಪಾರ್ಶ್ವವಾಯುವಿನಿಂದ ಬಳಲುತ್ತಿತ್ತು. ಕಳೆದ 10 ದಿನಗಳಿಂದ ಮೃಗಾಲಯದ ವೈದ್ಯರು ಚಿಕಿತ್ಸೆ ನೀಡುತ್ತಿದ್ದರು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ದಶಮಿ ಕೊನೆಯುಸಿರೆಳೆದಿದೆ.

ದಶಮಿ ಶಿವಮೊಗ್ಗ ಮೃಗಾಲಯದಲ್ಲೇ ಜನಿಸಿದ್ದು, ಕಳೆದ 17 ವರ್ಷಗಳಿಂದ ಮೃಗಾಲಯದ ಭಾಗವಾಗಿತ್ತು. ಇದೀಗ ದಶಮಿ ಮೃತಪಟ್ಟಿರುವುದು ಪ್ರವಾಸಿಗರು ಹಾಗೂ ಮೃಗಾಲಯದ ಸಿಬ್ಬಂದಿಯಲ್ಲಿ ಬೇಸರ ಮೂಡಿಸಿದೆ.

ಸೋಮವಾರ ಪಶುವೈದ್ಯಕೀಯ ಕಾಲೇಜಿನ ವೈದ್ಯರಿಂದ ದಶಮಿಯ ಮರಣೋತ್ತರ ಪರೀಕ್ಷೆ ನಡೆಯಲಿದೆ ಎಂದು ಮೃಗಾಲಯದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಮರಾಕ್ಷರ್ ತಿಳಿಸಿದ್ದಾರೆ.

ಮನೆ ದೇವರಿಗೆ ಹೋದ ಕುಟುಂಬಕ್ಕೆ ಕಾದಿತ್ತು ಶಾಕ್; ಕ್ಷಣಾರ್ಧದಲ್ಲಿ ತಗಡಿನ ಮನೆ ಬೆಂಕಿಗಾಹುತಿ, ಗೃಹೋಪಯೋಗಿ ವಸ್ತುಗಳು ಭಸ್ಮ!

0

ಗದಗ: ತಗಡಿನ ಮನೆಗೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡು ಕ್ಷಣಾರ್ಧದಲ್ಲೇ ಮನೆ ಸಂಪೂರ್ಣ ಸುಟ್ಟು ಕರಕಲಾದ ಘಟನೆ ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಶಿವಾಜಿನಗರ ತಾಂಡಾದಲ್ಲಿ ನಡೆದಿದೆ.

ಸಂತೋಷ ಲಮಾಣಿ ಎಂಬುವರಿಗೆ ಸೇರಿದ ಮನೆ ಇದಾಗಿದ್ದು, ಕುಟುಂಬಸ್ಥರೆಲ್ಲರೂ ಎರಡು ದಿನಗಳಿಂದ ಮನೆ ದೇವರಿಗೆ ತೆರಳಿದ್ದರು. ಇಂದು ಬೆಳಗಿನ ಜಾವ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇದನ್ನು ಗಮನಿಸಿದ ಸ್ಥಳೀಯರು ಕೂಡಲೇ ಬೆಂಕಿ ನಂದಿಸಲು ಮುಂದಾಗಿದ್ದಾರೆ.

ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸುವಷ್ಟರಲ್ಲಿ ಮನೆ ಸಂಪೂರ್ಣವಾಗಿ ಹೊತ್ತಿ ಉರಿದಿತ್ತು. ಬಳಿಕ ಅಗ್ನಿಶಾಮಕ ಸಿಬ್ಬಂದಿ ಹಾಗೂ ಸ್ಥಳೀಯರು ಹರಸಾಹಸಪಟ್ಟು ಬೆಂಕಿ ನಂದಿಸಿದ್ದಾರೆ. ಆದರೆ ಮನೆಯಲ್ಲಿದ್ದ ದವಸ ಧಾನ್ಯಗಳು, ಬಟ್ಟೆ, ಹಣ, ದಾಖಲೆಗಳು ಸೇರಿದಂತೆ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಬೆಂಕಿಗಾಹುತಿಯಾಗಿವೆ.

ಬೆಂಕಿ ಅವಘಡಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ಘಟನೆ ವಿಷಯ ತಿಳಿದು ಸ್ಥಳಕ್ಕೆ ಬಂದ ಕುಟುಂಬಸ್ಥರು ಸುಟ್ಟು ಕರಕಲಾದ ಮನೆಯನ್ನು ಕಂಡು ಕಣ್ಣೀರಿಟ್ಟಿದ್ದಾರೆ. ಘಟನೆ ಶಿರಹಟ್ಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮಳೆ ಕೊರತೆಯಿಂದ ಹಾವೇರಿ ರೈತರು ಕಂಗಾಲು; ವರದಾ ನದಿಗೆ ಗೇಟ್ ಅಳವಡಿಸಿ ನೀರು ನಿಲ್ಲಿಸಲು ಆಗ್ರಹ

ಹಾವೇರಿ: ಮಳೆ ಕೊರತೆಯಿಂದ ಕಂಗಾಲಾಗಿರುವ ಹಾವೇರಿ ಜಿಲ್ಲೆಯ ರೈತರು, ವರದಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ 20ಕ್ಕೂ ಅಧಿಕ ಬ್ರಿಡ್ಜ್ ಕಂ ಬ್ಯಾರೇಜ್‌ಗಳಿಗೆ ಗೇಟ್ ಅಳವಡಿಸಿ ನೀರು ನಿಲ್ಲಿಸುವಂತೆ ಜಿಲ್ಲಾಡಳಿತಕ್ಕೆ ಆಗ್ರಹಿಸಿದ್ದಾರೆ.

ಹಾವೇರಿ ಕೃಷಿ ಪ್ರಧಾನ ಜಿಲ್ಲೆಯಾಗಿದ್ದು, ಪ್ರಸಕ್ತ ವರ್ಷ ಮಳೆ ಪ್ರಮಾಣ ಕಡಿಮೆಯಾಗಿರುವುದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಜಿಲ್ಲೆಯ ಜೀವನಾಡಿ ನದಿಗಳಾದ ವರದಾ ಹಾಗೂ ತುಂಗಭದ್ರಾ ನದಿಗಳಲ್ಲೂ ನೀರಿನ ಪ್ರಮಾಣ ಇಳಿಕೆಯಾಗಿದೆ. ಹಾವೇರಿ ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಶೇ.50ರಷ್ಟು ಕಡಿಮೆಯಾಗಿದೆ ಎಂದು ರೈತರು ತಿಳಿಸಿದ್ದಾರೆ.

ಉತ್ತರ ಕನ್ನಡ ಹಾಗೂ ಮಲೆನಾಡು ಭಾಗಗಳಲ್ಲಿ ಮಳೆಯಾಗಿದ್ದರೂ, ಇದೀಗ ವರದಾ ನದಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ. ಹೀಗಾಗಿ ಸಣ್ಣ ನೀರಾವರಿ ಇಲಾಖೆ ಹಾಗೂ ಜಿಲ್ಲಾಡಳಿತ ಬ್ರಿಡ್ಜ್ ಕಂ ಬ್ಯಾರೇಜ್‌ಗಳ ಗೇಟ್‌ಗಳನ್ನು ಅಳವಡಿಸಿ ಲಭ್ಯವಿರುವ ನೀರನ್ನು ಸಂಗ್ರಹಿಸಬೇಕು. ಜೊತೆಗೆ ಸುತ್ತಮುತ್ತಲಿನ ಕೆರೆಗಳನ್ನು ತುಂಬಿಸುವ ಕೆಲಸಕ್ಕೂ ಆದ್ಯತೆ ನೀಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

ಮಳೆ ಕೊರತೆ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹಾಗೂ ಸಚಿವರು ಅಧಿಕಾರಿಗಳೊಂದಿಗೆ ಎರಡು-ಮೂರು ಬಾರಿ ಸಭೆ ನಡೆಸಿದ್ದರೂ, ಕೆರೆಗಳನ್ನು ತುಂಬಿಸುವ ಕಾರ್ಯ ಸಮರ್ಪಕವಾಗಿ ನಡೆಯುತ್ತಿಲ್ಲ ಎಂಬ ಆರೋಪವೂ ಕೇಳಿಬಂದಿದೆ.

ವರದಾ ನದಿಯಲ್ಲಿರುವ ನೀರನ್ನು ಬ್ಯಾರೇಜ್‌ಗಳಲ್ಲಿ ಸಂಗ್ರಹಿಸುವುದರಿಂದ ಚಳಿಗಾಲ ಹಾಗೂ ಬೇಸಿಗೆಯಲ್ಲಿ ಜಾನುವಾರುಗಳಿಗೆ ಕುಡಿಯುವ ನೀರು ಒದಗಿಸುವುದರ ಜೊತೆಗೆ ಹಿಂಗಾರು ಬೆಳೆ ಬೆಳೆಯುವ ರೈತರಿಗೂ ಅನುಕೂಲವಾಗಲಿದೆ. ಈ ವಿಚಾರದಲ್ಲಿ ಜಿಲ್ಲಾಡಳಿತ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ತೋರಬಾರದು ಎಂದು ರೈತರು ಆಗ್ರಹಿಸಿದ್ದಾರೆ.

ಮಳೆರಾಯನ ಅವಕೃಪೆಯಿಂದ ಬೆಳೆಗಳಿಗೆ ಸೂಕ್ತ ಫಸಲು ಸಿಗದೆ ಸಂಕಷ್ಟದಲ್ಲಿರುವ ರೈತರಿಗೆ, ಇದೀಗ ವರದಾ ನದಿಯ ನೀರೇ ಆಶ್ರಯವಾಗಿದೆ. ಹೀಗಾಗಿ ಲಭ್ಯವಿರುವ ನೀರನ್ನು ಸಂಗ್ರಹಿಸಿ ಮುಂದಿನ ದಿನಗಳಲ್ಲಿ ಜನರು ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಕ್ರಮ ಕೈಗೊಳ್ಳಬೇಕಿದೆ.

ಹೋಟೆಲ್ ಬಾತ್‌ರೂಮ್‌ನಲ್ಲಿ ಫೋನ್ ಯಾಕಿರುತ್ತೆ? ಇದರ ಹಿಂದಿದೆ ಅಚ್ಚರಿಯ ಕಾರಣ!

0

ಐಷಾರಾಮಿ ಹೋಟೆಲ್‌ಗಳಿಗೆ ತೆರಳಿದಾಗ ಅಲ್ಲಿನ ಕೊಠಡಿಗಳು, ಸೌಲಭ್ಯಗಳು ಹಾಗೂ ಅಲಂಕಾರಗಳು ಗಮನ ಸೆಳೆಯುವುದು ಸಾಮಾನ್ಯ.

ಆದರೆ ಕೆಲವೊಂದು ಹೋಟೆಲ್‌ಗಳ ಬಾತ್‌ರೂಮ್ ಅಥವಾ ಶೌಚಾಲಯದಲ್ಲಿ ಟೆಲಿಫೋನ್ ಇರುವುದನ್ನು ನೀವು ಗಮನಿಸಿರಬಹುದು. ಬಾತ್‌ರೂಮ್‌ನಲ್ಲೇ ಫೋನ್ ಇಡುವ ಅಗತ್ಯವೇನು ಎಂಬ ಪ್ರಶ್ನೆ ಹಲವರಲ್ಲಿ ಮೂಡುವುದು ಸಹಜ. ಆದರೆ ಇದರ ಹಿಂದೆ ಹಲವು ವರ್ಷಗಳ ಹಳೆಯ ಸಂಪ್ರದಾಯ ಹಾಗೂ ಅತಿಥಿಗಳ ಅನುಕೂಲಕ್ಕೆ ಸಂಬಂಧಿಸಿದ ಕಾರಣಗಳಿವೆ.

ಒಂದು ಕಾಲದಲ್ಲಿ ಐಷಾರಾಮಿ ಹೋಟೆಲ್‌ಗಳಲ್ಲಿ ಬಾತ್‌ರೂಮ್‌ನಲ್ಲೇ ಟೆಲಿಫೋನ್ ಇರುವುದು ಪ್ರತಿಷ್ಠೆಯ ಸಂಕೇತವಾಗಿತ್ತು. ವಿಶೇಷವಾಗಿ 1980 ಮತ್ತು 1990ರ ದಶಕಗಳಲ್ಲಿ ಹೋಟೆಲ್‌ಗಳು ತಮ್ಮ ಅತಿಥಿಗಳಿಗೆ ಹೆಚ್ಚಿನ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಬಾತ್‌ರೂಮ್‌ಗಳಲ್ಲೂ ಟೆಲಿಫೋನ್ ಅಳವಡಿಸುತ್ತಿದ್ದವು. ಅತಿಥಿಗಳು ಬಾತ್‌ರೂಮ್‌ನಿಂದ ಹೊರಗೆ ಬಂದು ರೂಮ್‌ನಲ್ಲಿರುವ ಫೋನ್ ಬಳಸುವ ಅಗತ್ಯವಿಲ್ಲದೆ, ಅಲ್ಲಿಂದಲೇ ಹೋಟೆಲ್ ಸಿಬ್ಬಂದಿಯನ್ನು ಸಂಪರ್ಕಿಸಬಹುದಾಗಿತ್ತು.

ರೂಮ್ ಸರ್ವಿಸ್, ಹೌಸ್‌ಕೀಪಿಂಗ್ ಅಥವಾ ಇನ್ನಿತರ ಅಗತ್ಯ ಸೇವೆಗಳನ್ನು ಪಡೆಯಬೇಕಾದರೆ ಬಾತ್‌ರೂಮ್‌ನಿಂದಲೇ ಕರೆ ಮಾಡುವ ವ್ಯವಸ್ಥೆ ಅತಿಥಿಗಳಿಗೆ ಸಾಕಷ್ಟು ಅನುಕೂಲಕರವಾಗಿತ್ತು. ಹೀಗಾಗಿ ಈ ವ್ಯವಸ್ಥೆಯನ್ನು ಹೋಟೆಲ್‌ಗಳಲ್ಲಿನ ಹೆಚ್ಚುವರಿ ಐಷಾರಾಮಿ ಸೌಲಭ್ಯವೆಂದು ಪರಿಗಣಿಸಲಾಗುತ್ತಿತ್ತು.

ಕೆಲವು ವಿದೇಶಿ ಹೋಟೆಲ್‌ಗಳಲ್ಲಿ ಈ ಸೌಲಭ್ಯ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿತ್ತು. ಬಾತ್‌ಟಬ್‌ನಲ್ಲಿರುವಾಗಲೇ ಅತಿಥಿಗಳು ಫೋನ್ ಕರೆಗಳನ್ನು ಮಾಡಲು ಸಾಧ್ಯವಾಗುವಂತೆ ವ್ಯವಸ್ಥೆ ಮಾಡಲಾಗಿತ್ತು. ಆ ಕಾಲದಲ್ಲಿ ಮೊಬೈಲ್ ಫೋನ್‌ಗಳ ಬಳಕೆ ಸಾಮಾನ್ಯವಾಗಿರದ ಕಾರಣ, ಹೋಟೆಲ್‌ನ ಪ್ರತಿಯೊಂದು ಭಾಗದಲ್ಲೂ ಸಂಪರ್ಕ ವ್ಯವಸ್ಥೆ ಕಲ್ಪಿಸುವುದು ಅತಿಥಿಗಳಿಗೆ ವಿಶೇಷ ಅನುಭವ ನೀಡುತ್ತಿತ್ತು.

ಮೊಬೈಲ್ ಬಂದ ಬಳಿಕ ಬದಲಾದ ಪರಿಸ್ಥಿತಿ:

ಕಾಲ ಬದಲಾದಂತೆ ಮೊಬೈಲ್ ಫೋನ್ ಮತ್ತು ನಂತರ ಸ್ಮಾರ್ಟ್‌ಫೋನ್‌ಗಳ ಬಳಕೆ ವೇಗವಾಗಿ ಹೆಚ್ಚಾಯಿತು. ಬಹುತೇಕ ಪ್ರತಿಯೊಬ್ಬರ ಕೈಯಲ್ಲೂ ಮೊಬೈಲ್ ಇರುವ ಪರಿಸ್ಥಿತಿ ನಿರ್ಮಾಣವಾದ ಬಳಿಕ ಬಾತ್‌ರೂಮ್‌ನಲ್ಲಿ ಪ್ರತ್ಯೇಕ ಟೆಲಿಫೋನ್ ಇಡುವ ಅಗತ್ಯ ಸಹಜವಾಗಿಯೇ ಕಡಿಮೆಯಾಯಿತು.

ಹೀಗಾಗಿ ಹಲವು ಹೋಟೆಲ್‌ಗಳು ಬಾತ್‌ರೂಮ್‌ನಲ್ಲಿದ್ದ ಟೆಲಿಫೋನ್‌ಗಳನ್ನು ತೆಗೆದುಹಾಕಲು ಆರಂಭಿಸಿದವು. ಅತಿಥಿಗಳು ತಮ್ಮ ಮೊಬೈಲ್ ಮೂಲಕವೇ ಹೋಟೆಲ್ ಸಿಬ್ಬಂದಿಯನ್ನು ಸಂಪರ್ಕಿಸಲು ಸಾಧ್ಯವಾಗಿದ್ದರಿಂದ, ಪ್ರತ್ಯೇಕ ಲ್ಯಾಂಡ್‌ಲೈನ್ ಫೋನ್‌ಗಳು ಅನಗತ್ಯವಾಗತೊಡಗಿದವು.

ಆದರೆ ಇಂದಿಗೂ ಕೆಲವು ಐಷಾರಾಮಿ ಹೋಟೆಲ್‌ಗಳ ಬಾತ್‌ರೂಮ್‌ನಲ್ಲಿ ಟೆಲಿಫೋನ್‌ಗಳು ಕಂಡುಬರುತ್ತವೆ. ಇದರ ಹಿಂದೆ ಈಗ ಕೇವಲ ಐಷಾರಾಮಿ ಪ್ರದರ್ಶನದ ಉದ್ದೇಶವಿಲ್ಲ. ಬದಲಾಗಿ, ತುರ್ತು ಸಂದರ್ಭಗಳಲ್ಲಿ ಅತಿಥಿಗಳ ಸುರಕ್ಷತೆಗೂ ಈ ಫೋನ್‌ಗಳು ಸಹಾಯಕವಾಗಬಹುದು.

ತುರ್ತು ಸಂದರ್ಭದಲ್ಲಿ ಫೋನ್ ಸಹಾಯಕ್ಕೆ:

ಬಾತ್‌ರೂಮ್‌ನಲ್ಲಿ ಜಾರಿಬಿದ್ದು ಗಾಯಗೊಂಡರೆ, ಅತಿಥಿಗೆ ತಕ್ಷಣ ಎದ್ದು ಹೊರಗೆ ಬರಲು ಸಾಧ್ಯವಾಗದ ಪರಿಸ್ಥಿತಿ ಎದುರಾಗಬಹುದು. ಅಂತಹ ಸಂದರ್ಭದಲ್ಲಿ ಬಾತ್‌ರೂಮ್‌ನಲ್ಲೇ ಫೋನ್ ಇದ್ದರೆ ಹೋಟೆಲ್ ಸಿಬ್ಬಂದಿಯನ್ನು ತಕ್ಷಣ ಸಂಪರ್ಕಿಸಲು ಸಾಧ್ಯವಾಗುತ್ತದೆ.

ಅದೇ ರೀತಿ ಯಾವುದೇ ಆರೋಗ್ಯ ಸಮಸ್ಯೆ ಎದುರಾದರೂ ಅಥವಾ ತಕ್ಷಣ ಸಹಾಯದ ಅಗತ್ಯವಿದ್ದರೂ ಅಲ್ಲಿಂದಲೇ ಮುಂಭಾಗದ ಕೌಂಟರ್, ಹೌಸ್‌ಕೀಪಿಂಗ್ ಅಥವಾ ಇತರ ಸಿಬ್ಬಂದಿಗೆ ಕರೆ ಮಾಡಬಹುದು. ಅಂದರೆ, ಬಾತ್‌ರೂಮ್‌ನಲ್ಲಿರುವ ಫೋನ್ ಕೆಲ ಸಂದರ್ಭಗಳಲ್ಲಿ ಅತಿಥಿಗಳ ಸುರಕ್ಷತೆಗೆ ಹೆಚ್ಚುವರಿ ಸಂಪರ್ಕ ವ್ಯವಸ್ಥೆಯಾಗಿ ಕಾರ್ಯನಿರ್ವಹಿಸುತ್ತದೆ.

ಇದರ ಜೊತೆಗೆ ರೂಮ್ ಸರ್ವಿಸ್ ಅಥವಾ ಹೌಸ್‌ಕೀಪಿಂಗ್‌ನಂತಹ ಸೇವೆಗಳನ್ನು ಪಡೆಯಲು ಕೂಡ ಈ ಫೋನ್‌ಗಳನ್ನು ಬಳಸಬಹುದು. ಮೊಬೈಲ್ ಫೋನ್ ಇದ್ದರೂ, ಹೋಟೆಲ್‌ನ ಆಂತರಿಕ ಸೇವೆಗಳಿಗೆ ನೇರವಾಗಿ ಸಂಪರ್ಕ ಕಲ್ಪಿಸುವ ಲ್ಯಾಂಡ್‌ಲೈನ್ ಫೋನ್ ಕೆಲವು ಅತಿಥಿಗಳಿಗೆ ಇನ್ನೂ ಅನುಕೂಲಕರವಾಗಿರುತ್ತದೆ.

ಒಟ್ಟಿನಲ್ಲಿ, ಐಷಾರಾಮಿ ಹೋಟೆಲ್‌ಗಳ ಬಾತ್‌ರೂಮ್‌ನಲ್ಲಿ ಫೋನ್ ಇಡುವ ಪದ್ಧತಿ ಒಂದು ಕಾಲದಲ್ಲಿ ಐಷಾರಾಮಿ ಮತ್ತು ಪ್ರತಿಷ್ಠೆಯ ಸಂಕೇತವಾಗಿತ್ತು. ಆದರೆ ಮೊಬೈಲ್ ಯುಗದಲ್ಲಿ ಇದರ ಅಗತ್ಯ ಕಡಿಮೆಯಾಗಿದೆ. ಆದರೂ ಕೆಲವು ಹೋಟೆಲ್‌ಗಳು ಈ ವ್ಯವಸ್ಥೆಯನ್ನು ಅತಿಥಿಗಳ ಅನುಕೂಲ ಮತ್ತು ವಿಶೇಷವಾಗಿ ತುರ್ತು ಸಂದರ್ಭಗಳಲ್ಲಿನ ಸುರಕ್ಷತೆಯ ದೃಷ್ಟಿಯಿಂದ ಮುಂದುವರಿಸಿಕೊಂಡು ಬಂದಿವೆ.

ಹೀಗಾಗಿ ಮುಂದಿನ ಬಾರಿ ಐಷಾರಾಮಿ ಹೋಟೆಲ್‌ನ ಬಾತ್‌ರೂಮ್‌ನಲ್ಲಿ ಫೋನ್ ಕಂಡಾಗ, ಅದು ಕೇವಲ ವಿಚಿತ್ರವಾಗಿ ಕಾಣುವ ವಸ್ತುವಲ್ಲ. ಅದರ ಹಿಂದೆ ಹೋಟೆಲ್ ಉದ್ಯಮದ ಹಳೆಯ ಐಷಾರಾಮಿ ಸಂಸ್ಕೃತಿ ಹಾಗೂ ಅತಿಥಿಗಳ ಸುರಕ್ಷತೆಗೆ ಸಂಬಂಧಿಸಿದ ಒಂದು ಕುತೂಹಲಕಾರಿ ಕಾರಣವೂ ಇದೆ.

ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗಲೇ ಹೃದಯಾಘಾತ; 59 ವರ್ಷದ ಮುಖ್ಯ ಶಿಕ್ಷಕ ಸಾವು

0

ಧಾರವಾಡ: ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತ ಸಂಭವಿಸಿ ಶಾಲಾ ಮುಖ್ಯ ಶಿಕ್ಷಕರೊಬ್ಬರು ಮೃತಪಟ್ಟಿರುವ ಘಟನೆ ಧಾರವಾಡ ನಗರದ ಮಾಳಮಡ್ಡಿಯ ಸರ್ಕಾರಿ ಶಾಲೆಯಲ್ಲಿ ನಡೆದಿದೆ. ಮೃತರನ್ನು 59 ವರ್ಷದ ಐಐ ಮುಲ್ಲಾನವರ್ ಎಂದು ಗುರುತಿಸಲಾಗಿದೆ.

ಕಳೆದ ಶುಕ್ರವಾರ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಮುಲ್ಲಾನವರ್ ಅವರಿಗೆ ಏಕಾಏಕಿ ಹೃದಯಾಘಾತ ಸಂಭವಿಸಿತ್ತು. ತಕ್ಷಣವೇ ಶಾಲೆಯಲ್ಲಿದ್ದ ಶಿಕ್ಷಕರು ಅವರನ್ನು ಆಸ್ಪತ್ರೆಗೆ ದಾಖಲಿಸಲು ಕ್ರಮ ಕೈಗೊಂಡಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.

ಶುಕ್ರವಾರ ಸಂಜೆ ಮುಖ್ಯ ಶಿಕ್ಷಕ ಮುಲ್ಲಾನವರ್ ನಿಧನರಾಗಿದ್ದು, ಕುಟುಂಬಸ್ಥರು ಶಿಕ್ಷಕರ ದಿನಾಚರಣೆಯಂದೇ ಅವರ ಅಂತ್ಯಕ್ರಿಯೆ ನೆರವೇರಿಸಿದ್ದಾರೆ. ಕರ್ತವ್ಯದ ಮೇಲಿದ್ದಾಗಲೇ ಮುಖ್ಯ ಶಿಕ್ಷಕರು ಮೃತಪಟ್ಟಿರುವ ಘಟನೆ ಶಾಲೆಯ ಶಿಕ್ಷಕರು ಹಾಗೂ ಸಿಬ್ಬಂದಿಯಲ್ಲಿ ದುಃಖದ ವಾತಾವರಣ ಮೂಡಿಸಿದೆ.

ದೆಹಲಿಯಲ್ಲಿ ಆರು ಅಂತಸ್ತಿನ ಕಟ್ಟಡ ಕುಸಿತ; ಅವಶೇಷಗಳಡಿ ಹಲವರು ಸಿಲುಕಿರುವ ಶಂಕೆ, 6 ಮಂದಿ ರಕ್ಷಣೆ

0

ನವದೆಹಲಿ: ನೈಋತ್ಯ ದೆಹಲಿಯ ಸತ್ಯ ನಿಕೇತನದಲ್ಲಿ ಇಂದು ಮಧ್ಯಾಹ್ನ ಆರು ಅಂತಸ್ತಿನ ಕಟ್ಟಡವೊಂದು ಕುಸಿದಿದ್ದು, ಹಲವರು ಅವಶೇಷಗಳಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಘಟನೆ ಬಳಿಕ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ತ್ವರಿತಗತಿಯಲ್ಲಿ ನಡೆಯುತ್ತಿದ್ದು, ಈವರೆಗೆ ಆರು ಮಂದಿಯನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ.

ಅಧಿಕಾರಿಗಳ ಪ್ರಕಾರ, 75 ಹಾಸಿಗೆಗಳ ಪೇಯಿಂಗ್ ಗೆಸ್ಟ್ (PG) ವಸತಿ ಸೌಲಭ್ಯ ಹೊಂದಿದ್ದ ಕಟ್ಟಡ ಮಧ್ಯಾಹ್ನ ಸುಮಾರು 1.30ರ ವೇಳೆಗೆ ಕುಸಿದಿದೆ. ಕಟ್ಟಡ ಕುಸಿದ ಸಂದರ್ಭದಲ್ಲಿ ಕನಿಷ್ಠ 50 ವಿದ್ಯಾರ್ಥಿಗಳು ಒಳಗಿದ್ದರು ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.

ಕುಸಿದ ಕಟ್ಟಡವು ‘ಹಾಸ್ಟೆಲ್ ಡೇಜ್’ ಹೆಸರಿನ ಪುರುಷರ ಪಿಜಿ ವಸತಿ ಎಂದು ತಿಳಿದುಬಂದಿದೆ. ಅವಶೇಷಗಳಡಿ ಇನ್ನೂ ಕೆಲವರು ಸಿಲುಕಿರುವ ಸಾಧ್ಯತೆ ಹಿನ್ನೆಲೆಯಲ್ಲಿ ರಕ್ಷಣಾ ಸಿಬ್ಬಂದಿ ಶೋಧ ಕಾರ್ಯಾಚರಣೆಯನ್ನು ಮುಂದುವರಿಸಿದ್ದಾರೆ.

ಘಟನಾ ಸ್ಥಳಕ್ಕೆ ಸ್ಥಳೀಯ ಪೊಲೀಸರು, ಅಗ್ನಿಶಾಮಕ ದಳ, ಅಂಬುಲೆನ್ಸ್ ಸೇರಿದಂತೆ ವಿವಿಧ ತುರ್ತು ಸೇವೆಗಳ ತಂಡಗಳನ್ನು ನಿಯೋಜಿಸಲಾಗಿದೆ. ಕನಿಷ್ಠ 12 ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಆಗಮಿಸಿದ್ದು, ರಕ್ಷಣಾ ಕಾರ್ಯಾಚರಣೆಗೆ ನೆರವಾಗುತ್ತಿವೆ.

ಅವಶೇಷಗಳನ್ನು ತೆರವುಗೊಳಿಸಿ ಸಿಲುಕಿರುವವರನ್ನು ಪತ್ತೆಹಚ್ಚಲು ಈಗಾಗಲೇ ಜೆಸಿಬಿ ಯಂತ್ರವನ್ನು ನಿಯೋಜಿಸಲಾಗಿದೆ. ಕಟ್ಟಡದ ಚಪ್ಪಡಿಗಳು ಹಾಗೂ ಗಿರ್ಡರ್‌ಗಳನ್ನು ತೆರವುಗೊಳಿಸಲು ಹೆಚ್ಚಿನ ಯಂತ್ರೋಪಕರಣಗಳನ್ನು ಸ್ಥಳಕ್ಕೆ ತರಲಾಗುತ್ತಿದೆ. ಅಗ್ನಿಶಾಮಕ ಸಿಬ್ಬಂದಿಗೆ ನೆರವಾಗಲು ವಿಪತ್ತು ಪ್ರತಿಕ್ರಿಯಾ ತಂಡಗಳನ್ನೂ ನಿಯೋಜಿಸಲಾಗಿದೆ.

ಘಟನೆ ಕುರಿತು ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತ ಮಾಹಿತಿ ಪಡೆದುಕೊಂಡಿದ್ದಾರೆ. ರಕ್ಷಣಾ ಕಾರ್ಯಾಚರಣೆಯನ್ನು ತ್ವರಿತಗತಿಯಲ್ಲಿ ನಡೆಸಿ, ಅವಶೇಷಗಳಡಿ ಸಿಲುಕಿರುವವರನ್ನು ಸುರಕ್ಷಿತವಾಗಿ ಹೊರತೆಗೆಯಲು ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಕಟ್ಟಡ ಕುಸಿತಕ್ಕೆ ನಿಖರ ಕಾರಣವೇನು ಎಂಬುದು ಇನ್ನೂ ತಿಳಿದುಬಂದಿಲ್ಲ. ಸದ್ಯ ರಕ್ಷಣಾ ಕಾರ್ಯಾಚರಣೆಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಅವಶೇಷಗಳಡಿ ಸಿಲುಕಿರುವವರ ಪತ್ತೆಗಾಗಿ ಅಧಿಕಾರಿಗಳು ಕಾರ್ಯಾಚರಣೆ ಮುಂದುವರಿಸಿದ್ದಾರೆ.