Home Blog

ಮೀನುಗಳಂತೆ ತೇಲಿಬಂದ ಮನುಷ್ಯರ ಶವಗಳು! ‘ಹೆಣಗಳ’ ರಾಶಿ ಕಂಡು ಬೆಚ್ಚಿಬಿದ್ದ ವಿಜಯಪುರ ಮಂದಿ

0

ವಿಜಯಪುರ: ನಗರದ ಹೊರವಲಯದ ಭೂತನಾಳ ಕೆರೆಯಲ್ಲಿ ಮೂವರು ಮಹಿಳೆಯರು ಸೇರಿದಂತೆ ನಾಲ್ವರು ಅಥವಾ ಅದಕ್ಕೂ ಹೆಚ್ಚು ಮಂದಿಯ ಶವಗಳು ಪತ್ತೆಯಾಗಿದ್ದು, ಘಟನೆ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಭೂತನಾಳ ಕೆರೆಯಲ್ಲಿ ಹಲವು ಶವಗಳು ಪತ್ತೆಯಾಗಿರುವ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳೀಯರಲ್ಲಿ ಚರ್ಚೆ ಶುರುವಾಗಿದೆ. ವಿಷಯ ತಿಳಿದ ಕೂಡಲೇ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.

ಕೆರೆಯಲ್ಲಿ ಪತ್ತೆಯಾಗಿರುವ ಮೃತದೇಹಗಳು ಯಾರದ್ದು ಎಂಬುದು ಸದ್ಯ ಖಚಿತವಾಗಿಲ್ಲ. ಮೃತರ ಗುರುತು ಪತ್ತೆಹಚ್ಚುವ ಕಾರ್ಯವನ್ನು ಪೊಲೀಸರು ಕೈಗೊಂಡಿದ್ದಾರೆ. ಒಂದೇ ಕೆರೆಯಲ್ಲಿ ಹಲವು ಶವಗಳು ಪತ್ತೆಯಾಗಿರುವುದಕ್ಕೆ ಕಾರಣವೇನು ಎಂಬ ಬಗ್ಗೆಯೂ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಘಟನೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಮೃತರ ಸಾವಿಗೆ ಕಾರಣವೇನು, ಎಲ್ಲರೂ ಒಂದೇ ಸಂದರ್ಭದಲ್ಲಿ ಕೆರೆಗೆ ಬಂದಿದ್ದರೇ ಅಥವಾ ಬೇರೆ ಬೇರೆ ಸಂದರ್ಭಗಳಲ್ಲಿ ಘಟನೆ ನಡೆದಿದೆಯೇ ಎಂಬುದರ ಕುರಿತು ಪೊಲೀಸರು ವಿವಿಧ ಆಯಾಮಗಳಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ.

ಸ್ಥಳಕ್ಕೆ ತೆರಳಿರುವ ಪೊಲೀಸರು ಕೆರೆಯ ಸುತ್ತಮುತ್ತ ಪರಿಶೀಲನೆ ನಡೆಸಿದ್ದು, ಘಟನೆಯ ಕುರಿತು ಮಾಹಿತಿ ಕಲೆಹಾಕುತ್ತಿದ್ದಾರೆ. ಮೃತದೇಹಗಳ ಗುರುತು ಹಾಗೂ ಸಾವಿಗೆ ನಿಖರ ಕಾರಣ ಪತ್ತೆಯಾದ ಬಳಿಕ ಪ್ರಕರಣದ ಸಂಪೂರ್ಣ ಮಾಹಿತಿ ಹೊರಬರುವ ಸಾಧ್ಯತೆಯಿದೆ.

ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ಭಾರತೀಯ ಮಹಿಳಾ ಕ್ರಿಕೆಟ್‌ʼಗೆ ಹೊಸ ಕ್ರಶ್ ಎಂಟ್ರಿ; 20 ವರ್ಷದ ಮೇಧಾವಿ ಬಿಧುರಿ ಬೌಲಿಂಗ್ ಜೊತೆಗೆ ಬ್ಯೂಟಿಯಿಂದಲೂ ಫೇಮಸ್!

0

ನವದೆಹಲಿ: 2026ನೇ ಸಾಲಿನ ಮಹಿಳಾ ಡೆಲ್ಲಿ ಪ್ರೀಮಿಯರ್ ಲೀಗ್‌ ಟೂರ್ನಿಯ ಆರಂಭದಲ್ಲೇ ಯುವ ಕ್ರಿಕೆಟರ್ ಮೇಧಾವಿ ಬಿಧುರಿ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಗಮನ ಸೆಳೆದಿದ್ದಾರೆ. ತಮ್ಮ ಬೌಲಿಂಗ್ ಕೌಶಲ್ಯದ ಜೊತೆಗೆ ವಿಶಿಷ್ಟ ವಿಕೆಟ್ ಸೆಲಿಬ್ರೇಷನ್ ಮೂಲಕವೂ ಅಭಿಮಾನಿಗಳ ಗಮನ ಸೆಳೆದಿರುವ 20 ವರ್ಷದ ಡೆಲ್ಲಿ ಮೂಲದ ಆಟಗಾರ್ತಿ ಇದೀಗ ಟೂರ್ನಿಯ ಹೊಸ ಚರ್ಚೆಯ ವಿಷಯವಾಗಿದ್ದಾರೆ.

ಮೇಧಾವಿ ಬಿಧುರಿ ಡೆಲ್ಲಿ ಮಹಿಳಾ ಕ್ರಿಕೆಟ್‌ನಲ್ಲಿ ಈಗಾಗಲೇ ಉದಯೋನ್ಮುಖ ಆಟಗಾರ್ತಿಯಾಗಿ ಗುರುತಿಸಿಕೊಂಡಿದ್ದಾರೆ. ಬಲಗೈ ಲೆಗ್ ಸ್ಪಿನ್ನರ್ ಆಗಿರುವ ಅವರು, ಕಳೆದ ಕೆಲವು ವರ್ಷಗಳಿಂದ ಡೆಲ್ಲಿ ತಂಡದ ಪರ ತಮ್ಮ ಬೌಲಿಂಗ್ ಸಾಮರ್ಥ್ಯವನ್ನು ಪ್ರದರ್ಶಿಸುತ್ತಿದ್ದಾರೆ. 2024ರ ವುಮೆನ್ಸ್ ಪ್ರೀಮಿಯರ್ ಲೀಗ್‌ ಆಟಗಾರ್ತಿಯರ ಹರಾಜಿಗೂ ಅವರು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದರು.

ಮಹಿಳಾ ಡೆಲ್ಲಿ ಪ್ರೀಮಿಯರ್ ಲೀಗ್‌ನ ಪಂದ್ಯವೊಂದರಲ್ಲಿ ಎದುರಾಳಿ ಆಟಗಾರ್ತಿ ನಿಶಿಕಾ ಅವರ ವಿಕೆಟ್ ಕಬಳಿಸಿದ ಬಳಿಕ ಮೇಧಾವಿ ಬಿಧುರಿ ಮಾಡಿದ ವಿಶೇಷ ‘6-7 ಸೆಲಿಬ್ರೇಷನ್’ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅವರ ಜೆರ್ಸಿ ನಂಬರ್ 67 ಆಗಿರುವುದೇ ಈ ವಿಶಿಷ್ಟ ಸಂಭ್ರಮಾಚರಣೆಯ ಹಿಂದಿರುವ ಕಾರಣವಾಗಿದೆ.

ವಾಸ್ತವವಾಗಿ, ಮೇಧಾವಿ ಅವರ ಜೆರ್ಸಿ ನಂಬರ್ 12 ಆಗಿತ್ತು. ಆದರೆ ಆ ನಂಬರ್ ಅನ್ನು ಮತ್ತೊಬ್ಬ ಆಟಗಾರ್ತಿ ಈಗಾಗಲೇ ಬಳಸುತ್ತಿದ್ದ ಕಾರಣ, ತಮ್ಮ ತಂಗಿಯ ಸಲಹೆಯ ಮೇರೆಗೆ ಮೇಧಾವಿ 67ನೇ ಸಂಖ್ಯೆಯ ಜೆರ್ಸಿಯನ್ನು ಆಯ್ಕೆ ಮಾಡಿಕೊಂಡರು ಎನ್ನಲಾಗಿದೆ. ಹೀಗಾಗಿ ವಿಕೆಟ್ ಪಡೆದಾಗಲೆಲ್ಲಾ ತಮ್ಮ ಜೆರ್ಸಿ ನಂಬರ್ ಅನ್ನು ಸೂಚಿಸುವ ರೀತಿಯಲ್ಲಿ 6-7 ಸೆಲಿಬ್ರೇಷನ್ ಮಾಡಲು ಆರಂಭಿಸಿದ್ದಾರೆ.

ಈ ವಿಶಿಷ್ಟ ಸಂಭ್ರಮಾಚರಣೆ ಅಭಿಮಾನಿಗಳ ಗಮನ ಸೆಳೆದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಮೇಧಾವಿ ಬಿಧುರಿ ಅವರ ಕುರಿತಾದ ಪೋಸ್ಟ್‌ಗಳು ಹಾಗೂ ಚರ್ಚೆಗಳು ಹೆಚ್ಚಾಗಿವೆ. ಕೆಲವರು ಅವರನ್ನು ಡೆಲ್ಲಿ ಪ್ರೀಮಿಯರ್ ಲೀಗ್‌ನ ಹೊಸ ‘ಕ್ರಶ್’ ಎಂದು ಕರೆದಿದ್ದಾರೆ.

ಮೇಧಾವಿ ಅವರ ಬೌಲಿಂಗ್ ಪ್ರದರ್ಶನದ ಜೊತೆಗೆ ಅವರ ಆಟದ ಶೈಲಿ ಹಾಗೂ ಆತ್ಮವಿಶ್ವಾಸದ ಸೆಲಿಬ್ರೇಷನ್‌ಗೂ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ. ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಅವರನ್ನು ಭಾರತದ ಅತ್ಯಂತ ಸುಂದರ ಮಹಿಳಾ ಕ್ರಿಕೆಟರ್‌ಗಳಲ್ಲಿ ಒಬ್ಬರು ಎಂದು ಹೊಗಳುತ್ತಿದ್ದಾರೆ.

ಆದರೆ, ಮೇಧಾವಿ ಬಿಧುರಿಯವರ ಗಮನ ಸದ್ಯ ತಮ್ಮ ಕ್ರಿಕೆಟ್ ಪ್ರದರ್ಶನದ ಮೇಲೆಯೇ ಇದೆ. ಬೌಲಿಂಗ್‌ನಲ್ಲಿ ನಿರಂತರವಾಗಿ ಉತ್ತಮ ಪ್ರದರ್ಶನ ನೀಡುವ ಮೂಲಕ ಡೆಲ್ಲಿ ಮಹಿಳಾ ಕ್ರಿಕೆಟ್‌ನಲ್ಲಿ ತಮ್ಮದೇ ಸ್ಥಾನವನ್ನು ಗಟ್ಟಿಗೊಳಿಸುವ ಗುರಿಯನ್ನು ಅವರು ಹೊಂದಿದ್ದಾರೆ.

ಮದುವೆ ಹೆಸರಲ್ಲಿ ಲಕ್ಷಾಂತರ ರೂ. ವಂಚನೆ; ಖತರ್ನಾಕ್ ತಾಯಿ-ಮಗ ಅರೆಸ್ಟ್!

0

ಬೆಂಗಳೂರು: ಮ್ಯಾಟ್ರಿಮೋನಿಯಲ್ ವೆಬ್‌ಸೈಟ್‌ಗಳ ಮೂಲಕ ಮದುವೆಗೆ ವರನ ಹುಡುಕಾಟದಲ್ಲಿದ್ದ ಕುಟುಂಬಗಳನ್ನು ಟಾರ್ಗೆಟ್ ಮಾಡಿ ಲಕ್ಷಾಂತರ ರೂಪಾಯಿ ವಂಚಿಸುತ್ತಿದ್ದ ಖತರ್ನಾಕ್ ತಾಯಿ-ಮಗನನ್ನು ಆಡುಗೋಡಿ ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳನ್ನು ಡಾ. ಪ್ರದೀಪ್ ಜೋಸೆಫ್ ಮತ್ತು ಕಲಾವತಿ ಎಂದು ಗುರುತಿಸಲಾಗಿದ್ದು, ಕಳೆದ ಮೂರು ತಿಂಗಳಿನಿಂದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ತಲೆಮರೆಸಿಕೊಂಡಿದ್ದ ಇವರನ್ನು ಕೇರಳದ ವಯನಾಡಿನಲ್ಲಿ ಬಂಧಿಸಿ ಬೆಂಗಳೂರಿಗೆ ಕರೆತರಲಾಗಿದೆ.

ಮೂಲತಃ ಮೈಸೂರಿನವರಾದ ತಾಯಿ-ಮಗ, ಶಾದಿ ಡಾಟ್ ಕಾಮ್ ಸೇರಿದಂತೆ ಮ್ಯಾಟ್ರಿಮೋನಿಯಲ್ ವೆಬ್‌ಸೈಟ್‌ಗಳಲ್ಲಿ ಪ್ರೊಫೈಲ್ ಸೃಷ್ಟಿಸಿ ತಮ್ಮನ್ನು ಶ್ರೀಮಂತ ಕುಟುಂಬದವರು ಎಂಬಂತೆ ಬಿಂಬಿಸಿಕೊಳ್ಳುತ್ತಿದ್ದರು. ಪ್ರದೀಪ್ ಜೋಸೆಫ್ ತಾನು ಪಿಎಚ್‌ಡಿ ಮಾಡಿರುವ ಡಾಕ್ಟರೇಟ್ ಪದವೀಧರ ಎಂದು ಪರಿಚಯಿಸಿಕೊಳ್ಳುತ್ತಿದ್ದ. ಮೈಸೂರಿನ ಬಾಡಿಗೆ ಬಂಗಲೆಯೊಂದನ್ನು ತನ್ನದೇ ಆಸ್ತಿ ಎಂದು ಹೇಳಿಕೊಂಡು ವಧುವಿನ ಕುಟುಂಬವನ್ನು ನಂಬಿಸುತ್ತಿದ್ದ ಎನ್ನಲಾಗಿದೆ.

ಮದುವೆ ಮಾತುಕತೆ ನಡೆದು ಸಂಬಂಧ ಕುದುರಿದ ಬಳಿಕ, ತುರ್ತಾಗಿ ಹಣದ ಅಗತ್ಯವಿದೆ ಎಂದು ಹೇಳಿ ವಧುವಿನ ಕುಟುಂಬದಿಂದ ಲಕ್ಷಾಂತರ ರೂಪಾಯಿ ಪಡೆದು ಬಳಿಕ ಪರಾರಿಯಾಗುವುದು ಇವರ ವಂಚನೆಯ ವಿಧಾನವಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಬೆಂಗಳೂರು ಮೂಲದ ಕುಟುಂಬವೊಂದು ಕೂಡ ಆರೋಪಿಯ ಮಾತುಗಳನ್ನು ನಂಬಿ ತಮ್ಮ ಮಗಳ ಮದುವೆಗೆ ಸಿದ್ಧತೆ ಮಾಡಿಕೊಂಡಿತ್ತು. ಸಂಬಂಧಿಕರು ಹಾಗೂ ಸ್ನೇಹಿತರಿಗೆ ಆಹ್ವಾನ ಪತ್ರಿಕೆಯನ್ನೂ ಹಂಚಲಾಗಿತ್ತು.

ಈ ವೇಳೆ ಮೈಸೂರು ಮೂಲದ ವ್ಯಕ್ತಿಯೊಬ್ಬರು ಸಾಕ್ಷ್ಯಾಧಾರಗಳೊಂದಿಗೆ ಆರೋಪಿಯ ಅಸಲಿ ಮುಖವನ್ನು ವಧುವಿನ ಕುಟುಂಬಕ್ಕೆ ತಿಳಿಸಿದ್ದು, ಕುಟುಂಬಕ್ಕೆ ಆಘಾತ ಎದುರಾಗಿದೆ.

ತನಿಖೆ ವೇಳೆ ಇದೇ ರೀತಿಯಲ್ಲಿ 10ಕ್ಕೂ ಹೆಚ್ಚು ಮಹಿಳೆಯರಿಗೆ ವಂಚಿಸಿರುವುದು ಬೆಳಕಿಗೆ ಬಂದಿದೆ ಎನ್ನಲಾಗಿದೆ.

ವಯನಾಡಿನಲ್ಲಿ ತಾಯಿ-ಮಗನ ಬಂಧನ:

ವಧುವಿನ ಕುಟುಂಬ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡ ಆಡುಗೋಡಿ ಪೊಲೀಸರು ಆರೋಪಿಗಳಿಗಾಗಿ ಮೈಸೂರಿಗೆ ತೆರಳಿದ್ದರು. ಆದರೆ ಪೊಲೀಸರ ದಾಳಿ ವೇಳೆ ಆರೋಪಿಗಳು ಕಾರಿನಲ್ಲಿ ಪರಾರಿಯಾಗಿದ್ದರು.

ಬಳಿಕ ತಾಂತ್ರಿಕ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರು ಕೇರಳದ ವಯನಾಡಿನಲ್ಲಿ ಇಬ್ಬರನ್ನೂ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮ್ಯಾಟ್ರಿಮೋನಿಯಲ್ ವೆಬ್‌ಸೈಟ್‌ಗಳಲ್ಲಿ ವಧು-ವರರ ಹುಡುಕಾಟ ನಡೆಸುವವರು ಅಪರಿಚಿತರ ಮಾತುಗಳನ್ನು ನಂಬುವ ಮುನ್ನ ಅವರ ಹಿನ್ನೆಲೆ, ಉದ್ಯೋಗ, ಆಸ್ತಿ ಹಾಗೂ ಇತರ ವಿವರಗಳನ್ನು ಪರಿಶೀಲಿಸಬೇಕು ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ಕೆಆರ್‌ಎಸ್‌ಗೆ ಭಾರೀ ನೀರು; 9,438 ಕ್ಯೂಸೆಕ್‌ಗೆ ಒಳಹರಿವು, ಶೀಘ್ರದಲ್ಲೇ ಡ್ಯಾಂ ಭರ್ತಿ!

0

ಮಂಡ್ಯ: ಕಾವೇರಿ ಜಲಾನಯನ ಪ್ರದೇಶಗಳಲ್ಲಿ ಕಳೆದ ಎರಡು ದಿನಗಳಿಂದ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೆಆರ್‌ಎಸ್‌ ಜಲಾಶಯಕ್ಕೆ ಹರಿದುಬರುತ್ತಿರುವ ನೀರಿನ ಪ್ರಮಾಣದಲ್ಲಿ ಭಾರೀ ಏರಿಕೆಯಾಗಿದೆ.

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್‌ ಜಲಾಶಯದ ಒಳಹರಿವು 9,438 ಕ್ಯೂಸೆಕ್‌ಗೆ ಏರಿಕೆಯಾಗಿದೆ. 124.80 ಅಡಿ ಗರಿಷ್ಠ ಸಾಮರ್ಥ್ಯದ ಜಲಾಶಯದಲ್ಲಿ ಸದ್ಯ 108.63 ಅಡಿ ನೀರು ಸಂಗ್ರಹವಾಗಿದ್ದು, 30.367 ಟಿಎಂಸಿ ನೀರು ಲಭ್ಯವಿದೆ.

ಕೆಆರ್‌ಎಸ್‌ ಜಲಾಶಯದಿಂದ ಸದ್ಯ 4,478 ಕ್ಯೂಸೆಕ್‌ ನೀರನ್ನು ಹೊರಬಿಡಲಾಗುತ್ತಿದೆ. ಕಾವೇರಿ ಜಲಾನಯನ ಪ್ರದೇಶಗಳಲ್ಲಿ ಇದೇ ರೀತಿ ಮಳೆ ಮುಂದುವರಿದು ಒಳಹರಿವು ಹೆಚ್ಚಾದರೆ, ಶೀಘ್ರದಲ್ಲೇ ಕೆಆರ್‌ಎಸ್‌ ಜಲಾಶಯ ಭರ್ತಿಯಾಗುವ ಸಾಧ್ಯತೆಯಿದೆ.

ಕೆಆರ್‌ಎಸ್‌ಗೆ ಒಳಹರಿವು ಮತ್ತಷ್ಟು ಹೆಚ್ಚಾದರೆ ತಮಿಳುನಾಡಿಗೆ ನೀರು ಹರಿಸುವ ವಿಚಾರದಲ್ಲಿಯೂ ಅನುಕೂಲಕರ ಪರಿಸ್ಥಿತಿ ನಿರ್ಮಾಣವಾಗುವ ನಿರೀಕ್ಷೆ ಇದೆ.

ಸೂರ್ಯಪೇಟೆಯಲ್ಲಿ ಭೀಕರ ಅಪಘಾತ; ಟ್ರಕ್‌ಗೆ ಖಾಸಗಿ ಬಸ್ ಡಿಕ್ಕಿ, 6 ಮಂದಿ ಸಾವು!

0

ಹೈದರಾಬಾದ್: ಖಾಸಗಿ ಬಸ್‌ವೊಂದು ಟ್ರಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಆರು ಮಂದಿ ಸಾವನ್ನಪ್ಪಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ತೆಲಂಗಾಣದ ಸೂರ್ಯಪೇಟೆಯಲ್ಲಿ ನಡೆದಿದೆ.

ಬುಧವಾರ ಮುಂಜಾನೆ ಸುಮಾರು 5.20ರ ವೇಳೆಗೆ ಈ ಅಪಘಾತ ಸಂಭವಿಸಿದೆ. ಹೈದರಾಬಾದ್‌ನಿಂದ ವಿಜಯವಾಡದತ್ತ ತೆರಳುತ್ತಿದ್ದ ಖಾಸಗಿ ಬಸ್, ದುರ್ಗಾಪುರಂ ಸ್ಟೇಜ್ ಬಳಿ ಟ್ರಕ್‌ಗೆ ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಪಘಾತದ ವೇಳೆ ಬಸ್‌ನಲ್ಲಿ ಒಟ್ಟು 43 ಪ್ರಯಾಣಿಕರು ಇದ್ದರು ಎನ್ನಲಾಗಿದೆ. ಡಿಕ್ಕಿಯ ರಭಸಕ್ಕೆ ಬಸ್‌ನಲ್ಲಿದ್ದ ಹಲವರಿಗೆ ಗಂಭೀರ ಗಾಯಗಳಾಗಿದ್ದು, ಗಾಯಾಳುಗಳನ್ನು ತಕ್ಷಣವೇ ಸಮೀಪದ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಅಪಘಾತದಲ್ಲಿ ಮೃತಪಟ್ಟವರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಶವಾಗಾರಕ್ಕೆ ರವಾನಿಸಲಾಗಿದೆ. ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಸ್ಥಳೀಯ ಪೊಲೀಸರು ಪರಿಶೀಲನೆ ನಡೆಸಿದ್ದು, ಅಪಘಾತಕ್ಕೆ ನಿಖರ ಕಾರಣವೇನು ಎಂಬುದರ ಕುರಿತು ತನಿಖೆ ಮುಂದುವರಿಸಿದ್ದಾರೆ.

‘ಟಾಕ್ಸಿಕ್’ ಅಬ್ಬರ ಶುರು; 4 ವರ್ಷಗಳ ಬಳಿಕ ಯಶ್ ನೋಡಿ ಫ್ಯಾನ್ಸ್ ಫಿದಾ!

0

ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳ ನಾಲ್ಕು ವರ್ಷಗಳ ಸುದೀರ್ಘ ಕಾಯುವಿಕೆಗೆ ಕೊನೆಗೂ ತೆರೆ ಬಿದ್ದಿದೆ.

ಯಶ್ ನಟನೆಯ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾ ಇಂದು ವಿಶ್ವದಾದ್ಯಂತ ಅದ್ಧೂರಿಯಾಗಿ ಚಿತ್ರಮಂದಿರಗಳಿಗೆ ಲಗ್ಗೆಯಿಟ್ಟಿದೆ.

ಮುಂಜಾನೆ 6 ಗಂಟೆಯಿಂದಲೇ ಹಲವು ಚಿತ್ರಮಂದಿರಗಳಲ್ಲಿ ಶೋ ಆರಂಭವಾಗಿದ್ದು, ನೆಚ್ಚಿನ ನಟ ಯಶ್ ಅವರನ್ನು ತೆರೆ ಮೇಲೆ ಕಂಡ ಅಭಿಮಾನಿಗಳು ಸಂಭ್ರಮಿಸಿದ್ದಾರೆ. ಚಿತ್ರಮಂದಿರಗಳ ಎದುರು ಪಟಾಕಿ ಸಿಡಿಸಿ, ಕೇಕ್ ಕತ್ತರಿಸಿ, ಯಶ್ ಅವರ ಕಟೌಟ್‌ಗಳಿಗೆ ಹಾಲಿನ ಅಭಿಷೇಕ ಮಾಡಿ ಅಭಿಮಾನಿಗಳು ಸಿನಿಮಾ ಬಿಡುಗಡೆ ಹಬ್ಬವನ್ನು ಆಚರಿಸಿದ್ದಾರೆ.

ವಿಶ್ವಾದ್ಯಂತ 12 ಸಾವಿರಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ ಪ್ರದರ್ಶನ:

‘ಟಾಕ್ಸಿಕ್’ ಸಿನಿಮಾ ವಿಶ್ವಾದ್ಯಂತ 12 ಸಾವಿರಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ ಬಿಡುಗಡೆಯಾಗಿದೆ ಎನ್ನಲಾಗಿದ್ದು, ಕರ್ನಾಟಕದಲ್ಲೇ 1,500ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಬೆಂಗಳೂರಿನ ಹಲವು ಪ್ರಮುಖ ಚಿತ್ರಮಂದಿರಗಳಲ್ಲಿ ಮುಂಜಾನೆಯಿಂದಲೇ ಶೋ ಆರಂಭವಾಗಿದ್ದು, ಪ್ರೇಕ್ಷಕರಿಂದ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಕನ್ನಡದ ಜೊತೆಗೆ ಪರಭಾಷೆಗಳಲ್ಲೂ ಸಿನಿಮಾಗೆ ಭಾರೀ ಬೇಡಿಕೆ ಸೃಷ್ಟಿಯಾಗಿದ್ದು, ಯಶ್ ಅಭಿಮಾನಿಗಳಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ.

ಅಡ್ವಾನ್ಸ್ ಬುಕಿಂಗ್‌ನಲ್ಲೇ ಭರ್ಜರಿ ಕಲೆಕ್ಷನ್?

ಬಿಡುಗಡೆಗೂ ಮುನ್ನವೇ ಅಡ್ವಾನ್ಸ್ ಬುಕಿಂಗ್‌ನಲ್ಲಿ ‘ಟಾಕ್ಸಿಕ್’ ಭರ್ಜರಿ ಸದ್ದು ಮಾಡಿದೆ. ಅಡ್ವಾನ್ಸ್ ಬುಕಿಂಗ್ ಮೂಲಕವೇ ಸುಮಾರು ₹70 ಕೋಟಿ ಗಳಿಕೆ ಕಂಡಿದೆ ಎನ್ನಲಾಗುತ್ತಿದೆ. ಚಿತ್ರಕ್ಕೆ ಸಿಕ್ಕಿರುವ ಕ್ರೇಜ್ ಹಾಗೂ ಬೃಹತ್ ಸ್ಕ್ರೀನ್ ಕೌಂಟ್ ಗಮನಿಸಿದರೆ ಮೊದಲ ದಿನವೇ ವಿಶ್ವಾದ್ಯಂತ ₹100 ಕೋಟಿ ಗಡಿ ದಾಟುವ ಸಾಧ್ಯತೆ ಇದೆ ಎಂಬ ಅಂದಾಜುಗಳು ಕೇಳಿಬರುತ್ತಿವೆ.

‘ಟಾಕ್ಸಿಕ್’ ಚಿತ್ರದಲ್ಲಿ ಯಶ್ ಮುಖ್ಯ ಪಾತ್ರದಲ್ಲಿ ನಟಿಸಿದ್ದು, ಅವರೊಂದಿಗೆ ಕಿಯಾರಾ ಅಡ್ವಾಣಿ, ನಯನತಾರಾ, ಹುಮಾ ಖುರೇಷಿ, ತಾರಾ ಸುತಾರಿಯಾ ಹಾಗೂ ರುಕ್ಮಿಣಿ ವಸಂತ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅಕ್ಷಯ್ ಒಬೆರಾಯ್, ಸುದೇವ್ ನಾಯರ್ ಮತ್ತು ಬಾಲಾಜಿ ಮನೋಹರ್ ಸೇರಿದಂತೆ ಹಲವರು ತಾರಾಗಣದಲ್ಲಿದ್ದಾರೆ. ಸಂಜೀದಾ ಶೇಖ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಚಿತ್ರವನ್ನು ಗೀತು ಮೋಹನ್‌ದಾಸ್ ನಿರ್ದೇಶಿಸಿದ್ದು, ಯಶ್ ಅವರೊಂದಿಗೆ ಸೇರಿ ಚಿತ್ರಕಥೆ ಬರೆದಿದ್ದಾರೆ. ಕೆ.ವಿ.ಎನ್. ಪ್ರೊಡಕ್ಷನ್ಸ್‌ನ ವೆಂಕಟ್ ಕೆ. ನಾರಾಯಣ ಹಾಗೂ ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಯಶ್ ಚಿತ್ರವನ್ನು ನಿರ್ಮಿಸಿದ್ದಾರೆ.

ಒಟ್ಟಿನಲ್ಲಿ, ನಾಲ್ಕು ವರ್ಷಗಳ ಬಳಿಕ ಯಶ್ ಅವರನ್ನು ಬೆಳ್ಳಿತೆರೆ ಮೇಲೆ ಕಣ್ತುಂಬಿಕೊಳ್ಳುತ್ತಿರುವ ಅಭಿಮಾನಿಗಳ ಸಂಭ್ರಮಕ್ಕೆ ‘ಟಾಕ್ಸಿಕ್’ ಬಿಡುಗಡೆ ಮತ್ತಷ್ಟು ಕಳೆ ತಂದಿದೆ.

H1N1 ಸೋಂಕು ಹೆಚ್ಚಳ; ಬೆಂಗಳೂರಿನಲ್ಲಿ 2 ಸಾವಿರ ಪ್ರಕರಣ, ಆತಂಕ ಬೇಡ ಎಂದ ಯು.ಟಿ. ಖಾದರ್!

0

ಬೆಂಗಳೂರು: ಕರ್ನಾಟಕದಲ್ಲಿ H1N1 ಸೋಂಕಿನ ಪ್ರಕರಣಗಳ ಸಂಖ್ಯೆ 4,000ಕ್ಕೂ ಹೆಚ್ಚಾಗಿದ್ದು, ರಾಜಧಾನಿ ಬೆಂಗಳೂರಿನಲ್ಲೇ ಸುಮಾರು 2,000 ಪ್ರಕರಣಗಳು ವರದಿಯಾಗಿವೆ.

ಆರೋಗ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದ್ದರೂ ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ. ಸೋಂಕು ನಿಯಂತ್ರಣಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಭರವಸೆ ನೀಡಿದರು.

ಇದೇ ವೇಳೆ, ದೆಹಲಿಯಲ್ಲೂ H1N1 ಪ್ರಕರಣಗಳ ಸಂಖ್ಯೆ ಹೆಚ್ಚಾಗಿದ್ದು, ಇದುವರೆಗೆ 2,308 ಪ್ರಕರಣಗಳು ಪತ್ತೆಯಾಗಿವೆ ಎಂದು ತಿಳಿದುಬಂದಿದೆ. ಸೋಂಕು ನಿಯಂತ್ರಣಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ರೇಖಾ ಅವರು ಆರೋಗ್ಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ.

ಸೋಂಕು ಹರಡುವುದನ್ನು ತಡೆಯುವ ಉದ್ದೇಶದಿಂದ ದೆಹಲಿ ಸರ್ಕಾರ ಶಾಲೆಗಳಿಗೆ ಎಂಟು ಪ್ರಮುಖ ಮಾರ್ಗಸೂಚಿಗಳನ್ನು ನೀಡಿದೆ. ವಿದ್ಯಾರ್ಥಿಗಳು ಶಾಲೆಯಲ್ಲಿ ಮಾಸ್ಕ್ ಧರಿಸುವುದು, ಕೆಮ್ಮುವಾಗ ಹಾಗೂ ಸೀನುವಾಗ ಕರವಸ್ತ್ರ ಬಳಸುವುದು ಮತ್ತು ಊಟಕ್ಕೂ ಮುನ್ನ ಕೈಗಳನ್ನು ಸ್ವಚ್ಛವಾಗಿ ತೊಳೆಯುವಂತೆ ಸೂಚಿಸಲಾಗಿದೆ.

ಉಸಿರಾಟದ ಸಮಸ್ಯೆ ಇರುವವರಿಂದ ಅಂತರ ಕಾಯ್ದುಕೊಳ್ಳಬೇಕು. ಶಾಲಾ ಕೊಠಡಿಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದು ಸೂಚಿಸಲಾಗಿದೆ. ಜ್ವರ, ಕೆಮ್ಮು ಅಥವಾ ನೆಗಡಿ ಇರುವ ಮಕ್ಕಳಿಗೆ ರಜೆ ನೀಡುವಂತೆ ಶಾಲೆಗಳಿಗೆ ತಿಳಿಸಲಾಗಿದೆ.

ವೈದ್ಯರ ಸಲಹೆ ಇಲ್ಲದೆ ಮಕ್ಕಳಿಗೆ ಯಾವುದೇ ಔಷಧ ನೀಡದಂತೆ ಪೋಷಕರಿಗೆ ಜಾಗೃತಿ ಮೂಡಿಸುವಂತೆಯೂ ಶಾಲೆಗಳಿಗೆ ಸೂಚಿಸಲಾಗಿದೆ. H1N1 ಸೋಂಕಿನ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಗಳು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುತ್ತಿವೆ.

ಈರುಳ್ಳಿ, ಮೆಣಸಿನಕಾಯಿ ಬೆಳೆಗೆ ರೋಗಬಾಧೆ

0

ವಿಜಯಸಾಕ್ಷಿ ಸುದ್ದಿ, ಗದಗ: ತಾಲೂಕಿನ ತಿಮ್ಮಾಪುರ ಹಾಗೂ ಹರ್ಲಾಪೂರ ಭಾಗದಲ್ಲಿ ಈರುಳ್ಳಿ ಮತ್ತು ಮೆಣಸಿನಕಾಯಿ ಬೆಳೆಗಳಿಗೆ ಮುಟುಗಿ ರೋಗ, ಥ್ರಿಪ್ಸ್ ಹಾಗೂ ನುಸಿ ಕೀಟಗಳ ಬಾಧೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಹೊಲಗಳಿಗೆ ಭೇಟಿ ನೀಡಿ ಬೆಳೆಗಳನ್ನು ಪರಿಶೀಲಿಸಿದರು.

ಗದಗ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಮಂಜುನಾಥ ಕರೋಶಿ ಅವರು ರೈತರೊಂದಿಗೆ ಚರ್ಚಿಸಿ ರೋಗ ಹಾಗೂ ಕೀಟಗಳ ಸಮಗ್ರ ನಿರ್ವಹಣೆ ಕುರಿತು ಮಾಹಿತಿ ನೀಡಿದರು.

ಥ್ರಿಪ್ಸ್ ಮತ್ತು ನುಸಿ ಕೀಟಗಳ ನಿಯಂತ್ರಣಕ್ಕೆ ಅಂಟು ಬಲೆ, ಬೇವಿನ ಎಣ್ಣೆ, ಜೈವಿಕ ಕೀಟನಾಶಕ ಹಾಗೂ ಶಿಫಾರಸು ಮಾಡಲಾದ ರಾಸಾಯನಿಕ ಕೀಟನಾಶಕಗಳನ್ನು ನಿಯಮಿತವಾಗಿ ಬದಲಾಯಿಸಿ ಸಿಂಪಡಿಸಬೇಕು. ಔಷಧ ಸಿಂಪಡಿಸುವಾಗ ದ್ರಾವಣವು ಎಲೆಗಳ ಕೆಳಭಾಗಕ್ಕೂ ತಲುಪುವಂತೆ ಎಚ್ಚರಿಕೆ ವಹಿಸಬೇಕು ಎಂದು ಸಲಹೆ ನೀಡಿದರು.

ಮಳೆ ಕೊರತೆಯಿಂದ ಕೆಲವು ಕಡೆ ಬೆಳೆಗಳು ಮೊಳಕೆ ಹಂತದಲ್ಲೇ ಕಮರಿ ನಾಶವಾಗುತ್ತಿರುವುದನ್ನು ಅಧಿಕಾರಿಗಳು ಪರಿಶೀಲಿಸಿದರು. ಶೀಘ್ರದಲ್ಲಿ ಸಮಗ್ರ ಸಮೀಕ್ಷೆ ನಡೆಸಿ ಬೆಳೆಹಾನಿ ವರದಿಯನ್ನು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಮಂಜುನಾಥ ಕರೋಶಿ ರೈತರಿಗೆ ಭರವಸೆ ನೀಡಿದರು.

ಕರ್ನಾಟಕ ರಾಜ್ಯ ರೈತ ಸಂಘದ ಗದಗ ಜಿಲ್ಲಾ ಅಧ್ಯಕ್ಷ ಯಲ್ಲಪ್ಪ ಎಚ್. ಬಾಬರಿ ಮಾತನಾಡಿ, ಸಾವಿರಾರು ರೂಪಾಯಿ ಖರ್ಚು ಮಾಡಿ ಬಿತ್ತನೆ ಮಾಡಿರುವ ಬೆಳೆಗಳು ರೈತರ ಕಣ್ಣೆದುರೇ ನಾಶವಾಗುತ್ತಿವೆ. ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ರೈತರಿಗೆ ಪರಿಹಾರ ಹಾಗೂ ಬೆಳೆ ವಿಮೆ ದೊರಕಿಸಿಕೊಡಬೇಕು ಎಂದು ಒತ್ತಾಯಿಸಿದರು.

ಶಿವಾನಂದ ಬಾನಿ, ರೈತ ಸಂಘದ ಗ್ರಾಮ ಘಟಕದ ಅಧ್ಯಕ್ಷ ಹುಚ್ಚೀರಪ್ಪ ಜೋಗಿನ, ವೆಂಕಟೇಶ ಸತ್ಯಪ್ಪನವರ, ಕೀರಣ ಜೋಗಿನ, ಫಕೀರಪ್ಪ ಹಂಚಿನಾಳ, ಮುತ್ತಪ್ಪ ಗಾಣದ ಸೇರಿದಂತೆ ರೈತರು ಉಪಸ್ಥಿತರಿದ್ದರು.

ಜಗತ್ತಿಗೆ ಮಾನವೀಯತೆಯ ಬೆಳಕು ತೋರಿದ ಪ್ರವಾದಿ ಮುಹಮ್ಮದ್

ಕತ್ತಲೆಯ ನಡುವೆ ಬೆಳಕಿನ ಕಿರಣ ಮೂಡಿದಂತೆ, ಅಧರ್ಮ, ಅನ್ಯಾಯ, ಅಸಮಾನತೆ ಮತ್ತು ಶೋಷಣೆಗಳಿಂದ ಸಮಾಜ ನಲುಗುತ್ತಿದ್ದ ಕಾಲದಲ್ಲಿ ಮಾನವೀಯತೆಯ ಮಹತ್ವವನ್ನು ಜಗತ್ತಿಗೆ ಸಾರಿದವರು ಪ್ರವಾದಿ ಮುಹಮ್ಮದ್‌ ಸಲ್ಲಲ್ಲಾಹು ಅಲೈಹಿವಸಲ್ಲಂ. ಪ್ರೀತಿ, ದಯೆ, ಸಹೋದರತ್ವ, ಸಮಾನತೆ, ಶಾಂತಿ ಹಾಗೂ ಸೇವೆಯಂತಹ ಮೌಲ್ಯಗಳನ್ನು ಬದುಕಿನ ಭಾಗವಾಗಿಸಿದ ಅವರ ಆದರ್ಶಗಳು ಇಂದಿಗೂ ಮಾನವ ಸಮಾಜಕ್ಕೆ ದಾರಿದೀಪವಾಗಿವೆ. ಪ್ರವಾದಿಯವರ ಜನ್ಮದಿನವನ್ನು ಈದ್‌ ಮಿಲಾದ್‌ ಅಥವಾ ಮಿಲಾದುನ್ನಬಿ ಹೆಸರಿನಲ್ಲಿ ಆಚರಿಸುವುದು ಅವರ ಸಂದೇಶಗಳನ್ನು ಸ್ಮರಿಸುವ ಹಾಗೂ ಜೀವನದಲ್ಲಿ ಅಳವಡಿಸಿಕೊಳ್ಳುವ ಮಹತ್ವದ ಸಂದರ್ಭವಾಗಿದೆ.

ಅರಬ್‌ ನಾಡಿನಲ್ಲಿ ಅಜ್ಞಾನ ಮತ್ತು ಅಂಧಕಾರ ತಾಂಡವವಾಡುತ್ತಿದ್ದ ಸಂದರ್ಭದಲ್ಲಿ ರಬೀವುಲ್‌ ಅವ್ವಲ್‌ ತಿಂಗಳ 12ರಂದು ಪ್ರವಾದಿ ಮುಹಮ್ಮದ್‌ ಅವರ ಜನನವಾಯಿತು ಎಂಬುದು ಇಸ್ಲಾಮಿನ ನಂಬಿಕೆ. ಸಮಾಜದಲ್ಲಿ ಮೇಲು-ಕೀಳು, ಜಾತಿ-ವರ್ಣ, ಲಿಂಗಭೇದ, ಗುಲಾಮಗಿರಿ ಹಾಗೂ ಶೋಷಣೆಗಳು ಸಾಮಾನ್ಯವಾಗಿದ್ದ ಕಾಲದಲ್ಲಿ ಅವರು ಮಾನವರೆಲ್ಲರೂ ಸಮಾನರು ಎಂಬ ಸಂದೇಶ ಸಾರಿದರು. ಮನುಷ್ಯನ ಗೌರವವು ಅವನ ಸಂಪತ್ತು, ವರ್ಣ ಅಥವಾ ಸ್ಥಾನಮಾನದಿಂದ ನಿರ್ಧಾರವಾಗುವುದಿಲ್ಲ; ಅವನ ನಡತೆ ಮತ್ತು ಮಾನವೀಯತೆಯೇ ಮುಖ್ಯ ಎಂಬ ತತ್ವವನ್ನು ಪ್ರತಿಪಾದಿಸಿದರು.

ಹೆಣ್ಣು ಮಗು ಹುಟ್ಟುವುದೇ ಶಾಪ ಎಂಬ ಮನೋಭಾವವಿದ್ದ ಕಾಲದಲ್ಲಿ ಹೆಣ್ಣು ಮಕ್ಕಳ ಗೌರವ ಮತ್ತು ಹಕ್ಕುಗಳಿಗಾಗಿ ಧ್ವನಿ ಎತ್ತಿದವರು ಪ್ರವಾದಿ ಮುಹಮ್ಮದ್‌. ಹೆಣ್ಣು ಮಗುವನ್ನು ಪ್ರೀತಿಯಿಂದ ಸಾಕಿ, ಉತ್ತಮ ಶಿಕ್ಷಣ ನೀಡಿ ಬೆಳೆಸುವುದು ಕುಟುಂಬ ಹಾಗೂ ಸಮಾಜದ ಕರ್ತವ್ಯ ಎಂಬ ಸಂದೇಶ ನೀಡಿದರು. ಮಹಿಳೆಯರ ಶಿಕ್ಷಣ ಮತ್ತು ಗೌರವಕ್ಕೆ ಒತ್ತು ನೀಡುವ ಮೂಲಕ ಸ್ತ್ರೀಯರ ಸಾಮಾಜಿಕ ಸ್ಥಾನಮಾನವನ್ನು ಎತ್ತಿಹಿಡಿದರು.

ಶಾಂತಿ ಎಂಬುದು ಕೇವಲ ಯುದ್ಧವಿಲ್ಲದ ಸ್ಥಿತಿಯಲ್ಲ; ಪರಸ್ಪರ ಗೌರವ, ಸಹಿಷ್ಣುತೆ ಮತ್ತು ಸಹಬಾಳ್ವೆಯೇ ನಿಜವಾದ ಶಾಂತಿ ಎಂಬುದನ್ನು ಪ್ರವಾದಿಯವರ ಜೀವನ ಸಾರುತ್ತದೆ. ಅನ್ಯ ಧರ್ಮೀಯರನ್ನು ಗೌರವದಿಂದ ಕಾಣಬೇಕು, ಸಂಕಷ್ಟದಲ್ಲಿರುವವರಿಗೆ ನೆರವಾಗಬೇಕು, ದ್ವೇಷ ಮತ್ತು ಅಸೂಯೆಗಳನ್ನು ತೊರೆದು ಪ್ರೀತಿ ಹಾಗೂ ಸಹೋದರತ್ವದಿಂದ ಬದುಕಬೇಕು ಎಂಬ ಅವರ ಸಂದೇಶ ಇಂದಿನ ವಿಭಜಿತ ಸಮಾಜಕ್ಕೂ ಅತ್ಯಂತ ಪ್ರಸ್ತುತವಾಗಿದೆ.

ಪ್ರಾಮಾಣಿಕ ದುಡಿಮೆ ಹಾಗೂ ಧರ್ಮಮಾರ್ಗದ ಸಂಪಾದನೆಗೂ ಅವರು ವಿಶೇಷ ಮಹತ್ವ ನೀಡಿದರು. ಮೋಸ, ವಂಚನೆ ಮತ್ತು ಅನ್ಯಾಯದ ಮೂಲಕ ಸಂಪಾದಿಸುವುದನ್ನು ವಿರೋಧಿಸಿ, ಪ್ರತಿಯೊಬ್ಬರ ಪರಿಶ್ರಮಕ್ಕೆ ಗೌರವ ನೀಡುವಂತೆ ಬೋಧಿಸಿದರು. ಕಾರ್ಮಿಕನ ಬೆವರಿನ ಹನಿ ಆರುವ ಮುನ್ನವೇ ಅವನ ಸಂಭಾವನೆಯನ್ನು ನೀಡಬೇಕು ಎಂಬ ಸಂದೇಶದ ಮೂಲಕ ಶ್ರಮಜೀವಿಗಳ ಗೌರವ ಮತ್ತು ಹಕ್ಕುಗಳನ್ನು ಎತ್ತಿಹಿಡಿದರು.

ಗುಲಾಮಗಿರಿ ಮತ್ತು ವರ್ಣಭೇದದ ವಿರುದ್ಧವೂ ಪ್ರವಾದಿಯವರ ನಿಲುವು ಸ್ಪಷ್ಟವಾಗಿತ್ತು. ಹಜರತ್‌ ಬಿಲಾಲ್‌ ಅವರಂತಹ ಗುಲಾಮರನ್ನು ಸ್ವಾತಂತ್ರ್ಯದ ಬದುಕಿನತ್ತ ಕರೆದೊಯ್ಯುವ ಮೂಲಕ ಮನುಷ್ಯನನ್ನು ಮನುಷ್ಯನಾಗಿ ಗೌರವಿಸುವ ಸಮಾನತೆಯ ತತ್ವವನ್ನು ಜಗತ್ತಿಗೆ ತೋರಿಸಿಕೊಟ್ಟರು.

ಸರಳತೆ ಮತ್ತು ತ್ಯಾಗವೂ ಅವರ ಬದುಕಿನ ಪ್ರಮುಖ ಗುಣಗಳಾಗಿದ್ದವು. ತಮ್ಮಲ್ಲಿದ್ದ ಸಂಪತ್ತು ಮತ್ತು ಸೌಲಭ್ಯಗಳನ್ನು ಅಗತ್ಯವಿರುವವರಿಗೆ ಹಂಚಿ, ಅತ್ಯಂತ ಸರಳ ಜೀವನ ನಡೆಸಿದರು. ದಾನ, ಸೇವೆ ಮತ್ತು ತ್ಯಾಗದ ಮೂಲಕ ಸಂಪಾದಿಸಿದ ಸತ್ಕಾರ್ಯಗಳೇ ಮನುಷ್ಯನ ನಿಜವಾದ ಸಂಪತ್ತು ಎಂಬುದನ್ನು ತಮ್ಮ ಬದುಕಿನ ಮೂಲಕ ತೋರಿಸಿದರು.

ಪ್ರಾಣಿ, ಪಕ್ಷಿ, ಸಸ್ಯ ಹಾಗೂ ಪರಿಸರದ ಮೇಲಿನ ದಯೆಯನ್ನೂ ಅವರು ಬೋಧಿಸಿದರು. ಯಾವುದೇ ಜೀವಿಗೆ ಅನಗತ್ಯವಾಗಿ ಹಾನಿ ಮಾಡಬಾರದು, ಪ್ರಕೃತಿಯನ್ನು ಸಂರಕ್ಷಿಸಬೇಕು ಎಂಬ ಸಂದೇಶವು ಇಂದಿನ ಪರಿಸರ ಸಂಕಷ್ಟದ ಸಂದರ್ಭದಲ್ಲಿ ಮತ್ತಷ್ಟು ಮಹತ್ವ ಪಡೆದುಕೊಂಡಿದೆ.

ಹೀಗಾಗಿ ಈದ್‌ ಮಿಲಾದ್‌ ಕೇವಲ ಹಬ್ಬದ ಸಂಭ್ರಮಕ್ಕೆ ಸೀಮಿತವಾಗದೆ, ಪ್ರವಾದಿ ಮುಹಮ್ಮದ್‌ ಅವರ ಮಾನವೀಯ ಸಂದೇಶಗಳನ್ನು ನೆನಪಿಸಿಕೊಳ್ಳುವ ದಿನವಾಗಬೇಕು. ಪ್ರೀತಿ, ದಯೆ, ಶಾಂತಿ, ಸಮಾನತೆ, ಪ್ರಾಮಾಣಿಕತೆ ಹಾಗೂ ಸೇವೆಯ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗಲೇ ಅವರ ಆದರ್ಶಗಳಿಗೆ ನಿಜವಾದ ಗೌರವ ಸಲ್ಲಿಸಿದಂತಾಗುತ್ತದೆ. ಇಂದಿನ ಸಮಾಜದಲ್ಲಿ ಶಾಂತಿ ಮತ್ತು ಸಾಮರಸ್ಯವನ್ನು ಕಾಪಾಡಲು ಪ್ರವಾದಿಯವರ ಮಾನವೀಯ ಮೌಲ್ಯಗಳು ಪ್ರತಿಯೊಬ್ಬರ ಬದುಕಿನ ದಾರಿದೀಪವಾಗಬೇಕು.

ಈದ್‌ ಮಿಲಾದ್‌ ಆಚರಣೆಯು ಕೇವಲ ಸಂಭ್ರಮಕ್ಕೆ ಸೀಮಿತವಾಗದೆ, ಪ್ರವಾದಿ ಮುಹಮ್ಮದ್‌ ಅವರ ಆದರ್ಶಗಳನ್ನು ನೆನಪಿಸಿಕೊಂಡು ಸಮಾಜದಲ್ಲಿ ಪ್ರೀತಿ, ಸಹೋದರತ್ವ ಮತ್ತು ಸೇವಾ ಮನೋಭಾವ ಬೆಳೆಸುವ ದಿನವಾಗಬೇಕು ಎಂದು ಸಮಾಜ ಸೇವಕ ಖಾಜಾಹುಸೇನ ಮಹಮ್ಮದರಫೀಕಸಾಬ ಹೊಸಪೇಟಿ, ಡಂಬಳ ಅಭಿಪ್ರಾಯಪಟ್ಟಿದ್ದಾರೆ.

– ಕೆ.ಆರ್. ದೊಡ್ಡಮನಿ, ಪತ್ರಕರ್ತರು, ಡಂಬಳ

ಮಾನವೀಯ ಮೌಲ್ಯಗಳ ಪ್ರತಿಪಾದಕ ಪ್ರವಾದಿ ಮುಹಮ್ಮದ್ (ಸ)

ಇಸ್ಲಾಂ ಜಗದೊಡೆಯನಾದ ಅಲ್ಲಾಹನ ಧರ್ಮ. ಮಾನವರ ಮಾರ್ಗದರ್ಶನಕ್ಕಾಗಿ ಅಲ್ಲಾಹನು ಪ್ರವಾದಿಗಳ ಮೂಲಕ ನೀಡುತ್ತ ಬಂದ ಸಂದೇಶವನ್ನು ಅಂತಿಮ ಪ್ರವಾದಿ ಮುಹಮ್ಮದ್ (ಸ) ಅವರ ಮೂಲಕ ಪರಿಪೂರ್ಣಗೊಳಿಸಿದನು ಎಂಬುದು ಇಸ್ಲಾಮಿನ ನಂಬಿಕೆ.

ಮಾನವ ಕುಲದ ಇತಿಹಾಸದಲ್ಲಿ ಪ್ರೀತಿ, ಕರುಣೆ, ಸಹೋದರತ್ವ, ನ್ಯಾಯ ಮತ್ತು ಮಾನವೀಯತೆಯ ಮೌಲ್ಯಗಳನ್ನು ಸಾರಿದ ಮಹಾನ್ ದಾರ್ಶನಿಕರಲ್ಲಿ ಪ್ರವಾದಿ ಮುಹಮ್ಮದ್ (ಸ) ಅವರು ಅಗ್ರಗಣ್ಯರು. ವಿವಿಧ ಧರ್ಮಗಳ ಸದಾಶಯಗಳಂತೆ ಇಸ್ಲಾಂ ಧರ್ಮದ ಬೋಧನೆಯಲ್ಲಿಯೂ ಮಾನವೀಯ ಮೌಲ್ಯಗಳಿಗೆ ಮಹತ್ವವಿದೆ. ಪ್ರವಾದಿ (ಸ) ಅವರ ಜೀವನವನ್ನು ಅರಿತುಕೊಳ್ಳುವುದರಿಂದ ನಮ್ಮ ಬದುಕಿನ ಸತ್ವ ಮತ್ತು ಮೌಲ್ಯವನ್ನು ಹೆಚ್ಚಿಸಿಕೊಳ್ಳಬಹುದು. ಅವರ ಜೀವನ ಕೇವಲ ಮುಸ್ಲಿಮರಿಗೆ ಸೀಮಿತವಾದ ಧಾರ್ಮಿಕ ಮಾದರಿಯಲ್ಲ, ಸಮಸ್ತ ಮಾನವಕುಲಕ್ಕೆ ನೈತಿಕ ಬದುಕಿನ ದಾರಿದೀಪವಾಗಿದೆ.

ಕ್ರಿ.ಶ. 571ರಲ್ಲಿ ಅರೇಬಿಯಾದ ಮಕ್ಕಾ ನಗರದಲ್ಲಿ ಅಮೀನಾ ಮತ್ತು ಅಬ್ದುಲ್ಲಾ ದಂಪತಿಯ ಪುತ್ರನಾಗಿ ಮುಹಮ್ಮದ್ (ಸ) ಜನಿಸಿದರು. ಬಾಲ್ಯದಿಂದಲೇ ಸತ್ಯವಂತಿಕೆ, ಪ್ರಾಮಾಣಿಕತೆ ಮತ್ತು ವಿಶ್ವಾಸಾರ್ಹತೆಗೆ ಹೆಸರಾಗಿದ್ದ ಅವರು ಜನರಿಂದ ‘ಅಲ್-ಅಮೀನ್’ ಎಂಬ ಗೌರವದ ಹೆಸರಿನಿಂದ ಕರೆಯಲ್ಪಟ್ಟರು. ಸತ್ಯ ಮತ್ತು ಪ್ರಾಮಾಣಿಕತೆಯೇ ಅವರ ಜೀವನದ ಪ್ರಮುಖ ಸಂದೇಶವಾಗಿತ್ತು.

ಏಕದೇವತ್ವ ಮತ್ತು ಮಾನವ ಸಮಾನತೆ

ಪ್ರವಾದಿ (ಸ) ಅವರು ಮನುಷ್ಯರೆಲ್ಲರೂ ದೇವರ ಮುಂದೆ ಸಮಾನರು ಎಂದು ಸಾರಿದರು. ಜಾತಿ, ವರ್ಣ, ಸಂಪತ್ತು, ಅಧಿಕಾರ ಅಥವಾ ಜನ್ಮದ ಆಧಾರದ ಮೇಲೆ ಒಬ್ಬ ಮನುಷ್ಯ ಮತ್ತೊಬ್ಬನಿಗಿಂತ ಶ್ರೇಷ್ಠನಲ್ಲ ಎಂಬ ಮಾನವೀಯ ಸಂದೇಶ ನೀಡಿದರು. ಮನುಷ್ಯನ ಶ್ರೇಷ್ಠತೆ ಅವನ ಜನ್ಮದಲ್ಲಲ್ಲ, ಅವನ ಸದಾಚಾರ, ನೀತಿ ಮತ್ತು ಸತ್ಕರ್ಮಗಳಲ್ಲಿ ಇದೆ ಎಂಬುದನ್ನು ಬೋಧಿಸಿದರು.

ಕರುಣೆ ಮತ್ತು ಪ್ರೀತಿ

ಪ್ರವಾದಿ (ಸ) ಅವರ ಬದುಕಿನ ಪ್ರತಿಯೊಂದು ಹಂತದಲ್ಲೂ ಕರುಣೆ ಮತ್ತು ಪ್ರೀತಿ ಎದ್ದು ಕಾಣುತ್ತದೆ. ಬಡವರು, ಅನಾಥರು, ವಿಧವೆಯರು, ದುರ್ಬಲರು ಹಾಗೂ ಸಮಾಜದ ಅಂಚಿನಲ್ಲಿದ್ದವರ ಬಗ್ಗೆ ಅವರು ವಿಶೇಷ ಕಾಳಜಿ ಹೊಂದಿದ್ದರು. ನೆರೆಹೊರೆಯವರ ಹಕ್ಕು ಮತ್ತು ಹೊಣೆಗಾರಿಕೆಗೆ ಮಹತ್ವ ನೀಡಿದರು. ತನ್ನ ನೆರೆಯವನು ಹಸಿದಿರುವಾಗ ತಾನು ಮಾತ್ರ ಹೊಟ್ಟೆ ತುಂಬಿಸಿಕೊಳ್ಳುವುದು ನಿಜವಾದ ಮಾನವೀಯತೆಯಲ್ಲ ಎಂಬ ಸಂದೇಶವನ್ನು ಸಾರಿದರು.

ಕ್ಷಮೆ ಅವರ ಜೀವನದ ಮತ್ತೊಂದು ಮಹಾನ್ ಗುಣ. ತಮ್ಮ ವಿರುದ್ಧ ಅನ್ಯಾಯ ಮಾಡಿದವರ ಮೇಲೂ ದ್ವೇಷ ಬೆಳೆಸದೆ, ಸಾಧ್ಯವಾದಲ್ಲಿ ಕ್ಷಮೆ ಮತ್ತು ಸೌಹಾರ್ದತೆಯ ದಾರಿಯನ್ನು ಆರಿಸಿದರು. ಮಕ್ಕಾ ವಿಜಯದ ಸಂದರ್ಭದಲ್ಲಿ ತಮ್ಮ ಮೇಲೆ ದೌರ್ಜನ್ಯ ನಡೆಸಿದವರಿಗೂ ಕ್ಷಮೆ ತೋರಿದ ಘಟನೆ ಮಾನವ ಇತಿಹಾಸದಲ್ಲಿನ ಅಪೂರ್ವ ಕ್ಷಮೆಯ ಸಂದೇಶವಾಗಿದೆ.

ಮಹಿಳೆಯರು, ಬಡವರು ಮತ್ತು ಅನಾಥರ ಕಾಳಜಿ

ಆ ಕಾಲದ ಸಮಾಜದಲ್ಲಿ ಮಹಿಳೆಯರ ಹಕ್ಕುಗಳು ನಿರ್ಲಕ್ಷ್ಯಕ್ಕೊಳಗಾಗಿದ್ದ ಸಂದರ್ಭದಲ್ಲಿ, ಪ್ರವಾದಿ (ಸ) ಅವರು ಮಹಿಳೆಯರ ಗೌರವ, ಹಕ್ಕು ಮತ್ತು ಮಾನವೀಯ ಸ್ಥಾನಮಾನವನ್ನು ಒತ್ತಿಹೇಳಿದರು. ಹೆಣ್ಣು ಮಕ್ಕಳನ್ನು ಕೀಳಾಗಿ ಕಾಣುವ ಮನೋಭಾವವನ್ನು ವಿರೋಧಿಸಿದರು. ಕುಟುಂಬದಲ್ಲಿ ಪ್ರೀತಿ, ಗೌರವ ಮತ್ತು ಜವಾಬ್ದಾರಿಯನ್ನು ಬೆಳೆಸುವಂತೆ ಬೋಧಿಸಿದರು.

ಅನಾಥರ ಆಸ್ತಿ ಕಬಳಿಸುವುದು, ಬಡವರನ್ನು ಶೋಷಿಸುವುದು, ತೂಕ-ಅಳತೆಯಲ್ಲಿ ಮೋಸ ಮಾಡುವುದು ಹಾಗೂ ವ್ಯಾಪಾರದಲ್ಲಿ ವಂಚಿಸುವುದನ್ನು ಖಂಡಿಸಿದರು. ದಾನ, ಝಕಾತ್ ಮತ್ತು ನೆರವಿನ ಮೂಲಕ ಸಮಾಜದ ದುರ್ಬಲ ವರ್ಗಗಳ ಬದುಕಿನಲ್ಲಿ ಬೆಳಕು ಮೂಡಿಸುವ ಸಂದೇಶ ನೀಡಿದರು.

ಶಾಂತಿ, ಜ್ಞಾನ ಮತ್ತು ಸಹಬಾಳ್ವೆ

ಪ್ರವಾದಿ (ಸ) ಅವರ ಬೋಧನೆಯಲ್ಲಿ ಶಾಂತಿ ಮತ್ತು ನ್ಯಾಯಕ್ಕೆ ಮಹತ್ವವಿತ್ತು. ವಿವಿಧ ಸಮುದಾಯಗಳ ನಡುವೆ ಪರಸ್ಪರ ಗೌರವ, ನ್ಯಾಯಯುತ ಸಂಬಂಧ ಮತ್ತು ಶಾಂತಿಯುತ ಸಹಬಾಳ್ವೆಯನ್ನು ಅವರು ಪ್ರೋತ್ಸಾಹಿಸಿದರು. ಮದೀನಾದಲ್ಲಿ ವಿವಿಧ ಸಮುದಾಯಗಳೊಂದಿಗೆ ಸಾಮಾಜಿಕ ಒಪ್ಪಂದದ ಮೂಲಕ ಬದುಕನ್ನು ವ್ಯವಸ್ಥಿತಗೊಳಿಸಿದ ಅವರ ಪ್ರಯತ್ನವು ಬಹುಸಾಂಸ್ಕೃತಿಕ ಸಮಾಜದಲ್ಲಿ ಸಹಬಾಳ್ವೆಯ ಮಹತ್ವವನ್ನು ತೋರಿಸುತ್ತದೆ.

ಜ್ಞಾನಾರ್ಜನೆಗೂ ಅವರು ಮಹತ್ವ ನೀಡಿದರು. ಓದು, ಚಿಂತನೆ ಮತ್ತು ಜ್ಞಾನದಿಂದ ಮನುಷ್ಯ ತನ್ನ ಬದುಕನ್ನು ಉತ್ತಮಗೊಳಿಸಬೇಕು ಎಂಬ ಸಂದೇಶ ಅವರ ಬೋಧನೆಯ ಪ್ರಮುಖ ಭಾಗವಾಗಿತ್ತು. ಜ್ಞಾನವು ವೈಯಕ್ತಿಕ ಪ್ರಗತಿಗಷ್ಟೇ ಅಲ್ಲ, ಮಾನವ ಕಲ್ಯಾಣಕ್ಕೂ ಬಳಕೆಯಾಗಬೇಕು ಎಂಬ ದೃಷ್ಟಿಕೋನ ಅವರ ಜೀವನದಲ್ಲಿತ್ತು.

ಪ್ರಾಣಿಗಳು, ಸಸ್ಯಗಳು ಮತ್ತು ಪ್ರಕೃತಿಯ ಬಗ್ಗೆ ಕರುಣೆ ತೋರುವ ಸಂದೇಶವೂ ಅವರ ಬೋಧನೆಯಲ್ಲಿ ಕಾಣುತ್ತದೆ. ಭೂಮಿಯ ಮೇಲಿನ ಪ್ರತಿಯೊಂದು ಜೀವಿಯನ್ನೂ ಗೌರವದಿಂದ ಕಾಣಬೇಕು ಎಂಬ ಮನೋಭಾವ ಇಂದಿನ ಪರಿಸರ ಸಂಕಷ್ಟದ ಕಾಲದಲ್ಲಿಯೂ ಅತ್ಯಂತ ಪ್ರಸ್ತುತವಾಗಿದೆ.

ಇಂದಿನ ಸಮಾಜಕ್ಕೆ ಸಂದೇಶ

ಇಂದು ಜಗತ್ತು ಧರ್ಮ, ಜಾತಿ, ಭಾಷೆ, ದೇಶ ಮತ್ತು ವಿಚಾರಧಾರೆಗಳ ಹೆಸರಿನಲ್ಲಿ ವಿಭಜನೆಯತ್ತ ಸಾಗುತ್ತಿರುವ ಸಂದರ್ಭದಲ್ಲಿ ಪ್ರವಾದಿ (ಸ) ಅವರ ಜೀವನ ಸಂದೇಶ ಮತ್ತಷ್ಟು ಪ್ರಸ್ತುತವಾಗುತ್ತದೆ.

ದ್ವೇಷಕ್ಕೆ ಬದಲಾಗಿ ಪ್ರೀತಿ,
ಹಿಂಸೆಗೆ ಬದಲಾಗಿ ಶಾಂತಿ,
ಅನ್ಯಾಯಕ್ಕೆ ಬದಲಾಗಿ ನ್ಯಾಯ,
ಅಹಂಕಾರಕ್ಕೆ ಬದಲಾಗಿ ವಿನಯ,
ವೈರತ್ವಕ್ಕೆ ಬದಲಾಗಿ ಕ್ಷಮೆ,
ಸ್ವಾರ್ಥಕ್ಕೆ ಬದಲಾಗಿ ಸೇವೆ — ಇವೇ ಅವರ ಜೀವನದ ಮಹತ್ವದ ಪಾಠಗಳು.

ಪ್ರವಾದಿ (ಸ) ಅವರನ್ನು ಗೌರವಿಸುವ ಅತ್ಯುತ್ತಮ ಮಾರ್ಗವೆಂದರೆ ಕೇವಲ ಅವರ ಹೆಸರನ್ನು ಸ್ಮರಿಸುವುದಲ್ಲ, ಅವರು ಪ್ರತಿಪಾದಿಸಿದ ಮಾನವೀಯ ಮೌಲ್ಯಗಳನ್ನು ನಮ್ಮ ನಿತ್ಯ ಬದುಕಿನಲ್ಲಿ ಅಳವಡಿಸಿಕೊಳ್ಳುವುದು. ಇಸ್ಲಾಂ ಧರ್ಮದ ಅಂತರಂಗದಲ್ಲಿ ಶಾಂತಿ, ನ್ಯಾಯ, ಕರುಣೆ ಮತ್ತು ಸೌಹಾರ್ದತೆಗೆ ಮಹತ್ವವಿದೆ. ನ್ಯಾಯಯುತ ಮಾರ್ಗವಿಲ್ಲದೆ ಶಾಂತಿಯನ್ನು ಸಾಧಿಸಲು ಸಾಧ್ಯವಿಲ್ಲ ಎಂಬ ಸಂದೇಶವೂ ಅವರ ಬೋಧನೆಯಲ್ಲಿದೆ.

ಪ್ರವಾದಿ (ಸ) ಅವರ ಜೀವನ ಒಂದು ಧರ್ಮದ ಇತಿಹಾಸ ಮಾತ್ರವಲ್ಲ, ಅದು ಮಾನವೀಯತೆಯ ವಿಶ್ವವಿದ್ಯಾಲಯ. ಸತ್ಯ, ನ್ಯಾಯ, ಕರುಣೆ, ಸಹನೆ, ಕ್ಷಮೆ, ಸಹೋದರತ್ವ ಮತ್ತು ಶಾಂತಿಯ ಮೌಲ್ಯಗಳನ್ನು ಅವರು ತಮ್ಮ ಬದುಕಿನ ಮೂಲಕ ಸಾರಿದರು. ಸಹನೆ, ಪ್ರೀತಿ, ಕ್ಷಮೆ ಮತ್ತು ನ್ಯಾಯದಿಂದ ತಮ್ಮ ಹೃದಯವನ್ನು ಬೆಳಗಿಸಿಕೊಂಡು, ಆ ಬೆಳಕಿನ ಮೂಲಕ ಅಲ್ಲಾಹನ ಸಂದೇಶವನ್ನು ಜನಸಾಮಾನ್ಯರಿಗೆ ತಲುಪಿಸಿದರು.

ಇಂದಿನ ಜಗತ್ತಿಗೆ ಬೇಕಾಗಿರುವುದು ದ್ವೇಷದ ಗೋಡೆಗಳಲ್ಲ—ಪ್ರೀತಿಯ ಸೇತುವೆಗಳು. ಭಾರತವೆಂಬ ಹಡಗಿಗೆ ಬುದ್ಧನ ಕರುಣೆ, ಪ್ರವಾದಿ (ಸ) ಅವರ ಸಹೋದರತೆ, ಬಸವಣ್ಣನವರ ಸಮಾನತೆಯ ಚಿಂತನೆ, ಗಾಂಧೀಜಿಯವರ ಶಾಂತಿ ಮತ್ತು ಅಂಬೇಡ್ಕರ್ ಅವರ ಸಾಮಾಜಿಕ ನ್ಯಾಯದ ಆಶಯಗಳು ದಿಕ್ಕುದೀಪಗಳಾಗಬೇಕು. ಹಲವು ದಾರ್ಶನಿಕರ ಚಿಂತನೆಗಳ ಕುಲುಮೆಯಲ್ಲಿ ನಮ್ಮ ಸಂವಿಧಾನ ರೂಪುಗೊಂಡಿದೆ. ಮನುಷ್ಯನನ್ನು ಮನುಷ್ಯನಾಗಿ ಕಾಣುವ ಹೃದಯವೇ ಈ ದೇಶದ ನಿಜವಾದ ಶಕ್ತಿ.

ಪ್ರವಾದಿ (ಸ) ಅವರ ಯಾವುದೇ ಮೂರ್ತಿ ಅಥವಾ ಭಾವಚಿತ್ರವಿಲ್ಲದಿದ್ದರೂ, ಕೋಟ್ಯಂತರ ಅನುಯಾಯಿಗಳ ಹೃದಯದಲ್ಲಿ ಅವರು ವಿರಾಜಮಾನರಾಗಿದ್ದಾರೆ. ಅವರ ಜೀವನ ಸಂದೇಶ ಭಾವೈಕ್ಯತೆ ಮತ್ತು ಮಾನವೀಯತೆಯ ಬೀಜ ಬಿತ್ತುತ್ತದೆ.

“ಮಾನವೀಯತೆಯೇ ಮನುಷ್ಯನ ನಿಜವಾದ ಧರ್ಮ” ಎಂಬ ಆಶಯವನ್ನು ಬದುಕಿನಲ್ಲಿ ಸಾಕಾರಗೊಳಿಸುವುದೇ ಪ್ರವಾದಿ ಮುಹಮ್ಮದ್ (ಸ) ಅವರ ಜೀವನಕ್ಕೆ ಸಲ್ಲಿಸುವ ಶ್ರೇಷ್ಠ ಗೌರವ. ಬಹುತ್ವದ ಭಾರತದಲ್ಲಿ ಎಲ್ಲರೂ ಸಮಾನವಾಗಿ ಬಾಳಿ ಬದುಕಲು ನಮ್ಮ ಸಂಬಂಧಗಳು ಗಟ್ಟಿಯಾಗಬೇಕು. ಸ್ವಧರ್ಮನಿಷ್ಠೆ ಮತ್ತು ಪರಧರ್ಮ ಸಹಿಷ್ಣುತೆಯೊಂದಿಗೆ ಬದುಕುವ ಮಾರ್ಗವನ್ನು ಅಳವಡಿಸಿಕೊಳ್ಳಬೇಕು. ಆಗಲೇ ಈದ್ ಮಿಲಾದ್ ಆಚರಣೆಗೆ ನಿಜವಾದ ಅರ್ಥ ಸಿಗುತ್ತದೆ.

— ಎ.ಎಸ್. ಮಕಾನದಾರ
ಕವಿ, ಪ್ರಕಾಶಕರು
ನಿರಂತರ ಪ್ರಕಾಶನ, ಗದಗ