ಬೆಂಗಳೂರು: ವಿಧಾನ ಪರಿಷತ್ ಕಲಾಪದಲ್ಲಿ ಇಂದು ಕೂಡ ಸಚಿವ ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ವಿಪಕ್ಷಗಳು ಪ್ರತಿಭಟಿಸಿದ ಪ್ರಸಂಗ ನಡೆಯಿತು. ಕಪ್ಪು ಬಟ್ಟೆ ಹಿಡಿದು ರಾಜೀನಾಮೆಗೆ ಪಟ್ಟು ಹಿಡಿದ ವಿಪಕ್ಷ ಸದಸ್ಯರು, ಸದನದಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಸರ್ಕಾರ ಮೊದಲು ರಾಜೀನಾಮೆ ಕೊಡಿಸಬೇಕು, ಕಳಂಕಿತ ಮಂತ್ರಿಗಳನ್ನು ಇಟ್ಟುಕೊಂಡು ಹೇಗೆ ಸದನ ನಡೆಸಲು ಸಾಧ್ಯ ಎಂದು ಪ್ರಶ್ನಿಸಿ, ಮೊದಲು ರಾಜೀನಾಮೆ ಕೊಡಿಸಿ ನಂತರ ಸದನ ಮುಂದುವರಿಸುವಂತೆ ಆಗ್ರಹಿಸಿದರು.
ಈ ವೇಳೆ ಕಾಂಗ್ರೆಸ್ನ ರವಿ ಮಾತನಾಡಿ, ಬರಗಾಲದ ಬಗ್ಗೆ ಚರ್ಚೆ ಮಾಡುವಂತೆಯೂ, ನಾಗೇಂದ್ರ ವಿಚಾರವಾಗಿ ನೋಟಿಸ್ ಕೊಟ್ಟು ಚರ್ಚಿಸುವಂತೆಯೂ ಸಲಹೆ ನೀಡಿದರು. ಆದರೆ ಸದನದಲ್ಲಿ ಗದ್ದಲ ಗಲಾಟೆ ಮುಂದುವರಿಯಿತು. ಬಿಜೆಪಿ ಸದಸ್ಯರು ಪ್ರಶ್ನೆ ಕೇಳುವ ಬದಲು ಸಚಿವ ನಾಗೇಂದ್ರ ಅವರನ್ನು ವಜಾಗೊಳಿಸುವಂತೆ ಘೋಷಣೆ ಕೂಗಿದರು. ವಿಪಕ್ಷಗಳ ಗಲಾಟೆಯ ನಡುವೆಯೇ ಪ್ರಶ್ನೋತ್ತರ ಕಲಾಪ ನಡೆಯಿತು. ‘ಕೋಟಿ ಕೋಟಿ ಲೂಟಿ’ ಎಂಬ ಘೋಷಣೆಗಳನ್ನೂ ವಿಪಕ್ಷ ಸದಸ್ಯರು ಕೂಗಿದರು.
ಪ್ರಶ್ನೋತ್ತರ ಅವಧಿಗೆ ಅಡ್ಡಿಪಡಿಸಬಾರದು ಎಂದು ಆಗ್ರಹಿಸಿದ ನಾಗರಾಜ್ ಯಾದವ್, ಈ ಬಗ್ಗೆ ಸಭಾಪತಿಗಳು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಈ ಮಧ್ಯೆ ವಿಪಕ್ಷಗಳು ರಾಹುಲ್ ಗಾಂಧಿ ಅವರ ಹೆಸರನ್ನು ಪ್ರಸ್ತಾಪಿಸಿದ್ದಕ್ಕೆ ಆಡಳಿತ ಪಕ್ಷದ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದರು. ಇದರಿಂದ ಸದನದಲ್ಲಿ ಮತ್ತೆ ಗದ್ದಲ ಏರ್ಪಟ್ಟಿತು. ಕಪ್ಪು ಬಟ್ಟೆ ತಿರುಗಿಸುತ್ತಾ ‘ಕೋಟಿ ಕೋಟಿ ಎಲ್ಲಿ ಹೋಯ್ತು, ರಾಹುಲ್ ಗಾಂಧಿ ಜೇಬಿಗೆ ಹೋಯ್ತು’ ಎಂದು ವಿಪಕ್ಷಗಳು ಘೋಷಣೆ ಕೂಗಿದವು.
ಪಾಯಿಂಟ್ ಆಫ್ ಆರ್ಡರ್ ಎತ್ತಿದ ಬಸವರಾಜ್ ಹೊರಟ್ಟಿ, ಸದನವನ್ನು ಈ ರೀತಿ ನಡೆಸುವುದು ಸರಿಯಲ್ಲ, ಯಾರು ಪ್ರಶ್ನೆ ಕೇಳುತ್ತಿದ್ದಾರೆ ಎಂಬುದೇ ಗೊತ್ತಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿ, ಈ ಪದ್ಧತಿಗೆ ಇತಿಶ್ರೀ ಹಾಡುವಂತೆಯೂ, ಸದನ ಮುಂದೂಡಿ ಮಾತುಕತೆ ನಡೆಸುವಂತೆಯೂ ಮನವಿ ಮಾಡಿದರು.
‘ಭ್ರಷ್ಟಾಚಾರಿಗಳನ್ನು ಮಂತ್ರಿ ಮಾಡಿದ್ದೀರಿ, ಹೀಗೆ ಸದನ ಹೇಗೆ ನಡೆಸುತ್ತೀರಿ’ ಎಂದು ಘೋಷಣೆ ಕೂಗಿದ ವಿಪಕ್ಷಗಳು, ನಾಗೇಂದ್ರ ಅವರನ್ನು ವಜಾಗೊಳಿಸುವಂತೆ ಚಪ್ಪಾಳೆ ತಟ್ಟಿ ಘೋಷಣೆ ಕೂಗಿದವು.

