Home Blog

ಕಬಡ್ಡಿ ಬೆಟ್ಟಿಂಗ್ ಪ್ರಕರಣ: ಗೃಹ ಸಚಿವ ಪರಮೇಶ್ವರ್ ವಿರುದ್ಧ ಎಫ್‌ಐಆರ್‌ಗೆ ಕೋರ್ಟ್‌ ಆದೇಶ

ಬೆಂಗಳೂರು: ಕಬಡ್ಡಿ ಪಂದ್ಯಾವಳಿ ವೇಳೆ ನಡೆದ ಬೆಟ್ಟಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಗೃಹ ಸಚಿವ ಜಿ. ಪರಮೇಶ್ವರ್ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶ ನೀಡಿದೆ.

ಚಿಕ್ಕೋಡಿ ಮತ್ತು ವಿಜಯಪುರ ತಂಡಗಳ ನಡುವೆ ನಡೆದ ಕಬಡ್ಡಿ ಪಂದ್ಯಾವಳಿ ವೇಳೆ, ಚಿಕ್ಕೋಡಿ ತಂಡ ಗೆಲ್ಲುತ್ತದೆ ಎಂದು ನಂಬಿ ಸಚಿವ ಪರಮೇಶ್ವರ್ ಅವರು 500 ರೂಪಾಯಿ ಬೆಟ್ಟಿಂಗ್ ಕಟ್ಟಿದ್ದರೆಂದು ಆರೋಪಿಸಲಾಗಿದೆ. ಆದರೆ ಪಂದ್ಯದಲ್ಲಿ ವಿಜಯಪುರ ತಂಡ ಗೆಲುವು ಸಾಧಿಸಿದ ನಂತರ, ಅವರು 500 ರೂಪಾಯಿ ಹಣವನ್ನು ಸಂಬಂಧಿತ ಅಧಿಕಾರಿಗೆ ನೀಡಿದ ಘಟನೆ ನಡೆದಿದೆ ಎಂದು ಹೇಳಲಾಗಿದೆ.

ಈ ಸಂಬಂಧ ನಾಗಭೂಷಣ್ ಎಂಬುವವರು ನ್ಯಾಯಾಲಯಕ್ಕೆ ದೂರು ಸಲ್ಲಿಸಿ, ಪ್ರಕರಣ ದಾಖಲಿಸಲು ಮನವಿ ಮಾಡಿಕೊಂಡಿದ್ದರು. ಮನವಿಯನ್ನು ಪರಿಶೀಲಿಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ, ಗೃಹ ಸಚಿವರ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಸೂಚನೆ ನೀಡಿದೆ.

ಅದರಂತೆ ಕೊಡಿಗೆಹಳ್ಳಿ ಪೊಲೀಸ್ ಠಾಣೆಗೆ ಪ್ರಕರಣ ದಾಖಲಿಸುವಂತೆ ನ್ಯಾಯಾಲಯ ಆದೇಶಿಸಿದ್ದು, ಈ ಪ್ರಕರಣ ಇದೀಗ ರಾಜಕೀಯ ಹಾಗೂ ಕಾನೂನು ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

ಬಿಸಿಲಿನ ತಾಪಕ್ಕೆ ಮತ್ತೊಂದು ಬಲಿ: ಬಸವ ಜಯಂತಿ ವೇಳೆ ಕುಸಿದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸಾವು!

ಬೆಳಗಾವಿ: ರಾಜ್ಯದಲ್ಲಿ ಬಿಸಿಲಿನ ತೀವ್ರತೆ ಹೆಚ್ಚುತ್ತಿರುವ ನಡುವೆ ಹಿಟ್‌ಸ್ಟ್ರೋಕ್‌ಗೆ ಮತ್ತೊಂದು ಬಲಿಯಾಗಿರುವ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ.

ಜಿಲ್ಲೆಯ ರಾಯಬಾಗ ತಾಲೂಕಿನ ಚಿಂಚಲಿ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ವೆಂಕಟೇಶ್ ಬಳ್ಳಾರಿ (35) ಬಿಸಿಲಿನ ತಾಪಕ್ಕೆ ತುತ್ತಾಗಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಮೃತ ವೆಂಕಟೇಶ್ ಬಳ್ಳಾರಿ ಅವರು ರಾಯಬಾಗ ಪಟ್ಟಣದ ನಿವಾಸಿಯಾಗಿದ್ದು, ಚಿಂಚಲಿ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಸೋಮವಾರ (ಏ.21) ಬಸವೇಶ್ವರ ಜಯಂತಿ ಕಾರ್ಯಕ್ರಮದ ಸಂದರ್ಭದಲ್ಲಿ ಫೋಟೋ ಪೂಜೆ ಬಳಿಕ ನಡೆದ ಮೆರವಣಿಗೆಯಲ್ಲಿ ಭಾಗವಹಿಸಿದ್ದ ವೇಳೆ ಅವರಿಗೆ ತೀವ್ರ ತಲೆ ಸುತ್ತು ಉಂಟಾಗಿ ಕುಸಿದು ಬಿದ್ದಿದ್ದಾರೆ.

ತಕ್ಷಣವೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಆಪ್ತರ ಪ್ರಕಾರ, ಬಿಸಿಲಿನ ತೀವ್ರತೆಯಿಂದಾಗಿ ಅವರಿಗೆ ಹೃದಯಾಘಾತ ಸಂಭವಿಸಿರುವ ಸಾಧ್ಯತೆಯೂ ಇದೆ ಎಂದು ಹೇಳಲಾಗಿದೆ.

ಈ ಘಟನೆ ರಾಜ್ಯದಲ್ಲಿ ಹೆಚ್ಚುತ್ತಿರುವ ಬಿಸಿಲಿನ ತಾಪ ಮತ್ತು ಹಿಟ್‌ಸ್ಟ್ರೋಕ್‌ ಅಪಾಯದ ಬಗ್ಗೆ ಮತ್ತೊಮ್ಮೆ ಎಚ್ಚರಿಕೆ ಮೂಡಿಸಿದೆ. ಆರೋಗ್ಯ ಇಲಾಖೆ ಸಾರ್ವಜನಿಕರಿಗೆ ಬಿಸಿಲಿನ ಸಮಯದಲ್ಲಿ ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಮನವಿ ಮಾಡಿದೆ.

ಕಳಪೆ ಪ್ರದರ್ಶನ: ಐಸಿಸಿ ಟಿ20 ಶ್ರೇಯಾಂಕದಲ್ಲಿ ಸ್ಮೃತಿ ಮಂಧಾನ ಕುಸಿತ!

0

ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ ಭಾರತ ಹಾಗೂ ದಕ್ಷಿಣ ಆಫ್ರಿಕಾ ಮಹಿಳಾ ತಂಡಗಳ ನಡುವಿನ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ ತಂಡವು ಮೊದಲ ಎರಡು ಪಂದ್ಯಗಳಲ್ಲಿ ಸೋಲು ಕಂಡಿದೆ.

ಬ್ಯಾಟಿಂಗ್ ವಿಭಾಗದ ವೈಫಲ್ಯವೇ ಈ ಸೋಲಿಗೆ ಪ್ರಮುಖ ಕಾರಣವಾಗಿದ್ದು, ಇದರ ಪರಿಣಾಮ ಐಸಿಸಿ ಮಹಿಳಾ ಟಿ20 ಶ್ರೇಯಾಂಕದಲ್ಲಿ ಸ್ಪಷ್ಟವಾಗಿ ಕಂಡುಬಂದಿದೆ.

ಭಾರತದ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ ಅವರು ಈ ಸರಣಿಯಲ್ಲಿ ಕೇವಲ 25 ರನ್ ಗಳಿಸಿದ್ದು, ಶ್ರೇಯಾಂಕದಲ್ಲಿ ಕುಸಿತ ಕಂಡಿದ್ದಾರೆ. ಅವರು ಮೂರನೇ ಸ್ಥಾನದಿಂದ ನಾಲ್ಕನೇ ಸ್ಥಾನಕ್ಕೆ ಇಳಿದಿದ್ದು, ವೆಸ್ಟ್ ಇಂಡೀಸ್‌ನ ಹೇಲಿ ಮ್ಯಾಥ್ಯೂಸ್ ಅವರನ್ನು ಹಿಂದಿಕ್ಕಿದ್ದಾರೆ. ಅದೇ ವೇಳೆ ಜೆಮಿಮಾ ರೊಡ್ರಿಗಸ್ ಕೂಡ ನಾಲ್ಕು ಸ್ಥಾನ ಕುಸಿದು 14ನೇ ಸ್ಥಾನಕ್ಕೆ ತಲುಪಿದ್ದಾರೆ.

ಇನ್ನೊಂದೆಡೆ, ತಂಡದ ಪರ ಉತ್ತಮ ಪ್ರದರ್ಶನ ನೀಡುತ್ತಿರುವ ಶಫಾಲಿ ವರ್ಮಾ ಅವರಿಗೆ ಶ್ರೇಯಾಂಕದಲ್ಲಿ ಉತ್ತೇಜನ ದೊರೆತಿದೆ. ಒಂದು ಅರ್ಧಶತಕ ಸೇರಿದಂತೆ ಸ್ಥಿರ ಪ್ರದರ್ಶನ ನೀಡಿರುವ ಶಫಾಲಿ ಎರಡು ಸ್ಥಾನಗಳ ಏರಿಕೆ ಸಾಧಿಸಿ ಪ್ರಸ್ತುತ ಆರನೇ ಸ್ಥಾನಕ್ಕೆ ತಲುಪಿದ್ದಾರೆ.

ಭಾರತದ ನಾಯಕಿ ಹರ್ಮನ್‌ಪ್ರೀತ್ ಕೌರ್ ಎರಡು ಸ್ಥಾನಗಳ ಏರಿಕೆ ಕಂಡು 11ನೇ ಸ್ಥಾನದಲ್ಲಿ ಸ್ಥಾನ ಪಡೆದಿದ್ದಾರೆ. ಬೌಲಿಂಗ್ ವಿಭಾಗದಲ್ಲಿಯೂ ಬದಲಾವಣೆಗಳು ಕಂಡುಬಂದಿವೆ. ಆಲ್‌ರೌಂಡರ್ ದೀಪ್ತಿ ಶರ್ಮಾ ಎರಡು ಸ್ಥಾನ ಕುಸಿದು ಐದನೇ ಸ್ಥಾನಕ್ಕೆ ಇಳಿದಿದ್ದಾರೆ. ವೇಗದ ಬೌಲರ್ ರೇಣುಕಾ ಸಿಂಗ್ ಠಾಕೂರ್ ನಾಲ್ಕು ಸ್ಥಾನ ಕುಸಿದು ಒಂಬತ್ತನೇ ಸ್ಥಾನಕ್ಕೆ ಜಾರಿದ್ದಾರೆ. ಅರುಂಧತಿ ರೆಡ್ಡಿ ಕೂಡ ಮೂರು ಸ್ಥಾನ ಕುಸಿದು ಟಾಪ್ 10ರಿಂದ ಹೊರಬಿದ್ದಿದ್ದಾರೆ.

ದಕ್ಷಿಣ ಆಫ್ರಿಕಾ ಪರವಾಗಿ ಲಾರಾ ವೊಲ್ಫರ್ಟ್ ಐದನೇ ಸ್ಥಾನವನ್ನು ಕಾಯ್ದುಕೊಂಡಿದ್ದಾರೆ. ಅನ್ನೆರಿ ಡೆರ್ಕ್ಸೆನ್ 18 ಸ್ಥಾನಗಳ ಏರಿಕೆ ಕಂಡು 33ನೇ ಸ್ಥಾನಕ್ಕೆ ತಲುಪಿದ್ದಾರೆ. ಸುನೆ ಲೂಸ್ ಕೂಡ ಎಂಟು ಸ್ಥಾನಗಳ ಏರಿಕೆ ಸಾಧಿಸಿ 35ನೇ ಸ್ಥಾನ ಪಡೆದಿದ್ದಾರೆ.

ಈ ಸರಣಿಯ ಮುಂದಿನ ಪಂದ್ಯಗಳು ಎರಡೂ ತಂಡಗಳ ಶ್ರೇಯಾಂಕ ಹಾಗೂ ಪ್ರದರ್ಶನದ ಮೇಲೆ ಮಹತ್ವದ ಪರಿಣಾಮ ಬೀರುವ ನಿರೀಕ್ಷೆಯಿದೆ.

ಸ್ಪಾ ಮತ್ತು ಮನೆಗಳಲ್ಲಿ ವೇಶ್ಯಾವಾಟಿಕೆ ಜಾಲ ಭೇದಿಸಿದ ಪೊಲೀಸರು: ನಾಲ್ವರು ಅರೆಸ್ಟ್, 6 ಮಹಿಳೆಯರ ರಕ್ಷಣೆ

ಬೆಂಗಳೂರು: ನಗರದಲ್ಲಿ ಸ್ಪಾ ಕೇಂದ್ರಗಳು ಮತ್ತು ಮನೆಗಳಲ್ಲಿ ಅನೈತಿಕ ಚಟುವಟಿಕೆ ನಡೆಸುತ್ತಿದ್ದ ಖತರ್ನಾಕ್ ಜಾಲವೊಂದನ್ನು ಪೊಲೀಸರು ಭೇದಿಸಿದ್ದು, ಮೂವರು ಮಹಿಳೆಯರು ಸೇರಿದಂತೆ ಒಟ್ಟು ನಾಲ್ವರನ್ನು ಬಂಧಿಸಿದ್ದಾರೆ.

ಈ ಕಾರ್ಯಾಚರಣೆಯಲ್ಲಿ ಆರು ಮಹಿಳೆಯರನ್ನು ರಕ್ಷಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರ ಮಾಹಿತಿಯ ಪ್ರಕಾರ, ಮಾರತಹಳ್ಳಿ, ಸುಂಕದಕಟ್ಟೆ ಸಮೀಪದ ಸ್ಪಾಗಳು ಹಾಗೂ ಮಂಜುನಾಥನಗರದ ಮನೆಯಲ್ಲಿ ಮಹಿಳೆಯರನ್ನು ಬಲವಂತವಾಗಿ ಅಥವಾ ಆಮಿಷಕ್ಕೆ ಒಳಪಡಿಸಿ ವೇಶ್ಯಾವಾಟಿಕೆಗೆ ದೂಡಲಾಗುತ್ತಿತ್ತು. ಈ ಬಗ್ಗೆ ದೊರೆತ ಖಚಿತ ಮಾಹಿತಿಯ ಆಧಾರದಲ್ಲಿ ಕೇಂದ್ರ ಅಪರಾಧ ಶಾಖೆ (CCB) ಮಹಿಳಾ ರಕ್ಷಣಾ ಘಟಕದ ಪೊಲೀಸರು ದಾಳಿ ನಡೆಸಿ ಜಾಲವನ್ನು ಬಯಲು ಮಾಡಿದ್ದಾರೆ.

ವಿಚಾರಣೆಯ ವೇಳೆ ಆರೋಪಿಗಳು ಮೊಬೈಲ್ ಫೋನ್ ಮೂಲಕ ಗ್ರಾಹಕರನ್ನು ಸಂಪರ್ಕಿಸಿ ಸ್ಪಾಗಳು ಮತ್ತು ಖಾಸಗಿ ಮನೆಗಳಲ್ಲಿ ಅನೈತಿಕ ಚಟುವಟಿಕೆ ನಡೆಸುತ್ತಿದ್ದುದನ್ನು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ HAL, ಬ್ಯಾಡರಹಳ್ಳಿ ಮತ್ತು ಬಾಗಲಗುಂಟೆ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದ್ದು, ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪ್ರಕರಣದ ತನಿಖೆ ಮುಂದುವರಿದಿದೆ.

ಪಟಾಕಿ ಕಾರ್ಖಾನೆ ಸ್ಫೋಟ: 13 ಮಂದಿ ಸಾವು, ಕೆಲವರ ಸ್ಥಿತಿ ಗಂಭೀರ!

0

ತಿರುವನಂತಪುರಂ: ಕೇರಳದ ತ್ರಿಶೂರ್‌ನಲ್ಲಿ ನಡೆಯುತ್ತಿರುವ ಪ್ರಸಿದ್ಧ ʻತ್ರಿಶೂರ್ ಪೂರಂ ಉತ್ಸವʼಕ್ಕಾಗಿ ಪಟಾಕಿ ತಯಾರಿಸುತ್ತಿದ್ದ ಕಾರ್ಖಾನೆಯಲ್ಲಿ ಮಂಗಳವಾರ (ಏ.21) ಭೀಕರ ಸ್ಫೋಟ ಸಂಭವಿಸಿದ್ದು, ಕನಿಷ್ಠ 13 ಮಂದಿ ಮೃತಪಟ್ಟಿದ್ದಾರೆ ಎಂದು ಕೇರಳ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (KSDMA) ದೃಢಪಡಿಸಿದೆ.

ಈ ಘಟನೆಯಲ್ಲಿ ಹಲವರು ಗಾಯಗೊಂಡಿದ್ದು, ಐವರ ಸ್ಥಿತಿ ಗಂಭೀರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೃತರ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆಗಳಿರುವ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

ಮಾಹಿತಿಯ ಪ್ರಕಾರ, ಉತ್ಸವದ ಹಿನ್ನೆಲೆಯಲ್ಲಿ ಪಟಾಕಿ ತಯಾರಿಕಾ ಕಾರ್ಯಗಳು ನಡೆಯುತ್ತಿದ್ದಾಗ ಮಧ್ಯಾಹ್ನ ಸುಮಾರು 3:30ರ ವೇಳೆಗೆ ಕಾರ್ಖಾನೆಯ ಶೆಡ್‌ನಲ್ಲಿ ಆಕಸ್ಮಿಕವಾಗಿ ಸ್ಫೋಟ ಸಂಭವಿಸಿದೆ. ಸ್ಫೋಟದ ಬಳಿಕ ಒಂದರ ನಂತರ ಒಂದರಂತೆ ಮತ್ತಷ್ಟು ಸ್ಫೋಟಗಳು ಸಂಭವಿಸಿರುವುದರಿಂದ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗಿದೆ ಎಂದು ವರದಿಗಳು ತಿಳಿಸಿವೆ.

ಘಟನೆಯ ಸಮಯದಲ್ಲಿ ಕಾರ್ಖಾನೆಯಲ್ಲಿ 40ಕ್ಕೂ ಹೆಚ್ಚು ಕಾರ್ಮಿಕರು ಕೆಲಸ ಮಾಡುತ್ತಿದ್ದರೆಂದು ತಿಳಿದುಬಂದಿದೆ. ಸ್ಥಳಕ್ಕೆ ಅಗ್ನಿಶಾಮಕ ದಳ, ಪೊಲೀಸರು ಹಾಗೂ ರಕ್ಷಣಾ ತಂಡಗಳು ಧಾವಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಘಟನೆ ಕುರಿತು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದು, ಗಾಯಾಳುಗಳಿಗೆ ತಕ್ಷಣ ಸೂಕ್ತ ಚಿಕಿತ್ಸೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಜೊತೆಗೆ ಪರಿಸ್ಥಿತಿಯನ್ನು ನಿಗಾ ವಹಿಸಿ ನಿರಂತರ ಮಾಹಿತಿ ನೀಡುವಂತೆ ರಾಜ್ಯ ಮುಖ್ಯ ಕಾರ್ಯದರ್ಶಿಗೆ ನಿರ್ದೇಶನ ನೀಡಿದ್ದಾರೆ.

ಇದೇ ವೇಳೆ, ಈ ದುರಂತಕ್ಕೆ ಪ್ರಧಾನಿ ನರೇಂದ್ರ ಮೋದಿ ಕಚೇರಿ ಕೂಡ ಸಂತಾಪ ಸೂಚಿಸಿದೆ. ಈ ಘಟನೆಗೆ ಸಂಬಂಧಿಸಿದಂತೆ ನಿಖರ ಕಾರಣ ಪತ್ತೆಹಚ್ಚಲು ತನಿಖೆ ಮುಂದುವರಿದಿದ್ದು, ಪಟಾಕಿ ಕಾರ್ಖಾನೆಗಳ ಸುರಕ್ಷತಾ ನಿಯಮಗಳ ಕುರಿತು ಮತ್ತೆ ಚರ್ಚೆ ಆರಂಭವಾಗಿದೆ.

CRPFನಲ್ಲಿ ಬೃಹತ್ ನೇಮಕಾತಿ: 9,175 ಕಾನ್ಸ್‌ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ದೇಶದ ಪ್ರಮುಖ ಭದ್ರತಾ ಪಡೆಗಳಲ್ಲಿ ಒಂದಾದ ಕೇಂದ್ರ ಮೀಸಲು ಪೊಲೀಸ್ ಪಡೆ (CRPF) ಕಾನ್ಸ್‌ಟೇಬಲ್ (ತಾಂತ್ರಿಕ ಮತ್ತು ಟ್ರೇಡ್ಸ್‌ಮನ್) ಹುದ್ದೆಗಳ ಭರ್ತಿಗಾಗಿ ಬೃಹತ್ ನೇಮಕಾತಿ ಅಭಿಯಾನವನ್ನು ಆರಂಭಿಸಿದೆ.

ಒಟ್ಟು 9,175 ಹುದ್ದೆಗಳು ಖಾಲಿ ಇದ್ದು, ಇದರಲ್ಲಿ 9,096 ಹುದ್ದೆಗಳು ಪುರುಷ ಅಭ್ಯರ್ಥಿಗಳಿಗೆ ಹಾಗೂ 79 ಹುದ್ದೆಗಳು ಮಹಿಳಾ ಅಭ್ಯರ್ಥಿಗಳಿಗೆ ಮೀಸಲಾಗಿವೆ.

ಅರ್ಜಿ ಸಲ್ಲಿಸುವ ಪ್ರಕ್ರಿಯೆ ಈಗಾಗಲೇ ಏಪ್ರಿಲ್ 20ರಿಂದ ಆರಂಭವಾಗಿದ್ದು, ಆಸಕ್ತ ಅಭ್ಯರ್ಥಿಗಳು CRPF ಅಧಿಕೃತ ವೆಬ್‌ಸೈಟ್ rect.crpf.gov.in ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಮೇ 19 ಕೊನೆಯ ದಿನಾಂಕವಾಗಿದ್ದು, ಕೊನೆಯ ಕ್ಷಣದ ತೊಂದರೆಗಳನ್ನು ತಪ್ಪಿಸಲು ಶೀಘ್ರದಲ್ಲೇ ಅರ್ಜಿ ಸಲ್ಲಿಸುವಂತೆ ಸೂಚಿಸಲಾಗಿದೆ.

ಅರ್ಹತೆ ವಿವರಗಳ ಪ್ರಕಾರ ಅಭ್ಯರ್ಥಿಗಳು ಕನಿಷ್ಠ 10ನೇ ತರಗತಿ (SSLC) ಉತ್ತೀರ್ಣರಾಗಿರಬೇಕು. ಹುದ್ದೆಗೆ ಅನುಗುಣವಾಗಿ ಸಂಬಂಧಿತ ಕ್ಷೇತ್ರದಲ್ಲಿ ಐಟಿಐ (ITI) ಪ್ರಮಾಣಪತ್ರ ಅಥವಾ ಅಗತ್ಯ ಕೌಶಲ್ಯ ಹೊಂದಿರಬೇಕು. ಚಾಲಕ ಹುದ್ದೆಗೆ ಭಾರಿ ಮೋಟಾರ್ ವಾಹನ ಚಾಲನಾ ಪರವಾನಗಿ (HMV License) ಕಡ್ಡಾಯವಾಗಿದ್ದು, ಕೆಲವು ತಾಂತ್ರಿಕ ಹುದ್ದೆಗಳಿಗೆ ಅನುಭವವೂ ಅಗತ್ಯವಿದೆ.

ವಯೋಮಿತಿಯಂತೆ ಚಾಲಕ ಹುದ್ದೆಗೆ 21 ರಿಂದ 27 ವರ್ಷ, ಇತರೆ ಟ್ರೇಡ್ಸ್‌ಮನ್ ಹುದ್ದೆಗಳಿಗೆ 18 ರಿಂದ 23 ವರ್ಷ ನಿಗದಿಪಡಿಸಲಾಗಿದೆ. ಮೀಸಲಾತಿ ವರ್ಗಗಳಿಗೆ ನಿಯಮಾನುಸಾರ ವಯೋಸಡಿಲಿಕೆ ಲಭ್ಯವಿದೆ.

ಆಯ್ಕೆ ಪ್ರಕ್ರಿಯೆಯಲ್ಲಿ ಅಭ್ಯರ್ಥಿಗಳು ಹಲವು ಹಂತಗಳನ್ನು ಎದುರಿಸಬೇಕು. ಮೊದಲಿಗೆ ಕಂಪ್ಯೂಟರ್ ಆಧಾರಿತ ಲಿಖಿತ ಪರೀಕ್ಷೆ, ನಂತರ ದೈಹಿಕ ಪರೀಕ್ಷೆ, ತದನಂತರ ಪ್ರಾಯೋಗಿಕ ಪರೀಕ್ಷೆ ನಡೆಯಲಿದೆ. ಅಂತಿಮವಾಗಿ ದಾಖಲೆ ಪರಿಶೀಲನೆ ಹಾಗೂ ವೈದ್ಯಕೀಯ ತಪಾಸಣೆ ನಂತರ ಆಯ್ಕೆ ಪಟ್ಟಿ ಪ್ರಕಟಿಸಲಾಗುತ್ತದೆ.

ವೇತನ ಶ್ರೇಣಿಯಂತೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ₹21,700 ರಿಂದ ₹69,100 (ಪೇ ಲೆವೆಲ್-3) ವೇತನ ಹಾಗೂ ಸರ್ಕಾರದ ಇತರ ಭತ್ಯೆಗಳು ಲಭ್ಯವಾಗಲಿವೆ.

 

ಕಾಲಿನ ಮೇಲೆ ಕಾಲು ಹಾಕಿ ಕುಳಿತುಕೊಳ್ಳುವುದು ಅಪಾಯವೇ? ತಜ್ಞರು ಏನು ಹೇಳ್ತಾರೆ ಕೇಳಿ!

0

ಒಂದು ಕಾಲದಲ್ಲಿ ದೊಡ್ಡವರ ಮುಂದೆ ಕಾಲಿನ ಮೇಲೆ ಕಾಲು ಹಾಕಿ ಕುಳಿತುಕೊಳ್ಳುವುದು ತಪ್ಪು ಎಂದು ಹೇಳಲಾಗುತ್ತಿತ್ತು.

ಆದರೆ ಈಗ ಕಾಲ ಬದಲಾಗಿದೆ. ಪ್ರತಿಯೊಬ್ಬರೂ ತಮ್ಮ ಅನುಕೂಲಕ್ಕೆ ತಕ್ಕಂತೆ ಕುಳಿತುಕೊಳ್ಳುತ್ತಾರೆ. ಆದರೂ ಈ ಭಂಗಿ ಆರೋಗ್ಯಕ್ಕೆ ಹಾನಿಕರವೇ ಎಂಬ ಪ್ರಶ್ನೆ ಇನ್ನೂ ಹಲವರಲ್ಲಿ ಇದೆ.

ಹಳೆಯ ನಂಬಿಕೆಗಳ ಪ್ರಕಾರ, ಈ ರೀತಿ ಕೂತರೆ ಬೆನ್ನೆಲುಬು ವಕ್ರವಾಗುತ್ತದೆ, ರಕ್ತ ಸಂಚಲನ ಕಡಿಮೆಯಾಗುತ್ತದೆ ಮತ್ತು ಕಾಲಿನ ನರಗಳು ಉಬ್ಬಿ ಕಾಣಿಸುವ ಸಮಸ್ಯೆ ಉಂಟಾಗುತ್ತದೆ ಎಂದು ಹೇಳಲಾಗುತ್ತಿತ್ತು. ಆದರೆ ಇತ್ತೀಚಿನ ಅಧ್ಯಯನಗಳು ಈ ಮಾತುಗಳನ್ನು ಸಂಪೂರ್ಣವಾಗಿ ಸಮರ್ಥಿಸುವುದಿಲ್ಲ.

ತಜ್ಞರ ಪ್ರಕಾರ, ಕಾಲಿನ ಮೇಲೆ ಕಾಲು ಹಾಕಿ ಕುಳಿತುಕೊಳ್ಳುವುದರಿಂದ ನರಗಳ ಮೇಲೆ ಸ್ವಲ್ಪ ಒತ್ತಡ ಬೀಳಬಹುದು. ಇದರಿಂದ ಕೆಲವೊಮ್ಮೆ ಕಾಲಿನಲ್ಲಿ ಜುಮ್ಮೆನಿಸುವುದು ಅಥವಾ ಸಣ್ಣ ನೋವು ಕಾಣಬಹುದು. ಆದರೆ ಇದು ತಾತ್ಕಾಲಿಕವಾಗಿದ್ದು, ದೀರ್ಘಕಾಲದ ಹಾನಿಗೆ ಕಾರಣವಾಗುವುದಿಲ್ಲ.

ಹೆಚ್ಚಿನವರು ಈ ಭಂಗಿ ಬೆನ್ನಿಗೆ ಹಾನಿ ಮಾಡುತ್ತದೆ ಎಂದು ಭಾವಿಸುತ್ತಾರೆ. ಆದರೆ ಮಾನವ ದೇಹದ ಬೆನ್ನೆಲುಬು ಬಹಳ ಬಲವಾಗಿದ್ದು, ವಿವಿಧ ರೀತಿಯ ಕುಳಿತ ಭಂಗಿಗಳನ್ನು ಸಹಿಸಬಲ್ಲದು. ಬೆನ್ನುನೋವು ಅಥವಾ ಸೊಂಟದ ನೋವಿಗೆ ಪ್ರಮುಖ ಕಾರಣ ಒಂದೇ ಭಂಗಿಯಲ್ಲಿ ಹೆಚ್ಚು ಸಮಯ ಕೂತಿರುವುದೇ ಆಗಿದೆ.

ಇನ್ನು ಕಾಲಿನ ನರಗಳು ಉಬ್ಬಿ ಕಾಣಿಸುವ ಸಮಸ್ಯೆಯ ಬಗ್ಗೆ ಹೇಳುವುದಾದರೆ, ಇದು ಕೇವಲ ಕುಳಿತ ರೀತಿಯಿಂದ ಮಾತ್ರ ಉಂಟಾಗುವುದಿಲ್ಲ. ವಯಸ್ಸು, ಜನ್ಯ ಕಾರಣಗಳು, ಅತಿಯಾದ ತೂಕ, ಗರ್ಭಾವಸ್ಥೆ ಮತ್ತು ದೀರ್ಘಕಾಲ ನಿಂತಿರುವುದು ಮುಖ್ಯ ಕಾರಣಗಳಾಗಿವೆ.

ಹೀಗಾಗಿ ಏನು ಮಾಡಬೇಕು?
ಯಾವ ರೀತಿಯಲ್ಲಿ ಕೂತರೂ ಸರಿ. ಆದರೆ ಒಂದೇ ಭಂಗಿಯಲ್ಲಿ ಹೆಚ್ಚು ಸಮಯ ಇರಬಾರದು. ಮಧ್ಯ ಮಧ್ಯದಲ್ಲಿ ಎದ್ದು ನಡೆಯುವುದು ಮತ್ತು ಭಂಗಿ ಬದಲಾಯಿಸುವುದು ಉತ್ತಮ.

ಕಾಲಿನ ಮೇಲೆ ಕಾಲು ಹಾಕಿ ಕುಳಿತುಕೊಳ್ಳುವುದು ಅಪಾಯಕರವಲ್ಲ. ಆದರೆ ದೀರ್ಘಕಾಲ ಒಂದೇ ಸ್ಥಿತಿಯಲ್ಲಿ ಕೂತಿರುವುದನ್ನು ತಪ್ಪಿಸುವುದು ಆರೋಗ್ಯಕರ ಜೀವನದ ಪ್ರಮುಖ ಗುಟ್ಟು.

ಸಿದ್ದರಾಮಯ್ಯ ಬದಲಾಗಿಲ್ಲ, ಟಗರು ಯಾವತ್ತೂ ಟಗರೇ: ಸಚಿವ ಜಮೀರ್ ಅಹಮದ್

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಿಂದೆ ಹೇಗಿದ್ದರೋ ಈಗಲೂ ಅದೇ ರೀತಿ ಇದ್ದಾರೆ. “ಟಗರು ಟಗರೇ” ಎಂದು ಸಚಿವ ಜಮೀರ್ ಅಹಮದ್ ಖಾನ್ ಹೇಳಿದ್ದಾರೆ.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ತಮ್ಮ ಆಪ್ತರು ಟಾರ್ಗೆಟ್ ಆದರೂ ಮೌನವಾಗಿದ್ದಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದರು. ಸಿಎಂಗೆ ಎಲ್ಲರೂ ಆಪ್ತರೇ. ಅವರು ನಮ್ಮ ಮುಖ್ಯಮಂತ್ರಿ. ಈಗ ಮೌನವಾಗಿರಬಹುದು, ಆದರೆ ಮಾತನಾಡಿದರೆ ಬೇರೆ ರೀತಿಯಲ್ಲಿ ಪ್ರತಿಧ್ವನಿಸುತ್ತದೆ. ಈಗ ಮಾತನಾಡುವ ಅಗತ್ಯ ಇಲ್ಲ ಎಂದು ಹೇಳಿದರು.

ಮುಸ್ಲಿಂ ಗುರುಗಳು ಪತ್ರ ಬರೆದ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಮಾಧ್ಯಮಗಳಲ್ಲಿ ಆ ಪತ್ರವನ್ನು ನೋಡಿದ್ದೇನೆ. ಸುಮಾರು 15–16 ಮಂದಿ ಗುರುಗಳು ರಾಹುಲ್ ಗಾಂಧಿ, ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪತ್ರ ಬರೆದಿದ್ದಾರೆ. ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಅದರ ಬಗ್ಗೆ ಸ್ಪಷ್ಟನೆ ಬೇಕಿದ್ದರೆ ಪತ್ರ ಬರೆದವರನ್ನೇ ಕೇಳಬೇಕು ಎಂದರು.

ಯಾವುದೇ ತಾರತಮ್ಯ ನಡೆಯುತ್ತಿಲ್ಲ. ಎಲ್ಲರನ್ನು ಸಮಾನವಾಗಿ ನೋಡಿಕೊಳ್ಳಲಾಗುತ್ತಿದೆ ಎಂದು ಅವರು ಸ್ಪಷ್ಟಪಡಿಸಿದರು. ಒಬ್ಬೊಬ್ಬರು ಒಬ್ಬೊಬ್ಬರ ಪರವಾಗಿ ಮಾತನಾಡುವುದು ಸಾಮಾನ್ಯ. ಅದನ್ನೆಲ್ಲ ಗಂಭೀರವಾಗಿ ಪರಿಗಣಿಸುವ ಅಗತ್ಯವಿಲ್ಲ ಎಂದು ಜಮೀರ್ ಅಹಮದ್ ಖಾನ್ ಹೇಳಿದರು.

ಸಿಡಿಲು ಬಡಿದು ವೃದ್ಧೆ ಸಾವು; ನೀರಿನಲ್ಲಿ ಮುಳುಗಿ ನಾಲ್ವರು ದುರ್ಮರಣ

0

ಹಾಸನ: ಜಿಲ್ಲೆಯಲ್ಲಿ ಮಳೆ-ಗಾಳಿ ತೀವ್ರಗೊಂಡಿರುವ ಹಿನ್ನೆಲೆ ಎರಡು ಪ್ರತ್ಯೇಕ ಘಟನೆಗಳಲ್ಲಿ ಒಟ್ಟು ಐವರು ಸಾವನ್ನಪ್ಪಿರುವ ದುರ್ಘಟನೆಗಳು ಸಂಭವಿಸಿವೆ.

ಆಲೂರು ತಾಲೂಕಿನಲ್ಲಿನ ಘಟನೆಯಲ್ಲಿ, ಜಾನುವಾರು ಮೇಯಿಸಲು ತೆರಳಿದ್ದ ನೀಲಮ್ಮ (70) ಮಳೆಯಿಂದ ರಕ್ಷಣೆ ಪಡೆಯಲು ಮರದ ಬಳಿ ಆಶ್ರಯ ಪಡೆದ ವೇಳೆ ಸಿಡಿಲು ಬಡಿದು ಮೃತಪಟ್ಟಿದ್ದಾರೆ. ಘಟನೆ ಸಂಬಂಧ ಸ್ಥಳಕ್ಕೆ ಚೆಸ್ಕಾಂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ನೊಂದೆಡೆ, ಭಾರೀ ಮಳೆ ಮತ್ತು ಬಿರುಗಾಳಿಯಿಂದ ಚನ್ನರಾಯಪಟ್ಟಣ ತಾಲೂಕಿನ ನುಗ್ಗೆಹಳ್ಳಿ ಹೋಬಳಿಯ ಕಾರೆಹಳ್ಳಿ, ನಾಗರನವಿಲೆ, ಚಿಕ್ಕೋನಹಳ್ಳಿ ಹಾಗೂ ರೇಚಿಹಳ್ಳಿ ರಸ್ತೆಗಳುದ್ದಕ್ಕೂ ಸುಮಾರು 20ಕ್ಕೂ ಹೆಚ್ಚು ಮರಗಳು ನೆಲಕ್ಕುರುಳಿವೆ. ಪರಿಣಾಮವಾಗಿ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ಚೆಸ್ಕಾಂ ಸಿಬ್ಬಂದಿ ದಿನಪೂರ್ತಿ ಮರ ತೆರವು ಕಾರ್ಯಾಚರಣೆ ನಡೆಸಿದರು.

ಇದರ ಜೊತೆಗೆ, ಅರಸೀಕೆರೆ ತಾಲೂಕಿನ ಗಂಡಸಿ ಹೋಬಳಿಯ ನಿಲಗುಂದ-ಹೊಸಳ್ಳಿ ಗ್ರಾಮದ ಕೆರೆಯಲ್ಲಿ ಜಾನುವಾರುಗಳ ಮೈ ತೊಳೆಯಲು ತೆರಳಿದ್ದ ವೇಳೆ ಕಾಲು ಜಾರಿ ನೀರಿಗೆ ಬಿದ್ದ ಅಳಿಯ ಪ್ರತೀಕ್ (10) ಮತ್ತು ಮಾವ ಪ್ರಭಾಕರ್ (45) ಈಜು ಬರದೇ ಮುಳುಗಿ ಮೃತಪಟ್ಟಿದ್ದಾರೆ. ಬೇಸಿಗೆ ರಜೆ ಹಿನ್ನೆಲೆಯಲ್ಲಿ ಪ್ರತೀಕ್ ಮಾವನ ಮನೆಗೆ ಬಂದಿದ್ದ ಎನ್ನಲಾಗಿದೆ.

ಮತ್ತೊಂದು ಘಟನೆ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನಲ್ಲೂ ಸಂಭವಿಸಿದ್ದು, ಈಜಲು ತೆರಳಿದ್ದ ಇಬ್ಬರು ಯುವಕರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಮಳೆಗಾಲದ ಅವಘಡಗಳಿಂದ ಜನರು ಎಚ್ಚರಿಕೆಯಿಂದ ಇರಬೇಕೆಂದು ಅಧಿಕಾರಿಗಳು ಸೂಚಿಸಿದ್ದಾರೆ.

ಕೇಂದ್ರ ಸರ್ಕಾರ ಕಾಂಗ್ರೆಸ್ ನಾಯಕರನ್ನೇ ಗುರಿಯಾಗಿಸಿದೆ: ಸಿಎಂ ಸಿದ್ದರಾಮಯ್ಯ ಆರೋಪ

ಚಾಮರಾಜನಗರ: ಕೇಂದ್ರ ಸರ್ಕಾರ ಕಾಂಗ್ರೆಸ್ ನಾಯಕರನ್ನೇ ಗುರಿಯಾಗಿಸಿಕೊಂಡು ತನಿಖಾ ದಾಳಿಗಳನ್ನು ನಡೆಸುತ್ತಿದೆ, ಬಿಜೆಪಿಯವರ ಮೇಲೆ ಇಂತಹ ಕ್ರಮಗಳು ಕಾಣಿಸುತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಗುಂಡ್ಲುಪೇಟೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶಾಸಕ ಹ್ಯಾರಿಸ್ ಪುತ್ರ ನಲಪಾಡ್ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ (ಇ.ಡಿ) ನಡೆಸಿದ ದಾಳಿ ಕುರಿತು ಪ್ರತಿಕ್ರಿಯಿಸಿ ಈ ಆರೋಪ ಮಾಡಿದರು.

ಮೂಢನಂಬಿಕೆಗಳ ಬಗ್ಗೆ ನನಗೆ ನಂಬಿಕೆ ಇಲ್ಲ. ಚಾಮರಾಜನಗರಕ್ಕೆ ಬಂದರೆ ಕುರ್ಚಿ ಹೋಗುತ್ತದೆ ಎಂಬ ಮಾತು ತಪ್ಪು. ನಾನು ಇಲ್ಲಿ ಹಲವು ಬಾರಿ ಭೇಟಿ ನೀಡಿದ್ದೇನೆ. ಇಲ್ಲಿಗೆ ಬಂದರೆ ಕುರ್ಚಿ ಗಟ್ಟಿಯಾಗುತ್ತದೆ ಎಂದು ಪ್ರಾಸಂಗಿಕವಾಗಿ ಹೇಳಿದ್ದೆ ಎಂದರು. ಗ್ಯಾರಂಟಿ ಯೋಜನೆಗಳ ಕುರಿತು ಮಾತನಾಡಿದ ಅವರು, ಮೊದಲು ವಿರೋಧಿಸಿದ್ದವರೇ ಈಗ ಅದನ್ನು ಅನುಸರಿಸುತ್ತಿದ್ದಾರೆ. ಗ್ಯಾರಂಟಿಗಳು ಬಡವರ ಪರ ಯೋಜನೆಗಳೆಂಬುದು ಅವರಿಗೆ ಈಗ ಅರಿವಾಗಿದೆ ಎಂದು ಹೇಳಿದರು.

ನಾರಿ ಶಕ್ತಿ ವಂದನ್ ಮಸೂದೆ ಕುರಿತು ಬಿಜೆಪಿ ಮಾಡಿದ ಆರೋಪಕ್ಕೆ ತಿರುಗೇಟು ನೀಡಿದ ಸಿಎಂ, ಮಹಿಳಾ ಮೀಸಲಾತಿಗೆ ವಿರೋಧಿಗಳು ಬಿಜೆಪಿಯವರೇ. ರಾಜೀವ್‌ ಗಾಂಧಿ ಅವಧಿಯಲ್ಲಿ ಸಂವಿಧಾನದ 73 ಮತ್ತು 74ನೇ ತಿದ್ದುಪಡಿಗಳ ಮೂಲಕ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳಾ ಮೀಸಲಾತಿ ತರಲಾಗಿತ್ತು. ಆದರೆ ಅದನ್ನು ರಾಜ್ಯಸಭೆಯಲ್ಲಿ ತಡೆದವರು ಬಿಜೆಪಿಯವರೇ ಎಂದು ಹೇಳಿದರು. ನಮ್ಮ ವಿರೋಧ ಕ್ಷೇತ್ರ ಮರುವಿಂಗಡಣೆಗೆ ಮಾತ್ರ, ಮಹಿಳಾ ಮೀಸಲಾತಿಗೆ ಅಲ್ಲ ಎಂದು ಸ್ಪಷ್ಟಪಡಿಸಿದರು.

ತೃತೀಯ ಭಾಷೆಗೆ ಅಂಕ ನೀಡುವ ವಿಚಾರದಲ್ಲಿ ನ್ಯಾಯಾಲಯದ ನಿರ್ದೇಶನವನ್ನು ಪಾಲಿಸಲಾಗುವುದು. ಹಿಂದಿನ ವರ್ಷಗಳಂತೆ ಮೌಲ್ಯಮಾಪನ ಮಾಡಿ ಅಂಕ ನೀಡಬೇಕು ಎಂದು ಉಚ್ಚ ನ್ಯಾಯಾಲಯ ಸೂಚಿಸಿರುವುದಾಗಿ ಹೇಳಿದರು.

ಅಲ್ಪಸಂಖ್ಯಾತರು ಹೈಕಮಾಂಡ್ಗೆ ಪತ್ರ ಬರೆದಿರುವ ಬಗ್ಗೆ ಪ್ರತಿಕ್ರಿಯಿಸಿ, ನಿರ್ಧಾರ ಕೈಗೊಳ್ಳುವಾಗ ಅವರೇ ಉಪಸ್ಥಿತರಿದ್ದರು. ನಂತರ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು. ಇದೇ ವೇಳೆ, ದಾವಣಗೆರೆ ಮತ್ತು ಬಾಗಲಕೋಟೆ ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.

error: Content is protected !!