ಕನ್ನಡದ ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ಅವರ ಬದುಕಿನಲ್ಲಿ ದುಃಖದ ಛಾಯೆ ಆವರಿಸಿದೆ. ಅವರ ತಾಯಿ ರತ್ನಕಾಂತಿ ಶೆಟ್ಟಿ ಅವರು ನಿಧನರಾಗಿದ್ದು, ತಾಯಿಯ ಅಗಲಿಕೆಯಿಂದ ಕಂಗಾಲಾಗಿರುವ ಗುರುಕಿರಣ್ ಸಾಮಾಜಿಕ ಜಾಲತಾಣದಲ್ಲಿ ಹೃದಯಸ್ಪರ್ಶಿ ಪೋಸ್ಟ್ ಹಂಚಿಕೊಂಡಿದ್ದಾರೆ. ತಮ್ಮ ಜೀವನದ ಪ್ರತಿಯೊಂದು ಸಾಧನೆಯ ಹಿಂದೆಯೂ ತಾಯಿಯೇ ಇದ್ದರು ಎಂದು ಹೇಳುವ ಮೂಲಕ ಗುರುಕಿರಣ್ ಮಾತೃವಂದನೆ ಸಲ್ಲಿಸಿದ್ದಾರೆ.
‘ನನ್ನ ಪ್ರೀತಿಯ ತಾಯಿ ರತ್ನಕಾಂತಿ ಶೆಟ್ಟಿ ಅವರು ನಿಧನರಾಗಿದ್ದಾರೆ ಎಂಬ ಹೃದಯವಿದ್ರಾವಕ ಸುದ್ದಿಯನ್ನು ಹಂಚಿಕೊಳ್ಳುತ್ತಿದ್ದೇನೆ. ಜೀವನದಲ್ಲಿ ಏನೇ ಆಗಿದ್ದರೂ, ಏನೇ ಸಾಧಿಸಿದ್ದರೂ ಅದಕ್ಕೆಲ್ಲಾ ನನ್ನ ತಾಯಿಯೇ ಕಾರಣ’ ಎಂದು ಗುರುಕಿರಣ್ ಬರೆದುಕೊಂಡಿದ್ದಾರೆ.
ಗುರುಕಿರಣ್ ಅವರ ಭಾವುಕ ಪೋಸ್ಟ್ಗೆ ಚಿತ್ರರಂಗದ ಗಣ್ಯರು, ಅಭಿಮಾನಿಗಳು ಹಾಗೂ ಆತ್ಮೀಯರಿಂದ ಸಂತಾಪದ ಮಹಾಪೂರವೇ ಹರಿದುಬಂದಿದೆ. ತಾಯಿ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಕುಟುಂಬಕ್ಕೆ ಈ ದುಃಖವನ್ನು ಭರಿಸುವ ಶಕ್ತಿ ದೊರೆಯಲಿ ಎಂದು ಎಲ್ಲರೂ ಪ್ರಾರ್ಥಿಸುತ್ತಿದ್ದಾರೆ.
90ರ ದಶಕದ ಅಂತ್ಯದಲ್ಲಿ ‘ಎ’ ಚಿತ್ರದ ಮೂಲಕ ಸ್ವತಂತ್ರ ಸಂಗೀತ ನಿರ್ದೇಶಕರಾಗಿ ಕನ್ನಡ ಚಿತ್ರರಂಗ ಪ್ರವೇಶಿಸಿದ ಗುರುಕಿರಣ್, ತಮ್ಮ ವಿಭಿನ್ನ ಸಂಗೀತದ ಮೂಲಕ ಹೊಸ ಸಂಚಲನ ಸೃಷ್ಟಿಸಿದ್ದರು. ‘ಉಪೇಂದ್ರ’, ‘ಅಪ್ಪು’, ‘ಆಪ್ತಮಿತ್ರ’, ‘ಜೋಗಿ’ ಸೇರಿದಂತೆ ಹಲವು ಯಶಸ್ವಿ ಚಿತ್ರಗಳಿಗೆ ಸಂಗೀತ ನೀಡುವ ಮೂಲಕ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಸ್ಥಾನ ಗಳಿಸಿದರು.
ಸಂಗೀತ ನಿರ್ದೇಶನದ ಜೊತೆಗೆ ಗಾಯಕ ಹಾಗೂ ನಟನಾಗಿಯೂ ಗುರುಕಿರಣ್ ಗುರುತಿಸಿಕೊಂಡಿದ್ದಾರೆ. ರಾಜ್ಯ ಸರ್ಕಾರಿ ಪ್ರಶಸ್ತಿ ಹಾಗೂ ಹಲವು ಫಿಲ್ಮ್ಫೇರ್ ಪ್ರಶಸ್ತಿಗಳನ್ನು ಗೆದ್ದಿರುವ ಅವರ ಯಶಸ್ಸಿನ ಹಾದಿಯಲ್ಲಿ ತಾಯಿ ರತ್ನಕಾಂತಿ ಶೆಟ್ಟಿ ಅವರ ಪ್ರೋತ್ಸಾಹ ಪ್ರಮುಖ ಪಾತ್ರ ವಹಿಸಿತ್ತು.
ತಮ್ಮ ಸಾಧನೆಯ ಹಿಂದಿನ ದೊಡ್ಡ ಶಕ್ತಿಯಾಗಿದ್ದ ತಾಯಿಯನ್ನೇ ಕಳೆದುಕೊಂಡಿರುವ ಗುರುಕಿರಣ್ಗೆ ಇದೀಗ ಚಿತ್ರರಂಗದ ಗಣ್ಯರು, ಸ್ನೇಹಿತರು ಮತ್ತು ಅಭಿಮಾನಿಗಳು ಧೈರ್ಯ ತುಂಬುತ್ತಿದ್ದಾರೆ.

