ವಿಜಯಸಾಕ್ಷಿ ಸುದ್ದಿ, ಹಗರಿಬೊಮ್ಮನಹಳ್ಳಿ: ತಾಲೂಕಿನ ಮೋರಗೇರಿ ಗ್ರಾಮದ ವಿದ್ಯಾರ್ಥಿನಿ ಕುಮಾರಿ ದುರುಗಮ್ಮ ಉತ್ತಂಗಿ ಅವರು ದೇಶದ ಪ್ರತಿಷ್ಠಿತ ನೀಟ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಬೆಂಗಳೂರಿನ ಸಪ್ತಗಿರಿ ಮೆಡಿಕಲ್ ಕಾಲೇಜಿನಲ್ಲಿ ಎಂ.ಬಿ.ಬಿ.ಎಸ್. ಪ್ರವೇಶ ಪಡೆದಿದ್ದು, ಕುಟುಂಬ ಹಾಗೂ ಸಮಾಜಕ್ಕೆ ಹೆಮ್ಮೆ ತಂದಿದ್ದಾರೆ.
ಈ ಸಾಧನೆಯ ಹಿನ್ನೆಲೆಯಲ್ಲಿ ಹಗರಿಬೊಮ್ಮನಹಳ್ಳಿ ತಾಲೂಕು ಮಾದಿಗ ಸಮಾಜ ಹಾಗೂ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ. ಬಿ. ಕೃಷ್ಣಪ್ಪನವರು ಸ್ಥಾಪಿಸಿದ) ಪದಾಧಿಕಾರಿಗಳು ಮೋರಗೇರಿಯಲ್ಲಿರುವ ವಿದ್ಯಾರ್ಥಿನಿಯ ಮನೆಗೆ ಭೇಟಿ ನೀಡಿ ದುರುಗಮ್ಮ ಅವರನ್ನು ಸನ್ಮಾನಿಸಿ ಅಭಿನಂದಿಸಿದರು.
ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ತಾಲೂಕು ದಲಿತ ಸಂಘರ್ಷ ಸಮಿತಿ ಅಧ್ಯಕ್ಷ ಪರಶುರಾಮ ಹೆಗ್ಡಾಳ್, ಅತ್ಯಂತ ಕಡುಬಡತನದಲ್ಲಿ ಬೆಳೆದ ವಿದ್ಯಾರ್ಥಿನಿ ದುರುಗಮ್ಮ ಅವರು ಅನೇಕ ಸವಾಲುಗಳನ್ನು ಮೆಟ್ಟಿ ನಿಂತು ಶ್ರಮವಹಿಸಿ ಸಾಧನೆ ಮಾಡಿದ್ದಾರೆ. ತಂದೆ-ತಾಯಿ ಹಾಗೂ ಇಡೀ ಸಮಾಜ ಹೆಮ್ಮೆಪಡುವಂತಹ ಸಾಧನೆ ಮಾಡಿರುವ ಅವರು, ಓದುವ ಮಕ್ಕಳಿಗೆ ಸ್ಫೂರ್ತಿಯಾಗಿದ್ದಾರೆ ಎಂದರು.
ಕಿತ್ತನೂರು ದೇವೇಂದ್ರ ಮಾತನಾಡಿ, ಕಿತ್ತು ತಿನ್ನುವ ಬಡತನವಿದ್ದರೂ ಕಷ್ಟ-ಕಾರ್ಪಣ್ಯಗಳನ್ನು ಬದಿಗೊತ್ತಿ ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಿದ ತಂದೆ-ತಾಯಿಯ ಶ್ರಮ ಇಂದು ಸಾರ್ಥಕವಾಗಿದೆ ಎಂದರು.
ನಿವೃತ್ತ ಶಿಕ್ಷಕ ಕೊಟ್ರೇಶ್ ಮೇಷ್ಟ್ರು ಅವರು ವಿದ್ಯಾರ್ಥಿನಿಯ ಮುಂದಿನ ವಿದ್ಯಾಭ್ಯಾಸಕ್ಕೆ ಅಗತ್ಯ ನೆರವು ನೀಡುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಹಿರಿಯರಾದ ಕೇಚ್ಚಿನಬಂಡಿ ದುರುಗಪ್ಪ, ಯಡ್ರಾಮ್ಮನಹಳ್ಳಿ ಮರಿಯಪ್ಪ, ಕಿತ್ತನೂರು ದುರುಗಪ್ಪ, ಕಡಲಬಾಳು ಪಕೀರಪ್ಪ, ಏಳುಕೋಟಿ ದೂಪದಹಳ್ಳಿ, ಡಿಎಸ್ಎಸ್ ಖಜಾಂಚಿ ಚಿಂತ್ರಪಳ್ಳಿ ರಮೇಶ್, ಶಿವಮೂರ್ತಿ ನೆಲ್ಕುದ್ರಿ, ಬ್ಯಾಳಾಳ್ ಅಜಯ್, ತೀರ್ಥ ಪ್ರಸಾದ್ ಹಂಪಪಟ್ಟಣ, ಬಸವರಾಜ ಕೇಚ್ಚಿನಬಂಡಿ, ಬಸವರಾಜ ಸೊಬಟಿ, ಚಾರೆಪ್ಪ ಹೊಸಕೇರಿ, ಸ್ವಾಮಿ ಹೊಸಕೇರಿ, ಪರಶುರಾಮ ಅಂಕಸಮುದ್ರ, ಮಹಾಂತೇಶ ಕಡಲಬಾಳು, ಮಲ್ಲಿಕಾರ್ಜುನ ಮಗಿಮಾವಿನಹಳ್ಳಿ, ಆನಂದಳ್ಳಿ ಬಸವರಾಜ್ ಹಾಗೂ ಸ್ಥಳೀಯ ಮುಖಂಡ ಮೋರಗೇರಿ ಮೈಲಪ್ಪ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

