Home Blog

101ರಿಂದ 180–200ಕ್ಕೆ ಬರಪೀಡಿತ ತಾಲೂಕುಗಳ ಸಂಖ್ಯೆ ಏರಿಕೆ ಸಾಧ್ಯತೆ: ಈಶ್ವರ್ ಖಂಡ್ರೆ

0

ಬೆಂಗಳೂರು: ರಾಜ್ಯದಲ್ಲಿ ಈ ಬಾರಿ ಎಲ್‌ ನಿನೋ ಪ್ರಭಾವದಿಂದ ಮಳೆ ಪ್ರಮಾಣ ಕಡಿಮೆಯಾಗಿದ್ದು, ಈ ತಿಂಗಳಾಂತ್ಯದ ವೇಳೆಗೆ 180ರಿಂದ 200 ತಾಲೂಕುಗಳು ಬರಪೀಡಿತ ಎಂದು ಘೋಷಣೆಯಾಗುವ ಸಾಧ್ಯತೆಯಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ್ ಬಿ. ಖಂಡ್ರೆ ಹೇಳಿದ್ದಾರೆ.

ನಗರದಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈಗಾಗಲೇ 101 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದ್ದು, ಶೀಘ್ರವೇ 24 ಬ್ಲಾಕ್‌ಗಳನ್ನು ಬರಪೀಡಿತ ಎಂದು ಘೋಷಿಸಲು ಸಿದ್ಧತೆ ನಡೆದಿದೆ ಎಂದು ತಿಳಿಸಿದರು. ತಿಂಗಳಾಂತ್ಯಕ್ಕೆ ನಡೆಯುವ ಮತ್ತೊಂದು ಗ್ರೌಂಡ್ ಟ್ರೂಥಿಂಗ್‌ನಲ್ಲಿ ಈ ಸಂಖ್ಯೆ ಹೆಚ್ಚಳವಾಗಿ 180ರಿಂದ 200ಕ್ಕೆ ತಲುಪಲಿದೆ ಎಂದರು.

ರಾಜ್ಯದಲ್ಲಿ 2026ರ ಮುಂಗಾರು ಮತ್ತು ಬರ ಪರಿಸ್ಥಿತಿ ಹಾಗೂ ಇತರೆ ನೈಸರ್ಗಿಕ ವಿಕೋಪ ಪರಿಸ್ಥಿತಿಗಳ ಪರಾಮರ್ಶೆ ಮತ್ತು ಸಮರ್ಥ ನಿರ್ವಹಣೆಗೆ ನೀತಿ ನಿರೂಪಣೆ ಹಾಗೂ ಅಗತ್ಯ ಕ್ರಮಗಳ ಬಗ್ಗೆ ನಿರ್ಣಯಿಸಲು ಕಂದಾಯ ಸಚಿವ ಡಾ. ಜಿ. ಪರಮೇಶ್ವರ್ ಅಧ್ಯಕ್ಷತೆಯಲ್ಲಿ ರಚಿಸಿರುವ ಸಂಪುಟದ ಉಪ ಸಮಿತಿಯ ಸದಸ್ಯರಾಗಿರುವುದಾಗಿ ಖಂಡ್ರೆ ತಿಳಿಸಿದರು. ಈ ಸಂಬಂಧ ಇತ್ತೀಚೆಗೆ ನಡೆದ ಸಭೆಯಲ್ಲಿ ಸಮಗ್ರ ಚರ್ಚೆ ನಡೆಸಲಾಗಿದೆ ಎಂದು ಅವರು ಹೇಳಿದರು.

ಎನ್‌ಡಿಆರ್‌ಎಫ್‌ನಿಂದ ಒಣಭೂಮಿ ಮತ್ತು ನೀರಾವರಿ ಭೂಮಿಗೆ ಪರಿಹಾರ ನೀಡಲಾಗುತ್ತದೆಯೆಂದೂ, ಇದರ ಜೊತೆಗೆ ರಾಜ್ಯದಲ್ಲಿ ತೀವ್ರ ಬೆಳೆ ಹಾನಿಯಾಗಿರುವ ಪ್ರದೇಶಗಳಿಗೆ ಹೆಚ್ಚುವರಿ ಪರಿಹಾರ ನೀಡುವ ಬಗ್ಗೆ ಮುಖ್ಯಮಂತ್ರಿಗಳು ನಿರ್ಧಾರ ಕೈಗೊಳ್ಳುವರೆಂದೂ ಸಚಿವರು ತಿಳಿಸಿದರು. ಪ್ರಸ್ತುತ ಬರಪೀಡಿತ ಎಂದು ಘೋಷಿಸಲಾಗಿರುವ 101 ಬ್ಲಾಕ್‌ಗಳಿಗೆ 2,600 ಕೋಟಿ ರೂಪಾಯಿ ನೀಡಬೇಕು ಎಂಬುದು ರಾಜ್ಯದ ಬೇಡಿಕೆಯಾಗಿದೆ ಎಂದು ಅವರು ಹೇಳಿದರು.

ಕರ್ನಾಟಕದ ಬಿಜೆಪಿ ಸಂಸತ್ ಸದಸ್ಯರು ಮತ್ತು ನಾಯಕರು ರಾಜ್ಯದ ಬರ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ರೈತರಿಗೆ ನೆರವಾಗಲು ಕೇಂದ್ರದ ಮೇಲೆ ಒತ್ತಡ ಹೇರಿ ಹಣ ಕೊಡಿಸುವ ಕಾರ್ಯ ಮಾಡಬೇಕೆಂದೂ, ಅದು ಬಿಟ್ಟು ಪಾದಯಾತ್ರೆ ಮಾಡುತ್ತಾ ಕಾಲಹರಣ ಮಾಡುತ್ತಿದ್ದಾರೆಂದೂ ಸಚಿವ ಖಂಡ್ರೆ ಆಕ್ಷೇಪಿಸಿದರು.

ಅಡುಗೆ ಮಾಡದೆ ಡ್ಯಾನ್ಸ್ ಕ್ಲಾಸ್ʼಗೆ ಹೋಗಿದ್ದಕ್ಕೆ ಪತ್ನಿಯನ್ನೇ ಕೊಂದ ಪತಿ! ಆರೋಪಿ ಅರೆಸ್ಟ್

0

ಮುಂಬೈ: ಅಡುಗೆ ಮಾಡದೆ ಡ್ಯಾನ್ಸ್ ಕ್ಲಾಸ್‌ಗೆ ತೆರಳಲು ಮುಂದಾಗಿದ್ದ ಪತ್ನಿಯನ್ನು ಪತಿ ಹತ್ಯೆಗೈದ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದೆ. ಹತ್ಯೆಯಾಗಿರುವುದು ಯಾಮಿನಿ (38) ಎಂಬುವರು. ಆಕೆಯ ಪತಿ ಕೃಷ್ಣ ಲಾಲ್ ಯಾದವ್ (41) ಕೊಲೆ ಆರೋಪಿಯಾಗಿದ್ದು, ಪೊಲೀಸರು ಆತನನ್ನು ಬಂಧಿಸಿದ್ದಾರೆ. ಹೌಸಿಂಗ್ ಸೊಸೈಟಿಯಲ್ಲಿ ಡ್ಯಾನ್ಸ್ ಕ್ಲಾಸ್‌ಗೆ ತೆರಳಲು ಸಿದ್ಧರಾಗಿದ್ದ ಮಹಿಳೆ ಅಡುಗೆ ಮಾಡದೇ ಇದ್ದುದಕ್ಕೆ, ಕುಡಿದು ಬಂದಿದ್ದ ಪತಿ ಜಗಳ ತೆಗೆದು ಹತ್ಯೆಗೈದಿರುವುದಾಗಿ ತಿಳಿದುಬಂದಿದೆ.

ಕೃಷ್ಣ ಲಾಲ್ ಕೆಲಸದಿಂದ ಮನೆಗೆ ಮರಳಿದಾಗ ಯಾಮಿನಿ ಬಳಿ ಅಡುಗೆ ಮಾಡಲು ತಿಳಿಸಿದ್ದ. ಆದರೆ ಯಾಮಿನಿ ಡ್ಯಾನ್ಸ್ ಕ್ಲಾಸ್‌ಗೆ ತೆರಳಬೇಕಿರುವುದಾಗಿ ಅಡುಗೆ ಮಾಡಲು ನಿರಾಕರಿಸಿದ್ದರು. ಇದರಿಂದ ಮದ್ಯದ ಅಮಲಿನಲ್ಲಿದ್ದ ಆರೋಪಿ, ತಮ್ಮ ಇಬ್ಬರು ಮಕ್ಕಳ ಮುಂದೆಯೇ ಯಾಮಿನಿಯ ಕುತ್ತಿಗೆ ಮತ್ತು ಹೊಟ್ಟೆಯ ಮೇಲೆ ಹಲ್ಲೆ ನಡೆಸಿದ್ದ.

ಹಲ್ಲೆಯ ಬಳಿಕ ಕುತ್ತಿಗೆ ಮತ್ತು ಹೊಟ್ಟೆಯಲ್ಲಿ ತೀವ್ರ ನೋವಿದೆ ಎಂದು ಯಾಮಿನಿ ಮಾತ್ರೆ ತರುವಂತೆ ಪತಿಗೆ ಕೇಳಿಕೊಂಡಿದ್ದರು. ಕೃಷ್ಣ ಲಾಲ್ ಮಾತ್ರೆ ತರಲು ತೆರಳಿದಾಗ ಮೆಡಿಕಲ್ ಬಂದ್ ಆಗಿದ್ದ ಕಾರಣ ಖಾಲಿ ಕೈಯಲ್ಲಿ ಹಿಂತಿರುಗಿದ್ದ. ಈ ವೇಳೆಗಾಗಲೇ ಮಹಿಳೆಯ ಹೊಟ್ಟೆ ಊದಿಕೊಂಡು ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ಕೂಡಲೇ ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತಾದರೂ ಚಿಕಿತ್ಸೆ ವೇಳೆ ಆಕೆ ಸಾವನ್ನಪ್ಪಿದ್ದರು.

ಆರಂಭದಲ್ಲಿ ಪೊಲೀಸರು ಆಕಸ್ಮಿಕ ಸಾವಿನ ಪ್ರಕರಣ ದಾಖಲಿಸಿಕೊಂಡು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದರು. ಮರಣೋತ್ತರ ಪರೀಕ್ಷೆ ವರದಿಯಲ್ಲಿ ಕುತ್ತಿಗೆಯ ಮೂಳೆ ಮುರಿತ ಮತ್ತು ಕರುಳಿಗೆ ತೀವ್ರ ಹಾನಿ ಸೇರಿದಂತೆ ಗಂಭೀರ ಗಾಯಗಳಾಗಿರುವುದು ಪತ್ತೆಯಾಗಿತ್ತು. ಬಳಿಕ ಪತಿಯನ್ನು ವಿಚಾರಣೆ ನಡೆಸಿದಾಗ ಆತ ಹಲ್ಲೆ ಮಾಡಿದ್ದನ್ನು ಒಪ್ಪಿಕೊಂಡಿದ್ದಾನೆ. ಇದು ಬಯಲಾಗುತ್ತಿದ್ದಂತೆ ಪತಿಯ ವಿರುದ್ಧ ಕೊಲೆ ಪ್ರಕರಣ ದಾಖಲಿಸಿಕೊಂಡು ಆತನನ್ನು ಬಂಧಿಸಲಾಗಿದೆ.

ಮೊದಲ ಬಾರಿಗೆ ವಿಮಾನ ಹತ್ತಿದ ಮಕ್ಕಳ ಸಂಭ್ರಮ: ಅಂಬೇಡ್ಕರ್ ಜೀವನ ಅರಿಯಲು ಮುಂಬೈ ಪ್ರವಾಸ

0

ಚಿಕ್ಕಬಳ್ಳಾಪುರ: ವಿಮಾನದಲ್ಲಿ ಪ್ರಯಾಣಿಸಬೇಕು ಎಂಬ ಮಕ್ಕಳ ಕನಸು ನನಸಾಗಿದ್ದು, ಸರ್ಕಾರಿ ಶಾಲೆ ಹಾಗೂ ಅನಾಥಾಶ್ರಮದ 200ಕ್ಕೂ ಹೆಚ್ಚು ಮಕ್ಕಳು ಮುಂಬೈ ಪ್ರವಾಸಕ್ಕೆ ತೆರಳಿದ್ದಾರೆ. ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮುಂಬೈಗೆ ಪ್ರಯಾಣಿಸಿರುವ ಮಕ್ಕಳು, ಮೊದಲ ವಿಮಾನಯಾನದ ಸಂಭ್ರಮದಲ್ಲಿ ಮಿಂದೆದ್ದಿದ್ದಾರೆ.

ದೇವನಹಳ್ಳಿ ತಾಲೂಕಿನ ಮಲ್ಲೇಪುರ ಸರ್ಕಾರಿ ಶಾಲೆಯ ಮಕ್ಕಳು ಸೇರಿದಂತೆ ವಿವಿಧ ಸರ್ಕಾರಿ ಶಾಲೆಗಳು ಹಾಗೂ ಅನಾಥಾಶ್ರಮದ ಮಕ್ಕಳು, ಪೋಷಕರು ಮತ್ತು ಶಿಕ್ಷಕರು ಪ್ರವಾಸದಲ್ಲಿ ಭಾಗಿಯಾಗಿದ್ದಾರೆ. ಎರಡು ದಿನಗಳ ಕಾಲ ಮುಂಬೈನ ಪ್ರಮುಖ ಪ್ರವಾಸಿ ತಾಣಗಳನ್ನು ವೀಕ್ಷಿಸಲಿರುವ ಮಕ್ಕಳು, ಹಲವು ಐತಿಹಾಸಿಕ ಸ್ಥಳಗಳಿಗೆ ಭೇಟಿ ನೀಡಲಿದ್ದಾರೆ.

ಪ್ರವಾಸದ ಪ್ರಮುಖ ಉದ್ದೇಶ ಡಾ.ಬಿ.ಆರ್. ಅಂಬೇಡ್ಕರ್ ಅವರ ಜೀವನ ಮತ್ತು ಹೋರಾಟದ ಕುರಿತು ಮಕ್ಕಳಿಗೆ ಅರಿವು ಮೂಡಿಸುವುದಾಗಿದೆ. ಮಕ್ಕಳು ಅಂಬೇಡ್ಕರ್ ಅವರ ಚೈತ್ಯಭೂಮಿ, ನಿವಾಸ ಸೇರಿದಂತೆ ಪ್ರಮುಖ ಸ್ಥಳಗಳಿಗೆ ಭೇಟಿ ನೀಡಿ ಅವರ ಜೀವನ, ಸಾಧನೆ ಹಾಗೂ ಚರಿತ್ರೆಯ ಕುರಿತು ತಿಳಿದುಕೊಳ್ಳಲಿದ್ದಾರೆ.

ದೇವನಹಳ್ಳಿ ಭಾಗದ ಸಮಾಜ ಸೇವಕ ಎಂ.ಪಿ. ಗಿರೀಶ್ ಅವರ ನೇತೃತ್ವದಲ್ಲಿ ಈ ವಿಶೇಷ ಪ್ರವಾಸ ಆಯೋಜಿಸಲಾಗಿದೆ. ಸಾಮಾನ್ಯವಾಗಿ ಪ್ರವಾಸಕ್ಕೆ ಅವಕಾಶ ಸಿಗದ ಮಕ್ಕಳಿಗೂ ಹೊಸ ಅನುಭವ ನೀಡುವ ಉದ್ದೇಶದಿಂದ ಈ ಕಾರ್ಯಕ್ರಮ ರೂಪಿಸಲಾಗಿದೆ.

ಮಕ್ಕಳಿಗೆ ಪ್ರವಾಸ ಕೇವಲ ಮನರಂಜನೆಗೆ ಸೀಮಿತವಾಗದೆ, ಶಿಕ್ಷಣ ಹಾಗೂ ಪ್ರೇರಣೆಯ ಅನುಭವವಾಗಲಿದೆ. ಮೊದಲ ಬಾರಿಗೆ ವಿಮಾನ ಹತ್ತಿದ ಮಕ್ಕಳು ತಮ್ಮ ಸಂತಸವನ್ನು ಹಂಚಿಕೊಂಡಿದ್ದು, ಮುಂಬೈ ಪ್ರವಾಸವನ್ನು ಕಣ್ತುಂಬಿಕೊಳ್ಳಲು ಉತ್ಸುಕರಾಗಿದ್ದಾರೆ ಎಂದು ಪ್ರವಾಸ ಆಯೋಜಕ ಗಿರೀಶ್ ತಿಳಿಸಿದ್ದಾರೆ.

ಸರ್ಕಾರವೇ ಜನರ ಮನೆಬಾಗಿಲಿಗೆ ಬರಲಿದೆ; ಹೊಸ ಪ್ರಜಾಸೇವಾ ಯೋಜನೆ ದೇಶಕ್ಕೆ ಮಾದರಿ: ಡಿಕೆಶಿ

0

ಬಳ್ಳಾರಿ: ಜನರ ಸಮಸ್ಯೆಗಳಿಗೆ ಪರಿಹಾರ ನೀಡಲು ಇನ್ನು ಮುಂದೆ ಜನರು ಸರ್ಕಾರಿ ಕಚೇರಿಗಳತ್ತ ಅಲೆಯಬೇಕಿಲ್ಲ. ಸರ್ಕಾರವೇ ಜನರ ಮನೆಬಾಗಿಲಿಗೆ ತೆರಳಿ ಸೇವೆ ನೀಡಲಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಘೋಷಿಸಿದರು. ವಿಜಯನಗರದಲ್ಲಿ ನೂತನ ಪ್ರಜಾಸೇವಾ ಇಲಾಖೆ ಹಾಗೂ ಆಡಳಿತ ವಿಕೇಂದ್ರೀಕರಣ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಪ್ರಜಾಪ್ರಭುತ್ವದಲ್ಲಿ ಜನರು 136 ಸ್ಥಾನಗಳಲ್ಲಿ ಕಾಂಗ್ರೆಸ್‌ನ್ನು ಗೆಲ್ಲಿಸಿ ಅಧಿಕಾರಕ್ಕೆ ತಂದಿದ್ದಾರೆ. ದೊರೆಗಳ ಆಡಳಿತ ಮುಗಿದಿದ್ದು, ಈಗ ಪ್ರಜೆಗಳ ಆಡಳಿತವಿದೆ. ಹೀಗಾಗಿ ‘ನಾಡಿನ ದೊರೆ’ ಎಂದು ಕರೆಯದೆ ‘ಪ್ರಜಾಸೇವಕ’ ಎಂದು ಕರೆಯುವಂತೆ ಅವರು ಮನವಿ ಮಾಡಿದರು.

ಅಧಿಕಾರಿಗಳು ಕಚೇರಿಯಲ್ಲೇ ಕುಳಿತು ಆಡಳಿತ ನಡೆಸುವ ಬದಲು ಪ್ರತಿ ಶನಿವಾರ ಹಳ್ಳಿ ಹಾಗೂ ಪಂಚಾಯಿತಿ ಮಟ್ಟಕ್ಕೆ ತೆರಳಿ ಜನರ ಸಮಸ್ಯೆಗಳನ್ನು ಆಲಿಸಿ ಪರಿಹರಿಸಬೇಕು ಎಂದು ಸೂಚಿಸಿದರು. ವಿಧಾನಸೌಧ, ಡಿಸಿ ಕಚೇರಿ ಅಥವಾ ಜನಪ್ರತಿನಿಧಿಗಳ ಕಚೇರಿಗಳಿಗೆ ಜನರು ಅಲೆಯುವುದನ್ನು ತಪ್ಪಿಸುವ ಉದ್ದೇಶದಿಂದ ಈ ಯೋಜನೆ ರೂಪಿಸಲಾಗಿದೆ ಎಂದರು.

ಗ್ಯಾರಂಟಿ ಯೋಜನೆಗಳ ಆರಂಭದ ವೇಳೆ ಟೀಕೆಗಳು ವ್ಯಕ್ತವಾಗಿದ್ದರೂ, ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅವುಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿ ದೇಶಕ್ಕೆ ಮಾದರಿಯಾಗಿದೆ. ಇದೇ ರೀತಿ ‘ಪ್ರಜಾಸೇವಾ ಯೋಜನೆ’ಯೂ ದೇಶಕ್ಕೆ ಮಾದರಿಯಾಗಲಿದೆ ಎಂದು ಡಿಕೆಶಿ ವಿಶ್ವಾಸ ವ್ಯಕ್ತಪಡಿಸಿದರು.

‘ಬಾಗಿಲಿಗೆ ಬಂದಿದೆ ನಿಮ್ಮ ಸರ್ಕಾರ, ಸೇವೆಗಿರಲಿ ನಿಮ್ಮ ಸಹಕಾರ’ ಎಂಬ ಘೋಷವಾಕ್ಯದೊಂದಿಗೆ ಅಧಿಕಾರಿಗಳು ಜನರ ಬಳಿಗೆ ತೆರಳಲಿದ್ದಾರೆ. ಅರ್ಜಿ ಸ್ವೀಕರಿಸುವುದರಲ್ಲೇ ಪ್ರಕ್ರಿಯೆ ಮುಗಿಯದೆ, ಪರಿಹಾರ ದೊರೆಯುವವರೆಗೂ ಸರ್ಕಾರ ಬೆಂಬಲವಾಗಿ ನಿಲ್ಲಲಿದೆ. ಬಡವರ ಕಾನೂನು ಹೋರಾಟಕ್ಕೆ ಅಗತ್ಯವಿದ್ದರೆ ಸರ್ಕಾರವೇ ವಕೀಲರನ್ನು ಒದಗಿಸಲಿದೆ ಎಂದು ಹೇಳಿದರು.

ಕಂದಾಯ ಇಲಾಖೆಯ ಹಕ್ಕುಪತ್ರ ಹಾಗೂ ‘ಭೂಮಿ ಗ್ಯಾರಂಟಿ’ ಕಾರ್ಯಕ್ರಮವನ್ನು ಮುಂದುವರಿಸಲಾಗುವುದು ಎಂದ ಅವರು, ಸರ್ಕಾರಿ ಶಾಲೆಗಳ ಮಕ್ಕಳಿಗೆ ಆಂತರಿಕವಾಗಿ ಶೇ.7ರಷ್ಟು ಮೀಸಲಾತಿ ನೀಡುವ ನಿರ್ಧಾರವನ್ನು ಶೀಘ್ರ ಜಾರಿಗೆ ತರಲಾಗುವುದು ಎಂದು ತಿಳಿಸಿದರು.

ಶಿಕ್ಷಕರ ದಿನದ ಅಂಗವಾಗಿ ಶಿಕ್ಷಕರಿಗೆ ಶುಭ ಕೋರಿದ ಡಿಕೆಶಿ, ರಾಜ್ಯದ 4 ಲಕ್ಷಕ್ಕೂ ಅಧಿಕ ಶಿಕ್ಷಕರಿಗೆ ವಿಶೇಷ ಬಿರುದು ಹಾಗೂ ಗೌರವ ನೀಡಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದರು.

ಬರ ಪರಿಸ್ಥಿತಿ ಕುರಿತು ಮಾತನಾಡಿದ ಅವರು, ಈಗಾಗಲೇ ಹಲವು ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಮತ್ತೊಂದು ಹಂತದಲ್ಲಿ 50 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸುವುದಾಗಿ ತಿಳಿಸಿದರು. ಹೆಲಿಕಾಪ್ಟರ್ ಬಳಕೆ ಕುರಿತು ಬಿಜೆಪಿ ನಾಯಕರ ಟೀಕೆಗೆ ಪ್ರತಿಕ್ರಿಯಿಸಿದ ಅವರು, ಜನರ ಕಷ್ಟಕ್ಕೆ ಸ್ಪಂದಿಸಲು ಸರ್ಕಾರ ಕೆಲಸ ಮಾಡುತ್ತಿದೆ ಎಂದರು.

ಪಂಚಾಯಿತಿ ಮಟ್ಟದಲ್ಲಿ ಹೊಸ ನಾಯಕತ್ವ ಬೆಳೆಸುವ ಉದ್ದೇಶದಿಂದ ‘ಭಾರತ್ ಜೋಡೋ ಯುವಕ ಸಂಘ’ಗಳನ್ನು ರಚಿಸಲಾಗುವುದು ಎಂದು ಇದೇ ವೇಳೆ ತಿಳಿಸಿದರು.

ಪರಪ್ಪನ ಅಗ್ರಹಾರ ಜೈಲಿನಲ್ಲಿ ಸಿಬ್ಬಂದಿ ಮೇಲೆ ಕೈದಿಗಳ ಹಲ್ಲೆ; ಕಾರಣ ತಿಳಿದು ಕ್ರಮ ಎಂದ ಪ್ರಿಯಾಂಕ್ ಖರ್ಗೆ

0

ಕಲಬುರಗಿ: ಪರಪ್ಪನ ಅಗ್ರಹಾರ ಜೈಲಿನಲ್ಲಿ ಸಿಬ್ಬಂದಿ ಮೇಲೆ ಕೈದಿಗಳು ಹಲ್ಲೆ ನಡೆಸಿದ ಘಟನೆಗೆ ಸಂಬಂಧಿಸಿದಂತೆ ಸಂಪೂರ್ಣ ಮಾಹಿತಿ ಇನ್ನೂ ಲಭ್ಯವಾಗಿಲ್ಲ. ಹಲ್ಲೆಗೆ ನಿಖರ ಕಾರಣವೇನು ಎಂಬುದನ್ನು ತಿಳಿದುಕೊಂಡ ಬಳಿಕ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಕಲಬುರಗಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜೈಲಿನಲ್ಲಿರುವ ಕೈದಿಗಳಿಗೆ ಕಾಲಕಾಲಕ್ಕೆ ಕೌನ್ಸೆಲಿಂಗ್ ನೀಡಲಾಗುತ್ತಿದೆ. ಕೆಲ ಸಂದರ್ಭಗಳಲ್ಲಿ ಕೈದಿಗಳ ಮಾನಸಿಕ ಸ್ಥಿತಿ ಸಹಜವಾಗಿರುವುದಿಲ್ಲ. ಅಂತಹ ಸಂದರ್ಭದಲ್ಲಿ ಜಗಳ, ಹಲ್ಲೆಯಂತಹ ಘಟನೆಗಳು ನಡೆಯುವ ಸಾಧ್ಯತೆಯಿದೆ ಎಂದು ಹೇಳಿದರು.

ಕೈದಿಗಳು ಕೇಳಿದ್ದನ್ನು ನೀಡದಿದ್ದಾಗಲೂ ಕೆಲವರು ಈ ರೀತಿಯಾಗಿ ವರ್ತಿಸುವ ಸಾಧ್ಯತೆ ಇದೆ. ಹೀಗಾಗಿ ಜೈಲು ಇಲಾಖೆಯ ಸಿಬ್ಬಂದಿಗೆ ಅಗತ್ಯ ತರಬೇತಿ ನೀಡಲಾಗುತ್ತಿದೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದರು.

ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳ ಸಂಖ್ಯೆ ಹೆಚ್ಚಾಗಿದೆ. ಜೈಲು ಸಿಬ್ಬಂದಿ ಹಾಗೂ ಕೈದಿಗಳ ನಡುವೆ ಉಂಟಾಗುವ ಇಂತಹ ಘಟನೆಗಳನ್ನು ನಿಯಂತ್ರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು.

ಇದೇ ವೇಳೆ ಬಿಜೆಪಿ ನಾಯಕ ಬಿ. ಶ್ರೀರಾಮುಲು ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಪ್ರಿಯಾಂಕ್ ಖರ್ಗೆ, “ನಾನು ಜೈಲಿಗೆ ಹೋಗುತ್ತೇನೆ ಎಂದು ರಾಮುಲು ಅವರು ಹೇಳುತ್ತಿದ್ದಾರೆ. ಜೈಲಿಗೆ ಹೋಗಿ ಬಂದವರನ್ನು ನಮ್ಮನ್ನು ಜೈಲಿಗೆ ಕಳುಹಿಸುತ್ತಾರಾ?” ಎಂದು ಪ್ರಶ್ನಿಸಿದರು. ರಾಮುಲು ಅವರು ಮೊದಲು ಕನ್ನಡವನ್ನು ಸರಿಯಾಗಿ ಮಾತನಾಡುವುದನ್ನು ಕಲಿಯಲಿ ಎಂದು ವ್ಯಂಗ್ಯವಾಡಿದರು.

ಬರ ಘೋಷಣೆ ವಿಚಾರವಾಗಿಯೂ ಪ್ರತಿಕ್ರಿಯಿಸಿದ ಅವರು, ಕೇಂದ್ರ ಸರ್ಕಾರ ನಿಗದಿಪಡಿಸಿರುವ ಮಾನದಂಡಗಳ ಪ್ರಕಾರವೇ ಬರ ಘೋಷಣೆ ಮಾಡಬೇಕು. ಆದರೆ ಇದನ್ನು ಬಿಟ್ಟು ಕಲಬುರಗಿಯಲ್ಲಿ ಬಿಜೆಪಿ ಪ್ರತಿಭಟನೆಯ ಹೆಸರಿನಲ್ಲಿ ಗುಂಡಾಗಿರಿ ಮಾಡುತ್ತಿದೆ ಎಂದು ಆರೋಪಿಸಿದರು.

‘ಚಂದ್ರನ ಅಂಗಳ ತಲುಪಿದರೂ ಜಾತಿ ವ್ಯವಸ್ಥೆ ಜೀವಂತ’: ಬಾಂಬೆ ಹೈಕೋರ್ಟ್ ವಿಷಾದ

0

ಮುಂಬೈ: ಭಾರತ ಬಾಹ್ಯಾಕಾಶ ಕ್ಷೇತ್ರದಲ್ಲಿ ಮಹತ್ವದ ಸಾಧನೆಗಳನ್ನು ಮಾಡುತ್ತಾ ಚಂದ್ರನತ್ತ ತಲುಪಿದ್ದರೂ, ಸಮಾಜದಲ್ಲಿ ಜಾತಿ ವ್ಯವಸ್ಥೆಯಂತಹ ಸಾಮಾಜಿಕ ಪಿಡುಗುಗಳು ಇನ್ನೂ ಮುಂದುವರಿದಿರುವುದು ವಿಷಾದಕರ ಎಂದು ಬಾಂಬೆ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಮ್ಯಾನುಯಲ್ ಸ್ಕ್ಯಾವೆಂಜಿಂಗ್ (ಮಲಮೂತ್ರವನ್ನು ಕೈಯಿಂದ ಸ್ವಚ್ಛಗೊಳಿಸುವ ಅಮಾನವೀಯ ಪದ್ಧತಿ) ವೇಳೆ ಮೃತಪಟ್ಟ ಕಾರ್ಮಿಕರ ಕುಟುಂಬಗಳಿಗೆ ಪರಿಹಾರ ನೀಡುವ ವಿಚಾರಣೆ ಸಂದರ್ಭದಲ್ಲಿ ನ್ಯಾಯಮೂರ್ತಿಗಳಾದ ಭಾರತಿ ಡಾಂಗ್ರೆ ಮತ್ತು ಮಂಜುಷಾ ದೇಶಪಾಂಡೆ ಅವರನ್ನೊಳಗೊಂಡ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಅಪಾಯಕಾರಿ ಸ್ವಚ್ಛತಾ ಕಾರ್ಯದಲ್ಲಿ ಮೃತಪಟ್ಟ ಕಾರ್ಮಿಕರ ಕುಟುಂಬಗಳಿಗೆ ಪರಿಹಾರ ನೀಡುವ ಹೊಣೆಗಾರಿಕೆಯನ್ನು ಖಾಸಗಿ ಸಂಸ್ಥೆಗಳು ಮತ್ತು ಉದ್ಯೋಗದಾತರ ಮೇಲೆ ಮಾತ್ರ ಹೊರಿಸುವ ಮಹಾರಾಷ್ಟ್ರ ಸರ್ಕಾರದ ನೀತಿಯ ಒಂದು ಭಾಗವನ್ನು ನ್ಯಾಯಾಲಯ ರದ್ದುಗೊಳಿಸಿದೆ.

ಸರ್ಕಾರಿ ಸಂಸ್ಥೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ಮತ್ತು ಖಾಸಗಿ ಸಂಸ್ಥೆಗಳು ಅಥವಾ ಗುತ್ತಿಗೆದಾರರ ಮೂಲಕ ಕೆಲಸ ಮಾಡುವ ಕಾರ್ಮಿಕರ ನಡುವೆ ಪರಿಹಾರದ ವಿಚಾರದಲ್ಲಿ ತಾರತಮ್ಯ ಮಾಡುವಂತಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. 2013ರ ಮ್ಯಾನುಯಲ್ ಸ್ಕ್ಯಾವೆಂಜರ್ಸ್ ಕಾಯ್ದೆ, ಕಾರ್ಮಿಕರು ಸರ್ಕಾರಿ ಅಥವಾ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂಬ ಆಧಾರದ ಮೇಲೆ ಯಾವುದೇ ಭೇದಭಾವ ಮಾಡುವುದಿಲ್ಲ ಎಂದು ಪೀಠ ಹೇಳಿದೆ.

ಅಪಾಯಕಾರಿ ಸ್ವಚ್ಛತಾ ಕಾರ್ಯದಲ್ಲಿ ಮೃತಪಟ್ಟ ಕಾರ್ಮಿಕರ ಅವಲಂಬಿತರಿಗೆ ರಾಜ್ಯ ಸರ್ಕಾರವೇ ತಕ್ಷಣ ಪರಿಹಾರ ನೀಡಬೇಕೆಂದೂ, ಬಳಿಕ ಅಗತ್ಯವಿದ್ದರೆ ಸಂಬಂಧಪಟ್ಟ ಖಾಸಗಿ ಸಂಸ್ಥೆ ಅಥವಾ ಉದ್ಯೋಗದಾತರಿಂದ ಆ ಮೊತ್ತವನ್ನು ವಸೂಲಿ ಮಾಡಿಕೊಳ್ಳಬಹುದೆಂದೂ ಹೈಕೋರ್ಟ್ ನಿರ್ದೇಶಿಸಿದೆ.

ಮೃತ ಕಾರ್ಮಿಕರ ಕುಟುಂಬಗಳಿಗೆ ತಲಾ 30 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ನ್ಯಾಯಾಲಯ ಆದೇಶಿಸಿದೆ. ಈಗಾಗಲೇ ಐವರು ಖಾಸಗಿ ಸ್ವಚ್ಛತಾ ಕಾರ್ಮಿಕರ ಕುಟುಂಬಗಳಿಗೆ ಈ ಪರಿಹಾರ ನೀಡಲು ಸೂಚಿಸಲಾಗಿದ್ದು, 2013ರ ಕಾಯ್ದೆಯ ವ್ಯಾಪ್ತಿಗೆ ಬರುವ ಅಪಾಯಕಾರಿ ಸ್ವಚ್ಛತಾ ಕಾರ್ಯದಲ್ಲಿ ಮೃತಪಟ್ಟ ಎಲ್ಲರನ್ನೂ ಗುರುತಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಲಾಗಿದೆ. ಈ ಗುರುತಿಸುವಿಕೆ ಪ್ರಕ್ರಿಯೆಯನ್ನು 6 ತಿಂಗಳೊಳಗೆ ಪೂರ್ಣಗೊಳಿಸಬೇಕೆಂದು ಪೀಠ ಆದೇಶಿಸಿದೆ.

ಜಾತಿ ವ್ಯವಸ್ಥೆಯಿಂದ ಸಮಾಜದ ನಿರ್ದಿಷ್ಟ ವರ್ಗದ ಜನರು ತಲತಲಾಂತರಗಳಿಂದ ಮಾನವ ಘನತೆಗೆ ವಿರುದ್ಧವಾದ ಕೆಲಸ ಮಾಡಲು ಒತ್ತಾಯಿಸಲ್ಪಡುತ್ತಿರುವುದು ಕಳವಳಕಾರಿ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಸಂವಿಧಾನ ಜಾರಿಗೆ ಬಂದು 75 ವರ್ಷಗಳಿಗೂ ಹೆಚ್ಚು ಕಾಲ ಕಳೆದಿದ್ದರೂ, ಶತಮಾನಗಳಿಂದ ಸಮಾಜವನ್ನು ಕಾಡುತ್ತಿರುವ ಜಾತಿ ವ್ಯವಸ್ಥೆಯಂತಹ ಸಾಮಾಜಿಕ ಪಿಡುಗಿನಿಂದ ದೇಶ ಇನ್ನೂ ಸಂಪೂರ್ಣವಾಗಿ ಮುಕ್ತವಾಗಿಲ್ಲ ಎಂದು ಪೀಠ ವಿಷಾದಿಸಿದೆ.

8 ವರ್ಷಗಳಾದರೂ ನ್ಯಾಯಕ್ಕಾಗಿ ಹೋರಾಟ ಮುಂದುವರಿದಿದೆ: ಸಂಜೀವ್ ಭಟ್ ಪುತ್ರ-ಪುತ್ರಿ

0

ನವದೆಹಲಿ: ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಅವರ ಬಂಧನಕ್ಕೆ ಎಂಟು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಅವರ ಪುತ್ರಿ ಆಕಾಶಿ ಭಟ್ ಮತ್ತು ಪುತ್ರ ಶಂತನು ಭಟ್ ಅವರು ಸೋಶಿಯಲ್ ಮೀಡಿಯದಲ್ಲಿ ಭಾವುಕ ಸಂದೇಶ ಹಂಚಿಕೊಂಡಿದ್ದು, ತಂದೆಯ ಬಿಡುಗಡೆ ಹಾಗೂ ನ್ಯಾಯಕ್ಕಾಗಿ ತಮ್ಮ ಹೋರಾಟ ಮುಂದುವರಿಯಲಿದೆ ಎಂದು ಹೇಳಿದ್ದಾರೆ.

ಸೆ.5, 2018ರಂದು ತಮ್ಮ ಕುಟುಂಬದ ಪಾಲಿಗೆ ಕರಾಳ ದಿನವಾಗಿತ್ತು. ಅಂದು ತಮ್ಮ ತಂದೆಯನ್ನು ಬಂಧಿಸಿದ ಪರಿಣಾಮ ಕುಟುಂಬವೇ ಛಿದ್ರಗೊಂಡಿತು ಎಂದು ಅವರು ಆರೋಪಿಸಿದ್ದಾರೆ. ಕಳೆದ ಎಂಟು ವರ್ಷಗಳಲ್ಲಿ ಒಟ್ಟು 2,923 ದಿನಗಳನ್ನು ತಂದೆಯಿಂದ ದೂರ ಕಳೆದಿದ್ದೇವೆ. ಕ್ಯಾಲೆಂಡರ್‌ನಲ್ಲಿ ಎಂಟು ವರ್ಷಗಳು ಕಳೆದಿದ್ದರೂ, ಆ ಸೆಪ್ಟೆಂಬರ್ ಬೆಳಗಿನ ಘಟನೆ ತಮ್ಮ ಮನಸ್ಸಿನಲ್ಲಿ ಇನ್ನೂ ಹಾಗೆಯೇ ಉಳಿದಿದೆ ಎಂದು ಅವರು ಹೇಳಿದ್ದಾರೆ.

ತಮ್ಮ ತಂದೆ ಅಧಿಕಾರದ ಎದುರು ಮೌನವಾಗಿರುವ ಬದಲು ಸತ್ಯ ಮತ್ತು ಆತ್ಮಸಾಕ್ಷಿಯ ಪರವಾಗಿ ನಿಲ್ಲುವುದನ್ನು ಆಯ್ಕೆ ಮಾಡಿಕೊಂಡಿದ್ದರು. ಅಧಿಕಾರವನ್ನು ಪ್ರಶ್ನಿಸುವುದು ಅಪಾಯಕಾರಿಯಾಗಿದ್ದರೂ, ತಮ್ಮ ವೃತ್ತಿ, ಗೌರವ, ಸ್ವಾತಂತ್ರ್ಯ ಹಾಗೂ ವೈಯಕ್ತಿಕ ಬದುಕಿನ ಮೇಲಿನ ಪರಿಣಾಮಗಳನ್ನು ಅರಿತಿದ್ದರೂ ಅವರು ತಮ್ಮ ನಿಲುವಿನಿಂದ ಹಿಂದೆ ಸರಿಯಲಿಲ್ಲ ಎಂದು ಪುತ್ರ-ಪುತ್ರಿ ತಿಳಿಸಿದ್ದಾರೆ.

‘ಅದು ಕೇವಲ ಐಪಿಎಸ್ ಅಧಿಕಾರಿ ಅಲ್ಲ, ನಮ್ಮ ತಂದೆ’

ಸಂಜೀವ್ ಭಟ್ ಅವರು ಕೇವಲ ಪತ್ರಿಕೆಗಳಲ್ಲಿ ಕಾಣಿಸಿಕೊಳ್ಳುವ ಹೆಸರು ಅಥವಾ ಐಪಿಎಸ್ ಅಧಿಕಾರಿಯಷ್ಟೇ ಅಲ್ಲ. ಅವರು ತಮ್ಮ ತಂದೆಯಾಗಿದ್ದು, ಸ್ವಂತ ನೆಮ್ಮದಿ, ವೃತ್ತಿ ಮತ್ತು ಸ್ವಾತಂತ್ರ್ಯಕ್ಕಿಂತ ಕೆಲವು ತತ್ವಗಳು ದೊಡ್ಡವು ಎಂಬುದನ್ನು ನಮಗೆ ಕಲಿಸಿದ ವ್ಯಕ್ತಿ ಎಂದು ಅವರು ಹೇಳಿದ್ದಾರೆ.

ರಾಜಕೀಯ ಅಧಿಕಾರ ಮತ್ತು ಆಡಳಿತ ವ್ಯವಸ್ಥೆಯನ್ನು ಪ್ರಶ್ನಿಸಿದ ಕಾರಣ ತಮ್ಮ ತಂದೆ ವೈಯಕ್ತಿಕವಾಗಿ ದೊಡ್ಡ ಬೆಲೆ ತೆತ್ತಿದ್ದಾರೆ. ದ್ವೇಷ ಮತ್ತು ಹಿಂಸೆಗೆ ಒಳಗಾದ ಜನರ ಪರವಾಗಿ ಧ್ವನಿ ಎತ್ತಲು ಅವರು ತಮ್ಮ ವೃತ್ತಿ ಹಾಗೂ ಸ್ವಾತಂತ್ರ್ಯವನ್ನೇ ಪಣಕ್ಕಿಟ್ಟಿದ್ದರು ಎಂದು ಆಕಾಶಿ ಮತ್ತು ಶಂತನು ಭಟ್ ಹೇಳಿದ್ದಾರೆ.

ಎಂಟು ವರ್ಷಗಳ ಅವಧಿಯಲ್ಲಿ ತಮ್ಮ ತಂದೆಯ ಸ್ವಾತಂತ್ರ್ಯ ಕಸಿದುಕೊಳ್ಳಲಾಗಿದೆ, ವೃತ್ತಿ ನಾಶವಾಗಿದೆ ಹಾಗೂ ಕುಟುಂಬದಿಂದ ಅಮೂಲ್ಯ ವರ್ಷಗಳು ದೂರವಾಗಿವೆ. ಆದರೆ ಅವರ ಆತ್ಮಸಾಕ್ಷಿಯನ್ನು ಮಾತ್ರ ಯಾರಿಂದಲೂ ಬಂಧಿಸಲು ಸಾಧ್ಯವಾಗಿಲ್ಲ ಎಂದು ಅವರು ಹೇಳಿದ್ದಾರೆ.

ಸಂಸ್ಥೆಗಳ ಸ್ವಾಯತ್ತತೆ ಕುರಿತು ಪ್ರಶ್ನೆ

ಪ್ರಜಾಪ್ರಭುತ್ವ ಒಂದೇ ಕ್ಷಣದಲ್ಲಿ ನಾಶವಾಗುವುದಿಲ್ಲ. ಅಧಿಕಾರವನ್ನು ನಿಯಂತ್ರಿಸಬೇಕಾದ ಸಂಸ್ಥೆಗಳು ಅದೇ ಅಧಿಕಾರದ ಪ್ರಭಾವಕ್ಕೆ ಒಳಗಾದಾಗ, ನ್ಯಾಯಾಂಗವು ದುರ್ಬಲರ ಕೊನೆಯ ಆಶ್ರಯವಾಗಿ ಕಾರ್ಯನಿರ್ವಹಿಸಲು ವಿಫಲವಾದಾಗ ಹಾಗೂ ಕಾನೂನು ಪ್ರಕ್ರಿಯೆ ದುರುಪಯೋಗಕ್ಕೆ ಒಳಗಾದಾಗ ಪ್ರಜಾಪ್ರಭುತ್ವದ ಅಡಿಪಾಯ ನಿಧಾನವಾಗಿ ದುರ್ಬಲವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ನ್ಯಾಯಾಂಗದ ಸ್ವಾತಂತ್ರ್ಯ, ಸಂಸ್ಥೆಗಳ ಸಮಗ್ರತೆ ಮತ್ತು ಕಾನೂನಿನ ಆಳ್ವಿಕೆ ಕೇವಲ ಸಂವಿಧಾನದ ಪದಗಳಲ್ಲ. ಅವು ಸಾಮಾನ್ಯ ನಾಗರಿಕರನ್ನು ರಾಜ್ಯದ ಅತಿಯಾದ ಅಧಿಕಾರದಿಂದ ರಕ್ಷಿಸುವ ಪ್ರಮುಖ ಕವಚಗಳಾಗಿವೆ. ಈ ಕವಚಗಳನ್ನು ಉಳಿಸಿಕೊಳ್ಳಲು ಜನರು ಪ್ರಶ್ನಿಸುವ ಧೈರ್ಯ ಹೊಂದಿರಬೇಕು ಎಂದು ಅವರು ಹೇಳಿದ್ದಾರೆ.

ಎಂಟು ವರ್ಷಗಳಿಂದ ತಮ್ಮ ತಂದೆಯ ವಿಚಾರದಲ್ಲಿ ಅಧಿಕಾರದ ವ್ಯವಸ್ಥೆ ಮತ್ತು ವಿವಿಧ ಸಂಸ್ಥೆಗಳ ನಡೆಗಳನ್ನು ಗಮನಿಸುತ್ತಿದ್ದೇವೆ. ತಮ್ಮ ತಂದೆಯನ್ನು ಮುರಿಯಲು ವ್ಯವಸ್ಥಿತ ಪ್ರಯತ್ನ ನಡೆದಿದ್ದರೂ, ಅವರು ಇನ್ನೂ ತಮ್ಮ ನಿಲುವಿನಲ್ಲಿ ಅಚಲವಾಗಿ ನಿಂತಿದ್ದಾರೆ ಎಂದು ಪುತ್ರ-ಪುತ್ರಿ ತಿಳಿಸಿದ್ದಾರೆ.

‘ಮೌನಕ್ಕೆ ಬೆಲೆ ತೆರಬೇಕಾಗುತ್ತದೆ’

ಅಧಿಕಾರವನ್ನು ಪ್ರಶ್ನಿಸಲು ಜನರು ಹೆದರಿ ಮೌನವಾಗುವುದು ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ. ಪ್ರಶ್ನಿಸುವ ಮನೋಭಾವ ಕಳೆದುಕೊಂಡರೆ ಸ್ವಾತಂತ್ರ್ಯವೂ ದುರ್ಬಲವಾಗುತ್ತದೆ. ಆದ್ದರಿಂದ ಅನ್ಯಾಯದ ವಿರುದ್ಧ ಧ್ವನಿ ಎತ್ತುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ ಎಂದು ಅವರು ಹೇಳಿದ್ದಾರೆ.

ಇತ್ತೀಚೆಗೆ ದೇಶದ ವಿವಿಧ ಭಾಗಗಳಲ್ಲಿ ಜನರು ಮತ್ತೆ ಪ್ರಶ್ನಿಸಲು ಆರಂಭಿಸಿದ್ದಾರೆ. ಪ್ರಚಾರ, ಏಕಪಕ್ಷೀಯ ನಿರೂಪಣೆ ಹಾಗೂ ಭಯದ ವಾತಾವರಣವನ್ನು ಮೀರಿ ಜನರು ತಮ್ಮದೇ ಆದ ಪ್ರಶ್ನೆಗಳನ್ನು ಕೇಳುವ ಧೈರ್ಯ ತೋರುತ್ತಿದ್ದಾರೆ. ತಲೆತಗ್ಗಿಸಿ ಬದುಕುವಂತೆ ಕಲಿತಿದ್ದ ಹೊಸ ತಲೆಮಾರು ಇದೀಗ ತಲೆ ಎತ್ತಿ ಪ್ರಶ್ನಿಸುವತ್ತ ಹೆಜ್ಜೆ ಇಡುತ್ತಿರುವುದು ಆಶಾದಾಯಕ ಬೆಳವಣಿಗೆ ಎಂದು ಅವರು ಹೇಳಿದ್ದಾರೆ.

ಒಬ್ಬ ವ್ಯಕ್ತಿಯ ಧೈರ್ಯ ದೊಡ್ಡ ಅಧಿಕಾರ ವ್ಯವಸ್ಥೆಯ ಎದುರು ಸಣ್ಣದಾಗಿ ಕಾಣಬಹುದು. ಆದರೆ ಇತಿಹಾಸದಲ್ಲಿ ಅಧಿಕಾರಕ್ಕೆ ಬಗ್ಗದವರ ಹೋರಾಟವೇ ನೆನಪಿನಲ್ಲಿ ಉಳಿಯುತ್ತದೆ. ಒಬ್ಬರ ಧೈರ್ಯ ಲಕ್ಷಾಂತರ ಜನರಲ್ಲಿ ಧೈರ್ಯ ಮೂಡಿಸಬಲ್ಲದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

‘2,923 ದಿನಗಳ ನೋವು; ಹೋರಾಟ ಮಾತ್ರ ನಿಲ್ಲದು’

ಸೆ.5 ಕೇವಲ 2,923 ದಿನಗಳ ವಿಭಜನೆಯ ದಿನವಲ್ಲ; ನ್ಯಾಯಕ್ಕಾಗಿ ಎಂಟು ವರ್ಷಗಳಿಂದ ನಡೆಯುತ್ತಿರುವ ನಿರಂತರ ಹೋರಾಟದ ಸಂಕೇತವಾಗಿದೆ ಎಂದು ಆಕಾಶಿ ಮತ್ತು ಶಂತನು ಭಟ್ ಹೇಳಿದ್ದಾರೆ.

ಸಂಜೀವ್ ಭಟ್ ಅವರು ಅಧಿಕಾರವನ್ನು ಎದುರಿಸಲು ತೋರಿದ ಧೈರ್ಯವನ್ನು ಜನರು ನೆನಪಿಸಿಕೊಳ್ಳಬೇಕು. ನಾಗರಿಕರನ್ನು ರಕ್ಷಿಸಬೇಕಾದ ಸಂಸ್ಥೆಗಳು ಅವರ ವಿರುದ್ಧವೇ ಬಳಸಲ್ಪಟ್ಟರೆ ಏನಾಗಬಹುದು ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ನ್ಯಾಯ ವಿಳಂಬವಾದಾಗ ಅದು ಕೇವಲ ಸಮಯದ ನಷ್ಟವಲ್ಲ; ನ್ಯಾಯಕ್ಕಾಗಿ ಸಮಾಜ ಎಷ್ಟು ಧೈರ್ಯದಿಂದ ಧ್ವನಿ ಎತ್ತುತ್ತದೆ ಎಂಬುದರ ಪರೀಕ್ಷೆಯೂ ಆಗಿದೆ ಎಂದು ಅವರು ಹೇಳಿದ್ದಾರೆ.

ತಮ್ಮ ತಂದೆ ದೇಶದ ಜಾತ್ಯತೀತ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ರಕ್ಷಿಸಲು ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದಾರೆ. ಅವರ ಧ್ವನಿ ಏಕಾಂಗಿಯಾಗದಂತೆ ಎಲ್ಲರೂ ಒಗ್ಗಟ್ಟಾಗಿ ನಿಲ್ಲಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಎಂಟು ವರ್ಷಗಳ ನಂತರವೂ ಸಂಜೀವ್ ಭಟ್ ಅವರು ಧೈರ್ಯ ಕಳೆದುಕೊಂಡಿಲ್ಲ. ತಲೆತಗ್ಗಿಸದೆ, ತಮ್ಮ ಆತ್ಮಸಾಕ್ಷಿಯನ್ನು ಕಾಪಾಡಿಕೊಂಡು, ಹೋರಾಟ ಮುಂದುವರಿಸಿದ್ದಾರೆ. ‘ನಾವು ಕೂಡ ಬಗ್ಗುವುದಿಲ್ಲ, ಮೌನವಾಗುವುದಿಲ್ಲ, ಶರಣಾಗುವುದಿಲ್ಲ. ನ್ಯಾಯಕ್ಕಾಗಿ ನಮ್ಮ ಹೋರಾಟ ಮುಂದುವರಿಯಲಿದೆ’ ಎಂದು ಆಕಾಶಿ ಭಟ್ ಮತ್ತು ಶಂತನು ಭಟ್ ತಿಳಿಸಿದ್ದಾರೆ.

ಶೈನ್ ಶೆಟ್ಟಿ ‘ಶಂಕರಾಭರಣ’ ಬಸ್ ಡ್ರೈವರ್; ಹಾರರ್ ಕಾಮಿಡಿ ಸಿನಿಮಾದ ಟೀಸರ್ ರಿಲೀಸ್, ನವೆಂಬರ್ 20ಕ್ಕೆ ತೆರೆಗೆ

0

ಸ್ಯಾಂಡಲ್‌ವುಡ್‌ನಲ್ಲಿ ವಿಭಿನ್ನ ಕಥಾಹಂದರದ ಸಿನಿಮಾಗಳ ಮೂಲಕ ಗಮನ ಸೆಳೆಯುತ್ತಿರುವ ನಟ ಶೈನ್ ಶೆಟ್ಟಿ ಅಭಿನಯದ ‘ಶಂಕರಾಭರಣ’ ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. ಈ ಹಿಂದೆ ‘ಶಂಕರಾಭರಣ’ ಹೆಸರಿನ ಬಸ್ ಪೋಸ್ಟರ್ ಮೂಲಕ ಸಿನಿಪ್ರೇಕ್ಷಕರ ಗಮನ ಸೆಳೆದಿದ್ದ ಚಿತ್ರತಂಡ, ಇದೀಗ ಟೀಸರ್ ಬಿಡುಗಡೆ ಮಾಡುವ ಮೂಲಕ ಸಿನಿಮಾದ ಪ್ರಮೋಷನ್‌ಗೆ ಚಾಲನೆ ನೀಡಿದೆ. ಸಿನಿಮಾ ನವೆಂಬರ್ 20ರಂದು ತೆರೆಗೆ ಬರಲು ಸಜ್ಜಾಗಿದೆ.

‘ಶಂಕರಾಭರಣ’ ಸಿನಿಮಾದಲ್ಲಿ ಶೈನ್ ಶೆಟ್ಟಿ ಬಸ್ ಚಾಲಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಶಂಕರಾಭರಣ ಎಂಬ ಬಸ್‌ನ ಚಾಲಕನಾಗಿ ಜೀವನ ಸಾಗಿಸುವ ಸಾಮಾನ್ಯ ವ್ಯಕ್ತಿಯ ಪಾತ್ರವನ್ನು ಶೈನ್ ನಿರ್ವಹಿಸಿದ್ದಾರೆ. ಸಿನಿಮಾದಲ್ಲಿ ನಾಯಕ, ನಾಯಕಿಯಷ್ಟೇ ಅಲ್ಲದೆ ಬಸ್ ಕೂಡ ಪ್ರಮುಖ ಪಾತ್ರ ವಹಿಸಲಿದೆ ಎನ್ನುವುದು ಚಿತ್ರದ ವಿಶೇಷತೆ.

ಈ ಸಿನಿಮಾಗೆ ಸುಮಂತ್ ಭಟ್ ಆಕ್ಷನ್ ಕಟ್ ಹೇಳಿದ್ದಾರೆ. ‘ಏಕಂ’ ವೆಬ್ ಸಿರೀಸ್ ಹಾಗೂ ರಾಷ್ಟ್ರ ಪ್ರಶಸ್ತಿ ಪಡೆದ ‘ಮಿಥ್ಯ’ ಫೀಚರ್ ಸಿನಿಮಾ ನಿರ್ದೇಶಿಸಿರುವ ಸುಮಂತ್ ಭಟ್, ಇದೇ ಮೊದಲ ಬಾರಿಗೆ ಔಟ್ ಅಂಡ್ ಔಟ್ ಕಮರ್ಷಿಯಲ್ ಸಿನಿಮಾವೊಂದನ್ನು ನಿರ್ದೇಶಿಸಿದ್ದಾರೆ. ‘ಶಂಕರಾಭರಣ’ ಹಾರರ್ ಕಾಮಿಡಿ ಸಿನಿಮಾವಾಗಿದ್ದು, ಟೀಸರ್ ಚಿತ್ರದ ವಿಭಿನ್ನ ಕಥಾಹಂದರದ ಬಗ್ಗೆ ಕುತೂಹಲ ಮೂಡಿಸಿದೆ.

‘ಶಂಕರಾಭರಣ’ ಸಿನಿಮಾದ ಕಥೆಯನ್ನೂ ಶೈನ್ ಶೆಟ್ಟಿ ಅವರೇ ಬರೆದಿದ್ದಾರೆ. ತಮ್ಮ ಜೀವನದಲ್ಲಿ ಹಾಗೂ ಸುತ್ತಮುತ್ತ ಕಂಡ ಕೆಲವು ಅನುಭವಗಳನ್ನು ಆಧರಿಸಿ ಕಥೆಯನ್ನು ರೂಪಿಸಿರುವುದಾಗಿ ಶೈನ್ ತಿಳಿಸಿದ್ದಾರೆ. ಅವರ ಕಥೆಗೆ ನಿರ್ದೇಶಕ ಸುಮಂತ್ ಭಟ್ ದೃಶ್ಯ ರೂಪ ನೀಡಿದ್ದಾರೆ.

ನಟನೆ ಮತ್ತು ಕಥೆಯ ಜತೆಗೆ ಶೈನ್ ಶೆಟ್ಟಿ ನಿರ್ಮಾಣದ ಜವಾಬ್ದಾರಿಯನ್ನೂ ಹೊತ್ತಿದ್ದಾರೆ. ‘ಶಂಕರಾಭರಣ’ ಸಿನಿಮಾ ಮೂಲಕ ಅವರು ನಿರ್ಮಾಪಕರಾಗಿಯೂ ಚಿತ್ರರಂಗಕ್ಕೆ ಹೆಜ್ಜೆ ಇಡುತ್ತಿದ್ದಾರೆ. ರಂಗಸ್ಥಳ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ದಿವಾಕರ್ ಶೆಟ್ಟಿ ಹಾಗೂ ಶೈನ್ ಶೆಟ್ಟಿ ಜಂಟಿಯಾಗಿ ಸಿನಿಮಾವನ್ನು ನಿರ್ಮಿಸಿದ್ದಾರೆ.

ಕರಾವಳಿ ಭಾಗದಿಂದ ಹಲವು ನಿರ್ಮಾಣ ಸಂಸ್ಥೆಗಳು ಈಗಾಗಲೇ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿವೆ. ರಕ್ಷಿತ್ ಶೆಟ್ಟಿ ಅವರ ಪರಂವ್ಹ ಸ್ಟುಡಿಯೋಸ್, ರಾಜ್ ಬಿ ಶೆಟ್ಟಿ ಅವರ ಲಾಫಿಂಗ್ ಬುದ್ಧ ಹಾಗೂ ರಿಷಬ್ ಶೆಟ್ಟಿ ಫಿಲ್ಮ್ಸ್‌ನಂತಹ ಸಂಸ್ಥೆಗಳ ಸಾಲಿಗೆ ಇದೀಗ ಶೈನ್ ಶೆಟ್ಟಿ ಅವರ ರಂಗಸ್ಥಳ ಸ್ಟುಡಿಯೋಸ್ ಕೂಡ ಸೇರ್ಪಡೆಯಾಗುತ್ತಿದೆ. ಉತ್ತಮ ಸಿನಿಮಾಗಳನ್ನು ನಿರ್ಮಾಣ ಮಾಡುವ ಉದ್ದೇಶ ಹೊಂದಿರುವ ರಂಗಸ್ಥಳ ಸ್ಟುಡಿಯೋಸ್‌ನ ಮೊದಲ ಹೆಜ್ಜೆ ‘ಶಂಕರಾಭರಣ’.

ಸಿನಿಮಾದಲ್ಲಿ ನಾಯಕಿಯಾಗಿ ತನ್ವಿ ರಾವ್ ಅಭಿನಯಿಸಿದ್ದಾರೆ. ಮಲಯಾಳಂನಲ್ಲಿ 17ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ತನ್ವಿ ರಾವ್, ಇದೇ ಮೊದಲ ಬಾರಿಗೆ ಶೈನ್ ಶೆಟ್ಟಿ ಅವರೊಂದಿಗೆ ತೆರೆ ಹಂಚಿಕೊಂಡಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ ಅನೂಪ್ ಸೀಳಿನ್ ಅವರ ಪತ್ನಿ ಕೃತಿ ಕೂಡ ಸಿನಿಮಾದ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ.

‘ಶಂಕರಾಭರಣ’ ಸಿನಿಮಾಕ್ಕೆ ಚರಣ್ ರಾಜ್ ಸಂಗೀತ ಸಂಯೋಜನೆ ಮಾಡಿದ್ದಾರೆ. ವಿಭಿನ್ನ ಟೈಟಲ್, ಬಸ್‌ನ್ನು ಕೇಂದ್ರವಾಗಿಟ್ಟುಕೊಂಡಿರುವ ಕಥೆ ಹಾಗೂ ಹಾರರ್ ಕಾಮಿಡಿ ಅಂಶಗಳೊಂದಿಗೆ ಸಿನಿಮಾ ಮೂಡಿಬಂದಿದ್ದು, ನವೆಂಬರ್ 20ರಂದು ಪ್ರೇಕ್ಷಕರ ಮುಂದೆ ಬರಲಿದೆ.

ಸೌದಿಗೆ ₹47,245 ಕೋಟಿ ಮೌಲ್ಯದ ಬಾಂಬ್‌-ರಕ್ಷಣಾ ಸಲಕರಣೆ ಮಾರಾಟಕ್ಕೆ ಅಮೆರಿಕ ಅಸ್ತು!

0

ವಾಷಿಂಗ್ಟನ್: ಪ್ರಾದೇಶಿಕ ಬೆದರಿಕೆಗಳ ವಿರುದ್ಧ ಸೌದಿ ಅರೇಬಿಯಾದ ರಕ್ಷಣಾ ಸಾಮರ್ಥ್ಯವನ್ನು ಬಲಪಡಿಸುವ ಉದ್ದೇಶದಿಂದ ಸುಮಾರು 5 ಶತಕೋಟಿ ಡಾಲರ್ (47,245 ಕೋಟಿ ರೂಪಾಯಿ) ಮೌಲ್ಯದ ಬಾಂಬ್‌ಗಳು, ಗೈಡೆನ್ಸ್ ಕಿಟ್ಸ್ ಮತ್ತು ಸಂಬಂಧಿತ ರಕ್ಷಣಾ ಸಲಕರಣೆಗಳ ಮಾರಾಟಕ್ಕೆ ಅಮೆರಿಕ ಒಪ್ಪಿಗೆ ನೀಡಿದೆ.

5,004 ಕೆಎಂಯು-572 ಜಂಟಿ ನೇರ ದಾಳಿ ಯುದ್ಧಸಾಮಗ್ರಿ, 5,004 ಬಿಎಲ್‌ಯು-111 (500-ಪೌಂಡ್ ತೂಕದ) ಸಾಮಾನ್ಯ ಬಳಕೆಯ ಬಾಂಬ್‌ಗಳು ಹಾಗೂ 5,000 ಬಿಎಲ್‌ಯು-117 (2,000-ಪೌಂಡ್ ತೂಕದ) ಸಾಮಾನ್ಯ ಬಳಕೆಯ ಬಾಂಬ್‌ಗಳನ್ನು ಸೌದಿ ಅರೇಬಿಯಾ ಅಮೆರಿಕದಿಂದ ಖರೀದಿಸಲಿದೆ.

ಇವುಗಳ ಜೊತೆಗೆ ಫ್ಯೂಸ್ ವ್ಯವಸ್ಥೆಗಳು, ಕಂಟೈನರ್‌ಗಳು, ಬಿಡಿಭಾಗಗಳು, ಲಾಜಿಸ್ಟಿಕ್ಸ್ ಬೆಂಬಲ ಹಾಗೂ ಅಮೆರಿಕ ಸರ್ಕಾರ ಮತ್ತು ಗುತ್ತಿಗೆದಾರರಿಂದ ಎಂಜಿನಿಯರಿಂಗ್ ಮತ್ತು ತಾಂತ್ರಿಕ ನೆರವು ಈ ಪ್ಯಾಕೇಜ್‌ನಲ್ಲಿ ಲಭ್ಯವಾಗಲಿದೆ. ಪ್ರಮುಖ ರಕ್ಷಣಾ ಸಂಸ್ಥೆ ಬೋಯಿಂಗ್ ಈ ಒಪ್ಪಂದದ ಮುಖ್ಯ ಗುತ್ತಿಗೆದಾರ ಸಂಸ್ಥೆಯಾಗಿರಲಿದೆ.

ಈ ಮಾರಾಟ ಸೌದಿ ಅರೇಬಿಯಾದ ವಾಯು ರಕ್ಷಣಾ ಸಾಮರ್ಥ್ಯ ಹೆಚ್ಚಿಸಲಿದ್ದು, ಭದ್ರತೆಯನ್ನು ಬಲಪಡಿಸಲು ಮತ್ತು ಅಮೆರಿಕ ಹಾಗೂ ಇತರ ಕೊಲ್ಲಿ ಪಾಲುದಾರರ ಪಡೆಗಳೊಂದಿಗೆ ಸಮನ್ವಯ ಸುಧಾರಿಸಲು ನೆರವಾಗಲಿದೆ ಎಂದು ಅಮೆರಿಕದ ವಿದೇಶಾಂಗ ಇಲಾಖೆ ತಿಳಿಸಿದೆ.

ಪ್ರಮುಖ ನ್ಯಾಟೋಯೇತರ ಮಿತ್ರರಾಷ್ಟ್ರದ ಭದ್ರತೆಯನ್ನು ಸುಧಾರಿಸುವ ಮೂಲಕ ಈ ಒಪ್ಪಂದ ಅಮೆರಿಕದ ವಿದೇಶಾಂಗ ನೀತಿ ಮತ್ತು ರಾಷ್ಟ್ರೀಯ ಭದ್ರತಾ ಗುರಿಗಳನ್ನು ಬೆಂಬಲಿಸುತ್ತದೆ ಎಂದು ಅಮೆರಿಕ ಸ್ಪಷ್ಟಪಡಿಸಿದೆ. ಈ ಮಾರಾಟದಿಂದ ಈ ಭಾಗದ ಪ್ರಾದೇಶಿಕ ಸೇನಾ ಸಮತೋಲನಕ್ಕೆ ಯಾವುದೇ ಧಕ್ಕೆ ಉಂಟಾಗುವುದಿಲ್ಲ ಹಾಗೂ ಅಮೆರಿಕದ ರಕ್ಷಣಾ ಸನ್ನದ್ಧತೆಯ ಮೇಲೂ ಯಾವುದೇ ಪ್ರತಿಕೂಲ ಪರಿಣಾಮ ಬೀರುವುದಿಲ್ಲ ಎಂದು ಪ್ರಕಟಣೆ ತಿಳಿಸಿದೆ.

ಇರಾನ್ ಪಡೆಗಳು ಮತ್ತು ಯೆಮೆನ್‌ನ ಹೌತಿ ಬಂಡುಕೋರರ ಡ್ರೋನ್ ಹಾಗೂ ಕ್ಷಿಪಣಿ ದಾಳಿಗಳ ಭೀತಿ ಎದುರಿಸುತ್ತಿರುವ ಸೌದಿ ಅರೇಬಿಯಾಗೆ ಈ ರಕ್ಷಣಾ ಒಪ್ಪಂದ ಮಹತ್ವದ ಬಲ ತಂದುಕೊಡಲಿದೆ.

ಬಂದೂಕಿನಿಂದ ಗುಂಡಿಟ್ಟು ಕೊಲೆ: 8 ವರ್ಷಗಳ ಬಳಿಕ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಹೈಕೋರ್ಟ್

0

ಬೆಂಗಳೂರು: ಜಮೀನಿನ ಖಾತಾ ಬದಲಾವಣೆ ವಿಚಾರದ ಹಳೆಯ ವೈಷಮ್ಯದಿಂದ ಕಾಫಿ ತೋಟದ ರಸ್ತೆಯಲ್ಲಿ ವ್ಯಕ್ತಿಯೊಬ್ಬರನ್ನು ಬಂದೂಕಿನಿಂದ ಗುಂಡಿಕ್ಕಿ ಕೊಂದ ಪ್ರಕರಣದಲ್ಲಿ ಆರೋಪಿಗೆ ಹೈಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ. ಚೆರಂಡ ಮೋಹನ್‌ಗೆ ಜೀವಾವಧಿ ಜೈಲು ಶಿಕ್ಷೆ ಜೊತೆಗೆ 1.10 ಲಕ್ಷ ರೂಪಾಯಿ ದಂಡ ವಿಧಿಸಿರುವ ನ್ಯಾಯಪೀಠ, ವಿಚಾರಣಾ ನ್ಯಾಯಾಲಯದ ಖುಲಾಸೆ ಆದೇಶವನ್ನು ರದ್ದುಗೊಳಿಸಿದೆ.

ವಿಚಾರಣಾ ನ್ಯಾಯಾಲಯದ ಖುಲಾಸೆ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಕ್ರಿಮಿನಲ್ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೆಚ್.ಪಿ. ಸಂದೇಶ್ ಹಾಗೂ ನ್ಯಾಯಮೂರ್ತಿ ಬಿ. ಪ್ರಮೋದ್ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿದೆ.

ಪ್ರಕರಣದ ಪ್ರಮುಖ ಸಾಕ್ಷ್ಯವಾಗಿ ಮೃತರ ಪತ್ನಿಯ ಹೇಳಿಕೆಯನ್ನು ನ್ಯಾಯಪೀಠ ಪರಿಗಣಿಸಿದೆ. ಗುಂಡಿನ ಸದ್ದು ಕೇಳಿ ಸ್ಥಳಕ್ಕೆ ಓಡಿಬಂದಿದ್ದ ಮೃತರ ಪತ್ನಿ, ಕೈಯಲ್ಲಿ ಬಂದೂಕು ಹಿಡಿದು ಬರುತ್ತಿದ್ದ ಆರೋಪಿಯನ್ನು ಕಂಡಿದ್ದರು. ಈ ವೇಳೆ ಆರೋಪಿ, “ನಿನ್ನ ಗಂಡನಿಗೆ ಬುದ್ಧಿ ಕಲಿಸಿದ್ದೇನೆ” ಎಂದು ಹೇಳಿದ್ದಾಗಿ ಅವರು ಸಾಕ್ಷ್ಯ ನೀಡಿದ್ದರು. ಈ ಹೇಳಿಕೆ ಭಾರತೀಯ ಸಾಕ್ಷ್ಯ ಕಾಯ್ದೆಯ ಸೆಕ್ಷನ್ 6ರ ಅಡಿಯಲ್ಲಿ ಪ್ರಮುಖ ಸಾಕ್ಷ್ಯವಾಗಿದೆ ಎಂದು ನ್ಯಾಯಪೀಠ ತಿಳಿಸಿದೆ.

ಅಲ್ಲದೆ ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಹಾಗೂ ಬ್ಯಾಲಿಸ್ಟಿಕ್ ತಜ್ಞರ ಸಾಕ್ಷ್ಯವನ್ನೂ ಪೀಠ ಪರಿಗಣಿಸಿದೆ. ಮೃತರ ದೇಹದಲ್ಲಿದ್ದ ರಂಧ್ರಗಳು ಹಾಗೂ ಸ್ಥಳದಲ್ಲಿ ಪತ್ತೆಯಾದ ಗುಂಡುಗಳು ಆರೋಪಿಯ ಬಂದೂಕಿನಿಂದಲೇ ಹಾರಿಸಲ್ಪಟ್ಟಿದ್ದವು ಎಂಬುದು ಸಾಕ್ಷ್ಯಗಳಿಂದ ಸಾಬೀತಾಗಿದೆ ಎಂದು ನ್ಯಾಯಪೀಠ ಹೇಳಿದೆ.

ಕೃತ್ಯ ಎಸಗಿದ ಬಳಿಕ ಆರೋಪಿಯೇ ಬಂದೂಕಿನೊಂದಿಗೆ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದ. ಆತನ ಮಾಹಿತಿ ಆಧರಿಸಿ ಗುಂಡಿನ ಖಾಲಿ ಕವರ್‌ಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಇಷ್ಟೆಲ್ಲ ಸಾಕ್ಷ್ಯಾಧಾರಗಳಿದ್ದರೂ ವಿಚಾರಣಾ ನ್ಯಾಯಾಲಯ ಅವುಗಳನ್ನು ಸೂಕ್ತವಾಗಿ ಪರಿಗಣಿಸದೆ ಆರೋಪಿಯನ್ನು ಖುಲಾಸೆಗೊಳಿಸಿದ್ದು ತಪ್ಪು ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಚೆರಂಡ ಮೋಹನ್ ಅವರನ್ನು ಐಪಿಸಿ ಸೆಕ್ಷನ್ 302 ಹಾಗೂ ಭಾರತೀಯ ಶಸ್ತ್ರಾಸ್ತ್ರ ಕಾಯ್ದೆಯ ಸೆಕ್ಷನ್ 27ರ ಅಡಿಯಲ್ಲಿ ತಪ್ಪಿತಸ್ಥರೆಂದು ಘೋಷಿಸಲಾಗಿದೆ. ಜೀವಾವಧಿ ಶಿಕ್ಷೆ ಜೊತೆಗೆ 1.10 ಲಕ್ಷ ರೂಪಾಯಿ ದಂಡ ವಿಧಿಸಿರುವ ನ್ಯಾಯಪೀಠ, ದಂಡದ ಮೊತ್ತದಲ್ಲಿ 90 ಸಾವಿರ ರೂಪಾಯಿಯನ್ನು ಮೃತರ ಪತ್ನಿಗೆ ಪರಿಹಾರವಾಗಿ ನೀಡುವಂತೆ ಆದೇಶಿಸಿದೆ.