Home Blog

‘ಗ್ಯಾರಂಟಿ ಹೆಸರಲ್ಲಿ ಜನರ ಜೇಬಿಗೆ ಕತ್ತರಿ’: ರಾಜ್ಯ ಸರ್ಕಾರದ ವಿರುದ್ಧ ರಮೇಶ್ ಜಿಗಜಿಣಗಿ ಕಿಡಿ

ವಿಜಯಪುರ: ಕಾಂಗ್ರೆಸ್ ಸರ್ಕಾರದ ಮೂರು ವರ್ಷದ ಆಡಳಿತದ ವಿರುದ್ಧ ಕೇಂದ್ರ ಸಚಿವ ರಮೇಶ್ ಜಿಗಜಿಣಗಿ ತೀವ್ರ ವಾಗ್ದಾಳಿ ನಡೆಸಿದ್ದು, ರಾಜ್ಯದಲ್ಲಿ ಅಭಿವೃದ್ಧಿಗಿಂತ ಭ್ರಷ್ಟಾಚಾರ ಮತ್ತು ಕುರ್ಚಿಗಾಗಿ ರಾಜಕಾರಣವೇ ಹೆಚ್ಚಾಗಿದೆ ಎಂದು ಆರೋಪಿಸಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಮಹಿಳೆಯರಿಗೆ ಗ್ಯಾರಂಟಿ ಕೊಡುತ್ತೇವೆ ಎಂದು ಹೇಳಿ, ಅದೇ ಹಣವನ್ನು ಕುಟುಂಬದ ಗಂಡಸರ ಜೇಬಿನಿಂದ ವಸೂಲಿ ಮಾಡಲಾಗುತ್ತಿದೆ. ಸಾಮರ್ಥ್ಯ ಇದ್ದರೆ ಗ್ಯಾರಂಟಿ ಕೊಡಿ, ಇಲ್ಲದಿದ್ದರೆ ಸುಳ್ಳು ಭರವಸೆ ಬೇಡ’ ಎಂದು ಟೀಕಿಸಿದರು.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಮಹಿಳೆಯರಿಗೆ ಸುರಕ್ಷತೆ ಇಲ್ಲದಂತಾಗಿದೆ. ಕಳ್ಳತನ, ದರೋಡೆ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಅವರು ಆರೋಪಿಸಿದರು.

‘ಮೂರು ವರ್ಷಗಳಲ್ಲಿ ಕಾಂಗ್ರೆಸ್ ಸರ್ಕಾರ ಮಾಡಿದ ಸಾಧನೆ ಶೂನ್ಯ. ಶಾಸಕರಿಗೆ ಅನುದಾನ ಕೊಟ್ಟಿಲ್ಲ. ಪ್ರಧಾನಿ ಮೋದಿ ಮಂಜೂರು ಮಾಡಿದ ರಸ್ತೆಗಳಿಗೆ ಇವರು ಭೂಮಿಪೂಜೆ ಮಾಡುತ್ತಿದ್ದಾರೆ’ ಎಂದು ವ್ಯಂಗ್ಯವಾಡಿದರು.

ಇನ್ನೂ ಮೂರು ವರ್ಷಗಳಲ್ಲಿ ಸರ್ಕಾರ ಮಾಡಿರುವುದು ಅಭಿವೃದ್ಧಿಯಲ್ಲ, ಕುರ್ಚಿಗಾಗಿ ಪರಸ್ಪರ ಗುದ್ದಾಟ ಮಾತ್ರ ಎಂದು ಹೇಳಿದ ಜಿಗಜಿಣಗಿ, ಸಿಎಂ ಸಿದ್ದರಾಮಯ್ಯ ವಿರುದ್ಧವೂ ತೀವ್ರ ವಾಗ್ದಾಳಿ ನಡೆಸಿದರು.

ಮಳೆ-ಗಾಳಿಗೆ ಬೆಳೆ ನಾಶ, ಮನೆಗಳಿಗೆ ಹಾನಿ: ದಾವಣಗೆರೆಯಲ್ಲಿ ಪ್ರಕೃತಿ ಆರ್ಭಟ

ದಾವಣಗೆರೆ: ಜಿಲ್ಲೆಯ ಹಲವು ಭಾಗಗಳಲ್ಲಿ ಸುರಿದ ಭಾರೀ ಮಳೆ ಮತ್ತು ಗಾಳಿಯಿಂದ ರೈತರು ಹಾಗೂ ಸಾರ್ವಜನಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಪಪ್ಪಾಯ ಬೆಳೆ ನೆಲಕಚ್ಚಿದರೆ, ಮರ ಬಿದ್ದು ಮನೆ ಹಾಗೂ ಶಾಲಾ ಕಟ್ಟಡಗಳಿಗೆ ಹಾನಿಯಾಗಿದೆ.

ಜಗಳೂರು ತಾಲೂಕಿನ ಸಿದ್ದಮ್ಮನಹಳ್ಳಿ ಮತ್ತು ದೊಣ್ಣೆಹಳ್ಳಿಯಲ್ಲಿ ರೈತರಾದ ತಿಪ್ಪೇಸ್ವಾಮಿ ಹಾಗೂ ಬಸಪ್ಪ ಅವರಿಗೆ ಸೇರಿದ ಎರಡು ಎಕರೆ ಪಪ್ಪಾಯ ತೋಟ ಸಂಪೂರ್ಣ ಹಾನಿಗೊಳಗಾಗಿದೆ. ಗಾಳಿ-ಮಳೆಯ ಅಬ್ಬರಕ್ಕೆ ಗಿಡಗಳು ನೆಲಕ್ಕುರುಳಿದ್ದು, ರೈತರು ಕಂಗಾಲಾಗಿದ್ದಾರೆ.

ಉದ್ದಘಟ್ಟ ಗ್ರಾಮದಲ್ಲಿ ಸರ್ಕಾರಿ ಶಾಲೆಯ ಕೊಠಡಿ ಮೇಲೆ ಬೃಹತ್ ಮರ ಬಿದ್ದ ಪರಿಣಾಮ ಶೀಟ್‌ಗಳು ಒಡೆದು ಹೋಗಿವೆ. ಅಲ್ಲದೆ ಶಾಲೆಯ ಅಡುಗೆ ಕೊಠಡಿ ಗೋಡೆಯಲ್ಲೂ ಬಿರುಕು ಕಾಣಿಸಿಕೊಂಡಿದೆ.

ಭರಮಸಮುದ್ರದಲ್ಲಿ ಮರ ಬಿದ್ದು ಮನೆಯೊಂದು ಜಖಂಗೊಂಡಿದ್ದು, ಹುಚ್ಚವ್ವನಹಳ್ಳಿ ಗ್ರಾಮದಲ್ಲಿ ಸಿಡಿಲು ಬಡಿದು ಆಕಳೊಂದು ಸಾವನ್ನಪ್ಪಿದೆ.

ಕೆಲ ಮನೆಗಳಿಗೆ ಮಳೆ ನೀರು ನುಗ್ಗಿದ ಪರಿಣಾಮ ಜನರು ನೀರು ಹೊರಹಾಕಲು ಪರದಾಡಿದರು. ಅಕಾಲಿಕ ಮಳೆಯಿಂದ ರೈತರು ಸರ್ಕಾರ ಪರಿಹಾರ ನೀಡುವಂತೆ ಆಗ್ರಹಿಸಿದ್ದಾರೆ.

8 ಆಸ್ಪತ್ರೆಗಳಲ್ಲಿ ಸಿಗದ ಬೆಡ್: 24 ಗಂಟೆ ಆಂಬುಲೆನ್ಸ್‌ನಲ್ಲೇ ನರಳಾಡಿದ ಗಾಯಾಳು

ಚಿಕ್ಕಮಗಳೂರು: ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಯುವಕನೊಬ್ಬನಿಗೆ ಆಸ್ಪತ್ರೆಗಳಲ್ಲಿ ಬೆಡ್ ಸಿಗದೆ, ಒಂದು ದಿನಪೂರ್ತಿ ಆಂಬುಲೆನ್ಸ್‌ನಲ್ಲೇ ಅಲೆದಾಡಬೇಕಾದ ಮನಕಲಕುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.

ಅರೆನೂರು ಸಮೀಪ ಬೈಕ್ ಅಪಘಾತದಲ್ಲಿ ಗಾಯಗೊಂಡಿದ್ದ ರವಿ ಎಂಬ ಯುವಕನನ್ನು ಮೊದಲು ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ವೈದ್ಯರು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ರೆಫರ್ ಮಾಡಿದ್ದರು.

ಆದರೆ ಮಂಗಳೂರಿನ ಹಲವು ಖಾಸಗಿ ಆಸ್ಪತ್ರೆಗಳಲ್ಲಿ ಬೆಡ್ ಇಲ್ಲ, ಸರ್ಜನ್ ಲಭ್ಯವಿಲ್ಲ ಎಂಬ ಕಾರಣ ನೀಡಿ ಚಿಕಿತ್ಸೆ ನಿರಾಕರಿಸಲಾಗಿದೆ ಎನ್ನಲಾಗಿದೆ. ಮತ್ತೊಂದು ಆಸ್ಪತ್ರೆಯಲ್ಲಿ 80 ಸಾವಿರ ರೂ. ಮುಂಗಡ ಹಣ ಕೇಳಲಾಗಿದೆ.

ಬಡ ಕೂಲಿ ಕಾರ್ಮಿಕ ಕುಟುಂಬಕ್ಕೆ ಹಣ ಒದಗಿಸಲು ಸಾಧ್ಯವಾಗದೇ, ಗಾಯಾಳುವನ್ನು ಮತ್ತೆ ಆಲ್ದೂರು ಗ್ರಾಮಕ್ಕೆ ಕರೆತಂದು ರಸ್ತೆ ಬದಿಯಲ್ಲಿ ಆಂಬುಲೆನ್ಸ್‌ನಲ್ಲೇ ನಿಲ್ಲಿಸಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು.

ಪೋಷಕರು ಮಗನಿಗಾಗಿ ಅಸಹಾಯಕರಾಗಿ ಕಣ್ಣೀರು ಹಾಕುತ್ತಿದ್ದ ದೃಶ್ಯ ಸ್ಥಳೀಯರ ಮನಕಲಕಿದೆ. ಬಳಿಕ ಗ್ರಾಮಸ್ಥರ ಸಲಹೆ ಮೇರೆಗೆ ಯುವಕನನ್ನು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಚಿಕ್ಕಮಗಳೂರಿನಲ್ಲಿ ವೈದ್ಯಕೀಯ ಕಾಲೇಜು ಇದ್ದರೂ ಗಂಭೀರ ರೋಗಿಗಳಿಗೆ ಚಿಕಿತ್ಸೆ ಸಿಗದಿರುವುದು ಆರೋಗ್ಯ ವ್ಯವಸ್ಥೆಯ ವೈಫಲ್ಯ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಾಲಯ್ಯ ಎದುರು ಮಂಚು ಮನೋಜ್ ಖಡಕ್ ವಿಲನ್: ಟಾಲಿವುಡ್‌ನಲ್ಲಿ ಹೈವೋಲ್ಟೇಜ್ ಕಾಂಬಿನೇಷನ್

ಹೈದರಾಬಾದ್: ನಂದಮೂರಿ ಬಾಲಕೃಷ್ಣ ಅವರ 111ನೇ ಸಿನಿಮಾದ ಬಗ್ಗೆ ಭಾರೀ ನಿರೀಕ್ಷೆ ಹುಟ್ಟಿಕೊಂಡಿರುವ ಬೆನ್ನಲ್ಲೇ, ಚಿತ್ರತಂಡ ಮತ್ತೊಂದು ದೊಡ್ಡ ಅಪ್‌ಡೇಟ್ ನೀಡಿದೆ. ನಟ ಮಂಚು ಮನೋಜ್ ಈ ಸಿನಿಮಾದಲ್ಲಿ ಮುಖ್ಯ ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಗೋಪಿಚಂದ್ ಮಲಿನೇನಿ ನಿರ್ದೇಶನದ ಈ ಬೃಹತ್ ಆಕ್ಷನ್ ಚಿತ್ರವನ್ನು ವೆಂಕಟ ಸತೀಶ್ ಕಿಲಾರು ನಿರ್ಮಿಸುತ್ತಿದ್ದು, ಮಂಚು ಮನೋಜ್ ಪಾತ್ರಕ್ಕೆ ವಿಶೇಷ ತೂಕ ನೀಡಲಾಗಿದೆ ಎನ್ನಲಾಗಿದೆ. ಚಿತ್ರತಂಡದ ಪ್ರಕಾರ, ಮನೋಜ್ ಪಾತ್ರ ಅತ್ಯಂತ ಕ್ರೂರ ಮತ್ತು ಪವರ್‌ಫುಲ್ ಆಗಿದ್ದು, ಬಾಲಯ್ಯ ಜೊತೆಗಿನ ಅವರ ಮುಖಾಮುಖಿ ಸಿನಿಮಾದ ಹೈಲೈಟ್ ಆಗಲಿದೆ.

ಜನ್ಮದಿನದಂದು ಈ ಘೋಷಣೆ ಹೊರಬಿದ್ದ ಹಿನ್ನೆಲೆ ಮಂಚು ಮನೋಜ್ ಅಭಿಮಾನಿಗಳ ಸಂಭ್ರಮ ಮತ್ತಷ್ಟು ಹೆಚ್ಚಾಗಿದೆ. ಈ ಪಾತ್ರಕ್ಕಾಗಿ ಮನೋಜ್ ದೇಹವನ್ನು ಮತ್ತಷ್ಟು ಫಿಟ್ ಮಾಡಿಕೊಳ್ಳುತ್ತಿದ್ದು, ಶೀಘ್ರದಲ್ಲೇ ಶೂಟಿಂಗ್‌ಗೆ ಜಾಯಿನ್ ಆಗಲಿದ್ದಾರೆ.

ಬಾಲಕೃಷ್ಣ ಮತ್ತು ಮಂಚು ಮನೋಜ್ ನಡುವೆ ಈಗಾಗಲೇ ಉತ್ತಮ ಸ್ನೇಹ ಸಂಬಂಧವಿದೆ. ‘ಊ ಕೊಡತಾರಾ ಉಲಿಕ್ಕಿ ಪಡತಾರಾ’ ಚಿತ್ರದಲ್ಲಿ ಬಾಲಯ್ಯ ವಿಶೇಷ ಪಾತ್ರದಲ್ಲಿ ನಟಿಸಿ ಮನೋಜ್‌ಗೆ ಬೆಂಬಲ ನೀಡಿದ್ದರು. ಇದೀಗ ಇಬ್ಬರೂ ಎದುರುಬದಿಯ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿರುವುದು ಚಿತ್ರಕ್ಕೆ ಮತ್ತಷ್ಟು ಕ್ರೇಜ್ ತಂದಿದೆ.

ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಮಂಚು ಮನೋಜ್, ‘ಬಾಲಯ್ಯ ಅವರೊಂದಿಗೆ ನಟಿಸುವುದು ನನ್ನ ಕನಸಾಗಿತ್ತು. ಈ ಅವಕಾಶ ನನ್ನ ಜೀವನದ ಅತ್ಯಂತ ವಿಶೇಷ ಗಿಫ್ಟ್’ ಎಂದು ಭಾವುಕರಾಗಿ ಬರೆದುಕೊಂಡಿದ್ದಾರೆ.

ಇತ್ತೀಚೆಗೆ ನೆಗೆಟಿವ್ ಪಾತ್ರಗಳ ಮೂಲಕ ಹೊಸ ಇಮೇಜ್ ಪಡೆದುಕೊಂಡಿರುವ ಮನೋಜ್, ಇದೀಗ ಮತ್ತೊಮ್ಮೆ ದೊಡ್ಡ ಮಟ್ಟದ ಖಳನಾಯಕನಾಗಿ ಮಿಂಚಲು ಸಜ್ಜಾಗಿದ್ದಾರೆ.

ಫ್ಯಾನ್ಸ್ ಮೇಲೆ ರೇಗಿದ ಸೆಕ್ಯೂರಿಟಿ: ಎಲ್ಲರೆದುರೇ ಸಿಬ್ಬಂದಿಗೆ ಬುದ್ಧಿ ಹೇಳಿದ ಜೂನಿಯರ್ ಎನ್ಟಿಆರ್

ಹೈದರಾಬಾದ್: ಅಭಿಮಾನಿಗಳ ಮೇಲೆ ದುರ್ವರ್ತನೆ ತೋರಿದ ತಮ್ಮ ಭದ್ರತಾ ಸಿಬ್ಬಂದಿಯನ್ನು ಜೂನಿಯರ್ ಎನ್ಟಿಆರ್ ಸಾರ್ವಜನಿಕವಾಗಿಯೇ ತರಾಟೆಗೆ ತೆಗೆದುಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.

ಜನ್ಮದಿನದ ಪ್ರಯುಕ್ತ ಮಂಗಳವಾರ ರಾತ್ರಿ ಜೂನಿಯರ್ ಎನ್ಟಿಆರ್ ನಿವಾಸದ ಮುಂದೆ ನೂರಾರು ಅಭಿಮಾನಿಗಳು ಜಮಾಯಿಸಿದ್ದರು. ಮಧ್ಯರಾತ್ರಿ ಮನೆಯ ಹೊರಗೆ ಬಂದ ತಾರಕ್, ಬ್ಯಾರಿಕೇಡ್ ಹಿಂದಿನಿಂದಲೇ ಅಭಿಮಾನಿಗಳಿಗೆ ಕೈಬೀಸಿ ಶುಭಾಶಯ ಸ್ವೀಕರಿಸಿದರು.

ಈ ವೇಳೆ ಕೆಲ ಅಭಿಮಾನಿಗಳು ಮುಂದೆ ಬರಲು ಯತ್ನಿಸಿದಾಗ, ಸೆಕ್ಯೂರಿಟಿ ಸಿಬ್ಬಂದಿ ಅವರನ್ನು ಬಲವಂತವಾಗಿ ಹಿಂದಕ್ಕೆ ತಳ್ಳಲು ಮತ್ತು ಗದರಿಸಲು ಆರಂಭಿಸಿದರು. ಅಭಿಮಾನಿಗಳೊಂದಿಗೆ ಅಸಭ್ಯವಾಗಿ ವರ್ತಿಸುತ್ತಿರುವುದು ಕಂಡ ತಾರಕ್ ತಕ್ಷಣವೇ ಮಧ್ಯಪ್ರವೇಶಿಸಿದ್ದಾರೆ.

ಮುಖ್ಯ ಭದ್ರತಾ ಸಿಬ್ಬಂದಿಯನ್ನು ಕರೆದು, ‘ನೀವೇ ಅನಗತ್ಯ ಗೊಂದಲ ಸೃಷ್ಟಿಸುತ್ತಿದ್ದೀರಿ’ ಎಂದು ಖಡಕ್ ಆಗಿ ಕ್ಲಾಸ್ ತೆಗೆದುಕೊಂಡಿದ್ದಾರೆ. ನಟನ ಈ ನಡೆ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದ್ದು, ‘ತಾರಕ್ ಯಾವತ್ತೂ ಫ್ಯಾನ್ಸ್ ಪರ’ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಕೊಂಡಾಡಲಾಗುತ್ತಿದೆ.

ಇದೇ ವೇಳೆ ಪ್ರಶಾಂತ್ ನೀಲ್ ನಿರ್ದೇಶನದ ‘ಡ್ರ್ಯಾಗನ್’ ಚಿತ್ರದ ಗ್ಲಿಂಪ್ಸ್ ಕೂಡ ಬಿಡುಗಡೆಗೊಂಡಿದ್ದು, ಅದರಲ್ಲಿ ತಾರಕ್ ಅವರ ರಗಡ್ ಲುಕ್ ಸಖತ್ ವೈರಲ್ ಆಗಿದೆ. ಅಫೀಮು ದಂಧೆಯ ಹಿನ್ನೆಲೆಯ ಕಥೆ ಹೊಂದಿರುವ ಈ ಸಿನಿಮಾ ಐದು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

ಮೆಲೋನಿಗೆ ‘ಮೆಲೋಡಿ’ ಚಾಕೊಲೇಟ್ ಉಡುಗೊರೆ ಕೊಟ್ಟ ಮೋದಿ! ವಿಡಿಯೋ ವೈರಲ್

ರೋಮ್: ಪ್ರಧಾನಿ ನರೇಂದ್ರ ಮೋದಿ ಇಟಲಿಯ ರಾಜಧಾನಿ ರೋಮ್‌ಗೆ ಭೇಟಿ ನೀಡಿದ ವೇಳೆ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿಗೆ ಭಾರತದ ಪ್ರಸಿದ್ಧ ‘ಮೆಲೋಡಿ’ ಚಾಕೋಲೇಟ್ ಉಡುಗೊರೆಯಾಗಿ ನೀಡಿ ಗಮನ ಸೆಳೆದಿದ್ದಾರೆ. ಈ ಸಂದರ್ಭದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.

ಪ್ರಧಾನಿ ಮೋದಿ ಮತ್ತು ಜಾರ್ಜಿಯಾ ಮೆಲೋನಿ ನಡುವಿನ ಸ್ನೇಹವನ್ನು ಸಾಮಾಜಿಕ ಜಾಲತಾಣ ಬಳಕೆದಾರರು ‘ಮೆಲೋಡಿ’ ಎಂದು ಕರೆಯುತ್ತಿದ್ದು, ಇದೀಗ ಅದೇ ಹೆಸರಿನ ಚಾಕೋಲೇಟ್ ಉಡುಗೊರೆ ನೀಡುವ ಮೂಲಕ ಮೋದಿ ಮತ್ತೊಮ್ಮೆ ನೆಟ್ಟಿಗರ ಗಮನ ಸೆಳೆದಿದ್ದಾರೆ.

ಈ ವೀಡಿಯೋವನ್ನು ಜಾರ್ಜಿಯಾ ಮೆಲೋನಿ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದು, ಉಡುಗೊರೆಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. ಸದ್ಯ ಈ ವೀಡಿಯೋ ಲಕ್ಷಾಂತರ ಮಂದಿಯ ಗಮನ ಸೆಳೆದಿದ್ದು, ಸುಮಾರು 19.6 ಮಿಲಿಯನ್ ವೀಕ್ಷಣೆಗಳನ್ನು ಪಡೆದಿದೆ.

ಪ್ರಧಾನಿ ಮೋದಿ ರೋಮ್‌ಗೆ ಆಗಮಿಸಿದ ವೇಳೆ ಜಾರ್ಜಿಯಾ ಮೆಲೋನಿ ಆತ್ಮೀಯ ಸ್ವಾಗತ ಕೋರಿದರು. ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಮೆಲೋನಿ, “ವೆಲ್ಕಮ್ ಟು ರೋಮ್, ಮೈ ಫ್ರೆಂಡ್” ಎಂದು ಬರೆದು ಮೋದಿ ಜೊತೆಗಿನ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಕೂಡ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ರೋಮ್‌ಗೆ ಭೇಟಿ ನೀಡಿದ ಬಳಿಕ ಪ್ರಧಾನಿ ಮೆಲೋನಿ ಜೊತೆ ಭೋಜನ ಕೂಟದಲ್ಲಿ ಭಾಗವಹಿಸಿದ್ದಾಗಿ ತಿಳಿಸಿದ್ದಾರೆ. ಬಳಿಕ ಐತಿಹಾಸಿಕ ಕೊಲೊಸಿಯಂಗೆ ಭೇಟಿ ನೀಡಿರುವುದಾಗಿ ಹೇಳಿದ ಅವರು, ವಿವಿಧ ಮಹತ್ವದ ವಿಷಯಗಳ ಕುರಿತು ಪರಸ್ಪರ ಅಭಿಪ್ರಾಯ ವಿನಿಮಯ ಮಾಡಿಕೊಂಡಿದ್ದೇವೆ ಎಂದು ತಿಳಿಸಿದ್ದಾರೆ.

ಬೈಕ್ ನಲ್ಲಿ ಅಕ್ರಮ ಮದ್ಯ ಸಾಗಾಟ: ಆರೋಪಿ ಶಿಕ್ಷೆ ಖಾಯಂಗೊಳಿಸಿದ ಹೈಕೋರ್ಟ್

ಬೆಂಗಳೂರು: ದ್ವಿಚಕ್ರ ವಾಹನದಲ್ಲಿ ಅಕ್ರಮವಾಗಿ ಮದ್ಯ ಸಾಗಣೆ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಿಗೆ ವಿಧಿಸಲಾಗಿದ್ದ ಒಂದು ವರ್ಷದ ಶಿಕ್ಷೆಯನ್ನು ಕರ್ನಾಟಕ ಹೈಕೋರ್ಟ್ ಎತ್ತಿಹಿಡಿದಿದೆ. ಜೊತೆಗೆ ಆರೋಪಿಗಳು ಸಲ್ಲಿಸಿದ್ದ ಕ್ರಿಮಿನಲ್ ಮರುಪರಿಶೀಲನಾ ಅರ್ಜಿಯನ್ನು ವಜಾಗೊಳಿಸಿದೆ.

ಆರೋಪಿಗಳಾದ ಮಂಜನಾಯ್ಕ ಹಾಗೂ ಶಂಕರ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿ. ಶ್ರೀಷಾನಂದ ಅವರ ಏಕಸದಸ್ಯ ಪೀಠ ಈ ಆದೇಶ ನೀಡಿದೆ.

ಪ್ರಕರಣದಲ್ಲಿ ಪೊಲೀಸರು ವಶಪಡಿಸಿಕೊಂಡಿದ್ದ ಭಾರಿ ಪ್ರಮಾಣದ ಮದ್ಯಕ್ಕೆ ಸಂಬಂಧಿಸಿದಂತೆ ಯಾವುದೇ ಸೂಕ್ತ ದಾಖಲೆಗಳನ್ನು ಆರೋಪಿಗಳು ಒದಗಿಸಿಲ್ಲ. ಅಲ್ಲದೆ ಸಾಕ್ಷಿಗಳ ಹೇಳಿಕೆಗಳು ಸಹ ಪ್ರಾಸಿಕ್ಯೂಷನ್ ಪರವಾಗಿಯೇ ಸಾಬೀತಾಗಿವೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ರಸ್ತೆಯಲ್ಲಿ ಸಂಚರಿಸುವ ವಾಹನಗಳ ತಪಾಸಣೆ ನಡೆಸಲು ಪೊಲೀಸರಿಗೆ ಪ್ರತ್ಯೇಕ ಸರ್ಚ್ ವಾರಂಟ್ ಕಡ್ಡಾಯವಲ್ಲ ಎಂದು ಪೀಠ ಸ್ಪಷ್ಟಪಡಿಸಿದೆ.

ಪ್ರಕರಣದ ತನಿಖೆ ನಡೆಸಿದ ಪೊಲೀಸರು ಹಾಗೂ ನ್ಯಾಯಾಲಯದಲ್ಲಿ ಸಾಕ್ಷ್ಯ ನೀಡಿದ ಸಾಕ್ಷಿಗಳಿಗೆ ಆರೋಪಿಗಳ ವಿರುದ್ಧ ಯಾವುದೇ ವೈಯಕ್ತಿಕ ದ್ವೇಷವಿಲ್ಲ. ಹೀಗಾಗಿ ಆರೋಪಿಗಳನ್ನು ಉದ್ದೇಶಪೂರ್ವಕವಾಗಿ ಸಿಲುಕಿಸಲಾಗಿದೆ ಎಂಬ ವಾದವನ್ನು ಒಪ್ಪಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ತಿಳಿಸಿದೆ.

ಜೊತೆಗೆ ಶಿಕ್ಷೆಗೆ ಗುರಿಯಾದ ಆರೋಪಿಗಳು 2026ರ ಜೂನ್ 5ರೊಳಗೆ ವಿಚಾರಣಾ ನ್ಯಾಯಾಲಯದ ಮುಂದೆ ಶರಣಾಗಬೇಕು ಎಂದು ಆದೇಶಿಸಲಾಗಿದೆ.

ಪ್ರಕರಣದ ಹಿನ್ನೆಲೆ

2014ರ ಸೆಪ್ಟೆಂಬರ್ 14ರಂದು ಖಚಿತ ಮಾಹಿತಿಯ ಮೇರೆಗೆ ಪೊಲೀಸರು ದಾಳಿ ನಡೆಸಿದ್ದರು. ಈ ವೇಳೆ ಹರಪನಹಳ್ಳಿ ಸಮೀಪ ಮೋಟಾರ್‌ಸೈಕಲ್‌ನಲ್ಲಿ ಯಾವುದೇ ಪರವಾನಗಿ ಇಲ್ಲದೆ ಪ್ಲಾಸ್ಟಿಕ್ ಚೀಲಗಳಲ್ಲಿ ಸುಮಾರು ₹13,200 ಮೌಲ್ಯದ ರಾಜಾ ವಿಸ್ಕಿ ಪ್ಯಾಕೆಟ್‌ಗಳನ್ನು ಸಾಗಿಸುತ್ತಿದ್ದ ಆರೋಪಿಗಳನ್ನು ಬಂಧಿಸಲಾಗಿತ್ತು.

ಬಳಿಕ ತನಿಖೆ ನಡೆಸಿದ ಪೊಲೀಸರು ಕರ್ನಾಟಕ ಅಬಕಾರಿ ಕಾಯ್ದೆಯ ಸೆಕ್ಷನ್ 32 ಮತ್ತು 34ರಡಿ ಆರೋಪಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ್ದ ಅರಸೀಕೆರೆಯ ಜೆಎಂಎಫ್‌ಸಿ ನ್ಯಾಯಾಲಯ ಆರೋಪಿಗಳಿಗೆ ತಲಾ ಒಂದು ವರ್ಷದ ಸರಳ ಕಾರಾಗೃಹ ಶಿಕ್ಷೆ ಹಾಗೂ ₹10 ಸಾವಿರ ದಂಡ ವಿಧಿಸಿತ್ತು.

ಈ ತೀರ್ಪನ್ನು ಹಾಸನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವೂ ಎತ್ತಿಹಿಡಿದಿತ್ತು. ಇದನ್ನು ಪ್ರಶ್ನಿಸಿ ಆರೋಪಿಗಳು ಹೈಕೋರ್ಟ್‌ಗೆ ಮರುಪರಿಶೀಲನಾ ಅರ್ಜಿ ಸಲ್ಲಿಸಿದ್ದರು.

ವಿಚಾರಣೆ ವೇಳೆ ಆರೋಪಿಗಳ ಪರ ವಕೀಲರು, ದಾಳಿಗೂ ಮುನ್ನ ಪೊಲೀಸರು ಸರ್ಚ್ ವಾರಂಟ್ ಪಡೆಯದ ಕಾರಣ ವಿಚಾರಣಾ ನ್ಯಾಯಾಲಯದ ಆದೇಶ ರದ್ದುಪಡಿಸಬೇಕು ಎಂದು ವಾದಿಸಿದ್ದರು. ಆದರೆ ಈ ವಾದವನ್ನು ಹೈಕೋರ್ಟ್ ತಳ್ಳಿ ಹಾಕಿದೆ.

ಮಧ್ಯಪ್ರಾಚ್ಯ ಯುದ್ಧದ ಎಫೆಕ್ಟ್: ರಾಜ್ಯದಲ್ಲಿ 38 ಸಾವಿರ ಟನ್ ರಸಗೊಬ್ಬರ ಕೊರತೆ

ಬೆಂಗಳೂರು: ಮಧ್ಯಪ್ರಾಚ್ಯ ಪ್ರದೇಶದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮ ರಾಜ್ಯದಲ್ಲಿ ರಸಗೊಬ್ಬರ ಕೊರತೆ ಉಂಟಾಗಿದ್ದು, ರೈತರು ಸಂಕಷ್ಟ ಎದುರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದ್ದಾರೆ.

ರಾಜ್ಯದಲ್ಲಿ ಪ್ರಸ್ತುತ ಸುಮಾರು 38 ಸಾವಿರ ಟನ್ ರಸಗೊಬ್ಬರ ಕೊರತೆ ಎದುರಾಗಿದ್ದು, ಇದರಲ್ಲಿ 14 ಸಾವಿರ ಟನ್ ಯೂರಿಯಾ ಅಭಾವವೂ ಸೇರಿದೆ ಎಂದು ಸಚಿವರು ಮಾಹಿತಿ ನೀಡಿದರು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಅಧಿಕಾರಿಗಳು ಕೇಂದ್ರ ಸರ್ಕಾರದ ಅಧಿಕಾರಿಗಳೊಂದಿಗೆ ನಿರಂತರ ಚರ್ಚೆ ನಡೆಸುತ್ತಿದ್ದಾರೆ ಎಂದರು.

ರೈತರು ರಸಗೊಬ್ಬರ ಬಳಕೆಯನ್ನು ಸಾಧ್ಯವಾದಷ್ಟು ಕಡಿಮೆ ಮಾಡಿ ಪರ್ಯಾಯ ಕೃಷಿ ವಿಧಾನಗಳನ್ನು ಅನುಸರಿಸುವಂತೆ ಸಲಹೆ ನೀಡಲಾಗಿದೆ. ಜೊತೆಗೆ ರಸಗೊಬ್ಬರ ದಾಸ್ತಾನು, ಅಕ್ರಮ ವಿತರಣೆ ಹಾಗೂ ಬೇರೆಡೆಗೆ ತಿರುಗಿಸುವಿಕೆ ತಡೆಯಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿಗಾವಹಿಸಲು ಸೂಚಿಸಲಾಗಿದೆ ಎಂದು ಹೇಳಿದರು.

ಜೂನ್ ತಿಂಗಳಲ್ಲಿ ಮುಂಗಾರು ಆರಂಭವಾಗುವ ನಿರೀಕ್ಷೆಯಿರುವುದರಿಂದ ರಸಗೊಬ್ಬರ ಪೂರೈಕೆಯನ್ನು ಸಮರ್ಪಕವಾಗಿ ನಿರ್ವಹಿಸಲು ಸರ್ಕಾರ ಸಿದ್ಧತೆ ನಡೆಸುತ್ತಿದೆ. ನಿಜವಾದ ರೈತರಿಗೆ ಮಾತ್ರ ರಸಗೊಬ್ಬರ ದೊರೆಯುವಂತೆ FRUITS ಐಡಿ ಆಧಾರಿತ ವಿತರಣಾ ವ್ಯವಸ್ಥೆ ಜಾರಿಗೆ ತರಲಾಗಿದೆ ಎಂದು ಸಚಿವರು ತಿಳಿಸಿದರು.

ಕೇಂದ್ರ ಸರ್ಕಾರ ರಾಜ್ಯಕ್ಕೆ ಒಟ್ಟು 30.05 ಲಕ್ಷ ಮೆಟ್ರಿಕ್ ಟನ್ ವಿವಿಧ ರೀತಿಯ ರಸಗೊಬ್ಬರ ಹಂಚಿಕೆ ಮಾಡಿದೆ. ಇದರಲ್ಲಿ 11.10 ಲಕ್ಷ ಮೆಟ್ರಿಕ್ ಟನ್ ಯೂರಿಯಾ, 4 ಲಕ್ಷ ಮೆಟ್ರಿಕ್ ಟನ್ ಡಿಎಪಿ, 2.12 ಲಕ್ಷ ಮೆಟ್ರಿಕ್ ಟನ್ ಎಂಒಪಿ, 11.88 ಲಕ್ಷ ಮೆಟ್ರಿಕ್ ಟನ್ ಕಾಂಪ್ಲೆಕ್ಸ್ ರಸಗೊಬ್ಬರ ಹಾಗೂ 0.95 ಲಕ್ಷ ಮೆಟ್ರಿಕ್ ಟನ್ ಎಸ್‌ಎಸ್‌ಪಿ ಸೇರಿವೆ.

ಆದರೆ ಈ ವರ್ಷ ಯೂರಿಯಾದ ಆರಂಭಿಕ ದಾಸ್ತಾನು ಪ್ರಮಾಣವು ಹಿಂದಿನ ವರ್ಷಗಳಿಗೆ ಹೋಲಿಸಿದರೆ ಗಣನೀಯವಾಗಿ ಕುಸಿದಿದೆ. 2023ರಲ್ಲಿ 3.91 ಲಕ್ಷ ಮೆಟ್ರಿಕ್ ಟನ್ ಹಾಗೂ 2024ರಲ್ಲಿ 5.41 ಲಕ್ಷ ಮೆಟ್ರಿಕ್ ಟನ್ ದಾಸ್ತಾನು ಇದ್ದರೆ, ಈ ವರ್ಷ ಅದು ಕೇವಲ 2.80 ಲಕ್ಷ ಮೆಟ್ರಿಕ್ ಟನ್‌ಗೆ ಇಳಿಕೆಯಾಗಿದೆ ಎಂದು ಸಚಿವರು ಹೇಳಿದರು.

ಏಪ್ರಿಲ್ ತಿಂಗಳಲ್ಲಿ ರಾಜ್ಯವು 4.02 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರ ಬೇಡಿಕೆ ಇಟ್ಟಿದ್ದರೂ, ಕೇಂದ್ರದಿಂದ ಕೇವಲ 2.54 ಲಕ್ಷ ಮೆಟ್ರಿಕ್ ಟನ್ ಪೂರೈಕೆಯಾಗಿದೆ. ಪರಿಣಾಮವಾಗಿ 1.48 ಲಕ್ಷ ಮೆಟ್ರಿಕ್ ಟನ್ ಕೊರತೆ ಉಂಟಾಗಿದೆ. ಇದರಲ್ಲಿ 0.38 ಲಕ್ಷ ಮೆಟ್ರಿಕ್ ಟನ್ ಡಿಎಪಿ ಹಾಗೂ 0.14 ಲಕ್ಷ ಮೆಟ್ರಿಕ್ ಟನ್ ಯೂರಿಯಾ ಕೊರತೆ ಸೇರಿದೆ.

ಮೇ ತಿಂಗಳಲ್ಲಿ 4.54 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರ ಅಗತ್ಯವಿದ್ದರೂ, ಇದುವರೆಗೆ ಕೇವಲ 1.77 ಲಕ್ಷ ಮೆಟ್ರಿಕ್ ಟನ್ ಮಾತ್ರ ಪೂರೈಕೆಯಾಗಿದೆ. ಇನ್ನೂ 2.77 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರ ಬಾಕಿಯಿದ್ದು, ಇದರಲ್ಲಿ 0.65 ಲಕ್ಷ ಮೆಟ್ರಿಕ್ ಟನ್ ಯೂರಿಯಾ ಹಾಗೂ 0.78 ಲಕ್ಷ ಮೆಟ್ರಿಕ್ ಟನ್ ಡಿಎಪಿ ಪೂರೈಕೆಯಾಗಬೇಕಿದೆ.

ಈ ಪರಿಸ್ಥಿತಿ ಶೀಘ್ರದಲ್ಲೇ ಸುಧಾರಿಸದಿದ್ದರೆ ಮುಂಗಾರು ಬಿತ್ತನೆ ಅವಧಿಯಲ್ಲಿ ರೈತರು ಗಂಭೀರ ಸಮಸ್ಯೆ ಎದುರಿಸಬೇಕಾಗಬಹುದು ಎಂದು ಕೃಷಿ ಸಚಿವರು ಎಚ್ಚರಿಸಿದ್ದಾರೆ.

‘ದುಬಾರೆ’ ದುರಂತಕ್ಕೆ ಅರಣ್ಯ ಇಲಾಖೆ ಹೊಣೆ? ತಜ್ಞರ ಎಚ್ಚರಿಕೆ ನಿರ್ಲಕ್ಷ್ಯಕ್ಕೆ ಎರಡು ಜೀವ ಬಲಿ

0

ಕೊಡಗು: ದುಬಾರೆ ಆನೆ ಶಿಬಿರದಲ್ಲಿ ನಡೆದ ಆನೆಗಳ ಕಾದಾಟದ ದುರಂತ ಇದೀಗ ಅರಣ್ಯ ಇಲಾಖೆಯ ನಿರ್ಲಕ್ಷ್ಯದ ವಿರುದ್ಧ ಭಾರೀ ಚರ್ಚೆಗೆ ಕಾರಣವಾಗಿದೆ. ಪ್ರವಾಸಿ ಮಹಿಳೆ ಸಾವಿನ ಬೆನ್ನಲ್ಲೇ ಗಾಯಗೊಂಡಿದ್ದ ‘ಮಾರ್ತಾಂಡ’ ಸಾಕಾನೆಯೂ ಮೃತಪಟ್ಟಿದ್ದು, 2019ರಲ್ಲೇ ತಜ್ಞರ ಸಮಿತಿ ನೀಡಿದ್ದ ಎಚ್ಚರಿಕೆ ವರದಿ ಇದೀಗ ಮತ್ತೆ ಬೆಳಕಿಗೆ ಬಂದಿದೆ.

ಹೈಕೋರ್ಟ್ ಸೂಚನೆಯಂತೆ ರಚನೆಯಾಗಿದ್ದ ತಜ್ಞರ ಸಮಿತಿ, ದುಬಾರೆ ಶಿಬಿರದಲ್ಲಿ ಪ್ರವಾಸಿಗರ ಅತಿಯಾದ ಒತ್ತಡದಿಂದ ಆನೆಗಳ ನಡವಳಿಕೆಯಲ್ಲಿ ಅಪಾಯಕಾರಿ ಬದಲಾವಣೆ ಆಗುತ್ತಿದೆ ಎಂದು ಎಚ್ಚರಿಸಿತ್ತು. ಪ್ರವಾಸಿಗರನ್ನು ಆನೆಗಳ ತೀರಾ ಹತ್ತಿರಕ್ಕೆ ಬಿಡಬಾರದು ಹಾಗೂ ಶಿಬಿರದಲ್ಲಿ ಗರಿಷ್ಠ 15 ಆನೆಗಳಷ್ಟೇ ಇರಬೇಕು ಎಂದು ಶಿಫಾರಸು ಮಾಡಲಾಗಿತ್ತು.

ಆದರೆ ಈ ಎಲ್ಲಾ ಶಿಫಾರಸುಗಳನ್ನು ಅರಣ್ಯ ಇಲಾಖೆ ಕಡೆಗಣಿಸಿದೆ ಎನ್ನಲಾಗಿದೆ. ಸದ್ಯ ದುಬಾರೆ ಶಿಬಿರದಲ್ಲಿ 30ಕ್ಕೂ ಹೆಚ್ಚು ಆನೆಗಳನ್ನು ಇರಿಸಲಾಗಿದ್ದು, ಪ್ರವಾಸಿಗರ ಸಂಖ್ಯೆಯೂ ನಿಯಂತ್ರಣ ತಪ್ಪಿದೆ ಎಂಬ ಆರೋಪ ಕೇಳಿಬಂದಿದೆ.

ಮೇ 18ರಂದು ಕಾವೇರಿ ನದಿಯಲ್ಲಿ ಸ್ನಾನ ಮಾಡಿಸುವ ವೇಳೆ ‘ಕಂಜನ್’ ಮತ್ತು ‘ಮಾರ್ತಾಂಡ’ ಆನೆಗಳ ನಡುವೆ ಭೀಕರ ಕಾದಾಟ ನಡೆದಿತ್ತು. ಈ ವೇಳೆ ನಿಯಂತ್ರಣ ತಪ್ಪಿದ ಮಾರ್ತಾಂಡ ಆನೆ ಪ್ರವಾಸಿಗರಿದ್ದ ಪ್ರದೇಶಕ್ಕೆ ದೌಡಾಯಿಸಿದ್ದು, ಚೆನ್ನೈ ಮೂಲದ ತುಳಸಿ ಎಂಬ ಮಹಿಳೆ ಮೃತಪಟ್ಟಿದ್ದರು.

ತೀವ್ರ ಆಂತರಿಕ ಗಾಯಗಳಿಂದ ಬಳಲುತ್ತಿದ್ದ ಮಾರ್ತಾಂಡ ಆನೆ ಕೂಡ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದೆ. ಎರಡು ಜೀವ ಬಲಿಯಾದ ಬಳಿಕ ಅರಣ್ಯ ಇಲಾಖೆಯ ಕಾರ್ಯವೈಖರಿ ಮತ್ತು ಸುರಕ್ಷತಾ ಕ್ರಮಗಳ ಬಗ್ಗೆ ಸಾರ್ವಜನಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

‘ಹಪ್ತಾ’ಗಾಗಿ ಬೆದರಿಸಿದ್ದ ರೌಡಿ: ಮಗಳ ಮದುವೆ ಮಧ್ಯೆಯೇ ಚರ್ಚ್‌ಗೆ ನುಗ್ಗಿ ಅರೆಸ್ಟ್ ಮಾಡಿದ ಪೊಲೀಸರು

0

ಕೋಲಾರ: ಉದ್ಯಮಿಯೊಬ್ಬರಿಗೆ ಬೆದರಿಕೆ ಹಾಕಿ ಹಪ್ತಾ ವಸೂಲಿ ಮಾಡುತ್ತಿದ್ದ ಆರೋಪದ ಮೇಲೆ ಗಡಿಪಾರು ಶಿಕ್ಷೆಗೆ ಒಳಗಾಗಿದ್ದ ರೌಡಿಶೀಟರ್ ಸ್ಟಾನ್ಲಿಯನ್ನು ಪೊಲೀಸರು ಮಗಳ ಮದುವೆ ಮಂಟಪದಿಂದಲೇ ಬಂಧಿಸಿರುವ ಘಟನೆ ಕೆಜಿಎಫ್ ನಗರದಲ್ಲಿ ನಡೆದಿದೆ.

ಸುಸೈಪಾಳ್ಯಂ ಪ್ರದೇಶದ ಚರ್ಚ್‌ನಲ್ಲಿ ಮಗಳ ಮದುವೆ ಕಾರ್ಯಕ್ರಮ ನಡೆಯುತ್ತಿದ್ದ ವೇಳೆ ಆಂಡರ್ಸನ್‌ಪೇಟೆ ಠಾಣೆ ಪೊಲೀಸರು ದಿಢೀರ್ ದಾಳಿ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಈ ಸಿನಿಮೀಯ ಕಾರ್ಯಾಚರಣೆಯ ವಿಡಿಯೋ ಈಗ ವೈರಲ್ ಆಗಿದೆ.

ಪೊಲೀಸ್ ಮಾಹಿತಿ ಪ್ರಕಾರ, ಮದುವೆ ಪೆಂಡಾಲ್ ಹಾಗೂ ಡೆಕೋರೇಷನ್ ಕೆಲಸ ಮಾಡುತ್ತಿದ್ದ ಮೊಹಮ್ಮದ್ ಸಕ್ಲೇನ್ ಎಂಬ ಉದ್ಯಮಿಗೆ ಸ್ಟಾನ್ಲಿ ಹಣಕ್ಕಾಗಿ ಬೆದರಿಕೆ ಹಾಕುತ್ತಿದ್ದ. ‘ಮಗಳ ಮದುವೆಗೆ ಹಣ ಕೊಡಲೇಬೇಕು’ ಎಂದು ಒತ್ತಡ ಹೇರುತ್ತಿದ್ದಾನೆ ಎಂದು ಸಂತ್ರಸ್ತ ಪೊಲೀಸರಿಗೆ ದೂರು ನೀಡಿದ್ದರು.

ಈಗಾಗಲೇ ಗಡಿಪಾರು ಆಗಿದ್ದ ಸ್ಟಾನ್ಲಿ ಕಾನೂನು ಉಲ್ಲಂಘಿಸಿ ಮತ್ತೆ ನಗರದೊಳಗೆ ಪ್ರವೇಶಿಸಿದ್ದಲ್ಲದೆ, ಸಾರ್ವಜನಿಕರಿಗೆ ಕಿರುಕುಳ ನೀಡಿ ಹಪ್ತಾ ವಸೂಲಿಗೆ ಇಳಿದಿದ್ದಾನೆ ಎಂಬ ಆರೋಪ ಕೇಳಿಬಂದಿತ್ತು.

ಕೆಜಿಎಫ್ ಎಸ್‌ಪಿ ಶಿವಾಂಶು ರಜಪೂತ್ ಸೂಚನೆ ಮೇರೆಗೆ ಪೊಲೀಸರು ತಕ್ಷಣ ಕಾರ್ಯಾಚರಣೆ ನಡೆಸಿ, ಮದುವೆ ಕಾರ್ಯಕ್ರಮ ನಡೆಯುತ್ತಿದ್ದ ಚರ್ಚ್‌ಗೆ ನುಗ್ಗಿ ಆರೋಪಿಯನ್ನು ಬಂಧಿಸಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಮುಂದುವರಿಸಿದ್ದಾರೆ.

error: Content is protected !!