ಬೆಂಗಳೂರು: ಮಧ್ಯಪ್ರಾಚ್ಯ ಬಿಕ್ಕಟ್ಟಿನ ನಡುವೆಯೇ ತೈಲ ಕೊರತೆ ವಿಚಾರವಾಗಿ ಸಚಿವ ಎಂ.ಬಿ. ಪಾಟೀಲ್ ಕೇಂದ್ರ ಸರ್ಕಾರದ ವಿರುದ್ಧ ಟೀಕೆ ವ್ಯಕ್ತಪಡಿಸಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ತೈಲ ಕೊರತೆಯಿಂದ ರಾಜ್ಯದ ಕೈಗಾರಿಕೆಗಳು ಸಂಕಷ್ಟ ಅನುಭವಿಸುತ್ತಿವೆ” ಎಂದು ಹೇಳಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಇಸ್ರೇಲ್ ಪ್ರವಾಸವನ್ನು ಉಲ್ಲೇಖಿಸಿದ ಅವರು, “ಮೋದಿ ಇಸ್ರೇಲ್ಗೆ ಭೇಟಿ ನೀಡಿ ‘ಫಾದರ್ ಲ್ಯಾಂಡ್’ ಎಂದು ಹೊಗಳಿದರು. ಆದರೆ ಅವರು ಮರಳಿದ ತಕ್ಷಣವೇ ಯುದ್ಧ ಆರಂಭವಾಯಿತು” ಎಂದು ಟೀಕಿಸಿದರು.
ಇರಾನ್ ಕುರಿತು ಮಾತನಾಡಿದ ಅವರು, “ಇರಾನ್ ನಮ್ಮ ಹಡಗುಗಳನ್ನು ಬಿಡುಗಡೆ ಮಾಡಿದೆ. ಭಾರತವನ್ನು ಸ್ನೇಹಿತ ರಾಷ್ಟ್ರವೆಂದು ಪರಿಗಣಿಸಿದೆ. ಅವರು ಎಲ್ಪಿಜಿ ಪೂರೈಕೆ ಮಾಡುತ್ತ ಸಹಕಾರ ನೀಡಿದ್ದಾರೆ. ಅದು ಇಲ್ಲದಿದ್ದರೆ ಪರಿಸ್ಥಿತಿ ಇನ್ನಷ್ಟು ಗಂಭೀರವಾಗುತ್ತಿತ್ತು” ಎಂದು ಹೇಳಿದರು.
ಇದೇ ವೇಳೆ, ಕೇಂದ್ರ ಸರ್ಕಾರದ ವಿದೇಶಾಂಗ ನೀತಿಯನ್ನು ಟೀಕಿಸಿದ ಅವರು, “ಮೋದಿ ಅವರ ವಿದೇಶಾಂಗ ನೀತಿ ವಿಫಲವಾಗಿದೆ. ಇರಾನ್ ನಮ್ಮ ಮಿತ್ರ ರಾಷ್ಟ್ರವಾಗಿರುವುದರಿಂದಲೇ ನಮ್ಮ ಹಡಗುಗಳಿಗೆ ಅನುಕೂಲವಾಗಿದೆ. ಇಲ್ಲದಿದ್ದರೆ ದೇಶದ ಪರಿಸ್ಥಿತಿ ಕಷ್ಟಕರವಾಗುತ್ತಿತ್ತು” ಎಂದು ಕಳವಳ ವ್ಯಕ್ತಪಡಿಸಿದರು.

