Home Blog

ಕಾರಿಗಾಗಿ ಗಲಾಟೆ: ಮದುವೆಯಾದ 10 ತಿಂಗಳಲ್ಲೇ ತಂಗಿ ಗಂಡನನ್ನೇ ಕೊಂದ ಬಾಮೈದ!

0

ಆನೇಕಲ್: ಕಾರು ಖರೀದಿ ವಿಚಾರವಾಗಿ ಉಂಟಾದ ಗಲಾಟೆಯಿಂದ ಬಾಮೈದನೇ ಭಾವನನ್ನು ಕೊಲೆ ಮಾಡಿರುವ ಘಟನೆ ಆಂಧ್ರಪ್ರದೇಶದ ಇಂದೂಪುರ ಪೊಲೀಸ್ ಠಾಣಾ ವ್ಯಾಪ್ತಿಯ ಮೇಳ್ಯ ಪ್ರದೇಶದಲ್ಲಿ ನಡೆದಿದೆ.

ವಿನಯ್ ಕುಮಾರ್ (37) ಕೊಲೆಯಾದ ವ್ಯಕ್ತಿ. ಪ್ರಕರಣ ಸಂಬಂಧ ರಾಜು, ವೇಣು ಹಾಗೂ ಶ್ರೇಯಸ್ ಎಂಬುವವರನ್ನು ಪೊಲೀಸರು ಬಂಧಿಸಿದ್ದು, ಇಂದೂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಂಗಳೂರು ಉತ್ತರ ತಾಲೂಕಿನ ಚಿಕ್ಕಬಾಣಾವರ ನಿವಾಸಿಯಾದ ವಿನಯ್ ಕುಮಾರ್, 10 ತಿಂಗಳ ಹಿಂದೆ ಮೇಘನಾರೊಂದಿಗೆ ಮದುವೆಯಾಗಿದ್ದರು. ಮದುವೆಯ ನಂತರ ದಂಪತಿಗಳ ನಡುವೆ ಕಲಹ ಆರಂಭವಾಗಿತ್ತು.

ಇತ್ತೀಚಿಗೆ ಕಾರು ಖರೀದಿ ವಿಚಾರವಾಗಿ ಗಲಾಟೆ ಹೆಚ್ಚಾಗಿತ್ತು. ಕಾರು ಖರೀದಿಗೆ ನನ್ನ ಅಣ್ಣ ರಾಜು ಹಣ ಕೊಡುತ್ತಾನೆ ತೆಗೆದುಕೊಂಡು ಬಾ ಎಂದು ಮೇಘನಾ ಹೇಳಿದ್ದಾರೆ. ಈ ಹಿನ್ನೆಲೆ ಶನಿವಾರ ರಾತ್ರಿ 9ಗಂಟೆಗೆ ಆಂಧ್ರದ ಮೇಳ್ಯ ಬಳಿ ವಿನಯ್ ಹೋಗಿದ್ದಾರೆ. ಈ ವೇಳೆ ಹಣಕಾಸಿನ ವಿಚಾರವಾಗಿ ಬಾಮೈದ ರಾಜು ಮತ್ತು ಅವನ ಗ್ಯಾಂಗ್​​ನಿಂದ ವಿನಯ್​​ ತಲೆಗೆ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ. ಆತನನ್ನು ಸೇರಿ ಬೈಕ್ ಸಮೇತ ಕಾಲುವೆಗೆ ಎಸೆದಿದ್ದಾರೆ.

ಬೈಕ್‌ನ ಜಿಪಿಎಸ್ ಮಾಹಿತಿ ಆಧರಿಸಿ ಘಟನೆ ಬೆಳಕಿಗೆ ಬಂದಿದ್ದು, ನಂತರ ವಿನಯ್ ಕುಟುಂಬಕ್ಕೆ ಮಾಹಿತಿ ನೀಡಲಾಗಿದೆ. ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ. ಬಳಿಕ ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗುತ್ತದೆ. ಅಂತ್ಯಕ್ರಿಯೆ ಅನಂತಪುರ ಜಿಲ್ಲೆಯ ಅಪ್ಪೆಹಳ್ಳಿ ಗ್ರಾಮದಲ್ಲಿ ನಡೆಯಲಿದೆ.

ಕಾರ್ಯಕರ್ತರ, ಹಿರಿಯರ ಪರಿಶ್ರಮದಿಂದ ಬೃಹದಾಕಾರದಲ್ಲಿ ಬೆಳೆದು ನಿಂತ ಬಿಜೆಪಿ: ಬಿ.ವೈ.ವಿಜಯೇಂದ್ರ

ದಾವಣಗೆರೆ: ಕೋಟ್ಯಂತರ ಕಾರ್ಯಕರ್ತರ ಪರಿಶ್ರಮದಿಂದ ಬಿಜೆಪಿ ದೇಶದಲ್ಲಿ ಮತ್ತು ರಾಜ್ಯದಲ್ಲಿ ಅತಿ ದೊಡ್ಡ ಪಕ್ಷವಾಗಿ ಬೆಳೆದುನಿಂತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ವಿಶ್ಲೇಷಿಸಿದ್ದಾರೆ.

ದಾವಣಗೆರೆ ಜಿಲ್ಲೆಯ ಬಿಜೆಪಿ ಕಚೇರಿಯಲ್ಲಿ ಇಂದು ಏರ್ಪಡಿಸಿದ ಬಿಜೆಪಿ ಸಂಸ್ಥಾಪಕರ ದಿನಾಚರಣೆಯಲ್ಲಿ ಅವರು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ದೇಶ ಮೊದಲು ಎಂಬ ವಿಚಾರಧಾರೆಯನ್ನು ಮುಂದಿಟ್ಟುಕೊಂಡು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ನ್ಯಾಯ ಕೊಡುವ ಚಿಂತನೆಯೊಂದಿಗೆ ಬಿಜೆಪಿ ದೇಶದುದ್ದಕ್ಕೂ ಬೆಳೆದುನಿಂತಿದೆ ಎಂದು ತಿಳಿಸಿದರು.

ದೇಶಕ್ಕೆ ಅನ್ನ ಕೊಡುವ ರೈತ ಎಷ್ಟು ಮುಖ್ಯವೋ, ಈ ದೇಶದ ಗಡಿಯನ್ನು ಕಾಯುವ ಯೋಧರು ಕೂಡ ಅಷ್ಟೇ ಮುಖ್ಯ ಎಂಬ ಭಾವನೆಯಿಂದ ನರೇಂದ್ರ ಮೋದಿಜೀ ಅವರ ದಿಟ್ಟ ನಾಯಕತ್ವದ ಅಡಿಯಲ್ಲಿ ದೇಶ ಮುನ್ನಡೆಸಲಾಗುತ್ತಿದೆ. ಇದಕ್ಕಾಗಿ ನಾವಿಂದು ದೇಶ ಕಾಯುವ ಯೋಧರನ್ನು ಗೌರವಿಸಿದ್ದೇವೆ ಎಂದು ಹೇಳಿದರು.

ವಾಜಪೇಯಿ, ಅಡ್ವಾಣಿ ಅವರ ನೇತೃತ್ವದಲ್ಲಿ ಪಕ್ಷ ಬೆಳೆದುಬಂದುದನ್ನು ಅವರು ವಿವರಿಸಿದರು. ಮಾಜಿ ಸಂಸದ ಮಲ್ಲಿಕಾರ್ಜುನಪ್ಪ ಅವರನ್ನೂ ನಾವು ನೆನಪಿಸಬೇಕಿದೆ. ರಾಜ್ಯದಲ್ಲಿ ಬಿ.ಎಸ್.ಯಡಿಯೂರಪ್ಪ, ಅನಂತಕುಮಾರ್, ವಿ.ಎಸ್.ಆಚಾರ್, ತಂಗ, ಶಂಕರಮೂರ್ತಿ ಅವರು ಸೇರಿ ಅನೇಕ ಹಿರಿಯರ ತಪಸ್ಸು, ಪರಿಶ್ರಮದಿಂದ ನಗರಕ್ಕೆ ಸೀಮಿತವಾಗಿದ್ದ ಬಿಜೆಪಿಯನ್ನು ಹಳ್ಳಿ ಹಳ್ಳಿಗೆ ತೆಗೆದುಕೊಂಡು ಹೋಗಲು ಸಾಧ್ಯವಾಗಿದೆ ಎಂದು ನುಡಿದರು.

ಬಿಜೆಪಿ ದೇಶದಲ್ಲಿ ಮತ್ತು ರಾಜ್ಯದಲ್ಲಿ ಬಹಳ ಬೃಹದಾಕಾರದಲ್ಲಿ ಬೆಳೆದುನಿಂತಿದೆ. ಅನೇಕ ಹಿರಿಯರು ತನು, ಮನ, ಧನವನ್ನು ಅರ್ಪಿಸಿ ತ್ಯಾಗ, ಬಲಿದಾನದ ಮೂಲಕ ಬಿಜೆಪಿ ಇಷ್ಟು ಎತ್ತರಕ್ಕೆ ಬೆಳೆದುನಿಂತಿದೆ ಎಂದು ತಿಳಿಸಿದರು. 25ಕ್ಕೂ ಹೆಚ್ಚು ದೇಶಗಳು ತಮ್ಮ ದೇಶದ ಅತ್ಯುನ್ನತ ಗೌರವವನ್ನು ನಮ್ಮ ಪ್ರಧಾನಿ ಮೋದಿಜೀ ಅವರಿಗೆ ನೀಡಿರುವುದು ನಮಗೆ ಹೆಮ್ಮೆಯ ವಿಚಾರ ಎಂದು ಹೇಳಿದರು.

ಬೂತ್ ಮಟ್ಟದಲ್ಲಿ ಜನರ ಕಣ್ಣೀರನ್ನು ಒರೆಸುವ ಕೆಲಸ ಮಾಡಬೇಕು: ಯಡಿಯೂರಪ್ಪ ಸಲಹೆ

ಬಾಗಲಕೋಟೆ: ಬೂತ್ ಮಟ್ಟದಲ್ಲಿ ನಾವು ಜನರ ಕಣ್ಣೀರನ್ನು ಒರೆಸುವ ಕೆಲಸ ಮಾಡಬೇಕು. ಜನರಿಗೆ ಸರಕಾರದ ಯೋಜನೆಗಳನ್ನು ತಲುಪಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಿಳಿಸಿದ್ದಾರೆ. ಇಂದು ಇಲ್ಲಿನ ಜಿಲ್ಲಾ ಕಾರ್ಯಾಲಯದಲ್ಲಿ ಏರ್ಪಡಿಸಿದ ಬಿಜೆಪಿ ಸಂಸ್ಥಾಪನಾ ದಿನದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಹಿರಿಯರ ಅನುಭವದ ಜೊತೆ ಯುವಕರ ಉತ್ಸಾಹ ಸೇರಿದರೆ ಸಂಘಟನೆ ಬಲಿಷ್ಠವಾಗಲು ಸಾಧ್ಯ ಎಂದು ಅವರು ವಿಶ್ಲೇಷಿಸಿದರು. ನಮ್ಮದು ವಿಶ್ವದ ಅತಿ ದೊಡ್ಡ ರಾಜಕೀಯ ಪಕ್ಷ ಎಂದು ಅವರು ನುಡಿದರು. ಪಕ್ಷದ ಬೆಳವಣಿಗೆಗೆ ಶ್ರಮಿಸಿದ ಎಲ್ಲ ಮಹನೀಯರನ್ನು ನೆನಪಿಸಿಕೊಂಡರು.

1980ರಲ್ಲಿ ಆರಂಭವಾದ ನಮ್ಮ ಪಕ್ಷದ ಪ್ರಯಾಣ ಜನರ ಆಶೀರ್ವಾದ ಮತ್ತು ನಿಮ್ಮ ಬೆಂಬಲದಿಂದ ಇವತ್ತು ಬಲಿಷ್ಠ ಮತ್ತು ಇಷ್ಟು ಎತ್ತರಕ್ಕೆ ಬೆಳೆದಿದೆ ಎಂದು ಅವರು ತಿಳಿಸಿದರು. ಜನರೇ ನಮ್ಮ ದೇವರು, ಜನಸೇವೆಯೇ ನಮ್ಮ ಕಾಯಕ. ಅವರ ಮುಂದೆ ನಾವು ನಮ್ರವಾಗಿ ಇರಬೇಕು ಎಂದು ಸೂಚಿಸಿದರು.

ಅಟಲ್ ಬಿಹಾರಿ ವಾಜಪೇಯಿ ಅವರ ಶ್ರಮ, ಅಡ್ವಾಣಿಯವರ ಸಂಘಟನಾ ಶಕ್ತಿ ಪ್ರತಿಯೊಬ್ಬ ಕಾರ್ಯಕರ್ತನ ಹೃದಯದಲ್ಲಿದೆ. ಪಕ್ಷದ ಬೆಳವಣಿಗೆಗೆ ಅನೇಕ ಮಹನೀಯರು ಶ್ರಮಿಸಿದ್ದಾರೆ ಎಂದು ವಿವರಿಸಿದರು. ಪಕ್ಷದ ಜಿಲ್ಲಾ ಪ್ರಮುಖರು, ಶಾಸಕರು, ಮಾಜಿ ಶಾಸಕರು, ಜನಪ್ರತಿನಿಧಿಗಳು, ಕಾರ್ಯಕರ್ತರು ಭಾಗವಹಿಸಿದ್ದರು.

LPG ಪೂರೈಕೆಯಲ್ಲಿ ವ್ಯತ್ಯಯ: ಕೇಂದ್ರದತ್ತ ಬೊಟ್ಟು ಮಾಡಿದ ಸಚಿವ ಪರಮೇಶ್ವರ್‌

ಬೆಂಗಳೂರು: ರಾಜ್ಯಕ್ಕೆ ಅಗತ್ಯವಿರುವ ಕನಿಷ್ಠ ಅನಿಲ ಪೂರೈಕೆಯನ್ನೂ ಕೇಂದ್ರ ಸರ್ಕಾರ ನೀಡುತ್ತಿಲ್ಲ ಎಂದು ಗೃಹಸಚಿವ ಜಿ. ಪರಮೇಶ್ವರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಎಲ್ಪಿಜಿ ಪೂರೈಕೆಯಲ್ಲಿ ಉಂಟಾಗಿರುವ ವ್ಯತ್ಯಯ ಕುರಿತು ಬೆಂಗಳೂರಿನಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಈಗಾಗಲೇ ಕೇಂದ್ರಕ್ಕೆ ಬೇಡಿಕೆ ಸಲ್ಲಿಸಿದ್ದು, ಪ್ರತಿ ರಾಜ್ಯಕ್ಕೆ ನೀಡಬೇಕಾದ ಅಲಾಟ್ಮೆಂಟ್ ಸಮರ್ಪಕವಾಗಿ ನೀಡಬೇಕು ಎಂದು ಒತ್ತಾಯಿಸಿದರು.

ಯುದ್ಧ ಪರಿಸ್ಥಿತಿಯ ಪರಿಣಾಮದಿಂದ ದೇಶದಾದ್ಯಂತ ಕೆಲವು ಸಮಸ್ಯೆಗಳು ಉಂಟಾಗಿವೆ. ಆದಾಗ್ಯೂ, ರಾಜ್ಯಕ್ಕೆ ಕನಿಷ್ಠ ಅನಿಲ ಪೂರೈಕೆಯಾದರೂ ನೀಡಬೇಕಾಗಿತ್ತು. ಅದೇ ಆಗದ ಕಾರಣ ಪ್ರಸ್ತುತ ತೊಂದರೆ ಎದುರಾಗುತ್ತಿದೆ ಎಂದು ಹೇಳಿದರು.

ಎಲ್ಲಾ ರಾಜ್ಯಗಳಿಗೆ ನೀಡುವಂತೆ ಕರ್ನಾಟಕಕ್ಕೂ ಸಮರ್ಪಕವಾಗಿ ಗ್ಯಾಸ್, ಪೆಟ್ರೋಲ್ ಮತ್ತು ಡೀಸೆಲ್ ಪೂರೈಕೆ ಮಾಡಬೇಕು ಎಂದು ಕೇಂದ್ರವನ್ನು ಅವರು ಆಗ್ರಹಿಸಿದರು. ಜೊತೆಗೆ ಕಾಳಸಂತೆಯಲ್ಲಿ ಮಾರಾಟ ಮಾಡುವವರ ಮೇಲೆ ನಿಗಾವಹಿಸಲಾಗಿದ್ದು, ಕೆಲವು ಕಡೆ ಪ್ರಕರಣಗಳೂ ದಾಖಲಾಗಿವೆ ಎಂದು ತಿಳಿಸಿದ್ದಾರೆ.

ಹಿಂದಿ ಭಾಷೆ ಕಡ್ಡಾಯವಲ್ಲ ಎಂಬ ನಿಯಮ ಜಾರಿಗೆ ಸಂಬಂಧಿಸಿದ ವಿಚಾರಕ್ಕೂ ಅವರು ಪ್ರತಿಕ್ರಿಯೆ ನೀಡಿದರು. ಹಿಂದಿ ಬಳಸದ ರಾಜ್ಯಗಳಲ್ಲಿ ಈ ರೀತಿಯ ಚರ್ಚೆಗಳು ಹಿಂದಿನಿಂದಲೂ ನಡೆಯುತ್ತಿವೆ. ಈ ವಿಷಯ ಶೀಘ್ರದಲ್ಲೇ ಬಗೆಹರಿದರೆ ಉತ್ತಮ ಎಂದು ಅಭಿಪ್ರಾಯಪಟ್ಟರು.

ಲೋಕಸಭಾ ಕ್ಷೇತ್ರಗಳ ಪುನರ್ವಿಂಗಡಣೆ ವಿಚಾರವಾಗಿ ಮಾತನಾಡಿದ ಅವರು, ಜನಸಂಖ್ಯೆ ಆಧಾರದ ಮೇಲೆ ಮರುಹಂಚಿಕೆ ಮಾಡಬಾರದು ಎಂಬ ಮುಖ್ಯಮಂತ್ರಿ ಹೇಳಿಕೆ ಸಮಂಜಸವಾಗಿದೆ ಎಂದು ಹೇಳಿದರು. ಉತ್ತರ ಭಾರತದ ರಾಜ್ಯಗಳಲ್ಲಿ ಜನಸಂಖ್ಯೆ ಹೆಚ್ಚು ಇರುವುದರಿಂದ ಈ ವಿಚಾರ ಪ್ರಸ್ತಾಪವಾಗಿದೆ ಎಂದರು.

2nd PUC ರಿಸಲ್ಟ್ ಡೇಟ್ ಫಿಕ್ಸ್? ಫಲಿತಾಂಶ ನೋಡುವ ಸುಲಭ ವಿಧಾನ ಇಲ್ಲಿದೆ

ಬೆಂಗಳೂರು: ದ್ವಿತೀಯ ಪಿಯುಸಿ ಫಲಿತಾಂಶಕ್ಕಾಗಿ ಕಾಯುತ್ತಿದ್ದ ವಿದ್ಯಾರ್ಥಿಗಳಿಗೆ ಮಹತ್ವದ ಸುದ್ದಿ ಸಿಗುವ ಸಾಧ್ಯತೆ ಇದೆ. ಏಪ್ರಿಲ್ 7, 2026ರಂದು ಫಲಿತಾಂಶ ಪ್ರಕಟವಾಗುವ ನಿರೀಕ್ಷೆ ವ್ಯಕ್ತವಾಗಿದೆ. ಆದರೆ ಈ ಕುರಿತು ಇನ್ನೂ ಅಧಿಕೃತ ಘೋಷಣೆ ಹೊರಬಿದ್ದಿಲ್ಲ.

ಫೆಬ್ರವರಿ 28ರಿಂದ ಮಾರ್ಚ್ 17ರವರೆಗೆ ನಡೆದಿದ್ದ ದ್ವಿತೀಯ ಪಿಯುಸಿ ಪರೀಕ್ಷೆಗಳ ಫಲಿತಾಂಶವನ್ನು ಪ್ರಕಟಿಸಲು ಶಿಕ್ಷಣ ಇಲಾಖೆ ಸಿದ್ಧತೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.

ಫಲಿತಾಂಶ ಪ್ರಕಟವಾದ ಬಳಿಕ ವಿದ್ಯಾರ್ಥಿಗಳು ಅಧಿಕೃತ ವೆಬ್‌ಸೈಟ್‌ಗಳಾದ karresults.nic.in ಹಾಗೂ kseab.karnataka.gov.in ಮೂಲಕ ಪರಿಶೀಲಿಸಬಹುದು. ಈ ವೆಬ್‌ಸೈಟ್‌ಗಳಲ್ಲಿ ತೊಂದರೆ ಉಂಟಾದರೆ, ಡಿಜಿಲಾಕರ್ ವೇದಿಕೆಯಲ್ಲಿಯೂ ಫಲಿತಾಂಶ ವೀಕ್ಷಣೆಗೆ ಅವಕಾಶ ಇದೆ.

ಕಳೆದ ವರ್ಷ ಏಪ್ರಿಲ್ 8ರಂದು ಫಲಿತಾಂಶ ಪ್ರಕಟಿಸಲಾಗಿದ್ದು, ಈ ಬಾರಿಯೂ ಅದೇ ಸಮಯದಲ್ಲಿ ಪ್ರಕಟವಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಫಲಿತಾಂಶದಲ್ಲಿ ವಿದ್ಯಾರ್ಥಿಯ ಹೆಸರು, ನೋಂದಣಿ ಸಂಖ್ಯೆ, ವಿಷಯವಾರು ಅಂಕಗಳು, ಒಟ್ಟು ಅಂಕಗಳು ಹಾಗೂ ಫಲಿತಾಂಶದ ಸ್ಥಿತಿ ಸೇರಿದಂತೆ ಎಲ್ಲಾ ವಿವರಗಳು ಲಭ್ಯವಾಗುತ್ತವೆ.

RCB vs CSK: ಆರಂಭದಲ್ಲಿ ಪಿಚ್ ನಿಧಾನವಾಗಿತ್ತು: ಗೆಲುವಿನ ಬಳಿಕ ಕ್ಯಾಪ್ಟನ್‌ ಹೇಳಿದ್ದೇನು..?

0

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ನಡೆದ ಐಪಿಎಲ್ 11ನೇ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿದೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ RCB, 20 ಓವರ್‌ಗಳಲ್ಲಿ 250 ರನ್‌ಗಳ ಭಾರೀ ಮೊತ್ತ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಸಿಎಸ್ಕೆ 19.4 ಓವರ್‌ಗಳಲ್ಲಿ 207 ರನ್‌ಗಳಿಗೆ ಸೀಮಿತಗೊಂಡು 43 ರನ್‌ಗಳಿಂದ ಸೋಲನುಭವಿಸಿತು.

ಗೆಲುವಿನ ಬಳಿಕ ಮಾತನಾಡಿದ RCB ನಾಯಕ ರಜತ್ ಪಾಟಿದಾರ್, ತಂಡದ ಸಾಂಘಿಕ ಪ್ರದರ್ಶನವನ್ನು ಶ್ಲಾಘಿಸಿದರು. ಆರಂಭದಲ್ಲಿ ಪಿಚ್ ನಿಧಾನವಾಗಿತ್ತು. ಆದರೆ ವಿರಾಟ್ ಕೊಹ್ಲಿ ಮತ್ತು ಫಿಲ್ ಸಾಲ್ಟ್ ಉತ್ತಮ ಆರಂಭ ನೀಡಿದರು. ಅವರ ಬ್ಯಾಟಿಂಗ್ ಅದ್ಭುತವಾಗಿತ್ತು ಎಂದು ಹೇಳಿದರು.

13ನೇ ಓವರ್ ನಂತರ ಆಟದ ವೇಗ ಹೆಚ್ಚಿಸಿದ ಬಗ್ಗೆ ಮಾತನಾಡಿದ ಅವರು, ಬೌಲರ್‌ಗಳ ಮೇಲೆ ಒತ್ತಡ ಹೇರುವುದು ನಮ್ಮ ಯೋಜನೆ ಆಗಿತ್ತು. ಅದನ್ನು ನಾನು ಮತ್ತು ಟಿಮ್ ಡೇವಿಡ್ ಯಶಸ್ವಿಯಾಗಿ ಜಾರಿಗೊಳಿಸಿದ್ದೇವೆ ಎಂದರು.

ಟಿಮ್ ಡೇವಿಡ್ ವಿಶ್ವದ ಅತ್ಯುತ್ತಮ ಫಿನಿಷರ್‌ಗಳಲ್ಲಿ ಒಬ್ಬರು. ಅವರು ಹೊಡೆದ 106 ಮೀಟರ್ ಸಿಕ್ಸರ್ ಅದ್ಭುತ. ನಾನು ನಾನ್-ಸ್ಟ್ರೈಕರ್ ಎಂಡ್‌ನಿಂದ ಅದನ್ನು ಆನಂದಿಸಿದೆ. ಅವರ ಸ್ಥಿರ ಪ್ರದರ್ಶನ ತಂಡಕ್ಕೆ ದೊಡ್ಡ ಬಲ ಎಂದು ಪಾಟಿದಾರ್ ಮೆಚ್ಚುಗೆ ವ್ಯಕ್ತಪಡಿಸಿದರು.

ದೇಶದಲ್ಲಿ LPG ಕೊರತೆ ಇಲ್ಲ: 5 ಕೆಜಿ ಸಿಲಿಂಡರ್ ಪೂರೈಕೆ ಹೆಚ್ಚಿಸಿದ ಕೇಂದ್ರ ಸರ್ಕಾರ

0

ನವದೆಹಲಿ: ಅಮೆರಿಕ ಮತ್ತು ಇರಾನ್ ನಡುವಿನ ಯುದ್ಧ 38ನೇ ದಿನಕ್ಕೆ ಕಾಲಿಟ್ಟಿರುವ ಹಿನ್ನೆಲೆ ಎಲ್ಪಿಜಿ ಕೊರತೆ ಬಗ್ಗೆ ಆತಂಕ ವ್ಯಕ್ತವಾಗಿದ್ದರೂ, ಕೇಂದ್ರ ಸರ್ಕಾರ ಜನರಿಗೆ ಭರವಸೆ ನೀಡಿದೆ.

ದೇಶದಲ್ಲಿ ಎಲ್ಪಿಜಿ ಕೊರತೆ ಇಲ್ಲ, ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿದೆ. ಜನರು ಆತಂಕಪಡಬೇಕಾದ ಅಗತ್ಯವಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಇದೇ ವೇಳೆ ಕೊರತೆ ನೀಗಿಸುವ ಉದ್ದೇಶದಿಂದ 5 ಕೆಜಿ ಗ್ಯಾಸಿನ ಸಣ್ಣ ಸಿಲಿಂಡರ್‌ಗಳ ಪೂರೈಕೆಯನ್ನು ಹೆಚ್ಚಿಸಲಾಗಿದೆ.

ಸರ್ಕಾರದ ಮಾಹಿತಿ ಪ್ರಕಾರ, 5 ಕೆಜಿ ತೂಕದ ಎಲ್ಪಿಜಿ ಸಿಲಿಂಡರ್‌ಗಳು ಎಲ್ಲಾ ಗ್ಯಾಸ್ ಏಜೆನ್ಸಿಗಳಲ್ಲೂ ಲಭ್ಯವಿದ್ದು, ಗ್ರಾಹಕರು ಯಾವುದೇ ಒಂದು ಗುರುತಿನ ಚೀಟಿ ತೋರಿಸಿ ಸುಲಭವಾಗಿ ಖರೀದಿಸಬಹುದು. ವಾಸಸ್ಥಳದ ದಾಖಲೆ ಸಲ್ಲಿಸುವ ಅಗತ್ಯವಿಲ್ಲ ಎಂದು ತಿಳಿಸಲಾಗಿದೆ.

ಇತ್ತೀಚಿನ ದಿನಗಳಲ್ಲಿ ಈ ಸಣ್ಣ ಸಿಲಿಂಡರ್‌ಗಳಿಗೆ ಬೇಡಿಕೆ ಹೆಚ್ಚಾಗಿದ್ದು, ಕಳೆದ ಮಾರ್ಚ್ 23ರಿಂದ ದೇಶಾದ್ಯಂತ ಸುಮಾರು 6.6 ಲಕ್ಷ ಸಿಲಿಂಡರ್‌ಗಳು ಮಾರಾಟವಾಗಿವೆ ಎಂದು ಪೆಟ್ರೋಲಿಯಂ ಸಚಿವಾಲಯ ತಿಳಿಸಿದೆ.

ಮನೆ ಬಳಕೆ, ಸಾರಿಗೆ ಹಾಗೂ ಇತರ ಅಗತ್ಯ ಸೇವೆಗಳಿಗಾಗಿ ಪೆಟ್ರೋಲ್, ಡೀಸೆಲ್ ಮತ್ತು ಅನಿಲ ಪೂರೈಕೆ ನಿರಂತರವಾಗಿರಲಿದೆ. ಏಪ್ರಿಲ್ 6ರಿಂದ ರಸಗೊಬ್ಬರ ಘಟಕಗಳಿಗೆ ಅನಿಲ ಪೂರೈಕೆ ಸರಾಸರಿ ಬಳಕೆಯ 90% ಮಟ್ಟಕ್ಕೆ ಹೆಚ್ಚಾಗುವ ನಿರೀಕ್ಷೆಯಿದೆ.

ದೇಶಾದ್ಯಂತ ಎಲ್ಲಾ ಸಂಸ್ಕರಣಾಗಾರಗಳು ಪೂರ್ಣ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸಾಕಷ್ಟು ಕಚ್ಚಾ ತೈಲ ಸಂಗ್ರಹ ಇದೆ. ಪೆಟ್ರೋಲ್ ಬಂಕ್‌ಗಳಲ್ಲೂ ಸಮರ್ಪಕ ದಾಸ್ತಾನು ಇರುವುದಾಗಿ ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

ಕಲ್ಲಂಗಡಿ ಬೆಳೆ ಹಾಳು- ಯುದ್ಧದ ಪರಿಣಾಮಕ್ಕೆ ಗದಗ ರೈತರ ಕಣ್ಣೀರು!

0

ಗದಗ: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮ ಗದಗ ಜಿಲ್ಲೆಯ ಕಲ್ಲಂಗಡಿ ಬೆಳೆಗಾರರ ಮೇಲೆ ಭಾರೀ ಪರಿಣಾಮ ಬೀರಿದೆ. ಜಿಲ್ಲೆಯ ಶಿರಹಟ್ಟಿ ತಾಲೂಕಿನ ಮಾಗಡಿ ಗ್ರಾಮದಲ್ಲಿ ಕಟಾವು ಮಾಡಿದ ಕಲ್ಲಂಗಡಿ ಮಾರಾಟವಾಗದೇ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಮಾಗಡಿ ಗ್ರಾಮ ಕಲ್ಲಂಗಡಿ ಬೆಳೆಗೆ ಪ್ರಸಿದ್ಧಿಯಾಗಿದ್ದು, ಈ ಬಾರಿ ಆಲಿಕಲ್ಲು ಮಳೆಯಿಂದ ಬೆಳೆ ಹಾನಿಯಾಗಿದ್ದರೂ ರೈತರು ಕಟಾವು ಮಾಡಿಕೊಂಡಿದ್ದರು. ಆದರೆ ಇದೀಗ ವ್ಯಾಪಾರಸ್ಥರು ಖರೀದಿಗೆ ಮುಂದೆ ಬರುತ್ತಿಲ್ಲ. ಇದರಿಂದ ಜಮೀನಿನಲ್ಲಿ ಶೇಖರಣೆ ಮಾಡಿಕೊಂಡಿರುವ ಕಲ್ಲಂಗಡಿ ಕೊಳೆತು ಹೋಗುತ್ತಿರುವುದು ರೈತರ ಕಳವಳಕ್ಕೆ ಕಾರಣವಾಗಿದೆ.

ಇದುವರೆಗೆ ವ್ಯಾಪಾರಸ್ಥರು ಕಲ್ಲಂಗಡಿಯನ್ನು ಬೇರೆ ರಾಜ್ಯಗಳು ಹಾಗೂ ವಿದೇಶಗಳಿಗೆ ರಫ್ತು ಮಾಡುತ್ತಿದ್ದರು. ಆದರೆ ಯುದ್ಧದ ಪರಿಣಾಮದಿಂದ ರಫ್ತು ವ್ಯವಸ್ಥೆ ಸಂಪೂರ್ಣ ಕುಂಠಿತಗೊಂಡಿದ್ದು, ಸ್ಥಳೀಯ ಮಾರುಕಟ್ಟೆಯಲ್ಲೂ ಬೇಡಿಕೆ ಕುಸಿದಿದೆ.

ಮಾಗಡಿ ಗ್ರಾಮದ ಗೋಪಾಲಗೌಡ ಭರಮಗೌಡ್ರು ಎಂಬ ರೈತನು ನಾಲ್ಕು ಎಕರೆ ಪ್ರದೇಶದಲ್ಲಿ ಕಲ್ಲಂಗಡಿ ಬೆಳೆ ಬೆಳೆದಿದ್ದು, ಸುಮಾರು ನಾಲ್ಕು ರಿಂದ ಐದು ಲಕ್ಷ ರೂಪಾಯಿ ವೆಚ್ಚ ಮಾಡಿದ್ದಾನೆ. ಸುಮಾರು 50ರಿಂದ 60 ಟನ್ ಕಲ್ಲಂಗಡಿ ಕಟಾವು ಮಾಡಿಕೊಂಡಿದ್ದರೂ ಮಾರಾಟವಾಗದೇ ಜಮೀನಿನಲ್ಲೇ ಹಾಳಾಗುತ್ತಿದೆ ಎಂದು ಆತ ಆತಂಕ ವ್ಯಕ್ತಪಡಿಸಿದ್ದಾನೆ.

“ಯುದ್ಧದ ಪರಿಣಾಮವಾಗಿ ಕಲ್ಲಂಗಡಿ ಯಾರೂ ಖರೀದಿ ಮಾಡುತ್ತಿಲ್ಲ. ನಾವು ಬೆಳೆದ ಬೆಳೆ ಕಣ್ಣೆದುರೇ ನಾಶವಾಗುತ್ತಿದೆ” ಎಂದು ರೈತರು ಅಳಲು ತೋಡಿಕೊಂಡಿದ್ದಾರೆ. ಸರ್ಕಾರ ತಕ್ಷಣ ಮಧ್ಯಪ್ರವೇಶಿಸಿ ರೈತರಿಗೆ ನೆರವು ನೀಡಬೇಕು ಎಂಬುದು ರೈತರ ಒತ್ತಾಯವಾಗಿದೆ.

ಚಿನ್ನಸ್ವಾಮಿಯಲ್ಲಿ RCB ಅಬ್ಬರ: CSK ವಿರುದ್ಧ 250 ರನ್ – 18 ವರ್ಷಗಳ ಇತಿಹಾಸ ಬದಲಿಸಿದ ಬೆಂಗಳೂರು ಬಾಯ್ಸ್‌

0

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ನಡೆದ ಸೂಪರ್ ಸಂಡೇ ಪಂದ್ಯದಲ್ಲಿ ಪ್ರಚಂಡ ಬ್ಯಾಟಿಂಗ್ ಪ್ರದರ್ಶನ ನೀಡುತ್ತಾ ಐಪಿಎಲ್ ಇತಿಹಾಸದಲ್ಲೇ ಹೊಸ ದಾಖಲೆ ನಿರ್ಮಿಸಿದೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ CSK ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಇದರ ಪ್ರಯೋಜನ ಪಡೆದುಕೊಂಡ RCB ಬ್ಯಾಟ್ಸ್‌ಮನ್‌ಗಳು ಸಿಡಿಲಬ್ಬರದ ಆಟ ಪ್ರದರ್ಶಿಸಿ 20 ಓವರ್‌ಗಳಲ್ಲಿ ಬರೋಬ್ಬರಿ 250 ರನ್ ಕಲೆಹಾಕಿದರು.

ಈ ಮೂಲಕ ಐಪಿಎಲ್ ಇತಿಹಾಸದಲ್ಲಿ CSK ವಿರುದ್ಧ 250 ರನ್ ಗಳಿಸಿದ ಮೊದಲ ತಂಡವೆಂಬ ಹೆಗ್ಗಳಿಕೆಗೆ RCB ಪಾತ್ರವಾಯಿತು. ಕಳೆದ 18 ವರ್ಷಗಳಲ್ಲಿ CSK ವಿರುದ್ಧ ಯಾವುದೇ ತಂಡ 235 ರನ್‌ಗಿಂತ ಹೆಚ್ಚು ಗಳಿಸಿರಲಿಲ್ಲ ಎಂಬುದು ವಿಶೇಷ.

ಇದಕ್ಕೂ ಮೊದಲು 2014ರಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಮತ್ತು 2024ರಲ್ಲಿ ಗುಜರಾತ್ ಟೈಟಾನ್ಸ್ ತಂಡಗಳು ತಲಾ 231 ರನ್ ಗಳಿಸಿದ್ದು ಈವರೆಗಿನ ಗರಿಷ್ಠ ಸಾಧನೆ ಆಗಿತ್ತು.

ಆದರೆ ಈ ಬಾರಿ RCB ಬ್ಯಾಟ್ಸ್‌ಮನ್‌ಗಳು ಸಿಎಸ್ಕೆ ಬೌಲರ್‌ಗಳನ್ನು ಚೆಂಡಾಡಿ ಎಲ್ಲಾ ಲೆಕ್ಕಾಚಾರಗಳನ್ನು ತಲೆಕೆಳಗಾಗಿಸಿದರು.

ಇದರೊಂದಿಗೆ RCB ತಂಡವು ಐಪಿಎಲ್‌ನಲ್ಲಿ ಒಟ್ಟು 36 ಬಾರಿ 200+ ರನ್ ಗಳಿಸಿದ ದಾಖಲೆ ನಿರ್ಮಿಸಿ, CSK ದಾಖಲೆಗೆ ಸಮನಾಗಿದೆ ಎಂಬುದು ಮತ್ತೊಂದು ವಿಶೇಷವಾಗಿದೆ.

ಸ್ನೇಹಿತನ ಮದುವೆಗೆ ಬಂದಿದ್ದ ಬೆಂಗಳೂರಿನ ಐಟಿ ಉದ್ಯೋಗಿ ಭದ್ರಾ ನದಿಯಲ್ಲಿ ಮುಳುಗಿ ಸಾವು

ಚಿಕ್ಕಮಗಳೂರು, ಏ.6: ಜಿಲ್ಲೆಯ ನರಸಿಂಹರಾಜಪುರ (ಎನ್.ಆರ್.ಪುರ) ತಾಲೂಕಿನ ಬನ್ನೂರು ಗ್ರಾಮದ ಬಳಿ ಭದ್ರಾ ನದಿಯಲ್ಲಿ ಈಜಲು ತೆರಳಿದ್ದ ಐಟಿ ಉದ್ಯೋಗಿಯೊಬ್ಬರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ದುರಂತ ಸಂಭವಿಸಿದೆ.

ಮೃತರನ್ನು ಗದಗ ಮೂಲದ ಅಭಿಷೇಕ್ (27) ಎಂದು ಗುರುತಿಸಲಾಗಿದೆ. ಅವರು ಬೆಂಗಳೂರಿನ ಖಾಸಗಿ ಐಟಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದರು.

ಸ್ನೇಹಿತನ ಮದುವೆಯಲ್ಲಿ ಭಾಗವಹಿಸಲು ಸ್ನೇಹಿತರೊಂದಿಗೆ ಬಾಳೆಹೊನ್ನೂರು ಸಮೀಪದ ಬನ್ನೂರು ಗ್ರಾಮಕ್ಕೆ ಬಂದಿದ್ದ ಅಭಿಷೇಕ್, ಸ್ಥಳೀಯ ಹೋಂಸ್ಟೇನಲ್ಲಿ ವಾಸ್ತವ್ಯ ಹೂಡಿದ್ದರು. ಇಂದು ಬೆಳಿಗ್ಗೆ ಸ್ನೇಹಿತರೊಂದಿಗೆ ಭದ್ರಾ ನದಿಗೆ ಈಜಲು ತೆರಳಿದ ವೇಳೆ, ನೀರಿನ ಪ್ರಬಲ ಸೆಳೆತಕ್ಕೆ ಸಿಲುಕಿ ನಾಪತ್ತೆಯಾಗಿದ್ದರು.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಸ್ಥಳೀಯರು ಶೋಧ ಕಾರ್ಯಾಚರಣೆ ಕೈಗೊಂಡರು. ಗಂಟೆಗಳ ಕಾಲ ನಡೆದ ಹುಡುಕಾಟದ ಬಳಿಕ, ಬನ್ನೂರು ಸಮೀಪದ ನದಿಯಲ್ಲೇ ಅಭಿಷೇಕ್ ಅವರ ಮೃತದೇಹ ಪತ್ತೆಯಾಯಿತು.

ಮದುವೆ ಸಂಭ್ರಮದಲ್ಲಿದ್ದ ಸ್ನೇಹಿತರು ಹಾಗೂ ಕುಟುಂಬಸ್ಥರಲ್ಲಿ ಈ ಘಟನೆ ತೀವ್ರ ಶೋಕ ಮೆರೆಯಿಸಿದ್ದು, ಸಂತಸದ ವಾತಾವರಣ ಕ್ಷಣಾರ್ಧದಲ್ಲಿ ದುಃಖಕ್ಕೆ ತಿರುಗಿದೆ.

ಈ ಸಂಬಂಧ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

error: Content is protected !!