Home Blog

ಗೋಲ್ಡ್ ಖರೀದಿದಾರರಿಗೆ ಶಾಕ್: ಕೇಂದ್ರದಿಂದ ಭಾರಿ ಸುಂಕ ಏರಿಕೆ!

ನವದೆಹಲಿ: ಜಾಗತಿಕ ಆರ್ಥಿಕ ಅಸ್ಥಿರತೆ ಹಾಗೂ ಇಂಧನ ಬಿಕ್ಕಟ್ಟಿನ ನಡುವೆಯೇ ದೇಶದ ಆರ್ಥಿಕತೆಯನ್ನು ರಕ್ಷಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಚಿನ್ನ ಮತ್ತು ಬೆಳ್ಳಿಯ ಮೇಲಿನ ಆಮದು ಸುಂಕವನ್ನು ಭಾರೀ ಪ್ರಮಾಣದಲ್ಲಿ ಹೆಚ್ಚಿಸಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಮಾಡಿದ ಆರ್ಥಿಕ ಮಿತವ್ಯಯದ ಮನವಿಯ ಬೆನ್ನಲ್ಲೇ ಈ ನಿರ್ಧಾರ ಹೊರಬಿದ್ದಿದೆ. ಈ ಹಿಂದೆ ಶೇ 6 ರಷ್ಟಿದ್ದ ಒಟ್ಟಾರೆ ಆಮದು ಸುಂಕವನ್ನು ಈಗ ಶೇ 15 ಕ್ಕೆ ಏರಿಸಲಾಗಿದೆ. ಇದರಲ್ಲಿ ಶೇ 10 ರಷ್ಟು ಮೂಲ ಕಸ್ಟಮ್ಸ್ ಸುಂಕ ಹಾಗೂ ಶೇ 5 ರಷ್ಟು ಕೃಷಿ ಮೂಲಸೌಕರ್ಯ ಅಭಿವೃದ್ಧಿ ಸೆಸ್ ಸೇರಿದೆ. ಈ ನಿರ್ಧಾರದಿಂದ ದೇಶೀಯ ಮಾರುಕಟ್ಟೆಯಲ್ಲಿ ಚಿನ್ನ ಹಾಗೂ ಬೆಳ್ಳಿಯ ದರ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ.

ಡಾಲರ್ ಎದುರು ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ ಕಂಡ ಹಿನ್ನೆಲೆಯಲ್ಲಿ, ವಿದೇಶಿ ವಿನಿಮಯ ಮೀಸಲು ನಿಧಿಯನ್ನು ರಕ್ಷಿಸಲು ಸರ್ಕಾರ ಈ ಕ್ರಮ ಕೈಗೊಂಡಿದೆ ಎನ್ನಲಾಗಿದೆ. ಇರಾನ್ ಯುದ್ಧ ಹಾಗೂ ಜಾಗತಿಕ ತೈಲ ಬೆಲೆ ಏರಿಕೆಯಿಂದ ಉಂಟಾಗಬಹುದಾದ ಆರ್ಥಿಕ ಒತ್ತಡವನ್ನು ತಡೆಯಲು ಸರ್ಕಾರ ಮುನ್ನೆಚ್ಚರಿಕಾ ಕ್ರಮವಾಗಿ ಈ ನಿರ್ಧಾರ ಕೈಗೊಂಡಿದೆ.

ಪ್ರಧಾನಿ ಮೋದಿ ಅವರು ನಾಗರಿಕರಿಗೆ ಕನಿಷ್ಠ ಒಂದು ವರ್ಷದವರೆಗೆ ಚಿನ್ನ ಖರೀದಿಯನ್ನು ಮುಂದೂಡಬೇಕು, ವಿದೇಶಿ ಪ್ರವಾಸ ಕಡಿಮೆ ಮಾಡಬೇಕು ಹಾಗೂ ಸಾರ್ವಜನಿಕ ಸಾರಿಗೆಯನ್ನು ಹೆಚ್ಚು ಬಳಸಬೇಕು ಎಂದು ಮನವಿ ಮಾಡಿದ್ದರು. ಆಮದು ಅವಲಂಬನೆ ಕಡಿಮೆ ಮಾಡಿ ದೇಶದ ಆರ್ಥಿಕತೆಯನ್ನು ಬಲಪಡಿಸುವುದೇ ಈ ಕರೆಯ ಉದ್ದೇಶ ಎಂದು ಹೇಳಲಾಗಿದೆ.

ಭಾರತವು ವಿಶ್ವದಲ್ಲೇ ಚಿನ್ನದ ಎರಡನೇ ಅತಿದೊಡ್ಡ ಗ್ರಾಹಕ ರಾಷ್ಟ್ರವಾಗಿದ್ದು, ಸುಂಕ ಏರಿಕೆಯಿಂದ ಚಿನ್ನದ ಬೇಡಿಕೆಯಲ್ಲಿ ಕುಸಿತ ಉಂಟಾಗುವ ಸಾಧ್ಯತೆ ಇದೆ. ಆದರೆ ಮತ್ತೊಂದೆಡೆ ಅಧಿಕ ತೆರಿಗೆಯಿಂದ ಚಿನ್ನದ ಕಳ್ಳಸಾಗಣೆ ಹೆಚ್ಚಾಗುವ ಆತಂಕವೂ ವ್ಯಕ್ತವಾಗಿದೆ.

ಈಗಾಗಲೇ ಏಪ್ರಿಲ್ ತಿಂಗಳಲ್ಲಿ ಭಾರತದ ಚಿನ್ನದ ಆಮದು ಕಳೆದ 30 ವರ್ಷಗಳಲ್ಲೇ ಕನಿಷ್ಠ ಮಟ್ಟ ತಲುಪಿತ್ತು. ಇದೀಗ ಸುಂಕ ಏರಿಕೆಯಿಂದ ಆಮದು ಪ್ರಮಾಣ ಇನ್ನಷ್ಟು ಇಳಿಯುವ ಸಾಧ್ಯತೆ ಇದೆ.

ಸ್ಯಾಂಡಲ್‌ವುಡ್‌ಗೆ ಆಘಾತ: ಕನ್ನಡದ ಖ್ಯಾತ ನಟ ದಿಲೀಪ್ ರಾಜ್ ಇನ್ನಿಲ್ಲ!

ಬೆಂಗಳೂರು: ಹಲವು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ಖ್ಯಾತ ನಟ ದಿಲೀಪ್ ರಾಜ್ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ.

ಮನೆಯಲ್ಲೇ ಅವರಿಗೆ ಹೃದಯಾಘಾತ ಸಂಭವಿಸಿದ್ದು, ತಕ್ಷಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತಾದರೂ ಅವರು ಬದುಕುಳಿಯಲಿಲ್ಲ ಎಂದು ತಿಳಿದುಬಂದಿದೆ.

ದಿಲೀಪ್ ರಾಜ್ ನಿಧನದ ಸುದ್ದಿ ತಿಳಿಯುತ್ತಿದ್ದಂತೆಯೇ ಚಿತ್ರರಂಗದ ಅನೇಕ ಕಲಾವಿದರು, ಸ್ನೇಹಿತರು ಹಾಗೂ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ. ಕನ್ನಡ ಸಿನಿಮಾಗಳಲ್ಲಿ ತಮ್ಮದೇ ಆದ ನಟನೆಯ ಮೂಲಕ ಗುರುತಿಸಿಕೊಂಡಿದ್ದ ಅವರು ಹಲವು ಜನಪ್ರಿಯ ಚಿತ್ರಗಳಲ್ಲಿ ಅಭಿನಯಿಸಿದ್ದರು.

ಮಿಲನ, ಯು ಟರ್ನ್, ಆರ್ಕೆಸ್ಟ್ರಾ ಮೈಸೂರು, ನಿಮ್ಮ ವಸ್ತುಗಳಿಗೆ ನೀವೇ ಜವಾಬ್ದಾರರು ಸೇರಿದಂತೆ ಹಲವು ಸಿನಿಮಾಗಳಲ್ಲಿ ಅವರು ನಟಿಸಿದ್ದರು.

ಸಿನಿಮಾ ಮಾತ್ರವಲ್ಲದೆ ಕಿರುತೆರೆಯಲ್ಲೂ ದಿಲೀಪ್ ರಾಜ್ ಸಕ್ರಿಯರಾಗಿದ್ದರು. ಹಿಟ್ಲರ್ ಕಲ್ಯಾಣ ಧಾರಾವಾಹಿಯಲ್ಲಿ ಅಭಿನಯಿಸಿದ್ದ ಅವರು, ಪಾರು ಹಾಗೂ ನಾ ನಿನ್ನ ಬಿಡಲಾರೆ ಧಾರಾವಾಹಿಗಳನ್ನು ನಿರ್ಮಾಣ ಮಾಡಿದ್ದರು.

NEET-UG 2026 ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ: ಕಿಂಗ್‌ಪಿನ್ ಬಂಧನ, ತನಿಖೆ ತೀವ್ರ!

ನವದೆಹಲಿ: ಮೇ 3 ರಂದು ನಡೆದ NEET-UG 2026 ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಕಿಂಗ್‌ಪಿನ್ ಅನ್ನು ಪೊಲೀಸರು ಬಂಧಿಸಿದ್ದಾರೆ.

ಈ ಪ್ರಕರಣದಲ್ಲಿ ಅಂತರರಾಜ್ಯ ಸಂಘಟಿತ ಜಾಲ ಕಾರ್ಯನಿರ್ವಹಿಸಿದ್ದ ಮಾಹಿತಿ ತನಿಖೆಯಿಂದ ಬೆಳಕಿಗೆ ಬಂದಿದೆ. ರಾಜಸ್ಥಾನ ಪೊಲೀಸರ ವಿಶೇಷ ಕಾರ್ಯಾಚರಣೆ ತಂಡ (SOG) ನಡೆಸಿದ ತನಿಖೆಯಲ್ಲಿ ಈ ಜಾಲದ ಪ್ರಮುಖ ಆರೋಪಿ ಮನೀಶ್ ಯಾದವ್ ಎಂಬಾತನನ್ನು ಜೈಪುರದಲ್ಲಿ ಬಂಧಿಸಲಾಗಿದೆ. ಆತ ಪ್ರಶ್ನೆ ಪತ್ರಿಕೆ ಸೋರಿಕೆ ಹಾಗೂ ಅದನ್ನು ಸಂಘಟಿತವಾಗಿ ವಿತರಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದಲ್ಲದೆ ಮತ್ತೊಬ್ಬ ಆರೋಪಿ ರಾಕೇಶ್ ಮಾಂಡವಾರಿಯಾನನ್ನೂ ಬಂಧಿಸಲಾಗಿದೆ. ಸೋರಿಕೆಯಾದ ಪ್ರಶ್ನೆ ಪತ್ರಿಕೆಯನ್ನು ವಿವಿಧ ರಾಜ್ಯಗಳಿಗೆ ಪ್ರಸಾರ ಮಾಡುವ ಜವಾಬ್ದಾರಿ ಅವನ ಮೇಲಿತ್ತು ಎಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ.

ತನಿಖೆ ಇನ್ನಷ್ಟು ವಿಸ್ತರಗೊಂಡಿದ್ದು, ರಾಜಸ್ಥಾನ, ಮಹಾರಾಷ್ಟ್ರ, ಉತ್ತರಾಖಂಡ ಸೇರಿದಂತೆ ಹಲವು ರಾಜ್ಯಗಳಲ್ಲಿ ದಾಳಿಗಳು ನಡೆದಿವೆ. ಇದುವರೆಗೆ ಸುಮಾರು 9 ಆರೋಪಿಗಳನ್ನು ಬಂಧಿಸಲಾಗಿದ್ದು, 45ಕ್ಕೂ ಹೆಚ್ಚು ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

ರಾಜಸ್ಥಾನದ ಸಿಕಾರ್ ಮತ್ತು ಜುಂಜುನು ಜಿಲ್ಲೆಗಳು, ಜೊತೆಗೆ ಡೆಹ್ರಾಡೂನ್‌ನಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಪ್ರಮುಖ ಶಂಕಿತರು ಬಂಧಿತರಾಗಿದ್ದಾರೆ. ಮಹಾರಾಷ್ಟ್ರದ ನಾಸಿಕ್‌ನಲ್ಲಿ ಶುಭಂ ಖೈರ್ನಾರ್ ಎಂಬಾತನನ್ನು ಸಹ ಪೊಲೀಸರು ಬಂಧಿಸಿದ್ದಾರೆ.

ಪರೀಕ್ಷಾ ವ್ಯವಸ್ಥೆಯ ಪಾವಿತ್ರ್ಯಕ್ಕೆ ಧಕ್ಕೆ ತರುವ ಈ ಅಕ್ರಮ ಜಾಲದ ಸಂಪೂರ್ಣ ಪತ್ತೆಗೆ ವಿವಿಧ ರಾಜ್ಯಗಳ ಪೊಲೀಸರು ಹಾಗೂ ವಿಶೇಷ ತನಿಖಾ ತಂಡಗಳು ಕಾರ್ಯಾಚರಣೆ ಮುಂದುವರಿಸಿದ್ದಾರೆ.

 

ರಾಯರ ಮಠದಲ್ಲಿ ದಾಖಲೆ ಬರೆದ ಹುಂಡಿ ಎಣಿಕೆ! 20 ದಿನದಲ್ಲಿ 2.78 ಕೋಟಿ ಕಾಣಿಕೆ ಸಂಗ್ರಹ

ರಾಯಚೂರು: ಕಲಿಯುಗದ ಕಾಮಧೇನು ಎಂದೇ ಪ್ರಸಿದ್ಧವಾದ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠಕ್ಕೆ ಏಪ್ರಿಲ್ ಹಾಗೂ ಮೇ ತಿಂಗಳ ಮೊದಲ 20 ದಿನಗಳಲ್ಲಿ ಭಕ್ತರಿಂದ ಭಾರೀ ಪ್ರಮಾಣದ ಕಾಣಿಕೆ ಹರಿದು ಬಂದಿದೆ.

ಮಠದಲ್ಲಿ ನಡೆದ ಕಾಣಿಕೆ ಹುಂಡಿ ಎಣಿಕೆ ಕಾರ್ಯ ಸೋಮವಾರ ರಾತ್ರಿ ಮುಕ್ತಾಯವಾಗಿದ್ದು, ಒಟ್ಟು ₹2,78,19,526 ರೂಪಾಯಿ ಸಂಗ್ರಹವಾಗಿದೆ ಎಂದು ಮಠದ ಮೂಲಗಳು ತಿಳಿಸಿವೆ. ಇದರಲ್ಲಿ ₹2,69,28,176 ನೋಟು ರೂಪದಲ್ಲಿದ್ದು, ₹8,91,350 ನಾಣ್ಯಗಳ ರೂಪದಲ್ಲಿ ಸಂಗ್ರಹವಾಗಿದೆ.

ಅದೇ ರೀತಿ ಭಕ್ತರು ಕಾಣಿಕೆ ರೂಪದಲ್ಲಿ 15.100 ಗ್ರಾಂ ಚಿನ್ನ ಹಾಗೂ 751 ಗ್ರಾಂ ಬೆಳ್ಳಿಯನ್ನು ಸಮರ್ಪಿಸಿದ್ದಾರೆ ಎಂದು ತಿಳಿದುಬಂದಿದೆ.

ಹುಂಡಿ ಎಣಿಕೆ ಕಾರ್ಯದಲ್ಲಿ ಮಠದ ನೂರಾರು ಸಿಬ್ಬಂದಿ, ಭಜನಾ ಮಂಡಳಿಯ ಭಕ್ತರು ಹಾಗೂ ಕರ ಸೇವಕರು ಭಾಗವಹಿಸಿದ್ದರು. ಮಂತ್ರಾಲಯ ರಾಘವೇಂದ್ರ ಸ್ವಾಮಿ ಮಠದಲ್ಲಿ ಪ್ರತಿ ತಿಂಗಳು ನಡೆಯುವ ಹುಂಡಿ ಎಣಿಕೆ ಭಕ್ತರ ನಂಬಿಕೆ ಹಾಗೂ ಭಕ್ತಿಯ ಪ್ರತಿಬಿಂಬವಾಗಿದ್ದು, ಈ ಬಾರಿಯೂ ಭಾರೀ ಕಾಣಿಕೆ ದಾಖಲಾಗಿದೆ.

ಮುಗ್ಗೂರು ಅರಣ್ಯದಲ್ಲಿ ಹೆಣ್ಣಾನೆ ಸಾವು: ತಾಯಿ ಆನೆ ಬಳಿ ಮರಿ ಆನೆಯ ರೋಧನೆ!

ರಾಮನಗರ: ರಾಮನಗರ ಜಿಲ್ಲೆಯ ಕಾವೇರಿ ವನ್ಯಜೀವಿ ವಲಯದ ಮುಗ್ಗೂರು ಅರಣ್ಯ ಪ್ರದೇಶದಲ್ಲಿ ಹೃದಯವಿದ್ರಾವಕ ಘಟನೆ ನಡೆದಿದೆ.

ಅನಾರೋಗ್ಯದಿಂದ ಬಳಲುತ್ತಿದ್ದ 35 ವರ್ಷದ ಹೆಣ್ಣಾನೆ ಬಹುಅಂಗಾಂಗ ವೈಫಲ್ಯದಿಂದ ಮೃತಪಟ್ಟಿದ್ದು, ಅದರ ಬಳಿ ನಿಂತು ಮರಿ ಆನೆ ಮೂಕರೋಧನೆ ವ್ಯಕ್ತಪಡಿಸಿರುವ ದೃಶ್ಯ ಎಲ್ಲರ ಮನಕಲುಕಿಸಿದೆ.

ಕನಕಪುರ ತಾಲೂಕಿನ ಮಡಿವಾಳ ಸಮೀಪದ ಮುಗ್ಗೂರು ಅರಣ್ಯ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ತಾಯಿ ಆನೆ ಸಾವನ್ನಪ್ಪಿದ ವಿಷಯ ತಿಳಿಯದೇ ಅದರ ದೇಹದ ಬಳಿ ಮರಿ ಆನೆ ನಿಂತು ನಿರಂತರವಾಗಿ ಸುತ್ತಾಡಿ ರೋಧನೆ ವ್ಯಕ್ತಪಡಿಸಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

ಈ ದೃಶ್ಯದ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವನ್ಯಜೀವಿ ಪ್ರೇಮಿಗಳಲ್ಲಿ ಭಾವನಾತ್ಮಕ ಪ್ರತಿಕ್ರಿಯೆ ಮೂಡಿಸಿದೆ.

ಘಟನೆಯ ಮಾಹಿತಿ ಪಡೆದ ಕಾವೇರಿ ವನ್ಯಜೀವಿ ವಲಯದ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಂತರ ಮೃತ ಕಾಡಾನೆಯ ಮರಣೋತ್ತರ ಪರೀಕ್ಷೆ ನಡೆಸಿ ಅಂತ್ಯಕ್ರಿಯೆ ನೆರವೇರಿಸಲಾಗಿದೆ.

ಬಳಿಕ ಅರಣ್ಯಾಧಿಕಾರಿಗಳು ಮರಿ ಆನೆಯನ್ನು ಶಾಂತಪಡಿಸಿ ಸುರಕ್ಷಿತವಾಗಿ ಕಾಡಿಗೆ ಬಿಡಲಾಗಿದೆ ಎಂದು ತಿಳಿದುಬಂದಿದೆ.

 

ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ಬೈಕ್ ಬ್ಯಾಟರಿ ಸ್ಫೋಟ: ವ್ಯಕ್ತಿ ಸಾವು!

ಬೆಂಗಳೂರು: ಎಲೆಕ್ಟ್ರಿಕ್ ಬೈಕ್ ಬ್ಯಾಟರಿ ಸ್ಫೋಟಗೊಂಡು 62 ವರ್ಷದ ವ್ಯಕ್ತಿ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಹಲಸೂರು ಪೊಲೀಸ್ ಠಾಣಾ ವ್ಯಾಪ್ತಿಯ ಮರ್ಸಿ ಟೌನ್‌ನಲ್ಲಿ ನಡೆದಿದೆ.

ಮೃತರನ್ನು ಲೂಥ್ ನಾಥನ್ (62) ಎಂದು ಗುರುತಿಸಲಾಗಿದೆ. ಆಟೋ ಚಾಲಕರಾಗಿದ್ದ ಅವರು ಮನೆಯಲ್ಲಿ ರಾತ್ರಿ ಎಲೆಕ್ಟ್ರಿಕ್ ಬೈಕನ್ನು ಚಾರ್ಜ್‌ಗೆ ಹಾಕಿ ಹಾಲ್‌ನಲ್ಲಿ ಮಲಗಿದ್ದ ವೇಳೆ ಈ ದುರಂತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮನೆ ಗ್ರೌಂಡ್ ಫ್ಲೋರ್‌ನಲ್ಲಿ ಒಬ್ಬರೇ ಮಲಗಿದ್ದ ನಾಥನ್, ಫಸ್ಟ್ ಫ್ಲೋರ್‌ನಲ್ಲಿ ಅವರ ಮಕ್ಕಳು ವಾಸವಾಗಿದ್ದರು. ಮುಂಜಾನೆ ಸುಮಾರು 3:15ರ ವೇಳೆಗೆ ಬೈಕ್ ಬ್ಯಾಟರಿ ಸ್ಫೋಟಗೊಂಡಿದ್ದು, ಕ್ಷಣಾರ್ಧದಲ್ಲಿ ಬೆಂಕಿ ಮನೆಗೆ ವ್ಯಾಪಿಸಿದೆ ಎಂದು ಹೇಳಲಾಗಿದೆ.

ಸ್ಫೋಟದ ತೀವ್ರತೆಯಿಂದ ಮನೆ ಸಂಪೂರ್ಣವಾಗಿ ಹೊತ್ತಿ ಉರಿದಿದ್ದು, ನಾಥನ್ ಸುಟ್ಟ ಸ್ಥಿತಿಯಲ್ಲಿ ಮೃತದೇಹವಾಗಿ ಪತ್ತೆಯಾಗಿದ್ದಾರೆ. ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದರೂ ಮನೆಗೆ ಭಾರೀ ಹಾನಿಯಾಗಿದೆ.

ಘಟನೆಯ ಕುರಿತು ಹಲಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬ್ಯಾಟರಿ ಸ್ಫೋಟದ ನಿಖರ ಕಾರಣದ ಬಗ್ಗೆ ತನಿಖೆ ನಡೆಯುತ್ತಿದೆ.

 

ರೇಷ್ಮೆ ಸೀರೆ ಸ್ವಚ್ಛಗೊಳಿಸುವ ಸುಲಭ ಮನೆಮದ್ದುಗಳು – ಇಲ್ಲಿದೆ ಉಪಯುಕ್ತ ಟಿಪ್ಸ್

ರೇಷ್ಮೆ ಸೀರೆಗಳು ಮಹಿಳೆಯರ ಫ್ಯಾಷನ್‌ನಲ್ಲಿ ಸದಾ ವಿಶೇಷ ಸ್ಥಾನ ಪಡೆದಿವೆ.

ಕಾಲ ಬದಲಾಗಿದ್ರೂ, ಫ್ಯಾಷನ್ ಎಷ್ಟೇ ಹೊಸ ರೂಪ ಪಡೆದರೂ ರೇಷ್ಮೆ ಸೀರೆ ಮೇಲಿನ ಆಕರ್ಷಣೆ ಮಾತ್ರ ಕಡಿಮೆಯಾಗಿಲ್ಲ. ವಿಶೇಷ ಸಂದರ್ಭಗಳಲ್ಲಿ ಧರಿಸಲಾಗುವ ಈ ಸೀರೆಗಳು ಅತ್ಯಂತ ಸೂಕ್ಷ್ಮ ಬಟ್ಟೆಯಿಂದ ತಯಾರಾಗಿರುವುದರಿಂದ ಅವುಗಳನ್ನು ತೊಳೆಯುವುದು ತುಂಬಾ ಎಚ್ಚರಿಕೆಯಿಂದ ಮಾಡಬೇಕಾಗುತ್ತದೆ.

ಡ್ರೈ ಕ್ಲೀನಿಂಗ್ ಮಾಡುವುದೂ ಕೆಲವೊಮ್ಮೆ ಕಷ್ಟಕರವಾಗುವ ಈ ರೇಷ್ಮೆ ಸೀರೆಗಳನ್ನು ಮನೆಯಲ್ಲಿಯೇ ಸರಳವಾಗಿ ಸ್ವಚ್ಛಗೊಳಿಸಬಹುದಾದ ಕೆಲವು ಸುರಕ್ಷಿತ ವಿಧಾನಗಳು ಇಲ್ಲಿವೆ.

ಮೊದಲು ಪ್ಯಾಚ್ ಟೆಸ್ಟ್ ಮುಖ್ಯ:

ಯಾವುದೇ ಕ್ಲೀನಿಂಗ್ ವಿಧಾನ ಬಳಸುವ ಮೊದಲು ಸೀರೆಯ ಸಣ್ಣ ಭಾಗದಲ್ಲಿ ಪರೀಕ್ಷೆ ಮಾಡಬೇಕು. ಸೀರೆಯ ಲೇಬಲ್ ಓದಿ ಯಾವ ವಸ್ತು ಬಳಸಬಾರದು ಎಂಬುದನ್ನು ಗಮನಿಸುವುದು ಮುಖ್ಯ. ಸೀರೆಯನ್ನು ಪ್ರತಿದಿನ ತೊಳೆಯುವ ಬದಲು ಕೆಲವು ಬಾರಿ ಉಟ್ಟ ನಂತರ ಮಾತ್ರ ತೊಳೆಯುವುದು ಉತ್ತಮ. ತೊಳೆಯುವ ನಂತರ ನೇರ ಸೂರ್ಯನ ಬೆಳಕಿನಲ್ಲಿ ಒಣಗಿಸಬಾರದು.

ಟಾಲ್ಕಮ್ ಪೌಡರ್ ಬಳಕೆ:

ರೇಷ್ಮೆ ಸೀರೆಯ ಮೇಲೆ ಎಣ್ಣೆ ಅಥವಾ ತುಪ್ಪ ಬಿದ್ದರೆ ನೀರು ಬಳಸಬೇಡಿ. ಬದಲಿಗೆ ಟಾಲ್ಕಮ್ ಪೌಡರ್ ಅಥವಾ ಕಾರ್ನ್‌ಸ್ಟಾರ್ಚ್ ಹಚ್ಚಿ 15–20 ನಿಮಿಷ ಬಿಡಿ. ಇದು ಎಣ್ಣೆಯನ್ನು ಹೀರಿಕೊಂಡು ನಂತರ ಮೃದುವಾಗಿ ಒರೆಸಿದರೆ ಕಲೆ ಹೋಗುತ್ತದೆ.

ಬೇಬಿ ಶಾಂಪೂ ವಿಧಾನ:

ಕಠಿಣ ಡಿಟರ್ಜೆಂಟ್ ಬಳಸುವುದು ರೇಷ್ಮೆಗೆ ಹಾನಿಕಾರಕ. ಸ್ವಲ್ಪ ಬೇಬಿ ಶಾಂಪೂವನ್ನು ನೀರಿನಲ್ಲಿ ಬೆರೆಸಿ ನೊರೆ ತಯಾರಿಸಿ, ಅದನ್ನು ಕಲೆ ಇರುವ ಭಾಗಕ್ಕೆ ನಿಧಾನವಾಗಿ ಹಚ್ಚಿ 10 ನಿಮಿಷ ನಂತರ ತಣ್ಣೀರಿನಲ್ಲಿ ತೊಳೆಯಿರಿ.

ಅಡುಗೆ ಸೋಡಾ ಉಪಾಯ:

ಒಣ ಕಲೆಗಳಿಗೆ ಅಡುಗೆ ಸೋಡಾ ಮತ್ತು ನೀರಿನ ಮಿಶ್ರಣ ಪೇಸ್ಟ್ ಮಾಡಿ 10–15 ನಿಮಿಷ ಹಚ್ಚಿ ಬಿಡಬಹುದು. ನಂತರ ನಿಧಾನವಾಗಿ ತೊಳೆಯುವುದರಿಂದ ಕಲೆ ಕಡಿಮೆಯಾಗುತ್ತದೆ.

ಬಿಳಿ ವಿನೆಗರ್ ಬಳಕೆ:

ಚಹಾ, ಕಾಫಿ ಅಥವಾ ಜ್ಯೂಸ್ ಕಲೆಗಳಿಗೆ ತಣ್ಣೀರಿನಲ್ಲಿ ಬಿಳಿ ವಿನೆಗರ್ ಮಿಶ್ರಣ ಮಾಡಿ ಹತ್ತಿಯಿಂದ ಸೌಮ್ಯವಾಗಿ ಒರೆಸಿದರೆ ಕಲೆ ಹೋಗುತ್ತದೆ.

 

ರಾಜ್ಯ ಸಾರಿಗೆ ನೌಕರರಿಗೆ ಬಂಪರ್ ಗಿಫ್ಟ್: ಮೂಲ ವೇತನದಲ್ಲಿ ಶೇ.12.50 ಹೆಚ್ಚಳಕ್ಕೆ ಸರ್ಕಾರ ಆದೇಶ!

ಬೆಂಗಳೂರು: ರಾಜ್ಯದ ನಾಲ್ಕು ಪ್ರಮುಖ ಸಾರಿಗೆ ನಿಗಮಗಳ ನೌಕರರ ಮೂಲ ವೇತನದಲ್ಲಿ ಶೇ.12.50 ರಷ್ಟು ಹೆಚ್ಚಳ ಮಾಡುವ ಮೂಲಕ ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ.

ಈ ಸಂಬಂಧ ಮಂಗಳವಾರ ಅಧಿಕೃತ ಆದೇಶ ಹೊರಡಿಸಲಾಗಿದ್ದು, ದೀರ್ಘಕಾಲದಿಂದ ಬಾಕಿಯಿದ್ದ ವೇತನ ಪರಿಷ್ಕರಣೆ ಬೇಡಿಕೆಗೆ ಸರ್ಕಾರ ಸ್ಪಂದಿಸಿದೆ.

ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹಾಗೂ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಗಳ ಸಾವಿರಾರು ನೌಕರರಿಗೆ ಈ ವೇತನ ಹೆಚ್ಚಳ ಅನ್ವಯವಾಗಲಿದೆ. ನೌಕರ ಸಂಘಟನೆಗಳು ಹಲವು ವರ್ಷಗಳಿಂದ ವೇತನ ಪರಿಷ್ಕರಣೆಗಾಗಿ ಸರ್ಕಾರದ ಗಮನ ಸೆಳೆಯುತ್ತಿದ್ದವು.

ಸರ್ಕಾರದ ಈ ನಿರ್ಧಾರದಿಂದ ಸಾರಿಗೆ ನೌಕರರಿಗೆ ಆರ್ಥಿಕ ಭದ್ರತೆ ಹೆಚ್ಚುವ ನಿರೀಕ್ಷೆಯಿದ್ದು, ಕುಟುಂಬದ ಜೀವನಮಟ್ಟದಲ್ಲಿಯೂ ಸುಧಾರಣೆ ಸಾಧ್ಯವಾಗಲಿದೆ ಎಂದು ಅಂದಾಜಿಸಲಾಗಿದೆ. ಇತ್ತೀಚಿನ ದೈನಂದಿನ ವೆಚ್ಚ ಮತ್ತು ದುಬಾರಿ ಜೀವನ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಈ ಪರಿಷ್ಕರಣೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ವೇತನ ಹೆಚ್ಚಳ ಆದೇಶ ಪ್ರಕಟವಾದ ಬಳಿಕ ರಾಜ್ಯದ ವಿವಿಧ ಸಾರಿಗೆ ಘಟಕಗಳಲ್ಲಿ ನೌಕರರು ಸಂತೋಷ ವ್ಯಕ್ತಪಡಿಸಿದ್ದಾರೆ. ದೀರ್ಘಕಾಲದ ಹೋರಾಟಕ್ಕೆ ಕೊನೆಗೂ ಫಲ ದೊರೆತಿರುವುದಾಗಿ ಸಂಘಟನೆಗಳು ಅಭಿಪ್ರಾಯಪಟ್ಟಿವೆ.

ಈ ನಿರ್ಧಾರದಿಂದ ರಾಜ್ಯದ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ಸೇವೆ ನೀಡುತ್ತಿರುವ ನೌಕರರ ಮನೋಬಲ ಹೆಚ್ಚುವ ನಿರೀಕ್ಷೆಯಿದೆ.

ತುಮಕೂರಿನಲ್ಲಿ ಪಿಡಬ್ಲ್ಯೂಡಿ ಎಂಜಿನಿಯರ್ ಆತ್ಮಹತ್ಯೆ: ಕುಟುಂಬದಲ್ಲಿ ಆಘಾತ!

ತುಮಕೂರು: ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಪಿಡಬ್ಲ್ಯೂಡಿ ಎಂಜಿನಿಯರ್ ಮಂಜುಪ್ರಸಾದ್ ಅವರು ದೇವರಾಯನದುರ್ಗ ಬೆಟ್ಟದ ಪ್ರದೇಶದಲ್ಲಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತುಮಕೂರಿನಲ್ಲಿ ನಡೆದಿದೆ.

ಮೃತ ಮಂಜುಪ್ರಸಾದ್ ಮೂಲತಃ ತುಮಕೂರು ತಾಲೂಕಿನ ಸತ್ಯಮಂಗಲ ನಿವಾಸಿಯಾಗಿದ್ದು, ಎಂಟೆಕ್ ಪದವಿ ಪೂರ್ಣಗೊಳಿಸಿ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡಿದ ನಂತರ ಕಳೆದ ಮೂರು ವರ್ಷಗಳಿಂದ ಪಿಡಬ್ಲ್ಯೂಡಿ ಎಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಪ್ರಸ್ತುತ ಪಾವಗಡ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.

ತಾಯಿಯ ಅಗಲಿಕೆಯ ನಂತರ ಅವರು ತೀವ್ರ ಮಾನಸಿಕ ನೋವಿಗೆ ಒಳಗಾಗಿದ್ದರು ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಇತ್ತೀಚೆಗೆ ಹುಟ್ಟಿದ 20 ದಿನಗಳ ಮಗುವನ್ನು ಕಂಡು ಸಂತೋಷಗೊಂಡಿದ್ದರೂ, ಮಾನಸಿಕ ಒತ್ತಡದಿಂದ ಅವರು ಬಳಲುತ್ತಿದ್ದರು ಎನ್ನಲಾಗಿದೆ.

ಮೊನ್ನೆ ದೇವಸ್ಥಾನಕ್ಕೆ ಭೇಟಿ ನೀಡಿ ಮನೆಗೆ ಮರಳಿದ್ದ ಅವರು, ನಂತರ “ಕೆಲಸ ಇದೆ” ಎಂದು ತೆರಳಿದವರು ಮತ್ತೆ ಮರಳದೆ ದುರಂತ ಅಂತ್ಯ ಕಂಡಿದ್ದಾರೆ ಎಂದು ವರದಿಯಾಗಿದೆ.

ಈ ಘಟನೆಯಿಂದ ಪತ್ನಿ ಹಾಗೂ ಕುಟುಂಬಸ್ಥರು ತೀವ್ರ ಶೋಕಕ್ಕೆ ಒಳಗಾಗಿದ್ದು, 20 ದಿನಗಳ ಹಸುಗೂಸು ತಂದೆಯ ನೆರಳಿಲ್ಲದೆ ಅನಾಥವಾಗಿದೆ. ಸ್ನೇಹಿತರು ಹಾಗೂ ಸಹೋದ್ಯೋಗಿಗಳೂ ಆಘಾತ ವ್ಯಕ್ತಪಡಿಸಿದ್ದಾರೆ.

ಮಾನಸಿಕ ಒತ್ತಡದಿಂದ ಅವರು ಹಿಂದೆಯೂ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಮೂಲಗಳು ತಿಳಿಸಿವೆ. ಘಟನೆ ಕುರಿತು ಸಂಬಂಧಿತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

NEET ಪೇಪರ್ ಲೀಕ್ʼಗೆ ಕೇಂದ್ರ ಸರ್ಕಾರವೇ ಹೊಣೆ; ಆಡಳಿತ ವೈಫಲ್ಯಕ್ಕೆ ಇದು ಸಾಕ್ಷಿ ಎಂದ ಲಕ್ಷ್ಮೀ ಹೆಬ್ಬಾಳ್ಕರ್

ಬೆಂಗಳೂರು: ನೀಟ್ (NEET) ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣವನ್ನು ತೀವ್ರವಾಗಿ ಖಂಡಿಸಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಕೇಂದ್ರ ಸರ್ಕಾರ ಚೆಲ್ಲಾಟವಾಡುತ್ತಿದೆ ಎಂದು ಆರೋಪಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಘಟನೆ ಅತ್ಯಂತ ದುರದೃಷ್ಟಕರ ಹಾಗೂ ಖಂಡನೀಯ ಎಂದು ತಿಳಿಸಿದ್ದಾರೆ. ಪರೀಕ್ಷೆಗೆ ಹಗಲಿರುಳು ಶ್ರಮಿಸಿ ಸಿದ್ಧತೆ ಮಾಡಿಕೊಂಡು ಪರೀಕ್ಷೆ ಬರೆದ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ಇಂದು ಅನಿಶ್ಚಿತತೆಯಲ್ಲಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ದೇಶದ ಅತ್ಯುನ್ನತ ಪ್ರವೇಶ ಪರೀಕ್ಷೆಗಳನ್ನೇ ಪಾರದರ್ಶಕವಾಗಿ ನಡೆಸಲು ಸಾಧ್ಯವಾಗದಿರುವುದು ಕೇಂದ್ರ ಸರ್ಕಾರದ ಆಡಳಿತ ವೈಫಲ್ಯಕ್ಕೆ ಸ್ಪಷ್ಟ ಉದಾಹರಣೆ ಎಂದು ಟೀಕಿಸಿದ್ದಾರೆ.

ಪರೀಕ್ಷಾ ಅಕ್ರಮಗಳು ಹಾಗೂ ಆಡಳಿತಾತ್ಮಕ ಅಸಮರ್ಥತೆಯಿಂದ ದೇಶದ ಪ್ರತಿಭಾವಂತ ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ವಿದ್ಯಾರ್ಥಿಗಳ ಭವಿಷ್ಯದ ವಿಚಾರದಲ್ಲಿ ಇಂತಹ ನಿರ್ಲಕ್ಷ್ಯ ತೋರಿರುವುದು ಅಕ್ಷಮ್ಯ ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

error: Content is protected !!