ತುಮಕೂರು: ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಪಿಡಬ್ಲ್ಯೂಡಿ ಎಂಜಿನಿಯರ್ ಮಂಜುಪ್ರಸಾದ್ ಅವರು ದೇವರಾಯನದುರ್ಗ ಬೆಟ್ಟದ ಪ್ರದೇಶದಲ್ಲಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತುಮಕೂರಿನಲ್ಲಿ ನಡೆದಿದೆ.
ಮೃತ ಮಂಜುಪ್ರಸಾದ್ ಮೂಲತಃ ತುಮಕೂರು ತಾಲೂಕಿನ ಸತ್ಯಮಂಗಲ ನಿವಾಸಿಯಾಗಿದ್ದು, ಎಂಟೆಕ್ ಪದವಿ ಪೂರ್ಣಗೊಳಿಸಿ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡಿದ ನಂತರ ಕಳೆದ ಮೂರು ವರ್ಷಗಳಿಂದ ಪಿಡಬ್ಲ್ಯೂಡಿ ಎಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಪ್ರಸ್ತುತ ಪಾವಗಡ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.
ತಾಯಿಯ ಅಗಲಿಕೆಯ ನಂತರ ಅವರು ತೀವ್ರ ಮಾನಸಿಕ ನೋವಿಗೆ ಒಳಗಾಗಿದ್ದರು ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಇತ್ತೀಚೆಗೆ ಹುಟ್ಟಿದ 20 ದಿನಗಳ ಮಗುವನ್ನು ಕಂಡು ಸಂತೋಷಗೊಂಡಿದ್ದರೂ, ಮಾನಸಿಕ ಒತ್ತಡದಿಂದ ಅವರು ಬಳಲುತ್ತಿದ್ದರು ಎನ್ನಲಾಗಿದೆ.
ಮೊನ್ನೆ ದೇವಸ್ಥಾನಕ್ಕೆ ಭೇಟಿ ನೀಡಿ ಮನೆಗೆ ಮರಳಿದ್ದ ಅವರು, ನಂತರ “ಕೆಲಸ ಇದೆ” ಎಂದು ತೆರಳಿದವರು ಮತ್ತೆ ಮರಳದೆ ದುರಂತ ಅಂತ್ಯ ಕಂಡಿದ್ದಾರೆ ಎಂದು ವರದಿಯಾಗಿದೆ.
ಈ ಘಟನೆಯಿಂದ ಪತ್ನಿ ಹಾಗೂ ಕುಟುಂಬಸ್ಥರು ತೀವ್ರ ಶೋಕಕ್ಕೆ ಒಳಗಾಗಿದ್ದು, 20 ದಿನಗಳ ಹಸುಗೂಸು ತಂದೆಯ ನೆರಳಿಲ್ಲದೆ ಅನಾಥವಾಗಿದೆ. ಸ್ನೇಹಿತರು ಹಾಗೂ ಸಹೋದ್ಯೋಗಿಗಳೂ ಆಘಾತ ವ್ಯಕ್ತಪಡಿಸಿದ್ದಾರೆ.
ಮಾನಸಿಕ ಒತ್ತಡದಿಂದ ಅವರು ಹಿಂದೆಯೂ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಮೂಲಗಳು ತಿಳಿಸಿವೆ. ಘಟನೆ ಕುರಿತು ಸಂಬಂಧಿತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

