Home Blog

ತೈಲ ಕೊರತೆಯಿಂದ ರಾಜ್ಯದ ಕೈಗಾರಿಕೆಗಳು ಸಂಕಷ್ಟ ಅನುಭವಿಸುತ್ತಿವೆ: ಸಚಿವ ಎಂ.ಬಿ. ಪಾಟೀಲ್

ಬೆಂಗಳೂರು: ಮಧ್ಯಪ್ರಾಚ್ಯ ಬಿಕ್ಕಟ್ಟಿನ ನಡುವೆಯೇ ತೈಲ ಕೊರತೆ ವಿಚಾರವಾಗಿ ಸಚಿವ ಎಂ.ಬಿ. ಪಾಟೀಲ್ ಕೇಂದ್ರ ಸರ್ಕಾರದ ವಿರುದ್ಧ ಟೀಕೆ ವ್ಯಕ್ತಪಡಿಸಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ತೈಲ ಕೊರತೆಯಿಂದ ರಾಜ್ಯದ ಕೈಗಾರಿಕೆಗಳು ಸಂಕಷ್ಟ ಅನುಭವಿಸುತ್ತಿವೆಎಂದು ಹೇಳಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಇಸ್ರೇಲ್ ಪ್ರವಾಸವನ್ನು ಉಲ್ಲೇಖಿಸಿದ ಅವರು, “ಮೋದಿ ಇಸ್ರೇಲ್ಗೆ ಭೇಟಿ ನೀಡಿಫಾದರ್ ಲ್ಯಾಂಡ್ಎಂದು ಹೊಗಳಿದರು. ಆದರೆ ಅವರು ಮರಳಿದ ತಕ್ಷಣವೇ ಯುದ್ಧ ಆರಂಭವಾಯಿತುಎಂದು ಟೀಕಿಸಿದರು.

ಇರಾನ್ ಕುರಿತು ಮಾತನಾಡಿದ ಅವರು, “ಇರಾನ್ ನಮ್ಮ ಹಡಗುಗಳನ್ನು ಬಿಡುಗಡೆ ಮಾಡಿದೆ. ಭಾರತವನ್ನು ಸ್ನೇಹಿತ ರಾಷ್ಟ್ರವೆಂದು ಪರಿಗಣಿಸಿದೆ. ಅವರು ಎಲ್ಪಿಜಿ ಪೂರೈಕೆ ಮಾಡುತ್ತ ಸಹಕಾರ ನೀಡಿದ್ದಾರೆ. ಅದು ಇಲ್ಲದಿದ್ದರೆ ಪರಿಸ್ಥಿತಿ ಇನ್ನಷ್ಟು ಗಂಭೀರವಾಗುತ್ತಿತ್ತುಎಂದು ಹೇಳಿದರು.

ಇದೇ ವೇಳೆ, ಕೇಂದ್ರ ಸರ್ಕಾರದ ವಿದೇಶಾಂಗ ನೀತಿಯನ್ನು ಟೀಕಿಸಿದ ಅವರು, “ಮೋದಿ ಅವರ ವಿದೇಶಾಂಗ ನೀತಿ ವಿಫಲವಾಗಿದೆ. ಇರಾನ್ ನಮ್ಮ ಮಿತ್ರ ರಾಷ್ಟ್ರವಾಗಿರುವುದರಿಂದಲೇ ನಮ್ಮ ಹಡಗುಗಳಿಗೆ ಅನುಕೂಲವಾಗಿದೆ. ಇಲ್ಲದಿದ್ದರೆ ದೇಶದ ಪರಿಸ್ಥಿತಿ ಕಷ್ಟಕರವಾಗುತ್ತಿತ್ತುಎಂದು ಕಳವಳ ವ್ಯಕ್ತಪಡಿಸಿದರು.

ನಾಗರಹೊಳೆ ಗಡಿಯಲ್ಲಿ ಉರುಳಿಗೆ ಸಿಲುಕಿ ಹುಲಿ ಸಾವು; ತನಿಖೆಗೆ ಸಚಿವ ಈಶ್ವರ ಖಂಡ್ರೆ ಸೂಚನೆ

ಮೈಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಮೇಟಿಕುಪ್ಪೆ ವನ್ಯಜೀವಿ ವಲಯದಲ್ಲಿ ಮೂರು ವರ್ಷದ ಗಂಡು ಹುಲಿ ಉರುಳಿಗೆ ಸಿಲುಕಿ ಸಾವನ್ನಪ್ಪಿರುವ ದುರ್ಘಟನೆ ನಡೆದಿದೆ.

ಹೆಚ್.ಡಿ. ಕೋಟೆ ತಾಲೂಕಿನ ಅಗಸರಹುಂಡಿ ಶಾಖೆ ವ್ಯಾಪ್ತಿಯ ಕಾಡಂಚಿನ ಜಮೀನಿನಲ್ಲಿ ಅಕ್ರಮವಾಗಿ ಅಳವಡಿಸಿದ್ದ ಉರುಳಿಗೆ ಹುಲಿ ಸಿಲುಕಿ ಮೃತಪಟ್ಟಿದೆ. ಈ ಘಟನೆ ಎರಡು ದಿನಗಳ ಹಿಂದೆಯೇ ನಡೆದಿದ್ದು, ಶುಕ್ರವಾರ ಬೆಳಿಗ್ಗೆ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಹುಲಿ ಯೋಜನೆ ನಿರ್ದೇಶಕಿ ಸೀಮಾ, ಎಸಿಎಫ್ ಮಧು ಹಾಗೂ ಅರಣ್ಯಾಧಿಕಾರಿ ರಶ್ಮಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಪಶುವೈದ್ಯರಾದ ಡಾ. ರಮೇಶ್ ಮತ್ತು ಡಾ. ಪ್ರಸನ್ನ ಮರಣೋತ್ತರ ಪರೀಕ್ಷೆ ನಡೆಸಿ, ಹುಲಿಯ ಅಂತ್ಯಕ್ರಿಯೆಯನ್ನು ಸ್ಥಳದಲ್ಲೇ ನೆರವೇರಿಸಿದರು.

ಈ ಪ್ರಕರಣಕ್ಕೆ ಸಂಬಂಧಿಸಿ, ಜಮೀನು ಮಾಲೀಕರಾದ ಅಗಸರಹುಂಡಿ ಗ್ರಾಮದ ಶಂಕರ್ ಹಾಗೂ ಜಿ.ಎಂ.ಹಳ್ಳಿಯ ಗಿರೀಶ್ ವಿರುದ್ಧ ಅರಣ್ಯ ಇಲಾಖೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಘಟನೆಗೆ ಸಂಬಂಧಿಸಿ ಈಶ್ವರ ಬಿ. ಖಂಡ್ರೆ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ನೇತೃತ್ವದಲ್ಲಿ ತನಿಖೆ ನಡೆಸುವಂತೆ ಸೂಚಿಸಿರುವ ಅವರು, ಗಸ್ತು ಕಾರ್ಯದಲ್ಲಿ ಲೋಪ ಕಂಡುಬಂದರೆ ಸಿಬ್ಬಂದಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆದೇಶಿಸಿದ್ದಾರೆ.

ಅದೇ ವೇಳೆ, ಉರುಳು ಅಳವಡಿಸಿದವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಹಾಗೂ ಇಂತಹ ಘಟನೆಗಳು ಮರುಕಳಿಸದಂತೆ ಕಾಡಂಚಿನ ಜಮೀನುಗಳಲ್ಲಿ ಅಕ್ರಮ ಉರುಳು ತೆರವುಗೊಳಿಸಲು ಕ್ರಮ ಕೈಗೊಳ್ಳುವಂತೆ ಸಚಿವರು ಸೂಚಿಸಿದ್ದಾರೆ.

ವಾಣಿಜ್ಯ LPG ಹಂಚಿಕೆ ಹೆಚ್ಚಳ: ಉದ್ಯಮ ವಲಯಕ್ಕೆ ಕೇಂದ್ರ ನೆರವು – ಪ್ರಲ್ಹಾದ ಜೋಶಿ

ನವದೆಹಲಿ/ಹುಬ್ಬಳ್ಳಿ: ಜಾಗತಿಕ ಬಿಕ್ಕಟ್ಟು ಮತ್ತು ಸವಾಲಿನ ನಡುವೆಯೂ ಕೇಂದ್ರ ಸರ್ಕಾರ ಕೈಗಾರಿಕಾ ವಲಯಕ್ಕೆ ನೆರವಾಗುವ ಉದ್ದೇಶದಿಂದ ವಾಣಿಜ್ಯ ಎಲ್ಪಿಜಿ ಹಂಚಿಕೆಯನ್ನು ಶೇ.70ರಷ್ಟು ಹೆಚ್ಚಿಸಿದ್ದು, ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ತೆರಿಗೆಯನ್ನು ಶೇ.10ರಷ್ಟು ಕಡಿತಗೊಳಿಸಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.

ಯುದ್ಧದ ಸಂದಿಗ್ಧ ಪರಿಸ್ಥಿತಿಯಲ್ಲಿ ಇಡೀ ಜಗತ್ತು ಇಂಧನ ಪೂರೈಕೆ ಸವಾಲುಗಳನ್ನು ಎದುರಿಸುತ್ತಿರುವ ಸಂದರ್ಭದಲ್ಲಿಯೂ, ಭಾರತದ ಕೈಗಾರಿಕೆಗಳು ಅಡಚಣೆ ಇಲ್ಲದೆ ಕಾರ್ಯನಿರ್ವಹಿಸಲು ಕೇಂದ್ರ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ಹಿನ್ನೆಲೆ ತೈಲದ ಮೇಲಿನ ಅಬಕಾರಿ ಸುಂಕ ಕಡಿತ ಹಾಗೂ ವಾಣಿಜ್ಯ ಎಲ್ಪಿಜಿ ಹಂಚಿಕೆ ಹೆಚ್ಚಿಸುವ ಮೂಲಕ ಕೈಗಾರಿಕಾ ಕ್ಷೇತ್ರಕ್ಕೆ ಉತ್ತೇಜನ ನೀಡಲಾಗಿದೆ ಎಂದು ಹೇಳಿದರು.

ದೇಶದಲ್ಲಿ ಕೋವಿಡ್ ಕಾಲದಂತೆ ಲಾಕ್ಡೌನ್ ಜಾರಿಯಾಗಬಹುದು ಎಂಬ ವದಂತಿಗಳನ್ನು ತಳ್ಳಿಹಾಕಿದ ಸಚಿವರು, ಇಂತಹ ಯಾವುದೇ ಪರಿಸ್ಥಿತಿ ಇಲ್ಲ ಎಂದು ಸ್ಪಷ್ಟಪಡಿಸಿದರು. ಜನರು ಇಂತಹ ಸುಳ್ಳು ಸುದ್ದಿಗಳಿಗೆ ಕಿವಿಗೊಡಬಾರದು ಮತ್ತು ಆತಂಕಪಡಬಾರದು ಎಂದು ಮನವಿ ಮಾಡಿದರು.

ಪ್ರಧಾನಿ ನರೇಂದ್ರ ಮೋದಿ ನಿರ್ದೇಶನದ ಮೇರೆಗೆ ವಾಣಿಜ್ಯ ಎಲ್ಪಿಜಿ ಹಂಚಿಕೆಯನ್ನು ಹೆಚ್ಚಿಸಲಾಗಿದೆ. ಕ್ರಮದಿಂದ ಉಕ್ಕು, ಆಟೋಮೊಬೈಲ್ ಮತ್ತು ಜವಳಿ ಸೇರಿದಂತೆ ವಿವಿಧ ಕೈಗಾರಿಕಾ ವಲಯಗಳಿಗೆ ಹೆಚ್ಚಿನ ನೆರವು ದೊರೆಯಲಿದೆ ಎಂದು ಜೋಶಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

IPL ಹಿನ್ನೆಲೆ: ತಡರಾತ್ರಿ 2ರವರೆಗೆ ಸಂಚಾರ ಅವಧಿ ವಿಸ್ತರಿಸಿದ ʻನಮ್ಮ ಮೆಟ್ರೋʼ

0

ಬೆಂಗಳೂರು: 2026 ಐಪಿಎಲ್ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ, ಪಂದ್ಯ ನಡೆಯುವ ದಿನಗಳಲ್ಲಿ ಮೆಟ್ರೋ ಸೇವೆಯನ್ನು ತಡರಾತ್ರಿ 2 ಗಂಟೆಯವರೆಗೆ ವಿಸ್ತರಿಸಲಾಗುತ್ತದೆ ಎಂದು BMRCL ತಿಳಿಸಿದೆ.

ಇಂದು RCB ಮತ್ತು ಎಸ್ಆರ್ಎಚ್ ತಂಡಗಳ ನಡುವೆ ಮೊದಲ ಪಂದ್ಯ ನಡೆಯಲಿದೆ. ಪಂದ್ಯ ವೀಕ್ಷಿಸಿ ಮನೆಗೆ ಮರಳುವವರಿಗೆ ಅನುಕೂಲವಾಗುವ ಉದ್ದೇಶದಿಂದ ನಿರ್ಧಾರ ಕೈಗೊಳ್ಳಲಾಗಿದೆ.

ಸಾಮಾನ್ಯವಾಗಿ ರಾತ್ರಿ 11 ಗಂಟೆಗೆ ಕೊನೆಯ ಮೆಟ್ರೋ ಸಂಚರಿಸುತ್ತಿತ್ತು. ಆದರೆ ಐಪಿಎಲ್ ಪಂದ್ಯ ದಿನಗಳಲ್ಲಿ ಎಲ್ಲಾ ನಿಲ್ದಾಣಗಳಿಂದ ಕೊನೆಯ ಮೆಟ್ರೋ ಸೇವೆಯನ್ನು ರಾತ್ರಿ 2 ಗಂಟೆಯವರೆಗೆ ವಿಸ್ತರಿಸಲಾಗಿದೆ. ಮೆಜೆಸ್ಟಿಕ್ ನಿಲ್ದಾಣದಿಂದ ನಾಲ್ಕೂ ದಿಕ್ಕುಗಳಿಗೆ ಕೊನೆಯ ರೈಲು ಮಧ್ಯರಾತ್ರಿ 1.30ಕ್ಕೆ ಹೊರಡಲಿದೆ.

ಇನ್ನೂ, ಐಪಿಎಲ್ ಪಂದ್ಯ ಟಿಕೆಟ್ಗಳ ಮೇಲೆ ಮೆಟ್ರೋ ಕ್ಯೂಆರ್ ಕೋಡ್ ಮುದ್ರಣಗೊಂಡಿದ್ದು, ಕ್ರೀಡಾಂಗಣಕ್ಕೆ ಬರುವವರು ಕಬ್ಬನ್ ಪಾರ್ಕ್ ಅಥವಾ ಮಹಾತ್ಮ ಗಾಂಧಿ ರಸ್ತೆ ಮೆಟ್ರೋ ನಿಲ್ದಾಣಗಳನ್ನು ಬಳಸುವಂತೆ ಸೂಚಿಸಲಾಗಿದೆ.

ನಗರದಲ್ಲಿ ವಾಹನ ದಟ್ಟಣೆ ನಿಯಂತ್ರಿಸಲು 44 ಮೆಟ್ರೋ ನಿಲ್ದಾಣಗಳಲ್ಲಿ ಹೆಚ್ಚುವರಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ ಎಂದು ಬಿಎಂಆರ್ಸಿಎಲ್ ತಿಳಿಸಿದೆ.

CSKಗೆ ಶಾಕ್: ಐಪಿಎಲ್ 2026ರ ಮೊದಲೆರಡು ವಾರಗಳಲ್ಲಿ ಧೋನಿ ಆಡೋದು ಡೌಟ್!

0

ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭಕ್ಕೂ ಮುನ್ನವೇ  ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ದೊಡ್ಡ ಆಘಾತ ಎದುರಾಗಿದೆ. ತಂಡದ ಪ್ರಮುಖ ಆಟಗಾರ ಮಹೇಂದ್ರ ಸಿಂಗ್ ಧೋನಿ ಆರಂಭಿಕ ಪಂದ್ಯಗಳಿಂದ ಹೊರಗುಳಿಯುವ ಸಾಧ್ಯತೆ ಇದೆ.

ಸ್ನಾಯು ಸೆಳೆತ ಸಮಸ್ಯೆಯಿಂದ ಬಳಲುತ್ತಿರುವ ಧೋನಿ, ಐಪಿಎಲ್‌ನ ಮೊದಲ ಎರಡು ವಾರಗಳ ಪಂದ್ಯಗಳಲ್ಲಿ ಆಡಲು ಸಾಧ್ಯವಿಲ್ಲ ಎಂದು ವರದಿಯಾಗಿದೆ. ಇದರಿಂದ ರಾಜಸ್ಥಾನ್ ರಾಯಲ್ಸ್, ಪಂಜಾಬ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯಗಳಿಗೆ ಅಲಭ್ಯರಾಗುವ ಸಾಧ್ಯತೆ ಹೆಚ್ಚು.

ಧೋನಿ ಅನುಪಸ್ಥಿತಿಯಲ್ಲಿ ತಂಡದ ವಿಕೆಟ್ ಕೀಪರ್ ಆಗಿ  ಸಂಜು ಸ್ಯಾಮ್ಸನ್ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಕಳೆದ ಕೆಲ ದಿನಗಳಿಂದ ಅವರು ವಿಕೆಟ್ ಕೀಪಿಂಗ್ ಅಭ್ಯಾಸ ಮಾಡುತ್ತಿರುವುದು ಗಮನಾರ್ಹವಾಗಿದೆ.

ಇನ್ನೊಂದೆಡೆ, ಧೋನಿ ಸಂಪೂರ್ಣ ಫಿಟ್‌ನೆಸ್ ಹೊಂದಿದರೆ ಏಪ್ರಿಲ್ 19ರಂದು ನಡೆಯಲಿರುವ ಮುಂಬೈ ಇಂಡಿಯನ್ಸ್ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯುವ ಸಾಧ್ಯತೆ ಇದೆ. ಅದುವರೆಗೆ ಅವರು ವಿಶ್ರಾಂತಿ ಪಡೆಯಲಿದ್ದಾರೆ ಎಂದು ತಿಳಿದುಬಂದಿದೆ.

ಹೀಗಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆರಂಭಿಕ ಪಂದ್ಯಗಳಲ್ಲಿ ‘ಥಲಾ’ ಅಭಿಮಾನಿಗಳಿಗೆ ನಿರಾಶೆ ಎದುರಾಗುವ ಸಾಧ್ಯತೆ ಇದೆ. ಧೋನಿ ಹೊರಗುಳಿದರೆ ಸರ್ಫರಾಝ್ ಖಾನ್ ಅವರಿಗೆ ಅವಕಾಶ ಸಿಗುವ ಸಾಧ್ಯತೆ ಇದೆ.

ರಸ್ತೆ ಅಪಘಾತ: ತಿರುಪತಿಗೆ ತೆರಳುತ್ತಿದ್ದ ಬೆಂಗಳೂರಿನ ಒಂದೇ ಕುಟುಂಬದ ಮೂವರು ಸಾವು!

0

ಬೆಂಗಳೂರು: ತಿರುಪತಿ ವೆಂಕಟೇಶ್ವರ ಸ್ವಾಮಿ ದರ್ಶನಕ್ಕೆ ತೆರಳುತ್ತಿದ್ದ ಒಂದೇ ಕುಟುಂಬದ ಮೂವರು ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ದುರ್ಘಟನೆ ನಡೆದಿದೆ.

ಈ ಅಪಘಾತವು ಬೆಂಗಳೂರು-ಚೆನ್ನೈ ರಾಷ್ಟ್ರೀಯ ಹೆದ್ದಾರಿಯ ಬಂಗಾರುಪಾಳ್ಯಂ ಸಮೀಪದ ಪಲಮಕುಲಪಲ್ಲಿ ಬಳಿ ಸಂಭವಿಸಿದೆ. ಬೆಂಗಳೂರು ಮೂಲದ ದಂಪತಿ ಮತ್ತು ಅವರ 4 ವರ್ಷದ ಮಗಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕಾರು ಚಾಲಕ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಪಲಮನೇರಿನಿಂದ ಚಿತ್ತೂರಿನತ್ತ ಬರುತ್ತಿದ್ದ ಬಸ್ ರಸ್ತೆ ಬದಿಯಲ್ಲಿ ನಿಂತಿತ್ತು. ಈ ವೇಳೆ ಹಿಂಬದಿಯಿಂದ ವೇಗವಾಗಿ ಬಂದ ಕಾರು ಬಸ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ತೀವ್ರತೆಗೆ ದಂಪತಿ ಹಾಗೂ ಮಗು ಕಾರಿನಲ್ಲೇ ಸಿಲುಕಿ ಮೃತಪಟ್ಟಿದ್ದಾರೆ.

ಅಪಘಾತದ ಬಳಿಕ ಕಾರು ಬಸ್‌ನ ಹಿಂಭಾಗದಲ್ಲಿ ಸಿಲುಕಿಕೊಂಡಿದ್ದು, ಪೊಲೀಸರು ಜೆಸಿಬಿ ಸಹಾಯದಿಂದ ಹೊರತೆಗೆದಿದ್ದಾರೆ.

ಪ್ರಾಥಮಿಕ ತನಿಖೆಯ ಪ್ರಕಾರ, ಅತಿ ವೇಗವೇ ಅಪಘಾತಕ್ಕೆ ಕಾರಣವಾಗಿರಬಹುದು ಎಂದು ಹೇಳಲಾಗಿದೆ. ಮೃತಪಟ್ಟ ಕುಟುಂಬವು ಇಂದು ಮಧ್ಯಾಹ್ನ 12 ಗಂಟೆಗೆ ತಿರುಪತಿಯಲ್ಲಿ ದರ್ಶನಕ್ಕೆ ಟಿಕೆಟ್ ಪಡೆದಿತ್ತು ಎನ್ನಲಾಗಿದೆ. ಪೊಲೀಸರು ಮೃತರ ವಿವರಗಳನ್ನು ಸಂಗ್ರಹಿಸುವ ಕಾರ್ಯದಲ್ಲಿ ತೊಡಗಿದ್ದಾರೆ.

ಸಿಲಿಂಡರ್ ಅಭಾವ: ಸೌದೆಗೆ ಮೊರೆ ಹೋದ ಹೋಟೆಲ್ ಮಾಲಿಕರು!

0

ಹಗರಿಬೊಮ್ಮನಹಳ್ಳಿ: ಮಧ್ಯ ಪ್ರಾಚ್ಯದಲ್ಲಿ ನಡೆಯುತ್ತಿರುವ ಅಮೆರಿಕ, ಇಸ್ರೇಲ್ ಹಾಗೂ ಇರಾನ್ ನಡುವಿನ ಯುದ್ಧದ ಪರಿಣಾಮವಾಗಿ ಸಿಲಿಂಡರ್ ಪೂರೈಕೆ ವ್ಯತ್ಯಯಗೊಂಡಿದ್ದು, ಹಗರಿಬೊಮ್ಮನಹಳ್ಳಿ ಪಟ್ಟಣದಲ್ಲಿ ಹೋಟೆಲ್ ಉದ್ಯಮಕ್ಕೆ ತೀವ್ರ ಸಮಸ್ಯೆ ಉಂಟಾಗಿದೆ.

ಪಟ್ಟಣದ ಹೃದಯ ಭಾಗದಲ್ಲಿರುವ ವಾಲ್ಮೀಕಿ ಸರ್ಕಲ್ ಸಮೀಪದ ಪ್ರಸಿದ್ಧ ದರ್ಶನ್ ಹೋಟೆಲ್ ಮಾಲಿಕರಾದ ಎಸ್.ಎಂ. ಗಂಗಾಧರಯ್ಯ ಅವರು ಮಾತನಾಡಿ, “ಸಿಲಿಂಡರ್ ಸರಿಯಾದ ಪ್ರಮಾಣದಲ್ಲಿ ಲಭ್ಯವಾಗದೇ ಇರುವುದರಿಂದ ನಾವು ಸೌದೆ ಬಳಸಿ ಅಡುಗೆ ಮಾಡಬೇಕಾದ ಪರಿಸ್ಥಿತಿ ಬಂದಿದೆ” ಎಂದು ತಿಳಿಸಿದರು.

ದರ್ಶನ್ ಹೋಟೆಲ್‌ನಲ್ಲಿ ಇಡ್ಲಿ, ಸಾಂಬಾರ್, ಪೂರಿ, ದೋಸೆ, ಉದ್ದಿನ ವಡೆ, ಮಿರ್ಚಿ, ಉಪ್ಪಿಟ್ಟು, ಅವಲಕ್ಕಿ, ಕೇಸರಿಬಾತ್, ಪಲಾವ್, ಚಿತ್ರಾನ್ನ ಸೇರಿದಂತೆ ಮಧ್ಯಾಹ್ನದ ಊಟವನ್ನೂ ಸೌದೆ ಬಳಸಿ ತಯಾರಿಸಲಾಗುತ್ತಿದೆ.

ಆದರೆ ಸೌದೆ ಒದಗಿಸುವುದು ಹಾಗೂ ಅದನ್ನು ಬಳಸಿ ಅಡುಗೆ ಮಾಡುವುದು ಸವಾಲಿನ ಕೆಲಸವಾಗಿದೆ ಎಂದು ಅವರು ಹೇಳಿದರು. ಕಮರ್ಷಿಯಲ್ ಸಿಲಿಂಡರ್ ಬಳಕೆ ಲಭ್ಯವಿಲ್ಲದ ಕಾರಣ ಸೌದೆ ಅವಲಂಬಿಸಬೇಕಾಗಿದೆ.

ಇದೇ ವೇಳೆ, ಕೆಲವು ಹೋಟೆಲ್ ಮಾಲಿಕರು ದುಬಾರಿ ದರದಲ್ಲಿ ಕಮರ್ಷಿಯಲ್ ಸಿಲಿಂಡರ್ ಖರೀದಿಸಿ, ಪ್ರತಿಯೊಂದು ತಿಂಡಿ ಪದಾರ್ಥದ ಮೇಲೂ ₹10ರವರೆಗೆ ದರ ಹೆಚ್ಚಿಸಿರುವುದು ಗ್ರಾಹಕರಿಗೆ ನೇರ ಹೊರೆ ಆಗುತ್ತಿದೆ. ಸಿಲಿಂಡರ್ ಪೂರೈಕೆ ಸ್ಥಿರವಾಗುವವರೆಗೆ ಈ ಸಮಸ್ಯೆ ಮುಂದುವರಿಯುವ ಸಾಧ್ಯತೆ ಇದೆ ಎನ್ನಲಾಗಿದೆ.

ವಿದ್ಯುತ್ ತಂತಿ ತಗುಲಿ ಚಿಪ್ಸ್ ಲೋಡ್ ಕ್ಯಾಂಟರ್ ಲಾರಿ ಸಂಪೂರ್ಣ ಭಸ್ಮ!

ಹಗರಿಬೊಮ್ಮನಹಳ್ಳಿ: ತಾಲೂಕಿನ ಪಿಲ್ಲೂಬನಹಳ್ಳಿ ಗ್ರಾಮದ ಬಳಿ ಚಿಪ್ಸ್ ಲೋಡ್ ಹೊತ್ತೊಯ್ಯುತ್ತಿದ್ದ ಕ್ಯಾಂಟರ್ ಲಾರಿಗೆ ವಿದ್ಯುತ್ ತಂತಿ ತಗುಲಿ ವಾಹನ ಸಂಪೂರ್ಣವಾಗಿ ಸುಟ್ಟು ಕರಕಲಾದ ಘಟನೆ ಶುಕ್ರವಾರ ಸಂಜೆ ನಡೆದಿದೆ.

ಘಟನೆ ಮಾರ್ಚ್ 27ರಂದು ಸಂಜೆ ಸುಮಾರು 4ರಿಂದ 5 ಗಂಟೆ ನಡುವೆ ನಡೆದಿದೆ. ಬೆಂಗಳೂರಿನಿಂದ ಹಡಗಲಿ ಪಟ್ಟಣದತ್ತ ತೆರಳುತ್ತಿದ್ದ KA-37 A-3262 ಸಂಖ್ಯೆಯ ಕ್ಯಾಂಟರ್ ಲಾರಿ, ಕೂಡ್ಲಿಗಿ ಹೈವೇಯ ಶಿವಪುರದಿಂದ ಪಿಲ್ಲೂಬನಹಳ್ಳಿ-ಮಾದೂರು ಮಾರ್ಗವಾಗಿ ಸಾಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.

ಗ್ರಾಮದ ಕೃಷಿ ಚಟುವಟಿಕೆಗಳಿಗೆ ಸಂಬಂಧಿಸಿದ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸರಬರಾಜು ಇದ್ದ ಕಾರಣ, ರಸ್ತೆ ಮೇಲಿನ ತಂತಿ ಕೆಳಮಟ್ಟದಲ್ಲಿ ಇರುವುದು ಕಂಡುಬಂದಿದೆ. ಲಾರಿಯ ಮೇಲ್ಭಾಗದಲ್ಲಿ ತುಂಬಿದ್ದ ಚಿಪ್ಸ್ ಪ್ಯಾಕೆಟ್‌ಗಳಿಗೆ ವಿದ್ಯುತ್ ತಂತಿ ತಗುಲುತ್ತಿದ್ದಂತೆ ಬೆಂಕಿ ಕಾಣಿಸಿಕೊಂಡಿದೆ.

ಚಾಲಕ ಘಟನೆ ಗಮನಿಸಿ ಪಿಲ್ಲೂಬನಹಳ್ಳಿ ಗ್ರಾಮದಿಂದ ಸುಮಾರು 200 ಮೀಟರ್ ದೂರದಲ್ಲಿ ವಾಹನ ನಿಲ್ಲಿಸಿದ್ದರೂ, ಬೆಂಕಿ ಕ್ಷಣಾರ್ಧದಲ್ಲಿ ವ್ಯಾಪಿಸಿ ಸಂಪೂರ್ಣ ಲಾರಿಯನ್ನು ಆವರಿಸಿತು.

ಹಗರಿಬೊಮ್ಮನಹಳ್ಳಿ ಅಗ್ನಿಶಾಮಕ ಠಾಣೆಯ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಆದಾಗ್ಯೂ, ಈ ಅವಘಡದಲ್ಲಿ ಕ್ಯಾಂಟರ್ ವಾಹನ ಹಾಗೂ ಚಿಪ್ಸ್ ಪ್ಯಾಕೆಟ್‌ಗಳು ಸಂಪೂರ್ಣವಾಗಿ ಸುಟ್ಟುಹೋಗಿವೆ.

ಅಗ್ನಿಶಾಮಕ ಠಾಣೆ ಅಧಿಕಾರಿ ವಾಸುದೇವಪ್ಪ ಅವರ ನೇತೃತ್ವದಲ್ಲಿ ಕೆ. ಶಶಿಕುಮಾರ್ ನಾಯ್ಕ, ಹಾಲಸ್ವಾಮಿ, ನಾರಾಯಣ, ರಾಮದಾಸ್ ಸೇರಿದಂತೆ ಸಿಬ್ಬಂದಿ ಹಾಗೂ ಚಾಲಕರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಕುಷ್ಟಗಿ ಚಾಳದ ಅಮೃತ ಶಿಲೆಯ ರಾಮಮಂದಿರದಲ್ಲಿ ವಿಜೃಂಭಣೆಯಿಂದ ರಾಮನವಮಿ ಆಚರಣೆ!

0

ಗದಗ: ಉತ್ತರ ಕರ್ನಾಟಕದಲ್ಲಿಯೇ ಪ್ರಸಿದ್ಧಿ ಪಡೆದ ಕುಷ್ಟಗಿ ಚಾಳದ ಅಮೃತಶಿಲೆಯ ಶ್ರೀರಾಮ ಮಂದಿರದಲ್ಲಿ ಭಕ್ತಿಭಾವದಿಂದ ರಾಮನವಮಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.

ಶುಕ್ರವಾರ ರಾಮನವಮಿ ಅಂಗವಾಗಿ, ಕುಷ್ಟಗಿ ಕುಟುಂಬದವರಿಂದ ಸ್ಥಾಪನೆಗೊಂಡ ಸುಮಾರು 96 ವರ್ಷಗಳ ಇತಿಹಾಸ ಹೊಂದಿರುವ ಬೆಟಗೇರಿಯ ಈ ಪ್ರಸಿದ್ಧ ಅಮೃತಶಿಲೆಯ ಮಂದಿರದಲ್ಲಿ ಸಾವಿರಾರು ಭಕ್ತರು ಭಾಗವಹಿಸಿದ್ದರು.

ಶ್ರೀರಾಮ, ಸೀತಾಮಾತೆ, ಲಕ್ಷ್ಮಣ, ಹನುಮಂತ ಹಾಗೂ ಗರುಡ ದೇವರ ಆಕರ್ಷಕ ಮೂರ್ತಿಗಳು ಭಕ್ತರ ಗಮನ ಸೆಳೆದವು.

ಬೆಳಿಗ್ಗೆಯಿಂದಲೇ ಹೋಮ, ಹವನ ಹಾಗೂ ವಿಶೇಷ ಅಲಂಕಾರ ಪೂಜೆಗಳು ನಡೆದವು. ಬಳಿಕ ಶ್ರೀರಾಮನ ಕಂಚಿನ ಮೂರ್ತಿಯನ್ನು ಸಂಪ್ರದಾಯಬದ್ಧವಾಗಿ ತೊಟ್ಟಿಲಿನಲ್ಲಿ ಇಟ್ಟು, ಭಕ್ತರು ಭಜನೆಗಳೊಂದಿಗೆ ತೊಟ್ಟಿಲು ತೂಗಿ ಶ್ರೀರಾಮನ ಜನ್ಮೋತ್ಸವವನ್ನು ಆಚರಿಸಿದರು.

ಅಯೋಧ್ಯೆಯ ಶ್ರೀರಾಮ ಜನ್ಮಸ್ಥಳದೊಂದಿಗೆ ಸಂಬಂಧ ಹೊಂದಿರುವ ಈ ಮಂದಿರದಲ್ಲಿ ಭಕ್ತರು ಲೋಕಕ್ಷೇಮಕ್ಕಾಗಿ ವಿಶೇಷ ಹೋಮಗಳಲ್ಲಿ ಭಾಗವಹಿಸಿದ್ದರು. ಪೂಜೆಯ ನಂತರ ಭಕ್ತರಿಗೆ ಕೊಸಂಬರಿ ಮತ್ತು ಪಾನಕ ವಿತರಣೆ ಮಾಡಲಾಯಿತು.

ಇದೇ ಸಂದರ್ಭದಲ್ಲಿ, ಶನಿವಾರ ಸೀತಾ ಕಲ್ಯಾಣ ಮಹೋತ್ಸವ ನಡೆಯಲಿದ್ದು, ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಅನ್ನಸಂತರ್ಪಣೆಯ ಪ್ರಸಾದ ಸ್ವೀಕರಿಸಬೇಕು ಎಂದು ಪ್ರಧಾನ ಅರ್ಚಕ ದೀವಾಕರ ದೀಕ್ಷಿತ್ ಹಾಗೂ ಟ್ರಸ್ಟಿಗಳಾದ ಕೊದಂಡರಾಮ ಕುಷ್ಟಗಿ, ನವೀನ ಕುಷ್ಟಗಿ ಮತ್ತು ಭರತ ಕುಷ್ಟಗಿ ಅವರು ಮನವಿ ಮಾಡಿದರು.

ರಾಮನವಮಿ ಅಂಗವಾಗಿ ಮಂತ್ರಾಲಯದಲ್ಲಿ ಮಹಾಭಿಷೇಕ: ಮೂಲ ರಾಮದೇವರಿಗೆ ವಿಶೇಷ ಪೂಜೆ!

ರಾಯಚೂರು:- ರಾಮನವಮಿ ಅಂಗವಾಗಿ ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ಭಕ್ತಿಭಾವದಿಂದ ನೆರವೇರಿದವು.

ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮಿ ಅವರು ಶ್ರೀ ಬ್ರಹ್ಮ ಕರಾರ್ಚಿತ ಮೂಲ ರಾಮದೇವರು ಸೇರಿದಂತೆ ಸಂಸ್ಥಾನ ಮೂರ್ತಿಗಳಿಗೆ ಮಹಾಭಿಷೇಕ ನೆರವೇರಿಸಿದರು. ಬಳಿಕ ಮೂಲ ರಾಮದೇವರು, ದಿಗ್ವಿಜಯ ರಾಮದೇವರು ಹಾಗೂ ಜಯರಾಮದೇವರುಗಳಿಗೆ ಗಂಧ ಲೇಪನ ಅರ್ಪಿಸಿ ಸಂಸ್ಥಾನ ಪೂಜೆ ನಡೆಸಲಾಯಿತು.

ಈ ಮಹಾಭಿಷೇಕವು ಮಠದಲ್ಲಿ ಅಪರೂಪದ ಹಾಗೂ ಮಹತ್ವದ ಆಚರಣೆಯಾಗಿದ್ದು, ವರ್ಷದಲ್ಲಿ ಎರಡು ಬಾರಿ ಮಾತ್ರ—ಶ್ರೀರಾಮನವಮಿ ಹಾಗೂ ಬಲಿ ಪಾಡ್ಯಮಿಯಂದು—ನಡೆಯುತ್ತದೆ.

ಇದೀಗ ಶ್ರೀರಾಮನವಮಿ ಅಂಗವಾಗಿ ಅಪಾರ ಸಂಖ್ಯೆಯ ಭಕ್ತರು ಆಗಮಿಸಿ ರಾಯರ ಕೃಪೆಗೆ ಪಾತ್ರರಾದರು. ರಾಯಚೂರು ನಗರದಲ್ಲೂ ಹಬ್ಬದ ಸಂಭ್ರಮ ಕಳೆಯಿದ್ದು, ರಾಮ ಮಂದಿರ, ಕೋದಂಡರಾಮ ದೇವಾಲಯ ಸೇರಿದಂತೆ ವಿವಿಧ ದೇವಾಲಯಗಳಲ್ಲಿ ಬೆಳಿಗ್ಗೆಯಿಂದಲೇ ವಿಶೇಷ ಪೂಜೆಗಳು ನಡೆದವು.

 

error: Content is protected !!