Home Blog

ಎಲ್ಲಿ ಬಿಜೆಪಿ, ಅಲ್ಲಿ ಅಭಿವೃದ್ಧಿ, ಬಂಗಾಳ ಭಯಮುಕ್ತವಾಗಿದೆ: ಪ್ರಧಾನಿ ಮೋದಿ

ನವದೆಹಲಿ: ಪಂಚರಾಜ್ಯ ಚುನಾವಣಾ ಫಲಿತಾಂಶ ಹೊರಬಂದ ಹಿನ್ನೆಲೆಯಲ್ಲಿ ಬಿಜೆಪಿ ಕಚೇರಿಯಲ್ಲಿ ನಡೆದ ವಿಜಯೋತ್ಸವದಲ್ಲಿ ಪ್ರಧಾನಿ ನರೇಂದ್ರ ಮೋದಿ ಬಂಗಾಳ ಜನತೆಗೆ ಭರವಸೆ ನೀಡಿದ್ದಾರೆ.

“ಗಂಗೋತ್ರಿಯಿಂದ ಗಂಗಾಸಾಗರವರೆಗೆ ಕಮಲ ಅರಳಿದೆ. ಬಂಗಾಳದಲ್ಲಿ ಹೊಸ ಸೂರ್ಯೋದಯವಾಗಿದ್ದು, ರಾಜ್ಯ ಭಯಮುಕ್ತವಾಗಿದೆ” ಎಂದು ಅವರು ತಿಳಿಸಿದ್ದಾರೆ. ಬಂಗಾಳ, ಅಸ್ಸಾಂ ಮತ್ತು ಪುದುಚೇರಿಯಲ್ಲಿ ಸಾಧಿಸಿದ ಗೆಲುವಿಗೆ ಕಾರಣರಾದ ಪಕ್ಷದ ಕಾರ್ಯಕರ್ತರನ್ನು ಅಭಿನಂದಿಸಿದ ಅವರು, “ನಿಮ್ಮ ಉತ್ತಮ ಭವಿಷ್ಯಕ್ಕಾಗಿ ಹಗಲು-ರಾತ್ರಿ ಶ್ರಮಿಸುತ್ತೇವೆ” ಎಂದು ಭರವಸೆ ನೀಡಿದ್ದಾರೆ.

ಚುನಾವಣೆಯಲ್ಲಿ ಗೆಲುವು-ಸೋಲು ಸಹಜವಾದರೂ, ಐದು ರಾಜ್ಯಗಳ ಜನತೆ ಭಾರತ ಪ್ರಜಾಪ್ರಭುತ್ವದ ಶಕ್ತಿಯನ್ನು ವಿಶ್ವಕ್ಕೆ ತೋರಿಸಿದ್ದಾರೆ. “ಪ್ರಜಾಪ್ರಭುತ್ವ ನಮ್ಮ ನರನಾಡಿಗಳಲ್ಲಿ ಹರಿಯುವ ಶಕ್ತಿ. ಈ ಗೆಲುವು ಭಾರತದ ಸಂವಿಧಾನಕ್ಕೂ ಸಲ್ಲುತ್ತದೆ” ಎಂದು ಅವರು ಹೇಳಿದ್ದಾರೆ.

ಅಸ್ಸಾಂ, ತಮಿಳುನಾಡು, ಪುದುಚೇರಿ ಹಾಗೂ ಕೇರಳ ರಾಜ್ಯಗಳಲ್ಲಿ ದಾಖಲೆ ಮಟ್ಟದ ಮತದಾನ ನಡೆದಿದ್ದು, ಮಹಿಳೆಯರ ಭಾಗವಹಿಸುವಿಕೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ, ಸಿಬ್ಬಂದಿ ಹಾಗೂ ಭದ್ರತಾ ಪಡೆಗಳ ಸೇವೆಯನ್ನು ಅವರು ಶ್ಲಾಘಿಸಿದ್ದಾರೆ. ಅಸ್ಸಾಂನಲ್ಲಿ ಮೂರನೇ ಬಾರಿ ಬಿಜೆಪಿ ನೇತೃತ್ವದ ಮೈತ್ರಿಕೂಟಕ್ಕೆ ಜನರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಪುದುಚೇರಿಯಲ್ಲಿಯೂ ಮೈತ್ರಿಕೂಟದ ಮೇಲೆ ಜನರು ನಂಬಿಕೆ ಇಟ್ಟಿದ್ದಾರೆ ಎಂದರು.

“ಎಲ್ಲಿ ಬಿಜೆಪಿ, ಅಲ್ಲಿ ಅಭಿವೃದ್ಧಿ” ಎಂಬ ಧ್ಯೇಯದೊಂದಿಗೆ ಕೆಲಸ ಮಾಡುತ್ತಿದ್ದೇವೆ. ದೇಶದ 20ಕ್ಕೂ ಹೆಚ್ಚು ರಾಜ್ಯಗಳಲ್ಲಿ ಬಿಜೆಪಿ ಅಥವಾ ಮೈತ್ರಿಕೂಟದ ಸರ್ಕಾರವಿದೆ. ಗುಜರಾತ್ ಸೇರಿದಂತೆ ಸ್ಥಳೀಯ ಚುನಾವಣೆಯಲ್ಲಿಯೂ ಪಕ್ಷಕ್ಕೆ ಭಾರೀ ಬೆಂಬಲ ದೊರೆತಿದೆ. ಜನಸಂಘದ ಸ್ಥಾಪಕ ಶ್ಯಾಮ ಪ್ರಸಾದ್ ಮುಖರ್ಜಿ ಅವರ ಕನಸಿನ ಬಂಗಾಳ ನಿರ್ಮಾಣದ ದಾರಿ ಈಗ ತೆರೆದಿದೆ.“ಬಂಗಾಳ ಭಯಮುಕ್ತವಾಗಿದೆ, ಹೊಸ ಅಧ್ಯಾಯ ಆರಂಭವಾಗಿದೆ” ಎಂದರು.

ಕೊನೆಯಲ್ಲಿ, ಬಂಗಾಳ ಜನತೆಗೆ ಭರವಸೆ ನೀಡಿದ ಅವರು, ಮಹಿಳೆಯರಿಗೆ ಸುರಕ್ಷತೆ, ಯುವಕರಿಗೆ ಉದ್ಯೋಗ ಹಾಗೂ ಆರೋಗ್ಯ ಸೌಲಭ್ಯಗಳನ್ನು ಒದಗಿಸಲು ಸರ್ಕಾರ ಬದ್ಧವಾಗಿದೆ. ನುಸುಳುವಿಕೆ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ಉಪಚುನಾವಣೆ ಗೆಲುವು: ಮತದಾರರಿಗೆ ಸಿಎಂ ಸಿದ್ದರಾಮಯ್ಯ ಧನ್ಯವಾದ!

ಬೆಂಗಳೂರು:  ಬಾಗಲಕೋಟೆ ಮತ್ತು ದಾವಣಗೆರೆ ವಿಧಾನಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಮತ ನೀಡಿ ಗೆಲುವು ಸಾಧಿಸಲು ನೆರವಾದ ಮತದಾರರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಧನ್ಯವಾದ ತಿಳಿಸಿದ್ದಾರೆ.

ಈ ಬಗ್ಗೆ ಮಾಧ್ಯಮ ಪ್ರಕಟಣೆ ಹೊರಡಿಸಿರುವ ಅವರು, ಈ ಗೆಲುವು ಸರ್ಕಾರದ ಸಾಧನೆಗಳು ಹಾಗೂ ಕಾಂಗ್ರೆಸ್ ಪಕ್ಷದ ಸಿದ್ಧಾಂತಕ್ಕೆ ಸಿಕ್ಕ ಜಯವಾಗಿದೆ. ವಿರೋಧ ಪಕ್ಷಗಳ ಅಪಪ್ರಚಾರ ಮತ್ತು ಹಣದ ಪ್ರಭಾವದ ನಡುವೆಯೂ ಜನರು ಕಾಂಗ್ರೆಸ್ ಹಾಗೂ ಸರ್ಕಾರದ ಮೇಲೆ ನಂಬಿಕೆ ಇಟ್ಟು ಮತ ಚಲಾಯಿಸಿದ್ದಾರೆ ಎಂದು ತಿಳಿಸಿದ್ದಾರೆ.

ರಾಜ್ಯದ ಜನತೆ ತಮ್ಮ ಮೇಲೆ ಇಟ್ಟಿರುವ ವಿಶ್ವಾಸವನ್ನು ಉಳಿಸಿಕೊಳ್ಳುವುದಾಗಿ ಭರವಸೆ ನೀಡಿದ ಅವರು, ಮುಂದಿನ ವಿಧಾನಸಭಾ ಚುನಾವಣೆಯಲ್ಲಿಯೂ ಇದೇ ರೀತಿಯ ಬೆಂಬಲ ಸಿಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ದಕ್ಷಿಣ ರಾಜ್ಯಗಳಲ್ಲಿ ಬಿಜೆಪಿಯ ರಾಜಕಾರಣಕ್ಕೆ ಅವಕಾಶ ಇಲ್ಲ ಎಂಬ ಸ್ಪಷ್ಟ ಸಂದೇಶ ಈ ಫಲಿತಾಂಶಗಳಿಂದ ಹೊರಬಂದಿದೆ ಎಂದು ಸಿಎಂ ಅಭಿಪ್ರಾಯಪಟ್ಟಿದ್ದಾರೆ. ಕೇರಳ ಮತ್ತು ತಮಿಳುನಾಡು ರಾಜ್ಯಗಳಲ್ಲಿಯೂ ಇದೇ ರೀತಿಯ ಜನಾಭಿಪ್ರಾಯ ವ್ಯಕ್ತವಾಗಿದೆ ಎಂದರು.

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ನಿರೀಕ್ಷಿತವಾಗಿತ್ತು ಎಂದು ಹೇಳಿದ ಅವರು, ಅಭ್ಯರ್ಥಿಗಳ ಆಯ್ಕೆದಿಂದ ಪ್ರಚಾರದ ಕಾರ್ಯತಂತ್ರದವರೆಗೆ ರಾಜ್ಯದ ಕಾಂಗ್ರೆಸ್ ನಾಯಕರು ಸಂಘಟಿತವಾಗಿ ಕೆಲಸ ಮಾಡಿದ್ದಾರೆ. ಪಕ್ಷದ ನಾಯಕರಾದ  ರಾಹುಲ್ ಗಾಂಧಿ ಹಾಗೂ ಪ್ರಿಯಾಂಕ ಗಾಂಧಿ ಅವರ ಶ್ರಮವನ್ನು ಸಿಎಂ ಪ್ರಶಂಸಿಸಿದ್ದಾರೆ.

ಶೀಘ್ರದಲ್ಲೇ ಕೇರಳದಲ್ಲಿ ಕಾಂಗ್ರೆಸ್ ಶಾಸಕಾಂಗ ಸಭೆ ನಡೆಯಲಿದ್ದು, ಮುಂದಿನ ಮುಖ್ಯಮಂತ್ರಿ ಆಯ್ಕೆ ನಡೆಯಲಿದೆ. ಕರ್ನಾಟಕದಂತೆ ಕೇರಳದಲ್ಲಿಯೂ ಉತ್ತಮ ಆಡಳಿತ ನೀಡಲಾಗುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ ಸಿಎಂ, ನೆರೆಯ ರಾಜ್ಯದ ಗೆಲುವು ಕರ್ನಾಟಕ ಕಾಂಗ್ರೆಸ್ ಬಲವನ್ನು ಹೆಚ್ಚಿಸಿದೆ ಎಂದು ತಿಳಿಸಿದ್ದಾರೆ.

 

18 ವರ್ಷದ ಸೇವೆಗೆ ಆರ್‌ಸಿಬಿ ಗೌರವ: ಫಿಸಿಯೋಗೆ ಭಾವುಕ ವಿದಾಯ!

ಹಾಲಿ ಚಾಂಪಿಯನ್ ಆರ್​ಸಿಬಿ ತನ್ನ ಮುಂದಿನ ಪಂದ್ಯವನ್ನು ಮೇ 7ರಂದು ಲಕ್ನೋ ಸೂಪರ್​ಜೈಂಟ್ಸ್ ವಿರುದ್ಧ ಏಕನಾ ಕ್ರೀಡಾಂಗಣದಲ್ಲಿ ಆಡಲಿದೆ.

ಪ್ಲೇಆಫ್ ದೃಷ್ಟಿಯಿಂದ ಉಳಿದ ಪಂದ್ಯಗಳಲ್ಲಿ ಗೆಲುವು ತಂಡಕ್ಕೆ ಅತ್ಯಗತ್ಯವಾಗಿದ್ದು, ಆರ್‌ಸಿಬಿ ತಯಾರಿಯಲ್ಲಿ ತೊಡಗಿದೆ.

ಈ ನಡುವೆ ಆರ್‌ಸಿಬಿ ಫ್ರಾಂಚೈಸಿ ತನ್ನ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಅದರಲ್ಲಿ ತಂಡದ ಮಾಜಿ ಫಿಸಿಯೋ ಇವಾನ್ ಸ್ಪೀಚ್ಲಿಗೆ ಭಾವುಕ ವಿದಾಯ ತಿಳಿಸಿದೆ.

ದಕ್ಷಿಣ ಆಫ್ರಿಕಾ ಮೂಲದ ಇವಾನ್ ಸ್ಪೀಚ್ಲಿ 2008ರಲ್ಲಿ ಆರ್‌ಸಿಬಿ ತಂಡಕ್ಕೆ ಫಿಸಿಯೋ ಆಗಿ ಸೇರಿ, ಸತತ 18 ವರ್ಷಗಳ ಕಾಲ (2008ರಿಂದ 2025ರವರೆಗೆ) ಆಟಗಾರರ ದೈಹಿಕ ಸಾಮರ್ಥ್ಯ ಕಾಪಾಡುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಕಳೆದ ವರ್ಷ ತಂಡ ಐಪಿಎಲ್ ಚಾಂಪಿಯನ್ ಆದ ನಂತರ ಅವರು ತಮ್ಮ ಹುದ್ದೆಯಿಂದ ನಿವೃತ್ತರಾಗಿದ್ದರು.

ಅವರ ಸೇವೆಯನ್ನು ಗೌರವಿಸಲು ಆರ್‌ಸಿಬಿ ವಿಶೇಷವಾಗಿ ಆಹ್ವಾನಿಸಿ, ತಂಡದ ಡ್ರೆಸ್ಸಿಂಗ್ ಕೋಣೆಯಲ್ಲಿ ಕೈಗಡಿಯಾರ ನೀಡಿ ಸನ್ಮಾನಿಸಿದೆ.

ಈ ಸಂದರ್ಭದಲ್ಲಿ, ಕೊಹ್ಲಿ ಸ್ಪೀಚ್ಲಿ ಬಗ್ಗೆ ತಮ್ಮ ಗೌರವ ಮತ್ತು ಪ್ರೀತಿಯನ್ನು ವ್ಯಕ್ತಪಡಿಸಿದರು, ಕಳೆದ 18 ವರ್ಷಗಳಲ್ಲಿ ತಂಡದ ಇತರರಿಗಿಂತ ಹೆಚ್ಚು ಸಮಯವನ್ನು ಅವರೊಂದಿಗೆ ಕಳೆದಿದ್ದೇನೆ ಎಂದು ಅವರು ನೆನಪಿಸಿಕೊಂಡರು.

ಒಟ್ಟಾರೆ, ಪ್ಲೇಆಫ್ ಸವಾಲಿನ ನಡುವೆ ಆರ್‌ಸಿಬಿ ತಂಡದಲ್ಲಿ ಈ ಭಾವುಕ ಕ್ಷಣ ಗಮನ ಸೆಳೆದಿದೆ.

ದಾವಣಗೆರೆ ದಕ್ಷಿಣ ಉಪಚುನಾವಣೆ: ಶಾಮನೂರು ಮನೆತನದ ಮೂರನೇ ಪೀಳಿಗೆ ವಿಧಾನಸಭೆಗೆ!

ದಾವಣಗೆರೆ: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು ಗೆಲುವು ಸಾಧಿಸಿದ್ದಾರೆ.

ತೀವ್ರ ಪೈಪೋಟಿಯ ನಡುವೆ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ದಾಸಕರಿಯಪ್ಪ ವಿರುದ್ಧ 5,708 ಮತಗಳ ಅಂತರದಿಂದ ಜಯಗಳಿಸಿದ್ದಾರೆ.

ಈ ಮೂಲಕ ಅಜ್ಜ ಶಾಮನೂರು ಶಿವಶಂಕರಪ್ಪ ಅವರ ರಾಜಕೀಯ ಹಾದಿಯನ್ನು ಮೊಮ್ಮಗ ಸಮರ್ಥ ಮುಂದುವರಿಸಿದ್ದು, ಶಾಮನೂರು ಮನೆತನದ ಮೂರನೇ ಪೀಳಿಗೆ ವಿಧಾನಸಭೆಗೆ ಪ್ರವೇಶಿಸಿದಂತಾಗಿದೆ. ತಂದೆ ಎಸ್‌.ಎಸ್‌. ಮಲ್ಲಿಕಾರ್ಜುನ ಅವರಂತೆ ಸಮರ್ಥ ಕೂಡ ಚಿಕ್ಕ ವಯಸ್ಸಿನಲ್ಲೇ ಶಾಸಕರಾಗಿ ಆಯ್ಕೆಯಾಗಿದ್ದು, 27ನೇ ವಯಸ್ಸಿನಲ್ಲಿ ವಿಧಾನಸಭೆಗೆ ಪ್ರವೇಶಿಸಿದ್ದಾರೆ.

ಮತ ಎಣಿಕೆ ವಿವರಗಳ ಪ್ರಕಾರ, ಸಮರ್ಥ್ ಶಾಮನೂರು 68,619 ಮತಗಳನ್ನು ಪಡೆದು ಗೆಲುವು ಸಾಧಿಸಿದರೆ, ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ದಾಸಕರಿಯಪ್ಪ 63,746 ಮತಗಳನ್ನು ಪಡೆದಿದ್ದಾರೆ. ಎಸ್‌ಡಿಪಿಐ ಅಭ್ಯರ್ಥಿ ಅಫ್ಸರ್ ಕೊಡ್ಲಿಪೇಟೆ 18,485 ಮತಗಳನ್ನು ಪಡೆದು ಮೂರನೇ ಸ್ಥಾನದಲ್ಲಿದ್ದಾರೆ.

ಈ ಉಪಚುನಾವಣೆಯಲ್ಲಿ ಎಸ್‌ಡಿಪಿಐ ದಾಖಲೆಯ ಮತಗಳನ್ನು ಪಡೆಯುವ ಮೂಲಕ ಅಚ್ಚರಿ ಮೂಡಿಸಿದ್ದು, ಅಲ್ಪಸಂಖ್ಯಾತ ಮತಗಳ ವಿಭಜನೆ ಕಾಂಗ್ರೆಸ್‌ಗೆ ಸವಾಲಾಗಿ ಪರಿಣಮಿಸಿದೆ. ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನೀಡದ ಹಿನ್ನೆಲೆ ಆ ಸಮುದಾಯದ ಒಂದು ಭಾಗ ಎಸ್‌ಡಿಪಿಐಗೆ ಬೆಂಬಲಿಸಿದ ಪರಿಣಾಮ ಕಾಂಗ್ರೆಸ್ ಗೆಲುವಿನ ಅಂತರ ಕಡಿಮೆಯಾಗಿದೆ ಎನ್ನಲಾಗಿದೆ.

ತಂದೆ ಸಚಿವ, ತಾಯಿ ಸಂಸದೆ ಹಾಗೂ ತಾತ ಹಿರಿಯ ರಾಜಕಾರಣಿ ಎಂಬ ಬಲವಾದ ಹಿನ್ನೆಲೆ ಇದ್ದರೂ, ಸಮರ್ಥ್ ಶಾಮನೂರು ಕಡಿಮೆ ಅಂತರದಲ್ಲಿ ಜಯ ಸಾಧಿಸಿರುವುದು ಗಮನಾರ್ಹವಾಗಿದೆ. ಈ ಫಲಿತಾಂಶವು ಸಾಂಪ್ರದಾಯಿಕ ರಾಜಕೀಯ ಲೆಕ್ಕಾಚಾರಗಳನ್ನು ಬದಲಿಸಿದ್ದು, ಬಿಜೆಪಿ-ಕಾಂಗ್ರೆಸ್ ನೇರ ಹಣಾಹಣಿಯ ನಡುವೆ ಮೂರನೇ ಶಕ್ತಿ ಹೊರಹೊಮ್ಮುವ ಸೂಚನೆ ನೀಡಿದೆ.

ಒಟ್ಟಾರೆ, ದಾವಣಗೆರೆ ದಕ್ಷಿಣ ಉಪಚುನಾವಣೆಯ ಫಲಿತಾಂಶ ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.

ಬೇಸಿಗೆಯಲ್ಲಿ ಬೆವರಿನ ವಾಸನೆ ತಡೆಯಲು ಸ್ನಾನದ ನೀರಿಗೆ ಈ ವಸ್ತುವನ್ನು ಸೇರಿಸಿ!

ಬೇಸಿಗೆಯಲ್ಲಿ ಬೆವರುವುದು ಸಾಮಾನ್ಯವಾದದ್ದು. ಆದರೆ ಕೆಲವೊಮ್ಮೆ ದೇಹದಿಂದ ವಿಪರೀತವಾಗಿ ಬೆವರು ಬರುತ್ತದೆ.

ಈ ಬೆವರು ಚರ್ಮದ ಮೇಲಿರುವ ಬ್ಯಾಕ್ಟೀರಿಯಾಗಳೊಂದಿಗೆ ಸಂವಹನಗೊಂಡಾಗ ದುರ್ವಾಸನೆ ಉಂಟಾಗುತ್ತದೆ. ಇದರಿಂದ ಅನೇಕರು ಮುಜುಗರಕ್ಕೆ ಒಳಗಾಗುವುದರ ಜೊತೆಗೆ ಪರ್‌ಫ್ಯೂಮ್ ಬಳಸಿದರೂ ಸಮಸ್ಯೆ ಸಂಪೂರ್ಣವಾಗಿ ಕಡಿಮೆಯಾಗುವುದಿಲ್ಲ.

ಆರೋಗ್ಯ ತಜ್ಞರ ಪ್ರಕಾರ, ಸ್ನಾನದ ವಿಧಾನದಲ್ಲಿ ಸ್ವಲ್ಪ ಬದಲಾವಣೆ ಮಾಡಿದರೆ ಬೆವರಿನ ದುರ್ವಾಸನೆಯನ್ನು ನಿಯಂತ್ರಿಸಬಹುದು. ಸ್ನಾನದ ನೀರಿಗೆ ಕೆಲವು ನೈಸರ್ಗಿಕ ಪದಾರ್ಥಗಳನ್ನು ಸೇರಿಸುವುದರಿಂದ ದೇಹದ ವಾಸನೆ ಕಡಿಮೆಯಾಗುವುದರ ಜೊತೆಗೆ ದಿನವಿಡೀ ತಾಜಾತನದಿಂದ ಇರಬಹುದು.

ಸ್ನಾನದ ನೀರಿಗೆ ಸೇರಿಸಬಹುದಾದ ಉಪಯುಕ್ತ ಪದಾರ್ಥಗಳು:

ಬೇವು:
ಬೇವಿನ ಎಲೆಗಳು ಅಥವಾ ಬೇವಿನ ಎಣ್ಣೆಯನ್ನು ನೀರಿಗೆ ಸೇರಿಸಿ ಸ್ನಾನ ಮಾಡುವುದರಿಂದ ದೇಹದ ವಾಸನೆ ಕಡಿಮೆಯಾಗುತ್ತದೆ. ಬೇವಿಗೆ ಬ್ಯಾಕ್ಟೀರಿಯಾ ವಿರೋಧಿ ಹಾಗೂ ಶಿಲೀಂಧ್ರ ವಿರೋಧಿ ಗುಣಗಳಿದ್ದು, ಚರ್ಮವನ್ನು ಸ್ವಚ್ಛವಾಗಿರಿಸುತ್ತದೆ. ತುರಿಕೆ, ದದ್ದು ಮತ್ತು ಕಿರಿಕಿರಿಯನ್ನು ಕೂಡ ತಡೆಯಲು ಸಹಕಾರಿ.

ನಿಂಬೆ:
ನಿಂಬೆಹಣ್ಣಿನ ಸುವಾಸನೆ ಬೆವರಿನ ದುರ್ವಾಸನೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ನಿಂಬೆ ರಸವನ್ನು ನೀರಿಗೆ ಬೆರೆಸಿ ಅಥವಾ ಸಿಪ್ಪೆಗಳನ್ನು ನೀರಿನಲ್ಲಿ ನೆನೆಸಿ ಬಳಸಬಹುದು. ನಿಂಬೆ ಸಾರಭೂತ ಎಣ್ಣೆಯನ್ನೂ ಕೆಲವು ಹನಿಗಳು ಸೇರಿಸಬಹುದು.

ಅಡುಗೆ ಸೋಡಾ:
ಸ್ನಾನದ ನೀರಿಗೆ ಒಂದು ಚಿಟಿಕೆ ಅಡುಗೆ ಸೋಡಾ ಸೇರಿಸುವುದರಿಂದ ಚರ್ಮ ಮೃದುಗೊಳ್ಳುತ್ತದೆ. ಜೊತೆಗೆ ದುರ್ವಾಸನೆಯನ್ನು ಕಡಿಮೆ ಮಾಡುವಲ್ಲಿ ಸಹಾಯಕ.

 ರೋಸ್ ವಾಟರ್:
ಗುಲಾಬಿ ದಳಗಳು ಅಥವಾ ರೋಸ್ ವಾಟರ್ ಸೇರಿಸಿ ಸ್ನಾನ ಮಾಡಿದರೆ ದೇಹದ ವಾಸನೆ ಕಡಿಮೆಯಾಗುತ್ತದೆ. ಇದು ನೈಸರ್ಗಿಕ ಮಾಯಿಶ್ಚರೈಸರ್ ಆಗಿ ಕಾರ್ಯನಿರ್ವಹಿಸಿ ಚರ್ಮದ ಶುಷ್ಕತೆಯನ್ನು ತಡೆಯುತ್ತದೆ.

ಪಟಿಕ:
ಪಟಿಕವನ್ನು ಒದ್ದೆಯಾದ ಚರ್ಮದ ಮೇಲೆ ಉಜ್ಜುವುದರಿಂದ ಬೆವರು ಉಂಟುಮಾಡುವ ಬ್ಯಾಕ್ಟೀರಿಯಾಗಳು ನಿವಾರಣೆಯಾಗುತ್ತವೆ. ಇದು ದೇಹದ ದುರ್ವಾಸನೆಯನ್ನು ನಿಯಂತ್ರಿಸಲು ಪರಿಣಾಮಕಾರಿ.

ಸ್ನಾನದ ನಂತರ ಪಾಲಿಸಬೇಕಾದ ಕ್ರಮಗಳು:

ಸ್ನಾನ ಮಾಡಿದ ಬಳಿಕ ದೇಹವನ್ನು ಚೆನ್ನಾಗಿ ಒಣಗಿಸಿಕೊಳ್ಳುವುದು ಅತ್ಯಂತ ಮುಖ್ಯ. ಒದ್ದೆಯಾದ ಚರ್ಮದಲ್ಲಿ ಬ್ಯಾಕ್ಟೀರಿಯಾಗಳು ವೇಗವಾಗಿ ಬೆಳೆಯುವ ಸಾಧ್ಯತೆ ಇರುವುದರಿಂದ ವಾಸನೆ ಹೆಚ್ಚಾಗಬಹುದು. ಜೊತೆಗೆ ಹತ್ತಿ ಬಟ್ಟೆಗಳನ್ನು ಧರಿಸುವುದು ಉತ್ತಮ, ಏಕೆಂದರೆ ಅವು ಬೆವರನ್ನು ಹೀರಿಕೊಂಡು ಚರ್ಮ ಉಸಿರಾಡಲು ಸಹಾಯ ಮಾಡುತ್ತವೆ.

 

ಚಿಕ್ಕಮಗಳೂರಿನಲ್ಲಿ ಹೃದಯವಿದ್ರಾವಕ ದುರಂತ: ಕೆರೆಯಲ್ಲಿ ಮುಳುಗಿ ನಾಲ್ವರು ಮಕ್ಕಳು ಸಾವು!

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಹೃದಯವಿದ್ರಾವಕ ಘಟನೆ ಸಂಭವಿಸಿದ್ದು, ಕೆರೆಯಲ್ಲಿ ಮುಳುಗಿ ನಾಲ್ವರು ಮಕ್ಕಳು ಮೃತಪಟ್ಟಿದ್ದಾರೆ. ಈ ದಾರುಣ ಘಟನೆ ಚಿಕ್ಕಮಗಳೂರಿನ ಅರಳುಗುಪ್ಪೆ ಗ್ರಾಮದಲ್ಲಿ ನಡೆದಿದೆ.

ಮೃತ ಮಕ್ಕಳನ್ನು ಅಬ್ದುಲ್ ರೆಹಮಾನ್ (9), ನಯಾಜ್ (12), ಮದಿನಾ ಬಾನು (9) ಹಾಗೂ ಆರುನ್ (8) ಎಂದು ಗುರುತಿಸಲಾಗಿದೆ. ಇವರು ಗ್ರಾಮದಲ್ಲಿರುವ ಕೆರೆಯ ಬಳಿ ಆಟವಾಡಲು ತೆರಳಿದ್ದ ವೇಳೆ ಅನಾಹುತ ಸಂಭವಿಸಿದೆ ಎಂದು ತಿಳಿದುಬಂದಿದೆ.

ಮಕ್ಕಳು ಆಟವಾಡುವ ವೇಳೆ ಕಾಲು ಜಾರಿ ಕೆರೆಗೆ ಬಿದ್ದಿರುವ ಸಾಧ್ಯತೆ ಇದ್ದು, ತಕ್ಷಣ ನೆರವಿಗೆ ಯಾರೂ ಲಭ್ಯವಾಗದ ಕಾರಣ ನಾಲ್ವರೂ ನೀರುಪಾಲಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಘಟನೆಯ ಬಗ್ಗೆ ತಿಳಿದು ಸ್ಥಳೀಯರು ತಕ್ಷಣ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದರೂ, ಮಕ್ಕಳನ್ನು ಬದುಕಿಸಲು ಸಾಧ್ಯವಾಗಲಿಲ್ಲ.

ಇದೇ ವೇಳೆ ಅರ್ಮನ್ ಎಂಬ ಮತ್ತೊಬ್ಬ ಬಾಲಕ ಅದೃಷ್ಟವಶಾತ್ ಬದುಕುಳಿದಿದ್ದಾನೆ. ಅವನನ್ನು ತಕ್ಷಣ ರಕ್ಷಿಸಿ ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ.

ಘಟನೆ ಸುದ್ದಿ ತಿಳಿಯುತ್ತಿದ್ದಂತೆಯೇ ಗ್ರಾಮದಲ್ಲಿ ಶೋಕ ಮಡುಗಟ್ಟಿದ್ದು, ಪೋಷಕರು ಹಾಗೂ ಸಂಬಂಧಿಕರ ಆಕ್ರಂದನ ಮರುಳಿಸುವಂತಿತ್ತು. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈ ಸಂಬಂಧ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನೆಯ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.

 

ಅಡುಗೆಮನೆಯಲ್ಲಿ ‘ಸೈಲೆಂಟ್ ಕಿಲ್ಲರ್’ ಸ್ಪಾಂಜ್: ಆರೋಗ್ಯಕ್ಕೆ ಭಾರಿ ಅಪಾಯ!

ಅಡುಗೆಮನೆಯಲ್ಲಿ ಪಾತ್ರೆ ತೊಳೆಯುವ ಸ್ಪಾಂಜ್‌ಗಳ ಸ್ವಚ್ಛತೆಯನ್ನು ನಿರ್ಲಕ್ಷಿಸುವುದು ಆರೋಗ್ಯಕ್ಕೆ ಗಂಭೀರ ಅಪಾಯ ಉಂಟುಮಾಡಬಹುದು.

ಸದಾ ಒದ್ದೆಯಾಗಿರುವ ಸ್ಪಾಂಜ್‌ಗಳಲ್ಲಿ ಆಹಾರ ಅವಶೇಷಗಳು ಜಮೆಯಾಗುತ್ತಿದ್ದು, ಇ. ಕೋಲಿ ಸೇರಿದಂತೆ ಅಪಾಯಕಾರಿ ಬ್ಯಾಕ್ಟೀರಿಯಾಗಳು ವೇಗವಾಗಿ ಬೆಳೆಯಲು ಅನುಕೂಲವಾಗುತ್ತದೆ. ಕೆಲ ಸಂದರ್ಭಗಳಲ್ಲಿ ಇವು ಶೌಚಾಲಯದ ಸೀಟಿಗಿಂತಲೂ ಹೆಚ್ಚು ಕೊಳೆಯನ್ನು ಹೊಂದಿರಬಹುದು.

ಈ ಬ್ಯಾಕ್ಟೀರಿಯಾಗಳು ಪಾತ್ರೆ ಮತ್ತು ಅಡುಗೆಮನೆಯ ಮೇಲ್ಮೈಗಳ ಮೂಲಕ ದೇಹಕ್ಕೆ ಪ್ರವೇಶಿಸಿದರೆ ವಾಂತಿ, ಅತಿಸಾರ, ಹೊಟ್ಟೆ ನೋವು ಮೊದಲಾದ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ. ವಿಶೇಷವಾಗಿ ಮಕ್ಕಳು ಮತ್ತು ವೃದ್ಧರಲ್ಲಿ ರೋಗನಿರೋಧಕ ಶಕ್ತಿ ಕುಗ್ಗುವ ಅಪಾಯ ಹೆಚ್ಚಾಗಿದೆ.

ಆರೋಗ್ಯದ ದೃಷ್ಟಿಯಿಂದ ಸ್ಪಾಂಜ್‌ಗಳನ್ನು ಪ್ರತಿ 1–2 ವಾರಗಳಿಗೊಮ್ಮೆ ಮತ್ತು ಬ್ರಷ್‌ಗಳನ್ನು 1–2 ತಿಂಗಳಿಗೊಮ್ಮೆ ಬದಲಾಯಿಸುವುದು ಅಗತ್ಯ. ಜೊತೆಗೆ, ಪ್ರತಿ ಬಳಕೆಯ ನಂತರ ತೊಳೆಯುವುದು, ಬೆಚ್ಚಗಿನ ನೀರು ಮತ್ತು ಸಾಬೂನಿನಿಂದ ಸ್ವಚ್ಛಗೊಳಿಸುವುದು, ಮೈಕ್ರೋವೇವ್ ಅಥವಾ ಕುದಿಯುವ ನೀರಿನಲ್ಲಿ ನಿಷ್ಕ್ರಿಯಗೊಳಿಸುವುದು ಉತ್ತಮ ವಿಧಾನಗಳಾಗಿವೆ.

ಅಡಿಗೆ ಸೋಡಾ ಬಳಸಿ ಸ್ಪಾಂಜ್‌ಗಳಲ್ಲಿನ ದುರ್ವಾಸನೆ ಮತ್ತು ಬ್ಯಾಕ್ಟೀರಿಯಾಗಳನ್ನು ಕಡಿಮೆ ಮಾಡಬಹುದು ಎಂದು ತಜ್ಞರು ಸಲಹೆ ನೀಡಿದ್ದಾರೆ.

ಬಂಡಾಯ ಮಣಿಸಿ ದಾವಣಗೆರೆ ಉಪ ಚುನಾವಣೆಯಲ್ಲಿ ಗೆದ್ದ ಸಮರ್ಥ್ ಶಾಮನೂರು

ದಾವಣಗೆರೆ: ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದ ತೆರವಾಗಿದ್ದ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು ಗೆಲುವು ಸಾಧಿಸಿದ್ದಾರೆ. ಈ ಮೂಲಕ ರಾಜ್ಯದಲ್ಲಿ ನಡೆದ ಎರಡೂ ಉಪಚುನಾವಣೆ ಕ್ಷೇತ್ರಗಳಲ್ಲಿ ಬಿಜೆಪಿ ಸೋಲು ಕಂಡಿದ್ದು, ಕಾಂಗ್ರೆಸ್ ತನ್ನ ಹಿಡಿತವನ್ನು ಮತ್ತಷ್ಟು ಬಲಪಡಿಸಿದೆ.

ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ಟಿ. ದಾಸ್ ಕರಿಯಪ್ಪ ವಿರುದ್ಧ 5,708 ಮತಗಳ ಅಂತರದಿಂದ ಜಯಗಳಿಸಿದ್ದಾರೆ. ಸಮರ್ಥ್ ಶಾಮನೂರು 69,578 ಮತಗಳನ್ನು ಪಡೆದಿದ್ದರೆ, ಶ್ರೀನಿವಾಸ ದಾಸ್ ಕರಿಯಪ್ಪ 63,870 ಮತಗಳನ್ನು ಗಳಿಸಿದ್ದಾರೆ.

ಇನ್ನು ಎಸ್‌ಡಿಪಿಐ ಅಭ್ಯರ್ಥಿ ಅಫ್ಸರ್ ಕೊಡ್ಲಿಪೇಟೆ 18,975 ಮತಗಳನ್ನು ಪಡೆದಿದ್ದು, ನೋಟಾಗೆ 511 ಮತಗಳು ಚಲಾವಣೆಯಾಗಿವೆ.

ಈ ಉಪಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಮುಸ್ಲಿಂ ಸಮುದಾಯದ ಅಭ್ಯರ್ಥಿಗೆ ಸಿಗದ ಹಿನ್ನೆಲೆ ಕೆಲ ನಾಯಕರು ಅಸಮಾಧಾನಗೊಂಡು ಬಂಡಾಯ ಎದ್ದಿದ್ದರು. ಪರಿಣಾಮವಾಗಿ ಎಸ್‌ಡಿಪಿಐ ಅಭ್ಯರ್ಥಿ ಸೇರಿದಂತೆ ಒಟ್ಟು 15 ಮಂದಿ ಮುಸ್ಲಿಂ ಅಭ್ಯರ್ಥಿಗಳು ಕಣಕ್ಕಿಳಿದಿದ್ದರು.

ಈ ಎಲ್ಲಾ ಅಭ್ಯರ್ಥಿಗಳಿಗೆ ಒಟ್ಟಾರೆ 22,768 ಮತಗಳು ಲಭಿಸಿವೆ. ಮತ ವಿಭಜನೆಯಿಂದ ಕಾಂಗ್ರೆಸ್ ಅಭ್ಯರ್ಥಿಯ ಗೆಲುವಿನ ಅಂತರ ಕಡಿಮೆಯಾದರೂ, ಅಂತಿಮವಾಗಿ ಸಮರ್ಥ್ ಶಾಮನೂರು ಗೆಲುವು ಸಾಧಿಸಲು ಸಾಧ್ಯವಾಯಿತು. ಸಮರ್ಥ್ ಶಾಮನೂರು ಅವರ ಗೆಲುವಿನ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಭರ್ಜರಿ ವಿಜಯೋತ್ಸವ ಆಚರಿಸಿದರು.

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಐತಿಹಾಸಿಕ ಗೆಲುವು: ಮೀನೂಟ ಬಡಿಸಿ ಕಾರ್ಯಕರ್ತರ ಸಂಭ್ರಮಾಚರಣೆ

ಕೋಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಗೆಲುವಿನತ್ತ ಸಾಗುತ್ತಿದ್ದಂತೆ ಪಕ್ಷದ ಕಚೇರಿಗಳಲ್ಲಿ ಸಂಭ್ರಮದ ವಾತಾವರಣ ನಿರ್ಮಾಣವಾಗಿದೆ. ಬಿಜೆಪಿ ಕಾರ್ಯಕರ್ತರು ಮೀನು-ಅನ್ನ ಬಡಿಸಿ ಸಂಭ್ರಮಾಚರಣೆ ನಡೆಸುವ ಮೂಲಕ ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ.

ಚುನಾವಣಾ ಪ್ರಚಾರದ ವೇಳೆ ಬಿಜೆಪಿ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಮಾಂಸಾಹಾರ ನಿಷೇಧಿಸಲಾಗುತ್ತದೆ ಎಂದು ತೃಣಮೂಲ ಕಾಂಗ್ರೆಸ್ ಆರೋಪಿಸಿತ್ತು. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೂಡ ಇದೇ ವಿಚಾರವನ್ನು ಮುಂದಿಟ್ಟುಕೊಂಡು, ಬಿಜೆಪಿ ಅಧಿಕಾರಕ್ಕೆ ಬಂದರೆ ಜನರಿಗೆ ಮೊಟ್ಟೆ, ಮೀನು ಹಾಗೂ ಮಾಂಸ ಸೇವನೆಗೆ ನಿರ್ಬಂಧ ವಿಧಿಸಬಹುದು ಎಂದು ಪ್ರಚಾರ ನಡೆಸಿದ್ದರು.

ಈ ಆರೋಪಗಳಿಗೆ ತಿರುಗೇಟು ನೀಡುವ ಉದ್ದೇಶದಿಂದ ಬಿಜೆಪಿ ಕಾರ್ಯಕರ್ತರು ಪಕ್ಷದ ಕಚೇರಿಯಲ್ಲಿ ಸಾಂಪ್ರದಾಯಿಕ ಬಂಗಾಳಿ ಆಹಾರವಾದ ‘ಮಾಚ್-ಭಾತ್’ ವಿತರಿಸಿ ಸಂಭ್ರಮಿಸಿದ್ದಾರೆ. ‘ಮಾಚ್’ ಎಂದರೆ ಮೀನು ಹಾಗೂ ‘ಭಾತ್’ ಎಂದರೆ ಅನ್ನ. ಬಿಜೆಪಿ ಮಾಂಸಾಹಾರ ನಿಷೇಧಿಸುತ್ತದೆ ಎಂಬುದು ಕೇವಲ ಅಪಪ್ರಚಾರ ಎಂದು ಕಾರ್ಯಕರ್ತರು ಸ್ಪಷ್ಟ ಸಂದೇಶ ರವಾನಿಸಿದ್ದಾರೆ.

ದೇಶದ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ ಪಶ್ಚಿಮ ಬಂಗಾಳ ಚುನಾವಣಾ ಫಲಿತಾಂಶ ಇದೀಗ ಬಿಜೆಪಿ ಪರವಾಗಿ ತಿರುಗಿದ್ದು, ಪಕ್ಷ ಐತಿಹಾಸಿಕ ಗೆಲುವು ದಾಖಲಿಸಿದೆ. ಹಲವು ವರ್ಷಗಳಿಂದ ಮಮತಾ ಬ್ಯಾನರ್ಜಿ ಹಿಡಿತದಲ್ಲಿದ್ದ ರಾಜ್ಯದಲ್ಲಿ ಬಿಜೆಪಿ ಪ್ರಾಬಲ್ಯ ಸಾಧಿಸುವತ್ತ ಮುನ್ನಡೆಯುತ್ತಿದೆ.

ಲಭ್ಯವಾಗಿರುವ ಆರಂಭಿಕ ಫಲಿತಾಂಶಗಳ ಪ್ರಕಾರ ಬಿಜೆಪಿ 198 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದು, ತೃಣಮೂಲ ಕಾಂಗ್ರೆಸ್ 89 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದೆ. ಕಾಂಗ್ರೆಸ್ ಎರಡು ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.

ಪಶ್ಚಿಮ ಬಂಗಾಳದ 294 ವಿಧಾನಸಭಾ ಕ್ಷೇತ್ರಗಳಿಗೆ ಏಪ್ರಿಲ್ 23 ಮತ್ತು 29ರಂದು ಎರಡು ಹಂತಗಳಲ್ಲಿ ಮತದಾನ ನಡೆದಿತ್ತು. ಈ ಚುನಾವಣೆಯಲ್ಲಿ ಒಟ್ಟು 2,926 ಅಭ್ಯರ್ಥಿಗಳು ಕಣಕ್ಕಿಳಿದಿದ್ದರು.

ಮೊದಲ ಹಂತದಲ್ಲಿ 152 ಕ್ಷೇತ್ರಗಳಿಗೆ 1,487 ಅಭ್ಯರ್ಥಿಗಳು ಸ್ಪರ್ಧಿಸಿದ್ದರೆ, ಎರಡನೇ ಹಂತದಲ್ಲಿ 142 ಕ್ಷೇತ್ರಗಳಿಗೆ 1,448 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಮೊದಲ ಹಂತದಲ್ಲಿ 93.19 ಶೇಕಡಾ ಹಾಗೂ ಎರಡನೇ ಹಂತದಲ್ಲಿ 92.47 ಶೇಕಡಾ ಮತದಾನ ದಾಖಲಾಗಿತ್ತು.

ರಾಜ್ಯದಲ್ಲಿ ಸರ್ಕಾರ ರಚಿಸಲು 148 ಸ್ಥಾನಗಳ ಬಹುಮತ ಅಗತ್ಯವಿದ್ದು, ಈ ಬಾರಿ 385 ಮಹಿಳಾ ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದರು. ಅಂತಿಮ ಫಲಿತಾಂಶ ಬಿಜೆಪಿ ಪರವಾಗಿ ಮುಂದುವರಿದರೆ, ಪಶ್ಚಿಮ ಬಂಗಾಳದ ರಾಜಕೀಯ ಇತಿಹಾಸದಲ್ಲಿ ಇದು ಮಹತ್ವದ ತಿರುವಾಗಲಿದೆ.

ಬಾಗಲಕೋಟೆ ಉಪಚುನಾವಣೆ: ಮೊದಲ ಸುತ್ತಿನಿಂದಲೇ ಮುನ್ನಡೆ ಕಾಯ್ದುಕೊಂಡ ಮೇಟಿ ಭರ್ಜರಿ ಜಯ

ಬಾಗಲಕೋಟೆ: ಬಾಗಲಕೋಟೆ ವಿಧಾನಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ಅವರು 21,866 ಮತಗಳ ಭಾರೀ ಅಂತರದಿಂದ ಗೆಲುವು ಸಾಧಿಸಿ ಪಕ್ಷಕ್ಕೆ ಮಹತ್ವದ ಜಯ ತಂದುಕೊಟ್ಟಿದ್ದಾರೆ. ಈ ಗೆಲುವಿನೊಂದಿಗೆ ಕ್ಷೇತ್ರದಲ್ಲಿ ಕಾಂಗ್ರೆಸ್ ತನ್ನ ಬಲವನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದು, ಕಾರ್ಯಕರ್ತರಲ್ಲಿ ಸಂಭ್ರಮ ಮನೆ ಮಾಡಿದೆ.

ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ಅವರಿಗೆ ಒಟ್ಟು 97,941 ಮತಗಳು ಲಭಿಸಿವೆ. ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ 76,075 ಮತಗಳನ್ನು ಪಡೆದಿದ್ದು, ಉಮೇಶ್ ಮೇಟಿ ಸ್ಪಷ್ಟ ಮುನ್ನಡೆಯೊಂದಿಗೆ ವಿಜಯಶಾಲಿಯಾಗಿದ್ದಾರೆ.

ಗೆಲುವಿನ ಬಳಿಕ ಮಾತನಾಡಿದ ಉಮೇಶ್ ಮೇಟಿ, ಕ್ಷೇತ್ರದ ನಗರ ಹಾಗೂ ಗ್ರಾಮೀಣ ಭಾಗದ ಎಲ್ಲ ಮತದಾರರಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸಿದರು. ಈ ಗೆಲುವು ನನ್ನ ವೈಯಕ್ತಿಕ ಸಾಧನೆಯಲ್ಲ. ಇದು ಬಾಗಲಕೋಟೆ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಪರಿಶ್ರಮ ಮತ್ತು ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಗೆಲುವಾಗಿದೆ ಎಂದು ಹೇಳಿದರು.

ನಾಮಪತ್ರ ಸಲ್ಲಿಕೆಯಿಂದ ಹಿಡಿದು ಚುನಾವಣಾ ಪ್ರಚಾರದ ಕೊನೆಯ ಹಂತದವರೆಗೂ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ್, ಸಚಿವ ಸತೀಶ್ ಜಾರಕಿಹೋಳಿ ಸೇರಿದಂತೆ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರು ಅಪಾರ ಶ್ರಮ ಪಟ್ಟಿದ್ದಾರೆ. ಅವರ ಸಹಕಾರ ಮತ್ತು ಬೆಂಬಲದಿಂದಲೇ ಈ ಗೆಲುವು ಸಾಧ್ಯವಾಗಿದೆ ಎಂದು ತಿಳಿಸಿದರು.

error: Content is protected !!