Home Blog

ಮಾರಕಾಸ್ತ್ರಗಳಿಂದ ಮಾಜಿ ಸಚಿವರ ಸಂಬಂಧಿಯ ಭೀಕರ ಹತ್ಯೆ! ಫೈನಾನ್ಸ್ ಕಚೇರಿಯಲ್ಲೇ ಕೃತ್ಯ

0

ಕಲಬುರಗಿ: ನಗರದ ಪಿ ಅಂಡ್ ಟಿ ಕಾಲೋನಿಯ ವೆಂಕಟೇಶ್ವರ ಕಾಂಪ್ಲೆಕ್ಸ್ ನಲ್ಲಿ ದುಷ್ಕರ್ಮಿಗಳು ಫೈನಾನ್ಸ್ ಕಚೇರಿಗೆ ನುಗ್ಗಿ ಕರ್ನಾಟಕದ ಮಾಜಿ ಸಚಿವರೊಬ್ಬರ ಸಂಬಂಧಿಯನ್ನು ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ.

ಮೃತರನ್ನು ಅನೀಲ್ ರಾಠೋಡ್ (45) ಎಂದು ಗುರುತಿಸಲಾಗಿದೆ. ಅವರು ನಗರದ ಸಿದ್ದೇಶ್ವರ ಬಡಾವಣೆಯ ನಿವಾಸಿಯಾಗಿದ್ದು, ಪಿ & ಟಿ ಕಾಲೋನಿಯ ವೆಂಕಟೇಶ್ವರ ಕಾಂಪ್ಲೆಕ್ಸ್‌ನಲ್ಲಿ ಫೈನಾನ್ಸ್ ವ್ಯವಹಾರ ನಡೆಸುತ್ತಿದ್ದರು. ಅಲ್ಲದೆ, ಅವರು ಮಾಜಿ ಸಚಿವ ರೇವು ನಾಯಕ್ ಬೆಳಮಗಿ ಅವರ ಸಂಬಂಧಿಯಾಗಿದ್ದಾರೆ.

ಮಾಹಿತಿ ಪ್ರಕಾರ, ಏಪ್ರಿಲ್ 02ರ ರಾತ್ರಿ ಅನೀಲ್ ತಮ್ಮ ಕಚೇರಿಯಲ್ಲಿ ಇದ್ದಾಗ ಆಟೋದಲ್ಲಿ ಬಂದ ಮೂವರು ದುಷ್ಕರ್ಮಿಗಳು ಹಣಕಾಸಿನ ವಿಚಾರಕ್ಕೆ ಗಲಾಟೆ ಮಾಡಿದ್ದಾರೆ. ವಾಗ್ವಾದ ತೀವ್ರಗೊಂಡ ಹಿನ್ನೆಲೆ ಮೂವರು ಸೇರಿಕೊಂಡು ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಅನೀಲ್ ರಾಠೋಡ್ ಅವರನ್ನು ಬರ್ಬರವಾಗಿ ಕೊಚ್ಚಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ.

ದಾಳಿ ವೇಳೆ ಅನೀಲ್ ರಾಠೋಡ್ ತಪ್ಪಿಸಿಕೊಳ್ಳಲು ಯತ್ನಿಸಿದರೂ, ಕಚೇರಿ ಬಾಗಿಲಿನ ಮುಂದೆ ಅವರನ್ನು ಕೊಚ್ಚಿ ಹಾಕಲಾಗಿದೆ ಎಂದು ತಿಳಿದುಬಂದಿದೆ.

ಇನ್ನೂ ಹಣಕಾಸಿನ ವಿಚಾರಕ್ಕೆ ನಮ್ಮ ಮಗನನ್ನ ಕೊಲೆ ಮಾಡಿರುವ ಅನುಮಾನ ಇದೆ. ಸಾಲ ಪಡೆದವರೇ ಕೊಲೆ ಮಾಡಿದ್ದಾರೆ ಎಂದು ಮೃತನ ಪೋಷಕರು ಹೇಳಿದ್ದಾರೆ. ಇನ್ನೂ ಅನಿಲ್‌ಗೆ ಜೀವ ಬೆದರಿಕೆ ಇತ್ತು. ಈ ಬಗ್ಗೆ ನಮ್ಮ ಬಳಿಯು ಸಹ ಆತ ಹೇಳಿಕೊಂಡಿದ್ದ. ಆದರೆ ಈ ರೀತಿಯಾಗಿ ಕೊಲೆ ಮಾಡುತ್ತಾರೆ ಎಂದು ನಾವು ಊಹಿಸಿರಲಿಲ್ಲ ಎಂದು ಕುಟುಂಬಸ್ಥರು ಕಣ್ಣೀರಿಟ್ಟಿದ್ದಾರೆ.

ಘಟನೆ ಮಾಹಿತಿ ತಿಳಿಯುತ್ತಿದ್ದಂತೆಯೇ ನಗರ ಪೊಲೀಸ್ ಆಯುಕ್ತರು ಹಾಗೂ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಂತಕರ ಪತ್ತೆಗೆ ಮೂರು ವಿಶೇಷ ತಂಡಗಳನ್ನು ರಚಿಸಲಾಗಿದ್ದು, ತನಿಖೆ ಮುಂದುವರೆದಿದೆ.

 

ಗದಗದಲ್ಲಿ ಆಟೋ ಗ್ಯಾಸ್ ಹಾಹಾಕಾರ: ಎಲ್‌ಪಿಜಿ ದರ ಏರಿಕೆಯಿಂದ ಚಾಲಕರ ಸಂಕಷ್ಟ, ಹೋರಾಟದ ಎಚ್ಚರಿಕೆ!

0

ಗದಗ: ಮಧ್ಯಪ್ರಾಚ್ಯ ದೇಶಗಳ ಯುದ್ಧದಿಂದಾಗಿ ಭಾರತದಲ್ಲಿ ಅನಿಲ ಬಿಕ್ಕಟ್ಟು ಹೆಚ್ಚಾಗಿದ್ದು, ಚಾಲಕರು, ಉದ್ಯಮಿಗಳ ಬದುಕು ಮೂರಾಬಟ್ಟೆಯಾಗಿದೆ.

ಗ್ಯಾಸ್ ಕೊರತೆ ಮಧ್ಯೆಯೇ ದರ ಏರಿಕೆಯಿಂದ ಚಾಲಕರು ಕಂಗಾಲಾಗಿದ್ದಾರೆ. ಅದರಲ್ಲೂ ಗದಗ ನಗರದಲ್ಲಿನ ಆಟೋ ಚಾಲಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಗ್ಯಾಸ್ ದರ ಮತ್ತು ಸರಬರಾಜಿನ ಸಮಸ್ಯೆಯಿಂದ ದಿನನಿತ್ಯದ ಆದಾಯ ಕುಸಿದಿದ್ದು, ಜೀವನ ನಿರ್ವಹಣೆ ಕಷ್ಟಕರವಾಗಿದೆ ಎಂದು ಚಾಲಕರು ಅಳಲು ವ್ಯಕ್ತಪಡಿಸಿದ್ದಾರೆ.

ಆಟೋ ಚಾಲಕರಿಗೆ ಅಗತ್ಯ ಪ್ರಮಾಣದಲ್ಲಿ ಎಲ್‌ಪಿಜಿ ಗ್ಯಾಸ್ ಲಭ್ಯವಾಗುತ್ತಿಲ್ಲ ಎಂಬುದು ಮತ್ತೊಂದು ಪ್ರಮುಖ ಸಮಸ್ಯೆಯಾಗಿದ್ದು, ಇದರಿಂದ ಉದ್ಯೋಗ ನಿರ್ವಹಣೆಯೇ ಅಸಾಧ್ಯವಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ. ಗ್ಯಾಸ್ ದರ ಏರಿಕೆಯಿಂದ ದುಡಿಮೆ ಕುಂಠಿತಗೊಂಡಿದ್ದು, ಮನೆ ಬಾಡಿಗೆ, ಮಕ್ಕಳ ಶಿಕ್ಷಣ ಸೇರಿದಂತೆ ಕುಟುಂಬದ ಅಗತ್ಯಗಳನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ.

ರಾಜ್ಯ ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿರುವ ಹಿನ್ನೆಲೆಯಲ್ಲಿ, ಅದೇ ಮಾದರಿಯಲ್ಲಿ ಬಿಪಿಎಲ್ ಕಾರ್ಡ್ ಹೊಂದಿರುವ ಆಟೋ ಚಾಲಕರಿಗೆ ವಿಶೇಷ ಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಲಾಗಿದೆ. ಪ್ರತಿ ದಿನ ಎರಡು ಲೀಟರ್ ಪೆಟ್ರೋಲ್ ಹಾಗೂ ಎರಡು ಕೆಜಿ ಎಲ್‌ಪಿಜಿ ಗ್ಯಾಸ್ ಉಚಿತವಾಗಿ ನೀಡುವಂತೆ ಅವರು ವಿನಂತಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಆಟೋ ಚಾಲಕರ ಸಂಘದ ಮುಖಂಡ ರಾಜು ಖಾನಪ್ಪನವರ, “ಗ್ಯಾಸ್ ದರ ಏರಿಕೆಯಿಂದ ನಮ್ಮ ಆದಾಯ ಸಂಪೂರ್ಣ ಕುಸಿದಿದೆ. ಸರ್ಕಾರ ತಕ್ಷಣವೇ ಕ್ರಮ ಕೈಗೊಂಡು ನೆರವು ನೀಡಬೇಕು” ಎಂದು ಹೇಳಿದ್ದಾರೆ.

ಆಟೋ ಸೇನೆಯ ನಗರಾಧ್ಯಕ್ಷ ಮೌನೇಶ್ ದಾಸರ ಮಾತನಾಡಿ, “ಆಟೋ ಚಾಲಕರ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸದಿದ್ದರೆ ಹೋರಾಟ ಅನಿವಾರ್ಯವಾಗುತ್ತದೆ” ಎಂದು ಎಚ್ಚರಿಸಿದರು.

ಆಟೋ ಚಾಲಕ ಶ್ರೀನಿವಾಸ್ ಕೂಡಾ, “ದಿನದ ಆದಾಯದಿಂದ ಕುಟುಂಬ ನಿರ್ವಹಣೆ ಕಷ್ಟವಾಗಿದ್ದು, ಸರ್ಕಾರದಿಂದ ಸಹಾಯ ಅಗತ್ಯವಾಗಿದೆ” ಎಂದು ಅಭಿಪ್ರಾಯಪಟ್ಟರು.

ಸರ್ಕಾರ ತಕ್ಷಣವೇ ಎಲ್‌ಪಿಜಿ ದರ ಇಳಿಕೆ ಹಾಗೂ ಆಟೋ ಚಾಲಕರಿಗೆ ನೆರವು ಯೋಜನೆಗಳನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿ, ಇಲ್ಲವಾದರೆ ಮುಂದಿನ ದಿನಗಳಲ್ಲಿ ತೀವ್ರ ಹೋರಾಟ ಕೈಗೊಳ್ಳುವುದಾಗಿ ಚಾಲಕರು ಎಚ್ಚರಿಕೆ ನೀಡಿದ್ದಾರೆ.

ರಕ್ತಸ್ರಾವ ನಿಲ್ಲದೇ ಇದ್ದರೆ ಎಚ್ಚರಿಕೆ! ಪ್ಲೇಟ್‌ಲೆಟ್‌ಗಳು ಕಡಿಮೆಯಾದರೆ ಜೀವಕ್ಕೆ ಅಪಾಯ!

0

ಪ್ಲೇಟ್‌ಲೆಟ್‌ಗಳು ನಮ್ಮ ರಕ್ತದಲ್ಲಿರುವ ಅತಿ ಮುಖ್ಯವಾದ ಸಣ್ಣ ಕೋಶಗಳಾಗಿದ್ದು, ರಕ್ತಸ್ರಾವವನ್ನು ತಡೆಯುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ.

ದೇಹದಲ್ಲಿ ಗಾಯವಾದಾಗ, ಈ ಪ್ಲೇಟ್‌ಲೆಟ್‌ಗಳು ಗಾಯದ ಸ್ಥಳದಲ್ಲಿ ಸೇರಿ ರಕ್ತದ ಗಡ್ಡೆ ರಚಿಸಿ ರಕ್ತಸ್ರಾವವನ್ನು ನಿಲ್ಲಿಸುತ್ತವೆ.

ಸಾಮಾನ್ಯವಾಗಿ ಆರೋಗ್ಯವಂತ ವ್ಯಕ್ತಿಯಲ್ಲಿ ಪ್ಲೇಟ್‌ಲೆಟ್‌ಗಳ ಪ್ರಮಾಣ ಪ್ರತಿ ಮೈಕ್ರೋಲೀಟರ್ ರಕ್ತದಲ್ಲಿ 1.5 ಲಕ್ಷದಿಂದ 4.5 ಲಕ್ಷದವರೆಗೆ ಇರುತ್ತದೆ. ಈ ಪ್ರಮಾಣ 1.5 ಲಕ್ಷಕ್ಕಿಂತ ಕಡಿಮೆಯಾದರೆ ಎಚ್ಚರಿಕೆ ಅಗತ್ಯ. 50 ಸಾವಿರಕ್ಕಿಂತ ಕಡಿಮೆಯಾದರೆ ಗಂಭೀರ ಸ್ಥಿತಿ, 20 ಸಾವಿರಕ್ಕಿಂತ ಕಡಿಮೆಯಾದರೆ ಒಳಾಂಗಿಕ ರಕ್ತಸ್ರಾವದ ಅಪಾಯ ಹೆಚ್ಚಾಗಿ ಜೀವಕ್ಕೆ ಅಪಾಯ ಉಂಟಾಗಬಹುದು.

ಪ್ರಮುಖ ಕಾರಣಗಳು:

ಪ್ಲೇಟ್‌ಲೆಟ್‌ಗಳ ಕೊರತೆಗೆ ಹಲವಾರು ಕಾರಣಗಳಿವೆ:

ವೈರಲ್ ಸೋಂಕುಗಳಾದ ಡೆಂಗ್ಯೂ, ಚಿಕನ್‌ಗುನ್‌ಯಾ ಮತ್ತು ಮಲೇರಿಯಾ

ಟೈಫಾಯ್ಡ್ ಮತ್ತು ಇತರೆ ವೈರಲ್ ಜ್ವರಗಳು

ಲಿವರ್ ಸಮಸ್ಯೆಗಳು, ವಿಶೇಷವಾಗಿ ಸಿರೋಸಿಸ್

ಬೋನ್ ಮ್ಯಾರೋ ಸಮಸ್ಯೆಗಳು

ಕ್ಯಾನ್ಸರ್ ಮತ್ತು ಕೀಮೋಥೆರಪಿ

ಆಟೋಇಮ್ಯೂನ್ ರೋಗಗಳು

ಲಕ್ಷಣಗಳು ಹೇಗಿರುತ್ತವೆ?

ಪ್ಲೇಟ್‌ಲೆಟ್‌ಗಳು ಕಡಿಮೆಯಾಗುವಾಗ ಕಾಣುವ ಪ್ರಮುಖ ಲಕ್ಷಣಗಳು:

  • ಸಣ್ಣ ಗಾಯಕ್ಕೂ ರಕ್ತಸ್ರಾವ ಹೆಚ್ಚು ಆಗುವುದು
  • ರಕ್ತಸ್ರಾವ ತಡವಾಗಿ ನಿಲ್ಲುವುದು
  • ಚರ್ಮದ ಮೇಲೆ ಕೆಂಪು/ನೇರಳೆ ಚುಕ್ಕೆಗಳು
  • ಮೂಗು ಅಥವಾ ಹಲ್ಲಿನ ಮಸೂರಿನಿಂದ ರಕ್ತಸ್ರಾವ
  • ಮಹಿಳೆಯರಲ್ಲಿ ಹೆಚ್ಚು ಪೀರಿಯಡ್ಸ್ ಬ್ಲೀಡಿಂಗ್
  • ದಣಿವು, ದುರ್ಬಲತೆ, ತಲೆಸುತ್ತು
  • ಹೇಗೆ ರಕ್ಷಿಸಿಕೊಳ್ಳಬೇಕು?
  • ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಿ
  • ಸೊಳ್ಳೆಗಳಿಂದ ರಕ್ಷಣೆ ಪಡೆಯಿರಿ
  • ಸ್ವಚ್ಛತೆಯನ್ನು ಕಾಪಾಡಿಕೊಳ್ಳಿ
  • ಪೌಷ್ಟಿಕ ಆಹಾರ ಸೇವಿಸಿ (ಹಸಿರು ತರಕಾರಿ, ಹಣ್ಣು, ಪ್ರೋಟೀನ್)
  • ಸಾಕಷ್ಟು ನೀರು ಕುಡಿಯಿರಿ
  • ಜ್ವರ/ದುರ್ಬಲತೆಯನ್ನು ನಿರ್ಲಕ್ಷಿಸಬೇಡಿ
  • ವೈದ್ಯರ ಸಲಹೆಯಿಲ್ಲದೆ ಔಷಧಿ ಸೇವಿಸಬೇಡಿ

ಪ್ಲೇಟ್‌ಲೆಟ್‌ಗಳ ಪ್ರಮಾಣ ದೇಹದ ಆರೋಗ್ಯಕ್ಕೆ ಅತ್ಯಂತ ಮುಖ್ಯ. ಯಾವುದೇ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ, ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಪಡೆಯುವುದು ಜೀವ ರಕ್ಷಿಸುತ್ತದೆ.

 

ಉಪಚುನಾವಣೆಯಲ್ಲಿ ಬಿಜೆಪಿ ಗೆಲುವು ಖಚಿತ: ಕಾಗೇರಿ

ಕಲಬುರಗಿ: ಇರಾನ್-ಇಸ್ರೇಲ್ ಯುದ್ಧದ ನಡುವೆಯೂ ಭಾರತದಲ್ಲಿ ದೊಡ್ಡ ಸಮಸ್ಯೆಗಳು ಉಂಟಾಗಿಲ್ಲವೆಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, “ಲಘು ಮಟ್ಟದಲ್ಲಿ ಗ್ಯಾಸ್ ಸಿಲಿಂಡರ್ ಸಮಸ್ಯೆ ಎದುರಾಗಿರಬಹುದು, ಆದರೆ ಅದನ್ನು ಹೊರತುಪಡಿಸಿದರೆ ದೇಶಕ್ಕೆ ದೊಡ್ಡ ತೊಂದರೆ ಆಗಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದಿಂದ ಇಂತಹ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಗಿದೆ” ಎಂದು ಹೇಳಿದರು.

ರಾಜ್ಯ ರಾಜಕೀಯ ಕುರಿತು ಮಾತನಾಡಿದ ಕಾಗೇರಿ, ಮುಂಬರುವ ಉಪಚುನಾವಣೆಗಳಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. “ಸಿಎಂ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರ ಆಡಳಿತದಿಂದ ಜನ ಬೇಸತ್ತಿದ್ದಾರೆ. ರಾಜ್ಯದಲ್ಲಿ ಅಭಿವೃದ್ಧಿ ಕೆಲಸಗಳು ಸರಿಯಾಗಿ ನಡೆಯುತ್ತಿಲ್ಲ” ಎಂದು ಆರೋಪಿಸಿದರು.

ಇನ್ನೂ ಸಚಿವ ಪ್ರಿಯಾಂಕ್ ಖರ್ಗೆ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, “ಸಚಿವರು ತಮ್ಮ ಇತಿಮಿತಿಯಲ್ಲಿ ಮಾತನಾಡಬೇಕು. ತಮ್ಮ ಇಲಾಖೆಯ ಸಾಧನೆ ಬಗ್ಗೆ ಹೇಳುವುದಿಲ್ಲ, ಬದಲಿಗೆ ಪ್ರಧಾನಿ ಮೋದಿ ಹಾಗೂ ಆರ್‌ಎಸ್‌ಎಸ್ ವಿರುದ್ಧ ಮಾತ್ರ ಮಾತನಾಡುತ್ತಾರೆ” ಎಂದು ಟೀಕಿಸಿದರು. ಜೊತೆಗೆ ಕಲಬುರಗಿಯಲ್ಲಿ ಕಾನೂನು ಸುವ್ಯವಸ್ಥೆ ಹಾಗೂ ಮೂಲಸೌಕರ್ಯ ಸಮಸ್ಯೆಗಳ ಬಗ್ಗೆ ಗಮನಹರಿಸುವಂತೆ ಸಲಹೆ ನೀಡಿದರು.

ನಿಜಕ್ಕೂ ದೇಹದ ಬೊಜ್ಜು ಕಡಿಮೆ ಮಾಡುತ್ತಾ GLP-1 ಔಷಧಿ? ಕೇಂದ್ರ ಸರ್ಕಾರದ ಕಠಿಣ ಮಾರ್ಗಸೂಚಿ ಹೀಗಿದೆ

0

ಇತ್ತೀಚಿನ ದಿನಗಳಲ್ಲಿ ಬೊಜ್ಜು (ಒಬೆಸಿಟಿ) ಮತ್ತು ಟೈಪ್-2 ಮಧುಮೇಹ ನಿಯಂತ್ರಣಕ್ಕೆ ಬಳಸಲಾಗುತ್ತಿರುವ GLP-1 ಔಷಧಿಗಳ ಬಳಕೆ ಕುರಿತು ಕೇಂದ್ರ ಸರ್ಕಾರ ಮಹತ್ವದ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.

ಈ ಔಷಧಿಗಳು ದೇಹದಲ್ಲಿ ಇನ್ಸುಲಿನ್ ಉತ್ಪಾದನೆಯನ್ನು ಹೆಚ್ಚಿಸಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವುದರ ಜೊತೆಗೆ ತೂಕ ಇಳಿಕೆಗೆ ಸಹಕಾರಿಯಾಗುತ್ತವೆ. ಆದರೆ ವೈದ್ಯರ ಸಲಹೆಯಿಲ್ಲದೆ ಬಳಸಿದರೆ ಗಂಭೀರ ಪಾರ್ಶ್ವ ಪರಿಣಾಮಗಳ ಅಪಾಯ ಇರುವುದರಿಂದ ಅರ್ಹ ವೈದ್ಯರ ಮೇಲ್ವಿಚಾರಣೆಯಲ್ಲೇ ಬಳಸಬೇಕು ಎಂದು ಸರ್ಕಾರ ಎಚ್ಚರಿಸಿದೆ.

ಭಾರತದಲ್ಲಿ ಈ ಔಷಧಿಗಳನ್ನು ಸ್ವತಂತ್ರವಾಗಿ ಖರೀದಿಸಲು ಅವಕಾಶವಿಲ್ಲದೆ, ಎಂಡೋಕ್ರಿನಾಲಜಿಸ್ಟ್‌ಗಳು ಹಾಗೂ ಇತರ ತಜ್ಞ ವೈದ್ಯರು ಮಾತ್ರ ನೀಡುವಂತೆ ನಿಯಂತ್ರಣ ವಿಧಿಸಲಾಗಿದೆ. ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (DCGI) ರಾಜ್ಯ ಔಷಧ ನಿಯಂತ್ರಕರ ಜೊತೆಗೂಡಿ ಮೇಲ್ವಿಚಾರಣೆಯನ್ನು ಕಠಿಣಗೊಳಿಸಿದ್ದು, ನಿಯಮ ಉಲ್ಲಂಘನೆ ಮಾಡಿದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದೆ.

ಒಟ್ಟಿನಲ್ಲಿ, GLP-1 ಔಷಧಿಗಳು ಪರಿಣಾಮಕಾರಿ ಆದರೂ, ವೈದ್ಯರ ಸಲಹೆಯಿಲ್ಲದೆ ಬಳಕೆ ಮಾಡುವುದು ಅಪಾಯಕಾರಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಏಕರೂಪ ನಾಗರಿಕ ಸಂಹಿತೆ ಜಾರಿ ಆದ್ರೆ, ನುಸುಳುಕೋರರು 4 ಬಾರಿ ಮದುವೆಯಾಗಲು ಸಾಧ್ಯವಾಗಲ್ಲ- ಅಮಿತ್ ಶಾ!

0

ದಿಸ್ಪುರ:- ಏಕರೂಪ ನಾಗರಿಕ ಸಂಹಿತೆ ಜಾರಿಯಿಂದ ನುಸುಳುಕೋರರು 4 ಬಾರಿ ಮದುವೆಯಾಗಲು ಸಾಧ್ಯವಾಗಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದ್ದಾರೆ.

ಅಸ್ಸಾಂನ ಗೋಲ್‌ಪಾರ ಜಿಲ್ಲೆಯ ದುಧ್‌ನೋಯ್‌ನಲ್ಲಿ ಚುನಾವಣಾ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ನಾವು ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತರುತ್ತೇವೆ. ಇದರಿಂದ ನುಸುಳುಕೋರರು 4 ಬಾರಿ ಮದುವೆಯಾಗಲು ಸಾಧ್ಯವಾಗಲ್ಲ. ಪ್ರಧಾನಿ ನರೇಂದ್ರ ಮೋದಿ ಮತ್ತು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, ಬುಡಕಟ್ಟು ಅಭಿವೃದ್ಧಿಗಾಗಿ ಸಮಗ್ರ ಮಾರ್ಗಸೂಚಿಯನ್ನು ಸಿದ್ಧಪಡಿಸಿದ್ದಾರೆ. ಇದರ ಸಂಪೂರ್ಣ ಅನುಷ್ಠಾನವು ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವುದರ ಮೇಲೆ ಅವಲಂಬಿತವಾಗಿದೆ ಎಂದಿದ್ದಾರೆ.

ಪ್ರಧಾನಿ ಮತ್ತು ಅಸ್ಸಾಂ ಮುಖ್ಯಮಂತ್ರಿ ಬುಡಕಟ್ಟು ಜನಾಂಗದವರ ಅಭಿವೃದ್ಧಿಗಾಗಿ ಒಂದು ಮಾರ್ಗಸೂಚಿಯನ್ನು ಸಿದ್ಧಪಡಿಸಿದ್ದಾರೆ. ಅದನ್ನು ಮುಂದಕ್ಕೆ ತೆಗೆದುಕೊಂಡು ಹೋಗಿ ಜಾರಿಗೆ ತರಲು ಬಿಜೆಪಿಗೆ ಮತ ಹಾಕಿ ಎಂದು ಜನತೆಗೆ ಮನವಿ ಮಾಡಿದ್ದಾರೆ.

ಹುಬ್ಬಳ್ಳಿಯಲ್ಲಿ ಜಿಮ್ ಟ್ರೈನರ್‌ ನಿಂದ ಲವ್ ಜಿಹಾದ್ ಆರೋಪ: ಸಚಿವ ಜಿ. ಪರಮೇಶ್ವರ್ ಹೇಳಿದ್ದೇನು?

ದಾವಣಗರೆ: ಹುಬ್ಬಳ್ಳಿಯಲ್ಲಿ ಜಿಮ್‌ ಟ್ರೈನರ್‌ ವಿರುದ್ದ ಕೇಳಿಬಂದಿರುವ ಲವ್ ಜಿಹಾದ್ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಜಿ. ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ.

ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಜಿಮ್ ಟ್ರೇನರ್ ಸಮೀರ್‌ ವಿರುದ್ಧ ಕೇಳಿ ಬಂದಿರುವ ಅತ್ಯಾಚಾರ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ವಿರುದ್ಧ ಕ್ರಮಕ್ಕೆ ಸೂಚಿಸಲಾಗಿದೆ. ಪ್ರಕರಣದ ಬಗ್ಗೆ ಎಲ್ಲಾ ಮಾಹಿತಿಯನ್ನು ನೀಡಲು ಅಧಿಕಾರಿಗಳಿಗೆ ತಿಳಿಸಿದ್ದೇನೆ. ಯಾರೇ ಆಗಿದ್ದರೂ ಕೂಡ ಅವರ ವಿರುದ್ದ ಕಠಿಣ ಕ್ರಮ ಕೈಗೊಳ್ಳುತ್ತೇವೆ.

ಈಗಾಗಲೇ ಯುವತಿಯನ್ನು ರಕ್ಷಣೆ ಮಾಡಲಾಗಿದೆ. ಜಿಮ್ ಟ್ರೈನರ್ ಮೇಲೆ ಕ್ರಮ ತೆಗೆದುಕೊಳ್ಳಲು ಹೇಳಿದ್ದೇನೆ. ಇಂತಹ ಕೇಸ್‌ಗಳಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಮಧ್ಯಪ್ರಾಚ್ಯ ಯುದ್ಧದ ಮಧ್ಯೆ ಭಾರತಕ್ಕೆ ಹೆಚ್ಚು ತೈಲ, ಅನಿಲ ಒದಗಿಸಲು ಸಿದ್ಧ ಎಂದ ರಷ್ಯಾ!

0

ಮಾಸ್ಕೋ/ದೆಹಲಿ: ಹಾರ್ಮುಜ್‌ ಜಲಸಂಧಿಯ ಬಿಕ್ಕಟ್ಟಿನಿಂದ ಇಂಧನ ಪೂರೈಕೆ ತೀವ್ರ ಒತ್ತಡಕ್ಕೆ ಸಿಲುಕಿರುವ ಹಿನ್ನೆಲೆ, ಭಾರತವು ರಷ್ಯಾದಿಂದ ತೈಲ ಖರೀದಿಯನ್ನು ಮುಂದುವರಿಸಿದೆ.

ಈಗಾಗಲೇ ತೈಲ ಪೂರೈಕೆಯಲ್ಲಿ ವ್ಯತ್ಯಯ ಇರದಂತೆ ನೋಡಿಕೊಳ್ಳಲು ಸುಮಾರು 6 ಕೋಟಿ ಬ್ಯಾರಲ್ ಕಚ್ಚಾ ತೈಲವನ್ನು ಭಾರತ ರಷ್ಯಾದಿಂದ ಖರೀದಿಸಿದೆ.

ರಷ್ಯಾ ಸರ್ಕಾರ ಭಾರತಕ್ಕೆ ಬೇಕಾದ ತೈಲ ಮತ್ತು ಎಲ್‌ಎನ್‌ಜಿ (LNG) ಪೂರೈಕೆಗೆ ಉತ್ಪಾದನೆ ಹೆಚ್ಚಿಸಲು ಸಿದ್ಧ ಎಂದು ಭರವಸೆ ನೀಡಿದೆ. ಮಧ್ಯಪ್ರಾಚ್ಯ ಯುದ್ಧದ ಪರಿಣಾಮದಿಂದ ಇಂಧನ ಬಿಕ್ಕಟ್ಟು ತೀವ್ರಗೊಳ್ಳುತ್ತಿರುವುದರಿಂದ, ಭಾರತಕ್ಕೆ ಅಗತ್ಯವಿರುವ ಕಚ್ಚಾ ತೈಲ ಮತ್ತು ದ್ರವೀಕೃತ ನೈಸರ್ಗಿಕ ಅನಿಲ ಪೂರೈಕೆಯನ್ನು ಹೆಚ್ಚಿಸಬಹುದು ಎಂದು ಮಾಸ್ಕೋ ತಿಳಿಸಿದೆ.

ಭಾರತಕ್ಕೆ ಅಧಿಕೃತ ಭೇಟಿ ನೀಡಿದ ರಷ್ಯಾದ ಉಪಾಧ್ಯಕ್ಷ ಡೆನಿಸ್ ಮಾಂಟುರೊವ್ ಅವರು ಮಾತನಾಡಿ, “ಭಾರತದಿಂದ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ರಷ್ಯಾದ ಕಂಪನಿಗಳು ಇಂಧನ ರಫ್ತುಗಳನ್ನು ಸ್ಥಿರವಾಗಿ ಹೆಚ್ಚಿಸುವ ಸಾಮರ್ಥ್ಯ ಹೊಂದಿವೆ.” 2025 ರ ಅಂತ್ಯದ ವೇಳೆಗೆ ರಷ್ಯಾ ಭಾರತಕ್ಕೆ ಖನಿಜ ರಸಗೊಬ್ಬರ ಪೂರೈಕೆಯನ್ನು ಶೇ.40ರಷ್ಟು ಹೆಚ್ಚಿಸಿವೆ, ಹಾಗೂ ಭಾರತದ ಅಗತ್ಯವನ್ನು ಪೂರೈಸಲು ಮಾಸ್ಕೋ ಸಿದ್ಧವಾಗಿದೆ ಎಂದು ಮಾಂಟುರೊವ್ ತಿಳಿಸಿದ್ದಾರೆ.

 

ಶಿರಸಿ ಬಳಿ ಎರಡು ಬಸ್‌ಗಳ ನಡುವೆ ಭೀಕರ ಅಪಘಾತ: ಹಲವರಿಗೆ ಗಾಯ!

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲ್ಲೂಕಿನ ಕೊಳಗಿಬೀಸ್ ಬಳಿ ಎರಡು ಬಸ್‌ಗಳ ನಡುವೆ ಭೀಕರ ಅಪಘಾತ ಸಂಭವಿಸಿದೆ.

ಭಟ್ಕಳದಿಂದ ಬಾಗಲಕೋಟೆಗೆ ತೆರಳುತ್ತಿದ್ದ ಕೆಎಸ್ಆರ್‌ಟಿಸಿ ಬಸ್ ಹಾಗೂ ಶಿರಸಿಯಿಂದ ಕುಮಟಾ ಕಡೆ ಹೋಗುತ್ತಿದ್ದ ಖಾಸಗಿ ಬಸ್ ನಡುವೆ ಡಿಕ್ಕಿ ಸಂಭವಿಸಿದೆ.

ಅಪಘಾತದಲ್ಲಿ ಸರ್ಕಾರಿ ಹಾಗೂ ಖಾಸಗಿ ಬಸ್‌ಗಳ ಮುಂಭಾಗ ಸಂಪೂರ್ಣ ಜಖಂ ಆಗಿದ್ದು, ಇಬ್ಬರೂ ಬಸ್‌ಗಳಲ್ಲಿ ಪ್ರಯಾಣಿಸುತ್ತಿದ್ದ ಹಲವರಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳನ್ನು ತಕ್ಷಣ ಶಿರಸಿ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳಿಗೆ ಚಿಕಿತ್ಸೆ ಮುಂದುವರಿದಿದೆ.

ಕಾರ್ಯಕ್ರಮದಲ್ಲೇ ಕುಸಿದು ಬಿದ್ದು ಅಸ್ವಸ್ಥ: ನಿವೃತ್ತ ನ್ಯಾ.ಸಂತೋಷ್ ಹೆಗ್ಡೆ ಆಸ್ಪತ್ರೆಗೆ ದಾಖಲು

ಬೆಂಗಳೂರು: ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರು ಬುಧವಾರ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅಸ್ವಸ್ಥರಾಗಿದ್ದಾರೆ.

ಕಾರ್ಯಕ್ರಮದ ವೇಳೆ ಮಾತನಾಡುತ್ತಿದ್ದಾಗ ಅವರು ಕುಸಿದು ಬಿದ್ದಿದ್ದಾರೆ. ತಕ್ಷಣವೇ ಅವರನ್ನು ವಿಕ್ರಮ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಧ್ಯ ವೈದ್ಯರ ಮಾಹಿತಿ ಪ್ರಕಾರ, ದೇಹದಲ್ಲಿ ಶುಗರ್ ಮಟ್ಟ ಕಡಿಮೆಯಾದ ಕಾರಣ ಅವರು ಅಸ್ವಸ್ಥರಾಗಿದ್ದರು, ಆದರೆ ಈಗ ಆರೋಗ್ಯ ಸ್ಥಿರವಾಗಿದೆ ಎಂದಿದ್ದಾರೆ.

ಸ್ಪೀಕರ್ ಯುಟಿ ಖಾದರ್ ಹೇಳಿದ್ದೇನು?

ಪಿಜಿಆರ್ ಸಿಂಧ್ಯಾಗೆ ಸ್ಕೌಟ್ಸ್ ಅಂಡ್ ಗೈಡ್ಸ್ ವತಿಯಿಂದ ಅಭಿನಂದನಾ ಕಾರ್ಯಕ್ರಮವಿತ್ತು, ಈ ವೇಳೆ ಮಾತನಾಡುತ್ತಿದ್ದಾಗ ನಿವೃತ್ತ ಲೋಕಾಯುಕ್ತರಾದ ಸಂತೋಷ್ ಹೆಗ್ಡೆ ಅವರಿಗೆ ವಾಮಿಟ್ ಆಯ್ತು, ಮನೆಗೆ ಹೋಗಬೇಕು ಅಂತಾ ಸ್ಟೇಜ್​ಯಿಂದ ಹೊರಟಾಗ ಕುಸಿದು ಬಿದ್ದರು.

ಈ ವೇಳೆ ಸ್ಥಳದಲ್ಲಿ ಆಂಬುಲೆನ್ಸ್ ಇರಲಿಲ್ಲ, ನನ್ನ ವಾಹನದಲ್ಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಸದ್ಯ ಆಸ್ಪತ್ರೆಯಲ್ಲಿ ಸಂತೋಷ್​ ಹೆಗ್ಡೆ ಅವರು ಆರಾಮಾಗಿ ಇದ್ದಾರೆ. ಸಂತೋಷ್ ಹೆಗ್ಡೆ ಕುಟುಂಬಸ್ಥರು ಆಸ್ಪತ್ರೆಗೆ ಬಂದಿದ್ದಾರೆ. ಯಾವುದೇ ತೊಂದರೆಯಿಲ್ಲ ಎಂದು ಸ್ಪೀಕರ್ ಯುಟಿ ಖಾದರ್ ಹೇಳಿದರು.

error: Content is protected !!