ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಮುಂಗಾರು ಆರಂಭದ ರೈತರ ಮೊದಲ ಹಬ್ಬವಾದ ಕಾರ ಹುಣ್ಣಿಮೆಯನ್ನು ಸೋಮವಾರ ಲಕ್ಷ್ಮೇಶ್ವರ ಪಟ್ಟಣ ಹಾಗೂ ಗ್ರಾಮೀಣ ಭಾಗಗಳಲ್ಲಿ ಸಂಭ್ರಮ, ಸಡಗರ ಮತ್ತು ಸಂಪ್ರದಾಯಬದ್ಧವಾಗಿ ಆಚರಿಸಲಾಯಿತು. ಉತ್ತಮ ಮುಂಗಾರು ಮಳೆ ಮತ್ತು ಸಮೃದ್ಧ ಬೆಳೆಗಾಗಿ ರೈತ ಸಮುದಾಯ ಆಚರಿಸುವ ಈ ಹಬ್ಬದಲ್ಲಿ ಕರಿ ಹರಿಯುವ ಸಂಪ್ರದಾಯ ವಿಶೇಷ ಆಕರ್ಷಣೆಯಾಗಿತ್ತು.
ಮುಂಗಾರು ಆರಂಭದ ರೈತರ ಮೊದಲ ಹಬ್ಬವಾದ ಕಾರ ಹುಣ್ಣಿಮೆಯನ್ನು ಸೋಮವಾರ ಲಕ್ಷ್ಮೇಶ್ವರ ಪಟ್ಟಣ ಹಾಗೂ ಗ್ರಾಮೀಣ ಭಾಗಗಳಲ್ಲಿ ಸಂಭ್ರಮ, ಸಡಗರ ಮತ್ತು ಸಂಪ್ರದಾಯಬದ್ಧವಾಗಿ ಆಚರಿಸಲಾಯಿತು. ಉತ್ತಮ ಮುಂಗಾರು ಮಳೆ ಮತ್ತು ಸಮೃದ್ಧ ಬೆಳೆಗಾಗಿ ರೈತ ಸಮುದಾಯ ಆಚರಿಸುವ ಈ ಹಬ್ಬದಲ್ಲಿ ಕರಿ ಹರಿಯುವ ಸಂಪ್ರದಾಯ ವಿಶೇಷ ಆಕರ್ಷಣೆಯಾಗಿತ್ತು.
ಸಂಪ್ರದಾಯದಂತೆ ಹುಲಗೇರಿಬಣದಲ್ಲಿ ಪಾಟೀಲಕುಲಕರ್ಣಿ ಮನೆತನದವರು ನಂದೆಣ್ಣವರ ಕುಟುಂಬಕ್ಕೆ ಕರಿ ಕಟ್ಟಲು ನೀಡಿ, ಸೊಪ್ಪಿನಕೇರಿ ಓಣಿಯ ಹಿರಿಯರು ಕರಿ ಹರಿಯುವ ಆಚರಣೆಗೆ ಚಾಲನೆ ನೀಡಿದರು.

ಬೆಳಗ್ಗೆಯೇ ರೈತರು ತಮ್ಮ ಎತ್ತುಗಳಿಗೆ ಸ್ನಾನ ಮಾಡಿಸಿ, ಎಳ್ಳೆಣ್ಣೆ, ಮಜ್ಜಿಗೆ, ಅರಿಶಿಣ, ಉಪ್ಪು ಹಾಗೂ ತತ್ತಿಯನ್ನು ಹಚ್ಚಿ, ರೋಗರುಜಿನಗಳಿಂದ ರಕ್ಷಣೆ ಸಿಗಲಿ ಎಂಬ ನಂಬಿಕೆಯಿಂದ ಪೂಜೆ ಸಲ್ಲಿಸಿದರು. ಬಳಿಕ ಕೋಡಿನ ತುದಿಗೆ ತಾಮ್ರದ ಕೊಂಬೆಣಸು ಅಳವಡಿಸಿ, ರಿಬ್ಬನ್, ಬಲೂನ್ ಹಾಗೂ ಗಜ್ಜೆಪಟ್ಟಿಗಳಿಂದ ಎತ್ತುಗಳನ್ನು ಅಲಂಕರಿಸಿದರು.

ಗೋಧೂಳಿ ವೇಳೆಯಲ್ಲಿ ವಿಶೇಷವಾಗಿ ಸಿಂಗರಿಸಿದ ಎತ್ತು ಹಾಗೂ ಹೋರಿಗಳನ್ನು ಊರ ಅಗಸಿ ರಸ್ತೆಯಲ್ಲಿ ಓಡಿಸಲಾಯಿತು. ಮೊದಲು ಕೊಬ್ಬರಿ ಸರವನ್ನು ಹರಿದು ಮುಂದೆ ಸಾಗುವ ಎತ್ತನ್ನೇ “ಕರಿ ಹರಿದ ಎತ್ತು” ಎಂದು ಪರಿಗಣಿಸುವ ಸಂಪ್ರದಾಯವಿದೆ. ಬಿಳಿ ಎತ್ತು ಕರಿ ಹರಿದರೆ ಹಿಂಗಾರು ಉತ್ತಮ, ಕರಿ ಎತ್ತು ಕರಿ ಹರಿದರೆ ಮುಂಗಾರು ಉತ್ತಮವಾಗಲಿದೆ ಎಂಬ ನಂಬಿಕೆ ರೈತರಲ್ಲಿದೆ.

ಪಟ್ಟಣದ ದೇಸಾಯಿಬಣ, ಹುಲಗೇರಿ ಬಣ, ಪೇಠಬಣ ಹಾಗೂ ಹಿರೇಬಣ ಅಗಸಿ ಬಾಗಿಲುಗಳಲ್ಲಿ ಕರಿ ಹರಿಯುವ ಸಂಪ್ರದಾಯ ನೆರವೇರಿತು. ರೈತರು ತಮ್ಮ ಎತ್ತುಗಳ ಮೈಮೇಲೆ “ರಾಮಧೂತ”, “ಭೂಮಿತಾಯಿ ಚೊಚ್ಚಲ ಮಗ”, “ಪುಣ್ಯಕೋಟಿ”, “ಮನೆದೇವ್ರು”, “ರಾಜಕುಮಾರ”, “ಒಡಹುಟ್ಟಿದವರು”, “ಮುಂಗಾರು ಮಳೆ”, “ನಮ್ಮ ಬಸವ” ಮೊದಲಾದ ಬರಹಗಳನ್ನು ಬರೆದು ಪ್ರೀತಿ ವ್ಯಕ್ತಪಡಿಸಿದರು.
ಬಳಿಕ ಪಟ್ಟಣದ ಆರಾಧ್ಯದೈವ ಸೋಮೇಶ್ವರ ದೇವಸ್ಥಾನದ ಸನ್ನಿಧಿಯಲ್ಲಿ ಗಿರೀಶ ಅಣ್ಣಿಗೇರಿಯವರ ಎತ್ತುಗಳು ಕರಿ ಹರಿದವು. ಎತ್ತುಗಳ ಓಟವನ್ನು ಕಣ್ತುಂಬಿಕೊಳ್ಳಲು ಸಾವಿರಾರು ರೈತರು, ಯುವಕರು ಹಾಗೂ ಮಕ್ಕಳು ಸೇರಿದ್ದರು. ನಂತರ ಕರಿ ಹರಿದ ಎತ್ತುಗಳೊಂದಿಗೆ ನೂರಾರು ಎತ್ತುಗಳ ಭವ್ಯ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ವಾದ್ಯ ವೈಭವದೊಂದಿಗೆ ನಡೆಯಿತು. ಇದೇ ವೇಳೆ ಸುರಿದ ಮಳೆ ಹಬ್ಬದ ಸಂಭ್ರಮವನ್ನು ಮತ್ತಷ್ಟು ಇಮ್ಮಡಿಗೊಳಿಸಿತು.
ಈ ಸಂದರ್ಭದಲ್ಲಿ ಗುರುರಾಜ ಪಾಟೀಲಕುಲಕರ್ಣಿ, ಚನ್ನಪ್ಪ ಜಗಲಿ, ಶಿವಯೋಗಿ ಅಂಕಲಕೋಟಿ, ಚಂದ್ರಣ್ಣ ಮೆಕ್ಕಿ, ಚನ್ನಪ್ಪ ಚಿಂಚಲಿ, ಬಸವರಾಜ ಮೆಣಸಿನಕಾಯಿ, ವಿರುಪಾಕ್ಷ ಆದಿ, ಅಪ್ಪಣ್ಣ ಮುಳಗುಂದ, ಮಯೂರಗೌಡ ಪಾಟೀಲ, ನಂದೀಶ ಬಂಡಿವಾಡ, ರಾಮಣ್ಣ ಗೌರಿ, ಸೋಮಣ್ಣ ಸುತಾರ, ಸುರೇಶ ಚೌಕನವರ, ಸೋಮಣ್ಣ ಉಮಚಗಿ, ಸುರೇಶ ರಾಚನಾಯ್ಕರ, ಮುತ್ತಣ್ಣ ಕಟ್ಟಿಗೌಡ್ರ, ಗಂಗಪ್ಪ ಮೇವುಂಡಿ, ಈರಪ್ಪ ಗುಡಗೇರಿ, ಬಸವರಾಜ ಅಣ್ಣಿಗೇರಿ, ಬಸವರಾಜ ಆದಿ, ರಮೇಶ ಹೆಬ್ಬಾಳ ಸೇರಿದಂತೆ ರೈತ ಮುಖಂಡರು ಉಪಸ್ಥಿತರಿದ್ದರು.
ಏಕೆ ಆಚರಿಸುತ್ತಾರೆ ಕಾರ ಹುಣ್ಣಿಮೆ?
ಮುಂಗಾರು ಉತ್ತಮವಾಗಲಿ, ಜಾನುವಾರುಗಳು ಆರೋಗ್ಯವಾಗಿರಲಿ ಹಾಗೂ ಸಮೃದ್ಧ ಬೆಳೆ ಬರಲಿ ಎಂಬ ಆಶಯದಿಂದ ರೈತರು ಕಾರ ಹುಣ್ಣಿಮೆಯನ್ನು ಆಚರಿಸುತ್ತಾರೆ. ಕರಿ ಹರಿಯುವ ಸಂಪ್ರದಾಯವು ಪ್ರಕೃತಿ, ಕೃಷಿ ಮತ್ತು ರೈತನ ಬದುಕಿನ ನಡುವಿನ ಅವಿನಾಭಾವ ಸಂಬಂಧದ ಸಂಕೇತವಾಗಿದೆ.

