Home Blog

3 ದಿನ ಅನ್ನ-ನೀರಿಲ್ಲದೆ ವಿದ್ಯಾರ್ಥಿಗಳ ನರಕಯಾತನೆ: ಸಮಾಜ ಕಲ್ಯಾಣ ಇಲಾಖೆ ವಿರುದ್ಧ ಬೀದಿಗಿಳಿದ ವಿದ್ಯಾರ್ಥಿಗಳು

0

ರಾಯಚೂರು: ಸರ್ಕಾರಿ ವಸತಿ ನಿಲಯದಲ್ಲಿ ವಿದ್ಯಾರ್ಥಿಗಳಿಗೆ ಮೂಲಭೂತ ಸೌಲಭ್ಯಗಳೇ ಸಿಗದಿರುವ ಆಘಾತಕಾರಿ ಘಟನೆ ರಾಯಚೂರಿನಲ್ಲಿ ಬೆಳಕಿಗೆ ಬಂದಿದೆ. ಡಾ. ಬಿ.ಆರ್. ಅಂಬೇಡ್ಕರ್ ಮೆಟ್ರಿಕ್ ನಂತರದ ವಸತಿ ನಿಲಯದಲ್ಲಿ ಕಳೆದ ಮೂರು ದಿನಗಳಿಂದ ಊಟ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಇಲ್ಲದೆ ವಿದ್ಯಾರ್ಥಿಗಳು ತೀವ್ರ ಸಂಕಷ್ಟ ಅನುಭವಿಸಿದ್ದಾರೆ.

ಯಾದಗಿರಿ ಹಾಗೂ ರಾಯಚೂರು ಜಿಲ್ಲೆಯ ವಿವಿಧ ಗ್ರಾಮೀಣ ಭಾಗಗಳಿಂದ ಬಂದಿರುವ ನೂರಾರು ವಿದ್ಯಾರ್ಥಿಗಳು ಹಸಿವು ಮತ್ತು ದಾಹದ ನಡುವೆ ದಿನ ಕಳೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಆರಂಭದಲ್ಲಿ ತಮ್ಮ ಬಳಿಯಿದ್ದ ಹಣದಲ್ಲಿ ಊಟ ಮಾಡಿಕೊಂಡ ವಿದ್ಯಾರ್ಥಿಗಳು, ಬಳಿಕ ಹಣ ಖಾಲಿಯಾದ ನಂತರ ಪಕ್ಕದ ಹಾಸ್ಟೆಲ್‌ಗಳಿಗೆ ತೆರಳಿ ಆಹಾರ ಕೇಳಿ ತಿಂದಿರುವುದಾಗಿ ಆರೋಪಿಸಿದ್ದಾರೆ.

ಪರಿಸ್ಥಿತಿ ಹದಗೆಟ್ಟ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಸಮಾಜ ಕಲ್ಯಾಣ ಇಲಾಖೆಯ ಜಿಲ್ಲಾ ಕಚೇರಿ ಎದುರು ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ದಾರೆ. “ನಮಗೆ ಊಟ ಕೊಡಿ, ಕುಡಿಯುವ ನೀರು ಕೊಡಿ” ಎಂದು ವಿದ್ಯಾರ್ಥಿಗಳು ಬೇಡಿಕೆ ಇಟ್ಟಿದ್ದಾರೆ.

ಈ ಅವ್ಯವಸ್ಥೆಗೆ ಹಾಸ್ಟೆಲ್ ವಾರ್ಡನ್ ಮೆಹಬೂಬ್ ಅವರ ನಿರ್ಲಕ್ಷ್ಯವೇ ಕಾರಣ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಹಾಸ್ಟೆಲ್ ಆರಂಭವಾಗಿದೆ ಎಂದು ಕರೆಸಿ, ಬಳಿಕ ಯಾವುದೇ ಸೌಲಭ್ಯ ಒದಗಿಸಿಲ್ಲ ಎಂದು ದೂರಿದ್ದಾರೆ. ಸಮಸ್ಯೆ ಕುರಿತು ಪ್ರಶ್ನಿಸಿದಾಗಲೂ ವಾರ್ಡನ್ ಉಡಾಫೆಯಾಗಿ ವರ್ತಿಸಿದ್ದಾರೆ ಎಂದು ವಿದ್ಯಾರ್ಥಿಗಳು ಹೇಳಿಕೊಂಡಿದ್ದಾರೆ.

ಪ್ರತಿಭಟನೆ ತೀವ್ರಗೊಂಡ ಬಳಿಕ ಸ್ಥಳಕ್ಕೆ ಬಂದ ವಾರ್ಡನ್ ವಿರುದ್ಧ ವಿದ್ಯಾರ್ಥಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಅವರನ್ನು ತಕ್ಷಣ ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಪ್ರಕರಣ ಇದೀಗ ಸಮಾಜ ಕಲ್ಯಾಣ ಇಲಾಖೆಗೆ ತಲೆನೋವಾಗಿ ಪರಿಣಮಿಸಿದೆ.

ಲಂಡನ್‌ನಲ್ಲಿ ಸಿಜೆಐ ಸೂರ್ಯ ಕಾಂತ್ ಭಾಷಣಕ್ಕೆ ಅಡ್ಡಿ: ಗದ್ದಲ ಸೃಷ್ಟಿಸಿದವರ ವಿರುದ್ಧ ಭಾರತೀಯ ಹೈಕಮಿಷನ್ ಕಿಡಿ

ನವದೆಹಲಿ: ಲಂಡನ್‌ನಲ್ಲಿ ನಡೆದ ಪ್ರತಿಷ್ಠಿತ ಕಾರ್ಯಕ್ರಮವೊಂದರಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರ ಭಾಷಣದ ವೇಳೆ ಕೆಲವರು ಗದ್ದಲ ಸೃಷ್ಟಿಸಿ ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದ ಘಟನೆ ವಿವಾದಕ್ಕೆ ಕಾರಣವಾಗಿದೆ. ಈ ಬೆಳವಣಿಗೆಯನ್ನು ಲಂಡನ್‌ನಲ್ಲಿರುವ ಭಾರತೀಯ ಹೈಕಮಿಷನ್ ತೀವ್ರವಾಗಿ ಖಂಡಿಸಿದೆ.

ಜೂನ್ 4ರಂದು ಲಂಡನ್‌ನ ಬರ್ಕ್‌ಬೆಕ್ ಕಾಲೇಜಿನಲ್ಲಿ ‘ಕೃತಕ ಬುದ್ಧಿಮತ್ತೆ ಮತ್ತು ಅಂತರರಾಷ್ಟ್ರೀಯ ಕಾನೂನು’ ವಿಷಯದ ಕುರಿತು ಸೂರ್ಯ ಕಾಂತ್ ಉಪನ್ಯಾಸ ನೀಡುತ್ತಿದ್ದರು. ಭಾಷಣದ ಬಳಿಕ ನಡೆದ ಪ್ರಶ್ನೋತ್ತರ ಅವಧಿಯಲ್ಲಿ ಕೆಲವರು ವಿಷಯಕ್ಕೆ ಸಂಬಂಧಿಸದ ಪ್ರಶ್ನೆಗಳನ್ನು ಕೇಳಲು ಮುಂದಾದರು. ಭಾರತದಲ್ಲಿ ವಿರೋಧದ ಧ್ವನಿಗಳನ್ನು ಹತ್ತಿಕ್ಕಲಾಗುತ್ತಿದೆ ಎಂಬ ಆರೋಪಗಳನ್ನು ಮುಂದಿಟ್ಟು ಚರ್ಚೆ ಆರಂಭಿಸಲು ಯತ್ನಿಸಿದರು.

ಈ ವೇಳೆ ಕಾರ್ಯಕ್ರಮದ ನಿರೂಪಕರು ಮಧ್ಯಪ್ರವೇಶಿಸಿ, ಪ್ರಶ್ನೆಗಳು ಕಾರ್ಯಕ್ರಮದ ವಿಷಯಕ್ಕೆ ಸಂಬಂಧಿಸಿಲ್ಲ ಎಂದು ಸ್ಪಷ್ಟಪಡಿಸಿ ಚರ್ಚೆಯನ್ನು ಸ್ಥಗಿತಗೊಳಿಸಿದರು. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಘಟನೆಗೆ ಪ್ರತಿಕ್ರಿಯಿಸಿರುವ ಭಾರತೀಯ ಹೈಕಮಿಷನ್, ಗೌರವಾನ್ವಿತ ಸಾರ್ವಜನಿಕ ವೇದಿಕೆಗಳಲ್ಲಿ ಇಂತಹ ವರ್ತನೆ ಒಪ್ಪಲಾಗದು ಎಂದು ಹೇಳಿದೆ. ಭಿನ್ನಾಭಿಪ್ರಾಯಗಳನ್ನು ವ್ಯಕ್ತಪಡಿಸುವ ಹಕ್ಕು ಎಲ್ಲರಿಗೂ ಇದ್ದರೂ, ಅದು ಶಾಂತಿಯುತ ಮತ್ತು ಸಭ್ಯ ರೀತಿಯಲ್ಲಿರಬೇಕು ಎಂದು ಸೂಚಿಸಿದೆ.

ಇದಕ್ಕೂ ಮುನ್ನ ತಮ್ಮ ಭಾಷಣದಲ್ಲಿ ಸೂರ್ಯ ಕಾಂತ್ ಅವರು, ಕೃತಕ ಬುದ್ಧಿಮತ್ತೆ ನ್ಯಾಯಾಂಗ, ಆಡಳಿತ ಹಾಗೂ ಜಾಗತಿಕ ವ್ಯವಸ್ಥೆಗಳ ಮೇಲೆ ದೊಡ್ಡ ಪರಿಣಾಮ ಬೀರುತ್ತಿದೆ. ಆದರೆ ತಂತ್ರಜ್ಞಾನವು ಸಂವಿಧಾನ, ಪ್ರಜಾಪ್ರಭುತ್ವ ಹಾಗೂ ಮಾನವ ಘನತೆಯ ಮೌಲ್ಯಗಳಿಗೆ ಬದ್ಧವಾಗಿರಬೇಕು ಎಂದು ಒತ್ತಿ ಹೇಳಿದ್ದರು.

ಜಾಗತಿಕ ಬಿಕ್ಕಟ್ಟಿನ ನಡುವೆಯೂ ಭಾರತದ ಆರ್ಥಿಕತೆಗೆ ಮೋದಿ ಮಾಸ್ಟರ್ ಪ್ಲಾನ್

ನವದೆಹಲಿ: ಜಾಗತಿಕ ಆರ್ಥಿಕ ಅನಿಶ್ಚಿತತೆ, ಮಧ್ಯಪ್ರಾಚ್ಯ ಸಂಘರ್ಷ ಹಾಗೂ ಅಂತರರಾಷ್ಟ್ರೀಯ ಮಾರುಕಟ್ಟೆಯ ಏರಿಳಿತಗಳ ನಡುವೆಯೂ ಭಾರತದ ಆರ್ಥಿಕ ಪ್ರಗತಿಯ ವೇಗವನ್ನು ಕಾಯ್ದುಕೊಳ್ಳಲು ಕೇಂದ್ರ ಸರ್ಕಾರ ಹೊಸ ಕಾರ್ಯತಂತ್ರ ರೂಪಿಸಲು ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಧಾನಿಯವರ ಆರ್ಥಿಕ ಸಲಹಾ ಮಂಡಳಿ (EAC) ಸದಸ್ಯರೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿ ದೇಶದ ಆರ್ಥಿಕ ಭವಿಷ್ಯದ ಕುರಿತು ಮಹತ್ವದ ಚರ್ಚೆ ನಡೆಸಿದರು.

ಸಭೆಯಲ್ಲಿ ಭಾರತದ ಸ್ಥೂಲ ಆರ್ಥಿಕ ಸ್ಥಿರತೆಯನ್ನು ಮತ್ತಷ್ಟು ಬಲಪಡಿಸುವುದು, ಹೂಡಿಕೆಗಳನ್ನು ಆಕರ್ಷಿಸುವುದು ಹಾಗೂ ಅಭಿವೃದ್ಧಿ ಯೋಜನೆಗಳಿಗೆ ವೇಗ ನೀಡುವ ಕುರಿತು ಸುದೀರ್ಘ ಸಮಾಲೋಚನೆ ನಡೆಯಿತು. ಜಾಗತಿಕ ಸವಾಲುಗಳ ನಡುವೆಯೂ ದೇಶದ ಬೆಳವಣಿಗೆಗೆ ಅಡ್ಡಿಯಾಗದಂತೆ ದೀರ್ಘಾವಧಿಯ ಆರ್ಥಿಕ ಸುಧಾರಣೆಗಳನ್ನು ಜಾರಿಗೊಳಿಸುವ ಅಗತ್ಯವನ್ನು ಒತ್ತಿ ಹೇಳಲಾಯಿತು.

ನಾಗರಿಕರ ಜೀವನವನ್ನು ಇನ್ನಷ್ಟು ಸುಲಭಗೊಳಿಸುವ ‘ಈಸ್ ಆಫ್ ಲಿವಿಂಗ್’ ಹಾಗೂ ಉದ್ಯಮಿಗಳಿಗೆ ಅನುಕೂಲಕರ ವಾತಾವರಣ ಕಲ್ಪಿಸುವ ‘ಈಸ್ ಆಫ್ ಡೂಯಿಂಗ್ ಬಿಸಿನೆಸ್’ ಸುಧಾರಣೆಗಳ ಕುರಿತೂ ಸಭೆಯಲ್ಲಿ ವಿಶೇಷ ಗಮನ ಹರಿಸಲಾಯಿತು. ಹೂಡಿಕೆ ಸ್ನೇಹಿ ನೀತಿಗಳ ಮೂಲಕ ಉದ್ಯಮ ವಲಯಕ್ಕೆ ಉತ್ತೇಜನ ನೀಡುವ ಬಗ್ಗೆ ಸಲಹೆಗಳನ್ನು ಮಂಡಿಸಲಾಯಿತು.

ಇದೇ ವೇಳೆ ಮಧ್ಯಪ್ರಾಚ್ಯದಲ್ಲಿನ ಸಂಘರ್ಷದಿಂದ ಜಾಗತಿಕ ತೈಲ ಮಾರುಕಟ್ಟೆ, ವ್ಯಾಪಾರ ಮತ್ತು ಸರಬರಾಜು ಸರಪಳಿಗಳ ಮೇಲೆ ಉಂಟಾಗಬಹುದಾದ ಪರಿಣಾಮಗಳ ಕುರಿತು ಚರ್ಚೆ ನಡೆಯಿತು. ಇಂತಹ ಸವಾಲುಗಳನ್ನು ಎದುರಿಸಲು ಭಾರತ ಮುಂಚಿತ ಸಿದ್ಧತೆಗಳನ್ನು ಕೈಗೊಳ್ಳಬೇಕೆಂದು ಆರ್ಥಿಕ ತಜ್ಞರು ಸಲಹೆ ನೀಡಿದರು.

ಒಟ್ಟಾರೆ, ಜಾಗತಿಕ ಅಸ್ಥಿರತೆಯ ನಡುವೆಯೂ ಭಾರತದ ಆರ್ಥಿಕ ಬೆಳವಣಿಗೆಗೆ ಯಾವುದೇ ಹಿನ್ನಡೆಯಾಗದಂತೆ ಸಮಗ್ರ ಕಾರ್ಯತಂತ್ರ ರೂಪಿಸುವ ನಿಟ್ಟಿನಲ್ಲಿ ಈ ಸಭೆ ಮಹತ್ವದ ಹೆಜ್ಜೆಯಾಗಿ ಪರಿಗಣಿಸಲಾಗಿದೆ.

ಜಾನ್ವಿ ಕಪೂರ್ ಪಾತ್ರದ ಬಗ್ಗೆ ಆಕ್ರೋಶ: ‘ಪೆದ್ದಿ’ ನಿರ್ದೇಶಕರಿಂದ ಸ್ಪಷ್ಟನೆ

ಹೈದರಾಬಾದ್: ‘ಪೆದ್ದಿ’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ದಾಖಲೆಗಳತ್ತ ದಾಪುಗಾಲಿಡುತ್ತಿರುವ ನಡುವೆಯೇ, ನಾಯಕಿ ಜಾನ್ವಿ ಕಪೂರ್ ಪಾತ್ರದ ಬಗ್ಗೆ ಹೊಸ ವಿವಾದ ಎದ್ದಿದೆ. ಚಿತ್ರದಲ್ಲಿ ನಟಿಗೆ ಸಮರ್ಪಕ ಪ್ರಾಮುಖ್ಯತೆ ನೀಡಲಾಗಿಲ್ಲ ಎಂಬ ಟೀಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಕೆಲವು ಸಿನಿಪ್ರೇಮಿಗಳು ಮತ್ತು ನೆಟ್ಟಿಗರು, ಜಾನ್ವಿ ಪಾತ್ರವನ್ನು ಕಥೆಯ ಕೇಂದ್ರಬಿಂದುವಾಗಿಸುವ ಬದಲು ಗ್ಲಾಮರ್ ಅಂಶಕ್ಕೆ ಹೆಚ್ಚು ಒತ್ತು ನೀಡಲಾಗಿದೆ ಎಂದು ಆರೋಪಿಸಿದ್ದಾರೆ. ‘ದೇವರ’ ಚಿತ್ರದ ಬಳಿಕ ಮತ್ತೊಮ್ಮೆ ಇದೇ ರೀತಿಯ ಚರ್ಚೆ ಜಾನ್ವಿ ಪಾತ್ರದ ಸುತ್ತ ಶುರುವಾಗಿದೆ.

ಈ ಟೀಕೆಗಳಿಗೆ ಪ್ರತಿಕ್ರಿಯಿಸಿರುವ ನಿರ್ದೇಶಕ ಬುಚ್ಚಿ ಬಾಬು ಸನಾ, ಚಿತ್ರದ ಉದ್ದೇಶವನ್ನು ಸ್ಪಷ್ಟಪಡಿಸಿದ್ದಾರೆ. “ರಾಮ್ ಚರಣ್ ಮತ್ತು ಜಾನ್ವಿ ನಡುವಿನ ಪ್ರೇಮಕಥೆಯೇ ಚಿತ್ರದ ಪ್ರಮುಖ ಭಾವನಾತ್ಮಕ ಅಂಶ. ಯಾವುದೇ ವಿವಾದ ಸೃಷ್ಟಿಸುವ ಅಥವಾ ನಟಿಯ ಪಾತ್ರವನ್ನು ಕಡಿಮೆ ಮಾಡುವ ಉದ್ದೇಶ ನಮ್ಮದಾಗಿರಲಿಲ್ಲ” ಎಂದು ಹೇಳಿದ್ದಾರೆ.

ಹಳ್ಳಿ ಹಿನ್ನೆಲೆಯ ಕಥೆ ಹಾಗೂ ಪಾತ್ರಗಳ ಸ್ವಭಾವಕ್ಕೆ ಅನುಗುಣವಾಗಿಯೇ ಚಿತ್ರಕಥೆ ರೂಪಿಸಲಾಗಿದೆ ಎಂದು ಹೇಳಿರುವ ಅವರು, ಜಾನ್ವಿ ಪಾತ್ರದ ಬಗ್ಗೆ ಬಂದಿರುವ ನೆಗೆಟಿವ್ ಪ್ರತಿಕ್ರಿಯೆಗಳು ತಮ್ಮನ್ನು ಅಚ್ಚರಿಗೊಳಿಸಿವೆ ಎಂದಿದ್ದಾರೆ.

ಸದ್ಯ ‘ಪೆದ್ದಿ’ ಚಿತ್ರದ ಯಶಸ್ಸಿನ ಜೊತೆಗೆ ಜಾನ್ವಿ ಕಪೂರ್ ಪಾತ್ರದ ಚಿತ್ರಣವೂ ಚರ್ಚೆಯ ವಿಷಯವಾಗಿದ್ದು, ನಿರ್ದೇಶಕರ ಸ್ಪಷ್ಟನೆ ಬಳಿಕ ಈ ವಿವಾದ ಯಾವ ದಿಕ್ಕು ಪಡೆಯಲಿದೆ ಎಂಬುದು ಕುತೂಹಲ ಮೂಡಿಸಿದೆ.

ಕೋರ್ಟ್ʼಗೆ ಗೈರುಹಾಜರಾದ ಬಿಜೆಪಿ ಶಾಸಕ ಶರಣು ಸಲಗರ್ʼಗೆ ಜಾಮೀನು ರಹಿತ ವಾರಂಟ್ ಜಾರಿ!

ಬೀದರ್: ಬಸವಕಲ್ಯಾಣ ಕ್ಷೇತ್ರದ ಬಿಜೆಪಿ ಶಾಸಕ ಶರಣು ಸಲಗರ್ ಅವರಿಗೆ ಕೋರ್ಟ್‌ಗೆ ಗೈರುಹಾಜರಾದ ಹಿನ್ನೆಲೆಯಲ್ಲಿ ಜಾಮೀನು ರಹಿತ ವಾರಂಟ್ (NBW) ಜಾರಿಯಾಗಿದೆ. ಈ ಬೆಳವಣಿಗೆಯಿಂದ ಶಾಸಕ ಸಲಗರ್ ಅವರಿಗೆ ಕಾನೂನು ಸಂಕಷ್ಟ ಎದುರಾಗಿದೆ.

2023ರಲ್ಲಿ ನಡೆದಿದ್ದ ಗೋಹತ್ಯೆ ಆರೋಪಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆ ಬೆಂಗಳೂರಿನ 42ನೇ ಎಸಿಜೆಎಂ ನ್ಯಾಯಾಲಯದಲ್ಲಿ ನಡೆಯುತ್ತಿದ್ದು, ಪ್ರಕರಣಕ್ಕೆ ಸಂಬಂಧಿಸಿದ ಸಾಕ್ಷ್ಯ ವಿಚಾರಣೆಗೆ ಶಾಸಕ ಶರಣು ಸಲಗರ್ ಹಾಜರಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ನ್ಯಾಯಾಲಯವು ಅವರ ವಿರುದ್ಧ ಜಾಮೀನು ರಹಿತ ವಾರಂಟ್ ಹೊರಡಿಸಿದೆ.

ಪ್ರಕರಣದ ತನಿಖೆ ನಡೆಸಿದ್ದ ಪೊಲೀಸರು ಈಗಾಗಲೇ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ (ಚಾರ್ಜ್‌ಶೀಟ್) ಸಲ್ಲಿಸಿದ್ದಾರೆ. ತನಿಖೆ ಪೂರ್ಣಗೊಂಡ ಬಳಿಕ ಪ್ರಕರಣದ ವಿಚಾರಣೆ ಪ್ರಗತಿಯಲ್ಲಿದ್ದು, ಸಾಕ್ಷ್ಯ ದಾಖಲಾತಿ ಪ್ರಕ್ರಿಯೆ ನಡೆಯಬೇಕಿತ್ತು.

2023ರ ಜುಲೈ 1ರಂದು ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಅಕ್ರಮವಾಗಿ ಗೋಹತ್ಯೆ ನಡೆಸಲಾಗುತ್ತಿದೆ ಎಂದು ಆರೋಪಿಸಿ ಶಾಸಕ ಶರಣು ಸಲಗರ್ ಹಾಗೂ ಅವರ ಬೆಂಬಲಿಗರು ಸ್ಥಳಕ್ಕೆ ತೆರಳಿದ್ದರು ಎನ್ನಲಾಗಿದೆ. ಈ ವೇಳೆ ಮುಸ್ಲಿಂ ಸಮುದಾಯದ ಮನೆಯೊಂದರ ಬಳಿ ಗೋಹತ್ಯೆ ತಡೆಯುವ ವಿಚಾರವಾಗಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣಗೊಂಡು ಗಲಾಟೆ ನಡೆದಿತ್ತು.

ಘಟನೆಗೆ ಸಂಬಂಧಿಸಿದಂತೆ ದಾಖಲಾದ ಪ್ರಕರಣದ ತನಿಖೆ ಪೂರ್ಣಗೊಂಡಿದ್ದು, ಇದೀಗ ನ್ಯಾಯಾಲಯದ ವಿಚಾರಣೆಯ ಹಂತದಲ್ಲಿದೆ. ಈ ನಡುವೆ ವಿಚಾರಣೆಗೆ ಗೈರಾಗಿರುವ ಹಿನ್ನೆಲೆಯಲ್ಲಿ ನ್ಯಾಯಾಲಯವು ಶಾಸಕ ಸಲಗರ್ ವಿರುದ್ಧ ಜಾಮೀನು ರಹಿತ ವಾರಂಟ್ ಜಾರಿ ಮಾಡಿದೆ.

ಪ್ರಕರಣದ ಮುಂದಿನ ವಿಚಾರಣೆ ವೇಳೆ ಶಾಸಕ ಶರಣು ಸಲಗರ್ ನ್ಯಾಯಾಲಯದ ಮುಂದೆ ಹಾಜರಾಗುವ ಸಾಧ್ಯತೆ ಇದ್ದು, ಕಾನೂನು ಪ್ರಕ್ರಿಯೆ ಮುಂದುವರಿಯಲಿದೆ.

KCET 2026 ಟಾಪರ್ಸ್ ಪಟ್ಟಿ ಪ್ರಕಟ: ಇಂಜಿನಿಯರಿಂಗ್ ವಿಭಾಗದಲ್ಲಿ ಬೆಂಗಳೂರಿನ ತನಿಷಾ ಕಾರ್ತಿಕ್ʼಗೆ ಮೊದಲ ರ್ಯಾಂಕ್!

ಬೆಂಗಳೂರು: 2026ನೇ ಸಾಲಿನ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (KCET) ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಇಂದು ಪ್ರಕಟಿಸಿದ್ದು, ವಿವಿಧ ವೃತ್ತಿಪರ ಕೋರ್ಸ್‌ಗಳ ಟಾಪರ್‌ಗಳ ಪಟ್ಟಿಯೂ ಬಹಿರಂಗಗೊಂಡಿದೆ. ಇಂಜಿನಿಯರಿಂಗ್ ವಿಭಾಗದಲ್ಲಿ ಬೆಂಗಳೂರಿನ ಆರ್‌ವಿ ಪಿಯು ಕಾಲೇಜಿನ ವಿದ್ಯಾರ್ಥಿನಿ ತನಿಷಾ ಕಾರ್ತಿಕ್ ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದು ಸಾಧನೆ ಮೆರೆದಿದ್ದಾರೆ.

ಏಪ್ರಿಲ್ 22, 23 ಮತ್ತು 24ರಂದು ನಡೆದಿದ್ದ ಯುಜಿ ಸಿಇಟಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಇಂಜಿನಿಯರಿಂಗ್ ವಿಭಾಗದ ಮೊದಲ ಮೂರು ಸ್ಥಾನಗಳನ್ನು ವಿದ್ಯಾರ್ಥಿಗಳು ಅಲಂಕರಿಸಿದ್ದಾರೆ.

ಇಂಜಿನಿಯರಿಂಗ್ ವಿಭಾಗದ ಟಾಪ್-3 ರ್ಯಾಂಕ್‌ಗಳು

  • ತನಿಷಾ ಕಾರ್ತಿಕ್ (ಆರ್‌ವಿ ಪಿಯು ಕಾಲೇಜು, ಬೆಂಗಳೂರು) – 1ನೇ ರ್ಯಾಂಕ್
  • ಶ್ರಾಜನ್ (ಸರ್ ಎಂ.ವಿ. ಪಿಯು ಕಾಲೇಜು, ಬೆಳ್ತಂಗಡಿ) – 2ನೇ ರ್ಯಾಂಕ್
  • ನಿನಾದ್ ವಸಿಷ್ಠ (ಆರ್‌ವಿ ಪಿಯು ಕಾಲೇಜು, ಜಯನಗರ) – 3ನೇ ರ್ಯಾಂಕ್

ವೆಟನರಿ ವಿಭಾಗ

  • ನಯನಾ ಗೋಪಿ – 1ನೇ ರ್ಯಾಂಕ್
  • ಅಮೂಲ್ಯ – 2ನೇ ರ್ಯಾಂಕ್
  • ರಿತ್ವಿಕ್ ಕುಮಾರ್ – 3ನೇ ರ್ಯಾಂಕ್

ಬಿಎಸ್‌ಸಿ ಅಗ್ರಿಕಲ್ಚರ್ ವಿಭಾಗ

  • ನಿನಾದ್ ವಸಿಷ್ಠ – 1ನೇ ರ್ಯಾಂಕ್
  • ಅನ್ಮೊಲ್ ಪ್ರಭು – 2ನೇ ರ್ಯಾಂಕ್
  • ಸಮಯ್ – 3ನೇ ರ್ಯಾಂಕ್

ಬಿಎಸ್‌ಸಿ ನರ್ಸಿಂಗ್, ಯೋಗ ಮತ್ತು ನ್ಯಾಚುರೋಪತಿ, ಬಿ-ಫಾರ್ಮಾ ಹಾಗೂ ಡಿ-ಫಾರ್ಮಾ ವಿಭಾಗಗಳಲ್ಲಿ

  • ನಯನಾ ಗೋಪಿ – 1ನೇ ರ್ಯಾಂಕ್
  • ಅಮೂಲ್ಯ – 2ನೇ ರ್ಯಾಂಕ್
  • ಸುಚಿತ್ರಾ – 3ನೇ ರ್ಯಾಂಕ್

ಈ ಬಾರಿಯ KCET ಫಲಿತಾಂಶದಲ್ಲಿ ವಿದ್ಯಾರ್ಥಿಗಳು ಉತ್ತಮ ಸಾಧನೆ ತೋರಿದ್ದು, ವಿವಿಧ ವೃತ್ತಿಪರ ಕೋರ್ಸ್‌ಗಳಿಗೆ ಪ್ರವೇಶ ಪಡೆಯುವ ಸ್ಪರ್ಧೆಯಲ್ಲಿ ಮೇಲುಗೈ ಸಾಧಿಸಿದ್ದಾರೆ. ಫಲಿತಾಂಶ ಪ್ರಕಟಗೊಂಡಿರುವ ಹಿನ್ನೆಲೆಯಲ್ಲಿ ಮುಂದಿನ ಕೌನ್ಸೆಲಿಂಗ್ ಹಾಗೂ ಸೀಟು ಹಂಚಿಕೆ ಪ್ರಕ್ರಿಯೆಗೆ ಕೆಇಎ ಶೀಘ್ರದಲ್ಲೇ ವೇಳಾಪಟ್ಟಿ ಪ್ರಕಟಿಸುವ ನಿರೀಕ್ಷೆಯಿದೆ.

ರಾಮಲಿಂಗಾರೆಡ್ಡಿ ಬಂಡಾಯಕ್ಕೆ ಬ್ರೇಕ್? ಸುರ್ಜೇವಾಲ ಮಧ್ಯಸ್ಥಿಕೆ ಬಳಿಕ ಇಂದು ಸಂಜೆಯೇ ರಾಜೀನಾಮೆ ವಾಪಸ್ ಸಾಧ್ಯತೆ

ಬೆಂಗಳೂರು: ಕಾಂಗ್ರೆಸ್ ಸರ್ಕಾರದಲ್ಲಿ ಖಾತೆ ಹಂಚಿಕೆ ವಿಚಾರವಾಗಿ ಭುಗಿಲೆದ್ದಿದ್ದ ಅಸಮಾಧಾನ ಸದ್ಯ ತಣ್ಣಗಾಗುವ ಲಕ್ಷಣಗಳು ಕಾಣಿಸುತ್ತಿವೆ. ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಅಚ್ಚರಿ ಮೂಡಿಸಿದ್ದ ಹಿರಿಯ ನಾಯಕ ರಾಮಲಿಂಗಾರೆಡ್ಡಿ, ಹೈಕಮಾಂಡ್ ಮಧ್ಯಸ್ಥಿಕೆಯ ಬಳಿಕ ತಮ್ಮ ನಿರ್ಧಾರವನ್ನು ಮರುಪರಿಶೀಲಿಸುವ ಸಾಧ್ಯತೆ ವ್ಯಕ್ತವಾಗಿದೆ.

ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರನ್ನು ಭೇಟಿಯಾದ ರಾಮಲಿಂಗಾರೆಡ್ಡಿ, ಬೆಂಗಳೂರು ಅಭಿವೃದ್ಧಿ ಖಾತೆ ನೀಡುವ ಕುರಿತು ನೀಡಿದ್ದ ಭರವಸೆ ಈಡೇರಿಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ಮೊದಲೇ ಮಾಹಿತಿ ನೀಡಿದ್ದರೆ ಸಚಿವ ಸ್ಥಾನ ಸ್ವೀಕರಿಸುವ ಪ್ರಶ್ನೆಯೇ ಇರಲಿಲ್ಲ” ಎಂದು ತಮ್ಮ ಬೇಸರವನ್ನು ಉಸ್ತುವಾರಿಗಳ ಮುಂದೆ ಹೊರಹಾಕಿದ್ದಾರೆ ಎನ್ನಲಾಗಿದೆ.

ಈ ವೇಳೆ ಪ್ರತಿಕ್ರಿಯಿಸಿದ ಸುರ್ಜೇವಾಲ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ಚರ್ಚಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಹೀಗಾಗಿ ರಾಮಲಿಂಗಾರೆಡ್ಡಿ ಕೂಡ ಅಂತಿಮ ನಿರ್ಧಾರ ಕೈಗೊಳ್ಳುವ ಮುನ್ನ ಸಂಜೆವರೆಗೆ ಕಾಯುವುದಾಗಿ ತಿಳಿಸಿದ್ದಾರೆ.

ಇದರ ಬೆನ್ನಲ್ಲೇ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಸುರ್ಜೇವಾಲ ನಡುವೆ ತಾಜ್ ವೆಸ್ಟ್ ಎಂಡ್ ಹೋಟೆಲ್‌ನಲ್ಲಿ ಮಹತ್ವದ ಮಾತುಕತೆ ನಡೆದಿದ್ದು, ಕಾಂಗ್ರೆಸ್ ಸರ್ಕಾರದಲ್ಲಿ ಮೂಡಿರುವ ಅಸಮಾಧಾನ ಶಮನಕ್ಕೆ ಕಾರ್ಯತಂತ್ರ ರೂಪಿಸಲಾಗಿದೆ ಎನ್ನಲಾಗಿದೆ.

ಇದೇ ವೇಳೆ ಹಿರಿಯ ಸಚಿವರ ಅಸಮಾಧಾನ ಕುರಿತು ಸಚಿವ ಸತೀಶ್ ಜಾರಕಿಹೊಳಿ ಕೂಡ ಸಕ್ರಿಯರಾಗಿದ್ದು, ಕೆ.ಎಚ್. ಮುನಿಯಪ್ಪ ಹಾಗೂ ರಾಮಲಿಂಗಾರೆಡ್ಡಿ ಪರವಾಗಿ ಮುಖ್ಯಮಂತ್ರಿಗಳೊಂದಿಗೆ ಪ್ರತ್ಯೇಕ ಮಾತುಕತೆ ನಡೆಸಿದ್ದಾರೆ. ಪಕ್ಷದ ಹಿರಿಯ ನಾಯಕರನ್ನು ಕಡೆಗಣಿಸದೇ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.

ಖಾತೆ ಹಂಚಿಕೆ ವಿವಾದದಿಂದ ಸೃಷ್ಟಿಯಾಗಿದ್ದ ರಾಜಕೀಯ ಬಿಕ್ಕಟ್ಟು ಇದೀಗ ಹೈಕಮಾಂಡ್ ಮಧ್ಯಪ್ರವೇಶದ ಮೂಲಕ ಪರಿಹಾರದ ಹಾದಿಯತ್ತ ಸಾಗುತ್ತಿರುವುದು ಕಾಂಗ್ರೆಸ್ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

‘ಈ ಗೆಳೆಯ ಶಾಶ್ವತ ಅಧ್ಯಾಯ’: ರಕ್ಷಿತ್ ಹುಟ್ಟುಹಬ್ಬಕ್ಕೆ ರಿಷಬ್ ಪೋಸ್ಟ್ ವೈರಲ್

ಬೆಂಗಳೂರು: ನಟ ರಕ್ಷಿತ್ ಶೆಟ್ಟಿ ಹುಟ್ಟುಹಬ್ಬದ ಸಂಭ್ರಮದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ. ಆದರೆ ಎಲ್ಲರ ಗಮನ ಸೆಳೆದಿದ್ದು ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಹಂಚಿಕೊಂಡ ವಿಶೇಷ ಪೋಸ್ಟ್.

ರಕ್ಷಿತ್ ಮತ್ತು ರಿಷಬ್ ನಡುವಿನ ಸ್ನೇಹ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಪ್ರಸಿದ್ಧವಾಗಿದೆ. ಆದರೂ ಇತ್ತೀಚೆಗೆ ಇಬ್ಬರ ನಡುವೆ ಮನಸ್ತಾಪ ಉಂಟಾಗಿದೆ ಎಂಬ ವದಂತಿಗಳು ಹರಿದಾಡುತ್ತಿದ್ದವು. ಇದೇ ವೇಳೆ ರಿಷಬ್ ಶೆಟ್ಟಿ ಹಂಚಿಕೊಂಡಿರುವ ಭಾವನಾತ್ಮಕ ಪೋಸ್ಟ್ ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ.

‘ಕಿರಿಕ್ ಪಾರ್ಟಿ’ ದಿನಗಳ ಹಳೆಯ ಫೋಟೋ ಹಂಚಿಕೊಂಡಿರುವ ರಿಷಬ್, “ಬಂದು ಹೋಗುವ ಜನರ ಮಧ್ಯೆ ಈ ಗೆಳೆಯ ಶಾಶ್ವತ ಅಧ್ಯಾಯವಾಗಿದ್ದಾನೆ” ಎಂದು ಬರೆದು ರಕ್ಷಿತ್‌ಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. ಈ ಸಾಲುಗಳು ಇಬ್ಬರ ನಡುವಿನ ಸ್ನೇಹ ಎಷ್ಟು ಗಟ್ಟಿಯಾಗಿದೆ ಎಂಬುದನ್ನು ಮತ್ತೆ ಸಾಬೀತುಪಡಿಸಿವೆ.

ಪೋಸ್ಟ್ ಪ್ರಕಟವಾದ ಕೆಲವೇ ಹೊತ್ತಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ‘ಸ್ನೇಹಕ್ಕೆ ಇದಕ್ಕಿಂತ ದೊಡ್ಡ ಉತ್ತರ ಬೇಕಿಲ್ಲ’ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

ಇದರ ಜೊತೆಗೆ ರಕ್ಷಿತ್ ಶೆಟ್ಟಿ ಅವರ ಮುಂದಿನ ಸಿನಿಮಾ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ರಿಷಬ್, “ಅವರು ಶೀಘ್ರದಲ್ಲೇ ಮರಳಲಿದ್ದಾರೆ” ಎಂದು ಹೇಳಿದ್ದು, ಹೊಸ ಸಿನಿಮಾ ಘೋಷಣೆಯ ನಿರೀಕ್ಷೆಯಲ್ಲಿರುವ ಅಭಿಮಾನಿಗಳಿಗೆ ಪರೋಕ್ಷ ಸುಳಿವು ನೀಡಿದಂತಾಗಿದೆ.

CET 2026 Result: ಸಿಇಟಿ ಪರೀಕ್ಷಾ ಫಲಿತಾಂಶ ಪ್ರಕಟ: ನೋಡುವುದು ಹೇಗೆ? ಡೈರೆಕ್ಟ್ ಲಿಂಕ್ ಇಲ್ಲಿದೆ

ಬೆಂಗಳೂರು: ಲಕ್ಷಾಂತರ ವಿದ್ಯಾರ್ಥಿಗಳು ಕಾತರದಿಂದ ಕಾಯುತ್ತಿದ್ದ 2026ನೇ ಸಾಲಿನ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (KCET) ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಇಂದು ಅಧಿಕೃತವಾಗಿ ಪ್ರಕಟಿಸಿದೆ.

ರಾಜ್ಯದ ವೈದ್ಯಕೀಯ ಶಿಕ್ಷಣ ಸಚಿವರು ಹಾಗೂ ಕೆಇಎ ಸಹಾಧ್ಯಕ್ಷರಾದ ಡಾ. ಶರಣ ಪ್ರಕಾಶ್ ಪಾಟೀಲ್ ಅವರು ಮಧ್ಯಾಹ್ನ ನಡೆದ ಸುದ್ದಿಗೋಷ್ಠಿಯಲ್ಲಿ ಫಲಿತಾಂಶವನ್ನು ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಪರೀಕ್ಷೆಯ ಒಟ್ಟಾರೆ ವಿವರಗಳು ಹಾಗೂ ವಿವಿಧ ವಿಭಾಗಗಳ ಸಾಧನೆ ಕುರಿತ ಮಾಹಿತಿಯನ್ನೂ ಹಂಚಿಕೊಳ್ಳಲಾಯಿತು.

ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ ಅವರ ಮಾಹಿತಿ ಪ್ರಕಾರ, ಅಭ್ಯರ್ಥಿಗಳು ಮಧ್ಯಾಹ್ನ 2 ಗಂಟೆಯ ಬಳಿಕ ಆನ್‌ಲೈನ್ ಮೂಲಕ ತಮ್ಮ ಫಲಿತಾಂಶ, ರ‍್ಯಾಂಕ್ ಹಾಗೂ ಸ್ಕೋರ್‌ಕಾರ್ಡ್ ಅನ್ನು ವೀಕ್ಷಿಸಬಹುದಾಗಿದೆ.

ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಒಂದೇ ವೇಳೆ ವೆಬ್‌ಸೈಟ್‌ಗೆ ಭೇಟಿ ನೀಡುವ ಸಾಧ್ಯತೆ ಇರುವುದರಿಂದ ಸರ್ವರ್ ಮೇಲಿನ ಒತ್ತಡ ಕಡಿಮೆ ಮಾಡಲು ಕೆಇಎ ಹಲವು ಅಧಿಕೃತ ವೆಬ್‌ಸೈಟ್‌ಗಳನ್ನು ಫಲಿತಾಂಶ ವೀಕ್ಷಣೆಗೆ ಲಭ್ಯಗೊಳಿಸಿದೆ.

ಫಲಿತಾಂಶ ಪರಿಶೀಲಿಸುವ ವಿಧಾನ

  • ಕೆಇಎ ಸೂಚಿಸಿರುವ ಯಾವುದೇ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
  • ಮುಖಪುಟದಲ್ಲಿ ಕಾಣಿಸುವ “UGCET 2026 Result” ಲಿಂಕ್ ಮೇಲೆ ಕ್ಲಿಕ್ ಮಾಡಿ.
  • ನಿಮ್ಮ ನೋಂದಣಿ ಸಂಖ್ಯೆಯನ್ನು (Registration Number) ನಮೂದಿಸಿ.
  • ಹೆಸರಿನ ಮೊದಲ ನಾಲ್ಕು ಅಕ್ಷರಗಳನ್ನು ದೊಡ್ಡ ಅಕ್ಷರಗಳಲ್ಲಿ (Capital Letters) ದಾಖಲಿಸಿ.
  • ‘Submit’ ಬಟನ್ ಒತ್ತಿದ ಬಳಿಕ ಫಲಿತಾಂಶ ಸ್ಕ್ರೀನ್ ಮೇಲೆ ಪ್ರದರ್ಶನವಾಗುತ್ತದೆ.
  • ಸ್ಕೋರ್‌ಕಾರ್ಡ್ ಅನ್ನು ಡೌನ್‌ಲೋಡ್ ಮಾಡಿಕೊಂಡು ಪ್ರಿಂಟ್ ಪಡೆಯಬಹುದು.

ವಿದ್ಯಾರ್ಥಿಗಳಿಗೆ ಮಹತ್ವದ ಸೂಚನೆ

ಮುಂದಿನ ಕೌನ್ಸೆಲಿಂಗ್, ದಾಖಲೆ ಪರಿಶೀಲನೆ ಹಾಗೂ ಸೀಟು ಹಂಚಿಕೆ ಪ್ರಕ್ರಿಯೆಗಳಲ್ಲಿ KCET ಸ್ಕೋರ್‌ಕಾರ್ಡ್ ಅತ್ಯಂತ ಪ್ರಮುಖ ದಾಖಲೆ ಆಗಿರುವುದರಿಂದ, ವಿದ್ಯಾರ್ಥಿಗಳು ತಮ್ಮ ಫಲಿತಾಂಶದ ಪ್ರತಿಯನ್ನು ಸುರಕ್ಷಿತವಾಗಿ ಸಂಗ್ರಹಿಸಿಟ್ಟುಕೊಳ್ಳುವಂತೆ ಕೆಇಎ ಸಲಹೆ ನೀಡಿದೆ.

ಫಲಿತಾಂಶ ಪ್ರಕಟಣೆಯೊಂದಿಗೆ ರಾಜ್ಯದ ಇಂಜಿನಿಯರಿಂಗ್, ಫಾರ್ಮಸಿ, ಕೃಷಿ, ವೆಟರ್ನರಿ ಹಾಗೂ ಇತರೆ ವೃತ್ತಿಪರ ಕೋರ್ಸ್‌ಗಳ ಪ್ರವೇಶ ಪ್ರಕ್ರಿಯೆಗೆ ಅಧಿಕೃತ ಚಾಲನೆ ದೊರೆತಿದೆ.

ಬೆಂಗಳೂರು ವಿಶ್ವವಿದ್ಯಾಲಯದ 100 ಎಕರೆ ಭೂಮಿಯ ಮೇಲೆ ಕೇಂದ್ರ ಸರ್ಕಾರದ ಕಣ್ಣು!?

ಬೆಂಗಳೂರು: ರಾಜ್ಯದ ಪ್ರತಿಷ್ಠಿತ ಸರ್ಕಾರಿ ವಿಶ್ವವಿದ್ಯಾಲಯಗಳಲ್ಲಿ ಒಂದಾದ ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದ 100 ಎಕರೆ ಭೂಮಿಯನ್ನು ಒಲಿಂಪಿಕ್ಸ್ ತರಬೇತಿ ಕೇಂದ್ರ ಸ್ಥಾಪನೆಗಾಗಿ ನೀಡುವಂತೆ ಕೇಂದ್ರ ಸರ್ಕಾರ ಮನವಿ ಮಾಡಿರುವುದು ಹೊಸ ವಿವಾದಕ್ಕೆ ಕಾರಣವಾಗಿದೆ. ಈ ಪ್ರಸ್ತಾವನೆಗೆ ವಿಶ್ವವಿದ್ಯಾಲಯ ಆಡಳಿತ ಹಾಗೂ ವಿದ್ಯಾರ್ಥಿ ವಲಯದಿಂದ ತೀವ್ರ ವಿರೋಧ ವ್ಯಕ್ತವಾಗಿದೆ.

ಸುಮಾರು 1,200 ಎಕರೆ ಪ್ರದೇಶದಲ್ಲಿ ಸ್ಥಾಪನೆಯಾಗಿದ್ದ ಬೆಂಗಳೂರು ವಿಶ್ವವಿದ್ಯಾಲಯವು ಕಳೆದ ಹಲವು ದಶಕಗಳಲ್ಲಿ ವಿವಿಧ ಕೇಂದ್ರ ಮತ್ತು ರಾಜ್ಯ ಸರ್ಕಾರಿ ಸಂಸ್ಥೆಗಳಿಗೆ ಭೂಮಿ ಹಸ್ತಾಂತರಿಸಿರುವ ಪರಿಣಾಮ ತನ್ನ ವ್ಯಾಪ್ತಿಯನ್ನು ಕಳೆದುಕೊಂಡಿದೆ. ಈಗಾಗಲೇ 300ಕ್ಕೂ ಹೆಚ್ಚು ಎಕರೆ ಜಾಗವನ್ನು ವಿವಿಧ ಸಂಸ್ಥೆಗಳಿಗೆ ನೀಡಲಾಗಿದ್ದು, ಕ್ಯಾಂಪಸ್ ವಿಸ್ತೀರ್ಣ ಗಣನೀಯವಾಗಿ ಕಡಿಮೆಯಾಗಿದೆ.

ಇದೀಗ ಜ್ಞಾನಭಾರತಿ ಆವರಣದಲ್ಲಿರುವ ಭಾರತೀಯ ಕ್ರೀಡಾ ಪ್ರಾಧಿಕಾರ (SAI) ಕೇಂದ್ರಕ್ಕೆ ಹೊಂದಿಕೊಂಡಿರುವ 100 ಎಕರೆ ಭೂಮಿಯನ್ನು ಒಲಿಂಪಿಕ್ಸ್ ತರಬೇತಿ ಕೇಂದ್ರ ನಿರ್ಮಾಣಕ್ಕಾಗಿ ನೀಡುವಂತೆ ಕೇಂದ್ರ ಸರ್ಕಾರ ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ಮೂಲಕ ಬೇಡಿಕೆ ಸಲ್ಲಿಸಿದೆ ಎಂದು ತಿಳಿದುಬಂದಿದೆ.

ಆದರೆ, ಈ ಪ್ರಸ್ತಾವನೆಗೆ ವಿಶ್ವವಿದ್ಯಾಲಯ ಆಡಳಿತ ವಿರೋಧ ವ್ಯಕ್ತಪಡಿಸಿದ್ದು, ಈಗಾಗಲೇ ಕ್ಯಾಂಪಸ್ ವಿಸ್ತೀರ್ಣ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಮತ್ತಷ್ಟು ಭೂಮಿ ಹಸ್ತಾಂತರಿಸುವುದು ಶೈಕ್ಷಣಿಕ ಚಟುವಟಿಕೆಗಳಿಗೆ ಹಾನಿಕಾರಕವಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ವಿದ್ಯಾರ್ಥಿ ಸಮುದಾಯವೂ ಈ ನಿಲುವಿಗೆ ಬೆಂಬಲ ಸೂಚಿಸಿದ್ದು, ಜ್ಞಾನಭಾರತಿ ಆವರಣದಲ್ಲಿರುವ ಭೂಮಿಯನ್ನು ವಿಶ್ವವಿದ್ಯಾಲಯದ ಶೈಕ್ಷಣಿಕ, ಸಂಶೋಧನಾ ಮತ್ತು ವಿದ್ಯಾರ್ಥಿ ಕಲ್ಯಾಣ ಚಟುವಟಿಕೆಗಳಿಗೆ ಮಾತ್ರ ಬಳಸಬೇಕು ಎಂದು ಆಗ್ರಹಿಸಿದೆ.

ಕ್ಯಾಂಪಸ್‌ನಲ್ಲಿನ ಹಸಿರು ವಾತಾವರಣ, ಸಂಶೋಧನಾ ಮೂಲಸೌಕರ್ಯ ಹಾಗೂ ಭವಿಷ್ಯದ ವಿಸ್ತರಣಾ ಯೋಜನೆಗಳ ದೃಷ್ಟಿಯಿಂದ ಜಾಗವನ್ನು ಉಳಿಸಿಕೊಳ್ಳುವುದು ಅಗತ್ಯ ಎಂದು ವಿದ್ಯಾರ್ಥಿಗಳು ಮತ್ತು ಕೆಲ ಶಿಕ್ಷಣ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

error: Content is protected !!