Home Blog

ಮಧ್ಯಪ್ರಾಚ್ಯ ಸಂಘರ್ಷ ಪರಿಣಾಮ: ಭಾರತದಲ್ಲಿ LPG ಬಳಕೆ 13% ಕುಸಿತ

0

ನವದೆಹಲಿ: ಮಧ್ಯಪ್ರಾಚ್ಯದಲ್ಲಿ ಮುಂದುವರಿದಿರುವ ಸಂಘರ್ಷದ ಪರಿಣಾಮವಾಗಿ ಭಾರತದಲ್ಲಿ ಎಲ್‌ಪಿಜಿ (LPG) ಬಳಕೆ ಗಣನೀಯವಾಗಿ ಕುಸಿತ ಕಂಡಿದೆ. ಪೂರೈಕೆಯಲ್ಲಿ ಉಂಟಾದ ಅಡಚಣೆಗಳ ಹಿನ್ನೆಲೆಯಲ್ಲಿ ಮಾರ್ಚ್ ತಿಂಗಳಲ್ಲಿ ಬಳಕೆ ಶೇ.13ರಷ್ಟು ಇಳಿಕೆಯಾಗಿದೆ.

ಪೆಟ್ರೋಲಿಯಂ ಪ್ಲಾನಿಂಗ್ ಅಂಡ್ ಅನಾಲಿಸಿಸ್ ಸೆಲ್ (PPAC) ದತ್ತಾಂಶದ ಪ್ರಕಾರ, ಕಳೆದ ವರ್ಷದ ಇದೇ ಅವಧಿಯಲ್ಲಿ 2.729 ದಶಲಕ್ಷ ಟನ್ ಎಲ್‌ಪಿಜಿ ಬಳಕೆಯಾಗಿದ್ದರೆ, ಈ ವರ್ಷದ ಮಾರ್ಚ್‌ನಲ್ಲಿ ಅದು 2.379 ದಶಲಕ್ಷ ಟನ್‌ಗೆ ಇಳಿಕೆಯಾಗಿದೆ.

ಭಾರತ ತನ್ನ ಒಟ್ಟು ಎಲ್‌ಪಿಜಿ ಬೇಡಿಕೆಯ ಸುಮಾರು ಶೇ.60 ರಷ್ಟು ಆಮದು ಮಾಡಿಕೊಳ್ಳುತ್ತದೆ. ಪ್ರಮುಖವಾಗಿ ಹಾರ್ಮುಜ್ ಜಲಸಂಧಿ ಮೂಲಕ ಸಾಗುವ ಸರಕು ಸಾಗಣೆಗೆ ಪಶ್ಚಿಮ ಏಷ್ಯಾ ಸಂಘರ್ಷದಿಂದ ತೊಂದರೆ ಉಂಟಾಗಿದೆ. ಇದರಿಂದ ಹಡಗುಗಳ ಸಂಚಾರ ವ್ಯತ್ಯಯಗೊಂಡಿದ್ದು, ಪೂರೈಕೆಯಲ್ಲಿ ಅನಿಶ್ಚಿತತೆ ಹೆಚ್ಚಾಗಿದೆ.

ಈ ಅಭಾವದ ಪರಿಣಾಮ ಗೃಹೇತರ ಬಳಕೆದಾರರ ಮೇಲೆ ಹೆಚ್ಚು ಕಂಡುಬಂದಿದೆ. ವಾಣಿಜ್ಯ ಬಳಕೆದಾರರಿಗೆ ಎಲ್‌ಪಿಜಿ ಮಾರಾಟ ಶೇ.48ರಷ್ಟು ಕುಸಿತಗೊಂಡಿದ್ದು, ಬೃಹತ್ ಬಳಕೆದಾರರ ಬಳಕೆ ಶೇ.75.5ರಷ್ಟು ಇಳಿಕೆಯಾಗಿದೆ.

ಪಂಚಮಸಾಲಿ ಪೀಠದಲ್ಲಿ ಹಣ ದುರುಪಯೋಗ ಆರೋಪ: ವಚನಾನಂದ ಸ್ವಾಮೀಜಿ ವಿರುದ್ಧ ದೂರು

ದಾವಣಗೆರೆ: ಪಂಚಮಸಾಲಿ ಗುರುಪೀಠದ ಒಳಜಗಳ ಮತ್ತಷ್ಟು ತೀವ್ರಗೊಂಡಿದ್ದು, ವಚನಾನಂದ ಸ್ವಾಮೀಜಿ ವಿರುದ್ಧ ಗಂಭೀರ ಆರೋಪಗಳು ಕೇಳಿಬಂದಿವೆ. ಪಂಚಮಸಾಲಿ ಮಠದ ಟ್ರಸ್ಟ್ ಪ್ರಧಾನ ಧರ್ಮದರ್ಶಿ ಬಿ.ಸಿ.ಉಮಾಪತಿ ಅವರು ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಗೆ ಲಿಖಿತ ದೂರು ಸಲ್ಲಿಸಿದ್ದಾರೆ.

ಹರಜಾತ್ರೆ ಸಂದರ್ಭದಲ್ಲಿ ಭಕ್ತರಿಂದ ಲಕ್ಷಾಂತರ ರೂಪಾಯಿ ಸಂಗ್ರಹಿಸಿ ದುರುಪಯೋಗ ಮಾಡಿದ್ದಾರೆ ಹಾಗೂ ‘ಶ್ವಾಸ’ ಕೇಂದ್ರದ ಸಂಪರ್ಕದಲ್ಲೇ ಮುಂದುವರಿದಿದ್ದಾರೆ ಎಂಬ ಆರೋಪಗಳನ್ನು ಮಾಡಿದ್ದಾರೆ.

ದೂರಿನ ಪ್ರಕಾರ, 2018ರ ಏಪ್ರಿಲ್‌ನಲ್ಲಿ ಗುರುಪೀಠಕ್ಕೆ ನೇಮಕವಾದಾಗ ವಚನಾನಂದ ಸ್ವಾಮೀಜಿಗೆ ಬೆಂಗಳೂರಿನ ‘ಶ್ವಾಸ’ ಸಂಸ್ಥೆಯಿಂದ ಸಂಪೂರ್ಣವಾಗಿ ದೂರವಾಗಬೇಕೆಂದು ಷರತ್ತು ವಿಧಿಸಲಾಗಿತ್ತು. ಆದರೆ ಅವರು ಆ ಸಂಸ್ಥೆಯೊಂದಿಗೆ ಸಂಬಂಧವನ್ನು ಕಡಿತಗೊಳಿಸದೇ ಹೆಚ್ಚಿನ ಸಮಯವನ್ನು ಅಲ್ಲಿ ಕಳೆದಿದ್ದಾರೆ ಎನ್ನಲಾಗಿದೆ.

ಇದರಿಂದ ಮಠದ ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಗಳಲ್ಲಿ ಆಸಕ್ತಿ ತೋರಿಸದಿದ್ದರೆಂದು ಭಕ್ತರಲ್ಲಿ ಅಸಮಾಧಾನ ಉಂಟಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಇದೇ ವೇಳೆ, 2026ರ ಹರಜಾತ್ರೆಯಲ್ಲಿ ಭಕ್ತರಿಂದ ಲಕ್ಷಾಂತರ ರೂಪಾಯಿ ಹಣವನ್ನು ರಸೀದಿ ನೀಡದೆ ಸಂಗ್ರಹಿಸಿ,

ಅದನ್ನು ತಮ್ಮ ವೈಯಕ್ತಿಕ ಖಾತೆಗೆ ವರ್ಗಾಯಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ನಂತರ ಹಣದ ಬಗ್ಗೆ ಪ್ರಶ್ನಿಸಿದ ಭಕ್ತರಿಗೆ ಸ್ಪಷ್ಟ ಉತ್ತರ ನೀಡದೆ ಅವಾಚ್ಯವಾಗಿ ವರ್ತಿಸಿದ್ದಾರೆ ಎನ್ನಲಾಗಿದೆ. ಇದಲ್ಲದೆ, ಸಂಗ್ರಹಿಸಿದ ಹಣವನ್ನು ಟ್ರಸ್ಟ್‌ಗೆ ಸಲ್ಲಿಸದೆ,

ಬೆಂಬಲಿಗರೊಂದಿಗೆ ಮಠದ ಆವರಣದಲ್ಲಿ ಗೊಂದಲ ಸೃಷ್ಟಿಸಿ ಭಕ್ತರಲ್ಲಿ ಆತಂಕ ಉಂಟುಮಾಡಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ. ಈ ಎಲ್ಲ ಕಾರಣಗಳಿಂದ ಸುದೀರ್ಘ ಚರ್ಚೆಯ ಬಳಿಕ ವಚನಾನಂದ ಸ್ವಾಮೀಜಿಯನ್ನು ಜಗದ್ಗುರು ಸ್ಥಾನದಿಂದ ಪದಚ್ಯುತಿಗೊಳಿಸಲಾಗಿದೆ ಎಂದು ಟ್ರಸ್ಟ್ ಸ್ಪಷ್ಟಪಡಿಸಿದೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ರಾಯ್ಪುರ್: ಮರಕ್ಕೆ ಡಿಕ್ಕಿಯಾಗಿ ಖಾಸಗಿ ವಿಮಾನ ಪತನ!

0

ರಾಯ್ಪುರ್: ಛತ್ತೀಸ್ಗಢದ ಜಶ್ಪುರ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಖಾಸಗಿ ವಿಮಾನವೊಂದು ಮರಕ್ಕೆ ಡಿಕ್ಕಿಯಾಗಿ ಪತನಗೊಂಡಿರುವ ಘಟನೆ ವರದಿಯಾಗಿದೆ.

ಈ ಅವಘಡ ಜಶ್ಪುರ ಜಿಲ್ಲೆ ವ್ಯಾಪ್ತಿಯ ನಾರಾಯಣಪುರ ಪೊಲೀಸ್ ಠಾಣೆ ಪ್ರದೇಶದ ಖುರಾಸಗಢ ಗ್ರಾಮದ ಸಮೀಪದ ರತನ್ಪಹ್ಲಿ ಅರಣ್ಯದಲ್ಲಿ ನಡೆದಿದೆ.

ಪ್ರಾಥಮಿಕ ಮಾಹಿತಿಯ ಪ್ರಕಾರ, ಸಣ್ಣ ಸಿಂಗಲ್-ಎಂಜಿನ್ ಪ್ರೊಪೆಲ್ಲರ್ ವಿಮಾನವು ನೆಲದಿಂದ ಸುಮಾರು 30 ಅಡಿ ಎತ್ತರದಲ್ಲಿ ಹಾರುತ್ತಿರುವಾಗ ನಿಯಂತ್ರಣ ಕಳೆದುಕೊಂಡು ಮರಕ್ಕೆ ಡಿಕ್ಕಿಯಾಗಿದೆ. ಅಪಘಾತಕ್ಕೂ ಕೆಲವೇ ಕ್ಷಣಗಳ ಮುನ್ನ ವಿಮಾನ ಅತೀ ಕಡಿಮೆ ಎತ್ತರದಲ್ಲಿ ಹಾರುತ್ತಿದ್ದ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿವೆ.

ವಿಮಾನ ಪತನಗೊಂಡ ಸ್ಥಳದಲ್ಲಿ ದಟ್ಟ ಹೊಗೆ ಆವರಿಸಿರುವುದು ಕಂಡುಬಂದಿದ್ದು, ಘಟನೆ ಸ್ಥಳಕ್ಕೆ ರಕ್ಷಣಾ ತಂಡಗಳು ಧಾವಿಸಿ ಪರಿಶೀಲನೆ ನಡೆಸುತ್ತಿವೆ. ಆದರೆ, ಅಪಘಾತದ ಕುರಿತು ಇನ್ನೂ ಅಧಿಕೃತ ದೃಢೀಕರಣ ಲಭ್ಯವಾಗಿಲ್ಲ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಿಷ್ಣೋಯ್ ಗ್ಯಾಂಗ್ ಹೆಸರಿನಲ್ಲಿ ಜೀವ ಬೆದರಿಕೆ: ಸಾರಿಗೆ ಅಧಿಕಾರಿಗೆ ಕರೆ!

0

ಬೆಂಗಳೂರು: ಬಿಷ್ಣೋಯ್ ಗ್ಯಾಂಗ್ ಹೆಸರಿನಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿ ಮಹಾರಾಷ್ಟ್ರದ ಪ್ರಾದೇಶಿಕ ಸಾರಿಗೆ ಅಧಿಕಾರಿಗೆ ಜೀವ ಬೆದರಿಕೆ ಹಾಕಿರುವ ಘಟನೆ ನಡೆದಿದೆ. ಈ ಸಂಬಂಧ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಸಾದ್ ಶಿವದಾಸ್ ನಾಲ್ವಡೆ ನೀಡಿದ ದೂರಿನ ಮೇರೆಗೆ ಅಪರಿಚಿತನ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಇದಕ್ಕೂ ಮುನ್ನ ಮಹಾರಾಷ್ಟ್ರದ ಕಾಶಿಗಾಂವ್ ಪೊಲೀಸ್ ಠಾಣೆಯಲ್ಲಿ ಶೂನ್ಯ ಎಫ್‌ಐಆರ್ ದಾಖಲಾಗಿದ್ದು, ನಂತರ ಘಟನೆ ನಡೆದ ಸ್ಥಳದ ಆಧಾರದಲ್ಲಿ ಪ್ರಕರಣವನ್ನು ಬೆಂಗಳೂರಿನ ಸೋಲದೇವನಹಳ್ಳಿ ಠಾಣೆಗೆ ವರ್ಗಾವಣೆ ಮಾಡಲಾಗಿದೆ. ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಕಳೆದ 10 ವರ್ಷಗಳಿಂದ ನಕಲಿ ಪರವಾನಗಿಗಳೊಂದಿಗೆ ಕಾರ್ಯನಿರ್ವಹಿಸುತ್ತಿರುವ ಆಟೋ ಚಾಲಕರ ವಿರುದ್ಧ ಕ್ರಮ ಕೈಗೊಳ್ಳಲು ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ಶಿವದಾಸ್ ಕಾನೂನು ಹೋರಾಟ ಆರಂಭಿಸಿದ್ದರು.

ಏಪ್ರಿಲ್ 12ರಂದು ಆಲ್ ಇಂಡಿಯಾ ಫೆಡರೇಷನ್ ಆಫ್ ಮೋಟಾರ್ ವೆಹಿಕಲ್ ಡಿಪಾರ್ಟ್‌ಮೆಂಟ್ ಟೆಕ್ನಿಕಲ್ ಎಕ್ಸಿಕ್ಯೂಟಿವ್ ಆಫೀಸರ್ ಅಸೋಸಿಯೇಷನ್ ಆಯೋಜಿಸಿದ್ದ ಕ್ರಿಕೆಟ್ ಪಂದ್ಯಾವಳಿ ವೀಕ್ಷಿಸಲು ಬೆಂಗಳೂರಿಗೆ ಬಂದಿದ್ದರು.

ಈ ವೇಳೆ ಕರೆ ಮಾಡಿದ ಅಪರಿಚಿತನು “ನಾನು ಬಿಷ್ಣೋಯ್ ಗ್ಯಾಂಗ್‌ನಿಂದ ಮಾತನಾಡುತ್ತಿದ್ದೇನೆ. ನೀವು ಪರವಾನಗಿ ತಪಾಸಣೆ ನಡೆಸಿ ಬಡ ರಿಕ್ಷಾ ಚಾಲಕರಿಗೆ ತೊಂದರೆ ಕೊಡುತ್ತಿದ್ದೀರಿ. ನಿಮ್ಮ ಬಳಿ ಇಬ್ಬರು ಏಜೆಂಟ್‌ಗಳಿದ್ದು, ಅವರು ತಪ್ಪು ಮಾಡಿದ ಫೈಲ್‌ಗಳನ್ನು ಮುಚ್ಚಿಡುತ್ತಿದ್ದೀರಿ” ಎಂದು ಆರೋಪಿಸಿದ್ದಾನೆ.

ಇದಕ್ಕೆ ಪ್ರತಿಕ್ರಿಯಿಸಿದ ಶಿವದಾಸ್, “ಕಚೇರಿಗೆ ಬಂದು ಯಾವ ಫೈಲ್ ಎಂದು ತೋರಿಸಿದರೆ ನಿಯಮಾನುಸಾರ ಕ್ರಮ ಕೈಗೊಳ್ಳುತ್ತೇವೆ” ಎಂದಿದ್ದಾರೆ. ಇದಕ್ಕೆ ಪ್ರತಿಯಾಗಿ ಆರೋಪಿ, “ನಾನು ಯಾಕೆ ಬರಲಿ? ನಿಮ್ಮ ಭದ್ರತೆ ಹೆಚ್ಚಿಸಿಕೊಳ್ಳಿ. ನಿಮ್ಮ ವಿಷಯ ದೆಹಲಿವರೆಗೂ ತಲುಪಿದೆ. ನಿಮ್ಮ ನಿರ್ಧಾರ ಬದಲಾಯಿಸಲೇಬೇಕು” ಎಂದು ಸುಮಾರು ಮೂರು ನಿಮಿಷಗಳ ಕಾಲ ಫೋನ್‌ನಲ್ಲಿ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಶಿರಸಿಯಲ್ಲಿ ವೈದ್ಯನ ಹತ್ಯೆ ಪ್ರಕರಣ ಬಯಲು: ವಿಶ್ವಾಸಕ್ಕೆ ದ್ರೋಹ ಮಾಡಿ ಸ್ನೇಹಿತನಿಂದಲೇ ಕೊಲೆ

ಉತ್ತರ ಕನ್ನಡ: ಜಿಲ್ಲೆಯ ಕಾರವಾರದ ಶಿರಸಿ ನಗರದಲ್ಲಿ ನಡೆದಿದ್ದ ವೈದ್ಯನ ಹತ್ಯೆ ಪ್ರಕರಣಕ್ಕೆ ಶಾಕಿಂಗ್‌  ಟ್ವಿಸ್ಟ್ ಸಿಕ್ಕಿದೆ. ಮದುವೆಗೆ ಸಿದ್ಧವಾಗಿದ್ದ ಡಾ. ರಮೇಶ್ ಕಲಗುಟಕರ (51) ಅವರನ್ನು ಅವರದೇ ಸ್ನೇಹಿತ ಕೊಲೆ ಮಾಡಿರುವುದು ಪೊಲೀಸ್ ತನಿಖೆಯಲ್ಲಿ ಬಹಿರಂಗವಾಗಿದೆ.

ಈ ಪ್ರಕರಣದಲ್ಲಿ ಶಿವಮೊಗ್ಗ ಮೂಲದ ಮಂಜುನಾಥ್ ಪಾಂಡುರಂಗ ನಾಯ್ಕ (68) ಎಂಬ ಆರೋಪಿಯನ್ನು ಮಾರುಕಟ್ಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ, ಚಿನ್ನದ ಆಸೆಯೇ ಈ ಭೀಕರ ಹತ್ಯೆಗೆ ಕಾರಣವಾಗಿದೆ ಎಂದು ತಿಳಿದುಬಂದಿದೆ.

ಆರೋಪಿ ಮಂಜುನಾಥ್ ಹಲವು ಬಾರಿ ಚಿಕಿತ್ಸೆಗಾಗಿ ವೈದ್ಯರ ಬಳಿ ಬಂದಿದ್ದರಿಂದ ಇಬ್ಬರ ನಡುವೆ ಸ್ನೇಹ ಬೆಳೆದಿತ್ತು. ಈ ವಿಶ್ವಾಸದನ್ನೇ ದುರುಪಯೋಗಪಡಿಸಿಕೊಂಡ ಆರೋಪಿ, ಮದುವೆ ಹಿನ್ನೆಲೆ ಬ್ಯಾಂಕ್‌ನಿಂದ ತಂದಿದ್ದ ಬಂಗಾರದ ಒಡವೆಗಳನ್ನು ಗಮನಿಸಿ ದುರಾಲೋಚನೆ ನಡೆಸಿದ್ದಾನೆ.

ಘಟನೆ ನಡೆದ ರಾತ್ರಿ ವೈದ್ಯರು ಮಲಗಿದ್ದಾಗ ಆಯುಧದಿಂದ ಹೊಡೆದು ಹತ್ಯೆ ಮಾಡಿ, ಮನೆಯ ಬೀಗ ಹಾಕಿ ಚಿನ್ನದೊಂದಿಗೆ ಪರಾರಿಯಾಗಿದ್ದಾನೆ. ಆದರೆ ಪೊಲೀಸರು ತ್ವರಿತ ಕಾರ್ಯಾಚರಣೆ ನಡೆಸಿ ಕೇವಲ 24 ಗಂಟೆಗಳಲ್ಲೇ ಆರೋಪಿಯನ್ನು ಬಂಧಿಸಿ, ಕದ್ದ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.

ಜಪಾನ್​ ನಲ್ಲಿ 7.4 ತೀವ್ರತೆಯ ಭೂಕಂಪ: ಅಧಿಕಾರಿಗಳಿಂದ ಸುನಾಮಿಯ ಎಚ್ಚರಿಕೆ

0

ಟೋಕಿಯೊ: ಉತ್ತರ ಜಪಾನ್‌ನಲ್ಲಿ ಸೋಮವಾರ 7.4 ತೀವ್ರತೆಯ ಭೂಕಂಪ ಸಂಭವಿಸಿದ್ದು, ಇದರ ಹಿನ್ನೆಲೆ 3 ಮೀಟರ್ ಎತ್ತರದ ಸುನಾಮಿ ಅಲೆಗಳ ಬಗ್ಗೆ ಎಚ್ಚರಿಕೆ ನೀಡಲಾಗಿದೆ ಎಂದು ಜಪಾನ್ ಹವಾಮಾನ ಸಂಸ್ಥೆ ತಿಳಿಸಿದೆ.

ಭೂಕಂಪವು ಇವಾಟೆ ಪ್ರಾಂತ್ಯ ಕರಾವಳಿಯ ಪೆಸಿಫಿಕ್ ಸಮುದ್ರ ಭಾಗದಲ್ಲಿ ಸಂಜೆ 4:53ರ ಸುಮಾರಿಗೆ ಸಂಭವಿಸಿದೆ. ಇದರ ಪ್ರಭಾವ ನೂರಾರು ಕಿಲೋಮೀಟರ್ ದೂರದಲ್ಲಿರುವ ಟೋಕಿಯೊ ವರೆಗೂ ಕಂಡುಬಂದಿದ್ದು, ಎತ್ತರದ ಕಟ್ಟಡಗಳು ಕಂಪಿಸಿದವು.

ಆರಂಭಿಕ ಸುನಾಮಿ ಅಲೆಗಳು ಉತ್ತರ ಕರಾವಳಿಯನ್ನು ತಕ್ಷಣವೇ ಅಪ್ಪಳಿಸುವ ಸಾಧ್ಯತೆ ಇರುವುದರಿಂದ, ಜನರು ತಕ್ಷಣ ಸುರಕ್ಷಿತ ಪ್ರದೇಶಗಳಿಗೆ ತೆರಳುವಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಅಲೆಗಳಿಂದ ಹಾನಿ ಸಂಭವಿಸುವ ಭೀತಿ ವ್ಯಕ್ತವಾಗಿದೆ.

ಜಪಾನ್ ವಿಶ್ವದ ಭೂಕಂಪ ಪೀಡಿತ ರಾಷ್ಟ್ರಗಳಲ್ಲಿ ಒಂದಾಗಿದ್ದು, ರಿಂಗ್ ಆಫ್ ಫೈರ್ ಪ್ರದೇಶದ ಪಶ್ಚಿಮ ಅಂಚಿನಲ್ಲಿ ನೆಲೆಗೊಂಡಿದೆ. ನಾಲ್ಕು ಪ್ರಮುಖ ಟೆಕ್ಟೋನಿಕ್ ಪ್ಲೇಟ್‌ಗಳ ಸಂಗಮ ಭಾಗದಲ್ಲಿರುವುದರಿಂದ ಇಲ್ಲಿ ಭೂಕಂಪಗಳು ಸಾಮಾನ್ಯವಾಗಿದೆ.

ಸುಮಾರು 12.5 ಕೋಟಿ ಜನಸಂಖ್ಯೆ ಹೊಂದಿರುವ ಜಪಾನ್‌ನಲ್ಲಿ ವರ್ಷಕ್ಕೆ ಸರಾಸರಿ 1,500 ಭೂಕಂಪಗಳು ದಾಖಲಾಗುತ್ತವೆ. ಜಗತ್ತಿನ ಒಟ್ಟು ಭೂಕಂಪಗಳಲ್ಲಿ ಸುಮಾರು 18% ಇಲ್ಲಿ ಸಂಭವಿಸುತ್ತವೆ.

2011ರಲ್ಲಿ ಜಪಾನ್‌ನಲ್ಲಿ ಸಂಭವಿಸಿದ್ದ 9.0 ತೀವ್ರತೆಯ ಭೂಕಂಪ ಮತ್ತು ಅದರ ಪರಿಣಾಮದ ಸುನಾಮಿ ಸುಮಾರು 18,500 ಜನರ ಜೀವ ಹಾನಿಗೆ ಕಾರಣವಾಗಿತ್ತು.

ಬಿಟ್‌ಕಾಯಿನ್ ಹಗರಣ ಕೇಸ್: ಶಾಸಕ ನಲಪಾಡ್ ಮನೆ ಸೇರಿ 17 ಕಡೆ ಇಡಿ ದಾಳಿ

ಬೆಂಗಳೂರುದಲ್ಲಿ ಭಾರಿ ಸದ್ದು ಮಾಡುತ್ತಿರುವ ಬಿಟ್‌ಕಾಯಿನ್ ಹಗರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕ ಮೊಹಮದ್‌ ಹ್ಯಾರೀಸ್‌ ನಲಪಾಡ್‌ ಮನೆ ಸೇರಿದಂತೆ 17 ಸ್ಥಳಗಳಲ್ಲಿ ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ದಾಳಿ ಹಿನ್ನಲೆಯಲ್ಲಿ 10 ಲಕ್ಷ ರೂಪಾಯಿ ಅನುಮಾನಾಸ್ಪದ ಹಣ ವರ್ಗಾವಣೆಯ ಸುಳಿವು ಪ್ರಮುಖ ಕಾರಣವೆಂದು ತಿಳಿದುಬಂದಿದೆ.

ಹ್ಯಾಕರ್ ಶ್ರೀಕಿ ಅಲಿಯಾಸ್ ಶ್ರೀಕೃಷ್ಣನೊಂದಿಗೆ ಆರ್ಥಿಕ ಸಂಪರ್ಕ ಹೊಂದಿದ್ದ ಶಂಕೆಯ ಮೇರೆಗೆ ಈ ದಾಳಿ ನಡೆದಿದೆ. 2020ರಲ್ಲಿ ಶ್ರೀಕಿ ವಿರುದ್ಧ ದಾಖಲಾಗಿದ್ದ ಪ್ರಕರಣದ ತನಿಖೆಯಲ್ಲಿ, ನಲಪಾಡ್ ಅವರ ಹೆಸರೂ ಹೊರಬಂದಿತ್ತು. ನಂತರ ಸರ್ಕಾರ ವಿಶೇಷ ತನಿಖಾ ತಂಡ (SIT) ರಚಿಸಿ ಪ್ರಕರಣವನ್ನು ಗಂಭೀರವಾಗಿ ಪರಿಶೀಲಿಸಿತ್ತು.

ತನಿಖೆಯ ವೇಳೆ ಬಿಟ್‌ಕಾಯಿನ್ ಹೂಡಿಕೆ ಹೆಸರಿನಲ್ಲಿ ವಂಚನೆ ನಡೆದಿರುವುದು ಬಹಿರಂಗವಾಗಿದ್ದು, 28 ಲಕ್ಷ ಹೂಡಿಕೆಗೆ 45 ಲಕ್ಷ ಲಾಭ ನೀಡುವುದಾಗಿ ಹೇಳಿ ಮಹಿಳೆಯಿಂದ ಹಣ ಪಡೆದು ಮೋಸ ಮಾಡಿರುವ ಆರೋಪವೂ ಎದುರಾಗಿದೆ. ಇದೇ ಪ್ರಕರಣದಲ್ಲಿ ಶ್ರೀಕಿ ಹಾಗೂ ಇತರರ ವಿರುದ್ಧ ದೂರು ದಾಖಲಾಗಿತ್ತು.

ಹೆಚ್ಚಿನ ತನಿಖೆಯಲ್ಲಿ ಬಿಟ್‌ಕಾಯಿನ್ ಹ್ಯಾಕಿಂಗ್ ಜಾಲವೂ ಪತ್ತೆಯಾಗಿದ್ದು, ಶ್ರೀಕಿ ಮೂಲಕ ಮುಂಬೈ ಮೂಲದ ವ್ಯಕ್ತಿಯಿಂದ 10 ಲಕ್ಷ ರೂಪಾಯಿ ನಲಪಾಡ್ ಖಾತೆಗೆ ವರ್ಗಾವಣೆಯಾಗಿದೆ ಎಂಬ ಅಂಶ ಬೆಳಕಿಗೆ ಬಂದಿದೆ. ಈ ಹಣವನ್ನು ವಾಪಸ್ ನೀಡುವುದಾಗಿ ಹೇಳಿದ್ದರೂ ಇನ್ನೂ ಹಿಂತಿರುಗಿಸದಿರುವುದು ತನಿಖೆಗೆ ಹೊಸ ತಿರುವು ನೀಡಿದೆ.

ಮಹಿಳಾ ಮೀಸಲು ಮಸೂದೆ ಸೋಲು: ವಿಪಕ್ಷಗಳ ವಿರುದ್ಧ ರಾಘವೇಂದ್ರ ಕಿಡಿ

ಶಿವಮೊಗ್ಗ: ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ವಿರೋಧ ಪಕ್ಷಗಳು ಉದ್ದೇಶಪೂರ್ವಕವಾಗಿ ತಡೆದು ಸೋಲಿಸಿದವು ಎಂದು ಸಂಸದ ಬಿ.ವೈ. ರಾಘವೇಂದ್ರ ಆರೋಪಿಸಿದ್ದಾರೆ.

ಶಿವಮೊಗ್ಗದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಸವಣ್ಣನವರ ಸಿದ್ಧಾಂತಗಳು ಹಾಗೂ ಸ್ತ್ರೀ ಸ್ವಾತಂತ್ರ್ಯದ ಮೌಲ್ಯಗಳಿಗೆ ಧಕ್ಕೆ ತರುವ ಕೆಲಸ ಕಾಂಗ್ರೆಸ್ ನೇತೃತ್ವದಲ್ಲಿ ನಡೆದಿದೆ. ಇದಕ್ಕೆ ಟಿಎಂಸಿ ಹಾಗೂ ಡಿಎಂಕೆ ಪಕ್ಷಗಳು ಸಹ ಕೈಜೋಡಿಸಿದ್ದವೆಂದು ಟೀಕಿಸಿದರು.

ಯಾವುದೇ ವಿಧೇಯಕವನ್ನು ಜಾರಿಗೊಳಿಸಲು ಸಂವಿಧಾನದ ಪ್ರಕಾರ ಎರಡು-ಮೂರರಷ್ಟು ಬಹುಮತ ಅಗತ್ಯವಿದೆ. ಆದರೆ, ಈ ಮಸೂದೆ ಸೇರಿ ಮೂರು ವಿಧೇಯಕಗಳ ಜಾರಿಗೆ ವಿರೋಧ ಪಕ್ಷಗಳು ಅಡ್ಡಿಪಡಿಸಿವೆ ಎಂದು ಹೇಳಿದರು.

“ಮಹಿಳಾ ಶಕ್ತಿಗೆ ಲೋಕಸಭೆ ಮತ್ತು ವಿಧಾನಸಭೆಯಲ್ಲಿ ಸಮರ್ಪಕ ಪ್ರತಿನಿಧಿತ್ವ ಸಿಗಬೇಕಿತ್ತು. ಆದರೆ, ವಿಪಕ್ಷಗಳು ತಪ್ಪು ಮಾಹಿತಿಯನ್ನು ಹಬ್ಬಿಸಿ ಮಸೂದೆ ಜಾರಿಯಾಗದಂತೆ ತಡೆಯುವ ಕೆಲಸ ಮಾಡಿವೆ” ಎಂದು ಅವರು ಆರೋಪಿಸಿದರು.

ಇದು ದುರುದ್ದೇಶದಿಂದ ಐತಿಹಾಸಿಕ ಮಸೂದೆಗೆ ತಡೆ ನೀಡಿದಂತಾಗಿದೆ. ದೇಶದ ತಾಯಂದಿರು ಮತ್ತು ಸಹೋದರಿಯರ ಮುಂದೆ ಪ್ರಧಾನಮಂತ್ರಿ ಕ್ಷಮೆಯಾಚಿಸಿದ್ದಾರೆ. ಮಹಿಳೆಯರು ಎಲ್ಲವನ್ನೂ ಮರೆತರೂ, ಅವಮಾನವನ್ನು ಮರೆಯುವುದಿಲ್ಲ ಎಂದು ಹೇಳಿದರು.

ಇದಲ್ಲದೆ, ಮಲೆನಾಡಿನ ಭೌಗೋಳಿಕ ವಿಸ್ತಾರ ಹೆಚ್ಚಿರುವುದಾದರೂ ಜನಸಂಖ್ಯೆ ಆಧಾರದಲ್ಲಿ ವಿಧಾನಸಭಾ ಕ್ಷೇತ್ರಗಳ ಸಂಖ್ಯೆ ಕಡಿಮೆಯಾಗಿದೆ. ಆದ್ದರಿಂದ ಪಶ್ಚಿಮ ಘಟ್ಟ ಪ್ರದೇಶಕ್ಕೆ ವಿಶೇಷ ಮಾನ್ಯತೆ ನೀಡಿ, ಜನಸಂಖ್ಯೆಯಷ್ಟೇ ಅಲ್ಲದೆ ಭೌಗೋಳಿಕ ಅಂಶವನ್ನೂ ಪರಿಗಣಿಸಿ ಹೊಸ ಕ್ಷೇತ್ರಗಳ ರಚನೆ ಮಾಡಬೇಕು ಎಂದು ಆಗ್ರಹಿಸಿದರು.

ಬಾಲಿವುಡ್‌ನಲ್ಲಿ ಸಂಭ್ರಮದ ಸುದ್ದಿ: ದೀಪಿಕಾ-ರಣವೀರ್ ದಂಪತಿಯಿಂದ ಎರಡನೇ ಮಗುವಿನ ಘೋಷಣೆ

ಬಾಲಿವುಡ್‌ನ ಪವರ್ ಕಪಲ್ ದೀಪಿಕಾ ಪಡುಕೋಣೆ ಮತ್ತು ರಣವೀರ್‌ ಸಿಂಗ್‌ ತಮ್ಮ ಕುಟುಂಬದಲ್ಲಿ ಮತ್ತೊಂದು ಸದಸ್ಯರ ಆಗಮನದ ಸುಳಿವು ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ವಿಶೇಷ ಪೋಸ್ಟ್ ಮೂಲಕ ಈ ದಂಪತಿ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದೇವೆ ಎಂದು ತಿಳಿಸಿದ್ದಾರೆ.

ಹಂಚಿಕೊಂಡಿರುವ ಫೋಟೋದಲ್ಲಿ ಮಗಳು ದುವ ಕಾಣಿಸಿಕೊಂಡಿದ್ದು, ಈ ಕ್ರಿಯೇಟಿವ್ ಅನೌನ್ಸ್‌ಮೆಂಟ್ ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿದೆ. ಈ ಸುದ್ದಿ ಹೊರಬಂದ ತಕ್ಷಣವೇ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರ ಹರಿದುಬಂದಿದೆ.

2018ರಲ್ಲಿ ವಿವಾಹವಾದ ಈ ಜೋಡಿ, 2024ರಲ್ಲಿ ಮೊದಲ ಮಗುವಿಗೆ ಸ್ವಾಗತ ಕೋರಿತ್ತು. ಈಗ ಮತ್ತೆ ಪೋಷಕರಾಗುತ್ತಿರುವ ಸಂತೋಷದಲ್ಲಿ ತೇಲುತ್ತಿರುವ ದಂಪತಿ, ತಮ್ಮ ವೈಯಕ್ತಿಕ ಜೀವನದ ಈ ಹೊಸ ಅಧ್ಯಾಯವನ್ನು ಬಹಿರಂಗಪಡಿಸಿದ್ದಾರೆ.

ಇದಕ್ಕೂ ನಡುವೆ, ರಣವೀರ್ ಸಿಂಗ್ ತಮ್ಮ ಇತ್ತೀಚಿನ ಸಿನಿಮಾದ ಯಶಸ್ಸನ್ನು ಸವಿಯುತ್ತಿದ್ದು, ದೀಪಿಕಾ ಪಡುಕೋಣೆ ಮುಂದಿನ ದೊಡ್ಡ ಪ್ರಾಜೆಕ್ಟ್‌ಗಳತ್ತ ಗಮನ ಹರಿಸಿದ್ದಾರೆ. ವೈಯಕ್ತಿಕ ಮತ್ತು ವೃತ್ತಿ ಜೀವನದ ಸಮತೋಲನವನ್ನು ಕಾಯ್ದುಕೊಂಡು ಸಾಗುತ್ತಿರುವ ಈ ಜೋಡಿ, ಇದೀಗ ಮತ್ತೊಂದು ಸಂತಸದ ಕ್ಷಣವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದೆ.

2: 5 ಕೋಟಿ ಸ್ಮಾರ್ಟ್ ಕ್ಲಾಸ್ ಯೋಜನೆಯಲ್ಲಿ ಭಾರೀ ಅವ್ಯವಹಾರ? ಕುವೆಂಪು ವಿವಿ ಪ್ರಕರಣಕ್ಕೆ ಹೈಲೇವಲ್ ತನಿಖೆ

0

ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯದಲ್ಲಿ ಸ್ಮಾರ್ಟ್ ಕ್ಲಾಸ್ ರೂಮ್ ಯೋಜನೆಯಲ್ಲಿ ಬಹುಕೋಟಿ ಅವ್ಯವಹಾರ ನಡೆದಿದೆ ಎಂಬ ಆರೋಪಕ್ಕೆ ಗಂಭೀರ ತಿರುವು ಸಿಕ್ಕಿದ್ದು, ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರು ಹೈಲೇವಲ್ ತನಿಖೆಗೆ ಆದೇಶಿಸಿದ್ದಾರೆ.

ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಯೋಜನೆಯಡಿ 5 ಕೋಟಿ ರೂ. ಅನುದಾನ ನೀಡಲಾಗಿದ್ದು, ಅದರಲ್ಲಿ 4.25 ಕೋಟಿ ರೂ. ಕಾಮಗಾರಿಗೆ ಖರ್ಚು ಮಾಡಲಾಗಿದೆ. ಆದರೆ ನಿಯಮ ಉಲ್ಲಂಘನೆ, ಕಳಪೆ ಕಾಮಗಾರಿ ಹಾಗೂ ದುಬಾರಿ ಬೆಲೆಗೆ ಪರಿಕರ ಖರೀದಿ ಆರೋಪಗಳು ಪ್ರಕರಣವನ್ನು ಗಂಭೀರಗೊಳಿಸಿವೆ.

ಈ ಹಿಂದೆ ನಿವೃತ್ತ ನ್ಯಾಯಾಧೀಶ ಎಚ್.ಬಿ. ರವೀಂದ್ರನಾಥ್ ನಡೆಸಿದ ತನಿಖೆಯಲ್ಲಿ ಆರೋಪಗಳು ಸತ್ಯ ಎಂದು ಪತ್ತೆಯಾಗಿತ್ತು. ಇದರ ಬೆನ್ನಲ್ಲೇ ಇದೀಗ ನಿವೃತ್ತ ನ್ಯಾಯಮೂರ್ತಿ ಆರ್. ಗುರುರಾಜನ್ ನೇತೃತ್ವದಲ್ಲಿ ಏಕಸದಸ್ಯ ಸಮಿತಿ ರಚನೆಗೊಂಡಿದ್ದು, ಒಂದು ತಿಂಗಳೊಳಗೆ ಸಂಪೂರ್ಣ ವರದಿ ಸಲ್ಲಿಸಲು ಸೂಚಿಸಲಾಗಿದೆ.

ಪ್ರಕರಣ ರಾಜ್ಯದ ಶಿಕ್ಷಣ ವ್ಯವಸ್ಥೆಯ ಮೇಲೆಯೇ ಪ್ರಶ್ನೆ ಎಬ್ಬಿಸಿದ್ದು, ತನಿಖಾ ವರದಿ ಮೇಲೆ ಮುಂದಿನ ಕಾನೂನು ಕ್ರಮ ನಿರ್ಧಾರವಾಗಲಿದೆ.

error: Content is protected !!