Home Blog

ಒಂದೇ ದಿನ 35 ಸಚಿವರು! ಬಂಗಾಳದಲ್ಲಿ ಸುವೇಂದು ಅಧಿಕಾರಿಯ ಮೇಗಾ ಸಂಪುಟ ವಿಸ್ತರಣೆ ಹಿಂದೆ ದೊಡ್ಡ ರಾಜಕೀಯ ಲೆಕ್ಕಾಚಾರ?

ಕೋಲ್ಕತ್ತಾ: ಪಶ್ಚಿಮ ಬಂಗಾಳ ರಾಜಕೀಯದಲ್ಲಿ ಅಚ್ಚರಿ ಮೂಡಿಸುವಂತಹ ಬೃಹತ್ ಬೆಳವಣಿಗೆ ನಡೆದಿದೆ. ಮುಖ್ಯಮಂತ್ರಿ ಸುವೇಂದು ಅಧಿಕಾರಿ  ಅವರು ಒಂದೇ ದಿನದಲ್ಲಿ 35 ಬಿಜೆಪಿ ಶಾಸಕರನ್ನು ಸಚಿವರನ್ನಾಗಿ ನೇಮಿಸಿ ಭಾರೀ ಸಂಪುಟ ವಿಸ್ತರಣೆ ಮಾಡಿದ್ದಾರೆ.

ಲೋಕಭವನದಲ್ಲಿ ನಡೆದ ಪ್ರಮಾಣ ವಚನ ಸಮಾರಂಭದಲ್ಲಿ ರಾಜ್ಯಪಾಲ ಆರ್.ಎನ್. ರವಿ ಅವರು ನೂತನ ಸಚಿವರಿಗೆ ಪ್ರಮಾಣ ವಚನ ಬೋಧಿಸಿದರು. ಈ ಏಕಕಾಲಿಕ ದೊಡ್ಡ ಪ್ರಮಾಣದ ನೇಮಕಾತಿ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.

ಮೇ 9ರಂದು ಸುವೇಂದು ಅಧಿಕಾರಿಯವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದ ನಂತರ ಇದು ಎರಡನೇ ಹಂತದ ಸಂಪುಟ ವಿಸ್ತರಣೆ. ಸಂವಿಧಾನದ ನಿಯಮದಂತೆ ಗರಿಷ್ಠ 44 ಸಚಿವರನ್ನು ನೇಮಿಸಲು ಅವಕಾಶವಿದ್ದು, ಈಗ ಸರ್ಕಾರವು ಬಹುತೇಕ ಆ ಮಟ್ಟಕ್ಕೆ ಹತ್ತಿರವಾಗಿದೆ.

ಮೊದಲ ಹಂತದಲ್ಲಿ ಕೆಲ ಪ್ರಮುಖ ನಾಯಕರಿಗೆ ಸಚಿವ ಸ್ಥಾನ ನೀಡಲಾಗಿದ್ದರೆ, ಇಂದು ನಡೆದ ಹಂತದಲ್ಲಿ 35 ಶಾಸಕರು ಸಚಿವ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ. ಇದರಲ್ಲಿ ಹಲವು ಹಿರಿಯ ಹಾಗೂ ಹೊಸ ಮುಖಗಳೂ ಸೇರಿದ್ದಾರೆ.

ರಾಜಕೀಯ ವಿಶ್ಲೇಷಕರ ಪ್ರಕಾರ, ಈ ಮೇಗಾ ಸಂಪುಟ ವಿಸ್ತರಣೆ ರಾಜ್ಯ ರಾಜಕೀಯದಲ್ಲಿ ಹೊಸ ಸಮೀಕರಣಗಳಿಗೆ ಕಾರಣವಾಗುವ ಸಾಧ್ಯತೆ ಇದೆ. ಆಡಳಿತ ಮತ್ತು ಪಕ್ಷದೊಳಗಿನ ಸಮತೋಲನ ಸಾಧಿಸಲು ಈ ತಂತ್ರ ಅನುಸರಿಸಲಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

16 ವರ್ಷದೊಳಗಿನ ಮಕ್ಕಳಿಗೆ ಸೋಷಿಯಲ್ ಮೀಡಿಯಾ ನಿಷೇಧ: ಮಲೇಷ್ಯಾದಿಂದ ಮಹತ್ವದ ಕ್ರಮ

ಕೌಲಾಲಂಪುರ್: ಮಕ್ಕಳಲ್ಲಿ ಹೆಚ್ಚುತ್ತಿರುವ ಸೋಷಿಯಲ್ ಮೀಡಿಯಾ ವ್ಯಸನ ಮತ್ತು ಆನ್‌ಲೈನ್ ಅಪಾಯಗಳನ್ನು ನಿಯಂತ್ರಿಸುವ ಉದ್ದೇಶದಿಂದ ಮಲೇಷ್ಯಾ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದ್ದು, 16 ವರ್ಷದೊಳಗಿನ ಮಕ್ಕಳು ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ಖಾತೆ ತೆರೆಯುವುದನ್ನು ನಿಷೇಧಿಸಿದೆ.

ಹೊಸ ನಿಯಮದ ಪ್ರಕಾರ, 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಫೇಸ್‌ಬುಕ್, ಇನ್‌ಸ್ಟಾಗ್ರಾಂ, ಟಿಕ್‌ಟಾಕ್, ಯೂಟ್ಯೂಬ್ ಸೇರಿದಂತೆ ಯಾವುದೇ ಸೋಷಿಯಲ್ ಮೀಡಿಯಾ ವೇದಿಕೆಗಳಲ್ಲಿ ಖಾತೆ ಹೊಂದಲು ಅವಕಾಶ ಇರುವುದಿಲ್ಲ. ಈ ಹಿನ್ನೆಲೆಯಲ್ಲಿ ಬಳಕೆದಾರರ ವಯಸ್ಸು ಪರಿಶೀಲಿಸುವ ವ್ಯವಸ್ಥೆಯನ್ನು ಕಡ್ಡಾಯವಾಗಿ ಜಾರಿಗೆ ತರಬೇಕು ಎಂದು ಸರ್ಕಾರ ಸಾಮಾಜಿಕ ಜಾಲತಾಣ ಕಂಪನಿಗಳಿಗೆ ಸೂಚಿಸಿದೆ.

ನಿಯಮಗಳನ್ನು ಪಾಲಿಸದ ಕಂಪನಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿರುವ ಸರ್ಕಾರ, ಗರಿಷ್ಠ 1 ಕೋಟಿ ರಿಂಗಿಟ್‌ (ಸುಮಾರು 23.95 ಕೋಟಿ ರೂಪಾಯಿ) ದಂಡ ವಿಧಿಸುವುದಾಗಿ ತಿಳಿಸಿದೆ.

ಮಕ್ಕಳನ್ನು ಹಾನಿಕಾರಕ ವಿಷಯಗಳು, ಸೈಬರ್ ಬುಲ್ಲಿಂಗ್, ಆನ್‌ಲೈನ್ ಶೋಷಣೆ ಹಾಗೂ ಅತಿಯಾದ ಸೋಷಿಯಲ್ ಮೀಡಿಯಾ ಬಳಕೆಯಿಂದ ರಕ್ಷಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆದರೆ, ಈ ನಿಯಮದಿಂದ ಮಕ್ಕಳಿಗೆ ಇಂಟರ್ನೆಟ್ ಅಥವಾ ಡಿಜಿಟಲ್ ತಂತ್ರಜ್ಞಾನ ಬಳಕೆಯ ಮೇಲೆ ಯಾವುದೇ ನಿರ್ಬಂಧ ಇರುವುದಿಲ್ಲ ಎಂದು ಮಲೇಷ್ಯಾ ಸರ್ಕಾರ ಸ್ಪಷ್ಟಪಡಿಸಿದೆ. ಶಿಕ್ಷಣ, ಅಧ್ಯಯನ ಹಾಗೂ ಇತರ ಅಗತ್ಯ ಡಿಜಿಟಲ್ ಸೇವೆಗಳನ್ನು ಮಕ್ಕಳು ಬಳಸಬಹುದಾಗಿದೆ.

ಇದಲ್ಲದೆ, ಸಾಮಾಜಿಕ ಜಾಲತಾಣ ಸಂಸ್ಥೆಗಳು ಅಪ್ರಾಪ್ತ ವಯಸ್ಕರ ಸುರಕ್ಷತೆಯನ್ನು ಖಚಿತಪಡಿಸಲು ವಿಶೇಷ ಭದ್ರತಾ ಕ್ರಮಗಳನ್ನು ಜಾರಿಗೆ ತರಬೇಕು. ಮಕ್ಕಳಿಗೆ ಹಾನಿಕಾರಕವಾಗುವ ವಿಷಯಗಳನ್ನು ನಿಯಂತ್ರಿಸುವುದು ಹಾಗೂ ನಕಲಿ ಅಥವಾ ಅನಧಿಕೃತ ಖಾತೆಗಳ ವಿರುದ್ಧ ಕ್ರಮ ಕೈಗೊಳ್ಳುವುದು ಕಡ್ಡಾಯವಾಗಿರಲಿದೆ ಎಂದು ಸರ್ಕಾರ ಸೂಚಿಸಿದೆ.

ಗಮನಾರ್ಹ ಸಂಗತಿಯೆಂದರೆ, ಮಕ್ಕಳ ಆನ್‌ಲೈನ್ ಸುರಕ್ಷತೆಯನ್ನು ಹೆಚ್ಚಿಸುವ ಉದ್ದೇಶದಿಂದ ಆಸ್ಟ್ರೇಲಿಯಾ, ಬ್ರೆಜಿಲ್, ಇಂಡೋನೇಷ್ಯಾ ಸೇರಿದಂತೆ ಹಲವು ದೇಶಗಳು ಈಗಾಗಲೇ ಇಂತಹ ನಿಯಮಗಳನ್ನು ಜಾರಿಗೆ ತಂದಿವೆ. ಇದೀಗ ಮಲೇಷ್ಯಾ ಕೂಡ ಆ ಸಾಲಿಗೆ ಸೇರ್ಪಡೆಯಾಗಿದೆ.

RCB ವಿಜಯೋತ್ಸವದ ಅಬ್ಬರದ ನಡುವೆ ಬೆಂಗಳೂರಿನಲ್ಲಿ ಪೊಲೀಸ್ ಬೇಟೆ! ಒಂದೇ ರಾತ್ರಿ 260 ಡ್ರಂಕ್ & ಡ್ರೈವ್ ಕೇಸ್ ದಾಖಲೆ

ಬೆಂಗಳೂರು: ಆರ್‌ಸಿಬಿ ತಂಡ ಐಪಿಎಲ್ 2026 ಫೈನಲ್‌ನಲ್ಲಿ ಭರ್ಜರಿ ಜಯ ಸಾಧಿಸಿ ಸತತ ಎರಡನೇ ಬಾರಿಗೆ ಟ್ರೋಫಿ ಗೆದ್ದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ವಿಜಯೋತ್ಸವ ಸಂಭ್ರಮಾಚರಣೆ ತೀವ್ರಗೊಂಡಿದೆ. ಆದರೆ ಈ ಸಂಭ್ರಮದ ನಡುವೆ ಸಂಚಾರಿ ಪೊಲೀಸರು ಕಟ್ಟುನಿಟ್ಟಿನ ಕಾರ್ಯಾಚರಣೆ ನಡೆಸಿದ್ದಾರೆ.

ನಗರದ ವಿವಿಧ ಭಾಗಗಳಲ್ಲಿ ನಡೆದ ತಪಾಸಣೆಯಲ್ಲಿ ಒಂದೇ ರಾತ್ರಿ 260 ಡ್ರಂಕ್ & ಡ್ರೈವ್ ಪ್ರಕರಣಗಳು ದಾಖಲಾಗಿರುವುದು ಪೊಲೀಸ್ ಇಲಾಖೆ ದೃಢಪಡಿಸಿದೆ. ವಿಜಯೋತ್ಸವದ ಸಂದರ್ಭದಲ್ಲೇ ವಾಹನ ಚಾಲನೆ ವೇಳೆ ಮದ್ಯಪಾನ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗಿದೆ.

ಆರ್‌ಸಿಬಿ ಗೆಲುವಿನ ನಂತರ ಅಭಿಮಾನಿಗಳು ಬೈಕ್ ರ‍್ಯಾಲಿ ನಡೆಸಿ, ರಸ್ತೆಗಳಲ್ಲೇ ಜಯಘೋಷ ಕೂಗಿ ಸಂಭ್ರಮಿಸಿದ್ದಾರೆ. ಹಲವೆಡೆ ಪಟಾಕಿ ಸಿಡಿಸಿ ಉತ್ಸಾಹಭರಿತ ಆಚರಣೆ ನಡೆದಿದ್ದು, ಕೆಲ ಪ್ರದೇಶಗಳಲ್ಲಿ ಟ್ರಾಫಿಕ್ ಗೊಂದಲವೂ ಉಂಟಾಗಿದೆ.

ಮುನ್ನೆಚ್ಚರಿಕಾ ಕ್ರಮವಾಗಿ ಫೈನಲ್ ಪಂದ್ಯ ದಿನ ರಾತ್ರಿ 11 ಗಂಟೆಯಿಂದ ಬೆಳಗ್ಗೆ 5 ಗಂಟೆವರೆಗೆ ನಗರದ ಪ್ರಮುಖ ಫ್ಲೈಓವರ್‌ಗಳನ್ನು ಬಂದ್ ಮಾಡುವಂತೆ ಸೂಚನೆ ನೀಡಲಾಗಿತ್ತು. ಆದರೂ ಸಂಭ್ರಮಾಚರಣೆ ಹೆಚ್ಚಾದ ಹಿನ್ನೆಲೆಯಲ್ಲಿ ಪೊಲೀಸರು ವಿಶೇಷ ತಪಾಸಣೆ ನಡೆಸಿದ್ದಾರೆ.

ಸದ್ಯ ಪ್ರಕರಣಗಳಿಗೆ ಸಂಬಂಧಿಸಿದಂತೆ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಂಚಾರಿ ಪೊಲೀಸರು ತಿಳಿಸಿದ್ದಾರೆ.

ಒಮ್ಮೆ ಟ್ರೋಲ್… ಈಗ ದೇವತೆ! RCB ಗೆಲುವಿನ ನಂತರ ಅನುಷ್ಕಾ ಶರ್ಮಾ ಬಗ್ಗೆ ಬದಲಾಗಿದ ಅಭಿಪ್ರಾಯ

ಒಂದು ಕಾಲದಲ್ಲಿ ವಿರಾಟ್ ಕೊಹ್ಲಿಯ ಪ್ರತಿಯೊಂದು ವೈಫಲ್ಯಕ್ಕೂ ಗುರಿಯಾಗುತ್ತಿದ್ದವರು ಅನುಷ್ಕಾ ಶರ್ಮಾ. ಸೋಷಿಯಲ್ ಮೀಡಿಯಾದಲ್ಲಿ ‘ಅಶುಭ’ ಎಂಬ ಟ್ಯಾಗ್‌ನಿಂದ ತೀವ್ರ ಟ್ರೋಲ್ ಎದುರಿಸಿದ್ದ ಅವರು, ಈಗ ಅದೇ ನೆಟ್ಟಿಗರಿಂದ ಸಂಪೂರ್ಣ ವಿಭಿನ್ನ ರೀತಿಯಲ್ಲಿ ಹೊಗಳಿಕೆ ಪಡೆಯುತ್ತಿದ್ದಾರೆ.

ಐಪಿಎಲ್ ಫೈನಲ್‌ನಲ್ಲಿ ಆರ್‌ಸಿಬಿ ಗುಜರಾತ್ ಟೈಟನ್ಸ್ ವಿರುದ್ಧ ಭರ್ಜರಿ ಜಯ ದಾಖಲಿಸಿದ ನಂತರ, ಫ್ಯಾನ್ಸ್ ಅಭಿಪ್ರಾಯವೇ ತಲೆಕೆಳಗಾಗಿದೆ. “ಅನುಷ್ಕಾ ಇದ್ದರೆ RCB ಗೆಲ್ಲುತ್ತದೆ” ಎಂಬ ಹೊಸ ನಂಬಿಕೆ ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿದೆ.

ಮೈದಾನದಲ್ಲಿ ಕೊಹ್ಲಿಯ ಆಕ್ರಮಣಕಾರಿ ಬ್ಯಾಟಿಂಗ್, ಗ್ಯಾಲರಿಯಲ್ಲಿ ಕುಳಿತಿದ್ದ ಅನುಷ್ಕಾ ಅವರ ಪ್ರತಿಕ್ರಿಯೆ—ಈ ಎರಡೂ ಕ್ಷಣಗಳು ಈಗ ವೈರಲ್ ಸೆನ್ಸೇಷನ್ ಆಗಿವೆ. ಕೊಹ್ಲಿ ಗೆಲುವಿನ ಶಾಟ್ ಹೊಡೆಯುತ್ತಿದ್ದಂತೆ ಫ್ಲೈಯಿಂಗ್ ಕಿಸ್ ನೀಡಿದ ದೃಶ್ಯ ಅಭಿಮಾನಿಗಳನ್ನು ಆಕರ್ಷಿಸಿದೆ.

ಹಿಂದೆ ಟ್ರೋಲ್ ಮಾಡಿದ ಅದೇ ಜನರು ಈಗ ಅವರನ್ನು “RCB ಯ ಲಕ್ಕಿ ಚಾರ್ಮ್”, “ವಿಜಯದ ಸಂಕೇತ” ಎಂದು ಕರೆಯುತ್ತಿದ್ದಾರೆ. ಸೋಷಿಯಲ್ ಮೀಡಿಯಾದ ಟ್ರೆಂಡ್ ಮತ್ತೆ ತಿರುಗಿದೆ.

ವಮಿಕಾ ಮತ್ತು ಅಕಾಯ್ ಜನನದ ನಂತರ ಪಂದ್ಯಗಳಲ್ಲಿ ಕಡಿಮೆ ಕಾಣಿಸಿಕೊಂಡಿದ್ದ ಅನುಷ್ಕಾ, ಈಗ ಮತ್ತೆ ಸ್ಟೇಡಿಯಂನಲ್ಲಿ ಸಕ್ರಿಯರಾಗಿದ್ದಾರೆ. ಅವರ ಮರಳುವಿಕೆ ಮತ್ತು RCB ಯಶಸ್ಸು—ಈ ಎರಡರ ನಡುವೆ ಫ್ಯಾನ್ಸ್ ಹೊಸ ಕಥೆಯನ್ನು ಕಟ್ಟುತ್ತಿದ್ದಾರೆ.

ಮದುವೆಯ ಸಂಭ್ರಮವೇ ಕೊನೆಯ ಕ್ಷಣ! ಕೆಲವೇ ಗಂಟೆಗಳಲ್ಲಿ ವರನ ಜೀವ ಕಸಿದ ಹೆಲಿಕಾಪ್ಟರ್ ದುರಂತ

ಅಟ್ಲಾಂಟಾ: ಹೊಸ ಬದುಕಿನ ಕನಸುಗಳೊಂದಿಗೆ ಸಪ್ತಪದಿ ತುಳಿದಿದ್ದ ಜೋಡಿಯ ಬದುಕು ಕೆಲವೇ ಗಂಟೆಗಳಲ್ಲಿ ಭೀಕರ ದುರಂತಕ್ಕೆ ತುತ್ತಾದ ಹೃದಯವಿದ್ರಾವಕ ಘಟನೆ ಅಮೆರಿಕದ ಜಾರ್ಜಿಯಾದಲ್ಲಿ ನಡೆದಿದೆ.

ಕೇರಳ ಮೂಲದ ನವವಿವಾಹಿತ ದಂಪತಿ ಮದುವೆಯ ಸಂಭ್ರಮ ಮುಗಿಸಿಕೊಂಡು ಹೋಟೆಲ್‌ಗೆ ತೆರಳಲು ಹೆಲಿಕಾಪ್ಟರ್ ಏರಿದ ಕೆಲವೇ ಕ್ಷಣಗಳಲ್ಲಿ, ದಟ್ಟ ಮಂಜು ಮತ್ತು ಕೆಟ್ಟ ಹವಾಮಾನದ ಪರಿಣಾಮವಾಗಿ ಹೆಲಿಕಾಪ್ಟರ್ ನಿಯಂತ್ರಣ ತಪ್ಪಿ ಅರಣ್ಯ ಪ್ರದೇಶದಲ್ಲಿ ಪತನಗೊಂಡಿದೆ.

ಈ ದುರಂತದಲ್ಲಿ ಡೆಲ್ಟಾ ಏರ್‌ಲೈನ್ಸ್‌ನ ಯುವ ಪೈಲಟ್ ಡೇವ್ ಫಿಜಿ (25) ಮತ್ತು ಹೆಲಿಕಾಪ್ಟರ್ ಪೈಲಟ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಆದರೆ ವೃತ್ತಿಯಲ್ಲಿ ನರ್ಸ್ ಆಗಿರುವ ನವವಧು ಜೆಸ್ನಿ ಅದ್ಭುತವಾಗಿ ಬದುಕುಳಿದಿದ್ದಾರೆ.

ಅಪಘಾತದ ಬಳಿಕ ಸುಮಾರು ಐದು ಗಂಟೆಗಳ ಕಾಲ ಅವಶೇಷಗಳ ನಡುವೆ ಸಿಲುಕಿದ್ದ ಜೆಸ್ನಿಯನ್ನು ರಕ್ಷಣಾ ಸಿಬ್ಬಂದಿ ಅತ್ಯಂತ ಕಷ್ಟಪಟ್ಟು ಹೊರತೆಗೆದಿದ್ದಾರೆ. ತೀವ್ರ ಗಾಯಗಳಾಗಿದ್ದರೂ ಜೀವಕ್ಕೆ ಅಪಾಯವಾಗದಂತೆ ಅವರು ಪಾರಾಗಿರುವುದು ವೈದ್ಯಕೀಯ ಅಚ್ಚರಿಯಾಗಿದೆ.

ಸ್ಥಳಕ್ಕೆ ಆಗಮಿಸಿದ ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿ (NTSB) ತನಿಖೆ ಆರಂಭಿಸಿದ್ದು, ಪ್ರಾಥಮಿಕ ವರದಿ 30 ದಿನಗಳಲ್ಲಿ ನಿರೀಕ್ಷಿಸಲಾಗಿದೆ.

ಮದುವೆಯ ಸಂತೋಷ ಕ್ಷಣಗಳಲ್ಲಿ ಆರಂಭವಾದ ಈ ಕಥೆ, ಕೆಲವೇ ಗಂಟೆಗಳಲ್ಲಿ ದುಃಖದ ದುರಂತವಾಗಿ ಬದಲಾಗಿರುವುದು ಎಲ್ಲರನ್ನೂ ಬೆಚ್ಚಿಬೀಳಿಸಿದೆ.

ಶಿವಮೊಗ್ಗದಲ್ಲಿ ತನ್ನದೇ ಗನ್‌ʼನಿಂದ ಗುಂಡು ಹಾರಿಸಿಕೊಂಡು ವ್ಯಕ್ತಿ ಆತ್ಮಹತ್ಯೆ!

ಶಿವಮೊಗ್ಗ: ತನ್ನದೇ ಲೈಸೆನ್ಸ್ ಹೊಂದಿದ್ದ ಗನ್‌ನಿಂದ ಗುಂಡು ಹಾರಿಸಿಕೊಂಡು ವೃದ್ಧರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ನಿಟ್ಟೂರು ಸಮೀಪದ ತಟ್ಟೆಕೊಡ್ಲು ಗ್ರಾಮದಲ್ಲಿ ನಡೆದಿದೆ.

ತಟ್ಟೆಕೊಡ್ಲು ನಿವಾಸಿ ರಾಮಚಂದ್ರ ರಾವ್ (85) ಆತ್ಮಹತ್ಯೆ ಮಾಡಿಕೊಂಡವರು. ಅವರು ತಮ್ಮ ಮನೆಯ ಕೋಣೆಯಲ್ಲೇ ಗನ್‌ನಿಂದ ತಲೆಗೆ ಗುಂಡು ಹಾರಿಸಿಕೊಂಡಿದ್ದು, ಘಟನೆಯ ತೀವ್ರತೆಗೆ ತಲೆ ಸಂಪೂರ್ಣ ಛಿದ್ರಗೊಂಡಿದೆ. ಮನೆಯ ಗೋಡೆಗಳ ಮೇಲೂ ರಕ್ತದ ಕಲೆಗಳು ಕಂಡುಬಂದಿವೆ.

ಮೂರು ದಿನಗಳ ಹಿಂದೆ ರಾಮಚಂದ್ರ ರಾವ್ ಅವರು ಬಿದ್ದು ತಲೆಗೆ ಗಂಭೀರ ಗಾಯ ಮಾಡಿಕೊಂಡಿದ್ದರು. ಬಳಿಕ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರೂ ನೋವು ಕಡಿಮೆಯಾಗಿರಲಿಲ್ಲ ಎನ್ನಲಾಗಿದೆ. ಇದೇ ಕಾರಣದಿಂದ ತೀವ್ರ ನೋವು ಸಹಿಸಲಾಗದೆ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.

ಗುಂಡಿನ ಸದ್ದು ಕೇಳಿ ಮನೆಯವರು ಸ್ಥಳಕ್ಕೆ ಧಾವಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಮಾಹಿತಿ ತಿಳಿಯುತ್ತಿದ್ದಂತೆಯೇ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬೆಳಗ್ಗೆ ಶ್ವಾನದಳ ಮತ್ತು ಬೆರಳಚ್ಚು ತಜ್ಞರ ತಂಡವೂ ಸ್ಥಳ ಪರಿಶೀಲನೆ ನಡೆಸಿದೆ.

ಬಳಸಿದ ಗನ್‌ಗೆ ಮಾನ್ಯ ಪರವಾನಗಿ ಇತ್ತೇ ಎಂಬುದರ ಕುರಿತು ಪೊಲೀಸರು ಪರಿಶೀಲನೆ ನಡೆಸುತ್ತಿದ್ದು, ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.

ಸ್ಪೆಷಲ್ ಫ್ಲೈಟ್ʼ​ನಲ್ಲಿ ಒಟ್ಟಿಗೆ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!

ಬೆಂಗಳೂರು: ರಾಜ್ಯದ ರಾಜಕೀಯ ಬೆಳವಣಿಗೆಗಳ ನಡುವೆಯೇ ಹಂಗಾಮಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ನಿಯೋಜಿತ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕಾಂಗ್ರೆಸ್ ಹೈಕಮಾಂಡ್ ನಾಯಕರೊಂದಿಗೆ ಮಹತ್ವದ ಮಾತುಕತೆ ನಡೆಸಲು ಸೋಮವಾರ ವಿಶೇಷ ವಿಮಾನದ ಮೂಲಕ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ.

ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ನಂತರದ ರಾಜಕೀಯ ಬೆಳವಣಿಗೆಗಳು, ಸಂಪುಟ ರಚನೆ, ಅಧಿಕಾರ ಹಂಚಿಕೆ ಹಾಗೂ ಪಕ್ಷದ ಸಂಘಟನೆಗೆ ಸಂಬಂಧಿಸಿದ ಮಹತ್ವದ ವಿಷಯಗಳ ಕುರಿತು ಚರ್ಚಿಸಲು ಇಬ್ಬರು ನಾಯಕರು ದೆಹಲಿಗೆ ತೆರಳಿರುವುದಾಗಿ ಮೂಲಗಳು ತಿಳಿಸಿವೆ.

ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ, ಹಿರಿಯ ಕಾಂಗ್ರೆಸ್ ನಾಯಕ ಹೆಚ್.ಸಿ. ಮಹದೇವಪ್ಪ ಸೇರಿದಂತೆ ಹಲವು ಪ್ರಮುಖ ಮುಖಂಡರು ಸಹ ಈ ನಿಯೋಗದೊಂದಿಗೆ ದೆಹಲಿಗೆ ತೆರಳಿದ್ದಾರೆ. ಹೀಗಾಗಿ ಈ ಭೇಟಿ ಕಾಂಗ್ರೆಸ್ ಪಕ್ಷದ ಒಳರಾಜಕೀಯದಲ್ಲಿ ವಿಶೇಷ ಮಹತ್ವ ಪಡೆದುಕೊಂಡಿದೆ.

ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹಾಗೂ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಸೇರಿದಂತೆ ಪಕ್ಷದ ಉನ್ನತ ನಾಯಕರೊಂದಿಗೆ ಸಭೆಗಳು ನಡೆಯಲಿವೆ ಎನ್ನಲಾಗಿದೆ.

ರಾಜ್ಯ ಸಚಿವ ಸಂಪುಟದ ಅಂತಿಮ ರೂಪುರೇಷೆ, ಉಪಮುಖ್ಯಮಂತ್ರಿ ಹುದ್ದೆಗಳ ಹಂಚಿಕೆ, ಪ್ರಮುಖ ಖಾತೆಗಳ ವಿತರಣೆ ಹಾಗೂ ಕೆಪಿಸಿಸಿ ಅಧ್ಯಕ್ಷರ ಆಯ್ಕೆ ಕುರಿತಂತೆ ಈ ಸಭೆಗಳಲ್ಲಿ ಮಹತ್ವದ ನಿರ್ಧಾರಗಳು ಹೊರಬೀಳುವ ಸಾಧ್ಯತೆ ಇದೆ.

ಇದೇ ವೇಳೆ, ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ನಂತರ ಪಕ್ಷದಲ್ಲಿ ಸಮನ್ವಯ ಕಾಪಾಡುವುದು ಮತ್ತು ಮುಂದಿನ ರಾಜಕೀಯ ಕಾರ್ಯತಂತ್ರ ರೂಪಿಸುವ ಕುರಿತು ಕೂಡ ಚರ್ಚೆಗಳು ನಡೆಯಲಿವೆ ಎಂದು ತಿಳಿದುಬಂದಿದೆ.

IPL ಫೈನಲ್ ಬೆಂಗಳೂರಿನಲ್ಲಿ ನಡೆಯಬೇಕಿತ್ತು: ಗುಜರಾತ್ ಪ್ರಭಾವದಿಂದ ಪಂದ್ಯ ಕಳೆದುಕೊಂಡೆವು – ಡಿ.ಕೆ. ಶಿವಕುಮಾರ್

ಬೆಂಗಳೂರು: ಐಪಿಎಲ್ ಸೀಸನ್-19ರ ಫೈನಲ್ ಪಂದ್ಯ ಬೆಂಗಳೂರಿನಲ್ಲಿ ನಡೆಯಬೇಕಾಗಿತ್ತು. ಆದರೆ ಗುಜರಾತ್ ತಮ್ಮ ಪ್ರಭಾವ ಬಳಸಿ ಪಂದ್ಯವನ್ನು ಕರ್ನಾಟಕದಿಂದ ಕಿತ್ತುಕೊಂಡಿದೆ ಎಂದು ನಿಯೋಜಿತ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆರೋಪಿಸಿದ್ದಾರೆ.

ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಐಪಿಎಲ್ ಫೈನಲ್ ಪಂದ್ಯವನ್ನು ಬೆಂಗಳೂರಿನಲ್ಲಿ ಆಯೋಜಿಸಲು ರಾಜ್ಯ ಸರ್ಕಾರ ಅಗತ್ಯ ಅನುಮತಿಗಳನ್ನು ನೀಡಿತ್ತು. ಆದಾಗ್ಯೂ, ಅಂತಿಮವಾಗಿ ಪಂದ್ಯವನ್ನು ಗುಜರಾತ್‌ಗೆ ವರ್ಗಾಯಿಸಲಾಗಿದೆ. ಇದು ನಮ್ಮ ರಾಜ್ಯದ ಕ್ರೀಡಾಭಿಮಾನಿಗಳಿಗೆ ಮತ್ತು ಕ್ರೀಡಾ ಮೂಲಸೌಕರ್ಯಕ್ಕೆ ಅನ್ಯಾಯವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಫೈನಲ್ ಪಂದ್ಯ ಕರ್ನಾಟಕದಲ್ಲೇ ನಡೆಯಬೇಕಿತ್ತು. ಅದಕ್ಕಾಗಿ ನಾವು ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದ್ದೆವು. ಆದರೆ ಗುಜರಾತ್ ತನ್ನ ಪ್ರಭಾವ ಬಳಸಿಕೊಂಡು ಪಂದ್ಯವನ್ನು ತನ್ನತ್ತ ಸೆಳೆದಿದೆ. ನಮ್ಮ ಸ್ಟೇಡಿಯಂಗೆ ಮಾತ್ರವಲ್ಲ, ರಾಜ್ಯದ ಯುವಕರಿಗೂ ಇದರಿಂದ ಅನ್ಯಾಯವಾಗಿದೆ ಎಂದು ಹೇಳಿದರು.

ಮುಂದಿನ ದಿನಗಳಲ್ಲಿ ಇಂತಹ ಪರಿಸ್ಥಿತಿ ಮರುಕಳಿಸದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು. ಬೆಂಗಳೂರು ದೇಶದ ಪ್ರಮುಖ ಕ್ರೀಡಾ ಕೇಂದ್ರಗಳಲ್ಲಿ ಒಂದಾಗಿದ್ದು, ದೊಡ್ಡ ಮಟ್ಟದ ಕ್ರೀಡಾಕೂಟಗಳನ್ನು ಆಯೋಜಿಸಲು ಎಲ್ಲ ರೀತಿಯ ಸಾಮರ್ಥ್ಯ ಹೊಂದಿದೆ ಎಂದು ಅವರು ಅಭಿಪ್ರಾಯಪಟ್ಟರು.

ಇದೇ ವೇಳೆ, ಐಪಿಎಲ್ 2026ರ ಫೈನಲ್‌ನಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಮಣಿಸಿ ಎರಡನೇ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡಕ್ಕೆ ಡಿ.ಕೆ. ಶಿವಕುಮಾರ್ ಅಭಿನಂದನೆ ಸಲ್ಲಿಸಿದರು.

ಆರ್‌ಸಿಬಿ ಕರ್ನಾಟಕದ ಹೆಸರಿನಲ್ಲಿ ಆಡುತ್ತಿರುವ ತಂಡ. ತಂಡದ ಆಟಗಾರರು ಇಡೀ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ರಾಜ್ಯದ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಕರ್ನಾಟಕ ಸರ್ಕಾರದ ಪರವಾಗಿ ಹಾಗೂ ರಾಜ್ಯದ ಕೋಟ್ಯಂತರ ಅಭಿಮಾನಿಗಳ ಪರವಾಗಿ ತಂಡಕ್ಕೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಹೇಳಿದರು. ಆರ್‌ಸಿಬಿ ಸಾಧನೆ ರಾಜ್ಯದ ಕ್ರೀಡಾಭಿಮಾನಿಗಳಿಗೆ ಹೆಮ್ಮೆಯ ಕ್ಷಣವಾಗಿದ್ದು, ಮುಂದಿನ ದಿನಗಳಲ್ಲಿಯೂ ತಂಡ ಇದೇ ರೀತಿ ಯಶಸ್ಸಿನ ಪಥದಲ್ಲಿ ಸಾಗಲಿ ಎಂದು ಶುಭ ಹಾರೈಸಿದರು.

ಕೋಟಿ ವೆಚ್ಚದ ಹೈಟೆಕ್ ಹಾಸ್ಟೆಲ್‌ ನಲ್ಲಿ ವಿದ್ಯಾರ್ಥಿಗಳ ನರಕಯಾತನೆ..!

ಗದಗ: ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅನುಕೂಲವಾಗಲಿ ಎಂದು ಸರ್ಕಾರ ಕೋಟಿ ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಹೈಟೆಕ್ ವಸತಿ ನಿಲಯ ಇದೀಗ ಅವ್ಯವಸ್ಥೆಯ ಅಡ್ಡೆಯಾಗಿರುವ ಆರೋಪ ಕೇಳಿ ಬಂದಿದೆ. ವಿದ್ಯಾರ್ಥಿಗಳಿಗೆ ನೀಡಬೇಕಾದ ಮೂಲ ಸೌಲಭ್ಯಗಳೇ ಇಲ್ಲದಂತಾಗಿದ್ದು, ಆಹಾರದಿಂದ ಹಿಡಿದು ಕುಡಿಯುವ ನೀರಿನವರೆಗೆ ಎಲ್ಲ ಕ್ಷೇತ್ರದಲ್ಲೂ ಭಾರೀ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ.

ಗದಗ ನಗರದ ಗಂಗಿಮಡಿಯಲ್ಲಿ ಇರುವ ಸಮಾಜ ಕಲ್ಯಾಣ ಇಲಾಖೆಯ ಸರ್ಕಾರಿ ಮೆಟ್ರಿಕ್ ನಂತರದ ಪರಿಶಿಷ್ಟ ಪಂಗಡದ ಬಾಲಕರ ವಸತಿ ನಿಲಯದಲ್ಲಿ ವಿದ್ಯಾರ್ಥಿಗಳು ಅಕ್ಷರಶಃ ನರಕಯಾತನೆ ಅನುಭವಿಸುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ. ಸರ್ಕಾರದಿಂದ ಕೋಟಿ ಕೋಟಿ ಅನುದಾನ ಬಂದಿದ್ದರೂ, ವಿದ್ಯಾರ್ಥಿಗಳಿಗೆ ಸಮರ್ಪಕ ಸೌಲಭ್ಯ ಸಿಗುತ್ತಿಲ್ಲ ಎಂದು ವಿದ್ಯಾರ್ಥಿಗಳು ಕಿಡಿಕಾರಿದ್ದಾರೆ.

ಧಾನ್ಯದಲ್ಲೇ ನುಸಿಗಳ ಸಾಮ್ರಾಜ್ಯ- ಅದೇ ಆಹಾರ ವಿದ್ಯಾರ್ಥಿಗಳ ಹೊಟ್ಟೆಗೆ..!

ವಸತಿ ನಿಲಯದ ಅಡುಗೆಮನೆಗೆ ಸರಬರಾಜಾಗುತ್ತಿರುವ ಗೋಧಿ ಹಾಗೂ ಇತರ ಧಾನ್ಯಗಳಲ್ಲಿ ನುಸಿಗಳು ಬುಸುಗುಟ್ಟುತ್ತಿವೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಇದೇ ಕಳಪೆ ಧಾನ್ಯ ಮತ್ತು ಹಳೇ ತರಕಾರಿಗಳಿಂದ ಊಟ ತಯಾರಿಸಲಾಗುತ್ತಿದ್ದು, ಅನಾರೋಗ್ಯದ ಭೀತಿ ಎದುರಾಗಿದೆ ಎಂದು ಹೇಳಿದ್ದಾರೆ.

“ಮೇನು ಪ್ರಕಾರ ಊಟ ನೀಡುವುದಿಲ್ಲ. ಮೊಟ್ಟೆ, ಬಾಳೆಹಣ್ಣು ನೀಡದೇ ಹಣ ದುರುಪಯೋಗ ಮಾಡಲಾಗುತ್ತಿದೆ. ಪ್ರಶ್ನೆ ಮಾಡಿದರೆ ನಮ್ಮನ್ನೇ ಟಾರ್ಗೆಟ್ ಮಾಡುತ್ತಾರೆ” ಎಂದು ವಿದ್ಯಾರ್ಥಿಗಳು ಆಕ್ರೋಶ ಹೊರಹಾಕಿದ್ದಾರೆ.

ಗಲೀಜು ನೀರಿಗೆ ವಿದ್ಯಾರ್ಥಿಗಳ ಅಲರ್ಜಿ- ಕುಡಿಯುವ ನೀರಿಗೂ ಪರದಾಟ

ಬೇಸಿಗೆಯ ಬಿಸಿಯಲ್ಲಿ ಕುಡಿಯುವ ನೀರಿಗಾಗಿ ವಿದ್ಯಾರ್ಥಿಗಳು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಪಾಚಿಗಟ್ಟಿದ ನೀರಿನ ಟ್ಯಾಂಕ್‌ಗಳಲ್ಲಿನ ನೀರನ್ನೇ ಸ್ನಾನ ಮತ್ತು ನಿತ್ಯಕರ್ಮಗಳಿಗೆ ಬಳಸಬೇಕಾದ ಅನಿವಾರ್ಯತೆ ಎದುರಾಗಿದೆ.

ಗಲೀಜು ನೀರು ಬಳಸುತ್ತಿರುವ ಪರಿಣಾಮ ಅನೇಕ ವಿದ್ಯಾರ್ಥಿಗಳಿಗೆ ಚರ್ಮದ ಅಲರ್ಜಿ, ಮೈತುಂಬಾ ತುರಿಕೆ ಕಾಣಿಸಿಕೊಂಡಿದ್ದು, ಆರೋಗ್ಯ ಸಮಸ್ಯೆ ಹೆಚ್ಚಾಗಿದೆ ಎಂದು ಆರೋಪಿಸಲಾಗಿದೆ. ಅನಾರೋಗ್ಯ ಕಾಣಿಸಿಕೊಂಡರೂ ಚಿಕಿತ್ಸೆ ವ್ಯವಸ್ಥೆ ಮಾಡುವತ್ತ ಅಧಿಕಾರಿಗಳು ಗಮನ ಹರಿಸುತ್ತಿಲ್ಲ ಎಂದು ವಿದ್ಯಾರ್ಥಿಗಳು ದೂರಿದ್ದಾರೆ.

ಧೂಳು ತಿನ್ನುತ್ತಿರುವ ಕಂಪ್ಯೂಟರ್‌ಗಳು

ವಿದ್ಯಾರ್ಥಿಗಳು ವಾಸಿಸುವ ಕೊಠಡಿಗಳಲ್ಲಿ ಸ್ವಚ್ಛತೆ ಎಂಬುದೇ ಕಾಣಿಸದಂತಾಗಿದೆ. ಕಂಪ್ಯೂಟರ್‌ಗಳು ಧೂಳು ತಿನ್ನುತ್ತಿದ್ದು, ಹೈಟೆಕ್ ವಸತಿ ನಿಲಯದ ಹೆಸರಿಗೆ ಮಾತ್ರ ಸೌಲಭ್ಯಗಳು ಉಳಿದಿವೆ ಎಂದು ವಿದ್ಯಾರ್ಥಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

“ಸರ್ಕಾರ ಅನುದಾನ ಕೊಡುತ್ತಿದೆ. ಆದರೆ ಅಧಿಕಾರಿಗಳ ಬೇಜವಾಬ್ದಾರಿಯಿಂದ ವಿದ್ಯಾರ್ಥಿಗಳ ಬದುಕೇ ದುಸ್ತರವಾಗಿದೆ” ಎಂದು ಅವರು ಆರೋಪಿಸಿದ್ದಾರೆ.

ಅಧಿಕಾರಿಗಳ ವಿರುದ್ಧ ವಿದ್ಯಾರ್ಥಿಗಳ ಕಿಡಿ

ಜಿಲ್ಲಾ ಮಟ್ಟದ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳ ಗಮನಕ್ಕೆ ಸಮಸ್ಯೆ ತಂದರೂ ಯಾವುದೇ ಕ್ರಮ ಕೈಗೊಳ್ಳಲಾಗುತ್ತಿಲ್ಲ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಅಧಿಕಾರಿಗಳು ಡೋಂಟ್ ಕೇರ್ ಧೋರಣೆ ತಾಳಿದ್ದಾರೆ. ಬಡ ವಿದ್ಯಾರ್ಥಿಗಳ ಗೋಳಾಟ ಕೇಳುವವರೇ ಇಲ್ಲ” ಎಂದು ಆರೋಪಿಸಿದ್ದಾರೆ.

ಇನ್ನಾದರೂ ಜಿಲ್ಲಾಡಳಿತ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ವಸತಿ ನಿಲಯದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡಬೇಕೆಂಬ ಒತ್ತಾಯ ಕೇಳಿ ಬಂದಿದೆ.

ಸಾಂತ್ವನ ಭೇಟಿಯೇ ಸಿಎಂ ವಿಜಯ್‌ಗೆ ತಲೆನೋವಾ? ಅಜಿತ್ ಮನೆ ಹೊರಗಿನಿಂದಲೇ ಶುರುವಾಯ್ತು ಹೊಸ ರಾಜಕೀಯ ಚರ್ಚೆ!

ನಟ ಅಜಿತ್ ಕುಮಾರ್ ಅವರ ತಾಯಿ ನಿಧನದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ವಿಜಯ್ ಭೇಟಿ ನೀಡಿದ್ದ ಘಟನೆ ಈಗ ರಾಜಕೀಯ ಮತ್ತು ಸಾಮಾಜಿಕ ವಲಯದಲ್ಲಿ ಅನಿರೀಕ್ಷಿತ ಚರ್ಚೆಗೆ ಕಾರಣವಾಗಿದೆ. ಸಂತಾಪ ಸೂಚಿಸುವ ಕಾರ್ಯಕ್ರಮದಲ್ಲಿ ನಟಿ ತ್ರಿಷಾ ಕೃಷ್ಣನ್ ಸಹ ಕಾಣಿಸಿಕೊಂಡಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ವಿಶೇಷವಾಗಿ ತ್ರಿಷಾಗೆ ನೀಡಲಾದ ಭದ್ರತೆ, ವಾಹನ ವ್ಯವಸ್ಥೆ ಹಾಗೂ ಪ್ರೋಟೋಕಾಲ್ ಕುರಿತಾಗಿ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆ ನಡೆಯುತ್ತಿದೆ. ಮುಖ್ಯಮಂತ್ರಿಯ ಅಧಿಕೃತ ಕಾರ್ಯಕ್ರಮದ ಭಾಗವಾಗಿ ನಟಿಗೆ ನೀಡಲಾದ ಸೌಲಭ್ಯಗಳು ಸಾರ್ವಜನಿಕ ಸಂಪನ್ಮೂಲಗಳ ಬಳಕೆಯ ಮಾನದಂಡಗಳಿಗೆ ಅನುಗುಣವಾಗಿವೆಯೇ ಎಂಬ ಪ್ರಶ್ನೆಗಳು ಕೇಳಿಬರುತ್ತಿವೆ.

ರಾಜಕೀಯ ವಿಶ್ಲೇಷಕರ ಅಭಿಪ್ರಾಯದಂತೆ, ಸಾರ್ವಜನಿಕ ಹುದ್ದೆಯಲ್ಲಿರುವ ನಾಯಕರ ಪ್ರತಿಯೊಂದು ನಡೆಗೂ ಹೆಚ್ಚಿನ ಗಮನ ಸಿಗುವುದು ಸಹಜ. ಅದರಲ್ಲೂ ಸಿನಿರಂಗ ಮತ್ತು ರಾಜಕೀಯದ ಪ್ರಭಾವ ಒಂದೇ ಕಡೆ ಸೇರುವಾಗ ಇಂತಹ ಚರ್ಚೆಗಳು ಮತ್ತಷ್ಟು ತೀವ್ರಗೊಳ್ಳುತ್ತವೆ.

ಕೆಲವರು ಇದನ್ನು ಅನಗತ್ಯ ವಿವಾದವೆಂದು ತಳ್ಳಿಹಾಕಿದರೆ, ಮತ್ತೊಂದು ವಲಯ ಸಾರ್ವಜನಿಕ ಹುದ್ದೆಯಲ್ಲಿರುವವರ ನಡೆ-ನುಡಿಗಳ ಬಗ್ಗೆ ಹೆಚ್ಚಿನ ಸ್ಪಷ್ಟತೆ ಮತ್ತು ಹೊಣೆಗಾರಿಕೆ ಅಗತ್ಯ ಎಂದು ವಾದಿಸುತ್ತಿದೆ.

ಒಟ್ಟಾರೆ, ಅಜಿತ್ ಕುಟುಂಬಕ್ಕೆ ಸಾಂತ್ವನ ಹೇಳಲು ನಡೆದ ಭೇಟಿಯು ಈಗ ರಾಜಕೀಯ, ಪ್ರೋಟೋಕಾಲ್ ಮತ್ತು ಸಾರ್ವಜನಿಕ ಹೊಣೆಗಾರಿಕೆ ಕುರಿತ ಚರ್ಚೆಯಾಗಿ ಬದಲಾಗಿದ್ದು, ಮುಂದಿನ ದಿನಗಳಲ್ಲಿ ಈ ವಿಚಾರದ ಬಗ್ಗೆ ಅಧಿಕೃತ ಸ್ಪಷ್ಟನೆ ಬರುತ್ತದೆಯೇ ಎಂಬುದರತ್ತ ಗಮನ ನೆಟ್ಟಿದೆ.

error: Content is protected !!