ವಿಜಯಸಾಕ್ಷಿ ಸುದ್ದಿ, ಗದಗ: ಜಿಲ್ಲೆಯ ಸಾಂಸ್ಕೃತಿಕ ಪರಿಸರವನ್ನು ಜೀವಂತವಾಗಿರಿಸುವಲ್ಲಿ ಸೋಮಶೇಖರ ಚಿಕ್ಕಮಠ ನೇತೃತ್ವದ ನಟರಂಗ ಸಂಸ್ಥೆಯ ಪಾತ್ರ ಅಪಾರವಾಗಿದೆ ಎಂದು ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷ ಕೃಷ್ಣಗೌಡ ಪಾಟೀಲ ಹೇಳಿದರು.
ನಗರದ ಪಂ. ಭೀಮಸೇನ್ ಜೋಶಿ ರಂಗಮಂದಿರದಲ್ಲಿ ಗುರುವಾರ ನಟರಂಗ ಕಲ್ಚರಲ್ ಅಕಾಡೆಮಿ ಮತ್ತು ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ‘ಮಕ್ಕಳ ಕಲರವ-೨೦೨೬’ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ, ಸಂಸ್ಥೆಯ ದಶಮಾನೋತ್ಸವದ ಲೋಗೋ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ನಟರಂಗ ಸಂಸ್ಥೆ ಗ್ರಾಮೀಣ ಭಾಗದ ಮಕ್ಕಳ ಪ್ರತಿಭಾ ಪ್ರದರ್ಶನಕ್ಕೂ ಉತ್ತಮ ವೇದಿಕೆ ಕಲ್ಪಿಸಿದೆ. ಸಂಸ್ಥೆಯ ಚಟುವಟಿಕೆಗಳನ್ನು ಇನ್ನಷ್ಟು ವಿಸ್ತರಿಸಲು ಸ್ವಂತ ಜಾಗದ ಅಗತ್ಯವಿದೆ ಎಂಬುದನ್ನು ಪದಾಧಿಕಾರಿಗಳು ಗಮನಕ್ಕೆ ತಂದಿದ್ದಾರೆ. ಈ ಕುರಿತು ಸಂಬಂಧಪಟ್ಟವರ ಗಮನ ಸೆಳೆದು ಸಂಸ್ಥೆಗೆ ಜಾಗ ಒದಗಿಸಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಅತಿಥಿಯಾಗಿ ಪಾಲ್ಗೊಂಡಿದ್ದ ಪ್ರೀತಿ ಹೊನಗುಡಿ ಮಾತನಾಡಿ, ಉತ್ತರ ಕರ್ನಾಟಕವು ಕಲೆಯ ತವರೂರು. ಇಂದಿನ ಮೊಬೈಲ್ ಯುಗದಲ್ಲೂ ಜನಪದ ಹಾಗೂ ಕಲಾ ಸಂಸ್ಕೃತಿಯನ್ನು ಜನರು ಪೋಷಿಸುತ್ತಿರುವುದಕ್ಕೆ ನಟರಂಗ ಸಂಸ್ಥೆಯ ಈ ಅದ್ಧೂರಿ ಕಾರ್ಯಕ್ರಮವೇ ಸಾಕ್ಷಿಯಾಗಿದೆ ಎಂದರು.
ಬೇಸಿಗೆ ಶಿಬಿರದ ಮೂಲಕ ಮಕ್ಕಳಲ್ಲಿನ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಶ್ಲಾಘನೀಯವಾಗಿ ನಡೆಯುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಖ್ಯಾತ ವೈದ್ಯ ಡಾ. ಎಸ್.ವಿ. ಶಿವನಗೌಡ ಮಾತನಾಡಿ, ನಟರಂಗ ಸಂಸ್ಥೆಯ ತರಬೇತುದಾರರು ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಗಳನ್ನು ಹೊರತರುತ್ತಿದ್ದಾರೆ. ಇಲ್ಲಿ ತರಬೇತಿ ಪಡೆದ ಅನೇಕ ಮಕ್ಕಳು ಇಂದು ದೊಡ್ಡ ವೇದಿಕೆಗಳಲ್ಲಿ ಮಿಂಚುತ್ತಿರುವುದು ಹೆಮ್ಮೆಯ ಸಂಗತಿ. ಈ ಸಂಸ್ಥೆ ಮತ್ತಷ್ಟು ಹೆಮ್ಮರವಾಗಿ ಬೆಳೆಯಲಿ ಎಂದು ಹಾರೈಸಿದರು.
ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಅಡ್ನೂರು-ರಾಜೂರ-ಗದಗ ಬೃಹನ್ಮಠದ ಅಭಿನವ ಪಂಚಾಕ್ಷರ ಶಿವಾಚಾರ್ಯ ಮಹಾಸ್ವಾಮೀಜಿ ಆಶೀರ್ವಚನ ನೀಡಿ, ನಟರಂಗ ಸಂಸ್ಥೆ ಸಮಾಜಕ್ಕೆ ಉತ್ತಮ ಕಲಾವಿದರನ್ನು ನೀಡುತ್ತಿರುವುದು ಶ್ಲಾಘನೀಯ ಕಾರ್ಯ ಎಂದರು.
ಪಂ. ಪಂಚಾಕ್ಷರ ಗವಾಯಿಗಳು ಹಾಗೂ ಪುಟ್ಟರಾಜ ಗವಾಯಿಗಳಂತಹ ಮಹಾನ್ ಪ್ರತಿಭೆಗಳು ಮತ್ತೆ ಈ ನೆಲದಲ್ಲಿ ಮೂಡಿಬರಬೇಕಾದರೆ ಇಂತಹ ಸಂಸ್ಥೆಗಳಿಗೆ ಸ್ವಂತ ನೆಲೆ ಅಗತ್ಯವಾಗಿದೆ. ಸರ್ಕಾರ ಜನಪರ ಸಂಸ್ಥೆಗಳಿಗೆ ಸೂಕ್ತ ಆಶ್ರಯ ನೀಡಬೇಕು ಎಂದು ಹೇಳಿದರು.
ವೇದಿಕೆಯ ಮೇಲೆ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ನಂದಾ ಹಣಬರಹಟ್ಟಿ, ರಂಗಕರ್ಮಿ ಮಹಾಂತೇಶ ಗಜೇಂದ್ರಗಡ, ತೋಂಟದಾರ್ಯ ಮಠದ ಆಡಳಿತಾಧಿಕಾರಿ ಎಸ್.ಎಸ್. ಪಟ್ಟಣಶೆಟ್ಟರ್, ಉದ್ಯಮಿ ಕಿರಣ ಬೂಮಾ, ಎಚ್.ಎಸ್. ಶಿವನಗೌಡ್ರ, ಶರಣಬಸಪ್ಪ ಗುಡುಮನಿ, ಜಿ.ಬಿ. ಪಾಟೀಲ, ಮುತ್ತಣ್ಣ ಮುಶಿಗೇರಿ, ವಿಜಯಕುಮಾರ ಹಿರೇಮಠ, ವಿಜಯಲಕ್ಷ್ಮೀ ಮಾನ್ವಿ, ಚಂದ್ರು ಹರಿಜನ, ಬಾಬು ನರಸಾಪುರ, ನಾಗರತ್ನಾ ಚಿಕ್ಕಮಠ, ರಾಮಚಂದ್ರ ಬಳ್ಳಾರಿ, ಮಹೇಶ ಕರಿಬಿಷ್ಟಿ, ನಟರಂಗ ಅಕಾಡೆಮಿಯ ಅಧ್ಯಕ್ಷ ಸೋಮಶೇಖರ ಚಿಕ್ಕಮಠ, ಪೂಜಾ ಚಿಕ್ಕಮಠ ಹಾಗೂ ಸಂಗೀತಾ ಶಿಗ್ಗಾಂವಿ ಉಪಸ್ಥಿತರಿದ್ದರು.
ರಾಹುಲ್ ರಾಠೋಡ ಪ್ರಾರ್ಥಿಸಿದರು. ಪತ್ರಕರ್ತ ಆನಂದಯ್ಯ ವಿರಕ್ತಮಠ ಕಾರ್ಯಕ್ರಮ ನಿರೂಪಿಸಿದರು. ಶಿಬಿರದ ಮಕ್ಕಳಿಂದ ನಡೆದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜನಮನ ಸೆಳೆದವು.
“ಗ್ರಾಮೀಣ ಮಕ್ಕಳ ಪ್ರತಿಭೆಗೆ ವೇದಿಕೆ ಕಲ್ಪಿಸಿ, ಉತ್ತರ ಕರ್ನಾಟಕದ ಕಲಾ ಸಂಸ್ಕೃತಿಯನ್ನು ಜೀವಂತವಾಗಿರಿಸಿರುವುದು ನಟರಂಗ ಸಂಸ್ಥೆಯ ದೊಡ್ಡ ಸಾಧನೆ.”
— ಕೃಷ್ಣಗೌಡ ಪಾಟೀಲ
ಯುವ ಕಾಂಗ್ರೆಸ್ ಘಟಕದ ಜಿಲ್ಲಾ ಅಧ್ಯಕ್ಷ

