Home Blog

ಹಿಂದಿ ಚಿತ್ರರಂಗದ ಸ್ವರಸಾಮ್ರಾಜ್ಞಿ ಸುಮನ್ ಕಲ್ಯಾಣ್‌ಪುರ್ ಇನ್ನಿಲ್ಲ

ಮುಂಬೈ: ಭಾರತೀಯ ಸಂಗೀತ ಲೋಕದ ಹಿರಿಯ ಗಾಯಕಿ ಸುಮನ್ ಕಲ್ಯಾಣ್‌ಪುರ್ ಅವರು 89ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಮೇ 31ರಂದು ಮುಂಬೈನ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರ ನಿಧನದಿಂದ ಭಾರತೀಯ ಚಿತ್ರಸಂಗೀತದ ಸುವರ್ಣಯುಗದ ಮತ್ತೊಂದು ಅಧ್ಯಾಯ ಅಂತ್ಯಗೊಂಡಂತಾಗಿದೆ.

ಸುಮಾರು ಆರು ದಶಕಗಳ ಕಾಲ ಗಾಯನ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದ ಸುಮನ್ ಕಲ್ಯಾಣ್‌ಪುರ್, ಹಿಂದಿ ಸೇರಿದಂತೆ ಅನೇಕ ಭಾರತೀಯ ಭಾಷೆಗಳಲ್ಲಿ ಸಾವಿರಾರು ಹಾಡುಗಳಿಗೆ ಧ್ವನಿಯಾಗಿದ್ದರು. ಬಾಂಗ್ಲಾದೇಶದ ಢಾಕಾದಲ್ಲಿ ಜನಿಸಿದ್ದ ಅವರು ನಂತರ ಮುಂಬೈನಲ್ಲಿ ನೆಲೆಸಿ, ಭಾರತೀಯ ಚಿತ್ರರಂಗದ ಪ್ರಮುಖ ಹಿನ್ನೆಲೆ ಗಾಯಕಿಯಾಗಿ ಹೊರಹೊಮ್ಮಿದ್ದರು.

‘ಆಜ್‌ಕಲ್ ತೇರೆ ಮೇರೆ ಪ್ಯಾರ್ ಕೆ ಚರ್ಚೇ’, ‘ನಾ ನಾ ಕರ್ತೆ ಪ್ಯಾರ್ ತುಮ್ಹೀ ಸೆ’, ‘ತುಮ್ನೆ ಪುಕಾರಾ ಔರ್ ಹಮ್ ಚಲೆ ಆಯೇ’ ಮೊದಲಾದ ಹಾಡುಗಳ ಮೂಲಕ ಅವರು ಕೋಟ್ಯಂತರ ಸಂಗೀತ ಪ್ರೇಮಿಗಳ ಮನ ಗೆದ್ದಿದ್ದರು. ಶಾಸ್ತ್ರೀಯ ಸಂಗೀತದ ಗಾಢ ಜ್ಞಾನ ಮತ್ತು ಮಧುರ ಕಂಠ ಅವರ ಯಶಸ್ಸಿನ ಮೂಲವಾಗಿತ್ತು.

ಕನ್ನಡ ಚಿತ್ರರಂಗದಲ್ಲೂ ಅವರು ‘ಒಡನಾಡಿ ಬೇಕೆಂದು’, ‘ಹನಿ ಹನಿ ಹೀರಿ ತಣಿ ಹರೆಯ’ ಹಾಗೂ ‘ತಲ್ಲಣ ನೂರು ಬಗೆ’ ಹಾಡುಗಳ ಮೂಲಕ ವಿಶೇಷ ಗುರುತು ಮೂಡಿಸಿದ್ದರು. ಕನ್ನಡಿಗರ ಹೃದಯದಲ್ಲಿ ತಮ್ಮದೇ ಸ್ಥಾನ ನಿರ್ಮಿಸಿಕೊಂಡಿದ್ದ ಸುಮನ್, ಬಹುಭಾಷಾ ಗಾಯಕಿಯಾಗಿ ಅಪಾರ ಜನಪ್ರಿಯತೆ ಗಳಿಸಿದ್ದರು.

ಕೊನೆಯ ಕ್ಷಣಗಳವರೆಗೂ ಸಂಗೀತದೊಂದಿಗೆ ಬದುಕಿದ್ದ ಸುಮನ್ ಕಲ್ಯಾಣ್‌ಪುರ್ ಅವರ ನಿಧನಕ್ಕೆ ದೇಶದಾದ್ಯಂತ ಕಲಾವಿದರು, ರಾಜಕೀಯ ನಾಯಕರು ಹಾಗೂ ಅಭಿಮಾನಿಗಳು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಅವರ ಹಾಡುಗಳು ಮುಂದಿನ ಪೀಳಿಗೆಗಳಿಗೂ ಸ್ಫೂರ್ತಿಯಾಗಲಿವೆ.

ಬೆಂಗಳೂರು ಸೇರಿ ಹಲವು ಜಿಲ್ಲೆಗಳಲ್ಲಿ ಗುಡುಗು ಮಳೆಯ ನಿರೀಕ್ಷೆ! ಹವಾಮಾನ ಇಲಾಖೆ ಎಚ್ಚರಿಕೆ

ಬೆಂಗಳೂರು: ಕರ್ನಾಟಕದಾದ್ಯಂತ ಮುಂದಿನ ಕೆಲವು ದಿನಗಳ ಕಾಲ ವರುಣನ ಅಬ್ಬರ ಜೋರಾಗುವ ಸಾಧ್ಯತೆ ಇದ್ದು, ಭಾರತೀಯ ಹವಾಮಾನ ಇಲಾಖೆ ಹಲವು ಜಿಲ್ಲೆಗಳಿಗೆ ಭಾರಿ ಮಳೆಯ ಮುನ್ನೆಚ್ಚರಿಕೆ ನೀಡಿದೆ.

ರಾಜ್ಯದ ವಿವಿಧ ಭಾಗಗಳಲ್ಲಿ ಗುಡುಗು, ಮಿಂಚು ಹಾಗೂ ಬಿರುಗಾಳಿ ಸಹಿತ ಮಳೆಯ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಹಳದಿ ಅಲರ್ಟ್ ಘೋಷಿಸಲಾಗಿದೆ.

ಉತ್ತರ ಒಳನಾಡಿನಲ್ಲಿ ಭಾರಿ ಮಳೆ ಎಚ್ಚರಿಕೆ:

ಗದಗ, ಧಾರವಾಡ, ಹಾವೇರಿ ಮತ್ತು ಕೊಪ್ಪಳ ಜಿಲ್ಲೆಗಳ ಕೆಲವೆಡೆ 40–50 ಕಿ.ಮೀ ವೇಗದ ಬಿರುಗಾಳಿಯೊಂದಿಗೆ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ದಕ್ಷಿಣ ಒಳನಾಡಿನಲ್ಲಿ ಹಳದಿ ಅಲರ್ಟ್:

ಮೈಸೂರು, ಮಂಡ್ಯ, ಹಾಸನ ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ 30–40 ಕಿ.ಮೀ ವೇಗದ ಬಿರುಗಾಳಿ ಸಹಿತ ಭಾರಿ ಮಳೆಯ ಮುನ್ಸೂಚನೆ ನೀಡಲಾಗಿದ್ದು, ಈ ಜಿಲ್ಲೆಗಳಿಗೆ ಹಳದಿ ಅಲರ್ಟ್ ಘೋಷಿಸಲಾಗಿದೆ.

ಕರಾವಳಿ ಜಿಲ್ಲೆಗಳಲ್ಲಿ ಸಾಧಾರಣ ಮಳೆ:

ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಬಹುತೇಕ ಭಾಗಗಳಲ್ಲಿ ಮುಂದಿನ ದಿನಗಳಲ್ಲಿ ಸಾಧಾರಣ ಮಳೆಯ ನಿರೀಕ್ಷೆಯಿದ್ದು, 30–40 ಕಿ.ಮೀ ವೇಗದ ಬಿರುಗಾಳಿ ಬೀಸುವ ಸಾಧ್ಯತೆ ಇದೆ. ಕರಾವಳಿ ಭಾಗದಲ್ಲಿ ತಂಪಾದ ವಾತಾವರಣ ಮುಂದುವರಿಯಲಿದೆ.

ಇತರೆ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಸಾಧ್ಯತೆ:

ಬಾಗಲಕೋಟೆ, ಬೆಳಗಾವಿ, ಬೀದರ್, ಕಲಬುರಗಿ, ರಾಯಚೂರು, ವಿಜಯಪುರ ಮತ್ತು ಯಾದಗಿರಿ ಜಿಲ್ಲೆಗಳ ಕೆಲವೆಡೆ ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆ ಇದ್ದು, ಬಿರುಗಾಳಿಯ ವೇಗ 40–50 ಕಿ.ಮೀ ಇರಬಹುದು ಎಂದು ಅಂದಾಜಿಸಲಾಗಿದೆ.

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಬಳ್ಳಾರಿ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಕೊಡಗು, ಕೋಲಾರ, ರಾಮನಗರ, ಶಿವಮೊಗ್ಗ, ತುಮಕೂರು ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಸಾಧಾರಣ ಮಳೆಯ ಸಾಧ್ಯತೆ ಇದೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸಂಜೆ ಅಥವಾ ರಾತ್ರಿ ವೇಳೆಗೆ ಗುಡುಗು ಸಹಿತ ಮಳೆಯಾಗುವ ನಿರೀಕ್ಷೆ ವ್ಯಕ್ತವಾಗಿದೆ.

ಸಾರ್ವಜನಿಕರಿಗೆ ಎಚ್ಚರಿಕೆ:

ಮಳೆ ಮತ್ತು ಬಿರುಗಾಳಿ ಸಮಯದಲ್ಲಿ ಸಾರ್ವಜನಿಕರು ಸುರಕ್ಷಿತ ಸ್ಥಳಗಳಲ್ಲಿ ಆಶ್ರಯ ಪಡೆಯಬೇಕು ಹಾಗೂ ಹಳೆಯ ಕಟ್ಟಡಗಳು ಮತ್ತು ಮರಗಳ ಕೆಳಗೆ ನಿಲ್ಲುವುದನ್ನು ತಪ್ಪಿಸಬೇಕು ಎಂದು ಹವಾಮಾನ ಇಲಾಖೆ ಸೂಚಿಸಿದೆ. ರೈತರು ತಮ್ಮ ಬೆಳೆ ಹಾಗೂ ಜಾನುವಾರುಗಳ ಸುರಕ್ಷತೆಗೆ ಅಗತ್ಯ ಮುಂಜಾಗ್ರತೆ ವಹಿಸುವಂತೆ ಸಲಹೆ ನೀಡಲಾಗಿದೆ.

ಗುಲಾಬಿ ಹೂವಿನ ಸ್ವಾಗತಕ್ಕೆ ಖುಷಿಯಾದ ಮಕ್ಕಳು

ವಿಜಯಸಾಕ್ಷಿ ಸುದ್ದಿ, ಗದಗ: ಎರಡು ತಿಂಗಳ ಬೇಸಿಗೆ ರಜೆಯ ನಂತರ ಸೋಮವಾರ ಜಿಲ್ಲೆಯಾದ್ಯಂತ ಶಾಲೆಗಳು ಪುನಃ ಆರಂಭಗೊಂಡಿದ್ದು, ವಿದ್ಯಾರ್ಥಿಗಳ ಆಗಮನದಿಂದ ಶಾಲಾ ಆವರಣಗಳು ಮತ್ತೆ ಕಲರವದಿಂದ ಜೀವಂತಗೊಂಡವು. ಹೊಸ ಶೈಕ್ಷಣಿಕ ವರ್ಷದ ಮೊದಲ ದಿನವಾದ ಶಾಲಾ ಪ್ರಾರಂಭೋತ್ಸವವನ್ನು ಜಿಲ್ಲೆಯ ವಿವಿಧ ಸರ್ಕಾರಿ ಹಾಗೂ ಖಾಸಗಿ ಶಾಲೆಗಳಲ್ಲಿ ಸಂಭ್ರಮ, ಸಡಗರ ಮತ್ತು ವಿಶೇಷ ಸ್ವಾಗತದೊಂದಿಗೆ ಆಚರಿಸಲಾಯಿತು.
ಶಾಲೆಗೆ ಆಗಮಿಸಿದ ವಿದ್ಯಾರ್ಥಿಗಳನ್ನು ಶಿಕ್ಷಕರು ಹಾಗೂ ಸಿಬ್ಬಂದಿ ಗುಲಾಬಿ ಹೂವು ನೀಡಿ ಆತ್ಮೀಯವಾಗಿ ಬರಮಾಡಿಕೊಂಡರು. ಕೆಲವೆಡೆ ಸಿಹಿ ಹಂಚುವ ಮೂಲಕ ಮಕ್ಕಳಿಗೆ ಸ್ವಾಗತ ಕೋರಲಾಯಿತು. ಮೊದಲ ದಿನವೇ ಶಾಲಾ ವಾತಾವರಣ ಹಬ್ಬದ ಸಂಭ್ರಮದಂತೆ ಕಂಗೊಳಿಸಿತು.
ಹೊಸ ಪುಸ್ತಕ, ಹೊಸ ತರಗತಿ… ಮಕ್ಕಳ ಮುಖದಲ್ಲಿ ಸಂಭ್ರಮ
ಎಪ್ರಿಲ್ ಹಾಗೂ ಮೇ ತಿಂಗಳ ಬೇಸಿಗೆ ರಜೆಯನ್ನು ಖುಷಿಯಿಂದ ಕಳೆದ ವಿದ್ಯಾರ್ಥಿಗಳು ಹೊಸ ಉತ್ಸಾಹದೊಂದಿಗೆ ಶಾಲೆಯತ್ತ ಮುಖ ಮಾಡಿದರು. ಹೊಸ ಪುಸ್ತಕಗಳು, ಹೊಸ ತರಗತಿ ಕೊಠಡಿಗಳು ಹಾಗೂ ಸ್ನೇಹಿತರೊಂದಿಗೆ ಮತ್ತೆ ಕಲಿಕೆ ಆರಂಭಿಸುವ ಸಂತಸ ಮಕ್ಕಳ ಮುಖದಲ್ಲಿ ಎದ್ದು ಕಾಣುತ್ತಿತ್ತು.
ವಿಶೇಷವಾಗಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಮುಂದಿನ ತರಗತಿಗೆ ಕಾಲಿಟ್ಟ ಖುಷಿ ವಿದ್ಯಾರ್ಥಿಗಳಲ್ಲಿ ಹೆಚ್ಚಾಗಿ ಕಂಡುಬಂತು.
ನಗರದ ಗಂಗಾಪುರ ಪೇಟೆ, ಶಹಾಪುರ ಪೇಟೆ, ಗಂಗಿಮಡಿ ಸೇರಿದಂತೆ ಜಿಲ್ಲೆಯ ವಿವಿಧ ಶಾಲೆಗಳಲ್ಲಿ ಶಾಲಾ ಪ್ರಾರಂಭೋತ್ಸವ ಅದ್ದೂರಿಯಾಗಿ ನಡೆಯಿತು. ಶಾಲಾ ಆವರಣಗಳನ್ನು ಸ್ವಚ್ಛಗೊಳಿಸಿ ವರ್ಣರಂಜಿತವಾಗಿ ಅಲಂಕರಿಸಲಾಗಿತ್ತು.
ಪುಟ್ಟ ಮಕ್ಕಳಿಗೆ ಶಿಕ್ಷಕರ ಆತ್ಮೀಯ ಸ್ಪರ್ಶ
ಶಿಕ್ಷಣ ಇಲಾಖೆಯ ನಿರ್ದೇಶನದಂತೆ ಮಕ್ಕಳ ಸ್ನೇಹಿ ವಾತಾವರಣ ನಿರ್ಮಿಸಲು ಶಾಲೆಗಳು ವಿಶೇಷ ಗಮನ ಹರಿಸಿದ್ದವು. ಶಾಲೆಗೆ ಮೊದಲ ದಿನ ಬಂದ ಪುಟ್ಟ ಮಕ್ಕಳ ಆತಂಕ ದೂರವಾಗುವಂತೆ ಶಿಕ್ಷಕರು ಪ್ರೀತಿಯಿಂದ ಮಾತನಾಡಿ ಆತ್ಮವಿಶ್ವಾಸ ತುಂಬಿದರು.
ಮಕ್ಕಳನ್ನು ಸೆಳೆಯುವ ಉದ್ದೇಶದಿಂದ ವಿವಿಧ ಸ್ವಾಗತ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
ಶಿಕ್ಷಕರ ಆತ್ಮೀಯತೆ ಹಾಗೂ ಮಕ್ಕಳ ಉತ್ಸಾಹದಿಂದ ಈ ಬಾರಿಯ ಶಾಲಾ ಪ್ರಾರಂಭೋತ್ಸವ ಗದಗ ಜಿಲ್ಲೆಯಲ್ಲಿ ವಿಶೇಷ ಮೆರುಗು ಪಡೆದಿದ್ದು, ಹೊಸ ಶೈಕ್ಷಣಿಕ ವರ್ಷಕ್ಕೆ ಭರವಸೆಯ ಆರಂಭ ದೊರೆತಂತಾಗಿದೆ.
ಮಾವಿನ ಶಿಕರಣಿ ಸವಿದು ಖುಷಿಯಾದ ಮಕ್ಕಳು
ನಗರದ ಸರ್ಕಾರಿ ಪ್ರಾಥಮಿಕ ಶಾಲೆ ನಂ. ೨ರಲ್ಲಿ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಊಟದೊಂದಿಗೆ ವಿಶೇಷವಾಗಿ ಮಾವಿನ ಹಣ್ಣಿನ ಶಿಕರಣಿ ತಯಾರಿಸಿ ಬಡಿಸಲಾಯಿತು. ಈ ವಿಶೇಷ ಉಪಹಾರ ಮಕ್ಕಳ ಮನ ಗೆದ್ದಿತು.

ಎತ್ತಿನಗಾಡಿಯಲ್ಲಿ ಶಾಲೆಗೆ ಬಂದ ಮಕ್ಕಳು!

ವಿಜಯಸಾಕ್ಷಿ ಸುದ್ದಿ ಗದಗ: ಹೊಸ ಶೈಕ್ಷಣಿಕ ವರ್ಷದ ಮೊದಲ ದಿನವೇ ಮಕ್ಕಳಲ್ಲಿ ಶಾಲೆಯ ಬಗ್ಗೆ ಪ್ರೀತಿ, ಉತ್ಸಾಹ ಮತ್ತು ಆತ್ಮೀಯತೆ ಮೂಡಿಸುವ ಉದ್ದೇಶದಿಂದ ಗದಗ ತಾಲೂಕಿನ ಅಸುಂಡಿಯ ಕುವೆಂಪು ಶತಮಾನೋತ್ಸವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾರಂಭೋತ್ಸವವನ್ನು ಅದ್ದೂರಿಯಾಗಿ ಹಾಗೂ ವಿಶಿಷ್ಟವಾಗಿ ಆಚರಿಸಲಾಯಿತು.
ಕಾರ್ಯಕ್ರಮಕ್ಕೂ ಮುನ್ನ ಗ್ರಾಮದ ಪ್ರಮುಖ ಬೀದಿಗಳಲ್ಲಿ ವಿದ್ಯಾರ್ಥಿಗಳ ಭವ್ಯ ಮೆರವಣಿಗೆ ನಡೆಯಿತು. ಎತ್ತಿನಗಾಡಿ ಹಾಗೂ ಟ್ರ್ಯಾಕ್ಟರ್‌ಗಳಲ್ಲಿ ಮಕ್ಕಳನ್ನು ಕೂರಿಸಿಕೊಂಡು ಗ್ರಾಮದಲ್ಲಿ ಮೆರವಣಿಗೆ ನಡೆಸಿ ಶಾಲೆಗೆ ಕರೆತರಲಾಯಿತು. ಮೆರವಣಿಗೆಯುದ್ದಕ್ಕೂ ಗ್ರಾಮಸ್ಥರು ಹರ್ಷೋದ್ಗಾರಗಳೊಂದಿಗೆ ಮಕ್ಕಳನ್ನು ಸ್ವಾಗತಿಸಿದರು.
ಶಾಲೆಯ ಮುಖ್ಯ ದ್ವಾರದಲ್ಲಿ ಅತಿಥಿಗಳು ಹಾಗೂ ಶಿಕ್ಷಕರು ಮಕ್ಕಳ ಮೇಲೆ ಪುಷ್ಪವೃಷ್ಟಿ ಮಾಡುವ ಮೂಲಕ ಆತ್ಮೀಯವಾಗಿ ಬರಮಾಡಿಕೊಂಡರು. ವಿಶೇಷವಾಗಿ ನಿರ್ಮಿಸಲಾಗಿದ್ದ ಸೆಲ್ಫಿ ಕಾರ್ನರ್ ವಿದ್ಯಾರ್ಥಿಗಳು ಮತ್ತು ಪಾಲಕರ ಗಮನ ಸೆಳೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಆರ್.ಎಸ್. ಬುರಡಿ ಮಾತನಾಡಿ, “ಶಿಕ್ಷಣವು ಪ್ರತಿಯೊಬ್ಬ ಮಗುವಿನ ಮೂಲಭೂತ ಹಕ್ಕು. ಮಕ್ಕಳಿಗೆ ಸುರಕ್ಷಿತ, ಸಂತೋಷದಾಯಕ ಹಾಗೂ ಪ್ರೇರಣಾದಾಯಕ ವಾತಾವರಣದಲ್ಲಿ ಶಿಕ್ಷಣ ದೊರೆಯಬೇಕು” ಎಂದು ಹೇಳಿದರು.
“ಶಾಲೆಯ ಮೊದಲ ದಿನವೇ ಮಕ್ಕಳಲ್ಲಿ ಶಾಲೆಯ ಬಗ್ಗೆ ಪ್ರೀತಿ ಮತ್ತು ಆತ್ಮೀಯತೆ ಮೂಡಬೇಕು. ಅದಕ್ಕಾಗಿ ಶಿಕ್ಷಕರು, ಪಾಲಕರು ಹಾಗೂ ಶಾಲಾಭಿವೃದ್ಧಿ ಸಮಿತಿ ಸದಸ್ಯರು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕು” ಎಂದು ಹೇಳಿದರು.
ಸರ್ಕಾರಿ ಶಾಲೆಗಳಲ್ಲಿ ಆಧುನಿಕ ಕಲಿಕಾ ಸೌಲಭ್ಯಗಳು, ಗುಣಮಟ್ಟದ ಶಿಕ್ಷಕರು, ಉಚಿತ ಪಠ್ಯಪುಸ್ತಕ, ಸಮವಸ್ತ್ರ ಹಾಗೂ ಮಧ್ಯಾಹ್ನದ ಬಿಸಿಯೂಟ ಸೇರಿದಂತೆ ವಿದ್ಯಾರ್ಥಿ ಸ್ನೇಹಿ ವ್ಯವಸ್ಥೆಗಳು ಲಭ್ಯವಿವೆ. ಗ್ರಾಮೀಣ ವಿದ್ಯಾರ್ಥಿಗಳೂ ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸುವ ಸಾಮರ್ಥ್ಯ ಹೊಂದುವಂತೆ ಶಿಕ್ಷಣ ನೀಡಲಾಗುತ್ತಿದೆ ಎಂದು ತಿಳಿಸಿದರು.
ಶಿಕ್ಷಣದ ಮಹತ್ವವನ್ನು ವಿಶಿಷ್ಟವಾಗಿ ವಿವರಿಸಿದ ಅವರು, “ಶಿಕ್ಷಣ ಕೊತ್ತಂಬರಿ ಸೊಪ್ಪಿನಂತಿದ್ದು, ಅದು ಎಲ್ಲೆ ಇದ್ದರೂ ತನ್ನ ಸುವಾಸನೆ ಹರಡುತ್ತದೆ. ಮಕ್ಕಳು ತಾವು ಓದುತ್ತಿರುವ ಶಾಲೆಯನ್ನು ಹೆಮ್ಮೆಯಿಂದ ಕಾಣಬೇಕು” ಎಂದು ಕರೆ ನೀಡಿದರು.
ನಿವೃತ್ತ ಉಪನಿರ್ದೇಶಕ ಎ.ಎನ್. ನಾಗರಳ್ಳಿ ಮಾತನಾಡಿ, “ಶಿಕ್ಷಕರು ಬದ್ಧತೆಯಿಂದ ಪಾಠ ಮಾಡಿದರೆ ಮಕ್ಕಳು ಖಂಡಿತ ಕಲಿಯುತ್ತಾರೆ. ಮಕ್ಕಳಲ್ಲಿ ಜ್ಞಾನ ಮತ್ತು ಮೌಲ್ಯಗಳನ್ನು ಬೆಳೆಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ” ಎಂದರು.
ಅತಿಥಿಯಾಗಿ ಭಾಗವಹಿಸಿದ್ದ ಎಚ್.ಕೆ. ಬೂಮ್ಮಕ್ಕನವರ ಮಾತನಾಡಿ, “ಖಾಸಗಿ ಶಾಲೆಗಳ ಹೆಚ್ಚಳದ ನಡುವೆಯೂ ಸರ್ಕಾರಿ ಶಾಲೆಗಳ ಅಸ್ತಿತ್ವ ಉಳಿಯಬೇಕು. ಪಾಲಕರು, ಹಳೆಯ ವಿದ್ಯಾರ್ಥಿಗಳು ಹಾಗೂ ಸಮಾಜದ ಎಲ್ಲ ವರ್ಗದವರು ಕೈಜೋಡಿಸಬೇಕು” ಎಂದು ಹೇಳಿದರು.
ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ (ಅಭಿವೃದ್ಧಿ) ಕೆ.ಡಿ. ಬಡಿಗೇರ ಮಾತನಾಡಿ, “ಒಂದು ಮಗುವೂ ಸರ್ಕಾರಿ ಶಾಲೆಯಿಂದ ಖಾಸಗಿ ಶಾಲೆಗೆ ಹೋಗದಂತೆ ನೋಡಿಕೊಳ್ಳುವ ಜವಾಬ್ದಾರಿ ಶಿಕ್ಷಕರ ಮೇಲಿದೆ” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜೆ.ಎ. ಭಾವಿಕಟ್ಟಿ, ರವಿ ಪ್ರಕಾಶ, ಬಿ.ಎಫ್. ಪೂಜಾರ, ವಿ.ಎಂ. ಹಿರೇಮಠ, ರವಿರಾಜ ಪವಾರ, ಶ್ರೀಮತಿ ಗೀತಾ ಕುಲಕರ್ಣಿ, ಎಂ.ಡಿ. ಹೊಸಮನಿ, ವಿ.ಎಫ್. ಕಲಕುಂಬಿ, ಶಂಕರ ಹಡಗಲಿ, ಶ್ರೀಮತಿ ಶೈಲಜಾ ಮಟ್ಟಿ, ಡಾ. ಬಸವರಾಜ ವಿ.ಎಚ್. ಬಳ್ಳಾರಿ, ಎಚ್.ವೈ. ಹೊನ್ನಿನಾಯ್ಕರ, ಸೋಮರೆಡ್ಡಿ ರಾಮೇನಳ್ಳಿ, ಶಿವಾನಂದ ಕರಿಗಾರ, ಫಕಿರೆಡ್ಡಿ ಮಾಡಳ್ಳಿ, ತಾಜುದ್ದೀನ್ ಓಲೇಕಾರ, ಶ್ರೀಮತಿ ರೇಖಾ ತಿಮ್ಮನಗೌಡ್ರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಎಪಿಸಿಒ ಶಿವಕುಮಾರ ಕುರಿ ಸ್ವಾಗತಿಸಿದರು. ವಿ.ವಿ. ನಡುವಿನಮನಿ ವಂದಿಸಿದರು. ಶಾಲೆಯ ಮುಖ್ಯೋಪಾಧ್ಯಾಯ ಡಿ.ಎಚ್. ಪರಂಗಿ ಕಾರ್ಯಕ್ರಮ ನಿರೂಪಿಸಿದರು.
 “ಶಾಲೆಯ ಮೊದಲ ದಿನ ಮಕ್ಕಳ ಮುಖದಲ್ಲಿ ಮೂಡುವ ಸಂತಸವೇ ವರ್ಷಪೂರ್ತಿ ಕಲಿಕೆಯ ಉತ್ಸಾಹಕ್ಕೆ ಅಡಿಪಾಯವಾಗುತ್ತದೆ.”
ಆರ್.ಎಸ್. ಬುರಡಿ, ಉಪನಿರ್ದೇಶಕರು, ಶಾಲಾ ಶಿಕ್ಷಣ ಇಲಾಖೆ
ಹೊಸ ಪುಸ್ತಕ-ಸಮವಸ್ತ್ರ ಪಡೆದು ಖುಷಿಯಾದ ಮಕ್ಕಳು
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕಗಳು ಹಾಗೂ ಸಮವಸ್ತ್ರಗಳನ್ನು ವಿತರಿಸಲಾಯಿತು. ಹೊಸ ಪುಸ್ತಕ ಹಾಗೂ ಸಮವಸ್ತ್ರ ಪಡೆದ ಮಕ್ಕಳ ಮುಖದಲ್ಲಿ ಸಂತಸ ಮನೆ ಮಾಡಿತ್ತು.
ಅಸುಂಡಿ ಶಾಲಾ ಮಕ್ಕಳಿಂದ ನಾಡಗೀತೆ ಪ್ರಸ್ತುತಪಡಿಸಲಾಯಿತು. ಮಲ್ಲಸಮುದ್ರ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳ ತಂಡದಿಂದ ನೃತ್ಯ ಪ್ರದರ್ಶನ ನಡೆಯಿತು.

ಅಂಪೈರ್‌ಗೆ ಐಸ್ ಪ್ಯಾಕ್ ಎಸೆತ: ಟಿಮ್ ಡೇವಿಡ್​ಗೆ ನಿಷೇಧದ ಶಿಕ್ಷೆ ವಿಧಿಸಿದ ಬಿಸಿಸಿಐ

ಸತತ ಎರಡನೇ ಬಾರಿಗೆ ಐಪಿಎಲ್ ಟ್ರೋಫಿ ಗೆದ್ದ ಆರ್‌ಸಿಬಿಗೆ ಬಿಸಿಸಿಐ ಶಾಕ್ ನೀಡಿದ್ದು, ತಂಡದ ಸ್ಟಾರ್ ಬ್ಯಾಟ್ಸ್‌ಮನ್ ಟಿಮ್ ಡೇವಿಡ್‌ಗೆ ಒಂದು ಪಂದ್ಯ ನಿಷೇಧದ ಶಿಕ್ಷೆ ವಿಧಿಸಿದೆ.

ಫೈನಲ್ ಪಂದ್ಯದಲ್ಲಿ ಅಂಪೈರ್ ನಿತಿನ್ ಮೆನನ್ ಅವರತ್ತ ಐಸ್ ಪ್ಯಾಕ್ ಎಸೆದ ಕಾರಣ ಬಿಸಿಸಿಐ ಈ ಕಠಿಣ ಕ್ರಮ ಕೈಗೊಂಡಿದೆ. ಇದರೊಂದಿಗೆ ಟಿಮ್ ಡೇವಿಡ್ ಅವರ ಪಂದ್ಯ ಶುಲ್ಕದ 50 ಪ್ರತಿಶತ ದಂಡವಾಗಿ ಕಡಿತಗೊಳಿಸಲಾಗಿದ್ದು, ಎರಡು ಡಿಮೆರಿಟ್ ಅಂಕಗಳನ್ನು ಸಹ ನೀಡಲಾಗಿದೆ.

ಐಪಿಎಲ್ ನೀತಿ ಸಂಹಿತೆಯ ಆರ್ಟಿಕಲ್ 2.9 ಉಲ್ಲಂಘನೆ ಮಾಡಿದ ಕಾರಣ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಬಿಸಿಸಿಐ ತಿಳಿಸಿದೆ. ಪಂದ್ಯದ ವೇಳೆ ಆಟಗಾರರು ಅಂಪೈರ್ ಅಥವಾ ಯಾವುದೇ ಅಧಿಕೃತ ವ್ಯಕ್ತಿಯತ್ತ ಕ್ರಿಕೆಟ್ ಸಾಮಗ್ರಿ ಅಥವಾ ವಸ್ತುಗಳನ್ನು ಆಕ್ರಮಣಕಾರಿ ರೀತಿಯಲ್ಲಿ ಎಸೆಯುವುದು ಈ ನಿಯಮದ ಉಲ್ಲಂಘನೆ ಎಂದು ಸ್ಪಷ್ಟಪಡಿಸಲಾಗಿದೆ.

ವರದಿಗಳ ಪ್ರಕಾರ, ಟಿಮ್ ಡೇವಿಡ್ ಲೀಗ್ ಹಂತದಿಂದಲೇ ಈ ಸೀಸನ್‌ನಲ್ಲಿ ಮೂರನೇ ಬಾರಿ ಶಿಸ್ತು ಕ್ರಮಕ್ಕೆ ಒಳಗಾಗಿದ್ದಾರೆ. ಮುಂಬೈ ಇಂಡಿಯನ್ಸ್ ವಿರುದ್ಧದ ಎರಡು ಪಂದ್ಯಗಳಲ್ಲಿ ನಡೆದ ನಿಯಮ ಉಲ್ಲಂಘನೆಗೆ ಕ್ರಮವಾಗಿ ಒಂದು ಮತ್ತು ಎರಡು ಡಿಮೆರಿಟ್ ಅಂಕಗಳನ್ನು ನೀಡಲಾಗಿತ್ತು. ಒಟ್ಟಾರೆ ಐದು ಡಿಮೆರಿಟ್ ಅಂಕಗಳು ಸಂಗ್ರಹವಾಗಿರುವ ಹಿನ್ನೆಲೆಯಲ್ಲಿ ಅವರಿಗೆ ಒಂದು ಪಂದ್ಯ ನಿಷೇಧ ವಿಧಿಸಲಾಗಿದೆ.

ಈ ನಿರ್ಧಾರದ ಪರಿಣಾಮವಾಗಿ ಟಿಮ್ ಡೇವಿಡ್ 2027ರ ಐಪಿಎಲ್ ಆರಂಭಿಕ ಪಂದ್ಯದಲ್ಲಿ ಆರ್‌ಸಿಬಿ ಪರ ಕಣಕ್ಕಿಳಿಯಲು ಸಾಧ್ಯವಾಗುವುದಿಲ್ಲ.

ಈ ಸೀಸನ್‌ನಲ್ಲಿ ಟಿಮ್ ಡೇವಿಡ್ 16 ಪಂದ್ಯಗಳಲ್ಲಿ 305 ರನ್ ಗಳಿಸಿದ್ದು, 33.88 ಸರಾಸರಿ ಹಾಗೂ 23 ಸಿಕ್ಸರ್‌ಗಳೊಂದಿಗೆ ಆರ್‌ಸಿಬಿ ಚಾಂಪಿಯನ್ ಸಾಧನೆಯಲ್ಲಿ ಪ್ರಮುಖ ಪಾತ್ರವಹಿಸಿದ್ದರು.

ರಸ್ತೆ-ಚರಂಡಿ ಇಲ್ಲದೆ ಕಂಗಾಲಾದ ಜನಜೀವನ!

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದ ಕೌಡೇಶ್ವರಿ ನಗರದ ನಿವಾಸಿಗಳು ರಸ್ತೆ, ಚರಂಡಿ ಹಾಗೂ ಕುಡಿಯುವ ನೀರಿನಂತಹ ಮೂಲಭೂತ ಸೌಲಭ್ಯಗಳನ್ನು ಒದಗಿಸುವಂತೆ ಆಗ್ರಹಿಸಿ ಸೋಮವಾರ ಮಳೆಯ ನಡುವೆಯೇ ಪುರಸಭೆಗೆ ದೌಡಾಯಿಸಿ ಪ್ರತಿಭಟನೆ ನಡೆಸಿದರು.
ಪುರಸಭೆ ಎದುರು ಜಮಾಯಿಸಿದ ನಿವಾಸಿಗಳು ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿ, “ಹಲವು ವರ್ಷಗಳಿಂದ ಮೂಲಸೌಕರ್ಯಗಳಿಲ್ಲದೆ ನರಕಯಾತನೆ ಅನುಭವಿಸುತ್ತಿದ್ದೇವೆ” ಎಂದು ದೂರಿದರು.
“ನಮ್ಮ ವಾರ್ಡಿನಲ್ಲಿ ರಸ್ತೆ ಹಾಗೂ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಮಳೆ ಬಂದಾಗ ರಸ್ತೆಗಳು ಸಂಪೂರ್ಣ ಕೆಸರಿನ ಗದ್ದೆಯಾಗುತ್ತವೆ. ಚರಂಡಿ ಇಲ್ಲದೆ ಮಳೆನೀರು ಮನೆಗಳ ಮುಂದೆ ನಿಂತುಕೊಳ್ಳುತ್ತದೆ. ಮಕ್ಕಳು ಹಾಗೂ ವೃದ್ಧರು ಸಂಚಾರ ನಡೆಸುವುದೇ ದುಸ್ತರವಾಗಿದೆ” ಎಂದು ನಿವಾಸಿಗಳು ಅಳಲು ತೋಡಿಕೊಂಡರು.
“ನಾವು ಪ್ರಥಮ ವಾರ್ಡಿನ ನಿವಾಸಿಗಳಾಗಿದ್ದರೂ ಮತದಾನ ಮಾತ್ರ ೮ನೇ ವಾರ್ಡಿಗೆ ಸೇರಿದೆ. ಈ ಕಾರಣದಿಂದ ಜನಪ್ರತಿನಿಧಿಗಳು ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದು, ನಮ್ಮ ಪ್ರದೇಶದ ಅಭಿವೃದ್ಧಿ ಮರೀಚಿಕೆಯಾಗಿಬಿಟ್ಟಿದೆ” ಎಂದು ಆರೋಪಿಸಿದರು.
ಈ ಕುರಿತು ಹಲವು ಬಾರಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆ ವೇಳೆ ಪುರಸಭೆ ಮುಖ್ಯಾಧಿಕಾರಿ ಪರಶುರಾಮ ಗುಡದಾರಿ, ಪುರಸಭೆ ಮಾಜಿ ಅಧ್ಯಕ್ಷ ಎಂ.ಆರ್. ಪಾಟೀಲ ಹಾಗೂ ಹಿರಿಯ ಆರೋಗ್ಯ ನಿರೀಕ್ಷಕ ಮಂಜುನಾಥ ಮುದಗಲ್ ನಿವಾಸಿಗಳೊಂದಿಗೆ ಮಾತುಕತೆ ನಡೆಸಿ ಸಮಸ್ಯೆಗಳನ್ನು ಆಲಿಸಿದರು.
“ರಸ್ತೆ, ಚರಂಡಿ ಹಾಗೂ ಇತರೆ ಮೂಲಭೂತ ಸೌಲಭ್ಯಗಳ ಅಭಿವೃದ್ಧಿಗೆ ಆದ್ಯತೆ ನೀಡಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು” ಎಂದು ಮುಖ್ಯಾಧಿಕಾರಿ ಭರವಸೆ ನೀಡಿದರು.
ಮುಖ್ಯಾಧಿಕಾರಿಗಳ ಭರವಸೆಯ ಬಳಿಕ ಪ್ರತಿಭಟನೆಯನ್ನು ಹಿಂತೆಗೆದುಕೊಂಡ ನಿವಾಸಿಗಳು, “ಶೀಘ್ರದಲ್ಲೇ ಕಾಮಗಾರಿ ಆರಂಭವಾಗದಿದ್ದರೆ ಮತ್ತೆ ಉಗ್ರ ಹೋರಾಟ ನಡೆಸಲಾಗುವುದು” ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಹನಮಂತಪ್ಪ ಬಾಲೆಹೊಸೂರ, ನಾಗಪ್ಪ ಪೂಜಾರ, ಲಕ್ಷ್ಮಣ ಮುಳಗುಂದ, ಮಂಜಪ್ಪ ಪಡಗೇರಿ, ಬೀರಪ್ಪ ಪೂಜಾರ, ಗಂಗಪ್ಪ ಗೊಜಗೊಜಿ, ಮಲ್ಲಪ್ಪ ಬನ್ನಿ, ಬಸಣ್ಣ ಉಳ್ಳಟ್ಟಿ, ರೇಣವ್ವ ಗೊರವರ, ಲಕ್ಷ್ಮವ್ವ ಕೋರಿ, ರೇಣವ್ವ ಪೂಜಾರ, ಗಂಗಮ್ಮ ಗೊಜಗೊಜಿ, ಸಂಕವ್ವ ಮುಳಗುಂದ, ಶಿವಲೀಲಾ ಬನ್ನಿ, ರೇಣವ್ವ ಕೋರಿ, ಜಯಮ್ಮ ಕುಷ್ಟಗಿ ಹಾಗೂ ಗೌರಮ್ಮ ತಹಶೀಲ್ದಾರ ಸೇರಿದಂತೆ ಕೌಡೇಶ್ವರಿ ನಗರದ ಅನೇಕ ನಿವಾಸಿಗಳು ಭಾಗವಹಿಸಿದ್ದರು.
“ಮೂಲಭೂತ ಸೌಲಭ್ಯಗಳಿಲ್ಲದೆ ಬದುಕು ಸಾಗಿಸುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಅಧಿಕಾರಿಗಳು ತಕ್ಷಣ ಸ್ಪಂದಿಸಬೇಕು.”
 ಕೌಡೇಶ್ವರಿ ನಗರ ನಿವಾಸಿಗಳು

ಮಕ್ಕಳ ಭವಿಷ್ಯಕ್ಕೆ ಶಿಕ್ಷಣವೇ ನಿಜವಾದ ಸಂಪತ್ತು

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ:  “ಪಾಲಕರಿಗೆ ಮಕ್ಕಳೇ ಸಂಪತ್ತಾದರೆ, ಮಕ್ಕಳಿಗೆ ವಿದ್ಯೆಯೇ ನಿಜವಾದ ಸಂಪತ್ತು. ಸುಂದರ ಭವಿಷ್ಯ ರೂಪಿಸಿಕೊಳ್ಳಲು ಶಿಕ್ಷಣವೇ ಪ್ರಮುಖ ಸಾಧನ” ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.
ಪಟ್ಟಣದ ಪಿಎಂಶ್ರೀ ಕೆಪಿಎಸ್ ಮಾದರಿ ಪ್ರಾಥಮಿಕ ಶಾಲೆ ನಂ. ೪ರಲ್ಲಿ ಸೋಮವಾರ ನಡೆದ ಶಾಲಾ ಪ್ರಾರಂಭೋತ್ಸವದಲ್ಲಿ ಮಕ್ಕಳಿಗೆ ಹೂವು ನೀಡಿ ಸ್ವಾಗತಿಸಿ, ಸಮವಸ್ತ್ರ ಹಾಗೂ ಪಠ್ಯಪುಸ್ತಕಗಳನ್ನು ವಿತರಿಸಿ ಅವರು ಮಾತನಾಡಿದರು.
“ನಮ್ಮ ಹಿರಿಯರು ಶಾಲೆಯನ್ನು ‘ಸಾಲಿಗುಡಿ’ ಎಂದು ಕರೆಯುತ್ತಿದ್ದರು. ಹೀಗಾಗಿ ಶಾಲೆಗೆ ದೇವಾಲಯದಷ್ಟೇ ಪಾವಿತ್ರ್ಯವಿದೆ. ಮಕ್ಕಳನ್ನು ದೇವರಂತೆ ಕಾಣುವ ಶಿಕ್ಷಕರು ಪ್ರೀತಿ ಮತ್ತು ಗೌರವದಿಂದ ಶಿಕ್ಷಣ ನೀಡುವುದರಿಂದ ಮಕ್ಕಳಿಗೆ ಶಿಕ್ಷಕರ ಮಾತೇ ವೇದವಾಕ್ಯವಾಗುತ್ತದೆ” ಎಂದು ಹೇಳಿದರು.
“ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಬೇಕಾದರೆ ಪಾಲಕರು ಅವರನ್ನು ತಪ್ಪದೇ ಶಾಲೆಗೆ ಕಳುಹಿಸಬೇಕು. ಮಕ್ಕಳು ಆಡುತ್ತಾ, ಹಾಡುತ್ತಾ, ನಲಿಯುತ್ತಾ ಕಲಿಯಬೇಕು” ಎಂದು ಸಲಹೆ ನೀಡಿದರು.
“ಉತ್ತಮ ನಾಗರಿಕರಾಗಿ ಹೊರಹೊಮ್ಮುವಲ್ಲಿ ಪಾಲಕರು ಹಾಗೂ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ವಿದ್ಯಾರ್ಥಿಗಳು ಎಂಟನೇ ತರಗತಿಯ ನಂತರ ಸರ್ಕಾರಿ ಪ್ರೌಢಶಾಲೆಗಳಿಗೆ ಸೇರ್ಪಡೆಯಾಗಬೇಕು. ಪಾಲಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆ ಹಾಗೂ ಕಾಲೇಜುಗಳಲ್ಲಿ ಕಲಿಸಬೇಕು” ಎಂದು ಮನವಿ ಮಾಡಿದರು.
“ಪಬ್ಲಿಕ್ ಶಾಲೆಗಳ ಅಭಿವೃದ್ಧಿಯ ಜವಾಬ್ದಾರಿ ನಮ್ಮದೇ ಆಗಿದ್ದು, ಪ್ರತಿದಿನ ಶಾಲೆಯ ಪ್ರಾರ್ಥನಾ ಸಭೆಗೆ ಬರುವ ಪ್ರಯತ್ನ ಮಾಡುತ್ತೇನೆ” ಎಂದು ಶಾಸಕ ಡಾ. ಲಮಾಣಿ ಹೇಳಿದರು.
ಸರ್ಕಾರ ಆದಷ್ಟು ಬೇಗ ಪಠ್ಯಪುಸ್ತಕ ಹಾಗೂ ಸಮವಸ್ತ್ರಗಳನ್ನು ಒದಗಿಸಬೇಕು. ಶಿಕ್ಷಕರ ವರ್ಗಾವಣೆ ಹಾಗೂ ನಿವೃತ್ತಿಯಿಂದ ಉಂಟಾಗಿರುವ ಕೊರತೆಯನ್ನು ನೀಗಿಸಲು ಅತಿಥಿ ಶಿಕ್ಷಕರ ನೇಮಕ ಪ್ರಕ್ರಿಯೆ ತ್ವರಿತಗೊಳಿಸಬೇಕು ಎಂದು ಆಗ್ರಹಿಸಿದರು.
ಈ ವೇಳೆ ಶಾಲೆಯಲ್ಲಿ ನಿರ್ಮಾಣಗೊಂಡ ಶೌಚಾಲಯವನ್ನು ಉದ್ಘಾಟಿಸಿದ ಅವರು, ಶೌಚಾಲಯ ಹಾಗೂ ದುರಸ್ತಿ ಕಾಮಗಾರಿಗಾಗಿ ₹೮ ಲಕ್ಷ ಅನುದಾನ ಒದಗಿಸಲಾಗಿದೆ ಎಂದು ತಿಳಿಸಿದರು.
ಪಿಎಂಶ್ರೀ ಯೋಜನೆ ಹಾಗೂ ಪಬ್ಲಿಕ್ ಶಾಲೆಗಳ ಉನ್ನತೀಕರಣ ಯೋಜನೆಯಡಿ ಶಾಲೆಗೆ ಹೊಸ ಕಟ್ಟಡ ನಿರ್ಮಾಣಕ್ಕೂ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಶಿವಾನಂದ ಚಕ್ರಸಾಲಿ, ಪುರಸಭೆ ಮಾಜಿ ಸದಸ್ಯ ಪ್ರವೀಣ ಬಾಳಿಕಾಯಿ, ಗಂಗಾಧರ ಮೆಣಸಿನಕಾಯಿ, ವಿಜಯ ಕುಂಬಾರ, ಎಂ.ಎನ್. ಭರಮಗೌಡರ, ಗೀತಾ ಹಳ್ಯಾಳ, ಎಸ್.ಸಿ. ಹಿರೇಮಠ, ಮುತ್ತಣ್ಣ ಹುಬ್ಬಳ್ಳಿ, ಬಸವರಾಜ ಯರಗುಪ್ಪಿ, ಉಮೇಶ ನೇಕಾರ, ಶ್ರೀನಿವಾಸ ಮತ್ತೂರ, ಸೋಮು ಉಮಚಗಿ, ನಾಗರಾಜ ಅಗಡಿ, ಪ್ರದೀಪ ಬೋವಿ, ರವಿ ಸುತಾರ, ಸೋಮು ಹಡಪದ, ತೇಜಶ್ವಿನಿ ಬೆಳವಿಗಿ, ಲಕ್ಷ್ಮವ್ವ ಸಂಶಿ, ಚೈತ್ರಾ ಹೊಂಗಲ ಸೇರಿದಂತೆ ಶಿಕ್ಷಕರು, ವಿದ್ಯಾರ್ಥಿಗಳು, ಪಾಲಕರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕ ಎಚ್.ಬಿ. ಸಣ್ಣಮನಿ ಸ್ವಾಗತಿಸಿದರು. ಶಿಕ್ಷಣ ಸಂಯೋಜಕ ರಾಘವೇಂದ್ರ ಜೋಶಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್.ಬಿ. ಕುರಿ, ಜೆ.ಡಿ. ಹರಕೇರಿ ಹಾಗೂ ಉಮೇಶ ನೇಕಾರ ಕಾರ್ಯಕ್ರಮ ನಿರೂಪಿಸಿದರು.
ಹಬ್ಬದ ಸಂಭ್ರಮದಲ್ಲಿ ಶಾಲಾರಂಭೋತ್ಸವ*
ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಶಾಲಾ ಪ್ರಾರಂಭೋತ್ಸವದ ಅಂಗವಾಗಿ ಶಾಲೆಗಳನ್ನು ಹೂವಿನ ಮಾಲೆ, ತೋರಣ, ಬಲೂನ್‌ಗಳಿಂದ ಅಲಂಕರಿಸಲಾಗಿತ್ತು. ಮಕ್ಕಳಿಗೆ ಹೂವು ಹಾಗೂ ಸಿಹಿ ನೀಡಿ ಸ್ವಾಗತಿಸಲಾಯಿತು. ಬಿಸಿಯೂಟದಲ್ಲಿ ವಿಶೇಷ ಸಿಹಿ ತಯಾರಿಸಲಾಗಿತ್ತು.
 “ಮಕ್ಕಳಿಗೆ ನೀಡುವ ಶಿಕ್ಷಣವೇ ಅವರ ಬದುಕಿನ ದೊಡ್ಡ ಆಸ್ತಿ ಮತ್ತು ಭವಿಷ್ಯದ ಬೆಳಕು.”
 ಡಾ. ಚಂದ್ರು ಲಮಾಣಿ, ಶಾಸಕ

ಗದಗದಲ್ಲಿ ಪ್ರತಿಭೆಗಳ ಮಹಾಸಂಗಮ

ವಿಜಯಸಾಕ್ಷಿ ಸುದ್ದಿ, ಗದಗ: ಗದಗವಾಣಿ ಪ್ರಾದೇಶಿಕ ದಿನಪತ್ರಿಕೆಯ ೪ನೇ ವಾರ್ಷಿಕೋತ್ಸವ ಹಾಗೂ ಕ್ರಾಂತಿಸೂರ್ಯ ಜೈಭೀಮ್ ಸೇನೆಯ ಪ್ರಥಮ ವಾರ್ಷಿಕೋತ್ಸವದ ಅಂಗವಾಗಿ ಗದಗ ನಗರದ ಜಗದ್ಗುರು ತೋಂಟದಾರ್ಯ ಮಠದ ಆವರಣದಲ್ಲಿ ಆಯೋಜಿಸಲಾದ “ಗದಗವಾಣಿ ಗಾನಕೋಗಿಲೆ ಸೀಸನ್-೫” ಗ್ರ್ಯಾಂಡ್ ಫಿನಾಲೆ, “ಕರುನಾಡ ಕಾಯಕ ಸಮ್ಮಾನ್-೨೦೨೬” ಹಾಗೂ ರಾಜ್ಯ ಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭವು ಸಾವಿರಾರು ಜನರ ಸಮ್ಮುಖದಲ್ಲಿ ಅದ್ದೂರಿಯಾಗಿ ಜರುಗಿ ಜಿಲ್ಲೆಯ ಸಾಂಸ್ಕೃತಿಕ ಇತಿಹಾಸದಲ್ಲೇ ವಿಶಿಷ್ಟ ಸಂಭ್ರಮಕ್ಕೆ ಸಾಕ್ಷಿಯಾಯಿತು.
ಸಂಗೀತ, ಸಂಸ್ಕೃತಿ, ಸನ್ಮಾನ ಹಾಗೂ ಜನಸಾಗರದ ಸಂಭ್ರಮ ಒಂದೇ ವೇದಿಕೆಯಲ್ಲಿ ಒಂದಾಗಿದ್ದ ಈ ಕಾರ್ಯಕ್ರಮ ಗದಗ ಜಿಲ್ಲೆಯ ಅತ್ಯಂತ ಭವ್ಯ ಮತ್ತು ಸ್ಮರಣೀಯ ಸಮಾರಂಭಗಳಲ್ಲಿ ಒಂದಾಗಿ ಹೊರಹೊಮ್ಮಿತು.
ಸಾಧಕರಿಗೆ ರಾಜ್ಯ ಮಟ್ಟದ ಗೌರವ
ಶಿಕ್ಷಣ, ಸಾಹಿತ್ಯ, ಸಂಗೀತ, ಕಲೆ, ಸಮಾಜಸೇವೆ, ಪತ್ರಿಕೋದ್ಯಮ, ವೈದ್ಯಕೀಯ, ಕೃಷಿ, ಉದ್ಯಮ, ಯುವಸೇವೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಸಾಧಕರಿಗೆ ರಾಜ್ಯ ಮಟ್ಟದ ಪ್ರಶಸ್ತಿಗಳನ್ನು ಪ್ರದಾನಿಸಿ ಗೌರವಿಸಲಾಯಿತು.
ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಗಣ್ಯರು, ಕಲಾವಿದರು, ಸಾಮಾಜಿಕ ಹೋರಾಟಗಾರರು ಹಾಗೂ ಸಾರ್ವಜನಿಕರು ಕಾರ್ಯಕ್ರಮಕ್ಕೆ ವಿಶೇಷ ಮೆರುಗು ತಂದರು. ಈ ಸಂಚಿಕೆಯಲ್ಲಿ ಕಾರ್ಯಕ್ರಮದ ಅಪರೂಪದ ಕ್ಷಣಗಳು, ಪ್ರಶಸ್ತಿ ಪುರಸ್ಕೃತರ ಸನ್ಮಾನ, ಗಾನಕೋಗಿಲೆ ಸ್ಪರ್ಧೆಯ ವಿಶೇಷ ದೃಶ್ಯಗಳು ಹಾಗೂ ಗಣ್ಯರ ಉಪಸ್ಥಿತಿಯ ಛಾಯಾಚಿತ್ರಗಳು ಪ್ರಕಟವಾಗಿವೆ.
ಗಾನಕೋಗಿಲೆ ಗಾಯನಕ್ಕೆ ಮನಸೋತ ಜನತೆ
“ಗದಗವಾಣಿ ಗಾನಕೋಗಿಲೆ ಸೀಸನ್-೫”ರ ಗ್ರ್ಯಾಂಡ್ ಫಿನಾಲೆಯಲ್ಲಿ ಸ್ಪರ್ಧಿಗಳು ಸುಮಧುರ ಗಾಯನದ ಮೂಲಕ ಪ್ರೇಕ್ಷಕರ ಮನ ಗೆದ್ದರು. ಸಂಗೀತ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನೆರೆದಿದ್ದ ಜನರಿಂದ ಭಾರೀ ಮೆಚ್ಚುಗೆ ಪಡೆದವು.
ಕಾರ್ಯಕ್ರಮದ ಆರಂಭದಿಂದ ಅಂತ್ಯದವರೆಗೆ ಸಭಾಂಗಣ ಜನಸಾಗರದಿಂದ ಕಿಕ್ಕಿರಿದು ತುಂಬಿತ್ತು.
ಗದಗದ ಸಾಂಸ್ಕೃತಿಕ ಶಕ್ತಿಗೆ ಕನ್ನಡಿ
ಕಾರ್ಯಕ್ರಮವು ಗದಗ ಜಿಲ್ಲೆಯ ಸಾಂಸ್ಕೃತಿಕ ವೈಭವ, ಪ್ರತಿಭೆಗಳ ಸಾಮರ್ಥ್ಯ ಹಾಗೂ ಸಾಮಾಜಿಕ ಒಗ್ಗಟ್ಟಿಗೆ ಜೀವಂತ ಸಾಕ್ಷಿಯಾಯಿತು. ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಅತಿಥಿಗಳು, ಪ್ರಾಯೋಜಕರು, ಸಂಘ-ಸಂಸ್ಥೆಗಳು, ಕಲಾವಿದರು, ಸ್ಪರ್ಧಿಗಳು, ಪ್ರಶಸ್ತಿ ಪುರಸ್ಕೃತರು, ಮಾಧ್ಯಮ ಪ್ರತಿನಿಧಿಗಳು ಹಾಗೂ ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿದ ಸಾರ್ವಜನಿಕರಿಗೆ ಗದಗವಾಣಿ ಕುಟುಂಬ ಕೃತಜ್ಞತೆ ಸಲ್ಲಿಸಿತು.
“ಪ್ರತಿಭೆಗಳನ್ನು ಗುರುತಿಸಿ ಗೌರವಿಸುವ ವೇದಿಕೆಗಳು ಸಮಾಜಕ್ಕೆ ಹೊಸ ಚೈತನ್ಯ ಮತ್ತು ಪ್ರೇರಣೆ ನೀಡುತ್ತವೆ.”
ಕೃಷ್ಣಗೌಡ ಹೆಚ್. ಪಾಟೀಲ
ಅಧ್ಯಕ್ಷರು, ಗದಗ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ

ಜೂ. 16ರೊಳಗೆ ಮತದಾರರ ಪಟ್ಟಿ ಪರಿಷ್ಕರಣೆ ಪೂರ್ಣಗೊಳಿಸಿ

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯ ಪ್ರಗತಿಯಲ್ಲಿದ್ದು, ಜೂನ್ ೧೬ರೊಳಗೆ ಪೂರ್ಣಗೊಳಿಸಬೇಕೆಂದು ಶಿರಹಟ್ಟಿ ವಿಧಾನಸಭಾ ಕ್ಷೇತ್ರದ ಮತದಾರರ ನೋಂದಣಾಧಿಕಾರಿ ಹಾಗೂ ಜಿಲ್ಲಾ ಉಪನಿರ್ದೇಶಕಿ ನಂದಾ ಹಣಬರಟ್ಟಿ ಸೂಚಿಸಿದರು.
ಸೋಮವಾರ ತಹಸೀಲ್ದಾರ್ ಕಚೇರಿಯಲ್ಲಿ ಮತದಾರರ ಸಂಕ್ಷಿಪ್ತ ಪರಿಷ್ಕರಣೆ-೨೦೦೬ರ ಕುರಿತು ಬಿಎಲ್‌ಓ ಮೇಲ್ವಿಚಾರಕರಿಗೆ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮತಕ್ಷೇತ್ರ ವ್ಯಾಪ್ತಿಯಲ್ಲಿ ಈಗಾಗಲೇ ಶೇ.೯೨ರಷ್ಟು ಮ್ಯಾಪಿಂಗ್ ಕಾರ್ಯ ಪೂರ್ಣಗೊಂಡಿದ್ದು, ಬಾಕಿ ಉಳಿದಿರುವ ಕಾರ್ಯವನ್ನು ಕೂಡ ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಬೇಕು ಎಂದು ತಿಳಿಸಿದರು.
“೮೮ ಮಂದಿ ಮೇಲ್ವಿಚಾರಕರಿಗೆ ಎರಡು ಹಂತಗಳಲ್ಲಿ ತರಬೇತಿ ನೀಡಲಾಗುತ್ತಿದೆ. ಪ್ರತಿಯೊಬ್ಬ ಮತಗಟ್ಟೆ ಮಟ್ಟದ ಅಧಿಕಾರಿ ಮನೆಮನೆ ಸಮೀಕ್ಷೆ ನಡೆಸಿ ಮತದಾರರ ಮಾಹಿತಿಯನ್ನು ಸಂಗ್ರಹಿಸಬೇಕು. ಎನ್ಯೂಮರೇಶನ್ ಫಾರ್ಮ್‌ನಲ್ಲಿ ದಾಖಲಾದ ಮಾಹಿತಿಯನ್ನು ಮೊಬೈಲ್ ಆಪ್‌ನಲ್ಲಿ ಮ್ಯಾಪಿಂಗ್ ಮಾಡಿ ಖಚಿತಪಡಿಸಿಕೊಂಡು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಬೇಕು” ಎಂದು ಅವರು ಸೂಚಿಸಿದರು.
ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಕೆ. ರಾಘವೇಂದ್ರ ರಾವ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಗೋಪಾಲ ನಾಯ್ಕ, ಶಿರಸ್ತೇದಾರ ಎಸ್.ಎಸ್. ಅಸ್ಕಿ, ಪ್ರವೀಣ ಮೊಹರೇಕರ ಸೇರಿದಂತೆ ಹಲವರು ಉಪಸ್ಥಿತರಿದ್ದರು.
“ಪ್ರತಿಯೊಬ್ಬ ಅರ್ಹ ಮತದಾರರ ಹೆಸರು ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗುವಂತೆ ಅಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು.”
ನಂದಾ ಹಣಬರಟ್ಟಿ, ಮತದಾರರ ನೋಂದಣಾಧಿಕಾರಿ

ಧರ್ಮ ಒಡೆಯುವ ಶಕ್ತಿಗಳ ವಿರುದ್ಧ ಹಿಂದೂ ಸಮಾಜ ಜಾಗೃತವಾಗಲಿ: ಕಾಡಸಿದ್ದೇಶ್ವರ ಸ್ವಾಮೀಜಿ

ವಿಜಯಸಾಕ್ಷಿ ಸುದ್ದಿ, ಗದಗ: ಬಸವಾದಿ ಶಿವಶರಣರು ಯಾವುದೇ ಒಂದು ಜಾತಿ ಅಥವಾ ಚೌಕಟ್ಟಿಗೆ ಸೀಮಿತರಾದವರಲ್ಲ. ಇಡೀ ಹಿಂದೂ ಧರ್ಮವನ್ನು ಶುದ್ಧೀಕರಣಗೊಳಿಸಿದ ಮಹಾಪುರುಷರು ಎಂದು ಕೊಲ್ಹಾಪುರದ ಕನೇರಿ ಮಠದ ಕಾಡಸಿದ್ದೇಶ್ವರ ಸ್ವಾಮೀಜಿ ಹೇಳಿದರು.
ನಗರದ ವಿದ್ಯಾದಾನ ಸಮಿತಿ ಮೈದಾನದಲ್ಲಿ ಹಿಂದೂ ಸರ್ವ ಸಮಾಜಗಳ ಒಕ್ಕೂಟದ ಆಶ್ರಯದಲ್ಲಿ ಭಾನುವಾರ ನಡೆದ “ಬಸವಾದಿ ಶಿವಶರಣರ ಬೃಹತ್ ಹಿಂದೂ ಸಮಾವೇಶದಲ್ಲಿ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
“ಕಾರ್ಲ್ ಮಾರ್ಕ್ಸ್ ಸಿದ್ಧಾಂತದ ಅನುಯಾಯಿಗಳು ಇಂದು ಬಸವಣ್ಣನವರ ಹೆಸರಿನಲ್ಲಿ ಇತಿಹಾಸ ತಿರುಚುವ ಕೆಲಸ ಮಾಡುತ್ತಿದ್ದಾರೆ. ಒಂದೇ ಸುಳ್ಳನ್ನು ನೂರು ಬಾರಿ ಹೇಳಿ ಸತ್ಯವನ್ನಾಗಿ ಮಾಡಲು ಹೊರಟಿರುವ ಇಂತಹ ಶಕ್ತಿಗಳ ವಿರುದ್ಧ ಹಿಂದೂ ಸಮಾಜ ಜಾಗೃತವಾಗಬೇಕು” ಎಂದು ಕರೆ ನೀಡಿದರು.
“ಬಸವಣ್ಣನವರು ವೇದ, ಆಗಮ, ಪುರಾಣಗಳನ್ನು ಸಂಪೂರ್ಣ ತಿರಸ್ಕರಿಸಿದ್ದರು ಎಂಬುದು ತಪ್ಪು ಪ್ರಚಾರ. ಶರಣರ ವಚನಗಳಲ್ಲೇ ವೇದ-ಆಗಮಗಳ ಉಲ್ಲೇಖಗಳಿವೆ. ಬಸವಣ್ಣನವರು ‘ದೇವನೊಬ್ಬ ನಾಮ ಹಲವು’ ಎಂದು ಸಾರಿದವರು” ಎಂದು ಹೇಳಿದರು.
“ಸಮಗಾರ ಹರಳಯ್ಯ, ಹಡಪದ ಅಪ್ಪಣ್ಣ ಅವರ ಸಮಾಜದವರು ಇನ್ನೂ ಸಾಮಾಜಿಕವಾಗಿ ಹಿಂದುಳಿದಿರುವುದು ನೋವಿನ ಸಂಗತಿ. ಬಸವ ತತ್ವಗಳನ್ನು ಕೇವಲ ಭಾಷಣಕ್ಕೆ ಸೀಮಿತಗೊಳಿಸದೆ ಜೀವನದಲ್ಲಿ ಅಳವಡಿಸಿಕೊಳ್ಳಬೇಕು” ಎಂದು ತಿಳಿಸಿದರು.
ಇಂದು ಒಂದೇ ಕುಟುಂಬದವರು ಒಟ್ಟಾಗಿ ಬದುಕುವುದು ಕಷ್ಟವಾಗಿರುವ ಸಂದರ್ಭದಲ್ಲಿ ಗದಗ ಜಿಲ್ಲೆಯ ೬೪ ಸಮಾಜಗಳು ಒಂದಾಗಿ ಸಮಾವೇಶ ನಡೆಸಿರುವುದು ದೇಶಕ್ಕೇ ಮಾದರಿಯಾಗಿದೆ ಎಂದು ಶ್ರೀಗಳು ಮೆಚ್ಚುಗೆ ವ್ಯಕ್ತಪಡಿಸಿದರು.
ರೈತರ ಸ್ಥಿತಿಗತಿಗಳ ಕುರಿತು ಮಾತನಾಡಿದ ಶ್ರೀಗಳು, “ಕೊರೋನಾ ಕಾಲದಲ್ಲೂ, ಗಡಿಭಾಗದಲ್ಲಿ ಉದ್ವಿಗ್ನ ಪರಿಸ್ಥಿತಿ ಇದ್ದಾಗಲೂ ರೈತ ಹೊಲದಲ್ಲಿ ದುಡಿಯುತ್ತಿದ್ದ. ಅದರಿಂದಲೇ ದೇಶಕ್ಕೆ ಆಹಾರದ ಕೊರತೆ ಉಂಟಾಗಲಿಲ್ಲ. ಆದರೆ ಇಂದು ರೈತನ ಬದುಕು ಸಂಕಷ್ಟಕ್ಕೆ ಸಿಲುಕಿದೆ” ಎಂದು ಹೇಳಿದರು.
“ಪೆಟ್ರೋಲ್ ಬೆಲೆ ಏರಿಕೆಯಾದಾಗ ಮೌನವಾಗಿರುವ ಸಮಾಜ, ತರಕಾರಿ ಅಥವಾ ಈರುಳ್ಳಿ ಬೆಲೆ ಏರಿದರೆ ಮಾತ್ರ ಚರ್ಚೆ ಮಾಡುತ್ತದೆ. ರೈತರು ತಮ್ಮ ಹಕ್ಕುಗಳ ಬಗ್ಗೆ ಇನ್ನಷ್ಟು ಜಾಗೃತರಾಗಬೇಕು” ಎಂದು ಕರೆ ನೀಡಿದರು.
ಸಮಾವೇಶವನ್ನು ಮುಂಡರಗಿಯ ಅನ್ನದಾನೀಶ್ವರ ಸ್ವಾಮೀಜಿ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ, ಹರಿದ್ವಾರದಿಂದ ಆಗಮಿಸಿದ್ದ ಅಮೃತಾನಂದಜಿ ಮಹಾರಾಜ್ ಸೇರಿದಂತೆ ನೂರಕ್ಕೂ ಹೆಚ್ಚು ಮಠಾಧೀಶರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ನರಗುಂದ ಶಾಸಕ ಸಿ.ಸಿ. ಪಾಟೀಲ, ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ, ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರುಡಗಿ, ಎಚ್.ಎಸ್. ಶಿವನಗೌಡ್ರ, ರವಿ ದಂಡಿನ, ಕಿರಣ ಬೂಮಾ, ವೆಂಕಟೇಶ ಕುಲಕರ್ಣಿ ಸೇರಿದಂತೆ ಹಲವರು ಭಾಗವಹಿಸಿದ್ದರು.
ಈ ವೇಳೆ ಡಾ. ಡಿ.ಎ. ಉಪಾಧ್ಯಾಯ ರಚಿಸಿರುವ “ಬಸವ ಶೈವದಲ್ಲಿ ಹಿಂದುತ್ವ” ಸಂಪುಟ-೨ ಹಾಗೂ ಡಾ. ಸಿ. ಶಿವಕುಮಾರ ಸ್ವಾಮೀಜಿ ರಚಿಸಿರುವ “ವಚನಾನುಸಂಧಾನ” ಗ್ರಂಥಗಳನ್ನು ಬಿಡುಗಡೆಗೊಳಿಸಲಾಯಿತು.
ಒಕ್ಕೂಟದ ಅಧ್ಯಕ್ಷ ವಸಂತಗೌಡ ಪೊಲೀಸಪಾಟೀಲ ಸ್ವಾಗತಿಸಿದರು. ಚಂದ್ರು ಬಾಳಿಹಳ್ಳಿಮಠ ಪ್ರಾಸ್ತಾವಿಕವಾಗಿ ಮಾತನಾಡಿದರು.
ಮೆರವಣಿಗೆಯಲ್ಲಿ ಮಹಿಳೆಯರ ಕುಂಭ ಮೆರಗು
ಸಮಾವೇಶಕ್ಕೂ ಮುನ್ನ ಭೂಮರೆಡ್ಡಿ ವೃತ್ತದಿಂದ ವಿದ್ಯಾದಾನ ಸಮಿತಿ ಮೈದಾನವರೆಗೆ ಬೃಹತ್ ಮೆರವಣಿಗೆ ನಡೆಯಿತು. ಸಾವಿರಾರು ಮಹಿಳೆಯರು ಕುಂಭ ಹೊತ್ತು ಸಾಗಿದ್ದು ವಿಶೇಷ ಗಮನ ಸೆಳೆಯಿತು.
ಅನೇಕ ಜಾನಪದ ಕಲಾತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದವು. ೧೦೦ಕ್ಕೂ ಹೆಚ್ಚು ಮಠಾಧೀಶರು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು.
“ಬಸವ ತತ್ವವನ್ನು ವಿಭಜನೆಯ ಸಾಧನವಾಗಿಸದೆ, ಸಮಾಜದ ಏಕತೆಗೆ ಬಳಸಬೇಕಾಗಿದೆ.”
 ಕಾಡಸಿದ್ದೇಶ್ವರ ಸ್ವಾಮೀಜಿ, ಕನೇರಿ ಮಠ
error: Content is protected !!