Home Blog

ಬೆಲೆ ಏರಿಕೆಯಿಂದ ಬೀದಿಗಿಳಿದ ಆಟೋ ಚಾಲಕರು: ಮೀಟರ್ ದರ ಹೆಚ್ಚಳ, ಮಕ್ಕಳ ಶಿಕ್ಷಣ ವೆಚ್ಚ ಭರಿಸಲು ಸರ್ಕಾರಕ್ಕೆ ಒತ್ತಾಯ

ಬೆಂಗಳೂರು: ರಾಜ್ಯದಲ್ಲಿ ಇಂಧನ ದರ ಏರಿಕೆ ತೀವ್ರ ಪರಿಣಾಮ ಬೀರಿದ್ದು, ಬದುಕು ಸಾಗಿಸಲು ಸಾಧ್ಯವಾಗುತ್ತಿಲ್ಲ ಎಂದು ಆಟೋ ಚಾಲಕರು ಸರ್ಕಾರದ ನೆರವು ಕೋರಿದ್ದಾರೆ. ಪೆಟ್ರೋಲ್, ಡೀಸೆಲ್, ಸಿಎನ್‌ಜಿ ಹಾಗೂ ಎಲ್‌ಪಿಜಿ ದರ ಏರಿಕೆಯಿಂದ ಆದಾಯ ಸಂಪೂರ್ಣ ಕುಸಿದಿದೆ ಎಂದು ಸ್ನೇಹಜೀವಿ ಆಟೋ ಚಾಲಕರ ಟ್ರೇಡ್ ಯೂನಿಯನ್ ಹೇಳಿದೆ.

ಜಾಗತಿಕ ತೈಲ ಬಿಕ್ಕಟ್ಟು ಮತ್ತು ಆಮದು ವೆಚ್ಚದ ಪರಿಣಾಮ ಕಳೆದ ಕೆಲವು ದಿನಗಳಿಂದ ಇಂಧನ ದರಗಳು ಏರಿಕೆಯಾಗುತ್ತಿದ್ದು, ಅದರ ಹೊರೆ ನೇರವಾಗಿ ಆಟೋ ಚಾಲಕರ ಮೇಲೇ ಬಿದ್ದಿದೆ. ದಿನಪೂರ್ತಿ ದುಡಿದರೂ ಮನೆಯ ಖರ್ಚು, ವಾಹನ ನಿರ್ವಹಣೆ ಮತ್ತು ಮಕ್ಕಳ ಶಿಕ್ಷಣ ವೆಚ್ಚ ನಿಭಾಯಿಸಲು ಸಾಧ್ಯವಾಗುತ್ತಿಲ್ಲ ಎಂದು ಚಾಲಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಹಿನ್ನೆಲೆ ರಾಜ್ಯಾದ್ಯಂತ ಏಕೀಕೃತ ಆಟೋ ಮೀಟರ್ ದರ ಜಾರಿಗೆ ತರಬೇಕು ಹಾಗೂ ಪ್ರಸ್ತುತ ಇರುವ ದರವನ್ನು ಹೆಚ್ಚಿಸಬೇಕು ಎಂದು ಯೂನಿಯನ್ ಸರ್ಕಾರಕ್ಕೆ ಮನವಿ ಮಾಡಿದೆ. ಕ್ಯಾಬ್ ಸೇವೆಗಳ ಕಡಿಮೆ ದರ ನೀತಿಯಿಂದ ಆಟೋ ಚಾಲಕರ ಆದಾಯ ಕುಸಿದಿದ್ದು, ಸರ್ಕಾರ ಮಧ್ಯಪ್ರವೇಶಿಸಬೇಕು ಎಂದು ಒತ್ತಾಯಿಸಲಾಗಿದೆ.

ಆಟೋ ಚಾಲಕರ ಮಕ್ಕಳ ಶಾಲಾ ಶುಲ್ಕವನ್ನು ಸರ್ಕಾರವೇ ಭರಿಸಬೇಕು ಎಂಬ ಬೇಡಿಕೆಯನ್ನೂ ಸಂಘಟನೆ ಮುಂದಿಟ್ಟಿದೆ. ಬೆಲೆ ಏರಿಕೆ ಮತ್ತು ಇಂಧನ ದರ ಹೆಚ್ಚಳದ ನಡುವೆ ಆಟೋ ಚಾಲಕರ ಬದುಕು ಸಂಕಷ್ಟಕ್ಕೆ ಸಿಲುಕಿದ್ದು, ತಕ್ಷಣ ಪರಿಹಾರ ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಲಾಗಿದೆ.

ಸೋಶಿಯಲ್ ಮೀಡಿಯಾದಲ್ಲಿ ‘ಹಾಟ್ ಗರ್ಲ್’ ಡ್ರಾಮಾ..! ಭೇಟಿಗೆ ಕರೆಸಿ ಚಾಕು ತೋರಿಸಿ ದರೋಡೆ: ಇಬ್ಬರು ವಿದ್ಯಾರ್ಥಿಗಳ ಬಂಧನ

ಬೆಂಗಳೂರು: ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಂನಲ್ಲಿ ಯುವತಿಯರ ಹೆಸರಿನಲ್ಲಿ ನಕಲಿ ಖಾತೆ ತೆರೆದು ಪುರುಷರನ್ನು ಬಲೆಗೆ ಸೆಳೆಯುತ್ತಿದ್ದ ಹನಿಟ್ರ್ಯಾಪ್ ಜಾಲವೊಂದು ಬೆಂಗಳೂರಿನಲ್ಲಿ ಬಯಲಾಗಿದೆ. ಮಹಿಳೆ ಹೆಸರಿನಲ್ಲಿ ಚಾಟಿಂಗ್ ಮಾಡಿ ವ್ಯಕ್ತಿಯನ್ನು ಭೇಟಿ ಮಾಡಲು ಕರೆಸಿಕೊಂಡ ಆರೋಪಿಗಳು ಬಳಿಕ ಚಾಕು ತೋರಿಸಿ ದರೋಡೆ ನಡೆಸಿರುವ ಘಟನೆ ಕೃಷ್ಣರಾಜಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಈ ಸಂಬಂಧ ಖಾಸಗಿ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ವಿವೇಕ್ ಮತ್ತು ನಿಖಿಲ್ ಎಂದು ಗುರುತಿಸಲಾಗಿದ್ದು, ಇನ್ನೊಬ್ಬ ಸಹಚರ ತಲೆಮರೆಸಿಕೊಂಡಿದ್ದಾನೆ.

ಬಿಪಿಒ ಉದ್ಯೋಗಿಯಾಗಿದ್ದ 26 ವರ್ಷದ ವ್ಯಕ್ತಿಯನ್ನು ಆರೋಪಿಗಳು ಹಲವು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಮಹಿಳೆಯಂತೆ ನಟಿಸಿ ಸಂಪರ್ಕಿಸಿದ್ದರು. ಬಳಿಕ ಕೆ.ಆರ್.ಪುರಂ ಪ್ರದೇಶಕ್ಕೆ ಕರೆಸಿಕೊಂಡು, “ಮಹಿಳಾ ಸ್ನೇಹಿತ ಬರುತ್ತಿದ್ದಾರೆ” ಎಂದು ನಂಬಿಸಿ ಬೈಕ್‌ನಲ್ಲಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದಾರೆ.

ಅಲ್ಲಿ ಚಾಕು ತೋರಿಸಿ ಹಲ್ಲೆ ನಡೆಸಿದ ಆರೋಪಿಗಳು 47 ಗ್ರಾಂ ಚಿನ್ನದ ಸರ ಹಾಗೂ ಮೊಬೈಲ್ ಫೋನ್ ಕಸಿದುಕೊಂಡು ಪರಾರಿಯಾಗಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸಿಸಿಟಿವಿ, ಮೊಬೈಲ್ ಡೇಟಾ ಹಾಗೂ ಸ್ಥಳೀಯ ಮಾಹಿತಿ ಆಧರಿಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ತನಿಖೆಯಲ್ಲಿ ಆರೋಪಿಗಳು ಕದ್ದ ಚಿನ್ನವನ್ನು ಆಭರಣ ಮಳಿಗೆಯಲ್ಲಿ ಅಡವಿಟ್ಟಿರುವುದು ಪತ್ತೆಯಾಗಿದ್ದು, ಪೊಲೀಸರು ಚಿನ್ನವನ್ನು ವಶಕ್ಕೆ ಪಡೆದಿದ್ದಾರೆ. ಪ್ರಕರಣದ ಪ್ರಮುಖ ಆರೋಪಿ ಪತ್ತೆಗೆ ವಿಶೇಷ ತಂಡ ಶೋಧ ಮುಂದುವರಿಸಿದೆ.

“ಮಗಳ ಹಿಂದೆ ರಾಜಕೀಯ ಕೈವಾಡ?”: ಕುಟುಂಬ ವಿವಾದದ ಬಗ್ಗೆ ಮೌನ ಮುರಿದ ಶಾಸಕ ಯೋಗೇಶ್ವರ್

ಬೆಂಗಳೂರು: ಕುಟುಂಬದ ವಿವಾದ ಹಾಗೂ ಮಗಳ ಆರೋಪಗಳ ಬಗ್ಗೆ ಹರಿದಾಡುತ್ತಿರುವ ಚರ್ಚೆಗಳ ನಡುವೆ ಶಾಸಕ ಸಿ.ಪಿ. ಯೋಗೇಶ್ವರ್ ಮೊದಲ ಬಾರಿಗೆ ಸಾರ್ವಜನಿಕವಾಗಿ ಪ್ರತಿಕ್ರಿಯೆ ನೀಡಿದ್ದಾರೆ. “ನನ್ನ ಮಾಜಿ ಪತ್ನಿಯೊಂದಿಗೆ 25 ವರ್ಷಗಳ ಹಿಂದೆಯೇ ವಿಚ್ಛೇದನವಾಗಿದೆ. ಈಗ ಅವರಿಗೂ ನನ್ನ ಕುಟುಂಬಕ್ಕೂ ಯಾವುದೇ ಸಂಬಂಧ ಇಲ್ಲ” ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆ ಮಾಡಿದ ವಿಡಿಯೋದಲ್ಲಿ ಮಾತನಾಡಿರುವ ಯೋಗೇಶ್ವರ್, “ಚಕ್ಕರೆ ಗ್ರಾಮದಲ್ಲಿ ನಡೆದ ಊರ ಹಬ್ಬದ ವೇಳೆ ನಮ್ಮ ಮನೆ ಬಳಿ ಬಂದು ವಿಡಿಯೋ ಮಾಡಿ, ಮನೆಯೊಳಗೆ ಬಿಡುತ್ತಿಲ್ಲ ಎಂಬ ರೀತಿಯಲ್ಲಿ ಪ್ರಚಾರ ಮಾಡಲಾಗಿದೆ. ಆದರೆ ಈ ಬಾರಿ ವೈಯಕ್ತಿಕ ಕಾರಣಗಳಿಂದ ಹಬ್ಬವೇ ನಡೆದಿರಲಿಲ್ಲ” ಎಂದು ಹೇಳಿದ್ದಾರೆ.

“ಈ ವಿಚಾರ ಗೊತ್ತಿದ್ದರೂ ನನ್ನ ಮಗಳು ಈ ರೀತಿಯ ನಡೆ ತೋರಿರುವುದು ನೋವು ತಂದಿದೆ. ಸಾರ್ವಜನಿಕ ವಲಯದಲ್ಲಿ ನಾನು ಮಕ್ಕಳ ಜವಾಬ್ದಾರಿ ತೆಗೆದುಕೊಳ್ಳದವನಂತೆ ಚಿತ್ರಿಸಲಾಗುತ್ತಿದೆ” ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮಗಳು ನಿಶಾ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ ಯೋಗೇಶ್ವರ್, “ನನ್ನ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಿ ರಾಜಕೀಯವಾಗಿ ಕಳಂಕಿತಗೊಳಿಸುವ ಯತ್ನ ನಡೆಯುತ್ತಿದೆ. ಇದರ ಹಿಂದೆ ವಿರೋಧಿಗಳ ಕೈವಾಡವಿದೆಯೇ ಎಂಬ ಅನುಮಾನವೂ ಮೂಡುತ್ತಿದೆ” ಎಂದು ಹೇಳಿದ್ದಾರೆ.

“ನಾನು ನನ್ನ ಮಗಳನ್ನು ಎಂದಿಗೂ ದೂರ ಮಾಡಿಲ್ಲ. ಆದರೆ ನನ್ನ ವಿರುದ್ಧ ನಿರಂತರ ಆರೋಪಗಳು ನಡೆಯುತ್ತಿರುವುದು ಮನಸ್ಸಿಗೆ ತೀವ್ರ ನೋವುಂಟು ಮಾಡಿದೆ” ಎಂದು ಯೋಗೇಶ್ವರ್ ಹೇಳಿದ್ದಾರೆ.

ದರ್ಶನ್ ವಿರುದ್ಧ ‘ಮೀಡಿಯಾ ಟ್ರಯಲ್’: ಚಾನೆಲ್‌ಗಳ ವರ್ತನೆಗೆ ಹೈಕೋರ್ಟ್ ಗರಂ

ಬೆಂಗಳೂರು: ನಟ ದರ್ಶನ್ ವಿರುದ್ಧ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಡೆಯುತ್ತಿರುವ ‘ಮಾಧ್ಯಮ ವಿಚಾರಣೆ’ ಬಗ್ಗೆ ಕರ್ನಾಟಕ ಹೈಕೋರ್ಟ್ ಕಠಿಣ ಆಕ್ಷೇಪ ವ್ಯಕ್ತಪಡಿಸಿದೆ. ಟಿವಿ ಚಾನೆಲ್‌ಗಳು ಮತ್ತು ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳು ನ್ಯಾಯಾಲಯದ ಪ್ರಕ್ರಿಯೆಯನ್ನೇ ಸಾರ್ವಜನಿಕ ಪ್ರದರ್ಶನದಂತೆ ಪ್ರಸಾರ ಮಾಡುತ್ತಿರುವುದು ಗಂಭೀರ ಬೆಳವಣಿಗೆ ಎಂದು ಕೋರ್ಟ್ ಎಚ್ಚರಿಸಿದೆ.

“ಮಾಧ್ಯಮಗಳು ನ್ಯಾಯಾಲಯಗಳ ಪರ್ಯಾಯವಾಗಲು ಸಾಧ್ಯವಿಲ್ಲ. ನ್ಯಾಯಾಧೀಶರಂತೆ ವರ್ತಿಸಿ ಆರೋಪಿಗಳಿಗೆ ಶಿಕ್ಷೆ ವಿಧಿಸುವ ಹಕ್ಕು ಮಾಧ್ಯಮಗಳಿಗೆ ಇಲ್ಲ” ಎಂದು ಹೈಕೋರ್ಟ್ ಸ್ಪಷ್ಟ ಸಂದೇಶ ರವಾನಿಸಿದೆ.

ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಅವರ ಪೀಠ, ಕೆಲ ವಾಹಿನಿಗಳು ನ್ಯಾಯಾಲಯದ ಕಲಾಪಗಳನ್ನು ಮರುಸೃಷ್ಟಿ ಮಾಡಿ, ಆರೋಪಿಗಳು ಹಾಗೂ ವಕೀಲರ ಮುಖಗಳನ್ನು ತೆರೆದೆಯೇ ತೋರಿಸುತ್ತಿರುವುದು ನ್ಯಾಯಯುತ ವಿಚಾರಣೆಯ ಹಕ್ಕಿಗೆ ಧಕ್ಕೆಯಾಗಿದೆ ಎಂದು ಅಭಿಪ್ರಾಯಪಟ್ಟಿದೆ. “ಇದು ಬಾಕಿ ಇರುವ ಪ್ರಕರಣಗಳನ್ನು ಜನರ ಮನರಂಜನೆಗಾಗಿ ಪ್ರಸಾರ ಮಾಡುವಂತಾಗಿದೆ” ಎಂದು ಕೋರ್ಟ್ ಗಂಭೀರ ಟೀಕೆ ಮಾಡಿದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದ ಕುರಿತು ಕೆಲ ಮಾಧ್ಯಮ ಸಂಸ್ಥೆಗಳು ತಡೆಯಾಜ್ಞೆ ಆದೇಶ ಮತ್ತು ಕಾರ್ಯಕ್ರಮ ಸಂಹಿತೆ ಉಲ್ಲಂಘಿಸಿ ವರದಿ ಮಾಡುತ್ತಿವೆ ಎಂದು ಆರೋಪಿಸಿ ನಟ ದರ್ಶನ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಮಾಧ್ಯಮಗಳು ಆಯ್ದ ಮಾಹಿತಿ ಸೋರಿಕೆ, ಊಹಾತ್ಮಕ ವಿಶ್ಲೇಷಣೆ ಮತ್ತು ಪರಿಶೀಲಿಸದ ಆರೋಪಗಳ ಮೂಲಕ ಸಾರ್ವಜನಿಕ ಅಭಿಪ್ರಾಯವನ್ನು ಪ್ರಭಾವಿತಗೊಳಿಸುತ್ತಿವೆ ಎಂದು ಅವರು ದೂರಿದ್ದರು.

ಈ ಅರ್ಜಿಯನ್ನು ಭಾಗಶಃ ಮಾನ್ಯಗೊಳಿಸಿರುವ ಹೈಕೋರ್ಟ್, ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಹಾಗೂ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯಕ್ಕೆ ದೂರುಗಳ ಕುರಿತು ತನಿಖೆ ನಡೆಸಿ ಕ್ರಮ ಕೈಗೊಳ್ಳಲು ಸೂಚಿಸಿದೆ.

ನ್ಯಾಯಾಲಯದ ಪ್ರಕಾರ, ಈ ರೀತಿಯ ಪ್ರಸಾರಗಳು ಕೇಬಲ್ ಟೆಲಿವಿಷನ್ ನೆಟ್‌ವರ್ಕ್ ನಿಯಮಗಳು, 1994ರ ಕಾರ್ಯಕ್ರಮ ಸಂಹಿತೆಯ ನಿಯಮ 6 ಉಲ್ಲಂಘಿಸುವುದರ ಜೊತೆಗೆ ನ್ಯಾಯಾಂಗದ ಕಾರ್ಯದಲ್ಲಿ ಹಸ್ತಕ್ಷೇಪ ಮಾಡುವಂತಿವೆ. “ತಡೆಯಾಜ್ಞೆ ಇದ್ದರೂ ನಿರಂತರ ಪ್ರಸಾರ ಮಾಡುವುದು ನ್ಯಾಯಾಂಗದ ನಿರ್ಲಕ್ಷ್ಯ ತೋರಿಸುತ್ತದೆ. ಇದು ಪ್ರಾಥಮಿಕವಾಗಿ ನ್ಯಾಯಾಲಯದ ಅವಮಾನಕ್ಕೆ ಸಮಾನ” ಎಂದು ಹೈಕೋರ್ಟ್ ಎಚ್ಚರಿಕೆ ನೀಡಿದೆ.

ಟೈರ್ ಬ್ಲಾಸ್ಟ್ ಬಳಿಕ ಹೊತ್ತಿ ಉರಿದ ಎಸಿ ಬಸ್; ಮಧ್ಯರಾತ್ರಿ 36 ಮಂದಿಯ ಜೀವ ಉಳಿಸಿದ ಚಾಲಕ!

0

ಹಾಸನ: ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಸಂಚರಿಸುತ್ತಿದ್ದ ಖಾಸಗಿ ಸ್ಲೀಪರ್ ಎಸಿ ಬಸ್‌ಗೆ ಬೆಂಕಿ ಹೊತ್ತಿಕೊಂಡು ಸಂಪೂರ್ಣ ಸುಟ್ಟು ಭಸ್ಮವಾದ ಭೀಕರ ಘಟನೆ ಶಾಂತಿಗ್ರಾಮ ಸಮೀಪ ನಡೆದಿದೆ. ಮಣಿಪಾಲದಿಂದ ಬೆಂಗಳೂರಿಗೆ ತೆರಳುತ್ತಿದ್ದ ಬಸ್‌ನಲ್ಲಿ ಇದ್ದ 36 ಪ್ರಯಾಣಿಕರು ಚಾಲಕನ ಕ್ಷಿಪ್ರ ನಿರ್ಧಾರದಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ತಡರಾತ್ರಿ ಸುಮಾರು 2:30ರ ವೇಳೆಗೆ ಬಸ್‌ನ ಹಿಂಬದಿ ಟೈರ್ ಸ್ಫೋಟಗೊಂಡಿದ್ದು, ನಂತರ ಬೆಂಕಿ ವೇಗವಾಗಿ ಹಬ್ಬಿದೆ. ಚಾಲಕ ತಕ್ಷಣವೇ ಬಸ್ ನಿಲ್ಲಿಸಿ, ಒಳಗಿದ್ದ ಪ್ರಯಾಣಿಕರನ್ನು ಎಚ್ಚರಿಸಿ ಹೊರಗೆ ಕರೆದೊಯ್ದಿದ್ದಾರೆ. ಬೆಂಕಿ ವ್ಯಾಪಕವಾಗುವ ಮುನ್ನವೇ ಎಲ್ಲರನ್ನು ಸುರಕ್ಷಿತವಾಗಿ ಕೆಳಗಿಳಿಸಲಾಗಿದೆ.

ಬಸ್‌ನಲ್ಲಿ ಮಹಿಳೆಯರು ಮತ್ತು ಮಕ್ಕಳೂ ಸೇರಿ ಒಟ್ಟು 36 ಮಂದಿ ಪ್ರಯಾಣಿಸುತ್ತಿದ್ದರು. ಯಾವುದೇ ಜೀವಹಾನಿ ಸಂಭವಿಸದಿದ್ದರೂ, ಪ್ರಯಾಣಿಕರ ಬ್ಯಾಗ್‌, ಬಟ್ಟೆ, ಮೊಬೈಲ್ ಸೇರಿದಂತೆ ಬೆಲೆಬಾಳುವ ವಸ್ತುಗಳು ಬೆಂಕಿಯಲ್ಲಿ ಕರಕಲಾಗಿವೆ.

ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದರೂ, ಬಸ್ ಸಂಪೂರ್ಣ ಸುಟ್ಟು ಹೋಗಿದೆ. ಘಟನೆ ಕುರಿತು ಸಾರಿಗೆ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದು, ತಾಂತ್ರಿಕ ದೋಷವೇ ಅಥವಾ ಬೇರೆ ಕಾರಣವೇ ಎಂಬುದರ ಕುರಿತು ತನಿಖೆ ಮುಂದುವರಿದಿದೆ.

ನಕಲಿ ಬಿಲ್ ಜಾಲದಲ್ಲಿ ‘ನ್ಯಾಷನಲ್ ಟ್ರಾವೆಲ್ಸ್’ ಹೆಸರು: ₹2384 ಕೋಟಿ ವಹಿವಾಟಿನ ಬೆನ್ನಲ್ಲೇ ಭಾರೀ ಶಾಕ್

ಬೆಂಗಳೂರು, ಮೇ 16: ಕರ್ನಾಟಕದಲ್ಲಿ ಬೃಹತ್ ಮಟ್ಟದಲ್ಲಿ ನಡೆಯುತ್ತಿದ್ದ ನಕಲಿ ಐಟಿಸಿ ಬಿಲ್ ದಂಧೆ ರಾಜ್ಯ ರಾಜಕೀಯಕ್ಕೂ ತಲುಪಿದೆ. ಸುಮಾರು ₹2,000 ಕೋಟಿ ಮೌಲ್ಯದ ತೆರಿಗೆ ವಂಚನೆ ಪ್ರಕರಣದಲ್ಲಿ ಸಚಿವ ಜಮೀರ್ ಅಹ್ಮದ್ ಖಾನ್ ಅವರಿಗೆ ಸೇರಿದೆ ಎನ್ನಲಾದ ‘ನ್ಯಾಷನಲ್ ಟ್ರಾವೆಲ್ಸ್’ ಸಂಸ್ಥೆಯ ಹೆಸರು ಕೇಳಿಬಂದಿದ್ದು, ವಾಣಿಜ್ಯ ತೆರಿಗೆ ಇಲಾಖೆ ನೋಟಿಸ್ ಜಾರಿ ಮಾಡಿದೆ.

ಮಹಾರಾಷ್ಟ್ರದ ಸ್ಕ್ರ್ಯಾಪ್ ಮಾಫಿಯಾ ಮತ್ತು ಕರ್ನಾಟಕದ ನಕಲಿ ಕಂಪನಿಗಳ ನಡುವೆ ನಡೆಯುತ್ತಿದ್ದ ಈ ದಂಧೆಯಲ್ಲಿ ‘ಟಂಗ್‌ಸ್ಟನ್ ಕಾರ್ಬೈಡ್ ಸ್ಕ್ರ್ಯಾಪ್’ ಹೆಸರಿನಲ್ಲಿ ನಕಲಿ ಇ-ವೇ ಬಿಲ್‌ಗಳನ್ನು ಸೃಷ್ಟಿಸಿ ಕೋಟ್ಯಾಂತರ ರೂಪಾಯಿ ವಹಿವಾಟು ನಡೆದಂತೆ ದಾಖಲೆ ತೋರಿಸಲಾಗುತ್ತಿತ್ತು. ತಿಂಗಳಿಗೆ 20ಕ್ಕೂ ಹೆಚ್ಚು ಭಾರಿ ವಾಹನಗಳು ಸ್ಕ್ರ್ಯಾಪ್ ಸಾಗಿಸುತ್ತಿವೆ ಎಂದು ದಾಖಲೆ ಸೃಷ್ಟಿಸಿದರೂ, ಲಾರಿಗಳಲ್ಲಿ ವಾಸ್ತವವಾಗಿ ಯಾವುದೇ ಸರಕು ಇರಲಿಲ್ಲ.

ನ್ಯಾಷನಲ್ ಟ್ರಾವೆಲ್ಸ್ ಗುತ್ತಿಗೆ ಲಾರಿಗಳನ್ನೂ ಈ ಅಕ್ರಮ ಜಾಲ ಬಳಸಿಕೊಂಡಿದೆ ಎಂಬ ಅನುಮಾನ ವ್ಯಕ್ತವಾಗಿದ್ದು, ಇದೇ ಹಿನ್ನೆಲೆ ಸಂಸ್ಥೆಗೆ ನೋಟಿಸ್ ಜಾರಿಯಾಗಿದೆ. ಬೆಂಗಳೂರಿನಲ್ಲಿ ಟಂಗ್‌ಸ್ಟನ್ ಸ್ಕ್ರ್ಯಾಪ್ ಉತ್ಪಾದನೆ ಅಷ್ಟಾಗಿ ಇಲ್ಲದಿದ್ದರೂ, ಕೋಟ್ಯಾಂತರ ರೂಪಾಯಿ ಮೌಲ್ಯದ ರಫ್ತು ದಾಖಲೆಗಳು ಪತ್ತೆಯಾಗಿದ್ದರಿಂದ ಅಧಿಕಾರಿಗಳು ತನಿಖೆ ಆರಂಭಿಸಿದ್ದರು.

ತನಿಖೆಯಲ್ಲಿ ಬರೋಬ್ಬರಿ 127 ನಕಲಿ ಸಂಸ್ಥೆಗಳ ಜಾಲ ಪತ್ತೆಯಾಗಿದ್ದು, ಹಲವು ಕಂಪನಿಗಳು ಕೇವಲ ಕಾಗದದಲ್ಲಿ ಮಾತ್ರ ಅಸ್ತಿತ್ವದಲ್ಲಿದ್ದವು ಎಂಬುದು ಬಹಿರಂಗವಾಗಿದೆ. ‘ಎಸ್‌ಕೆಎಸ್ ಟ್ರೇಡರ್ಸ್’ ಹಾಗೂ ‘ಕೆಎಚ್ ಇ-ವೇಸ್ಟ್ ಸೈಕ್ಲರ್’ ಸಂಸ್ಥೆಗಳ ಮೂಲಕ ಮಾತ್ರವೇ ₹2,384 ಕೋಟಿ ವಹಿವಾಟು ನಡೆದಿದ್ದು, ₹594 ಕೋಟಿ ಐಟಿಸಿ ಬಿಲ್ ದುರುಪಯೋಗವಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ 7 ಮಂದಿಯನ್ನು ಬಂಧಿಸಲಾಗಿದೆ. ವಾಣಿಜ್ಯ ತೆರಿಗೆ ಇಲಾಖೆ ಹಾಗೂ ತನಿಖಾ ಸಂಸ್ಥೆಗಳು ಹಣದ ಹಾದಿ, ರಾಜಕೀಯ ಸಂಪರ್ಕ ಹಾಗೂ ಲಾಜಿಸ್ಟಿಕ್ಸ್ ನೆಟ್‌ವರ್ಕ್ ಕುರಿತಾಗಿ ಆಳವಾದ ತನಿಖೆ ಮುಂದುವರಿಸಿವೆ.

ಪೇಪರ್ ಲೀಕ್ ದುರಂತ: ನೀಟ್ ರದ್ದು ಬೆನ್ನಲ್ಲೇ ವಿದ್ಯಾರ್ಥಿಗಳ ಸರಣಿ ಆತ್ಮಹತ್ಯೆಗೆ ಮತ್ತೊಂದು ಬಲಿ

ನವದೆಹಲಿ: ದೇಶವನ್ನೇ ಬೆಚ್ಚಿಬೀಳಿಸಿದ್ದ ನೀಟ್-ಯುಜಿ 2026 ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ ಈಗ ಮತ್ತೊಂದು ಭೀಕರ ತಿರುವು ಪಡೆದುಕೊಂಡಿದೆ. ಪರೀಕ್ಷೆ ರದ್ದುಗೊಂಡ ಆಘಾತ ತಾಳಲಾರದೆ ದೇಶದ ವಿವಿಧ ಭಾಗಗಳಲ್ಲಿ ನೀಟ್ ಆಕಾಂಕ್ಷಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ತೀವ್ರ ಚರ್ಚೆಗೆ ಕಾರಣವಾಗಿದೆ.

ರಾಜಸ್ಥಾನದ ಸಿಕಾರ್‌ನಲ್ಲಿ 22 ವರ್ಷದ ಪ್ರದೀಪ್ ಮೇಘವಾಲ್ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಮೂರು ವರ್ಷಗಳಿಂದ ನೀಟ್‌ಗಾಗಿ ಹಗಲು-ರಾತ್ರಿ ಶ್ರಮಿಸಿದ್ದ ಪ್ರದೀಪ್, ಈ ಬಾರಿ ಉತ್ತಮ ಅಂಕಗಳ ನಿರೀಕ್ಷೆಯಲ್ಲಿದ್ದ. ಆದರೆ ಪ್ರಶ್ನೆಪತ್ರಿಕೆ ಸೋರಿಕೆ ಹಿನ್ನೆಲೆಯಲ್ಲಿ ಪರೀಕ್ಷೆ ರದ್ದಾದ ಬಳಿಕ ಆತ ಸಂಪೂರ್ಣವಾಗಿ ಮನನೊಂದಿದ್ದ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಬಾಡಿಗೆ ಮನೆಯಲ್ಲಿ ಸಹೋದರಿಯರ ಜೊತೆ ವಾಸವಾಗಿದ್ದ ಪ್ರದೀಪ್, ಶುಕ್ರವಾರ ಮಧ್ಯಾಹ್ನ ಫ್ಯಾನ್‌ಗೆ ನೇಣು ಬಿಗಿದುಕೊಂಡಿದ್ದಾನೆ. ಸಹೋದರಿ ಗಮನಿಸಿದ ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ.

ಇದೀಗ ಈ ಪ್ರಕರಣ ರಾಷ್ಟ್ರವ್ಯಾಪಿ ಕಳವಳ ಹುಟ್ಟಿಸಿದ್ದು, ದೆಹಲಿ, ಉತ್ತರ ಪ್ರದೇಶ ಮತ್ತು ಗೋವಾ ರಾಜ್ಯಗಳಲ್ಲಿಯೂ ಇದೇ ರೀತಿಯ ಆತ್ಮಹತ್ಯೆ ಪ್ರಕರಣಗಳು ವರದಿಯಾಗಿವೆ. ಉತ್ತರ ಪ್ರದೇಶದ ರಿತಿಕ್ ಮಿಶ್ರಾ ಎಂಬ ಯುವಕ ಮೂರನೇ ಬಾರಿ ನೀಟ್ ಬರೆದು ಉತ್ತಮ ಫಲಿತಾಂಶದ ನಿರೀಕ್ಷೆಯಲ್ಲಿದ್ದರೂ, ಪ್ರಶ್ನೆಪತ್ರಿಕೆ ಸೋರಿಕೆ ವಿವಾದದ ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಕುಟುಂಬ ಆರೋಪಿಸಿದೆ.

ಇದರ ನಡುವೆ ಸಿಬಿಐ ತನಿಖೆ ವೇಗ ಪಡೆದುಕೊಂಡಿದ್ದು, ಪ್ರಮುಖ ಆರೋಪಿ ಪ್ರೊಫೆಸರ್ ಪಿವಿ ಕುಲಕರ್ಣಿ ಸೇರಿದಂತೆ ಹಲವರ ಬಂಧನವಾಗಿದೆ. ದೇಶದ ವಿವಿಧ ರಾಜ್ಯಗಳಲ್ಲಿ ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ಪ್ರಶ್ನೆಪತ್ರಿಕೆ ಸೋರಿಕೆ ಜಾಲದ ಬಗ್ಗೆಯೂ ತನಿಖೆ ನಡೆಯುತ್ತಿದೆ.

ಒಂದು ರಾಷ್ಟ್ರೀಯ ಮಟ್ಟದ ಪರೀಕ್ಷೆಯ ಮೇಲಿನ ನಂಬಿಕೆ ಕುಸಿದ ಪರಿಣಾಮ, ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗಿದ್ದು, ಕೇಂದ್ರ ಸರ್ಕಾರ ಹಾಗೂ ಪರೀಕ್ಷಾ ಸಂಸ್ಥೆಗಳ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.

‘ವಿಶ್ವದಲ್ಲೇ ಕನಿಷ್ಠ ಏರಿಕೆ ಭಾರತದಲ್ಲೇ’: ತೈಲ ಬೆಲೆ ಏರಿಕೆ ಟೀಕೆಗೆ ಪ್ರಲ್ಹಾದ ಜೋಶಿ ತಿರುಗೇಟು

ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಕುರಿತು ನಡೆಯುತ್ತಿರುವ ರಾಜಕೀಯ ಟೀಕೆಗಳಿಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅಂಕಿಅಂಶಗಳೊಂದಿಗೆ ತೀವ್ರ ಪ್ರತಿಕ್ರಿಯೆ ನೀಡಿದ್ದಾರೆ.

ಅವರು ಹೇಳುವಂತೆ, ಜಾಗತಿಕ ಇಂಧನ ಬಿಕ್ಕಟ್ಟಿನ ನಡುವೆಯೂ ಭಾರತದಲ್ಲಿ ತೈಲ ಬೆಲೆ ಏರಿಕೆ ಕೇವಲ 3.2% ಆಗಿದ್ದು, ಇತರ ದೇಶಗಳಲ್ಲಿ ಬಹಳ ಹೆಚ್ಚು ಪ್ರಮಾಣದಲ್ಲಿ ಏರಿಕೆಯಾಗಿದೆ.

ಜೋಶಿ ನೀಡಿದ ವಿವರಗಳ ಪ್ರಕಾರ, ಯುಎಸ್‌ಎನಲ್ಲಿ 44.5%, ಶ್ರೀಲಂಕಾದಲ್ಲಿ 38.2%, ಯುಕೆನಲ್ಲಿ 19.2% ಮತ್ತು ಜರ್ಮನಿಯಲ್ಲಿ 13.7% ತೈಲ ಬೆಲೆ ಏರಿಕೆಯಾಗಿದೆ.

ಕೇಂದ್ರ ಸರ್ಕಾರ ಇತ್ತೀಚೆಗೆ ಅಬಕಾರಿ ಸುಂಕವನ್ನು 10 ರೂ. ಕಡಿಮೆ ಮಾಡಿದ್ದರೂ, ಬ್ರೆಂಟ್ ಕಚ್ಚಾ ತೈಲ ಬೆಲೆ ಏರಿಕೆಯ ಪರಿಣಾಮವಾಗಿ ಇಂಧನ ದರ ಹೆಚ್ಚಳ ಅನಿವಾರ್ಯವಾಗಿದೆ ಎಂದು ಅವರು ತಿಳಿಸಿದ್ದಾರೆ.

ರಾಜ್ಯ ಸರ್ಕಾರಗಳ ವಿರುದ್ಧವೂ ವಾಗ್ದಾಳಿ ನಡೆಸಿದ ಜೋಶಿ, ಕರ್ನಾಟಕದಲ್ಲಿ ಪೆಟ್ರೋಲ್-ಡೀಸೆಲ್ ತೆರಿಗೆ ಹೆಚ್ಚಳದ ಮೂಲಕ ಜನರಿಗೆ ಹೆಚ್ಚುವರಿ ಹೊರೆ ಹಾಕಲಾಗಿದೆ ಎಂದು ಆರೋಪಿಸಿದ್ದಾರೆ.

“ಕಾಂಗ್ರೆಸ್ ಬೂಟಾಟಿಕೆ ರಾಜಕಾರಣ ಮಾಡುತ್ತಿದೆ” ಎಂದು ಹೇಳಿದ ಅವರು, ಪ್ರಸ್ತುತ ತೈಲ ಬೆಲೆ ಏರಿಕೆಯನ್ನು ಜಾಗತಿಕ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಅರ್ಥಮಾಡಿಕೊಳ್ಳಬೇಕು ಎಂದು ಸ್ಪಷ್ಟಪಡಿಸಿದ್ದಾರೆ.

ಶ್ವಾಸಕೋಶ ಸೋಂಕು, ದೃಷ್ಟಿ ಸಮಸ್ಯೆ, ಮೂಳೆ ಬಿರುಕು: ಪವನ್ ಕಲ್ಯಾಣ್ ಆರೋಗ್ಯದ ಅಸಲಿ ಸ್ಥಿತಿ ಬಯಲು

ಶಸ್ತ್ರಚಿಕಿತ್ಸೆಯ ಬಳಿಕ ಮೊದಲ ಬಾರಿಗೆ ಸಾರ್ವಜನಿಕವಾಗಿ ಮಾತನಾಡಿರುವ ಪವನ್‌ ಕಲ್ಯಾಣ್‌ ಕಳೆದ ಕೆಲವು ತಿಂಗಳಿಂದ ಎದುರಿಸಿದ್ದ ಗಂಭೀರ ಆರೋಗ್ಯ ಸಮಸ್ಯೆಗಳ ಬಗ್ಗೆ ಆತಂಕಕಾರಿ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ.

ಜನಸೇನಾ ಪಕ್ಷದ ಸಭೆಯಲ್ಲಿ ಮಾತನಾಡಿದ ಪವನ್ ಕಲ್ಯಾಣ್, ಕೋವಿಡ್ ನಂತರ ಶ್ವಾಸಕೋಶದ ಸೋಂಕು ಸಂಪೂರ್ಣವಾಗಿ ಗುಣವಾಗಿರಲಿಲ್ಲ ಎಂದು ಹೇಳಿದ್ದಾರೆ.

“ಚುನಾವಣೆಗೆ ಮುನ್ನ ಸುಮಾರು ಒಂದೂವರೆ ವರ್ಷ ಧೂಳಿನಲ್ಲಿ ನಿರಂತರ ಪ್ರಚಾರ ನಡೆಸಿದ್ದರಿಂದ ಸೈನಸ್‌ನಲ್ಲಿ ಧೂಳು ಗಟ್ಟಿಯಾಗಿ ಜಮೆಯಾಗಿತ್ತು. ಇದರಿಂದ ಎಡಗಣ್ಣಿನ ಬಳಿ ಊತ ಬರುತ್ತಿತ್ತು. ಒಂದು ಹಂತದಲ್ಲಿ ದೃಷ್ಟಿಯೇ ಮಂದವಾಗಿತ್ತು. ಎಡಗಡೆ ಕಣ್ಣು ತಿರುಗಿಸಿದರೆ ಏನೂ ಕಾಣುತ್ತಿರಲಿಲ್ಲ” ಎಂದು ಹೇಳಿದ್ದಾರೆ.

ಆರೋಗ್ಯ ಪರೀಕ್ಷೆಯಲ್ಲಿ ದೇಹದ ಕೆಲ ಮಾಂಸಖಂಡಗಳು ಹರಿದಿರುವುದು ಹಾಗೂ ಕೆಲವು ಮೂಳೆಗಳಲ್ಲಿ ಬಿರುಕುಗಳಿರುವುದೂ ಪತ್ತೆಯಾಗಿದೆ ಎಂದು ತಿಳಿಸಿದ್ದಾರೆ.

“ಅಭಿಮಾನಿಗಳು ಪ್ರೀತಿಯಿಂದ ಕೈ ಹಿಡಿದು ಎಳೆಯುತ್ತಾರೆ. ಆದರೆ ಅದರಿಂದ ಎರಡೂ ಭುಜಗಳಲ್ಲಿ ಮಾಂಸಖಂಡಗಳಿಗೆ ಹಾನಿಯಾಗಿದೆ. ನೋವು ಅಸಹನೀಯವಾಗಿತ್ತು” ಎಂದು ಪವನ್ ಹೇಳಿದ್ದಾರೆ.

ವೈದ್ಯರ ಸಲಹೆಯಂತೆ ಎಲ್ಲಾ ಕಾರ್ಯಕ್ರಮಗಳನ್ನು ರದ್ದು ಮಾಡಿ ಚಿಕಿತ್ಸೆ ಪಡೆದಿದ್ದಾಗಿ ಹೇಳಿದ ಅವರು, “ಸುಮಾರು ಒಂದು ತಿಂಗಳ ಬಳಿಕ ಮತ್ತೆ ಜನರ ಮುಂದೆ ಬಂದಿದ್ದೇನೆ” ಎಂದರು.

ಪ್ರಧಾನಿ Narendra Modi ಸೇರಿದಂತೆ ಹಲವು ಗಣ್ಯರು ಆರೋಗ್ಯ ವಿಚಾರಿಸಿದ್ದನ್ನು ಸ್ಮರಿಸಿದ ಪವನ್, ಈಗ ಆರೋಗ್ಯದಲ್ಲಿ ಸಾಕಷ್ಟು ಸುಧಾರಣೆ ಕಂಡುಬಂದಿದ್ದು, ಮತ್ತೆ ರಾಜಕೀಯದಲ್ಲಿ ಸಕ್ರಿಯರಾಗುವುದಾಗಿ ಘೋಷಿಸಿದ್ದಾರೆ.

ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ಕಸ್ಟಮ್ಸ್ ದಾಳಿ: 47 ವನ್ಯಜೀವಿ, ₹3.26 ಕೋಟಿ ಮೌಲ್ಯದ ಗಾಂಜಾ ವಶ

ಚಿಕ್ಕಬಳ್ಳಾಪುರ: ಬ್ಯಾಂಕಾಕ್‌ನಿಂದ ಬೆಂಗಳೂರಿಗೆ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಅಪರೂಪದ ವನ್ಯಜೀವಿಗಳನ್ನು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು, ಕೆಂಪು ಪಾದದ ಆಮೆಗಳು, ಆಫ್ರಿಕನ್ ಆಮೆಗಳು, ಅರ್ಜೆಂಟಿನಾ ಕಪ್ಪು-ಬಿಳಿ ತೇಗು ಹಾಗೂ ಗೋಲ್ಡೀಸ್ ಮಾರ್ಮೋಸೆಟ್ ಸೇರಿ ಒಟ್ಟು 47 ವನ್ಯಜೀವಿಗಳನ್ನು ಪತ್ತೆಹಚ್ಚಿದ್ದಾರೆ.

ಈ ಸಂಬಂಧ ಕಸ್ಟಮ್ಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಮುಂದಿನ ಕಾನೂನು ಕ್ರಮಕ್ಕಾಗಿ ಬೆಂಗಳೂರು ಗ್ರಾಮಾಂತರ ಆರ್‌ಎಫ್‌ಒ ಅಧಿಕಾರಿಗಳ ವಶಕ್ಕೆ ಒಪ್ಪಿಸಲಾಗಿದೆ. ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ತನಿಖೆ ಮುಂದುವರಿದಿದೆ.

ಇದೇ ವೇಳೆ ಮತ್ತೊಂದು ಕಾರ್ಯಾಚರಣೆಯಲ್ಲಿ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ 3.26 ಕೋಟಿ ರೂಪಾಯಿ ಮೌಲ್ಯದ ಹೈಡ್ರೋಪೋನಿಕ್ ಗಾಂಜಾವನ್ನೂ ಕಸ್ಟಮ್ಸ್ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

ಬ್ಯಾಂಕಾಕ್‌ನಿಂದ ಬಂದ ಇಬ್ಬರು ಪ್ರಯಾಣಿಕರ ಲಗೇಜ್ ತಪಾಸಣೆ ವೇಳೆ 8.5 ಕೆಜಿ ಗಾಂಜಾ ಪತ್ತೆಯಾಗಿದ್ದು, ಅದರ ಮೌಲ್ಯ ಸುಮಾರು 2.98 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಮತ್ತೊಬ್ಬ ಪ್ರಯಾಣಿಕನ ಬಳಿ 800 ಗ್ರಾಂ ಗಾಂಜಾ ಪತ್ತೆಯಾಗಿದ್ದು, ಅದರ ಮೌಲ್ಯ 28 ಲಕ್ಷ ರೂಪಾಯಿ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

error: Content is protected !!