ತುಮಕೂರು: ಸ್ವಯಂ ಉದ್ಯೋಗ ಮತ್ತು ಹೆಚ್ಚಿನ ಆದಾಯದ ಭರವಸೆ ನೀಡಿ ಮಹಿಳೆಯರಿಂದ ಲಕ್ಷಾಂತರ ರೂಪಾಯಿ ಸಂಗ್ರಹಿಸಿದ್ದ ‘ಎಸ್ಎಲ್ವಿ ಮಹಿಳಾ ಮಾರ್ಟ್’ ಕಂಪನಿ ವಿರುದ್ಧ ತುಮಕೂರಿನಲ್ಲಿ ಭಾರೀ ವಂಚನೆ ಆರೋಪ ಕೇಳಿ ಬಂದಿದೆ. ಹಾವೇರಿ ಮಾದರಿಯಲ್ಲೇ ತುಮಕೂರಿನಲ್ಲೂ ನೂರಾರು ಮಹಿಳೆಯರು ಹಣ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಜಯನಗರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕಂಪನಿ, ಮನೆಯಲ್ಲೇ ಪ್ಯಾಕಿಂಗ್ ಕೆಲಸ ನೀಡುವುದಾಗಿ ಹೇಳಿ ಗೃಹಿಣಿಯರನ್ನು ಗುರಿಯಾಗಿಸಿಕೊಂಡಿತ್ತು. ಲಕ್ಷಾಂತರ ರೂಪಾಯಿ ಭದ್ರತಾ ಠೇವಣಿ ಪಾವತಿಸಿದರೆ ಮಾಸಿಕ ಸಂಬಳ, ಕಂತುಗಳಲ್ಲಿ ಹಣ ವಾಪಸ್ ಹಾಗೂ ಬಳಿಕ ಸಂಪೂರ್ಣ ಠೇವಣಿ ಮೊತ್ತ ಮರುಪಾವತಿ ಮಾಡುವುದಾಗಿ ನಂಬಿಸಿತ್ತು. ಕೆಲವೇ ತಿಂಗಳಲ್ಲಿ ಹೂಡಿಕೆ ಹಣ ದುಪ್ಪಟ್ಟಾಗಲಿದೆ ಎಂಬ ಭರವಸೆ ನೀಡಿ ಮಹಿಳೆಯರನ್ನು ಸೆಳೆದಿತ್ತು.
ಆರಂಭದಲ್ಲಿ ವ್ಯವಹಾರ ಸುಗಮವಾಗಿ ನಡೆಯುತ್ತಿರುವ ಭರವಸೆ ಮೂಡಿಸಿದ್ದ ಕಂಪನಿ, ಏಪ್ರಿಲ್ ತಿಂಗಳವರೆಗೂ ಹಣ ಸಂಗ್ರಹಿಸಿ ಬಳಿಕ ದಿಢೀರ್ ಕಚೇರಿಗೆ ಬೀಗ ಹಾಕಿ ನಾಪತ್ತೆಯಾಗಿದೆ. ಇದರಿಂದ ಹೂಡಿಕೆ ಮಾಡಿದ ಮಹಿಳೆಯರು ಭಾರೀ ಆರ್ಥಿಕ ನಷ್ಟ ಅನುಭವಿಸುತ್ತಿದ್ದಾರೆ.
ಸಂತ್ರಸ್ತರಲ್ಲಿ ಹಲವರು ಮನೆಯವರಿಗೆ ತಿಳಿಯದಂತೆ ಸಾಲ ಮಾಡಿ ಹಣ ಹೂಡಿಕೆ ಮಾಡಿದ್ದು, ಕೆಲವರು ತಮ್ಮ ಆಸ್ತಿ ದಾಖಲೆಗಳನ್ನು ಅಡಮಾನವಿಟ್ಟು ಹಣ ಸಂಗ್ರಹಿಸಿದ್ದರು. ಇನ್ನೂ ಕೆಲವರು ಸ್ನೇಹಿತರು ಹಾಗೂ ಸಂಬಂಧಿಕರಿಂದ ಹಣ ಪಡೆದು ಕಂಪನಿಗೆ ನೀಡಿರುವುದಾಗಿ ತಿಳಿಸಿದ್ದಾರೆ.
ಹಾವೇರಿಯಲ್ಲಿ ನಡೆದ ವಂಚನೆ ಪ್ರಕರಣದ ಬಳಿಕ ತುಮಕೂರಿನ ಮಹಿಳೆಯರೂ ಮುಂದೆ ಬಂದು ದೂರು ನೀಡಲು ಆರಂಭಿಸಿದ್ದಾರೆ. ಸದ್ಯ ಜಯನಗರ ಠಾಣೆಯಲ್ಲಿ ಎನ್ಸಿಆರ್ ದಾಖಲಾಗಿದ್ದು, ವಂಚನೆಗೆ ಸಂಬಂಧಿಸಿದ ದಾಖಲೆಗಳು, ಹೂಡಿಕೆದಾರರ ಮಾಹಿತಿ ಹಾಗೂ ಕಂಪನಿಯ ಕಾರ್ಯವೈಖರಿ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

