ಬೆಂಗಳೂರು: ರಾಜ್ಯದಲ್ಲಿ ಇಂಧನ ದರ ಏರಿಕೆ ತೀವ್ರ ಪರಿಣಾಮ ಬೀರಿದ್ದು, ಬದುಕು ಸಾಗಿಸಲು ಸಾಧ್ಯವಾಗುತ್ತಿಲ್ಲ ಎಂದು ಆಟೋ ಚಾಲಕರು ಸರ್ಕಾರದ ನೆರವು ಕೋರಿದ್ದಾರೆ. ಪೆಟ್ರೋಲ್, ಡೀಸೆಲ್, ಸಿಎನ್ಜಿ ಹಾಗೂ ಎಲ್ಪಿಜಿ ದರ ಏರಿಕೆಯಿಂದ ಆದಾಯ ಸಂಪೂರ್ಣ ಕುಸಿದಿದೆ ಎಂದು ಸ್ನೇಹಜೀವಿ ಆಟೋ ಚಾಲಕರ ಟ್ರೇಡ್ ಯೂನಿಯನ್ ಹೇಳಿದೆ.
ಜಾಗತಿಕ ತೈಲ ಬಿಕ್ಕಟ್ಟು ಮತ್ತು ಆಮದು ವೆಚ್ಚದ ಪರಿಣಾಮ ಕಳೆದ ಕೆಲವು ದಿನಗಳಿಂದ ಇಂಧನ ದರಗಳು ಏರಿಕೆಯಾಗುತ್ತಿದ್ದು, ಅದರ ಹೊರೆ ನೇರವಾಗಿ ಆಟೋ ಚಾಲಕರ ಮೇಲೇ ಬಿದ್ದಿದೆ. ದಿನಪೂರ್ತಿ ದುಡಿದರೂ ಮನೆಯ ಖರ್ಚು, ವಾಹನ ನಿರ್ವಹಣೆ ಮತ್ತು ಮಕ್ಕಳ ಶಿಕ್ಷಣ ವೆಚ್ಚ ನಿಭಾಯಿಸಲು ಸಾಧ್ಯವಾಗುತ್ತಿಲ್ಲ ಎಂದು ಚಾಲಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಹಿನ್ನೆಲೆ ರಾಜ್ಯಾದ್ಯಂತ ಏಕೀಕೃತ ಆಟೋ ಮೀಟರ್ ದರ ಜಾರಿಗೆ ತರಬೇಕು ಹಾಗೂ ಪ್ರಸ್ತುತ ಇರುವ ದರವನ್ನು ಹೆಚ್ಚಿಸಬೇಕು ಎಂದು ಯೂನಿಯನ್ ಸರ್ಕಾರಕ್ಕೆ ಮನವಿ ಮಾಡಿದೆ. ಕ್ಯಾಬ್ ಸೇವೆಗಳ ಕಡಿಮೆ ದರ ನೀತಿಯಿಂದ ಆಟೋ ಚಾಲಕರ ಆದಾಯ ಕುಸಿದಿದ್ದು, ಸರ್ಕಾರ ಮಧ್ಯಪ್ರವೇಶಿಸಬೇಕು ಎಂದು ಒತ್ತಾಯಿಸಲಾಗಿದೆ.
ಆಟೋ ಚಾಲಕರ ಮಕ್ಕಳ ಶಾಲಾ ಶುಲ್ಕವನ್ನು ಸರ್ಕಾರವೇ ಭರಿಸಬೇಕು ಎಂಬ ಬೇಡಿಕೆಯನ್ನೂ ಸಂಘಟನೆ ಮುಂದಿಟ್ಟಿದೆ. ಬೆಲೆ ಏರಿಕೆ ಮತ್ತು ಇಂಧನ ದರ ಹೆಚ್ಚಳದ ನಡುವೆ ಆಟೋ ಚಾಲಕರ ಬದುಕು ಸಂಕಷ್ಟಕ್ಕೆ ಸಿಲುಕಿದ್ದು, ತಕ್ಷಣ ಪರಿಹಾರ ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಲಾಗಿದೆ.

