ನವದೆಹಲಿ: ದೇಶದ ಸಾಂಸ್ಕೃತಿಕ ಮತ್ತು ದೇಶಭಕ್ತಿಯ ಸಂಕೇತವಾದ ‘ವಂದೇ ಮಾತರಂ’ ಗೀತೆಗೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವಾಲಯವು ಮಹತ್ವದ ನಿರ್ಧಾರ ಕೈಗೊಂಡಿದೆ. ರಾಷ್ಟ್ರಗೀತೆ ‘ಜನ ಗಣ ಮನ’ಗೂ ಮುನ್ನ ‘ವಂದೇ ಮಾತರಂ’ ಗೀತೆಯನ್ನು ಕಡ್ಡಾಯವಾಗಿ ಹಾಡಬೇಕು ಅಥವಾ ನುಡಿಸಬೇಕು ಎಂದು ಹೊಸ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
‘ವಂದೇ ಮಾತರಂ’ ಗೀತೆಗೆ 150 ವರ್ಷಗಳು ಪೂರ್ತಿಯಾದ ಹಿನ್ನೆಲೆ ಗೌರವ ಸಲ್ಲಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಪದ್ಮ ಪ್ರಶಸ್ತಿ ಪ್ರದಾನ ಸಮಾರಂಭಗಳು ಸೇರಿದಂತೆ ರಾಷ್ಟ್ರಪತಿಗಳು ಭಾಗವಹಿಸುವ ಎಲ್ಲಾ ಅಧಿಕೃತ ಸರ್ಕಾರಿ ಕಾರ್ಯಕ್ರಮಗಳಲ್ಲಿ, ಚಿತ್ರಮಂದಿರಗಳಲ್ಲಿ ಹಾಗೂ ಇತರ ಸರ್ಕಾರೀ ಕಾರ್ಯಕ್ರಮಗಳಲ್ಲಿ ‘ವಂದೇ ಮಾತರಂ’ ಗೀತೆ ನುಡಿಸಬೇಕು ಅಥವಾ ಹಾಡಬೇಕು ಎಂದು ಸೂಚಿಸಲಾಗಿದೆ.
3 ನಿಮಿಷ 10 ಸೆಕೆಂಡುಗಳ ಅವಧಿಯ, 6 ಚರಣಗಳನ್ನು ಒಳಗೊಂಡ ‘ವಂದೇ ಮಾತರಂ’ ಗೀತೆಯನ್ನು ಹಾಡುವಾಗ ಅಥವಾ ನುಡಿಸುವಾಗ ಎಲ್ಲರೂ ಕಡ್ಡಾಯವಾಗಿ ಎದ್ದು ನಿಲ್ಲಬೇಕು ಎಂದು ಮಾರ್ಗಸೂಚಿಯಲ್ಲಿ ಸ್ಪಷ್ಟಪಡಿಸಲಾಗಿದೆ.
ತ್ರಿವರ್ಣ ಧ್ವಜಾರೋಹಣದ ಸಂದರ್ಭಗಳಲ್ಲಿ, ಸರ್ಕಾರಿ ಕಾರ್ಯಕ್ರಮಗಳಿಗೆ ರಾಷ್ಟ್ರಪತಿಗಳ ಆಗಮನದ ವೇಳೆ, ಅವರ ಭಾಷಣಗಳ ಮೊದಲು ಮತ್ತು ನಂತರ, ರಾಷ್ಟ್ರವನ್ನುದ್ದೇಶಿಸಿ ಮಾಡುವ ಭಾಷಣಗಳ ಸಂದರ್ಭಗಳಲ್ಲಿ, ಹಾಗೆಯೇ ರಾಜ್ಯಪಾಲರ ಆಗಮನ ಮತ್ತು ಭಾಷಣಗಳ ಮೊದಲು ಹಾಗೂ ನಂತರವೂ ಈ ನಿಯಮ ಅನ್ವಯವಾಗಲಿದೆ.
ಇನ್ನೂ, ‘ರಾಷ್ಟ್ರದ ಗೌರವಕ್ಕೆ ಅಪಮಾನ ತಡೆ’ ಕಾಯ್ದೆಯ ಅಡಿಯಲ್ಲಿ ರಾಷ್ಟ್ರಗೀತೆಗೆ (ಮತ್ತು ಈಗ ರಾಷ್ಟ್ರೀಯ ಗೀತೆಗೂ) ಅಡ್ಡಿಪಡಿಸುವ ಅಥವಾ ಇತರರು ಗೌರವಿಸುವುದನ್ನು ತಡೆಯುವ ವ್ಯಕ್ತಿಗೆ ಗರಿಷ್ಠ 3 ವರ್ಷಗಳ ಜೈಲು ಶಿಕ್ಷೆ ವಿಧಿಸುವ ಅವಕಾಶವಿದೆ ಎಂದು ತಿಳಿಸಲಾಗಿದೆ.
ಇದುವರೆಗೆ ‘ವಂದೇ ಮಾತರಂ’ ಗೀತೆಗೆ ಯಾವುದೇ ಅಧಿಕೃತ ಶಿಷ್ಟಾಚಾರವಿರಲಿಲ್ಲ. ಆದರೆ ‘ಜನ ಗಣ ಮನ’ ಗೀತೆಗೆ ರಾಗ, ಅವಧಿ ಮತ್ತು ಗಾಯನ ವಿಧಾನ ಕುರಿತಂತೆ ಸ್ಪಷ್ಟ ನಿಯಮಗಳಿದ್ದವು. ಇದೀಗ ಆರು ಚರಣಗಳ ಸಂಪೂರ್ಣ ಆವೃತ್ತಿಯನ್ನು ಅಧಿಕೃತವಾಗಿ ಕಡ್ಡಾಯಗೊಳಿಸಲಾಗಿದೆ.
ವಿಶೇಷವಾಗಿ, 1937ರಲ್ಲಿ ಕಾಂಗ್ರೆಸ್ ಸರ್ಕಾರ ತೆಗೆದುಹಾಕಿದ್ದ ನಾಲ್ಕು ಚರಣಗಳನ್ನು ಸೇರಿಸಿ ಒಟ್ಟು ಆರು ಚರಣಗಳನ್ನೂ ಈಗಿನಿಂದ ನುಡಿಸಲು ಸೂಚಿಸಲಾಗಿದೆ. 1875ರಲ್ಲಿ ಅಕ್ಷಯ ನವಮಿಯಂದು ಬಂಕಿಮ್ ಚಂದ್ರ ಚಟರ್ಜಿ ರಚಿಸಿದ್ದ ‘ವಂದೇ ಮಾತರಂ’ ಗೀತೆ, ಅದೇ ವರ್ಷದ ನವೆಂಬರ್ 7ರಂದು ಮೊದಲ ಬಾರಿ ಪ್ರಕಟಗೊಂಡಿತ್ತು.