ವಡೋದರಾ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಕಂಡಿದ್ದ ಸರಕು ಸಾಗಣೆ ಕಾರಿಡಾರ್ ನಿರ್ಮಾಣದ ಕನಸನ್ನು ತಮ್ಮ ಸರ್ಕಾರ ಪೂರ್ಣಗೊಳಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಗುಜರಾತ್ನ ವಡೋದರಾದಲ್ಲಿ ನಡೆದ ‘ನಮೋ ಫಾರ್ ವಿಕಸಿತ್ ಭಾರತ್’ ಕಾರ್ಯಕ್ರಮದಲ್ಲಿ ₹35,000 ಕೋಟಿ ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ 2,800 ಕಿ.ಮೀ ಉದ್ದದ ಸರಕು ಸಾಗಣೆ ಕಾರಿಡಾರ್ (Freight Corridor) ಅನ್ನು ಲೋಕಾರ್ಪಣೆ ಮಾಡಲಾಗಿದ್ದು, ಇದನ್ನು 21ನೇ ಶತಮಾನದ ಐತಿಹಾಸಿಕ ಸಾಧನೆ ಎಂದು ಪ್ರಧಾನಿ ಮೋದಿ ಬಣ್ಣಿಸಿದರು.
ಫ್ರೈಟ್ ಕಾರಿಡಾರ್ ಯೋಜನೆಯನ್ನು ಉಲ್ಲೇಖಿಸಿದ ಮೋದಿ, ಬಿಜೆಪಿ ಸರ್ಕಾರ ಹಾಗೂ ಹಿಂದಿನ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಕಾರ್ಯವೈಖರಿಯನ್ನು ಹೋಲಿಸಿದರು. ಅಟಲ್ ಬಿಹಾರಿ ವಾಜಪೇಯಿ ಅವರ ಅವಧಿಯಲ್ಲೇ ಈ ಯೋಜನೆಗೆ ರೂಪುರೇಷೆ ಸಿದ್ಧವಾಗಿತ್ತು. ಆದರೆ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ ಯೋಜನೆಗೆ ನಿರೀಕ್ಷಿತ ಪ್ರಗತಿ ಸಿಗಲಿಲ್ಲ. 2014ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಕಾಮಗಾರಿಗಳಿಗೆ ವೇಗ ಸಿಕ್ಕಿತು ಎಂದು ಪ್ರಧಾನಿ ಹೇಳಿದರು.
ಫ್ರೈಟ್ ಕಾರಿಡಾರ್ನ ಉಪಯುಕ್ತತೆಯನ್ನು ಪ್ರಶ್ನಿಸುವವರ ವಿರುದ್ಧವೂ ಮೋದಿ ವ್ಯಂಗ್ಯವಾಡಿದರು. ‘ಹಾಗಾದರೆ ಟ್ರಕ್ ಡ್ರೈವರ್ಗಳು ಏನು ಮಾಡಬೇಕು? ಟ್ರಕ್ಗಳ ಗತಿ ಏನು? ಟ್ರಕ್ಗಳು ಎಲ್ಲಿಗೆ ಹೋಗುತ್ತವೆ? ಟ್ರಕ್ ಖರೀದಿಸಿದವರ ಪಾಡೇನು?’ ಎಂದು ಪ್ರಶ್ನಿಸುವ ಮೂಲಕ ಟೀಕಾಕಾರರನ್ನು ಲೇವಡಿ ಮಾಡಿದರು.
ಸ್ವಾತಂತ್ರ್ಯದ ಬಳಿಕವೂ ರೈಲ್ವೆ ಸಂಪರ್ಕದಿಂದ ವಂಚಿತವಾಗಿದ್ದ ಹಲವು ಪ್ರದೇಶಗಳಿಗೆ ಈ ಕಾರಿಡಾರ್ ಸಂಪರ್ಕ ಕಲ್ಪಿಸುತ್ತಿದ್ದು, ಇದು ‘ಆತ್ಮನಿರ್ಭರ ಭಾರತ’ದ ಭಾಗವಾಗಿದೆ ಎಂದು ಮೋದಿ ಹೇಳಿದರು.
2014ರ ನಂತರ ಭಾರತ 50,000 ಆಧುನಿಕ ರೈಲ್ವೆ ಬೋಗಿಗಳನ್ನು ನಿರ್ಮಿಸಿದೆ ಎಂದು ಪ್ರಧಾನಿ ತಿಳಿಸಿದರು. ಆದರೆ ಹಿಂದಿನ ಸರ್ಕಾರಕ್ಕೆ 10 ವರ್ಷಗಳ ಅವಧಿಯಲ್ಲಿ 50,000 ಶೌಚಾಲಯಗಳನ್ನೂ ನಿರ್ಮಿಸಲು ಸಾಧ್ಯವಾಗಿರಲಿಲ್ಲ ಎಂದು ಹಿಂದಿನ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಭಾರತ ಇದೀಗ ‘ಚಿಪ್ಸ್ನಿಂದ ಶಿಪ್ವರೆಗೆ’ ವಿವಿಧ ಉತ್ಪನ್ನಗಳನ್ನು ದೇಶೀಯವಾಗಿಯೇ ತಯಾರಿಸುವ ಹೊಸ ಉತ್ಪಾದನಾ ಯುಗವನ್ನು ಪ್ರವೇಶಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

