Home Blog

ಹಿಮಾಚಲ ಪ್ರದೇಶದಲ್ಲಿ ಭೀಕರ ಬಸ್ ಅಪಘಾತ; ಚಾಲಕ-ಕಂಡಕ್ಟರ್ ಸೇರಿ 8 ಮಂದಿ ಸಾವು, 6 ಜನರ ಸ್ಥಿತಿ ಗಂಭೀರ

0

ಶಿಮ್ಲಾ: ಹಿಮಾಚಲ ಪ್ರದೇಶದ ಚಂಬಾ ಜಿಲ್ಲೆಯಲ್ಲಿ ಖಾಸಗಿ ಬಸ್‌ವೊಂದು ನಿಯಂತ್ರಣ ತಪ್ಪಿ ಪಲ್ಟಿಯಾಗಿ ಕೆಳಗಿನ ರಸ್ತೆಗೆ ಬಿದ್ದ ಪರಿಣಾಮ ಚಾಲಕ ಮತ್ತು ಕಂಡಕ್ಟರ್ ಸೇರಿದಂತೆ 8 ಮಂದಿ ಮೃತಪಟ್ಟಿದ್ದು, 10 ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರ ಪೈಕಿ 6 ಜನರ ಸ್ಥಿತಿ ಗಂಭೀರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಸ್‌ ಇಂದು ಬೆಳಗ್ಗೆ ಬೈರಾಗರ್‌ನಿಂದ ಚಂಬಾ ಕಡೆಗೆ ತೆರಳುತ್ತಿತ್ತು. ಬೈರಾಗರ್-ಟಿಸ್ಸಾ ಮಾರ್ಗದ ದೇವಿಕೋಥಿ ಪ್ರದೇಶದ ಚಲುಂಜ್ ಮೋರ್ ಬಳಿ ಬಸ್‌ ಪಲ್ಟಿಯಾಗಿದೆ. ಅಪಘಾತ ಸಂಭವಿಸಿದ ಸಂದರ್ಭದಲ್ಲಿ ಬಸ್‌ನಲ್ಲಿ ಒಟ್ಟು 18 ಮಂದಿ ಪ್ರಯಾಣಿಸುತ್ತಿದ್ದರು ಎಂದು ತಿಳಿದುಬಂದಿದೆ.

ಬಸ್‌ ನಿಯಂತ್ರಣ ಕಳೆದುಕೊಂಡು ಕೆಳಗಿನ ರಸ್ತೆಗೆ ಉರುಳಿ ಬಿದ್ದಿದ್ದು, ಕೆಲವು ಪ್ರಯಾಣಿಕರು ಬಸ್‌ನ ಅಡಿಯಲ್ಲಿ ಸಿಲುಕಿಕೊಂಡು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಪಘಾತದ ಬಳಿಕ ಗಾಯಾಳುಗಳ ಚೀರಾಟ ಕೇಳಿದ ಸ್ಥಳೀಯರು ತಕ್ಷಣ ಸ್ಥಳಕ್ಕೆ ಧಾವಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಮಾಹಿತಿ ಲಭ್ಯವಾಗುತ್ತಿದ್ದಂತೆ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ತಂಡಗಳು ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿವೆ. ಬಸ್‌ನ್ನು ಮೇಲಕ್ಕೆತ್ತಿ ಅದರ ಅಡಿಯಲ್ಲಿ ಸಿಲುಕಿದ್ದವರನ್ನು ಹೊರತೆಗೆಯಲಾಗಿದ್ದು, ಗಾಯಗೊಂಡವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಪಘಾತದಲ್ಲಿ ಮೃತಪಟ್ಟವರ ಗುರುತುಗಳನ್ನು ಅಧಿಕಾರಿಗಳು ಇನ್ನೂ ಅಧಿಕೃತವಾಗಿ ಬಹಿರಂಗಪಡಿಸಿಲ್ಲ. ಬಸ್‌ ಅಪಘಾತಕ್ಕೆ ನಿಖರ ಕಾರಣವೇನು ಎಂಬುದನ್ನು ಪತ್ತೆಹಚ್ಚಲು ಪೊಲೀಸರು ಹಾಗೂ ಸಂಬಂಧಿತ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.

ಭೀಕರ ಅಪಘಾತದ ಸುದ್ದಿ ತಿಳಿದ ಬಳಿಕ ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದಾರೆ. ಗಾಯಾಳುಗಳಿಗೆ ಅಗತ್ಯ ಹಾಗೂ ಸೂಕ್ತ ವೈದ್ಯಕೀಯ ಚಿಕಿತ್ಸೆ ದೊರೆಯುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದಾರೆ.

ಇದರ ನಡುವೆ ಹಿಮಾಚಲ ಪ್ರದೇಶದಲ್ಲಿ ಧಾರಾಕಾರ ಮಳೆಯ ಪರಿಣಾಮ ಜನಜೀವನವೂ ಅಸ್ತವ್ಯಸ್ತಗೊಂಡಿದೆ. ರಾಜ್ಯದ ವಿವಿಧೆಡೆ 185 ರಸ್ತೆಗಳು ಬಂದ್ ಆಗಿವೆ ಎಂದು ವರದಿಯಾಗಿದೆ. ಶಿಮ್ಲಾ ಹವಾಮಾನ ಇಲಾಖೆ, ಆಗಸ್ಟ್ 10 ಮತ್ತು 11ರಂದು ರಾಜ್ಯದ ಕೆಲವು ಪ್ರದೇಶಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಮುನ್ಸೂಚನೆ ನೀಡಿದೆ. ಹೀಗಾಗಿ ಗುಡ್ಡಗಾಡು ಪ್ರದೇಶಗಳಲ್ಲಿ ಸಂಚರಿಸುವವರು ಮುನ್ನೆಚ್ಚರಿಕೆ ವಹಿಸುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.

ಜಮೀನು ಖಾತೆ ಬದಲಾವಣೆಗೆ ಸರ್ಕಾರಿ ನಿಯಮದಂತೆ ಶುಲ್ಕ ಸಂಗ್ರಹಿಸಿದರೆ ಲಂಚವಲ್ಲ; ನಿವೃತ್ತ ಗ್ರಾಮ ಲೆಕ್ಕಾಧಿಕಾರಿಗೆ ಹೈಕೋರ್ಟ್‌ ರಿಲೀಫ್

ಬೆಂಗಳೂರು: ಜಮೀನು ಖಾತೆ ಬದಲಾವಣೆಗೆ ಸರ್ಕಾರಿ ನಿಯಮದಂತೆ ಮುದ್ರಾಂಕ ಶುಲ್ಕ ಸಂಗ್ರಹಿಸಿ, ಅದನ್ನು ಅಧಿಕೃತವಾಗಿ ಖಜಾನೆಗೆ ಜಮೆ ಮಾಡಿದ್ದರೆ ಅದನ್ನು ಲಂಚ ಅಥವಾ ಅಕ್ರಮ ಹಣ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಇದೇ ಪ್ರಕರಣದಲ್ಲಿ 68 ವರ್ಷದ ನಿವೃತ್ತ ಗ್ರಾಮ ಲೆಕ್ಕಾಧಿಕಾರಿ ವಿ.ಎಸ್. ಅಲ್ಬಾಲ್ ಅವರಿಗೆ ವಿಧಿಸಲಾಗಿದ್ದ ಶಿಕ್ಷೆಯನ್ನು ರದ್ದುಪಡಿಸಿರುವ ಹೈಕೋರ್ಟ್, ತಡೆಹಿಡಿಯಲಾಗಿದ್ದ ಅವರ ಸಂಪೂರ್ಣ ಪಿಂಚಣಿಯನ್ನು ಯಾವುದೇ ವಿಳಂಬವಿಲ್ಲದೆ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ನಿವೃತ್ತ ಗ್ರಾಮ ಲೆಕ್ಕಾಧಿಕಾರಿ ವಿ.ಎಸ್. ಅಲ್ಬಾಲ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್. ಸುನಿಲ್ ದತ್ ಯಾದವ್ ಮತ್ತು ನ್ಯಾಯಮೂರ್ತಿ ಕೆ.ಜಿ. ಶಾಂತಿ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿದೆ. ಇದೇ ವೇಳೆ ಕರ್ನಾಟಕ ಆಡಳಿತ ನ್ಯಾಯಮಂಡಳಿ (ಕೆಎಟಿ) ನೀಡಿದ್ದ ಆದೇಶವನ್ನೂ ಹೈಕೋರ್ಟ್ ರದ್ದುಪಡಿಸಿದೆ.

1999ರ ಕರ್ನಾಟಕ ಮುದ್ರಾಂಕ (ಎರಡನೇ ತಿದ್ದುಪಡಿ) ಕಾಯ್ದೆ ಹಾಗೂ ಸರ್ಕಾರದ ಸುತ್ತೋಲೆಯ ಪ್ರಕಾರ ಕೃಷಿ ಜಮೀನು ವಿಭಜನೆಯ ಸಂದರ್ಭದಲ್ಲಿ ಪ್ರತಿ ಭಾಗಕ್ಕೆ ₹250ರಂತೆ ಮುದ್ರಾಂಕ ಶುಲ್ಕ ಸಂಗ್ರಹಿಸುವುದು ಕಡ್ಡಾಯವಾಗಿತ್ತು. ಅರ್ಜಿದಾರರು ಮೂರು ಭಾಗಗಳಿಗೆ ತಲಾ ₹250ರಂತೆ ಒಟ್ಟು ₹750 ಸಂಗ್ರಹಿಸಿ, ಅದಕ್ಕೆ ಸೂಕ್ತ ರಸೀದಿ ನೀಡಿ ಅಧಿಕೃತ ಖಜಾನೆಗೆ ಹಣ ಜಮೆ ಮಾಡಿರುವುದು ದಾಖಲೆಗಳಿಂದ ಸಾಬೀತಾಗಿದೆ ಎಂದು ನ್ಯಾಯಪೀಠ ಗಮನಿಸಿದೆ.

ಸರ್ಕಾರದ ನಿಯಮದಂತೆ ಕಾನೂನುಬದ್ಧವಾಗಿ ಶುಲ್ಕ ಸಂಗ್ರಹಿಸುವುದನ್ನು ‘ಲಂಚ’ ಅಥವಾ ‘ಅಕ್ರಮ ಸ್ವತ್ತು’ ಎಂದು ಪರಿಗಣಿಸಲು ಸಾಧ್ಯವಿಲ್ಲ. ಅದನ್ನು ಕರ್ತವ್ಯಲೋಪವೆಂದೂ ಹೇಳಲಾಗುವುದಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.

ಪ್ರಕರಣದ ಹಿನ್ನೆಲೆ

ಬಾಗಲಕೋಟೆ ಜಿಲ್ಲೆಯ ಬಿಳಗಿ ತಾಲೂಕಿನ ಗ್ರಾಮ ಲೆಕ್ಕಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ವಿ.ಎಸ್. ಅಲ್ಬಾಲ್ ಅವರು 2012ರಲ್ಲಿ ನಿವೃತ್ತರಾಗಿದ್ದರು. ಅದಕ್ಕೂ ಮುನ್ನ 1999ರಲ್ಲಿ ಬಿಳಗಿ ತಾಲೂಕಿನಲ್ಲಿ ಪ್ರಭಾರ ಗ್ರಾಮ ಲೆಕ್ಕಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.

ಈ ವೇಳೆ ಹಂಚಿನಾಳ ಗ್ರಾಮದ ಮಹದೇವಪ್ಪ ಸಂಗಪ್ಪ ಕಂಬೋಗಿ ಅವರು ತಮ್ಮ ಹಾಗೂ ಇಬ್ಬರು ಮಕ್ಕಳ ಹೆಸರಿಗೆ ಜಮೀನು ಖಾತೆ ಬದಲಾವಣೆ ಮಾಡುವಂತೆ 1999ರ ಮೇ 18ರಂದು ಅರ್ಜಿ ಸಲ್ಲಿಸಿದ್ದರು. ನಿಯಮದಂತೆ ಮೂರು ಭಾಗಗಳಿಗೆ ತಲಾ ₹250ರಂತೆ ಒಟ್ಟು ₹750 ಮುದ್ರಾಂಕ ಶುಲ್ಕ ಪಾವತಿಸುವಂತೆ ಗ್ರಾಮ ಲೆಕ್ಕಾಧಿಕಾರಿಯಾಗಿದ್ದ ಅಲ್ಬಾಲ್ ಸೂಚಿಸಿದ್ದರು.

ಆದರೆ, ದೂರುದಾರರು ಈ ಮೊತ್ತವನ್ನು ಲಂಚದ ಬೇಡಿಕೆ ಎಂದು ತಪ್ಪಾಗಿ ಭಾವಿಸಿ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ತನಿಖೆ ಬಳಿಕ ವಿಶೇಷ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು.

ವಿಚಾರಣೆ ನಡೆಸಿದ ವಿಶೇಷ ನ್ಯಾಯಾಲಯ ಅರ್ಜಿದಾರರನ್ನು ಖುಲಾಸೆಗೊಳಿಸಿತ್ತು. ಆದರೆ, ಪ್ರಕರಣಕ್ಕೆ ಸಂಬಂಧಿಸಿದ ಉಪಲೋಕಾಯುಕ್ತರ ವಿಚಾರಣೆಯಲ್ಲಿ ಆರೋಪ ಸಾಬೀತಾಗಿದೆ ಎಂದು ಹೇಳಿ ಸರ್ಕಾರ ಅಲ್ಬಾಲ್ ಅವರನ್ನು ಸೇವೆಯಿಂದ ವಜಾಗೊಳಿಸಿತ್ತು.

ಇದನ್ನು ಪ್ರಶ್ನಿಸಿ ಅವರು ಕೆಎಟಿಗೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ್ದ ಕೆಎಟಿ ಲೋಕಾಯುಕ್ತ ವರದಿಯನ್ನು ರದ್ದುಪಡಿಸಿ, ಅವರನ್ನು ಸೇವೆಗೆ ಮರುಸೇರ್ಪಡೆಗೊಳಿಸುವಂತೆ ನಿರ್ದೇಶನ ನೀಡಿತ್ತು. ಆದರೆ, ಪ್ರಕರಣದ ಕುರಿತು ಹೊಸದಾಗಿ ವಿಚಾರಣೆ ನಡೆಸಲು ಅವಕಾಶ ನೀಡಿತ್ತು.

ಮರು ವಿಚಾರಣೆ ವೇಳೆ ಉಪಲೋಕಾಯುಕ್ತರ ಮುಂದೆ ಹಾಜರಾದ ಅಲ್ಬಾಲ್, ದೂರುದಾರರಿಂದ ಸಂಗ್ರಹಿಸಿದ್ದ ₹750 ಮುದ್ರಾಂಕ ಶುಲ್ಕವಾಗಿದ್ದು, ಅದನ್ನು ಸರ್ಕಾರದ ಖಜಾನೆಗೆ ಜಮೆ ಮಾಡಿರುವುದಾಗಿ ದಾಖಲೆಗಳ ಸಮೇತ ವಿವರಿಸಿದ್ದರು.

ದಾಖಲೆಗಳನ್ನು ಪರಿಶೀಲಿಸಿದ ಬಳಿಕ ಉಪಲೋಕಾಯುಕ್ತರು ಅವರ ಶೇ.50ರಷ್ಟು ಪಿಂಚಣಿಯನ್ನು ಶಾಶ್ವತವಾಗಿ ತಡೆಹಿಡಿಯುವಂತೆ ಶಿಫಾರಸು ಮಾಡಿದ್ದರು. ಅದರಂತೆ ಸರ್ಕಾರವೂ ಆದೇಶ ಹೊರಡಿಸಿತ್ತು. ಇದನ್ನು ಪ್ರಶ್ನಿಸಿ ಅಲ್ಬಾಲ್ ಮತ್ತೆ ಕೆಎಟಿಗೆ ಅರ್ಜಿ ಸಲ್ಲಿಸಿದ್ದರು. ಕೆಎಟಿ ಅರ್ಜಿಯನ್ನು ವಜಾಗೊಳಿಸಿದ ಹಿನ್ನೆಲೆಯಲ್ಲಿ ಅವರು ಹೈಕೋರ್ಟ್ ಮೊರೆ ಹೋಗಿದ್ದರು.

ಪ್ರಕರಣದ ಸಂಪೂರ್ಣ ದಾಖಲೆಗಳನ್ನು ಪರಿಶೀಲಿಸಿದ ಹೈಕೋರ್ಟ್, ಸರ್ಕಾರದ ನಿಯಮದಂತೆ ಸಂಗ್ರಹಿಸಿ ಖಜಾನೆಗೆ ಜಮೆ ಮಾಡಿರುವ ಮುದ್ರಾಂಕ ಶುಲ್ಕವನ್ನು ಲಂಚವೆಂದು ಪರಿಗಣಿಸಲಾಗದು ಎಂದು ಸ್ಪಷ್ಟಪಡಿಸಿ, ನಿವೃತ್ತ ಗ್ರಾಮ ಲೆಕ್ಕಾಧಿಕಾರಿಗೆ ವಿಧಿಸಿದ್ದ ಶಿಕ್ಷೆಯನ್ನು ರದ್ದುಪಡಿಸಿದೆ. ಅಲ್ಲದೆ, ತಡೆಹಿಡಿಯಲಾಗಿದ್ದ ಸಂಪೂರ್ಣ ಪಿಂಚಣಿಯನ್ನು ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

6 ರನ್ʼಗಳ ರೋಚಕ ಗೆಲುವು.. ಕೊನೆಯ ಓವರ್ʼವರೆಗೂ ಕುತೂಹಲ ಕೆರಳಿಸಿದ ಪಂದ್ಯದಿಂದ CPLಗೆ ಭರ್ಜರಿ ಚಾಲನೆ!

0

ಕಿಂಗ್ಸ್‌ಟೌನ್: ಕೆರಿಬಿಯನ್ ಪ್ರೀಮಿಯರ್ ಲೀಗ್‌ನ 14ನೇ ಆವೃತ್ತಿಗೆ ರೋಚಕ ಪಂದ್ಯವೊಂದರೊಂದಿಗೆ ಚಾಲನೆ ದೊರೆತಿದೆ. ಕಿಂಗ್ಸ್‌ಟೌನ್‌ನ ಅರ್ನೋಸ್ ವೇಲ್ ಮೈದಾನದಲ್ಲಿ ನಡೆದ ಉದ್ಘಾಟನಾ ಪಂದ್ಯದಲ್ಲಿ ಜಮೈಕಾ ಕಿಂಗ್ಸ್‌ಮೆನ್ ಹಾಗೂ ಅಂಟಿಗುವಾ ಅಂಡ್ ಬಾರ್ಬುಡಾ ಫಾಲ್ಕನ್ಸ್ ತಂಡಗಳು ಮುಖಾಮುಖಿಯಾಗಿದ್ದು, ಕೊನೆಯ ಎಸೆತದವರೆಗೂ ನಡೆದ ರೋಚಕ ಹೋರಾಟದಲ್ಲಿ ಫಾಲ್ಕನ್ಸ್ ತಂಡ 2 ವಿಕೆಟ್‌ಗಳಿಂದ ಗೆಲುವು ಸಾಧಿಸಿದೆ.

ಟಾಸ್ ಗೆದ್ದ ಅಂಟಿಗುವಾ ಅಂಡ್ ಬಾರ್ಬುಡಾ ಫಾಲ್ಕನ್ಸ್ ನಾಯಕ ಫ್ಯಾಬಿಯನ್ ಅಲೆನ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಅದರಂತೆ ಮೊದಲು ಬ್ಯಾಟ್ ಮಾಡಿದ ಜಮೈಕಾ ಕಿಂಗ್ಸ್‌ಮೆನ್ ತಂಡ ಉತ್ತಮ ಆರಂಭ ಪಡೆಯಿತು.

ಆರಂಭಿಕ ಬ್ಯಾಟರ್ ರೀಝ ಹೆಂಡ್ರಿಕ್ಸ್ ಕೇವಲ 25 ಎಸೆತಗಳಲ್ಲಿ 42 ರನ್ ಸಿಡಿಸಿದರೆ, ನಾಯಕ ರೋವ್‌ಮನ್ ಪೊವೆಲ್ 47 ರನ್‌ಗಳ ಮಹತ್ವದ ಕೊಡುಗೆ ನೀಡಿದರು. ಇವರಿಬ್ಬರ ಬ್ಯಾಟಿಂಗ್ ನೆರವಿನಿಂದ ಜಮೈಕಾ ಕಿಂಗ್ಸ್‌ಮೆನ್ ತಂಡ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 167 ರನ್ ಗಳಿಸಿತು.

ಕೊನೆಯ ಎಸೆತದವರೆಗೂ ನಡೆದ ರೋಚಕ ಹೋರಾಟ

168 ರನ್‌ಗಳ ಗುರಿ ಬೆನ್ನತ್ತಿದ ಅಂಟಿಗುವಾ ಅಂಡ್ ಬಾರ್ಬುಡಾ ಫಾಲ್ಕನ್ಸ್ ತಂಡಕ್ಕೆ ಆರಂಭಿಕ ಹಂತದಲ್ಲಿ ಟಿಮ್ ರಾಬಿನ್ಸನ್ 40 ರನ್ ಗಳಿಸಿ ಆಸರೆಯಾದರು. ಬಳಿಕ ತಜಿಂದರ್ ಧಿಲ್ಲೋನ್ ಸ್ಫೋಟಕ ಬ್ಯಾಟಿಂಗ್ ನಡೆಸಿ ಕೇವಲ 37 ಎಸೆತಗಳಲ್ಲಿ 62 ರನ್ ಬಾರಿಸಿದರು.

ಆದರೂ ಅಂತಿಮ ಹಂತದಲ್ಲಿ ಜಮೈಕಾ ಬೌಲರ್‌ಗಳು ಪಂದ್ಯವನ್ನು ತಮ್ಮತ್ತ ತಿರುಗಿಸಿಕೊಂಡರು. ಕೊನೆಯ ಓವರ್‌ನಲ್ಲಿ ಫಾಲ್ಕನ್ಸ್ ತಂಡಕ್ಕೆ ಗೆಲ್ಲಲು ಕೇವಲ 6 ರನ್‌ಗಳ ಅಗತ್ಯವಿತ್ತು.

ಕೊನೆಯ ಓವರ್ ಎಸೆದ ಹುನೈನ್ ಶಾ ಮೊದಲ ಎರಡು ಎಸೆತಗಳಲ್ಲಿ ಕೇವಲ 3 ರನ್ ನೀಡಿದರು. ಮೂರನೇ ಎಸೆತದಲ್ಲಿ ಜಹ್ಮರ್ ಹ್ಯಾಮಿಲ್ಟನ್ 3 ರನ್ ಗಳಿಸಿ ಔಟಾದರೆ, ನಾಲ್ಕನೇ ಎಸೆತದಲ್ಲಿ ಉಸಾಮಾ ಮಿರ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು.

ಇದರಿಂದ ಕೊನೆಯ ಎರಡು ಎಸೆತಗಳಲ್ಲಿ ಫಾಲ್ಕನ್ಸ್ ತಂಡಕ್ಕೆ 3 ರನ್‌ಗಳ ಅಗತ್ಯವಾಯಿತು. ಐದನೇ ಎಸೆತದಲ್ಲಿ ಹುನೈನ್ ಶಾ ಕೇವಲ ಒಂದು ರನ್ ನೀಡಿದರು. ಹೀಗಾಗಿ ಕೊನೆಯ ಎಸೆತದಲ್ಲಿ ಗೆಲುವಿಗೆ 2 ರನ್ ಬೇಕಾಯಿತು.

ಅಂತಿಮ ಎಸೆತದಲ್ಲಿ ಶಮರ್ ಸ್ಪ್ರಿಂಗರ್ 2 ರನ್ ಕಲೆಹಾಕುವ ಮೂಲಕ ಅಂಟಿಗುವಾ ಅಂಡ್ ಬಾರ್ಬುಡಾ ಫಾಲ್ಕನ್ಸ್ ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟರು. ಇದರೊಂದಿಗೆ ಫಾಲ್ಕನ್ಸ್ ತಂಡ 19 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ ಗುರಿ ತಲುಪಿ, ಸಿಪಿಎಲ್‌ನ 14ನೇ ಆವೃತ್ತಿಯನ್ನು ಗೆಲುವಿನೊಂದಿಗೆ ಆರಂಭಿಸಿತು. ಇತ್ತ ಜಮೈಕಾ ಕಿಂಗ್ಸ್‌ಮೆನ್ ತಂಡವು ಕೊನೆಯವರೆಗೂ ಹೋರಾಡಿದರೂ ಕೇವಲ 2 ವಿಕೆಟ್‌ಗಳಿಂದ ಸೋಲೊಪ್ಪಿಕೊಳ್ಳಬೇಕಾಯಿತು.

ಜಮೈಕಾ ಕಿಂಗ್ಸ್‌ಮೆನ್ ಪ್ಲೇಯಿಂಗ್ 11

ಶಯಾನ್ ಜಹಾಂಗೀರ್ (ವಿಕೆಟ್ ಕೀಪರ್), ರೀಝ ಹೆಂಡ್ರಿಕ್ಸ್, ಶಕ್ಕೆರೆ ಪ್ಯಾರಿಸ್, ಕೀಸಿ ಕಾರ್ಟಿ, ರೋವ್‌ಮನ್ ಪೊವೆಲ್ (ನಾಯಕ), ಆ್ಯಂಡ್ರೆ ರಸೆಲ್, ಹಸನ್ ಖಾನ್, ಕೀಮೊ ಪಾಲ್, ಹುನೈನ್ ಶಾ, ವಿಟೆಲ್ ಲಾವೆಸ್, ಜೀವರ್ ರಾಯಲ್.

ಅಂಟಿಗುವಾ ಅಂಡ್ ಬಾರ್ಬುಡಾ ಫಾಲ್ಕನ್ಸ್ ಪ್ಲೇಯಿಂಗ್ 11

ಎವಿನ್ ಲೆವಿಸ್, ರಹಕೀಮ್ ಕಾರ್ನ್‌ವಾಲ್, ಟಿಮ್ ರಾಬಿನ್ಸನ್, ಜಹ್ಮರ್ ಹ್ಯಾಮಿಲ್ಟನ್ (ವಿಕೆಟ್ ಕೀಪರ್), ತಜಿಂದರ್ ಧಿಲ್ಲೋನ್, ಕರೀಮಾ ಗೋರ್, ಫ್ಯಾಬಿಯನ್ ಅಲೆನ್ (ನಾಯಕ), ಶಮರ್ ಸ್ಪ್ರಿಂಗರ್, ಉಸಾಮಾ ಮಿರ್, ಅಲ್ಜಾರಿ ಜೋಸೆಫ್, ಜೇಡನ್ ಸೀಲ್ಸ್.

Bengaluru: ಹಿಂದಿ ಮಾತನಾಡದಿದ್ದಕ್ಕೆ ಯುವತಿ, ಯುವಕರಿಂದ ಹಲ್ಲೆ! ಕೇಸ್ ದಾಖಲು

ಬೆಂಗಳೂರು: ಹಿಂದಿ ಮಾತನಾಡದಿದ್ದಕ್ಕೆ ಡೆಲಿವರಿ ಬಾಯ್‌ ಮೇಲೆ ಯುವಕರ ಗುಂಪೊಂದು ಹಲ್ಲೆ ನಡೆಸಿದ ಆರೋಪ ಬೆಂಗಳೂರಿನ ಯಲಹಂಕ ನ್ಯೂ ಟೌನ್‌ನಲ್ಲಿ ಕೇಳಿಬಂದಿದೆ. ಇಂದು ಮುಂಜಾನೆ ನಡೆದ ಘಟನೆಗೆ ಸಂಬಂಧಿಸಿದಂತೆ ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಸಂತ್ರಸ್ತನನ್ನು 25 ವರ್ಷದ ಬಸವರಾಜ್ ಎಂದು ಗುರುತಿಸಲಾಗಿದೆ. ವಿದ್ಯಾಭ್ಯಾಸದ ಜೊತೆಗೆ ಅವರು ಕ್ವಿಕ್-ಕಾಮರ್ಸ್ ಡೆಲಿವರಿ ಪ್ಲಾಟ್‌ಫಾರ್ಮ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಸವರಾಜ್ ಅವರು ಆರ್ಡರ್‌ವೊಂದನ್ನು ತಲುಪಿಸಿದ ಬಳಿಕ ಯಲಹಂಕ ನ್ಯೂ ಟೌನ್‌ನ 4ನೇ ಹಂತದಿಂದ ಸಂತೋಷ್ ನಗರದ ಕಡೆಗೆ ತೆರಳುತ್ತಿದ್ದರು. ಈ ವೇಳೆ ಬೆಳಗಿನ ಜಾವ ಸುಮಾರು 4.40ರ ವೇಳೆಗೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಕೆಲವು ಯುವತಿಯರು ತಮ್ಮನ್ನು ನಿಂದಿಸಿದ್ದಾರೆ ಎಂದು ಅವರು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ.

ಇದರಿಂದಾಗಿ ಯುವತಿಯರ ಬಳಿ ತೆರಳಿದ ಬಸವರಾಜ್, ತಮಗೆ ಹಿಂದಿ ಭಾಷೆ ಬರುವುದಿಲ್ಲ. ಏಕೆ ನಿಂದಿಸುತ್ತಿದ್ದೀರಿ ಎಂಬುದನ್ನು ಕನ್ನಡದಲ್ಲಿ ತಿಳಿಸುವಂತೆ ಕೇಳಿಕೊಂಡಿದ್ದಾರೆ ಎನ್ನಲಾಗಿದೆ. ಈ ವೇಳೆ ಯುವತಿಯರು ತಮ್ಮನ್ನು ಮತ್ತೆ ನಿಂದಿಸಿ, ಟೋಪಿಯನ್ನು ಎಳೆದು ಹಲ್ಲೆಗೆ ಯತ್ನಿಸಿದ್ದಾರೆ ಎಂದು ಬಸವರಾಜ್ ದೂರಿನಲ್ಲಿ ತಿಳಿಸಿದ್ದಾರೆ.

ನಂತರ ಬಸವರಾಜ್ ಅವರು ಪೊಲೀಸ್ ಸಹಾಯವಾಣಿ 112ಕ್ಕೆ ಹಾಗೂ ತಮ್ಮ ಪರಿಚಯಸ್ಥ ಅಶೋಕ್ ಅವರಿಗೆ ಕರೆ ಮಾಡಿದ್ದಾರೆ. ಈ ನಡುವೆ ಬಸವರಾಜ್ ಅವರನ್ನು ತಡೆದ ಯುವತಿಯರು ಸ್ಥಳಕ್ಕೆ ಕೆಲವು ಯುವಕರನ್ನು ಕರೆಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.

ಬಳಿಕ ಸುಮಾರು ನಾಲ್ಕೈದು ಮಂದಿ ಯುವಕ-ಯುವತಿಯರು ಸೇರಿಕೊಂಡು ಬಸವರಾಜ್ ಮೇಲೆ ಕೈಗಳಿಂದ ಹಾಗೂ ರಸ್ತೆಯಲ್ಲಿದ್ದ ಮರದ ದೊಣ್ಣೆಯಿಂದ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಹಲ್ಲೆಯಿಂದ ಬೆನ್ನು, ತಲೆ ಹಾಗೂ ಮೂಗಿನ ಭಾಗಕ್ಕೆ ಗಾಯಗಳಾಗಿದ್ದು, ರಕ್ತಸ್ರಾವವಾಗಿದೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

ಬಸವರಾಜ್ ಅವರನ್ನು ರಕ್ಷಿಸಲು ಅಶೋಕ್ ಮಧ್ಯಪ್ರವೇಶಿಸಿದಾಗ ಅವರ ತಲೆಯ ಮೇಲೂ ಹಲ್ಲೆ ನಡೆಸಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಆರೋಪಿಗಳು ಅವಾಚ್ಯ ಶಬ್ದಗಳಿಂದ ನಿಂದಿಸಿ, ತಮ್ಮನ್ನು ಸುಮ್ಮನೆ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ ಎಂದು ಬಸವರಾಜ್ ತಿಳಿಸಿದ್ದಾರೆ.

ಬಸವರಾಜ್ ನೀಡಿದ ದೂರಿನ ಆಧಾರದ ಮೇಲೆ ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ಗುರುತಿಸದ ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್‌ಗಳಾದ 118(1), 126(2), 351(2), 352 ಹಾಗೂ 3(5) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ತನಿಖೆ ನಡೆಯುತ್ತಿದ್ದು, ಹಲ್ಲೆ ನಡೆಸಿದ ಆರೋಪಿಗಳ ಗುರುತು ಪತ್ತೆಹಚ್ಚಲು ಪೊಲೀಸರು ಕ್ರಮ ಕೈಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ಶ್ರೀಲಂಕಾ ವಿರುದ್ಧದ ಟೆಸ್ಟ್ʼಗೂ ಮುನ್ನ ದೇವದತ್ ಪಡಿಕ್ಕಲ್ ಭರ್ಜರಿ ಅರ್ಧಶತಕ

0

ಕೊಲಂಬೊ: ಭಾರತ ಹಾಗೂ ಶ್ರೀಲಂಕಾ ನಡುವಿನ ಮುಂಬರುವ ಟೆಸ್ಟ್ ಸರಣಿಗೆ ಸಿದ್ಧತೆ ನಡೆಸುತ್ತಿರುವ ಟೀಂ ಇಂಡಿಯಾಗೆ ಯುವ ಬ್ಯಾಟರ್ ದೇವದತ್ ಪಡಿಕ್ಕಲ್ ಭರವಸೆ ಮೂಡಿಸಿದ್ದಾರೆ. ಕೊಲಂಬೋದ ಎನ್‌ಸಿಸಿ ಮೈದಾನದಲ್ಲಿ ನಡೆಯುತ್ತಿರುವ ಮೂರು ದಿನಗಳ ಅಭ್ಯಾಸ ಪಂದ್ಯದಲ್ಲಿ ಶ್ರೀಲಂಕಾ ಕ್ರಿಕೆಟ್ ಪ್ರೆಸಿಡೆಂಟ್ಸ್ ಇಲೆವೆನ್ ವಿರುದ್ಧ ಪಡಿಕ್ಕಲ್ ಆಕರ್ಷಕ ಅರ್ಧಶತಕ ಸಿಡಿಸಿ ಗಮನ ಸೆಳೆದಿದ್ದಾರೆ.

ಅಭ್ಯಾಸ ಪಂದ್ಯದ ಎರಡನೇ ದಿನದಾಟದಲ್ಲಿ ಟೀಂ ಇಂಡಿಯಾದ ಮೊದಲ ಇನಿಂಗ್ಸ್ ಆರಂಭವಾಗಿದ್ದು, ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದರು. ಈ ಹಂತದಲ್ಲಿ ಮೂರನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದ ದೇವದತ್ ಪಡಿಕ್ಕಲ್, ಅನುಭವಿ ಬ್ಯಾಟರ್ ಹಾಗೂ ಮತ್ತೊಬ್ಬ ಕನ್ನಡಿಗ ಕೆ.ಎಲ್. ರಾಹುಲ್ ಅವರೊಂದಿಗೆ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿದರು.

ಎದುರಾಳಿ ಬೌಲರ್‌ಗಳನ್ನು ಆತ್ಮವಿಶ್ವಾಸದಿಂದ ಎದುರಿಸಿದ ಪಡಿಕ್ಕಲ್ ಕೇವಲ 61 ಎಸೆತಗಳಲ್ಲಿ 6 ಬೌಂಡರಿಗಳ ನೆರವಿನಿಂದ ಅರ್ಧಶತಕ ಪೂರ್ಣಗೊಳಿಸಿದರು. ಆರಂಭಿಕ ಆಘಾತದ ನಡುವೆಯೂ ತಂಡದ ಇನಿಂಗ್ಸ್‌ಗೆ ಆಸರೆಯಾದ ಅವರು, ಸಿಕ್ಕ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡಿದ್ದಾರೆ.

ಸಾಯಿ ಸುದರ್ಶನ್ ಸ್ಥಾನಕ್ಕೆ ಪಡಿಕ್ಕಲ್ ಪೈಪೋಟಿ

ಅಭ್ಯಾಸ ಪಂದ್ಯದಲ್ಲಿ ದೇವದತ್ ಪಡಿಕ್ಕಲ್ ಅವರ ಈ ಪ್ರದರ್ಶನ ಇದೀಗ ಮೊದಲ ಟೆಸ್ಟ್‌ನ ಪ್ಲೇಯಿಂಗ್ ಇಲೆವೆನ್ ಆಯ್ಕೆ ವಿಚಾರದಲ್ಲಿ ಕುತೂಹಲ ಮೂಡಿಸಿದೆ. ಈ ಹಿಂದೆ ಟೀಂ ಇಂಡಿಯಾ ಪರ ಮೂರನೇ ಕ್ರಮಾಂಕದಲ್ಲಿ ಸಾಯಿ ಸುದರ್ಶನ್ ಕಣಕ್ಕಿಳಿಯುತ್ತಿದ್ದರು. ಆದರೆ ಬೆರಳಿನ ಗಾಯದ ಕಾರಣ ಸಾಯಿ ಸುದರ್ಶನ್ ಅಭ್ಯಾಸ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ.

ಇದೀಗ ಅವರ ಅನುಪಸ್ಥಿತಿಯಲ್ಲಿ ಅವಕಾಶ ಪಡೆದಿರುವ ಪಡಿಕ್ಕಲ್ ಅರ್ಧಶತಕ ಸಿಡಿಸಿರುವುದು ತಂಡದ ಆಯ್ಕೆಗಾರರ ಗಮನ ಸೆಳೆಯುವ ಸಾಧ್ಯತೆಯಿದೆ. ಹೀಗಾಗಿ ಆಗಸ್ಟ್ 15ರಿಂದ ಆರಂಭವಾಗಲಿರುವ ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಪಡಿಕ್ಕಲ್‌ಗೆ ಪ್ಲೇಯಿಂಗ್ ಇಲೆವೆನ್‌ನಲ್ಲಿ ಅವಕಾಶ ಸಿಗುತ್ತದೆಯೇ ಎಂಬ ಕುತೂಹಲ ಹೆಚ್ಚಾಗಿದೆ.

ಮೊದಲ ಇನಿಂಗ್ಸ್‌ನಲ್ಲಿ ಶ್ರೀಲಂಕಾ XI ಬೃಹತ್ ಮೊತ್ತ

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ಕ್ರಿಕೆಟ್ ಪ್ರೆಸಿಡೆಂಟ್ಸ್ ಇಲೆವೆನ್ ತಂಡವು ಮೊದಲ ಇನಿಂಗ್ಸ್‌ನಲ್ಲಿ 8 ವಿಕೆಟ್ ನಷ್ಟಕ್ಕೆ 363 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು.

ಇದಕ್ಕೆ ಉತ್ತರವಾಗಿ ಮೊದಲ ಇನಿಂಗ್ಸ್ ಆರಂಭಿಸಿರುವ ಟೀಂ ಇಂಡಿಯಾ 32 ಓವರ್‌ಗಳ ಅಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು 127 ರನ್ ಗಳಿಸಿತ್ತು. ಆರಂಭಿಕ ವಿಕೆಟ್ ಕಳೆದುಕೊಂಡ ಬಳಿಕ ದೇವದತ್ ಪಡಿಕ್ಕಲ್ ಹಾಗೂ ಕೆ.ಎಲ್. ರಾಹುಲ್ ಜೋಡಿ ತಂಡದ ಇನಿಂಗ್ಸ್‌ ಅನ್ನು ಮುನ್ನಡೆಸಿದೆ.

ಶ್ರೀಲಂಕಾ XI ತಂಡ

ಸೋನಲ್ ದಿನುಷಾ (ನಾಯಕ), ನಿಶಾನ್ ಮದುಷ್ಕ, ಅಂಜಲಾ ಬಂಡಾರ (ವಿಕೆಟ್ ಕೀಪರ್), ರವಿಂದು ರಶಾಂಥ, ಪಸಿಂದು ಸೂರಿಯಬಂಡಾರ, ಪವನ್ ರತ್ನಾಯಕೆ, ಅಹಾನ್ ವಿಕ್ರಮಸಿಂಘೆ, ನಿಪುನ್ ಧನಂಜಯ, ಲಹೀರು ಕುಮಾರ, ವಿಶ್ವ ಫೆರ್ನಾಂಡೊ, ಅಸಂಕ ಮನೋಜ್, ಇಸಿತಾ ವಿಜೇಸುಂದರ, ರಮೇಶ್ ಮೆಂಡಿಸ್, ಕೇಸರ ನುವಂತ, ದಿಲುಮ್ ಸುದೀರ.

ಭಾರತ ಟೆಸ್ಟ್ ತಂಡ

ಶುಭ್‌ಮನ್ ಗಿಲ್ (ನಾಯಕ), ಕೆ.ಎಲ್. ರಾಹುಲ್ (ಉಪನಾಯಕ), ರಿಷಭ್ ಪಂತ್, ಧ್ರುವ್ ಜುರೆಲ್, ಯಶಸ್ವಿ ಜೈಸ್ವಾಲ್, ದೇವದತ್ ಪಡಿಕ್ಕಲ್, ಸಾಯಿ ಸುದರ್ಶನ್, ರವೀಂದ್ರ ಜಡೇಜಾ, ಕುಲ್ದೀಪ್ ಯಾದವ್, ಮಾನವ್ ಸುತಾರ್, ಸಾರಂಶ್ ಜೈನ್, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ಗುರ್ನೂರ್ ಬ್ರಾರ್, ಆಖಿಬ್ ನಬಿ.

ಸಚಿವ ಸಂಪುಟದಲ್ಲಿ ಮಹಿಳೆಯರಿಗೆ ಸ್ಥಾನ ಸಿಗಲಿದೆ: ಸಿಎಂ ಡಿ ಕೆ ಶಿವಕುಮಾರ್ ಭರವಸೆ

ಬೆಂಗಳೂರು: “ನಮ್ಮ ಸಚಿವ ಸಂಪುಟದಲ್ಲಿ ಮಹಿಳೆಗೆ ಸ್ಥಾನ ಇದ್ದೇ ಇರುತ್ತದೆ. ನಾವು ಮಹಿಳೆಯರಿಗೆ ಹೆಚ್ಚು ಶಕ್ತಿ ನೀಡುತ್ತೇವೆ” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ತಿಳಿಸಿದರು. ವಿಧಾನಸೌಧ ಆವರಣದಲ್ಲಿ ಎಸ್ ನಿಜಲಿಂಗಪ್ಪ ಅವರ ಪುಣ್ಯಸ್ಮರಣೆ ಹಿನ್ನೆಲೆಯಲ್ಲಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ಶಿವಕುಮಾರ್ ಅವರು ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದರು.

ರಾಹುಲ್ ಗಾಂಧಿ ಅವರು ಮಹಿಳಾ ಮೀಸಲಾತಿ ಮಸೂದೆ ಬಗ್ಗೆ ಚರ್ಚೆ ಮಾಡಿದ್ದಕ್ಕೆ ಕಿರಣ್ ರಿಜಿಜು ಅವರು ಕರ್ನಾಟಕ ಸಚಿವ ಸಂಪುಟದಲ್ಲಿ ಮಹಿಳೆಯರಿಲ್ಲ ಎಂಬ ಹೇಳಿಕೆ ಬಗ್ಗೆ ಕೇಳಿದಾಗ, “ಈ ಮಸೂದೆಯನ್ನು ರೂಪಿಸಿ, ಲೋಕಸಭೆಯಲ್ಲಿ ಪಾಸ್ ಮಾಡಿದ್ದವರು ಕಾಂಗ್ರೆಸ್ ನವರು. ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ನಾವು ಮಹಿಳೆರಿಗೆ ಹೆಚ್ಚು ಸ್ಥಾನ ನೀಡಿದ್ದೆವು. ಸಧ್ಯದಲ್ಲೇ ಸಂಪುಟ ವಿಸ್ತರಣೆ ವಿಚಾರ ಬಗೆಹರಿಯಲಿದೆ. ರಿಜಿಜು ಅವರು ಕಾಂಗ್ರೆಸ್ ಪಕ್ಷದ ಬಗ್ಗೆ ಚಿಂತಿಸುವುದು ಬೇಡ, ಅವರು ತಮ್ಮ ಪಕ್ಷ ಹಾಗೂ ಸರ್ಕಾರದ ಬಗ್ಗೆ ಆಲೋಚಿಸಲಿ” ಎಂದರು. ದೆಹಲಿಗೆ ಹೋಗುತ್ತಿದ್ದೀರಾ ಎಂದು ಕೇಳಿದಾಗ, “ಹೋಗಲೇಬೇಕಲ್ಲವೆ, ನಿಮಗೆ ಮಾಹಿತಿ ನೀಡಿಯೇ ಹೋಗುತ್ತೇವೆ” ಎಂದರು.

ಕರ್ನಾಟಕಕ್ಕೆ ಗೌರವ ತಂದ ಧೀಮಂತ ನಾಯಕ ನಿಜಲಿಂಗಪ್ಪ ಅವರು

“ಮಾಜಿ ಮುಖ್ಯಮಂತ್ರಿ ಎಸ್ ನಿಜಲಿಂಗಪ್ಪ ಅವರ ಪುಣ್ಯ ಸ್ಮರಣೆ ಅಂಗವಾಗಿ ನಾವೆಲ್ಲರೂ ಅವರಿಗೆ ಗೌರವ ಸಲ್ಲಿಸಿ ಸ್ಮರಿಸುತ್ತಿದ್ದೇವೆ. ನಾನು ಅನೇಕ ಬಾರಿ ನಿಜಲಿಂಗಪ್ಪ ಅವರ ಜೊತೆ ಚರ್ಚೆ ಮಾಡಿದ್ದೇನೆ. ನಾನು ಹಾಗೂ ಎಸ್ ಎಂ ಕೃಷ್ಣ ಅವರು ಹಲವು ಬಾರಿ ನಿಜಲಿಂಗಪ್ಪ ಅವರ ಜೊತೆಗೆ ಹೋಗಿದ್ದೇವೆ. ಸೋನಿಯಾ ಗಾಂಧಿ ಅವರು ಕೂಡ ನಿಜಲಿಂಗಪ್ಪ ಅವರನ್ನು ಭೇಟಿ ಮಾಡಬೇಕು ಎಂದು ಚಿತ್ರದುರ್ಗಕ್ಕೆ ಆಗಮಿಸಿದ್ದರು. ನಾನು ಎರಡನೇ ಬಾರಿಗೆ ಶಾಸಕನಾದಾಗಲೂ ಕರ್ನಾಟಕ ಭವನದಲ್ಲಿ ಅವರನ್ನು ಭೇಟಿ ಮಾಡಿದ್ದೆ” ಎಂದು ಸ್ಮರಿಸಿದರು.

“ನಿಜಲಿಂಗಪ್ಪ ಅವರು ಕರ್ನಾಟಕಕ್ಕೆ ಗೌರವ ತಂದ ಧೀಮಂತ ನಾಯಕ. ಕರ್ನಾಟಕದ ಏಕೀಕರಣಕ್ಕೆ ದೊಡ್ಡ ಹೋರಾಟ ಮಾಡಿದ್ದರು. ಮಹಾತ್ಮಾ ಗಾಂಧೀಜಿ ಅವರ ಚಿಂತನೆ ಅಳವಡಿಸಿಕೊಂಡ ನಾಯಕರು. ನಮ್ಮ ಕರ್ನಾಟಕದಿಂದ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದವರು ನಿಜಲಿಂಗಪ್ಪ ಅವರು. ಅವರ ಬಳಿಕ ಇಂದು ಮಲ್ಲಿಕಾರ್ಜುನ ಖರ್ಗೆ ಅವರು ಅಧ್ಯಕ್ಷರಾಗಿದ್ದಾರೆ. ಕೇಂದ್ರದಲ್ಲಿ ಕನ್ನಡ ಹಾಗೂ ಕರ್ನಾಟಕದ ಏಕೀಕರಣಕ್ಕೆ ಧ್ವನಿ ಎತ್ತಿದ ನಾಯಕ” ಎಂದು ಬಣ್ಣಿಸಿದರು.

“ಸರಳತೆ ನಿಜಲಿಂಗಪ್ಪ ಅವರ ಆಸ್ತಿ. ಅವರ ಆಸ್ತಿ ಬೇರೆಯವರ ಪಾಲಾಗಬಾರದು ಎಂದು ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ಆಸ್ತಿಯನ್ನು ಸರ್ಕಾರದ ವಶಕ್ಕೆ ಪಡೆಯಲಾಗಿದೆ. ಇಂತಹ ನಾಯಕರ ಆಡಳಿತ ಜಾತ್ಯಾತೀತ ತತ್ವ ಬಸವಣ್ಣನವರ ಚಿಂತನೆಯನ್ನು ಪ್ರತಿಬಿಂಬಿಸಿದ ಧೀಮಂತ ನಾಯಕ, ಮುಖ್ಯಮಂತ್ರಿಯಾಗಿದ್ದರು. ನಾವೆಲ್ಲರೂ ಅವರ ಹಾದಿಯಲ್ಲಿ ಸಾಗಬೇಕು” ಎಂದು ಅಭಿಪ್ರಾಯಪಟ್ಟರು.

“ದೇಶದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಎಐಸಿಸಿ ಅಧ್ಯಕ್ಷರಾಗಿ ಅವರು ಕೊಟ್ಟ ಮಾರ್ಗದರ್ಶನಗಳು, ದಾಖಲೆಗಳಲ್ಲಿ ಇವೆ. 1924ರ ಬೆಳಗಾವಿ ಅಧಿವೇಶನ ಸಂದರ್ಭದಲ್ಲಿ ನಿಜಲಿಂಗಪ್ಪ ಅವರ ಪಾತ್ರ ದೊಡ್ಡದಾಗಿತ್ತು. ನೀರಾವರಿಗೆ ಭದ್ರಾ ಹಾಗೂ ಕೃಷ್ಣ ಮೇಲ್ದಂಡೆ ಯೋಜನೆ ಜಾರಿಗೆ ಪ್ರಮುಖ ಪಾತ್ರ ವಹಿಸಿದ ನಾಯಕರು. ಅವರ ಕುಟುಂಬದವರಿಗೆ ಒಳ್ಳೆಯದನ್ನು ಮಾಡಲಿ. ನಿಜಲಿಂಗಪ್ಪ ಅವರು ಸಿಎಂ ಆಗಿದ್ದರೂ ಅವರ ಪುತ್ರಿ ನಾನು ಓದಿದ ಕಾಲೇಜಿನಲ್ಲಿ ಅಧ್ಯಾಪಕರಾಗಿ ಕೆಲಸ ಮಾಡುತ್ತಿದ್ದರು. ಅವರು ಸರಳ ಜೀವನ ನಡೆಸಿದ್ದರು. ಅವರ ಮಾರ್ಗದರ್ಶನ ನಮಗೆ ಸದಾ ಅಗತ್ಯ” ಎಂದು ತಿಳಿಸಿದರು.

ವಲಸಿಗರ ಮಾಹಿತಿ ಸಿಕ್ಕರೆ ಪೊಲೀಸರಿಗೆ ನೀಡಿ, ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಬೇಡಿ; ಪ್ರಿಯಾಂಕ್ ಖರ್ಗೆ ಎಚ್ಚರಿಕೆ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ವಲಸಿಗರ ವಿಚಾರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸ್ವಯಂಘೋಷಿತ ತನಿಖೆ ನಡೆಸಿ ವಿಡಿಯೋಗಳನ್ನು ಹರಿಬಿಡುವುದರ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ಎಚ್ಚರಿಕೆ ನೀಡಿದ್ದಾರೆ. ಸರ್ಕಾರದ ಕಾರ್ಯವೈಖರಿಯನ್ನು ಟೀಕಿಸುವ ನೆಪದಲ್ಲಿ ಇಂತಹ ಚಟುವಟಿಕೆಗಳನ್ನು ನಡೆಸುವುದನ್ನು ನಿಲ್ಲಿಸಬೇಕು ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ವಲಸಿಗರ ಕುರಿತು ಮಾಹಿತಿ ಸಂಗ್ರಹಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವುದರಿಂದ ಅಂತರರಾಷ್ಟ್ರೀಯ ಜಾಲಗಳು ಎಚ್ಚೆತ್ತುಕೊಳ್ಳುವ ಸಾಧ್ಯತೆಯಿದೆ. ಇದರಿಂದ ಸರ್ಕಾರ ನಡೆಸುತ್ತಿರುವ ರಹಸ್ಯ ಕಾರ್ಯಾಚರಣೆಗಳಿಗೆ ಅಡ್ಡಿಯಾಗಬಹುದು. ಹೀಗಾಗಿ ಇಂತಹ ಮಾಹಿತಿಯನ್ನು ಸಾರ್ವಜನಿಕವಾಗಿ ಹಂಚಿಕೊಳ್ಳುವ ಬದಲು ನೇರವಾಗಿ ಪೊಲೀಸರಿಗೆ ಅಥವಾ ಸಂಬಂಧಪಟ್ಟ ಅಧಿಕಾರಿಗಳಿಗೆ ನೀಡಬೇಕು ಎಂದು ಖರ್ಗೆ ಹೇಳಿದ್ದಾರೆ.

ಇಂತಹ ‘ವಿಜಿಲಾಂಟಿಸಂ’ ಅಥವಾ ‘ಮಾರಲ್ ಪೋಲಿಸಿಂಗ್’ ಅನ್ನು ಸರ್ಕಾರ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ನಿಜವಾದ ದೇಶಭಕ್ತರು ಹಾಗೂ ರಾಜ್ಯದ ಹಿತಾಸಕ್ತಿ ಬಯಸುವವರು ತಮ್ಮ ಬಳಿ ಇರುವ ಮಾಹಿತಿಯನ್ನು ಕಾನೂನುಬದ್ಧವಾಗಿ ಸಂಬಂಧಪಟ್ಟ ಇಲಾಖೆಗೆ ತಲುಪಿಸಬೇಕು ಎಂದು ಸಚಿವರು ತಿಳಿಸಿದ್ದಾರೆ.

ಕಳೆದ ಮೂರು ತಿಂಗಳಲ್ಲಿ ಬಾಂಗ್ಲಾದೇಶ, ಆಫ್ರಿಕಾ ಸೇರಿದಂತೆ ವಿವಿಧ ಪ್ರದೇಶಗಳಿಂದ ಬಂದಿರುವ ಸುಮಾರು 1,000 ವಲಸಿಗರನ್ನು ಸರ್ಕಾರ ಪತ್ತೆಹಚ್ಚಿದ್ದು, ಅವರನ್ನು ಎಫ್‌ಆರ್‌ಒಗೆ ಹಸ್ತಾಂತರಿಸಲಾಗಿದೆ ಎಂದು ಪ್ರಿಯಾಂಕ್ ಖರ್ಗೆ ಮಾಹಿತಿ ನೀಡಿದ್ದಾರೆ.

ಈ ವಿಚಾರದಲ್ಲಿ ಸರ್ಕಾರ ಬಿಎಸ್‌ಎಫ್ ಹಾಗೂ ಎಫ್‌ಆರ್‌ಒ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದೆ. ವಲಸಿಗರ ವಿಚಾರದಲ್ಲಿ ಸರ್ಕಾರ ಶೇ.100ರಷ್ಟು ಕಠಿಣ ಕ್ರಮ ಕೈಗೊಳ್ಳಲು ಬದ್ಧವಾಗಿದೆ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಅನಗತ್ಯ ಪ್ರಚಾರ ಮಾಡುವುದರಿಂದ ಭದ್ರತಾ ವ್ಯವಸ್ಥೆಗೆ ಧಕ್ಕೆಯಾಗುವ ಸಾಧ್ಯತೆಯಿದ್ದು, ಸಾರ್ವಜನಿಕರು ಈ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಬಿಡದಿ ಟೌನ್ ಶಿಪ್ ವಿರುದ್ಧ ಜೆಡಿಎಸ್ ಪಾದಯಾತ್ರೆಗೆ ಬಿಜೆಪಿ ಬೆಂಬಲ.. ಒಟ್ಟಾಗಿ ಹೋರಾಡಲು ತೀರ್ಮಾನ ಎಂದ HDK!

ಬೆಂಗಳೂರು: ಬಿಡದಿ ಟೌನ್‌ಶಿಪ್ ಯೋಜನೆ ವಿರೋಧಿಸಿ ಜೆಡಿಎಸ್ ಹಮ್ಮಿಕೊಂಡಿರುವ ಪಾದಯಾತ್ರೆಗೆ ಬಿಜೆಪಿ ಸಾಂಕೇತಿಕವಾಗಿ ಬೆಂಬಲ ನೀಡಲು ನಿರ್ಧರಿಸಿದೆ. ಬಿಜೆಪಿ-ಜೆಡಿಎಸ್ ನಾಯಕರು ಒಗ್ಗಟ್ಟಾಗಿ ಹೋರಾಟ ನಡೆಸುವ ತೀರ್ಮಾನಕ್ಕೆ ಬಂದಿದ್ದು, ನಾಳೆ ನಡೆಯಲಿರುವ ಪಾದಯಾತ್ರೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಬಿಜೆಪಿ ನಾಯಕರು ಭಾಗವಹಿಸಲಿದ್ದಾರೆ.

ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆದ ಬಿಜೆಪಿ-ಜೆಡಿಎಸ್ ಸಮನ್ವಯ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಸಭೆಯಲ್ಲಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಸೇರಿದಂತೆ ಉಭಯ ಪಕ್ಷಗಳ ಪ್ರಮುಖ ನಾಯಕರು ಭಾಗವಹಿಸಿದ್ದರು.

ಬಿಡದಿ ಟೌನ್‌ಶಿಪ್ ಯೋಜನೆಯನ್ನು ಕೈಬಿಡುವಂತೆ ಆಗ್ರಹಿಸಿ ಆ.9 ಮತ್ತು 10ರಂದು ಎರಡು ದಿನಗಳ ಕಾಲ ಪಾದಯಾತ್ರೆ ನಡೆಯಲಿದೆ. ಬೈರಮಂಗಲದಿಂದ ಕೆಂಗೇರಿವರೆಗೆ ಪಾದಯಾತ್ರೆ ಸಾಗಲಿದ್ದು, ಬಳಿಕ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಜೆಡಿಎಸ್-ಬಿಜೆಪಿ ಜಂಟಿ ಸಮಾರೋಪ ಸಮಾವೇಶ ನಡೆಸಲು ತೀರ್ಮಾನಿಸಲಾಗಿದೆ. ಆ.19 ಅಥವಾ 20ರಂದು ಸಮಾರೋಪ ಸಮಾವೇಶ ನಡೆಯುವ ಸಾಧ್ಯತೆ ಇದೆ.

ಸಭೆ ಬಳಿಕ ಮಾತನಾಡಿದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ನಾಳೆ ಆರಂಭವಾಗಲಿರುವ ಪಾದಯಾತ್ರೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಬಿಜೆಪಿ ನಾಯಕರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. ರೈತರ ಪರವಾಗಿ ಈಗಾಗಲೇ ಬಿಜೆಪಿ ಹಲವು ಸಭೆಗಳನ್ನು ನಡೆಸಿದೆ. ಬಿಡದಿ ಟೌನ್‌ಶಿಪ್‌ ಸೇರಿದಂತೆ ರೈತರ ಸಮಸ್ಯೆಗಳ ಕುರಿತು ವಿಧಾನಸಭೆ ಅಧಿವೇಶನದಲ್ಲೂ ಚರ್ಚೆ ನಡೆಸಲಾಗುವುದು ಎಂದು ಹೇಳಿದರು.

ಬಿಡದಿ ಟೌನ್‌ಶಿಪ್‌ ಯೋಜನೆಗೆ ರೈತರು ಭೂಮಿ ನೀಡಲು ಸಿದ್ಧರಿಲ್ಲ. ರೈತರು ಮತ್ತು ಮಹಿಳೆಯರ ಹೋರಾಟವನ್ನು ಇಡೀ ರಾಜ್ಯ ಗಮನಿಸುತ್ತಿದೆ. ಹೀಗಾಗಿ ಈ ವಿಚಾರವನ್ನು ಸದನದಲ್ಲಿಯೂ ಪ್ರಸ್ತಾಪಿಸಿ ಚರ್ಚೆ ನಡೆಸಬೇಕಿದೆ ಎಂದು ಕುಮಾರಸ್ವಾಮಿ ಹೇಳಿದರು.

ಇದೇ ವೇಳೆ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಸಚಿವರಿಗೆ ಇನ್ನೂ ಖಾತೆ ಹಂಚಿಕೆಯಾಗಿಲ್ಲ ಎಂದು ಟೀಕಿಸಿದರು. ಮುಖ್ಯಮಂತ್ರಿ ಸ್ಥಾನದ ವಿಚಾರದಲ್ಲಿ ಮೂರು ವರ್ಷಗಳನ್ನು ಕಳೆದ ಸರ್ಕಾರ ಇದೀಗ ಸಚಿವರ ಖಾತೆ ಹಂಚಿಕೆ ವಿಚಾರದಲ್ಲೂ ಕಾಲಹರಣ ಮಾಡುತ್ತಿದೆ ಎಂದು ಆರೋಪಿಸಿದರು. ಸರ್ಕಾರದ ಈ ಸ್ಥಿತಿ ಅದರ ದಿವಾಳಿತನವನ್ನು ತೋರಿಸುತ್ತದೆ ಎಂದು ಕುಮಾರಸ್ವಾಮಿ ಟೀಕಿಸಿದರು.

ತಿಥಿ ಊಟ ಸೇವಿಸಿ 15 ಶಾಲಾ ವಿದ್ಯಾರ್ಥಿಗಳು ತೀವ್ರ ಅಸ್ವಸ್ಥ: ಆಸ್ಪತ್ರೆಗೆ ದಾಖಲು

ಶಿವಮೊಗ್ಗ: ಜಿಲ್ಲೆಯ ಭದ್ರಾವತಿ ತಾಲೂಕಿನಲ್ಲಿ ಖಾಸಗಿ ಕಾರ್ಯಕ್ರಮವೊಂದರಲ್ಲಿ ಸಿದ್ಧಪಡಿಸಿದ್ದ ಭೋಜನ ಸೇವಿಸಿದ 15ಕ್ಕೂ ಹೆಚ್ಚು ವಿಶೇಷಚೇತನ ವಿದ್ಯಾರ್ಥಿಗಳು ಸೇರಿದಂತೆ 20ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡಿರುವ ಘಟನೆ ನಡೆದಿದೆ. ಅಸ್ವಸ್ಥರಾದವರನ್ನು ಭದ್ರಾವತಿ ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಸದ್ಯ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ.

ಭದ್ರಾವತಿಯ ವೇಲೂರ್ ಶೆಡ್ ಪ್ರದೇಶದ ಮನೆಯೊಂದರಲ್ಲಿ ತಿಥಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕಾಗಿ ಸಿದ್ಧಪಡಿಸಲಾಗಿದ್ದ ಊಟವನ್ನು ನ್ಯೂಟೌನ್‌ನ ತರಂಗ ಕಿವುಡು ಮತ್ತು ಮೂಗರ ವಸತಿ ಶಾಲೆಯ ವಿದ್ಯಾರ್ಥಿಗಳು ಸೇವಿಸಿದ್ದರು.

ಊಟ ಸೇವಿಸಿದ ಕೆಲವೇ ಗಂಟೆಗಳಲ್ಲಿ ವಿದ್ಯಾರ್ಥಿಗಳಿಗೆ ತೀವ್ರ ವಾಂತಿ ಹಾಗೂ ಭೇದಿ ಕಾಣಿಸಿಕೊಂಡಿದೆ. ಇದೇ ಭೋಜನ ಸೇವಿಸಿದ್ದ ಮೃತರ ಕುಟುಂಬದ ಸಂಬಂಧಿಕರು ಹಾಗೂ ಸ್ಥಳೀಯರು ಸೇರಿದಂತೆ 7ರಿಂದ 8 ಮಂದಿ ಸಾರ್ವಜನಿಕರ ಆರೋಗ್ಯದಲ್ಲೂ ಏರುಪೇರಾಗಿದೆ.

ಅಸ್ವಸ್ಥರಾದ ವಿದ್ಯಾರ್ಥಿಗಳನ್ನು ತಕ್ಷಣವೇ ಭದ್ರಾವತಿ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದ್ದು, ತುರ್ತು ಚಿಕಿತ್ಸಾ ಘಟಕದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಸದ್ಯ ಎಲ್ಲರ ಆರೋಗ್ಯ ಸ್ಥಿರವಾಗಿದ್ದು, ಯಾರನ್ನೂ ಶಿವಮೊಗ್ಗದ ಜಿಲ್ಲಾ ಆಸ್ಪತ್ರೆಗೆ ಸ್ಥಳಾಂತರಿಸುವ ಅಗತ್ಯ ಎದುರಾಗಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.

ವಿದ್ಯಾರ್ಥಿಗಳು ವಿಶೇಷಚೇತನರಾಗಿರುವ ಹಿನ್ನೆಲೆಯಲ್ಲಿ ಮುಂದಿನ ಎರಡು-ಮೂರು ದಿನಗಳ ಕಾಲ ವೈದ್ಯಕೀಯ ನಿಗಾದಲ್ಲಿ ಇರಿಸಿ ಚಿಕಿತ್ಸೆ ಮುಂದುವರಿಸಲು ನಿರ್ಧರಿಸಲಾಗಿದೆ.

ಒಂದೇ ಕಾರ್ಯಕ್ರಮದ ಊಟ ಸೇವಿಸಿದ ಹಲವರು ಏಕಕಾಲದಲ್ಲಿ ಅಸ್ವಸ್ಥಗೊಂಡಿರುವ ಹಿನ್ನೆಲೆಯಲ್ಲಿ ಆಹಾರ ಕಲುಷಿತಗೊಂಡಿರುವ ಶಂಕೆ ವ್ಯಕ್ತವಾಗಿದೆ. ಕಾರ್ಯಕ್ರಮದ ಬಳಿಕ ಉಳಿದಿದ್ದ ಆಹಾರವನ್ನು ಮಕ್ಕಳಿಗೆ ನೀಡಲಾಗಿತ್ತೇ ಅಥವಾ ಆಹಾರ ತಯಾರಿಕೆಯಲ್ಲೇ ದೋಷ ಸಂಭವಿಸಿತ್ತೇ ಎಂಬುದರ ಕುರಿತು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

ನಿನ್ನೆ ಕ್ಲಾಸ್… ಇಂದು ಸಮಾಧಾನ! ಕಣ್ಣೀರಿಟ್ಟ ಚೇತನಾ ಪಾಟೀಲಗೆ ರಾಯರಡ್ಡಿ ಧೈರ್ಯ

ಗದಗ: ಬರ ಪರಿಸ್ಥಿತಿ ವರದಿಯಲ್ಲಿ ಲೋಪ ಕಂಡು ನಿನ್ನೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ರಾಯರಡ್ಡಿ, ಇಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಚೇತನಾ ಪಾಟೀಲ ಅವರಿಗೆ ಸಮಾಧಾನ ಹೇಳಿ ಧೈರ್ಯ ತುಂಬಿದರು.

ಗದಗ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದಿದ್ದ ಬರ ಪರಿಸ್ಥಿತಿ ಪರಿಶೀಲನಾ ಸಭೆಯಲ್ಲಿ ಬೆಳೆ ಅಂಕಿ-ಅಂಶಗಳ ಕುರಿತು ಅಧಿಕಾರಿಗಳಿಂದ ಸ್ಪಷ್ಟ ಮಾಹಿತಿ ಬಾರದ ಹಿನ್ನೆಲೆಯಲ್ಲಿ ಸಚಿವರು ಗರಂ ಆಗಿದ್ದರು. ಈ ವೇಳೆ ಕೃಷಿ ಜಂಟಿ ನಿರ್ದೇಶಕಿ ಚೇತನಾ ಪಾಟೀಲ ಭಾವುಕರಾಗಿ ಸಭೆಯಲ್ಲೇ ಕಣ್ಣೀರು ಹಾಕಿದ್ದರು.

ಈ ಬೆಳವಣಿಗೆ ಹಿನ್ನೆಲೆಯಲ್ಲಿ ಶನಿವಾರ ಶಿರಹಟ್ಟಿ ಪಟ್ಟಣದ ತಾಲೂಕು ಪಂಚಾಯತ್ ಕಚೇರಿಯಲ್ಲಿ ನಡೆದ ಶಿರಹಟ್ಟಿ ಹಾಗೂ ಲಕ್ಷ್ಮೇಶ್ವರ ತಾಲೂಕುಗಳ ಬರ ಪರಿಸ್ಥಿತಿ ಅವಲೋಕನ ಸಭೆಗೂ ಮುನ್ನವೇ ಸಚಿವ ರಾಯರಡ್ಡಿ ಅವರು ಚೇತನಾ ಪಾಟೀಲ ಸೇರಿದಂತೆ ಅಧಿಕಾರಿಗಳೊಂದಿಗೆ ಮಾತನಾಡಿ ಸಮಾಧಾನಪಡಿಸಿದರು.

ಬೇಜಾರು ಮಾಡಿಕೊಳ್ಳಬೇಡಿ

ಸಭೆ ಆರಂಭಕ್ಕೂ ಮುನ್ನ ಚೇತನಾ ಪಾಟೀಲ ಅವರಿಗೆ ಧೈರ್ಯ ತುಂಬಿದ ಸಚಿವರು, “ನಾನು ವರದಿ ಕೇಳಿದ್ದು ಸ್ಪಷ್ಟತೆ ಇರಲಿ ಎಂದು ಹೇಳಿದ್ದೇನೆ. ಯಾರೂ ಬೇಜಾರು ಮಾಡಿಕೊಳ್ಳಬೇಡಿ. ನಾವೆಲ್ಲರೂ ಒಂದು ತಂಡವಾಗಿ ಸಾರ್ವಜನಿಕರ ಪರವಾಗಿ ಕೆಲಸ ಮಾಡಬೇಕು” ಎಂದು ಹೇಳಿದರು.

ಅಧಿಕಾರಿಗಳು ತಮ್ಮ ಇಲಾಖೆಗೆ ಸಂಬಂಧಿಸಿದಂತೆ ಸರಿಯಾದ ಹಾಗೂ ನಿಖರ ಮಾಹಿತಿಯೊಂದಿಗೆ ಸಭೆಗೆ ಬರಬೇಕು ಎಂದು ಮತ್ತೊಮ್ಮೆ ತಾಕೀತು ಮಾಡಿದ ಸಚಿವರು, ತಪ್ಪು ಮಾಹಿತಿ ಬಂದಾಗ ಅದನ್ನು ಪ್ರಶ್ನಿಸುವುದು ಅನಿವಾರ್ಯವಾಗುತ್ತದೆ ಎಂದು ಸ್ಪಷ್ಟಪಡಿಸಿದರು.

ನಾನು ಟಫ್‌ ಮ್ಯಾನ್‌…

ಈ ವೇಳೆ ತಮ್ಮ ಕಾರ್ಯವೈಖರಿ ಕುರಿತು ಮಾತನಾಡಿದ ರಾಯರಡ್ಡಿ, “ನಾನೊಬ್ಬ ಟಫ್‌ ಮ್ಯಾನ್‌. ನನ್ನ ಭಾಷೆ ಸ್ವಲ್ಪ ಹಾರ್ಡ್‌ ಇದೆ. ಆದರೆ ನಾನು ಅಸಂವಿಧಾನಿಕ ಪದ ಬಳಸುವುದಿಲ್ಲ. ನಾವೆಲ್ಲರೂ ಪಬ್ಲಿಕ್‌ ಸರ್ವೆಂಟ್‌ಗಳು. ನೀವು ನೀಟಾಗಿ ಕೆಲಸ ಮಾಡಿ. ನಾವೆಲ್ಲರೂ ಸಾರ್ವಜನಿಕರ ಪರವಾಗಿ ಕೆಲಸ ಮಾಡುವವರು” ಎಂದರು.

“ನೀವು ಗುಡ್‌ ಆಫೀಸರ್‌ ಆಗಿದ್ದರೆ ಮಾಹಿತಿ ಸರಿಯಾಗಿ ಕೊಡಿ. ನಾನು ಹಲವಾರು ಹುದ್ದೆಗಳನ್ನು ಅನುಭವಿಸಿದ್ದೇನೆ. ಅಧಿಕಾರಿಗಳಿಂದ ನಿಖರ ಮಾಹಿತಿ ನಿರೀಕ್ಷಿಸುವುದು ಸಹಜ” ಎಂದು ಸಚಿವರು ಹೇಳಿದರು.

ನಿನ್ನೆ ನಡೆದ ಸಭೆಯಲ್ಲಿ ಕೃಷಿ ಇಲಾಖೆಯ ಬೆಳೆ ಅಂಕಿ-ಅಂಶಗಳ ಕುರಿತು ಅಸಮಾಧಾನಗೊಂಡಿದ್ದ ಸಚಿವರು, ಕೃಷಿ ಇಲಾಖೆಯ ಬೆಳೆಯನ್ನು ತೋಟಗಾರಿಕೆ ವಿಭಾಗದಲ್ಲಿ ನಮೂದಿಸಿರುವುದು ಸೇರಿದಂತೆ ಹಲವು ಲೋಪಗಳನ್ನು ಪ್ರಶ್ನಿಸಿದ್ದರು. ಸಚಿವರ ಕಠಿಣ ಮಾತುಗಳಿಂದ ಚೇತನಾ ಪಾಟೀಲ ಭಾವುಕರಾಗಿ ಕಣ್ಣೀರು ಹಾಕಿದ್ದರು. ಆದರೆ, “ಕಠಿಣವಾಗಿ ಮಾತನಾಡಿದ್ದು ಕೆಲಸದ ಮೇಲಿನ ಕಾಳಜಿಯಿಂದ, ವೈಯಕ್ತಿಕವಾಗಿ ಯಾರನ್ನೂ ನೋಯಿಸುವ ಉದ್ದೇಶವಿಲ್ಲ” ಎಂಬ ಸಂದೇಶವನ್ನು ಇಂದು ಸಚಿವರು ನೀಡುವ ಮೂಲಕ ಹಿಂದಿನ ಬೆಳವಣಿಗೆಗೆ ಸ್ಪಷ್ಟನೆ ನೀಡಿದರು.

ಶಿರಹಟ್ಟಿ ಹಾಗೂ ಲಕ್ಷ್ಮೇಶ್ವರ ತಾಲೂಕುಗಳ ಬರ ಪರಿಸ್ಥಿತಿ, ಬೆಳೆ ಹಾನಿ, ಮಳೆ ಕೊರತೆ, ಕುಡಿಯುವ ನೀರು ಹಾಗೂ ರೈತರ ಸಮಸ್ಯೆಗಳ ಕುರಿತು ಸಭೆಯಲ್ಲಿ ಅಧಿಕಾರಿಗಳಿಂದ ಸಚಿವರು ಮಾಹಿತಿ ಪಡೆದುಕೊಂಡರು.