ಬೆಂಗಳೂರು: ಕೆಪಿಎಸ್ಸಿ ಹಗರಣದ ಪ್ರಮುಖ ಆರೋಪಿ ಬಸವರಾಜ ಕನ್ನಾಳೆಯಿಂದ ತುಮಕೂರು ವಿಶ್ವವಿದ್ಯಾಲಯದಲ್ಲೂ ಹಲವು ಅವ್ಯವಹಾರ ನಡೆದಿರುವ ಅನುಮಾನ ವ್ಯಕ್ತವಾಗಿದ್ದು, ಈ ದಿಕ್ಕಿನಲ್ಲೂ ಸಿಐಡಿ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ.
ರಾಜ್ಯದಲ್ಲಿ ಸದ್ದು ಮಾಡುತ್ತಿರುವ ಕೆಪಿಎಸ್ಸಿ ಹಗರಣದ ಬೇರು ತುಮಕೂರಿಗೂ ವ್ಯಾಪಿಸಿದೆ. ಮಧ್ಯವರ್ತಿಯಾಗಿ ಬಂಧಿತನಾಗಿರುವ ಬಸವರಾಜ ಕನ್ನಾಳೆಯ ಅಕ್ರಮ ತುಮಕೂರು ವಿಶ್ವವಿದ್ಯಾಲಯಕ್ಕೂ ವ್ಯಾಪಿಸಿರುವ ಶಂಕೆ ವ್ಯಕ್ತವಾಗಿದೆ. ವಿವಿಯ ನಾಮನಿರ್ದೇಶಿತ ಸಿಂಡಿಕೇಟ್ ಸದಸ್ಯರಾಗಿದ್ದ ಬಸವರಾಜ ಕನ್ನಾಳೆ ಹಲವು ಭ್ರಷ್ಟಾಚಾರ ಎಸಗಿರುವ ಶಂಕೆಯಿದೆ.
ಬಸವರಾಜ ಕನ್ನಾಳೆ 2025ರ ಆಗಸ್ಟ್ನಲ್ಲಿ ತುಮಕೂರು ವಿವಿ ಸಿಂಡಿಕೇಟ್ ಸದಸ್ಯರಾಗಿ ನೇಮಕಗೊಂಡಿದ್ದರು. ಖರೀದಿ ಮತ್ತು ಕಾಮಗಾರಿ ನಿರ್ಧಾರದ ಉಪಸಮಿತಿಯಲ್ಲಿ ಸದಸ್ಯರಾಗಿ ನೇಮಕಗೊಂಡಿದ್ದ ಇವರು, ವಾರ್ಷಿಕ ಬಜೆಟ್ ಜಾರಿಯಲ್ಲೂ ಪ್ರಭಾವ ಬಳಸಿಕೊಂಡು ದುರ್ಬಳಕೆ ಮಾಡಿಕೊಂಡಿರುವ ಶಂಕೆಯಿದ್ದು, ಈ ನಿಟ್ಟಿನಲ್ಲಿ ಸಿಐಡಿ ತನಿಖೆ ನಡೆಸುತ್ತಿದೆ.
ಸಿಂಡಿಕೇಟ್ ಸದಸ್ಯರಾಗಿ ನೇಮಕಗೊಂಡ ಒಂದೇ ವರ್ಷದಲ್ಲಿ ಬಸವರಾಜ ಕನ್ನಾಳೆ ವ್ಯವಹಾರ ಚತುರ ಎನಿಸಿಕೊಂಡಿದ್ದರೆಂದೂ, ವಿವಿಯಲ್ಲಿ ಖಾಲಿಯಿರುವ ಕುಲಪತಿ ಹುದ್ದೆಗೆ ಅರ್ಜಿ ಸಲ್ಲಿಸಿದ್ದ ಹಿರಿಯ ಪ್ರಾಧ್ಯಾಪಕರ ಸಂಪರ್ಕ ಸಾಧಿಸಿ, ಹುದ್ದೆ ಕೊಡಿಸುವ ಭರವಸೆಯೊಂದಿಗೆ ವ್ಯವಹಾರ ಆರಂಭಿಸಿದ್ದರೆಂಬ ಮಾತು ವಿವಿ ಆವರಣದಲ್ಲಿ ಕೇಳಿಬರುತ್ತಿದೆ. ಅನಂತಪುರಂ ಕೇಂದ್ರೀಯ ವಿವಿಯಲ್ಲಿ ಖಾಲಿಯಿರುವ ಕುಲಪತಿ ಹುದ್ದೆಗೆ ನೇಮಕ ಮಾಡಿಸುವುದಾಗಿ ತುಮಕೂರು ವಿವಿ ವಿಶ್ರಾಂತ ಕುಲಪತಿಯೊಬ್ಬರಿಂದ ಬಂಡವಾಳ ಹೂಡಿಸಿರುವ ವದಂತಿಯೂ ಇದ್ದು, ಈ ಬಗ್ಗೆಯೂ ಸಿಐಡಿ ಹಾಗೂ ಸಿಬಿಐ ತನಿಖೆ ನಡೆಸುತ್ತಿದೆ ಎನ್ನಲಾಗಿದೆ.
ಬಸವರಾಜ ಕನ್ನಾಳೆಯ ದೂರವಾಣಿ ಕರೆಗಳ ಮಾಹಿತಿ ಸಂಗ್ರಹಿಸಿರುವ ತನಿಖಾಧಿಕಾರಿಗಳು ಅಕ್ರಮದ ಜಾಡು ಜಾಲಾಡುತ್ತಿದ್ದಾರೆ. ಈ ನಡುವೆ ಬಸವರಾಜ ಕನ್ನಾಳೆಯನ್ನು ಸಿಂಡಿಕೇಟ್ನಿಂದ ವಜಾಗೊಳಿಸುವಂತೆ ಎಬಿವಿಪಿ ಆಗ್ರಹಿಸಿದೆ.
ಆದರೆ ವಿವಿಯ ಆಡಳಿತ ಮಂಡಳಿ ಬಸವರಾಜ ಕನ್ನಾಳೆಗೆ ಕ್ಲೀನ್ ಚಿಟ್ ನೀಡಿದ್ದು, ಈ ಕುರಿತು ಸಿಬಿಐ, ಸಿಐಡಿ ಹಾಗೂ ರಾಜ್ಯ ಗೃಹ ಇಲಾಖೆಗೆ ಪ್ರಮಾಣ ಪತ್ರ ಸಲ್ಲಿಸಿದೆ. ತುಮಕೂರು ವಿವಿ ಕುಲಪತಿ ಹುದ್ದೆಗೆ ಅರ್ಜಿ ಸಲ್ಲಿಸಿರುವ ಸಾಕಷ್ಟು ಹಿರಿಯ ಪ್ರಾಧ್ಯಾಪಕರು ಬಸವರಾಜ ಕನ್ನಾಳೆ ಸಂಪರ್ಕದಲ್ಲಿದ್ದು, ನೇಮಕಾತಿಗೆ ಲಾಬಿ ನಡೆಸಲು ವ್ಯವಹಾರ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದ್ದು, ಈ ಬೆಳವಣಿಗೆಯಿಂದ ಆತನ ಸಂಪರ್ಕದಲ್ಲಿದ್ದ ಪ್ರಾಧ್ಯಾಪಕರಲ್ಲಿ ಆತಂಕ ಮನೆಮಾಡಿದೆ.

