Home Blog

ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ

0

ವಿಜಯಸಾಕ್ಷಿ ಸುದ್ದಿ, ಗದಗ: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಬಿ. ನಾಗೇಂದ್ರ ಅವರಿಗೆ ಮತ್ತೆ ಸಚಿವ ಸ್ಥಾನ ನೀಡಿರುವುದನ್ನು ಖಂಡಿಸಿ ಹಾಗೂ ಅವರು ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಬಿಜೆಪಿ ಜಿಲ್ಲಾ ಘಟಕದ ವತಿಯಿಂದ ನಗರದ ಜಿಲ್ಲಾಡಳಿತ ಭವನದ ಎದುರು ಬುಧವಾರ ಪ್ರತಿಭಟನೆ ನಡೆಯಿತು.

ಬೆಳಗ್ಗೆಯಿಂದ ಸಂಜೆವರೆಗೆ ನಡೆದ ಪ್ರತಿಭಟನೆಯಲ್ಲಿ ಕಾಂಗ್ರೆಸ್‌ ಸರ್ಕಾರ ಹಾಗೂ ಸಚಿವ ಬಿ. ನಾಗೇಂದ್ರ ವಿರುದ್ಧ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ನಿಗಮದ ಹಣ ಬೇನಾಮಿ ಖಾತೆಗಳಿಗೆ ಅಕ್ರಮವಾಗಿ ವರ್ಗಾವಣೆಯಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಗಮದ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಡೆತ್‌ನೋಟ್‌ನಲ್ಲಿಯೂ ಹಣ ವರ್ಗಾವಣೆಯ ಕುರಿತು ಉಲ್ಲೇಖವಾಗಿತ್ತು. ಬಿಜೆಪಿ ನಡೆಸಿದ ಹೋರಾಟದ ಹಿನ್ನೆಲೆಯಲ್ಲಿ ನಾಗೇಂದ್ರ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಪ್ರಕರಣದ ತನಿಖೆ ಹಾಗೂ ಆರೋಪಗಳು ಇನ್ನೂ ಚರ್ಚೆಯಲ್ಲಿರುವಾಗಲೇ ಅವರಿಗೆ ಮತ್ತೆ ಸಚಿವ ಸ್ಥಾನ ನೀಡಿರುವುದು ಖಂಡನೀಯ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ನಿಗಮದ ಹಣದ ಅಕ್ರಮದಲ್ಲಿ ಸಚಿವ ನಾಗೇಂದ್ರ ಅವರ ಪಾತ್ರದ ಕುರಿತು ಗಂಭೀರ ಆರೋಪಗಳು ಕೇಳಿಬಂದಿದ್ದರೂ, ಅವರನ್ನು ಮತ್ತೆ ಸಚಿವರನ್ನಾಗಿ ಮಾಡಿರುವುದು ಕಾಂಗ್ರೆಸ್‌ ಸರ್ಕಾರದ ಆಡಳಿತ ವೈಖರಿಗೆ ಸಾಕ್ಷಿಯಾಗಿದೆ ಎಂದು ಬಿಜೆಪಿ ಮುಖಂಡರು ಆರೋಪಿಸಿದರು. ವಾಲ್ಮೀಕಿ ಸಮುದಾಯದ ಅಭಿವೃದ್ಧಿಗಾಗಿ ಮೀಸಲಾದ ಹಣದ ಅಕ್ರಮದಿಂದ ಆ ಸಮಾಜಕ್ಕೆ ಅನ್ಯಾಯವಾಗಿದೆ. ನಾಗೇಂದ್ರ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವವರೆಗೆ ಬಿಜೆಪಿ ಜನಪ್ರತಿನಿಧಿಗಳು ವಿಧಾನಮಂಡಲ ಅಧಿವೇಶನ ಸುಗಮವಾಗಿ ನಡೆಯಲು ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಸಿದರು.

ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಜನರ ತೆರಿಗೆ ಹಣವನ್ನು ಸಮರ್ಪಕವಾಗಿ ಬಳಸುತ್ತಿಲ್ಲ. ಭ್ರಷ್ಟಾಚಾರದ ಆರೋಪಗಳು ಸರ್ಕಾರವನ್ನು ಸುತ್ತುವರಿದಿದ್ದು, ಆಡಳಿತದಲ್ಲಿ ಅರಾಜಕತೆ ತಾಂಡವವಾಡುತ್ತಿದೆ. ರಾಜ್ಯದಲ್ಲಿ ‘ತುಘಲಕ್‌ ಸರ್ಕಾರ’ದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಪ್ರತಿಭಟನಾಕಾರರು ಟೀಕಿಸಿದರು.

ಪಂಚ ಗ್ಯಾರಂಟಿ ಯೋಜನೆಗಳ ಪ್ರಯೋಜನ ಎಲ್ಲ ವರ್ಗದ ಜನರನ್ನು ಸಮರ್ಪಕವಾಗಿ ತಲುಪುತ್ತಿಲ್ಲ. ಸರ್ಕಾರ ಒಂದು ಕೋಮಿನ ಓಲೈಕೆಗೆ ಆದ್ಯತೆ ನೀಡುತ್ತಿದೆ ಎಂಬ ಆರೋಪವನ್ನೂ ಬಿಜೆಪಿ ಮುಖಂಡರು ಮಾಡಿದರು. ಕಾಂಗ್ರೆಸ್‌ ಸರ್ಕಾರದ ಆಡಳಿತದಿಂದ ಜನರು ಬೇಸರಗೊಂಡಿದ್ದು, ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ದೊರೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಯುವ ಮೋರ್ಚಾ ಅಧ್ಯಕ್ಷ ಸಂತೋಷ ಅಕ್ಕಿ, ರಾಘವೇಂದ್ರ ಯಳವತ್ತಿ, ವಿನಾಯಕ ಮಾನ್ವಿ, ವಿಜಯಕುಮಾರ ಗಡ್ಡಿ, ಸಿದ್ದಣ್ಣ ಪಲ್ಲೇದ, ಹೇಮಗಿರೀಶ ಹಾವಿನಾಳ, ಐ.ಎಸ್. ಪೂಜಾರ, ನಾಗರಾಜ ತಳವಾರ, ಅನಿಲ್ ಅಬ್ಬಿಗೇರಿ, ನಿರ್ಮಲಾ ಕೊಳ್ಳಿ, ವಂದನಾ ವೆರ್ಣೇಕರ ಸೇರಿದಂತೆ ಮುಖಂಡರು ಹಾಗೂ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

“ವಾಲ್ಮೀಕಿ ಸಮುದಾಯದ ಅಭಿವೃದ್ಧಿಗಾಗಿ ಮೀಸಲಾದ ಹಣದ ಅಕ್ರಮದಿಂದ ಆ ಸಮಾಜಕ್ಕೆ ಅನ್ಯಾಯವಾಗಿದೆ. ನಾಗೇಂದ್ರ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವವರೆಗೆ ನಮ್ಮ ಹೋರಾಟ ಮುಂದುವರಿಯಲಿದೆ.”

— ರಾಜು ಕುರಡಗಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ

ತಾಯಿಯ ಪ್ರೀತಿಯಂತೆ ಸಿಕ್ಕ ಆತ್ಮೀಯತೆ: ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಎಚ್.ಕೆ. ಪಾಟೀಲ ಭಾವುಕ

0

ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಈಶ್ವರೀಯ ವಿಶ್ವವಿದ್ಯಾಲಯದ ಸೇವಾ ಕೇಂದ್ರದಲ್ಲಿ ಸ್ವಾತಂತ್ರ್ಯ ದಿನಾಚರಣೆ ಹಾಗೂ ಶಾಸಕ ಎಚ್.ಕೆ. ಪಾಟೀಲ ಅವರ ಜನ್ಮದಿನಾಚರಣೆಯನ್ನು ಆತ್ಮೀಯವಾಗಿ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಪರಮಾತ್ಮನ ಆಶೀರ್ವಾದ ಪಡೆದು ಮಾತನಾಡಿದ ಶಾಸಕ ಎಚ್.ಕೆ. ಪಾಟೀಲ ಅವರು, ಈಶ್ವರೀಯ ವಿಶ್ವವಿದ್ಯಾಲಯದ ಸೇವಾ ಕೇಂದ್ರದಲ್ಲಿ ದೊರೆತ ಆತ್ಮೀಯತೆಯನ್ನು ಸ್ಮರಿಸಿದರು.

ರಾಜಕಾರಣಿ ಹಾಗೂ ಸಚಿವನಾದ ಬಳಿಕ ಸುಪ್ರೀಂ ಕೋರ್ಟ್, ಹೈಕೋರ್ಟ್ ನ್ಯಾಯಾಧೀಶರು ಹಾಗೂ ಪ್ರಖ್ಯಾತ ವಕೀಲರ ಸಭೆ-ಸಮಾರಂಭಗಳಲ್ಲಿ ಯಾವುದೇ ಹಿಂಜರಿಕೆಯಿಲ್ಲದೆ ಧೈರ್ಯವಾಗಿ ಮಾತನಾಡಿದ್ದೇನೆ. ಆದರೆ, ಇಂದು ಈ ಆಧ್ಯಾತ್ಮಿಕ ಸಭೆಯಲ್ಲಿ ಮಾತನಾಡಲು ನನಗೆ ಪದಗಳೇ ಸಿಗುತ್ತಿಲ್ಲ. ಇಲ್ಲಿ ತೋರಿದ ಪ್ರೀತಿ-ಮಮತೆ ನನ್ನ ತಾಯಿಯ ಪ್ರೀತಿಯನ್ನು ನೆನಪಿಸಿದೆ ಎಂದರು.

ದೀಪ ಬೆಳಗಿಸಿ, ಕೇಕ್ ಕತ್ತರಿಸಿ ತಮ್ಮ ಜನ್ಮದಿನ ಆಚರಿಸಿದ ರೀತಿಯು ತಾಯಿಯ ಪ್ರೀತಿಯನ್ನು ನೆನಪಿಸಿತು. ತಮ್ಮ ತಾಯಿ ಮಾಡುತ್ತಿದ್ದ ಆಚರಣೆಗಳನ್ನು ಇಲ್ಲಿನ ಸಹೋದರಿಯರು ಮುಂದುವರಿಸಿಕೊಂಡು ಹೋಗುತ್ತಿರುವಂತೆ ಭಾಸವಾಯಿತು. ಪ್ರತಿವರ್ಷವೂ ಈ ಪವಿತ್ರ ಸ್ಥಳಕ್ಕೆ ಆಗಮಿಸಿ ಎಲ್ಲರ ಆಶೀರ್ವಾದ ಪಡೆಯಲು ಬಯಸುವುದಾಗಿ ಅವರು ಹೇಳಿದರು.

ಸೇವಾ ಕೇಂದ್ರದ ಸಂಚಾಲಕಿ ಬಿ.ಕೆ. ಜಯಂತಿ ಅಕ್ಕ ಅವರು ಸ್ವಾಗತಿಸಿ ಅಭಿನಂದಿಸಿದರು. ಸ್ವಾತಂತ್ರ್ಯ ದಿನದ ಅಂಗವಾಗಿ ಆಂತರಿಕ ಸ್ವಾತಂತ್ರ್ಯದ ಮಹತ್ವದ ಕುರಿತು ಸಂದೇಶ ನೀಡಿದರು.

ನಂತರ ನೆರೆದಿದ್ದವರಿಗೆ ರಾಜಯೋಗ ಧ್ಯಾನದ ಅಭ್ಯಾಸ ಮಾಡಿಸಿ, ವ್ಯಸನಮುಕ್ತ ಜೀವನ ನಡೆಸುವ ಕುರಿತು ಪ್ರತಿಜ್ಞಾ ವಿಧಿ ಬೋಧಿಸಿದರು.

ಕಾರ್ಯಕ್ರಮದಲ್ಲಿ ಬಳ್ಳಾರಿಯ ಡಾ. ಶ್ರೀಮತಿ ವಿದ್ಯಾ, ಡಾ. ವೇಮನ್ ಸಾವಕಾರ್, ಜಿಲ್ಲಾಸ್ಪತ್ರೆಯ ಡಾ. ಗಿರೀಶ್ ನಾಗರಾಳ, ಆಂಜನೇಯ ಕಟಗಿ, ವರದರಾಜ್ ಹೆಬ್ಸೂರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಬಿ.ಕೆ. ರೇಖಾ ವಂದಿಸಿದರು.

ಮಹಿಳಾ ಶಿಕ್ಷಣದಿಂದ ಕುಟುಂಬದ ಪ್ರಗತಿ ಸಾಧ್ಯ: ಶಂಕರ ಹಲಗತ್ತಿ

0

ವಿಜಯಸಾಕ್ಷಿ ಸುದ್ದಿ, ಧಾರವಾಡ: ಶಿಕ್ಷಣ ಪ್ರತಿಯೊಬ್ಬ ಮನುಷ್ಯನ ಮೂಲಭೂತ ಹಕ್ಕಾಗಿದ್ದು, ಮಹಿಳಾ ಶಿಕ್ಷಣದಿಂದ ಕುಟುಂಬ, ಸಮಾಜ ಹಾಗೂ ದೇಶದ ಪ್ರಗತಿ ಸಾಧ್ಯ ಎಂದು ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಹೇಳಿದರು.

ನಗರದ ಶ್ರೀಮತಿ ಕಲ್ಲವ್ವ ಶಿವಪ್ಪಣ್ಣ ಜಿಗಳೂರ ಹಾಗೂ ಸುಶೀಲ ಮುರಿಗೆಪ್ಪ ಶೇಷಗಿರಿ ಪದವಿ ಮಹಾವಿದ್ಯಾಲಯದಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘದ ಶಿಕ್ಷಣ ಮಂಟಪದ ವತಿಯಿಂದ ಆಯೋಜಿಸಿದ್ದ ‘ಮಹಿಳೆ: ಶಿಕ್ಷಣ ಹಾಗೂ ಆರೋಗ್ಯ’ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

“ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ. ಶಿಕ್ಷಿತ ತಾಯಿ ಮಕ್ಕಳ ಭವಿಷ್ಯಕ್ಕೆ ಭದ್ರ ಬುನಾದಿ ಹಾಕುವುದರ ಜತೆಗೆ ಅವರ ಆರೋಗ್ಯ ಹಾಗೂ ಶಿಕ್ಷಣದ ಬಗ್ಗೆ ಸೂಕ್ತ ಕಾಳಜಿ ವಹಿಸಬಲ್ಲಳು. ಒಬ್ಬ ಪುರುಷ ಶಿಕ್ಷಣ ಪಡೆದರೆ ಒಬ್ಬ ವ್ಯಕ್ತಿ ಕಲಿತಂತಾಗುತ್ತದೆ; ಆದರೆ ಒಬ್ಬ ಮಹಿಳೆ ಶಿಕ್ಷಣ ಪಡೆದರೆ ಇಡೀ ಕುಟುಂಬವೇ ಸುಶಿಕ್ಷಿತವಾಗುತ್ತದೆ” ಎಂದು ಶಂಕರ ಹಲಗತ್ತಿ ಹೇಳಿದರು.

ಕೇವಲ ಪದವಿ ಪಡೆಯುವುದೇ ಶಿಕ್ಷಣದ ಅಂತಿಮ ಗುರಿಯಲ್ಲ. ಶಿಕ್ಷಣವೆಂದರೆ ವ್ಯಕ್ತಿಯೊಳಗಿನ ಅರಿವಿನ ವಿಸ್ತರಣೆ ಹಾಗೂ ಸಮಾಜದಲ್ಲಿ ಜವಾಬ್ದಾರಿಯುತವಾಗಿ ಬದುಕುವ ಕಲಿಕೆಯಾಗಬೇಕು. ಮಹಿಳಾ ಶಿಕ್ಷಣವು ಕುಟುಂಬದ ಅಭಿವೃದ್ಧಿಗೆ ಮಾತ್ರವಲ್ಲದೆ ಇಡೀ ಸಮಾಜದ ಪ್ರಗತಿಗೂ ಕಾರಣವಾಗುತ್ತದೆ ಎಂದರು.

ಪ್ರಸೂತಿ ಹಾಗೂ ಹೆರಿಗೆ ತಜ್ಞೆ ಡಾ. ಗೀತಾ ಭರತ್ ಉತ್ತೂರ ‘ಮಹಿಳೆ: ಶಿಕ್ಷಣ ಹಾಗೂ ಆರೋಗ್ಯ’ ವಿಷಯದ ಕುರಿತು ಉಪನ್ಯಾಸ ನೀಡಿ, ಕುಟುಂಬ ನಿರ್ವಹಣೆಯ ಒತ್ತಡದಲ್ಲಿ ಮಹಿಳೆಯರು ತಮ್ಮ ಆರೋಗ್ಯವನ್ನು ನಿರ್ಲಕ್ಷಿಸುತ್ತಿದ್ದಾರೆ. ಆರೋಗ್ಯವಾಗಿದ್ದಾಗ ಮಾತ್ರ ಜೀವನದಲ್ಲಿ ಸಾಧನೆ ಮಾಡಲು ಸಾಧ್ಯ ಎಂದರು.

“ಮಹಿಳೆಯರು ತಮ್ಮ ಆರೋಗ್ಯವನ್ನು ನಿರ್ಲಕ್ಷಿಸಬಾರದು. ರಕ್ತಹೀನತೆ, ಖಿನ್ನತೆ, ಸುಸ್ತು, ಥೈರಾಯ್ಡ್ ಸಮಸ್ಯೆ ಹಾಗೂ ಋತುಚಕ್ರದ ಅಸಮತೆಯಂತಹ ಸಮಸ್ಯೆಗಳು ಕಂಡುಬಂದರೆ ನಿರ್ಲಕ್ಷಿಸದೆ ಸೂಕ್ತ ಚಿಕಿತ್ಸೆ ಪಡೆಯಬೇಕು. ಸಮತೋಲನ ಆಹಾರ, ನಿಯಮಿತ ದೈಹಿಕ ಚಟುವಟಿಕೆ ಹಾಗೂ ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಅಗತ್ಯ” ಎಂದು ಸಲಹೆ ನೀಡಿದರು.

ವೇದಿಕೆಯಲ್ಲಿ ಆಡಳಿತ ಮಂಡಳಿ ಸದಸ್ಯ ಡಾ. ಜೆ.ಎಂ. ನಾಗಯ್ಯ ಹಾಗೂ ಆಡಳಿತಾಧಿಕಾರಿ ಎಸ್.ಕೆ. ಹೊಸಂಗಡಿ ಮಾತನಾಡಿದರು.

ಕಾಲೇಜಿನ ಪ್ರಾಚಾರ್ಯೆ ಪ್ರೊ. ರಾಜೇಶ್ವರಿ ಶೆಟ್ಟರ ಸ್ವಾಗತಿಸಿದರು. ಕ.ವಿ.ವ. ಸಂಘದ ಶಿಕ್ಷಣ ಮಂಟಪದ ಸಂಚಾಲಕ ವೀರಣ್ಣ ಒಡ್ಡೀನ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಅಶ್ವಿನಿ ಪಾಟೀಲ ಪರಿಚಯಿಸಿದರು. ಚೇತನ ಎಂ.ವ್ಹಿ. ನಿರೂಪಿಸಿದರು. ಡಾ. ದತ್ತಾ ಕಾಮಕರ ವಂದಿಸಿದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರು, ಉಪನ್ಯಾಸಕರು, ವಿಜಯಕುಮಾರ ಗಿಡ್ನವರ ದಂಪತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಯುವಕರ ಭವಿಷ್ಯಕ್ಕೆ ಶರಣರ ತತ್ವಗಳು ದಾರಿದೀಪ: ಅನ್ನದಾನೀಶ್ವರ ಶ್ರೀ

0

ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ: 12ನೇ ಶತಮಾನದ ಶಿವಶರಣರ ತತ್ವೋಪದೇಶಗಳು ಇಂದಿನ ಪೀಳಿಗೆಯ ಭವಿಷ್ಯ ರೂಪಿಸಲು ಸಹಕಾರಿಯಾಗಿದ್ದು, ಯುವಕರು ಶರಣರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಮುಂಡರಗಿ ಅನ್ನದಾನೀಶ್ವರ ಸಂಸ್ಥಾನಮಠದ ನಾಡೋಜ ಡಾ. ಅನ್ನದಾನೀಶ್ವರ ಮಹಾಸ್ವಾಮಿಗಳು ಹೇಳಿದರು.

ಲಕ್ಕುಂಡಿಯ ಅನ್ನದಾನೀಶ್ವರ ಶಾಖಾ ಮಠದಲ್ಲಿ ಶ್ರಾವಣ ಮಾಸದ ಅಂಗವಾಗಿ ಹಮ್ಮಿಕೊಂಡಿರುವ ಶರಣರ ತತ್ವ ಚಿಂತನೆ ಪ್ರವಚನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಹರ್ಲಾಪೂರ ಕೊಟ್ಟೂರೇಶ್ವರ ಮಠದ ಡಾ. ಕೊಟ್ಟೂರೇಶ್ವರ ಮಹಾಸ್ವಾಮಿಗಳು ಮಾತನಾಡಿ, ಆಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನದ ಯುಗದಲ್ಲಿ ನಿರ್ಮಾಣವಾಗುವ ಹಲವು ಸಿನಿಮಾಗಳು ಕೆಲವೇ ದಿನಗಳಲ್ಲಿ ಜನರ ನೆನಪಿನಿಂದ ಮರೆಯಾಗುತ್ತವೆ. ಆದರೆ 12ನೇ ಶತಮಾನದ ಶರಣರ ಜೀವನ ಚರಿತ್ರೆ, ಅವರು ನಡೆದ ದಾರಿ, ಮಾರ್ಗದರ್ಶನ, ನಿಸ್ವಾರ್ಥ ಸೇವೆ ಹಾಗೂ ಪ್ರಾಮಾಣಿಕತೆಯ ಕಥೆಗಳು ಇಂದಿಗೂ ಜನಮಾನಸದಲ್ಲಿ ಉಳಿದಿವೆ ಎಂದರು.

12ನೇ ಶತಮಾನದ ಶರಣರ ಜೀವನ ಚರಿತ್ರೆ, ಅವರು ನಡೆದು ಬಂದ ದಾರಿ, ಮಾರ್ಗದರ್ಶನ, ಅವರ ನಿಸ್ವಾರ್ಥ ಸೇವೆ ಹಾಗೂ ಪ್ರಾಮಾಣಿಕತೆಯ ಕಥೆಗಳು ಇಂದಿಗೂ ಜನಮಾನಸದಲ್ಲಿ ಉಳಿದುಕೊಂಡಿವೆ. ಈ ದಿಸೆಯಲ್ಲಿ ಪ್ರತಿಯೊಬ್ಬರೂ ಸಮಾಜಮುಖಿ ಕಾರ್ಯದಲ್ಲಿ ತೊಡಗಿಕೊಳ್ಳಬೇಕು ಎಂದು ಡಾ. ಕೊಟ್ಟೂರೇಶ್ವರ ಮಹಾಸ್ವಾಮಿಗಳು ಹೇಳಿದರು.

ನಿವೃತ್ತ ಯೋಧ ದತ್ತಾತ್ರೇಯ ಜೋಶಿ ಮಾತನಾಡಿ, ಸನಾತನ ಧರ್ಮದ ಪ್ರತಿಯೊಂದು ಧಾರ್ಮಿಕ ಆಚರಣೆಗೂ ವೈಜ್ಞಾನಿಕ ಹಿನ್ನೆಲೆ ಇದೆ. ಶ್ರಾವಣ ಮಾಸದ ಆಚರಣೆಗೂ ವಿಶೇಷ ಅರ್ಥವಿದ್ದು, ಶರಣರ ತತ್ವ ಚಿಂತನೆಯ ಪ್ರವಚನದ ಮೂಲಕ ಅದರ ಮಹತ್ವವನ್ನು ತಿಳಿದುಕೊಳ್ಳಬಹುದು ಎಂದರು.

ಅಂಜುಮನ್ ಇಸ್ಲಾಂ ಕಮಿಟಿ ಅಧ್ಯಕ್ಷ ನಜೀರಅಹ್ಮದ್ ಕಿರಿಟಗೇರಿ ಮಾತನಾಡಿ, ಇಂದಿನ ಯುವಕರು ಧಾರ್ಮಿಕ ಕಾರ್ಯಕ್ರಮಗಳಿಂದ ವಿಮುಖರಾಗಿ ದುಶ್ಚಟಗಳಿಗೆ ಬಲಿಯಾಗುತ್ತಿರುವುದು ವಿಷಾದನೀಯ ಎಂದರು.

ಗದಗದ ಡಾ. ಗಿರಿಜಾ ಹಸಬಿ ಅವರು ಪ್ರವಚನ ಆರಂಭಿಸಿದರು. ಷಡಕ್ಷರಯ್ಯ ಬದ್ನಿಮಠ ಹಾಗೂ ವೀರಣ್ಣ ಕರಿಯಲ್ಲಪ್ಪನವರ ಸಂಗೀತ ಸೇವೆ ಸಲ್ಲಿಸಿದರು.

ಶಂಕ್ರಯ್ಯ ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ. ಮಾಜಿ ಸದಸ್ಯ ಎಸ್.ಬಿ. ಕಲಕೇರಿ, ಗ್ರಾ.ಪಂ. ಮಾಜಿ ಸದಸ್ಯ ಬಸವರಾಜ ಯಲಿಶಿರುಂದ, ನಿವೃತ್ತ ಶಿಕ್ಷಕ ಅಶೋಕ ಬೂದಿಹಾಳ, ವೀರಯ್ಯ ಗಂಧದ, ನಿಂಗಪ್ಪ ಗುಂಜಳ, ಬಸಪ್ಪ ರೇವಡಿ, ಅಶೋಕ ಕಣವಿ, ಗಂಗಾಧರ ತಿಮ್ಮಾಪೂರ ಹಾಗೂ ಸೇವಾ ಸಮಿತಿ ಅಧ್ಯಕ್ಷ ಮುತ್ತಪ್ಪ ನೋಟಗಾರ ವೇದಿಕೆಯಲ್ಲಿದ್ದರು.

ಬಸವರಾಜ ಕಣವಿ ಸ್ವಾಗತಿಸಿದರು. ಅಮರೇಶ ಕರೆಕಲ್ಲ ನಿರೂಪಿಸಿದರು. ಶಿವಯೋಗಿ ಡಿಗ್ಗಾವಿ ವಂದಿಸಿದರು.

“ಶರಣರು ತಾವು ನುಡಿದಂತೆ ನಡೆದು ಈ ಸಮಾಜಕ್ಕೆ ಇಂದಿಗೂ ಮಾದರಿಯಾಗಿದ್ದಾರೆ. ಅವರ ತತ್ವ, ನೀತಿ ಹಾಗೂ ಸಂಸ್ಕಾರಗಳು ಯುವಕರಿಗೆ ಸ್ಪೂರ್ತಿದಾಯಕವಾಗಿವೆ. ಶ್ರಾವಣ ಮಾಸದಲ್ಲಿ ಶರಣರ ತತ್ವ ಚಿಂತನೆ ಹಾಗೂ ಉಪದೇಶಗಳನ್ನು ಶ್ರವಣ ಮಾಡಬೇಕು.”

— ಡಾ. ಅನ್ನದಾನೀಶ್ವರ ಮಹಾಸ್ವಾಮಿಗಳು

ಅಂಕಕ್ಕಿಂತ ಕಲಿಕೆಯೇ ಮುಖ್ಯ: ಸಾಧಕ ವಿದ್ಯಾರ್ಥಿಗಳಿಗೆ ‘ಈ ವಾರದ ತಾರೆಗಳು’ ಗೌರವ

0

ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಆನಂದ ಆಶ್ರಮ ರಸ್ತೆಯಲ್ಲಿರುವ ಪ್ರಕಲ್ಪ ಹಿರಿಯ ಪ್ರಾಥಮಿಕ ಆಂಗ್ಲ ಮಾಧ್ಯಮ ಶಾಲೆಯಲ್ಲಿ 3ನೇ ಸಾಪ್ತಾಹಿಕ ಪರೀಕ್ಷೆಯ ಫಲಿತಾಂಶ ಪ್ರಕಟಿಸಲಾಯಿತು.

ವಿದ್ಯಾರ್ಥಿಗಳಲ್ಲಿ ಕಲಿಕೆಯ ಆಸಕ್ತಿ ಹಾಗೂ ಆತ್ಮವಿಶ್ವಾಸ ಹೆಚ್ಚಿಸುವ ಉದ್ದೇಶದಿಂದ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ‘ಈ ವಾರದ ತಾರೆಗಳು’ ಎಂದು ಗುರುತಿಸಿ ಪ್ರೋತ್ಸಾಹಿಸಲಾಯಿತು.

ಅಂಕಗಳಿಗಿಂತ ಕಲಿಕೆಯೇ ಹೆಚ್ಚು ಮುಖ್ಯವಾಗಿದ್ದು, ವಿದ್ಯಾರ್ಥಿಗಳು ನಿರಂತರವಾಗಿ ತಮ್ಮ ಸಾಮರ್ಥ್ಯವನ್ನು ಸುಧಾರಿಸಿಕೊಳ್ಳುವುದೇ ನಿಜವಾದ ಯಶಸ್ಸು ಎಂಬ ಸಂದೇಶವನ್ನು ಈ ಸಂದರ್ಭದಲ್ಲಿ ನೀಡಲಾಯಿತು. ಪರೀಕ್ಷೆಯ ಫಲಿತಾಂಶವನ್ನು ವಿದ್ಯಾರ್ಥಿಗಳ ಪ್ರಗತಿಯನ್ನು ಗುರುತಿಸುವ ಹಾಗೂ ಮುಂದಿನ ಸಾಧನೆಗೆ ಪ್ರೇರೇಪಿಸುವ ಸಾಧನವಾಗಿ ಬಳಸಲಾಯಿತು.

ವಿದ್ಯಾರ್ಥಿಗಳ ಸಾಧನೆಗೆ ಶಾಲೆಯ ಶಿಕ್ಷಕರ ಮಾರ್ಗದರ್ಶನ ಹಾಗೂ ಪ್ರೋತ್ಸಾಹವೂ ಪ್ರಮುಖ ಪಾತ್ರ ವಹಿಸಿತು. ಮುಕ್ತಾ ಭಜಂತ್ರಿ, ಪುಷ್ಪಾ ಮೇಗೇರಿ, ನಜಿಯಾ ಎನ್.ಎ. ಅಲಡ್ಕಟ್ಟಿ, ಪರ್ವೀನ್ ಉಕ್ಕಳ್ಳಿ, ಹೀನಾ, ಸುರೇಖಾ, ಶೋಭಾ, ತೇಜಶ್ವಿನಿ ಹಾಗೂ ಅನುಪಮಾ ಸೇರಿದಂತೆ ಶಿಕ್ಷಕರು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು.

ವಿದ್ಯಾರ್ಥಿಗಳು ತಮ್ಮ ಫಲಿತಾಂಶದಿಂದ ಆತ್ಮವಿಶ್ವಾಸ ಪಡೆದು ಮುಂದಿನ ಪರೀಕ್ಷೆಗಳಲ್ಲಿ ಇನ್ನಷ್ಟು ಉತ್ತಮ ಸಾಧನೆ ಮಾಡುವಂತೆ ಶಿಕ್ಷಕರು ಹುರಿದುಂಬಿಸಿದರು.

ಕಳಸಾಪುರ–ನಾಗಾವಿಯಲ್ಲಿ ಅಕ್ರಮ ಗಣಿಗಾರಿಕೆ ಅಬ್ಬರ: ಕಡಿವಾಣಕ್ಕೆ ಜೈ ಭೀಮ್ ಸಮಿತಿ ಆಗ್ರಹ

0

ವಿಜಯಸಾಕ್ಷಿ ಸುದ್ದಿ, ಗದಗ: ತಾಲೂಕಿನ ಕಳಸಾಪುರ ಹಾಗೂ ನಾಗಾವಿ ಸುತ್ತಮುತ್ತಲಿನ ಗುಡ್ಡಗಾಡು ಪ್ರದೇಶಗಳಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ಮತ್ತು ಮೊರಂ ಲೂಟಿಯನ್ನು ತಕ್ಷಣ ತಡೆಗಟ್ಟುವಂತೆ ಆಗ್ರಹಿಸಿ ಜೈ ಭೀಮ್ ರಾಜ್ಯ ಸಂಘರ್ಷ ಸಮಿತಿ ವತಿಯಿಂದ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಭೂವಿಜ್ಞಾನಿಗಳಿಗೆ ಮನವಿ ಸಲ್ಲಿಸಲಾಯಿತು.

ಕಳಸಾಪುರ–ನಾಗಾವಿ ಭಾಗದಲ್ಲಿ ರಾಜಾರೋಷವಾಗಿ ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದು, ಇದರಿಂದ ನೈಸರ್ಗಿಕ ಸಂಪತ್ತು ನಾಶವಾಗುವುದರ ಜತೆಗೆ ವನ್ಯಜೀವಿಗಳ ಆವಾಸಸ್ಥಾನಕ್ಕೂ ಧಕ್ಕೆಯಾಗುತ್ತಿದೆ. ಹಗಲು-ರಾತ್ರಿ ಭಾರಿ ವಾಹನಗಳು ಅತಿವೇಗ ಹಾಗೂ ಕರ್ಕಶ ಶಬ್ದದೊಂದಿಗೆ ಸಂಚರಿಸುತ್ತಿರುವುದರಿಂದ ಧೂಳಿನ ಮಾಲಿನ್ಯ ಉಂಟಾಗಿ ಮಕ್ಕಳು, ವೃದ್ಧರು ಸೇರಿದಂತೆ ಸಾರ್ವಜನಿಕರ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತಿದೆ ಎಂದು ಸಮಿತಿ ಆರೋಪಿಸಿದೆ.

ಅಕ್ರಮ ಗಣಿಗಾರಿಕೆ ಕುರಿತು ಮಾಹಿತಿ ಇದ್ದರೂ ಸಂಬಂಧಪಟ್ಟ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಕೆಲ ಅಧಿಕಾರಿಗಳು ಹಾಗೂ ಹೊರಗುತ್ತಿಗೆ ಸಿಬ್ಬಂದಿ ದಂಧೆಕೋರರೊಂದಿಗೆ ಶಾಮೀಲಾಗಿರುವ ಶಂಕೆಯಿದ್ದು, ಅಕ್ರಮವಾಗಿ ಸಂಚರಿಸುವ ವಾಹನಗಳಿಗೆ ನಾಮಕಾವಸ್ಥೆ ದಂಡ ವಿಧಿಸಿ ಬಿಡಲಾಗುತ್ತಿದೆ ಎಂದು ಸಮಿತಿ ದೂರಿದೆ.

ಕಳಸಾಪುರ–ನಾಗಾವಿ ಸುತ್ತಮುತ್ತಲಿನ ಅಕ್ರಮ ಗಣಿಗಾರಿಕೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಬೇಕು. ಕರ್ತವ್ಯಲೋಪ ಎಸಗಿದ ಹಾಗೂ ಅಕ್ರಮಕ್ಕೆ ಸಾಥ್ ನೀಡಿದ ಅಧಿಕಾರಿಗಳು, ಸಿಬ್ಬಂದಿ ವಿರುದ್ಧ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು. ಅಕ್ರಮ ಗಣಿಗಾರಿಕೆಗೆ ಬಳಸುತ್ತಿರುವ ಜೆಸಿಬಿ, ಹಿಟಾಚಿ ಹಾಗೂ ಟಿಪ್ಪರ್‌ಗಳನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು. ಅಕ್ರಮದಲ್ಲಿ ತೊಡಗಿರುವ ವ್ಯಕ್ತಿಗಳು, ಜಮೀನು ಹಾಗೂ ವಾಹನ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಸಮಿತಿ ಆಗ್ರಹಿಸಿದೆ.

ಈ ಸಂದರ್ಭದಲ್ಲಿ ಸಮಿತಿಯ ಉಪಾಧ್ಯಕ್ಷ ಮಂಜುನಾಥ ಎಫ್. ತೌಜಲ್, ರೋಣ ತಾಲೂಕು ಅಧ್ಯಕ್ಷ ಬಸವರಾಜ ಬದಾಮಿ, ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ರಾಷ್ಟ್ರಿನ್ ಜೋಸೆಫ್, ರಾಜೇಶ ವಿ. ಶೆಟ್ಟರ್, ಇಮಾಮಹುಸೇನ್ ಕುನ್ನಿಬಾವಿ, ಸಮೀರಅಹ್ಮದ್ ಕುನ್ನಿಬಾವಿ, ಬಾಬು ಬಳ್ಳಾರಿ, ಮಂಜುನಾಥ ಸಂದಿಮನಿ, ಪ್ರೇಮಕುಮಾರ ಹುಬ್ಬಳ್ಳಿ, ಮಂಜುನಾಥ ಸುಂಕದ, ಶ್ರೀಕಾಂತ ಹಲವಾಗಲಿ, ಹೇಮಂತ ಹುಬ್ಬಳ್ಳಿ, ವಿರುಪಾಕ್ಷ ಗೌಡರ, ಗಿರೀಶ ಚಳಗೇರಿ, ರಫೀಕ ನವಲಗುಂದ, ಫರದೀನ ಕಾಟಾಪುರ ಹಾಗೂ ಮಲ್ಲೇಶ ಮೇಳದಾಳಮಠ ಉಪಸ್ಥಿತರಿದ್ದರು.

“ಅಕ್ರಮ ಗಣಿಗಾರಿಕೆಗೆ ಕೂಡಲೇ ಕಡಿವಾಣ ಹಾಕಬೇಕು. ಇಲ್ಲವಾದರೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಾಗೂ ಜಿಲ್ಲಾಧಿಕಾರಿ ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ಸೇರಿದಂತೆ ಉಗ್ರ ಹೋರಾಟ ನಡೆಸಲಾಗುವುದು.”

— ಗಣೇಶ್ ಹುಬ್ಬಳ್ಳಿ, ಜೈ ಭೀಮ್ ರಾಜ್ಯ ಸಂಘರ್ಷ ಸಮಿತಿ ಅಧ್ಯಕ್ಷ

ಶ್ರಮಿಕರ ಬದುಕಿಗೆ ಹೊಸ ಬಲ ನೀಡಿದ ಕೆ.ಎಚ್. ಪಾಟೀಲರ ಕನಸು

0

ವಿಜಯಸಾಕ್ಷಿ ಸುದ್ದಿ, ಗದಗ: ರೈತರು, ಕೃಷಿ ಕೂಲಿ ಕಾರ್ಮಿಕರು ಸೇರಿದಂತೆ ಶ್ರಮಿಕ ವರ್ಗದ ಆರ್ಥಿಕ ಹಾಗೂ ಸಾಮಾಜಿಕ ಉನ್ನತಿಗಾಗಿ ಸದಾ ಚಿಂತಿಸಿದ ದಿ. ಕೆ.ಎಚ್. ಪಾಟೀಲ ಅವರ ಹೆಸರಿನಲ್ಲಿ ಶ್ರಮಿಕರ ದುಡಿಮೆಯ ಸ್ಥಳವಾದ ಅಟೋನಗರ ನಿರ್ಮಾಣಗೊಂಡಿರುವುದು ಸಂತಸದ ಸಂಗತಿ ಎಂದು ಶಾಸಕ ಎಚ್.ಕೆ. ಪಾಟೀಲ ಹೇಳಿದರು.

ಹುಬ್ಬಳ್ಳಿ ರಸ್ತೆಯ ಕೆಇಬಿ ಗ್ರಿಡ್ ಬಳಿಯಲ್ಲಿ ಫೋರ್ ವ್ಹೀಲರ್ ಮೆಕ್ಯಾನಿಕಲ್ ಹಾಗೂ ಬಾಡಿ ವರ್ಕ್ಸ್ ಅಸೋಸಿಯೇಶನ್ ವತಿಯಿಂದ ಆಯೋಜಿಸಿದ್ದ ಕೆ.ಎಚ್. ಪಾಟೀಲ ಅಟೋನಗರ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಅಟೋನಗರದ ನಿರ್ಮಾಣಕ್ಕೆ ಸಂಬಂಧಿಸಿದಂತೆ ತಾವು ನೀಡಿದ ಸಲಹೆ-ಸೂಚನೆಗಳನ್ನು ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಉತ್ತಮವಾಗಿ ಅನುಷ್ಠಾನಗೊಳಿಸಿದ್ದು, ನಿರ್ಮಿಸಿರುವ ಶೆಡ್‌ಗಳ ಕಾರ್ಯ ತೃಪ್ತಿಕರವಾಗಿದೆ. ಇನ್ನಷ್ಟು ಶ್ರಮಿಕರು ಇಲ್ಲಿ ತಮ್ಮ ಕಾರ್ಯಚಟುವಟಿಕೆ ನಡೆಸಲು ಆಸಕ್ತಿ ತೋರಿಸುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ಮಾರ್ಚ್ 16ರೊಳಗೆ ಸಂಘಕ್ಕೆ ಮತ್ತಷ್ಟು ಎರಡು ಎಕರೆ ಜಮೀನು ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿದರು.

ಹೆಸ್ಕಾಂ ಅಧ್ಯಕ್ಷ ಶಾಸಕ ಅಜ್ಜಂಪೀರ ಖಾದ್ರಿ ಮಾತನಾಡಿ, ಅಟೋನಗರದಲ್ಲಿ ಆರಂಭವಾಗಲಿರುವ ಕಾರ್ಮಿಕರ ಉದ್ದಿಮೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವಲ್ಲಿ ಯಾವುದೇ ತೊಂದರೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಹುಬ್ಬಳ್ಳಿ-ಧಾರವಾಡ ಮಾಜಿ ಮಹಾಪೌರ ಅನಿಲಕುಮಾರ ಪಾಟೀಲ, ಗದಗ-ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ ಬಬರ್ಚಿ, ಸಾದಿಕ ನರಗುಂದ, ರಜಾಕ ಡಂಕೇದ, ಬಿ.ಎಂ. ನದ್ದಿಮುಲ್ಲಾ, ನಿಂಗಪ್ಪ ಎಂಬತ್ನಾಳ, ಸಯ್ಯದ ಜಮೀರ ಖಾಜಿ, ಮಹಮ್ಮದ್ ರಫೀಕ ನವಲಗುಂದ, ಮೈನುದ್ದೀನ ನಾಗಡ, ಮಹಮ್ಮದ್ ಅಲಿ ಕಲೆಗಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

“ಕಾರ್ಮಿಕರ ಅಗತ್ಯಗಳನ್ನು ಗಮನಿಸಿ ಶಾಸಕ ಎಚ್.ಕೆ. ಪಾಟೀಲರು ನೀಡಿದ ಸಹಕಾರ ಹಾಗೂ ಅವಕಾಶವನ್ನು ಸದ್ಬಳಕೆ ಮಾಡಿಕೊಂಡು ಉತ್ತಮ ಬದುಕು ರೂಪಿಸಿಕೊಳ್ಳುತ್ತೇವೆ.”

— ಉಸ್ಮಾನ ಮಾಳೆಕೊಪ್ಪ, ಅಸೋಸಿಯೇಶನ್ ಅಧ್ಯಕ್ಷ

ವಿಶೇಷ ಮಕ್ಕಳೊಂದಿಗೆ ವಿಶ್ವ ಛಾಯಾಗ್ರಹಣ ದಿನಾಚರಣೆ: ಗದಗ ಛಾಯಾಗ್ರಾಹಕರಿಂದ ಅರ್ಥಪೂರ್ಣ ಸೇವೆ

0

ವಿಜಯಸಾಕ್ಷಿ ಸುದ್ದಿ, ಗದಗ: 187ನೇ ವಿಶ್ವ ಛಾಯಾಗ್ರಹಣ ದಿನಾಚರಣೆಯ ಅಂಗವಾಗಿ ಗದಗ ಜಿಲ್ಲಾ ಛಾಯಾಗ್ರಾಹಕ ಕ್ಷೇಮಾಭಿವೃದ್ಧಿ ಹಾಗೂ ವಿವಿಧೋದ್ದೇಶಗಳ ಸಂಘದ ವತಿಯಿಂದ ಬೆಟಗೇರಿಯ ಮಂಜು ಶಿಕ್ಷಣ ಸಂಸ್ಥೆಯ ಬುದ್ಧಿಮಾಂದ್ಯ ಮಕ್ಕಳ ಶಾಲೆಯಲ್ಲಿ ಅರ್ಥಪೂರ್ಣವಾಗಿ ಕಾರ್ಯಕ್ರಮ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಕ್ಯಾಮೆರಾದ ಪಿತಾಮಹ ಲೂಯಿಸ್ ಡಾಗ್ಯುರೆ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ, ಮಕ್ಕಳಿಗೆ ಬೆಳಗಿನ ಉಪಹಾರ ವಿತರಿಸಲಾಯಿತು.

ಮಂಜು ಶಿಕ್ಷಣ ಸಂಸ್ಥೆಯ ಚೇರ್ಮನ್ ಶಂಕರ ಸಿಂಗ ರಜಪೂತ ಮಾತನಾಡಿ, ಛಾಯಾಗ್ರಾಹಕರ ಸಂಘದ ವತಿಯಿಂದ ವಿಶೇಷ ಮಕ್ಕಳೊಂದಿಗೆ ವಿಶ್ವ ಛಾಯಾಗ್ರಹಣ ದಿನಾಚರಣೆ ಆಚರಿಸಿರುವುದು ಸಂತಸದ ಸಂಗತಿ ಎಂದರು.

ಗದಗ ಜಿಲ್ಲಾ ಛಾಯಾಗ್ರಾಹಕರ ಸಂಘದ ಜಿಲ್ಲಾಧ್ಯಕ್ಷ ಪವನ್ ಕೆ. ಮೆಹರವಾಡೆ ಮಾತನಾಡಿ, ಹುಟ್ಟುಹಬ್ಬ ಸೇರಿದಂತೆ ಖಾಸಗಿ ಕಾರ್ಯಕ್ರಮಗಳಿಗೆ ಅನಗತ್ಯವಾಗಿ ಹಣ ಖರ್ಚು ಮಾಡುವ ಬದಲು ಇಂತಹ ಸಂಸ್ಥೆಗಳಿಗೆ ಭೇಟಿ ನೀಡಿ ವಿಶೇಷ ಮಕ್ಕಳಿಗೆ ಕೈಲಾದಷ್ಟು ನೆರವು ನೀಡಬೇಕು. ಉಪಹಾರ ಅಥವಾ ಊಟದ ವ್ಯವಸ್ಥೆ ಮಾಡುವ ಮೂಲಕ ಸೇವಾ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸದಸ್ಯರಿಗೆ ಕರೆ ನೀಡಿದರು.

ಇದೇ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಪವನ್ ಕೆ. ಮೆಹರವಾಡೆ ಅವರ ಪುತ್ರಿಯ ಹುಟ್ಟುಹಬ್ಬವನ್ನು ಸಹ ಮಕ್ಕಳೊಂದಿಗೆ ಆಚರಿಸಲಾಯಿತು. ಮಕ್ಕಳೊಂದಿಗೆ ಹುಟ್ಟುಹಬ್ಬ ಆಚರಿಸಿದ್ದು ಕಾರ್ಯಕ್ರಮದ ವಿಶೇಷವಾಗಿತ್ತು.

ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ವೈಜನಾಥ ಕೌತಾಳ, ಗೌರವಾಧ್ಯಕ್ಷ ರಂಜಿತ್ ಬೇವಿನಕಟ್ಟಿ, ಕಾರ್ಯದರ್ಶಿ ಮಾದೇಗೌಡ ಸಂಕನಗೌಡ್ರು, ಕೆಪಿಎ ನಿರ್ದೇಶಕ ಮಂಜುನಾಥ ಲಕ್ಷಟ್ಟಿ ಹಾಗೂ ಸದಸ್ಯರಾದ ಸುರೇಶ್ ಮಿಸ್ಕಿನ್, ರಾಮು ಕಠಾರೆ, ರಾಜು ಬಾಕಳೆ, ಶಂಕರ್ ಬಾಕಳೆ, ಬಿಲಾಲ, ವೀರೇಶ್ ಗೌಡರ, ರವೀಂದ್ರ ಕೊಳ್ಳಿ, ಮಲ್ಲಿಕಾರ್ಜುನ ಬ್ಯಾಹಟ್ಟಿ, ದೀಪಕ್ ಬಾಕಳೆ, ನಾಗರಾಜ್ ಶಿದ್ಲಿಂಗ, ರವಿ ಬಳಿಗೇರ, ಬಾಬಣ್ಣ ಶಿದ್ಲಿಂಗ, ವಾದಿರಾಜ ಕುಲಕರ್ಣಿ, ಹನುಮಂತ, ಪ್ರಕಾಶ, ಚಿದಾನಂದ, ಮಂಜುನಾಥ ಮೆಹರವಾಡೆ, ತುಕಾರಾಂ ಪಾಂಡ್ರೆ, ಕೃಷ್ಣಾ ಪವಾರ ಹಾಗೂ ಶ್ರೀಧರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

೨೧ನೇ ಶತಮಾನದಲ್ಲೂ ಅಸಮಾನತೆ, ಮೌಢ್ಯ ಆಚರಣೆಗಳಿರುವುದು ವಿಷಾದನೀಯ: ಡಾ. ತೋಂಟದ ಶ್ರೀ

0

ವಿಜಯಸಾಕ್ಷಿ ಸುದ್ದಿ, ಗದಗ: ವಿಜ್ಞಾನ, ತಂತ್ರಜ್ಞಾನ ಹಾಗೂ ಶಿಕ್ಷಣ ಕ್ಷೇತ್ರಗಳಲ್ಲಿ ಭಾರತ ಜಾಗತಿಕ ಮಟ್ಟದಲ್ಲಿ ಬೆಳವಣಿಗೆ ಸಾಧಿಸಿದ್ದರೂ, ಆಧುನಿಕ ಯುಗದಲ್ಲಿಯೂ ಅಸಮಾನತೆ ಮತ್ತು ಮೌಢ್ಯ ಆಚರಣೆಗಳು ಸಮಾಜದಲ್ಲಿ ಬೇರೂರಿವೆ. ೨೧ನೇ ಶತಮಾನದಲ್ಲಿಯೂ ಸಮಾನತೆ ಸಾಧಿಸುವಲ್ಲಿ ನಾವು ವಿಫಲರಾಗಿರುವುದು ವಿಷಾದನೀಯ ಎಂದು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಹೇಳಿದರು.

ಲಿಂಗಾಯತ ಪ್ರಗತಿಶೀಲ ಸಂಘದ ವತಿಯಿಂದ ನಡೆದ ೨೮೧೧ನೇ ಶಿವಾನುಭವ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಮಹಾವೀರ, ಬುದ್ಧ, ಬಸವೇಶ್ವರ, ನಾರಾಯಣ ಗುರು, ಮಹಾತ್ಮ ಗಾಂಧೀಜಿ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಸೇರಿದಂತೆ ಅನೇಕ ದಾರ್ಶನಿಕರು ಮನುಷ್ಯರ ಮಧ್ಯೆ ಸಮಾನತೆ ತರಲು ಸಮಾಜೋಧಾರ್ಮಿಕ ಆಂದೋಲನ ನಡೆಸಿದ್ದಾರೆ. ಆದರೂ ಜಾತಿ, ಲಿಂಗ ಹಾಗೂ ವರ್ಣದ ತಾರತಮ್ಯ ಸಂಪೂರ್ಣವಾಗಿ ನಿರ್ಮೂಲನೆಯಾಗದಿರುವುದು ಖೇದಕರ ಎಂದರು.

ಪರುಶುರಾಮ ಎಸ್. ಇಳಿಗೇರ ಅವರು ಬರೆದ ‘ಸಮಾನತೆಯ ಹರಿಕಾರ ಬ್ರಹ್ಮಶ್ರೀ ನಾರಾಯಣ ಗುರುಗಳು’ ಕೃತಿಯನ್ನು ಇದೇ ಸಂದರ್ಭದಲ್ಲಿ ಲೋಕಾರ್ಪಣೆ ಮಾಡಲಾಯಿತು. ಕೃತಿಯ ಪರಿಚಯವನ್ನು ಪರುಶುರಾಮ ಇಳಗೇರ ಮಾಡಿದರು.

‘ಶರಣರು ಕಂಡ ಅನಾದಿ ಬಸವಣ್ಣ’ ವಿಷಯ ಕುರಿತು ಪ್ರವಚನ ನೀಡಿದ ಶರಣೆ ಗಿರಿಜಕ್ಕ ಧರ್ಮರೆಡ್ಡಿ, ಬಸವಣ್ಣನವರು ಭಕ್ತಿ ಹಾಗೂ ವಿನಯದ ಭಂಡಾರಿಯಾಗಿದ್ದರು. ಸಮಾಜಕ್ಕೆ ನಡೆ-ನುಡಿಯ ಮಾರ್ಗ ತೋರಿದ ಪರಮಾರಾಧ್ಯರಾಗಿದ್ದಾರೆ ಎಂದರು.

ಗದಗ ನಗರಸಭೆ ಮಾಜಿ ಉಪಾಧ್ಯಕ್ಷ ಶಂಕರ ಹಾನಗಲ್ಲ ಮಾತನಾಡಿ, ಲಿಂಗೈಕ್ಯ ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು ಶ್ರೀಮಠದಿಂದ ನಾರಾಯಣ ಗುರುಗಳ ಕುರಿತು ಪುರಾಣ ಕಾವ್ಯ ರಚನೆ ಮಾಡಿಸಿರುವುದು ಹೆಮ್ಮೆಯ ಸಂಗತಿ ಎಂದರು.

ಸಂಘದ ಮಾಜಿ ಅಧ್ಯಕ್ಷ ಗಂಗಾಧರ ಹಿರೇಮಠ ಹಾಗೂ ಅವರ ಪತ್ನಿಯನ್ನು ಸನ್ಮಾನಿಸಲಾಯಿತು.

ವಚನ ಸಂಗೀತವನ್ನು ಮೃತ್ಯುಂಜಯ ಹಿರೇಮಠ ಹಾಗೂ ಗುರುನಾಥ ಸುತಾರ, ಧರ್ಮಗ್ರಂಥ ಪಠಣವನ್ನು ಜೀವನ ನಟರಾಜ ಯಲ್ಬುರ್ಗಿ, ವಚನ ಚಿಂತನವನ್ನು ಮೇಘಾ ಮುದ್ದಿ ನೆರವೇರಿಸಿದರು. ಕರವೀರಯ್ಯ ಶೇಖರಯ್ಯ ಕೋರಿಮಠ ಪರಿವಾರದವರು ಹಾಗೂ ವಿನಾಯಕ ಮಾನ್ವಿ ದಾಸೋಹ ಸೇವೆ ಸಲ್ಲಿಸಿದರು.

ಸಂಘದ ಅಧ್ಯಕ್ಷ ಡಾ. ಉಮೇಶ ಪುರದ ಸ್ವಾಗತಿಸಿದರು. ಡಾ. ರಮೇಶ ಕಲ್ಲನಗೌಡರ ನಿರೂಪಿಸಿದರು. ಉಪಾಧ್ಯಕ್ಷ ಪ್ರಭು ಗಂಜಿಹಾಳ, ಸುರೇಖಾ ಪಿಳ್ಳಿ, ಕಾರ್ಯದರ್ಶಿ ಸಿದ್ಧರಾಮ ಪಟ್ಟೇದ, ಸಹಕಾರ್ಯದರ್ಶಿ ಪ್ರತಿಭಾ ಬಡ್ನಿ, ಕೋಶಾಧ್ಯಕ್ಷ ವೀರಣ್ಣ ಗೋಟಡಕಿ, ಕೆ.ಎಸ್. ಕೋರಿಮಠ, ಸೋಮಶೇಖರ ಪುರಾಣಿಮಠ, ಆದೇಶ ಅಂಗಡಿ ಸೇರಿದಂತೆ ಶ್ರೀಮಠದ ಸದ್ಭಕ್ತರು ಭಾಗವಹಿಸಿದ್ದರು.

“ಮನುಷ್ಯರ ಮಧ್ಯೆ ಸಮಾನತೆಯನ್ನು ತರಲು ಬಸವಣ್ಣನವರು ಇಷ್ಟಲಿಂಗವನ್ನು ನೀಡಿದರು. ಇಷ್ಟಲಿಂಗಧಾರಿಗಳಲ್ಲಿ ಮೇಲು-ಕೀಳು ಇಲ್ಲ ಎಂದು ಸಾರಿದರು. ಕೇರಳದಲ್ಲಿ ನಾರಾಯಣ ಗುರುಗಳು ಅಸಮಾನತೆಯನ್ನು ತೊಡೆದುಹಾಕಲು ಶ್ರಮಿಸಿ ಮಹಾ ಮಾನವತಾವಾದಿಯಾದರು. ‘ಸಮಾನತೆಯ ಹರಿಕಾರ ಬ್ರಹ್ಮಶ್ರೀ ನಾರಾಯಣ ಗುರುಗಳು’ ಕೃತಿಯನ್ನು ಎಲ್ಲರೂ ಓದಿ, ಅವರ ವಿಚಾರಗಳನ್ನು ಜೀವನದಲ್ಲಿ ಅನುಸರಿಸಬೇಕು.”

— ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು

ವಿಜೃಂಭಣೆಯಿಂದ ನಡೆದ ಶ್ರೀ ಚಂಗಳಾದೇವಿ ಮೂರ್ತಿ ಮೆರವಣಿಗೆ

0

ವಿಜಯಸಾಕ್ಷಿ ಸುದ್ದಿ, ಬೆಟಗೇರಿ: ಶ್ರಾವಣ ಮಾಸದ ಪ್ರಯುಕ್ತ ಬೆಟಗೇರಿ ವಾರ್ಡ್ ನಂ.7ರ ಹೆಳವಿ ಓಣಿಯ ಆರಾಧ್ಯ ದೈವ ಶ್ರೀ ಚಂಗಳಾದೇವಿ ಮೂರ್ತಿ ಮೆರವಣಿಗೆ ಸೋಮವಾರ ವಿಜೃಂಭಣೆಯಿಂದ ನಡೆಯಿತು.

ಶ್ರೀ ಚಂಗಳಾದೇವಿ ಮೂರ್ತಿಗೆ ಬಣ್ಣ ಹಚ್ಚಿಸಿ ವಿಶೇಷ ಅಲಂಕಾರ ಮಾಡಲಾಗಿತ್ತು. ಬಳಿಕ 101 ಪೂರ್ಣಕುಂಭ ಹಾಗೂ ವಿವಿಧ ವಾದ್ಯಮೇಳಗಳೊಂದಿಗೆ ಕನ್ಯಾಳ ಅಗಸಿಯ ದೂಳಿಕಟ್ಟಿ ಶ್ರೀ ಮಾರುತಿ ದೇವಸ್ಥಾನದಿಂದ ಮಧ್ಯಾಹ್ನ 12.30ಕ್ಕೆ ಮೆರವಣಿಗೆ ಆರಂಭವಾಯಿತು.

ಮೆರವಣಿಗೆಯು ಗಾರ್ಗಿಪೇಟೆ, ಒಕ್ಕಲಗೇರಿ ಓಣಿ, ಕುರಹಟ್ಟಿ ಪೇಟೆ, ಶ್ರೀ ಮೈಲಾರಲಿಂಗೇಶ್ವರ ದೇವಸ್ಥಾನ, ಶ್ರೀ ವೀರಭದ್ರೇಶ್ವರ ದೇವಸ್ಥಾನ ಹಾಗೂ ಬೇಲೇರಿ ಓಣಿ ಮಾರ್ಗವಾಗಿ ಸಾಗಿ ಮರಳಿ ಹೆಳವಿ ಓಣಿಯ ದೈವದ ಮನೆಗೆ ತಲುಪಿ ಮುಕ್ತಾಯಗೊಂಡಿತು.

ಮೆರವಣಿಗೆಯುದ್ದಕ್ಕೂ ಭಕ್ತರು ಶ್ರದ್ಧಾಭಕ್ತಿಯಿಂದ ಪಾಲ್ಗೊಂಡು ದೇವಿಯ ದರ್ಶನ ಪಡೆದು ಪೂಜೆ ಸಲ್ಲಿಸಿದರು. ಓಣಿಯ ಮಹಿಳೆಯರು, ಯುವಕರು ಹಾಗೂ ಮಕ್ಕಳು ಸೇರಿದಂತೆ ನೂರಾರು ಜನರು ಸಂಭ್ರಮದಿಂದ ಪಾಲ್ಗೊಂಡಿದ್ದರು.

ಕಾರ್ಯಕ್ರಮದ ಅಂಗವಾಗಿ ಸಂಜೆ, ಮೆರವಣಿಗೆ ಹಾಗೂ ಧಾರ್ಮಿಕ ಕಾರ್ಯಕ್ರಮಕ್ಕೆ ತನು-ಮನ-ಧನದಿಂದ ಸಹಕಾರ ನೀಡಿದ ದಾನಿಗಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮಕ್ಕೆ ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರುಡಗಿ ಹಾಗೂ ವಾರ್ಡ್ ನಂ.7ರ ನಗರಸಭಾ ಸದಸ್ಯ ರಾಘವೇಂದ್ರ ಯಳವತ್ತಿ ವಿಶೇಷ ಅತಿಥಿಗಳಾಗಿ ಆಗಮಿಸಿದ್ದರು.

ಓಣಿಯ ಗುರು-ಹಿರಿಯರು, ಯುವಕರು, ಮಹಿಳೆಯರು ಹಾಗೂ ಮಕ್ಕಳು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.