Home Blog

ಶಿವಶಂಕರಪ್ಪ ಅಮಾನತು ರದ್ದುಗೊಳಿಸಿದ ಹೈಕೋರ್ಟ್: 7 ದಿನದಲ್ಲಿ ಮರುನೇಮಕಕ್ಕೆ ಆದೇಶ

0

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ ನೇಮಕಾತಿಯಲ್ಲಿ ಭ್ರಷ್ಟಾಚಾರ ಆರೋಪ ಹಾಗೂ ಜಾರಿ ನಿರ್ದೇಶನಾಲಯದ ತನಿಖೆಯ ನಡುವೆಯೇ, ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಅವರಿಗೆ ಹೈಕೋರ್ಟ್‌ನಿಂದ ದೊಡ್ಡ ರಿಲೀಫ್ ಸಿಕ್ಕಿದೆ. ರಾಜ್ಯಪಾಲರು ಹೊರಡಿಸಿದ್ದ ಅಮಾನತು ಆದೇಶವನ್ನು ಹೈಕೋರ್ಟ್ ಏಕಸದಸ್ಯ ಪೀಠ ರದ್ದುಗೊಳಿಸಿದೆ.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಹೈಕೋರ್ಟ್ ಪೀಠ, ನಿಯಮಾವಳಿಗಳ ಉಲ್ಲಂಘನೆಯಾಗಿದೆ ಎಂದು ಅಭಿಪ್ರಾಯಪಟ್ಟಿದೆ. ಕೆಪಿಎಸ್‌ಸಿ ಅಧ್ಯಕ್ಷರನ್ನು ಅಮಾನತುಗೊಳಿಸುವಂತೆ ರಾಜ್ಯ ಸಚಿವ ಸಂಪುಟ ಯಾವುದೇ ಸಲಹೆ ಅಥವಾ ಶಿಫಾರಸು ಮಾಡಿರಲಿಲ್ಲ. ಸಂವಿಧಾನಬದ್ಧವಾಗಿ ರಾಜ್ಯಪಾಲರು ಸಚಿವ ಸಂಪುಟದ ತೀರ್ಮಾನವನ್ನಷ್ಟೇ ಅನುಸರಿಸಬೇಕಿರುತ್ತದೆ. ಆದರೆ ಈ ಪ್ರಕ್ರಿಯೆಯನ್ನು ಉಲ್ಲಂಘಿಸಿ ಆದೇಶ ಹೊರಡಿಸಲಾಗಿದೆ ಎಂದು ನ್ಯಾಯಪೀಠ ತಿಳಿಸಿದೆ.

ಜುಲೈ 10ರಂದು ರಾಜ್ಯಪಾಲರು ಹೊರಡಿಸಿದ್ದ ಅಮಾನತು ಆದೇಶವನ್ನು ರದ್ದುಪಡಿಸಿರುವ ಹೈಕೋರ್ಟ್, ಮುಂದಿನ 7 ದಿನಗಳ ಒಳಗೆ ಶಿವಶಂಕರಪ್ಪ ಸಾಹುಕಾರ್ ಅವರನ್ನು ಕೆಪಿಎಸ್‌ಸಿ ಅಧ್ಯಕ್ಷರನ್ನಾಗಿ ಮರುನೇಮಕ ಮಾಡುವಂತೆ ಆದೇಶಿಸಿದೆ. ಆದರೆ, ತಮ್ಮ ಪುತ್ರಿಯ ನೇಮಕಾತಿಗೆ ಸಂಬಂಧಿಸಿದ ಯಾವುದೇ ಆಡಳಿತಾತ್ಮಕ ಪ್ರಕ್ರಿಯೆ ಅಥವಾ ನಿರ್ಣಯಗಳಲ್ಲಿ ಭಾಗಿಯಾಗಬಾರದು, ಯಾವುದೇ ತೀರ್ಮಾನ ತೆಗೆದುಕೊಳ್ಳಬಾರದು ಎಂದು ನಿರ್ಬಂಧ ವಿಧಿಸಿದೆ.

ಕೆಪಿಎಸ್‌ಸಿ ಅಧ್ಯಕ್ಷರ ವಿರುದ್ಧ ಕೇಳಿಬಂದಿರುವ ಭ್ರಷ್ಟಾಚಾರ ಆರೋಪಗಳ ಸರಿ-ತಪ್ಪುಗಳ ಬಗ್ಗೆ ತಾನು ಯಾವುದೇ ತೀರ್ಮಾನ ನೀಡಿಲ್ಲ, ಅಮಾನತು ಪ್ರಕ್ರಿಯೆಗೆ ಸಂಬಂಧಿಸಿದಂತೆ ಮಾತ್ರ ಈ ಆದೇಶ ಪ್ರಕಟಿಸಲಾಗಿದೆ ಎಂದು ಹೈಕೋರ್ಟ್ ಏಕಸದಸ್ಯ ಪೀಠ ಸ್ಪಷ್ಟಪಡಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಹಂತದಲ್ಲೂ ಯಾರ ಮೇಲೂ ಪ್ರಭಾವ ಬೀರಲು ಪ್ರಯತ್ನಿಸಬಾರದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

ಅಮಾನತು ಪ್ರಕ್ರಿಯೆಯಲ್ಲಿದ್ದ ಲೋಪದ ಹಿನ್ನೆಲೆಯಲ್ಲಿ ಈ ಆದೇಶ ನೀಡಲಾಗಿದೆಯೇ ಹೊರತು, ಆರೋಪಗಳಿಗೆ ಸಂಬಂಧಿಸಿದಂತೆ ಸಕ್ಷಮ ಪ್ರಾಧಿಕಾರವು ಕಾನೂನು ಪ್ರಕಾರ ಅಗತ್ಯ ಕ್ರಮ ಕೈಗೊಳ್ಳಲು ಸ್ವತಂತ್ರವಾಗಿದೆ ಎಂದು ಹೈಕೋರ್ಟ್ ಹೇಳಿದೆ. ಶಿವಶಂಕರಪ್ಪ ಪರವಾಗಿ ಹಿರಿಯ ವಕೀಲ ಅರುಣ್ ಶ್ಯಾಮ್ ವಾದ ಮಂಡಿಸಿ, ರಾಜ್ಯಪಾಲರ ನಿರ್ಧಾರ ಕಾನೂನುಬಾಹಿರ ಎಂದು ವಾದಿಸಿದ್ದರು.

ಹನೂರು ಶೂಟೌಟ್: ಮೃತರ ಕುಟುಂಬಕ್ಕೆ ತಲಾ 10 ಲಕ್ಷ ಪರಿಹಾರ ಘೋಷಿಸಿದ ತಮಿಳುನಾಡು

0

ಚೆನ್ನೈ: ಚಾಮರಾಜನಗರ ಜಿಲ್ಲೆಯ ಹನೂರಿನಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಗುಂಡೇಟಿಗೆ ಮೂವರು ಬಲಿಯಾದ ಘಟನೆಯನ್ನು ತಮಿಳುನಾಡು ಸಿಎಂ ವಿಜಯ್ ಖಂಡಿಸಿದ ಬೆನ್ನಲ್ಲೇ, ಮೃತ ಕುಟುಂಬಕ್ಕೆ ತಲಾ ₹10 ಲಕ್ಷ ಪರಿಹಾರವನ್ನು ನೆರೆ ರಾಜ್ಯದ ಸರ್ಕಾರ ಘೋಷಿಸಿದೆ.

ತಮಿಳುನಾಡು ವಿಧಾನಸಭೆಯಲ್ಲೂ ಹನೂರು ಶೂಟೌಟ್ ವಿಚಾರ ಪ್ರಸ್ತಾಪವಾಗಿದ್ದು, ಡಿಎಂಕೆ ಮತ್ತು ಎಐಡಿಎಂಕೆ ಮುಖಂಡರು ಈ ಬಗ್ಗೆ ಸದನದಲ್ಲಿ ಧ್ವನಿ ಎತ್ತಿದ್ದಾರೆ. ಮೃತರ ಕುಟುಂಬಗಳಿಗೆ ತಲಾ ₹10 ಲಕ್ಷ ಪರಿಹಾರ ನೀಡುವುದಾಗಿ ಅರಣ್ಯ ಸಚಿವ ರಂಜಿತ್ ಕುಮಾರ್ ಘೋಷಿಸಿದ್ದಾರೆ. ಜೊತೆಗೆ, ಕರ್ನಾಟಕ ಸರ್ಕಾರ ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂಬ ಆಗ್ರಹವೂ ಸದನದಲ್ಲಿ ವ್ಯಕ್ತವಾಗಿದೆ.

ಹನೂರಿನಲ್ಲಿ ನಡೆದಿರುವ ಘಟನೆ ಕುರಿತು ತಮಿಳುನಾಡು ವಿಧಾನಸಭೆಯಲ್ಲಿ ಭಾರಿ ಚರ್ಚೆಯಾಗಿದೆ. ಮೃತರೆಲ್ಲರೂ ತಮಿಳುನಾಡು ಮೂಲದವರಾಗಿದ್ದು, ಮೆಟ್ಟೂರು ಜಲಾಶಯ ನಿರ್ಮಾಣದ ಕಾರಣದಿಂದ ಹನೂರಿನಲ್ಲಿ ವಾಸವಿದ್ದರು ಎಂದು ಸದನದಲ್ಲಿ ಪ್ರಸ್ತಾಪವಾಗಿದೆ. ಅವರೆಲ್ಲ ತಮಿಳರಾಗಿದ್ದು, ಅವರ ರಕ್ಷಣೆಯಾಗಬೇಕು ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ. ಅರಣ್ಯಾಧಿಕಾರಿಗಳು ಬಿಡುಗಡೆ ಮಾಡಿದ್ದ ಫೋಟೋಗಳಲ್ಲಿ ಸ್ಟಿಕ್ಕರ್ ತೆಗೆಯದ ಹೊಸ ಚಪ್ಪಲಿ ಇರುವ ಬಗ್ಗೆಯೂ ಸದನದಲ್ಲಿ ಚರ್ಚೆಯಾಗಿದೆ. ಮೃತರ ಕುಟುಂಬಕ್ಕೆ ₹1 ಕೋಟಿ ಪರಿಹಾರ ನೀಡಬೇಕು ಮತ್ತು ಪ್ರಕರಣದ ಬಗ್ಗೆ ಸಿಬಿಐ ತನಿಖೆಯಾಗಬೇಕು ಎಂದು ಶಾಸಕರು ಆಗ್ರಹಿಸಿದ್ದಾರೆ.

ಮತ್ತೊಂದೆಡೆ, ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ತೋಮಿಯರ್‌ಪಾಳ್ಯಕ್ಕೆ ತಮಿಳುನಾಡಿನ ಮಾಜಿ ಶಾಸಕರ ತಂಡ ಭೇಟಿ ನೀಡಿದೆ. ತೋಮಿಯರ್‌ಪಾಳ್ಯದ ಚರ್ಚ್‌ನಲ್ಲಿ ಘಟನೆ ಸಂಬಂಧ ಸಭೆಯನ್ನೂ ನಡೆಸಲಾಗಿದೆ. ತಮಿಳರ ಹತ್ಯೆಯಾಗಿದೆ ಎಂದು ಉಲ್ಲೇಖಿಸಿ ಘಟನೆಯನ್ನು ಖಂಡಿಸಿ ತಮಿಳುನಾಡು ಸಿಎಂ ವಿಜಯ್ ಎಕ್ಸ್ ಪೋಸ್ಟ್ ಮಾಡಿದ್ದ ಬೆನ್ನಲ್ಲೇ ಈ ಮಹತ್ವದ ಬೆಳವಣಿಗೆಗಳು ನಡೆದಿವೆ.

ವಂದೇ ಮಾತರಂಗೆ ಕಾಂಗ್ರೆಸ್ ವಿರೋಧವಿಲ್ಲ, ಆದರೆ ಎರಡು ಪ್ಯಾರಾ ಮಾತ್ರ ಹಾಡುತ್ತೇವೆ: ಬಿ.ಕೆ. ಹರಿಪ್ರಸಾದ್

0

ನವದೆಹಲಿ: ಕಾಂಗ್ರೆಸ್ ಕಾರ್ಯಕ್ರಮಗಳಲ್ಲಿ ‘ವಂದೇ ಮಾತರಂ’ ಗೀತೆಯನ್ನು ಪೂರ್ಣವಾಗಿ ಹಾಡುವುದಿಲ್ಲ, ಬದಲಿಗೆ ಎರಡು ಪ್ಯಾರಾಗಳನ್ನಷ್ಟೇ ಹಾಡಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಸ್ಪಷ್ಟಪಡಿಸಿದ್ದಾರೆ.

ಸೋನಿಯಾ ಗಾಂಧಿ ಅವರು ವಂದೇ ಮಾತರಂಗೆ ಅಪಮಾನ ಮಾಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಪ್ರತಿಕ್ರಿಯಿಸಿದ ಹರಿಪ್ರಸಾದ್, ವಂದೇ ಮಾತರಂಗೆ ಕಾಂಗ್ರೆಸ್‌ನ ವಿರೋಧವಿಲ್ಲ ಎಂದು ಸ್ಪಷ್ಟಪಡಿಸಿದರು. ಬಂಕಿಮಚಂದ್ರ ಚಟರ್ಜಿ ಬರೆದಿರುವ ಗೀತೆಯ ಎರಡು ಪ್ಯಾರಾಗಳನ್ನು ಮಾತ್ರ ಕಾಂಗ್ರೆಸ್ ಕಾರ್ಯಕ್ರಮಗಳಲ್ಲಿ ಹಾಡಲಾಗುವುದು, ನೇಣು ಹಾಕಿದರೂ ಜೈಲಿಗೆ ಹಾಕಿದರೂ ಇದೇ ನಿಲುವು ಮುಂದುವರಿಯಲಿದೆ ಎಂದು ಅವರು ಹೇಳಿದರು.

ವಂದೇ ಮಾತರಂ ಅನ್ನು ಕಡ್ಡಾಯಗೊಳಿಸುವ ಮೂಲಕ ರಾಷ್ಟ್ರಗೀತೆ ‘ಜನಗಣಮನ’ವನ್ನು ಎರಡನೇ ದರ್ಜೆಗೆ ತರುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದ ಅವರು, ರಾಷ್ಟ್ರಗೀತೆ, ರಾಷ್ಟ್ರಧ್ವಜ ಹಾಗೂ ರಾಷ್ಟ್ರಚಿಹ್ನೆಗೆ ಬಿಜೆಪಿ ಮತ್ತು ಆರ್‌ಎಸ್‌ಎಸ್ ಅಪಮಾನ ಮಾಡಿದೆ ಎಂದು ಟೀಕಿಸಿದರು. ರಾಜ್ಯ ಸರ್ಕಾರದ ಕಾರ್ಯಕ್ರಮಗಳಲ್ಲಿ ಪೂರ್ಣ ಗೀತೆ ಹಾಡುವ ವಿಚಾರ ಆಯಾ ಸರ್ಕಾರಕ್ಕೆ ಬಿಟ್ಟಿದ್ದು, ಜನರಿಂದ ಆಯ್ಕೆಯಾದ ಸರ್ಕಾರ ಕಾನೂನು ಪಾಲಿಸಲಿ, ತಮ್ಮ ಆಕ್ಷೇಪ ಇಲ್ಲ ಎಂದು ಸ್ಪಷ್ಟಪಡಿಸಿದರು.

ಆರ್‌ಎಸ್‌ಎಸ್ ಹಾಗೂ ಹಿಂದೂ ಮಹಾಸಭಾದ ಚಟುವಟಿಕೆಗಳನ್ನು ಪ್ರಸ್ತಾಪಿಸಿದ ಹರಿಪ್ರಸಾದ್, ‘ಸದಾ ವತ್ಸಲೇ’ಯನ್ನು ರಾಷ್ಟ್ರಗೀತೆ ಎಂದು ಪರಿಗಣಿಸಬಹುದೇ ಎಂದು ಪ್ರಶ್ನಿಸಿದರು. ಆಜಾದ್ ಹಿಂದ್ ಜಿಂದಾಬಾದ್, ಇಂಕಲಾಬ್ ಜಿಂದಾಬಾದ್ ಘೋಷಣೆಗಳನ್ನು ಬಿಜೆಪಿಯವರು ಕೂಗುತ್ತಾರೆಯೇ ಎಂದು ಪ್ರಶ್ನಿಸಿದ ಅವರು, ವಂದೇ ಮಾತರಂ ವಿಚಾರವನ್ನು ಮುಂದಿಟ್ಟುಕೊಂಡು ದೇಶದಲ್ಲಿ ಸೌಹಾರ್ದತೆ ಹಾಳು ಮಾಡುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದರು.

ಸೋನಿಯಾ ಗಾಂಧಿ ವಿರುದ್ಧದ ಆರೋಪವನ್ನು ಆರ್‌ಎಸ್‌ಎಸ್‌ನ ಕುತಂತ್ರ ಎಂದು ಬಣ್ಣಿಸಿದ ಹರಿಪ್ರಸಾದ್, ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕುರ್ಚಿ ಕೇಳಿದವರು ಸೋನಿಯಾ ಗಾಂಧಿ ಎಂಬ ಆರೋಪಗಳ ಬಗ್ಗೆಯೂ ಪ್ರತಿಕ್ರಿಯಿಸಿದರು. 2024ಕ್ಕೂ ಮುನ್ನ ಸಂವಿಧಾನ ಬದಲಿಸಲು ಬಿಜೆಪಿ ಮುಂದಾಗಿತ್ತು, ಆದರೆ ಜನರು ಸೂಕ್ತ ಉತ್ತರ ನೀಡಿದ್ದಾರೆ ಎಂದು ಅವರು ಹೇಳಿದರು.

‘ಶಾರುಖ್ ನನ್ನ ಸ್ನೇಹಿತನಲ್ಲ, ಸಹೋದ್ಯೋಗಿ’: 16 ವರ್ಷಗಳ ಮೌನದ ಬಗ್ಗೆ ಸನ್ನಿ ಡಿಯೋಲ್ ಮಾತು

ಮುಂಬೈ: ಬಾಲಿವುಡ್‌ನ ಎರಡು ದೊಡ್ಡ ಹೆಸರುಗಳಾದ ಸನ್ನಿ ಡಿಯೋಲ್ ಮತ್ತು ಶಾರುಖ್ ಖಾನ್ ನಡುವಿನ ಹಳೆಯ ಸಂಘರ್ಷ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. 1993ರ ‘ಡರ್’ ಚಿತ್ರದ ಚಿತ್ರೀಕರಣದ ಸಂದರ್ಭದಲ್ಲಿ ಕ್ಲೈಮ್ಯಾಕ್ಸ್ ದೃಶ್ಯದ ವಿಚಾರವಾಗಿ ಇಬ್ಬರ ನಡುವೆ ದೊಡ್ಡ ಜಟಾಪಟಿ ನಡೆದಿತ್ತು. ಈ ವೇಳೆ ತೀವ್ರ ಕೋಪಗೊಂಡಿದ್ದ ಸನ್ನಿ ಡಿಯೋಲ್ ತಮ್ಮ ಕೈಗಳಿಂದಲೇ ಜೀನ್ಸ್ ಹರಿದುಕೊಂಡಿದ್ದಾಗಿ ಇದೀಗ ಹೇಳಿದ್ದಾರೆ.

ಇತ್ತೀಚಿನ ಸಂದರ್ಶನದಲ್ಲಿ ಈ ಘಟನೆಯ ಕುರಿತು ಮಾತನಾಡಿದ ಸನ್ನಿ, ಆ ಸಂದರ್ಭದಲ್ಲಿ ತಮ್ಮ ವಯಸ್ಸು ಕಡಿಮೆಯಾಗಿತ್ತು ಹಾಗೂ ನಟರಲ್ಲಿ ಕಂಡುಬರುವ ಅಭದ್ರತೆಯೂ ಸಂಘರ್ಷಕ್ಕೆ ಕಾರಣವಾಗಬಹುದು ಎಂದು ಹೇಳಿದ್ದಾರೆ.

ಅವರ ಪ್ರಕಾರ, ನಟರು ತಮ್ಮ ಪಾತ್ರದ ಮೇಲೆ ಮಾತ್ರ ಗಮನಹರಿಸಬೇಕು. ಆದರೆ ಪಾತ್ರಕ್ಕೆ ಸಿಗುವ ಪ್ರಾಮುಖ್ಯತೆ, ಪರದೆ ಮೇಲಿನ ಪ್ರಭಾವ ಸೇರಿದಂತೆ ಹಲವು ವಿಚಾರಗಳಲ್ಲಿ ಅಭದ್ರತೆ ಮೂಡಿದಾಗ ಅನಗತ್ಯ ಗೊಂದಲಗಳು ಸೃಷ್ಟಿಯಾಗುತ್ತವೆ.

‘ಡರ್’ನಲ್ಲಿ ಸನ್ನಿ ಡಿಯೋಲ್ ನಾಯಕನಾಗಿ ನಟಿಸಿದ್ದರೆ, ಶಾರುಖ್ ಖಾನ್ ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಆದರೆ ಶಾರುಖ್ ನಿರ್ವಹಿಸಿದ ಪಾತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ಸಿಕ್ಕಿದ್ದು ಸನ್ನಿ ಅವರ ಅಸಮಾಧಾನಕ್ಕೆ ಕಾರಣವಾಗಿತ್ತು. ಇದೇ ವಿಚಾರ ಕ್ಲೈಮ್ಯಾಕ್ಸ್ ದೃಶ್ಯದ ಸಂದರ್ಭದಲ್ಲಿ ದೊಡ್ಡ ವಿವಾದಕ್ಕೆ ತಿರುಗಿತ್ತು.

ಜಗಳದ ಬಳಿಕ ಇಬ್ಬರೂ ಸುಮಾರು 16 ವರ್ಷಗಳ ಕಾಲ ಪರಸ್ಪರ ಮಾತನಾಡಲಿಲ್ಲ. ಆದರೆ ತಾವು ಶಾರುಖ್ ಖಾನ್ ಅವರನ್ನು ಎಂದಿಗೂ ಶತ್ರುವಾಗಿ ನೋಡಿರಲಿಲ್ಲ ಎಂದು ಸನ್ನಿ ಸ್ಪಷ್ಟಪಡಿಸಿದ್ದಾರೆ.

ಇಂದಿನ ಸಂಬಂಧದ ಕುರಿತು ಮಾತನಾಡಿದ ಅವರು, “ಶಾರುಖ್ ಖಾನ್ ನನ್ನ ಸ್ನೇಹಿತನಲ್ಲ, ಅವರು ನನ್ನ ಸಹೋದ್ಯೋಗಿ” ಎಂಬ ನಿಲುವು ವ್ಯಕ್ತಪಡಿಸಿದ್ದಾರೆ. ಚಿತ್ರರಂಗದಲ್ಲಿ ಕೆಲಸ ಮಾಡುವವರನ್ನು ವೃತ್ತಿಪರ ಸಹೋದ್ಯೋಗಿಗಳಾಗಿ ನೋಡುವುದಾಗಿ ಹಾಗೂ ನಿಜವಾದ ಸ್ನೇಹ ಬಾಲ್ಯದಲ್ಲೇ ಸಿಗುತ್ತದೆ ಎಂದು ಹೇಳಿದ್ದಾರೆ.

ಸುಮಾರು ಒಂದೂವರೆ ದಶಕದ ಈ ಮೌನಕ್ಕೆ 2023ರಲ್ಲಿ ತೆರೆ ಬಿದ್ದಿತ್ತು. ಸನ್ನಿ ಡಿಯೋಲ್ ಅಭಿನಯದ ‘ಗದರ್ 2’ ಭರ್ಜರಿ ಯಶಸ್ಸು ಕಂಡ ಸಂದರ್ಭದಲ್ಲಿ ಇಬ್ಬರು ಮತ್ತೆ ಆತ್ಮೀಯವಾಗಿ ಭೇಟಿಯಾಗಿದ್ದರು. ಆ ಬಳಿಕ ‘ಡರ್’ ಕಾಲದ ವೈಮನಸ್ಸು ಕೊನೆಗೊಂಡಿತ್ತು.

ರಾಷ್ಟ್ರಗೀತೆ ಬದಲಾವಣೆಗೆ ಮುಖೇಶ್ ಖನ್ನಾ ಒತ್ತಾಯ: ‘ಜನ ಗಣ ಮನ’ ವಿರುದ್ಧ ನಟನ ವಿವಾದಾತ್ಮಕ ಹೇಳಿಕೆ

ಮುಂಬೈ: ರಾಷ್ಟ್ರಗೀತೆ ‘ಜನ ಗಣ ಮನ’ ಕುರಿತು ಬಾಲಿವುಡ್ ನಟ ಮುಖೇಶ್ ಖನ್ನಾ ನೀಡಿರುವ ಹೇಳಿಕೆ ಇದೀಗ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ‘ಜನ ಗಣ ಮನ’ ಬದಲಿಗೆ ‘ವಂದೇ ಮಾತರಂ’ ಅನ್ನು ಭಾರತದ ಅಧಿಕೃತ ರಾಷ್ಟ್ರಗೀತೆಯನ್ನಾಗಿ ಮಾಡಬೇಕು ಎಂದು ‘ಶಕ್ತಿಮಾನ್’ ಖ್ಯಾತಿಯ ನಟ ಆಗ್ರಹಿಸಿದ್ದಾರೆ.

ಸ್ವಾತಂತ್ರ್ಯ ಹೋರಾಟಗಾರರ ಸ್ಮರಣಾರ್ಥ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹೊಸ ದೇಶಭಕ್ತಿ ಗೀತೆ ‘ಆವೋ ಬಚ್ಚೋಂ’ ಬಿಡುಗಡೆ ಮಾಡಿದ ಸಂದರ್ಭದಲ್ಲಿ ನೀಡಿದ ಸಂದರ್ಶನದಲ್ಲಿ ಮುಖೇಶ್ ಖನ್ನಾ ಈ ಹೇಳಿಕೆ ನೀಡಿದ್ದಾರೆ.

‘ಜನ ಗಣ ಮನ’ ಭಾರತದ ನಿಜವಾದ ರಾಷ್ಟ್ರಗೀತೆಯಲ್ಲ ಎಂದು ಪ್ರತಿಪಾದಿಸಿರುವ ಅವರು, ಈ ಗೀತೆಯನ್ನು ರವೀಂದ್ರನಾಥ ಠಾಗೋರ್ ಅವರು ಬ್ರಿಟಿಷ್ ರಾಜಮನೆತನವನ್ನು ಹೊಗಳಲು ಬರೆದಿದ್ದರು ಎಂಬ ವಾದವನ್ನು ಮುಂದಿಟ್ಟಿದ್ದಾರೆ.

‘ವಂದೇ ಮಾತರಂ’ ಮಾತ್ರವೇ ಭಾರತದ ನಿಜವಾದ ರಾಷ್ಟ್ರಗೀತೆ ಆಗಬೇಕು ಎಂದು ಮುಖೇಶ್ ಖನ್ನಾ ಹೇಳಿದ್ದಾರೆ. ಲತಾ ಮಂಗೇಷ್ಕರ್ ಅವರ ಗಾಯನವನ್ನು ಉಲ್ಲೇಖಿಸಿ, ‘ವಂದೇ ಮಾತರಂ’ ಅತ್ಯಂತ ಸುಂದರವಾಗಿ ಮೂಡಿಬಂದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

‘ಜನ ಗಣ ಮನ’ವನ್ನು ದೇಶದಿಂದ ತೆಗೆದುಹಾಕಿ ‘ವಂದೇ ಮಾತರಂ’ ಅನ್ನು ಅಧಿಕೃತವಾಗಿ ಜಾರಿಗೆ ತರಬೇಕು. ಈ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕೆಲಸ ಮಾಡುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

ಶಾಲೆಗಳು ಮತ್ತು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ‘ವಂದೇ ಮಾತರಂ’ ಹಾಡಲಾಗುತ್ತಿದೆ ಎಂಬುದನ್ನೂ ಮುಖೇಶ್ ಖನ್ನಾ ಉಲ್ಲೇಖಿಸಿದ್ದಾರೆ.

ತಮ್ಮ ಹೇಳಿಕೆಗೆ ಮತ್ತಷ್ಟು ಬಲ ನೀಡುವಂತೆ ಮುಖೇಶ್ ಖನ್ನಾ, ತಾವು ಸುಮಾರು 7 ನಿಮಿಷಗಳ ಅವಧಿಯ ‘ವಂದೇ ಮಾತರಂ’ ಗೀತೆಯನ್ನು ಸ್ವತಃ ರೆಕಾರ್ಡ್ ಮಾಡಿರುವುದಾಗಿ ತಿಳಿಸಿದ್ದಾರೆ. ಈ ಗೀತೆಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ.

ನಟನ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ರಾಷ್ಟ್ರಗೀತೆ ಕುರಿತ ಅವರ ನಿಲುವಿನ ಬಗ್ಗೆ ವ್ಯಾಪಕ ಪರ-ವಿರೋಧದ ಚರ್ಚೆ ನಡೆಯುತ್ತಿದೆ.

ವಿಧಾನಪರಿಷತ್ ಉಪಸಭಾಪತಿಯಾಗಿ ಉಮಾಶ್ರೀ ಅವಿರೋಧ ಆಯ್ಕೆ

0

ಬೆಂಗಳೂರು: ವಿಧಾನಪರಿಷತ್‌ನ ತೆರವಾಗಿದ್ದ ಉಪಸಭಾಪತಿ ಸ್ಥಾನಕ್ಕೆ ಕಾಂಗ್ರೆಸ್‌ ಸದಸ್ಯೆ ಹಾಗೂ ಹಿರಿಯ ನಟಿ ಉಮಾಶ್ರೀ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಆಡಳಿತ ಪಕ್ಷಕ್ಕೆ ಬಹುಮತವಿದ್ದರೂ, ವಿಪಕ್ಷದಿಂದ ಯಾವುದೇ ನಾಮಪತ್ರ ಸಲ್ಲಿಕೆಯಾಗದ ಹಿನ್ನೆಲೆಯಲ್ಲಿ ಉಮಾಶ್ರೀ ಅವರ ಆಯ್ಕೆ ಅವಿರೋಧವಾಗಿ ನಡೆದಿದೆ.

ಈ ಹಿಂದೆ ಉಪಸಭಾಪತಿಯಾಗಿದ್ದ ಎಂ.ಕೆ. ಪ್ರಾಣೇಶ್ ಅವರು ರಾಜೀನಾಮೆ ನೀಡಿದ್ದರಿಂದ ಸ್ಥಾನ ತೆರವಾಗಿತ್ತು. ಈ ಸ್ಥಾನಕ್ಕೆ ಸೋಮವಾರ ಉಮಾಶ್ರೀ ಅವರು ನಾಮಪತ್ರ ಸಲ್ಲಿಸಿದ್ದರು.

ಸಭಾನಾಯಕ ಯತೀಂದ್ರ ಸಿದ್ದರಾಮಯ್ಯ ಅವರು ಉಮಾಶ್ರೀ ಅವರನ್ನು ಅಭಿನಂದಿಸಿ, ನಟನೆಯ ಮೂಲಕ ದೇಶದ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿರುವ ಅವರು ರಾಷ್ಟ್ರ ಹಾಗೂ ರಾಜ್ಯ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಚಿತ್ರರಂಗದ ಬಳಿಕ ರಾಜಕೀಯ ಪ್ರವೇಶಿಸಿ ಜನಸೇವೆಯಲ್ಲಿ ತೊಡಗಿಸಿಕೊಂಡಿದ್ದು, ಚುನಾವಣಾ ರಾಜಕಾರಣದಲ್ಲೂ ಸೋಲು-ಗೆಲುವುಗಳನ್ನು ಕಂಡಿದ್ದಾರೆ ಎಂದು ಹೇಳಿದರು.

2013ರಲ್ಲಿ ತೇರದಾಳ ಕ್ಷೇತ್ರದಿಂದ ಗೆದ್ದು ಮೊದಲ ಬಾರಿಗೆ ಸಚಿವರಾಗಿ ಕಾರ್ಯನಿರ್ವಹಿಸಿದ್ದ ಉಮಾಶ್ರೀ ಅವರು ಇದೀಗ ಮೇಲ್ಮನೆ ಉಪಸಭಾಪತಿಯಾಗಿ ಆಯ್ಕೆಯಾಗಿರುವುದು ಸಂತಸದ ವಿಚಾರ ಎಂದು ಯತೀಂದ್ರ ಸಿದ್ದರಾಮಯ್ಯ ಹೇಳಿದರು.

‘ಉಮಾಶ್ರೀ ಅಕ್ಕ ದಾರಿ ತಪ್ಪಲ್ಲ’: ಛಲವಾದಿ ನಾರಾಯಣಸ್ವಾಮಿ

ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಕೂಡ ಉಮಾಶ್ರೀ ಅವರನ್ನು ಅಭಿನಂದಿಸಿದರು. ರಾಜ್ಯ ಕಂಡ ಅತ್ಯುತ್ತಮ ನಟಿಯರಲ್ಲಿ ಒಬ್ಬರಾಗಿರುವ ಉಮಾಶ್ರೀ ಅವರು ಮೂರು ದಶಕಗಳಿಂದ ರಾಜಕೀಯದಲ್ಲೂ ಸಕ್ರಿಯರಾಗಿದ್ದಾರೆ ಎಂದರು.

“ಸಭಾಪತಿಗಳು ದಾರಿ ತಪ್ಪಿದರೂ ಉಮಾಶ್ರೀ ಅಕ್ಕ ದಾರಿ ತಪ್ಪಲ್ಲ. ಅವರು ಎಲ್ಲರಿಗೂ ನ್ಯಾಯ ಒದಗಿಸುತ್ತಾರೆ ಎಂಬ ವಿಶ್ವಾಸವಿದೆ” ಎಂದು ಅವರು ಹೇಳಿದರು.

ನಟನೆ ಹಾಗೂ ಜನಪ್ರಿಯತೆ ಉತ್ತುಂಗದಲ್ಲಿದ್ದ ಸಂದರ್ಭದಲ್ಲೇ ಉಮಾಶ್ರೀ ರಾಜಕೀಯಕ್ಕೆ ಬಂದರು. 1994ರಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಯಾಗುವ ಸಂದರ್ಭದಲ್ಲಿ ಎಸ್. ಬಂಗಾರಪ್ಪ ಅವರು ಅವರನ್ನು ಬೆಳೆಸುವಂತೆ ಸೂಚಿಸಿದ್ದರು ಎಂದು ಛಲವಾದಿ ನಾರಾಯಣಸ್ವಾಮಿ ನೆನಪಿಸಿಕೊಂಡರು.

ರಾಜಕೀಯ ಜೀವನದಲ್ಲಿ ಇಲ್ಲಿಯವರೆಗೆ ಯಾವುದೇ ರೀತಿಯ ಎಡವಟ್ಟು ಮಾಡಿಕೊಳ್ಳದೆ ಬಂದಿರುವ ಉಮಾಶ್ರೀ ಅವರ ಸಾಧನೆ ಗಮನಾರ್ಹ ಎಂದು ಅವರು ಶ್ಲಾಘಿಸಿದರು.

400ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟನೆ: ಬೋಜೇಗೌಡ

ಜೆಡಿಎಸ್ ಸದಸ್ಯ ಬೋಜೇಗೌಡ ಅವರು ಕೂಡ ಉಮಾಶ್ರೀ ಅವರನ್ನು ಅಭಿನಂದಿಸಿದರು. ಬಡತನದ ನಡುವೆಯೂ ಇಬ್ಬರು ಮಕ್ಕಳನ್ನು ಉತ್ತಮವಾಗಿ ಬೆಳೆಸಿ, ಒಬ್ಬರನ್ನು ವಕೀಲರನ್ನಾಗಿ ಹಾಗೂ ಮತ್ತೊಬ್ಬರನ್ನು ವೈದ್ಯರನ್ನಾಗಿ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಉಮಾಶ್ರೀ ಅವರು ತಮ್ಮ ನಟನಾ ಜೀವನದಲ್ಲಿ ಸುಮಾರು 400 ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ ಎಂದು ಹೇಳಿದ ಬೋಜೇಗೌಡ, ಹಿರಿಯ ಕಲಾವಿದರಾದ ಎನ್‌.ಎಸ್‌. ರಾವ್ ಸೇರಿದಂತೆ ಹಲವು ಪ್ರಮುಖ ನಟರೊಂದಿಗೆ ಕೆಲಸ ಮಾಡಿರುವ ಅವರ ಸಿನಿ ಬದುಕಿನ ಅನುಭವಗಳನ್ನು ಸ್ಮರಿಸಿದರು.

ಉಮಾಶ್ರೀ ಅವರು ಮೇಲ್ಮನೆ ಉಪಸಭಾಪತಿಯಾಗಿ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಅವರು ಶುಭ ಹಾರೈಸಿದರು.

ಹನೂರು ಎನ್ ಕೌಂಟರ್ ಪ್ರಕರಣಕ್ಕೆ ಜುಡಿಷಿಯಲ್ ತನಿಖೆ ನಡೆಸಿ; ಸತ್ಯಾಸತ್ಯತೆ ಬಹಿರಂಗಪಡಿಸಿ – ಬಿ.ವೈ. ವಿಜಯೇಂದ್ರ

0

ಬೆಂಗಳೂರು: ಚಾಮರಾಜನಗರ ಜಿಲ್ಲೆಯ ಹನೂರು ಬಳಿ ನಡೆದಿರುವ ಅರಣ್ಯ ಎನ್‌ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಸಮಗ್ರ, ನಿಷ್ಪಕ್ಷಪಾತ ಹಾಗೂ ಪಾರದರ್ಶಕ ತನಿಖೆ ನಡೆಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಗ್ರಹಿಸಿದ್ದಾರೆ. ಘಟನೆ ಕುರಿತು ಹಲವು ಅನುಮಾನಗಳು ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಕೇವಲ ಮ್ಯಾಜಿಸ್ಟ್ರೇಟ್ ತನಿಖೆಗೆ ಸೀಮಿತಗೊಳಿಸದೆ ಜುಡಿಷಿಯಲ್ ತನಿಖೆ ನಡೆಸಿ ಸತ್ಯಾಸತ್ಯತೆ ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದರು.

ತಮಿಳುನಾಡು ಮುಖ್ಯಮಂತ್ರಿ ಹಾಗೂ ಆರ್ಚ್ ಬಿಷಪ್ ಅವರು ಮೃತರ ಕುಟುಂಬಗಳಿಗೆ ಸರ್ಕಾರಿ ಉದ್ಯೋಗ ಹಾಗೂ ಪರಿಹಾರ ನೀಡುವಂತೆ ಮನವಿ ಮಾಡಿರುವ ಬಗ್ಗೆ ಪ್ರತಿಕ್ರಿಯಿಸಿದ ವಿಜಯೇಂದ್ರ, ಈ ವಿಚಾರಕ್ಕೆ ಜಾತಿ ಅಥವಾ ಧರ್ಮದ ಬಣ್ಣ ನೀಡುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟರು. ಮೃತರು ಯಾವುದೇ ಧರ್ಮಕ್ಕೆ ಸೇರಿದವರಾಗಿದ್ದರೂ ಮಾನವೀಯತೆಯೇ ಪರಿಹಾರ ಮತ್ತು ನ್ಯಾಯದ ಮಾನದಂಡವಾಗಬೇಕು ಎಂದು ಹೇಳಿದರು.

ಸದನದ ಆರಂಭದ ದಿನದಿಂದಲೂ ಬಿಜೆಪಿ ಮತ್ತು ಜೆಡಿಎಸ್ ಮೃತಪಟ್ಟ ಮೂವರು ಕುಟುಂಬಗಳಿಗೆ ತಲಾ ₹1 ಕೋಟಿ ಪರಿಹಾರ ಹಾಗೂ ಒಬ್ಬರಿಗೆ ಸರ್ಕಾರಿ ಉದ್ಯೋಗ ನೀಡಬೇಕೆಂದು ಒತ್ತಾಯಿಸುತ್ತಿವೆ ಎಂದ ಅವರು, ಅರಣ್ಯ ಸಚಿವರು ಸದನದಲ್ಲಿ ಪದೇಪದೇ ಮೃತರ ಧರ್ಮ ಉಲ್ಲೇಖಿಸುತ್ತಿರುವುದನ್ನು ಪ್ರಶ್ನಿಸಿದರು. ಪ್ರಕರಣವನ್ನು ಧರ್ಮದ ದೃಷ್ಟಿಕೋನದಿಂದ ಅಲ್ಲ, ಮಾನವೀಯ ದೃಷ್ಟಿಕೋನದಿಂದ ನೋಡಬೇಕು ಎಂದು ಒತ್ತಿ ಹೇಳಿದರು.

ಬೇಟೆಗೆ ಹೋಗಿದ್ದರು ಎಂಬ ಆರೋಪವಿದ್ದ ಮಾತ್ರಕ್ಕೆ ಎನ್‌ಕೌಂಟರ್ ಮಾಡಬಹುದೇ ಎಂದು ಪ್ರಶ್ನಿಸಿದ ವಿಜಯೇಂದ್ರ, ಅಧಿಕಾರಿಗಳ ಬಳಿ ಟಾರ್ಚ್ ಇತ್ತು, ಪರಿಸ್ಥಿತಿ ನಿಯಂತ್ರಿಸಲು ಬೇರೆ ಕಾನೂನುಬದ್ಧ ಮಾರ್ಗಗಳಿರಲಿಲ್ಲವೇ ಎಂಬುದಕ್ಕೆ ಸರ್ಕಾರ ಉತ್ತರಿಸಬೇಕು ಎಂದರು. ಅರಣ್ಯ ಅಧಿಕಾರಿಗಳು ಕರ್ತವ್ಯ ನಿರ್ವಹಣೆಯಲ್ಲಿ ಲೋಪ ಎಸಗಿದ್ದಾರೆಯೇ ಎಂಬುದನ್ನು ಸಮಗ್ರ ತನಿಖೆಯ ಮೂಲಕ ಪತ್ತೆಹಚ್ಚಿ, ತಪ್ಪಿತಸ್ಥರು ಯಾರೇ ಆಗಿದ್ದರೂ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಕೊಡಗು, ಮಡಿಕೇರಿ, ಶಿವಮೊಗ್ಗ, ಮಲೆನಾಡು, ಉತ್ತರ ಕನ್ನಡ ಹಾಗೂ ಕರಾವಳಿ ಭಾಗಗಳಲ್ಲಿ ಮಾನವ-ವನ್ಯಜೀವಿ ಸಂಘರ್ಷ ಗಂಭೀರ ಸಮಸ್ಯೆಯಾಗಿರುವ ಹಿನ್ನೆಲೆಯಲ್ಲಿ ಹನೂರು ಘಟನೆಯ ಸಂಪೂರ್ಣ ಸತ್ಯ ಹೊರಬರುವುದು ಅಗತ್ಯ ಎಂದ ಅವರು, ಯಾವ ಸರ್ಕಾರದ ಅವಧಿಯಲ್ಲಿ ಘಟನೆ ನಡೆದಿದೆ ಎಂಬುದು ಮುಖ್ಯವಲ್ಲ, ಹಿಂದಿನ ಘಟನೆಗಳನ್ನು ಮುಂದಿಟ್ಟುಕೊಂಡು ಈಗಿನ ಪ್ರಕರಣದ ಹೊಣೆಗಾರಿಕೆಯಿಂದ ಸರ್ಕಾರ ನುಣುಚಿಕೊಳ್ಳಬಾರದು ಎಂದು ಹೇಳಿದರು.

ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಕಚೇರಿ ಮೇಲೆ ನಡೆದ ದಾಳಿಯನ್ನು ಬಿಜೆಪಿ ಸ್ವಾಗತಿಸುತ್ತದೆ ಎಂದ ವಿಜಯೇಂದ್ರ, ಪರೀಕ್ಷೆ ಮತ್ತು ಫಲಿತಾಂಶ ಪ್ರಕಟಣೆಯಲ್ಲಿ ವಿಳಂಬದಿಂದ ಅಭ್ಯರ್ಥಿಗಳಿಗೆ ನಿರಂತರ ಅನ್ಯಾಯವಾಗುತ್ತಿದೆ ಎಂದು ದೂರಿದರು. ಯುವಕರ ಭವಿಷ್ಯದ ಜೊತೆ ಆಟವಾಡುವ ವ್ಯವಸ್ಥೆಗೆ ಕಡಿವಾಣ ಹಾಕುವುದು ಸರ್ಕಾರದ ಕರ್ತವ್ಯ ಎಂದ ಅವರು,

ಯಾವ ಸರ್ಕಾರ ಕೆಪಿಎಸ್‌ಸಿ ಅಧ್ಯಕ್ಷರು ಅಥವಾ ಸದಸ್ಯರನ್ನು ನೇಮಕ ಮಾಡಿತ್ತು ಎಂಬುದು ಮುಖ್ಯವಲ್ಲ, ಅಕ್ರಮ ನಡೆದಿದ್ದರೆ ನಿಷ್ಪಕ್ಷಪಾತ ತನಿಖೆ ಆಗಲೇಬೇಕು ಎಂದು ಪ್ರತಿಪಾದಿಸಿದರು. ಕೆಪಿಎಸ್‌ಸಿ ಅಕ್ರಮಗಳ ಕುರಿತು ರಾಜ್ಯ ಸರ್ಕಾರ ಕೂಡಲೇ ಸಿಬಿಐ ತನಿಖೆಗೆ ಆದೇಶಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ನಿವೃತ್ತ ಶಿಕ್ಷಕನ ಹತ್ಯೆ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌: ಆಸ್ತಿಗಾಗಿ ಪ್ರಿಯಕರನೊಂದಿಗೆ ಸೇರಿ ತಂದೆಯನ್ನೇ ಕೊಂದ ಮಗಳು

0

ವಿಜಯಪುರ: ನಿವೃತ್ತ ಶಿಕ್ಷಕ ಸಿದ್ದಪ್ಪ ಅಂಜುಟಗಿ ಕೊಲೆ ಪ್ರಕರಣದ ತನಿಖೆ ಪೊಲೀಸರನ್ನೇ ಬೆಚ್ಚಿಬೀಳಿಸುವಂತಹ ಸತ್ಯವನ್ನು ಬಯಲಿಗೆಳೆದಿದೆ. ಆಸ್ತಿ ವಿಚಾರದ ಜಗಳ ಹಾಗೂ ವೈಯಕ್ತಿಕ ಸಂಬಂಧಕ್ಕೆ ತಂದೆ ವಿರೋಧ ವ್ಯಕ್ತಪಡಿಸಿದ್ದಕ್ಕೆ ಪುತ್ರಿಯೇ ಪ್ರಿಯಕರನ ಜೊತೆ ಸೇರಿ ತಂದೆಯನ್ನು ಹತ್ಯೆ ಮಾಡಿದ್ದಾಳೆ ಎನ್ನುವುದು ತನಿಖೆಯಲ್ಲಿ ಪತ್ತೆಯಾಗಿದೆ.

ಇಂಡಿ ತಾಲೂಕಿನ ಚೌಡಿಹಾಳ ರಸ್ತೆಯ ಪೂಜಾರಿ ವಸ್ತಿ ತೋಟದ ಬಳಿ ಸಿದ್ದಪ್ಪ ಅವರ ಮೃತದೇಹ ಪತ್ತೆಯಾಗಿತ್ತು. ಆರಂಭದಲ್ಲಿ ಅಪರಿಚಿತ ದುಷ್ಕರ್ಮಿಗಳು ಕೊಲೆ ಮಾಡಿ ಪರಾರಿಯಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದರು.

ಆದರೆ ಮೃತರ ಹಿರಿಯ ಪುತ್ರಿ ನಿಖಿತಾ ನೀಡಿದ ದೂರಿನ ಆಧಾರದ ಮೇಲೆ ತನಿಖೆ ಮುಂದುವರಿಸಿದಾಗ ಪ್ರಕರಣದ ದಿಕ್ಕೇ ಬದಲಾಗಿದೆ. ಸಿದ್ದಪ್ಪ ಅವರ ಪುತ್ರಿ ಪ್ರಿಯಾಂಕಾ ಹಾಗೂ ಆಕೆಯ ಪ್ರಿಯಕರ ಸಂತೋಷ್ ಸಿಂಧೆ ಬಂಧಿತರಾಗಿದ್ದಾರೆ. ಮತ್ತೋರ್ವ ಆರೋಪಿ ಗುರುರಾಜ ಬಿರಾದಾರ್ ತಲೆಮರೆಸಿಕೊಂಡಿದ್ದು, ಆತನಿಗಾಗಿ ಶೋಧ ನಡೆಯುತ್ತಿದೆ.

ಎರಡು ವರ್ಷಗಳ ಹಿಂದೆ ನಿವೃತ್ತಿಯಾಗಿದ್ದ ಸಿದ್ದಪ್ಪ ಅವರಿಗೆ ನಿವೃತ್ತಿ ಹಣ ಬಂದಿತ್ತು. ಗ್ರಾಮದಲ್ಲೂ ಆಸ್ತಿ ಹೊಂದಿದ್ದರು. ಈ ಆಸ್ತಿಯಲ್ಲಿ ಪಾಲು ನೀಡುವಂತೆ ಪುತ್ರಿ ಒತ್ತಾಯಿಸುತ್ತಿದ್ದಳು ಎನ್ನಲಾಗಿದೆ. ಆದರೆ ಸಿದ್ದಪ್ಪ ಇದಕ್ಕೆ ಒಪ್ಪಿರಲಿಲ್ಲ.

ಇದೇ ವೇಳೆ ಪ್ರಿಯಾಂಕಾ ಆಟೋ ಚಾಲಕ ಸಂತೋಷ್ ಸಿಂಧೆ ಜೊತೆ ಸಂಬಂಧ ಹೊಂದಿದ್ದಳು ಎನ್ನಲಾಗಿದ್ದು, ಇದಕ್ಕೆ ಸಿದ್ದಪ್ಪ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಆಸ್ತಿ ಹಾಗೂ ಈ ಸಂಬಂಧದ ವಿಚಾರವಾಗಿ ತಂದೆ-ಮಗಳ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು ಎಂದು ತನಿಖೆಯಲ್ಲಿ ತಿಳಿದುಬಂದಿದೆ.

ಆಗಸ್ಟ್ 15ರಂದು ಮತ್ತೊಮ್ಮೆ ಇದೇ ವಿಚಾರಕ್ಕೆ ಜಗಳ ನಡೆದಿದೆ. ಬಳಿಕ ಪ್ರಿಯಾಂಕಾ ತನ್ನ ಪ್ರಿಯಕರ ಸಂತೋಷ್‌ನನ್ನು ಕರೆಸಿಕೊಂಡಿದ್ದಾಳೆ. ಇಬ್ಬರೂ ಸೇರಿ ಸಿದ್ದಪ್ಪ ಅವರನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ.

ನಂತರ ಕಲ್ಲಿನಿಂದ ಹಲ್ಲೆ ನಡೆಸಿ ಹತ್ಯೆಯನ್ನು ಖಚಿತಪಡಿಸಿಕೊಂಡು, ಮೃತದೇಹವನ್ನು ರಸ್ತೆ ಬದಿಗೆ ಎಸೆದು ಪರಾರಿಯಾಗಿದ್ದರು ಎಂಬ ಸ್ಫೋಟಕ ಮಾಹಿತಿ ತನಿಖೆಯಲ್ಲಿ ಬಹಿರಂಗವಾಗಿದೆ.

ಪ್ರಕರಣದ ಇಬ್ಬರು ಪ್ರಮುಖ ಆರೋಪಿಗಳಾದ ಪ್ರಿಯಾಂಕಾ ಹಾಗೂ ಸಂತೋಷ್ ಪೊಲೀಸರ ವಶದಲ್ಲಿದ್ದು, ಕೃತ್ಯಕ್ಕೆ ಸಹಕರಿಸಿದ್ದಾನೆ ಎನ್ನಲಾದ ಗುರುರಾಜ ಬಿರಾದಾರ್‌ಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.

ತದಡಿ ಅಳಿವೆಯಲ್ಲಿ ಬೋಟ್ ಮುಳುಗು: ನಾಲ್ವರು ಮೀನುಗಾರರು ಕೂದಲೆಳೆ ಅಂತರದಲ್ಲಿ ಪಾರು

0

ಕಾರವಾರ: ತದಡಿ ಬಂದರಿನ ಅಳಿವೆಯಲ್ಲಿ ಹೂಳು ಮತ್ತು ಅಲೆಗಳ ಅಬ್ಬರದಿಂದ ಮೀನುಗಾರಿಕಾ ಬೋಟ್‌ವೊಂದು ಮುಳುಗಿದ್ದು, ಅದರಲ್ಲಿದ್ದ ನಾಲ್ವರು ಮೀನುಗಾರರು ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣದ ತದಡಿ ಬಂದರಿನಲ್ಲಿ ಘಟನೆ ನಡೆದಿದೆ.

ಸುರೇಂದ್ರ ಹರಿಕಂತ್ರ ಅವರಿಗೆ ಸೇರಿದ ‘ಲಕ್ಷ್ಮೀಕೃಪ’ ಬೋಟ್ ಇಂದು ಮೀನುಗಾರಿಕೆಗೆ ತೆರಳಿತ್ತು. ಬಂದರಿನಿಂದ ಹೊರಟ ಕೆಲವೇ ದೂರದಲ್ಲಿ ಹೂಳು ತುಂಬಿದ ಅಳಿವೆಯಲ್ಲಿ ಬೋಟ್ ಸಿಲುಕಿಕೊಂಡಿದೆ.

ಅಳಿವೆಯಲ್ಲಿ ಅಲೆಗಳ ಹೊಡೆತ ಹೆಚ್ಚಾದ ಹಿನ್ನೆಲೆಯಲ್ಲಿ ಬೋಟ್‌ನ ತಳಭಾಗ ಹಾನಿಗೊಳಗಾಗಿದೆ. ಪರಿಣಾಮ ನೀರು ಬೋಟ್ ಒಳಗೆ ನುಗ್ಗಿ ಕೆಲವೇ ಕ್ಷಣಗಳಲ್ಲಿ ಬೋಟ್ ಮುಳುಗಿದೆ. ಘಟನೆಯಲ್ಲಿ ಸುಮಾರು ₹20 ಲಕ್ಷ ಮೌಲ್ಯದ ಹಾನಿ ಸಂಭವಿಸಿದೆ ಎಂದು ಹೇಳಲಾಗಿದೆ.

ಅಪಾಯದ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳೀಯ ಮೀನುಗಾರರು ಧಾವಿಸಿ ನಾಲ್ವರು ಮೀನುಗಾರರನ್ನು ರಕ್ಷಿಸಿದ್ದಾರೆ. ಹೀಗಾಗಿ ಭಾರೀ ದುರಂತವೊಂದು ತಪ್ಪಿದಂತಾಗಿದೆ.

ತದಡಿ ಅಳಿವೆಯಲ್ಲಿ ಹೂಳು ತುಂಬಿರುವುದರಿಂದ ಬೋಟ್‌ಗಳು ಸಂಚರಿಸುವುದೇ ಅಪಾಯಕಾರಿಯಾಗಿದೆ ಎಂದು ಮೀನುಗಾರರು ಆತಂಕ ವ್ಯಕ್ತಪಡಿಸಿದ್ದಾರೆ. ಇದೇ ಸ್ಥಳದಲ್ಲಿ ಎರಡು ದಿನಗಳ ಹಿಂದಷ್ಟೇ ‘ಶ್ರೀದೇವಿ’ ಹೆಸರಿನ ಬೋಟ್ ಕೂಡ ಮುಳುಗಿತ್ತು.

ಒಂದೇ ವಾರದಲ್ಲಿ ಎರಡು ಬೋಟ್‌ಗಳು ಮುಳುಗಿರುವ ಹಿನ್ನೆಲೆಯಲ್ಲಿ ತದಡಿ ಅಳಿವೆಯ ಹೂಳು ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂಬ ಒತ್ತಾಯ ಇದೀಗ ಮತ್ತಷ್ಟು ಗಟ್ಟಿಯಾಗಿದೆ.

KRS ನೀರು ಬಿಡುಗಡೆಗೆ ರೈತರ ಆಕ್ರೋಶ: ಒಳಹರಿವು 1,961, ಹೊರಹರಿವು 4,917 ಕ್ಯೂಸೆಕ್!

0

ಮಂಡ್ಯ: ಕೃಷ್ಣರಾಜ ಸಾಗರ (KRS) ಜಲಾಶಯದಿಂದ ನೀರು ಬಿಡುಗಡೆ ವಿಚಾರ ಮಂಡ್ಯದಲ್ಲಿ ಮತ್ತೊಮ್ಮೆ ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಡ್ಯಾಂಗೆ ಕೇವಲ 1,961 ಕ್ಯೂಸೆಕ್ ನೀರು ಹರಿದು ಬರುತ್ತಿದ್ದರೂ, 4,917 ಕ್ಯೂಸೆಕ್‌ಗೂ ಅಧಿಕ ನೀರನ್ನು ನದಿಗೆ ಹರಿಸಲಾಗುತ್ತಿದೆ. ಒಳಹರಿವಿಗಿಂತ ಹೊರಹರಿವು ಗಣನೀಯವಾಗಿ ಹೆಚ್ಚಿರುವುದೇ ಇದೀಗ ರೈತರ ಅನುಮಾನಕ್ಕೆ ಪ್ರಮುಖ ಕಾರಣವಾಗಿದೆ.

KRSನಿಂದ ತಮಿಳುನಾಡಿಗೆ ಕದ್ದುಮುಚ್ಚಿ ಕಾವೇರಿ ನೀರು ಹರಿಸಲಾಗುತ್ತಿದೆ ಎಂದು ರೈತ ಸಂಘಟನೆಗಳು ಆರೋಪಿಸಿವೆ. ಕಳೆದ ಆಗಸ್ಟ್ 15ರಿಂದಲೇ ಅಧಿಕಾರಿಗಳು ಸಮರ್ಪಕ ಮಾಹಿತಿ ನೀಡದೆ ನೀರು ಹರಿಸುತ್ತಿದ್ದಾರೆ ಎಂಬ ಅನುಮಾನ ವ್ಯಕ್ತಪಡಿಸಿರುವ ರೈತರು, ನೀರು ಬಿಡುಗಡೆಗೆ ಸಂಬಂಧಿಸಿದ ಸಂಪೂರ್ಣ ವಿವರಗಳನ್ನು ಸರ್ಕಾರ ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದ್ದಾರೆ.

ಈ ಹಿಂದೆ ಕುಡಿಯುವ ನೀರು ಮತ್ತು ನಾಲೆಗಳಿಗೆ 2,000ರಿಂದ 2,500 ಕ್ಯೂಸೆಕ್‌ನಷ್ಟು ನೀರು ಬಿಡುಗಡೆ ಮಾಡಲಾಗುತ್ತಿತ್ತು. ಆದರೆ ಇದೀಗ ಏಕಾಏಕಿ 4,917 ಕ್ಯೂಸೆಕ್‌ಗೂ ಅಧಿಕ ನೀರು ಹೊರಬಿಡುತ್ತಿರುವುದೇಕೆ ಎಂಬ ಪ್ರಶ್ನೆ ಎದ್ದಿದೆ.

“ಜಲಾಶಯಕ್ಕೆ ನೀರು ಕಡಿಮೆ ಬರುತ್ತಿರುವಾಗ ಹೊರಹರಿವು ಏಕೆ ಹೆಚ್ಚಿಸಲಾಗಿದೆ? ನೀರು ಕುಡಿಯಲು ಹಾಗೂ ನಾಲೆಗಳಿಗೆ ಹೋಗುತ್ತಿದೆಯೇ ಅಥವಾ ಬೇರೆಡೆಗೆ ಹರಿಸಲಾಗುತ್ತಿದೆಯೇ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕು” ಎಂದು ರೈತರು ಒತ್ತಾಯಿಸಿದ್ದಾರೆ.

ಮಂಡ್ಯ ರೈತರ ಪಾಲಿಗೆ KRS ನೀರು ಅತ್ಯಂತ ಮಹತ್ವದ್ದಾಗಿದ್ದು, ನೀರು ಬಿಡುಗಡೆ ವಿಚಾರದಲ್ಲಿ ಯಾವುದೇ ರೀತಿಯ ಗೊಂದಲ ಅಥವಾ ಮುಚ್ಚುಮರೆ ಇರಬಾರದು ಎಂದು ರೈತ ಸಂಘಟನೆಗಳು ಎಚ್ಚರಿಸಿವೆ.

ಒಳಹರಿವು-ಹೊರಹರಿವಿನ ಸಂಪೂರ್ಣ ಲೆಕ್ಕ, ನೀರು ಬಿಡುಗಡೆಗೆ ಕಾರಣ ಹಾಗೂ ನೀರು ತಲುಪುತ್ತಿರುವ ಪ್ರದೇಶಗಳ ಕುರಿತು ಸರ್ಕಾರ ತಕ್ಷಣ ಸ್ಪಷ್ಟ ಮಾಹಿತಿ ನೀಡಬೇಕು. ಇಲ್ಲದಿದ್ದರೆ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವುದಾಗಿ ರೈತ ಸಂಘಟನೆಗಳು ಎಚ್ಚರಿಕೆ ನೀಡಿವೆ.