ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: “ಗುರ್ಜಿ… ಗುರ್ಜಿ… ಎಲ್ಲಾಡಿ ಬಂದೆ… ಹಳ್ಳ-ಕೊಳ್ಳ ತಿರುಗಾಡಿ ಬಂದೆ… ಕಾರ ಮಳೆಯೇ, ಕಪ್ಪತ್ತ ಮಳೆಯೇ… ಸುರಿ ಮಳೆಯೋ ಸುರಿ ಮಳೆಯೋ…” ಎಂಬ ಜನಪದ ಗೀತೆಯ ನಿನಾದದೊಂದಿಗೆ ಪಟ್ಟಣದ ಸಾಲಗೇರಿ ಓಣಿಯ ರೈತ ಮಹಿಳೆಯರು ಶುಕ್ರವಾರ ಸಾಂಪ್ರದಾಯಿಕ ಗುರ್ಜಿ ಪೂಜೆ ನೆರವೇರಿಸಿ ಮಳೆರಾಯನಿಗೆ ಮೊರೆ ಹೋದರು.
ಮಳೆಯನ್ನೇ ನಂಬಿ ಹೆಸರು, ಶೇಂಗಾ, ಹತ್ತಿ, ಉಳ್ಳಾಗಡ್ಡಿ, ಮೆಣಸಿನಕಾಯಿ ಹಾಗೂ ಗೋವಿನ ಜೋಳ ಸೇರಿದಂತೆ ವಿವಿಧ ಬೆಳೆಗಳ ಬಿತ್ತನೆ ಮಾಡಿರುವ ರೈತರು ಕಳೆದ ಹದಿನೈದು ದಿನಗಳಿಂದ ಮಳೆಯ ಕೊರತೆಯಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ತೇವಾಂಶದ ಅಭಾವದಿಂದ ಮೊಳಕೆಯೊಡೆದ ಬೆಳೆಗಳು ಒಣಗತೊಡಗಿದ್ದು, ರೈತರಲ್ಲಿ ಆತಂಕ ಮನೆ ಮಾಡಿದೆ.

ಈ ಹಿನ್ನೆಲೆಯಲ್ಲಿ ಕೃಷಿಯನ್ನೇ ಬದುಕಾಗಿಸಿಕೊಂಡ ರೈತರು ಹಾಗೂ ರೈತ ಮಹಿಳೆಯರು ಮಳೆಗಾಗಿ ಸಂಪ್ರದಾಯದ ಮೊರೆ ಹೋಗಿದ್ದಾರೆ. ಗ್ರಾಮೀಣ ಜಾನಪದ ಸಂಸ್ಕೃತಿಯ ವಿಶಿಷ್ಟ ಆಚರಣೆಯಾದ ಗುರ್ಜಿ ಪೂಜೆಯಲ್ಲಿ ಆಕಳ ಸಗಣಿಯಿಂದ ತಯಾರಿಸಿದ ಗುರ್ಜಿ ಮೂರ್ತಿಯನ್ನು ಹಂಚಿನ ಮೇಲೆ ಪ್ರತಿಷ್ಠಾಪಿಸಿ ಹಸಿರು ಹುಲ್ಲು ಹಾಗೂ ಹೂಗಳಿಂದ ಅಲಂಕರಿಸಲಾಗುತ್ತದೆ.
ಮಹಿಳೆಯರು ಜನಪದ ಗೀತೆಗಳನ್ನು ಹಾಡುತ್ತಾ ಓಣಿಯಿಂದ ಓಣಿಗೆ ಸಂಚರಿಸುತ್ತಾರೆ. ಮನೆಗಳ ಮುಂದೆ ತೆರಳಿದಾಗ ಮನೆಯವರು ಗುರ್ಜಿ ಹೊತ್ತ ಮಹಿಳೆಯರ ಮೇಲೆ ನೀರು ಸುರಿದು ಪೂಜೆ ಸಲ್ಲಿಸುತ್ತಾರೆ. ಐದು ದಿನಗಳ ಕಾಲ ನಡೆಯುವ ಈ ಆಚರಣೆಯ ಅಂತ್ಯದಲ್ಲಿ ಸಂಗ್ರಹಿಸಿದ ಧಾನ್ಯಗಳಿಂದ ವಿಶೇಷ ಪೂಜೆ ಹಾಗೂ ಅನ್ನಸಂತರ್ಪಣೆ ಏರ್ಪಡಿಸಲಾಗುತ್ತದೆ.

ಮಳೆಯಿಲ್ಲದೆ ಕಂಗಾಲಾಗಿರುವ ರೈತ ಸಮುದಾಯಕ್ಕೆ ಗುರ್ಜಿ ಪೂಜೆ ಕೇವಲ ಸಂಪ್ರದಾಯವಾಗಿಯೇ ಉಳಿದಿಲ್ಲ. ಅದು ರೈತರ ಬದುಕಿನ ಭರವಸೆ, ನಂಬಿಕೆ ಮತ್ತು ಆಶಾವಾದದ ಸಂಕೇತವಾಗಿ ಬೆಳೆದಿದೆ.
“ಗುರ್ಜಿ ಪೂಜೆ ನಮ್ಮ ಪಾಲಿಗೆ ಕೇವಲ ಆಚರಣೆಯಲ್ಲ; ಅದು ರೈತರ ಬದುಕಿನ ಭರವಸೆಯ ಸಂಕೇತ. ಮಳೆರಾಯ ಕೃಪೆ ತೋರಿ ಬೆಳೆಗಳನ್ನು ಉಳಿಸಲಿ ಎಂಬುದು ನಮ್ಮ ಪ್ರಾರ್ಥನೆ.”
– ಸಾವಿತ್ರಮ್ಮ ಹಂಪಣ್ಣವರ ಹಾಗೂ ಹಂಪಮ್ಮ ಹಂಪಣ್ಣವರ, ರೈತ ಮಹಿಳೆಯರು

