ವಿಜಯಸಾಕ್ಷಿ ಸುದ್ದಿ, ರೋಣ: ರಾಜ್ಯದ ಅಘೋಷಿತ ಗುಡಿಸಲು ಪ್ರದೇಶಗಳನ್ನು ಸ್ಲಂ ಕಾಯ್ದೆ–1973ರಡಿ ಗುರುತಿಸಿ ಘೋಷಣೆ ಮಾಡಬೇಕು. ಘೋಷಿತ ಕೊಳಗೇರಿ ಪ್ರದೇಶಗಳ ನಿವಾಸಿಗಳಿಗೆ ವಸತಿ ಸೌಲಭ್ಯ ಕಲ್ಪಿಸಿ ಭೂಮಿ ಹಕ್ಕನ್ನು ಖಾತ್ರಿಗೊಳಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಗದಗ ಜಿಲ್ಲಾ ಸ್ಲಂ ಸಮಿತಿ ಅಧ್ಯಕ್ಷ ಇಮ್ತಿಯಾಜ್ ಆರ್. ಮಾನ್ವಿ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲೂಕು ಮಟ್ಟದ ಸ್ಲಂ ಪ್ರದೇಶದ ಮುಖಂಡರಿಗೆ ಸ್ಲಂ ಕಾಯ್ದೆ ಕುರಿತು ಆಯೋಜಿಸಿದ್ದ ಮಾಹಿತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗದಗ ಜಿಲ್ಲೆಯಲ್ಲಿ ಸುಮಾರು 100ಕ್ಕೂ ಹೆಚ್ಚು ಗುಡಿಸಲು ಪ್ರದೇಶಗಳನ್ನು ಸ್ಲಂ ಕಾಯ್ದೆಯಡಿ ಘೋಷಣೆ ಮಾಡಲಾಗಿದ್ದು, ಇನ್ನೂ 80ಕ್ಕೂ ಹೆಚ್ಚು ಗುಡಿಸಲು ಪ್ರದೇಶಗಳನ್ನು ಗುರುತಿಸಲಾಗಿದೆ ಎಂದು ತಿಳಿಸಿದರು. ಆದರೆ ಘೋಷಿತ ಕೊಳಗೇರಿ ಪ್ರದೇಶಗಳಿಗೆ ನಾಗರಿಕ ಸೌಲಭ್ಯಗಳನ್ನು ಕಲ್ಪಿಸಬೇಕಾದ ಅಧಿಕಾರಿಗಳು ಅಭಿವೃದ್ಧಿ ಕಾರ್ಯದಲ್ಲಿ ತಾರತಮ್ಯ ಮಾಡುತ್ತಿರುವುದು ಖಂಡನೀಯ ಎಂದು ಆರೋಪಿಸಿದರು.
ಸುಮಾರು 70 ವರ್ಷಗಳಿಂದ ಜನರು ವಾಸಿಸುತ್ತಿರುವ ಜಿಲ್ಲೆಯ ಹಲವಾರು ಕೊಳಗೇರಿ ಪ್ರದೇಶಗಳಲ್ಲಿ ಕನಿಷ್ಠ ಮೂಲಸೌಲಭ್ಯಗಳನ್ನು ಒದಗಿಸುವಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸಂಪೂರ್ಣ ವಿಫಲರಾಗಿದ್ದಾರೆ ಎಂದು ದೂರಿದರು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೊಳಗೇರಿ ಅಭಿವೃದ್ಧಿ ಮತ್ತು ವಸತಿಗಾಗಿ ಕೋಟ್ಯಂತರ ರೂಪಾಯಿ ಅನುದಾನ ನೀಡುತ್ತಿದ್ದರೂ, ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಅನುದಾನದ ದುರ್ಬಳಕೆಯಿಂದ ಗದಗ ಜಿಲ್ಲೆಯ ಹಲವು ಸ್ಲಂ ಪ್ರದೇಶಗಳು ಇಂದಿಗೂ ಸೌಲಭ್ಯ ವಂಚಿತವಾಗಿವೆ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ವಕೀಲ ಎಂ.ಬಿ. ನದಾಫ, ಗದಗ ಜಿಲ್ಲಾ ಮಹಿಳಾ ಸಮಿತಿ ಸಂಚಾಲಕಿ ಪರವೀನಬಾನು ಹವಾಲ್ದಾರ, ಮುಖಂಡ ಮೌಲಾಸಾಬ ಗಚ್ಚಿ, ರೋಣ ತಾಲೂಕು ಮಟ್ಟದ ಮುಖಂಡರಾದ ಬಸವರಾಜ ಕುರಿ, ರಹಿಮಾನಬಿ ಕೊಲಕಾರ, ಹುಸೇನಬಿ ಸರಖವಾಸ, ಭಾಗ್ಯ ಗೊಲ್ಲರ, ಶಮಶಾದ್ ಪೊಲಾವಾಲೆ, ಶಾಮೀದ್ ಚೌಧರಿ, ಅಲ್ಲಾಬಿ ಚೌಧರಿ, ಫರೀದಾ ಮೀರಾನಾಯ್ಕ, ಮಾಳವ್ವ ಹಿರೇಮನಿ, ಈರಪ್ಪ ಗದುಗಿನ, ಜಹರಾಬಿ ಚೌಧರಿ, ಶಮಶಾದ್ ಇಟಗಿ, ಮೀನಾಕ್ಷಿ ಗುಡಿಮನಿ, ಶಂಕ್ರಪ್ಪ ಮುಂಡರಗಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ರೋಣ ತಾಲೂಕು ಸ್ಲಂ ಸಮಿತಿ ಘಟಕವನ್ನು ರಚಿಸಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಜಿಲ್ಲಾ ಸಮಿತಿ ಸದಸ್ಯ ಮೌಲಾಸಾಬ ಎಸ್. ಗಚ್ಚಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಗದಗ ಜಿಲ್ಲಾ ಸ್ಲಂ ಸಮಿತಿಯು ಕಳೆದ ಎರಡು ದಶಕಗಳಿಂದ ಕೊಳಗೇರಿ ಜನರ ಸಂವಿಧಾನಬದ್ಧ ಹಕ್ಕುಗಳಿಗಾಗಿ ನಿರಂತರ ಹೋರಾಟ ನಡೆಸುತ್ತಿದೆ. ಜಿಲ್ಲೆಯ ಎಲ್ಲ ತಾಲೂಕು ಕೇಂದ್ರಗಳಲ್ಲಿ ಸ್ಲಂ ಸಮಿತಿಯನ್ನು ವಿಸ್ತರಿಸಿ, ಸ್ಲಂ ಜನರ ಪರವಾಗಿ ದೊಡ್ಡ ಮಟ್ಟದ ಹೋರಾಟ ರೂಪಿಸಲಾಗುವುದು.
ಇಮ್ತಿಯಾಜ್ ಆರ್. ಮಾನ್ವಿ, ಗದಗ ಜಿಲ್ಲಾ ಸ್ಲಂ ಸಮಿತಿ ಅಧ್ಯಕ್ಷ

