Home Blog

ಮೃಗಶಿರ ಮಳೆಗೆ ರೈತರಲ್ಲಿ ಹೊಸ ಉತ್ಸಾಹ

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಎಲ್‌ನೀನೋ ಪರಿಣಾಮದಿಂದ ಈ ವರ್ಷ ಮಳೆ ಕೊರತೆ ಉಂಟಾಗಲಿದೆ ಎಂಬ ಆತಂಕದ ನಡುವೆಯೂ ಭೂಮಿತಾಯಿ ಮತ್ತು ಮಳೆರಾಯನ ಮೇಲಿನ ನಂಬಿಕೆಯಿಂದ ಬಿತ್ತನೆ ಕಾರ್ಯದಲ್ಲಿ ತೊಡಗಿದ್ದ ರೈತ ಸಮುದಾಯಕ್ಕೆ ಶನಿವಾರ ಸುರಿದ ಮೃಗಶಿರ ಮಳೆ ಹೊಸ ಚೈತನ್ಯ ತುಂಬಿದೆ.

ಹೆಸರು, ಮೆಕ್ಕೆಜೋಳ, ಉಳ್ಳಾಗಡ್ಡಿ, ಹತ್ತಿ, ಶೇಂಗಾ, ತೊಗರಿ ಹಾಗೂ ಮೆಣಸಿನಕಾಯಿ ಸೇರಿದಂತೆ ವಿವಿಧ ಬೆಳೆಗಳ ಬಿತ್ತನೆ ಈಗಾಗಲೇ ಆರಂಭವಾಗಿದ್ದು, ಉತ್ತಮ ಮಳೆಯಿಂದ ರೈತರ ಮುಖದಲ್ಲಿ ಸಂತಸ ಮನೆಮಾಡಿದೆ.

ಬೀಜ, ಗೊಬ್ಬರ, ಡೀಸೆಲ್ ಸೇರಿ ಸಾವಿರಾರು ರೂಪಾಯಿ ಖರ್ಚು ಮಾಡಿ ಬಿತ್ತನೆ ಮಾಡಿದ ಬಳಿಕ ಮಳೆ ಬಾರದಿದ್ದರೆ ಹೇಗೆ ಎಂಬ ಆತಂಕದಲ್ಲಿದ್ದ ರೈತರಿಗೆ ಮಳೆ ನಿರಾಳತೆ ತಂದಿದೆ.

ತಾಲೂಕಿನ ಶಿಗ್ಲಿ, ರಾಮಗಿರಿ, ಗೊಜನೂರ, ದೊಡ್ಡೂರ, ಸೂರಣಗಿ, ಬಾಲೆಹೊಸೂರ, ಬಡ್ನಿ, ಆದ್ರಳ್ಳಿ, ಯಳವತ್ತಿ, ಯತ್ನಳ್ಳಿ ಸೇರಿದಂತೆ ಬಹುತೇಕ ಭಾಗಗಳಲ್ಲಿ ಉತ್ತಮ ಮಳೆಯಾಗಿದೆ. ಜಮೀನುಗಳ ತಗ್ಗು ಪ್ರದೇಶಗಳು, ಕೆರೆ-ಕಟ್ಟೆಗಳು ನೀರಿನಿಂದ ತುಂಬಿ, ಹಳ್ಳಗಳು ಹರಿಯಲು ಆರಂಭಿಸಿವೆ.

ಮಳೆಯ ಪರಿಣಾಮ ರೈತರು ಬೀಜ ಮತ್ತು ರಸಗೊಬ್ಬರ ಖರೀದಿಗಾಗಿ ಕೃಷಿ ಕೇಂದ್ರಗಳ ಮುಂದೆ ಸಾಲುಗಟ್ಟಿ ನಿಂತ ದೃಶ್ಯ ಸಾಮಾನ್ಯವಾಗಿತ್ತು. ಆದರೆ ಪ್ರತಿ ವರ್ಷದಂತೆ ಈ ವರ್ಷವೂ ಡಿಎಪಿ ಹಾಗೂ ಯೂರಿಯಾ ಗೊಬ್ಬರಕ್ಕಾಗಿ ರೈತರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಇನ್ನೊಂದೆಡೆ, ಪಟ್ಟಣ ಹಾಗೂ ಗ್ರಾಮೀಣ ಭಾಗದ ಚರಂಡಿಗಳು ತ್ಯಾಜ್ಯದಿಂದ ಮುಚ್ಚಿಕೊಂಡಿದ್ದರಿಂದ ಮಳೆ ನೀರು ರಸ್ತೆ ಮೇಲೆ ಹರಿದು ಅವ್ಯವಸ್ಥೆ ಸೃಷ್ಟಿಸಿತು. ತಗ್ಗು-ಗುಂಡಿಗಳಿಂದ ಕೂಡಿರುವ ರಸ್ತೆಗಳ ದುಸ್ಥಿತಿ ಮತ್ತೊಮ್ಮೆ ಬಯಲಾಗಿದ್ದು, ವಾಹನ ಸವಾರರು ಹಾಗೂ ಸಾರ್ವಜನಿಕರು ಸಂಚಾರಕ್ಕೆ ಪರದಾಡುವಂತಾಯಿತು.
ಲಕ್ಷ್ಮೇಶ್ವರ ಪಟ್ಟಣಕ್ಕೆ ಕಳೆದ ಒಂದು ತಿಂಗಳಿನಿಂದ ನದಿ ನೀರಿನ ಪೂರೈಕೆ ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ ಹಲವರು ಮಳೆ ನೀರನ್ನು ಸಂಗ್ರಹಿಸಿಕೊಂಡ ದೃಶ್ಯ ಕಂಡುಬಂತು. ಸಂಜೆ ವೇಳೆ ಆರಂಭವಾದ ನಿರಂತರ ಮಳೆಯಿಂದ ವ್ಯಾಪಾರ-ವಹಿವಾಟು ಹಾಗೂ ಸಂಚಾರಕ್ಕೂ ಅಡಚಣೆ ಉಂಟಾಯಿತು. ಜನರು ಮತ್ತೆ ಛತ್ರಿ, ರೇನ್‌ಕೋಟ್ ಹಾಗೂ ಸ್ವೆಟರ್‌ಗಳ ಮೊರೆ ಹೋದರು.

“ಮಳೆ ಕೊರತೆ ಆತಂಕದ ನಡುವೆಯೂ ಕೃಷಿ ನಂಬಿ ಬಿತ್ತನೆ ಮಾಡಿದ್ದೇವೆ. ಇದೀಗ ಸುರಿದ ಮೃಗಶಿರ ಮಳೆ ರೈತರಲ್ಲಿ ಹೊಸ ಭರವಸೆ ಮೂಡಿಸಿದೆ.”
ಚನ್ನಪ್ಪ ಚಣ್ಮುಕಿ, ರೈತ ಮುಖಂಡ

ಗದಗ ಜಿಲ್ಲಾ ಪದಾಧಿಕಾರಿಗಳ ನೇಮಕ

ವಿಜಯಸಾಕ್ಷಿ ಸುದ್ದಿ, ಗದಗ: ಅಖಿಲ ಕರ್ನಾಟಕ ಮುಸ್ಲಿಂ ಮಹಾಸಭಾ ಗದಗ ಜಿಲ್ಲಾ ಘಟಕದ ಪದಾಧಿಕಾರಿಗಳ ನೇಮಕಾತಿ ಸಂಬಂಧ ಜಿಲ್ಲಾ ಕಚೇರಿಯಲ್ಲಿ ಸಭೆ ನಡೆಯಿತು.

ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾಧ್ಯಕ್ಷ ಎಂ.ಡಿ. ಜಾಫರ್ ಡಾಲಾಯತ್ ವಹಿಸಿಕೊಂಡಿದ್ದು, ಮುಖ್ಯ ಅತಿಥಿಯಾಗಿ ರಾಜ್ಯಾಧ್ಯಕ್ಷ ಮಹ್ಮದಶಫಿ ನಾಗರಕಟ್ಟಿ ಭಾಗವಹಿಸಿದ್ದರು. ಸಭೆಯಲ್ಲಿ ಜಿಲ್ಲಾ ಘಟಕದ ಉಪಾಧ್ಯಕ್ಷ ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳ ನೇಮಕ ಕುರಿತು ಚರ್ಚಿಸಿ, ನಿವೃತ್ತ ನೌಕರರಾದ ಮಹಬೂಬ ಬಾದಷಾ ಅಮೀರಸಾಹೇಬ ಖಾಜಿ ಅವರನ್ನು ಜಿಲ್ಲಾ ಉಪಾಧ್ಯಕ್ಷರಾಗಿ ಹಾಗೂ ರಿಯಾಜ ಅಹ್ಮದ್ ಈಟಿ ಅವರನ್ನು ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಒಮ್ಮತದಿಂದ ಆಯ್ಕೆ ಮಾಡಲಾಯಿತು.

ರಾಜ್ಯಾಧ್ಯಕ್ಷ ಮಹ್ಮದಶಫಿ ನಾಗರಕಟ್ಟಿ ಅವರ ಆದೇಶದ ಮೇರೆಗೆ ಜಿಲ್ಲಾಧ್ಯಕ್ಷ ಎಂ.ಡಿ. ಜಾಫರ್ ಡಾಲಾಯತ್ ಅವರು ನೇಮಕಾತಿ ಆದೇಶ ಹೊರಡಿಸಿದರು.

ನೇಮಕಗೊಂಡ ಪದಾಧಿಕಾರಿಗಳು ಗದಗ ಜಿಲ್ಲೆಯ ಮುಸ್ಲಿಂ ಸಮುದಾಯವನ್ನು ಸಂಘಟಿಸಿ, ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯವಾಗಿ ಸಮಾಜದ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಶ್ರಮಿಸಬೇಕು ಎಂದು ಸೂಚಿಸಲಾಗಿದೆ.

ಜನರ ಜೀವಕ್ಕೆ ಕಂಟಕವಾದ ‘ಲಂಡಿ ಹಳ್ಳ’

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದ ಮಧ್ಯ ಭಾಗದ ಮೂಲಕ ಹರಿಯುತ್ತಿರುವ ‘ಲಂಡಿ ಹಳ್ಳ’ ಇದೀಗ ಸುತ್ತಮುತ್ತಲಿನ ಜನರ ಜೀವ-ಜೀವನಕ್ಕೆ ವಿಷ ವರ್ತುಲವಾಗಿ ಪರಿಣಮಿಸಿದ್ದು, ನೂರಾರು ಕುಟುಂಬಗಳು ರೋಗ-ರುಜಿನ, ಗಬ್ಬು ವಾಸನೆ ಹಾಗೂ ವಿಷಜಂತುಗಳ ಭೀತಿಯಲ್ಲಿ ದಿನ ಕಳೆಯುವಂತಾಗಿದೆ.

ಹಳ್ಳದಕೇರಿ, ಕೆಂಚಲಾಪುರ, ಬನಶಂಕರಿ ಬಡಾವಣೆ, ಆಸಾರ ಓಣಿ, ಬಳಿಗಾರ ಓಣಿ, ಉಪ್ಪಿನ ಮಾಳ, ಸೊಪ್ಪಿನಕೇರಿ, ಅಂಬೇಡ್ಕರ ನಗರ, ಮಂಜಲಾಪುರ ಹಾಗೂ ಅಡರಕಟ್ಟಿ ಭಾಗದ ಜನರು ಈ ಸಮಸ್ಯೆಯಿಂದ ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ.

ಜನವಸತಿ ಪ್ರದೇಶದ ಅಂಚಿನುದ್ದಕ್ಕೂ ಹರಿದಿರುವ ಹಳ್ಳದಲ್ಲಿ ವರ್ಷಪೂರ್ತಿ ಆಳೆತ್ತರ ಬೆಳೆದ ಗಿಡಗಂಟೆಗಳು, ತ್ಯಾಜ್ಯ ಮಿಶ್ರಿತ ಕೊಳಚೆ ನೀರು, ಹಾವು-ಚೇಳು ಸೇರಿದಂತೆ ವಿಷಜಂತುಗಳ ಕಾಟ, ಸೊಳ್ಳೆ-ಕ್ರಿಮಿಗಳ ಹಾವಳಿ ಮತ್ತು ದುರ್ವಾಸನೆಯಿಂದ ನಿವಾಸಿಗಳು ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ.

ಮಳೆಯಾದರೆ ಪರಿಸ್ಥಿತಿ ಮತ್ತಷ್ಟು ಹದಗೆಡುತ್ತಿದ್ದು, ಸೇತುವೆ ಮೇಲೆ ನೀರು ಹರಿದು ಸಂಚಾರ ಸ್ಥಗಿತಗೊಳ್ಳುವುದು ಸಾಮಾನ್ಯವಾಗಿದೆ. ಚರಂಡಿ ನೀರು ಕೂಡ ಇದೇ ಹಳ್ಳಕ್ಕೆ ಸೇರುತ್ತಿರುವುದರಿಂದ ತ್ಯಾಜ್ಯ ಮತ್ತು ಕೊಳಚೆ ಮತ್ತಷ್ಟು ಹೆಚ್ಚಾಗಿದೆ.

ಸ್ಥಳೀಯರು ಹಲವು ವರ್ಷಗಳಿಂದ ಹಳ್ಳವನ್ನು ಸಂಪೂರ್ಣ ಸ್ವಚ್ಛಗೊಳಿಸಿ, ಎರಡೂ ಬದಿಯಲ್ಲಿ ಕಾಂಕ್ರೀಟ್ ತಡೆಗೋಡೆ ಹಾಗೂ ಕಾಂಪೌಂಡ್ ನಿರ್ಮಿಸುವಂತೆ ಆಗ್ರಹಿಸುತ್ತಿದ್ದರೂ ಶಾಶ್ವತ ಪರಿಹಾರ ಮಾತ್ರ ಸಿಕ್ಕಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

“ಮಕ್ಕಳನ್ನು ಹಗಲಲ್ಲೂ ಹೊರಗೆ ಬಿಡಲು ಭಯವಾಗುತ್ತಿದೆ. ದೊಡ್ಡ ಮಳೆ ಬಂದರೆ ರಾತ್ರಿ ನಿದ್ದೆಯೇ ಇರುವುದಿಲ್ಲ. ಹಾವು-ಚೇಳು, ಹಂದಿ, ನಾಯಿಗಳ ಕಾಟದ ನಡುವೆ ಬದುಕುವುದು ದುಸ್ತರವಾಗಿದೆ” ಎಂದು ಸ್ಥಳೀಯರು ಅಳಲು ತೋಡಿಕೊಂಡರು.

ಈ ಹಿಂದೆ ಪುರಸಭೆ ಮುಖ್ಯಾಧಿಕಾರಿಯಾಗಿದ್ದ ಶಂಕರ ಹುಲ್ಲಮ್ಮನವರ ಜಿಲ್ಲಾಧಿಕಾರಿಗಳ ಸಹಕಾರದೊಂದಿಗೆ ಹಳ್ಳ ಸ್ವಚ್ಛಗೊಳಿಸುವ ಕಾರ್ಯ ಕೈಗೊಂಡಿದ್ದರು. ಆದರೆ ಇದೀಗ ಮತ್ತೆ ಸಮಸ್ಯೆ ತೀವ್ರಗೊಂಡಿದೆ.

ಪುರಸಭೆ ಮುಖ್ಯಾಧಿಕಾರಿ ಪರಶುರಾಮ ಗುಡದಾರಿ ಪ್ರತಿಕ್ರಿಯಿಸಿ, “ಈ ಹಳ್ಳಕ್ಕೆ ಮಳೆ ನೀರಿನ ಜೊತೆಗೆ ಚರಂಡಿ ನೀರು ಕೂಡ ಸೇರುತ್ತಿದೆ. ಅಪಾರ ಪ್ರಮಾಣದಲ್ಲಿ ಗಿಡಗಂಟೆ ಹಾಗೂ ಕೊಳಚೆ ಸಂಗ್ರಹವಾಗಿದೆ. ಕೇವಲ ಪೌರಕಾರ್ಮಿಕರಿಂದ ಸ್ವಚ್ಛತೆ ಸಾಧ್ಯವಿಲ್ಲ. ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಹಿಟ್ಯಾಚಿ ಹಾಗೂ ಜೆಸಿಬಿ ಬಳಸಿ ಶೀಘ್ರ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗುವುದು” ಎಂದು ತಿಳಿಸಿದ್ದಾರೆ.

“ಹಳ್ಳದಂಚಿನಲ್ಲಿ ಬದುಕುತ್ತಿರುವ ಜನರು ನಿತ್ಯ ಭಯದಲ್ಲೇ ದಿನ ಕಳೆಯುತ್ತಿದ್ದಾರೆ. ಸಮಸ್ಯೆ ಪರಿಹರಿಸದಿದ್ದರೆ ಜಾನುವಾರುಗಳೊಂದಿಗೆ ರಾಜ್ಯ ಹೆದ್ದಾರಿ ತಡೆದು ಹೋರಾಟ ನಡೆಸುತ್ತೇವೆ.”

ಮಂಜುನಾಥ ಮಾಗಡಿ

ರೈತ ಮುಖಂಡ

ಎಚ್.ಕೆ. ಪಾಟೀಲರ ಕಡೆಗಣನೆಗೆ ಯುವ ಕಾಂಗ್ರೆಸ್ ಆಕ್ರೋಶ: ಮುಂದಿನ ವಿಸ್ತರಣೆಯಲ್ಲಿ ನ್ಯಾಯ ಕೊಡಲಿ

ವಿಜಯಸಾಕ್ಷಿ ಸುದ್ದಿ, ಗದಗ: ಕರ್ನಾಟಕ ರಾಜಕೀಯದಲ್ಲಿ ಜನಪರ ಕೆಲಸಗಳ ಮೂಲಕ ತಮ್ಮದೇ ಆದ ಛಾಪು ಮೂಡಿಸಿರುವ ಹಿರಿಯ ನಾಯಕ ಡಾ. ಎಚ್.ಕೆ. ಪಾಟೀಲರಿಗೆ ಸಚಿವ ಸಂಪುಟದಲ್ಲಿ ಅವಕಾಶ ನೀಡದಿರುವುದು ಉತ್ತರ ಕರ್ನಾಟಕದ ಜನತೆಗೆ ಮಾಡಿದ ಅನ್ಯಾಯವಾಗಿದೆ ಎಂದು ಗದಗ-ಬೆಟಗೇರಿ ಶಹರ ಯುವ ಕಾಂಗ್ರೆಸ್ ಅಧ್ಯಕ್ಷ ಅನ್ವರ ನದಾಫ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪತ್ರಿಕಾ ಪ್ರಕಟಣೆಯಲ್ಲಿ ಪ್ರತಿಕ್ರಿಯಿಸಿರುವ ಅವರು, ದಶಕಗಳ ಕಾಲ ಶಾಸಕರಾಗಿ, ವಿವಿಧ ಇಲಾಖೆಗಳ ಸಚಿವರಾಗಿ ಹಾಗೂ ಜನಪರ ಆಡಳಿತಗಾರರಾಗಿ ಎಚ್.ಕೆ. ಪಾಟೀಲರು ಸೇವೆ ಸಲ್ಲಿಸಿದ್ದಾರೆ. ನೀರಾವರಿ, ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್, ಕಾನೂನು ಹಾಗೂ ಸಂಸದೀಯ ವ್ಯವಹಾರಗಳಂತಹ ಪ್ರಮುಖ ಖಾತೆಗಳನ್ನು ಸಮರ್ಥವಾಗಿ ನಿಭಾಯಿಸಿರುವ ಅನುಭವ ಅವರಿಗೆ ಇದೆ ಎಂದು ಹೇಳಿದರು.

“ಕಾಂಗ್ರೆಸ್ ಪಕ್ಷದ ನಿಷ್ಠಾವಂತ ನಾಯಕರಾಗಿ ಸರ್ಕಾರದಲ್ಲಿ ಅತ್ಯುತ್ತಮ ಕೆಲಸ ಮಾಡಿದ ಕೀರ್ತಿ ಎಚ್.ಕೆ. ಪಾಟೀಲರಿಗೆ ಸಲ್ಲುತ್ತದೆ. ಉತ್ತರ ಕರ್ನಾಟಕದ ಧ್ವನಿಯಾಗಿ ರೈತರ ಪರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ” ಎಂದು ಶ್ಲಾಘಿಸಿದರು.

ರಾಜ್ಯದ ಸರ್ವ ಸಮುದಾಯಗಳ ಪ್ರೀತಿಗೆ ಪಾತ್ರರಾಗಿರುವ ಎಚ್.ಕೆ. ಪಾಟೀಲರು ದೀನ ದಲಿತರು, ಅಲ್ಪಸಂಖ್ಯಾತರು ಹಾಗೂ ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ನಿರಂತರ ಶ್ರಮಿಸಿದ್ದಾರೆ. ಇಂತಹ ಅನುಭವಿ, ಪ್ರಾಮಾಣಿಕ ಹಾಗೂ ಜನಪರ ನಾಯಕರಿಗೆ ಮುಂದಿನ ಸಚಿವ ಸಂಪುಟ ವಿಸ್ತರಣೆಯಲ್ಲಿ ಸಚಿವ ಸ್ಥಾನ ನೀಡಿ ಪ್ರಮುಖ ಜವಾಬ್ದಾರಿ ನೀಡಬೇಕು ಎಂದು ಆಗ್ರಹಿಸಿದರು.

ಉತ್ತರ ಕರ್ನಾಟಕ ಹಾಗೂ ಅಖಂಡ ಧಾರವಾಡ ಜಿಲ್ಲೆಯ ಜನರ ಆಶಯದಂತೆ ಎಚ್.ಕೆ. ಪಾಟೀಲರಿಗೆ ಸೂಕ್ತ ಸ್ಥಾನಮಾನ ನೀಡುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರಿಗೆ ಮನವಿ ಮಾಡಿದ್ದಾರೆ.

“ಜನಪರ ಆಡಳಿತ, ಪ್ರಾಮಾಣಿಕ ರಾಜಕಾರಣ ಮತ್ತು ಉತ್ತರ ಕರ್ನಾಟಕದ ಧ್ವನಿಯಾಗಿ ಕೆಲಸ ಮಾಡಿದ ಎಚ್.ಕೆ. ಪಾಟೀಲರಿಗೆ ಸಚಿವ ಸ್ಥಾನ ನೀಡದಿರುವುದು ಈ ಭಾಗದ ಜನತೆಗೆ ಮಾಡಿದ ಅನ್ಯಾಯ.”

ಅನ್ವರ ನದಾಫ

ಗದಗ-ಬೆಟಗೇರಿ ಶಹರ ಯುವ ಕಾಂಗ್ರೆಸ್ ಅಧ್ಯಕ್ಷ

ಅಗ್ನಿವೀರ್‌ಗೆ ನಾಲ್ವರು ವಿದ್ಯಾರ್ಥಿಗಳ ಆಯ್ಕೆ

ವಿಜಯಸಾಕ್ಷಿ ಸುದ್ದಿ, ನರೇಗಲ್: ಪಟ್ಟಣದ ಮರಿಯಪ್ಪ ಬಾಳಪ್ಪ ಕಳಕೊಣ್ಣವರ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ನಾಲ್ವರು ವಿದ್ಯಾರ್ಥಿಗಳು ಭಾರತೀಯ ಸೇನೆಯ ಅಗ್ನಿಪಥ್ ಯೋಜನೆಯಡಿ ಅಗ್ನಿವೀರ್‌ಗೆ ಆಯ್ಕೆಯಾಗಿದ್ದು, ಕಾಲೇಜಿಗೆ ಹೆಮ್ಮೆ ತಂದಿದ್ದಾರೆ.

ಇತ್ತೀಚೆಗೆ ನಡೆದ ನೇಮಕಾತಿ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದ ಬಿಎ 6ನೇ ಸೆಮಿಸ್ಟರ್‌ನ ಕಳಕಾಪುರ ಗ್ರಾಮದ ಶಾರುಖ್ ಹಸನಸಾಬ್ ಗೌಡರ, ಬಿಎ 4ನೇ ಸೆಮಿಸ್ಟರ್‌ನ ಮಾರನಬಸರಿ ಗ್ರಾಮದ ಬಸವರಾಜ್ ಲಂಕೆಪ್ಪ ಕುರಿ, ಬಿಎ 4ನೇ ಸೆಮಿಸ್ಟರ್‌ನ ಜಕ್ಕಲಿ ಗ್ರಾಮದ ಶಬ್ಬೀರಸಾಬ್ ಅಲ್ಲಿಸಾಬ್ ಬಸಾಪುರ ಹಾಗೂ ಬಿಎಸ್‌ಸಿ 4ನೇ ಸೆಮಿಸ್ಟರ್‌ನ ಜಕ್ಕಲಿ ಗ್ರಾಮದ ಶಂಕರಪ್ಪ ಮಲ್ಲಪ್ಪ ಇಟಗಿ ಅವರು ಸೇನೆಗೆ ಆಯ್ಕೆಯಾಗಿದ್ದಾರೆ ಎಂದು ಪ್ರಾಂಶುಪಾಲೆ ಜಯಶ್ರೀ ಮುತಗಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಗ್ನಿವೀರ್‌ಗೆ ಆಯ್ಕೆಯಾದ ವಿದ್ಯಾರ್ಥಿಗಳನ್ನು ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷರು ಹಾಗೂ ರೋಣ ಕ್ಷೇತ್ರದ ಶಾಸಕ ಜಿ.ಎಸ್. ಪಾಟೀಲ, ಸಿಡಿಸಿ ಸದಸ್ಯರು ಹಾಗೂ ಕಾಲೇಜಿನ ಸಿಬ್ಬಂದಿ ಅಭಿನಂದಿಸಿದ್ದಾರೆ.

ಇತ್ತೀಚೆಗೆ ಕಾಲೇಜಿನಲ್ಲಿ ನಡೆದ ಕ್ಯಾಂಪಸ್ ಸಂದರ್ಶನದಲ್ಲಿ ವಿವಿಧ ಕಂಪನಿಗಳಿಗೆ 79 ವಿದ್ಯಾರ್ಥಿಗಳು ಆಯ್ಕೆಯಾಗಿದ್ದರು. ಇದೀಗ ನಾಲ್ವರು ವಿದ್ಯಾರ್ಥಿಗಳು ಸೇನೆಗೆ ಆಯ್ಕೆಯಾಗುವ ಮೂಲಕ ಕಾಲೇಜಿನ ಕೀರ್ತಿಯನ್ನು ಮತ್ತಷ್ಟು ಹೆಚ್ಚಿಸಿದ್ದಾರೆ.

ಪ್ರಸಕ್ತ ಸಾಲಿನ ಪ್ರಥಮ ವರ್ಷದ ಪದವಿ ಕೋರ್ಸ್‌ಗಳ ಪ್ರವೇಶಾತಿಗೆ ವಿವಿಧ ಊರುಗಳಿಂದ ವಿದ್ಯಾರ್ಥಿಗಳು ಆಗಮಿಸುತ್ತಿದ್ದು, ಬಿಸಿಎ ವಿಭಾಗದ ಪ್ರವೇಶಾತಿ ಈಗಾಗಲೇ ಪೂರ್ಣಗೊಂಡಿದೆ. ಬಿಎ, ಬಿಕಾಂ ಹಾಗೂ ಬಿಎಸ್‌ಸಿ (ಸಿಎಸ್) ವಿಭಾಗಗಳಿಗೆ ಪ್ರವೇಶಾತಿ ಪ್ರಕ್ರಿಯೆ ಮುಂದುವರಿದಿದೆ ಎಂದು ಪ್ರಾಂಶುಪಾಲರು ತಿಳಿಸಿದ್ದಾರೆ.

15 ವರ್ಷಗಳ ಕಾಯುವಿಕೆ ಅಂತ್ಯ? ನಿವೇಶನ ವಿತರಣೆಗೆ ವೇಗ!

ವಿಜಯಸಾಕ್ಷಿ ಸುದ್ದಿ, ಮುಳಗುಂದ: ಪಟ್ಟಣ ಪಂಚಾಯತಿ ವತಿಯಿಂದ 2012ರಿಂದ ಕಡುಬಡವರು ಹಾಗೂ ನಿರ್ಗತಿಕರಿಗೆ ಹಂಚಿಕೆಯಾಗಬೇಕಿದ್ದ ನಿವೇಶನಗಳ ವಿತರಣೆ ವಿಳಂಬವಾಗಿರುವುದನ್ನು ಖಂಡಿಸಿ ಮಹಿಳೆಯರು ಪಟ್ಟಣ ಪಂಚಾಯತಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಈ ವೇಳೆ ಪ್ರತಿಭಟನಾಕಾರರೊಂದಿಗೆ ಮಾತನಾಡಿದ ಪಪಂ ಮುಖ್ಯಾಧಿಕಾರಿ ಮಂಜುನಾಥ ಗುಳೆದ, ಕಳೆದ 15 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ನಿವೇಶನ ಹಂಚಿಕೆ ಪ್ರಕ್ರಿಯೆ ಇದೀಗ ಚುರುಕುಗೊಂಡಿದೆ ಎಂದು ತಿಳಿಸಿದರು.

ಸುಮಾರು 4 ಸಾವಿರ ಅರ್ಜಿಗಳ ಪೈಕಿ 373 ಫಲಾನುಭವಿಗಳ ತಾತ್ಕಾಲಿಕ ಪಟ್ಟಿಯನ್ನು ಈಗಾಗಲೇ ಪ್ರಕಟಿಸಲಾಗಿದ್ದು, ಪರಿಶೀಲನಾ ಪ್ರಕ್ರಿಯೆ ನಡೆಯುತ್ತಿದೆ. ಉಸ್ತುವಾರಿ ಸಚಿವರ ಸೂಚನೆಯಂತೆ ಜಿಲ್ಲಾಧಿಕಾರಿ, ಆಡಳಿತಾಧಿಕಾರಿ ಹಾಗೂ ಅಧಿಕಾರಿಗಳು ಸರ್ವೇ ಕಾರ್ಯ ಕೈಗೊಂಡಿದ್ದು, ನಿವೇಶನ ರಹಿತ ಕುಟುಂಬಗಳ ಸಮೀಕ್ಷೆ ಪೂರ್ಣಗೊಂಡಿದೆ ಎಂದು ಹೇಳಿದರು.

ಆಗಸ್ಟ್ 15ರಂದು ಉಸ್ತುವಾರಿ ಸಚಿವರಿಂದ ಹಕ್ಕುಪತ್ರ ವಿತರಣೆ ಮಾಡುವ ಕುರಿತು ಚರ್ಚೆ ನಡೆದಿದ್ದು, ಪಟ್ಟಣದ ಹಿರಿಯರ ಸಮ್ಮುಖದಲ್ಲಿ ಅಂತಿಮ ನಿರ್ಧಾರ ಕೈಗೊಂಡು ಅರ್ಹ ಕುಟುಂಬಗಳಿಗೆ ನಿವೇಶನ ತಲುಪಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಮುಳಗುಂದ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಬಿ.ಜಿ. ಸುಬ್ಬಾಪೂರಮಠ ಹಾಗೂ ಪೊಲೀಸ್ ಸಿಬ್ಬಂದಿ ಬಂದುಬಸ್ತ್ ಕೈಗೊಂಡಿದ್ದು, ಪ್ರತಿಭಟನೆ ಶಾಂತಿಯುತವಾಗಿ ಅಂತ್ಯವಾಯಿತು.

ವರ್ಷಕ್ಕೆ ಎರಡು ಬಾರಿ ರಕ್ತದಾನ ಮಾಡಿ: ಡಾ. ದತ್ತಾತ್ರೇಯ

ವಿಜಯಸಾಕ್ಷಿ ಸುದ್ದಿ, ಗದಗ: ರಕ್ತದಾನವು ಕೇವಲ ಮತ್ತೊಬ್ಬರ ಜೀವ ಉಳಿಸುವ ಪುಣ್ಯದ ಕೆಲಸವಲ್ಲ, ಅದು ದಾನಿಯ ಆರೋಗ್ಯಕ್ಕೂ ವರದಾನ. ಪ್ರತಿಯೊಬ್ಬ ಆರೋಗ್ಯವಂತ ವ್ಯಕ್ತಿಯೂ ವರ್ಷಕ್ಕೆ ಕನಿಷ್ಠ ಎರಡು ಬಾರಿ ರಕ್ತದಾನ ಮಾಡುವ ಸಂಕಲ್ಪ ಮಾಡಬೇಕು ಎಂದು ರಕ್ತ ತಪಾಸಕ ಡಾ. ದತ್ತಾತ್ರೇಯ ವೈಕುಂಠೆ ಕರೆ ನೀಡಿದರು.

ನಗರದ ಶಾಸ್ತ್ರಿ ಮಹಿಳಾ ಬಿ.ಎಡ್ ಕಾಲೇಜು ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ, ಜೆಡಿಎಸ್ ಶಿಕ್ಷಣ ಸಂಸ್ಥೆ ಗದಗ ಹಾಗೂ ಭಾವಸಾರ ವಿಷನ್ ಇಂಡಿಯಾ ಇವರ ಸಂಯುಕ್ತ ಆಶ್ರಯದಲ್ಲಿ ಬಿ.ಎಡ್ ಪ್ರಶಿಕ್ಷಣಾರ್ಥಿಗಳಿಗಾಗಿ ಆಯೋಜಿಸಿದ್ದ ‘ಪೌರತ್ವ ತರಬೇತಿ ಹಾಗೂ ಉಚಿತ ರಕ್ತ ತಪಾಸಣಾ ಶಿಬಿರ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ರಕ್ತದಾನದ ವೈಜ್ಞಾನಿಕ ಮಹತ್ವವನ್ನು ವಿವರಿಸಿದ ಅವರು, “ಇಂದು ವಿಜ್ಞಾನ ಎಷ್ಟೇ ಮುಂದುವರೆದರೂ ರಕ್ತವನ್ನು ಕೃತಕವಾಗಿ ಉತ್ಪಾದಿಸಲು ಸಾಧ್ಯವಿಲ್ಲ. ನಾವು ರಕ್ತದಾನ ಮಾಡಿದಾಗ ದೇಹದಲ್ಲಿ ಹೊಸ ರಕ್ತಕಣಗಳ ಉತ್ಪತ್ತಿ ಚುರುಕುಗೊಳ್ಳುತ್ತದೆ. ಇದರಿಂದ ದೇಹದ ಚಯಾಪಚಯ ಕ್ರಿಯೆ ಸುಧಾರಿಸಿ ಆರೋಗ್ಯ ಉತ್ತಮವಾಗುತ್ತದೆ,” ಎಂದರು.

ಪ್ರತಿಯೊಬ್ಬರೂ ತಮ್ಮ ರಕ್ತದ ಗುಂಪಿನ ಬಗ್ಗೆ ಸ್ಪಷ್ಟ ಮಾಹಿತಿ ಹೊಂದಿರಬೇಕು. ಅಪಘಾತ ಹಾಗೂ ತುರ್ತು ಚಿಕಿತ್ಸೆಯ ಸಂದರ್ಭಗಳಲ್ಲಿ ಇದು ಜೀವ ಉಳಿಸಲು ನೆರವಾಗುತ್ತದೆ ಎಂದು ಅವರು ಹೇಳಿದರು.

ಜನ್ಮದಿನ, ವಿವಾಹ ವಾರ್ಷಿಕೋತ್ಸವ ಹಾಗೂ ಹಬ್ಬ-ಹರಿದಿನಗಳಂತಹ ಸಂದರ್ಭಗಳಲ್ಲಿ ರಕ್ತದಾನ ಮಾಡುವ ಸಂಸ್ಕೃತಿ ಬೆಳೆಸಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯೆ ಡಾ. ಎಸ್.ಬಿ. ಹೊನ್ನಗುಡಿ ಮಾತನಾಡಿ, “ಶಿಕ್ಷಕಿಯರಾಗುವ ನೀವು ಸಮಾಜಕ್ಕೆ ಮಾದರಿಯಾಗಬೇಕು. ನಿಮ್ಮ ಒಂದು ಯೂನಿಟ್ ರಕ್ತ ಮೂರು ಜೀವಗಳನ್ನು ಉಳಿಸಬಲ್ಲದು,” ಎಂದು ಪ್ರಶಿಕ್ಷಣಾರ್ಥಿಗಳಿಗೆ ಕರೆ ನೀಡಿದರು.

ಶಿಬಿರದಲ್ಲಿ ಡಾ. ದತ್ತಾತ್ರೇಯ ವೈಕುಂಠೆ ಅವರು 95 ಬಿ.ಎಡ್ ಪ್ರಶಿಕ್ಷಣಾರ್ಥಿಗಳ ರಕ್ತದ ಗುಂಪು ತಪಾಸಣೆ ನಡೆಸಿ, ಬಳಿಕ ರಕ್ತದ ಗುಂಪು ನಮೂದಿಸಿದ ಗುರುತಿನ ಚೀಟಿಗಳನ್ನು ವಿತರಿಸಿದರು.

ಮುಖ್ಯ ಅತಿಥಿಗಳಾಗಿ ಡಾ. ಹರೀಶ ವೈಕುಂಠೆ, ನಾಗರಾಜ ವಾದೋನೆ ಭಾಗವಹಿಸಿದ್ದರು. ವೇದಿಕೆಯಲ್ಲಿ ಡಾ. ಡಿ.ಎಂ. ನದಾಫ್, ವಿ.ಕೆ. ಅರಳಿಮಠ, ಗಂಗಾಧರ, ಆರ್.ಎ. ಕೆರೂರ, ಸತೀಶ, ಈಶ್ವರ, ಶ್ರೀಮತಿ ಎನ್.ಎಂ. ಮಟ್ಟಿ ಉಪಸ್ಥಿತರಿದ್ದರು.

ಪ್ರೊ. ಎಂ. ಸಂದೀಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಸೌಭಾಗ್ಯ ಚೂರಿಮಠ ಹಾಗೂ ಭುವನೇಶ್ವರಿ ಕಮಡೊಳ್ಳಿ ಸಂದರ್ಭೋಚಿತವಾಗಿ ಮಾತನಾಡಿದರು. ಸವಿತಾ ಮತ್ತು ತಂಡ ಪ್ರಾರ್ಥಿಸಿದರು. ಅನುರಾಧಾ ಬೆಟಗೇರಿ ಹಾಗೂ ಗೌರಮ್ಮ ಮಜ್ಜಿಗುಡ್ಡ ಕಾರ್ಯಕ್ರಮ ನಿರೂಪಿಸಿದರು. ನೀಲಮ್ಮ ಐದನಾಳ ವಂದಿಸಿದರು.

“ಶಾಲಾ ಹಂತದಲ್ಲೇ ಮಕ್ಕಳಲ್ಲಿ ರಕ್ತದಾನದ ಬಗ್ಗೆ ಜಾಗೃತಿ ಮೂಡಿಸಲು ರಕ್ತದ ಗುಂಪಿನ ಮಹತ್ವ ಹಾಗೂ ರಕ್ತದಾನದ ಅಗತ್ಯವನ್ನು ಪಠ್ಯಪುಸ್ತಕಗಳಲ್ಲಿ ಅಳವಡಿಸಬೇಕು.” 

ಡಾ. ದತ್ತಾತ್ರೇಯ ವೈಕುಂಠೆ

ಹೆದ್ದಾರಿಯಲ್ಲಿ ಜೈನ ಮುನಿಗಳ ಜೀವಕ್ಕೆ ಕಂಟಕ: ಸುರಕ್ಷತಾ ಕ್ರಮ ಕೈಗೊಳ್ಳುವಂತೆ ಮನವಿ

ವಿಜಯಸಾಕ್ಷಿ ಸುದ್ದಿ, ಗದಗ: ಜೈನ ಮುನಿಗಳು ಹಾಗೂ ಸಾಧ್ವಿಯರ ಮೇಲೆ ಇತ್ತೀಚೆಗೆ ಹೆಚ್ಚುತ್ತಿರುವ ರಸ್ತೆ ಅಪಘಾತಗಳಿಗೆ ತೀವ್ರ ಆತಂಕ ವ್ಯಕ್ತಪಡಿಸಿರುವ ಗದಗ ಜಿಲ್ಲಾ ಜೈನ ಸಮಾಜ, ಅಹಿಂಸೆಯ ಸಂದೇಶ ಹೊತ್ತು ದೇಶಾದ್ಯಂತ ಬರಿಗಾಲಿನಲ್ಲಿ ಪಾದಯಾತ್ರೆ ಮಾಡುವ ಜೈನ ತಪಸ್ವಿಗಳಿಗೆ ತಕ್ಷಣ ಸುರಕ್ಷತಾ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಪ್ರಧಾನಮಂತ್ರಿ ಹಾಗೂ ರಾಷ್ಟ್ರಪತಿಗೆ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಿತು.

ನಗರದ ಗುಜ್ಜರ ಬಸ್ತಿಯಿಂದ ಶುಕ್ರವಾರ ಆರಂಭವಾದ ಶಾಂತ ಹಾಗೂ ಮೌನ ಬೃಹತ್ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಜಿಲ್ಲಾಧಿಕಾರಿಗಳ ಕಚೇರಿಗೆ ತಲುಪಿತು. ಮೆರವಣಿಗೆಯಲ್ಲಿ ಜೈನ ಸಮಾಜದ ನೂರಾರು ಸದಸ್ಯರು ಭಾಗವಹಿಸಿ ತಪಸ್ವಿಗಳ ರಕ್ಷಣೆಗೆ ಸರ್ಕಾರ ಮಧ್ಯಪ್ರವೇಶಿಸಬೇಕು ಎಂದು ಒತ್ತಾಯಿಸಿದರು.

ಮನವಿಯಲ್ಲಿ, “ಶತಮಾನಗಳಿಂದ ಜೈನ ಸಾಧು-ಸಾಧ್ವಿಯರು ಅಹಿಂಸೆ, ಶಾಂತಿ ಹಾಗೂ ಆಧ್ಯಾತ್ಮಿಕ ಶಿಸ್ತಿನ ಸಂದೇಶದೊಂದಿಗೆ ದೇಶಾದ್ಯಂತ ಪಾದಯಾತ್ರೆ ನಡೆಸುತ್ತಿದ್ದಾರೆ. ಆದರೆ ಇಂದು ಹೆದ್ದಾರಿಗಳಲ್ಲೇ ಅವರ ಜೀವ ಅಪಾಯಕ್ಕೆ ಸಿಲುಕುತ್ತಿದೆ,” ಎಂದು ಆತಂಕ ವ್ಯಕ್ತಪಡಿಸಲಾಗಿದೆ.

ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳ ಪಕ್ಕದಲ್ಲಿ ಜೈನ ತಪಸ್ವಿಗಳು, ಗ್ರಾಮೀಣರು ಹಾಗೂ ಕಾಲ್ನಡಿಗೆ ಪ್ರಯಾಣಿಕರಿಗಾಗಿ ಪ್ರತ್ಯೇಕ ಸುರಕ್ಷಿತ ಪಾದಚಾರಿ ಕಾರಿಡಾರ್ ನಿರ್ಮಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಇದೇ ವೇಳೆ “ಸನ್ಯಾಸಿ ದಾಟುವಿಕೆ ವಲಯ” ಎಂಬ ಶಾಶ್ವತ ಎಚ್ಚರಿಕೆ ಫಲಕಗಳ ಅಳವಡಿಕೆ, ವಾಹನಗಳ ವೇಗ ನಿಯಂತ್ರಣ, ಅಪಘಾತ ಪ್ರಕರಣಗಳಲ್ಲಿ ನಿಷ್ಪಕ್ಷಪಾತ ತನಿಖೆ ಹಾಗೂ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗಿದೆ.

ಜೈನ ಮುನಿಗಳು ಹೆಚ್ಚಾಗಿ ವಿಹಾರ ಮಾಡುವ ಬೆಳಿಗ್ಗೆ 4ರಿಂದ 8 ಗಂಟೆ ಹಾಗೂ ಸಂಜೆ 5ರಿಂದ 6.30ರ ಅವಧಿಯಲ್ಲಿ ಹೆದ್ದಾರಿಗಳಲ್ಲಿ ವಿಶೇಷ ಪೊಲೀಸ್ ಗಸ್ತು ಹಾಗೂ ಮೇಲ್ವಿಚಾರಣೆ ಕೈಗೊಳ್ಳಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಆರ್‌ಟಿಓ ಮೂಲಕ ಚಾಲನಾ ಪರವಾನಗಿ ನೀಡುವ ಪ್ರಕ್ರಿಯೆಯಲ್ಲಿ “ಬರಿಗಾಲಿನ ತಪಸ್ವಿಗಳ ಸುರಕ್ಷತೆ” ಕುರಿತು ಜಾಗೃತಿ ಮಾಡ್ಯೂಲ್ ಸೇರಿಸಬೇಕೆಂದೂ ಆಗ್ರಹಿಸಲಾಗಿದೆ.

ಶ್ವೇತಾಂಬರ ಮೂರ್ತಿಪೂಜಕ ಸಮಾಜದ ಅಧ್ಯಕ್ಷ ಇಂದ್ರಕುಮಾರ ಬಾಫಣಾ, ವರ್ಧಮಾನ ಸ್ಥಾನಕವಾಸಿ ಸಮಾಜದ ಅಧ್ಯಕ್ಷ ರೂಪಚಂದಜೀ ಪಾಲರೇಚಾ, ತೇರಾಪಂಥ ಸಮಾಜದ ಅಧ್ಯಕ್ಷ ಖೀಮಚಂದ ಬನ್ಸಾಲಿ, ಕೆಡಿಒ ಜೈನ ಮಹಾಜನ್ ಸಮಾಜದ ಅಧ್ಯಕ್ಷ ವಿಜಯ ಲೂಥಿಯಾ, ದಿಗಂಬರ ಜೈನ ಸಮಾಜದ ಅಧ್ಯಕ್ಷ ಪದ್ಮರಾಜ ಕುಲಕರ್ಣಿ ಸೇರಿದಂತೆ ಸಮಾಜದ ಮುಖಂಡರು, ಮಹಿಳಾ ಹಾಗೂ ಯುವಕ ಮಂಡಳದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ, ಸರ್ಕಾರಕ್ಕೆ ರವಾನಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಪ್ರಮುಖ ಬೇಡಿಕೆಗಳು

  • ಜೈನ ಮುನಿಗಳಿಗಾಗಿ ಸುರಕ್ಷಿತ ಪಾದಚಾರಿ ಕಾರಿಡಾರ್ ನಿರ್ಮಾಣ
  • “ಸನ್ಯಾಸಿ ದಾಟುವಿಕೆ ವಲಯ” ಎಚ್ಚರಿಕೆ ಫಲಕ ಅಳವಡಿಕೆ
  • ಹೆದ್ದಾರಿಗಳಲ್ಲಿ ವೇಗ ನಿಯಂತ್ರಣ ಕ್ರಮ
  • ಅಪಘಾತ ಪ್ರಕರಣಗಳಲ್ಲಿ ನಿಷ್ಪಕ್ಷಪಾತ ತನಿಖೆ
  • ವಿಶೇಷ ಪೊಲೀಸ್ ಗಸ್ತು ವ್ಯವಸ್ಥೆ
  • ಚಾಲನಾ ಪರವಾನಗಿಯಲ್ಲಿ ಜಾಗೃತಿ ಮಾಡ್ಯೂಲ್ ಸೇರ್ಪಡೆ

ಶಿರಹಟ್ಟಿ ರಾಜಕೀಯದಲ್ಲಿ ರವಿಕಾಂತ ಅಂಗಡಿ ಹೆಸರು ಸದ್ದು!

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಮುಂಬರುವ ವಿಧಾನಸಭಾ ಚುನಾವಣೆಗೆ ಮುನ್ನ ಶಿರಹಟ್ಟಿ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗುವ ಬೆಳವಣಿಗೆಯಲ್ಲಿ, ವಕೀಲ ಹಾಗೂ ಹೋರಾಟಗಾರ ರವಿಕಾಂತ ಅಂಗಡಿ ಅವರು ಚುನಾವಣಾ ಕಣಕ್ಕಿಳಿಯಬೇಕು ಎಂದು ಶಿರಹಟ್ಟಿ ತಾಲೂಕು ವಕೀಲರ ಸಂಘ ಆಗ್ರಹಿಸಿದೆ.

ಪಟ್ಟಣದ ವಕೀಲರ ಸಂಘದಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಎಸ್.ವೈ. ಗೊಬ್ಬರಗುಂಪಿ, “ಶಿರಹಟ್ಟಿ ಮತಕ್ಷೇತ್ರದ ಸಮಗ್ರ ಅಭಿವೃದ್ಧಿ ಹಾಗೂ ಜನರ ಸಮಸ್ಯೆಗಳ ಶಾಶ್ವತ ಪರಿಹಾರಕ್ಕಾಗಿ ದೀರ್ಘಕಾಲದಿಂದ ಹೋರಾಟ ನಡೆಸುತ್ತಿರುವ ವಕೀಲ ರವಿಕಾಂತ ಅಂಗಡಿ ಅವರು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಬೇಕು,” ಎಂದು ಒತ್ತಾಯಿಸಿದರು.

ರವಿಕಾಂತ ಅಂಗಡಿ ಅವರು ಹಲವು ವರ್ಷಗಳಿಂದ ಜನಪರ ಹಾಗೂ ರೈತಪರ ಹೋರಾಟಗಳಲ್ಲಿ ಸಕ್ರಿಯರಾಗಿದ್ದು, ಶಿರಹಟ್ಟಿ, ಮುಂಡರಗಿ ಹಾಗೂ ಲಕ್ಷ್ಮೇಶ್ವರ ಭಾಗದ ರೈತರ ಜಮೀನು ರಕ್ಷಣೆ, ರೈತರ ಹಕ್ಕುಗಳ ಪರ ಹೋರಾಟ, ಸಾಮಾಜಿಕ ನ್ಯಾಯ ಹಾಗೂ ಪರಿಸರ ಸಂರಕ್ಷಣೆಯಂತಹ ವಿಚಾರಗಳಲ್ಲಿ ಗಮನಾರ್ಹ ಪಾತ್ರ ವಹಿಸಿದ್ದಾರೆ ಎಂದು ಹೇಳಿದರು.

ಸಾಮಾನ್ಯ ಜನರ ಸಂಕಷ್ಟಗಳಿಗೆ ತಕ್ಷಣ ಸ್ಪಂದಿಸುವ ಗುಣ, ಕಾನೂನು ಕ್ಷೇತ್ರದಲ್ಲಿನ ಅನುಭವ ಹಾಗೂ ಜನಸೇವೆಯ ಬದ್ಧತೆಯಿಂದ ರವಿಕಾಂತ ಅಂಗಡಿ ಅವರು ಸಾರ್ವಜನಿಕರ ವಿಶ್ವಾಸ ಗಳಿಸಿದ್ದಾರೆ. ಕ್ಷೇತ್ರದ ಅಭಿವೃದ್ಧಿಗೆ ಹೊಸ ಚಿಂತನೆ ಹಾಗೂ ಪರಿಣಾಮಕಾರಿ ನಾಯಕತ್ವ ನೀಡುವ ಸಾಮರ್ಥ್ಯ ಅವರಲ್ಲಿದೆ ಎಂದು ಅಭಿಪ್ರಾಯಪಟ್ಟರು.

ಶಿರಹಟ್ಟಿ ಮತಕ್ಷೇತ್ರದ ಜನರು ಅಭಿವೃದ್ಧಿಪರ ಹಾಗೂ ಜನರ ನಡುವೆ ನಿರಂತರ ಸಂಪರ್ಕ ಹೊಂದಿರುವ ನಾಯಕತ್ವ ನಿರೀಕ್ಷಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ರವಿಕಾಂತ ಅಂಗಡಿ ಅವರು ಚುನಾವಣೆಗೆ ಸ್ಪರ್ಧಿಸಬೇಕು ಎಂಬುದು ಕ್ಷೇತ್ರದ ಜನರ ಆಶಯವಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ವಕೀಲರ ಸಂಘದ ಉಪಾಧ್ಯಕ್ಷ ಎ.ವಿ. ಮಾನೆ, ಕಾರ್ಯದರ್ಶಿ ಎ.ಎ. ಬೇವಿನಗಿಡದ, ಜಂಟಿ ಕಾರ್ಯದರ್ಶಿ ಮಹೇಶ ದಾನಪ್ಪಗೌಡರ, ಖಜಾಂಚಿ ಶ್ರೀಮತಿ ಬಂಡಿವಡ್ಡರ ಸೇರಿದಂತೆ ಹಲವು ಸದಸ್ಯರು ಉಪಸ್ಥಿತರಿದ್ದರು.

ಜನರ ಪರ ಹೋರಾಟಕ್ಕೆ ಸದಾ ಸಿದ್ಧ

ಸಭೆಯಲ್ಲಿ ಮಾತನಾಡಿದ ವಕೀಲ ರವಿಕಾಂತ ಅಂಗಡಿ, “ನಾನು ಜನರ ಹಾಗೂ ರೈತರ ಸಮಸ್ಯೆಗಳ ಪರ ಸಾಕಷ್ಟು ಹೋರಾಟಗಳನ್ನು ನಡೆಸಿದ್ದೇನೆ. ಮುಂದೆಯೂ ಜನಪರ ಹಾಗೂ ರೈತಪರ ಕಾರ್ಯಗಳಿಗೆ ಸದಾ ಸಿದ್ಧನಿದ್ದೇನೆ. ಎಲ್ಲರ ಆಶಯದಂತೆ ಸ್ಪರ್ಧಿಸುವ ಅವಕಾಶ ದೊರೆತಲ್ಲಿ ಜನರ ಸೇವೆಗೆ ಇನ್ನಷ್ಟು ಬಲ ದೊರೆಯುತ್ತದೆ,” ಎಂದು ಹೇಳಿದರು.

₹4 ಕೋಟಿ ಕಾಮಗಾರಿ, ನೀರು ಮಾತ್ರ ಇಲ್ಲ: ಜೆಜೆಎಂ ವಿರುದ್ಧ ಲಕ್ಕುಂಡಿ ಗ್ರಾಮಸಭೆಯಲ್ಲಿ ಆಕ್ರೋಶ

ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ: ಜಲ ಜೀವನ ಮಿಷನ್ (ಜೆಜೆಎಂ) ಯೋಜನೆಯ ಅಸಮರ್ಪಕ ಕಾಮಗಾರಿ, ಕುಡಿಯುವ ನೀರಿನ ತಾರತಮ್ಯ ಪೂರೈಕೆ ಹಾಗೂ ಗ್ರಾಮ ಅಭಿವೃದ್ಧಿ ವಿಚಾರಗಳು ಲಕ್ಕುಂಡಿ ಗ್ರಾಮ ಪಂಚಾಯಿತಿ ವಿಶೇಷ ಗ್ರಾಮಸಭೆಯಲ್ಲಿ ತೀವ್ರ ಚರ್ಚೆಗೆ ಗ್ರಾಸವಾದವು.

ಅನ್ನದಾನೀಶ್ವರ ಸಭಾಭವನದಲ್ಲಿ ನಡೆದ ಗ್ರಾಮಸಭೆಯಲ್ಲಿ ಮಹಿಳೆಯರು ಹಾಗೂ ಯುವಕರು ಆಕ್ರೋಶ ವ್ಯಕ್ತಪಡಿಸಿ, “ಗ್ರಾಮದ 5 ವಾರ್ಡ್‌ಗಳಿಗೆ ಮಾತ್ರ ಸಮರ್ಪಕ ನೀರು ಪೂರೈಕೆಯಾಗುತ್ತಿದೆ. 6, 7, 8, 9 ಹಾಗೂ 10ನೇ ವಾರ್ಡ್‌ಗಳಿಗೆ 8ರಿಂದ 12 ದಿನಕ್ಕೊಮ್ಮೆ ನೀರು ಬರುತ್ತಿದ್ದು ಜನರು ಹಾಗೂ ಜಾನುವಾರುಗಳು ಸಂಕಷ್ಟ ಅನುಭವಿಸುತ್ತಿವೆ,” ಎಂದು ದೂರಿದರು.

ತಾ.ಪಂ ಮಾಜಿ ಅಧ್ಯಕ್ಷ ಎಂ.ಎನ್. ಉಮಚಗಿ ಹಾಗೂ ಎನ್.ಐ. ಕಿರಿಟಗೇರಿ ಮಾತನಾಡಿ, “ಕಾಮಗಾರಿ ಪೂರ್ಣಗೊಂಡಿದೆ ಎಂದು ಹೇಳಲಾಗುತ್ತಿದೆ. ಆದರೆ ನೀರು ಮಾತ್ರ ಬರುತ್ತಿಲ್ಲ. ಸಂಬಂಧಪಟ್ಟ ಇಂಜಿನಿಯರ್ ಹಾಗೂ ಗುತ್ತಿಗೆದಾರರ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಲಾಗುವುದು,” ಎಂದು ಎಚ್ಚರಿಸಿದರು.

ಗ್ರಾಮಸಭೆಯ ಅಧ್ಯಕ್ಷತೆ ವಹಿಸಿದ್ದ ಶರಣು ಗೋಗೇರಿ ಮಾತನಾಡಿ, “101 ದೇವಸ್ಥಾನ ಹಾಗೂ ಭಾವಿಗಳನ್ನು ಹೊಂದಿರುವ ಲಕ್ಕುಂಡಿಯನ್ನು ವಿಶ್ವ ಪರಂಪರೆ ಪಟ್ಟಿಗೆ ಸೇರಿಸಲು ಶಾಸಕ ಎಚ್. ಕೆ. ಪಾಟೀಲ ಹಾಗೂ ಶಾಸಕ ಸಿ. ಸಿ. ಪಾಟೀಲ ಶ್ರಮಿಸುತ್ತಿದ್ದಾರೆ. ಗ್ರಾಮವನ್ನು ಸ್ವಚ್ಛ ಹಾಗೂ ಸುಂದರವಾಗಿ ಉಳಿಸಿ ಪ್ರವಾಸಿಗರನ್ನು ಸೆಳೆಯಲು ಗ್ರಾಮಸ್ಥರು ಸಹಕರಿಸಬೇಕು,” ಎಂದು ಮನವಿ ಮಾಡಿದರು.

ಗ್ರಾಮೀಣ ವಿಶ್ವವಿದ್ಯಾಲಯದ ಸಂಯೋಜಕ ಸೋಮಲಿಂಗ ಕರ್ಣಿ ಪರಿಸರ ಸಂರಕ್ಷಣೆಯ ಮಹತ್ವ ಕುರಿತು ಮಾತನಾಡಿದರು. ನ್ಯಾಯವಾದಿ ಸುಪರ್ಣ ಬ್ಯಾಹಟ್ಟಿ ಮಹಿಳಾ ಕಾನೂನುಗಳ ಕುರಿತು ಹಾಗೂ ಸುಜಾತಾ ಶಾಸ್ತ್ರಿಮಠ ಮಹಿಳಾ ಜಾಗೃತಿ ಕುರಿತು ಮಾಹಿತಿ ನೀಡಿದರು.

ಪಿಡಿಒ ಡಾ. ಅಮೀರನಾಯಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಎಂ.ಎ. ಗಾಜಿ ಸ್ವಾಗತಿಸಿದರು.

ಗ್ರಾಮಸಭೆಯಲ್ಲಿ ಆಶ್ರಯ ವಸತಿ ಯೋಜನೆಯಡಿ ಜೀತ ಪದ್ಧತಿಯಿಂದ ಮುಕ್ತಿ ಪಡೆದ ಪಕ್ಕಣ್ಣ ಬೇಲೇರಿ, ಮ್ಯಾನುಯಲ್ ಸ್ಕಾವೆಂಜರ್ ಸೇವೆಯ ಮಾಯಪ್ಪ ಮುಳ್ಳಾಳ ಹಾಗೂ ವಿಜಯಲಕ್ಷ್ಮಿ ಕರಿ ಅವರನ್ನು ಫಲಾನುಭವಿಗಳಾಗಿ ಆಯ್ಕೆ ಮಾಡಲಾಯಿತು.

ಇದೇ ವೇಳೆ 2018ರಲ್ಲಿ ಆಯ್ಕೆಯಾಗಿದ್ದ ಕೆಲ ಫಲಾನುಭವಿಗಳ ಬದಲಿಗೆ ಅದೇ ಕುಟುಂಬದ ಸದಸ್ಯರನ್ನು ಮರು ಆಯ್ಕೆ ಮಾಡುವ ಠರಾವನ್ನು ಸಭೆಯಲ್ಲಿ ಓದಿ ತಿಳಿಸಲಾಯಿತು.

ಜೆಜೆಎಂ ಯೋಜನೆ ವಿರುದ್ಧ ಗರಂ

ಸುಮಾರು ₹4 ಕೋಟಿ ವೆಚ್ಚದಲ್ಲಿ ಪೂರ್ಣಗೊಂಡಿದೆ ಎನ್ನಲಾಗುತ್ತಿರುವ ಜೆಜೆಎಂ ಕಾಮಗಾರಿಯಲ್ಲೂ ಇದುವರೆಗೂ ನೀರು ಪೂರೈಕೆ ಆರಂಭವಾಗಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ವಾಲ್‌ಮನ್‌ಗೆ ಆಡಳಿತಾಧಿಕಾರಿ ತರಾಟೆ

ಈ ವೇಳೆ ನೀರು ಪೂರೈಕೆ ಮಾಡುತ್ತಿರುವ ವಾಲ್‌ಮನ್‌ರನ್ನು ಸಭೆಗೆ ಕರೆಯಿಸಿದ ಆಡಳಿತಾಧಿಕಾರಿ ಹಾಗೂ ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಶರಣು ಗೋಗೇರಿ, “ಸಮರ್ಪಕ ನೀರು ಪೂರೈಕೆಗೆ ಅಗತ್ಯ ಸಂಪನ್ಮೂಲ ಒದಗಿಸಲಾಗುತ್ತಿದೆ. ಸಮಸ್ಯೆಗಳನ್ನು ತಕ್ಷಣ ಗಮನಕ್ಕೆ ತರಬೇಕು. ನಿರ್ಲಕ್ಷ್ಯ ವಹಿಸಿದರೆ ಕ್ರಮ ಅನಿವಾರ್ಯ,” ಎಂದು ಎಚ್ಚರಿಕೆ ನೀಡಿದರು.

error: Content is protected !!