ನವದೆಹಲಿ: ರಾಮ್ ಚರಣ್ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ ‘ಪೆದ್ದಿ’ ಬಿಡುಗಡೆಗೆ ಸಜ್ಜಾಗುತ್ತಿರುವ ನಡುವೆಯೇ ಚಿತ್ರದ ಪ್ರಚಾರ ಹೊಸ ಹಂತಕ್ಕೇರಿದೆ. ದೆಹಲಿಯಲ್ಲಿ ನಡೆದ ಭರ್ಜರಿ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ರಾಮ್ ಚರಣ್, ಪ್ರಧಾನಿ ನರೇಂದ್ರ ಮೋದಿ ಜೊತೆ ‘ಪೆದ್ದಿ’ ಕುರಿತಾಗಿ ನಡೆದ ವಿಶೇಷ ಸಂಭಾಷಣೆಯನ್ನು ಬಹಿರಂಗಪಡಿಸಿದ್ದು, ಅದು ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ.
“‘ಪೆದ್ದಿ’ ಕೇವಲ ಸಿನಿಮಾ ಅಲ್ಲ. ಇದು ಹಳ್ಳಿಯ ಯುವಕರ ಕನಸು, ಪ್ರತಿಭೆ ಮತ್ತು ಹೋರಾಟದ ಕಥೆ,” ಎಂದು ರಾಮ್ ಚರಣ್ ಹೇಳಿದರು. ಗ್ರಾಮೀಣ ಭಾರತದ ಅಸಲಿ ಶಕ್ತಿಯನ್ನು ಈ ಸಿನಿಮಾ ತೆರೆಗೆ ತರುತ್ತದೆ ಎಂದು ಅವರು ಸ್ಪಷ್ಟಪಡಿಸಿದರು.
ಪ್ರಧಾನಿ ಮೋದಿ ಜೊತೆಗಿನ ಭೇಟಿಯನ್ನು ನೆನೆಸಿಕೊಂಡ ರಾಮ್ ಚರಣ್, “ನಾನು ದೆಹಲಿಯಲ್ಲಿ ಮೋದಿ ಅವರನ್ನು ಭೇಟಿಯಾದಾಗ ಅವರು ‘ಪೆದ್ದಿ’ ಬಗ್ಗೆ ಕೇಳಿದರು. ಆಗ ನಾನು ಇದು ಹಳ್ಳಿಗಳಿಂದ ರಾಷ್ಟ್ರಮಟ್ಟಕ್ಕೆ ಹೊರಹೊಮ್ಮುವ ಪ್ರತಿಭೆಗಳ ಕಥೆ ಎಂದು ವಿವರಿಸಿದೆ,” ಎಂದರು.
ಅದಕ್ಕೆ ಪ್ರತಿಕ್ರಿಯಿಸಿದ್ದ ಮೋದಿ, ಪಶ್ಚಿಮ ಬಂಗಾಳದ ಒಂದು ಹಳ್ಳಿಯ ಫುಟ್ಬಾಲ್ ಆಟಗಾರರ ಉದಾಹರಣೆ ನೀಡಿದರಂತೆ. “ಒಬ್ಬ ಆಟಗಾರ ಸಾಧನೆ ಮಾಡಿದ ಬಳಿಕ ಇಡೀ ಹಳ್ಳಿ ಫುಟ್ಬಾಲ್ ಕಡೆ ತಿರುಗಿತು. ಈಗ ಆ ಪ್ರದೇಶವೇ ಪ್ರತಿಭೆಗಳ ಕೇಂದ್ರವಾಗಿದೆ,” ಎಂದು ಪ್ರಧಾನಿ ಹೇಳಿದ್ದನ್ನು ರಾಮ್ ಚರಣ್ ಬಹಿರಂಗಪಡಿಸಿದರು.
‘ಪೆದ್ದಿ’ ಸಿನಿಮಾದಲ್ಲಿ ರಾಮ್ ಚರಣ್ ಗ್ರಾಮೀಣ ಹಿನ್ನೆಲೆಯ ಯುವಕನಾಗಿ ಕಾಣಿಸಿಕೊಳ್ಳಲಿದ್ದು, ಕ್ರಿಕೆಟ್ನಿಂದ ಕುಸ್ತಿ ಕ್ಷೇತ್ರದವರೆಗೆ ಸಾಗುವ ಪ್ರೇರಣಾದಾಯಕ ಪಯಣ ಕಥೆಯ ಹೈಲೈಟ್ ಆಗಿದೆ. ಪಾತ್ರಕ್ಕಾಗಿ ವಿಶೇಷ ದೈಹಿಕ ತಯಾರಿ ನಡೆಸಬೇಕಾಯಿತು ಎಂದು ರಾಮ್ ಚರಣ್ ಹೇಳಿದ್ದಾರೆ.
ಜಾನ್ಹವಿ ಕಪೂರ್ ನಾಯಕಿಯಾಗಿ ನಟಿಸಿರುವ ಈ ಸಿನಿಮಾದಲ್ಲಿ ಶಿವರಾಜ್ ಕುಮಾರ್, ಜಗಪತಿ ಬಾಬು, ಬೊಮನ್ ಇರಾನಿ ಸೇರಿದಂತೆ ದೊಡ್ಡ ತಾರಾಬಳಗವೇ ಇದೆ. ಎಆರ್ ರೆಹಮಾನ್ ಸಂಗೀತ ನೀಡಿರುವ ಈ ಚಿತ್ರವನ್ನು ಮೈತ್ರಿ ಮೂವಿ ಮೇಕರ್ಸ್ ಅದ್ಧೂರಿಯಾಗಿ ನಿರ್ಮಿಸಿದೆ.

