ಬೆಂಗಳೂರು: ಪತ್ನಿ ನೀಡಿದ ದೂರಿನ ಆಧಾರದ ಮೇಲೆ ಕಾನೂನು ಪ್ರಕ್ರಿಯೆಯನ್ನು ಸಮರ್ಪಕವಾಗಿ ಪಾಲಿಸದೆ ಪತಿಯನ್ನು ಬಂಧಿಸಿ ಜೈಲಿಗೆ ಕಳುಹಿಸಿದ ಬಾಗಲೂರು ಪೊಲೀಸರ ಕ್ರಮವನ್ನು ಕರ್ನಾಟಕ ಹೈಕೋರ್ಟ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ಕಳೆದ ಏಪ್ರಿಲ್ನಿಂದ ಜೈಲಿನಲ್ಲಿದ್ದ ಅರ್ಜಿದಾರರನ್ನು ತಕ್ಷಣ ಬಿಡುಗಡೆ ಮಾಡುವಂತೆ ನ್ಯಾಯಾಲಯ ಆದೇಶಿಸಿದೆ.
ಬಾಗಲೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವನ್ನು ರದ್ದುಪಡಿಸುವಂತೆ ಹಾಗೂ ಬಂಧನದಿಂದ ಬಿಡುಗಡೆ ಕೋರಿ ರಾಮಕೃಷ್ಣಂ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ, ತಪ್ಪಿತಸ್ಥ ಪೊಲೀಸ್ ಅಧಿಕಾರಿಯ ವಿರುದ್ಧ 12 ವಾರಗಳೊಳಗೆ ಇಲಾಖಾ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಿದೆ.
ವಿಚಾರಣೆ ವೇಳೆ ಹಾಜರಾಗಿದ್ದ ತನಿಖಾಧಿಕಾರಿಯನ್ನು ಪ್ರಶ್ನಿಸಿದ ನ್ಯಾಯಪೀಠ, ಯಾವ ಪ್ರಕರಣದಲ್ಲಿ ಬಂಧಿಸಬೇಕು, ಯಾವ ಪ್ರಕರಣದಲ್ಲಿ ಬಂಧಿಸಬಾರದು ಎಂಬ ಮೂಲಭೂತ ಅರಿವೂ ಇಲ್ಲವೇ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿತು.
ಇದಕ್ಕೆ ಉತ್ತರಿಸಿದ ತನಿಖಾಧಿಕಾರಿ, ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿತ್ತು. ಆದರೆ ಅರ್ಜಿದಾರರು ಹಾಜರಾಗಿರಲಿಲ್ಲ ಎಂದು ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ನಿಜವಾಗಿಯೂ ನೋಟಿಸ್ ನೀಡಲಾಗಿತ್ತೇ ಅಥವಾ ಕೇವಲ ದಾಖಲೆಗಾಗಿ ಸೃಷ್ಟಿಸಲಾಗಿತ್ತೇ ಎಂದು ಪ್ರಶ್ನಿಸಿತು.
ಐಪಿಸಿ ಸೆಕ್ಷನ್ 498ಎ ಅಡಿ ಪತ್ನಿ ದೂರು ನೀಡಿದ ತಕ್ಷಣ ಪತಿಯನ್ನು ಬಂಧಿಸಿ ಜೈಲಿಗೆ ಕಳುಹಿಸಬೇಕು ಎಂದು ಕಾನೂನಿನಲ್ಲಿ ಎಲ್ಲಿದೆ ಎಂದು ಪ್ರಶ್ನಿಸಿದ ನ್ಯಾಯಾಲಯ, ಪಾಲುದಾರಿಕೆ ಒಪ್ಪಂದದಲ್ಲಿ ಸಹಿ ನಕಲಿ ಮಾಡಿರುವ ಆರೋಪವಿದ್ದರೆ ಮಾತ್ರಕ್ಕೆ ಬಂಧಿಸುವುದು ನ್ಯಾಯಸಮ್ಮತವಲ್ಲ ಎಂದು ಅಭಿಪ್ರಾಯಪಟ್ಟಿತು.
“ಜೈಲಿಗೆ ಕಳುಹಿಸುವುದೆಂದರೆ ಆಟವಾಗಿಬಿಟ್ಟಿದೆಯೇ? ಅಪರಾಧ ಸಾಬೀತಾದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಿ. ಆದರೆ ಅಮಾಯಕರನ್ನು ವಿಚಾರಣೆ ನಡೆಸದೇ ಜೈಲಿಗೆ ಕಳುಹಿಸುವುದು ಅಧಿಕಾರ ದುರುಪಯೋಗ” ಎಂದು ನ್ಯಾಯಪೀಠ ಕಿಡಿಕಾರಿತು.
ಇತ್ತೀಚಿನ ದಿನಗಳಲ್ಲಿ ಪತ್ನಿಯರಿಂದ ದೂರು ಬಂದ ತಕ್ಷಣ ಪೊಲೀಸರು ಯಾವುದೇ ಪ್ರಾಥಮಿಕ ಪರಿಶೀಲನೆ ನಡೆಸದೆ ಪತಿಯನ್ನು ನೇರವಾಗಿ ಬಂಧಿಸುತ್ತಿದ್ದಾರೆ. ಕಾನೂನು ಪ್ರಕ್ರಿಯೆ ಪಾಲಿಸದೆ ನಾಗರಿಕರ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವುದು ಒಪ್ಪಲಾಗದು ಎಂದು ನ್ಯಾಯಾಲಯ ಹೇಳಿದೆ.
ಇದೇ ವೇಳೆ, “ಪೊಲೀಸರು ಎಂದರೆ ಏನು ಬೇಕಾದರೂ ಮಾಡಬಹುದು ಎಂದುಕೊಂಡಿದ್ದೀರಾ? ನಿಮ್ಮ ವಿರುದ್ಧ ಇಲಾಖಾ ತನಿಖೆಗೆ ಆದೇಶಿಸಲಾಗುವುದು. ಈ ಬಂಧನದಿಂದ ಅರ್ಜಿದಾರರಿಗೆ ಉಂಟಾದ ಹಾನಿಗೆ ಒಂದು ಲಕ್ಷ ರೂಪಾಯಿ ನಿಮ್ಮ ವೈಯಕ್ತಿಕ ಜೇಬಿನಿಂದಲೇ ಪಾವತಿಸುವ ಪರಿಸ್ಥಿತಿ ಬರಬಹುದು” ಎಂದು ನ್ಯಾಯಪೀಠ ಮೌಖಿಕವಾಗಿ ಎಚ್ಚರಿಕೆ ನೀಡಿತು.
ಪತ್ನಿಯಿಂದ ದೈಹಿಕ ಅಥವಾ ವರದಕ್ಷಿಣೆ ಕಿರುಕುಳದ ಆರೋಪವಿಲ್ಲದಿದ್ದರೂ, ಕೇವಲ ಪಾಲುದಾರಿಕೆ ಒಪ್ಪಂದದಲ್ಲಿ ಸಹಿ ನಕಲಿ ಮಾಡಿದ ಆರೋಪಕ್ಕೆ ಜೈಲಿಗೆ ಕಳುಹಿಸಿರುವುದು ಸರಿಯಲ್ಲ. ಪತ್ನಿ ಪ್ರಭಾವಿ ವ್ಯಕ್ತಿಯಾಗಿರುವ ಕಾರಣಕ್ಕೆ ಪತಿಯನ್ನು ಬಂಧಿಸಲಾಗಿದೆ ಎಂಬ ಅನುಮಾನ ಮೂಡುತ್ತದೆ. ಬಂಧನಕ್ಕೂ ಮುನ್ನವೇ ನೋಟಿಸ್ ನೀಡಿರುವಂತೆ ದಾಖಲೆ ಸೃಷ್ಟಿಸಿರುವುದು ನಾಗರಿಕರ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ನ್ಯಾಯಾಲಯ ಆಕ್ರೋಶ ವ್ಯಕ್ತಪಡಿಸಿತು.
ಅರ್ಜಿದಾರರು ಈ ಹಿಂದೆ ಒಂದು ಪ್ರಕರಣದಲ್ಲಿ ಜೈಲಿಗೆ ಹೋಗಿದ್ದರು ಎಂಬ ಕಾರಣಕ್ಕೆ ಮತ್ತೆ ಜೈಲಿಗೆ ಕಳುಹಿಸಬೇಕು ಎನ್ನುವ ಮನೋಭಾವ ಸರಿಯಲ್ಲ. ಒಮ್ಮೆ ಜೈಲು ಸೇರಿದ್ದರೆ ಜೀವನಪೂರ್ತಿ ಅಲ್ಲೇ ಇರಬೇಕೆಂಬ ಕಾನೂನು ಇಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿತು.
ದೂರು ದಾಖಲಾಗಿ ಐದು ತಿಂಗಳಾದ ಬಳಿಕ ಬಂಧಿಸಿರುವುದು, ಮೂರು ತಿಂಗಳು ಯಾವುದೇ ತನಿಖೆ ನಡೆಸದೆ ಇದ್ದದ್ದು ಹಾಗೂ ತನಿಖಾಧಿಕಾರಿ ಬದಲಾದ ತಕ್ಷಣ ನೋಟಿಸ್ ನೀಡಿ ತನಿಖೆಗೆ ಸಹಕರಿಸಿಲ್ಲ ಎಂಬ ನೆಪದಲ್ಲಿ ಬಂಧಿಸಿರುವುದು ಕಾನೂನುಬಾಹಿರ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಬಂಧನಕ್ಕೆ ಅನುಮತಿ ನೀಡುವ ವೇಳೆ ಮ್ಯಾಜಿಸ್ಟ್ರೇಟ್ ಕೂಡ ಸೂಕ್ತ ವಿವೇಚನೆ ಬಳಸಿಲ್ಲ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ.
ಪ್ರಕರಣದ ಹಿನ್ನೆಲೆ
ಸುಮಾರು 12 ವರ್ಷಗಳ ಹಿಂದೆ ರಾಮಕೃಷ್ಣಂ ಹಾಗೂ ದೂರುದಾರರ ವಿವಾಹವಾಗಿತ್ತು. ಬಳಿಕ ದಂಪತಿ ನಡುವೆ ವರದಕ್ಷಿಣೆ ಕಿರುಕುಳ ಹಾಗೂ ವಿಚ್ಛೇದನಕ್ಕೆ ಸಂಬಂಧಿಸಿದ ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿವೆ. ಇದೇ ವೇಳೆ ಪತಿ ತನ್ನ ಸಹಿಯನ್ನು ನಕಲು ಮಾಡಿ ಬ್ಯಾಂಕ್ ಚಾಲ್ತಿ ಖಾತೆ ತೆರೆದಿದ್ದಾರೆ ಎಂದು ಪತ್ನಿ ದೂರು ನೀಡಿದ್ದರು.
ನಂತರ ತನಿಖಾಧಿಕಾರಿ ಬದಲಾದ ಬಳಿಕ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿಎನ್ಎಸ್ಎಸ್) ಸೆಕ್ಷನ್ 35ರ ಅಡಿಯಲ್ಲಿ ಪೊಲೀಸರು ಅರ್ಜಿದಾರರನ್ನು ಬಂಧಿಸಿದ್ದರು. ಇದೀಗ ಈ ಬಂಧನವನ್ನು ಪ್ರಶ್ನಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ಬಂಧನ ಕ್ರಮವನ್ನು ಪ್ರಶ್ನಿಸಿ ಅರ್ಜಿದಾರರ ಬಿಡುಗಡೆಗೆ ಆದೇಶಿಸಿದೆ.

