ಬೆಂಗಳೂರು: ಜನ ಸಾಮಾನ್ಯರಿಗೆ ಅಗತ್ಯವಸ್ತುಗಳ ಬೆಲೆ ಏರಿಕೆ ತೀವ್ರ ಆಘಾತ ತಂದಿರುವ ಸಂದರ್ಭದಲ್ಲಿಯೇ, ಜಲಮಂಡಳಿ ಸಂಸ್ಥೆ ಕಳೆದ ಎರಡು ವರ್ಷಗಳಿಂದ ಕುಡಿಯುವ ನೀರಿನ ದರವನ್ನು ನಿರಂತರವಾಗಿ ಹೆಚ್ಚಿಸುತ್ತಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ.
ಪ್ರತಿ ಮೂರು ತಿಂಗಳಿಗೆ ಶೇಕಡಾ 3ರಷ್ಟು ಹೆಚ್ಚಳ ಮಾಡುವ ಮೂಲಕ, ಜನರಿಂದ ವರ್ಷಕ್ಕೆ ಶೇಕಡಾ 12ರಷ್ಟು ಹೆಚ್ಚುವರಿ ಶುಲ್ಕ ವಸೂಲಿ ಮಾಡಲಾಗುತ್ತಿದೆ. ಈ ಬಗ್ಗೆ ಯಾವುದೇ ಸಾರ್ವಜನಿಕ ಪ್ರಕಟಣೆ ನೀಡದೆ, ಜನರ ಗಮನಕ್ಕೂ ತರದೆ ಬಡ್ಡಿ/ಸುಲಿಗೆ ವಿಧಿಸಲಾಗುತ್ತಿದೆ ಎಂದು ಬಿಜೆಪಿ ಮುಖಂಡ ಎನ್. ಆರ್. ರಮೇಶ್ ಆರೋಪಿಸಿದ್ದಾರೆ.
ಇನ್ನು ಒಳಚರಂಡಿ ಉಪಕರಣದ ಶುಲ್ಕವೂ ಪ್ರತಿ ತಿಂಗಳು ಶೇಕಡಾ 31.25ರಷ್ಟು ಏರಿಕೆಗೊಂಡಿದ್ದು, BWSSB ಆಡಳಿತ ಮಂಡಳಿಯು ರಾಜ್ಯ ಆಡಳಿತ ಸುಧಾರಣಾ ಆಯೋಗದ ಶಿಫಾರಸ್ಸಿನಂತೆ ಈ ಕ್ರಮವನ್ನು ಅನುಸರಿಸುತ್ತಿದೆ. ಜನರು ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯ ಹೊರೆ ತಾಳುತ್ತಿರುವ ಸಂದರ್ಭದಲ್ಲಿ, ಮೂಲಸೌಕರ್ಯಗಳ ಮೇಲಿನ ಈ ನಿರಂತರ ಶುಲ್ಕ ಹೆಚ್ಚಳ ಜನರಲ್ಲಿ ಆಕ್ರೋಶ ಹುಟ್ಟಿಸಿದೆ.

