Home Blog

“ರಾಜೀನಾಮೆ ನೀಡಬೇಡಿ”!ಸಿಎಂ ಸಿದ್ದರಾಮಯ್ಯಗೆ ವಾಟಾಳ್ ನಾಗರಾಜ್ ಮನವಿ

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ನಾಯಕತ್ವ ಬದಲಾವಣೆ ಚರ್ಚೆ ತೀವ್ರಗೊಂಡಿರುವ ನಡುವೆಯೇ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ವಿಧಾನಸೌಧದಲ್ಲಿ ಭೇಟಿ ಮಾಡಿ ರಾಜೀನಾಮೆ ನೀಡಬಾರದೆಂದು ವಿನಂತಿಸಿದ್ದಾರೆ.

ವಿಧಾನಸೌಧದಲ್ಲಿ ಸಿಎಂ ಅವರನ್ನು ಭೇಟಿ ಮಾಡಿದ ವಾಟಾಳ್ ನಾಗರಾಜ್, “ಯಾವ ಕಾರಣಕ್ಕೂ ನೀವು ರಾಜೀನಾಮೆ ನೀಡಬಾರದು, ನೀವು ಅಧಿಕಾರದಲ್ಲಿದ್ದದ್ದು ಸಂತೋಷ ತಂದಿದೆ” ಎಂದು ಹೇಳಿ ಮನವಿ ಮಾಡಿದ್ದಾರೆ. ಇದಕ್ಕೆ ಸಿಎಂ ಸಿದ್ದರಾಮಯ್ಯ ನಗುತ್ತಲೇ ಪ್ರತಿಕ್ರಿಯೆ ನೀಡಿ ಮುಂದೆ ಸಾಗಿದ್ದಾರೆ ಎಂದು ತಿಳಿದುಬಂದಿದೆ.

ಕಳೆದ ಕೆಲವು ದಿನಗಳಿಂದ ರಾಜ್ಯ ರಾಜಕೀಯದಲ್ಲಿ ನಾಯಕತ್ವ ಬದಲಾವಣೆ ಕುರಿತ ಚರ್ಚೆಗಳು ಜೋರಾಗಿವೆ. ಈ ಹಿನ್ನೆಲೆ ಕಾಂಗ್ರೆಸ್ ಹೈಕಮಾಂಡ್ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ದೆಹಲಿಗೆ ಕರೆಸಿಕೊಂಡು ಹಲವು ಸುತ್ತಿನ ಸಭೆಗಳನ್ನು ನಡೆಸಿತ್ತು. ಬಳಿಕ ನಾಯಕತ್ವ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿತ್ತು.

ಆದರೆ ಸಿದ್ದರಾಮಯ್ಯ ಅವರು ಗುರುವಾರ ರಾಜೀನಾಮೆ ನೀಡಲಿದ್ದಾರೆ ಎಂಬ ವದಂತಿಗಳು ಹರಡುತ್ತಿದ್ದು, ರಾಜಕೀಯ ವಲಯದಲ್ಲಿ ಕುತೂಹಲ ಹೆಚ್ಚಾಗಿದೆ. ಈ ನಡುವೆ ಅವರ ಆಪ್ತರು ಹಾಗೂ ಬೆಂಬಲಿಗರು ಸಭೆಗಳನ್ನು ನಡೆಸುತ್ತಿರುವುದು ಗಮನ ಸೆಳೆದಿದೆ.

ಈ ರಾಜಕೀಯ ಬೆಳವಣಿಗೆಗಳ ಮಧ್ಯೆ ವಾಟಾಳ್ ನಾಗರಾಜ್ ಅವರ ಭೇಟಿ ಮತ್ತಷ್ಟು ಚರ್ಚೆಗೆ ಕಾರಣವಾಗಿದೆ. ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದರೆ ಕಾಂಗ್ರೆಸ್‌ನಲ್ಲಿ ಗೊಂದಲ ಉಂಟಾಗುತ್ತದೆ ಎಂದು ಅವರು ಈ ಹಿಂದೆ ಹೇಳಿದ್ದನ್ನು ಮತ್ತೆ ಒತ್ತಿಹೇಳಿದ್ದಾರೆ.

ಜಾತಿಗಣತಿ ವರದಿ ಸ್ವೀಕರಿಸಿದ ಸಿಎಂ ಸಿದ್ದರಾಮಯ್ಯ: ಮುಸ್ಲಿಂ ಸಮುದಾಯ ನಂ.1 ಜಾತಿ! ರಾಜ್ಯ ರಾಜಕೀಯದಲ್ಲಿ ಸಂಚಲನ

ಬೆಂಗಳೂರು: ರಾಜ್ಯದಲ್ಲಿ ಕಳೆದ ಹಲವು ವರ್ಷಗಳಿಂದ ರಾಜಕೀಯ ಹಾಗೂ ಸಾಮಾಜಿಕ ಚರ್ಚೆಗೆ ಕಾರಣವಾಗಿದ್ದ ಜಾತಿಗಣತಿ ವರದಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ವಿಧಾನಸೌಧದಲ್ಲಿ ಅಧಿಕೃತವಾಗಿ ಸ್ವೀಕರಿಸಿದ್ದಾರೆ.

ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಮಧುಸೂದನ್ ನಾಯ್ಕ್ ಅವರು ವರದಿಯನ್ನು ಸಿಎಂಗೆ ಸಲ್ಲಿಸಿದರು. ಸುಮಾರು 300 ಪುಟಗಳಿರುವ ಈ ವರದಿ ದೀರ್ಘಕಾಲದ ಸಮೀಕ್ಷೆ ಆಧಾರದಲ್ಲಿ ಸಿದ್ಧಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವರದಿಯ ಪ್ರಕಾರ ರಾಜ್ಯದ ವಿವಿಧ ಸಮುದಾಯಗಳ ಜನಸಂಖ್ಯೆ ವಿವರಗಳು ಉಲ್ಲೇಖವಾಗಿದ್ದು, ಮುಸ್ಲಿಂ ಸಮುದಾಯ ಶೇ.14ರಷ್ಟು (75 ರಿಂದ 80 ಲಕ್ಷ ಜನಸಂಖ್ಯೆ) ಅತಿ ದೊಡ್ಡ ಸಮುದಾಯವಾಗಿದೆ ಎಂದು ಹೇಳಲಾಗಿದೆ. ನಂತರ ವೀರಶೈವ–ಲಿಂಗಾಯತ ಶೇ.11ರಷ್ಟು (60 ರಿಂದ 65 ಲಕ್ಷ), ಒಕ್ಕಲಿಗರು ಶೇ.10ರಷ್ಟು (55 ರಿಂದ 60 ಲಕ್ಷ) ಹಾಗೂ ಕುರುಬರು ಶೇ.8ರಷ್ಟು (40 ರಿಂದ 45 ಲಕ್ಷ) ಜನಸಂಖ್ಯೆ ಹೊಂದಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ವರದಿ ಸಲ್ಲಿಕೆ ಬಳಿಕ ಮಾತನಾಡಿದ ಆಯೋಗದ ಅಧ್ಯಕ್ಷ ಮಧುಸೂದನ್ ನಾಯ್ಕ್, ಸಮೀಕ್ಷೆ ಸಂಪೂರ್ಣವಾಗಿ ನಡೆಸಲಾಗಿದ್ದು, ಭಾಗವಹಿಸದವರ ಅಂಕಿಅಂಶಗಳನ್ನು ಸೇರಿಸಲು ಸಾಧ್ಯವಾಗಿಲ್ಲ ಎಂದು ತಿಳಿಸಿದ್ದಾರೆ. ವರದಿ ತಾಂತ್ರಿಕ ಹಾಗೂ ಭಾಷಾಂತರ ಕಾರ್ಯದಿಂದಾಗಿ ವಿಳಂಬವಾಗಿದೆ ಎಂದೂ ಅವರು ಹೇಳಿದ್ದಾರೆ.

ಜಾತಿಗಣತಿ ವರದಿ ಬಹಿರಂಗವಾದ ಹಿನ್ನೆಲೆಯಲ್ಲಿ ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗೆ ದಾರಿ ಮಾಡಿಕೊಡುವ ಸಾಧ್ಯತೆ ಇದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಭಟ್ಕಳದಲ್ಲಿನ ಅಶಾಂತಿಗೆ ಸರ್ಕಾರದ ನೀತಿಗಳೇ ಕಾರಣ! ಕಾಗೇರಿ ಗಂಭೀರ ಆರೋಪ

ಕಾರವಾರ: ಭಟ್ಕಳದ ಮುರಿನಕಟ್ಟೆ ಧ್ವಂಸ ಪ್ರಕರಣ ಸಂಬಂಧ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಗಂಭೀರ ಆರೋಪ ಮಾಡಿದ್ದಾರೆ.

ಭಟ್ಕಳದಲ್ಲಿ ನಡೆದ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಅವರು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಘಟನೆಗೆ ಸರ್ಕಾರದ ನೀತಿಗಳೇ ಕಾರಣ. ಅಲ್ಪಸಂಖ್ಯಾತರ ಮೇಲಿನ ಕೆಲವು ಪ್ರಕರಣಗಳನ್ನು ಸರ್ಕಾರ ಹಿಂಪಡೆದಿರುವುದೇ ಇಂತಹ ಕೃತ್ಯಗಳಿಗೆ ಪ್ರೇರಣೆ ನೀಡಿದೆ ಎಂದು ದೂರಿದ್ದಾರೆ.

ಕಾನೂನು ಕೈಗೆತ್ತಿಕೊಳ್ಳುವುದು ಸ್ವೀಕಾರಾರ್ಹವಲ್ಲ ಎಂದು ಹೇಳಿದ ಅವರು, ಮುರಿನಕಟ್ಟೆ ಸ್ಥಳಾಂತರ ವಿಚಾರದಲ್ಲಿ ಯಾವುದೇ ಕೋಮು ಭಾವನೆಗಳಿಗೆ ನೋವುಂಟಾಗಿಲ್ಲ, ಜಿಲ್ಲಾಡಳಿತ ಹಾಗೂ ಸಂಬಂಧಿತ ಇಲಾಖೆಗಳ ಸಹಕಾರದೊಂದಿಗೆ ಕ್ರಮ ಕೈಗೊಳ್ಳಲಾಗಿತ್ತು ಎಂದು ಸ್ಪಷ್ಟಪಡಿಸಿದರು.

ಇತ್ತೀಚೆಗೆ ನಡೆದ ರಸ್ತೆ ಅಪಘಾತದಲ್ಲಿ 11 ಜನರು ಸಾವನ್ನಪ್ಪಿದ್ದ ಹಿನ್ನೆಲೆಯಲ್ಲಿ ಭಟ್ಕಳದಲ್ಲಿ ದುಃಖದ ವಾತಾವರಣವಿತ್ತು. ಇಂತಹ ಸಂದರ್ಭದಲ್ಲೇ ಸಾವಿರಾರು ಜನರು ಸೇರಿ ಕಟ್ಟೆ ಧ್ವಂಸ ಮಾಡಿದ್ದಾರೆ ಎಂದು ಆರೋಪಿಸಿರುವ ಅವರು, ಪೊಲೀಸರ ಮೇಲೆಯೂ ಹಲ್ಲೆ ನಡೆದಿರುವುದನ್ನು ತೀವ್ರವಾಗಿ ಖಂಡಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ತಪ್ಪಿತಸ್ಥರನ್ನು ತಕ್ಷಣ ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕಾಗೇರಿ ಆಗ್ರಹಿಸಿದ್ದಾರೆ. ಜೊತೆಗೆ ಈ ಘಟನೆಯನ್ನು ಖಂಡಿಸಿ ಮೇ 29ರಂದು ಭಟ್ಕಳದಲ್ಲಿ ಬಿಜೆಪಿ ವತಿಯಿಂದ ಪ್ರತಿಭಟನಾ ಸಭೆ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಚಿತ್ರದುರ್ಗದಲ್ಲಿ ಹೃದಯವಿದ್ರಾವಕ ದುರಂತ! ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ ಐವರು ಸಾವು

ಚಿತ್ರದುರ್ಗ: ಮೊಳಕಾಲ್ಮೂರು ತಾಲೂಕಿನ ಬೈರಾಪುರ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ಐವರು ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ.

ರಸ್ತೆಬದಿ ನಿಂತಿದ್ದ ಲಾರಿಗೆ ಅತಿವೇಗವಾಗಿ ಬಂದ ಬುಲೆರೋ ವಾಹನ ಡಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ. ಡಿಕ್ಕಿಯ ತೀವ್ರತೆಗೆ ಬುಲೆರೋ ವಾಹನ ಸಂಪೂರ್ಣ ಜಖಂಗೊಂಡಿದ್ದು, ಅದರಲ್ಲಿದ್ದವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಮೃತರನ್ನು ಬಳ್ಳಾರಿ ಮೂಲದ ವೆಂಕಟೇಶ್(28), ಶಿವಮ್ಮ(25), ಮೀನಾಕ್ಷಿ(16), ಪೂಜಾ(4) ಹಾಗೂ ಪರುಶುರಾಮ(1.5) ಎಂದು ಗುರುತಿಸಲಾಗಿದೆ. ಒಂದೇ ಕುಟುಂಬದ ಐವರು ಮೃತಪಟ್ಟಿರುವುದು ಸ್ಥಳೀಯರಲ್ಲಿ ಶೋಕದ ವಾತಾವರಣ ಸೃಷ್ಟಿಸಿದೆ.

ಘಟನೆಯಲ್ಲಿ ಕೆಲವರು ಗಾಯಗೊಂಡಿದ್ದು, ಅವರನ್ನು ಮೊಳಕಾಲ್ಮೂರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.

ಘಟನೆ ಕುರಿತು ಮಾಹಿತಿ ಪಡೆದ ಮೊಳಕಾಲ್ಮೂರು ಪೊಲೀಸ್ ಠಾಣೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಔಷಧಿ ಬಳಸುವಾಗ ಈ ತಪ್ಪುಗಳನ್ನು ಮಾಡಬೇಡಿ: ವೈದ್ಯರ ಸಲಹೆ ಕಡ್ಡಾಯ!

ಅನಾರೋಗ್ಯ ಬಂದಾಗ ಔಷಧಿ ಆರೋಗ್ಯ ಸುಧಾರಿಸಲು ಸಹಾಯ ಮಾಡುತ್ತದೆ ಎಂಬುದು ಎಲ್ಲರಿಗೂ ತಿಳಿದ ವಿಷಯ.

ಆದರೆ ಔಷಧಿ ಸೇವನೆಯ ವೇಳೆ ಮಾಡುವ ಕೆಲವು ಸಾಮಾನ್ಯ ತಪ್ಪುಗಳು ದೀರ್ಘಕಾಲದಲ್ಲಿ ಆರೋಗ್ಯಕ್ಕೆ ಗಂಭೀರ ಹಾನಿ ಉಂಟುಮಾಡಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.

ಘಾಜಿಯಾಬಾದ್ ಜಿಲ್ಲಾ ಆಸ್ಪತ್ರೆಯ ಫಾರ್ಮಾಸಿಸ್ಟ್ ನರೇಂದ್ರ ಕುಮಾರ್ ಶರ್ಮಾ ಅವರ ಪ್ರಕಾರ, ಸ್ವಯಂ ಔಷಧಿ ಸೇವನೆ, ಡೋಸ್ ಮಧ್ಯದಲ್ಲೇ ನಿಲ್ಲಿಸುವುದು ಮತ್ತು ವೈದ್ಯರ ಸಲಹೆ ಇಲ್ಲದೆ ಔಷಧಿ ಬದಲಾಯಿಸುವುದು ಅಪಾಯಕಾರಿಯಾಗಬಹುದು. ವಿಶೇಷವಾಗಿ ಆಂಟಿಬಯೋಟಿಕ್‌ಗಳನ್ನು ಸರಿಯಾಗಿ ಬಳಸದಿದ್ದರೆ “ಸೂಪರ್‌ಬಗ್” ಎಂಬ ಪರಿಸ್ಥಿತಿ ಉಂಟಾಗಿ ಔಷಧಿಗಳು ಮುಂದಿನ ದಿನಗಳಲ್ಲಿ ಪರಿಣಾಮಕಾರಿಯಾಗದೇ ಹೋಗುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದ್ದಾರೆ.

ಜನರು ಸಾಮಾನ್ಯವಾಗಿ ಮಾಡುವ ತಪ್ಪುಗಳು:

ವೈದ್ಯರ ಸಲಹೆ ಇಲ್ಲದೆ ಔಷಧಿ ಸೇವನೆ:
ಜ್ವರ, ಶೀತ, ಕೆಮ್ಮು ಬಂದಾಗ ಹಲವರು ತಾವೇ ಔಷಧಿ ತೆಗೆದುಕೊಳ್ಳುತ್ತಾರೆ. ಇದು ದೇಹದ ಮೇಲೆ ದುಷ್ಪರಿಣಾಮ ಉಂಟುಮಾಡಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.

ಕೋರ್ಸ್ ಪೂರ್ಣಗೊಳಿಸದೇ ಔಷಧಿ ನಿಲ್ಲಿಸುವುದು:
ಆರೋಗ್ಯ ಸ್ವಲ್ಪ ಸುಧಾರಿಸಿದ ತಕ್ಷಣ ಆಂಟಿಬಯೋಟಿಕ್ ನಿಲ್ಲಿಸುವುದರಿಂದ ಸೋಂಕು ಮತ್ತೆ ತೀವ್ರವಾಗುವ ಅಪಾಯ ಹೆಚ್ಚುತ್ತದೆ.

ಸಮಯಕ್ಕೆ ಸರಿಯಾಗಿ ಔಷಧಿ ಸೇವಿಸದಿರುವುದು:
ಔಷಧಿ ಸಮಯ ತಪ್ಪಿಸುವುದು, ಖಾಲಿ ಹೊಟ್ಟೆಯಲ್ಲಿ ತೆಗೆದುಕೊಳ್ಳುವುದು ಅಥವಾ ಎಕ್ಸ್‌ಪೈರಿ ದಿನಾಂಕ ಪರಿಶೀಲಿಸದೇ ಸೇವಿಸುವುದು ಅಪಾಯಕಾರಿ ಎಂದು ಹೇಳಲಾಗಿದೆ.

ಪೇನ್‌ಕಿಲ್ಲರ್‌ಗಳ ಅತಿಯಾದ ಬಳಕೆ ಅಪಾಯಕಾರಿಯೇ?

ತಜ್ಞರ ಪ್ರಕಾರ, ನೋವು ನಿವಾರಕ ಔಷಧಿಗಳನ್ನು ಅತಿಯಾಗಿ ಬಳಸುವುದರಿಂದ ಕಿಡ್ನಿ ಮತ್ತು ಲಿವರ್ ಮೇಲೆ ಹಾನಿ ಉಂಟಾಗಬಹುದು. ಇದು ಮುಂದಿನ ದಿನಗಳಲ್ಲಿ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.

ಜನರಿಕ್ ಮತ್ತು ಬ್ರಾಂಡೆಡ್ ಔಷಧಿ ವ್ಯತ್ಯಾಸ:

ಜನರಿಕ್ ಮತ್ತು ಬ್ರಾಂಡೆಡ್ ಔಷಧಿಗಳಲ್ಲಿ ಇರುವ ಸಕ್ರಿಯ ಅಂಶ (salt) ಒಂದೇ ಆಗಿರುತ್ತದೆ. ವ್ಯತ್ಯಾಸ ಕೇವಲ ಕಂಪನಿ ಮತ್ತು ಬೆಲೆಯಲ್ಲಿ ಮಾತ್ರ ಎಂದು ತಜ್ಞರು ತಿಳಿಸಿದ್ದಾರೆ. ವೈದ್ಯರ ಸಲಹೆಯೊಂದಿಗೆ ಸರಿಯಾದ ರೀತಿಯಲ್ಲಿ ಬಳಸಿದರೆ ಜನರಿಕ್ ಔಷಧಿಯೂ ಪರಿಣಾಮಕಾರಿಯೇ ಎಂದು ಅವರು ಹೇಳಿದ್ದಾರೆ.

ರಾಜ್ಯದ ಹಲವೆಡೆ ನಾಳೆ ಗುಡುಗು ಸಹಿತ ಮಳೆ! 9 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಣೆ!

ಬೆಂಗಳೂರು: ಕರ್ನಾಟಕದಲ್ಲಿ ನಾಳೆ ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ರಾಜ್ಯದ 9 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದ್ದು, ಬೀದರ್, ಕಲಬುರಗಿ, ವಿಜಯಪುರ, ಯಾದಗಿರಿ, ರಾಯಚೂರು, ಕೊಪ್ಪಳ, ತುಮಕೂರು, ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳಲ್ಲಿ ಭಾರಿ ಮಳೆ ಸಾಧ್ಯತೆ ಇದೆ ಎಂದು ತಿಳಿಸಲಾಗಿದೆ.

ಬೆಂಗಳೂರು ಸೇರಿದಂತೆ ಕರಾವಳಿ ಕರ್ನಾಟಕ, ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡು ಭಾಗಗಳಲ್ಲಿ ಮಳೆಯ ಅಬ್ಬರ ಹೆಚ್ಚಾಗುವ ನಿರೀಕ್ಷೆ ಇದೆ. ಅರಬ್ಬಿ ಸಮುದ್ರದಿಂದ ತೇವಾಂಶಯುಕ್ತ ಗಾಳಿಯ ಹರಿವು ಬಲವಾಗುತ್ತಿರುವುದು ಹಾಗೂ ಮುಂಗಾರು ಪೂರ್ವ ಹವಾಮಾನ ಬದಲಾವಣೆಗಳು ಮಳೆಯ ಪ್ರಮಾಣ ಹೆಚ್ಚಿಸಲು ಕಾರಣವಾಗಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಬೆಂಗಳೂರು ಹವಾಮಾನ ಕೇಂದ್ರದ ಪ್ರಕಾರ ಮುಂದಿನ ಕೆಲವು ದಿನಗಳವರೆಗೆ ರಾಜ್ಯದ ಹಲವೆಡೆ ಗುಡುಗು, ಮಿಂಚು ಹಾಗೂ ಬಿರುಗಾಳಿ ಸಹಿತ ಸಾಧಾರಣದಿಂದ ಮಧ್ಯಮ ಮಳೆಯಾಗುವ ಸಾಧ್ಯತೆ ಇದೆ.

ಮೇ 29ರವರೆಗೆ ಉತ್ತರ ಒಳನಾಡಿನಲ್ಲಿ ಗಂಟೆಗೆ 50–60 ಕಿ.ಮೀ ವೇಗದ ಗಾಳಿಯೊಂದಿಗೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದ್ದು, ದಕ್ಷಿಣ ಒಳನಾಡಿನಲ್ಲಿಯೂ ಇದೇ ರೀತಿಯ ಹವಾಮಾನ ಮುಂದುವರಿಯಲಿದೆ ಎಂದು ಮಾಹಿತಿ ನೀಡಲಾಗಿದೆ. ಮೇ 29ರಿಂದ ಮೇ 31ರವರೆಗೆ ಗಾಳಿಯ ವೇಗ ಸ್ವಲ್ಪ ಕಡಿಮೆಯಾಗುವ ಸಾಧ್ಯತೆ ಇದ್ದರೂ, ಕೆಲವೆಡೆ ಮಳೆಯ ಅಬ್ಬರ ಮುಂದುವರಿಯಲಿದೆ ಎಂದು ಇಲಾಖೆ ತಿಳಿಸಿದೆ.

ಮನೆಯಲ್ಲಿರುವ ಉಪ್ಪಿನಿಂದಲೇ ಬಾತ್‌ರೂಮ್ ಹೊಳೆಯುವಂತೆ ಮಾಡಬಹುದು!

ಬಾತ್‌ರೂಮ್‌ ಅನ್ನು ಸ್ವಚ್ಛವಾಗಿಡುವುದು ಆರೋಗ್ಯದ ದೃಷ್ಟಿಯಿಂದ ಅತ್ಯಂತ ಮುಖ್ಯವಾಗಿದೆ.

ತೇವಾಂಶ ಹೆಚ್ಚಿರುವ ಕಾರಣ ಸ್ನಾನಗೃಹದಲ್ಲಿ ಬ್ಯಾಕ್ಟೀರಿಯಾ, ಶಿಲೀಂಧ್ರ ಹಾಗೂ ದುರ್ವಾಸನೆ ವೇಗವಾಗಿ ಹರಡುವ ಸಾಧ್ಯತೆ ಹೆಚ್ಚಿರುತ್ತದೆ. ಸಾಮಾನ್ಯವಾಗಿ ಹಲವರು ದುಬಾರಿ ಕ್ಲೀನರ್‌ಗಳನ್ನು ಬಳಸಿದರೂ, ಮನೆಯಲ್ಲೇ ಲಭ್ಯವಿರುವ ಉಪ್ಪಿನ ಸಹಾಯದಿಂದ ಕಡಿಮೆ ವೆಚ್ಚದಲ್ಲಿ ಪರಿಣಾಮಕಾರಿಯಾಗಿ ಬಾತ್‌ರೂಮ್‌ ಕ್ಲೀನ್‌ ಮಾಡಬಹುದು ಎಂದು ತಜ್ಞರು ಸಲಹೆ ನೀಡಿದ್ದಾರೆ.

ಉಪ್ಪಿನೊಂದಿಗೆ ನಿಂಬೆಹಣ್ಣು ಬೆರೆಸಿ ನಲ್ಲಿಗಳು ಹಾಗೂ ಬೇಸಿನ್‌ಗಳನ್ನು ಸ್ವಚ್ಛಗೊಳಿಸಿದರೆ ತುಕ್ಕು ಮತ್ತು ನೀರಿನ ಕಲೆಗಳು ಮಾಯವಾಗಿ ಹೊಳಪು ಬರುತ್ತದೆ. ಅದೇ ರೀತಿ ಉಪ್ಪು ಮತ್ತು ವಿನೆಗರ್‌ ಮಿಶ್ರಣವು ಟೈಲ್ಸ್‌ ಹಾಗೂ ಗೋಡೆಯ ಮೇಲಿನ ಶಿಲೀಂಧ್ರ ಮತ್ತು ದುರ್ವಾಸನೆಯನ್ನು ನಿವಾರಿಸಲು ಸಹಕಾರಿ ಎನ್ನಲಾಗಿದೆ.

ಅರ್ಧ ಕಪ್‌ ಉಪ್ಪಿಗೆ ಅರ್ಧ ಕಪ್‌ ಅಡುಗೆ ಸೋಡಾ ಸೇರಿಸಿ ಪೇಸ್ಟ್‌ ತಯಾರಿಸಿ ಬಳಸಿದರೆ ಬಾತ್‌ರೂಮ್‌ನಲ್ಲಿರುವ ಕಲೆಗಳು ಹಾಗೂ ಬ್ಯಾಕ್ಟೀರಿಯಾಗಳನ್ನು ಸುಲಭವಾಗಿ ತೆಗೆದುಹಾಕಬಹುದು. ಉಪ್ಪಿನೊಂದಿಗೆ ಡಿಶ್‌ವಾಶ್‌ ಸೋಪ್‌ ಮಿಶ್ರಣ ಮಾಡಿ ವಾಶ್‌ಬೇಸಿನ್‌ ಹಾಗೂ ಟೈಲ್ಸ್‌ ಕ್ಲೀನ್‌ ಮಾಡಿದರೆ ಗ್ರೀಸ್‌ ಮತ್ತು ಮೊಂಡುತನದ ಕಲೆಗಳು ನಿವಾರಣೆಯಾಗುತ್ತವೆ.

ಚರಂಡಿಯಿಂದ ಬರುವ ದುರ್ವಾಸನೆ ಹಾಗೂ ಅಡಚಣೆ ನಿವಾರಣೆಗೆ ಉಪ್ಪು ಮತ್ತು ಬಿಸಿನೀರು ಉಪಯುಕ್ತವಾಗಿದೆ. ಚರಂಡಿಗೆ ಉಪ್ಪು ಹಾಕಿ ಅದರ ಮೇಲೆ ಬಿಸಿನೀರು ಸುರಿದರೆ ಕೊಳೆ ಹಾಗೂ ಗ್ರೀಸ್‌ ಸಡಿಲವಾಗಿ ಬ್ಲಾಕ್‌ ತೆರವುಗೊಳ್ಳುತ್ತದೆ ಎಂದು ತಿಳಿಸಲಾಗಿದೆ.

ಇನ್ನೂ ಟೈಲ್ಸ್‌ ಮೇಲಿನ ಹಳದಿ ಕಲೆಗಳನ್ನು ತೆಗೆದುಹಾಕಲು ಟೂತ್‌ಪೇಸ್ಟ್‌ ಮತ್ತು ಉಪ್ಪಿನ ಪೇಸ್ಟ್‌ ಪರಿಣಾಮಕಾರಿ ಎಂದು ಹೇಳಲಾಗಿದೆ.

ಉಪ್ಪು ಬ್ಯಾಕ್ಟೀರಿಯಾ ಬೆಳವಣಿಗೆಯನ್ನು ತಡೆಯುವುದರ ಜೊತೆಗೆ ದುರ್ವಾಸನೆ ಕಡಿಮೆ ಮಾಡಿ ಬಾತ್‌ರೂಮ್‌ ಅನ್ನು ಸ್ವಚ್ಛ ಹಾಗೂ ನೈರ್ಮಲ್ಯಯುತವಾಗಿಡಲು ಸಹಾಯ ಮಾಡುತ್ತದೆ ಎಂದು ಆರೋಗ್ಯ ತಜ್ಞರು ತಿಳಿಸಿದ್ದಾರೆ.

ಸಿಎಂ ಸ್ಥಾನ ಬಿಟ್ಟುಕೊಡುವ ಮೂಲಕ ರಾಜಕೀಯ ಪ್ರೌಢಿಮೆ ತೋರಿದ್ದಾರೆ: ರಂಭಾಪುರಿ ಶ್ರೀ

ಚಿಕ್ಕಮಗಳೂರು: ಮುಖ್ಯಮಂತ್ರಿ ಸ್ಥಾನ ಬದಲಾವಣೆ ಕುರಿತ ರಾಜಕೀಯ ಚರ್ಚೆಗಳ ನಡುವೆಯೇ ರಂಭಾಪುರಿ ಶ್ರೀಗಳು ಮಹತ್ವದ ಹೇಳಿಕೆ ನೀಡಿದ್ದಾರೆ. ಸಿದ್ದರಾಮಯ್ಯ ಅವರು ಸಿಎಂ ಸ್ಥಾನ ಬಿಟ್ಟುಕೊಡುವ ಮೂಲಕ ರಾಜಕೀಯ ಪ್ರೌಢಿಮೆ ತೋರಿದ್ದಾರೆ ಎಂದು ಅವರು ಶ್ಲಾಘಿಸಿದ್ದಾರೆ.

ಬಾಳೆಹೊನ್ನೂರಿನಲ್ಲಿ ಮಾತನಾಡಿದ ಶ್ರೀಗಳು, “2023ರಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿದ ಬಳಿಕ ಅನುಭವಿ ನಾಯಕನಾಗಿ ಸಿದ್ದರಾಮಯ್ಯ ಅವರಿಗೆ ಮೊದಲ ಅವಕಾಶ ನೀಡಲಾಗಿತ್ತು. ಎರಡೂವರೆ ವರ್ಷಗಳ ಬಳಿಕ ಅಧಿಕಾರ ಹಸ್ತಾಂತರದ ಮಾತು ಈಗ ಸಾಕಾರವಾಗುತ್ತಿದೆ” ಎಂದರು.

“ಡಿಕೆ ಶಿವಕುಮಾರ್ ಅವರು ಈ ಅವಧಿಯಲ್ಲಿ ತಾಳ್ಮೆ ಮತ್ತು ಸಹನೆಯನ್ನು ಕಳೆದುಕೊಳ್ಳದೆ ಕಾಯುತ್ತಿದ್ದರು. ಸಿದ್ದರಾಮಯ್ಯ ಅವರು ಉದಾರ ಮನಸ್ಸಿನಿಂದ ಸ್ಥಾನ ಬಿಟ್ಟುಕೊಡುವ ಮೂಲಕ ಮುತ್ಸದ್ದಿತನ ತೋರಿದ್ದಾರೆ” ಎಂದು ಹೇಳಿದರು.

ರಾಜ್ಯದ ಮುಂದಿನ ಆಡಳಿತ ಕುರಿತು ಮಾತನಾಡಿದ ಅವರು, “ಡಿಕೆಶಿ ಮುಖ್ಯಮಂತ್ರಿ ಆಗಿ ಉತ್ತಮ ಆಡಳಿತ ನೀಡಲಿ. ಜಾತಿ-ಧರ್ಮದ ಸಂಘರ್ಷಗಳು ಹೆಚ್ಚಾಗಬಾರದು. ಎಲ್ಲಾ ಸಮುದಾಯದ ಜನರನ್ನೂ ಮೇಲೆತ್ತುವ ಕೆಲಸ ನಡೆಯಬೇಕು” ಎಂದು ಆಶಿಸಿದರು.

“ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲೂ ಜಾತಿ ಭಾವನೆ ಬೆಳೆಸುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಇದು ಬೇಸರದ ಸಂಗತಿ. ಸಮಾಜದಲ್ಲಿ ಸಮಾನತೆ ಮತ್ತು ಶಾಂತಿ ಉಳಿಯಬೇಕು” ಎಂದು ಶ್ರೀಗಳು ಕರೆ ನೀಡಿದರು.

“ನಾಳೆಯೇ ರಾಜೀನಾಮೆ ಕೊಡ್ತೀನಿ ಅಂದ್ರು”: ಸಿದ್ದರಾಮಯ್ಯ ನಿರ್ಧಾರ ಬಿಚ್ಚಿಟ್ಟ ಆರ್‌ವಿ ದೇಶಪಾಂಡೆ!

ಬೆಂಗಳೂರು: ಕರ್ನಾಟಕ ರಾಜಕಾರಣದಲ್ಲಿ ಕ್ಷಣಕ್ಷಣಕ್ಕೂ ನಾಟಕೀಯ ಬೆಳವಣಿಗೆಗಳು ನಡೆಯುತ್ತಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆ ಇದೀಗ ಬಹುತೇಕ ಖಚಿತವಾಗಿದೆ. ಈ ನಡುವೆ ಹಿರಿಯ ಕಾಂಗ್ರೆಸ್ ನಾಯಕ ಆರ್.ವಿ. ದೇಶಪಾಂಡೆ ಅವರು ಸ್ಫೋಟಕ ಹೇಳಿಕೆ ನೀಡುವ ಮೂಲಕ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಬಳಿಕ ಮಾತನಾಡಿದ ದೇಶಪಾಂಡೆ, “ಸಿದ್ದರಾಮಯ್ಯ ಅವರು ದೆಹಲಿಯಲ್ಲಿ ರಾಜೀನಾಮೆ ನಿರ್ಧಾರ ತಿಳಿಸಿ ಬಂದಿದ್ದಾರೆ. ನಾಳೆಯೇ ರಾಜೀನಾಮೆ ಕೊಡ್ತೀನಿ ಅಂತ ನಮಗೆ ಹೇಳಿದ್ದಾರೆ. ಆದರೆ ನಾವು ಯಾವುದೇ ಕಾರಣಕ್ಕೂ ರಾಜೀನಾಮೆ ಕೊಡಬೇಡಿ ಎಂದು ಒತ್ತಾಯಿಸಿದ್ದೇವೆ” ಎಂದು ತಿಳಿಸಿದ್ದಾರೆ.

ಇದುವರೆಗೆ ಊಹಾಪೋಹಗಳ ಮಟ್ಟದಲ್ಲಿದ್ದ ರಾಜೀನಾಮೆ ಚರ್ಚೆಗೆ ದೇಶಪಾಂಡೆ ಅವರ ಈ ಹೇಳಿಕೆ ಅಧಿಕೃತ ಮುದ್ರೆ ಒತ್ತಿದಂತಾಗಿದೆ.

ಇನ್ನೊಂದೆಡೆ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿದ ಬಳಿಕ ಕಾನೂನು ಸಚಿವ ಎಚ್.ಕೆ. ಪಾಟೀಲ್ ಕೂಡ ಆತಂಕ ವ್ಯಕ್ತಪಡಿಸಿದ್ದಾರೆ. “ರಾಜೀನಾಮೆ ಕುರಿತ ಸುದ್ದಿಗಳಿಂದ ನಮಗೂ ಕಳವಳ ಉಂಟಾಯಿತು. ಸಿಎಂ ಮುಂದೆ ನಮ್ಮ ಮನವಿಯನ್ನು ಇಟ್ಟಿದ್ದೇವೆ. ಆದರೆ ಅವರು ನಮ್ಮ ಎದುರು ಒಂದು ಮಾತನ್ನೂ ಆಡಲಿಲ್ಲ. ಸಂಪೂರ್ಣ ಮೌನವಾಗಿದ್ದರು” ಎಂದು ಹೇಳಿದ್ದಾರೆ.

ರಾಜಕೀಯ ಬೆಳವಣಿಗೆಗಳ ನಡುವೆಯೇ ಸಿದ್ದರಾಮಯ್ಯ ಅವರ ಮೌನ ಮತ್ತು ದೇಶಪಾಂಡೆ ಅವರ ಬಹಿರಂಗ ಹೇಳಿಕೆ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಈಗ ಅಂತಿಮ ಹಂತ ತಲುಪಿದೆ ಎಂಬ ಸಂದೇಶ ನೀಡಿದೆ.

ಲೋಕಭವನಕ್ಕೆ ಟೈಮ್ ಕೇಳಿದ ಸಿದ್ದರಾಮಯ್ಯ: ರಾಜೀನಾಮೆಗೆ ಕ್ಷಣಗಣನೆ, ಹೋಗುವ ಮುನ್ನ ‘ಜಾತಿಗಣತಿ’ ಅಸ್ತ್ರ!

ಬೆಂಗಳೂರು: ಕರ್ನಾಟಕದ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡುವುದು ಇದೀಗ ಕೇವಲ ಅಧಿಕೃತ ಪ್ರಕ್ರಿಯೆಯಷ್ಟೇ ಬಾಕಿ ಉಳಿದಿದೆ. ಇದಕ್ಕೆ ಪುಷ್ಟಿ ನೀಡುವಂತೆ, ಮುಖ್ಯಮಂತ್ರಿ ಕಚೇರಿಯಿಂದ ಲೋಕಭವನ (ರಾಜಭವನ) ಭೇಟಿಗೆ ಸಮಯ ಕೋರಿ ಅಧಿಕೃತ ಮಾಹಿತಿ ರವಾನೆಯಾಗಿದೆ.

ಮುಖ್ಯಮಂತ್ರಿಗಳ ಸಚಿವಾಲಯದಿಂದ ಲೋಕಭವನಕ್ಕೆ ಸಂದೇಶ ಕಳುಹಿಸಲಾಗಿದ್ದು, ನಾಳೆ (ಗುರುವಾರ) ಮಧ್ಯಾಹ್ನ ಸಿದ್ದರಾಮಯ್ಯ ಅವರು ಭೇಟಿ ನೀಡಲಿದ್ದಾರೆ ಎಂದು ತಿಳಿಸಲಾಗಿದೆ. ಆದರೆ ಭೇಟಿಯ ನಿಖರ ಸಮಯವನ್ನು ಇನ್ನೂ ಬಹಿರಂಗಪಡಿಸಿಲ್ಲ. ರಾಜಕೀಯ ವಲಯದಲ್ಲಿ ನಡೆಯುತ್ತಿರುವ ಚರ್ಚೆಗಳ ಪ್ರಕಾರ, ಬೆಳಗ್ಗೆ ಜಂಟಿ ಸುದ್ದಿಗೋಷ್ಠಿ ಬಳಿಕ ಮಧ್ಯಾಹ್ನ ಸಿದ್ದರಾಮಯ್ಯ ಅವರು ರಾಜೀನಾಮೆ ಪತ್ರ ಸಲ್ಲಿಸುವ ಸಾಧ್ಯತೆ ಇದೆ.

ಈ ಬೆಳವಣಿಗೆಯ ನಡುವೆಯೇ ಸಚಿವ ಚಲುವರಾಯಸ್ವಾಮಿ ಸಿಎಂ ನಿವಾಸಕ್ಕೆ ಭೇಟಿ ನೀಡಿ ಮಹತ್ವದ ಚರ್ಚೆ ನಡೆಸಿದ್ದಾರೆ.

ಇದರ ಜೊತೆಗೆ, ತಮ್ಮ ರಾಜೀನಾಮೆಗೆ ಮುನ್ನ ‘ಜಾತಿಗಣತಿ ವರದಿ’ಯನ್ನು ಅಧಿಕೃತವಾಗಿ ಸ್ವೀಕರಿಸಲು ಸಿದ್ದರಾಮಯ್ಯ ನಿರ್ಧರಿಸಿದ್ದಾರೆ. ಇಂದು ಸಂಜೆ 5 ಗಂಟೆಗೆ ವಿಧಾನಸೌಧಕ್ಕೆ ಆಗಮಿಸಲಿರುವ ಅವರು, ಹಿಂದುಳಿದ ವರ್ಗಗಳ ಆಯೋಗದಿಂದ ವರದಿ ಸ್ವೀಕರಿಸಲಿದ್ದಾರೆ.

ಈ ಕುರಿತು ಮಾತನಾಡಿದ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಮಧುಸೂದನ್ ಆರ್. ನಾಯ್ಕ್, “ವರದಿ ಒಂದು ತಿಂಗಳ ಹಿಂದೆಯೇ ಸಿದ್ಧವಾಗಿತ್ತು. ಸದಸ್ಯರ ಲಭ್ಯತೆ ಸಮಸ್ಯೆಯಿಂದ ಸಲ್ಲಿಕೆ ತಡವಾಯಿತು. ರಾಜಕೀಯ ಬೆಳವಣಿಗೆಗಳಿಗೂ ವರದಿ ಸಲ್ಲಿಕೆಗೆ ಯಾವುದೇ ಸಂಬಂಧವಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.

error: Content is protected !!