ಕೃಷ್ಣಗಿರಿ:ನಾವೆಲ್ಲರೂ ಪರಸ್ಪರ ಅಣ್ಣತಮ್ಮಂದಿರು. ಊರುಗಳಾಗಿ ಭಾಗವಾಗಿದ್ದೇವೆ ಅಷ್ಟೇ. ನಾವೆಲ್ಲರೂ ಇಂದು ದಕ್ಷಿಣ ಭಾರತದ ಸ್ವಾಭಿಮಾನ ಉಳಿಸಲು ಒಟ್ಟಾಗಿ ಹೋರಾಟ ಮಾಡುತ್ತಿದ್ದೇವೆ.” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.
ತಮಿಳುನಾಡು ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕೃಷ್ಣಗಿರಿ ಜಿಲ್ಲೆಯ ಥಳಿ ವಿಧಾನಸಭಾ ಕ್ಷೇತ್ರದ ಕೆಲಮಂಗಲಂ ನಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮಾತನಾಡಿದರು. ಥಳಿ ಕರ್ನಾಟಕ ರಾಜ್ಯದ ಗಡಿ ಭಾಗದಲ್ಲಿರುವ ವಿಧಾನಸಭಾ ಕ್ಷೇತ್ರ. ನನ್ನ ಕ್ಷೇತ್ರ ಕನಕಪುರದೊಂದಿಗೆ ಗಡಿಯನ್ನು ಈ ಕ್ಷೇತ್ರ ಹಂಚಿಕೊಂಡಿದೆ. ಇಲ್ಲಿ ಸಾಕಷ್ಟು ಜನ ಕನ್ನಡಿಗರು ಇದ್ದೀರಿ.
ನನ್ನ ಕ್ಷೇತ್ರದಲ್ಲಿ ಜಮೀನು ಹೊಂದಿರುವ ಈ ಭಾಗದ ಅನೇಕರಿಗೆ ನಮ್ಮ ಕ್ಷೇತ್ರದಲ್ಲೇ ಮತ ಇಟ್ಟುಕೊಳ್ಳಿ ಎಂದು ನಾನು ಆಹ್ವಾನ ಕೊಟ್ಟಿದ್ದರೂ ನೀವುಗಳು ಇಲ್ಲಿನ ಅಭ್ಯರ್ಥಿ ರಾಮಚಂದ್ರ ಅವರು ನಮ್ಮನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ ಎಂದು ಇಲ್ಲೇ ಮತ ಹೊಂದಿದ್ದೀರಿ.
ನಾನು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಬಳಿಕ ಮತದಾರರೆಲ್ಲರೂ ನಿಮ್ಮ ಕ್ಷೇತ್ರದಲ್ಲೇ ಮತದಾನ ಮಾಡಲು ಬಸುತ್ತಿದ್ದಾರೆ ಇಲ್ಲಿ ಕಲ್ಪಿಸಲಾಗಿರುವ ಯೋಜನೆಗಳೇನು ಎಂದು ನಾನು ರಾಮಚಂದ್ರ ಅವರನ್ನು ಕೇಳಿದೆ. ಅವರು ನಮಗೆ ಮಾಹಿತಿ ನೀಡಿದರು. ಆ ಮಾಹಿತಿ ಬಗ್ಗೆ ನಾನು, ರಾಮಲಿಂಗಾ ರೆಡ್ಡಿ, ಸಿದ್ದರಾಮಯ್ಯ ಅವರೆಲ್ಲರೂ ಸೇರಿ ಚರ್ಚೆ ಮಾಡಿ ನಮ್ಮ ರಾಜ್ಯದಲ್ಲಿ ಐದು ಗ್ಯಾರಂಟಿ ಯೋಜನೆ ಜಾರಿ ಮಾಡಿದೆವು” ಎಂದು ತಿಳಿಸಿದರು.
“ಕರ್ನಾಟಕದಲ್ಲಿ ಹಾಗೂ ಕೇಂದ್ರದಲ್ಲಿ ಬಿಜೆಪಿಯ ಡಬಲ್ ಇಂಜಿನ್ ಸರ್ಕಾರ ಇತ್ತು. ಮೋದಿ ಅವರು ಸೇರಿದಂತೆ ಬಿಜೆಪಿಯವರೆಲ್ಲರೂ ಅಚ್ಚೇದಿನ ನೀಡುವುದಾಗಿ ಹೇಳಿದ್ದರು. ನಿಮಗೆ 15 ಲಕ್ಷ ಹಾಕುತ್ತೇವೆ ಎಂದು ನಿಮ್ಮಿಂದ ಜನಧನ್ ಖಾತೆ ತೆರೆಸಿದರು. ನಿಮಗೆ ಆ ಹಣ ಬಂತಾ? ಆದರೆ ನಾವು ಪಂಚ ಗ್ಯಾರಂಟಿ ಭರವಸೆ ನೀಡಿದೆವು. ನಾವು ರಾಜ್ಯದಾದ್ಯಂತ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ಬಡ ಕುಟುಂಬದ ಮಹಿಳೆಗೆ ಮಾಸಿಕ 2 ಸಾವಿರ, 200 ಯೂನಿಟ್ ವರೆಗೂ ವಿದ್ಯುತ್ ಉಚಿತ, 10 ಕೆ.ಜಿ ಅಕ್ಕಿ, ನಿರುದ್ಯೋಗಿಗಳಿಗೆ 3 ಸಾವಿರ ವರೆಗೂ ನಿರುದ್ಯೋಗ ಭತ್ಯೆ ನೀಡಿದೆವು” ಎಂದು ಹೇಳಿದರು.
ಮೋದಿ ಅವರಿಂದ ಗ್ಯಾಸ್ ಹೋಗಿ ಸೌದೆ ಒಲೆ ವಾಪಸ್ ಬಂದಿದೆ
“ಇಲ್ಲಿ ಡಿಎಂಕೆ ನೇತೃತ್ವದ ಮೈತ್ರಿಕೂಟದ ಪ್ರಣಾಳಿಕೆಯಲ್ಲಿ ಮಹಿಳೆಯರಿಗೆ ತಮಿಳುನಾಡಿನಾದ್ಯಂತ ಉಚಿತ ಬಸ್ ಪ್ರಯಾಣ, ಮಹಿಳೆಯರಿಗೆ 2 ಸಾವಿರ ಹಣ ನೀಡುವ ಭರವಸೆ ನೀಡಿದ್ದಾರೆ. ಇನ್ನು ಮೋದಿ ಅವರಿಂದ ಗ್ಯಾಸ್ ಹೋಗಿ ಸೌದೆ ಒಲೆ ವಾಪಸ್ ಬಂದಿದೆ. ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ.
ಹೀಗಾಗಿ ಕುಟುಂಬದ ಅಗತ್ಯ ವಸ್ತುಗಳ ಖರೀದಿಗೆ 8 ಸಾವಿರ ನೀಡುವ ಭರವಸೆ ನೀಡಲಾಗಿದೆ. ಡಿಎಂಕೆ, ಕಾಂಗ್ರೆಸ್ ಪಕ್ಷಗಳು ಕೊಟ್ಟ ಮಾತಿನಂತೆ ನಡೆಯುವ ಪಕ್ಷಗಳು. ನಮ್ಮ ರಾಜ್ಯದಲ್ಲಿ ರೈತರಿಗೆ ಉಚಿತ ವಿದ್ಯುತ್ ನೀಡುತ್ತಿದ್ದೇವೆ. ಅದೇ ರೀತಿ ನಿಮ್ಮ ರಾಜ್ಯದಲ್ಲಿ ರೈತರಿಗೆ ಮೀಟರ್ ರಹಿತ ಪಂಪ್ ಸೆಟ್ ನೀಡುವ ಭರವಸೆ ನೀಡಿದ್ದೇವೆ. ಹಿರಿಯ ನಾಗರೀಕರಿಗೆ ವೃದ್ಧಾಪ್ಯ ವೇತನದ ಮೂಲಕ 2 ಸಾವಿರ, ವಿಕಲಾಂಗರಿಗೆ 2500 ನೀಡುವುದಾಗಿ ಘೋಷಣೆ ಮಾಡಿದ್ದೇವೆ.
ಪೆರಿಯಾರ್ ಅವರ ಮಾರ್ಗದರ್ಶನದಲ್ಲಿ ಡಿಎಂಕೆ ನೇತೃತ್ವದ ಸರ್ಕಾರ ಆಡಳಿತ ನಡೆಸುತ್ತಿದೆ. ಪೆರಿಯಾರ್ ಅವರ ಮಾತೃಭೆ ಕನ್ನಡವಾಗಿತ್ತು. ಅವರು ತಮಿಳು ಭಾಷೆಗಾಗಿ ಹೋರಾಟ ಮಾಡಿಕೊಂಡು ಬಂದರು. ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರ ಮಾತೃಭಾಷೆ ತಮಿಳು.
ಮೋದಿಯವರು ಅಧಿಕಾರಕ್ಕೆ ಬಂದು 12 ವರ್ಷಗಳಾಗಿದ್ದು, ಅವರು ಯಾವುದಾದರೂ ಒಂದು ವಿಚಾರದಲ್ಲಿ ಕೊಟ್ಟ ಮಾತು ಉಳಿಸಿಕೊಂಡಿದ್ದಾರಾ? ನುಡಿದಂತೆ ನಡೆದು ಒಂದು ಕಾರ್ಯಕ್ರಮ ಜಾರಿಗೆ ತಂದಿದ್ದಾರಾ? ಇಲ್ಲ. ಉಚಿತವಾಗಿ ಅಕ್ಕಿ ನೀಡುವ ಕಾರ್ಯಕ್ರಮ, ಅಂಗನವಾಡಿ ಕಾರ್ಯಕ್ರಮ, ಆಶಾ ಕಾರ್ಯಕರ್ತೆಯರ ಕಾರ್ಯಕ್ರಮ, ಉಳುವವನಿಗೆ ಭೂಮಿ, ಉಚಿತ ವಿದ್ಯುತ್ ಸೇರಿದಂತೆ ಜನಪರ ಯೋಜನೆಗಳನ್ನು ಜಾರಿಗೆ ತಂದಿರುವುದು ಕಾಂಗ್ರೆಸ್ ಸರ್ಕಾರವೇ ಹೊರತು. ಬಿಜೆಪಿಯಲ್ಲ.
ಬಿಜೆಪಿಯವರದ್ದು ಖಾಲಿ ಬುಟ್ಟಿ, ಬೇವಿನಸೊಪ್ಪು ನಂದೇ ಬೆಳಗೋ ಪೂಜಾರಿ ಎಂಬ ಮಾತಿನಂತೆ ಖಾಲಿ ಮಾತು ಅಷ್ಟೇ. ಬಿಜೆಪಿ ರಾಜ್ಯಾಧ್ಯಕ್ಷರಾದ ಅಣ್ಣಾಮಲೈ ನಮ್ಮ ರಾಜ್ಯದಲ್ಲಿ ಸೇವೆಸಲ್ಲಿಸಿದ್ದರು. ಬಿಜೆಪಿಯವರು ಪಾಪ ಆತನನ್ನು ಕಿತ್ತೊಗೆದಿದ್ದಾರೆ. ಆತನಿಗೆ ಟಿಕೆಟ್ ನೀಡಿಲ್ಲ. ಈಗ ಎಐಡಿಎಂಕೆ ಅವರು ಆತನನ್ನು ನೀವು ಇಟ್ಟುಕೊಂಡರೆ ನಾವು ನಿಮ್ಮ ಹತ್ತಿರಕ್ಕೂ ಬರುವುದಿಲ್ಲ ಎಂದು ಹೇಳಿದ್ದಾರೆ” ಎಂದರು.