Home Blog

ಜು. 3ರಂದು ದಲಿತ ಜನಾಗ್ರಹ ಸಮಾವೇಶ

0

ವಿಜಯಸಾಕ್ಷಿ ಸುದ್ದಿ, ಗದಗ: ಭೂಮಿ, ವಸತಿ, ಬ್ಯಾಕ್‌ಲಾಗ್ ಹುದ್ದೆಗಳ ನೇಮಕಾತಿ ಹಾಗೂ ವಿಶೇಷ ಘಟಕ ಯೋಜನೆಗೆ ಏಕಗವಾಕ್ಷಿ ನೀತಿ ಜಾರಿಗೊಳಿಸುವಂತೆ ಒತ್ತಾಯಿಸಿ ಜುಲೈ 3ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ದಲಿತ ಜನಾಗ್ರಹ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‌ವಾದ) ಮುಂಡರಗಿ ತಾಲೂಕು ಸಂಚಾಲಕ ಎಚ್.ಡಿ. ಪೂಜಾರ ತಿಳಿಸಿದರು.

ಭೂಮಿ, ವಸತಿ, ಬ್ಯಾಕ್‌ಲಾಗ್ ಹುದ್ದೆಗಳ ನೇಮಕಾತಿ ಹಾಗೂ ವಿಶೇಷ ಘಟಕ ಯೋಜನೆಗೆ ಏಕಗವಾಕ್ಷಿ ನೀತಿ ಜಾರಿಗೊಳಿಸುವಂತೆ ಒತ್ತಾಯಿಸಿ ಜುಲೈ 3ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ದಲಿತ ಜನಾಗ್ರಹ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‌ವಾದ) ಮುಂಡರಗಿ ತಾಲೂಕು ಸಂಚಾಲಕ ಎಚ್.ಡಿ. ಪೂಜಾರ ತಿಳಿಸಿದರು.

ಸೋಮವಾರ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಸಂಸ (ಅಂಬೇಡ್ಕರ್‌ವಾದ) ರಾಜ್ಯಾಧ್ಯಕ್ಷ ಮಾವಳ್ಳಿ ಶಂಕರ ಅವರ ನೇತೃತ್ವದಲ್ಲಿ ನಡೆಯಲಿರುವ ಈ ಸಮಾವೇಶದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಸಾವಿರಾರು ಜನರು ಭಾಗವಹಿಸಲಿದ್ದಾರೆ ಎಂದರು.

ಈ ಹಿಂದೆಯೂ ದಲಿತ ಸಂಘರ್ಷ ಸಮಿತಿ ಐದು ಲಕ್ಷಕ್ಕೂ ಹೆಚ್ಚು ದಲಿತರನ್ನು ಒಗ್ಗೂಡಿಸಿ ಬೃಹತ್ ಸಮಾವೇಶ ನಡೆಸಿದ್ದು, ಅದರ ಫಲವಾಗಿ ರಾಜ್ಯದಲ್ಲಿ ವಸತಿ ಶಾಲೆಗಳು ಆರಂಭಗೊಂಡವು. ಈಗ ಆ ಶಾಲೆಗಳ ಸಂಖ್ಯೆಯನ್ನು ಹೆಚ್ಚಿಸುವುದರ ಜೊತೆಗೆ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ವಸತಿ ಶಾಲೆಗಳಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸಬೇಕು ಎಂದು ಸಮಾವೇಶದ ಮೂಲಕ ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದು ಹೇಳಿದರು.

ವಿಶೇಷ ಘಟಕ ಯೋಜನೆಯಡಿ ಮೀಸಲಿರುವ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸುತ್ತಿರುವುದರಿಂದ ದಲಿತ ಸಮುದಾಯಕ್ಕೆ ದೊರೆಯಬೇಕಾದ ಸೌಲಭ್ಯಗಳು ವಂಚಿತವಾಗುತ್ತಿವೆ. ಬ್ಯಾಕ್‌ಲಾಗ್ ಹುದ್ದೆಗಳ ನೇಮಕಾತಿಯಲ್ಲಿ ಆಗುತ್ತಿರುವ ವಿಳಂಬದಿಂದ ದಲಿತ ಯುವಕರಿಗೆ ಸರ್ಕಾರಿ ಉದ್ಯೋಗದ ಅವಕಾಶಗಳು ಸಿಗುತ್ತಿಲ್ಲ. ಜೊತೆಗೆ ಭೂಒಡೆತನ ಯೋಜನೆಯನ್ನು ಪುನರಾರಂಭಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಸಮಾವೇಶದ ಮೂಲಕ ಸರ್ಕಾರದ ಗಮನ ಸೆಳೆಯಲಾಗುವುದು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಬಾಲರಾಜ ಅರಬರ, ಪ್ರೊ. ಸತೀಶ ಪಾಸಿ, ನಾಗರಾಜ ಹೂಗಾರ, ಮಲ್ಲಿಕಾರ್ಜುನ ಗೌಡಣ್ಣವರ, ನಾಗರಾಜ ಗೋಕಾವಿ, ಪೂಜಾ ಬೇವೂರ, ಹನುಮಂತ ಚಲವಾದಿ, ಚೇತನಾ ಸೀತಾಲಹರಿ, ಮುತ್ತಪ್ಪ ಭಜಂತ್ರಿ, ಮಂಜುನಾಥ ಮಾತಿನ ಹಾಗೂ ರಸೂಲಸಾಬ ತಹಸೀಲ್ದಾರ್ ಉಪಸ್ಥಿತರಿದ್ದರು.

ಕುಮಾರಸ್ವಾಮಿ ವಿರುದ್ಧ ವೈಯಕ್ತಿಕ ಟೀಕೆ ನಿಲ್ಲಿಸಲಿ: ವಿ.ಆರ್. ಗೋವಿಂದಗೌಡ್ರ

0

ವಿಜಯಸಾಕ್ಷಿ ಸುದ್ದಿ, ಗದಗ: ಶಾಸಕ ಪ್ರದೀಪ್ ಈಶ್ವರ್ ಅವರು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಅವಹೇಳನಕಾರಿ ಹಾಗೂ ವೈಯಕ್ತಿಕ ಹೇಳಿಕೆ ನೀಡುವುದನ್ನು ತಕ್ಷಣ ನಿಲ್ಲಿಸಬೇಕು ಎಂದು ಜೆಡಿಎಸ್ ರಾಜ್ಯ ವಕ್ತಾರ ವಿ.ಆರ್. ಗೋವಿಂದಗೌಡ್ರ ಆಗ್ರಹಿಸಿದರು.

ಶಾಸಕ ಪ್ರದೀಪ್ ಈಶ್ವರ್ ಅವರು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಅವಹೇಳನಕಾರಿ ಹಾಗೂ ವೈಯಕ್ತಿಕ ಹೇಳಿಕೆ ನೀಡುವುದನ್ನು ತಕ್ಷಣ ನಿಲ್ಲಿಸಬೇಕು ಎಂದು ಜೆಡಿಎಸ್ ರಾಜ್ಯ ವಕ್ತಾರ ವಿ.ಆರ್. ಗೋವಿಂದಗೌಡ್ರ ಆಗ್ರಹಿಸಿದರು.

ಸೋಮವಾರ ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಿಶ್ರಮ ಅಕಾಡೆಮಿಗೆ ಮೂರು ಸಿಎ ಸೈಟ್ ಮಂಜೂರಾತಿ ಕುರಿತು ನ್ಯಾಯಾಲಯ ಪ್ರಶ್ನಿಸಿರುವ ಸಂದರ್ಭದಲ್ಲಿ ಅದಕ್ಕೆ ಉತ್ತರಿಸುವ ಬದಲು ಕುಮಾರಸ್ವಾಮಿ ವಿರುದ್ಧ ವೈಯಕ್ತಿಕ ಟೀಕೆ ಮಾಡುವುದು ಸರಿಯಲ್ಲ ಎಂದು ಹೇಳಿದರು.

ರಾಜಕಾರಣದಲ್ಲಿ ಮಾತು ಮತ್ತು ನಡವಳಿಕೆಗೆ ಮಿತಿ ಇರಬೇಕು. ಟೀಕೆ-ಟಿಪ್ಪಣಿ ಸಹಜವಾದರೂ ವೈಯಕ್ತಿಕ ನಿಂದನೆ ಸಲ್ಲದು. ಕುಮಾರಸ್ವಾಮಿ ಅವರಿಗೆ ರಾಜ್ಯಾದ್ಯಂತ ಅಪಾರ ಅಭಿಮಾನಿಗಳಿದ್ದು, ಇದೇ ರೀತಿಯ ಭಾಷೆಯನ್ನು ಪ್ರದೀಪ್ ಈಶ್ವರ್ ಮುಂದುವರಿಸಿದರೆ ಅದಕ್ಕೆ ತಕ್ಕ ಪ್ರತಿಕ್ರಿಯೆ ನೀಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಪ್ರದೀಪ್ ಈಶ್ವರ್ ತಾವು ಹಿಂದುಳಿದ ಸಮುದಾಯದ ಶಾಸಕ ಎಂದು ಹೇಳಿಕೊಳ್ಳುತ್ತಾರೆ. ಕಾಂಗ್ರೆಸ್ ಪಕ್ಷದಲ್ಲಿಯೇ ಹಿಂದುಳಿದ ವರ್ಗದ ಅನೇಕ ಹಿರಿಯ ನಾಯಕರು ಮತ್ತು ಶಾಸಕರಿದ್ದು, ಅವರಿಂದ ರಾಜಕೀಯ ಸಂಸ್ಕಾರ ಕಲಿಯಬೇಕು. ಮೀಸೆ ತಿರುವುವುದು, ಸೆಡ್ಡು ಹೊಡೆಯುವುದರಿಂದ ಯಾರೂ ಹೆದರುವುದಿಲ್ಲ. ಜೆಡಿಎಸ್ ಬಾಡಿಗೆ ಪಕ್ಷವಲ್ಲ ಎಂಬುದನ್ನು ಅರಿತುಕೊಳ್ಳಬೇಕು ಎಂದು ತಿರುಗೇಟು ನೀಡಿದರು.

ಗ್ಯಾರಂಟಿ ಯೋಜನೆಗಳ ಕುರಿತು ಮಾತನಾಡಿದ ಅವರು, ಗ್ಯಾರಂಟಿ ಸಮಿತಿ ಸದಸ್ಯರು ಸಚಿವರಂತೆ ಅಧಿಕಾರಿಗಳ ಸಭೆ ನಡೆಸುವುದಕ್ಕಿಂತ ಯೋಜನೆಗಳ ಸಮರ್ಪಕ ಅನುಷ್ಠಾನದತ್ತ ಗಮನ ಹರಿಸಬೇಕು. ಸತ್ತವರ ಹೆಸರಿನಲ್ಲಿ ಹಾಗೂ ಖಾತೆಯೇ ಇಲ್ಲದವರ ಹೆಸರಿನಲ್ಲಿ ಹಣ ಜಮೆಯಾಗಿರುವುದಾಗಿ ಸರ್ಕಾರವೇ ಹೇಳುತ್ತಿದೆ. ಹೀಗಿದ್ದರೂ ಗ್ಯಾರಂಟಿ ಸಮಿತಿ ವಿಫಲವಾಗಿದ್ದು, ಅದನ್ನು ವಿಸರ್ಜಿಸಬೇಕು ಎಂದು ಒತ್ತಾಯಿಸಿದರು.

ಗೃಹಲಕ್ಷ್ಮಿ ಯೋಜನೆಯ ಹಣವನ್ನು ತೆರಿಗೆ ಪಾವತಿಸುವ ಮಹಿಳೆಯರಿಗೆ ನೀಡದಿರುವ ನಿರ್ಧಾರ ಸರಿಯಲ್ಲ. ಚುನಾವಣೆಗೂ ಮುನ್ನ ನೀಡಿದ ಭರವಸೆಯಂತೆ ಸರ್ಕಾರ ನಡೆದುಕೊಳ್ಳಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಅಮರೇಶ ಅಂಗಡಿ, ಬಸವರಾಜ ಅಪ್ಪಣ್ಣವರ, ಪ್ರಫುಲ್ ಪುಣೇಕರ್ ಹಾಗೂ ಜಿ.ಕೆ. ಕೊಳ್ಳಿಮಠ ಉಪಸ್ಥಿತರಿದ್ದರು.

“ರಾಜಕಾರಣದಲ್ಲಿ ಟೀಕೆ ಸಹಜ, ಆದರೆ ವೈಯಕ್ತಿಕ ನಿಂದನೆ ಸರಿಯಲ್ಲ. ಕುಮಾರಸ್ವಾಮಿ ವಿರುದ್ಧದ ಅವಹೇಳನಕಾರಿ ಹೇಳಿಕೆಗಳನ್ನು ಪ್ರದೀಪ್ ಈಶ್ವರ್ ತಕ್ಷಣ ನಿಲ್ಲಿಸಬೇಕು.”

ವಿ.ಆರ್. ಗೋವಿಂದಗೌಡ್ರ, ಜೆಡಿಎಸ್ ರಾಜ್ಯ ವಕ್ತಾರ

ಕುಟುಂಬ ಕಲಹದ ಬೆನ್ನಲ್ಲೇ ಮೊಬೈಲ್ ಟವರ್ ಏರಿದ ವ್ಯಕ್ತಿ..!

0

ಗದಗ: ಕುಟುಂಬ ಕಲಹದ ಹಿನ್ನೆಲೆಯಲ್ಲಿ ಕುಡಿದ ಮತ್ತಿನಲ್ಲಿದ್ದ ವ್ಯಕ್ತಿಯೊಬ್ಬ ಮೊಬೈಲ್ ಟವರ್ ಏರಿ ಆತಂಕ ಸೃಷ್ಟಿಸಿದ ಘಟನೆ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಕೊರ್ಲಹಳ್ಳಿ ಗ್ರಾಮದಲ್ಲಿ ಸೋಮವಾರ ನಡೆದಿದೆ.

ಗ್ರಾಮದ ನಜೀರ್ ಸಾಬ್ ಎಂಬಾತ ಈ ಕೃತ್ಯ ಎಸಗಿದ ವ್ಯಕ್ತಿ.

ಸೋಮವಾರ ಮಧ್ಯಾಹ್ನ ಮದ್ಯದ ಅಮಲಿನಲ್ಲಿ
ಮನನೊಂದ ನಜೀರ್ ಸಾಬ್ ನೇರವಾಗಿ ಗ್ರಾಮದ ಮೊಬೈಲ್ ಟವರ್ ಏರಿ ಹೈಡ್ರಾಮಾ ನಡೆಸಿದ್ದಾನೆ.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಮುಂಡರಗಿ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಧಾವಿಸಿ ಕಾರ್ಯಾಚರಣೆ ಆರಂಭಿಸಿದರು. ಸುಮಾರು ಸಮಯ ಮನವೊಲಿಕೆ ನಡೆಸಿದ ಬಳಿಕ ನಜೀರ್ ಸಾಬ್‌ನನ್ನು ಸುರಕ್ಷಿತವಾಗಿ ಕೆಳಗಿಳಿಸಲಾಯಿತು.

ಕಾರ್ಯಾಚರಣೆ ವೇಳೆ ಕೆಲಕಾಲ ಹುಚ್ಚಾಟ ಮೆರೆದ ನಜೀರ್ ಸಾಬ್‌ನ್ನು ಕೊನೆಗೆ ಪೊಲೀಸರು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ. ಮುಂಡರಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಚಿಕ್ಕಬಳ್ಳಾಪುರ ಹೋಂ ಸ್ಟೇನಲ್ಲಿ ಬೆಂಗಳೂರಿನ ಯುವತಿ ಸಾವು: ಲವ್ ಜಿಹಾದ್ ಕೊಲೆ ಎಂದು ತಾಯಿ ಆರೋಪ

ಚಿಕ್ಕಬಳ್ಳಾಪುರ: ಮುದ್ದೇನಹಳ್ಳಿ ಸಮೀಪದ ಹೋಂಸ್ಟೇಯೊಂದರಲ್ಲಿ ಬೆಂಗಳೂರು ಮೂಲದ ಯುವತಿ ಸಾಯಿ ಸುರಭಿ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ಯುವತಿಯ ತಾಯಿ ಇದನ್ನು ಯೋಜಿತ ಕೊಲೆ ಎಂದು ಆರೋಪಿಸಿದ್ದಾರೆ. ಪ್ರಕರಣದಲ್ಲಿ ಯುವತಿಯೊಂದಿಗೆ ಹೋಂಸ್ಟೇಗೆ ಬಂದಿದ್ದ ಕೇರಳ ಮೂಲದ ಸಂಜೀತ್ ಅಲಿ ಅಸ್ವಸ್ಥ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಶನಿವಾರ ಹೋಂಸ್ಟೇಗೆ ಬಂದಿದ್ದ ಇಬ್ಬರೂ ಸೋಮವಾರ ಚೆಕ್‌ಔಟ್ ಮಾಡದ ಹಿನ್ನೆಲೆಯಲ್ಲಿ ಸಿಬ್ಬಂದಿ ಕೊಠಡಿ ಪರಿಶೀಲಿಸಿದಾಗ ಯುವತಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ಸ್ಥಳದಲ್ಲಿ ಹಗ್ಗ ಕತ್ತರಿಸಿದ ಸ್ಥಿತಿ, ಕೆಲವು ಮಾತ್ರೆಗಳು ಹಾಗೂ ಡೈರಿಯೊಂದು ಪತ್ತೆಯಾಗಿರುವುದರಿಂದ ಪ್ರಕರಣದ ಸುತ್ತ ಹಲವು ಅನುಮಾನಗಳು ಮೂಡಿವೆ.

ಘಟನಾ ಸ್ಥಳಕ್ಕೆ ಜಿಲ್ಲಾ ಎಸ್‌ಪಿ ಕುಶಾಲ್ ಚೌಕ್ಸಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತಳ ಮರಣಕ್ಕೆ ನಿಖರ ಕಾರಣ ತಿಳಿಯಲು ಮರಣೋತ್ತರ ಪರೀಕ್ಷೆ ಹಾಗೂ ವಿಧಿವಿಜ್ಞಾನ ವರದಿಗಾಗಿ ಕಾಯಲಾಗುತ್ತಿದೆ. ಸಂಜೀತ್ ಅಲಿಯ ಹೇಳಿಕೆ ದಾಖಲಿಸಿದ ಬಳಿಕವೇ ಆತ್ಮಹತ್ಯೆಯೋ, ಕೊಲೆಯೋ ಅಥವಾ ಬೇರೆ ಯಾವುದೇ ಕಾರಣವಿದೆಯೋ ಎಂಬುದು ಸ್ಪಷ್ಟವಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದೇ ವೇಳೆ, ಮೃತಳ ತಾಯಿ ಗೀತಾ ಭಾವುಕರಾಗಿ ಪ್ರತಿಕ್ರಿಯಿಸಿ, ಸಂಜೀತ್ ಅಲಿ ಹಲವು ವರ್ಷಗಳಿಂದ ತನ್ನ ಪುತ್ರಿಯನ್ನು ಹಿಂಬಾಲಿಸುತ್ತಿದ್ದ, ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದ ಹಾಗೂ ಡ್ರಗ್ಸ್ ವ್ಯಸನಕ್ಕೆ ದೂಡಿದ್ದಾನೆ ಎಂದು ಆರೋಪಿಸಿದ್ದಾರೆ. ಇತ್ತೀಚೆಗೆ ಚಿಕಿತ್ಸೆಯಿಂದ ಗುಣಮುಖಳಾಗಿದ್ದ ಪುತ್ರಿಯನ್ನು ಮತ್ತೊಮ್ಮೆ ತನ್ನೊಂದಿಗೆ ಕರೆದುಕೊಂಡು ಹೋಗಿ ಸಂಚು ರೂಪಿಸಿ ಕೊಲೆ ಮಾಡಿದ್ದಾನೆ ಎಂದು ಅವರು ದೂರಿದ್ದಾರೆ.

ಮೃತಳ ಸಂಬಂಧಿಕರು ಕೂಡ ಸಂಜೀತ್ ಅಲಿ ವಿರುದ್ಧ ಈ ಹಿಂದೆಯೇ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರೂ ಯಾವುದೇ ಪರಿಣಾಮಕಾರಿ ಕ್ರಮ ಕೈಗೊಳ್ಳಲಿಲ್ಲ ಎಂದು ಆರೋಪಿಸಿದ್ದು, ಪ್ರಕರಣದ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ.

ಗೃಹಜ್ಯೋತಿಗೆ ಸರ್ಕಾರದ ಹೊಸ ರೂಲ್ಸ್! ಹೊರರಾಜ್ಯದವರಿಗೆ ಶಾಕ್, ಮನೆ ಮನೆಗೆ ಪರಿಶೀಲನೆ; ಡಬಲ್ ಸಂಪರ್ಕ ಕಟ್

ಬೆಂಗಳೂರು: ರಾಜ್ಯ ಸರ್ಕಾರದ ಗೃಹಜ್ಯೋತಿ ಉಚಿತ ವಿದ್ಯುತ್ ಯೋಜನೆಗೆ ಭಾರೀ ಬದಲಾವಣೆ ತರಲು ಸರ್ಕಾರ ಮುಂದಾಗಿದೆ. ಯೋಜನೆಯ ದುರ್ಬಳಕೆಯನ್ನು ತಡೆಯಲು ರಾಜ್ಯಾದ್ಯಂತ ಮನೆ ಮನೆಗೆ ಹೊಸ ಅರ್ಜಿ ವಿತರಣೆ, ಫಲಾನುಭವಿಗಳ ಮರುಪರಿಶೀಲನೆ ಹಾಗೂ ಡಬಲ್ ಸಂಪರ್ಕ ರದ್ದು ಸೇರಿದಂತೆ ಹಲವು ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೆ ತರಲಾಗುತ್ತಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಘೋಷಿಸಿದ್ದಾರೆ.

ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಸುಮಾರು 1.64 ಕೋಟಿ ಜನರು ಗೃಹಜ್ಯೋತಿ ಯೋಜನೆಯ ಪ್ರಯೋಜನ ಪಡೆಯುತ್ತಿದ್ದಾರೆ. ಆದರೆ ಯೋಜನೆಯನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿರುವ ಹಿನ್ನೆಲೆಯಲ್ಲಿ ಸರ್ಕಾರ ಸಂಪೂರ್ಣ ಪರಿಶೀಲನೆ ನಡೆಸಲು ನಿರ್ಧರಿಸಿದೆ ಎಂದರು.

“ಈ ಯೋಜನೆ ಕರ್ನಾಟಕದ ಜನರಿಗಾಗಿ ಮಾತ್ರ. ಹೊರರಾಜ್ಯದವರು ಅಥವಾ ಇಲ್ಲಿನ ಮತದಾರರಲ್ಲದವರು ಗೃಹಜ್ಯೋತಿ ಸೌಲಭ್ಯ ಪಡೆಯಲು ಅವಕಾಶ ಇರುವುದಿಲ್ಲ” ಎಂದು ಸ್ಪಷ್ಟಪಡಿಸಿದ ಡಿಕೆ ಶಿವಕುಮಾರ್, ಒಂದೇ ವ್ಯಕ್ತಿಯ ಹೆಸರಿನಲ್ಲಿ ಒಂದಕ್ಕಿಂತ ಹೆಚ್ಚು ಉಚಿತ ವಿದ್ಯುತ್ ಸಂಪರ್ಕ ಕಂಡುಬಂದರೆ ಅವುಗಳನ್ನು ತಕ್ಷಣವೇ ರದ್ದುಪಡಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಹೊಸ ಅರ್ಜಿಗಳನ್ನು ಸರ್ಕಾರ ಮನೆ ಬಾಗಿಲಿಗೆ ತಲುಪಿಸಲಿದ್ದು, ಫಲಾನುಭವಿಯ ಫೋಟೋ, ವಿಳಾಸ ಹಾಗೂ ಇತರೆ ದಾಖಲೆಗಳನ್ನು ಇಂಧನ ಇಲಾಖೆಯ ಸಿಬ್ಬಂದಿ ಸ್ಥಳದಲ್ಲೇ ಪರಿಶೀಲಿಸಲಿದ್ದಾರೆ. ಅರ್ಹರಿಗೆ ಯಾವುದೇ ತೊಂದರೆ ಆಗದಂತೆ ಸಂಪೂರ್ಣ ಪಾರದರ್ಶಕ ವ್ಯವಸ್ಥೆ ಜಾರಿಗೊಳಿಸಲಾಗುವುದು ಎಂದು ಅವರು ಹೇಳಿದರು.

ಇದೇ ವೇಳೆ, ಐದು ಗ್ಯಾರಂಟಿ ಯೋಜನೆಗಳ ಮೇಲ್ವಿಚಾರಣೆಗೆ ಪಂಚಾಯಿತಿ ಮಟ್ಟದಲ್ಲಿ ವಿಶೇಷ ಸಮಿತಿಗಳನ್ನು ರಚಿಸಿ, ಫಲಾನುಭವಿಗಳ ಅರ್ಹತೆಯನ್ನು ಪರಿಶೀಲಿಸಲು ಪ್ರತ್ಯೇಕ ಅಧಿಕಾರಿಗಳನ್ನು ನೇಮಿಸಲಾಗುವುದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಇಂಧನ ಸಚಿವ ಕೆ.ಜೆ. ಜಾರ್ಜ್, ಯೋಜನೆಯನ್ನು ಸರಿಪಡಿಸುವುದು ಸರ್ಕಾರದ ಜವಾಬ್ದಾರಿಯಾಗಿದ್ದು, ದುರ್ಬಳಕೆ ತಡೆಯುವ ಕ್ರಮವನ್ನು ರಾಜಕೀಯವಾಗಿ ಟೀಕಿಸುವುದು ಸರಿಯಲ್ಲ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಇಲಾಖೆಯ ಸಿಬ್ಬಂದಿಯನ್ನು ಅಭಿನಂದಿಸಿದ ಡಿಕೆ ಶಿವಕುಮಾರ್, “ಕರೆಂಟ್ ಒಂದು ನಿಮಿಷ ಹೋದರೂ ಜನ ಮೊದಲು ನನ್ನನ್ನೇ ಬೈಯುತ್ತಾರೆ. ಆದರೆ ನೀವು ಉತ್ತಮ ಸೇವೆ ನೀಡುತ್ತಿದ್ದೀರಿ” ಎಂದು ಹಾಸ್ಯಭರಿತವಾಗಿ ಸಿಬ್ಬಂದಿಯ ಕಾರ್ಯವನ್ನು ಮೆಚ್ಚಿದರು.

ನಾಡಬಾಂಬ್ ಎಲ್ಲಿಂದ ಬಂತು? ಶಿರಾ ಸ್ಫೋಟ ಪ್ರಕರಣದಲ್ಲಿ ಪೊಲೀಸರಿಗೆ ಹೊಸ ಸವಾಲು | ನಾಗೇಂದ್ರನ ಸಂಪರ್ಕಗಳ ಜಾಲ ಪರಿಶೀಲನೆ

0

ತುಮಕೂರು: ಶಿರಾ ಕಾರು ಸ್ಫೋಟ ಪ್ರಕರಣದಲ್ಲಿ ಸಾವನ್ನಪ್ಪಿದ ನಾಗೇಂದ್ರ ಬಳಸಿದ ನಾಡಬಾಂಬ್‌ನ ಮೂಲ ಪತ್ತೆ ಇದೀಗ ಪೊಲೀಸರಿಗೆ ಅತಿದೊಡ್ಡ ಸವಾಲಾಗಿ ಪರಿಣಮಿಸಿದೆ. ಆತ್ಮಹತ್ಯೆಗೆ ಮುನ್ನದ ಮೂರು ದಿನಗಳ ಚಲನವಲನವನ್ನು ಕಳ್ಳಂಬೆಳ್ಳ ಪೊಲೀಸರು ಸಂಪೂರ್ಣವಾಗಿ ಪರಿಶೀಲಿಸಿದ್ದು, ತನಿಖೆಯಲ್ಲಿ ಹಲವು ಮಹತ್ವದ ಮಾಹಿತಿಗಳು ಹೊರಬಿದ್ದಿವೆ.

ಪೊಲೀಸರ ಮಾಹಿತಿ ಪ್ರಕಾರ, ಜೂನ್ 25ರಂದು ಬೆಂಗಳೂರಿಗೆ ಬಂದಿದ್ದ ನಾಗೇಂದ್ರ ಯುವತಿ ರಮ್ಯಾಳನ್ನು ಭೇಟಿಯಾಗಿ ರಾತ್ರಿ ಅಂಕೋಲಾಗೆ ತೆರಳಿದ್ದ. ಮರುದಿನ ಅಂಕೋಲಾದಲ್ಲಿ ವಿವಿಧೆಡೆ ಸಂಚರಿಸಿದ ಬಳಿಕ ಮತ್ತೆ ಬೆಂಗಳೂರಿಗೆ ಬಂದು, ಜೂನ್ 27ರಂದು ರಮ್ಯಾಳನ್ನು ಕರೆದುಕೊಂಡು ಹೊರಟಿದ್ದ. ಬಳಿಕ ಶಿರಾ ಸಮೀಪ ಕಾರಿನಲ್ಲೇ ನಾಡಬಾಂಬ್ ಸ್ಫೋಟಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ.

ಈ ಅವಧಿಯಲ್ಲಿ ನಾಗೇಂದ್ರ 10 ಮಂದಿಯನ್ನು ಖುದ್ದಾಗಿ ಭೇಟಿಯಾಗಿದ್ದು, 8 ಮಂದಿಯೊಂದಿಗೆ ಮೊಬೈಲ್ ಮೂಲಕ ಸಂಪರ್ಕದಲ್ಲಿದ್ದ ಎನ್ನುವುದು ತನಿಖೆಯಿಂದ ದೃಢಪಟ್ಟಿದೆ. ಆದರೆ ವಿಚಾರಣೆ ನಡೆಸಿದವರಲ್ಲಿ ಯಾರಿಂದಲೂ ಸ್ಫೋಟಕದ ಬಗ್ಗೆ ಸ್ಪಷ್ಟ ಮಾಹಿತಿ ದೊರೆತಿಲ್ಲ.

ಉತ್ತರ ಕನ್ನಡ ಜಿಲ್ಲೆಯ ಅರಣ್ಯ ಪ್ರದೇಶಗಳಲ್ಲಿ ಕಾಡುಪ್ರಾಣಿಗಳ ಬೇಟೆಗೆ ಬಳಸಲಾಗುವ ನಾಡಬಾಂಬ್ ನಾಗೇಂದ್ರನಿಗೆ ಹೇಗೆ ಸಿಕ್ಕಿತು ಎಂಬುದನ್ನು ಪತ್ತೆಹಚ್ಚಲು ಪೊಲೀಸರು ಬಹುಮುಖ ತನಿಖೆ ನಡೆಸುತ್ತಿದ್ದಾರೆ. ಸ್ಫೋಟಕವನ್ನು ಹೊರಗಿನಿಂದ ಪಡೆದಿದ್ದಾನೆಯೇ ಅಥವಾ ಪಟಾಕಿ ಮದ್ದು ಸೇರಿದಂತೆ ಕಚ್ಚಾ ವಸ್ತುಗಳನ್ನು ಬಳಸಿ ಸ್ವತಃ ತಯಾರಿಸಿದ್ದಾನೆಯೇ ಎಂಬ ಅಂಶವನ್ನೂ ಪರಿಶೀಲಿಸಲಾಗುತ್ತಿದೆ.

ಪ್ರಕರಣದ ಮತ್ತೊಂದು ಆಯಾಮದಲ್ಲಿ, ಯುವತಿ ರಮ್ಯಾ ನೀಡಿರುವ ಕಿರುಕುಳದ ಆರೋಪಗಳು ಹಾಗೂ ನಾಗೇಂದ್ರನ ಸಂಬಂಧಿಕರು ನೀಡಿರುವ ವಿರುದ್ಧ ಹೇಳಿಕೆಗಳನ್ನೂ ಪೊಲೀಸರು ದಾಖಲಿಸಿಕೊಂಡಿದ್ದಾರೆ.

ಸದ್ಯ ನಾಡಬಾಂಬ್‌ನ ಮೂಲ, ಸ್ಫೋಟಕ ತಯಾರಿಕೆಯ ವಿಧಾನ ಹಾಗೂ ನಾಗೇಂದ್ರನ ಸಂಪರ್ಕ ಜಾಲದ ಕುರಿತು ಕಳ್ಳಂಬೆಳ್ಳ ಪೊಲೀಸರು ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದಾರೆ.

ದೇಣಿಗೆ ಹಣದಲ್ಲಿ ಐಷಾರಾಮಿ ಬದುಕು! ರಾಮಮಂದಿರ ಹಗರಣದಲ್ಲಿ ಯುವ ಉದ್ಯೋಗಿ ಸೇರಿ 7 ಆರೋಪಿಗಳ ಆಸ್ತಿ ತನಿಖೆ

0

ಅಯೋಧ್ಯೆ: ರಾಮಮಂದಿರ ದೇಣಿಗೆ ಹಣವನ್ನು ಅಕ್ರಮವಾಗಿ ದುರುಪಯೋಗಪಡಿಸಿಕೊಂಡ ಹಗರಣದ ತನಿಖೆ ಮುಂದುವರಿದಿದ್ದು, ಆರೋಪಿಗಳ ವಿರುದ್ಧ ಆಸ್ತಿ ಮುಟ್ಟುಗೋಲು ಕ್ರಮಗಳನ್ನು ಪೊಲೀಸರು ಆರಂಭಿಸಿದ್ದಾರೆ. ಪ್ರಕರಣದಲ್ಲಿ 22 ವರ್ಷದ ಬ್ಯಾಂಕ್ ಔಟ್‌ಸೋರ್ಸಿಂಗ್ ಉದ್ಯೋಗಿ ಅನುಕಲ್ಪ್ ಮಿಶ್ರಾ ಪ್ರಮುಖ ಪಾತ್ರ ವಹಿಸಿದ್ದಾನೆ ಎಂಬುದು ತನಿಖೆಯಿಂದ ಸ್ಪಷ್ಟವಾಗಿದೆ.

ಕೇವಲ ₹15,000 ಮಾಸಿಕ ವೇತನ ಹೊಂದಿದ್ದ ಈತ, ಕೆಲವೇ ವರ್ಷಗಳಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಗಳನ್ನು ಗಳಿಸಿರುವುದು ತನಿಖಾಧಿಕಾರಿಗಳನ್ನು ಶಾಕ್‌ಗೆ ಒಳಪಡಿಸಿದೆ. ಅಯೋಧ್ಯೆಯಲ್ಲಿ ₹65 ಲಕ್ಷ ಮೌಲ್ಯದ ಮನೆ, ಗ್ರಾಮದಲ್ಲಿ ಫಾರ್ಮ್‌ಹೌಸ್, ಹೊಸ ವಾಹನಗಳು ಹಾಗೂ ದುಬಾರಿ ಬೈಕ್ ಖರೀದಿ ಸೇರಿದಂತೆ ಹಲವು ಆಸ್ತಿಗಳು ಈತನ ಹೆಸರಿನಲ್ಲಿ ಪತ್ತೆಯಾಗಿವೆ.

ಪೊಲೀಸ್ ಮೂಲಗಳ ಪ್ರಕಾರ, ಆರೋಪಿ ತನ್ನ ಸ್ವಗ್ರಾಮದಲ್ಲಿ ಭಾರಿ ವೆಚ್ಚದ 7 ದಿನಗಳ ಧಾರ್ಮಿಕ ಕಾರ್ಯಕ್ರಮವನ್ನೂ ನಡೆಸಿದ್ದಾನೆ. ಇವೆಲ್ಲವೂ ದೇವಾಲಯದ ದೇಣಿಗೆ ಹಣದ ದುರುಪಯೋಗದಿಂದಲೇ ನಡೆದಿದೆ ಎಂಬ ಶಂಕೆ ಬಲವಾಗಿದೆ.

ಭಾನುವಾರ ನಡೆಸಿದ ದಾಳಿಯಲ್ಲಿ ಆತನ ಮನೆಯಿಂದ ಪ್ರಮುಖ ಆಸ್ತಿ ದಾಖಲೆಗಳು ವಶಪಡಿಸಿಕೊಳ್ಳಲಾಗಿದೆ. ಬ್ಯಾಂಕ್ ಖಾತೆಗಳು, ಹಣಕಾಸು ವಹಿವಾಟು ದಾಖಲೆಗಳು ಹಾಗೂ ಆಸ್ತಿ ಹೂಡಿಕೆಗಳ ಮೂಲದ ಕುರಿತು ತೀವ್ರ ತನಿಖೆ ನಡೆಯುತ್ತಿದೆ.

ಪ್ರಕರಣದಲ್ಲಿ ಬಂಧಿತ ಇತರ 7 ಆರೋಪಿಗಳ ಚರ-ಸ್ಥಿರ ಆಸ್ತಿಗಳನ್ನೂ ಪರಿಶೀಲಿಸಲಾಗುತ್ತಿದ್ದು, ಹಣದ ಹರಿವು (Money Trail) ಪತ್ತೆಹಚ್ಚಲು ವಿಶೇಷ ತಂಡ ಕಾರ್ಯನಿರ್ವಹಿಸುತ್ತಿದೆ. ಅಕ್ರಮ ಸಾಬೀತಾದರೆ ಎಲ್ಲಾ ಆಸ್ತಿಗಳನ್ನು ಸರ್ಕಾರ ಜಪ್ತಿ ಮಾಡುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಟನಲ್ ರಸ್ತೆಗಳಿಗೆ ಸಾವಿರಾರು ಕೋಟಿ, ಬಿಎಂಟಿಸಿಗೆ ಇಲ್ಲವೇ?:  4,500 ಇ-ಬಸ್ ವಿಳಂಬದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ

ಬೆಂಗಳೂರು: ಬಿಎಂಟಿಸಿಗೆ ಕೇಂದ್ರ ಸರ್ಕಾರ ಮಂಜೂರು ಮಾಡಿರುವ 4,500 ಎಲೆಕ್ಟ್ರಿಕ್ ಬಸ್‌ಗಳ ನಿಯೋಜನೆಗೆ ರಾಜ್ಯ ಸರ್ಕಾರ ಕ್ಯಾಬಿನೆಟ್ ಅನುಮೋದನೆ ನೀಡದೇ ವಿಳಂಬ ಮಾಡುತ್ತಿದೆ ಎಂದು ಸಂಸದ ತೇಜಸ್ವಿ ಸೂರ್ಯ ಆರೋಪಿಸಿದ್ದಾರೆ.

ಈ ಯೋಜನೆಗಾಗಿ ರಾಜ್ಯ ಸರ್ಕಾರ ನೀಡಬೇಕಿರುವ ಹಣ ಅತ್ಯಲ್ಪ ಪ್ರಮಾಣದಲ್ಲಿದೆ. ಆದರೂ ಸಾರ್ವಜನಿಕ ಸಾರಿಗೆ ಬಲಪಡಿಸುವ ಮಹತ್ವದ ಯೋಜನೆಗೆ ಕಾಂಗ್ರೆಸ್ ಸರ್ಕಾರ ಒಪ್ಪಿಗೆ ನೀಡುತ್ತಿಲ್ಲ ಎಂದು ಅವರು ಹೇಳಿದರು.

“ವಿಐಪಿ ಯೋಜನೆಗಳಾದ ಟನಲ್ ರಸ್ತೆಗಳಿಗಾಗಿ ಸಾವಿರಾರು ಕೋಟಿ ರೂಪಾಯಿ ಖರ್ಚು ಮಾಡಲು ಸರ್ಕಾರ ಸಿದ್ಧವಾಗಿದೆ. ಆದರೆ ಪ್ರತಿದಿನ ಬಿಎಂಟಿಸಿ ಬಸ್ ಹಾಗೂ ಮೆಟ್ರೋ ಬಳಸುವ ಸಾಮಾನ್ಯ ಜನರಿಗಾಗಿ ಹಣ ಖರ್ಚು ಮಾಡಲು ಹಿಂದೇಟು ಹಾಕುತ್ತಿದೆ” ಎಂದು ತೇಜಸ್ವಿ ಸೂರ್ಯ ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ಸರ್ಕಾರ ಸಾಮಾನ್ಯ ನಾಗರಿಕರನ್ನು ಎರಡನೇ ದರ್ಜೆಯ ಪ್ರಜೆಗಳಂತೆ ನೋಡುತ್ತಿದೆ. ಮಹಿಳೆಯರು, ಪಾದಚಾರಿಗಳು ಮತ್ತು ಸಾರ್ವಜನಿಕ ಸಾರಿಗೆ ಬಳಕೆದಾರರು ಸರ್ಕಾರದ ಆದ್ಯತೆಯಲ್ಲಿ ಇಲ್ಲ ಎಂದು ಆರೋಪಿಸಿದರು.

ಬನಶಂಕರಿ ಸ್ಕೈವಾಕ್ ಕಾಮಗಾರಿ ಸ್ಥಗಿತಗೊಂಡಿರುವುದಕ್ಕೂ ಅವರು ಆಕ್ರೋಶ ವ್ಯಕ್ತಪಡಿಸಿದರು. ಉಪಮುಖ್ಯಮಂತ್ರಿಯಾಗಿದ್ದಾಗ ಡಿ.ಕೆ. ಶಿವಕುಮಾರ್ ಸ್ವತಃ ಗುದ್ದಲಿ ಪೂಜೆ ನೆರವೇರಿಸಿದ್ದ ಯೋಜನೆಯನ್ನು ಈಗ ಅರ್ಧಕ್ಕೆ ನಿಲ್ಲಿಸಲಾಗಿದೆ ಎಂದು ದೂರಿದರು.

8 ಅಡಿ ಎತ್ತರದಿಂದ ಹೆಡ್ ಡೈವ್: 4 ಅಡಿ ಆಳದ ಪೂಲ್‌ನಲ್ಲಿ ಯುವಕನ ದಾರುಣ ಅಂತ್ಯ, ವಿಡಿಯೋ ವೈರಲ್

0

ಸಿಂಧುದುರ್ಗ: ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯಲ್ಲಿ ರೆಸಾರ್ಟ್‌ನಲ್ಲಿ ನಡೆದ ನಿರ್ಲಕ್ಷ್ಯದ ಸಾಹಸ ಯುವಕನ ಜೀವ ಬಲಿಯಾಗಿಸಿದೆ. ಸ್ನೇಹಿತರೊಂದಿಗೆ ಪ್ರವಾಸಕ್ಕೆ ಬಂದಿದ್ದ 25 ವರ್ಷದ ಶ್ರೇಣಿಕ್ ಮಿಲಿಂದ್ ಟಾಕಳೆ ಈಜುಕೊಳದ ಆಳ ತಿಳಿಯದೆ ಹೆಡ್ ಡೈವ್ ಮಾಡಿದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಸ್ನೇಹಿತರ ಸಂಭ್ರಮದ ನಡುವೆ ಸುಮಾರು 8ರಿಂದ 10 ಅಡಿ ಎತ್ತರದ ಗೋಡೆಯಿಂದ ಈಜುಕೊಳಕ್ಕೆ ತಲೆಕೆಳಗಾಗಿ ಹಾರಿದ ಶ್ರೇಣಿಕ್, ಕೇವಲ ನಾಲ್ಕು ಅಡಿ ಆಳವಿದ್ದ ಮಕ್ಕಳ ಈಜುಕೊಳಕ್ಕೆ ಬಿದ್ದಿದ್ದಾರೆ. ಪರಿಣಾಮ ಅವರ ತಲೆ ನೇರವಾಗಿ ಕಾಂಕ್ರೀಟ್ ನೆಲಕ್ಕೆ ಅಪ್ಪಳಿಸಿ ಮಾರಣಾಂತಿಕ ಗಾಯವಾಗಿದೆ.

ದುರಂತದ ದೃಶ್ಯ ಸ್ನೇಹಿತನ ಮೊಬೈಲ್‌ನಲ್ಲಿ ಸೆರೆ ಸಿಕ್ಕಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.

ಗಂಭೀರವಾಗಿ ಗಾಯಗೊಂಡ ಶ್ರೇಣಿಕ್ ಅವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಆಸ್ಪತ್ರೆಗೆ ತಲುಪುವ ಮೊದಲೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ಘಟನೆ ಸಂಬಂಧ ಮಾಲ್ವಣ್ ಪೊಲೀಸರು ಅಸ್ವಾಭಾವಿಕ ಸಾವು ಪ್ರಕರಣ ದಾಖಲಿಸಿಕೊಂಡಿದ್ದು, ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಗಣೇಶ್ ಮಾನೆ ನೇತೃತ್ವದಲ್ಲಿ ತನಿಖೆ ಮುಂದುವರಿದಿದೆ. ಇದೇ ವೇಳೆ ರೆಸಾರ್ಟ್‌ಗಳಲ್ಲಿ ಅಪಾಯಕಾರಿ ಸಾಹಸಗಳಿಗೆ ಕೈಹಾಕದಂತೆ ಪೊಲೀಸರು ಪ್ರವಾಸಿಗರಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ.

‘ನನ್ನನ್ನು ರಕ್ಷಿಸುತ್ತಿದ್ದ ವ್ಯಕ್ತಿಯನ್ನು ಕಳೆದುಕೊಂಡಿದ್ದೇನೆ’; ವೈಶಾಕ್ ಸಾವಿನ ಕುರಿತು ಕೃಷಿ ತಾಪಂಡ ಭಾವುಕ

ಆಪ್ತ ಸ್ನೇಹಿತ ವೈಶಾಕ್ ಆತ್ಮಹತ್ಯೆ ಪ್ರಕರಣದ ಬಳಿಕ ನಟಿ ಕೃಷಿ ತಾಪಂಡ ಮೊದಲ ಬಾರಿಗೆ ಸಾರ್ವಜನಿಕವಾಗಿ ಪ್ರತಿಕ್ರಿಯೆ ನೀಡಿದ್ದು, ನಿರಂತರ ಊಹಾಪೋಹಗಳು ಮತ್ತು ವದಂತಿಗಳನ್ನು ನಿಲ್ಲಿಸುವಂತೆ ಮನವಿ ಮಾಡಿದ್ದಾರೆ.

ಇನ್‌ಸ್ಟಾಗ್ರಾಮ್‌ನಲ್ಲಿ ಪ್ರಕಟಿಸಿರುವ ಸರಣಿ ಪೋಸ್ಟ್‌ಗಳಲ್ಲಿ ಮಾತನಾಡಿರುವ ಅವರು, “ನಾನು ಇನ್ನೂ ಈ ಆಘಾತದಿಂದ ಹೊರಬಂದಿಲ್ಲ. ನನ್ನನ್ನು ಸದಾ ರಕ್ಷಿಸುತ್ತಿದ್ದ ವ್ಯಕ್ತಿಯನ್ನು ಕಳೆದುಕೊಂಡ ನೋವನ್ನು ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ಸಮಯದಲ್ಲಿ ಸಾರ್ವಜನಿಕ ಹೇಳಿಕೆ ನೀಡುವ ಶಕ್ತಿಯೂ ನನ್ನಲ್ಲಿಲ್ಲ” ಎಂದು ಬರೆದುಕೊಂಡಿದ್ದಾರೆ.

ವೈಶಾಕ್ ಸಾವಿನ ಬಳಿಕ ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವ ಚರ್ಚೆಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಕುಟುಂಬ ಮತ್ತು ಸ್ನೇಹಿತರು ದುಃಖದಲ್ಲಿರುವ ಸಂದರ್ಭದಲ್ಲೂ ಕೆಲವರು ಸಂವೇದನಾಶೀಲತೆ ಮರೆತು ಕೇವಲ ಪ್ರತಿಕ್ರಿಯೆಗಾಗಿ ಒತ್ತಡ ಹೇರುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

“ಒಂದು ಕುಟುಂಬ ತನ್ನ ಮಗನನ್ನು ಕಳೆದುಕೊಂಡಿದೆ. ಸ್ನೇಹಿತರು ತಮ್ಮ ಆತ್ಮೀಯನನ್ನು ಕಳೆದುಕೊಂಡಿದ್ದಾರೆ. ಇಂತಹ ಸಮಯದಲ್ಲಿ ವದಂತಿಗಳು ಮತ್ತು ಆಧಾರರಹಿತ ಚರ್ಚೆಗಳು ನಮ್ಮ ನೋವನ್ನು ಇನ್ನಷ್ಟು ಹೆಚ್ಚಿಸುತ್ತವೆ. ದಯವಿಟ್ಟು ನಮಗೆ ಶಾಂತಿಯಿಂದ ದುಃಖಿಸಲು ಅವಕಾಶ ನೀಡಿ” ಎಂದು ಅವರು ವಿನಂತಿಸಿದ್ದಾರೆ.

ಇದೇ ವೇಳೆ ತಮ್ಮ ಪರವಾಗಿ ನಿಂತು ಪ್ರಾರ್ಥನೆ, ಪ್ರೀತಿ ಮತ್ತು ಬೆಂಬಲ ವ್ಯಕ್ತಪಡಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿರುವ ಕೃಷಿ, ಕೊನೆಯ ಸಂದೇಶದಲ್ಲಿ “ಬದುಕಲು ಕಾರಣ ನೀಡಲು ಸಾಧ್ಯವಾಗದಿದ್ದರೂ, ಯಾರೊಬ್ಬರ ಭರವಸೆಯನ್ನೂ ಕಸಿಯಬೇಡಿ. ದಯವಿಟ್ಟು ದಯೆ ಮತ್ತು ಮಾನವೀಯತೆಯನ್ನು ಆರಿಸಿ” ಎಂದು ಭಾವುಕ ಮನವಿ ಮಾಡಿದ್ದಾರೆ.