ಬೆಂಗಳೂರು: ರಿಯಲ್ ಎಸ್ಟೇಟ್ ಮಾಡುವುದು ರಾಜ್ಯ ಸರ್ಕಾರದ ಕೆಲಸವಲ್ಲ ಎಂದು ಸಿದ್ದರಾಮಯ್ಯ ಸರಕಾರದ ಮೇಲೆ ಹರಿಹಾಯ್ದಿರುವ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು, ರೈತರಿಗೆ ಬೇಡವಾಗಿರುವ ಬಿಡದಿ ಟೌನ್ ಶಿಪ್ ಯೋಜನೆಯನ್ನು ಕೂಡಲೇ ಕೈಬಿಡಬೇಕು ಎಂದು ಒತ್ತಾಯಿಸಿದ್ದಾರೆ.
ಪಕ್ಷದ ರಾಜ್ಯ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತಾಡಿಸಿದ ಕೇಂದ್ರ ಸಚಿವರು; ರೈತರು ಜಮೀನು ನೀಡಲ್ಲ ಎಂದು ಬೀದಿಯಲ್ಲಿ ಕೂತಿದ್ದಾರೆ. ಆದರೆ, ರಾಜ್ಯ ಸರ್ಕಾರದಲ್ಲಿರುವ ರಿಯಲ್ ಎಸ್ಟೇಟ್ ದಂಧೆಕೋರರು ಭೂಮಿಯನ್ನು ಕಿತ್ತುಕೊಂಡು ವ್ಯವಹಾರ ಮಾಡಿಯೇ ಸಿದ್ಧ ಎಂದು ಹೊರಟಿದ್ದಾರೆ. ಇದು ಯಾರಪ್ಪನ ಭೂಮಿ ಅವರು ಧಮ್ಕಿ ಹಾಕಿ ಕಿತ್ತುಕೊಳ್ಳುವುದಕ್ಕೆ ಎಂದು ಕಿಡಿಕಾರಿದರು.
ಜನರ ಆಡಳಿತ ನಡೆಸಬೇಕಾದ ಈ ಸರ್ಕಾರ ಬ್ರೋಕರ್ ಕೆಲಸ ಮಾಡಲು ಹೊರಟಿದೆ. ಬಡ ರೈತರಿಂದ ಜಮೀನು ಕಿತ್ತುಕೊಂಡು ರಿಯಲ್ ಎಸ್ಟೇಟ್ ಮಾಫಿಯಾ ಮಾಡಲು ಹೊರಟಿದೆ. ಚದರ ಅಡಿ ವ್ಯವಹಾರದಲ್ಲಿ ದಂಧೆ ಮಾಡಲು ಮುಂದಾಗಿದೆ. ಇದರ ಬ್ರೋಕರ್ ಗಿರಿಯನ್ನು ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ವಹಿಸಿಕೊಂಡಿದ್ದಾರೆ ಎಂದು ಸಚಿವ ಕುಮಾರಸ್ವಾಮಿ ಅವರು ಆರೋಪ ಮಾಡಿದರು.
ಎಂಟು ಹಳ್ಳಿಗಳ ರೈತರ ಅತ್ಯಂತ ಫಲವತ್ತಾದ ತೋಟಗಾರಿಕೆ ಬೆಳೆಗಳನ್ನು ಬೆಳೆಯುವ ಕೃಷಿ ಭೂಮಿಯನ್ನು ಲಪಟಾಯಿಸಿ ರಿಯಲ್ ಎಸ್ಟೇಟ್ ಮಾಡಲು ಹೊರಟಿರುವ ರಾಜ್ಯ ಸರ್ಕಾರವು ನೇರವಾಗಿ ದಂಧೆಯಲ್ಲಿ ಮುಳುಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಈ ದಂಡಕೋರರ ಕೈಗೊಂಬೆಯಾಗಿ ವರ್ತಿಸುತ್ತಿದ್ದಾರೆ ಎಂದು ಸಚಿವ ಕುಮಾರಸ್ವಾಮಿ ಅವರು ಗಂಭೀರ ಆರೋಪ ಮಾಡಿದರು.
ಯಾವುದೇ ಕಾರಣಕ್ಕೂ ಭೂಮಿ ಕೊಡುವುದಿಲ್ಲ ಎನ್ನುವುತ್ತಿರುವ ರೈತರನ್ನು ಬೆದರಿಸಿ ಹೆದರಿಸುವ, ಬೆದರಿಸುವ ಕೆಲಸ ಆಗುತ್ತಿದೆ. ಇಂತಹವರ ಬೆದರಿಕೆಯ ಆಟ ನಮ್ಮ ಮುಂದೆ ನಡೆಯುವುದಿಲ್ಲ. ಭೂಮಿ ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ. ಯಾವ ರೈತರು ಕೂಡ ಭೂಮಿ ಬಿಟ್ಟುಕೊಡಲು ತಯಾರಿಲ್ಲ. ಅದು ಹೇಗೆ ಭೂಮಿ ವಶಪಡಿಸಿಕೊಳ್ಳುತ್ತಿರೋ ಬಂದು ವಶಪಡಿಸಿಕೊಳ್ಳಲಿ ನೋಡೋಣ ಎಂದು ಕುಮಾರಸ್ವಾಮಿ ಅವರು ನೇರ ಸವಾಲು ಹಾಕಿದರು.
ಯಾರ ಯಾರ ಕಾಲದಲ್ಲಿ ಯಾರ ಯಾರ ಕಾಲು ಕಟ್ತೀರಿ ಎನ್ನುವುದು ನನಗೆ ಗೊತ್ತಿದೆ ಗೊತ್ತಿದೆ ಎಂದು ಹೇಳುತ್ತಲೇ ಕೆಲವರ ಹೆಸರು ಹೇಳದೆ ಆಕ್ರೋಶ ವ್ಯಕ್ತಪಡಿಸಿದ ಕೇಂದ್ರ ಸಚಿವರು, ಇದೇ ಸಂದರ್ಭದಲ್ಲಿ ರಾಮನಗರದ ಜಿಲ್ಲಾಧಿಕಾರಿಗೆ ಕಟುವಾದ ಶಬ್ದಗಳಿಂದ ಎಚ್ಚರಿಕೆ ನೀಡಿದರು.
ರಾಮನಗರ ಜಿಲ್ಲಾಧಿಕಾರಿಗೆ ನೇರ ಎಚ್ಚರಿಕೆ:
ರೈತರ ಭೂಮಿ ಕಿತ್ತುಕೊಂಡು ರಿಯಲ್ ಎಸ್ಟೇಟ್ ದಂಧೆ ಮಾಡುವ ವ್ಯಕ್ತಿಗಳ ಹೇಳುವುದಕ್ಕೆಲ್ಲ ಈ ಜಿಲ್ಲಾಧಿಕಾರಿ ಕುಣಿಯುತ್ತಿದ್ದಾರೆ. ಅವರು ಹೇಳಿದ್ದಕ್ಕೆಲ್ಲಾ ಈ ಡಿಸಿ ಸೈನ್ ಹೊಡೆದುಕೊಂಡು ಕೂತಿದ್ದಾರೆ. ಒಂದು ಗ್ರಾಮಕ್ಕೆ ಹೋಗಿ ರೈತರ ಕಷ್ಟ ಸುಖ ಕೇಳಿಲ್ಲ, ಸಭೆ ನಡೆಸಿಲ್ಲ. ನನ್ನ ನಂಬರ್ನಿಂದ ಫೋನ್ ಹೋದರೆ ಡಿಸಿ ಫೋನೇ ತೆಗೆಯಲ್ಲ. ಏನೇನು ಮಾಡುತ್ತಿದ್ದಾರೆ ಎಂಬುದನ್ನು ನಾನು ಕೂಡ ನೋಡುತ್ತಿದ್ದೇನೆ. ಸಮಯ ಬಂದಾಗ ಉತ್ತರ ಕೊಡುತ್ತೇನೆ ಎಂದು ಅವರು ಎಚ್ಚರಿಕೆ ನೀಡಿದರು.
ಮುಖ್ಯಮಂತ್ರಿಗಳಿಗೆ ಒಂದು ಮಾತು ಹೇಳಲು ಬಯಸುತ್ತೇನೆ, ಕುರ್ಚಿ ಸಿಕ್ಕಿದರೆ ಸಾಕು ಎಂದು ಇಂಥ ದಂಧೆಕೋರನ ಮಾತು ಕಟ್ಟಿಕೊಂಡು ರಿಯಲ್ ಎಸ್ಟೇಟ್ ದಲ್ಲಾಳಿ ಆಗಬೇಡಿ. ಕೊನೆಗಾಲದಲ್ಲಿ ಹೋಗಬೇಕಾದರೆ ಸಿದ್ದರಾಮಯ್ಯನವರೇ ಗೌರವಯುತವಾಗಿ ಒಳ್ಳೆಯ ಹೆಸರು ತೆಗೆದುಕೊಂಡು ಹೋಗಿ. ಹಲವಾರು ಭಾಗ್ಯ ಕೊಟ್ಟರೂ 2018ರಲ್ಲಿ 85 ಸೀಟಿಗೆ ಇಳಿಸಿದರು ಜನರು. ಇಂಥ ಗ್ಯಾರಂಟಿ ಕೊಟ್ಟು ಜನ ಈಗ ಹೇಗೆ ಉಳಿಸ್ತಾರೆ ಅಂತ ಭಾವಿಸಬೇಡಿ ಎಂದು ಕುಮಾರಸ್ವಾಮಿ ಅವರು ತೀವ್ರ ತರಾಟೆಗೆ ತೆಗೆದುಕೊಂಡರು.
ಸಂಪುಟ ಸಭೆಯ ನಿರ್ಧಾರಗಳ ಬಗ್ಗೆ ತೀವ್ರ ಕಿಡಿಕಾರಿದ ಅವರು; ಬೇಕಾಬಿಟ್ಟಿ ನಿರ್ಧಾರಗಳನ್ನು ಕೈಗೊಳ್ಳುವ ಇದನ್ನು ಕ್ಯಾಬಿನೆಟ್ ಎನ್ನುತ್ತೀರಾ? ಕ್ಯಾಬಿನೆಟ್ ಎನ್ನೋದು ಹೆಸರಿಗೆ ಮಾತ್ರ. ಕ್ಯಾಬಿನೆಟ್ ನಲ್ಲಿ ಹೇಳೋರು ಕೇಳೋರು ಯಾರೂ ಇಲ್ಲ. ಕ್ಯಾಬಿನೆಟ್ ಅಂದ್ರೆ ಎಲ್ಲವನ್ನೂ ಹರಾಜು ಹಾಕುವ ಮನೆ ಎನ್ನಬಹುದಾ? ಎಂದು ಅವರು ಲೇವಡಿ ಮಾಡಿದರು.