Home Blog

ರಾಜಣ್ಣ, ಪರಮೇಶ್ವರ್ ಗೆ ಗೌರವ ಡಾಕ್ಟರೇಟ್ ನೀಡದಿರಲು ತುಮಕೂರು ವಿವಿ ಮಹತ್ವದ ನಿರ್ಧಾರ!

ತುಮಕೂರು: ತುಮಕೂರು ವಿಶ್ವವಿದ್ಯಾಲಯದ 19ನೇ ಘಟಿಕೋತ್ಸವ ಜೂನ್ 3ರಂದು ವಿಶ್ವವಿದ್ಯಾಲಯದ ಆವರಣದಲ್ಲಿ ನಡೆಯಲಿದ್ದು, ಈ ಬಾರಿ ಸಕ್ರಿಯ ರಾಜಕಾರಣಿಗಳಿಗೆ ಗೌರವ ಡಾಕ್ಟರೇಟ್ ನೀಡದಿರಲು ಪರಿಶೀಲನಾ ಸಮಿತಿ ಮಹತ್ವದ ನಿರ್ಧಾರ ಕೈಗೊಂಡಿದೆ.

ಈ ಹಿನ್ನೆಲೆಯಲ್ಲಿ ಮಾಜಿ ಸಚಿವರಾದ ಡಾ. ಜಿ. ಪರಮೇಶ್ವರ್ ಹಾಗೂ ಕೆ. ಎನ್. ರಾಜಣ್ಣ ಅವರಿಗೆ ಈ ಬಾರಿ ಗೌರವ ಡಾಕ್ಟರೇಟ್ ನೀಡದಿರಲು ತೀರ್ಮಾನಿಸಲಾಗಿದೆ ಎಂದು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಬ್ಬರೂ ನಾಯಕರು ವಿಶ್ವವಿದ್ಯಾಲಯಕ್ಕೆ ನೀಡಿರುವ ಕೊಡುಗೆ ಮಹತ್ವದ್ದು. ಆರಂಭದಲ್ಲಿ ಅವರ ಹೆಸರುಗಳನ್ನು ಪರಿಗಣಿಸಲಾಗಿತ್ತು. ಆದರೆ ಪರಿಶೀಲನಾ ಸಮಿತಿ ದೇಶದ ಇತರ ರಾಜ್ಯಗಳಲ್ಲಿ ಸಕ್ರಿಯ ರಾಜಕಾರಣಿಗಳಿಗೆ ಗೌರವ ಡಾಕ್ಟರೇಟ್ ನೀಡುವ ನಿಯಮಗಳು ಹಾಗೂ ಇತ್ತೀಚಿನ ವರ್ಷಗಳಲ್ಲಿ ಕರ್ನಾಟಕದಲ್ಲಿ ನಡೆದ ಉದಾಹರಣೆಗಳನ್ನು ಪರಿಶೀಲಿಸಿದ ಬಳಿಕ ಈ ನಿರ್ಧಾರ ಕೈಗೊಂಡಿದೆ ಎಂದು ಹೇಳಿದರು.

ಈ ಹಿಂದೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಸತೀಶ್ ಜಾರಕಿಹೊಳಿ ಅವರು ತಮಗೆ ನೀಡಲಾಗಿದ್ದ ಗೌರವ ಡಾಕ್ಟರೇಟ್ ಅನ್ನು ತಿರಸ್ಕರಿಸಿದ್ದರು. ಅಲ್ಲದೆ, ಸಿದ್ದರಾಮಯ್ಯ ಅವರಿಗೂ ಮೈಸೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ನೀಡುವ ವಿಷಯದಲ್ಲಿ ಅವರು ಸ್ವತಃ ವಿನಮ್ರವಾಗಿ ನಿರಾಕರಿಸಿದ್ದರು ಎಂಬುದನ್ನೂ ಸಮಿತಿ ಪರಿಗಣಿಸಿದೆ ಎಂದು ತಿಳಿಸಿದರು.

ಈ ಹಿನ್ನೆಲೆಯಲ್ಲಿ ಇನ್ಮುಂದೆ ಸಕ್ರಿಯ ರಾಜಕಾರಣಿಗಳಿಗೆ ಗೌರವ ಡಾಕ್ಟರೇಟ್ ನೀಡಬಾರದು ಎಂಬ ತೀರ್ಮಾನಕ್ಕೆ ಸಮಿತಿ ಬಂದಿದ್ದು, ಈ ಬಾರಿಯ ಘಟಿಕೋತ್ಸವದಲ್ಲಿ ರಾಜಕಾರಣಿಗಳನ್ನು ಹೊರತುಪಡಿಸಿ ವಿವಿಧ ಕ್ಷೇತ್ರಗಳ ಮೂವರು ಸಾಧಕರಿಗೆ ಗೌರವ ಡಾಕ್ಟರೇಟ್ ನೀಡಲಾಗುತ್ತಿದೆ.

ಈ ಬಾರಿ ಸ್ವಾತಂತ್ರ್ಯ ಹೋರಾಟಗಾರ ಟಿ. ಆರ್. ರೇವಣ್ಣ, ಕನ್ನಡದ ಕವಿ ಹಾಗೂ ಚಿಂತಕ ದ್ವಾರನಕುಂಟೆ ಪಾತಣ್ಣ ಮತ್ತು ಚಾರ್ಟರ್ಡ್ ಅಕೌಂಟೆಂಟ್ ಹಾಗೂ ವಕೀಲ ಎನ್. ಆರ್. ಪ್ರದೀಪ್ ಅವರಿಗೆ ಗೌರವ ಡಾಕ್ಟರೇಟ್ ನೀಡಲಾಗುತ್ತಿದೆ.

ಘಟಿಕೋತ್ಸವಕ್ಕೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಆಹ್ವಾನಿಸಲಾಗಿದ್ದು, ಅವರು ಕಾರ್ಯಕ್ರಮದಲ್ಲಿ ಭಾಗವಹಿಸುವ ಕುರಿತು ಇನ್ನೂ ಅಂತಿಮ ಮಾಹಿತಿ ಲಭ್ಯವಾಗಿಲ್ಲ. ಘಟಿಕೋತ್ಸವಕ್ಕೂ ಮುನ್ನ ಅವರು ನೂತನವಾಗಿ ಸ್ಥಾಪಿತವಾದ ತುಮಕೂರು ಇನ್ನೋವೇಶನ್ ಇನ್ ಕ್ಯುಬೇಶನ್ ಅಂಡ್ ಆಂತ್ರಪ್ರಿನ್ಯುರ್‌ಶಿಪ್ ಕೌನ್ಸಿಲ್ ಹಾಗೂ ಗೋ ಗ್ರೀನ್ – ಬೈಸಿಕಲ್ ಇನಿಶಿಯೇಟಿವ್ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ.

ಒಟ್ಟು 29 ಲಕ್ಷ ರೂ. ವೆಚ್ಚದಲ್ಲಿ ಘಟಿಕೋತ್ಸವ ಆಯೋಜಿಸಲಾಗುತ್ತಿದ್ದು, ಈ ಬಾರಿ ಒಬ್ಬರಿಗೆ ಡಿ.ಲಿಟ್, 59 ಪಿಎಚ್.ಡಿ ಪದವಿಗಳು, 2,058 ಸ್ನಾತಕೋತ್ತರ ಪದವಿಗಳು ಹಾಗೂ 8,781 ಸ್ನಾತಕ ಪದವಿಗಳು ಪ್ರದಾನವಾಗಲಿದೆ. ಜೊತೆಗೆ 90 ವಿದ್ಯಾರ್ಥಿಗಳಿಗೆ 117 ಚಿನ್ನದ ಪದಕಗಳು ಹಾಗೂ ನಾಲ್ಕು ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಲಾಗುತ್ತದೆ ಎಂದು ಕುಲಪತಿ ತಿಳಿಸಿದ್ದಾರೆ.

ನಕಲಿ ಸಹಿ ಆರೋಪ: ಇಬ್ಬರು ಶಾಸಕರನ್ನು ಉಚ್ಚಾಟಿಸಿದ ಟಿಎಂಸಿ!

ಕೋಲ್ಕತ್ತಾ: ಪಶ್ಚಿಮ ಬಂಗಾಳ ರಾಜಕೀಯದಲ್ಲಿ ನಕಲಿ ಸಹಿ ಆರೋಪದ ವಿವಾದ ತೀವ್ರ ಚರ್ಚೆಗೆ ಗ್ರಾಸವಾಗಿರುವ ನಡುವೆಯೇ ತೃಣಮೂಲ ಕಾಂಗ್ರೆಸ್ ತನ್ನ ಇಬ್ಬರು ಶಾಸಕರಾದ ಸಂದೀಪನ್ ಸಹಾ ಮತ್ತು ಋತಬ್ರತ ಬ್ಯಾನರ್ಜಿ ಅವರನ್ನು ಪಕ್ಷದಿಂದ ಉಚ್ಚಾಟಿಸಿದೆ.

ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ ಎಂಬ ಆರೋಪದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಟಿಎಂಸಿ ಪ್ರಕಟಿಸಿದೆ. ಪಕ್ಷದ ಉಪಾಧ್ಯಕ್ಷೆ ಚಂದ್ರಿಮಾ ಭಟ್ಟಾಚಾರ್ಯ ಅವರು ಸಹಿ ಮಾಡಿರುವ ಅಧಿಕೃತ ಪತ್ರದಲ್ಲಿ, ಇಬ್ಬರು ಶಾಸಕರು ಸಭೆಗಳಿಗೆ ಪದೇಪದೇ ಗೈರಾಗುತ್ತಿದ್ದು, ಪಕ್ಷದ ಹಿತಾಸಕ್ತಿಗೆ ಧಕ್ಕೆ ಉಂಟುಮಾಡುವ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಉಲ್ಲೇಖಿಸಲಾಗಿದೆ.

ಈ ಬೆಳವಣಿಗೆಗೂ ಮುನ್ನ, ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಿಗೆ ಬೆಂಬಲ ಸೂಚಿಸುವ ಪತ್ರದಲ್ಲಿ ತಮ್ಮ ಸಹಿಯನ್ನು ನಕಲಿ ಮಾಡಲಾಗಿದೆ ಎಂದು ಇಬ್ಬರು ಶಾಸಕರು ದೂರು ನೀಡಿದ್ದರು ಎಂಬ ಮಾಹಿತಿ ಹೊರಬಿದ್ದಿತ್ತು.

ಈ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ ನಾಯಕ ಸುವೇಂದು ಅಧಿಕಾರಿ, ಟಿಎಂಸಿಯೊಳಗೇ ಶಾಸಕರ ಸಹಿ ನಕಲಿ ಮಾಡಲಾಗಿದೆ ಎಂಬ ಗಂಭೀರ ಆರೋಪವನ್ನು ಮಾಡಿದ್ದಾರೆ. ಈ ಘಟನೆಯಲ್ಲಿ ಬಿಜೆಪಿಯ ಯಾವುದೇ ಪಾತ್ರವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಲೋಕಸಭೆ ಚುನಾವಣೆಯ ಬಳಿಕ ಟಿಎಂಸಿಯೊಳಗಿನ ಅಸಮಾಧಾನ ಹಾಗೂ ಭಿನ್ನಾಭಿಪ್ರಾಯಗಳು ಹೆಚ್ಚಾಗುತ್ತಿರುವ ಚರ್ಚೆಗಳ ನಡುವೆ ಈ ಘಟನೆ ರಾಜ್ಯ ರಾಜಕೀಯದಲ್ಲಿ ಹೊಸ ತಿರುವು ಪಡೆದುಕೊಂಡಿದೆ.

ಬುದ್ದಿವಾದ ಹೇಳಿದ್ದೇ ತಪ್ಪಾಯ್ತಾ? ಬಿಯರ್ ಬಾಟಲಿಯಿಂದ ತಿವಿದು ಚಿಕ್ಕಪ್ಪನ ಭೀಕರ ಕೊಲೆ!

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪಿಲಾತಬೆಟ್ಟು ಗ್ರಾಮದಲ್ಲಿ ಅಣ್ಣನ ಮಗನಿಂದಲೇ ಚಿಕ್ಕಪ್ಪನನ್ನು ಬಿಯರ್ ಬಾಟಲಿಯಿಂದ ತಿವಿದು ಹತ್ಯೆಗೈದ ಭೀಕರ ಘಟನೆ ನಡೆದಿದೆ.

37 ವರ್ಷದ ಮಧುಸೂದನ್ ಮೃತ ದುರ್ದೈವಿ. ಆರೋಪಿಯಾಗಿರುವ ರಾಹುಲ್ ತನ್ನ ಚಿಕ್ಕಪ್ಪನ ಮೇಲೆ ದಾಳಿ ನಡೆಸಿದವನು ಎಂದು ತಿಳಿದುಬಂದಿದೆ.

ಮೇ 31ರ ರಾತ್ರಿ ಮನೆಯಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಯುತ್ತಿದ್ದ ವೇಳೆ ಕೆಲಸದ ವಿಚಾರವಾಗಿ ಮಧುಸೂದನ್ ಅವರು ರಾಹುಲ್‌ಗೆ ಬುದ್ಧಿವಾದ ಹೇಳಿದ್ದಾರೆ. ಇದರಿಂದ ಕೋಪಗೊಂಡ ರಾಹುಲ್ ಕಾರ್ಯಕ್ರಮದಿಂದ ಹೊರನಡೆದಿದ್ದಾನೆ ಎಂದು ಹೇಳಲಾಗಿದೆ.

ಕಾರ್ಯಕ್ರಮ ಮುಗಿದ ಬಳಿಕ ಮನೆ ಸಮೀಪ ಮಧುಸೂದನ್ ಮೇಲೆ ರಾಹುಲ್ ಏಕಾಏಕಿ ದಾಳಿ ನಡೆಸಿದ್ದಾನೆ. ಬಿಯರ್ ಬಾಟಲಿಯಿಂದ ಕುತ್ತಿಗೆ ಭಾಗಕ್ಕೆ ತಿವಿದ ಪರಿಣಾಮ ಗಂಭೀರವಾಗಿ ಗಾಯಗೊಂಡ ಮಧುಸೂದನ್ ಅವರನ್ನು ತಕ್ಷಣ ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಆಸ್ಪತ್ರೆ ತಲುಪುವಷ್ಟರಲ್ಲೇ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಘಟನೆ ಬಳಿಕ ಆರೋಪಿ ರಾಹುಲ್ ಸ್ಥಳದಿಂದ ಪರಾರಿಯಾಗಿದ್ದನು. ಬಳಿಕ ಪೊಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಜ್ಯದಲ್ಲಿ ಭಾರೀ ಮಳೆಯ ಮುನ್ಸೂಚನೆ: ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ

ಬೆಂಗಳೂರು: ರಾಜ್ಯದ ಕರಾವಳಿ ಹಾಗೂ ಒಳನಾಡು ಜಿಲ್ಲೆಗಳಲ್ಲಿ ಮುಂದಿನ ಕೆಲವು ದಿನಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಹವಾಮಾನ ಇಲಾಖೆಯ ವರದಿಯ ಪ್ರಕಾರ, ಜೂನ್ 1 ರಿಂದ 4ರವರೆಗೆ ಒಳನಾಡು ಜಿಲ್ಲೆಗಳ ಕೆಲವು ಭಾಗಗಳಲ್ಲಿ ಒಂದು ಅಥವಾ ಎರಡು ಕಡೆ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಇದೇ ರೀತಿ ಜೂನ್ 3 ರಿಂದ 5ರವರೆಗೆ ಕರಾವಳಿ ಜಿಲ್ಲೆಗಳಲ್ಲಿಯೂ ಮಳೆಯಾಗುವ ಸಾಧ್ಯತೆ ಇರುವುದಾಗಿ ತಿಳಿಸಲಾಗಿದೆ.

ಈ ಅವಧಿಯಲ್ಲಿ ರಾಜ್ಯದ ವಿವಿಧ ಪ್ರದೇಶಗಳಲ್ಲಿ ಸುಮಾರು 64.5 ಮಿ.ಮೀ ರಿಂದ 115.5 ಮಿ.ಮೀ ವರೆಗೆ ಭಾರೀ ಮಳೆಯಾಗುವ ಸಾಧ್ಯತೆ ಇರುವುದರಿಂದ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ. ಸಾರ್ವಜನಿಕರು ಹಾಗೂ ರೈತರು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಲಾಗಿದೆ.

ಇನ್ನು ಮುಂದಿನ 3 ದಿನಗಳವರೆಗೆ ರಾಜ್ಯದಲ್ಲಿ ಗರಿಷ್ಠ ತಾಪಮಾನ ಹೆಚ್ಚಾಗುವ ಸಾಧ್ಯತೆ ಇದ್ದು, ಒಣ ಹವಾಮಾನ ಮುಂದುವರಿಯಲಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ತಿಳಿಸಿದೆ. ಬಹುತೇಕ ಜಿಲ್ಲೆಗಳಲ್ಲಿ ಬಿಸಿಲಿನ ತೀವ್ರತೆ ಹೆಚ್ಚಾಗಲಿದೆ.

ಮಧ್ಯಾಹ್ನದ ನಂತರ ಹವಾಮಾನದಲ್ಲಿ ಸ್ವಲ್ಪ ಬದಲಾವಣೆ ಕಂಡುಬರುವ ಸಾಧ್ಯತೆ ಇದ್ದು, ಗಾಳಿಯ ದಿಕ್ಕಿನ ಬದಲಾವಣೆಯಿಂದ ಕೆಲವೆಡೆ ಮೋಡ ಕವಿದ ವಾತಾವರಣ ಇರಲಿದೆ.

ಜೂನ್ 1 ರಿಂದ 3ರವರೆಗೆ ಉತ್ತರ ಒಳನಾಡು ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ 34 ಡಿಗ್ರಿ ಸೆಲ್ಸಿಯಸ್ ರಿಂದ 38 ಡಿಗ್ರಿ ಸೆಲ್ಸಿಯಸ್ವರೆಗೆ ದಾಖಲಾಗುವ ಸಾಧ್ಯತೆ ಇದೆ. ಅದೇ ವೇಳೆ ದಕ್ಷಿಣ ಒಳನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಬೆಳಿಗ್ಗೆ ತಾಪಮಾನ ತುಸು ಕಡಿಮೆಯಾಗಿ 28 ಡಿಗ್ರಿ ಸೆಲ್ಸಿಯಸ್ ರಿಂದ 32 ಡಿಗ್ರಿ ಸೆಲ್ಸಿಯಸ್ವರೆಗೆ ಇರಲಿದೆ.

ಯುವಕರಲ್ಲೂ ಹೆಚ್ಚುತ್ತಿರುವ ಹೈ ಬಿಪಿ: ಪದೇಪದೇ ತಲೆನೋವು ನಿರ್ಲಕ್ಷ್ಯ ಮಾಡಬೇಡಿ!

ಇತ್ತೀಚಿನ ದಿನಗಳಲ್ಲಿ ಹೈ ಬ್ಲಡ್ ಪ್ರೆಶರ್ ಸಮಸ್ಯೆ ಯುವಕರಲ್ಲಿಯೂ ಹೆಚ್ಚಾಗಿ ಕಂಡುಬರುತ್ತಿದೆ.

ಅದರಲ್ಲಿಯೂ ಅನೇಕರು ಪದೇಪದೇ ತಲೆನೋವು ಕಾಣಿಸಿಕೊಂಡರೂ ಅದನ್ನು ಸಾಮಾನ್ಯ ದಣಿವು, ಒತ್ತಡ ಅಥವಾ ನಿದ್ರಾಹೀನತೆ ಎಂದು ನಿರ್ಲಕ್ಷಿಸುತ್ತಿದ್ದಾರೆ. ಆದರೆ ವೈದ್ಯರ ಪ್ರಕಾರ, ಇದು ಕೆಲವೊಮ್ಮೆ ದೇಹ ನೀಡುವ ಎಚ್ಚರಿಕೆಯ ಸೂಚನೆಯಾಗಿರಬಹುದು.

ಹೈ ಬಿಪಿ ಮತ್ತು ತಲೆನೋವಿಗೆ ನೇರ ಸಂಬಂಧ ಯಾವಾಗಲೂ ಇರುವುದಿಲ್ಲ. ಮೈಗ್ರೇನ್, ಮಾನಸಿಕ ಒತ್ತಡ, ನೀರಿನ ಕೊರತೆ, ನಿದ್ರೆಯ ಅಭಾವ ಸೇರಿದಂತೆ ಹಲವು ಕಾರಣಗಳಿಂದ ತಲೆನೋವು ಉಂಟಾಗಬಹುದು. ಆದರೆ ರಕ್ತದೊತ್ತಡ ಅತಿಯಾಗಿ ಏರಿದ ಸಂದರ್ಭಗಳಲ್ಲಿ ಕೆಲವರಿಗೆ ತಲೆನೋವು ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಹೀಗಾಗಿ ಕೇವಲ ತಲೆನೋವಿನ ಆಧಾರದ ಮೇಲೆ ಹೈ ಬಿಪಿ ಇದೆ ಎಂದು ನಿರ್ಧರಿಸುವುದು ಸರಿಯಲ್ಲ.

ಈ ಲಕ್ಷಣಗಳು ಕಂಡುಬಂದರೆ ತಕ್ಷಣ ಬಿಪಿ ಪರೀಕ್ಷೆ ಮಾಡಿಸಬೇಕು:

  • ಪದೇಪದೇ ತಲೆನೋವು
  • ತಲೆಸುತ್ತು
  • ದೃಷ್ಟಿ ಮಸುಕಾಗುವುದು
  • ಎದೆನೋವು
  • ಉಸಿರಾಟದ ತೊಂದರೆ
  • ಅತಿಯಾದ ದಣಿವು
  • ಗಮನ ಕೇಂದ್ರೀಕರಿಸಲು ಕಷ್ಟವಾಗುವುದು

ಕುಟುಂಬದಲ್ಲಿ ಹೈ ಬಿಪಿ ಇತಿಹಾಸ ಇರುವವರು, ಮಧುಮೇಹ, ಸ್ಥೂಲಕಾಯ ಅಥವಾ ಹೃದಯ ಸಂಬಂಧಿತ ಸಮಸ್ಯೆಗಳಿರುವವರು ನಿಯಮಿತವಾಗಿ ಬಿಪಿ ಪರೀಕ್ಷೆ ಮಾಡಿಸಿಕೊಳ್ಳುವುದು ಅತ್ಯಗತ್ಯ.

ಹೈ ಬಿಪಿಯನ್ನು ನಿಯಂತ್ರಣದಲ್ಲಿ ಇಡುವ ವಿಧಾನಗಳು:

ಆರೋಗ್ಯಕರ ಜೀವನಶೈಲಿ ರೂಡಿಸಿಕೊಳ್ಳುವುದು, ಸಮತೋಲಿತ ಆಹಾರ ಸೇವನೆ, ಉಪ್ಪಿನ ಪ್ರಮಾಣ ಕಡಿಮೆ ಮಾಡುವುದು, ದಿನನಿತ್ಯ ವ್ಯಾಯಾಮ, ಸಾಕಷ್ಟು ನಿದ್ರೆ, ಒತ್ತಡ ನಿಯಂತ್ರಣ, ಧೂಮಪಾನ-ಮದ್ಯಪಾನದಿಂದ ದೂರವಿರುವುದು ಮತ್ತು ವೈದ್ಯರ ಸಲಹೆ ಪಾಲಿಸುವುದು ಮುಖ್ಯ.

ಹೈ ಬ್ಲಡ್ ಪ್ರೆಶರ್ ಅನ್ನು “ಸೈಲೆಂಟ್ ಕಿಲ್ಲರ್” ಎಂದು ಕರೆಯಲಾಗುತ್ತದೆ. ಆರಂಭಿಕ ಹಂತದಲ್ಲಿ ಸ್ಪಷ್ಟ ಲಕ್ಷಣಗಳು ಕಾಣಿಸದ ಕಾರಣ, ನಿರ್ಲಕ್ಷ್ಯ ಮಾಡಿದರೆ ಹೃದಯ, ಕಿಡ್ನಿ ಮತ್ತು ಮೆದುಳಿನ ಆರೋಗ್ಯಕ್ಕೆ ಅಪಾಯ ಉಂಟಾಗಬಹುದು. ಆದ್ದರಿಂದ ಪದೇಪದೇ ತಲೆನೋವು ಕಂಡುಬಂದರೆ ತಕ್ಷಣ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ.

ಸುಕೇಶ್ ಕೇಸ್‌ನಲ್ಲಿ ಹೊಸ ತಿರುವು! ‘ಬಲಿಪಶು’ ಎಂದ ಜಾಕ್ವೆಲಿನ್‌ಗೆ ಕೋರ್ಟ್‌ನಿಂದ ಭಾರೀ ಹಿನ್ನಡೆ

ನವದೆಹಲಿ: ಹಲವು ವರ್ಷಗಳಿಂದ ದೇಶಾದ್ಯಂತ ಸಂಚಲನ ಸೃಷ್ಟಿಸಿರುವ ₹200 ಕೋಟಿ ಅಕ್ರಮ ಹಣ ವರ್ಗಾವಣೆ ಪ್ರಕರಣ ಇದೀಗ ನಿರ್ಣಾಯಕ ಹಂತ ತಲುಪಿದೆ. ಪ್ರಕರಣದಲ್ಲಿ ಹೆಸರು ಕೇಳಿಬಂದಿದ್ದ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್‌ಗೆ ದೆಹಲಿ ನ್ಯಾಯಾಲಯದಿಂದ ದೊಡ್ಡ ಹಿನ್ನಡೆ ಎದುರಾಗಿದೆ.

ಜಾಕ್ವೆಲಿನ್ ವಿರುದ್ಧ ಕ್ರಿಮಿನಲ್ ಆರೋಪಗಳನ್ನು ರೂಪಿಸಲು ನ್ಯಾಯಾಲಯ ಆದೇಶ ನೀಡಿದ್ದು, ಜೂನ್ 3ರಂದು ಖುದ್ದಾಗಿ ಕೋರ್ಟ್‌ಗೆ ಹಾಜರಾಗುವಂತೆ ಸೂಚಿಸಿದೆ. ಇದರೊಂದಿಗೆ ಪ್ರಕರಣದಲ್ಲಿ ನಟಿಯ ಕಾನೂನು ಹೋರಾಟ ಮತ್ತಷ್ಟು ಸಂಕೀರ್ಣವಾಗಿದೆ.

ಪ್ರಕರಣದ ವಿಚಾರಣೆ ವೇಳೆ ತಾನು ಮೋಸಕ್ಕೊಳಗಾದ ವ್ಯಕ್ತಿ, ಬಲಿಪಶು ಮಾತ್ರ ಎಂಬ ವಾದವನ್ನು ಜಾಕ್ವೆಲಿನ್ ಮುಂದಿಟ್ಟಿದ್ದರು. ಆದರೆ ನ್ಯಾಯಾಲಯ ಈ ವಾದವನ್ನು ಒಪ್ಪದೆ, ತನಿಖಾ ದಾಖಲೆಗಳಲ್ಲಿ ಲಭ್ಯವಿರುವ ಮಾಹಿತಿಗಳು ಅವರ ವಿರುದ್ಧ ಗಂಭೀರ ಅನುಮಾನ ಮೂಡಿಸುತ್ತವೆ ಎಂದು ಸ್ಪಷ್ಟಪಡಿಸಿದೆ.

ಕೋಟ್ಯಂತರ ರೂಪಾಯಿ ಮೌಲ್ಯದ ದುಬಾರಿ ಉಡುಗೊರೆಗಳು, ಕುಟುಂಬ ಸದಸ್ಯರಿಗೆ ಹಣಕಾಸು ನೆರವು ಹಾಗೂ ಐಷಾರಾಮಿ ಕಾರುಗಳನ್ನು ಜಾಕ್ವೆಲಿನ್ ಮತ್ತು ಅವರ ಆಪ್ತರು ಪಡೆದಿರುವ ಆರೋಪ ತನಿಖೆಯಲ್ಲಿ ಪ್ರಮುಖ ಅಂಶವಾಗಿದೆ. ಸುಕೇಶ್ ಚಂದ್ರಶೇಖರ್‌ನ ಅಪರಾಧ ಹಿನ್ನೆಲೆ ತಿಳಿದಿದ್ದರೂ ಆತನೊಂದಿಗೆ ಸಂಪರ್ಕ ಮುಂದುವರಿದಿತ್ತು ಎಂಬ ಅಂಶವನ್ನೂ ಕೋರ್ಟ್ ಗಂಭೀರವಾಗಿ ಪರಿಗಣಿಸಿದೆ.

ಈ ಪ್ರಕರಣದಲ್ಲಿ ಅಪ್ರೂವರ್ ಆಗಲು ಜಾಕ್ವೆಲಿನ್ ಸಲ್ಲಿಸಿದ್ದ ಅರ್ಜಿಗೆ ಕೂಡ ತೀವ್ರ ವಿರೋಧ ವ್ಯಕ್ತವಾಗಿತ್ತು. ಮುಖ್ಯ ಆರೋಪಿಯೊಂದಿಗೆ ನೇರ ಸಂಪರ್ಕ ಹೊಂದಿದ್ದ ವ್ಯಕ್ತಿಗೆ ಅಂತಹ ಸೌಲಭ್ಯ ನೀಡಬಾರದು ಎಂದು ಜಾರಿ ನಿರ್ದೇಶನಾಲಯ ವಾದಿಸಿತ್ತು.

ಜೈಲಿನಲ್ಲಿದ್ದಾಗಲೇ ಸರ್ಕಾರಿ ಅಧಿಕಾರಿಗಳ ಹೆಸರಿನಲ್ಲಿ ನಕಲಿ ಕರೆ ಮಾಡಿ ಉದ್ಯಮಿ ಕುಟುಂಬದಿಂದ ₹200 ಕೋಟಿಗೂ ಅಧಿಕ ಹಣ ಸುಲಿಗೆ ಮಾಡಿದ ಆರೋಪ ಎದುರಿಸುತ್ತಿರುವ ಸುಕೇಶ್ ಚಂದ್ರಶೇಖರ್ ಪ್ರಕರಣದಲ್ಲಿ, ಇದೀಗ ಜಾಕ್ವೆಲಿನ್ ವಿರುದ್ಧದ ಕಾನೂನು ಹೋರಾಟ ಹೊಸ ತಿರುವು ಪಡೆದುಕೊಂಡಿದೆ.

ರಾಜ್ಯಸಭೆ, ವಿಧಾನ ಪರಿಷತ್ ಚುನಾವಣೆಗಳಿಗೆ ನಾಮಪತ್ರ ಸಲ್ಲಿಕೆ ಆರಂಭ: ಅಭ್ಯರ್ಥಿಗಳ ಆಯ್ಕೆ ಕಸರತ್ತಿನಲ್ಲಿ ಕಾಂಗ್ರೆಸ್-ಬಿಜೆಪಿ

ಬೆಂಗಳೂರು: ರಾಜ್ಯ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆ ಮತ್ತು ಸಚಿವ ಸಂಪುಟ ರಚನೆಗೆ ಸಂಬಂಧಿಸಿದ ರಾಜಕೀಯ ಚಟುವಟಿಕೆಗಳು ತೀವ್ರಗೊಂಡಿರುವ ನಡುವೆಯೇ, ನಾಲ್ಕು ರಾಜ್ಯಸಭೆ ಹಾಗೂ ಏಳು ವಿಧಾನ ಪರಿಷತ್ ಸ್ಥಾನಗಳ ಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಇಂದಿನಿಂದ ಆರಂಭವಾಗಿದೆ. ಈ ಸಂಬಂಧ ಚುನಾವಣಾ ಆಯೋಗ ಎರಡೂ ಚುನಾವಣೆಗಳ ಅಧಿಸೂಚನೆಯನ್ನು ಪ್ರಕಟಿಸಿದೆ.

ಜೂನ್ 8ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದು, ಜೂನ್ 11ರಂದು ನಾಮಪತ್ರ ಹಿಂಪಡೆಯಲು ಅವಕಾಶ ನೀಡಲಾಗಿದೆ. ಜೂನ್ 18ರಂದು ಮತದಾನ ನಡೆಯಲಿದ್ದು, ಅಂದೇ ಫಲಿತಾಂಶ ಪ್ರಕಟವಾಗಲಿದೆ.

ರಾಜ್ಯದ ರಾಜಕೀಯ ಬೆಳವಣಿಗೆಗಳ ನಡುವೆ ಕಾಂಗ್ರೆಸ್ ಹಾಗೂ ಬಿಜೆಪಿ ಎರಡೂ ಪಕ್ಷಗಳು ಇನ್ನೂ ತಮ್ಮ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಿಲ್ಲ. ಮುಖ್ಯಮಂತ್ರಿ ಆಯ್ಕೆ ಮತ್ತು ಸಚಿವ ಸಂಪುಟ ರಚನೆಯ ಪ್ರಕ್ರಿಯೆಯಲ್ಲಿ ನಿರತರಾಗಿರುವ ಕಾಂಗ್ರೆಸ್‌ನಲ್ಲಿ ಅಭ್ಯರ್ಥಿಗಳ ಆಯ್ಕೆ ವಿಳಂಬವಾಗಿರುವುದು ಗಮನಾರ್ಹವಾಗಿದೆ. ಮುಂದಿನ ಎರಡು ಅಥವಾ ಮೂರು ದಿನಗಳಲ್ಲಿ ಎರಡೂ ಪಕ್ಷಗಳು ತಮ್ಮ ಅಭ್ಯರ್ಥಿಗಳ ಹೆಸರನ್ನು ಘೋಷಿಸುವ ಸಾಧ್ಯತೆ ಇದೆ.

ಸಂಖ್ಯಾಬಲದ ಲೆಕ್ಕಾಚಾರದ ಪ್ರಕಾರ, ರಾಜ್ಯಸಭೆಯ ನಾಲ್ಕು ಸ್ಥಾನಗಳಲ್ಲಿ ಕಾಂಗ್ರೆಸ್ ಮೂರು ಸ್ಥಾನಗಳನ್ನು ಹಾಗೂ ಬಿಜೆಪಿ ಒಂದು ಸ್ಥಾನವನ್ನು ಗೆಲ್ಲುವ ಸಾಧ್ಯತೆ ಇದೆ. ಇದೇ ವೇಳೆ ವಿಧಾನ ಪರಿಷತ್ತಿನ ಏಳು ಸ್ಥಾನಗಳಲ್ಲಿ ಕಾಂಗ್ರೆಸ್ ನಾಲ್ಕು ಸ್ಥಾನಗಳಲ್ಲಿ ಸುಲಭ ಜಯದ ನಿರೀಕ್ಷೆಯಲ್ಲಿದ್ದು, ಹೆಚ್ಚುವರಿ ಒಂದು ಸ್ಥಾನವನ್ನು ಗೆಲ್ಲುವ ಉದ್ದೇಶದಿಂದ ಮತ್ತೊಬ್ಬ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಕುರಿತು ಚಿಂತನೆ ನಡೆಸುತ್ತಿದೆ. ಬಿಜೆಪಿ ಎರಡು ಸ್ಥಾನಗಳನ್ನು ಗೆಲ್ಲುವ ಸಾಧ್ಯತೆ ಇದೆ.

ಪ್ರಸ್ತುತ ರಾಜ್ಯಸಭಾ ಸದಸ್ಯರಾಗಿರುವ ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಬಿಜೆಪಿ ನಾಯಕ ಈರಣ್ಣ ಕಡಾಡಿ ಹಾಗೂ ಕೆ. ನಾರಾಯಣ ಅವರ ಅವಧಿ ಜೂನ್ 25ರಂದು ಅಂತ್ಯಗೊಳ್ಳಲಿದೆ.

ಇದೇ ವೇಳೆ ವಿಧಾನಸಭೆಯಿಂದ ವಿಧಾನ ಪರಿಷತ್ತಿಗೆ ಆಯ್ಕೆಯಾಗಿರುವ ಜೆಡಿಎಸ್‌ನ ಗೋವಿಂದ ರಾಜು, ಕಾಂಗ್ರೆಸ್‌ನ ನಸೀರ್ ಅಹಮದ್, ತಿಪ್ಪಣ್ಣಪ್ಪ ಕಮಕನೂರ, ಬಿ.ಕೆ. ಹರಿಪ್ರಸಾದ್ ಹಾಗೂ ಬಿಜೆಪಿಯ ಎಂ.ಟಿ.ಬಿ. ನಾಗರಾಜು, ಪ್ರತಾಪ್ ಸಿಂಹ ನಾಯಕ್ ಮತ್ತು ಸುನಿಲ್ ವಲ್ಯಾಪುರೆ ಅವರ ಅವಧಿಯು ಜೂನ್ 30ರಂದು ಮುಕ್ತಾಯಗೊಳ್ಳಲಿದೆ. ಹೀಗಾಗಿ ಈ ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ರಾಜ್ಯ ರಾಜಕೀಯದಲ್ಲಿ ಮತ್ತೊಮ್ಮೆ ಚಟುವಟಿಕೆಗಳು ಗರಿಗೆದರಿವೆ.

ಕಾಂಗ್ರೆಸ್ʼನಲ್ಲಿ ಡ್ರೈವರ್ ಮಾತ್ರ ಬದಲಾಗಿದೆ, ಬಸ್ ಕೆಟ್ಟದ್ದೇ ಇದೆ; ಡಿಕೆಶಿ ನೇತೃತ್ವದ ಸರ್ಕಾರಕ್ಕೆ ಅಶೋಕ್ ಟಾಂಗ್

ಬೆಂಗಳೂರು: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ನಡೆದಿದ್ದರೂ ಕಾಂಗ್ರೆಸ್ ಸರ್ಕಾರದ ಸ್ಥಿತಿಯಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ಟೀಕಿಸಿದ್ದಾರೆ. ಮುಖ್ಯಮಂತ್ರಿ ಸ್ಥಾನದಲ್ಲಿ ಬದಲಾವಣೆ ಆಗಿರುವುದನ್ನು ವ್ಯಂಗ್ಯವಾಗಿ ಉಲ್ಲೇಖಿಸಿದ ಅವರು, ಡ್ರೈವರ್ ಮಾತ್ರ ಬದಲಾಗಿದ್ದಾರೆ, ಬಸ್ ಮತ್ತು ಎಂಜಿನ್ ಕೆಟ್ಟು ಹೋಗಿವೆ ಎಂದು ಲೇವಡಿ ಮಾಡಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸರ್ಕಾರದ ನಾಯಕತ್ವ ಬದಲಾದರೆ ಮಾತ್ರ ಆಡಳಿತ ಸುಧಾರಿಸುವುದಿಲ್ಲ. ಈಗಾಗಲೇ ಆರ್ಥಿಕ ಹಾಗೂ ಆಡಳಿತಾತ್ಮಕವಾಗಿ ಹದಗೆಟ್ಟಿರುವ ವ್ಯವಸ್ಥೆಯನ್ನು ಹೊಸ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಹಸ್ತಾಂತರಿಸಲಾಗಿದೆ ಎಂದು ಆರೋಪಿಸಿದರು.

ಡ್ರೈವರ್ ಬದಲಾದರೆ ಸಾಕಾಗುವುದಿಲ್ಲ. ಬಸ್ ಮತ್ತು ಎಂಜಿನ್ ಎರಡೂ ಕೆಟ್ಟು ಹೋಗಿದ್ದರೆ ಅದು ಸರಿಯಾಗಿ ಓಡುವುದಿಲ್ಲ. ಸಿದ್ದರಾಮಯ್ಯ ಅವರು ಕೆಟ್ಟುಹೋಗಿರುವ ಗಾಡಿಯನ್ನೇ ಡಿ.ಕೆ. ಶಿವಕುಮಾರ್ ಅವರಿಗೆ ನೀಡಿದ್ದಾರೆ. ಸಾಲ ಮಾಡಿ ಡೀಸೆಲ್ ಹಾಕಿಸಿಕೊಂಡು ಸಾಗುತ್ತಿರುವ ಬಸ್ ಅನ್ನು ಹೊಸ ಚಾಲಕನಿಗೆ ಒಪ್ಪಿಸಿದ್ದಾರೆ,” ಎಂದು ಅಶೋಕ್ ವ್ಯಂಗ್ಯವಾಡಿದರು.

ಇದೇ ವೇಳೆ, ಮುಖ್ಯಮಂತ್ರಿ ಸ್ಥಾನದಿಂದ ಸಿದ್ದರಾಮಯ್ಯ ಅವರನ್ನು ಬದಲಾಯಿಸಿರುವ ವಿಚಾರವನ್ನು ಉಲ್ಲೇಖಿಸಿದ ಅವರು, ಕಾಂಗ್ರೆಸ್ ಪಕ್ಷ ಹಿಂದುಳಿದ ವರ್ಗಗಳ ನಾಯಕರನ್ನು ಕಡೆಗಣಿಸುವ ಪರಂಪರೆಯನ್ನು ಮುಂದುವರಿಸಿದೆ ಎಂದು ಆರೋಪಿಸಿದರು.

“ನಾನು ಅಹಿಂದ ನಾಯಕ, ದೇಶದಲ್ಲೇ ಏಕೈಕ ಅಹಿಂದ ಮುಖ್ಯಮಂತ್ರಿ ಎಂದು ಸಿದ್ದರಾಮಯ್ಯ ಹೇಳುತ್ತಿದ್ದರು. ಯಾವುದೇ ಕಾರಣಕ್ಕೂ ನನ್ನನ್ನು ಬದಲಾಯಿಸುವುದಿಲ್ಲ ಎಂಬ ವಿಶ್ವಾಸ ಅವರಲ್ಲಿತ್ತು. ಆದರೆ ರಾಹುಲ್ ಗಾಂಧಿ ಅವರ ನಿರ್ಧಾರದಿಂದಲೇ ಅವರು ಸ್ಥಾನ ಕಳೆದುಕೊಂಡಿದ್ದಾರೆ ಎಂದು ಹೇಳಿದರು.

ಕಾಂಗ್ರೆಸ್ ಪಕ್ಷದ ಇತಿಹಾಸವನ್ನು ಉಲ್ಲೇಖಿಸಿದ ಅಶೋಕ್, ಹಿಂದೆ ರಾಜೀವ್ ಗಾಂಧಿ ಅವರು ವೀರೇಂದ್ರ ಪಾಟೀಲರನ್ನು ಅಧಿಕಾರದಿಂದ ಕೆಳಗಿಳಿಸಿದ್ದರು. ಇಂದಿರಾ ಗಾಂಧಿ ಅವರು ದೇವರಾಜ ಅರಸ್ ಹಾಗೂ ಬಂಗಾರಪ್ಪ ಅವರನ್ನು ಪದಚ್ಯುತಗೊಳಿಸಿದ್ದರು. ಇದೀಗ ಸಿದ್ದರಾಮಯ್ಯ ಅವರ ಸರದಿ ಬಂದಿದೆ. ಕಾಂಗ್ರೆಸ್ ಪಕ್ಷದಲ್ಲಿ ನಾಯಕರನ್ನು ಅಧಿಕಾರದಿಂದ ಕಿತ್ತೊಗೆಯುವ ಸಂಸ್ಕೃತಿ ಹೊಸದೇನಲ್ಲ ಎಂದು ಟೀಕಿಸಿದರು.

ದೇವರಾಜ ಅರಸ್, ಬಂಗಾರಪ್ಪ ಹಾಗೂ ಸಿದ್ದರಾಮಯ್ಯ ಹಿಂದುಳಿದ ವರ್ಗಗಳ ನಾಯಕರಾಗಿದ್ದರು. ಇಂತಹ ನಾಯಕರನ್ನೇ ಕಾಂಗ್ರೆಸ್ ಪಕ್ಷ ಪದೇಪದೇ ಕಡೆಗಣಿಸುತ್ತಿದೆ. ಹೀಗಾಗಿ ಕಾಂಗ್ರೆಸ್ ಹಿಂದುಳಿದ ವರ್ಗಗಳ ಪರವಲ್ಲ, ಅವರ ವಿರುದ್ಧದ ಪಕ್ಷವಾಗಿ ಪರಿಣಮಿಸಿದೆ ಎಂದು ಅಶೋಕ್ ಆರೋಪಿಸಿದರು.

‘ಕೊರಗಜ್ಜ’ ನಿರ್ದೇಶಕನಿಗೆ ನಿರ್ಮಾಪಕರಿಂದ ಕೋಟಿ ಮೌಲ್ಯದ ಸರ್ಪ್ರೈಸ್ ಗಿಫ್ಟ್‌

ಮಂಗಳೂರು: ಇನ್ನೂ ಸಿನಿಮಾ ಬಿಡುಗಡೆಯಾಗಿಲ್ಲ. ಆದರೆ ‘ಕೊರಗಜ್ಜ’ ಚಿತ್ರ ಈಗಾಗಲೇ ದಾಖಲೆ ಮಟ್ಟದ ಚರ್ಚೆಗೆ ಕಾರಣವಾಗಿದೆ. ಚಿತ್ರದ ಮೇಲೆ ನಿರ್ಮಾಪಕರ ವಿಶ್ವಾಸ ಎಷ್ಟರ ಮಟ್ಟಿಗೆ ಇದೆ ಎಂಬುದಕ್ಕೆ ನಿರ್ದೇಶಕ ಸುಧೀರ್ ಅತ್ತಾವರ್ ಅವರಿಗೆ ನೀಡಲಾದ ₹1.75 ಕೋಟಿ ಮೌಲ್ಯದ ಐಷಾರಾಮಿ ಫ್ಲಾಟ್ ಸಾಕ್ಷಿಯಾಗಿದೆ.

ಮೂರು ವರ್ಷಗಳಿಂದ ನಿರಂತರವಾಗಿ ಸಿನಿಮಾ ನಿರ್ಮಾಣದ ಕೆಲಸದಲ್ಲಿ ತೊಡಗಿದ್ದ ನಿರ್ದೇಶಕರ ಶ್ರಮವನ್ನು ಗುರುತಿಸಿ ನಿರ್ಮಾಪಕ ತ್ರಿವಿಕ್ರಮ ಸಪಲ್ಯ ಈ ದುಬಾರಿ ಉಡುಗೊರೆಯನ್ನು ನೀಡಿದ್ದಾರೆ. ಇತ್ತೀಚೆಗೆ ನಡೆದ ಗೃಹ ಪ್ರವೇಶ ಕಾರ್ಯಕ್ರಮದಲ್ಲಿ ಚಿತ್ರತಂಡದ ಪ್ರಮುಖರು ಭಾಗವಹಿಸಿದ್ದರು.

ಇದೇ ವೇಳೆ ‘ಕೊರಗಜ್ಜ’ ಚಿತ್ರ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ. ಈಗಾಗಲೇ ಆರು ಭಾಷೆಗಳಲ್ಲಿ ನಿರ್ಮಾಣವಾಗುತ್ತಿರುವ ಈ ಸಿನಿಮಾ ಚೈನೀಸ್ ಹಾಗೂ ಇಂಗ್ಲಿಷ್ ಆವೃತ್ತಿಗಳಲ್ಲೂ ಬಿಡುಗಡೆಯಾಗಲು ಸಜ್ಜಾಗಿದೆ. ಹಾಂಕಾಂಗ್ ಮತ್ತು ಬೀಜಿಂಗ್ ಮೂಲದ ವಿತರಣಾ ಸಂಸ್ಥೆಗಳು ಚಿತ್ರದ ಹಕ್ಕುಗಳ ಕುರಿತು ಮಾತುಕತೆ ನಡೆಸುತ್ತಿರುವುದು ಚಿತ್ರದ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸಿದೆ.

ಚಿತ್ರದ 3ಡಿ ತಾಂತ್ರಿಕ ಕಾರ್ಯಗಳು ಕೊಚ್ಚಿ ಮತ್ತು ಚೆನ್ನೈನಲ್ಲಿ ನಡೆಯುತ್ತಿದ್ದು, ಅಂತರರಾಷ್ಟ್ರೀಯ ಗುಣಮಟ್ಟದ ದೃಶ್ಯಾನುಭವ ನೀಡುವ ಗುರಿ ಹೊಂದಲಾಗಿದೆ. ಸುಮಾರು ₹40 ಕೋಟಿಗೂ ಅಧಿಕ ಬಜೆಟ್‌ನಲ್ಲಿ ನಿರ್ಮಾಣವಾಗುತ್ತಿರುವ ಈ ಸಿನಿಮಾ ಕರಾವಳಿ ದೈವ ಆರಾಧನೆಯ ಕಥೆಯನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವ ನಿರೀಕ್ಷೆ ಮೂಡಿಸಿದೆ.

ಹಿರಿಯ ನಟಿ ಭವ್ಯ ಅಭಿನಯಿಸಿರುವ ಈ ಚಿತ್ರದಲ್ಲಿ ದೈವ ಪರಂಪರೆ, ಸಂಸ್ಕೃತಿ ಹಾಗೂ ಆಧ್ಯಾತ್ಮಿಕ ಅಂಶಗಳಿಗೆ ವಿಶೇಷ ಒತ್ತು ನೀಡಲಾಗಿದ್ದು, ಆಗಸ್ಟ್‌ನಲ್ಲಿ ಚಿತ್ರಮಂದಿರಗಳಲ್ಲಿ ಅದ್ದೂರಿ ಬಿಡುಗಡೆಗೆ ಸಿದ್ಧತೆ ನಡೆಯುತ್ತಿದೆ.

ಈಜಲು ತೆರಳಿದ್ದ ಹಾವೇರಿ ಮೂಲದ ವಿದ್ಯಾರ್ಥಿ ನದಿಯಲ್ಲಿ ಮುಳುಗಿ ಸಾವು

ಬೈಂದೂರು: ಕುಟುಂಬ ಪ್ರವಾಸದ ಸಂಭ್ರಮ ಕೆಲವೇ ನಿಮಿಷಗಳಲ್ಲಿ ಶೋಕವಾಗಿ ಬದಲಾಗಿದೆ. ಮುರುಡೇಶ್ವರ ಪ್ರವಾಸ ಮುಗಿಸಿ ವಿಶ್ರಾಂತಿಗಾಗಿ ನಿಂತಿದ್ದ ವೇಳೆ ಹೊಳೆಗೆ ಸ್ನಾನಕ್ಕೆ ಇಳಿದ 16 ವರ್ಷದ ವಿದ್ಯಾರ್ಥಿಯೊಬ್ಬ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಬೈಂದೂರು ತಾಲೂಕಿನ ಶಿರೂರು ಸಂಕದಗುಂಡಿ ಹೊಳೆಯಲ್ಲಿ ನಡೆದಿದೆ.

ಹಾವೇರಿ ಮೂಲದ ಆಯುಷ್ ಮೃತ ದುರ್ದೈವಿ. ಕುಟುಂಬದ ಏಳು ಮಂದಿ ಮುರುಡೇಶ್ವರ ಹಾಗೂ ಕನ್ಯಾಕುಮಾರಿ ಪ್ರವಾಸದಲ್ಲಿದ್ದು, ಶಿರೂರು ಸಮೀಪ ವಾಹನ ನಿಲ್ಲಿಸಿ ಊಟದ ವ್ಯವಸ್ಥೆ ಮಾಡುತ್ತಿದ್ದರು.

ಈ ವೇಳೆ ಆಯುಷ್ ಹಾಗೂ ಮತ್ತೊಬ್ಬ ಬಾಲಕ ಸಮೀಪದ ಹೊಳೆಗೆ ತೆರಳಿದ್ದಾರೆ. ಆರಂಭದಲ್ಲಿ ಸಾಮಾನ್ಯವಾಗಿ ಸ್ನಾನ ಮಾಡುತ್ತಿದ್ದ ಬಾಲಕ, ಬಳಿಕ ನೀರಿನ ಆಳ ಹೆಚ್ಚಿರುವ ಪ್ರದೇಶಕ್ಕೆ ತೆರಳಿದ್ದಾನೆ. ಆಳದ ಅಂದಾಜು ಸಿಗದ ಕಾರಣ ಕ್ಷಣಾರ್ಧದಲ್ಲಿ ನೀರಿನಲ್ಲಿ ಮುಳುಗಿದ್ದಾನೆ ಎನ್ನಲಾಗಿದೆ.

ಜೊತೆಯಲ್ಲಿದ್ದ ಬಾಲಕ ಆತಂಕದಿಂದ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದು, ಕೂಡಲೇ ರಕ್ಷಣಾ ಕಾರ್ಯ ಆರಂಭಿಸಲಾಯಿತು. ಆದರೆ ಎಲ್ಲ ಪ್ರಯತ್ನಗಳು ವಿಫಲವಾದವು.

ಅಗ್ನಿಶಾಮಕ ಸಿಬ್ಬಂದಿ ಹಾಗೂ ಸ್ಥಳೀಯರು ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಕಾರ್ಯಾಚರಣೆ ನಡೆಸಿದ ಬಳಿಕ ಬಾಲಕನ ಮೃತದೇಹವನ್ನು ಹೊರತೆಗೆದಿದ್ದಾರೆ.

ಗುಜರಾತ್‌ನಲ್ಲಿ ವಾಸವಿದ್ದ ಆಯುಷ್ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಯಾಗಿದ್ದು, ಕುಟುಂಬದೊಂದಿಗೆ ರಜೆ ಪ್ರವಾಸಕ್ಕೆ ಬಂದಿದ್ದ. ಪ್ರವಾಸದ ಖುಷಿಯ ನಡುವೆ ನಡೆದ ಈ ದುರಂತ ಕುಟುಂಬವನ್ನು ಕಣ್ಣೀರಿನಲ್ಲಿ ಮುಳುಗಿಸಿದೆ. ಬೈಂದೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

error: Content is protected !!