ನವದೆಹಲಿ: ದೇಶದಲ್ಲಿ ಆಧ್ಯಾತ್ಮಿಕ ಪ್ರವಾಸೋದ್ಯಮಕ್ಕೆ ಹೆಚ್ಚುತ್ತಿರುವ ಆಸಕ್ತಿ ನಡುವೆಯೇ, ಭಾರತೀಯ ರೈಲ್ವೆ ‘ಶ್ರೀ ರಾಮಾಯಣ ಯಾತ್ರೆ’ ಎಂಬ 17 ದಿನಗಳ ವಿಶೇಷ ರೈಲು ಪ್ರವಾಸವನ್ನು ಘೋಷಿಸಿದೆ. ಈ ಯಾತ್ರೆ ಮಾರ್ಚ್ 30ರಿಂದ ಆರಂಭವಾಗಲಿದೆ.
‘ಭಾರತ್ ಗೌರವ್ ಡಿಲಕ್ಸ್ ಎಸಿ ಟೂರಿಸ್ಟ್’ ರೈಲಿನ ಮೂಲಕ ನಡೆಯಲಿರುವ ಈ ಪ್ರವಾಸದಲ್ಲಿ ಭಗವಾನ್ ಶ್ರೀರಾಮನ ಜೀವನಕ್ಕೆ ಸಂಬಂಧಿಸಿದ ಭಾರತ ಹಾಗೂ ನೇಪಾಳದ ಪ್ರಮುಖ ತೀರ್ಥಕ್ಷೇತ್ರಗಳನ್ನು ಭೇಟಿ ನೀಡಲಾಗುತ್ತದೆ.
ಪ್ರವಾಸಿಗರ ಆರಾಮಕ್ಕಾಗಿ 1AC, 2AC ಮತ್ತು 3AC ಬೋಗಿಗಳೊಂದಿಗೆ ಆಧುನಿಕ ಅಡುಗೆಮನೆ, ರೆಸ್ಟೋರೆಂಟ್, ಸೆನ್ಸಾರ್ ಆಧಾರಿತ ಶೌಚಾಲಯಗಳು, ಸ್ನಾನಗೃಹಗಳು ಮತ್ತು ಫುಟ್ ಮಸಾಜರ್ಗಳಂತಹ ಸೌಲಭ್ಯಗಳನ್ನು ಒದಗಿಸಲಾಗಿದೆ. ಪ್ರಯಾಣಿಕರ ಸುರಕ್ಷತೆಗೆ ಸಿಸಿಟಿವಿ ಹಾಗೂ ಭದ್ರತಾ ಸಿಬ್ಬಂದಿಯನ್ನೂ ನಿಯೋಜಿಸಲಾಗಿದೆ.
ಈ ಯಾತ್ರೆ ದೆಹಲಿಯ ಸಫ್ದರ್ಜಂಗ್ ರೈಲು ನಿಲ್ದಾಣದಿಂದ ಆರಂಭವಾಗಿ 16 ರಾತ್ರಿ ಹಾಗೂ 17 ದಿನಗಳ ಕಾಲ ನಡೆಯಲಿದೆ. ಒಟ್ಟು 7,560 ಕಿಲೋಮೀಟರ್ ಪ್ರಯಾಣದಲ್ಲಿ ಅಯೋಧ್ಯೆ, ವಾರಾಣಸಿ, ಪ್ರಯಾಗ್ರಾಜ್, ನಾಸಿಕ್, ಹಂಪಿ, ರಾಮೇಶ್ವರಂ ಸೇರಿದಂತೆ ಹಲವು ಪ್ರಮುಖ ಧಾರ್ಮಿಕ ತಾಣಗಳಿಗೆ ಭೇಟಿ ನೀಡಲಾಗುತ್ತದೆ.
ಜತೆಗೆ ನೇಪಾಳದ ಜನಕಪುರದಲ್ಲಿರುವ ಸೀತಾ ದೇವಿಯ ಜನ್ಮಸ್ಥಳಕ್ಕೂ ಪ್ರವಾಸಿಗರನ್ನು ಕರೆದೊಯ್ಯಲಾಗುತ್ತದೆ. ಗಂಗಾ ಆರತಿ, ತ್ರಿವೇಣಿ ಸಂಗಮ ಸೇರಿದಂತೆ ಪ್ರಮುಖ ಆಧ್ಯಾತ್ಮಿಕ ಅನುಭವಗಳನ್ನೂ ಈ ಪ್ಯಾಕೇಜ್ ಒಳಗೊಂಡಿದೆ.
ಈ ಯಾತ್ರೆಗೆ ಒಟ್ಟು 150 ಪ್ರಯಾಣಿಕರಿಗೆ ಮಾತ್ರ ಅವಕಾಶವಿದ್ದು, ಟಿಕೆಟ್ ದರವು ಆಯ್ಕೆ ಮಾಡಿದ ಬೋಗಿಗಳ ಆಧಾರದ ಮೇಲೆ ನಿಗದಿಯಾಗಿದೆ. ಕನಿಷ್ಠ ದರವು ಸುಮಾರು 1.11 ಲಕ್ಷದಿಂದ ಪ್ರಾರಂಭವಾಗಿ, ಪ್ರಥಮ ದರ್ಜೆಗೆ 1.64 ಲಕ್ಷದವರೆಗೆ ಇದೆ.
ಪ್ಯಾಕೇಜ್ನಲ್ಲಿ ರೈಲು ಪ್ರಯಾಣ, ತ್ರೀ-ಸ್ಟಾರ್ ಹೋಟೆಲ್ ವಾಸ್ತವ್ಯ, ಸಸ್ಯಾಹಾರಿ ಊಟ, ಸ್ಥಳೀಯ ಪ್ರವಾಸಕ್ಕೆ ಎಸಿ ಬಸ್ ವ್ಯವಸ್ಥೆ, ವಿಮೆ ಹಾಗೂ ಟೂರ್ ಗೈಡ್ ಸೌಲಭ್ಯಗಳನ್ನೂ ಒಳಗೊಂಡಿವೆ ಎಂದು ಐಆರ್ಸಿಟಿಸಿ ತಿಳಿಸಿದೆ.