ಮೈಸೂರು: ಕ್ಷೇತ್ರ ಮರುವಿಂಗಡನೆಯನ್ನು ಹೊಸ ಜನಗಣತಿಯಾದ ನಂತರ ಮಾಡುವುದು ಸೂಕ್ತ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು. ಎರಡು ದಿನಗಳ ಪ್ರವಾಸ ನಿಮಿತ್ತ ಮೈಸೂರಿಗೆ ಆಗಮಿಸಿದ ಸಂದರ್ಭದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದರು.
ನಾವು ಅದಕ್ಕಾಗಿಯೇ ಕ್ಷೇತ್ರ ಮರು ವಿಂಗಡಣೆಯನ್ನು ವಿರೋಧ ಮಾಡಿದೆವು. ನಾವು ಎಂದಿಗೂ ಮಹಿಳಾ ಮೀಸಲಾತಿಯ ಪರವಾಗಿಯೇ ಇದ್ದೇವೆ ಎಂದರು.
ಇಲ್ಲಿಯವರೆಗೆ ಕಾಯಬೇಕಿರಲಿಲ್ಲ
ಸಂವಿಧಾನಕ್ಕೆ 73, 74ನೇ ತಿದ್ದುಪಡಿಯನ್ನು ತಂದಿದ್ದು ಕಾಂಗ್ರೆಸ್ ಪಕ್ಷ. ಸ್ಥಳೀಯ ಸಂಸ್ಥೆಗಳಲ್ಲಿ 50% ಮಹಿಳಾ ಮೀಸಲಾತಿ ತಂದಿದ್ದು ಕೂಡ ಕಾಂಗ್ರೆಸ್ ಪಕ್ಷವೇ. 2023 ರಲ್ಲಿಯೇ ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರವಾಗಿದ್ದು ಆಗಲೇ ಅದನ್ನು ಜಾರಿ ಮಾಡಬೇಕಿತ್ತು, ಇಲ್ಲಿಯವರೆಗೆ ಏಕೆ ಕಾಯಬೇಕಿತ್ತು ಎಂದರು.
ವಿರೋಧಿಸಿದವರೇ ಗ್ಯಾರಂಟಿ ಕೊಡುತ್ತಿದ್ದಾರೆ
ಗ್ಯಾರಂಟಿಗಳನ್ನು ಎಲ್ಲಾ ಪಕ್ಷಗಳು ತಮ್ಮ ಪ್ರಣಾಳಿಕೆಯಲ್ಲಿ ಸೇರಿಸಿರುವ ಬಗ್ಗೆ ಮಾತನಾಡಿ 2023 ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ವಿರೋಧಿಸಿದ್ದರು. ಈಗ ಅವರೇ ಯೋಜನೆಗಳನ್ನು ಘೋಷಿಸುತ್ತಿದ್ದಾರೆ ಎಂದರು.
ಮಹಿಳಾ ಮೀಸಲಾತಿ ಪರವಾಗಿದ್ದೇವೆ ಎಂದು ಪ್ರಧಾನಿಗಳಿಗೆ ತಿಳಿಸಿದೆ
ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿಯವರು ಬೆಂಗಳೂರಿಗೆ ಆಗಮಿಸಿದ ಸಂದರ್ಭದಲ್ಲಿ ಮುಖ್ಯಮಂತ್ರಿ ಹಾಗೂ ಪ್ರಧಾನಿಗಳ ನಡುವೆ ಆದ ಮಾತುಕತೆಯ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿಗಳು ಮಹಿಳಾ ಮೀಸಲಾತಿ ಬಗ್ಗೆ ನಿಮ್ಮ ನಿಲುವೇನು ಎಂದು ಪ್ರಧಾನಿಗಳು ಕೇಳಿದ್ದರು. ನಾವು ಮಹಿಳಾ ಮೀಸಲಾತಿಯ ಪರವಾಗಿದ್ದೇವೆ ಎಂದು ತಿಳಿಸಿದ್ದಾಗಿ ಮುಖ್ಯಮಂತ್ರಿಗಳು ಹೇಳಿದರು.
ಪ್ರಧಾನಿಗಳು ಸಾಮಾಜಿಕ ನ್ಯಾಯದ ಪರವಾಗಿಲ್ಲ
ಮಹಿಳಾ ಮೀಸಲಾತಿ ಮಸೂದೆಯನ್ನು ತಿರಸ್ಕರಿಸುವ ಮೂಲಕ ಕಾಂಗ್ರೆಸ್ ಭ್ರೂಣ ಹತ್ಯೆ ಮಾಡಿದೆ ಎಂದು ಪ್ರಧಾನಿಗಳು ಆರೋಪಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ಪ್ರಧಾನಿಗಳದ್ದು ತಾರತಮ್ಯದ ಧೋರಣೆಯಾಗಿದ್ದು, ಅವರು ಸಾಮಾಜಿಕ ನ್ಯಾಯದ ಪರವಾಗಿಲ್ಲ ಎಂದರು.
ಅವರು ಅಧಿಕಾರಕ್ಕೆ ಬಂದು 12 ವರ್ಷಗಳಲ್ಲಿ ಮಹಿಳಾ ಮೀಸಲಾತಿ ಏಕೆ ಜಾರಿಮಾಡಲಿಲ್ಲ ಎಂದು ಪ್ರಶ್ನಿಸಿದರು. ಈಗಲೂ 2023ರ ಪ್ರಕಾರ ಜಾರಿ ಮಾಡಲಿ. ಕ್ಷೇತ್ರ ಮರು ವಿಂಗಡನೆಯನ್ನು ಜನಗಣತಿಯಾದ ನಂತರ ಮಾಡಿದರೆ ಸೂಕ್ತ ಎಂದರು. ಲೋಕಸಭಾ ಸ್ಥಾನಗಳನ್ನು ಶೇಕಡ 50% ರಷ್ಟು ಹೆಚ್ಚು ಮಾಡುವುದಾಗಿ ಹೇಳಿದ್ದು, ದಕ್ಷಿಣ ಭಾರತದ ರಾಜ್ಯಗಳಿಗೆ ಅನ್ಯಾಯವಾಗುತ್ತದೆ. ಜನಗಣತಿ ಮಾಡಿ ಎಲ್ಲರಿಗೂ ಸಮಾನವಾಗಿ ಸ್ಥಾನಗಳನ್ನು ಕೊಡಬೇಕು ಎಂದರು.
ಕ್ಷೇತ್ರ ಮರು ವಿಂಗಡಣೆಯಿಂದ ದಕ್ಷಿಣ ಭಾರತದ ರಾಜ್ಯಗಳಿಗೆ ಅನ್ಯಾಯ
ಜನಸಂಖ್ಯೆ ನಿಯಂತ್ರಣವನ್ನು ದಕ್ಷಿಣ ಭಾರತದ ರಾಜ್ಯಗಳು ಉತ್ತಮವಾಗಿ ಮಾಡಿದ್ದು, ಉತ್ತರ ಭಾರತದ ರಾಜ್ಯಗಳು ಮಾಡಿಲ್ಲ. ಸಹಜವಾಗಿಯೇ ಅವರಿಗೆ ಅನುಕೂಲ ಹಾಗೂ ದಕ್ಷಿಣ ಭಾರತದ ರಾಜ್ಯಗಳಿಗೆ ಅನಾನುಕೂಲವಾಗಲಿದೆ ಎಂದರು.
ಬಹುಮತ ವಿಲ್ಲ ಎಂದು ಗೊತ್ತಿದ್ದು ಮಸೂದೆಯನ್ನು ಮಂಡಿಸಬಾರದಿತ್ತು
ಮುಂದಿನ ದಿನಗಳಲ್ಲಿ ಕಾಂಗ್ರೆಸ್ಸಿಗೆ ಜನ ಪಾಠ ಕಲಿಸಲಿದ್ದಾರೆ ಎಂಬ ಪ್ರಧಾನಿಗಳ ಹೇಳಿಕೆಗೆ ಪ್ರತಿಕ್ರಿಯೆ ನೀಡಿ ಪ್ರಧಾನಿಗಳು ರಾಜಕೀಯ ಮಾಡುತ್ತಿದ್ದಾರೆ. ಮೂರನೇ ಎರಡರಷ್ಟು ಬಹುಮತವಿಲ್ಲ ಎಂದು ಗೊತ್ತಿದ್ದೂ ಮಹಿಳಾ ಮೀಸಲಾತಿ, ಕ್ಷೇತ್ರ ಮರು ವಿಂಗಡಣೆಯನ್ನು ಒಟ್ಟಿಗೆ ತರಬೇಕಾದ ಅಗತ್ಯವಿರಲಿಲ್ಲ ಎಂದು ಹೇಳಿದರು.
ಇಡಿ ದಾಳಿ ಬಗ್ಗೆ ತಿಳಿದಿಲ್ಲ
ಶಾಸಕ ಎನ್.ಎ ಹ್ಯಾರೀಸ್ ಅವರ ಮನೆಯ ಮೇಲೆ ಇಡಿ ದಾಳಿಯಾಗಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ ಈ ಬಗ್ಗೆ ನನಗೆ ತಿಳಿದಿಲ್ಲ ಎಂದರು.
ಕೇರಳದಲ್ಲಿ ಕಾಂಗ್ರೆಸ್ ಗೆಲ್ಲಲಿದೆ
ಮೂಲಗಳ ಪ್ರಕಾರ ತಮಿಳುನಾಡಿನಲ್ಲಿ ಡಿಎಂಕೆ ಮತ್ತು ಮಿತ್ರ ಪಕ್ಷಗಳು ಗೆಲ್ಲಲಿದ್ದು ಕೇರಳದಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.

