Home Blog

ಮಾರ್ಚ್‌ನಲ್ಲಿ ಜಿಎಸ್‌ಟಿ ಸಂಗ್ರಹ ₹1.78 ಲಕ್ಷ ಕೋಟಿ – ವಾರ್ಷಿಕವಾಗಿ 8.2% ಏರಿಕೆ!

0

ನವದೆಹಲಿ: ದೇಶದಲ್ಲಿ ಮಾರ್ಚ್ ತಿಂಗಳಲ್ಲಿ ಜಿಎಸ್‌ಟಿ ಸಂಗ್ರಹದಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದ್ದು, ನಿವ್ವಳವಾಗಿ ₹1.78 ಲಕ್ಷ ಕೋಟಿ ಸಂಗ್ರಹವಾಗಿದೆ.

ಇದು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇಕಡಾ 8.2ರಷ್ಟು ಹೆಚ್ಚಾಗಿದೆ.

ರೀಫಂಡ್ ಮೊತ್ತವನ್ನು ಒಳಗೊಂಡರೆ ಒಟ್ಟು ಜಿಎಸ್‌ಟಿ ಸಂಗ್ರಹ ₹2 ಲಕ್ಷ ಕೋಟಿಯನ್ನು ದಾಟಿದ್ದು, ಈ ಪ್ರಮಾಣವೂ ಹಿಂದಿನ ವರ್ಷಕ್ಕಿಂತ ಶೇಕಡಾ 8.8ರಷ್ಟು ಹೆಚ್ಚಳ ಕಂಡಿದೆ. ಸರ್ಕಾರ ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ, ಮಾರ್ಚ್ ತಿಂಗಳಲ್ಲಿ ₹22,000 ಕೋಟಿ ರೀಫಂಡ್ ನೀಡಲಾಗಿದ್ದು, ಇದು ಶೇಕಡಾ 13.8ರಷ್ಟು ಏರಿಕೆಯಾಗಿದೆ.

ಇನ್ನು 2025-26 ಹಣಕಾಸು ವರ್ಷದಲ್ಲಿ ಒಟ್ಟು ಜಿಎಸ್‌ಟಿ ಸಂಗ್ರಹ ₹22.27 ಲಕ್ಷ ಕೋಟಿಗೆ ಏರಿಕೆಯಾಗಿದೆ. ಇದು ಹಿಂದಿನ ಹಣಕಾಸು ವರ್ಷದೊಂದಿಗೆ ಹೋಲಿಸಿದರೆ ಶೇಕಡಾ 8.3ರಷ್ಟು ಹೆಚ್ಚಾಗಿದೆ. ರೀಫಂಡ್ ನಂತರದ ನಿವ್ವಳ ಜಿಎಸ್‌ಟಿ ಸಂಗ್ರಹ ₹19.34 ಲಕ್ಷ ಕೋಟಿಯಾಗಿದ್ದು, ಇದರಲ್ಲಿ ಶೇಕಡಾ 7.1ರಷ್ಟು ಏರಿಕೆ ದಾಖಲಾಗಿದೆ.

ರಾಜ್ಯವಾರು ಸಂಗ್ರಹದ ವಿವರಗಳನ್ನು ಗಮನಿಸಿದರೆ ಮಹಾರಾಷ್ಟ್ರ ರಾಜ್ಯವು ಅಗ್ರಸ್ಥಾನದಲ್ಲಿದೆ. ಕರ್ನಾಟಕ ಮತ್ತು ಗುಜರಾತ್ ರಾಜ್ಯಗಳು ಜಿಎಸ್‌ಟಿ ಸಂಗ್ರಹದಲ್ಲಿ ಟಾಪ್-3 ಸ್ಥಾನಗಳನ್ನು ಪಡೆದಿವೆ. ಜಿಎಸ್‌ಟಿ ಹಂಚಿಕೆಯ ನಂತರ ಕರ್ನಾಟಕ, ಹಿಮಾಚಲ ಪ್ರದೇಶ, ಪಂಜಾಬ್, ಉತ್ತರಾಖಂಡ್, ಹರ್ಯಾಣ, ರಾಜಸ್ಥಾನ, ಉತ್ತರ ಪ್ರದೇಶ, ಬಿಹಾರ್, ಗುಜರಾತ್ ಹಾಗೂ ಮಹಾರಾಷ್ಟ್ರ ರಾಜ್ಯಗಳು ಪಾಸಿಟಿವ್ ಬೆಳವಣಿಗೆ ತೋರಿವೆ.

ಇನ್ನು ಜಮ್ಮು-ಕಾಶ್ಮೀರ, ಚಂಡೀಗಢ, ದೆಹಲಿ, ಅರುಣಾಚಲ ಪ್ರದೇಶ ಮತ್ತು ಮೇಘಾಲಯ ರಾಜ್ಯಗಳು ಜಿಎಸ್‌ಟಿ ಸಂಗ್ರಹದಲ್ಲಿ ಕುಸಿತ ಕಂಡು ನೆಗಟಿವ್ ಗ್ರೋತ್ ದಾಖಲಿಸಿವೆ.

ಒಟ್ಟಾರೆ, ದೇಶದ ಆರ್ಥಿಕ ಚಟುವಟಿಕೆಗಳಲ್ಲಿ ಸ್ಥಿರತೆ ಮತ್ತು ಬೆಳವಣಿಗೆ ಮುಂದುವರಿದಿರುವುದನ್ನು ಜಿಎಸ್‌ಟಿ ಸಂಗ್ರಹದ ಈ ಅಂಕಿ-ಅಂಶಗಳು ಸೂಚಿಸುತ್ತಿವೆ.

ಪ್ರವಾಸದ ವೇಳೆ ದುರಂತ: ಕಾವೇರಿ ನದಿಯಲ್ಲಿ ಈಜಲು ಹೋದ ಯುವಕ ನೀರುಪಾಲು!

ಮಂಡ್ಯ: ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣ ಎಡಮುರಿ ಕಾವೇರಿ ನದಿಯಲ್ಲಿ ಭಾನುವಾರ ನಡೆದ ದುರಂತದಲ್ಲಿ ಬೆಂಗಳೂರಿನ ಯುವಕನೊಬ್ಬ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ.

ಮೃತ ಯುವಕನನ್ನು ಬೆಂಗಳೂರಿನ ರಾಮಮೂರ್ತಿನಗರ ನಿವಾಸಿ ವಿಘ್ನೇಶ್ (25) ಎಂದು ಗುರುತಿಸಲಾಗಿದೆ. ಇವರು ಖಾಸಗಿ ಸಂಸ್ಥೆಯೊಂದರಲ್ಲಿ ಉದ್ಯೋಗಿಯಾಗಿದ್ದು, ಸ್ನೇಹಿತರೊಂದಿಗೆ ಪ್ರವಾಸಕ್ಕೆಂದು ಮಂಡ್ಯ ಜಿಲ್ಲೆಗೆ ಆಗಮಿಸಿದ್ದರು.

ಮಾಹಿತಿ ಪ್ರಕಾರ, ವಿಘ್ನೇಶ್ ತನ್ನ ನಾಲ್ವರು ಸ್ನೇಹಿತರೊಂದಿಗೆ ಬಲಮುರಿ-ಎಡಮುರಿ ಪ್ರದೇಶಕ್ಕೆ ಭೇಟಿ ನೀಡಿದ್ದರು. ಪ್ರವಾಸದ ವೇಳೆ ಅವರು ಕಾವೇರಿ ನದಿಯಲ್ಲಿ ಈಜಲು ಇಳಿದಿದ್ದು, ಈ ಸಮಯದಲ್ಲಿ ವಿಘ್ನೇಶ್ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿದ್ದಾನೆ. ಸಹಯಾತ್ರಿಗಳು ತಕ್ಷಣ ರಕ್ಷಿಸಲು ಯತ್ನಿಸಿದರೂ ಸಾಧ್ಯವಾಗಿಲ್ಲ.

ಘಟನೆಯ ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಧಾವಿಸಿ ಶೋಧ ಕಾರ್ಯಾಚರಣೆ ನಡೆಸಿದರು. ಬಳಿಕ ಮೃತದೇಹವನ್ನು ನದಿಯಿಂದ ಹೊರತೆಗೆದು ಮುಂದಿನ ಕ್ರಮ ಕೈಗೊಂಡರು.

ಈ ಸಂಬಂಧ ಕೆಆರ್‌ಎಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನೆ ಕುರಿತು ತನಿಖೆ ಮುಂದುವರಿದಿದೆ.

 

ನಿಮ್ಮ ಲಿವರ್ ಆರೋಗ್ಯ ಚನ್ನಾಗಿರಲು ಈ ಆಹಾರಗಳಿಂದ ದೂರವಿರಿ!

0

ಇತ್ತೀಚಿನ ದಿನಗಳಲ್ಲಿ ಲಿವರ್ ಸಂಬಂಧಿತ ಕಾಯಿಲೆಗಳು ವೇಗವಾಗಿ ಹೆಚ್ಚುತ್ತಿರುವುದು ಗಮನಾರ್ಹವಾಗಿದೆ.

ಅಸ್ವಸ್ಥ ಜೀವನಶೈಲಿ, ಅಸಮತೋಲನ ಆಹಾರ ಪದ್ಧತಿ ಹಾಗೂ ಜಂಕ್ ಫುಡ್ ಸೇವನೆ ಇದರ ಪ್ರಮುಖ ಕಾರಣಗಳಾಗಿವೆ.

ಲಿವರ್ ದೇಹದ ಪ್ರಮುಖ ಅಂಗವಾಗಿದ್ದು, ದೇಹವನ್ನು ಡಿಟಾಕ್ಸ್ ಮಾಡುವುದು, ಜೀರ್ಣಕ್ರಿಯೆಗೆ ಸಹಾಯ ಮಾಡುವುದು ಹಾಗೂ ಅಗತ್ಯ ಪೋಷಕಾಂಶಗಳನ್ನು ಸಂಗ್ರಹಿಸುವ ಮಹತ್ವದ ಕೆಲಸ ಮಾಡುತ್ತದೆ. ಲಿವರ್ ಸರಿಯಾಗಿ ಕಾರ್ಯನಿರ್ವಹಿಸದಿದ್ದರೆ ಫ್ಯಾಟಿ ಲಿವರ್, ಹೆಪಟೈಟಿಸ್ ಸೇರಿದಂತೆ ಹಲವು ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ.

ಆರೋಗ್ಯ ತಜ್ಞರ ಪ್ರಕಾರ, ಲಿವರ್ ಆರೋಗ್ಯ ಕಾಪಾಡಿಕೊಳ್ಳಲು ಕೆಲವು ಆಹಾರಗಳನ್ನು ತಪ್ಪಿಸುವುದು ಅಗತ್ಯ. ವಿಶೇಷವಾಗಿ ಹೆಚ್ಚು ಎಣ್ಣೆಯಲ್ಲಿ ತಯಾರಿಸಿದ ಕರಿದ ಪದಾರ್ಥಗಳು ದೇಹದಲ್ಲಿ ಕೊಬ್ಬು ಹೆಚ್ಚಿಸಿ ಫ್ಯಾಟಿ ಲಿವರ್ ಸಮಸ್ಯೆಗೆ ಕಾರಣವಾಗಬಹುದು. ಅದೇ ರೀತಿ ಅತಿಯಾದ ಸಕ್ಕರೆ ಇರುವ ಆಹಾರಗಳು ಲಿವರ್‌ನಲ್ಲಿ ಕೊಬ್ಬು ಸಂಗ್ರಹವಾಗುವ ಸಾಧ್ಯತೆಯನ್ನು ಹೆಚ್ಚಿಸುತ್ತವೆ.

ಇನ್ನು ಪ್ರೊಸೆಸ್ಡ್ ಮತ್ತು ಪ್ಯಾಕೇಜ್ಡ್ ಆಹಾರಗಳಲ್ಲಿ ಇರುವ ರಾಸಾಯನಿಕಗಳು ಮತ್ತು ಪ್ರಿಸರ್ವೇಟಿವ್‌ಗಳು ಲಿವರ್‌ಗೆ ಹಾನಿಕಾರಕವಾಗಬಹುದು. ಹೀಗಾಗಿ ಇವುಗಳ ಸೇವನೆಯನ್ನು ಕಡಿಮೆ ಮಾಡುವುದು ಉತ್ತಮ.

ಲಿವರ್ ಆರೋಗ್ಯವನ್ನು ಕಾಪಾಡಿಕೊಳ್ಳಲು ಹಸಿರು ತರಕಾರಿ, ಹಣ್ಣು ಹಾಗೂ ಫೈಬರ್‌ ಸಮೃದ್ಧ ಆಹಾರಗಳನ್ನು ಸೇವಿಸುವುದು ಮುಖ್ಯ. ಪಾಲಕ್, ಬ್ರೋಕೋಲಿ, ಕ್ಯಾರೆಟ್, ಬೀಟ್‌ರೂಟ್ ಮುಂತಾದವು ಲಿವರ್‌ಗೆ ಸಹಾಯಕವಾಗುತ್ತವೆ. ಜೊತೆಗೆ ಬೆಳ್ಳುಳ್ಳಿ ಮತ್ತು ಅರಿಶಿನ ದೇಹದ ವಿಷಪದಾರ್ಥಗಳನ್ನು ಹೊರಹಾಕಲು ನೆರವಾಗುತ್ತವೆ.

ಸಾಕಷ್ಟು ನೀರು ಕುಡಿಯುವುದು, ನಿಯಮಿತ ವ್ಯಾಯಾಮ ಮಾಡುವುದು, ತೂಕವನ್ನು ನಿಯಂತ್ರಣದಲ್ಲಿಡುವುದು ಮತ್ತು ಮದ್ಯಪಾನದಿಂದ ದೂರವಿರುವುದು ಲಿವರ್ ಆರೋಗ್ಯಕ್ಕೆ ಅಗತ್ಯ. ಜೊತೆಗೆ ನಿಯಮಿತ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದರಿಂದ ಸಮಸ್ಯೆಗಳನ್ನು ಆರಂಭದಲ್ಲೇ ಗುರುತಿಸಿ ಚಿಕಿತ್ಸೆ ಪಡೆಯಬಹುದು.

ಬೆಂಕಿಗೆ ಹೊತ್ತಿ ಉರಿದ ಕಾರು: ಮೂವರು ಸಜೀವ ದಹನ, ಓರ್ವನ ಸ್ಥಿತಿ ಗಂಭೀರ!

ತುಮಕೂರು:- ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರು ಬಳಿ ಕೋರಗೆರೆ ಸೇತುವೆ ಮೇಲೆ ಭೀಕರ ಅಪಘಾತ ಸಂಭವಿಸಿದೆ.

ಕಾರೊಂದು ಬೆಂಕಿಯಲ್ಲಿ ಹೊತ್ತಿ ಉರಿದಿದ್ದು, ಮೂವರು ಸಜೀವದಹನವಾಗಿದ್ದಾರೆ. ಮೃತರು ಗುಬ್ಬಿ ತಾಲೂಕಿನವರು ಎನ್ನಲಾಗುತ್ತಿದೆ. ಘಟನೆಯಲ್ಲಿ ಓರ್ವನ ಸ್ಥಿತಿ ಗಂಭೀರವಾಗಿದ್ದು, ಸದ್ಯ ಗಾಯಾಳನ್ನು ಹತ್ತಿರದ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಹುಳಿಯಾರು ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಇಂದು ನಾಲ್ವರು ಪಂಚಣಿಯಹಳ್ಳಿ ಹತ್ತಿರದ ದೇವಸ್ಥಾನಕ್ಕೆ ತೆರಳಿ ದರ್ಶನ ಪಡೆದುಕೊಂಡು ವಾಪಸ್​ ಆಗುತ್ತಿದ್ದರು. ಈ ವೇಳೆ ವೇಗವಾಗಿ ಬಂದ ಕಾರು ಸೇತುವೆಯ ತಡೆಗೊಡೆಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಬೆಂಕಿ ಹೊತ್ತಿಕೊಂಡಿದೆ. ಪರಿಣಾಮ ಕಾರಿನಲ್ಲಿದ್ದ ಮೂವರು ಸಜೀವದಹನವಾಗಿದ್ದು, ಓರ್ವನ ಸ್ಥಿತಿ ಗಂಭೀರವಾಗಿದೆ. ಗಾಯಾಳುವಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ ಎಂದು ತಿಳಿದು ಬಂದಿದೆ.

ಗುಜರಾತ್ ವಿರುದ್ಧ ಗೆಲುವಿನ ಬೆನ್ನಲ್ಲೇ ಶ್ರೇಯಸ್ ಅಯ್ಯರ್‌ಗೆ 12 ಲಕ್ಷ ದಂಡ!

0

ಚಂಡೀಗಢ: ಗುಜರಾತ್ ಟೈಟಾನ್ಸ್ ವಿರುದ್ಧದ ಗೆಲುವಿನ ಬೆನ್ನಲ್ಲೇ ಪಂಜಾಬ್ ಕಿಂಗ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಗೆ 12 ಲಕ್ಷ ದಂಡ ವಿಧಿಸಲಾಗಿದೆ.

ಗುಜರಾತ್ ಟೈಟಾನ್ಸ್ ವಿರುದ್ಧ ನಿನ್ನೆ ನಡೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ 3 ವಿಕೆಟ್‌ಗಳಿಂದ ಗೆಲವು ಸಾಧಿಸಿದೆ. ಪಂದ್ಯದಲ್ಲಿ ನಿಧಾನಗತಿಯ ಓವರ್ ರೇಟ್ ಕಾಯ್ದುಕೊಂಡಿದ್ದಕ್ಕಾಗಿ ಪಂಜಾಬ್ ಕಿಂಗ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್‌ಗೆ 12 ಲಕ್ಷ ರೂ. ದಂಡ ವಿಧಿಸಲಾಗಿದೆ. ಈ ಆವೃತ್ತಿಯಲ್ಲಿ ಮೊದಲ ಬಾರಿಗೆ ನಿಧಾನಗತಿಯ ಓವರ್ ರೇಟ್ ಕಾಯ್ದುಕೊಂಡಿದ್ದಕ್ಕಾಗಿ ಶ್ರೇಯಸ್ ಅಯ್ಯರ್‌ಗೆ 12 ಲಕ್ಷ ರೂ. ದಂಡ ವಿಧಿಸಲಾಗಿದೆ.

ಟಾಸ್ ಸೋತು ಮೊದಲು ಬ್ಯಾಟ್ ಬೀಸಿದ ಗುಜರಾತ್ 6 ವಿಕೆಟ್ ನಷ್ಟಕ್ಕೆ 162 ರನ್ ಹೊಡೆಯಿತು. ಈ ಮೊತ್ತವನ್ನು ಬೆನ್ನಟ್ಟಿದ ಪಂಜಾಬ್ 165 ರನ್ ಹೊಡೆದು ಟೂರ್ನಿಯಲ್ಲಿ ಶುಭಾರಂಭ ಮಾಡಿತು.

ಮೊಬೈಲ್ ಮೂಲಕ ಸ್ವಯಂ ಗಣತಿ ದಾಖಲಿಸಿದ ಡಿಜಿಪಿ ಡಾ.ಎಂ.ಎ.ಸಲೀಂ

ಬೆಂಗಳೂರು: ಕೇಂದ್ರ ಸರ್ಕಾರ ಹಮ್ಮಿಕೊಂಡಿರುವ ಜನ ಗಣತಿ 2027ರ ಅಂಗವಾಗಿ ಸ್ವಯಂ ಗಣತಿ ವ್ಯವಸ್ಥೆ ಪರಿಚಯಿಸಿದ್ದು, ಇಂದು ಬುಧವಾರ(ಏ.1) ಕರ್ನಾಟಕ ರಾಜ್ಯದ ಪೊಲೀಸ್ ಮಹಾನಿರ್ದೇಶಕರು ಮತ್ತು ಆರಕ್ಷಕ ಮಹಾನಿರೀಕ್ಷಕರಾದ ಡಾ.ಎಂ.ಎ.ಸಲೀಂ ಅವರು ಅವರು ತಮ್ಮ ಕಚೇರಿಯಲ್ಲಿ ಮೊಬೈಲ್ ಮೂಲಕ ಸ್ವಯಂ ಗಣತಿ ದಾಖಲಾತಿ ಪೂರ್ಣಗೊಳಿಸಿದರು.

ಕರ್ನಾಟಕ ರಾಜ್ಯದ ಜನಗಣತಿ ನಿರ್ದೇಶಕರಾದ ರಾಮಚಂದ್ರನ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. 2026 ರ ಏಪ್ರಿಲ್ 1 ರಿಂದ 15 ರವರೆಗೆ ಎಲ್ಲಾ ನಾಗರಿಕರು ಅಧಿಕೃತ ಪೋರ್ಟಲ್ se.census.gov.in ಮೂಲಕ ತಮ್ಮ ಮಾಹಿತಿಯನ್ನು ಆನ್ಲೈನ್ನಲ್ಲಿ ದಾಖಲಿಸಿಕೊಳ್ಳಬಹುದು ಎಂದು ತಿಳಿಸಿದರು.

“ನಮ್ಮ ಜನಗಣತಿ – ನಮ್ಮ ಅಭಿವೃದ್ಧಿ” ಎಂಬ ಧ್ಯೇಯ ವಾಕ್ಯದೊಂದಿಗೆ ಸರ್ಕಾರ ಜನಗಣತಿ 2027 ಹಮ್ಮಿಕೊಂಡಿದ್ದು, ಇದರ ಅಂಗವಾಗಿ ಸರ್ಕಾರ ಸ್ವಯಂ ಗಣತಿ ವ್ಯವಸ್ಥೆಯನ್ನು ಪರಿಚಯಿಸಿದೆ. ಈ ಪ್ರಕ್ರಿಯೆ ಅತ್ಯಂತ ಸರಳ ಮತ್ತು ಸುರಕ್ಷಿತವಾಗಿದ್ದು, ನಾಗರಿಕರು ಯಾವುದೇ ಆತಂಕವಿಲ್ಲದೇ ಸ್ವಯಂ ಮಾಹಿತಿಯನ್ನು ದಾಖಲಿಸಬಹುದು ಎಂದರು.

ಕರ್ತವ್ಯ ಲೋಪ ಆರೋಪ: ಮುನಿರಾಬಾದ್ PSI ಅಮಾನತು

ಕೊಪ್ಪಳ: ಆಡಳಿತಾತ್ಮಕ ಕಾರ್ಯಗಳಲ್ಲಿ ನಿರ್ಲಕ್ಷ್ಯ ತೋರಿದ ಆರೋಪದ ಹಿನ್ನೆಲೆಯಲ್ಲಿ ಮುನಿರಾಬಾದ್ ಪೊಲೀಸ್ ಠಾಣೆಯ ಪಿಎಸ್ಐ ಸುನೀಲ್ ಅವರನ್ನು ಅಮಾನತು ಮಾಡಲಾಗಿದೆ.

ಜಿಲ್ಲಾ ಪೊಲೀಸ್ ಅಧೀಕ್ಷಕರಾದ ರಾಮ್ ಅರಸಿದ್ಧಿ ಅವರು ಸಂಬಂಧ ಆದೇಶ ಹೊರಡಿಸಿದ್ದು, ಕಳೆದ ಎರಡು ವರ್ಷಗಳಿಂದ ಮುನಿರಾಬಾದ್ ಠಾಣೆಯಲ್ಲಿ ಪಿಎಸ್ಐ ಆಗಿ ಕಾರ್ಯನಿರ್ವಹಿಸುತ್ತಿದ್ದ ಸುನೀಲ್ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.

ಇತ್ತೀಚೆಗೆ ಮುನಿರಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಿದೇಶಿಗರ ಪಾರ್ಟಿ, ಅಕ್ರಮ ಕಲ್ಲು ಗಣಿಗಾರಿಕೆ ಹಾಗೂ ಅನ್ನಭಾಗ್ಯ ಅಕ್ಕಿ ಅಕ್ರಮ ಮಾರಾಟ ಸೇರಿದಂತೆ ಹಲವು ಅನಧಿಕೃತ ಚಟುವಟಿಕೆಗಳು ಬೆಳಕಿಗೆ ಬಂದಿದ್ದವು. ಘಟನೆಗಳನ್ನು ಸಮರ್ಪಕವಾಗಿ ನಿಯಂತ್ರಿಸಲು ವಿಫಲವಾದ ಹಿನ್ನೆಲೆಯಲ್ಲಿ ಆಡಳಿತಾತ್ಮಕ ವೈಫಲ್ಯ ಆರೋಪದಡಿ ಅವರನ್ನು ಅಮಾನತು ಮಾಡಲಾಗಿದೆ.

ಕ್ರಮದಿಂದ ಇಲಾಖೆಯಲ್ಲಿ ಜವಾಬ್ದಾರಿತನವನ್ನು ಬಲಪಡಿಸುವ ಸಂದೇಶ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಹೋದ್ಯೋಗಿಗೆ ಕಿರುಕುಳ ಆರೋಪ: ನರ್ಸಿಂಗ್ ಕೌನ್ಸಿಲ್ ರಿಜಿಸ್ಟ್ರಾರ್ ಅರೆಸ್ಟ್!

0

ಬೆಂಗಳೂರು: ಮಹಿಳಾ ಸಹೋದ್ಯೋಗಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಕರ್ನಾಟಕ ರಾಜ್ಯ ನರ್ಸಿಂಗ್ ಕೌನ್ಸಿಲ್ ಕಚೇರಿಯ ರಿಜಿಸ್ಟ್ರಾರ್ ಡಾ. ಮಲ್ಲುರನ್ನು ಉಪ್ಪಾರಪೇಟೆ ಪೊಲೀಸರು ಬಂಧಿಸಿದ್ದಾರೆ.

ಗಾಂಧಿನಗರದಲ್ಲಿರುವ ಕರ್ನಾಟಕ ನರ್ಸಿಂಗ್ ಕೌನ್ಸಿಲ್ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳೆಯೊಬ್ಬರು, ಡಾ. ಮಲ್ಲು ತಮ್ಮೊಂದಿಗೆ ಅಸಭ್ಯವಾಗಿ ವರ್ತಿಸಿ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಮಾರ್ಚ್ 26ರಂದು ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಸಂಬಂಧ ಆರೋಪಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿತ್ತು. ಆದರೆ ಅವರು ಪ್ರತಿಕ್ರಿಯಿಸದ ಹಿನ್ನೆಲೆಯಲ್ಲಿ ಮಂಗಳವಾರ ಅವರನ್ನು ಪೊಲೀಸರು ವಶಕ್ಕೆ ಪಡೆದು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ. ನಂತರ ನ್ಯಾಯಾಲಯವು ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಕುರಿತು ಮಾಹಿತಿ ನೀಡಿದ ಬೆಂಗಳೂರು ಪಶ್ಚಿಮ ವಿಭಾಗದ ಡಿಸಿಪಿ ಯತೀಶ್ ಎನ್., ಪ್ರಕರಣದ ತನಿಖೆ ಮುಂದುವರಿದಿದ್ದು, ಮುಂದಿನ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಬಡಾವಣೆ ಪೊಲೀಸರ ಕಾರ್ಯಾಚರಣೆ: ಬೈಕ್ ಕಳ್ಳತನ ಮಾಡಿದ್ದ ಆರೋಪಿ ಬಂಧನ, 4 ಬೈಕ್ʼಗಳ ಜಪ್ತಿ

ಗದಗ: ನಗರದ ಬೆಟಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಮೋಟಾರ್ ಸೈಕಲ್ ಕಳ್ಳತನ ಪ್ರಕರಣವನ್ನು ಪೊಲೀಸರು ಯಶಸ್ವಿಯಾಗಿ ಭೇದಿಸಿ, ಆರೋಪಿಯನ್ನು ಬಂಧಿಸಿದ್ದಾರೆ.

2025ರ ನವೆಂಬರ್ 5ರಂದು ಹೊಂಡಾ ಆಕ್ಟಿವಾ (KA-26/ED-1568) ಬೈಕ್ ಕಳುವಾಗಿದ್ದ ಕುರಿತು ಗುನ್ನಾ ಸಂಖ್ಯೆ 97/2025, ಕಲಂ 303(2) ಬಿಎನ್‌ಎಸ್-2023 ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಗಂಗಾಪೂರ ಪೇಟದ ಶಿವು ನಡಗೇರಿ ಅವರು ಈ ಕುರಿತು ದೂರು ನೀಡಿದ್ದರು.

ಜಿಲ್ಲಾ ಪೊಲೀಸ್ ಅಧೀಕ್ಷಕರಾದ ರೋಹನ್ ಜಗದೀಶ್ ಹಾಗೂ ಉಪಾಧೀಕ್ಷಕರಾದ ಮುರ್ತುಜಾ ಖಾದ್ರಿ ಅವರ ಮಾರ್ಗದರ್ಶನದಲ್ಲಿ, ಸಿಪಿಐ ಧೀರಜ್ ಬಿ. ಸಿಂಧೆ ನೇತೃತ್ವದಲ್ಲಿ

ಸಿ.ಪಿ.ಐ ಧೀರಜ್ ಬಿ. ಸಿಂಧೆ, ಪಿ.ಎಸ್.ಐ ಮಾರುತಿ ಎಸ್. ಜೋಗದಂಡಕರ್, ಎಎಸ್ಐ‌ ಐ.ಎಸ್ ಲಮಾಣಿ, ಸಿಬ್ಬಂದಿಗಳಾದ ಎನ್.ಡಿ ಹುಬ್ಬಳ್ಳಿ, ಎಸ್.ಎಚ್ ಡೋಣಿ, ಪರಶುರಾಮ. ಎಚ್ ದೊಡಮನಿ,ಅಶೋಕ ಗದಗ, ನಾಗರಾಜ್ ಬರಡಿ, ಪ್ರವೀಣ್ ಕಲ್ಲೂರ,ಅಕ್ಷಯ ಕುಮಾರ್ ಬದಾಮಿ, ಖಯ್ಯುಮ್ ಲಕ್ಕುಂಡಿ ಒಳಗೊಂಡ ವಿಶೇಷ ಪೊಲೀಸ್ ತಂಡವನ್ನು ರಚಿಸಲಾಗಿತ್ತು.

ತಂಡದ ಕಾರ್ಯಾಚರಣೆಯಲ್ಲಿ ಮುಂಡರಗಿ ತಾಲೂಕಿನ ಡಂಬಳ ಗ್ರಾಮದ ಮಧುಸೂಧನ ತಂದೆ ಷಣ್ಮುಖಪ್ಪ ಕುಂತಿಕಲ ವಯಸ್ಸು (25) ಜಾತಿ-ಹಿಂದೂ ಲಿಂಗಾಯತ ಎಂಬಾತ ವೃತ್ತಿಯಲ್ಲಿ ಗೌಂಡಿ ಕೆಲಸ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಲಾಗಿದೆ.

ಪೊಲೀಸರ ವಿಚಾರಣೆ ವೇಳೆ ಆರೋಪಿಯು ಗದಗ ನಗರದಲ್ಲಿ 1, ಸಿಂಧನೂರಿನಲ್ಲಿ 2 ಹಾಗೂ ಗಂಗಾವತಿಯಲ್ಲಿ 1 ಬೈಕ್ ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ. ಇದಲ್ಲದೆ, ಕೊಪ್ಪಳ ಜಿಲ್ಲೆಯಲ್ಲಿ ಮಹಿಳೆಯ ತಾಳಿ ಸರ ಕಳವು ಪ್ರಕರಣದಲ್ಲೂ ಭಾಗಿಯಾಗಿರುವುದು ತಿಳಿದು ಬಂದಿದೆ.

ಆರೋಪಿಯಿಂದ ಹೊಂಡಾ ಆಕ್ಟಿವಾ (₹30,000), ಹೊಂಡಾ ಸಿಬಿ ಶೈನ್ (₹35,000), ಹೊಂಡಾ ಯುನಿಕಾರ್ನ್ (₹45,000) ಮತ್ತು ಹೀರೋ HF ಡಿಲಕ್ಸ್ (₹25,000) ಸೇರಿ ಒಟ್ಟು ₹1,35,000 ಮೌಲ್ಯದ ನಾಲ್ಕು ಮೋಟಾರ್ ಸೈಕಲ್‌ಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯವರ ಕಾರ್ಯಕ್ಷಮತೆಯನ್ನು ಹಿರಿಯ ಅಧಿಕಾರಿಗಳು ಪ್ರಶಂಸಿ, ಬಹುಮಾನ ಘೋಷಿಸಿದ್ದಾರೆ.

NDA ಒಕ್ಕೂಟಕ್ಕೆ ಅಸ್ಸಾಂ ಜನರು ಮತ್ತೊಮ್ಮೆ ಆಶೀರ್ವಾದ ನೀಡಲಿದ್ದಾರೆ: ಪ್ರಧಾನಿ ಮೋದಿ

0

ಗುವಾಹಟಿ: ಕಳೆದ ಹತ್ತು ವರ್ಷಗಳಲ್ಲಿ ಅಸ್ಸಾಂ ರಾಜ್ಯವು ಮಹತ್ವದ ಅಭಿವೃದ್ಧಿಯನ್ನು ಕಂಡಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಬಿಜೆಪಿ ನೇತೃತ್ವದ ಎನ್ಡಿಎ ಒಕ್ಕೂಟಕ್ಕೆ ಜನರು ಮತ್ತೊಮ್ಮೆ ಆಶೀರ್ವಾದ ನೀಡಲಿದ್ದಾರೆ ಎಂಬ ವಿಶ್ವಾಸವನ್ನೂ ವ್ಯಕ್ತಪಡಿಸಿದ್ದಾರೆ.

ಗೋಗಮುಖ್ನಲ್ಲಿ ನಡೆದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಜನರಲ್ಲಿರುವ ಉತ್ಸಾಹವು ನಿರಂತರ ಅಭಿವೃದ್ಧಿ ಮತ್ತು ಸ್ಥಿರ ಆಡಳಿತದ ಮೇಲೆ ಇರುವ ನಂಬಿಕೆಯನ್ನು ತೋರಿಸುತ್ತದೆ ಎಂದರು. ಬಾರಿ ನಡೆಯುವ ಚುನಾವಣೆಯು ಅಭಿವೃದ್ಧಿ ಹೊಂದಿದ ಭಾರತದ ದಿಕ್ಕಿನಲ್ಲಿ ಮಹತ್ವದ ಹೆಜ್ಜೆಯಾಗಲಿದೆ ಎಂದು ಹೇಳಿದರು.

ಅಸ್ಸಾಂನಲ್ಲಿ ಬಿಜೆಪಿ ಮತ್ತೆ ಸರ್ಕಾರ ರಚಿಸಿ ಹ್ಯಾಟ್ರಿಕ್ ಗೆಲುವು ಸಾಧಿಸುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಮೋದಿ, ರಾಜ್ಯದ ಜನರು ಮತ್ತೊಮ್ಮೆ ಕಾಂಗ್ರೆಸ್ ಪಕ್ಷವನ್ನು ತಿರಸ್ಕರಿಸಲು ಸಿದ್ಧರಾಗಿದ್ದಾರೆ ಎಂದರು. ಇದೇ ವೇಳೆ ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿ, “ಸ್ವಯಂ ಘೋಷಿತ ರಾಜಕುಮಾರನಿಗೆ ಇದು ಹ್ಯಾಟ್ರಿಕ್ ಸೋಲು ಆಗಲಿದೆಎಂದು ಟೀಕಿಸಿದರು.

ಚುನಾವಣೆ ಘೋಷಣೆಯಾದ ನಂತರ ಅಸ್ಸಾಂನಲ್ಲಿ ಇದು ತನ್ನ ಮೊದಲ ಸಾರ್ವಜನಿಕ ಸಭೆಯಾಗಿದ್ದು, ಇಲ್ಲಿ ಕಂಡುಬರುವ ಜನಸಾಗರವೇ ಮೂರನೇ ಬಾರಿ ಗೆಲುವು ಖಚಿತ ಎಂಬುದಕ್ಕೆ ಸಾಕ್ಷಿ ಎಂದು ಮೋದಿ ಹೇಳಿದ್ದಾರೆ. ತಮ್ಮ ನಾಯಕತ್ವದಲ್ಲಿ ದೇಶದಲ್ಲಿ ಹ್ಯಾಟ್ರಿಕ್ ಸಾಧನೆಯಾಗಿರುವುದನ್ನು ಉಲ್ಲೇಖಿಸಿ, ಅಸ್ಸಾಂದಲ್ಲೂ ಅದೇ ರೀತಿಯ ಫಲಿತಾಂಶ ಬರುತ್ತದೆ ಎಂಬ ಆಶಾಭಾವನೆ ವ್ಯಕ್ತಪಡಿಸಿದರು.

error: Content is protected !!