ಬೆಂಗಳೂರು: ಕರ್ನಾಟಕ ರಾಜ್ಯದ ಜೈಲುಗಳಲ್ಲಿ ನಡೆಯುತ್ತಿದ್ದ ಅಕ್ರಮ ಚಟುವಟಿಕೆಗಳು ಮತ್ತು ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಕಾರಾಗೃಹ ಡಿಜಿಪಿ ಅಲೋಕ್ ಕುಮಾರ್ ಮಹತ್ವದ ಬದಲಾವಣೆಗಳನ್ನು ಜಾರಿಗೆ ತಂದಿದ್ದಾರೆ.
ರಾಜ್ಯದ ವಿವಿಧ ಜೈಲುಗಳಲ್ಲಿ ಹಲವು ವರ್ಷಗಳಿಂದ ಒಂದೇ ಬ್ಯಾರಕ್ನಲ್ಲಿ ಉಳಿದಿದ್ದ ಕೈದಿಗಳಿಗೆ ಇದೀಗ ಬಿಗ್ ಶಾಕ್ ಎದುರಾಗಿದೆ. ಸುಮಾರು 10 ರಿಂದ 20 ವರ್ಷಗಳ ಕಾಲ ಒಂದೇ ಬ್ಯಾರಕ್ನಲ್ಲಿ ನೆಲೆಸಿದ್ದ ಕೈದಿಗಳ ಬ್ಯಾರಕ್ಗಳನ್ನು ಬದಲಾಯಿಸಲು ಸೂಚನೆ ನೀಡಲಾಗಿದೆ.
ಹೊಸ ನಿಯಮದ ಪ್ರಕಾರ, ಇನ್ನು ಮುಂದೆ ಕೈದಿಗಳಿಗೆ ಆಲ್ಫಾಬೆಟಿಕ್ ಆಧಾರದ ಮೇಲೆ ಬ್ಯಾರಕ್ ಹಂಚಿಕೆ ಮಾಡಲಾಗುತ್ತದೆ. ಇದರಿಂದ ಕೈದಿಗಳು ತಮ್ಮ ಇಚ್ಛೆಯ ಬ್ಯಾರಕ್ ಆಯ್ಕೆ ಮಾಡಿಕೊಳ್ಳುವ ಅವಕಾಶಕ್ಕೆ ತೆರೆ ಬೀಳಲಿದೆ.
ಜೈಲುಗಳಲ್ಲಿ ಮೊಬೈಲ್ ಫೋನ್ಗಳ ಅಕ್ರಮ ಬಳಕೆ, ಪ್ರಭಾವಶಾಲಿ ಕೈದಿಗಳ ದಬ್ಬಾಳಿಕೆ ಹಾಗೂ ಕೆಲವು ಜೈಲಾಧಿಕಾರಿಗಳ ಮೂಲಕ ನಡೆಯುತ್ತಿದ್ದ ಭ್ರಷ್ಟಾಚಾರವನ್ನು ನಿಯಂತ್ರಿಸಲು ಈ ಕ್ರಮ ಸಹಾಯಕವಾಗಲಿದೆ ಎಂದು ಮೂಲಗಳು ತಿಳಿಸಿವೆ.
ಹಿರಿಯ ಕೈದಿಗಳು ತಮ್ಮ ಪ್ರಭಾವ ಬಳಸಿ ಅನುಕೂಲಕರ ಸೆಲ್ಗಳನ್ನು ಪಡೆಯುವುದು ಹಾಗೂ ಇತರ ಕೈದಿಗಳೊಂದಿಗೆ ಡೀಲ್ ನಡೆಸುವಂತಹ ಚಟುವಟಿಕೆಗಳಿಗೂ ಹೊಸ ವ್ಯವಸ್ಥೆ ಅಡ್ಡಿಯಾಗಲಿದೆ.
ರಾಜ್ಯದ ಎಲ್ಲಾ ಜೈಲುಗಳಲ್ಲಿ ಈ ಹೊಸ ನಿಯಮ ಜಾರಿಗೊಂಡಿದ್ದು, ಬೆಂಗಳೂರು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹವೂ ಈ ಕ್ರಮದ ವ್ಯಾಪ್ತಿಗೆ ಬಂದಿದೆ.

