Home Blog

ರಾಷ್ಟ್ರೀಯ ವೇದಿಕೆಯಲ್ಲಿ ಧಾರವಾಡದ ಗರಿಮೆ: ಬಾಲಚಂದ್ರ ತೊದಲಬಾಗಿ ಸಾಧನೆಗೆ ಕಿರೀಟ

0

ವಿಜಯಸಾಕ್ಷಿ ಸುದ್ದಿ, ಧಾರವಾಡ/ಬೆಂಗಳೂರು: ಸಾರಿಗೆ ಜಾರಿ ಕ್ಷೇತ್ರದಲ್ಲಿ ಕಠಿಣ ನಿಯಮ ಪಾಲನೆ ಹಾಗೂ ಪರಿಣಾಮಕಾರಿ ಕಾರ್ಯಾಚರಣೆಯ ಮೂಲಕ ರಾಜ್ಯಕ್ಕೆ ಮಾದರಿಯಾದ ಸೇವೆ ಸಲ್ಲಿಸಿದ ಧಾರವಾಡ ಜಿಲ್ಲೆಯ ಹಿರಿಯ IMV ಅಧಿಕಾರಿ ಬಾಲಚಂದ್ರ ತೊದಲಬಾಗಿ ಅವರು ರಾಷ್ಟ್ರಮಟ್ಟದಲ್ಲಿ ಮತ್ತೊಮ್ಮೆ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ.

ಆಲ್ ಇಂಡಿಯಾ ಫೆಡರೇಶನ್ ಆಫ್ ಮೋಟರ್ ವಾಹನ ಇಲಾಖೆ ತಾಂತ್ರಿಕ ಕಾರ್ಯನಿರ್ವಹಣಾಧಿಕಾರಿಗಳ ಸಂಘದ ವತಿಯಿಂದ ನೀಡುವ ಪ್ರತಿಷ್ಠಿತ “ರಾಷ್ಟ್ರೀಯ ಸಾರಿಗೆ ಜಾರಿಗೆ ಅತ್ಯುತ್ತಮತೆ ಪ್ರಶಸ್ತಿ – 2026” ಅವರಿಗೆ ಲಭಿಸಿದೆ. ಸಾರಿಗೆ ನಿಯಮ ಉಲ್ಲಂಘನೆ ವಿರುದ್ಧ ಕಟ್ಟುನಿಟ್ಟಿನ ಕ್ರಮ, ಪರಿಣಾಮಕಾರಿ ಜಾರಿ ಕಾರ್ಯ ಹಾಗೂ ದಾಖಲೆಯ ಮಟ್ಟದಲ್ಲಿ ದಂಡ ಸಂಗ್ರಹ (ಚಲನ್) ಮತ್ತು ಆದಾಯ ಹೆಚ್ಚಳಕ್ಕೆ ಕಾರಣವಾದ ಸಾಧನೆ ಈ ಗೌರವಕ್ಕೆ ಕಾರಣವಾಗಿದೆ.

ಮಾದರಿಯಾದ ಸೇವೆಗೆ ರಾಷ್ಟ್ರೀಯ ಮನ್ನಣೆ

ಬಾಲಚಂದ್ರ ತೊದಲಬಾಗಿ ಅವರು ತಮ್ಮ ಕರ್ತವ್ಯದಲ್ಲಿ ತೋರಿದ ನಿಷ್ಠೆ, ಸಮರ್ಪಣೆ ಹಾಗೂ ಪ್ರಾಮಾಣಿಕತೆಯಿಂದ ಸಾರಿಗೆ ಜಾರಿ ಕ್ಷೇತ್ರದಲ್ಲಿ ಮಾದರಿಯಾಗಿ ಹೊರಹೊಮ್ಮಿದ್ದಾರೆ. ಸಾರ್ವಜನಿಕ ಸುರಕ್ಷತೆ ಮತ್ತು ಕಾನೂನು ಪಾಲನೆಗೆ ಒತ್ತು ನೀಡಿದ ಅವರ ಕಾರ್ಯಪದ್ಧತಿ ಇದೀಗ ರಾಷ್ಟ್ರಮಟ್ಟದಲ್ಲಿ ಗುರುತಿಸಲ್ಪಟ್ಟಿದೆ.

ಬೆಂಗಳೂರಿನಲ್ಲಿ ಭವ್ಯ ಸಮಾರಂಭ

ಎಪ್ರಿಲ್ 10, 2026 ರಂದು ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಗಣ್ಯರ ಸಮ್ಮುಖದಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

“ಕರ್ತವ್ಯವೇ ನನ್ನ ಮೊದಲ ಆದ್ಯತೆ”

“ಸಾರಿಗೆ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವುದು ಜನರ ಜೀವ ರಕ್ಷಣೆಗಾಗಿ ಅತ್ಯಂತ ಮುಖ್ಯ. ಈ ಪ್ರಶಸ್ತಿ ನನ್ನ ಹೊಣೆಗಾರಿಕೆಯನ್ನು ಇನ್ನಷ್ಟು ಹೆಚ್ಚಿಸಿದೆ” ಎಂದು ಬಾಲಚಂದ್ರ ತೊದಲಬಾಗಿ ಪ್ರತಿಕ್ರಿಯಿಸಿದರು.

ಸ್ಥಳೀಯರು, ಸಹೋದ್ಯೋಗಿಗಳು ಹಾಗೂ ಗಣ್ಯರು ಅವರ ಸಾಧನೆಗೆ ಹರ್ಷ ವ್ಯಕ್ತಪಡಿಸಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಆಘಾತ: ರಸ್ತೆ ಅಪಘಾತದಲ್ಲಿ ನಟ ಹರೀಶ್ ಸ್ಥಳದಲ್ಲೇ ಸಾವು

ಮಡಿಕೇರಿ: ಕನ್ನಡ ಚಿತ್ರರಂಗ ಮತ್ತು ಕಿರುತೆರೆ ಲೋಕಕ್ಕೆ ಮತ್ತೊಂದು ದುಃಖದ ಸುದ್ದಿ ಲಭಿಸಿದೆ. ಸಹ ಕಲಾವಿದ ಹರೀಶ್ (40) ತಡರಾತ್ರಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.

ಕುಶಾಲನಗರ ತಾಲ್ಲೂಕಿನ ಆನೆಕಾಡು ಅರಣ್ಯ ಪ್ರದೇಶದ ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಈ ಅಪಘಾತ ಸಂಭವಿಸಿದೆ. ಕೆಲಸ ಮುಗಿಸಿ ತಮ್ಮ ಸ್ವಗ್ರಾಮ ಹೊಸಕೋಟೆ ಕಡೆಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ, ರಸ್ತೆ ಬದಿಯಲ್ಲಿ ನಿಂತಿದ್ದ ಟ್ಯಾಂಕರ್‌ಗೆ ಕಾರು ಡಿಕ್ಕಿ ಹೊಡೆದಿದೆ.

ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಹರೀಶ್ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

ಹರೀಶ್ ಅವರು ಕನ್ನಡ ಸಿನಿಮಾಗಳಲ್ಲಿ ಸಹ ಕಲಾವಿದನಾಗಿ ಹಾಗೂ ಜನಪ್ರಿಯ ಕಿರುತೆರೆ ಧಾರಾವಾಹಿಗಳಲ್ಲಿ ಅಭಿನಯಿಸುವ ಮೂಲಕ ತಮ್ಮದೇ ಆದ ಗುರುತನ್ನು ಮೂಡಿಸಿಕೊಂಡಿದ್ದರು. ಬಹುಮುಖ ಪ್ರತಿಭೆ ಹೊಂದಿದ್ದ ಅವರು ಚಿತ್ರರಂಗದಲ್ಲಿ ತಮ್ಮದೇ ಸ್ಥಾನ ನಿರ್ಮಿಸಿಕೊಂಡಿದ್ದರು.

ಅವರ ಅಕಾಲಿಕ ನಿಧನದಿಂದ ಕಲಾ ವಲಯದಲ್ಲಿ ಶೋಕದ ಛಾಯೆ ಆವರಿಸಿದೆ.

ಮಂಗಳೂರು! ಪಂಪ್‌ವೆಲ್‌ನಲ್ಲಿ ಭೀಕರ ಅಪಘಾತ: ಬೈಕ್ ಸವಾರ ಸ್ಥಳದಲ್ಲೇ ಸಾವು

ಮಂಗಳೂರು: ಇಲ್ಲಿನ ಪಂಪ್‌ವೆಲ್ ಪ್ರದೇಶದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಬೈಕ್ ಸವಾರನೊಬ್ಬ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಡೆದಿದೆ.

ಮೃತರನ್ನು ಬೆಳ್ತಂಗಡಿ ತಾಲೂಕಿನ ಕಳೆಂಜ ಗ್ರಾಮದ ನಿವಾಸಿ ಗೋಪಾಲ್ (29) ಎಂದು ಗುರುತಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ 66ರ ನಂತೂರು–ಪಂಪ್‌ವೆಲ್ ಸರ್ವಿಸ್ ರಸ್ತೆಯಲ್ಲಿ ಈ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ.

ಮಾಹಿತಿಯ ಪ್ರಕಾರ, ಬೈಕ್ ಸವಾರ ಗೋಪಾಲ್ ಅವರು ಸಂಚರಿಸುತ್ತಿದ್ದ ವೇಳೆ ಟಿಪ್ಪರ್ ಲಾರಿ ಡಿಕ್ಕಿ ಹೊಡೆದಿದ್ದು, ಪರಿಣಾಮ ಅವರು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಘಟನೆಯ ನಂತರ ಸ್ಥಳೀಯರು ಮತ್ತು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಸಂಚಾರಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಹಾಸನ: ಮಗಳ ಸಾವಿನಲ್ಲೂ ಸಾರ್ಥಕತೆ ಮೆರೆದ ಪೋಷಕರು: ಬ್ರೈನ್ ಡೆಡ್ ಆಗಿದ್ದ ಯುವತಿಯ ಅಂಗಾಂಗ ದಾನ

ಹಾಸನ: ಭೀಕರ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಮೆದುಳು ನಿಷ್ಕ್ರಿಯಗೊಂಡ ಯುವತಿಯ ಸಾವಿನ ನಡುವೆ ಮಾನವೀಯತೆಯ ಸ್ಪರ್ಶ ಮೂಡಿಸಿದ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ.

ಅರಸೀಕೆರೆ ತಾಲೂಕಿನ ಕಾರೇಹಳ್ಳಿ ಗ್ರಾಮದ ಮೋನಿಕಾ (18), ಏಪ್ರಿಲ್ 5ರಂದು ಸಂಜೆ ಬಿ.ಹೆಚ್ ರಸ್ತೆಯ ಎಪಿಎಂಸಿ ಮಾರುಕಟ್ಟೆ ಸಮೀಪ ಸಂಭವಿಸಿದ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದರು. ತಲೆಗೆ ಭಾರೀ ಪೆಟ್ಟಾಗಿದ್ದರಿಂದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ನಂತರ ಮೆದುಳು ನಿಷ್ಕ್ರಿಯಗೊಂಡಿದೆ ಎಂದು ವೈದ್ಯರು ಖಚಿತಪಡಿಸಿದರು.

ಮಗಳ ಸ್ಥಿತಿ ಅರಿತ ಪೋಷಕರು ಮೊದಲಿಗೆ ದುಃಖದಲ್ಲಿ ಮುಳುಗಿದ್ದರೂ, ಬಳಿಕ ಧೈರ್ಯದಿಂದ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಅಂಗಾಂಗ ದಾನಕ್ಕೆ ಒಪ್ಪಿಗೆ ನೀಡಿ, ಐದು ಮಂದಿಗೆ ಹೊಸ ಜೀವನ ನೀಡಿದ್ದಾರೆ.

ಕೇವಲ 18 ವರ್ಷದಲ್ಲೇ ಜೀವನ ಕಳೆದುಕೊಂಡ ಮೋನಿಕಾ, ತನ್ನ ಕೊನೆಯ ಕ್ಷಣದಲ್ಲೇ ಮಾನವೀಯತೆಯ ಶ್ರೇಷ್ಠ ಸಂದೇಶವೊಂದನ್ನು ಬಿಟ್ಟು ಹೋಗಿದ್ದಾಳೆ. ಸಮಾಜಕ್ಕೆ ಮಾದರಿಯಾಗಿರುವ ಈ ಘಟನೆ, ಅಂಗಾಂಗ ದಾನದ ಮಹತ್ವವನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.

ಪೀಣ್ಯ ಎಲಿವೇಟೆಡ್ ಫ್ಲೈಓವರ್ ಬಂದ್ ಮುಂದೂಡಿಕೆ: ವಾಹನ ಸಂಚಾರಕ್ಕೆ ಮುಕ್ತ

ಬೆಂಗಳೂರು: ಪೀಣ್ಯ ಎಲಿವೇಟೆಡ್ ಫ್ಲೈಓವರ್‌ನಲ್ಲಿ ಏಪ್ರಿಲ್ 13ರಿಂದ 5 ದಿನಗಳ ಕಾಲ ವಾಹನ ಸಂಚಾರ ನಿರ್ಬಂಧಿಸಲಾಗುತ್ತದೆ ಎಂದು ಮೊದಲು ಘೋಷಿಸಲಾಗಿದ್ದ ನಿರ್ಧಾರವನ್ನು ಇದೀಗ ಮುಂದೂಡಲಾಗಿದೆ.

ಹೀಗಾಗಿ ನಾಳೆಯಿಂದ ಫ್ಲೈಓವರ್ ಎಂದಿನಂತೆ ವಾಹನ ಸಂಚಾರಕ್ಕೆ ಮುಕ್ತವಾಗಿರಲಿದೆ ಎಂದು ಬೆಂಗಳೂರು ನಗರ ಸಂಚಾರ ಪೊಲೀಸರು ತಿಳಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಕೇಬಲ್‌ಗಳ ದುರಸ್ತಿ ಕಾರ್ಯದ ನಂತರ ಫ್ಲೈಓವರ್‌ನ ಸುರಕ್ಷತಾ ಪರಿಶೀಲನೆಗಾಗಿ ಅಂತಿಮ ಲೋಡ್ ಟೆಸ್ಟಿಂಗ್ ನಡೆಸಲು ಮುಂದಾಗಿತ್ತು. ಈ ಹಿನ್ನೆಲೆಯಲ್ಲಿ ಏಪ್ರಿಲ್ 13ರಿಂದ 17ರವರೆಗೆ ಸಂಚಾರ ಬಂದ್ ಮಾಡುವ ಯೋಜನೆ ರೂಪಿಸಲಾಗಿತ್ತು.

ಆದರೆ ಕಾರಣಾಂತರಗಳಿಂದ ಲೋಡ್ ಟೆಸ್ಟಿಂಗ್ ಪ್ರಕ್ರಿಯೆಯನ್ನು ಮುಂದೂಡಲಾಗಿದ್ದು, ವಾಹನ ಸಂಚಾರ ನಿರ್ಬಂಧಿಸುವ ಅಗತ್ಯ ಇಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಈ ಕುರಿತು ಸಂಚಾರ ಪೊಲೀಸರು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಈ ನಡುವೆ ಸಂಚಾರ ಪೊಲೀಸರು NHAIಗೆ ಪತ್ರ ಬರೆದು, ಫ್ಲೈಓವರ್ ಬಂದ್ ಮಾಡಿದರೆ ಜಾಲಹಳ್ಳಿ ಕ್ರಾಸ್, ದಾಸರಹಳ್ಳಿ ಮತ್ತು 8ನೇ ಮೈಲಿಯಲ್ಲಿ ಭಾರೀ ಟ್ರಾಫಿಕ್ ಜಾಮ್ ಉಂಟಾಗುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಿದ್ದರು. ಜೊತೆಗೆ ಶಾಲೆಗಳಿಗೆ ರಜೆ ಇರುವ ಹಿನ್ನೆಲೆ ವಾಹನ ದಟ್ಟಣೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯೂ ಇತ್ತು ಎಂದು ತಿಳಿಸಿದ್ದರು.

ಮಂಡ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ಹಿನ್ನೆಲೆಯಲ್ಲಿ ಸಂಚಾರ ಒತ್ತಡ ಹೆಚ್ಚಾಗುವ ಸಾಧ್ಯತೆ ಇರುವ ಕಾರಣವೂ ಈ ನಿರ್ಧಾರಕ್ಕೆ ಕಾರಣವಾಗಿದೆ ಎಂದು ಮೂಲಗಳು ತಿಳಿಸಿವೆ.

ಒಟ್ಟಿನಲ್ಲಿ, ತಾತ್ಕಾಲಿಕ ಬಂದ್ ನಿರ್ಧಾರ ಹಿಂಪಡೆಯಲಾಗಿದ್ದು, ಪೀಣ್ಯ ಫ್ಲೈಓವರ್‌ನಲ್ಲಿ ವಾಹನ ಸಂಚಾರ ಮುಂದುವರಿಯಲಿದೆ.

ಬೆಂಗಳೂರಿನಲ್ಲಿ ಅಮಾನವೀಯ ಕೃತ್ಯ: ಬೊಗಳಿದ್ದಕ್ಕೆ ಸಾಕು ನಾಯಿ ಮೇಲೆ ಭೀಕರ ಹಲ್ಲೆ!

ಬೆಂಗಳೂರು: ಪಕ್ಕದ ಮನೆಯ ಸಾಕು ನಾಯಿಯೊಂದು ಬೊಗಳಿದ ಕಾರಣಕ್ಕೆ ವ್ಯಕ್ತಿಯೊಬ್ಬ ಕ್ರೌರ್ಯ ಮೆರೆದಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ಅವರೆಹಳ್ಳಿಯಲ್ಲಿ ನಡೆದಿದೆ.

ಈ ಘಟನೆಯಲ್ಲಿ ನಾಯಿಗೆ ಗಂಭೀರ ಗಾಯಗಳಾಗಿದ್ದು, ಸಿಸಿಟಿವಿಯಲ್ಲಿ ದೃಶ್ಯಗಳು ಸೆರೆಯಾಗಿವೆ.

ಆಂಜಿನಪ್ಪ ಎಂಬುವವರಿಗೆ ಸೇರಿದ “ಸ್ಕೂಬಿ” ಎಂಬ ಸಾಕು ನಾಯಿ, ನಿನ್ನೆ ಸಂಜೆ ಪಕ್ಕದ ಮನೆಯ ಮಹಿಳೆಯನ್ನು ನೋಡಿ ಬೊಗಳಿದಿದೆ ಎನ್ನಲಾಗಿದೆ. ಇದರಿಂದ ಆಕ್ರೋಶಗೊಂಡ ಪತಿ ಗೋಪಿ, ರಾತ್ರಿ ವೇಳೆ ಆಂಜಿನಪ್ಪ ಅವರ ಮನೆಗೆ ತೆರಳಿ ಗೇಟಿಗೆ ಕಟ್ಟಿದ್ದ ನಾಯಿಯ ಮೇಲೆ ಕಟ್ಟಿಗೆಯಿಂದ ಹಲ್ಲೆ ನಡೆಸಿದ್ದಾನೆ.

ಆರೋಪಿಯ ಹೊಡೆತಕ್ಕೆ ನಾಯಿ ಗಂಭೀರವಾಗಿ ಗಾಯಗೊಂಡು ಪ್ರಜ್ಞೆ ತಪ್ಪಿ ಬಿದ್ದಿದೆ. ತಕ್ಷಣವೇ ಮಾಲೀಕ ಆಂಜಿನಪ್ಪ ನಾಯಿ ಆಸ್ಪತ್ರೆಗೆ ಕರೆದೊಯ್ದಿದ್ದು, ಸದ್ಯ ಚಿಕಿತ್ಸೆ ಬಳಿಕ ಸ್ಕೂಬಿ ಪ್ರಾಣಾಪಾಯದಿಂದ ಪಾರಾಗಿದೆ ಎಂದು ತಿಳಿದುಬಂದಿದೆ.

ಘಟನೆ ಸಂಬಂಧ ನಾಯಿಗೆ ಹಲ್ಲೆ ನಡೆದ ದೃಶ್ಯಗಳು ಸಿಸಿಟಿವಿಯಲ್ಲಿ ದಾಖಲಾಗಿದ್ದು, ಈ ಕುರಿತು ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಕನಸುಗಳ ಗುಣಮಟ್ಟವೇ ನಿದ್ರೆಯ ಆರೋಗ್ಯಕ್ಕೆ ಕನ್ನಡಿ: ಹೊಸ ಸಂಶೋಧನೆ ಹೇಳಿದ್ದಿಷ್ಟು!

0

ರಾತ್ರಿ ನಿದ್ರೆಯ ವೇಳೆ ಕಾಣುವ ಕನಸುಗಳು ಕೇವಲ ಮನಸ್ಸಿನ ಕಲ್ಪನೆಗಳಲ್ಲ, ಅವು ನಮ್ಮ ನಿದ್ರೆಯ ಗುಣಮಟ್ಟವನ್ನು ಸೂಚಿಸುವ ಪ್ರಮುಖ ಸೂಚಕಗಳಾಗಿವೆ ಎಂಬ ಹೊಸ ವೈಜ್ಞಾನಿಕ ಅಧ್ಯಯನ ಬೆಳಕಿಗೆ ಬಂದಿದೆ.

ಇಟಲಿಯ ಐಎಂಟಿ ಇನ್ಸ್ಟಿಟ್ಯೂಟ್ ಫಾರ್ ಅಡ್ವಾನ್ಸ್ಡ್ ಸ್ಟಡೀಸ್‌ನ ಸಂಶೋಧಕರು ಈ ಕುರಿತು ಅಧ್ಯಯನ ನಡೆಸಿದ್ದಾರೆ.

ಸಂಶೋಧನೆಯ ಪ್ರಕಾರ, ಕನಸುಗಳ ಸ್ಪಷ್ಟತೆ ಮತ್ತು ನಿದ್ರೆಯ ಗುಣಮಟ್ಟದ ನಡುವೆ ನೇರ ಸಂಬಂಧವಿದೆ ಎಂದು ಕಂಡುಬಂದಿದೆ. ಒಟ್ಟು 44 ಆರೋಗ್ಯವಂತ ವ್ಯಕ್ತಿಗಳ ಮೇಲೆ ಈ ಅಧ್ಯಯನ ನಡೆಸಲಾಗಿದ್ದು, ಅವರ ನಿದ್ರೆಯ ಮಾದರಿಗಳನ್ನು ಪರಿಶೀಲಿಸಿ ರಾತ್ರಿ ವಿವಿಧ ಸಮಯಗಳಲ್ಲಿ ಎಬ್ಬಿಸಿ ಕನಸುಗಳ ವಿವರಗಳನ್ನು ಸಂಗ್ರಹಿಸಲಾಗಿದೆ.

ಅಧ್ಯಯನದಲ್ಲಿ ಗಾಢ ಹಾಗೂ ಸ್ಪಷ್ಟ ಕನಸುಗಳನ್ನು ಕಾಣುವವರು ಉತ್ತಮ ಗುಣಮಟ್ಟದ ನಿದ್ರೆ ಪಡೆಯುತ್ತಿರುವುದು ತಿಳಿದುಬಂದಿದೆ. ಇಂತಹವರು ಬೆಳಗ್ಗೆ ಎದ್ದಾಗ ಹೆಚ್ಚು ತಾಜಾತನ ಹಾಗೂ ಶಕ್ತಿಯುತವಾಗಿರುವುದು ಗಮನಿಸಲಾಗಿದೆ. ಅದೇ ವೇಳೆ ಅಸ್ಪಷ್ಟ ಅಥವಾ ಅರ್ಧಸಿದ್ಧ ಕನಸುಗಳನ್ನು ಕಾಣುವವರಲ್ಲಿ ನಿದ್ರೆಯ ಗುಣಮಟ್ಟ ಕಡಿಮೆ ಇರುವುದಾಗಿ ಸಂಶೋಧನೆ ಹೇಳಿದೆ.

ವಿಜ್ಞಾನಿಗಳ ಪ್ರಕಾರ, ಕನಸುಗಳ ಸಮಯದಲ್ಲಿ ಮೆದುಳಿನಲ್ಲಿ ನಡೆಯುವ ರಾಸಾಯನಿಕ ಚಟುವಟಿಕೆಗಳು ನಿದ್ರೆಯ ಗುಣಮಟ್ಟವನ್ನು ಪ್ರಭಾವಿತಗೊಳಿಸುತ್ತವೆ. ಉತ್ತಮ ನಿದ್ರೆ ದೇಹ ಮತ್ತು ಮನಸ್ಸಿನ ಆರೋಗ್ಯಕ್ಕೆ ಅತ್ಯಂತ ಮುಖ್ಯವಾಗಿದ್ದು, ಒತ್ತಡ ಕಡಿಮೆ ಮಾಡುವುದರ ಜೊತೆಗೆ ಹಲವು ಆರೋಗ್ಯ ಸಮಸ್ಯೆಗಳ ಅಪಾಯವನ್ನೂ ತಗ್ಗಿಸುತ್ತದೆ ಎಂದು ಅಧ್ಯಯನ ತಿಳಿಸಿದೆ.

ಒಟ್ಟಿನಲ್ಲಿ, ಕನಸುಗಳ ಸ್ವರೂಪವೇ ನಿದ್ರೆಯ ಆರೋಗ್ಯವನ್ನು ಅಳೆಯುವ ಒಂದು ಪ್ರಮುಖ ಮಾನದಂಡವಾಗಬಹುದು ಎಂಬುದನ್ನು ಈ ಸಂಶೋಧನೆ ಸೂಚಿಸಿದೆ.

ಭೀಕರ ಅಪಘಾತ: ಪತ್ನಿ ಎದುರೇ ನರಳಿ-ನರಳಿ ಪ್ರಾಣಬಿಟ್ಟ 45ರ ವ್ಯಕ್ತಿ!

ಬೆಂಗಳೂರು:- ಭೀಕರ ಅಪಘಾತದಲ್ಲಿ 45ರ ವ್ಯಕ್ತಿ ಪತ್ನಿಯ ಕಣ್ಣೆದುರೇ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಮೈಸೂರು ರಸ್ತೆಯ ಸ್ಯಾಟ್‌ಲೈಟ್ ಬಸ್ ನಿಲ್ದಾಣದ ಪಾರ್ಕಿಂಗ್ ಪ್ರದೇಶದಲ್ಲಿ ಜರುಗಿದೆ.

45 ವರ್ಷದ ಶ್ಯಾಮ್ ದೊರೆ ಮೃತ ವ್ಯಕ್ತಿ. ತಮಿಳುನಾಡಿಗೆ ತೆರಳಿ ಹಿಂದಿರುಗಿದ್ದ ಅವರು ಪತ್ನಿ ಜಯಶ್ರೀ ಎದುರೇ ನರಳಿ ನರಳಿ ಪ್ರಾಣ ಬಿಟ್ಟಿದ್ದಾರೆ ಎನ್ನಲಾಗಿದೆ. ಕಾರನ್ನು ರಿವರ್ಸ್ ತೆಗೆದುಕೊಳ್ಳುತ್ತಿದ್ದ ಅಪರಿಚಿತ ಚಾಲಕನ ನಿರ್ಲಕ್ಷ್ಯದಿಂದ ಈ ಅಪಘಾತ ಸಂಭವಿಸಿದ್ದು, ಅಲ್ಲೇ ನಿಂತಿದ್ದ ಬ್ಲಡ್ ಬ್ಯಾಂಕ್ ಬಸ್ ಹಾಗೂ ಕಾರಿನ ನಡುವೆ ಸಿಲುಕಿದ ಶ್ಯಾಮ್ ದೊರೆ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನೆ ಸಂಬಂಧ ಬ್ಯಾಟರಾಯಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಹಿಳಾ ಮೀಸಲಾತಿ ಕಾಯ್ದೆಗೆ ಸಂಪೂರ್ಣ ಬೆಂಬಲ ಕೋರಿ ಸಂಸದರಿಗೆ ಪ್ರಧಾನಿ ಮೋದಿ ಕರೆ!

0

ನವದೆಹಲಿ: ಮಹಿಳಾ ಮೀಸಲಾತಿ ಸಂಬಂಧಿತ ನಾರಿ ಶಕ್ತಿ ವಂದನಾ ಕಾಯ್ದೆ ತಿದ್ದುಪಡಿ ಕುರಿತು ಸಂಪೂರ್ಣ ಬೆಂಬಲ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಲೋಕಸಭೆ ಹಾಗೂ ರಾಜ್ಯಸಭೆಯ ಎಲ್ಲಾ ಸಂಸದೀಯ ಪಕ್ಷಗಳ ನಾಯಕರಿಗೆ ಪತ್ರ ಬರೆದಿದ್ದಾರೆ.

ಈ ಪತ್ರದಲ್ಲಿ ಪ್ರಧಾನಿ ಮೋದಿ ಅವರು ಏಪ್ರಿಲ್ 16ರಿಂದ ಆರಂಭವಾಗಲಿರುವ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಈ ಐತಿಹಾಸಿಕ ತಿದ್ದುಪಡಿಯನ್ನು ಸರ್ವಾನುಮತದಿಂದ ಅಂಗೀಕರಿಸುವಂತೆ ಮನವಿ ಮಾಡಿದ್ದಾರೆ. ಜೊತೆಗೆ ಮಹಿಳಾ ಪ್ರತಿನಿಧಿತ್ವವನ್ನು ಹೆಚ್ಚಿಸುವುದು ದೇಶದ ಪ್ರಗತಿಗೆ ಅತ್ಯಗತ್ಯ ಎಂದು ಅವರು ತಿಳಿಸಿದ್ದಾರೆ.

ಇದೇ ವೇಳೆ ಬಿಜೆಪಿ ತನ್ನ ಎಲ್ಲಾ ಸಂಸದರಿಗೆ ವಿಪ್ ಜಾರಿ ಮಾಡಿದ್ದು, ಏಪ್ರಿಲ್ 16, 17 ಹಾಗೂ 18ರಂದು ಸದನದಲ್ಲಿ ಹಾಜರಿರುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

ಮಹಿಳೆಯರಿಗೆ 33 ಶೇಕಡಾ ಮೀಸಲಾತಿ ಜಾರಿಗೆ ತರುವ ಈ ಕ್ರಮವು 2029ರ ಲೋಕಸಭೆ ಚುನಾವಣೆ ಹಾಗೂ ಮುಂದಿನ ವಿಧಾನಸಭಾ ಚುನಾವಣೆಗಳಲ್ಲಿ ಪರಿಣಾಮಕಾರಿ ಜಾರಿಗೆ ತರಲು ಉದ್ದೇಶಿಸಲಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಮಹಿಳಾ ಶಕ್ತಿ ದೇಶದ ಪ್ರತಿಯೊಂದು ಕ್ಷೇತ್ರದಲ್ಲೂ ತನ್ನ ಛಾಪು ಮೂಡಿಸುತ್ತಿದೆ ಎಂದು ಹೇಳಿರುವ ಪ್ರಧಾನಿ ಮೋದಿ, ಈ ತಿದ್ದುಪಡಿ ಭಾರತದ ಪ್ರಜಾಪ್ರಭುತ್ವವನ್ನು ಮತ್ತಷ್ಟು ಬಲಪಡಿಸುವ ಐತಿಹಾಸಿಕ ಹೆಜ್ಜೆಯಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

Asha Bhosle: ಪದ್ಮವಿಭೂಷಣ ಪುರಸ್ಕೃತೆ ಗಾಯಕಿ ಆಶಾ ಭೋಸ್ಲೆ ನಿಧನ!

0

ಮುಂಬೈ:- ಪದ್ಮವಿಭೂಷಣ ಪುರಸ್ಕೃತ ಖ್ಯಾತ ಹಿನ್ನೆಲೆ ಗಾಯಕಿ ಆಶಾ ಭೋಸ್ಲೆ (92) ಅವರು ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ.

ಹೃದಯಾಘಾತದಿಂದ ಆಸ್ಪತ್ರೆಗೆ ದಾಖಲಾಗಿದ್ದ ಅವರು, ವೈದ್ಯರ ಶ್ರಮದ ನಡುವೆಯೂ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ವಯೋಸಹಜ ಸಮಸ್ಯೆಗಳಿಂದಲೂ ಅವರು ಬಳಲುತ್ತಿದ್ದರು ಎಂದು ತಿಳಿದುಬಂದಿದೆ.

ಹಿಂದಿ ಮಾತ್ರವಲ್ಲದೆ ಕನ್ನಡ ಸೇರಿದಂತೆ ಸುಮಾರು 20ಕ್ಕೂ ಹೆಚ್ಚು ಭಾಷೆಗಳಲ್ಲಿ 12,000ಕ್ಕೂ ಅಧಿಕ ಹಾಡುಗಳನ್ನು ಹಾಡಿರುವ ಆಶಾ ಭೋಸ್ಲೆ ಅವರು, ಪಾಪ್, ಗಜಲ್ ಹಾಗೂ ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲೂ ಅಪಾರ ಹೆಸರು ಗಳಿಸಿದ್ದರು.

ಅವರ ನಿಧನಕ್ಕೆ ಸಂಗೀತ ಕ್ಷೇತ್ರದ ಗಣ್ಯರು ಹಾಗೂ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.

error: Content is protected !!