ತಮಿಳುನಾಡು ಸರ್ಕಾರವೇ ಸ್ವಂತ ಒಟಿಟಿ ಪ್ಲಾಟ್ಫಾರ್ಮ್ ಆರಂಭಿಸಬೇಕು ಎಂದು ನಟ ವಿಜಯ್ ಸೇತುಪತಿ ಮುಖ್ಯಮಂತ್ರಿ ವಿಜಯ್ ಅವರಿಗೆ ನೇರ ಸಲಹೆ ನೀಡಿದ್ದಾರೆ. ಪ್ರಾದೇಶಿಕ ಸಿನಿಮಾಗಳ ಉಳಿವು ಮತ್ತು ಬೆಳವಣಿಗೆಗಾಗಿ ಇದು ಅತ್ಯಗತ್ಯ ಹೆಜ್ಜೆಯಾಗಲಿದೆ ಎಂದು ಅವರು ಹೇಳಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಒಟಿಟಿ ಕಂಪನಿಗಳು ಆರ್ಥಿಕ ಒತ್ತಡ ಎದುರಿಸುತ್ತಿವೆ. ಚಂದಾದಾರರ ಸಂಖ್ಯೆ ಕುಸಿತ, ಕಂಟೆಂಟ್ ಹೂಡಿಕೆ ಇಳಿಕೆ ಮತ್ತು ಪ್ರಾದೇಶಿಕ ಸಿನಿಮಾಗಳಿಗೆ ಕಡಿಮೆಯಾಗುತ್ತಿರುವ ಅವಕಾಶಗಳ ನಡುವೆ, ಸರ್ಕಾರದ ಬೆಂಬಲಿತ ಡಿಜಿಟಲ್ ವೇದಿಕೆ ಅಗತ್ಯವಾಗಿದೆ ಎಂದು ವಿಜಯ್ ಸೇತುಪತಿ ಅಭಿಪ್ರಾಯಪಟ್ಟಿದ್ದಾರೆ.
ಹಿರಿಯ ನಟ ಕಮಲ್ ಹಾಸನ್ ಕೂಡ ಇದೇ ವಿಚಾರವನ್ನು ಹಿಂದೆ ಪ್ರಸ್ತಾಪಿಸಿದ್ದರು. ಇದೀಗ ಆ ಅಭಿಪ್ರಾಯಕ್ಕೆ ಬಲ ತುಂಬಿರುವ ವಿಜಯ್ ಸೇತುಪತಿ, ಸರ್ಕಾರದ ಒಟಿಟಿ ಬಂದರೆ ಸಣ್ಣ ಸಿನಿಮಾಗಳಿಗೂ ಜಾಗ ಸಿಗುತ್ತದೆ ಎಂದು ಹೇಳಿದ್ದಾರೆ. ದೊಡ್ಡ ಪ್ಲಾಟ್ಫಾರ್ಮ್ಗಳಲ್ಲಿ ಅವಕಾಶ ಕಳೆದುಕೊಳ್ಳುತ್ತಿರುವ ಹೊಸ ಪ್ರತಿಭೆಗಳು ಮತ್ತು ಪ್ರಾದೇಶಿಕ ಕಥೆಗಳಿಗೆ ಇದು ಹೊಸ ದಾರಿ ತೆರೆದಿಡಲಿದೆ ಎಂದು ತಿಳಿಸಿದ್ದಾರೆ.
ಸಿನಿಮಾ ಮಾತ್ರವಲ್ಲ, ಭಾಷೆ ಮತ್ತು ಸಂಸ್ಕೃತಿಯನ್ನು ಡಿಜಿಟಲ್ ಯುಗದಲ್ಲಿ ಉಳಿಸಿಕೊಳ್ಳಲು ಕೂಡ ಇಂತಹ ಸರ್ಕಾರಿ ಒಟಿಟಿ ಪ್ರಮುಖ ಪಾತ್ರ ವಹಿಸಲಿದೆ ಎಂದು ಅವರು ಒತ್ತಿ ಹೇಳಿದ್ದಾರೆ.
‘ಮಾಸ್ಟರ್’ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದ ವಿಜಯ್ ಮತ್ತು ವಿಜಯ್ ಸೇತುಪತಿ ಇದೀಗ ಮುಖ್ಯಮಂತ್ರಿ-ನಟ ಎಂಬ ಹೊಸ ಸಮೀಕರಣದಲ್ಲಿ ಸುದ್ದಿಯಾಗಿದ್ದಾರೆ. ವಿಜಯ್ ಸೇತುಪತಿ ನೀಡಿರುವ ಈ ಸಲಹೆ ತಮಿಳು ಚಿತ್ರರಂಗದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದ್ದು, ಸರ್ಕಾರ ಈ ಬಗ್ಗೆ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬ ಕುತೂಹಲ ಹೆಚ್ಚಾಗಿದೆ.

