Home Blog

SIR ಕರ್ತವ್ಯಕ್ಕೆ ತೆರಳಿದ್ದ ವೇಳೆ ಹೃದಯಾಘಾತ: BLO ಸಿಬ್ಬಂದಿ ದುರ್ಮರಣ

ಬೆಂಗಳೂರು: ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್) ಕರ್ತವ್ಯಕ್ಕೆ ತೆರಳುತ್ತಿದ್ದ ವೇಳೆ ಬೂತ್ ಮಟ್ಟದ ಅಧಿಕಾರಿ (ಬಿಎಲ್‌ಒ) ಹೃದಯಾಘಾತದಿಂದ ಮೃತಪಟ್ಟಿರುವ ದುರ್ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರು ದಕ್ಷಿಣ ವಿಭಾಗದಲ್ಲಿ ಬಿಎಲ್‌ಒ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ನಟರಾಜ್ ಅವರು, ಭಾನುವಾರ ಬೆಳಗ್ಗೆ ಮನೆಯಿಂದ ಎಸ್‌ಐಆರ್ ಕರ್ತವ್ಯಕ್ಕೆ ತೆರಳುತ್ತಿದ್ದ ವೇಳೆ ಏಕಾಏಕಿ ಹೃದಯಾಘಾತಕ್ಕೊಳಗಾಗಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ಯತ್ನಿಸಲಾಯಿತಾದರೂ, ಅಷ್ಟರಲ್ಲೇ ಅವರು ಮೃತಪಟ್ಟಿರುವುದಾಗಿ ತಿಳಿದುಬಂದಿದೆ.

ಎಸ್‌ಐಆರ್ ಪ್ರಕ್ರಿಯೆ ಹಿನ್ನೆಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅಧಿಕಾರಿಯೊಬ್ಬರ ಸಾವಿನಿಂದ ಸಹೋದ್ಯೋಗಿಗಳಲ್ಲಿ ಹಾಗೂ ಇಲಾಖೆಯಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.

ಇದೇ ಎಸ್‌ಐಆರ್ ಕರ್ತವ್ಯಕ್ಕೆ ತೆರಳುತ್ತಿದ್ದ ವೇಳೆ ತುಮಕೂರು ಜಿಲ್ಲೆಯ ಗೂಳೂರು ಸಮೀಪ ಗ್ರಾಮ ಲೆಕ್ಕಾಧಿಕಾರಿ ಭುವನಾ ಅವರ ದ್ವಿಚಕ್ರ ವಾಹನಕ್ಕೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಅವರು ಗಂಭೀರವಾಗಿ ಗಾಯಗೊಂಡಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದರು.

ಆ ಘಟನೆಯ ಬೆನ್ನಲ್ಲೇ ಇದೀಗ ಎಸ್‌ಐಆರ್ ಕರ್ತವ್ಯಕ್ಕೆ ತೆರಳುತ್ತಿದ್ದ ಬಿಎಲ್‌ಒ ನಟರಾಜ್ ಹೃದಯಾಘಾತದಿಂದ ಮೃತಪಟ್ಟಿರುವುದು ದುಃಖದ ಸಂಗತಿಯಾಗಿದ್ದು, ಸತತ ಎರಡನೇ ದಿನ ಎಸ್‌ಐಆರ್ ಕರ್ತವ್ಯಕ್ಕೆ ಸಂಬಂಧಿಸಿದಂತೆ ಅಧಿಕಾರಿಯೊಬ್ಬರು ಜೀವ ಕಳೆದುಕೊಂಡಿರುವ ಘಟನೆ ಗಮನ ಸೆಳೆದಿದೆ.

ಕಾರಿನ ಇಎಂಐ ಕಟ್ಟಲು ಹಣವಿದೆ, ಮಗುವಿನ ಜೀವನಾಂಶಕ್ಕೆ ಇಲ್ಲವೇ?; ಪತಿಗೆ ಹೈಕೋರ್ಟ್ ತೀವ್ರ ತರಾಟೆ

ಬೆಂಗಳೂರು: ಐಷಾರಾಮಿ ಕಾರಿನ ಮಾಸಿಕ ಕಂತು (ಇಎಂಐ) ಪಾವತಿಸಲು ಆರ್ಥಿಕ ಸಾಮರ್ಥ್ಯವಿರುವ ವ್ಯಕ್ತಿ, ಅನಾರೋಗ್ಯದಿಂದ ಬಳಲುತ್ತಿರುವ ಮಗುವಿನ ಪೋಷಣೆ ಹಾಗೂ ಪತ್ನಿಯ ಜೀವನಾಂಶ ಪಾವತಿಸಲು ಸಾಧ್ಯವಿಲ್ಲ ಎಂದು ಹೇಳಲು ಆಗುವುದಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಖಡಕ್‌ವಾಗಿ ಹೇಳಿದೆ.

ವಿಚ್ಛೇದನ ಪ್ರಕರಣವೊಂದರಲ್ಲಿ ಪತ್ನಿ ಹಾಗೂ ಆಟಿಸಂ ಕಾಯಿಲೆಯಿಂದ ಬಳಲುತ್ತಿರುವ ಮಗುವಿಗೆ ಮಾಸಿಕ 30 ಸಾವಿರ ರೂ. ಮಧ್ಯಂತರ ಜೀವನಾಂಶ ನೀಡುವಂತೆ ಕುಟುಂಬ ನ್ಯಾಯಾಲಯ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಪತಿ ಸೈಯದ್ ಕಮ್ರಾನ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಡಾ. ಚಿಲ್ಲಾಕೂರು ಸುಮಲತಾ ಅವರಿದ್ದ ನ್ಯಾಯಪೀಠ ವಜಾಗೊಳಿಸಿದೆ.

ಪ್ರಕರಣದ ವಿಚಾರಣೆ ವೇಳೆ ದಾಖಲೆಗಳನ್ನು ಪರಿಶೀಲಿಸಿದ ನ್ಯಾಯಾಲಯ, ಪತಿಯ ವಾರ್ಷಿಕ ಆದಾಯ ಕಳೆದ ಕೆಲವು ವರ್ಷಗಳಲ್ಲಿ 14 ಲಕ್ಷ ರೂ.ಗಳಿಂದ 28 ಲಕ್ಷ ರೂ.ವರೆಗೆ ಇದ್ದು, ಅವರು ತಿಂಗಳಿಗೆ ಕನಿಷ್ಠ 2 ಲಕ್ಷ ರೂ. ಆದಾಯ ಗಳಿಸುತ್ತಿರುವುದು ದಾಖಲೆಗಳಿಂದ ಸ್ಪಷ್ಟವಾಗಿದೆ ಎಂದು ತಿಳಿಸಿದೆ.

ಇದೇ ವೇಳೆ, ಹೊಸ ಐಷಾರಾಮಿ ಕಾರು ಖರೀದಿಸಿ ಅದಕ್ಕಾಗಿ ಪ್ರತಿ ತಿಂಗಳು 53 ಸಾವಿರ ರೂ. ಇಎಂಐ ಪಾವತಿಸುತ್ತಿರುವ ವ್ಯಕ್ತಿ, ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಮಗುವಿನ ಚಿಕಿತ್ಸೆ ಮತ್ತು ಪತ್ನಿಯ ನಿರ್ವಹಣೆಗೆ ತಿಂಗಳಿಗೆ 30 ಸಾವಿರ ರೂ. ನೀಡಲು ಸಾಧ್ಯವಿಲ್ಲ ಎಂದು ವಾದಿಸುವುದನ್ನು ಒಪ್ಪಲಾಗುವುದಿಲ್ಲ ಎಂದು ನ್ಯಾಯಪೀಠ ಕಟುವಾಗಿ ಹೇಳಿದೆ.

ಪತಿಯ ಪರ ವಕೀಲರು, ಪತ್ನಿಯೇ ಮಗುವಿನೊಂದಿಗೆ ಮನೆ ಬಿಟ್ಟು ಹೋಗಿದ್ದು, ಪತಿ ಸ್ವಯಂಪ್ರೇರಿತವಾಗಿ ತಿಂಗಳಿಗೆ 5 ಸಾವಿರ ರೂ. ನೀಡುತ್ತಿದ್ದರು. ಪತ್ನಿ ವಿದ್ಯಾವಂತರಾಗಿದ್ದು, ಉದ್ಯೋಗ ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ಅಲ್ಲದೆ ವ್ಯಾಪಾರದಲ್ಲಿ ನಷ್ಟವಾಗಿರುವ ಕಾರಣ ಹೆಚ್ಚಿನ ಮೊತ್ತ ಪಾವತಿಸಲು ಸಾಧ್ಯವಿಲ್ಲ ಎಂದು ವಾದ ಮಂಡಿಸಿದ್ದರು.

ಇದಕ್ಕೆ ಪ್ರತಿಯಾಗಿ ಪತ್ನಿಯ ಪರ ವಕೀಲರು, ಪತಿ ಖಾಸಗಿ ಕಂಪನಿಯ ನಿರ್ದೇಶಕರಾಗಿದ್ದು, ತೆರಿಗೆ ದಾಖಲೆಗಳ ಪ್ರಕಾರ ತಿಂಗಳಿಗೆ 2 ಲಕ್ಷ ರೂ.ಗಿಂತ ಹೆಚ್ಚು ಆದಾಯ ಗಳಿಸುತ್ತಿದ್ದಾರೆ. ಏಳು ವರ್ಷದ ಮಗು ಆಟಿಸಂ ಸ್ಪೆಕ್ಟ್ರಮ್ ಡಿಸಾರ್ಡರ್‌ನಿಂದ ಬಳಲುತ್ತಿದ್ದು, ಚಿಕಿತ್ಸೆ ಮತ್ತು ಆರೈಕೆಗೆ ಹೆಚ್ಚಿನ ವೆಚ್ಚವಾಗುತ್ತಿದೆ. ಪತ್ನಿಗೆ ಯಾವುದೇ ಆದಾಯದ ಮೂಲವಿಲ್ಲದ ಹಿನ್ನೆಲೆಯಲ್ಲಿ ಕುಟುಂಬ ನ್ಯಾಯಾಲಯದ ಆದೇಶ ಸಮಂಜಸವಾಗಿದೆ ಎಂದು ವಾದಿಸಿದರು.

ಉಭಯ ಪಕ್ಷಗಳ ವಾದ ಹಾಗೂ ದಾಖಲೆಗಳನ್ನು ಪರಿಶೀಲಿಸಿದ ಹೈಕೋರ್ಟ್, ಕುಟುಂಬ ನ್ಯಾಯಾಲಯ ನೀಡಿದ್ದ ಮಾಸಿಕ 30 ಸಾವಿರ ರೂ. ಮಧ್ಯಂತರ ಜೀವನಾಂಶದ ಆದೇಶದಲ್ಲಿ ಯಾವುದೇ ದೋಷವಿಲ್ಲ ಎಂದು ಅಭಿಪ್ರಾಯಪಟ್ಟಿದ್ದು, ಪತಿಯ ಅರ್ಜಿಯನ್ನು ವಜಾಗೊಳಿಸಿದೆ.

ಪವಾಡಸದೃಶವಾಗಿ ಗರ್ಭಗುಡಿಯಿಂದ ಹೊರಬಂದ ರಾಚೋಟೇಶ್ವರ ಶ್ರೀಗಳು: 33 ದಿನಗಳ ಶಿವಯೋಗ ಸಮಾಧಿ ಸಂಪನ್ನ

ಗದಗ; ತಾಲೂಕಿನ ಅಂತೂರ–ಬೆಂತೂರ ಗ್ರಾಮದ ಬೂದೀಶ್ವರ ಮಠದಲ್ಲಿ ಕಳೆದ 33 ದಿನಗಳಿಂದ ನಡೆಯುತ್ತಿದ್ದ ಅಪರೂಪದ ಶಿವಯೋಗ ಸಮಾಧಿ ಅನುಷ್ಠಾನ ಭಾನುವಾರ ಯಶಸ್ವಿಯಾಗಿ ಸಂಪನ್ನಗೊಂಡಿತು.

ಲೋಕಕಲ್ಯಾಣ, ವಿಶ್ವಶಾಂತಿ ಹಾಗೂ ಸಕಲ ಜೀವಿಗಳ ಒಳಿತಿಗಾಗಿ ಜೂನ್ 3ರಂದು ಶಿವಯೋಗ ಸಮಾಧಿಗೆ ಪ್ರವೇಶಿಸಿದ್ದ ಬೂದೀಶ್ವರ ಮಠದ ಪರಮಪೂಜ್ಯ ರಾಚೋಟೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಭಾನುವಾರ ಗರ್ಭಗುಡಿಯಿಂದ ಆರೋಗ್ಯವಂತರಾಗಿ ಹೊರಬಂದು ಸಾವಿರಾರು ಭಕ್ತರಿಗೆ ದರ್ಶನ ನೀಡಿದರು.

ಶ್ರೀಗಳು ಗಾಳಿ, ಬೆಳಕು ಹಾಗೂ ಹೊರಜಗತ್ತಿನ ಯಾವುದೇ ಸಂಪರ್ಕವಿಲ್ಲದ ಗರ್ಭಗುಡಿಯೊಳಗೆ 33 ದಿನಗಳ ಕಾಲ ಅನ್ನ, ನೀರು ಸೇವಿಸದೆ, ಮಾತಾಡದೆ, ಸಂಪೂರ್ಣ ಮೌನದಲ್ಲಿ ಶಿವಧ್ಯಾನ ಹಾಗೂ ಯೋಗಸಾಧನೆಯಲ್ಲಿ ನಿರತರಾಗಿದ್ದರು. ಇಂತಹ ಕಠಿಣ ತಪಸ್ಸು ಇಂದಿನ ಕಾಲಘಟ್ಟದಲ್ಲಿ ಅತ್ಯಂತ ಅಪರೂಪವಾಗಿದ್ದು, ಈ ಕಾರಣದಿಂದಲೇ ರಾಜ್ಯದ ವಿವಿಧ ಜಿಲ್ಲೆಗಳಿಂದ ಸಾವಿರಾರು ಭಕ್ತರು ಅಂತೂರ–ಬೆಂತೂರ ಗ್ರಾಮಕ್ಕೆ ಆಗಮಿಸಿ ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದರು.

ಭಾನುವಾರ ಬೆಳಗ್ಗಿನಿಂದಲೇ ಮಠದ ಆವರಣದಲ್ಲಿ ಭಕ್ತರ ಸಾಗರವೇ ನೆರೆದಿತ್ತು. ಶ್ರೀಗಳು ಯಾವಾಗ ಗರ್ಭಗುಡಿಯಿಂದ ಹೊರಬರುತ್ತಾರೆ ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿತ್ತು. ನಿಗದಿತ ಸಮಯದಲ್ಲಿ ಗರ್ಭಗುಡಿಯ ಬಾಗಿಲು ತೆರೆಯುತ್ತಿದ್ದಂತೆ “ಹರ ಹರ ಮಹಾದೇವ”, “ಜೈ ರಾಚೋಟೇಶ್ವರ ಶ್ರೀಗಳು” ಎಂಬ ಜಯಘೋಷಗಳು ಮುಗಿಲು ಮುಟ್ಟಿದವು. ಆರೋಗ್ಯವಂತರಾಗಿ ಹೊರಬಂದ ಶ್ರೀಗಳು ಮೊದಲು ಶಿವಲಿಂಗಕ್ಕೆ ವಿಶೇಷ ಪೂಜೆ ಸಲ್ಲಿಸಿ ಬಳಿಕ ಭಕ್ತರಿಗೆ ಆಶೀರ್ವಾದ ಹಾಗೂ ದರ್ಶನ ನೀಡಿದರು.

ಶ್ರೀಗಳನ್ನು ಕಣ್ತುಂಬಿಕೊಳ್ಳಲು ಮಹಿಳೆಯರು, ಯುವಕರು, ಮಕ್ಕಳು ಸೇರಿದಂತೆ ಎಲ್ಲ ವಯೋಮಾನದ ಭಕ್ತರು ಸರತಿ ಸಾಲಿನಲ್ಲಿ ನಿಂತು ಆಶೀರ್ವಾದ ಪಡೆದರು. ಶ್ರೀಗಳ ದರ್ಶನ ಪಡೆದ ಅನೇಕ ಭಕ್ತರು ಭಾವೋದ್ವೇಗಕ್ಕೆ ಒಳಗಾಗಿ ಕಣ್ಣೀರಿಟ್ಟ ದೃಶ್ಯಗಳು ಕಂಡುಬಂದವು. ಕೆಲವರು ಇದನ್ನು “ಶಿವನ ಕೃಪೆ” ಎಂದು ಬಣ್ಣಿಸಿದರೆ, ಮತ್ತಿತರರು “ಇದು ಅಪರೂಪದ ಆಧ್ಯಾತ್ಮಿಕ ಸಾಧನೆ” ಎಂದು ಅಭಿಪ್ರಾಯಪಟ್ಟರು.

ಮಠದ ಆವರಣದಲ್ಲಿ ವಿಶೇಷ ಪೂಜೆ, ರುದ್ರಾಭಿಷೇಕ, ಮಂಗಳಾರತಿ ಹಾಗೂ ಪ್ರಸಾದ ವಿತರಣೆಯ ವ್ಯವಸ್ಥೆ ಮಾಡಲಾಗಿತ್ತು. ಭಕ್ತರ ದಟ್ಟಣೆಯನ್ನು ನಿಯಂತ್ರಿಸಲು ಸ್ವಯಂಸೇವಕರು ಹಾಗೂ ಪೊಲೀಸ್ ಇಲಾಖೆ ಅಗತ್ಯ ಬಂದೋಬಸ್ತ್ ಕೈಗೊಂಡಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿತ್ತು.

ಶಿವಯೋಗ ಸಮಾಧಿ ಅನುಷ್ಠಾನದ ಯಶಸ್ವಿ ಸಮಾಪ್ತಿಯಿಂದ ಅಂತೂರ–ಬೆಂತೂರ ಗ್ರಾಮ ಭಕ್ತಿಸಾಗರವಾಗಿ ಮಾರ್ಪಟ್ಟಿದ್ದು, ದಿನವಿಡೀ ಭಕ್ತರ ಸಂಚಾರ ಮುಂದುವರಿದಿತ್ತು.

ಶಿವಯೋಗ ಸಮಾಧಿಯ ಸಂದೇಶ

“ದೇಹದ ಮಿತಿಗಳನ್ನು ಮೀರಿ ಆತ್ಮಸಾಧನೆಯ ಮೂಲಕ ಲೋಕಕಲ್ಯಾಣದ ಸಂಕಲ್ಪವನ್ನು ಸಾಕಾರಗೊಳಿಸುವುದೇ ಶಿವಯೋಗ ಸಮಾಧಿಯ ಮಹತ್ವ. ರಾಚೋಟೇಶ್ವರ ಶ್ರೀಗಳ 33 ದಿನಗಳ ಅನುಷ್ಠಾನ ಭಕ್ತರಲ್ಲಿ ಭಕ್ತಿ, ನಂಬಿಕೆ ಹಾಗೂ ಆಧ್ಯಾತ್ಮಿಕ ಚೈತನ್ಯವನ್ನು ಮತ್ತಷ್ಟು ಬಲಪಡಿಸಿದೆ.”

ಜುಲೈ 20ರಿಂದ ಆಗಸ್ಟ್ 13ರವರೆಗೆ ಸಂಸತ್ ಮಳೆಗಾಲದ ಅಧಿವೇಶನ: 25 ದಿನಗಳಲ್ಲಿ 19 ಸಭೆಗಳು

ನವದೆಹಲಿ: ಸಂಸತ್ತಿನ 2026ರ ಮಳೆಗಾಲದ ಅಧಿವೇಶನವು ಜುಲೈ 20ರಿಂದ ಆಗಸ್ಟ್ 13ರವರೆಗೆ ನಡೆಯಲಿದ್ದು, ಒಟ್ಟು 25 ದಿನಗಳ ಈ ಅಧಿವೇಶನದಲ್ಲಿ 19 ಸಭೆಗಳು ನಡೆಯಲಿವೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ತಿಳಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ಕೇಂದ್ರ ಸರ್ಕಾರದ ಶಿಫಾರಸಿನ ಮೇರೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಂಸತ್ತಿನ ಉಭಯ ಸದನಗಳ ಅಧಿವೇಶನವನ್ನು ಕರೆಯಲು ಅನುಮೋದನೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.

“2026ರ ಜುಲೈ 20ರಿಂದ ಆಗಸ್ಟ್ 13ರವರೆಗೆ ನಡೆಯಲಿರುವ ಮಳೆಗಾಲದ ಅಧಿವೇಶನದಲ್ಲಿ ರಾಷ್ಟ್ರೀಯ ಮಹತ್ವದ ವಿಷಯಗಳ ಕುರಿತು ಅರ್ಥಪೂರ್ಣ ಚರ್ಚೆ ನಡೆಸಿ, ಅಗತ್ಯ ನಿರ್ಧಾರಗಳನ್ನು ಕೈಗೊಳ್ಳಲಾಗುತ್ತದೆ” ಎಂದು ಕಿರಣ್ ರಿಜಿಜು ಹೇಳಿದ್ದಾರೆ.

ಮುಂಬರುವ ಅಧಿವೇಶನದಲ್ಲಿ ಪಶ್ಚಿಮ ಬಂಗಾಳ, ಅಸ್ಸಾಂ ಹಾಗೂ ಪುದುಚೇರಿ ವಿಧಾನಸಭಾ ಚುನಾವಣೆಯ ಬಳಿಕದ ರಾಜಕೀಯ ಬೆಳವಣಿಗೆಗಳು ಪ್ರಮುಖ ಚರ್ಚೆಯ ವಿಷಯವಾಗುವ ಸಾಧ್ಯತೆಯಿದೆ. ವಿಶೇಷವಾಗಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಹಾಗೂ ಶಿವಸೇನೆ (ಉದ್ಧವ್ ಬಾಳಾಸಾಹೇಬ್ ಠಾಕ್ರೆ ಬಣ) ಪಕ್ಷಗಳಲ್ಲಿ ಉಂಟಾಗಿರುವ ಬಂಡಾಯ ಬೆಳವಣಿಗೆಗಳು ಸಂಸತ್ತಿನಲ್ಲಿ ಪ್ರತಿಧ್ವನಿಸುವ ನಿರೀಕ್ಷೆಯಿದೆ.

ಪ್ರತ್ಯೇಕ ಬಣಗಳಾಗಿ ಗುರುತಿಸುವಂತೆ ಮನವಿ ಸಲ್ಲಿಸಿರುವ 20 ಟಿಎಂಸಿ ಹಾಗೂ ಆರು ಶಿವಸೇನೆ (ಯುಬಿಟಿ) ಸಂಸದರ ಅರ್ಜಿಗಳ ಕುರಿತು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಮಹತ್ವದ ತೀರ್ಮಾನ ಕೈಗೊಳ್ಳುವ ಸಾಧ್ಯತೆಯೂ ಇದೆ.

ಇನ್ನೊಂದೆಡೆ, ರಾಜ್ಯಸಭೆಯಲ್ಲಿ ಹೊಸದಾಗಿ ಆಯ್ಕೆಯಾದ ಹಾಗೂ ಮರು ಆಯ್ಕೆಯಾದ ಸದಸ್ಯರ ಪ್ರಮಾಣ ವಚನ ಸ್ವೀಕಾರದೊಂದಿಗೆ ಆಡಳಿತಾರೂಢ ಎನ್‌ಡಿಎ ಮೈತ್ರಿಕೂಟದ ಸಂಖ್ಯಾಬಲ ಮತ್ತಷ್ಟು ಹೆಚ್ಚಾಗಿದೆ. ಟಿಎಂಸಿಯ ಮೂವರು ರಾಜ್ಯಸಭಾ ಸದಸ್ಯರ ರಾಜೀನಾಮೆ ಹಾಗೂ ಉಪಚುನಾವಣೆಗಳ ಫಲಿತಾಂಶಗಳು ಕೂಡ ಮೇಲ್ಮನೆಯಲ್ಲಿ ಬಿಜೆಪಿ ನೇತೃತ್ವದ ಮೈತ್ರಿಕೂಟಕ್ಕೆ ಅನುಕೂಲಕರವಾಗಿವೆ.

ಕಳೆದ ಅಧಿವೇಶನದಲ್ಲಿ ಲೋಕಸಭೆಯಲ್ಲಿ ಅಂಗೀಕಾರ ಪಡೆಯಲು ವಿಫಲವಾಗಿದ್ದ ಮಹಿಳಾ ಮೀಸಲಾತಿ ಹಾಗೂ ಲೋಕಸಭಾ ಕ್ಷೇತ್ರಗಳ ಸಂಖ್ಯಾ ಹೆಚ್ಚಳಕ್ಕೆ ಸಂಬಂಧಿಸಿದ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಕೇಂದ್ರ ಸರ್ಕಾರ ಮರುಪರಿಶೀಲನೆ ನಡೆಸುತ್ತಿದೆ. ಎಲ್ಲಾ ರಾಜ್ಯಗಳಲ್ಲಿ ಲೋಕಸಭಾ ಕ್ಷೇತ್ರಗಳ ಸಂಖ್ಯೆಯನ್ನು ಏಕರೂಪವಾಗಿ ಶೇಕಡಾ 50ರಷ್ಟು ಹೆಚ್ಚಿಸುವ ಪ್ರಸ್ತಾವನೆಯನ್ನು ಸರ್ಕಾರ ರೂಪಿಸುತ್ತಿದ್ದು, ಜನಸಂಖ್ಯೆ ಆಧಾರಿತ ಕ್ಷೇತ್ರ ಮರುವಿಂಗಡಣೆಗೆ ದಕ್ಷಿಣ ಭಾರತದ ಹಲವು ರಾಜಕೀಯ ಪಕ್ಷಗಳು ಈಗಾಗಲೇ ತೀವ್ರ ವಿರೋಧ ವ್ಯಕ್ತಪಡಿಸಿವೆ.

ಕೆಆರ್ ಸರ್ಕಲ್ ಬಿಎಂಟಿಸಿ ಬಸ್ ಅಪಘಾತ ಪ್ರಕರಣ: ಚಾಲಕನ ವಿರುದ್ಧ FIR ದಾಖಲಿಸಿದ ಪೊಲೀಸರು

ಬೆಂಗಳೂರು: ನಗರದ ಕೆ.ಆರ್. ಸರ್ಕಲ್‌ನಲ್ಲಿ ಸಿಗ್ನಲ್‌ನಲ್ಲಿ ನಿಂತಿದ್ದ ಬಿಎಂಟಿಸಿ ಬಸ್‌ಗೆ ಮತ್ತೊಂದು ಬಿಎಂಟಿಸಿ ಬಸ್ ಡಿಕ್ಕಿ ಹೊಡೆದು ಹಲವು ಪ್ರಯಾಣಿಕರು ಹಾಗೂ ಚಾಲಕರು ಗಾಯಗೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲಸೂರು ಗೇಟ್ ಸಂಚಾರಿ ಪೊಲೀಸ್ ಠಾಣೆಯಲ್ಲಿ ಬಸ್ ಚಾಲಕನ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಶಾಂತಿನಗರ 3ನೇ ಬಿಎಂಟಿಸಿ ಡಿಪೋದ ಚಾಲಕ ಅಭಿಷೇಕ್ ವಿರುದ್ಧ ನಿರ್ಲಕ್ಷ್ಯದ ಚಾಲನೆ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ. ಅಪಘಾತ ಸಂಭವಿಸಿದ ವೇಳೆ ಅವರು ಕೆಎ-51 ಎಜೆ 6163 ನೋಂದಣಿ ಸಂಖ್ಯೆಯ ಬಸ್ ಚಲಾಯಿಸುತ್ತಿದ್ದರು.

ಪ್ರಾಥಮಿಕ ತನಿಖೆ ಪ್ರಕಾರ, ಕೆ.ಆರ್. ಸರ್ಕಲ್ ಜಂಕ್ಷನ್‌ನಲ್ಲಿ ಕೆಂಪು ಸಿಗ್ನಲ್ ಇದ್ದ ಕಾರಣ ಎಲ್ಲಾ ವಾಹನಗಳು ನಿಂತಿದ್ದವು. ಈ ವೇಳೆ ಅಭಿಷೇಕ್ ವೇಗವಾಗಿ ಬಸ್ ಚಲಾಯಿಸಿ, ಸಿಗ್ನಲ್‌ನಲ್ಲಿ ನಿಂತಿದ್ದ ಮತ್ತೊಂದು ಬಿಎಂಟಿಸಿ ಬಸ್‌ಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದ್ದಾರೆ ಎಂದು ಆರೋಪಿಸಲಾಗಿದೆ.

ಅಪಘಾತದ ಪರಿಣಾಮ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ದೂರುದಾರರ ಎಡಗಾಲಿನ ಮೂಳೆ ಮುರಿದಿದ್ದು, ಹಲವು ಪ್ರಯಾಣಿಕರು ಗಾಯಗೊಂಡಿದ್ದಾರೆ. ಶರಣಮ್ಮ ಎಂಬ ಪ್ರಯಾಣಿಕರ ದವಡೆಯ ಹಲ್ಲು ಮುರಿದಿರುವುದಾಗಿ ತಿಳಿದುಬಂದಿದೆ. ಅಲ್ಲದೆ, ಸಿಗ್ನಲ್‌ನಲ್ಲಿ ನಿಂತಿದ್ದ ಬಸ್‌ನ ಚಾಲಕ ಪ್ರಕಾಶ್ ಅವರಿಗೂ ಗಂಭೀರ ಗಾಯಗಳಾಗಿವೆ.

ಗಾಯಾಳುಗಳನ್ನು ತಕ್ಷಣವೇ ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಬಸ್ ಚಾಲಕನ ನಿರ್ಲಕ್ಷ್ಯದ ಚಾಲನೆಯಿಂದಲೇ ಅಪಘಾತ ಸಂಭವಿಸಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದ್ದು, ಈ ಸಂಬಂಧ ಹಲಸೂರು ಗೇಟ್ ಸಂಚಾರಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ.

ನಿಪ್ಪಾಣಿ ತಾಲೂಕಿನಲ್ಲಿ ಮಳೆ ಆರ್ಭಟ: ಮೂರು ಸಂಪರ್ಕ ಸೇತುವೆಗಳು ಜಲಾವೃತ!

ಬೆಳಗಾವಿ: ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಭಾರಿ ಮಳೆಯ ಆರ್ಭಟ ಮುಂದುವರಿದಿರುವ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನಲ್ಲಿ ಮೂರು ಪ್ರಮುಖ ಸಂಪರ್ಕ ಸೇತುವೆಗಳು ಜಲಾವೃತಗೊಂಡಿವೆ.

ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿರುವುದರಿಂದ ದೂದಗಂಗಾ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಕಾರದಗಾ–ಬೋಜ್ ಸಂಪರ್ಕ ಸೇತುವೆ ಸಂಪೂರ್ಣ ಮುಳುಗಿದೆ. ಇದೇ ರೀತಿ ವೇದಗಂಗಾ ನದಿಗೆ ಅಡ್ಡಲಾಗಿ ಇರುವ ಬಾರವಾಡ–ಕನ್ನೂರ ಹಾಗೂ ಬೋಜವಾಡಿ–ಗಜವರವಾಡಿ ಸೇತುವೆಗಳೂ ಜಲಾವೃತಗೊಂಡಿವೆ.

ಮಹಾರಾಷ್ಟ್ರದ ರಾಜಾಪುರ–ಜುಗಳ ಸೇತುವೆ ಮೇಲೂ ನೀರು ಹರಿಯುತ್ತಿರುವ ಕಾರಣ ಪರಿಸ್ಥಿತಿ ಗಂಭೀರವಾಗಿದೆ. ಉಕ್ಕಿ ಹರಿಯುತ್ತಿರುವ ನದಿಗಳ ಹಿನ್ನೆಲೆಯಲ್ಲಿ ಸ್ಥಳೀಯ ಆಡಳಿತವು ಜನರು ಯಾವುದೇ ಕಾರಣಕ್ಕೂ ನೀರಿನ ಹತ್ತಿರ ಅಥವಾ ಸೇತುವೆಗಳ ಮೇಲೆ ಹೋಗದಂತೆ ಎಚ್ಚರಿಕೆ ನೀಡಿದೆ.

ಸದ್ಯ ಪರಿಸ್ಥಿತಿಯನ್ನು ಸ್ಥಳೀಯ ಅಧಿಕಾರಿಗಳು ನಿಗಾ ವಹಿಸುತ್ತಿದ್ದು, ಅಗತ್ಯವಿದ್ದಲ್ಲಿ ರಸ್ತೆ ಸಂಚಾರವನ್ನು ಸಂಪೂರ್ಣವಾಗಿ ನಿರ್ಬಂಧಿಸುವ ಸಾಧ್ಯತೆ ಇದೆ.

ಬಳ್ಳಾರಿಯಲ್ಲಿ ನಕಲಿ ಬಂದೂಕು ಹಿಡಿದು ರೀಲ್ಸ್: ಮೂವರು ಯುವಕರು ಪೊಲೀಸ್ ವಶಕ್ಕೆ!

ಬಳ್ಳಾರಿ: ಜನರಲ್ಲಿ ಭಯ ಹುಟ್ಟಿಸುವ ರೀತಿಯಲ್ಲಿ ನಕಲಿ ಬಂದೂಕುಗಳನ್ನು ಹಿಡಿದು ರೀಲ್ಸ್ ಮಾಡಿದ್ದ ಮೂವರು ಯುವಕರನ್ನು ಬಳ್ಳಾರಿ ಕೌಲ್ ಬಜಾರ್ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಸಾಹಿಲ್, ವಿಕಾಸ್ ಮತ್ತು ಅಭಿಷೇಕ್ ಎಂದು ಗುರುತಿಸಲಾಗಿದೆ. ಆರೋಪಿಗಳು ನಗರದ ಬಂಡಿಹಟ್ಟಿ ಬಳಿಯ ಎಚ್‌ಎಲ್‌ಸಿ ಕಾಲುವೆ ಮೇಲಿನ ಪ್ರದೇಶದಲ್ಲಿ ನಕಲಿ ಡಬಲ್ ಬ್ಯಾರೆಲ್ ಬಂದೂಕು ಹಾಗೂ ಪಿಸ್ತೂಲ್ ಹಿಡಿದು ಭಯ ಹುಟ್ಟಿಸುವ ರೀತಿಯಲ್ಲಿ ರೀಲ್ಸ್ ಮಾಡಿದ್ದರು.

ಈ ವಿಡಿಯೋಗಳನ್ನು ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಸಾರ್ವಜನಿಕರಲ್ಲಿ ಆತಂಕ ಉಂಟುಮಾಡುವ ರೀತಿಯ ವರ್ತನೆ ಹಿನ್ನೆಲೆಯಲ್ಲಿ ಪೊಲೀಸರು ತಕ್ಷಣ ಕ್ರಮ ಕೈಗೊಂಡು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಕೌಲ್ ಬಜಾರ್ ಪೊಲೀಸ್ ಠಾಣೆಯಲ್ಲಿ ಮುಂದಿನ ತನಿಖೆ ನಡೆಯುತ್ತಿದೆ.

ಚಾರ್ಮಾಡಿ ಘಾಟಿಯಲ್ಲಿ ಮಳೆ–ಮಂಜಿನ ಮೋಡಿ: ಪ್ರವಾಸಿಗರನ್ನು ಆಕರ್ಷಿಸುತ್ತಿರುವ ಪ್ರಕೃತಿ ಸೌಂದರ್ಯ

ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯಲ್ಲಿ ವಾತಾವರಣ ಕ್ಷಣಕ್ಷಣಕ್ಕೂ ಬದಲಾಗುತ್ತಿದ್ದು, ಪಶ್ಚಿಮ ಘಟ್ಟಗಳಲ್ಲಿ ಧಾರಾಕಾರ ಮಳೆಯೊಂದಿಗೆ ದಟ್ಟ ಮಂಜು ಕವಿದಿದೆ.

ದಕ್ಷಿಣ ಕನ್ನಡ ಹಾಗೂ ಚಿಕ್ಕಮಗಳೂರು ಜಿಲ್ಲೆಗಳನ್ನು ಸಂಪರ್ಕಿಸುವ ಈ ಘಾಟಿಯಲ್ಲಿ ಕೆಲಕ್ಷಣಗಳಲ್ಲಿ ದಟ್ಟ ಮಂಜು ರಸ್ತೆಗಳನ್ನು ಆವರಿಸುತ್ತಿದ್ದು, ಮುಂದಿನ ಕ್ಷಣದಲ್ಲೇ ಮಳೆರಾಯನ ಅಬ್ಬರ ಕಾಣಿಸುತ್ತಿದೆ. ಮಳೆ ಮತ್ತು ಮಂಜಿನ ಈ ಸಂಯೋಜನೆ ಪರಿಸರವನ್ನು ಮತ್ತಷ್ಟು ಮನಮೋಹಕವಾಗಿಸಿದೆ.

ಘಾಟಿಯ ಹಸಿರು ಬೆಟ್ಟಗಳ ನಡುವೆ ಹರಡಿರುವ ಮಂಜು ಪ್ರಕೃತಿಯ ಅದ್ಭುತ ದೃಶ್ಯವನ್ನು ಸೃಷ್ಟಿಸಿದ್ದು, ವಾಹನ ಸವಾರರಿಗೆ ಸ್ವಲ್ಪ ಸವಾಲಿನ ಪರಿಸ್ಥಿತಿ ಉಂಟಾಗಿದ್ದರೂ ಪ್ರವಾಸಿಗರನ್ನು ಮಾತ್ರ ಇದು ಆಕರ್ಷಿಸುತ್ತಿದೆ.

ಪ್ರವಾಸಿಗರು ಈ ದೃಶ್ಯಗಳನ್ನು ತಮ್ಮ ಮೊಬೈಲ್‌ ಫೋನ್‌ಗಳಲ್ಲಿ ಸೆರೆಹಿಡಿದು ಸಂತೋಷ ವ್ಯಕ್ತಪಡಿಸುತ್ತಿದ್ದಾರೆ. ಪ್ರಕೃತಿಯ ಈ ಅಪರೂಪದ ಸೌಂದರ್ಯ ಚಾರ್ಮಾಡಿ ಘಾಟಿಯನ್ನು ಮತ್ತೆ ಪ್ರವಾಸಿಗರ ಪ್ರಮುಖ ಆಕರ್ಷಣೆಯ ಕೇಂದ್ರವಾಗಿಸಿದೆ.

ಬೆಳಗಾವಿಯಲ್ಲಿ ಮಳೆ–ಗಾಳಿ ಆರ್ಭಟ: ಹುಣಸೆ ಮರ ಬಿದ್ದು ನಾಲ್ಕು ಮನೆಗಳಿಗೆ ಹಾನಿ!

ಬೆಳಗಾವಿ: ಕುಂದಾನಗರಿ ಬೆಳಗಾವಿಯಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಬಿಟ್ಟುಬಿಡದೇ ಸುರಿಯುತ್ತಿರುವ ಧಾರಾಕಾರ ಮಳೆ ಹಾಗೂ ಬಿರುಗಾಳಿಯಿಂದ ಜನಜೀವನ ಅಸ್ತವ್ಯಸ್ತವಾಗಿದೆ.

ನಗರದ ಖಾಸಬಾಗದ ಉಪ್ಪಾರ ಗಲ್ಲಿಯಲ್ಲಿ ಭಾರಿ ಗಾಳಿಗೆ ಬೃಹತ್ ಹುಣಸೆ ಮರ ಹಾಗೂ ರೆಂಬೆಗಳು ಧರೆಗುರುಳಿದ್ದು, ನಾಲ್ಕು ಮನೆಗಳಿಗೆ ತೀವ್ರ ಹಾನಿಯಾಗಿದೆ. ಅನಿಲ್ ಮುಟ್ಟೇಕರ್, ಆನಂದ ಭದ್ವಾಂಕರ್, ಏಕನಾಥ ಭದ್ವಾಂಕರ್ ಹಾಗೂ ಪ್ರಶಾಂತ ಗೋರ್ಲೆ ಅವರ ಮನೆಗಳು ಜಖಂಗೊಂಡಿವೆ.

ಮರ ಬೀಳುವ ವೇಳೆ ಮನೆಯಲ್ಲಿದ್ದ ಕೆಲ ಅಗತ್ಯ ವಸ್ತುಗಳು ನಾಶವಾಗಿದ್ದು, ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ಸಂತ್ರಸ್ತ ಕುಟುಂಬಗಳು ಸರ್ಕಾರ ಹಾಗೂ ಅಧಿಕಾರಿಗಳು ತಕ್ಷಣ ಪರಿಹಾರ ನೀಡಬೇಕೆಂದು ಮನವಿ ಮಾಡಿದ್ದಾರೆ.

ಅದೃಷ್ಟವಶಾತ್, ಮರ ಬೀಳುವ ಮುನ್ನವೇ ಎಚ್ಚರಿಕೆ ಸಿಕ್ಕಿದ್ದರಿಂದ ನಾಲ್ಕೂ ಕುಟುಂಬಗಳ ಸದಸ್ಯರು ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ. ಇದರಿಂದ ಯಾವುದೇ ಜೀವಹಾನಿ ಸಂಭವಿಸಿಲ್ಲ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಶಹಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದಾರೆ. ಸದ್ಯ ಬಿದ್ದಿರುವ ಬೃಹತ್ ಮರವನ್ನು ಕತ್ತರಿಸಿ ತೆರವುಗೊಳಿಸುವ ಕಾರ್ಯಾಚರಣೆ ನಡೆಯುತ್ತಿದೆ.

ಟ್ರಾಫಿಕ್ ದಂಡ ಪಾವತಿಗೆ ಭರ್ಜರಿ ಸ್ಪಂದನೆ: ಬೆಂಗಳೂರಲ್ಲಿ ₹18 ಕೋಟಿ ಸಂಗ್ರಹ!

ಬೆಂಗಳೂರು: ಸಂಚಾರಿ ನಿಯಮ ಉಲ್ಲಂಘನೆ ಮಾಡಿದ ವಾಹನ ಸವಾರರಿಗೆ 50% ರಿಯಾಯಿತಿ ದರದಲ್ಲಿ ದಂಡ ಪಾವತಿಸಲು ನೀಡಿರುವ ಅವಕಾಶಕ್ಕೆ ಬೆಂಗಳೂರಿನಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಜೂನ್ 21ರಿಂದ ಆರಂಭವಾದ ಈ ಯೋಜನೆಯಡಿ ಜುಲೈ 4ರವರೆಗೆ ಒಟ್ಟು 6,06,032 ಪ್ರಕರಣಗಳು ಇತ್ಯರ್ಥಗೊಂಡಿವೆ. ಈ ಅವಧಿಯಲ್ಲಿ ವಿವಿಧ ವಿಧಾನಗಳ ಮೂಲಕ ಒಟ್ಟು 18,15,42,200 ರೂ. ದಂಡ ವಸೂಲಿ ಮಾಡಲಾಗಿದೆ ಎಂದು ಸಂಚಾರ ಪೊಲೀಸ್ ಇಲಾಖೆ ತಿಳಿಸಿದೆ.

ರಿಯಾಯಿತಿ ದರದಲ್ಲಿ ದಂಡ ಪಾವತಿಸಲು ಜುಲೈ 10ರವರೆಗೆ ಅವಕಾಶ ನೀಡಲಾಗಿದ್ದು, ಸಾರ್ವಜನಿಕರು ಈ ಅವಕಾಶವನ್ನು ಬಳಸಿಕೊಳ್ಳುವಂತೆ ಇಲಾಖೆ ಮನವಿ ಮಾಡಿದೆ.

ನಗರದ ಪ್ರಮುಖ ಜಂಕ್ಷನ್‌ಗಳಲ್ಲಿ ಪಿಎಸ್‌ಐ ಸೇರಿದಂತೆ ಸಂಚಾರ ಪೊಲೀಸರನ್ನು ನಿಯೋಜಿಸಲಾಗಿದ್ದು, ದಂಡ ಪಾವತಿಗೆ ಸಹಾಯ ಮಾಡುವ ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ಸಂಚಾರಿ ನಿಯಮಗಳ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯವೂ ನಡೆಯುತ್ತಿದೆ.

ನಿಯಮ ಉಲ್ಲಂಘನೆಗಳನ್ನು ಕಡಿಮೆ ಮಾಡುವುದರ ಜೊತೆಗೆ ಬಾಕಿ ಇರುವ ದಂಡವನ್ನು ವಸೂಲಿ ಮಾಡುವ ಉದ್ದೇಶದಿಂದ ಈ ವಿಶೇಷ ಅಭಿಯಾನ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.