Home Blog

6 ತಿಂಗಳ ಗರ್ಭಿಣಿಗೆ ಕಿರುಕುಳ: ಸ್ವಂತ ಪೋಷಕರ ವಿರುದ್ಧ ಮಗ ದೂರು!

ನೆಲಮಂಗಲ: ಪ್ರೀತಿಸಿ ಮದುವೆಯಾದ ದಂಪತಿಗೆ ಜಾತಿಯ ಹೆಸರಿನಲ್ಲಿ ಕಿರುಕುಳ ನೀಡಿ, ಜೀವಬೆದರಿಕೆ ಹಾಕಿರುವ ಅಮಾನವೀಯ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಟೌನ್‌ನಲ್ಲಿ ಬೆಳಕಿಗೆ ಬಂದಿದೆ.

ಸುಭಾಷ್ ನಗರ ನಿವಾಸಿಗಳಾದ ಅಭಿಷೇಕ್ ಮತ್ತು ವಿದ್ಯಾಶ್ರೀ ಇಬ್ಬರು ಕೆಲಸ ಮಾಡುವ ಸ್ಥಳದಲ್ಲಿ ಪರಿಚಯವಾಗಿ ಪ್ರೀತಿಸುತ್ತಿದ್ದರು. ಕುಟುಂಬದ ವಿರೋಧದ ನಡುವೆಯೇ ಎಂಟು ತಿಂಗಳ ಹಿಂದೆ ಕರಿ ಕಾಟೇರಮ್ಮ ದೇವಾಲಯದಲ್ಲಿ ಸರಳವಾಗಿ ಮದುವೆಯಾಗಿದ್ದರು.

ವಿದ್ಯಾಶ್ರೀ ಬೇರೆ ಜಾತಿಯವರು ಎಂಬ ಕಾರಣಕ್ಕೆ ಮದುವೆಯಾದ ದಿನದಿಂದಲೇ ಅಭಿಷೇಕ್ ಪೋಷಕರಾದ ಮುನಿಶಂಕರಯ್ಯ ಮತ್ತು ಆನಂದಮ್ಮ ಕಿರುಕುಳ ನೀಡುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ. ಸದ್ಯ ವಿದ್ಯಾಶ್ರೀ 6 ತಿಂಗಳ ಗರ್ಭಿಣಿಯಾಗಿದ್ದು, ಈ ಸಂದರ್ಭದಲ್ಲಿಯೂ ಆಕೆಯನ್ನು ಮನೆಗೆ ಸೇರಿಸಿಕೊಳ್ಳದೆ ಜಾತಿ ನಿಂದನೆ ಮಾಡಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಪತ್ನಿಯ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಪತಿ ಅಭಿಷೇಕ್ ಸ್ವಂತ ತಂದೆ-ತಾಯಿ ವಿರುದ್ಧವೇ ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವುದು ಗಮನಾರ್ಹವಾಗಿದೆ.

ಪ್ರಕರಣ ಸಂಬಂಧ ಪೊಲೀಸರು ಎನ್‌ಸಿಆರ್ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

 

Spiritual Tips: ಊಟದ ಬಳಿಕ ಈ ಅಭ್ಯಾಸ ಇದ್ದರೆ ಸಮೃದ್ಧಿ ಹೆಚ್ಚುತ್ತದೆ!

0

ಊಟದ ನಂತರ ತಮ್ಮ ತಟ್ಟೆಯನ್ನು ನಾವೇ ತೆಗೆದುಕೊಳ್ಳುವ ಸಂಪ್ರದಾಯದ ಮಹತ್ವದ ಬಗ್ಗೆ ಧಾರ್ಮಿಕ ಹಾಗೂ ಶಾಸ್ತ್ರದ ದೃಷ್ಟಿಯಿಂದ ಮಹತ್ವದ ಮಾಹಿತಿಯೊಂದು ಲಭ್ಯವಾಗಿದೆ.

ಆಹಾರ ಸೇವನೆಯನ್ನು ‘ಅನ್ನಯಜ್ಞ’ ಎಂದು ಪರಿಗಣಿಸಲಾಗುತ್ತದೆ. ಈ ಯಜ್ಞದ ಆರಂಭದಿಂದ ಅಂತ್ಯವರೆಗೂ ವಿನಯ, ವಿಧೇಯತೆ, ಭಕ್ತಿ ಮತ್ತು ಕೃತಜ್ಞತಾ ಭಾವ ಹೊಂದಿರುವುದು ಅಗತ್ಯವೆಂದು ತಿಳಿಸಲಾಗಿದೆ. ಮನೆಯಲ್ಲಿ ಯಾರು ಆಹಾರ ತಯಾರಿಸಿದರೂ, ಅನ್ನವನ್ನು ಪರಬ್ರಹ್ಮ ಸ್ವರೂಪವೆಂದು ಪರಿಗಣಿಸಲಾಗುತ್ತದೆ.

ಊಟದ ನಂತರ ತಮ್ಮ ತಟ್ಟೆಯನ್ನು ನಾವೇ ತೆಗೆದುಕೊಳ್ಳುವುದರಿಂದ ಅನ್ನಪೂರ್ಣೇಶ್ವರಿ ಹಾಗೂ ಅನ್ನದಾತರ ಮೇಲಿನ ಕೃತಜ್ಞತೆ ವ್ಯಕ್ತವಾಗುತ್ತದೆ. ಇದರಿಂದ ಜೀವನದಲ್ಲಿ ಆಹಾರದ ಕೊರತೆ ಎದುರಾಗುವುದಿಲ್ಲ ಎಂಬ ನಂಬಿಕೆಯೂ ಇದೆ.

ಊಟ ಮಾಡಿದ ಬಳಿಕ ಆಹಾರ ‘ಎಂಜಲು’ ಆಗುತ್ತದೆ. ಅದನ್ನು ಬೇರೆಯವರು ತೆಗೆದುಕೊಂಡು ಹೋದರೆ ಅದೃಷ್ಟ ಕುಗ್ಗುತ್ತದೆ ಎಂಬ ನಂಬಿಕೆ ಇದೆ. ಆದರೆ ಅತಿಥಿಗಳ ವಿಚಾರದಲ್ಲಿ ಇದು ಅನ್ವಯಿಸುವುದಿಲ್ಲ. ‘ಅತಿಥಿ ದೇವೋಭವ’ ಎಂಬ ತತ್ವದಂತೆ, ಅತಿಥಿಗಳ ತಟ್ಟೆಯನ್ನು ನಾವು ಸ್ವತಃ ತೆಗೆದುಕೊಳ್ಳುವುದು ಕರ್ತವ್ಯವಾಗಿದೆ.

ತಟ್ಟೆಯಲ್ಲಿ ಯಾವುದೇ ಆಹಾರ ಉಳಿಯದಂತೆ ಶುದ್ಧವಾಗಿ ಮಾಡುವುದು ಉತ್ತಮ. ಉಳಿದ ಆಹಾರವನ್ನು ತ್ಯಜಿಸಿ, ತಟ್ಟೆಯನ್ನು ತೊಳೆದು ಅಥವಾ ಸ್ವಚ್ಛ ಸ್ಥಳದಲ್ಲಿ ಇಡುವ ಅಭ್ಯಾಸದಿಂದ ಶಿಸ್ತು, ನಮ್ರತೆ ಮತ್ತು ಕೃತಜ್ಞತೆ ಬೆಳೆಯುತ್ತದೆ. ಇದರಿಂದ ಕುಟುಂಬದ ಬಾಂಧವ್ಯಗಳು ಬಲವಾಗುತ್ತವೆ.

ಶಾಸ್ತ್ರದ ಪ್ರಕಾರ, ಈ ಪದ್ಧತಿಯನ್ನು ಪಾಲಿಸುವುದರಿಂದ ಆರ್ಥಿಕ ಸಮೃದ್ಧಿ ಹೆಚ್ಚುತ್ತದೆ, ನಕಾರಾತ್ಮಕ ಶಕ್ತಿಗಳು ದೂರವಾಗುತ್ತವೆ ಮತ್ತು ಮನೆಯಲ್ಲಿನ ಶಾಂತಿ, ಸೌಹಾರ್ದತೆ ವೃದ್ಧಿಸುತ್ತದೆ ಎಂದು ಹೇಳಲಾಗಿದೆ.

ತಟ್ಟೆಯಲ್ಲಿ ಕೈ ತೊಳೆಯುವುದನ್ನು ತಪ್ಪಿಸಿ, ಬೇರೆಡೆ ಕೈ ತೊಳೆಯುವುದು ಉತ್ತಮ. ಊಟದ ನಂತರ ತಟ್ಟೆಯನ್ನು ಹೆಚ್ಚು ಹೊತ್ತು ಹಾಗೆಯೇ ಬಿಡದೆ ತಕ್ಷಣವೇ ಶುದ್ಧಿ ಮಾಡಬೇಕು. ವಿಶೇಷವಾಗಿ ರಾತ್ರಿಯಿಡೀ ತಟ್ಟೆಯನ್ನು ಸಿಂಕ್‌ನಲ್ಲಿ ಬಿಡಬಾರದು ಎಂದು ಸೂಚಿಸಲಾಗಿದೆ.

ಆದರೆ ಈ ನಿಯಮಗಳು ಮನೆಗಳಿಗೆ ಮಾತ್ರ ಅನ್ವಯಿಸುವುದಾಗಿದ್ದು, ಮದುವೆ ಸಮಾರಂಭಗಳು ಅಥವಾ ಹೋಟೆಲ್‌ಗಳಲ್ಲಿ ಅತಿಥಿಗಳಾಗಿ ಹೋದಾಗ ಈ ಪದ್ಧತಿಯನ್ನು ಪಾಲಿಸುವ ಅಗತ್ಯವಿಲ್ಲ ಎಂದು ತಿಳಿಸಲಾಗಿದೆ.

ಪರಪ್ಪನ ಅಗ್ರಹಾರ ಜೈಲಿನಲ್ಲಿ ಗಲಾಟೆ: ಕೈದಿಗಳ ಮೇಲೆ ಲಾಠಿ ಪ್ರಹಾರ

ಬೆಂಗಳೂರು: ನಗರದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಕೈದಿಗಳು ಮತ್ತು ಜೈಲು ಸಿಬ್ಬಂದಿ ನಡುವೆ ಸಂಘರ್ಷ ಸಂಭವಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಮಾರ್ಚ್ 29ರ ತಡರಾತ್ರಿ ಈ ಘಟನೆ ನಡೆದಿದ್ದು, ಜೈಲಿನಿಂದಲೇ ವಿಡಿಯೋ ಹೊರಬಂದ ಪ್ರಕರಣದ ಹಿನ್ನೆಲೆ ಜೈಲು ಅಧೀಕ್ಷಕ ಕರ್ಣ ಕ್ಷತ್ರಿ ನೇತೃತ್ವದಲ್ಲಿ ವಿಚಾರಣಾ ಬಂಧಿಗಳ ವಿಭಾಗದ ಟವರ್-1ರಲ್ಲಿ ತಪಾಸಣೆ ನಡೆಸಲಾಗುತ್ತಿತ್ತು. ಈ ವೇಳೆ ತಪಾಸಣೆಗೆ ಅಡ್ಡಿಪಡಿಸಿದ ಕೈದಿಗಳಾದ ಇನಾಕ್ ಜಾಯ್, ವೋಕು ಆರೆಂಜಿ ಸೇರಿದಂತೆ ಕೆಲವರು ಅಧಿಕಾರಿಗಳ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.

ಪರಿಸ್ಥಿತಿ ಉದ್ವಿಗ್ನಗೊಂಡ ಹಿನ್ನೆಲೆಯಲ್ಲಿ ಸಿಬ್ಬಂದಿ ತಕ್ಷಣವೇ ಕ್ರಮ ಕೈಗೊಂಡು ಕೈದಿಗಳನ್ನು ಚದುರಿಸಲು ಲಘು ಲಾಠಿ ಪ್ರಹಾರ ನಡೆಸಿದ್ದಾರೆ. ಕಾರ್ಯಾಚರಣೆ ವೇಳೆ ಬ್ಯಾರಕ್‌ಗಳಲ್ಲಿ ಅಡಗಿಸಿಟ್ಟಿದ್ದ 10ಕ್ಕೂ ಹೆಚ್ಚು ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಘಟನೆಗೆ ಸಂಬಂಧಿಸಿದಂತೆ ಗಲಾಟೆ ಮಾಡಿದ ಕೈದಿಗಳ ವಿರುದ್ಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

ಚಿತ್ರದುರ್ಗ| ಎರಡು ಲಾರಿಗಳ ನಡುವೆ ಮುಖಾಮುಖಿ ಡಿಕ್ಕಿ: ಮೂವರು ಸಾವು!

ಚಿತ್ರದುರ್ಗ: ಇಲ್ಲಿನ ಕಲ್ಕುಂಟೆ ಸಮೀಪದ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಎರಡು ಲಾರಿಗಳ ಮಧ್ಯೆ ಸಂಭವಿಸಿದ ಭೀಕರ ಅಪಘಾತದಲ್ಲಿ ಮೂವರು ಸಾವನ್ನಪ್ಪಿರುವ ಘಟನೆ ಜರುಗಿದೆ.

ಚಿತ್ರದುರ್ಗದಿಂದ ದಾವಣಗೆರೆ ಕಡೆಗೆ ಸಾಗುತ್ತಿದ್ದ ಲಾರಿ ಹಾಗೂ ದಾವಣಗೆರೆಯಿಂದ ಚಿತ್ರದುರ್ಗ ಕಡೆ ಬರುತ್ತಿದ್ದ ಮತ್ತೊಂದು ಲಾರಿ ಮುಖಾಮುಖಿಯಾಗಿ ಡಿಕ್ಕಿ ಹೊಡೆದಿವೆ. ಡಿಕ್ಕಿಯ ರಭಸಕ್ಕೆ ಒಂದು ಲಾರಿ ಡಿವೈಡರ್ ದಾಟಿ ಎದುರು ಬದಿಗೆ ಹೋಗಿ ಇನ್ನೊಂದು ಲಾರಿಗೆ ಅಪ್ಪಳಿಸಿದೆ ಎಂದು ತಿಳಿದುಬಂದಿದೆ.

ಅಪಘಾತದಲ್ಲಿ ಮೊದಲಿಗೆ ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಮತ್ತೊಬ್ಬರು ಬಳಿಕ ಮೃತಪಟ್ಟಿದ್ದಾರೆ. ಈವರೆಗೆ ಮೃತರ ಗುರುತು ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಭರಮಸಾಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ಸಂಬಂಧ ತನಿಖೆ ಮುಂದುವರಿದಿದೆ.

ಜೋಕಾಲಿ ಆಡುವಾಗ ದುರಂತ: ಸೀರೆ ಕೊರಳಿಗೆ ಸುತ್ತಿಕೊಂಡು 10 ವರ್ಷದ ಬಾಲಕಿ ಸಾವು

ಚಿಕ್ಕಮಗಳೂರು: ಮನೆಯಲ್ಲೇ ಜೋಕಾಲಿ ಆಡುವಾಗ ಸೀರೆ ಕೊರಳಿಗೆ ಸುತ್ತಿಕೊಂಡು 10 ವರ್ಷದ ಬಾಲಕಿ ಮೃತಪಟ್ಟಿರುವ ದಾರುಣ ಘಟನೆ ತಾಲೂಕಿನ ಹೆಬ್ಬಳ್ಳಿ ಗ್ರಾಮದಲ್ಲಿ ನಡೆದಿದೆ.

ಲೇಖನಾ (10) ಮೃತ ಬಾಲಕಿ ಎಂದು ತಿಳಿದುಬಂದಿದೆ. ಘಟನೆ ಸಂಭವಿಸಿದ ವೇಳೆ ಬಾಲಕಿಯ ಪೋಷಕರು ಮನೆಯಲ್ಲಿ ಇರಲಿಲ್ಲ ಎನ್ನಲಾಗಿದೆ. ಮನೆಯಲ್ಲಿ ಜೋಕಾಲಿ ಹಾಕಿ ಆಟವಾಡುತ್ತಿದ್ದಾಗ ಸೀರೆ ಉರುಳಿ ಬಾಲಕಿಯ ಕೊರಳಿಗೆ ಸುತ್ತಿಕೊಂಡಿದ್ದು, ಉಸಿರುಗಟ್ಟಿದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ ಎಂಬ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ.

ಘಟನೆ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಮಾಹಿತಿ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಮುಂದುವರಿಸಿದ್ದಾರೆ.

ಭಾರತೀಯ ತೈಲ ಹಡಗುಗಳಿಗೆ ಟೋಲ್ ವಿಧಿಸಿಲ್ಲ: ಇರಾನ್ ಸ್ಪಷ್ಟನೆ!

0

ನವದೆಹಲಿ: ಹಾರ್ಮುಜ್ ಜಲಸಂಧಿಯ ಮೂಲಕ ಸಂಚರಿಸುವ ಭಾರತೀಯ ತೈಲ ಟ್ಯಾಂಕರ್‌ಗಳಿಗೆ ಯಾವುದೇ ಶುಲ್ಕ ವಿಧಿಸಲಾಗಿಲ್ಲ ಎಂದು ಇರಾನ್ ರಾಯಭಾರಿ ಮೊಹಮ್ಮದ್ ಫಥಾಲಿ ಸ್ಪಷ್ಟಪಡಿಸಿದ್ದಾರೆ.

ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತೀಯ ಹಡಗುಗಳಿಗೆ ಟೋಲ್ ವಿಧಿಸಲಾಗಿದೆ ಎಂಬ ವರದಿಗಳನ್ನು ತಳ್ಳಿಹಾಕಿದ್ದಾರೆ. ಈ ಕುರಿತು ಯಾವುದೇ ಗೊಂದಲವಿದ್ದರೆ ಭಾರತ ಸರ್ಕಾರವನ್ನು ಸಂಪರ್ಕಿಸುವಂತೆ ಅವರು ತಿಳಿಸಿದ್ದಾರೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್‌ಗೆ ಟೋಲ್ ಪಾವತಿಸುವ ಹಡಗುಗಳನ್ನು ತಡೆಯುವುದಾಗಿ ಎಚ್ಚರಿಕೆ ನೀಡಿದ ಬೆನ್ನಲ್ಲೇ ಈ ಸ್ಪಷ್ಟನೆ ಹೊರಬಂದಿದೆ.

ಫಥಾಲಿ ಅವರ ಪ್ರಕಾರ, ಹಾರ್ಮುಜ್ ಜಲಸಂಧಿಯಲ್ಲಿ ಭಾರತೀಯ ಹಡಗುಗಳ ಸುರಕ್ಷಿತ ಸಂಚಾರಕ್ಕಾಗಿ ಇರಾನ್ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಶೀಘ್ರದಲ್ಲೇ ಹೊಸ ಕಾರ್ಯವಿಧಾನವನ್ನು ಪ್ರಕಟಿಸಲಾಗುವುದು.

ಜಗತ್ತಿನ ಒಟ್ಟು ತೈಲ ಸಾಗಣೆಯ ಸುಮಾರು 20% ಹಾರ್ಮುಜ್ ಜಲಸಂಧಿಯ ಮೂಲಕ ನಡೆಯುತ್ತದೆ. ಇಲ್ಲಿ ಸಂಚಾರಕ್ಕೆ ಅಡ್ಡಿಯಾದರೆ ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅವರು ಎಚ್ಚರಿಸಿದ್ದಾರೆ.

ಅಂತರರಾಷ್ಟ್ರೀಯ ಸಮುದ್ರ ಕಾನೂನಿನ ಪ್ರಕಾರ (UNCLOS), ಜಾಗತಿಕ ಜಲಮಾರ್ಗದಲ್ಲಿ ಕೇವಲ ಸಂಚಾರಕ್ಕಾಗಿ ಶುಲ್ಕ ವಿಧಿಸುವಂತಿಲ್ಲ. ಈ ಹಿನ್ನೆಲೆಯಲ್ಲಿ ಇರಾನ್ ಟೋಲ್ ವಿಧಿಸುವ ಕುರಿತು ಹರಡಿದ್ದ ಸುದ್ದಿಗಳಿಗೆ ಈಗ ತೆರೆ ಬಿದ್ದಿದೆ.

ಇರಾನ್ ತನ್ನ ಜಲಸಂಧಿಯ ಮೂಲಕ ಹಾದುಹೋಗುವ ಹಡಗುಗಳಿಗೆ ಸುಮಾರು 2 ಮಿಲಿಯನ್ ಡಾಲರ್ (₹17 ಕೋಟಿ) ಟೋಲ್ ವಿಧಿಸುವ ಸಾಧ್ಯತೆ ಇದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಈ ಸ್ಪಷ್ಟನೆ ನೀಡಲಾಗಿದೆ.

ಭಾರತ ಮತ್ತು ಇರಾನ್ ನಡುವಿನ ದ್ವಿಪಕ್ಷೀಯ ಸಂಬಂಧಗಳು ಉತ್ತಮವಾಗಿದ್ದು, ಚಾಬಹಾರ್ ಬಂದರು ಅಭಿವೃದ್ಧಿಯಲ್ಲಿ ಭಾರತ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ರಾಯಭಾರಿ ತಿಳಿಸಿದ್ದಾರೆ.

ಗಾಂಜಾ ಸೇವಿಸಿ ಅನುಮಾನಾಸ್ಪದ ವರ್ತನೆ: ವಿದ್ಯಾರ್ಥಿ ವಿರುದ್ದ ಸುಮೊಟೊ ಕೇಸ್ ದಾಖಲು

ಶಿವಮೊಗ್ಗ: ವಿನೋಬನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗಾಂಜಾ ಸೇವಿಸಿ ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದ ಪದವಿ ವಿದ್ಯಾರ್ಥಿಯ ವಿರುದ್ಧ ಪೊಲೀಸರು ಸುಮೊಟೊ ಪ್ರಕರಣ ದಾಖಲಿಸಿದ್ದಾರೆ.

ಘಟನೆ ರಾತ್ರಿ ಗಸ್ತು ವೇಳೆ ನಡೆದಿದೆ. ಸಾರ್ವಜನಿಕ ಸ್ಥಳದಲ್ಲಿ ಒಬ್ಬ ಯುವಕ ಅಸ್ವಸ್ಥನಂತೆ ತೂರಾಡುತ್ತಿರುವುದನ್ನು ಕಂಡ ಪೊಲೀಸರು ತಕ್ಷಣ ಸ್ಥಳಕ್ಕೆ ತೆರಳಿ ವಿಚಾರಣೆ ನಡೆಸಿದ್ದಾರೆ. ಆತನ ವರ್ತನೆ ಅನುಮಾನಾಸ್ಪದವಾಗಿದ್ದ ಹಿನ್ನೆಲೆಯಲ್ಲಿ ಗಾಂಜಾ ಸೇವನೆ ಶಂಕೆ ವ್ಯಕ್ತವಾಗಿದೆ.

ಪೊಲೀಸರು ತಕ್ಷಣವೇ ಆತನನ್ನು ಮೆಗ್ಗಾನ್ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ. ವೈದ್ಯಕೀಯ ವರದಿಯಲ್ಲಿ ಆತ ಗಾಂಜಾ ಸೇವಿಸಿರುವುದು ದೃಢಪಟ್ಟಿದೆ ಎಂದು ತಿಳಿದುಬಂದಿದೆ.

ಈ ಹಿನ್ನೆಲೆಯಲ್ಲಿ ವಿನೋಬನಗರ ಪೊಲೀಸರು ಮಾದಕ ವಸ್ತು ಸೇವನೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮುಂದಿನ ತನಿಖೆ ನಡೆಯುತ್ತಿದೆ.

ಐಪಿಎಲ್ ಅಭಿಮಾನಿಗಳಿಗೆ ಗುಡ್ ನ್ಯೂಸ್: ಬೆಂಗಳೂರು ಮೆಟ್ರೋ ಸೇವೆ ವಿಸ್ತರಣೆ!

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಐಪಿಎಲ್ ಕ್ರೇಜ್ ಹೆಚ್ಚಾಗುತ್ತಿದ್ದಂತೆ ಕ್ರಿಕೆಟ್ ಅಭಿಮಾನಿಗಳಿಗೆ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ಸಿಹಿ ಸುದ್ದಿ ನೀಡಿದೆ.

ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಏಪ್ರಿಲ್ 15, 18 ಮತ್ತು 24ರಂದು ನಡೆಯಲಿರುವ ಐಪಿಎಲ್ ಪಂದ್ಯಗಳ ಹಿನ್ನೆಲೆಯಲ್ಲಿ ಮೆಟ್ರೋ ಸೇವೆ ಸಮಯವನ್ನು ವಿಸ್ತರಿಸಲಾಗಿದೆ. ಈ ದಿನಗಳಲ್ಲಿ ರಾತ್ರಿ 11ರಿಂದ ತಡರಾತ್ರಿ 2 ಗಂಟೆವರೆಗೆ ಹೆಚ್ಚುವರಿ ಮೆಟ್ರೋ ಸೇವೆ ಲಭ್ಯವಾಗಲಿದೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.

ಕೊನೆಯ ರೈಲುಗಳ ಸಮಯ ವಿವರ:
ವೈಟ್‌ಫೀಲ್ಡ್ ಮಾರ್ಗದಲ್ಲಿ ರಾತ್ರಿ 12:30ಕ್ಕೆ, ಚಲ್ಲಘಟ್ಟ ಮತ್ತು ಸಿಲ್ಕ್ ಇನ್‌ಸ್ಟಿಟ್ಯೂಟ್ ಮಾರ್ಗಗಳಲ್ಲಿ ರಾತ್ರಿ 12:45ಕ್ಕೆ, ಬೊಮ್ಮಸಂದ್ರ ಮಾರ್ಗದಲ್ಲಿ ರಾತ್ರಿ 1 ಗಂಟೆಗೆ ಕೊನೆಯ ರೈಲು ಸಂಚಾರ ನಡೆಯಲಿದೆ. ಮೆಜೆಸ್ಟಿಕ್‌ನಿಂದ ನಾಲ್ಕು ದಿಕ್ಕುಗಳಿಗೆ ರಾತ್ರಿ 1:30ಕ್ಕೆ ಕೊನೆಯ ರೈಲು ಹೊರಡಲಿದೆ.

ಸ್ಟೇಡಿಯಂಗೆ ಹತ್ತಿರವಿರುವ ಕಬ್ಬನ್ ಪಾರ್ಕ್ ಮತ್ತು ಎಂ.ಜಿ. ರಸ್ತೆ ಮೆಟ್ರೋ ನಿಲ್ದಾಣಗಳನ್ನು ಬಳಸಲು ಅಭಿಮಾನಿಗಳಿಗೆ ಸೂಚಿಸಲಾಗಿದೆ. ಅಲ್ಲದೆ ನಿಲ್ದಾಣಗಳಲ್ಲಿ ಹೆಚ್ಚುವರಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ದ್ವಿಚಕ್ರ ವಾಹನಗಳಿಗೆ 30 ರೂ ಹಾಗೂ ಕಾರುಗಳಿಗೆ 60 ರೂ ಪಾರ್ಕಿಂಗ್ ಶುಲ್ಕ ನಿಗದಿಪಡಿಸಲಾಗಿದೆ.

ಟ್ರಾಫಿಕ್ ಸಮಸ್ಯೆ ತಪ್ಪಿಸಲು ಮೆಟ್ರೋ ಬಳಕೆ ಮಾಡಲು ಬಿಎಂಆರ್‌ಸಿಎಲ್ ಮನವಿ ಮಾಡಿದೆ. ಜೊತೆಗೆ ಕ್ರಿಕೆಟ್ ಅಭಿಮಾನಿಗಳ ಅನುಕೂಲಕ್ಕಾಗಿ ಬಿಎಂಟಿಸಿ ವಿಶೇಷ ಬಸ್ ಸೇವೆಗಳನ್ನೂ ವಿಸ್ತರಿಸಿದೆ.

ಸರ್ಜಾಪುರ, ಎಲೆಕ್ಟ್ರಾನಿಕ್ ಸಿಟಿ, ಬನ್ನೇರುಘಟ್ಟ, ಯಲಹಂಕ, ಹೊಸಕೋಟೆ ಹಾಗೂ ಬನಶಂಕರಿ ಸೇರಿದಂತೆ ಹಲವು ಮಾರ್ಗಗಳಲ್ಲಿ ವಿಶೇಷ ಬಸ್ ಸಂಚಾರ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಿಳಿಸಲಾಗಿದೆ.

ವೇಗವಾಗಿ ಊಟ ಮಾಡುವ ಅಭ್ಯಾಸದಿಂದ ಬೊಜ್ಜಿನ ಅಪಾಯ ಹೆಚ್ಚಳ! ತಜ್ಞರ ಎಚ್ಚರಿಕೆ

0

ಇಂದಿನ ವೇಗದ ಜೀವನಶೈಲಿಯಲ್ಲಿ ಅನೇಕರು ಕೆಲಸದ ಒತ್ತಡದಿಂದ ಊಟವನ್ನು ತ್ವರಿತವಾಗಿ ಮುಗಿಸುವ ಅಭ್ಯಾಸವನ್ನು ಬೆಳೆಸಿಕೊಂಡಿದ್ದಾರೆ.

ಆದರೆ ಈ ಅಭ್ಯಾಸವು ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದ್ದು, ಬೊಜ್ಜಿನ ಸಮಸ್ಯೆ (Obesity) ಹೆಚ್ಚಿಸುವ ಸಾಧ್ಯತೆ ಇದೆ ಎಂದು ಆರೋಗ್ಯ ತಜ್ಞರು ಎಚ್ಚರಿಕೆ ನೀಡಿದ್ದಾರೆ.

ತಜ್ಞರ ಪ್ರಕಾರ, ವೇಗವಾಗಿ ಊಟ ಮಾಡಿದಾಗ ದೇಹಕ್ಕೆ ಹೊಟ್ಟೆ ತುಂಬಿದ ಸೂಚನೆ ಸರಿಯಾಗಿ ತಲುಪುವುದಿಲ್ಲ. ಇದರಿಂದ ವ್ಯಕ್ತಿ ಅಗತ್ಯಕ್ಕಿಂತ ಹೆಚ್ಚು ಆಹಾರ ಸೇವಿಸುವ ಸಾಧ್ಯತೆ ಹೆಚ್ಚುತ್ತದೆ. ಇದರ ಪರಿಣಾಮವಾಗಿ ದೇಹದ ತೂಕ ಹೆಚ್ಚಾಗಿ ಬೊಜ್ಜಿನ ಸಮಸ್ಯೆ ಉಂಟಾಗುತ್ತದೆ.

ಅಷ್ಟೇ ಅಲ್ಲ, ಆಹಾರವನ್ನು ಸರಿಯಾಗಿ ಜಗಿದು ತಿನ್ನದಿರುವುದರಿಂದ ಜೀರ್ಣಕ್ರಿಯೆ ನಿಧಾನಗೊಳ್ಳುತ್ತದೆ. ಇದರಿಂದ ಅಜೀರ್ಣ, ಹೊಟ್ಟೆ ಉಬ್ಬರ ಸೇರಿದಂತೆ ಹಲವು ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ದೀರ್ಘಕಾಲ ಈ ಅಭ್ಯಾಸ ಮುಂದುವರಿದರೆ ಮೆಟಾಬಾಲಿಸಂ ಕುಂಠಿತವಾಗಿ ದೇಹದಲ್ಲಿ ಕೊಬ್ಬು ಜಮೆಯಾಗಲು ಕಾರಣವಾಗುತ್ತದೆ.

ಇದಲ್ಲದೇ, ಹೆಚ್ಚು ಕ್ಯಾಲೊರಿ ಸೇವನೆಯಿಂದ ಹೃದಯ ಸಂಬಂಧಿತ ಕಾಯಿಲೆಗಳ ಅಪಾಯವೂ ಹೆಚ್ಚಾಗಬಹುದು. ಜೊತೆಗೆ ಇನ್ಸುಲಿನ್ ಅಸಮತೋಲನದಿಂದ ಟೈಪ್-2 ಮಧುಮೇಹದ ಸಾಧ್ಯತೆಯೂ ಹೆಚ್ಚುತ್ತದೆ ಎಂದು ತಜ್ಞರು ತಿಳಿಸಿದ್ದಾರೆ.

ಈ ಸಮಸ್ಯೆಗಳನ್ನು ತಪ್ಪಿಸಲು ನಿಧಾನವಾಗಿ, ಆಹಾರವನ್ನು ಆಸ್ವಾದಿಸುತ್ತಾ ತಿನ್ನುವುದು ಅತ್ಯಂತ ಮುಖ್ಯ. ಊಟ ಮಾಡುವಾಗ ಚೆನ್ನಾಗಿ ಜಗಿದು ತಿನ್ನುವುದು, ಮೊಬೈಲ್ ಮತ್ತು ಟಿವಿ ನೋಡುತ್ತಾ ಊಟ ಮಾಡುವ ಅಭ್ಯಾಸವನ್ನು ತಪ್ಪಿಸುವುದು ಅಗತ್ಯವಾಗಿದೆ.

ನಿಯಮಿತ ಸಮಯಕ್ಕೆ ಊಟ ಮಾಡುವುದು, ಸಮತೋಲನ ಆಹಾರ ಸೇವನೆ, ಜಂಕ್ ಫುಡ್ ಕಡಿಮೆ ಮಾಡುವುದು ಹಾಗೂ ಹಣ್ಣು–ತರಕಾರಿ, ಪ್ರೋಟೀನ್ ಮತ್ತು ಫೈಬರ್ ಸಮೃದ್ಧ ಆಹಾರವನ್ನು ಆಹಾರದಲ್ಲಿ ಸೇರಿಸುವುದು ಉತ್ತಮ ಎಂದು ಸಲಹೆ ನೀಡಲಾಗಿದೆ. ಜೊತೆಗೆ ನಿಯಮಿತ ವ್ಯಾಯಾಮ ಮತ್ತು ಸರಿಯಾದ ನಿದ್ರೆ ಆರೋಗ್ಯ ಕಾಪಾಡಲು ಸಹಾಯಕವಾಗುತ್ತದೆ.

ಅಂಪೈರ್ ಸೂಚನೆ ನಿರ್ಲಕ್ಷ್ಯ: RCB ಆಟಗಾರ ಟಿಮ್ ಡೇವಿಡ್​ಗೆ ಭಾರಿ ದಂಡ!

0

ಐಪಿಎಲ್ 2026ರ 20ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಆರ್‌ಸಿಬಿ ನಡುವೆ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ಆರ್‌ಸಿಬಿ ಬ್ಯಾಟರ್ ಟಿಮ್ ಡೇವಿಡ್ ನಿಯಮ ಉಲ್ಲಂಘನೆ ಮಾಡಿದ ಹಿನ್ನೆಲೆಯಲ್ಲಿ ಅವರಿಗೆ ದಂಡ ವಿಧಿಸಲಾಗಿದೆ.

ಐಪಿಎಲ್ ನೀತಿ ಸಂಹಿತೆಯ ಸೆಕ್ಷನ್ 2.4 ಉಲ್ಲಂಘಿಸಿದ ಕಾರಣ, ಟಿಮ್ ಡೇವಿಡ್‌ಗೆ ಪಂದ್ಯ ಶುಲ್ಕದ ಶೇಕಡಾ 25 ರಷ್ಟು ದಂಡ ಹಾಗೂ ಒಂದು ಡಿಮೆರಿಟ್ ಪಾಯಿಂಟ್ ವಿಧಿಸಲಾಗಿದೆ ಎಂದು ಅಧಿಕೃತವಾಗಿ ತಿಳಿದುಬಂದಿದೆ.

ಘಟನೆಯ ಪ್ರಕಾರ, ಮುಂಬೈ ಇಂಡಿಯನ್ಸ್ ಪರ ಹಾರ್ದಿಕ್ ಪಾಂಡ್ಯ ಬೌಲ್ ಮಾಡುತ್ತಿದ್ದ 18ನೇ ಓವರ್ ವೇಳೆ ಟಿಮ್ ಡೇವಿಡ್ ಬ್ಯಾಟಿಂಗ್ ಮಾಡುತ್ತಿದ್ದರು. ಈ ವೇಳೆ ನೋ-ಬಾಲ್‌ಗೆ ಸಿಕ್ಸರ್ ಸಿಡಿಸಿದ ಬಳಿಕ, ಚೆಂಡು ಒದ್ದೆಯಾಗಿದ್ದ ಕಾರಣ ಅಂಪೈರ್‌ಗಳು ಅದನ್ನು ಬದಲಾಯಿಸಲು ನಿರ್ಧರಿಸಿದರು.

ಹೊಸ ಚೆಂಡುಗಳನ್ನು ತರಲಾಗುತ್ತಿದ್ದಾಗ ಟಿಮ್ ಡೇವಿಡ್ ಚೆಂಡುಗಳ ಪೆಟ್ಟಿಗೆಯಿಂದ ಒಂದು ಚೆಂಡನ್ನು ತೆಗೆದುಕೊಂಡು ಅದನ್ನು ಪರಿಶೀಲಿಸುತ್ತಿದ್ದರು. ಅಂಪೈರ್ ಪದೇ ಪದೇ ಚೆಂಡನ್ನು ಹಿಂತಿರುಗಿಸಲು ಸೂಚಿಸಿದರೂ, ಡೇವಿಡ್ ಅದನ್ನು ಪಾಲಿಸದಿರುವುದು ವಿವಾದಕ್ಕೆ ಕಾರಣವಾಯಿತು.

ಮತ್ತೊಂದು ಘಟನೆಯಲ್ಲಿ, ಜಿತೇಶ್ ಅವರ ವಿಕೆಟ್ ನಂತರವೂ ಟಿಮ್ ಡೇವಿಡ್ ಚೆಂಡನ್ನು ಹಿಡಿದುಕೊಂಡು ಅಂಪೈರ್ ಸೂಚನೆಗಳನ್ನು ನಿರ್ಲಕ್ಷಿಸಿದರೆಂದು ವರದಿಯಾಗಿದೆ. ಈ ನಡೆ ಅಂಪೈರ್‌ಗಳ ನಿರ್ದೇಶನಕ್ಕೆ ವಿರುದ್ಧವಾಗಿದ್ದು, ನಿಯಮ ಉಲ್ಲಂಘನೆಯಾಗಿ ಪರಿಗಣಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಟಿಮ್ ಡೇವಿಡ್ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದು, ಪಂದ್ಯ ಅಧಿಕಾರಿಗಳು ನೀಡಿದ ಶಿಕ್ಷೆಯನ್ನು ಸ್ವೀಕರಿಸಿದ್ದಾರೆ ಎಂದು ಐಪಿಎಲ್ ಮೂಲಗಳು ತಿಳಿಸಿವೆ.

error: Content is protected !!