Home Blog Page 3

ತಮಿಳುನಾಡು ಕಾಂಗ್ರೆಸ್ ಶಾಸಕರು ಬೆಂಗಳೂರಿಗೆ ಬಂದಿಲ್ಲ: ವದಂತಿಗಳಿಗೆ ಡಿಕೆ ಶಿವಕುಮಾರ್ ಸ್ಪಷ್ಟನೆ

ಬೆಂಗಳೂರು: ತಮಿಳುನಾಡು ಕಾಂಗ್ರೆಸ್ ಶಾಸಕರು ಬೆಂಗಳೂರಿಗೆ ಬಂದಿದ್ದಾರೆ ಎಂಬ ವದಂತಿಗಳನ್ನು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಳ್ಳಿಹಾಕಿದ್ದಾರೆ. ಈ ಬಗ್ಗೆ ಹರಿದಾಡುತ್ತಿರುವ ಸುದ್ದಿಗಳೆಲ್ಲವೂ ಸುಳ್ಳು ಎಂದು ಸ್ಪಷ್ಟಪಡಿಸಿದ್ದಾರೆ.

ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್, ತಮಿಳುನಾಡು ಕಾಂಗ್ರೆಸ್ ಶಾಸಕರು ಈಗಲ್ಟನ್ ರೆಸಾರ್ಟ್‌ಗೆ ಬಂದಿದ್ದಾರೆ ಎನ್ನುವ ಮಾಹಿತಿ ಸಂಪೂರ್ಣ ತಪ್ಪು ಎಂದು ಹೇಳಿದರು.

ಈಗಲ್ಟನ್ ರೆಸಾರ್ಟ್‌ಗೆ ಯಾರೂ ಬಂದಿಲ್ಲ. ಆ ರೆಸಾರ್ಟ್ ಸದ್ಯ ದುರಸ್ತಿ ಕಾಮಗಾರಿಗಾಗಿ ಮುಚ್ಚಲಾಗಿದೆ. ಶಾಸಕರು ಹೈದರಾಬಾದ್‌ಗೆ ಹೋಗಿದ್ದಾರೆ ಎಂದು ಟಿವಿಯಲ್ಲಿ ನೋಡಿದ್ದೇನೆ ಅಷ್ಟೇ. ಈ ಕುರಿತು ನನಗೆ ಯಾವುದೇ ಮಾಹಿತಿ ಇಲ್ಲ. ಪಕ್ಷದ ಹೈಕಮಾಂಡ್‌ನವರೂ ಸಹ ನನ್ನೊಂದಿಗೆ ಯಾವುದೇ ಮಾತುಕತೆ ನಡೆಸಿಲ್ಲ ಎಂದು ತಿಳಿಸಿದರು.

ಪಕ್ಷದ ಹೈಕಮಾಂಡ್ ಮಾತನಾಡಿದ್ದರೆ ಅದು ಬೇರೆ ವಿಚಾರವಾಗುತ್ತಿತ್ತು. ಆಗ ನಾನು ಪಕ್ಷದ ನಿರ್ಧಾರದಂತೆ ನಡೆದುಕೊಳ್ಳುತ್ತಿದ್ದೆ. ಆದರೆ ಈ ವಿಚಾರದಲ್ಲಿ ನನಗೆ ಯಾವುದೇ ಮಾಹಿತಿ ಇಲ್ಲ. ಪ್ರಚಾರಕ್ಕೆ ಹೋಗಲು ಹೇಳಿದ್ದರು, ಹೋಗಿದ್ದೆ. ಪ್ರಣಾಳಿಕೆ ಬಿಡುಗಡೆಗೆ ಕರೆದಿದ್ದರು, ಅದಕ್ಕೂ ಹೋಗಿದ್ದೆ. ಇದನ್ನು ಬಿಟ್ಟರೆ ತಮಿಳುನಾಡಿನ ರಾಜಕೀಯ ಬೆಳವಣಿಗೆಗಳ ಬಗ್ಗೆ ಯಾರೂ ನನ್ನನ್ನು ಸಂಪರ್ಕಿಸಿಲ್ಲ ಎಂದು ಡಿಕೆ ಶಿವಕುಮಾರ್ ಹೇಳಿದರು.

ಇದೇ ವೇಳೆ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ಅಭಿಮಾನೋತ್ಸವದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಯಡಿಯೂರಪ್ಪ ರಾಜ್ಯಕ್ಕೆ ಸೇವೆ ಸಲ್ಲಿಸಿದ್ದಾರೆ. ಅವರಿಗೆ ಜನ್ಮದಿನ ಇದ್ದರೆ ಒಳ್ಳೆಯದಾಗಲಿ. ಭಗವಂತ ಅವರಿಗೆ ಆರೋಗ್ಯ ಮತ್ತು ಸುಖ ನೀಡಲಿ ಎಂದು ಹಾರೈಸಿದರು.

ಆದರೆ ರಾಜಕೀಯವಾಗಿ ಅವರ ವಿಚಾರಧಾರೆ ಬೇರೆ, ನಮ್ಮ ವಿಚಾರಧಾರೆ ಬೇರೆ ಎಂದು ಡಿಸಿಎಂ ಹೇಳಿದರು. ಕೇರಳದಲ್ಲಿ ಮುಖ್ಯಮಂತ್ರಿ ಆಯ್ಕೆ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಎಲ್ಲ ನಾಯಕರನ್ನು ಕರೆದು ಚರ್ಚೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ. ಎಲ್ಲಾ ರಾಜಕೀಯ ಪಕ್ಷಗಳಲ್ಲೂ ಇದೇ ರೀತಿಯ ಪ್ರಕ್ರಿಯೆ ನಡೆಯುತ್ತದೆ ಎಂದು ತಿಳಿಸಿದ್ದಾರೆ.

ರಷ್ಯಾ–ಉಕ್ರೇನ್ ಯುದ್ಧಕ್ಕೆ ತಾತ್ಕಾಲಿಕ ವಿರಾಮ: 3 ದಿನಗಳ ಕದನ ವಿರಾಮ ಘೋಷಣೆ

ವಾಷಿಂಗ್ಟನ್: ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧಕ್ಕೆ ತಾತ್ಕಾಲಿಕ ವಿರಾಮ ನೀಡುವ ಉದ್ದೇಶದಿಂದ ಮೇ 9ರಿಂದ 11ರವರೆಗೆ ಮೂರು ದಿನಗಳ ಕದನವಿರಾಮ ಘೋಷಿಸಲಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹಾಗೂ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರೊಂದಿಗೆ ಮಾತುಕತೆ ನಡೆಸಿದ ಬಳಿಕ ಪರಸ್ಪರ ಒಪ್ಪಿಗೆಯ ಮೇರೆಗೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಟ್ರಂಪ್ ತಮ್ಮ ‘ಟ್ರೂತ್ ಸೋಶಿಯಲ್’ ಖಾತೆಯಲ್ಲಿ ಪ್ರಕಟಿಸಿದ್ದಾರೆ.

ಈ ಕುರಿತು ಪೋಸ್ಟ್ ಮಾಡಿರುವ ಟ್ರಂಪ್, ದ್ವಿತೀಯ ಮಹಾಯುದ್ಧದ ವಿಜಯ ದಿನವನ್ನು ರಷ್ಯಾದಲ್ಲಿ ಆಚರಿಸಲಾಗುತ್ತಿದೆ. ಯುದ್ಧದಲ್ಲಿ ಭಾಗಿಯಾಗಿದ್ದ ಉಕ್ರೇನ್‌ನಲ್ಲಿಯೂ ಈ ಸಂದರ್ಭದಲ್ಲಿ ಕಾರ್ಯಕ್ರಮಗಳು ನಡೆಯಲಿವೆ. ಈ ಹಿನ್ನೆಲೆ ನನ್ನ ಮನವಿಯ ಮೇರೆಗೆ ಎರಡೂ ದೇಶಗಳ ನಾಯಕರು ಮೂರು ದಿನಗಳ ಕದನವಿರಾಮಕ್ಕೆ ಒಪ್ಪಿಗೆ ಸೂಚಿಸಿದ್ದಾರೆ ಎಂದು ತಿಳಿಸಿದ್ದಾರೆ.

ಕದನವಿರಾಮ ಅವಧಿಯಲ್ಲಿ ಉಭಯ ದೇಶಗಳ ನಡುವಿನ ಎಲ್ಲಾ ರೀತಿಯ ಸೈನಿಕ ಚಟುವಟಿಕೆಗಳನ್ನು ಸ್ಥಗಿತಗೊಳಿಸಲಾಗುತ್ತದೆ. ಜೊತೆಗೆ ಯುದ್ಧದಲ್ಲಿ ಬಂಧಿತರಾಗಿರುವ ಕೈದಿಗಳ ಪೈಕಿ ಪ್ರತಿ ದೇಶದಿಂದ 1,000 ಕೈದಿಗಳನ್ನು ಪರಸ್ಪರ ವಿನಿಮಯ ಮಾಡಿಕೊಳ್ಳಲು ಸಹ ಒಪ್ಪಂದವಾಗಿದೆಯೆಂದು ಟ್ರಂಪ್ ಹೇಳಿದ್ದಾರೆ.

ಇದೇ ವೇಳೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಕೂಡ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಈ ಬೆಳವಣಿಗೆಯನ್ನು ಖಚಿತಪಡಿಸಿದ್ದಾರೆ.

ಮೇ 9ರಿಂದ 11ರವರೆಗೆ ರಷ್ಯಾ ಜೊತೆ ತಾತ್ಕಾಲಿಕ ಕದನವಿರಾಮ ಜಾರಿಗೆ ಬರಲಿದ್ದು, ಅದರ ಭಾಗವಾಗಿ 1,000 ಯುದ್ಧ ಕೈದಿಗಳ ವಿನಿಮಯಕ್ಕೂ ಒಪ್ಪಂದವಾಗಿದೆ ಎಂದು ತಿಳಿಸಿದ್ದಾರೆ.

ಈ ರಾಜತಾಂತ್ರಿಕ ಮಾತುಕತೆ ಯಶಸ್ವಿಯಾಗಲು ಸಹಕರಿಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಅವರ ತಂಡಕ್ಕೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದು ಝೆಲೆನ್ಸ್ಕಿ ಹೇಳಿದ್ದಾರೆ. ಇನ್ನೊಂದೆಡೆ ರಷ್ಯಾ ಕೂಡ ಮೂರು ದಿನಗಳ ಕದನವಿರಾಮ ಘೋಷಣೆಯನ್ನು ಅಧಿಕೃತವಾಗಿ ದೃಢಪಡಿಸಿದೆ.

ಸರ್ಕಾರಿ ಆಸ್ಪತ್ರೆಯಲ್ಲೇ ಅಪ್ರಾಪ್ತೆಯ ಮೇಲೆ ದೌರ್ಜನ್ಯ: ಡಿ-ಗ್ರೂಪ್ ನೌಕರ ವಿರುದ್ಧ ಪೋಕ್ಸೋ ಕೇಸ್ ದಾಖಲು

0

ಬಳ್ಳಾರಿ: ವಿಜಯನಗರ ಜಿಲ್ಲೆಯ ಹೊಸಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದಡಿ ಡಿ-ಗ್ರೂಪ್ ನೌಕರನನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ಅಜಯ್ ಮದಕರಿ (37) ಎಂದು ಗುರುತಿಸಲಾಗಿದೆ. ತಾಯಿಯ ಚಿಕಿತ್ಸೆಗೆಂದು ಆಸ್ಪತ್ರೆಗೆ ಬಂದಿದ್ದ ಬಾಲಕಿಯನ್ನು ಆರೋಪಿ ತನ್ನ ನಿವಾಸಕ್ಕೆ ಕರೆದೊಯ್ದು ಮತ್ತು ಬರುವ ದ್ರವ್ಯ ನೀಡಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಬಾಲಕಿಯ ತಾಯಿ ನೀಡಿದ ದೂರಿನ ಮೇರೆಗೆ ಹೊಸಪೇಟೆ ಬಡಾವಣೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತಕ್ಷಣ ಕಾರ್ಯಾಚರಣೆ ನಡೆಸಿದ್ದಾರೆ.

ಪ್ರಕರಣ ಸಂಬಂಧ ಪೋಕ್ಸೋ ಕಾಯ್ದೆಯಡಿ ಎಫ್‌ಐಆರ್ ದಾಖಲಾಗಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಪ್ರಿಯಕರನ ಜೊತೆ ಸೇರಿ ಗಂಡನ ಮನೆಗೆ ಕನ್ನ ಹಾಕಿದ್ದ ಮಹಿಳೆ ಬಂಧನ

0

ಬೆಳಗಾವಿ: ಮದುವೆಯಾದ ಕೆಲವೇ ದಿನಗಳಲ್ಲಿ ಪ್ರಿಯಕರನ ಜೊತೆ ಸೇರಿ ಗಂಡನ ಮನೆಯಲ್ಲೇ ಕಳ್ಳತನ ನಡೆಸಿದ್ದ ಮಹಿಳೆ ಇದೀಗ ಪೊಲೀಸರ ಅತಿಥಿಯಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಹೊಸಕೋಟಿ ಗ್ರಾಮದಲ್ಲಿ ನಡೆದಿದೆ.

ಹಸೀನಾ ನದಾಫ್ ಹಾಗೂ ಆಕೆಯ ಪ್ರಿಯಕರ ಹಣಮಂತ ಮಾರಾಪೂರ ಬಂಧಿತರು. ಆರೋಪಿಗಳು ಸುಮಾರು 21 ಲಕ್ಷ ಮೌಲ್ಯದ 154.6 ಗ್ರಾಂ ಚಿನ್ನಾಭರಣ ಮತ್ತು ಬೆಳ್ಳಿಯ ಆಭರಣ ಕಳವು ಮಾಡಿರುವುದು ತನಿಖೆಯಲ್ಲಿ ಬಹಿರಂಗವಾಗಿದೆ.

ಮೂಲತಃ ಮೂಡಲಗಿ ತಾಲೂಕಿನ ನಿವಾಸಿಯಾಗಿರುವ ಹಸೀನಾ, ಎರಡು ತಿಂಗಳ ಹಿಂದೆ ಶರೀಫ್ ಜೊತೆ ವಿವಾಹವಾಗಿದ್ದಳು. ಆದರೆ ಮದುವೆಯ ಬಳಿಕವೂ ಪ್ರಿಯಕರನ ಸಂಪರ್ಕ ಮುಂದುವರಿಸಿಕೊಂಡಿದ್ದಳು. ಕೊನೆಗೆ ಗಂಡನ ಮನೆಯ ಚಿನ್ನಾಭರಣ ಕದ್ದು ಪ್ರಿಯಕರನ ಜೊತೆ ಪರಾರಿಯಾಗಲು ಯತ್ನಿಸಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ಕಟಕೋಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ದೂರಿನ ಮೇರೆಗೆ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿದೆ.

ಭಾರತದ ನೂತನ ರಕ್ಷಣಾ ಪಡೆಗಳ ಮುಖ್ಯಸ್ಥರಾಗಿ ಎನ್‌.ಎಸ್‌. ರಾಜಾ ಸುಬ್ರಮಣಿ ನೇಮಕ

ನವದೆಹಲಿ: ಭಾರತದ ರಕ್ಷಣಾ ಪಡೆಗಳ ನೂತನ ಮುಖ್ಯಸ್ಥರಾಗಿ ಲೆಫ್ಟಿನೆಂಟ್ ಜನರಲ್ ಎನ್‌.ಎಸ್‌. ರಾಜಾ ಸುಬ್ರಮಣಿ (ನಿವೃತ್ತ) ಅವರನ್ನು ಕೇಂದ್ರ ಸರ್ಕಾರ ನೇಮಕ ಮಾಡಿದೆ. ಇದೇ ವೇಳೆ ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ವೈಸ್ ಅಡ್ಮಿರಲ್ ಕೃಷ್ಣ ಸ್ವಾಮಿನಾಥನ್ ಅವರನ್ನು ನೇಮಕ ಮಾಡುವ ಮಹತ್ವದ ಆದೇಶವೂ ಹೊರಬಿದ್ದಿದೆ.

ಪ್ರಸ್ತುತ ಸಿಡಿಎಸ್ ಆಗಿರುವ ಜನರಲ್ ಅನಿಲ್ ಚೌಹಾಣ್ ಅವರು ಮೇ 30ರಂದು ತಮ್ಮ ಅಧಿಕಾರಾವಧಿ ಪೂರ್ಣಗೊಳಿಸಲಿದ್ದು, ಅವರ ಸ್ಥಾನವನ್ನು ರಾಜಾ ಸುಬ್ರಮಣಿ ವಹಿಸಿಕೊಳ್ಳಲಿದ್ದಾರೆ.

ಪ್ರಸ್ತುತ ರಾಷ್ಟ್ರೀಯ ಭದ್ರತಾ ಮಂಡಳಿ ಸಚಿವಾಲಯದಲ್ಲಿ ಮಿಲಿಟರಿ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿರುವ ಲೆಫ್ಟಿನೆಂಟ್ ಜನರಲ್ ರಾಜಾ ಸುಬ್ರಮಣಿ, ಕಳೆದ ವರ್ಷ ಜುಲೈ 31ರಂದು ಸೇನಾ ಸಿಬ್ಬಂದಿಯ ಉಪ ಮುಖ್ಯಸ್ಥ ಹುದ್ದೆಯಿಂದ ನಿವೃತ್ತರಾಗಿದ್ದರು.

ಎನ್‌.ಎಸ್‌. ರಾಜಾ ಸುಬ್ರಮಣಿ ಅವರು ಭಾರತೀಯ ಸೇನೆಯಲ್ಲಿ ಸುಮಾರು 39 ವರ್ಷಗಳ ಸೇವೆ ಸಲ್ಲಿಸಿರುವ ಅನುಭವಿ ಅಧಿಕಾರಿ. 1985ರ ಡಿಸೆಂಬರ್ 14ರಂದು ಗರ್ವಾಲ್ ರೈಫಲ್ಸ್‌ನ 8ನೇ ಬೆಟಾಲಿಯನ್‌ಗೆ ಮೊದಲ ಬಾರಿ ನಿಯೋಜನೆಗೊಂಡಿದ್ದರು.

ಅವರು ಕಳೆದ ವರ್ಷ ಸೆಪ್ಟೆಂಬರ್ 1ರಂದು ರಾಷ್ಟ್ರೀಯ ಭದ್ರತಾ ಮಂಡಳಿಯಲ್ಲಿ ಮಿಲಿಟರಿ ಸಲಹೆಗಾರರಾಗಿ ಜವಾಬ್ದಾರಿ ವಹಿಸಿಕೊಂಡಿದ್ದರು. ಇದಕ್ಕೂ ಮೊದಲು ಜುಲೈ 2024ರಿಂದ ಜುಲೈ 2025ರವರೆಗೆ ಭೂಸೇನೆಯ ಉಪ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದರು. ಅಲ್ಲದೆ, ಮಾರ್ಚ್ 2023ರಿಂದ ಜೂನ್ 2024ರವರೆಗೆ ಸೆಂಟ್ರಲ್ ಕಮಾಂಡ್‌ನ ಜನರಲ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್ ಆಗಿಯೂ ಸೇವೆ ಸಲ್ಲಿಸಿದ್ದರು.

ಭಾರತೀಯ ಸೇನೆಯಲ್ಲಿ ಸಲ್ಲಿಸಿದ ದೀರ್ಘಕಾಲದ ಸೇವೆ ಹಾಗೂ ಶೌರ್ಯವನ್ನು ಪರಿಗಣಿಸಿ ರಾಜಾ ಸುಬ್ರಮಣಿ ಅವರಿಗೆ ಹಲವು ಪ್ರತಿಷ್ಠಿತ ಸೇನಾ ಗೌರವಗಳು ಲಭಿಸಿವೆ. ಪರಮ ವಿಶಿಷ್ಟ ಸೇವಾ ಪದಕ, ಅತಿ ವಿಶಿಷ್ಟ ಸೇವಾ ಪದಕ, ಸೇನಾ ಪದಕ ಹಾಗೂ ವಿಶಿಷ್ಟ ಸೇವಾ ಪದಕ ಸೇರಿದಂತೆ ಅನೇಕ ಗೌರವಗಳು ಅವರ ಮುಡಿಗೇರಿವೆ.

ಜನರಲ್ ಅನಿಲ್ ಚೌಹಾಣ್ ನಿವೃತ್ತಿಯಾದ ಬಳಿಕ ಮೇ 30ರಂದು ರಾಜಾ ಸುಬ್ರಮಣಿ ಅವರು ಅಧಿಕೃತವಾಗಿ ದೇಶದ ರಕ್ಷಣಾ ಪಡೆಗಳ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.

ಕಡಿಮೆ ಬಡ್ಡಿ ಆಮಿಷಕ್ಕೆ ಚಿನ್ನ ದೋಚಿದ ಜ್ಯುವೆಲರಿ ಮಾಲೀಕ; ಅಂಗಡಿಗೆ ಬೀಗ ಜಡಿದು ಪರಾರಿ

ಬೆಂಗಳೂರು: ಕಡಿಮೆ ಬಡ್ಡಿದರದಲ್ಲಿ ಹೆಚ್ಚು ಸಾಲ ನೀಡುವುದಾಗಿ ನಂಬಿಸಿ ಗ್ರಾಹಕರ ಚಿನ್ನಾಭರಣ ಪಡೆದು ಕೋಟ್ಯಂತರ ರೂಪಾಯಿ ವಂಚನೆ ನಡೆಸಿದ ಆರೋಪದಡಿ ಬೆಂಗಳೂರಿನ ಜ್ಯುವೆಲರಿ ಶಾಪ್ ಮಾಲೀಕನ ವಿರುದ್ಧ ಪ್ರಕರಣ ದಾಖಲಾಗಿದೆ. ಆರೋಪಿಯು ಅಂಗಡಿ ಮುಚ್ಚಿ ತಲೆಮರೆಸಿಕೊಂಡಿದ್ದಾನೆ.

ರಾಘವೇಂದ್ರ ಜ್ಯುವೆಲರಿ ಶಾಪ್ ಮಾಲೀಕ ತೇಜಸ್ ಗೌಡ ಅಲಿಯಾಸ್ ಮೂರ್ತಿ ಈ ವಂಚನೆ ಪ್ರಕರಣದ ಪ್ರಮುಖ ಆರೋಪಿ. ವಿವಿಧ ಫೈನಾನ್ಸ್ ಕಂಪನಿಗಳಲ್ಲಿ ಚಿನ್ನ ಅಡವಿಟ್ಟಿದ್ದ ಗ್ರಾಹಕರ ಮಾಹಿತಿ ಸಂಗ್ರಹಿಸಿ, ಕಡಿಮೆ ಬಡ್ಡಿಗೆ ಹೆಚ್ಚಿನ ಸಾಲ ನೀಡುವುದಾಗಿ ಆಮಿಷ ಒಡ್ಡುತ್ತಿದ್ದ ಎನ್ನಲಾಗಿದೆ.

ಗ್ರಾಹಕರು ನಂಬಿದ ಬಳಿಕ ಅವರ ಅಡವಿಟ್ಟಿದ್ದ ಚಿನ್ನವನ್ನು ಬಿಡಿಸಿಕೊಂಡು, ತನ್ನದೇ ಜ್ಯುವೆಲರಿ ಅಂಗಡಿಯಲ್ಲಿ ಇಟ್ಟುಕೊಳ್ಳುತ್ತಿದ್ದ. ಕಳೆದ ಒಂದು ವರ್ಷದಿಂದ ಇದೇ ಮಾದರಿಯಲ್ಲಿ ವಂಚನೆ ನಡೆಸಿದ್ದ ಆರೋಪಿ, ಕಳೆದ ಮೂರು ತಿಂಗಳಿಂದ ಅಂಗಡಿ ಮುಚ್ಚಿ ಪರಾರಿಯಾಗಿದ್ದಾನೆ.

ಯಲಹಂಕ ಅಳ್ಳಾಳಸಂದ್ರ ನಿವಾಸಿ ಸೌಮ್ಯಲತಾ ಅವರಿಗೆ ಮಾತ್ರವೇ 50 ಲಕ್ಷ ರೂ.ಕ್ಕೂ ಅಧಿಕ ವಂಚನೆ ನಡೆದಿರುವ ಆರೋಪ ಕೇಳಿಬಂದಿದೆ. ಪ್ರಕರಣ ಸಂಬಂಧ ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಪೊಲೀಸರು ಆರೋಪಿಗಾಗಿ ಶೋಧ ಕಾರ್ಯ ಆರಂಭಿಸಿದ್ದಾರೆ.

ಮನೆಯಲ್ಲಿ ಇಲಿಗಳ ಕಾಟವೇ? ತಪ್ಪದೇ ಅನುಸರಿಸಿ ಈ ಟಿಪ್ಸ್ – ಮತ್ತೆ ಬರಲ್ಲ

ಮನೆಯಲ್ಲಿ ಮಕ್ಕಳ ಕಿತಾಪತಿ ಸಹಿಸಿಕೊಳ್ಳಬಹುದು. ಆದರೆ ಇಲಿಗಳ ಕಾಟ ಮಾತ್ರ ಯಾರಿಗೂ ಸುಲಭವಾಗಿ ತಾಳಲಾಗದು. ಒಮ್ಮೆ ಇಲಿ ಮನೆಗೆ ಪ್ರವೇಶಿಸಿದರೆ, ಅದು ವೇಗವಾಗಿ ಹೆಚ್ಚಾಗಿ ದೊಡ್ಡ ಸಮಸ್ಯೆಯಾಗಬಹುದು. ಆಹಾರ ಪದಾರ್ಥಗಳನ್ನು ಹಾಳುಮಾಡುವುದು, ಬಟ್ಟೆಗಳನ್ನು ಕಚ್ಚುವುದು, ವಿದ್ಯುತ್ ತಂತಿಗಳನ್ನು ಹಾನಿಗೊಳಿಸುವುದು ಮಾತ್ರವಲ್ಲದೆ, ಮನೆಯಲ್ಲಿ ಮಲಮೂತ್ರ ವಿಸರ್ಜನೆ ಮಾಡುವ ಮೂಲಕ ರೋಗಾಣುಗಳನ್ನು ಹರಡುವ ಅಪಾಯವೂ ಇರುತ್ತದೆ.

ಬಹಳಷ್ಟು ಮಂದಿ ಮಾರುಕಟ್ಟೆಯಲ್ಲಿ ಸಿಗುವ ಇಲಿ ವಿಷ ಅಥವಾ ರಾಸಾಯನಿಕಗಳನ್ನು ಬಳಸುತ್ತಾರೆ. ಆದರೆ ಅವುಗಳಿಂದ ಇಲಿಗಳು ಸತ್ತು ಮನೆಯೊಳಗಿನ ಮೂಲೆಗಳಲ್ಲಿ ಕೊಳೆಯುವ ಸಾಧ್ಯತೆ ಇದೆ. ಇದರಿಂದ ದುರ್ವಾಸನೆ ಉಂಟಾಗುತ್ತದೆ. ಜೊತೆಗೆ, ಮನೆಯಲ್ಲಿ ಸಣ್ಣ ಮಕ್ಕಳು ಅಥವಾ ಸಾಕುಪ್ರಾಣಿಗಳು ಇದ್ದರೆ ಇಂತಹ ವಿಷಕಾರಿ ಪದಾರ್ಥಗಳ ಬಳಕೆ ಅಪಾಯಕಾರಿಯಾಗಬಹುದು. ಇಂತಹ ಸಂದರ್ಭದಲ್ಲಿ ಮನೆಯಲ್ಲೇ ಸುಲಭವಾಗಿ ಸಿಗುವ ಕೆಲವು ನೈಸರ್ಗಿಕ ವಿಧಾನಗಳ ಮೂಲಕ ಇಲಿಗಳನ್ನು ಓಡಿಸಬಹುದು.

ಪುದೀನದ ವಾಸನೆ ಪರಿಣಾಮಕಾರಿ
ಪುದೀನದ ಸುವಾಸನೆ ಮನುಷ್ಯರಿಗೆ ಇಷ್ಟವಾದರೂ, ಇಲಿಗಳಿಗೆ ಅದು ಅಸಹ್ಯಕರ. ಪುದೀನದಲ್ಲಿರುವ ಮೆಂಥಾಲ್ ಇಲಿಗಳ ಉಸಿರಾಟ ವ್ಯವಸ್ಥೆಗೆ ತೊಂದರೆ ಉಂಟುಮಾಡುತ್ತದೆ. ಹತ್ತಿ ಉಂಡೆಗಳ ಮೇಲೆ ನಾಲ್ಕು–ಐದು ಹನಿ ಪುದೀನ ಎಣ್ಣೆ ಹಾಕಿ, ಇಲಿಗಳು ಓಡಾಡುವ ಸ್ಥಳಗಳು, ರಂಧ್ರಗಳ ಬಳಿ ಅಥವಾ ಅಡುಗೆಮನೆಯ ಮೂಲೆಗಳಲ್ಲಿ ಇಟ್ಟರೆ ಉತ್ತಮ ಫಲಿತಾಂಶ ಸಿಗುತ್ತದೆ. ಎಣ್ಣೆ ಲಭ್ಯವಿಲ್ಲದಿದ್ದರೆ ತಾಜಾ ಪುದೀನ ಎಲೆಗಳನ್ನು ರುಬ್ಬಿ ಬಳಸಬಹುದು.

ಕೆಂಪು ಮೆಣಸಿನ ಪುಡಿಯ ತಂತ್ರ
ಕೆಂಪು ಮೆಣಸಿನ ಪುಡಿ ಇಲಿಗಳಿಗೆ ತೀವ್ರ ಕಿರಿಕಿರಿ ಉಂಟುಮಾಡುತ್ತದೆ. ಇಲಿಗಳ ಪ್ರವೇಶದ್ವಾರಗಳ ಬಳಿ ಅಥವಾ ರಂಧ್ರಗಳ ಸುತ್ತ ಸ್ವಲ್ಪ ಮೆಣಸಿನ ಪುಡಿಯನ್ನು ಸಿಂಪಡಿಸಬಹುದು. ಆದರೆ ಇದನ್ನು ಬಳಸುವಾಗ ಜಾಗರೂಕತೆ ಅಗತ್ಯ. ಪುಡಿ ಗಾಳಿಯಲ್ಲಿ ಹರಡದಂತೆ ನೋಡಿಕೊಳ್ಳಬೇಕು. ಮಕ್ಕಳಿಂದ ದೂರವಿಡಬೇಕು.

ಈರುಳ್ಳಿ ಚೂರುಗಳ ಉಪಯೋಗ
ಈರುಳ್ಳಿಯ ತೀವ್ರ ವಾಸನೆ ಇಲಿಗಳಿಗೆ ಇಷ್ಟವಿರುವುದಿಲ್ಲ. ಈರುಳ್ಳಿಯನ್ನು ದೊಡ್ಡ ತುಂಡುಗಳಾಗಿ ಕತ್ತರಿಸಿ, ಕಪಾಟುಗಳ ಒಳಗೆ, ಸೋಫಾದ ಹಿಂದೆ ಅಥವಾ ಇಲಿಗಳು ಹೆಚ್ಚಾಗಿ ಕಾಣಿಸುವ ಸ್ಥಳಗಳಲ್ಲಿ ಇಡಬಹುದು. ಆದರೆ ಈರುಳ್ಳಿ ಬೇಗನೆ ಹಾಳಾಗುವುದರಿಂದ ಒಂದು ಅಥವಾ ಎರಡು ದಿನಕ್ಕೊಮ್ಮೆ ಬದಲಾಯಿಸಬೇಕು.

ಇಲಿ ಸಮಸ್ಯೆ ಮರುಕಳಿಸದಂತೆ ತಡೆಯಲು ಈ ಕ್ರಮಗಳು ಮುಖ್ಯ

ಆಹಾರ ಸುರಕ್ಷತೆ: ಆಹಾರ ಪದಾರ್ಥಗಳನ್ನು ಯಾವಾಗಲೂ ಗಾಳಿಯಾಡದ ಡಬ್ಬಿಗಳಲ್ಲಿ ಸಂಗ್ರಹಿಸಿ.

ಸ್ವಚ್ಛತೆ: ಅಡುಗೆಮನೆಯನ್ನು ರಾತ್ರಿ ಸಮಯದಲ್ಲಿ ಸಂಪೂರ್ಣ ಸ್ವಚ್ಛವಾಗಿಡಿ. ಉಳಿದ ಆಹಾರ ಅಥವಾ ಕಸ ಹೊರಗೆ ಇರಬಾರದು.

ರಂಧ್ರ ಮುಚ್ಚುವುದು: ಮನೆಯ ಗೋಡೆಗಳು, ಬಾಗಿಲುಗಳು ಅಥವಾ ಕಿಟಕಿಗಳ ಬಳಿ ಇರುವ ಸಣ್ಣ ರಂಧ್ರಗಳನ್ನು ಸಿಮೆಂಟ್ ಅಥವಾ ಲೋಹದ ಜಾಲರಿಯಿಂದ ಮುಚ್ಚಿ.

ಈ ಸರಳ ವಿಧಾನಗಳನ್ನು ಅನುಸರಿಸಿದರೆ, ರಾಸಾಯನಿಕಗಳ ಬಳಕೆಯಿಲ್ಲದೆ ಮನೆಯನ್ನು ಇಲಿಗಳ ಕಾಟದಿಂದ ಸುರಕ್ಷಿತವಾಗಿಡಬಹುದು.

ರಿವರ್ಸ್ ವೇಳೆ ವಿದ್ಯಾರ್ಥಿನಿಯರ ಮೇಲೆ ಹರಿದ ಥಾರ್: ವಿದ್ಯಾರ್ಥಿನಿ ಸಾವು, ಮೂವರ ಸ್ಥಿತಿ ಗಂಭೀರ

0

ರಾಯಚೂರು: ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಮಹೀಂದ್ರಾ ಥಾರ್ ವಾಹನ ಹರಿದು ವಿದ್ಯಾರ್ಥಿನಿಯೊಬ್ಬಳು ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಘಟನೆಯಲ್ಲಿ ಮೂವರು ವಿದ್ಯಾರ್ಥಿನಿಯರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಅರಗಿನಮರ ಕ್ಯಾಂಪ್ ನಿವಾಸಿ ಭೂಮಿಕಾ (17) ಮೃತ ವಿದ್ಯಾರ್ಥಿನಿ ಎಂದು ಗುರುತಿಸಲಾಗಿದೆ. ಮೇಘನಾ, ಮಹೇಶ್ವರಿ ಹಾಗೂ ಜಹೀದಾ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಕಾಲೇಜು ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದ ವೇಳೆ ಚಾಲಕ ರಿವರ್ಸ್ ತೆಗೆದುಕೊಳ್ಳುವಾಗ ನಿರ್ಲಕ್ಷ್ಯದಿಂದ ವಾಹನ ವಿದ್ಯಾರ್ಥಿನಿಯರ ಮೇಲೆ ಹರಿದಿದೆ ಎಂದು ತಿಳಿದುಬಂದಿದೆ. ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಂಧನೂರು ಸಂಚಾರ ಠಾಣೆ ಪೊಲೀಸರು ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಗುಂಡ್ಯಹೊಳೆಯಲ್ಲಿ ದುರಂತ; ಸ್ನಾನಕ್ಕೆ ಹೋದ ಇಬ್ಬರು ವಿದ್ಯಾರ್ಥಿನಿಯರು ನೀರಲ್ಲಿ ಮುಳುಗಿ ಸಾವು

ಮಂಗಳೂರು: ಮಂಗಳೂರಿನ ಕಡಬ ತಾಲೂಕಿನ ಕುಟ್ರುಪ್ಪಾಡಿ ಗ್ರಾಮದ ಕೊಲ್ಯದಕಟ್ಟ ಸಮೀಪದ ಗುಂಡ್ಯಹೊಳೆಯಲ್ಲಿ ಸಂಭವಿಸಿದ ದುರಂತದಲ್ಲಿ ಇಬ್ಬರು ವಿದ್ಯಾರ್ಥಿನಿಯರು ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

ಸ್ನಾನಕ್ಕೆಂದು ನದಿಗೆ ತೆರಳಿದ್ದ ನಾಲ್ವರಲ್ಲಿ ಸುನೀತಾ (21) ಮತ್ತು ಅರ್ಪಿತಾ (15) ನೀರಿನ ಸೆಳೆತಕ್ಕೆ ಸಿಲುಕಿ ಮುಳುಗಿದ್ದಾರೆ. ಮೃತರು ಕುಟ್ರುಪ್ಪಾಡಿ ನಿವಾಸಿಗಳಾಗಿದ್ದು, ಒಂದೇ ಕುಟುಂಬಕ್ಕೆ ಸೇರಿದವರಾಗಿದ್ದಾರೆ ಎನ್ನಲಾಗಿದೆ.

ಘಟನೆ ತಿಳಿಯುತ್ತಿದ್ದಂತೆಯೇ ಸ್ಥಳೀಯರು ರಕ್ಷಣಾ ಕಾರ್ಯಾಚರಣೆ ನಡೆಸಿ ಇಬ್ಬರ ಮೃತದೇಹಗಳನ್ನು ಹೊರತೆಗೆದಿದ್ದಾರೆ. ಪ್ರಕರಣ ಸಂಬಂಧ ಕಡಬ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಚಿಕಿತ್ಸೆ ಫಲಿಸದೆ ಕಾಡಾನೆ ಸಾವು; ಗೋಪಿನಾಥಂ ವನ್ಯಧಾಮದಲ್ಲಿ ಅರಣ್ಯ ಇಲಾಖೆ ಕಳವಳ

ಚಾಮರಾಜನಗರ: ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಗೋಪಿನಾಥಂ ಕಾವೇರಿ ವನ್ಯಧಾಮದಲ್ಲಿ ಗಾಯಗೊಂಡಿದ್ದ ಗಂಡಾನೆ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದೆ. ಕೆಲ ದಿನಗಳ ಹಿಂದೆ ಜಲಾಶಯಕ್ಕೆ ನೀರು ಕುಡಿಯಲು ಬಂದಿದ್ದ ವೇಳೆ ಕಾಡಾನೆ ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಸ್ಥಳೀಯರು ಮಾಹಿತಿ ನೀಡುತ್ತಿದ್ದಂತೆಯೇ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಚಿಕಿತ್ಸೆಯನ್ನು ಆರಂಭಿಸಿದ್ದರು.

ಗಾಯಗೊಂಡಿದ್ದ ಆನೆಯ ಆರೋಗ್ಯ ಸ್ಥಿತಿ ಗಂಭೀರವಾಗಿದ್ದ ಹಿನ್ನೆಲೆ ನಿರಂತರ ನಿಗಾವಹಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಗಂಡಾನೆ ಕೊನೆಯುಸಿರೆಳೆದಿದೆ. ಕಾಡಾನೆಯ ಸಾವಿನಿಂದ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸ್ಥಳೀಯರಲ್ಲಿ ಬೇಸರ ಮೂಡಿಸಿದೆ.

ಕಾಡಾನೆ ಸಾವಿನ ನಿಖರ ಕಾರಣ ತಿಳಿಯಲು ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ. ಅರಣ್ಯ ಪ್ರದೇಶದಲ್ಲಿ ವನ್ಯಜೀವಿಗಳ ಚಲನವಲನ ಹೆಚ್ಚಾಗಿರುವ ಹಿನ್ನೆಲೆ ಇಲಾಖೆ ಹೆಚ್ಚುವರಿ ನಿಗಾ ವಹಿಸಿದೆ.

error: Content is protected !!