Home Blog

ತಿಪ್ಪಣ್ಣ ಕಮಕನೂರ್‌ಗೆ ಸಚಿವ ಸ್ಥಾನ ನೀಡಿ!

ವಿಜಯಸಾಕ್ಷಿ ಸುದ್ದಿ, ಹಗರಿಬೊಮ್ಮನಹಳ್ಳಿ: ವಿಜಯನಗರ ಜಿಲ್ಲೆಯ ಹಿಂದುಳಿದ ವರ್ಗಗಳ ನಾಯಕ ಹಾಗೂ ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣ ಕಮಕನೂರ್ ಅವರಿಗೆ ಸಚಿವ ಸ್ಥಾನ ನೀಡಬೇಕು ಹಾಗೂ ಅವರ ವಿಧಾನ ಪರಿಷತ್ ಸದಸ್ಯತ್ವ ಅವಧಿಯನ್ನು ಮುಂದಿನ ಆರು ವರ್ಷಗಳಿಗೆ ವಿಸ್ತರಿಸಬೇಕು ಎಂದು ವಿಜಯನಗರ ಜಿಲ್ಲಾ ಗಂಗಾಮತ ಬೆಸ್ತ ಸಮಾಜ ಸಂಘ ಸರ್ಕಾರವನ್ನು ಒತ್ತಾಯಿಸಿದೆ.
ಪಟ್ಟಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿಜಯನಗರ ಜಿಲ್ಲಾ ಗಂಗಾಮತ ಬೆಸ್ತ ಸಮಾಜದ ಜಿಲ್ಲಾಧ್ಯಕ್ಷ ಅಂಬಾಡಿ ನಾಗರಾಜ್, “ಗಂಗಾಮತ, ಬೆಸ್ತ, ಕೋಲಿ ಹಾಗೂ ಕಬ್ಬಲಿಗ ಸಮಾಜದ ಪ್ರತಿನಿಧಿಯಾಗಿ ತಿಪ್ಪಣ್ಣ ಕಮಕನೂರ್ ಅವರು ಹಲವು ವರ್ಷಗಳಿಂದ ಸಾಮಾಜಿಕ ಹೋರಾಟ ನಡೆಸಿದ್ದಾರೆ. ಆಡಳಿತದ ಅನುಭವ ಹೊಂದಿರುವ ಅವರು ಜನಪರ ಕಾಳಜಿಯ ನಾಯಕ” ಎಂದು ಹೇಳಿದರು.
ಜೂನ್ 2026ಕ್ಕೆ ತಿಪ್ಪಣ್ಣ ಕಮಕನೂರ್ ಅವರ ನಾಲ್ಕು ವರ್ಷದ ಸದಸ್ಯತ್ವ ಅವಧಿ ಪೂರ್ಣಗೊಳ್ಳಲಿದ್ದು, ಅವರ ಅನುಭವ ಹಾಗೂ ಸಮಾಜಪರ ಸೇವೆಯನ್ನು ಗಮನಿಸಿ ಮುಂದಿನ ಆರು ವರ್ಷಗಳಿಗೂ ಅವಧಿ ವಿಸ್ತರಿಸಬೇಕು ಎಂದು ಆಗ್ರಹಿಸಿದರು.
ನಿಯೋಜಿತ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಹೊಸ ಸಚಿವ ಸಂಪುಟದಲ್ಲಿ ತಿಪ್ಪಣ್ಣ ಕಮಕನೂರ್ ಅವರಿಗೆ ಸಚಿವ ಸ್ಥಾನ ನೀಡಬೇಕು. ಹಿಂದುಳಿದ ವರ್ಗಗಳ ಧ್ವನಿಯಾಗಿ ಕೆಲಸ ಮಾಡುತ್ತಿರುವ ನಾಯಕರಿಗೆ ಸರ್ಕಾರ ಸೂಕ್ತ ಗೌರವ ನೀಡಬೇಕು ಎಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸರ್ದಾರ್ ಯಮನೂರಪ್ಪ, ಬಾರಿಕರ ಪರಶುರಾಮ್, ಸೂರ್ಯ ನಾರಾಯಣಪ್ಪ, ಸರ್ದಾರ್ ಜೀವಪ್ಪ, ಎಲ್ಐಸಿ ಪರಶುರಾಮ್, ಸರ್ದಾರ ಸಿದ್ದಪ್ಪ, ವೆಂಕಟೇಶ್ ವಲ್ಲಭಾಪುರ, ಪೂಜಾರ್ ಶ್ರೀನಿವಾಸ್, ಅಂಬಿಗರ ಮಂಜುನಾಥ, ಅಕಾರಿ ಸುನಿಲ್, ಅಂಬಿಗರ ಪುನೀತ್ ಸೇರಿದಂತೆ ಸಮಾಜದ ಮುಖಂಡರು ಉಪಸ್ಥಿತರಿದ್ದರು.

ಬೀದಿ ನಾಯಿ ದಾಳಿಗೆ ಏಳು ಜನ ಗಾಯ

ವಿಜಯಸಾಕ್ಷಿ ಸುದ್ದಿ, ಹಗರಿಬೊಮ್ಮನಹಳ್ಳಿ: ತಾಲೂಕಿನ ಹಂಪಾಪಟ್ಟಣ ಗ್ರಾಮದಲ್ಲಿ ಬೀದಿ ನಾಯಿಯೊಂದು ಸರಣಿ ದಾಳಿ ನಡೆಸಿ ಏಳು ಮಂದಿಗೆ ಗಾಯಪಡಿಸಿದ ಘಟನೆ ಗ್ರಾಮಸ್ಥರಲ್ಲಿ ಭೀತಿ ಮೂಡಿಸಿದೆ.
ಗುರುವಾರ ಸಂಜೆ ಸುಮಾರು 4 ಗಂಟೆ ವೇಳೆಗೆ ಗ್ರಾಮದ ರಸ್ತೆಯಲ್ಲಿ ಸಂಚರಿಸುತ್ತಿದ್ದ ಜನರ ಮೇಲೆ ಏಕಾಏಕಿ ದಾಳಿ ನಡೆಸಿದ ನಾಯಿ, ಮೂವರಿಗೆ ಕಚ್ಚಿ ಗಾಯಪಡಿಸಿದೆ. ಬಳಿಕ ಅದೇ ರಾತ್ರಿ ಇನ್ನೂ ಮೂವರ ಮೇಲೆ ದಾಳಿ ನಡೆಸಿದ್ದು, ಶುಕ್ರವಾರ ಮುಂಜಾನೆ ಮತ್ತೊಬ್ಬ ಯುವಕನಿಗೂ ನಾಯಿ ಕಚ್ಚಿರುವುದಾಗಿ ತಿಳಿದು ಬಂದಿದೆ.
ಹೀಗೆ ಎರಡು ದಿನಗಳ ಅವಧಿಯಲ್ಲಿ ಏಳು ಮಂದಿ ಗಾಯಗೊಂಡಿದ್ದು, ಗ್ರಾಮದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಗಾಯಾಳುಗಳನ್ನು ತಕ್ಷಣ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಗಂಭೀರವಾಗಿ ಗಾಯಗೊಂಡ ಕೆಲವರನ್ನು ಹೆಚ್ಚಿನ ಚಿಕಿತ್ಸೆಗೆ ಕೊಪ್ಪಳ ಆಸ್ಪತ್ರೆಗೆ ರವಾನಿಸಲಾಗಿದೆ.
ನಾಯಿಯ ದಾಳಿಯಿಂದ ಗ್ರಾಮಸ್ಥರು ಭಯಭೀತರಾಗಿದ್ದು, ಸ್ಥಳೀಯರು ನಾಯಿಯನ್ನು ಓಡಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ. ಗ್ರಾಮದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಂಡು ಬೀದಿ ನಾಯಿಗಳ ನಿಯಂತ್ರಣಕ್ಕೆ ಮುಂದಾಗಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಭಗೀರಥನ ಓಣಿಯಲ್ಲೇ ನೀರಿನ ಬರ!

ವಿಜಯಸಾಕ್ಷಿ ಸುದ್ದಿ, ಗದಗ: ಪಟ್ಟಣದಲ್ಲಿ ಕಳೆದ ಎರಡು-ಮೂರು ವರ್ಷಗಳಿಂದ ಕುಡಿಯುವ ನೀರಿನ ಸಮಸ್ಯೆ ನಿರಂತರವಾಗಿದ್ದು, ತುಂಗಭದ್ರ ನೀರು ಪೂರೈಕೆಯಾಗುತ್ತಿದ್ದರೂ ಸಮರ್ಪಕ ನಿರ್ವಹಣೆಯ ಕೊರತೆಯಿಂದ ಜನರಿಗೆ ಸರಿಯಾಗಿ ನೀರು ಸಿಗುತ್ತಿಲ್ಲ ಎಂಬ ಆರೋಪಗಳು ಹೆಚ್ಚುತ್ತಿವೆ.
ಪಟ್ಟಣದ ಹಳೆ ಬಸ್ ನಿಲ್ದಾಣದ ಬಳಿಯ ನಿವಾಸಿಗಳು ಶನಿವಾರ ಸಾರ್ವಜನಿಕ ನಲ್ಲಿಗಳ ಬಳಿ ನೀರಿಗಾಗಿ ಗಂಟೆಗಟ್ಟಲೆ ಕಾಯ್ದು ನಿಂತ ದೃಶ್ಯ ಕಂಡು ಬಂದಿತು. ಕಳೆದ 20ರಿಂದ 30 ದಿನಗಳಿಂದ ಈ ಭಾಗಕ್ಕೆ ತುಂಗಭದ್ರ ಕುಡಿಯುವ ನೀರು ಪೂರೈಕೆಯಾಗಿಲ್ಲ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದರು.
ಸಾರ್ವಜನಿಕ ನಲ್ಲಿಗಳಲ್ಲೂ ಸಮರ್ಪಕ ನೀರು ಬಾರದ ಹಿನ್ನೆಲೆಯಲ್ಲಿ ಜನರು ಪುರಸಭೆ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಇದೇ ಭಾಗದಲ್ಲಿ ಪಟ್ಟಣಕ್ಕೆ ಕುಡಿಯುವ ನೀರಿನ ಯೋಜನೆ ಜಾರಿಗೆ ತರುವಲ್ಲಿ ಶ್ರಮಿಸಿದ ಮಾಜಿ ಶಾಸಕ ಜಿ.ಎಸ್. ಗಡ್ಡದ್ದೇವರಮಠ ಅವರ ನಿವಾಸವಿದ್ದು, “ನೀರು ತಂದ ಭಗೀರಥನ ಓಣಿಯಲ್ಲೇ ಈಗ ನೀರಿನ ಬರ ಎದುರಾಗಿದೆ” ಎಂದು ನಿವಾಸಿಗಳು ವ್ಯಂಗ್ಯವಾಡುತ್ತಿದ್ದಾರೆ.
ನೀರಿನ ಸಮಸ್ಯೆ ಕುರಿತು ಪುರಸಭೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾರೂ ಸ್ಪಂದಿಸುತ್ತಿಲ್ಲ. ಪಟ್ಟಣದ ಬಹುತೇಕ ಭಾಗಗಳಲ್ಲಿ ಇದೇ ಪರಿಸ್ಥಿತಿ ನಿರ್ಮಾಣವಾಗಿದ್ದು, ಜನರು ನಿತ್ಯ ಸಂಕಷ್ಟ ಅನುಭವಿಸುವಂತಾಗಿದೆ ಎಂದು ಸ್ಥಳೀಯರು ದೂರಿದರು.
ಕೂಡಲೇ ಸಮಸ್ಯೆ ಬಗೆಹರಿಸದಿದ್ದರೆ ಪುರಸಭೆ ಕಚೇರಿ ಎದುರು ಕೊಡಗಳನ್ನು ಇಟ್ಟು ಪ್ರತಿಭಟನೆ ನಡೆಸುವುದಾಗಿ ನಿವಾಸಿಗಳು ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಉಮಾ ಮುತಗೊಂಡ, ಮುರಗಯ್ಯ ಅಕಳಂಡಸ್ವಾಮಿಮಠ, ಶಿವಯೋಗಿ ಗಡ್ಡದೇವರಮಠ, ಜ್ಯೋತಿ ಕೂಸನೂರುಮಠ, ಶೈಲಾ ಗಡ್ಡದೇವರಮಠ, ಮಲ್ಲಯ್ಯ ಗಡ್ಡದೇವರಮಠ, ಬಸನಗೌಡ ಮನ್ನಂಗಿ, ಕೊಟ್ರೆಶ್ ಕೆಸರಳ್ಳಿಮಠ, ಮಂಜುಳಾ ಕೂಸನೂರುಮಠ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
 “ತುಂಗಭದ್ರ ನೀರು ಬರುತ್ತಿದೆ ಎನ್ನುವ ಮಾತು ಮಾತ್ರ ಇದೆ; ಆದರೆ ಕಳೆದ 30 ದಿನಗಳಿಂದ ನಮ್ಮ ಮನೆಗಳಿಗೆ ಒಂದು ಹನಿ ನೀರೂ ಬಂದಿಲ್ಲ”
ಸ್ಥಳೀಯ ನಿವಾಸಿಗಳು

ಪಿಣರಾಯಿ ಮನೆ ಮೇಲೆ ಇ.ಡಿ ದಾಳಿ ಖಂಡಿಸಿ ಸಿಪಿಐ(ಎಂ) ಪ್ರತಿಭಟನೆ

ವಿಜಯಸಾಕ್ಷಿ ಸುದ್ದಿ, ಹಗರಿಬೊಮ್ಮನಹಳ್ಳಿ: ಕೇರಳದ ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ವಿರೋಧ ಪಕ್ಷದ ನಾಯಕರಾದ ಪಿಣರಾಯಿ ವಿಜಯನ್ ಅವರ ನಿವಾಸದ ಮೇಲೆ ನಡೆದ ಇ.ಡಿ ದಾಳಿಯನ್ನು ಖಂಡಿಸಿ ಸಿಪಿಐ(ಎಂ) ಪಕ್ಷದ ತಾಲೂಕು ಸಮಿತಿಯಿಂದ ಶನಿವಾರ ಪಟ್ಟಣದ ಬಸವೇಶ್ವರ ವೃತ್ತದ ಬಳಿ ಭಾರಿ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. “ಇ.ಡಿ ದಾಳಿ ಎಂಬುದು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ರಾಜಕೀಯ ಪ್ರತೀಕಾರದ ಭಾಗ. ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ಒಂದೇ ತಿಂಗಳೊಳಗೆ ಪಿಣರಾಯಿ ವಿಜಯನ್ ನಿವಾಸದ ಮೇಲೆ ದಾಳಿ ನಡೆಸಿರುವುದು ವಿರೋಧ ಪಕ್ಷದ ನಾಯಕರನ್ನು ಬೆದರಿಸುವ ಉದ್ದೇಶವನ್ನೇ ಸ್ಪಷ್ಟಪಡಿಸುತ್ತದೆ” ಎಂದು ಆರೋಪಿಸಿದರು.
ಎಕ್ಸಲಾಜಿಕ್ ಪ್ರಕರಣಕ್ಕೂ ಪಿಣರಾಯಿ ವಿಜಯನ್ ಅವರಿಗೂ ಯಾವುದೇ ಸಂಬಂಧವಿಲ್ಲ ಎಂದು ನ್ಯಾಯಾಲಯಗಳು ಹಲವು ಬಾರಿ ಗಮನಿಸಿದರೂ, ರಾಜಕೀಯ ಬೇಟೆ ಮಾತ್ರ ನಿರಂತರವಾಗಿ ಮುಂದುವರಿಯುತ್ತಿದೆ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.
ಕೇರಳದ ಮುಖ್ಯಮಂತ್ರಿ ವಿ.ಡಿ. ಸತೀಶನ್ ಅವರು ದೆಹಲಿಯಲ್ಲಿ ಪ್ರಧಾನಮಂತ್ರಿಯನ್ನು ಭೇಟಿ ಮಾಡಿದ ತಕ್ಷಣವೇ ಈ ದಾಳಿ ನಡೆದಿರುವುದು ಹಲವು ಗಂಭೀರ ಅನುಮಾನಗಳಿಗೆ ಕಾರಣವಾಗಿದೆ ಎಂದು ಮುಖಂಡರು ಆರೋಪಿಸಿದರು.
ರಾಜ್ಯದಲ್ಲಿ ಯುಡಿಎಫ್ ಸರ್ಕಾರ ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಇಂತಹ ಕ್ರಮಗಳು ಜರುಗುತ್ತಿರುವುದು ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ ಬೆಳವಣಿಗೆ. ಕೇರಳದಲ್ಲಿ ಜನರು ಈಗಾಗಲೇ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದು, ದೇಶದಾದ್ಯಂತ ಇದರ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ ಎಂದು ಹೇಳಿದರು.
ಕೇಂದ್ರ ಸರ್ಕಾರದ ಜನವಿರೋಧಿ, ನವ ಉದಾರವಾದಿ ಹಾಗೂ ದಮನಕಾರಿ ನೀತಿಗಳ ವಿರುದ್ಧ ಜನಸಾಮಾನ್ಯರ ಧ್ವನಿಯನ್ನು ಸಿಪಿಐ(ಎಂ) ಪಕ್ಷ ಸದಾ ರಕ್ಷಿಸಲಿದೆ. ಜನಪರ ಹೋರಾಟ ಮುಂದುವರಿಯಲಿದೆ ಎಂದು ಪ್ರತಿಭಟನಾಕಾರರು ಘೋಷಿಸಿದರು.
ಪ್ರತಿಭಟನೆಯ ನೇತೃತ್ವವನ್ನು ತಾಲೂಕು ಕಾರ್ಯದರ್ಶಿ ಬಿ. ಮಾಳಮ್ಮ ವಹಿಸಿದ್ದರು. ತಾಲೂಕು ಸಮಿತಿ ಮುಖಂಡರಾದ ಎಸ್. ಜಗನ್ನಾಥ, ಕೆ. ರಮೇಶ್, ಜಿ. ರಮೇಶ್, ಕೆ. ರಾಮಣ್ಣ, ಸರ್ದಾರ್ ಹುಲಿಗೆಮ್ಮ, ಬಿ. ಮೈಲಮ್ಮ, ತಟ್ನಮ್ಮ, ರಂಗಪ್ಪ ದಾಸರ, ಕೂಟಗಿ ಮಲ್ಲಿಕಾರ್ಜುನ, ದುರುಗಮ್ಮ ಸೇರಿದಂತೆ ಹಲವರು ಭಾಗವಹಿಸಿದ್ದರು.
“ರಾಜಕೀಯ ವಿರೋಧಿಗಳನ್ನು ಮಣಿಸಲು ತನಿಖಾ ಸಂಸ್ಥೆಗಳನ್ನು ಬಳಸುವುದು ಪ್ರಜಾಪ್ರಭುತ್ವದ ಮೌಲ್ಯಗಳ ಮೇಲಿನ ನೇರ ದಾಳಿ”
ಬಿ. ಮಾಳಮ್ಮ

ಮಳೆಯ ಸಿಂಚನಕ್ಕೆ ಹಸಿರುಗೂಡಾದ ಕಪ್ಪತ್ತಗುಡ್ಡ

ವಿಜಯಸಾಕ್ಷಿ ಸುದ್ದಿ, ಡಂಬಳ: ವರ್ಷವಿಡೀ ಅರಣ್ಯ ಇಲಾಖೆಯ ವಿಶೇಷ ಕಾಳಜಿಯಿಂದ ಕಂಗೊಳಿಸುತ್ತಿರುವ ಕಪ್ಪತ್ತಗುಡ್ಡ ಇದೀಗ ಮತ್ತೆ ಪ್ರಕೃತಿ ಪ್ರಿಯರನ್ನು ತನ್ನತ್ತ ಕೈಬೀಸಿ ಕರೆಯುತ್ತಿದೆ. ದಿವ್ಯ ಔಷಧೀಯ ಸಸ್ಯಗಳ ಆಗರವಾಗಿರುವ ಕಪ್ಪತ್ತಗಿರಿಯ ಅರಣ್ಯ ಪ್ರದೇಶದಲ್ಲಿ ನಾನಾ ಬಗೆಯ ಸುವಾಸನೆಯ ಕಾಡು ಹೂಗಳು ಅರಳಿ ಪರಿಸರಾಸಕ್ತರ ಮನ ಸೆಳೆಯುತ್ತಿವೆ.
ಗದಗ, ಶಿರಹಟ್ಟಿ ಹಾಗೂ ಮುಂಡರಗಿ ತಾಲೂಕು ವ್ಯಾಪ್ತಿಯಲ್ಲಿ ಸುಮಾರು ೬೨ ಕಿ.ಮೀ ಉದ್ದ ಹಾಗೂ ೩೩ ಸಾವಿರ ಹೆಕ್ಟೇರ್ ವ್ಯಾಪ್ತಿಯಲ್ಲಿ ಹರಡಿಕೊಂಡಿರುವ ಕಪ್ಪತ್ತಗಿರಿ, ಮಳೆಯ ಸಿಂಚನಕ್ಕೆ ಹಚ್ಚಹಸಿರಿನಿಂದ ಕಂಗೊಳಿಸುತ್ತಿದೆ. ಇತ್ತೀಚೆಗೆ ಸುರಿಯುತ್ತಿರುವ ಮಳೆಯಿಂದ ಗುಡ್ಡದ ಅರಣ್ಯ ಪ್ರದೇಶ ಇನ್ನಷ್ಟು ಜೀವಂತಗೊಂಡಿದ್ದು, ನೂರಾರು ಬಗೆಯ ಹೂಗಳು ಅರಳಿ ಸುವಾಸನೆ ಬೀರುತ್ತಿವೆ. ದುಂಬಿಗಳ ಝೇಂಕಾರ, ಹಕ್ಕಿ-ಪಕ್ಷಿಗಳ ಕಲರವ, ವನ್ಯಜೀವಿಗಳ ಸಂಚಾರ ಹಾಗೂ ಮುಂಜಾನೆ ಗುಡ್ಡದ ಮಡಿಲಲ್ಲಿ ತೇಲಾಡುವ ಬೆಳ್ಳಿ ಮೋಡಗಳು ಕಪ್ಪತ್ತಗಿರಿಯ ಸೌಂದರ್ಯವನ್ನು ಇಮ್ಮಡಿಗೊಳಿಸಿವೆ.
ಹೂಗಳ ಪರಿಮಳಕ್ಕೆ ಮನಸೋತ ಪ್ರವಾಸಿಗರು
ರಾಜ್ಯ ಹಾಗೂ ವಿದೇಶಗಳಿಂದಲೂ ಪ್ರವಾಸಿಗರನ್ನು ಸೆಳೆಯುತ್ತಿರುವ ಕಪ್ಪತ್ತಗುಡ್ಡ ಪ್ರದೇಶದ ದ್ರೋಣಗಿರಿ ಸೇರಿದಂತೆ ಅನೇಕ ಬೆಟ್ಟಗಳ ಸುತ್ತಮುತ್ತ ಕಾಡು ಮಲ್ಲಿಗೆ, ಹೊನ್ನವರೆ, ಡಬ್ಬುಗೊಳಿ, ಕಾಡು ಕನಕಾಂಬರ, ತಾವರೆ, ಸಂಪಿಗೆ, ಕಾಡು ಸೂರ್ಯಕಾಂತಿ, ನೀಲಿ ಕುರುಂಜಿ, ಕಾಡು ಗುಲಾಬಿ, ತಂಗಡಿ ಹೂ, ಬಿಳಿ ಲಿಲಿ, ಕೆಂಪು ಬಲ್ಸಂ ಹಾಗೂ ಕಾಡು ಚಾಮಂತಿ ಸೇರಿ ನೂರಾರು ಬಗೆಯ ಅಪರೂಪದ ಹೂಗಳು ಅರಳಿ ನಿಂತಿವೆ.
ಬೆಳಿಗ್ಗೆ ಮತ್ತು ಸಂಜೆ ವೇಳೆಯಲ್ಲಿ ಹರಡುವ ಸುಗಂಧ ಪರಿಸರವನ್ನು ಮತ್ತಷ್ಟು ಮನಮೋಹಕಗೊಳಿಸುತ್ತಿದೆ. ಹೂವಿನ ಮಕರಂದ ಸವಿಯಲು ಜೇನುನೊಣಗಳು ಹಾಗೂ ಬಣ್ಣ ಬಣ್ಣದ ಪತಂಗಗಳು ಗುಂಪುಗೂಡುತ್ತಿರುವ ದೃಶ್ಯ ಕಪ್ಪತ್ತಗುಡ್ಡದ ಎಲ್ಲೆಡೆ ಕಣ್ಮನ ಸೆಳೆಯುತ್ತಿದೆ.
ಔಷಧೀಯ ಸಸ್ಯಗಳ ಅಪರೂಪದ ಭಂಡಾರ
ಕಪ್ಪತ್ತಗಿರಿ ಕೇವಲ ಪ್ರವಾಸಿ ತಾಣವಷ್ಟೇ ಅಲ್ಲ, ಅಪರೂಪದ ಔಷಧೀಯ ಸಸ್ಯಗಳ ನೈಸರ್ಗಿಕ ಸಂಗ್ರಹಾಲಯವೂ ಹೌದು. ಬಸವನಪಾದ, ರುದ್ರಾಕ್ಷಿ ಸಪ್ತಪರ್ಣ, ಅನಂತಮೂಲ, ಅಜವಾನ, ಅತ್ತಿ, ಅಡಸೋಗಿ, ಚಿತ್ರಮೂಲ, ಸಂಜೀವಿನಿ, ಕಾಡು ತುಳಸಿ, ಅಮೃತಬಳ್ಳಿ, ರಕ್ತಚಂದನ, ಪಾರಿಜಾತ, ಪುಷ್ಕರಮೂಲ, ಶಂಖಪುಷ್ಪ, ಹಿಪ್ಪಲಿ ಸೇರಿದಂತೆ ನೂರಾರು ಔಷಧೀಯ ಸಸ್ಯಗಳು ಇಲ್ಲಿ ಸಮೃದ್ಧವಾಗಿ ಬೆಳೆಯುತ್ತಿವೆ.
ಅರಣ್ಯ ಇಲಾಖೆ ಸಂರಕ್ಷಿಸಿ ಬೆಳೆಸಿರುವ ವಿವಿಧ ತಳಿಯ ಸಸ್ಯಗಳು ಪರಿಸರ ತಜ್ಞರು, ಸಂಶೋಧಕರು ಹಾಗೂ ಪ್ರಕೃತಿ ಪ್ರಿಯರ ಅಧ್ಯಯನ ಆಸಕ್ತಿಯನ್ನು ಹೆಚ್ಚಿಸುತ್ತಿವೆ.
ಬೆಂಕಿಯ ಬಳಿಕವೂ ಅರಳಿದ ಹಸಿರು ಜೀವಂತಿಕೆ
ಬೇಸಿಗೆಯಲ್ಲಿ ಕೆಲ ಕಿಡಿಗೇಡಿಗಳಿಂದ ಉಂಟಾದ ಬೆಂಕಿಗೆ ಕೆಲವೆಡೆ ಗಿಡ-ಮರಗಳು ಸುಟ್ಟು ಕರಕಲಾಗಿದ್ದರೂ, ಇದೀಗ ಸುರಿಯುತ್ತಿರುವ ಮಳೆಯಿಂದ ಮತ್ತೆ ಚಿಗುರೊಡೆದು ಹೂ-ಕಾಯಿಗಳನ್ನು ಬಿಟ್ಟಿವೆ. ಪ್ರಕೃತಿಯ ಪುನರುತ್ಥಾನದ ಈ ಅದ್ಭುತ ದೃಶ್ಯ ಪರಿಸರ ಪ್ರಿಯರಿಗೆ ಹೊಸ ಚೈತನ್ಯ ತುಂಬುತ್ತಿದೆ.
ಅರಣ್ಯ ಇಲಾಖೆಯ ಕಣ್ಗಾವಲು
ಮುಂಡರಗಿ ಅರಣ್ಯ ವಲಯಾಧಿಕಾರಿ ಮಂಜುನಾಥ ಆರ್. ಮೇಗಲಮನಿ ನೇತೃತ್ವದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿ, ಸಿಸಿ ಕ್ಯಾಮೆರಾ ಹಾಗೂ ಡ್ರೋನ್ ಕ್ಯಾಮೆರಾಗಳ ಕಣ್ಗಾವಲು ವ್ಯವಸ್ಥೆಯಿಂದ ಕಪ್ಪತ್ತಗಿರಿಯ ಪರಿಸರ ಸಂರಕ್ಷಣೆ ಪರಿಣಾಮಕಾರಿಯಾಗಿ ನಡೆಯುತ್ತಿದೆ. ಇದರ ಫಲವಾಗಿ ಹೂ ಬಳ್ಳಿಗಳು ಹಾಗೂ ಔಷಧೀಯ ಸಸ್ಯಗಳು ಉತ್ತಮವಾಗಿ ಬೆಳೆಯಲು ಸಾಧ್ಯವಾಗಿದೆ.
ಪ್ರಕೃತಿ ಮಡಿಲಲ್ಲಿ ಮನಮೋಹಕ ಕ್ಷಣಗಳು
ಕಪ್ಪತ್ತಗುಡ್ಡದ ಗಿರಿ ಸಾಲುಗಳಲ್ಲಿ ಮೃದುವಾಗಿ ಬೀಸುವ ತಂಗಾಳಿ, ಆಕಾಶ ಮುಟ್ಟುವ ಬೆಳ್ಳಿಯಂತ ಮೋಡಗಳು, ವನ್ಯಮೃಗಗಳ ಜಿಗಿದಾಟ, ನವಿಲುಗಳ ನಾಟ್ಯ, ಹಕ್ಕಿಗಳ ಕಲರವ ಹಾಗೂ ಹಸಿರು ಹುಲ್ಲಿನ ಹಾಸು ನೋಡುಗರನ್ನು ಮಂತ್ರಮುಗ್ಧರನ್ನಾಗಿಸುತ್ತಿದೆ. ಅಲ್ಲದೆ ಹಲವು ದಶಕಗಳಿಂದ ಗುಹೆಗಳಲ್ಲಿ ನೆಲೆಸಿರುವ ಸಾಧು-ಸಂತರ ತಪೋಭೂಮಿ, ಕೆರೆಗಳು ಹಾಗೂ ಪ್ರಕೃತಿಯ ರಮಣೀಯ ದೃಶ್ಯಗಳು ಪ್ರವಾಸಿಗರಿಗೆ ವಿಶಿಷ್ಟ ಅನುಭವ ನೀಡುತ್ತಿವೆ.
“ಈಗಾಗಲೇ ಸುರಿದ ಅಕಾಲಿಕ ಮಳೆ ಹಾಗೂ ಸದ್ಯದ ಮಳೆಯಿಂದ ಕಪ್ಪತ್ತಗುಡ್ಡ ಸಂಪೂರ್ಣ ಹಸಿರಿನಿಂದ ಕಂಗೊಳಿಸುತ್ತಿದೆ. ನೂರಾರು ಔಷಧೀಯ ಸಸ್ಯಗಳು ಹೂ ಬಿಟ್ಟಿವೆ. ಈ ಬಾರಿ ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುವ ನಿರೀಕ್ಷೆ ಇದೆ. ಪರಿಸರ ಸಂರಕ್ಷಣೆಗೆ ಪ್ಲಾಸ್ಟಿಕ್ ಮುಕ್ತ ಚಾರಣಕ್ಕೆ ಒತ್ತು ನೀಡಲಾಗಿದೆ. ಪರಿಸರ ಹಾನಿಗೆ ಯತ್ನಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು.”
ಮಂಜುನಾಥ ಆರ್. ಮೇಗಲಮನಿ
ಅರಣ್ಯ ವಲಯಾಧಿಕಾರಿ, ಕಪ್ಪತ್ತಗುಡ್ಡ, ಮುಂಡರಗಿ ತಾಲೂಕು

ಹಿಂದುಳಿದ ಸಮುದಾಯಗಳ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ಘೋಷಿಸಿ: ಸಂಗಮೇಶ ಹಾದಿಮನಿ

ವಿಜಯಸಾಕ್ಷಿ ಸುದ್ದಿ, ಗದಗ: ಜಿಲ್ಲೆಯ ಗಂಗಾಮತಸ್ಥರು ಹಾಗೂ ಅಂಬಿಗೇರ, ಬಾರಕೇರ, ಸುಣಗಾರ, ಕಬ್ಬೇರ, ಬೆಸ್ತ ಸೇರಿದಂತೆ 39 ಪರ್ಯಾಯ ಪದಗಳನ್ನು ಹೊಂದಿರುವ ಸಮುದಾಯಗಳ ಅಭಿವೃದ್ಧಿಗೆ ಸರ್ಕಾರ ವಿಶೇಷ ಯೋಜನೆಗಳನ್ನು ರೂಪಿಸಬೇಕು ಎಂದು ಯುವನಾಯಕ ಸಮುದಾಯದ ಪ್ರಧಾನ ಕಾರ್ಯದರ್ಶಿ ಹಾಗೂ ಗಂಗಾಮತಸ್ಥ ನೌಕರರ ಸಂಘದ ರಾಜ್ಯ ನಿರ್ದೇಶಕ ಸಂಗಮೇಶ ಹಾದಿಮನಿ ಆಗ್ರಹಿಸಿದ್ದಾರೆ.
ಗದಗ ಜಿಲ್ಲೆಯಲ್ಲಿ ಗಂಗಾಮತ ಹಾಗೂ ಸಂಬಂಧಿತ ಸಮುದಾಯಗಳ ಜನಸಂಖ್ಯೆ ಅಪಾರವಾಗಿದ್ದು, ನಗರ ಪ್ರದೇಶಗಳಲ್ಲಿ ನೂರಾರು ಬಡ ಕುಟುಂಬಗಳು ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿವೆ. ಈ ಸಮುದಾಯಗಳು ಸಾಮಾಜಿಕವಾಗಿ, ಆರ್ಥಿಕವಾಗಿ ಹಾಗೂ ಶೈಕ್ಷಣಿಕವಾಗಿ ಹಿಂದುಳಿದ ಸ್ಥಿತಿಯಲ್ಲಿವೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಬಡತನದ ಕಾರಣಕ್ಕೆ ಮಕ್ಕಳ ಶಿಕ್ಷಣ ಕುಂಠಿತಗೊಳ್ಳಬಾರದು. ಸರ್ಕಾರ ಹಿಂದುಳಿದ ಸಮುದಾಯಗಳ ಅಭಿವೃದ್ಧಿಗೆ ಹೊಸ ಯೋಜನೆಗಳನ್ನು ರೂಪಿಸಿ ಸಮಾನತೆಯಿಂದ ಬದುಕಲು ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಸಮುದಾಯದ ಮೂಲ ವೃತ್ತಿಗಳಿಗೆ ಉತ್ತೇಜನ ನೀಡುವ ಮೂಲಕ ಸಾಲ-ಸೌಲಭ್ಯಗಳನ್ನು ಒದಗಿಸಬೇಕು. ಕಡುಬಡತನದಲ್ಲಿರುವ ಕುಟುಂಬಗಳ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡುವುದರ ಮೂಲಕ ಶಿಕ್ಷಣ ಕ್ರಾಂತಿಗೆ ಸರ್ಕಾರ ಮುಂದಾಗಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಲಿಂಗಾಯತ ಧರ್ಮ ನಾಶಕ್ಕೆ ಸಂಚು: ಸಾಹಿತಿ ಬಸವರಾಜ ಸೂಳಿಭಾವಿ ವಾಗ್ದಾಳಿ

ವಿಜಯಸಾಕ್ಷಿ ಸುದ್ದಿ, ಗದಗ: ಲಿಂಗಾಯತ ಧರ್ಮವು ಮಾನವೀಯತೆ, ಸಮಾನತೆ ಮತ್ತು ಸಹಬಾಳ್ವೆಯ ತತ್ವಗಳ ಮೇಲೆ ನಿಂತಿರುವ ಸ್ವತಂತ್ರ ಧರ್ಮವಾಗಿದ್ದು, ಹಿಂದೂ ಸಮಾವೇಶಗಳ ಹೆಸರಿನಲ್ಲಿ ಅದನ್ನು ಒಡೆಯುವ ಹಾಗೂ ಬಸವ ತತ್ವವನ್ನು ಮಸುಕುಗೊಳಿಸುವ ಹುನ್ನಾರ ನಡೆಯುತ್ತಿದೆ ಎಂದು ಸಾಹಿತಿ ಬಸವರಾಜ ಸೂಳಿಭಾವಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ “ಸಮಾನತೆಗಾಗಿ ನಾವು” ಸಂಘಟನೆ ಆಶ್ರಯದಲ್ಲಿ ವಿವಿಧ ಪ್ರಗತಿಪರ ಸಂಘಟನೆಗಳು ಹಾಗೂ ದಲಿತ ಸಂಘಟನೆಗಳ ಸಹಯೋಗದಲ್ಲಿ ನಡೆದ ವಚನ ಅರಿವಿನ ಮಹಾಯಾನ, ಬಸವಾದಿ ಶಿವಶರಣರ ವಚನಗಳ ಸಾಮೂಹಿಕ ಪಠಣ ಮತ್ತು ಸಂವಿಧಾನದ ಪೂರ್ವಪೀಠಿಕೆಯ ಸಮಾನತೆಯ ಉದ್ಘೋಷ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಲಿಂಗಾಯತ ಧರ್ಮದ ವೈಶಿಷ್ಟ್ಯತೆ ಮತ್ತು ಬಸವ ತತ್ವಗಳ ಬಗ್ಗೆ ಪ್ರಖರವಾಗಿ ಅಭಿಪ್ರಾಯ ವ್ಯಕ್ತಪಡಿಸಿದರು.
“ಜನಿವಾರವನ್ನು ಕಿತ್ತೊಗೆದು ಸಮಾನತೆ ತಂದ ಬಸವಣ್ಣನಿಗೆ ಮತ್ತೆ ಜನಿವಾರ ತೊಡಿಸುವ ಪ್ರಯತ್ನ ನಡೆಯುತ್ತಿದೆ. ‘ದೇಹವೇ ದೇವಾಲಯ’ ಎಂದ ಬಸವ ತತ್ವಕ್ಕೆ ವಿರುದ್ಧವಾಗಿ ಊರಿಗೊಂದು, ಓಣಿಗೊಂದು ದೇವಾಲಯ ನಿರ್ಮಿಸಿ ಮಹಿಳೆಯರನ್ನು ದೇವದಾಸಿಯರನ್ನಾಗಿ ಮಾಡಿದ ವ್ಯವಸ್ಥೆಯನ್ನು ಬಸವ ತತ್ವದ ಜೊತೆ ಬೆರೆಸುವ ಅಪಾಯಕಾರಿ ಪ್ರಯತ್ನ ನಡೆಯುತ್ತಿದೆ,” ಎಂದು ಆರೋಪಿಸಿದರು.
ಜಗತ್ತಿಗೆ ಮೊದಲು ಬೆಳಕಿನ ದಾರಿ ತೋರಿದವರು ಬುದ್ಧ. ನಂತರ ಬಸವಣ್ಣ ಸಮಾನತೆಯ ಲಿಂಗಾಯತ ಧರ್ಮವನ್ನು ಕೊಟ್ಟರು. ಸ್ವಾತಂತ್ರ್ಯಾನಂತರ ಡಾ. ಬಿ.ಆರ್. ಅಂಬೇಡ್ಕರ್ ಅವರು ಬುದ್ಧ ಮತ್ತು ಬಸವಣ್ಣನ ಆಶಯಗಳಿಗೆ ಸಂವಿಧಾನದ ಮೂಲಕ ಕಾನೂನಾತ್ಮಕ ಚೌಕಟ್ಟು ರೂಪಿಸಿ, “ಎಲ್ಲರೂ ಸಮಾನರು” ಎಂಬ ಸಂದೇಶ ನೀಡಿದ್ದಾರೆ ಎಂದು ಹೇಳಿದರು.
 “ಸಂವಿಧಾನದ ದೃಷ್ಟಿಯಲ್ಲಿ ಯಾರೂ ಹೆಚ್ಚಲ್ಲ, ಯಾರೂ ಕಡಿಮೆಯಿಲ್ಲ. ಸಮಾನತೆಯನ್ನು ವಿರೋಧಿಸುವವರು ರಾಷ್ಟ್ರದ್ರೋಹಿಗಳೇ” ಎಂದು
ಬಸವರಾಜ ಸೂಳಿಭಾವಿ ಅಸಮಾಧಾನ ವ್ಯಕ್ತಪಡಿಸಿದರು.
ವಚನ ಸಾಹಿತ್ಯವು ಜಾತಿ ಭೇದಗಳನ್ನು ಕಿತ್ತೊಗೆದು ಮನುಷ್ಯ ಪ್ರೀತಿಯ ಸಂದೇಶ ಸಾರಿದೆ. ಬುದ್ಧ, ಬಸವ ಮತ್ತು ಅಂಬೇಡ್ಕರ್ ಅವರ ಸಮಾನತೆಯ ಪರಂಪರೆಯ ಅರಿವು ಹೆಚ್ಚಿಸುವ ಇಂತಹ ಕಾರ್ಯಕ್ರಮಗಳು ಇಂದಿನ ಸಮಾಜಕ್ಕೆ ಅತ್ಯಗತ್ಯ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಅಶೋಕ ಬರಗುಂಡಿ, ಶೇಕಣ್ಣ ಕವಳಿಕಾಯಿ, ಶಿವಾನಂದ ತಮ್ಮಣ್ಣವರ, ಎಂ.ಎಸ್. ಹಡಪದ, ಗೌರಕ್ಕ ಬಡಿಗಣ್ಣವರ, ಎಚ್.ಎಸ್. ಹರ್ಲಾಪುರ, ರವೀಂದ್ರ ಹೊನವಾಡ, ಮುತ್ತು ಬಿಳೆಯಲಿ, ಎಸ್.ಎನ್. ಬಳ್ಳಾರಿ, ರಾಮಚಂದ್ರ ಹಂಸನೂರ, ಶರೀಫ್ ಬಿಳೆಯಲಿ, ಪರಶು ಕಾಳೆ, ಮಲ್ಲಿಕಾರ್ಜುನ ಖಂಡಮ್ಮನವರ, ಎ.ಯಿ. ನವಲಗುಂದ, ಎ.ಕೆ. ಮುಲ್ಲಾನವರ, ಪಾಲಾಕ್ಷಿ ಗಡದಿನ್ನಿ ಹಾಗೂ ಮುತ್ತು ಹಾಳಕೇರಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಬಸವಾದಿ ಶಿವಶರಣರ ವಚನಗಳ ಸಾಮೂಹಿಕ ಪಠಣ ನಡೆಯಿತು. ಶರೀಫ್ ಬಿಳಿಯಲಿ ಹಾಗೂ ಸಂಗಡಿಗರು ವಚನಗೀತೆಗಳನ್ನು ಹಾಡಿ ಗಮನ ಸೆಳೆದರು. ಸಾರ್ವಜನಿಕರಿಗೆ ಸಾವಿರಾರು ಕರಪತ್ರಗಳನ್ನು ಹಂಚುವ ಮೂಲಕ ಜಾಗೃತಿ ಮೂಡಿಸುವ ಕಾರ್ಯವೂ ನಡೆಯಿತು.
“ಹಿಂದೂ ಧರ್ಮಕ್ಕೆ ಯಾವುದೇ ಸ್ಪಷ್ಟ ಆಧಾರ ಇಲ್ಲ. ಧರ್ಮಗ್ರಂಥ ಇಲ್ಲ, ಸಂಸ್ಥಾಪಕರು ಇಲ್ಲ. ಆದರೆ ಲಿಂಗಾಯತ ಧರ್ಮಕ್ಕೆ ಬಸವಣ್ಣ, ಶಿವಶರಣರು ಮತ್ತು ವಚನಗಳೇ ಆಧಾರ. ಇದು ಎಲ್ಲರನ್ನೂ ಒಂದೇ ದೃಷ್ಟಿಯಿಂದ ನೋಡುವ ಸಮಾನತೆಯ ಧರ್ಮ”
ಬಸವರಾಜ ಸೂಳಿಭಾವಿ, ಸಾಹಿತಿ

ಗೊಂದಲದ ವಾತಾವರಣದಲ್ಲಿ ಡಿಕೆಶಿ ಇನ್ನಿಂಗ್ಸ್ ಆರಂಭ: ಬಸವರಾಜ ಬೊಮ್ಮಾಯಿ

ಬೆಂಗಳೂರು: ಡಿ.ಕೆ. ಶಿವಕುಮಾರ್ ಗೊಂದಲದ ವಾತಾವರಣದಲ್ಲಿ ತಮ್ಮ ಇನ್ನಿಂಗ್ಸನ್ನು ಆರಂಭಿಸುತ್ತಿದ್ದಾರೆ. ರಾಜ್ಯದ ಜನತೆ ಈಗಾಗಲೇ ಈ ಸರ್ಕಾರದ ಮೇಲೆ ವಿಶ್ವಾಸ ಕಳೆದುಕೊಂಡಿದ್ದಾರೆ. ಅವರಿಗೆ ಅವಕಾಶ ಬಂದಾಗ ಈ ಸರ್ಕಾರವನ್ನು ಕಿತ್ತೊಗೆಯಲಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅಭಿಪ್ರಾಯ ಪಟ್ಟಿದ್ದಾರೆ.

ಖಾಸಗಿ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನಲ್ಲಿನ ನಾಯಕತ್ವ ಬದಲಾವಣೆ ರಾಜ್ಯದ ಆಡಳಿತದಲ್ಲಿ ಯಾವುದೇ ಪರಿಣಾಮ ಬೀರುವುದಿಲ್ಲ ಇದು ಕಾಂಗ್ರೆಸ್ ದುರಾಡಳಿತದ ಮುಂದುವರೆದ ಭಾಗ. ರಾಜ್ಯದ ಆರ್ಥಿಕತೆಯ ವಿಚಾರದಲ್ಲಿ ಈಗಾಗಲೇ ಸಾಕಷ್ಟು ಹಾನಿ ಮಾಡಲಾಗಿದೆ. ರಾಜ್ಯದಲ್ಲಿ ಅಭಿವೃದ್ಧಿ ಶೂನ್ಯ ಆಗಿದ್ದು, ವ್ಯವಸ್ಥೆಯನ್ನು ಸುಧಾರಿಸಲು ಡಿ.ಕೆ. ಶಿವಕುಮಾರ್ ಅವರಿಗೆ ಸಮಯ ಸಿಗುತ್ತದೆಯೊ ಇಲ್ಲವೊ ಗೊತ್ತಿಲ್ಲ.

ಸಂಪುಟ ರಚನೆಯ ಕಸರತ್ತಿನಲ್ಲಿ ಆಂತರಿಕ ಭಿನ್ನಮತ ಹೊರಬರುತ್ತಿದೆ. ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿ, ಪರಮೇಶ್ವರ ಅವರನ್ನು ಮುಖ್ಯಮಂತ್ರಿ ಮಾಡದಿರುವುದರಿಂದ ಒಬಿಸಿ ಮತ್ತು ಎಸ್ಸಿ ಎಸ್ಟಿ ಸಮುದಾಯದವರು ಅಸಮಾಧಾನಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಡಿ.ಕೆ. ಶಿವಕುಮಾರ್ ಗೊಂದಲದ ವಾತಾವರಣದಲ್ಲಿ ತಮ್ಮ ಇನ್ನಿಂಗ್ಸನ್ನು ಆರಂಭಿಸುತ್ತಿದ್ದಾರೆ. ಕರ್ನಾಟಕದ ಜನತೆ ಈಗಾಗಲೇ ಈ ಸರ್ಕಾರದ ಮೇಲೆ ವಿಶ್ವಾಸ ಕಳೆದುಕೊಂಡಿದ್ದಾರೆ. ಮುಂದೆ ಅವರಿಗೆ ಅವಕಾಶ ಬಂದಾಗ ಈ ಸರ್ಕಾರವನ್ನು ಕಿತ್ತೊಗೆಯಲಿದ್ದಾರೆ ಎಂದು ಹೇಳಿದರು.

ತೂಗು ಕತ್ತಿ

ಹೊಸ ಸಂಪುಟ ಸೇರಲು ಪ್ರಥಮ ಬಾರಿ ಆಯ್ಕೆಯಾದವರಿಂದ ಹಿಡಿದು ಐದಾರು ಬಾರಿ ಆಯ್ಕೆಯಾದವರೂ ಲಾಬಿ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಸಂಪುಟದಲ್ಲಿದ್ದ ಸಚಿವರು ಸ್ಥಾನ ಬಿಟ್ಟು ಕೊಡಲು ಸಿದ್ದರಿಲ್ಲ. ಹೀಗಾಗಿ ದೊಡ್ಡ ಮಟ್ಟದ ಪೈಪೋಟಿ ನಡೆಯುತ್ತಿದೆ. ಅಲ್ಲದೇ ನೂತನ ಸಂಪುಟ ರಚನೆಯಲ್ಲಿ ಸಿದ್ದರಾಮಯ್ಯ ಮಹತ್ವದ ಪಾತ್ರ ನಿರ್ವಹಿಸಲಿದ್ದಾರೆ. ಅಲ್ಲದೇ ಅವರು ರಾಜ್ಯ ರಾಜಕಾರಣದಲ್ಲಿಯೇ ಸಕ್ರೀಯರಾಗಿರುತ್ತೇನೆ ಎಂದು ಹೇಳಿರುವುದು ಅಪಾಯಕಾರಿ ಸಂದೇಶವಾಗಿದ್ದು ಇದು ಡಿ.ಕೆ.ಶಿವಕುಮಾರ್ ಮತ್ತು ಅವರ ಸರ್ಕಾರದ ಮೇಲೆ ತೂಗು ಕತ್ತಿ ನೇತಾಡಿದಂತಾಗುತ್ತದೆ ಎಂದು ಹೇಳಿದರು.

ಅಧಿಕೃತವಾಗಿ ಡಿಕೆಶಿಗೆ ಸಿಎಂ ಪಟ್ಟ! ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನಾಗಿ ಸರ್ವಾನುಮತ ಆಯ್ಕೆ

ಬೆಂಗಳೂರು: ಕರ್ನಾಟಕದ ಮುಂದಿನ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರನ್ನು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ (ಸಿಎಲ್‌ಪಿ) ಸಭೆಯಲ್ಲಿ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಯಿತು.

ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಿದ ಬೆನ್ನಲ್ಲೇ ಡಿಕೆ ಶಿವಕುಮಾರ್ ಮುಂದಿನ ಸಿಎಂ ಆಗುವುದು ಬಹುತೇಕ ಖಚಿತವಾಗಿತ್ತು. ಆದರೆ ಪಕ್ಷದ ಸಂಪ್ರದಾಯ ಮತ್ತು ಪ್ರಕ್ರಿಯೆಯಂತೆ ಶಾಸಕಾಂಗ ಪಕ್ಷದ ಸಭೆ ನಡೆಸಿ ಅಧಿಕೃತವಾಗಿ ನಾಯಕನ ಆಯ್ಕೆ ಮಾಡಲಾಯಿತು.

ಸಭೆಯಲ್ಲಿ ಕಾಂಗ್ರೆಸ್ ಹಿರಿಯ ನಾಯಕರು ಹಾಗೂ ವೀಕ್ಷಕರಾದ ಜೈರಾಮ್ ರಮೇಶ್, ಕೆ.ಸಿ. ವೇಣುಗೋಪಾಲ್ ಮತ್ತು ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಉಪಸ್ಥಿತರಿದ್ದರು. ಸಭೆಗೆ ಮುನ್ನ ವಿಧಾನಸೌಧದಲ್ಲಿರುವ ಅಜ್ಜಯ್ಯನ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆ ಶಿವಕುಮಾರ್, ಬಳಿಕ ಸಭಾಂಗಣಕ್ಕೆ ಆಗಮಿಸಿ ಎಲ್ಲ ಶಾಸಕರ ಬಳಿಗೆ ತೆರಳಿ ಹಸ್ತಲಾಘವ ಮಾಡಿ ಅಭಿನಂದನೆ ಸ್ವೀಕರಿಸಿದರು.

ಮೂರು ವರ್ಷಗಳ ಕಾಲ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದ ಡಿಕೆ ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷರಾಗಿ ಪಕ್ಷ ಸಂಘಟನೆಗೂ ಪ್ರಮುಖ ಕೊಡುಗೆ ನೀಡಿದ್ದಾರೆ.

ಜೂನ್ 3ರಂದು ಅವರು ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

IPL 2026 Final: ಫೈನಲ್‌ ಗೆದ್ದರೂ ಸಂಭ್ರಮಿಸುವಂತಿಲ್ಲ: ಸಂಭ್ರಮಾಚರಣೆಗೆ ಖಡಕ್ ರೂಲ್ಸ್ ಜಾರಿ ಮಾಡಿದ ಪೊಲೀಸರು

ಬೆಂಗಳೂರು: ಐಪಿಎಲ್ 2026ರ ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿರುವ ಬೆನ್ನಲ್ಲೇ ರಾಜಧಾನಿ ಬೆಂಗಳೂರಿನಲ್ಲಿ ಸಂಭ್ರಮದ ವಾತಾವರಣ ಮನೆಮಾಡಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ಫೈನಲ್ ಪ್ರವೇಶಿಸಿರುವ ಹಿನ್ನೆಲೆಯಲ್ಲಿ ಅಭಿಮಾನಿಗಳ ಉತ್ಸಾಹ ಹೆಚ್ಚಾಗಿದ್ದು,

ಮೇ 31ರಂದು ನಡೆಯಲಿರುವ ಹೈವೋಲ್ಟೇಜ್ ಪಂದ್ಯದ ಬಳಿಕ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಬೆಂಗಳೂರು ನಗರ ಪೊಲೀಸರು ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಪ್ರಕಟಿಸಿದ್ದಾರೆ.

ಪಂದ್ಯದ ಫಲಿತಾಂಶದ ನಂತರ ನಗರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಪೊಲೀಸ್ ಆಯುಕ್ತರ ಕಚೇರಿ ವಿಶೇಷ ಸೂಚನೆಗಳನ್ನು ಹೊರಡಿಸಿದ್ದು, ಸಾರ್ವಜನಿಕರು ಹಾಗೂ ಕ್ರಿಕೆಟ್ ಅಭಿಮಾನಿಗಳು ಕಡ್ಡಾಯವಾಗಿ ಪಾಲಿಸಬೇಕೆಂದು ಮನವಿ ಮಾಡಿದೆ.

ಪೊಲೀಸರ ಸೂಚನೆಯಂತೆ, ಪಂದ್ಯ ಮುಗಿದ ಬಳಿಕ ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ರೀತಿಯ ವಿಜಯೋತ್ಸವ ಅಥವಾ ಗುಂಪು ಸಂಭ್ರಮಾಚರಣೆಗೆ ಅವಕಾಶ ಇರುವುದಿಲ್ಲ. ರಸ್ತೆಗಳಿಗೆ ಮುಖಮಾಡಿ ಎಲ್‌ಇಡಿ ವಾಲ್‌ಗಳನ್ನು ಅಳವಡಿಸುವುದಕ್ಕೂ ನಿರ್ಬಂಧ ಹೇರಲಾಗಿದೆ. ಅಲ್ಲದೆ, ಸಂಬಂಧಿತ ಅನುಮತಿ ಪಡೆಯದೇ ಮಾಲ್‌ಗಳು, ಪಬ್‌ಗಳು ಹಾಗೂ ವಾಣಿಜ್ಯ ಸಂಸ್ಥೆಗಳ ಹೊರಭಾಗದಲ್ಲಿ ಬೃಹತ್ ಪರದೆಗಳನ್ನು ಅಳವಡಿಸಿ ಪಂದ್ಯ ಪ್ರಸಾರ ಮಾಡುವಂತಿಲ್ಲ.

ಇದೇ ವೇಳೆ ಪಟಾಕಿ ಸಿಡಿಸುವುದು ಹಾಗೂ ಅಪಾಯಕಾರಿ ವಸ್ತುಗಳ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಪಂದ್ಯ ಗೆಲುವಿನ ಸಂಭ್ರಮದಲ್ಲಿ ರಸ್ತೆಗಳಲ್ಲಿ ಬೈಕ್ ರ್ಯಾಲಿ, ವ್ಹೀಲಿಂಗ್, ಸ್ಟಂಟ್‌ಗಳು ಅಥವಾ ಅತಿವೇಗದ ಚಾಲನೆ ನಡೆಸಿದರೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಪಾನ ಮಾಡಿ ಗಲಾಟೆ ಸೃಷ್ಟಿಸುವುದು, ಅಸಭ್ಯ ವರ್ತನೆ ತೋರುವುದು ಅಥವಾ ಸಾರ್ವಜನಿಕ ಶಾಂತಿಗೆ ಭಂಗ ತರುವ ಯಾವುದೇ ಕೃತ್ಯಗಳ ವಿರುದ್ಧವೂ ಕ್ರಮ ಜರುಗಿಸಲಾಗುತ್ತದೆ ಎಂದು ತಿಳಿಸಲಾಗಿದೆ.

ಅಭಿಮಾನಿಗಳು ಟ್ರಾಫಿಕ್ ಪೊಲೀಸರ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಜೊತೆಗೆ, ಬೇರೆ ತಂಡಗಳ ಅಭಿಮಾನಿಗಳನ್ನು ಕೆಣಕುವುದು, ನಿಂದಿಸುವುದು ಅಥವಾ ಪ್ರಚೋದನಾತ್ಮಕ ವರ್ತನೆ ತೋರಿಸುವುದನ್ನು ತಪ್ಪಿಸಬೇಕು ಎಂದು ಸೂಚಿಸಲಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿಯೂ ಎಚ್ಚರಿಕೆ ವಹಿಸುವಂತೆ ಮನವಿ ಮಾಡಿರುವ ಪೊಲೀಸರು, ದ್ವೇಷಪೂರಿತ ಪೋಸ್ಟ್‌ಗಳು, ಸುಳ್ಳು ಸುದ್ದಿಗಳು ಅಥವಾ ವದಂತಿಗಳನ್ನು ಹಂಚಿಕೊಂಡರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಒಟ್ಟಾರೆ, ಐಪಿಎಲ್ ಫೈನಲ್ ಪಂದ್ಯದ ಸಂಭ್ರಮವು ನಗರದ ಶಾಂತಿ ಮತ್ತು ಸಾರ್ವಜನಿಕ ಸುರಕ್ಷತೆಗೆ ಧಕ್ಕೆ ತರದಂತೆ ಎಲ್ಲರೂ ಜವಾಬ್ದಾರಿಯಿಂದ ವರ್ತಿಸಬೇಕು. ಪಂದ್ಯವನ್ನು ಆನಂದಿಸಿ, ಆದರೆ ಕಾನೂನು ಮತ್ತು ಪೊಲೀಸ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂಬುದು ಬೆಂಗಳೂರು ಪೊಲೀಸರ ಮನವಿಯಾಗಿದೆ.

error: Content is protected !!