Home Blog

ಊಟ ಮಾಡುವಾಗ ಮೊಬೈಲ್ ನೋಡ್ತೀರಾ? ನಿಮ್ಮ ಆರೋಗ್ಯಕ್ಕೆ ಇದು ಭಾರೀ ಅಪಾಯ

0

ಊಟ ಮಾಡುವಾಗ ನಮ್ಮ ಸಂಪೂರ್ಣ ಗಮನ ಆಹಾರದ ಮೇಲಿರಬೇಕು. ಊಟವನ್ನು ಆನಂದಿಸುತ್ತಾ, ನಿಧಾನವಾಗಿ ತಿನ್ನುವುದರಿಂದ ಆರೋಗ್ಯ ಉತ್ತಮವಾಗಿರುತ್ತದೆ ಎಂದು ಹಿರಿಯರು ಸದಾ ಹೇಳುತ್ತಿದ್ದರು.

ಹಿಂದಿನ ಕಾಲದಲ್ಲಿ ನಮ್ಮ ಅಜ್ಜ-ಅಜ್ಜಿಯರು ಇದೇ ರೀತಿ ಶಾಂತವಾಗಿ ಊಟ ಮಾಡುತ್ತಿದ್ದರು. ಆದರೆ ಇಂದಿನ ದಿನಗಳಲ್ಲಿ ಪುಟ್ಟ ಮಕ್ಕಳಿಂದ ಹಿಡಿದು ಹಿರಿಯರವರೆಗೆ ಬಹುತೇಕ ಎಲ್ಲರೂ ಊಟ ಮಾಡುವಾಗ ಟಿವಿ ಅಥವಾ ಮೊಬೈಲ್ ನೋಡುತ್ತಲೇ ಊಟ ಮಾಡುವ ಅಭ್ಯಾಸ ಬೆಳೆಸಿಕೊಂಡಿದ್ದಾರೆ.

ಸೋಷಿಯಲ್ ಮೀಡಿಯಾದ ರೀಲ್ಸ್‌, ವಿಡಿಯೋಗಳನ್ನು ಸ್ಕ್ರೋಲ್ ಮಾಡುತ್ತಾ ಊಟ ಮಾಡುವ ಈ ಅಭ್ಯಾಸ ನಮ್ಮ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ನೀವು ಕೂಡ ಇದೇ ರೀತಿ ಮೊಬೈಲ್ ನೋಡುತ್ತಾ ಊಟ ಮಾಡುತ್ತಿದ್ದರೆ, ಅದರ ಪರಿಣಾಮಗಳನ್ನು ತಪ್ಪದೆ ತಿಳಿದುಕೊಳ್ಳಿ.

ಊಟ ಮಾಡುವಾಗ ಮೊಬೈಲ್ ಅಥವಾ ಟಿವಿ ನೋಡುವುದರಿಂದ ಆಗುವ ಸಮಸ್ಯೆಗಳು:

ಬೊಜ್ಜು ಹೆಚ್ಚಾಗುತ್ತದೆ:
ಟಿವಿ ಅಥವಾ ಮೊಬೈಲ್ ನೋಡುತ್ತಾ ಊಟ ಮಾಡಿದಾಗ ನಮ್ಮ ಗಮನ ಆಹಾರದಿಂದ ಬೇರೆಡೆಗೆ ಹೋಗುತ್ತದೆ. ಇದರ ಪರಿಣಾಮವಾಗಿ ಎಷ್ಟು ತಿನ್ನುತ್ತಿದ್ದೇವೆ ಎಂಬ ಅರಿವು ಇರದು. ಅತಿಯಾಗಿ ತಿನ್ನುವುದರಿಂದ ಜೀರ್ಣಕ್ರಿಯೆ ಮೇಲೆ ಒತ್ತಡ ಬಿದ್ದು, ಬೊಜ್ಜಿನ ಸಮಸ್ಯೆ ಕಾಣಿಸಿಕೊಳ್ಳುತ್ತದೆ.

ಜೀರ್ಣಕ್ರಿಯೆ ಸಮಸ್ಯೆಗಳು:
ಆಹಾರವನ್ನು ಸರಿಯಾಗಿ ಅಗಿಯದೇ, ಗಮನವಿಲ್ಲದೆ ತಿಂದರೆ ಜೀರ್ಣಕ್ರಿಯೆ ಸರಿಯಾಗಿ ನಡೆಯುವುದಿಲ್ಲ. ಇದರಿಂದ ಅಜೀರ್ಣ, ಹೊಟ್ಟೆ ನೋವು, ಮಲಬದ್ಧತೆ ಮುಂತಾದ ಸಮಸ್ಯೆಗಳು ಉಂಟಾಗಬಹುದು.

ಮಧುಮೇಹದ ಅಪಾಯ ಹೆಚ್ಚಾಗುತ್ತದೆ:
ಮೊಬೈಲ್ ಅಥವಾ ಟಿವಿ ನೋಡುತ್ತಾ ಊಟ ಮಾಡುವುದರಿಂದ ದೇಹದ ಚಯಾಪಚಯ ಕ್ರಿಯೆ ನಿಧಾನಗೊಳ್ಳುತ್ತದೆ. ಆಹಾರ ಸರಿಯಾಗಿ ಜೀರ್ಣವಾಗದೆ ತೂಕ ಹೆಚ್ಚಾಗಲು ಕಾರಣವಾಗುತ್ತದೆ. ಈ ಕಾರಣಗಳಿಂದ ಮಧುಮೇಹ ಬರುವ ಅಪಾಯವೂ ಹೆಚ್ಚಾಗುತ್ತದೆ.

ಊಟ ಮಾಡುವಾಗ ಈ ವಿಷಯಗಳನ್ನು ನೆನಪಿನಲ್ಲಿಡಿ:

• ಊಟ ಮಾಡುವಾಗ ಟಿವಿ ಅಥವಾ ಮೊಬೈಲ್ ಬಳಕೆಯನ್ನು ಸಂಪೂರ್ಣವಾಗಿ ತಪ್ಪಿಸಿ.
• ಆಹಾರದ ಮೇಲಷ್ಟೇ ಗಮನ ಕೇಂದ್ರೀಕರಿಸಿ, ಅನಾವಶ್ಯಕ ಮಾತು ಅಥವಾ ಫೋನ್‌ ನೋಡುವುದನ್ನು ಬಿಡಿ.
• ಆಹಾರವನ್ನು ನಿಧಾನವಾಗಿ, ಚೆನ್ನಾಗಿ ಅಗಿದು ತಿನ್ನಿ.
• ಊಟವಾದ ತಕ್ಷಣ ನೀರು ಕುಡಿಯಬೇಡಿ. ಇದು ಜೀರ್ಣಕ್ರಿಯೆಗೆ ಅಡ್ಡಿಯಾಗಬಹುದು.

ಸಣ್ಣ ಅಭ್ಯಾಸ ಬದಲಾವಣೆಯಿಂದಲೇ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಇಂದಿನಿಂದಲೇ ಮೊಬೈಲ್‌ ದೂರವಿಟ್ಟು, ಮನಸ್ಸಿಟ್ಟು ಊಟ ಮಾಡುವ ಅಭ್ಯಾಸ ಬೆಳೆಸಿಕೊಳ್ಳಿ.

ಬೇಸಿಗೆಯಲ್ಲಿ ಹಾವುಗಳ ಕಾಟವೇ? ಸರ್ಪಗಂಧ ಗಿಡವೇ ಶಾಶ್ವತ ಪರಿಹಾರ!

0

ಬೇಸಿಗೆ ಕಾಲ ಆರಂಭವಾದರೆ ಹಾವುಗಳ ಕಾಟ ಹೆಚ್ಚಾಗುವುದು ಸಾಮಾನ್ಯ. ಬಿಸಿಲಿನ ತಾಪವನ್ನು ತಾಳಲಾರದೆ ಹಾವುಗಳು ತಮ್ಮ ಬಿಲಗಳಿಂದ ಹೊರಬಂದು ತಂಪಾದ ಸ್ಥಳಗಳನ್ನು ಹುಡುಕುತ್ತಾ ಮನೆಗಳ ಸುತ್ತಮುತ್ತ, ಪೊದೆಗಳು, ಮರಗಿಡಗಳ ಬಳಿ ಕಾಣಿಸಿಕೊಳ್ಳುತ್ತವೆ.

ಕೆಲವೊಮ್ಮೆ ಅವು ಮನೆಯೊಳಗೂ ಪ್ರವೇಶಿಸುವ ಅಪಾಯವಿರುತ್ತದೆ. ಹಾವು ಕಚ್ಚಿದರೆ ಪ್ರಾಣಾಪಾಯವೂ ಸಂಭವಿಸಬಹುದಾದ ಕಾರಣ, ಹಲವರು ಹಾವುಗಳನ್ನು ಕಂಡ ತಕ್ಷಣ ಭಯಭೀತರಾಗುತ್ತಾರೆ. ಅದಕ್ಕಾಗಿ ಹಾವುಗಳಿಂದ ರಕ್ಷಿಸಿಕೊಳ್ಳಲು ವಿವಿಧ ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಳ್ಳುವುದು ಅಗತ್ಯವಾಗುತ್ತದೆ.

ಈ ನಿಟ್ಟಿನಲ್ಲಿ ನೈಸರ್ಗಿಕ ಹಾಗೂ ಪರಿಣಾಮಕಾರಿ ಪರಿಹಾರವಾಗಿ ಸರ್ಪಗಂಧ ಸಸ್ಯ ಬಹಳ ಉಪಯುಕ್ತವಾಗಿದೆ. ಮನೆಯಂಗಳದಲ್ಲಿ ಅಥವಾ ಮನೆ ಬಾಗಿಲಿನ ಬಳಿ ಸರ್ಪಗಂಧ ಗಿಡವನ್ನು ನೆಡುವುದರಿಂದ ಹಾವುಗಳು ಮನೆ ಬಳಿ ಸುಳಿಯದಂತೆ ತಡೆಯಬಹುದು. ಈ ಸಸ್ಯದಲ್ಲಿ ಅಪಾರ ಪ್ರಮಾಣದ ಔಷಧೀಯ ಗುಣಗಳಿದ್ದು, ಮೆಣಸು ಅಥವಾ ಹಸಿರು ಮೆಣಸಿನಕಾಯಿ ತರಹದ ತೀಕ್ಷ್ಣ ವಾಸನೆಯನ್ನು ಹೊರಸೂಸುತ್ತದೆ. ಈ ವಾಸನೆ ಸುತ್ತಮುತ್ತಲಿನ ಪ್ರದೇಶದಲ್ಲಿ ಹರಡುತ್ತಿದ್ದು, ಹಾವುಗಳಿಗೆ ಇದು ಅಸಹ್ಯವಾಗುತ್ತದೆ. ಆದ್ದರಿಂದ ಹಾವುಗಳು ಈ ಗಿಡ ಇರುವ ಪ್ರದೇಶದತ್ತ ಬರಲು ಹಿಂಜರಿಯುತ್ತವೆ.

ಹಾವುಗಳಿಗೆ ಮಾತ್ರವಲ್ಲದೆ, ಇತರೆ ಸರೀಸೃಪಗಳಿಗೂ ಸರ್ಪಗಂಧ ಸಸ್ಯ ಶತ್ರುವಾಗಿದೆ. ಹೀಗಾಗಿ ಮನೆ ಸುತ್ತಮುತ್ತ ಈ ಗಿಡವನ್ನು ನೆಡುವುದರಿಂದ ಹಾವುಗಳ ಅಪಾಯವನ್ನು ಬಹುಮಟ್ಟಿಗೆ ಕಡಿಮೆ ಮಾಡಬಹುದು. ಇದಲ್ಲದೆ, ಸರ್ಪಗಂಧ ಸಸ್ಯದ ಬೇರುಗಳನ್ನು ಮನೆ ಬಾಗಿಲು, ಕಿಟಕಿ ಅಥವಾ ಪ್ರವೇಶ ದ್ವಾರಗಳ ಬಳಿ ಇಟ್ಟರೆ, ಹಾವುಗಳು ಮನೆಯೊಳಗೆ ಪ್ರವೇಶಿಸುವ ಸಾಧ್ಯತೆ ಕಡಿಮೆಯಾಗುತ್ತದೆ. ಈ ಬೇರುಗಳಿಂದ ಹೊರಬರುವ ಬಲವಾದ ವಾಸನೆ ಹಾವುಗಳನ್ನು ದೂರ ಇಡುತ್ತದೆ.

ಸರ್ಪಗಂಧ ಸಸ್ಯದ ಬೀಜಗಳಲ್ಲೂ ಹಾವುಗಳನ್ನು ಓಡಿಸುವ ಶಕ್ತಿ ಇದೆ. ಈ ಬೀಜಗಳಲ್ಲಿ ಆಲ್ಕಲಾಯ್ಡ್‌ಗಳು, ರೆಸರ್ಪೈನ್, ಸರ್ಪೆಂಟೈನ್ ಹಾಗೂ ಅಜ್ಮಲೈಸಿನ್‌ನಂತಹ ಔಷಧೀಯ ಅಂಶಗಳಿದ್ದು, ಇವುಗಳ ತೀಕ್ಷ್ಣ ವಾಸನೆ ಹಾವುಗಳು ಆ ಪ್ರದೇಶಕ್ಕೆ ಬಾರದಂತೆ ಮಾಡುತ್ತದೆ.

ಸರ್ಪಗಂಧ ಸಸ್ಯದ ಜೊತೆಗೆ, ಚೆಂಡುಹೂವು, ತುಳಸಿ ಮತ್ತು ಲೆಮನ್ ಗ್ರಾಸ್ ಗಿಡಗಳನ್ನು ಮನೆಯ ಸುತ್ತಮುತ್ತ ನೆಡುವುದರಿಂದಲೂ ಹಾವುಗಳ ಕಾಟವನ್ನು ನಿಯಂತ್ರಿಸಬಹುದು. ಇವುಗಳ ವಾಸನೆ ಕೂಡ ಹಾವುಗಳಿಗೆ ಇಷ್ಟವಿರದ ಕಾರಣ, ನೈಸರ್ಗಿಕವಾಗಿ ಮನೆಗೆ ರಕ್ಷಣೆಯಾಗಿ ಕಾರ್ಯನಿರ್ವಹಿಸುತ್ತವೆ.

ಜಿಬಿಎ, ಸ್ಥಳೀಯ ಸಂಸ್ಥೆ ಚುನಾವಣೆ ಕುರಿತು ಬಿಜೆಪಿ ತೀರ್ಮಾನಿಸಲಿ: H. D. ದೇವೇಗೌಡ

0

ಬೆಂಗಳೂರು: ಜಿಬಿಎ ಹಾಗೂ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಬಿಜೆಪಿ ಜೊತೆ ಮೈತ್ರಿಯಾಗಿ ಸ್ಪರ್ಧಿಸುವ ಆಕಾಂಕ್ಷೆ ನಮ್ಮದಾಗಿದೆ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ H. D. ದೇವೇಗೌಡ ತಿಳಿಸಿದ್ದಾರೆ.

ನಗರದ ಜೆಪಿ ಭವನದಲ್ಲಿ ಮಾತನಾಡಿದ ಅವರು, ನಾವು ಎನ್‌ಡಿಎ ಭಾಗವಾಗಿದ್ದೇವೆ. ಜಿಬಿಎ ಮತ್ತು ಸ್ಥಳೀಯ ಸಂಸ್ಥೆ ಚುನಾವಣೆಗಳನ್ನು ಬಿಜೆಪಿ–ಜೆಡಿಎಸ್ ಒಟ್ಟಾಗಿ ಎದುರಿಸಬೇಕು ಎನ್ನುವುದು ನಮ್ಮ ಆಸೆ. ಇದರಲ್ಲಿ ಯಾವುದೇ ವ್ಯತ್ಯಾಸ ಇಲ್ಲ ಎಂದರು.

ಬಿಜೆಪಿ ರಾಷ್ಟ್ರೀಯ ಪಕ್ಷವಾಗಿದ್ದು, ಜೆಡಿಎಸ್ ಪ್ರಾದೇಶಿಕ ಪಕ್ಷವಾಗಿದೆ. ಹೀಗಾಗಿ ಬಿಜೆಪಿ ಯಾವ ನಿರ್ಧಾರ ಕೈಗೊಳ್ಳುತ್ತದೆಯೋ, ಅವರ ಭಾವನೆ ತಿಳಿದ ಬಳಿಕವೇ ನಾವು ಅಂತಿಮ ತೀರ್ಮಾನ ಕೈಗೊಳ್ಳುತ್ತೇವೆ ಎಂದು ದೇವೇಗೌಡ ಹೇಳಿದರು.

ಸಂಸತ್ ಹಾಗೂ ವಿಧಾನಸಭೆ ಚುನಾವಣೆಯಲ್ಲಿ ಒಟ್ಟಾಗಿ ಸ್ಪರ್ಧಿಸುವ ನಿರ್ಧಾರ ಈಗಾಗಲೇ ಇದೆ. ಆದರೆ ಜಿಬಿಎ ಮತ್ತು ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಸೀಟುಗಳು ಕಡಿಮೆ ಇರುವುದರಿಂದ ಹಂಚಿಕೆ ವಿಚಾರ ಸಂಕೀರ್ಣವಾಗಬಹುದು. ಆದರೂ ಮೈತ್ರಿಯಾಗಿ ಹೋಗಲು ಪ್ರಯತ್ನಿಸುತ್ತೇವೆ ಎಂದು ತಿಳಿಸಿದರು.

ಕುಮಾರಸ್ವಾಮಿ ಅವರು ದೆಹಲಿಗೆ ತೆರಳಿ ಬಿಜೆಪಿ ಕೇಂದ್ರ ನಾಯಕರ ಜೊತೆ ಚರ್ಚೆ ನಡೆಸಲಿದ್ದಾರೆ. ಅವರು ಮರಳಿ ಬಂದ ನಂತರ ಅಂತಿಮ ರೂಪುರೇಷೆ ತೀರ್ಮಾನಿಸಲಾಗುತ್ತದೆ ಎಂದು ದೇವೇಗೌಡ ಹೇಳಿದರು.

ಬೆಂಗಳೂರಿಗರ ಗಮನಕ್ಕೆ: ನಗರದಲ್ಲಿ ನಾಳೆ ಕಾವೇರಿ ನೀರು ಪೂರೈಕೆ ಸ್ಥಗಿತ!

0

ಬೆಂಗಳೂರು: ಕಾವೇರಿ 5ನೇ ಹಂತದ ಯೋಜನೆಯಡಿ ಹೊಸ EMF ಮೀಟರ್‌ಗಳನ್ನು ಅಳವಡಿಸುವ ಕಾಮಗಾರಿಯ ಹಿನ್ನೆಲೆಯಲ್ಲಿ ಫೆಬ್ರವರಿ 26, ಗುರುವಾರ ಪೂರ್ವ ಮತ್ತು ದಕ್ಷಿಣ ಬೆಂಗಳೂರಿನ ಹಲವೆಡೆ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.

ಕಾಮಗಾರಿ ನಡೆಯುವ ವೇಳೆ ಪಂಪಿಂಗ್ ಕಾರ್ಯ ಸ್ಥಗಿತಗೊಳ್ಳುವುದರಿಂದ ಈ ಭಾಗದ ನಿವಾಸಿಗಳು 24 ಗಂಟೆಗಳ ನೀರು ವ್ಯತ್ಯಯಕ್ಕೆ ಸಿದ್ಧರಾಗಬೇಕು ಎಂದು BWSSB ತಿಳಿಸಿದೆ.

ಜಲಮಂಡಳಿ ಅಧ್ಯಕ್ಷ ಡಾ.ವಿ.ರಾಮ್ ಪ್ರಸಾತ್ ಮನೋಹರ್ ಸಾರ್ವಜನಿಕರು ಮಂಡಳಿಯೊಂದಿಗೆ ಸಹಕರಿಸುವಂತೆ ಮನವಿ ಮಾಡಿದ್ದು, ಉಂಟಾಗುವ ಅನಾನುಕೂಲತೆಗೆ ವಿಷಾದ ವ್ಯಕ್ತಪಡಿಸಿದ್ದಾರೆ.

ಪೂರ್ವ ಬೆಂಗಳೂರು (ಮಹದೇವಪುರ ವಲಯ ಹಾಗೂ ಸುತ್ತಮುತ್ತ):

  • ವೈಟ್‌ಫೀಲ್ಡ್
  • ಕಡುಗೋಡಿ
  • ಹೂಡಿ
  • ಗರುಡಾಚಾರ್ ಪಾಳ್ಯ
  • ದೊಡ್ಡನೆಕ್ಕುಂದಿ
  • ಮುನ್ನೇಕೊಳಲ (ಮಾರತಹಳ್ಳಿ ಪ್ರದೇಶ)
  • ನಲ್ಲೂರುಹಳ್ಳಿ
  • ಸಿದ್ದಾಪುರ
  • ನಾಗೊಂಡನಹಳ್ಳಿ
  • ರಾಮಗೊಂದನಹಳ್ಳಿ
  • ಚನ್ನಸಂದ್ರ

ದಕ್ಷಿಣ ಬೆಂಗಳೂರು:

  • ಬನಶಂಕರಿ (ವಿವಿಧ ಹಂತಗಳು)
  • ಕುಮಾರಸ್ವಾಮಿ ಲೇಔಟ್
  • ಪೂರ್ಣಪ್ರಜ್ಞ ಲೇಔಟ್
  • ಅಂಜನಾಪುರ
  • ಗೊಟ್ಟಿಗೆರೆ
  • ಬೇಗೂರು
  • ಕಲ್ಲಹಳ್ಳಿ
  • ಕುಡ್ಲು
  • ಕೊಡಿಚಿಕ್ಕನಹಳ್ಳಿ

ಗುರುವಾರ ಬೆಳಿಗ್ಗೆ 6 ಗಂಟೆಗೆ ಪಂಪಿಂಗ್ ಕಾರ್ಯ ಸ್ಥಗಿತಗೊಳ್ಳಲಿದೆ. ಶುಕ್ರವಾರ ಬೆಳಿಗ್ಗೆ 6 ಗಂಟೆಗೆ ಮರುಪ್ರಾರಂಭವಾಗಲಿದೆ. ಬಳಿಕ ಮನೆಗಳಿಗೆ ನೀರು ತಲುಪಲು ಹಾಗೂ ಒತ್ತಡ ಸಾಮಾನ್ಯಗೊಳ್ಳಲು ಇನ್ನೂ 3 ರಿಂದ 6 ಗಂಟೆಗಳ ಕಾಲ ಹಿಡಿಯಬಹುದು ಎಂದು ಅಂದಾಜಿಸಲಾಗಿದೆ.

ಹೀಗಾಗಿ ಅಗತ್ಯ ನೀರನ್ನು ಮುಂಚಿತವಾಗಿ ಸಂಗ್ರಹಿಸಿಕೊಳ್ಳುವಂತೆ ಮತ್ತು ಅನಗತ್ಯ ಬಳಕೆಯನ್ನು ತಪ್ಪಿಸುವಂತೆ ಸೂಚಿಸಲಾಗಿದೆ. ಮುಂಬರುವ ಬೇಸಿಗೆ ನೀರಿನ ಅಭಾವವನ್ನು ಸಮರ್ಥವಾಗಿ ಎದುರಿಸಲು BWSSB ಸಮಗ್ರ ಸಿದ್ಧತೆ ಮಾಡಿಕೊಂಡಿದ್ದು, ಪಾರಂಪರಿಕ ವ್ಯವಸ್ಥೆಯಿಂದ ಹೊರಬಂದು ತಂತ್ರಜ್ಞಾನ ಆಧಾರಿತ ಹಾಗೂ ನಾಗರಿಕ ಸ್ನೇಹಿ ಕ್ರಮಗಳನ್ನು ಜಾರಿಗೊಳಿಸಿದೆ ಎಂದು ಜಲಮಂಡಳಿ ಅಧ್ಯಕ್ಷರು ತಿಳಿಸಿದ್ದಾರೆ.

ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಧಾರ್ಮಿಕ ಹೆಸರಿಲ್ಲ: ಕೇರಳ ಸಚಿವ ಸಂಪುಟ ತೀರ್ಮಾನ

0

ಕೇರಳ: ಇನ್ನು ಮುಂದೆ ಕೇರಳದಲ್ಲಿ ಸರ್ಕಾರದಿಂದ ನಡೆಸಲ್ಪಡುವ ಶಾಲೆ, ಕಾಲೇಜು, ವಿಶ್ವವಿದ್ಯಾಲಯಗಳು ಹಾಗೂ ಇತರೆ ಶಿಕ್ಷಣ ಸಂಸ್ಥೆಗಳಿಗೆ ಧರ್ಮವನ್ನು ಸೂಚಿಸುವ ಹೆಸರಿಡಲು ಅವಕಾಶ ಇರುವುದಿಲ್ಲ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ.

ಸರ್ಕಾರ ನಡೆಸುವ ಶಿಕ್ಷಣ ಸಂಸ್ಥೆಗಳು ಜಾತ್ಯತೀತ ಸ್ವಭಾವವನ್ನು ಕಾಪಾಡಿಕೊಳ್ಳಬೇಕು. ಸಮಾನತೆ ಹಾಗೂ ಎಲ್ಲರನ್ನು ಒಳಗೊಂಡಿರುವ ಸಾಂವಿಧಾನಿಕ ಮೌಲ್ಯಗಳನ್ನು ಪ್ರತಿಬಿಂಬಿಸಬೇಕು ಎಂಬ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ.

ಈ ತೀರ್ಮಾನವು ಭವಿಷ್ಯದಲ್ಲಿ ಸ್ಥಾಪನೆಯಾಗುವ ಶಿಕ್ಷಣ ಸಂಸ್ಥೆಗಳಿಗೆ ಮಾತ್ರ ಅನ್ವಯವಾಗಲಿದೆ. ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ಶಿಕ್ಷಣ ಸಂಸ್ಥೆಗಳ ಹೆಸರಿನಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಸರ್ಕಾರಿ ಮೂಲಗಳು ಸ್ಪಷ್ಟಪಡಿಸಿವೆ.

ಈ ಸಂಬಂಧ ನ್ಯಾ. ಜೆ.ಬಿ.ಕೋಶಿ ಅವರ ನೇತೃತ್ವದ ಆಯೋಗ ಸಲ್ಲಿಸಿದ ವರದಿಯನ್ನು ಸಚಿವ ಸಂಪುಟ ತಾತ್ವಿಕವಾಗಿ ಅಂಗೀಕರಿಸಿದೆ. ಕೇರಳದಲ್ಲಿನ ಕ್ರಿಶ್ಚಿಯನ್ ಅಲ್ಪಸಂಖ್ಯಾತರ ಶೈಕ್ಷಣಿಕ ಹಾಗೂ ಆರ್ಥಿಕ ಹಿಂದುಳಿದಿರುವಿಕೆ ಮತ್ತು ಕಲ್ಯಾಣಕ್ಕೆ ಸಂಬಂಧಿಸಿದ ವಿಚಾರಗಳ ಅಧ್ಯಯನಕ್ಕಾಗಿ ಕೋಶಿ ಆಯೋಗವನ್ನು ಸರ್ಕಾರ ರಚಿಸಿತ್ತು.

ಇದೇ ವೇಳೆ, ಕೇರಳಕ್ಕೆ ಸಂಬಂಧಿಸಿದ ಮತ್ತೊಂದು ಮಹತ್ವದ ಬೆಳವಣಿಗೆಯೂ ನಡೆದಿದೆ. ಕೇರಳ ರಾಜ್ಯದ ಹೆಸರು ಇನ್ನು ಮುಂದೆ ‘ಕೇರಳಂ’ ಎಂದು ಅಧಿಕೃತವಾಗಿ ಕರೆಯಲ್ಪಡಲಿದೆ. ಈ ಸಂಬಂಧ ರಾಜ್ಯ ಸರ್ಕಾರ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸಿ ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಟ್ಟಿತ್ತು. ಪ್ರಧಾನಿ Narendra Modi ನೇತೃತ್ವದಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ ಇದಕ್ಕೆ ಒಪ್ಪಿಗೆ ನೀಡಿದೆ. ಪರಿಣಾಮವಾಗಿ, ಮುಂದಿನ ದಿನಗಳಲ್ಲಿ ರಾಜ್ಯದ ಅಧಿಕೃತ ಹೆಸರು ‘ಕೇರಳಂ’ ಆಗಲಿದೆ.

ಆರೋಗ್ಯ ಇಲಾಖೆ ಕಾರ್ಯಕ್ರಮದಲ್ಲಿ ಉರ್ದು ಬಳಕೆ ವಿಚಾರ: “ಗೊತ್ತಿಲ್ಲ” ಎಂದ ಪ್ರದೀಪ್ ಈಶ್ವರ್

0

ಬೆಂಗಳೂರು: ಆರೋಗ್ಯ ಇಲಾಖೆ ಕಾರ್ಯಕ್ರಮದಲ್ಲಿ ಉರ್ದು ಭಾಷೆ ಬಳಕೆ ಮಾಡಿರುವ ವಿಚಾರ ತಮ್ಮ ಗಮನಕ್ಕೆ ಬಂದಿಲ್ಲ ಎಂದು ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಸ್ಪಷ್ಟಪಡಿಸಿದ್ದಾರೆ.

ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಆರೋಗ್ಯ ಇಲಾಖೆ ಕಾರ್ಯಕ್ರಮದಲ್ಲಿ ಉರ್ದು ಬಳಕೆ ಮಾಡಿರುವ ಬಗ್ಗೆ ನನಗೆ ಮಾಹಿತಿ ಇಲ್ಲ. ಅದು ನನ್ನ ಗಮನಕ್ಕೆ ಬಂದಿಲ್ಲ. ವಿಚಾರ ತಿಳಿದುಕೊಂಡು ನಂತರ ಪ್ರತಿಕ್ರಿಯೆ ನೀಡುತ್ತೇನೆ ಎಂದು ಹೇಳಿದರು.

ನಮ್ಮಲ್ಲಿ ಕನ್ನಡಕ್ಕೆ ಮೊದಲ ಆದ್ಯತೆ ಇದೆ. ನಮ್ಮ ಮಣ್ಣಿನ ಭಾಷೆ, ನಮ್ಮ ತಾಯಿ ಭಾಷೆ ಕನ್ನಡವೇ. ಇತರೆ ಭಾಷೆಗಳು ಜೀವನೋಪಾಯಕ್ಕಾಗಿ ಅಗತ್ಯವಾಗಬಹುದು, ಆದರೆ ಕನ್ನಡ ಭಾಷೆ ಮಾತ್ರ ಭಾವನೆಗೆ ಸಂಬಂಧಿಸಿದ್ದು ಎಂದು ಹೇಳಿದರು. ಅಂತಹ ಘಟನೆ ನಡೆದಿರುವುದು ದೃಢಪಟ್ಟರೆ, ನಾಳೆ ಬಂದು ಖಂಡನೆ ವ್ಯಕ್ತಪಡಿಸುವುದಾಗಿ ಶಾಸಕ ತಿಳಿಸಿದರು.

ಅನುಭವಿ ಮುಖ್ಯಮಂತ್ರಿಗಳು ನಾಡಿನ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕೊಡಬೇಕು: ವಿಜಯೇಂದ್ರ ಆಗ್ರಹ

0

ಬೆಂಗಳೂರು: ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳು ಈ ಸುಳ್ಳಾಟ, ಕಳ್ಳಾಟವನ್ನು ನಿಲ್ಲಿಸಬೇಕು. 16 ಬಜೆಟ್ ಮಂಡಿಸಿ ದೇವರಾಜ ಅರಸು ಅವರ ದಾಖಲೆಯನ್ನು ಮುರಿದ ಅನುಭವಿ ಮುಖ್ಯಮಂತ್ರಿಗಳು ನಾಡಿನ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕೊಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಆಗ್ರಹಿಸಿದ್ದಾರೆ.

ಅವರು ಇಂದು ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಸುಳ್ಳು ಹೇಳುವುದು ಬಿಟ್ಟರೆ ಬೇರೇನನ್ನೂ ಮಾಡಲು ಇವರಿಗೆ ಸಾಧ್ಯವಾಗಿಲ್ಲ. ಕಾಂಗ್ರೆಸ್ ಸರಕಾರದ ಮನೆದೇವರೇ ಸುಳ್ಳು ಎಂದು ದೂರಿದರು.

ಏನೇ ಸಮಸ್ಯೆಗಳು ಬಂದರೂ ಹಿಂದಿನ ಬಿಜೆಪಿ ಸರಕಾರವನ್ನು ದೂರುತ್ತಾರೆ. ಕೇಂದ್ರ ಸರಕಾರದ ಮೇಲೆ ಜವಾಬ್ದಾರಿ ಹಾಕುವಂಥದ್ದು ಮತ್ತು ತನ್ನ ಜವಾಬ್ದಾರಿಯ ಸ್ಥಾನದಿಂದ ನುಣುಚಿಕೊಳ್ಳುವ ಷಡ್ಯಂತ್ರ, ಕುತಂತ್ರವನ್ನು ಸಿದ್ದರಾಮಯ್ಯರ ನೇತೃತ್ವದ ಕಾಂಗ್ರೆಸ್ ಸರಕಾರ ಕಳೆದ 3 ವರ್ಷಗಳಿಂದ ನಿರಂತರವಾಗಿ ಮಾಡಿಕೊಂಡು ಬರುತ್ತಿದೆ ಎಂದು ತಿಳಿಸಿದರು. ರಾಜ್ಯ ಕಾಂಗ್ರೆಸ್ ಸರಕಾರದ ನಿರ್ಲಕ್ಷ್ಯ ಧೋರಣೆಯೇ ಎಲ್ಲ ಸಮಸ್ಯೆಗಳಿಗೆ ಕಾರಣ ಎಂದು ಟೀಕಿಸಿದರು. ಇದು ನಾಡಿನ ಪ್ರತಿಯೊಬ್ಬರನ್ನೂ ಚಿಂತೆಗೀಡು ಮಾಡಿದೆ ಎಂದು ತಿಳಿಸಿದರು.

ರಾಜ್ಯದ ಆರೋಗ್ಯ ಇಲಾಖೆ ಪರಿಸ್ಥಿತಿ ಕುರಿತು ಮಾತನಾಡಿದ ಅವರು, 108 ಆಂಬುಲೆನ್ಸ್ ಸಿಬ್ಬಂದಿ ಮತ್ತು ವೈದ್ಯರು ಬೀದಿಗಿಳಿದು ಹೋರಾಡುವ ಪರಿಸ್ಥಿತಿಯನ್ನು ಸರಕಾರ ತಂದಿಟ್ಟಿದೆ. ಕಾಂಗ್ರೆಸ್ಸಿನವರು ಸಾವಿರ ದಿನಗಳ ಸಾಧನಾ ಸಮಾವೇಶ ಮಾಡುತ್ತಾರೆ. ಸಮಸ್ಯೆಗಳನ್ನು ಪರಿಹರಿಸುತ್ತಿಲ್ಲ ಎಂದು ಟೀಕಿಸಿದರು. ಇವರ ಬೇಜವಾಬ್ದಾರಿಯಿಂದ ರಾಜ್ಯದ ಆರೋಗ್ಯ ಇಲಾಖೆಯೇ ಐ.ಸಿ.ಯುನಲ್ಲಿದೆ. ಔಷಧಿ ಕೊರತೆ ಕಾಡುತ್ತಿದೆ ಎಂದು ಆಕ್ಷೇಪಿಸಿದರು.

ಸುನೇತ್ರಾ ಪವಾರ್ ಬಾರಾಮತಿ ಉಪಚುನಾವಣೆಗೆ ಅಭ್ಯರ್ಥಿಯಾಗಿ ಆಯ್ಕೆ!

0

ಮುಂಬೈ: ಅಜಿತ್ ಪವಾರ್ ನಿಧನದಿಂದ ತೆರವಾಗಿರುವ ಬಾರಾಮತಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಸುನೇತ್ರಾ ಪವಾರ್ ಅವರನ್ನು ಅಭ್ಯರ್ಥಿಯಾಗಿ ಅಂತಿಮಗೊಳಿಸಲಾಗಿದೆ. ಪಕ್ಷದ ಉನ್ನತ ಮಟ್ಟದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ಸುನೇತ್ರಾ ಪವಾರ್ ಅವರ ಹೆಸರನ್ನು ರಾಷ್ಟ್ರೀಯ ಅಧ್ಯಕ್ಷೆಯಾಗಿ ಅಧಿಕೃತವಾಗಿ ಅನುಮೋದಿಸುವ ಪ್ರಕ್ರಿಯೆಯೂ ಆರಂಭವಾಗಿದೆ. ವಿಮಾನ ಅಪಘಾತದಲ್ಲಿ ಅಜಿತ್ ಪವಾರ್ ನಿಧನರಾದ ನಂತರ ಪಕ್ಷದೊಳಗಿನ ಬೆಳವಣಿಗೆಗಳ ಹಿನ್ನೆಲೆ ಅವರನ್ನು ಮುಂದಿರಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎನ್ನಲಾಗಿದೆ.

ಪ್ರಸ್ತುತ ಸುನೇತ್ರಾ ಪವಾರ್ ಉಪಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಶಾಸಕಾಂಗ ಪಕ್ಷದ ನಾಯಕಿಯಾಗಿಯೂ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಇದೇ ಸಭೆಯಲ್ಲಿ ರಾಜ್ಯಸಭೆಗೆ ಪಾರ್ಥ್ ಪವಾರ್ ಅವರ ನಾಮನಿರ್ದೇಶನವನ್ನು ಅಂತಿಮಗೊಳಿಸಲಾಗಿದೆ.

ಸುನೇತ್ರಾ ಪವಾರ್ ಅವರ ರಾಜೀನಾಮೆಯಿಂದ ತೆರವಾದ ರಾಜ್ಯಸಭಾ ಸ್ಥಾನ ಖಾಲಿಯಾಗಿತ್ತು. ಮಹಾರಾಷ್ಟ್ರದಲ್ಲಿ ಖಾಲಿ ಇರುವ ಏಳು ರಾಜ್ಯಸಭಾ ಸ್ಥಾನಗಳಿಗೆ ಮಾರ್ಚ್ 16ರಂದು ಚುನಾವಣೆ ನಡೆಯಲಿದೆ.

ಜನವರಿ 28ರಂದು ನಡೆದ ವಿಮಾನ ಅಪಘಾತದಲ್ಲಿ ಮಾಜಿ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ನಿಧನರಾದ ಬಳಿಕ ಬಾರಾಮತಿ ವಿಧಾನಸಭಾ ಸ್ಥಾನ ಖಾಲಿಯಾಯಿತು.

2024ರ ವಿಧಾನಸಭಾ ಚುನಾವಣೆಯಲ್ಲಿ ಅಜಿತ್ ಪವಾರ್ ಅವರು ತಮ್ಮ ಸೋದರಳಿಯ ಹಾಗೂ ಎನ್ಸಿಪಿ (ಎಸ್ಪಿ) ಅಭ್ಯರ್ಥಿ ಯುಗೇಂದ್ರ ಪವಾರ್ ಅವರನ್ನು 1,00,899 ಮತಗಳ ಅಂತರದಿಂದ ಸೋಲಿಸಿದ್ದರು. ಅಜಿತ್ ಪವಾರ್ 1,81,132 ಮತಗಳನ್ನು ಪಡೆದರೆ, ಯುಗೇಂದ್ರ ಪವಾರ್ 80,233 ಮತಗಳನ್ನು ಗಳಿಸಿದ್ದರು. ಉಪಚುನಾವಣೆಯ ವೇಳಾಪಟ್ಟಿ ಹಾಗೂ ಅಧಿಕೃತ ಅಧಿಸೂಚನೆ ಶೀಘ್ರದಲ್ಲೇ ಪ್ರಕಟವಾಗುವ ಸಾಧ್ಯತೆ ಇದೆ.

ಶಕ್ತಿಪೀಠ ಶಿರಸಿಯಲ್ಲಿ ಭಕ್ತಿ ಸಂಭ್ರಮ: ಮಾರಿಕಾಂಬಾ ದೇವಿಯ ರಥಾರೋಹಣಕ್ಕೆ ಸಾವಿರಾರು ಭಕ್ತರ ಸಾಕ್ಷಿ

0

ಶಿರಸಿ: ದಕ್ಷಿಣ ಭಾರತದ ಅತಿದೊಡ್ಡ ಹಾಗೂ ಸುಪ್ರಸಿದ್ಧ ಜಾತ್ರೆಗಳಲ್ಲಿ ಒಂದಾದ ಉತ್ತರ ಕನ್ನಡ ಜಿಲ್ಲೆಯ ಶಿರಸಿ ಶ್ರೀ ಮಾರಿಕಾಂಬಾ ದೇವಿಯ ಜಾತ್ರಾ ಮಹೋತ್ಸವಕ್ಕೆ ಅದ್ದೂರಿ ಚಾಲನೆ ದೊರೆತಿದ್ದು, ಜಾತ್ರೆಯು ಮತ್ತೆ ಭಕ್ತಿ ಸಂಭ್ರಮದ ಕೇಂದ್ರಬಿಂದುವಾಗಿದೆ. ಉತ್ತರ ಕನ್ನಡದ ಜನರ ಸಂಸ್ಕೃತಿ ಮತ್ತು ಪರಂಪರೆಯನ್ನು ಪ್ರತಿಬಿಂಬಿಸುವ ಈ ಉತ್ಸವದಲ್ಲಿ ಶ್ರೀ ಮಾರಿಕಾಂಬಾ ದೇವಾಲಯ ರಥೋತ್ಸವ ಪ್ರಮುಖ ಆಕರ್ಷಣೆಯಾಗಿದೆ.

ನಿನ್ನೆ ನಡೆದ ಕಲ್ಯಾಣೋತ್ಸವದ ಬಳಿಕ ಇಂದು ಮುಂಜಾನೆ ರಥಾರೋಹಣ ನೆರವೇರಿದ್ದು, ಸಾವಿರಾರು ಭಕ್ತರು ದೇವಿಯ ದರ್ಶನ ಪಡೆದು ಭಾವಪರವಶರಾದರು. ಜೈಕಾರದ ಘೋಷಣೆಗಳು ನಗರದ ತುಂಬೆಲ್ಲ ಮೊಳಗಿದವು.

ಜಾತ್ರೆಯು ಒಂಬತ್ತು ದಿನಗಳ ಕಾಲ ನಡೆಯಲಿದ್ದು, ಕರ್ನಾಟಕ ಮಾತ್ರವಲ್ಲದೆ ನೆರೆಯ ರಾಜ್ಯಗಳಿಂದಲೂ ಲಕ್ಷಾಂತರ ಭಕ್ತರು ಆಗಮಿಸುವ ನಿರೀಕ್ಷೆ ಇದೆ. ಭಕ್ತರ ಅನುಕೂಲಕ್ಕಾಗಿ ಸ್ಥಳೀಯ ಆಡಳಿತ ಹಾಗೂ ದೇವಸ್ಥಾನ ಸಮಿತಿ ಸಕಲ ಸಿದ್ಧತೆ ಮಾಡಿಕೊಂಡಿದೆ.

ಅಪರೂಪದ ಖಾಯಿಲೆಗಳಿಂದ ಬಳಲುವವರು ಆತ್ಮವಿಶ್ವಾಸ ಕಳೆದುಕೊಳ್ಳದಿರಿ, ಹಣದ ಚಿಂತೆ ಬಿಡಿ: ಡಿ.ಕೆ. ಶಿವಕುಮಾರ್

0

ಬೆಂಗಳೂರು: ಹಿಮೋಫಿಲಿಯಾ ಹಾಗೂ ಇತರೇ ಅಪರೂಪದ ಖಾಯಿಲೆಗಳಿಂದ ಬಳಲುತ್ತಿರುವ ರೋಗಿಗಳ ಜೊತೆ ಕಾಂಗ್ರೆಸ್ ಸರ್ಕಾರ ನಿಲ್ಲುತ್ತದೆ. ಹಣದ ಬಗ್ಗೆ ಚಿಂತೆ ಮಾಡಬೇಡಿ. ಆದರೆ ಯಾರೂ ಸಹ ತಮ್ಮ ಆತ್ಮವಿಶ್ವಾಸ ಕಳೆದುಕೊಳ್ಳಬೇಡಿ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ಧೈರ್ಯ ತುಂಬಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಬೆಂಗಳೂರಿನ ನೆಹರೂ ತಾರಾಲಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ‘ಕುಸುಮ ಸಂಜೀವಿನಿ’ ಹಿಮೋಫಿಲಿಯ ರೋಗಿಗಳಿಗೆ ರೋಗ ನಿರೋಧಕ ಚಿಕಿತ್ಸೆ ಹಾಗೂ 108 ಆಂಬುಲೆನ್ಸ್ ಸೇವೆಗಳನ್ನು ಡಿಸಿಎಂ ಶಿವಕುಮಾರ್ ಅವರು ಉದ್ಘಾಟಿಸಿ ಮಾತನಾಡಿದರು.

“ಒಬ್ಬ ರೋಗಿಗೆ ಚುಚ್ಚುಮದ್ದು ನೀಡಲು ವರ್ಷಕ್ಕೆ ಐದು ಲಕ್ಷ ಖರ್ಚಾಗಲಿದೆ. ಹಿಮೋಫಿಲಿಯಾದಂತಹ ಅಪರೂಪದ ಖಾಯಿಲೆಯಿಂದ ಬಳಲುತ್ತಿರುವ ರೋಗಿಗಳ ಬದುಕಿನಲ್ಲಿ ಭರವಸೆ ಮೂಡಿಸಬೇಕು, ಅವರ ಬದುಕಿಗೆ ಶಕ್ತಿ ತುಂಬಬೇಕು ಎಂದು ನಮ್ಮ ಸರ್ಕಾರ ಹೊರಟಿದೆ. ಇಡೀ ದೇಶದಲ್ಲಿ ನಾವು ಮೊದಲ ಬಾರಿಗೆ ಸಹಾಯಹಸ್ತ ಚಾಚಿದೆ” ಎಂದರು.

“ಈ ರೋಗ ಬಂದ ತಕ್ಷಣ ಭವಿಷ್ಯವೇ ಇಲ್ಲ ಎಂದು ಭರವಸೆ ಕಳೆದುಕೊಳ್ಳಬಾರದು. ಮಕ್ಕಳು, ತಂದೆತಾಯಂದಿರ ಜೊತೆ ನಾವಿದ್ದೇವೆ. ಇಷ್ಟೊಂದು ಹಣ ಹೊಂದಿಸಲು ಎಲ್ಲರಿಗೂ ಸಾಧ್ಯವಿಲ್ಲ. ಆದ ಕಾರಣ ನಾವು ನಿಮ್ಮಜೊತೆಯಾಗಿದ್ದೇವೆ. ಯಾವುದೇ ರೋಗ ಆಗಿರಬಹುದು ಬಯಸಿ ಬರುವಂತಹದ್ದಲ್ಲ. ಮುಗ್ದ ಮಕ್ಕಳು ಇದರಿಂದ ಬಳಲುತ್ತಿದ್ದಾರೆ. ಪ್ರಕೃತಿ ನಿಯಮ ಎಂದೂ ಹೇಳಬಹುದು. ಇಲ್ಲಿ ತಂದೆ ತಾಯಿ, ಮಕ್ಕಳದ್ದು ಸೇರಿದಂತೆ ಯಾರದ್ದೂ ತಪ್ಪಿಲ್ಲ. ಇದನ್ನ ನಾವು ಸ್ವೀಕರಿಸಲೇ ಬೇಕು” ಎಂದರು.

“ನಮ್ಮ ಆರೋಗ್ಯ ಇಲಾಖೆ ಇಡೀ ದೇಶದಲ್ಲಿಯೇ ಕ್ರಾಂತಿ ಮಾಡುತ್ತಿದೆ. ದಿನೇಶ್‌ ಅವರು ಅತ್ಯಂತ ದಕ್ಷತೆಯಿಂದ ಕೆಲಸ ಮಾಡುತ್ತಿದ್ದಾರೆ. ಜನರು ಎದ್ದುನಿಂತು ಚಪ್ಪಾಳೆ ಹೊಡೆಯಬೇಡಿ ಬದಲಾಗಿ. ಮತ್ತೆ ಇದೇ ಸರ್ಕಾರ ಅಧಿಕಾರಕ್ಕೆ ಬರಲಿ ಎಂದು ಆಶೀರ್ವದಿಸಿ.

ಆಗ ಇನ್ನೂ ಹೆಚ್ಚಿನ ಸೇವೆ ಮಾಡುತ್ತೇವೆ. ಸರ್ಕಾರವೇ ರೋಗಿಗಳ ನೋವಿಗೆ ಜೊತೆಯಾಗಬೇಕು ಎಂದು ದಿನೇಶ್‌ ಗುಂಡುರಾವ್‌ ಅವರು ಸಂಪುಟದಲ್ಲಿ ಈ ವಿಚಾರ ಮಂಡಿಸಿ ಸಹಾಯಕ್ಕೆ ನಿಂತಿದ್ದಾರೆ. ಇದಕ್ಕೆ ಬೆನ್ನೆಲುಬಾಗಿ ವೈದ್ಯಕೀಯ ಶಿಕ್ಷಣ ಸಚಿವರಾದ ಶರಣ ಪ್ರಕಾಶ್‌ ಪಾಟೀಲ್‌ ಅವರು ಜೊತೆಯಾಗಿದ್ದಾರೆ” ಎಂದರು.

error: Content is protected !!