ಚಿಕ್ಕಮಗಳೂರು: ಮುಳ್ಳಯ್ಯನಗಿರಿ ತಪ್ಪಲಿನಲ್ಲಿ ಉರುಳಿಗೆ ಸಿಕ್ಕು ಗಾಯಗೊಂಡ ಹುಲಿ ಕಳೆದ ಕೆಲವು ದಿನಗಳಿಂದ ಸಂಚರಿಸುತ್ತಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಗ್ರಾಮಸ್ಥರು ಹಾಗೂ ಪ್ರವಾಸಿಗರಿಗೆ ಎಚ್ಚರಿಕೆ ನೀಡಿದೆ.
ಮಾಹಿತಿಯ ಪ್ರಕಾರ, ಹುಲಿಯ ಸೊಂಟದಲ್ಲಿ ಉರುಳು ಸಿಲುಕಿದ್ದು ಅದು ಇನ್ನೂ ನೇತಾಡುತ್ತಿರುವ ಸ್ಥಿತಿಯಲ್ಲಿದೆ. ಈ ಕಾರಣದಿಂದ ಹುಲಿ ತೀವ್ರ ನೋವಿನಲ್ಲಿದ್ದರೂ ಕಳೆದ ನಾಲ್ಕೈದು ದಿನಗಳಿಂದ ಪ್ರದೇಶದಲ್ಲಿ ಓಡಾಡುತ್ತಿದೆ. ಈ ಅವಧಿಯಲ್ಲಿ ಅದು ಜಿಂಕೆ ಮತ್ತು ಕಡವೆಯನ್ನು ಬೇಟೆಯಾಡಿರುವುದು ಸಹ ದೃಢಪಟ್ಟಿದೆ. ಸುತ್ತಮುತ್ತ ಪ್ರಾಣಿಗಳ ಅವಶೇಷಗಳು ಪತ್ತೆಯಾಗಿವೆ.
ಸ್ಥಳೀಯ ನಿವಾಸಿಗಳ ಭದ್ರತೆಗಾಗಿ ಅರಣ್ಯ ಇಲಾಖೆ ತೋಟ ಕಾರ್ಮಿಕರಿಗೆ ಕೆಲಸಕ್ಕೆ ತೆರಳದಂತೆ ಸೂಚನೆ ನೀಡಿದ್ದು, ಪಂಡರವಳ್ಳಿ, ಕೊಳಗಾಮೆ ಹಾಗೂ ಏಳುನೂರ್ ಖಾನ್ ಗ್ರಾಮಗಳಲ್ಲಿ ಜನರು ಆತಂಕದಲ್ಲಿ ಇದ್ದಾರೆ.
ಹುಲಿಯನ್ನು ಸೆರೆಹಿಡಿಯಲು ಅರಣ್ಯ ಇಲಾಖೆ ಕಳೆದ ಮೂರ್ನಾಲ್ಕು ದಿನಗಳಿಂದ ಕಾರ್ಯಾಚರಣೆ ನಡೆಸುತ್ತಿದ್ದು, ಕ್ಯಾಮೆರಾ ಟ್ರ್ಯಾಪ್ಗಳನ್ನು ಅಳವಡಿಸಿ ಅದರ ಚಲನವಲನವನ್ನು ನಿಗಾ ವಹಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಉರುಳು ಹಾಕಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಮತ್ತು ಪರಿಸರವಾದಿಗಳು ಆಗ್ರಹಿಸಿದ್ದಾರೆ.

