ಬೆಂಗಳೂರು: ನೇಪಾಳದಲ್ಲಿ ಕಾಣೆಯಾದ ಕನ್ನಡಿಗರ ಡಿಎನ್ಎ ಮಾದರಿ ಸಂಗ್ರಹಕ್ಕೆ ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯನ್ನು ನೋಡಲ್ ಕೇಂದ್ರವನ್ನಾಗಿ ಆಯ್ಕೆ ಮಾಡಲಾಗಿದೆ.
ನೇಪಾಳ ಮತ್ತು ಟಿಬೆಟ್ ಸ್ವಾಯತ್ತ ಪ್ರದೇಶದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪ ಹಾಗೂ ದಿಢೀರ್ ಪ್ರವಾಹದಲ್ಲಿ ಕಾಣೆಯಾಗಿರುವ ಕರ್ನಾಟಕದ ಸಂತ್ರಸ್ತರ ಪ್ರಥಮ ಹಂತದ ರಕ್ತಸಂಬಂಧಿಗಳ ಗುರುತು ಪತ್ತೆಹಚ್ಚಲು ಮತ್ತು ಡಿಎನ್ಎ ಮಾದರಿ ಸಂಗ್ರಹಕ್ಕಾಗಿ ಬೆಂಗಳೂರಿನ ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಯನ್ನು ‘ನೋಡಲ್ ಕೇಂದ್ರ’ವನ್ನಾಗಿ ನಿಯೋಜಿಸಲಾಗಿದೆ. ಈ ಕುರಿತು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಕೆಎಸ್ಡಿಎಂಎ) ಮತ್ತು ಕಂದಾಯ ಇಲಾಖೆ ಆದೇಶ ಹೊರಡಿಸಿವೆ.
ನೇಪಾಳದಲ್ಲಿ ಪತ್ತೆಯಾಗಿರುವ ಮೃತದೇಹಗಳ ಗುರುತು ಪತ್ತೆಹಚ್ಚಲು ಮತ್ತು ಅವುಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲು ನೇಪಾಳ ಸರ್ಕಾರ ಹಾಗೂ ಕಠ್ಮಂಡುವಿನಲ್ಲಿರುವ ಭಾರತೀಯ ರಾಯಭಾರ ಕಚೇರಿ ಸೂಚನೆ ನೀಡಿದೆ. ಫೋಟೋ ಹಾಗೂ ಇತರ ವಿವರಗಳಿಂದ ಗುರುತು ಹಿಡಿಯಲಾಗದ ಮೃತದೇಹಗಳ ಡಿಎನ್ಎ ಪ್ರೊಫೈಲ್ ತಯಾರಿಸಲಾಗುತ್ತಿದ್ದು, ಅದನ್ನು ಪರಿಶೀಲಿಸಲು ಸಂತ್ರಸ್ತರ ರಕ್ತಸಂಬಂಧಿಗಳ ಡಿಎನ್ಎ ಮಾದರಿಯ ಅಗತ್ಯವಿದೆ.
ಆಸ್ಪತ್ರೆಯ ನೋಡಲ್ ಅಧಿಕಾರಿಗಳ ವಿವರ: ಡಿಎನ್ಎ ಮಾದರಿ ಸಂಗ್ರಹ ಮತ್ತು ಸಂಬಂಧಿಕರ ಪರಿಶೀಲನೆಗಾಗಿ ಬೌರಿಂಗ್ ಹಾಗೂ ಲೇಡಿ ಕರ್ಜನ್ ಆಸ್ಪತ್ರೆಯಲ್ಲಿ ವಿಧಿವಿಜ್ಞಾನ ವಿಭಾಗದ ಮುಖ್ಯಸ್ಥ ಡಾ. ನಾಗೇಶ್ ಕುಪ್ಪಸ್ಟ್ ಹಾಗೂ ಆರ್ಎಂಒ ಡಾ. ವಾಡಿರಾಜ್ ಬಿ. ಪೊಕ್ಕನ್ ಅವರನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ.
ನೇಪಾಳದಲ್ಲಿ ಕಾಣೆಯಾದವರ ಪ್ರಥಮ ಹಂತದ ಸಂಬಂಧಿಕರು (ತಂದೆ, ತಾಯಿ, ಮಗ, ಮಗಳು ಅಥವಾ ಸಂಗಾತಿ) ಡಿಎನ್ಎ ಪರೀಕ್ಷೆಗೆ ಬರುವಾಗ ಇತ್ತೀಚಿನ ಪಾಸ್ಪೋರ್ಟ್ ಅಳತೆಯ ಭಾವಚಿತ್ರ, ಸರ್ಕಾರದಿಂದ ನೀಡಲಾದ ಗುರುತಿನ ಚೀಟಿ ಹಾಗೂ ಸಂಬಂಧವನ್ನು ಸಾಬೀತುಪಡಿಸುವ ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕಿದೆ.
ಜಿಲ್ಲಾಡಳಿತ ಹಾಗೂ ಗ್ರೇಟರ್ ಬೆಂಗಳೂರು ಪ್ರಾಧಿಕಾರದಿಂದ ಪರಿಶೀಲನೆಗೊಂಡ ಬಳಿಕ ಈ ಮಾದರಿಗಳನ್ನು ರಾಜ್ಯ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (ಎಫ್ಎಸ್ಎಲ್) ಕಳುಹಿಸಿ, ನಂತರ ನೇಪಾಳದ ಅಧಿಕಾರಿಗಳೊಂದಿಗೆ ಹಂಚಿಕೊಳ್ಳಲಾಗುತ್ತದೆ. ಕಾಣೆಯಾದವರ ಬಗ್ಗೆ ಮಾಹಿತಿ ನೀಡಲು ಅಥವಾ ನೆರವು ಪಡೆಯಲು ಕೆಎಸ್ಡಿಎಂಎ ಹೆಲ್ಪ್ಲೈನ್ ಸಂಪರ್ಕಿಸಬಹುದೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ನೇಪಾಳದ ರಾಷ್ಟ್ರೀಯ ವಿಪತ್ತು ಅಪಾಯ ಕಡಿತ ಮತ್ತು ನಿರ್ವಹಣಾ ಪ್ರಾಧಿಕಾರ ಶುಕ್ರವಾರ ನೀಡಿದ ಮಾಹಿತಿ ಪ್ರಕಾರ, ಪ್ರವಾಹದಿಂದ ಸಾವನ್ನಪ್ಪಿದವರ ಸಂಖ್ಯೆ 1,295ಕ್ಕೆ ಏರಿದೆ. 32,000ಕ್ಕೂ ಹೆಚ್ಚು ಜನರು ತೊಂದರೆಗೊಳಗಾಗಿದ್ದು, ರಸ್ತೆಗಳು, ಸೇತುವೆಗಳು, ಶಾಲೆಗಳು ಮತ್ತು ಆರೋಗ್ಯ ಸೌಲಭ್ಯಗಳು ಹಾನಿಗೊಳಗಾಗಿವೆ.

