ಬೆಂಗಳೂರು: ಡೇಟಿಂಗ್ ಆ್ಯಪ್ ಮೂಲಕ ಪರಿಚಯವಾಗಿದ್ದ ಯುವತಿ ಯುವಕನನ್ನು ಅಪಹರಿಸಿ 3.70 ಲಕ್ಷ ರೂಪಾಯಿ ದೋಚಿರುವ ಘಟನೆ ನಡೆದಿದ್ದು, ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಂದಾಪುರ ನಿವಾಸಿಯಾಗಿರುವ ದೂರುದಾರ ಯುವಕನಿಗೆ ಡೇಟಿಂಗ್ ಆ್ಯಪ್ನಲ್ಲಿ ಯುವತಿಯ ಪರಿಚಯವಾಗಿತ್ತು. ಆಗಸ್ಟ್ 19ರಂದು ರಾತ್ರಿ ಎಲೆಕ್ಟ್ರಾನಿಕ್ ಸಿಟಿ ಬಳಿಯ ಹುಲಿಮಂಗಲ ಮುಖ್ಯರಸ್ತೆಯಲ್ಲಿನ ಪಬ್ಗೆ ಬರುವಂತೆ ಯುವತಿ ಯುವಕನಿಗೆ ತಿಳಿಸಿದ್ದಳು. ಅದರಂತೆ ರಾತ್ರಿ 9.45ರ ಸುಮಾರಿಗೆ ಪಬ್ ಬಳಿ ತೆರಳಿದ್ದ ಯುವಕನನ್ನು, ಬಿಳಿ ಬಣ್ಣದ ಕಾರಿನಲ್ಲಿ ಬಂದಿದ್ದ ಯುವತಿ ಪೆಟ್ರೋಲ್ ಹಾಕಿಸಿಕೊಂಡು ಬರೋಣ ಎಂಬ ನೆಪವೊಡ್ಡಿ ಕಾರಿಗೆ ಹತ್ತಿಸಿಕೊಂಡು ಕರೆದೊಯ್ದಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಸ್ವಲ್ಪ ಸಮಯದ ಬಳಿಕ ನಿರ್ಜನ ಪ್ರದೇಶದಲ್ಲಿ ಕಾರು ನಿಲ್ಲಿಸಿದ ಯುವತಿ, ಶೌಚಾಲಯಕ್ಕೆ ಹೋಗಬೇಕೆಂಬ ನೆಪವೊಡ್ಡಿ ವಾಹನದಿಂದ ಕೆಳಗಿಳಿದು ತೆರಳಿದ್ದಳು. ಅಷ್ಟರಲ್ಲಿ ಅಲ್ಲಿಗೆ ಬಂದ ನಾಲ್ವರು ಅಪರಿಚಿತರು ಯುವಕನನ್ನು ಬೆದರಿಸಿ, ಅದೇ ಕಾರಿನಲ್ಲಿ ಬಲವಂತವಾಗಿ ಅಜ್ಞಾತ ಸ್ಥಳಕ್ಕೆ ಕರೆದೊಯ್ದಿದ್ದರು. ಬಳಿಕ ಆತನನ್ನು ಮತ್ತೊಂದು ಕಾರಿನಲ್ಲಿ ಕೂರಿಸಿಕೊಂಡು ನಗರದ ವಿವಿಧೆಡೆ ಸುತ್ತಾಡಿಸಲಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ.
ಕಾರಿನಲ್ಲಿ ಯುವಕನಿಗೆ ಕೊಲೆ ಬೆದರಿಕೆ ಹಾಕಿದ ಆರೋಪಿಗಳು, 7 ಸಾವಿರ ರೂ. ನಗದು, ಡೆಬಿಟ್ ಕಾರ್ಡ್ ಹಾಗೂ ಕ್ರೆಡಿಟ್ ಕಾರ್ಡ್ ಕಿತ್ತುಕೊಂಡಿದ್ದಾರೆ. ಬಳಿಕ ಯುವಕನನ್ನು ಎಟಿಎಂಗೆ ಕರೆದೊಯ್ದು ಪಿನ್ ನಂಬರ್ ಪಡೆದು 45 ಸಾವಿರ ರೂ. ಡ್ರಾ ಮಾಡಿಕೊಂಡಿದ್ದಾರೆ. ಇದಲ್ಲದೆ ಆತನ ಕ್ರೆಡಿಟ್ ಕಾರ್ಡ್ ಬಳಸಿ ಕಾರಿಗೆ ಪೆಟ್ರೋಲ್ ಹಾಕಿಸಿಕೊಂಡಿರುವ ಆರೋಪಿಗಳು,
ಕಾರ್ಡ್ ಪಾಸ್ವರ್ಡ್ ಬದಲಿಸಿ 3.20 ಲಕ್ಷ ರೂ.ಗಳನ್ನು ಬೇರೊಂದು ಖಾತೆಗೆ ವರ್ಗಾಯಿಸಿಕೊಂಡಿದ್ದಾರೆ. ಆಗಸ್ಟ್ 20ರಂದು ಬೆಳಗ್ಗೆ ಎಲೆಕ್ಟ್ರಾನಿಕ್ ಸಿಟಿ ಮೆಟ್ರೋ ನಿಲ್ದಾಣದ ಹಿಂಭಾಗದ ರಸ್ತೆಯಲ್ಲಿ ಯುವಕನನ್ನು ಕಾರಿನಿಂದ ಕೆಳಗಿಳಿಸಿ ಆರೋಪಿಗಳು ಪರಾರಿಯಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮನೆಗೆ ಮರಳಿದ ಯುವಕ ಕುಟುಂಬದ ಸದಸ್ಯರೊಂದಿಗೆ ಚರ್ಚಿಸಿ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾನೆ. ಅಪಹರಣ ಮತ್ತು ಸುಲಿಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಯುವತಿಯ ಮೊಬೈಲ್ ಸಂಖ್ಯೆ ಹಾಗೂ ಎಟಿಎಂ, ಪೆಟ್ರೋಲ್ ಬಂಕ್ಗಳ ಸಿ.ಸಿ ಕ್ಯಾಮೆರಾ ದೃಶ್ಯಾವಳಿ ಪರಿಶೀಲಿಸಿ ಆರೋಪಿಗಳ ಪತ್ತೆಗೆ ಮಾಹಿತಿ ಸಂಗ್ರಹಿಸುತ್ತಿದ್ದಾರೆ.

