Home Blog

ದಾವಣಗೆರೆಯಲ್ಲಿ ರೈತರ ಪ್ರತಿಭಟನೆ: ಎಸಿ ಕಚೇರಿಗೆ ಮುತ್ತಿಗೆ ಯತ್ನ; ರೇಣುಕಾಚಾರ್ಯ ಸೇರಿ 200ಕ್ಕೂ ಹೆಚ್ಚು ಮಂದಿ ವಶಕ್ಕೆ

0

ದಾವಣಗೆರೆ: ಗುಟ್ಕಾ ನಿಷೇಧ ಆದೇಶ ಹಿಂಪಡೆಯಬೇಕು ಹಾಗೂ ಅಪ್ಪರ್ ಭದ್ರಾ ಯೋಜನೆಗೆ ನೀರು ಬಿಡುಗಡೆ ಮಾಡಬಾರದು ಎಂದು ಆಗ್ರಹಿಸಿ ದಾವಣಗೆರೆಯಲ್ಲಿ ರೈತರು ನಡೆಸಿದ ಪ್ರತಿಭಟನೆ ಶುಕ್ರವಾರ ತೀವ್ರಗೊಂಡಿತು.

ಎಸಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ, ರೈತ ಮುಖಂಡ ಮಾಡಾಳ್ ಮಲ್ಲಿಕಾರ್ಜುನ್ ಸೇರಿದಂತೆ 200ಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದರು.

ಜಿಲ್ಲೆಯ ವಿವಿಧ ಭಾಗಗಳಿಂದ ಕಳೆದ ಮೂರು ದಿನಗಳಿಂದ ನಡೆಯುತ್ತಿದ್ದ ಪಾದಯಾತ್ರೆ ಶುಕ್ರವಾರ ದಾವಣಗೆರೆ ನಗರ ಪ್ರವೇಶಿಸಿತು. ರೇಣುಕಾಚಾರ್ಯ, ಮಾಡಾಳ್ ಮಲ್ಲಿಕಾರ್ಜುನ್ ಹಾಗೂ ಲೋಕಿಕೆರೆ ನಾಗರಾಜ್ ನೇತೃತ್ವದಲ್ಲಿ ರೈತರು ಜಯದೇವ ವೃತ್ತದಿಂದ ಎಸಿ ಕಚೇರಿಯತ್ತ ಮೆರವಣಿಗೆ ನಡೆಸಿದರು.

ಗುಟ್ಕಾ ನಿಷೇಧದಿಂದ ಅಡಿಕೆ ಬೆಳೆಗಾರರಿಗೆ ಮಾರುಕಟ್ಟೆ ಸಮಸ್ಯೆ ಎದುರಾಗುವ ಸಾಧ್ಯತೆಯಿದೆ ಎಂದು ಪ್ರತಿಭಟನಾಕಾರರು ಹೇಳಿದರು. ಅಡಿಕೆ ಬೆಲೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿರುವುದರಿಂದ ನಿಷೇಧ ಆದೇಶವನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

ಅಪ್ಪರ್ ಭದ್ರಾ ಯೋಜನೆಗೆ 3 ಟಿಎಂಸಿ ನೀರು ಬಿಡುಗಡೆ ಮಾಡುವ ಸರ್ಕಾರದ ನಿರ್ಧಾರಕ್ಕೂ ರೈತರು ವಿರೋಧ ವ್ಯಕ್ತಪಡಿಸಿದರು. ಈ ಕುರಿತು ಹಲವು ದಿನಗಳಿಂದ ರೈತರು ಹೋರಾಟ ನಡೆಸುತ್ತಿದ್ದರೂ ಸರ್ಕಾರ ಸೂಕ್ತವಾಗಿ ಸ್ಪಂದಿಸಿಲ್ಲ ಎಂದು ಮಾಡಾಳ್ ಮಲ್ಲಿಕಾರ್ಜುನ್ ಆರೋಪಿಸಿದರು.

ಪಿಬಿ ರಸ್ತೆಯಲ್ಲಿ ಪ್ರತಿಭಟನೆ:

ಪಾದಯಾತ್ರೆ ಪಿಬಿ ರಸ್ತೆಗೆ ತಲುಪಿದಾಗ ಪ್ರತಿಭಟನಾಕಾರರು ರಸ್ತೆ ತಡೆ ನಡೆಸಿದರು. ಕೆಲವರು ಟೈರ್‌ಗಳಿಗೆ ಬೆಂಕಿ ಹಚ್ಚಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಇದರಿಂದ ಕೆಲಕಾಲ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು.

ನಂತರ ಪ್ರತಿಭಟನಾಕಾರರು ಎಸಿ ಕಚೇರಿ ಆವರಣಕ್ಕೆ ಪ್ರವೇಶಿಸಲು ಮುಂದಾದರು. ಪೊಲೀಸರು ಅಳವಡಿಸಿದ್ದ ಬ್ಯಾರಿಕೇಡ್‌ಗಳನ್ನು ತೆರವುಗೊಳಿಸಲು ಯತ್ನಿಸಿದ ಸಂದರ್ಭದಲ್ಲಿ ಎರಡೂ ಕಡೆಯವರ ನಡುವೆ ತಳ್ಳಾಟ ಹಾಗೂ ಮಾತಿನ ಚಕಮಕಿ ನಡೆಯಿತು.

ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದರು.

ಸೋಮವಾರ ದಾವಣಗೆರೆ ಬಂದ್‌ಗೆ ಎಚ್ಚರಿಕೆ:

ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ, ಮಾಡಾಳ್ ಮಲ್ಲಿಕಾರ್ಜುನ್ ಸೇರಿದಂತೆ 200ಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಗುಟ್ಕಾ ನಿಷೇಧ ಆದೇಶ ಹಿಂಪಡೆಯಬೇಕು ಹಾಗೂ ಅಪ್ಪರ್ ಭದ್ರಾ ಯೋಜನೆಗೆ ನೀರು ಬಿಡುಗಡೆ ಮಾಡುವ ನಿರ್ಧಾರವನ್ನು ಕೈಬಿಡಬೇಕು ಎಂದು ಪ್ರತಿಭಟನಾ ಮುಖಂಡರು ಒತ್ತಾಯಿಸಿದ್ದಾರೆ.

ಬೇಡಿಕೆಗಳನ್ನು ಈಡೇರಿಸದಿದ್ದರೆ ಸೋಮವಾರ ದಾವಣಗೆರೆ ಬಂದ್ ನಡೆಸುವುದಾಗಿ ಪ್ರತಿಭಟನಾ ಮುಖಂಡರು ಎಚ್ಚರಿಕೆ ನೀಡಿದ್ದಾರೆ.

ಪ್ರತಿಭಟನೆ ಹಿನ್ನೆಲೆಯಲ್ಲಿ ನಗರದಲ್ಲಿ ಪೊಲೀಸ್ ಬಂದೋಬಸ್ತ್ ಹೆಚ್ಚಿಸಲಾಗಿದ್ದು, ಪರಿಸ್ಥಿತಿ ನಿಯಂತ್ರಣದಲ್ಲಿಡಲು ಪೊಲೀಸರು ಕ್ರಮ ಕೈಗೊಂಡಿದ್ದಾರೆ.

ಕಣ್ಣೀರಿಟ್ಟುಕೊಂಡೇ ಸಚಿವ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ ಬಿ.ನಾಗೇಂದ್ರ; ‘ಜನತಾ ನ್ಯಾಯಾಲಯಕ್ಕೆ ಬನ್ನಿ’ ಎಂದು ಬಿಜೆಪಿ ನಾಯಕರಿಗೆ ಸವಾಲ್

ಬೆಂಗಳೂರು: ವಾಲ್ಮೀಕಿ ನಿಗಮದ ಹಗರಣ ಸಂಬಂಧ ಸಚಿವ ಬಿ.ನಾಗೇಂದ್ರ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದಾರೆ.

ವಿಧಾನಸೌಧದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿದ ಅವರು, ಪಕ್ಷದ ವರಿಷ್ಠರಿಗೆ ಮುಜುಗರ ಉಂಟಾಗಬಾರದು ಎಂಬ ಕಾರಣಕ್ಕೆ ಸ್ವಇಚ್ಛೆಯಿಂದ ರಾಜೀನಾಮೆ ನೀಡುತ್ತಿರುವುದಾಗಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಭಾವುಕರಾಗಿ ಕಣ್ಣೀರು ಹಾಕಿರುವ ಅವರು, ತಮ್ಮ ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡುವುದಾಗಿ ತಿಳಿಸಿದರು. ಪ್ರಕರಣಕ್ಕೆ ಸಂಬಂಧಿಸಿದ ಆರೋಪಗಳನ್ನು ಜನರ ಮುಂದೆ ಸಮರ್ಥವಾಗಿ ಎದುರಿಸುವುದಾಗಿ ಹೇಳಿದ ಅವರು, ಬಿಜೆಪಿಯವರು ಜನತಾ ನ್ಯಾಯಾಲಯಕ್ಕೆ ಬರಲಿ ಎಂದು ಸವಾಲು ಹಾಕಿದರು.

ವಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ ನಾಗೇಂದ್ರ, ವಿಧಾನಸಭೆ ಕಲಾಪದ ವೇಳೆ ಹಲವು ವಿಷಯಗಳ ಕುರಿತು ಚರ್ಚೆಗೆ ಅವಕಾಶ ನೀಡುವಂತೆ ಮನವಿ ಮಾಡಲಾಗಿತ್ತು. ನೋಟಿಸ್ ನೀಡಿ ಚರ್ಚೆಗೆ ಬರುವಂತೆ ಕೇಳಿಕೊಂಡರೂ ವಿಪಕ್ಷಗಳು ಸ್ಪಂದಿಸಲಿಲ್ಲ ಎಂದು ಆರೋಪಿಸಿದರು.

ರಾಜ್ಯದಲ್ಲಿನ ಬರ ಪರಿಸ್ಥಿತಿ, KPSC ಅಕ್ರಮ, ಕಾವೇರಿ ನೀರಿನ ವಿಚಾರ ಹಾಗೂ ಕಸ್ತೂರಿ ರಂಗನ್ ವರದಿ ಸೇರಿದಂತೆ ಹಲವು ವಿಷಯಗಳ ಕುರಿತು ಸದನದಲ್ಲಿ ಚರ್ಚೆ ನಡೆಯಬೇಕಿತ್ತು. ಆದರೆ ವಿಪಕ್ಷಗಳು ಕಲಾಪಕ್ಕೆ ಅಡ್ಡಿಪಡಿಸಿದವು. ಇದೀಗ ಯಾವುದೇ ಸ್ಪಷ್ಟ ವಿಷಯವಿಲ್ಲದೆ ಪಾದಯಾತ್ರೆ ನಡೆಸಲು ಮುಂದಾಗಿವೆ ಎಂದು ನಾಗೇಂದ್ರ ಟೀಕಿಸಿದರು.

ಬಿಜೆಪಿ ನಾಯಕರು ಮನುಸ್ಮೃತಿ ವಿಚಾರಧಾರೆ ಮುಂದಿಟ್ಟುಕೊಂಡು ರಾಜಕೀಯ ಮಾಡುತ್ತಿದ್ದಾರೆ. “ಇದು ವೇದ ಕಾಲವಲ್ಲ, ಪುರಾಣ ಕಾಲವಲ್ಲ. ಇದು ಸಂವಿಧಾನದ ಕಾಲ, ಅಂಬೇಡ್ಕರ್ ಯುಗ” ಎಂದರು.

ದಲಿತರು, ಆದಿವಾಸಿಗಳು ಹಾಗೂ ಬಡವರು ಅಧಿಕಾರಕ್ಕೆ ಬರಬಾರದು ಎಂಬ ಮನಸ್ಥಿತಿ ಬಿಜೆಪಿಯಲ್ಲಿದೆ. ತಾವು ಯಾವುದೇ ಒತ್ತಡಕ್ಕೆ ಮಣಿಯುವುದಿಲ್ಲ. ಸಂವಿಧಾನದ ಮೇಲೆ ನಂಬಿಕೆ ಇಟ್ಟುಕೊಂಡು ಕಾನೂನು ಹೋರಾಟ ಮುಂದುವರಿಸುವುದಾಗಿ ಹೇಳಿದರು.

ವಾಲ್ಮೀಕಿ ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ತಮ್ಮ ಪಾತ್ರವಿಲ್ಲ ಎಂದು ನಾಗೇಂದ್ರ ಸ್ಪಷ್ಟಪಡಿಸಿದರು.

“ನಾನು ಹಣ ವರ್ಗಾವಣೆಗೆ ಆದೇಶ ಮಾಡಿದ್ದೇನಾ? ನನ್ನ ನೋಟ್‌ಶೀಟ್ ಇದೆಯಾ? ಪ್ರಕರಣದಲ್ಲಿ ನನ್ನ ಪಾತ್ರವಿದೆ ಎಂಬುದಕ್ಕೆ ದಾಖಲೆ ತೋರಿಸಲಿ” ಎಂದು ಪ್ರಶ್ನಿಸಿದರು.

ಈ ಪ್ರಕರಣದಲ್ಲಿ ಹಣವನ್ನು ಸಂಪೂರ್ಣವಾಗಿ ವಾಪಸ್ ಪಡೆಯಲಾಗಿದೆ ಎಂದು ಹೇಳಿದ ಅವರು, ತಮ್ಮ ವಿರುದ್ಧದ ಆರೋಪಗಳು ತನಿಖೆಯ ಮೂಲಕ ಸುಳ್ಳೆಂದು ಸಾಬೀತಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಪ್ರಕರಣದ ತನಿಖೆ ನಡೆಸಿದ SIT ಮತ್ತು CID ಅಧಿಕಾರಿಗಳ ಮೇಲೆ ವಿಶ್ವಾಸವಿದೆ. ED ಮತ್ತು CBI ತನಿಖೆಯ ಬಗ್ಗೆಯೂ ಪ್ರಸ್ತಾಪಿಸಿದ ಅವರು, ಪ್ರಕರಣದಲ್ಲಿ ತಮ್ಮನ್ನು ಬಂಧಿಸಲಾಗಿತ್ತು. ಬಳಿಕ ನ್ಯಾಯಾಲಯದಿಂದ ಜಾಮೀನು ಪಡೆದು ಹೊರಬಂದಿರುವುದಾಗಿ ತಿಳಿಸಿದರು.

ಮೊದಲ ಚಾರ್ಜ್‌ಶೀಟ್‌ನಲ್ಲಿ ತಮ್ಮ ಹೆಸರು ಇರಲಿಲ್ಲ. ತಾವು ಸಚಿವರಾದ ಬಳಿಕ ಸಲ್ಲಿಸಲಾದ ಎರಡನೇ ಚಾರ್ಜ್‌ಶೀಟ್‌ನಲ್ಲಿ ತಮ್ಮ ಹೆಸರನ್ನು ಸೇರಿಸಲಾಗಿದೆ ಎಂದು ಅವರು ಆರೋಪಿಸಿದರು.

ತಮ್ಮ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವ ಕ್ರಮವನ್ನು ಸ್ವಾಗತಿಸುವುದಾಗಿ ಹೇಳಿದ ನಾಗೇಂದ್ರ, ಇದೇ ಮಾನದಂಡವನ್ನು ಇತರ ರಾಜಕಾರಣಿಗಳ ಪ್ರಕರಣಗಳಲ್ಲೂ ಅನುಸರಿಸಬೇಕು ಎಂದು ಆಗ್ರಹಿಸಿದರು.

“ಕುಮಾರಸ್ವಾಮಿ ಅವರ ವಿಚಾರದಲ್ಲಿ ಯಾಕೆ ಪ್ರಾಸಿಕ್ಯೂಷನ್‌ಗೆ ಕಳುಹಿಸಲಿಲ್ಲ? ನನಗೆ ಒಂದು ನ್ಯಾಯ, ಅವರಿಗೆ ಒಂದು ನ್ಯಾಯವೇ?” ಎಂದು ಪ್ರಶ್ನಿಸಿದರು.

ಬಿಜೆಪಿ ನಾಯಕರ ವಿರುದ್ಧದ ಪ್ರಕರಣಗಳಲ್ಲೂ ಕಾನೂನು ಪ್ರಕ್ರಿಯೆ ಸಮಾನವಾಗಿ ನಡೆಯಬೇಕು ಎಂದು ಹೇಳಿದರು.

ಜನಾರ್ದನ ರೆಡ್ಡಿ, ಶ್ರೀರಾಮುಲು ವಿರುದ್ಧ ಟೀಕೆ:

ಬಳ್ಳಾರಿ ಬಿಜೆಪಿ ನಾಯಕರಾದ ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು ವಿರುದ್ಧವೂ ನಾಗೇಂದ್ರ ವಾಗ್ದಾಳಿ ನಡೆಸಿದರು.

“ಬಳ್ಳಾರಿಯಲ್ಲಿರುವ ನಾಯಕರು ಬನ್ನಿ. ಜನತಾ ನ್ಯಾಯಾಲಯಕ್ಕೆ ಹೋಗೋಣ” ಎಂದು ಹೇಳಿದ ಅವರು, ತಮ್ಮ ವಿರುದ್ಧದ ಆರೋಪಗಳನ್ನು ಜನರ ಮುಂದೆ ಚರ್ಚಿಸಲು ಸಿದ್ಧ. ED ಮತ್ತು CBI ತನಿಖೆಯ ಹೆಸರಿನಲ್ಲಿ ತಮ್ಮನ್ನು ಹೆದರಿಸಲು ಸಾಧ್ಯವಿಲ್ಲ. ಯಾವುದೇ ತನಿಖೆಯನ್ನು ಕಾನೂನುಬದ್ಧವಾಗಿ ಎದುರಿಸುವುದಾಗಿ ಹೇಳಿದರು.

‘ರಾಜೀನಾಮೆಯಿಂದ ಸರ್ಕಾರದ ಕೆಲಸಕ್ಕೆ ಅಡ್ಡಿಯಾಗಬಾರದು’:

ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಪಕ್ಷದ ನಾಯಕರು ತಮ್ಮ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದಂತೆ ತಮ್ಮ ಬೆಂಬಲಕ್ಕೆ ನಿಂತಿದ್ದಾರೆ. ಪಕ್ಷದ ವರಿಷ್ಠರಿಗೆ ಮುಜುಗರ ಉಂಟಾಗಬಾರದು ಮತ್ತು ಸರ್ಕಾರದ ಅಭಿವೃದ್ಧಿ ಕಾರ್ಯಗಳಿಗೆ ಯಾವುದೇ ಅಡ್ಡಿಯಾಗಬಾರದು ಎಂಬ ಉದ್ದೇಶದಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ತಿಳಿಸಿದರು.

ಮುಂದಿನ ದಿನಗಳಲ್ಲಿ ತಮ್ಮ ಮೇಲಿನ ಆರೋಪಗಳ ವಿರುದ್ಧ ಕಾನೂನು ಹೋರಾಟ ನಡೆಸುವುದಾಗಿ ಹೇಳಿದ ನಾಗೇಂದ್ರ, ಚುನಾವಣೆಯ ಸಂದರ್ಭದಲ್ಲಿ ಈ ವಿಚಾರವನ್ನು ಜನರ ಮುಂದೆ ಇಡುವುದಾಗಿ ತಿಳಿಸಿದರು. “ನಾನು ಹೋರಾಟ ಮುಂದುವರಿಸುತ್ತೇನೆ. ಅನ್ಯಾಯವಾದರೆ ಅದನ್ನು ಪ್ರಶ್ನಿಸುತ್ತೇನೆ” ಎಂದು ನಾಗೇಂದ್ರ ಹೇಳಿದರು.

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಲ್ಲಿ ಅಕ್ರಮ ಆರೋಪ: ಸಮಗ್ರ ತನಿಖೆಗೆ ಆಗ್ರಹ

0

ವಿಜಯಸಾಕ್ಷಿ ಸುದ್ದಿ, ಗದಗ: ಗದಗ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಲ್ಲಿ ಹೆಚ್ಚುವರಿ ಪ್ರಭಾರ ಹಂಚಿಕೆ, ಅತಿಥಿ ಉಪನ್ಯಾಸಕರ ನೇಮಕಾತಿಯಲ್ಲಿ ಅಕ್ರಮ ಮತ್ತು ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ, ಸಮಗ್ರ ತನಿಖೆ ನಡೆಸುವಂತೆ ಮುಸ್ಲಿಂ ಸಮಾಜದ ಯುವಕರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಸಾಮಾಜಿಕ ಕಾರ್ಯಕರ್ತ ಇಮಾಮಸಾಬ ಡಂಬಳ ಮಾತನಾಡಿ, ಉಚ್ಚ ನ್ಯಾಯಾಲಯ ಹಾಗೂ ಇಲಾಖೆಯ ನಿಯಮಗಳಿಗೆ ವಿರುದ್ಧವಾಗಿ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗೆ ಹೆಚ್ಚುವರಿ ಹುದ್ದೆಗಳ ಪ್ರಭಾರ ನೀಡಲಾಗುತ್ತಿದೆ ಎಂದು ಆರೋಪಿಸಿದರು.

ಒಬ್ಬೊಬ್ಬ ಸಿಬ್ಬಂದಿಗೆ ನಾಲ್ಕೈದು ಹುದ್ದೆಗಳ ಹೆಚ್ಚುವರಿ ಜವಾಬ್ದಾರಿ ನೀಡಿರುವುದರಿಂದ ತಾಲೂಕು ಕೇಂದ್ರಗಳಲ್ಲಿ ಅಧಿಕಾರಿಗಳು ಲಭ್ಯವಾಗುತ್ತಿಲ್ಲ. ಇದರ ಪರಿಣಾಮವಾಗಿ ಸಾರ್ವಜನಿಕರು ಹಾಗೂ ವಸತಿ ನಿಲಯಗಳ ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ ಎಂದು ದೂರಿದರು.

ವಸತಿ ನಿಲಯಗಳಲ್ಲಿ ಮೂಲಸೌಕರ್ಯ ಮತ್ತು ಗುಣಮಟ್ಟದ ಆಹಾರದ ಕೊರತೆಯಿದ್ದು, ಅತಿಥಿ ಉಪನ್ಯಾಸಕರ ನೇಮಕಾತಿಯಲ್ಲಿಯೂ ನಿಯಮಬಾಹಿರತೆ ನಡೆದಿದೆ ಎಂದು ಆರೋಪಿಸಿದರು. ಇಲಾಖೆಯಲ್ಲಿನ ಎಲ್ಲ ಆರೋಪಗಳ ಕುರಿತು ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ರಾಜೇಸಾಬ ಶಿರಹಟ್ಟಿ, ಅಮನ್ ಬೋದ್ಲೆಖಾನ, ಆಸೀಫ್ ಯಲಿಗಾರ, ಗೌಸಮೋದಿನ್ ಸೂಡಿ, ಜೈಲಾನಿ ಶಿರಹಟ್ಟಿ, ಇರ್ಷಾದಅಹ್ಮದ ದಂಡಿನ, ಜಾಕೀರಹುಸೇನ ಮಾಲ್ದಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಸಾರ್ವಜನಿಕರಿಗೆ ನ್ಯಾಯ ದೊರೆಯಬೇಕಾದರೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಲ್ಲಿನ ಅಕ್ರಮ ಹಾಗೂ ಭ್ರಷ್ಟಾಚಾರದ ಆರೋಪಗಳನ್ನು ಸಮಗ್ರ ತನಿಖೆಗೆ ಒಳಪಡಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು.

– ಇಮಾಮಸಾಬ ಡಂಬಳ, ಸಾಮಾಜಿಕ ಕಾರ್ಯಕರ್ತ

ಬರ ಘೋಷಣೆಯಲ್ಲಿ ಗದಗ ಜಿಲ್ಲೆಗೆ ಅನ್ಯಾಯ

0

ವಿಜಯಸಾಕ್ಷಿ ಸುದ್ದಿ, ಗದಗ: ರಾಜ್ಯ ಸರ್ಕಾರ ಬರಪೀಡಿತ ತಾಲೂಕುಗಳ ಪಟ್ಟಿಯಲ್ಲಿ ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕನ್ನು ಮಾತ್ರ ಸೇರಿಸಿರುವುದು ಜಿಲ್ಲೆಯ ರೈತರಿಗೆ ಮಾಡಿದ ಅನ್ಯಾಯ ಎಂದು ಜೆಡಿಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಜಿಅಲಿ ಎಚ್. ಕೊಪ್ಪಳ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಿಲ್ಲೆಯಲ್ಲಿ ಮುಂಗಾರು ಮಳೆ ಸಮರ್ಪಕವಾಗಿ ಆಗಿಲ್ಲ. ಬಿತ್ತನೆ ಮಾಡಿದ ರೈತರು ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸುತ್ತಿದ್ದು, ಬರ ಅಧ್ಯಯನ ಯಾವ ಆಧಾರದ ಮೇಲೆ ನಡೆಸಲಾಗಿದೆ ಎಂಬುದು ಪ್ರಶ್ನೆಯಾಗಿದೆ ಎಂದು ಅವರು ತಿಳಿಸಿದ್ದಾರೆ.

ರಾಜ್ಯ ಸರ್ಕಾರ ಗದಗ ಜಿಲ್ಲೆಯ ಎಲ್ಲ ಏಳು ತಾಲೂಕುಗಳಲ್ಲಿ ಮರು ಸಮೀಕ್ಷೆ ನಡೆಸಿ, ವಾಸ್ತವ ಪರಿಸ್ಥಿತಿಯನ್ನು ಪರಿಗಣಿಸಿ ಜಿಲ್ಲೆಯ ಎಲ್ಲ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಬೇಕು ಎಂದು ಪತ್ರಿಕಾ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.

ಗದಗ ಜಿಲ್ಲೆಯ ರೈತರ ಸಂಕಷ್ಟವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಕೂಡಲೇ ಎಲ್ಲ ಏಳು ತಾಲೂಕುಗಳಲ್ಲಿ ಮರು ಸಮೀಕ್ಷೆ ನಡೆಸಿ ಬರಪೀಡಿತ ಪ್ರದೇಶಗಳೆಂದು ಘೋಷಿಸಬೇಕು.

– ಹಾಜಿಅಲಿ ಎಚ್. ಕೊಪ್ಪಳ, ಜೆಡಿಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ

ಬಂದ್ ಆತಂಕಕ್ಕೆ ತೆರೆ; ಕೆಂಚಲಾಪೂರ ಶಾಲೆ ಪುನರಾರಂಭ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಕಳೆದ ಒಂದು ವಾರದಿಂದ ತೀವ್ರ ಚರ್ಚೆಗೆ ಕಾರಣವಾಗಿದ್ದ ಪಟ್ಟಣದ ಕೆಂಚಲಾಪೂರ ಬಡಾವಣೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪುನರಾರಂಭಗೊಂಡಿದ್ದು, ಗುರುವಾರ ಕ್ಷೇತ್ರ ಶಿಕ್ಷಣಾಧಿಕಾರಿ ಶಿವರಾಜ ಸೀಮಿಕೇರಿ ಶಾಲೆಗೆ ಭೇಟಿ ನೀಡಿ ಪಾಲಕರು, ಸಾರ್ವಜನಿಕರು ಹಾಗೂ ಶಿಕ್ಷಣ ಪ್ರೇಮಿಗಳ ಸಭೆ ನಡೆಸುವ ಮೂಲಕ ಉಂಟಾಗಿದ್ದ ಗೊಂದಲವನ್ನು ನಿವಾರಿಸುವ ಪ್ರಯತ್ನ ನಡೆಸಿದರು.

ಸುಮಾರು 30 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಈ ಶಾಲೆಯಲ್ಲಿ ಕಳೆದ ಎರಡು-ಮೂರು ವರ್ಷಗಳಿಂದ ಉಂಟಾದ ನಿರ್ಲಕ್ಷ್ಯದಿಂದ ಮಕ್ಕಳು ವರ್ಗಾವಣೆ ಪ್ರಮಾಣಪತ್ರ ಪಡೆದು ಬೇರೆ ಶಾಲೆಗಳಿಗೆ ದಾಖಲಾದ ಕಾರಣ, ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಶೂನ್ಯ ದಾಖಲಾತಿ ಉಂಟಾಗಿತ್ತು. ಇದರಿಂದ ಶಾಲೆಯನ್ನು ಮುಚ್ಚಲಾಗುತ್ತಿದೆ ಎಂಬ ಆತಂಕ ಸಾರ್ವಜನಿಕ ವಲಯದಲ್ಲಿ ಮೂಡಿತ್ತು.

ಸಾರ್ವಜನಿಕರ ಆಕ್ರೋಶ ಮತ್ತು ಶಾಲೆ ಉಳಿಸಬೇಕೆಂಬ ಒತ್ತಾಯದ ಹಿನ್ನೆಲೆಯಲ್ಲಿ ಕಾರ್ಯಪ್ರವೃತ್ತರಾದ ಶಿಕ್ಷಣ ಇಲಾಖೆ ಅಧಿಕಾರಿಗಳು ಪಾಲಕರ ಮನವೊಲಿಸಿ ಮಕ್ಕಳನ್ನು ಮತ್ತೆ ಶಾಲೆಗೆ ಕಳುಹಿಸುವಂತೆ ಮನವಿ ಮಾಡಿದ್ದರು. ಅದರಂತೆ ಮಂಗಳವಾರ ಶಾಲೆ ಪುನರಾರಂಭಗೊಂಡಿತ್ತು. ಈ ಹಿನ್ನೆಲೆಯಲ್ಲಿ ಗುರುವಾರ ನಡೆದ ಪಾಲಕರು, ಸಾರ್ವಜನಿಕರು ಹಾಗೂ ಶಿಕ್ಷಣ ಪ್ರೇಮಿಗಳ ಸಭೆಗೆ ವಿಶೇಷ ಮಹತ್ವ ದೊರೆಯಿತು.

ಸಭೆಯಲ್ಲಿ ಮಾತನಾಡಿದ ಯುವ ಮುಖಂಡ ಮಂಜುನಾಥ ಮಾಗಡಿ, ಕೆಂಚಲಾಪೂರ ಶಾಲೆಯಲ್ಲಿ ಶಿಕ್ಷಣದ ಗುಣಮಟ್ಟದ ಬಗ್ಗೆ ಅಧಿಕಾರಿಗಳು ಹೆಚ್ಚಿನ ಗಮನ ಹರಿಸಬೇಕು. ಶಿಕ್ಷಕರು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು. ಕನ್ನಡ ಶಾಲೆಗಳನ್ನು ಉಳಿಸಿ ಬೆಳೆಸುವುದು ಎಲ್ಲರ ಜವಾಬ್ದಾರಿಯಾಗಿದ್ದು, ಈ ಶಾಲೆಯಲ್ಲಿ ಎಲ್‌ಕೆಜಿ ಹಾಗೂ ಯುಕೆಜಿ ತರಗತಿಗಳನ್ನು ಆರಂಭಿಸಬೇಕು. ಈ ಭಾಗದ ಜನರು ಶಾಲೆಯ ಅಭಿವೃದ್ಧಿಗೆ ಸಂಪೂರ್ಣ ಸಹಕಾರ ನೀಡಲಿದ್ದಾರೆ ಎಂದು ಹೇಳಿದರು.

ಬಳಿಕ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಶಿವರಾಜ ಸೀಮಿಕೇರಿ, ಶಿಕ್ಷಕರು ನಿರೀಕ್ಷಿತ ರೀತಿಯಲ್ಲಿ ಕಾರ್ಯನಿರ್ವಹಿಸದಿರುವುದರಿಂದ ಶಾಲೆ ಈ ಸ್ಥಿತಿಗೆ ತಲುಪಿದೆ ಎಂಬ ಪಾಲಕರು ಹಾಗೂ ಸಾರ್ವಜನಿಕರ ಆರೋಪವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಇಂತಹ ಪರಿಸ್ಥಿತಿಯು ಇಡೀ ಶಿಕ್ಷಣ ಇಲಾಖೆಗೆ ಕೆಟ್ಟ ಹೆಸರು ತರುವಂತಾಗಿದೆ ಎಂದು ಹೇಳಿದರು.

ಶಾಲೆಯನ್ನು ಯಾವುದೇ ಕಾರಣಕ್ಕೂ ಬಂದ್ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಶಿಕ್ಷಕರು ಪ್ರಾಮಾಣಿಕತೆ ಹಾಗೂ ದಕ್ಷತೆಯಿಂದ ಕಾರ್ಯನಿರ್ವಹಿಸಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು. ಶಿಕ್ಷಕ ವೃತ್ತಿಯ ಗೌರವವನ್ನು ಕಾಪಾಡಿಕೊಂಡು ವೃತ್ತಿ ಬದುಕನ್ನು ಸಾರ್ಥಕಗೊಳಿಸಬೇಕು ಎಂದು ಪರೋಕ್ಷ ಎಚ್ಚರಿಕೆ ನೀಡಿದರು.

ಇದೇ ವೇಳೆ ಶಾಲೆಗೆ ಒಬ್ಬ ಶಿಕ್ಷಕರನ್ನು ಸ್ಥಳದಲ್ಲಿಯೇ ನಿಯೋಜಿಸುವ ಭರವಸೆ ನೀಡಿ, ಸಂಬಂಧಿತ ಶಿಕ್ಷಕರ ಹೆಸರನ್ನು ಘೋಷಿಸಿದರು. ಅವರು ತಕ್ಷಣದಿಂದಲೇ ಕರ್ತವ್ಯಕ್ಕೆ ಹಾಜರಾಗಿ ಕಾರ್ಯನಿರ್ವಹಿಸುವಂತೆ ಸೂಚಿಸಲಾಯಿತು. ಮುಂದಿನ ದಿನಗಳಲ್ಲಿ ಇಂತಹ ಪರಿಸ್ಥಿತಿ ಮರುಕಳಿಸದಂತೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಶಿವರಾಜ ಸೀಮಿಕೇರಿ ಭರವಸೆ ನೀಡಿದರು.

ಸಭೆಯಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಸುಲೇಮಾನ ಮುಜಾವರ, ಶಿಕ್ಷಣ ಸಂಯೋಜಕ ಆರ್.ಬಿ. ಜೋಶಿ, ಕ್ಷೇತ್ರ ಸಮನ್ವಯಾಧಿಕಾರಿ ಎಸ್.ಕೆ. ಹವಾಲ್ದಾರ, ಸಿಆರ್‌ಪಿಗಳಾದ ಉಮೇಶ ನೇಕಾರ, ಶ್ರೀನಿವಾಸ ಮತ್ತೂರ, ಎನ್.ಎ. ಮುಲ್ಲಾ, ಶಿಕ್ಷಕರಾದ ಚಂದ್ರಕಾಂತ ನೇಕಾರ, ಬಿ.ಎಂ. ಕುಂಬಾರ, ಡಿ.ಬಿ. ದೊಡ್ಡಮನಿ, ಶಾಲೆಯ ಮುಖ್ಯಶಿಕ್ಷಕಿ ಎಲ್.ಕೆ. ಹೆಬ್ಬಳ್ಳಿ ಸೇರಿದಂತೆ ಓಣಿಯ ಹಿರಿಯರು, ಪಾಲಕರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

ಕೆಂಚಲಾಪೂರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಯಾವುದೇ ಕಾರಣಕ್ಕೂ ಮುಚ್ಚುವುದಿಲ್ಲ. ಶಾಲೆಯನ್ನು ಉಳಿಸಿ ಬೆಳೆಸಲು ಶಿಕ್ಷಣ ಇಲಾಖೆ, ಶಿಕ್ಷಕರು, ಪಾಲಕರು ಹಾಗೂ ಸಾರ್ವಜನಿಕರೆಲ್ಲರೂ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕು. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಶಾಲೆಯ ಹಿಂದಿನ ವೈಭವವನ್ನು ಮರಳಿ ತರಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು.

— ಶಿವರಾಜ ಸೀಮಿಕೇರಿ, ಕ್ಷೇತ್ರ ಶಿಕ್ಷಣಾಧಿಕಾರಿ

ವೀರಭದ್ರೇಶ್ವರ–ಭದ್ರಕಾಳಿ ಕಲ್ಯಾಣೋತ್ಸವಕ್ಕೆ ಭಕ್ತಿಸಾಗರ

0

ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಬಸವೇಶ್ವರ ನಗರದ (ಶಹಪೂರಪೇಟೆ) ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಶ್ರೀ ವೀರಭದ್ರೇಶ್ವರ ಸ್ವಾಮಿಯ 74ನೇ ಹಾಗೂ ಶ್ರೀ ಭದ್ರಕಾಳಿದೇವಿ ಸಮೇತ 3ನೇ ವರ್ಷದ ಜಾತ್ರಾ ಮಹೋತ್ಸವದ ಅಂಗವಾಗಿ ಗುರುವಾರ ವಿವಿಧ ಧಾರ್ಮಿಕ ಹಾಗೂ ಸಾಂಪ್ರದಾಯಿಕ ಕಾರ್ಯಕ್ರಮಗಳು ಭಕ್ತಿಭಾವದಿಂದ ಜರುಗಿದವು.

ಜಾತ್ರಾ ಮಹೋತ್ಸವದ ಪ್ರಮುಖ ಕಾರ್ಯಕ್ರಮವಾದ ಶ್ರೀ ವೀರಭದ್ರೇಶ್ವರ ಸ್ವಾಮಿ ಹಾಗೂ ಶ್ರೀ ಭದ್ರಕಾಳಿದೇವಿ ಸಮೇತ ಕಲ್ಯಾಣ ಮಹೋತ್ಸವವು ವೇದಘೋಷ, ಮಂಗಳವಾದ್ಯ ಹಾಗೂ ಧಾರ್ಮಿಕ ವಿಧಿವಿಧಾನಗಳೊಂದಿಗೆ ವಿಜೃಂಭಣೆಯಿಂದ ನೆರವೇರಿತು.

ಪುರೋಹಿತರ ನೇತೃತ್ವದಲ್ಲಿ ಗಣಪತಿ ಪೂಜೆ, ಪುಣ್ಯಾಹವಾಚನ, ಸಂಕಲ್ಪ, ದೇವತಾ ಆವಾಹನೆ ಸೇರಿದಂತೆ ವಿವಿಧ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿ, ವೀರಭದ್ರೇಶ್ವರ ಸ್ವಾಮಿ ಹಾಗೂ ಭದ್ರಕಾಳಿದೇವಿಯ ದೈವಿಕ ಕಲ್ಯಾಣೋತ್ಸವವನ್ನು ಶಾಸ್ತ್ರೋಕ್ತವಾಗಿ ಆಚರಿಸಲಾಯಿತು.

ಸಂಜೆ ದೇವಸ್ಥಾನದ ಕಳಸಾರೋಹಣ ಕಾರ್ಯಕ್ರಮ ಧಾರ್ಮಿಕ ವಿಧಿವಿಧಾನಗಳೊಂದಿಗೆ ನೆರವೇರಿತು. ಪೂಜಾ ಕೈಂಕರ್ಯಗಳ ಬಳಿಕ ಪವಿತ್ರ ಕಳಸವನ್ನು ದೇವಸ್ಥಾನದ ಶಿಖರದ ಮೇಲೆ ಪ್ರತಿಷ್ಠಾಪಿಸಲಾಯಿತು. ಕಳಸಾರೋಹಣವು ದೇವಾಲಯದ ಪಾವಿತ್ರ್ಯ, ಶಕ್ತಿ ಹಾಗೂ ಧಾರ್ಮಿಕ ಚೈತನ್ಯದ ಸಂಕೇತವಾಗಿದ್ದು, ಈ ಸಂದರ್ಭದಲ್ಲಿ ಭಕ್ತರು ದೇವರ ಕೃಪೆ ಹಾಗೂ ನಾಡಿನ ಸುಭಿಕ್ಷಕ್ಕಾಗಿ ಪ್ರಾರ್ಥಿಸಿದರು.

ಇದೇ ಸಂದರ್ಭದಲ್ಲಿ ವಿವಿಧ ಗ್ರಾಮದೇವತೆಗಳಿಗೆ ಉಡಿ ತುಂಬುವ ಸಂಪ್ರದಾಯವೂ ಶ್ರದ್ಧಾಭಕ್ತಿಯಿಂದ ನೆರವೇರಿತು. ಸುಮಂಗಲಿಯರು ಹಾಗೂ ಭಕ್ತರು ಅರಿಶಿನ, ಕುಂಕುಮ, ಹೂವು, ತೆಂಗಿನಕಾಯಿ, ಧಾನ್ಯ ಸೇರಿದಂತೆ ಮಂಗಳದ್ರವ್ಯಗಳನ್ನು ಸಮರ್ಪಿಸಿ ದೇವಿಯರಿಗೆ ಉಡಿ ತುಂಬಿದರು.

ರಾತ್ರಿ ದೀಪಸ್ತಂಭಗಳಿಗೆ ದೀಪೋತ್ಸವ ನಡೆಸಲಾಯಿತು. ಜಾತ್ರಾ ಮಹೋತ್ಸವದ ಅಂಗವಾಗಿ ದೇವಸ್ಥಾನದಲ್ಲಿ ದಿನವಿಡೀ ವಿಶೇಷ ಪೂಜೆ, ಅಭಿಷೇಕ, ಅಲಂಕಾರ, ಆರತಿ ಹಾಗೂ ಪ್ರಸಾದ ವಿತರಣೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಸುತ್ತಮುತ್ತಲಿನ ಪ್ರದೇಶಗಳಿಂದ ಆಗಮಿಸಿದ್ದ ಅಪಾರ ಸಂಖ್ಯೆಯ ಭಕ್ತರು ಪೂಜಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಶ್ರೀ ವೀರಭದ್ರೇಶ್ವರ ಸ್ವಾಮಿ ಹಾಗೂ ಶ್ರೀ ಭದ್ರಕಾಳಿದೇವಿಯ ದರ್ಶನ ಪಡೆದು ಪುನೀತರಾದರು.

ಭಕ್ತಾದಿಗಳಿಗೆ ಮಹಾ ಅನ್ನಸಂತರ್ಪಣೆಯನ್ನೂ ಏರ್ಪಡಿಸಲಾಗಿತ್ತು. ಜಾತ್ರಾ ಮಹೋತ್ಸವ ಸಮಿತಿಯ ಅಧ್ಯಕ್ಷ ರಾಚೋಟಿ ಕಾಡಪ್ಪನವರ, ಉಪಾಧ್ಯಕ್ಷ ರಾಜು ತಡಸದ, ಕಾರ್ಯದರ್ಶಿ ನಾಗರಾಜ ಹಳ್ಳಿಕೇರಿ, ಖಜಾಂಚಿ ವಿಶ್ವನಾಥ ಕೆರಕಣ್ಣವರ ಸೇರಿದಂತೆ ಹಿರಿಯರು, ಮಹಿಳೆಯರು, ಬಸವೇಶ್ವರ ನಗರದ ವೀರಭದ್ರೇಶ್ವರ ದೇವಸ್ಥಾನ ಟ್ರಸ್ಟ್ ಕಮಿಟಿ, ಶಂಕರಲಿಂಗ ದೇವಸ್ಥಾನ ಟ್ರಸ್ಟ್ ಕಮಿಟಿ, ವರದಾನೇಶ್ವರಿ ಮಹಿಳಾ ಮಂಡಳದ ಸರ್ವ ಪದಾಧಿಕಾರಿಗಳು ಹಾಗೂ ಯುವಕ ಮಂಡಳದ ಸದಸ್ಯರು ಜಾತ್ರಾ ಮಹೋತ್ಸವದ ಯಶಸ್ಸಿಗೆ ಶ್ರಮಿಸಿದರು.

ಜಾತ್ರಾ ಮಹೋತ್ಸವದ ಅಂಗವಾಗಿ ಆ. 29ರಂದು ಶನಿವಾರ ಬೆಳಿಗ್ಗೆ 10 ಗಂಟೆಗೆ ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಲಿದೆ.

ಆ. 31ರಂದು ಸೋಮವಾರ ಬೆಳಿಗ್ಗೆ ರುದ್ರಾಭಿಷೇಕ ಹಾಗೂ ಸಂಜೆ 6.15 ಗಂಟೆಗೆ ಮಹಾರಥೋತ್ಸವ ಜರುಗಲಿದೆ. ಸೆಪ್ಟೆಂಬರ್ 1ರಂದು ಮಂಗಳವಾರ ಬೆಳಿಗ್ಗೆ 11 ಗಂಟೆಗೆ ಅಗ್ನಿ ಪ್ರವೇಶ ಹಾಗೂ ಸಂಜೆ 6.15 ಗಂಟೆಗೆ ಲಘುರಥೋತ್ಸವ ನಡೆಯಲಿದೆ.

ಸೆಪ್ಟೆಂಬರ್ 4ರಂದು ಶುಕ್ರವಾರ ಮಧ್ಯಾಹ್ನ 1 ಗಂಟೆಗೆ ಮಹಾಪ್ರಸಾದ ಹಾಗೂ ಸೆಪ್ಟೆಂಬರ್ 8ರಂದು ಸಂಜೆ 7.30 ಗಂಟೆಗೆ ದೀಪಾಲಂಕಾರದೊಂದಿಗೆ ಪಾಲಕಿ ಉತ್ಸವ ನಡೆಯಲಿದೆ ಎಂದು ಜಾತ್ರಾ ಮಹೋತ್ಸವ ಸಮಿತಿ ತಿಳಿಸಿದೆ.

ಶ್ರೀ ವೀರಭದ್ರೇಶ್ವರ ಸ್ವಾಮಿ ಹಾಗೂ ಶ್ರೀ ಭದ್ರಕಾಳಿದೇವಿಯ ಜಾತ್ರಾ ಮಹೋತ್ಸವವು ಭಕ್ತರ ಶ್ರದ್ಧೆ, ಧಾರ್ಮಿಕ ನಂಬಿಕೆ ಮತ್ತು ನಮ್ಮ ಸಾಂಪ್ರದಾಯಿಕ ಸಂಸ್ಕೃತಿಯ ಪ್ರತೀಕವಾಗಿದೆ. ಎಲ್ಲ ಭಕ್ತರ ಸಹಕಾರದಿಂದ ಜಾತ್ರಾ ಮಹೋತ್ಸವವನ್ನು ಯಶಸ್ವಿಯಾಗಿ ನಡೆಸಲಾಗುತ್ತಿದ್ದು, ಮುಂದಿನ ಕಾರ್ಯಕ್ರಮಗಳಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಳ್ಳಬೇಕು.

— ರಾಚೋಟಿ ಕಾಡಪ್ಪನವರ, ಅಧ್ಯಕ್ಷರು, ಜಾತ್ರಾ ಮಹೋತ್ಸವ ಸಮಿತಿ

ಗದಗದ ಎಲ್ಲ ತಾಲೂಕುಗಳಿಗೂ ಬರದ ಬಿಸಿ: ಸರ್ಕಾರದ ತಾರತಮ್ಯಕ್ಕೆ ರೈತರ ಆಕ್ರೋಶ

0

ವಿಜಯಸಾಕ್ಷಿ ಸುದ್ದಿ, ಗದಗ: ಗದಗ ಜಿಲ್ಲೆಯಲ್ಲಿ ಮಳೆ ಕೊರತೆ ಹಾಗೂ ಬರ ಪರಿಸ್ಥಿತಿಯಿಂದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಬೆಳೆಗಳು ಹಾನಿಗೊಳಗಾಗಿವೆ. ರೈತರ ಬದುಕು ದುಸ್ತರವಾಗಿರುವ ಹಿನ್ನೆಲೆಯಲ್ಲಿ ಸರ್ಕಾರ ಕೂಡಲೇ ನೆರವಿಗೆ ಧಾವಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ರವಿ ವಗ್ಗನವರ ಆಗ್ರಹಿಸಿದ್ದಾರೆ.

ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕನ್ನು ಮಾತ್ರ ಬರಪೀಡಿತ ಎಂದು ಘೋಷಿಸಿ, ಜಿಲ್ಲೆಯ ಉಳಿದ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸದಿರುವ ಸರ್ಕಾರದ ಕ್ರಮವನ್ನು ಅವರು ತೀವ್ರವಾಗಿ ಖಂಡಿಸಿದ್ದಾರೆ.

ಜಿಲ್ಲೆಯ ಇತರೆ ತಾಲೂಕುಗಳಲ್ಲಿಯೂ ಮಳೆ ಕೊರತೆ ಹಾಗೂ ಬೆಳೆ ನಷ್ಟದಿಂದ ರೈತರು ಸಂಕಷ್ಟದಲ್ಲಿದ್ದಾರೆ. ಸರ್ಕಾರ ಯಾವುದೇ ತಾರತಮ್ಯ ಮಾಡದೆ ವಾಸ್ತವ ಪರಿಸ್ಥಿತಿಯ ಆಧಾರದ ಮೇಲೆ ಜಿಲ್ಲೆಯ ಎಲ್ಲ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಬೇಕು ಎಂದು ಒತ್ತಾಯಿಸಿದ್ದಾರೆ.

ಗದಗ ಜಿಲ್ಲೆಯ ಎಲ್ಲ ತಾಲೂಕುಗಳನ್ನು ಸಂಪೂರ್ಣ ಬರಪೀಡಿತ ಪ್ರದೇಶವೆಂದು ಘೋಷಿಸಿ, ಬೆಳೆ ನಷ್ಟ ಅನುಭವಿಸಿರುವ ರೈತರಿಗೆ ಪ್ರತಿ ಎಕರೆಗೆ ₹50 ಸಾವಿರ ಪರಿಹಾರ ನೀಡಬೇಕು. ಜಿಲ್ಲೆಯಲ್ಲಿ ಸಮಗ್ರ ಹಾಗೂ ಪಾರದರ್ಶಕ ಬೆಳೆ ನಷ್ಟ ಸಮೀಕ್ಷೆ ನಡೆಸಿ, ಅರ್ಹ ಪ್ರತಿಯೊಬ್ಬ ರೈತನಿಗೂ ಪರಿಹಾರ ತಲುಪುವಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ರೈತರಿಗೆ ದೊರೆಯಬೇಕಿರುವ ಬೆಳೆ ವಿಮೆ ಪರಿಹಾರವನ್ನು ಕೂಡಲೇ ಬಿಡುಗಡೆ ಮಾಡಬೇಕು. ಬರ ಪರಿಸ್ಥಿತಿಯಿಂದ ಜಾನುವಾರುಗಳಿಗೂ ಸಂಕಷ್ಟ ಎದುರಾಗಿರುವುದರಿಂದ ಗ್ರಾಮೀಣ ಪ್ರದೇಶಗಳಲ್ಲಿ ಅಗತ್ಯ ಪ್ರಮಾಣದ ಮೇವು ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಬರದಿಂದ ಸಂಕಷ್ಟದಲ್ಲಿರುವ ರೈತರಿಗೆ ವಿಶೇಷ ಬರ ಪರಿಹಾರ ಪ್ಯಾಕೇಜ್ ಘೋಷಿಸಬೇಕು ಎಂದು ಅವರು ತಿಳಿಸಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವರು ನಡೆಸಿರುವ ಬರ ಅಧ್ಯಯನದಿಂದ ರೈತರಿಗೆ ಏನು ಪ್ರಯೋಜನವಾಗಿದೆ ಎಂದು ಪ್ರಶ್ನಿಸಿರುವ ರವಿ ವಗ್ಗನವರ, ಬರ ಅಧ್ಯಯನ ಕೇವಲ ಕಾಗದಕ್ಕೆ ಸೀಮಿತವಾಗದೆ, ಅದರ ಆಧಾರದ ಮೇಲೆ ರೈತರ ಸಂಕಷ್ಟಕ್ಕೆ ತಕ್ಷಣವೇ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ರೈತರ ನೋವು, ಬೆಳೆ ನಷ್ಟ ಹಾಗೂ ಸಂಕಷ್ಟವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ರೈತರ ತಾಳ್ಮೆಯನ್ನು ಪರೀಕ್ಷಿಸದೆ ಜಿಲ್ಲೆಯ ಎಲ್ಲ ತಾಲೂಕುಗಳ ರೈತರಿಗೆ ಸಮಾನವಾಗಿ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ.

ಸರ್ಕಾರ ಕೂಡಲೇ ಗದಗ ಜಿಲ್ಲೆಯ ಎಲ್ಲ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿ, ಪ್ರತಿ ಎಕರೆಗೆ ₹50 ಸಾವಿರ ಬೆಳೆ ನಷ್ಟ ಪರಿಹಾರ ನೀಡಲು ಕ್ರಮ ಕೈಗೊಳ್ಳದಿದ್ದರೆ ರೈತರ ನೇತೃತ್ವದಲ್ಲಿ ಜಿಲ್ಲಾ ಆಡಳಿತ ಭವನಕ್ಕೆ ಮುತ್ತಿಗೆ ಹಾಕಿ ಪ್ರಜಾಸತ್ತಾತ್ಮಕ ರೀತಿಯಲ್ಲಿ ತೀವ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.

ಬರ ಪರಿಹಾರ, ಬೆಳೆ ವಿಮೆ, ಜಾನುವಾರುಗಳಿಗೆ ಮೇವು ಹಾಗೂ ಕುಡಿಯುವ ನೀರು ಸೇರಿದಂತೆ ರೈತರಿಗೆ ಸಿಗಬೇಕಾದ ಎಲ್ಲ ಸೌಲಭ್ಯಗಳನ್ನು ಯಾವುದೇ ವಿಳಂಬವಿಲ್ಲದೆ ಒದಗಿಸಬೇಕು ಎಂದು ಸರ್ಕಾರವನ್ನು ಆಗ್ರಹಿಸಿದ್ದಾರೆ.

ಗಜೇಂದ್ರಗಡ ತಾಲೂಕನ್ನು ಮಾತ್ರ ಬರಪೀಡಿತ ಎಂದು ಘೋಷಿಸಿ ಜಿಲ್ಲೆಯ ಉಳಿದ ತಾಲೂಕುಗಳ ರೈತರನ್ನು ಕಡೆಗಣಿಸುವುದು ಸರಿಯಲ್ಲ. ಮಳೆ ಕೊರತೆ ಮತ್ತು ಬೆಳೆ ನಷ್ಟದಿಂದ ಇಡೀ ಜಿಲ್ಲೆಯ ರೈತರು ಸಂಕಷ್ಟದಲ್ಲಿದ್ದಾರೆ. ಸರ್ಕಾರ ಕೂಡಲೇ ಗದಗ ಜಿಲ್ಲೆಯನ್ನು ಸಂಪೂರ್ಣ ಬರಪೀಡಿತ ಜಿಲ್ಲೆ ಎಂದು ಘೋಷಿಸಿ, ಪ್ರತಿ ಎಕರೆಗೆ ₹50 ಸಾವಿರ ಪರಿಹಾರ ನೀಡಬೇಕು. ಇಲ್ಲವಾದರೆ ರೈತರೊಂದಿಗೆ ಸೇರಿ ಜಿಲ್ಲಾ ಆಡಳಿತ ಭವನಕ್ಕೆ ಮುತ್ತಿಗೆ ಹಾಕಿ ತೀವ್ರ ಹೋರಾಟ ನಡೆಸಲಾಗುವುದು.

— ರವಿ ವಗ್ಗನವರ, ಜಿಲ್ಲಾ ಕಾರ್ಯಾಧ್ಯಕ್ಷ, ಕರ್ನಾಟಕ ರಾಜ್ಯ ರೈತ ಸಂಘ, ಗದಗ

ಸಿಹಿ ಟೂತ್‌ಪೇಸ್ಟ್‌ನಿಂದ ಶುಗರ್ ಹೆಚ್ಚುತ್ತಾ? ಡಯಾಬಿಟಿಸ್ ಇರುವವರು ತಿಳಿಯಲೇಬೇಕಾದ ವಿಷಯ!

0

ಡಯಾಬಿಟಿಸ್ ಇರುವವರು ಆಹಾರದಿಂದ ಹಿಡಿದು ದೈನಂದಿನ ಆರೋಗ್ಯದವರೆಗೆ ಹಲವು ವಿಚಾರಗಳಲ್ಲಿ ಎಚ್ಚರಿಕೆ ವಹಿಸಬೇಕಾಗುತ್ತದೆ.

ಸಕ್ಕರೆ ಪ್ರಮಾಣ ಹೆಚ್ಚಿರುವ ಆಹಾರ, ಪಾನೀಯಗಳನ್ನು ನಿಯಂತ್ರಿಸುವುದು ಮಾತ್ರವಲ್ಲದೆ, ಬಾಯಿಯ ಆರೋಗ್ಯದ ಬಗ್ಗೆಯೂ ವಿಶೇಷ ಗಮನ ನೀಡುವುದು ಅಗತ್ಯ. ಅದರಲ್ಲೂ ಪ್ರತಿದಿನ ಬೆಳಗ್ಗೆ ಮತ್ತು ರಾತ್ರಿ ಬಳಸುವ ಟೂತ್‌ಪೇಸ್ಟ್ ಸಿಹಿ ರುಚಿ ಹೊಂದಿದ್ದರೆ ಅದನ್ನು ಡಯಾಬಿಟಿಸ್ ಇರುವವರು ಬಳಸಬಹುದೇ ಎಂಬ ಅನುಮಾನ ಕೆಲವರಲ್ಲಿದೆ.

ಟೂತ್‌ಪೇಸ್ಟ್ ಸಿಹಿಯಾಗಿ ರುಚಿ ನೀಡುತ್ತದೆ ಎಂದ ಮಾತ್ರಕ್ಕೆ ಅದರಲ್ಲಿ ಸಕ್ಕರೆ ಇದೆ ಎಂದು ಅರ್ಥವಲ್ಲ. ಟೂತ್‌ಪೇಸ್ಟ್‌ಗಳಲ್ಲಿ ಸಿಹಿ ರುಚಿಗಾಗಿ ವಿವಿಧ ಫ್ಲೇವರಿಂಗ್ ಏಜೆಂಟ್‌ಗಳು ಅಥವಾ ಸಕ್ಕರೆ ಇಲ್ಲದ ಸ್ವೀಟನರ್‌ಗಳನ್ನು ಬಳಸಬಹುದು. ಹೀಗಾಗಿ ಟೂತ್‌ಪೇಸ್ಟ್‌ನ ರುಚಿಯನ್ನು ಮಾತ್ರ ಆಧರಿಸಿ ಅದನ್ನು ಆಯ್ಕೆ ಮಾಡುವುದು ಸರಿಯಲ್ಲ. ಅದರಲ್ಲಿರುವ Ingredients ಮತ್ತು ಮುಖ್ಯವಾಗಿ Fluoride ಅಂಶವನ್ನು ಪರಿಶೀಲಿಸುವುದು ಹೆಚ್ಚು ಮುಖ್ಯ.

ಸಿಹಿ ರುಚಿಯ ಟೂತ್‌ಪೇಸ್ಟ್ ಬಳಸಬಹುದೇ?

ಹೌದು, ಟೂತ್‌ಪೇಸ್ಟ್ ಸಿಹಿ ರುಚಿ ಹೊಂದಿದೆ ಎಂಬ ಕಾರಣಕ್ಕೆ ಮಾತ್ರ ಡಯಾಬಿಟಿಸ್ ಇರುವವರು ಅದನ್ನು ತಪ್ಪಿಸಬೇಕೆಂದಿಲ್ಲ. ಕೆಲವು ಟೂತ್‌ಪೇಸ್ಟ್‌ಗಳಲ್ಲಿರುವ ಸಿಹಿ ರುಚಿ ಸಕ್ಕರೆಯಿಂದ ಬರುವುದಿಲ್ಲ. ಆದ್ದರಿಂದ ಉತ್ಪನ್ನದ ಪ್ಯಾಕೆಟ್‌ನಲ್ಲಿರುವ Ingredients ಪಟ್ಟಿಯನ್ನು ಪರಿಶೀಲಿಸುವುದು ಉತ್ತಮ.

American Dental Association ಪ್ರಕಾರ, ಟೂತ್‌ಪೇಸ್ಟ್‌ಗಳಲ್ಲಿ ಸಿಹಿ ರುಚಿಗಾಗಿ ಬಳಸುವ ಕೆಲವು ಫ್ಲೇವರಿಂಗ್ ಏಜೆಂಟ್‌ಗಳು ಮತ್ತು ಕ್ಯಾಲೊರಿ ಇಲ್ಲದ ಸ್ವೀಟನರ್‌ಗಳು ಸಾಮಾನ್ಯವಾಗಿವೆ.

ಟೂತ್‌ಪೇಸ್ಟ್‌ನಲ್ಲಿ ಫ್ಲೋರೈಡ್ ಏಕೆ ಮುಖ್ಯ?

ಡಯಾಬಿಟಿಸ್ ಇರುವವರು ಟೂತ್‌ಪೇಸ್ಟ್ ಆಯ್ಕೆ ಮಾಡುವಾಗ Fluoride ಇದೆಯೇ ಎಂಬುದನ್ನು ಗಮನಿಸುವುದು ಮುಖ್ಯ. ಫ್ಲೋರೈಡ್ ಹಲ್ಲಿನ ಎನಾಮೆಲ್‌ನ್ನು ಬಲಪಡಿಸಲು ಹಾಗೂ ಹಲ್ಲು ಕೊಳೆಯುವುದನ್ನು ತಡೆಯಲು ಸಹಾಯ ಮಾಡುತ್ತದೆ. ನಿಯಮಿತವಾಗಿ ಫ್ಲೋರೈಡ್ ಟೂತ್‌ಪೇಸ್ಟ್ ಬಳಸಿ ಬ್ರಷ್ ಮಾಡುವುದು ಹಲ್ಲಿನ ರಕ್ಷಣೆಗೆ ಸಹಾಯಕವಾಗಿದೆ.

ಆದರೆ ಎಲ್ಲರಿಗೂ ಒಂದೇ ರೀತಿಯ ಟೂತ್‌ಪೇಸ್ಟ್ ಸೂಕ್ತವಾಗಿರಬೇಕೆಂದಿಲ್ಲ. ಹಲ್ಲುಗಳಲ್ಲಿ ಹೆಚ್ಚಿನ ಸೆನ್ಸಿಟಿವಿಟಿ, ರಕ್ತಸ್ರಾವ, ಊತ, ನೋವು ಅಥವಾ ಬೇರೆ ಯಾವುದೇ ದಂತ ಸಮಸ್ಯೆ ಇದ್ದರೆ ದಂತ ವೈದ್ಯರ ಸಲಹೆ ಪಡೆದು ಟೂತ್‌ಪೇಸ್ಟ್ ಆಯ್ಕೆ ಮಾಡುವುದು ಉತ್ತಮ.

ಡಯಾಬಿಟಿಸ್ ಇದ್ದವರಿಗೆ ಬಾಯಿಯ ಆರೋಗ್ಯ ಏಕೆ ಮುಖ್ಯ?

ರಕ್ತದಲ್ಲಿನ ಸಕ್ಕರೆ ಪ್ರಮಾಣ ಹೆಚ್ಚಾಗಿರುವುದು ಬಾಯಿಯ ಆರೋಗ್ಯದ ಮೇಲೂ ಪರಿಣಾಮ ಬೀರಬಹುದು. ಡಯಾಬಿಟಿಸ್ ಇರುವವರಲ್ಲಿ ಒಸಡು ಕಾಯಿಲೆ, ಹಲ್ಲು ಕೊಳೆಯುವುದು ಮತ್ತು ಬಾಯಿ ಒಣಗುವಂತಹ ಸಮಸ್ಯೆಗಳ ಅಪಾಯ ಹೆಚ್ಚಿರಬಹುದು. ರಕ್ತದಲ್ಲಿನ ಸಕ್ಕರೆ ನಿಯಂತ್ರಣದಲ್ಲಿಲ್ಲದಿದ್ದರೆ ಬಾಯಿಯಲ್ಲಿ ಉಂಟಾಗುವ ಸೋಂಕುಗಳು ಗುಣವಾಗಲು ಹೆಚ್ಚು ಸಮಯ ಬೇಕಾಗಬಹುದು ಎಂದು CDC ತಿಳಿಸಿದೆ.

ಅದೇ ರೀತಿ ಒಸಡು ಕಾಯಿಲೆ ಇದ್ದರೆ ಡಯಾಬಿಟಿಸ್ ನಿಯಂತ್ರಣವೂ ಕಷ್ಟವಾಗಬಹುದು. ಹೀಗಾಗಿ ಡಯಾಬಿಟಿಸ್ ಇರುವವರು ರಕ್ತದಲ್ಲಿನ ಸಕ್ಕರೆ ನಿಯಂತ್ರಣದ ಜೊತೆಗೆ ಬಾಯಿಯ ಸ್ವಚ್ಛತೆಗೂ ಆದ್ಯತೆ ನೀಡಬೇಕು.

ದಿನಕ್ಕೆ ಎಷ್ಟು ಬಾರಿ ಬ್ರಷ್ ಮಾಡಬೇಕು?

ಸಾಮಾನ್ಯವಾಗಿ ದಿನಕ್ಕೆ ಎರಡು ಬಾರಿ, ಸುಮಾರು ಎರಡು ನಿಮಿಷಗಳ ಕಾಲ ಹಲ್ಲುಗಳನ್ನು ಬ್ರಷ್ ಮಾಡುವುದು ಉತ್ತಮ. ಬೆಳಗ್ಗೆ ಬ್ರಷ್ ಮಾಡುವುದು ಮಾತ್ರವಲ್ಲದೆ, ರಾತ್ರಿ ಮಲಗುವ ಮುನ್ನವೂ ಬ್ರಷ್ ಮಾಡುವುದು ಮುಖ್ಯ. ಹಲ್ಲುಗಳ ನಡುವೆ ಸಿಲುಕಿರುವ ಆಹಾರದ ಕಣಗಳು ಮತ್ತು ಪ್ಲಾಕ್‌ಗಳನ್ನು ತೆಗೆದುಹಾಕಲು ಫ್ಲಾಸಿಂಗ್ ಅಥವಾ ಸೂಕ್ತವಾದ ಇಂಟರ್‌ಡೆಂಟಲ್ ಕ್ಲೀನಿಂಗ್ ವಿಧಾನವನ್ನು ಬಳಸಬಹುದು.

ಬ್ರಷ್ ಮಾಡುವಾಗ ತುಂಬಾ ಗಟ್ಟಿಯಾಗಿ ಹಲ್ಲುಗಳನ್ನು ಉಜ್ಜಬಾರದು. ಇದರಿಂದ ಒಸಡುಗಳಿಗೆ ಹಾನಿಯಾಗುವ ಸಾಧ್ಯತೆ ಇದೆ. ಮೃದುವಾಗಿ ಹಾಗೂ ಸರಿಯಾದ ರೀತಿಯಲ್ಲಿ ಹಲ್ಲುಗಳನ್ನು ಸ್ವಚ್ಛಗೊಳಿಸುವುದು ಮುಖ್ಯ.

ಟೂತ್‌ಪೇಸ್ಟ್ ಮಾತ್ರ ಸಾಕಾಗುವುದಿಲ್ಲ:

ಡಯಾಬಿಟಿಸ್ ಇರುವವರು ಉತ್ತಮ ಟೂತ್‌ಪೇಸ್ಟ್ ಬಳಸುವುದರ ಜೊತೆಗೆ ಕೆಲವು ಸರಳ ಅಭ್ಯಾಸಗಳನ್ನು ರೂಢಿಸಿಕೊಳ್ಳಬೇಕು.

  • ದಿನಕ್ಕೆ ಎರಡು ಬಾರಿ ಸುಮಾರು ಎರಡು ನಿಮಿಷ ಬ್ರಷ್ ಮಾಡಬೇಕು.
  • ಫ್ಲೋರೈಡ್ ಹೊಂದಿರುವ ಟೂತ್‌ಪೇಸ್ಟ್ ಬಳಸುವುದು ಉತ್ತಮ.
  • ಹಲ್ಲುಗಳ ನಡುವಿನ ಭಾಗವನ್ನು ನಿಯಮಿತವಾಗಿ ಸ್ವಚ್ಛಗೊಳಿಸಬೇಕು.
  • ತುಂಬಾ ಗಟ್ಟಿಯಾಗಿ ಬ್ರಷ್ ಮಾಡುವುದನ್ನು ತಪ್ಪಿಸಬೇಕು.
  • ಸಕ್ಕರೆ ಮತ್ತು Added Sugar ಹೆಚ್ಚಿರುವ ಆಹಾರ, ಪಾನೀಯಗಳ ಸೇವನೆಯನ್ನು ಮಿತಿಗೊಳಿಸಬೇಕು.
  • ರಕ್ತದಲ್ಲಿನ ಸಕ್ಕರೆಯನ್ನು ವೈದ್ಯರ ಸಲಹೆಯಂತೆ ನಿಯಂತ್ರಣದಲ್ಲಿಡಬೇಕು.
  • ನಿಯಮಿತವಾಗಿ ದಂತ ವೈದ್ಯರನ್ನು ಭೇಟಿ ಮಾಡಿ ತಪಾಸಣೆ ಮಾಡಿಸಿಕೊಳ್ಳಬೇಕು.

ಈ ಲಕ್ಷಣಗಳು ಕಂಡುಬಂದರೆ ನಿರ್ಲಕ್ಷ್ಯ ಮಾಡಬೇಡಿ:

ಡಯಾಬಿಟಿಸ್ ಇರುವವರಿಗೆ ಬಾಯಿಯಲ್ಲಿ ಕೆಲವು ಸಮಸ್ಯೆಗಳು ಕಂಡುಬಂದರೆ ಅದನ್ನು ಸಾಮಾನ್ಯ ಎಂದು ನಿರ್ಲಕ್ಷ್ಯ ಮಾಡಬಾರದು. ಕೆಳಗಿನ ಲಕ್ಷಣಗಳು ಕಂಡುಬಂದರೆ ದಂತ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ:

  • ಹಲ್ಲುಗಳಿಂದ ಪದೇಪದೇ ರಕ್ತಸ್ರಾವವಾಗುವುದು
  • ಒಸಡುಗಳು ಕೆಂಪಾಗುವುದು ಅಥವಾ ಊದಿಕೊಳ್ಳುವುದು
  • ಹಲ್ಲು ನೋವು ಕಾಣಿಸಿಕೊಳ್ಳುವುದು
  • ಹಲ್ಲುಗಳು ಅಲುಗಾಡುವುದು
  • ಹಲ್ಲುಗಳಲ್ಲಿ ಸೆನ್ಸಿಟಿವಿಟಿ ಹೆಚ್ಚಾಗುವುದು
  • ಬಾಯಿಯಿಂದ ನಿರಂತರ ದುರ್ವಾಸನೆ ಬರುವುದು
  • ಬಾಯಿ ಹೆಚ್ಚು ಒಣಗುವುದು
  • ಬಾಯಿಯಲ್ಲಿ ಗಾಯಗಳು ಪದೇಪದೇ ಕಾಣಿಸಿಕೊಳ್ಳುವುದು

ಕೆಂಪು, ಊದಿಕೊಂಡ ಅಥವಾ ಸುಲಭವಾಗಿ ರಕ್ತಸ್ರಾವವಾಗುವ ಒಸಡುಗಳು ಒಸಡು ಕಾಯಿಲೆಯ ಲಕ್ಷಣಗಳಾಗಿರಬಹುದು. ಇಂತಹ ಸಮಸ್ಯೆಗಳನ್ನು ಆರಂಭದಲ್ಲೇ ಪತ್ತೆಹಚ್ಚಿ ಚಿಕಿತ್ಸೆ ಪಡೆಯುವುದು ಮುಖ್ಯ.

ನಿಯಮಿತ ದಂತ ತಪಾಸಣೆ ಅಗತ್ಯ:

ಡಯಾಬಿಟಿಸ್ ಇರುವವರು ನಿಯಮಿತವಾಗಿ ದಂತ ವೈದ್ಯರನ್ನು ಭೇಟಿ ಮಾಡುವುದು ಉತ್ತಮ. ದಂತ ತಪಾಸಣೆಯ ಮೂಲಕ ಹಲ್ಲು ಕೊಳೆಯುವುದು, ಒಸಡು ಕಾಯಿಲೆ ಸೇರಿದಂತೆ ಹಲವು ಸಮಸ್ಯೆಗಳನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚಬಹುದು. CDC ಕೂಡ ಡಯಾಬಿಟಿಸ್ ಇರುವವರು ನಿಯಮಿತ ದಂತ ತಪಾಸಣೆ ಮಾಡಿಸಿಕೊಳ್ಳುವಂತೆ ಸಲಹೆ ನೀಡುತ್ತದೆ.

ಒಟ್ಟಿನಲ್ಲಿ, ಟೂತ್‌ಪೇಸ್ಟ್ ಸಿಹಿ ರುಚಿ ಹೊಂದಿದೆ ಎಂಬ ಕಾರಣಕ್ಕೆ ಮಾತ್ರ ಡಯಾಬಿಟಿಸ್ ಇರುವವರು ಅದನ್ನು ತಪ್ಪಿಸಬೇಕೆಂದಿಲ್ಲ. ಟೂತ್‌ಪೇಸ್ಟ್‌ನ ರುಚಿಗಿಂತ ಅದರ Ingredients ಮತ್ತು Fluoride ಅಂಶಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ದಿನಕ್ಕೆ ಎರಡು ಬಾರಿ ಸರಿಯಾಗಿ ಬ್ರಷ್ ಮಾಡುವುದು, ಹಲ್ಲುಗಳ ನಡುವಿನ ಭಾಗವನ್ನು ಸ್ವಚ್ಛವಾಗಿಡುವುದು, ಸಕ್ಕರೆ ಸೇವನೆಯನ್ನು ನಿಯಂತ್ರಿಸುವುದು ಹಾಗೂ ನಿಯಮಿತವಾಗಿ ದಂತ ತಪಾಸಣೆ ಮಾಡಿಸಿಕೊಳ್ಳುವುದು ಬಾಯಿಯ ಆರೋಗ್ಯಕ್ಕೆ ಮುಖ್ಯ.

ಡಯಾಬಿಟಿಸ್ ಇರುವವರಿಗೆ ಬಾಯಿಯ ಆರೋಗ್ಯವೂ ಒಟ್ಟಾರೆ ಆರೋಗ್ಯದ ಪ್ರಮುಖ ಭಾಗವಾಗಿದೆ. ಹೀಗಾಗಿ ಬಾಯಿಯಲ್ಲಿ ಯಾವುದೇ ಅಸಹಜ ಲಕ್ಷಣ ಕಂಡುಬಂದರೆ ಸ್ವಯಂ ಚಿಕಿತ್ಸೆ ಮಾಡಿಕೊಳ್ಳದೆ ದಂತ ವೈದ್ಯರ ಸಲಹೆ ಪಡೆಯುವುದು ಉತ್ತಮ.

ಸೂಚನೆ: ಈ ಮಾಹಿತಿ ಸಾಮಾನ್ಯ ಆರೋಗ್ಯ ಜಾಗೃತಿಗಾಗಿ ಮಾತ್ರ. ಇದು ವೈಯಕ್ತಿಕ ವೈದ್ಯಕೀಯ ಅಥವಾ ದಂತ ಚಿಕಿತ್ಸೆಯ ಸಲಹೆಯಲ್ಲ. ನಿಮ್ಮ ಆರೋಗ್ಯ ಸ್ಥಿತಿ ಮತ್ತು ದಂತ ಸಮಸ್ಯೆಗೆ ಅನುಗುಣವಾಗಿ ವೈದ್ಯರು ಅಥವಾ ಅರ್ಹ ದಂತ ವೈದ್ಯರ ಸಲಹೆ ಪಡೆಯಿರಿ.

ಮನುಸ್ಮೃತಿ ವಿವಾದ: ರಾಹುಲ್‌ ಗಾಂಧಿ ವಿರುದ್ಧ ದೂರು ನೀಡಿದ ಸುಪ್ರೀಂ ಕೋರ್ಟ್‌ ವಕೀಲೆ ನಾಜಿಯಾ ಖಾನ್!

0

ನವದೆಹಲಿ: ಛಾತ್ರೋಂ ಕಿ ಗೂಂಜ್ ಕಾರ್ಯಕ್ರಮದಲ್ಲಿ ಮನುಸ್ಮೃತಿ ಕುರಿತು ನೀಡಿದ ಹೇಳಿಕೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ಸುಪ್ರೀಂ ಕೋರ್ಟ್ ವಕೀಲೆ ನಾಜಿಯಾ ಖಾನ್ ದೂರು ದಾಖಲಿಸಿದ್ದಾರೆ.

ಪ್ರಾಚೀನ ಗ್ರಂಥದಿಂದ ಆಯ್ದ ಭಾಗಗಳನ್ನು ಮಾತ್ರ ಎತ್ತಿಹಿಡಿದು, ತಿರುಚಿ ಪ್ರಸ್ತುತಪಡಿಸುವ ಮೂಲಕ ಮನುಸ್ಮೃತಿಗೆ ಕಳಂಕ ತರಲಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ನಾಜಿಯಾ ಖಾನ್, ತಾವು ಕಲ್ಮಾ ಮತ್ತು ಶಹಾದಾ ಎರಡನ್ನೂ ಪಠಿಸುತ್ತೇನೆ ಎಂದೂ, ಜೊತೆಗೆ ‘ವಂದೇ ಮಾತರಂ’ ಹಾಡುವಾಗ ತಾನೊಬ್ಬಳು ಖಾನ್ ಆಗಿದ್ದರೂ ತನ್ನ ಬಗ್ಗೆ ತನಗೇ ಅಪಾರ ಹೆಮ್ಮೆ ಎನಿಸುತ್ತದೆ ಎಂದೂ ಹೇಳಿದ್ದಾರೆ. ರಾಹುಲ್ ಗಾಂಧಿ ಕೇವಲ ಒಂದೇ ಅಧ್ಯಾಯವನ್ನು ಆಯ್ದುಕೊಂಡು, ಪದಗಳನ್ನು ತಿರುಚಿ, ಮನುಸ್ಮೃತಿಗೆ ಅಪಖ್ಯಾತಿ ತರುವ ಮತ್ತು ತಪ್ಪು ಅಭಿಪ್ರಾಯ ಸೃಷ್ಟಿಸುವ ಪ್ರಯತ್ನ ಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ.

ಪ್ರತಿಯೊಬ್ಬರ ವಾಕ್ ಸ್ವಾತಂತ್ರ್ಯದ ಹಕ್ಕನ್ನು ತಾನು ಗೌರವಿಸುವುದಾಗಿ ತಿಳಿಸಿದ ಖಾನ್, ಭಾಷಣದ ವೇಳೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಭಾವಚಿತ್ರಗಳನ್ನು ಪ್ರದರ್ಶಿಸಿದ್ದನ್ನು ಪ್ರಶ್ನಿಸಿದ್ದಾರೆ. ಬಿಜೆಪಿ ಸರ್ಕಾರ ಬಂದ ನಂತರ ಪ್ರತಿಯೊಬ್ಬರೂ ಮನುಸ್ಮೃತಿ ಓದಬೇಕು ಅಥವಾ ಪಾಲಿಸಬೇಕು ಎಂದು ಪ್ರಧಾನಿ ಮೋದಿ ಎಂದಾದರೂ ಹೇಳಿದ್ದಾರೆಯೇ ಎಂದು ಪ್ರಶ್ನಿಸಿದ ಖಾನ್, ರಾಹುಲ್ ಗಾಂಧಿ ಈ ರೀತಿ ಏಕೆ ಮಾಡಿದರು ಎಂಬುದಕ್ಕೆ ಉತ್ತರಿಸಬೇಕಾಗುತ್ತದೆ ಎಂದಿದ್ದಾರೆ.

ಮಹಾರಾಷ್ಟ್ರದ ಪುಣೆಯಲ್ಲಿ ಆಗಸ್ಟ್ 22ರಂದು ನಡೆದ ‘ಛಾತ್ರೋಂ ಕಿ ಗೂಂಜ್’ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ, ಮಹಿಳೆಯರ ಗುರುತು ಕೇವಲ ತಂದೆ, ಪತಿ ಅಥವಾ ಮಗನ ಸಂಬಂಧಗಳಿಗೆ ಸೀಮಿತವಾಗಿರಬಾರದು, ಆಕೆ ತನಗೆ ತಾನೇ ಒಡತಿ, ಬೇರೆ ಯಾರಿಗೂ ಸೇರಿದವಳಲ್ಲ ಎಂದು ಪ್ರತಿಪಾದಿಸಿದ್ದರು.

ಈ ವೇಳೆ ಮನುಸ್ಮೃತಿಯ ಸಾಲುಗಳನ್ನು ಉಲ್ಲೇಖಿಸಿದ್ದ ರಾಹುಲ್, ಬಾಲ್ಯದಲ್ಲಿ ಹೆಣ್ಣು ತಂದೆಗೆ ಸೇರಿದವಳು, ಯೌವನದಲ್ಲಿ ಗಂಡನಿಗೆ ಸೇರಿದವಳು, ಪತಿ ತೀರಿಕೊಂಡಾಗ ಮಕ್ಕಳಿಗೆ ಸೇರಿದವಳು, ಆಕೆ ಎಂದಿಗೂ ಸ್ವತಂತ್ರಳಾಗಿರಬಾರದು ಎಂದು ಮನುಸ್ಮೃತಿ ಹೇಳುತ್ತದೆ ಎಂದಿದ್ದರು. ಇದು ಮನುಸ್ಮೃತಿಯ ನೇರ ಉಲ್ಲೇಖವೆಂದೂ, ಇಂತಹ ಮಾತುಗಳು ನಾಚಿಕೆಗೇಡು ಎಂದೂ ಹೇಳಿದ್ದ ಅವರು, ಮಹಿಳೆಯರಿಗೆ ಸ್ವತಂತ್ರವಾಗಿ ತಮ್ಮನ್ನು ತಾವು ಗುರುತಿಸಿಕೊಳ್ಳುವ ಹಕ್ಕಿದೆ ಎಂದು ತಿಳಿಸಿದ್ದರು.

ಭೂಸ್ವಾಧೀನ ಪರಿಹಾರದ ಜೊತೆ ಭಾವನಾತ್ಮಕ ನಷ್ಟ ಪರಿಹಾರವೂ ಹಕ್ಕು: ಹೈಕೋರ್ಟ್ ಮಹತ್ವದ ತೀರ್ಪು

0

ಬೆಂಗಳೂರು: ಅಭಿವೃದ್ಧಿ ಕಾರ್ಯಗಳಿಗಾಗಿ ಜಮೀನು ಕಳೆದುಕೊಳ್ಳುವ ರೈತರಿಗೆ ಮೂಲ ಪರಿಹಾರದ ಜೊತೆಗೆ ಮಾನಸಿಕ ನಷ್ಟಕ್ಕಾಗಿ (ಸೊಲಾಟಿಯಂ) ಹೆಚ್ಚುವರಿ ಪರಿಹಾರ ಪಡೆದುಕೊಳ್ಳುವ ಹಕ್ಕಿದೆ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.

ಭೂಸ್ವಾಧೀನಕ್ಕಾಗಿ ಪರಿಹಾರ ನೀಡುವ ಕುರಿತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮಧ್ಯಸ್ಥಗಾರರು ಹೊರಡಿಸಿದ ಆದೇಶ ರದ್ದು ಮಾಡಬೇಕು ಮತ್ತು ಮಾರುಕಟ್ಟೆ ಮೌಲ್ಯದ ಪರಿಹಾರದ ಹೊರತಾಗಿಯೂ ಭಾವನಾತ್ಮಕ ಪರಿಹಾರ ಹಾಗೂ ಸ್ವಾಧೀನದ ದಿನದಿಂದ ಬಡ್ಡಿ ಪಾವತಿ ಮಾಡಬೇಕೆಂದು ಕೋರಿ ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನ ಅಮರಾವತಿ ಗ್ರಾಮದ ದಿ. ಜಿ. ಸಿದ್ದರಾಮಯ್ಯ ಅವರ ವಾರಸುದಾರರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ಧಾರವಾಡದ ಹೈಕೋರ್ಟ್ ಪೀಠ ಈ ಅರ್ಜಿಯ ವಿಚಾರಣೆ ನಡೆಸಿತು. ರಾಷ್ಟ್ರೀಯ ಹೆದ್ದಾರಿ ಕಾಯ್ದೆಯಡಿ ಭೂಮಿ ಕಳೆದುಕೊಂಡವರಿಗೂ ಭೂಸ್ವಾಧೀನ ಕಾಯ್ದೆಯ ಸೆಕ್ಷನ್ 23(2)ರ ಅಡಿಯಲ್ಲಿ ಮಾನಸಿಕ ನಷ್ಟ ಅಥವಾ ಭಾವನಾತ್ಮಕ ಪರಿಹಾರ ಮತ್ತು ಸೆಕ್ಷನ್ 28ರ ಅಡಿಯಲ್ಲಿ ಬಡ್ಡಿ ಪಡೆಯುವ ಕಾನೂನುಬದ್ಧ ಹಕ್ಕಿದೆ ಎಂದು ಪೀಠ ಸ್ಪಷ್ಟಪಡಿಸಿತು.

ಭೂಮಿ ಕಳೆದುಕೊಂಡವರಿಗೆ ಪರಿಹಾರ ನೀಡುವ ಸಂಬಂಧದ ಆದೇಶಗಳಲ್ಲಿ ಮಾನಸಿಕ ನಷ್ಟಕ್ಕೆ ಪರಿಹಾರ ಹಾಗೂ ಬಡ್ಡಿ ನಮೂದಿಸಿಲ್ಲ ಎಂಬ ಕಾರಣಕ್ಕೆ ಅದನ್ನು ನಿರಾಕರಿಸುವುದು ಸಂವಿಧಾನದ 14 ಮತ್ತು 300-ಎ ವಿಧಿಗಳ ಉಲ್ಲಂಘನೆಯಾಗುತ್ತದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿತು. ಆದ್ದರಿಂದ ಸಂತ್ರಸ್ತರಿಗೆ ಕಾನೂನುಬದ್ಧವಾಗಿ ಸಿಗಬೇಕಾದ ಭಾವನಾತ್ಮಕ ನಷ್ಟ ಮತ್ತು ಬಡ್ಡಿ ಸೌಲಭ್ಯಗಳನ್ನು ಲೆಕ್ಕಹಾಕಿ ಸೂಕ್ತ ಆದೇಶ ಹೊರಡಿಸಬೇಕು ಎಂದು ವಿಶೇಷ ಭೂಸ್ವಾಧೀನ ಅಧಿಕಾರಿಗೆ ನ್ಯಾಯಾಲಯ ನಿರ್ದೇಶಿಸಿದೆ.

ಈ ಸಂಬಂಧ ಉಭಯ ಪಕ್ಷಕಾರರು ಯಾವುದೇ ನೋಟಿಫಿಕೇಶನ್‌ಗಾಗಿ ಕಾಯದೆ, 2026ರ ಸೆಪ್ಟೆಂಬರ್ 10ರಂದು ಮಧ್ಯಾಹ್ನ 3 ಗಂಟೆಗೆ ನೇರವಾಗಿ ವಿಶೇಷ ಭೂಸ್ವಾಧೀನ ಅಧಿಕಾರಿಯವರ ಸಮಕ್ಷಮ ಹಾಜರಾಗುವಂತೆ ಪೀಠ ಸೂಚನೆ ನೀಡಿದೆ. ಪ್ರಕರಣ ಸಂಬಂಧ ಅರ್ಜಿದಾರರ ಪರವಾಗಿ ವಕೀಲ ಸಂಕೇತ್ ಶಂಕರಪ್ಪ ಅಂಬಲಿ ವಕಾಲತ್ತು ವಹಿಸಿದ್ದರು.

ಪ್ರಕರಣದ ಹಿನ್ನೆಲೆ: ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನ ಅಮರಾವತಿ ಗ್ರಾಮದ ಜಿ. ಸಿದ್ಧರಾಮಯ್ಯ ಅವರಿಗೆ ಸೇರಿದ ಜಮೀನನ್ನು 2009ರಲ್ಲಿ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಗಾಗಿ ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಪರಿಹಾರ ಪಡೆಯುವುದಕ್ಕಾಗಿ ನಡೆಯುತ್ತಿದ್ದ ನ್ಯಾಯಾಂಗ ಪ್ರಕ್ರಿಯೆ ನಡುವೆ ಸಿದ್ದರಾಮಯ್ಯ ಮೃತಪಟ್ಟಿದ್ದು, ಅವರ ವಾರಸುದಾರರು ಕಾನೂನು ಪ್ರಕ್ರಿಯೆ ಮುಂದುವರೆಸಿ, ವಿಶೇಷ ಭೂಸ್ವಾಧೀನ ಅಧಿಕಾರಿ ನಿಗದಿಪಡಿಸಿದ್ದ ಪರಿಹಾರ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು.