ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ: ಉದ್ಯೋಗದ ಅಗತ್ಯವಿರುವ ಕೂಲಿಕಾರರು ಜಾಬ್ ಕಾರ್ಡ್ ಮಾಡಿಸಿಕೊಂಡು ಉದ್ಯೋಗ ಖಾತ್ರಿ ಯೋಜನೆಯ ಸೌಲಭ್ಯ ಪಡೆಯಬೇಕು ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ ಬಿ. ಕಂದಕೂರ ಹೇಳಿದರು.
ತಾಲೂಕಿನ ಗೋಗೇರಿ ಗ್ರಾಮ ಪಂಚಾಯಿತಿ ಆವರಣದಲ್ಲಿ ಬುಧವಾರ ಜಾಬ್ ಕಾರ್ಡ್ ಮೇಳ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಆ.15ರಿಂದ ಸೆ.15ರವರೆಗೆ ತಾಲೂಕಿನಾದ್ಯಂತ ಅಭಿಯಾನ ನಡೆಯಲಿದೆ. ಜಾಬ್ ಕಾರ್ಡ್ ಇಲ್ಲದವರು ಹೊಸ ಕಾರ್ಡ್ ಮಾಡಿಸಿಕೊಳ್ಳಬಹುದು. ಕಾರ್ಡ್ನಲ್ಲಿ ತಿದ್ದುಪಡಿ ಅಗತ್ಯವಿದ್ದರೆ ಮಾಡಿಸಿಕೊಳ್ಳುವುದರ ಜತೆಗೆ ಇ-ಕೆವೈಸಿ ನವೀಕರಣಕ್ಕೂ ಅವಕಾಶವಿದೆ ಎಂದರು.
ಕೆಲಸದ ಅಗತ್ಯವಿರುವವರು ನಮೂನೆ-6ರಲ್ಲಿ ಅರ್ಜಿ ಸಲ್ಲಿಸಿದರೆ ಯೋಜನೆಯಡಿ ಉದ್ಯೋಗ ಒದಗಿಸಲಾಗುವುದು. ಗ್ರಾಮ ಪಂಚಾಯಿತಿ ಸಿಬ್ಬಂದಿ ಮನೆ ಮನೆಗೆ ಭೇಟಿ ನೀಡುವ ಸಂದರ್ಭದಲ್ಲಿ ಕೂಲಿಕಾರರು ಅಗತ್ಯ ಮಾಹಿತಿ ನೀಡಿ ಅಭಿಯಾನ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಯೋಜನೆಯ ಕ್ರಿಯಾಯೋಜನೆಯಲ್ಲಿ ವೈಯಕ್ತಿಕ ಫಲಾನುಭವಿಗಳಾಗಿ ಆಯ್ಕೆಯಾಗಿರುವವರು ತಕ್ಷಣ ಕಾಮಗಾರಿ ಆದೇಶ ಪಡೆದು ಕಾಮಗಾರಿ ಆರಂಭಿಸುವಂತೆ ಸಿಬ್ಬಂದಿಗೆ ಸೂಚಿಸಿದರು. ಬಳಿಕ ಕಾಯಕ ಬಂಧುಗಳು ಹಾಗೂ ಗ್ರಾಮಸ್ಥರೊಂದಿಗೆ ಸಂವಾದ ನಡೆಸಿ, ಯೋಜನೆಯಡಿ ದೊರೆಯುವ ಉದ್ಯೋಗಾವಕಾಶ ಹಾಗೂ ವಿವಿಧ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ಭಾರತ್ ಜೋಡೋ ಯುವ ಸಂಘ ನೋಂದಣಿ ಕುರಿತು ಮಾಹಿತಿ ನೀಡಿದ ಕಂದಕೂರ, 18ರಿಂದ 35 ವರ್ಷದೊಳಗಿನ ಯುವಕರು ನೋಂದಣಿ ಮಾಡಿಕೊಳ್ಳಬೇಕು. ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಕನಿಷ್ಠ 100 ಯುವಕರ ನೋಂದಣಿಯಾದರೆ ಸಂಘ ರಚನೆಯಾಗಲಿದ್ದು, ಎಲ್ಲ ಸಮುದಾಯಗಳ ಯುವಕರು ಹಾಗೂ ಮಹಿಳೆಯರು ಭಾಗವಹಿಸುವಂತೆ ಕ್ರಮವಹಿಸಬೇಕು ಎಂದರು.
ಐಇಸಿ ಸಂಯೋಜಕ ಮಂಜುನಾಥ ಹಳ್ಳದ, ಕಾರ್ಯದರ್ಶಿಗಳಾದ ಎಂ.ಎಂ. ಗೋಡೆಕಾರ, ಎನ್.ಜಿ. ಭಾಗವಾನ, ಕೆ.ಬಿ. ಮಾದರ, ಡಿ.ಕೆ. ವಾಲಿಕಾರ, ಯಲ್ಲವ್ವ ಗಾರಗಿ, ನಿಂಗಪ್ಪ ಸೋಂಪೂರ, ಕಾಯಕ ಬಂಧುಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
“ಜಾಬ್ ಕಾರ್ಡ್ ಇಲ್ಲದ ಕೂಲಿಕಾರರು ಹೊಸ ಕಾರ್ಡ್ ಮಾಡಿಸಿಕೊಳ್ಳಿ, ತಿದ್ದುಪಡಿ ಹಾಗೂ ಇ-ಕೆವೈಸಿ ನವೀಕರಣಕ್ಕೂ ಅವಕಾಶವಿದೆ. ಎಲ್ಲರೂ ಅಭಿಯಾನದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಉದ್ಯೋಗ ಖಾತ್ರಿ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು.”
— ಚಂದ್ರಶೇಖರ ಬಿ. ಕಂದಕೂರ, ತಾ.ಪಂ. ಇಒ, ಗಜೇಂದ್ರಗಡ

