Home Blog

ವಿದ್ಯುತ್ ತಂತಿ ತಗುಲಿ ಚಿಪ್ಸ್ ಲೋಡ್ ಕ್ಯಾಂಟರ್ ಲಾರಿ ಸಂಪೂರ್ಣ ಭಸ್ಮ!

ಹಗರಿಬೊಮ್ಮನಹಳ್ಳಿ: ತಾಲೂಕಿನ ಪಿಲ್ಲೂಬನಹಳ್ಳಿ ಗ್ರಾಮದ ಬಳಿ ಚಿಪ್ಸ್ ಲೋಡ್ ಹೊತ್ತೊಯ್ಯುತ್ತಿದ್ದ ಕ್ಯಾಂಟರ್ ಲಾರಿಗೆ ವಿದ್ಯುತ್ ತಂತಿ ತಗುಲಿ ವಾಹನ ಸಂಪೂರ್ಣವಾಗಿ ಸುಟ್ಟು ಕರಕಲಾದ ಘಟನೆ ಶುಕ್ರವಾರ ಸಂಜೆ ನಡೆದಿದೆ.

ಘಟನೆ ಮಾರ್ಚ್ 27ರಂದು ಸಂಜೆ ಸುಮಾರು 4ರಿಂದ 5 ಗಂಟೆ ನಡುವೆ ನಡೆದಿದೆ. ಬೆಂಗಳೂರಿನಿಂದ ಹಡಗಲಿ ಪಟ್ಟಣದತ್ತ ತೆರಳುತ್ತಿದ್ದ KA-37 A-3262 ಸಂಖ್ಯೆಯ ಕ್ಯಾಂಟರ್ ಲಾರಿ, ಕೂಡ್ಲಿಗಿ ಹೈವೇಯ ಶಿವಪುರದಿಂದ ಪಿಲ್ಲೂಬನಹಳ್ಳಿ-ಮಾದೂರು ಮಾರ್ಗವಾಗಿ ಸಾಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.

ಗ್ರಾಮದ ಕೃಷಿ ಚಟುವಟಿಕೆಗಳಿಗೆ ಸಂಬಂಧಿಸಿದ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸರಬರಾಜು ಇದ್ದ ಕಾರಣ, ರಸ್ತೆ ಮೇಲಿನ ತಂತಿ ಕೆಳಮಟ್ಟದಲ್ಲಿ ಇರುವುದು ಕಂಡುಬಂದಿದೆ. ಲಾರಿಯ ಮೇಲ್ಭಾಗದಲ್ಲಿ ತುಂಬಿದ್ದ ಚಿಪ್ಸ್ ಪ್ಯಾಕೆಟ್‌ಗಳಿಗೆ ವಿದ್ಯುತ್ ತಂತಿ ತಗುಲುತ್ತಿದ್ದಂತೆ ಬೆಂಕಿ ಕಾಣಿಸಿಕೊಂಡಿದೆ.

ಚಾಲಕ ಘಟನೆ ಗಮನಿಸಿ ಪಿಲ್ಲೂಬನಹಳ್ಳಿ ಗ್ರಾಮದಿಂದ ಸುಮಾರು 200 ಮೀಟರ್ ದೂರದಲ್ಲಿ ವಾಹನ ನಿಲ್ಲಿಸಿದ್ದರೂ, ಬೆಂಕಿ ಕ್ಷಣಾರ್ಧದಲ್ಲಿ ವ್ಯಾಪಿಸಿ ಸಂಪೂರ್ಣ ಲಾರಿಯನ್ನು ಆವರಿಸಿತು.

ಹಗರಿಬೊಮ್ಮನಹಳ್ಳಿ ಅಗ್ನಿಶಾಮಕ ಠಾಣೆಯ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಆದಾಗ್ಯೂ, ಈ ಅವಘಡದಲ್ಲಿ ಕ್ಯಾಂಟರ್ ವಾಹನ ಹಾಗೂ ಚಿಪ್ಸ್ ಪ್ಯಾಕೆಟ್‌ಗಳು ಸಂಪೂರ್ಣವಾಗಿ ಸುಟ್ಟುಹೋಗಿವೆ.

ಅಗ್ನಿಶಾಮಕ ಠಾಣೆ ಅಧಿಕಾರಿ ವಾಸುದೇವಪ್ಪ ಅವರ ನೇತೃತ್ವದಲ್ಲಿ ಕೆ. ಶಶಿಕುಮಾರ್ ನಾಯ್ಕ, ಹಾಲಸ್ವಾಮಿ, ನಾರಾಯಣ, ರಾಮದಾಸ್ ಸೇರಿದಂತೆ ಸಿಬ್ಬಂದಿ ಹಾಗೂ ಚಾಲಕರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಕುಷ್ಟಗಿ ಚಾಳದ ಅಮೃತ ಶಿಲೆಯ ರಾಮಮಂದಿರದಲ್ಲಿ ವಿಜೃಂಭಣೆಯಿಂದ ರಾಮನವಮಿ ಆಚರಣೆ!

0

ಗದಗ: ಉತ್ತರ ಕರ್ನಾಟಕದಲ್ಲಿಯೇ ಪ್ರಸಿದ್ಧಿ ಪಡೆದ ಕುಷ್ಟಗಿ ಚಾಳದ ಅಮೃತಶಿಲೆಯ ಶ್ರೀರಾಮ ಮಂದಿರದಲ್ಲಿ ಭಕ್ತಿಭಾವದಿಂದ ರಾಮನವಮಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.

ಶುಕ್ರವಾರ ರಾಮನವಮಿ ಅಂಗವಾಗಿ, ಕುಷ್ಟಗಿ ಕುಟುಂಬದವರಿಂದ ಸ್ಥಾಪನೆಗೊಂಡ ಸುಮಾರು 96 ವರ್ಷಗಳ ಇತಿಹಾಸ ಹೊಂದಿರುವ ಬೆಟಗೇರಿಯ ಈ ಪ್ರಸಿದ್ಧ ಅಮೃತಶಿಲೆಯ ಮಂದಿರದಲ್ಲಿ ಸಾವಿರಾರು ಭಕ್ತರು ಭಾಗವಹಿಸಿದ್ದರು.

ಶ್ರೀರಾಮ, ಸೀತಾಮಾತೆ, ಲಕ್ಷ್ಮಣ, ಹನುಮಂತ ಹಾಗೂ ಗರುಡ ದೇವರ ಆಕರ್ಷಕ ಮೂರ್ತಿಗಳು ಭಕ್ತರ ಗಮನ ಸೆಳೆದವು.

ಬೆಳಿಗ್ಗೆಯಿಂದಲೇ ಹೋಮ, ಹವನ ಹಾಗೂ ವಿಶೇಷ ಅಲಂಕಾರ ಪೂಜೆಗಳು ನಡೆದವು. ಬಳಿಕ ಶ್ರೀರಾಮನ ಕಂಚಿನ ಮೂರ್ತಿಯನ್ನು ಸಂಪ್ರದಾಯಬದ್ಧವಾಗಿ ತೊಟ್ಟಿಲಿನಲ್ಲಿ ಇಟ್ಟು, ಭಕ್ತರು ಭಜನೆಗಳೊಂದಿಗೆ ತೊಟ್ಟಿಲು ತೂಗಿ ಶ್ರೀರಾಮನ ಜನ್ಮೋತ್ಸವವನ್ನು ಆಚರಿಸಿದರು.

ಅಯೋಧ್ಯೆಯ ಶ್ರೀರಾಮ ಜನ್ಮಸ್ಥಳದೊಂದಿಗೆ ಸಂಬಂಧ ಹೊಂದಿರುವ ಈ ಮಂದಿರದಲ್ಲಿ ಭಕ್ತರು ಲೋಕಕ್ಷೇಮಕ್ಕಾಗಿ ವಿಶೇಷ ಹೋಮಗಳಲ್ಲಿ ಭಾಗವಹಿಸಿದ್ದರು. ಪೂಜೆಯ ನಂತರ ಭಕ್ತರಿಗೆ ಕೊಸಂಬರಿ ಮತ್ತು ಪಾನಕ ವಿತರಣೆ ಮಾಡಲಾಯಿತು.

ಇದೇ ಸಂದರ್ಭದಲ್ಲಿ, ಶನಿವಾರ ಸೀತಾ ಕಲ್ಯಾಣ ಮಹೋತ್ಸವ ನಡೆಯಲಿದ್ದು, ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಅನ್ನಸಂತರ್ಪಣೆಯ ಪ್ರಸಾದ ಸ್ವೀಕರಿಸಬೇಕು ಎಂದು ಪ್ರಧಾನ ಅರ್ಚಕ ದೀವಾಕರ ದೀಕ್ಷಿತ್ ಹಾಗೂ ಟ್ರಸ್ಟಿಗಳಾದ ಕೊದಂಡರಾಮ ಕುಷ್ಟಗಿ, ನವೀನ ಕುಷ್ಟಗಿ ಮತ್ತು ಭರತ ಕುಷ್ಟಗಿ ಅವರು ಮನವಿ ಮಾಡಿದರು.

ರಾಮನವಮಿ ಅಂಗವಾಗಿ ಮಂತ್ರಾಲಯದಲ್ಲಿ ಮಹಾಭಿಷೇಕ: ಮೂಲ ರಾಮದೇವರಿಗೆ ವಿಶೇಷ ಪೂಜೆ!

ರಾಯಚೂರು:- ರಾಮನವಮಿ ಅಂಗವಾಗಿ ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ಭಕ್ತಿಭಾವದಿಂದ ನೆರವೇರಿದವು.

ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮಿ ಅವರು ಶ್ರೀ ಬ್ರಹ್ಮ ಕರಾರ್ಚಿತ ಮೂಲ ರಾಮದೇವರು ಸೇರಿದಂತೆ ಸಂಸ್ಥಾನ ಮೂರ್ತಿಗಳಿಗೆ ಮಹಾಭಿಷೇಕ ನೆರವೇರಿಸಿದರು. ಬಳಿಕ ಮೂಲ ರಾಮದೇವರು, ದಿಗ್ವಿಜಯ ರಾಮದೇವರು ಹಾಗೂ ಜಯರಾಮದೇವರುಗಳಿಗೆ ಗಂಧ ಲೇಪನ ಅರ್ಪಿಸಿ ಸಂಸ್ಥಾನ ಪೂಜೆ ನಡೆಸಲಾಯಿತು.

ಈ ಮಹಾಭಿಷೇಕವು ಮಠದಲ್ಲಿ ಅಪರೂಪದ ಹಾಗೂ ಮಹತ್ವದ ಆಚರಣೆಯಾಗಿದ್ದು, ವರ್ಷದಲ್ಲಿ ಎರಡು ಬಾರಿ ಮಾತ್ರ—ಶ್ರೀರಾಮನವಮಿ ಹಾಗೂ ಬಲಿ ಪಾಡ್ಯಮಿಯಂದು—ನಡೆಯುತ್ತದೆ.

ಇದೀಗ ಶ್ರೀರಾಮನವಮಿ ಅಂಗವಾಗಿ ಅಪಾರ ಸಂಖ್ಯೆಯ ಭಕ್ತರು ಆಗಮಿಸಿ ರಾಯರ ಕೃಪೆಗೆ ಪಾತ್ರರಾದರು. ರಾಯಚೂರು ನಗರದಲ್ಲೂ ಹಬ್ಬದ ಸಂಭ್ರಮ ಕಳೆಯಿದ್ದು, ರಾಮ ಮಂದಿರ, ಕೋದಂಡರಾಮ ದೇವಾಲಯ ಸೇರಿದಂತೆ ವಿವಿಧ ದೇವಾಲಯಗಳಲ್ಲಿ ಬೆಳಿಗ್ಗೆಯಿಂದಲೇ ವಿಶೇಷ ಪೂಜೆಗಳು ನಡೆದವು.

 

ಪ್ರಯಾಣಿಕರ ಬೇಡಿಕೆ ಈಡೇರಿಸಿದ ರೈಲ್ವೆ ಇಲಾಖೆ: ಈ ಭಾಗದಲ್ಲಿ ಮೆಮು ರೈಲು ಸೇವೆ ಆರಂಭ!

ಬೆಂಗಳೂರು: ತುಮಕೂರು ಮಾರ್ಗವಾಗಿ ಬೆಂಗಳೂರಿನಿಂದ ಅರಸೀಕೆರೆಗೆ ನೂತನ ಮೆಮು ರೈಲು ಸೇವೆ ಆರಂಭವಾಗಿದ್ದು, ಪ್ರಯಾಣಿಕರ ಬಹುದಿನದ ಬೇಡಿಕೆಗೆ ಸ್ಪಂದನೆ ದೊರೆತಿದೆ.

ಯಲಹಂಕದಿಂದ ಯಶವಂತಪುರ ಮಾರ್ಗವಾಗಿ ಈ ರೈಲು ಸಂಚಾರ ನಡೆಸಲಿದೆ ಎಂದು ರೈಲ್ವೆ ಇಲಾಖೆ ರಾಜ್ಯ ಸಚಿವ ವಿ. ಸೋಮಣ್ಣ ತಿಳಿಸಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಸಚಿವರು, ವಿದ್ಯಾರ್ಥಿಗಳು, ದಿನಗೂಲಿ ಕಾರ್ಮಿಕರು, ಉದ್ಯೋಗಿಗಳು, ರೈತರು ಹಾಗೂ ವ್ಯಾಪಾರಿಗಳಿಗೆ ಈ ಮೆಮು ರೈಲು ಕೈಗೆಟುಕುವ ಮತ್ತು ವಿಶ್ವಾಸಾರ್ಹ ಪ್ರಯಾಣದ ಆಯ್ಕೆಯಾಗಲಿದೆ. ಪ್ರಯಾಣಿಕರು ಈ ಸೇವೆಯನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಮನವಿ ಮಾಡಿದ್ದಾರೆ.

ರೈಲು ಸಂಖ್ಯೆ 66505 ಯಲಹಂಕದಿಂದ ಬೆಳಿಗ್ಗೆ 6.45ಕ್ಕೆ ಹೊರಟು, ಯಶವಂತಪುರ ಮಾರ್ಗವಾಗಿ ಬೆಳಿಗ್ಗೆ 8.58ಕ್ಕೆ ತುಮಕೂರಿಗೆ ತಲುಪಿ, 11 ಗಂಟೆಗೆ ಅರಸೀಕೆರೆಯನ್ನು ಸೇರುತ್ತದೆ. ಅದೇ ರೀತಿ, ರೈಲು ಸಂಖ್ಯೆ 66506 ಅರಸೀಕೆರೆಯಿಂದ ಮಧ್ಯಾಹ್ನ 2.15ಕ್ಕೆ ಹೊರಟು, ಸಂಜೆ 4.38ಕ್ಕೆ ತುಮಕೂರಿಗೆ ತಲುಪಿ, 7.15ಕ್ಕೆ ಯಲಹಂಕಕ್ಕೆ ಆಗಮಿಸುತ್ತದೆ.

ಈ ಮೆಮು ರೈಲು ಸೇವೆ ಭಾನುವಾರವನ್ನು ಹೊರತುಪಡಿಸಿ ವಾರದ ಆರು ದಿನಗಳ ಕಾಲ ಲಭ್ಯವಿರಲಿದೆ ಎಂದು ತಿಳಿಸಲಾಗಿದೆ.

ಇದೇ ವೇಳೆ, ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಭಾನುವಾರವೂ ಸೇರಿ ವಾರದ ಏಳು ದಿನಗಳ ಕಾಲ ರೈಲು ಸಂಚಾರಕ್ಕೆ ವ್ಯವಸ್ಥೆ ಮಾಡುವಂತೆ ಮನವಿ ಮಾಡಲಾಗಿದೆ. ವಿಶೇಷವಾಗಿ ತಿಪಟೂರಿನಿಂದ ಭಾನುವಾರ ಮಧ್ಯಾಹ್ನದ ಬಳಿಕ ರೈಲುಗಳಿಲ್ಲದ ಹಿನ್ನೆಲೆಯಲ್ಲಿ ಆ ದಿನವೂ ಸೇವೆ ಅಗತ್ಯವಿದೆ ಎಂದು ಪ್ರಯಾಣಿಕರು ಸಚಿವರ ಗಮನ ಸೆಳೆದಿದ್ದಾರೆ.

ತುಂಗಭದ್ರಾ ನದಿಯಲ್ಲಿ ಸ್ನಾನಕ್ಕೆ ಹೋಗಿ ಜೀವ ಕಳೆದುಕೊಂಡ ನಾಲ್ವರು!

ರಾಯಚೂರು: ತುಂಗಭದ್ರಾ ನದಿಯಲ್ಲಿ ಸ್ನಾನಕ್ಕೆ ತೆರಳಿದ್ದ ಒಂದೇ ಕುಟುಂಬದ ನಾಲ್ವರು ದುರಂತವಾಗಿ ಸಾವನ್ನಪ್ಪಿರುವ ಘಟನೆ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಕುರ್ಡಿ ಗ್ರಾಮದ ಸಮೀಪ ನಡೆದಿದೆ.

ಮೃತರನ್ನು ಉಮಾವತಿ (35), ರತ್ನ (24), ಮಹೇಶ್ (28) ಮತ್ತು ಶಿವಾನಂದ (24) ಎಂದು ಗುರುತಿಸಲಾಗಿದೆ. ಇವರ ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ಕೋಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

ಮಾಹಿತಿ ಪ್ರಕಾರ, ಕುಟುಂಬದವರು ಆಂಧ್ರಪ್ರದೇಶದ ಕೋಸಗಿ ತಾಲೂಕಿನ ರಾಜಲಬಂಡ ಅಣೆಕಟ್ಟಿನ ಕೊನೆ ಭಾಗದ ಸಾತುನೂರು ಗ್ರಾಮದ ಬಳಿ ತುಂಗಭದ್ರಾ ನದಿಗೆ ಮಧ್ಯಾಹ್ನ ಸ್ನಾನಕ್ಕೆ ತೆರಳಿದ್ದರು. ಈ ವೇಳೆ ತಗ್ಗು ಪ್ರದೇಶದಲ್ಲಿ ಸಿಲುಕಿಕೊಂಡು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಮೃತರು ರಾಯಚೂರು ಜಿಲ್ಲೆಯ ಕುರ್ಡಿ ಗ್ರಾಮದ ನಿವಾಸಿಗಳಾಗಿದ್ದು, ಘಟನೆ ಆಂಧ್ರಪ್ರದೇಶದ ಕೋಸಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪ್ರಕರಣ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಭಾರತದಲ್ಲಿ ಲಾಕ್‌ಡೌನ್ ಪರಿಸ್ಥಿತಿ ಇಲ್ಲ: ಸಚಿವೆ ನಿರ್ಮಲಾ ಸೀತಾರಾಮನ್ ಸ್ಪಷ್ಟನೆ!

0

ನವದೆಹಲಿ: ದೇಶದಲ್ಲಿ ಲಾಕ್‌ಡೌನ್ ಜಾರಿಯಾಗಲಿದೆ ಎಂಬ ವದಂತಿಗಳನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಳ್ಳಿಹಾಕಿದ್ದು, ಅವು ಸಂಪೂರ್ಣ ಆಧಾರರಹಿತ ಎಂದು ಸ್ಪಷ್ಟಪಡಿಸಿದ್ದಾರೆ.

ರಾಜ್ಯಸಭೆಯಲ್ಲಿ 2026ರ ಹಣಕಾಸು ಮಸೂದೆಯ ಚರ್ಚೆಯ ವೇಳೆ ಮಾತನಾಡಿದ ಅವರು, “ದೇಶಾದ್ಯಂತ ಅನಾವಶ್ಯಕ ಭಯ ಹುಟ್ಟಿಸುವ ವದಂತಿಗಳು ಹರಡುತ್ತಿವೆ. ಲಾಕ್‌ಡೌನ್ ಎಲ್ಲಿ ನಡೆಯುತ್ತಿದೆ? ಪಾಕಿಸ್ತಾನದಲ್ಲಿ ಇಂತಹ ಪರಿಸ್ಥಿತಿ ಇರಬಹುದು, ಆದರೆ ಭಾರತದಲ್ಲಿ ಇಲ್ಲ” ಎಂದು ಹೇಳಿದರು.

ಸಾರ್ವಜನಿಕರು ಮತ್ತು ರಾಜಕೀಯ ನಾಯಕರು ಅಪ್ರಮಾಣಿತ ಮಾಹಿತಿಯನ್ನು ಹಂಚಿಕೊಂಡು ಜನರಲ್ಲಿ ಆತಂಕ ಸೃಷ್ಟಿಸಬಾರದು ಎಂದು ಅವರು ಎಚ್ಚರಿಸಿದರು.

ಇನ್ನೂ ಬಾಂಗ್ಲಾದೇಶದ ಪರಿಸ್ಥಿತಿಯನ್ನು ಉಲ್ಲೇಖಿಸಿದ ಅವರು, “ಅವರ ಸಂಕಷ್ಟವನ್ನು ತೋರಿಸಲು ಅಲ್ಲ, ವಾಸ್ತವಿಕ ಹೋಲಿಕೆಗೆ ಮಾತ್ರ ಹೇಳುತ್ತಿದ್ದೇನೆ. ಉತ್ತಮ ನೆರೆಹೊರೆಯ ದೇಶವಾಗಿ, ಅಗತ್ಯವಿದ್ದಲ್ಲಿ ಭಾರತ ಸಹಾಯ ನೀಡಲು ಸಿದ್ಧವಾಗಿದೆ” ಎಂದು ತಿಳಿಸಿದ್ದಾರೆ.

“ನಮ್ಮ ದೇಶದಲ್ಲಿ ಯಾವುದೇ ತುರ್ತು ಪರಿಸ್ಥಿತಿ ಇಲ್ಲ. ಜನರು ವದಂತಿಗಳಿಗೆ ಒಳಗಾಗಬಾರದು” ಎಂದು ನಿರ್ಮಲಾ ಸೀತಾರಾಮನ್ ಸ್ಪಷ್ಟನೆ ನೀಡಿದ್ದಾರೆ.

ಹಣ ದುರ್ಬಳಕೆ ಆರೋಪ: ವಿಡಿಯೋ ಮಾಡಿ ಆತ್ಮಹತ್ಯೆಗೆ ಶರಣಾದ ಮಹಿಳಾ ಕಾರ್ಯದರ್ಶಿ!

ಚಿಕ್ಕಮಗಳೂರು: ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದಲ್ಲಿ ಹಣ ದುರ್ಬಳಕೆ ಆರೋಪ ಹಿನ್ನೆಲೆ ಮನನೊಂದು ಮಹಿಳಾ ಕಾರ್ಯದರ್ಶಿ ಆತ್ಮಹತ್ಯೆಗೆ ಶರಣಾದ ಘಟನೆ ತರೀಕೆರೆ ತಾಲೂಕಿನ ಹೆಚ್. ಮಲ್ಲೇನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಉಷಾ (45) ಮೃತ ಮಹಿಳೆ. ಕಿರುಕುಳ ತಡೆಯಲು ಸಾಧ್ಯವಾಗುತ್ತಿಲ್ಲ ಎಂದು ವಿಡಿಯೋ ಮಾಡಿ ಅವರು ನೇಣಿಗೆ ಶರಣಾಗಿದ್ದಾರೆ. ವಿಡಿಯೋದಲ್ಲಿ, ಲೆಕ್ಕಪತ್ರ ಪುಸ್ತಕ ಕಳೆದುಹೋಗಿರುವುದು ತನ್ನಿಂದಾದ ತಪ್ಪು ಎಂದು ಅವರು ಒಪ್ಪಿಕೊಂಡಿದ್ದಾರೆ.

ಕಳೆದ 10 ವರ್ಷಗಳಿಂದ ಹಣ ದುರುಪಯೋಗ ಎಂದು ಗ್ರಾಮಸ್ಥರು ಆರೋಪಿಸಿದ್ದು, ಈ ಸಂಬಂಧ ನಡೆದಿದ್ದ ಪಂಚಾಯತಿಯಲ್ಲೂ ಲೆಕ್ಕಪತ್ರ ಮಿಸ್ಸಿಂಗ್​​ ಆಗಿರೋದು ನಿಜ ಎಂದು ಉಷಾ ಒಪ್ಪಿಕೊಂಡಿದ್ದರು ಎನ್ನಲಾಗಿದೆ. 2010ರಲ್ಲಿ ಸ್ಥಾಪನೆಯಾದ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದಲ್ಲಿ ಆರಂಭದಿಂದಲೂ ಉಷಾ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದರು.

2025ರಲ್ಲಿ ಸಂಘಕ್ಕೆ ಹೊಸ ಸದಸ್ಯರು ಸೇರ್ಪಡೆಗೊಂಡ ಬಳಿಕ ಹಳೆಯ ಲೆಕ್ಕಪತ್ರಗಳನ್ನು ಕೇಳಲು ಪ್ರಾರಂಭಿಸಿದ್ದು, ಈ ವೇಳೆ ಉಷಾ ವಿರುದ್ಧ ಹಣ ದುರ್ಬಳಕೆ ಆರೋಪ ಕೇಳಿಬಂದಿತ್ತು ಎಂದು ಮೂಲಗಳು ತಿಳಿಸಿವೆ.

ಈ ಕುರಿತು ಮೃತಳ ಪತಿ ತರೀಕೆರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪತ್ನಿಯ ಸಾವಿಗೆ ಕೆಲವರ ಕಿರುಕುಳವೇ ಕಾರಣ ಎಂದು ಆರೋಪಿಸಿದ್ದಾರೆ. ಉಷಾ ಎಲ್ಲಾ ಲೆಕ್ಕಪತ್ರಗಳನ್ನು ನೀಡಿದ್ದರೂ ಕುಟುಂಬಕ್ಕೆ ಜೀವ ಬೆದರಿಕೆ ಹಾಕಲಾಗುತ್ತಿತ್ತು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ವಿಡಿಯೋದಲ್ಲಿ 10 ಜನರ ಹೆಸರುಗಳನ್ನು ಉಲ್ಲೇಖಿಸಿರುವ ಹಿನ್ನೆಲೆಯಲ್ಲಿ ಹೆಚ್. ಮಲ್ಲೇನಹಳ್ಳಿ ಗ್ರಾಮದ 10 ಜನರ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ದೇವಸ್ಥಾನ ಮಾಹಿತಿ ಮರೆಮಾಚಿದ ಅಧಿಕಾರಿಗೆ 1 ಲಕ್ಷ ರೂ. ದಂಡ!

ಬೆಂಗಳೂರು: ಉಡುಪಿ ಜಿಲ್ಲೆಯ ಕಾರ್ಕಳದಲ್ಲಿರುವ ಶ್ರೀ ಮಾರಿಯಮ್ಮ ದೇವಸ್ಥಾನದ ಸಾರ್ವಜನಿಕ ಮಾಹಿತಿ ಅಧಿಕಾರಿ ಹಾಗೂ ಆಡಳಿತ ಮೊಕ್ತೇಸರ ಕೆ.ಪಿ. ಗೋಪಾಲಕೃಷ್ಣರಾವ್ ಅವರಿಗೆ ಮಾಹಿತಿ ಹಕ್ಕು ಕಾಯ್ದೆ ಉಲ್ಲಂಘನೆಯ ಹಿನ್ನೆಲೆ ಕರ್ನಾಟಕ ಮಾಹಿತಿ ಆಯೋಗವು ನಾಲ್ಕು ಪ್ರಕರಣಗಳಲ್ಲಿ ಒಟ್ಟು ಒಂದು ಲಕ್ಷ ರೂ. ದಂಡ ವಿಧಿಸಿದೆ.

ಜೊತೆಗೆ ಅರ್ಜಿದಾರರಿಗೆ 16 ಸಾವಿರ ರೂ. ಪರಿಹಾರ ನೀಡುವಂತೆ ಆದೇಶಿಸಿದೆ.

ಅರ್ಜಿದಾರ ಸೋಮನಾಥ ನಾಯಕ್ ಅವರು ದೇವಾಲಯಕ್ಕೆ ಸಂಬಂಧಿಸಿದ ಮಾಹಿತಿ ಕೋರಿದ್ದರೂ, ಸಂಬಂಧಿತ ಅಧಿಕಾರಿ ವಿಚಾರಣೆಗಳಿಗೆ ಹಾಜರಾಗದೆ ಹಾಗೂ ಮಾಹಿತಿ ನೀಡದೆ ನಿರ್ಲಕ್ಷ್ಯ ತೋರಿದ್ದರೆಂದು ತಿಳಿದುಬಂದಿದೆ. ಈ ದೇವಾಲಯವು ಮುಜುರಾಯಿ ಇಲಾಖೆಯ ವ್ಯಾಪ್ತಿಗೆ ಒಳಪಟ್ಟಿದ್ದು, ಸರ್ಕಾರದಿಂದ ವಾರ್ಷಿಕ ಅನುದಾನ ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ಹಣ ಬಿಡುಗಡೆಗೊಂಡಿರುವುದರಿಂದ ಮಾಹಿತಿ ನೀಡುವುದು ಕಡ್ಡಾಯವಾಗಿತ್ತು.

ಆಯೋಗದ ಆದೇಶವನ್ನು ಪಾಲಿಸದ ಹಿನ್ನೆಲೆಯಲ್ಲಿ ಪ್ರತಿ ಪ್ರಕರಣಕ್ಕೆ 25 ಸಾವಿರ ರೂ. ದಂಡ ವಿಧಿಸಲಾಗಿದ್ದು, ಎರಡು ಪ್ರಕರಣಗಳಲ್ಲಿ ತಲಾ 5 ಸಾವಿರ ರೂ. ಹಾಗೂ ಇನ್ನೆರಡು ಪ್ರಕರಣಗಳಲ್ಲಿ ತಲಾ 3 ಸಾವಿರ ರೂ. ಪರಿಹಾರ ನೀಡುವಂತೆ ರಾಜ್ಯ ಮಾಹಿತಿ ಆಯುಕ್ತ ರುದ್ರಣ್ಣ ಹರ್ತಿಕೋಟೆ ನಿರ್ದೇಶನ ನೀಡಿದ್ದಾರೆ.

ಇದೇ ವೇಳೆ, ದಂಡ ಮೊತ್ತವನ್ನು ಸಂಬಂಧಿತ ಅಧಿಕಾರಿಯ ವೇತನದಿಂದ ವಸೂಲಿ ಮಾಡಿ ಸರ್ಕಾರದ ಖಾತೆಗೆ ಜಮಾ ಮಾಡುವಂತೆ ಉಡುಪಿ ಜಿಲ್ಲೆಯ ಹಿಂದೂ ಧಾರ್ಮಿಕ ಮತ್ತು ಧರ್ಮಾದಾಯ ದತ್ತಿಗಳ ಇಲಾಖೆಯ ಸಹಾಯಕ ಆಯುಕ್ತರಿಗೆ ಸೂಚಿಸಲಾಗಿದೆ.

IPL 2026: ಆರ್‌ಸಿಬಿಗೆ ಆರಂಭಿಕ ಹೊಡೆತ! ಮೊದಲ ಪಂದ್ಯಕ್ಕೆ ಸ್ಟಾರ್ ಬೌಲರ್ ಅಲಭ್ಯ

0

ಐಪಿಎಲ್ 2026 ರ ಟೂರ್ನಿ ಮಾರ್ಚ್ 28 ರಂದು ಆರಂಭವಾಗಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಲಿದೆ.

ಈ ಪಂದ್ಯವು ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಜೆ 7:30 ಕ್ಕೆ ನಡೆಯಲಿದೆ. ಆದರೆ ಪಂದ್ಯಕ್ಕೂ ಮುನ್ನವೇ ಆರ್‌ಸಿಬಿ ತಂಡಕ್ಕೆ ದೊಡ್ಡ ಆಘಾತ ಎದುರಾಗಿದೆ. ತಂಡದ ಪ್ರಮುಖ ವೇಗಿ ಜೋಶ್ ಹೇಜಲ್‌ವುಡ್ ಅವರು ಫಿಟ್‌ನೆಸ್ ಸಮಸ್ಯೆಯಿಂದಾಗಿ ಮೊದಲ ಪಂದ್ಯದಲ್ಲಿ ಆಡಲು ಸಾಧ್ಯವಾಗುವುದಿಲ್ಲ ಎಂದು ಕೋಚ್ ಆಂಡಿ ಫ್ಲವರ್ ತಿಳಿಸಿದ್ದಾರೆ.

ಗಾಯದ ನಡುವೆಯೂ ತಂಡವನ್ನು ಸೇರಿಕೊಂಡಿರುವ ಹೇಜಲ್‌ವುಡ್ ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಳ್ಳದ ಹಿನ್ನೆಲೆಯಲ್ಲಿ ಅವರನ್ನು ಮೊದಲ ಪಂದ್ಯದಿಂದ ಹೊರಗಿಡಲಾಗಿದೆ. ನವೆಂಬರ್ 2025 ರಿಂದ ಕ್ರಿಕೆಟ್‌ನಿಂದ ದೂರವಿರುವ ಅವರು ಮಂಡಿರಜ್ಜು ಮತ್ತು ಅಕಿಲೀಸ್ ಸ್ನಾಯು ಸಮಸ್ಯೆಗಳಿಂದ ಬಳಲುತ್ತಿದ್ದಾರೆ.

ಆರ್‌ಸಿಬಿ ತಂಡದ ಬೌಲಿಂಗ್ ವಿಭಾಗದಲ್ಲಿ ಹೇಜಲ್‌ವುಡ್ ಪ್ರಮುಖ ಪಾತ್ರ ವಹಿಸುತ್ತಿದ್ದು, ಅವರ ಅನುಪಸ್ಥಿತಿ ತಂಡಕ್ಕೆ ಸವಾಲಾಗಬಹುದು. ಕಳೆದ ಆವೃತ್ತಿಯಲ್ಲಿ ಅವರು 12 ಪಂದ್ಯಗಳಲ್ಲಿ 22 ವಿಕೆಟ್ ಪಡೆದಿದ್ದು, 8.77 ಎಕಾನಮಿ ದರ ಹೊಂದಿದ್ದರು. ಇದೀಗ ಅವರ ಗೈರುಹಾಜರಿಯಲ್ಲಿ ಇತರ ವೇಗದ ಬೌಲರ್‌ಗಳ ಮೇಲೆ ಹೆಚ್ಚು ಹೊಣೆಗಾರಿಕೆ ಬೀಳಲಿದೆ.

ಇದರ ಮಧ್ಯೆ, ರಜತ್ ಪಾಟಿದಾರ್ ನೇತೃತ್ವದ ಆರ್‌ಸಿಬಿ ತಂಡ ತವರಿನಲ್ಲಿ ಗೆಲುವಿನೊಂದಿಗೆ ಟೂರ್ನಿ ಆರಂಭಿಸಲು ಸಜ್ಜಾಗಿದ್ದು, ಅಭಿಮಾನಿಗಳಲ್ಲಿ ಪಂದ್ಯಕ್ಕಾಗಿ ಹೆಚ್ಚಿನ ನಿರೀಕ್ಷೆ ಮೂಡಿದೆ. ಪಂದ್ಯ ಸಂಜೆ 7:30 ಕ್ಕೆ ಆರಂಭವಾಗಲಿದ್ದು, ಟಾಸ್ 7:00 ಗಂಟೆಗೆ ನಡೆಯಲಿದೆ.

ತೈಲ ಬಿಕ್ಕಟ್ಟು: ರಾಜನಾಥ್ ಸಿಂಗ್ ನೇತೃತ್ವದಲ್ಲಿ ಅಂತರ-ಸಚಿವಾಲಯ ಸಮಿತಿ ರಚನೆ

0

ನವದೆಹಲಿ: ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ದೇಶದ ತೈಲ ಮತ್ತು ನೈಸರ್ಗಿಕ ಅನಿಲ ಪೂರೈಕೆಯನ್ನು ಸಮೀಪದಿಂದ ಗಮನಿಸಲು ಕೇಂದ್ರ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದೆ.

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ನೇತೃತ್ವದಲ್ಲಿ ಅಂತರಸಚಿವಾಲಯ ಸಮಿತಿಯನ್ನು ರಚಿಸಲಾಗಿದೆ. ಸಮಿತಿಯಲ್ಲಿ ಅಮಿತ್ ಶಾ, ನಿರ್ಮಲಾ ಸೀತಾರಾಮನ್ ಹಾಗೂ ಹರ್ದೀಪ್ ಸಿಂಗ್ ಪುರಿ ಸೇರಿದಂತೆ ಹಲವು ಪ್ರಮುಖ ಸಚಿವರು ಸದಸ್ಯರಾಗಿದ್ದಾರೆ.

ಸಮಿತಿಯ ಉದ್ದೇಶ ತೈಲ ಮತ್ತು ಅನಿಲ ಪೂರೈಕೆಯಲ್ಲಿ ಉಂಟಾಗುವ ಸಮಸ್ಯೆಗಳನ್ನು ತಕ್ಷಣ ಪತ್ತೆಹಚ್ಚಿ ಪರಿಹರಿಸುವುದಾಗಿದೆ. ಇದರಿಂದ ಇಂಧನ ಕ್ಷೇತ್ರದ ಸ್ಥಿರತೆಯನ್ನು ಕಾಪಾಡಲು ಸರ್ಕಾರ ತ್ವರಿತ ಕ್ರಮ ಕೈಗೊಂಡಿದೆ.

ಕೇಂದ್ರ ಸರ್ಕಾರದ ಪ್ರಕಾರ, ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿದ್ದು, ಯಾವುದೇ ಕೊರತೆ ಇಲ್ಲ. ಜನರು ಆತಂಕಗೊಂಡು ಅನಗತ್ಯವಾಗಿ ಇಂಧನ ಸಂಗ್ರಹಿಸಬಾರದು ಎಂದು ಮನವಿ ಮಾಡಲಾಗಿದೆ.

ಇದೇ ವೇಳೆ, ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷ ತೀವ್ರಗೊಂಡಿದೆ. ಇದರ ಪರಿಣಾಮವಾಗಿ ಇರಾನ್ ಹಾರ್ಮುಜ್ ಜಲಸಂಧಿಯನ್ನು ನಿರ್ಬಂಧಿಸಿದೆ. ಜಗತ್ತಿನ ಒಟ್ಟು ತೈಲ ಮತ್ತು ಅನಿಲ ಪೂರೈಕೆಯ ಸುಮಾರು 20ರಿಂದ 25 ಶೇಕಡಾ ಮಾರ್ಗದ ಮೂಲಕ ಸಾಗುತ್ತದೆ. ಭಾರತಕ್ಕೂ ಸುಮಾರು 12ರಿಂದ 15 ಶೇಕಡಾ ಕಚ್ಚಾ ತೈಲ ಇದೇ ಮಾರ್ಗದಿಂದ ಬರುತ್ತಿತ್ತು.

ನಿರ್ಬಂಧದಿಂದ ಜಾಗತಿಕ ಮಟ್ಟದಲ್ಲಿ ಇಂಧನ ಬೆಲೆಗಳು ಏರಿಕೆಯಾಗುವ ಸಾಧ್ಯತೆ ಇದೆ ಎಂಬ ಆತಂಕ ವ್ಯಕ್ತವಾಗಿದೆ.

error: Content is protected !!