Home Blog

ಅಪಪ್ರಚಾರ ಬಿಟ್ಟು ಹಿಂದೂ ಸಮಾವೇಶಕ್ಕೆ ಬನ್ನಿ

ವಿಜಯಸಾಕ್ಷಿ ಸುದ್ದಿ, ಗದಗ: “ಹಿಂದೂ ಸಮಾವೇಶವನ್ನು ಹತ್ತಿಕ್ಕಲು ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಪ್ರಯತ್ನಿಸುತ್ತಿವೆ. ಕನ್ಹೇರಿ ಶ್ರೀಗಳ ಬಗ್ಗೆ ಅಪಪ್ರಚಾರ ಮಾಡುವುದು ಸರಿಯಲ್ಲ. ಅಪಪ್ರಚಾರ ಬಿಟ್ಟು ಮೇ 31ರಂದು ನಡೆಯುವ ಹಿಂದೂ ಸಮಾವೇಶಕ್ಕೆ ಬನ್ನಿ” ಎಂದು ದಲಿತ ಮುಖಂಡ ಉಡಚಪ್ಪ ಹಳ್ಳಿಕೇರಿ ಕರೆ ನೀಡಿದರು.
ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಈ ಹಿಂದೆ ಶಿವಶರಣ ಮಾದರ ಚೆನ್ನಯ್ಯ ಶ್ರೀಗಳನ್ನು ಆರ್‌ಎಸ್‌ಎಸ್ ಸ್ವಾಮೀಜಿ ಎಂದು ನಿಂದಿಸಲಾಗಿತ್ತು. ನಾಡಿನ ಹಲವಾರು ಸ್ವಾಮೀಜಿಗಳ ಬಗ್ಗೆ ಹಗುರವಾಗಿ ಮಾತನಾಡಲಾಗಿದೆ. ಬೆಳಿಗ್ಗೆ ಮೂಢನಂಬಿಕೆ ವಿರೋಧದ ಮಾತು ಹೇಳುವವರು ರಾತ್ರಿ ಮನೆಗೆ ಹೋಗಿ ಪೂಜೆ–ಪುನಸ್ಕಾರ ಮಾಡುತ್ತಾರೆ. ಸಮಾಜದಲ್ಲಿ ಒಡಕು ಮೂಡಿಸುವ ಕೆಲಸ ನಡೆಯುತ್ತಿದೆ” ಎಂದು ಸಾಹಿತಿ ಬಸವರಾಜ ಸೂಳಿಭಾವಿ ಹಾಗೂ ಅವರ ತಂಡದ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.
ಜಿಲ್ಲೆಯ 68 ಸಂಘಟನೆಗಳ ಸಹಯೋಗದಲ್ಲಿ ಪಕ್ಷಾತೀತವಾಗಿ ಸಮಾವೇಶ ಆಯೋಜಿಸಲಾಗಿದೆ. ಜಿಲ್ಲೆಯ ಎಲ್ಲ ಸ್ವಾಮೀಜಿಗಳಿಗೂ ಆಹ್ವಾನ ನೀಡಲಾಗಿದೆ. ಕೆಲವರು ಜಾತಿ–ಜಾತಿಗಳ ನಡುವೆ ವಿಷಬೀಜ ಬಿತ್ತುವ ಕೆಲಸ ಮಾಡುತ್ತಿದ್ದಾರೆ. ಪ್ರಚೋದನಕಾರಿ ಹೇಳಿಕೆಗಳನ್ನು ನಿಲ್ಲಿಸಬೇಕು ಎಂದು ಅವರು ಆಗ್ರಹಿಸಿದರು.
“ಬಸವಣ್ಣನವರ ಹೆಸರಿನಲ್ಲಿ ಹಿಂದೂ ಧರ್ಮ ಒಡೆಯುವ ಹುನ್ನಾರದ ವಿರುದ್ಧ ಈ ಸಮಾವೇಶ ನಡೆಯುತ್ತಿದೆ. ‘ನಾವೆಲ್ಲರೂ ಒಂದು, ನಾವೆಲ್ಲರೂ ಹಿಂದೂ’ ಎಂಬ ಸಂದೇಶದೊಂದಿಗೆ ಸಮಾವೇಶ ಆಯೋಜಿಸಲಾಗಿದೆ” ಎಂದು ಹೇಳಿದರು.
“ತೋಂಟದಾರ್ಯ ಮಠವನ್ನು ಜಾತಿಗೆ ಸೀಮಿತಗೊಳಿಸುವ ಯತ್ನ
ತೋಂಟದಾರ್ಯ ಮಠದ ಬಗ್ಗೆ ಅಪಾರ ಭಕ್ತಿ ಇದೆ. ಆದರೆ ಕೆಲವರು ಮಠವನ್ನು ಒಂದು ಜಾತಿಗೆ ಸೀಮಿತಗೊಳಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಅವರು, ತಮ್ಮನ್ನು ತಾವು ಚಿಂತಕರು ಎಂದು ಕರೆದುಕೊಳ್ಳುವವರು ಅನಗತ್ಯ ಟೀಕೆ ಮಾಡುವುದನ್ನು ನಿಲ್ಲಿಸಬೇಕು ಎಂದು ಹೇಳಿದರು.
ಈ ವೇಳೆ ಮಂಜುನಾಥ ಕೊಟ್ನಿಕಲ್, ಕುಮಾರ ನಡಗೇರಿ, ಸತೀಶ್ ಕುಂಬಾರ, ರಾಘವೇಂದ್ರ ಪರಾಪೂರ, ಪಿ.ಎಸ್. ಕಾಳೆ, ಮೌನೇಶ್ ದಾಸರ, ಹುಲಗಪ್ಪ ವಾಲ್ಮೀಕಿ, ಅಶೋಕ ಭಜಂತ್ರಿ, ಈರಪ್ಪ ವಾಲ್ಮೀಕಿ, ಮಂಜುನಾಥ ಗುಡಿ, ಮಂಜುನಾಥ ಪೂಜಾರ, ಸ್ವರೂಪ ಹುಳ್ಳಿಕಾಶಿ, ವೆಂಕಟೇಶ್ ದೊಡ್ಡಮನಿ ಉಪಸ್ಥಿತರಿದ್ದರು.

20 ದಿನಕ್ಕೊಮ್ಮೆ ನೀರು… ಕೆಸರಿನಲ್ಲಿ ಬದುಕು!

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: “ನದಿ ನೀರಿನ ಪೈಪ್ ನಮ್ಮ ಬಡಾವಣೆಯಲ್ಲೇ ಹಾದು ಹೋಗುತ್ತದೆ… ಆದರೆ 20 ದಿನಕ್ಕೊಮ್ಮೆ ಮಾತ್ರ ನೀರು ಬರುತ್ತದೆ. ಮಳೆ ಬಂದರೆ ರಸ್ತೆ ಕೆರೆಯಾಗುತ್ತದೆ. ಮನೆ ಮುಂದೆ ಚರಂಡಿ ನೀರು ಹರಿಯುತ್ತದೆ…” — ಇಂತಹ ಗಂಭೀರ ಸಮಸ್ಯೆಗಳ ವಿರುದ್ಧ ಆಕ್ರೋಶಗೊಂಡ ಗಡ್ಡದೇವರಮಠ ಆಶ್ರಯ ಬಡಾವಣೆಯ ನಿವಾಸಿಗಳು ಬುಧವಾರ ಪುರಸಭೆಗೆ ದಿಡೀರ್ ದೌಡಾಯಿಸಿ ಅಸಮಾಧಾನ ಹೊರಹಾಕಿದರು.

ಪಟ್ಟಣದ ಗಡ್ಡದೇವರಮಠ ಆಶ್ರಯ ಬಡಾವಣೆಯಲ್ಲಿ ಕುಡಿಯುವ ನೀರು, ರಸ್ತೆ, ಚರಂಡಿ ಹಾಗೂ ಸ್ವಚ್ಛತೆ ಸೇರಿದಂತೆ ಮೂಲಭೂತ ಸೌಲಭ್ಯಗಳ ಕೊರತೆಯಿಂದ ಸಾರ್ವಜನಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಆರೋಪಿಸಿದರು.

ಈ ವೇಳೆ ಮಾತನಾಡಿದ ನಿವಾಸಿಗಳು, “ನದಿ ನೀರು ಪೂರೈಕೆಯ ಪೈಪ್‌ಲೈನ್ ನಮ್ಮ ಭಾಗದಲ್ಲಿಯೇ ಹಾದು ಹೋಗಿದ್ದರೂ 20 ದಿನಗಳಿಗೊಮ್ಮೆ ಮಾತ್ರ ನೀರು ಪೂರೈಕೆಯಾಗುತ್ತಿದೆ. ಇರುವ ಬೋರ್‌ವೆಲ್‌ನಿಂದಲೂ ಸಮರ್ಪಕ ನೀರು ಸಿಗುತ್ತಿಲ್ಲ. ನೀರಿಗಾಗಿ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮಳೆ ಬಂದಾಗ ಬಡಾವಣೆಯಿಂದ ಪಟ್ಟಣಕ್ಕೆ ಸಂಪರ್ಕಿಸುವ ರಸ್ತೆಯಲ್ಲಿ ಎದೆಯತ್ತರ ನೀರು ನಿಂತು ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ರಸ್ತೆಗಳು ಕೆಸರುಮಯವಾಗುತ್ತಿದ್ದು, ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಮನೆಗಳ ಮುಂದೆ ನೀರು ಹರಿದು ಸಾರ್ವಜನಿಕರಿಗೆ ತೀವ್ರ ತೊಂದರೆ ಉಂಟಾಗುತ್ತಿದೆ ಎಂದು ದೂರಿದರು.

ತಕ್ಷಣವೇ ರಸ್ತೆ ದುರಸ್ತಿ, ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಸ್ವಚ್ಛತಾ ಕಾಮಗಾರಿಗಳಿಗೆ ಆದ್ಯತೆ ನೀಡಬೇಕು. ಸಮಸ್ಯೆಗಳನ್ನು ನಿರ್ಲಕ್ಷಿಸಿದರೆ ಮುಂದಿನ ದಿನಗಳಲ್ಲಿ ಹೋರಾಟ ನಡೆಸುವುದಾಗಿ ಸ್ಥಳೀಯರು ಎಚ್ಚರಿಕೆ ನೀಡಿದರು.

ನಿವಾಸಿಗಳ ಅಹವಾಲು ಆಲಿಸಿದ ಪುರಸಭೆ ಅಧಿಕಾರಿಗಳು ಹಾಗೂ ನೀರು ಸರಬರಾಜು ಇಲಾಖೆ ಮೇಲ್ವಿಚಾರಕ ಪರಶುರಾಮ ಮುಳಗುಂದ, ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಈ ವೇಳೆ ವಿರೂಪಾಕ್ಷಪ್ಪ ಹಡಪದ, ಮಂಜುನಾಥ ಬಳಗಾನೂರ, ಭಾಷಾಸಾಬ ಬೂದಿಹಾಳ, ಕಿರಣ ಬಳಗಾನೂರ, ಎಚ್.ಎ. ಬಹದ್ದೂರ, ವೈ.ಎಂ. ನಾಲಬಂದ, ಚನ್ನವ್ವ ಕಮತದ, ನಿರ್ಮಲ ಹೊಸಮನಿ, ದಾವಲಬಿ ಬಾಗಲಕೋಟ, ಸಾಹೇರಾ ಗುಡಗೇರಿ, ಮಲ್ಲವ್ವ ಗಡದವರ, ಜೈತುನಬಿ ದೊಡ್ಡಮನಿ, ನೀಲವ್ವ ಮಾವನೂರ, ವಿನೋದಾ ಬೋರೆ, ನಿಂಗವ್ವ ಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

“20 ದಿನಕ್ಕೊಮ್ಮೆ ನೀರು ಬರುತ್ತಿದೆ. ಮಳೆ ಬಂದರೆ ರಸ್ತೆ ಕೆರೆಯಾಗುತ್ತದೆ. ಮೂಲಭೂತ ಸೌಲಭ್ಯಕ್ಕಾಗಿ ಪುರಸಭೆಗೆ ಬರಬೇಕಾದ ಸ್ಥಿತಿ ಬಂದಿದೆ.”

ಗಡ್ಡದೇವರಮಠ ಆಶ್ರಯ ಬಡಾವಣೆಯ ನಿವಾಸಿಗಳು

“ವಲಸೆ ಬೇಡ… ಊರಲ್ಲೇ ಕೆಲಸ ಮಾಡಿ”

ವಿಜಯಸಾಕ್ಷಿ ಸುದ್ದಿ, ನರಗುಂದ: ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಸಮುದಾಯದ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ನರೇಗಾ ಯೋಜನೆಯಲ್ಲಿ ಭಾಗವಹಿಸಿ, ಸರ್ಕಾರ ನೀಡುತ್ತಿರುವ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಬನಹಟ್ಟಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಂಜುನಾಥ ಗಣಿ ಕರೆ ನೀಡಿದರು.

ಬನಹಟ್ಟಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬನಹಟ್ಟಿ ಗ್ರಾಮದಲ್ಲಿ ನರೇಗಾ ಯೋಜನೆಯಡಿ ನಡೆಯುತ್ತಿರುವ ಸಮುದಾಯ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಕಾರ್ಮಿಕರನ್ನು ಉದ್ದೇಶಿಸಿ ಅವರು ಮಾತನಾಡಿದರು.

ಬೇಸಿಗೆ ಅವಧಿಯಲ್ಲಿ ರೈತರ ಹೊಲಗಳಲ್ಲಿ ಬದು ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗುತ್ತಿದ್ದು, ಎಸ್ಸಿ–ಎಸ್ಟಿ ಸಮುದಾಯದ ರೈತರು ಮತ್ತು ಕಾರ್ಮಿಕರು ತಮ್ಮ ಹೊಲಗಳಿಗೂ ಬದು ನಿರ್ಮಿಸಿಕೊಳ್ಳಲು ಮುಂದಾಗಬೇಕು ಎಂದು ಹೇಳಿದರು.

ಮಳೆ ಇಲ್ಲದೆ ಕೂಲಿ ಕೆಲಸ ಸಿಗುತ್ತಿಲ್ಲ ಎಂದು ಆತಂಕಪಡುವ ಅಗತ್ಯವಿಲ್ಲ. ಮಳೆ ಆರಂಭವಾಗುವವರೆಗೂ ನರೇಗಾ ಯೋಜನೆಯಡಿ ಕೆಲಸ ನೀಡಲು ಗ್ರಾಮ ಪಂಚಾಯತ್ ಸಿದ್ಧವಿದ್ದು, ಬನಹಟ್ಟಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಎಲ್ಲ ಗ್ರಾಮಗಳ ಕಾರ್ಮಿಕರು ಇದರ ಪ್ರಯೋಜನ ಪಡೆಯಬೇಕು ಎಂದು ಮನವಿ ಮಾಡಿದರು.

ನರೇಗಾ ಜಾಬ್ ಕಾರ್ಡ್‌ನ್ನು ಗ್ರಾಮ ಪಂಚಾಯತ್ ವತಿಯಿಂದ ಉಚಿತವಾಗಿ ನೀಡಲಾಗುತ್ತದೆ. ಕೆಲಸಕ್ಕೆ ಹಾಜರಾಗಲು ಉದ್ಯೋಗ ಚೀಟಿಯೊಂದಿಗೆ ಇ-ಕೆವೈಸಿ ಕಡ್ಡಾಯವಾಗಿ ಮಾಡಿಸಿರಬೇಕು ಎಂದು ತಿಳಿಸಿದರು.

ನರೇಗಾ ಯೋಜನೆಯಡಿ ಗಂಡು–ಹೆಣ್ಣು ಭೇದವಿಲ್ಲದೆ ದಿನಕ್ಕೆ ₹370 ಸಮಾನ ಕೂಲಿ ನೀಡಲಾಗುತ್ತಿದೆ. ಬೇಸಿಗೆ ಕಾರಣ ವಲಸೆ ಹೋಗದೇ, ತಮ್ಮ ಊರಲ್ಲೇ ಕೆಲಸ ಪಡೆದು ಆರೋಗ್ಯಕರ ಜೀವನ ನಡೆಸುವಂತೆ ಸಲಹೆ ನೀಡಿದರು.

ಪಿಡಿಓ ಮಂಜುನಾಥ ಗಣಿ ನೇತೃತ್ವದಲ್ಲಿ ನರೇಗಾ ಐಇಸಿ ಚಟುವಟಿಕೆಗಳ ಮೂಲಕ ಬನಹಟ್ಟಿ ಗ್ರಾಮದ ಎಸ್ಸಿ–ಎಸ್ಟಿ ಕಾಲೋನಿಗಳಲ್ಲಿ ವಿಶೇಷ ಜಾಗೃತಿ ಅಭಿಯಾನ ಕೈಗೊಳ್ಳಲಾಗಿತ್ತು. ಇದರ ಪರಿಣಾಮವಾಗಿ 60ಕ್ಕೂ ಹೆಚ್ಚು ಎಸ್ಸಿ–ಎಸ್ಟಿ ಸಮುದಾಯದ ಕಾರ್ಮಿಕರು ಶುಕ್ರವಾರ ನರೇಗಾ ಕೆಲಸಕ್ಕೆ ಹಾಜರಾಗಿದ್ದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಕಾರ್ಯದರ್ಶಿ ಮಾಳಪ್ಪ ಪೂಜಾರ, ಸಿಬ್ಬಂದಿ ಶಿವನಪ್ಪ ಕಲ್ಲಾಪೂರ, ನರೇಗಾ ಸಿಬ್ಬಂದಿಗಳಾದ ಸುನೀಲ ಶಿರೋಳ, ಮಂಜುನಾಥ ನಾಡಗೌಡ ಹಾಗೂ ಕಾಯಕಬಂಧು ತಳವಾರ ಉಪಸ್ಥಿತರಿದ್ದರು.

“ಮಳೆ ಇಲ್ಲದೆ ಕೆಲಸ ಸಿಗುತ್ತಿಲ್ಲ ಎಂದು ಚಿಂತಿಸಬೇಡಿ. ಮಳೆ ಆರಂಭವಾಗುವವರೆಗೂ ನರೇಗಾ ಯೋಜನೆಯಡಿ ಕೆಲಸ ನೀಡಲು ಗ್ರಾಮ ಪಂಚಾಯತ್ ಸಿದ್ಧವಿದೆ.”

ಮಂಜುನಾಥ ಗಣಿ

ಪಿಡಿಓ, ಬನಹಟ್ಟಿ ಗ್ರಾಮ ಪಂಚಾಯತ್

ರಾಜ್ಯ ಕಾರ್ಯದರ್ಶಿಯಾಗಿ ಪ್ರಭುರಾಜಗೌಡ ನೇಮಕ

ವಿಜಯಸಾಕ್ಷಿ ಸುದ್ದಿ, ಗದಗ: ಕನ್ನಡ ಜಾಗೃತಿ ವೇದಿಕೆಯ ರಾಜ್ಯ ಕಾರ್ಯದರ್ಶಿಯಾಗಿ ಗದಗ ಜಿಲ್ಲೆಯ ಯುವ ಮುಖಂಡ ಪ್ರಭುರಾಜಗೌಡ ವಿ. ಪಾಟೀಲ ಅವರನ್ನು ನೇಮಕ ಮಾಡಲಾಗಿದೆ.

ಚಿಕ್ಕಬಳ್ಳಾಪುರ ತಾಲೂಕಿನ ನಂದಿಬೆಟ್ಟದಲ್ಲಿ ಕನ್ನಡ ಜಾಗೃತಿ ವೇದಿಕೆ ವತಿಯಿಂದ ಆಯೋಜಿಸಿದ್ದ ರಾಜ್ಯ ಹಾಗೂ ಜಿಲ್ಲಾ ಪದಾಧಿಕಾರಿಗಳ ಒಂದು ದಿನದ ಕಾರ್ಯಾಗಾರದಲ್ಲಿ ಈ ಘೋಷಣೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಕನ್ನಡ ಜಾಗೃತಿ ವೇದಿಕೆಯ ರಾಜ್ಯಾಧ್ಯಕ್ಷ ಕೆ. ಮಂಜುನಾಥ ದೇವ ಅವರು ನೇಮಕಾತಿ ಆದೇಶ ನೀಡಿ ಮಾತನಾಡಿ, “ಪ್ರಭುರಾಜಗೌಡ ಪಾಟೀಲ ಅವರು ಕಳೆದ ಎರಡು ದಶಕಗಳಿಂದ ಕನ್ನಡ ನಾಡು–ನುಡಿ, ರೈತಪರ ಹೋರಾಟ ಹಾಗೂ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಅವರ ಸೇವೆಯನ್ನು ಪರಿಗಣಿಸಿ ರಾಜ್ಯ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ” ಎಂದು ತಿಳಿಸಿದರು.

ಕಾರ್ಯಾಗಾರದಲ್ಲಿ ಕನ್ನಡ ಮುನ್ನಡೆ, ಕಾನೂನು ಅರಿವು, ಸಂಘಟನೆಯ ಉದ್ದೇಶಗಳು ಹಾಗೂ ಪದಾಧಿಕಾರಿಗಳ ಜವಾಬ್ದಾರಿಗಳ ಕುರಿತು ಚರ್ಚೆ ನಡೆಯಿತು.

ಈ ಸಂದರ್ಭದಲ್ಲಿ ರಾಜ್ಯ ಪದಾಧಿಕಾರಿಗಳು, ವಿವಿಧ ಜಿಲ್ಲೆ ಹಾಗೂ ತಾಲೂಕುಗಳ ಅಧ್ಯಕ್ಷರು, ಮಹಿಳಾ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

ರಾಜ್ಯದಲ್ಲೇ ನಂ.1 ಸಾಧನೆ ಮಾಡಿದ ಹಂಪಸಾಗರ ನಾಡಕಚೇರಿ

ವಿಜಯಸಾಕ್ಷಿ ಸುದ್ದಿ, ಹಗರಿಬೊಮ್ಮನಹಳ್ಳಿ: ತಾಲೂಕು ವ್ಯಾಪ್ತಿಯ ಹಂಪಸಾಗರ ನಾಡಕಚೇರಿಯ ಅಟಲ್ ಜಿ ಜನಸ್ನೇಹಿ ಕೇಂದ್ರವು ವಿವಿಧ ಪ್ರಮಾಣಪತ್ರಗಳ ಅರ್ಜಿಗಳನ್ನು ನಿಗದಿತ ಅವಧಿಗೂ ಮುನ್ನ ಶೇ.100 ರಷ್ಟು ವಿಲೇವಾರಿ ಮಾಡಿ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ಗಮನ ಸೆಳೆದಿದೆ.

ಈ ಸಾಧನೆ ಹಿನ್ನೆಲೆಯಲ್ಲಿ ವಿಜಯನಗರ ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಅವರು ಹಗರಿಬೊಮ್ಮನಹಳ್ಳಿ ತಹಸೀಲ್ದಾರ್ ಆರ್. ಕವಿತಾ ಅವರಿಗೆ ಅಭಿನಂದನಾ ಪತ್ರ ನೀಡಿ ಸನ್ಮಾನಿಸಿ ಶುಭ ಹಾರೈಸಿದರು.

ಅಟಲ್ ಜಿ ಜನಸ್ನೇಹಿ ಕೇಂದ್ರ ಯೋಜನೆಯಡಿ ಸಾರ್ವಜನಿಕರಿಗೆ ಪ್ರಮಾಣಪತ್ರಗಳನ್ನು ಶೀಘ್ರ ವಿತರಿಸುವಲ್ಲಿ ಹಂಪಸಾಗರ ನಾಡಕಚೇರಿ ಕಾರ್ಯಕ್ಷಮತೆ ಮೆರೆದಿದ್ದು, ಉಪ ತಹಸೀಲ್ದಾರ್ ಆಸಿಫ್ ಅಲಿ ಅವರಿಗೆ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ ಲಭಿಸಿದೆ.

354 ಅರ್ಜಿಗಳ ಶೇ.100 ವಿಲೇವಾರಿ

ನವೆಂಬರ್ 2025ರ ಅವಧಿಯಲ್ಲಿ ನಾಡಕಚೇರಿಯಲ್ಲಿ ಸ್ವೀಕರಿಸಲಾದ 354 ಅರ್ಜಿಗಳನ್ನು ನಿಗದಿತ ಅವಧಿಗೂ ಮುನ್ನವೇ ಸಂಪೂರ್ಣವಾಗಿ ವಿಲೇವಾರಿ ಮಾಡುವ ಮೂಲಕ 10 ಸಿಗ್ಮಾ ಮಟ್ಟ ಸಾಧಿಸಲಾಗಿದೆ.

16.00 ವಿಲೇವಾರಿ ಸೂಚ್ಯಂಕದ ಪ್ರಕಾರ 17 ಪಟ್ಟು ವೇಗದಲ್ಲಿ ಅರ್ಜಿಗಳನ್ನು ವಿಲೇವಾರಿ ಮಾಡಿ, 1000ಕ್ಕಿಂತ ಕಡಿಮೆ ಅರ್ಜಿಗಳನ್ನು ಸ್ವೀಕರಿಸುವ ನಾಡಕಚೇರಿ ವಿಭಾಗದಲ್ಲಿ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆಯಲಾಗಿದೆ.

ಸಿಬ್ಬಂದಿ ಕಾರ್ಯತತ್ಪರತೆಗೆ ಮೆಚ್ಚುಗೆ

ಅಟಲ್ ಜಿ ಜನಸ್ನೇಹಿ ಕೇಂದ್ರಾಲಯದ ಪರವಾಗಿ ಹಂಪಸಾಗರ ನಾಡಕಚೇರಿ ಸಿಬ್ಬಂದಿ ತಂಡಕ್ಕೆ ಅಭಿನಂದನಾ ಪತ್ರ ನೀಡಲಾಗಿದ್ದು, ಸಿಬ್ಬಂದಿಯ ಸಹಕಾರ, ಕಾರ್ಯತತ್ಪರತೆ ಹಾಗೂ ಸಾರ್ವಜನಿಕ ಸೇವೆಯ ಮೇಲಿನ ಬದ್ಧತೆಯೇ ಈ ಸಾಧನೆಗೆ ಕಾರಣ ಎಂದು ಉಲ್ಲೇಖಿಸಲಾಗಿದೆ.

ಮುಂದಿನ ದಿನಗಳಲ್ಲೂ ಇದೇ ರೀತಿಯ ಕಾರ್ಯಕ್ಷಮತೆ ಮತ್ತು ಜನಸೇವೆಯನ್ನು ಮುಂದುವರಿಸುವಂತೆ ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಡಿಜಿಟಲ್ ಸಹಿಯೊಂದಿಗೆ ನೀಡಲಾದ ಅಭಿನಂದನಾ ಪತ್ರವು ಸಿಬ್ಬಂದಿಯಲ್ಲಿ ಮತ್ತಷ್ಟು ಉತ್ಸಾಹ ತುಂಬಿದೆ.

“ಸಮಯಪಾಲನೆ, ಕಾರ್ಯತತ್ಪರತೆ ಮತ್ತು ಸಾರ್ವಜನಿಕ ಸೇವೆಯ ಬದ್ಧತೆಯಿಂದಲೇ ರಾಜ್ಯ ಮಟ್ಟದ ಸಾಧನೆ ಸಾಧ್ಯವಾಗಿದೆ.”

ಕವಿತಾ ಎಸ್. ಮನ್ನಿಕೇರಿ, ಜಿಲ್ಲಾಧಿಕಾರಿ

ಬೆಳಗಾವಿಯಲ್ಲಿ ಹಿರಿಯ ವೈದ್ಯ ಗುಂಡು ಹಾರಿಸಿಕೊಂಡು ಆತ್ಮಹತ್ಯೆ

ಬೆಳಗಾವಿ: ಬೆಳಗಾವಿಯಲ್ಲಿ ಹಿರಿಯ ವೈದ್ಯರೊಬ್ಬರು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ವೈದ್ಯಕೀಯ ವಲಯದಲ್ಲಿ ಶಾಕ್ ಉಂಟುಮಾಡಿದೆ. ಟಿಳಕವಾಡಿ ಪೊಲೀಸ್ ಠಾಣಾ ವ್ಯಾಪ್ತಿಯ ಗೋಡ್ಸೆವಾಡಿಯ ನಿವಾಸದಲ್ಲಿ ಈ ಘಟನೆ ನಡೆದಿದೆ.

79 ವರ್ಷದ ಡಾ. ದಿನೇಶ್ ಲಕ್ಷ್ಮಣ ಭಟ್ಕಳ ಆತ್ಮಹತ್ಯೆ ಮಾಡಿಕೊಂಡ ವೈದ್ಯರಾಗಿದ್ದಾರೆ. ಅವರು ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಮೂಲದವರಾಗಿದ್ದು, ದೀರ್ಘಕಾಲ ವೈದ್ಯರಾಗಿ ಸೇವೆ ಸಲ್ಲಿಸಿ ಬಳಿಕ ಬೆಳಗಾವಿಯಲ್ಲಿ ವಾಸವಾಗಿದ್ದರು.

ಶುಕ್ರವಾರ ಬೆಳಗ್ಗೆ ಮನೆಯ ಬಾಲ್ಕನಿಯಲ್ಲಿ ತಾವೇ ತಮ್ಮ ಮೇಲೆ ಗುಂಡು ಹಾರಿಸಿಕೊಂಡಿದ್ದಾರೆ ಎನ್ನಲಾಗಿದೆ. ಗುಂಡಿನ ಸದ್ದು ಕೇಳಿ ಮನೆಯವರು ಹಾಗೂ ನೆರೆಹೊರೆಯವರು ಸ್ಥಳಕ್ಕೆ ಧಾವಿಸಿದಾಗ ಅವರು ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡುಬಂದಿದೆ.

ತಕ್ಷಣ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಟಿಳಕವಾಡಿ ಠಾಣೆ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ.

ಪ್ರಾಥಮಿಕ ತನಿಖೆ ಪ್ರಕಾರ, ಡಾ. ಭಟ್ಕಳ ಅವರು ಅನಾರೋಗ್ಯ ಮತ್ತು ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಆದರೆ ಆತ್ಮಹತ್ಯೆಗೆ ನಿಖರ ಕಾರಣವೇನು ಎಂಬುದು ಪೊಲೀಸರ ತನಿಖೆಯ ಬಳಿಕ ಸ್ಪಷ್ಟವಾಗಲಿದೆ.

ಮಾನಸಿಕ ಒತ್ತಡ ಅನುಭವಿಸುತ್ತಿದ್ದರೆ ಅಥವಾ ಭಾವನಾತ್ಮಕ ಬೆಂಬಲ ಅಗತ್ಯವಿದ್ದರೆ ಸ್ನೇಹ ಫೌಂಡೇಶನ್ 04424640050 ಅಥವಾ ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್ ಸಹಾಯವಾಣಿ 9152987821 ಸಂಪರ್ಕಿಸಬಹುದು.

ಪ್ರಧಾನಿ ಮೋದಿಗೆ ಝಲ್ಮುರಿ ನೀಡಿದ್ದ ವ್ಯಾಪಾರಿಗೆ ಪಾಕ್ – ಬಾಂಗ್ಲಾದೇಶದಿಂದ ಕೊಲೆ ಬೆದರಿಕೆ ಕರೆ!

ಕೋಲ್ಕತ್ತಾ: ಚುನಾವಣಾ ಪ್ರಚಾರದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜನಪ್ರಿಯ ಬಂಗಾಳಿ ತಿನಿಸಾದ ಝಲ್ಮುರಿ ನೀಡಿ ದೇಶದ ಗಮನ ಸೆಳೆದಿದ್ದ ಪಶ್ಚಿಮ ಬಂಗಾಳದ ಜಲ್ಮುರಿ ಮಾರಾಟಗಾರ ಇದೀಗ ಬೆದರಿಕೆ ಕರೆಗಳಿಂದ ಆತಂಕಕ್ಕೀಡಾಗಿದ್ದಾನೆ.

ಜಾರ್ಗ್ರಾಮ್‌ನ ರಸ್ತೆಬದಿ ಝಲ್ಮುರಿ ಅಂಗಡಿ ನಡೆಸುತ್ತಿರುವ ಬಿಕ್ರಮ್ ಸೌ ಅವರಿಗೆ ಪಾಕಿಸ್ತಾನ ಮತ್ತು ಬಾಂಗ್ಲಾದೇಶದಿಂದ ನಿರಂತರ ಬೆದರಿಕೆ ಕರೆಗಳು ಬರುತ್ತಿವೆ ಎಂದು ಆರೋಪಿಸಲಾಗಿದೆ.

ಕಳೆದ ಕೆಲವು ದಿನಗಳಿಂದ ಪದೇ ಪದೇ ಫೋನ್ ಹಾಗೂ ವೀಡಿಯೊ ಕರೆಗಳ ಮೂಲಕ ಕೊಲೆ ಬೆದರಿಕೆ ಹಾಕಲಾಗುತ್ತಿದೆ ಎಂದು ಬಿಕ್ರಮ್ ಸೌ ತಿಳಿಸಿದ್ದಾರೆ.

ಏಪ್ರಿಲ್ 19ರಂದು ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣಾ ಪ್ರಚಾರದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಬಿಕ್ರಮ್ ಸೌ ಅವರ ಅಂಗಡಿಗೆ ಭೇಟಿ ನೀಡಿ ಝಲ್ಮುರಿ ಸವಿದಿದ್ದರು. ಈ ಘಟನೆ ಬಳಿಕ ಝಲ್ಮುರಿ ವ್ಯಾಪಾರಿ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದ್ದರು.

ಈಗ ಬೆದರಿಕೆ ಕರೆಗಳು ತಮ್ಮನ್ನು ಹಾಗೂ ಕುಟುಂಬದವರನ್ನು ತೀವ್ರ ಆತಂಕಕ್ಕೀಡು ಮಾಡಿವೆ ಎಂದು ಬಿಕ್ರಮ್ ಸೌ ಹೇಳಿದ್ದಾರೆ.

ಕೆಲವರು ಕರೆ ಮಾಡಿ ಬಾಂಬ್ ಇಟ್ಟು ಸ್ಫೋಟಿಸುವುದಾಗಿ ಬೆದರಿಸುತ್ತಿದ್ದಾರೆ. ಇನ್ನೂ ಕೆಲವರು ಅಸಭ್ಯ ಮತ್ತು ನಿಂದನೀಯ ಪದಗಳನ್ನು ಬಳಸಿ ಅವಾಚ್ಯವಾಗಿ ಮಾತನಾಡುತ್ತಿದ್ದಾರೆ” ಎಂದು ಅವರು ದೂರಿದ್ದಾರೆ. ಈ ಸಂಬಂಧ ಪೊಲೀಸರಿಗೆ ದೂರು ನೀಡಲಾಗಿದ್ದು, ಪ್ರಕರಣದ ತನಿಖೆ ನಡೆಯುತ್ತಿದೆ ಎಂದು ತಿಳಿದುಬಂದಿದೆ.

ಇನ್ನೊಂದೆಡೆ, ಪ್ರಧಾನಿ ಮೋದಿ ಭೇಟಿ ಬಳಿಕ ಬಿಕ್ರಮ್ ಸೌ ಅವರ ಅಂಗಡಿಗೆ ಗ್ರಾಹಕರ ಸಂಖ್ಯೆ ಹೆಚ್ಚಾಗಿದೆ. ದೇಶಾದ್ಯಂತ ಗಮನ ಸೆಳೆದಿರುವ ಈ ಝಲ್ಮುರಿ ಅಂಗಡಿಗೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದಾರೆ.

CET ಅಭ್ಯರ್ಥಿಗಳಿಗೆ ಮಹತ್ವದ ಸುದ್ದಿ: CBSE ಹಾಗೂ ಬೇರೆ ರಾಜ್ಯಗಳ ಅಂಕ ದಾಖಲಿಸಲು ಲಿಂಕ್ ಬಿಡುಗಡೆ

ಬೆಂಗಳೂರು: ಸಿಬಿಎಸ್‌ಇ, ಸಿಐಎಸ್‌ಸಿಇ ಮತ್ತು ಇತರೆ ರಾಜ್ಯ ಪರೀಕ್ಷಾ ಮಂಡಳಿಗಳಿಂದ 12ನೇ ತರಗತಿಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ತಮ್ಮ ಅಂಕಗಳನ್ನು ಪರಿಶೀಲಿಸಿ ದೃಢೀಕರಿಸಲು ಹಾಗೂ ಅಂಕ ಪಟ್ಟಿ ಅಪ್ ಲೋಡ್ ಮಾಡಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ವೆಬ್ ಸೈಟ್ ನಲ್ಲಿ ಲಿಂಕ್ ಬಿಡುಗಡೆ ಮಾಡಿದೆ.

ನಿಗದಿತ ಲಿಂಕ್ ಮೂಲಕ ಲಾಗಿನ್ ಆದ ತಕ್ಷಣ ಅಭ್ಯರ್ಥಿಗಳಿಗೆ ತಮ್ಮ ಅಂಕಗಳು ಪ್ರದರ್ಶನವಾಗುತ್ತದೆ. ಅವು ಸರಿ ಇದ್ದರೆ ದೃಢೀಕರಿಸಬೇಕು. ಒಂದು ವೇಳೆ ಇದುವರೆಗೂ ಅಂಕಗಳನ್ನು ನಮೂದಿಸದೇ ಇದ್ದರೆ ಅಂತಹವರು ಕೂಡ ಅಂಕಗಳನ್ನು ದಾಖಲಿಸಬಹುದು. ನಂತರ ಅದಕ್ಕೆ ಪೂರಕವಾದ ಅಂಕಪಟ್ಟಿಯನ್ನು ಅಪ್ ಲೋಡ್ ಮಾಡಬೇಕು. ಇದೆಲ್ಲ ಮಾಡಲು ಮೇ‌ 24ರವರೆಗೂ ಅವಕಾಶ ನೀಡಲಾಗಿದೆ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಅಭ್ಯರ್ಥಿಗಳು ಧೃಡೀಕರಿಸಿ ಸಲ್ಲಿಸುವ ಅಂಕಗಳನ್ನೇ ನಿಯಮಾನುಸಾರ ಮೆರಿಟ್ ನಿರ್ಧರಿಸಲು ಉಪಯೋಗಿಸ ಲಾಗುವುದು ಹಾಗೂ ಸೀಟು ಹಂಚಿಕೆಯ ನಂತರ ಆಯಾ ಕಾಲೇಜಿನಲ್ಲಿ ಪ್ರವೇಶ ಪಡೆಯುವ ಸಂದರ್ಭದಲ್ಲಿ ಅಂಕಗಳನ್ನು ಪರಿಶೀಲಿಸಲಾಗುವುದು. ಅಭ್ಯರ್ಥಿಗಳು ತಪ್ಪು ಮಾಹಿತಿ ನೀಡಿದಲ್ಲಿ ಸೀಟು ರದ್ದುಗೊಳ್ಳುತ್ತದೆ ಮತ್ತು ಅಭ್ಯರ್ಥಿತನವನ್ನು ತೆಗೆದು ಹಾಕಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.

2026 ಹಾಗೂ ಅದಕ್ಕಿಂತ ಮೊದಲಿನ ವರ್ಷಗಳಲ್ಲಿ ಉತ್ತೀರ್ಣರಾದವರು ಕೂಡ ಅಂಕಗಳನ್ನು ದಾಖಲಿಸಬಹುದು ಎಂದು ಅವರು ವಿವರಿಸಿದ್ದಾರೆ.

ರಾಜ್ಯ ಪಠ್ಯಕ್ರಮದಲ್ಲಿ ಓದಿದ ಅಭ್ಯರ್ಥಿಗಳ ಅಂಕಗಳ ವಿವರವನ್ನು ಆನ್ ಲೈನ್ ಮೂಲಕ ಪದವಿ ಪೂರ್ವ ಶಿಕ್ಷಣ ಇಲಾಖೆಯಿಂದ ಲಭ್ಯವಾಗಲಿದೆ. ಹೀಗಾಗಿ ರಾಜ್ಯ ಮಂಡಳಿಯ ಅಭ್ಯರ್ಥಿಗಳು ಅಂಕ ದಾಖಲಿಸುವ ಅಗತ್ಯ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಡಿಕೆಶಿ ಕಾಕ್ರೋಚ್ ಪಾರ್ಟಿಗೆ ಅಧ್ಯಕ್ಷರಾಗಿ 50 ಸೀಟು ಗೆದ್ದು ತೋರಿಸಲಿ: ನಿಖಿಲ್ ಕುಮಾರಸ್ವಾಮಿ ಕಿಡಿ

ಬೆಂಗಳೂರು: ನಾನು ಕನ್ನಡ ನಾಡಿನ ಹುಡುಗ, ಇಲ್ಲಿ ನಾನು ತೆರಿಗೆ ಕಟ್ತಾ ಇದ್ದೇನೆ. ನಾಡಿನ ಜನರ ಪರವಾಗಿ ಸಾಮಾನ್ಯ ಪ್ರಜೆಯಾಗಿ ಪ್ರಶ್ನೆ ಮಾಡ್ತಿದ್ದೇನೆ. ಇದು ನನ್ನ ಸ್ಟೇಟಸ್ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ಗೆ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.

ಜೆ.ಪಿ. ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಟೇಟಸ್ ಬಗ್ಗೆ ಟೀಕೆ ಮಾಡಿದ ಡಿಕೆಶಿಗೆ ನಾನು ಕಾಮನ್ ಮ್ಯಾನ್ ಆಗಿ ಬರ್ತೇನೆ. ನನಗೆ ಯಾವ ಸ್ಟೇಟಸ್ ಕೂಡ ಬೇಡ ಎಂದು ಟಾಂಗ್ ಕೊಟ್ಟರು.

“ಕಾಕ್ರೋಚ್ ಪಾರ್ಟಿಗೆ ಅಧ್ಯಕ್ಷರಾಗಿ”

ಸೋಶಿಯಲ್ ಮೀಡಿಯಾದಲ್ಲಿ ‘ಕಾಕ್ರೋಚ್ ಜನತಾ ಪಾರ್ಟಿ’ ಅಂತ ಸೆನ್ಸೇಷನ್ ಶುರುವಾಗಿದೆ. ಉಪಮುಖ್ಯಮಂತ್ರಿಗಳು ಅಲ್ಲಿಗೆ ಹೋಗಿ ಅಧ್ಯಕ್ಷರಾಗಲಿ” ಎಂದು ನಿಖಿಲ್ ವ್ಯಂಗ್ಯವಾಡಿದರು. ನಿನ್ನೆ ಪ್ರತಿಭಟನೆಯಲ್ಲಿ ಸಿಎಂ ಹಾಗೂ ಡಿಸಿಎಂ ಐ ಆಮ್ ಕಾಕ್ರೋಚ್ ಟೀ-ಶರ್ಟ್ ಬಿಡುಗಡೆ ಮಾಡಿದ್ದಾರೆ. ಒಂದು ರಾಷ್ಟ್ರೀಯ ಪಕ್ಷದವರಾಗಿ ಕಾಕ್ರೋಚ್ ಪಾರ್ಟಿ ಟೀ-ಶರ್ಟ್ ಬಿಡುಗಡೆ ಮಾಡಿದ್ದಾರೆ” ಎಂದು ಕಿಡಿಕಾರಿದರು.

“50% ಸ್ಥಳೀಯರಿಗೆ ಉದ್ಯೋಗ ಕಾನೂನು ತನ್ನಿ”

ಬಿಡದಿ ಕೈಗಾರಿಕಾ ಮಹಾ ಯೋಜನೆ ಭೂಸ್ವಾಧೀನವನ್ನು ತೀವ್ರವಾಗಿ ಖಂಡಿಸಿದ ನಿಖಿಲ್, ಈ ಯೋಜನೆ ಹೆಚ್.ಡಿ. ಕುಮಾರಸ್ವಾಮಿ ಅವರ ಕನಸಿನ ಕೂಸಾಗಿದ್ದರೂ, ‘ಕೃಷ್ಣಾ’ ಕಚೇರಿಯಲ್ಲಿ ರೈತರೊಂದಿಗೆ ಸಭೆ ನಡೆಸಿದ ಬಳಿಕ ಅವರ ಮನವಿಗೆ ಸ್ಪಂದಿಸಿ ಯೋಜನೆಯನ್ನು ಕೈಬಿಡಲಾಗಿತ್ತು ಎಂದು ನೆನಪಿಸಿದರು.

“ಆದರೆ ಈಗಿನ ಸರ್ಕಾರ ಇದನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದೆ. ‘ಅಲ್ಲಿ ರೈತರೇ ಇಲ್ಲ’ ಎಂದು ಡಿಸಿಎಂ ಹಠ ಹಿಡಿದಿದ್ದಾರೆ. ಕೃಷಿ ಜಮೀನನ್ನೇ ಏಕೆ ರೈತರಿಂದ ಬಲವಂತವಾಗಿ ಕಿತ್ತುಕೊಳ್ಳುತ್ತಿದ್ದೀರಿ? ಡಿಸಿಎಂ ಮೊದಲು ಹಳ್ಳಿಗಳಿಗೆ ಬಂದು ರೈತರ ಕ್ಷಮೆ ಕೇಳಲಿ” ಎಂದರು.

“ಅಷ್ಟೊಂದು ಮಾತಾಡುವ ಡಿಸಿಎಂ, ಈ ಯೋಜನೆಯಲ್ಲಿ ಸ್ಥಳೀಯರಿಗೆ ಕಡ್ಡಾಯವಾಗಿ ಶೇ. 50ರಷ್ಟು ಉದ್ಯೋಗ ನೀಡಲೇಬೇಕು ಎಂಬ ಕಾನೂನನ್ನು ತರಲಿ ನೋಡೋಣ, ಆಗ ನಾನು ಒಪ್ಪುತ್ತೇನೆ. ಕುಮಾರಸ್ವಾಮಿ ಅವರಿಗೆ ಚಾಲೆಂಜ್ ಮಾಡುವುದನ್ನು ಬಿಟ್ಟು ರೈತರ ಪ್ರಶ್ನೆಗಳಿಗೆ ಉತ್ತರಿಸಲಿ. ನಾನು ಯಾವುದೇ ಸ್ಟೇಟಸ್ ಇಲ್ಲದೆ ಕಾಮನ್ ಮ್ಯಾನ್ ಆಗಿ ಹಳ್ಳಿಗಳಿಗೆ ಬರಲು ಸಿದ್ಧ” ಎಂದು ಸವಾಲು ಹಾಕಿದರು.

ಬಾಲಕನಿಗೆ ಇಂಜೆಕ್ಷನ್ ಚುಚ್ಚಿ ಪರಾರಿಯಾದ ಮುಸುಕುಧಾರಿಗಳ ತಂಡ: ಪೋಷಕರಲ್ಲಿ ಆತಂಕ

0

ಧಾರವಾಡ: ಕುಂದಗೋಳ ತಾಲೂಕಿನ ತರ್ಲಘಟ್ಟ ಗ್ರಾಮದಲ್ಲಿ ನಡೆದ ಅನುಮಾನಾಸ್ಪದ ಘಟನೆಯೊಂದು ಪೋಷಕರಲ್ಲಿ ಭೀತಿ ಮೂಡಿಸಿದೆ. 10 ವರ್ಷದ ಬಾಲಕನನ್ನು ತಡೆದು ಅಪರಿಚಿತರು ಇಂಜೆಕ್ಷನ್ ಚುಚ್ಚಿ ಪರಾರಿಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ.

ಮಣಿಕಂಠ ಗಾಣಿಗೇರ ಎಂಬ ಬಾಲಕ ರಸ್ತೆ ಮೂಲಕ ಹೋಗುತ್ತಿದ್ದ ವೇಳೆ ಬೈಕ್‌ನಲ್ಲಿ ಬಂದ ಇಬ್ಬರು ಮುಸುಕುಧಾರಿಗಳು ವಿಳಾಸ ಕೇಳುವ ನೆಪದಲ್ಲಿ ಮಾತು ಆರಂಭಿಸಿದ್ದಾರೆ. ಬಳಿಕ ಏಕಾಏಕಿ ಬಾಲಕನ ಬಾಯಿಯನ್ನು ಹಿಡಿದು ಇಂಜೆಕ್ಷನ್ ಚುಚ್ಚಿ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.

ಘಟನೆ ಬಳಿಕ ಬಾಲಕ ಅಸ್ವಸ್ಥಗೊಂಡ ಹಿನ್ನೆಲೆ ಕುಟುಂಬಸ್ಥರು ತಕ್ಷಣ ಕುಂದಗೋಳ ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದಾರೆ. ವೈದ್ಯರು ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಕಳುಹಿಸಿದ್ದಾರೆ.

ಬಾಲಕನಿಗೆ ಯಾವ ಇಂಜೆಕ್ಷನ್ ನೀಡಲಾಗಿದೆ ಎಂಬುದು ಇನ್ನೂ ತಿಳಿದುಬಂದಿಲ್ಲ. ಇದರಿಂದ ಗ್ರಾಮಸ್ಥರಲ್ಲಿ ತೀವ್ರ ಆತಂಕ ಮನೆ ಮಾಡಿದ್ದು, ಮಕ್ಕಳ ಸುರಕ್ಷತೆ ಬಗ್ಗೆ ಪೋಷಕರು ಕಳವಳ ವ್ಯಕ್ತಪಡಿಸಿದ್ದಾರೆ.

ಘಟನೆ ಸಂಬಂಧ ಕುಂದಗೋಳ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದು, ಸಿಸಿಟಿವಿ ದೃಶ್ಯಾವಳಿ ಹಾಗೂ ಇತರೆ ಮಾಹಿತಿಗಳ ಆಧಾರದಲ್ಲಿ ತನಿಖೆ ಮುಂದುವರಿಸಿದ್ದಾರೆ.

error: Content is protected !!