‘ಸ್ವಾತಂತ್ರ್ಯದ ಓಟ’ ನಾಟಕವನ್ನು ನಮ್ಮ ಗಜೇಂದ್ರಗಡದಲ್ಲಿ ಪ್ರದರ್ಶಿಸಬೇಕೆಂಬುದು ಬಹಳ ದಿನಗಳ ನನ್ನ ಕನಸಾಗಿತ್ತು. ಆದರೆ ವೈಯಕ್ತಿಕ ಕೆಲಸಗಳ ಒತ್ತಡದಿಂದ ಅದು ಸಾಧ್ಯವಾಗಲಿಲ್ಲ. ಈ ನಾಟಕವನ್ನು ನೋಡುವ ಅವಕಾಶಕ್ಕಾಗಿ ಕಾಯುತ್ತಿದ್ದ ನನಗೆ, ಗದಗ ನಗರದ ರಂಗಪರಿಸರದ ಗೆಳೆಯರು, ಲಿಂಗಾಯತ ಪ್ರಗತಿಶೀಲ ಸಂಘ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ಜುಲೈ 15ರಂದು ಶ್ರೀ ತೋಂಟದಾರ್ಯ ಕಲ್ಯಾಣ ಕೇಂದ್ರದಲ್ಲಿ ನಾಟಕ ಆಯೋಜಿಸಿದ್ದರಿಂದ, ಅದನ್ನು ಕಣ್ತುಂಬಿಕೊಳ್ಳುವ ಅವಕಾಶ ದೊರೆಯಿತು.
ಶಿವಮೊಗ್ಗ ರಂಗಾಯಣದ ಈ ಪ್ರಸ್ತುತಿಯನ್ನು ನಟರಾಜ್ ಹೊನ್ನವಳ್ಳಿ ನಿರ್ದೇಶಿಸಿದ್ದು, ಸಲ್ಮಾ ದಂಡಿನ ಸಹ ನಿರ್ದೇಶಕರಾಗಿ ಕೈಜೋಡಿಸಿದ್ದಾರೆ. ಬೋಳುವಾರು ಮಹಮದ್ ಕುಂಞ ಅವರ ಮಹತ್ವದ ಕಾದಂಬರಿಯನ್ನು ಮಂಜುನಾಥ ಗೋಮರದಹಳ್ಳಿ ಪರಿಣಾಮಕಾರಿಯಾಗಿ ರಂಗರೂಪಕ್ಕೆ ತಂದಿದ್ದಾರೆ.
ಸಾವಿರಕ್ಕೂ ಹೆಚ್ಚು ಪುಟಗಳ ಕಾದಂಬರಿಯನ್ನು ಬಿಗಿಯಾದ ರಂಗಪಠ್ಯವಾಗಿ ರೂಪಿಸುವುದು ಸುಲಭದ ಕೆಲಸವಲ್ಲ. ಆದರೆ ಈ ತಂಡ ಅದನ್ನು ಯಶಸ್ವಿಯಾಗಿ ಸಾಧಿಸಿದೆ. ಕಥೆಯ ಆತ್ಮಕ್ಕೆ ಧಕ್ಕೆಯಾಗದಂತೆ, ಅದರ ತಾತ್ವಿಕತೆಯನ್ನು ಉಳಿಸಿಕೊಂಡೇ ರಂಗಭಾಷೆಗೆ ಅನುವಾದಿಸಿರುವುದು ಈ ನಾಟಕದ ದೊಡ್ಡ ಸಾಧನೆ.
ಈ ರಂಗಪ್ರಯೋಗದ ಜೀವಾಳ ಸಂಗೀತ. ಗದಗ ಜಿಲ್ಲೆಯ ಅಬ್ಬಿಗೇರಿಯ ಪ್ರತಿಭಾವಂತ ಸಂಗೀತ ನಿರ್ದೇಶಕ ರಾಘವ ಕಮ್ಮಾರ ಅವರ ಸಂಗೀತ ಸಂಯೋಜನೆ ಮತ್ತು ಗಾಯನ ಇಡೀ ನಾಟಕಕ್ಕೆ ಹೊಸ ಎತ್ತರ ನೀಡಿದೆ. ಸೂಫಿ ಸಂತರ ತತ್ತ್ವಪದಗಳು, ಕಬೀರ್ ಮತ್ತು ರವೀಂದ್ರನಾಥ ಠಾಗೋರ್ ಅವರ ಕಾವ್ಯದ ಸಾಲುಗಳು, ಬೋಡೆ ರಿಯಾಜ್ ಅವರ ಗಜಲ್ಗಳು ಕಥೆಯೊಳಗೆ ಸಹಜವಾಗಿ ಬೆರೆತು ಪ್ರೇಕ್ಷಕರನ್ನು ಮತ್ತೊಂದು ಅನುಭವಲೋಕಕ್ಕೆ ಕರೆದೊಯ್ಯುತ್ತವೆ.
ಉತ್ತರ ಕರ್ನಾಟಕದ ಸಾಂಸ್ಕೃತಿಕ ಗುರುತಾದ ಹೆಜ್ಜೆ ಮೇಳವನ್ನು ಬಳಸಿರುವ ರೀತಿ ವಿಶೇಷವಾಗಿ ಮನಸೆಳೆಯುತ್ತದೆ. ರಂಗದ ಮೇಲೆ ಹೆಜ್ಜೆ ಮೇಳ ಆರಂಭವಾದ ಕ್ಷಣವೇ ಎದ್ದು ಕುಣಿಯಬೇಕೆನಿಸುವಷ್ಟು ಜೀವಂತಿಕೆಯನ್ನು ಸಂಗೀತ ನೀಡುತ್ತದೆ.
ನಾಟಕವು ದೇಶ ವಿಭಜನೆಯ ಕಥೆಯನ್ನು ಮಾತ್ರ ಹೇಳುವುದಿಲ್ಲ. ವಿಭಜನೆಯಿಂದ ಒಡೆದ ಮಾನವ ಸಂಬಂಧಗಳು, ಧರ್ಮಾಂಧತೆಯ ನಡುವೆ ಉಳಿಯುವ ಮನುಷ್ಯತ್ವ ಮತ್ತು ಪ್ರೀತಿಯ ಹುಡುಕಾಟವನ್ನು ಅತ್ಯಂತ ಸೂಕ್ಷ್ಮವಾಗಿ ಕಟ್ಟಿಕೊಡುತ್ತದೆ. ಕರಾಚಿಯಿಂದ ಮುತ್ತುಪ್ಪಾಡಿಯವರೆಗೆ ಚಾಂದ್ ಅಲಿಯ ಪಯಣವು ಭೌಗೋಳಿಕ ಗಡಿಗಳಾಚೆಗೆ ಮನುಷ್ಯನ ಅಂತರಂಗದ ಹುಡುಕಾಟವಾಗುತ್ತದೆ.
ನಾಟಕದುದ್ದಕ್ಕೂ ಮೂವರು ಕಲಾವಿದರು ಚಾಂದ್ ಅಲಿಯ ವಿವಿಧ ಆಯಾಮಗಳನ್ನು ಪ್ರತಿನಿಧಿಸುವ ರೀತಿ ನಿರ್ದೇಶಕರ ಕಲ್ಪನಾಶಕ್ತಿಗೆ ಸಾಕ್ಷಿಯಾಗಿದೆ. ಬಿರ್ಲಾ ಹೌಸ್ ದೃಶ್ಯ ಹಾಗೂ ಗಾಂಧೀಜಿಯ ಹತ್ಯೆಯ ನಿರೂಪಣೆ ಅತ್ಯಂತ ಸಾಂಕೇತಿಕವಾಗಿ ಮೂಡಿಬಂದಿದ್ದು, ಹಿಂಸೆಯನ್ನು ತೋರಿಸದೇ ಅದರ ನೋವನ್ನು ಪ್ರೇಕ್ಷಕರ ಮನಸ್ಸಿಗೆ ತಲುಪಿಸುತ್ತದೆ.
ಸಹನಾ ಪಿಂಜಾರ ಅವರ ವೇಷಭೂಷಣ, ರಂಗಸಜ್ಜಿಕೆ, ಬೆಳಕಿನ ವಿನ್ಯಾಸ ಹಾಗೂ ಎಲ್ಲಾ ಕಲಾವಿದರ ಸಹಜ ಅಭಿನಯ ನಾಟಕವನ್ನು ಇನ್ನಷ್ಟು ಪರಿಣಾಮಕಾರಿಯನ್ನಾಗಿಸಿವೆ. ಆರಂಭದಲ್ಲಿ ನಾಟಕ ನಿಧಾನವಾಗಿ ಸಾಗಿದಂತೆ ಭಾಸವಾದರೂ, ನಂತರ ಮೂರೂವರೆ ಗಂಟೆಗಳ ಕಾಲ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಸಂಪೂರ್ಣ ಯಶಸ್ವಿಯಾಗಿದೆ.
ಈ ಲೇಖನದಲ್ಲಿ ನಾನು ನಾಟಕದ ಕಥೆಯನ್ನು ವಿಶ್ಲೇಷಿಸಿಲ್ಲ. ಒಬ್ಬ ಪ್ರೇಕ್ಷಕನಾಗಿ ನನಗಾದ ಅನುಭವವನ್ನು ಮಾತ್ರ ಹಂಚಿಕೊಂಡಿದ್ದೇನೆ. ‘ಸ್ವಾತಂತ್ರ್ಯದ ಓಟ’ ಕೇವಲ ಒಂದು ನಾಟಕವಲ್ಲ; ಅದು ಇಂದಿನ ಸಮಾಜದಲ್ಲಿ ಹೆಚ್ಚುತ್ತಿರುವ ಅಸಹನೆಗೆ ಉತ್ತರ ಹುಡುಕುವ ಮಾನವೀಯ ಚಿಂತನೆಯ ರಂಗಯಾನ. ಪ್ರತಿಯೊಬ್ಬರೂ ಒಮ್ಮೆ ನೋಡಲೇಬೇಕಾದ, ಅನುಭವಿಸಲೇಬೇಕಾದ ಅಪರೂಪದ ರಂಗಪ್ರಯೋಗ.
ಇಂತಹ ಮಹತ್ವದ ಪ್ರಯೋಗವನ್ನು ಯಶಸ್ವಿಯಾಗಿ ರಂಗಕ್ಕೇರಿಸಿದ ಶಿವಮೊಗ್ಗ ರಂಗಾಯಣ, ನಿರ್ದೇಶಕ ನಟರಾಜ್ ಹೊನ್ನವಳ್ಳಿ, ಸಹ ನಿರ್ದೇಶಕಿ ಸಲ್ಮಾ ದಂಡಿನ, ಕೃತಿಕಾರ ಬೋಳುವಾರು ಮಹಮದ್ ಕುಂಞ, ರಂಗರೂಪಾಂತರಕಾರ ಮಂಜುನಾಥ ಗೋಮರದಹಳ್ಳಿ, ಸಂಗೀತ ನಿರ್ದೇಶಕ ರಾಘವ ಕಮ್ಮಾರ ಹಾಗೂ ಇಡೀ ರಂಗತಂಡ ಅಭಿನಂದನೆಗೆ ಅರ್ಹರು.
ಈ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಿದ ಪರಮಪೂಜ್ಯ ಶ್ರೀ ಜಗದ್ಗುರು ತೋಂಟದ ಸಿದ್ಧರಾಮ ಮಹಾಸ್ವಾಮಿಗಳಿಗೆ ಕೃತಜ್ಞತೆಗಳು. ನಾಟಕ ಆಯೋಜನೆಗೆ ಶ್ರಮಿಸಿದ ಜಿ.ಬಿ. ಪಾಟೀಲ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ, ಗದಗದ ಕಲಾಪ್ರೇಮಿಗಳು ಹಾಗೂ ಎಲ್ಲ ಸಂಘಟಕರಿಗೂ ಅಭಿನಂದನೆಗಳು.
ಇಂತಹ ಗುಣಮಟ್ಟದ ನಾಟಕಗಳು ರಾಜ್ಯದ ಮೂಲೆಮೂಲೆಗೂ ತಲುಪಬೇಕು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕರ್ನಾಟಕ ನಾಟಕ ಅಕಾಡೆಮಿ ಇಂತಹ ರಂಗಪ್ರಯೋಗಗಳಿಗೆ ಇನ್ನಷ್ಟು ಪ್ರೋತ್ಸಾಹ ನೀಡಿ ರಾಜ್ಯದ ವಿವಿಧ ನಗರಗಳಲ್ಲಿ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಬೇಕು ಎಂಬುದು ನನ್ನ ಮನವಿ.

-ಆರ್.ಕೆ. ಬಾಗವಾನ, ಶಿಕ್ಷಕರು, ಗೋಗೇರಿ

