ಬಳ್ಳಾರಿ: ಹುಟ್ಟುಹಬ್ಬ ಆಚರಣೆಯ ಹೆಸರಿನಲ್ಲಿ ಪತ್ನಿಯನ್ನು ಮನೆಯಿಂದ ಕರೆದುಕೊಂಡು ಹೋಗಿ ಕೊಲೆ ಮಾಡಿದ ಅಮಾನವೀಯ ಘಟನೆ ಬಳ್ಳಾರಿಯಲ್ಲಿ ಬೆಳಕಿಗೆ ಬಂದಿದೆ. ಕೊಲೆ ನಡೆದ ಬಳಿಕ 13 ದಿನಗಳ ಕಾಲ ನಾಪತ್ತೆ ನಾಟಕವಾಡಿದ ಪತಿಯೇ ಅಂತಿಮವಾಗಿ ಪೊಲೀಸರ ವಿಚಾರಣೆ ವೇಳೆ ಅಪರಾಧ ಒಪ್ಪಿಕೊಂಡಿದ್ದಾನೆ.
ಮೃತ ಮಹಿಳೆ ಆಫ್ರೀನ್ ಬಾನು ಹಾಗೂ ಆರೋಪಿ ನೂರ್ ಅಹ್ಮದ್ ಪ್ರೀತಿಸಿ ವಿವಾಹವಾಗಿದ್ದರು. ದಾಂಪತ್ಯ ಜೀವನಕ್ಕೆ ಎರಡು ವರ್ಷವಾಗಿದ್ದು, ಎಂಟು ತಿಂಗಳ ಮಗು ಸಹ ಇದೆ. ಆದರೆ ಕಳೆದ ಕೆಲವು ತಿಂಗಳುಗಳಿಂದ ದಂಪತಿ ನಡುವೆ ವೈಮನಸ್ಸು ಹೆಚ್ಚಾಗಿತ್ತು. ಇದೇ ಕಾರಣಕ್ಕೆ ಆಫ್ರೀನ್ ತವರು ಮನೆಯಲ್ಲಿ ವಾಸವಾಗಿದ್ದರು.
ಪತ್ನಿಯ ಹುಟ್ಟುಹಬ್ಬದ ದಿನ ಮನೆಗೆ ಬಂದ ನೂರ್ ಅಹ್ಮದ್, ಕುಟುಂಬದವರ ಸಮ್ಮುಖದಲ್ಲೇ ಕೇಕ್ ಕಟ್ ಮಾಡಿ ಸಂಭ್ರಮಿಸಿದ್ದ. ಬಳಿಕ ಪಾರ್ಟಿ ನೆಪದಲ್ಲಿ ಪತ್ನಿಯನ್ನು ಹೊರಗೆ ಕರೆದುಕೊಂಡು ಹೋಗಿದ್ದಾನೆ.
ತನಿಖೆ ಪ್ರಕಾರ, ಪೂರ್ವಯೋಜಿತವಾಗಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದ ಆರೋಪಿ, ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದಾನೆ. ನಂತರ ಮೃತದೇಹವನ್ನು ಬೈಕ್ನಲ್ಲಿ ಸಾಗಿಸಿ ಕುಡತಿನಿ ಸಮೀಪದ ಪ್ರದೇಶದಲ್ಲಿ ಎಸೆದು ಪರಾರಿಯಾಗಿದ್ದಾನೆ.
ರಾತ್ರಿ ಮನೆಗೆ ಹಿಂದಿರುಗಿದ ಆರೋಪಿ, ಪತ್ನಿ ಕಾಣೆಯಾಗಿದ್ದಾಳೆ ಎಂದು ಹೇಳಿ ಕುಟುಂಬಸ್ಥರ ಜೊತೆ ಹುಡುಕಾಟ ನಡೆಸುವ ನಾಟಕ ಮಾಡಿದ್ದಾನೆ. ಆದರೆ ಕುಟುಂಬದವರ ಅನುಮಾನ ಹೆಚ್ಚಾದ ಹಿನ್ನೆಲೆಯಲ್ಲಿ ಪೊಲೀಸರಿಗೆ ದೂರು ನೀಡಲಾಗಿತ್ತು.
ಪೊಲೀಸರು ತಾಂತ್ರಿಕ ಮಾಹಿತಿ ಹಾಗೂ ವಿಚಾರಣೆಯ ಆಧಾರದ ಮೇಲೆ ನೂರ್ ಅಹ್ಮದ್ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಕೊಲೆ ಸತ್ಯ ಹೊರಬಿದ್ದಿದೆ. ಆರೋಪಿಯ ಮಾಹಿತಿ ಮೇರೆಗೆ 13 ದಿನಗಳ ಬಳಿಕ ಮೃತದೇಹ ಪತ್ತೆಯಾಗಿದ್ದು, ಶವ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿತ್ತು.
ಪ್ರಕರಣ ದಾಖಲಿಸಿಕೊಂಡಿರುವ ಕೌಲ್ ಬಜಾರ್ ಪೊಲೀಸರು ಆರೋಪಿ ವಿರುದ್ಧ ಕೊಲೆ ಆರೋಪದಡಿ ಕಾನೂನು ಕ್ರಮ ಜರುಗಿಸಿ ಜೈಲಿಗೆ ಕಳುಹಿಸಿದ್ದಾರೆ.

