Home Blog

ಪದೇ ಪದೇ ಹೊಟ್ಟೆ ನೋವು, ಗ್ಯಾಸ್ಟ್ರಿಕ್ ಸಮಸ್ಯೆ ಕಾಣಿಸುತ್ತಿದೆಯೇ? ನಿರ್ಲಕ್ಷ್ಯ ಬೇಡ!

ಇತ್ತೀಚಿನ ದಿನಗಳಲ್ಲಿ ಅನೇಕರು ಪದೇಪದೇ ಹೊಟ್ಟೆ ನೋವು, ಅಜೀರ್ಣ ಹಾಗೂ ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹಲವರು ಇದನ್ನು ಸಾಮಾನ್ಯ ಸಮಸ್ಯೆ ಎಂದು ಭಾವಿಸಿ ನಿರ್ಲಕ್ಷ್ಯ ಮಾಡುತ್ತಾರೆ. ಆದರೆ ಆರೋಗ್ಯ ತಜ್ಞರ ಪ್ರಕಾರ, ಈ ರೀತಿಯ ಲಕ್ಷಣಗಳು ದೀರ್ಘಕಾಲ ಮುಂದುವರಿದರೆ ಅದು ಗಂಭೀರ ಆರೋಗ್ಯ ಸಮಸ್ಯೆಯ ಸೂಚನೆಯಾಗಿರಬಹುದು.

ಲೇಡಿ ಹಾರ್ಡಿಂಗ್ ಮೆಡಿಕಲ್ ಕಾಲೇಜು ಮತ್ತು ಅಸೋಸಿಯೇಟೆಡ್ ಆಸ್ಪತ್ರೆಯ ಮೆಡಿಸಿನ್ ವಿಭಾಗದ ತಜ್ಞ ಡಾ. ಎಲ್.ಎಚ್. ಘೋಟೇಕರ್ ಅವರ ಪ್ರಕಾರ, ಇತ್ತೀಚಿನ ದಿನಗಳಲ್ಲಿ ಅಸ್ವಸ್ಥ ಆಹಾರ ಪದ್ಧತಿಯೇ ಹೊಟ್ಟೆ ಸಮಸ್ಯೆಗಳು ಹೆಚ್ಚಾಗಲು ಪ್ರಮುಖ ಕಾರಣವಾಗಿದೆ.

ಯಾವ ಸಮಸ್ಯೆಗಳ ಸೂಚನೆಯಾಗಿರಬಹುದು?

ಮೈದಾ ಪದಾರ್ಥಗಳು, ಫಾಸ್ಟ್ ಫುಡ್ ಹಾಗೂ ಹೆಚ್ಚು ಎಣ್ಣೆಯ ಆಹಾರಗಳನ್ನು ನಿರಂತರವಾಗಿ ಸೇವಿಸುವುದರಿಂದ ಜೀರ್ಣಕ್ರಿಯೆ ಮೇಲೆ ಪರಿಣಾಮ ಬೀಳುತ್ತದೆ. ಇಂತಹ ಆಹಾರಗಳು ಸರಿಯಾಗಿ ಜೀರ್ಣವಾಗದೆ ಹೊಟ್ಟೆಯಲ್ಲಿ ಗ್ಯಾಸ್ಟ್ರಿಕ್, ಅಜೀರ್ಣ ಮತ್ತು ಉಬ್ಬರ ಸಮಸ್ಯೆ ಉಂಟುಮಾಡಬಹುದು.

ಕೆಲವರಿಗೆ ಹಾಲು, ಗ್ಲೂಟನ್ ಅಥವಾ ಕೆಲವು ಆಹಾರ ಪದಾರ್ಥಗಳು ಸರಿಯಾಗಿ ಜೀರ್ಣವಾಗದೆ ಹೊಟ್ಟೆ ಉಬ್ಬರ ಮತ್ತು ಸಣ್ಣ ಮಟ್ಟದ ನೋವು ಕಾಣಿಸಬಹುದು. ದೀರ್ಘಕಾಲ ಗ್ಯಾಸ್ಟ್ರಿಕ್, ಮಲಬದ್ಧತೆ ಅಥವಾ ಅಜೀರ್ಣ ಸಮಸ್ಯೆ ಮುಂದುವರಿದರೆ ಅದು ಐಬಿಎಸ್ (ಇರಿಟೇಬಲ್ ಬವಲ್ ಸಿಂಡ್ರೋಮ್) ಅಥವಾ ಅಂತರಾಯದ ಉರಿಯೂತದ ಲಕ್ಷಣವಾಗಿರಬಹುದು ಎಂದು ವೈದ್ಯರು ತಿಳಿಸಿದ್ದಾರೆ.

ಕೆಲ ಸಂದರ್ಭಗಳಲ್ಲಿ ಹೊಟ್ಟೆ ಸಮಸ್ಯೆಗಳು ಅಲ್ಸರ್ ಅಥವಾ ಕ್ಯಾನ್ಸರ್‌ನ ಆರಂಭಿಕ ಸೂಚನೆಯಾಗಿಯೂ ಕಾಣಿಸಬಹುದು. ಹೀಗಾಗಿ ಈ ಸಮಸ್ಯೆಗಳನ್ನು ನಿರ್ಲಕ್ಷ್ಯ ಮಾಡಬಾರದು ಎಂದು ತಜ್ಞರು ಎಚ್ಚರಿಸಿದ್ದಾರೆ.

ಈ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ

  • ಕಾರಣವಿಲ್ಲದೆ ತೂಕ ಇಳಿಕೆಯಾಗುವುದು
  • ಪದೇಪದೇ ವಾಂತಿ ಕಾಣಿಸಿಕೊಳ್ಳುವುದು
  • ಮಲದಲ್ಲಿ ರಕ್ತ ಕಾಣಿಸಿಕೊಳ್ಳುವುದು
  • ದೌರ್ಬಲ್ಯ ಮತ್ತು ಬೇಗ ದಣಿವಾಗುವುದು
  • ನಿರಂತರ ಹೊಟ್ಟೆನೋವು

ಈ ರೀತಿಯ ಲಕ್ಷಣಗಳು ಕಂಡುಬಂದರೆ ತಕ್ಷಣ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಅಗತ್ಯ ಎಂದು ವೈದ್ಯರು ಸಲಹೆ ನೀಡಿದ್ದಾರೆ.

ಹೊಟ್ಟೆಯ ಆರೋಗ್ಯ ಕಾಪಾಡಲು ಏನು ಮಾಡಬೇಕು?

ಫಾಸ್ಟ್ ಫುಡ್ ಮತ್ತು ಹೆಚ್ಚು ಎಣ್ಣೆಯಲ್ಲಿ ಕರಿದ ಆಹಾರಗಳ ಸೇವನೆಯನ್ನು ಕಡಿಮೆ ಮಾಡಬೇಕು. ದಿನಕ್ಕೆ ಕನಿಷ್ಠ ಏಳು ಗ್ಲಾಸ್ ನೀರು ಕುಡಿಯುವುದು ಉತ್ತಮ. ಹಸಿರು ತರಕಾರಿಗಳು, ಹಣ್ಣುಗಳು ಹಾಗೂ ಫೈಬರ್‌ಯುಕ್ತ ಆಹಾರ ಸೇವಿಸುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ.

ಇದರ ಜೊತೆಗೆ ಪ್ರತಿದಿನ ನಿಯಮಿತ ಸಮಯಕ್ಕೆ ಊಟ ಮಾಡುವುದು, ಒತ್ತಡ ಕಡಿಮೆ ಮಾಡಿಕೊಳ್ಳುವುದು ಹಾಗೂ ಆರೋಗ್ಯಕರ ಜೀವನಶೈಲಿಯನ್ನು ಪಾಲಿಸುವುದರಿಂದ ಹೊಟ್ಟೆಗೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ತಪ್ಪಿಸಬಹುದು ಎಂದು ತಜ್ಞರು ತಿಳಿಸಿದ್ದಾರೆ.

ದೇಶದ ಆರ್ಥಿಕ ಬಿಕ್ಕಟ್ಟು ನಿವಾರಣೆಗಾಗಿ ತಿಮ್ಮಪ್ಪನಿಗೆ ಪ್ರಾರ್ಥನೆ: ಡಿ.ಕೆ. ಶಿವಕುಮಾರ್

ತಿರುಮಲ: ದೇಶವು ಆರ್ಥಿಕ ಬಿಕ್ಕಟ್ಟಿನಿಂದ ಬಳಲಬಾರದು. ಎಲ್ಲರಿಗೂ ಶಕ್ತಿ, ಉತ್ತಮ ಆರೋಗ್ಯ ಲಭಿಸಲಿ. ರಾಜ್ಯದಲ್ಲಿ ಉತ್ತಮ ಮಳೆ ಬರಲಿ ಎಂದು ಭಗವಂತ ವೆಂಕಟೇಶ್ವರನ ಬಳಿ ಪ್ರಾರ್ಥಿಸಿದ್ದೇನೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಹೇಳಿದರು.

ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿರುಮಲದಲ್ಲಿ ಮಂಗಳವಾರ ಶ್ರೀ ವೆಂಕಟೇಶ್ವರ ಸ್ವಾಮೀಯ ದರ್ಶನ ಪಡೆದು, ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.

“ಇಡೀ ದೇಶ ಶಾಂತಿಯಿಂದ ಕೂಡಿರಲಿ. ಸವಾಲುಗಳನ್ನು ಸಮರ್ಥನೆವಾಗಿ ಎದುರಿಸಲಿ ಎಂದು ಕೋರಿಕೊಂಡಿದ್ದೇನೆ. ಈ ಮಹತ್ವದ ದಿನದಂದು ಇಲ್ಲಿಗೆ ಬಂದಿರುವುದಕ್ಕೆ ನನಗೆ ತುಂಬಾ ಸಂತೋಷವಾಗಿದೆ. ಬಹಳ ಸಮಯದ ನಂತರ ಅಂದರೆ ಆರೇಳು ವರ್ಷಗಳ ನಂತರ ನಾನು ಇಲ್ಲಿಗೆ ಭೇಟಿ ನೀಡಿದ್ದೇನೆ.

ತಿರುಮಲ ತಿರುಪತಿ ದೇವಸ್ಥಾನ ಟ್ರಸ್ಟ್ ಬಹಳಷ್ಟು ಬದಲಾವಣೆಗಳನ್ನು, ಬಹಳಷ್ಟು ಅಭಿವೃದ್ಧಿಗಳನ್ನು ಮಾಡಿದೆ. ಶಿಸ್ತು, ಉತ್ತಮ ಶುಚಿತ್ವ ಕಾಪಾಡಿದೆ. ಉತ್ತಮ ಆಡಳಿತ ನಡೆಸುತ್ತಿದೆ. ಸರಕಾರ ಉತ್ತಮ ಕೆಲಸ ಮಾಡಿದೆ. ನಾನು ಎಲ್ಲರಿಗೂ ಧನ್ಯವಾದ ಹೇಳುತ್ತೇನೆ” ಎಂದರು.

“ಶ್ರೀ ವೆಂಕಟೇಶ್ವರನ ದರ್ಶನದಿಂದ ಸಂತಸವಾಗಿದೆ. ಟಿಟಿಡಿಯ ಅಧ್ಯಕ್ಷರು ಕೂಡ ತಮ್ಮ ತಂಡದೊಂದಿಗೆ ಉತ್ತಮ ಕೆಲಸ ಮಾಡುತ್ತಿದ್ದಾರೆ. ಇಲ್ಲಿನ ಕಂದಾಯ ಸಚಿವರನ್ನು ಭೇಟಿ ಮಾಡಿದೆ. ಅವರೂ ಇಲ್ಲಿ ಅತ್ಯುತ್ತಮ ಕೆಲಸ ಮಾಡುತ್ತಿದ್ದಾರೆ. ಆದ್ದರಿಂದ ನಾನು ಅವರೆಲ್ಲರಿಗೂ ಶುಭ ಹಾರೈಸುತ್ತೇನೆ” ಎಂದರು.

ಭಾರತದಲ್ಲಿ ಚಿನ್ನದ ಬೆಲೆ ಮತ್ತೆ ಏರಿಕೆ! ಬೆಂಗಳೂರಿನಲ್ಲಿ ಎಷ್ಟು? ಇಲ್ಲಿದೆ ಡೀಟೇಲ್ಸ್!

ಚಿನ್ನದ ದರದಲ್ಲಿ ಮತ್ತೆ ಏರಿಕೆ ಕಂಡುಬಂದಿದೆ. ಸತತ ಇಳಿಕೆಯ ಬಳಿಕ ಮಂಗಳವಾರ ಗ್ರಾಮ್‌ಗೆ 75 ರೂ. ಹೆಚ್ಚಳವಾಗಿದ್ದು, ಕಳೆದ ಹತ್ತು ದಿನಗಳಲ್ಲಿ ಒಟ್ಟಾರೆ ಸುಮಾರು 430 ರೂ. ಏರಿಕೆಯಾಗಿದೆ ಎಂದು ಮಾರುಕಟ್ಟೆ ವರದಿಗಳು ತಿಳಿಸಿವೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯ ಪ್ರಭಾವದಿಂದ ಭಾರತದಲ್ಲಿಯೂ ಚಿನ್ನದ ಬೆಲೆಯಲ್ಲಿ ಚಲನವಲನ ಮುಂದುವರಿದಿದೆ. ಇತ್ತ ಬೆಳ್ಳಿ ದರದಲ್ಲಿ ಸ್ವಲ್ಪ ಇಳಿಕೆ ಕಂಡುಬಂದಿದ್ದು, ನಿನ್ನೆ ಏರಿಕೆಯಾದ ಬಳಿಕ ಇವತ್ತು 100 ಗ್ರಾಮ್‌ಗೆ 5 ರೂ. ಕುಸಿತವಾಗಿದೆ.

ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,43,950 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,57,040 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 28,500 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,43,950 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 28,500 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 30,000 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ:

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,704 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,395 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 11,778 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 285 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ:

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,704 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,395 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 285 ರೂ.

ಮಂಗಳೂರಿನ ಬಾವಿಗಳಲ್ಲಿ ಉಕ್ಕಿ ಬಂದ ಡೀಸೆಲ್: ಕುಡಿಯಲು ನೀರಿಲ್ಲದೆ ಕಾವೂರು ನಿವಾಸಿಗಳು ಕಂಗಾಲು!

0

ಮಂಗಳೂರು: ಕಾವೂರು ಪ್ರದೇಶದಲ್ಲಿ ನಡೆದಿರುವ ವಿಚಿತ್ರ ಘಟನೆ ಕರಾವಳಿ ಜನರನ್ನು ಬೆಚ್ಚಿಬೀಳಿಸಿದೆ. ಮೂರು ಮನೆಗಳ ಬಾವಿಗಳಲ್ಲಿ ಡೀಸೆಲ್ ಮಿಶ್ರಿತ ನೀರು ಕಾಣಿಸಿಕೊಂಡಿದ್ದು, ಲ್ಯಾಬ್ ಪರೀಕ್ಷೆಯಲ್ಲಿ ನೀರಿನಲ್ಲಿ ಶೇ.28 ರಷ್ಟು ಡೀಸೆಲ್ ಅಂಶ ಇರುವುದು ದೃಢಪಟ್ಟಿದೆ. ಬಾವಿಯಿಂದ ತೆಗೆದ ನೀರಿಗೆ ಕಾಗದ ಮುಳುಗಿಸಿ ಬೆಂಕಿ ಹಚ್ಚಿದರೆ ಅದು ಹೊತ್ತಿ ಉರಿಯುತ್ತಿರುವುದು ಸ್ಥಳೀಯರಲ್ಲಿ ಭಾರೀ ಆತಂಕ ಮೂಡಿಸಿದೆ.

ಸ್ಥಳೀಯ ನಿವಾಸಿಗಳ ಪ್ರಕಾರ, ಕಳೆದ ಕೆಲವು ದಿನಗಳಿಂದ ಬಾವಿಯ ನೀರಿನಲ್ಲಿ ತೀವ್ರ ಡೀಸೆಲ್ ವಾಸನೆ ಬರುತ್ತಿತ್ತು. ನಂತರ ಪರಿಶೀಲನೆ ನಡೆಸಿದಾಗ ನೀರಿನ ಮೇಲ್ಮೈಯಲ್ಲಿ ದಪ್ಪ ಎಣ್ಣೆ ಪದರ ತೇಲುತ್ತಿರುವುದು ಕಂಡುಬಂದಿದೆ. ಮೋಟಾರ್ ಮೂಲಕ ನೀರನ್ನು ಸಂಪೂರ್ಣ ಖಾಲಿ ಮಾಡಿದರೂ, ಮತ್ತೆ ಡೀಸೆಲ್ ಮಿಶ್ರಿತ ನೀರು ಜಿನುಗುತ್ತಿದೆ.

ಸಂತ್ರಸ್ತ ಸದಾಶಿವ ಮಾತನಾಡಿ, “ನಮಗೆ ಈಗ ಬಾವಿ ನೀರು ಸಂಪೂರ್ಣ ಅಯೋಗ್ಯವಾಗಿದೆ. ಕುಡಿಯುವುದಕ್ಕೆ ಮಾತ್ರವಲ್ಲ, ಪಾತ್ರೆ ತೊಳೆಯಲು ಸಹ ಬಳಸಲು ಸಾಧ್ಯವಿಲ್ಲ. ಟ್ಯಾಂಕರ್ ನೀರು ತರಿಸಿಕೊಂಡೇ ಬದುಕುವ ಪರಿಸ್ಥಿತಿ ಬಂದಿದೆ” ಎಂದು ಹೇಳಿದ್ದಾರೆ.

ಈ ಪ್ರದೇಶದ ಪಕ್ಕದಲ್ಲೇ ಇರುವ ಪೆಟ್ರೋಲ್ ಬಂಕ್‌ನ ಅಂಡರ್‌ಗ್ರೌಂಡ್ ಟ್ಯಾಂಕ್‌ನಿಂದ ಡೀಸೆಲ್ ಸೋರಿಕೆಯಾಗಿರಬಹುದು ಎಂದು ಸ್ಥಳೀಯರು ಆರೋಪಿಸಿದ್ದಾರೆ. ಆದರೆ ಬಂಕ್ ಮಾಲೀಕರು ಇದನ್ನು ತಳ್ಳಿಹಾಕಿದ್ದು, “ಸ್ಟಾಕ್‌ನಲ್ಲಿ ವ್ಯತ್ಯಾಸ ಇಲ್ಲ. ನಮ್ಮಿಂದ ಸೋರಿಕೆ ಆಗಿಲ್ಲ” ಎಂದು ತಿಳಿಸಿದ್ದಾರೆ.

ಆರೋಗ್ಯ ಇಲಾಖೆ ಅಧಿಕಾರಿಗಳು ಬಾವಿ ನೀರನ್ನು ಪರೀಕ್ಷೆಗೆ ಕೊಂಡೊಯ್ದು, ನೀರು ಕುಡಿಯಲು ಯೋಗ್ಯವಲ್ಲ ಎಂದು ವರದಿ ನೀಡಿದ್ದಾರೆ. ಆದರೆ ಇದುವರೆಗೆ ಪಾಲಿಕೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಶಾಶ್ವತ ಪರಿಹಾರ ಕಲ್ಪಿಸಿಲ್ಲ ಎಂಬ ಆರೋಪ ಕೇಳಿಬಂದಿದೆ.

ಅಂತರ್ಜಲ ಸಂಪೂರ್ಣ ಕಲುಷಿತಗೊಳ್ಳುವ ಅಪಾಯ ಎದುರಾಗಿರುವ ಹಿನ್ನೆಲೆಯಲ್ಲಿ ತಕ್ಷಣ ಸಮಗ್ರ ತನಿಖೆ ನಡೆಸಿ, ಸೋರಿಕೆಯ ಮೂಲ ಪತ್ತೆಹಚ್ಚಬೇಕು ಎಂದು ಸಾರ್ವಜನಿಕರು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.

“‘ಸರ್ಜರಿ ಮಾಡಿಸಿಕೊಂಡಳು’ ಎಂದ ಟ್ರೋಲ್ಸ್‌ಗೆ ಕೀರ್ತಿ ಸುರೇಶ್ ತಿರುಗೇಟು: ‘ನನ್ನ ದೇಹ, ನನ್ನ ಶ್ರಮʼ ಎಂದ ನಟಿ

ಚೆನ್ನೈ: ನಟಿಯರ ದೇಹದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುವ ಬಾಡಿ ಶೇಮಿಂಗ್ ಮತ್ತು ವದಂತಿಗಳ ವಿರುದ್ಧ ನಟಿ ಕೀರ್ತಿ ಸುರೇಶ್ ನೇರವಾಗಿ ಧ್ವನಿ ಎತ್ತಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಸುದೀರ್ಘ ಪೋಸ್ಟ್ ಹಂಚಿಕೊಂಡಿರುವ ಅವರು, ತಾವು ಅನುಭವಿಸಿದ ಮಾನಸಿಕ ಒತ್ತಡ, ದೈಹಿಕ ಹಿನ್ನಡೆ ಮತ್ತು ಪ್ಲಾಸ್ಟಿಕ್ ಸರ್ಜರಿ ಆರೋಪಗಳ ಬಗ್ಗೆ ಮೊದಲ ಬಾರಿಗೆ ಮುಕ್ತವಾಗಿ ಮಾತನಾಡಿದ್ದಾರೆ.

‘ಮಹಾನಟಿ’ ಸಿನಿಮಾ ಬಳಿಕ ಫಿಟ್ ಆಗಬೇಕೆಂಬ ಉದ್ದೇಶದಿಂದ ಜಿಮ್ ಆರಂಭಿಸಿದ್ದ ಕೀರ್ತಿ, ಕೇವಲ 9 ತಿಂಗಳಲ್ಲಿ 10 ಕೆಜಿ ತೂಕ ಇಳಿಸಿಕೊಂಡಿದ್ದರು. ಆದರೆ ಅವರ ಈ ಪರಿವರ್ತನೆಗೆ ಮೆಚ್ಚುಗೆ ಸಿಗುವ ಬದಲು ಟೀಕೆ ಮತ್ತು ಗಾಸಿಪ್‌ಗಳೇ ಹೆಚ್ಚಾದವು.

“ನಾನು ಸರ್ಜರಿ ಮಾಡಿಸಿಕೊಂಡಿದ್ದೇನೆ ಎಂದು ಕೆಲವರು ಹರಿಬಿಟ್ಟರು. ಆದರೆ ನಾನು ನನ್ನ ಮುಖ ಸೇರಿದಂತೆ ಎಲ್ಲವನ್ನೂ ನೈಸರ್ಗಿಕವಾಗಿಯೇ ಉಳಿಸಿಕೊಂಡಿದ್ದೇನೆ. ನನ್ನ ಕಠಿಣ ಪರಿಶ್ರಮವನ್ನು ಜನರು ಸರ್ಜರಿ ಎಂದು ತಳ್ಳಿಹಾಕಿದ್ದು ನೋವಾಯಿತು” ಎಂದು ಕೀರ್ತಿ ಹೇಳಿದ್ದಾರೆ.

ಫಿಟ್‌ನೆಸ್ ತಮ್ಮ ಜೀವನದ ಅತಿ ದೊಡ್ಡ ಗುರು ಎಂದು ಬಣ್ಣಿಸಿರುವ ಅವರು, ಯೋಗಾಭ್ಯಾಸದಿಂದ ಮಾನಸಿಕ ಶಾಂತಿ ಮತ್ತು ಆತ್ಮವಿಶ್ವಾಸ ದೊರಕಿತು ಎಂದಿದ್ದಾರೆ. ಜೊತೆಗೆ, ಸಮಾಜದ ದ್ವಂದ್ವ ಮನೋಭಾವವನ್ನೂ ಪ್ರಶ್ನಿಸಿದ್ದಾರೆ.

“ದಪ್ಪ ಇದ್ದರೆ ಸ್ಲಿಮ್ ಆಗಿ ಎನ್ನುತ್ತಾರೆ. ಸ್ಲಿಮ್ ಆದರೆ ದಪ್ಪವಾಗು ಎನ್ನುತ್ತಾರೆ. ಜನರು ನಿಜವಾಗಿ ಏನು ಬಯಸುತ್ತಾರೆ ಎಂಬುದೇ ಅರ್ಥವಾಗುವುದಿಲ್ಲ” ಎಂದು ಅವರು ಹೇಳಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಿಂದ ದೂರವಿದ್ದ ಕಾರಣಕ್ಕೂ ಕೀರ್ತಿ ಸ್ಪಷ್ಟನೆ ನೀಡಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ ದೈಹಿಕ ಹಾಗೂ ಮಾನಸಿಕವಾಗಿ ತೀವ್ರ ಹಿನ್ನಡೆ ಅನುಭವಿಸಿದ್ದಾಗಿ ಹೇಳಿರುವ ಅವರು, “ಬಿದ್ದರೆ ಸ್ವಲ್ಪ ವಿಶ್ರಾಂತಿ ಪಡೆಯುತ್ತೇನೆ. ಆದರೆ ಎಂದಿಗೂ ಸೋಲೊಪ್ಪಿಕೊಳ್ಳುವುದಿಲ್ಲ” ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಪೆಟ್ರೋಲ್ ದರ ಏರಿಕೆ ಎಫೆಕ್ಟ್‌: ಬೆಂಗಳೂರಿನಲ್ಲಿ ಇವಿ ಬೈಕ್‌ಗಳಿಗೆ ಭಾರೀ ಡಿಮ್ಯಾಂಡ್‌!

ಬೆಂಗಳೂರು: ದೇಶದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ದರ ನಿರಂತರ ಏರಿಕೆಯಾಗುತ್ತಿರುವ ಬೆನ್ನಲ್ಲೇ ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ವಾಹನಗಳ ಬೇಡಿಕೆ ಏರಿಕೆಯಾಗುತ್ತಿದೆ.

ಪಶ್ಚಿಮ ಏಷ್ಯಾದಲ್ಲಿನ ಸಮರ ಪರಿಸ್ಥಿತಿ ಮತ್ತು ಇಂಧನ ಬಿಕ್ಕಟ್ಟಿನ ಪರಿಣಾಮವಾಗಿ ಇಂಧನ ದರಗಳು ಹೆಚ್ಚಳ ಕಂಡಿದ್ದು, ವಾಹನ ಸವಾರರ ಆರ್ಥಿಕ ಹೊರೆ ಮತ್ತಷ್ಟು ಹೆಚ್ಚಾಗಿದೆ.

ಇತ್ತೀಚೆಗೆ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಪ್ರತಿ ಲೀಟರ್‌ಗೆ 3 ರೂಪಾಯಿ ಹೆಚ್ಚಿಸಲಾಗಿತ್ತು. ಇದೀಗ ಮತ್ತೆ 90 ಪೈಸೆ ಏರಿಕೆಯಾದ ಹಿನ್ನೆಲೆ ಜನರು ಪರ್ಯಾಯ ವ್ಯವಸ್ಥೆಗಳತ್ತ ಮುಖ ಮಾಡುತ್ತಿದ್ದಾರೆ.

ಈ ನಡುವೆ ಬೆಂಗಳೂರಿನ ರಾಜಾಜಿನಗರ ಸೇರಿದಂತೆ ಹಲವು ಪ್ರದೇಶಗಳ ಇವಿ ಬೈಕ್ ಶೋರೂಂಗಳಲ್ಲಿ ಜನರ ಸಂಖ್ಯೆ ಹೆಚ್ಚಾಗಿದೆ. ಗ್ರಾಹಕರು ಎಲೆಕ್ಟ್ರಿಕ್ ಬೈಕ್‌ಗಳ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿದ್ದು, ಹಲವರು ನೇರವಾಗಿ ಬುಕ್ಕಿಂಗ್ ಕೂಡ ಮಾಡುತ್ತಿದ್ದಾರೆ.

ಪರಿಸರ ಸ್ನೇಹಿ ತಂತ್ರಜ್ಞಾನ, ಕಡಿಮೆ ನಿರ್ವಹಣಾ ವೆಚ್ಚ ಹಾಗೂ ಇಂಧನ ಖರ್ಚು ಉಳಿಯುವ ಕಾರಣಕ್ಕೆ ಜನರು ಎಲೆಕ್ಟ್ರಿಕ್ ವಾಹನಗಳತ್ತ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.

ಕರ್ನಾಟಕ ಮೂಲದ ಹಲವು ಸ್ಟಾರ್ಟ್‌ಅಪ್ ಹಾಗೂ ಉದ್ಯಮಿಗಳು ಹೊಸ ಮಾದರಿಯ ಇವಿ ಬೈಕ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿದ್ದು, ಕಡಿಮೆ ಬಜೆಟ್‌ನಲ್ಲಿ ಆಧುನಿಕ ಫೀಚರ್ಸ್‌ಗಳೊಂದಿಗೆ ವಾಹನಗಳನ್ನು ಬಿಡುಗಡೆ ಮಾಡುತ್ತಿದ್ದಾರೆ.

ಪೆಟ್ರೋಲ್ ದರ ಏರಿಕೆಯು ಮುಂದುವರಿದರೆ ಮುಂದಿನ ದಿನಗಳಲ್ಲಿ ಎಲೆಕ್ಟ್ರಿಕ್ ವಾಹನಗಳ ಮಾರಾಟ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ವಾಹನ ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಡೆಡ್‌ಲೈನ್ ಅಂತ್ಯ: ಇಂದೇ ಸಾರಿಗೆ ಮುಷ್ಕರದ ಭವಿಷ್ಯ ನಿರ್ಧಾರ, ಸರ್ಕಾರ ಒಪ್ಪುತ್ತಾ?

ಬೆಂಗಳೂರು: ರಾಜ್ಯ ಸಾರಿಗೆ ನೌಕರರು ಘೋಷಿಸಿರುವ ಮುಷ್ಕರದ ಡೆಡ್‌ಲೈನ್ ಇಂದು ಅಂತ್ಯಗೊಳ್ಳಲಿದ್ದು, ಸರ್ಕಾರ ಮತ್ತು ನೌಕರರ ನಡುವಿನ ಸಂಘರ್ಷ ತೀವ್ರ ಹಂತ ತಲುಪಿದೆ.

ಮೇ 18ರಂದು ಕಾರ್ಮಿಕ ಇಲಾಖೆಯ ಜೊತೆ ನಡೆದ ಸಂಧಾನ ಸಭೆ ವಿಫಲವಾದ ಹಿನ್ನೆಲೆಯಲ್ಲಿ, ಇಂದು ಸರ್ಕಾರ ಮತ್ತೊಮ್ಮೆ ಮಾತುಕತೆ ನಡೆಸದಿದ್ದರೆ ರಾತ್ರಿಯಿಂದಲೇ ಸಾರಿಗೆ ಮುಷ್ಕರ ಆರಂಭವಾಗುವ ಸಾಧ್ಯತೆ ಇದೆ.

ಸಂಧಾನ ಸಭೆಯಲ್ಲಿ ಸರ್ಕಾರದ ಮನವೊಲಿಕೆ ಪ್ರಯತ್ನಗಳಿಗೆ ನೌಕರ ಸಂಘಟನೆ ಮುಖಂಡರು ಬಗ್ಗದ ಹಿನ್ನೆಲೆ, ಮುಷ್ಕರ ಅನಿವಾರ್ಯ ಎನ್ನುವ ವಾತಾವರಣ ನಿರ್ಮಾಣವಾಗಿದೆ. ಆದರೆ ನೌಕರರು ಸರ್ಕಾರಕ್ಕೆ ಮತ್ತೊಂದು ಅವಕಾಶ ನೀಡಿದ್ದು, ವೇತನ ಹೆಚ್ಚಳದ ಪ್ರಮಾಣದ ವಿಚಾರದಲ್ಲಿ ಮಾತುಕತೆಗೆ ಸಿದ್ಧವಿದ್ದೇವೆ ಎಂದು ತಿಳಿಸಿದ್ದಾರೆ.

ಆದರೆ ವೇತನ ಹೆಚ್ಚಳ ಜಾರಿಗೆ ಬರುವ ದಿನಾಂಕದಲ್ಲಿ ಯಾವುದೇ ಬದಲಾವಣೆ ಒಪ್ಪುವುದಿಲ್ಲ ಎಂಬ ಷರತ್ತಿನೊಂದಿಗೆ ನೌಕರರು ತಮ್ಮ ನಿಲುವು ಸ್ಪಷ್ಟಪಡಿಸಿದ್ದಾರೆ. ಈ ಪ್ರಸ್ತಾವನೆಗೆ ಸರ್ಕಾರ ಯಾವ ರೀತಿಯ ಪ್ರತಿಕ್ರಿಯೆ ನೀಡಲಿದೆ ಎಂಬುದು ಕುತೂಹಲ ಮೂಡಿಸಿದೆ.

ಇನ್ನೊಂದೆಡೆ ಸರ್ಕಾರದ ಮೂರು ವರ್ಷದ ಸಂಭ್ರಮಾಚರಣೆ ಕಾರ್ಯಕ್ರಮ ಇಂದು ನಡೆಯುತ್ತಿದ್ದು, ಮುಖ್ಯಮಂತ್ರಿ ಸೇರಿದಂತೆ ಸಚಿವರು ಹಾಗೂ ಹಿರಿಯ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಈ ನಡುವೆಯೇ ಸಿಎಂ ಸ್ವತಃ ಸಭೆ ನಡೆಸಿ ನೌಕರರ ಮನವೊಲಿಸುತ್ತಾರಾ ಅಥವಾ ಜವಾಬ್ದಾರಿಯನ್ನು ಸಾರಿಗೆ ಸಚಿವರಿಗೇ ವಹಿಸುತ್ತಾರಾ ಎಂಬ ಪ್ರಶ್ನೆ ಉದ್ಭವಿಸಿದೆ.

ಒಂದುವೇಳೆ ಮುಷ್ಕರ ಆರಂಭವಾದರೆ ಸಾರ್ವಜನಿಕರಿಗೆ ತೊಂದರೆ ಆಗದಂತೆ ನಿಗಮಗಳು ಪ್ಲ್ಯಾನ್ ಬಿ ಸಿದ್ಧಪಡಿಸಿವೆ. ಟ್ರೈನಿ ಸಿಬ್ಬಂದಿ ಹಾಗೂ ಖಾಸಗಿ ಬಸ್‌ಗಳ ಸಹಾಯದಿಂದ ಸಾರಿಗೆ ಸೇವೆ ಮುಂದುವರಿಸಲು ಸಿದ್ಧತೆ ನಡೆಸಲಾಗಿದೆ ಎಂದು ತಿಳಿದುಬಂದಿದೆ.

ಸರ್ಕಾರ ಮತ್ತು ನೌಕರರ ನಡುವಿನ ಇಂದಿನ ಬೆಳವಣಿಗೆ ರಾಜ್ಯದ ಲಕ್ಷಾಂತರ ಪ್ರಯಾಣಿಕರ ಗಮನ ಸೆಳೆದಿದ್ದು, ಮಾತುಕತೆ ಯಶಸ್ವಿಯಾಗುತ್ತದೆಯೋ ಅಥವಾ ಮುಷ್ಕರ ಅನಿವಾರ್ಯವಾಗುತ್ತದೆಯೋ ಎಂಬುದನ್ನು ಕಾದುನೋಡಬೇಕಿದೆ.

ನಾಳೆ ರಾಜ್ಯಾದ್ಯಂತ ಮೆಡಿಕಲ್ ಶಾಪ್ ಬಂದ್‌: ಇಂದೇ ಔಷಧಿ ಖರೀದಿಸಿ!

ಬೆಂಗಳೂರು: ರಾಜ್ಯದ ಜನತೆ ಗಮನಿಸಬೇಕಾದ ಮಹತ್ವದ ಬೆಳವಣಿಗೆಯೊಂದರಲ್ಲಿ, ನಾಳೆ ಕರ್ನಾಟಕ ಸೇರಿದಂತೆ ದೇಶಾದ್ಯಂತ ಮೆಡಿಕಲ್ ಶಾಪ್‌ಗಳು ಬಂದ್ ಆಗಲಿವೆ.

ಆನ್‌ಲೈನ್ ಮೂಲಕ ನಡೆಯುತ್ತಿರುವ ಔಷಧಿ ಮಾರಾಟ ವಿರೋಧಿಸಿ ಅಖಿಲ ಭಾರತ ಔಷಧಿ ವ್ಯಾಪಾರಿಗಳ ಸಂಘ ದೇಶವ್ಯಾಪಿ ಬಂದ್‌ಗೆ ಕರೆ ನೀಡಿದ್ದು, ಕರ್ನಾಟಕ ಔಷಧಿ ಮಾರಾಟ ವ್ಯಾಪಾರಿಗಳ ಸಂಘವೂ ಇದಕ್ಕೆ ಬೆಂಬಲ ಸೂಚಿಸಿದೆ.

ರಾಜ್ಯದಲ್ಲಿ 26 ಸಾವಿರಕ್ಕೂ ಹೆಚ್ಚು ಮೆಡಿಕಲ್ ಅಂಗಡಿಗಳು ಮೇ 20ರಂದು ರಾತ್ರಿ 12.01ರಿಂದ 11.59ರವರೆಗೆ ಸಂಪೂರ್ಣ ಬಂದ್ ಆಗಲಿವೆ. ಹೀಗಾಗಿ ಜನರು ಅಗತ್ಯ ಔಷಧಿಗಳನ್ನು ಇಂದೇ ಖರೀದಿಸಿಕೊಳ್ಳುವಂತೆ ಮನವಿ ಮಾಡಲಾಗಿದೆ.

ಬ್ಲಿಂಕಿಟ್, ಸ್ವಿಗ್ಗಿ, ಜೋಮಾಟೋ ಸೇರಿದಂತೆ ವಿವಿಧ ಆಪ್ ಆಧಾರಿತ ಸಂಸ್ಥೆಗಳು ಆನ್‌ಲೈನ್ ಮೂಲಕ ಔಷಧಿಗಳನ್ನು ಮಾರಾಟ ಮಾಡುತ್ತಿರುವುದು ಪರವಾನಗಿ ಪಡೆದ ಮೆಡಿಕಲ್ ಮಾಲೀಕರ ಬದುಕಿಗೆ ದೊಡ್ಡ ಹೊಡೆತ ನೀಡುತ್ತಿದೆ ಎಂದು ವ್ಯಾಪಾರಿಗಳು ಆರೋಪಿಸಿದ್ದಾರೆ.

ಕೋವಿಡ್ ಅವಧಿಯಲ್ಲಿ ನೀಡಲಾದ ತಾತ್ಕಾಲಿಕ ಅನುಮತಿಯನ್ನು ಕೆಲ ಕಂಪನಿಗಳು ಶಾಶ್ವತ ವ್ಯವಹಾರವನ್ನಾಗಿ ಮಾಡಿಕೊಂಡಿದ್ದು, ನಕಲಿ ಪ್ರಿಸ್ಕ್ರಿಪ್ಷನ್ ಬಳಕೆ, ನಿಯಂತ್ರಣರಹಿತ ಔಷಧಿ ವಿತರಣೆ, ಆಂಟಿಬಯೋಟಿಕ್ ದುರುಪಯೋಗ ಮತ್ತು ನಕಲಿ ಔಷಧಿಗಳ ಅಪಾಯ ಹೆಚ್ಚುತ್ತಿದೆ ಎಂದು ಸಂಘಟನೆಗಳು ಆತಂಕ ವ್ಯಕ್ತಪಡಿಸಿವೆ.

ಜಿಎಸ್‌ಆರ್ 220(ಇ) ಹಾಗೂ ಜಿಎಸ್‌ಆರ್ 817(ಇ) ಆದೇಶಗಳನ್ನು ಹಿಂಪಡೆಯಬೇಕು, ಅಕ್ರಮ ಇ-ಫಾರ್ಮಸಿ ಸೇವೆಗಳನ್ನು ಬಂದ್ ಮಾಡಬೇಕು ಹಾಗೂ ಸಣ್ಣ ವ್ಯಾಪಾರಿಗಳನ್ನು ರಕ್ಷಿಸಬೇಕು ಎಂಬುದು ವ್ಯಾಪಾರಿಗಳ ಪ್ರಮುಖ ಬೇಡಿಕೆಯಾಗಿದೆ.

ಇದೇ ಮೊದಲ ಬಾರಿಗೆ ರಾಜ್ಯದಲ್ಲಿ ಇಷ್ಟು ದೊಡ್ಡ ಮಟ್ಟದಲ್ಲಿ ಮೆಡಿಕಲ್ ಶಾಪ್‌ಗಳು ಬಂದ್ ಆಗುತ್ತಿರುವ ಹಿನ್ನೆಲೆ, ಸಾರ್ವಜನಿಕರ ಮೇಲಿನ ಪರಿಣಾಮ ಏನಾಗಲಿದೆ ಎಂಬುದು ಕುತೂಹಲ ಮೂಡಿಸಿದೆ.

ರಾಜ್ಯಾದ್ಯಂತ ಭಾರೀ ಮಳೆ ಮುನ್ಸೂಚನೆ: ಹವಾಮಾನ ಇಲಾಖೆ ಎಚ್ಚರಿಕೆ!

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸೋಮವಾರ ಸುರಿದ ಭಾರೀ ಮಳೆ ಜನಜೀವನ ಅಸ್ತವ್ಯಸ್ತಗೊಳಿಸಿದ್ದು, ಹಲವೆಡೆ ರಸ್ತೆಗಳು ಜಲಾವೃತವಾಗಿ ಅಪಾರ್ಟ್‌ಮೆಂಟ್‌ಗಳಿಗೆ ನೀರು ನುಗ್ಗಿದ ಘಟನೆಗಳು ವರದಿಯಾಗಿವೆ.

ಇದೇ ವೇಳೆ ಇಂದು ಕೂಡ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಹವಾಮಾನ ಇಲಾಖೆ ಯೆಲ್ಲೋ ಹಾಗೂ ಆರೆಂಜ್‌ ಅಲರ್ಟ್‌ ಘೋಷಿಸಿದೆ. ಕೊಪ್ಪಳ, ಧಾರವಾಡ, ಗದಗ, ವಿಜಯನಗರ, ಹಾವೇರಿ, ದಾವಣಗೆರೆ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಭಾರೀ ಮಳೆಯ ಮುನ್ಸೂಚನೆ ಹಿನ್ನೆಲೆ ಆರೆಂಜ್‌ ಅಲರ್ಟ್‌ ಘೋಷಿಸಲಾಗಿದೆ.

ಇನ್ನು ವಿಜಯಪುರ, ಯಾದಗಿರಿ, ರಾಯಚೂರು, ಬಾಗಲಕೋಟೆ, ಬೆಳಗಾವಿ, ಬಳ್ಳಾರಿ, ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಚಿತ್ರದುರ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು, ಮಂಡ್ಯ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲೂ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಗಂಟೆಗೆ 40 ರಿಂದ 50 ಕಿ.ಮೀ ವೇಗದಲ್ಲಿ ಬಲವಾದ ಗಾಳಿ ಬೀಸುವ ಸಾಧ್ಯತೆ ಇದ್ದು, ಗುಡುಗು, ಮಿಂಚು ಹಾಗೂ ಆಲಿಕಲ್ಲು ಸಹಿತ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ.

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ರಾಮನಗರ, ಮಂಡ್ಯ, ಮೈಸೂರು, ಹಾಸನ, ಚಾಮರಾಜನಗರ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ವಿಶೇಷ ಕಟ್ಟೆಚ್ಚರ ವಹಿಸಲು ಸೂಚಿಸಲಾಗಿದೆ.

ಇದೇ ವೇಳೆ ರಾಜ್ಯದ ಹಲವೆಡೆ ಉಷ್ಣಾಂಶವೂ ಏರಿಕೆಯಾಗಿದ್ದು, ಕಲಬುರಗಿಯಲ್ಲಿ ಗರಿಷ್ಠ 42.4 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಿದೆ. ಉತ್ತರ ಒಳನಾಡಿನ ಕೆಲವು ಭಾಗಗಳಲ್ಲಿ ತಾಪಮಾನ ಸಾಮಾನ್ಯಕ್ಕಿಂತ 1.6 ರಿಂದ 3 ಡಿಗ್ರಿವರೆಗೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ವರದಿ ತಿಳಿಸಿದೆ.

ಭಾರೀ ಮಳೆ ಮತ್ತು ಗಾಳಿಯಿಂದ ಕೆಲವೆಡೆ ವಿದ್ಯುತ್‌ ಸಂಪರ್ಕ ಕಡಿತವಾಗುವ ಹಾಗೂ ರಸ್ತೆಗಳು ಜಲಾವೃತಗೊಂಡು ಟ್ರಾಫಿಕ್‌ ಸಮಸ್ಯೆ ಉಂಟಾಗುವ ಆತಂಕವಿದೆ. ಹೀಗಾಗಿ ಮಳೆ ವೇಳೆ ಮನೆಯೊಳಗೇ ಇರಲು, ಅನಗತ್ಯ ಪ್ರಯಾಣ ತಪ್ಪಿಸಲು ಹಾಗೂ ಮರಗಳ ಕೆಳಗೆ ಆಶ್ರಯ ಪಡೆಯದಂತೆ ಹವಾಮಾನ ಇಲಾಖೆ ಸಾರ್ವಜನಿಕರಿಗೆ ಸೂಚನೆ ನೀಡಿದೆ.

ವಾಹನ ಸವಾರರಿಗೆ ಬೆಳ್ಳಂಬೆಳಗ್ಗೆ ಶಾಕ್‌: ಪೆಟ್ರೋಲ್, ಡೀಸೆಲ್ ದರ ಮತ್ತೆ ಏರಿಕೆ!

ನವದೆಹಲಿ: ಇರಾನ್‌ ಮತ್ತು ಅಮೆರಿಕ ನಡುವಿನ ಉದ್ವಿಗ್ನತೆ ಮತ್ತಷ್ಟು ತೀವ್ರವಾಗುತ್ತಿರುವ ನಡುವೆಯೇ ದೇಶದ ಜನರಿಗೆ ಮತ್ತೆ ಇಂಧನ ದರ ಏರಿಕೆಯ ಶಾಕ್‌ ಎದುರಾಗಿದೆ.

ಮಂಗಳವಾರ ಬೆಳಿಗ್ಗೆ ಸರ್ಕಾರಿ ತೈಲ ಕಂಪನಿಗಳು ಪೆಟ್ರೋಲ್‌ ಹಾಗೂ ಡೀಸೆಲ್‌ ದರವನ್ನು ಪ್ರತಿ ಲೀಟರ್‌ಗೆ ಸರಾಸರಿ 90 ಪೈಸೆ ಹೆಚ್ಚಿಸಿವೆ.

ಇದು ಒಂದು ವಾರದೊಳಗೆ ಎರಡನೇ ಬಾರಿ ಇಂಧನ ದರ ಏರಿಕೆಯಾಗಿದೆ. ಕಳೆದ ಮೇ 15ರಂದು ಪೆಟ್ರೋಲ್‌ ಮತ್ತು ಡೀಸೆಲ್‌ ದರವನ್ನು ಏಕಾಏಕಿ 3 ರೂ. ಹೆಚ್ಚಿಸಲಾಗಿತ್ತು. ಇದೀಗ ಕೇವಲ ಕೆಲವೇ ದಿನಗಳ ಅಂತರದಲ್ಲಿ ಮತ್ತೆ ದರ ಏರಿಕೆಯಾಗಿರುವುದು ವಾಹನ ಸವಾರರು ಮತ್ತು ಸಾರ್ವಜನಿಕರಿಗೆ ಭಾರೀ ಹೊರೆ ತಂದಿದೆ.

ಹಿಂದಿನ ಏರಿಕೆಯ ಬಳಿಕ ದೆಹಲಿಯಲ್ಲಿ ಪೆಟ್ರೋಲ್‌ ದರ ಲೀಟರ್‌ಗೆ 94.77 ರೂ.ನಿಂದ 97.77 ರೂ.ಗೆ ಹಾಗೂ ಡೀಸೆಲ್‌ ದರ 87.67 ರೂ.ನಿಂದ 90.67 ರೂ.ಗೆ ಏರಿಕೆಯಾಗಿತ್ತು. ಇದೀಗ ಮತ್ತೊಮ್ಮೆ ಹೆಚ್ಚಳ ಮಾಡಿರುವುದರಿಂದ ದರಗಳು ಇನ್ನಷ್ಟು ಏರಿಕೆಯಾಗಿವೆ.

ಮಾರುಕಟ್ಟೆ ವಿಶ್ಲೇಷಕರು ಹಾಗೂ ಕೈಗಾರಿಕಾ ಮೂಲಗಳ ಪ್ರಕಾರ, ಜಾಗತಿಕ ರಾಜತಾಂತ್ರಿಕ ಮತ್ತು ಮಿಲಿಟರಿ ಬಿಕ್ಕಟ್ಟಿನ ಪರಿಣಾಮವಾಗಿ ಕಚ್ಚಾ ತೈಲದ ಬೆಲೆಯಲ್ಲಿ ಭಾರೀ ಏರಿಕೆ ಕಂಡುಬಂದಿದೆ. ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆಯಿಂದ ಹಾರ್ಮುಜ್ ಜಲಸಂಧಿ ಮಾರ್ಗದಲ್ಲಿ ತೈಲ ಪೂರೈಕೆಗೆ ಅಡಚಣೆ ಉಂಟಾಗಿದ್ದು, ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರಲ್‌ಗೆ 100 ಡಾಲರ್‌ ದಾಟಿದೆ ಎನ್ನಲಾಗಿದೆ.

ಕಚ್ಚಾ ತೈಲದ ದರ ಏರಿಕೆಯಿಂದ ಭಾರತೀಯ ತೈಲ ಸಂಸ್ಕರಣಾ ಕಂಪನಿಗಳಿಗೆ ಭಾರೀ ನಷ್ಟ ಉಂಟಾಗುತ್ತಿದ್ದು, ಅದರ ಹೊರೆ ಗ್ರಾಹಕರ ಮೇಲೆ ಬೀಳುತ್ತಿದೆ. ಕಳೆದ ವಾರದ 3 ರೂ. ಏರಿಕೆಯಿಂದ ತೈಲ ಕಂಪನಿಗಳಿಗೆ ಆಗುತ್ತಿದ್ದ ಶೇ.25ರಷ್ಟು ನಷ್ಟ ತಗ್ಗಿತ್ತು ಎನ್ನಲಾಗಿದ್ದು, ಇದೀಗ ಮತ್ತೆ ದರ ಹೆಚ್ಚಳ ಮಾಡಲಾಗಿದೆ.

ಇಂಧನ ದರದ ನಿರಂತರ ಏರಿಕೆಯಿಂದ ಸಾರಿಗೆ ವೆಚ್ಚ, ಅಗತ್ಯ ವಸ್ತುಗಳ ಬೆಲೆ ಮತ್ತು ದೈನಂದಿನ ಜೀವನ ವೆಚ್ಚಗಳು ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದ್ದು, ಸಾರ್ವಜನಿಕರಲ್ಲಿ ಆತಂಕ ಹೆಚ್ಚಾಗಿದೆ.

error: Content is protected !!