ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಇಂಧನ ಉಳಿತಾಯ ಹಾಗೂ ಸಾರ್ವಜನಿಕ ಸಾರಿಗೆ ಬಳಕೆಗೆ ನೀಡಿದ ಕರೆಗೆ ಬೆಂಗಳೂರಿನಲ್ಲಿ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.
ಜಾಗತಿಕ ಕಚ್ಚಾ ತೈಲ ಬಿಕ್ಕಟ್ಟಿನ ನಡುವೆಯೇ ಮೆಟ್ರೋ ಮತ್ತು ಬಸ್ ಬಳಕೆ ಹೆಚ್ಚಿಸಲು ನೀಡಿದ ಸಲಹೆಯನ್ನು ನಗರದ ಜನರು ಪಾಸಿಟಿವ್ ಆಗಿ ಸ್ವೀಕರಿಸಿದ್ದಾರೆ. ಹೈದರಾಬಾದ್ನಲ್ಲಿ ಇತ್ತೀಚೆಗೆ ಮಾತನಾಡಿದ್ದ ಪ್ರಧಾನಿ ಮೋದಿ, ಜಾಗತಿಕ ಇಂಧನ ಬಿಕ್ಕಟ್ಟಿನ ಸಂದರ್ಭದಲ್ಲಿ ದೇಶ ಒಗ್ಗಟ್ಟಾಗಿ ಸಾಧ್ಯವಾದಷ್ಟು ಸಾರ್ವಜನಿಕ ಸಾರಿಗೆಯನ್ನು ಬಳಸಬೇಕು ಎಂದು ಮನವಿ ಮಾಡಿದ್ದರು. ಇದರ ಪರಿಣಾಮವಾಗಿ ಮೆಜೆಸ್ಟಿಕ್ನ ಕೆಂಪೇಗೌಡ ಬಸ್ ನಿಲ್ದಾಣ ಹಾಗೂ ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಳ ಕಂಡಿದೆ.
“ಬೈಕ್ ಬಳಸುವುದಕ್ಕಿಂತ ಮೆಟ್ರೋ ಬಳಕೆ ಮಾಡಿದರೆ ಹಣ ಮತ್ತು ಸಮಯ ಎರಡೂ ಉಳಿಯುತ್ತದೆ” ಎಂದು ಅನೇಕ ಪ್ರಯಾಣಿಕರು ಅಭಿಪ್ರಾಯಪಟ್ಟಿದ್ದಾರೆ. ಕೆಲವರು ಇಷ್ಟು ದಿನ ಖಾಸಗಿ ವಾಹನ ಬಳಸುತ್ತಿದ್ದರೂ, ಈಗ ಕಚೇರಿಗೆ ಮೆಟ್ರೋ ಮೂಲಕವೇ ತೆರಳಲು ನಿರ್ಧರಿಸಿದ್ದೇವೆ ಎಂದು ತಿಳಿಸಿದ್ದಾರೆ.
ಪೆಟ್ರೋಲ್ ಹಾಗೂ ಡೀಸೆಲ್ ಆಮದು ಕಡಿಮೆ ಮಾಡಿದರೆ ದೇಶದ ಆರ್ಥಿಕತೆಗೆ ಬಲ ಸಿಗಲಿದೆ ಎಂಬ ಅರಿವು ಜನರಲ್ಲಿ ಹೆಚ್ಚುತ್ತಿದೆ ಎನ್ನಲಾಗಿದೆ.
ಇನ್ನೊಂದೆಡೆ ದೇಶಾದ್ಯಂತ ಡೀಸೆಲ್ ಕೊರತೆಯ ಎಚ್ಚರಿಕೆ ಕೂಡ ವ್ಯಕ್ತವಾಗಿದೆ. ಬಲ್ಕ್ ಸರಬರಾಜು ದರ ಹಾಗೂ ಚಿಲ್ಲರೆ ಮಾರಾಟ ದರದ ವ್ಯತ್ಯಾಸದಿಂದ ಅನೇಕ ಕೈಗಾರಿಕೆಗಳು ನೇರವಾಗಿ ಪೆಟ್ರೋಲ್ ಬಂಕ್ಗಳಿಂದ ಹೈ ಸ್ಪೀಡ್ ಡೀಸೆಲ್ ಖರೀದಿ ಮಾಡುತ್ತಿವೆ. ಇದರಿಂದ ಚಿಲ್ಲರೆ ಬಂಕ್ಗಳಲ್ಲಿ ದಾಸ್ತಾನು ನಿರ್ವಹಣೆ ಕಷ್ಟವಾಗುತ್ತಿದೆ ಎಂದು ಇಂಡಿಯನ್ ಆಯಿಲ್ ಪೆಟ್ರೋಲಿಯಂ ಡೀಲರ್ಸ್ ಅಸೋಸಿಯೇಷನ್ ಪ್ರಧಾನಿ ಮೋದಿ ಅವರಿಗೆ ದೂರು ನೀಡಿದೆ.
ಜಾಗತಿಕ ಮಟ್ಟದಲ್ಲಿ ಅಮೆರಿಕ, ಇಸ್ರೇಲ್ ಹಾಗೂ ಇರಾನ್ ನಡುವಿನ ಯುದ್ಧ ಭೀತಿ ಹೆಚ್ಚುತ್ತಿರುವ ಹಿನ್ನೆಲೆ ಇಂಧನ ಉಳಿತಾಯ ಕ್ರಮಗಳು ಅನಿವಾರ್ಯವಾಗುತ್ತಿವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

