ಹಾಸನ: ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ, ಗ್ರಾಮೀಣ ಸೊಗಡು ಮತ್ತು ಆಧುನಿಕ ಕಲೆಯನ್ನು ಸಮನ್ವಯಗೊಳಿಸಿದ ಖ್ಯಾತ ಚಿತ್ರಕಲಾವಿದ ಕೆ.ಟಿ. ಶಿವಪ್ರಸಾದ್ ಅವರು ನಿಧನರಾಗಿದ್ದಾರೆ.
ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
1947ರಲ್ಲಿ ಕೊಡಗಿನ ಮಡಿಕೇರಿ ತಾಲೂಕಿನ ಬಡ ಕೃಷಿ ಕುಟುಂಬದಲ್ಲಿ ಜನಿಸಿದ ಶಿವಪ್ರಸಾದ್, ಬಾಲ್ಯದಿಂದಲೇ ಚಿತ್ರಕಲೆಯತ್ತ ಅಪಾರ ಆಸಕ್ತಿ ಹೊಂದಿದ್ದರು. ಕುಟುಂಬದ ಒತ್ತಾಯದ ಕಾರಣ ಇಂಜಿನಿಯರಿಂಗ್ ಓದಿಗೆ ಸೇರಿದ್ದರೂ, ಬಳಿಕ ಕಲೆಯ ಮೇಲಿನ ಒಲವಿನಿಂದ ಮುಂಬೈನ ಪ್ರತಿಷ್ಠಿತ ‘ಸರ್ ಜೆ.ಜೆ. ಸ್ಕೂಲ್ ಆಫ್ ಆರ್ಟ್’ನಲ್ಲಿ ಅಧ್ಯಯನ ಮಾಡಿ 1973ರಲ್ಲಿ ಚಿತ್ರಕಲೆಯಲ್ಲಿ ಡಿಪ್ಲೊಮಾ ಪಡೆದಿದ್ದರು.
ತಮ್ಮ ಕಲಾಕೃತಿಗಳ ಮೂಲಕ ಶೋಷಿತರು, ರೈತರು ಹಾಗೂ ಗ್ರಾಮೀಣ ಜನರ ಬದುಕನ್ನು ಚಿತ್ರಿಸಿದ ಅವರು, ಸಾಮಾಜಿಕ ಚಳವಳಿಗಳಲ್ಲೂ ಸಕ್ರಿಯವಾಗಿ ಭಾಗವಹಿಸಿದ್ದರು. ಅವರ ಚಿತ್ರಕಲೆಗಳಿಗೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಪಾರ ಮೆಚ್ಚುಗೆ ದೊರೆತಿತ್ತು. ಬ್ರಿಟನ್ನ ಪ್ರಸಿದ್ಧ ಕಲಾವಿದ ಲುಸಿಯನ್ ಫ್ರಾಯ್ಡ್ ಅವರಿಗೆ ಹೋಲಿಸಲ್ಪಟ್ಟಿದ್ದರು.
ಬೆಂಗಳೂರು, ಮೈಸೂರು, ಮುಂಬೈ ಹಾಗೂ ನವದೆಹಲಿಯಲ್ಲಿ ನಡೆದ ಅನೇಕ ಏಕವ್ಯಕ್ತಿ ಹಾಗೂ ಸಮೂಹ ಕಲಾ ಪ್ರದರ್ಶನಗಳಲ್ಲಿ ಭಾಗವಹಿಸಿದ್ದ ಅವರ ಕೃತಿಗಳು ಜಹಾಂಗೀರ್ ಆರ್ಟ್ ಗ್ಯಾಲರಿ, ಸಾಕ್ಷಿ ಗ್ಯಾಲರಿ ಸೇರಿದಂತೆ ಹಲವು ಪ್ರಮುಖ ಕಲಾ ಕೇಂದ್ರಗಳಲ್ಲಿ ಪ್ರದರ್ಶನಗೊಂಡಿದ್ದವು.
ಕಲಾ ಕ್ಷೇತ್ರಕ್ಕೆ ನೀಡಿದ ಅಪಾರ ಕೊಡುಗೆಯನ್ನು ಗುರುತಿಸಿ ಕರ್ನಾಟಕ ಸರ್ಕಾರವು 2001ರಲ್ಲಿ ಅವರಿಗೆ ‘ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ’ ನೀಡಿ ಗೌರವಿಸಿತ್ತು. ಅವರ ನಿಧನದಿಂದ ಭಾರತೀಯ ಕಲಾ ಲೋಕದಲ್ಲಿ ದೊಡ್ಡ ಶೂನ್ಯ ಉಂಟಾಗಿದೆ.

