Home Blog Page 3

ಚಿಕ್ಕಪೇಟೆ ಮೆಟ್ರೋ ಬಳಿ ಭೀಕರ ಅಗ್ನಿ ಅವಘಡ: ಶಾರ್ಟ್ ಸರ್ಕ್ಯೂಟ್‌ನಿಂದ ಫ್ಯಾನ್ಸಿ ಸ್ಟೋರ್ ಭಸ್ಮ

0

ಬೆಂಗಳೂರು: ನಗರದಲ್ಲಿ ಇಂದು ಬೆಳಿಗ್ಗೆ ಭೀಕರ ಅಗ್ನಿ ಅವಘಡ ಸಂಭವಿಸಿದೆ. ಚಿಕ್ಕಪೇಟೆ ಮೆಟ್ರೋ ನಿಲ್ದಾಣ ಸಮೀಪದ ಫ್ಯಾನ್ಸಿ ಸ್ಟೋರ್‌ನಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಬೆಂಕಿ ಕಾಣಿಸಿಕೊಂಡಿದೆ.

ಬೆಳಿಗ್ಗೆ ಸುಮಾರು 7 ಗಂಟೆ ವೇಳೆಗೆ ಆರಂಭವಾದ ಬೆಂಕಿ ಕ್ಷಣಾರ್ಧದಲ್ಲಿ ವ್ಯಾಪಿಸಿ ಅಂಗಡಿಯಲ್ಲಿದ್ದ ಲಕ್ಷಾಂತರ ಮೌಲ್ಯದ ವಸ್ತುಗಳನ್ನು ಭಸ್ಮಗೊಳಿಸಿದೆ. ಸ್ಥಳದಲ್ಲಿ ದಟ್ಟ ಹೊಗೆ ಆವರಿಸಿಕೊಂಡಿದ್ದು, ಪರಿಸರದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

ತಕ್ಷಣವೇ ಆರು ಅಗ್ನಿಶಾಮಕದಳ ವಾಹನಗಳು ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ಆರಂಭಿಸಿವೆ. ದಟ್ಟ ಹೊಗೆಯಿಂದಾಗಿ ಅಗ್ನಿಶಾಮಕ ಸಿಬ್ಬಂದಿ ಆಕ್ಸಿಜನ್ ಸಿಲಿಂಡರ್ ಹಾಗೂ ಮಾಸ್ಕ್ ಧರಿಸಿ ಅಂಗಡಿ ಒಳಗೆ ಪ್ರವೇಶಿಸಿ ಬೆಂಕಿ ನಂದಿಸುವಲ್ಲಿ ನಿರತರಾಗಿದ್ದಾರೆ. ಕಳೆದ ಒಂದು ಗಂಟೆಯಿಂದ ನಿರಂತರವಾಗಿ ಕಾರ್ಯಾಚರಣೆ ಮುಂದುವರಿದಿದೆ.

ಕಾಫಿನಾಡಲ್ಲಿ ಗಜಭೀತಿ : ನಗರ ಸಮೀಪವೇ ಪುಂಡಾನೆಗಳು, ಕೃಷಿಕರಿಗೆ ಜೀವಭಯ

0

ಚಿಕ್ಕಮಗಳೂರು: ಕಾಫಿನಾಡಾದ ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಡಾನೆಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ನಗರಕ್ಕೆ ತೀರಾ ಸಮೀಪದಲ್ಲಿರುವ ಮತ್ತಾವರ ಹಾಗೂ ನಲ್ಲೂರು ಗ್ರಾಮಗಳ ಸುತ್ತ ಎರಡು ಪುಂಡಾನೆಗಳು ಬೀಡುಬಿಟ್ಟಿದ್ದು, ಎಸ್ಟೇಟ್‌ಗಳ ನಡುವೆ ನಿರಂತರ ಸಂಚಾರ ನಡೆಸುತ್ತಿವೆ.

ಕಾಫಿ ತೋಟಗಳಿಗೆ ಕೆಲಸಕ್ಕೆ ತೆರಳುವ ಕಾರ್ಮಿಕರು ಆತಂಕಗೊಂಡಿದ್ದು, ಭತ್ತದ ಪೈರುಗಳು ಹಾನಿಗೊಳಗಾಗಿವೆ. ಇದೇ ವೇಳೆ ಚಿಕ್ಕಮಗಳೂರು–ಬೇಲೂರು ಗಡಿಭಾಗದ ಚೀಕನಹಳ್ಳಿಯಲ್ಲಿ ಒಂಟಿ ಸಲಗ ಕಾಣಿಸಿಕೊಂಡಿದ್ದು, ನರಸಿಂಹರಾಜಪುರ ತಾಲೂಕಿನ ಮಡಬೂರು ಗ್ರಾಮದ ಯಕ್ಕಡಬೈಲು ಅರಣ್ಯ ಪ್ರದೇಶದಲ್ಲಿ ಆನೆಗಳ ಹಿಂಡೂ ತಂಗಿರುವುದು ಪತ್ತೆಯಾಗಿದೆ.

ಒಂಟಿ ಸಲಗಗಳಷ್ಟೇ ಅಲ್ಲದೆ, ಗುಂಪು ಗುಂಪಾಗಿ ಸಂಚರಿಸುತ್ತಿರುವ ಆನೆಗಳು ಕೃಷಿಕರ ನೆಮ್ಮದಿಯನ್ನು ಕಸಿದುಕೊಂಡಿವೆ. ಬೆಳೆ ಹಾನಿಯ ಜೊತೆಗೆ ಜೀವಭಯವೂ ಕಾಡುತ್ತಿದೆ.

ಅರಣ್ಯ ಇಲಾಖೆ ಮುನ್ನೆಚ್ಚರಿಕಾ ಸೂಚನೆ ನೀಡಿದ್ದು, ಮುಂಜಾನೆ ತೋಟಗಳಿಗೆ ತೆರಳುವವರು, ವಾಕಿಂಗ್‌ಗೆ ಹೋಗುವವರು ಮತ್ತು ರಾತ್ರಿ ವಾಹನ ಚಲಾಯಿಸುವವರು ಹೆಚ್ಚಿನ ಎಚ್ಚರಿಕೆ ವಹಿಸಬೇಕು ಎಂದು ಮನವಿ ಮಾಡಿದೆ. ಕಾಡಾನೆಗಳನ್ನು ಕೆಣಕದೆ, ಸುರಕ್ಷಿತ ಅಂತರ ಕಾಯ್ದುಕೊಳ್ಳುವಂತೆ ಸೂಚಿಸಲಾಗಿದೆ.

ಸಚಿವ ಸ್ಥಾನಕ್ಕೆ ಲಾಬಿ ಶುರು! 24 MLCಗಳಿಂದ ಹೈಕಮಾಂಡ್ʼಗೆ ಪತ್ರ

0

ಬೆಂಗಳೂರು: ರಾಜ್ಯ ಕಾಂಗ್ರೆಸ್‌ನಲ್ಲಿ ಸಚಿವ ಸಂಪುಟ ಪುನಾರಚನೆ ವಿಚಾರ ಮತ್ತೆ ಚರ್ಚೆಗೆ ಬಂದಿದೆ. ಇತ್ತೀಚೆಗೆ 31 ಶಾಸಕರು ಸಚಿವ ಸಂಪುಟ ಪುನಾರಚನೆಗೆ ಒತ್ತಾಯಿಸಿ ಹೈಕಮಾಂಡ್‌ ನಾಯಕರಿಗೆ ಪತ್ರ ಬರೆದಿದ್ದ ಬೆನ್ನಲ್ಲೇ, ಇದೀಗ 24 ಮಂದಿ ವಿಧಾನ ಪರಿಷತ್ ಸದಸ್ಯರು (ಎಂಎಲ್‌ಸಿಗಳು) ಸಹ ಪತ್ರ ಬರೆದಿದ್ದಾರೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್‌ ಖರ್ಗೆ ಅವರನ್ನು ಭೇಟಿ ಮಾಡಿದ ಎಂಎಲ್‌ಸಿಗಳು, ಸಚಿವ ಸಂಪುಟದಲ್ಲಿ ಸೂಕ್ತ ಪ್ರಾತಿನಿಧ್ಯ ನೀಡುವಂತೆ ಮನವಿ ಸಲ್ಲಿಸಿದರು. 24 ಮಂದಿ ಸಹಿ ಮಾಡಿದ ಪತ್ರವನ್ನು ಖರ್ಗೆ ಅವರಿಗೆ ನೀಡಲಾಗಿದೆ.

ಸಂಪುಟದಲ್ಲಿ ಎಂಎಲ್‌ಸಿಗಳಿಗೆ ಪ್ರಾತಿನಿಧ್ಯ ಇಲ್ಲದಿರುವುದು ಅಸಮಾನತೆ ಹಾಗೂ ನಿರುತ್ಸಾಹ ಭಾವನೆ ಉಂಟುಮಾಡುತ್ತದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಇದರಿಂದ ಎಂಎಲ್‌ಸಿಗಳಿಗೆ ರಾಜಕೀಯ ಭವಿಷ್ಯ ಇಲ್ಲ ಎಂಬ ಭಾವನೆ ಮೂಡಬಹುದು ಎಂದು ತಿಳಿಸಿದ್ದಾರೆ.

ಸಮರ್ಥ ನಾಯಕರು ವಿಧಾನ ಪರಿಷತ್‌ ಚುನಾವಣೆಯಲ್ಲಿ ಸ್ಪರ್ಧಿಸುವ ಬದಲು ವಿಧಾನಸಭಾ ಟಿಕೆಟ್ ಪಡೆಯಲು ಮುಂದಾಗುವ ಸಾಧ್ಯತೆ ಇದೆ. ಇದರಿಂದ ಗುಂಪುಗಾರಿಕೆ ಹೆಚ್ಚಾಗಿ ಪಕ್ಷದ ಸಂಘಟನೆಯನ್ನು ದುರ್ಬಲಗೊಳಿಸಬಹುದು ಎಂದು ಎಚ್ಚರಿಸಲಾಗಿದೆ.

ವಿಧಾನ ಪರಿಷತ್ತಿನ ಕನಿಷ್ಠ ಐದು ಸದಸ್ಯರನ್ನು ಸಚಿವ ಸಂಪುಟದಲ್ಲಿ ಸೇರಿಸಬೇಕು ಎಂದು ಎಂಎಲ್‌ಸಿಗಳು ಒತ್ತಾಯಿಸಿದ್ದಾರೆ. ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಒಬ್ಬರು, ಪದವೀಧರ ಅಥವಾ ಶಿಕ್ಷಕರ ಕ್ಷೇತ್ರದಿಂದ ಒಬ್ಬರು, ಕೆಳಮನೆ ಅಥವಾ ನಾಮನಿರ್ದೇಶಿತ ವರ್ಗದಿಂದ ಒಬ್ಬರನ್ನು ಆಯ್ಕೆ ಮಾಡುವಂತೆ ಪತ್ರದಲ್ಲಿ ಮನವಿ ಮಾಡಲಾಗಿದೆ.

ಭಾರತ-ಪಾಕ್‌ ನ್ಯೂಕ್ಲಿಯರ್‌ ವಾರ್‌ ನಿಲ್ಲಿಸಿದ್ದು ನಾನೇ:‌ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌

0

ವಾಷಿಂಗ್ಟನ್: ನನ್ನ ಮಧ್ಯಸ್ಥಿಕೆ ಇಲ್ಲದಿದ್ದರೆ ಭಾರತ ವಿರುದ್ಧದ ಯುದ್ಧದಲ್ಲಿ ಪಾಕಿಸ್ತಾನ ಪ್ರಧಾನಿ ಸಾವನ್ನಪ್ಪುತ್ತಿದ್ದರು ಎಂದು 3.5 ಕೋಟಿ ಜನರು ಹೇಳುತ್ತಿದ್ದಾರೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ.

ತಮ್ಮ ಎರಡನೇ ಅವಧಿಯ ಸರ್ಕಾರಕ್ಕೆ ಒಂದು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ 2026ರ ರಾಷ್ಟ್ರೀಯ ಒಕ್ಕೂಟವನ್ನುದ್ದೇಶಿಸಿ ಅವರು ಭಾಷಣ ಮಾಡಿದರು. ಈ ವೇಳೆ ಅಮೆರಿಕ ಗತವೈಭವಕ್ಕೆ ಮರಳಿದ್ದು, ಹಿಂದೆಂದಿಗಿಂತಲೂ ದೊಡ್ಡದು, ಉತ್ತಮದು, ಶ್ರೀಮಂತ ಹಾಗೂ ಬಲಿಷ್ಠ ರಾಷ್ಟ್ರವಾಗಿದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಭಾರತ–ಪಾಕಿಸ್ತಾನ ನಡುವಿನ ಯುದ್ಧವನ್ನು ತಾವು ನಿಲ್ಲಿಸಿದ್ದಾಗಿ ಮತ್ತೊಮ್ಮೆ ಉಲ್ಲೇಖಿಸಿದರು. ನನ್ನ ಮೊದಲ 10 ತಿಂಗಳ ಅವಧಿಯಲ್ಲೇ 8 ಯುದ್ಧಗಳನ್ನು ನಿಲ್ಲಿಸಿದ್ದೇನೆ. ಅದರಲ್ಲಿ ಭಾರತ–ಪಾಕಿಸ್ತಾನ ಯುದ್ಧವು ಪರಮಾಣು ಸಂಘರ್ಷವಾಗುವ ಸಾಧ್ಯತೆ ಇತ್ತು. ನಾನು ಮಧ್ಯಸ್ಥಿಕೆ ವಹಿಸದಿದ್ದರೆ ಪಾಕಿಸ್ತಾನದ ಪ್ರಧಾನಿ ಸಾವನ್ನಪ್ಪುತ್ತಿದ್ದರು ಎಂದು 3.5 ಕೋಟಿ ಜನರು ಹೇಳುತ್ತಿದ್ದಾರೆ ಎಂದು ಟ್ರಂಪ್ ಅಭಿಪ್ರಾಯಪಟ್ಟರು.

ಮುಂದುವರೆದು ಮಾತನಾಡಿದ ಅವರು, ಕಳೆದ 9 ತಿಂಗಳಲ್ಲಿ ಅಮೆರಿಕಕ್ಕೆ ಅಕ್ರಮವಾಗಿ ಯಾರೂ ಪ್ರವೇಶಿಸಿಲ್ಲ. ಅಕ್ರಮ ವಲಸಿಗರ ಸಂಖ್ಯೆ ಶೂನ್ಯಕ್ಕೆ ಇಳಿದಿದೆ. ಕಾನೂನುಬದ್ಧ ವಿಧಾನದಲ್ಲಿ ಮಾತ್ರ ವಲಸೆಗೆ ಅವಕಾಶ ನೀಡಲಾಗುತ್ತಿದೆ ಎಂದು ಹೇಳಿದರು.

ಅಮೆರಿಕಕ್ಕೆ ಸ್ವಾತಂತ್ರ್ಯ ಸಿಕ್ಕು ಈ ಜುಲೈ 4ರಂದು 250 ವರ್ಷ ಪೂರ್ತಿಯಾಗಲಿದೆ. ಆ ವೇಳೆಗೆ ಅಮೆರಿಕ ಭೂಮಿಯ ಮೇಲಿನ ಅತ್ಯಂತ ಪ್ರಗತಿಪರ ರಾಷ್ಟ್ರವಾಗಿ ಹೊರಹೊಮ್ಮಲಿದೆ. ಈ ಹಿಂದೆ ದೇಶದಲ್ಲಿ ಹತ್ಯೆ ಪ್ರಮಾಣ ಹೆಚ್ಚು ಇದ್ದರೂ, ಈಗ ಕೊಲೆ ಪ್ರಮಾಣ ಇತಿಹಾಸದಲ್ಲೇ ಅತಿದೊಡ್ಡ ಮಟ್ಟದ ಕುಸಿತ ಕಂಡಿದೆ ಎಂದು ಟ್ರಂಪ್ ಶ್ಲಾಘಿಸಿದರು.

ಅಡಿಗೆಮನೆ ಶುದ್ಧವಾಗಿರಲಿ, ನಕಾರಾತ್ಮಕ ಶಕ್ತಿ ದೂರವಾಗಲಿ!

0

ಅಡಿಗೆಮನೆ ನಮ್ಮ ಮನೆಯ ಅತ್ಯಂತ ಪ್ರಮುಖ ಮತ್ತು ಶಕ್ತಿಶಾಲಿ ಸ್ಥಳಗಳಲ್ಲಿ ಒಂದಾಗಿದೆ. ಇದು ಕೇವಲ ಅಡುಗೆಯನ್ನು ತಯಾರಿಸುವ ಸ್ಥಳವಲ್ಲ, ದೇಹಕ್ಕೆ ಶಕ್ತಿ, ಒಳ್ಳೆಯ ಆಲೋಚನೆಗಳು ಮತ್ತು ಆರೋಗ್ಯವನ್ನು ಒದಗಿಸುವ ಕೇಂದ್ರವಾಗಿದೆ.

ಆರೋಗ್ಯವಿದ್ದಾಗ ಮಾತ್ರ ನಮ್ಮ ಶ್ರೇಯಸ್ಸು, ಕೀರ್ತಿ ಮತ್ತು ಪ್ರತಿಷ್ಠೆ ಹೆಚ್ಚುತ್ತವೆ; ಆರೋಗ್ಯ ನಷ್ಟವಾದರೆ ಎಲ್ಲವೂ ಕಳೆದುಹೋಗುತ್ತದೆ ಎಂಬುದನ್ನು ಮರೆಯಬಾರದು. ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ, ಅಡಿಗೆಮನೆಯಲ್ಲಿ ಇರಬಾರದ ವಸ್ತುಗಳು ಮತ್ತು ಸ್ಥಿತಿಗಳ ಬಗ್ಗೆ ಸಲಹೆ ನೀಡುತ್ತಾರೆ.

ವಾಸ್ತು ಶಾಸ್ತ್ರದ ಪ್ರಕಾರ, ಅಡಿಗೆಮನೆಯಲ್ಲಿ ಕೆಲವು ವಸ್ತುಗಳು ಅಥವಾ ತಪ್ಪು ಸ್ಥಿತಿಗಳು ಬಡತನ, ಆಲಸ್ಯ ಮತ್ತು ನಕಾರಾತ್ಮಕ ಆಲೋಚನೆಗಳಿಗೆ ಕಾರಣವಾಗುತ್ತವೆ. ಸಾಮಾನ್ಯವಾಗಿ ಅಡಿಗೆಮನೆಯನ್ನು ಆಗ್ನೇಯ (ಸೌತ್ ಈಸ್ಟ್) ದಿಕ್ಕಿನಲ್ಲಿ ನಿರ್ಮಿಸುವುದು ಶುಭಕರ, ಮತ್ತು ಬಳಿಕ ವಾಯುವ್ಯ (ನಾರ್ತ್ ವೆಸ್ಟ್) ದಿಕ್ಕನ್ನು ಆಯ್ಕೆ ಮಾಡಬಹುದು. ಅಡುಗೆ ಮಾಡುವಾಗ ಸೂರ್ಯನ ಕಡೆ ಮುಖ ಮಾಡುವುದನ್ನು ಶುಭಕರ ಎಂದು ಪರಿಗಣಿಸಲಾಗುತ್ತದೆ.

ಅಡಿಗೆಮನೆಯಲ್ಲಿ ಗಮನಹರಿಸಬೇಕಾದ ಪ್ರಮುಖ ಅಂಶಗಳು:

  1. ಉಳಿದ ಅಥವಾ ಹಾಳಾದ ಆಹಾರ:
    ಅಡುಗೆ ಮಾಡಿದ ಆಹಾರವನ್ನು ಎಲ್ಲರೂ ಸೇವಿಸಿದ ನಂತರ ಉಳಿದ ಆಹಾರವನ್ನು ಹಾಳಾಗಲು ಬಿಡಬಾರದು. ಹಾಳಾದ ಆಹಾರ ಮನೆಯಲ್ಲಿ ದಾರಿದ್ರ್ಯವನ್ನು ಹೆಚ್ಚಿಸುತ್ತದೆ. ಉಳಿದ ಆಹಾರವನ್ನು ಪ್ರಾಣಿಗಳು ಅಥವಾ ಹಸಿದವರಿಗೆ ಹಂಚಬಹುದು.
  2. ಮುರಿದ ಪಾತ್ರೆಗಳು:
    ಮುರಿದ ಅಥವಾ ಒಡೆದ ಪಾತ್ರೆಗಳನ್ನು ಅಡಿಗೆಮನೆಯಲ್ಲಿ ಇಡಬಾರದು. ಇವು ಆರ್ಥಿಕ ನಷ್ಟಕ್ಕೆ ಕಾರಣವಾಗುತ್ತವೆ. ಪಾತ್ರೆಗಳು ಹಾಳಾಗದೆ, ಸಿಂಕ್‌ನಲ್ಲಿ ಉಳಿದ ಆಹಾರ ಪದಾರ್ಥಗಳೊಂದಿಗೆ ಇಡುವುದನ್ನು ತಪ್ಪಿಸಬೇಕು.
  3. ಸಿಂಕ್‌ನಲ್ಲಿ ಆಹಾರ ಪದಾರ್ಥಗಳು:
    ಸಿಂಕ್‌ನಲ್ಲಿ ಊಟ ಮಾಡಿದ ತಟ್ಟೆ ಅಥವಾ ಪಾತ್ರೆಗಳಲ್ಲಿ ಉಳಿದಿರುವ ಆಹಾರವನ್ನು ಕೂಡಲೇ ವಿಲೇವಾರಿ ಮಾಡಬೇಕು. ಆಹಾರದ ಅವಶೇಷಗಳನ್ನು ಪ್ರಾಣಿಗಳಿಗೆ ನೀಡಬೇಕು. ಇಲ್ಲದಿದ್ದರೆ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚುತ್ತದೆ ಮತ್ತು ಗಂಡ-ಹೆಂಡತಿಯ ನಡುವೆ ಕಲಹ ಉಂಟಾಗಬಹುದು.
  4. ಅಡಿಗೆಮನೆಯಲ್ಲಿ ಕಸ:
    ಅಡಿಗೆಮನೆ ಯಾವಾಗಲೂ ಸ್ವಚ್ಛವಾಗಿರಬೇಕು. ಈರುಳ್ಳಿ ಸಿಪ್ಪೆ, ತರಕಾರಿ ತುಂಡುಗಳು ಅಥವಾ ಯಾವುದೇ ಕಸವನ್ನು ಬಿಡಬಾರದು. ಸ್ವಚ್ಛತೆ ಇಲ್ಲದ ಅಡಿಗೆಮನೆಗೆ ಲಕ್ಷ್ಮಿ ದೇವಿಯು ಪ್ರವೇಶಿಸದೆ, ಅಲ್ಲಿ ತಯಾರಾದ ಆಹಾರ ಸೇವಿಸುವವರಿಗೆ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು.

ಡಾ. ಬಸವರಾಜ್ ಗುರೂಜಿಯವರ ಪ್ರಕಾರ, ಅಡಿಗೆಮನೆ ಸ್ವಚ್ಛ ಮತ್ತು ಶುದ್ಧವಾಗಿದ್ದರೆ, ಮನೆಯಲ್ಲಿನ ಶಕ್ತಿ, ಶ್ರೀಮಂತಿಕೆ ಮತ್ತು ಆರೋಗ್ಯವು ಹೆಚ್ಚುತ್ತದೆ.

 

ರಾಯಚೂರು: ಅಕಾಲಿಕ ಮಳೆಯಿಂದ ಸಜ್ಜೆ, ಜೋಳ ಬೆಳೆ ಹಾನಿ – ರೈತರಿಗೆ ಕಷ್ಟ

0

ರಾಯಚೂರು, ಫೆಬ್ರವರಿ 25: ರಾಯಚೂರು ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಸುರಿದ ಅಕಾಲಿಕ ಮಳೆಯಿಂದಾಗಿ ರೈತರ ನಡುವೆ ಭಾರಿ ನಷ್ಟ ಸಂಭವಿಸಿದೆ.

ದೇವದುರ್ಗ ತಾಲೂಕಿನ ಹೆಚ್. ಸಿದ್ದಾಪುರ ಮತ್ತು ಸುತ್ತಮುತ್ತಲ ಗ್ರಾಮಗಳಲ್ಲಿ ಸಜ್ಜೆ, ಜೋಳ ಮತ್ತು ಭತ್ತದ ಬೆಳೆಗಳಿಗೆ ಹಾನಿಯಾಗಿದ್ದು, ಹಲವಾರು ರೈತರು ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸಿದ್ದಾರೆ.

ಹೆಚ್. ಸಿದ್ದಾಪುರ ಗ್ರಾಮದ ಕೃಷ್ಣಾಗೆ ಸೇರಿದ 7 ಎಕರೆ ಸಜ್ಜೆ ಬೆಳೆ ಸಂಪೂರ್ಣ ನೆಲಕ್ಕಚ್ಚಿಹೋಗಿದ್ದು, ಸಾವಿರಾರು ರೂಪಾಯಿ ವೆಚ್ಚ ಮಾಡಿಕೊಂಡರೂ ಸಹ ಬೆಳೆ ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ರೈತರು ಹೋರಾಟ ಮಾಡಿ, ನೆಲಕ್ಕಚ್ಚಿದ ಬೆಳೆಯನ್ನು ಎತ್ತಿ ಉಳಿಸಲು ಪ್ರಯತ್ನಿಸುತ್ತಿದ್ದಾರೆ. ಗಾಳಿ ಮತ್ತು ಮಳೆಯು ಜಿಲ್ಲೆ ಮಟ್ಟದಲ್ಲಿ ಭತ್ತ, ಜೋಳ ಮತ್ತು ಸಜ್ಜೆ ಬೆಳೆಗಳಿಗೆ ಹಾನಿ ಉಂಟುಮಾಡಿದೆ.

ಅಕಾಲಿಕ ಮಳೆಯಿಂದ ಮೆಣಸಿನಕಾಯಿ ಬೆಳೆಗೂ ಹಾನಿ ಸಂಭವಿಸಿದ್ದು, ಒದ್ದೆಯಾಗಿರುವ ಮೆಣಸಿನಕಾಯಿ ರೈತರಿಗೆ ಹೆಚ್ಚಿನ ಚಿಂತೆ ಉಂಟುಮಾಡಿದೆ. ರೈತರು ಬೆಳೆ ಪರಿಶೀಲನೆ ಮಾಡಿಸಿ, ತಕ್ಷಣ ಪರಿಹಾರ ನೀಡುವಂತೆ ಅಧಿಕಾರಿಗಳಿಂದ ಒತ್ತಾಯಿಸಿದ್ದಾರೆ.

ಒಟ್ಟಿನಲ್ಲಿ, ಅಕಾಲಿಕ ಮಳೆಯ ಪರಿಣಾಮದಿಂದ ರಾಯಚೂರು ಜಿಲ್ಲೆ ರೈತರಿಗೆ ಸಂಕಷ್ಟಕಾರಿಯಾಗಿದೆ ಮತ್ತು ಮುಂದಿನ ದಿನಗಳಲ್ಲಿ ಸೂಕ್ತ ಪರಿಹಾರ ಕ್ರಮ ಕೈಗೊಳ್ಳುವುದು ಅಗತ್ಯವಾಗಿದೆ.

 

ಚಿಕ್ಕಮಗಳೂರಿನಲ್ಲಿ ಕಾಡಾನೆ ಆತಂಕ – 12 ಗ್ರಾಮಗಳಲ್ಲಿ ನಿಷೇಧಾಜ್ಞೆ ಜಾರಿ

0

ಚಿಕ್ಕಮಗಳೂರು: ಚಿಕ್ಕಮಗಳೂರು ತಾಲ್ಲೂಕಿನಲ್ಲಿ ಕಾಡಾನೆಗಳ ಹಿಂಸೆ ಹೆಚ್ಚಿದ ಹಿನ್ನೆಲೆ ಆಡಳಿತವು ತೀವ್ರ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ.

ತಾಲ್ಲೂಕಿನ ಒಟ್ಟು 12 ಗ್ರಾಮಗಳಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ, ಸಂಜೆ 4 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ಸಾರ್ವಜನಿಕ ಸಂಚಾರ ನಿಯಂತ್ರಿಸಲಾಗಿದೆ. ಈ ಕುರಿತು ತಹಶೀಲ್ದಾರ್ ಆದೇಶ ಹೊರಡಿಸಿ, ನಿಷೇಧಾಜ್ಞೆ ಫೆಬ್ರವರಿ 26 ರವರೆಗೆ ಜಾರಿಯಾಗಿರಲಿದೆ ಎಂದು ತಿಳಿಸಿದ್ದಾರೆ. ಕೆಲ ದಿನಗಳ ಹಿಂದೆ, ಹುಣಸೆಹಳ್ಳಿ ಗ್ರಾಮದಲ್ಲಿ ನಾಗೇಶ್ ಗೌಡರ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ 50 ವರ್ಷದ ಕಾರ್ಮಿಕ ಯಲ್ಲಪ್ಪ ಆನೆ ದಾಳಿಗೆ ಬಲಿಯಾಗಿದ್ದರು. ಅದೇ ಸ್ಥಳದಲ್ಲಿ ಒಂದು ವಾರದ ಮಧ್ಯಂತರದಲ್ಲಿ ಹೊಸಪೇಟೆ ಮೂಲದ 34 ವರ್ಷದ ಬೋರಮ್ಮ ಎಂಬ ಕಾರ್ಮಿಕ ಮಹಿಳೆಯೂ ಕಾಡಾನೆ ದಾಳಿಗೆ ಅಸುನೀಗಿದ್ದರು. ಈ ಘಟನೆಯನ್ನು ನಂತರ, ವೇಗವಾಗಿ ನಡೆದ ಆನೆ ಸೆರೆ ಕಾರ್ಯಾಚರಣೆಯಲ್ಲಿ ಯಶಸ್ವಿಯಾಗಿ ಕಿಲ್ಲರ್ ಸಲಗ ಸೆರೆಯಾಗಿತ್ತು.

ಅರಣ್ಯ ಇಲಾಖೆ, ಈ ರೀತಿಯ ಅಪಾಯಗಳಿಂದ ಮುಂದಿನ ಘಟನೆಗಳು ತಡೆಯಲು, ಚಿಕ್ಕಮಗಳೂರು ತಾಲ್ಲೂಕಿನ ಮೂಗ್ತಿಹಳ್ಳಿ, ವಸ್ತಾರೆ, ಮತ್ತಾವರ, ದಂಬದಹಳ್ಳಿ, ನಲ್ಲೂರು, ಕಾರೇಮನೆ, ಉಕ್ಕುಂದ, ಗಡಬನಹಳ್ಳಿ, ಜೋಳದಾಳು, ಚಿಕ್ಕೊಳಲೆ, ತಳಿಹಳ್ಳಿ, ಶಿರಗುಂದ ಗ್ರಾಮಗಳಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದೆ. ವಿಶೇಷವಾಗಿ ಚಿಕ್ಕೊಳಲೆ ಅರಣ್ಯ ಪ್ರದೇಶದಲ್ಲಿ ಎರಡು ಕಾಡಾನೆಗಳು ಬೀಡುಬಿಟ್ಟಿರುವುದು ಪತ್ತೆಯಾಗಿದ್ದು, ಅವರ ಚಲನೆಯ ಮೇಲೂ ಅರಣ್ಯ ಇಲಾಖೆ ಹದ್ದಿನಕಣ್ಣು ಇಟ್ಟಿದೆ.

ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಶ್ವಾನ ದಳದ ಸಹಾಯದಿಂದ ಕಾಡಾನೆಗಳ ಸಂಚಾರ ದಿಕ್ಕು ಮತ್ತು ಚಲನೆಗಳನ್ನು ಕ್ರಮವಾಗಿ ಗಮನಿಸುತ್ತಿದ್ದಾರೆ. ಗ್ರಾಮಾಂತರ ಪ್ರದೇಶಗಳಲ್ಲಿ ಅನಗತ್ಯ ಸಂಚಾರ ಮಾಡದಂತೆ ಸಾರ್ವಜನಿಕರಿಗೆ ಮನವಿ ಮಾಡಲಾಗಿದೆ. ಕಾಫಿ ತೋಟಗಳಿಗೆ ತೆರಳುವವರು ತಾತ್ಕಾಲಿಕವಾಗಿ ಕೆಲಸ ನಿಲ್ಲಿಸುವಂತೆ ಸೂಚಿಸಲಾಗಿದೆ. ಇದಲ್ಲದೆ, ರಾತ್ರಿ ವೇಳೆ ಮನೆಗಳ ಹೊರಗೆ ಓಡಾಡದಂತೆ ಮತ್ತು ಗುಂಪಿನಲ್ಲಿ ಮಾತ್ರ ಸಂಚರಿಸುವಂತೆ ಎಚ್ಚರಿಸಲಾಗಿದೆ. ಯಾವುದೇ ತುರ್ತು ಪರಿಸ್ಥಿತಿ ಉಂಟಾದರೆ ತಕ್ಷಣ ಅರಣ್ಯ ಇಲಾಖೆ ಅಥವಾ ಪೊಲೀಸ್ ಇಲಾಖೆಯನ್ನು ಸಂಪರ್ಕಿಸಲು ಸಾರ್ವಜನಿಕರಿಗೆ ಸೂಚಿಸಲಾಗಿದೆ.

 

 

ರಾತ್ರಿ ಬೇಗ ನಿದ್ದೆ ಬರ್ತಿಲ್ವಾ?  ಹಾಗಾದ್ರೆ ಮಲಗುವ ಮೊದಲು ಈ 5 ಟಿಪ್ಸ್ ಫಾಲೋ ಮಾಡಿ!

0

ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಮಾನಸಿಕ ಒತ್ತಡ, ಆತಂಕ ಮತ್ತು ಖಿನ್ನತೆಯಂತಹ ಸಮಸ್ಯೆಗಳಿಗೆ ಒಳಗಾಗುತ್ತಿದ್ದಾರೆ. ಅತಿಯಾದ ಕೆಲಸದ ಒತ್ತಡ, ಸ್ಪರ್ಧಾತ್ಮಕ ಜೀವನಶೈಲಿ ಮತ್ತು ನಿದ್ರೆಯ ಕೊರತೆ ಇದಕ್ಕೆ ಪ್ರಮುಖ ಕಾರಣಗಳಾಗಿವೆ. ಇಂತಹ ಸಂದರ್ಭದಲ್ಲಿ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಧ್ಯಾನ ಮಹತ್ವದ ಪಾತ್ರವಹಿಸುತ್ತದೆ.

ಬೆಳಿಗ್ಗೆ ಧ್ಯಾನ ಮಾಡುವುದನ್ನು ತಜ್ಞರು ಶಿಫಾರಸು ಮಾಡುತ್ತಿದ್ದರೂ, ಸಮಯದ ಅಭಾವದಿಂದ ಅನೇಕರಿಗೆ ಅದು ಸಾಧ್ಯವಾಗುವುದಿಲ್ಲ. ಅಂತಹವರು ರಾತ್ರಿ ಮಲಗುವ ಮುನ್ನ ಧ್ಯಾನ ಮಾಡುವುದರಿಂದಲೂ ಸಾಕಷ್ಟು ಪ್ರಯೋಜನ ಪಡೆಯಬಹುದು. ದಿನವಿಡೀ ಸಂಗ್ರಹವಾದ ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡಲು ರಾತ್ರಿ ಧ್ಯಾನ ಸಹಕಾರಿ.

ಉತ್ತಮ ನಿದ್ರೆ

ಇಂದಿನ ಕಾಲದಲ್ಲಿ ಅನೇಕರು ಮಲಗುವ ಮುನ್ನ ಮೊಬೈಲ್ ಬಳಕೆಯಲ್ಲಿ ಸಮಯ ಕಳೆಯುತ್ತಾರೆ. ಇದರಿಂದ ನಿದ್ರೆಯ ಗುಣಮಟ್ಟ ಕುಸಿಯುತ್ತದೆ. ಮಲಗುವ ಮೊದಲು 10–15 ನಿಮಿಷ ಧ್ಯಾನ ಮಾಡುವುದರಿಂದ ಮನಸ್ಸು ಶಾಂತಗೊಳ್ಳುತ್ತದೆ. ನಿಯಮಿತ ಅಭ್ಯಾಸದಿಂದ ಚಡಪಡಿಕೆ, ಆತಂಕ ಕಡಿಮೆಯಾಗುತ್ತದೆ ಮತ್ತು ಉತ್ತಮ ನಿದ್ರೆ ದೊರೆಯುತ್ತದೆ.

ಒತ್ತಡ ಕಡಿಮೆ

ಒತ್ತಡದಲ್ಲಿರುವಾಗ ದೇಹದಲ್ಲಿ ಕಾರ್ಟಿಸೋಲ್ ಮತ್ತು ಅಡ್ರಿನಾಲಿನ್ ಹಾರ್ಮೋನ್‌ಗಳು ಹೆಚ್ಚಾಗಿ ಬಿಡುಗಡೆ ಆಗುತ್ತವೆ. ಇದು ದೀರ್ಘಾವಧಿಯಲ್ಲಿ ಖಿನ್ನತೆಯಂತಹ ಸಮಸ್ಯೆಗಳಿಗೆ ಕಾರಣವಾಗಬಹುದು. ಮಲಗುವ ಮುನ್ನ ಧ್ಯಾನ ಮಾಡುವುದರಿಂದ ಕಾರ್ಟಿಸೋಲ್ ಮಟ್ಟ ಕಡಿಮೆಯಾಗಲು ಸಹಾಯವಾಗುತ್ತದೆ.

ಮೆದುಳಿನ ಚಟುವಟಿಕೆ ಸುಧಾರಣೆ

ನಿಯಮಿತ ಧ್ಯಾನವು ಮೆದುಳಿನ ಹಿಪೊಕ್ಯಾಂಪಸ್ ಭಾಗಕ್ಕೆ ರಕ್ತಪ್ರವಾಹ ಹೆಚ್ಚಿಸಲು ಸಹಕಾರಿ ಎಂದು ಅಧ್ಯಯನಗಳು ಸೂಚಿಸುತ್ತವೆ. ಎಂಟು ವಾರಗಳ ಕಾಲ ನಿರಂತರ ಧ್ಯಾನ ಮಾಡಿದರೆ ಗಮನ, ಸ್ಮರಣಶಕ್ತಿ ಮತ್ತು ಮನೋನಿಬಂಧನೆ ಸುಧಾರಿಸಬಹುದು.

ಖಿನ್ನತೆ ಮತ್ತು ಆತಂಕ ನಿಯಂತ್ರಣ

ಧ್ಯಾನವು ಭಾವನಾತ್ಮಕ ಸಮತೋಲನವನ್ನು ಹೆಚ್ಚಿಸುತ್ತದೆ. ನಕಾರಾತ್ಮಕ ಚಿಂತನೆಗಳನ್ನು ಕಡಿಮೆ ಮಾಡುತ್ತದೆ. ಇದರಿಂದ ಖಿನ್ನತೆ ಮತ್ತು ಆತಂಕದ ಲಕ್ಷಣಗಳು ತಗ್ಗಲು ಸಹಾಯವಾಗುತ್ತದೆ.

ಒಟ್ಟಿನಲ್ಲಿ, ಬೆಳಿಗ್ಗೆ ಸಾಧ್ಯವಾಗದಿದ್ದರೂ ರಾತ್ರಿ ಮಲಗುವ ಮುನ್ನ ಧ್ಯಾನ ಅಭ್ಯಾಸ ಮಾಡುವುದು ಮಾನಸಿಕ ಆರೋಗ್ಯಕ್ಕೆ ಉತ್ತಮ. ದಿನಕ್ಕೆ ಕೇವಲ ಕೆಲವು ನಿಮಿಷಗಳನ್ನು ಮೀಸಲಿಟ್ಟರೂ ದೀರ್ಘಾವಧಿಯಲ್ಲಿ ಅದರ ಲಾಭಗಳು ಸ್ಪಷ್ಟವಾಗುತ್ತವೆ.

ಭಾರತಕ್ಕೆ ಸೆಮಿಫೈನಲ್ ಕಾದಾಟ – ಎದುರಾಳಿ ತಂಡಗಳ ಫಲಿತಾಂಶವೂ ನಿರ್ಧಾರಕ!

0

ಟಿ20 ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ಪ್ರಸ್ತುತ ನಿರ್ಣಾಯಕ ಹಂತದಲ್ಲಿದ್ದು, ಸೂಪರ್ 8 ಹಂತದ ಮೊದಲ ಪಂದ್ಯದಲ್ಲಿ ಸೋತ ನಂತರ ಮುಂದಿನ ಪಂದ್ಯಗಳು ಅತ್ಯಂತ ಮುಖ್ಯವಾಗಿವೆ.

ಭಾರತ ತಂಡಕ್ಕೆ ಸೆಮಿಫೈನಲ್‌ ಪ್ರವೇಶಕ್ಕಾಗಿ ಝಿಂಬಾಬ್ವೆ ಹಾಗೂ ವೆಸ್ಟ್ ಇಂಡೀಸ್ ವಿರುದ್ಧ ಗೆಲುವು ಅನಿವಾರ್ಯವಾಗಿದೆ. ಈ ಗೆಲುವುಗಳ ಹೊರತಾಗಿಯೇ ಭಾರತ ತಂಡ ನೇರವಾಗಿ ಸೆಮಿಫೈನಲ್‌ಗೆ ಹೋಗುತ್ತೆ ಎಂದು ಖಚಿತವಾಗಿ ಹೇಳಲಾಗುವುದಿಲ್ಲ. ಸೆಮಿಫೈನಲ್ ಹಾದಿಯಲ್ಲಿ ಸೌತ್ ಆಫ್ರಿಕಾ, ವೆಸ್ಟ್ ಇಂಡೀಸ್ ಹಾಗೂ ಝಿಂಬಾಬ್ವೆ ತಂಡಗಳ ಫಲಿತಾಂಶಗಳು ಪ್ರಮುಖವಾಗಿವೆ. ನೆಟ್ ರನ್ ರೇಟ್‌ನಲ್ಲಿ ಹಿಂದಿನ ಸ್ಥಾನದಲ್ಲಿರುವ ಟೀಮ್ ಇಂಡಿಯಾ ಎದುರಾಳಿ ತಂಡಗಳ ಫಲಿತಾಂಶಗಳ ಮೇಲೂ ಅವಲಂಬಿತವಾಗಿದೆ. ಮುಂದಿನ ಪಂದ್ಯಗಳಲ್ಲಿ.

  • ಝಿಂಬಾಬ್ವೆ ತಂಡ ಸೋಲು ಬಯಸಬೇಕು.
  • ವೆಸ್ಟ್ ಇಂಡೀಸ್ ತಂಡ ಸೌತ್ ಆಫ್ರಿಕಾ ವಿರುದ್ಧ ಸೋತರೆ ಭಾರತಕ್ಕೆ ಸಹಾಯಕ.
  • ಸೌತ್ ಆಫ್ರಿಕಾ ತಂಡವು ವೆಸ್ಟ್ ಇಂಡೀಸ್ ಮತ್ತು ಝಿಂಬಾಬ್ವೆ ವಿರುದ್ಧ ಗೆಲ್ಲಬೇಕು.

ಇದರಿಂದ, ಸೌತ್ ಆಫ್ರಿಕಾ ತಂಡವು ಮುಂದಿನ ಎರಡು ಪಂದ್ಯಗಳಲ್ಲಿ ಗೆದ್ದರೆ ಟೀಮ್ ಇಂಡಿಯಾದ ಗೆಲುವು 4 ಅಂಕಗಳೊಂದಿಗೆ ಸೆಮಿಫೈನಲ್ ಹಾದಿ ಸುಗಮವಾಗುತ್ತದೆ. ಆದರೆ, ವೆಸ್ಟ್ ಇಂಡೀಸ್ ತಂಡ ಸೌತ್ ಆಫ್ರಿಕಾ ವಿರುದ್ಧ ಗೆದ್ದರೆ, ಭಾರತ ತಂಡವು ಝಿಂಬಾಬ್ವೆ ಮತ್ತು ವೆಸ್ಟ್ ಇಂಡೀಸ್ ವಿರುದ್ಧ ಭಾರೀ ಅಂತರದಿಂದ ಗೆಲುವು ಸಾಧಿಸಬೇಕಾಗುತ್ತದೆ, ಏಕೆಂದರೆ ಆ ಸಮಯದಲ್ಲಿ ಸೌತ್ ಆಫ್ರಿಕಾ 6 ಅಂಕೆಗಳೊಂದಿಗೆ ಸೆಮಿಫೈನಲ್ ಪ್ರವೇಶ ಪಡೆಯಲಿದೆ.

ಹೀಗಾಗಿ, ಟೀಮ್ ಇಂಡಿಯಾದ ಸೆಮಿಫೈನಲ್ ಹಾದಿ ತೀವ್ರವಾಗಿ ನಿರ್ಣಾಯಕವಾಗಿದೆ. ಭಾರತ ತಂಡವು ತನ್ನ ಮುಂದಿನ ಪಂದ್ಯಗಳಲ್ಲಿ ಗೆಲುವು ಸಾಧಿಸುವುದರ ಜೊತೆಗೆ ಎದುರಾಳಿ ತಂಡಗಳ ಫಲಿತಾಂಶಗಳ ಮೇಲೆ ಕೂಡ ಅವಲಂಬಿತವಾಗಿದೆ. ಸೌತ್ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್ ನಡುವಣ ಪಂದ್ಯಗಳು ಭಾರತೀಯ ಅಭಿಮಾನಿಗಳಿಗೆ ಕಣ್ಣಿನ ಮುಂಭಾಗದಲ್ಲಿ ನಡೆಯುವ ಅತಿ ಮುಖ್ಯ ಘಟನೆಗಳಾಗಿವೆ.

ಕೊಪ್ಪಳ ವಸತಿ ಶಾಲೆಯಲ್ಲಿ ಅಪ್ರಾಪ್ತೆ ಗರ್ಭಿಣಿ: ಮದುವೆಯ ಆಮಿಷ, ಪೋಕ್ಸೋ ಅಡಿ ಪ್ರಕರಣ

0

ಕೊಪ್ಪಳ: ಜಿಲ್ಲೆಯ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ವ್ಯಾಪ್ತಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಪಿಯು ವಿದ್ಯಾರ್ಥಿನಿಯೊಬ್ಬಳು ಗರ್ಭಿಣಿಯಾಗಿರುವುದು ಬಹಿರಂಗವಾಗಿದ್ದು, ಮದುವೆಯಾಗುವುದಾಗಿ ನಂಬಿಸಿ ಅಪ್ರಾಪ್ತೆಯ ಮೇಲೆ ಅತ್ಯಾಚಾರ ಎಸಗಿರುವ ಆರೋಪ ಕೇಳಿ ಬಂದಿದೆ. ಪ್ರಕರಣ ಸಂಬಂಧ ಪೋಕ್ಸೋ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಲಾಗಿದೆ.

ದೂರಿನ ಪ್ರಕಾರ, ಆರೋಪಿಯು ಮದುವೆಯ ಆಮಿಷವೊಡ್ಡಿ ವಿದ್ಯಾರ್ಥಿನಿಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ್ದಲ್ಲದೆ, ವಿಷಯವನ್ನು ಯಾರಿಗೂ ಹೇಳದಂತೆ ಬೆದರಿಕೆ ಹಾಕಿದ್ದಾನೆಂದು ತಿಳಿಸಲಾಗಿದೆ. ಫೆಬ್ರವರಿ 19ರಂದು ಬಾಲಕಿಗೆ ರಕ್ತಸ್ರಾವವಾಗಿದ್ದ ಹಿನ್ನೆಲೆ ವೈದ್ಯಕೀಯ ಪರೀಕ್ಷೆ ನಡೆಸಿದಾಗ ಗರ್ಭಿಣಿಯಾಗಿರುವುದು ದೃಢಪಟ್ಟಿದೆ. ಬಳಿಕ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

ಘಟನೆ ಬಹಿರಂಗವಾದ ಬಳಿಕ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಷಯವನ್ನು ಮುಚ್ಚಿಡಲು ಯತ್ನಿಸಿದ್ದರೆಂಬ ಆರೋಪದ ಹಿನ್ನೆಲೆ ವಸತಿಶಾಲೆಯ ಪ್ರಾಂಶುಪಾಲರ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಕೇಳಿಬಂದಿದೆ. ಪ್ರಾಂಶುಪಾಲರ ಅಮಾನತಿಗೆ ಒತ್ತಾಯಿಸಿ ಎಸ್‌ಎಫ್‌ಐ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.

ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ವಿದ್ಯಾರ್ಥಿನಿಯ ಹೇಳಿಕೆ ದಾಖಲಿಸಿಕೊಂಡು ತನಿಖೆ ಮುಂದುವರಿದಿದೆ. ವಸತಿಶಾಲೆಗಳ ಮೇಲ್ವಿಚಾರಣೆ ಹಾಗೂ ಅಪ್ರಾಪ್ತೆಯರ ಸುರಕ್ಷತೆ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂಬ ಸಾರ್ವಜನಿಕ ಒತ್ತಾಯವೂ ಕೇಳಿಬರುತ್ತಿದೆ.

ಗಮನಾರ್ಹವಾಗಿ, ಕಳೆದ ನವೆಂಬರ್‌ನಲ್ಲಿ ಕೂಡ ಕೊಪ್ಪಳ ಜಿಲ್ಲೆಯ ವಿದ್ಯಾರ್ಥಿನಿಲಯದಲ್ಲಿ ಅಪ್ರಾಪ್ತ ಬಾಲಕಿಗೆ ಹೆರಿಗೆಯಾದ ಪ್ರಕರಣ ರಾಜ್ಯದಾದ್ಯಂತ ಚರ್ಚೆಗೆ ಗ್ರಾಸವಾಗಿತ್ತು. ಅದನ್ನು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಂಡಿತ್ತು. ಇದೀಗ ಮತ್ತೆ ಅಂಥದ್ದೇ ಘಟನೆ ಮರುಕಳಿಸಿರುವುದು ಆತಂಕ ಮೂಡಿಸಿದೆ.

error: Content is protected !!