Home Blog

ಬೆಂಗಳೂರು ಬಿಸಿಗೆ ತತ್ತರ: ಎಸಿ-ಕೂಲರ್ʼಗಳಿಗೆ ಭಾರೀ ಬೇಡಿಕೆ, ಮಣ್ಣಿನ ಮಡಿಕೆಗಳಿಗೂ ಹೆಚ್ಚಿದ ಕ್ರೇಜ್

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ತೀವ್ರತೆ ಹೆಚ್ಚಾಗುತ್ತಿದ್ದು, ತಾಪಮಾನ ದಾಖಲೆ ಮಟ್ಟಕ್ಕೆ ಏರಿಕೆಯಾಗುತ್ತಿದೆ. ಸುಡುವ ಸೆಕೆಯಿಂದ ಬೇಸತ್ತ ನಗರದ ಜನರು ಇದೀಗ ತಂಪಾಗಿರಲು ಎಲೆಕ್ಟ್ರಾನಿಕ್ ಉಪಕರಣಗಳು ಹಾಗೂ ಮಣ್ಣಿನ ಉತ್ಪನ್ನಗಳತ್ತ ಮುಖ ಮಾಡುತ್ತಿದ್ದಾರೆ.

ಏಪ್ರಿಲ್ ಆರಂಭದಲ್ಲೇ ಬಿಸಿಲಿನ ತೀವ್ರತೆ ಹೆಚ್ಚಾದ ಹಿನ್ನೆಲೆಯಲ್ಲಿ, ಜನರು ಎಸಿ, ಏರ್ ಕೂಲರ್ ಹಾಗೂ ಮಣ್ಣಿನ ಮಡಿಕೆಗಳನ್ನು ಖರೀದಿಸಲು ಮಾರುಕಟ್ಟೆಗಳಿಗೆ ಧಾವಿಸುತ್ತಿದ್ದಾರೆ. ನಗರದ ಎಲೆಕ್ಟ್ರಾನಿಕ್ ಶೋರೂಮ್‌ಗಳಲ್ಲಿ ಎಸಿ ಮತ್ತು ಕೂಲರ್‌ಗಳಿಗೆ ಭಾರೀ ಬೇಡಿಕೆ ಕಂಡುಬರುತ್ತಿದೆ. ಫ್ಯಾನ್ ಇದ್ದರೂ ಬಿಸಿಲಿನ ತಾಪದಿಂದ ಬಿಡುವು ಸಿಗದ ಕಾರಣ, ಗ್ರಾಹಕರು ತಮ್ಮ ಬಜೆಟ್‌ಗೆ ತಕ್ಕಂತೆ ಉಪಕರಣಗಳನ್ನು ಖರೀದಿಸಲು ಮುಂದಾಗುತ್ತಿದ್ದಾರೆ.

ಆದರೆ, ಬೇಡಿಕೆ ಹೆಚ್ಚಿರುವ ಹಿನ್ನೆಲೆಯಲ್ಲಿ ಹಲವು ಶೋರೂಮ್‌ಗಳಲ್ಲಿ ಸ್ಟಾಕ್ ಖಾಲಿಯಾಗಿದ್ದು, ಹೊಸ ಉಪಕರಣಗಳಿಗಾಗಿ ಕನಿಷ್ಠ ಒಂದು ವಾರ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಗ್ರಾಹಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಇನ್ನೊಂದೆಡೆ, ಪರಿಸರ ಸ್ನೇಹಿ ಮಣ್ಣಿನ ಉತ್ಪನ್ನಗಳಿಗೂ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಉಂಟಾಗಿದೆ. ‘ಬಡವರ ಫ್ರಿಡ್ಜ್’ ಎಂದೇ ಪ್ರಸಿದ್ಧವಾದ ಮಣ್ಣಿನ ಮಡಿಕೆಗಳು, ಜಗ್ಗುಗಳು ಹಾಗೂ ಬಾಟಲಿಗಳು ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗುತ್ತಿವೆ. ಆರೋಗ್ಯದ ದೃಷ್ಟಿಯಿಂದ ಮಡಿಕೆ ನೀರು ಉತ್ತಮವೆಂಬ ಕಾರಣದಿಂದ ಜನರು ಅದನ್ನು ಹೆಚ್ಚು ಆಯ್ಕೆ ಮಾಡುತ್ತಿದ್ದಾರೆ.

ಬೇಡಿಕೆಗೆ ಅನುಗುಣವಾಗಿ ಪೂರೈಕೆ ಸಾಧ್ಯವಾಗದಿದ್ದರೂ, ಮಡಿಕೆ ತಯಾರಕರು ಹಾಗೂ ವ್ಯಾಪಾರಿಗಳು ಉತ್ತಮ ವ್ಯಾಪಾರದಿಂದ ಸಂತಸ ವ್ಯಕ್ತಪಡಿಸಿದ್ದಾರೆ. ಒಟ್ಟಾರೆ, ಬಿಸಿಲಿನ ತೀವ್ರತೆಯ ನಡುವೆ ತಂಪಾಗಿರಲು ಜನರು ವಿಭಿನ್ನ ಆಯ್ಕೆಗಳನ್ನು ಹುಡುಕುತ್ತಿರುವುದು ಸ್ಪಷ್ಟವಾಗಿದೆ.

ಕೆಂಗೇರಿ ಚಲ್ಲಘಟ್ಟದಲ್ಲಿ ಮನೆ ತೆರವುಗೆ ಹೈಕೋರ್ಟ್ ಬ್ರೇಕ್: ವಿಕಲಚೇತನರ ಪರ ಮಧ್ಯಂತರ ರಕ್ಷಣೆ

ಬೆಂಗಳೂರು: ನಗರದ ಕೆಂಗೇರಿ ಹೋಬಳಿಯ ಚಲ್ಲಘಟ್ಟ ಗ್ರಾಮದ ಸರ್ವೇ ನಂಬರ್ 13ರಲ್ಲಿ ವಿಕಲಚೇತನರು ನಿರ್ಮಿಸಿರುವ ಮನೆ ಹಾಗೂ ಶೆಡ್‌ಗಳನ್ನು ತೆರವುಗೊಳಿಸುವ ಕ್ರಮಕ್ಕೆ ಹೈಕೋರ್ಟ್ ತಾತ್ಕಾಲಿಕ ತಡೆ ನೀಡಿದೆ.

ಬಿಡಿಎ ಸಹಾಯಕ ಕಾರ್ಯಕಾರಿ ಎಂಜಿನಿಯರ್ ನೀಡಿದ್ದ ತೆರವು ನೋಟಿಸ್ ರದ್ದುಪಡಿಸುವಂತೆ ಮಾರುತಿ ಅಂಗವಿಕಲರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಅದರ ಅಧ್ಯಕ್ಷ ಎಂ.ಜೆ. ರಂಗಸ್ವಾಮಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್. ಸುನೀಲ್ ದತ್ ಅವರ ಪೀಠ ಈ ಮಧ್ಯಂತರ ಆದೇಶ ನೀಡಿದೆ. ಜೊತೆಗೆ ರಾಜ್ಯ ಸರ್ಕಾರ ಹಾಗೂ ಬಿಡಿಎ ಸೇರಿ ಎಲ್ಲಾ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಮುಂದೂಡಲಾಗಿದೆ.

ನ್ಯಾಯಪೀಠವು, ಸಂಬಂಧಿತ ಮನವಿ ಕುರಿತು ಸೂಕ್ತ ಆದೇಶ ಹೊರಬರುವವರೆಗೆ ಅರ್ಜಿದಾರರನ್ನು ಜಾಗದಿಂದ ತೆರವುಗೊಳಿಸಬಾರದು ಎಂದು ಸ್ಪಷ್ಟಪಡಿಸಿದೆ. ಬಿಡಿಎ ನೀಡಿದ ನೋಟಿಸ್ ಹಿಂಪಡೆಯುವಂತೆ ಅರ್ಜಿದಾರರು ಈಗಾಗಲೇ 2026ರ ಏಪ್ರಿಲ್ 15ರಂದು ಮನವಿ ಸಲ್ಲಿಸಿರುವುದನ್ನೂ ನ್ಯಾಯಪೀಠ ಗಮನಕ್ಕೆ ತೆಗೆದುಕೊಂಡಿದೆ.

ಪ್ರಕರಣದ ಹಿನ್ನೆಲೆ:
ವಿಕಲಚೇತನರಿಗೆ ನಿವೇಶನ ಒದಗಿಸುವ ಉದ್ದೇಶದಿಂದ 2007ರಲ್ಲಿ ಅರ್ಜಿದಾರ ಸಂಘವು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿತ್ತು. ಬಳಿಕ ಆಶ್ರಯ ಯೋಜನೆಯಡಿ 2020ರ ಜನವರಿ 6ರಂದು ಐದು ಎಕರೆ ಭೂಮಿಯನ್ನು ಮಂಜೂರು ಮಾಡಲಾಗಿತ್ತು. ಆ ಜಾಗವನ್ನು ಸಂಘದ ಸುಪರ್ದಿಗೆ ನೀಡಲಾಗಿದ್ದು, ಕಂದಾಯ ದಾಖಲೆಗಳನ್ನೂ ಸಂಘದ ಹೆಸರಿಗೆ ಮಾಡಲಾಗಿದೆ.

ನಂತರ ಆ ಜಾಗದಲ್ಲಿ 20×30 ಅಡಿ ವಿಸ್ತೀರ್ಣದ 230 ವಸತಿ ನಿವೇಶನಗಳನ್ನು ನಿರ್ಮಿಸಲಾಗಿದ್ದು, ತಹಶೀಲ್ದಾರ್ ಅನುಮೋದನೆ ಸಹ ಪಡೆದಿದೆ. ಜಿಲ್ಲಾಧಿಕಾರಿಗಳ ನೇತೃತ್ವದ ಸಮಿತಿ 230 ಫಲಾನುಭವಿಗಳನ್ನು ಆಯ್ಕೆ ಮಾಡಿ ಹಕ್ಕುಪತ್ರಗಳನ್ನು ವಿತರಿಸಿದೆ. ಫಲಾನುಭವಿಗಳು ಆಸ್ತಿಗಳ ಮೇಲೆ ತೆರಿಗೆ ಪಾವತಿಸುತ್ತಾ ವಾಸಿಸುತ್ತಿದ್ದಾರೆ.

ಇದೀಗ ಈ ಜಾಗ ನಾಡಪ್ರಭು ಕೆಂಪೇಗೌಡ ಬಡಾವಣೆಗೆ ಸೇರಿದೆ ಎಂದು ಹೇಳಿ ಬಿಡಿಎ ಅಧಿಕಾರಿಗಳು ಮನೆ-ಶೆಡ್ ತೆರವುಗೊಳಿಸುವಂತೆ ನೋಟಿಸ್ ನೀಡಿದ್ದರು. ಇದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೊರೆ ಹೋಗಿದ್ದರು.

ರಾಜ್ಯ ಸರ್ಕಾರದಿಂದ ವಿದ್ಯುತ್ ಗ್ರಾಹಕರಿಗೆ ಗುಡ್ ನ್ಯೂಸ್: ಕರೆಂಟ್ ಬಿಲ್ ಹೆಸರು ಬದಲಾವಣೆ ಇನ್ನೂ ಸುಲಭ!

ಬೆಂಗಳೂರು: ವಿದ್ಯುತ್ ಗ್ರಾಹಕರಿಗೆ ರಾಜ್ಯ ಇಂಧನ ಇಲಾಖೆ ಗುಡ್ ನ್ಯೂಸ್ ನೀಡಿದ್ದು, ಈಗ ವಿದ್ಯುತ್ ಬಿಲ್‌ನಲ್ಲಿ ಹೆಸರು ಬದಲಾವಣೆ ಪ್ರಕ್ರಿಯೆಯನ್ನು ಆನ್‌ಲೈನ್ ಮೂಲಕ ಸುಲಭಗೊಳಿಸಲಾಗಿದೆ.

ಇಂಧನ ಇಲಾಖೆ ಹೊಸ ಲಿಂಕ್ ಬಿಡುಗಡೆ ಮಾಡಿದ್ದು, ಮನೆಯಲ್ಲೇ ಕುಳಿತು ಹೆಸರು ಬದಲಾವಣೆ ಮಾಡಿಕೊಳ್ಳುವ ಅವಕಾಶ ಕಲ್ಪಿಸಿದೆ. ಇಲ್ಲಿಯವರೆಗೆ ಮನೆ ಅಥವಾ ಕಟ್ಟಡ ಖರೀದಿ ಮಾಡಿದ ನಂತರ ವಿದ್ಯುತ್ ಬಿಲ್‌ನ ಹೆಸರು ಬದಲಾಯಿಸಲು ಬೆಸ್ಕಾಂ ಕಚೇರಿಗೆ ಹಲವಾರು ಬಾರಿ ತೆರಳಬೇಕಾಗುತ್ತಿತ್ತು. ಇದೀಗ ಈ ಹೊಸ ಆನ್‌ಲೈನ್ ವ್ಯವಸ್ಥೆಯಿಂದ ಆ ತೊಂದರೆ ನಿವಾರಣೆಯಾಗಿದ್ದು, ಈಗಾಗಲೇ 5,000ಕ್ಕೂ ಹೆಚ್ಚು ಗ್ರಾಹಕರು ಈ ಸೌಲಭ್ಯವನ್ನು ಬಳಸಿಕೊಂಡಿದ್ದಾರೆ ಎಂದು ಇಲಾಖೆ ತಿಳಿಸಿದೆ.

ಹೆಸರು ಬದಲಾವಣೆ ಮಾಡುವ ವಿಧಾನ:

ಬೆಸ್ಕಾಂ ವೆಬ್‌ಸೈಟ್‌ಗೆ ಲಾಗಿನ್ ಆಗಬೇಕು.

“ಜನಸ್ನೇಹಿ ವಿದ್ಯುತ್ ಸೇವೆಗಳು” ವಿಭಾಗದಲ್ಲಿ “ಒನರ್‌ಶಿಪ್ ನೇಮ್ ಚೆಂಜ್” ಆಯ್ಕೆ ಮಾಡಬೇಕು.

ಅಗತ್ಯ ವಿವರಗಳನ್ನು ಭರ್ತಿ ಮಾಡಿ ದಾಖಲೆಗಳನ್ನು ಅಪ್ಲೋಡ್ ಮಾಡಬೇಕು.

ಅಗತ್ಯ ದಾಖಲೆಗಳು:

ಆಧಾರ್ ಕಾರ್ಡ್

ಮಾರಾಟ ಪತ್ರ (Sale Deed)

ತೆರಿಗೆ ಪಾವತಿ ರಸೀದಿ

ಹಿಂದಿನ ಮಾಲೀಕರಿಂದ ಎನ್‌ಒಸಿ

ಇತ್ತೀಚಿನ ವಿದ್ಯುತ್ ಬಿಲ್

ವಿದ್ಯುತ್ ಪೂರೈಕೆ ಒಪ್ಪಂದ

ನಷ್ಟ ಪರಿಹಾರ ಬಾಂಡ್

ಅರ್ಜಿ ಪತ್ರ

 ಫೋಟೋ.

ಈ ಹೊಸ ವ್ಯವಸ್ಥೆಯಿಂದ ಸಮಯ ಹಾಗೂ ಶ್ರಮ ಉಳಿತಾಯವಾಗಲಿದ್ದು, ಗ್ರಾಹಕರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಚಿತ್ರದುರ್ಗ: ಹೆದ್ದಾರಿ 44ರಲ್ಲಿ ಬಸ್ ಪಲ್ಟಿ – 44 ಪ್ರಯಾಣಿಕರು ಪ್ರಾಣಾಪಾಯದಿಂದ ಪಾರು

0

ಚಿತ್ರದುರ್ಗ: ಹೆಗ್ಗೆರೆ ಗ್ರಾಮದ ಸಮೀಪದ ರಾಷ್ಟ್ರೀಯ ಹೆದ್ದಾರಿ 44ರಲ್ಲಿ ಇಂದು ಬೆಳಗ್ಗೆ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್ ಪಲ್ಟಿಯಾದ ಘಟನೆ ನಡೆದಿದೆ.

ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ 44 ಮಂದಿ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಬಳ್ಳಾರಿಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಸರ್ಕಾರಿ ಬಸ್, ಹೆಗ್ಗೆರೆ ಗ್ರಾಮದ ಬಳಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಮಧ್ಯೆ ಉರುಳಿ ಬಿದ್ದಿದೆ. ಬಸ್ ಪಲ್ಟಿಯಾದ ರಭಸಕ್ಕೆ ಕ್ಷಣಕಾಲ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಬಸ್ಸಿನಲ್ಲಿ ಒಟ್ಟು 44 ಪ್ರಯಾಣಿಕರಿದ್ದು, ಅಪಘಾತದಲ್ಲಿ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಸ್ಥಳೀಯರ ನೆರವಿನಿಂದ ಗಾಯಾಳುಗಳನ್ನು ಚಳ್ಳಕೆರೆ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ನಂತರ ಗಾಯಾಳುಗಳು ಚೇತರಿಸಿಕೊಂಡು ಮನೆಗಳಿಗೆ ತೆರಳಿದ್ದಾರೆ ಎಂದು ತಿಳಿದುಬಂದಿದೆ.

ಅಪಘಾತದಿಂದಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲಕಾಲ ಸಂಚಾರ ವ್ಯತ್ಯಯ ಉಂಟಾಯಿತು. ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿದ ಚಳ್ಳಕೆರೆ ಪೊಲೀಸರು, ಕ್ರೇನ್ ಸಹಾಯದಿಂದ ರಸ್ತೆ ಮಧ್ಯೆ ಬಿದ್ದಿದ್ದ ಬಸ್ಸನ್ನು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಬಸ್ ವೇಗವಾಗಿ ಚಲಿಸುತ್ತಿದ್ದಾಗ ಈ ಅವಘಡ ಸಂಭವಿಸಿರಬಹುದು ಎಂಬ ಅನುಮಾನ ವ್ಯಕ್ತವಾಗಿದ್ದು, ಚಳ್ಳಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಭೀಕರ ಗಾಳಿ ಅಬ್ಬರಕ್ಕೆ ಧರೆಗುರುಳಿದ ಮೊಬೈಲ್ ಟವರ್: ಹಲವು ಬೈಕ್‌ಗಳು ಜಖಂ, ತಪ್ಪಿದ ದುರಂತ; ಪುರಸಭೆ ವಿರುದ್ಧ ಆಕ್ರೋಶ!!

0

ಗದಗ: ಜಿಲ್ಲೆಯ ಮುಂಡರಗಿ ಪಟ್ಟಣದ ಜಾಗೃತ ಸರ್ಕಲ್ ಸಮೀಪ ಭಾರೀ ಗಾಳಿಯ ಪರಿಣಾಮ ಮನೆಯ ಮೇಲ್ಚಾವಣಿಯಲ್ಲಿ ಅಳವಡಿಸಲಾಗಿದ್ದ ಮೊಬೈಲ್ ಟವರ್ ಧರೆಗೆ ಉರುಳಿದ ಘಟನೆ ನಡೆದಿದೆ.

ನಿನ್ನೆ ಸಂಜೆ ವೇಳೆಯಲ್ಲಿ ಏಕಾಏಕಿ ಬೀಸಿದ ಭಾರೀ ಗಾಳಿಯಿಂದ ಈ ಅವಾಂತರ ಸಂಭವಿಸಿದ್ದು, ಮನೆ ಮುಂದೆ ನಿಲ್ಲಿಸಿದ್ದ ಹಲವು ಬೈಕ್‌ಗಳು ಜಖಂಗೊಂಡಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.

ಟವರ್ ಕುಸಿತದಿಂದ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸವಾರರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಸ್ಥಳಕ್ಕೆ ಬಂದ ಸಾರ್ವಜನಿಕರು ಮತ್ತು ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು.

ಈ ಘಟನೆ ಹಿನ್ನೆಲೆಯಲ್ಲಿ ಮುಂಡರಗಿ ಪುರಸಭೆ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಖಾಸಗಿ ಕಂಪನಿಗಳಿಗೆ ಮನೆಯಿಂದ ಮೇಲೆ ಟವರ್ ಅಳವಡಿಸಲು ಅನುಮತಿ ನೀಡಬಾರದಿತ್ತು ಎಂದು ಕಿಡಿಕಾರಿದ್ದಾರೆ. ಮುಂಡರಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಹಗರಿಬೊಮ್ಮನಹಳ್ಳಿ ಪುರಸಭೆ ಅಧ್ಯಕ್ಷರ ಚುನಾವಣೆ: ಬಿಜೆಪಿಯಿಂದ ವಿಪ್ ಜಾರಿ

ಬಣಕಾರ್ ಸುರೇಶ್ ಅಭ್ಯರ್ಥಿ ಘೋಷಣೆ – ಶಿಸ್ತು ಉಲ್ಲಂಘನೆಗೆ ಕ್ರಮ ಎಚ್ಚರಿಕೆ

ಹಗರಿಬೊಮ್ಮನಹಳ್ಳಿ: ಪಟ್ಟಣದ ಪುರಸಭೆ ಅಧ್ಯಕ್ಷರ ಚುನಾವಣೆ ಎಪ್ರಿಲ್ 30ರಂದು ನಡೆಯಲಿದ್ದು, ಭಾರತೀಯ ಜನತಾ ಪಕ್ಷ (ಬಿಜೆಪಿ)ದಿಂದ ಬಣಕಾರ್ ಸುರೇಶ್ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿಯಾಗಿ ಘೋಷಿಸಲಾಗಿದೆ ಎಂದು ಮಂಡಲ ಅಧ್ಯಕ್ಷ ಬೆಣಕಲ್ಲು ಪ್ರಕಾಶ್ ತಿಳಿಸಿದ್ದಾರೆ.

ಪಟ್ಟಣದ ಬಿಜೆಪಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದಿನ ಅಧ್ಯಕ್ಷರ ಚುನಾವಣೆಯಲ್ಲಿ ಪಕ್ಷದ ಎಲ್ಲಾ ಸದಸ್ಯರ ಮೇಲೆ ನಂಬಿಕೆ ಇಟ್ಟು ವಿಪ್ ಜಾರಿ ಮಾಡಲಾಗಿರಲಿಲ್ಲ. ಆದರೆ, ಆ ವೇಳೆ ಪಕ್ಷದ ಇಬ್ಬರು ಸದಸ್ಯರು ನಂಬಿಕೆ ದ್ರೋಹ ಮಾಡಿದ್ದನ್ನು ಸ್ಮರಿಸಿದರು.

ಈ ಬಾರಿ ಅಂತಹ ಪರಿಸ್ಥಿತಿ ಮರುಕಳಿಸದಂತೆ ಹಾಗೂ ಪಕ್ಷಕ್ಕೆ ಮುಜುಗರ ತಪ್ಪಿಸಲು ವಿಪ್ ಜಾರಿ ಮಾಡಲಾಗಿದೆ. ಚುನಾವಣೆಯ ವೇಳೆ ವಿಪ್ ಉಲ್ಲಂಘಿಸುವ ಸದಸ್ಯರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.

ಹಾಗೂ ಈ ವಿಚಾರವನ್ನು ಹಾಲಿ ಶಾಸಕರು, ಬಿಜೆಪಿ ಜಿಲ್ಲಾಧ್ಯಕ್ಷರು ಹಾಗೂ ಪಕ್ಷದ ಪ್ರಮುಖ ಮುಖಂಡರ ಗಮನಕ್ಕೂ ತಂದಿದ್ದೇವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಪುರಸಭೆಯ ಸದಸ್ಯರಾದ ಜೋಗಿ ಹನುಮಂತಪ್ಪ, ಬಣಕಾರ್ ಸುರೇಶ್, ನವೀನ್ ಕುಮಾರ್, ದೀಪಕ್ ಕಠಾರೆ, ನಾಗರಾಜ್ ಜನ್ನು ಹಾಗೂ ಬಿಜೆಪಿ ನಗರ ಘಟಕದ ಅಧ್ಯಕ್ಷ ಮಂಜುನಾಥ್ ಹಿರೇಮಠ್, ಮಂಡಲ ಕಾರ್ಯದರ್ಶಿಗಳಾದ ದಿವಾಕರ ಗೌಡ್ರು, ಹನುಮಂತಪ್ಪ ಕೋಗಳಿ ಸೇರಿದಂತೆ ಪಕ್ಷದ ಪ್ರಮುಖರಾದ ಅಂಬಳಿ ರವೀಂದ್ರಗೌಡ್ರು, ಸಂದೀಪ್, ಮಂಜುನಾಥ್ ಉಪಸ್ಥಿತರಿದ್ದರು.

ರಾಜ್ಯದ ಗಾಳಿಯ ಗುಣಮಟ್ಟದಲ್ಲಿ ಏರುಪೇರು: ಬೆಳಗಾವಿಯಲ್ಲಿ ಉತ್ತಮ, ಬೆಂಗಳೂರಿನಲ್ಲಿ ಇನ್ನೂ ಕಳವಳ!

ಬೆಂಗಳೂರು: ರಾಜ್ಯದ ಪ್ರಮುಖ ನಗರಗಳಲ್ಲಿ ಗಾಳಿಯ ಗುಣಮಟ್ಟದಲ್ಲಿ ಸ್ವಲ್ಪ ಸುಧಾರಣೆ ಕಂಡುಬಂದಿದ್ದರೂ, ಕೆಲವು ನಗರಗಳಲ್ಲಿ ಇನ್ನೂ ಅನಾರೋಗ್ಯಕರ ಮಟ್ಟ ಮುಂದುವರಿದಿದೆ ಎಂದು ತಜ್ಞರು ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಏರ್ ಕ್ವಾಲಿಟಿ ಇಂಡೆಕ್ಸ್ (AQI) ಸುಮಾರು 131–135 ರಷ್ಟಿದ್ದು, ಕಳಪೆ ಮಟ್ಟದಲ್ಲೇ ಉಳಿದಿದೆ. ಇತ್ತೀಚಿನ ದಿನಗಳಿಗೆ ಹೋಲಿಸಿದರೆ ಸುಧಾರಣೆ ಕಂಡರೂ, ಆರೋಗ್ಯದ ದೃಷ್ಟಿಯಿಂದ ಇನ್ನೂ ಅಪಾಯಕಾರಿಯೇ ಎಂದು ತಜ್ಞರು ಎಚ್ಚರಿಸಿದ್ದಾರೆ.

ಮಂಗಳೂರಿನಲ್ಲಿ AQI 126ರಷ್ಟಿದ್ದು, ಉಡುಪಿಯಲ್ಲಿ 124 ದಾಖಲಾಗಿದೆ. ಈ ಎರಡೂ ನಗರಗಳಲ್ಲಿ ಗಾಳಿಯ ಗುಣಮಟ್ಟ ಅನಾರೋಗ್ಯಕರ ಮಟ್ಟದಲ್ಲಿದೆ. ಕೆಲ ತಿಂಗಳ ಹಿಂದೆ ಮಂಗಳೂರಿನಲ್ಲಿ AQI 200 ದಾಟಿದ ಸಂದರ್ಭಗಳೂ ಇದ್ದವು.

ಇದರ ನಡುವೆ ಬೆಳಗಾವಿಯಲ್ಲಿ ಗಾಳಿಯ ಗುಣಮಟ್ಟ ಭಾರೀ ಸುಧಾರಣೆ ಕಂಡಿದ್ದು, AQI ಕೇವಲ 40ರಷ್ಟಿದ್ದು ಅತ್ಯುತ್ತಮ ಮಟ್ಟದಲ್ಲಿದೆ.

ಇತರೆ ನಗರಗಳ ಸ್ಥಿತಿ ಹೀಗಿದೆ:

  • ಮೈಸೂರು – 113
  • ಕಲಬುರಗಿ – 95
  • ಶಿವಮೊಗ್ಗ – 106
  • ಬಳ್ಳಾರಿ – 137
  • ಹುಬ್ಬಳ್ಳಿ – 60
  • ವಿಜಯಪುರ – 93

ತಜ್ಞರ ಪ್ರಕಾರ, ವಿಶ್ವ ಆರೋಗ್ಯ ಸಂಸ್ಥೆ ಮಾನದಂಡಗಳಂತೆ 100 ಕ್ಕಿಂತ ಮೇಲಿನ AQI ಆರೋಗ್ಯಕ್ಕೆ ಹಾನಿಕರವಾಗಿದ್ದು, ಶ್ವಾಸಕೋಶ ಸಮಸ್ಯೆ ಸೇರಿದಂತೆ ಹಲವು ಸಮಸ್ಯೆಗಳಿಗೆ ಕಾರಣವಾಗಬಹುದು.

AQI ಮಟ್ಟಗಳ ವರ್ಗೀಕರಣ:

  • 0–50 : ಉತ್ತಮ
  • 50–100 : ಮಧ್ಯಮ
  • 100–150 : ಕಳಪೆ
  • 150–200 : ಅನಾರೋಗ್ಯಕರ
  • 200–300 : ಗಂಭೀರ
  • 300+ : ಅಪಾಯಕಾರಿ

ಒಟ್ಟಿನಲ್ಲಿ, ಕೆಲವು ನಗರಗಳಲ್ಲಿ ಸುಧಾರಣೆ ಕಂಡರೂ, ರಾಜ್ಯದ ಹಲವು ಭಾಗಗಳಲ್ಲಿ ಗಾಳಿಯ ಗುಣಮಟ್ಟ ಇನ್ನೂ ಕಳವಳಕಾರಿ ಸ್ಥಿತಿಯಲ್ಲಿದೆ.

ರಾಜ್ಯದಲ್ಲಿ ಮಳೆ–ಗಾಳಿ ಅಬ್ಬರ: ಆರು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್​ ಘೋಷಣೆ!

ಬೆಂಗಳೂರು: ಉಷ್ಣ ಅಲೆಯಿಂದ ಬೇಸತ್ತಿದ್ದ ಕರಾವಳಿ ಭಾಗಗಳಲ್ಲಿ ಇಂದು ಗುಡುಗು–ಸಿಡಿಲು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಇದರ ಜೊತೆಗೆ ಉತ್ತರ ಕರ್ನಾಟಕದ ಆರು ಜಿಲ್ಲೆಗಳಿಗೆ ಎಚ್ಚರಿಕೆ ನೀಡಲಾಗಿದೆ. ಕರಾವಳಿಯ ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಕಳೆದ ಕೆಲ ದಿನಗಳಿಂದ ತೀವ್ರ ಬಿಸಿಲು ಕಾಣಿಸಿಕೊಂಡಿತ್ತು. ಇಂದು ಈ ಭಾಗಗಳಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.

ಉತ್ತರ ಒಳನಾಡಿನ ಬೆಳಗಾವಿ, ಬಾಗಲಕೋಟೆ, ಧಾರವಾಡ, ಗದಗ, ಹಾವೇರಿ ಹಾಗೂ ಕಲಬುರಗಿ ಜಿಲ್ಲೆಗಳಲ್ಲಿ 40-50 ಕಿ.ಮೀ ವೇಗದ ಗಾಳಿ ಸಹಿತ ಆಲಿಕಲ್ಲು ಮಳೆ ಸುರಿಯುವ ಸಾಧ್ಯತೆ ಇದೆ. ಮುಂದಿನ 2-3 ದಿನಗಳ ಕಾಲ ಇದೇ ಪರಿಸ್ಥಿತಿ ಮುಂದುವರಿಯುವ ಸಾಧ್ಯತೆ ಇದೆ.

ದಕ್ಷಿಣ ಒಳನಾಡಿನ ದಾವಣಗೆರೆ, ಚಿತ್ರದುರ್ಗ, ಬಳ್ಳಾರಿ, ವಿಜಯನಗರ, ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ಹಾಸನ ಜಿಲ್ಲೆಗಳಲ್ಲಿಯೂ ಗುಡುಗು, ಸಿಡಿಲು ಸಹಿತ ಮಳೆಯಾಗಲಿದೆ.

ಇತ್ತ, ಈಗಾಗಲೇ ಮಳೆ–ಗಾಳಿಯಿಂದ ಹಲವೆಡೆ ಅವಾಂತರಗಳು ಸೃಷ್ಟಿಯಾಗಿವೆ. ಭದ್ರಾವತಿ ಪ್ರದೇಶದಲ್ಲಿ ಬಿರುಗಾಳಿ ಸಹಿತ ಮಳೆಗೆ 200ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಹಾಗೂ ಮರಗಳು ಧರೆಗುರುಳಿವೆ. ಮನೆಗಳ ಮೇಲ್ಚಾವಣಿಗಳು ಹಾನಿಗೊಂಡಿದ್ದು, ಅಡಕೆ ತೋಟಗಳು ನಾಶವಾಗಿ ರೈತರು ಸಂಕಷ್ಟಕ್ಕೀಡಾಗಿದ್ದಾರೆ.

ತರಿಕೆರೆನಲ್ಲಿ ಮನೆಗಳ ಮೇಲೆ ಮರಗಳು ಬಿದ್ದು ಹಾನಿಯಾಗಿದ್ದು, ರಾಯಚೂರಿನಲ್ಲಿ ಹೆದ್ದಾರಿಗಳ ಮೇಲೆ ಮರಗಳು ಬಿದ್ದು ಸಂಚಾರ ಅಸ್ತವ್ಯಸ್ತಗೊಂಡಿದೆ.

ಬಿಸಿಲು ಮತ್ತು ಮಳೆಯ ದ್ವಿಮುಖ ಪರಿಣಾಮಕ್ಕೆ ಜನಸಾಮಾನ್ಯರು ಕಂಗೆಟ್ಟಿದ್ದು, ಸಂತ್ರಸ್ತರು ಸರ್ಕಾರದ ನೆರವಿನ ನಿರೀಕ್ಷೆಯಲ್ಲಿದ್ದಾರೆ.

RCB ಬೌಲರ್‌ಗಳ ಮಾರಕ ದಾಳಿಗೆ ತತ್ತರಿಸಿದ ಡೆಲ್ಲಿ: ಬೆಂಗಳೂರಿಗೆ 9 ವಿಕೆಟ್‌ಗಳ ಭರ್ಜರಿ ಜಯ!

0

ಸೋಮವಾರ ನಡೆದ ಐಪಿಎಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 9 ವಿಕೆಟ್‌ಗಳಿಂದ ಭರ್ಜರಿ ಜಯ ಸಾಧಿಸಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ತಂಡ ಆರ್‌ಸಿಬಿ ಬೌಲರ್‌ಗಳ ಮಾರಕ ದಾಳಿಗೆ ತತ್ತರಿಸಿ ಕೇವಲ 75 ರನ್‌ಗಳಿಗೆ ಆಲೌಟ್ ಆಯಿತು. ಆರಂಭದಲ್ಲೇ ವಿಕೆಟ್‌ಗಳು ಸರಣಿಯಾಗಿ ಬೀಳುತ್ತಿದ್ದಂತೆ ಡೆಲ್ಲಿ ಸಂಕಷ್ಟಕ್ಕೆ ಸಿಲುಕಿತು. ಅಭಿಷೇಕ್ ಪೊರೆಲ್ 30 ರನ್ ಹಾಗೂ ಡೇವಿಡ್ ಮಿಲ್ಲರ್ 19 ರನ್ ಗಳಿಸಿ ತಂಡಕ್ಕೆ ಸ್ವಲ್ಪ ಮಟ್ಟಿನ ನೆರವು ನೀಡಿದರು.

ಆರ್‌ಸಿಬಿ ಪರ ಜೋಷ್ ಹೇಜಲ್‌ವುಡ್ 4 ವಿಕೆಟ್ ಕಿತ್ತರೆ, ಭುವನೇಶ್ವರ್ ಕುಮಾರ್ 3 ವಿಕೆಟ್ ಪಡೆದು ಡೆಲ್ಲಿ ಬ್ಯಾಟಿಂಗ್ ಬೆನ್ನೆಲುಬು ಮುರಿದರು. ಇನ್ನುಳಿದಂತೆ ಇತರ ಬೌಲರ್‌ಗಳೂ ತಲಾ ವಿಕೆಟ್ ಪಡೆದು ಉತ್ತಮ ಬೆಂಬಲ ನೀಡಿದರು.

ಕೇವಲ 76 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಆರ್‌ಸಿಬಿ ಆರಂಭದಿಂದಲೇ ಆಕ್ರಮಣಕಾರಿ ಆಟ ಪ್ರದರ್ಶಿಸಿತು. ಜಾಕೋಬ್ ಬೆಥೆಲ್ 20 ರನ್, ವಿರಾಟ್ ಕೊಹ್ಲಿ 23 ರನ್ ಹಾಗೂ ದೇವದತ್ ಪಡಿಕ್ಕಲ್ 34 ರನ್ ಗಳಿಸಿ ಸುಲಭವಾಗಿ ಗೆಲುವು ಸಾಧಿಸಿದರು.

ಆರ್‌ಸಿಬಿ ಕೇವಲ 6.3 ಓವರ್‌ಗಳಲ್ಲಿ ಗುರಿ ತಲುಪಿ ಪಂದ್ಯವನ್ನು ತನ್ನದಾಗಿಸಿಕೊಂಡಿತು.

ಒಟ್ಟಿನಲ್ಲಿ ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡರಲ್ಲೂ ಮಿಂಚಿದ ಆರ್‌ಸಿಬಿ, ಡೆಲ್ಲಿ ವಿರುದ್ಧ ಸಂಪೂರ್ಣ ಪ್ರಾಬಲ್ಯ ಸಾಧಿಸಿ ಭರ್ಜರಿ ಗೆಲುವು ದಾಖಲಿಸಿದೆ.

ಬಾಡಿಗೆ ಮನೆಯಲ್ಲಿ ಬೆತ್ತಲೆ ಸ್ಥಿತಿಯಲ್ಲಿ ಯುವತಿ ಶವ ಪತ್ತೆ: ಕೊಲೆನಾ? ಆತ್ಮಹತ್ಯೆಯಾ?

ಬೆಂಗಳೂರು: ಬಾಡಿಗೆ ಮನೆಯಲ್ಲಿ ಯುವತಿಯೊಬ್ಬರ ಮೃತದೇಹ ಕೊಳೆತ ಹಾಗೂ ಬೆತ್ತಲೆ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ನಗರದಲ್ಲಿ ಆತಂಕ ಮೂಡಿಸಿದೆ.

ಮೃತರನ್ನು ಪೂಜಾ ದತ್ತಾ ಎಂದು ಗುರುತಿಸಲಾಗಿದೆ. ಅವರು ಕಳೆದ ಸುಮಾರು ಎರಡೂವರೆ ವರ್ಷಗಳಿಂದ ಆಡುಗೋಡಿ ಪ್ರದೇಶದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು ಎಂದು ತಿಳಿದುಬಂದಿದೆ. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಅವರು ಇತ್ತೀಚೆಗೆ ಉದ್ಯೋಗ ಕಳೆದುಕೊಂಡಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.

ಸ್ಥಳೀಯ ನಿವಾಸಿಗಳು ಮನೆಯಿಂದ ದುರ್ವಾಸನೆ ಬರುತ್ತಿರುವುದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಮಾಹಿತಿ ಆಧಾರವಾಗಿ ಸ್ಥಳಕ್ಕೆ ಆಗಮಿಸಿದ ಆಡುಗೋಡಿ ಠಾಣೆ ಪೊಲೀಸರು ಬಾಗಿಲು ತೆರಳಿ ಪರಿಶೀಲನೆ ನಡೆಸಿದಾಗ ಕೊಳೆತ ಸ್ಥಿತಿಯಲ್ಲಿದ್ದ ಮೃತದೇಹ ಪತ್ತೆಯಾಗಿದೆ.

ಪರಿಶೀಲನೆ ವೇಳೆ ಕೋಣೆಯಲ್ಲಿ ಖಾಸಗಿ ಕಂಪನಿಯ ಐಡಿ ಕಾರ್ಡ್ ಹಾಗೂ ಕೆಲವು ಹರಿದ ಕಾಗದಗಳು ಕಂಡುಬಂದಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಬಳಿಕ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ರವಾನಿಸಲಾಗಿದೆ.

ಪ್ರಾಥಮಿಕವಾಗಿ ಇದು ಆತ್ಮಹತ್ಯೆಯಾ ಅಥವಾ ಕೊಲೆಯಾ ಎಂಬ ಬಗ್ಗೆ ಅನುಮಾನ ವ್ಯಕ್ತವಾಗಿದ್ದು, ಪೊಲೀಸರು ಎಲ್ಲಾ ಆಯಾಮಗಳಲ್ಲಿ ತನಿಖೆ ಆರಂಭಿಸಿದ್ದಾರೆ. ಮುಂದಿನ ವರದಿಯನ್ನು ಮರಣೋತ್ತರ ಪರೀಕ್ಷೆಯ ವರದಿ ಹಾಗೂ ಫೋರೆನ್ಸಿಕ್ ಪರಿಶೀಲನೆಯ ನಂತರ ಸ್ಪಷ್ಟಪಡಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

error: Content is protected !!