Home Blog

ವರುಣಾ ಕ್ಷೇತ್ರದಲ್ಲಿ 165 ಎಕರೆ ಭೂಸ್ವಾಧೀನಕ್ಕೆ ಕೆಐಎಡಿಬಿ ನೋಟಿಫಿಕೇಷನ್: ರೈತರ ಆಕ್ರೋಶ

0

ಮೈಸೂರು: ರಾಮನಗರ ಜಿಲ್ಲೆಯ ಬಿಡದಿ ಟೌನ್‌ಶಿಪ್ ಭೂಸ್ವಾಧೀನ ವಿವಾದದ ಬೆನ್ನಲ್ಲೇ, ಮೈಸೂರು ಜಿಲ್ಲೆಯಲ್ಲೂ ರೈತರ ಫಲವತ್ತಾದ ಕೃಷಿ ಭೂಮಿಗೆ ರಾಜ್ಯ ಸರ್ಕಾರ ಕೈಹಾಕಿದೆ ಎಂಬ ಆರೋಪ ಕೇಳಿಬಂದಿದೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿನಿಧಿಸುವ ವರುಣಾ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕೈಗಾರಿಕಾ ಉದ್ದೇಶಕ್ಕಾಗಿ ಬರೋಬ್ಬರಿ 165 ಎಕರೆ ಭೂಮಿಯನ್ನು ವಶಪಡಿಸಿಕೊಳ್ಳಲು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಪ್ರಾಥಮಿಕ ಅಧಿಸೂಚನೆ ಹೊರಡಿಸಿದ್ದು, ಸ್ಥಳೀಯ ರೈತರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಮೈಸೂರು ವಿಮಾನ ನಿಲ್ದಾಣದ ಸಮೀಪವಿರುವ ವರುಣಾ ಕ್ಷೇತ್ರದ ಮರಸೆ ಹಾಗೂ ಮದರಗಳ್ಳಿ ಗ್ರಾಮಗಳ ವ್ಯಾಪ್ತಿಯಲ್ಲಿ ಈ 165 ಎಕರೆ ಭೂಮಿ ಗುರುತಿಸಲಾಗಿದೆ. ಈ ಜಮೀನುಗಳಲ್ಲಿ ರೈತರು ಅಡಕೆ, ಬಾಳೆ, ತೆಂಗು, ಭತ್ತ ಸೇರಿದಂತೆ ವಾಣಿಜ್ಯ ಮತ್ತು ಆಹಾರ ಬೆಳೆಗಳನ್ನು ಬೆಳೆದು ಜೀವನ ಸಾಗಿಸುತ್ತಿದ್ದಾರೆ.

ಸಮೃದ್ಧವಾಗಿ ಬೆಳೆ ತೆಗೆಯುತ್ತಿರುವ ಭೂಮಿಯನ್ನೇ ಕೈಗಾರಿಕೆ ಹೆಸರಿನಲ್ಲಿ ಸ್ವಾಧೀನಪಡಿಸಿಕೊಳ್ಳಲು ಸರ್ಕಾರ ಮುಂದಾಗಿರುವುದು ಅನ್ನದಾತರ ಆತಂಕವನ್ನು ಹೆಚ್ಚಿಸಿದೆ. ಜೀವನಕ್ಕೆ ಆಧಾರವಾಗಿರುವ ಫಲವತ್ತಾದ ಭೂಮಿಯನ್ನು ಯಾವುದೇ ಕಾರಣಕ್ಕೂ ಕೈಗಾರಿಕೆಗೆ ಬಿಟ್ಟುಕೊಡುವುದಿಲ್ಲ ಎಂದು ಸ್ಥಳೀಯ ರೈತರು ಪಟ್ಟುಹಿಡಿದಿದ್ದಾರೆ.

ಬೆಂಗಳೂರು ಸಮೀಪದ ಬಿಡದಿಯಲ್ಲಿ ನಡೆದ ಭೂಸ್ವಾಧೀನ ವಿರೋಧಿ ಚಳವಳಿಯ ಮಾದರಿಯಲ್ಲೇ ಮೈಸೂರಿನಲ್ಲೂ ಬೃಹತ್ ಹೋರಾಟ ರೂಪಿಸಲು ರೈತ ಸಂಘಟನೆಗಳು ಮತ್ತು ಭೂಮಾಲೀಕರು ಸಜ್ಜಾಗುತ್ತಿದ್ದಾರೆ.

ನೇಪಾಳ ಪ್ರವಾಹ ಎಫೆಕ್ಟ್: ಬಿಹಾರ, ಯುಪಿ, ಉತ್ತರಾಖಂಡದಲ್ಲಿ ಹೈ ಅಲರ್ಟ್ ಘೋಷಣೆ

0

ನವದೆಹಲಿ: ನೇಪಾಳದಲ್ಲಿ ಸಂಭವಿಸಿರುವ ಭೀಕರ ಪ್ರವಾಹದಿಂದಾಗಿ ಬಿಹಾರ, ಉತ್ತರ ಪ್ರದೇಶ ಮತ್ತು ಉತ್ತರಾಖಂಡ ರಾಜ್ಯಗಳಲ್ಲಿ ಹೈಅಲರ್ಟ್ ಘೋಷಿಸಲಾಗಿದ್ದು, ಅಧಿಕಾರಿಗಳು ಗಡಿ ಪ್ರದೇಶಗಳ ಮೇಲೆ ತೀವ್ರ ನಿಗಾ ವಹಿಸಿದ್ದಾರೆ.

ನೇಪಾಳದಲ್ಲಿ ಉಂಟಾಗಿರುವ ವಿನಾಶಕಾರಿ ಪ್ರವಾಹಕ್ಕೆ ಈವರೆಗೆ ಕನಿಷ್ಠ 160ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದು, 750ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ. ಈ ನೈಸರ್ಗಿಕ ವಿಕೋಪದಿಂದಾಗಿ ನೆರೆಯ ಭಾರತೀಯ ರಾಜ್ಯಗಳಲ್ಲಿ ಪ್ರವಾಹದ ಆತಂಕ ಎದುರಾಗಿದ್ದು, ಮುಂದಿನ 24 ಗಂಟೆಗಳ ಕಾಲ ಬಿಹಾರ, ಉತ್ತರ ಪ್ರದೇಶ ಹಾಗೂ ಉತ್ತರಾಖಂಡ ರಾಜ್ಯಗಳಿಗೆ ಪ್ರವಾಹದ ಹೈಅಲರ್ಟ್ ನೀಡಲಾಗಿದೆ.

ಪ್ರವಾಹದ ಪರಿಣಾಮ ನದಿ ನೀರಿನ ಮಟ್ಟ ಹೆಚ್ಚಾಗುವ ಭೀತಿಯಿದ್ದು, ಬಿಹಾರದ 9 ಜಿಲ್ಲೆಗಳಾದ ಪಶ್ಚಿಮ ಚಂಪಾರಣ್, ಪೂರ್ವ ಚಂಪಾರಣ್, ಗೋಪಾಲಗಂಜ್, ಮುಜಾಫರ್‌ಪುರ, ಸೀವನ್, ಸರಣ್, ಶಿಯೋಹರ್, ಸೀತಾಮರ್ಹಿ, ವೈಶಾಲಿ ಹಾಗೂ ಉತ್ತರ ಪ್ರದೇಶದ 7 ಜಿಲ್ಲೆಗಳಾದ ಮಹಾರಾಜ್‌ಗಂಜ್, ಕುಶಿನಗರ, ಪಿಲಿಭಿತ್, ಶ್ರಾವಸ್ತಿ, ಬಲರಾಮಪುರ, ಸಿದ್ಧಾರ್ಥನಗರ, ಗೋರಖ್‌ಪುರ ಹಾಗೂ ಉತ್ತರಾಖಂಡದ ಗಡಿ ಜಿಲ್ಲೆಯಾದ ಚಂಪಾವತ್‌ದಲ್ಲಿ ಅಲರ್ಟ್ ಘೋಷಿಸಲಾಗಿದೆ.

ನೇಪಾಳದಲ್ಲಿರುವ ಭೋಟೆಕೋಶಿ ನದಿ ತ್ರಿಶೂಲಿ ನದಿ ವ್ಯವಸ್ಥೆಯೊಂದಿಗೆ ಸಂಪರ್ಕ ಹೊಂದಿದ್ದು, ತ್ರಿಶೂಲಿ ನದಿ ದೇವಘಾಟ್ ಬಳಿ ಕಾಳಿ ಗಂಡಕಿಯನ್ನು ಸೇರಿ ನಾರಾಯಣಿ ನದಿಯಾಗುತ್ತದೆ. ಇದು ಭಾರತ ಪ್ರವೇಶಿಸಿದಾಗ ಗಂಡಕ್ ಎಂದು ಕರೆಯಲ್ಪಡುತ್ತದೆ. ಹೀಗಾಗಿ ನೇಪಾಳದ ನದಿಗಳಲ್ಲಿ ಒಳಹರಿವು ಹೆಚ್ಚಾದರೆ ಅದು ಗಂಡಕ್ ನದಿ ಮೇಲೆ ಪರಿಣಾಮ ಬೀರುತ್ತದೆ.

ಸದ್ಯಕ್ಕೆ ನೇಪಾಳ ಪ್ರವಾಹದಿಂದಾಗಿ ಗಂಡಕ್ ಮತ್ತು ನಾರಾಯಣಿ ನದಿಗಳಲ್ಲಿ, ವಿಶೇಷವಾಗಿ ಬಿಹಾರ ಮತ್ತು ಉತ್ತರ ಪ್ರದೇಶದ ಗಡಿ ಪ್ರದೇಶಗಳಲ್ಲಿ ನೀರಿನ ಮಟ್ಟ ತೀವ್ರವಾಗಿ ಏರಿಕೆಯಾಗುವ ಸಾಧ್ಯತೆಯಿದೆ.

ಸೆ.9ಕ್ಕೆ ಐಫೋನ್ 18 ಸರಣಿ ಲಾಂಚ್: “ಸರ್ಪ್ರೈಸ್ ಅಂಡ್ ಶೈನ್” ಇವೆಂಟ್ ಘೋಷಿಸಿದ ಆಪಲ್

0

ನವದೆಹಲಿ: ಆಪಲ್ ಕಂಪನಿ ಐಫೋನ್‌ನ ಮುಂಬರುವ 18ರ ಸರಣಿಯನ್ನು ಬಿಡುಗಡೆ ಮಾಡುವ ಕುರಿತು ಅಧಿಕೃತ ಮಾಹಿತಿ ಹಂಚಿಕೊಂಡಿದೆ. ಸೆಪ್ಟೆಂಬರ್ 9ರಂದು ಲಾಂಚ್ ಇವೆಂಟ್ ನಡೆಯಲಿದ್ದು, ಹಲವು ಹೊಸ ಪ್ರಾಡಕ್ಟ್‌ಗಳು ರಿಲೀಸ್ ಆಗಲಿವೆ. ಐಫೋನ್ 18 ಪ್ರೋ, ಐಫೋನ್ 18 ಪ್ರೋ ಮ್ಯಾಕ್ಸ್ ಬಿಡುಗಡೆಯಾಗುವ ನಿರೀಕ್ಷೆಯಿದೆ.

ಈ ಕುರಿತು ಆಪಲ್ ಕಂಪನಿ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಸೆಪ್ಟೆಂಬರ್ 9ರಂದು ಬೆಳಿಗ್ಗೆ 10 ಗಂಟೆಗೆ “ಸರ್ಪ್ರೈಸ್ ಅಂಡ್ ಶೈನ್” ಎಂಬ ಟ್ಯಾಗ್‌ಲೈನ್‌ನೊಂದಿಗೆ ಲಾಂಚ್ ಇವೆಂಟ್ ನಡೆಯಲಿದೆ ಎಂದು ತಿಳಿಸಿದೆ.

ಐಫೋನ್ ಪ್ರಿಯರು ಸೆ.9ರಂದು ಐಫೋನ್ 18ರ ಸರಣಿ ಬಿಡುಗಡೆಯಾಗುವ ನಿರೀಕ್ಷೆಯಲ್ಲಿದ್ದಾರೆ. ಆದರೆ ಕಂಪನಿ ಈ ಬಗ್ಗೆ ನಿಖರ ಮಾಹಿತಿ ಹಂಚಿಕೊಂಡಿಲ್ಲ, ಬದಲಿಗೆ ಏನೆಲ್ಲಾ ಬಿಡುಗಡೆಯಾಗಬಹುದು ಎಂಬ ಪಟ್ಟಿಯನ್ನಷ್ಟೇ ನೀಡಿದೆ.

ಐಫೋನ್ 18 ಪ್ರೋ, ಐಫೋನ್ 18 ಪ್ರೋ ಮ್ಯಾಕ್ಸ್, ಐಫೋನ್ ಫೋಲ್ಡ್, ಆಪಲ್ ವಾಚ್ ಸೀರೀಸ್ 12, ಆಪಲ್ ವಾಚ್ ಅಲ್ಟ್ರಾ 4, ಏರ್‌ಪಾಡ್ 6, ಐಪ್ಯಾಡ್ ಮಿನಿ, ಹೋಮ್‌ಪಾಡ್ ಮಿನಿ 2, ಆಪಲ್ ಟಿವಿ 4ಕೆ, ಆಪಲ್ ಹೋಮ್ ಹಬ್ ಬಿಡುಗಡೆಯಾಗುವ ಸಾಧ್ಯತೆಯಿದೆ ಎಂದು ಪಟ್ಟಿ ಮಾಡಲಾಗಿದೆ. ಲಾಂಚ್ ಇವೆಂಟ್ ಯೂಟ್ಯೂಬ್, ಆಪಲ್ ವೆಬ್‌ಸೈಟ್ ಮತ್ತು ಆಪಲ್ ಟಿವಿಯಲ್ಲಿ ನೇರಪ್ರಸಾರವಾಗಲಿದೆ.

ಶಿಕ್ಷಕರ ನೇಮಕಾತಿ ಅಧಿಸೂಚನೆಗೆ ತಡೆ ನೀಡಲು ಹೈಕೋರ್ಟ್ ನಕಾರ: ಉರ್ದು ಶಾಲೆಗಳನ್ನು ಏಕೆ ಹೊರಗಿಟ್ಟಿದ್ದೀರಿ ಎಂದು ಸರ್ಕಾರಕ್ಕೆ ಪ್ರಶ್ನೆ

0

ಬೆಂಗಳೂರು: ರಾಜ್ಯ ಸರ್ಕಾರ ಸುಮಾರು 15 ಸಾವಿರ ಶಿಕ್ಷಕರ ನೇಮಕಾತಿಗೆ ಹೊರಡಿಸಿರುವ ಅಧಿಸೂಚನೆಗೆ ತಡೆ ನೀಡಲು ಹೈಕೋರ್ಟ್ ನಿರಾಕರಿಸಿದೆ. ಆಗಸ್ಟ್ 11ರಂದು ಸರ್ಕಾರ ಹೊರಡಿಸಿರುವ ನೇಮಕಾತಿ ಅಧಿಸೂಚನೆ ಪ್ರಶ್ನಿಸಿ ಹುಬ್ಬಳ್ಳಿಯ ಉರ್ದು ಭಾಷಾ ಶಿಕ್ಷಕಿ ಅಸ್ಮಾ ಘೋರಿ ಮತ್ತಿತರರು ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅನಂತ ರಾಮನಾಥ ಹೆಗಡೆ ಅವರ ಪೀಠ ಈ ನಿರ್ದೇಶನ ನೀಡಿದೆ.

ಕನ್ನಡ ಅಥವಾ ಇಂಗ್ಲಿಷ್ ಬೋಧನಾ ಮಾಧ್ಯಮವಾಗಿರುವ ಶಾಲೆಗಳಲ್ಲಿ ಕೆಲವು ಖಾಲಿ ಹುದ್ದೆಗಳಿದ್ದು, ಸರ್ಕಾರ ಆ ಹುದ್ದೆಗಳನ್ನು ಭರ್ತಿ ಮಾಡಲು ಪ್ರಯತ್ನಿಸುತ್ತಿದೆ ಎಂದ ನ್ಯಾಯಪೀಠ, ಆದರೆ ಉರ್ದು ಶಾಲೆಗಳಲ್ಲಿ ನೇಮಕಾತಿ ಏಕೆ ನಡೆಯುತ್ತಿಲ್ಲ ಎಂಬುದು ಕಾನೂನುಬದ್ಧ ಪ್ರಶ್ನೆ ಎಂದು ಅಭಿಪ್ರಾಯಪಟ್ಟಿತು. ಉರ್ದು ಮಾಧ್ಯಮ ಶಾಲೆಗಳು ಸೇರಿದಂತೆ ಭಾಷಾ ಅಲ್ಪಸಂಖ್ಯಾತ ಶಿಕ್ಷಕರ ಆಯ್ಕೆ ಪ್ರಕ್ರಿಯೆಯನ್ನು ಏಕೆ ಕೈಗೊಂಡಿಲ್ಲ ಎಂಬುದರ ಕುರಿತು ವಿವರಣೆ ನೀಡುವಂತೆ ಸರ್ಕಾರಕ್ಕೆ ಮೌಖಿಕವಾಗಿ ಸೂಚಿಸಿದ ಪೀಠ, ವಿಚಾರಣೆಯನ್ನು ಸೆಪ್ಟೆಂಬರ್ 7ಕ್ಕೆ ಮುಂದೂಡಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಸರ್ಕಾರದ ನೇಮಕಾತಿ ಅಧಿಸೂಚನೆ ಉರ್ದು ಮಾಧ್ಯಮ ಶಾಲೆಗಳನ್ನು ಸಂಪೂರ್ಣವಾಗಿ ಹೊರಗಿಟ್ಟಿದ್ದು, ಇದು ಕರ್ನಾಟಕ ಶಿಕ್ಷಣ ಇಲಾಖೆ ಸೇವೆಗಳು (ಸಾರ್ವಜನಿಕ ಶಿಕ್ಷಣ ಇಲಾಖೆ) (ನೇಮಕಾತಿ) (ತಿದ್ದುಪಡಿ) ನಿಯಮಗಳು, 2026 ಮತ್ತು 19, 21, 29(1) ಮತ್ತು 350ಅ ವಿಧಿಗಳ ಉಲ್ಲಂಘನೆ ಎಂದು ವಾದಿಸಿದರು. ಅರ್ಜಿದಾರರ ಈ ಮನವಿಯನ್ನು ತಳ್ಳಿಹಾಕಿದ ನ್ಯಾಯಾಲಯ, ಈ ನಿರ್ದಿಷ್ಟ ನೇಮಕಾತಿ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಗುವುದಿಲ್ಲ ಎಂದಿತು.

ಚೆನ್ನೈ ಸೂಪರ್ ಕಿಂಗ್ಸ್ʼನ ಮುಂದಿನ ಕೋಚ್ ಆಗ್ತಾರಾ ದಿನೇಶ್ ಕಾರ್ತಿಕ್? ಮಾಜಿ ಆಟಗಾರ ಕೊಟ್ಟ ಕಾರಣಗಳೇನು?

0

ಚೆನ್ನೈ: ಚೆನ್ನೈ ಸೂಪರ್ ಕಿಂಗ್ಸ್‌ ತಂಡದ ದೀರ್ಘಕಾಲದ ಯಶಸ್ಸಿನ ಪ್ರಮುಖ ರೂವಾರಿ ಸ್ಟೀಫನ್ ಫ್ಲೆಮಿಂಗ್ ಇತ್ತೀಚೆಗೆ ಇಂಗ್ಲೆಂಡ್ ಟೆಸ್ಟ್ ತಂಡದ ಮುಖ್ಯ ಕೋಚ್ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಹೀಗಾಗಿ ಸಿಎಸ್‌ಕೆ ಮುಖ್ಯ ಕೋಚ್ ಸ್ಥಾನ ತೆರವಾಗಿದ್ದು, ಅವರ ಉತ್ತರಾಧಿಕಾರಿ ಯಾರು ಎಂಬ ಚರ್ಚೆ ಐಪಿಎಲ್ ವಲಯದಲ್ಲಿ ಜೋರಾಗಿದೆ.

ಈ ಬೆನ್ನಲ್ಲೇ ಸಿಎಸ್‌ಕೆ ತಂಡದ ಮಾಜಿ ಆಟಗಾರ ಹಾಗೂ ಆಸ್ಟ್ರೇಲಿಯಾದ ದಿಗ್ಗಜ ಮ್ಯಾಥ್ಯೂ ಹೇಡನ್, ಭಾರತದ ಮಾಜಿ ವಿಕೆಟ್‌ಕೀಪರ್ ಬ್ಯಾಟರ್ ದಿನೇಶ್ ಕಾರ್ತಿಕ್ ಅವರ ಹೆಸರನ್ನು ಬಲವಾಗಿ ಶಿಫಾರಸು ಮಾಡಿದ್ದಾರೆ. 2027ರ ಐಪಿಎಲ್ ಆವೃತ್ತಿಯಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸಲು ದಿನೇಶ್ ಕಾರ್ತಿಕ್ ‘ಪರ್ಫೆಕ್ಟ್’ ಅಭ್ಯರ್ಥಿ ಎಂದು ಹೇಡನ್ ಅಭಿಪ್ರಾಯಪಟ್ಟಿದ್ದಾರೆ.

ದಿನೇಶ್ ಕಾರ್ತಿಕ್ ಅವರನ್ನು ಸಿಎಸ್‌ಕೆ ಕೋಚ್ ಹುದ್ದೆಗೆ ಸೂಕ್ತ ಅಭ್ಯರ್ಥಿ ಎಂದು ಹೇಡನ್ ಪರಿಗಣಿಸಲು ಪ್ರಮುಖ ಕಾರಣವೆಂದರೆ ಅವರ ಚೆನ್ನೈ ಹಾಗೂ ತಮಿಳುನಾಡಿನ ಕ್ರಿಕೆಟ್‌ನೊಂದಿಗಿನ ನಂಟು. ಚೆನ್ನೈ ಸೂಪರ್ ಕಿಂಗ್ಸ್‌ನಂತಹ ಬೃಹತ್ ಫ್ರಾಂಚೈಸಿಗೆ ಸ್ಥಳೀಯ ಕ್ರಿಕೆಟ್ ಸಂಸ್ಕೃತಿಯನ್ನು ಆಳವಾಗಿ ಅರ್ಥಮಾಡಿಕೊಂಡಿರುವ ಕೋಚ್ ಅಗತ್ಯವಿದೆ ಎಂದು ಹೇಡನ್ ಹೇಳಿದ್ದಾರೆ.

ಚೆನ್ನೈ ಮೂಲದ ದಿನೇಶ್ ಕಾರ್ತಿಕ್, ತಮಿಳುನಾಡು ದೇಶೀಯ ಕ್ರಿಕೆಟ್ ತಂಡವನ್ನು ದೀರ್ಘಕಾಲ ಮುನ್ನಡೆಸಿದ ಅನುಭವ ಹೊಂದಿದ್ದಾರೆ. ಹೀಗಾಗಿ ಸ್ಥಳೀಯ ಆಟಗಾರರು, ಕ್ರಿಕೆಟ್ ವ್ಯವಸ್ಥೆ ಹಾಗೂ ಚೆನ್ನೈನ ಕ್ರಿಕೆಟ್ ಸಂಸ್ಕೃತಿಯ ಬಗ್ಗೆ ಅವರಿಗಿರುವ ಜ್ಞಾನ ಸಿಎಸ್‌ಕೆ ತಂಡಕ್ಕೆ ನೆರವಾಗಬಹುದು ಎಂಬುದು ಹೇಡನ್ ಅವರ ಅಭಿಪ್ರಾಯ.

ಇನ್ನು ದಿನೇಶ್ ಕಾರ್ತಿಕ್ ಅವರ ಕೋಚಿಂಗ್ ಸಾಮರ್ಥ್ಯವನ್ನು ತೋರಿಸುವ ಮತ್ತೊಂದು ಪ್ರಮುಖ ಅಂಶವೆಂದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದೊಂದಿಗಿನ ಅವರ ಯಶಸ್ವಿ ಕಾರ್ಯನಿರ್ವಹಣೆ. ಆರ್‌ಸಿಬಿ ತಂಡದ ಬ್ಯಾಟಿಂಗ್ ಕೋಚ್ ಹಾಗೂ ಮೆಂಟರ್ ಆಗಿ ಕಾರ್ತಿಕ್ ಕೆಲಸ ಮಾಡುತ್ತಿದ್ದು, ಅವರ ಮಾರ್ಗದರ್ಶನ ತಂಡಕ್ಕೆ ಮಹತ್ವದ ನೆರವು ನೀಡಿದೆ ಎಂದು ಹೇಡನ್ ಹೇಳಿದ್ದಾರೆ.

ಅಲ್ಲದೆ, ಐಪಿಎಲ್‌ನಂತಹ ಒತ್ತಡದ ಟೂರ್ನಿಯಲ್ಲಿ ಆಟಗಾರರನ್ನು ನಿಭಾಯಿಸುವ ಸಾಮರ್ಥ್ಯವೂ ದಿನೇಶ್ ಕಾರ್ತಿಕ್ ಅವರಲ್ಲಿದೆ ಎಂದು ಹೇಡನ್ ಅಭಿಪ್ರಾಯಪಟ್ಟಿದ್ದಾರೆ. ಸಿಎಸ್‌ಕೆ ತಂಡದಂತಹ ಯಶಸ್ವಿ ಫ್ರಾಂಚೈಸಿಯಲ್ಲಿ ಅಭಿಮಾನಿಗಳ ನಿರೀಕ್ಷೆ ಹಾಗೂ ಒತ್ತಡ ಯಾವ ಮಟ್ಟದಲ್ಲಿರುತ್ತದೆ ಎಂಬುದನ್ನು ಅರ್ಥಮಾಡಿಕೊಂಡು ಕೆಲಸ ಮಾಡುವ ಸಾಮರ್ಥ್ಯ ಡಿಕೆ ಅವರಲ್ಲಿದೆ ಎಂದು ಅವರು ಶ್ಲಾಘಿಸಿದ್ದಾರೆ.

ಸ್ಟೀಫನ್ ಫ್ಲೆಮಿಂಗ್ ಅವರ ನಿರ್ಗಮನದ ಬಳಿಕ ಸಿಎಸ್‌ಕೆ ಮುಖ್ಯ ಕೋಚ್ ಹುದ್ದೆಗೆ ಎಂ.ಎಸ್. ಧೋನಿ, ಮೈಕಲ್ ಹಸ್ಸಿ ಹಾಗೂ ಇಯಾನ್ ಮಾರ್ಗನ್ ಸೇರಿದಂತೆ ಹಲವು ದೊಡ್ಡ ಹೆಸರುಗಳು ಕೇಳಿಬರುತ್ತಿವೆ. ಆದರೆ ಈ ಕುರಿತು ಸಿಎಸ್‌ಕೆ ಆಡಳಿತ ಮಂಡಳಿಯಿಂದ ಯಾವುದೇ ಅಧಿಕೃತ ಘೋಷಣೆ ಹೊರಬಿದ್ದಿಲ್ಲ.

ಮ್ಯಾಥ್ಯೂ ಹೇಡನ್ ಅವರ ದಿನೇಶ್ ಕಾರ್ತಿಕ್ ಕುರಿತ ಹೇಳಿಕೆ ಸದ್ಯಕ್ಕೆ ಅವರ ವೈಯಕ್ತಿಕ ಅಭಿಪ್ರಾಯವಾಗಿದ್ದು, ಸಿಎಸ್‌ಕೆ ಅಂತಿಮವಾಗಿ ಯಾರನ್ನು ಮುಖ್ಯ ಕೋಚ್ ಆಗಿ ಆಯ್ಕೆ ಮಾಡಲಿದೆ ಎಂಬುದು ಕುತೂಹಲ ಮೂಡಿಸಿದೆ.

ಸ್ಟೀಫನ್ ಫ್ಲೆಮಿಂಗ್ ಅವರ ಸುದೀರ್ಘ ಪಯಣ ಅಂತ್ಯಗೊಂಡಿರುವ ಹಿನ್ನೆಲೆಯಲ್ಲಿ ಸಿಎಸ್‌ಕೆ ತಂಡದಲ್ಲಿ ಹೊಸ ಯುಗ ಆರಂಭವಾಗುವ ಸಾಧ್ಯತೆ ಇದೆ. ಹೀಗಾಗಿ ‘ಮುಂದಿನ ಕೋಚ್ ಯಾರು?’ ಎಂಬ ಪ್ರಶ್ನೆಗೆ ದಿನೇಶ್ ಕಾರ್ತಿಕ್ ಅವರ ಹೆಸರು ಇದೀಗ ಪ್ರಮುಖವಾಗಿ ಕೇಳಿಬರುತ್ತಿದ್ದು, ಅಂತಿಮ ನಿರ್ಧಾರಕ್ಕಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ.

ಶತಕ ಬಾರಿಸಿ ಟಿಮ್ ಸೈಫರ್ಟ್ ಡಿಫರೆಂಟ್ ಸೆಲೆಬ್ರೇಷನ್: ಸೆಂಚುರಿ ಬಳಿಕ ಕಿವೀಸ್ ಆಟಗಾರನ ಸಂಭ್ರಮ ವೈರಲ್!

0

ಕೆರಿಬಿಯನ್ ಪ್ರೀಮಿಯರ್ ಲೀಗ್‌ (CPL 2026)ನ 17ನೇ ಪಂದ್ಯದಲ್ಲಿ ಸೇಂಟ್ ಲೂಸಿಯಾ ಕಿಂಗ್ಸ್ ತಂಡದ ಸ್ಟಾರ್ ಬ್ಯಾಟರ್ ಟಿಮ್ ಸೈಫರ್ಟ್ ಸ್ಫೋಟಕ ಶತಕ ಸಿಡಿಸಿ ಅಬ್ಬರಿಸಿದ್ದಾರೆ. ಟ್ರಿನ್‌ಬಾಗೊ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದ ಸೈಫರ್ಟ್, ಕೇವಲ 61 ಎಸೆತಗಳಲ್ಲಿ ಅಜೇಯ 105 ರನ್ ಬಾರಿಸುವ ಮೂಲಕ ಈ ಆವೃತ್ತಿಯ ಮೊದಲ ಶತಕ ದಾಖಲಿಸಿದ್ದಾರೆ.

https://x.com/CPL/status/2092775538163081700

ಕ್ವೀನ್ಸ್ ಪಾರ್ಕ್ ಓವಲ್ ಮೈದಾನದಲ್ಲಿ ಟಿಆರ್‌ಕೆ ಬೌಲರ್‌ಗಳ ಮೇಲೆ ಸಂಪೂರ್ಣ ಪ್ರಾಬಲ್ಯ ಸಾಧಿಸಿದ ಸೈಫರ್ಟ್, ತಮ್ಮ ಅಮೋಘ ಇನ್ನಿಂಗ್ಸ್‌ನಲ್ಲಿ 9 ಬೌಂಡರಿ ಹಾಗೂ 5 ಭರ್ಜರಿ ಸಿಕ್ಸರ್‌ಗಳನ್ನು ಸಿಡಿಸಿದರು. ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಸೇಂಟ್ ಲೂಸಿಯಾ ಕಿಂಗ್ಸ್ ತಂಡ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 211 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು.

ಶತಕ ಪೂರ್ಣಗೊಳಿಸಿದ ಬಳಿಕ ಟಿಮ್ ಸೈಫರ್ಟ್ ಅವರ ಸಂಭ್ರಮಾಚರಣೆ ಕೂಡ ಅಭಿಮಾನಿಗಳ ಗಮನ ಸೆಳೆಯಿತು. ಶತಕದ ಬಳಿಕ ಹೆಲ್ಮೆಟ್ ತೆಗೆದು ಬ್ಯಾಟ್ ಎತ್ತಿದ ಸೈಫರ್ಟ್, ಮೈದಾನದಲ್ಲೇ ವಿಭಿನ್ನ ರೀತಿಯಲ್ಲಿ ಕುಣಿದು ಸಂಭ್ರಮಿಸಿದರು. ನ್ಯೂಜಿಲೆಂಡ್ ಆಟಗಾರನ ಈ ಮೋಜಿನ ನೃತ್ಯದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

211 ರನ್‌ಗಳ ಕಠಿಣ ಗುರಿ ಬೆನ್ನತ್ತಿದ ಟ್ರಿನ್‌ಬಾಗೊ ನೈಟ್ ರೈಡರ್ಸ್ ತಂಡಕ್ಕೆ ಸೇಂಟ್ ಲೂಸಿಯಾ ಕಿಂಗ್ಸ್ ಬೌಲರ್‌ಗಳು ಯಾವುದೇ ಅವಕಾಶ ನೀಡಲಿಲ್ಲ. ಶಿಸ್ತುಬದ್ಧ ಬೌಲಿಂಗ್ ದಾಳಿಗೆ ತತ್ತರಿಸಿದ ಟಿಕೆಆರ್ ತಂಡ ನಿಗದಿತ ಓವರ್‌ಗಳಲ್ಲಿ 175 ರನ್‌ಗಳಿಸಲಷ್ಟೇ ಶಕ್ತವಾಯಿತು. ಈ ಮೂಲಕ ಸೇಂಟ್ ಲೂಸಿಯಾ ಕಿಂಗ್ಸ್ 36 ರನ್‌ಗಳ ಭರ್ಜರಿ ಗೆಲುವು ದಾಖಲಿಸಿತು.

ಇನ್ನು ಟಿಮ್ ಸೈಫರ್ಟ್ ಅವರ ಈ ಶತಕವು ಅವರ ಸದ್ಯದ ಅಮೋಘ ಫಾರ್ಮ್‌ಗೆ ಮತ್ತೊಂದು ಸಾಕ್ಷಿಯಾಗಿದೆ. ಇತ್ತೀಚೆಗಷ್ಟೇ ಯುಕೆಯಲ್ಲಿ ನಡೆದ ‘ದಿ ಹಂಡ್ರೆಡ್ 2026’ ಟೂರ್ನಿಯಲ್ಲಿ ಮ್ಯಾಂಚೆಸ್ಟರ್ ಸೂಪರ್ ಜೈಂಟ್ಸ್ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸೈಫರ್ಟ್, ಟೂರ್ನಿಯ ‘ಪ್ಲೇಯರ್ ಆಫ್ ದಿ ಟೂರ್ನಮೆಂಟ್’ ಪ್ರಶಸ್ತಿಯನ್ನೂ ಗೆದ್ದಿದ್ದರು.

ಇದೀಗ ಅದೇ ಅದ್ಭುತ ಫಾರ್ಮ್ ಅನ್ನು ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲೂ ಮುಂದುವರಿಸಿರುವ ಸೈಫರ್ಟ್, ಸಿಪಿಎಲ್‌ನಲ್ಲಿ ಎರಡು ಶತಕಗಳನ್ನು ದಾಖಲಿಸಿದ ಬ್ಯಾಟರ್‌ಗಳ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ.

ಇದಕ್ಕೂ ಮುನ್ನ 2025ರ ಸಿಪಿಎಲ್ ಆವೃತ್ತಿಯಲ್ಲಿ ಸೇಂಟ್ ಲೂಸಿಯಾ ಕಿಂಗ್ಸ್ ಪರ ಆಡಿದ್ದ ಸೈಫರ್ಟ್, ಆಂಟಿಗುವಾ ಮತ್ತು ಬಾರ್ಬುಡಾ ಫಾಲ್ಕನ್ಸ್ ವಿರುದ್ಧ ಕೇವಲ 53 ಎಸೆತಗಳಲ್ಲಿ ಅಜೇಯ 125 ರನ್ ಸಿಡಿಸಿದ್ದರು. ಇದೀಗ ಮತ್ತೊಮ್ಮೆ ಅದೇ ತಂಡದ ಪರ ಅಬ್ಬರಿಸಿರುವ ಅವರು, ಟ್ರಿನ್‌ಬಾಗೊ ನೈಟ್ ರೈಡರ್ಸ್ ವಿರುದ್ಧ 61 ಎಸೆತಗಳಲ್ಲಿ ಅಜೇಯ 105 ರನ್ ಗಳಿಸಿ ತಮ್ಮ ಸ್ಫೋಟಕ ಬ್ಯಾಟಿಂಗ್ ಸಾಮರ್ಥ್ಯವನ್ನು ಮತ್ತೊಮ್ಮೆ ಪ್ರದರ್ಶಿಸಿದ್ದಾರೆ.

ಕಬ್ಬಿನ ಗದ್ದೆಯಲ್ಲಿ 4 ಚಿರತೆ ಮರಿಗಳು ಪ್ರತ್ಯಕ್ಷ: ಗ್ರಾಮಸ್ಥರಲ್ಲಿ ಆತಂಕ

0

ರಾಮನಗರ: ಚನ್ನಪಟ್ಟಣ ತಾಲೂಕಿನ ನೇರಳೂರು ಗ್ರಾಮದಲ್ಲಿ ಕಬ್ಬಿನ ಗದ್ದೆಯೊಂದರಲ್ಲಿ ನಾಲ್ಕು ಚಿರತೆ ಮರಿಗಳು ಪತ್ತೆಯಾಗಿರುವುದು ಗ್ರಾಮಸ್ಥರಲ್ಲಿ ಆತಂಕಕ್ಕೆ ಕಾರಣವಾಗಿದೆ.

ರೈತ ನಾಗೇಶ್ ಅವರ ಕಬ್ಬಿನ ಗದ್ದೆಯಲ್ಲಿ ಸುಮಾರು ನಾಲ್ಕೈದು ದಿನಗಳ ಪ್ರಾಯದ ನಾಲ್ಕು ಚಿರತೆ ಮರಿಗಳು ಕಂಡುಬಂದಿವೆ. ಮರಿಗಳನ್ನು ಕಂಡ ಸ್ಥಳೀಯರು ಕೂಡಲೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.

ಮರಿಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಅವುಗಳ ತಾಯಿ ಚಿರತೆ ಸುತ್ತಮುತ್ತಲೇ ಇರುವ ಸಾಧ್ಯತೆಯಿದ್ದು, ಅದರ ಚಲನವಲನದ ಮೇಲೆ ಅರಣ್ಯ ಇಲಾಖೆ ಕಟ್ಟುನಿಟ್ಟಿನ ನಿಗಾ ಇರಿಸಿದೆ. ಚಿರತೆಯನ್ನು ಸೆರೆಹಿಡಿಯಲು ಸೂಕ್ತ ಸ್ಥಳದಲ್ಲಿ ಬೋನ್ ಅಳವಡಿಸುವ ಕಾರ್ಯಕ್ಕೂ ಇಲಾಖೆ ಮುಂದಾಗಿದೆ.

ಕಬ್ಬಿನ ಗದ್ದೆಯಲ್ಲಿ ಏಕಾಏಕಿ ನಾಲ್ಕು ಚಿರತೆ ಮರಿಗಳು ಪತ್ತೆಯಾಗಿರುವುದು ಸ್ಥಳೀಯರಲ್ಲಿ ಭೀತಿ ಮೂಡಿಸಿದ್ದು, ಅರಣ್ಯ ಇಲಾಖೆ ಮುಂದಿನ ಕ್ರಮದತ್ತ ಗಮನಹರಿಸಿದೆ.

ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಸರ್ಕಾರದ ‘ಮಾಸ್ಟರ್ ಪ್ಲ್ಯಾನ್’: ಖಾದರ್ ನೇತೃತ್ವದಲ್ಲಿ ಸಂಪುಟ ಉಪಸಮಿತಿ ರಚನೆ

0

ಬೆಂಗಳೂರು: ವಿದ್ಯಾರ್ಥಿಗಳು ಹಾಗೂ ಶಿಕ್ಷಣ ಕ್ಷೇತ್ರ ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ರಾಜ್ಯ ಸರ್ಕಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ನೇತೃತ್ವದಲ್ಲಿ ಸಂಪುಟದ ಉಪಸಮಿತಿ ರಚಿಸಿದೆ.

ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ, ಗೃಹ ಹಾಗೂ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ, ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಶರಣ ಪ್ರಕಾಶ ಪಾಟೀಲ್ ಹಾಗೂ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಉಪಸಮಿತಿಯ ಸದಸ್ಯರಾಗಿದ್ದಾರೆ.

ಪರೀಕ್ಷೆ ಮತ್ತು ನೇಮಕಾತಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆ, ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಅಕ್ರಮಗಳಿಗೆ ಕಡಿವಾಣ ಹಾಕುವುದು, ಪರೀಕ್ಷೆ ಮತ್ತು ನೇಮಕಾತಿಗೆ ನಿಗದಿತ ವೇಳಾಪಟ್ಟಿ ರೂಪಿಸುವುದು ಸೇರಿದಂತೆ ಹಲವು ಪ್ರಮುಖ ವಿಚಾರಗಳನ್ನು ಸಮಿತಿ ಪರಿಶೀಲಿಸಲಿದೆ.

ಖಾಸಗಿ ಶಿಕ್ಷಣ ಸಂಸ್ಥೆಗಳ ಶುಲ್ಕ ನಿಯಂತ್ರಣ, ಕೋಚಿಂಗ್ ಕೇಂದ್ರಗಳ ಮೇಲ್ವಿಚಾರಣೆ ಹಾಗೂ ವಿದ್ಯಾರ್ಥಿಗಳು ಮತ್ತು ಅವರ ಕುಟುಂಬಗಳ ಮೇಲಿನ ಶಿಕ್ಷಣದ ಆರ್ಥಿಕ ಹೊರೆಯನ್ನು ತಗ್ಗಿಸುವ ಮಾರ್ಗಗಳ ಬಗ್ಗೆಯೂ ಉಪಸಮಿತಿ ಅಧ್ಯಯನ ನಡೆಸಲಿದೆ.

ಇದರ ಜತೆಗೆ ಸರ್ಕಾರಿ ಶಾಲೆಗಳು, ಪಿಯು ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳ ಮೂಲಸೌಕರ್ಯ ಹಾಗೂ ಶಿಕ್ಷಣದ ಗುಣಮಟ್ಟ ಸುಧಾರಣೆ, ಶಿಕ್ಷಕರ ಕೊರತೆ ನಿವಾರಣೆ, ಪ್ರಯೋಗಾಲಯ, ಗ್ರಂಥಾಲಯ ಮತ್ತು ಹಾಸ್ಟೆಲ್ ಸೇರಿದಂತೆ ಅಗತ್ಯ ಸೌಲಭ್ಯಗಳ ಅಭಿವೃದ್ಧಿಗೂ ಆದ್ಯತೆ ನೀಡಲಿದೆ.

ಎಲ್ಲ ಅಂಶಗಳನ್ನು ಸಮಗ್ರವಾಗಿ ಪರಿಶೀಲಿಸಿದ ಬಳಿಕ ವಿದ್ಯಾರ್ಥಿಗಳು ಹಾಗೂ ಶಿಕ್ಷಣ ಕ್ಷೇತ್ರ ಎದುರಿಸುತ್ತಿರುವ ಸವಾಲುಗಳಿಗೆ ಪರಿಹಾರ ಮತ್ತು ಅಗತ್ಯ ಸುಧಾರಣಾ ಕ್ರಮಗಳ ಕುರಿತು ಉಪಸಮಿತಿ ಸರ್ಕಾರಕ್ಕೆ ಶಿಫಾರಸು ಸಲ್ಲಿಸಲಿದೆ.

ನೇಪಾಳ ಪ್ರವಾಹದಲ್ಲಿ ಕನ್ನಡಿಗರಿಗೆ ಸಂಕಷ್ಟ: ಮಾನಸ ಸರೋವರ ಯಾತ್ರೆಗೆ ತೆರಳಿದ್ದ ಬೆಂಗಳೂರಿನ ನಾಲ್ವರು ಎನ್‌ಆರ್‌ಐ ನಾಪತ್ತೆ

0

ಬೆಂಗಳೂರು: ನೇಪಾಳ-ಟಿಬೆಟ್ ಗಡಿಯಲ್ಲಿ ಸಂಭವಿಸಿದ ಭೀಕರ ಪ್ರವಾಹ ಹಾಗೂ ಭೂಕುಸಿತದ ನಡುವೆ ಮಾನಸ ಸರೋವರ ಯಾತ್ರೆಗೆ ತೆರಳಿದ್ದ ಬೆಂಗಳೂರಿನ ಮೂಲದ ನಾಲ್ವರು ಎನ್‌ಆರ್‌ಐ ಕನ್ನಡಿಗರು ನಾಪತ್ತೆಯಾಗಿದ್ದಾರೆ.

ಮೂಲತಃ ಬೆಂಗಳೂರಿನವರಾಗಿದ್ದು, ಸದ್ಯ ಅಮೆರಿಕದಲ್ಲಿ ನೆಲೆಸಿರುವ ನಾಲ್ವರು ಯಾತ್ರಿಕರು ಮಾನಸ ಸರೋವರ ಯಾತ್ರೆಗಾಗಿ ಅಮೆರಿಕದಿಂದ ನೇಪಾಳಕ್ಕೆ ತೆರಳಿದ್ದರು. ಪ್ರವಾಹ ಸಂಭವಿಸಿದ ಪ್ರದೇಶದಲ್ಲಿದ್ದ ಚೀನಾ ರಾಯಭಾರ ಕಚೇರಿಗೆ ತೆರಳಿದ್ದ ಅವರು, ದುರಂತದ ಬಳಿಕ ಸ್ನೇಹಿತರು ಹಾಗೂ ಕುಟುಂಬಸ್ಥರ ಸಂಪರ್ಕಕ್ಕೆ ಸಿಗದೆ ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ.

ನಾಲ್ವರು ನಾಪತ್ತೆಯಾಗಿರುವ ಕುರಿತು ಅವರ ಸ್ನೇಹಿತರು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರಕ್ಕೆ ಮಾಹಿತಿ ನೀಡಿದ್ದು, ಪತ್ತೆ ಹಾಗೂ ರಕ್ಷಣೆಗೆ ನೆರವು ಕೋರಿದ್ದಾರೆ.

ಕರ್ನಾಟಕದ ಇಬ್ಬರು ಸುರಕ್ಷಿತ

ಇದೇ ವೇಳೆ ಹೈದರಾಬಾದ್‌ನ 23 ಮಂದಿ ಹಾಗೂ ಕರ್ನಾಟಕದ ಇಬ್ಬರು ಸೇರಿದಂತೆ ಒಟ್ಟು 25 ಮಂದಿಯ ತಂಡ ನೇಪಾಳ ಪ್ರವಾಸ ಕೈಗೊಂಡಿತ್ತು. ಪ್ರವಾಹದಲ್ಲಿ ಸಿಲುಕಿದ್ದ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಮಲ್ಲಿನಾಥ್ ಕೊಲಕುಂದಿ ಹಾಗೂ ಸಂಗಮೇಶ್ ಕನಕಪುರ ಅವರನ್ನು ಕೆಎಸ್‌ಡಿಎಂಎ ಸಂಪರ್ಕಿಸುವಲ್ಲಿ ಯಶಸ್ವಿಯಾಗಿದೆ.

ಇಬ್ಬರೂ ಸುರಕ್ಷಿತವಾಗಿದ್ದು, ಅವರನ್ನು ಅಪಾಯದ ಪ್ರದೇಶದಿಂದ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.

ರಕ್ಷಿಸಲ್ಪಟ್ಟ ಇಬ್ಬರು ಕನ್ನಡಿಗರನ್ನು ನೇಪಾಳದಿಂದ ನವದೆಹಲಿಗೆ ಕರೆತರಲು ರಾಜ್ಯ ಸರ್ಕಾರ ಅಗತ್ಯ ವ್ಯವಸ್ಥೆಗಳನ್ನು ಕೈಗೊಳ್ಳುತ್ತಿದೆ. ಮತ್ತೊಂದೆಡೆ, ನಾಪತ್ತೆಯಾಗಿರುವ ಬೆಂಗಳೂರಿನ ನಾಲ್ವರು ಎನ್‌ಆರ್‌ಐ ಕನ್ನಡಿಗರ ಪತ್ತೆಗಾಗಿ ಅಧಿಕಾರಿಗಳು ಸಂಪರ್ಕ ಹಾಗೂ ರಕ್ಷಣಾ ಪ್ರಯತ್ನಗಳನ್ನು ಮುಂದುವರಿಸಿದ್ದಾರೆ.

ಡೈನಾಮಿಕ್ ಕುಟುಂಬದಲ್ಲಿ ಮದುವೆ ಸಂಭ್ರಮ: ಅದ್ದೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡ ನಟ ಪ್ರಣಮ್ ದೇವರಾಜ್

ಬೆಂಗಳೂರು: ಡೈನಾಮಿಕ್ ಸ್ಟಾರ್ ದೇವರಾಜ್ ಕುಟುಂಬದಲ್ಲಿ ಮತ್ತೊಂದು ಸಂಭ್ರಮ ಮನೆಮಾಡಿದೆ. ದೇವರಾಜ್ ಅವರ ಕಿರಿಯ ಪುತ್ರ ಹಾಗೂ ನಟ ಪ್ರಣಮ್ ದೇವರಾಜ್ ಅವರು ತಮ್ಮ ಪ್ರೇಯಸಿ ನಮಿತಾ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ಆಪ್ತರು, ಕುಟುಂಬದ ಹಿರಿಯರು ಹಾಗೂ ಚಿತ್ರರಂಗದ ಗಣ್ಯರ ಸಮ್ಮುಖದಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಪ್ರಣಮ್ ಮತ್ತು ನಮಿತಾ ಪರಸ್ಪರ ಉಂಗುರ ಬದಲಿಸಿಕೊಂಡಿದ್ದಾರೆ. ಈ ಮೂಲಕ ಇಬ್ಬರೂ ತಮ್ಮ ಸಂಬಂಧವನ್ನು ವೈವಾಹಿಕ ಜೀವನದತ್ತ ಕೊಂಡೊಯ್ಯುವ ಅಧಿಕೃತ ಹೆಜ್ಜೆ ಇಟ್ಟಿದ್ದಾರೆ.

ಈ ವಿಶೇಷ ಸಮಾರಂಭದ ಉಸ್ತುವಾರಿಯನ್ನು ಪ್ರಣಮ್ ಅವರ ಸಹೋದರ ಪ್ರಜ್ವಲ್ ದೇವರಾಜ್ ಹಾಗೂ ಅವರ ಪತ್ನಿ ರಾಗಿಣಿ ವಹಿಸಿಕೊಂಡಿದ್ದರು. ಕುಟುಂಬಸ್ಥರು ಹಾಗೂ ಆತ್ಮೀಯರು ನವಜೋಡಿಗೆ ಶುಭ ಹಾರೈಸಿದರು.

ಪ್ರಣಮ್ ಮತ್ತು ನಮಿತಾ ಅವರದ್ದು ಲವ್ ಕಮ್ ಅರೇಂಜ್ ಮ್ಯಾರೇಜ್ ಎಂದು ಮೂಲಗಳು ತಿಳಿಸಿದ್ದು, ವಿವಾಹದ ದಿನಾಂಕ ಇನ್ನಷ್ಟೇ ಅಧಿಕೃತವಾಗಿ ಪ್ರಕಟವಾಗಬೇಕಿದೆ.

ಪ್ರಣಮ್ ದೇವರಾಜ್ ‘ಕುಮಾರಿ 21 ಎಫ್’ ಚಿತ್ರದ ಮೂಲಕ ನಾಯಕನಾಗಿ ಸ್ಯಾಂಡಲ್‌ವುಡ್‌ಗೆ ಪರಿಚಯವಾಗಿದ್ದರು. ಬಳಿಕ ‘ಸನ್ ಆಫ್ ಮುತ್ತಣ್ಣ’ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿ ಗಮನ ಸೆಳೆದಿದ್ದಾರೆ. ಕಮರ್ಷಿಯಲ್ ಯಶಸ್ಸಿನ ನಿರೀಕ್ಷೆಯಲ್ಲಿರುವ ಪ್ರಣಮ್, ವಿಭಿನ್ನ ಕಥೆಗಳನ್ನು ಆಯ್ಕೆ ಮಾಡಿಕೊಂಡು ತಮ್ಮ ವೃತ್ತಿಜೀವನದಲ್ಲಿ ಮುನ್ನಡೆಯುತ್ತಿದ್ದಾರೆ.

ಇದೀಗ ಸಿನಿಮಾದಾಚೆಗಿನ ಬದುಕಿನಲ್ಲಿ ಹೊಸ ಇನ್ನಿಂಗ್ಸ್ ಆರಂಭಿಸಿರುವ ಪ್ರಣಮ್ ದೇವರಾಜ್ ಮತ್ತು ನಮಿತಾ ಜೋಡಿಗೆ ಅಭಿಮಾನಿಗಳು ಹಾಗೂ ಸ್ಯಾಂಡಲ್‌ವುಡ್‌ನಿಂದ ಶುಭಾಶಯಗಳು ಹರಿದುಬರುತ್ತಿವೆ.