ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಭಾರೀ ಕುತೂಹಲ ಮೂಡಿಸಿರುವ ಕಾಂಗ್ರೆಸ್ ನಾಯಕತ್ವ ಬಿಕ್ಕಟ್ಟು ಹಾಗೂ ‘ಪವರ್ ಶೇರಿಂಗ್’ ರಾಜಕೀಯ ಇದೀಗ ಅಂತಿಮ ಹಂತ ತಲುಪಿದಂತೆ ಕಾಣುತ್ತಿದೆ. ಕಾಂಗ್ರೆಸ್ ಹೈಕಮಾಂಡ್ನಿಂದ ದೆಹಲಿಗೆ ತುರ್ತು ಬುಲಾವ್ ಬಂದ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಮಹತ್ವದ ರಾಜಕೀಯ ತಂತ್ರ ರೂಪಿಸಿದ್ದು, ತಮ್ಮ ಆಪ್ತ ಸಚಿವರೊಂದಿಗೆ ಇಂದು ರಾತ್ರಿ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ.
ರಾಜ್ಯ ಕಾಂಗ್ರೆಸ್ನಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಸಂಬಂಧಿಸಿದ ಚರ್ಚೆಗಳು ತೀವ್ರಗೊಂಡಿರುವ ಈ ಸಂದರ್ಭದಲ್ಲಿ ಹೈಕಮಾಂಡ್ ಕೇವಲ ಸಿದ್ದರಾಮಯ್ಯ ಅವರಿಗೆ ಮಾತ್ರ ದೆಹಲಿಗೆ ಬರುವಂತೆ ಸೂಚಿಸಿತ್ತು. ಆದರೆ ಸಿಎಂ ಸದ್ದಿಲ್ಲದೆ ತಮ್ಮ ಆಪ್ತ ಸಚಿವರಿಗೆ ಕೂಡ ದೆಹಲಿಗೆ ಆಗಮಿಸುವಂತೆ ಸಂದೇಶ ರವಾನಿಸಿರುವುದು ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.
ಸಿಎಂ ಜೊತೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹಾಗೂ ಬೃಹತ್ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಸೇರಿದಂತೆ ಹಲವು ಪ್ರಮುಖ ನಾಯಕರು ದೆಹಲಿಗೆ ತೆರಳಲಿದ್ದಾರೆ ಎನ್ನಲಾಗಿದೆ.
ಹೈಕಮಾಂಡ್ ಎದುರು ತಮ್ಮ ಸಂಖ್ಯಾಬಲ ಹಾಗೂ ಬೆಂಬಲಿಗರ ಶಕ್ತಿಯನ್ನು ಪರೋಕ್ಷವಾಗಿ ಪ್ರದರ್ಶಿಸಲು ಸಿದ್ದರಾಮಯ್ಯ ಈ ರಾಜಕೀಯ ನಡೆ ಅನುಸರಿಸಿದ್ದಾರೆ ಎಂಬ ಮಾತುಗಳು ಕಾಂಗ್ರೆಸ್ ವಲಯದಲ್ಲಿ ಕೇಳಿಬರುತ್ತಿವೆ.
ಸಿದ್ದರಾಮಯ್ಯ ಇಂದು ರಾತ್ರಿ ದೆಹಲಿ ತಲುಪಲಿದ್ದು, ನಾಳೆ (ಮೇ 26) ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸಮ್ಮುಖದಲ್ಲಿ ಮಹತ್ವದ ಸಭೆ ನಡೆಯಲಿದೆ.
ಮೊದಲ ಹಂತದಲ್ಲಿ ರಾಹುಲ್ ಗಾಂಧಿ ಸಿದ್ದರಾಮಯ್ಯ ಅವರೊಂದಿಗೆ ಪ್ರತ್ಯೇಕವಾಗಿ ಚರ್ಚೆ ನಡೆಸಲಿದ್ದು, ಬಳಿಕ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಕರೆಸಿ ಮಾತುಕತೆ ನಡೆಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ಈ ಸಭೆ ಸಿದ್ದರಾಮಯ್ಯ ಪಾಲಿಗೆ ರಾಜಕೀಯವಾಗಿ ಮಹತ್ವದ್ದಾಗಿದ್ದು, ಮುಂದಿನ ನಾಯಕತ್ವದ ಬಗ್ಗೆ ಸ್ಪಷ್ಟ ಸಂದೇಶ ಸಿಗುವ ನಿರೀಕ್ಷೆ ಇದೆ.
ರಾಜ್ಯಸಭೆ ಚುನಾವಣೆಯ ಅಭ್ಯರ್ಥಿಗಳ ಆಯ್ಕೆ ಸಂಬಂಧ ಸಿಎಂಗೆ ದೆಹಲಿ ಬುಲಾವ್ ನೀಡಲಾಗಿದೆ ಎಂದು ಅಧಿಕೃತವಾಗಿ ಹೇಳಲಾಗುತ್ತಿದ್ದರೂ, ಕಾಂಗ್ರೆಸ್ ಒಳಗಡೆ ಮೂರು ಪ್ರಮುಖ ರಾಜಕೀಯ ವಿಚಾರಗಳು ಚರ್ಚೆಗೆ ಗ್ರಾಸವಾಗಿವೆ.
ಸಿದ್ದರಾಮಯ್ಯ ಅವರನ್ನು ರಾಜ್ಯಸಭೆಗೆ ಕಳುಹಿಸಿ, ಕೇಂದ್ರ ರಾಜಕಾರಣಕ್ಕೆ ಆಹ್ವಾನಿಸುವ ಮೂಲಕ ರಾಜ್ಯದಲ್ಲಿ ನಾಯಕತ್ವ ಬದಲಾವಣೆಗೆ ದಾರಿ ಮಾಡಿಕೊಡಲಾಗುತ್ತದೆಯೇ ಎಂಬ ಪ್ರಶ್ನೆ ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.
ಇನ್ನೊಂದು ಕಡೆ, ಸದ್ಯ ನಾಯಕತ್ವ ಬದಲಾವಣೆ ಬೇಡ, ಸರ್ಕಾರ ಮುಂದುವರಿಸಿ, ಅಗತ್ಯವಿದ್ದರೆ ಸಂಪುಟ ಪುನರ್ರಚನೆ ಮಾಡಿಕೊಳ್ಳಿ ಎಂಬ ಸಂದೇಶವನ್ನು ಹೈಕಮಾಂಡ್ ನೀಡುವ ಸಾಧ್ಯತೆಯೂ ಇದೆ.
ರಾಜ್ಯಸಭೆ ಚುನಾವಣೆ ಮುಗಿಯುವವರೆಗೆ ಯಾವುದೇ ಬದಲಾವಣೆ ಬೇಡ, ಮುಖ್ಯಮಂತ್ರಿ ಸ್ಥಾನ ವಿಚಾರವನ್ನು ನಂತರ ಪರಿಶೀಲಿಸೋಣ ಎಂಬ ತಾತ್ಕಾಲಿಕ ಸಮಾಧಾನದ ಸೂತ್ರಕ್ಕೂ ಹೈಕಮಾಂಡ್ ಮೊರೆ ಹೋಗಬಹುದು ಎನ್ನಲಾಗುತ್ತಿದೆ.
ಈ ಮೂರು ಪ್ರಮುಖ ರಾಜಕೀಯ ಸಾಧ್ಯತೆಗಳ ಪೈಕಿ ಒಂದಕ್ಕೆ ಈ ಬಾರಿ ಸ್ಪಷ್ಟತೆ ಸಿಗುವ ನಿರೀಕ್ಷೆ ರಾಜಕೀಯ ವಲಯದಲ್ಲಿ ಹೆಚ್ಚಾಗಿದೆ.