ಮೈಸೂರು: ನಗರದಲ್ಲಿ ಗುತ್ತಿಗೆದಾರನನ್ನು ಗುರಿಯಾಗಿಸಿಕೊಂಡು ನಡೆದ ಸಂಘಟಿತ ಅಪಹರಣ ಪ್ರಕರಣ ಭಾರೀ ಆತಂಕ ಮೂಡಿಸಿದೆ. ಕಣ್ಣಿಗೆ ಕಪ್ಪುಪಟ್ಟಿ ಕಟ್ಟಿ ರಾತ್ರಿಯಿಡೀ ಕಾರಿನಲ್ಲಿ ಬಂಧಿಯಾಗಿರಿಸಿ, “ಕೊಲೆ ಸುಫಾರಿ” ಹೆಸರಿನಲ್ಲಿ ₹40 ಲಕ್ಷಕ್ಕೆ ಬೇಡಿಕೆ ಇಟ್ಟ ದುಷ್ಕರ್ಮಿಗಳು, ಕೊನೆಗೆ ₹16 ಲಕ್ಷ ನಗದು ಹಾಗೂ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ. ಪ್ರಕರಣದ ಬೆನ್ನತ್ತಿರುವ ಪೊಲೀಸರು ಆರೋಪಿಗಳ ಬಂಧನಕ್ಕೆ ಮೂರು ವಿಶೇಷ ತಂಡಗಳನ್ನು ರಚಿಸಿದ್ದಾರೆ.
ಜುಲೈ 15ರಂದು ಮೈಸೂರು ತಾಲೂಕಿನ ಮುದೇಗೌಡನ ದೊಡ್ಡಿ ಗ್ರಾಮದ ಗುತ್ತಿಗೆದಾರ ರಾಮು ತಮ್ಮ ತೋಟದಿಂದ ಮನೆಗೆ ಮರಳುತ್ತಿದ್ದ ವೇಳೆ ನಾಲ್ವರು ಆರೋಪಿಗಳು ಅವರನ್ನು ಅಪಹರಿಸಿದ್ದಾರೆ. ಕಾರಿನೊಳಗೆ ಕಣ್ಣಿಗೆ ಕಪ್ಪುಪಟ್ಟಿ ಕಟ್ಟಿ ವಿವಿಧ ಪ್ರದೇಶಗಳಲ್ಲಿ ಸುತ್ತಾಡಿಸಿದ್ದು, ಅವರ ಮೊಬೈಲ್ನಿಂದಲೇ ಕುಟುಂಬದವರಿಗೆ ಕರೆ ಮಾಡಿಸಿ ಅನುಮಾನ ಬಾರದಂತೆ ನೋಡಿಕೊಂಡಿದ್ದಾರೆ.
ಅಪಹರಣದ ವೇಳೆ ರಾಮು ಅವರ ಬಳಿಯಿದ್ದ 30 ಗ್ರಾಂ ಚಿನ್ನದ ಸರ, 20 ಗ್ರಾಂ ತೂಕದ ಎರಡು ಉಂಗುರಗಳು ಹಾಗೂ ₹50 ಸಾವಿರ ನಗದನ್ನು ಕಸಿದುಕೊಂಡಿದ್ದಾರೆ. ಬಳಿಕ “ನಿನ್ನ ಹತ್ಯೆಗೆ ₹9 ಲಕ್ಷ ಸುಫಾರಿ ನೀಡಲಾಗಿದೆ. ಬದುಕಬೇಕಾದರೆ ₹40 ಲಕ್ಷ ಕೊಡಬೇಕು” ಎಂದು ಬೆದರಿಸಿ ಹಲ್ಲೆ ನಡೆಸಿದ್ದಾರೆ.
ಹಣ ಇಲ್ಲ ಎಂದು ರಾಮು ಹೇಳಿದ ಬಳಿಕ, ₹16 ಲಕ್ಷ ಇರುವುದಾಗಿ ತಿಳಿಸಿದ್ದು, ಆ ಹಣವನ್ನು ಪತ್ನಿಯಿಂದ ತರಿಸುವಂತೆ ಒತ್ತಾಯಿಸಲಾಗಿದೆ. ರಾಮು ಅವರ ಬಾಮೈದ ಸುರೇಶ್, ನಂದಗುಂದ ಸೇತುವೆ ಬಳಿ ಕಪ್ಪು ಶರ್ಟ್ ಧರಿಸಿದ್ದ ವ್ಯಕ್ತಿಗೆ ₹16 ಲಕ್ಷ ಹಸ್ತಾಂತರಿಸಿದ್ದಾರೆ.
ಹಣ ಪಡೆದ ಬಳಿಕ ಆರೋಪಿಗಳು ರಾಮುವನ್ನು ಇನ್ನೂ ಕೆಲಕಾಲ ಕಾರಿನಲ್ಲಿ ಸುತ್ತಾಡಿಸಿ, ಅಜ್ಞಾತ ಪ್ರದೇಶದಲ್ಲಿ ಬಿಟ್ಟು ಪರಾರಿಯಾಗಿದ್ದಾರೆ. ಪೊಲೀಸರಿಗೆ ಮಾಹಿತಿ ನೀಡಿದರೆ ಕೊಲೆ ಮಾಡುವುದಾಗಿ ಜೀವ ಬೆದರಿಕೆಯನ್ನೂ ಹಾಕಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ವರುಣಾ ಠಾಣೆ ಪೊಲೀಸರು ತನಿಖೆ ಆರಂಭಿಸಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿಗಳ ಸುಳಿವು ಪತ್ತೆ ಹಚ್ಚಲು ಮೂರು ವಿಶೇಷ ಪೊಲೀಸ್ ತಂಡಗಳು ಕಾರ್ಯಾಚರಣೆ ನಡೆಸುತ್ತಿವೆ.

