ಗದಗ: ಬಿತ್ತನೆ ಕಾರ್ಯ ಚುರುಕುಗೊಂಡಿರುವ ಮಹತ್ವದ ಸಮಯದಲ್ಲೇ ಗದಗದಲ್ಲಿ ಯೂರಿಯಾ ಗೊಬ್ಬರ ವಿತರಣೆ ಸ್ಥಗಿತಗೊಂಡಿದ್ದು, ಗೊಬ್ಬರಕ್ಕಾಗಿ ಮುಂಜಾನೆಯಿಂದಲೇ ಸಾಲಿನಲ್ಲಿ ನಿಂತಿದ್ದ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ ಘಟನೆ ಶನಿವಾರ ನಡೆದಿದೆ.
ನಗರದ ಡಂಬಳ ನಾಕಾ ಬಳಿಯಿರುವ ಶ್ರೀ ಎಂಟರ್ಪ್ರೈಸ್ ಎದುರು ನೂರಾರು ರೈತರು ಯೂರಿಯಾ ಗೊಬ್ಬರಕ್ಕಾಗಿ ಕಾದು ನಿಂತಿದ್ದರು. ಆದರೆ, ಯೂರಿಯಾ ವಿತರಣೆಗೆ ಬಳಸುವ ಆ್ಯಪ್ನಲ್ಲಿ ತಾಂತ್ರಿಕ ದೋಷ ಉಂಟಾಗಿರುವ ಕಾರಣ ಇಂದು ಗೊಬ್ಬರ ವಿತರಣೆ ಇರುವುದಿಲ್ಲ ಎಂದು ನಾಮಫಲಕ ಅಳವಡಿಸಲಾಗಿತ್ತು. ಇದರಿಂದ ರೈತರು ಕೃಷಿ ಇಲಾಖೆ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಗೊಬ್ಬರ ಸಿಗುವ ನಿರೀಕ್ಷೆಯಲ್ಲಿ ಹಲವು ರೈತರು ಹೆಲ್ಮೆಟ್, ಟವೆಲ್, ನೀರಿನ ಬಾಟಲಿ ಇಟ್ಟು ಪಾಳೆ ಹಚ್ಚಿಕೊಂಡು ಮುಂಜಾನೆಯಿಂದಲೇ ಸ್ಥಳದಲ್ಲಿ ಕಾದು ಕುಳಿತಿದ್ದರು. ಇದುವರೆಗೆ ಒಂದು ಎಕರೆಗೆ ಒಂದು ಚೀಲ ಯೂರಿಯಾ ಗೊಬ್ಬರ ವಿತರಣೆ ಮಾಡಲಾಗುತ್ತಿತ್ತು. ಆದರೆ, ಇಂದು ಸಂಪೂರ್ಣ ವಿತರಣೆ ಸ್ಥಗಿತಗೊಂಡಿರುವುದು ರೈತರ ಅಸಮಾಧಾನಕ್ಕೆ ಕಾರಣವಾಗಿದೆ.
“ಇದೀಗ ಬಿತ್ತನೆ ಮಾಡುವ ಸಮಯ. ಇದೇ ಸಂದರ್ಭದಲ್ಲಿ ಗೊಬ್ಬರ ಸಿಗದಿದ್ದರೆ ಬೆಳೆ ಬೆಳೆಸುವುದು ಹೇಗೆ? ಸರ್ಕಾರ ಹಾಗೂ ಕೃಷಿ ಇಲಾಖೆ ಕೂಡಲೇ ಸಮಸ್ಯೆ ಬಗೆಹರಿಸಿ ಯೂರಿಯಾ ವಿತರಣೆ ಆರಂಭಿಸಬೇಕು” ಎಂದು ರೈತರು ಆಗ್ರಹಿಸಿದರು.
ಯೂರಿಯಾ ಕೊರತೆ ಹಾಗೂ ತಾಂತ್ರಿಕ ಸಮಸ್ಯೆಯಿಂದ ಗೊಬ್ಬರ ವಿತರಣೆ ನಿಂತಿರುವುದು ರೈತರಲ್ಲಿ ಆತಂಕ ಮೂಡಿಸಿದ್ದು, ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಮಧ್ಯಪ್ರವೇಶಿಸಿ ಸಮಸ್ಯೆ ಪರಿಹರಿಸಬೇಕೆಂದು ಅನ್ನದಾತರು ಒತ್ತಾಯಿಸಿದ್ದಾರೆ.

