Home Blog

ಭಾರತದ ಮೊದಲ ಹೈಡ್ರೋಜನ್ ಚಾಲಿತ ರೈಲಿಗೆ ಪ್ರಧಾನಿ ಮೋದಿ ಚಾಲನೆ

0

ಚಂಡೀಗಢ: ಭಾರತದ ರೈಲ್ವೆ ಇತಿಹಾಸದಲ್ಲಿ ಮಹತ್ವದ ಹೆಜ್ಜೆಯಾಗಿ ದೇಶದ ಮೊದಲ ಹೈಡ್ರೋಜನ್ ಚಾಲಿತ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಚಾಲನೆ ನೀಡಿದರು. ಈ ರೈಲು ಉತ್ತರ ರೈಲ್ವೆ ವ್ಯಾಪ್ತಿಯ ಹರಿಯಾಣ ರಾಜ್ಯದ 89 ಕಿಲೋಮೀಟರ್ ಉದ್ದದ ಜಿಂದ್–ಸೋನಿಪತ್ ಮಾರ್ಗದಲ್ಲಿ ಸಂಚರಿಸಲಿದೆ.

ಭಾರತದಲ್ಲಿ ಮೊದಲ ಬಾರಿಗೆ ಹೈಡ್ರೋಜನ್ ಇಂಧನ ಕೋಶ (Hydrogen Fuel Cell) ತಂತ್ರಜ್ಞಾನವನ್ನು ರೈಲ್ವೆ ಸೇವೆಯಲ್ಲಿ ಅಳವಡಿಸಲಾಗಿದೆ. ಈ ತಂತ್ರಜ್ಞಾನದಲ್ಲಿ ಹೈಡ್ರೋಜನ್ ಇಂಧನ ಕೋಶಗಳ ಮೂಲಕ ವಿದ್ಯುತ್ ಉತ್ಪಾದಿಸಿ ರೈಲನ್ನು ಚಲಾಯಿಸಲಾಗುತ್ತದೆ. ಇದರಿಂದ ಡೀಸೆಲ್ ಬಳಕೆ ಕಡಿಮೆಯಾಗುವ ಜೊತೆಗೆ ಪರಿಸರ ಮಾಲಿನ್ಯವೂ ತಗ್ಗುವ ನಿರೀಕ್ಷೆಯಿದೆ.

ಈ ಯೋಜನೆಯ ಭಾಗವಾಗಿ ಹೈಡ್ರೋಜನ್ ಸಂಗ್ರಹಣೆ ಹಾಗೂ ಇಂಧನ ತುಂಬುವ (Refuelling) ವಿಶೇಷ ಮೂಲಸೌಕರ್ಯಗಳನ್ನೂ ಅಭಿವೃದ್ಧಿಪಡಿಸಲಾಗಿದೆ. ಹೀಗಾಗಿ ಭವಿಷ್ಯದಲ್ಲಿ ದೇಶದ ವಿವಿಧ ಮಾರ್ಗಗಳಲ್ಲಿ ಹೈಡ್ರೋಜನ್ ರೈಲುಗಳ ಸಂಚಾರಕ್ಕೆ ಇದು ಅಡಿಪಾಯವಾಗಲಿದೆ.

ಈ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪ್ರತಿಕ್ರಿಯಿಸಿರುವ ಪ್ರಧಾನಿ ನರೇಂದ್ರ ಮೋದಿ, ಹೈಡ್ರೋಜನ್ ಚಾಲಿತ ರೈಲು ಸೇವೆಯ ಆರಂಭವು ಭಾರತದ ರೈಲ್ವೆ ಕ್ಷೇತ್ರದಲ್ಲಿ ಶುದ್ಧ ಮತ್ತು ಹಸಿರು ತಂತ್ರಜ್ಞಾನ ಅಳವಡಿಕೆಗೆ ಹೊಸ ದಿಕ್ಕು ನೀಡಲಿದೆ ಎಂದು ತಿಳಿಸಿದ್ದಾರೆ. ಜೊತೆಗೆ, ಹೈಡ್ರೋಜನ್ ರೈಲುಗಳನ್ನು ಹೊಂದಿರುವ ವಿಶ್ವದ ಆಯ್ದ ರಾಷ್ಟ್ರಗಳ ಪಟ್ಟಿಗೆ ಭಾರತ ಸೇರ್ಪಡೆಯಾಗಿರುವುದು ಹೆಮ್ಮೆಯ ಸಂಗತಿ ಎಂದಿದ್ದಾರೆ.

ಪ್ರಾಯೋಗಿಕ ಯೋಜನೆಯಾಗಿ ಅಭಿವೃದ್ಧಿಪಡಿಸಿರುವ ಈ ರೈಲು, ಹೈಡ್ರೋಜನ್ ಇಂಧನ ತಂತ್ರಜ್ಞಾನದ ಕಾರ್ಯಕ್ಷಮತೆಯನ್ನು ಪರೀಕ್ಷಿಸುವ ಜೊತೆಗೆ, ಪರಿಸರ ಸ್ನೇಹಿ ಮತ್ತು ಸುಸ್ಥಿರ ರೈಲು ಸಾರಿಗೆ ವ್ಯವಸ್ಥೆ ನಿರ್ಮಾಣಕ್ಕೆ ಅಗತ್ಯವಾದ ಭವಿಷ್ಯದ ಯೋಜನೆಗಳಿಗೆ ದಾರಿಯಾಗಲಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.

ದೇಶಾದ್ಯಂತ ಮುಂದಿನ 6 ದಿನ ಭಾರೀ ಮಳೆ; ಜುಲೈ 19 ಬಳಿಕ ಮಾನ್ಸೂನ್ ಮತ್ತಷ್ಟು ಚುರುಕು – IMD ಮುನ್ಸೂಚನೆ

0

ನವದೆಹಲಿ: ದೇಶದಲ್ಲಿ ನೈಋತ್ಯ ಮಾನ್ಸೂನ್ ನಿರ್ಣಾಯಕ ಹಂತ ತಲುಪಿದ್ದು, ಮುಂದಿನ ಆರು ದಿನಗಳಲ್ಲಿ ಹಲವು ರಾಜ್ಯಗಳಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ.

ಆದರೆ, ಹಲವು ವಾತಾವರಣದ ಅಂಶಗಳು ಮಾನ್ಸೂನ್ ಚಟುವಟಿಕೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದ್ದು, ಒಟ್ಟಾರೆ ಪರಿಸ್ಥಿತಿ ಇನ್ನೂ ಅನಿಶ್ಚಿತವಾಗಿದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.

ಉತ್ತರ ಒಡಿಶಾ, ಜಾರ್ಖಂಡ್ ಹಾಗೂ ಪಶ್ಚಿಮ ಬಂಗಾಳದ ಮೇಲಿದ್ದ ಕಡಿಮೆ ಒತ್ತಡದ ಪ್ರದೇಶ ದುರ್ಬಲಗೊಂಡಿದ್ದರೂ, ಪೂರ್ವ ಮತ್ತು ಮಧ್ಯ ಭಾರತದ ಹಲವು ಭಾಗಗಳಲ್ಲಿ ಮಳೆ ಮುಂದುವರಿಯುವ ನಿರೀಕ್ಷೆಯಿದೆ. ಆದರೆ, ಎಲ್ ನಿನೊ ಬಲಗೊಳ್ಳುತ್ತಿರುವುದು, ನಿಷ್ಕ್ರಿಯ ಮ್ಯಾಡೆನ್-ಜೂಲಿಯನ್ ಆಂದೋಲನ (MJO) ಹಾಗೂ ಬಂಗಾಳಕೊಲ್ಲಿಯಲ್ಲಿನ ವಾತಾವರಣದ ಬದಲಾವಣೆಗಳು ವ್ಯಾಪಕ ಮಳೆಗೆ ಅಡ್ಡಿಯಾಗುವ ಸಾಧ್ಯತೆಯಿದೆ.

ಐಎಂಡಿ ಮುನ್ಸೂಚನೆಯಂತೆ, ಜುಲೈ 19ರ ಬಳಿಕ ಮಳೆಯ ಚಟುವಟಿಕೆ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ. ಜುಲೈ 17ರಂದು ಹಿಮಾಚಲ ಪ್ರದೇಶ ಹಾಗೂ ಜಮ್ಮು-ಕಾಶ್ಮೀರದಲ್ಲಿ ಚದುರಿದ ಮಳೆಯಾಗಲಿದ್ದು, ಜುಲೈ 18ರಿಂದ 22ರವರೆಗೆ ಈ ಪ್ರದೇಶಗಳಲ್ಲಿ ವ್ಯಾಪಕ ಮಳೆಯಾಗುವ ನಿರೀಕ್ಷೆಯಿದೆ. ಇದೇ ಅವಧಿಯಲ್ಲಿ ಹರಿಯಾಣ, ಚಂಡೀಗಢ, ದೆಹಲಿ ಹಾಗೂ ಪಂಜಾಬ್‌ನಲ್ಲೂ ಉತ್ತಮ ಮಳೆಯಾಗುವ ಸಾಧ್ಯತೆ ಇದೆ.

ಮಧ್ಯಪ್ರದೇಶ, ಛತ್ತೀಸ್‌ಗಢ ಹಾಗೂ ವಿದರ್ಭ ಪ್ರದೇಶಗಳಲ್ಲಿ ವಾರಪೂರ್ತಿ ಮಳೆ ಸಕ್ರಿಯವಾಗಿರಲಿದ್ದು, ಪಶ್ಚಿಮ ಮಧ್ಯಪ್ರದೇಶದಲ್ಲಿ ಜುಲೈ 21 ಮತ್ತು 22ರಂದು ಭಾರೀ ಮಳೆಯಾಗುವ ಸಾಧ್ಯತೆಯಿದೆ.

ಪೂರ್ವ ಭಾರತದ ಬಿಹಾರ, ಜಾರ್ಖಂಡ್, ಒಡಿಶಾ ಹಾಗೂ ಪಶ್ಚಿಮ ಬಂಗಾಳದಲ್ಲೂ ಮಾನ್ಸೂನ್ ಚಟುವಟಿಕೆ ಮುಂದುವರಿಯಲಿದೆ. ಈಶಾನ್ಯ ಭಾರತದ ಅರುಣಾಚಲ ಪ್ರದೇಶ, ಅಸ್ಸಾಂ, ಮೇಘಾಲಯ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ ಹಾಗೂ ತ್ರಿಪುರ ರಾಜ್ಯಗಳಲ್ಲಿ ಜುಲೈ 22ರವರೆಗೆ ವ್ಯಾಪಕ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ.

ಪಶ್ಚಿಮ ಭಾರತದಲ್ಲಿಯೂ ಕೊಂಕಣ ಮತ್ತು ಗೋವಾ ಪ್ರದೇಶಗಳಲ್ಲಿ ಜುಲೈ 17ರಿಂದ 22ರವರೆಗೆ ಉತ್ತಮ ಮಳೆಯಾಗುವ ಸಾಧ್ಯತೆಯಿದೆ. ಗುಜರಾತ್, ಸೌರಾಷ್ಟ್ರ, ಕಚ್, ಮಧ್ಯ ಮಹಾರಾಷ್ಟ್ರ ಹಾಗೂ ಮರಾಠವಾಡ ಪ್ರದೇಶಗಳಲ್ಲಿ ಚದುರಿದ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಕರ್ನಾಟಕ, ಕೇರಳ ಹಾಗೂ ತೆಲಂಗಾಣದಲ್ಲೂ ಮುಂದಿನ ವಾರ ಮಳೆಯ ಅಬ್ಬರ ಮುಂದುವರಿಯುವ ಸಾಧ್ಯತೆ ಇದೆ. ವಿಶೇಷವಾಗಿ ಕರಾವಳಿ ಕರ್ನಾಟಕ, ಕೇರಳ ಹಾಗೂ ಲಕ್ಷದ್ವೀಪದಲ್ಲಿ ಹಲವೆಡೆ ವ್ಯಾಪಕ ಮಳೆಯಾಗುವ ಸಾಧ್ಯತೆಯಿದೆ ಎಂದು ಐಎಂಡಿ ತಿಳಿಸಿದೆ.

ಮುಂದಿನ ವಾರ ಹಲವು ಪ್ರದೇಶಗಳಲ್ಲಿ ಉತ್ತಮ ಮಳೆಯ ನಿರೀಕ್ಷೆಯಿದ್ದರೂ, ದೇಶದ ಒಟ್ಟಾರೆ ಮಾನ್ಸೂನ್ ಸ್ಥಿತಿ ಇನ್ನೂ ಅನಿಶ್ಚಿತವಾಗಿದೆ ಎಂದು ಹವಾಮಾನ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಎಲ್ ನಿನೊ ಪರಿಣಾಮ, ನಿಷ್ಕ್ರಿಯ ಮ್ಯಾಡೆನ್-ಜೂಲಿಯನ್ ಆಂದೋಲನ (MJO) ಹಾಗೂ ಬಂಗಾಳಕೊಲ್ಲಿಯಲ್ಲಿನ ವಾತಾವರಣದ ಬದಲಾವಣೆಗಳು ಮಾನ್ಸೂನ್ ಚಟುವಟಿಕೆಯನ್ನು ಮಿತಿಗೊಳಿಸುವ ಸಾಧ್ಯತೆಯಿದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಚಾಮುಂಡಿ ಬೆಟ್ಟದಲ್ಲಿ ಆಧ್ಯಾತ್ಮಿಕ ಸಂಭ್ರಮ: ಮೊದಲ ಆಷಾಢ ಶುಕ್ರವಾರ ಲಕ್ಷಾಂತರ ಭಕ್ತರ ದಂಡು, 1,588 ಪೊಲೀಸರ ಭದ್ರತೆ

0

ಮೈಸೂರು: ಆಷಾಢ ಮಾಸದ ಮೊದಲ ಶುಕ್ರವಾರದ ಪ್ರಯುಕ್ತ ಚಾಮುಂಡಿ ಬೆಟ್ಟದಲ್ಲಿ ಭಕ್ತಿ, ಸಂಭ್ರಮ ಮತ್ತು ಭದ್ರತಾ ಸಿದ್ಧತೆಗಳು ಗರಿಗೆದರಿವೆ. ಮುಂಜಾನೆಯಿಂದಲೇ ದೇವಿಯ ದರ್ಶನಕ್ಕಾಗಿ ಭಕ್ತರು ಸಾಲುಗಟ್ಟಿ ನಿಂತಿದ್ದು, ಚಾಮುಂಡೇಶ್ವರಿ ದೇವಾಲಯದಲ್ಲಿ ವಿಶೇಷ ಪೂಜೆಗಳು ವಿಜೃಂಭಣೆಯಿಂದ ನಡೆದಿವೆ.

ನಾಗಲಕ್ಷ್ಮೀ ಅಲಂಕಾರದಲ್ಲಿ ಕಂಗೊಳಿಸಿದ ತಾಯಿ ಚಾಮುಂಡೇಶ್ವರಿ ಹಸಿರು ಸೀರೆಯಲ್ಲಿ ನಾಗಶೇಷ ಶೃಂಗಾರ ತೊಟ್ಟು ಭಕ್ತರಿಗೆ ದಿವ್ಯ ದರ್ಶನ ನೀಡಿದ್ದಾರೆ. ಬೆಳಗಿನ ಜಾವ 3.30ಕ್ಕೆ ಪೂಜಾ ಕೈಂಕರ್ಯ ಆರಂಭಗೊಂಡು, ಅಭಿಷೇಕ, ಕುಂಕುಮಾರ್ಚನೆ ಮತ್ತು ಮಹಾಮಂಗಳಾರತಿ ಬಳಿಕ ದರ್ಶನ ವ್ಯವಸ್ಥೆ ಕಲ್ಪಿಸಲಾಗಿದೆ.

ಭಕ್ತರ ಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು ಸಾಮಾನ್ಯ ದರ್ಶನ, ಮೆಟ್ಟಿಲು ಮಾರ್ಗದಿಂದ ಬರುವ ಭಕ್ತರು ಹಾಗೂ ₹2,000 ವಿಶೇಷ ಟಿಕೆಟ್ ಹೊಂದಿರುವವರಿಗೆ ಪ್ರತ್ಯೇಕ ಕ್ಯೂ ಲೈನ್ ವ್ಯವಸ್ಥೆ ಮಾಡಲಾಗಿದೆ. ವಿಶೇಷ ಟಿಕೆಟ್ ಹೊಂದಿರುವವರಿಗೆ ಬೆಳಗ್ಗೆ 5.30ರಿಂದ 10 ಗಂಟೆಯವರೆಗೆ ನೇರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

ವಿಐಪಿ ವಾಹನಗಳಿಗೆ ಮಹಿಷಾಸುರ ಪ್ರತಿಮೆಯವರೆಗೆ ಮಾತ್ರ ಪ್ರವೇಶ ನೀಡಲಾಗಿದ್ದು, ಅಲ್ಲಿಂದ ದೇವಾಲಯದವರೆಗೆ ಕಾಲ್ನಡಿಗೆಯಲ್ಲೇ ತೆರಳುವ ವ್ಯವಸ್ಥೆ ಜಾರಿಯಲ್ಲಿದೆ.

ಯಾವುದೇ ಅಹಿತಕರ ಘಟನೆ ನಡೆಯದಂತೆ ಚಾಮುಂಡಿ ಬೆಟ್ಟದಲ್ಲಿ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಡಿಐಜಿ, ನಾಲ್ವರು ಡಿಸಿಪಿಗಳು, 12 ಎಸಿಪಿಗಳು ಸೇರಿದಂತೆ ಒಟ್ಟು 1,588 ಪೊಲೀಸ್ ಮತ್ತು ಭದ್ರತಾ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದು, ಭಕ್ತರ ಸುಗಮ ದರ್ಶನಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ.

ನಕಲಿ ನೇಮಕಾತಿ ಜಾಲ ಪ್ರಕರಣ: ಪುತ್ರಿ-ತಂದೆ ವಿರುದ್ಧದ ಕ್ರಿಮಿನಲ್ ಪ್ರಕರಣ ರದ್ದು ಮಾಡಲು ಹೈಕೋರ್ಟ್ ನಿರಾಕರಣೆ

ಬೆಂಗಳೂರು: ನಕಲಿ ನೇಮಕಾತಿ ಆದೇಶಗಳು, ನಕಲಿ ಸರ್ಕಾರಿ ಇಮೇಲ್ ಐಡಿಗಳು ಹಾಗೂ ಕಾಲ್ಪನಿಕ ತರಬೇತಿ ಕಾರ್ಯಕ್ರಮಗಳ ಮೂಲಕ ಸರ್ಕಾರಿ ಉದ್ಯೋಗದ ಭರವಸೆ ನೀಡಿ ಉದ್ಯೋಗಾಕಾಂಕ್ಷಿಗಳನ್ನು ವಂಚಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಪುತ್ರಿ ಮತ್ತು ಆಕೆಯ ತಂದೆ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಪ್ರಕರಣವನ್ನು ರದ್ದುಗೊಳಿಸಲು ಕರ್ನಾಟಕ ಹೈಕೋರ್ಟ್ ನಿರಾಕರಿಸಿದೆ.

ಶಂಶಾದ್ ಬೇಗಂ ಹಾಗೂ ಅವರ ತಂದೆ ಎಂ.ಎ. ಮನ್ಸೂರ್ ಅಹ್ಮದ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ವಜಾಗೊಳಿಸಿ ಮಹತ್ವದ ಆದೇಶ ನೀಡಿದೆ.

ವಿಚಾರಣೆ ವೇಳೆ ನ್ಯಾಯಾಲಯ, ನಕಲಿ ನೇಮಕಾತಿ ಆದೇಶಗಳು, ನಕಲಿ ಇಮೇಲ್ ಐಡಿಗಳು, ನಕಲಿ ತರಬೇತಿ ಕೇಂದ್ರಗಳು ಮತ್ತು ಸರ್ಕಾರಿ ಇಲಾಖೆಗಳ ಹೆಸರನ್ನು ದುರುಪಯೋಗಪಡಿಸಿಕೊಂಡು ಮುಗ್ಧ ಉದ್ಯೋಗಾಕಾಂಕ್ಷಿಗಳನ್ನು ವಂಚಿಸುವವರಿಗೆ ನ್ಯಾಯಾಲಯ ಯಾವುದೇ ರೀತಿಯ ರಕ್ಷಣೆ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಇಂತಹ ಪ್ರಕರಣಗಳಲ್ಲಿ ಆರೋಪಗಳು ಗಂಭೀರವಾಗಿದ್ದು, ಸಮಗ್ರ ತನಿಖೆ ಅಗತ್ಯವೆಂದು ಪೀಠ ಅಭಿಪ್ರಾಯಪಟ್ಟಿದೆ.

ದೂರಿನಲ್ಲಿ ಆರೋಪಿಗಳ ಕಾರ್ಯವೈಖರಿಯನ್ನು ವಿವರವಾಗಿ ಉಲ್ಲೇಖಿಸಲಾಗಿದ್ದು, ತನಿಖೆ ನಡೆಸಲು ಅಗತ್ಯವಾದ ಪ್ರಾಥಮಿಕ ಸಾಕ್ಷ್ಯಗಳು ಲಭ್ಯವಿವೆ ಎಂದು ನ್ಯಾಯಾಲಯ ಹೇಳಿದೆ. ಕೇವಲ ಉದ್ಯೋಗದ ಭರವಸೆ ನೀಡಿದ ಆರೋಪ ಮಾತ್ರವಲ್ಲದೆ, ನಕಲಿ ಇಮೇಲ್ ಐಡಿಗಳ ಸೃಷ್ಟಿ, ನಕಲಿ ನೇಮಕಾತಿ ಆದೇಶಗಳ ತಯಾರಿ, ಸರ್ಕಾರಿ ಇಲಾಖೆಗಳ ಹೆಸರಿನ ದುರ್ಬಳಕೆ ಹಾಗೂ ಕಾಲ್ಪನಿಕ ತರಬೇತಿ ಕಾರ್ಯಕ್ರಮಗಳಿಗೆ ಅಭ್ಯರ್ಥಿಗಳನ್ನು ಕಳುಹಿಸಿದ ಆರೋಪಗಳು ದೊಡ್ಡ ಮಟ್ಟದ ವಂಚನಾ ಜಾಲದ ಸುಳಿವು ನೀಡುತ್ತವೆ ಎಂದು ಪೀಠ ಅಭಿಪ್ರಾಯ ವ್ಯಕ್ತಪಡಿಸಿದೆ.

ಅರ್ಜಿದಾರರ ಪರ ವಕೀಲರು, ಪ್ರಕರಣದಲ್ಲಿ ನೇರವಾಗಿ ಮೋಸಕ್ಕೊಳಗಾದ ಯಾವುದೇ ವ್ಯಕ್ತಿ ದೂರು ದಾಖಲಿಸಿಲ್ಲ. ದೂರುದಾರರಿಗೂ ಆರೋಪಿತ ಉದ್ಯೋಗ ಹಗರಣಕ್ಕೂ ಸಂಬಂಧವಿಲ್ಲ. ಈ ಪ್ರಕರಣಗಳು ಹಿಂದಿನ ಕಾನೂನು ವ್ಯಾಜ್ಯಗಳಿಗೆ ಪ್ರತೀಕಾರವಾಗಿ ದಾಖಲಿಸಲಾದ ದೂರುಗಳಾಗಿದ್ದು, ಆದ್ದರಿಂದ ಪ್ರಕರಣವನ್ನು ರದ್ದುಗೊಳಿಸಬೇಕು ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸರ್ಕಾರದ ಪರ ವಕೀಲರು, ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಹಲವು ಉದ್ಯೋಗಾಕಾಂಕ್ಷಿಗಳಿಂದ ಆನ್‌ಲೈನ್ ಮೂಲಕ ಹಣ ಸಂಗ್ರಹಿಸಲಾಗಿದೆ. ಬಳಿಕ ನಕಲಿ ಇಮೇಲ್ ಐಡಿಗಳ ಮೂಲಕ ನೇಮಕಾತಿ ಆದೇಶಗಳನ್ನು ಕಳುಹಿಸಿ, ಕೋಲ್ಕತ್ತಾ ಹಾಗೂ ಮಹಾರಾಷ್ಟ್ರದಲ್ಲಿ ನಡೆಯುತ್ತದೆ ಎಂದು ಹೇಳಲಾದ ಕಾಲ್ಪನಿಕ ತರಬೇತಿ ಕಾರ್ಯಕ್ರಮಗಳಿಗೆ ಅಭ್ಯರ್ಥಿಗಳನ್ನು ಕಳುಹಿಸಲಾಗಿತ್ತು. ನಂತರ ನೇಮಕಾತಿ ಪ್ರಕ್ರಿಯೆ ಹಾಗೂ ತರಬೇತಿ ಕಾರ್ಯಕ್ರಮಗಳು ಸಂಪೂರ್ಣ ನಕಲಿ ಎಂಬುದು ಬೆಳಕಿಗೆ ಬಂದಿತು ಎಂದು ನ್ಯಾಯಾಲಯದ ಗಮನಕ್ಕೆ ತಂದರು.

ಇದಲ್ಲದೆ, ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಉದ್ಯೋಗ ನೀಡುವುದಾಗಿ ಸುಳ್ಳು ಭರವಸೆ ನೀಡಿ, ತಾವು ಕಾಂಗ್ರೆಸ್ ಪಕ್ಷದ ನಾಯಕರಾಗಿದ್ದೇವೆ ಎಂದು ಬಿಂಬಿಸಿಕೊಂಡು ಉದ್ಯೋಗಾಕಾಂಕ್ಷಿಗಳಿಂದ ಸುಮಾರು 5.3 ಕೋಟಿ ರೂಪಾಯಿ ಸಂಗ್ರಹಿಸಿರುವ ಆರೋಪವೂ ತನಿಖೆಯಲ್ಲಿ ಬಹಿರಂಗವಾಗಿದೆ ಎಂದು ಸರ್ಕಾರ ತಿಳಿಸಿತು. ಪ್ರಕರಣದ ಸತ್ಯಾಸತ್ಯತೆ ತನಿಖೆಯಿಂದಲೇ ಹೊರಬರಬೇಕಿರುವುದರಿಂದ ಅರ್ಜಿಯನ್ನು ವಜಾಗೊಳಿಸುವಂತೆ ಕೋರಿದ್ದ ಸರ್ಕಾರದ ವಾದವನ್ನು ಹೈಕೋರ್ಟ್ ಪರಿಗಣಿಸಿ, ಪ್ರಕರಣ ರದ್ದುಗೊಳಿಸಲು ನಿರಾಕರಿಸಿದೆ.

ಚಾಮುಂಡಿ ತಾಯಿ ಸನ್ನಿಧಿಯಲ್ಲಿ ವಿಜಯಲಕ್ಷ್ಮಿ: ಆಷಾಢ ಶುಕ್ರವಾರ ವಿಶೇಷ ಪೂಜೆ ಸಲ್ಲಿಸಿದ ದರ್ಶನ್ ಪತ್ನಿ

ಮೈಸೂರು: ಆಷಾಢ ಮಾಸದ ಮೊದಲ ಶುಕ್ರವಾರದ ಹಿನ್ನೆಲೆಯಲ್ಲಿ ನಟ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ, ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.

ನಾಗಲಕ್ಷ್ಮೀ ಅಲಂಕಾರದಲ್ಲಿ ಕಂಗೊಳಿಸುತ್ತಿದ್ದ ತಾಯಿ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ವಿಜಯಲಕ್ಷ್ಮಿ ಪೂಜೆ ಸಲ್ಲಿಸಿ ಪ್ರಾರ್ಥನೆ ಸಲ್ಲಿಸಿದರು. ಆಷಾಢ ಶುಕ್ರವಾರದ ಪ್ರಯುಕ್ತ ಮುಂಜಾನೆಯಿಂದಲೇ ದೇವಾಲಯದಲ್ಲಿ ವಿಶೇಷ ಧಾರ್ಮಿಕ ವಿಧಿವಿಧಾನಗಳು ನಡೆಯುತ್ತಿದ್ದು, ಸಾವಿರಾರು ಭಕ್ತರು ದರ್ಶನಕ್ಕೆ ಆಗಮಿಸಿದ್ದಾರೆ.

ಈ ವೇಳೆ ನಟ ದರ್ಶನ್ ಅವರ ವಿರುದ್ಧದ ರೇಣುಕಾಸ್ವಾಮಿ ಹತ್ಯೆ ಪ್ರಕರಣವೂ ಮತ್ತೆ ಗಮನ ಸೆಳೆದಿದೆ. 2024ರ ಜೂನ್‌ನಲ್ಲಿ ಬಂಧಿತರಾಗಿದ್ದ ದರ್ಶನ್ ಜಾಮೀನಿನ ಮೇಲೆ ಬಿಡುಗಡೆಯಾದ ಬಳಿಕ, ಜಾಮೀನು ರದ್ದಾದ ಹಿನ್ನೆಲೆಯಲ್ಲಿ 2025ರ ಆಗಸ್ಟ್‌ನಲ್ಲಿ ಮರುಬಂಧನಕ್ಕೊಳಗಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ.

ಭಕ್ತರ ಅನುಕೂಲಕ್ಕಾಗಿ ಈ ಬಾರಿ ₹2,000 ವಿಶೇಷ ದರ್ಶನ ಟಿಕೆಟ್ ವ್ಯವಸ್ಥೆ ಜಾರಿಯಲ್ಲಿದ್ದು, ಅಭಿಷೇಕ, ಕುಂಕುಮಾರ್ಚನೆ ಹಾಗೂ ಮಹಾಮಂಗಳಾರತಿ ಬಳಿಕ ಬೆಳಗ್ಗೆ 5.30ರಿಂದ 10 ಗಂಟೆಯವರೆಗೆ ವಿಶೇಷ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಚಾಮುಂಡಿ ಬೆಟ್ಟದಲ್ಲಿ ದಿನವಿಡೀ ಭಕ್ತರ ದಂಡು ಮುಂದುವರಿದಿದೆ.

ವರ್ಷಗಳ ವೈರಲ್ ನಂಬಿಕೆಗೆ ಫುಲ್ ಸ್ಟಾಪ್: ‘3 ಇಡಿಯಟ್ಸ್’ ಸೋನಂ ವಾಂಗ್‌ಚುಕ್ ಕಥೆಯಲ್ಲ ಎಂದ ಆಮಿರ್ ಖಾನ್

ಮುಂಬೈ: ‘3 ಇಡಿಯಟ್ಸ್’ ಸಿನಿಮಾದ ರಾಂಚೋ ಪಾತ್ರ ಸೋನಂ ವಾಂಗ್‌ಚುಕ್ ಅವರ ಜೀವನದಿಂದ ಸ್ಫೂರ್ತಿ ಪಡೆದಿದೆ ಎಂಬ ವರ್ಷಗಳ ನಂಬಿಕೆಯನ್ನು ನಟ ಆಮಿರ್ ಖಾನ್ ಸಂಪೂರ್ಣವಾಗಿ ತಳ್ಳಿ ಹಾಕಿದ್ದಾರೆ. ಸಿನಿಮಾ ನಿರ್ಮಾಣದ ವೇಳೆ ಚಿತ್ರತಂಡಕ್ಕೆ ಸೋನಂ ವಾಂಗ್‌ಚುಕ್ ಪರಿಚಯವೇ ಇರಲಿಲ್ಲ ಎಂದು ಅವರು ಬಹಿರಂಗಪಡಿಸಿದ್ದಾರೆ.

ಲಂಡನ್ ಇಂಡಿಯನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ‘ಲಗಾನ್’ ಚಿತ್ರದ ವಿಶೇಷ ಪ್ರದರ್ಶನದ ಬಳಿಕ ನಡೆದ ಸಂವಾದದಲ್ಲಿ ಈ ವಿಚಾರ ಪ್ರಸ್ತಾಪವಾಯಿತು.

ಇತ್ತೀಚೆಗೆ ನಟ ಓಮಿ ವೈದ್ಯ, ಸೋನಂ ವಾಂಗ್‌ಚುಕ್ ಅವರಿಗೆ ಬೆಂಬಲ ಸೂಚಿಸುತ್ತಾ, ‘3 ಇಡಿಯಟ್ಸ್’ ಚಿತ್ರದ ರಾಂಚೋ ಪಾತ್ರ ಅವರ ಜೀವನವನ್ನು ಆಧರಿಸಿದೆ ಎಂದು ಹೇಳಿದ್ದರು. ಇದೇ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಆಮಿರ್, ‘ಅದು ಸತ್ಯವಲ್ಲ. ಓಮಿ ವೈದ್ಯ ತಪ್ಪು ಮಾಹಿತಿ ಹಂಚಿಕೊಂಡಿದ್ದಾರೆ. ರಾಜಕುಮಾರ್ ಹಿರಾನಿ ಮತ್ತು ಅಭಿಜತ್ ಜೋಶಿ ಯಾರಿಗೂ ಆಗ ಸೋನಂ ವಾಂಗ್‌ಚುಕ್ ಅವರ ಬಗ್ಗೆ ತಿಳಿದಿರಲಿಲ್ಲ’ ಎಂದು ಸ್ಪಷ್ಟಪಡಿಸಿದರು.

ಸೋನಂ ವಾಂಗ್‌ಚುಕ್ ಅವರ ಸಾಮಾಜಿಕ ಹೋರಾಟಕ್ಕೆ ಬೆಂಬಲ ಸೂಚಿಸಿದ ಆಮಿರ್, ‘ಅವರು ಮಾಡುತ್ತಿರುವ ಕೆಲಸ ಶ್ಲಾಘನೀಯ. ಆದರೆ ಅವರ ವ್ಯಕ್ತಿತ್ವಕ್ಕೆ ಗೌರವ ತೋರಿಸಲು ‘3 ಇಡಿಯಟ್ಸ್’ ಚಿತ್ರದೊಂದಿಗೆ ಸಂಬಂಧ ಕಲ್ಪಿಸುವುದು ಸರಿಯಲ್ಲ. ಅವರು ಶೀಘ್ರ ಗುಣಮುಖರಾಗಿ ಉಪವಾಸ ಕೈಬಿಡಲಿ ಎಂದು ನಾವು ಆಶಿಸುತ್ತೇವೆ’ ಎಂದರು.

ಸಾಮಾಜಿಕ ಜಾಲತಾಣಗಳಲ್ಲಿ ಹಲವು ವರ್ಷಗಳಿಂದ ಹರಿದಾಡುತ್ತಿದ್ದ ಈ ವಾದಕ್ಕೆ ಇದೀಗ ಆಮಿರ್ ಖಾನ್ ಅವರ ಹೇಳಿಕೆಯಿಂದ ಸ್ಪಷ್ಟ ಉತ್ತರ ಸಿಕ್ಕಂತಾಗಿದೆ.

ಬಿ.ಸಿ.ರೋಡ್ ಬಸ್ ನಿಲ್ದಾಣದಲ್ಲಿ ಯುವತಿ ಬರ್ಬರ ಹತ್ಯೆ: 24 ಗಂಟೆಯಲ್ಲೇ ಆರೋಪಿ ಚೇತನ್ ಬಂಧನ

0

ಮಂಗಳೂರು: ಬಂಟ್ವಾಳದ ಬಿ.ಸಿ.ರೋಡ್ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಸಾರ್ವಜನಿಕರ ಎದುರಲ್ಲೇ ನಡೆದ ಯುವತಿ ಲಾವಣ್ಯ ಹತ್ಯೆ ಪ್ರಕರಣದಲ್ಲಿ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ, 24 ಗಂಟೆಗಳೊಳಗೆ ಪ್ರಮುಖ ಆರೋಪಿ ಚೇತನ್‌ನನ್ನು ಬಂಧಿಸಿದ್ದಾರೆ.

ಕಕ್ಯಪದವು ನಿವಾಸಿ ಹಾಗೂ ಖಾಸಗಿ ನರ್ಸಿಂಗ್ ಹೋಂ ಸಿಬ್ಬಂದಿಯಾಗಿದ್ದ ಲಾವಣ್ಯ, ಗುರುವಾರ ಸಂಜೆ ಕೆಲಸ ಮುಗಿಸಿ ಮನೆಗೆ ತೆರಳಲು ಸರ್ಕಾರಿ ಬಸ್‌ನಲ್ಲಿ ಕುಳಿತಿದ್ದರು. ಇದೇ ವೇಳೆ ಬಸ್‌ಗೆ ನುಗ್ಗಿದ ಆರೋಪಿ ಚೇತನ್, ಅವರನ್ನು ಬಲವಂತವಾಗಿ ಹೊರಗೆ ಎಳೆದು ಮಚ್ಚಿನಿಂದ ಹಲ್ಲೆ ನಡೆಸಿದ್ದಾನೆ.

ರಕ್ತದ ಮಡುವಿನಲ್ಲಿ ಬಿದ್ದಿದ್ದ ಲಾವಣ್ಯ ಅವರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದರೂ, ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು. ಘಟನೆಯ ನಂತರ ಪರಾರಿಯಾಗಿದ್ದ ಚೇತನ್‌ಗಾಗಿ ಪೊಲೀಸರು ವಿಶೇಷ ಶೋಧ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

ಪ್ರಾಥಮಿಕ ಮಾಹಿತಿಯಂತೆ, ಚೇತನ್ ಮೃತೆಯ ಸಂಬಂಧಿಯಾಗಿದ್ದು, ಪ್ರೀತಿ ನಿರಾಕರಣೆಯ ಹಿನ್ನೆಲೆಯಲ್ಲೇ ಈ ಕೃತ್ಯ ನಡೆದಿರುವ ಶಂಕೆ ವ್ಯಕ್ತವಾಗಿದೆ. ಪ್ರಕರಣದ ಎಲ್ಲ ಆಯಾಮಗಳ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಈ ಹತ್ಯೆ ರಾಜ್ಯಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ಆರೋಪಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂಬ ಆಗ್ರಹ ಸಾರ್ವಜನಿಕರಿಂದ ವ್ಯಕ್ತವಾಗಿದೆ.

ಇದೇ ವೇಳೆ, ಆರೋಪಿ ಚೇತನ್ ಭಜರಂಗದಳದ ಸದಸ್ಯ ಎಂಬ ಹೇಳಿಕೆಯೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಫೋಟೋ ಕುರಿತು ಭಜರಂಗದಳ ಸ್ಪಷ್ಟನೆ ನೀಡಿದ್ದು, ಅದು ಎಡಿಟ್ ಮಾಡಲಾದ ನಕಲಿ ಚಿತ್ರ ಎಂದು ತಿಳಿಸಿದೆ.

ಜಗನ್ನಾಥ ರಥಯಾತ್ರೆಯಲ್ಲಿ ಭೀಕರ ದುರಂತ: ಹೈಟೆನ್ಷನ್ ವಿದ್ಯುತ್ ತಂತಿ ತಗುಲಿ 15ಕ್ಕೂ ಹೆಚ್ಚು ಭಕ್ತರು ಗಂಭೀರ!

0

ನಂದಿಗ್ರಾಮ: ಪಶ್ಚಿಮ ಬಂಗಾಳದ ನಂದಿಗ್ರಾಮದಲ್ಲಿ ಜಗನ್ನಾಥ ರಥಯಾತ್ರೆ ವೇಳೆ ಭೀಕರ ಅಪಘಾತ ಸಂಭವಿಸಿದೆ.

ರಥದ ಮೇಲ್ಭಾಗವು 11,000 ವೋಲ್ಟ್ ಹೈಟೆನ್ಷನ್ ವಿದ್ಯುತ್ ತಂತಿಗೆ ತಗುಲಿದ ಪರಿಣಾಮ, ರಥದ ಹಗ್ಗ ಎಳೆಯುತ್ತಿದ್ದ 15ಕ್ಕೂ ಹೆಚ್ಚು ಭಕ್ತರು ವಿದ್ಯುತ್ ಆಘಾತಕ್ಕೊಳಗಾಗಿದ್ದಾರೆ.

ನಂದಿಗ್ರಾಮದ ತೆಖಲಿ ರಥಯಾತ್ರೆ ಉತ್ಸವ ಸಮಿತಿ ಆಯೋಜಿಸಿದ್ದ ಮೆರವಣಿಗೆಯಲ್ಲಿ ಈ ಘಟನೆ ನಡೆದಿದೆ. ಭಕ್ತರು ರಥವನ್ನು ಎಳೆಯುತ್ತಿದ್ದ ವೇಳೆ ರಸ್ತೆಯ ಮೇಲಿದ್ದ ವಿದ್ಯುತ್ ತಂತಿಗೆ ರಥದ ಮೇಲ್ಭಾಗ ತಗುಲಿದ್ದು, ಏಕಾಏಕಿ ವಿದ್ಯುತ್ ಪ್ರವಹಿಸಿದೆ.

ಘಟನೆಯಿಂದ ಹಲವು ಭಕ್ತರು ಗಾಯಗೊಂಡಿದ್ದು, ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಗೊಂಡವರ ಪೈಕಿ 10ಕ್ಕೂ ಹೆಚ್ಚು ಮಂದಿಯನ್ನು ನಂದಿಗ್ರಾಮ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಅಧಿಕಾರಿಗಳು ಪರಿಶೀಲನೆ ಆರಂಭಿಸಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷರ ವಿಚಾರದಲ್ಲಿ ಹೈಕಮಾಂಡ್‌ಗೆ ಇನ್ನೂ ಭಯ ಇದೆ: ಶಾಸಕ ಯತ್ನಾಳ್

ಮೈಸೂರು: ಬಿಜೆಪಿ ಹೈಕಮಾಂಡ್‌ಗೆ ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷರ ವಿಚಾರದಲ್ಲಿ ಇನ್ನೂ ಭಯ ಇದ್ದಂತೆ ಕಾಣುತ್ತಿದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.

ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಮಾತನಾಡಿದ ಅವರು, ರಾಜ್ಯಾಧ್ಯಕ್ಷರ ಕುಟುಂಬದ ಪ್ರಭಾವದ ಬಗ್ಗೆ ಹೈಕಮಾಂಡ್‌ಗೆ ಇನ್ನೂ ತಪ್ಪು ಕಲ್ಪನೆ ಇದೆ. ಆದರೆ ಶೀಘ್ರದಲ್ಲೇ ವಾಸ್ತವ ಅರಿವಾಗಲಿದೆ ಎಂದು ಹೇಳಿದ್ದಾರೆ.

ದೇಶದ ಹಲವು ರಾಜ್ಯಗಳಲ್ಲಿ ಬಿಜೆಪಿ ಹೈಕಮಾಂಡ್ ದೊಡ್ಡ ದೊಡ್ಡ ನಾಯಕರನ್ನೇ ಮನೆಗೆ ಕಳುಹಿಸಿದೆ. ಅದೇ ರೀತಿಯ ಬೆಳವಣಿಗೆ ಕರ್ನಾಟಕದಲ್ಲೂ ನವೆಂಬರ್ ಅಥವಾ ಡಿಸೆಂಬರ್ ಒಳಗೆ ನಡೆಯಬಹುದು ಎಂದು ಯತ್ನಾಳ್ ಹೇಳಿದ್ದಾರೆ.

ಬಿಜೆಪಿ ಮತ್ತು ಕಾಂಗ್ರೆಸ್‌ನ ಕೆಲ ನಾಯಕರು ಸೇರಿಕೊಂಡು ಇಲ್ಲಿ ಅಡ್ಡ ಮತದಾನ ಮಾಡಿಸಿದ್ದಾರೆ ಎಂಬ ಆರೋಪ ಮಾಡಿದ ಅವರು, ಈ ಸತ್ಯ ಬಿಜೆಪಿ ಹೈಕಮಾಂಡ್‌ಗೆ ತಿಳಿದಿದೆಯೋ ಇಲ್ಲವೋ ಗೊತ್ತಿಲ್ಲ. ಇಂತಹ ವಿಚಾರಗಳಲ್ಲಿ ಹೈಕಮಾಂಡ್ ಏಕೆ ಮೌನವಾಗಿದೆ ಎಂಬುದು ಅರ್ಥವಾಗುತ್ತಿಲ್ಲ ಎಂದಿದ್ದಾರೆ.

ಇಲ್ಲಿ ಪಕ್ಷಗಳು ಒಂದಾಗಿಲ್ಲ, ಆದರೆ ಕೆಲವು ನಾಯಕರು ಒಂದಾಗಿದ್ದಾರೆ. ಇಂತಹ ಬೆಳವಣಿಗೆಗಳು ಪಕ್ಷವನ್ನು ಹಾಳು ಮಾಡುತ್ತಿವೆ ಎಂದು ಯತ್ನಾಳ್ ಆರೋಪಿಸಿದ್ದಾರೆ.

2 ವರ್ಷದ ಹೆಣ್ಣು ಮಗು ಅನುಮಾನಾಸ್ಪದ ಸಾವು; ಪೋಷಕರ ವಿರುದ್ಧ ಸ್ನೇಹಿತೆಯಿಂದ ದೂರು!

ಬೆಂಗಳೂರು: ನಗರದ ಬಾಣಸವಾಡಿ ಪೊಲೀಸ್ ಠಾಣೆ ವ್ಯಾಪ್ತಿಯ ಇಂದಿರಾ ಸ್ಟ್ರೀಟ್‌ನಲ್ಲಿ ಎರಡು ವರ್ಷದ ಹೆಣ್ಣು ಮಗು ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ನಡೆದಿದೆ.

ಮಗುವಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದ್ದು, ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಮೃತಪಟ್ಟಿದೆ ಎಂದು ಪೋಷಕರು ತಿಳಿಸಿದ್ದಾರೆ. ಆದರೆ ಮಗುವಿನ ಸಾವಿನ ಬಗ್ಗೆ ಅನುಮಾನ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಜೇಸನ್ ಆಂಥೋನಿ ಮತ್ತು ರೋಸ್ಲಿನ್ ಎಂಬವರು ಹಲವು ವರ್ಷಗಳಿಂದ ಲಿವ್‌-ಇನ್ ಸಂಬಂಧದಲ್ಲಿದ್ದು, ಇವರಿಗೆ ಎರಡು ವರ್ಷದ ಹೆಣ್ಣು ಮಗು ಇತ್ತು. ಎರಡು ದಿನಗಳ ಹಿಂದೆ ಮಗುವಿಗೆ ಏಕಾಏಕಿ ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು. ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲು ಪ್ರಯತ್ನಿಸಿದರೂ ಮಗು ಮೃತಪಟ್ಟಿದೆ ಎಂದು ಪೋಷಕರು ಹೇಳಿಕೆ ನೀಡಿದ್ದಾರೆ.

ಘಟನೆಯ ಮಾಹಿತಿ ಪಡೆದ ಬಾಣಸವಾಡಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಾಥಮಿಕ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ದಂಪತಿಯ ಸ್ನೇಹಿತೆಯೊಬ್ಬರು ಮಗುವಿನ ಸಾವಿನ ಕುರಿತು ಅನುಮಾನ ವ್ಯಕ್ತಪಡಿಸಿ ಪೊಲೀಸರಿಗೆ ದೂರು ನೀಡಿದ್ದಾರೆ.

ದೂರಿನಲ್ಲಿ, ತಾಯಿ ಮಗುವಿಗೆ ಆಗಾಗ ಹೊಡೆಯುತ್ತಿದ್ದುದನ್ನು ತಾನು ನೋಡಿದ್ದೇನೆ ಎಂದು ಉಲ್ಲೇಖಿಸಿರುವುದಾಗಿ ತಿಳಿದುಬಂದಿದೆ. ಅಲ್ಲದೆ, ಮಗುವಿನ ದೇಹದ ಮೇಲೆ ಕೆಲವೆಡೆ ಗಾಯದ ಗುರುತುಗಳು ಪತ್ತೆಯಾಗಿರುವುದು ಪೊಲೀಸರ ಅನುಮಾನಕ್ಕೆ ಕಾರಣವಾಗಿದೆ.

ಈ ಹಿನ್ನೆಲೆಯಲ್ಲಿ ಪೊಲೀಸರು ಅನುಮಾನಾಸ್ಪದ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಸದ್ಯ ಮಗುವಿನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿ ಬಂದ ಬಳಿಕ ಸಾವಿಗೆ ನಿಖರ ಕಾರಣ ತಿಳಿಯಲಿದೆ.

ಪ್ರಕರಣದ ಕುರಿತು ಪೊಲೀಸರು ಪೋಷಕರು ಸೇರಿದಂತೆ ಸಂಬಂಧಪಟ್ಟವರಿಂದ ಮಾಹಿತಿ ಸಂಗ್ರಹಿಸುತ್ತಿದ್ದಾರೆ.