Home Blog

ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಭಾರೀ ಮಳೆ ಎಚ್ಚರಿಕೆ: 3 ದಿನ ಯೆಲ್ಲೋ ಅಲರ್ಟ್

ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಪರಿಣಾಮ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಮುಂದಿನ ಮೂರು ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ರಾಜಧಾನಿ ಬೆಂಗಳೂರಿಗೆ ಮೂರು ದಿನಗಳ ಕಾಲ ಯೆಲ್ಲೋ ಅಲರ್ಟ್ ಘೋಷಿಸಲಾಗಿದ್ದು, ನಗರದಲ್ಲಿ ಗುಡುಗು-ಮಿಂಚು ಸಹಿತ ಜೋರು ಮಳೆಯಾಗುವ ಸಾಧ್ಯತೆ ಇದೆ. ಅಲ್ಲದೆ ಗಂಟೆಗೆ 30 ರಿಂದ 40 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯೂ ಇದೆ ಎಂದು ಇಲಾಖೆ ತಿಳಿಸಿದೆ.

ರಾಜ್ಯದ ಒಳನಾಡು ಹಾಗೂ ಕರಾವಳಿ ಭಾಗಗಳ ಬಹುತೇಕ ಜಿಲ್ಲೆಗಳಲ್ಲಿ ಮಳೆಯ ಅಬ್ಬರ ಹೆಚ್ಚಾಗುವ ನಿರೀಕ್ಷೆಯಿದೆ. ಯಾದಗಿರಿ, ರಾಯಚೂರು, ಬಾಗಲಕೋಟೆ, ಕೊಪ್ಪಳ, ಧಾರವಾಡ, ಗದಗ, ಬಳ್ಳಾರಿ, ವಿಜಯನಗರ, ಹಾವೇರಿ, ದಾವಣಗೆರೆ, ಶಿವಮೊಗ್ಗ, ಚಿತ್ರದುರ್ಗ, ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಹಾಸನ, ತುಮಕೂರು, ಕೊಡಗು, ಮೈಸೂರು, ಮಂಡ್ಯ, ಚಾಮರಾಜನಗರ, ರಾಮನಗರ, ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ನಗರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಸಾರ್ವಜನಿಕರು ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಹವಾಮಾನ ಇಲಾಖೆ ಮನವಿ ಮಾಡಿದೆ.

ಬೆಂಗಳೂರು ಜನರಿಗೆ ಸಿಹಿ ಸುದ್ದಿ: ಇಂದಿನಿಂದ ಆಸ್ತಿಗಳ ಗೈಡೆನ್ಸ್ ವ್ಯಾಲ್ಯೂ ಇಳಿಕೆ!

ಬೆಂಗಳೂರು: ಸಿಲಿಕಾನ್ ಸಿಟಿ ಜನರಿಗೆ ರಾಜ್ಯ ಸರ್ಕಾರ ಮತ್ತೊಂದು ಗುಡ್ ನ್ಯೂಸ್ ನೀಡಿದೆ.

ಬಿ ಖಾತಾದಿಂದ ಎ ಖಾತಾಗೆ ಆಸ್ತಿ ಪರಿವರ್ತನೆ ಮಾಡಿಸಿಕೊಳ್ಳುವವರಿಗೆ ಗೈಡೆನ್ಸ್ ವ್ಯಾಲ್ಯೂ ದರದಲ್ಲಿ ಇಳಿಕೆ ಸೌಲಭ್ಯ ಇಂದಿನಿಂದ ಜಾರಿಯಾಗಿದೆ.

ಆಸ್ತಿಗಳ ಮೇಲೆ ವಿಧಿಸಲಾಗುತ್ತಿದ್ದ ಗೈಡೆನ್ಸ್ ವ್ಯಾಲ್ಯೂ ಶುಲ್ಕವನ್ನು  5% ನಿಂದ 2%ಗೆ ಇಳಿಕೆ ಮಾಡಲಾಗಿದ್ದು, ಈ ವಿಶೇಷ ಆಫರ್ ಇಂದಿನಿಂದ ಆರಂಭವಾಗಿ ಆಗಸ್ಟ್ 23ರವರೆಗೆ ಲಭ್ಯವಿರಲಿದೆ.

ಈಗಾಗಲೇ ಅರ್ಜಿ ಸಲ್ಲಿಸಿ ಅನುಮೋದನೆ ಪಡೆದಿದ್ದರೂ ಹಣ ಪಾವತಿ ಮಾಡದೇ ಇರುವವರಿಗೂ ಈ ಸೌಲಭ್ಯ ಅನ್ವಯವಾಗಲಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ರಾಜ್ಯ ಸರ್ಕಾರ ನೀಡಿರುವ ಈ 100 ದಿನಗಳ ಗಡುವು ಮುಗಿದ ಬಳಿಕ ಮತ್ತೆ ಹಿಂದಿನಂತೆ 5 ಶೇಕಡಾ ದರವೇ ಜಾರಿಗೆ ಬರಲಿದೆ. ಗಡುವು ಮುಗಿದ ನಂತರವೂ ಅಧಿಕಾರಿಗಳು ಕಡಿತ ದರದಲ್ಲಿ ಸೌಲಭ್ಯ ನೀಡಿದರೆ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸರ್ಕಾರ ಎಚ್ಚರಿಕೆ ನೀಡಿದೆ.

ನಟಿಗೆ ಕೀಳು ಸಂದೇಶ ಕಳಿಸಿ ಸಿಕ್ಕಿಬಿದ್ದ ಪೊಲೀಸ್: ಸ್ಕ್ರೀನ್‌ಶಾಟ್ ಸಮೇತ ಬಹಿರಂಗಪಡಿಸಿದ ಚೈತ್ರಾ ಆಚಾರ್

ಸಾಮಾಜಿಕ ಜಾಲತಾಣಗಳಲ್ಲಿ ಮಹಿಳೆಯರು ಹಾಗೂ ನಟಿಯರ ವಿರುದ್ಧ ನಡೆಯುತ್ತಿರುವ ಆನ್‌ಲೈನ್ ಕಿರುಕುಳ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದೆ. ಈ ಬಾರಿ ಕನ್ನಡ ನಟಿ ಚೈತ್ರಾ ಆಚಾರ್ ಅವರಿಗೆ ಅಸಭ್ಯ ಸಂದೇಶ ಕಳುಹಿಸಿದ್ದ ಆರೋಪದಡಿ ಪೊಲೀಸ್ ಇಲಾಖೆಯ ಸಿಬ್ಬಂದಿಯೊಬ್ಬನೇ ವಿವಾದದ ಕೇಂದ್ರಬಿಂದುವಾಗಿದ್ದಾನೆ.

ನಟಿ ಚೈತ್ರಾ ಆಚಾರ್ ಅವರಿಗೆ ಹೊಸಮನಿ ಎಂಬ ವ್ಯಕ್ತಿ ಕೀಳು ಮಟ್ಟದ ಸಂದೇಶ ಕಳುಹಿಸಿದ್ದಾನೆ ಎನ್ನಲಾಗಿದೆ. ಆತ ಪೊಲೀಸ್ ಇಲಾಖೆಗೆ ಸೇರಿದವನಾಗಿರುವುದು ಪ್ರಕರಣಕ್ಕೆ ಮತ್ತಷ್ಟು ಗಂಭೀರತೆ ತಂದಿದೆ.

ಘಟನೆಯ ನಂತರ ಚೈತ್ರಾ ಆಚಾರ್ ಯಾವುದೇ ಮುಲಾಜಿಲ್ಲದೆ ಆ ವ್ಯಕ್ತಿ ಕಳುಹಿಸಿದ್ದ ಸಂದೇಶಗಳ ಸ್ಕ್ರೀನ್‌ಶಾಟ್ ಹಾಗೂ ಫೋಟೋವನ್ನು ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಬೆಂಗಳೂರು ಪೊಲೀಸರನ್ನು ಟ್ಯಾಗ್ ಮಾಡಿ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ಪ್ರಕರಣ ವೈರಲ್ ಆದ ಬಳಿಕ ಆರೋಪಿಯು ನಟಿಗೆ ಕ್ಷಮೆಯಾಚನೆ ಸಲ್ಲಿಸಿದ್ದಾನೆ. ‘ತಪ್ಪಾಗಿದೆ, ನಿಮ್ಮ ಮೇಲಿನ ಕಾಳಜಿಯಿಂದಲೇ ಸಂದೇಶ ಕಳುಹಿಸಿದ್ದೆ. ಪೋಸ್ಟ್ ಡಿಲೀಟ್ ಮಾಡಿದರೆ ನನ್ನ ಕೆಲಸ ಉಳಿಯುತ್ತದೆ’ ಎಂದು ಮನವಿ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.

ಆದರೆ ನಟಿ ಇದಕ್ಕೂ ಮಣಿಯದೆ, ಆ ಕ್ಷಮೆಯಾಚನೆಯ ಸ್ಕ್ರೀನ್‌ಶಾಟ್‌ನನ್ನೂ ಸಾರ್ವಜನಿಕಗೊಳಿಸಿದ್ದಾರೆ. ‘ನನ್ನ ವೃತ್ತಿಯ ಬಗ್ಗೆ ಅವಹೇಳನ ಮಾಡುವಾಗ ಇದು ನೆನಪಾಗಲಿಲ್ಲವೇ?’ ಎಂದು ಪ್ರಶ್ನಿಸಿ ಆಕ್ರೋಶ ಹೊರಹಾಕಿದ್ದಾರೆ.

ಚೈತ್ರಾ ಆಚಾರ್ ಸಾಮಾಜಿಕ ಜಾಲತಾಣಗಳಲ್ಲಿ ಮಹಿಳೆಯರ ವಿರುದ್ಧ ನಡೆಯುವ ಕಿರುಕುಳದ ವಿರುದ್ಧ ನಿರಂತರವಾಗಿ ಧ್ವನಿ ಎತ್ತುತ್ತಿದ್ದು, ಅಸಭ್ಯ ವರ್ತನೆ ತೋರಿದವರನ್ನು ಸಾರ್ವಜನಿಕವಾಗಿ ಪ್ರಶ್ನಿಸುವ ಮೂಲಕ ಗಮನ ಸೆಳೆಯುತ್ತಿದ್ದಾರೆ.

ಸದ್ಯ ಅವರು ಕನ್ನಡದ ಜೊತೆಗೆ ತಮಿಳು ಹಾಗೂ ತೆಲುಗು ಸಿನಿಮಾಗಳಲ್ಲೂ ಸಕ್ರಿಯರಾಗಿದ್ದು, ಪ್ರಭಾಸ್ ನಟನೆಯ ‘ಫೌಜಿ’ ಸಿನಿಮಾದಲ್ಲೂ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಕಾನ್ ಇತಿಹಾಸದಲ್ಲೇ ಅತಿ ದುಬಾರಿ ಲುಕ್: 1300 ಕೋಟಿ ಮೌಲ್ಯದ ಗೌನ್‌ನಲ್ಲಿ ಊರ್ವಶಿ ಮಿಂಚಿಂಗ್‌

ಕಾನ್ ಚಲನಚಿತ್ರೋತ್ಸವವು ಕಳೆದ ಎರಡು ದಶಕಗಳಲ್ಲಿ ಕೇವಲ ಸಿನಿಮಾ ಹಬ್ಬವಾಗಿರದೆ, ಜಾಗತಿಕ ಫ್ಯಾಷನ್ ವೇದಿಕೆಯಾಗಿಯೂ ರೂಪಾಂತರಗೊಂಡಿದೆ. ಈ ವೇದಿಕೆಯಲ್ಲಿ ಭಾರತೀಯ ನಟಿ ಊರ್ವಶಿ ರೌಟೇಲಾ 2025ರಲ್ಲಿ ಧರಿಸಿದ್ದ ಲುಕ್ ಈಗಲೂ ವಿಶ್ವದ ಅತ್ಯಂತ ದುಬಾರಿ ಸೆಲೆಬ್ರಿಟಿ ರೆಡ್ ಕಾರ್ಪೆಟ್ ಅವತಾರಗಳಲ್ಲಿ ಒಂದಾಗಿ ದಾಖಲಾಗಿದೆ.

ಅಂತಾರಾಷ್ಟ್ರೀಯ ವರದಿಗಳ ಪ್ರಕಾರ, ಊರ್ವಶಿ ಅವರ ಸಂಪೂರ್ಣ ಕಾನ್ ಲುಕ್ ಮೌಲ್ಯ ಬರೋಬ್ಬರಿ 155.9 ಮಿಲಿಯನ್ ಡಾಲರ್, ಅಂದರೆ ಸುಮಾರು 1300 ಕೋಟಿ ರೂಪಾಯಿಗೂ ಅಧಿಕವಾಗಿತ್ತು.

ನಟಿ ಧರಿಸಿದ್ದ ಮೈಕಲ್ ಸಿಂಕೋ ವಿನ್ಯಾಸದ ವಿಶೇಷ ಗೌನ್ ಸಂಪೂರ್ಣ ಮೆಕ್ಸಿಕನ್ ಮೊಸಾಯಿಕ್ ಕಲಾಶೈಲಿಯಲ್ಲಿ ರೂಪುಗೊಂಡಿದ್ದು, ಅದರ ಮೌಲ್ಯ ಮಾತ್ರವೇ ಸುಮಾರು 4.8 ಮಿಲಿಯನ್ ಡಾಲರ್ ಎಂದು ಹೇಳಲಾಗಿದೆ. ಇದಲ್ಲದೇ ಅವರು ಕೈಯಲ್ಲಿ ಹಿಡಿದಿದ್ದ ಗಿಳಿ ಆಕಾರದ ಕ್ಲಚ್ ಬೆಲೆ ಸುಮಾರು 41 ಲಕ್ಷ ರೂಪಾಯಿ ಎಂದು ವರದಿಯಾಗಿತ್ತು.

ಆದರೆ ಈ ಲುಕ್‌ನ ಪ್ರಮುಖ ಆಕರ್ಷಣೆಯಾಗಿದ್ದದ್ದು ಅಪರೂಪದ ವಜ್ರಾಭರಣಗಳು. ಮೌಸಾಯೆಫ್ ರೆಡ್ ಡೈಮಂಡ್, ಒಪೆನ್‌ಹೈಮರ್ ಬ್ಲೂ ಡೈಮಂಡ್, ಡ್ರೆಸ್ಡೆನ್ ಗ್ರೀನ್ ಡೈಮಂಡ್ ಹಾಗೂ ಟಿಫಾನಿ ಯೆಲ್ಲೋ ಡೈಮಂಡ್ ಸೇರಿ ಹಲವು ಅಪರೂಪದ ವಜ್ರಗಳನ್ನು ಊರ್ವಶಿ ಧರಿಸಿದ್ದರು. ಈ ಆಭರಣಗಳ ಒಟ್ಟು ಮೌಲ್ಯವೇ 151 ಮಿಲಿಯನ್ ಡಾಲರ್ ಎಂದು ವರದಿಗಳು ತಿಳಿಸಿವೆ.

ಈ ಮೂಲಕ ಕಿಮ್ ಕರ್ದಾಶಿಯಾನ್ ಧರಿಸಿದ್ದ ಮರ್ಲಿನ್ ಮನ್ರೋ ಐಕಾನಿಕ್ ಡ್ರೆಸ್ ದಾಖಲೆಗೂ ಮೀರಿದ ಲುಕ್‌ನಲ್ಲಿ ಊರ್ವಶಿ ಕಾಣಿಸಿಕೊಂಡಿದ್ದರು ಎಂಬ ಚರ್ಚೆ ಅಂತರಾಷ್ಟ್ರೀಯ ಫ್ಯಾಷನ್ ವಲಯದಲ್ಲಿ ಭಾರೀ ಸದ್ದು ಮಾಡಿತ್ತು.

ಹಾಸನದಲ್ಲಿ ಖಾಸಗಿ ಬಸ್‌ಗೆ ಬೆಂಕಿ: 36 ಪ್ರಯಾಣಿಕರು ಕೂದಲೆಳೆ ಅಂತರದಲ್ಲಿ ಪಾರು!

ಹಾಸನ: ಮಂಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಖಾಸಗಿ ಬಸ್ಸೊಂದರ ಟೈರ್ ಸ್ಫೋಟಗೊಂಡು ಬೆಂಕಿ ಹೊತ್ತಿಕೊಂಡ ಘಟನೆ ಹಾಸನ ತಾಲೂಕಿನ ಶಾಂತಿಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ತಡರಾತ್ರಿ ನಡೆದಿದೆ.

ಬಸ್‌ನಲ್ಲಿ ಸುಮಾರು 36 ಪ್ರಯಾಣಿಕರಿದ್ದು, ಟೈರ್ ಸ್ಫೋಟವಾದ ತಕ್ಷಣ ಚಾಲಕ ಸಮಯಪ್ರಜ್ಞೆ ಮೆರೆದಿದ್ದು, ಬಸ್ ಅನ್ನು ತಕ್ಷಣ ನಿಲ್ಲಿಸಿ ಎಲ್ಲ ಪ್ರಯಾಣಿಕರನ್ನೂ ಸುರಕ್ಷಿತವಾಗಿ ಕೆಳಗಿಳಿಸಿದ್ದರಿಂದ ಭಾರಿ ಅನಾಹುತ ತಪ್ಪಿದಂತಾಗಿದೆ.

ಆದರೆ ಬೆಂಕಿಯ ತೀವ್ರತೆ ಹೆಚ್ಚಾಗಿದ್ದರಿಂದ ಪ್ರಯಾಣಿಕರ ಲಗೇಜ್‌, ಮೊಬೈಲ್‌ಗಳು ಹಾಗೂ ಇತರೆ ಬೆಲೆಬಾಳುವ ವಸ್ತುಗಳು ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿವೆ ಎಂದು ತಿಳಿದುಬಂದಿದೆ.

ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಧಾವಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದರು. ಘಟನೆಯಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಪ್ರಯಾಣಿಕರು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

‘ಮದುವೆಗೆ ಅವಸರ ಬೇಡ, ಮಕ್ಕಳ ಬದಲು ನಾಯಿಗಳನ್ನು ಸಾಕಿ’: ಶೆಫಾಲಿ ಶಾ ಹೇಳಿಕೆ ವೈರಲ್

ಬಾಲಿವುಡ್‌ನ ಖ್ಯಾತ ನಟಿ ಶೆಫಾಲಿ ಶಾ ಮದುವೆ, ಸಂಬಂಧಗಳು ಹಾಗೂ ಪೋಷಕತ್ವದ ಕುರಿತು ನೀಡಿರುವ ನೇರ ಹೇಳಿಕೆಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿವೆ.

ಲಿಲ್ಲಿ ಸಿಂಗ್ ಜೊತೆಗಿನ ಸಂದರ್ಶನದಲ್ಲಿ ಮಾತನಾಡಿದ ಶೆಫಾಲಿ, ಭಾವನಾತ್ಮಕವಾಗಿ ಪ್ರಬುದ್ಧರಾಗುವ ಮುನ್ನ ಯುವಕರು ಮದುವೆಯಂತಹ ಜೀವನದ ನಿರ್ಣಾಯಕ ಹೆಜ್ಜೆ ಇಡಬಾರದು ಎಂದು ಹೇಳಿದ್ದಾರೆ.

‘ಚಿಕ್ಕ ವಯಸ್ಸಿನಲ್ಲಿ ನಿಮಗೆ ನಿಮ್ಮ ಬಗ್ಗೆ ಸರಿಯಾದ ಅರಿವು ಇರುವುದಿಲ್ಲ. ಜೀವನದಲ್ಲಿ ಏನು ಬೇಕು, ಯಾವ ರೀತಿಯ ಸಂಬಂಧ ಬೇಕು ಎಂಬುದನ್ನು ತಿಳಿದುಕೊಳ್ಳುವ ಮುನ್ನ ಮದುವೆಯಾಗುವುದು ಸರಿಯಲ್ಲ. ಮದುವೆ ಎಂಬ ವ್ಯವಸ್ಥೆಯನ್ನು ನಂಬದಿದ್ದರೆ ಅದರಲ್ಲಿ ಕಾಲಿಡಬೇಡಿ’ ಎಂದು ಅವರು ಸ್ಪಷ್ಟವಾಗಿ ಹೇಳಿದ್ದಾರೆ.

ಇದೇ ವೇಳೆ, ‘ನನ್ನ ಮಾತಿಗೆ ಟ್ರೋಲ್ ಆಗಬಹುದು. ಆದರೂ ಹೇಳುತ್ತೇನೆ, ಮಕ್ಕಳನ್ನು ಮಾಡಿಕೊಳ್ಳುವುದಕ್ಕಿಂತ ನಾಯಿಗಳನ್ನು ಸಾಕಿ. ನಾಯಿಗಳು ಮಾತ್ರವೇ ಯಾವುದೇ ಷರತ್ತಿಲ್ಲದ ಪ್ರೀತಿ ಕೊಡುತ್ತವೆ’ ಎಂದು ಶೆಫಾಲಿ ಹೇಳಿಕೆ ನೀಡಿದ್ದಾರೆ.

ಅವರ ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಂಬಂಧಗಳು ಮತ್ತು ಪೋಷಕತ್ವದ ಕುರಿತು ಹೊಸ ಚರ್ಚೆಗೆ ಕಾರಣವಾಗಿದೆ.

ಶೆಫಾಲಿ ಶಾ ತಮ್ಮ ವೈಯಕ್ತಿಕ ಜೀವನದಲ್ಲೂ ಸಾಕಷ್ಟು ಏಳು-ಬೀಳುಗಳನ್ನು ಕಂಡಿದ್ದಾರೆ. ಮೊದಲ ಪತಿ ಹರ್ಷ್ ಛಾಯಾ ಅವರಿಂದ ದೂರಾದ ಬಳಿಕ, 2000ರಲ್ಲಿ ನಿರ್ಮಾಪಕ ವಿಪುಲ್ ಅಮೃತ್ಲಾಲ್ ಶಾ ಅವರನ್ನು ವಿವಾಹವಾಗಿದ್ದರು.

ಸಿಎಂ ಬಿರುದಿಗಿಂತ ‘ದಳಪತಿ’ಗೆ ಆದ್ಯತೆ: ‘ಜನ ನಾಯಗನ್’ನಲ್ಲಿ ವಿಜಯ್ ತೆಗೆದುಕೊಂಡ ನಿರ್ಧಾರ ವೈರಲ್

ತಮಿಳುನಾಡು ಮುಖ್ಯಮಂತ್ರಿ ಹಾಗೂ ನಟ ದಳಪತಿ ವಿಜಯ್ ಅಭಿನಯದ ಕೊನೆಯ ಸಿನಿಮಾ ‘ಜನ ನಾಯಗನ್’ ರಾಜಕೀಯ ಹಾಗೂ ಸಿನಿಮಾ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿರುವ ನಡುವೆ, ಇದೀಗ ಚಿತ್ರದ ಟೈಟಲ್ ಕಾರ್ಡ್ ಕುರಿತ ಮಾಹಿತಿ ಹೊಸ ಸಂಚಲನ ಸೃಷ್ಟಿಸಿದೆ.

ಚಿತ್ರದ ಆರಂಭದಲ್ಲಿ ‘ಹಾನರೆಬಲ್ ಚೀಫ್ ಮಿನಿಸ್ಟರ್ ದಳಪತಿ ವಿಜಯ್’ ಎಂಬ ಟೈಟಲ್ ಕಾರ್ಡ್ ಪ್ರದರ್ಶಿಸಲು ಚಿತ್ರತಂಡ ಯೋಚಿಸಿತ್ತು ಎಂದು ವರದಿಯಾಗಿದೆ. ಆದರೆ, ಈ ಪ್ರಸ್ತಾಪವನ್ನು ವಿಜಯ್ ಸ್ವತಃ ನಿರಾಕರಿಸಿದ್ದಾರೆ ಎನ್ನಲಾಗಿದೆ.

ಅಭಿಮಾನಿಗಳು ದಶಕಗಳಿಂದ ತಮ್ಮನ್ನು ಗುರುತಿಸುತ್ತಿರುವ ‘ದಳಪತಿ’ ಎಂಬ ಬಿರುದೇ ಮುಂದುವರಿಯಬೇಕು ಎಂದು ವಿಜಯ್ ಸೂಚಿಸಿರುವುದಾಗಿ ಮೂಲಗಳು ತಿಳಿಸಿವೆ. ರಾಜಕೀಯ ಹುದ್ದೆಯನ್ನು ಸಿನಿಮಾದೊಂದಿಗೆ ಮಿಶ್ರಣಗೊಳಿಸಬಾರದು ಎಂಬ ನಿಲುವನ್ನು ಅವರು ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.

ತಮ್ಮ ಸಿನಿಮಾ ಬದುಕಿಗೆ ತೆರೆ ಎಳೆಯುತ್ತಿರುವ ಈ ಹಂತದಲ್ಲೂ ಅಭಿಮಾನಿಗಳ ಭಾವನೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿರುವ ವಿಜಯ್ ನಿರ್ಧಾರ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.

‘ಜನ ನಾಯಗನ್’ ಸಿನಿಮಾ ಈಗಾಗಲೇ ಸೆನ್ಸಾರ್ ಸಮಸ್ಯೆಗಳು, ದೃಶ್ಯ ಸೋರಿಕೆ ಹಾಗೂ ಬಿಡುಗಡೆಯ ವಿಳಂಬದಿಂದ ಸಾಕಷ್ಟು ಸುದ್ದಿಯಲ್ಲಿದ್ದು, ಹೊಸ ರಿಲೀಸ್ ಡೇಟ್ ಶೀಘ್ರದಲ್ಲೇ ಘೋಷಣೆಯಾಗುವ ಸಾಧ್ಯತೆ ಇದೆ.

ಮೊದಲ ಮಳೆಯಲ್ಲೇ ಲಕ್ಷ್ಮೇಶ್ವರ ತತ್ತರ..!

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದಲ್ಲಿ ಗುರುವಾರ ರಾತ್ರಿ ಸುರಿದ ಭಾರಿ ಮಳೆ ಹಾಗೂ ಬಿರುಗಾಳಿಯ ಅಬ್ಬರಕ್ಕೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು, ಪಟ್ಟಣದ ಹಲವು ಪ್ರದೇಶಗಳು ಜಲಾವೃತವಾಗಿ ಜನರು ರಾತ್ರಿಯಿಡೀ ಪರದಾಡುವಂತಾಯಿತು.

ಮುಂಗಾರಿನ ಮೊದಲ ಮಳೆಯಲ್ಲೇ ತ್ಯಾಜ್ಯದಿಂದ ತುಂಬಿಕೊಂಡಿದ್ದ ಚರಂಡಿಗಳ ಕೊಳಚೆ ನೀರು ರಸ್ತೆಗಳಿಗೆ ಹರಿದು ಬಂದ ಪರಿಣಾಮ ರಸ್ತೆಗಳು ಕೆರೆಯಂತಾಗಿದ್ದವು. ಪಟ್ಟಣದ ಶಿಗ್ಲಿ ಕ್ರಾಸ್, ಗ್ರಂಥಾಲಯದ ಬಳಿ ಅಪಾರ ಪ್ರಮಾಣದ ನೀರು ಹರಿದು ಬಂದು ರಸ್ತೆಗಳಲ್ಲಿ ಕೊಳಚೆ ನೀರು ತುಂಬಿಕೊಂಡಿತ್ತು. ಬಹುತೇಕ ರಸ್ತೆಗಳಲ್ಲಿ ತಗ್ಗು-ಗುಂಡಿಗಳು ನೀರಿನಿಂದ ತುಂಬಿದ್ದರಿಂದ ವಾಹನ ಸವಾರರು ಹಾಗೂ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸಿದರು.

ಅಂಬೇಡ್ಕರ್ ನಗರ, ಮುಕ್ತಿನಗರ, ಬಸವೇಶ್ವರ ನಗರ ಸೇರಿದಂತೆ ತಗ್ಗು ಪ್ರದೇಶಗಳ ಅನೇಕ ಮನೆಗಳಿಗೆ ನೀರು ನುಗ್ಗಿ ನಿವಾಸಿಗಳು ಆತಂಕದಲ್ಲಿ ರಾತ್ರಿಯಿಡೀ ಕಾಲ ಕಳೆಯುವಂತಾಯಿತು.

ಭಾರಿ ಗಾಳಿ-ಮಳೆಯ ಅಬ್ಬರಕ್ಕೆ ಪಟ್ಟಣದ ಹಲವೆಡೆ ವಿದ್ಯುತ್ ಕಂಬಗಳು ಹಾಗೂ ಮರಗಿಡಗಳು ನೆಲಕ್ಕುರುಳಿದ ಪರಿಣಾಮ ವಿದ್ಯುತ್ ಸಂಪರ್ಕ ಹಾಗೂ ಕೆಲವೆಡೆ ರಸ್ತೆ ಸಂಪರ್ಕ ಕೂಡ ಕಡಿತಗೊಂಡಿತ್ತು. ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಹೆಸ್ಕಾಂ ಸಿಬ್ಬಂದಿ, ಪುರಸಭೆ ಸಿಬ್ಬಂದಿ ಹಾಗೂ ಪೊಲೀಸರು ರಾತ್ರಿಯಿಡೀ ಕಾರ್ಯನಿರ್ವಹಿಸಿದರು. ಅವರ ಸೇವೆಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರು.

ಪಟ್ಟಣದ ಸವಣೂರ ರಸ್ತೆಯ ಹೂವಮ್ಮ ಮಲ್ಲಪ್ಪ ಗದ್ದಿ ಅವರ ಮನೆಯ ಮೇಲೆ ಬೃಹತ್ ಮರ ಬಿದ್ದ ಪರಿಣಾಮ ಮನೆಯಲ್ಲಿದ್ದ ವೃದ್ಧೆ, ಮಹಿಳೆ ಮತ್ತು ಮಕ್ಕಳು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಇಟ್ಟಿಗೆರೆಯ ಅಂಚಿನ ಪ್ರದೇಶದ ನಿವಾಸಿಗಳು ವರ್ಷಗಳಿಂದ ಅನುಭವಿಸುತ್ತಿರುವ ಹಿನ್ನೀರಿನ ಸಮಸ್ಯೆ ಪರಿಹರಿಸಲು ಪುರಸಭೆ ವತಿಯಿಂದ ಕೆರೆ ಅಭಿವೃದ್ಧಿಗಾಗಿ ₹೫೬ ಲಕ್ಷ ವೆಚ್ಚದಲ್ಲಿ ಕೈಗೊಂಡಿದ್ದ ಕಾಮಗಾರಿಗಳು ಮೊದಲ ಮಳೆಯ ಹೊಡೆತಕ್ಕೇ ಕಿತ್ತು ಹೋಗಿವೆ. ನೀರು ಕೆರೆಗೆ ಹರಿದು ಹೋಗಲು ಗುತ್ತಿಗೆದಾರರು ರಾತ್ರಿಯಿಡೀ ಹರಸಾಹಸ ಪಟ್ಟರೂ ಈ ಭಾಗದ ಜನರು ಸಮಸ್ಯೆಯಿಂದ ಹೊರಬರಲಿಲ್ಲ. ಹಾಕಲಾಗಿದ್ದ ಬಂಡು ಒಡೆದು ಹೋಗಿದ್ದರೂ ಯಾವುದೇ ಪ್ರಯೋಜನವಾಗಲಿಲ್ಲ.

ಇನ್ನೂ ಕೆರೆಗೆ ಚರಂಡಿ ಹಾಗೂ ಕೊಳಚೆ ನೀರು ಹರಿದು ಬರುತ್ತಿರುವುದು ಮುಂದುವರಿದಿದ್ದು, ಅವೈಜ್ಞಾನಿಕ ಹಾಗೂ ಕಳಪೆ ಕಾಮಗಾರಿಯಿಂದ ಪುರಸಭೆಯ ಲಕ್ಷಾಂತರ ರೂಪಾಯಿ ಹಣ ಪೋಲಾಗಿರುವುದಾಗಿ ಸಾರ್ವಜನಿಕರು ಆರೋಪಿಸಿದ್ದಾರೆ.

“ಅವೈಜ್ಞಾನಿಕ ಮತ್ತು ಕಳಪೆ ಕಾಮಗಾರಿಯಿಂದ ಪುರಸಭೆಯ ಲಕ್ಷಾಂತರ ರೂಪಾಯಿ ಹಣ ಪೋಲಾಗಿದ್ದು, ಜನರ ಸಮಸ್ಯೆಯೂ ಪರಿಹಾರವಾಗಿಲ್ಲ, ಈ ಕುರಿತು ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು.”

ಶರಣು ಗೋಡಿ, ಜಿಲ್ಲಾಧ್ಯಕ್ಷ

ಕರವೇ ಸ್ವಾಭಿಮಾನಿ ಸೇನೆ

ಪ್ರಶ್ನೆಪತ್ರಿಕೆ ಸೋರಿಕೆ ತಡೆಯಲು ಕೇಂದ್ರ ಸರ್ಕಾರ ಸಂಪೂರ್ಣ ವಿಫಲ: ಮಿಥುನ ಜಿ. ಪಾಟೀಲ ಆಕ್ರೋಶ

ವಿಜಯಸಾಕ್ಷಿ ಸುದ್ದಿ, ಡಂಬಳ: ದೇಶದ ವೈದ್ಯಕೀಯ ಶಿಕ್ಷಣ ವ್ಯವಸ್ಥೆಯಲ್ಲಿ ಪಾರದರ್ಶಕತೆ ಹಾಗೂ ಸಮಾನ ಅವಕಾಶ ಕಲ್ಪಿಸುವ ಉದ್ದೇಶದಿಂದ ಜಾರಿಗೆ ತರಲಾದ ನೀಟ್ ಪರೀಕ್ಷೆಯು ಇದೀಗ ವಿಶ್ವಾಸಾರ್ಹತೆಯ ಸಂಕಷ್ಟಕ್ಕೆ ಸಿಲುಕಿರುವುದು ಅತ್ಯಂತ ದುರಂತದ ಸಂಗತಿ ಎಂದು ರೋಣ ಗ್ಯಾರಂಟಿ ಸಮಿತಿ ಅಧ್ಯಕ್ಷ ಮಿಥುನ ಜಿ. ಪಾಟೀಲ ಆರೋಪಿಸಿದರು.
ಡಂಬಳ ಹೋಬಳಿಯ ಡೋಣಿ ತಾಂಡದಲ್ಲಿ ಮಾತನಾಡಿದ ಅವರು, ೨೦೨೬ರ ನೀಟ್ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ ದೇಶದಾದ್ಯಂತ ಲಕ್ಷಾಂತರ ವಿದ್ಯಾರ್ಥಿಗಳು ಹಾಗೂ ಪೋಷಕರಲ್ಲಿ ತೀವ್ರ ಆತಂಕ ಸೃಷ್ಟಿಸಿದೆ ಎಂದು ಹೇಳಿದರು.
ವರ್ಷಗಳ ಕಾಲ ಪರಿಶ್ರಮಪಟ್ಟು ತಯಾರಿ ನಡೆಸಿದ ವಿದ್ಯಾರ್ಥಿಗಳ ಭವಿಷ್ಯ ಇಂದು ಅನಿಶ್ಚಿತತೆಯ ಅಂಚಿನಲ್ಲಿದೆ. ಇಂತಹ ಸಂದರ್ಭದಲ್ಲಿ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಜಾಗೃತಿ ವಹಿಸಿ ವಿದ್ಯಾರ್ಥಿಗಳಿಗೆ ಸೂಕ್ತ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ನೀಟ್ ಪರೀಕ್ಷೆ ರದ್ದುಗೊಂಡಿರುವುದು ಕೇವಲ ಆಡಳಿತಾತ್ಮಕ ನಿರ್ಧಾರವಲ್ಲ. ಇದು ಸುಮಾರು 22 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳ ಕನಸು ಮತ್ತು ಪೋಷಕರ ನಂಬಿಕೆಗೆ ಬಿದ್ದ ದೊಡ್ಡ ಹೊಡೆತವಾಗಿದೆ. ವಿದ್ಯಾರ್ಥಿಗಳ ಶ್ರಮಕ್ಕೆ ನ್ಯಾಯ ಸಿಗಬೇಕಾದರೆ ಕೇಂದ್ರ ಸರ್ಕಾರ ಹಾಗೂ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಸಂಪೂರ್ಣ ಜವಾಬ್ದಾರಿ ಹೊತ್ತು ಪಾರದರ್ಶಕ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ನೀಟ್ ಪರೀಕ್ಷೆಯಲ್ಲಿ ಅಕ್ರಮ ನಡೆಯುತ್ತಿರುವುದು ಇದೇ ಮೊದಲಲ್ಲ ಎಂದು ಆರೋಪಿಸಿದ ಅವರು, 2024ರ ಪರೀಕ್ಷೆಯಲ್ಲಿಯೂ ಪ್ರಶ್ನೆಪತ್ರಿಕೆ ಸೋರಿಕೆ ಆರೋಪಗಳು ಕೇಳಿ ಬಂದಿದ್ದವು. ಆ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಿ ಪರೀಕ್ಷಾ ಸುರಕ್ಷತೆಗಾಗಿ ಕಠಿಣ ಮಾರ್ಗಸೂಚಿಗಳನ್ನು ರೂಪಿಸಿತ್ತು ಎಂದು ಹೇಳಿದರು.
ಡಿಜಿಟಲ್ ಲಾಕ್ ವ್ಯವಸ್ಥೆ, ಬಯೋಮೆಟ್ರಿಕ್ ಪರಿಶೀಲನೆ, ಸಿಸಿಟಿವಿ ನಿಗಾ ಸೇರಿದಂತೆ ಹಲವು ಭದ್ರತಾ ಕ್ರಮಗಳನ್ನು ಘೋಷಿಸಲಾಗಿದ್ದರೂ, ಅವು ಕೇವಲ ಕಾಗದದಲ್ಲೇ ಉಳಿದಿವೆ. ಜಾರಿಗೆ ತರುವಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಟೀಕಿಸಿದರು.
ದೇಶದ ವಿದ್ಯಾರ್ಥಿಗಳ ಭವಿಷ್ಯದ ಪ್ರಶ್ನೆಯಲ್ಲಿ ಯಾವುದೇ ನಿರ್ಲಕ್ಷ್ಯ ಸಹಿಸಲಾಗದು. ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿ ನಂಬಿಕೆ ಉಳಿಸಿಕೊಳ್ಳಬೇಕಾದರೆ ಪರೀಕ್ಷಾ ವ್ಯವಸ್ಥೆಯಲ್ಲಿ ಸಂಪೂರ್ಣ ಪಾರದರ್ಶಕತೆ ಮತ್ತು ತಂತ್ರಜ್ಞಾನ ಆಧಾರಿತ ಭದ್ರತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಬೇಕು ಎಂದು ಹೇಳಿದರು.
ಪ್ರತಿ ವರ್ಷ ಲಕ್ಷಾಂತರ ವಿದ್ಯಾರ್ಥಿಗಳು ತಮ್ಮ ಕನಸುಗಳನ್ನು ಹೊತ್ತು ನೀಟ್ ಪರೀಕ್ಷೆಗೆ ಹಾಜರಾಗುತ್ತಾರೆ. ಗ್ರಾಮೀಣ ಹಾಗೂ ಮಧ್ಯಮ ವರ್ಗದ ಕುಟುಂಬಗಳ ಮಕ್ಕಳು ದಿನರಾತ್ರಿ ಪರಿಶ್ರಮಪಟ್ಟು ಪರೀಕ್ಷೆಗೆ ಸಿದ್ಧರಾಗುತ್ತಾರೆ. ಆದರೆ ಪ್ರಶ್ನೆಪತ್ರಿಕೆ ಸೋರಿಕೆಯಂತಹ ಘಟನೆಗಳು ಅವರ ಮಾನಸಿಕ ಸ್ಥೈರ್ಯ ಕುಗ್ಗಿಸುವುದಲ್ಲದೆ, ಶಿಕ್ಷಣ ವ್ಯವಸ್ಥೆಯ ಮೇಲಿನ ನಂಬಿಕೆಯನ್ನು ಹಾಳು ಮಾಡುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.
ಈ ಪ್ರಕರಣದ ಕುರಿತು ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ಸ್ವತಂತ್ರ ತನಿಖೆ ನಡೆಸಬೇಕು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಂಡು ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಬೇಕು. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಕೇಂದ್ರ ಸರ್ಕಾರ ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
“ನೀಟ್ ಪರೀಕ್ಷೆಯ ವಿಶ್ವಾಸಾರ್ಹತೆ ಕುಸಿದರೆ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ಕತ್ತಲೆಯಾಗುತ್ತದೆ, ಕೇಂದ್ರ ಸರ್ಕಾರ ತಕ್ಷಣ ಹೊಣೆ ಹೊತ್ತು ಕ್ರಮ ಕೈಗೊಳ್ಳಬೇಕು.”
ಮಿಥುನ ಜಿ. ಪಾಟೀಲ
ರೋಣ ಗ್ಯಾರಂಟಿ ಸಮಿತಿ ಅಧ್ಯಕ್ಷ

ಗ್ರಾಮೀಣ ಮಕ್ಕಳಿಗೆ ವೇದಿಕೆ ಕಲ್ಪಿಸಿ ಸಾಂಸ್ಕೃತಿಕ ಪರಂಪರೆ ಉಳಿಸುತ್ತಿರುವ ನಟರಂಗ ಸಂಸ್ಥೆ: ಕೃಷ್ಣಗೌಡ ಪಾಟೀಲ

ವಿಜಯಸಾಕ್ಷಿ ಸುದ್ದಿ, ಗದಗ: ಜಿಲ್ಲೆಯ ಸಾಂಸ್ಕೃತಿಕ ಪರಿಸರವನ್ನು ಜೀವಂತವಾಗಿರಿಸುವಲ್ಲಿ ಸೋಮಶೇಖರ ಚಿಕ್ಕಮಠ ನೇತೃತ್ವದ ನಟರಂಗ ಸಂಸ್ಥೆಯ ಪಾತ್ರ ಅಪಾರವಾಗಿದೆ ಎಂದು ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷ ಕೃಷ್ಣಗೌಡ ಪಾಟೀಲ ಹೇಳಿದರು.

ನಗರದ ಪಂ. ಭೀಮಸೇನ್ ಜೋಶಿ ರಂಗಮಂದಿರದಲ್ಲಿ ಗುರುವಾರ ನಟರಂಗ ಕಲ್ಚರಲ್ ಅಕಾಡೆಮಿ ಮತ್ತು ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ‘ಮಕ್ಕಳ ಕಲರವ-೨೦೨೬’ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ, ಸಂಸ್ಥೆಯ ದಶಮಾನೋತ್ಸವದ ಲೋಗೋ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ನಟರಂಗ ಸಂಸ್ಥೆ ಗ್ರಾಮೀಣ ಭಾಗದ ಮಕ್ಕಳ ಪ್ರತಿಭಾ ಪ್ರದರ್ಶನಕ್ಕೂ ಉತ್ತಮ ವೇದಿಕೆ ಕಲ್ಪಿಸಿದೆ. ಸಂಸ್ಥೆಯ ಚಟುವಟಿಕೆಗಳನ್ನು ಇನ್ನಷ್ಟು ವಿಸ್ತರಿಸಲು ಸ್ವಂತ ಜಾಗದ ಅಗತ್ಯವಿದೆ ಎಂಬುದನ್ನು ಪದಾಧಿಕಾರಿಗಳು ಗಮನಕ್ಕೆ ತಂದಿದ್ದಾರೆ. ಈ ಕುರಿತು ಸಂಬಂಧಪಟ್ಟವರ ಗಮನ ಸೆಳೆದು ಸಂಸ್ಥೆಗೆ ಜಾಗ ಒದಗಿಸಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಅತಿಥಿಯಾಗಿ ಪಾಲ್ಗೊಂಡಿದ್ದ ಪ್ರೀತಿ ಹೊನಗುಡಿ ಮಾತನಾಡಿ, ಉತ್ತರ ಕರ್ನಾಟಕವು ಕಲೆಯ ತವರೂರು. ಇಂದಿನ ಮೊಬೈಲ್ ಯುಗದಲ್ಲೂ ಜನಪದ ಹಾಗೂ ಕಲಾ ಸಂಸ್ಕೃತಿಯನ್ನು ಜನರು ಪೋಷಿಸುತ್ತಿರುವುದಕ್ಕೆ ನಟರಂಗ ಸಂಸ್ಥೆಯ ಈ ಅದ್ಧೂರಿ ಕಾರ್ಯಕ್ರಮವೇ ಸಾಕ್ಷಿಯಾಗಿದೆ ಎಂದರು.

ಬೇಸಿಗೆ ಶಿಬಿರದ ಮೂಲಕ ಮಕ್ಕಳಲ್ಲಿನ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಶ್ಲಾಘನೀಯವಾಗಿ ನಡೆಯುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಖ್ಯಾತ ವೈದ್ಯ ಡಾ. ಎಸ್.ವಿ. ಶಿವನಗೌಡ ಮಾತನಾಡಿ, ನಟರಂಗ ಸಂಸ್ಥೆಯ ತರಬೇತುದಾರರು ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಗಳನ್ನು ಹೊರತರುತ್ತಿದ್ದಾರೆ. ಇಲ್ಲಿ ತರಬೇತಿ ಪಡೆದ ಅನೇಕ ಮಕ್ಕಳು ಇಂದು ದೊಡ್ಡ ವೇದಿಕೆಗಳಲ್ಲಿ ಮಿಂಚುತ್ತಿರುವುದು ಹೆಮ್ಮೆಯ ಸಂಗತಿ. ಈ ಸಂಸ್ಥೆ ಮತ್ತಷ್ಟು ಹೆಮ್ಮರವಾಗಿ ಬೆಳೆಯಲಿ ಎಂದು ಹಾರೈಸಿದರು.

ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಅಡ್ನೂರು-ರಾಜೂರ-ಗದಗ ಬೃಹನ್ಮಠದ ಅಭಿನವ ಪಂಚಾಕ್ಷರ ಶಿವಾಚಾರ್ಯ ಮಹಾಸ್ವಾಮೀಜಿ ಆಶೀರ್ವಚನ ನೀಡಿ, ನಟರಂಗ ಸಂಸ್ಥೆ ಸಮಾಜಕ್ಕೆ ಉತ್ತಮ ಕಲಾವಿದರನ್ನು ನೀಡುತ್ತಿರುವುದು ಶ್ಲಾಘನೀಯ ಕಾರ್ಯ ಎಂದರು.

ಪಂ. ಪಂಚಾಕ್ಷರ ಗವಾಯಿಗಳು ಹಾಗೂ ಪುಟ್ಟರಾಜ ಗವಾಯಿಗಳಂತಹ ಮಹಾನ್ ಪ್ರತಿಭೆಗಳು ಮತ್ತೆ ಈ ನೆಲದಲ್ಲಿ ಮೂಡಿಬರಬೇಕಾದರೆ ಇಂತಹ ಸಂಸ್ಥೆಗಳಿಗೆ ಸ್ವಂತ ನೆಲೆ ಅಗತ್ಯವಾಗಿದೆ. ಸರ್ಕಾರ ಜನಪರ ಸಂಸ್ಥೆಗಳಿಗೆ ಸೂಕ್ತ ಆಶ್ರಯ ನೀಡಬೇಕು ಎಂದು ಹೇಳಿದರು.

ವೇದಿಕೆಯ ಮೇಲೆ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ನಂದಾ ಹಣಬರಹಟ್ಟಿ, ರಂಗಕರ್ಮಿ ಮಹಾಂತೇಶ ಗಜೇಂದ್ರಗಡ, ತೋಂಟದಾರ್ಯ ಮಠದ ಆಡಳಿತಾಧಿಕಾರಿ ಎಸ್.ಎಸ್. ಪಟ್ಟಣಶೆಟ್ಟರ್, ಉದ್ಯಮಿ ಕಿರಣ ಬೂಮಾ, ಎಚ್.ಎಸ್. ಶಿವನಗೌಡ್ರ, ಶರಣಬಸಪ್ಪ ಗುಡುಮನಿ, ಜಿ.ಬಿ. ಪಾಟೀಲ, ಮುತ್ತಣ್ಣ ಮುಶಿಗೇರಿ, ವಿಜಯಕುಮಾರ ಹಿರೇಮಠ, ವಿಜಯಲಕ್ಷ್ಮೀ ಮಾನ್ವಿ, ಚಂದ್ರು ಹರಿಜನ, ಬಾಬು ನರಸಾಪುರ, ನಾಗರತ್ನಾ ಚಿಕ್ಕಮಠ, ರಾಮಚಂದ್ರ ಬಳ್ಳಾರಿ, ಮಹೇಶ ಕರಿಬಿಷ್ಟಿ, ನಟರಂಗ ಅಕಾಡೆಮಿಯ ಅಧ್ಯಕ್ಷ ಸೋಮಶೇಖರ ಚಿಕ್ಕಮಠ, ಪೂಜಾ ಚಿಕ್ಕಮಠ ಹಾಗೂ ಸಂಗೀತಾ ಶಿಗ್ಗಾಂವಿ ಉಪಸ್ಥಿತರಿದ್ದರು.

ರಾಹುಲ್ ರಾಠೋಡ ಪ್ರಾರ್ಥಿಸಿದರು. ಪತ್ರಕರ್ತ ಆನಂದಯ್ಯ ವಿರಕ್ತಮಠ ಕಾರ್ಯಕ್ರಮ ನಿರೂಪಿಸಿದರು. ಶಿಬಿರದ ಮಕ್ಕಳಿಂದ ನಡೆದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜನಮನ ಸೆಳೆದವು.

“ಗ್ರಾಮೀಣ ಮಕ್ಕಳ ಪ್ರತಿಭೆಗೆ ವೇದಿಕೆ ಕಲ್ಪಿಸಿ, ಉತ್ತರ ಕರ್ನಾಟಕದ ಕಲಾ ಸಂಸ್ಕೃತಿಯನ್ನು ಜೀವಂತವಾಗಿರಿಸಿರುವುದು ನಟರಂಗ ಸಂಸ್ಥೆಯ ದೊಡ್ಡ ಸಾಧನೆ.”

— ಕೃಷ್ಣಗೌಡ ಪಾಟೀಲ

ಯುವ ಕಾಂಗ್ರೆಸ್ ಘಟಕದ ಜಿಲ್ಲಾ ಅಧ್ಯಕ್ಷ

error: Content is protected !!