ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ: ಅಧಿಕಮಾಸದ ಅಂಗವಾಗಿ ನವನಗರದ ಶ್ರೀ ಕಾಳಿಕಾ ದೇವಸ್ಥಾನದಲ್ಲಿ ವಿಶ್ವಚೇತನ ಮಹಿಳಾ ಮಂಡಳದಿಂದ ಹಮ್ಮಿಕೊಂಡಿದ್ದ 33 ದಿನಗಳ ಅಧಿಕಮಾಸ ವ್ರತಾಚರಣೆಯು ಉದ್ಯಾಪನೆ ಹಾಗೂ ಅನ್ನಸಂತರ್ಪಣೆಯೊಂದಿಗೆ ಸಂಪನ್ನಗೊಂಡಿತು.
ಅಧಿಕಮಾಸದ ಅವಧಿಯಲ್ಲಿ ಮಹಿಳಾ ಮಂಡಳದ ಸದಸ್ಯರು ಪ್ರತಿದಿನ ಕೃಷ್ಣ ತುಳಸಿ ಕಲ್ಯಾಣ ಪೂಜೆ, ದಂಪತಿಗಳಿಗೆ ಬಾಗಿನ ಅರ್ಪಣೆ, ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಹಾಗೂ ಅಪೂಪ ದಾನ ಸೇರಿದಂತೆ ವಿವಿಧ ಧಾರ್ಮಿಕ ಸೇವಾ ಕಾರ್ಯಗಳನ್ನು ನಡೆಸಿದರು. ಅಲ್ಲದೆ, ವಿವಿಧ ಗೃಹಿಣಿಯರ ಮನೆಗಳಲ್ಲಿ ತುಳಸಿ ಪೂಜೆ ನೆರವೇರಿಸಿ, ಪುರಂದರದಾಸರ ಪದಗಳು ಹಾಗೂ ರಾಮ-ಕೃಷ್ಣ ಭಜನೆಗಳನ್ನು ಹಾಡುವ ಮೂಲಕ ವ್ರತಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಶ್ರೀ ವಿಶ್ವಕರ್ಮ ವಿಕಾಸ ಸಮಿತಿ ಟ್ರಸ್ಟ್ ಅಧ್ಯಕ್ಷ ಸಿ.ಪಿ. ಮಾಯಾಚಾರಿ, ಭಾರತೀಯ ಧಾರ್ಮಿಕ ಪರಂಪರೆಯಲ್ಲಿ ಅಧಿಕಮಾಸದ ಮಹತ್ವವನ್ನು ವಿವರಿಸಿ, “ಭಾರತೀಯರ ದಾನ ಸಂಸ್ಕೃತಿಯ ಪ್ರತೀಕವಾಗಿ ಅಧಿಕಮಾಸ ವಿಶೇಷ ಸ್ಥಾನ ಪಡೆದಿದೆ” ಎಂದು ಹೇಳಿದರು.
ವಿಶ್ವಚೇತನ ಮಹಿಳಾ ಮಂಡಳದ ಅಧ್ಯಕ್ಷೆ ಶ್ರೀಮತಿ ಮೀನಾಕ್ಷಿ ಬಡಿಗೇರ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಳೆದ ಹತ್ತು ವರ್ಷಗಳಿಂದ ನವನಗರದಲ್ಲಿ ಅಧಿಕಮಾಸ ವ್ರತಾಚರಣೆಯನ್ನು ನಿರಂತರವಾಗಿ ನಡೆಸಿಕೊಂಡು ಬರಲಾಗುತ್ತಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶ್ರೀ ಕಾಳಿಕಾ ದೇವಸ್ಥಾನದ ಅರ್ಚಕ ನಾರಾಯಣ ಆಚಾರ್ಯ ಲಕ್ಕುಂಡಿ, ಕಾರ್ಯಕ್ರಮ ಸಂಯೋಜಕರಾದ ಮೀನಾಕ್ಷಿ ಮತ್ತು ಮೋಹನ ಬಡಿಗೇರ, ಶೋಭಾ ಮತ್ತು ಜಕಣಾಚಾರ್ಯ ಕರವೀರಕರ, ಶೋಭಾ ಮತ್ತು ಎಸ್.ಎನ್. ಬಡಿಗೇರ ದಂಪತಿ ಹಾಗೂ ಸಂಗೀತ ಕಲಾವಿದ ವಾಸು ಸೋನಾರ ಅವರನ್ನು ಸನ್ಮಾನಿಸಲಾಯಿತು.

