Home Blog

ಭಾರತೀಯ ತೈಲ ಹಡಗುಗಳಿಗೆ ಟೋಲ್ ವಿಧಿಸಿಲ್ಲ: ಇರಾನ್ ಸ್ಪಷ್ಟನೆ!

0

ನವದೆಹಲಿ: ಹಾರ್ಮುಜ್ ಜಲಸಂಧಿಯ ಮೂಲಕ ಸಂಚರಿಸುವ ಭಾರತೀಯ ತೈಲ ಟ್ಯಾಂಕರ್‌ಗಳಿಗೆ ಯಾವುದೇ ಶುಲ್ಕ ವಿಧಿಸಲಾಗಿಲ್ಲ ಎಂದು ಇರಾನ್ ರಾಯಭಾರಿ ಮೊಹಮ್ಮದ್ ಫಥಾಲಿ ಸ್ಪಷ್ಟಪಡಿಸಿದ್ದಾರೆ.

ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತೀಯ ಹಡಗುಗಳಿಗೆ ಟೋಲ್ ವಿಧಿಸಲಾಗಿದೆ ಎಂಬ ವರದಿಗಳನ್ನು ತಳ್ಳಿಹಾಕಿದ್ದಾರೆ. ಈ ಕುರಿತು ಯಾವುದೇ ಗೊಂದಲವಿದ್ದರೆ ಭಾರತ ಸರ್ಕಾರವನ್ನು ಸಂಪರ್ಕಿಸುವಂತೆ ಅವರು ತಿಳಿಸಿದ್ದಾರೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್‌ಗೆ ಟೋಲ್ ಪಾವತಿಸುವ ಹಡಗುಗಳನ್ನು ತಡೆಯುವುದಾಗಿ ಎಚ್ಚರಿಕೆ ನೀಡಿದ ಬೆನ್ನಲ್ಲೇ ಈ ಸ್ಪಷ್ಟನೆ ಹೊರಬಂದಿದೆ.

ಫಥಾಲಿ ಅವರ ಪ್ರಕಾರ, ಹಾರ್ಮುಜ್ ಜಲಸಂಧಿಯಲ್ಲಿ ಭಾರತೀಯ ಹಡಗುಗಳ ಸುರಕ್ಷಿತ ಸಂಚಾರಕ್ಕಾಗಿ ಇರಾನ್ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಶೀಘ್ರದಲ್ಲೇ ಹೊಸ ಕಾರ್ಯವಿಧಾನವನ್ನು ಪ್ರಕಟಿಸಲಾಗುವುದು.

ಜಗತ್ತಿನ ಒಟ್ಟು ತೈಲ ಸಾಗಣೆಯ ಸುಮಾರು 20% ಹಾರ್ಮುಜ್ ಜಲಸಂಧಿಯ ಮೂಲಕ ನಡೆಯುತ್ತದೆ. ಇಲ್ಲಿ ಸಂಚಾರಕ್ಕೆ ಅಡ್ಡಿಯಾದರೆ ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅವರು ಎಚ್ಚರಿಸಿದ್ದಾರೆ.

ಅಂತರರಾಷ್ಟ್ರೀಯ ಸಮುದ್ರ ಕಾನೂನಿನ ಪ್ರಕಾರ (UNCLOS), ಜಾಗತಿಕ ಜಲಮಾರ್ಗದಲ್ಲಿ ಕೇವಲ ಸಂಚಾರಕ್ಕಾಗಿ ಶುಲ್ಕ ವಿಧಿಸುವಂತಿಲ್ಲ. ಈ ಹಿನ್ನೆಲೆಯಲ್ಲಿ ಇರಾನ್ ಟೋಲ್ ವಿಧಿಸುವ ಕುರಿತು ಹರಡಿದ್ದ ಸುದ್ದಿಗಳಿಗೆ ಈಗ ತೆರೆ ಬಿದ್ದಿದೆ.

ಇರಾನ್ ತನ್ನ ಜಲಸಂಧಿಯ ಮೂಲಕ ಹಾದುಹೋಗುವ ಹಡಗುಗಳಿಗೆ ಸುಮಾರು 2 ಮಿಲಿಯನ್ ಡಾಲರ್ (₹17 ಕೋಟಿ) ಟೋಲ್ ವಿಧಿಸುವ ಸಾಧ್ಯತೆ ಇದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಈ ಸ್ಪಷ್ಟನೆ ನೀಡಲಾಗಿದೆ.

ಭಾರತ ಮತ್ತು ಇರಾನ್ ನಡುವಿನ ದ್ವಿಪಕ್ಷೀಯ ಸಂಬಂಧಗಳು ಉತ್ತಮವಾಗಿದ್ದು, ಚಾಬಹಾರ್ ಬಂದರು ಅಭಿವೃದ್ಧಿಯಲ್ಲಿ ಭಾರತ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ರಾಯಭಾರಿ ತಿಳಿಸಿದ್ದಾರೆ.

ಗಾಂಜಾ ಸೇವಿಸಿ ಅನುಮಾನಾಸ್ಪದ ವರ್ತನೆ: ವಿದ್ಯಾರ್ಥಿ ವಿರುದ್ದ ಸುಮೊಟೊ ಕೇಸ್ ದಾಖಲು

ಶಿವಮೊಗ್ಗ: ವಿನೋಬನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗಾಂಜಾ ಸೇವಿಸಿ ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದ ಪದವಿ ವಿದ್ಯಾರ್ಥಿಯ ವಿರುದ್ಧ ಪೊಲೀಸರು ಸುಮೊಟೊ ಪ್ರಕರಣ ದಾಖಲಿಸಿದ್ದಾರೆ.

ಘಟನೆ ರಾತ್ರಿ ಗಸ್ತು ವೇಳೆ ನಡೆದಿದೆ. ಸಾರ್ವಜನಿಕ ಸ್ಥಳದಲ್ಲಿ ಒಬ್ಬ ಯುವಕ ಅಸ್ವಸ್ಥನಂತೆ ತೂರಾಡುತ್ತಿರುವುದನ್ನು ಕಂಡ ಪೊಲೀಸರು ತಕ್ಷಣ ಸ್ಥಳಕ್ಕೆ ತೆರಳಿ ವಿಚಾರಣೆ ನಡೆಸಿದ್ದಾರೆ. ಆತನ ವರ್ತನೆ ಅನುಮಾನಾಸ್ಪದವಾಗಿದ್ದ ಹಿನ್ನೆಲೆಯಲ್ಲಿ ಗಾಂಜಾ ಸೇವನೆ ಶಂಕೆ ವ್ಯಕ್ತವಾಗಿದೆ.

ಪೊಲೀಸರು ತಕ್ಷಣವೇ ಆತನನ್ನು ಮೆಗ್ಗಾನ್ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ. ವೈದ್ಯಕೀಯ ವರದಿಯಲ್ಲಿ ಆತ ಗಾಂಜಾ ಸೇವಿಸಿರುವುದು ದೃಢಪಟ್ಟಿದೆ ಎಂದು ತಿಳಿದುಬಂದಿದೆ.

ಈ ಹಿನ್ನೆಲೆಯಲ್ಲಿ ವಿನೋಬನಗರ ಪೊಲೀಸರು ಮಾದಕ ವಸ್ತು ಸೇವನೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮುಂದಿನ ತನಿಖೆ ನಡೆಯುತ್ತಿದೆ.

ಐಪಿಎಲ್ ಅಭಿಮಾನಿಗಳಿಗೆ ಗುಡ್ ನ್ಯೂಸ್: ಬೆಂಗಳೂರು ಮೆಟ್ರೋ ಸೇವೆ ವಿಸ್ತರಣೆ!

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಐಪಿಎಲ್ ಕ್ರೇಜ್ ಹೆಚ್ಚಾಗುತ್ತಿದ್ದಂತೆ ಕ್ರಿಕೆಟ್ ಅಭಿಮಾನಿಗಳಿಗೆ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ಸಿಹಿ ಸುದ್ದಿ ನೀಡಿದೆ.

ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಏಪ್ರಿಲ್ 15, 18 ಮತ್ತು 24ರಂದು ನಡೆಯಲಿರುವ ಐಪಿಎಲ್ ಪಂದ್ಯಗಳ ಹಿನ್ನೆಲೆಯಲ್ಲಿ ಮೆಟ್ರೋ ಸೇವೆ ಸಮಯವನ್ನು ವಿಸ್ತರಿಸಲಾಗಿದೆ. ಈ ದಿನಗಳಲ್ಲಿ ರಾತ್ರಿ 11ರಿಂದ ತಡರಾತ್ರಿ 2 ಗಂಟೆವರೆಗೆ ಹೆಚ್ಚುವರಿ ಮೆಟ್ರೋ ಸೇವೆ ಲಭ್ಯವಾಗಲಿದೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.

ಕೊನೆಯ ರೈಲುಗಳ ಸಮಯ ವಿವರ:
ವೈಟ್‌ಫೀಲ್ಡ್ ಮಾರ್ಗದಲ್ಲಿ ರಾತ್ರಿ 12:30ಕ್ಕೆ, ಚಲ್ಲಘಟ್ಟ ಮತ್ತು ಸಿಲ್ಕ್ ಇನ್‌ಸ್ಟಿಟ್ಯೂಟ್ ಮಾರ್ಗಗಳಲ್ಲಿ ರಾತ್ರಿ 12:45ಕ್ಕೆ, ಬೊಮ್ಮಸಂದ್ರ ಮಾರ್ಗದಲ್ಲಿ ರಾತ್ರಿ 1 ಗಂಟೆಗೆ ಕೊನೆಯ ರೈಲು ಸಂಚಾರ ನಡೆಯಲಿದೆ. ಮೆಜೆಸ್ಟಿಕ್‌ನಿಂದ ನಾಲ್ಕು ದಿಕ್ಕುಗಳಿಗೆ ರಾತ್ರಿ 1:30ಕ್ಕೆ ಕೊನೆಯ ರೈಲು ಹೊರಡಲಿದೆ.

ಸ್ಟೇಡಿಯಂಗೆ ಹತ್ತಿರವಿರುವ ಕಬ್ಬನ್ ಪಾರ್ಕ್ ಮತ್ತು ಎಂ.ಜಿ. ರಸ್ತೆ ಮೆಟ್ರೋ ನಿಲ್ದಾಣಗಳನ್ನು ಬಳಸಲು ಅಭಿಮಾನಿಗಳಿಗೆ ಸೂಚಿಸಲಾಗಿದೆ. ಅಲ್ಲದೆ ನಿಲ್ದಾಣಗಳಲ್ಲಿ ಹೆಚ್ಚುವರಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ದ್ವಿಚಕ್ರ ವಾಹನಗಳಿಗೆ 30 ರೂ ಹಾಗೂ ಕಾರುಗಳಿಗೆ 60 ರೂ ಪಾರ್ಕಿಂಗ್ ಶುಲ್ಕ ನಿಗದಿಪಡಿಸಲಾಗಿದೆ.

ಟ್ರಾಫಿಕ್ ಸಮಸ್ಯೆ ತಪ್ಪಿಸಲು ಮೆಟ್ರೋ ಬಳಕೆ ಮಾಡಲು ಬಿಎಂಆರ್‌ಸಿಎಲ್ ಮನವಿ ಮಾಡಿದೆ. ಜೊತೆಗೆ ಕ್ರಿಕೆಟ್ ಅಭಿಮಾನಿಗಳ ಅನುಕೂಲಕ್ಕಾಗಿ ಬಿಎಂಟಿಸಿ ವಿಶೇಷ ಬಸ್ ಸೇವೆಗಳನ್ನೂ ವಿಸ್ತರಿಸಿದೆ.

ಸರ್ಜಾಪುರ, ಎಲೆಕ್ಟ್ರಾನಿಕ್ ಸಿಟಿ, ಬನ್ನೇರುಘಟ್ಟ, ಯಲಹಂಕ, ಹೊಸಕೋಟೆ ಹಾಗೂ ಬನಶಂಕರಿ ಸೇರಿದಂತೆ ಹಲವು ಮಾರ್ಗಗಳಲ್ಲಿ ವಿಶೇಷ ಬಸ್ ಸಂಚಾರ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಿಳಿಸಲಾಗಿದೆ.

ವೇಗವಾಗಿ ಊಟ ಮಾಡುವ ಅಭ್ಯಾಸದಿಂದ ಬೊಜ್ಜಿನ ಅಪಾಯ ಹೆಚ್ಚಳ! ತಜ್ಞರ ಎಚ್ಚರಿಕೆ

0

ಇಂದಿನ ವೇಗದ ಜೀವನಶೈಲಿಯಲ್ಲಿ ಅನೇಕರು ಕೆಲಸದ ಒತ್ತಡದಿಂದ ಊಟವನ್ನು ತ್ವರಿತವಾಗಿ ಮುಗಿಸುವ ಅಭ್ಯಾಸವನ್ನು ಬೆಳೆಸಿಕೊಂಡಿದ್ದಾರೆ.

ಆದರೆ ಈ ಅಭ್ಯಾಸವು ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದ್ದು, ಬೊಜ್ಜಿನ ಸಮಸ್ಯೆ (Obesity) ಹೆಚ್ಚಿಸುವ ಸಾಧ್ಯತೆ ಇದೆ ಎಂದು ಆರೋಗ್ಯ ತಜ್ಞರು ಎಚ್ಚರಿಕೆ ನೀಡಿದ್ದಾರೆ.

ತಜ್ಞರ ಪ್ರಕಾರ, ವೇಗವಾಗಿ ಊಟ ಮಾಡಿದಾಗ ದೇಹಕ್ಕೆ ಹೊಟ್ಟೆ ತುಂಬಿದ ಸೂಚನೆ ಸರಿಯಾಗಿ ತಲುಪುವುದಿಲ್ಲ. ಇದರಿಂದ ವ್ಯಕ್ತಿ ಅಗತ್ಯಕ್ಕಿಂತ ಹೆಚ್ಚು ಆಹಾರ ಸೇವಿಸುವ ಸಾಧ್ಯತೆ ಹೆಚ್ಚುತ್ತದೆ. ಇದರ ಪರಿಣಾಮವಾಗಿ ದೇಹದ ತೂಕ ಹೆಚ್ಚಾಗಿ ಬೊಜ್ಜಿನ ಸಮಸ್ಯೆ ಉಂಟಾಗುತ್ತದೆ.

ಅಷ್ಟೇ ಅಲ್ಲ, ಆಹಾರವನ್ನು ಸರಿಯಾಗಿ ಜಗಿದು ತಿನ್ನದಿರುವುದರಿಂದ ಜೀರ್ಣಕ್ರಿಯೆ ನಿಧಾನಗೊಳ್ಳುತ್ತದೆ. ಇದರಿಂದ ಅಜೀರ್ಣ, ಹೊಟ್ಟೆ ಉಬ್ಬರ ಸೇರಿದಂತೆ ಹಲವು ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ದೀರ್ಘಕಾಲ ಈ ಅಭ್ಯಾಸ ಮುಂದುವರಿದರೆ ಮೆಟಾಬಾಲಿಸಂ ಕುಂಠಿತವಾಗಿ ದೇಹದಲ್ಲಿ ಕೊಬ್ಬು ಜಮೆಯಾಗಲು ಕಾರಣವಾಗುತ್ತದೆ.

ಇದಲ್ಲದೇ, ಹೆಚ್ಚು ಕ್ಯಾಲೊರಿ ಸೇವನೆಯಿಂದ ಹೃದಯ ಸಂಬಂಧಿತ ಕಾಯಿಲೆಗಳ ಅಪಾಯವೂ ಹೆಚ್ಚಾಗಬಹುದು. ಜೊತೆಗೆ ಇನ್ಸುಲಿನ್ ಅಸಮತೋಲನದಿಂದ ಟೈಪ್-2 ಮಧುಮೇಹದ ಸಾಧ್ಯತೆಯೂ ಹೆಚ್ಚುತ್ತದೆ ಎಂದು ತಜ್ಞರು ತಿಳಿಸಿದ್ದಾರೆ.

ಈ ಸಮಸ್ಯೆಗಳನ್ನು ತಪ್ಪಿಸಲು ನಿಧಾನವಾಗಿ, ಆಹಾರವನ್ನು ಆಸ್ವಾದಿಸುತ್ತಾ ತಿನ್ನುವುದು ಅತ್ಯಂತ ಮುಖ್ಯ. ಊಟ ಮಾಡುವಾಗ ಚೆನ್ನಾಗಿ ಜಗಿದು ತಿನ್ನುವುದು, ಮೊಬೈಲ್ ಮತ್ತು ಟಿವಿ ನೋಡುತ್ತಾ ಊಟ ಮಾಡುವ ಅಭ್ಯಾಸವನ್ನು ತಪ್ಪಿಸುವುದು ಅಗತ್ಯವಾಗಿದೆ.

ನಿಯಮಿತ ಸಮಯಕ್ಕೆ ಊಟ ಮಾಡುವುದು, ಸಮತೋಲನ ಆಹಾರ ಸೇವನೆ, ಜಂಕ್ ಫುಡ್ ಕಡಿಮೆ ಮಾಡುವುದು ಹಾಗೂ ಹಣ್ಣು–ತರಕಾರಿ, ಪ್ರೋಟೀನ್ ಮತ್ತು ಫೈಬರ್ ಸಮೃದ್ಧ ಆಹಾರವನ್ನು ಆಹಾರದಲ್ಲಿ ಸೇರಿಸುವುದು ಉತ್ತಮ ಎಂದು ಸಲಹೆ ನೀಡಲಾಗಿದೆ. ಜೊತೆಗೆ ನಿಯಮಿತ ವ್ಯಾಯಾಮ ಮತ್ತು ಸರಿಯಾದ ನಿದ್ರೆ ಆರೋಗ್ಯ ಕಾಪಾಡಲು ಸಹಾಯಕವಾಗುತ್ತದೆ.

ಅಂಪೈರ್ ಸೂಚನೆ ನಿರ್ಲಕ್ಷ್ಯ: RCB ಆಟಗಾರ ಟಿಮ್ ಡೇವಿಡ್​ಗೆ ಭಾರಿ ದಂಡ!

0

ಐಪಿಎಲ್ 2026ರ 20ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಆರ್‌ಸಿಬಿ ನಡುವೆ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ಆರ್‌ಸಿಬಿ ಬ್ಯಾಟರ್ ಟಿಮ್ ಡೇವಿಡ್ ನಿಯಮ ಉಲ್ಲಂಘನೆ ಮಾಡಿದ ಹಿನ್ನೆಲೆಯಲ್ಲಿ ಅವರಿಗೆ ದಂಡ ವಿಧಿಸಲಾಗಿದೆ.

ಐಪಿಎಲ್ ನೀತಿ ಸಂಹಿತೆಯ ಸೆಕ್ಷನ್ 2.4 ಉಲ್ಲಂಘಿಸಿದ ಕಾರಣ, ಟಿಮ್ ಡೇವಿಡ್‌ಗೆ ಪಂದ್ಯ ಶುಲ್ಕದ ಶೇಕಡಾ 25 ರಷ್ಟು ದಂಡ ಹಾಗೂ ಒಂದು ಡಿಮೆರಿಟ್ ಪಾಯಿಂಟ್ ವಿಧಿಸಲಾಗಿದೆ ಎಂದು ಅಧಿಕೃತವಾಗಿ ತಿಳಿದುಬಂದಿದೆ.

ಘಟನೆಯ ಪ್ರಕಾರ, ಮುಂಬೈ ಇಂಡಿಯನ್ಸ್ ಪರ ಹಾರ್ದಿಕ್ ಪಾಂಡ್ಯ ಬೌಲ್ ಮಾಡುತ್ತಿದ್ದ 18ನೇ ಓವರ್ ವೇಳೆ ಟಿಮ್ ಡೇವಿಡ್ ಬ್ಯಾಟಿಂಗ್ ಮಾಡುತ್ತಿದ್ದರು. ಈ ವೇಳೆ ನೋ-ಬಾಲ್‌ಗೆ ಸಿಕ್ಸರ್ ಸಿಡಿಸಿದ ಬಳಿಕ, ಚೆಂಡು ಒದ್ದೆಯಾಗಿದ್ದ ಕಾರಣ ಅಂಪೈರ್‌ಗಳು ಅದನ್ನು ಬದಲಾಯಿಸಲು ನಿರ್ಧರಿಸಿದರು.

ಹೊಸ ಚೆಂಡುಗಳನ್ನು ತರಲಾಗುತ್ತಿದ್ದಾಗ ಟಿಮ್ ಡೇವಿಡ್ ಚೆಂಡುಗಳ ಪೆಟ್ಟಿಗೆಯಿಂದ ಒಂದು ಚೆಂಡನ್ನು ತೆಗೆದುಕೊಂಡು ಅದನ್ನು ಪರಿಶೀಲಿಸುತ್ತಿದ್ದರು. ಅಂಪೈರ್ ಪದೇ ಪದೇ ಚೆಂಡನ್ನು ಹಿಂತಿರುಗಿಸಲು ಸೂಚಿಸಿದರೂ, ಡೇವಿಡ್ ಅದನ್ನು ಪಾಲಿಸದಿರುವುದು ವಿವಾದಕ್ಕೆ ಕಾರಣವಾಯಿತು.

ಮತ್ತೊಂದು ಘಟನೆಯಲ್ಲಿ, ಜಿತೇಶ್ ಅವರ ವಿಕೆಟ್ ನಂತರವೂ ಟಿಮ್ ಡೇವಿಡ್ ಚೆಂಡನ್ನು ಹಿಡಿದುಕೊಂಡು ಅಂಪೈರ್ ಸೂಚನೆಗಳನ್ನು ನಿರ್ಲಕ್ಷಿಸಿದರೆಂದು ವರದಿಯಾಗಿದೆ. ಈ ನಡೆ ಅಂಪೈರ್‌ಗಳ ನಿರ್ದೇಶನಕ್ಕೆ ವಿರುದ್ಧವಾಗಿದ್ದು, ನಿಯಮ ಉಲ್ಲಂಘನೆಯಾಗಿ ಪರಿಗಣಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಟಿಮ್ ಡೇವಿಡ್ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದು, ಪಂದ್ಯ ಅಧಿಕಾರಿಗಳು ನೀಡಿದ ಶಿಕ್ಷೆಯನ್ನು ಸ್ವೀಕರಿಸಿದ್ದಾರೆ ಎಂದು ಐಪಿಎಲ್ ಮೂಲಗಳು ತಿಳಿಸಿವೆ.

ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಉಷ್ಣ ಅಲೆ ತೀವ್ರ ಹೆಚ್ಚಳ: ಬಿಸಿಲಿನಿಂದ ದೂರವಿರಿ- ಹವಾಮಾನ ಇಲಾಖೆ ಎಚ್ಚರಿಕೆ

0

ನವದೆಹಲಿ: ಭಾರತದಲ್ಲಿ ಮುಂದಿನ ದಿನಗಳಲ್ಲಿ ಉಷ್ಣ ಅಲೆ ಪರಿಸ್ಥಿತಿ ತೀವ್ರಗೊಳ್ಳುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಐಎಂಡಿ ಪ್ರಕಾರ, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಏಪ್ರಿಲ್ 17ರ ವೇಳೆಗೆ ಗರಿಷ್ಠ ತಾಪಮಾನ 41 ಡಿಗ್ರಿ ಸೆಲ್ಸಿಯಸ್ ತಲುಪುವ ಸಾಧ್ಯತೆ ಇದೆ. ಏಪ್ರಿಲ್ 18ರವರೆಗೆ ವಾಯುವ್ಯ ಭಾರತದಲ್ಲಿ ತಾಪಮಾನವು 4ರಿಂದ 6 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗುವ ನಿರೀಕ್ಷೆಯಿದೆ.

ಮಧ್ಯಪ್ರದೇಶ, ವಿದರ್ಭ ಮತ್ತು ಛತ್ತೀಸ್‌ಗಢ ಪ್ರದೇಶಗಳಲ್ಲಿ ಮುಂದಿನ ದಿನಗಳಲ್ಲಿ 3ರಿಂದ 5 ಡಿಗ್ರಿ ಸೆಲ್ಸಿಯಸ್ ವರೆಗೆ ತಾಪಮಾನ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಇಲಾಖೆ ತಿಳಿಸಿದೆ. ಗುಜರಾತ್ ಮತ್ತು ಮಹಾರಾಷ್ಟ್ರದಲ್ಲಿಯೂ 2ರಿಂದ 3 ಡಿಗ್ರಿ ಸೆಲ್ಸಿಯಸ್ ಹೆಚ್ಚಳವಾಗುವ ಸಾಧ್ಯತೆ ವ್ಯಕ್ತವಾಗಿದೆ.

ಒಡಿಶಾ, ಕರಾವಳಿ ಆಂಧ್ರಪ್ರದೇಶ, ಗುಜರಾತ್ ಸೇರಿದಂತೆ ಹಲವು ಭಾಗಗಳಲ್ಲಿ ಮುಂದಿನ ಒಂದು ವಾರ ಬಿಸಿಲಿನ ವಾತಾವರಣ ಮುಂದುವರಿಯುವ ನಿರೀಕ್ಷೆಯಿದೆ. ಪಶ್ಚಿಮ ಬಂಗಾಳ, ಮಹಾರಾಷ್ಟ್ರ ಹಾಗೂ ದಕ್ಷಿಣ ಭಾರತದ ಕೆಲವು ಭಾಗಗಳಲ್ಲಿಯೂ ಇದೇ ರೀತಿಯ ಪರಿಸ್ಥಿತಿ ಕಂಡುಬರಲಿದೆ ಎಂದು ಮುನ್ಸೂಚನೆ ನೀಡಲಾಗಿದೆ.

ಇತ್ತ ಈಶಾನ್ಯ ಭಾರತದಲ್ಲಿ ಭಿನ್ನ ಹವಾಮಾನ ಪರಿಸ್ಥಿತಿ ಕಂಡುಬರಲಿದ್ದು, ಅಸ್ಸಾಂ ಮತ್ತು ಮೇಘಾಲಯದಲ್ಲಿ ಗುಡುಗು ಸಹಿತ ಗಾಳಿ-ಮಳೆಯ ಸಾಧ್ಯತೆ ಇದೆ. ಕೆಲವು ಪ್ರದೇಶಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯೂ ಇದೆ ಎಂದು ಐಎಂಡಿ ತಿಳಿಸಿದೆ.

ಕರ್ನಾಟಕ, ಕೇರಳ ಮತ್ತು ಕರಾವಳಿ ಆಂಧ್ರಪ್ರದೇಶದ ಕೆಲವು ಭಾಗಗಳಲ್ಲಿ ಉಷ್ಣ ಅಲೆ ತೀವ್ರಗೊಳ್ಳುವ ಸಾಧ್ಯತೆ ಇದ್ದು, ಜನರು ಎಚ್ಚರಿಕೆಯಿಂದ ಇರಲು ಹವಾಮಾನ ಇಲಾಖೆ ಸಲಹೆ ನೀಡಿದೆ.

ಕೆರೆಗೆ ಬಿದ್ದ ಮಕ್ಕಳನ್ನು ರಕ್ಷಿಸಲು ಹೋದ ಇಬ್ಬರು ಮಹಿಳೆಯರು ನೀರುಪಾಲು!

ಕೋಲಾರ: ಕೋಲಾರ ಜಿಲ್ಲೆಯ ಅರಹಳ್ಳಿ ಕೆರೆಯಲ್ಲಿ ದುರಂತ ಘಟನೆ ಸಂಭವಿಸಿದ್ದು, ಕೆರೆಗೆ ಬಿದ್ದಿದ್ದ ಮಕ್ಕಳನ್ನು ರಕ್ಷಿಸಲು ಮುಂದಾದ ಇಬ್ಬರು ಮಹಿಳೆಯರು ನೀರುಪಾಲಾಗಿದ್ದಾರೆ.

ಮೃತರನ್ನು ಮೊಹಮದಿ (25) ಮತ್ತು ಸಲ್ಮಾ (26) ಎಂದು ಗುರುತಿಸಲಾಗಿದೆ. ಇಬ್ಬರೂ ಕೋಲಾರ ನಿಸಾರ್ ನಗರದ ನಿವಾಸಿಗಳಾಗಿದ್ದಾರೆ.

ಮಾಹಿತಿಯ ಪ್ರಕಾರ, ಮಹಿಳೆಯರು ಹಾಗೂ ಮಕ್ಕಳು ಅರಹಳ್ಳಿ ಕೆರೆಗೆ ಬಟ್ಟೆ ತೊಳೆಯಲು ತೆರಳಿದ್ದ ಸಂದರ್ಭದಲ್ಲಿ ಮಕ್ಕಳು ಆಕಸ್ಮಿಕವಾಗಿ ನೀರಿಗೆ ಬಿದ್ದಿದ್ದಾರೆ. ಅವರನ್ನು ರಕ್ಷಿಸಲು ನೀರಿಗೆ ಇಳಿದಾಗ ಇಬ್ಬರು ಮಹಿಳೆಯರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಸಲ್ಮಾ ಅವರು ಮನೆಯಲ್ಲಿ ನಡೆದ ಕಾರ್ಯಕ್ರಮ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಕೋಲಾರಿಗೆ ಬಂದಿದ್ದರೆಂದು ತಿಳಿದುಬಂದಿದೆ.

ಘಟನೆಯ ಸ್ಥಳಕ್ಕೆ ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪಂಚಮಸಾಲಿಗಳು ಬಲವಾಗುತ್ತಿದ್ದಾರೆ, ಸ್ವಾಮೀಜಿಗಳನ್ನು ಟಾರ್ಗೆಟ್ ಮಾಡಲಾಗುತ್ತಿದೆ – ವಚನಾನಂದ ಸ್ವಾಮೀಜಿ ಆರೋಪ

ದಾವಣಗೆರೆ: ಹರಿಹರ ಪಂಚಮಸಾಲಿ ಪೀಠದಿಂದ ಉಚ್ಛಾಟನೆಗೊಂಡ ಹಿನ್ನೆಲೆಯಲ್ಲಿ ಮಾತನಾಡಿದ ವಚನಾನಂದ ಸ್ವಾಮೀಜಿ, ಪಂಚಮಸಾಲಿ ಸಮಾಜದ ನಾಯಕರು ಮತ್ತು ಸ್ವಾಮೀಜಿಗಳು ಬಲವಾಗುತ್ತಿರುವ ಕಾರಣದಿಂದ ಅವರನ್ನು ಉದ್ದೇಶಪೂರ್ವಕವಾಗಿ ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಪಂಚಮಸಾಲಿ ನಾಯಕರು ಮತ್ತು ಸ್ವಾಮೀಜಿಗಳು ಗಟ್ಟಿಯಾಗುತ್ತಿದ್ದಾರೆ. ಇದೇ ಕಾರಣಕ್ಕೆ ಜಯ ಮೃತ್ಯುಂಜಯ ಸ್ವಾಮೀಜಿ ಇರಬಹುದು, ಹಿಂದೆ ಸಿದ್ದಲಿಂಗ ಸ್ವಾಮೀಜಿ ಇರಬಹುದು, ಇದೀಗ ನಮ್ಮನ್ನೂ ಟಾರ್ಗೆಟ್ ಮಾಡಲಾಗಿದೆ ಎಂದು ದೂರಿದರು.

ಟ್ರಸ್ಟಿಗಳ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಕೆಲವರಿಗೆ ನಾವು ಹಿಂದೂಗಳು ಎಂದು ಹೇಳುವುದೇ ಇಷ್ಟವಿಲ್ಲ, ಇನ್ನೂ ಕೆಲವರಿಗೆ ಲಿಂಗಾಯತ ಹಿಂದೂ ಎಂದು ಕರೆಯುವುದೂ ಇಷ್ಟವಿಲ್ಲ. ಇಂದಿನ ಸಭೆ ಬಗ್ಗೆ ಯಾವುದೇ ನೋಟಿಸ್ ನೀಡಲಾಗಿಲ್ಲ. ಪಂಚಮಸಾಲಿ ಮಠವು ಕೆಲವರದ್ದೇ ಅಲ್ಲ ಎಂದು ಹೇಳಿದರು.

ಇನ್ನೂ, ಸರ್ಕಾರದ ಅನುದಾನ ಮತ್ತು ಭಕ್ತರ ದೇಣಿಗೆ ಹಣದ ಲೆಕ್ಕ ಕೇಳಿದ ಕಾರಣಕ್ಕೆ ನನ್ನ ಮೇಲೆ ಆರೋಪ ಮಾಡಿ ಹೊರಹಾಕಲಾಗಿದೆ. ಆದರೆ ಈ ನಿರ್ಧಾರದಿಂದ ನನಗೆ ಯಾವುದೇ ಆತಂಕ ಇಲ್ಲ. ಪಂಚಮಸಾಲಿ ಸಮಾಜವೇ ನನ್ನ ಶ್ವಾಸ, ಸಮಾಜದ ಜನ ಹೇಳಿದಂತೆ ನಡೆದುಕೊಳ್ಳುತ್ತೇನೆ ಎಂದು ತಿಳಿಸಿದರು.

ಮಠದ ಆಡಳಿತದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಪೀಠಕ್ಕೆ ಬಂದ ಬಳಿಕ ಭಕ್ತರ ಮನೆಗಳಿಗೆ ಭೇಟಿ ನೀಡಬೇಕು ಎಂಬ ಆಸೆ ಇತ್ತು. ಆದರೆ ಹರಿಹರ ಮತ್ತು ದಾವಣಗೆರೆಗೆ ಹೋಗದಂತೆ ವ್ಯವಸ್ಥಿತವಾಗಿ ತಡೆಯಲಾಗಿತ್ತು. ಮಠದಲ್ಲಿ ಬಸವಣ್ಣನವರ ಫೋಟೋ ಹಾಕಲು ಸಹ ಅವಕಾಶ ನೀಡಲಿಲ್ಲ ಎಂದು ಆರೋಪಿಸಿದರು.

ಗುಜರಾತ್ʼನಲ್ಲಿ ಭೀಕರ ಅಪಘಾತ: ಯಾತ್ರಿಕರ ಮೇಲೆ ಟ್ರಕ್ ಹರಿದು 7 ಮಂದಿ ಸಾವು!

ಗಾಂಧಿನಗರ: ಗುಜರಾತ್‌ನಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 6 ಯಾತ್ರಿಕರು ಸೇರಿದಂತೆ ಒಟ್ಟು 7 ಮಂದಿ ಸಾವನ್ನಪ್ಪಿರುವ ಘಟನೆ ಭಾನುವಾರ ತಡರಾತ್ರಿ ನಡೆದಿದೆ.

ರಾಜ್ಕೋಟಿನ ಗಡ್ಕಾ ಗ್ರಾಮದಿಂದ ದೇಕಾವಾಲಾ ದೇವಸ್ಥಾನಕ್ಕೆ ಯಾತ್ರಿಕರ ಗುಂಪು ಕಾಲ್ನಡಿಗೆಯಲ್ಲಿ ತೆರಳುತ್ತಿತ್ತು. ಸುರೇಂದ್ರನಗರ ಜಿಲ್ಲೆಯ ಭಾಸ್ಕರ್ಪಾರ ಬಳಿ ಇರುವ ಲಖ್ತಾರ್–ವಿರಮ್ಗಾಮ್ ಹೆದ್ದಾರಿಯಲ್ಲಿ ಸಾಗುತ್ತಿದ್ದ ವೇಳೆ, ವೇಗವಾಗಿ ಬಂದ ಟ್ರಕ್ ಸುಮಾರು ಹತ್ತು ಮಂದಿಗೆ ಡಿಕ್ಕಿ ಹೊಡೆದಿದೆ.

ರಸ್ತೆ ಬದಿಯಲ್ಲಿ ಟೈರ್ ಬದಲಾಯಿಸಲು ನಿಲ್ಲಿಸಲಾಗಿದ್ದ ಡಂಪರ್ ಟ್ರಕ್ ಅನ್ನು ದಾಟುವ ಸಂದರ್ಭದಲ್ಲಿ, ಹಿಂದಿನಿಂದ ಬಂದ ಮತ್ತೊಂದು ಟ್ರಕ್ ನಿಯಂತ್ರಣ ತಪ್ಪಿ ಯಾತ್ರಿಕರ ಮೇಲೆ ಹರಿದಿದೆ. ಈ ಭೀಕರ ಅಪಘಾತದಲ್ಲಿ 6 ಯಾತ್ರಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಇದಲ್ಲದೆ, ಟೈರ್ ಬದಲಾಯಿಸುತ್ತಿದ್ದ ಡಂಪರ್ ಟ್ರಕ್ ಚಾಲಕನ ಮೇಲೂ ಟ್ರಕ್ ಹರಿದಿದ್ದು, ಅವನು ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದ್ದಾನೆ. ಈ ಮೂಲಕ ಮೃತರ ಸಂಖ್ಯೆ 7ಕ್ಕೆ ಏರಿದೆ.

ಘಟನೆಯ ಮಾಹಿತಿ ತಿಳಿದ ತಕ್ಷಣ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಈ ದುರ್ಘಟನೆಗೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದು, ಗಾಯಾಳುಗಳು ಶೀಘ್ರ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸಿದ್ದಾರೆ.

ಉಪ ಚುನಾವಣೆ: ಎರಡೂ ಕಡೆ ಗೆಲ್ಲುವ ಸಂಪೂರ್ಣ ವಿಶ್ವಾಸ ನಮಗಿದೆ – ಬಿ.ವೈ. ವಿಜಯೇಂದ್ರ

ಬೆಂಗಳೂರು: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ಸಿನವರು ಮಹಿಳಾ ಮೀಸಲಾತಿ ಒಂದು ರಾಜಕೀಯ ಗಿಮಿಕ್ ಎಂದಿದ್ದಾರೆ. ಈ ಹೇಳಿಕೆಯ ಮೂಲಕ ದೇಶದ ನಾರಿಶಕ್ತಿಗೆ ಅಪಮಾನ ಮಾಡುವ ಕೆಲಸವನ್ನು ಕಾಂಗ್ರೆಸ್ ಪಕ್ಷದವರು ಮಾಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ತಿಳಿಸಿದ್ದಾರೆ.

ಮಾಧ್ಯಮಗಳ ಜೊತೆ ಇಂದು ಮಾತನಾಡಿದ ಅವರು, ಮಹಿಳಾ ಮೀಸಲಾತಿಯು ನರೇಂದ್ರ ಮೋದಿಜಿ ಅವರು ತೆಗೆದುಕೊಂಡ ಐತಿಹಾಸಿಕ ನಿರ್ಣಯ ಎಂದು ತಿಳಿಸಿದರು. ಉಪ ಚುನಾವಣೆಯಲ್ಲಿ ರಾಜ್ಯದ ಮುಖ್ಯಮಂತ್ರಿಗಳು ವಿಧಾನಸೌಧ ಮತ್ತು ಆಡಳಿತವನ್ನು ಸಂಪೂರ್ಣ ಮರೆತು ಬಾಗಲಕೋಟೆಯಲ್ಲಿ 8-9 ದಿನಗಳ ಕಾಲ ಇದ್ದರು. ದಾವಣಗೆರೆ ಬಗ್ಗೆ ಮುಖ್ಯಮಂತ್ರಿಗಳು ತಲೆ ಕೆಡಿಸಿಕೊಂಡಂತೆ ಕಾಣಲಿಲ್ಲ ಎಂದು ತಿಳಿಸಿದರು.

ಆದರೆ, ಬಾಗಲಕೋಟೆಯಲ್ಲಿ 8-9 ದಿನಗಳ ಕಾಲ ತಮ್ಮ ಪಟಾಲಂ ಜೊತೆ ಸೂಟ್‍ಕೇಸ್ ಜೊತೆ ಅಲ್ಲೇ ಇದ್ದುದನ್ನು ನೋಡಿದ್ದೀರಿ. ಮುಖ್ಯಮಂತ್ರಿಗಳು ಸಂಪೂರ್ಣ ಹತಾಶರಾಗಿದ್ದರು. ಬಾಗಲಕೋಟೆ, ದಾವಣಗೆರೆ ದಕ್ಷಿಣವನ್ನು ಕಾಂಗ್ರೆಸ್ ಪಕ್ಷದಿಂದ ಕಿತ್ತುಕೊಳ್ಳುವಲ್ಲಿ ಯಶಸ್ವಿ ಆಗುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಎರಡೂ ಕಡೆ ಗೆಲ್ಲುವ ಸಂಪೂರ್ಣ ವಿಶ್ವಾಸ ನಮಗಿದೆ ಎಂದು ತಿಳಿಸಿದರು.

ದಾವಣಗೆರೆ ಸೋಲಿನ ಮುನ್ಸೂಚನೆ ಲಭಿಸಿದ್ದರಿಂದ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಮುಖ್ಯಮಂತ್ರಿಗಳ ರಾಜಕೀಯ ಸಲಹೆಗಾರರ ರಾಜೀನಾಮೆ ಪಡೆಯುವಂತೆ ಸೂಚನೆ ನೀಡಿದೆ. ಸಚಿವಸಂಪುಟದ ವಿಸ್ತರಣೆಗೆ ಆಗ್ರಹಿಸಿ 38ಕ್ಕೂ ಹೆಚ್ಚು ಶಾಸಕರು ಈಗಾಗಲೇ ದೆಹಲಿಯಲ್ಲಿ ಬೀಡು ಬಿಟ್ಟಿದ್ದಾರೆ.

ಡಿ.ಕೆ.ಶಿವಕುಮಾರ್ ಬೆಂಬಲಿಗರು ಸಹ ದೆಹಲಿ ಯಾತ್ರೆ ಪ್ರಾರಂಭ ಮಾಡಿದ್ದನ್ನು ಗಮನಿಸಿದರೆ, ಉಪ ಚುನಾವಣೆ ಫಲಿತಾಂಶದ ನಂತರ ಆಡಳಿತ ಪಕ್ಷವಾದ ಕಾಂಗ್ರೆಸ್ ಪಕ್ಷದಲ್ಲಿ ಅಲ್ಲೋಲಕಲ್ಲೋಲ ಆಗಲಿದೆ. ಅದರ ಸ್ಪಷ್ಟ ಮುನ್ಸೂಚನೆ ಕಾಣುತ್ತಿದೆ ಎಂದು ತಿಳಿಸಿದರು. ಚುನಾವಣಾ ಫಲಿತಾಂಶದ ಬಳಿಕ ಇವರಿಗೆ ಜ್ಞಾನೋದಯ ಆಗಲಿದೆ ಎಂದು ಪ್ರಶ್ನೆಗೆ ಉತ್ತರಿಸಿದರು. ಅಭಿವೃದ್ಧಿಶೂನ್ಯತೆ, ಓಲೈಕೆ ರಾಜಕಾರಣಕ್ಕೆ ಜನರು ಉತ್ತರ ಕೊಡಲಿದ್ದಾರೆ ಎಂದರು.

error: Content is protected !!