Home Blog

ರಷ್ಯಾ ತೈಲ ಖರೀದಿ ನಿರ್ಬಂಧಕ್ಕೆ ತಾತ್ಕಾಲಿಕ ರಿಲೀಫ್: ಮತ್ತೊಂದು ತಿಂಗಳು ಅವಕಾಶ

ಅಮೆರಿಕ: ರಷ್ಯಾದ ತೈಲ ಖರೀದಿಗೆ ವಿಧಿಸಲಾಗಿದ್ದ ನಿರ್ಬಂಧಗಳ ಮೇಲಿನ ವಿನಾಯಿತಿಯನ್ನು ಅಮೆರಿಕ ಮತ್ತೊಂದು ತಿಂಗಳ ಕಾಲ ವಿಸ್ತರಿಸಿದೆ. ಸಮುದ್ರದಲ್ಲಿ ಈಗಾಗಲೇ ಸಾಗಣೆಯಲ್ಲಿರುವ ರಷ್ಯಾ ತೈಲಕ್ಕೆ ಈ ವಿನಾಯಿತಿ ಅನ್ವಯವಾಗಲಿದೆ ಎಂದು ಅಮೆರಿಕದ ಖಜಾನೆ ಇಲಾಖೆ ತಿಳಿಸಿದೆ.

ಅಮೆರಿಕ ಖಜಾನೆ ಇಲಾಖೆಯ ವಿದೇಶಿ ಆಸ್ತಿ ನಿಯಂತ್ರಣ ಕಚೇರಿ (OFAC) ಹೊರಡಿಸಿರುವ ಆದೇಶದ ಪ್ರಕಾರ, ಏಪ್ರಿಲ್ 17 ಅಥವಾ ಅದಕ್ಕೂ ಮೊದಲು ಸಮುದ್ರ ಮಾರ್ಗದಲ್ಲಿ ಸಾಗಣೆಯಲ್ಲಿರುವ ರಷ್ಯಾ ತೈಲದ ಮೇಲಿನ ನಿರ್ಬಂಧ ವಿನಾಯಿತಿಯನ್ನು ಜೂನ್ 17ರವರೆಗೆ ವಿಸ್ತರಿಸಲಾಗಿದೆ.

ಈ ಹಿಂದೆ ಪಶ್ಚಿಮ ಏಷ್ಯಾದ ಉದ್ವಿಗ್ನ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಏಪ್ರಿಲ್ 17ರಿಂದ ಮೇ 16ರವರೆಗೆ ಒಂದು ತಿಂಗಳ ಕಾಲ ಭಾರತ ಸೇರಿದಂತೆ ಹಲವು ದೇಶಗಳಿಗೆ ರಷ್ಯಾ ತೈಲ ಖರೀದಿಗೆ ಅಮೆರಿಕ ವಿನಾಯಿತಿ ನೀಡಿತ್ತು. ಇದೀಗ ತೈಲ ಬಿಕ್ಕಟ್ಟು ಮುಂದುವರಿದಿರುವ ಹಿನ್ನೆಲೆ ಮತ್ತೆ ಅವಧಿ ವಿಸ್ತರಣೆ ಮಾಡಲಾಗಿದೆ.

ಇದಕ್ಕೂ ಮೊದಲು ಮಾರ್ಚ್ 5ರಿಂದ ಆರಂಭವಾಗುವಂತೆ ಒಂದು ತಿಂಗಳ ಕಾಲ ಭಾರತಕ್ಕೆ ರಷ್ಯಾ ತೈಲ ಖರೀದಿಯಲ್ಲಿ ನಿರ್ಬಂಧ ಸಡಿಲಿಕೆ ನೀಡಲಾಗಿತ್ತು. ಬಳಿಕ ಇದೇ ಮಾದರಿಯ ವಿನಾಯಿತಿಯನ್ನು ಹಲವು ಇತರ ರಾಷ್ಟ್ರಗಳಿಗೂ ವಿಸ್ತರಿಸಲಾಗಿತ್ತು.

ಪಶ್ಚಿಮ ಏಷ್ಯಾದಲ್ಲಿ ಇಸ್ರೇಲ್, ಇರಾನ್ ಹಾಗೂ ಅಮೆರಿಕ ನಡುವಿನ ಉದ್ವಿಗ್ನತೆ ಹೆಚ್ಚುತ್ತಿರುವ ಪರಿಣಾಮ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಅನಿಶ್ಚಿತತೆ ನಿರ್ಮಾಣವಾಗಿದೆ. ವಿಶೇಷವಾಗಿ ಹಾರ್ಮುಜ್ ಜಲಮಾರ್ಗದ ಮೇಲೆ ಇರಾನ್ ಪ್ರಭಾವ ಹೆಚ್ಚಿರುವುದರಿಂದ ತೈಲ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ ಎಂದು ವರದಿಯಾಗಿದೆ.

ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಸ್ಥಿರತೆ ಕಾಪಾಡುವ ಉದ್ದೇಶದಿಂದ ಈ ತಾತ್ಕಾಲಿಕ ಕ್ರಮ ಕೈಗೊಳ್ಳಲಾಗಿದೆ ಎಂದು ಅಮೆರಿಕ ಸ್ಪಷ್ಟಪಡಿಸಿದೆ. ಸಾಗಣೆಯಲ್ಲಿರುವ ರಷ್ಯಾ ತೈಲವನ್ನು ಇತರ ರಾಷ್ಟ್ರಗಳು ಖರೀದಿಸಲು ಅವಕಾಶ ನೀಡುವುದರಿಂದ ಜಾಗತಿಕ ಪೂರೈಕೆ ಸ್ಥಿರವಾಗಲಿದೆ ಎಂದು ತಿಳಿಸಿದೆ.

ಇದು ಕೇವಲ ಅಲ್ಪಾವಧಿಯ ಕ್ರಮವಾಗಿದ್ದು, ಸಮುದ್ರದಲ್ಲಿ ಸಾಗಣೆಯಲ್ಲಿರುವ ತೈಲಕ್ಕೆ ಮಾತ್ರ ಅನ್ವಯಿಸುತ್ತದೆ. ಇದರಿಂದ ರಷ್ಯಾ ಸರ್ಕಾರಕ್ಕೆ ಹೆಚ್ಚಿನ ಆರ್ಥಿಕ ಲಾಭವಾಗುವುದಿಲ್ಲ ಎಂದು ಅಮೆರಿಕ ಹೇಳಿದೆ.

ಜೈಲಿನಲ್ಲೇ ದರ್ಶನ್, ಹೊರಗೆ ವಿಜಯಲಕ್ಷ್ಮೀ ಭಾವನಾತ್ಮಕ ಪೋಸ್ಟ್! ವೈರಲ್ ಆಯ್ತು ಮದುವೆ ಕಾರ್ಡ್

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ವಿಜಯಲಕ್ಷ್ಮೀ ದಂಪತಿ ಇಂದು ತಮ್ಮ 23ನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದು, ಈ ಬಾರಿ ಸಂಭ್ರಮದ ಬದಲು ಭಾವುಕ ಕ್ಷಣಗಳು ಹೆಚ್ಚಾಗಿ ಕಾಣಿಸಿಕೊಂಡಿವೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೈಲಿನಲ್ಲಿರುವ ಹಿನ್ನೆಲೆ, ಈ ವರ್ಷದ ವೆಡ್ಡಿಂಗ್ ಆ್ಯನಿವರ್ಸರಿ ದಂಪತಿಗೆ ದೂರದಲ್ಲೇ ಕಳೆಯುವಂತಾಗಿದೆ.

ಈ ವಿಶೇಷ ದಿನದಂದು ವಿಜಯಲಕ್ಷ್ಮೀ ಅವರು ಸಾಮಾಜಿಕ ಜಾಲತಾಣದಲ್ಲಿ ದರ್ಶನ್ ಫೋಟೋ ಹಂಚಿಕೊಂಡಿದ್ದು, ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಇದೇ ವೇಳೆ ದರ್ಶನ್-ವಿಜಯಲಕ್ಷ್ಮೀ ಮದುವೆಯ ಹಳೆಯ ಆಮಂತ್ರಣ ಪತ್ರಿಕೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.

2003ರ ಮೇ 19ರಂದು ಧರ್ಮಸ್ಥಳದ ವಸಂತ ಮಹಲ್‌ನಲ್ಲಿ ಬೆಳಿಗ್ಗೆ 9:10 ರಿಂದ 9:50ರ ಮಿಥುನ ಲಗ್ನದಲ್ಲಿ ದರ್ಶನ್ ಮತ್ತು ವಿಜಯಲಕ್ಷ್ಮೀ ಸರಳವಾಗಿ ವಿವಾಹವಾಗಿದ್ದರು. ಯಾವುದೇ ಆಡಂಬರವಿಲ್ಲದೆ ನಡೆದಿದ್ದ ಈ ಮದುವೆಯಲ್ಲಿ ಕುಟುಂಬಸ್ಥರು ಹಾಗೂ ಆಪ್ತರು ಮಾತ್ರ ಭಾಗಿಯಾಗಿದ್ದರು. ಕೆಮಿಕಲ್ ಇಂಜಿನಿಯರಿಂಗ್ ಪದವೀಧರೆಯಾಗಿರುವ ವಿಜಯಲಕ್ಷ್ಮೀ ಹಾಗೂ ನಟ ದರ್ಶನ್ ನಡುವೆ ಪ್ರೀತಿ ಬೆಳೆದು ನಂತರ ಹಿರಿಯರ ಸಮ್ಮುಖದಲ್ಲಿ ಮದುವೆ ನಡೆದಿತ್ತು.

ಈ ದಂಪತಿಗೆ ವಿನೀಶ್ ಹೆಸರಿನ ಮಗನಿದ್ದಾನೆ. ದಾಂಪತ್ಯ ಜೀವನದಲ್ಲಿ ಸಾಕಷ್ಟು ಏರುಪೇರುಗಳನ್ನು ಎದುರಿಸಿದ್ದರೂ, ವಿಜಯಲಕ್ಷ್ಮೀ ಯಾವಾಗಲೂ ದರ್ಶನ್ ಪರ ನಿಂತಿದ್ದಾರೆ. ದರ್ಶನ್ ಕಾನೂನು ಹೋರಾಟದಲ್ಲೂ ಅವರು ಪ್ರಮುಖ ಬೆಂಬಲವಾಗಿದ್ದರು.

ಇತ್ತೀಚೆಗಷ್ಟೇ ಸುಪ್ರೀಂಕೋರ್ಟ್ ದರ್ಶನ್ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದು, ಇನ್ನೂ ಒಂದು ವರ್ಷಗಳ ಕಾಲ ಜೈಲು ವಾಸ ಮುಂದುವರಿಯುವ ಸಾಧ್ಯತೆ ಇದೆ. ಹೀಗಾಗಿ ಈ ಬಾರಿ ದಂಪತಿ ಒಟ್ಟಿಗೆ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳುವ ಅವಕಾಶ ಕೈ ತಪ್ಪಿದೆ.

ನಾಳೆಯ ಸಾರಿಗೆ ನೌಕರರ ಮುಷ್ಕರಕ್ಕೆ ಹೈಕೋರ್ಟ್ ಬ್ರೇಕ್​​: ಮುಷ್ಕರ ನಡೆಸದಂತೆ ಆದೇಶ

ಬೆಂಗಳೂರು: ಮೇ 20ರಂದು ರಾಜ್ಯವ್ಯಾಪಿ ಮುಷ್ಕರಕ್ಕೆ ಕರೆ ನೀಡಿದ್ದ ಸಾರಿಗೆ ನೌಕರರ ಸಂಘಟನೆಗಳಿಗೆ ಕರ್ನಾಟಕ ಹೈಕೋರ್ಟ್ ತೀವ್ರ ಹಿನ್ನಡೆ ಉಂಟುಮಾಡಿದೆ. ಸಾರಿಗೆ ನೌಕರರು ಮುಷ್ಕರ ನಡೆಸದಂತೆ ಹೈಕೋರ್ಟ್ ತಾತ್ಕಾಲಿಕ ನಿರ್ಬಂಧ ವಿಧಿಸಿ ಮಹತ್ವದ ಆದೇಶ ಹೊರಡಿಸಿದೆ.

ನ್ಯಾ. ಸೂರಜ್ ಗೋವಿಂದರಾಜ್ ಹಾಗೂ ನ್ಯಾ. ಕೆ. ಮನ್ಮಥರಾವ್ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿದ್ದು, ಸರ್ಕಾರ ಹಾಗೂ ಸಾರಿಗೆ ಸಂಘಟನೆಗಳು ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂದು ಸೂಚಿಸಿದೆ.

ಇದೇ ವೇಳೆ ಸರ್ಕಾರ ಮತ್ತು ಸಾರಿಗೆ ಸಂಘಟನೆಗಳಿಗೆ ನೋಟಿಸ್ ಜಾರಿ ಮಾಡಿರುವ ನ್ಯಾಯಾಲಯ, ಸಾರಿಗೆ ಸಚಿವರೊಂದಿಗೆ ತುರ್ತು ಸಭೆ ನಡೆಸಿ ಸಮಸ್ಯೆ ಪರಿಹರಿಸುವಂತೆ ನಿರ್ದೇಶನ ನೀಡಿದೆ.

ಸಾರಿಗೆ ನೌಕರರ ಮುಷ್ಕರ ಪ್ರಶ್ನಿಸಿ ಕೆಲಸದ ಮಹಿಳೆ ಹಾಗೂ ಕಟ್ಟಡ ಕಾರ್ಮಿಕರೊಬ್ಬರು ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, ಅರ್ಜಿದಾರರ ಕುರಿತು ಅಚ್ಚರಿ ವ್ಯಕ್ತಪಡಿಸಿದರೂ, ಸಾರ್ವಜನಿಕ ಹಿತದೃಷ್ಟಿಯಿಂದ ವಿಚಾರಣೆ ಕೈಗೆತ್ತಿಕೊಂಡಿತು.

ನ್ಯಾಯಾಲಯದ ಮುಂದೆ ಮಂಡನೆಯಾದ ಮಾಹಿತಿಯ ಪ್ರಕಾರ, ಕರ್ನಾಟಕ ಅಗತ್ಯ ಸೇವೆಗಳ ನಿರ್ವಹಣಾ ಕಾಯ್ದೆ (KESMA) ಅಡಿ ಜನವರಿ 1ರಿಂದ ಜೂನ್ 30ರವರೆಗೆ ಮುಷ್ಕರಕ್ಕೆ ನಿರ್ಬಂಧವಿದೆ. ಜೊತೆಗೆ 2025ರ ಜುಲೈ 18ರಂದು ಆರಂಭವಾದ ಕಾರ್ಮಿಕ ಆಯುಕ್ತರ ರಾಜಿ ಸಂಧಾನ ಪ್ರಕ್ರಿಯೆ ಇನ್ನೂ ಮುಂದುವರಿದಿದ್ದು, ಮುಂದಿನ ವಿಚಾರಣೆಯನ್ನು ಮೇ 25ಕ್ಕೆ ನಿಗದಿಪಡಿಸಲಾಗಿದೆ.

ಈ ಸಂದರ್ಭದಲ್ಲಿ ಮುಷ್ಕರ ನಡೆಸುವುದು ಕಾನೂನುಬಾಹಿರವಾಗುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಅಲ್ಲದೆ, ನಿಯಮಾನುಸಾರ 14 ದಿನಗಳ ನೋಟಿಸ್ ನೀಡಬೇಕಾದರೆ, ಕೇವಲ 7 ದಿನಗಳ ನೋಟಿಸ್ ನೀಡಲಾಗಿದೆ ಎಂಬುದನ್ನೂ ಗಮನಿಸಿದೆ.

ಮೇ 20ರಂದು ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆಗಳೂ ನಿಗದಿಯಾಗಿರುವ ಹಿನ್ನೆಲೆಯಲ್ಲಿ, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ತೊಂದರೆ ಉಂಟಾಗದಂತೆ ಮುಷ್ಕರ ತಡೆಯುವಂತೆ ಮನವಿ ಮಾಡಲಾಗಿತ್ತು.

ಇತ್ತ, ಬೆಂಗಳೂರಿನ ಬನ್ನೇರುಘಟ್ಟ ಕಾರ್ಮಿಕ ಭವನದಲ್ಲಿ ನಿನ್ನೆ ನಡೆದ ಸಂಧಾನ ಸಭೆ ವಿಫಲವಾಗಿತ್ತು. ಅಧಿಕಾರಿಗಳ ಮನವೊಲಿಕೆಗೆ ಸಾರಿಗೆ ನೌಕರರ ಮುಖಂಡರು ಒಪ್ಪದಿದ್ದು, ನೇರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಸಭೆ ನಡೆಸಬೇಕೆಂದು ಪಟ್ಟು ಹಿಡಿದಿದ್ದರು.

ಇಂದು ಮಧ್ಯಾಹ್ನದೊಳಗೆ ಸಭೆ ನಡೆಸಿ ಬೇಡಿಕೆಗಳ ಕುರಿತು ಸ್ಪಷ್ಟ ಭರವಸೆ ನೀಡದಿದ್ದರೆ ಮುಷ್ಕರ ನಡೆಸುವುದು ಖಚಿತ ಎಂದು ಸಂಘಟನೆಗಳು ಎಚ್ಚರಿಕೆ ನೀಡಿದ್ದವು. ಆದರೆ ಇದೀಗ ಹೈಕೋರ್ಟ್ ಆದೇಶದಿಂದ ಮುಷ್ಕರಕ್ಕೆ ತಾತ್ಕಾಲಿಕ ತಡೆ ಬಿದ್ದಿದೆ.

ದುಬಾರೆ ದುರಂತದ ಬಳಿಕ ಕಠಿಣ ರೂಲ್ಸ್! ಇನ್ಮುಂದೆ ಆನೆಗಳಿಂದ 100 ಅಡಿ ದೂರ ಕಡ್ಡಾಯ

0

ಮಡಿಕೇರಿ: ದುಬಾರೆ ಆನೆ ಶಿಬಿರದಲ್ಲಿ ನಡೆದ ಪ್ರವಾಸಿ ಮಹಿಳೆಯ ದಾರುಣ ಸಾವಿನ ಬಳಿಕ ಕರ್ನಾಟಕ ಅರಣ್ಯ ಇಲಾಖೆ ದೊಡ್ಡ ನಿರ್ಧಾರ ಕೈಗೊಂಡಿದೆ. ಇನ್ನು ಮುಂದೆ ರಾಜ್ಯದ ಯಾವುದೇ ಸಾಕಾನೆ ಶಿಬಿರದಲ್ಲಿ ಪ್ರವಾಸಿಗರು ಆನೆಗಳ ಹತ್ತಿರ ಹೋಗಲು ಅವಕಾಶ ಇರುವುದಿಲ್ಲ. ಕನಿಷ್ಠ 100 ಅಡಿ ದೂರದಲ್ಲೇ ನಿಂತು ಆನೆಗಳ ಸ್ನಾನ ಹಾಗೂ ಚಟುವಟಿಕೆ ವೀಕ್ಷಿಸಬೇಕು ಎಂದು ಕಟ್ಟುನಿಟ್ಟಿನ ಆದೇಶ ಹೊರಡಿಸಲಾಗಿದೆ.

ಅರಣ್ಯ ಸಚಿವ ಈಶ್ವರ್ ಬಿ ಖಂಡ್ರೆ ಈ ಸಂಬಂಧ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ರಾಜ್ಯದ ಎಲ್ಲ ಸಾಕಾನೆ ಶಿಬಿರಗಳಿಗೆ ಹೊಸ ಪ್ರಮಾಣಿತ ಕಾರ್ಯಾಚರಣೆ ವಿಧಾನ (SOP) ಜಾರಿಗೆ ತರಲು ಆದೇಶಿಸಿದ್ದಾರೆ.

ದುಬಾರೆ ಶಿಬಿರದಲ್ಲಿ ಎರಡು ಆನೆಗಳ ಕಾದಾಟದ ವೇಳೆ ಪ್ರವಾಸಿಗ ಮಹಿಳೆ ಸಿಲುಕಿ ಸಾವನ್ನಪ್ಪಿದ ಘಟನೆ ಸರ್ಕಾರಕ್ಕೆ ಎಚ್ಚರಿಕೆಯ ಗಂಟೆ ಆಗಿದೆ. ಇದೇ ಹಿನ್ನೆಲೆಯಲ್ಲಿ ಪ್ರವಾಸಿಗರ ಸುರಕ್ಷತೆಯನ್ನು ಮೊದಲ ಆದ್ಯತೆಯಾಗಿ ಪರಿಗಣಿಸಿ ಹೊಸ ನಿಯಮ ಜಾರಿಗೆ ತರಲಾಗುತ್ತಿದೆ.

ಹೊಸ ಮಾರ್ಗಸೂಚಿ ಪ್ರಕಾರ, ಪ್ರವಾಸಿಗರು ಆನೆಗಳೊಂದಿಗೆ ಫೋಟೋ ಅಥವಾ ಸೆಲ್ಫಿ ತೆಗೆದುಕೊಳ್ಳುವುದು ಸಂಪೂರ್ಣ ನಿಷೇಧ. ಆನೆ ಮೈತೊಳೆಯುವ ಸಂದರ್ಭ ಹತ್ತಿರ ಹೋಗಲು ಅವಕಾಶ ಇರುವುದಿಲ್ಲ. ಪ್ರವಾಸಿಗರ ಕೈಯಿಂದ ಬಾಳೆಹಣ್ಣು, ಬೆಲ್ಲ, ಕಬ್ಬು ಸೇರಿದಂತೆ ಯಾವುದೇ ಆಹಾರವನ್ನು ಆನೆಗಳಿಗೆ ನೀಡುವುದನ್ನೂ ನಿಷೇಧಿಸಲಾಗಿದೆ.

ಈಗಾಗಲೇ ಚಾರಣಪಥಗಳ ಸುರಕ್ಷತೆಗಾಗಿ ಎಸ್‌ಒಪಿ ರೂಪಿಸುವ ಕಾರ್ಯ ಆರಂಭವಾಗಿದ್ದು, ಅದೇ ಮಾದರಿಯಲ್ಲಿ ಸಾಕಾನೆ ಶಿಬಿರಗಳಲ್ಲೂ ಕಟ್ಟುನಿಟ್ಟಿನ ನಿಯಮ ಜಾರಿಗೆ ತರಲಾಗುತ್ತಿದೆ. ಅರಣ್ಯ ಇಲಾಖೆ ಅಧಿಕಾರಿಗಳು ನಾಳೆಯಿಂದಲೇ ಎಲ್ಲಾ ಶಿಬಿರಗಳಲ್ಲಿ ಹೊಸ ನಿಯಮಗಳನ್ನು ಅನುಷ್ಠಾನಗೊಳಿಸಲು ಸಿದ್ಧತೆ ಆರಂಭಿಸಿದ್ದಾರೆ.

ಪದೇ ಪದೇ ಹೊಟ್ಟೆ ನೋವು, ಗ್ಯಾಸ್ಟ್ರಿಕ್ ಸಮಸ್ಯೆ ಕಾಣಿಸುತ್ತಿದೆಯೇ? ನಿರ್ಲಕ್ಷ್ಯ ಬೇಡ!

ಇತ್ತೀಚಿನ ದಿನಗಳಲ್ಲಿ ಅನೇಕರು ಪದೇಪದೇ ಹೊಟ್ಟೆ ನೋವು, ಅಜೀರ್ಣ ಹಾಗೂ ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹಲವರು ಇದನ್ನು ಸಾಮಾನ್ಯ ಸಮಸ್ಯೆ ಎಂದು ಭಾವಿಸಿ ನಿರ್ಲಕ್ಷ್ಯ ಮಾಡುತ್ತಾರೆ. ಆದರೆ ಆರೋಗ್ಯ ತಜ್ಞರ ಪ್ರಕಾರ, ಈ ರೀತಿಯ ಲಕ್ಷಣಗಳು ದೀರ್ಘಕಾಲ ಮುಂದುವರಿದರೆ ಅದು ಗಂಭೀರ ಆರೋಗ್ಯ ಸಮಸ್ಯೆಯ ಸೂಚನೆಯಾಗಿರಬಹುದು.

ಲೇಡಿ ಹಾರ್ಡಿಂಗ್ ಮೆಡಿಕಲ್ ಕಾಲೇಜು ಮತ್ತು ಅಸೋಸಿಯೇಟೆಡ್ ಆಸ್ಪತ್ರೆಯ ಮೆಡಿಸಿನ್ ವಿಭಾಗದ ತಜ್ಞ ಡಾ. ಎಲ್.ಎಚ್. ಘೋಟೇಕರ್ ಅವರ ಪ್ರಕಾರ, ಇತ್ತೀಚಿನ ದಿನಗಳಲ್ಲಿ ಅಸ್ವಸ್ಥ ಆಹಾರ ಪದ್ಧತಿಯೇ ಹೊಟ್ಟೆ ಸಮಸ್ಯೆಗಳು ಹೆಚ್ಚಾಗಲು ಪ್ರಮುಖ ಕಾರಣವಾಗಿದೆ.

ಯಾವ ಸಮಸ್ಯೆಗಳ ಸೂಚನೆಯಾಗಿರಬಹುದು?

ಮೈದಾ ಪದಾರ್ಥಗಳು, ಫಾಸ್ಟ್ ಫುಡ್ ಹಾಗೂ ಹೆಚ್ಚು ಎಣ್ಣೆಯ ಆಹಾರಗಳನ್ನು ನಿರಂತರವಾಗಿ ಸೇವಿಸುವುದರಿಂದ ಜೀರ್ಣಕ್ರಿಯೆ ಮೇಲೆ ಪರಿಣಾಮ ಬೀಳುತ್ತದೆ. ಇಂತಹ ಆಹಾರಗಳು ಸರಿಯಾಗಿ ಜೀರ್ಣವಾಗದೆ ಹೊಟ್ಟೆಯಲ್ಲಿ ಗ್ಯಾಸ್ಟ್ರಿಕ್, ಅಜೀರ್ಣ ಮತ್ತು ಉಬ್ಬರ ಸಮಸ್ಯೆ ಉಂಟುಮಾಡಬಹುದು.

ಕೆಲವರಿಗೆ ಹಾಲು, ಗ್ಲೂಟನ್ ಅಥವಾ ಕೆಲವು ಆಹಾರ ಪದಾರ್ಥಗಳು ಸರಿಯಾಗಿ ಜೀರ್ಣವಾಗದೆ ಹೊಟ್ಟೆ ಉಬ್ಬರ ಮತ್ತು ಸಣ್ಣ ಮಟ್ಟದ ನೋವು ಕಾಣಿಸಬಹುದು. ದೀರ್ಘಕಾಲ ಗ್ಯಾಸ್ಟ್ರಿಕ್, ಮಲಬದ್ಧತೆ ಅಥವಾ ಅಜೀರ್ಣ ಸಮಸ್ಯೆ ಮುಂದುವರಿದರೆ ಅದು ಐಬಿಎಸ್ (ಇರಿಟೇಬಲ್ ಬವಲ್ ಸಿಂಡ್ರೋಮ್) ಅಥವಾ ಅಂತರಾಯದ ಉರಿಯೂತದ ಲಕ್ಷಣವಾಗಿರಬಹುದು ಎಂದು ವೈದ್ಯರು ತಿಳಿಸಿದ್ದಾರೆ.

ಕೆಲ ಸಂದರ್ಭಗಳಲ್ಲಿ ಹೊಟ್ಟೆ ಸಮಸ್ಯೆಗಳು ಅಲ್ಸರ್ ಅಥವಾ ಕ್ಯಾನ್ಸರ್‌ನ ಆರಂಭಿಕ ಸೂಚನೆಯಾಗಿಯೂ ಕಾಣಿಸಬಹುದು. ಹೀಗಾಗಿ ಈ ಸಮಸ್ಯೆಗಳನ್ನು ನಿರ್ಲಕ್ಷ್ಯ ಮಾಡಬಾರದು ಎಂದು ತಜ್ಞರು ಎಚ್ಚರಿಸಿದ್ದಾರೆ.

ಈ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ

  • ಕಾರಣವಿಲ್ಲದೆ ತೂಕ ಇಳಿಕೆಯಾಗುವುದು
  • ಪದೇಪದೇ ವಾಂತಿ ಕಾಣಿಸಿಕೊಳ್ಳುವುದು
  • ಮಲದಲ್ಲಿ ರಕ್ತ ಕಾಣಿಸಿಕೊಳ್ಳುವುದು
  • ದೌರ್ಬಲ್ಯ ಮತ್ತು ಬೇಗ ದಣಿವಾಗುವುದು
  • ನಿರಂತರ ಹೊಟ್ಟೆನೋವು

ಈ ರೀತಿಯ ಲಕ್ಷಣಗಳು ಕಂಡುಬಂದರೆ ತಕ್ಷಣ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಅಗತ್ಯ ಎಂದು ವೈದ್ಯರು ಸಲಹೆ ನೀಡಿದ್ದಾರೆ.

ಹೊಟ್ಟೆಯ ಆರೋಗ್ಯ ಕಾಪಾಡಲು ಏನು ಮಾಡಬೇಕು?

ಫಾಸ್ಟ್ ಫುಡ್ ಮತ್ತು ಹೆಚ್ಚು ಎಣ್ಣೆಯಲ್ಲಿ ಕರಿದ ಆಹಾರಗಳ ಸೇವನೆಯನ್ನು ಕಡಿಮೆ ಮಾಡಬೇಕು. ದಿನಕ್ಕೆ ಕನಿಷ್ಠ ಏಳು ಗ್ಲಾಸ್ ನೀರು ಕುಡಿಯುವುದು ಉತ್ತಮ. ಹಸಿರು ತರಕಾರಿಗಳು, ಹಣ್ಣುಗಳು ಹಾಗೂ ಫೈಬರ್‌ಯುಕ್ತ ಆಹಾರ ಸೇವಿಸುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ.

ಇದರ ಜೊತೆಗೆ ಪ್ರತಿದಿನ ನಿಯಮಿತ ಸಮಯಕ್ಕೆ ಊಟ ಮಾಡುವುದು, ಒತ್ತಡ ಕಡಿಮೆ ಮಾಡಿಕೊಳ್ಳುವುದು ಹಾಗೂ ಆರೋಗ್ಯಕರ ಜೀವನಶೈಲಿಯನ್ನು ಪಾಲಿಸುವುದರಿಂದ ಹೊಟ್ಟೆಗೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ತಪ್ಪಿಸಬಹುದು ಎಂದು ತಜ್ಞರು ತಿಳಿಸಿದ್ದಾರೆ.

ದೇಶದ ಆರ್ಥಿಕ ಬಿಕ್ಕಟ್ಟು ನಿವಾರಣೆಗಾಗಿ ತಿಮ್ಮಪ್ಪನಿಗೆ ಪ್ರಾರ್ಥನೆ: ಡಿ.ಕೆ. ಶಿವಕುಮಾರ್

ತಿರುಮಲ: ದೇಶವು ಆರ್ಥಿಕ ಬಿಕ್ಕಟ್ಟಿನಿಂದ ಬಳಲಬಾರದು. ಎಲ್ಲರಿಗೂ ಶಕ್ತಿ, ಉತ್ತಮ ಆರೋಗ್ಯ ಲಭಿಸಲಿ. ರಾಜ್ಯದಲ್ಲಿ ಉತ್ತಮ ಮಳೆ ಬರಲಿ ಎಂದು ಭಗವಂತ ವೆಂಕಟೇಶ್ವರನ ಬಳಿ ಪ್ರಾರ್ಥಿಸಿದ್ದೇನೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಹೇಳಿದರು.

ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿರುಮಲದಲ್ಲಿ ಮಂಗಳವಾರ ಶ್ರೀ ವೆಂಕಟೇಶ್ವರ ಸ್ವಾಮೀಯ ದರ್ಶನ ಪಡೆದು, ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.

“ಇಡೀ ದೇಶ ಶಾಂತಿಯಿಂದ ಕೂಡಿರಲಿ. ಸವಾಲುಗಳನ್ನು ಸಮರ್ಥನೆವಾಗಿ ಎದುರಿಸಲಿ ಎಂದು ಕೋರಿಕೊಂಡಿದ್ದೇನೆ. ಈ ಮಹತ್ವದ ದಿನದಂದು ಇಲ್ಲಿಗೆ ಬಂದಿರುವುದಕ್ಕೆ ನನಗೆ ತುಂಬಾ ಸಂತೋಷವಾಗಿದೆ. ಬಹಳ ಸಮಯದ ನಂತರ ಅಂದರೆ ಆರೇಳು ವರ್ಷಗಳ ನಂತರ ನಾನು ಇಲ್ಲಿಗೆ ಭೇಟಿ ನೀಡಿದ್ದೇನೆ.

ತಿರುಮಲ ತಿರುಪತಿ ದೇವಸ್ಥಾನ ಟ್ರಸ್ಟ್ ಬಹಳಷ್ಟು ಬದಲಾವಣೆಗಳನ್ನು, ಬಹಳಷ್ಟು ಅಭಿವೃದ್ಧಿಗಳನ್ನು ಮಾಡಿದೆ. ಶಿಸ್ತು, ಉತ್ತಮ ಶುಚಿತ್ವ ಕಾಪಾಡಿದೆ. ಉತ್ತಮ ಆಡಳಿತ ನಡೆಸುತ್ತಿದೆ. ಸರಕಾರ ಉತ್ತಮ ಕೆಲಸ ಮಾಡಿದೆ. ನಾನು ಎಲ್ಲರಿಗೂ ಧನ್ಯವಾದ ಹೇಳುತ್ತೇನೆ” ಎಂದರು.

“ಶ್ರೀ ವೆಂಕಟೇಶ್ವರನ ದರ್ಶನದಿಂದ ಸಂತಸವಾಗಿದೆ. ಟಿಟಿಡಿಯ ಅಧ್ಯಕ್ಷರು ಕೂಡ ತಮ್ಮ ತಂಡದೊಂದಿಗೆ ಉತ್ತಮ ಕೆಲಸ ಮಾಡುತ್ತಿದ್ದಾರೆ. ಇಲ್ಲಿನ ಕಂದಾಯ ಸಚಿವರನ್ನು ಭೇಟಿ ಮಾಡಿದೆ. ಅವರೂ ಇಲ್ಲಿ ಅತ್ಯುತ್ತಮ ಕೆಲಸ ಮಾಡುತ್ತಿದ್ದಾರೆ. ಆದ್ದರಿಂದ ನಾನು ಅವರೆಲ್ಲರಿಗೂ ಶುಭ ಹಾರೈಸುತ್ತೇನೆ” ಎಂದರು.

ಭಾರತದಲ್ಲಿ ಚಿನ್ನದ ಬೆಲೆ ಮತ್ತೆ ಏರಿಕೆ! ಬೆಂಗಳೂರಿನಲ್ಲಿ ಎಷ್ಟು? ಇಲ್ಲಿದೆ ಡೀಟೇಲ್ಸ್!

ಚಿನ್ನದ ದರದಲ್ಲಿ ಮತ್ತೆ ಏರಿಕೆ ಕಂಡುಬಂದಿದೆ. ಸತತ ಇಳಿಕೆಯ ಬಳಿಕ ಮಂಗಳವಾರ ಗ್ರಾಮ್‌ಗೆ 75 ರೂ. ಹೆಚ್ಚಳವಾಗಿದ್ದು, ಕಳೆದ ಹತ್ತು ದಿನಗಳಲ್ಲಿ ಒಟ್ಟಾರೆ ಸುಮಾರು 430 ರೂ. ಏರಿಕೆಯಾಗಿದೆ ಎಂದು ಮಾರುಕಟ್ಟೆ ವರದಿಗಳು ತಿಳಿಸಿವೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯ ಪ್ರಭಾವದಿಂದ ಭಾರತದಲ್ಲಿಯೂ ಚಿನ್ನದ ಬೆಲೆಯಲ್ಲಿ ಚಲನವಲನ ಮುಂದುವರಿದಿದೆ. ಇತ್ತ ಬೆಳ್ಳಿ ದರದಲ್ಲಿ ಸ್ವಲ್ಪ ಇಳಿಕೆ ಕಂಡುಬಂದಿದ್ದು, ನಿನ್ನೆ ಏರಿಕೆಯಾದ ಬಳಿಕ ಇವತ್ತು 100 ಗ್ರಾಮ್‌ಗೆ 5 ರೂ. ಕುಸಿತವಾಗಿದೆ.

ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,43,950 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,57,040 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 28,500 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,43,950 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 28,500 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 30,000 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ:

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,704 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,395 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 11,778 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 285 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ:

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,704 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,395 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 285 ರೂ.

ಮಂಗಳೂರಿನ ಬಾವಿಗಳಲ್ಲಿ ಉಕ್ಕಿ ಬಂದ ಡೀಸೆಲ್: ಕುಡಿಯಲು ನೀರಿಲ್ಲದೆ ಕಾವೂರು ನಿವಾಸಿಗಳು ಕಂಗಾಲು!

0

ಮಂಗಳೂರು: ಕಾವೂರು ಪ್ರದೇಶದಲ್ಲಿ ನಡೆದಿರುವ ವಿಚಿತ್ರ ಘಟನೆ ಕರಾವಳಿ ಜನರನ್ನು ಬೆಚ್ಚಿಬೀಳಿಸಿದೆ. ಮೂರು ಮನೆಗಳ ಬಾವಿಗಳಲ್ಲಿ ಡೀಸೆಲ್ ಮಿಶ್ರಿತ ನೀರು ಕಾಣಿಸಿಕೊಂಡಿದ್ದು, ಲ್ಯಾಬ್ ಪರೀಕ್ಷೆಯಲ್ಲಿ ನೀರಿನಲ್ಲಿ ಶೇ.28 ರಷ್ಟು ಡೀಸೆಲ್ ಅಂಶ ಇರುವುದು ದೃಢಪಟ್ಟಿದೆ. ಬಾವಿಯಿಂದ ತೆಗೆದ ನೀರಿಗೆ ಕಾಗದ ಮುಳುಗಿಸಿ ಬೆಂಕಿ ಹಚ್ಚಿದರೆ ಅದು ಹೊತ್ತಿ ಉರಿಯುತ್ತಿರುವುದು ಸ್ಥಳೀಯರಲ್ಲಿ ಭಾರೀ ಆತಂಕ ಮೂಡಿಸಿದೆ.

ಸ್ಥಳೀಯ ನಿವಾಸಿಗಳ ಪ್ರಕಾರ, ಕಳೆದ ಕೆಲವು ದಿನಗಳಿಂದ ಬಾವಿಯ ನೀರಿನಲ್ಲಿ ತೀವ್ರ ಡೀಸೆಲ್ ವಾಸನೆ ಬರುತ್ತಿತ್ತು. ನಂತರ ಪರಿಶೀಲನೆ ನಡೆಸಿದಾಗ ನೀರಿನ ಮೇಲ್ಮೈಯಲ್ಲಿ ದಪ್ಪ ಎಣ್ಣೆ ಪದರ ತೇಲುತ್ತಿರುವುದು ಕಂಡುಬಂದಿದೆ. ಮೋಟಾರ್ ಮೂಲಕ ನೀರನ್ನು ಸಂಪೂರ್ಣ ಖಾಲಿ ಮಾಡಿದರೂ, ಮತ್ತೆ ಡೀಸೆಲ್ ಮಿಶ್ರಿತ ನೀರು ಜಿನುಗುತ್ತಿದೆ.

ಸಂತ್ರಸ್ತ ಸದಾಶಿವ ಮಾತನಾಡಿ, “ನಮಗೆ ಈಗ ಬಾವಿ ನೀರು ಸಂಪೂರ್ಣ ಅಯೋಗ್ಯವಾಗಿದೆ. ಕುಡಿಯುವುದಕ್ಕೆ ಮಾತ್ರವಲ್ಲ, ಪಾತ್ರೆ ತೊಳೆಯಲು ಸಹ ಬಳಸಲು ಸಾಧ್ಯವಿಲ್ಲ. ಟ್ಯಾಂಕರ್ ನೀರು ತರಿಸಿಕೊಂಡೇ ಬದುಕುವ ಪರಿಸ್ಥಿತಿ ಬಂದಿದೆ” ಎಂದು ಹೇಳಿದ್ದಾರೆ.

ಈ ಪ್ರದೇಶದ ಪಕ್ಕದಲ್ಲೇ ಇರುವ ಪೆಟ್ರೋಲ್ ಬಂಕ್‌ನ ಅಂಡರ್‌ಗ್ರೌಂಡ್ ಟ್ಯಾಂಕ್‌ನಿಂದ ಡೀಸೆಲ್ ಸೋರಿಕೆಯಾಗಿರಬಹುದು ಎಂದು ಸ್ಥಳೀಯರು ಆರೋಪಿಸಿದ್ದಾರೆ. ಆದರೆ ಬಂಕ್ ಮಾಲೀಕರು ಇದನ್ನು ತಳ್ಳಿಹಾಕಿದ್ದು, “ಸ್ಟಾಕ್‌ನಲ್ಲಿ ವ್ಯತ್ಯಾಸ ಇಲ್ಲ. ನಮ್ಮಿಂದ ಸೋರಿಕೆ ಆಗಿಲ್ಲ” ಎಂದು ತಿಳಿಸಿದ್ದಾರೆ.

ಆರೋಗ್ಯ ಇಲಾಖೆ ಅಧಿಕಾರಿಗಳು ಬಾವಿ ನೀರನ್ನು ಪರೀಕ್ಷೆಗೆ ಕೊಂಡೊಯ್ದು, ನೀರು ಕುಡಿಯಲು ಯೋಗ್ಯವಲ್ಲ ಎಂದು ವರದಿ ನೀಡಿದ್ದಾರೆ. ಆದರೆ ಇದುವರೆಗೆ ಪಾಲಿಕೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಶಾಶ್ವತ ಪರಿಹಾರ ಕಲ್ಪಿಸಿಲ್ಲ ಎಂಬ ಆರೋಪ ಕೇಳಿಬಂದಿದೆ.

ಅಂತರ್ಜಲ ಸಂಪೂರ್ಣ ಕಲುಷಿತಗೊಳ್ಳುವ ಅಪಾಯ ಎದುರಾಗಿರುವ ಹಿನ್ನೆಲೆಯಲ್ಲಿ ತಕ್ಷಣ ಸಮಗ್ರ ತನಿಖೆ ನಡೆಸಿ, ಸೋರಿಕೆಯ ಮೂಲ ಪತ್ತೆಹಚ್ಚಬೇಕು ಎಂದು ಸಾರ್ವಜನಿಕರು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.

“‘ಸರ್ಜರಿ ಮಾಡಿಸಿಕೊಂಡಳು’ ಎಂದ ಟ್ರೋಲ್ಸ್‌ಗೆ ಕೀರ್ತಿ ಸುರೇಶ್ ತಿರುಗೇಟು: ‘ನನ್ನ ದೇಹ, ನನ್ನ ಶ್ರಮʼ ಎಂದ ನಟಿ

ಚೆನ್ನೈ: ನಟಿಯರ ದೇಹದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುವ ಬಾಡಿ ಶೇಮಿಂಗ್ ಮತ್ತು ವದಂತಿಗಳ ವಿರುದ್ಧ ನಟಿ ಕೀರ್ತಿ ಸುರೇಶ್ ನೇರವಾಗಿ ಧ್ವನಿ ಎತ್ತಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಸುದೀರ್ಘ ಪೋಸ್ಟ್ ಹಂಚಿಕೊಂಡಿರುವ ಅವರು, ತಾವು ಅನುಭವಿಸಿದ ಮಾನಸಿಕ ಒತ್ತಡ, ದೈಹಿಕ ಹಿನ್ನಡೆ ಮತ್ತು ಪ್ಲಾಸ್ಟಿಕ್ ಸರ್ಜರಿ ಆರೋಪಗಳ ಬಗ್ಗೆ ಮೊದಲ ಬಾರಿಗೆ ಮುಕ್ತವಾಗಿ ಮಾತನಾಡಿದ್ದಾರೆ.

‘ಮಹಾನಟಿ’ ಸಿನಿಮಾ ಬಳಿಕ ಫಿಟ್ ಆಗಬೇಕೆಂಬ ಉದ್ದೇಶದಿಂದ ಜಿಮ್ ಆರಂಭಿಸಿದ್ದ ಕೀರ್ತಿ, ಕೇವಲ 9 ತಿಂಗಳಲ್ಲಿ 10 ಕೆಜಿ ತೂಕ ಇಳಿಸಿಕೊಂಡಿದ್ದರು. ಆದರೆ ಅವರ ಈ ಪರಿವರ್ತನೆಗೆ ಮೆಚ್ಚುಗೆ ಸಿಗುವ ಬದಲು ಟೀಕೆ ಮತ್ತು ಗಾಸಿಪ್‌ಗಳೇ ಹೆಚ್ಚಾದವು.

“ನಾನು ಸರ್ಜರಿ ಮಾಡಿಸಿಕೊಂಡಿದ್ದೇನೆ ಎಂದು ಕೆಲವರು ಹರಿಬಿಟ್ಟರು. ಆದರೆ ನಾನು ನನ್ನ ಮುಖ ಸೇರಿದಂತೆ ಎಲ್ಲವನ್ನೂ ನೈಸರ್ಗಿಕವಾಗಿಯೇ ಉಳಿಸಿಕೊಂಡಿದ್ದೇನೆ. ನನ್ನ ಕಠಿಣ ಪರಿಶ್ರಮವನ್ನು ಜನರು ಸರ್ಜರಿ ಎಂದು ತಳ್ಳಿಹಾಕಿದ್ದು ನೋವಾಯಿತು” ಎಂದು ಕೀರ್ತಿ ಹೇಳಿದ್ದಾರೆ.

ಫಿಟ್‌ನೆಸ್ ತಮ್ಮ ಜೀವನದ ಅತಿ ದೊಡ್ಡ ಗುರು ಎಂದು ಬಣ್ಣಿಸಿರುವ ಅವರು, ಯೋಗಾಭ್ಯಾಸದಿಂದ ಮಾನಸಿಕ ಶಾಂತಿ ಮತ್ತು ಆತ್ಮವಿಶ್ವಾಸ ದೊರಕಿತು ಎಂದಿದ್ದಾರೆ. ಜೊತೆಗೆ, ಸಮಾಜದ ದ್ವಂದ್ವ ಮನೋಭಾವವನ್ನೂ ಪ್ರಶ್ನಿಸಿದ್ದಾರೆ.

“ದಪ್ಪ ಇದ್ದರೆ ಸ್ಲಿಮ್ ಆಗಿ ಎನ್ನುತ್ತಾರೆ. ಸ್ಲಿಮ್ ಆದರೆ ದಪ್ಪವಾಗು ಎನ್ನುತ್ತಾರೆ. ಜನರು ನಿಜವಾಗಿ ಏನು ಬಯಸುತ್ತಾರೆ ಎಂಬುದೇ ಅರ್ಥವಾಗುವುದಿಲ್ಲ” ಎಂದು ಅವರು ಹೇಳಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಿಂದ ದೂರವಿದ್ದ ಕಾರಣಕ್ಕೂ ಕೀರ್ತಿ ಸ್ಪಷ್ಟನೆ ನೀಡಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ ದೈಹಿಕ ಹಾಗೂ ಮಾನಸಿಕವಾಗಿ ತೀವ್ರ ಹಿನ್ನಡೆ ಅನುಭವಿಸಿದ್ದಾಗಿ ಹೇಳಿರುವ ಅವರು, “ಬಿದ್ದರೆ ಸ್ವಲ್ಪ ವಿಶ್ರಾಂತಿ ಪಡೆಯುತ್ತೇನೆ. ಆದರೆ ಎಂದಿಗೂ ಸೋಲೊಪ್ಪಿಕೊಳ್ಳುವುದಿಲ್ಲ” ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಪೆಟ್ರೋಲ್ ದರ ಏರಿಕೆ ಎಫೆಕ್ಟ್‌: ಬೆಂಗಳೂರಿನಲ್ಲಿ ಇವಿ ಬೈಕ್‌ಗಳಿಗೆ ಭಾರೀ ಡಿಮ್ಯಾಂಡ್‌!

ಬೆಂಗಳೂರು: ದೇಶದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ದರ ನಿರಂತರ ಏರಿಕೆಯಾಗುತ್ತಿರುವ ಬೆನ್ನಲ್ಲೇ ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ವಾಹನಗಳ ಬೇಡಿಕೆ ಏರಿಕೆಯಾಗುತ್ತಿದೆ.

ಪಶ್ಚಿಮ ಏಷ್ಯಾದಲ್ಲಿನ ಸಮರ ಪರಿಸ್ಥಿತಿ ಮತ್ತು ಇಂಧನ ಬಿಕ್ಕಟ್ಟಿನ ಪರಿಣಾಮವಾಗಿ ಇಂಧನ ದರಗಳು ಹೆಚ್ಚಳ ಕಂಡಿದ್ದು, ವಾಹನ ಸವಾರರ ಆರ್ಥಿಕ ಹೊರೆ ಮತ್ತಷ್ಟು ಹೆಚ್ಚಾಗಿದೆ.

ಇತ್ತೀಚೆಗೆ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಪ್ರತಿ ಲೀಟರ್‌ಗೆ 3 ರೂಪಾಯಿ ಹೆಚ್ಚಿಸಲಾಗಿತ್ತು. ಇದೀಗ ಮತ್ತೆ 90 ಪೈಸೆ ಏರಿಕೆಯಾದ ಹಿನ್ನೆಲೆ ಜನರು ಪರ್ಯಾಯ ವ್ಯವಸ್ಥೆಗಳತ್ತ ಮುಖ ಮಾಡುತ್ತಿದ್ದಾರೆ.

ಈ ನಡುವೆ ಬೆಂಗಳೂರಿನ ರಾಜಾಜಿನಗರ ಸೇರಿದಂತೆ ಹಲವು ಪ್ರದೇಶಗಳ ಇವಿ ಬೈಕ್ ಶೋರೂಂಗಳಲ್ಲಿ ಜನರ ಸಂಖ್ಯೆ ಹೆಚ್ಚಾಗಿದೆ. ಗ್ರಾಹಕರು ಎಲೆಕ್ಟ್ರಿಕ್ ಬೈಕ್‌ಗಳ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿದ್ದು, ಹಲವರು ನೇರವಾಗಿ ಬುಕ್ಕಿಂಗ್ ಕೂಡ ಮಾಡುತ್ತಿದ್ದಾರೆ.

ಪರಿಸರ ಸ್ನೇಹಿ ತಂತ್ರಜ್ಞಾನ, ಕಡಿಮೆ ನಿರ್ವಹಣಾ ವೆಚ್ಚ ಹಾಗೂ ಇಂಧನ ಖರ್ಚು ಉಳಿಯುವ ಕಾರಣಕ್ಕೆ ಜನರು ಎಲೆಕ್ಟ್ರಿಕ್ ವಾಹನಗಳತ್ತ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.

ಕರ್ನಾಟಕ ಮೂಲದ ಹಲವು ಸ್ಟಾರ್ಟ್‌ಅಪ್ ಹಾಗೂ ಉದ್ಯಮಿಗಳು ಹೊಸ ಮಾದರಿಯ ಇವಿ ಬೈಕ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿದ್ದು, ಕಡಿಮೆ ಬಜೆಟ್‌ನಲ್ಲಿ ಆಧುನಿಕ ಫೀಚರ್ಸ್‌ಗಳೊಂದಿಗೆ ವಾಹನಗಳನ್ನು ಬಿಡುಗಡೆ ಮಾಡುತ್ತಿದ್ದಾರೆ.

ಪೆಟ್ರೋಲ್ ದರ ಏರಿಕೆಯು ಮುಂದುವರಿದರೆ ಮುಂದಿನ ದಿನಗಳಲ್ಲಿ ಎಲೆಕ್ಟ್ರಿಕ್ ವಾಹನಗಳ ಮಾರಾಟ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ವಾಹನ ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

error: Content is protected !!