Home Blog

ಅಗ್ನಿಕುಂಡದಂತಾದ ಆದಿಲಾಬಾದ್: 45.3°C ತಾಪಮಾನ ದಾಖಲು, ಬಿಸಿಲಿನ ಹೊಡೆತಕ್ಕೆ 6 ಮಂದಿ ಬಲಿ

0

ತೆಲಂಗಾಣ: ತೀವ್ರ ಬಿಸಿಲಿನ ತಾಪಕ್ಕೆ ಆದಿಲಾಬಾದ್ ಜಿಲ್ಲೆ ಬೆಂಕಿಯ ಕುಲುಮೆಯಂತೆ ಉರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಬೆಳಗ್ಗೆ 7 ಗಂಟೆಯಿಂದಲೇ ಪ್ರಾರಂಭವಾಗುವ ತಾಪಮಾನ ಸಂಜೆ 7 ಗಂಟೆಯಾದರೂ ಕಡಿಮೆಯಾಗದ ಸ್ಥಿತಿ ನಿರ್ಮಾಣವಾಗಿದೆ. ಹಗಲಿನ ವೇಳೆ ರಸ್ತೆಗಳಲ್ಲಿ ಜನ ಸಂಚಾರವೂ ಕಡಿಮೆಯಾಗುತ್ತಿದೆ.

ಕಳೆದ ಕೆಲವು ದಿನಗಳಿಂದ ತಾಪಮಾನ ಸಾಮಾನ್ಯಕ್ಕಿಂತ ಹೆಚ್ಚಾಗಿದ್ದು, ಭಾನುವಾರ 45.3 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಇದು ಸಾಮಾನ್ಯಕ್ಕಿಂತ ಸುಮಾರು 3.5 ಡಿಗ್ರಿ ಹೆಚ್ಚಾಗಿದೆ. ಬಿಸಿಗಾಳಿಯ ಪರಿಣಾಮವಾಗಿ ಜಿಲ್ಲೆಯಲ್ಲಿ ಈಗಾಗಲೇ ಆರು ಮಂದಿ ಸಾವನ್ನಪ್ಪಿರುವುದಾಗಿ ವರದಿಯಾಗಿದೆ.

ಹವಾಮಾನ ಇಲಾಖೆ (ಐಎಂಡಿ) ಮಾಹಿತಿ ಪ್ರಕಾರ, ರಾಜ್ಯದ ಹಲವು ಭಾಗಗಳಲ್ಲಿ ಹೀಟ್‌ವೇವ್ ಪರಿಸ್ಥಿತಿ ಮುಂದುವರಿದಿದೆ. ಸೋಮವಾರ ಮತ್ತು ಮಂಗಳವಾರ ತಾಪಮಾನ ಇನ್ನೂ 1ರಿಂದ 2 ಡಿಗ್ರಿ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಮುನ್ಸೂಚನೆ ನೀಡಲಾಗಿದೆ.

ಇದರ ನಡುವೆ, ಸೋಮವಾರ ಉತ್ತರ ತೆಲಂಗಾಣ ಜಿಲ್ಲೆಗಳಲ್ಲಿ ಹಾಗೂ ಮಂಗಳವಾರ ಉತ್ತರ ಮತ್ತು ದಕ್ಷಿಣ ಭಾಗಗಳಲ್ಲಿ ಹಗುರದಿಂದ ಮಧ್ಯಮ ಮಳೆಯಾಗುವ ಸಾಧ್ಯತೆ ಇದೆ. ಏಪ್ರಿಲ್ 29ರಂದು ರಾಜ್ಯದಾದ್ಯಂತ, 30ರಂದು ಮಧ್ಯ ಮತ್ತು ದಕ್ಷಿಣ ಜಿಲ್ಲೆಗಳಲ್ಲಿ ಹಾಗೂ ಮೇ 1 ಮತ್ತು 2ರಂದು ಗುಡುಗು-ಮಿಂಚಿನೊಂದಿಗೆ ಮಳೆಯಾಗುವ ಸೂಚನೆಗಳಿವೆ ಎಂದು ಐಎಂಡಿ ತಿಳಿಸಿದೆ.

ಬಿಸಿಲಿನ ತೀವ್ರತೆಯನ್ನು ಗಮನಿಸಿ ಜನರು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕೆಂದು ಅಧಿಕಾರಿಗಳು ಸಲಹೆ ನೀಡಿದ್ದಾರೆ. ಮಧ್ಯಾಹ್ನ ವೇಳೆಯಲ್ಲಿ ಹೊರಗೆ ಹೋಗುವುದನ್ನು ತಪ್ಪಿಸಿ, ಅಗತ್ಯ ಕೆಲಸಗಳನ್ನು ಬೆಳಗ್ಗೆ ಅಥವಾ ಸಂಜೆ ವೇಳೆ ಮುಗಿಸಿಕೊಳ್ಳುವುದು ಒಳಿತು ಎಂದು ಸೂಚಿಸಲಾಗಿದೆ.

ಹೊರಗೆ ತೆರಳುವ ಸಂದರ್ಭದಲ್ಲಿ ಛತ್ರಿ, ಟೋಪಿ ಅಥವಾ ತಲೆಯನ್ನು ಮುಚ್ಚಿಕೊಳ್ಳುವ ವಸ್ತ್ರಗಳನ್ನು ಬಳಸಬೇಕು. ದೇಹದಲ್ಲಿ ನೀರಿನ ಕೊರತೆ ಉಂಟಾಗದಂತೆ ಸಾಕಷ್ಟು ನೀರು ಹಾಗೂ ಮಜ್ಜಿಗೆ ಸೇವಿಸುವುದು ಅತ್ಯಗತ್ಯ ಎಂದು ಆರೋಗ್ಯ ತಜ್ಞರು ಸಲಹೆ ನೀಡಿದ್ದಾರೆ.

ಕೃಷಿ ಹೊಂಡಕ್ಕೆ ಬಿದ್ದು ತಾಯಿ-ಮಗಳು ಸಾವು: ಪತಿ ವಿರುದ್ಧ ಪ್ರಕರಣ ದಾಖಲು!

0

ಆನೇಕಲ್: ಕೃಷಿ ಹೊಂಡಕ್ಕೆ ಬಿದ್ದು ತಾಯಿ ಹಾಗೂ ಮಗಳು ಸಾವನ್ನಪ್ಪಿದ ದಾರುಣ ಘಟನೆ ಸೂರ್ಯನಗರ ಪೊಲೀಸ್ ಠಾಣಾ ವ್ಯಾಪ್ತಿಯ ಲಕ್ಷ್ಮೀಸಾಗರ ಗ್ರಾಮದಲ್ಲಿ ನಡೆದಿದೆ.

ಮೃತರನ್ನು ಲಾವಣ್ಯ (28) ಹಾಗೂ ಲಕ್ಷತಾ (8) ಎಂದು ಗುರುತಿಸಲಾಗಿದೆ. ಲಾವಣ್ಯ ಅವರು 2017ರಲ್ಲಿ ಗ್ರಾಮದ ಸಂಪತ್ ಅವರೊಂದಿಗೆ ವಿವಾಹವಾಗಿದ್ದರು.

ಘಟನೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಲಾವಣ್ಯ ಪೋಷಕರು, ತಮ್ಮ ಮಗಳ ಪತಿಯ ವಿರುದ್ಧ ಶಂಕೆ ವ್ಯಕ್ತಪಡಿಸಿದ್ದಾರೆ. ಪ್ರಕರಣದ ಸತ್ಯಾಸತ್ಯತೆ ಪತ್ತೆಹಚ್ಚುವಂತೆ ಪೊಲೀಸರಿಗೆ ಮನವಿ ಮಾಡಿದ್ದಾರೆ.

ಈ ಹಿನ್ನೆಲೆಯಲ್ಲಿ ಸೂರ್ಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

ವೃತ್ತಿಪರ ಕೋರ್ಸ್ ಪ್ರವೇಶಕ್ಕೆ ಡೆಡ್‌ ಲೈನ್ ವಿಸ್ತರಣೆ: ಏಪ್ರಿಲ್ 30ರವರೆಗೆ ಅರ್ಜಿ ಸಲ್ಲಿಸಲು ಅವಕಾಶ

ಬೆಂಗಳೂರು: ಎಂಬಿಎ, ಎಂಸಿಎ, ಎಂಇ, ಎಂ.ಟೆಕ್ ಮತ್ತು ಎಂ.ಆರ್ಕಿಟೆಕ್ಚರ್ ಕೋರ್ಸ್ ಗಳ ಪ್ರವೇಶಕ್ಕೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಏಪ್ರಿಲ್ 30ರವರೆಗೆ ದಿನಾಂಕ ವಿಸ್ತರಿಸಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ತಿಳಿಸಿದ್ದಾರೆ.

ಶುಲ್ಕ ಪಾವತಿಗೆ ಮೇ 5 ಕೊನೆ ದಿನ. ಅಭ್ಯರ್ಥಿಗಳ ಕೋರಿಕೆ ಮೇಲೆ ದಿನಾಂಕ ವಿಸ್ತರಿಸಿದ್ದು, ಪುನಃ ಮುಂದೂಡುವುದಿಲ್ಲ. ನಿಗದಿತ ದಿನಾಂಕದೊಳಗೆ ಅರ್ಜಿ ಸಲ್ಲಿಸಬೇಕು ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇರಾನ್–ಅಮೆರಿಕ ಉದ್ವಿಗ್ನತೆ ಪರಿಣಾಮ: ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆ! ಇಂದಿನ ದರ ಹೀಗಿದೆ..?

ಬೆಂಗಳೂರು: ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಇರಾನ್–ಅಮೆರಿಕ ನಡುವಿನ ಸಂಧಾನ ಮಾತುಕತೆ ಮತ್ತೊಮ್ಮೆ ವಿಫಲವಾಗಿದೆ. ಈ ಬೆಳವಣಿಗೆ ಹೂಡಿಕೆದಾರರನ್ನು ಸುರಕ್ಷಿತ ಹೂಡಿಕೆಗಳಾದ ಚಿನ್ನ ಮತ್ತು ಬೆಳ್ಳಿಯತ್ತ ಮುಖಮಾಡುವಂತೆ ಮಾಡಿದ್ದು, ಚಿನ್ನದ ಬೆಲೆಯಲ್ಲಿ ಏರಿಕೆ ಕಂಡುಬಂದಿದೆ.

2026ರ ಏಪ್ರಿಲ್ 27, ಸೋಮವಾರದಂದು 24 ಕ್ಯಾರೆಟ್ ಚಿನ್ನದ 10 ಗ್ರಾಂ ಬೆಲೆಯಲ್ಲಿ ₹380 ಏರಿಕೆಯಾಗಿ ₹1,54,420ಕ್ಕೆ ತಲುಪಿದೆ. ಪ್ರತಿ ಗ್ರಾಂ ಬೆಲೆ ₹38 ಹೆಚ್ಚಾಗಿ ₹15,442 ದಾಖಲಾಗಿದೆ.

ಇನ್ನೊಂದೆಡೆ, 22 ಕ್ಯಾರೆಟ್ ಚಿನ್ನದ ಪ್ರತಿ ಗ್ರಾಂ ಬೆಲೆ ₹35 ಏರಿಕೆಯಾಗಿ ₹14,155 ಆಗಿದ್ದು, 10 ಗ್ರಾಂ ಬೆಲೆ ₹350 ಏರಿಕೆಯಿಂದ ₹1,41,550ಕ್ಕೆ ಏರಿದೆ.

ಬೆಳ್ಳಿ ಬೆಲೆ ಮಾತ್ರ ಇಂದು ಸ್ಥಿರವಾಗಿದೆ. ಪ್ರತಿ ಗ್ರಾಂ ಬೆಲೆ ₹260 ಇದ್ದು, ಒಂದು ಕಿಲೋಗ್ರಾಂ ಬೆಲೆ ₹2,60,000 ಆಗಿದೆ.

ಇರಾನ್–ಅಮೆರಿಕ ನಡುವಿನ ಸಂಘರ್ಷ ಮತ್ತು ಜಾಗತಿಕ ಮಾರುಕಟ್ಟೆಯಲ್ಲಿ ಡಾಲರ್ ಮೌಲ್ಯದ ಏರಿಳಿತಗಳು ಚಿನ್ನ ಮತ್ತು ಬೆಳ್ಳಿ ಬೆಲೆಗಳ ಮೇಲೆ ನೇರ ಪರಿಣಾಮ ಬೀರುತ್ತಿದ್ದು, ಮುಂದಿನ ದಿನಗಳಲ್ಲಿಯೂ ಬೆಲೆಯಲ್ಲಿ ಅಸ್ಥಿರತೆ ಮುಂದುವರಿಯುವ ಸಾಧ್ಯತೆ ಇದೆ.

ಜನಿವಾರ ವಿವಾದಕ್ಕೆ ಕಠಿಣ ಕ್ರಮ: ಕೃಪಾನಿಧಿ ಕಾಲೇಜಿಗೆ ಬಿಗ್​​ ಶಾಕ್​

ಬೆಂಗಳೂರು: ನಗರದ ಮಡಿವಾಳದಲ್ಲಿರುವ ಕೃಪಾನಿಧಿ ಕಾಲೇಜುದಲ್ಲಿ CET ಪರೀಕ್ಷೆ ವೇಳೆ ವಿದ್ಯಾರ್ಥಿಗಳ ಜನಿವಾರ ತೆಗೆಸಿದ ಪ್ರಕರಣ ಭಾರೀ ವಿವಾದಕ್ಕೆ ಕಾರಣವಾಗಿದ್ದು, ಇದೀಗ ಕಾಲೇಜಿಗೆ ದೊಡ್ಡ ಹೊಡೆತ ಬಿದ್ದಿದೆ.

ಘಟನೆಗೆ ಸಂಬಂಧಿಸಿದಂತೆ ಮೂವರು ಸಿಬ್ಬಂದಿಯನ್ನು ಅಮಾನತು ಮಾಡಲಾಗಿದ್ದು, ಇದೀಗ ಕಾಲೇಜಿನಲ್ಲಿ ಇನ್ಮುಂದೆ ಯಾವುದೇ ಸರ್ಕಾರಿ ಪರೀಕ್ಷೆಗಳನ್ನು ನಡೆಸದಂತೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಬೆಂಗಳೂರು ನಗರ ಡಿಸಿ ಜಗದೀಶ್ ತಿಳಿಸಿದ್ದಾರೆ.

“ಜನಿವಾರ ತೆಗೆಸಿದ ಪ್ರಕರಣದಲ್ಲಿ ಕರ್ತವ್ಯ ಲೋಪ ಸ್ಪಷ್ಟವಾಗಿದೆ. ತರಬೇತಿ ನೀಡಿದ್ದರೂ ಇಂತಹ ಘಟನೆ ನಡೆದಿರುವುದು ಗಂಭೀರ ವಿಷಯ. ಉದ್ದೇಶಪೂರ್ವಕ ಕೃತ್ಯ ಎನ್ನುವ ಶಂಕೆ ಇದೆ. ಹೀಗಾಗಿ ಈ ಕಾಲೇಜಿಗೆ ಪರೀಕ್ಷಾ ಕೇಂದ್ರ ಮಾನ್ಯತೆ ನೀಡಬಾರದು” ಎಂದು ಡಿಸಿ ಸ್ಪಷ್ಟಪಡಿಸಿದ್ದಾರೆ.

ಈ ನಡುವೆ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಧಾರ್ಮಿಕ ಸ್ವಾತಂತ್ರ್ಯದ ಉಲ್ಲಂಘನೆ ಎಂದು ಆಕ್ರೋಶ ವ್ಯಕ್ತಪಡಿಸಿ, ಕಾಲೇಜಿನ ಪರವಾನಗಿ ರದ್ದುಪಡಿಸಿ 25 ಲಕ್ಷ ರೂ. ದಂಡ ವಿಧಿಸುವಂತೆ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದೆ.

ನಗುತ್ತಾ ಮಾತಾಡುತ್ತಿದ್ದ ಟೆಕ್ಕಿ ಯುವತಿಗೆ ಬ್ರೈನ್ ಸ್ಟ್ರೋಕ್: ಚಿಕಿತ್ಸೆ ಫಲಿಸದೇ ಸಾವು..!

ಬೆಂಗಳೂರು: ತಾಯಿ ಜೊತೆ ನಗುತ್ತಾ ಮಾತನಾಡುತ್ತಿದ್ದಾಗಲೇ ಏಕಾಏಕಿ ಬ್ರೈನ್ ಸ್ಟ್ರೋಕ್‌ಗೆ ಒಳಗಾಗಿ ಚಿಕಿತ್ಸೆ ಫಲಕಾರಿಯಾಗದೆ ಟೆಕ್ಕಿ ಯುವತಿ ಸಾವನ್ನಪ್ಪಿದ ದುರ್ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಹಾಸನ ಜಿಲ್ಲೆಯ ಶ್ವೇತಾ (25) ಮೃತಳಾಗಿದ್ದು, ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಳು. ಏಪ್ರಿಲ್ 25ರಂದು ಕೆಲಸ ಮುಗಿಸಿ ಮನೆಗೆ ಬಂದ ಶ್ವೇತಾ ತಾಯಿಯೊಂದಿಗೆ ಮಾತನಾಡುತ್ತಿರುವ ವೇಳೆ ಏಕಾಏಕಿ ಕುಸಿದು ಬಿದ್ದಿದ್ದು, ಮಾತನಾಡಲಾರದ ಸ್ಥಿತಿಗೆ ತಲುಪಿದ್ದಳು. ತಕ್ಷಣವೇ ಬೆಂಗಳೂರಿಗೆ ಚಿಕಿತ್ಸೆಗೆ ಕರೆತರಲಾಗುತ್ತಿದ್ದಾಗಲೇ ಆಕೆ ಕೋಮಾಗೆ ಜಾರಿದ್ದಳು.

ವೈದ್ಯಕೀಯ ಪರೀಕ್ಷೆಯಲ್ಲಿ ಶ್ವೇತಾಳಿಗೆ ಬ್ರೈನ್ ಸ್ಟ್ರೋಕ್ ಆಗಿರುವುದು ದೃಢಪಟ್ಟಿದ್ದು, ಆಕೆಯ ಸ್ಥಿತಿ ಗಂಭೀರವಾಗಿತ್ತು. ದುಃಖದ ನಡುವೆಯೇ ಪೋಷಕರು ಅಂಗಾಂಗ ದಾನ ಮಾಡಲು ನಿರ್ಧರಿಸಿದ್ದರು.

ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ ಶ್ವೇತಾ ಮೃತಪಟ್ಟಿದ್ದು, ಅಂಗಾಂಗ ದಾನ ಪ್ರಕ್ರಿಯೆ ಸಾಧ್ಯವಾಗಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಏಕೈಕ ಪುತ್ರಿಯನ್ನು ಕಳೆದುಕೊಂಡ ಕುಟುಂಬ ದುಃಖದಲ್ಲಿ ಮುಳುಗಿದೆ.

ಸದ್ಯ ಶ್ವೇತಾಳ ಮೃತದೇಹವನ್ನು ಹಾಸನಕ್ಕೆ ರವಾನಿಸಲಾಗಿದೆ. ಇತ್ತೀಚೆಗೆ ಹಾಸನ ಜಿಲ್ಲೆಯಲ್ಲಿ ಯುವಜನರಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಆತಂಕ ವ್ಯಕ್ತವಾಗಿದ್ದರೆ, ಯಾವುದೇ ಪೂರ್ವ ಲಕ್ಷಣಗಳಿಲ್ಲದೇ ಆರೋಗ್ಯವಾಗಿದ್ದ ಯುವತಿ ಬ್ರೈನ್ ಸ್ಟ್ರೋಕ್‌ನಿಂದ ಸಾವನ್ನಪ್ಪಿರುವುದು ಮತ್ತಷ್ಟು ಚಿಂತೆಗೆ ಕಾರಣವಾಗಿದೆ.

ರಾಹುಲ್ ಗಾಂಧಿ ನಡೆ ಬಿಜೆಪಿಗೆ ಅನುಕೂಲ: ‘ಪಪ್ಪು’ ಹೇಳಿಕೆಯಲ್ಲಿ ತಪ್ಪಿಲ್ಲ – ಕುನಾಲ್ ಘೋಷ್

0

ಕೋಲ್ಕತ್ತಾ: ವಿಧಾನಸಭಾ ಚುನಾವಣೆಯ ಸನ್ನಾಹಗಳು ಜೋರಾಗುತ್ತಿದ್ದಂತೆ ಪಶ್ಚಿಮ ಬಂಗಾಳದಲ್ಲಿ ರಾಜಕೀಯ ವಾತಾವರಣ ತೀವ್ರಗೊಂಡಿದ್ದು, ನಾಯಕರ ನಡುವಿನ ವಾಕ್ಸಮರ ತಾರಕಕ್ಕೇರಿದೆ. ಈ ನಡುವೆ ಟಿಎಂಸಿ ಹಿರಿಯ ನಾಯಕ ಕುನಾಲ್ ಘೋಷ್ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ.

ಕೋಲ್ಕತ್ತಾದಲ್ಲಿ ಚುನಾವಣಾ ಪ್ರಚಾರದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಕುನಾಲ್ ಘೋಷ್, ರಾಹುಲ್ ಗಾಂಧಿ ಅವರ ನಾಯಕತ್ವ ಸಾಮರ್ಥ್ಯವನ್ನು ಪ್ರಶ್ನಿಸಿದರು. ಮಹಾರಾಷ್ಟ್ರ, ದೆಹಲಿ, ಹರಿಯಾಣ ಮತ್ತು ಬಿಹಾರ ಸೇರಿದಂತೆ ಪ್ರಮುಖ ರಾಜ್ಯಗಳಲ್ಲಿ ಬಿಜೆಪಿಯ ವಿಸ್ತರಣೆಯನ್ನು ತಡೆಯುವಲ್ಲಿ ಅವರು ವಿಫಲರಾಗಿದ್ದಾರೆ ಎಂದು ಟೀಕಿಸಿದರು.

ತಮ್ಮ ರಾಜಕೀಯ ಜವಾಬ್ದಾರಿಯಿಂದ ಹಿಂದೆ ಸರಿದ ರಾಹುಲ್ ಗಾಂಧಿ ಈಗ ಪಶ್ಚಿಮ ಬಂಗಾಳಕ್ಕೆ ಬಂದು ಬಿಜೆಪಿಗೆ ಅನುಕೂಲವಾಗುವಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ಘೋಷ್ ಆರೋಪಿಸಿದರು.

ಇದಲ್ಲದೆ, ಟಿಎಂಸಿ ಬಲವಾಗಿರುವ ಕ್ಷೇತ್ರಗಳಿಗೆ ರಾಹುಲ್ ಗಾಂಧಿ ಭೇಟಿ ನೀಡುತ್ತಿರುವುದರ ಹಿಂದೆ ಸಂಚು ಇದೆ ಎಂದು ಅವರು ಹೇಳಿದರು. ಪಶ್ಚಿಮ ಬಂಗಾಳದಲ್ಲಿ ಅವರ ಪ್ರವೇಶವು ವಿರೋಧ ಪಕ್ಷಗಳ ಮತಗಳನ್ನು ವಿಭಜಿಸಲು ಕಾರಣವಾಗುತ್ತಿದ್ದು, ಇದರಿಂದ ಬಿಜೆಪಿಗೆ ನೇರ ಲಾಭವಾಗುತ್ತಿದೆ ಎಂದು ಘೋಷ್ ಆರೋಪಿಸಿದರು.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭದ್ರತಾ ಲೋಪ: 240ಕ್ಕೂ ಹೆಚ್ಚು CCTV ಕೇಬಲ್ ಕಟ್, ಸಿಬ್ಬಂದಿ ಬಂಧನ

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಟೈಟನ್ಸ್ ನಡುವಿನ ಪಂದ್ಯದ ವೇಳೆ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 240ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾ ಕೇಬಲ್‌ಗಳು ಕಟ್ ಆಗಿರುವುದು ಭದ್ರತಾ ವಲಯದಲ್ಲಿ ಭಾರೀ ಆತಂಕ ಹುಟ್ಟಿಸಿತ್ತು.

ಪ್ರಾರಂಭದಲ್ಲಿ ಇದು ವಿಧ್ವಂಸಕ ಕೃತ್ಯವಾಗಿರಬಹುದು ಎಂಬ ಅನುಮಾನದಲ್ಲಿ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆ ತನಿಖೆ ಆರಂಭಿಸಿತ್ತು. ಆದರೆ ವಿಚಾರಣೆಯಲ್ಲಿ ಅಚ್ಚರಿಯ ಕಾರಣ ಬಹಿರಂಗವಾಗಿದೆ.

ಕ್ರೀಡಾಂಗಣದ ಸಿಸಿಟಿವಿ ನಿರ್ವಹಣೆಯನ್ನು ನೋಡುತ್ತಿದ್ದ IVS ಡಿಜಿಟಲ್ ಸೊಲ್ಯೂಷನ್ ಸಂಸ್ಥೆಯ ಸಬ್-ಕಾಂಟ್ರಾಕ್ಟ್ ಸಿಬ್ಬಂದಿಗಳಾದ ಮಂಜುನಾಥ್ ಮತ್ತು ಅಬ್ದುಲ್ ಕಲಾಂ ಈ ಕೃತ್ಯ ಎಸಗಿರುವುದು ಪತ್ತೆಯಾಗಿದೆ. ಸಂಬಳ ಬಾಕಿ ಇಟ್ಟಿದ್ದಕ್ಕೆ ಕೋಪಗೊಂಡ ಇಬ್ಬರೂ ಸಂಸ್ಥೆಗೆ ‘ಪಾಠ ಕಲಿಸಲು’ ಉದ್ದೇಶಪೂರ್ವಕವಾಗಿ ಕೇಬಲ್ ಕತ್ತರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪಂದ್ಯದ ದಿನವೇ ಪ್ರಮುಖ ಕೇಬಲ್‌ಗಳನ್ನು ಯಾರಿಗೂ ಅನುಮಾನ ಬಾರದಂತೆ ಕತ್ತರಿಸಲಾಗಿದ್ದು, ಸಂಜೆ ವೇಳೆಗೆ ಸಿಸಿಟಿವಿ ಫೀಡ್ ಸಂಪೂರ್ಣ ಸ್ಥಗಿತಗೊಂಡಿತ್ತು. ಈ ಬೆಳವಣಿಗೆ ಪೊಲೀಸರನ್ನೂ ಭದ್ರತಾ ಸಿಬ್ಬಂದಿಯನ್ನೂ ಕೆಲಕಾಲ ಕಂಗಾಲು ಮಾಡಿತ್ತು.

AQI ಅಲರ್ಟ್: ಕರ್ನಾಟಕದ ಹಲವೆಡೆ ಗಾಳಿ ವಿಷಕಾರಿ! ಮಂಗಳೂರು-ಬಳ್ಳಾರಿ ಪರಿಸ್ಥಿತಿ ಗಂಭೀರ, ಬೆಂಗಳೂರೂ ರಿಸ್ಕ್ ಝೋನ್

0

ಮಂಗಳೂರು: ಕರ್ನಾಟಕ ರಾಜ್ಯದಲ್ಲಿ ವಾಯು ಮಾಲಿನ್ಯ ಮತ್ತೆ ಹೆಚ್ಚುತ್ತಿದ್ದು, ಹಲವು ನಗರಗಳಲ್ಲಿ AQI ಮಟ್ಟ ಆರೋಗ್ಯಕ್ಕೆ ಅಪಾಯಕಾರಿಯಾಗಿ ಏರಿಕೆಯಾಗಿದೆ. ಬಳ್ಳಾರಿಯಲ್ಲಿ AQI 158 ತಲುಪಿದ್ದು ‘ಅನಾರೋಗ್ಯಕರ’ ಹಂತದಲ್ಲಿದೆ. ಮಂಗಳೂರು ಮತ್ತು ಉಡುಪಿ ನಗರಗಳಲ್ಲೂ 100ಕ್ಕಿಂತ ಹೆಚ್ಚು AQI ದಾಖಲಾಗಿದ್ದು, ಪರಿಸ್ಥಿತಿ ಗಂಭೀರವಾಗಿದೆ.

ಬೆಂಗಳೂರುಯಲ್ಲಿ AQI 131 ಇದ್ದರೂ, ಇದು ‘ಕಳಪೆ’ ಮಟ್ಟದಲ್ಲೇ ಉಳಿದಿದ್ದು, ಜನರ ಆರೋಗ್ಯಕ್ಕೆ ಹಾನಿಕರವಾಗಿದೆ. ತಜ್ಞರು ವಿಶೇಷವಾಗಿ ಮಕ್ಕಳಿಗೆ, ವೃದ್ಧರಿಗೆ ಮತ್ತು ಉಸಿರಾಟ ಸಮಸ್ಯೆ ಇರುವವರಿಗೆ ಎಚ್ಚರಿಕೆ ನೀಡಿದ್ದಾರೆ.

ಇಂದಿನ AQI ಸ್ಥಿತಿ:
• ಮೈಸೂರು – 121
• ಶಿವಮೊಗ್ಗ – 126
• ಬೆಳಗಾವಿ – 78 (ಮಧ್ಯಮ)
• ಹುಬ್ಬಳ್ಳಿ – 94
• ವಿಜಯಪುರ – 93

AQI ಅರ್ಥ:
0-50 (ಉತ್ತಮ) | 50-100 (ಮಧ್ಯಮ) | 100-150 (ಕಳಪೆ) | 150-200 (ಅನಾರೋಗ್ಯಕರ) | 200+ (ಗಂಭೀರ)

ಮುಂದಿನ ದಿನಗಳಲ್ಲಿ ಮಳೆಯ ಕೊರತೆ ಮುಂದುವರಿದರೆ, ಗಾಳಿಯ ಗುಣಮಟ್ಟ ಇನ್ನಷ್ಟು ಹದಗೆಡುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

ರಾಜ್ಯದ ಎಲ್ಲಾ ಶಾಲೆಗಳಲ್ಲಿ ಪತ್ರಿಕೆ ಓದುವುದು ಕಡ್ಡಾಯ: ಮಕ್ಕಳ ಜ್ಞಾನ ವೃದ್ಧಿಗೆ ಶಿಕ್ಷಣ ಇಲಾಖೆಯ ಹೊಸ ಆದೇಶ

ಬೆಂಗಳೂರು: ವಿದ್ಯಾರ್ಥಿಗಳಲ್ಲಿ ಸಾಮಾನ್ಯ ಜ್ಞಾನ ವೃದ್ಧಿ ಮತ್ತು ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಅರಿವು ಹೆಚ್ಚಿಸುವ ಉದ್ದೇಶದಿಂದ ರಾಜ್ಯದ ಎಲ್ಲಾ ಶಾಲೆಗಳಲ್ಲಿ ದಿನಪತ್ರಿಕೆ ಓದುವುದನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಕಡ್ಡಾಯಗೊಳಿಸಿದೆ. ಈ ಕುರಿತು ಅಧಿಕೃತ ಸುತ್ತೋಲೆ ಹೊರಡಿಸಲಾಗಿದೆ.

ಸುತ್ತೋಲೆಯ ಪ್ರಕಾರ, ಪ್ರಾರ್ಥನೆ ಮುಗಿದ ತಕ್ಷಣ ಪ್ರತಿದಿನ 10 ರಿಂದ 15 ನಿಮಿಷಗಳ ಕಾಲ ಪತ್ರಿಕೆ ಓದಿಸುವುದು ಕಡ್ಡಾಯವಾಗಿದ್ದು, ಈ ನಿಯಮವು ಸರ್ಕಾರಿ, ಅನುದಾನಿತ, ಖಾಸಗಿ ಹಾಗೂ ವಸತಿ ಶಾಲೆಗಳು ಸೇರಿದಂತೆ ರಾಜ್ಯದ ಎಲ್ಲ ಶಾಲೆಗಳಿಗೂ ಅನ್ವಯವಾಗುತ್ತದೆ.

ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಮನವಿಗೆ ಸ್ಪಂದಿಸಿದ ಶಿಕ್ಷಣ ಇಲಾಖೆ ಈ ನಿರ್ಧಾರ ಕೈಗೊಂಡಿದೆ. ಈಗಾಗಲೇ ಕೆಲವು ಶಾಲೆಗಳಲ್ಲಿ ಪ್ರಾರ್ಥನೆ ವೇಳೆ ಪತ್ರಿಕೆ ಓದುವ ಪದ್ಧತಿ ಇದ್ದರೂ, ಇನ್ನು ಮುಂದೆ ಪ್ರಾರ್ಥನೆಯ ನಂತರ ಪ್ರತ್ಯೇಕವಾಗಿ 10–15 ನಿಮಿಷಗಳನ್ನು ದಿನಪತ್ರಿಕೆ ಓದುವುದಕ್ಕಾಗಿಯೇ ಮೀಸಲಿಡಬೇಕು ಎಂದು ಸುತ್ತೋಲೆಯಲ್ಲಿ ಸ್ಪಷ್ಟಪಡಿಸಲಾಗಿದೆ.

ಈ ಕ್ರಮದಿಂದ ವಿದ್ಯಾರ್ಥಿಗಳಲ್ಲಿ ಓದುವ ಹವ್ಯಾಸ ಬೆಳೆಸುವ ಜೊತೆಗೆ ಮೊಬೈಲ್‌ಗಳ ಅತಿಯಾದ ಬಳಕೆಯನ್ನು ಕಡಿಮೆ ಮಾಡಲು ಸಹಕಾರಿಯಾಗಲಿದೆ. ಜೊತೆಗೆ ಪ್ರಸ್ತುತ ವಿದ್ಯಮಾನಗಳ ಬಗ್ಗೆ ಅರಿವು ಮೂಡಿಸಿ, ಭವಿಷ್ಯದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವಲ್ಲಿ ಈ ನಿರ್ಧಾರ ನೆರವಾಗಲಿದೆ ಎಂದು ಇಲಾಖೆ ನಿರೀಕ್ಷಿಸಿದೆ.

error: Content is protected !!