Home Blog

ಮೂವರು ರೌಡಿಶೀಟರ್‌ಗಳಿಗೆ ಗಡಿಪಾರು: ಎಸ್ಪಿ ರೋಹನ್ ಜಗದೀಶ್ ಖಡಕ್ ಸಂದೇಶ

ಗದಗ: ಜಿಲ್ಲೆಯಲ್ಲಿನ ರೌಡಿಶೀಟರ್‌ಗಳು ಹಾಗೂ ಸಮಾಜ ವಿರೋಧಿ ಶಕ್ತಿಗಳ ವಿರುದ್ಧ ಗದಗ ಜಿಲ್ಲಾ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ನಿರಂತರ ಅಪರಾಧ ಚಟುವಟಿಕೆಗಳಲ್ಲಿ ತೊಡಗಿದ್ದ ಮೂವರು ಕುಖ್ಯಾತ ಆರೋಪಿಗಳನ್ನು ಜಿಲ್ಲೆಯಿಂದ ಗಡಿಪಾರು ಮಾಡಿ ಆದೇಶ ಹೊರಡಿಸಿದ್ದಾರೆ.

ಸಾರ್ವಜನಿಕರಲ್ಲಿ ಭೀತಿ ಹುಟ್ಟಿಸಿ, ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟುಮಾಡುತ್ತಿದ್ದ ಹಿನ್ನೆಲೆಯಲ್ಲಿ ಈ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಗಡಿಪಾರುಗೊಂಡವರನ್ನು ಮೈನುದ್ದೀನ್, ಫಕ್ರುಸಾಬ್ ಹಾಗೂ ಹಾಲಪ್ಪ ಎಂದು ಗುರುತಿಸಲಾಗಿದೆ. ಇವರ ವಿರುದ್ಧ ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ಹಲವು ಗಂಭೀರ ಪ್ರಕರಣಗಳು ದಾಖಲಾಗಿರುವುದು ಪೊಲೀಸ್ ದಾಖಲೆಗಳಿಂದ ಬಹಿರಂಗವಾಗಿದೆ.

ರೌಡಿಗಳ ಅಟ್ಟಹಾಸಕ್ಕೆ ಬ್ರೇಕ್

ಪೊಲೀಸ್ ಇಲಾಖೆಯ ಮಾಹಿತಿ ಪ್ರಕಾರ, ಆರೋಪಿಗಳು ಕೊಲೆ ಯತ್ನ, ಗಲಭೆ, ಸಾರ್ವಜನಿಕ ಆಸ್ತಿ ಹಾನಿ, ಜೀವ ಬೆದರಿಕೆ, ದರೋಡೆ ಸೇರಿದಂತೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದರು. ಅನೇಕ ಬಾರಿ ಪ್ರಕರಣ ದಾಖಲಾಗಿದ್ದರೂ ತಮ್ಮ ಚಟುವಟಿಕೆಗಳನ್ನು ನಿಲ್ಲಿಸದೇ ಪುನಃ ಅಪರಾಧ ಕೃತ್ಯಗಳಲ್ಲಿ ತೊಡಗುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಈ ಹಿನ್ನೆಲೆ ಸಮಾಜದ ಶಾಂತಿ ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ ಗಡಿಪಾರು ಕ್ರಮ ಜಾರಿಗೊಳಿಸಲಾಗಿದೆ.

ಮೈನುದ್ದೀನ್ ವಿರುದ್ಧ 5 ಗಂಭೀರ ಪ್ರಕರಣಗಳು

ಮೈನುದ್ದೀನ್ ವಿರುದ್ಧ 2017ರಿಂದ 2026ರವರೆಗೆ ಒಟ್ಟು 5 ಪ್ರಕರಣಗಳು ದಾಖಲಾಗಿವೆ. ಗಲಭೆ, ಕೊಲೆ ಯತ್ನ, ದರೋಡೆ, ಸಾರ್ವಜನಿಕ ಆಸ್ತಿ ಹಾನಿ ಹಾಗೂ ಜೀವ ಬೆದರಿಕೆ ಪ್ರಕರಣಗಳಲ್ಲಿ ಈತನ ಹೆಸರು ಕೇಳಿ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಫಕ್ರುಸಾಬ್ ವಿರುದ್ಧ 10 ಪ್ರಕರಣಗಳು!

ಫಕ್ರುಸಾಬ್ ವಿರುದ್ಧ 2017ರಿಂದ 2025ರವರೆಗೆ ಒಟ್ಟು 10 ಪ್ರಕರಣಗಳು ದಾಖಲಾಗಿವೆ. ಗಲಭೆ, ಹಲ್ಲೆ, ಕೊಲೆ ಯತ್ನ ಹಾಗೂ ಸಮಾಜದ ಶಾಂತಿ ಭಂಗಪಡಿಸುವ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಆರೋಪಗಳಿವೆ. ಹಲವು ಬಾರಿ ಎಚ್ಚರಿಕೆ ನೀಡಿದರೂ ವರ್ತನೆ ಬದಲಾಗದ ಹಿನ್ನೆಲೆ ಪೊಲೀಸರು ಗಡಿಪಾರು ಅಸ್ತ್ರ ಪ್ರಯೋಗಿಸಿದ್ದಾರೆ.

ಹಾಲಪ್ಪ ವಿರುದ್ಧ 12 ಪ್ರಕರಣಗಳ ಪಟ್ಟಿ!

ಹಾಲಪ್ಪ ವಿರುದ್ಧ ಅತ್ಯಧಿಕವಾಗಿ 12 ಪ್ರಕರಣಗಳು ದಾಖಲಾಗಿವೆ. ಗಲಭೆ, ಬೆದರಿಕೆ, ಸಾರ್ವಜನಿಕ ಆಸ್ತಿ ಹಾನಿ ಸೇರಿದಂತೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಗಳಿವೆ. 2017ರಿಂದ 2025ರವರೆಗೆ ನಿರಂತರವಾಗಿ ಪ್ರಕರಣಗಳು ದಾಖಲಾಗಿರುವುದರಿಂದ ಈತನ ವಿರುದ್ಧವೂ ಕಠಿಣ ಕ್ರಮ ಜಾರಿಯಾಗಿದೆ.

ಅಪರಾಧಿಗಳಿಗೆ ಜಿಲ್ಲೆಯಲ್ಲಿ ಜಾಗ” – ಎಸ್ಪಿ ರೋಹನ್ ಜಗದೀಶ್

ಜಿಲ್ಲೆಯಲ್ಲಿ ಸಮಾಜ ವಿರೋಧಿ ಚಟುವಟಿಕೆಗಳಿಗೆ ಯಾವುದೇ ಅವಕಾಶ ನೀಡುವುದಿಲ್ಲ. ಸಾರ್ವಜನಿಕ ಶಾಂತಿ ಕದಡುವವರ ವಿರುದ್ಧ ಮುಂದೆಯೂ ಗಡಿಪಾರು ಸೇರಿದಂತೆ ಕಠಿಣ ಕಾನೂನು ಕ್ರಮ ಮುಂದುವರಿಯಲಿದೆ” ಎಂದು ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ರೋಹನ್ ಜಗದೀಶ್ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಹೆಂಡತಿಯ ಈ ನಡವಳಿಕೆಗಳು ದಾಂಪತ್ಯ ಜೀವನಕ್ಕೆ ಮುಳುವಾಗಬಹುದು!

ಗಂಡ-ಹೆಂಡತಿ ಸಂಬಂಧವು ಪ್ರೀತಿ, ನಂಬಿಕೆ ಮತ್ತು ಪರಸ್ಪರ ಗೌರವದ ಮೇಲೆ ನಿಂತಿರುವ ಪವಿತ್ರ ಬಾಂಧವ್ಯವಾಗಿದೆ.

ಆದರೆ ಕೆಲವು ನಡವಳಿಕೆಗಳು ಮತ್ತು ತಪ್ಪು ತಿಳುವಳಿಕೆಗಳು ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿಸಿ ಸಂಬಂಧದ ಮಧುರತೆಯನ್ನು ಹಾಳು ಮಾಡಬಹುದು ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.

ದಾಂಪತ್ಯ ಜೀವನ ಸುಗಮವಾಗಿ ಸಾಗಬೇಕಾದರೆ ಇಬ್ಬರೂ ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳುವುದು ಹಾಗೂ ಪರಸ್ಪರ ಭಾವನೆಗಳಿಗೆ ಗೌರವ ನೀಡುವುದು ಅಗತ್ಯ. ಅದರಲ್ಲೂ ಕೆಲವು ಅಭ್ಯಾಸಗಳು ಸಂಬಂಧದಲ್ಲಿ ಅನಗತ್ಯ ಒತ್ತಡ ಮತ್ತು ಮನಸ್ತಾಪಗಳಿಗೆ ಕಾರಣವಾಗಬಹುದು ಎನ್ನಲಾಗುತ್ತಿದೆ.

ಅನುಮಾನ ಸಂಬಂಧಕ್ಕೆ ಮಾರಕ:

ಪ್ರತಿಯೊಂದು ಸಣ್ಣ ವಿಚಾರಕ್ಕೂ ಸಂಗಾತಿಯ ಮೇಲೆ ಅನುಮಾನ ವ್ಯಕ್ತಪಡಿಸುವುದು ಸಂಬಂಧದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ನಿರಂತರ ಅನುಮಾನದಿಂದ ಪರಸ್ಪರ ನಂಬಿಕೆ ಕುಗ್ಗಿ, ಗಂಡ-ಹೆಂಡತಿ ನಡುವಿನ ಅಂತರ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಕುಟುಂಬ ಸಲಹೆಗಾರರು ಹೇಳುತ್ತಾರೆ.

ಇತರರೊಂದಿಗೆ ಹೋಲಿಕೆ ಬೇಡ:

ಕೆಲವರು ತಮ್ಮ ಸಂಗಾತಿಯನ್ನು ಇತರರೊಂದಿಗೆ ಹೋಲಿಸುವ ಅಭ್ಯಾಸ ಹೊಂದಿರುತ್ತಾರೆ. “ಅವರು ಹೀಗೆ ಮಾಡುತ್ತಾರೆ, ನೀವು ಯಾಕೆ ಮಾಡುವುದಿಲ್ಲ” ಎಂಬ ಮಾತುಗಳು ಸಂಬಂಧದಲ್ಲಿ ಅಸಮಾಧಾನ ಮೂಡಿಸಬಹುದು. ಇಂತಹ ಹೋಲಿಕೆಗಳು ಆತ್ಮವಿಶ್ವಾಸಕ್ಕೆ ಧಕ್ಕೆ ತರುವುದರ ಜೊತೆಗೆ ದಾಂಪತ್ಯದಲ್ಲಿ ಭಿನ್ನಾಭಿಪ್ರಾಯ ಹೆಚ್ಚಿಸಬಹುದು ಎಂದು ತಜ್ಞರು ಎಚ್ಚರಿಸುತ್ತಾರೆ.

ಅತಿಯಾದ ನಿರೀಕ್ಷೆ ಒತ್ತಡಕ್ಕೆ ಕಾರಣ:

ಆರ್ಥಿಕ ಸಾಮರ್ಥ್ಯವನ್ನು ಪರಿಗಣಿಸದೆ ಅತಿಯಾದ ಬೇಡಿಕೆಗಳು ಅಥವಾ ನಿರೀಕ್ಷೆಗಳನ್ನು ಇಡುವುದು ಕುಟುಂಬದಲ್ಲಿ ಹಣಕಾಸಿನ ಒತ್ತಡವನ್ನು ಹೆಚ್ಚಿಸಬಹುದು. ಇದು ದಾಂಪತ್ಯ ಜೀವನದಲ್ಲಿ ಅನಗತ್ಯ ಜಗಳಗಳಿಗೆ ಕಾರಣವಾಗುವ ಸಾಧ್ಯತೆ ಇದೆ.

ಸಣ್ಣ ವಿಚಾರಕ್ಕೂ ಜಗಳ ಬೇಡ;

ಸಣ್ಣಪುಟ್ಟ ವಿಷಯಗಳನ್ನು ದೊಡ್ಡದಾಗಿ ಪರಿಗಣಿಸಿ ಪದೇ ಪದೇ ಜಗಳವಾಡುವುದು ಅಥವಾ ಸಂಗಾತಿಯೊಂದಿಗೆ ಕಠಿಣವಾಗಿ ವರ್ತಿಸುವುದು ಸಂಬಂಧದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಕೆಲಸದ ಒತ್ತಡದಿಂದ ಮನೆಗೆ ಬರುವ ಸಂಗಾತಿಗೆ ಸಹಾನುಭೂತಿ ಮತ್ತು ಪ್ರೀತಿಯಿಂದ ವರ್ತಿಸುವುದು ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ ಎಂದು ತಜ್ಞರು ಸಲಹೆ ನೀಡಿದ್ದಾರೆ.

ಒಟ್ಟಾರೆ, ಪರಸ್ಪರ ನಂಬಿಕೆ, ಗೌರವ ಮತ್ತು ಸಂವಹನವೇ ಯಶಸ್ವಿ ದಾಂಪತ್ಯ ಜೀವನದ ಮೂಲಾಧಾರಗಳಾಗಿದ್ದು, ಇವುಗಳನ್ನು ಕಾಪಾಡಿಕೊಂಡರೆ ಸಂಬಂಧ ದೀರ್ಘಕಾಲ ಸುಂದರವಾಗಿ ಉಳಿಯುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಬಂಗಾಳಕೊಲ್ಲಿಯಲ್ಲಿ 4.6 ತೀವ್ರತೆಯ ಭೂಕಂಪ; 10 ಕಿ.ಮೀ ಆಳದಲ್ಲಿ ನಡುಗಿದ ಭೂಮಿ

ನವದೆಹಲಿ: ಬಂಗಾಳಕೊಲ್ಲಿಯಲ್ಲಿ ಮಂಗಳವಾರ ಬೆಳಗ್ಗೆ 4.6 ತೀವ್ರತೆಯ ಭೂಕಂಪ ಸಂಭವಿಸಿದ್ದು, ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (NCS) ಈ ಕುರಿತು ಮಾಹಿತಿ ನೀಡಿದೆ. ಭೂಕಂಪವು ಜೂನ್ 2ರಂದು ಬೆಳಗ್ಗೆ 7:43ರ ಸುಮಾರಿಗೆ 10 ಕಿಲೋಮೀಟರ್ ಆಳದಲ್ಲಿ ಸಂಭವಿಸಿದೆ ಎಂದು ಕೇಂದ್ರ ತಿಳಿಸಿದೆ.

ಎನ್‌ಸಿಎಸ್ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಭೂಕಂಪದ ಕೇಂದ್ರಬಿಂದು 14.027 ಉತ್ತರ ಅಕ್ಷಾಂಶ ಹಾಗೂ 93.132 ಪೂರ್ವ ರೇಖಾಂಶದಲ್ಲಿ ದಾಖಲಾಗಿದೆ. ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಎನ್‌ಸಿಎಸ್, ರಿಕ್ಟರ್ ಮಾಪಕದಲ್ಲಿ 4.6 ತೀವ್ರತೆಯ ಭೂಕಂಪ ದಾಖಲಾಗಿದ್ದು, ಅದರ ಕೇಂದ್ರ ಬಂಗಾಳಕೊಲ್ಲಿಯ ಪ್ರದೇಶದಲ್ಲಿದೆ ಎಂದು ತಿಳಿಸಿದೆ.

ಸದ್ಯಕ್ಕೆ ಭೂಕಂಪದಿಂದ ಯಾವುದೇ ಜೀವಹಾನಿ ಅಥವಾ ಆಸ್ತಿಪಾಸ್ತಿ ನಷ್ಟ ಸಂಭವಿಸಿರುವ ಬಗ್ಗೆ ವರದಿಯಾಗಿಲ್ಲ. ಆದಾಗ್ಯೂ, ಸಂಬಂಧಿತ ಇಲಾಖೆಗಳು ಪರಿಸ್ಥಿತಿಯ ಮೇಲೆ ನಿಗಾ ವಹಿಸಿವೆ.

ಇದಕ್ಕೂ ಮುನ್ನ ಫೆಬ್ರವರಿ 11ರಂದು ಬಂಗಾಳಕೊಲ್ಲಿಯಲ್ಲಿ 4.3 ತೀವ್ರತೆಯ ಭೂಕಂಪ ಸಂಭವಿಸಿತ್ತು. ಬೆಳಗ್ಗೆ 5:12ರ ವೇಳೆಗೆ ಸಂಭವಿಸಿದ್ದ ಆ ಭೂಕಂಪವೂ 10 ಕಿಲೋಮೀಟರ್ ಆಳದಲ್ಲಿ ದಾಖಲಾಗಿದ್ದು, ಅದರ ಕೇಂದ್ರಬಿಂದು 14.94 ಉತ್ತರ ಅಕ್ಷಾಂಶ ಮತ್ತು 90.18 ಪೂರ್ವ ರೇಖಾಂಶದಲ್ಲಿತ್ತು ಎಂದು ಎನ್‌ಸಿಎಸ್ ತಿಳಿಸಿತ್ತು.

ಭೂಕಂಪಗಳ ಆಳವನ್ನು ಹೇಗೆ ವರ್ಗೀಕರಿಸಲಾಗುತ್ತದೆ?

ಭೂಮಿಯ ಮೇಲ್ಮೈಯಿಂದ ಸುಮಾರು 700 ಕಿಲೋಮೀಟರ್ ಆಳದವರೆಗೂ ಭೂಕಂಪಗಳು ಸಂಭವಿಸಬಹುದು. ಅಮೆರಿಕದ ಭೂವೈಜ್ಞಾನಿಕ ಸಮೀಕ್ಷೆ (USGS) ಪ್ರಕಾರ, ಭೂಕಂಪಗಳನ್ನು ಅವುಗಳ ಆಳದ ಆಧಾರದ ಮೇಲೆ ಮೂರು ವಿಭಾಗಗಳಾಗಿ ವಿಂಗಡಿಸಲಾಗುತ್ತದೆ.

  • ಆಳವಿಲ್ಲದ ಭೂಕಂಪಗಳು: 0 ರಿಂದ 70 ಕಿ.ಮೀ ಆಳದವರೆಗೆ
  • ಮಧ್ಯಂತರ ಭೂಕಂಪಗಳು: 70 ರಿಂದ 300 ಕಿ.ಮೀ ಆಳದವರೆಗೆ
  • ಆಳವಾದ ಭೂಕಂಪಗಳು: 300 ರಿಂದ 700 ಕಿ.ಮೀ ಆಳದವರೆಗೆ

ಸಾಮಾನ್ಯವಾಗಿ 70 ಕಿಲೋಮೀಟರ್‌ಗಿಂತ ಹೆಚ್ಚಿನ ಆಳದಲ್ಲಿ ಸಂಭವಿಸುವ ಭೂಕಂಪಗಳನ್ನು ‘ಡೀಪ್-ಫೋಕಸ್’ ಭೂಕಂಪಗಳು ಎಂದು ಕರೆಯಲಾಗುತ್ತದೆ. ಈ ಬಾರಿ ಬಂಗಾಳಕೊಲ್ಲಿಯಲ್ಲಿ ಸಂಭವಿಸಿರುವ ಭೂಕಂಪವು ಕೇವಲ 10 ಕಿಲೋಮೀಟರ್ ಆಳದಲ್ಲಿ ದಾಖಲಾಗಿರುವುದರಿಂದ ಇದು ಆಳವಿಲ್ಲದ ಭೂಕಂಪಗಳ ವರ್ಗಕ್ಕೆ ಸೇರಿದೆ.

ಜೈಲಲ್ಲಿ ಮಾನಸಿಕವಾಗಿ ಕುಗ್ಗಿರುವ ದರ್ಶನ್ ಫೋಟೋ ವೈರಲ್! ದಾಸನ ಸ್ಥಿತಿ ಕಂಡು ಮರುಗಿನ ಫ್ಯಾನ್ಸ್!

0

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ಅವರ ಕುರಿತ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನಟನ ಸ್ಥಿತಿ ಕಂಡು ಅಭಿಮಾನಿಗಳು ಗಾಬರಿಗೊಂಡಿದ್ದಾರೆ.

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಬಂಧನದಲ್ಲಿರುವ ದರ್ಶನ್ ಅವರ ಆರೋಗ್ಯ ಮತ್ತು ಮಾನಸಿಕ ಸ್ಥಿತಿ ಕುರಿತು ವಿವಿಧ ರೀತಿಯ ಊಹಾಪೋಹಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಇದೇ ವೇಳೆ ವೈರಲ್ ಆಗಿರುವ ಫೋಟೋ ಕೂಡ ಸಾಕಷ್ಟು ಗಮನ ಸೆಳೆದಿದೆ.

ಇತ್ತೀಚೆಗೆ ಸುಪ್ರೀಂ ಕೋರ್ಟ್ 1 ವರ್ಷ ಜಾಮೀನು ತಿರಸ್ಕಾರ ಮಾಡಿರುವ ಹಿನ್ನೆಲೆ ದರ್ಶನ್ ಅವರು ಮಾನಸಿಕವಾಗಿ ಕುಗ್ಗಿದ್ದಾರೆ ಎಂಬ ಮಾತುಗಳು ಕೂಡ ಕೇಳಿಬರುತ್ತಿದೆ. ತಮ್ಮ ನೆಚ್ಚಿನ ನಾಯಕ ನಟನ ಇಂದಿನ ಪರಿಸ್ಥಿತಿ ಕಂಡು ಅಭಿಮಾನಿಗಳು ಆತಂಕ ಮತ್ತು ಭಾವುಕತೆಯನ್ನು ವ್ಯಕ್ತಪಡಿಸುತ್ತಿದ್ದಾರೆ.

ಆದರೆ, ದರ್ಶನ್ ಅವರ ಮಾನಸಿಕ ಸ್ಥಿತಿ ಅಥವಾ ಆರೋಗ್ಯದ ಬಗ್ಗೆ ಅಧಿಕೃತ ಮೂಲಗಳಿಂದ ಯಾವುದೇ ಮಾಹಿತಿ ಹೊರಬಿದ್ದಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದು Ai ಫೋಟೋ ಆಗಿರಬಹುದು ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇನ್ನೂ ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ಮುಂದುವರಿದಿದ್ದು, ಪ್ರಕರಣಕ್ಕೆ ಸಂಬಂಧಿಸಿದ ಕಾನೂನು ಪ್ರಕ್ರಿಯೆಗಳತ್ತ ಎಲ್ಲರ ಗಮನ ನೆಟ್ಟಿದೆ.

ಭ್ರೂಣದ ನರಮಂಡಲದಲ್ಲಿ ಗಂಭೀರ ದೋಷ: 32 ವಾರಗಳ ಗರ್ಭಪಾತಕ್ಕೆ ಹೈಕೋರ್ಟ್ ಅನುಮತಿ

ಬೆಂಗಳೂರು: ಮಹಿಳೆಯ ದೈಹಿಕ ಸ್ವಾಯತ್ತತೆ ಹಾಗೂ ಸಂತಾನೋತ್ಪತ್ತಿ ಹಕ್ಕುಗಳಿಗೆ ಮಹತ್ವ ನೀಡಿರುವ ಕರ್ನಾಟಕ ಹೈಕೋರ್ಟ್, ಗಂಭೀರ ನರಮಂಡಲದ (ನ್ಯೂರೋಲಾಜಿಕಲ್) ದೋಷಗಳಿಂದ ಬಳಲುತ್ತಿರುವ 32 ವಾರಗಳ ಭ್ರೂಣವನ್ನು ವೈದ್ಯಕೀಯವಾಗಿ ಗರ್ಭಪಾತ ಮಾಡಲು ಅನುಮತಿ ನೀಡಿದೆ. ವೈದ್ಯಕೀಯ ಮಂಡಳಿ ಸಲ್ಲಿಸಿದ್ದ ವರದಿಯ ಆಧಾರದ ಮೇಲೆ ನ್ಯಾಯಾಲಯ ಈ ಮಹತ್ವದ ಆದೇಶ ಹೊರಡಿಸಿದೆ.

ಮಹಿಳೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ನ್ಯಾಯಪೀಠ, ಪ್ರಕರಣದ ವೈದ್ಯಕೀಯ ಹಾಗೂ ಮಾನವೀಯ ಅಂಶಗಳನ್ನು ಪರಿಗಣಿಸಿ ಗರ್ಭಪಾತಕ್ಕೆ ಅನುಮೋದನೆ ನೀಡಿದೆ. ಆದೇಶದ ಸಂಪೂರ್ಣ ಪ್ರತಿ ಇನ್ನಷ್ಟೇ ಲಭ್ಯವಾಗಬೇಕಿದೆ.

ವಿಚಾರಣೆ ವೇಳೆ, ಭ್ರೂಣದಲ್ಲಿ ಪತ್ತೆಯಾಗಿರುವ ಗಂಭೀರ ನರಮಂಡಲದ ದೋಷಗಳಿಂದ ಮಗು ಜನಿಸಿದ ಬಳಿಕ ತೀವ್ರ ಆರೋಗ್ಯ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಇದೆ ಎಂದು ವೈದ್ಯಕೀಯ ಮಂಡಳಿ ವರದಿಯಲ್ಲಿ ಉಲ್ಲೇಖಿಸಲಾಗಿತ್ತು. ಇಂತಹ ಪರಿಸ್ಥಿತಿಯಲ್ಲಿ ಮಗುವಿನ ಜೀವನಪರ್ಯಂತದ ಸಂಕಷ್ಟ, ಪೋಷಕರು ಅನುಭವಿಸಬೇಕಾದ ಮಾನಸಿಕ ವೇದನೆ ಹಾಗೂ ಆರ್ಥಿಕ ಹೊರೆಗಳನ್ನು ಗಮನದಲ್ಲಿಟ್ಟುಕೊಂಡು ಗರ್ಭಪಾತಕ್ಕೆ ಅನುಮತಿ ನೀಡುವುದು ಸೂಕ್ತ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಸಾಮಾನ್ಯವಾಗಿ ವೈದ್ಯಕೀಯ ಗರ್ಭಪಾತಕ್ಕೆ 24 ವಾರಗಳವರೆಗೆ ಕಾನೂನು ಅವಕಾಶ ನೀಡುತ್ತದೆ. ಆದರೆ ಈ ಪ್ರಕರಣದಲ್ಲಿ ಗರ್ಭಧಾರಣೆಯ 32ನೇ ವಾರದಲ್ಲಿ ಮಾತ್ರ ಭ್ರೂಣದ ಗಂಭೀರ ದೋಷಗಳು ಪತ್ತೆಯಾಗಿದ್ದರಿಂದ ಮಹಿಳೆ ನ್ಯಾಯಾಲಯದ ಮೊರೆ ಹೋಗಬೇಕಾಯಿತು ಎಂದು ಪೀಠ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ.

ಅಂತಿಮವಾಗಿ ಅರ್ಜಿಯನ್ನು ಅಂಗೀಕರಿಸಿದ ನ್ಯಾಯಾಲಯ, ಅರ್ಜಿಯಲ್ಲಿ ಉಲ್ಲೇಖಿಸಲಾದ ಆಸ್ಪತ್ರೆಯಲ್ಲಿಯೇ ವೈದ್ಯಕೀಯ ಗರ್ಭಪಾತ ಪ್ರಕ್ರಿಯೆ ನಡೆಸಲು ಅನುಮತಿ ನೀಡಿದೆ. ಜೊತೆಗೆ ರಾಜ್ಯ ಸರ್ಕಾರ ಹಾಗೂ ಸಂಬಂಧಿತ ಆಸ್ಪತ್ರೆ ತಕ್ಷಣ ಆದೇಶವನ್ನು ಜಾರಿಗೊಳಿಸುವಂತೆ ನಿರ್ದೇಶನ ನೀಡಿದೆ.

ಪ್ರಕರಣದ ಹಿನ್ನೆಲೆ

ಪ್ರಕರಣದ ವಿವರಗಳ ಪ್ರಕಾರ, ಏಪ್ರಿಲ್ ತಿಂಗಳಲ್ಲಿ ನಡೆಸಲಾಗಿದ್ದ ಅಲ್ಟ್ರಾಸೌಂಡ್ ಪರೀಕ್ಷೆಯಲ್ಲಿ ಯಾವುದೇ ಅಸಹಜತೆ ಕಂಡುಬಂದಿರಲಿಲ್ಲ. ಆದರೆ ಮೇ ತಿಂಗಳಲ್ಲಿ ನಡೆದ ಸ್ಕ್ಯಾನಿಂಗ್ ವೇಳೆ ಭ್ರೂಣದಲ್ಲಿ ಗಂಭೀರ ನರಮಂಡಲದ ವೈಕಲ್ಯಗಳಿರುವುದು ವೈದ್ಯರಿಗೆ ಪತ್ತೆಯಾಗಿದೆ.

ಈ ಹಿನ್ನೆಲೆಯಲ್ಲಿ ಗರ್ಭಪಾತಕ್ಕೆ ಅನುಮತಿ ನೀಡುವಂತೆ ಮಹಿಳೆಯ ಕುಟುಂಬಸ್ಥರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ವಿಶೇಷ ವೈದ್ಯಕೀಯ ಮಂಡಳಿಯನ್ನು ರಚಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿ ಮಧ್ಯಂತರ ಆದೇಶ ನೀಡಿತ್ತು.

ನಂತರ ಮಂಡಳಿ ಸಲ್ಲಿಸಿದ ವರದಿಯಲ್ಲಿ, ಮಗು ಜನಿಸಿದರೆ ಗಂಭೀರ ನರಮಂಡಲದ ವೈಕಲ್ಯಗಳಿಂದ ಬಳಲುವ ಸಾಧ್ಯತೆ ಹೆಚ್ಚಿದ್ದು, ಜೀವಿತಾವಧಿಯವರೆಗೂ ನಿರಂತರ ವೈದ್ಯಕೀಯ ಆರೈಕೆಯ ಅಗತ್ಯ ಉಂಟಾಗಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಲಾಗಿತ್ತು.

ವಿಚಾರಣೆ ಸಂದರ್ಭದಲ್ಲಿ ಮಹಿಳೆಯ ಪತಿ ನ್ಯಾಯಾಲಯದ ಮುಂದೆ ಹಾಜರಾಗಿ, ವೈದ್ಯರ ಸಲಹೆ ಹಾಗೂ ವೈದ್ಯಕೀಯ ವರದಿಗಳ ಆಧಾರದ ಮೇಲೆಯೇ ಈ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದ್ದಾರೆ. ಭ್ರೂಣದ ಆರೋಗ್ಯ ವರದಿಗಳು ಸಾಮಾನ್ಯವಾಗಿದ್ದರೆ ಗರ್ಭಪಾತದ ಬಗ್ಗೆ ಯೋಚಿಸುವ ಪ್ರಶ್ನೆಯೇ ಉದ್ಭವಿಸುತ್ತಿರಲಿಲ್ಲ ಎಂದು ಅವರು ನ್ಯಾಯಪೀಠಕ್ಕೆ ವಿವರಿಸಿದ್ದಾರೆ.

ಝೋಜಿಲಾ ಸುರಂಗ ಕಾಮಗಾರಿಗೆ ಐತಿಹಾಸಿಕ ಮೈಲಿಗಲ್ಲು: ಜೂನ್ 9ಕ್ಕೆ ಉತ್ಖನನ ಪೂರ್ಣ

ಶ್ರೀನಗರ: ಕಾಶ್ಮೀರ ಮತ್ತು ಲಡಾಖ್ ನಡುವಿನ ವರ್ಷಪೂರ್ತಿ ಸಂಪರ್ಕಕ್ಕೆ ದಾರಿ ಮಾಡಿಕೊಡುವ ಮಹತ್ವಾಕಾಂಕ್ಷಿ ಝೋಜಿಲಾ ಸುರಂಗ ಯೋಜನೆ ಐತಿಹಾಸಿಕ ಮೈಲಿಗಲ್ಲಿನತ್ತ ಸಾಗುತ್ತಿದೆ.

ಹಿಮಾಲಯದ ದುರ್ಗಮ ಪ್ರದೇಶದಲ್ಲಿ ನಿರ್ಮಾಣವಾಗುತ್ತಿರುವ ಈ ಬೃಹತ್ ಸುರಂಗದ ಉತ್ಖನನ ಕಾರ್ಯ ಅಂತಿಮ ಹಂತ ತಲುಪಿದ್ದು, ಜೂನ್ 9ರ ವೇಳೆಗೆ ಸಂಪೂರ್ಣಗೊಳ್ಳುವ ನಿರೀಕ್ಷೆಯಿದೆ.

ಸಮುದ್ರಮಟ್ಟದಿಂದ ಸುಮಾರು 11,578 ಅಡಿ ಎತ್ತರದಲ್ಲಿ ನಿರ್ಮಾಣವಾಗುತ್ತಿರುವ 13.15 ಕಿಲೋಮೀಟರ್ ಉದ್ದದ ಸುರಂಗವನ್ನು ಹೈದರಾಬಾದ್ ಮೂಲದ ಮೇಘಾ ಎಂಜಿನಿಯರಿಂಗ್ ಆ್ಯಂಡ್ ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್ ನಿರ್ಮಿಸುತ್ತಿದೆ. ಬಾಲ್ಟಾಲ್ ಮತ್ತು ಮಿನಮಾರ್ಗ್ ಭಾಗಗಳಿಂದ ನಡೆಯುತ್ತಿರುವ ಸುರಂಗ ಕೊರೆತ ಕಾರ್ಯದ ಅಂಚುಗಳು ಮೇ ಅಂತ್ಯದ ವೇಳೆಗೆ ಒಂದಾಗಲಿದ್ದು, ಇದನ್ನು ಎಂಜಿನಿಯರ್‌ಗಳು “ಹ್ಯಾಂಡ್‌ಶೇಕ್ ಮೊಮೆಂಟ್” ಎಂದು ಬಣ್ಣಿಸಿದ್ದಾರೆ.

ತೀವ್ರ ಹಿಮಪಾತ, ಮೈನಸ್ ತಾಪಮಾನ ಹಾಗೂ ಸಂಕೀರ್ಣ ಭೂವೈಜ್ಞಾನಿಕ ಸವಾಲುಗಳ ನಡುವೆಯೂ ಕಾಮಗಾರಿ ವೇಗವಾಗಿ ಸಾಗುತ್ತಿದ್ದು, ಯೋಜನೆಯು ಅಂತಿಮ ಹಂತ ತಲುಪಿದೆ.

ಗಡಿ ಭದ್ರತೆಗೆ ಬಲ:

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ 6,809.69 ಕೋಟಿ ರೂಪಾಯಿ ವೆಚ್ಚದ ಈ ಯೋಜನೆ ಸೆಪ್ಟೆಂಬರ್ 2026ರ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಸುರಂಗ ಪೂರ್ಣಗೊಂಡ ಬಳಿಕ ಚಳಿಗಾಲದಲ್ಲಿ ಹಿಮಪಾತದಿಂದ ಮುಚ್ಚಲ್ಪಡುವ ಝೋಜಿಲಾ ಪಾಸ್ ಅವಲಂಬನೆ ಕಡಿಮೆಯಾಗಲಿದೆ.

ಚೀನಾ ಹಾಗೂ ಪಾಕಿಸ್ತಾನದೊಂದಿಗೆ ಸೂಕ್ಷ್ಮ ಗಡಿಯನ್ನು ಹಂಚಿಕೊಂಡಿರುವ ಲಡಾಖ್ ಪ್ರದೇಶಕ್ಕೆ ವರ್ಷಪೂರ್ತಿ ನಿರಂತರ ಸಂಪರ್ಕ ಕಲ್ಪಿಸುವ ಮೂಲಕ ಸೇನಾ ಸಿಬ್ಬಂದಿ, ರಕ್ಷಣಾ ಸಾಮಗ್ರಿಗಳು ಹಾಗೂ ತುರ್ತು ಸೇವೆಗಳ ಸಂಚಾರಕ್ಕೆ ಹೆಚ್ಚಿನ ಅನುಕೂಲವಾಗಲಿದೆ.

ಸ್ಥಳೀಯ ಆರ್ಥಿಕತೆಗೆ ಉತ್ತೇಜನ:

ಯೋಜನೆಯಿಂದ ಈಗಾಗಲೇ ಸಾವಿರಕ್ಕೂ ಹೆಚ್ಚು ಸ್ಥಳೀಯರಿಗೆ ಉದ್ಯೋಗಾವಕಾಶ ದೊರೆತಿದೆ. ಸುರಂಗ ಕಾರ್ಯಾರಂಭವಾದ ಬಳಿಕ ಸೋನಾಮಾರ್ಗ್, ಡ್ರಾಸ್, ಕಾರ್ಗಿಲ್ ಮತ್ತು ಲೇಹ್ ಪ್ರದೇಶಗಳಲ್ಲಿ ಪ್ರವಾಸೋದ್ಯಮ, ವ್ಯಾಪಾರ ಹಾಗೂ ಸಾರಿಗೆ ಕ್ಷೇತ್ರಗಳಿಗೆ ಹೊಸ ಚೈತನ್ಯ ಸಿಗುವ ನಿರೀಕ್ಷೆ ಇದೆ.

ದೇಶದ ಅತ್ಯಂತ ಪ್ರಮುಖ ಮೂಲಸೌಕರ್ಯ ಯೋಜನೆಗಳಲ್ಲಿ ಒಂದಾಗಿ ಪರಿಗಣಿಸಲ್ಪಟ್ಟಿರುವ ಝೋಜಿಲಾ ಸುರಂಗ, ಕಾಶ್ಮೀರ ಮತ್ತು ಲಡಾಖ್ ನಡುವಿನ ಸಂಪರ್ಕ ವ್ಯವಸ್ಥೆಯಲ್ಲಿ ಹೊಸ ಅಧ್ಯಾಯ ಬರೆಯಲಿದ್ದು, ರಾಷ್ಟ್ರೀಯ ಭದ್ರತೆ ಹಾಗೂ ಆರ್ಥಿಕ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಲಿದೆ.

ನಡೆಯಿರಿ, ಮಾಲಿನ್ಯ ತಡೆಯಿರಿ: ಜೂನ್ ಪೂರ್ತಿ ಜಿಬಿಎ ವಿಶೇಷ ಅಭಿಯಾನ!

ಬೆಂಗಳೂರು: ವಾಹನ ದಟ್ಟಣೆ ಮತ್ತು ವಾಯು ಮಾಲಿನ್ಯ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಗ್ರೇಟರ್ ಬೆಂಗಳೂರು ಅಥಾರಿಟಿ ಹೊಸ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿದೆ.

ಜೂನ್ ತಿಂಗಳ ಪೂರ್ತಿ ನಡೆಯಲಿರುವ ಈ ಅಭಿಯಾನಕ್ಕೆ #1KmChallenge ಎಂದು ಹೆಸರಿಡಲಾಗಿದ್ದು, ಒಂದು ಕಿಲೋಮೀಟರ್ ವ್ಯಾಪ್ತಿಯೊಳಗಿನ ಸಂಚಾರಕ್ಕೆ ವಾಹನ ಬಳಸದೇ ನಡೆದುಕೊಂಡು ಹೋಗುವಂತೆ ನಾಗರಿಕರಿಗೆ ಕರೆ ನೀಡಲಾಗಿದೆ.

ಜಿಬಿಎಯ ಕ್ಲೈಮೇಟ್ ಆಕ್ಷನ್ ಸೆಲ್ ವತಿಯಿಂದ ಹಮ್ಮಿಕೊಳ್ಳಲಾಗಿರುವ ಈ ಅಭಿಯಾನದ ಉದ್ದೇಶ, ನಗರದ ರಸ್ತೆಗಳಲ್ಲಿ ವಾಹನಗಳ ಸಂಖ್ಯೆಯನ್ನು ಕಡಿಮೆ ಮಾಡಿ ಮಾಲಿನ್ಯ ನಿಯಂತ್ರಿಸುವುದಾಗಿದೆ. ಸಣ್ಣ ದೂರಗಳಿಗೂ ಬೈಕ್ ಹಾಗೂ ಕಾರುಗಳನ್ನು ಬಳಸುವ ಪ್ರವೃತ್ತಿ ಹೆಚ್ಚುತ್ತಿರುವುದರಿಂದ ಟ್ರಾಫಿಕ್ ಸಮಸ್ಯೆ ಮತ್ತಷ್ಟು ಗಂಭೀರವಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಭಿಯಾನದ ಭಾಗವಾಗಿ, ಒಂದು ಕಿಲೋಮೀಟರ್ ದೂರವನ್ನು ಕಾಲ್ನಡಿಗೆಯಲ್ಲಿ ಕ್ರಮಿಸುವಂತೆ ಜನರಿಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಇದರಿಂದ ಪರಿಸರ ಸಂರಕ್ಷಣೆಯ ಜೊತೆಗೆ ಆರೋಗ್ಯಕರ ಜೀವನಶೈಲಿಯನ್ನು ರೂಢಿಸಿಕೊಳ್ಳಲು ಸಹಕಾರಿಯಾಗಲಿದೆ ಎಂಬುದು ಜಿಬಿಎ ಅಭಿಪ್ರಾಯವಾಗಿದೆ.

ಅಭಿಯಾನದ ಪ್ರಮುಖ ಉದ್ದೇಶಗಳು:

  • ವಾಹನ ಬಳಕೆ ಕಡಿಮೆ ಮಾಡಿ ವಾಯು ಮಾಲಿನ್ಯ ನಿಯಂತ್ರಿಸುವುದು.
  • ದೈನಂದಿನ ನಡಿಗೆಯನ್ನು ಉತ್ತೇಜಿಸಿ ಸಾರ್ವಜನಿಕರ ಆರೋಗ್ಯ ಸುಧಾರಿಸುವುದು.
  • ನಗರದ ರಸ್ತೆಗಳಲ್ಲಿ ವಾಹನ ದಟ್ಟಣೆಯನ್ನು ತಗ್ಗಿಸುವುದು.

ಅಭಿಯಾನ ಘೋಷಣೆಯಾದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆ ಆರಂಭವಾಗಿದೆ. ಪರಿಸರ ಕಾಳಜಿಯ ದೃಷ್ಟಿಯಿಂದ ಈ ಯೋಜನೆಯನ್ನು ಹಲವರು ಮೆಚ್ಚಿಕೊಂಡಿದ್ದರೆ, ಮತ್ತೊಂದೆಡೆ ನಗರದ ಪಾದಚಾರಿ ವ್ಯವಸ್ಥೆಯ ದುಸ್ಥಿತಿಯನ್ನು ನೆನಪಿಸಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರದ ಅನೇಕ ಪ್ರದೇಶಗಳಲ್ಲಿ ಫುಟ್‌ಪಾತ್‌ಗಳು ಹಾಳಾಗಿದ್ದು, ಕಸದ ರಾಶಿಗಳು, ತೆರೆದ ಚರಂಡಿಗಳು ಹಾಗೂ ಗುಂಡಿ ಬಿದ್ದ ರಸ್ತೆಗಳ ನಡುವೆ ಸುರಕ್ಷಿತವಾಗಿ ನಡೆಯುವುದು ಕಷ್ಟಕರವಾಗಿದೆ ಎಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ.

ಪಾದಚಾರಿಗಳಿಗೆ ಸುರಕ್ಷಿತ, ವಿಶಾಲ ಹಾಗೂ ನಿರಂತರ ಫುಟ್‌ಪಾತ್‌ಗಳನ್ನು ನಿರ್ಮಿಸಿದ ಬಳಿಕ ಇಂತಹ ಅಭಿಯಾನಗಳನ್ನು ಕೈಗೊಳ್ಳಬೇಕು ಎಂದು ಸಾರ್ವಜನಿಕರು ಜಿಬಿಎ ಹಾಗೂ ಬಿಬಿಎಂಪಿ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

ಒಟ್ಟಾರೆ, ಪರಿಸರ ಮತ್ತು ಆರೋಗ್ಯದ ದೃಷ್ಟಿಯಿಂದ ಮಹತ್ವದ ಹೆಜ್ಜೆಯಾಗಿ ಕಂಡುಬರುತ್ತಿರುವ #1KmChallenge ಅಭಿಯಾನ, ಬೆಂಗಳೂರಿನ ಮೂಲಸೌಕರ್ಯ ಸಮಸ್ಯೆಗಳ ಕುರಿತು ಮತ್ತೊಮ್ಮೆ ಚರ್ಚೆಗೆ ಕಾರಣವಾಗಿದೆ.

ಡೀಪ್‌ಫೇಕ್ ಬಿಕಿನಿ ವಿಡಿಯೋ ವೈರಲ್: ಕಿಡಿಗೇಡಿಗಳ ವಿರುದ್ಧ ನಟಿ ರುಕ್ಮಿಣಿ ವಸಂತ್ ದೂರು!

0

ನಟಿ ರುಕ್ಮಿಣಿ ವಸಂತ್‌ ಅವರ ಹೆಸರಿನಲ್ಲಿ ಎಐ ಹಾಗೂ ಡೀಪ್‌ಫೇಕ್ ತಂತ್ರಜ್ಞಾನ ಬಳಸಿ ನಕಲಿ ಬಿಕಿನಿ ವಿಡಿಯೋ ಸೃಷ್ಟಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟ ಪ್ರಕರಣ ಸಂಬಂಧ ಸೈಬರ್ ಕ್ರೈಮ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ನಟಿ ರುಕ್ಮಿಣಿ ವಸಂತ್‌ ನೀಡಿದ ದೂರಿನ ಆಧಾರದ ಮೇಲೆ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದ್ದು, ಐಟಿ ಕಾಯ್ದೆ ಹಾಗೂ ಬಿಎನ್‌ಎಸ್‌ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ತನಿಖೆ ಆರಂಭಿಸಲಾಗಿದೆ.

ದೂರಿನಲ್ಲಿ ಅವರು, ತಮ್ಮ ಫೋಟೋಗಳನ್ನು ಅನಧಿಕೃತವಾಗಿ ಬಳಸಿ ಎಐ ತಂತ್ರಜ್ಞಾನದಿಂದ ಬೇರೆಯವರ ದೇಹಕ್ಕೆ ಮುಖವನ್ನು ಅಳವಡಿಸಿ ನಕಲಿ ವಿಡಿಯೋ ಮತ್ತು ಚಿತ್ರಗಳನ್ನು ಸೃಷ್ಟಿಸಲಾಗಿದೆ ಎಂದು ಆರೋಪಿಸಿದ್ದಾರೆ. ಇದು ತಮ್ಮ ಗೌರವಕ್ಕೆ ಧಕ್ಕೆ ತರುವ ಹಾಗೂ ಮಾನಹಾನಿ ಮಾಡುವ ಕೃತ್ಯವಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಈ ಪ್ರಕರಣದಲ್ಲಿ ಒಟ್ಟು 29 ಸಾಮಾಜಿಕ ಜಾಲತಾಣ ಖಾತೆಗಳ ವಿರುದ್ಧ ದೂರು ನೀಡಲಾಗಿದ್ದು, ಅದರಲ್ಲಿ 9 ಇನ್‌ಸ್ಟಾಗ್ರಾಂ ಖಾತೆಗಳು, 14 ಎಕ್ಸ್ (X) ಖಾತೆಗಳು ಹಾಗೂ 6 ಫೇಸ್‌ಬುಕ್ ಖಾತೆಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿದೆ.

ಸೈಬರ್ ಕ್ರೈಮ್ ಪೊಲೀಸರು ಸಂಬಂಧಿತ ಖಾತೆಗಳ ಮೂಲವನ್ನು ಪತ್ತೆಹಚ್ಚಿ ಮುಂದಿನ ಕ್ರಮ ಕೈಗೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ.

ಕುರ್ಚಿ ಮೇಲೆ ಬಟ್ಟೆ ರಾಶಿ ಹಾಕುತ್ತಿದ್ದೀರಾ? ವಾಸ್ತು ಎಚ್ಚರಿಕೆ ಏನು ಹೇಳುತ್ತದೆ ನೋಡಿ

ದಿನನಿತ್ಯದ ಜೀವನದಲ್ಲಿ ಸಾಮಾನ್ಯವಾಗಿ ಕಂಡುಬರುವ ಒಂದು ಸಣ್ಣ ಅಭ್ಯಾಸವೇ ಮನೆಯ ವಾಸ್ತು ಮತ್ತು ಧನಾತ್ಮಕ ಶಕ್ತಿಯ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ ಎಂದು ವಾಸ್ತು ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಆಫೀಸ್ ಅಥವಾ ಹೊರಗಿನಿಂದ ಸುಸ್ತಾಗಿ ಮನೆಗೆ ಬಂದ ನಂತರ, ಬಟ್ಟೆಗಳನ್ನು ಬದಲಾಯಿಸಿ ಅವುಗಳನ್ನು ಸರಿಯಾದ ಜಾಗದಲ್ಲಿ ಇಡುವ ಬದಲು ಕುರ್ಚಿ ಅಥವಾ ಸೋಫಾದ ಮೇಲೆ ಎಸೆದುಬಿಡುವ ಅಭ್ಯಾಸ ಹಲವರಲ್ಲಿ ಕಂಡುಬರುತ್ತದೆ. ಆರಂಭದಲ್ಲಿ ಇದು ಸಾಮಾನ್ಯ ಸೋಮಾರಿತನವಾಗಿ ಕಂಡರೂ, ಕ್ರಮೇಣ ಇದು ಮನೆಯ ಶಾಂತಿ ಮತ್ತು ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಲಾಗುತ್ತಿದೆ.

ವಾಸ್ತು ಶಾಸ್ತ್ರದ ಪ್ರಕಾರ, ಕುರ್ಚಿ ಮತ್ತು ಸೋಫಾಗಳನ್ನು ಸದಾ ಸ್ವಚ್ಛ ಮತ್ತು ಖಾಲಿಯಾಗಿ ಇಟ್ಟುಕೊಳ್ಳಬೇಕು. ಅವುಗಳ ಮೇಲೆ ಬಟ್ಟೆಗಳನ್ನು ರಾಶಿಯಾಗಿ ಇಡುವುದರಿಂದ ಆ ಸ್ಥಳದ ಶಕ್ತಿಯ ಹರಿವು ಅಡ್ಡಿಯಾಗುತ್ತದೆ ಎಂದು ವಾಸ್ತು ತಜ್ಞರು ಅಭಿಪ್ರಾಯಪಡುತ್ತಾರೆ. ಇದರ ಪರಿಣಾಮವಾಗಿ ಮನೆಯಲ್ಲಿ ಅಶಾಂತಿ, ಕಿರಿಕಿರಿ, ವಿನಾಕಾರಣ ಜಗಳಗಳು ಮತ್ತು ಮಾನಸಿಕ ಒತ್ತಡ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಇದೇ ರೀತಿಯಾಗಿ, ಈ ಅಸ್ತವ್ಯಸ್ತತೆ ಮನೆಯ ಆರ್ಥಿಕ ಸ್ಥಿತಿಯ ಮೇಲೂ ಪರಿಣಾಮ ಬೀರುತ್ತದೆ ಎಂಬ ನಂಬಿಕೆ ಇದೆ. ಧನಾತ್ಮಕ ಶಕ್ತಿ ಕಡಿಮೆಯಾಗುವುದರಿಂದ ಅನಿರೀಕ್ಷಿತ ಖರ್ಚುಗಳು ಹೆಚ್ಚಾಗಿ ಹಣ ಉಳಿಸಿಕೊಳ್ಳುವುದು ಕಷ್ಟವಾಗಬಹುದು ಎಂದು ವಾಸ್ತು ತಜ್ಞರು ಎಚ್ಚರಿಸುತ್ತಾರೆ.

ಮನೋವಿಜ್ಞಾನಿಗಳ ಪ್ರಕಾರವೂ, ಸುತ್ತಮುತ್ತಲಿನ ಅಸ್ತವ್ಯಸ್ತ ವಾತಾವರಣವು ಮನಸ್ಸಿನಲ್ಲಿ ಗೊಂದಲವನ್ನು ಉಂಟುಮಾಡಿ, ಗಮನ ಕೇಂದ್ರೀಕರಿಸಲು ಅಡಚಣೆ ತರಬಹುದು ಎಂದು ಹೇಳಲಾಗುತ್ತಿದೆ.

ಈ ಹಿನ್ನೆಲೆಯಲ್ಲಿ ತಜ್ಞರು ಕೆಲವು ಸರಳ ಸಲಹೆಗಳನ್ನು ನೀಡುತ್ತಿದ್ದಾರೆ. ಕುಳಿತುಕೊಳ್ಳುವ ಜಾಗವನ್ನು ಸದಾ ಖಾಲಿ ಮತ್ತು ಸ್ವಚ್ಛವಾಗಿಡುವುದು, ಬಟ್ಟೆಗಳನ್ನು ತಕ್ಷಣ ಮಡಚಿ ಸರಿಯಾದ ಸ್ಥಳದಲ್ಲಿ ಇಡುವುದು ಹಾಗೂ ಕೊಳಕು ಬಟ್ಟೆಗಳಿಗೆ ಪ್ರತ್ಯೇಕ ಲಾಂಡ್ರಿ ಬಾಸ್ಕೆಟ್ ಬಳಸುವುದು ಸೇರಿದಂತೆ ದಿನಕ್ಕೆ ಕೆಲವೇ ನಿಮಿಷಗಳನ್ನು ಮನೆ ಸ್ವಚ್ಛತೆಗೆ ಮೀಸಲಿಡುವುದರಿಂದ ಪರಿಸರದಲ್ಲಿ ಧನಾತ್ಮಕ ಶಕ್ತಿ ಹೆಚ್ಚಾಗುತ್ತದೆ ಎಂದು ಸಲಹೆ ನೀಡಲಾಗಿದೆ.

ಹಿಂದಿ ಚಿತ್ರರಂಗದ ಸ್ವರಸಾಮ್ರಾಜ್ಞಿ ಸುಮನ್ ಕಲ್ಯಾಣ್‌ಪುರ್ ಇನ್ನಿಲ್ಲ

ಮುಂಬೈ: ಭಾರತೀಯ ಸಂಗೀತ ಲೋಕದ ಹಿರಿಯ ಗಾಯಕಿ ಸುಮನ್ ಕಲ್ಯಾಣ್‌ಪುರ್ ಅವರು 89ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಮೇ 31ರಂದು ಮುಂಬೈನ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರ ನಿಧನದಿಂದ ಭಾರತೀಯ ಚಿತ್ರಸಂಗೀತದ ಸುವರ್ಣಯುಗದ ಮತ್ತೊಂದು ಅಧ್ಯಾಯ ಅಂತ್ಯಗೊಂಡಂತಾಗಿದೆ.

ಸುಮಾರು ಆರು ದಶಕಗಳ ಕಾಲ ಗಾಯನ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದ ಸುಮನ್ ಕಲ್ಯಾಣ್‌ಪುರ್, ಹಿಂದಿ ಸೇರಿದಂತೆ ಅನೇಕ ಭಾರತೀಯ ಭಾಷೆಗಳಲ್ಲಿ ಸಾವಿರಾರು ಹಾಡುಗಳಿಗೆ ಧ್ವನಿಯಾಗಿದ್ದರು. ಬಾಂಗ್ಲಾದೇಶದ ಢಾಕಾದಲ್ಲಿ ಜನಿಸಿದ್ದ ಅವರು ನಂತರ ಮುಂಬೈನಲ್ಲಿ ನೆಲೆಸಿ, ಭಾರತೀಯ ಚಿತ್ರರಂಗದ ಪ್ರಮುಖ ಹಿನ್ನೆಲೆ ಗಾಯಕಿಯಾಗಿ ಹೊರಹೊಮ್ಮಿದ್ದರು.

‘ಆಜ್‌ಕಲ್ ತೇರೆ ಮೇರೆ ಪ್ಯಾರ್ ಕೆ ಚರ್ಚೇ’, ‘ನಾ ನಾ ಕರ್ತೆ ಪ್ಯಾರ್ ತುಮ್ಹೀ ಸೆ’, ‘ತುಮ್ನೆ ಪುಕಾರಾ ಔರ್ ಹಮ್ ಚಲೆ ಆಯೇ’ ಮೊದಲಾದ ಹಾಡುಗಳ ಮೂಲಕ ಅವರು ಕೋಟ್ಯಂತರ ಸಂಗೀತ ಪ್ರೇಮಿಗಳ ಮನ ಗೆದ್ದಿದ್ದರು. ಶಾಸ್ತ್ರೀಯ ಸಂಗೀತದ ಗಾಢ ಜ್ಞಾನ ಮತ್ತು ಮಧುರ ಕಂಠ ಅವರ ಯಶಸ್ಸಿನ ಮೂಲವಾಗಿತ್ತು.

ಕನ್ನಡ ಚಿತ್ರರಂಗದಲ್ಲೂ ಅವರು ‘ಒಡನಾಡಿ ಬೇಕೆಂದು’, ‘ಹನಿ ಹನಿ ಹೀರಿ ತಣಿ ಹರೆಯ’ ಹಾಗೂ ‘ತಲ್ಲಣ ನೂರು ಬಗೆ’ ಹಾಡುಗಳ ಮೂಲಕ ವಿಶೇಷ ಗುರುತು ಮೂಡಿಸಿದ್ದರು. ಕನ್ನಡಿಗರ ಹೃದಯದಲ್ಲಿ ತಮ್ಮದೇ ಸ್ಥಾನ ನಿರ್ಮಿಸಿಕೊಂಡಿದ್ದ ಸುಮನ್, ಬಹುಭಾಷಾ ಗಾಯಕಿಯಾಗಿ ಅಪಾರ ಜನಪ್ರಿಯತೆ ಗಳಿಸಿದ್ದರು.

ಕೊನೆಯ ಕ್ಷಣಗಳವರೆಗೂ ಸಂಗೀತದೊಂದಿಗೆ ಬದುಕಿದ್ದ ಸುಮನ್ ಕಲ್ಯಾಣ್‌ಪುರ್ ಅವರ ನಿಧನಕ್ಕೆ ದೇಶದಾದ್ಯಂತ ಕಲಾವಿದರು, ರಾಜಕೀಯ ನಾಯಕರು ಹಾಗೂ ಅಭಿಮಾನಿಗಳು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಅವರ ಹಾಡುಗಳು ಮುಂದಿನ ಪೀಳಿಗೆಗಳಿಗೂ ಸ್ಫೂರ್ತಿಯಾಗಲಿವೆ.

error: Content is protected !!