Home Blog

ತಾಂತ್ರಿಕ ದೋಷ ಶಂಕೆ: ಬೆಂಕಿಗೆ ಆಹುತಿಯಾದ ಪವನ ವಿದ್ಯುತ್ ಯಂತ್ರ!

0

ಗದಗ: ತಾಲೂಕಿನ ಕಣವಿಹೊಸೂರ ಗ್ರಾಮದ ಹೊರವಲಯದಲ್ಲಿ ಸ್ಥಾಪಿಸಲಾಗಿದ್ದ ಪವನ ವಿದ್ಯುತ್ ಯಂತ್ರದಲ್ಲಿ (ವಿಂಡ್‌ಮಿಲ್) ಏಕಾಏಕಿ ಬೆಂಕಿ ಕಾಣಿಸಿಕೊಂಡು, ಅದರ ರೆಕ್ಕೆಗಳು ಸುಟ್ಟು ಭಸ್ಮವಾದ ಘಟನೆ ಸೋಮವಾರ ನಡೆದಿದೆ.

ತಾಂತ್ರಿಕ ದೋಷದಿಂದ ಬೆಂಕಿ ಹೊತ್ತಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು, ಬೆಂಕಿ ಕ್ಷಣಾರ್ಧದಲ್ಲೇ ವಿಂಡ್‌ಮಿಲ್‌ನ ಮೇಲ್ಭಾಗಕ್ಕೆ ವ್ಯಾಪಿಸಿ ರೆಕ್ಕೆಗಳು ಸಂಪೂರ್ಣ ಸುಟ್ಟುಹೋಗಿವೆ.

ಘಟನೆ ನಡೆದ ವೇಳೆ ಜಮೀನಿನಲ್ಲಿ ಯಾರೂ ಇಲ್ಲದ ಕಾರಣ ಸಂಭವಿಸಬಹುದಾಗಿದ್ದ ಭಾರೀ ಅನಾಹುತ ತಪ್ಪಿದೆ.

ವಿಷಯ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದರು.

ಈ ಘಟನೆ ಗದಗ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಬೆಂಕಿ ಅವಘಡಕ್ಕೆ ನಿಖರ ಕಾರಣ ತಿಳಿಯಲು ಪರಿಶೀಲನೆ ನಡೆಸಲಾಗುತ್ತಿದೆ.

ತೂಕ ಇಳಿಸಬೇಕೆಂದಿದ್ದರೆ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಮಖಾನ ಸೇವಿಸಿ ಸಾಕು..!

0

ಇಂದಿನ ವೇಗದ ಜೀವನಶೈಲಿ, ಅನಿಯಮಿತ ದಿನಚರಿ ಹಾಗೂ ಅನಾರೋಗ್ಯಕರ ಆಹಾರ ಪದ್ಧತಿಯ ಪರಿಣಾಮವಾಗಿ ಸ್ಥೂಲಕಾಯ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ತೂಕ ಇಳಿಸಿಕೊಳ್ಳಲು ಅನೇಕರು ವಿವಿಧ ವಿಧಾನಗಳನ್ನು ಅನುಸರಿಸುತ್ತಿದ್ದರೂ,

ಸರಿಯಾದ ಆಹಾರ ಕ್ರಮವಿಲ್ಲದೆ ಉತ್ತಮ ಫಲಿತಾಂಶ ಪಡೆಯುವುದು ಕಷ್ಟ. ಇಂತಹ ಸಂದರ್ಭದಲ್ಲಿ ಪೌಷ್ಟಿಕಾಂಶಗಳಿಂದ ಸಮೃದ್ಧವಾಗಿರುವ ಮಖಾನ (ಫಾಕ್ಸ್ ನಟ್) ತೂಕ ನಿಯಂತ್ರಣಕ್ಕೆ ಉತ್ತಮ ಆಹಾರಗಳಲ್ಲಿ ಒಂದಾಗಿದೆ ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ.

ಮಖಾನದಲ್ಲಿ ಉತ್ಕರ್ಷಣ ನಿರೋಧಕಗಳು (ಆಂಟಿ ಆಕ್ಸಿಡೆಂಟ್ಸ್), ಪ್ರೋಟೀನ್, ಫೈಬರ್, ಕ್ಯಾಲ್ಸಿಯಂ, ಕಾರ್ಬೋಹೈಡ್ರೇಟ್ ಸೇರಿದಂತೆ ಹಲವು ಅಗತ್ಯ ಪೋಷಕಾಂಶಗಳಿವೆ. ಇದು ಜೀರ್ಣಕ್ರಿಯೆಯನ್ನು ಸುಧಾರಿಸುವುದರ ಜೊತೆಗೆ ದೀರ್ಘಕಾಲ ಹೊಟ್ಟೆ ತುಂಬಿದ ಅನುಭವ ನೀಡುವುದರಿಂದ ಅತಿಯಾಗಿ ಆಹಾರ ಸೇವಿಸುವುದನ್ನು ತಡೆಯುತ್ತದೆ.

ಆಯುರ್ವೇದದ ಪ್ರಕಾರ ಮಖಾನದಲ್ಲಿ ವಯಸ್ಸಾಗುವಿಕೆಯನ್ನು ನಿಧಾನಗೊಳಿಸುವ ಗುಣಗಳಿದ್ದು, ತ್ವಚೆಯ ಆರೋಗ್ಯ ಕಾಪಾಡಲು ಸಹ ಸಹಕಾರಿಯಾಗಿದೆ. ಬೆಳಿಗ್ಗೆ ಸೇವಿಸಿದರೆ ಇದರ ಪ್ರಯೋಜನ ಇನ್ನಷ್ಟು ಹೆಚ್ಚಾಗುತ್ತದೆ ಎನ್ನಲಾಗಿದೆ.

ಮಖಾನದಲ್ಲಿರುವ ಪ್ರಮುಖ ಪೋಷಕಾಂಶಗಳು

ಒಂದು ಕಪ್ ಮಖಾನದಲ್ಲಿ ಸುಮಾರು 5 ಗ್ರಾಂ ಪ್ರೋಟೀನ್, 20 ಗ್ರಾಂ ಕಾರ್ಬೋಹೈಡ್ರೇಟ್, 33 ಮೈಕ್ರೋಗ್ರಾಂ ಫೋಲಿಕ್ ಆಮ್ಲ, 1.2 ಮಿಲಿಗ್ರಾಂ ಕಬ್ಬಿಣ, 52 ಮಿಲಿಗ್ರಾಂ ಕ್ಯಾಲ್ಸಿಯಂ, 430 ಮಿಲಿಗ್ರಾಂ ಪೊಟ್ಯಾಸಿಯಮ್, 198 ಮಿಲಿಗ್ರಾಂ ರಂಜಕ ಹಾಗೂ ಒಮೆಗಾ-3 ಮತ್ತು ಇತರೆ ಆರೋಗ್ಯಕರ ಕೊಬ್ಬಿನಾಂಶಗಳು ಇವೆ.

ಕಡಿಮೆ ಕ್ಯಾಲೊರಿಯೊಂದಿಗೆ ಹೆಚ್ಚಿನ ಫೈಬರ್ ಹೊಂದಿರುವುದರಿಂದ ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಇದು ಉತ್ತಮ ಆಹಾರವಾಗಿದೆ. ಪ್ರತಿದಿನ ಬೆಳಗ್ಗೆ ಒಂದು ಹಿಡಿ ಮಖಾನ ಸೇವಿಸುವುದು ಆರೋಗ್ಯಕ್ಕೆ ಲಾಭದಾಯಕ ಎಂದು ತಜ್ಞರು ಸಲಹೆ ನೀಡುತ್ತಾರೆ.

ಮಖಾನ ಸೇವನೆಯ ಪ್ರಮುಖ ಪ್ರಯೋಜನಗಳು

  • ಮಖಾನ ದೇಹದ ದೌರ್ಬಲ್ಯವನ್ನು ಕಡಿಮೆ ಮಾಡಿ ಶಕ್ತಿಯನ್ನು ಹೆಚ್ಚಿಸಲು ನೆರವಾಗುತ್ತದೆ. ದೈಹಿಕ ಆರೋಗ್ಯ ಸುಧಾರಿಸುವುದರ ಜೊತೆಗೆ ಸಂತಾನೋತ್ಪತ್ತಿ ಆರೋಗ್ಯಕ್ಕೂ ಸಹಕಾರಿ ಎಂದು ಪರಿಗಣಿಸಲಾಗಿದೆ.
  • ಪೌಷ್ಟಿಕಾಂಶಗಳಿಂದ ಸಮೃದ್ಧವಾಗಿರುವ ಮಖಾನ ಮಧುಮೇಹ ಇರುವವರಿಗೆ ಸಹ ಪ್ರಯೋಜನಕಾರಿಯಾಗಿದೆ. ನಿಯಮಿತ ಸೇವನೆಯಿಂದ ರಕ್ತದಲ್ಲಿನ ಸಕ್ಕರೆ ಪ್ರಮಾಣ ನಿಯಂತ್ರಣಕ್ಕೆ ನೆರವಾಗಬಹುದು.
  • ಮಖಾನದಲ್ಲಿ ಆಂಟಿ ಆಕ್ಸಿಡೆಂಟ್ಸ್ ಅಧಿಕವಾಗಿರುವುದರಿಂದ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ನಾಲ್ಕರಿಂದ ಐದು ಮಖಾನ ಸೇವಿಸಿದರೆ ತ್ವಚೆಯ ಮೇಲಿನ ವಯಸ್ಸಿನ ಗುರುತುಗಳು ಕಡಿಮೆಯಾಗಲು ಸಹಕಾರಿಯಾಗುತ್ತದೆ.
  • ಮೂತ್ರಪಿಂಡದ ಆರೋಗ್ಯ ಕಾಪಾಡಲು ಮಖಾನ ಉತ್ತಮ ಆಹಾರವೆಂದು ಪರಿಗಣಿಸಲಾಗಿದೆ. ಜೊತೆಗೆ ಕಡಿಮೆ ಕ್ಯಾಲೊರಿ ಹಾಗೂ ಕ್ಯಾಲ್ಸಿಯಂ ಅಂಶ ಇರುವುದರಿಂದ ಮೂಳೆಗಳನ್ನು ಬಲಪಡಿಸಲು ಸಹ ನೆರವಾಗುತ್ತದೆ.

ಮಖಾನವನ್ನು ಹೇಗೆ ಸೇವಿಸಬೇಕು?

ಮಖಾನವನ್ನು ದೇಸಿ ತುಪ್ಪದಲ್ಲಿ ಸ್ವಲ್ಪ ಹುರಿದು ಉಪ್ಪು ಮತ್ತು ಕರಿಮೆಣಸಿನ ಪುಡಿ ಸೇರಿಸಿ ಆರೋಗ್ಯಕರ ತಿಂಡಿಯಾಗಿ ಸೇವಿಸಬಹುದು. ಹಾಲು ಇಷ್ಟಪಡುವವರು ಮಖಾನವನ್ನು ಹಾಲಿನಲ್ಲಿ ಕುದಿಸಿ ಸೇವಿಸಬಹುದು. ನಿಯಮಿತವಾಗಿ ಮಿತ ಪ್ರಮಾಣದಲ್ಲಿ ಆಹಾರದಲ್ಲಿ ಸೇರಿಸಿಕೊಂಡರೆ ಆರೋಗ್ಯಕ್ಕೆ ಹಲವು ರೀತಿಯ ಪ್ರಯೋಜನಗಳನ್ನು ಪಡೆಯಬಹುದು.

ಗದಗ: ಮತದಾರರ ಪಟ್ಟಿ ಪರಿಷ್ಕರಣೆ ವೇಳೆ ಬಿಎಲ್‌ಒ ಅಸ್ವಸ್ಥ!

0

ಗದಗ: ಮತದಾರರ ವಿಶೇಷ ಸಮಗ್ರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್) ಕಾರ್ಯದ ವೇಳೆ ಬಿಎಲ್‌ಒ ಅಸ್ವಸ್ಥಗೊಂಡ ಘಟನೆ ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಸುಗ್ನಹಳ್ಳಿ ಗ್ರಾಮದಲ್ಲಿ ಸೋಮವಾರ ನಡೆದಿದೆ.

ಸುಗ್ನಹಳ್ಳಿ ಗ್ರಾಮದ ಮತಗಟ್ಟೆ ಸಂಖ್ಯೆ 174ರಲ್ಲಿ ಬಿಎಲ್‌ಒ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಸುಧಾ ಹೇಮಗಿರಿಮಠ ಅವರು ಬೆಳಿಗ್ಗೆ ಮನೆ ಮನೆಗೆ ತೆರಳಿ ಎನ್ಯುಮರೇಷನ್ ಫಾರ್ಮ್‌ಗಳನ್ನು ಸಂಗ್ರಹಿಸುವ ಸಂದರ್ಭದಲ್ಲಿ ಏಕಾಏಕಿ ಅಸ್ವಸ್ಥಗೊಂಡರು.

ತಕ್ಷಣ ಅವರನ್ನು ಬೆಳ್ಳಟ್ಟಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ವೈದ್ಯರ ಮೇಲ್ವಿಚಾರಣೆಯಲ್ಲಿ ಚಿಕಿತ್ಸೆ ಮುಂದುವರಿದಿದ್ದು, ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿದುಬಂದಿದೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಶಿರಹಟ್ಟಿ ಕಂದಾಯ ನಿರೀಕ್ಷಕ ಬಸವರಾಜ ಕಾತ್ರಾಳ ಆಸ್ಪತ್ರೆಗೆ ಭೇಟಿ ನೀಡಿ ಬಿಎಲ್‌ಒ ಅವರ ಆರೋಗ್ಯ ವಿಚಾರಿಸಿ, ಅಗತ್ಯ ಚಿಕಿತ್ಸೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಕಾಂಕ್ರೀಟ್ ನಗರವಾಗುತ್ತಿದೆಯಾ ಬೆಂಗಳೂರು? 3 ವರ್ಷದಲ್ಲಿ 19 ಸಾವಿರಕ್ಕೂ ಹೆಚ್ಚು ಮರಗಳ ಮಾರಣಹೋಮ!

ಬೆಂಗಳೂರು: ಒಮ್ಮೆ ‘ಗಾರ್ಡನ್ ಸಿಟಿ’ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಬೆಂಗಳೂರು ನಗರದಲ್ಲಿ ಹಸಿರು ಪರಿಸರದ ಮೇಲೆ ಅಭಿವೃದ್ಧಿ ಕಾಮಗಾರಿಗಳ ಪರಿಣಾಮ ಹೆಚ್ಚಾಗುತ್ತಿದೆ.

ಕಳೆದ ಮೂರು ವರ್ಷಗಳ ಅವಧಿಯಲ್ಲಿ ನಗರದಲ್ಲಿ ಅಂದಾಜು 19 ಸಾವಿರಕ್ಕೂ ಹೆಚ್ಚು ಮರಗಳನ್ನು ತೆರವುಗೊಳಿಸಲಾಗಿದೆ ಎಂಬ ವರದಿ ಪರಿಸರ ಪ್ರೇಮಿಗಳು ಹಾಗೂ ನಾಗರಿಕರಲ್ಲಿ ಆತಂಕ ಮೂಡಿಸಿದೆ.

ಹೊಸ ಮೆಟ್ರೋ ಮಾರ್ಗಗಳು, ರಸ್ತೆ ವಿಸ್ತರಣೆ, ಮೇಲ್ಸೇತುವೆ ನಿರ್ಮಾಣ ಸೇರಿದಂತೆ ವಿವಿಧ ಸಾರ್ವಜನಿಕ ಮೂಲಸೌಕರ್ಯ ಯೋಜನೆಗಳಿಗಾಗಿ ಸಾವಿರಾರು ಮರಗಳನ್ನು ಕಡಿಯಲಾಗಿದೆ. ಈ ಪೈಕಿ 7,683 ಮರಗಳು ನೇರವಾಗಿ ಸಾರ್ವಜನಿಕ ಅಭಿವೃದ್ಧಿ ಕಾಮಗಾರಿಗಳಿಗೆ ಬಲಿಯಾಗಿವೆ ಎಂದು ತಿಳಿದು ಬಂದಿದೆ.

ಇನ್ನುಳಿದ ಮರಗಳನ್ನು ಖಾಸಗಿ ಅಭಿವೃದ್ಧಿ ಯೋಜನೆಗಳು, ಅಪಾಯಕಾರಿ ಸ್ಥಿತಿಯಲ್ಲಿದ್ದ ಮರಗಳ ತೆರವು ಹಾಗೂ ಇತರೆ ಕಾರಣಗಳಿಗಾಗಿ ಕಡಿದಿರುವುದಾಗಿ ಮಾಹಿತಿ ಇದೆ.

ಪ್ರತಿ ವರ್ಷ ನಗರದಲ್ಲಿ ಮರಗಳ ಸಂಖ್ಯೆ ಕಡಿಮೆಯಾಗುತ್ತಿರುವುದು ಪರಿಸರ ಸಮತೋಲನದ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ. ಹೆಚ್ಚುತ್ತಿರುವ ಕಾಂಕ್ರೀಟ್‌ ನಗರೀಕರಣದ ನಡುವೆ ತಾಪಮಾನ ಏರಿಕೆ, ವಾಯು ಮಾಲಿನ್ಯ ಸೇರಿದಂತೆ ಹಲವು ಸಮಸ್ಯೆಗಳು ಎದುರಾಗುತ್ತಿವೆ.

ಅಭಿವೃದ್ಧಿ ಕಾಮಗಾರಿಗಳು ಅಗತ್ಯವಾದರೂ, ಪರಿಸರ ಸಂರಕ್ಷಣೆಗೆ ಸಮಾನ ಆದ್ಯತೆ ನೀಡಬೇಕು ಎಂದು ಪರಿಸರ ತಜ್ಞರು ಒತ್ತಾಯಿಸಿದ್ದಾರೆ. ಮರಗಳ ತೆರವಿಗೆ ಪರ್ಯಾಯವಾಗಿ ಹೆಚ್ಚಿನ ಪ್ರಮಾಣದಲ್ಲಿ ಮರ ನೆಡುವುದು ಹಾಗೂ ಹಸಿರು ಪ್ರದೇಶಗಳ ರಕ್ಷಣೆಗೆ ಕ್ರಮ ಕೈಗೊಳ್ಳುವುದು ಅಗತ್ಯವಾಗಿದೆ.

ಕರ್ನಾಟಕ ಬಿಜೆಪಿಗೆ ಆಘಾತ; ಹಿರಿಯ ನಾಯಕ ರಾಮಚಂದ್ರೇಗೌಡ ಇನ್ನಿಲ್ಲ!

ಬೆಂಗಳೂರು: ರಾಜ್ಯ ಬಿಜೆಪಿಯ ಹಿರಿಯ ನಾಯಕ ಹಾಗೂ ಮಾಜಿ ಸಚಿವ ರಾಮಚಂದ್ರೇಗೌಡ (88) ಅವರು ವಯೋಸಹಜ ಅನಾರೋಗ್ಯದಿಂದ ಇಂದು ಮುಂಜಾನೆ ನಿಧನರಾಗಿದ್ದಾರೆ.

ರಾಜಾಜಿನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

ಕಳೆದ ಒಂದು ತಿಂಗಳಿನಿಂದ ತೀವ್ರ ಅನಾರೋಗ್ಯ ಹಾಗೂ ವಯೋಸಹಜ ಸಮಸ್ಯೆಗಳಿಂದ ಬಳಲುತ್ತಿದ್ದ ರಾಮಚಂದ್ರೇಗೌಡರನ್ನು ರಾಜಾಜಿನಗರದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆರೋಗ್ಯದಲ್ಲಿ ಚೇತರಿಕೆ ಕಾಣದೆ ಅವರು ಮೃತಪಟ್ಟಿದ್ದಾರೆ.

ಕರ್ನಾಟಕದಲ್ಲಿ ಬಿಜೆಪಿ ಪಕ್ಷವನ್ನು ತಳಮಟ್ಟದಿಂದ ಸಂಘಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ನಾಯಕರಲ್ಲಿ ರಾಮಚಂದ್ರೇಗೌಡರು ಒಬ್ಬರಾಗಿದ್ದರು. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದರು.

ಆರ್‌ಎಸ್‌ಎಸ್‌ ಹಿನ್ನೆಲೆಯ ರಾಮಚಂದ್ರೇಗೌಡರು 1953ರಲ್ಲೇ ಸಂಘದೊಂದಿಗೆ ತಮ್ಮ ಸಾರ್ವಜನಿಕ ಜೀವನ ಆರಂಭಿಸಿದ್ದರು. ಬಳಿಕ 1970ರಲ್ಲಿ ಅಧಿಕೃತವಾಗಿ ರಾಜಕೀಯ ಪ್ರವೇಶ ಪಡೆದರು. ಬಿಜೆಪಿಯ ಹಿಂದಿನ ರೂಪವಾಗಿದ್ದ ಭಾರತೀಯ ಜನಸಂಘದ ಮೂಲಕ ಅಂದಿನ ಬೆಂಗಳೂರು ನಗರ ನಿಗಮಕ್ಕೆ ಆಯ್ಕೆಯಾದ ಮೊದಲ ಕಾರ್ಪೊರೇಟರ್ ಎಂಬ ಹೆಗ್ಗಳಿಕೆಯನ್ನು ಹೊಂದಿದ್ದರು.

ಬೆಂಗಳೂರು ನಗರದಲ್ಲಿ ಬಿಜೆಪಿ ಬಲವರ್ಧನೆಗೆ ಅವರು ಮಹತ್ವದ ಕೊಡುಗೆ ನೀಡಿದ್ದರು. ರಾಜ್ಯ ರಾಜಕಾರಣದಲ್ಲಿ ಮೇಲ್ಮನೆಯ ಪ್ರಭಾವಿ ನಾಯಕರಾಗಿದ್ದ ಅವರು, ಸತತ ಐದು ಬಾರಿ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದರು.

ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸರ್ಕಾರದಲ್ಲಿ ವೈದ್ಯಕೀಯ ಶಿಕ್ಷಣ ಸಚಿವರಾಗಿ ಕಾರ್ಯನಿರ್ವಹಿಸಿದ್ದ ರಾಮಚಂದ್ರೇಗೌಡರು, ಹಲವು ಪ್ರಮುಖ ಜವಾಬ್ದಾರಿಗಳನ್ನು ನಿಭಾಯಿಸಿದ್ದರು.

2010ರಲ್ಲಿ ವೈದ್ಯಕೀಯ ಕಾಲೇಜುಗಳ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಅವರ ಹೆಸರು ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಅವರು ನೈತಿಕ ಹೊಣೆ ಹೊತ್ತು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ನಂತರ ನಡೆದ ಕಾನೂನು ಹೋರಾಟದಲ್ಲಿ ಹೈಕೋರ್ಟ್ ಪ್ರಕರಣದಿಂದ ಅವರನ್ನು ದೋಷಮುಕ್ತಗೊಳಿಸಿತ್ತು.

ಸುಮಾರು ಐದು ದಶಕಗಳ ಕಾಲ ಸಕ್ರಿಯ ರಾಜಕೀಯದಲ್ಲಿದ್ದ ರಾಮಚಂದ್ರೇಗೌಡರು, 2018ರಲ್ಲಿ ವಯೋಸಹಜ ಕಾರಣಗಳಿಂದ ಸಕ್ರಿಯ ರಾಜಕಾರಣದಿಂದ ನಿವೃತ್ತಿ ಘೋಷಿಸಿದ್ದರು.

ಅವರ ನಿಧನದೊಂದಿಗೆ ಕರ್ನಾಟಕ ಬಿಜೆಪಿಯ ಆರಂಭಿಕ ಹಂತದ ಸಂಘಟನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಹಿರಿಯ ನಾಯಕರೊಬ್ಬರ ಯುಗ ಅಂತ್ಯಗೊಂಡಂತಾಗಿದೆ.

ಗೃಹ ಸಚಿವರ ತವರು ಜಿಲ್ಲೆಯಲ್ಲೇ ಭದ್ರತಾ ವೈಫಲ್ಯ? ಕಲಬುರಗಿ ಜೈಲಿನಿಂದ ಮೂವರು ಸಜಾ ಕೈದಿಗಳು ಪರಾರಿ

ಕಲಬುರಗಿ: ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ತವರು ಜಿಲ್ಲೆಯ ಕಲಬುರಗಿ ಕೇಂದ್ರ ಕಾರಾಗೃಹದಿಂದ ಮೂವರು ಸಜಾ ಕೈದಿಗಳು ಪರಾರಿಯಾಗಿರುವ ಘಟನೆ ನಡೆದಿದೆ.

ಮಸ್ತಾನ್, ಸಂತೋಷ್ ಹಾಗೂ ಸಾಗರ್ ಪರಾರಿಯಾದ ಕೈದಿಗಳಾಗಿದ್ದು, ಬೀದರ್‌ನಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ಶಿಕ್ಷೆಗೆ ಒಳಪಟ್ಟಿದ್ದರು.

ಮಾಹಿತಿ ಪ್ರಕಾರ, ಮಧ್ಯರಾತ್ರಿ ಸುಮಾರು 3 ಗಂಟೆ ವೇಳೆಗೆ ಜೈಲಿನ ಕಂಪೌಂಡ್ ಹಾರಿ ಮೂವರು ಕೈದಿಗಳು ಪರಾರಿಯಾಗಿದ್ದಾರೆ. ಕೈದಿಗಳು ತಪ್ಪಿಸಿಕೊಳ್ಳಲು ಜೈಲು ಸಿಬ್ಬಂದಿಯೇ ಸಹಕಾರ ನೀಡಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.

ಲಾಕಪ್‌ನಲ್ಲಿ ಇರಬೇಕಾದ ಕೈದಿಗಳನ್ನು ಮಧ್ಯರಾತ್ರಿ ಹೊರಗೆ ಬಿಡಲಾಗಿದ್ದು ಹೇಗೆ ಎಂಬ ಪ್ರಶ್ನೆ ಇದೀಗ ಎದ್ದಿದೆ. ಜೈಲಿನ ಕೆಲ ಸಿಬ್ಬಂದಿ ಹಾಗೂ ಅಧಿಕಾರಿಗಳ ನೆರವಿನಿಂದಲೇ ಈ ಪರಾರಿ ನಡೆದಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.

ಘಟನೆ ಸಂಬಂಧ ಫರ್ತಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಇದೇ ವೇಳೆ, ಕಳೆದ ಜುಲೈ 3ರಂದು ಜಿಲ್ಲೆಯ ಅಫಜಲಪುರ ಪೊಲೀಸ್ ಠಾಣೆಯಿಂದ ಪೋಕ್ಸೊ ಪ್ರಕರಣದ ಆರೋಪಿ ಮಂಜಾನಾಥ್ ಎಂಬಾತ ಕೂಡ ಪರಾರಿಯಾಗಿದ್ದ. ಠಾಣೆಗೆ ಕರೆತಂದಿದ್ದ ಆರೋಪಿಯು ಪೊಲೀಸರ ಕಸ್ಟಡಿಯಿಂದ ತಪ್ಪಿಸಿಕೊಂಡಿದ್ದ ಘಟನೆ ನಡೆದಿತ್ತು. ಕಳೆದ ಕೆಲ ದಿನಗಳ ಅಂತರದಲ್ಲಿ ನಡೆದ ಈ ಎರಡು ಪರಾರಿ ಪ್ರಕರಣಗಳು ಪೊಲೀಸ್ ಇಲಾಖೆ ಹಾಗೂ ಜೈಲು ಭದ್ರತೆ ಬಗ್ಗೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿವೆ.

ಬಿಡದಿ ಟೌನ್‌ಶಿಪ್ ಜೆಎಂಸಿ ಸರ್ವೆಗೆ ಅಡ್ಡಿ; 20ಕ್ಕೂ ಹೆಚ್ಚು ರೈತರ ವಿರುದ್ಧ FIR!

ರಾಮನಗರ: ಬಿಡದಿ ಟೌನ್‌ಶಿಪ್ ಯೋಜನೆಗೆ ಸಂಬಂಧಿಸಿದ ಜಂಟಿ ಭೂಮಾಪನ ಕಾರ್ಯದ ವೇಳೆ ನಡೆದ ಗಲಾಟೆ ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ.

ಜೆಎಂಸಿ ಸರ್ವೆಗೆ ತಡೆಯೊಡ್ಡಿ, ಕಂದಾಯ ಇಲಾಖೆಯ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ್ದಾರೆ ಹಾಗೂ ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದ್ದಾರೆ ಎಂಬ ಆರೋಪದಡಿ 20ಕ್ಕೂ ಹೆಚ್ಚು ರೈತರ ವಿರುದ್ಧ ಬಿಡದಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಕಂದಾಯ ಇಲಾಖೆ ಅಧಿಕಾರಿಗಳು ನೀಡಿದ ಅಧಿಕೃತ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಂಡಲಹಳ್ಳಿ ಗ್ರಾಮದಲ್ಲಿ ಜೆಎಂಸಿ ಸರ್ವೆ ನಡೆಸುವ ವೇಳೆ ರೈತರು ಹಾಗೂ ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆದು ಪರಿಸ್ಥಿತಿ ಉದ್ವಿಗ್ನಗೊಂಡಿತ್ತು ಎನ್ನಲಾಗಿದೆ.

ಸರ್ವೆಗೆ ವಿರೋಧ ಮುಂದುವರಿಸಿದ ರೈತರು:

ಬಿಡದಿ ಟೌನ್‌ಶಿಪ್ ಯೋಜನೆ ವ್ಯಾಪ್ತಿಗೆ ಒಳಪಡುವ ಹಲವು ಗ್ರಾಮಗಳಲ್ಲಿ ರೈತರು ಇದೀಗ ಕಟ್ಟೆಚ್ಚರ ವಹಿಸಿದ್ದಾರೆ. ಜಿಲ್ಲಾಡಳಿತ ಅಥವಾ ಅಧಿಕಾರಿಗಳು ಮತ್ತೆ ಜೆಎಂಸಿ ಸರ್ವೆ ಕಾರ್ಯ ಆರಂಭಿಸಲು ಮುಂದಾದರೆ ಸ್ಥಳದಲ್ಲೇ ತಡೆದು ಪ್ರತಿಭಟನೆ ನಡೆಸಲು ರೈತ ಸಂಘಟನೆಗಳು ಹಾಗೂ ಸ್ಥಳೀಯರು ಸಿದ್ಧತೆ ಮಾಡಿಕೊಂಡಿದ್ದಾರೆ.

ಸ್ಥಳದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಜಿಲ್ಲಾಡಳಿತ ಸದ್ಯಕ್ಕೆ ಜೆಎಂಸಿ ಸರ್ವೆ ಕಾರ್ಯವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಸಂಘರ್ಷಕ್ಕೆ ಅವಕಾಶ ನೀಡದೆ, ಮೊದಲು ಪ್ರತಿಭಟನಾಕಾರರೊಂದಿಗೆ ಶಾಂತಿಯುತ ಮಾತುಕತೆ ನಡೆಸಲು ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ.

ಯೋಜನೆ ಪರ ಇರುವ ರೈತರ ಜಮೀನು ಸರ್ವೆಗೆ ಸಿದ್ಧತೆ:

ಇನ್ನೊಂದೆಡೆ, ಬಿಡದಿ ಟೌನ್‌ಶಿಪ್ ಯೋಜನೆಗೆ ಒಪ್ಪಿಗೆ ಸೂಚಿಸಿರುವ ರೈತರ ಜಮೀನುಗಳ ಜೆಎಂಸಿ ಸರ್ವೆ ಕಾರ್ಯವನ್ನು ಮುಂದುವರಿಸಲು ಜಿಲ್ಲಾಡಳಿತ ನಿರ್ಧರಿಸಿದೆ.

ಯಾವುದೇ ಅಹಿತಕರ ಘಟನೆ ನಡೆಯದಂತೆ ಹೆಚ್ಚಿನ ಪೊಲೀಸ್ ಭದ್ರತೆ ಪಡೆದುಕೊಂಡು, ಯೋಜನೆ ಪರ ಇರುವ ರೈತರ ಜಮೀನುಗಳ ಸರ್ವೆ ನಡೆಸಲು ಅಧಿಕಾರಿಗಳು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ಬಿಡದಿ ಟೌನ್‌ಶಿಪ್ ಯೋಜನೆಗೆ ಸಂಬಂಧಿಸಿದಂತೆ ರೈತರ ವಿರೋಧ, ಅಧಿಕಾರಿಗಳ ಕ್ರಮ ಹಾಗೂ ಮುಂದಿನ ಮಾತುಕತೆಗಳತ್ತ ಇದೀಗ ಎಲ್ಲರ ಗಮನ ನೆಟ್ಟಿದೆ.

ಸಚಿವರಿಗೆ ‘ಚಿಲ್ಲರೆ ಕೊಡಿ, ಇಲ್ಲದಿದ್ರೆ ಬಸ್ ಇಳಿಯಿರಿ’ ಎಂದ BMTC ಸಿಬ್ಬಂದಿ ಅಮಾನತು!

ಬೆಂಗಳೂರು: ಮುಖಕ್ಕೆ ಮಾಸ್ಕ್ ಧರಿಸಿ ಸಾಮಾನ್ಯ ಪ್ರಯಾಣಿಕರಂತೆ ಬಿಎಂಟಿಸಿ ಬಸ್‌ನಲ್ಲಿ ಸಂಚರಿಸಿ ಸಾರಿಗೆ ವ್ಯವಸ್ಥೆಯ ರಿಯಾಲಿಟಿ ಚೆಕ್ ನಡೆಸಿದ್ದ ಸಚಿವ ಭೈರತಿ ಸುರೇಶ್ ಅವರಿಗೆ ಉದ್ಧಟತನದಿಂದ ವರ್ತಿಸಿದ್ದ ಆರೋಪದಡಿ ಚಾಲಕ ಕಂ ನಿರ್ವಾಹಕನನ್ನು ಬಿಎಂಟಿಸಿ ಅಮಾನತುಗೊಳಿಸಿದೆ.

ರಾಮಕೃಷ್ಣ ಟಿ.ಜಿ. ಅಮಾನತುಗೊಂಡ ಸಿಬ್ಬಂದಿಯಾಗಿದ್ದಾರೆ.

ಜುಲೈ 11ರಂದು ರಾತ್ರಿ ಸುಮಾರು 9.30ರ ವೇಳೆಗೆ ಸಚಿವ ಭೈರತಿ ಸುರೇಶ್ ಹೆಬ್ಬಾಳದಿಂದ ಭೂಪಸಂದ್ರಕ್ಕೆ ತೆರಳುತ್ತಿದ್ದ ಬಿಎಂಟಿಸಿ ಬಸ್ ಏರಿದ್ದರು. ತಮ್ಮ ಗುರುತು ಮರೆಮಾಚಿಕೊಂಡು ಸಾಮಾನ್ಯ ಪ್ರಯಾಣಿಕರಂತೆ ಪ್ರಯಾಣಿಸಿದ ಸಚಿವರು, ಬಸ್ ಸಿಬ್ಬಂದಿಯ ಕಾರ್ಯವೈಖರಿ ಹಾಗೂ ಪ್ರಯಾಣಿಕರಿಗೆ ನೀಡಲಾಗುತ್ತಿರುವ ಸೇವೆಯನ್ನು ಖುದ್ದಾಗಿ ಪರಿಶೀಲಿಸಿದ್ದರು.

ಪ್ರಯಾಣದ ವೇಳೆ ಟಿಕೆಟ್ ಪಡೆಯಲು ಸಚಿವರು ಹಣ ನೀಡಿದ್ದರು. ಈ ಸಂದರ್ಭದಲ್ಲಿ ಚಾಲಕ ಕಂ ನಿರ್ವಾಹಕ ರಾಮಕೃಷ್ಣ ಟಿ.ಜಿ. ಆರು ರೂಪಾಯಿ ಚಿಲ್ಲರೆ ನೀಡುವಂತೆ ಕೇಳಿದ್ದಾರೆ. ತಮ್ಮ ಬಳಿ ಚಿಲ್ಲರೆ ಇಲ್ಲ ಎಂದು ಸಚಿವರು ತಿಳಿಸಿದಾಗ, ‘ಚಿಲ್ಲರೆ ಕೊಡಿ, ಇಲ್ಲದಿದ್ದರೆ ಬಸ್‌ನಿಂದ ಕೆಳಗೆ ಇಳಿಯಿರಿ’ ಎಂದು ಉದ್ಧಟತನದಿಂದ ವರ್ತಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಯುಪಿಐ ವ್ಯವಸ್ಥೆ ಇದ್ದರೂ ಮಾಹಿತಿ ನೀಡದ ಸಿಬ್ಬಂದಿ:

ಬಿಎಂಟಿಸಿ ಬಸ್‌ಗಳಲ್ಲಿ 2024ರಿಂದಲೇ ಯುಪಿಐ ಮೂಲಕ ಡಿಜಿಟಲ್ ಟಿಕೆಟ್ ಪಾವತಿ ವ್ಯವಸ್ಥೆ ಜಾರಿಯಲ್ಲಿದೆ. ನಿಗಮದ ಒಟ್ಟು ಟಿಕೆಟ್ ಆದಾಯದಲ್ಲಿ ಸುಮಾರು ಶೇ.53ರಷ್ಟು ಹಣ ಯುಪಿಐ ಮೂಲಕವೇ ಸಂಗ್ರಹವಾಗುತ್ತಿದೆ.

ಆದರೆ, ಚಿಲ್ಲರೆ ಇಲ್ಲದ ಸಂದರ್ಭದಲ್ಲಿ ಪ್ರಯಾಣಿಕರಿಗೆ ಯುಪಿಐ ಪಾವತಿ ವ್ಯವಸ್ಥೆಯ ಬಗ್ಗೆ ಮಾಹಿತಿ ನೀಡಬೇಕಿದ್ದ ನಿರ್ವಾಹಕ ಕರ್ತವ್ಯದಲ್ಲಿ ವಿಫಲರಾಗಿದ್ದಾರೆ ಎಂದು ಬಿಎಂಟಿಸಿ ಪರಿಗಣಿಸಿದೆ. ಸಿಬ್ಬಂದಿಯ ವರ್ತನೆಯಿಂದ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಸಂಸ್ಥೆಯ ವಿರುದ್ಧ ನಕಾರಾತ್ಮಕ ಪ್ರಚಾರಕ್ಕೆ ಅವಕಾಶ ಉಂಟಾಗಿದೆ ಎಂದು ನಿಗಮ ತಿಳಿಸಿದೆ.

ಈ ಹಿನ್ನೆಲೆಯಲ್ಲಿ ಇಲಾಖಾ ವಿಚಾರಣೆಯನ್ನು ಬಾಕಿ ಇರಿಸಿ ರಾಮಕೃಷ್ಣ ಟಿ.ಜಿ. ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.

ಫನ್ ವರ್ಲ್ಡ್ ಬಳಿ ಹೊಸ ಬಸ್ ನಿಲ್ದಾಣ:

ಸಚಿವರ ರಿಯಾಲಿಟಿ ಚೆಕ್ ವೇಳೆ ಮತ್ತೊಂದು ಸಮಸ್ಯೆಯೂ ಬೆಳಕಿಗೆ ಬಂದಿದೆ. ಜಯಮಹಲ್ ರಸ್ತೆಯ ಫನ್ ವರ್ಲ್ಡ್ ಸಮೀಪ ಪ್ರಯಾಣಿಕರೊಬ್ಬರು ಬಸ್ ನಿಲ್ಲಿಸುವಂತೆ ಕೈ ಸನ್ನೆ ಮಾಡಿದರೂ, ಬಸ್ ನಿಲ್ಲಿಸದೆ ತೆರಳಿರುವುದನ್ನು ಸಚಿವರು ಗಮನಿಸಿದ್ದರು.

ಪ್ರಯಾಣಿಕರ ಅನುಕೂಲಕ್ಕಾಗಿ ಸಚಿವರ ನಿರ್ದೇಶನದ ಮೇರೆಗೆ ಫನ್ ವರ್ಲ್ಡ್ ಸಮೀಪ ಅಧಿಕೃತ ಬಸ್ ನಿಲುಗಡೆಯನ್ನು ಜಾರಿಗೆ ತರಲಾಗಿದೆ ಎಂದು ಬಿಎಂಟಿಸಿ ಪ್ರಕಟಣೆಯಲ್ಲಿ ತಿಳಿಸಿದೆ.

ಮಂಗಳೂರಿನಲ್ಲಿ 11 ಅಕ್ರಮ ಬಾಂಗ್ಲಾ ವಲಸಿಗರು ಪತ್ತೆ; ನಾಲ್ವರು ಅಪ್ರಾಪ್ತರು ವಶಕ್ಕೆ!

ಮಂಗಳೂರು: ಅಕ್ರಮವಾಗಿ ಭಾರತಕ್ಕೆ ನುಸುಳಿ ಮಂಗಳೂರಿನಲ್ಲಿ ಕೂಲಿ ಕೆಲಸ ಮಾಡುತ್ತಿದ್ದ 11 ಮಂದಿ ಬಾಂಗ್ಲಾದೇಶದ ಪ್ರಜೆಗಳನ್ನು ಪೊಲೀಸರು ಪತ್ತೆಹಚ್ಚಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರದ ಉರ್ವಾ ಪೊಲೀಸ್ ಠಾಣಾ ವ್ಯಾಪ್ತಿಯ ಕಟ್ಟಡ ನಿರ್ಮಾಣ ಕಾಮಗಾರಿ ಸ್ಥಳದಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಏಳು ಮಂದಿಯನ್ನು ಬಂಧಿಸಿದ್ದು, ನಾಲ್ವರು ಅಪ್ರಾಪ್ತರನ್ನು ವಶಕ್ಕೆ ಪಡೆದಿದ್ದಾರೆ.

ಖಚಿತ ಮಾಹಿತಿ ಮೇರೆಗೆ ಪೊಲೀಸರು ಕಟ್ಟಡ ನಿರ್ಮಾಣ ಕಾಮಗಾರಿ ಸ್ಥಳದ ಮೇಲೆ ದಾಳಿ ನಡೆಸಿದಾಗ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾದೇಶದ ಪ್ರಜೆಗಳು ಪತ್ತೆಯಾಗಿದ್ದಾರೆ. ಬಂಧಿತರನ್ನು ಎಂ.ಡಿ. ಕೌಸರ್ ಅಲಿ, ಎಂ.ಡಿ. ನೂರ್ ಅಮೀನ್, ಎಂ.ಡಿ. ನಾಹಿದುಲ್ ಇಸ್ಲಾಂ, ಹುಮಾಯೂನ್ ಕಬೀರ್, ರೊಮ್ಜಾನ್ ಅಲಿ, ಅಬ್ದುಲ್ ರಹಮಾನ್ ರೊಯೆಲ್ ಹಾಗೂ ನೋಯಾನ್ ಎಂದು ಗುರುತಿಸಲಾಗಿದೆ. ನಾಲ್ವರು ಅಪ್ರಾಪ್ತರ ವಿರುದ್ಧ ಅಗತ್ಯ ಕಾನೂನು ಪ್ರಕ್ರಿಯೆ ಕೈಗೊಳ್ಳಲಾಗುತ್ತಿದೆ.

ಪಶ್ಚಿಮ ಬಂಗಾಳದ ನಕಲಿ ವಿಳಾಸ ಬಳಕೆ:

ಆರೋಪಿಗಳು ಅಕ್ರಮವಾಗಿ ಭಾರತ ಪ್ರವೇಶಿಸಿ, ಪಶ್ಚಿಮ ಬಂಗಾಳದ ನಕಲಿ ವಿಳಾಸಗಳನ್ನು ಬಳಸಿಕೊಂಡು ಮಂಗಳೂರಿಗೆ ಬಂದಿದ್ದರು ಎನ್ನಲಾಗಿದೆ. ಬಳಿಕ ಕಟ್ಟಡ ನಿರ್ಮಾಣ ಕಾಮಗಾರಿಗಳಲ್ಲಿ ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು ಎಂಬುದು ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಮೂಲದ ಏಜೆಂಟ್ ಒಬ್ಬರ ವಿರುದ್ಧ ಉರ್ವಾ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.

ಬಾಂಗ್ಲಾದೇಶದ ಗುರುತಿನ ಚೀಟಿ ವಶ:

ಕಾರ್ಯಾಚರಣೆ ವೇಳೆ ಆರೋಪಿಗಳ ಬಳಿಯಿಂದ ಬಾಂಗ್ಲಾದೇಶದ ರಾಷ್ಟ್ರೀಯ ಗುರುತಿನ ಚೀಟಿ, ಜನನ ಪ್ರಮಾಣಪತ್ರ ಹಾಗೂ ಕುಟುಂಬಕ್ಕೆ ಸಂಬಂಧಿಸಿದ ಇತರ ದಾಖಲೆಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ದಾಖಲೆಗಳ ಆಧಾರದ ಮೇಲೆ ಬಂಧಿತರು ಬಾಂಗ್ಲಾದೇಶದ ನಿವಾಸಿಗಳೇ ಎಂಬುದನ್ನು ಪರಿಶೀಲಿಸಲಾಗುತ್ತಿದೆ.

ಇತ್ತೀಚೆಗೆ ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ನಡೆದ ಮತ್ತೊಂದು ಕಾರ್ಯಾಚರಣೆಯಲ್ಲೂ ಅಕ್ರಮ ಬಾಂಗ್ಲಾದೇಶಿ ವಲಸಿಗರನ್ನು ಪೊಲೀಸರು ಪತ್ತೆಹಚ್ಚಿದ್ದರು. ಇದೀಗ ಉರ್ವಾದಲ್ಲಿ ಮತ್ತೆ 11 ಮಂದಿ ಪತ್ತೆಯಾಗಿರುವುದು ಅಕ್ರಮ ವಲಸೆ ಜಾಲದ ಕುರಿತು ಅನುಮಾನ ಮೂಡಿಸಿದೆ.

ಪ್ರಕರಣದ ವರದಿಯನ್ನು ಬೆಂಗಳೂರಿನ ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿಗೆ (FRRO) ಸಲ್ಲಿಸಲಾಗಿದ್ದು, ಮುಂದಿನ ಕಾನೂನು ಪ್ರಕ್ರಿಯೆ ಆರಂಭಿಸಲಾಗಿದೆ. ಅಕ್ರಮ ವಲಸೆ ಜಾಲದಲ್ಲಿ ಭಾಗಿಯಾಗಿರುವ ಇತರ ವ್ಯಕ್ತಿಗಳ ಬಗ್ಗೆಯೂ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Chanakya Niti: ಪ್ರಗತಿಗೆ ಅಡ್ಡಿಯಾಗುವ ಕೆಟ್ಟ ಅಭ್ಯಾಸಗಳಿವು; ತಪ್ಪದೇ ನಿಯಂತ್ರಿಸಿ!

0

ಜೀವನದಲ್ಲಿ ಯಶಸ್ಸು ಹಾಗೂ ಪ್ರಗತಿ ಸಾಧಿಸಲು ನಮ್ಮ ಕೆಲವು ಅಭ್ಯಾಸಗಳ ಮೇಲೆ ನಿಯಂತ್ರಣ ಹೊಂದುವುದು ಅಗತ್ಯ ಎಂದು ಆಚಾರ್ಯ ಚಾಣಕ್ಯರು ಹೇಳಿದ್ದಾರೆ.

ನಮ್ಮಲ್ಲಿರುವ ಕೆಲವು ಕೆಟ್ಟ ಅಭ್ಯಾಸಗಳು ಜೀವನದ ಬೆಳವಣಿಗೆಗೆ ಅಡ್ಡಿಯಾಗಬಹುದು. ಅವುಗಳನ್ನು ನಿಯಂತ್ರಿಸಲು ಕಲಿತವರು ಮಾತ್ರ ಸಕಾರಾತ್ಮಕವಾಗಿ ಮುಂದೆ ಸಾಗಲು ಸಾಧ್ಯ ಎಂದು ಚಾಣಕ್ಯ ನೀತಿಯಲ್ಲಿ ತಿಳಿಸಲಾಗಿದೆ.

ಕೋಪದ ಮೇಲೆ ಇರಲಿ ನಿಯಂತ್ರಣ:

ಚಾಣಕ್ಯರ ಪ್ರಕಾರ, ಕೋಪವು ಮನುಷ್ಯನ ದೊಡ್ಡ ಶತ್ರು. ಕೋಪದ ಸಮಯದಲ್ಲಿ ವ್ಯಕ್ತಿಯ ಯೋಚನಾ ಶಕ್ತಿ ಕುಂದುತ್ತದೆ ಹಾಗೂ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಧ್ಯತೆ ಹೆಚ್ಚಾಗುತ್ತದೆ. ಇದರಿಂದ ಸಂಬಂಧಗಳು ಹಾಳಾಗುವುದರ ಜೊತೆಗೆ ವೈಯಕ್ತಿಕ ಹಾಗೂ ವೃತ್ತಿ ಜೀವನದ ಮೇಲೂ ಪರಿಣಾಮ ಬೀರುತ್ತದೆ. ಹೀಗಾಗಿ ಕೋಪ ಬಂದಾಗ ತಕ್ಷಣ ಪ್ರತಿಕ್ರಿಯಿಸುವ ಬದಲು ಶಾಂತವಾಗಿ ಯೋಚಿಸುವುದು ಉತ್ತಮ.

ಮಾತಿನ ಮೇಲೆ ಹಿಡಿತ ಇರಲಿ:

ಯೋಚಿಸದೆ ಮಾತನಾಡುವ ಅಭ್ಯಾಸ ಹಲವು ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ಚಾಣಕ್ಯರು ಎಚ್ಚರಿಸಿದ್ದಾರೆ. ಮಾತನಾಡುವ ಮುನ್ನ ಯೋಚಿಸುವುದು ಹಾಗೂ ಸೌಮ್ಯವಾಗಿ ಮಾತನಾಡುವುದು ಉತ್ತಮ ಸಂಬಂಧಗಳನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಅಲ್ಲದೆ, ತಮ್ಮ ಯೋಜನೆಗಳು ಹಾಗೂ ವೈಯಕ್ತಿಕ ವಿಚಾರಗಳನ್ನು ಎಲ್ಲರೊಂದಿಗೂ ಹಂಚಿಕೊಳ್ಳುವುದನ್ನು ತಪ್ಪಿಸಬೇಕು ಎಂದು ಸಲಹೆ ನೀಡಿದ್ದಾರೆ.

ಆಸೆ ಮತ್ತು ದುರಾಸೆ ನಿಯಂತ್ರಿಸಿ:

ಅತಿಯಾದ ಆಸೆ ಹಾಗೂ ದುರಾಸೆ ವ್ಯಕ್ತಿಯ ನೆಮ್ಮದಿಯನ್ನು ಕಸಿದುಕೊಳ್ಳಬಹುದು. ಇರುವುದರಲ್ಲಿ ತೃಪ್ತಿ ಹೊಂದಿ, ತಮ್ಮ ಗುರಿಗಳ ಮೇಲೆ ಗಮನ ಕೇಂದ್ರೀಕರಿಸಿದರೆ ಜೀವನದಲ್ಲಿ ಉತ್ತಮ ಬದಲಾವಣೆಗಳನ್ನು ತರಬಹುದು ಎಂದು ಚಾಣಕ್ಯ ನೀತಿ ಹೇಳುತ್ತದೆ.

ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಿ:

ಹಣ ಸಂಪಾದಿಸುವುದು ಎಷ್ಟು ಮುಖ್ಯವೋ, ಅದನ್ನು ಸರಿಯಾದ ರೀತಿಯಲ್ಲಿ ಬಳಸುವುದು ಕೂಡ ಅಷ್ಟೇ ಮುಖ್ಯ ಎಂದು ಚಾಣಕ್ಯರು ಹೇಳಿದ್ದಾರೆ. ಅಗತ್ಯವಿಲ್ಲದ ಖರ್ಚುಗಳನ್ನು ನಿಯಂತ್ರಿಸದಿದ್ದರೆ ಹಣ ಉಳಿಸಲು ಸಾಧ್ಯವಾಗುವುದಿಲ್ಲ. ಭವಿಷ್ಯದ ಭದ್ರತೆಗಾಗಿ ಹಣದ ನಿರ್ವಹಣೆಯಲ್ಲಿ ಎಚ್ಚರಿಕೆ ವಹಿಸಬೇಕು.

ಒಟ್ಟಿನಲ್ಲಿ, ಕೋಪ, ಮಾತು, ಆಸೆ ಹಾಗೂ ಖರ್ಚಿನ ಮೇಲೆ ನಿಯಂತ್ರಣ ಸಾಧಿಸಿದರೆ ಜೀವನದಲ್ಲಿ ಯಶಸ್ಸಿನ ಹಾದಿ ಸುಲಭವಾಗುತ್ತದೆ ಎಂಬುದು ಚಾಣಕ್ಯ ನೀತಿಯ ಸಾರವಾಗಿದೆ.