ಚೆನ್ನೈ: ತಮಿಳುನಾಡು ವಿಧಾನಸಭೆಯಲ್ಲಿ ಮುಖ್ಯಮಂತ್ರಿ ದಳಪತಿ ವಿಜಯ್ ನೀಡಿದ ಭಾಷಣ ಹಾಗೂ ಅದರ ಕೊನೆಯಲ್ಲಿ ಪ್ರದರ್ಶಿಸಿದ ಸ್ಟೈಲ್ ಇದೀಗ ರಾಜಕೀಯ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ವಿಪಕ್ಷಗಳ ಟೀಕೆಗಳಿಗೆ ತಕ್ಕ ಉತ್ತರ ನೀಡಿದ ವಿಜಯ್, ತಮ್ಮ ಪಕ್ಷದ ಕಾರ್ಯವೈಖರಿಯನ್ನು ಸಮರ್ಥಿಸಿಕೊಂಡು ಭ್ರಷ್ಟಾಚಾರದ ವಿರುದ್ಧ ಕಠಿಣ ಸಂದೇಶ ರವಾನಿಸಿದ್ದಾರೆ.
ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆ ವೇಳೆ ವಿರೋಧ ಪಕ್ಷಗಳು ಸರ್ಕಾರ ಹಾಗೂ ವಿಜಯ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿ ಸಭಾತ್ಯಾಗ ಮಾಡಿದ್ದವು. ಬಳಿಕ ಉತ್ತರ ಭಾಷಣ ಮಾಡಿದ ವಿಜಯ್, ತಮ್ಮ ಪಕ್ಷವನ್ನು ಕೇವಲ ಸಿನಿಮಾ ಹಿನ್ನೆಲೆಯ ಪಕ್ಷ ಎಂದು ಟೀಕಿಸುವವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಚುನಾವಣೆಗೂ ಮುನ್ನ ಜನಪರ ಹೋರಾಟಗಳು, ಸಾಮಾಜಿಕ ಸೇವಾ ಕಾರ್ಯಗಳು ಹಾಗೂ ಸಾರ್ವಜನಿಕ ಸಮಸ್ಯೆಗಳ ಪರ ನಡೆಸಿದ ಹೋರಾಟಗಳ ವಿವರ ನೀಡಿದ ಅವರು, “ನಮ್ಮದು ಜನರ ಮಧ್ಯೆ ಬೆಳೆದ ರಿಯಲ್ ಪಕ್ಷ” ಎಂದು ಸ್ಪಷ್ಟಪಡಿಸಿದರು.
ಭಾಷಣದ ಕೊನೆಯಲ್ಲಿ ಮಾಜಿ ಮುಖ್ಯಮಂತ್ರಿ ಸ್ಟಾಲಿನ್ ಈ ಹಿಂದೆ ಬಳಸಿದ್ದ ವೈರಲ್ ಸಂಜ್ಞೆಯನ್ನು ಮರುಕಳಿಸಿದ ವಿಜಯ್, ಪರೋಕ್ಷವಾಗಿ ರಾಜಕೀಯ ಎದುರಾಳಿಗಳಿಗೆ ಎಚ್ಚರಿಕೆ ನೀಡಿದರು. ವಿಶೇಷವಾಗಿ ಭ್ರಷ್ಟಾಚಾರದ ವಿರುದ್ಧ ಕಠಿಣ ಕ್ರಮದ ಸಂದೇಶ ನೀಡಿದ ತಕ್ಷಣ ಆ ಸಂಜ್ಞೆ ಪ್ರದರ್ಶಿಸಿದ್ದರಿಂದ, ಇದು ಹಿಂದಿನ ಆಡಳಿತದ ವಿರುದ್ಧದ ರಾಜಕೀಯ ಸೂಚನೆ ಎಂಬ ವಿಶ್ಲೇಷಣೆಗಳು ಕೇಳಿಬರುತ್ತಿವೆ.
ವಿಧಾನಸಭೆಯಲ್ಲಿನ ಈ ದೃಶ್ಯ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಬೆಂಬಲಿಗರು ವಿಜಯ್ ಅವರ ರಾಜಕೀಯ ಆತ್ಮವಿಶ್ವಾಸವನ್ನು ಪ್ರಶಂಸಿಸುತ್ತಿದ್ದರೆ, ವಿರೋಧಿಗಳು ಅದರ ಬಗ್ಗೆ ವಿಭಿನ್ನ ವ್ಯಾಖ್ಯಾನಗಳನ್ನು ಮಾಡುತ್ತಿದ್ದಾರೆ.

