Home Blog

ನ್ಯಾಯಾಲಯದ ಆದೇಶ ಮೀರಿ ಚಾಮುಂಡಿ ಬೆಟ್ಟ ಕಾಮಗಾರಿ: ಸರ್ಕಾರಕ್ಕೆ ಹೈಕೋರ್ಟ್ ತರಾಟೆ

ಬೆಂಗಳೂರು: ನ್ಯಾಯಾಲಯಕ್ಕೆ ನೀಡಿದ್ದ ಭರವಸೆಯನ್ನು ಮೀರಿ ಮೈಸೂರಿನ ಚಾಮುಂಡಿ ಬೆಟ್ಟದ ದೇವಸ್ಥಾನ ಆವರಣದಲ್ಲಿ ಕಾಮಗಾರಿ ನಡೆಸಿರುವ ರಾಜ್ಯ ಸರ್ಕಾರದ ಕ್ರಮಕ್ಕೆ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ವಿವಾದಿತ ಪ್ರದೇಶದಲ್ಲಿ ನಡೆಯುತ್ತಿರುವ ಎಲ್ಲಾ ನಿರ್ಮಾಣ ಚಟುವಟಿಕೆಗಳನ್ನು ತಕ್ಷಣವೇ ಸ್ಥಗಿತಗೊಳಿಸಲು ಮಧ್ಯಂತರ ಆದೇಶ ನೀಡಲಾಗಿದೆ.

ಚಾಮುಂಡಿ ಬೆಟ್ಟದ ಮೂಲ ಸ್ವರೂಪಕ್ಕೆ ಧಕ್ಕೆಯಾಗುವ ರೀತಿಯಲ್ಲಿ ಕಾಮಗಾರಿ ನಡೆಯುತ್ತಿದೆ ಎಂದು ಆಕ್ಷೇಪಿಸಿ ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಂ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ಹೊರಡಿಸಿದೆ.

ದೇವಾಲಯದ ಆವರಣದಲ್ಲಿ ನಡೆಯುತ್ತಿರುವ ಎಲ್ಲ ರೀತಿಯ ನಿರ್ಮಾಣ ಕಾಮಗಾರಿಗಳನ್ನು ತಕ್ಷಣ ನಿಲ್ಲಿಸಬೇಕು ಎಂದು ಪೀಠ ಸೂಚಿಸಿದೆ. ಜೊತೆಗೆ, ಕಾಮಗಾರಿಗಾಗಿ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ 47 ಕೋಟಿ ರೂ. ಅನುದಾನವನ್ನು ಯಾವ ಕೆಲಸಗಳಿಗೆ ಬಳಸಲಾಗಿದೆ ಹಾಗೂ ಎಷ್ಟು ವೆಚ್ಚ ಮಾಡಲಾಗಿದೆ ಎಂಬುದರ ಕುರಿತು ಎರಡು ವಾರಗಳೊಳಗೆ ವಿವರವಾದ ಪ್ರಮಾಣಪತ್ರ ಸಲ್ಲಿಸುವಂತೆ ಸರ್ಕಾರಕ್ಕೆ ಸೂಚನೆ ನೀಡಲಾಗಿದೆ.

ಇದಕ್ಕೂ ಮೊದಲು, ನ್ಯಾಯಾಲಯದ ಪೂರ್ವಾನುಮತಿಯಿಲ್ಲದೆ ಯಾವುದೇ ಶಾಶ್ವತ ಕಾಮಗಾರಿ ಕೈಗೊಳ್ಳುವುದಿಲ್ಲ ಎಂದು ರಾಜ್ಯ ಸರ್ಕಾರ ಭರವಸೆ ನೀಡಿತ್ತು. ಆದರೆ, ನ್ಯಾಯಾಲಯಕ್ಕೆ ಸಲ್ಲಿಸಲಾದ ಚಿತ್ರಗಳನ್ನು ಗಮನಿಸಿದರೆ, ದೇವಸ್ಥಾನ ಆವರಣದಲ್ಲಿ ಬೃಹತ್ ಮಟ್ಟದ ಶಾಶ್ವತ ನಿರ್ಮಾಣ ಕಾರ್ಯ ನಡೆದಿದೆ ಎಂಬುದು ಸ್ಪಷ್ಟವಾಗುತ್ತದೆ ಎಂದು ಪೀಠ ತಿಳಿಸಿದೆ.

ಕೇಂದ್ರ ಸರ್ಕಾರದಿಂದ 47 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ ಎಂಬ ಕಾರಣ ನೀಡಿ ಕಾಮಗಾರಿಯನ್ನು ಸಮರ್ಥಿಸಿಕೊಂಡಿರುವ ಜಿಲ್ಲಾಧಿಕಾರಿಗಳ ಕ್ರಮವನ್ನು ಪೀಠ ತೀವ್ರವಾಗಿ ಟೀಕಿಸಿದೆ. ಇದು ದುರುದ್ದೇಶಪೂರಿತವಾಗಿದ್ದು, ಕಾನೂನಾತ್ಮಕವಾಗಿ ಸಂಪೂರ್ಣ ಅಸಂಗತ ಎಂದು ಹೇಳಿದೆ.

ಜಿಲ್ಲಾಧಿಕಾರಿಗಳು ರಾಜ್ಯದ ಅಧಿಕಾರಿಯಾಗಿರುವುದರಿಂದ ನ್ಯಾಯಾಲಯದ ಆದೇಶಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಅವರ ಕರ್ತವ್ಯವಾಗಿದೆ. ಆದೇಶ ಪಾಲನೆ ಮಾಡದಿರುವುದನ್ನು ಸಮರ್ಥಿಸುವ ಯಾವುದೇ ಪ್ರಯತ್ನವೂ ನ್ಯಾಯಾಂಗ ಅಧಿಕಾರದ ಉಲ್ಲಂಘನೆಯಾಗುತ್ತದೆ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.

ಕಳೆದ ವರ್ಷ ಅಲ್ಪ ಏರಿಕೆ ಕಂಡಿದ್ದ ಫಲಿತಾಂಶ ಮತ್ತೆ ಕುಸಿತ: ಗದಗ ಜಿಲ್ಲೆಗೆ ಹಿನ್ನಡೆ

0

ಗದಗ: ರಾಜ್ಯದಲ್ಲಿ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ಗದಗ ಜಿಲ್ಲೆ ಈ ಬಾರಿ ಮತ್ತೊಮ್ಮೆ ಹಿನ್ನಡೆಯನ್ನು ಅನುಭವಿಸಿದೆ. ಕಳೆದ ವರ್ಷ ಅಲ್ಪ ಮಟ್ಟಿನ ಏರಿಕೆ ಕಂಡಿದ್ದ ಫಲಿತಾಂಶ, ಈ ಬಾರಿ ಮತ್ತೆ ಕುಸಿತ ಕಂಡಿರುವುದು ಜಿಲ್ಲೆಯ ಶೈಕ್ಷಣಿಕ ವ್ಯವಸ್ಥೆಯ ಕುರಿತು ಪ್ರಶ್ನೆಗಳು ಮೂಡುವಂತೆ ಮಾಡಿದೆ.

2024ರಲ್ಲಿ ರಾಜ್ಯದಲ್ಲೇ ಕೊನೆಯ ಸ್ಥಾನದಲ್ಲಿದ್ದ ಗದಗ ಜಿಲ್ಲೆ, 2025ರಲ್ಲಿ 25ನೇ ಸ್ಥಾನಕ್ಕೆ ಏರಿಕೆಯಾಗಿ ನಿರೀಕ್ಷೆ ಹುಟ್ಟಿಸಿತ್ತು. ಆದರೆ 2026ರಲ್ಲಿ ಮತ್ತೆ 30ನೇ ಸ್ಥಾನಕ್ಕೆ ಜಾರುವ ಮೂಲಕ, ಜಿಲ್ಲೆ ತನ್ನ ಪ್ರದರ್ಶನವನ್ನು ಸ್ಥಿರಗೊಳಿಸಲು ವಿಫಲವಾಗಿದೆ.

ಇದ್ರಲ್ಲೂ ಗಮನಾರ್ಹ ವಿಷಯವೆಂದರೆ, ಈ ಬಾರಿ ಜಿಲ್ಲೆಯಲ್ಲಿ ಶೇಕಡಾವಾರು ಉತ್ತೀರ್ಣತೆ ಶೇ. 76.65 ದಾಖಲಾಗಿದ್ದು, ಕಳೆದ ವರ್ಷದ ಶೇ. 66.64 ಕ್ಕಿಂತ ಹೆಚ್ಚಾಗಿದೆ. ಆದಾಗ್ಯೂ, ರಾಜ್ಯದ ಇತರೆ ಜಿಲ್ಲೆಗಳ ಉತ್ತಮ ಸಾಧನೆಯ ಹಿನ್ನೆಲೆ ಗದಗ ಜಿಲ್ಲೆಯ ರ್ಯಾಂಕಿಂಗ್ ಕುಸಿತ ಕಂಡಿದೆ. ರಾಜ್ಯಮಟ್ಟದ ಒಟ್ಟಾರೆ ಉತ್ತೀರ್ಣ ಪ್ರಮಾಣ ಏರಿಕೆಯಾದುದು ಮಾತ್ರ ಸ್ವಲ್ಪ ಸಮಾಧಾನ ತಂದಿದೆ.

ಕಳೆದ ನಾಲ್ಕು ವರ್ಷದ ಪಿಯು ಫಲಿತಾಂಶ

  1. 2025-26 76.65% 30
  2. 2024-25 66.64% 25
  3. 2023-24 72.86% 32
  4. 2022-23 66.91% 30

ಇನ್ನೂ ಈ ಬಗ್ಗೆ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಎಸ್. ಬಿ. ಮಸನಾಯಕ ಪ್ರತಿಕ್ರಿಯೇ ನೀಡಿದ್ದು, ಈ ಬಾರಿ ಶೇಕಡಾವಾರು ಉತ್ತೀರ್ಣತೆ ಏರಿಕೆಯಾದರೂ, ರಾಜ್ಯಮಟ್ಟದ ರ್ಯಾಂಕಿಂಗ್ನಲ್ಲಿ ಗದಗ ಜಿಲ್ಲೆ ಕುಸಿತ ಕಂಡಿದೆ. ಫಲಿತಾಂಶ ಸುಧಾರಣೆಗೆ ಹಲವು ಕ್ರಮಗಳನ್ನು ಕೈಗೊಂಡಿದ್ದರೂ ನಿರೀಕ್ಷಿತ ಮಟ್ಟದ ಫಲಿತಾಂಶ ದೊರಕಿಲ್ಲ. ಈ ಬಗ್ಗೆ ಸಮಗ್ರ ಆತ್ಮಾವಲೋಕನ ನಡೆಸಲಾಗುತ್ತದೆ ಎಂದು ಹೇಳಿದ್ದಾರೆ.

ಹಣ್ಣು ಮಾರುವ ಕುಟುಂಬದ ಮಗಳು ಜಿಲ್ಲೆಗೆ ದ್ವಿತೀಯ ಸ್ಥಾನ! ಬಡತನದಲ್ಲೂ 97.33% ಅಂಕ

0

ಲಕ್ಷ್ಮೇಶ್ವರ: ಪ್ರತಿಭೆ ಯಾರ ಸ್ವತ್ತೂ ಅಲ್ಲ, ಅದು ಸಾಧಕನ ಸ್ವತ್ತು ಎಂಬುದಕ್ಕೆ ಲಕ್ಷ್ಮೇಶ್ವರ ಪಟ್ಟಣದ ರೋಹಿಣಿ ಬೆಟಗೇರಿ ಜೀವಂತ ಉದಾಹರಣೆಯಾಗಿದ್ದಾಳೆ. ಹಣ್ಣು ಮಾರುವ ತಂದೆ-ತಾಯಿಯ ಮಗಳಾದ ರೋಹಿಣಿ ಬಡತನದಲ್ಲಿಯೇ ಓದಿ, ಪಿಯುಸಿ ಕಲಾ ವಿಭಾಗದಲ್ಲಿ 600ರಲ್ಲಿ 584 ಅಂಕ (97.33%) ಗಳಿಸಿ ಜಿಲ್ಲೆಗೆ ದ್ವಿತೀಯ ಸ್ಥಾನ ಪಡೆದು ಹೆತ್ತವರ ಹಾಗೂ ಕಾಲೇಜಿನ ಕೀರ್ತಿ ಹೆಚ್ಚಿಸಿದ್ದಾಳೆ.

ರೋಹಿಣಿ ಪಟ್ಟಣದ ತಾಯಿ ಪಾರ್ವತಿ ಮಕ್ಕಳ ಬಳಗದ ಶ್ರೀ ವೀರ ಗಂಗಾಧರ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದು, ಇದೇ ಸಂಸ್ಥೆಯಲ್ಲಿ ಎಸ್ಎಸ್ಎಲ್ಸಿಯಲ್ಲಿ ಶೇ. 95 ಅಂಕ ಪಡೆದಿದ್ದಳು. ಪಿಯುಸಿಯಲ್ಲಿ ಕನ್ನಡ, ಹಿಂದಿ ಮತ್ತು ಭೂಗೋಳಶಾಸ್ತ್ರದಲ್ಲಿ ಶತಕಕ್ಕೆ ಶತಕ ಅಂಕಗಳನ್ನು ಗಳಿಸಿ ತನ್ನ ಪ್ರತಿಭೆ ತೋರಿದ್ದಾಳೆ. ಚಿತ್ರಕಲೆಯಲ್ಲಿ ವಿಶೇಷ ಆಸಕ್ತಿಯುಳ್ಳ ಈಕೆ ಉತ್ತಮ ಚಿತ್ರ ಮತ್ತು ಪೇಟಿಂಗ್ ಮಾಡುವಲ್ಲಿಯೂ ನಿಪುಣಳಾಗಿದ್ದಾಳೆ.

ರೋಹಿಣಿಯ ತಂದೆ ಪ್ರಭು ಹಾಗೂ ತಾಯಿ ಕವಿತಾ, ಅಜ್ಜಿ ಸೋಮಕ್ಕ ಲಕ್ಷ್ಮೇಶ್ವರದಲ್ಲಿ ಬಾಳೆಹಣ್ಣು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಆಶ್ರಯ ಯೋಜನೆಯಡಿ ದೊರೆತ ಚಿಕ್ಕ ಮನೆಯನ್ನು ಹೊರತುಪಡಿಸಿ ಮತ್ತಾವುದೇ ಆಸ್ತಿ ಇಲ್ಲ. ಹಣ್ಣು ಮಾರಾಟದ ಆದಾಯದಲ್ಲಿಯೇ ಕುಟುಂಬ ನಿರ್ವಹಣೆ ನಡೆಸುತ್ತಾ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಹಂಬಲವನ್ನು ಪಾಲಕರು ಹೊಂದಿದ್ದಾರೆ.

ಇನ್ನೂ ಈ ಬಗ್ಗೆ ರೋಹಿಣಿ ಮಾತನಾಡಿದ್ದು, ಉತ್ತಮ ಫಲಿತಾಂಶ ಮಾಡಬೇಕು ಎಂಬ ಹಂಬಲದಿಂದ ಪರೀಕ್ಷೆ ಸಮಯದಲ್ಲಿ ಬೆಳಿಗ್ಗೆ ಬೇಗ ಎದ್ದು ಆಸಕ್ತಿಯಿಂದ ಓದುತ್ತಿದ್ದೆ. ಕಾಲೇಜಿನಲ್ಲಿ ಗಮನದಿಂದ ಪಾಠ ಕೇಳುತ್ತಿದ್ದೆ. ಮುಂದೆ ಪದವಿ ಪಡೆದು ಐಎಎಸ್ ಓದಿ ಉನ್ನತ ಹುದ್ದೆ ಪಡೆದು ಸಮಾಜ ಸೇವೆ ಮಾಡುವ ಆಸೆ ಇದೆ. ನನ್ನ ಯಶಸ್ಸಿಗೆ ಪಾಲಕರ ಮತ್ತು ಶಿಕ್ಷಕರ ಪ್ರೋತ್ಸಾಹ ಮುಖ್ಯ ಕಾರಣ ಎಂದಿದ್ದಾರೆ..

ಅದಲ್ಲದೆ ಮಗಳ ಸಾಧನೆ ಬಗ್ಗೆ ರೋಹಿಣಿ ತಂದೆ- ತಾಯಿಯಾದ ಪ್ರಭು, ಕವಿತಾ ಮಾತನಾಡಿದ್ದು, ನಾವು ಬಡತನದ ಕಾರಣದಿಂದ ಪ್ರಾಥಮಿಕ ಶಿಕ್ಷಣವನ್ನೇ ಪೂರ್ಣಗೊಳಿಸಲಾಗಲಿಲ್ಲ. ಆದರೆ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವುದು ನಮ್ಮ ಕನಸು. ಮಗಳು ಐಎಎಸ್ ಆಗಬೇಕೆಂಬ ಆಸೆ ಹೊಂದಿದ್ದಾಳೆ, ಅವಳ ಕನಸು ಈಡೇರಿಸಲು ನಾವು ದುಡಿಯುತ್ತೇವೆ ಎಂದು ಸಂತೋಷ ವ್ಯಕ್ತಪಡಿಸಿದ್ದಾರೆ.

ಲಕ್ಷ್ಮೇಶ್ವರ ಮಹಿಳಾ ಕಾಲೇಜಿಗೆ ಕೀರ್ತಿ ತಂದ ವಿದ್ಯಾರ್ಥಿನಿಯರು! ದ್ವಿತೀಯ PUC ಫಲಿತಾಂಶದಲ್ಲಿ ಕಲಾ–ವಾಣಿಜ್ಯ ವಿಭಾಗಗಳಲ್ಲಿ ಸಾಧನೆ

0

ಲಕ್ಷ್ಮೇಶ್ವರ: ಮಹಿಳೆಯರಿಂದಲೇ ನಡೆಸಲ್ಪಡುವ ಈ ಭಾಗದ ಪ್ರಮುಖ ಶಿಕ್ಷಣ ಸಂಸ್ಥೆಯಾಗಿರುವ ಪಟ್ಟಣದ ತಾಯಿ ಪಾರ್ವತಿ ಮಕ್ಕಳ ಬಳಗದ ಎಸ್.ಎಂ.ಜೆ.ವಿ.ಜಿ ಕಲಾ ಮತ್ತು ವಾಣಿಜ್ಯ ಮಹಿಳಾ ಪಿಯು ಕಾಲೇಜು ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಉತ್ತಮ ಸಾಧನೆ ಮಾಡಿದ್ದು, ಸಂಸ್ಥೆಗೆ ಕೀರ್ತಿ ತಂದಿದೆ.

ಕಲಾ ವಿಭಾಗದಲ್ಲಿ ರೋಹಿಣಿ ಪಿ. ಬೆಟಗೇರಿ ಶೇ. 97.33 ಅಂಕಗಳನ್ನು ಪಡೆದು ಜಿಲ್ಲೆಗೆ ದ್ವಿತೀಯ ಹಾಗೂ ತಾಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದಾಳೆ. ನಂದಿತಾ ಐ. ಬಳಿಗಾರ ಶೇ. 96.66 ಅಂಕಗಳೊಂದಿಗೆ ಜಿಲ್ಲೆಗೆ ತೃತೀಯ ಸ್ಥಾನ ಪಡೆದಿದ್ದಾಳೆ. ಗೀತಾ ಎಂ. ಹಿರೇಮಠ ಶೇ. 95 ಅಂಕಗಳನ್ನು ಗಳಿಸಿ ಉತ್ತಮ ಸಾಧನೆ ತೋರಿದ್ದಾರೆ.

ವಾಣಿಜ್ಯ ವಿಭಾಗದಲ್ಲಿ ಸಹನಾ ಬಿ. ಶೀಶನಳ್ಳಿ ಶೇ. 92.50, ನಂದಿತಾ ಎಸ್. ನಾಗಲೋಟಿ ಶೇ. 91.83 ಹಾಗೂ ಜ್ಯೋತಿ ಎಂ. ಬಕ್ಸದ್ ಶೇ. 89.50 ಅಂಕಗಳನ್ನು ಗಳಿಸಿ ಗಮನಾರ್ಹ ಸಾಧನೆ ಮಾಡಿದ್ದಾರೆ.

ಇದಲ್ಲದೆ ರೋಹಿಣಿ ಬೆಟಗೇರಿ ಕನ್ನಡ, ಇತಿಹಾಸ ಮತ್ತು ಭೂಗೋಳಶಾಸ್ತ್ರ ವಿಷಯಗಳಲ್ಲಿ ನೂರಕ್ಕೆ ನೂರು ಅಂಕಗಳನ್ನು ಗಳಿಸಿರುವುದು ವಿಶೇಷವಾಗಿದೆ. ನಂದಿತಾ ಬಳಿಗಾರ ಕೂಡ ಕನ್ನಡ ವಿಷಯದಲ್ಲಿ ನೂರಕ್ಕೆ ನೂರು ಅಂಕಗಳನ್ನು ಪಡೆದು ವಿಶಿಷ್ಟ ಸಾಧನೆ ಮಾಡಿದ್ದಾರೆ.

ವಿದ್ಯಾರ್ಥಿಗಳ ಸಾಧನೆಗೆ ತಾಯಿ ಪಾರ್ವತಿ ಮಕ್ಕಳ ಬಳಗದ ಅಧ್ಯಕ್ಷೆ ಸುವರ್ಣಬಾಯಿ ಬಹದ್ದೂರದೇಸಾಯಿ, ಉಪಾಧ್ಯಕ್ಷೆ ಜಯಲಕ್ಷ್ಮಿ ಮಹಾಂತಶೆಟ್ಟರ, ಕಾರ್ಯದರ್ಶಿ ಜಯಲಕ್ಷ್ಮಿ ಗಡ್ಡದೇವರಮಠ, ಪ್ರಾಚಾರ್ಯ ಸರಸ್ವತಿ ಹುಲ್ಲಣ್ಣವರ ಹಾಗೂ ಉಪನ್ಯಾಸಕರು ಮತ್ತು ಸಿಬ್ಬಂದಿ ವರ್ಗ ಅಭಿನಂದಿಸಿದ್ದಾರೆ.

ಬಿಸಿಎನ್ ಕಾಲೇಜಿಗೆ ಭರ್ಜರಿ ಫಲಿತಾಂಶ: ವಿಜ್ಞಾನ ವಿಭಾಗದಲ್ಲಿ ಅಂಜಲಿ ಲಮಾಣಿ ಅಗ್ರಸ್ಥಾನ

0

ಲಕ್ಷ್ಮೇಶ್ವರ: ಪಟ್ಟಣದ ಬಿಸಿಎನ್ ವಿದ್ಯಾಸಂಸ್ಥೆಯ ಬಿಸಿಎನ್ ವಿಜನ್ ಪ.ಪೂ ಕಾಲೇಜು 2025-26ನೇ ಸಾಲಿನ ಪ.ಪೂ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿ ಕಾಲೇಜಿಗೆ ಕೀರ್ತಿ ತಂದಿದೆ.

ವಿಜ್ಞಾನ ವಿಭಾಗದಲ್ಲಿ ವಿದ್ಯಾರ್ಥಿಗಳು ಉತ್ತಮ ಅಂಕಗಳನ್ನು ಗಳಿಸಿದ್ದು, ಅಂಜಲಿ ಲಮಾಣಿ ಶೇ. 94.67 ಅಂಕಗಳೊಂದಿಗೆ ಅಗ್ರಸ್ಥಾನ ಪಡೆದಿದ್ದಾರೆ. ಆರತಿ ಹೊಸಮನಿ ಶೇ. 88.83, ಹರ್ಷಿತಾ ಪಾಟೀಲ ಶೇ. 88.33, ಪ್ರಿಯಾ ಕುಂದಗೋಳ ಶೇ. 82.16 ಹಾಗೂ ಸ್ನೇಹಾ ಜನಿವಾರದ ಶೇ. 81.67 ಅಂಕಗಳನ್ನು ಪಡೆದು ಗಮನಾರ್ಹ ಸಾಧನೆ ಮಾಡಿದ್ದಾರೆ.

ವಿದ್ಯಾರ್ಥಿಗಳ ಈ ಸಾಧನೆಗೆ ಹಾಗೂ ಕಾಲೇಜಿನ ಉತ್ತಮ ಫಲಿತಾಂಶಕ್ಕೆ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಬಸವರಾಜ ನೆಲವಿಗಿ, ಕಾರ್ಯದರ್ಶಿ ಲೋಹಿತ್ ನೆಲವಿಗಿ, ಪ್ರಾಚಾರ್ಯರಾದ ಮಂಜುನಾಥ ಬಂಡಿವಾಡ, ಡಿ.ಎಸ್. ಪ್ಯಾಟಿ, ಪ್ರೇಮಾ ಗೊನ್ನೆನ್ನವರ ಹಾಗೂ ಉಪನ್ಯಾಸಕರು ಮತ್ತು ಸಿಬ್ಬಂದಿಗಳು ಅಭಿನಂದನೆ ಸಲ್ಲಿಸಿದ್ದಾರೆ.

ಬಿಸಿಲಿಗೆ ಹೋದ ತಕ್ಷಣ ತಲೆನೋವು ಬರುತ್ತಾ? ಹಾಗಿದ್ರೆ ನಿಮ್ಮ ದೇಹದಲ್ಲಿ ಈ ಸಮಸ್ಯೆಯ ಸೂಚನೆ ಇರಬಹುದು!

0

ಬೇಸಿಗೆಯಲ್ಲಿ ಬಿಸಿಲಿಗೆ ಹೊರಗೆ ಹೋದ ತಕ್ಷಣ ಅನೇಕರಿಗೆ ತಲೆನೋವು ಕಾಣಿಸಿಕೊಳ್ಳುತ್ತದೆ. ಇದನ್ನು ಸಾಮಾನ್ಯವೆಂದು ನಿರ್ಲಕ್ಷಿಸುವುದು ಸೂಕ್ತವಲ್ಲ, ಏಕೆಂದರೆ ಇದು ದೇಹದ ಅಸಮತೋಲನದ ಸೂಚನೆಯಾಗಿರಬಹುದು.

ಬಿಸಿಲಿಗೆ ಒಡ್ಡಿಕೊಂಡ ತಕ್ಷಣ ತಲೆಭಾರ, ಕಣ್ಣುಗಳಲ್ಲಿ ಉರಿ, ತಲೆತಿರುಗುವಿಕೆ, ದೌರ್ಬಲ್ಯ, ಅತಿಯಾದ ಬೆವರು ಮತ್ತು ಚಡಪಡಿಕೆ ಮುಂತಾದ ಲಕ್ಷಣಗಳು ಕಾಣಿಸಬಹುದು. ಕೆಲ ಸಂದರ್ಭಗಳಲ್ಲಿ ವೇಗದ ಹೃದಯ ಬಡಿತ ಮತ್ತು ಆಯಾಸವೂ ಉಂಟಾಗಬಹುದು.

ವೈದ್ಯರ ಪ್ರಕಾರ, ತೀವ್ರ ಬಿಸಿಲು ಮತ್ತು ಉಷ್ಣತೆಯಿಂದ ದೇಹದ ತಾಪಮಾನ ತಕ್ಷಣ ಏರಿಕೆಯಾಗುತ್ತದೆ. ಇದರ ಪರಿಣಾಮವಾಗಿ ತಲೆನೋವು ಉಂಟಾಗಬಹುದು. ಜೊತೆಗೆ ದೇಹದಲ್ಲಿ ನೀರಿನ ಕೊರತೆ (ಡಿಹೈಡ್ರೇಷನ್) ಉಂಟಾದರೆ ಮತ್ತು ಬೆವರಿನ ಮೂಲಕ ನೀರು ಹಾಗೂ ಖನಿಜಗಳು ಹೊರಹೋದರೆ ತಲೆನೋವು ಹೆಚ್ಚಾಗುತ್ತದೆ.

ತೀವ್ರ ಬೆಳಕು ಕಣ್ಣಿಗೆ ತಾಗುವುದರಿಂದ ಮೈಗ್ರೇನ್ ಇರುವವರಿಗೆ ಸಮಸ್ಯೆ ಹೆಚ್ಚಾಗಬಹುದು. ಖಾಲಿ ಹೊಟ್ಟೆಯಲ್ಲಿ ಬಿಸಿಲಿಗೆ ಹೋಗುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ಕುಸಿದು ತಲೆನೋವು ಉಂಟಾಗಬಹುದು. ನಿದ್ರೆ ಕೊರತೆ, ದಣಿವು ಮತ್ತು ಬಿಸಿ ಗಾಳಿಯೂ ಈ ಸಮಸ್ಯೆಯನ್ನು ಹೆಚ್ಚಿಸುತ್ತವೆ.

ಮೈಗ್ರೇನ್ ಸಮಸ್ಯೆ ಇರುವವರು, ಡಿಹೈಡ್ರೇಷನ್ ಆಗುವವರು, ಖಾಲಿ ಹೊಟ್ಟೆಯಲ್ಲಿ ಹೆಚ್ಚು ಸಮಯ ಇರುವವರು, ಮಕ್ಕಳು, ವೃದ್ಧರು, ಗರ್ಭಿಣಿಯರು ಮತ್ತು ಹೊರಾಂಗಣದಲ್ಲಿ ಕೆಲಸ ಮಾಡುವವರು ಈ ಸಮಸ್ಯೆಗೆ ಹೆಚ್ಚು ಒಳಗಾಗುವ ಸಾಧ್ಯತೆ ಇದೆ.

ತಡೆಗಟ್ಟಲು ಬಿಸಿಲಿಗೆ ಹೋಗುವ ಮೊದಲು ಸಾಕಷ್ಟು ನೀರು ಕುಡಿಯುವುದು ಅಗತ್ಯ. ತಲೆ ಮುಚ್ಚಲು ಟೋಪಿ, ದುಪ್ಪಟ್ಟಾ ಅಥವಾ ಛತ್ರಿ ಬಳಸುವುದು, ಕಣ್ಣಿಗೆ ಸನ್‌ಗ್ಲಾಸ್ ಧರಿಸುವುದು, ಮಧ್ಯಾಹ್ನದ ತೀವ್ರ ಬಿಸಿಲಿನಲ್ಲಿ ಹೊರಗೆ ಹೋಗುವುದನ್ನು ತಪ್ಪಿಸುವುದು ಉತ್ತಮ. ಹೊರಗೆ ಹೋಗುವ ಮೊದಲು ಸ್ವಲ್ಪ ಆಹಾರ ಸೇವಿಸುವುದು ಮತ್ತು ಹಗುರ ಉಡುಪು ಧರಿಸುವುದು ಸಹ ಸಹಾಯಕ.

ಬಿಸಿಲಿಗೆ ಹೋದ ತಕ್ಷಣ ತಲೆನೋವು ಕಾಣಿಸಿಕೊಳ್ಳುವುದು ದೇಹದ ಎಚ್ಚರಿಕೆಯ ಸೂಚನೆ ಆಗಿರಬಹುದು. ಆದ್ದರಿಂದ ಈ ಲಕ್ಷಣಗಳನ್ನು ನಿರ್ಲಕ್ಷಿಸದೇ, ಅಗತ್ಯವಿದ್ದರೆ ವೈದ್ಯರನ್ನು ಸಂಪರ್ಕಿಸುವುದು ಮುಖ್ಯ.

ಎಲ್‌ಪಿಜಿ ಪೂರೈಕೆ ಗೊಂದಲಕ್ಕೆ ಬ್ರೇಕ್: ಹೋಟೆಲ್ ಉದ್ಯಮಕ್ಕೆ ಬಿಗ್ ರಿಲೀಫ್!

ಬೆಂಗಳೂರು: ಎಲ್‌ಪಿಜಿ ಪೂರೈಕೆ ಸಂಬಂಧಿತ ಗೊಂದಲಗಳಿಂದ ಸಂಕಷ್ಟಕ್ಕೀಡಾಗಿದ್ದ ಹೋಟೆಲ್ ಮತ್ತು ರೆಸ್ಟೋರೆಂಟ್ ಉದ್ಯಮಕ್ಕೆ ಕೇಂದ್ರ ಸರ್ಕಾರದಿಂದ ಬಿಗ್ ರಿಲೀಫ್ ಸಿಕ್ಕಿದೆ.

ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ವಾಣಿಜ್ಯ ಬಳಕೆದಾರರಿಗೆ ತಮ್ಮ ಎಲ್‌ಪಿಜಿ ಅವಶ್ಯಕತೆಯಲ್ಲಿ 70% ವರೆಗೆ ಪೂರೈಕೆ ಪುನಃಸ್ಥಾಪಿಸುವ ನಿರ್ಧಾರವನ್ನು ಪ್ರಕಟಿಸಿದೆ. ಈ ಕ್ರಮದಿಂದ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಹಾಗೂ ಆಹಾರ ಸೇವಾ ವಲಯಗಳಿಗೆ ದೊಡ್ಡ ಮಟ್ಟದ ನೆರವು ದೊರೆಯಲಿದೆ ಎಂದು ನಿರೀಕ್ಷಿಸಲಾಗಿದೆ.

ಕಳೆದ ಕೆಲವು ದಿನಗಳಿಂದ ಗೃಹ ಬಳಕೆ ಮತ್ತು ವಾಣಿಜ್ಯ ಬಳಕೆಗೆ ಆದ್ಯತೆ ನೀಡುವ ಕ್ರಮಗಳಿಂದಾಗಿ ಹಲವು ರೆಸ್ಟೋರೆಂಟ್‌ಗಳು ಹಾಗೂ ತಿನಿಸು ಕೇಂದ್ರಗಳು ತಾತ್ಕಾಲಿಕವಾಗಿ ಮುಚ್ಚಬೇಕಾದ ಪರಿಸ್ಥಿತಿ ಉಂಟಾಗಿತ್ತು. ಇದರಿಂದ ಉದ್ಯಮ ಕ್ಷೇತ್ರದಲ್ಲಿ ತೀವ್ರ ಸಂಕಷ್ಟ ಉಂಟಾಗಿತ್ತು.

ಹೊಸ ನಿರ್ದೇಶನದ ಪ್ರಕಾರ, ಕೈಗಾರಿಕಾ ಘಟಕಗಳು ಈಗ ಮಾರ್ಚ್ 2026ರ ಮೊದಲು ದಾಖಲಾದ ದೇಶೀಯವಲ್ಲದ ಎಲ್‌ಪಿಜಿ ಬಳಕೆಯ 70% ವರೆಗೆ ಪೂರೈಕೆ ಪಡೆಯಲಿವೆ. ಆಹಾರ ಸಂಸ್ಕರಣೆ, ಔಷಧ, ಕೃಷಿ, ಪ್ಯಾಕೇಜಿಂಗ್ ಸೇರಿದಂತೆ ಹಲವು ಪ್ರಮುಖ ವಲಯಗಳಿಗೆ ಇದು ಅನ್ವಯವಾಗಲಿದೆ ಎಂದು ಸಚಿವಾಲಯ ತಿಳಿಸಿದೆ.

ಇದರ ಜೊತೆಗೆ ವಲಸೆ ಕಾರ್ಮಿಕರಿಗೆ ಸಹಾಯವಾಗುವಂತೆ 5 ಕೆಜಿ ಎಲ್‌ಪಿಜಿ ಸಿಲಿಂಡರ್‌ಗಳ ಪೂರೈಕೆಯನ್ನು ಹೆಚ್ಚಿಸಲು ಸರ್ಕಾರ ಸೂಚಿಸಿದೆ. ಈ ಸಣ್ಣ ಸಿಲಿಂಡರ್‌ಗಳು ಉಚಿತ ವ್ಯಾಪಾರ ಎಲ್‌ಪಿಜಿ (FTL) ವರ್ಗದಲ್ಲಿ ಲಭ್ಯವಾಗಲಿದ್ದು, ಆಯ್ದ ಪೆಟ್ರೋಲ್ ಪಂಪ್‌ಗಳು ಹಾಗೂ ವಿತರಣೆ ಕೇಂದ್ರಗಳಲ್ಲಿ ಖರೀದಿಗೆ ಅವಕಾಶ ಇರಲಿದೆ.

ಹೊಸ ನಿರ್ಧಾರದಿಂದ ಇಂಧನ ಪೂರೈಕೆ ಒತ್ತಡ ಕಡಿಮೆಯಾಗುವ ಜೊತೆಗೆ ಹೋಟೆಲ್ ಮತ್ತು ಕೈಗಾರಿಕಾ ವಲಯದಲ್ಲಿ ಉತ್ಪಾದನೆ ಹಾಗೂ ಸೇವಾ ಕಾರ್ಯಗಳು ಸರಾಗವಾಗಿ ಮುಂದುವರಿಯಲಿವೆ ಎಂದು ನಿರೀಕ್ಷಿಸಲಾಗಿದೆ.

ಇ-ಖಾತೆ ಮಾಡಿಕೊಡಲು 2 ಲಕ್ಷಕ್ಕೆ ಲಂಚದ ಬೇಡಿಕೆ: ‘ಲೋಕಾ’ ಬಲೆಗೆ ಬಿದ್ದ ಅಧಿಕಾರಿ!

ರಾಯಚೂರು: ಸಿರವಾರ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದ ಘಟನೆ ನಡೆದಿದೆ.

ಇ-ಖಾತೆ ಮಾಡಿಕೊಡಲು 2 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದ ಅಧಿಕಾರಿ ಸುರೇಶ್ ಶೆಟ್ಟಿ, ರಾಘವೇಂದ್ರ ರೆಡ್ಡಿ ಎಂಬವರಿಂದ 1 ಲಕ್ಷ ರೂ. ಅಡ್ವಾನ್ಸ್ ಹಣ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ದಾಳಿ ನಡೆದಿದೆ. ಹಣ ಸ್ವೀಕರಿಸುವಾಗಲೇ ದಾಳಿ ನಡೆದಿದ್ದು, ಅಧಿಕಾರಿಯನ್ನು ಸ್ಥಳದಲ್ಲೇ ಹಿಡಿಯಲಾಗಿದೆ.

ಲೋಕಾಯುಕ್ತರು ದಾಳಿ ನಡೆಸುತ್ತಿದ್ದಂತೆಯೇ ತಪ್ಪಿಸಿಕೊಳ್ಳಲು ಯತ್ನಿಸಿದ ಸುರೇಶ್ ಶೆಟ್ಟಿ, ಸಿರವಾರದಿಂದ ಕವಿತಾಳ ಪಟ್ಟಣದ ಕಡೆಗೆ ಕಾರಿನಲ್ಲಿ ಪರಾರಿಯಾಗಲು ಪ್ರಯತ್ನಿಸಿದ್ದಾನೆ. ಆದರೆ ಸಿನಿಮೀಯ ರೀತಿಯಲ್ಲಿ ಚೇಸ್ ಮಾಡಿದ ಲೋಕಾಯುಕ್ತ ಅಧಿಕಾರಿಗಳು ಆರೋಪಿಯನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಸದ್ಯ ಆರೋಪಿಯನ್ನು ಕವಿತಾಳ ಪ್ರವಾಸಿ ಮಂದಿರದಲ್ಲಿ ವಿಚಾರಣೆ ನಡೆಸಲಾಗುತ್ತಿದ್ದು, ಪಂಚನಾಮೆ ಕಾರ್ಯ ನಡೆಯುತ್ತಿದೆ.

ಈ ಕಾರ್ಯಾಚರಣೆಯನ್ನು ಲೋಕಾಯುಕ್ತ ಎಸ್‌ಪಿ ಸಿದ್ದರಾಜು ನೇತೃತ್ವದಲ್ಲಿ ಇನ್ಸ್‌ಪೆಕ್ಟರ್ ರವಿ ಪುರುಷೋತ್ತಮ್ ಹಾಗೂ ಸಿಬ್ಬಂದಿ ವಿಜಯಕುಮಾರ್, ಅಮರೇಶ್ ನಡೆಸಿದ್ದಾರೆ.

ಹಾಡಹಗಲೇ ಬೈಕ್ ಎಗರಿಸಿದ ಕಳ್ಳ! ಮಾಲೀಕನ ನಿರ್ಲಕ್ಷ್ಯವೇ ಕೃತ್ಯಕ್ಕೆ ಕಾರಣ

ಬೆಂಗಳೂರು: ಲಕ್ಕಸಂದ್ರದಲ್ಲಿ ಮನೆ ಮುಂಭಾಗ ನಿಲ್ಲಿಸಿದ್ದ ಬೈಕ್ ಅನ್ನು ಕಳ್ಳನೊಬ್ಬ ಹಾಡಹಗಲೇ ಕದ್ದೊಯ್ದ ಘಟನೆ ಬೆಳಕಿಗೆ ಬಂದಿದೆ.

ಮಾಲೀಕರ ಸಣ್ಣ ನಿರ್ಲಕ್ಷ್ಯವೇ ಕಳ್ಳನಿಗೆ ಅವಕಾಶ ನೀಡಿದಂತಾಗಿದೆ.

ಏಪ್ರಿಲ್ 9ರಂದು ಮಧ್ಯಾಹ್ನ ಸುಮಾರು 2 ಗಂಟೆ ಸಮಯದಲ್ಲಿ ಲಕ್ಕಸಂದ್ರದ 16ನೇ ಕ್ರಾಸ್ ಬಳಿ ಈ ಘಟನೆ ನಡೆದಿದ್ದು, ನಿವಾಸಿಯೊಬ್ಬರು ತಮ್ಮ ಸುಜುಕಿ ಆಕ್ಸೆಸ್ 125 ಬೈಕ್ ಅನ್ನು ಮನೆ ಮುಂದೆ ನಿಲ್ಲಿಸಿದ್ದರು. ಆದರೆ ಕೀ ತೆಗೆದುಕೊಳ್ಳದೇ ಮರೆತು ಹೋಗಿದ್ದರಿಂದ ಬೈಕ್ ಅಲ್ಲಿಯೇ ನಿಂತಿತ್ತು.

ಈ ವೇಳೆ ಅದೇ ಪ್ರದೇಶದಲ್ಲಿ ತಿರುಗುತ್ತಿದ್ದ ಕಳ್ಳನೊಬ್ಬ ಪರಿಸ್ಥಿತಿಯನ್ನು ಗಮನಿಸಿ, ಯಾರೂ ಇಲ್ಲದ ಅವಕಾಶವನ್ನು ಬಳಸಿಕೊಂಡು ಬೈಕ್ ಸ್ಟಾರ್ಟ್ ಮಾಡಿ ಸುಲಭವಾಗಿ ಪರಾರಿಯಾಗಿದ್ದಾನೆ. ಈ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಇದೀಗ ವೈರಲ್ ಆಗಿವೆ.

ಬೈಕ್ ಕಳುವಾಗಿರುವುದನ್ನು ಗಮನಿಸಿದ ಮಾಲೀಕರು ಸಿಸಿಟಿವಿ ಪರಿಶೀಲಿಸಿದಾಗ ಕಳ್ಳತನದ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಆಡುಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸಿಸಿಟಿವಿ ಆಧಾರದ ಮೇಲೆ ಆರೋಪಿಯ ಪತ್ತೆಗೆ ಮುಂದಾಗಿದ್ದಾರೆ.

ಇಂದಿನಿಂದ ಎರಡು ದಿನ ಕರಾವಳಿ ಜಿಲ್ಲೆಗಳಲ್ಲಿ ಬಿಸಿಗಾಳಿ! ಯೆಲ್ಲೋ ಅಲರ್ಟ್ ಘೋಷಣೆ

ಕಾರವಾರ: ರಾಜ್ಯದ ಕರಾವಳಿ ಭಾಗದಲ್ಲಿ ಮುಂದಿನ ಎರಡು ದಿನಗಳ ಕಾಲ ಅಧಿಕ ಉಷ್ಣಾಂಶ ಮತ್ತು ಬಿಸಿಗಾಳಿ ಬೀಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ (IMD) ಎಚ್ಚರಿಕೆ ನೀಡಿದೆ.

ಉತ್ತರ ಕನ್ನಡ, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಏಪ್ರಿಲ್ 10 ರಿಂದ 12 ರವರೆಗೆ ಉಷ್ಣಾಂಶ ಹೆಚ್ಚಳವಾಗುವ ಸೂಚನೆ ನೀಡಲಾಗಿದ್ದು, ಈ ಹಿನ್ನೆಲೆಯಲ್ಲಿ ಕರಾವಳಿ ಭಾಗಕ್ಕೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಜನರು ಮಧ್ಯಾಹ್ನ ಸಮಯದಲ್ಲಿ ಅಗತ್ಯವಿಲ್ಲದೆ ಹೊರಗೆ ಹೋಗಬಾರದೆಂದು ಹವಾಮಾನ ಇಲಾಖೆ ಸಲಹೆ ನೀಡಿದೆ.

ಇದರ ಜೊತೆಗೆ ಅರಬ್ಬಿ ಸಮುದ್ರವೂ ಪ್ರಕ್ಷುಬ್ಧವಾಗಿದ್ದು, ಉತ್ತರ ಕನ್ನಡ ಕರಾವಳಿ ಭಾಗದಲ್ಲಿ ಗಂಟೆಗೆ 30 ರಿಂದ 40 ಕಿ.ಮೀ ವೇಗದಲ್ಲಿ ಗಾಳಿಯು ಬೀಸುತ್ತಿದೆ. ಗಾಳಿ ಒತ್ತಡ ಹೆಚ್ಚಾದ ಪರಿಣಾಮ ಕಾರವಾರ ಸೇರಿದಂತೆ ಹಲವು ಕಡೆ ಮೀನುಗಾರರು ಮೀನುಗಾರಿಕೆಯನ್ನು ಸ್ಥಗಿತಗೊಳಿಸಿದ್ದಾರೆ.

ಆಳ ಸಮುದ್ರಕ್ಕೆ ತೆರಳುವ ಪರ್ಶಿಯನ್ ಬೋಟುಗಳು ಬಂದರಿನಲ್ಲಿ ಲಂಗರು ಹಾಕಿದ್ದು, ಮುಂದಿನ ಹವಾಮಾನ ಸುಧಾರಣೆಯ ನಿರೀಕ್ಷೆಯಲ್ಲಿ ಮೀನುಗಾರರು ಕಾಯುತ್ತಿದ್ದಾರೆ. ಅಧಿಕಾರಿಗಳು ಮೀನುಗಾರರಿಗೆ ಎಚ್ಚರಿಕೆಯಿಂದ ಇರಲು ಸೂಚನೆ ನೀಡಿದ್ದಾರೆ.

error: Content is protected !!