Home Blog

ಗಣೇಶೋತ್ಸವಕ್ಕೆ ‘ಶಾಂತಿ’ ಮಂತ್ರ; ಡಿಜೆ, ಪಿಒಪಿಗೆ ಪೊಲೀಸ್ ಬ್ರೇಕ್

0

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಮುಂಬರುವ ಗಣೇಶ ಚತುರ್ಥಿಯನ್ನು ಸಾರ್ವಜನಿಕರು ಪರಿಸರ ಸ್ನೇಹಿ ಗಣಪತಿ ಮೂರ್ತಿಗಳನ್ನು ಪ್ರತಿಷ್ಠಾಪಿಸುವ ಮೂಲಕ ಶಾಂತಿಯುತವಾಗಿ ಆಚರಿಸಬೇಕು ಎಂದು ಶಿರಹಟ್ಟಿ ಪಿಎಸ್‌ಐ ಈರಪ್ಪ ರಿತ್ತಿ ಹೇಳಿದರು.

ಬುಧವಾರ ಶಿರಹಟ್ಟಿ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಪೊಲೀಸ್ ಇಲಾಖೆ ವತಿಯಿಂದ ಆಯೋಜಿಸಿದ್ದ ಶಾಂತಿಸಭೆಯಲ್ಲಿ ಮಾತನಾಡಿದ ಅವರು, ಸಾರ್ವಜನಿಕ ಹಿತದೃಷ್ಟಿಯಿಂದ ಜಿಲ್ಲಾಧಿಕಾರಿಗಳು ಈಗಾಗಲೇ ಡಿಜೆ ವ್ಯವಸ್ಥೆ ಹಾಗೂ ಹೆಚ್ಚಿನ ಡೆಸಿಬೆಲ್ ಶಬ್ದವರ್ಧಕ ಸಾಧನಗಳ ಬಳಕೆಯನ್ನು ನಿಷೇಧಿಸಿದ್ದಾರೆ. ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಪಿಒಪಿ ಗಣೇಶ ಮೂರ್ತಿಗಳ ಬಳಕೆಯನ್ನೂ ನಿಷೇಧಿಸಲಾಗಿದ್ದು, ಗಣೇಶೋತ್ಸವ ಮಂಡಳಿಗಳು ಕಡ್ಡಾಯವಾಗಿ ಮಣ್ಣಿನಿಂದ ತಯಾರಿಸಿದ ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಬೇಕು ಎಂದು ತಿಳಿಸಿದರು.

ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಲು ಸಂಬಂಧಿಸಿದ ಇಲಾಖೆಗಳ ಪೂರ್ವಾನುಮತಿ ಪಡೆಯಬೇಕು. ಸಂಘಟಕರು ಕಾವಲು ಸಮಿತಿ ರಚಿಸಿ ಸ್ವಯಂಸೇವಕರನ್ನು ನಿಯೋಜಿಸಬೇಕು. ಅವರಿಗೆ ಮಂಡಳಿಯ ಹೆಸರು ಇರುವ ಬ್ಯಾಡ್ಜ್, ಕೂಪನ್ ಹಾಗೂ ಗುರುತಿನ ಚೀಟಿ ವ್ಯವಸ್ಥೆ ಕಲ್ಪಿಸಬೇಕು ಎಂದು ಸೂಚಿಸಿದರು.

ಪ್ರತಿಷ್ಠಾಪನಾ ಸ್ಥಳದಲ್ಲಿ ಮದ್ಯಪಾನ, ಧೂಮಪಾನ, ಜೂಜಾಟ, ಇಸ್ಪೀಟ್ ಸೇರಿದಂತೆ ಯಾವುದೇ ಕಾನೂನುಬಾಹಿರ ಚಟುವಟಿಕೆಗಳಿಗೆ ಅವಕಾಶ ನೀಡಬಾರದು. ಕೋಮು ಪ್ರಚೋದನೆಗೆ ಕಾರಣವಾಗುವಂತಹ ಕೃತ್ಯಗಳು ನಡೆಯದಂತೆ ಎಚ್ಚರಿಕೆ ವಹಿಸಬೇಕು. ಕಡ್ಡಾಯವಾಗಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಿಕೊಳ್ಳುವುದರ ಜೊತೆಗೆ ಮುಂಜಾಗ್ರತಾ ಕ್ರಮವಾಗಿ ಬೆಂಕಿ ನಂದಿಸುವ ಉಪಕರಣಗಳನ್ನು ಸ್ಥಳದಲ್ಲಿ ಇರಿಸಿಕೊಳ್ಳಬೇಕು ಎಂದರು.

ಪೊಲೀಸ್ ಇಲಾಖೆ ಹೊರಡಿಸುವ ಎಲ್ಲ ನಿಯಮಗಳನ್ನು ಚಾಚೂ ತಪ್ಪದೆ ಪಾಲಿಸಿ ಶಾಂತಿಯುತವಾಗಿ ಹಬ್ಬ ಆಚರಿಸುವ ಮೂಲಕ ಇಲಾಖೆಗೆ ಸಹಕಾರ ನೀಡಬೇಕು ಎಂದು ಪಿಎಸ್‌ಐ ಈರಪ್ಪ ರಿತ್ತಿ ಹೇಳಿದರು.

ಸಭೆಯಲ್ಲಿ ತಹಶೀಲ್ದಾರ್ ಕೆ. ರಾಘವೇಂದ್ರ ರಾವ್, ಪಪಂ ಮುಖ್ಯಾಧಿಕಾರಿ ನಿಲೇಶ ಹಾದಿಮನಿ, ತಾಪಂ ಯೋಜನಾಧಿಕಾರಿ ಎಚ್.ಎನ್. ಕೊಂಡಿಕೊಪ್ಪ, ಹುಮಾಯೂನ್ ಮಾಗಡಿ, ಪರಮೇಶ ಪರಬ, ಸಂದೀಪ ಕಪ್ಪತ್ತನವರ, ಚಾಂದಸಾಬ ಮುಳಗುಂದ, ಅಜ್ಜುಗೌಡ ಪಾಟೀಲ, ಸುಧೀರ ಜಮಖಂಡಿ, ಜಕಾವುಲ್ಲಾ ಮಾಗಡಿ, ಅಲ್ಲಾಭಕ್ಷಿ ನಗಾರಿ, ಈರಣ್ಣ ಕೋಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಗಣೇಶೋತ್ಸವವನ್ನು ಪರಿಸರ ಸ್ನೇಹಿಯಾಗಿ ಹಾಗೂ ಶಾಂತಿಯುತವಾಗಿ ಆಚರಿಸುವುದು ಎಲ್ಲರ ಜವಾಬ್ದಾರಿ. ಡಿಜೆ, ಪಿಒಪಿ ಮೂರ್ತಿಗಳ ಬಳಕೆ ಹಾಗೂ ಕಾನೂನುಬಾಹಿರ ಚಟುವಟಿಕೆಗಳಿಗೆ ಅವಕಾಶ ನೀಡದೆ ಪೊಲೀಸ್ ಇಲಾಖೆ ಸೂಚಿಸುವ ಎಲ್ಲ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು.

— ಈರಪ್ಪ ರಿತ್ತಿ, ಪಿಎಸ್‌ಐ, ಶಿರಹಟ್ಟಿ

ಹೆಣ್ಣುಮಕ್ಕಳ ಉನ್ನತ ಶಿಕ್ಷಣಕ್ಕಾಗಿ ಕಾಲೇಜ್ ಮಂಜೂರು ಮಾಡಿ

0

ವಿಜಯಸಾಕ್ಷಿ ಸುದ್ದಿ, ಹಗರಿಬೊಮ್ಮನಹಳ್ಳಿ: ತಾಲೂಕು ಕೇಂದ್ರ ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದುತ್ತಿದ್ದರೂ ಗ್ರಾಮೀಣ ಭಾಗದ ಮಹಿಳಾ ವಿದ್ಯಾರ್ಥಿನಿಯರಿಗೆ ಪದವಿ ಶಿಕ್ಷಣ ಪಡೆಯಲು ಸೂಕ್ತ ಅವಕಾಶಗಳ ಕೊರತೆಯಿದೆ. ಮಹಿಳಾ ಸಬಲೀಕರಣದ ದೃಷ್ಟಿಯಿಂದ ಹಗರಿಬೊಮ್ಮನಹಳ್ಳಿ ತಾಲೂಕು ಕೇಂದ್ರದಲ್ಲಿ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮಂಜೂರು ಮಾಡಬೇಕು ಎಂದು ಆಗ್ರಹಿಸಿ ಪ್ರಗತಿಪರ ನಾಗರಿಕರ ವೇದಿಕೆ ವತಿಯಿಂದ ಬುಧವಾರ ಪ್ರತಿಭಟನೆ ನಡೆಸಿ, ಆಡಳಿತ ಸೌಧದ ಉಪ ತಹಸೀಲ್ದಾರ್ ಶಿವಕುಮಾರ್ ಅವರ ಮೂಲಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಅವರಿಗೆ ಮನವಿ ಸಲ್ಲಿಸಲಾಯಿತು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಪತ್ರಕರ್ತ ಬುಡ್ಡಿ ಬಸವರಾಜ್ ಮಾತನಾಡಿ, ತಾಲೂಕು ಕೇಂದ್ರದಲ್ಲಿ ಏಳು ಪದವಿಪೂರ್ವ ಕಾಲೇಜುಗಳಿದ್ದು, ಪ್ರತಿವರ್ಷ ಸಾವಿರಾರು ವಿದ್ಯಾರ್ಥಿನಿಯರು ಪಿಯುಸಿ ಶಿಕ್ಷಣ ಪೂರ್ಣಗೊಳಿಸುತ್ತಾರೆ. ಆದರೆ ಪದವಿ ಶಿಕ್ಷಣ ಪಡೆಯಲು ಪ್ರತ್ಯೇಕ ಮಹಿಳಾ ಕಾಲೇಜು ಇಲ್ಲದಿರುವುದು ಈ ಭಾಗದ ಪ್ರಮುಖ ಕೊರತೆಯಾಗಿದೆ ಎಂದರು.

ಭೌಗೋಳಿಕವಾಗಿ ತಾಲೂಕು ಕೇಂದ್ರದಲ್ಲಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಸ್ಥಾಪಿಸುವ ಅಗತ್ಯವಿದೆ. ಗಂಗಾವತಿ ಭೀಮಪ್ಪ ಅವರು ಶಿಕ್ಷಣದ ಉದ್ದೇಶಕ್ಕಾಗಿ ಪಟ್ಟಣದಲ್ಲಿ ದಾನವಾಗಿ ನೀಡಿರುವ ಜಾಗದಲ್ಲಿ ವಿಶಾಲವಾದ ಸ್ಥಳಾವಕಾಶವಿದೆ. ಈ ಸ್ಥಳದಲ್ಲಿ ಮಹಿಳೆಯರಿಗಾಗಿ ಪ್ರತ್ಯೇಕ ಕಾಲೇಜು ಸ್ಥಾಪಿಸಿದರೆ ಪೋಷಕರು ತಮ್ಮ ಹೆಣ್ಣುಮಕ್ಕಳನ್ನು ಧೈರ್ಯದಿಂದ ಕಾಲೇಜಿಗೆ ಕಳುಹಿಸಲು ಸಾಧ್ಯವಾಗುತ್ತದೆ. ಇದರಿಂದ ಪದವಿ ಶಿಕ್ಷಣ ಪಡೆಯುವ ಮಹಿಳೆಯರ ಸಂಖ್ಯೆ ಗಣನೀಯವಾಗಿ ಹೆಚ್ಚಲಿದೆ. ತಾಲೂಕಿನ 65ಕ್ಕೂ ಹೆಚ್ಚು ಗ್ರಾಮಗಳ ಗ್ರಾಮೀಣ ವಿದ್ಯಾರ್ಥಿನಿಯರಿಗೆ ಇದರಿಂದ ಅನುಕೂಲವಾಗಲಿದೆ ಎಂದು ಹೇಳಿದರು.

ಪ್ರಗತಿಪರ ಸಂಘಟನೆಗಳ ಸಂಚಾಲಕ ಈ. ಕೃಷ್ಣಮೂರ್ತಿ ಮಾತನಾಡಿ, ಹಗರಿಬೊಮ್ಮನಹಳ್ಳಿ ತಾಲೂಕು ಇಡೀ ಜಿಲ್ಲೆಗೆ ಕೇಂದ್ರ ಸ್ಥಾನವಾಗಿರುವುದರಿಂದ ಇಲ್ಲಿಗೆ ಬರುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿದೆ. ಮಹಿಳಾ ವಿದ್ಯಾರ್ಥಿನಿಯರ ಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮಂಜೂರು ಮಾಡಲು ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಮುಖಂಡ ಮುಟುಗನಹಳ್ಳಿ ಕೊಟ್ರೇಶ್ ಮಾತನಾಡಿ, ತಾಲೂಕು ಕೇಂದ್ರದಲ್ಲಿ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಸ್ಥಾಪನೆಯಾದರೆ ಕೊಟ್ಟೂರು, ಹಡಗಲಿ ಹಾಗೂ ಕೂಡ್ಲಿಗಿ ತಾಲೂಕುಗಳ ಕೆಲವು ಗ್ರಾಮಗಳ ವಿದ್ಯಾರ್ಥಿನಿಯರೂ ಇದರ ಸದುಪಯೋಗ ಪಡೆದುಕೊಳ್ಳಲಿದ್ದಾರೆ. ಇದು ಹೋರಾಟದ ಆರಂಭವಾಗಿದ್ದು, ಕಾಲೇಜು ಮಂಜೂರಾಗುವವರೆಗೆ ಹೋರಾಟ ನಿರಂತರವಾಗಿ ನಡೆಯಲಿದೆ. ಪಕ್ಷಾತೀತವಾಗಿ ಎಲ್ಲರೂ ಹೋರಾಟಕ್ಕೆ ಕೈಜೋಡಿಸಬೇಕು ಎಂದು ಕರೆ ನೀಡಿದರು.

ಈ ವೇಳೆ ಪುರಸಭೆ ಮಾಜಿ ಅಧ್ಯಕ್ಷ ಟಿ. ರಾಘವೇಂದ್ರ, ಡಾ. ಬಿ.ಆರ್. ಅಂಬೇಡ್ಕರ್ ಸಂಘದ ಅಧ್ಯಕ್ಷ ದೊಡ್ಡಬಸಪ್ಪ, ಹಿಂದುಳಿದ ಜಾತಿಗಳ ಒಕ್ಕೂಟದ ತಾಲೂಕು ಅಧ್ಯಕ್ಷ ಲಿಂಗರಾಜ ಯಾದವ್, ಪುರಸಭೆ ಸದಸ್ಯ ದೀಪಕ್ ಕಠಾರೆ, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಅನಿಲ್ ಕುಮಾರ್ ಜಾಣ, ಗಣೇಶ್ ಹಾವಲ್ದಾರ್, ಎಸ್.ಎಸ್. ಎತ್ತಿನಮನಿ ಸೇರಿದಂತೆ ಹಲವರು ಮಾತನಾಡಿದರು.

ಪ್ರತಿಭಟನೆಯಲ್ಲಿ ಕಿನ್ನಾಳ ಸುಭಾಸ್, ರುದ್ರೇಶ್, ಡಿಎಸ್‌ಎಸ್ ಸಂಚಾಲಕ ಕೆಚ್ಚನಬಂಡಿ ದುರ್ಗಪ್ಪ, ಬಸವರಾಜ್, ಗನಿಸಾಬ್, ಪ್ರಕಾಶ್, ಮಾದಿಗ ಮಹಾಸಭಾ ತಾಲೂಕು ಅಧ್ಯಕ್ಷ ಎಚ್. ಲೋಕಪ್ಪ, ಸೋಮು ಭಜಂತ್ರಿ, ಐನಹಳ್ಳಿ ಸೋಮಶೇಖರ್, ಜಮಾಲ್ ಸಾಬ್, ಸಂತೋಷ್, ಬ್ಯಾಲಾ ದೊಡ್ಡಬಸಪ್ಪ, ನಿಂಗಪ್ಪ, ಮಲ್ಲಿಕಾರ್ಜುನ, ಆನಂದ್ ಯಾದವ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ಮಹಿಳೆಯರ ಉನ್ನತ ಶಿಕ್ಷಣಕ್ಕೆ ಅವಕಾಶ ಕಲ್ಪಿಸುವುದು ಇಂದಿನ ಅಗತ್ಯ. ಹಗರಿಬೊಮ್ಮನಹಳ್ಳಿಯಲ್ಲಿ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮಂಜೂರು ಮಾಡುವವರೆಗೆ ಪಕ್ಷಾತೀತವಾಗಿ ಹೋರಾಟ ಮುಂದುವರಿಸುತ್ತೇವೆ.

— ಮುಟುಗನಹಳ್ಳಿ ಕೊಟ್ರೇಶ್, ಮುಖಂಡ

ಜೀವನ ಆಯ್ದುಕೊಳ್ಳಿ, ಆತ್ಮಹತ್ಯೆಯನ್ನಲ್ಲ: ಎಸ್.ಡಿ. ಬೆನ್ನೂರ

0

ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ: ಮಾನವ ಜೀವನ ಅತ್ಯಮೂಲ್ಯವಾದದ್ದು. ಯಾವುದೇ ಕಾರಣಕ್ಕೂ ಅದನ್ನು ಹಾಳು ಮಾಡಿಕೊಳ್ಳದೆ, ಆತ್ಮಹತ್ಯೆಯಂತಹ ದುರಾಲೋಚನೆಗಳಿಂದ ದೂರವಿದ್ದು ಬದುಕನ್ನು ಆಯ್ದುಕೊಳ್ಳಬೇಕು ಎಂದು ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ. ಬೆನ್ನೂರ ಹೇಳಿದರು.

ಗಜೇಂದ್ರಗಡ ಸಮೀಪದ ಸೂಡಿ ಗ್ರಾಮದ ಶ್ರೀ ಗುರು ವಿಜಯ ಮಹಾಂತೇಶ ಪದವಿ ಮಹಾವಿದ್ಯಾಲಯದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಾರ್ಯಾಲಯ, ಜಿಲ್ಲಾ ಮಾನಸಿಕ ಆರೋಗ್ಯ ವಿಭಾಗ, ಜಿಲ್ಲಾ ಮಾಹಿತಿ ಶಿಕ್ಷಣ ಸಂವಹನ ವಿಭಾಗ, ಗದಗ, ತಾಲೂಕು ಆರೋಗ್ಯ ಅಧಿಕಾರಿಗಳ ಕಾರ್ಯಾಲಯ, ರೋಣ, ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಶ್ರೀ ಗುರು ವಿಜಯ ಮಹಾಂತೇಶ ಪದವಿ ಮಹಾವಿದ್ಯಾಲಯ, ಸೂಡಿ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ವಿಶ್ವ ಆತ್ಮಹತ್ಯೆ ತಡೆ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.

ದಾಸವರೇಣ್ಯರು ಮಾನವ ಜನ್ಮ ಅತ್ಯಮೂಲ್ಯವಾದದ್ದು ಎಂಬುದನ್ನು ತಮ್ಮ ಕೀರ್ತನೆಗಳ ಮೂಲಕ ಸಾರಿದ್ದಾರೆ. ಆದರೆ ಜಾಗತೀಕರಣದ ಪರಿಣಾಮವಾಗಿ ಮನುಷ್ಯನ ಜೀವನದಲ್ಲಿ ವಿವಿಧ ರೀತಿಯ ಒತ್ತಡಗಳು ಹೆಚ್ಚಾಗುತ್ತಿವೆ. ಮಾನಸಿಕ ಅಸ್ವಸ್ಥತೆ, ಮಾದಕ ವಸ್ತುಗಳ ವ್ಯಸನ, ಆಪ್ತರ ಸಾವು, ಭೀಕರ ದುರಂತಗಳು, ನೈಸರ್ಗಿಕ ವಿಕೋಪಗಳು, ಅತಿಯಾದ ಸಾಲದ ಬಾಧೆ, ನಿರುದ್ಯೋಗ ಹಾಗೂ ದೀರ್ಘಕಾಲದ ಅನಾರೋಗ್ಯದಂತಹ ಸಮಸ್ಯೆಗಳು ಕೆಲವೊಮ್ಮೆ ಆತ್ಮಹತ್ಯೆಯಂತಹ ಗಂಭೀರ ನಿರ್ಧಾರಗಳಿಗೆ ಕಾರಣವಾಗುತ್ತಿವೆ ಎಂದರು.

ಆದ್ದರಿಂದ ಸಾರ್ವಜನಿಕರು ‘ಸದೃಢವಾದ ದೇಹದಲ್ಲಿ ಸದೃಢವಾದ ಮನಸ್ಸು’ ಎಂಬ ನಾಣ್ಣುಡಿಯಂತೆ ಮಾನಸಿಕ ಆರೋಗ್ಯಕ್ಕೂ ಆದ್ಯತೆ ನೀಡಬೇಕು. ಜೀವನದಲ್ಲಿ ಎದುರಾಗುವ ಸಮಸ್ಯೆಗಳನ್ನು ಸವಾಲುಗಳಾಗಿ ಸ್ವೀಕರಿಸಿ, ಅವುಗಳನ್ನು ಎದುರಿಸುವ ಕೌಶಲ್ಯವನ್ನು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದ ಇನ್ನೋರ್ವ ಅತಿಥಿ ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಕೆ.ಎ. ಹಾದಿಮನಿ ಮಾತನಾಡಿ, ಜಗತ್ತಿನಲ್ಲಿ ಸಂಭವಿಸುವ ಆತ್ಮಹತ್ಯೆಯಂತಹ ಗಂಭೀರ ಸ್ವರೂಪದ ಸಾವುಗಳನ್ನು ತಡೆಗಟ್ಟುವ ಉದ್ದೇಶದಿಂದ ಪ್ರತಿವರ್ಷ ಸೆಪ್ಟೆಂಬರ್ 10ರಂದು ವಿಶ್ವ ಆತ್ಮಹತ್ಯೆ ತಡೆ ದಿನಾಚರಣೆ ಆಚರಿಸಲಾಗುತ್ತಿದೆ ಎಂದರು.

ಖಿನ್ನತೆ ಸೇರಿದಂತೆ ಗಂಭೀರ ಸಮಸ್ಯೆಗಳಿಗೆ ಸಿಲುಕಿದಾಗ ನೆರವಿನ ಹಸ್ತ ಚಾಚುವುದರ ಜೊತೆಗೆ ಆಪ್ತ ಸಮಾಲೋಚನೆ ಪಡೆಯಬೇಕು. ಮಾನಸಿಕ ರೋಗ ತಜ್ಞರ ಸಲಹೆ ಹಾಗೂ ಮನಶ್ಶಾಸ್ತ್ರಜ್ಞರೊಂದಿಗೆ ಆತ್ಮೀಯವಾಗಿ ಮಾತನಾಡುವುದು ಖಿನ್ನತೆಯಿಂದ ಹೊರಬರಲು ನೆರವಾಗುತ್ತದೆ. ಸೂಕ್ತ ಸಮಯದಲ್ಲಿ ನೆರವು ಪಡೆದುಕೊಂಡರೆ ಆತ್ಮಹತ್ಯೆಯಿಂದ ಪಾರಾಗಿ ಜೀವನವನ್ನು ಆಯ್ದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಕರ್ನಾಟಕ ರಾಜ್ಯದ ಟೆಲಿ-ಮಾನಸ ಸಹಾಯವಾಣಿ 14416 ಗಂಭೀರ ಸ್ವರೂಪದ ಮಾನಸಿಕ ಅಸ್ವಸ್ಥತೆ ಅಥವಾ ಸಣ್ಣ ಪ್ರಮಾಣದ ಮಾನಸಿಕ ಸಮಸ್ಯೆ ಎದುರಿಸುತ್ತಿರುವವರಿಗೆ ಅಗತ್ಯ ನೆರವು ನೀಡಲಿದೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀ ಗುರು ವಿಜಯ ಮಹಾಂತೇಶ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಸಿ.ಬಿ. ಕಮ್ಮಾರ ಮಾತನಾಡಿ, ಬದುಕಿನ ಅಮೂಲ್ಯತೆಯನ್ನು ಅರಿತುಕೊಂಡು ಮೌಲ್ಯ ಹಾಗೂ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಆತ್ಮಹತ್ಯೆಯಂತಹ ಕೆಟ್ಟ ವಿಚಾರಗಳು ಮನಸ್ಸಿನಲ್ಲಿ ಸುಳಿಯುವುದಿಲ್ಲ ಎಂದರು.

ಮುಖ್ಯ ವೇದಿಕೆಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ, ಸೂಡಿಯ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಶಿವಕುಮಾರ ಕುಬಸದ ಹಾಗೂ ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಹೇಮಾಕ್ಷಿ ತಳವಾರ ಉಪಸ್ಥಿತರಿದ್ದರು. ಕಾಲೇಜಿನ ಉಪನ್ಯಾಸಕ ಎನ್.ಎಸ್. ಜೋಶಿ ಕಾರ್ಯಕ್ರಮ ನಿರೂಪಿಸಿದರು.

ಸಮಸ್ಯೆಗಳಿಂದ ಓಡಿಹೋಗುವುದಲ್ಲ; ಅವುಗಳನ್ನು ಸವಾಲಾಗಿ ಸ್ವೀಕರಿಸಿ ಎದುರಿಸುವುದೇ ಬದುಕಿನ ಗೆಲುವು. ಆತ್ಮಹತ್ಯೆಯಲ್ಲ, ಜೀವನವನ್ನೇ ಆಯ್ದುಕೊಳ್ಳಿ.

— ಎಸ್.ಡಿ. ಬೆನ್ನೂರ, ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ

ಕನಿಷ್ಠ ವೇತನ, ಸೇವಾ ಭದ್ರತೆಗೆ ಆಗ್ರಹ: ಗದಗದಲ್ಲಿ ಮಹಿಳಾ ಪೌರಕಾರ್ಮಿಕರ ಬೃಹತ್ ಪ್ರತಿಭಟನೆ

0

ವಿಜಯಸಾಕ್ಷಿ ಸುದ್ದಿ, ಗದಗ: ಕನಿಷ್ಠ ವೇತನ ಜಾರಿ, ಸೇವೆ ಕಾಯಂಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಗದಗ-ಬೆಟಗೇರಿ ನಗರಸಭೆಯ ಮಹಿಳಾ ಪೌರ ಕಾರ್ಮಿಕರು ಗುರುವಾರ ನಗರದ ಗಾಂಧಿ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಕಳೆದ ಹಲವು ದಿನಗಳಿಂದ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿರುವ ಕಾರ್ಮಿಕರು, ಸರ್ಕಾರ ಹಾಗೂ ಜಿಲ್ಲಾಡಳಿತ ತಮ್ಮ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು. ನಗರ ಸ್ವಚ್ಛತೆಗಾಗಿ ಹಲವು ವರ್ಷಗಳಿಂದ ದುಡಿಯುತ್ತಿದ್ದರೂ ಕನಿಷ್ಠ ವೇತನ ಸೇರಿದಂತೆ ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿದ್ದೇವೆ. ದುಡಿಮೆಗೆ ತಕ್ಕ ವೇತನ ಹಾಗೂ ಸೇವಾ ಭದ್ರತೆ ನೀಡುವಂತೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ದೂರಿದರು.

ಗಾಂಧಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿದ ಮಹಿಳಾ ಪೌರ ಕಾರ್ಮಿಕರು ರಸ್ತೆ ತಡೆ ನಡೆಸಿ ರಾಜ್ಯ ಸರ್ಕಾರ, ಜಿಲ್ಲಾಡಳಿತ ಹಾಗೂ ನಗರಸಭೆ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಸುಮಾರು ಒಂದೂವರೆ ಗಂಟೆಗೂ ಹೆಚ್ಚು ಕಾಲ ರಸ್ತೆ ತಡೆ ನಡೆಸಿದ್ದರಿಂದ ಪ್ರಮುಖ ವೃತ್ತದಲ್ಲಿ ವಾಹನ ಸಂಚಾರ ಅಸ್ತವ್ಯಸ್ತಗೊಂಡು ವಾಹನ ಸವಾರರು ಪರದಾಡುವಂತಾಯಿತು. ಕೆಲಕಾಲ ಸಂಚಾರ ದಟ್ಟಣೆಯೂ ಉಂಟಾಯಿತು.

ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಮಹಿಳಾ ಪೌರ ಕಾರ್ಮಿಕ ಜ್ಯೋತಿ ಹೊಸಳ್ಳಿ ಏಕಾಏಕಿ ಕುಸಿದು ಬಿದ್ದರು. ಅಸ್ವಸ್ಥಗೊಂಡ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ತಕ್ಷಣ ಆ್ಯಂಬುಲೆನ್ಸ್‌ಗೆ ಕರೆ ಮಾಡಲಾಯಿತು. ಆದರೆ, ಆ್ಯಂಬುಲೆನ್ಸ್‌ ಸ್ಥಳಕ್ಕೆ ಆಗಮಿಸುವುದು ವಿಳಂಬವಾದ ಹಿನ್ನೆಲೆಯಲ್ಲಿ ಪ್ರತಿಭಟನಾಕಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

‘ಬಡ ಕಾರ್ಮಿಕರ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸಬೇಕು. ನಮ್ಮ ದುಡಿಮೆಗೆ ತಕ್ಕ ಕನಿಷ್ಠ ವೇತನ ಹಾಗೂ ಸೇವಾ ಭದ್ರತೆ ನೀಡಬೇಕು. ಪ್ರತಿಭಟನೆ ವೇಳೆ ಅಸ್ವಸ್ಥಗೊಂಡ ಕಾರ್ಮಿಕ ಮಹಿಳೆಯನ್ನು ಆಸ್ಪತ್ರೆಗೆ ಕರೆದೊಯ್ಯಲು ಆ್ಯಂಬುಲೆನ್ಸ್‌ ಕೂಡ ತಡವಾಗಿರುವುದು ವ್ಯವಸ್ಥೆಯ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ’ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಬಳಿಕ ಜ್ಯೋತಿ ಹೊಸಳ್ಳಿ ಅವರನ್ನು ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಯಿತು.

ತಮ್ಮ ಬೇಡಿಕೆಗಳ ಕುರಿತು ಹಿರಿಯ ಅಧಿಕಾರಿಗಳು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಸ್ಪಷ್ಟ ಭರವಸೆ ನೀಡಬೇಕು ಎಂದು ಕಾರ್ಮಿಕರು ಪಟ್ಟು ಹಿಡಿದರು. ಬಳಿಕ ಸ್ಥಳಕ್ಕೆ ನಗರಸಭೆ ಕಮಿಷನರ್ ರಾಜಾರಾಂ ಪವಾರ ಆಗಮಿಸಿದಾಗ, ಹಲವು ವರ್ಷಗಳಿಂದ ಸಮಸ್ಯೆ ಎದುರಿಸುತ್ತಿದ್ದರೂ ಸೂಕ್ತ ಕ್ರಮ ಕೈಗೊಳ್ಳದಿರುವುದಕ್ಕೆ ಕಾರ್ಮಿಕರು ಅವರನ್ನು ತರಾಟೆಗೆ ತೆಗೆದುಕೊಂಡರು.

ಪ್ರತಿಭಟನಾಕಾರರ ಮನವಿ ಸ್ವೀಕರಿಸಿದ ಕಮಿಷನರ್, ಕಾರ್ಮಿಕರ ಬೇಡಿಕೆಗಳನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಬಳಿಕ ಕಾರ್ಮಿಕರು ಪ್ರತಿಭಟನೆ ಹಾಗೂ ರಸ್ತೆ ತಡೆ ಕೈಬಿಟ್ಟರು.

ಪ್ರತಿಭಟನೆಯಲ್ಲಿ ನಗರಸಭೆ ಸದಸ್ಯರಾದ ಕೃಷ್ಣಾ ಪರಾಪೂರ, ಅಶೋಕ ಕುಡತಿನ್ನಿ, ಗಣೇಶ ಹುಬ್ಬಳ್ಳಿ, ಎಸ್.ಎನ್. ಬಳ್ಳಾರಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ಧರಣಿ ಸ್ಥಳಕ್ಕೆ ಶಾಸಕ ಎಚ್.ಕೆ. ಪಾಟೀಲ ಭೇಟಿ

ನಗರಸಭೆ ಎದುರು ಮಹಿಳಾ ಪೌರ ಕಾರ್ಮಿಕರು ನಡೆಸುತ್ತಿರುವ ಧರಣಿ ಸ್ಥಳಕ್ಕೆ ಶಾಸಕ ಎಚ್.ಕೆ. ಪಾಟೀಲ ಭೇಟಿ ನೀಡಿ ಕಾರ್ಮಿಕರ ಸಮಸ್ಯೆಗಳನ್ನು ಆಲಿಸಿದರು. ಕಾರ್ಮಿಕರ ನ್ಯಾಯಯುತ ಬೇಡಿಕೆಗಳ ಕುರಿತು ಪರಿಶೀಲನೆ ನಡೆಸಿ, ಸೂಕ್ತ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗುವುದು ಎಂದು ಭರವಸೆ ನೀಡಿದರು.

ಚೆನ್ನೈನಲ್ಲಿ 804 ಗ್ರಾಂ ಹಾಲ್‌ಮಾರ್ಕ್ ಇಲ್ಲದ ಚಿನ್ನಾಭರಣ ವಶ; ಆಭರಣ ಅಂಗಡಿಯಲ್ಲಿ ಅಧಿಕಾರಿಗಳ ಶೋಧ

0

ಚೆನ್ನೈ: ನಗರದಲ್ಲಿ ಹಾಲ್‌ಮಾರ್ಕ್ ಇಲ್ಲದೆ ವಾಣಿಜ್ಯ ಮಾರಾಟಕ್ಕೆ ಪ್ರದರ್ಶಿಸಲಾಗಿದ್ದ 803.99 ಗ್ರಾಂ ಚಿನ್ನಾಭರಣಗಳನ್ನು ಭಾರತೀಯ ಮಾನದಂಡಗಳ ಬ್ಯೂರೋ (BIS) ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಚೆನ್ನೈನ ಅಂಬತ್ತೂರಿನಲ್ಲಿರುವ ಆಭರಣ ಅಂಗಡಿಯಲ್ಲಿ ಸೆಪ್ಟೆಂಬರ್ 1ರಂದು ನಡೆಸಿದ ಶೋಧ ಕಾರ್ಯಾಚರಣೆ ವೇಳೆ ಹಾಲ್‌ಮಾರ್ಕ್ ಮಾಡದ ಚಿನ್ನಾಭರಣಗಳು ಪತ್ತೆಯಾಗಿವೆ. ವಾಣಿಜ್ಯ ಮಾರಾಟಕ್ಕಾಗಿ ಹಾಲ್‌ಮಾರ್ಕ್ ಇಲ್ಲದ ಚಿನ್ನಾಭರಣಗಳನ್ನು ಪ್ರದರ್ಶಿಸಿರುವುದು ಕಂಡುಬಂದ ಹಿನ್ನೆಲೆಯಲ್ಲಿ, 2016ರ ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ ಕಾಯ್ದೆಯ ಸೆಕ್ಷನ್ 28ರ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದು BIS ತಿಳಿಸಿದೆ.

ವಶಪಡಿಸಿಕೊಂಡ ಚಿನ್ನಾಭರಣಗಳಲ್ಲಿ 671.50 ಗ್ರಾಂ ತೂಕದ 175 ಮಂಗಳಸೂತ್ರಗಳು (ತಾಳಿಗಳು), 25.02 ಗ್ರಾಂ ತೂಕದ 12 ಮಕ್ಕಳ ಬಳೆಗಳು, 86.14 ಗ್ರಾಂ ತೂಕದ 40 ಕಿವಿಯೋಲೆಗಳು ಹಾಗೂ 21.33 ಗ್ರಾಂ ತೂಕದ 10 ಪೆಂಡೆಂಟ್‌ಗಳು ಸೇರಿವೆ.

ಚಿನ್ನದ ಆಭರಣಗಳು ಹಾಗೂ ಕಲಾಕೃತಿಗಳಿಗೆ ಕಡ್ಡಾಯ ಹಾಲ್‌ಮಾರ್ಕಿಂಗ್ ವ್ಯವಸ್ಥೆಯನ್ನು 2021ರಲ್ಲಿ ಜಾರಿಗೆ ತರಲಾಗಿದೆ. ಅಮೂಲ್ಯ ಲೋಹದ ವಸ್ತುಗಳ ಶುದ್ಧತೆ ಅಥವಾ ಸೂಕ್ಷ್ಮತೆಯ ಅಧಿಕೃತ ದೃಢೀಕರಣವಾಗಿರುವ ಹಾಲ್‌ಮಾರ್ಕ್, ಗ್ರಾಹಕರಿಗೆ ಚಿನ್ನದ ಗುಣಮಟ್ಟದ ಬಗ್ಗೆ ಖಚಿತತೆ ನೀಡುವ ಪ್ರಮುಖ ವ್ಯವಸ್ಥೆಯಾಗಿದೆ.

ಹಾಲ್‌ಮಾರ್ಕ್ ಇಲ್ಲದ ಚಿನ್ನಾಭರಣಗಳನ್ನು ವಾಣಿಜ್ಯ ಮಾರಾಟಕ್ಕಾಗಿ ಪ್ರದರ್ಶಿಸಿರುವುದು ನಿಯಮ ಉಲ್ಲಂಘನೆಯಾಗಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳು ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ಕಾನೂನು ಕ್ರಮ ಕೈಗೊಳ್ಳುತ್ತಿದ್ದಾರೆ.

ಕರ್ನಾಟಕದ 50 ತಾಲೂಕು ಆಸ್ಪತ್ರೆಗಳಲ್ಲಿ ಶ್ರವಣ-ಮಾತಿನ ಚಿಕಿತ್ಸೆ: ಸರ್ಕಾರದ ಮಹತ್ವದ ಆದೇಶ

0

ಬೆಂಗಳೂರು: ರಾಜ್ಯದ ಗ್ರಾಮೀಣ ಭಾಗದ ಜನರಿಗೆ ಶ್ರವಣ ಹಾಗೂ ಮಾತಿನ ಸಮಸ್ಯೆಗಳಿಗೆ ತಾಲೂಕು ಮಟ್ಟದಲ್ಲೇ ಚಿಕಿತ್ಸೆ ಮತ್ತು ಪರೀಕ್ಷೆ ದೊರೆಯುವಂತೆ ಮಾಡಲು ಸರ್ಕಾರ ಮಹತ್ವದ ಕ್ರಮ ಕೈಗೊಂಡಿದೆ.

ರಾಜ್ಯದ 50 ತಾಲೂಕು ಆಸ್ಪತ್ರೆಗಳಲ್ಲಿ ಶ್ರವಣ-ಮಾತಿನ ಚಿಕಿತ್ಸಾ ಸೇವೆ ಆರಂಭಿಸಲು ಸರ್ಕಾರ ಆದೇಶಿಸಿದೆ.

ಇದರ ಭಾಗವಾಗಿ ಪ್ರತಿ ತಾಲೂಕು ಆಸ್ಪತ್ರೆಗೆ ಅಗತ್ಯವಿರುವ ಆಡಿಯಾಲಜಿ ಉಪಕರಣಗಳನ್ನು ಖರೀದಿಸಲು ಅನುಮೋದನೆ ನೀಡಲಾಗಿದೆ. ಪ್ರತಿ ಆಸ್ಪತ್ರೆಗೆ ಸುಮಾರು ₹40.78 ಲಕ್ಷ ಮೌಲ್ಯದ ಉಪಕರಣ ಒದಗಿಸಲು ನಿರ್ಧರಿಸಲಾಗಿದ್ದು, ಒಟ್ಟು ₹20.39 ಕೋಟಿ ವೆಚ್ಚವಾಗಲಿದೆ.

50 ಆಡಿಯಾಲಜಿಸ್ಟ್‌ಗಳ ನೇಮಕ:

ಪ್ರತಿ ತಾಲೂಕು ಆಸ್ಪತ್ರೆಗೆ ಒಬ್ಬ ಆಡಿಯಾಲಜಿಸ್ಟ್‌ರನ್ನು ನೇಮಕ ಮಾಡಲು ಸರ್ಕಾರ ನಿರ್ಧರಿಸಿದೆ. ಆಡಿಯಾಲಜಿಸ್ಟ್‌ಗಳಿಗೆ ತಿಂಗಳಿಗೆ ₹30 ಸಾವಿರ ಗೌರವಧನ ನೀಡಲಾಗುತ್ತದೆ. 50 ಆಡಿಯಾಲಜಿಸ್ಟ್‌ಗಳಿಗೆ ವಾರ್ಷಿಕವಾಗಿ ಸುಮಾರು ₹1.80 ಕೋಟಿ ವೆಚ್ಚವಾಗಲಿದೆ.

ಈ ಸೇವೆ ಆರಂಭವಾಗುವುದರಿಂದ ಗ್ರಾಮೀಣ ಪ್ರದೇಶದ ಜನರು ಕಿವಿ ಮತ್ತು ಶ್ರವಣ ಸಮಸ್ಯೆಗಳ ಪರೀಕ್ಷೆ ಹಾಗೂ ಚಿಕಿತ್ಸೆಗಾಗಿ ಜಿಲ್ಲಾ ಕೇಂದ್ರಗಳಿಗೆ ತೆರಳುವ ಅಗತ್ಯ ಕಡಿಮೆಯಾಗಲಿದೆ.

ಅಗತ್ಯ ಆಡಿಯಾಲಜಿ ಉಪಕರಣಗಳ ಖರೀದಿಯನ್ನು ಕರ್ನಾಟಕ ರಾಜ್ಯ ಔಷಧಿ ನಿಗಮದ (KSMSCL) ಮೂಲಕ ನಡೆಸಲು ಸೂಚಿಸಲಾಗಿದೆ. KTPP ಕಾಯ್ದೆ ಮತ್ತು ನಿಯಮಗಳಂತೆ ಟೆಂಡರ್ ಪ್ರಕ್ರಿಯೆ ಮೂಲಕ ಉಪಕರಣಗಳನ್ನು ಖರೀದಿಸಲು ಸರ್ಕಾರ ನಿರ್ದೇಶನ ನೀಡಿದೆ.

ಟೆಲಿ-ICU ಸೇವೆಗೂ ವಿಸ್ತರಣೆ:

ರಾಜ್ಯದಲ್ಲಿ ಟೆಲಿ-ICU ಯೋಜನೆಯನ್ನು ವಿಸ್ತರಿಸಲು ಕೂಡ ಸರ್ಕಾರ ಕ್ರಮ ಕೈಗೊಂಡಿದೆ. 43 ಪೈಲಟ್ ಕೇಂದ್ರಗಳಲ್ಲಿ ಟೆಲಿ-ICU ಸೇವೆ ಜಾರಿಗೆ ತರಲು ನಿರ್ಧರಿಸಲಾಗಿದೆ.

11 ಹಬ್‌ಗಳ ಮೂಲಕ 131 ಸ್ಪೋಕ್ ಆಸ್ಪತ್ರೆಗಳಿಗೆ ಟೆಲಿ-ICU ಸಂಪರ್ಕ ಕಲ್ಪಿಸಲಾಗುತ್ತದೆ. ಇದರಲ್ಲಿ 6 ವಯಸ್ಕರ ಟೆಲಿ-ICU ಹಬ್‌ಗಳು ಹಾಗೂ 5 SNCU ಹಬ್‌ಗಳ ಸ್ಥಾಪನೆಗೆ ತೀರ್ಮಾನಿಸಲಾಗಿದೆ.

ಅಲ್ಲದೆ, 94 ವಯಸ್ಕರ ಟೆಲಿ-ICU ಸ್ಪೋಕ್ ಕೇಂದ್ರಗಳು, 23 SNCU/NICU ಹಾಗೂ 14 PICU ಸ್ಪೋಕ್ ಕೇಂದ್ರಗಳನ್ನು ಆರಂಭಿಸಲು ನಿರ್ಧರಿಸಲಾಗಿದೆ. ಟೆಲಿ-ICU ವ್ಯವಸ್ಥೆಯ ಮೂಲಕ ತಜ್ಞ ವೈದ್ಯರಿಂದ ರೋಗಿಗಳಿಗೆ ಅಗತ್ಯ ಮಾರ್ಗದರ್ಶನ ಮತ್ತು ಚಿಕಿತ್ಸೆ ಸಲಹೆ ದೊರೆಯಲಿದೆ.

ಸರ್ಕಾರಿ ಆಸ್ಪತ್ರೆಗಳ ಎಕ್ಸ್‌ರೇಗೆ AI ಟಚ್:

ಇದರ ಜೊತೆಗೆ ಸರ್ಕಾರಿ ಆಸ್ಪತ್ರೆಗಳ ಎಕ್ಸ್‌ರೇ ಸೇವೆಯನ್ನು ಡಿಜಿಟಲೀಕರಣಗೊಳಿಸಲು ಸರ್ಕಾರ ಮುಂದಾಗಿದೆ. 162 ಎಕ್ಸ್‌ರೇ ಯಂತ್ರಗಳನ್ನು ಡಿಜಿಟಲ್ ರೇಡಿಯೋಗ್ರಫಿ (DR) ವ್ಯವಸ್ಥೆಗೆ ಅಪ್‌ಗ್ರೇಡ್ ಮಾಡಲು ಗ್ರೀನ್‌ಸಿಗ್ನಲ್ ನೀಡಲಾಗಿದೆ.

ಈ ಯೋಜನೆಗೆ ₹40.5 ಕೋಟಿ ಅನುದಾನ ನೀಡಲಾಗಿದ್ದು, 300 mA ಹಾಗೂ 500 mA ಸಾಮರ್ಥ್ಯದ ಎಕ್ಸ್‌ರೇ ಯಂತ್ರಗಳನ್ನು DR ವ್ಯವಸ್ಥೆಗೆ ಪರಿವರ್ತಿಸಲಾಗುತ್ತದೆ.

ಎಕ್ಸ್‌ರೇ ಚಿತ್ರಗಳನ್ನು AI ತಂತ್ರಜ್ಞಾನದ ಮೂಲಕ ವಿಶ್ಲೇಷಿಸಿ ರೋಗ ಪತ್ತೆಗೆ ನೆರವಾಗುವ ವ್ಯವಸ್ಥೆ ಜಾರಿಗೆ ತರುವ ಬಗ್ಗೆಯೂ ಚಿಂತನೆ ನಡೆದಿದೆ. KDRM ಹಂತ-1 ಅಡಿಯಲ್ಲಿ ಈ ಯೋಜನೆಯನ್ನು ಜಾರಿಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.

ಒಟ್ಟಾರೆ, ತಾಲೂಕು ಮಟ್ಟದಲ್ಲೇ ಶ್ರವಣ-ಮಾತಿನ ಚಿಕಿತ್ಸೆ, ತಜ್ಞ ವೈದ್ಯರ ಟೆಲಿ-ICU ಮಾರ್ಗದರ್ಶನ ಹಾಗೂ AI ಆಧಾರಿತ ಎಕ್ಸ್‌ರೇ ಸೇವೆ ಒದಗಿಸುವ ಮೂಲಕ ರಾಜ್ಯದ ಸರ್ಕಾರಿ ಆರೋಗ್ಯ ಸೇವೆಯನ್ನು ಮತ್ತಷ್ಟು ಬಲಪಡಿಸಲು ಸರ್ಕಾರ ಮುಂದಾಗಿದೆ.

ಮನೆ ಮುಂದೆ ಆಟವಾಡುತ್ತಿದ್ದ 3 ವರ್ಷದ ಬಾಲಕಿ ಅನುಮಾನಾಸ್ಪದ ಸಾವು; ಮಲತಾಯಿ ಮೇಲೆ ಕೊಲೆ ಆರೋಪ!

0

ನೆಲಮಂಗಲ: ಮನೆ ಮುಂದೆ ಆಟವಾಡುತ್ತಿದ್ದ ಮೂರು ವರ್ಷದ ಬಾಲಕಿ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ತೋಟದಗುಡ್ಡಹಳ್ಳಿಯಲ್ಲಿ ನಡೆದಿದೆ.

ಲಿಕ್ಷಿತಾ (3) ಮೃತ ಬಾಲಕಿ. ಮಗುವಿನ ಸಾವಿನ ಹಿಂದೆ ಮಲತಾಯಿ ಗಿರಿಜಾ ಕೈವಾಡವಿದೆ ಎಂದು ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ.

ಮಗುವಿನ ದೇಹದ ಮೇಲೆ ಬರೆ ಹಾಗೂ ಗಾಯದ ಗುರುತುಗಳು ಪತ್ತೆಯಾಗಿರುವುದು ಸಾವಿನ ಬಗ್ಗೆ ಹಲವು ಅನುಮಾನಗಳಿಗೆ ಕಾರಣವಾಗಿದೆ. ಘಟನೆ ಬಳಿಕ ಆಕ್ರೋಶಗೊಂಡ ಕುಟುಂಬಸ್ಥರು ಗಿರಿಜಾ ಮೇಲೆ ಹಲ್ಲೆಗೆ ಮುಂದಾಗಿದ್ದು, ಸ್ಥಳಕ್ಕೆ ಬಂದ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ.

ಮೃತ ಬಾಲಕಿಯ ತಾಯಿ ಅನಾರೋಗ್ಯದಿಂದ ಮೃತಪಟ್ಟ ಬಳಿಕ ತಂದೆ ಜಗದೀಶ್, ಗಿರಿಜಾ ಜೊತೆ ವಾಸವಾಗಿದ್ದರು ಎನ್ನಲಾಗಿದೆ. ಜಗದೀಶ್ ಫೈನಾನ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಕಳೆದ ಸುಮಾರು 20 ದಿನಗಳಿಂದ ಗಿರಿಜಾ ಹಾಗೂ ಲಿಕ್ಷಿತಾ ಜೊತೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು ಎಂದು ತಿಳಿದುಬಂದಿದೆ.

ಗಿರಿಜಾ ಅವರಿಗೂ ಈ ಹಿಂದೆ ಮದುವೆಯಾಗಿತ್ತು ಎನ್ನಲಾಗಿದ್ದು, ಬಳಿಕ ಜಗದೀಶ್ ಜೊತೆ ವಾಸವಾಗಿದ್ದರು. ಇಬ್ಬರೂ ಗಂಡ-ಹೆಂಡತಿ ಎಂದು ಹೇಳಿಕೊಂಡು ಬಾಡಿಗೆ ಮನೆಯಲ್ಲಿ ನೆಲೆಸಿದ್ದರು ಎನ್ನಲಾಗಿದೆ.

ಮೂರು ವರ್ಷದ ಬಾಲಕಿಯ ಅನುಮಾನಾಸ್ಪದ ಸಾವಿನಿಂದ ಕುಟುಂಬಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಮಲತಾಯಿಯೇ ಮಗುವನ್ನು ಕೊಲೆ ಮಾಡಿದ್ದಾಳೆ ಎಂದು ಆರೋಪಿಸಿದ್ದಾರೆ. ಈ ಆರೋಪದ ಹಿನ್ನೆಲೆಯಲ್ಲಿ ಮನೆ ಬಳಿ ಗಲಾಟೆ ಉಂಟಾಗಿ, ಪರಿಸ್ಥಿತಿ ಕೈ ಕೈ ಮಿಲಾಯಿಸುವ ಹಂತಕ್ಕೂ ತಲುಪಿತ್ತು. ಪೊಲೀಸರು ಮಧ್ಯಪ್ರವೇಶಿಸಿ ಗಲಾಟೆಯನ್ನು ನಿಯಂತ್ರಿಸಿದ್ದಾರೆ.

ಮಗುವಿನ ಸಾವಿಗೆ ನಿಖರ ಕಾರಣವೇನು ಎಂಬುದು ತನಿಖೆಯಿಂದ ತಿಳಿದುಬರಬೇಕಿದೆ. ಘಟನೆ ಸಂಬಂಧ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

ಊಟ ತಿಂದಾಕ್ಷಣ ಮಲಗೋ ಅಭ್ಯಾಸ ಇದ್ಯಾ!? ಎಚ್ಚರ, ಗ್ಯಾಸ್-ಆಸಿಡಿಟಿ ಹೆಚ್ಚಾಗಲು ಇದು ಕಾರಣವಾಗಬಹುದು

0

ಬೆಳಗ್ಗೆ ಎದ್ದ ತಕ್ಷಣ ಹೊಟ್ಟೆ ಉಬ್ಬರ, ಗ್ಯಾಸ್, ಆಸಿಡಿಟಿ ಹಾಗೂ ಅಜೀರ್ಣದಂತಹ ಸಮಸ್ಯೆಗಳು ಕಾಣಿಸಿಕೊಳ್ಳುವುದು ಹಲವರಲ್ಲಿ ಸಾಮಾನ್ಯವಾಗಿದೆ.

ಬದಲಾಗುತ್ತಿರುವ ಜೀವನಶೈಲಿ, ಸಮಯಕ್ಕೆ ಸರಿಯಾಗಿ ಊಟ ಮಾಡದಿರುವುದು, ಹೆಚ್ಚು ಎಣ್ಣೆ ಹಾಗೂ ಮಸಾಲೆಯುಕ್ತ ಆಹಾರ ಸೇವನೆ, ಜಂಕ್ ಫುಡ್ ಸೇವನೆ ಮತ್ತು ಕಡಿಮೆ ನೀರು ಕುಡಿಯುವುದು ಜೀರ್ಣಕ್ರಿಯೆಯ ಮೇಲೆ ಪರಿಣಾಮ ಬೀರಬಹುದು.

ಇಂತಹ ಸಮಸ್ಯೆಗಳಿಗೆ ಕೆಲವರು ಮನೆಯಲ್ಲೇ ಸಿಗುವ ಧನಿಯಾ ಮತ್ತು ಶುಂಠಿಯನ್ನು ಬಳಸಿ ಪಾನೀಯ ತಯಾರಿಸಿಕೊಂಡು ಸೇವಿಸುತ್ತಾರೆ. ಧನಿಯಾ-ಶುಂಠಿ ನೀರು ಜೀರ್ಣಕ್ರಿಯೆಗೆ ಸಹಾಯ ಮಾಡಬಹುದು ಎಂದು ಕೆಲವರು ನಂಬುತ್ತಾರೆ. ಆದರೆ ಇದನ್ನು ಸೇವಿಸಿದರೆ ಗ್ಯಾಸ್, ಆಸಿಡಿಟಿ ಅಥವಾ ಹೊಟ್ಟೆ ನೋವು ಎರಡು ದಿನಗಳಲ್ಲಿ ಸಂಪೂರ್ಣವಾಗಿ ನಿವಾರಣೆಯಾಗುತ್ತದೆ ಎಂಬುದಕ್ಕೆ ಸಾಕಷ್ಟು ವೈಜ್ಞಾನಿಕ ಸಾಕ್ಷ್ಯವಿಲ್ಲ.

ಧನಿಯಾ-ಶುಂಠಿ ನೀರು ತಯಾರಿಸುವುದು ಹೇಗೆ?

ಮೊದಲು ಒಂದು ಚಮಚ ಧನಿಯಾವನ್ನು ಸ್ವಲ್ಪ ಹುರಿದುಕೊಂಡು ನೀರಿಗೆ ಹಾಕಬೇಕು. ನಂತರ ಸಣ್ಣ ತುಂಡು ಶುಂಠಿಯನ್ನು ಸೇರಿಸಿ ಕೆಲವು ನಿಮಿಷ ಕುದಿಸಬೇಕು. ಬಳಿಕ ನೀರನ್ನು ಸೋಸಿ ಬೆಚ್ಚಗಿರುವಾಗ ಸೇವಿಸಬಹುದು. ರುಚಿಗಾಗಿ ಕೆಲವರು ಸ್ವಲ್ಪ ಜೇನುತುಪ್ಪವನ್ನೂ ಸೇರಿಸುತ್ತಾರೆ.

ಶುಂಠಿಯನ್ನು ಹಲವು ವರ್ಷಗಳಿಂದ ಜೀರ್ಣಕ್ರಿಯೆಗೆ ಸಂಬಂಧಿಸಿದ ಕೆಲವು ಸಮಸ್ಯೆಗಳಿಗೆ ಬಳಸಲಾಗುತ್ತಿದೆ. ಆದರೂ ಯಾವುದೇ ಮನೆಮದ್ದನ್ನು ನಿಯಮಿತವಾಗಿ ಸೇವಿಸುವ ಮೊದಲು ಅದರ ಪರಿಣಾಮ ಮತ್ತು ವೈಯಕ್ತಿಕ ಆರೋಗ್ಯ ಪರಿಸ್ಥಿತಿಯನ್ನು ಗಮನಿಸುವುದು ಮುಖ್ಯ.

ಗ್ಯಾಸ್, ಆಸಿಡಿಟಿ ಕಡಿಮೆಯಾಗಲು ಏನು ಮಾಡಬೇಕು?

ಜೀರ್ಣಕ್ರಿಯೆ ಉತ್ತಮವಾಗಿರಲು ಆಹಾರ ಪದ್ಧತಿಯಲ್ಲಿ ಕೆಲವು ಬದಲಾವಣೆ ಮಾಡಿಕೊಳ್ಳುವುದು ಮುಖ್ಯ. ಹೆಚ್ಚು ಎಣ್ಣೆಯುಕ್ತ ಮತ್ತು ಮಸಾಲೆಯುಕ್ತ ಆಹಾರವನ್ನು ಕಡಿಮೆ ಮಾಡಬೇಕು. ಅತಿಯಾದ ಕಾಫಿ, ಚಹಾ ಹಾಗೂ ಕಾರ್ಬೊನೇಟೆಡ್ ಪಾನೀಯಗಳ ಸೇವನೆಯನ್ನೂ ನಿಯಂತ್ರಿಸುವುದು ಸಹಾಯಕವಾಗಬಹುದು.

ಊಟವನ್ನು ನಿಧಾನವಾಗಿ ಸೇವಿಸುವುದು, ಸಾಕಷ್ಟು ನೀರು ಕುಡಿಯುವುದು ಮತ್ತು ಊಟ ಮಾಡಿದ ತಕ್ಷಣ ಮಲಗದೆ ಇರುವುದು ಉತ್ತಮ ಅಭ್ಯಾಸವಾಗಿದೆ. ನಿಯಮಿತ ಸಮಯಕ್ಕೆ ಊಟ ಮಾಡುವುದಕ್ಕೂ ಆದ್ಯತೆ ನೀಡಬೇಕು.

ಪದೇಪದೇ ಸಮಸ್ಯೆ ಕಾಣಿಸಿಕೊಂಡರೆ ಎಚ್ಚರ:

ಗ್ಯಾಸ್ ಅಥವಾ ಆಸಿಡಿಟಿ ಪದೇಪದೇ ಕಾಣಿಸಿಕೊಳ್ಳುತ್ತಿದ್ದರೆ ಕೇವಲ ಮನೆಮದ್ದಿನ ಮೂಲಕ ಸಮಸ್ಯೆಯನ್ನು ನಿಯಂತ್ರಿಸಲು ಪ್ರಯತ್ನಿಸುವ ಬದಲು ಅದರ ಮೂಲ ಕಾರಣವನ್ನು ಪತ್ತೆಹಚ್ಚುವುದು ಅಗತ್ಯ.

ನಿರಂತರ ಎದೆ ಉರಿ, ತೀವ್ರ ಹೊಟ್ಟೆ ನೋವು, ವಾಂತಿ, ನುಂಗಲು ಕಷ್ಟ, ಕಾರಣವಿಲ್ಲದೆ ತೂಕ ಇಳಿಕೆಯಾಗುವುದು ಅಥವಾ ಮಲದಲ್ಲಿ ರಕ್ತ ಕಾಣಿಸಿಕೊಳ್ಳುವಂತಹ ಲಕ್ಷಣಗಳು ಕಂಡುಬಂದರೆ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಸಲಹೆ ಪಡೆಯಬೇಕು.

ರೇಣುಕಾಸ್ವಾಮಿ ಕೊಲೆ ಕೇಸ್: ಖುದ್ದು ಹಾಜರಾತಿಗೆ ದರ್ಶನ್ ಮನವಿ, ಸೆ.16ಕ್ಕೆ ವಿಚಾರಣೆ ಮುಂದೂಡಿದ ಹೈಕೋರ್ಟ್

0

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ಸೆಷನ್ಸ್ ಕೋರ್ಟ್‌ನಲ್ಲಿ ಮುಂದುವರಿದಿರುವ ಬೆನ್ನಲ್ಲೇ, ವಿಚಾರಣೆಗೆ ಖುದ್ದು ಹಾಜರಾಗಲು ಅವಕಾಶ ನೀಡುವಂತೆ ನಟ ದರ್ಶನ್ ಸಲ್ಲಿಸಿರುವ ಅರ್ಜಿ ಹೈಕೋರ್ಟ್‌ನಲ್ಲಿ ವಿಚಾರಣೆಗೆ ಬಂದಿದೆ. ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಸೆಪ್ಟೆಂಬರ್ 16ಕ್ಕೆ ಮುಂದೂಡಿದೆ.

ಸೆಪ್ಟೆಂಬರ್ 10ರಂದು ನ್ಯಾಯಮೂರ್ತಿ ವಿ. ಶ್ರೀಶಾನಂದ ಅವರಿದ್ದ ಪೀಠದಲ್ಲಿ ಅರ್ಜಿ ವಿಚಾರಣೆ ನಡೆಯಿತು. ದರ್ಶನ್ ಪರ ಹಿರಿಯ ವಕೀಲ ಹಷ್ಮತ್ ಪಾಷಾ ವಾದ ಮಂಡಿಸಿ, ಸಾಕ್ಷ್ಯ ವಿಚಾರಣೆ ನಡೆಯುವ ಸಂದರ್ಭದಲ್ಲಿ ಆರೋಪಿಗಳಿಗೆ ಖುದ್ದು ಹಾಜರಾಗಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದರು.

ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸುವಾಗ ತಾಂತ್ರಿಕ ಕಾರಣಗಳಿಂದ ಸೂಕ್ತ ಸಂವಹನ ಸಾಧ್ಯವಾಗುತ್ತಿಲ್ಲ. ಪ್ರಮುಖ ಸಾಕ್ಷಿಗಳ ವಿಚಾರಣೆ ನಡೆಯುವ ಸಂದರ್ಭದಲ್ಲಾದರೂ ಆರೋಪಿಗಳನ್ನು ನ್ಯಾಯಾಲಯಕ್ಕೆ ಖುದ್ದು ಹಾಜರುಪಡಿಸಬೇಕು ಎಂದು ಅವರು ವಾದಿಸಿದರು.

ಈ ವೇಳೆ ನ್ಯಾಯಾಧೀಶರು, ವಿಡಿಯೋ ಕಾನ್ಫರೆನ್ಸ್‌ನಲ್ಲೇ ಆರೋಪಿ ಮತ್ತು ವಕೀಲರ ನಡುವೆ ಖಾಸಗಿ ಮಾತುಕತೆಗೆ ವ್ಯವಸ್ಥೆ ಮಾಡಬಹುದು ಎಂದು ಹೇಳಿದರು. ಕೋರ್ಟ್ ಕಲಾಪ ಆರಂಭವಾಗುವುದಕ್ಕೂ 15 ನಿಮಿಷ ಮುನ್ನ ಆರೋಪಿಗಳು ತಮ್ಮ ವಕೀಲರೊಂದಿಗೆ ಮಾತನಾಡಲು ಅವಕಾಶ ಕಲ್ಪಿಸಬಹುದು ಎಂದು ತಿಳಿಸಿದರು.

ಆರೋಪಿಗಳನ್ನು ನ್ಯಾಯಾಲಯಕ್ಕೆ ಖುದ್ದಾಗಿ ಕರೆತರಬೇಕಾದರೆ ಪೊಲೀಸರ ಭದ್ರತೆ ಒದಗಿಸಬೇಕಾಗುತ್ತದೆ. ಅಲ್ಲದೆ, ಜನದಟ್ಟಣೆಯನ್ನು ನಿಯಂತ್ರಿಸುವುದು ಕಷ್ಟವಾಗಬಹುದು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.

ಬೇಕಿದ್ದರೆ ಪರಪ್ಪನ ಅಗ್ರಹಾರ ಜೈಲಿನಲ್ಲೇ ಕೋರ್ಟ್ ವ್ಯವಸ್ಥೆ ಮಾಡಬಹುದು ಅಥವಾ ಅಲ್ಲಿಯೇ ವಿಚಾರಣೆ ನಡೆಸುವಂತೆ ಸೂಚನೆ ನೀಡಬಹುದು ಎಂದು ನ್ಯಾಯಾಧೀಶರು ತಿಳಿಸಿದರು. ಖುದ್ದು ಹಾಜರಾತಿಗಿಂತ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸುವುದು ಹೆಚ್ಚು ಪರಿಣಾಮಕಾರಿಯಾಗಬಹುದು ಎಂದೂ ಅಭಿಪ್ರಾಯಪಟ್ಟರು.

ಟ್ರಯಲ್ ಪ್ರಕ್ರಿಯೆಯನ್ನು ಸೌಹಾರ್ದಯುತವಾಗಿ ಪೂರ್ಣಗೊಳಿಸುವ ಅಗತ್ಯವಿದೆ. ಎರಡೂ ಕಡೆಯ ವಕೀಲರು ಚರ್ಚಿಸಿ ಸೂಕ್ತ ತೀರ್ಮಾನಕ್ಕೆ ಬರುವಂತೆ ನ್ಯಾಯಾಲಯ ಸೂಚಿಸಿದೆ. ಪ್ರತಿಯೊಂದು ವಿಚಾರಣೆಯಲ್ಲೂ ಆರೋಪಿಗಳ ಖುದ್ದು ಹಾಜರಾತಿ ಅಗತ್ಯವಿಲ್ಲ. ಕ್ರಾಸ್ ಎಕ್ಸಾಮಿನೇಷನ್ ಯಾವಾಗ ನಡೆಯಲಿದೆ ಎಂಬುದನ್ನು ನ್ಯಾಯಾಲಯಕ್ಕೆ ತಿಳಿಸುವಂತೆ ಸೂಚಿಸಿ ವಿಚಾರಣೆಯನ್ನು ಸೆಪ್ಟೆಂಬರ್ 16ಕ್ಕೆ ಮುಂದೂಡಲಾಗಿದೆ.

ದರ್ಶನ್ ಪರ ವಕೀಲರ ವಾದವೇನು?

ಸಾಕ್ಷ್ಯ ವಿಚಾರಣೆ ನಡೆಯುವ ಸಂದರ್ಭದಲ್ಲಿ ಆರೋಪಿಗೆ ಖುದ್ದು ಹಾಜರಾಗುವ ಅವಕಾಶ ನೀಡಬೇಕು. ಸಾಕ್ಷ್ಯವನ್ನು ನೇರವಾಗಿ ಆಲಿಸುವುದು ಹಾಗೂ ವೀಕ್ಷಿಸುವುದು ಆರೋಪಿಯ ಹಕ್ಕು ಎಂದು ದರ್ಶನ್ ಪರ ವಕೀಲರು ವಾದಿಸಿದ್ದಾರೆ.

ಪರಪ್ಪನ ಅಗ್ರಹಾರ ಜೈಲು ಮತ್ತು ನ್ಯಾಯಾಲಯದಲ್ಲಿ ವಿಡಿಯೋ ಕಾನ್ಫರೆನ್ಸ್‌ಗೆ ಅಗತ್ಯವಿರುವ ಸೂಕ್ತ ಉಪಕರಣಗಳಿಲ್ಲ. ತಾಂತ್ರಿಕ ವ್ಯವಸ್ಥೆಗಳನ್ನು ಇನ್ನೂ ಸಮರ್ಪಕವಾಗಿ ಉನ್ನತೀಕರಿಸಲಾಗಿಲ್ಲ. ಈ ಕಾರಣದಿಂದ ಕಾಲಕಾಲಕ್ಕೆ ತಮ್ಮ ವಕೀಲರಿಗೆ ಸೂಕ್ತ ಸೂಚನೆಗಳನ್ನು ನೀಡಲು ಸಾಧ್ಯವಾಗುತ್ತಿಲ್ಲ. ವಿಡಿಯೋ ಕಾನ್ಫರೆನ್ಸ್‌ನಲ್ಲೂ ತಾಂತ್ರಿಕ ಅಡಚಣೆಗಳು ಎದುರಾಗುತ್ತಿವೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ಈ ಹಿನ್ನೆಲೆಯಲ್ಲಿ ದರ್ಶನ್ ಅವರನ್ನು ವಿಚಾರಣೆಗೆ ಖುದ್ದು ಹಾಜರುಪಡಿಸುವಂತೆ ಜೈಲು ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು ಎಂದು ಮನವಿ ಮಾಡಲಾಗಿತ್ತು. ಸೆಷನ್ಸ್ ಕೋರ್ಟ್ ಈ ಅರ್ಜಿಯನ್ನು ವಜಾಗೊಳಿಸಿದ ಬಳಿಕ ದರ್ಶನ್ ಪರವಾಗಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಗಿತ್ತು.

ಚಿಕ್ಕಬಳ್ಳಾಪುರ: ಬಾವಿಗೆ ಬಿದ್ದು ಮಹಿಳೆ ಅನುಮಾನಾಸ್ಪದ ಸಾವು!

0

ಚಿಕ್ಕಬಳ್ಳಾಪುರ: ಬಾವಿಗೆ ಬಿದ್ದು ಮಹಿಳೆಯೊಬ್ಬರು ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಕುಡುವತಿ ಗ್ರಾಮದಲ್ಲಿ ನಡೆದಿದೆ.

ಮೃತ ಮಹಿಳೆಯನ್ನು ಕಲ್ಪನಾ (39) ಎಂದು ಗುರುತಿಸಲಾಗಿದೆ. ಸುಮಾರು 20 ವರ್ಷಗಳ ಹಿಂದೆ ಕುಡುವತಿ ಗ್ರಾಮದ ತಮ್ಮೇಗೌಡ ಎಂಬುವರೊಂದಿಗೆ ಕಲ್ಪನಾ ವಿವಾಹವಾಗಿದ್ದು, ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.

ಇತ್ತೀಚೆಗೆ ಅನಾರೋಗ್ಯದ ಹಿನ್ನೆಲೆಯಲ್ಲಿ ಕಲ್ಪನಾ ಕುಡುವತಿ ಗ್ರಾಮದ ತಮ್ಮ ತವರು ಮನೆಯಲ್ಲಿದ್ದರು ಎನ್ನಲಾಗಿದೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

ಘಟನೆ ಮಾಹಿತಿ ತಿಳಿದು ಸ್ಥಳಕ್ಕೆ ನಂದಿಗಿರಿಧಾಮ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.

ಘಟನೆಗೆ ಸಂಬಂಧಿಸಿದಂತೆ ನಂದಿಗಿರಿಧಾಮ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಮಹಿಳೆಯ ಸಾವಿನ ನಿಖರ ಕಾರಣದ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.