ಹಾಸನ: ಹೇಮಾವತಿ ಜಲಾಶಯ ಯೋಜನೆ ಕಚೇರಿಯಲ್ಲಿ ಅಪರೂಪದ ಘಟನೆ ನಡೆದಿದೆ. ಹೇಮಾವತಿ ಜಲಾಶಯ ಯೋಜನೆ (HRP) ವಿಶೇಷ ಭೂಸ್ವಾಧೀನಾಧಿಕಾರಿ ಹುದ್ದೆಗೆ ಇಬ್ಬರು ಅಧಿಕಾರಿಗಳು ಹಕ್ಕು ಹೇಳಿಕೊಂಡು ಮುಖಾಮುಖಿಯಾಗಿದ್ದಾರೆ.
ಮಂಜುನಾಥ್ ಅವರನ್ನು ಒಂದು ವಾರದ ಹಿಂದೆ ಸರ್ಕಾರ ವರ್ಗಾವಣೆ ಮಾಡಿದ್ದು, ಅವರ ಸ್ಥಾನಕ್ಕೆ ಮಹೇಶ್ ಅವರನ್ನು ನೇಮಕ ಮಾಡಿತ್ತು. ಆದೇಶದಂತೆ ಮಹೇಶ್ ಈಗಾಗಲೇ ಅಧಿಕಾರ ಸ್ವೀಕರಿಸಿ ಕುರ್ಚಿ ಅಲಂಕರಿಸಿದ್ದಾರೆ.
ಆದರೆ ಈ ವರ್ಗಾವಣೆಯನ್ನು ಪ್ರಶ್ನಿಸಿದ ಮಂಜುನಾಥ್ ಕರ್ನಾಟಕ ಆಡಳಿತ ನ್ಯಾಯಮಂಡಳಿ (KAT) ಮೊರೆ ಹೋಗಿ ತಡೆಯಾಜ್ಞೆ ತಂದಿದ್ದಾರೆ. ಸ್ಟೇ ಆದೇಶದೊಂದಿಗೆ ಕಚೇರಿಗೆ ಬಂದ ಮಂಜುನಾಥ್ ತಮ್ಮ ಹುದ್ದೆ ಮರಳಿ ನೀಡುವಂತೆ ಆಗ್ರಹಿಸಿದ್ದಾರೆ.
ಇದರಿಂದ ಕಚೇರಿಯಲ್ಲಿ ವಿಚಿತ್ರ ಸ್ಥಿತಿ ನಿರ್ಮಾಣವಾಗಿದೆ. ಕುರ್ಚಿಯ ಮೇಲೆ ಮಹೇಶ್ ಕುಳಿತಿದ್ದರೆ, ಮಂಜುನಾಥ್ ಪಕ್ಕದಲ್ಲೇ ನಿಂತು “ಇದು ನನ್ನ ಸ್ಥಾನ” ಎಂದು ಹಕ್ಕು ಸಾಧಿಸುತ್ತಿದ್ದಾರೆ.
ಈ ಗೊಂದಲದಿಂದ ಕಚೇರಿಯ ದಿನನಿತ್ಯದ ಕಾರ್ಯಗಳು ಅಸ್ತವ್ಯಸ್ತಗೊಂಡಿವೆ. ಸಿಬ್ಬಂದಿ ಯಾರ ಆದೇಶ ಪಾಲಿಸಬೇಕು ಎಂಬ ಗೊಂದಲದಲ್ಲಿ ಸಿಲುಕಿದ್ದಾರೆ. ಕಡತಗಳ ವಿಲೇವಾರಿ ಕೂಡ ವಿಳಂಬವಾಗುತ್ತಿದೆ.
ಪ್ರಮುಖ ಯೋಜನೆಗೆ ಸಂಬಂಧಿಸಿದ ಕಚೇರಿಯಲ್ಲೇ ಈ ರೀತಿಯ ಅಧಿಕಾರಿಗಳ ಕಿತ್ತಾಟ ಸಾರ್ವಜನಿಕರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಈಗ ಈ ಕುರ್ಚಿ ಯುದ್ಧಕ್ಕೆ ಅಂತ್ಯ ಯಾವಾಗ ಎಂಬುದರತ್ತ ಎಲ್ಲರ ಕಣ್ಣು ನೆಟ್ಟಿದೆ.

