Home Blog

ಕುಮುದ್ ರಾಣೆ ನಿಧನ: ಆಪ್ತ ಸ್ನೇಹಿತೆಯನ್ನು ಕಳೆದುಕೊಂಡು ಕಣ್ಣೀರಿಟ್ಟ ಸಲ್ಮಾನ್ ಖಾನ್

ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ ಕುಟುಂಬದ ಆಪ್ತ ಸದಸ್ಯೆಯಂತಿದ್ದ ಖ್ಯಾತ ಕೇಶ ವಿನ್ಯಾಸಕಿ ಕುಮುದ್ ರಾಣೆ ಅವರ ನಿಧನ ಖಾನ್ ಕುಟುಂಬಕ್ಕೆ ಭಾರೀ ಆಘಾತ ಉಂಟುಮಾಡಿದೆ. ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಕುಮುದ್ ರಾಣೆ ಅವರ ಹೋರಾಟ ಅಂತ್ಯಗೊಂಡಿದ್ದು, ಅಂತಿಮ ವಿಧಿವಿಧಾನಗಳ ವೇಳೆ ಸಲ್ಮಾನ್ ಖಾನ್ ಸೇರಿದಂತೆ ಇಡೀ ಕುಟುಂಬ ಭಾವುಕಗೊಂಡಿದೆ.

ಮುಂಬೈನ ಬಾಂದ್ರಾದಲ್ಲಿ ಸಲೂನ್ ನಡೆಸುತ್ತಿದ್ದ ಕುಮುದ್ ರಾಣೆ, ಹಲವು ವರ್ಷಗಳಿಂದ ಸಲ್ಮಾನ್ ಖಾನ್ ಕುಟುಂಬದೊಂದಿಗೆ ಅತ್ಯಂತ ನಿಕಟ ಸಂಬಂಧ ಹೊಂದಿದ್ದರು. ಅವರ ಅಗಲಿಕೆಯ ಸುದ್ದಿ ತಿಳಿಯುತ್ತಿದ್ದಂತೆ ಸಲ್ಮಾನ್ ಖಾನ್ ಅಂತಿಮ ದರ್ಶನಕ್ಕೆ ಆಗಮಿಸಿದ್ದು, ದುಃಖವನ್ನು ತಡೆಹಿಡಿಯಲು ಸಾಧ್ಯವಾಗದೆ ಭಾವನಾತ್ಮಕವಾಗಿ ಕುಗ್ಗಿದ ದೃಶ್ಯಗಳು ವೈರಲ್ ಆಗಿವೆ.

ಅಂತಿಮ ನಮನ ಕಾರ್ಯಕ್ರಮದಲ್ಲಿ ಅರ್ಬಾಜ್ ಖಾನ್, ಸೊಹೈಲ್ ಖಾನ್, ಸಲ್ಮಾ ಖಾನ್, ಹೆಲೆನ್, ನಿರ್ವಾಣ ಖಾನ್ ಮತ್ತು ಅರ್ಹಾನ್ ಖಾನ್ ಭಾಗವಹಿಸಿದರು. ವಿಶೇಷವಾಗಿ ಸೊಹೈಲ್ ಖಾನ್ ಪುತ್ರ ನಿರ್ವಾಣ ಕಣ್ಣೀರಿಟ್ಟ ದೃಶ್ಯಗಳು ನೆರೆದವರ ಮನಕಲಕಿದವು. ಈ ವೇಳೆ ಅರ್ಹಾನ್ ಖಾನ್ ನಿರ್ವಾಣಗೆ ಸಾಂತ್ವನ ಹೇಳುತ್ತಿರುವುದು ವಿಡಿಯೋಗಳಲ್ಲಿ ಕಾಣಿಸಿಕೊಂಡಿದೆ.

2025ರ ಹೊಸ ವರ್ಷಾಚರಣೆಯನ್ನೂ ಸಲ್ಮಾನ್ ಖಾನ್ ಜೊತೆಗೂಡಿ ಆಚರಿಸಿದ್ದ ಕುಮುದ್ ರಾಣೆ, ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ನಟನೊಂದಿಗಿನ ಚಿತ್ರಗಳನ್ನು ಹಂಚಿಕೊಂಡಿದ್ದರು. ಆಪ್ತ ಸ್ನೇಹಿತೆಯನ್ನು ಕಳೆದುಕೊಂಡ ನೋವು ಸಲ್ಮಾನ್ ಮುಖದಲ್ಲಿ ಸ್ಪಷ್ಟವಾಗಿ ಕಾಣಿಸಿಕೊಂಡಿದೆ.

ವೃತ್ತಿಪರವಾಗಿ ಸಕ್ರಿಯವಾಗಿರುವ ಸಲ್ಮಾನ್ ಖಾನ್, ಸದ್ಯ ವಂಶಿ ಪೈಡಿಪಲ್ಲಿ ನಿರ್ದೇಶನದ ಹೊಸ ಆಕ್ಷನ್-ಡ್ರಾಮಾ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ನಯನತಾರಾ ನಾಯಕಿಯಾಗಿ ನಟಿಸುತ್ತಿರುವ ಈ ಚಿತ್ರ ಮುಂದಿನ ವರ್ಷ ಈದ್ ಸಂದರ್ಭದಲ್ಲಿ ಬಿಡುಗಡೆಯಾಗಲಿದೆ. ಜೊತೆಗೆ ‘ಮಾತೃಭೂಮಿ’ ಚಿತ್ರವೂ ಈ ವರ್ಷ ತೆರೆಗೆ ಬರಲು ಸಜ್ಜಾಗಿದೆ.

ವಿಡಿಯೋ ಕಾಲ್ ಮೂಲಕ ಅಭಿಮಾನಿಗೆ ಸರ್ಪ್ರೈಸ್ ಕೊಟ್ಟ ಅಜಿತ್

ಚೆನ್ನೈ: ತಮಿಳು ಸೂಪರ್‌ಸ್ಟಾರ್ ಅಜಿತ್ ಕುಮಾರ್ ಅವರ ಅಪರೂಪದ ನಡೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಯಾವುದೇ ಪ್ರಚಾರ ಕಾರ್ಯಕ್ರಮ, ಆಡಿಯೋ ಲಾಂಚ್ ಅಥವಾ ಅಭಿಮಾನಿ ಸಂವಾದಗಳಿಂದ ದೂರ ಉಳಿಯುವ ಅಜಿತ್, ತಮ್ಮ ಸ್ನೇಹಿತನ ಮಕ್ಕಳಿಗೆ ಸ್ವತಃ ವಿಡಿಯೋ ಕಾಲ್ ಮಾಡಿ ಅಚ್ಚರಿ ನೀಡಿದ್ದಾರೆ.

ಸಿನಿಮಾ ಮತ್ತು ವೈಯಕ್ತಿಕ ಬದುಕನ್ನು ಪ್ರತ್ಯೇಕವಾಗಿಟ್ಟುಕೊಳ್ಳುವ ಅಜಿತ್ ಕುಮಾರ್, ಸದ್ಯ ಅಂತರರಾಷ್ಟ್ರೀಯ ರೇಸಿಂಗ್ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇದೇ ವೇಳೆ ತಮ್ಮ ಆಪ್ತ ಸ್ನೇಹಿತನ ಇಬ್ಬರು ಮಕ್ಕಳೊಂದಿಗೆ ವಿಡಿಯೋ ಕಾಲ್‌ನಲ್ಲಿ ಮಾತನಾಡಿ ಅವರ ಕನಸಿನ ಕ್ಷಣವನ್ನು ಸಾಕಾರಗೊಳಿಸಿದ್ದಾರೆ.

ರೇಸಿಂಗ್ ಉಡುಪಿನಲ್ಲೇ ಕಾಣಿಸಿಕೊಂಡ ಅಜಿತ್, ಮಕ್ಕಳೊಂದಿಗೆ ಅತ್ಯಂತ ಪ್ರೀತಿಯಿಂದ ಮಾತನಾಡಿ ಅವರ ಶಿಕ್ಷಣ, ದಿನನಿತ್ಯದ ಚಟುವಟಿಕೆಗಳ ಬಗ್ಗೆ ವಿಚಾರಿಸಿದರು. ಜೊತೆಗೆ “ಶೀಘ್ರದಲ್ಲೇ ನಿಮ್ಮನ್ನು ಖುದ್ದಾಗಿ ಭೇಟಿ ಮಾಡುತ್ತೇನೆ. ದೇವರು ನಿಮ್ಮನ್ನು ಸದಾ ಕಾಪಾಡಲಿ” ಎಂದು ಶುಭ ಹಾರೈಸಿದರು.

ಸೂಪರ್‌ಸ್ಟಾರ್ ಜೊತೆ ನೇರವಾಗಿ ಮಾತನಾಡಿದ ಖುಷಿಯಲ್ಲಿ ಮಕ್ಕಳು ಸಂಭ್ರಮಿಸಿದ ದೃಶ್ಯಗಳು ಇದೀಗ ವೈರಲ್ ಆಗಿವೆ. ಅಭಿಮಾನಿಗಳು ವಿಡಿಯೋ ನೋಡಿ ಭಾವುಕರಾಗಿದ್ದು, ಅಜಿತ್ ಅವರ ಸರಳತೆ ಮತ್ತು ವಿನಯಶೀಲತೆಯನ್ನು ಕೊಂಡಾಡುತ್ತಿದ್ದಾರೆ.

“ಇದು ನಿಜವಾದ ಸ್ಟಾರ್‌ಡಮ್”, “ಅಜಿತ್ ಸರ್ ಅವರಂತಹ ವ್ಯಕ್ತಿತ್ವ ಅಪರೂಪ”, “ಕೋಟ್ಯಂತರ ಅಭಿಮಾನಿಗಳಿದ್ದರೂ ನೆಲದ ಜೊತೆಗಿನ ನಂಟು ಕಳೆದುಕೊಂಡಿಲ್ಲ” ಎಂದು ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

90ರ ದಶಕದಿಂದ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ತನ್ನದೇ ಆದ ಸ್ಥಾನ ನಿರ್ಮಿಸಿಕೊಂಡಿರುವ ಅಜಿತ್, ಇಂದಿಗೂ ಪ್ರಚಾರದ ಗಿಮಿಕ್‌ಗಳಿಗಿಂತ ತಮ್ಮ ಕೆಲಸದ ಮೂಲಕವೇ ಜನರನ್ನು ತಲುಪುವ ನಟರಾಗಿದ್ದಾರೆ. ಇತ್ತೀಚೆಗೆ ತಾಯಿಯ ಅಗಲಿಕೆಯ ದುಃಖ ಅನುಭವಿಸಿದ್ದರೂ, ಮತ್ತೆ ರೇಸಿಂಗ್ ಟ್ರ್ಯಾಕ್‌ಗೆ ಮರಳಿರುವ ಅವರು ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ದಕ್ಷಿಣ ಭಾರತೀಯ ಚಿತ್ರರಂಗದ ದಂತಕಥೆ ಭಾರತಿರಾಜ ನಿಧನ

ಚೆನ್ನೈ: ತಮಿಳು ಹಾಗೂ ತೆಲುಗು ಚಿತ್ರರಂಗದಲ್ಲಿ ಕ್ರಾಂತಿ ಮೂಡಿಸಿದ್ದ ಖ್ಯಾತ ನಿರ್ದೇಶಕ, ನಟ ಭಾರತಿ ರಾಜ (86) ಅವರು ಬುಧವಾರ ಮುಂಜಾನೆ ನಿಧನರಾಗಿದ್ದಾರೆ. ವೃದ್ಧಾಪ್ಯ ಹಾಗೂ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಗ್ರಾಮೀಣ ಬದುಕಿನ ಸೊಗಡನ್ನು ಬೆಳ್ಳಿತೆರೆಯಲ್ಲಿ ಅದ್ಭುತವಾಗಿ ಕಟ್ಟಿಕೊಟ್ಟ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದ ಭಾರತಿ ರಾಜ, 1977ರ ‘16 ವಯತಿನಿಲೆ’ ಚಿತ್ರದ ಮೂಲಕ ನಿರ್ದೇಶಕರಾಗಿ ಭಾರೀ ಯಶಸ್ಸು ಕಂಡಿದ್ದರು. ನಂತರ ‘ಕಿಲಕ್ಕೆ ಪೋಗುಂ ರೈಲು’, ‘ಸಿಗಪ್ಪು ರೋಜಕ್ಕಲ್’, ‘ಅಲೈಗಲ್ ಓಯಿವತಿಲ್ಲೈ’, ‘ಕಾದಲ್ ಓವಿಯಂ’ ಹಾಗೂ ‘ಮುದಲ್ ಮರಿಯಾಥೈ’ ಚಿತ್ರಗಳ ಮೂಲಕ ತಮಿಳು ಚಿತ್ರರಂಗದ ದಿಕ್ಕನ್ನೇ ಬದಲಿಸಿದ್ದರು.

ಚಿತ್ರರಂಗದ ಪಯಣ ಆರಂಭಿಸುವ ಮುನ್ನ ಕನ್ನಡದ ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರ ಬಳಿ ಸಹಾಯಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದ ಭಾರತಿ ರಾಜ, ಅಲ್ಲಿಯೇ ನಿರ್ದೇಶನದ ಸೂಕ್ಷ್ಮತೆಗಳನ್ನು ಕಲಿತಿದ್ದರು. ಕನ್ನಡದಲ್ಲಿ ಸಿನಿಮಾ ಮಾಡದಿದ್ದರೂ ಕನ್ನಡಿಗರೊಂದಿಗೆ ವಿಶೇಷ ನಂಟು ಹೊಂದಿದ್ದರು.

ತೆಲುಗಿನಲ್ಲಿ ‘ಸೀತಕೋಕ ಚಿಲುಕ’, ‘ಆರಾಧನಾ’, ‘ಜಮದಗ್ನಿ’, ‘ಈ ತರಂ ಇಲ್ಲು’, ‘ಎರ್ರಾ ಗುಲಾಬಿಲು’, ‘ಟಿಕ್ ಟಿಕ್ ಟಿಕ್’, ‘ಕೊತ್ತ ಜೀವನಲು’ ಹಾಗೂ ‘ಯುವತರಂ ಪಿಲಿಚಿಂಡಿ’ ಸೇರಿದಂತೆ ಅನೇಕ ಜನಪ್ರಿಯ ಚಿತ್ರಗಳನ್ನು ನಿರ್ದೇಶಿಸಿ ಅಪಾರ ಮೆಚ್ಚುಗೆ ಗಳಿಸಿದ್ದರು.

2020ರಲ್ಲಿ ಬಿಡುಗಡೆಯಾದ ‘ಮೀಂದುಮ್ ಒರು ಮರಿಯಾಥೈ’ ಅವರ ಕೊನೆಯ ನಿರ್ದೇಶನದ ಸಿನಿಮಾ. ಬಳಿಕ ಅವರು ಯಾವುದೇ ಚಿತ್ರ ನಿರ್ದೇಶಿಸಿರಲಿಲ್ಲ. ನಟನಾಗಿಯೂ ಯಶಸ್ವಿ ವೃತ್ತಿಜೀವನ ಕಟ್ಟಿಕೊಂಡಿದ್ದ ಅವರು, ಅನೇಕ ಚಿತ್ರಗಳಲ್ಲಿ ತಮ್ಮ ಅಭಿನಯದ ಮೂಲಕ ಗಮನ ಸೆಳೆದಿದ್ದರು.

ಕಳೆದ ವರ್ಷ ಪುತ್ರ ಹಾಗೂ ನಟ-ನಿರ್ದೇಶಕ ಮನೋಜ್ ಭಾರತಿರಾಜ ಅವರ ನಿಧನದಿಂದ ಭಾರತಿ ರಾಜ ತೀವ್ರವಾಗಿ ಮನನೊಂದಿದ್ದರು. ಆ ದುಃಖದಿಂದ ಹೊರಬರಲು ಕುಟುಂಬದೊಂದಿಗೆ ಕೆಲಕಾಲ ವಿದೇಶದಲ್ಲಿ ಕಾಲ ಕಳೆದಿದ್ದರು. ಇದೀಗ ಅವರ ಅಗಲಿಕೆಯಿಂದ ಭಾರತೀಯ ಸಿನಿರಂಗದ ದಿಗ್ಗಜರ ಪೀಳಿಗೆಯ ಮತ್ತೊಂದು ಕೊಂಡಿ ಕಳಚಿದಂತಾಗಿದೆ. ಚಿತ್ರರಂಗದ ಗಣ್ಯರು, ಅಭಿಮಾನಿಗಳು ಹಾಗೂ ರಾಜಕೀಯ ನಾಯಕರು ಸಂತಾಪ ಸೂಚಿಸಿದ್ದಾರೆ.

97 ವರ್ಷದ ತಾತನನ್ನು ಭೇಟಿಯಾಗಲು ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಮೊಮ್ಮಗನಿಗೆ ಪೆರೋಲ್‌ ಮಂಜೂರು

ಬೆಂಗಳೂರು: ಮರಣಶಯ್ಯೆಯಲ್ಲಿರುವ 97 ವರ್ಷದ ತಾತನನ್ನು ಭೇಟಿ ಮಾಡಿ ಕೊನೆಯ ಕ್ಷಣಗಳಲ್ಲಿ ಆರೈಕೆ ಮಾಡುವ ಅವಕಾಶ ಕಲ್ಪಿಸುವ ಉದ್ದೇಶದಿಂದ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಕೈದಿಯೊಬ್ಬರಿಗೆ ಕರ್ನಾಟಕ ಹೈಕೋರ್ಟ್ 15 ದಿನಗಳ ತುರ್ತು ಪೆರೋಲ್ ಮಂಜೂರು ಮಾಡಿದೆ.

ಮೈಸೂರು ಕೇಂದ್ರ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿರುವ ಎನ್.ಡಿ. ನವೀನ್ ಅಲಿಯಾಸ್ ಸಬ್ಸಿಡಿ ನವೀನ್ ಅವರಿಗೆ ಪೆರೋಲ್ ನೀಡುವಂತೆ ಅವರ ತಂದೆ ಎನ್.ಎನ್. ದೇವರಾಜು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ನಡೆಸಿತು.

ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ಏಕಸದಸ್ಯ ಪೀಠ, ಪ್ರಕರಣದ ಪರಿಸ್ಥಿತಿಯನ್ನು ಪರಿಗಣಿಸಿ 15 ದಿನಗಳ ತುರ್ತು ಪೆರೋಲ್ ಮಂಜೂರು ಮಾಡಿ ಆದೇಶ ಹೊರಡಿಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಕೊಲೆ ಪ್ರಕರಣದಲ್ಲಿ ನವೀನ್ ಅವರಿಗೆ 2024ರ ಡಿಸೆಂಬರ್ 18ರಂದು ಜೀವಾವಧಿ ಶಿಕ್ಷೆ ವಿಧಿಸಲಾಗಿದ್ದು, ಅವರು 2022ರ ಅಕ್ಟೋಬರ್ 2ರಿಂದ ಜೈಲಿನಲ್ಲಿದ್ದಾರೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಪ್ರಸ್ತುತ ಅವರ 97 ವರ್ಷದ ತಾತ ಗಂಭೀರ ಅನಾರೋಗ್ಯದಿಂದ ಮರಣಶಯ್ಯೆಯಲ್ಲಿದ್ದು, ಅವರನ್ನು ಭೇಟಿ ಮಾಡಲು ಪೆರೋಲ್ ನೀಡುವಂತೆ ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸರ್ಕಾರದ ಪರ ವಕೀಲರು, ಈ ಹಿಂದೆ ನವೀನ್ ಅವರಿಗೆ ಮೂರು ಬಾರಿ ಪೆರೋಲ್ ಮಂಜೂರಾಗಿದ್ದು, ಎಲ್ಲ ಸಂದರ್ಭಗಳಲ್ಲೂ ಅವರು ವಿಧಿಸಲಾದ ಷರತ್ತುಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದ್ದಾರೆ ಎಂದು ನ್ಯಾಯಾಲಯದ ಗಮನಕ್ಕೆ ತಂದರು. ಪೆರೋಲ್ ಅವಧಿ ಪೂರ್ಣಗೊಂಡ ಕೂಡಲೇ ಅವರು ಜೈಲಿಗೆ ಶರಣಾಗಿದ್ದು, ಯಾವುದೇ ನಿಯಮ ಉಲ್ಲಂಘನೆಯೂ ನಡೆದಿಲ್ಲ ಎಂದು ವಿವರಿಸಿದರು.

ಎರಡೂ ಕಡೆಯ ವಾದಗಳನ್ನು ಆಲಿಸಿದ ನ್ಯಾಯಪೀಠ, ಮಾನವೀಯ ನೆಲೆಯಲ್ಲಿ ನವೀನ್ ಅವರಿಗೆ 15 ದಿನಗಳ ತುರ್ತು ಪೆರೋಲ್ ಮಂಜೂರು ಮಾಡಿತು.

ಆದರೆ, ಪೆರೋಲ್ ಅವಧಿಯಲ್ಲಿ ಕೆಲವು ಷರತ್ತುಗಳನ್ನು ವಿಧಿಸಲಾಗಿದ್ದು, ವಾರಕ್ಕೊಮ್ಮೆ ಸಂಬಂಧಿತ ಪೊಲೀಸ್ ಠಾಣೆಗೆ ಹಾಜರಾಗಿ ಸಹಿ ಮಾಡಬೇಕು ಎಂದು ಸೂಚಿಸಲಾಗಿದೆ. ಜೊತೆಗೆ, ಪೆರೋಲ್ ಅವಧಿಯಲ್ಲಿ ಯಾವುದೇ ಅಪರಾಧಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬಾರದು ಹಾಗೂ ಅವಧಿ ಮುಗಿದ ಕೂಡಲೇ ಜೈಲಿಗೆ ಮರಳಬೇಕು ಎಂದು ನ್ಯಾಯಾಲಯ ನಿರ್ದೇಶನ ನೀಡಿದೆ.

ಗದಗ ಜಂಕ್ಷನ್‌ಗೆ ಯಶವಂತಪುರ ರೈಲು ನಿಲುಗಡೆಗೆ ಒತ್ತಾಯ

0

ವಿಜಯಸಾಕ್ಷಿ ಸುದ್ದಿ, ಗದಗ: ಯಶವಂತಪುರ-ವಿಜಯಪುರ ನಡುವೆ ಸಂಚರಿಸುವ ರೈಲಿಗೆ ಗದಗ ಮೇನ್ ಜಂಕ್ಷನ್‌ನಲ್ಲಿ ನಿಲುಗಡೆ ಕಲ್ಪಿಸಬೇಕು ಹಾಗೂ ಗದಗ-ಹರಪನಹಳ್ಳಿ ನೂತನ ರೈಲು ಮಾರ್ಗ ಕಾಮಗಾರಿಯನ್ನು ಶೀಘ್ರ ಆರಂಭಿಸಬೇಕು ಎಂದು ಗದಗ ಜಿಲ್ಲಾ ವಿಕಾಸ ವೇದಿಕೆ ವತಿಯಿಂದ ಮಾಜಿ ಮುಖ್ಯಮಂತ್ರಿ ಹಾಗೂ ಗದಗ-ಹಾವೇರಿ ಲೋಕಸಭಾ ಸದಸ್ಯ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಲಾಯಿತು.

ಟ್ರೇನ್ ಸಂಖ್ಯೆ 06577/06578 ಯಶವಂತಪುರ-ವಿಜಯಪುರ ರೈಲು ವಾರಕ್ಕೆ ಎರಡು ಬಾರಿ ಸಂಚರಿಸುವಂತೆ ವಿಸ್ತರಿಸಲಾಗಿದ್ದರೂ, ಗದಗ ಬೈಪಾಸ್‌ನಲ್ಲಿ ನೀಡಲಾಗಿದ್ದ ಎರಡು ನಿಮಿಷಗಳ ತಾತ್ಕಾಲಿಕ ನಿಲುಗಡೆಯನ್ನೂ ರದ್ದುಪಡಿಸಿರುವುದು ಜಿಲ್ಲೆಯ ಪ್ರಯಾಣಿಕರಿಗೆ ಅನ್ಯಾಯವಾಗಿದೆ ಎಂದು ಜಿಲ್ಲಾ ವಿಕಾಸ ವೇದಿಕೆ ಅಧ್ಯಕ್ಷ ವಿಶ್ವನಾಥ ಖಾನಾಪೂರ ಆಕ್ರೋಶ ವ್ಯಕ್ತಪಡಿಸಿದರು.

ಬೆಂಗಳೂರು ಹಾಗೂ ವಿಜಯಪುರ ನಗರಗಳಿಗೆ ಪ್ರತಿನಿತ್ಯ ಪ್ರಯಾಣಿಸುವ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಈ ರೈಲು ಅತ್ಯಂತ ಅನುಕೂಲಕರವಾಗಿದೆ. ಗದಗವು ಐತಿಹಾಸಿಕ ರೈಲ್ವೆ ಜಂಕ್ಷನ್ ಆಗಿದ್ದು, ಗದಗ-ಕುಷ್ಟಗಿ, ಗದಗ-ಗಂಗಾವತಿ, ಸಿಂಧನೂರು ಭಾಗಗಳ ಸಂಪರ್ಕಕ್ಕೂ ಪ್ರಮುಖ ಕೇಂದ್ರವಾಗಿದೆ. ಕೇವಲ ಇಂಜಿನ್ ಬದಲಾವಣೆಗೆ 15 ನಿಮಿಷಗಳ ಕಾಲಾವಕಾಶ ಬೇಕಿರುವ ಕಾರಣ ಗದಗ ಮೇನ್ ಜಂಕ್ಷನ್‌ನಲ್ಲಿ ನಿಲುಗಡೆ ನೀಡಲು ಯಾವುದೇ ತೊಂದರೆ ಇರುವುದಿಲ್ಲ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಮನವಿಗೆ ಸ್ಪಂದಿಸಿದ ಬಸವರಾಜ ಬೊಮ್ಮಾಯಿ ರೈಲ್ವೆ ಇಲಾಖೆಯ ಗಮನಕ್ಕೆ ವಿಷಯವನ್ನು ಮತ್ತೊಮ್ಮೆ ತಂದು ಗದಗ ಜಂಕ್ಷನ್‌ನಲ್ಲಿ ನಿಲುಗಡೆ ಸೌಲಭ್ಯ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.

ಇದೇ ವೇಳೆ ಗದಗ-ಹರಪನಹಳ್ಳಿ ನೂತನ ರೈಲು ಮಾರ್ಗದ ಸರ್ವೇ ಹಾಗೂ ಕಾಮಗಾರಿಯನ್ನು ಶೀಘ್ರ ಆರಂಭಿಸಲು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ ಹಾಗೂ ರಾಜ್ಯ ಸಚಿವ ವಿ. ಸೋಮಣ್ಣ ಅವರ ಗಮನಕ್ಕೆ ತರುವುದಾಗಿ ಹೇಳಿದರು.

ಈ ಯೋಜನೆಗೆ ವೇಗ ನೀಡುವಂತೆ ಗದಗ ಮತ್ತು ವಿಜಯನಗರ ಜಿಲ್ಲಾಧಿಕಾರಿಗಳು, ಜಿಲ್ಲಾ ಉಸ್ತುವಾರಿ ಸಚಿವರು, ವಿಜಯನಗರ ಲೋಕಸಭಾ ಸದಸ್ಯ ತುಕಾರಾಮ್ ಹಾಗೂ ಹರಪನಹಳ್ಳಿ ಶಾಸಕಿಯಾದ ಲತಾ ಮಲ್ಲಿಕಾರ್ಜುನ್ ಅವರಿಗೂ ಈಗಾಗಲೇ ಮನವಿ ಸಲ್ಲಿಸಲಾಗಿದೆ ಎಂದು ವಿಶ್ವನಾಥ ಖಾನಾಪೂರ ತಿಳಿಸಿದರು.

ಈ ಸಂದರ್ಭದಲ್ಲಿ ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ, ನರಗುಂದ ಶಾಸಕ ಹಾಗೂ ಮಾಜಿ ಸಚಿವ ಸಿ.ಸಿ‌. ಪಾಟೀಲ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಸತೀಶ ಪರ್ವತಗೌಡರ, ಜಗದೀಶ ಕಂಗೂರಿ, ವೆಂಕಟೇಶ ಕಬಾಡಿ, ಬಸವರಾಜ ತಳವಾರ, ಸಿದ್ದಪ್ಪ ಜರತಕನ್ನಿ, ರಜಾಕ್ ನೂರಭಾಷಾ ಸೇರಿದಂತೆ ಅನೇಕರು ಭಾಗವಹಿಸಿದ್ದರು.

 “ಗದಗ ಐತಿಹಾಸಿಕ ರೈಲ್ವೆ ಜಂಕ್ಷನ್‌. ಜಿಲ್ಲೆಯ ಸಾವಿರಾರು ಪ್ರಯಾಣಿಕರ ಹಿತದೃಷ್ಟಿಯಿಂದ ಯಶವಂತಪುರ-ವಿಜಯಪುರ ರೈಲು ಗದಗ ಮೇನ್ ಜಂಕ್ಷನ್‌ನಲ್ಲಿ ನಿಲ್ಲಿಸುವುದು ಅತ್ಯಗತ್ಯ.”

ವಿಶ್ವನಾಥ ಖಾನಾಪೂರ

ಅಧ್ಯಕ್ಷರು, ಗದಗ ಜಿಲ್ಲಾ ವಿಕಾಸ ವೇದಿಕೆ

 

ಜೂ. 16ರ ಬೃಹತ್ ಪ್ರತಿಭಟನೆಗೆ ಇಂದು ಪೂರ್ವಭಾವಿ ಸಭೆ

0

ವಿಜಯಸಾಕ್ಷಿ ಸುದ್ದಿ, ಗದಗ: ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಗದಗ ಶಾಸಕ ಎಚ್.ಕೆ.ಪಾಟೀಲ ಅವರಿಗೆ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿ ಜೂನ್ 16ರಂದು ನಗರದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು, ಅದರ ಪೂರ್ವಸಿದ್ಧತೆಯ ಅಂಗವಾಗಿ ಎಚ್‌.ಕೆ. ಪಾಟೀಲ ಅಭಿಮಾನಿ ಬಳಗದ ವತಿಯಿಂದ ಜೂನ್ 10ರಂದು ಸಂಜೆ 4 ಗಂಟೆಗೆ ಪೂರ್ವಭಾವಿ ಸಭೆ ಆಯೋಜಿಸಲಾಗಿದೆ.

ನಗರದ ದಿ. ಕಾಟನ್ ಸೇಲ್ ಸೊಸೈಟಿ ಆವರಣದಲ್ಲಿ ನಡೆಯಲಿರುವ ಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಜಿಲ್ಲಾ ಪದಾಧಿಕಾರಿಗಳು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ವಿವಿಧ ಘಟಕಗಳ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಲಿದ್ದಾರೆ.

ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ಗ್ರಾಮ ಪಂಚಾಯತ್, ಎಪಿಎಂಸಿ, ನಗರಸಭೆ, ಪಟ್ಟಣ ಪಂಚಾಯಿತಿ ಹಾಗೂ ಪುರಸಭೆಗಳ ಅಧ್ಯಕ್ಷರು ಮತ್ತು ಸದಸ್ಯರು ಸೇರಿದಂತೆ ಪಕ್ಷದ ವಿವಿಧ ಸಂಘಟನೆಗಳ ಪ್ರತಿನಿಧಿಗಳಿಗೆ ಸಭೆಗೆ ಆಹ್ವಾನ ನೀಡಲಾಗಿದೆ.

ಮಹಿಳಾ ಕಾಂಗ್ರೆಸ್, ಯುವ ಕಾಂಗ್ರೆಸ್, ಎಸ್‌ಸಿ/ಎಸ್‌ಟಿ ಘಟಕ, ಅಲ್ಪಸಂಖ್ಯಾತರ ಘಟಕ, ವಿದ್ಯಾರ್ಥಿ ಕಾಂಗ್ರೆಸ್, ಕಾಂಗ್ರೆಸ್ ಸೇವಾದಳ, ಹಿಂದುಳಿದ ವರ್ಗಗಳ ಘಟಕ, ಸಾಮಾಜಿಕ ಜಾಲತಾಣ ವಿಭಾಗ, ರಾಜೀವ್ ಗಾಂಧಿ ಪಂಚಾಯತ್ ಸಂಘಟನೆ, ಮಾಜಿ ಸೈನಿಕರ ವಿಭಾಗ, ಕಾರ್ಮಿಕರ ವಿಭಾಗ, ಐಎನ್‌ಟಿಯುಸಿ, ಕಾನೂನು ಮತ್ತು ಮಾನವ ಹಕ್ಕು ವಿಭಾಗ, ಕಿಸಾನ್ ಹಾಗೂ ಖೇತ್ ಮಜದೂರ ವಿಭಾಗ, ವೈದ್ಯರ ಮತ್ತು ವೃತ್ತಿಪರ ವಿಭಾಗ, ಶಿಕ್ಷಕರ ಹಾಗೂ ಪದವಿಧರರ ವಿಭಾಗ, ಐಟಿ ಮತ್ತು ಡಾಟಾ ವಿಭಾಗ ಸೇರಿದಂತೆ ವಿವಿಧ ಘಟಕಗಳ ಪದಾಧಿಕಾರಿಗಳು ಮತ್ತು ಸದಸ್ಯರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಗದಗ-ಬೆಟಗೇರಿ ಶಹರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿ.ಬಿ. ಅಸೂಟಿ, ಮುಳಗುಂದ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಸವರಾಜ ಸುಂಕಾಪುರ ಹಾಗೂ ಗದಗ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಅಶೋಕ ಮಂದಾಲಿ ಪತ್ರಿಕಾ ಪ್ರಕಟಣೆ ಮೂಲಕ ಸಭೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದ್ದಾರೆ.

 

ಟಿ20 ತಂಡದಿಂದ ಸಿರಾಜ್ ಔಟ್! ಆಯ್ಕೆ ಮಾಡಿ ಕೈ ಬಿಡಲು ಏನು ಕಾರಣ?

0

ಭಾರತದ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಅವರನ್ನು ಮುಂಬರುವ ಐರ್ಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗಳಿಂದ ಕೈಬಿಡಲಾಗಿದೆ.

ಈ ಹಿಂದೆ ಅವರು ಈ ಸರಣಿಗಳಿಗೆ ಆಯ್ಕೆಯಾಗಿದ್ದರೂ, ಇದೀಗ ತಂಡದಿಂದ ಹೊರಗುಳಿಯುವಂತೆ ಸೂಚಿಸಲಾಗಿದೆ.

ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಈ ನಿರ್ಧಾರವನ್ನು ವರ್ಕ್‌ಲೋಡ್ ಮ್ಯಾನೇಜ್‌ಮೆಂಟ್ ಯೋಜನೆಯ ಭಾಗವಾಗಿ ತೆಗೆದುಕೊಂಡಿದೆ ಎಂದು ತಿಳಿಸಿದೆ. ದೀರ್ಘ ಮತ್ತು ನಿರಂತರ ಅಂತರರಾಷ್ಟ್ರೀಯ ಕ್ರಿಕೆಟ್ ವೇಳಾಪಟ್ಟಿಯನ್ನು ಗಮನದಲ್ಲಿಟ್ಟುಕೊಂಡು ಸಿರಾಜ್ ಅವರಿಗೆ ವಿಶ್ರಾಂತಿ ನೀಡಲಾಗಿದೆ ಎಂದು ತಿಳಿದುಬಂದಿದೆ.

ಮುಂದಿನ ಮಹತ್ವದ ಟೆಸ್ಟ್ ಸರಣಿಗಳನ್ನು ಗಮನದಲ್ಲಿಟ್ಟುಕೊಂಡು ಈ ಕ್ರಮ ಕೈಗೊಳ್ಳಲಾಗಿದೆ. ಭಾರತ ತಂಡಕ್ಕೆ ಮುಂದಿನ ಸರಣಿಗಳು ನಿರ್ಣಾಯಕವಾಗಿದ್ದು, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ತಲುಪಲು ಉತ್ತಮ ಪ್ರದರ್ಶನ ಅಗತ್ಯವಿದೆ ಎಂದು ತಿಳಿಸಲಾಗಿದೆ.

ಮೂಲಗಳ ಪ್ರಕಾರ, ಸಿರಾಜ್ ಅವರು ಇತ್ತೀಚಿನ ವರ್ಷಗಳಲ್ಲಿ ಭಾರೀ ಕಾರ್ಯಭಾರವನ್ನು ನಿರ್ವಹಿಸಿದ್ದಾರೆ. 2025ರಿಂದ ಟೆಸ್ಟ್ ಕ್ರಿಕೆಟ್‌ನಲ್ಲಿ ಅತ್ಯಧಿಕ ಓವರ್‌ಗಳನ್ನು ಎಸೆದ ಬೌಲರ್‌ಗಳ ಪಟ್ಟಿಯಲ್ಲಿ ಅವರು ಮುಂಚೂಣಿಯಲ್ಲಿದ್ದಾರೆ ಎಂದು ವರದಿಯಾಗಿದೆ.

ಇತ್ತೀಚಿನ ಐಪಿಎಲ್ ಸೀಸನ್‌ನಲ್ಲಿ ಗುಜರಾತ್ ಟೈಟಾನ್ಸ್ ಪರ ಎಲ್ಲಾ ಪಂದ್ಯಗಳನ್ನು ಆಡಿರುವ ಅವರು, ಬಳಿಕವೂ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ನಿರಂತರವಾಗಿ ಭಾಗವಹಿಸಿದ್ದರು.

ಆದರೆ ಟಿ20 ತಂಡದಿಂದ ಹೊರಗುಳಿದಿದ್ದರೂ, ಅವರು ಮುಂಬರುವ ಏಕದಿನ ಸರಣಿಯಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಬಿಸಿಸಿಐ ಮುಂದಿನ ವಿಶ್ವಕಪ್ ಮತ್ತು ಟೆಸ್ಟ್ ಚಾಂಪಿಯನ್‌ಶಿಪ್ ಗುರಿಗಳನ್ನು ಗಮನದಲ್ಲಿಟ್ಟುಕೊಂಡು ತಂಡವನ್ನು ರೂಪಿಸುತ್ತಿದೆ ಎಂದು ತಿಳಿದುಬಂದಿದೆ.

ನೆಲಮಂಗಲದಲ್ಲಿ ಚಿರತೆ ಹಾವಳಿ ಹೆಚ್ಚಳ: ಸಾಕು ಪ್ರಾಣಿಗಳ ಮೇಲೆ ದಾಳಿ, ಗ್ರಾಮಸ್ಥರಲ್ಲಿ ಆತಂಕ

ನೆಲಮಂಗಲ: ಬೆಂಗಳೂರು ಹೊರವಲಯದ ನೆಲಮಂಗಲ ತಾಲೂಕಿನಲ್ಲಿ ಚಿರತೆಗಳ ಹಾವಳಿ ಹೆಚ್ಚಾಗಿದ್ದು, ಸ್ಥಳೀಯ ನಿವಾಸಿಗಳಲ್ಲಿ ಆತಂಕ ಉಂಟಾಗಿದೆ.

ತಾಲೂಕಿನ ಕೆಂಗಲ್ ಗ್ರಾಮ ಹಾಗೂ ಸೋಂಪುರ ಹೋಬಳಿಯ ತೀರ್ಥ ಪ್ರಸಾದ್ ತೋಟದಲ್ಲಿ ಚಿರತೆ ನಿರಂತರವಾಗಿ ಓಡಾಡುತ್ತಿರುವುದು ಕಂಡುಬಂದಿದೆ. ಕತ್ತಲಿನ ವೇಳೆ ಹೊಂಚು ಹಾಕಿ ಸಾಕು ಪ್ರಾಣಿಗಳ ಮೇಲೆ ದಾಳಿ ಮಾಡುತ್ತಿರುವ ಘಟನೆಗಳು ಹೆಚ್ಚಾಗಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಚಿರತೆ ದಾಳಿಯಿಂದ ಬಾತುಕೋಳಿ, ಕುರಿ ಮತ್ತು ಮೇಕೆಗಳ ಮೇಲೆ ಹಾನಿ ಸಂಭವಿಸುತ್ತಿದ್ದು, ಗ್ರಾಮಸ್ಥರು ಭಯಭೀತರಾಗಿದ್ದಾರೆ. ರಾತ್ರಿ ವೇಳೆ ಮನೆಯಿಂದ ಹೊರಬರಲು ಸಹ ಜನರು ಹಿಂಜರಿಯುವ ಪರಿಸ್ಥಿತಿ ನಿರ್ಮಾಣವಾಗಿದೆ.

ಚಿರತೆ ಓಡಾಟದ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಪರಿಸ್ಥಿತಿಯ ಗಂಭೀರತೆಯನ್ನು ತೋರಿಸುತ್ತಿದೆ.

ಚಿರತೆ ಸೆರೆಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮನವಿ ಮಾಡಿದ್ದಾರೆ. ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

ಸಂಜೆ ನಂತರ ಉಗುರು ಕತ್ತರಿಸಬಾರದು ಏಕೆ? ಇದರ ಹಿಂದಿನ ವೈಜ್ಞಾನಿಕ ಕಾರಣವೇನು?

0

ನಮ್ಮ ಸಂಪ್ರದಾಯದಲ್ಲಿ ಸೂರ್ಯಾಸ್ತದ ನಂತರ, ವಿಶೇಷವಾಗಿ ಸಂಜೆ ಬಳಿಕ ಉಗುರುಗಳನ್ನು ಕತ್ತರಿಸುವುದು ಅಶುಭ ಎಂದು ಹಿರಿಯರು ಹೇಳುವುದನ್ನು ಸಾಮಾನ್ಯವಾಗಿ ಕೇಳಬಹುದು.

ಇದಕ್ಕೆ ಸಂಬಂಧಿಸಿದಂತೆ ವಿವಿಧ ನಂಬಿಕೆಗಳು ಮತ್ತು ವೈಜ್ಞಾನಿಕ ಕಾರಣಗಳ ಕುರಿತು ಚರ್ಚೆ ನಡೆಯುತ್ತದೆ.

ಸಾಂಪ್ರದಾಯಿಕ ನಂಬಿಕೆಗಳ ಪ್ರಕಾರ, ಸಂಜೆ ಸಮಯದಲ್ಲಿ ಲಕ್ಷ್ಮೀ ದೇವಿಯ ಪ್ರವೇಶವಾಗುತ್ತದೆ ಎಂದು ಪರಿಗಣಿಸಲಾಗುತ್ತದೆ. ಈ ಸಮಯದಲ್ಲಿ ಕಸ ತೆಗೆಯುವುದು ಅಥವಾ ಹಣ ಸಂಬಂಧಿತ ಕೆಲಸಗಳನ್ನು ಮಾಡುವುದು ಅಶುಭ ಎಂದು ಕೆಲವರು ನಂಬುತ್ತಾರೆ. ಅದೇ ರೀತಿ ಉಗುರು ಕತ್ತರಿಸುವುದನ್ನೂ ತಪ್ಪಿಸಿಕೊಳ್ಳಬೇಕು ಎಂಬ ಅಭಿಪ್ರಾಯವೂ ಇದೆ.

ಇದಕ್ಕೆ ಹಿಂದೆ ಇರುವ ಪ್ರಮುಖ ಕಾರಣಗಳಲ್ಲಿ ಒಂದಾಗಿ ಹಳೆಯ ಕಾಲದ ಜೀವನಶೈಲಿ ಮತ್ತು ಸುರಕ್ಷತೆ ವಿಚಾರಗಳನ್ನು ಹೇಳಲಾಗುತ್ತದೆ. ಆ ಸಮಯದಲ್ಲಿ ವಿದ್ಯುತ್ ಸೌಲಭ್ಯ ಇರಲಿಲ್ಲ. ಸೀಮೆಎಣ್ಣೆ ದೀಪದ ಬೆಳಕಿನಲ್ಲಿ ಅಥವಾ ಕಡಿಮೆ ಬೆಳಕಿನಲ್ಲಿ ಉಗುರು ಕತ್ತರಿಸುವುದು ಅಪಾಯಕಾರಿಯಾಗಿತ್ತು. ಚೂಪಾದ ಸಾಧನಗಳಿಂದ ಗಾಯವಾಗುವ ಸಾಧ್ಯತೆ ಹೆಚ್ಚಿತ್ತು ಎಂದು ಹಿರಿಯರು ವಿವರಿಸುತ್ತಾರೆ.

ಇದಲ್ಲದೆ ರಾತ್ರಿ ಸಮಯದಲ್ಲಿ ಕತ್ತರಿಸಿದ ಉಗುರುಗಳನ್ನು ಸರಿಯಾಗಿ ಸ್ವಚ್ಛಗೊಳಿಸುವುದು ಮತ್ತು ವಿಲೇವಾರಿ ಮಾಡುವುದು ಕಷ್ಟವಾಗುತ್ತಿತ್ತು. ಇದರಿಂದ ಸ್ವಚ್ಛತೆ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇತ್ತು.

ಇಂದಿನ ದಿನಗಳಲ್ಲಿ ಸಹ ಸ್ವಚ್ಛತೆ ದೃಷ್ಟಿಯಿಂದ, ದಿನದ ಬೆಳಕಿನಲ್ಲಿ ಅಥವಾ ಉತ್ತಮ ಬೆಳಕಿನಲ್ಲಿ ಉಗುರು ಕತ್ತರಿಸುವುದು ಉತ್ತಮ ಎಂದು ಸಲಹೆ ನೀಡಲಾಗುತ್ತದೆ. ದಿನದ ಹೊತ್ತಿನಲ್ಲಿ ಕತ್ತರಿಸಿದ ಉಗುರುಗಳನ್ನು ಸರಿಯಾಗಿ ಸ್ವಚ್ಛಗೊಳಿಸಲು ಮತ್ತು ವಿಲೇವಾರಿ ಮಾಡಲು ಸುಲಭವಾಗುತ್ತದೆ ಎಂದು ತಿಳಿಸಲಾಗಿದೆ.

ಉಗುರುಗಳು ಕೆರಾಟಿನ್ ಪದಾರ್ಥದಿಂದ ನಿರ್ಮಿತವಾಗಿದ್ದು, ಸ್ನಾನದ ನಂತರ ಅಥವಾ ಕೈಗಳು ಮೃದುವಾಗಿರುವ ಸಮಯದಲ್ಲಿ ಕತ್ತರಿಸುವುದು ಸುಲಭವಾಗುತ್ತದೆ ಎಂದು ತಜ್ಞರು ಸೂಚಿಸುತ್ತಾರೆ. ಕತ್ತರಿಸಿದ ನಂತರ ಕೈಗಳನ್ನು ತೊಳೆಯುವುದು ಮತ್ತು ಸ್ವಚ್ಛತೆಯನ್ನು ಕಾಪಾಡುವುದು ಅಗತ್ಯ ಎಂದು ಹೇಳಲಾಗುತ್ತದೆ.

ಇದು ಸಂಪೂರ್ಣವಾಗಿ ಸಂಪ್ರದಾಯ, ನಂಬಿಕೆ ಮತ್ತು ಸ್ವಚ್ಛತಾ ಕಾರಣಗಳ ಸಮನ್ವಯದಿಂದ ಬಂದಿರುವ ಅಭ್ಯಾಸ ಎಂದು ತಿಳಿದುಬರುತ್ತದೆ.

 

ಬೆಸ್ಕಾಂ ಆನ್‌ಲೈನ್ ಸೇವೆಗಳಿಗೆ 21 ದಿನ ತಾತ್ಕಾಲಿಕ ಸ್ಥಗಿತ: ಗ್ರಾಹಕರಿಗೆ ಮುನ್ಸೂಚನೆ

ಬೆಂಗಳೂರು: ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ತನ್ನ ಗ್ರಾಹಕರಿಗೆ ಮಹತ್ವದ ಮುನ್ಸೂಚನೆ ನೀಡಿದ್ದು, ಆನ್‌ಲೈನ್ ಸೇವೆಗಳು ತಾತ್ಕಾಲಿಕವಾಗಿ ಸ್ಥಗಿತಗೊಳ್ಳಲಿವೆ ಎಂದು ತಿಳಿಸಿದೆ.

ಜೂನ್ 10ರಿಂದ ಜೂನ್ 30ರವರೆಗೆ ಒಟ್ಟು 21 ದಿನಗಳ ಕಾಲ ಬೆಸ್ಕಾಂನ ಎಲ್ಲಾ ಆನ್‌ಲೈನ್ ಸೇವೆಗಳು ಲಭ್ಯವಿರುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಡೇಟಾವನ್ನು ಹಳೆಯ ಸಾಫ್ಟ್‌ವೇರ್‌ನಿಂದ ಹೊಸ ತಂತ್ರಜ್ಞಾನ ಆಧಾರಿತ ವ್ಯವಸ್ಥೆಗೆ ವರ್ಗಾಯಿಸುವ ಹಿನ್ನೆಲೆಯಲ್ಲಿ ಈ ತಾತ್ಕಾಲಿಕ ಸ್ಥಗಿತ ಅಗತ್ಯವಾಗಿದೆ ಎಂದು ಸ್ಪಷ್ಟಪಡಿಸಲಾಗಿದೆ.

ಈ ಅವಧಿಯಲ್ಲಿ ಹೊಸ ವಿದ್ಯುತ್ ಸಂಪರ್ಕಕ್ಕಾಗಿ ಅರ್ಜಿ ಸಲ್ಲಿಕೆ, ಮಾಲೀಕತ್ವ ಬದಲಾವಣೆ, ಲೋಡ್ ಹೆಚ್ಚಳ ವಿನಂತಿ ಹಾಗೂ ಆನ್‌ಲೈನ್ ಬಿಲ್ ಪಾವತಿ ಸೇರಿದಂತೆ ಹಲವು ಪ್ರಮುಖ ಸೇವೆಗಳು ಬೆಸ್ಕಾಂ ಪೋರ್ಟಲ್ ಮತ್ತು ಆಪ್ ಮೂಲಕ ಲಭ್ಯವಿರುವುದಿಲ್ಲ.

ಆದರೆ ಗ್ರಾಹಕರು ಫೋನ್‌ಪೇ, ಗೂಗಲ್‌ಪೇ, ಅಮೆಜಾನ್‌ಪೇ ಸೇರಿದಂತೆ ಯುಪಿಐ ಮಾಧ್ಯಮಗಳ ಮೂಲಕ ವಿದ್ಯುತ್ ಬಿಲ್ ಪಾವತಿಯನ್ನು ಮುಂದುವರಿಸಬಹುದಾಗಿದೆ ಎಂದು ತಿಳಿಸಲಾಗಿದೆ.

ಸಾಫ್ಟ್‌ವೇರ್ ಅಪ್‌ಗ್ರೇಡ್ ಪ್ರಕ್ರಿಯೆಯಿಂದ ವಿದ್ಯುತ್ ಸರಬರಾಜಿನಲ್ಲಿ ಯಾವುದೇ ವ್ಯತ್ಯಯ ಉಂಟಾಗುವುದಿಲ್ಲ ಎಂದು ಬೆಸ್ಕಾಂ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

error: Content is protected !!