ವಿಜಯಸಾಕ್ಷಿ ಸುದ್ದಿ, ಗದಗ: ಮಧುಮೇಹವನ್ನು ಕೇವಲ ಔಷಧಗಳಿಂದ ನಿಯಂತ್ರಿಸಲು ಸಾಧ್ಯವಿಲ್ಲ. ಆಹಾರ ಪದ್ಧತಿ, ನಿಯಮಿತ ವ್ಯಾಯಾಮ, ಪಾದದ ಆರೈಕೆ ಹಾಗೂ ಮಾನಸಿಕ ಬೆಂಬಲದಂತಹ ಅಂಶಗಳು ಸಮಾನವಾಗಿ ಮಹತ್ವದ್ದಾಗಿದ್ದು, ರೋಗಿಯ ಆರೈಕೆಯಲ್ಲಿ ನರ್ಸ್ಗಳ ಪಾತ್ರ ಅತ್ಯಂತ ಪ್ರಮುಖವಾಗಿದೆ ಎಂದು ಸಿಎಂಸಿ ವೆಲ್ಲೂರಿನ ಹಿರಿಯ ಎಂಡೋಕ್ರೈನಾಲಜಿಸ್ಟ್ ಡಾ. ಅನ್ವರ್ ಹುಸೇನ್ ಹೇಳಿದರು.
ಕ್ರಿಶ್ಚಿಯನ್ ಮೆಡಿಕಲ್ ಕಾಲೇಜು (ಸಿಎಂಸಿ), ವೆಲ್ಲೂರು ಹಾಗೂ ಬಾಸೆಲ್ ಮಿಷನ್ ಸಿಎಸ್ಐ ಆಸ್ಪತ್ರೆ, ಗದಗ ಇವರ ಸಂಯುಕ್ತಾಶ್ರಯದಲ್ಲಿ ನಗರದ ಕ್ಲಾರ್ಕ್ಸ್ ಇನ್ ಹೋಟೆಲ್ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ‘ಮಧುಮೇಹ ನಿರ್ವಹಣೆ’ ಕುರಿತ ಒಂದು ದಿನದ ನಿರಂತರ ನರ್ಸಿಂಗ್ ಶಿಕ್ಷಣ (ಸಿಎನ್ಇ) ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.
ಮಧುಮೇಹ ಚಿಕಿತ್ಸೆಯಲ್ಲಿನ ಹೊಸ ವಿಧಾನಗಳು, ಇನ್ಸುಲಿನ್ ನಿರೋಧಕತೆ ಹಾಗೂ ಗರ್ಭಾವಸ್ಥೆಯ ಮಧುಮೇಹ ನಿರ್ವಹಣೆ ಕುರಿತು ಸವಿಸ್ತಾರವಾಗಿ ವಿವರಿಸಿದ ಅವರು, ರೋಗಿಗೆ ಸಮಗ್ರ ಆರೈಕೆ ದೊರೆತಾಗ ಮಾತ್ರ ಉತ್ತಮ ಫಲಿತಾಂಶ ಸಾಧ್ಯವಾಗುತ್ತದೆ ಎಂದರು.
ಡಯಾಬಿಟಿಸ್ ನರ್ಸ್ ಎಜುಕೇಟರ್ ವಿಜಯಲಕ್ಷ್ಮಿ ಅವರು ಸುರಕ್ಷಿತ ಇನ್ಸುಲಿನ್ ಚುಚ್ಚುಮದ್ದು ತಂತ್ರ, ಇನ್ಸುಲಿನ್ ಪೆನ್ ಬಳಕೆ, ಹೈಪೋಗ್ಲೈಸೆಮಿಯಾ ತುರ್ತು ನಿರ್ವಹಣೆ ಹಾಗೂ ಸ್ವಯಂ ರಕ್ತದ ಗ್ಲೂಕೋಸ್ ಪರೀಕ್ಷೆ ಮಾಡುವ ವಿಧಾನಗಳ ಕುರಿತು ಪ್ರಾಯೋಗಿಕ ಪ್ರದರ್ಶನ ನೀಡಿದರು.
ಬಾಸೆಲ್ ಮಿಷನ್ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲೆ ಪ್ರೊ. ಬ್ಯೂಲಾ ಪ್ರಿಯದರ್ಶಿನಿ ಮಾತನಾಡಿ, ಭಾರತೀಯ ನರ್ಸಿಂಗ್ ಪರಿಷತ್ತಿನ ಮಾರ್ಗಸೂಚಿಯಂತೆ ಉತ್ತರ ಕರ್ನಾಟಕದಲ್ಲಿ ಇಂತಹ ವಿಶೇಷ ತರಬೇತಿ ಕಾರ್ಯಕ್ರಮಗಳ ಅಗತ್ಯ ಹೆಚ್ಚಿದ್ದು, ನರ್ಸ್ಗಳ ಕೌಶಲ್ಯ ವೃದ್ಧಿಗೆ ಇದು ಸಹಕಾರಿಯಾಗಿದೆ ಎಂದರು.
ಬಾಸೆಲ್ ಮಿಷನ್ ಸಿಎಸ್ಐ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಅಜಯ್ ರಾಜು ಮಾತನಾಡಿ, ಐಸಿಎಂಆರ್–ಇಂಡಿಯಾಬ್ ಅಧ್ಯಯನದ ಪ್ರಕಾರ ಕರ್ನಾಟಕದಲ್ಲಿ 18 ವರ್ಷ ಮೇಲ್ಪಟ್ಟವರಲ್ಲಿ ಶೇ.11.2ರಷ್ಟು ಜನ ಮಧುಮೇಹದಿಂದ ಬಳಲುತ್ತಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ರೋಗ ತಡವಾಗಿ ಪತ್ತೆಯಾಗುತ್ತಿರುವುದರಿಂದ ಪ್ರಾಥಮಿಕ ಹಂತದಲ್ಲೇ ನರ್ಸ್ಗಳು ತಪಾಸಣೆ, ಮಾರ್ಗದರ್ಶನ ಹಾಗೂ ಆರೋಗ್ಯ ಶಿಕ್ಷಣ ನೀಡುವುದು ಅತ್ಯಂತ ಅಗತ್ಯ ಎಂದು ಹೇಳಿದರು.
ಗದಗ ಜಿಲ್ಲೆಯ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳು, ಸಮುದಾಯ ಆರೋಗ್ಯ ಕೇಂದ್ರಗಳು ಮತ್ತು ನರ್ಸಿಂಗ್ ಕಾಲೇಜುಗಳಿಂದ 125ಕ್ಕೂ ಹೆಚ್ಚು ನರ್ಸ್ಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ತಜ್ಞರಿಂದ ಪ್ರಾಯೋಗಿಕ ಹಾಗೂ ಸಾಕ್ಷ್ಯಾಧಾರಿತ ತರಬೇತಿ ಪಡೆದರು.
ಕಾರ್ಯಕ್ರಮದಲ್ಲಿ ಕೆ.ಎಚ್. ಪಾಟೀಲ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಸಹ ಪ್ರಾಧ್ಯಾಪಕ ಡಾ. ಸ್ಟೀಫನ್, ಹಿರಿಯ ಶುಶ್ರೂಷಾಧಿಕಾರಿಗಳು ಹಾಗೂ ನರ್ಸಿಂಗ್ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
“ಮಧುಮೇಹ ಚಿಕಿತ್ಸೆಯಲ್ಲಿ ಔಷಧ ಮಾತ್ರ ಸಾಕಾಗುವುದಿಲ್ಲ. ಆಹಾರ, ವ್ಯಾಯಾಮ, ಪಾದದ ಆರೈಕೆ ಮತ್ತು ಮಾನಸಿಕ ಬೆಂಬಲವನ್ನು ಸಮನ್ವಯಗೊಳಿಸಿದಾಗಲೇ ರೋಗವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಸಾಧ್ಯ.”
– ಡಾ. ಅನ್ವರ್ ಹುಸೇನ್, ಹಿರಿಯ ಎಂಡೋಕ್ರೈನಾಲಜಿಸ್ಟ್, ಸಿಎಂಸಿ ವೆಲ್ಲೂರು

