Home Blog

ಪ್ರಧಾನಿ ಮೋದಿಗೆ ಝಲ್ಮುರಿ ನೀಡಿದ್ದ ವ್ಯಾಪಾರಿಗೆ ಪಾಕ್ – ಬಾಂಗ್ಲಾದೇಶದಿಂದ ಕೊಲೆ ಬೆದರಿಕೆ ಕರೆ!

ಕೋಲ್ಕತ್ತಾ: ಚುನಾವಣಾ ಪ್ರಚಾರದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜನಪ್ರಿಯ ಬಂಗಾಳಿ ತಿನಿಸಾದ ಝಲ್ಮುರಿ ನೀಡಿ ದೇಶದ ಗಮನ ಸೆಳೆದಿದ್ದ ಪಶ್ಚಿಮ ಬಂಗಾಳದ ಜಲ್ಮುರಿ ಮಾರಾಟಗಾರ ಇದೀಗ ಬೆದರಿಕೆ ಕರೆಗಳಿಂದ ಆತಂಕಕ್ಕೀಡಾಗಿದ್ದಾನೆ.

ಜಾರ್ಗ್ರಾಮ್‌ನ ರಸ್ತೆಬದಿ ಝಲ್ಮುರಿ ಅಂಗಡಿ ನಡೆಸುತ್ತಿರುವ ಬಿಕ್ರಮ್ ಸೌ ಅವರಿಗೆ ಪಾಕಿಸ್ತಾನ ಮತ್ತು ಬಾಂಗ್ಲಾದೇಶದಿಂದ ನಿರಂತರ ಬೆದರಿಕೆ ಕರೆಗಳು ಬರುತ್ತಿವೆ ಎಂದು ಆರೋಪಿಸಲಾಗಿದೆ.

ಕಳೆದ ಕೆಲವು ದಿನಗಳಿಂದ ಪದೇ ಪದೇ ಫೋನ್ ಹಾಗೂ ವೀಡಿಯೊ ಕರೆಗಳ ಮೂಲಕ ಕೊಲೆ ಬೆದರಿಕೆ ಹಾಕಲಾಗುತ್ತಿದೆ ಎಂದು ಬಿಕ್ರಮ್ ಸೌ ತಿಳಿಸಿದ್ದಾರೆ.

ಏಪ್ರಿಲ್ 19ರಂದು ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣಾ ಪ್ರಚಾರದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಬಿಕ್ರಮ್ ಸೌ ಅವರ ಅಂಗಡಿಗೆ ಭೇಟಿ ನೀಡಿ ಝಲ್ಮುರಿ ಸವಿದಿದ್ದರು. ಈ ಘಟನೆ ಬಳಿಕ ಝಲ್ಮುರಿ ವ್ಯಾಪಾರಿ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದ್ದರು.

ಈಗ ಬೆದರಿಕೆ ಕರೆಗಳು ತಮ್ಮನ್ನು ಹಾಗೂ ಕುಟುಂಬದವರನ್ನು ತೀವ್ರ ಆತಂಕಕ್ಕೀಡು ಮಾಡಿವೆ ಎಂದು ಬಿಕ್ರಮ್ ಸೌ ಹೇಳಿದ್ದಾರೆ.

ಕೆಲವರು ಕರೆ ಮಾಡಿ ಬಾಂಬ್ ಇಟ್ಟು ಸ್ಫೋಟಿಸುವುದಾಗಿ ಬೆದರಿಸುತ್ತಿದ್ದಾರೆ. ಇನ್ನೂ ಕೆಲವರು ಅಸಭ್ಯ ಮತ್ತು ನಿಂದನೀಯ ಪದಗಳನ್ನು ಬಳಸಿ ಅವಾಚ್ಯವಾಗಿ ಮಾತನಾಡುತ್ತಿದ್ದಾರೆ” ಎಂದು ಅವರು ದೂರಿದ್ದಾರೆ. ಈ ಸಂಬಂಧ ಪೊಲೀಸರಿಗೆ ದೂರು ನೀಡಲಾಗಿದ್ದು, ಪ್ರಕರಣದ ತನಿಖೆ ನಡೆಯುತ್ತಿದೆ ಎಂದು ತಿಳಿದುಬಂದಿದೆ.

ಇನ್ನೊಂದೆಡೆ, ಪ್ರಧಾನಿ ಮೋದಿ ಭೇಟಿ ಬಳಿಕ ಬಿಕ್ರಮ್ ಸೌ ಅವರ ಅಂಗಡಿಗೆ ಗ್ರಾಹಕರ ಸಂಖ್ಯೆ ಹೆಚ್ಚಾಗಿದೆ. ದೇಶಾದ್ಯಂತ ಗಮನ ಸೆಳೆದಿರುವ ಈ ಝಲ್ಮುರಿ ಅಂಗಡಿಗೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದಾರೆ.

CET ಅಭ್ಯರ್ಥಿಗಳಿಗೆ ಮಹತ್ವದ ಸುದ್ದಿ: CBSE ಹಾಗೂ ಬೇರೆ ರಾಜ್ಯಗಳ ಅಂಕ ದಾಖಲಿಸಲು ಲಿಂಕ್ ಬಿಡುಗಡೆ

ಬೆಂಗಳೂರು: ಸಿಬಿಎಸ್‌ಇ, ಸಿಐಎಸ್‌ಸಿಇ ಮತ್ತು ಇತರೆ ರಾಜ್ಯ ಪರೀಕ್ಷಾ ಮಂಡಳಿಗಳಿಂದ 12ನೇ ತರಗತಿಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ತಮ್ಮ ಅಂಕಗಳನ್ನು ಪರಿಶೀಲಿಸಿ ದೃಢೀಕರಿಸಲು ಹಾಗೂ ಅಂಕ ಪಟ್ಟಿ ಅಪ್ ಲೋಡ್ ಮಾಡಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ವೆಬ್ ಸೈಟ್ ನಲ್ಲಿ ಲಿಂಕ್ ಬಿಡುಗಡೆ ಮಾಡಿದೆ.

ನಿಗದಿತ ಲಿಂಕ್ ಮೂಲಕ ಲಾಗಿನ್ ಆದ ತಕ್ಷಣ ಅಭ್ಯರ್ಥಿಗಳಿಗೆ ತಮ್ಮ ಅಂಕಗಳು ಪ್ರದರ್ಶನವಾಗುತ್ತದೆ. ಅವು ಸರಿ ಇದ್ದರೆ ದೃಢೀಕರಿಸಬೇಕು. ಒಂದು ವೇಳೆ ಇದುವರೆಗೂ ಅಂಕಗಳನ್ನು ನಮೂದಿಸದೇ ಇದ್ದರೆ ಅಂತಹವರು ಕೂಡ ಅಂಕಗಳನ್ನು ದಾಖಲಿಸಬಹುದು. ನಂತರ ಅದಕ್ಕೆ ಪೂರಕವಾದ ಅಂಕಪಟ್ಟಿಯನ್ನು ಅಪ್ ಲೋಡ್ ಮಾಡಬೇಕು. ಇದೆಲ್ಲ ಮಾಡಲು ಮೇ‌ 24ರವರೆಗೂ ಅವಕಾಶ ನೀಡಲಾಗಿದೆ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಅಭ್ಯರ್ಥಿಗಳು ಧೃಡೀಕರಿಸಿ ಸಲ್ಲಿಸುವ ಅಂಕಗಳನ್ನೇ ನಿಯಮಾನುಸಾರ ಮೆರಿಟ್ ನಿರ್ಧರಿಸಲು ಉಪಯೋಗಿಸ ಲಾಗುವುದು ಹಾಗೂ ಸೀಟು ಹಂಚಿಕೆಯ ನಂತರ ಆಯಾ ಕಾಲೇಜಿನಲ್ಲಿ ಪ್ರವೇಶ ಪಡೆಯುವ ಸಂದರ್ಭದಲ್ಲಿ ಅಂಕಗಳನ್ನು ಪರಿಶೀಲಿಸಲಾಗುವುದು. ಅಭ್ಯರ್ಥಿಗಳು ತಪ್ಪು ಮಾಹಿತಿ ನೀಡಿದಲ್ಲಿ ಸೀಟು ರದ್ದುಗೊಳ್ಳುತ್ತದೆ ಮತ್ತು ಅಭ್ಯರ್ಥಿತನವನ್ನು ತೆಗೆದು ಹಾಕಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.

2026 ಹಾಗೂ ಅದಕ್ಕಿಂತ ಮೊದಲಿನ ವರ್ಷಗಳಲ್ಲಿ ಉತ್ತೀರ್ಣರಾದವರು ಕೂಡ ಅಂಕಗಳನ್ನು ದಾಖಲಿಸಬಹುದು ಎಂದು ಅವರು ವಿವರಿಸಿದ್ದಾರೆ.

ರಾಜ್ಯ ಪಠ್ಯಕ್ರಮದಲ್ಲಿ ಓದಿದ ಅಭ್ಯರ್ಥಿಗಳ ಅಂಕಗಳ ವಿವರವನ್ನು ಆನ್ ಲೈನ್ ಮೂಲಕ ಪದವಿ ಪೂರ್ವ ಶಿಕ್ಷಣ ಇಲಾಖೆಯಿಂದ ಲಭ್ಯವಾಗಲಿದೆ. ಹೀಗಾಗಿ ರಾಜ್ಯ ಮಂಡಳಿಯ ಅಭ್ಯರ್ಥಿಗಳು ಅಂಕ ದಾಖಲಿಸುವ ಅಗತ್ಯ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಡಿಕೆಶಿ ಕಾಕ್ರೋಚ್ ಪಾರ್ಟಿಗೆ ಅಧ್ಯಕ್ಷರಾಗಿ 50 ಸೀಟು ಗೆದ್ದು ತೋರಿಸಲಿ: ನಿಖಿಲ್ ಕುಮಾರಸ್ವಾಮಿ ಕಿಡಿ

ಬೆಂಗಳೂರು: ನಾನು ಕನ್ನಡ ನಾಡಿನ ಹುಡುಗ, ಇಲ್ಲಿ ನಾನು ತೆರಿಗೆ ಕಟ್ತಾ ಇದ್ದೇನೆ. ನಾಡಿನ ಜನರ ಪರವಾಗಿ ಸಾಮಾನ್ಯ ಪ್ರಜೆಯಾಗಿ ಪ್ರಶ್ನೆ ಮಾಡ್ತಿದ್ದೇನೆ. ಇದು ನನ್ನ ಸ್ಟೇಟಸ್ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ಗೆ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.

ಜೆ.ಪಿ. ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಟೇಟಸ್ ಬಗ್ಗೆ ಟೀಕೆ ಮಾಡಿದ ಡಿಕೆಶಿಗೆ ನಾನು ಕಾಮನ್ ಮ್ಯಾನ್ ಆಗಿ ಬರ್ತೇನೆ. ನನಗೆ ಯಾವ ಸ್ಟೇಟಸ್ ಕೂಡ ಬೇಡ ಎಂದು ಟಾಂಗ್ ಕೊಟ್ಟರು.

“ಕಾಕ್ರೋಚ್ ಪಾರ್ಟಿಗೆ ಅಧ್ಯಕ್ಷರಾಗಿ”

ಸೋಶಿಯಲ್ ಮೀಡಿಯಾದಲ್ಲಿ ‘ಕಾಕ್ರೋಚ್ ಜನತಾ ಪಾರ್ಟಿ’ ಅಂತ ಸೆನ್ಸೇಷನ್ ಶುರುವಾಗಿದೆ. ಉಪಮುಖ್ಯಮಂತ್ರಿಗಳು ಅಲ್ಲಿಗೆ ಹೋಗಿ ಅಧ್ಯಕ್ಷರಾಗಲಿ” ಎಂದು ನಿಖಿಲ್ ವ್ಯಂಗ್ಯವಾಡಿದರು. ನಿನ್ನೆ ಪ್ರತಿಭಟನೆಯಲ್ಲಿ ಸಿಎಂ ಹಾಗೂ ಡಿಸಿಎಂ ಐ ಆಮ್ ಕಾಕ್ರೋಚ್ ಟೀ-ಶರ್ಟ್ ಬಿಡುಗಡೆ ಮಾಡಿದ್ದಾರೆ. ಒಂದು ರಾಷ್ಟ್ರೀಯ ಪಕ್ಷದವರಾಗಿ ಕಾಕ್ರೋಚ್ ಪಾರ್ಟಿ ಟೀ-ಶರ್ಟ್ ಬಿಡುಗಡೆ ಮಾಡಿದ್ದಾರೆ” ಎಂದು ಕಿಡಿಕಾರಿದರು.

“50% ಸ್ಥಳೀಯರಿಗೆ ಉದ್ಯೋಗ ಕಾನೂನು ತನ್ನಿ”

ಬಿಡದಿ ಕೈಗಾರಿಕಾ ಮಹಾ ಯೋಜನೆ ಭೂಸ್ವಾಧೀನವನ್ನು ತೀವ್ರವಾಗಿ ಖಂಡಿಸಿದ ನಿಖಿಲ್, ಈ ಯೋಜನೆ ಹೆಚ್.ಡಿ. ಕುಮಾರಸ್ವಾಮಿ ಅವರ ಕನಸಿನ ಕೂಸಾಗಿದ್ದರೂ, ‘ಕೃಷ್ಣಾ’ ಕಚೇರಿಯಲ್ಲಿ ರೈತರೊಂದಿಗೆ ಸಭೆ ನಡೆಸಿದ ಬಳಿಕ ಅವರ ಮನವಿಗೆ ಸ್ಪಂದಿಸಿ ಯೋಜನೆಯನ್ನು ಕೈಬಿಡಲಾಗಿತ್ತು ಎಂದು ನೆನಪಿಸಿದರು.

“ಆದರೆ ಈಗಿನ ಸರ್ಕಾರ ಇದನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದೆ. ‘ಅಲ್ಲಿ ರೈತರೇ ಇಲ್ಲ’ ಎಂದು ಡಿಸಿಎಂ ಹಠ ಹಿಡಿದಿದ್ದಾರೆ. ಕೃಷಿ ಜಮೀನನ್ನೇ ಏಕೆ ರೈತರಿಂದ ಬಲವಂತವಾಗಿ ಕಿತ್ತುಕೊಳ್ಳುತ್ತಿದ್ದೀರಿ? ಡಿಸಿಎಂ ಮೊದಲು ಹಳ್ಳಿಗಳಿಗೆ ಬಂದು ರೈತರ ಕ್ಷಮೆ ಕೇಳಲಿ” ಎಂದರು.

“ಅಷ್ಟೊಂದು ಮಾತಾಡುವ ಡಿಸಿಎಂ, ಈ ಯೋಜನೆಯಲ್ಲಿ ಸ್ಥಳೀಯರಿಗೆ ಕಡ್ಡಾಯವಾಗಿ ಶೇ. 50ರಷ್ಟು ಉದ್ಯೋಗ ನೀಡಲೇಬೇಕು ಎಂಬ ಕಾನೂನನ್ನು ತರಲಿ ನೋಡೋಣ, ಆಗ ನಾನು ಒಪ್ಪುತ್ತೇನೆ. ಕುಮಾರಸ್ವಾಮಿ ಅವರಿಗೆ ಚಾಲೆಂಜ್ ಮಾಡುವುದನ್ನು ಬಿಟ್ಟು ರೈತರ ಪ್ರಶ್ನೆಗಳಿಗೆ ಉತ್ತರಿಸಲಿ. ನಾನು ಯಾವುದೇ ಸ್ಟೇಟಸ್ ಇಲ್ಲದೆ ಕಾಮನ್ ಮ್ಯಾನ್ ಆಗಿ ಹಳ್ಳಿಗಳಿಗೆ ಬರಲು ಸಿದ್ಧ” ಎಂದು ಸವಾಲು ಹಾಕಿದರು.

ಬಾಲಕನಿಗೆ ಇಂಜೆಕ್ಷನ್ ಚುಚ್ಚಿ ಪರಾರಿಯಾದ ಮುಸುಕುಧಾರಿಗಳ ತಂಡ: ಪೋಷಕರಲ್ಲಿ ಆತಂಕ

0

ಧಾರವಾಡ: ಕುಂದಗೋಳ ತಾಲೂಕಿನ ತರ್ಲಘಟ್ಟ ಗ್ರಾಮದಲ್ಲಿ ನಡೆದ ಅನುಮಾನಾಸ್ಪದ ಘಟನೆಯೊಂದು ಪೋಷಕರಲ್ಲಿ ಭೀತಿ ಮೂಡಿಸಿದೆ. 10 ವರ್ಷದ ಬಾಲಕನನ್ನು ತಡೆದು ಅಪರಿಚಿತರು ಇಂಜೆಕ್ಷನ್ ಚುಚ್ಚಿ ಪರಾರಿಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ.

ಮಣಿಕಂಠ ಗಾಣಿಗೇರ ಎಂಬ ಬಾಲಕ ರಸ್ತೆ ಮೂಲಕ ಹೋಗುತ್ತಿದ್ದ ವೇಳೆ ಬೈಕ್‌ನಲ್ಲಿ ಬಂದ ಇಬ್ಬರು ಮುಸುಕುಧಾರಿಗಳು ವಿಳಾಸ ಕೇಳುವ ನೆಪದಲ್ಲಿ ಮಾತು ಆರಂಭಿಸಿದ್ದಾರೆ. ಬಳಿಕ ಏಕಾಏಕಿ ಬಾಲಕನ ಬಾಯಿಯನ್ನು ಹಿಡಿದು ಇಂಜೆಕ್ಷನ್ ಚುಚ್ಚಿ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.

ಘಟನೆ ಬಳಿಕ ಬಾಲಕ ಅಸ್ವಸ್ಥಗೊಂಡ ಹಿನ್ನೆಲೆ ಕುಟುಂಬಸ್ಥರು ತಕ್ಷಣ ಕುಂದಗೋಳ ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದಾರೆ. ವೈದ್ಯರು ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಕಳುಹಿಸಿದ್ದಾರೆ.

ಬಾಲಕನಿಗೆ ಯಾವ ಇಂಜೆಕ್ಷನ್ ನೀಡಲಾಗಿದೆ ಎಂಬುದು ಇನ್ನೂ ತಿಳಿದುಬಂದಿಲ್ಲ. ಇದರಿಂದ ಗ್ರಾಮಸ್ಥರಲ್ಲಿ ತೀವ್ರ ಆತಂಕ ಮನೆ ಮಾಡಿದ್ದು, ಮಕ್ಕಳ ಸುರಕ್ಷತೆ ಬಗ್ಗೆ ಪೋಷಕರು ಕಳವಳ ವ್ಯಕ್ತಪಡಿಸಿದ್ದಾರೆ.

ಘಟನೆ ಸಂಬಂಧ ಕುಂದಗೋಳ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದು, ಸಿಸಿಟಿವಿ ದೃಶ್ಯಾವಳಿ ಹಾಗೂ ಇತರೆ ಮಾಹಿತಿಗಳ ಆಧಾರದಲ್ಲಿ ತನಿಖೆ ಮುಂದುವರಿಸಿದ್ದಾರೆ.

ಹಿರಿಯೂರು ಫ್ಲೈಓವರ್ ಬಳಿ ಆಂಬುಲೆನ್ಸ್-ಲಾರಿ ನಡುವೆ ಭೀಕರ ಅಪಘಾತ

ಚಿತ್ರದುರ್ಗ: ರಾಷ್ಟ್ರೀಯ ಹೆದ್ದಾರಿಯಲ್ಲಿ ಮತ್ತೊಂದು ಭೀಕರ ಅಪಘಾತ ಸಂಭವಿಸಿದ್ದು, ಹೊಸಪೇಟೆಯಿಂದ ಬೆಂಗಳೂರಿಗೆ ರೋಗಿಯನ್ನು ಕರೆದೊಯ್ಯುತ್ತಿದ್ದ ಆಂಬುಲೆನ್ಸ್ ಲಾರಿಗೆ ಡಿಕ್ಕಿ ಹೊಡೆದು ಜಖಂಗೊಂಡ ಘಟನೆ ಹಿರಿಯೂರು ತಾಲ್ಲೂಕಿನ ಫ್ಲೈಓವರ್ ಔಟರಿಂಗ್ ಬಳಿ ನಡೆದಿದೆ.

ಶುಕ್ರವಾರ ಮುಂಜಾನೆ ನಡೆದ ಈ ಅಪಘಾತದಲ್ಲಿ ಆಂಬುಲೆನ್ಸ್‌ನ ಮುಂಭಾಗ ಸಂಪೂರ್ಣ ಹಾನಿಗೊಳಗಾಗಿದ್ದು, ಅಪಘಾತದ ತೀವ್ರತೆ ಎಷ್ಟಿತ್ತು ಎಂಬುದು ದೃಶ್ಯಗಳಿಂದಲೇ ಸ್ಪಷ್ಟವಾಗುತ್ತಿದೆ. ರೋಗಿಯನ್ನು ತುರ್ತು ಚಿಕಿತ್ಸೆಗೆ ಬೆಂಗಳೂರಿಗೆ ಸಾಗಿಸಲಾಗುತ್ತಿತ್ತು ಎನ್ನಲಾಗಿದೆ.

ಅದೃಷ್ಟವಶಾತ್ ಯಾವುದೇ ಜೀವಹಾನಿ ಸಂಭವಿಸಿಲ್ಲ. ರೋಗಿಗೆ ಸಣ್ಣ ಪ್ರಮಾಣದ ಗಾಯಗಳಾಗಿದ್ದು, ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಮತ್ತು ಸ್ಥಳೀಯರು ರಕ್ಷಣಾ ಕಾರ್ಯಾಚರಣೆ ನಡೆಸಿ, ವಾಹನ ಸಂಚಾರವನ್ನು ಮರುಸ್ಥಾಪಿಸಿದರು.

ಅಪಘಾತದಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು. ಹೆದ್ದಾರಿಗಳಲ್ಲಿ ಹೆಚ್ಚುತ್ತಿರುವ ಅಪಘಾತಗಳ ಬಗ್ಗೆ ಸಾರ್ವಜನಿಕರು ತೀವ್ರ ಆತಂಕ ವ್ಯಕ್ತಪಡಿಸಿದ್ದು, ವಿಶೇಷವಾಗಿ ಮುಂಜಾನೆ ವೇಳೆಯ ಸಂಚಾರದಲ್ಲಿ ಕಟ್ಟುನಿಟ್ಟಿನ ಸುರಕ್ಷತಾ ಕ್ರಮ ಜಾರಿಗೆ ತರಬೇಕು ಎಂದು ಒತ್ತಾಯಿಸಿದ್ದಾರೆ.

ರಾಜ್ಯದಲ್ಲಿ ಶಿಕ್ಷಣ ಕ್ರಾಂತಿ: 1,000 ಕೆಪಿಎಸ್ ಶಾಲೆಗಳಿಗೆ ಜೂನ್ 1ರಂದು ಶಿವಮೊಗ್ಗದಲ್ಲಿ ಚಾಲನೆ

ಶಿವಮೊಗ್ಗ: ಕರ್ನಾಟಕದಲ್ಲಿ ಸರ್ಕಾರಿ ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸುವ ದಿಟ್ಟ ಹೆಜ್ಜೆಯಾಗಿ 1,000 ಕರ್ನಾಟಕ ಪಬ್ಲಿಕ್ ಶಾಲೆಗಳ ನಿರ್ಮಾಣಕ್ಕೆ ಜೂನ್ 1ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಶಿವಮೊಗ್ಗದಲ್ಲಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.

ಶಿವಮೊಗ್ಗದ ಅಲ್ಲಮಪ್ರಭು ಮೈದಾನದಲ್ಲಿ ನಡೆಯಲಿರುವ ಈ ರಾಜ್ಯಮಟ್ಟದ ಕಾರ್ಯಕ್ರಮದ ಸಿದ್ಧತೆಗಳನ್ನು ಪರಿಶೀಲಿಸಿದ ಬಳಿಕ ಮಾತನಾಡಿದ ಸಚಿವರು, ಪ್ರತಿ ಶಾಲೆಗೆ ಸರಾಸರಿ 3.5 ಕೋಟಿ ರೂ. ವೆಚ್ಚ ಮಾಡಲಾಗುತ್ತಿದ್ದು, ಆಧುನಿಕ ಸೌಲಭ್ಯಗಳೊಂದಿಗೆ ಶಿಕ್ಷಣ ನೀಡುವ ವ್ಯವಸ್ಥೆ ರೂಪಿಸಲಾಗುತ್ತಿದೆ ಎಂದರು.

ಒಂದೇ ಆವರಣದಲ್ಲಿ ಪ್ರಾಥಮಿಕದಿಂದ ಪ್ರೌಢಶಿಕ್ಷಣದವರೆಗೆ ಎಲ್ಲಾ ಸೌಲಭ್ಯಗಳು ದೊರೆಯಲಿದ್ದು, ಈ ಶಾಲೆಗಳು ವಿದ್ಯಾರ್ಥಿಗಳ ಭವಿಷ್ಯಕ್ಕೆ ಆಶಾಕಿರಣವಾಗಲಿವೆ ಎಂದು ಹೇಳಿದರು.

ರಾಜ್ಯದ 800 ಶಾಲೆಗಳನ್ನು ಶಿಕ್ಷಣ ಇಲಾಖೆ ಹಾಗೂ 200 ಶಾಲೆಗಳನ್ನು ಅಲ್ಪಸಂಖ್ಯಾತರ ಇಲಾಖೆ ನಿರ್ಮಾಣ ಮಾಡಲಿದೆ ಎಂದು ಮಾಹಿತಿ ನೀಡಿದರು.

ಪಿಯುಸಿ ಪರೀಕ್ಷೆ-2 ಫಲಿತಾಂಶದ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಒಟ್ಟಾರೆ ಫಲಿತಾಂಶ ಶೇ.92.25ಕ್ಕೆ ಏರಿಕೆಯಾಗಿದೆ. ಶಿಕ್ಷಣದಲ್ಲಿ ಗುಣಮಟ್ಟ ಹೆಚ್ಚಾಗಿದ್ದು, ಶೇ.60ಕ್ಕೂ ಹೆಚ್ಚು ಅಂಕ ಗಳಿಸುವ ವಿದ್ಯಾರ್ಥಿಗಳ ಪ್ರಮಾಣವೂ ಹೆಚ್ಚಾಗಿದೆ ಎಂದು ಹೇಳಿದರು.

ಈ ತಿಂಗಳ ಅಂತ್ಯದೊಳಗೆ ಎಸ್‌ಎಸ್‌ಎಲ್‌ಸಿ ಎರಡನೇ ಪರೀಕ್ಷೆಯ ಫಲಿತಾಂಶ ಪ್ರಕಟವಾಗಲಿದೆ ಎಂದು ತಿಳಿಸಿದರು.

ಶಿವಮೊಗ್ಗ ಜಿಲ್ಲೆಯಲ್ಲಿ ಈಗಾಗಲೇ 12 ಕರ್ನಾಟಕ ಪಬ್ಲಿಕ್ ಶಾಲೆಗಳಿದ್ದು, ಹೊಸದಾಗಿ 19 ಶಾಲೆಗಳನ್ನು ಉನ್ನತೀಕರಿಸಲಾಗುತ್ತಿದೆ. ಖಾಸಗಿ ಸಂಸ್ಥೆಯೊಂದು ಸಿಎಸ್‌ಆರ್ ನಿಧಿಯಿಂದ 12 ಕೋಟಿ ರೂ. ಸಹಾಯ ಮಾಡಲು ಮುಂದಾಗಿದೆ ಎಂದರು.

ಎಸೆಸೆಲ್ಸಿಯಲ್ಲಿ 600ಕ್ಕೂ ಹೆಚ್ಚು ಅಂಕ ಪಡೆದ ಜಿಲ್ಲೆಯ 867 ವಿದ್ಯಾರ್ಥಿಗಳನ್ನು ವಿಶೇಷವಾಗಿ ಸನ್ಮಾನಿಸಲಾಗುವುದು ಎಂದು ಮಾಹಿತಿ ನೀಡಿದರು.

ಇದೇ ವೇಳೆ ಬಿರುಗಾಳಿ ಮತ್ತು ಮಳೆಯಿಂದ ಅಡಿಕೆ ಬೆಳೆ ಹಾನಿಗೀಡಾದ ರೈತರಿಗೆ ವಿಶೇಷ ಪ್ಯಾಕೇಜ್ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು.

ಕೆಲಸ ಮುಗಿಸಿ ಇಬ್ಬರು ಯುವಕರೊಂದಿಗೆ ತೆರಳಿದ್ದ ಯುವತಿ ಅನುಮಾನಾಸ್ಪದ ಸಾವು: ಇಬ್ಬರು ಪೊಲೀಸ್ ವಶಕ್ಕೆ

ಹಗರಿಬೊಮ್ಮನಹಳ್ಳಿ: ಪಟ್ಟಣದ ಆಡಳಿತ ವಿಧಾನಸೌಧದ ಸಮೀಪದ ಅಗ್ನಿಶಾಮಕ ಠಾಣೆ ಬಳಿ ಗುರುವಾರ ರಾತ್ರಿ ಮಹಿಳೆಯೊಬ್ಬಳು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಪಟ್ಟಣದಲ್ಲಿ ಆತಂಕ ಹಾಗೂ ಸಂಚಲನಕ್ಕೆ ಕಾರಣವಾಗಿದೆ. ತಲೆಗೆ ಗಂಭೀರ ಗಾಯಗಳಾಗಿರುವ ಸ್ಥಿತಿಯಲ್ಲಿ ರಕ್ತದ ಮಡುವಿನಲ್ಲಿ ಮಹಿಳೆಯ ಶವ ಪತ್ತೆಯಾಗಿದ್ದು, ಪ್ರಕರಣಕ್ಕೆ ಕೊಲೆ ಶಂಕೆ ವ್ಯಕ್ತವಾಗಿದೆ.

ಮೃತ ಮಹಿಳೆಯನ್ನು ಪಟ್ಟಣದ ರಾಮರಹೀಮ್ ನಗರ ನಿವಾಸಿ ಪ್ರಿಯಾಂಕ (27) ಎಂದು ಗುರುತಿಸಲಾಗಿದೆ.

ಅಂಗಡಿಯಿಂದ ಹೊರಟ ಬಳಿಕ ನಡೆದೇನು?

ಪ್ರಿಯಾಂಕ ಕಳೆದ ಕೆಲವು ತಿಂಗಳಿಂದ ಪಟ್ಟಣದ “ಮಿಯಾ ಫ್ಯಾಷನ್” ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಗುರುವಾರ ರಾತ್ರಿ ಸುಮಾರು 8.30ರವರೆಗೆ ಅಂಗಡಿಯಲ್ಲಿ ಕೆಲಸ ನಿರ್ವಹಿಸಿದ್ದ ಅವರು, ಬಳಿಕ ಇಬ್ಬರು ಯುವಕರೊಂದಿಗೆ ತೆರಳಿರುವ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ.

ಇದಾದ ಕೆಲವೇ ಸಮಯದಲ್ಲಿ ಪಟ್ಟಣದ ಹೊರವಲಯದ ಅಗ್ನಿಶಾಮಕ ಠಾಣೆ ಸಮೀಪ ಗಂಭೀರವಾಗಿ ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಸ್ಥಳೀಯರು ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.

ತಲೆಗೆ ಗಂಭೀರ ಗಾಯ – ಹರಿದ ಬಟ್ಟೆಗಳು

ಘಟನಾ ಸ್ಥಳದಲ್ಲಿ ಯುವತಿಯ ತಲೆಯಿಂದ ಹೆಚ್ಚಿನ ರಕ್ತಸ್ರಾವವಾಗಿರುವುದು ಕಂಡು ಬಂದಿದೆ. ಅಲ್ಲದೇ, ಮೃತೆಯ ಬಟ್ಟೆಗಳು ಹರಿದ ಸ್ಥಿತಿಯಲ್ಲಿ ಪತ್ತೆಯಾಗಿರುವುದರಿಂದ ಪ್ರಕರಣ ಹಲವು ಅನುಮಾನಗಳಿಗೆ ಕಾರಣವಾಗಿದೆ. ಇದು ಅಪಘಾತವೋ, ಹಿಟ್ ಅಂಡ್ ರನ್ ಪ್ರಕರಣವೋ ಅಥವಾ ಕೊಲೆಯೋ ಎಂಬುದರ ಕುರಿತು ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಕೈಗೊಂಡಿದ್ದಾರೆ.

ವಿಚ್ಛೇದನದ ಬಳಿಕ ಮಗನೊಂದಿಗೆ ವಾಸ

ಮೂಲಗಳ ಪ್ರಕಾರ, ಪ್ರಿಯಾಂಕ ಸುಮಾರು ಒಂದೂವರೆ ವರ್ಷದ ಹಿಂದೆ ಮರಿಯಮ್ಮನಹಳ್ಳಿ ಹೋಬಳಿ ವ್ಯಾಪ್ತಿಯ ಯುವಕನೊಂದಿಗೆ ವಿವಾಹವಾಗಿದ್ದರು. ಆದರೆ ಕೆಲವೇ ದಿನಗಳಲ್ಲಿ ದಾಂಪತ್ಯ ಜೀವನ ಮುರಿದು ವಿಚ್ಛೇದನವಾಗಿತ್ತು. ಬಳಿಕ ಅವರು ತಮ್ಮ ಮಗನೊಂದಿಗೆ ರಾಮರಹೀಮ್ ನಗರದಲ್ಲಿ ವಾಸಿಸುತ್ತಿದ್ದರು ಎನ್ನಲಾಗಿದೆ.

ಇಬ್ಬರು ಯುವಕರು ವಶಕ್ಕೆ

ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಇಬ್ಬರು ಯುವಕರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿರುವುದಾಗಿ ತಿಳಿದು ಬಂದಿದೆ. ತನಿಖೆಯ ನಂತರವೇ ಘಟನೆಯ ನಿಜಸ್ವರೂಪ ಬಹಿರಂಗವಾಗಲಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಘಟನಾ ಸ್ಥಳಕ್ಕೆ ವಿಜಯನಗರ ಜಿಲ್ಲಾ ಎಸ್‌ಪಿ ಜಾಹ್ನವಿ, ಡಿವೈಎಸ್‌ಪಿ ಮಲ್ಲೇಶ್ ದೊಡ್ಡಮನಿ ಹಾಗೂ ಸಿಪಿಐ ವಿಕಾಸ್ ಲಮಾಣಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಮೃತೆಯ ಪೋಷಕರು ಠಾಣೆಗೆ ಆಗಮಿಸಿ ದೂರು ಸಲ್ಲಿಸಲು ಮುಂದಾಗಿದ್ದಾರೆ. ಪ್ರಕರಣ ದಾಖಲಾಗಿದ ಬಳಿಕ ಹೆಚ್ಚಿನ ಮಾಹಿತಿ ಹೊರಬೀಳುವ ಸಾಧ್ಯತೆ ಇದೆ.

ಮಂಡ್ಯದ ಬಲಮುರಿಯಲ್ಲಿ ದುರಂತ: ಕಾವೇರಿ ನದಿಯಲ್ಲಿ ಮುಳುಗಿ ಟೆಕ್ ಕಂಪನಿ ಉದ್ಯೋಗಿಗಳಿಬ್ಬರ ಸಾವು

ಮಂಡ್ಯ: ಶ್ರೀರಂಗಪಟ್ಟಣ ತಾಲೂಕಿನ ಬಲಮುರಿ ಪ್ರವಾಸಿ ತಾಣದಲ್ಲಿ ಕಾವೇರಿ ನದಿಯಲ್ಲಿ ಈಜಲು ಹೋಗಿದ್ದ ಇಬ್ಬರು ಯುವಕರು ನೀರುಪಾಲಾದ ಘಟನೆ ಆತಂಕ ಮೂಡಿಸಿದೆ. ಮೃತಪಟ್ಟವರು ಮೈಸೂರಿನ ಕೈಗಾರಿಕಾ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಯುವಕರು ಎಂಬುದು ತಿಳಿದುಬಂದಿದೆ.

ಚಾಮರಾಜನಗರ ಜಿಲ್ಲೆಯ ತಮರವಾಡಿ ಗ್ರಾಮದ ಮೊಹನ್ ಕುಮಾರ್ (21) ಮತ್ತು ಮೈಸೂರಿನ ಕೆಳಹಳ್ಳಿ ಗ್ರಾಮದ ರವಿಚಂದ್ರ (21) ಮೃತ ಯುವಕರು. ಇಬ್ಬರೂ ಐಟಿಐ ಮುಗಿಸಿ ಬೆಳಗೊಳ ಕೈಗಾರಿಕಾ ಪ್ರದೇಶದ ಕೇನ್ಸ್ ಟೆಕ್ನಾಲಜಿಯಲ್ಲಿ ಉದ್ಯೋಗದಲ್ಲಿದ್ದರು.

ಸ್ನೇಹಿತ ವಿಕಾಸ್ ಜೊತೆ ಮೂವರು ಬಲಮುರಿಗೆ ಬಂದಿದ್ದ ವೇಳೆ ಕಾವೇರಿ ನದಿಗೆ ಇಳಿದ ಇಬ್ಬರು ಆಳವಾದ ನೀರಿನಲ್ಲಿ ಸಿಲುಕಿ ಮುಳುಗಿದ್ದಾರೆ ಎನ್ನಲಾಗಿದೆ.

ಘಟನೆ ಗಮನಿಸಿದ ವಿಕಾಸ್ ತಕ್ಷಣ ಸ್ಥಳೀಯ ರೈತರ ನೆರವಿನಿಂದ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೆಆರ್‌ಎಸ್ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು.

ಸ್ಥಳೀಯ ಈಜುಗಾರರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ನಡೆಸಿದ ಕಾರ್ಯಾಚರಣೆಯಲ್ಲಿ ಇಬ್ಬರ ಶವಗಳನ್ನು ಹೊರತೆಗೆಯಲಾಗಿದೆ. ಬಳಿಕ ಮೃತದೇಹಗಳನ್ನು ಮೈಸೂರಿನ ಕೆಆರ್ ಆಸ್ಪತ್ರೆ ಶವಾಗಾರಕ್ಕೆ ರವಾನಿಸಲಾಗಿದೆ.

ಘಟನೆ ಸಂಬಂಧ ಕೆಆರ್‌ಎಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಕೋವಿಡ್ ಗಿಂತ ಡೆಡ್ಲಿ ಎಬೋಲಾ ಭೀತಿ: ಭಾರತದಲ್ಲಿ ಹೈ ಅಲರ್ಟ್, ಏರ್ ಪೋರ್ಟ್ ಗಳಲ್ಲಿ ಕಟ್ಟುನಿಟ್ಟಿನ ತಪಾಸಣೆ

ನವದೆಹಲಿ/ಬೆಂಗಳೂರು: ಆಫ್ರಿಕಾದ ಹಲವು ಭಾಗಗಳಲ್ಲಿ ಎಬೋಲಾ ವೈರಸ್‌ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಭಾರತದಲ್ಲೂ ಕೇಂದ್ರ ಸರ್ಕಾರ ಕಟ್ಟೆಚ್ಚರ ವಹಿಸಲು ಸೂಚನೆ ನೀಡಿದೆ. ಕೋವಿಡ್‌ಗಿಂತಲೂ ಹೆಚ್ಚು ಅಪಾಯಕಾರಿ ಎಂದು ಪರಿಗಣಿಸಲ್ಪಡುವ ಎಬೋಲಾ ವೈರಸ್‌ ಹಾವಳಿ ಹಿನ್ನೆಲೆ ರಾಷ್ಟ್ರ ರಾಜಧಾನಿ ನವದೆಹಲಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸೇರಿದಂತೆ ದೇಶದ ಪ್ರಮುಖ ಏರ್‌ಪೋರ್ಟ್‌ಗಳಲ್ಲಿ ಕಟ್ಟುನಿಟ್ಟಿನ ತಪಾಸಣೆ ಆರಂಭಿಸಲಾಗಿದೆ.

ಹೈ-ರಿಸ್ಕ್‌ ದೇಶಗಳಿಂದ ಆಗಮಿಸುವ ಪ್ರಯಾಣಿಕರಿಗೆ ವಿಶೇಷ ಮಾರ್ಗಸೂಚಿಗಳನ್ನು ಜಾರಿಗೊಳಿಸಲಾಗಿದ್ದು, ಪ್ರಯಾಣದ ಹಿನ್ನೆಲೆ ಹಾಗೂ ಆರೋಗ್ಯ ಮಾಹಿತಿ ಕಡ್ಡಾಯವಾಗಿ ದಾಖಲಿಸಿಕೊಳ್ಳಲಾಗುತ್ತಿದೆ.

ಇದೇ ವೇಳೆ ದೆಹಲಿಯಲ್ಲಿ ನಡೆಯಬೇಕಿದ್ದ ಭಾರತ-ಆಫ್ರಿಕಾ ಒಕ್ಕೂಟದ ಶೃಂಗಸಭೆಯನ್ನು ಮುನ್ನೆಚ್ಚರಿಕಾ ಕ್ರಮವಾಗಿ ಮುಂದೂಡಲಾಗಿದೆ ಎಂದು ವಿದೇಶಾಂಗ ಸಚಿವಾಲಯ ಮಾಹಿತಿ ನೀಡಿದೆ.

ಈ ಬೆಳವಣಿಗೆಯ ಬೆನ್ನಲ್ಲೇ ರಾಜ್ಯ ಸರ್ಕಾರಗಳು ಮತ್ತು ಆರೋಗ್ಯ ಇಲಾಖೆಗಳು ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಕೇಂದ್ರ ಸರ್ಕಾರ ಸೂಚಿಸಿದೆ.

ರಾಜ್ಯ ಆರೋಗ್ಯ ಇಲಾಖೆಗೆ ನೀಡಿರುವ ಪ್ರಮುಖ ಸೂಚನೆಗಳು:

  • ಕ್ವಾರಂಟೈನ್‌ ಕೇಂದ್ರಗಳನ್ನು ಗುರುತಿಸುವುದು
  • ಐಸೋಲೇಷನ್‌ ಸೌಲಭ್ಯ ಹೊಂದಿದ ಪ್ರತ್ಯೇಕ ಕೇಂದ್ರಗಳನ್ನು ಸಿದ್ಧಪಡಿಸುವುದು
  • ಹೆಲ್ತ್‌ ಸ್ಕ್ರೀನಿಂಗ್‌ಗಾಗಿ ಹೆಚ್ಚುವರಿ ಸಿಬ್ಬಂದಿ ನಿಯೋಜನೆ
  • ಶಂಕಿತ ಪ್ರಕರಣಗಳನ್ನು ಆಸ್ಪತ್ರೆಗೆ ಸಾಗಿಸಲು ಅಂಬುಲೆನ್ಸ್‌ ವ್ಯವಸ್ಥೆ
  • ಎಬೋಲಾ ಚಿಕಿತ್ಸೆ ಮತ್ತು ನಿರ್ವಹಣೆ ಕುರಿತು ಆರೋಗ್ಯ ಕಾರ್ಯಕರ್ತರಿಗೆ ತರಬೇತಿ ನೀಡುವುದು

ವಿಮಾನ ನಿಲ್ದಾಣಗಳಿಗೆ ಹೊರಡಿಸಿರುವ ಮಾರ್ಗಸೂಚಿಗಳು:

  • ಟ್ರಿಪಲ್‌ ಲೇಯರ್‌ ಮಾಸ್ಕ್‌ ಧರಿಸುವುದು ಕಡ್ಡಾಯ
  • ಹ್ಯಾಂಡ್‌ ಗ್ಲೌಸ್‌ ಬಳಕೆ
  • ಸ್ಯಾನಿಟೈಸರ್‌ ಕಡ್ಡಾಯವಾಗಿ ಇಟ್ಟುಕೊಳ್ಳುವುದು
  • ಶಂಕಿತ ಪ್ರಕರಣ ಪತ್ತೆಯಾದ ಕೂಡಲೇ ವರದಿ ಸಲ್ಲಿಸುವುದು
  • ಪ್ರಯಾಣಿಕರ ಟ್ರಾವೆಲ್‌ ಹಿಸ್ಟರಿ ದಾಖಲಿಸುವುದು
  • ಸೆಲ್ಫ್‌ ಡಿಕ್ಲರೇಷನ್‌ ಫಾರ್ಮ್‌ ಭರ್ತಿ ಮಾಡಿಸುವುದು
  • ಎಬೋಲಾ ಪೀಡಿತ ದೇಶಗಳಿಂದ ಬಂದವರ ವಿವರ ಸಂಗ್ರಹಣೆ

ಎಬೋಲಾ ಸೋಂಕಿತರಿಗೆ ಐಸೋಲೇಷನ್‌ ಕ್ರಮಗಳು:

  • ಪ್ರತ್ಯೇಕ ಕೊಠಡಿಯಲ್ಲಿ ಚಿಕಿತ್ಸೆ
  • ಬಾತ್‌ರೂಮ್‌ ಹೊಂದಿರುವ ಪ್ರತ್ಯೇಕ ಕೊಠಡಿಯಲ್ಲಿ ಇರಿಸುವುದು
  • ಕೊಠಡಿಗೆ ಪ್ರವೇಶಿಸುವ ಆರೋಗ್ಯ ಸಿಬ್ಬಂದಿಗೆ ಪಿಪಿಇ ಕಿಟ್‌ ಕಡ್ಡಾಯ
  • ಪ್ರತಿ ಎರಡು ಗಂಟೆಗೆ ಆಮ್ಲಜನಕ ಮಟ್ಟ ಪರೀಕ್ಷೆ
  • ನಿಯಮಿತ ಕಾರ್ಡಿಯಾಕ್‌ ಮಾನಿಟರಿಂಗ್‌

ಹೈ-ರಿಸ್ಕ್‌ ದೇಶಗಳಿಂದ ಬಂದ ಪ್ರಯಾಣಿಕರಿಗೆ ಸೂಚನೆಗಳು:

  • 21 ದಿನಗಳ ಒಳಗೆ ಯಾವುದೇ ರೋಗ ಲಕ್ಷಣ ಕಂಡುಬಂದರೆ ತಕ್ಷಣ ಆರೋಗ್ಯ ಇಲಾಖೆಗೆ ಮಾಹಿತಿ ನೀಡುವುದು
  • ಜ್ವರ, ವಾಂತಿ, ದೌರ್ಬಲ್ಯ ಸೇರಿ ಯಾವುದೇ ಲಕ್ಷಣ ಕಂಡರೂ ವೈದ್ಯರನ್ನು ಸಂಪರ್ಕಿಸುವುದು
  • ಪ್ರಯಾಣದ ಸಂಪೂರ್ಣ ಮಾಹಿತಿ ಆರೋಗ್ಯ ಅಧಿಕಾರಿಗಳಿಗೆ ನೀಡುವುದು
  • ವಿಮಾನ ನಿಲ್ದಾಣ ತಪಾಸಣೆಯ ನಂತರ ಲಕ್ಷಣ ಕಂಡುಬಂದರೆ ಕಡ್ಡಾಯವಾಗಿ ಪರೀಕ್ಷೆ ಮಾಡಿಸಿಕೊಳ್ಳುವುದು

ಆರೋಗ್ಯ ತಜ್ಞರ ಪ್ರಕಾರ, ಎಬೋಲಾ ವೈರಸ್‌ ಸೋಂಕಿನ ಮರಣ ಪ್ರಮಾಣ ಸರಾಸರಿ ಶೇ.50ರಷ್ಟಿದ್ದು, ಕೆಲ ಸಂದರ್ಭಗಳಲ್ಲಿ ಇದು ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯೂ ಇದೆ. ಹೀಗಾಗಿ ಮುನ್ನೆಚ್ಚರಿಕಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸಾರ್ವಜನಿಕರಿಗೆ ಸೂಚಿಸಲಾಗಿದೆ.

ತಮಿಳುನಾಡು ಸಚಿವ ಸಂಪುಟ ವಿಸ್ತರಣೆ: IUML ಮತ್ತು VCK ಪಕ್ಷಗಳ ತಲಾ ಒಬ್ಬರಿಗೆ ಸಚಿವ ಸ್ಥಾನ

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ನೇತೃತ್ವದ ಟಿವಿಕೆ ಸರ್ಕಾರದಲ್ಲಿ ಮತ್ತೊಮ್ಮೆ ಸಚಿವ ಸಂಪುಟ ವಿಸ್ತರಣೆ ನಡೆದಿದ್ದು, ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (IUML) ಮತ್ತು ವಿದುಥಲೈ ಚಿರುತ್ತೈಗಲ್ ಕಚ್ಚಿ (VCK) ಪಕ್ಷಗಳ ನಾಯಕರನ್ನು ಸಚಿವರಾಗಿ ಸೇರಿಸಿಕೊಳ್ಳಲಾಗಿದೆ.

ಚೆನ್ನೈನ ಲೋಕ ಭವನದಲ್ಲಿ ಇಂದು ನಡೆದ ಸರಳ ಸಮಾರಂಭದಲ್ಲಿ, ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ನಾಯಕ ಹಾಗೂ ಪಾಪನಾಶಂ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಂ. ಶಾಹಜಹಾನ್ ಮತ್ತು ವಿಸಿಕೆ ಪಕ್ಷದ ನಾಯಕ, ಟಿಂಡಿವನಂ ಕ್ಷೇತ್ರದ ಶಾಸಕ ವನ್ನಿ ಅರಸು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಸಚಿವ ಸಂಪುಟ ಹಂಚಿಕೆಯಂತೆ ಎ.ಎಂ. ಶಾಹಜಹಾನ್ ಅವರಿಗೆ ಅಲ್ಪಸಂಖ್ಯಾತರ ಕಲ್ಯಾಣ ಖಾತೆ ನೀಡಲಾಗಿದ್ದು, ವಕ್ಫ್ ಬೋರ್ಡ್‌ನ ಜವಾಬ್ದಾರಿಯನ್ನೂ ವಹಿಸಲಾಗಿದೆ. ಇನ್ನು ವನ್ನಿ ಅರಸು ಅವರಿಗೆ ಸಾಮಾಜಿಕ ನ್ಯಾಯ ಖಾತೆ ನೀಡಲಾಗಿದ್ದು, ಅದರ ಅಡಿಯಲ್ಲಿ ಆದಿ ದ್ರಾವಿಡರ ಕಲ್ಯಾಣ ಹಾಗೂ ಹಿಲ್ ಟ್ರೈಬ್ಸ್ ವೆಲ್ಫೇರ್ ಇಲಾಖೆಗಳು ಸೇರಿವೆ.

ಈ ಹೊಸ ವಿಸ್ತರಣೆಯೊಂದಿಗೆ ಟಿವಿಕೆ ಸರ್ಕಾರದಲ್ಲಿ ಮೈತ್ರಿ ಪಕ್ಷಗಳ ಪ್ರಾತಿನಿಧ್ಯ ಮತ್ತಷ್ಟು ಬಲಗೊಂಡಿದೆ. ಇದಕ್ಕೂ ಮೊದಲು ನಡೆದ ಸಚಿವ ಸಂಪುಟ ವಿಸ್ತರಣೆಯಲ್ಲಿ 23 ಮಂದಿಯನ್ನು ಸಚಿವರಾಗಿ ನೇಮಕ ಮಾಡಲಾಗಿತ್ತು. ಆ ವೇಳೆ ಕಾಂಗ್ರೆಸ್ ಪಕ್ಷವು ಸುಮಾರು 59 ವರ್ಷಗಳ ಬಳಿಕ ತಮಿಳುನಾಡು ಸರ್ಕಾರದಲ್ಲಿ ಮೊದಲ ಬಾರಿಗೆ ಸ್ಥಾನ ಪಡೆದುಕೊಂಡಿತ್ತು.

error: Content is protected !!