Home Blog

ಗದಗ: ದೇವು ಫಿಟ್ನೆಸ್‌ನಲ್ಲಿ “ಅಪ್ಪು” ಜನ್ಮದಿನಕ್ಕೆ ವಿಶೇಷ ಸ್ಮರಣೆ!

0

ಗದಗ: ನಗರದ ದೇವು ಫಿಟ್ನೆಸ್ನಲ್ಲಿ ಇತ್ತೀಚೆಗೆ ವ್ಯಾಯಾಮ ಶಾಲೆಯ ಎಲ್ಲಾ ವಿದ್ಯಾರ್ಥಿಗಳು ದಿವಂಗತ ಪುನೀತ್ ರಾಜ್‍ಕುಮಾರ್ ಅವರ ಜನ್ಮ ದಿನದ ಪ್ರಯುಕ್ತ ಹುಟ್ಟುಹಬ್ಬವನ್ನು ಸ್ಮರಣೀಯವಾಗಿ ಆಚರಿಸಿದರು.

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಪುನೀತ್ ರಾಜ್ ಕುಮಾರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಕೇಕ್ ಕತ್ತರಿಸಿ ಗೌರವ ಸಲ್ಲಿಸಿದರು. ಅವರ ಜೀವನ ಮೌಲ್ಯಗಳು, ಸಮಾಜ ಸೇವೆ ಮತ್ತು ಯುವಕರಿಗೆ ನೀಡಿದ ಪ್ರೇರಣೆಗಳನ್ನು ಸ್ಮರಿಸಲಾಯಿತು.

ಕಾರ್ಯಕ್ರಮದಲ್ಲಿ ತರಬೇತುದಾರರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿ, ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಪ್ರತಿಜ್ಞೆ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ದೇವು, ಪರಶುರಾಮ ಸುಂಕದ, ದೇವು ಮೇದಾರ ಹಾಗೂ ರವಿ ಭಂಡಾರಿ ಇದ್ದರು.

50,000 ಸಿಲಿಂಡರ್ ಅಗತ್ಯ: ಕೇಂದ್ರಕ್ಕೆ ಮತ್ತೊಮ್ಮೆ ಪತ್ರ ಬರೆದ ಸಿಎಂ ಸಿದ್ದರಾಮಯ್ಯ!

ಬೆಂಗಳೂರು: ದೇಶದಾದ್ಯಾಂತ ಸಿಲಿಂಡರ್ ಕೊರತೆಯ ಸಮಸ್ಯೆ ಮುಂದುವರೆದಿದ್ದು, ಕರ್ನಾಟಕದಲ್ಲಿ ಹೋಟೆಲ್ ಮತ್ತು ರೆಸ್ಟೋರೆಂಟ್ ಮಾಲೀಕರು ದಿನನಿತ್ಯ ಪರದಾಡುವ ಸ್ಥಿತಿಗೆ ತಲುಪಿದ್ದಾರೆ.

ಒಂದ್ಕಡೆ ಗೃಹಬಳಕೆ ಸಿಲಿಂಡರ್ ಪಡೆಯಲು ಜನರು ಮುಗಿಬಿದ್ದರೆ, ಮತ್ತೊಂದ್ಕಡೆ ವಾಣಿಜ್ಯ ಬಳಕೆಗಾಗಿ ಸಿಲಿಂಡರ್ ಲಭ್ಯವಿಲ್ಲದ ಕಾರಣ ಉದ್ಯಮಗಳು ಮುಚ್ಚುವ ಪರಿಸ್ಥಿತಿ ಎದುರಾಗುತ್ತಿದೆ.

ಈ ಹಿನ್ನೆಲೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತೊಮ್ಮೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಪೆಟ್ರೋಲ್ ಮತ್ತು ಎಲ್‌ಪಿಜಿ ವಿಭಾಗದ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪೂಣಿಯಾ ಅವರಿಗೆ ಬರೆದ ಪತ್ರದಲ್ಲಿ, ರಾಜ್ಯಕ್ಕೆ ತುರ್ತು ಅಗತ್ಯವಿರುವ ಸಿಲಿಂಡರ್ ಸಂಖ್ಯೆ 50,000 ಎಂದು ಉಲ್ಲೇಖಿಸಲಾಗಿದೆ. “ಈಗಾಗಲೇ ದಿನಕ್ಕೆ 1,000 ಸಿಲಿಂಡರ್ ಮಾತ್ರ ಪೂರೈಸಲು ಸಾಧ್ಯವಾಗಿದೆ. ಹೀಗಾಗಿ ಹೋಟೆಲ್ಗಳು, ಪಿಜಿ ಅಂಗಡಿಗಳು, ಅಡುಗೆ ತಯಾರಿಕಾ ಸಂಸ್ಥೆಗಳು ಮುಚ್ಚುವ ಪರಿಸ್ಥಿತಿ ಎದುರಾಗುತ್ತಿದೆ,” ಎಂದು ಸಿಎಂ ತಿಳಿಸಿದ್ದಾರೆ.

ವಿದ್ಯಾರ್ಥಿಗಳು, ಐಟಿ ನೌಕರರು, ರೈತರು, ಡೈರಿ ಉತ್ಪಾದಕರು ಸೇರಿದಂತೆ ಅನೇಕ ಜನರು ಆತಿಥ್ಯ ವಲಯದ ಮೇಲೆ ಅವಲಂಬಿತರಾಗಿದ್ದಾರೆ. ಭಾರತಕ್ಕೆ ಬಂದ 2 ಟ್ಯಾಂಕರ್ಗಳ LPG ಅನ್ನು ಸಮರ್ಪಕವಾಗಿ ಹಂಚಿಕೆ ಮಾಡಿ. ರಾಜ್ಯದ ಲಭ್ಯತೆ ಸ್ಥಿರಗೊಳಿಸಲು ತಕ್ಷಣ ಕ್ರಮ ಕೈಗೊಳ್ಳಿ ಎಂದು ಸಿಎಂ ಸಿದ್ದರಾಮಯ್ಯ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

 

ಬಿಸಿಲಿನಲ್ಲಿ ತಣ್ಣೀರು ಕುಡಿಯುವುದರಿಂದ ಆರೋಗ್ಯಕ್ಕೆ ಹಾನಿ!? ತಜ್ಞರಿಂದಲೇ ನಿಜಾಂಶ ತಿಳಿದುಕೊಳ್ಳಿ!

0

ಬೇಸಿಗೆ ಹಿಮ್ಮುಖವಾಗಿ ತಂಪಾದ ನೀರು ಕುಡಿಯುವುದು ಸಾಮಾನ್ಯ ಅಭ್ಯಾಸವಾಗಿದ್ದರೂ, ಇದರಿಂದ ಕೆಲವು ಆರೋಗ್ಯ ಸಮಸ್ಯೆಗಳು ಉಂಟಾಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.

ಬಿಸಿಲಿನ ತೀವ್ರತೆಯಿಂದ ಮುಕ್ತಿ ಪಡೆಯಲು ತಕ್ಷಣ ತಂಪು ನೀರನ್ನು ಕುಡಿಯುವ ಅಭ್ಯಾಸ ದೇಹದ ಮೇಲೆ ವಿಭಿನ್ನ ರೀತಿಯಲ್ಲಿ ಪರಿಣಾಮ ಬೀರುತ್ತದೆ.

ತಜ್ಞರ ಪ್ರಕಾರ, ತುಂಬಾ ತಂಪಾದ ನೀರು ಕುಡಿಯುವುದರಿಂದ ಜೀರ್ಣಕ್ರಿಯೆ ಮೇಲೆ ಪರಿಣಾಮ ಬೀರಬಹುದು. ಆಹಾರ ಸರಿಯಾಗಿ ಜೀರ್ಣವಾಗದೇ ಹೊಟ್ಟೆ ಭಾರವಾಗುವುದು, ಗ್ಯಾಸ್ಟ್ರಿಕ್ ಸಮಸ್ಯೆಗಳು ಕಂಡುಬರಬಹುದು. ಜೊತೆಗೆ ಗಂಟಲು ಕೆರೆತ ಅಥವಾ ಶೀತಕ್ಕೆ ಒಳಗಾಗಬಹುದು. ಬೇಸಿಗೆಯಲ್ಲಿ ದೇಹ ಬಿಸಿಯಾಗಿರುವ ಸಮಯದಲ್ಲಿ ಏಕಾಏಕಿ ತಣ್ಣೀರು ಕುಡಿಯುವುದರಿಂದ ದೇಹದ ತಾಪಮಾನ ಏಕಾಏಕಿ ಬದಲಾವಣೆಯಾಗುತ್ತದೆ. ಇದರಿಂದ ತಲೆನೋವು, ಸುಸ್ತು, ರಕ್ತ ಸಂಚಾರದ ಮೇಲೆ ಪರಿಣಾಮ, ದೀರ್ಘಕಾಲದಲ್ಲಿ ಆರೋಗ್ಯ ಸಮಸ್ಯೆಗಳು ಹೆಚ್ಚಾಗುವ ಸಾಧ್ಯತೆ ಇದೆ.

ಯಾರು ತಣ್ಣೀರು ಕುಡಿಯಬಾರದು?

  • ಜೀರ್ಣಕ್ರಿಯೆ ಸಮಸ್ಯೆಯಿರುವವರು
  • ಗಂಟಲು ಅಥವಾ ಸೈನಸ್ ಸಮಸ್ಯೆ ಹೊಂದಿರುವವರು
  • ಹೆಚ್ಚು ಶೀತಕ್ಕೆ ಒಳಗಾಗುವವರು
  • ಸಣ್ಣ ಮಕ್ಕಳು ಮತ್ತು ವೃದ್ಧರು
  • ಹೃದಯ ಅಥವಾ ರಕ್ತದ ಒತ್ತಡ ಸಮಸ್ಯೆ ಇರುವವರು

ತಣ್ಣೀರು ಕುಡಿಯುವ ಮುನ್ನ ಪಾಲಿಸಬೇಕಾದ ಮುನ್ನೆಚ್ಚರಿಕೆಗಳು:

  • ತುಂಬಾ ಐಸ್ ಅಥವಾ ಅತಿಯಾಗಿ ತಂಪಾದ ನೀರನ್ನು ಕುಡಿಯಬೇಡಿ
  • ಬಿಸಿಲಿನಿಂದ ಬಂದ ತಕ್ಷಣ ನೀರು ಕುಡಿಯದೆ, ಕೆಲವು ನಿಮಿಷ ವಿಶ್ರಾಂತಿ ತೆಗೆದುಕೊಳ್ಳಿ
  • ದಿನವಿಡೀ ನೀರನ್ನು ಸ್ವಲ್ಪ-ಸ್ವಲ್ಪ ಕುಡಿಯಿರಿ
  • ಗಂಟಲು ನೋವು ಅಥವಾ ಇತರ ಸಮಸ್ಯೆಗಳಿದ್ದರೆ ತಣ್ಣೀರು ಕುಡಿಯಬೇಡಿ

 

‘ನಮ್ಮ ಮೆಟ್ರೋ’ 15 ವರ್ಷದ ಇತಿಹಾಸದಲ್ಲಿ ಹೊಸ ಮೈಲಿಗಲ್ಲು!

ಬೆಂಗಳೂರು: ಯುಗಾದಿ ಹಿಂದಿನ ದಿನ, ನಮ್ಮ ಮೆಟ್ರೋದಲ್ಲಿ 10.73 ಲಕ್ಷ ಜನರು ಪ್ರಯಾಣಿಸಿ 15 ವರ್ಷಗಳ ಮೆಟ್ರೋ ಇತಿಹಾಸದಲ್ಲಿ ಹೊಸ ದಾಖಲೆ ಸೃಷ್ಟಿಸಿದ್ದಾರೆ.

ನಾಲ್ಕು ದಿನದ ನಿರಂತರ ರಜೆಯ ಕಾರಣ ಮೆಟ್ರೋ ಪ್ರಯಾಣಿಕರ ಸಂಖ್ಯೆ ಬೃಹತ್ ಪ್ರಮಾಣಕ್ಕೆ ಏರಿಕೆಯಾಗಿದ್ದು, 10 ಲಕ್ಷಕ್ಕೂ ಹೆಚ್ಚು ಜನರು ಒಂದೇ ದಿನ ಸಂಚರಿಸಿದ್ದಾರೆ. ಈ ಸಂಖ್ಯೆಯಲ್ಲಿ 4 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ಸ್ಮಾರ್ಟ್‌ಕಾರ್ಡ್‌ ಬಳಕೆ ಮಾಡಿಕೊಂಡಿದ್ದಾರೆ.

ಈ ಸಾಧನೆಯೊಂದಿಗೆ ಬೆಂಗಳೂರು ಮೆಟ್ರೋ ನಗರ ಸಾರಿಗೆ ವ್ಯವಸ್ಥೆಯಲ್ಲಿ ಮಹತ್ವದ ಮೈಲಿಗಲ್ಲು ತಲುಪಿದ್ದು, ನಗರಿಗರಿಗೆ ಬೃಹತ್ ಮೆಟ್ರೋ ಸೇವೆ ನೀಡುವ ಸಾಮರ್ಥ್ಯವನ್ನು ಪುನರುಚ್ಚರಿಸಿದೆ.

ಇರಾನ್–ಇಸ್ರೇಲ್ ಸಂಘರ್ಷ: ಮಾ.28ರವರೆಗೆ 9 ಗಲ್ಫ್ ರಾಷ್ಟ್ರಗಳ ಏರ್‌ಸ್ಪೇಸ್ ಪ್ರವೇಶಿಸದಂತೆ ನಿರ್ಬಂಧ!

0

ನವದೆಹಲಿ: ಮಧ್ಯಪ್ರಾಚ್ಯದಲ್ಲಿ ಉಲ್ಬಣಗೊಂಡಿರುವ ಉದ್ವಿಗ್ನತೆ ಹಿನ್ನೆಲೆ, ನಾಗರಿಕ ವಿಮಾನಯಾನ ಸಚಿವಾಲಯ ಮಹತ್ವದ ನಿರ್ಧಾರ ಕೈಗೊಂಡಿದ್ದು, ಮಾರ್ಚ್ 28ರವರೆಗೆ 9 ಗಲ್ಫ್ ರಾಷ್ಟ್ರಗಳ ವಾಯುಪ್ರದೇಶ ಪ್ರವೇಶಿಸದಂತೆ ವಿಮಾನಯಾನ ಕಂಪನಿಗಳಿಗೆ ಸೂಚನೆ ನೀಡಿದೆ.

ಡಿಜಿಸಿಎ ಮಾರ್ಗಸೂಚಿಯಂತೆ, ಬಹ್ರೇನ್, ಇರಾನ್, ಇರಾಕ್, ಇಸ್ರೇಲ್, ಜೋರ್ಡಾನ್, ಕುವೈತ್, ಲೆಬನಾನ್, ಕತಾರ್ ಹಾಗೂ ಯುನೈಟೆಡ್ ಅರಬ್ ಎಮಿರೇಟ್ಸ್ ವಾಯುಪ್ರದೇಶಗಳನ್ನು ತಾತ್ಕಾಲಿಕವಾಗಿ ತಪ್ಪಿಸುವಂತೆ ಸೂಚಿಸಲಾಗಿದೆ.

ಇರಾನ್–ಇಸ್ರೇಲ್ ನಡುವಿನ ಸಂಘರ್ಷ ಹಾಗೂ ಅಮೆರಿಕದ ಭಾಗವಹಿಸುವಿಕೆಯಿಂದ ಹೆಚ್ಚುತ್ತಿರುವ ಉದ್ವಿಗ್ನತೆ ಹಿನ್ನೆಲೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ. ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಈ ಪ್ರದೇಶಗಳನ್ನು ಹೈರಿಸ್ಕ್ ವಲಯವಾಗಿ ಗುರುತಿಸಲಾಗಿದೆ.

ಇದಲ್ಲದೆ, ಇರಾನ್, ಇಸ್ರೇಲ್, ಲೆಬನಾನ್, ಇರಾಕ್, ಸೌದಿ ಅರೇಬಿಯಾ, ಯುಎಇ, ಕತಾರ್, ಬಹ್ರೇನ್, ಕುವೈತ್, ಓಮನ್ ಮತ್ತು ಜೋರ್ಡಾನ್ ಸೇರಿದಂತೆ 11 ರಾಷ್ಟ್ರಗಳಲ್ಲಿ 32,000 ಅಡಿ ಎತ್ತರಕ್ಕಿಂತ ಕಡಿಮೆ ಹಾರಾಟಗಳನ್ನು ತಪ್ಪಿಸಲು ಸೂಚಿಸಲಾಗಿದೆ.

ಈ ಸೂಚನೆಯ ಪರಿಣಾಮವಾಗಿ ಭಾರತೀಯ ವಿಮಾನಯಾನ ಸಂಸ್ಥೆಗಳ ಕಾರ್ಯಾಚರಣೆಯಲ್ಲಿ ವ್ಯತ್ಯಯ ಉಂಟಾಗಿದೆ. ಈಗಾಗಲೇ ಹಲವು ವಿಮಾನಗಳು ರದ್ದಾಗಿದ್ದು, ಇನ್ನೂ ಕೆಲವು ವಿಮಾನಗಳ ಮಾರ್ಗ ಬದಲಾವಣೆ ಮಾಡಲಾಗಿದೆ. ಇದರಿಂದ ಭಾರತದಿಂದ ಯುರೋಪ್, ಉತ್ತರ ಅಮೆರಿಕಾ ಹಾಗೂ ಮಧ್ಯಪ್ರಾಚ್ಯದ ಕಡೆ ಪ್ರಯಾಣಿಸುವ ಪ್ರಯಾಣಿಕರ ಪ್ರಯಾಣ ಸಮಯ ಹೆಚ್ಚಾಗುವ ಸಾಧ್ಯತೆ ಇದೆ.

ಪ್ರಸ್ತುತ ಪರಿಸ್ಥಿತಿಯನ್ನು ಅವಲೋಕಿಸಿ ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

15 ದಿನದ ಹಸುಗೂಸು ಸಾವು ಪ್ರಕರಣ: ವಿಷ ನೀಡಿ ಕೊಂದ ತಂದೆ ಬಂಧನ!

ಬೆಳಗಾವಿ: ಹೆಣ್ಣುಮಗು ಜನಿಸಿದ ಕಾರಣಕ್ಕೆ 15 ದಿನದ ಹಸುಗೂಸಿಗೆ ವಿಷವುಣಿಸಿ ಹತ್ಯೆ ಮಾಡಿದ ಆರೋಪದಡಿ ತಂದೆಯನ್ನು ಪೊಲೀಸರು ಬಂಧಿಸಿರುವ ದುರ್ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ.

ಬೆಳಗಾವಿ ತಾಲೂಕಿನ ಉಕ್ಕಡ ಗ್ರಾಮದಲ್ಲಿ ಮಾರ್ಚ್ 17ರಂದು ಈ ಘಟನೆ ನಡೆದಿದ್ದು, ಭೀಮರಾಯ ಚಿಪ್ಪಾಡೆ ಎಂಬಾತ ಬಂಧಿತ ಆರೋಪಿಯಾಗಿದ್ದಾನೆ. ಈ ಕುರಿತು ಮಗುವಿನ ತಾಯಿ ಶೀಲಾ ಕಾಕತಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.

ಮಾಹಿತಿಯ ಪ್ರಕಾರ, ಒಂದು ವರ್ಷದ ಹಿಂದೆ ಭೀಮರಾಯ ಮತ್ತು ಶೀಲಾ ವಿವಾಹವಾಗಿದ್ದು, ಇತ್ತೀಚೆಗೆ ಅವರಿಗೆ ಹೆಣ್ಣುಮಗು ಜನಿಸಿತ್ತು. ಆದರೆ ಗಂಡು ಮಗುವಿನ ಆಸೆ ಹೊಂದಿದ್ದ ಭೀಮರಾಯ, ಹೆಣ್ಣುಮಗು ಜನಿಸಿದ ಕಾರಣ ಅಸಮಾಧಾನಗೊಂಡಿದ್ದನು ಎನ್ನಲಾಗಿದೆ.

ಘಟನೆ ದಿನ ಪತ್ನಿಯ ತವರಿನಲ್ಲಿ ಇದ್ದ ಭೀಮರಾಯ, ಮಗುವನ್ನು ನೋಡಿ ತೆರಳಿದ ಕೆಲವೇ ಸಮಯದಲ್ಲಿ ಮಗು ಅಸ್ವಸ್ಥಗೊಂಡಿತ್ತು. ತಕ್ಷಣವೇ ಮಗುವನ್ನು ಬೆಳಗಾವಿಯ ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮಗು ಮೃತಪಟ್ಟಿದೆ.

ಪ್ರಾಥಮಿಕವಾಗಿ ಹತ್ತಿ ಬೆಳೆಗಳಿಗೆ ಬಳಸುವ ಕೀಟನಾಶಕವನ್ನು ಮಗುವಿಗೆ ನೀಡಲಾಗಿದೆ ಎಂಬ ಅನುಮಾನ ವ್ಯಕ್ತವಾಗಿತ್ತು. ಮರಣೋತ್ತರ ಪರೀಕ್ಷೆಯ ವರದಿ ಬಳಿಕ ಸಾವಿನ ನಿಖರ ಕಾರಣ ತಿಳಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದರು.

ಘಟನೆ ತಿಳಿಯುತ್ತಿದ್ದಂತೆಯೇ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಆರೋಪ ಎದುರಿಸುತ್ತಿದ್ದ ಭೀಮರಾಯ ಘಟನೆಯ ನಂತರ ಪರಾರಿಯಾಗಿದ್ದನು. ಬಳಿಕ ಪೊಲೀಸರು ಬಲೆ ಬೀಸಿ ಆರೋಪಿಯನ್ನು ಬಂಧಿಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಕಾಕತಿ ಪೊಲೀಸರು ಮುಂದಿನ ತನಿಖೆ ಮುಂದುವರಿಸಿದ್ದಾರೆ.

ರಸ್ತೆಯಲ್ಲಿ ಹಳೆಯ ವಾಹನ ಬಿಟ್ಟರೆ ಟೋಯಿಂಗ್ ಖಚಿತ: ಡಿಸಿಎಂ ಡಿಕೆ ಶಿವಕುಮಾರ್ ವಾರ್ನಿಂಗ್

ಬೆಂಗಳೂರು: ನಗರದಲ್ಲಿ ಎಲ್ಲೆಂದರಲ್ಲಿ ಹಳೆಯ ವಾಹನಗಳನ್ನು ನಿಲ್ಲಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಖಡಕ್ ಎಚ್ಚರಿಕೆ ನೀಡಿದ್ದಾರೆ.

ವಿಧಾನಸೌಧದಲ್ಲಿ ಜಿಬಿಎ ಐದು ನಗರ ಪಾಲಿಕೆಗಳ 2026-27ನೇ ಸಾಲಿನ ಬಜೆಟ್ ಸಿದ್ಧತೆ ಕುರಿತು ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ರಸ್ತೆಗಳಲ್ಲಿ ಹೆಚ್ಚು ಕಾಲ ನಿಲ್ಲಿಸಿರುವ ಹಳೆಯ ವಾಹನಗಳನ್ನು ಟೋಯಿಂಗ್ ಮಾಡಿ ನಿರ್ದಿಷ್ಟ ಸ್ಥಳಗಳಿಗೆ ಕೊಂಡೊಯ್ಯಲಾಗುವುದು. ಈ ಕಾರ್ಯಕ್ಕಾಗಿ ಬೆಳ್ಳಳ್ಳಿ, ಮಿಟಗಾನಹಳ್ಳಿ, ಸೊಂಡೆಕೊಪ್ಪ ಹಾಗೂ ಗಿಡ್ಡೇನಹಳ್ಳಿ ಪ್ರದೇಶಗಳಲ್ಲಿ ಜಾಗಗಳನ್ನು ಈಗಾಗಲೇ ಗುರುತಿಸಲಾಗಿದೆ. ನಗರದಲ್ಲಿ ಟ್ರಾಫಿಕ್ ನಿಯಂತ್ರಣಕ್ಕೆ ಇದು ಮಹತ್ವದ ಹೆಜ್ಜೆಯಾಗಲಿದೆ ಎಂದರು.

ಇನ್ನು ಮುಂದೆ ನಾನ್-ಪಾರ್ಕಿಂಗ್ ಪ್ರದೇಶಗಳಲ್ಲಿ ವಾಹನ ನಿಲ್ಲಿಸಿದರೂ ಕೂಡ ಟೋಯಿಂಗ್ ಕ್ರಮ ಜರುಗಲಿದೆ. ಪ್ರತಿಯೊಂದು ಕಾರ್ಪೊರೇಷನ್‌ಗೆ ಎರಡು ಟೋಯಿಂಗ್ ವಾಹನಗಳನ್ನು ಒದಗಿಸಲಾಗಿದ್ದು, ಈಗಾಗಲೇ ಅಗತ್ಯ ಸೂಚನೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ಬೀದಿ ಬದಿ ವ್ಯಾಪಾರ ಸಂಬಂಧ ಮಾತನಾಡಿದ ಅವರು, ವ್ಯಾಪಾರ ನಡೆಸಲು ನಿಗದಿತ ಸ್ಥಳಗಳನ್ನು ಗುರುತಿಸಲಾಗುವುದು. ನೋಂದಣಿ ಮಾಡಿಕೊಂಡವರಿಗೆ ಮಾತ್ರ ವ್ಯಾಪಾರ ಮಾಡಲು ಅವಕಾಶ ನೀಡಲಾಗುವುದು. ಐಡೆಂಟಿಟಿ ಕಾರ್ಡ್ ಹೊಂದಿರುವವರಿಗೆ ಮಾತ್ರ ಮಾರಾಟಕ್ಕೆ ಅನುಮತಿ ನೀಡುವ ಕ್ರಮ ಜಾರಿಯಾಗಲಿದೆ ಎಂದರು.

ಅದೇ ರೀತಿ, ನಗರದಲ್ಲಿ ಅನಧಿಕೃತವಾಗಿ ಫ್ಲೆಕ್ಸ್ ಅಳವಡಿಸುವವರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಲಾಗುವುದು. ಫ್ಲೆಕ್ಸ್ ಹಾಕುವವರಿಗೆ 50 ಸಾವಿರದಿಂದ 1 ಲಕ್ಷ ರೂಪಾಯಿ ವರೆಗೆ ದಂಡ ವಿಧಿಸಲಾಗುವುದು ಎಂದು ಎಚ್ಚರಿಸಿದರು.

ಬೀದಿ ಬದಿ ವ್ಯಾಪಾರ ಹಾಗೂ ಫುಟ್‌ಪಾತ್ ಸಮಸ್ಯೆ ನಿವಾರಣೆಗೆ ಹೊಸ ಪಾಲಿಸಿ ತರಲು ಯೋಚನೆ ನಡೆಯುತ್ತಿದೆ. ಪಾರ್ಕ್‌ಗಳಲ್ಲಿ ನಡೆಯುತ್ತಿರುವ ಅನಧಿಕೃತ ಚಟುವಟಿಕೆಗಳನ್ನು ತಡೆಗಟ್ಟಲು ಪಾರ್ಕ್ ಸಮಯ ನಿಗದಿ ಮಾಡುವುದಾಗಿ ತಿಳಿಸಿದರು.

ಒಟ್ಟಾರೆ, ಬೆಂಗಳೂರು ನಗರದಲ್ಲಿ ಟ್ರಾಫಿಕ್, ವ್ಯಾಪಾರ ಮತ್ತು ಸಾರ್ವಜನಿಕ ಶಿಸ್ತಿನ ನಿಯಂತ್ರಣಕ್ಕಾಗಿ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದೆ.

ಕೆಂಪೇಗೌಡ ಏರ್‌ಪೋರ್ಟ್‌ಗೆ ಜಾಗತಿಕ ಮನ್ನಣೆ: ಸತತ 3ನೇ ಬಾರಿ ಪ್ರಶಸ್ತಿ!

ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿಯಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತೊಂದು ಮಹತ್ವದ ಸಾಧನೆ ಮಾಡಿದೆ.

‘ಸ್ಕೈಟ್ರಾಕ್ಸ್ ವರ್ಲ್ಡ್ ಏರ್‌ಪೋರ್ಟ್ ಅವಾರ್ಡ್ಸ್ 2026’ರಲ್ಲಿ ಸತತ ಮೂರನೇ ಬಾರಿಗೆ ‘ಭಾರತ ಮತ್ತು ದಕ್ಷಿಣ ಏಷ್ಯಾದ ಅತ್ಯುತ್ತಮ ಪ್ರಾದೇಶಿಕ ವಿಮಾನ ನಿಲ್ದಾಣ’ ಎಂಬ ಗೌರವಕ್ಕೆ ಪಾತ್ರವಾಗಿದೆ.

ಈ ಪ್ರಶಸ್ತಿ ಕೆಂಪೇಗೌಡ ಏರ್‌ಪೋರ್ಟ್‌ನ್ನು ಪ್ರಮುಖ ಜಾಗತಿಕ ಪ್ರಯಾಣ ಕೇಂದ್ರಗಳಲ್ಲಿ ಒಂದಾಗಿ ಮತ್ತೊಮ್ಮೆ ಗುರುತಿಸಿದೆ. ವಿಶ್ವದ ವಿಮಾನ ನಿಲ್ದಾಣಗಳ ಶ್ರೇಯಾಂಕದಲ್ಲೂ ಗಮನಾರ್ಹ ಪ್ರಗತಿ ಸಾಧಿಸಿರುವ ಇದು, 48ನೇ ಸ್ಥಾನದಿಂದ 41ನೇ ಸ್ಥಾನಕ್ಕೆ ಏರಿಕೆ ಕಂಡಿದೆ. ಇದರೊಂದಿಗೆ ಅಗ್ರ 50 ವಿಮಾನ ನಿಲ್ದಾಣಗಳ ಪಟ್ಟಿಯಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ.

ವಿಮಾನ ನಿಲ್ದಾಣಗಳ ಶ್ರೇಷ್ಠತೆಯನ್ನು ಅಳೆಯುವ ಜಾಗತಿಕ ಮಾನದಂಡವಾಗಿರುವ ಸ್ಕೈಟ್ರಾಕ್ಸ್ ಅವಾರ್ಡ್ಸ್, ಚೆಕ್-ಇನ್, ಭದ್ರತೆ, ವಲಸೆ, ಚಿಲ್ಲರೆ ಸೇವೆಗಳು ಸೇರಿದಂತೆ ಹಲವು ಅಂಶಗಳಲ್ಲಿ ಗ್ರಾಹಕ ಅನುಭವವನ್ನು ಪರಿಗಣಿಸಿ ನೀಡಲಾಗುತ್ತದೆ. ಈ ಎಲ್ಲಾ ಕ್ಷೇತ್ರಗಳಲ್ಲಿ ಸ್ಥಿರ ಸಾಧನೆ ತೋರಿದ ಹಿನ್ನೆಲೆಯಲ್ಲಿ ಈ ಗೌರವ ಲಭಿಸಿದೆ.

ಇದರ ಜೊತೆಗೆ, ಕೆಂಪೇಗೌಡ ಏರ್‌ಪೋರ್ಟ್ ನಾಲ್ಕನೇ ಬಾರಿಗೆ ‘ವಿಶ್ವದ ಅತ್ಯುತ್ತಮ ಆಗಮನದ ವಿಮಾನ ನಿಲ್ದಾಣ’ ಎಂಬ ಮನ್ನಣೆಯನ್ನೂ ಪಡೆದುಕೊಂಡಿದೆ. ಟರ್ಮಿನಲ್ 2ಗೆ ಸ್ಕೈಟ್ರಾಕ್ಸ್‌ನಿಂದ ‘5-ಸ್ಟಾರ್’ ರೇಟಿಂಗ್ ದೊರೆತಿದ್ದು, ಇದು ಭಾರತದ ಮೊದಲ ಟರ್ಮಿನಲ್ ಎಂಬ ದಾಖಲೆ ನಿರ್ಮಿಸಿದೆ.

ಹಾಗೆಯೇ, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳ ಮಂಡಳಿಯ ಕಾರ್ಬನ್ ಮಾನ್ಯತೆ ಕಾರ್ಯಕ್ರಮದಡಿ 5ನೇ ಹಂತ ಹಾಗೂ ಪ್ರವೇಶ ಸಾಧ್ಯತೆ ಮಾನ್ಯತೆಯಡಿ 3ನೇ ಹಂತವನ್ನು ಸಾಧಿಸಿರುವುದು ಈ ವಿಮಾನ ನಿಲ್ದಾಣದ ಜಾಗತಿಕ ಮಟ್ಟದ ಗುಣಮಟ್ಟವನ್ನು ಮತ್ತಷ್ಟು ಎತ್ತಿಹಿಡಿದಿದೆ.

ಒಟ್ಟಾರೆ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಸತತ ಸಾಧನೆಗಳ ಮೂಲಕ ವಿಶ್ವ ಮಟ್ಟದಲ್ಲಿ ತನ್ನ ಪ್ರತಿಷ್ಠೆಯನ್ನು ಬಲಪಡಿಸಿಕೊಂಡಿದೆ.

ಕಳಪೆ ಕ್ರೆಡಿಟ್ ಇದ್ದರೆ ಬ್ಯಾಂಕ್ ಕೆಲಸ ಕಷ್ಟ: ಹೊಸ ನಿಯಮ ಜಾರಿ, CIBIL ಸ್ಕೋರ್ ಕಡ್ಡಾಯ!

0

ನವದೆಹಲಿ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಸರ್ಕಾರಿ ಬ್ಯಾಂಕ್ ಉದ್ಯೋಗ ಪಡೆಯುವುದು ಇನ್ನಷ್ಟು ಕಠಿಣವಾಗುತ್ತಿದ್ದು, ನೇಮಕಾತಿ ಪ್ರಕ್ರಿಯೆಯಲ್ಲಿ ಮಹತ್ವದ ಬದಲಾವಣೆ ಜಾರಿಗೆ ಬಂದಿದೆ.

ಇದೀಗ ಅಭ್ಯರ್ಥಿಗಳ ಕ್ರೆಡಿಟ್ ಸ್ಕೋರ್  ಪರಿಶೀಲನೆ ಕಡ್ಡಾಯಗೊಳಿಸಲಾಗಿದೆ. ಇದುವರೆಗೆ ಅಭ್ಯರ್ಥಿಗಳು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೇಲೆ ಹೆಚ್ಚು ಗಮನ ಹರಿಸುತ್ತಿದ್ದರು. ಆದರೆ, ಬ್ಯಾಂಕಿಂಗ್ ವಲಯದಲ್ಲಿ ಪಾರದರ್ಶಕತೆ ಮತ್ತು ಜವಾಬ್ದಾರಿತನ ಹೆಚ್ಚಿಸಲು ಹೊಸ ನಿಯಮಗಳನ್ನು ಜಾರಿಗೆ ತರಲಾಗಿದೆ. ಸಾರ್ವಜನಿಕರ ಹಣವನ್ನು ನಿರ್ವಹಿಸುವ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳು ಶುದ್ಧ ಹಣಕಾಸು ದಾಖಲೆ ಹೊಂದಿರಬೇಕು ಎಂಬುದು ಬ್ಯಾಂಕುಗಳ ಉದ್ದೇಶವಾಗಿದೆ.

ಸಾಲ ಮರುಪಾವತಿಯಲ್ಲಿ ವಿಳಂಬ ಮಾಡಿರುವವರು ಅಥವಾ ಕ್ರೆಡಿಟ್ ಕಾರ್ಡ್ ಬಾಕಿಗಳನ್ನು ಸರಿಯಾದ ಸಮಯಕ್ಕೆ ಪಾವತಿಸದವರ ವಿಶ್ವಾಸಾರ್ಹತೆಯ ಮೇಲೆ ಬ್ಯಾಂಕುಗಳು ಸಂಶಯ ವ್ಯಕ್ತಪಡಿಸುತ್ತವೆ. ಈ ಹಿನ್ನೆಲೆಯಲ್ಲಿ ಕಳಪೆ ಕ್ರೆಡಿಟ್ ದಾಖಲೆ ಹೊಂದಿರುವವರಿಗೆ ಉದ್ಯೋಗ ಸಿಗುವುದು ಕಷ್ಟವಾಗಬಹುದು.

ಈ ನಿಯಮ ಎಲ್ಲಾ ಬ್ಯಾಂಕಿಂಗ್ ಉದ್ಯೋಗಾಕಾಂಕ್ಷಿಗಳಿಗೆ ಅನ್ವಯವಾಗಲಿದೆ. ವಿಶೇಷವಾಗಿ ಇಎಂಐ ಪಾವತಿಸದೇ ಇರುವವರು ಅಥವಾ ಬಾಕಿ ಉಳಿಸಿಕೊಂಡಿರುವವರು ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ. ಆಯ್ಕೆ ಪ್ರಕ್ರಿಯೆ ವೇಳೆ ಅಭ್ಯರ್ಥಿಗಳು ತಮ್ಮ ಸಿಬಿಲ್ ವರದಿಯನ್ನು ಸಲ್ಲಿಸಬೇಕಾಗುತ್ತದೆ. ದಾಖಲೆಗಳಲ್ಲಿ ವ್ಯತ್ಯಾಸ ಕಂಡುಬಂದರೆ ಅಥವಾ ಸಮರ್ಪಕ ವಿವರಣೆ ನೀಡಲು ವಿಫಲರಾದರೆ, ಅಂತಿಮವಾಗಿ ಆಯ್ಕೆಯಾಗಿದ್ದರೂ ಉದ್ಯೋಗ ಕಳೆದುಕೊಳ್ಳುವ ಸಾಧ್ಯತೆ ಇದೆ.

ಆದರೆ, ಶಿಕ್ಷಣ ಸಾಲ ಪಡೆದ ವಿದ್ಯಾರ್ಥಿಗಳಿಗೆ ಕೆಲವು ಸಡಿಲಿಕೆ ನೀಡಲಾಗಿದೆ. ಹಣಕಾಸಿನ ಅಡಚಣೆಯಿಂದಾಗಿ ಶಿಕ್ಷಣ ಸಾಲದ ಮರುಪಾವತಿ ವಿಳಂಬವಾಗಿದ್ದರೆ, ಅದನ್ನು ಮಾನವೀಯ ನೆಲೆಯಲ್ಲಿ ಪರಿಗಣಿಸಲಾಗುತ್ತದೆ ಎಂದು ಬ್ಯಾಂಕುಗಳು ತಿಳಿಸಿವೆ.

ತಜ್ಞರ ಪ್ರಕಾರ, ಬ್ಯಾಂಕಿಂಗ್ ಉದ್ಯೋಗಾಕಾಂಕ್ಷಿಗಳು ತಮ್ಮ ಕ್ರೆಡಿಟ್ ಸ್ಕೋರ್‌ನ್ನು ನಿಯಮಿತವಾಗಿ ಪರಿಶೀಲಿಸಿ, ಬಾಕಿ ಇರುವ ಸಾಲಗಳನ್ನು ತಕ್ಷಣ ತೀರಿಸುವುದು ಉತ್ತಮ. ಜೊತೆಗೆ ಬ್ಯಾಂಕಿನಿಂದ ‘ನೋ ಒಬ್ಜೆಕ್ಷನ್ ಸರ್ಟಿಫಿಕೆಟ್’ ಪಡೆದುಕೊಳ್ಳುವುದರಿಂದ ಭವಿಷ್ಯದಲ್ಲಿ ಉದ್ಯೋಗದ ವೇಳೆ ಎದುರಾಗುವ ಸಮಸ್ಯೆಗಳನ್ನು ತಪ್ಪಿಸಬಹುದು.

ಕೋಲ್ಕತ್ತಾ ಆಸ್ಪತ್ರೆಯಲ್ಲಿ ನಿರ್ಲಕ್ಷ್ಯ ಆರೋಪ: ಲಿಫ್ಟ್‌ನಲ್ಲಿ ಸಿಲುಕಿ ವ್ಯಕ್ತಿ ಸಾವು

ಕೋಲ್ಕತ್ತಾ: ಕೋಲ್ಕತ್ತಾದ ಆರ್ಜಿ ಕರ್ ಆಸ್ಪತ್ರೆಗೆ ಸಂಬಂಧಿಸಿದಂತೆ ಮತ್ತೊಂದು ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಲಿಫ್ಟ್‌ನಲ್ಲಿ ಸಿಲುಕಿಕೊಂಡ ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ಘಟನೆ ತೀವ್ರ ಚರ್ಚೆಗೆ ಕಾರಣವಾಗಿದೆ.

ಅರೂಪ್ ಬಂಡೋಪಾಧ್ಯಾಯ ಎಂದು ಗುರುತಿಸಲ್ಪಟ್ಟ ಮೃತರು, ತಮ್ಮ ಮಗನ ಚಿಕಿತ್ಸೆಗೆ ಆಸ್ಪತ್ರೆಗೆ ಬಂದಿದ್ದರು. ಮಗನ ಕಾಲಿನ ಶಸ್ತ್ರಚಿಕಿತ್ಸೆಯ ನಂತರ ಅವರು ಲಿಫ್ಟ್ ಮೂಲಕ ಕೆಳಕ್ಕೆ ಬರುತ್ತಿದ್ದ ವೇಳೆ, ಲಿಫ್ಟ್ ಅಚಾನಕ್ ಸ್ಥಗಿತಗೊಂಡು ಮೂವರು ಒಳಗೆ ಸಿಲುಕಿಕೊಂಡಿದ್ದರು.

ಬಹಳ ಹೊತ್ತಿನವರೆಗೆ ಅವರು ಹಿಂದಿರುಗದಿದ್ದರಿಂದ ಆತಂಕಗೊಂಡ ಕುಟುಂಬ ಸದಸ್ಯರು ಹುಡುಕಾಟ ಆರಂಭಿಸಿದ್ದು, ಕೊನೆಗೆ ಲಿಫ್ಟ್ ಒಳಗೇ ಅವರ ಶವ ಪತ್ತೆಯಾಗಿದೆ.

ಆಸ್ಪತ್ರೆಯಲ್ಲಿ ತುರ್ತು ಪರಿಸ್ಥಿತಿಗೆ ಸ್ಪಂದಿಸಲು ಲಿಫ್ಟ್‌ಮ್ಯಾನ್ ಇಲ್ಲದಿರುವುದು ಹಾಗೂ ಲಿಫ್ಟ್ ದುರಸ್ತಿ ಮಾಡದಿರುವುದು ಗಂಭೀರ ನಿರ್ಲಕ್ಷ್ಯ ಎಂದು ಆರೋಪಗಳು ಕೇಳಿಬಂದಿವೆ. ಪೊಲೀಸರು ಅಸ್ವಾಭಾವಿಕ ಸಾವಿನ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರೆದಿದೆ.

error: Content is protected !!