ರಾಜ್ಯ ಸರ್ಕಾರದ ವಿರುದ್ಧ ಕಲೇಗಾರ ಆಕ್ರೋಶ!
ವಿಜಯಸಾಕ್ಷಿ ಸುದ್ದಿ, ಗದಗ
“ಬೆಳೆಯನ್ನೇ ಬೆಳೆಯಬೇಡಿ, ಪರಿಹಾರವನ್ನೇ ಕೇಳಬೇಡಿ” ಎಂಬ ರೀತಿಯ ಸಂದೇಶ ನೀಡುವ ರಾಜ್ಯ ಸರ್ಕಾರದ ನಿಲುವು ರೈತ ವಿರೋಧಿ, ಅಮಾನವೀಯ ಹಾಗೂ ಖಂಡನೀಯ ಎಂದು ಆಮ್ ಆದ್ಮಿ ಪಕ್ಷದ ಗದಗ ಜಿಲ್ಲಾ ಅಧ್ಯಕ್ಷ ಡಾ. ದಾದಾಪೀರ್ ಕಲೇಗಾರ್ ಆರೋಪಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರ ರೈತರ ಸಂಕಷ್ಟದ ಸಂದರ್ಭದಲ್ಲಿ ಅವರ ಬೆನ್ನಿಗೆ ನಿಲ್ಲುವ ಬದಲು ಜವಾಬ್ದಾರಿಯಿಂದ ಹಿಂದೆ ಸರಿಯಲು ಯತ್ನಿಸುತ್ತಿದೆ ಎಂದು ಟೀಕಿಸಿದರು.
ಮಳೆ ಕೊರತೆ, ಅತಿವೃಷ್ಟಿ, ಬೆಲೆ ಕುಸಿತ, ಗೊಬ್ಬರ ಕೊರತೆ, ಕಳಪೆ ಬೀಜ ಪೂರೈಕೆ ಹಾಗೂ ಸಾಲದ ಹೊರೆಗಳಿಂದ ರೈತರು ಈಗಾಗಲೇ ಸಂಕಷ್ಟದಲ್ಲಿದ್ದಾರೆ.
ಇಂತಹ ಪರಿಸ್ಥಿತಿಯಲ್ಲಿ ರೈತರಿಗೆ ಬೆಂಬಲ ನೀಡುವ ಬದಲು ಬಿತ್ತನೆ ಮಾಡದಂತೆ ಹೇಳುವುದು ರೈತರನ್ನು ಆತ್ಮವಿಶ್ವಾಸ ಕಳೆದುಕೊಳ್ಳುವಂತೆ ಮಾಡುವ ನಿರ್ಧಾರವಾಗಿದೆ ಎಂದು ಅವರು ಆರೋಪಿಸಿದರು.
ಚುನಾವಣೆ ವೇಳೆ ರೈತರ ಪರವಾಗಿ ಹಲವು ಭರವಸೆಗಳನ್ನು ನೀಡಿದ್ದ ಕಾಂಗ್ರೆಸ್ ಸರ್ಕಾರ, ಅಧಿಕಾರಕ್ಕೆ ಬಂದ ಬಳಿಕ ರೈತರ ಸಮಸ್ಯೆಗಳನ್ನು ನಿರ್ಲಕ್ಷಿಸಿ ಬೆಳೆ ಹಾನಿ ಪರಿಹಾರದ ಹೊಣೆಗಾರಿಕೆಯಿಂದಲೂ ಹಿಂದೆ ಸರಿಯುತ್ತಿದೆ.
ಇದು ರೈತ ಸಮುದಾಯಕ್ಕೆ ಮಾಡುತ್ತಿರುವ ದ್ರೋಹ ಎಂದು ಕಿಡಿಕಾರಿದರು. ತಕ್ಷಣ ನಿರ್ಧಾರ ಹಿಂಪಡೆಯಲಿ
ಸರ್ಕಾರ ರೈತ ವಿರೋಧಿ ನಿರ್ಧಾರವನ್ನು ಕೂಡಲೇ ಹಿಂಪಡೆಯಬೇಕು.
ಬೆಳೆ ಹಾನಿಗೊಳಗಾದ ಎಲ್ಲ ರೈತರಿಗೆ, ಅವರು ಬೆಳೆ ವಿಮೆ ಪಡೆದಿರಲಿ ಅಥವಾ ಪಡೆಯದಿರಲಿ, ಸಮರ್ಪಕ ಪರಿಹಾರ ಘೋಷಿಸಬೇಕು. ಬರ, ಅತಿವೃಷ್ಟಿ ಹಾಗೂ ಪ್ರಕೃತಿ ವಿಕೋಪದಿಂದ ಸಂಕಷ್ಟದಲ್ಲಿರುವ ರೈತರಿಗೆ ತುರ್ತು ವಿಶೇಷ ಪ್ಯಾಕೇಜ್ ಪ್ರಕಟಿಸಬೇಕು ಎಂದು ಅವರು ಒತ್ತಾಯಿಸಿದರು.
“ರೈತರನ್ನು ಸಂಕಷ್ಟದ ಸಮಯದಲ್ಲಿ ಕೈಬಿಡುವ ಸರ್ಕಾರವನ್ನು ಆಮ್ ಆದ್ಮಿ ಪಕ್ಷ ತೀವ್ರವಾಗಿ ಖಂಡಿಸುತ್ತದೆ. ಸರ್ಕಾರ ತನ್ನ ನಿರ್ಧಾರವನ್ನು ಮರುಪರಿಶೀಲಿಸಿ ರೈತಪರ ನಿಲುವು ತಾಳಬೇಕು.”
– ಡಾ. ದಾದಾಪೀರ್ ಕಲೇಗಾರ್, ಜಿಲ್ಲಾ ಅಧ್ಯಕ್ಷರು, ಆಮ್ ಆದ್ಮಿ ಪಕ್ಷ

