Home Blog

ನೇತ್ರಾವತಿ ನದಿಯಲ್ಲಿ ಈಜಲು ಹೋಗಿ ಇಂಜಿನಿಯರಿಂಗ್ ವಿದ್ಯಾರ್ಥಿ ಸಾವು!

ಮಂಗಳೂರು: ನೇತ್ರಾವತಿ ನದಿಯಲ್ಲಿ ಈಜಲು ತೆರಳಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ನೀರಲ್ಲಿ ಮುಳುಗಿ ಮೃತಪಟ್ಟಿರುವ ದುರ್ಘಟನೆ ಬೆಳ್ತಂಗಡಿ ತಾಲೂಕಿನ ಪಜಿರಡ್ಕ ಸಮೀಪ ನಡೆದಿದೆ.

ಮೃತ ವಿದ್ಯಾರ್ಥಿಯನ್ನು ಬೆಳಗಾವಿ ಜಿಲ್ಲೆಯ ಗೋಕಾಕ್ ಮೂಲದ ಶ್ರೀಪೂರ್ಣ (21) ಎಂದು ಗುರುತಿಸಲಾಗಿದೆ. ಅವರು ಉಜಿರೆಯ ಖಾಸಗಿ ಇಂಜಿನಿಯರಿಂಗ್ ಕಾಲೇಜೊಂದರಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಯಾಗಿ ವ್ಯಾಸಂಗ ಮಾಡುತ್ತಿದ್ದರು.

ಮಂಗಳವಾರ ಸಂಜೆ ಸುಮಾರು 4 ಗಂಟೆ ವೇಳೆಗೆ ಶ್ರೀಪೂರ್ಣ ಸೇರಿದಂತೆ ಏಳು ಮಂದಿ ಸ್ನೇಹಿತರ ತಂಡ ನೇತ್ರಾವತಿ ನದಿಗೆ ಈಜಲು ತೆರಳಿತ್ತು. ವೇಳೆ ಶ್ರೀಪೂರ್ಣ ನೀರಿನಲ್ಲಿ ಮುಳುಗಿದರೆಂದು ತಿಳಿದುಬಂದಿದೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳೀಯರು, ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಶೌರ್ಯ ವಿಪತ್ತು ನಿರ್ವಹಣಾ ಪಡೆ ಶೋಧ ಕಾರ್ಯ ಆರಂಭಿಸಿದೆ. ವಿದ್ಯಾರ್ಥಿಯ ಮೃತದೇಹ ಪತ್ತೆಗಾಗಿ ಕಾರ್ಯಾಚರಣೆ ಮುಂದುವರಿದಿದೆ.

ಬೆಳ್ತಂಗಡಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಸಿನಿಮೀಯ ಸ್ಟೈಲ್ ವಂಚನೆ: ಡಿಸೈನ್ ಸೆಲೆಕ್ಟ್ ನೆಪದಲ್ಲಿ ₹3 ಕೋಟಿ ಚಿನ್ನಾಭರಣ ದೋಚಿದ ಖದೀಮರು

ಬೆಂಗಳೂರು: ಹೋಲ್‌ಸೇಲ್ ದರದಲ್ಲಿ ಚಿನ್ನಾಭರಣ ಖರೀದಿಸುವ ನೆಪದಲ್ಲಿ ಉದ್ಯಮಿಯೊಬ್ಬರಿಗೆ ಕೋಟ್ಯಂತರ ರೂಪಾಯಿ ವಂಚನೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಮಲ್ಲೇಶ್ವರಂನ ಸಂಪಿಗೆ ರಸ್ತೆಯಲ್ಲಿ ನಡೆದ ಈ ಹೈಟೆಕ್ ವಂಚನೆಯಲ್ಲಿ ಆರೋಪಿಗಳು ಸುಮಾರು ₹3 ಕೋಟಿ ಮೌಲ್ಯದ 1 ಕೆಜಿ 850 ಗ್ರಾಂ ಚಿನ್ನಾಭರಣಗಳೊಂದಿಗೆ ಪರಾರಿಯಾಗಿದ್ದಾರೆ.

ನಗರತ್‌ಪೇಟೆಯಲ್ಲಿರುವ ಪ್ರಸಿದ್ಧ ‘ಮೆಹ್ತಾ ಜ್ಯುವೆಲ್ಲರಿ’ ಸಂಸ್ಥೆಯ ಮಾಲೀಕರು ಈ ವಂಚನೆ ಜಾಲದ ಬಲೆಗೆ ಬಿದ್ದಿದ್ದಾರೆ. ಪರೇಶ್ ಸೋನಿ ಎಂಬಾತ ಮೆಹ್ತಾ ಜ್ಯುವೆಲ್ಲರಿ ಮಾಲೀಕರನ್ನು ಸಂಪರ್ಕಿಸಿ, ‘ಮಾಹಿ ಎಂಟರ್‌ಪ್ರೈಸಸ್’ ಹೆಸರಿನ ಸಂಸ್ಥೆ ನಡೆಸುತ್ತಿರುವುದಾಗಿ ಹೇಳಿ, ಹೋಲ್‌ಸೇಲ್ ದರದಲ್ಲಿ ದೊಡ್ಡ ಪ್ರಮಾಣದ ಚಿನ್ನಾಭರಣಗಳ ಅಗತ್ಯವಿದೆ ಎಂದು ನಂಬಿಸಿದ್ದಾನೆ.

ಇದಕ್ಕಾಗಿ ಮಲ್ಲೇಶ್ವರಂನ ಕಚೇರಿಯೊಂದರ ಮೇಲೆ ‘ಲೋಟಸ್ ಜ್ಯುವೆಲ್ಲರಿ’ ಹಾಗೂ ‘ಮಾಹಿ ಎಂಟರ್‌ಪ್ರೈಸಸ್’ ಎಂಬ ನಕಲಿ ಬೋರ್ಡ್ ಅಳವಡಿಸಿ ವ್ಯವಸ್ಥಿತ ಸಂಚು ರೂಪಿಸಲಾಗಿತ್ತು ಎನ್ನಲಾಗಿದೆ.

ದೊಡ್ಡ ವ್ಯವಹಾರದ ಆರ್ಡರ್ ಇದೆ ಎಂದು ನಂಬಿದ ಜ್ಯುವೆಲ್ಲರಿ ಮಾಲೀಕರು, ತಮ್ಮ ಮ್ಯಾನೇಜರ್ ಮೂಲಕ ಸುಮಾರು 3 ಕೆಜಿ ಚಿನ್ನಾಭರಣಗಳನ್ನು ಆರೋಪಿಗಳ ಕಚೇರಿಗೆ ಕಳುಹಿಸಿದ್ದರು.

ಮ್ಯಾನೇಜರ್ ಕಚೇರಿಗೆ ತಲುಪಿದ ಬಳಿಕ ಆರೋಪಿಗಳು ಆಭರಣಗಳ ವಿನ್ಯಾಸ ಪರಿಶೀಲಿಸುವಂತೆ ನಟಿಸಿ, ಪಕ್ಕದ ಕ್ಯಾಬಿನ್‌ನಲ್ಲಿ ಕುಳಿತಿದ್ದ ಚಂದ್ರಶೇಖರ್ ಎಂಬಾತನಿಗೆ ಪಟ್ಟಿ ಸಿದ್ಧಪಡಿಸುವಂತೆ ನೀಡಿದ್ದಾರೆ.

ನಂತರ ಆಭರಣಗಳ ಫೋಟೋ ತೆಗೆದುಕೊಳ್ಳುವ ನೆಪದಲ್ಲಿ ಆರೋಪಿಗಳು ಪಕ್ಕದ ಕೋಣೆಗೆ ತೆರಳಿದ್ದು, ಅಲ್ಲಿಂದಲೇ ಚಿನ್ನಾಭರಣಗಳೊಂದಿಗೆ ಪರಾರಿಯಾಗಿದ್ದಾರೆ. ಒಳಗೆ ಹೋದವರು ಬಹಳ ಹೊತ್ತಾದರೂ ಮರಳಿ ಬಾರದ ಹಿನ್ನೆಲೆಯಲ್ಲಿ ಅನುಮಾನಗೊಂಡ ಮ್ಯಾನೇಜರ್ ಪರಿಶೀಲನೆ ನಡೆಸಿದಾಗ ವಂಚನೆ ಬೆಳಕಿಗೆ ಬಂದಿದೆ.

ಈ ಸಂಬಂಧ ಶ್ಯಾಮ್, ರಾಮಚಂದ್ರ ಹಾಗೂ ಪರೇಶ್ ಸೋನಿ ವಿರುದ್ಧ ಸಂತ್ರಸ್ತ ಉದ್ಯಮಿ ದೂರು ನೀಡಿದ್ದು, ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಸಿಸಿಟಿವಿ ದೃಶ್ಯಾವಳಿ ಆಧರಿಸಿ ಆರೋಪಿಗಳ ಪತ್ತೆಗೆ ಶೋಧ ಕಾರ್ಯ ಮುಂದುವರಿಸಿದ್ದಾರೆ.

ಮಹಿಳೆಯರ ಸ್ವಾವಲಂಬನೆಯೇ ದೇಶದ ಅಭಿವೃದ್ಧಿಗೆ ಶಕ್ತಿ: ದೀಪಿಕಾ

ಹಗರಿಬೊಮ್ಮನಹಳ್ಳಿ: “ಮಹಿಳೆಯರು ಸ್ವಾವಲಂಬಿಯಾಗಿ ಬದುಕು ಕಟ್ಟಿಕೊಂಡಾಗ ಮಾತ್ರ ಕುಟುಂಬದ ಆರ್ಥಿಕ ಸ್ಥಿತಿ ಸುಧಾರಿಸುವುದರ ಜೊತೆಗೆ ದೇಶದ ಅಭಿವೃದ್ಧಿಗೂ ಬಲ ಸಿಗುತ್ತದೆ” ಎಂದು ಎಸ್‌ಎಲ್‌ಆರ್ ಮೆಟಾಲಿಕ್ಸ್ ಸಂಸ್ಥೆಯ ಅಧಿಕಾರಿ ದೀಪಿಕಾ ಹೇಳಿದರು.

ಹಗರಿಬೊಮ್ಮನಹಳ್ಳಿ ತಾಲೂಕಿನ ವರದಾಪುರ ಗ್ರಾಮದಲ್ಲಿ ಎಸ್‌ಎಲ್‌ಆರ್ ಮೆಟಾಲಿಕ್ಸ್ ಹಾಗೂ ಚೈತನ್ಯ ಗ್ರಾಮೀಣ ಅಭಿವೃದ್ಧಿ ಎಜುಕೇಷನಲ್ ಟ್ರಸ್ಟ್ ಸಹಯೋಗದಲ್ಲಿ ಆಯೋಜಿಸಿದ್ದ ಆರು ತಿಂಗಳ ಉಚಿತ ಹೊಲಿಗೆ ತರಬೇತಿ ಸಮಾರೋಪ ಹಾಗೂ ಹೊಲಿಗೆ ಯಂತ್ರ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಹಿಳೆಯರು ಸ್ವಯಂ ಉದ್ಯೋಗದ ಮೂಲಕ ಸಬಲೀಕರಣ ಹೊಂದಿದಾಗ ಕುಟುಂಬಗಳು ಆರ್ಥಿಕ ಸಂಕಷ್ಟದಿಂದ ಹೊರಬರಲು ಸಾಧ್ಯವಾಗುತ್ತದೆ. ಆತ್ಮವಿಶ್ವಾಸದಿಂದ ಸ್ವಂತ ಉದ್ಯೋಗ ಆರಂಭಿಸಿ ಸಮಾಜದಲ್ಲಿ ಮಾದರಿಯಾಗಬೇಕು ಎಂದು ಕರೆ ನೀಡಿದರು.

ಎಸ್‌ಎಲ್‌ಆರ್ ಸಂಸ್ಥೆಯ ಸಿಎಸ್‌ಆರ್ ವಿಭಾಗದ ಮುಖ್ಯಸ್ಥ ಕೆ. ಮಲ್ಲಿಕಾರ್ಜುನ ಮಾತನಾಡಿ, ಸಂಸ್ಥೆಯಿಂದ ನೀಡಲಾಗಿರುವ ತರಬೇತಿಯನ್ನು ಸದುಪಯೋಗಪಡಿಸಿಕೊಂಡು ಮಹಿಳೆಯರು ಸ್ವಂತ ಟೈಲರಿಂಗ್ ಅಂಗಡಿ ಆರಂಭಿಸುವುದರ ಜೊತೆಗೆ ಇತರರಿಗೂ ತರಬೇತಿ ನೀಡುವ ಮೂಲಕ ಮತ್ತಷ್ಟು ಜನರಿಗೆ ಉದ್ಯೋಗಾವಕಾಶ ಕಲ್ಪಿಸಬೇಕು ಎಂದು ಹೇಳಿದರು.

ಸಂಸ್ಥೆಯ ವತಿಯಿಂದ ವಿದ್ಯಾರ್ಥಿ ಮಿತ್ರ, ರೈತ ಮಿತ್ರ ಸೇರಿದಂತೆ ಹಲವು ಜನಪರ ಯೋಜನೆಗಳನ್ನು ಜಾರಿಗೆ ತರಲಾಗುತ್ತಿದ್ದು, ಗ್ರಾಮೀಣ ಭಾಗದ ಜನರು ಅವುಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದರು. ಚೈತನ್ಯ ಗ್ರಾಮೀಣ ಅಭಿವೃದ್ಧಿ ಎಜುಕೇಷನಲ್ ಟ್ರಸ್ಟ್ ಅಧ್ಯಕ್ಷ ಭೀಮರಾಜ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಎಸ್‌ಎಲ್‌ಆರ್ ಕಂಪನಿಯ ಸಿಬ್ಬಂದಿಗಳಾದ ಮಾರುತಿ ಗೋಶಿ, ವೆಂಕಟೇಶ್, ಪಂಪಾಪತಿ, ಎಸ್‌ಡಿಎಂಸಿ ಅಧ್ಯಕ್ಷ ದುರುಗಪ್ಪ, ತರಬೇತಿ ಶಿಕ್ಷಕಿ ಸುವರ್ಣಮ್ಮ ಹಾಗೂ ತರಬೇತಿ ಪಡೆದ ಮಹಿಳೆಯರಾದ ಸೊನ್ನದ ವಸಂತ, ದುರುಗಮ್ಮ, ಉಷಾ ಸೇರಿದಂತೆ ಶಿಬಿರಾರ್ಥಿಗಳು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

“ಆರು ತಿಂಗಳ ಉಚಿತ ಹೊಲಿಗೆ ತರಬೇತಿ ಪಡೆದ ಮಹಿಳೆಯರಿಗೆ ಹೊಲಿಗೆ ಯಂತ್ರಗಳನ್ನು ವಿತರಿಸಲಾಗಿದೆ. ತರಬೇತಿ ಪಡೆದವರು ಸ್ವಯಂ ಉದ್ಯೋಗ ಆರಂಭಿಸಿ ತಮ್ಮ ಕುಟುಂಬದ ಆರ್ಥಿಕ ಸಂಕಷ್ಟ ನಿವಾರಿಸಿಕೊಳ್ಳಬೇಕು ಎಂದು ಎಸ್‌ಎಲ್‌ಆರ್ ಮೆಟಾಲಿಕ್ಸ್,ಸಿಎಸ್‌ಆರ್ ವಿಭಾಗದ ಮುಖ್ಯಸ್ಥ ಕೆ. ಮಲ್ಲಿಕಾರ್ಜುನ ಹೇಳಿದ್ದಾರೆ.

ಶಿವಮೊಗ್ಗದಲ್ಲಿ ಒಂದೇ ಕುಟುಂಬದ ನಾಲ್ವರು ನಾಪತ್ತೆ: ತಿಂಗಳಾದರೂ ಸಿಗದ ಸುಳಿವು, ಆತಂಕದಲ್ಲಿ ಸಂಬಂಧಿಕರು

ಶಿವಮೊಗ್ಗ: ನಗರದ ಬುದ್ಧನಗರದಲ್ಲಿ ವಾಸವಿದ್ದ ಒಂದೇ ಕುಟುಂಬದ ನಾಲ್ವರು ಕಳೆದ ಒಂದು ತಿಂಗಳಿನಿಂದ ನಿಗೂಢವಾಗಿ ನಾಪತ್ತೆಯಾಗಿರುವ ಘಟನೆ ಆತಂಕಕ್ಕೆ ಕಾರಣವಾಗಿದೆ. ಏಪ್ರಿಲ್ 15ರಿಂದ ಕಾಣೆಯಾಗಿರುವ ಕುಟುಂಬಸ್ಥರ ಬಗ್ಗೆ ಇದುವರೆಗೂ ಯಾವುದೇ ಸುಳಿವು ಸಿಕ್ಕಿಲ್ಲ.

ನಾಪತ್ತೆಯಾದವರನ್ನು ಮೊಹಮ್ಮದ್ ಇಕ್ಬಾಲ್ (62), ನಸ್ರತ್ ಬಾನು (54), ಮೊಹಮ್ಮದ್ ಫಾಜಿಲ್ (35) ಹಾಗೂ ಮೊಹಮ್ಮದ್ ಆದಿಲ್ (32) ಎಂದು ಗುರುತಿಸಲಾಗಿದೆ. ಆರಂಭದಲ್ಲಿ ಸಂಬಂಧಿಕರು ಅವರು ಎಲ್ಲೋ ಹೋಗಿರಬಹುದು ಎಂದುಕೊಂಡು ಕಾದು ಕುಳಿತ್ತಿದ್ದರು. ಆದರೆ ತಿಂಗಳು ಕಳೆದರೂ ಯಾವುದೇ ಮಾಹಿತಿ ಸಿಗದ ಹಿನ್ನೆಲೆ ಶಿವಮೊಗ್ಗ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಪ್ರಕರಣ ದಾಖಲಾಗಿದೆ.

ಪೊಲೀಸರ ಪ್ರಕಾರ, ಮೊಹಮ್ಮದ್ ಇಕ್ಬಾಲ್ 5.5 ಅಡಿ ಎತ್ತರ, ಸಾಧಾರಣ ಮೈಕಟ್ಟು ಹಾಗೂ ಬಿಳಿ ಮೈಬಣ್ಣ ಹೊಂದಿದ್ದಾರೆ. ನಸ್ರತ್ ಬಾನು 5.2 ಅಡಿ ಎತ್ತರ, ದಪ್ಪ ಮೈಕಟ್ಟು, ಗೋಧಿ ಮೈಬಣ್ಣ ಹಾಗೂ ಸೀಳು ತುಟಿಯ ಗುರುತು ಹೊಂದಿದ್ದಾರೆ.

ಇದೇ ಕುಟುಂಬದ ಮೊಹಮ್ಮದ್ ಫಾಜಿಲ್ 5.6 ಅಡಿ ಎತ್ತರ, ತೆಳ್ಳನೆ ಮೈಕಟ್ಟು ಹಾಗೂ ಎದೆಯ ಭಾಗದಲ್ಲಿ ಚರ್ಮಗಂಟು ಹೊಂದಿದ್ದು, ಮೊಹಮ್ಮದ್ ಆದಿಲ್ 5.4 ಅಡಿ ಎತ್ತರ, ದಪ್ಪ ಮೈಕಟ್ಟು ಮತ್ತು ಎಣ್ಣೆಗೆಂಪು ಮೈಬಣ್ಣ ಹೊಂದಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಸಂಬಂಧಿಕರು ಹಾಗೂ ಪೊಲೀಸರು ವಿವಿಧ ಕಡೆಗಳಲ್ಲಿ ಹುಡುಕಾಟ ನಡೆಸಿದರೂ ಕುಟುಂಬದ ಯಾವುದೇ ಸದಸ್ಯರ ಸುಳಿವು ಸಿಕ್ಕಿಲ್ಲ. ಪ್ರಕರಣ ದಾಖಲಿಸಿಕೊಂಡಿರುವ ದೊಡ್ಡಪೇಟೆ ಠಾಣೆ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.

ನಾಪತ್ತೆಯಾದವರ ಬಗ್ಗೆ ಯಾವುದೇ ಮಾಹಿತಿ ಸಿಕ್ಕಲ್ಲಿ 08182-261414, 9972426144, 9480803345 ಅಥವಾ 6264571710 ಸಂಖ್ಯೆಗೆ ಸಂಪರ್ಕಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.

ತಾಲಿಬಾನ್ ಸಂಪರ್ಕ ಹೊಂದಿದ್ದ ಉಗ್ರನಿಗೆ 7 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿದ NIA ಕೋರ್ಟ್!

ಬೆಂಗಳೂರು: ನಿಷೇಧಿತ ತಾಲಿಬಾನ್ ಹಾಗೂ ತೆಹ್ರಿಕ್-ಇ-ತಾಲಿಬಾನ್ ಪಾಕಿಸ್ತಾನ (ಟಿಟಿಪಿ) ಸಂಘಟನೆಗಳ ಅಂತಾರಾಷ್ಟ್ರೀಯ ಸದಸ್ಯರೊಂದಿಗೆ ಸಂಪರ್ಕ ಹೊಂದಿದ್ದು, ಯುವಕರನ್ನು ಸಂಘಟನೆಗೆ ಸೆಳೆಯುತ್ತಿದ್ದ ಆರೋಪದಡಿ ಬಂಧಿತನಾಗಿದ್ದ ಮಹಾರಾಷ್ಟ್ರ ಮೂಲದ ಹಮ್ರಾಜ್ ವೋರ್ಷಿದ್ ಶೇಖ್‌ಗೆ ಬೆಂಗಳೂರಿನ ಎನ್‌ಐಎ ವಿಶೇಷ ನ್ಯಾಯಾಲಯ 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 63 ಸಾವಿರ ರೂ. ದಂಡ ವಿಧಿಸಿದೆ.

2023ರ ಏಪ್ರಿಲ್‌ನಲ್ಲಿ ಹಮ್ರಾಜ್ ವೋರ್ಷಿದ್ ಶೇಖ್ ಮತ್ತು ಮೊಹಮ್ಮದ್ ಆರೀಫ್ ವಿರುದ್ಧ ಯುಎಪಿಎ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ತನಿಖೆ ಆರಂಭಿಸಿತ್ತು. ಬಳಿಕ ಅದೇ ವರ್ಷದ ಅಕ್ಟೋಬರ್‌ನಲ್ಲಿ ಆರೋಪಪಟ್ಟಿ ಸಲ್ಲಿಸಲಾಗಿತ್ತು.

ಪ್ರಕರಣದ ವಿಚಾರಣೆ ನಡೆಸಿದ ಎನ್‌ಐಎ ವಿಶೇಷ ನ್ಯಾಯಾಲಯ, ಆರೋಪಿಗಳ ಪೈಕಿ ಹಮ್ರಾಜ್ ವಿರುದ್ಧದ ಆರೋಪಗಳು ಸಾಬೀತಾದ ಹಿನ್ನೆಲೆ ಶಿಕ್ಷೆ ಪ್ರಕಟಿಸಿದೆ. ಮತ್ತೊಬ್ಬ ಆರೋಪಿ ವಿರುದ್ಧ ವಿಚಾರಣೆ ಮುಂದುವರೆದಿದೆ.

ಎನ್‌ಐಎ ತನಿಖೆಯ ಪ್ರಕಾರ, 2019ರಿಂದ 2022ರವರೆಗೆ ಸೌದಿ ಅರೇಬಿಯಾದಲ್ಲಿದ್ದ ಹಮ್ರಾಜ್‌, ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನ ಮೂಲದ ಕೆಲವರ ಸಂಪರ್ಕಕ್ಕೆ ಬಂದಿದ್ದ. ಈ ವೇಳೆ ಆತ ತಾಲಿಬಾನ್ ಹಾಗೂ ಟಿಟಿಪಿ ಸಂಘಟನೆಗಳ ತತ್ವಗಳಿಗೆ ಪ್ರಭಾವಿತನಾಗಿದ್ದಾನೆ ಎಂದು ತಿಳಿದುಬಂದಿದೆ.

ತನಿಖೆ ವೇಳೆ ‘ಹಂಝಲಾ’ ಎಂಬ ಆನ್‌ಲೈನ್ ಹ್ಯಾಂಡ್ಲರ್ ಜತೆ ಸಂಪರ್ಕದಲ್ಲಿದ್ದ ವಿಚಾರವೂ ಬೆಳಕಿಗೆ ಬಂದಿದೆ. ಈ ವ್ಯಕ್ತಿ ‘ಕಾಶ್ಮೀರ ಪೇಜ್’ ಹೆಸರಿನ ಇನ್‌ಸ್ಟಾಗ್ರಾಂ ಖಾತೆ ಮೂಲಕ ಯುವಕರನ್ನು ಪ್ರಚೋದಿಸಿ ಮೂಲಭೂತವಾದದತ್ತ ಸೆಳೆಯುತ್ತಿದ್ದ ಎಂದು ಎನ್‌ಐಎ ತಿಳಿಸಿದೆ.

ಭಾರತಕ್ಕೆ ಮರಳಿದ ಬಳಿಕ ಹಮ್ರಾಜ್‌, ತನ್ನ ಸ್ನೇಹಿತ ಮೊಹಮ್ಮದ್ ಆರೀಫ್ ಜೊತೆ ಸೇರಿ ತಾಲಿಬಾನ್ ಮತ್ತು ಟಿಟಿಪಿ ಸಂಘಟನೆಗಳ ತತ್ವಗಳನ್ನು ಪ್ರಚಾರ ಮಾಡುತ್ತಿದ್ದರು ಎನ್ನಲಾಗಿದೆ. ಆರ್ಥಿಕ ಹಾಗೂ ವೈಯಕ್ತಿಕ ಸಂಕಷ್ಟದಲ್ಲಿದ್ದ ಯುವಕರನ್ನು ಗುರಿಯಾಗಿಸಿಕೊಂಡು ಉಗ್ರ ಸಂಘಟನೆ ಪರವಾಗಿ ಕೆಲಸ ಮಾಡಲು ಪ್ರಚೋದನೆ ನೀಡುತ್ತಿದ್ದರು ಎಂದು ತನಿಖೆಯಲ್ಲಿ ಪತ್ತೆಯಾಗಿದೆ.

ಇನ್ನೂ ಪ್ರಮುಖವಾಗಿ, ಇಬ್ಬರೂ ಸೇರಿ ಭಾರತದ ವಿರುದ್ಧ ಜಿಹಾದ್ ಯುದ್ಧ ನಡೆಸುವ ಉದ್ದೇಶದಿಂದ ಟಿಟಿಪಿಗೆ ಸೇರ್ಪಡೆಯಾಗಲು ತಮ್ಮದೇ ತಂಡ ರಚಿಸಲು ಸಿದ್ಧತೆ ನಡೆಸುತ್ತಿದ್ದರು ಎಂಬುದು ತನಿಖೆಯಲ್ಲಿ ಬಹಿರಂಗವಾಗಿದೆ ಎಂದು ಎನ್‌ಐಎ ಪ್ರಕಟಣೆಯಲ್ಲಿ ತಿಳಿಸಿದೆ.

ಜಿಬಿಎ ಚುನಾವಣೆ ಭವಿಷ್ಯ ಇಂದು ನಿರ್ಧಾರ? ಸುಪ್ರೀಂನಲ್ಲಿ ಅರ್ಜಿ ವಿಚಾರಣೆ!

ನವದೆಹಲಿ: ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಸಲ್ಲಿಸಿರುವ ಅರ್ಜಿಯ ವಿಚಾರಣೆ ಇಂದು ಸುಪ್ರೀಂ ಕೋರ್ಟ್‌ನಲ್ಲಿ ನಡೆಯಲಿದೆ.

ಈ ಹಿಂದೆ ಜನವರಿಯಲ್ಲಿ ಸುಪ್ರೀಂ ಕೋರ್ಟ್ ಜೂನ್ ತಿಂಗಳೊಳಗೆ ಜಿಬಿಎ ಪಂಚ ಪಾಲಿಕೆಗಳಿಗೆ ಚುನಾವಣೆ ನಡೆಸಬೇಕು ಎಂದು ಆದೇಶಿಸಿತ್ತು. ಆದರೆ ರಾಜ್ಯದಲ್ಲಿ ಜನಗಣತಿ ಹಾಗೂ ಎಸ್‌ಐಆರ್ ಕಾರ್ಯಗಳು ನಡೆಯುತ್ತಿರುವುದರಿಂದ ಸರ್ಕಾರಿ ನೌಕರರು ಈಗಾಗಲೇ ಕರ್ತವ್ಯದಲ್ಲಿ ನಿರತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಚುನಾವಣಾ ಪ್ರಕ್ರಿಯೆ ನಡೆಸುವುದು ಕಷ್ಟಕರವಾಗಿದೆ ಎಂದು ರಾಜ್ಯ ಸರ್ಕಾರ ವಾದಿಸಿದೆ.

ಅದೇ ಕಾರಣದಿಂದ ಚುನಾವಣೆ ಮುಂದೂಡಿಕೆ ಮಾಡುವಂತೆ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ಜೊತೆಗೆ ರಾಜ್ಯ ಚುನಾವಣಾ ಆಯೋಗವೂ ಚುನಾವಣೆಗೆ ಹೆಚ್ಚುವರಿ ಮೂರು ತಿಂಗಳ ಕಾಲಾವಕಾಶ ನೀಡುವಂತೆ ಮನವಿ ಮಾಡಿದೆ.

ಈ ಕುರಿತು ಸಿಜೆಐ ಸೂರ್ಯಕಾಂತ್ ನೇತೃತ್ವದ ಪೀಠದಲ್ಲಿ ವಿಚಾರಣೆ ನಡೆಯಲಿದ್ದು, ಮಹತ್ವದ ತೀರ್ಪಿನ ನಿರೀಕ್ಷೆ ಇದೆ.

ಈ ವಿಚಾರ ರಾಜ್ಯ ರಾಜಕೀಯ ಹಾಗೂ ಸ್ಥಳೀಯ ಆಡಳಿತ ವ್ಯವಸ್ಥೆಯಲ್ಲಿ ಗಮನ ಸೆಳೆದಿದೆ.

ಶಾಲಾ ಆರಂಭಕ್ಕೂ ಮುನ್ನ ಪೋಷಕರಿಗೆ ಡಬಲ್ ಶಾಕ್: ನೋಟ್‌ಬುಕ್ ಬೆಲೆ 25% ಏರಿಕೆ!

ಬೆಂಗಳೂರು: ರಾಜ್ಯದಲ್ಲಿ ಶಾಲೆ–ಕಾಲೇಜುಗಳ ಆರಂಭಕ್ಕೂ ಮುನ್ನವೇ ಪೋಷಕರು ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದಾರೆ.

ಈಗಾಗಲೇ ಶಾಲಾ ಶುಲ್ಕ ಹಾಗೂ ಶಾಲಾ ವಾಹನಗಳ ಬಾಡಿಗೆ ದರ ಹೆಚ್ಚಳವಾಗಿರುವ ನಡುವೆಯೇ, ಇದೀಗ ನೋಟ್‌ಬುಕ್, ವರ್ಕ್‌ಬುಕ್ ಹಾಗೂ ಪೇಪರ್‌ಗಳ ಬೆಲೆಗಳು ಶೇಕಡ 20ರಿಂದ 25ರಷ್ಟು ಏರಿಕೆಯಾಗಿವೆ.

ಕಚ್ಚಾ ವಸ್ತುಗಳ ದರ ಏರಿಕೆ ಹಾಗೂ ಇಂಧನ ಬೆಲೆ ಹೆಚ್ಚಳವೇ ಈ ಬೆಲೆ ಏರಿಕೆಗೆ ಪ್ರಮುಖ ಕಾರಣವೆಂದು ಉದ್ಯಮಿಗಳು ತಿಳಿಸಿದ್ದಾರೆ. ಗಲ್ಫ್ ರಾಷ್ಟ್ರಗಳಲ್ಲಿನ ಸಂಘರ್ಷದ ಪರಿಣಾಮವಾಗಿ ಕಚ್ಚಾ ವಸ್ತುಗಳ ಪೂರೈಕೆ ಅಸ್ಥಿರಗೊಂಡಿದ್ದು, ಪೇಪರ್ ತಯಾರಿಕೆಗೆ ಅಗತ್ಯವಾದ ರಾಸಾಯನಿಕಗಳು ಮತ್ತು ಬಣ್ಣಗಳ ಲಭ್ಯತೆಯೂ ಕಡಿಮೆಯಾಗಿದೆ ಎಂದು ಹೇಳಿದ್ದಾರೆ.

ಇದರ ಜೊತೆಗೆ ಇಂಧನ ದರ ಏರಿಕೆಯಿಂದ ನೋಟ್‌ಬುಕ್, ವರ್ಕ್‌ಬುಕ್ ಹಾಗೂ ಪೇಪರ್ ಉತ್ಪಾದನೆ ಮತ್ತು ಮುದ್ರಣ ವೆಚ್ಚವೂ ಹೆಚ್ಚಾಗಿದೆ. ಇದರಿಂದ ಮಾರುಕಟ್ಟೆಯಲ್ಲಿ ಶಾಲಾ ಸಾಮಗ್ರಿಗಳ ಬೆಲೆಗಳು ಗಣನೀಯವಾಗಿ ಹೆಚ್ಚಳಗೊಂಡಿವೆ.

ಈ ಬೆಲೆ ಏರಿಕೆ ನೇರವಾಗಿ ಪೋಷಕರ ಮೇಲೆ ಪರಿಣಾಮ ಬೀರಿದ್ದು, ಶಾಲಾ ಆರಂಭದ ಹೊತ್ತಿನಲ್ಲಿ ಖರ್ಚಿನ ಭಾರ ಹೆಚ್ಚಾಗಿದೆ ಎಂದು ಪೋಷಕರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಬಿಚ್ಚಾಲಿ ಗ್ರಾಮದಲ್ಲಿ ಜಾಗ ವಿವಾದ: ರಾಯರ ಜಪದ ಕಟ್ಟೆ ಕೋಣೆಗಳಿಗೆ ಬೀಗ ಜಡಿದ ಅಧಿಕಾರಿಗಳು!

ರಾಯಚೂರು: ತಾಲೂಕಿನ ಬಿಚ್ಚಾಲಿ ಗ್ರಾಮದಲ್ಲಿರುವ ರಾಘವೇಂದ್ರ ಸ್ವಾಮಿಗಳ ಏಕಶಿಲಾ ವೃಂದಾವನ ಬಳಿಯ ಜಾಗದ ವಿವಾದಕ್ಕೆ ಸಂಬಂಧಿಸಿದಂತೆ ರಾಯರ ಜಪದ ಕಟ್ಟೆ ಬಳಿಯ 6 ಕೋಣೆಗಳು ಹಾಗೂ ಗೋಶಾಲೆಗೆ ಅಧಿಕಾರಿಗಳು ಬೀಗ ಹಾಕಿದ್ದಾರೆ.

ಪೊಲೀಸ್ ಭದ್ರತೆಯ ನಡುವೆ ಕಂದಾಯ ಇಲಾಖೆ ಅಧಿಕಾರಿಗಳು ಅರ್ಚಕರ ವಶದಲ್ಲಿದ್ದ ಕೋಣೆಗಳನ್ನು ವಶಕ್ಕೆ ಪಡೆದು ಬೀಗ ಹಾಕಿದ್ದಾರೆ. ಸರ್ವೆ ಸಂಖ್ಯೆ 35 ಹಾಗೂ 37ರಲ್ಲಿ ಇರುವ 2 ಎಕರೆ 33 ಗುಂಟೆ ಜಾಗದ ವಿಚಾರವಾಗಿ ಮಂತ್ರಾಲಯ ರಾಯರ ಮಠ, ಅರ್ಚಕರು ಹಾಗೂ ರೈತರ ನಡುವೆ ಹಲವು ದಿನಗಳಿಂದ ವಿವಾದ ಮುಂದುವರಿದಿತ್ತು.

ಈ ಜಾಗವನ್ನು ಸರ್ಕಾರ ಮಂತ್ರಾಲಯ ರಾಯರ ಮಠಕ್ಕೆ ಮಂಜೂರು ಮಾಡಿದ್ದು, ಇದನ್ನು ಪ್ರಶ್ನಿಸಿ ಜಪದ ಕಟ್ಟೆ ಬಿಚ್ಚಾಲಿ ಅಪ್ಪಣ್ಣಾಚಾರ್ಯ ಸೇವಾ ಟ್ರಸ್ಟ್ ನ್ಯಾಯಾಲಯಕ್ಕೆ ರಿಟ್ ಅರ್ಜಿ ಸಲ್ಲಿಸಿತ್ತು. ಆದರೆ ನ್ಯಾಯಾಲಯ ಅರ್ಜಿಯನ್ನು ವಜಾಗೊಳಿಸಿತ್ತು.

ನ್ಯಾಯಾಲಯದ ಸೂಚನೆಯಂತೆ ಅಧಿಕಾರಿಗಳು ಇದೇ ಏಪ್ರಿಲ್ 13ರಂದು ಸ್ಥಳದ ಸರ್ವೆ ಕಾರ್ಯ ನಡೆಸಿದ್ದರು. ಯಾವುದೇ ಮುನ್ಸೂಚನೆ ನೀಡದೆ ಸರ್ವೆ ಮಾಡಲಾಗಿದೆ ಎಂದು ಉಳುಮೆ ಮಾಡುತ್ತಿದ್ದ ರೈತರು ಆಕ್ರೋಶ ವ್ಯಕ್ತಪಡಿಸಿದ್ದರು.

ಈಗ ಏಕಾಏಕಿ ಕೋಣೆಗಳಿಗೆ ಬೀಗ ಹಾಕಿರುವುದಕ್ಕೆ ಅರ್ಚಕರ ಕುಟುಂಬಸ್ಥರು ಕೂಡ ಆಕ್ರೋಶ ಹೊರಹಾಕಿದ್ದಾರೆ. ನ್ಯಾಯಾಲಯದ ಆದೇಶದಂತೆ ಜಾಗದ ಸರ್ವೆ ನಡೆಸಿ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಯಚೂರು ಉಪವಿಭಾಗ ಸಹಾಯಕ ಆಯುಕ್ತ ಹಂಪಣ್ಣ ಸಜ್ಜನ್ ಹಾಗೂ ತಹಶೀಲ್ದಾರ್ ಸುರೇಶ್ ವರ್ಮಾ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದ್ದು, ಆಸ್ತಿಯನ್ನು ಮಂತ್ರಾಲಯ ಮಠದ ವಶಕ್ಕೆ ಒಪ್ಪಿಸುವ ಪ್ರಕ್ರಿಯೆ ನಡೆಯುತ್ತಿದೆ.

IPL 2026: ವೈಭವ್‌ ಸೂರ್ಯವಂಶಿ ಅಬ್ಬರ: ಲಕ್ನೋ ವಿರುದ್ಧ ರಾಜಸ್ಥಾನ್‌ಗೆ ರೋಚಕ ಜಯ!

ಜೈಪುರ: ಯುವ ಆಟಗಾರ ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ರಾಜಸ್ಥಾನ್ ರಾಯಲ್ಸ್ ತಂಡ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ 7 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿದೆ.

ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಲಕ್ನೋ ಸೂಪರ್‌ ಜೈಂಟ್ಸ್ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 220 ರನ್‌ಗಳ ಭಾರೀ ಮೊತ್ತ ಕಲೆಹಾಕಿತು. ಗುರಿ ಬೆನ್ನಟ್ಟಿದ ರಾಜಸ್ಥಾನ್‌ ರಾಯಲ್ಸ್‌ 19.1 ಓವರ್‌ಗಳಲ್ಲಿ 3 ವಿಕೆಟ್‌ ನಷ್ಟಕ್ಕೆ 225 ರನ್‌ ಗಳಿಸಿ ರೋಚಕ ಗೆಲುವು ಸಾಧಿಸಿತು.

ಈ ಗೆಲುವಿನೊಂದಿಗೆ ರಾಜಸ್ಥಾನ್‌ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರಿದ್ದು, ಪ್ಲೇಆಫ್‌ ಪ್ರವೇಶಕ್ಕೆ ಮತ್ತೊಂದು ಹೆಜ್ಜೆ ದೂರದಲ್ಲಿದೆ. ಮುಂಬೈ ವಿರುದ್ಧದ ಕೊನೆಯ ಪಂದ್ಯದಲ್ಲಿ ಗೆದ್ದರೆ ಟಾಪ್‌-4 ಸ್ಥಾನ ಖಚಿತವಾಗಲಿದೆ. ಚೇಸಿಂಗ್‌ ಆರಂಭಿಸಿದ ರಾಜಸ್ಥಾನ್‌ಗೆ ಯಶಸ್ವಿ ಜೈಸ್ವಾಲ್ ವೇಗದ ಆರಂಭ ನೀಡಿದರು. 23 ಎಸೆತಗಳಲ್ಲಿ 43 ರನ್‌ ಸಿಡಿಸಿದ ಜೈಸ್ವಾಲ್‌ಗೆ ಸಾಥ್‌ ನೀಡಿದ ವೈಭವ್‌ ಸೂರ್ಯವಂಶಿ ಬೌಲರ್‌ಗಳ ಮೇಲೆ ಅಬ್ಬರಿಸಿದರು.

ವೈಭವ್‌ ಕೇವಲ 38 ಎಸೆತಗಳಲ್ಲಿ 10 ಸಿಕ್ಸ್‌ ಮತ್ತು 7 ಬೌಂಡರಿಗಳೊಂದಿಗೆ 93 ರನ್‌ಗಳ ಸ್ಫೋಟಕ ಇನ್ನಿಂಗ್ಸ್‌ ಆಡಿದರು. ಧ್ರುವ್ ಜುರೆಲ್ ಕೂಡ 38 ಎಸೆತಗಳಲ್ಲಿ 53 ರನ್‌ ಬಾರಿಸಿ ತಂಡದ ಗೆಲುವಿಗೆ ನೆರವಾದರು.

ಲಕ್ನೋ ಪರ ಆಕಾಶ್ ಸಿಂಗ್ ಹಾಗೂ ಮೊಯ್ಸಿನ್ ಖಾನ್ ತಲಾ ಒಂದು ವಿಕೆಟ್‌ ಪಡೆದರು. ಇದಕ್ಕೂ ಮೊದಲು ಬ್ಯಾಟಿಂಗ್‌ ಮಾಡಿದ ಲಕ್ನೋ ತಂಡದ ಪರ ಮಿಚೆಲ್ ಮಾರ್ಷ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಆರಂಭದಿಂದಲೇ ಸಿಕ್ಸರ್‌, ಬೌಂಡರಿಗಳ ಮಳೆ ಸುರಿಸಿದ ಮಾರ್ಷ್‌ ಶತಕದ ಸನಿಹದಲ್ಲಿ ಔಟಾದರು.

ಜೋಶ್ ಇಂಗ್ಲೀಸ್ ಜೊತೆಗೂಡಿ ಮಾರ್ಷ್‌ ಕೇವಲ 50 ಎಸೆತಗಳಲ್ಲಿ 109 ರನ್‌ಗಳ ಜೊತೆಯಾಟ ಕಟ್ಟಿದರು. ಮಾರ್ಷ್‌ 57 ಎಸೆತಗಳಲ್ಲಿ 96 ರನ್‌ ಗಳಿಸಿದರೆ, ಜೋಶ್‌ ಇಂಗ್ಲೀಸ್‌ 29 ಎಸೆತಗಳಲ್ಲಿ 60 ರನ್‌ ಚಚ್ಚಿದರು. ನಾಯಕ ರಿಷಬ್ ಪಂತ್ 23 ಎಸೆತಗಳಲ್ಲಿ 35 ರನ್‌ಗಳಿಸಿದರು.

ರಾಜಸ್ಥಾನ್‌ ಪರ ಯಶ್‌ ರಾಜ್‌ 2 ವಿಕೆಟ್‌ ಪಡೆದರೆ, ಜೋಫ್ರಾ ಆರ್ಚರ್ ಒಂದು ವಿಕೆಟ್‌ ಕಬಳಿಸಿದರು.

ಇಂದು ರಾಜ್ಯಾದ್ಯಂತ ಮೆಡಿಕಲ್ ಶಾಪ್ ಬಂದ್: 26 ಸಾವಿರಕ್ಕೂ ಅಧಿಕ ಔಷಧಿ ಅಂಗಡಿಗಳು ಕ್ಲೋಸ್!

ಬೆಂಗಳೂರು: ಕರ್ನಾಟಕ ಸೇರಿದಂತೆ ದೇಶಾದ್ಯಂತ ಇಂದು ಮೆಡಿಕಲ್ ಶಾಪ್‌ಗಳು ಬಂದ್ ಆಗಲಿವೆ.

ಆನ್‌ಲೈನ್ ಇ-ಫಾರ್ಮಸಿ ಹಾಗೂ ಕ್ವಿಕ್ ಕಾಮರ್ಸ್ ಆ್ಯಪ್‌ಗಳ ಮೂಲಕ ಕಾನೂನು ಬಾಹಿರವಾಗಿ ಔಷಧಿ ಮಾರಾಟ ನಡೆಯುತ್ತಿದೆ ಎಂದು ಆರೋಪಿಸಿ ಆಲ್ ಇಂಡಿಯಾ ಆರ್ಗನೈಸೇಶನ್ ಆಫ್ ಕೆಮಿಸ್ಟ್ ಅಂಡ್ ಡ್ರಗ್ಗಿಸ್ಟ್ ಪ್ರತಿಭಟನೆಗೆ ಕರೆ ನೀಡಿದೆ.

ಈ ಬಂದ್‌ಗೆ ಕರ್ನಾಟಕ ರಾಜ್ಯ ಔಷಧಿ ಮಾರಾಟ ವ್ಯಾಪಾರಿಗಳ ಸಂಘವೂ ಬೆಂಬಲ ನೀಡಿದ್ದು, ರಾಜ್ಯಾದ್ಯಂತ 26 ಸಾವಿರಕ್ಕೂ ಅಧಿಕ ಮೆಡಿಕಲ್ ಶಾಪ್‌ಗಳು ಒಂದು ದಿನದ ಮಟ್ಟಿಗೆ ಸಂಪೂರ್ಣ ಬಂದ್ ಆಗಲಿವೆ. ಬೆಂಗಳೂರು ಒಂದರಲ್ಲೇ ಮೂರು ಸಾವಿರಕ್ಕೂ ಹೆಚ್ಚು ಮೆಡಿಕಲ್ ಅಂಗಡಿಗಳು ಕಾರ್ಯನಿರ್ವಹಿಸುತ್ತಿದ್ದು, ಬಹುತೇಕ ಅಂಗಡಿಗಳು ಬಂದ್‌ಗೆ ಬೆಂಬಲ ಸೂಚಿಸಿವೆ.

ಇನ್ನೊಂದೆಡೆ, ಬೆಂಗಳೂರು ಫಾರ್ಮ್ ರಿಟೈಲರ್ಸ್ ಮತ್ತು ಡಿಸ್ಟ್ರಿಬ್ಯೂಟರ್ಸ್ ಫೋರಂನಿಂದ ಹೊರಬಂದ ಕೆಲ ಸದಸ್ಯರು ಪ್ರತ್ಯೇಕ ಸಂಘ ರಚಿಸಿ ಬಂದ್‌ಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಆದರೂ ಹೆಚ್ಚಿನ ಮೆಡಿಕಲ್ ಮಾಲೀಕರು ಬಂದ್‌ಗೆ ಬೆಂಬಲ ನೀಡಿ ಅಂಗಡಿಗಳನ್ನು ಮುಚ್ಚಿದ್ದಾರೆ.

ಬಂದ್‌ನಿಂದ ಸಾರ್ವಜನಿಕರಿಗೆ ತೊಂದರೆಯಾಗದಂತೆ ಕೆಲವು ಪರ್ಯಾಯ ವ್ಯವಸ್ಥೆಗಳನ್ನು ಮಾಡಲಾಗಿದೆ. ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳ ಒಳಗೆ ಕಾರ್ಯನಿರ್ವಹಿಸುವ ಫಾರ್ಮಸಿಗಳು ಎಂದಿನಂತೆ ತೆರೆದಿರಲಿವೆ. ತುರ್ತು ಸಂದರ್ಭಗಳಲ್ಲಿ ಅಗತ್ಯ ಔಷಧಿ ಪೂರೈಕೆಗಾಗಿ ಆಯ್ದ ಕೇಂದ್ರಗಳಲ್ಲಿ ಎಮರ್ಜೆನ್ಸಿ ಕೌಂಟರ್‌ಗಳನ್ನು ತೆರೆಯಲಾಗುತ್ತದೆ ಎಂದು ಸಂಘಟನೆ ತಿಳಿಸಿದೆ.

ತುರ್ತು ವೈದ್ಯಕೀಯ ಅವಶ್ಯಕತೆ ಇರುವವರು ಆಸ್ಪತ್ರೆಗಳ ಫಾರ್ಮಸಿಗಳ ಸೇವೆಯನ್ನು ಪಡೆಯಬಹುದಾಗಿದೆ.

error: Content is protected !!