ವಿಜಯಸಾಕ್ಷಿ ಸುದ್ದಿ, ರೋಣ: ಮುಂಗಾರು ಹಂಗಾಮಿನ ಆರಂಭದಲ್ಲೇ ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಡೀಸೆಲ್ ಕೊರತೆ ಎದುರಾಗಿರುವುದರಿಂದ ರೈತ ಸಮುದಾಯ ತೀವ್ರ ಸಂಕಷ್ಟಕ್ಕೆ ಸಿಲುಕಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡರು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ವಿರುದ್ಧ ಆಕ್ರೋಶ ಹೊರಹಾಕಿದರು.
ಸೋಮವಾರ ತಹಸೀಲ್ದಾರ್ ಕಚೇರಿಗೆ ಮನವಿ ಸಲ್ಲಿಸಿದ ಬಳಿಕ ಮಾತನಾಡಿದ ರೈತ ಸಂಘದ ಮುಖಂಡ ಶಿವಲಿಂಗಪ್ಪ ಬೋಪಳಾಪೂರ, ರೋಹಿಣಿ ಮಳೆಯ ಅವಧಿ ಮುಗಿದರೂ ಸರ್ಕಾರ ಸಮರ್ಪಕವಾಗಿ ಬೀಜ ಮತ್ತು ಗೊಬ್ಬರ ದಾಸ್ತಾನು ಮಾಡದಿರುವುದರಿಂದ ಬಿತ್ತನೆ ಕಾರ್ಯ ಹಿನ್ನಡೆ ಅನುಭವಿಸುತ್ತಿದೆ ಎಂದು ಆರೋಪಿಸಿದರು.
ಮುಂಗಾರು ಹಂಗಾಮಿನಲ್ಲಿ ರೈತರಿಗೆ ಬೀಜ, ಗೊಬ್ಬರ ಮತ್ತು ಡೀಸೆಲ್ ಸಮರ್ಪಕವಾಗಿ ದೊರೆಯದಿದ್ದರೆ ಅದರ ನೇರ ಪರಿಣಾಮ ಆಹಾರ ಉತ್ಪಾದನೆ ಮೇಲೆಯೇ ಬೀಳಲಿದೆ. ಇಂದಿನ ಕೃಷಿ ಬಹುತೇಕ ಯಾಂತ್ರೀಕೃತವಾಗಿದ್ದು, ಡೀಸೆಲ್ ಕೊರತೆಯಿಂದ ಟ್ರ್ಯಾಕ್ಟರ್ ಹಾಗೂ ಕೃಷಿ ಯಂತ್ರಗಳ ಬಳಕೆ ಅಸ್ತವ್ಯಸ್ತವಾಗುತ್ತಿದೆ ಎಂದು ಅವರು ಹೇಳಿದರು.
ತಾಲೂಕು ಅಧ್ಯಕ್ಷ ಸಂಗಣ್ಣ ಪವಾಡಶೆಟ್ಟಿ ಮಾತನಾಡಿ, ಟ್ರ್ಯಾಕ್ಟರ್ ತಂದರೆ ಮಾತ್ರ ಡೀಸೆಲ್ ನೀಡುತ್ತಿರುವ ಪೆಟ್ರೋಲ್ ಬಂಕ್ಗಳ ಕ್ರಮ ರೈತರಿಗೆ ಮತ್ತಷ್ಟು ಹೊರೆ ತಂದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಹಳ್ಳಿಗಳಿಂದ ಟ್ರ್ಯಾಕ್ಟರ್ ತಂದು ಡೀಸೆಲ್ ತುಂಬಿಸಿಕೊಂಡರೆ ನೂರಾರು ರೂಪಾಯಿ ವ್ಯರ್ಥವಾಗುತ್ತದೆ. ರೈತರು ಕ್ಯಾನ್ನಲ್ಲಿ ಡೀಸೆಲ್ ತೆಗೆದುಕೊಂಡು ಹೋಗಲು ಅವಕಾಶ ನೀಡಬೇಕು. ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ಸರ್ಕಾರ ಹಾಗೂ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಮುಖಂಡ ಮೇಘರಾಜ ಭಾವಿ ಮಾತನಾಡಿ, ತಾಲೂಕಿನ ಹಲವು ಗೊಬ್ಬರ ಮಾರಾಟಗಾರರು ನಿಗದಿತ ದರಕ್ಕಿಂತ ಹೆಚ್ಚು ಬೆಲೆಯಲ್ಲಿ ಗೊಬ್ಬರ ಮಾರಾಟ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ ಎಂದರು.
ಗೊಬ್ಬರ ಅಂಗಡಿಗಳಲ್ಲಿ ದರಪಟ್ಟಿ ಕಡ್ಡಾಯವಾಗಿ ಪ್ರಕಟಿಸಬೇಕು. ಕಳೆದ ವರ್ಷದ ಅತಿವೃಷ್ಟಿಯಿಂದಲೇ ರೈತರು ಸಂಕಷ್ಟದಲ್ಲಿದ್ದು, ಇಂತಹ ಸಂದರ್ಭದಲ್ಲಿ ಹೆಚ್ಚಿನ ದರದಲ್ಲಿ ಗೊಬ್ಬರ ಮಾರಾಟ ಮಾಡುವುದು ಸರಿಯಲ್ಲ ಎಂದು ಹೇಳಿದರು.
ಈ ವೇಳೆ ಸಂಗಣ್ಣ ದಂಡಿನ, ಬಸವರಾಜ ಹೊಸಮನಿ, ಶಾಂತವೀರಯ್ಯ ಬೆನಹಾಳ, ಶರಣಪ್ಪ ಚನ್ನಪ್ಪಗೌಡ್ರ, ಬಸನಗೌಡ ಚೆನ್ನಪ್ಪಗೌಡ, ಕಾವ್ಯ ಸೋಮನಕಟ್ಟಿ, ಮಲ್ಲಪ್ಪ ಯಂಡಿಗೇರಿ, ಮೈಲಾರಪ್ಪ ಚವಡಿ, ಕಳಕಪ್ಪ ನೀರಲೋಟ, ರೈಮಾನಸಾಬ ಬಾಲೇಸಾಬನವರ, ಉಮೇಶ ಮುಗುಳಿ, ಬಸವರಾಜ ಬ್ಯಾಳಿ, ಬಸನಗೌಡ ಮುದಿಬಸನಗೌಡ, ಯಲ್ಲಪ್ಪ ಹಡಗಲಿ, ಮಲ್ಲಪ್ಪ ಚಳಗೇರಿ, ರಮೇಶ ಚನ್ನಪ್ಪಗೌಡ್ರ, ಈರಪ್ಪ ಯತ್ನಳ್ಳಿ ಸೇರಿದಂತೆ ಅನೇಕ ರೈತರು ಉಪಸ್ಥಿತರಿದ್ದರು.
“ಬಿತ್ತನೆ ಸಮಯದಲ್ಲೇ ರೈತರಿಗೆ ಬೀಜ, ಗೊಬ್ಬರ, ಡೀಸೆಲ್ ಕೊರತೆ ಎದುರಾದರೆ ಮುಂದಿನ ದಿನಗಳಲ್ಲಿ ಆಹಾರ ಉತ್ಪಾದನೆ ಮೇಲೆಯೇ ದೊಡ್ಡ ಹೊಡೆತ ಬೀಳಲಿದೆ. ಸರ್ಕಾರ ತಕ್ಷಣ ಎಚ್ಚೆತ್ತುಕೊಳ್ಳಬೇಕು”
ಶಿವಲಿಂಗಪ್ಪ ಬೋಪಳಾಪೂರ
ರೈತ ಸಂಘದ ಮುಖಂಡ
“ರೈತರಿಗೆ ಡೀಸೆಲ್ ಪೂರೈಕೆಯಲ್ಲಿ ಅನಗತ್ಯ ನಿಯಮ ಹೇರಿಕೆ ಮಾಡಬಾರದು. ಸಮಸ್ಯೆ ಬಗೆಹರಿಸದಿದ್ದರೆ ಹೋರಾಟ ಅನಿವಾರ್ಯ”
ಸಂಗಣ್ಣ ಪವಾಡಶೆಟ್ಟಿ
ತಾಲೂಕು ಅಧ್ಯಕ್ಷ