Home Blog

ಮಳೆಯ ಅಬ್ಬರದಲ್ಲಿ ರಸ್ತೆ ದುರಂತ: ನೆಲಮಂಗಲ ಮಾದಾವರದಲ್ಲಿ EV ಬೈಕ್ ಸವಾರ ದುರ್ಮರಣ

ನೆಲಮಂಗಲ: ಮಾದಾವರ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಳೆಯ ನಡುವಿನ ಅಪಘಾತದಲ್ಲಿ ಎಲೆಕ್ಟ್ರಿಕ್ ಬೈಕ್ ಸವಾರ ಲೋಕೇಶ್ (45) ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.

ಮಧ್ಯಾಹ್ನ 2:30ರ ಸುಮಾರಿಗೆ ಬೆಂಗಳೂರಿನ ಕಡೆಗೆ ಸಾಗುತ್ತಿದ್ದ ಲೋಕೇಶ್ ಅವರ ಬೈಕ್, ಮುಂದೆ ಚಲಿಸುತ್ತಿದ್ದ ಕ್ಯಾಂಟರ್ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಮಳೆಯ ಕಾರಣ ರಸ್ತೆ ಜಾರಿದಿದ್ದು, ಕ್ಯಾಂಟರ್ ಚಾಲಕನ ಹಠಾತ್ ಬ್ರೇಕ್ ಹಾಕಿದ ಪರಿಣಾಮ ಹಿಂಬದಿಯಲ್ಲಿ ಬರುತ್ತಿದ್ದ ಬೈಕ್ ನಿಯಂತ್ರಣ ತಪ್ಪಿದೆ ಎಂದು ಪ್ರಾಥಮಿಕ ಮಾಹಿತಿಯಿಂದ ತಿಳಿದುಬಂದಿದೆ.

ಡಿಕ್ಕಿಯ ತೀವ್ರತೆಯಿಂದ ಲೋಕೇಶ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನೆ ನಂತರ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ.

ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ.

ಮಳೆಯ ಸಂದರ್ಭ ರಸ್ತೆ ಸುರಕ್ಷತೆ ಪಾಲಿಸುವಂತೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

JDS ಆಂತರಿಕ ರಾಜಕೀಯ ತೀವ್ರತೆ: ಜಿ.ಟಿ.ದೇವೇಗೌಡ ವಿರುದ್ಧ ಸಾ.ರಾ.ಮಹೇಶ್ ನೇರ ಟೀಕೆ

0

ಮೈಸೂರು: ಜೆಡಿಎಸ್ ಆಂತರಿಕ ರಾಜಕೀಯದಲ್ಲಿ ಮತ್ತೆ ಗರಮಾವೇಶ ಉಂಟಾಗುವ ರೀತಿಯಲ್ಲಿ ಮಾಜಿ ಸಚಿವ ಸಾ.ರಾ.ಮಹೇಶ್ ಅವರು ಹಿರಿಯ ನಾಯಕ ಜಿ.ಟಿ.ದೇವೇಗೌಡ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪಕ್ಷದ ನಾಯಕತ್ವದ ನಿರ್ಧಾರಕ್ಕೆ ಅನುಗುಣವಾಗಿ ಜಿ.ಟಿ.ದೇವೇಗೌಡರನ್ನು ಮತ್ತೆ ಪಕ್ಷದಲ್ಲಿ ಉಳಿಸಿಕೊಳ್ಳಲು ಅವಕಾಶವಿದೆ ಎಂದು ಹೇಳಿದರೂ, ಅವರ ರಾಜಕೀಯ ನಡೆ ಬಗ್ಗೆ ಕಠಿಣ ಟೀಕೆ ಮಾಡಿದ್ದಾರೆ.

ಪ್ರತಿ ಚುನಾವಣೆಯಲ್ಲೂ ವಿಭಿನ್ನ ತೀರ್ಮಾನ ತೆಗೆದುಕೊಳ್ಳುವ ಮೂಲಕ ಪಕ್ಷಕ್ಕೆ ಹಾನಿ ಮಾಡಲಾಗಿದೆ ಎಂದು ಆರೋಪಿಸಿದ ಮಹೇಶ್, ಈ ರೀತಿಯ ನಡೆ ಕಾರ್ಯಕರ್ತರ ಮನೋಭಾವದ ಮೇಲೆ ಪರಿಣಾಮ ಬೀರಿದೆ ಎಂದು ಹೇಳಿದರು.

ಪಕ್ಷದ ಶ್ರೇಷ್ಠತೆ ವ್ಯಕ್ತಿಗಿಂತ ದೊಡ್ಡದು ಎಂಬುದನ್ನು ಒತ್ತಿಹೇಳಿದ ಅವರು, ಜೆಡಿಎಸ್‌ಗೆ ನಿಷ್ಠಾವಂತ ಕಾರ್ಯಕರ್ತರೇ ಬಲ ಎಂದು ಹೇಳಿದರು.

ಪಕ್ಷ ನೀಡಿದ್ದ ಜವಾಬ್ದಾರಿಗಳನ್ನು ಸಮರ್ಪಕವಾಗಿ ನಿರ್ವಹಿಸಿಲ್ಲ ಎಂಬ ಆರೋಪವನ್ನು ಮುಂದಿಟ್ಟ ಅವರು, ಈ ಕಾರಣದಿಂದಲೇ ಈಗ ಸಾಮೂಹಿಕ ನಾಯಕತ್ವದ ಮೂಲಕ ಮುಂದುವರಿಯಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.

ನಾಳೆಯ ಸಮಾವೇಶ ಹಾಗೂ ರಾಜಕೀಯ ಬೆಳವಣಿಗೆಗಳನ್ನು ಉಲ್ಲೇಖಿಸಿದ ಮಹೇಶ್, ಎಲ್ಲಾ ನಡೆಗಳನ್ನು ಗಮನಿಸುತ್ತಿದ್ದೇವೆ ಎಂದು ಪರೋಕ್ಷ ಎಚ್ಚರಿಕೆ ನೀಡಿದರು.

‘ಹಿಜಬ್ ಸರ್ಕಾರದ ಆದ್ಯತೆ, ಶಿಕ್ಷಣ ಅಲ್ಲ’; ಉಡುಪಿಯಲ್ಲಿ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಸುನೀಲ್ ಕುಮಾರ್ ವಾಗ್ದಾಳಿ

0

ಉಡುಪಿ: ರಾಜ್ಯ ಸರ್ಕಾರ ಶಿಕ್ಷಣದ ಮೂಲಭೂತ ಸಮಸ್ಯೆಗಳನ್ನು ಬಗೆಹರಿಸುವ ಬದಲು ಹಿಜಬ್ ವಿಚಾರವನ್ನು ಮುಂದಿಟ್ಟುಕೊಂಡು ಓಲೈಕೆ ರಾಜಕಾರಣ ನಡೆಸುತ್ತಿದೆ ಎಂದು ಬಿಜೆಪಿ ಶಾಸಕ ಸುನೀಲ್ ಕುಮಾರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಸರ್ಕಾರಿ ಶಾಲೆಗಳಿಗೆ ಸುಣ್ಣ ಬಣ್ಣ ಇಲ್ಲ, ಶಿಕ್ಷಕರ ಕೊರತೆ ಇದೆ, ವಿದ್ಯಾರ್ಥಿಗಳಿಗೆ ಅಗತ್ಯ ಸೌಲಭ್ಯಗಳೇ ಇಲ್ಲ. ಆದರೆ ಸರ್ಕಾರಕ್ಕೆ ಮುಖ್ಯ ಆದ್ಯತೆ ಹಿಜಬ್ ಆಗಿದೆ. ಇದು ಓಲೈಕೆ ರಾಜಕಾರಣದ ಪರಮಾವಧಿ” ಎಂದು ಟೀಕಿಸಿದರು.

“ರಾಜ್ಯ ಶಿಕ್ಷಣ ನೀತಿ ಜಾರಿಗೊಳಿಸುವುದಾಗಿ 2023ರಲ್ಲಿ ಘೋಷಿಸಿದ್ದ ಸರ್ಕಾರ, ಎನ್‌ಇಪಿ ರದ್ದುಪಡಿಸಿ ಎಸ್‌ಇಪಿ ಜಾರಿಗೆ ತರದೇ ಮೂರು ವರ್ಷ ಕಳೆದಿವೆ. ಶಿಕ್ಷಣ ಕ್ಷೇತ್ರದ ಬಗ್ಗೆ ಸರ್ಕಾರದ ನಿರ್ಲಕ್ಷ್ಯ ಸ್ಪಷ್ಟವಾಗಿದೆ” ಎಂದರು.

ಹಿಜಬ್ ವಿಚಾರದಿಂದ ಶಾಲಾ ಮಕ್ಕಳಲ್ಲಿ ದ್ವೇಷ ಮತ್ತು ವಿಭಜನೆಯ ಮನೋಭಾವ ಮೂಡಿಸಲಾಗುತ್ತಿದೆ ಎಂದು ಆರೋಪಿಸಿದ ಅವರು, “ಸಿದ್ದರಾಮಯ್ಯ ಸರ್ಕಾರದ ನೀತಿ ಒಡೆದು ಆಳುವ ರಾಜಕಾರಣ. ಈಗ ವಿದ್ಯಾರ್ಥಿಗಳ ಮನಸ್ಸಿನಲ್ಲೇ ಭೇದಭಾವ ಬೆಳೆಸುವ ಕೆಲಸ ನಡೆಯುತ್ತಿದೆ” ಎಂದು ಹೇಳಿದರು.

ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ಕುರಿತು ಮಾತನಾಡಿದ ಅವರು, “ರಾಜ್ಯ ಸರ್ಕಾರವೇ ಮೊದಲು ತೆರಿಗೆ ಹೆಚ್ಚಿಸಿ ಜನರಿಗೆ ಹೊರೆ ಹಾಕಿತ್ತು. ಈಗ ಜಾಗತಿಕ ಯುದ್ಧದ ಪರಿಣಾಮವಾಗಿ ಇಂಧನ ಬೆಲೆ ಏರಿಕೆಯಾಗಿದೆ. ಯುದ್ಧ ಪರಿಸ್ಥಿತಿ ತಣ್ಣಗಾದರೆ ಬೆಲೆ ಸಹಜವಾಗಿಯೇ ಇಳಿಕೆಯಾಗುತ್ತದೆ” ಎಂದು ಪ್ರತಿಕ್ರಿಯಿಸಿದರು.

ದಾಖಲೆ ಇಲ್ಲದೆ ರೈಲು ಪ್ರಯಾಣ: ಹುಬ್ಬಳ್ಳಿಯಲ್ಲಿ ನಾಲ್ವರು ಬಾಂಗ್ಲಾದೇಶಿ ಪ್ರಜೆಗಳ ಸೆರೆ

0

ಹುಬ್ಬಳ್ಳಿ: ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ರೈಲ್ವೆ ರಕ್ಷಣಾ ಪಡೆ ಸಿಬ್ಬಂದಿ ನಡೆಸಿದ ಕಾರ್ಯಾಚರಣೆಯಲ್ಲಿ ನಾಲ್ವರು ಬಾಂಗ್ಲಾದೇಶ ಮೂಲದ ವ್ಯಕ್ತಿಗಳನ್ನು ಬಂಧಿಸಲಾಗಿದೆ. ಕಾನೂನುಬಾಹಿರವಾಗಿ ದೇಶ ಪ್ರವೇಶಿಸಿ, ಯಾವುದೇ ದಾಖಲೆಗಳಿಲ್ಲದೇ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಆರೋಪ ಇವರ ಮೇಲಿದೆ.

ಆರ್‌ಪಿಎಫ್ ಸಿಬ್ಬಂದಿಗೆ ಅನುಮಾನ ಮೂಡಿದ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಿದಾಗ, ಬಂಧಿತರ ಬಳಿ ಪಾಸ್‌ಪೋರ್ಟ್‌, ವೀಸಾ ಸೇರಿದಂತೆ ಯಾವುದೇ ಗುರುತಿನ ದಾಖಲೆಗಳು ಪತ್ತೆಯಾಗಿಲ್ಲ. ಬಳಿಕ ನಾಲ್ವರನ್ನು ವಶಕ್ಕೆ ಪಡೆದು ಹೆಚ್ಚಿನ ತನಿಖೆ ಆರಂಭಿಸಲಾಗಿದೆ.

ಬಂಧಿತರಿಂದ ಹುಬ್ಬಳ್ಳಿ-ಗದಗ ರಸ್ತೆಯಲ್ಲಿರುವ ಆರ್‌ಪಿಎಫ್ ಠಾಣೆಯಲ್ಲಿ ವಿಚಾರಣೆ ಮುಂದುವರಿದಿದ್ದು, ದೇಶ ಪ್ರವೇಶದ ಹಾದಿ, ಸಂಪರ್ಕ ಜಾಲ ಹಾಗೂ ಇತರ ಮಾಹಿತಿ ಕಲೆಹಾಕಲಾಗುತ್ತಿದೆ. ಪ್ರಕರಣ ಭದ್ರತಾ ದೃಷ್ಟಿಯಿಂದ ಗಂಭೀರ ಸ್ವರೂಪ ಪಡೆದುಕೊಂಡಿದೆ.

ವಿಚ್ಛೇದನ ಸಿಗುವವರೆಗೆ ಸಿನಿಮಾಗಳಲ್ಲಿ ನಟಿಸಲ್ಲ: ನಟ ಜಯಂ ರವಿ

ನಟ ಜಯಂ ರವಿ ತಮ್ಮ ವಿಚ್ಛೇದನ ವಿವಾದದ ನಡುವೆ ಸ್ಫೋಟಕ ಹೇಳಿಕೆಗಳನ್ನು ನೀಡಿದ್ದಾರೆ. ಪತ್ನಿ ಆರತಿಯಿಂದ ಪ್ರತ್ಯೇಕವಾಗಿರುವ ಅವರು, ವಿಚ್ಛೇದನ ಪ್ರಕರಣ ಮುಗಿಯುವವರೆಗೆ ಸಿನಿಮಾಗಳಲ್ಲಿ ನಟಿಸುವುದಿಲ್ಲ ಎಂದು ಘೋಷಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರವಿ, ತಮ್ಮ ಕುಟುಂಬ ಜೀವನದ ಬಗ್ಗೆ ಮೊದಲ ಬಾರಿಗೆ ಬಹಿರಂಗವಾಗಿ ಮಾತನಾಡಿದ್ದು, ಪತ್ನಿ ಹಾಗೂ ಆನ್‌ಲೈನ್ ಟ್ರೋಲಿಗರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ನನ್ನ ಜೀವನದಲ್ಲಿ ನಡೆದಿರುವುದನ್ನು ಸರಿಪಡಿಸಿಕೊಳ್ಳುವವರೆಗೆ ನಾನು ಕ್ಯಾಮೆರಾ ಮುಂದೆ ನಿಲ್ಲುವುದಿಲ್ಲ. ಸಾಕಷ್ಟು ವರ್ಷ ಮೌನವಾಗಿದ್ದೆ. ಆದರೆ ಈಗ ಎಲ್ಲಾ ಸತ್ಯಗಳನ್ನು ಹೊರಗೆ ತರುವ ಸಮಯ ಬಂದಿದೆ’ ಎಂದು ರವಿ ಹೇಳಿದ್ದಾರೆ.

ತಮ್ಮ ಮಕ್ಕಳ ವಿಚಾರದಲ್ಲಿ ಭಾವುಕರಾದ ಅವರು, ‘ಮಕ್ಕಳ ಫೀಸ್‌ಗೆ 90 ಲಕ್ಷ ರೂ. ಕಟ್ಟುತ್ತಿದ್ದೇನೆ. ನನ್ನ ಮಕ್ಕಳ ಮೇಲೆ ನನಗೆ ಪ್ರೀತಿ ಇಲ್ಲ ಎಂದು ಹೇಗೆ ಹೇಳುತ್ತಾರೆ? ಈಗ ನನ್ನ ಮಕ್ಕಳನ್ನೇ ನೋಡಲು ಅವಕಾಶ ನೀಡುತ್ತಿಲ್ಲ. ಶಾಲೆಗೆ ಬಾಡಿಗಾರ್ಡ್ ಜೊತೆ ಕಳುಹಿಸಲಾಗುತ್ತಿದೆ’ ಎಂದು ಆರೋಪಿಸಿದ್ದಾರೆ.

ತಮ್ಮ ವೈವಾಹಿಕ ಜೀವನದ ಬಗ್ಗೆ ಮಾತನಾಡಿದ ರವಿ, ‘ನಾನು ಇದ್ದಾಗ ನನ್ನನ್ನು ಗುಲಾಮನಂತೆ ನಡೆಸಿಕೊಂಡರು. ಈಗ ನನ್ನ ಬಗ್ಗೆ ಮಾತನಾಡುತ್ತಿರುವ ರೀತಿಯೇ ನನಗೆ ದೊಡ್ಡ ನೋವು ಕೊಡುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಗಾಯಕಿ ಕೆನೀಶಾ ಫ್ರಾನ್ಸಿಸ್ ಜೊತೆಗಿನ ಆಪ್ತತೆಯ ಬಗ್ಗೆ ಸಾಕಷ್ಟು ವದಂತಿಗಳು ಹರಿದಾಡುತ್ತಿದ್ದ ಬೆನ್ನಲ್ಲೇ, ಕೆನೀಶಾ ‘ವಿದಾಯ ಚೆನ್ನೈ’ ಪೋಸ್ಟ್ ಹಂಚಿಕೊಂಡಿದ್ದು ಚರ್ಚೆಗೆ ಕಾರಣವಾಗಿದೆ. ಅದರ ಬೆನ್ನಲ್ಲೇ ಜಯಂ ರವಿ ನಡೆಸಿದ ಸುದ್ದಿಗೋಷ್ಠಿ ಮತ್ತಷ್ಟು ಸಂಚಲನ ಸೃಷ್ಟಿಸಿದೆ.

ಬೆಲೆ ಏರಿಕೆಯಿಂದ ಬೀದಿಗಿಳಿದ ಆಟೋ ಚಾಲಕರು: ಮೀಟರ್ ದರ ಹೆಚ್ಚಳ, ಮಕ್ಕಳ ಶಿಕ್ಷಣ ವೆಚ್ಚ ಭರಿಸಲು ಸರ್ಕಾರಕ್ಕೆ ಒತ್ತಾಯ

ಬೆಂಗಳೂರು: ರಾಜ್ಯದಲ್ಲಿ ಇಂಧನ ದರ ಏರಿಕೆ ತೀವ್ರ ಪರಿಣಾಮ ಬೀರಿದ್ದು, ಬದುಕು ಸಾಗಿಸಲು ಸಾಧ್ಯವಾಗುತ್ತಿಲ್ಲ ಎಂದು ಆಟೋ ಚಾಲಕರು ಸರ್ಕಾರದ ನೆರವು ಕೋರಿದ್ದಾರೆ. ಪೆಟ್ರೋಲ್, ಡೀಸೆಲ್, ಸಿಎನ್‌ಜಿ ಹಾಗೂ ಎಲ್‌ಪಿಜಿ ದರ ಏರಿಕೆಯಿಂದ ಆದಾಯ ಸಂಪೂರ್ಣ ಕುಸಿದಿದೆ ಎಂದು ಸ್ನೇಹಜೀವಿ ಆಟೋ ಚಾಲಕರ ಟ್ರೇಡ್ ಯೂನಿಯನ್ ಹೇಳಿದೆ.

ಜಾಗತಿಕ ತೈಲ ಬಿಕ್ಕಟ್ಟು ಮತ್ತು ಆಮದು ವೆಚ್ಚದ ಪರಿಣಾಮ ಕಳೆದ ಕೆಲವು ದಿನಗಳಿಂದ ಇಂಧನ ದರಗಳು ಏರಿಕೆಯಾಗುತ್ತಿದ್ದು, ಅದರ ಹೊರೆ ನೇರವಾಗಿ ಆಟೋ ಚಾಲಕರ ಮೇಲೇ ಬಿದ್ದಿದೆ. ದಿನಪೂರ್ತಿ ದುಡಿದರೂ ಮನೆಯ ಖರ್ಚು, ವಾಹನ ನಿರ್ವಹಣೆ ಮತ್ತು ಮಕ್ಕಳ ಶಿಕ್ಷಣ ವೆಚ್ಚ ನಿಭಾಯಿಸಲು ಸಾಧ್ಯವಾಗುತ್ತಿಲ್ಲ ಎಂದು ಚಾಲಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಹಿನ್ನೆಲೆ ರಾಜ್ಯಾದ್ಯಂತ ಏಕೀಕೃತ ಆಟೋ ಮೀಟರ್ ದರ ಜಾರಿಗೆ ತರಬೇಕು ಹಾಗೂ ಪ್ರಸ್ತುತ ಇರುವ ದರವನ್ನು ಹೆಚ್ಚಿಸಬೇಕು ಎಂದು ಯೂನಿಯನ್ ಸರ್ಕಾರಕ್ಕೆ ಮನವಿ ಮಾಡಿದೆ. ಕ್ಯಾಬ್ ಸೇವೆಗಳ ಕಡಿಮೆ ದರ ನೀತಿಯಿಂದ ಆಟೋ ಚಾಲಕರ ಆದಾಯ ಕುಸಿದಿದ್ದು, ಸರ್ಕಾರ ಮಧ್ಯಪ್ರವೇಶಿಸಬೇಕು ಎಂದು ಒತ್ತಾಯಿಸಲಾಗಿದೆ.

ಆಟೋ ಚಾಲಕರ ಮಕ್ಕಳ ಶಾಲಾ ಶುಲ್ಕವನ್ನು ಸರ್ಕಾರವೇ ಭರಿಸಬೇಕು ಎಂಬ ಬೇಡಿಕೆಯನ್ನೂ ಸಂಘಟನೆ ಮುಂದಿಟ್ಟಿದೆ. ಬೆಲೆ ಏರಿಕೆ ಮತ್ತು ಇಂಧನ ದರ ಹೆಚ್ಚಳದ ನಡುವೆ ಆಟೋ ಚಾಲಕರ ಬದುಕು ಸಂಕಷ್ಟಕ್ಕೆ ಸಿಲುಕಿದ್ದು, ತಕ್ಷಣ ಪರಿಹಾರ ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಲಾಗಿದೆ.

ಸೋಶಿಯಲ್ ಮೀಡಿಯಾದಲ್ಲಿ ‘ಹಾಟ್ ಗರ್ಲ್’ ಡ್ರಾಮಾ..! ಭೇಟಿಗೆ ಕರೆಸಿ ಚಾಕು ತೋರಿಸಿ ದರೋಡೆ: ಇಬ್ಬರು ವಿದ್ಯಾರ್ಥಿಗಳ ಬಂಧನ

ಬೆಂಗಳೂರು: ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಂನಲ್ಲಿ ಯುವತಿಯರ ಹೆಸರಿನಲ್ಲಿ ನಕಲಿ ಖಾತೆ ತೆರೆದು ಪುರುಷರನ್ನು ಬಲೆಗೆ ಸೆಳೆಯುತ್ತಿದ್ದ ಹನಿಟ್ರ್ಯಾಪ್ ಜಾಲವೊಂದು ಬೆಂಗಳೂರಿನಲ್ಲಿ ಬಯಲಾಗಿದೆ. ಮಹಿಳೆ ಹೆಸರಿನಲ್ಲಿ ಚಾಟಿಂಗ್ ಮಾಡಿ ವ್ಯಕ್ತಿಯನ್ನು ಭೇಟಿ ಮಾಡಲು ಕರೆಸಿಕೊಂಡ ಆರೋಪಿಗಳು ಬಳಿಕ ಚಾಕು ತೋರಿಸಿ ದರೋಡೆ ನಡೆಸಿರುವ ಘಟನೆ ಕೃಷ್ಣರಾಜಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಈ ಸಂಬಂಧ ಖಾಸಗಿ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ವಿವೇಕ್ ಮತ್ತು ನಿಖಿಲ್ ಎಂದು ಗುರುತಿಸಲಾಗಿದ್ದು, ಇನ್ನೊಬ್ಬ ಸಹಚರ ತಲೆಮರೆಸಿಕೊಂಡಿದ್ದಾನೆ.

ಬಿಪಿಒ ಉದ್ಯೋಗಿಯಾಗಿದ್ದ 26 ವರ್ಷದ ವ್ಯಕ್ತಿಯನ್ನು ಆರೋಪಿಗಳು ಹಲವು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಮಹಿಳೆಯಂತೆ ನಟಿಸಿ ಸಂಪರ್ಕಿಸಿದ್ದರು. ಬಳಿಕ ಕೆ.ಆರ್.ಪುರಂ ಪ್ರದೇಶಕ್ಕೆ ಕರೆಸಿಕೊಂಡು, “ಮಹಿಳಾ ಸ್ನೇಹಿತ ಬರುತ್ತಿದ್ದಾರೆ” ಎಂದು ನಂಬಿಸಿ ಬೈಕ್‌ನಲ್ಲಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದಾರೆ.

ಅಲ್ಲಿ ಚಾಕು ತೋರಿಸಿ ಹಲ್ಲೆ ನಡೆಸಿದ ಆರೋಪಿಗಳು 47 ಗ್ರಾಂ ಚಿನ್ನದ ಸರ ಹಾಗೂ ಮೊಬೈಲ್ ಫೋನ್ ಕಸಿದುಕೊಂಡು ಪರಾರಿಯಾಗಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸಿಸಿಟಿವಿ, ಮೊಬೈಲ್ ಡೇಟಾ ಹಾಗೂ ಸ್ಥಳೀಯ ಮಾಹಿತಿ ಆಧರಿಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ತನಿಖೆಯಲ್ಲಿ ಆರೋಪಿಗಳು ಕದ್ದ ಚಿನ್ನವನ್ನು ಆಭರಣ ಮಳಿಗೆಯಲ್ಲಿ ಅಡವಿಟ್ಟಿರುವುದು ಪತ್ತೆಯಾಗಿದ್ದು, ಪೊಲೀಸರು ಚಿನ್ನವನ್ನು ವಶಕ್ಕೆ ಪಡೆದಿದ್ದಾರೆ. ಪ್ರಕರಣದ ಪ್ರಮುಖ ಆರೋಪಿ ಪತ್ತೆಗೆ ವಿಶೇಷ ತಂಡ ಶೋಧ ಮುಂದುವರಿಸಿದೆ.

“ಮಗಳ ಹಿಂದೆ ರಾಜಕೀಯ ಕೈವಾಡ?”: ಕುಟುಂಬ ವಿವಾದದ ಬಗ್ಗೆ ಮೌನ ಮುರಿದ ಶಾಸಕ ಯೋಗೇಶ್ವರ್

ಬೆಂಗಳೂರು: ಕುಟುಂಬದ ವಿವಾದ ಹಾಗೂ ಮಗಳ ಆರೋಪಗಳ ಬಗ್ಗೆ ಹರಿದಾಡುತ್ತಿರುವ ಚರ್ಚೆಗಳ ನಡುವೆ ಶಾಸಕ ಸಿ.ಪಿ. ಯೋಗೇಶ್ವರ್ ಮೊದಲ ಬಾರಿಗೆ ಸಾರ್ವಜನಿಕವಾಗಿ ಪ್ರತಿಕ್ರಿಯೆ ನೀಡಿದ್ದಾರೆ. “ನನ್ನ ಮಾಜಿ ಪತ್ನಿಯೊಂದಿಗೆ 25 ವರ್ಷಗಳ ಹಿಂದೆಯೇ ವಿಚ್ಛೇದನವಾಗಿದೆ. ಈಗ ಅವರಿಗೂ ನನ್ನ ಕುಟುಂಬಕ್ಕೂ ಯಾವುದೇ ಸಂಬಂಧ ಇಲ್ಲ” ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆ ಮಾಡಿದ ವಿಡಿಯೋದಲ್ಲಿ ಮಾತನಾಡಿರುವ ಯೋಗೇಶ್ವರ್, “ಚಕ್ಕರೆ ಗ್ರಾಮದಲ್ಲಿ ನಡೆದ ಊರ ಹಬ್ಬದ ವೇಳೆ ನಮ್ಮ ಮನೆ ಬಳಿ ಬಂದು ವಿಡಿಯೋ ಮಾಡಿ, ಮನೆಯೊಳಗೆ ಬಿಡುತ್ತಿಲ್ಲ ಎಂಬ ರೀತಿಯಲ್ಲಿ ಪ್ರಚಾರ ಮಾಡಲಾಗಿದೆ. ಆದರೆ ಈ ಬಾರಿ ವೈಯಕ್ತಿಕ ಕಾರಣಗಳಿಂದ ಹಬ್ಬವೇ ನಡೆದಿರಲಿಲ್ಲ” ಎಂದು ಹೇಳಿದ್ದಾರೆ.

“ಈ ವಿಚಾರ ಗೊತ್ತಿದ್ದರೂ ನನ್ನ ಮಗಳು ಈ ರೀತಿಯ ನಡೆ ತೋರಿರುವುದು ನೋವು ತಂದಿದೆ. ಸಾರ್ವಜನಿಕ ವಲಯದಲ್ಲಿ ನಾನು ಮಕ್ಕಳ ಜವಾಬ್ದಾರಿ ತೆಗೆದುಕೊಳ್ಳದವನಂತೆ ಚಿತ್ರಿಸಲಾಗುತ್ತಿದೆ” ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮಗಳು ನಿಶಾ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ ಯೋಗೇಶ್ವರ್, “ನನ್ನ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಿ ರಾಜಕೀಯವಾಗಿ ಕಳಂಕಿತಗೊಳಿಸುವ ಯತ್ನ ನಡೆಯುತ್ತಿದೆ. ಇದರ ಹಿಂದೆ ವಿರೋಧಿಗಳ ಕೈವಾಡವಿದೆಯೇ ಎಂಬ ಅನುಮಾನವೂ ಮೂಡುತ್ತಿದೆ” ಎಂದು ಹೇಳಿದ್ದಾರೆ.

“ನಾನು ನನ್ನ ಮಗಳನ್ನು ಎಂದಿಗೂ ದೂರ ಮಾಡಿಲ್ಲ. ಆದರೆ ನನ್ನ ವಿರುದ್ಧ ನಿರಂತರ ಆರೋಪಗಳು ನಡೆಯುತ್ತಿರುವುದು ಮನಸ್ಸಿಗೆ ತೀವ್ರ ನೋವುಂಟು ಮಾಡಿದೆ” ಎಂದು ಯೋಗೇಶ್ವರ್ ಹೇಳಿದ್ದಾರೆ.

ದರ್ಶನ್ ವಿರುದ್ಧ ‘ಮೀಡಿಯಾ ಟ್ರಯಲ್’: ಚಾನೆಲ್‌ಗಳ ವರ್ತನೆಗೆ ಹೈಕೋರ್ಟ್ ಗರಂ

ಬೆಂಗಳೂರು: ನಟ ದರ್ಶನ್ ವಿರುದ್ಧ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಡೆಯುತ್ತಿರುವ ‘ಮಾಧ್ಯಮ ವಿಚಾರಣೆ’ ಬಗ್ಗೆ ಕರ್ನಾಟಕ ಹೈಕೋರ್ಟ್ ಕಠಿಣ ಆಕ್ಷೇಪ ವ್ಯಕ್ತಪಡಿಸಿದೆ. ಟಿವಿ ಚಾನೆಲ್‌ಗಳು ಮತ್ತು ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳು ನ್ಯಾಯಾಲಯದ ಪ್ರಕ್ರಿಯೆಯನ್ನೇ ಸಾರ್ವಜನಿಕ ಪ್ರದರ್ಶನದಂತೆ ಪ್ರಸಾರ ಮಾಡುತ್ತಿರುವುದು ಗಂಭೀರ ಬೆಳವಣಿಗೆ ಎಂದು ಕೋರ್ಟ್ ಎಚ್ಚರಿಸಿದೆ.

“ಮಾಧ್ಯಮಗಳು ನ್ಯಾಯಾಲಯಗಳ ಪರ್ಯಾಯವಾಗಲು ಸಾಧ್ಯವಿಲ್ಲ. ನ್ಯಾಯಾಧೀಶರಂತೆ ವರ್ತಿಸಿ ಆರೋಪಿಗಳಿಗೆ ಶಿಕ್ಷೆ ವಿಧಿಸುವ ಹಕ್ಕು ಮಾಧ್ಯಮಗಳಿಗೆ ಇಲ್ಲ” ಎಂದು ಹೈಕೋರ್ಟ್ ಸ್ಪಷ್ಟ ಸಂದೇಶ ರವಾನಿಸಿದೆ.

ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಅವರ ಪೀಠ, ಕೆಲ ವಾಹಿನಿಗಳು ನ್ಯಾಯಾಲಯದ ಕಲಾಪಗಳನ್ನು ಮರುಸೃಷ್ಟಿ ಮಾಡಿ, ಆರೋಪಿಗಳು ಹಾಗೂ ವಕೀಲರ ಮುಖಗಳನ್ನು ತೆರೆದೆಯೇ ತೋರಿಸುತ್ತಿರುವುದು ನ್ಯಾಯಯುತ ವಿಚಾರಣೆಯ ಹಕ್ಕಿಗೆ ಧಕ್ಕೆಯಾಗಿದೆ ಎಂದು ಅಭಿಪ್ರಾಯಪಟ್ಟಿದೆ. “ಇದು ಬಾಕಿ ಇರುವ ಪ್ರಕರಣಗಳನ್ನು ಜನರ ಮನರಂಜನೆಗಾಗಿ ಪ್ರಸಾರ ಮಾಡುವಂತಾಗಿದೆ” ಎಂದು ಕೋರ್ಟ್ ಗಂಭೀರ ಟೀಕೆ ಮಾಡಿದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದ ಕುರಿತು ಕೆಲ ಮಾಧ್ಯಮ ಸಂಸ್ಥೆಗಳು ತಡೆಯಾಜ್ಞೆ ಆದೇಶ ಮತ್ತು ಕಾರ್ಯಕ್ರಮ ಸಂಹಿತೆ ಉಲ್ಲಂಘಿಸಿ ವರದಿ ಮಾಡುತ್ತಿವೆ ಎಂದು ಆರೋಪಿಸಿ ನಟ ದರ್ಶನ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಮಾಧ್ಯಮಗಳು ಆಯ್ದ ಮಾಹಿತಿ ಸೋರಿಕೆ, ಊಹಾತ್ಮಕ ವಿಶ್ಲೇಷಣೆ ಮತ್ತು ಪರಿಶೀಲಿಸದ ಆರೋಪಗಳ ಮೂಲಕ ಸಾರ್ವಜನಿಕ ಅಭಿಪ್ರಾಯವನ್ನು ಪ್ರಭಾವಿತಗೊಳಿಸುತ್ತಿವೆ ಎಂದು ಅವರು ದೂರಿದ್ದರು.

ಈ ಅರ್ಜಿಯನ್ನು ಭಾಗಶಃ ಮಾನ್ಯಗೊಳಿಸಿರುವ ಹೈಕೋರ್ಟ್, ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಹಾಗೂ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯಕ್ಕೆ ದೂರುಗಳ ಕುರಿತು ತನಿಖೆ ನಡೆಸಿ ಕ್ರಮ ಕೈಗೊಳ್ಳಲು ಸೂಚಿಸಿದೆ.

ನ್ಯಾಯಾಲಯದ ಪ್ರಕಾರ, ಈ ರೀತಿಯ ಪ್ರಸಾರಗಳು ಕೇಬಲ್ ಟೆಲಿವಿಷನ್ ನೆಟ್‌ವರ್ಕ್ ನಿಯಮಗಳು, 1994ರ ಕಾರ್ಯಕ್ರಮ ಸಂಹಿತೆಯ ನಿಯಮ 6 ಉಲ್ಲಂಘಿಸುವುದರ ಜೊತೆಗೆ ನ್ಯಾಯಾಂಗದ ಕಾರ್ಯದಲ್ಲಿ ಹಸ್ತಕ್ಷೇಪ ಮಾಡುವಂತಿವೆ. “ತಡೆಯಾಜ್ಞೆ ಇದ್ದರೂ ನಿರಂತರ ಪ್ರಸಾರ ಮಾಡುವುದು ನ್ಯಾಯಾಂಗದ ನಿರ್ಲಕ್ಷ್ಯ ತೋರಿಸುತ್ತದೆ. ಇದು ಪ್ರಾಥಮಿಕವಾಗಿ ನ್ಯಾಯಾಲಯದ ಅವಮಾನಕ್ಕೆ ಸಮಾನ” ಎಂದು ಹೈಕೋರ್ಟ್ ಎಚ್ಚರಿಕೆ ನೀಡಿದೆ.

ಟೈರ್ ಬ್ಲಾಸ್ಟ್ ಬಳಿಕ ಹೊತ್ತಿ ಉರಿದ ಎಸಿ ಬಸ್; ಮಧ್ಯರಾತ್ರಿ 36 ಮಂದಿಯ ಜೀವ ಉಳಿಸಿದ ಚಾಲಕ!

0

ಹಾಸನ: ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಸಂಚರಿಸುತ್ತಿದ್ದ ಖಾಸಗಿ ಸ್ಲೀಪರ್ ಎಸಿ ಬಸ್‌ಗೆ ಬೆಂಕಿ ಹೊತ್ತಿಕೊಂಡು ಸಂಪೂರ್ಣ ಸುಟ್ಟು ಭಸ್ಮವಾದ ಭೀಕರ ಘಟನೆ ಶಾಂತಿಗ್ರಾಮ ಸಮೀಪ ನಡೆದಿದೆ. ಮಣಿಪಾಲದಿಂದ ಬೆಂಗಳೂರಿಗೆ ತೆರಳುತ್ತಿದ್ದ ಬಸ್‌ನಲ್ಲಿ ಇದ್ದ 36 ಪ್ರಯಾಣಿಕರು ಚಾಲಕನ ಕ್ಷಿಪ್ರ ನಿರ್ಧಾರದಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ತಡರಾತ್ರಿ ಸುಮಾರು 2:30ರ ವೇಳೆಗೆ ಬಸ್‌ನ ಹಿಂಬದಿ ಟೈರ್ ಸ್ಫೋಟಗೊಂಡಿದ್ದು, ನಂತರ ಬೆಂಕಿ ವೇಗವಾಗಿ ಹಬ್ಬಿದೆ. ಚಾಲಕ ತಕ್ಷಣವೇ ಬಸ್ ನಿಲ್ಲಿಸಿ, ಒಳಗಿದ್ದ ಪ್ರಯಾಣಿಕರನ್ನು ಎಚ್ಚರಿಸಿ ಹೊರಗೆ ಕರೆದೊಯ್ದಿದ್ದಾರೆ. ಬೆಂಕಿ ವ್ಯಾಪಕವಾಗುವ ಮುನ್ನವೇ ಎಲ್ಲರನ್ನು ಸುರಕ್ಷಿತವಾಗಿ ಕೆಳಗಿಳಿಸಲಾಗಿದೆ.

ಬಸ್‌ನಲ್ಲಿ ಮಹಿಳೆಯರು ಮತ್ತು ಮಕ್ಕಳೂ ಸೇರಿ ಒಟ್ಟು 36 ಮಂದಿ ಪ್ರಯಾಣಿಸುತ್ತಿದ್ದರು. ಯಾವುದೇ ಜೀವಹಾನಿ ಸಂಭವಿಸದಿದ್ದರೂ, ಪ್ರಯಾಣಿಕರ ಬ್ಯಾಗ್‌, ಬಟ್ಟೆ, ಮೊಬೈಲ್ ಸೇರಿದಂತೆ ಬೆಲೆಬಾಳುವ ವಸ್ತುಗಳು ಬೆಂಕಿಯಲ್ಲಿ ಕರಕಲಾಗಿವೆ.

ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದರೂ, ಬಸ್ ಸಂಪೂರ್ಣ ಸುಟ್ಟು ಹೋಗಿದೆ. ಘಟನೆ ಕುರಿತು ಸಾರಿಗೆ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದು, ತಾಂತ್ರಿಕ ದೋಷವೇ ಅಥವಾ ಬೇರೆ ಕಾರಣವೇ ಎಂಬುದರ ಕುರಿತು ತನಿಖೆ ಮುಂದುವರಿದಿದೆ.

error: Content is protected !!