Home Blog

ದಾವಣಗೆರೆಯಲ್ಲಿ ಡಬಲ್ ಟ್ರಾಜಿಡಿ ; ಬಸ್ ಪಲ್ಟಿಗೆ ವಿದ್ಯಾರ್ಥಿ ಬಲಿ, ಹೆದ್ದಾರಿಯಲ್ಲಿ ಕಾರು ಅಪಘಾತಕ್ಕೆ ಇಬ್ಬರು ಸಾವು

ದಾವಣಗೆರೆ: ಜಿಲ್ಲೆಯಲ್ಲಿ ಒಂದೇ ದಿನ ಎರಡು ಭೀಕರ ರಸ್ತೆ ಅಪಘಾತಗಳು ಸಂಭವಿಸಿ ಮೂವರು ಪ್ರಾಣ ಕಳೆದುಕೊಂಡಿದ್ದಾರೆ. ಚನ್ನಗಿರಿ ತಾಲೂಕಿನ ಮರಬನಹಳ್ಳಿ ಗ್ರಾಮದಲ್ಲಿ ಆ್ಯಕ್ಸಲ್ ತುಂಡಾದ ಪರಿಣಾಮ ಸಾರಿಗೆ ಬಸ್ ಪಲ್ಟಿಯಾಗಿ ವಿದ್ಯಾರ್ಥಿಯೊಬ್ಬ ಮೃತಪಟ್ಟಿದ್ದರೆ, 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಅಪಘಾತದಲ್ಲಿ ಮೃತಪಟ್ಟ ಯುವಕನನ್ನು ದರ್ಶನ್ (21) ಎಂದು ಗುರುತಿಸಲಾಗಿದೆ. ಬಸ್ ಪಲ್ಟಿಯಾದ ಪರಿಣಾಮ ಹಲವು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದು, ಕನಿಷ್ಠ 20 ಮಂದಿಯ ಸ್ಥಿತಿ ಚಿಂತಾಜನಕವಾಗಿದೆ. ಗಾಯಾಳುಗಳಿಗೆ ದಾವಣಗೆರೆ ಜಿಲ್ಲಾ ಆಸ್ಪತ್ರೆ ಹಾಗೂ ಬಸವಾಪಟ್ಟಣ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಇನ್ನೊಂದೆಡೆ, ದಾವಣಗೆರೆ ನಗರದ ಶಾಮನೂರು ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಎರಡು ಕಾರುಗಳ ನಡುವೆ ಸಂಭವಿಸಿದ ಭೀಕರ ಡಿಕ್ಕಿಗೆ ಇಬ್ಬರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರನ್ನು ಗೌತಮ್ (29) ಹಾಗೂ ಮನೋಜ್ (29) ಎಂದು ಗುರುತಿಸಲಾಗಿದೆ. ಮದುವೆ ಕಾರ್ಯಕ್ರಮ ಮುಗಿಸಿ ವಾಪಸ್ ಆಗುತ್ತಿದ್ದ ವೇಳೆ ವೇಗದ ಕಾರುಗಳು ಮುಖಾಮುಖಿ ಡಿಕ್ಕಿ ಹೊಡೆದಿವೆ ಎನ್ನಲಾಗಿದೆ.

ಎರಡೂ ಕಾರುಗಳು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಸ್ಥಳಕ್ಕೆ ದಾವಣಗೆರೆ ದಕ್ಷಿಣ ಸಂಚಾರಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅತಿ ವೇಗವೇ ಅಪಘಾತಕ್ಕೆ ಪ್ರಮುಖ ಕಾರಣ ಎಂಬ ಶಂಕೆ ವ್ಯಕ್ತವಾಗಿದೆ.

ಬಹುಮತ ಸಾಬೀತಾದರೆ ನಾಳೆಯೇ ಪ್ರಮಾಣವಚನ: ವಿಜಯ್ ವಿಚಾರದಲ್ಲಿ ರಾಜ್ಯಪಾಲ ಅರ್ಲೇಕರ್ ಸ್ಪಷ್ಟನೆ

ಚೆನ್ನೈ: ತಮಿಳುನಾಡಿನಲ್ಲಿ ಸರ್ಕಾರ ರಚನೆ ಕುರಿತ ರಾಜಕೀಯ ಚರ್ಚೆಗಳು ತೀವ್ರವಾಗಿರುವ ನಡುವೆಯೇ ರಾಜ್ಯಪಾಲ ಆರ್‌.ವಿ. ಅರ್ಲೇಕರ್ ಮಹತ್ವದ ಸ್ಪಷ್ಟನೆ ನೀಡಿದ್ದಾರೆ. ಬಹುಮತ ಹೊಂದಿರುವ ಯಾವುದೇ ಪಕ್ಷ ಅಥವಾ ಮೈತ್ರಿಗೆ ಸರ್ಕಾರ ರಚನೆಗೆ ಅವಕಾಶ ನೀಡುವುದು ಪ್ರಜಾಪ್ರಭುತ್ವ ವ್ಯವಸ್ಥೆಯ ಭಾಗವಾಗಿದ್ದು, ಅಂತಿಮವಾಗಿ ಸಂಖ್ಯೆಯೇ ಮುಖ್ಯ ಎಂದು ಅವರು ಹೇಳಿದ್ದಾರೆ.

ದಳಪತಿ ವಿಜಯ್ ಎರಡು ಬಾರಿ ರಾಜ್ಯಪಾಲರನ್ನು ಭೇಟಿಯಾಗಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ್ದರು. ಆದರೆ, ಅಗತ್ಯ ಬಹುಮತವನ್ನು ಸಾಬೀತುಪಡಿಸಲು ಸಾಧ್ಯವಾಗದ ಹಿನ್ನೆಲೆ ಅವರ ಮನವಿಯನ್ನು ರಾಜ್ಯಪಾಲರು ತಿರಸ್ಕರಿಸಿದ್ದರು. ಈ ನಿರ್ಧಾರಕ್ಕೆ ವ್ಯಾಪಕ ಟೀಕೆ ವ್ಯಕ್ತವಾದ ಬೆನ್ನಲ್ಲೇ ರಾಜ್ಯಪಾಲರು ತಮ್ಮ ನಿಲುವು ಸ್ಪಷ್ಟಪಡಿಸಿದ್ದಾರೆ.

ಯಾವುದೇ ಪಕ್ಷ ಸರ್ಕಾರ ರಚಿಸಲು ಮುಂದೆ ಬಂದರೂ, ತಮ್ಮ ಬಳಿ ಬಹುಮತವಿದೆ ಎಂಬುದನ್ನು ಮೊದಲು ಮನವರಿಕೆ ಮಾಡಿಕೊಡಬೇಕು. ಇದಕ್ಕಿಂತ ಹೆಚ್ಚಾಗಿ ನಾನು ಏನನ್ನೂ ಕೇಳಿಲ್ಲ. ನಾನು ತಲೆ ಎಣಿಕೆ ಮಾಡಲು ಹೇಳುತ್ತಿಲ್ಲ. ಬಹುಮತವನ್ನು ವಿಧಾನಸಭೆಯಲ್ಲೇ ಸಾಬೀತುಪಡಿಸಬೇಕು ಎಂಬುದಷ್ಟೇ ನನ್ನ ಮಾತು ಎಂದು ರಾಜ್ಯಪಾಲರು ತಿಳಿಸಿದ್ದಾರೆ.

ಬಹುಮತದೊಂದಿಗೆ ಡಿಎಂಕೆ, ಎಐಎಡಿಎಂಕೆ ಅಥವಾ ಬೇರೆ ಯಾರೇ ಬಂದರೂ ಸರ್ಕಾರ ರಚನೆಗೆ ಅವಕಾಶ ನೀಡಲೇಬೇಕು. ಇದು ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಭಾಗ. ಅಗತ್ಯ ಸಂಖ್ಯಾಬಲ ಇದ್ದರೆ ನಾಳೆಯೇ ಪ್ರಮಾಣವಚನ ಬೋಧಿಸಲು ನಾನು ಸಿದ್ಧನಿದ್ದೇನೆ ಎಂದು ಅವರು ಹೇಳಿದ್ದಾರೆ.

ಇದೇ ವೇಳೆ, ಟಿವಿಕೆ ಹೊರತುಪಡಿಸಿ 118 ಸದಸ್ಯರ ಬೆಂಬಲದೊಂದಿಗೆ ಇನ್ನಾವ ಪಕ್ಷವೂ ಮುಂದೆ ಬರದಿದ್ದರೆ ಸಂವಿಧಾನಾತ್ಮಕ ಆಯ್ಕೆಗಳ ಬಗ್ಗೆ ಯೋಚಿಸಬೇಕಾಗುತ್ತದೆ ಎಂದೂ ಅವರು ತಿಳಿಸಿದ್ದಾರೆ.

ಎಸ್‌.ಆರ್‌. ಬೊಮ್ಮಾಯಿ ಪ್ರಕರಣವನ್ನು ಉಲ್ಲೇಖಿಸಿದ ರಾಜ್ಯಪಾಲರು, ಆ ತೀರ್ಪು ಹೊಸ ಸರ್ಕಾರ ರಚನೆಗೆ ಸಂಬಂಧಿಸಿದುದಲ್ಲ. ಇಲ್ಲಿ ವಿಚಾರ ಹೊಸ ಸರ್ಕಾರ ರಚನೆಗೆ ಸಂಬಂಧಿಸಿದೆ. ನಾನು ಬಹುಮತದ ಸಂಖ್ಯೆ ಕೇಳುತ್ತಿದ್ದೇನೆ ಹೊರತು ನನ್ನ ಮುಂದೆ ಶಾಸಕರ ತಲೆ ಎಣಿಕೆ ಮಾಡಲು ಹೇಳುತ್ತಿಲ್ಲ. ಅದನ್ನು ವಿಧಾನಸಭೆಯಲ್ಲೇ ಮಾಡಬೇಕು ಎಂದು ಹೇಳಿದರು.

ರಾಜಕೀಯವಾಗಿ ಕುದುರೆ ವ್ಯಾಪಾರದ ಆರೋಪಗಳು ಕೇಳಿಬರುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಇಂತಹ ಬೆಳವಣಿಗೆಗಳು ಒಳ್ಳೆಯದಲ್ಲ. ಸಮಸ್ಯೆಯನ್ನು ಶೀಘ್ರವಾಗಿ ಬಗೆಹರಿಸಲು ನಾನು ಸಿದ್ಧನಿದ್ದೇನೆ. ಆದರೆ ಸರ್ಕಾರ ರಚನೆಗೆ ಸಂಖ್ಯಾಬಲ ಅನಿವಾರ್ಯ ಎಂದು ಹೇಳಿದ್ದಾರೆ.

ಸಂಖ್ಯೆಗಳಿಲ್ಲದೇ ಮೊದಲು ಪ್ರಮಾಣವಚನ ಬೋಧಿಸಿ ನಂತರ ಬಹುಮತ ಸಾಬೀತುಪಡಿಸಿ ಎಂದು ಹೇಳುವುದು ಸರಿಯಲ್ಲ. ಇದು ಕೇವಲ ಒಂದು ಪಕ್ಷದ ಸಮಸ್ಯೆಯಲ್ಲ, ರಾಜ್ಯದ ಆಡಳಿತಕ್ಕೆ ಸಂಬಂಧಿಸಿದ ವಿಷಯ. ಸಂಖ್ಯಾಬಲವಿಲ್ಲದೇ ಸರ್ಕಾರ ರಚನೆಗೆ ಅವಕಾಶ ನೀಡಿದರೆ ಜನರಿಗೆ ಸಮಸ್ಯೆಯಾಗುತ್ತದೆ ಎಂದು ರಾಜ್ಯಪಾಲರು ಅಭಿಪ್ರಾಯಪಟ್ಟರು.

ಹದ್ದುಬಸ್ತಿಗೆ ಲಂಚ ಬೇಡಿಕೆ: ಲೋಕಾಯುಕ್ತ ಬಲೆಗೆ ಬಿದ್ದ ಸರ್ವೆಯರ್

ಹಗರಿಬೊಮ್ಮನಹಳ್ಳಿ: ಭೂಮಿ ಹದ್ದು ಬಸ್ತು ಮಾಡಿಕೊಡುವುದಕ್ಕಾಗಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆರೋಪದ ಮೇರೆಗೆ ಹಗರಿಬೊಮ್ಮನಹಳ್ಳಿ ಭೂಮಾಪನ ಇಲಾಖೆಯ ಸರ್ವೆಯರ್ ಒಬ್ಬರು ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ತಾಲೂಕಿನ ನಂದಿಬೇವೂರು ತಾಂಡಾದಲ್ಲಿ ನಡೆದಿದೆ.

ಹಗರಿಬೊಮ್ಮನಹಳ್ಳಿ ಭೂಮಾಪನ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸರ್ವೆಯರ್ ಕೊಟ್ರೇಶ್ ನಾಯ್ಕ ಲೋಕಾಯುಕ್ತರ ಬಲೆಗೆ ಬಿದ್ದ ಆರೋಪಿ.

ತಾಲೂಕಿನ ವರದಾಪುರ ಗ್ರಾಮದ ಎಚ್. ದೇವೇಂದ್ರಪ್ಪ ಅವರು ತಮ್ಮ ಹೊಲದ ಹದ್ದು ಬಸ್ತಿಗಾಗಿ ಭೂಮಾಪನ ಇಲಾಖೆಗೆ ಅರ್ಜಿ ಸಲ್ಲಿಸಿದ್ದರು. ಈ ಪ್ರಕರಣದ ಪರಿಶೀಲನೆಗಾಗಿ ಸರ್ವೆಯರ್ ಕೊಟ್ರೇಶ್ ನಾಯ್ಕ ಅವರನ್ನು ನಿಯೋಜಿಸಲಾಗಿತ್ತು.

ಆದರೆ, 2024ರಿಂದ ವಿವಿಧ ಕಾರಣಗಳನ್ನು ಹೇಳುತ್ತಾ ಹದ್ದು ಬಸ್ತು ಕಾರ್ಯವನ್ನು ವಿಳಂಬಗೊಳಿಸಿ, ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಮೊದಲ ಹಂತದಲ್ಲಿ ₹10 ಸಾವಿರ ಹಣ ಪಡೆದಿದ್ದಲ್ಲದೆ, ಬಳಿಕ ಮತ್ತಷ್ಟು ₹30 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ, ಹರಪನಹಳ್ಳಿ ತಾಲೂಕಿನ ನಂದಿಬೇವೂರು ತಾಂಡಾದಲ್ಲಿ ಲಂಚ ಸ್ವೀಕರಿಸುವ ವೇಳೆ ಕೊಟ್ರೇಶ್ ನಾಯ್ಕ ಅವರನ್ನು ಬಲೆಗೆ ಬೀಳಸಲಾಗಿದೆ. ಬಳಿಕ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಲೋಕಾಯುಕ್ತ ಡಿವೈಎಸ್ಪಿ ಸಚಿನ್ ಎಸ್. ಛಲವಾದಿ ಅವರ ಮಾರ್ಗದರ್ಶನದಲ್ಲಿ ಸಿಪಿಐ ರಾಜೇಶ್ ಲಮಾಣಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು, ಅಧಿಕಾರಿಗಳಾದ ಅಮರೇಶ್ ಹುಬ್ಬಳ್ಳಿ ಸೇರಿದಂತೆ ಸಿಬ್ಬಂದಿಗಳಾದ ಸುರೇಶ್, ಶ್ರೀನಿವಾಸ್, ರೇಣುಕಪ್ಪ, ಕುಮಾರ ನಾಯ್ಕ, ಚೆನ್ನಬಸಪ್ಪ ಹಾಗೂ ಕೃಷ್ಣ ತಂಡದಲ್ಲಿ ಭಾಗವಹಿಸಿದ್ದರು.

ಕನಕಪುರದಲ್ಲಿ ಡಬ್ಬಲ್ ಶಾಕ್: ಡಾಕ್ಟರ್ ಆತ್ಮಹತ್ಯೆ ಮಾಡಿಕೊಂಡ 48 ಗಂಟೆ ಒಳಗೆ ನರ್ಸ್ ನೇಣಿಗೆ ಶರಣು

ರಾಮನಗರ: ಕನಕಪುರ ನಗರದ ನವೋದಯ ಆಸ್ಪತ್ರೆ ಸುತ್ತ ಭಾರೀ ಅನುಮಾನ ಮತ್ತು ಆತಂಕದ ವಾತಾವರಣ ನಿರ್ಮಾಣವಾಗಿದೆ. ಆಸ್ಪತ್ರೆಯ ವೈದ್ಯ ಡಾ. ಚೇತನ್ ಟೆಂಕರ್ ಆತ್ಮಹತ್ಯೆ ಮಾಡಿಕೊಂಡು ಕೇವಲ ಎರಡು ದಿನಗಳಲ್ಲೇ ಅದೇ ಆಸ್ಪತ್ರೆಯ ನರ್ಸ್ ಸರಸ್ವತಿ ಕೂಡ ನೇಣಿಗೆ ಶರಣಾಗಿದ್ದಾರೆ.

ಮಹದೇಶ್ವರ ಬಡಾವಣೆಯ ಮನೆಯಲ್ಲಿ ನರ್ಸ್ ಸರಸ್ವತಿ ಮೃತದೇಹ ಪತ್ತೆಯಾಗಿದ್ದು, ಆತ್ಮಹತ್ಯೆ ಶಂಕೆ ವ್ಯಕ್ತವಾಗಿದೆ. ಎರಡು ದಿನಗಳ ಹಿಂದೆ ಡಾ. ಚೇತನ್ ಕುಟುಂಬ ಕಲಹದ ಹಿನ್ನೆಲೆ ಜೀವ ಅಂತ್ಯಗೊಳಿಸಿಕೊಂಡಿದ್ದರು. ಇದೀಗ ಅವರೊಂದಿಗೆ ದೀರ್ಘಕಾಲದಿಂದ ಕೆಲಸ ಮಾಡುತ್ತಿದ್ದ ನರ್ಸ್ ಕೂಡ ಆತ್ಮಹತ್ಯೆ ಮಾಡಿಕೊಂಡಿರುವುದು ಪ್ರಕರಣಕ್ಕೆ ಹೊಸ ತಿರುವು ನೀಡಿದೆ.

ಸ್ಥಳೀಯ ಮೂಲಗಳ ಪ್ರಕಾರ, ವೈದ್ಯ ಮತ್ತು ನರ್ಸ್ ನಡುವೆ ಅಕ್ರಮ ಸಂಬಂಧವಿತ್ತು ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಆದರೆ ಈ ಕುರಿತು ಪೊಲೀಸರು ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಕನಕಪುರ ಟೌನ್ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು, ಇಬ್ಬರ ಸಾವಿನ ನಡುವಿನ ಸಂಪರ್ಕದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ತಪ್ಪು ಮಾಹಿತಿ ನೀಡಿ ನ್ಯಾಯಾಲಯದ ದಾರಿ ತಪ್ಪಿಸಲು ಯತ್ನ, 25 ಸಾವಿರ ರೂ. ದಂಡ – KKRTC ವಿರುದ್ಧ ಹೈಕೋರ್ಟ್ ಕಿಡಿ

ಬೆಂಗಳೂರು: ರಸ್ತೆ ಅಪಘಾತ ಪ್ರಕರಣದಲ್ಲಿ ತನ್ನದೇ ಸಿಬ್ಬಂದಿಯ ತಪ್ಪನ್ನು ಮುಚ್ಚಿಟ್ಟು ನ್ಯಾಯಾಲಯಕ್ಕೆ ತಪ್ಪು ಮಾಹಿತಿ ನೀಡಲು ಯತ್ನಿಸಿದ ಹಿನ್ನೆಲೆಯಲ್ಲಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಕ್ಕೆ (ಕೆಕೆಆರ್‌ಟಿಸಿ) ಹೈಕೋರ್ಟ್‌ ತೀವ್ರ ತರಾಟೆ ತೆಗೆದುಕೊಂಡಿದೆ. ಜೊತೆಗೆ 25 ಸಾವಿರ ರೂಪಾಯಿ ದಂಡ ವಿಧಿಸಿ ಮಹತ್ವದ ಆದೇಶ ಹೊರಡಿಸಿದೆ.

ಅಪಘಾತಕ್ಕೆ ಸಂಬಂಧಿಸಿದಂತೆ ನಿಗಮವು ಈಗಾಗಲೇ ತನ್ನ ಸಿಬ್ಬಂದಿಯ ವಿರುದ್ಧ ಆಂತರಿಕ ಶಿಸ್ತು ಕ್ರಮ ಕೈಗೊಂಡಿದ್ದರೂ, ನ್ಯಾಯಾಲಯದ ಮುಂದೆ ಮೃತ ವ್ಯಕ್ತಿಯದ್ದೇ ತಪ್ಪು ಎಂದು ವಾದ ಮಂಡಿಸಿರುವುದು ದ್ವಂದ್ವ ನಿಲುವು ಎಂದು ಹೈಕೋರ್ಟ್‌ ಕಿಡಿಕಾರಿದೆ. ಇದು ನ್ಯಾಯಾಂಗ ಪ್ರಕ್ರಿಯೆಯ ದುರುಪಯೋಗವಾಗಿದ್ದು, ನ್ಯಾಯಾಲಯದ ಪಾವಿತ್ರ್ಯತೆಗೆ ಧಕ್ಕೆ ತರುವಂತಹ ನಡೆ ಎಂದು ಪೀಠ ಸ್ಪಷ್ಟಪಡಿಸಿದೆ.

ಅಪಘಾತ ಪರಿಹಾರ ನ್ಯಾಯಾಧೀಕರಣದ ಆದೇಶವನ್ನು ಪ್ರಶ್ನಿಸಿ ಕೆಕೆಆರ್‌ಟಿಸಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಹಾಗೂ ನ್ಯಾಯಮೂರ್ತಿ ಡಾ. ಚಿಲ್ಲಕೂರು ಸುಮಲತಾ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿದೆ. ವಿಧಿಸಿರುವ 25 ಸಾವಿರ ರೂಪಾಯಿ ದಂಡವನ್ನು ಪ್ರಕರಣಕ್ಕೆ ಕಾರಣರಾದ ಅಧಿಕಾರಿಗಳಿಂದಲೇ ವಸೂಲಿ ಮಾಡಬೇಕು ಎಂದು ಕೂಡ ನ್ಯಾಯಾಲಯ ಸೂಚಿಸಿದೆ.

ವಿಚಾರಣೆ ವೇಳೆ ನ್ಯಾಯಪೀಠ, ಅಪಘಾತದ ಬಳಿಕ ನಿಗಮವು ಗುತ್ತಿಗೆ ಆಧಾರಿತ ಚಾಲಕನನ್ನು ಸೇವೆಯಿಂದ ವಜಾಗೊಳಿಸಿರುವುದನ್ನೂ, ನಿರ್ವಾಹಕನ ವಾರ್ಷಿಕ ವೇತನ ಬಡ್ತಿಯನ್ನು ಕಡಿತಗೊಳಿಸಿರುವುದನ್ನೂ ಉಲ್ಲೇಖಿಸಿತು. ಒಂದು ಕಡೆ ಸಿಬ್ಬಂದಿಯ ತಪ್ಪು ಒಪ್ಪಿಕೊಂಡು ಶಿಕ್ಷೆ ನೀಡಿರುವ ನಿಗಮ, ಮತ್ತೊಂದೆಡೆ ಮೃತರದ್ದೇ ತಪ್ಪು ಎಂದು ವಾದಿಸುವುದು ಕಾನೂನುಬಾಹಿರ ದ್ವಂದ್ವ ನಿಲುವು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.

ಇದೇ ವೇಳೆ, ನ್ಯಾಯಾಲಯಕ್ಕೆ ಬರುವ ಯಾವುದೇ ದಾವೆದಾರರು ಶುದ್ಧ ಹಸ್ತದಿಂದ ಬರಬೇಕು. ತಪ್ಪು ಮಾಹಿತಿ ನೀಡಿ ನ್ಯಾಯಾಂಗ ಪ್ರಕ್ರಿಯೆಯನ್ನು ದಾರಿ ತಪ್ಪಿಸಲು ಯತ್ನಿಸುವವರು ಯಾವುದೇ ಪರಿಹಾರಕ್ಕೆ ಅರ್ಹರಾಗುವುದಿಲ್ಲ ಎಂದು ಹೈಕೋರ್ಟ್‌ ಎಚ್ಚರಿಕೆ ನೀಡಿದೆ.

ಅಲ್ಲದೆ, ಮುಂದಿನ ದಿನಗಳಲ್ಲಿ ಇಂತಹ ಪ್ರಕರಣಗಳಲ್ಲಿ ಆಂತರಿಕ ಶಿಸ್ತು ಕ್ರಮದ ವಿವರಗಳನ್ನು ನ್ಯಾಯಾಲಯದ ಮುಂದೆ ಕಡ್ಡಾಯವಾಗಿ ಬಹಿರಂಗಪಡಿಸಬೇಕು. ಇದೇ ರೀತಿಯ ದ್ವಂದ್ವ ನಿಲುವುಗಳನ್ನು ತಡೆಯಲು ಪ್ರತ್ಯೇಕ ಪರಿಶೀಲನಾ ಸಮಿತಿ ರಚಿಸಿ ಸೂಕ್ತ ಸುತ್ತೋಲೆ ಹೊರಡಿಸಬೇಕು ಎಂದು ಕೆಕೆಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕರಿಗೆ ನಿರ್ದೇಶನ ನೀಡಲಾಗಿದೆ.

ಪ್ರಕರಣದ ಹಿನ್ನೆಲೆ ಕುರಿತು ಹೇಳುವುದಾದರೆ, ವಿನೋದ್ ಕುಮಾರ್ ಮಾನೆ ಎಂಬವರು ಬಸ್ ಅಪಘಾತದಲ್ಲಿ ಮೃತಪಟ್ಟಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ್ದ ಮೋಟಾರು ವಾಹನ ಅಪಘಾತ ಪರಿಹಾರ ನ್ಯಾಯಾಧೀಕರಣವು, ಮೃತರ ಕುಟುಂಬಕ್ಕೆ 1 ಕೋಟಿ 10 ಲಕ್ಷ 36 ಸಾವಿರ 200 ರೂಪಾಯಿ ಪರಿಹಾರವನ್ನು ಶೇ.6 ಬಡ್ಡಿದರದೊಂದಿಗೆ ನೀಡುವಂತೆ 2025ರ ಮಾರ್ಚ್‌ 14ರಂದು ಕೆಕೆಆರ್‌ಟಿಸಿಗೆ ಆದೇಶಿಸಿತ್ತು. ಈ ಆದೇಶ ಪ್ರಶ್ನಿಸಿ ನಿಗಮವು ಹೈಕೋರ್ಟ್‌ ಮೆಟ್ಟಿಲೇರಿತ್ತು.

ವಿಚಾರಣೆ ವೇಳೆ ಕೆಕೆಆರ್‌ಟಿಸಿ ಪರ ವಕೀಲರು, ಮೃತ ವ್ಯಕ್ತಿಯೇ ಬಸ್‌ ಬಾಗಿಲಲ್ಲಿ ನಿಂತು ನಿರ್ಲಕ್ಷ್ಯದಿಂದ ಪ್ರಯಾಣಿಸಿದ್ದರಿಂದ ಘಟನೆ ನಡೆದಿದೆ ಎಂದು ವಾದ ಮಂಡಿಸಿದ್ದರು. ಆದರೆ, ಚಾಲಕ ಮತ್ತು ನಿರ್ವಾಹಕರ ವಿರುದ್ಧ ಕೈಗೊಂಡ ಶಿಸ್ತು ಕ್ರಮದ ಬಗ್ಗೆ ನ್ಯಾಯಾಲಯ ಪ್ರಶ್ನಿಸಿದಾಗ, ಚಾಲಕನನ್ನು ಸೇವೆಯಿಂದ ವಜಾಗೊಳಿಸಿರುವುದನ್ನೂ, ನಿರ್ವಾಹಕನ ವೇತನ ಬಡ್ತಿ ಕಡಿತಗೊಳಿಸಿರುವುದನ್ನೂ ನಿಗಮ ಪರ ವಕೀಲರು ಒಪ್ಪಿಕೊಂಡಿದ್ದರು.

 

ನವಿಲುಗಳ ಸರಣಿ ಸಾವಿನಿಂದ ಬೆಚ್ಚಿಬಿದ್ದ ತುಮಕೂರು; H5N1 ಭೀತಿ ನಡುವೆ ಜಿಲ್ಲೆಯಲ್ಲಿ ಕಟ್ಟೆಚ್ಚರ

0

ತುಮಕೂರು: ಜಿಲ್ಲೆಯಲ್ಲಿ ನವಿಲುಗಳ ಸರಣಿ ಸಾವು ಹಕ್ಕಿ ಜ್ವರದ ಭೀತಿಯನ್ನು ಮತ್ತಷ್ಟು ಗಂಭೀರಗೊಳಿಸಿದೆ. ಕಳೆದ ಒಂದು ತಿಂಗಳಲ್ಲಿ 54ಕ್ಕೂ ಅಧಿಕ ನವಿಲುಗಳು ಸಾವನ್ನಪ್ಪಿರುವುದು ಪರಿಸರ ಮತ್ತು ಆರೋಗ್ಯ ಇಲಾಖೆಗಳನ್ನೇ ಬೆಚ್ಚಿಬೀಳಿಸಿದೆ. ಈಗಾಗಲೇ ಕೆಲ ನವಿಲುಗಳಲ್ಲಿ H5N1 ವೈರಸ್ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ತುಮಕೂರು ಜಿಲ್ಲೆಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.

ತುಮಕೂರು ತಾಲೂಕಿನ ವಿವಿಧ ಭಾಗಗಳಲ್ಲಿ ಆರಂಭವಾದ ನವಿಲುಗಳ ಸಾವು ಇದೀಗ ಕುಣಿಗಲ್ ವ್ಯಾಪ್ತಿಗೂ ವಿಸ್ತರಿಸಿದೆ. ಕಾಡು ಪ್ರದೇಶಗಳಲ್ಲಿ ನಿರಂತರವಾಗಿ ನವಿಲಿನ ಕಳೆಬರಗಳು ಪತ್ತೆಯಾಗುತ್ತಿದ್ದು, ಸೋಂಕು ವೇಗವಾಗಿ ಹರಡುತ್ತಿರುವ ಶಂಕೆ ವ್ಯಕ್ತವಾಗಿದೆ. ಸಾವನ್ನಪ್ಪಿದ ಪಕ್ಷಿಗಳ ಮಾದರಿಗಳನ್ನು ಲ್ಯಾಬ್‌ಗೆ ರವಾನಿಸಲಾಗಿದ್ದು, ಅಧಿಕಾರಿಗಳು ವರದಿಗಾಗಿ ಕಾದಿದ್ದಾರೆ.

ಜಿಲ್ಲಾ ಪಶುಸಂಗೋಪನಾ ಇಲಾಖೆ ಹೈ ಅಲರ್ಟ್ ಘೋಷಿಸಿ, ಗ್ರಾಮೀಣ ಭಾಗಗಳಲ್ಲಿ ನಿಗಾವ್ಯವಸ್ಥೆ ಬಿಗಿಗೊಳಿಸಿದೆ. ಯಾವುದೇ ಪಕ್ಷಿ ಅಥವಾ ಕಾಡುಪ್ರಾಣಿಗಳ ಅಸಹಜ ಸಾವು ಕಂಡುಬಂದರೆ ತಕ್ಷಣ ಮಾಹಿತಿ ನೀಡುವಂತೆ ಸಾರ್ವಜನಿಕರಿಗೆ ಸೂಚಿಸಲಾಗಿದೆ. ಕೋಳಿ ಫಾರಂಗಳು, ಜಲಾಶಯ ಪ್ರದೇಶಗಳು ಹಾಗೂ ಕಾಡು ವಲಯಗಳಲ್ಲಿ ವಿಶೇಷ ತಪಾಸಣೆ ನಡೆಸಲಾಗುತ್ತಿದೆ.

ಇದರ ಮಧ್ಯೆ ಬೊಮ್ಮನಹಳ್ಳಿ ಕೋಳಿ ಫಾರಂನಲ್ಲಿ ಸಾವನ್ನಪ್ಪಿದ್ದ 30ಕ್ಕೂ ಹೆಚ್ಚು ಕೋಳಿಗಳ ಪರೀಕ್ಷಾ ವರದಿ ನೆಗೆಟಿವ್ ಬಂದಿದೆ. ಕೋಳಿಗಳಲ್ಲಿ ಹಕ್ಕಿ ಜ್ವರ ಪತ್ತೆಯಾಗದಿದ್ದರೂ, ನವಿಲುಗಳ ನಿರಂತರ ಸಾವು ಜಿಲ್ಲೆಯಲ್ಲಿ ಭೀತಿಯ ವಾತಾವರಣ ನಿರ್ಮಿಸಿದೆ.

ಅಕ್ರಮ ಅಕ್ಕಿ ಲಾರಿಗಳಿಂದ ಲಕ್ಷ ಲಕ್ಷ ವಸೂಲಿ ಮಾಡಿದ ಎಸ್ಪಿ ಗನ್‌ಮ್ಯಾನ್ ಅರೆಸ್ಟ್

0

ಬಳ್ಳಾರಿ: ಪೊಲೀಸ್ ಇಲಾಖೆಯ ಪ್ರತಿಷ್ಠೆಗೆ ಧಕ್ಕೆ ತರುವಂತಹ ಪ್ರಕರಣವೊಂದು ಬಳ್ಳಾರಿಯಲ್ಲಿ ಬೆಳಕಿಗೆ ಬಂದಿದ್ದು, ಜಿಲ್ಲಾ ಎಸ್ಪಿ ಗನ್‌ಮ್ಯಾನ್ ದೇವರಾಜ್ ಅಕ್ರಮ ಪಡಿತರ ಅಕ್ಕಿ ಸಾಗಾಣೆದಾರರಿಂದ ಹಣ ಸುಲಿಗೆ ಮಾಡಿದ ಆರೋಪದಡಿ ಬಂಧನಕ್ಕೊಳಗಾಗಿದ್ದಾನೆ. ಮೋಕಾ ಪೊಲೀಸರು ದೇವರಾಜ್ ಮತ್ತು ಆತನ ಸಹಚರರನ್ನು ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಿದ್ದಾರೆ.

ಆರೋಪಿಗಳ ತಂಡ ಮಡಕೇರಿಯಿಂದ ಆಂಧ್ರಪ್ರದೇಶಕ್ಕೆ ತೆರಳುತ್ತಿದ್ದ ಎರಡು ಅಕ್ಕಿ ಲಾರಿಗಳನ್ನು ಅಡ್ಡಗಟ್ಟಿ, ತಾವು ‘ಎಸ್ಪಿ ಸ್ಕ್ವಾಡ್’ ಅಧಿಕಾರಿಗಳು ಎಂದು ಪರಿಚಯಿಸಿಕೊಂಡಿದ್ದರು. ಬಳಿಕ ಲಾರಿಗಳನ್ನು ಜಪ್ತಿ ಮಾಡಿ ಜೈಲಿಗೆ ಕಳುಹಿಸುವುದಾಗಿ ಬೆದರಿಕೆ ಹಾಕಿ ಐದು ಲಕ್ಷ ರೂಪಾಯಿ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಕೊನೆಗೆ ಮೂರು ಲಕ್ಷ ರೂಪಾಯಿ ಪಡೆದು ವಾಹನಗಳನ್ನು ಬಿಟ್ಟುಕೊಟ್ಟಿದ್ದಾರೆ ಎಂದು ದೂರುದಾರ ಶರಭಯ್ಯ ಆರೋಪಿಸಿದ್ದಾರೆ.

ಮೋಕಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ದೂರಿನ ಆಧಾರದಲ್ಲಿ ತನಿಖೆ ಕೈಗೊಂಡ ಪೊಲೀಸರು, ಗನ್‌ಮ್ಯಾನ್ ದೇವರಾಜ್ ನೇರವಾಗಿ ಹಣ ವಸೂಲಿಯಲ್ಲಿ ಭಾಗಿಯಾಗಿರುವುದನ್ನು ಪತ್ತೆಹಚ್ಚಿದ್ದಾರೆ. ಪ್ರಕರಣ ಗಂಭೀರವಾಗುತ್ತಿದ್ದಂತೆ ಜಿಲ್ಲಾ ಎಸ್ಪಿ ಸುಮನ್ ಡಿ. ಪನ್ನೇಕರ್ ತಕ್ಷಣ ಕ್ರಮ ಕೈಗೊಂಡು ಆರೋಪಿಗಳ ಬಂಧನಕ್ಕೆ ಸೂಚನೆ ನೀಡಿದ್ದಾರೆ.

ಸದ್ಯ ಆರೋಪಿಗಳ ವಿರುದ್ಧ ಸುಲಿಗೆ, ಬೆದರಿಕೆ ಹಾಗೂ ಅಧಿಕಾರದ ದುರುಪಯೋಗ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಈ ಅಕ್ರಮ ವಸೂಲಿಯಲ್ಲಿ ಇನ್ನೂ ಯಾರಾದರೂ ಭಾಗಿಯಾಗಿದ್ದಾರೆಯೇ ಎಂಬುದರ ಬಗ್ಗೆ ತನಿಖೆ ವಿಸ್ತರಿಸಿದ್ದಾರೆ.

ಹಲ್ಲು ಕಡಿಯುವ ಅಭ್ಯಾಸದಿಂದ ದವಡೆ ನೋವು ಬರುತ್ತಿದೆಯೇ? ಇಲ್ಲಿದೆ ಅಸಲಿ ಕಾರಣ

ಬೆಳಿಗ್ಗೆ ಎದ್ದ ತಕ್ಷಣ ದವಡೆ ನೋವು ಅಥವಾ ಹಲ್ಲು ನೋವು ಅನುಭವಿಸುವವರ ಸಂಖ್ಯೆ ಇತ್ತೀಚೆಗೆ ಹೆಚ್ಚುತ್ತಿದೆ. ತಜ್ಞರ ಪ್ರಕಾರ, ಇದಕ್ಕೆ ಪ್ರಮುಖ ಕಾರಣ ರಾತ್ರಿ ನಿದ್ರೆಯಲ್ಲಿರುವಾಗ ಅರಿವಿಲ್ಲದೆ ಹಲ್ಲು ಕಡಿಯುವ ಅಭ್ಯಾಸವಾಗಿದೆ. ಜಗತ್ತಿನಾದ್ಯಂತ ಸುಮಾರು 10ರಿಂದ 36 ಶೇಕಡಾ ಜನರು ಒತ್ತಡ ಮತ್ತು ಮಾನಸಿಕ ಚಿಂತೆಯಿಂದ ಈ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ ಎಂದು ಅಧ್ಯಯನಗಳು ತಿಳಿಸಿವೆ.

ರಾತ್ರಿ ಮಲಗುವ ವೇಳೆ ಒತ್ತಡ ಅಥವಾ ಅತಿಯಾದ ಆಲೋಚನೆಗಳಿಂದ ಅನೇಕರು ತಿಳಿಯದೆ ಹಲ್ಲುಗಳನ್ನು ಬಿಗಿಯಾಗಿ ಒತ್ತುತ್ತಾರೆ ಅಥವಾ ಕಡಿಯುತ್ತಾರೆ. ಈ ನಿರಂತರ ಘರ್ಷಣೆಯಿಂದ ಹಲ್ಲಿನ ಮೇಲಿನ ದಂತಕವಚ ಪದರ ಹಾನಿಗೊಳಗಾಗುತ್ತದೆ. ಪರಿಣಾಮವಾಗಿ ಹಲ್ಲುಗಳು ನಿಧಾನವಾಗಿ ದುರ್ಬಲಗೊಳ್ಳುವ ಸಾಧ್ಯತೆ ಇರುತ್ತದೆ.

ಬೆಳಿಗ್ಗೆ ಎದ್ದಾಗ ದವಡೆಯಲ್ಲಿ ಬಿಗಿತ, ಹಲ್ಲು ನೋವು ಅಥವಾ ದವಡೆ ನೋವು ಕಾಣಿಸಿಕೊಳ್ಳುವುದು ಈ ಸಮಸ್ಯೆಯ ಪ್ರಮುಖ ಲಕ್ಷಣಗಳಾಗಿವೆ. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಪಡೆಯದಿದ್ದರೆ ಹಲ್ಲು ಸವೆತ, ಒಸಡು ಸಮಸ್ಯೆಗಳು ಸೇರಿದಂತೆ ಹಲವು ತೊಂದರೆಗಳು ಉಂಟಾಗಬಹುದು ಎಂದು ದಂತ ತಜ್ಞರು ಎಚ್ಚರಿಸಿದ್ದಾರೆ.

ಈ ಸಮಸ್ಯೆಯಿಂದ ಹಲ್ಲುಗಳನ್ನು ರಕ್ಷಿಸಲು ‘ಮೌತ್ ಗಾರ್ಡ್’ ಬಳಕೆ ಪರಿಣಾಮಕಾರಿ ಎಂದು ವೈದ್ಯರು ಸಲಹೆ ನೀಡಿದ್ದಾರೆ. ಮಲಗುವ ಮುನ್ನ ಮೌತ್ ಗಾರ್ಡ್ ಧರಿಸುವುದರಿಂದ ಮೇಲಿನ ಮತ್ತು ಕೆಳಗಿನ ಹಲ್ಲುಗಳು ನೇರವಾಗಿ ತಾಕುವುದನ್ನು ತಡೆಯಬಹುದು. ಇದರಿಂದ ಹಲ್ಲುಗಳ ನಡುವಿನ ಘರ್ಷಣೆ ಕಡಿಮೆಯಾಗಿ, ಹಲ್ಲು ಸವೆತ ತಡೆಯಲು ಸಹಕಾರಿಯಾಗುತ್ತದೆ.

ತಜ್ಞರ ಪ್ರಕಾರ, ಒತ್ತಡವನ್ನು ನಿಯಂತ್ರಿಸುವುದೇ ಈ ಸಮಸ್ಯೆಗೆ ದೀರ್ಘಕಾಲಿಕ ಪರಿಹಾರವಾಗಿದೆ. ಪ್ರತಿದಿನ ನಿಯಮಿತ ವ್ಯಾಯಾಮ ಮಾಡುವುದು, ಧ್ಯಾನ ಹಾಗೂ ಆಳವಾದ ಉಸಿರಾಟದ ವ್ಯಾಯಾಮಗಳನ್ನು ಅಭ್ಯಾಸ ಮಾಡುವುದು ಮನಸ್ಸನ್ನು ಶಾಂತವಾಗಿಡಲು ಸಹಾಯ ಮಾಡುತ್ತದೆ.

ಇದಲ್ಲದೆ, ಮಲಗುವ ಮೊದಲು ಹಾಸ್ಯ ಕಾರ್ಯಕ್ರಮಗಳು ಅಥವಾ ಮನರಂಜನೆಯ ಚಲನಚಿತ್ರಗಳನ್ನು ವೀಕ್ಷಿಸುವುದು ಒತ್ತಡ ಕಡಿಮೆ ಮಾಡಲು ಸಹಕಾರಿ ಎಂದು ವೈದ್ಯರು ತಿಳಿಸಿದ್ದಾರೆ.

ಆರೋಗ್ಯಕರ ಹಲ್ಲುಗಳು ಕೇವಲ ಬಾಯಿಯ ಆರೋಗ್ಯಕ್ಕಷ್ಟೇ ಅಲ್ಲ, ದೇಹದ ಒಟ್ಟಾರೆ ಆರೋಗ್ಯಕ್ಕೂ ಅಗತ್ಯವಾಗಿರುವುದರಿಂದ ಒತ್ತಡವನ್ನು ನಿಯಂತ್ರಿಸಿ ಸರಿಯಾದ ಮುನ್ನೆಚ್ಚರಿಕೆಗಳನ್ನು ಪಾಲಿಸುವುದು ಮುಖ್ಯ ಎಂದು ತಜ್ಞರು ಸಲಹೆ ನೀಡಿದ್ದಾರೆ.

ಅನಿಲ್ ಕುಂಬ್ಳೆ ಸರ್ಕಲ್ ಬಳಿ ಭೀಕರ ಅಪಘಾತ: ಹಿಟ್ ಅಂಡ್ ರನ್ ಗೆ ಪಾದಚಾರಿ ಬಲಿ!

ಬೆಂಗಳೂರು: ನಗರದ ಎಂಜಿ ರಸ್ತೆ ವ್ಯಾಪ್ತಿಯ ಅನಿಲ್ ಕುಂಬ್ಳೆ ಸರ್ಕಲ್ ಬಳಿ ಇಂದು ಮುಂಜಾನೆ ನಡೆದ ಹಿಟ್ ಅಂಡ್ ರನ್ ಅಪಘಾತದಲ್ಲಿ ಪಾದಚಾರಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಡೆದಿದೆ.

ಮುಂಜಾನೆ ಸುಮಾರು 4.30ರ ವೇಳೆಗೆ ಪಾದಚಾರಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಅಪರಿಚಿತ ವಾಹನ ಡಿಕ್ಕಿ ಹೊಡೆದು ಸ್ಥಳದಿಂದ ಪರಾರಿಯಾಗಿದೆ. ಅಪಘಾತದ ತೀವ್ರತೆಗೆ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಘಟನೆ ಕುರಿತು ಮಾಹಿತಿ ದೊರಕುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಸಂಚಾರಿ ಪೊಲೀಸರು ಪರಿಶೀಲನೆ ನಡೆಸಿದ್ದು, ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ. ಮೃತರ ಗುರುತು ಪತ್ತೆಹಚ್ಚುವ ಕಾರ್ಯವೂ ಮುಂದುವರಿದಿದೆ.

ಈ ಸಂಬಂಧ ಕಬ್ಬನ್ ಪಾರ್ಕ್ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಡಿಕ್ಕಿ ಹೊಡೆದ ವಾಹನ ಹಾಗೂ ಚಾಲಕನ ಪತ್ತೆಗೆ ಶೋಧ ಕಾರ್ಯ ಆರಂಭಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬೆಂಗಳೂರು-ಮಂಗಳೂರು ಏರ್ ಕ್ವಾಲಿಟಿಯಲ್ಲಿ ಸುಧಾರಣೆ: AQI ಇಳಿದರೂ ಆರೋಗ್ಯದ ಮೇಲೆ ಅಪಾಯ ಇನ್ನೂ ಮುಂದುವರಿಕೆ

ಬೆಂಗಳೂರು: ರಾಜ್ಯದ ಪ್ರಮುಖ ನಗರಗಳ ವಾಯು ಗುಣಮಟ್ಟದಲ್ಲಿ ಗಮನಾರ್ಹ ಸುಧಾರಣೆ ಕಂಡುಬಂದಿದ್ದು, ವಿಶೇಷವಾಗಿ ಬೆಂಗಳೂರು ಮತ್ತು ಮಂಗಳೂರು ನಗರಗಳ ಏರ್ ಕ್ವಾಲಿಟಿ ಇಂಡೆಕ್ಸ್ (AQI) ಕಳೆದ ಕೆಲವು ವಾರಗಳಿಗೆ ಹೋಲಿಸಿದರೆ ಉತ್ತಮ ಮಟ್ಟಕ್ಕೆ ಇಳಿದಿದೆ. ಆದರೂ ವಿಶ್ವ ಆರೋಗ್ಯ ಸಂಸ್ಥೆ (WHO) ಮಾನದಂಡಗಳ ಪ್ರಕಾರ ಈ ಮಟ್ಟದ ವಾಯು ಗುಣಮಟ್ಟವೂ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

ಪ್ರಸ್ತುತ ಬೆಂಗಳೂರಿನ AQI 66 ದಾಖಲಾಗಿದ್ದು, ತಾಂತ್ರಿಕವಾಗಿ ‘ಮಧ್ಯಮ’ ಅಥವಾ ‘ಸ್ವೀಕಾರಾರ್ಹ’ ಮಟ್ಟದಲ್ಲಿದೆ. ಮಂಗಳೂರಿನಲ್ಲಿ ಕೆಲ ತಿಂಗಳ ಹಿಂದೆ AQI 200ರ ಗಡಿ ತಲುಪುವ ಮೂಲಕ ಆತಂಕ ಸೃಷ್ಟಿಸಿತ್ತು. ಆದರೆ ಇತ್ತೀಚಿನ ಮಳೆಯ ಪರಿಣಾಮ ಮತ್ತು ಗಾಳಿಯ ಚಲನವಲನದಿಂದ ನಗರದಲ್ಲಿ ವಾಯು ಗುಣಮಟ್ಟ ಸುಧಾರಿಸಿದ್ದು, ಇಂದು AQI 86ಕ್ಕೆ ಇಳಿದಿದೆ.

ರಾಜ್ಯದ ಇತರೆ ನಗರಗಳಲ್ಲೂ ವಾಯು ಗುಣಮಟ್ಟ ಸಾಧಾರಣ ಮಟ್ಟದಲ್ಲಿದ್ದು, ಮೈಸೂರು 74, ಬೆಳಗಾವಿ 68, ಕಲಬುರಗಿ 64, ಶಿವಮೊಗ್ಗ 66, ಬಳ್ಳಾರಿ 86, ಹುಬ್ಬಳ್ಳಿ 87, ಉಡುಪಿ 64 ಹಾಗೂ ವಿಜಯಪುರ 67 AQI ದಾಖಲಿಸಿವೆ.

ತಜ್ಞರ ಪ್ರಕಾರ AQI 0 ರಿಂದ 50ರ ನಡುವೆ ಇದ್ದರೆ ಮಾತ್ರ ಉತ್ತಮ ವಾಯು ಗುಣಮಟ್ಟ ಎಂದು ಪರಿಗಣಿಸಲಾಗುತ್ತದೆ. 50ರಿಂದ 100ರ ಮಟ್ಟ ‘ಮಧ್ಯಮ’ ಎಂದು ವರ್ಗೀಕರಿಸಲ್ಪಟ್ಟರೂ, ಉಸಿರಾಟ ಸಮಸ್ಯೆ ಹೊಂದಿರುವವರು ಮತ್ತು ಮಕ್ಕಳಿಗೆ ದೀರ್ಘಾವಧಿಯಲ್ಲಿ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

ನಗರಗಳಲ್ಲಿ ವಾಹನಗಳ ದಟ್ಟಣೆ, ಕೈಗಾರಿಕಾ ಮಾಲಿನ್ಯ ಮತ್ತು ಧೂಳು ಪ್ರಮಾಣ ಕಡಿಮೆಯಾಗದ ಹೊರತು ವಾಯು ಗುಣಮಟ್ಟದಲ್ಲಿ ಶಾಶ್ವತ ಸುಧಾರಣೆ ಸಾಧ್ಯವಿಲ್ಲ ಎಂದು ಪರಿಸರ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

error: Content is protected !!