ಬೆಂಗಳೂರು: ನ್ಯಾಯಾಲಯ ನೀಡುವ ಡಿಕ್ರಿ ಆದೇಶವು ಕೇವಲ ಹಕ್ಕಿನ ಘೋಷಣೆ ಮಾತ್ರವಲ್ಲ, ಅದನ್ನು ಕಾನೂನುಬದ್ಧವಾಗಿ ಕಾರ್ಯಗತಗೊಳಿಸಬೇಕಾದ ಬಾಧ್ಯತೆಯೂ ಆಗಿದೆ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ಸ್ಪಷ್ಟನೆ ನೀಡಿದೆ.
ನ್ಯಾಯಾಲಯದ ಡಿಕ್ರಿ ಇದ್ದರೂ ಆಸ್ತಿಗೆ ಇ-ಖಾತೆ ಇಲ್ಲ ಎಂಬ ಕಾರಣ ನೀಡಿ ಕ್ರಯಪತ್ರ (ಮಾರಾಟ ಪತ್ರ) ನೋಂದಣಿ ನಿರಾಕರಿಸಲು ಅವಕಾಶವಿಲ್ಲ ಎಂದು ಹೈಕೋರ್ಟ್ ತೀರ್ಪು ನೀಡಿದೆ. ಜೊತೆಗೆ, ಈ ಸಂಬಂಧ ನೋಂದಣಾಧಿಕಾರಿಗಳು ಅನುಸರಿಸಬೇಕಾದ ಮಾರ್ಗಸೂಚಿಗಳನ್ನೂ ರೂಪಿಸಿದೆ.
ತುಮಕೂರು ಜಿಲ್ಲೆಯ ಪಿ.ಎಸ್. ಅಶೋಕ್ ಕುಮಾರ್ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಅವರ ಏಕಸದಸ್ಯ ಪೀಠ ಈ ಮಹತ್ವದ ಆದೇಶ ಹೊರಡಿಸಿದೆ. ವಿಚಾರಣಾ ನ್ಯಾಯಾಲಯದ ಡಿಕ್ರಿ ಆದೇಶದ ಹೊರತಾಗಿಯೂ ಇ-ಖಾತೆ ಇಲ್ಲವೆಂಬ ನೆಪ ನೀಡಿ ನೋಂದಣಿ ಮಾಡಲು ನಿರಾಕರಿಸಿದ್ದ ತುಮಕೂರು ಜಿಲ್ಲಾ ನೋಂದಣಾಧಿಕಾರಿಗಳು 2025ರ ಆಗಸ್ಟ್ 28ರಂದು ಹೊರಡಿಸಿದ್ದ ಹಿಂಬರಹವನ್ನು ನ್ಯಾಯಾಲಯ ರದ್ದುಪಡಿಸಿದೆ.
ತೀರ್ಪಿನಲ್ಲಿ ಹೈಕೋರ್ಟ್, ಇ-ಖಾತೆ ಇಲ್ಲ ಎಂಬ ಕಾರಣ ನೀಡಿ ಕ್ರಯಪತ್ರ ನೋಂದಣಿಯನ್ನು ತಿರಸ್ಕರಿಸುವುದು ಕಾನೂನಿನ ಮೂಲ ತತ್ವಗಳಿಗೆ ವಿರುದ್ಧವಾಗಿದೆ ಎಂದು ಅಭಿಪ್ರಾಯಪಟ್ಟಿದೆ. ಇಂತಹ ಪ್ರಕರಣಗಳು ಪದೇ ಪದೇ ನ್ಯಾಯಾಲಯದ ಮುಂದೆ ಬರುತ್ತಿರುವುದು ಆಡಳಿತಾತ್ಮಕ ವೈಫಲ್ಯವನ್ನು ತೋರಿಸುತ್ತದೆ ಎಂದು ಪೀಠ ಅಸಮಾಧಾನ ವ್ಯಕ್ತಪಡಿಸಿದೆ.
ನ್ಯಾಯಾಲಯ ಒಂದು ಬಾರಿ ಡಿಕ್ರಿ ನೀಡಿದ ಬಳಿಕ, ಅದನ್ನು ಕಾನೂನುಬದ್ಧವಾಗಿ ಜಾರಿಗೆ ತರಬೇಕಾಗುತ್ತದೆ. ಕೋರ್ಟ್ ಕಮಿಷನರ್ ಸೇರಿದಂತೆ ಸಂಬಂಧಿತ ಅಧಿಕಾರಿಗಳಿಗೆ ಆ ಆದೇಶವನ್ನು ಅನುಷ್ಠಾನಗೊಳಿಸುವ ಅಧಿಕಾರ ನೀಡಲಾಗಿದೆ. ಇಂತಹ ಸಂದರ್ಭದಲ್ಲಿ ನಗರ ಪಾಲಿಕೆಗಳು ಹಾಗೂ ನೋಂದಣಿ ಪ್ರಾಧಿಕಾರಗಳು ತಾಂತ್ರಿಕ ಕಾರಣಗಳನ್ನು ಮುಂದಿಟ್ಟು ನ್ಯಾಯಾಲಯದ ಆದೇಶವನ್ನು ನಿಷ್ಪ್ರಯೋಜಕಗೊಳಿಸಲು ಸಾಧ್ಯವಿಲ್ಲ ಎಂದು ಪೀಠ ಸ್ಪಷ್ಟಪಡಿಸಿದೆ.
ಸರ್ಕಾರದ ಪ್ರಾಧಿಕಾರಗಳ ಜವಾಬ್ದಾರಿ ಕೇವಲ ನಿಯಂತ್ರಣಕ್ಕೆ ಸೀಮಿತವಾಗಿಲ್ಲ. ನ್ಯಾಯಾಂಗದ ಆದೇಶಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಹೊಣೆಗಾರಿಕೆಯೂ ಅವರ ಮೇಲಿದೆ. ಆದರೆ ಸ್ಪಷ್ಟ ಆಡಳಿತಾತ್ಮಕ ಮಾರ್ಗಸೂಚಿಗಳ ಕೊರತೆಯಿಂದ ಅಸಂಗತ ಪ್ರಕ್ರಿಯೆಗಳು ನಡೆಯುತ್ತಿವೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಈ ಹಿನ್ನೆಲೆ, ನ್ಯಾಯಾಲಯದ ಡಿಕ್ರಿ ಜಾರಿಗೆ ಸಂಬಂಧಿಸಿದಂತೆ ವಿಚಾರಣಾಧೀನ ನ್ಯಾಯಾಲಯಗಳು, ಸ್ಥಳೀಯ ಸಂಸ್ಥೆಗಳು ಹಾಗೂ ನೋಂದಣಿ ಪ್ರಾಧಿಕಾರಗಳು ಅನುಸರಿಸಬೇಕಾದ ಹಲವು ಮಾರ್ಗಸೂಚಿಗಳನ್ನು ಹೈಕೋರ್ಟ್ ರೂಪಿಸಿದೆ. ಈ ತೀರ್ಪು ಆಸ್ತಿ ನೋಂದಣಿ ಹಾಗೂ ನ್ಯಾಯಾಲಯದ ಆದೇಶ ಜಾರಿಗೆ ಸಂಬಂಧಿಸಿದಂತೆ ಮಹತ್ವದ ಮಾದರಿಯಾಗಲಿದೆ.

