Home Blog

ರಾಜ್ಯದ ಗಾಳಿಯ ಗುಣಮಟ್ಟದಲ್ಲಿ ಏರುಪೇರು: ಬೆಳಗಾವಿಯಲ್ಲಿ ಉತ್ತಮ, ಬೆಂಗಳೂರಿನಲ್ಲಿ ಇನ್ನೂ ಕಳವಳ!

ಬೆಂಗಳೂರು: ರಾಜ್ಯದ ಪ್ರಮುಖ ನಗರಗಳಲ್ಲಿ ಗಾಳಿಯ ಗುಣಮಟ್ಟದಲ್ಲಿ ಸ್ವಲ್ಪ ಸುಧಾರಣೆ ಕಂಡುಬಂದಿದ್ದರೂ, ಕೆಲವು ನಗರಗಳಲ್ಲಿ ಇನ್ನೂ ಅನಾರೋಗ್ಯಕರ ಮಟ್ಟ ಮುಂದುವರಿದಿದೆ ಎಂದು ತಜ್ಞರು ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಏರ್ ಕ್ವಾಲಿಟಿ ಇಂಡೆಕ್ಸ್ (AQI) ಸುಮಾರು 131–135 ರಷ್ಟಿದ್ದು, ಕಳಪೆ ಮಟ್ಟದಲ್ಲೇ ಉಳಿದಿದೆ. ಇತ್ತೀಚಿನ ದಿನಗಳಿಗೆ ಹೋಲಿಸಿದರೆ ಸುಧಾರಣೆ ಕಂಡರೂ, ಆರೋಗ್ಯದ ದೃಷ್ಟಿಯಿಂದ ಇನ್ನೂ ಅಪಾಯಕಾರಿಯೇ ಎಂದು ತಜ್ಞರು ಎಚ್ಚರಿಸಿದ್ದಾರೆ.

ಮಂಗಳೂರಿನಲ್ಲಿ AQI 126ರಷ್ಟಿದ್ದು, ಉಡುಪಿಯಲ್ಲಿ 124 ದಾಖಲಾಗಿದೆ. ಈ ಎರಡೂ ನಗರಗಳಲ್ಲಿ ಗಾಳಿಯ ಗುಣಮಟ್ಟ ಅನಾರೋಗ್ಯಕರ ಮಟ್ಟದಲ್ಲಿದೆ. ಕೆಲ ತಿಂಗಳ ಹಿಂದೆ ಮಂಗಳೂರಿನಲ್ಲಿ AQI 200 ದಾಟಿದ ಸಂದರ್ಭಗಳೂ ಇದ್ದವು.

ಇದರ ನಡುವೆ ಬೆಳಗಾವಿಯಲ್ಲಿ ಗಾಳಿಯ ಗುಣಮಟ್ಟ ಭಾರೀ ಸುಧಾರಣೆ ಕಂಡಿದ್ದು, AQI ಕೇವಲ 40ರಷ್ಟಿದ್ದು ಅತ್ಯುತ್ತಮ ಮಟ್ಟದಲ್ಲಿದೆ.

ಇತರೆ ನಗರಗಳ ಸ್ಥಿತಿ ಹೀಗಿದೆ:

  • ಮೈಸೂರು – 113
  • ಕಲಬುರಗಿ – 95
  • ಶಿವಮೊಗ್ಗ – 106
  • ಬಳ್ಳಾರಿ – 137
  • ಹುಬ್ಬಳ್ಳಿ – 60
  • ವಿಜಯಪುರ – 93

ತಜ್ಞರ ಪ್ರಕಾರ, ವಿಶ್ವ ಆರೋಗ್ಯ ಸಂಸ್ಥೆ ಮಾನದಂಡಗಳಂತೆ 100 ಕ್ಕಿಂತ ಮೇಲಿನ AQI ಆರೋಗ್ಯಕ್ಕೆ ಹಾನಿಕರವಾಗಿದ್ದು, ಶ್ವಾಸಕೋಶ ಸಮಸ್ಯೆ ಸೇರಿದಂತೆ ಹಲವು ಸಮಸ್ಯೆಗಳಿಗೆ ಕಾರಣವಾಗಬಹುದು.

AQI ಮಟ್ಟಗಳ ವರ್ಗೀಕರಣ:

  • 0–50 : ಉತ್ತಮ
  • 50–100 : ಮಧ್ಯಮ
  • 100–150 : ಕಳಪೆ
  • 150–200 : ಅನಾರೋಗ್ಯಕರ
  • 200–300 : ಗಂಭೀರ
  • 300+ : ಅಪಾಯಕಾರಿ

ಒಟ್ಟಿನಲ್ಲಿ, ಕೆಲವು ನಗರಗಳಲ್ಲಿ ಸುಧಾರಣೆ ಕಂಡರೂ, ರಾಜ್ಯದ ಹಲವು ಭಾಗಗಳಲ್ಲಿ ಗಾಳಿಯ ಗುಣಮಟ್ಟ ಇನ್ನೂ ಕಳವಳಕಾರಿ ಸ್ಥಿತಿಯಲ್ಲಿದೆ.

ರಾಜ್ಯದಲ್ಲಿ ಮಳೆ–ಗಾಳಿ ಅಬ್ಬರ: ಆರು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್​ ಘೋಷಣೆ!

ಬೆಂಗಳೂರು: ಉಷ್ಣ ಅಲೆಯಿಂದ ಬೇಸತ್ತಿದ್ದ ಕರಾವಳಿ ಭಾಗಗಳಲ್ಲಿ ಇಂದು ಗುಡುಗು–ಸಿಡಿಲು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಇದರ ಜೊತೆಗೆ ಉತ್ತರ ಕರ್ನಾಟಕದ ಆರು ಜಿಲ್ಲೆಗಳಿಗೆ ಎಚ್ಚರಿಕೆ ನೀಡಲಾಗಿದೆ. ಕರಾವಳಿಯ ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಕಳೆದ ಕೆಲ ದಿನಗಳಿಂದ ತೀವ್ರ ಬಿಸಿಲು ಕಾಣಿಸಿಕೊಂಡಿತ್ತು. ಇಂದು ಈ ಭಾಗಗಳಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.

ಉತ್ತರ ಒಳನಾಡಿನ ಬೆಳಗಾವಿ, ಬಾಗಲಕೋಟೆ, ಧಾರವಾಡ, ಗದಗ, ಹಾವೇರಿ ಹಾಗೂ ಕಲಬುರಗಿ ಜಿಲ್ಲೆಗಳಲ್ಲಿ 40-50 ಕಿ.ಮೀ ವೇಗದ ಗಾಳಿ ಸಹಿತ ಆಲಿಕಲ್ಲು ಮಳೆ ಸುರಿಯುವ ಸಾಧ್ಯತೆ ಇದೆ. ಮುಂದಿನ 2-3 ದಿನಗಳ ಕಾಲ ಇದೇ ಪರಿಸ್ಥಿತಿ ಮುಂದುವರಿಯುವ ಸಾಧ್ಯತೆ ಇದೆ.

ದಕ್ಷಿಣ ಒಳನಾಡಿನ ದಾವಣಗೆರೆ, ಚಿತ್ರದುರ್ಗ, ಬಳ್ಳಾರಿ, ವಿಜಯನಗರ, ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ಹಾಸನ ಜಿಲ್ಲೆಗಳಲ್ಲಿಯೂ ಗುಡುಗು, ಸಿಡಿಲು ಸಹಿತ ಮಳೆಯಾಗಲಿದೆ.

ಇತ್ತ, ಈಗಾಗಲೇ ಮಳೆ–ಗಾಳಿಯಿಂದ ಹಲವೆಡೆ ಅವಾಂತರಗಳು ಸೃಷ್ಟಿಯಾಗಿವೆ. ಭದ್ರಾವತಿ ಪ್ರದೇಶದಲ್ಲಿ ಬಿರುಗಾಳಿ ಸಹಿತ ಮಳೆಗೆ 200ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಹಾಗೂ ಮರಗಳು ಧರೆಗುರುಳಿವೆ. ಮನೆಗಳ ಮೇಲ್ಚಾವಣಿಗಳು ಹಾನಿಗೊಂಡಿದ್ದು, ಅಡಕೆ ತೋಟಗಳು ನಾಶವಾಗಿ ರೈತರು ಸಂಕಷ್ಟಕ್ಕೀಡಾಗಿದ್ದಾರೆ.

ತರಿಕೆರೆನಲ್ಲಿ ಮನೆಗಳ ಮೇಲೆ ಮರಗಳು ಬಿದ್ದು ಹಾನಿಯಾಗಿದ್ದು, ರಾಯಚೂರಿನಲ್ಲಿ ಹೆದ್ದಾರಿಗಳ ಮೇಲೆ ಮರಗಳು ಬಿದ್ದು ಸಂಚಾರ ಅಸ್ತವ್ಯಸ್ತಗೊಂಡಿದೆ.

ಬಿಸಿಲು ಮತ್ತು ಮಳೆಯ ದ್ವಿಮುಖ ಪರಿಣಾಮಕ್ಕೆ ಜನಸಾಮಾನ್ಯರು ಕಂಗೆಟ್ಟಿದ್ದು, ಸಂತ್ರಸ್ತರು ಸರ್ಕಾರದ ನೆರವಿನ ನಿರೀಕ್ಷೆಯಲ್ಲಿದ್ದಾರೆ.

RCB ಬೌಲರ್‌ಗಳ ಮಾರಕ ದಾಳಿಗೆ ತತ್ತರಿಸಿದ ಡೆಲ್ಲಿ: ಬೆಂಗಳೂರಿಗೆ 9 ವಿಕೆಟ್‌ಗಳ ಭರ್ಜರಿ ಜಯ!

0

ಸೋಮವಾರ ನಡೆದ ಐಪಿಎಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 9 ವಿಕೆಟ್‌ಗಳಿಂದ ಭರ್ಜರಿ ಜಯ ಸಾಧಿಸಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ತಂಡ ಆರ್‌ಸಿಬಿ ಬೌಲರ್‌ಗಳ ಮಾರಕ ದಾಳಿಗೆ ತತ್ತರಿಸಿ ಕೇವಲ 75 ರನ್‌ಗಳಿಗೆ ಆಲೌಟ್ ಆಯಿತು. ಆರಂಭದಲ್ಲೇ ವಿಕೆಟ್‌ಗಳು ಸರಣಿಯಾಗಿ ಬೀಳುತ್ತಿದ್ದಂತೆ ಡೆಲ್ಲಿ ಸಂಕಷ್ಟಕ್ಕೆ ಸಿಲುಕಿತು. ಅಭಿಷೇಕ್ ಪೊರೆಲ್ 30 ರನ್ ಹಾಗೂ ಡೇವಿಡ್ ಮಿಲ್ಲರ್ 19 ರನ್ ಗಳಿಸಿ ತಂಡಕ್ಕೆ ಸ್ವಲ್ಪ ಮಟ್ಟಿನ ನೆರವು ನೀಡಿದರು.

ಆರ್‌ಸಿಬಿ ಪರ ಜೋಷ್ ಹೇಜಲ್‌ವುಡ್ 4 ವಿಕೆಟ್ ಕಿತ್ತರೆ, ಭುವನೇಶ್ವರ್ ಕುಮಾರ್ 3 ವಿಕೆಟ್ ಪಡೆದು ಡೆಲ್ಲಿ ಬ್ಯಾಟಿಂಗ್ ಬೆನ್ನೆಲುಬು ಮುರಿದರು. ಇನ್ನುಳಿದಂತೆ ಇತರ ಬೌಲರ್‌ಗಳೂ ತಲಾ ವಿಕೆಟ್ ಪಡೆದು ಉತ್ತಮ ಬೆಂಬಲ ನೀಡಿದರು.

ಕೇವಲ 76 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಆರ್‌ಸಿಬಿ ಆರಂಭದಿಂದಲೇ ಆಕ್ರಮಣಕಾರಿ ಆಟ ಪ್ರದರ್ಶಿಸಿತು. ಜಾಕೋಬ್ ಬೆಥೆಲ್ 20 ರನ್, ವಿರಾಟ್ ಕೊಹ್ಲಿ 23 ರನ್ ಹಾಗೂ ದೇವದತ್ ಪಡಿಕ್ಕಲ್ 34 ರನ್ ಗಳಿಸಿ ಸುಲಭವಾಗಿ ಗೆಲುವು ಸಾಧಿಸಿದರು.

ಆರ್‌ಸಿಬಿ ಕೇವಲ 6.3 ಓವರ್‌ಗಳಲ್ಲಿ ಗುರಿ ತಲುಪಿ ಪಂದ್ಯವನ್ನು ತನ್ನದಾಗಿಸಿಕೊಂಡಿತು.

ಒಟ್ಟಿನಲ್ಲಿ ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡರಲ್ಲೂ ಮಿಂಚಿದ ಆರ್‌ಸಿಬಿ, ಡೆಲ್ಲಿ ವಿರುದ್ಧ ಸಂಪೂರ್ಣ ಪ್ರಾಬಲ್ಯ ಸಾಧಿಸಿ ಭರ್ಜರಿ ಗೆಲುವು ದಾಖಲಿಸಿದೆ.

ಬಾಡಿಗೆ ಮನೆಯಲ್ಲಿ ಬೆತ್ತಲೆ ಸ್ಥಿತಿಯಲ್ಲಿ ಯುವತಿ ಶವ ಪತ್ತೆ: ಕೊಲೆನಾ? ಆತ್ಮಹತ್ಯೆಯಾ?

ಬೆಂಗಳೂರು: ಬಾಡಿಗೆ ಮನೆಯಲ್ಲಿ ಯುವತಿಯೊಬ್ಬರ ಮೃತದೇಹ ಕೊಳೆತ ಹಾಗೂ ಬೆತ್ತಲೆ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ನಗರದಲ್ಲಿ ಆತಂಕ ಮೂಡಿಸಿದೆ.

ಮೃತರನ್ನು ಪೂಜಾ ದತ್ತಾ ಎಂದು ಗುರುತಿಸಲಾಗಿದೆ. ಅವರು ಕಳೆದ ಸುಮಾರು ಎರಡೂವರೆ ವರ್ಷಗಳಿಂದ ಆಡುಗೋಡಿ ಪ್ರದೇಶದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು ಎಂದು ತಿಳಿದುಬಂದಿದೆ. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಅವರು ಇತ್ತೀಚೆಗೆ ಉದ್ಯೋಗ ಕಳೆದುಕೊಂಡಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.

ಸ್ಥಳೀಯ ನಿವಾಸಿಗಳು ಮನೆಯಿಂದ ದುರ್ವಾಸನೆ ಬರುತ್ತಿರುವುದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಮಾಹಿತಿ ಆಧಾರವಾಗಿ ಸ್ಥಳಕ್ಕೆ ಆಗಮಿಸಿದ ಆಡುಗೋಡಿ ಠಾಣೆ ಪೊಲೀಸರು ಬಾಗಿಲು ತೆರಳಿ ಪರಿಶೀಲನೆ ನಡೆಸಿದಾಗ ಕೊಳೆತ ಸ್ಥಿತಿಯಲ್ಲಿದ್ದ ಮೃತದೇಹ ಪತ್ತೆಯಾಗಿದೆ.

ಪರಿಶೀಲನೆ ವೇಳೆ ಕೋಣೆಯಲ್ಲಿ ಖಾಸಗಿ ಕಂಪನಿಯ ಐಡಿ ಕಾರ್ಡ್ ಹಾಗೂ ಕೆಲವು ಹರಿದ ಕಾಗದಗಳು ಕಂಡುಬಂದಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಬಳಿಕ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ರವಾನಿಸಲಾಗಿದೆ.

ಪ್ರಾಥಮಿಕವಾಗಿ ಇದು ಆತ್ಮಹತ್ಯೆಯಾ ಅಥವಾ ಕೊಲೆಯಾ ಎಂಬ ಬಗ್ಗೆ ಅನುಮಾನ ವ್ಯಕ್ತವಾಗಿದ್ದು, ಪೊಲೀಸರು ಎಲ್ಲಾ ಆಯಾಮಗಳಲ್ಲಿ ತನಿಖೆ ಆರಂಭಿಸಿದ್ದಾರೆ. ಮುಂದಿನ ವರದಿಯನ್ನು ಮರಣೋತ್ತರ ಪರೀಕ್ಷೆಯ ವರದಿ ಹಾಗೂ ಫೋರೆನ್ಸಿಕ್ ಪರಿಶೀಲನೆಯ ನಂತರ ಸ್ಪಷ್ಟಪಡಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

IPL 2026: ಐಪಿಎಲ್ ಇತಿಹಾಸದಲ್ಲೇ ಹೀನಾಯ ದಾಖಲೆ ಬರೆದ ಡೆಲ್ಲಿ ಕ್ಯಾಪಿಟಲ್ಸ್!

0

ಕೇವಲ ಎರಡು ದಿನಗಳ ಹಿಂದೆ ಐಪಿಎಲ್ ಇತಿಹಾಸದಲ್ಲೇ ಅತ್ಯಧಿಕ ಮೊತ್ತ ಕಲೆಹಾಕಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಇದೀಗ ಅದೇ ಅರುಣ್ ಜೇಟ್ಲಿ ಮೈದಾನದಲ್ಲಿ ಅತ್ಯಂತ ಹೀನಾಯ ಪ್ರದರ್ಶನ ನೀಡಿದೆ.

ಏಪ್ರಿಲ್ 25ರಂದು ಪಂಜಾಬ್ ಕಿಂಗ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಇದೇ ಮೈದಾನದಲ್ಲಿ 264 ರನ್ ಗಳಿಸಿ ತನ್ನ ಇತಿಹಾಸದಲ್ಲೇ ಅತ್ಯಧಿಕ ಸ್ಕೋರ್ ದಾಖಲಿಸಿತ್ತು. ಆ ಪಂದ್ಯದಲ್ಲಿ ಬ್ಯಾಟಿಂಗ್ ಪಟಾಕಿ ಪ್ರದರ್ಶನ ಕಂಡಿದ್ದ ಡೆಲ್ಲಿ ತಂಡದಿಂದ ಇಂದಿನ ಪಂದ್ಯದಲ್ಲೂ ಅದೇ ರೀತಿಯ ಪ್ರದರ್ಶನ ನಿರೀಕ್ಷಿಸಲಾಗಿತ್ತು.

ಆದರೆ ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಪರಿಸ್ಥಿತಿ ಸಂಪೂರ್ಣವಾಗಿ ಬದಲಾಗಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಆರಂಭದಲ್ಲೇ ಆರ್‌ಸಿಬಿ ವೇಗಿಗಳ ಸಾಂಘಿಕ ದಾಳಿಗೆ ತತ್ತರಿಸಿದೆ. ಮೊದಲ 3 ಓವರ್‌ಗಳಲ್ಲೇ 5 ಪ್ರಮುಖ ವಿಕೆಟ್ ಕಳೆದುಕೊಂಡು ತಂಡ ಕೇವಲ 7 ರನ್‌ಗೆ ಕುಸಿಯಿತು.

ಈ 7 ರನ್‌ಗಳಲ್ಲಿ ಸ್ಟಬ್ಸ್ ಬಾರಿಸಿದ ಒಂದು ಬೌಂಡರಿಯೂ ಸೇರಿತ್ತು. ಉಳಿದ ಬ್ಯಾಟ್ಸ್‌ಮನ್‌ಗಳಲ್ಲಿ ಹಲವರಿಗೆ ಖಾತೆ ತೆರೆಯಲು ಕೂಡ ಸಾಧ್ಯವಾಗಲಿಲ್ಲ. ಐಪಿಎಲ್‌ನಲ್ಲಿ ಚೊಚ್ಚಲ ಪಂದ್ಯವನ್ನಾಡಿದ ಸಾಹಿಲ್ ಪರಾಖ್ ಭುವನೇಶ್ವರ್ ಕುಮಾರ್ ಎಸೆತದಲ್ಲಿ ಶೂನ್ಯಕ್ಕೆ ಕ್ಲೀನ್ ಬೌಲ್ಡ್ ಆದರು. ಅನುಭವಿ ಬ್ಯಾಟ್ಸ್‌ಮನ್ ಕೆಎಲ್ ರಾಹುಲ್ ಕೇವಲ 1 ರನ್‌ಗೆ ವಿಕೆಟ್ ಒಪ್ಪಿಸಿದರು. ಸಮೀರ್ ರಿಜ್ವಿ ಕೂಡ ಶೂನ್ಯಕ್ಕೆ ಔಟಾದರು.

ಸ್ಟಬ್ಸ್ 5 ರನ್ ಗಳಿಸಿ ನಿರ್ಗಮಿಸಿದರೆ, ನಿತೀಶ್ ರಾಣಾ ಕೂಡ 1 ರನ್‌ಗೆ ಔಟಾದರು. ನಾಯಕ ಅಕ್ಷರ್ ಪಟೇಲ್ ಸಹ ಖಾತೆ ತೆರೆಯಲು ವಿಫಲರಾದರು. ಈ ಮೂಲಕ 6 ಬ್ಯಾಟ್ಸ್‌ಮನ್‌ಗಳಲ್ಲಿ ಮೂವರು ಶೂನ್ಯಕ್ಕೆ ಔಟಾಗಿದ್ದು, ತಂಡ ಸಂಪೂರ್ಣವಾಗಿ ಕುಸಿತ ಕಂಡಿದೆ.

ಪವರ್‌ಪ್ಲೇ ಅಂತ್ಯದ ವೇಳೆಗೆ ಡೆಲ್ಲಿ ಕ್ಯಾಪಿಟಲ್ಸ್ ಕೇವಲ 13 ರನ್‌ಗೆ 6 ವಿಕೆಟ್ ಕಳೆದುಕೊಂಡಿದ್ದು, ಇದು ಐಪಿಎಲ್ ಇತಿಹಾಸದಲ್ಲೇ ಅತ್ಯಂತ ಕಳಪೆ ಪ್ರದರ್ಶನಗಳಲ್ಲಿ ಒಂದಾಗಿ ದಾಖಲಾಗಿದೆ. ಇದಕ್ಕೂ ಮೊದಲು 2011ರಲ್ಲಿ ಕೊಚ್ಚಿ ಟಸ್ಕರ್ಸ್ 29 ರನ್‌ಗೆ 6 ವಿಕೆಟ್ ಕಳೆದುಕೊಂಡಿದ್ದು ಹಿಂದಿನ ಅತಿ ಕೆಟ್ಟ ದಾಖಲೆ ಆಗಿತ್ತು.

ಒಂದೇ ಮೈದಾನದಲ್ಲಿ ಎರಡು ದಿನಗಳ ಅಂತರದಲ್ಲಿ ಅತ್ಯುನ್ನತ ಮತ್ತು ಅತ್ಯಂತ ಹೀನಾಯ ಪ್ರದರ್ಶನ ಕಂಡಿರುವುದು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಅಸಮಾನತೆಗೂ ಸಾಕ್ಷಿಯಾಗಿದೆ.

ಬ್ರಹ್ಮರಕೋಟ್ಲು ಟೋಲ್ ಗೇಟ್ ವಿರುದ್ಧ ಜನಾಂದೋಲನ ನಡಿಗೆ: ನಾಳೆ ಬೃಹತ್ ಪ್ರತಿಭಟನೆಗೆ ಕರೆ!

ಮಂಗಳೂರು: ರಾಷ್ಟ್ರೀಯ ಹೆದ್ದಾರಿ 75ರ ಬ್ರಹ್ಮರಕೋಟ್ಲು ಟೋಲ್ ಗೇಟ್ ಅನ್ನು ಸಂಪೂರ್ಣವಾಗಿ ಮುಚ್ಚುವಂತೆ ಆಗ್ರಹಿಸಿ ಏಪ್ರಿಲ್ 28ರಂದು ಬೃಹತ್ ಜನಾಂದೋಲನ ನಡಿಗೆ ಹಮ್ಮಿಕೊಳ್ಳಲಾಗಿದೆ ಎಂದು ಕಾಂಗ್ರೆಸ್ ನಾಯಕರು ಹಾಗೂ ಟೋಲ್ ಗೇಟ್ ತೆರವು ಹೋರಾಟ ಸಮಿತಿ ಗೌರವಾಧ್ಯಕ್ಷ ಬಿ. ರಮಾನಾಥ ರೈ ತಿಳಿಸಿದ್ದಾರೆ.

ಗುರುಪುರ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಬ್ರಹ್ಮರಕೋಟ್ಲು ಟೋಲ್ ಗೇಟ್‌ನಲ್ಲಿ ಕಳೆದ 23 ವರ್ಷಗಳಿಂದ ಮೂಲಭೂತ ಸೌಕರ್ಯಗಳಿಲ್ಲದೆ ಕಾನೂನುಬಾಹಿರವಾಗಿ ಸುಂಕ ವಸೂಲಿ ಮಾಡಲಾಗುತ್ತಿದೆ ಎಂದು ಆರೋಪಿಸಿದರು. ವಾಹನ ಸವಾರರಿಗೆ ಕನಿಷ್ಠ ಸೌಲಭ್ಯವೂ ನೀಡದೆ ನಿರಂತರವಾಗಿ ಟೋಲ್ ಸಂಗ್ರಹ ನಡೆಯುತ್ತಿರುವುದು ಅನ್ಯಾಯವಾಗಿದೆ ಎಂದು ಅವರು ಹೇಳಿದ್ದಾರೆ.

ಈ ಹಿನ್ನೆಲೆಯಲ್ಲಿ ಏಪ್ರಿಲ್ 28ರಂದು ಬಿ.ಸಿ. ರೋಡ್ ನಾರಾಯಣಗುರು ವೃತ್ತದಿಂದ ಬ್ರಹ್ಮರಕೋಟ್ಲು ಟೋಲ್ ಗೇಟ್‌ವರೆಗೆ ಜನಾಂದೋಲನ ನಡಿಗೆ ನಡೆಯಲಿದೆ ಎಂದು ತಿಳಿಸಲಾಗಿದೆ. ಈ ಹೋರಾಟದಲ್ಲಿ ಎಲ್ಲರೂ ಭಾಗವಹಿಸಿ ಬೆಂಬಲ ನೀಡಬೇಕು ಎಂದು ರಮಾನಾಥ ರೈ ಮನವಿ ಮಾಡಿದ್ದಾರೆ.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಮಾತನಾಡಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಕೂಡಲೇ ಈ ವಿಚಾರದಲ್ಲಿ ಎಚ್ಚೆತ್ತುಕೊಂಡು ನಿಯಮ ಉಲ್ಲಂಘನೆಗಳ ಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಕಾನೂನುಬಾಹಿರ ಟೋಲ್ ಸಂಗ್ರಹ ಸಂಪೂರ್ಣವಾಗಿ ನಿಲ್ಲುವವರೆಗೆ ಹೋರಾಟ ಮುಂದುವರಿಯಲಿದೆ ಎಂದು ಅವರು ಎಚ್ಚರಿಸಿದರು.

ಸಭೆಯಲ್ಲಿ ಗುರುಪುರ ಕಾಂಗ್ರೆಸ್ ಅಧ್ಯಕ್ಷ ಬಿ.ಎಲ್.ಪಿ. ಪದ್ಮನಾಭ ಕೋಟ್ಯಾನ್, ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪುರುಷೋತ್ತಮ ಚಿತ್ರಾಪುರ, ಕೆಪಿಸಿಸಿ ಸದಸ್ಯ ಆರ್.ಕೆ. ಪೃಥ್ವಿರಾಜ್, ಬುಡಾ ಅಧ್ಯಕ್ಷ ಬೇಬಿ ಕುಂದರ್ ಸೇರಿದಂತೆ ಹಲವಾರು ನಾಯಕರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ಜನಾಂದೋಲನದ ಹಿನ್ನೆಲೆಯಲ್ಲಿ ಮಂಗಳೂರು ಭಾಗದಲ್ಲಿ ರಾಜಕೀಯ ಚಟುವಟಿಕೆಗಳು ಮತ್ತಷ್ಟು ತೀವ್ರಗೊಂಡಿವೆ.

“ಭಯದಲ್ಲಿ ಬದುಕುವುದು ಸಾಕು, ಈಗ ನಂಬಿಕೆ ಬೇಕು”: ಪಶ್ಚಿಮ ಬಂಗಾಳ ಜನತೆಗೆ ಮೋದಿ ಪತ್ರ!

0

ಲಕ್ನೋ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಕೊನೆಯ ಹಂತದ ಪ್ರಚಾರ ಮುಗಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯದ ಜನತೆಗೆ ಬಹಿರಂಗ ಪತ್ರವನ್ನು ಬರೆದು ಅಭಿವೃದ್ಧಿ ಮತ್ತು ಬದಲಾವಣೆಗೆ ಮತ ನೀಡುವಂತೆ ಮನವಿ ಮಾಡಿದ್ದಾರೆ.

ಪತ್ರದಲ್ಲಿ ಪ್ರಧಾನಿ ಮೋದಿ ಅವರು ಹಲವು ವರ್ಷಗಳಿಂದ ಭಯದ ವಾತಾವರಣದಲ್ಲಿ ಬದುಕಿದ್ದ ಮತದಾರರು ಈಗ ಬದಲಾವಣೆ ಹಾಗೂ ಅಭಿವೃದ್ಧಿಯನ್ನು ಬಯಸುತ್ತಿದ್ದಾರೆ ಎಂದು ತಿಳಿಸಿದ್ದಾರೆ. ವಿಶೇಷವಾಗಿ ಯುವಕರು, ಮಹಿಳೆಯರು, ರೈತರು ಮತ್ತು ಕಾರ್ಮಿಕರು ಉತ್ತಮ ಭವಿಷ್ಯಕ್ಕಾಗಿ ಬದಲಾವಣೆಯ ನಿರೀಕ್ಷೆಯಲ್ಲಿ ಇದ್ದಾರೆ ಎಂದು ಅವರು ಉಲ್ಲೇಖಿಸಿದ್ದಾರೆ.

ತೃಣಮೂಲ ಕಾಂಗ್ರೆಸ್ ಆಡಳಿತದ ಬಗ್ಗೆ ಟೀಕೆ ವ್ಯಕ್ತಪಡಿಸಿದ ಪ್ರಧಾನಿ ಮೋದಿ, ರಾಜ್ಯದಲ್ಲಿ ಭಯದ ವಾತಾವರಣದಿಂದ ಜನರು ಹೊರಬಂದು ಸುರಕ್ಷತೆ, ಉತ್ತಮ ಅವಕಾಶಗಳು ಮತ್ತು ಅಭಿವೃದ್ಧಿಯನ್ನು ಹುಡುಕುತ್ತಿದ್ದಾರೆ ಎಂದು ಹೇಳಿದ್ದಾರೆ. ಯುವಕರು ಮುಕ್ತ ಅವಕಾಶಗಳನ್ನು, ಮಹಿಳೆಯರು ಗೌರವ ಹಾಗೂ ಸುರಕ್ಷತೆಯನ್ನು ಬಯಸುತ್ತಿದ್ದಾರೆ ಎಂದು ಪತ್ರದಲ್ಲಿ ಹೇಳಿದ್ದಾರೆ.

“ಭಯದಲ್ಲಿ ಬದುಕುವುದು ಸಾಕು, ಈಗ ನಂಬಿಕೆ ಬೇಕು. ಪಶ್ಚಿಮ ಬಂಗಾಳಕ್ಕೆ ಈಗ ಬದಲಾವಣೆ ಅಗತ್ಯ” ಎಂದು ಪ್ರಧಾನಿ ಮೋದಿ ತಮ್ಮ ಪತ್ರದಲ್ಲಿ ಹೇಳಿದ್ದಾರೆ ಎಂದು ವರದಿಯಾಗಿದೆ.

ಬಿಜೆಪಿಯ ದೀರ್ಘಕಾಲದ “ಅಭಿವೃದ್ಧಿ ಹೊಂದಿದ ಬಂಗಾಳ” ಯೋಜನೆಯನ್ನು ಪುನರುಚ್ಚರಿಸಿರುವ ಅವರು, ಯುವ ಶಕ್ತಿ, ಮಹಿಳಾ ಶಕ್ತಿ, ರೈತರು, ಕಾರ್ಮಿಕರು ಮತ್ತು ಉದ್ಯಮಿಗಳು ಸೇರಿದಂತೆ ಎಲ್ಲಾ ವರ್ಗದ ಜನರು ಅಭಿವೃದ್ಧಿಯತ್ತ ಸಾಗಲು ಬಯಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಪತ್ರದಲ್ಲಿ ಅವರು ಚುನಾವಣಾ ಪ್ರಚಾರದ ಅನುಭವವನ್ನು ಉಲ್ಲೇಖಿಸುತ್ತಾ, ಪಶ್ಚಿಮ ಬಂಗಾಳದಲ್ಲಿ ನಡೆದ ಪ್ರಚಾರವು ಕೇವಲ ರಾಜಕೀಯ ಪ್ರಯಾಣವಲ್ಲ, ಅದು ಆಧ್ಯಾತ್ಮಿಕ ಅನುಭವದಂತೆ ಭಾಸವಾಯಿತು ಎಂದು ಹೇಳಿದ್ದಾರೆ. ಜನರ ಪ್ರೀತಿ ಹಾಗೂ ಮಾ ಕಾಳಿ ಆಶೀರ್ವಾದ ತಮ್ಮ ಮೇಲೆ ಇದೆ ಎಂದು ಕೂಡ ಹೇಳಿದ್ದಾರೆ.

ಬಿಸಿಲು, ನಿರಂತರ ರ‍್ಯಾಲಿಗಳು ಮತ್ತು ರೋಡ್‌ಶೋಗಳ ನಡುವೆಯೂ ಪ್ರಚಾರದ ಸಮಯದಲ್ಲಿ ತಮಗೆ ದಣಿವು ಅನುಭವವಾಗಲಿಲ್ಲ ಎಂದು ಹೇಳಿರುವ ಪ್ರಧಾನಿ, ಈ ಚುನಾವಣೆ ತಮ್ಮಿಗೆ ಕೇವಲ ರಾಜಕೀಯ ಹೋರಾಟವಲ್ಲ, ಒಂದು ಭಾವನಾತ್ಮಕ ಮತ್ತು ಆಧ್ಯಾತ್ಮಿಕ ಪ್ರಯಾಣವಾಗಿತ್ತು ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಸದ್ಯ ಈ ಪತ್ರ ರಾಜಕೀಯ ವಲಯದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

ಆಟೋ, ಟ್ಯಾಕ್ಸಿ ಚಾಲಕರಿಗೆ ಮರಾಠಿ ಕಡ್ಡಾಯ ಆದೇಶಕ್ಕೆ 6 ತಿಂಗಳ ತಾತ್ಕಾಲಿಕ ಬ್ರೇಕ್!

0

ಮುಂಬೈ: ಮಹಾರಾಷ್ಟ್ರದಲ್ಲಿ ಎಲ್ಲಾ ಪರವಾನಗಿ ಪಡೆದ ಆಟೋ ಹಾಗೂ ಟ್ಯಾಕ್ಸಿ ಚಾಲಕರಿಗೆ ಮರಾಠಿ ಭಾಷೆ ಕಡ್ಡಾಯಗೊಳಿಸುವ ಕುರಿತು ಹೊರಡಿಸಿದ್ದ ಆದೇಶಕ್ಕೆ ರಾಜ್ಯ ಸರ್ಕಾರ ಆರು ತಿಂಗಳ ತಾತ್ಕಾಲಿಕ ತಡೆ ನೀಡಿದೆ.

ಇತ್ತೀಚಿಗಷ್ಟೇ ಸಾರಿಗೆ ಸಚಿವ ಪ್ರತಾಪ್ ಸರ್ನಾಯಕ್ ಅವರು ಮೇ 1ರಿಂದ ರಾಜ್ಯಾದ್ಯಂತ ಆಟೋ ಮತ್ತು ಟ್ಯಾಕ್ಸಿ ಚಾಲಕರು ಮರಾಠಿ ಮಾತನಾಡುವುದು, ಓದುವುದು ಹಾಗೂ ಬರೆಯುವುದು ಕಡ್ಡಾಯ ಎಂದು ಘೋಷಿಸಿದ್ದರು. ನಿಯಮ ಪಾಲಿಸದಿದ್ದರೆ ಪರವಾನಗಿ ರದ್ದುಗೊಳಿಸಲಾಗುವುದು ಎಂಬ ಎಚ್ಚರಿಕೆಯೂ ನೀಡಲಾಗಿತ್ತು.

ಆದರೆ ಈ ನಿರ್ಧಾರಕ್ಕೆ ಸಂಬಂಧಿಸಿ ರಾಜಕೀಯ ಹಾಗೂ ಸಾಮಾಜಿಕ ವಲಯದಲ್ಲಿ ಚರ್ಚೆ ಮುಂದುವರಿದಿದ್ದು, ಶಿವಸೇನಾ ನಾಯಕ ಸಂಜಯ್ ನಿರುಪಮ್ ಅವರು ಸಚಿವ ಪ್ರತಾಪ್ ಸರ್ನಾಯಕ್ ಅವರಿಗೆ ಪತ್ರ ಬರೆದು ಈ ಆದೇಶವನ್ನು ಕನಿಷ್ಠ ಆರು ತಿಂಗಳುಗಳಿಂದ ಒಂದು ವರ್ಷದವರೆಗೆ ಮುಂದೂಡಬೇಕು ಎಂದು ಮನವಿ ಮಾಡಿದ್ದಾರೆ.

ಮರಾಠಿ ಮಹಾರಾಷ್ಟ್ರದ ಗುರುತು ಮತ್ತು ಹೆಮ್ಮೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಆದರೆ ಭಾಷೆ ಕಲಿಯುವುದು ವ್ಯಕ್ತಿಯ ಸಾಮರ್ಥ್ಯ ಮತ್ತು ಸಮಯದ ಮೇಲೆ ಅವಲಂಬಿತವಾಗಿರುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ತಕ್ಷಣದ ಕಡ್ಡಾಯ ಜಾರಿಗೆ ತರಲಾಗುವುದರಿಂದ ಅಶಾಂತಿ ಉಂಟಾಗುವ ಸಾಧ್ಯತೆ ಇದೆ ಎಂದು ಅವರು ಎಚ್ಚರಿಸಿದ್ದಾರೆ.

ಚಾಲಕರಿಗೆ ಮರಾಠಿ ಕಲಿಯಲು ಸಮಯ ನೀಡಬೇಕು. ಪ್ರೀತಿಯಿಂದ ಕಲಿಸಿದ ಭಾಷೆ ದೀರ್ಘಕಾಲ ಉಳಿಯುತ್ತದೆ, ಭಯದಿಂದ ಜಾರಿಗೊಳಿಸಿದ ಭಾಷೆ ಅಸಮಾಧಾನಕ್ಕೆ ಕಾರಣವಾಗಬಹುದು ಎಂದು ಸಂಜಯ್ ನಿರುಪಮ್ ತಮ್ಮ ಪತ್ರದಲ್ಲಿ ಹೇಳಿದ್ದಾರೆ.

ಈ ನಡುವೆ ಸರ್ಕಾರದ ಮೂಲ ಆದೇಶದಲ್ಲಿ ರಾಜ್ಯದ ಎಲ್ಲಾ ಆಟೋ ಮತ್ತು ಟ್ಯಾಕ್ಸಿ ಚಾಲಕರು ಮರಾಠಿ ಭಾಷೆಯಲ್ಲಿ ಸಂವಹನ ನಡೆಸಲು ತಿಳಿದಿರಬೇಕು ಎಂಬ ನಿಯಮವನ್ನು ಕಡ್ಡಾಯಗೊಳಿಸಲಾಗಿತ್ತು.

ಸದ್ಯ ಸರ್ಕಾರದ ಈ ತಾತ್ಕಾಲಿಕ ತೀರ್ಮಾನದಿಂದ ನಿಯಮ ಜಾರಿಗೆ ಸಂಬಂಧಿಸಿದ ಮುಂದಿನ ಹೆಜ್ಜೆ ಏನು ಎಂಬ ಕುತೂಹಲ ಮೂಡಿದೆ.

ಆದಾಯ ಹೆಚ್ಚಿಸಿಕೊಳ್ಳಲು ಚಾಣಕ್ಯನ 4 ಪ್ರಮುಖ ಸಲಹೆಗಳು: ಈ ಕೆಟ್ಟ ಅಭ್ಯಾಸಗಳನ್ನು ಬಿಟ್ಟುಬಿಡಿ ಎಂದ ಮಹಾ ನೀತಿ

0

ಇಂದಿನ ಕಾಲದಲ್ಲಿ ಪ್ರತಿಯೊಬ್ಬರೂ ಆದಾಯವನ್ನು ಹೆಚ್ಚಿಸಿಕೊಳ್ಳಬೇಕು, ಶ್ರೀಮಂತಿಕೆಯನ್ನು ಗಳಿಸಬೇಕು ಎಂದು ಬಯಸುತ್ತಾರೆ.

ಆದರೆ ಅದಕ್ಕೆ ಸರಿಯಾದ ಮಾರ್ಗ ಯಾವುದು ಎಂಬುದೇ ಅನೇಕರಿಗೆ ಸ್ಪಷ್ಟವಾಗಿಲ್ಲ. ಆಚಾರ್ಯ ಚಾಣಕ್ಯರ ಪ್ರಕಾರ, ಆದಾಯ ಹೆಚ್ಚಿಸಲು ಕೇವಲ ದುಡಿಮೆ ಸಾಕಾಗುವುದಿಲ್ಲ; ಜೊತೆಗೆ ನಮ್ಮ ಆಲೋಚನೆ ಹಾಗೂ ದೈನಂದಿನ ಅಭ್ಯಾಸಗಳಲ್ಲಿ ಬದಲಾವಣೆ ಅಗತ್ಯವಾಗಿದೆ.

ಚಾಣಕ್ಯ ನೀತಿಯ ಪ್ರಕಾರ, ಕೆಲವು ಕೆಟ್ಟ ಅಭ್ಯಾಸಗಳನ್ನು ತ್ಯಜಿಸದಿದ್ದರೆ ಎಷ್ಟೇ ಹಣ ಗಳಿಸಿದರೂ ಅದು ಉಳಿಯುವುದಿಲ್ಲ. ಆದಾಯವನ್ನು ಹೆಚ್ಚಿಸಲು ಮೊದಲು ಈ ಅಭ್ಯಾಸಗಳನ್ನು ಬದಲಾಯಿಸಬೇಕು ಎಂದು ಅವರು ಹೇಳಿದ್ದಾರೆ.

1. ಸಮಯ ವ್ಯರ್ಥ ಮಾಡುವ ಅಭ್ಯಾಸವನ್ನು ಬಿಡಿ:
ಸಮಯವೇ ದೊಡ್ಡ ಸಂಪತ್ತು ಎಂದು ಚಾಣಕ್ಯರು ಹೇಳಿದ್ದಾರೆ. ಸಮಯವನ್ನು ವ್ಯರ್ಥ ಮಾಡುವವರು ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯವಿಲ್ಲ. ಸಮಯವನ್ನು ಸರಿಯಾಗಿ ಬಳಸಿದರೆ ಉತ್ಪಾದಕತೆ ಹೆಚ್ಚಾಗಿ ಆದಾಯವೂ ಸ್ವಯಂಚಾಲಿತವಾಗಿ ಹೆಚ್ಚಾಗುತ್ತದೆ.

2. ಅನಗತ್ಯ ಖರ್ಚುಗಳನ್ನು ನಿಯಂತ್ರಿಸಿ:
ಹಣವನ್ನು ಉಳಿಸುವುದು ಹೇಗೆ ಗಳಿಸುವಷ್ಟೇ ಮುಖ್ಯ. ಅನಗತ್ಯ ವಸ್ತುಗಳಿಗೆ ಹಣ ಖರ್ಚು ಮಾಡುವ ಬದಲು ಸರಿಯಾದ ಹೂಡಿಕೆ ಕಲಿಯಬೇಕು. ಇದು ಆರ್ಥಿಕ ಸ್ಥಿರತೆಯನ್ನು ಹೆಚ್ಚಿಸುತ್ತದೆ.

3. ಸೋಮಾರಿತನವನ್ನು ತ್ಯಜಿಸಿ:
ಸೋಮಾರಿತನವೇ ಯಶಸ್ಸಿನ ದೊಡ್ಡ ಅಡ್ಡಿ ಎಂದು ಚಾಣಕ್ಯರು ಎಚ್ಚರಿಸಿದ್ದಾರೆ. ಕಠಿಣ ಪರಿಶ್ರಮ ಮತ್ತು ನಿಯಮಿತ ದಿನಚರಿಯು ಆದಾಯ ಹೆಚ್ಚಿಸುವ ಪ್ರಮುಖ ಅಂಶಗಳು.

4. ಕೆಟ್ಟ ಸಹವಾಸದಿಂದ ದೂರವಿರಿ:
ನೀವು ಬೆರೆಯುವ ಜನರ ಪ್ರಭಾವ ನಿಮ್ಮ ಆಲೋಚನೆ ಮತ್ತು ಜೀವನಶೈಲಿಯ ಮೇಲೆ ನೇರ ಪರಿಣಾಮ ಬೀರುತ್ತದೆ. ಸಕಾರಾತ್ಮಕ ಹಾಗೂ ದುಡಿಯುವ ಮನೋಭಾವದವರೊಂದಿಗೆ ಇದ್ದರೆ ಯಶಸ್ಸಿನ ಸಾಧ್ಯತೆ ಹೆಚ್ಚುತ್ತದೆ.

ಚಾಣಕ್ಯನ ಈ ಉಪದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ, ಆದಾಯ ಹೆಚ್ಚಿಸುವುದಷ್ಟೇ ಅಲ್ಲದೆ ಆರ್ಥಿಕವಾಗಿ ಸದೃಢ ಜೀವನವನ್ನೂ ನಿರ್ಮಿಸಬಹುದು ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.

 

ಮುಂಬೈನಲ್ಲಿ ಹೃದಯವಿದ್ರಾವಕ ಘಟನೆ: ಫುಡ್‌ ಪಾಯಿಸನ್‌ನಿಂದ ಒಂದೇ ಕುಟುಂಬದ ನಾಲ್ವರು ಸಾವು!

0

ಮುಂಬೈ: ಮುಂಬೈನ ಪೈಧೋನಿ ಪ್ರದೇಶದಲ್ಲಿ ಹೃದಯವಿದ್ರಾವಕ ಘಟನೆ ನಡೆದಿದ್ದು, ಒಂದೇ ಕುಟುಂಬದ ನಾಲ್ವರು ಫುಡ್‌ ಪಾಯಿಸನ್‌ನಿಂದ ಸಾವನ್ನಪ್ಪಿದ್ದಾರೆ.

ಮೃತರನ್ನು ಅಬ್ದುಲ್ಲಾ ದೋಕಾಡಿಯಾ (40), ನಸ್ರೀನ್ ದೋಕಾಡಿಯಾ (35) ಹಾಗೂ ಅವರ ಪುತ್ರಿಯರಾದ ಆಯಿಷಾ (16) ಮತ್ತು ಜೈನಾಬ್ (13) ಎಂದು ಗುರುತಿಸಲಾಗಿದೆ.

ಪ್ರಾಥಮಿಕ ಮಾಹಿತಿಯ ಪ್ರಕಾರ, ಏಪ್ರಿಲ್ 25ರ ರಾತ್ರಿ ಸುಮಾರು 10:30ಕ್ಕೆ ಕುಟುಂಬದ ಸದಸ್ಯರು ಸಂಬಂಧಿಕರೊಂದಿಗೆ ಒಟ್ಟಿಗೆ ಬಿರಿಯಾನಿ ಸೇವಿಸಿದ್ದರು. ಬಳಿಕ ಸಂಬಂಧಿಕರು ತಮ್ಮ ಮನೆಗಳಿಗೆ ತೆರಳಿದ್ದು, ಕುಟುಂಬದವರು ಮಾತ್ರ ಮನೆಯಲ್ಲಿ ಉಳಿದಿದ್ದರು.

ನಡುರಾತ್ರಿ ಸುಮಾರು 1:00 ರಿಂದ 1:30ರ ನಡುವೆ ನಾಲ್ವರು ಸದಸ್ಯರು ಕಲ್ಲಂಗಡಿ ಹಣ್ಣು ಸೇವಿಸಿದ್ದಾಗಿ ತಿಳಿದುಬಂದಿದೆ. ನಂತರ ಮುಂಜಾನೆ 5:30 ರಿಂದ 6:00ರ ನಡುವೆ ಅವರಿಗೆ ತೀವ್ರ ವಾಂತಿ ಹಾಗೂ ಹೊಟ್ಟೆ ನೋವು ಕಾಣಿಸಿಕೊಂಡಿದೆ.

ಆರಂಭದಲ್ಲಿ ಕುಟುಂಬ ವೈದ್ಯರಿಂದ ಚಿಕಿತ್ಸೆ ನೀಡಲಾಗಿದ್ದರೂ, ಸ್ಥಿತಿ ಗಂಭೀರವಾಗಿದ್ದರಿಂದ ಅವರನ್ನು ತಕ್ಷಣ ಮುಂಬೈನ ಜೆಜೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಾಲ್ವರೂ ಮೃತಪಟ್ಟಿದ್ದಾರೆ.

ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಸಾವಿನ ನಿಖರ ಕಾರಣ ವರದಿ ಬಂದ ಬಳಿಕ ತಿಳಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಈ ಸಂಬಂಧ ಆಕಸ್ಮಿಕ ಸಾವು ಪ್ರಕರಣ ದಾಖಲಾಗಿದೆ.

ಈ ದುರಂತ ಘಟನೆಯಿಂದ ಸ್ಥಳೀಯರಲ್ಲಿ ಆಘಾತ ವ್ಯಕ್ತವಾಗಿದ್ದು, ಫುಡ್ ಪಾಯಿಸನ್ ಸಾಧ್ಯತೆ ಬಗ್ಗೆ ತನಿಖೆ ಮುಂದುವರಿದಿದೆ.

error: Content is protected !!