ಬೆಳಗಾವಿ: ಕ್ಷುಲ್ಲಕ ಕಾರಣಕ್ಕಾಗಿ ಅಳಿಯನೊಬ್ಬ ತನ್ನ ಅತ್ತೆಗೆ ಚಾಕುವಿನಿಂದ ಇರಿದ ಭೀಕರ ಘಟನೆ ಸವದತ್ತಿ ತಾಲೂಕಿನ ಆಲದಕಟ್ಟಿ ಗ್ರಾಮದಲ್ಲಿ ನಡೆದಿದೆ.
ವಿಡಿಯೋ ಕಾಲ್ನಲ್ಲಿ ಮಗು ತೋರಿಸಿಲ್ಲ ಎಂಬ ಕಾರಣಕ್ಕೆ ಆರೋಪಿ ಅರವಿಂದ ಗವಳಿ ಸಿಟ್ಟಿಗೆದ್ದಿದ್ದು, ತನ್ನ ಅತ್ತೆ ಮಹಾದೇವಿ (45) ಅವರಿಗೆ ಚಾಕುವಿನಿಂದ ದಾಳಿ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಪತ್ನಿಗೆ ಎರಡು ತಿಂಗಳ ಹಿಂದೆ ಹೆರಿಗೆಯಾಗಿದ್ದು, ಆಕೆ ತವರು ಮನೆಯಲ್ಲಿ ಉಳಿದಿದ್ದಳು. ಅರವಿಂದ ನಿರಂತರವಾಗಿ ವಿಡಿಯೋ ಕಾಲ್ ಮಾಡಿ ಮಗುವನ್ನು ತೋರಿಸುವಂತೆ ಒತ್ತಾಯಿಸುತ್ತಿದ್ದನು. ಇದಕ್ಕೆ ಅತ್ತೆ ವಿರೋಧ ವ್ಯಕ್ತಪಡಿಸಿ ಬುದ್ಧಿವಾದ ಹೇಳಿದ್ದರಿಂದ ಇಬ್ಬರ ನಡುವೆ ವಾಗ್ವಾದ ನಡೆದಿದೆ.
ಇದೇ ದ್ವೇಷದಿಂದ ಅರವಿಂದ ಅತ್ತೆಯ ಮನೆಗೆ ನುಗ್ಗಿ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ. ಗಂಭೀರವಾಗಿ ಗಾಯಗೊಂಡ ಮಹಾದೇವಿಯನ್ನು ಕೂಡಲೇ ಬೆಳಗಾವಿಯ ಬಿಮ್ಸ್ ಆಸ್ಪತ್ರೆಯ ಐಸಿಯುಗೆ ದಾಖಲಿಸಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಘಟನೆ ಬಳಿಕ ಆರೋಪಿ ಅರವಿಂದ ಸಾಮಾಜಿಕ ಜಾಲತಾಣದಲ್ಲಿ “ಇಂದು ಜೈಲು, ನಾಳೆ ಬೇಲ್… ನಿನ್ನನ್ನು ಬಿಡಲ್ಲ” ಎಂದು ಸ್ಟೇಟಸ್ ಹಾಕಿಕೊಂಡು ಅಹಂಕಾರ ಪ್ರದರ್ಶಿಸಿದ್ದಾನೆ ಎಂದು ತಿಳಿದುಬಂದಿದೆ.
ಮುರಗೋಡ ಪೊಲೀಸರು ತಕ್ಷಣ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.
ಬೆಂಗಳೂರು: ರಾಜ್ಯದಲ್ಲಿ ಮುಂದಿನ ನಾಲ್ಕು ದಿನಗಳ ಕಾಲ ಮಳೆ ಅಬ್ಬರ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಜೋರು ಮಳೆಯಾಗುವ ಸಾಧ್ಯತೆ ಇದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಬೆಂಗಳೂರು ನಗರದಲ್ಲಿ ಮುಂದಿನ ಮೂರು ದಿನಗಳ ಕಾಲ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದ್ದು, 30-40 ಕಿ.ಮೀ ವೇಗದ ಗಾಳಿ ಬೀಸುವ ಸಾಧ್ಯತೆಯಿದೆ ಎಂದು ಇಲಾಖೆ ತಿಳಿಸಿದೆ. ಚಿಕ್ಕಮಗಳೂರು, ಕೊಡಗು, ಹಾಸನ, ಮೈಸೂರು, ಮಂಡ್ಯ, ರಾಮನಗರ, ಚಾಮರಾಜನಗರ, ತುಮಕೂರು, ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಗಳಲ್ಲಿ ಮಳೆ ತೀವ್ರವಾಗುವ ನಿರೀಕ್ಷೆಯಿದೆ.
ಕರಾವಳಿ ಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗಲಿದ್ದು, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಒಣ ಹವೆಯೇ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಉತ್ತರ ಕರ್ನಾಟಕದ ಯಾದಗಿರಿ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಕೂಡ ಗುಡುಗು ಸಹಿತ ಸಾಧಾರಣ ಮಳೆಯ ಸಾಧ್ಯತೆ ಇದೆ.
ಮೇ 7 ಮತ್ತು 8ರಂದು ಬೆಳಗಾವಿ, ಧಾರವಾಡ, ಹಾವೇರಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ನಿರೀಕ್ಷೆಯಿದ್ದು, ಉಳಿದ ಬಹುತೇಕ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಮುಂದುವರಿಯಲಿದೆ.
ಇತ್ತ ಮೈಸೂರು ಜಿಲ್ಲೆಯಲ್ಲಿ ಮಳೆ ಮತ್ತು ಗಾಳಿಯ ಆರ್ಭಟ ಮುಂದುವರಿದಿದ್ದು, ಹುಣಸೂರು ತಾಲ್ಲೂಕಿನ ಬಿಳಿಕೆರೆ–ಮನುಗನಹಳ್ಳಿ ಮಧ್ಯೆ ಬೃಹತ್ ಮರ ಬಿದ್ದು ಮೈಸೂರು–ಹುಣಸೂರು ಮುಖ್ಯ ರಸ್ತೆಯಲ್ಲಿ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗಿದೆ. ವಾಹನ ಸವಾರರು ಪರದಾಡುವಂತಾಗಿದೆ.
ಆಚಾರ್ಯ ಚಾಣಕ್ಯರು ತಮ್ಮ ನೀತಿಶಾಸ್ತ್ರದಲ್ಲಿ ಜೀವನ, ಯಶಸ್ಸು, ಸಂಬಂಧಗಳು ಸೇರಿದಂತೆ ಹಲವು ವಿಷಯಗಳ ಬಗ್ಗೆ ಗಾಢವಾದ ಉಪದೇಶಗಳನ್ನು ನೀಡಿದ್ದಾರೆ.
ವಿಶೇಷವಾಗಿ ಅವರು ಒಬ್ಬ ವ್ಯಕ್ತಿ ಇತರರನ್ನು ಯೋಚನೆಯಿಲ್ಲದೆ, ಕುರುಡಾಗಿ ನಂಬುವ ಅಭ್ಯಾಸ ಬೆಳೆಸಿಕೊಂಡರೆ ಅದು ಅವನ ಜೀವನಕ್ಕೆ ದೊಡ್ಡ ಹಾನಿಯನ್ನುಂಟುಮಾಡಬಹುದು ಎಂದು ಎಚ್ಚರಿಸಿದ್ದಾರೆ. ಇಂದಿನ ಕಾಲದಲ್ಲೂ ಈ ಮಾತು ಬಹಳ ಪ್ರಸ್ತುತವಾಗಿದ್ದು, ನಮ್ಮ ದೈನಂದಿನ ನಿರ್ಧಾರಗಳಿಗೆ ಸಂಬಂಧಿಸಿದೆ.
ಚಾಣಕ್ಯರ ಪ್ರಕಾರ, ಇತರರ ಮಾತನ್ನು ಸಂಪೂರ್ಣವಾಗಿ ನಂಬಿ ಸ್ವಂತ ಯೋಚನೆ ಇಲ್ಲದೆ ಮುಂದುವರಿದರೆ, ವ್ಯಕ್ತಿಯ ಮನಸ್ಸು ನಿಧಾನವಾಗಿ ಸ್ವತಂತ್ರವಾಗಿ ಯೋಚಿಸುವ ಶಕ್ತಿಯನ್ನು ಕಳೆದುಕೊಳ್ಳುತ್ತದೆ. ಜನರು ಹೇಳುವ ಪ್ರತಿಯೊಂದು ಮಾತು ಸತ್ಯವಾಗಿರಲು ಸಾಧ್ಯವಿಲ್ಲ. ಕೆಲವರು ತಮ್ಮ ಸ್ವಾರ್ಥ, ಲಾಭ ಅಥವಾ ಕೆಟ್ಟ ಉದ್ದೇಶಗಳಿಂದ ತಪ್ಪು ಸಲಹೆ ನೀಡಬಹುದು. ಅಂತಹ ಸಂದರ್ಭದಲ್ಲಿ ಸ್ವಂತ ವಿಶ್ಲೇಷಣೆ ಇಲ್ಲದೆ ಅವರ ಮಾತನ್ನು ಅನುಸರಿಸಿದರೆ, ಅದು ತಪ್ಪು ದಾರಿಗೆ ಕರೆದೊಯ್ಯಬಹುದು.
ಇದರಿಂದ ವ್ಯಕ್ತಿಯ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವೂ ದುರ್ಬಲವಾಗುತ್ತದೆ. ಸಣ್ಣ ವಿಷಯಗಳಿಗೂ ಇತರರ ಅಭಿಪ್ರಾಯವನ್ನು ಕೇಳಬೇಕಾದ ಸ್ಥಿತಿ ನಿರ್ಮಾಣವಾಗುತ್ತದೆ. ಇದರಿಂದ ಸ್ವಂತ ನಿರ್ಧಾರ ತೆಗೆದುಕೊಳ್ಳುವ ಆತ್ಮವಿಶ್ವಾಸ ಕಡಿಮೆಯಾಗುತ್ತದೆ. ಕ್ರಮೇಣ ವ್ಯಕ್ತಿ ತನ್ನ ಮೇಲೆ ನಂಬಿಕೆ ಕಳೆದುಕೊಳ್ಳುತ್ತಾನೆ ಮತ್ತು ಇತರರ ಮೇಲೆ ಸಂಪೂರ್ಣವಾಗಿ ಅವಲಂಬಿತನಾಗುತ್ತಾನೆ.
ಇದಲ್ಲದೆ, ಈ ಅಭ್ಯಾಸವು ವ್ಯಕ್ತಿಯ ಆತ್ಮವಿಶ್ವಾಸವನ್ನು ಕೂಡ ಕುಸಿತಗೊಳಿಸುತ್ತದೆ. ಯಾವ ಕೆಲಸ ಮಾಡಿದರೂ “ನಾನು ಮಾಡಬಹುದೇ?” ಎಂಬ ಸಂಶಯ ಹುಟ್ಟುತ್ತದೆ. ಇದು ವ್ಯಕ್ತಿತ್ವದ ಬೆಳವಣಿಗೆಯನ್ನೇ ತಡೆಹಿಡಿಯುತ್ತದೆ ಎಂದು ಚಾಣಕ್ಯರು ತಿಳಿಸಿದ್ದಾರೆ.
ಹೀಗಾಗಿ ಚಾಣಕ್ಯ ನೀತಿಯ ಪ್ರಮುಖ ಸಂದೇಶವೆಂದರೆ—ಇತರರ ಸಲಹೆಗಳನ್ನು ಕೇಳುವುದು ಒಳ್ಳೆಯದು, ಆದರೆ ಅಂತಿಮ ನಿರ್ಧಾರವನ್ನು ಸ್ವಂತ ಬುದ್ಧಿ, ಅನುಭವ ಮತ್ತು ವಿವೇಚನೆಯ ಆಧಾರದ ಮೇಲೆ ತೆಗೆದುಕೊಳ್ಳಬೇಕು. ಇದರಿಂದ ಮಾತ್ರ ವ್ಯಕ್ತಿ ಜೀವನದಲ್ಲಿ ಯಶಸ್ಸು ಸಾಧಿಸಿ ಸ್ಥಿರವಾಗಿ ಮುಂದುವರಿಯಲು ಸಾಧ್ಯವಾಗುತ್ತದೆ.
ಮುಂಬೈ: ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ 2026ರ 47ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ 6 ವಿಕೆಟ್ಗಳ ಗೆಲುವು ಸಾಧಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ತಂಡ ನಿಕೋಲಸ್ ಪೂರನ್ ಹಾಗೂ ಮಿಚೆಲ್ ಮಾರ್ಷ್ ಅವರ ಸ್ಫೋಟಕ ಆಟದ ನೆರವಿನಿಂದ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 228 ರನ್ ಗಳಿಸಿತು. ಪೂರನ್ ಕೇವಲ 21 ಎಸೆತಗಳಲ್ಲಿ 63 ರನ್ ಗಳಿಸಿ ಮಿಂಚಿದರು. ಮಾರ್ಷ್ 25 ಎಸೆತಗಳಲ್ಲಿ 44 ರನ್ ದಾಖಲಿಸಿದರು. ನಂತರದ ಹಂತದಲ್ಲಿ ಮಾಕ್ರಮ್ ಮತ್ತು ಹಿಮ್ಮತ್ ಸಿಂಗ್ ಅವರ ಉತ್ತಮ ಆಟದಿಂದ ತಂಡ ಬಲವಾದ ಮೊತ್ತ ದಾಖಲಿಸಿತು.
ಗುರಿ ಬೆನ್ನಟ್ಟಿದ ಮುಂಬೈ ತಂಡಕ್ಕೆ ರಯಾನ್ ರಿಕಲ್ಟನ್ ಹಾಗೂ ರೋಹಿತ್ ಶರ್ಮಾ ಭರ್ಜರಿ ಆರಂಭ ನೀಡಿದರು. ರಿಕಲ್ಟನ್ 32 ಎಸೆತಗಳಲ್ಲಿ 83 ರನ್ ಗಳಿಸಿ 8 ಸಿಕ್ಸರ್ ಮತ್ತು 6 ಬೌಂಡರಿಗಳೊಂದಿಗೆ ಅಬ್ಬರಿಸಿದರು. ರೋಹಿತ್ ಶರ್ಮಾ ಕೂಡ 44 ಎಸೆತಗಳಲ್ಲಿ 84 ರನ್ ಸಿಡಿಸಿ ತಂಡಕ್ಕೆ ಬಲ ನೀಡಿದರು.
ಕೊನೆಯಲ್ಲಿ ನಮನ್ ಧೀರ್ 12 ಎಸೆತಗಳಲ್ಲಿ ಅಜೇಯ 23 ರನ್ ಗಳಿಸಿ ಮುಂಬೈಗೆ ಗೆಲುವಿನ ಮುಟ್ಟಿಸಿದರು. ಮುಂಬೈ ತಂಡ 18.4 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 229 ರನ್ ಗಳಿಸಿ ರೋಚಕ ಜಯ ಸಾಧಿಸಿತು.
ಬೆಂಗಳೂರು: ವಾಣಿಜ್ಯ ಎಲ್ಪಿಜಿ ಸಿಲಿಂಡರ್ ದರದಲ್ಲಿ ಭಾರಿ ಏರಿಕೆ ಆಗಿರುವ ಹಿನ್ನೆಲೆಯಲ್ಲಿ ಬೆಂಗಳೂರಿನ ಹೋಟೆಲ್ಗಳಲ್ಲಿ ಆಹಾರ ಪದಾರ್ಥಗಳ ಬೆಲೆ ಹೆಚ್ಚಳಗೊಂಡಿದೆ.
ಮಧ್ಯಪ್ರಾಚ್ಯ ಯುದ್ಧದ ಭೀತಿ ಹಾಗೂ ಜಾಗತಿಕ ತೈಲ ಮಾರುಕಟ್ಟೆಯ ಏರಿಳಿತ ಇದರ ಪ್ರಮುಖ ಕಾರಣವಾಗಿದೆ ಎಂದು ಮೂಲಗಳು ತಿಳಿಸಿವೆ. 19 ಕೆಜಿ ವಾಣಿಜ್ಯ ಎಲ್ಪಿಜಿ ಸಿಲಿಂಡರ್ ದರ ಬರೋಬ್ಬರಿ 993 ರೂ. ಏರಿಕೆ ಕಂಡು 3,154 ರೂ.ಗೆ ತಲುಪಿದೆ. ಇದರ ನೇರ ಪರಿಣಾಮವಾಗಿ ಹೋಟೆಲ್ ಮಾಲೀಕರು ತಿಂಡಿ, ಊಟ ಹಾಗೂ ಪಾನೀಯಗಳ ದರವನ್ನು ಶೇ.20ರಷ್ಟು ಹೆಚ್ಚಿಸಲು ಮುಂದಾಗಿದ್ದಾರೆ.
ಗಾಂಧಿನಗರದ ‘ರಸಪಾಕ’ ಹೋಟೆಲ್ ಸೇರಿದಂತೆ ಹಲವೆಡೆ ಈಗಾಗಲೇ ಹೊಸ ದರ ಜಾರಿಗೆ ಬಂದಿದ್ದು,
ಊಟ: 100 ರೂ. ನಿಂದ 120 ರೂ.
ದೋಸೆ: 75 ರೂ. ನಿಂದ 85 ರೂ.
ಪೂರಿ: 60 ರೂ. ನಿಂದ 75 ರೂ.
ಟೀ: 20 ರೂ. ನಿಂದ 25 ರೂ.ಗೆ ಏರಿಕೆ ಮಾಡಲಾಗಿದೆ.
ಈ ಬಗ್ಗೆ ಗ್ರಾಹಕರು ಅಸಮಾಧಾನ ವ್ಯಕ್ತಪಡಿಸಿದ್ದು, ನಿರಂತರ ಬೆಲೆ ಏರಿಕೆ ಸಾಮಾನ್ಯ ಜನರ ಜೇಬಿಗೆ ಹೊರೆ ಆಗುತ್ತಿದೆ ಎಂದು ಹೇಳಿದ್ದಾರೆ. ಇತ್ತ ಬೆಂಗಳೂರು ನಗರ ಹೋಟೆಲ್ ಮಾಲೀಕರ ಸಂಘವು, ಬೆಲೆ ಏರಿಕೆ ನಿರ್ಧಾರವು ಹೋಟೆಲ್ ಮಾಲೀಕರ ವಿವೇಚನೆಗೆ ಬಿಟ್ಟ ವಿಚಾರ ಎಂದು ಪ್ರತಿಕ್ರಿಯಿಸಿದೆ.
ಬೆಂಗಳೂರು: ತುಮಕೂರು ರಸ್ತೆ ಮತ್ತು ಪೀಣ್ಯ ಮಾರ್ಗದಲ್ಲಿ ಸಂಚರಿಸುವ ವಾಹನ ಸವಾರರಿಗೆ ಪ್ರಮುಖ ಸೂಚನೆ ನೀಡಲಾಗಿದೆ.
ಪೀಣ್ಯ ಎಲಿವೇಟೆಡ್ ಫ್ಲೈಓವರ್ ಮೇಲೆ ಇಂದಿನಿಂದ ಮುಂದಿನ 4 ದಿನಗಳ ಕಾಲ ಸಂಪೂರ್ಣ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ತಿಳಿಸಿದೆ.
ಮೇ 5ರ ಬೆಳಗ್ಗೆ 5 ಗಂಟೆಯಿಂದ ಮೇ 8ರ ಬೆಳಗ್ಗೆ 11 ಗಂಟೆಯವರೆಗೆ ಫ್ಲೈಓವರ್ ಮೇಲೆ ಸಂಚಾರ ಸ್ಥಗಿತವಾಗಿದ್ದು, ಕೇಬಲ್ ಅಳವಡಿಕೆ ದುರಸ್ತಿ ಹಾಗೂ ಅಂತಿಮ ಲೋಡ್ ಟೆಸ್ಟಿಂಗ್ ಕಾಮಗಾರಿ ನಡೆಯಲಿದೆ. ಸಾರ್ವಜನಿಕರ ಸುರಕ್ಷತೆ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಅವಧಿಯಲ್ಲಿ ನೆಲಮಂಗಲದಿಂದ ಬೆಂಗಳೂರು ನಗರಕ್ಕೆ ಹಾಗೂ ಬೆಂಗಳೂರು ನಗರದಿಂದ ನೆಲಮಂಗಲ ಕಡೆಗೆ ಸಂಚರಿಸುವ ವಾಹನಗಳು ಪರ್ಯಾಯ ಮಾರ್ಗಗಳನ್ನು ಬಳಸಬೇಕಾಗಿದೆ. ಸರ್ವಿಸ್ ರಸ್ತೆ ಮತ್ತು ಪೀಣ್ಯ–ದಾಸರಹಳ್ಳಿ–ಜಾಲಹಳ್ಳಿ ಕ್ರಾಸ್ ಮಾರ್ಗದಲ್ಲಿ ಸಂಚಾರ ವ್ಯವಸ್ಥೆ ಮಾಡಲಾಗಿದೆ.
ಪ್ರಯಾಣಿಕರು ಸಮಯಕ್ಕಿಂತ ಮುಂಚಿತವಾಗಿ ಪ್ರಯಾಣ ಆರಂಭಿಸುವಂತೆ ಹಾಗೂ ಪರ್ಯಾಯ ಮಾರ್ಗಗಳನ್ನು ಅನುಸರಿಸುವಂತೆ ಟ್ರಾಫಿಕ್ ಪೊಲೀಸರು ಮನವಿ ಮಾಡಿದ್ದಾರೆ. ಈ ಹಿಂದೆ ಮುಂದೂಡಲಾಗಿದ್ದ ಕಾಮಗಾರಿ ಇದೀಗ ಆರಂಭವಾಗಿರುವುದರಿಂದ ಸುತ್ತಮುತ್ತಲಿನ ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಲಾಗಿದೆ.
ಗದಗ: ಬೆಂಗಳೂರಿನಿಂದ ಗದಗ ನಗರಕ್ಕೆ ಬರುತ್ತಿದ್ದ ಪಲ್ಲಕ್ಕಿ ಬಸ್ಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಸಂಪೂರ್ಣವಾಗಿ ಸುಟ್ಟು ಕರಕಲಾದ ಘಟನೆ ಮಂಗಳವಾರ ಬೆಳಗಿನ ಜಾವ ಗುತ್ತಲ ಸಮೀಪ ನಡೆದಿದೆ.
ಕ್ಷಣಾರ್ಧದಲ್ಲಿ ಸಂಭವಿಸಿದ ಈ ಅವಘಡದಲ್ಲಿ ದೊಡ್ಡ ದುರಂತ ತಪ್ಪಿದ್ದು, ಚಾಲಕನ ಸಮಯೋಚಿತ ಕ್ರಮದಿಂದ ಎಲ್ಲಾ ಪ್ರಯಾಣಿಕರು ಜೀವಂತವಾಗಿ ಪಾರಾಗಿದ್ದಾರೆ.
ಸೋಮವಾರ ರಾತ್ರಿ ಬೆಂಗಳೂರಿನಿಂದ ಹೊರಟಿದ್ದ (KA-57-F6680) ಸಂಖ್ಯೆಯ ಪಲ್ಲಕ್ಕಿ ಬಸ್ನಲ್ಲಿ ಸುಮಾರು ಹದಿನೈದಕ್ಕೂ ಹೆಚ್ಚು ಪ್ರಯಾಣಿಕರು ಗದಗ ಕಡೆಗೆ ಪ್ರಯಾಣಿಸುತ್ತಿದ್ದರು. ಸಾಮಾನ್ಯವಾಗಿ ನಡೆಯುತ್ತಿದ್ದ ಪ್ರಯಾಣ ಮಧ್ಯರಾತ್ರಿ ಬಳಿಕ ಭೀತಿಯ ಕ್ಷಣಗಳಿಗೆ ತಿರುಗಿತು. ಬಸ್ ಚಲಿಸುತ್ತಿದ್ದಾಗ ಬ್ರೇಕ್ ಲೈನ್ನಲ್ಲಿ ಉಂಟಾದ ತೊಂದರೆಯಿಂದ ಕಿಡಿ ಹೊತ್ತಿಕೊಂಡಿದ್ದು, ಅದು ಕ್ಷಣಕ್ಷಣಕ್ಕೂ ಬೆಂಕಿಯಾಗಿ ವ್ಯಾಪಿಸತೊಡಗಿತು.
ಆರಂಭದಲ್ಲಿ ಸಣ್ಣದಾಗಿ ಕಾಣಿಸಿಕೊಂಡ ಬೆಂಕಿ ಕೆಲವೇ ಕ್ಷಣಗಳಲ್ಲಿ ಬಸ್ನ ಹಿಂಭಾಗವನ್ನು ಆವರಿಸಿತು. ಪರಿಸ್ಥಿತಿ ಗಂಭೀರವಾಗುತ್ತಿರುವುದನ್ನು ಅರಿತ ಚಾಲಕ ಫಕ್ಕೀರಪ್ಪ ತಕ್ಷಣ ಬಸ್ ನಿಲ್ಲಿಸಿ, ಯಾವುದೇ ಗಾಬರಿಯಾಗದೆ ಪ್ರಯಾಣಿಕರನ್ನು ಹೊರಗೆ ಬಿಡಲು ಮುಂದಾದರು. ಬಸ್ ಬಾಗಿಲು ಮೂಲಕ ಎಲ್ಲರನ್ನು ಇಳಿಸಲು ಸಮಯ ಸಾಲದ ಕಾರಣ, ಗಾಜುಗಳನ್ನು ಒಡೆದು ಪ್ರಯಾಣಿಕರನ್ನು ಹೊರಗೆ ತೆಗೆದು ಸುರಕ್ಷಿತ ಸ್ಥಳಕ್ಕೆ ಕರೆದೊಯ್ದರು. ಈ ವೇಳೆ ಒಟ್ಟು ಹದಿನೇಳು ಮಂದಿ ಪ್ರಯಾಣಿಕರು ಪಾರಾಗಿದ್ದು, ಯಾರಿಗೂ ಪ್ರಾಣಾಪಾಯವಾಗಿಲ್ಲ ಎನ್ನುವುದು ದೊಡ್ಡ ನೆಮ್ಮದಿ.
ಪ್ರತ್ಯಕ್ಷದರ್ಶಿಗಳ ಪ್ರಕಾರ, ಇನ್ನೂ ಕೆಲ ನಿಮಿಷ ತಡವಾದರೂ ಬೆಂಕಿ ಸಂಪೂರ್ಣ ಬಸ್ ಅನ್ನು ಆವರಿಸಿ ಭೀಕರ ದುರಂತಕ್ಕೆ ಕಾರಣವಾಗಬಹುದಿತ್ತು. “ಚಾಲಕನ ಧೈರ್ಯ ಮತ್ತು ಚಾತುರ್ಯದಿಂದಲೇ ನಾವು ಬದುಕಿದ್ದೇವೆ” ಎಂದು ಕೆಲ ಗದಗ ತಾಲೂಕು ಪಂಚಾಯತ್ ಇಒ ಜಿನಗಾ ಅವರು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.
ಈ ಘಟನೆಗೆ ಸಾಕ್ಷಿಯಾದ ಪತ್ರಕರ್ತ ರಮೇಶ್ ಭಜಂತ್ರಿ ಅವರು ತಮ್ಮ ಮಗನೊಂದಿಗೆ ಬೆಂಗಳೂರಿಗೆ ಹೋಗಿ ವಾಪಾಸಾಗುತ್ತಿದ್ದ ವೇಳೆ ಇದೇ ಬಸ್ನಲ್ಲಿ ಪ್ರಯಾಣಿಸುತ್ತಿದ್ದರು. ಘಟನೆ ನಡೆದ ಕೂಡಲೇ ಅವರು ತಮ್ಮ ಮೊಬೈಲ್ನಲ್ಲಿ ಬೆಂಕಿಗಾಹುತಿಯಾದ ಬಸ್ನ ದೃಶ್ಯಗಳನ್ನು ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಆ ದೃಶ್ಯಗಳು ವ್ಯಾಪಕವಾಗಿ ವೈರಲ್ ಆಗಿವೆ. ಬಸ್ ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗುತ್ತಿರುವ ದೃಶ್ಯಗಳು ಘಟನೆಯ ಭೀಕರತೆಯನ್ನು ತೋರಿಸುತ್ತವೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳೀಯ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಲು ಕ್ರಮ ಕೈಗೊಂಡರು. ಆದರೆ ಅಷ್ಟರಲ್ಲಾಗಲೇ ಬಸ್ ಸಂಪೂರ್ಣ ಸುಟ್ಟು ಹಾಳಾಗಿತ್ತು.
ಪ್ರಾಥಮಿಕ ತನಿಖೆಯಲ್ಲಿ ಬ್ರೇಕ್ ಲೈನ್ನ ದೋಷವೇ ಬೆಂಕಿಗೆ ಕಾರಣವಾಗಿರುವ ಸಾಧ್ಯತೆ ವ್ಯಕ್ತವಾಗಿದ್ದು, ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಈ ಅವಘಡ ಮತ್ತೊಮ್ಮೆ ವಾಹನಗಳ ತಾಂತ್ರಿಕ ಪರಿಶೀಲನೆ ಮತ್ತು ಸುರಕ್ಷತಾ ಕ್ರಮಗಳ ಮಹತ್ವವನ್ನು ನೆನಪಿಸಿಕೊಟ್ಟಿದೆ. ಸಮಯಕ್ಕೆ ಸೂಕ್ತ ಕ್ರಮ ಕೈಗೊಂಡ ಚಾಲಕ ಫಕ್ಕೀರಪ್ಪ ಅವರ ಸಾಹಸದಿಂದ ಸಂಭವಿಸಬಹುದಾದ ದೊಡ್ಡ ಅನಾಹುತ ತಪ್ಪಿದಂತಾಗಿದೆ.
ನವದೆಹಲಿ: ಪಂಚರಾಜ್ಯ ಚುನಾವಣಾ ಫಲಿತಾಂಶ ಹೊರಬಂದ ಹಿನ್ನೆಲೆಯಲ್ಲಿ ಬಿಜೆಪಿ ಕಚೇರಿಯಲ್ಲಿ ನಡೆದ ವಿಜಯೋತ್ಸವದಲ್ಲಿ ಪ್ರಧಾನಿ ನರೇಂದ್ರ ಮೋದಿ ಬಂಗಾಳ ಜನತೆಗೆ ಭರವಸೆ ನೀಡಿದ್ದಾರೆ.
“ಗಂಗೋತ್ರಿಯಿಂದ ಗಂಗಾಸಾಗರವರೆಗೆ ಕಮಲ ಅರಳಿದೆ. ಬಂಗಾಳದಲ್ಲಿ ಹೊಸ ಸೂರ್ಯೋದಯವಾಗಿದ್ದು, ರಾಜ್ಯ ಭಯಮುಕ್ತವಾಗಿದೆ” ಎಂದು ಅವರು ತಿಳಿಸಿದ್ದಾರೆ. ಬಂಗಾಳ, ಅಸ್ಸಾಂ ಮತ್ತು ಪುದುಚೇರಿಯಲ್ಲಿ ಸಾಧಿಸಿದ ಗೆಲುವಿಗೆ ಕಾರಣರಾದ ಪಕ್ಷದ ಕಾರ್ಯಕರ್ತರನ್ನು ಅಭಿನಂದಿಸಿದ ಅವರು, “ನಿಮ್ಮ ಉತ್ತಮ ಭವಿಷ್ಯಕ್ಕಾಗಿ ಹಗಲು-ರಾತ್ರಿ ಶ್ರಮಿಸುತ್ತೇವೆ” ಎಂದು ಭರವಸೆ ನೀಡಿದ್ದಾರೆ.
ಚುನಾವಣೆಯಲ್ಲಿ ಗೆಲುವು-ಸೋಲು ಸಹಜವಾದರೂ, ಐದು ರಾಜ್ಯಗಳ ಜನತೆ ಭಾರತ ಪ್ರಜಾಪ್ರಭುತ್ವದ ಶಕ್ತಿಯನ್ನು ವಿಶ್ವಕ್ಕೆ ತೋರಿಸಿದ್ದಾರೆ. “ಪ್ರಜಾಪ್ರಭುತ್ವ ನಮ್ಮ ನರನಾಡಿಗಳಲ್ಲಿ ಹರಿಯುವ ಶಕ್ತಿ. ಈ ಗೆಲುವು ಭಾರತದ ಸಂವಿಧಾನಕ್ಕೂ ಸಲ್ಲುತ್ತದೆ” ಎಂದು ಅವರು ಹೇಳಿದ್ದಾರೆ.
ಅಸ್ಸಾಂ, ತಮಿಳುನಾಡು, ಪುದುಚೇರಿ ಹಾಗೂ ಕೇರಳ ರಾಜ್ಯಗಳಲ್ಲಿ ದಾಖಲೆ ಮಟ್ಟದ ಮತದಾನ ನಡೆದಿದ್ದು, ಮಹಿಳೆಯರ ಭಾಗವಹಿಸುವಿಕೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ, ಸಿಬ್ಬಂದಿ ಹಾಗೂ ಭದ್ರತಾ ಪಡೆಗಳ ಸೇವೆಯನ್ನು ಅವರು ಶ್ಲಾಘಿಸಿದ್ದಾರೆ. ಅಸ್ಸಾಂನಲ್ಲಿ ಮೂರನೇ ಬಾರಿ ಬಿಜೆಪಿ ನೇತೃತ್ವದ ಮೈತ್ರಿಕೂಟಕ್ಕೆ ಜನರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಪುದುಚೇರಿಯಲ್ಲಿಯೂ ಮೈತ್ರಿಕೂಟದ ಮೇಲೆ ಜನರು ನಂಬಿಕೆ ಇಟ್ಟಿದ್ದಾರೆ ಎಂದರು.
“ಎಲ್ಲಿ ಬಿಜೆಪಿ, ಅಲ್ಲಿ ಅಭಿವೃದ್ಧಿ” ಎಂಬ ಧ್ಯೇಯದೊಂದಿಗೆ ಕೆಲಸ ಮಾಡುತ್ತಿದ್ದೇವೆ. ದೇಶದ 20ಕ್ಕೂ ಹೆಚ್ಚು ರಾಜ್ಯಗಳಲ್ಲಿ ಬಿಜೆಪಿ ಅಥವಾ ಮೈತ್ರಿಕೂಟದ ಸರ್ಕಾರವಿದೆ. ಗುಜರಾತ್ ಸೇರಿದಂತೆ ಸ್ಥಳೀಯ ಚುನಾವಣೆಯಲ್ಲಿಯೂ ಪಕ್ಷಕ್ಕೆ ಭಾರೀ ಬೆಂಬಲ ದೊರೆತಿದೆ. ಜನಸಂಘದ ಸ್ಥಾಪಕ ಶ್ಯಾಮ ಪ್ರಸಾದ್ ಮುಖರ್ಜಿ ಅವರ ಕನಸಿನ ಬಂಗಾಳ ನಿರ್ಮಾಣದ ದಾರಿ ಈಗ ತೆರೆದಿದೆ.“ಬಂಗಾಳ ಭಯಮುಕ್ತವಾಗಿದೆ, ಹೊಸ ಅಧ್ಯಾಯ ಆರಂಭವಾಗಿದೆ” ಎಂದರು.
ಕೊನೆಯಲ್ಲಿ, ಬಂಗಾಳ ಜನತೆಗೆ ಭರವಸೆ ನೀಡಿದ ಅವರು, ಮಹಿಳೆಯರಿಗೆ ಸುರಕ್ಷತೆ, ಯುವಕರಿಗೆ ಉದ್ಯೋಗ ಹಾಗೂ ಆರೋಗ್ಯ ಸೌಲಭ್ಯಗಳನ್ನು ಒದಗಿಸಲು ಸರ್ಕಾರ ಬದ್ಧವಾಗಿದೆ. ನುಸುಳುವಿಕೆ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಬೆಂಗಳೂರು: ಬಾಗಲಕೋಟೆ ಮತ್ತು ದಾವಣಗೆರೆ ವಿಧಾನಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಮತ ನೀಡಿ ಗೆಲುವು ಸಾಧಿಸಲು ನೆರವಾದ ಮತದಾರರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಧನ್ಯವಾದ ತಿಳಿಸಿದ್ದಾರೆ.
ಈ ಬಗ್ಗೆ ಮಾಧ್ಯಮ ಪ್ರಕಟಣೆ ಹೊರಡಿಸಿರುವ ಅವರು, ಈ ಗೆಲುವು ಸರ್ಕಾರದ ಸಾಧನೆಗಳು ಹಾಗೂ ಕಾಂಗ್ರೆಸ್ ಪಕ್ಷದ ಸಿದ್ಧಾಂತಕ್ಕೆ ಸಿಕ್ಕ ಜಯವಾಗಿದೆ. ವಿರೋಧ ಪಕ್ಷಗಳ ಅಪಪ್ರಚಾರ ಮತ್ತು ಹಣದ ಪ್ರಭಾವದ ನಡುವೆಯೂ ಜನರು ಕಾಂಗ್ರೆಸ್ ಹಾಗೂ ಸರ್ಕಾರದ ಮೇಲೆ ನಂಬಿಕೆ ಇಟ್ಟು ಮತ ಚಲಾಯಿಸಿದ್ದಾರೆ ಎಂದು ತಿಳಿಸಿದ್ದಾರೆ.
ರಾಜ್ಯದ ಜನತೆ ತಮ್ಮ ಮೇಲೆ ಇಟ್ಟಿರುವ ವಿಶ್ವಾಸವನ್ನು ಉಳಿಸಿಕೊಳ್ಳುವುದಾಗಿ ಭರವಸೆ ನೀಡಿದ ಅವರು, ಮುಂದಿನ ವಿಧಾನಸಭಾ ಚುನಾವಣೆಯಲ್ಲಿಯೂ ಇದೇ ರೀತಿಯ ಬೆಂಬಲ ಸಿಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ದಕ್ಷಿಣ ರಾಜ್ಯಗಳಲ್ಲಿ ಬಿಜೆಪಿಯ ರಾಜಕಾರಣಕ್ಕೆ ಅವಕಾಶ ಇಲ್ಲ ಎಂಬ ಸ್ಪಷ್ಟ ಸಂದೇಶ ಈ ಫಲಿತಾಂಶಗಳಿಂದ ಹೊರಬಂದಿದೆ ಎಂದು ಸಿಎಂ ಅಭಿಪ್ರಾಯಪಟ್ಟಿದ್ದಾರೆ. ಕೇರಳ ಮತ್ತು ತಮಿಳುನಾಡು ರಾಜ್ಯಗಳಲ್ಲಿಯೂ ಇದೇ ರೀತಿಯ ಜನಾಭಿಪ್ರಾಯ ವ್ಯಕ್ತವಾಗಿದೆ ಎಂದರು.
ಕೇರಳ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ನಿರೀಕ್ಷಿತವಾಗಿತ್ತು ಎಂದು ಹೇಳಿದ ಅವರು, ಅಭ್ಯರ್ಥಿಗಳ ಆಯ್ಕೆದಿಂದ ಪ್ರಚಾರದ ಕಾರ್ಯತಂತ್ರದವರೆಗೆ ರಾಜ್ಯದ ಕಾಂಗ್ರೆಸ್ ನಾಯಕರು ಸಂಘಟಿತವಾಗಿ ಕೆಲಸ ಮಾಡಿದ್ದಾರೆ. ಪಕ್ಷದ ನಾಯಕರಾದ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕ ಗಾಂಧಿ ಅವರ ಶ್ರಮವನ್ನು ಸಿಎಂ ಪ್ರಶಂಸಿಸಿದ್ದಾರೆ.
ಶೀಘ್ರದಲ್ಲೇ ಕೇರಳದಲ್ಲಿ ಕಾಂಗ್ರೆಸ್ ಶಾಸಕಾಂಗ ಸಭೆ ನಡೆಯಲಿದ್ದು, ಮುಂದಿನ ಮುಖ್ಯಮಂತ್ರಿ ಆಯ್ಕೆ ನಡೆಯಲಿದೆ. ಕರ್ನಾಟಕದಂತೆ ಕೇರಳದಲ್ಲಿಯೂ ಉತ್ತಮ ಆಡಳಿತ ನೀಡಲಾಗುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ ಸಿಎಂ, ನೆರೆಯ ರಾಜ್ಯದ ಗೆಲುವು ಕರ್ನಾಟಕ ಕಾಂಗ್ರೆಸ್ ಬಲವನ್ನು ಹೆಚ್ಚಿಸಿದೆ ಎಂದು ತಿಳಿಸಿದ್ದಾರೆ.
ಹಾಲಿ ಚಾಂಪಿಯನ್ ಆರ್ಸಿಬಿ ತನ್ನ ಮುಂದಿನ ಪಂದ್ಯವನ್ನು ಮೇ 7ರಂದು ಲಕ್ನೋ ಸೂಪರ್ಜೈಂಟ್ಸ್ ವಿರುದ್ಧ ಏಕನಾ ಕ್ರೀಡಾಂಗಣದಲ್ಲಿ ಆಡಲಿದೆ.
ಪ್ಲೇಆಫ್ ದೃಷ್ಟಿಯಿಂದ ಉಳಿದ ಪಂದ್ಯಗಳಲ್ಲಿ ಗೆಲುವು ತಂಡಕ್ಕೆ ಅತ್ಯಗತ್ಯವಾಗಿದ್ದು, ಆರ್ಸಿಬಿ ತಯಾರಿಯಲ್ಲಿ ತೊಡಗಿದೆ.
ಈ ನಡುವೆ ಆರ್ಸಿಬಿ ಫ್ರಾಂಚೈಸಿ ತನ್ನ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಅದರಲ್ಲಿ ತಂಡದ ಮಾಜಿ ಫಿಸಿಯೋ ಇವಾನ್ ಸ್ಪೀಚ್ಲಿಗೆ ಭಾವುಕ ವಿದಾಯ ತಿಳಿಸಿದೆ.
ದಕ್ಷಿಣ ಆಫ್ರಿಕಾ ಮೂಲದ ಇವಾನ್ ಸ್ಪೀಚ್ಲಿ 2008ರಲ್ಲಿ ಆರ್ಸಿಬಿ ತಂಡಕ್ಕೆ ಫಿಸಿಯೋ ಆಗಿ ಸೇರಿ, ಸತತ 18 ವರ್ಷಗಳ ಕಾಲ (2008ರಿಂದ 2025ರವರೆಗೆ) ಆಟಗಾರರ ದೈಹಿಕ ಸಾಮರ್ಥ್ಯ ಕಾಪಾಡುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಕಳೆದ ವರ್ಷ ತಂಡ ಐಪಿಎಲ್ ಚಾಂಪಿಯನ್ ಆದ ನಂತರ ಅವರು ತಮ್ಮ ಹುದ್ದೆಯಿಂದ ನಿವೃತ್ತರಾಗಿದ್ದರು.
ಅವರ ಸೇವೆಯನ್ನು ಗೌರವಿಸಲು ಆರ್ಸಿಬಿ ವಿಶೇಷವಾಗಿ ಆಹ್ವಾನಿಸಿ, ತಂಡದ ಡ್ರೆಸ್ಸಿಂಗ್ ಕೋಣೆಯಲ್ಲಿ ಕೈಗಡಿಯಾರ ನೀಡಿ ಸನ್ಮಾನಿಸಿದೆ.
ಈ ಸಂದರ್ಭದಲ್ಲಿ, ಕೊಹ್ಲಿ ಸ್ಪೀಚ್ಲಿ ಬಗ್ಗೆ ತಮ್ಮ ಗೌರವ ಮತ್ತು ಪ್ರೀತಿಯನ್ನು ವ್ಯಕ್ತಪಡಿಸಿದರು, ಕಳೆದ 18 ವರ್ಷಗಳಲ್ಲಿ ತಂಡದ ಇತರರಿಗಿಂತ ಹೆಚ್ಚು ಸಮಯವನ್ನು ಅವರೊಂದಿಗೆ ಕಳೆದಿದ್ದೇನೆ ಎಂದು ಅವರು ನೆನಪಿಸಿಕೊಂಡರು.
ಒಟ್ಟಾರೆ, ಪ್ಲೇಆಫ್ ಸವಾಲಿನ ನಡುವೆ ಆರ್ಸಿಬಿ ತಂಡದಲ್ಲಿ ಈ ಭಾವುಕ ಕ್ಷಣ ಗಮನ ಸೆಳೆದಿದೆ.