Home Blog

ಆರೋಪಿಗಳ ವಿರುದ್ಧ ಬಲವಂತದ ಕ್ರಮ ಕೈಗೊಳ್ಳಬೇಡಿ ಎಂಬ ನಿರ್ದೇಶನ ತನಿಖೆಗೆ ಅಡ್ಡಿಯಲ್ಲ; ಹೈಕೋರ್ಟ್

ಬೆಂಗಳೂರು: ಆರೋಪಿಗಳ ವಿರುದ್ಧ ಬಲವಂತದ ಕ್ರಮ ಕೈಗೊಳ್ಳದಂತೆ ನ್ಯಾಯಾಲಯ ನೀಡುವ ಆದೇಶವು ಬಂಧನ ಸೇರಿದಂತೆ ವ್ಯಕ್ತಿಯ ವೈಯಕ್ತಿಕ ಸ್ವಾತಂತ್ರ್ಯವನ್ನು ಮಾತ್ರ ರಕ್ಷಿಸುತ್ತದೆ. ಆದರೆ, ತನಿಖಾ ಸಂಸ್ಥೆಯು ತನಿಖೆ ಮುಂದುವರಿಸುವುದು ಅಥವಾ ಕಾನೂನುಬದ್ಧ ಕ್ರಮಗಳನ್ನು ಕೈಗೊಳ್ಳುವುದನ್ನು ಅದು ತಡೆಯುವುದಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ಸ್ಪಷ್ಟನೆ ನೀಡಿದೆ.

ಹಣ ದುರ್ಬಳಕೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ತನ್ನ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿರುವ ಕ್ರಮವನ್ನು ಪ್ರಶ್ನಿಸಿ ತಮಿಳುನಾಡು ಮೂಲದ ಕಂಪನಿಯ ನಿರ್ದೇಶಕಿ ಪವಿತ್ರ ರಾಮಾನುಜಂ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ವಜಾಗೊಳಿಸಿದೆ.

ಪ್ರಕರಣದ ವಿಚಾರಣೆ ವೇಳೆ, ಈ ಹಿಂದೆ ಅರ್ಜಿದಾರರು ತನಿಖೆಗೆ ಸಹಕರಿಸುವುದಾಗಿ ಮುಚ್ಚಳಿಕೆ ನೀಡಿದ್ದ ಹಿನ್ನೆಲೆಯಲ್ಲಿ, ಅವರ ವಿರುದ್ಧ ಬಲವಂತದ ಕ್ರಮ ಕೈಗೊಳ್ಳಬಾರದು ಎಂದು ನ್ಯಾಯಾಲಯ ಮಧ್ಯಂತರ ಆದೇಶ ನೀಡಿತ್ತು. ಆದರೂ ಇಡಿ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿರುವುದು ಕಾನೂನುಬಾಹಿರ ಎಂದು ಅರ್ಜಿದಾರರು ವಾದಿಸಿದ್ದರು.

ಆದರೆ, ಈ ವಾದವನ್ನು ತಳ್ಳಿಹಾಕಿದ ಹೈಕೋರ್ಟ್, ‘ಬಲವಂತದ ಕ್ರಮ ಕೈಗೊಳ್ಳಬಾರದು’ ಎಂಬ ಆದೇಶವು ತನಿಖಾ ಸಂಸ್ಥೆಯ ಅಧಿಕಾರವನ್ನು ನಿರ್ಬಂಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ನ್ಯಾಯಾಲಯದ ಪ್ರಕಾರ, ಇಂತಹ ಆದೇಶವು ತನಿಖೆ ಎದುರಿಸುತ್ತಿರುವ ವ್ಯಕ್ತಿಯ ವೈಯಕ್ತಿಕ ಸ್ವಾತಂತ್ರ್ಯವನ್ನು ರಕ್ಷಿಸಲು ನೀಡುವ ನ್ಯಾಯಾಂಗ ರಕ್ಷಣೆಯಾಗಿದೆ. ಇದು ಬಂಧನ ಅಥವಾ ವ್ಯಕ್ತಿಯ ಸ್ವಾತಂತ್ರ್ಯದ ಮೇಲೆ ನೇರ ಪರಿಣಾಮ ಬೀರುವ ಕ್ರಮಗಳನ್ನು ಮಾತ್ರ ನಿರ್ಬಂಧಿಸುತ್ತದೆ. ಆದರೆ, ತನಿಖೆಯನ್ನು ಮುಂದುವರಿಸುವುದು, ಸಾಕ್ಷ್ಯ ಸಂಗ್ರಹಿಸುವುದು, ಪ್ರಾಸಿಕ್ಯೂಷನ್ ದೂರು ಸಲ್ಲಿಸುವುದು ಅಥವಾ ಕಾನೂನುಬದ್ಧವಾಗಿ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವಂತಹ ಕ್ರಮಗಳಿಗೆ ಯಾವುದೇ ಅಡ್ಡಿಯಾಗುವುದಿಲ್ಲ ಎಂದು ಪೀಠ ತಿಳಿಸಿದೆ.

ಪ್ರಕರಣದ ಹಿನ್ನೆಲೆ

ಹಣ ದುರ್ಬಳಕೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಪವಿತ್ರ ರಾಮಾನುಜಂ ಅವರನ್ನು ಆರೋಪಿಯನ್ನಾಗಿ ಸೇರಿಸಿದ್ದು, ಸುಮಾರು ₹7.9 ಕೋಟಿ ಹಣ ದುರ್ಬಳಕೆ ನಡೆಸಿರುವ ಆರೋಪದಡಿ ಇಸಿಐಆರ್ (ECIR) ದಾಖಲಿಸಿತ್ತು. ತನಿಖೆಗೆ ಹಾಜರಾಗುವಂತೆ ಇಡಿ ಸಮನ್ಸ್ ನೀಡಿದ್ದನ್ನು ಪ್ರಶ್ನಿಸಿ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು.

ತನಿಖೆಗೆ ಸಂಪೂರ್ಣ ಸಹಕರಿಸುವುದಾಗಿ ಅವರು ನ್ಯಾಯಾಲಯಕ್ಕೆ ಭರವಸೆ ನೀಡಿದ ಹಿನ್ನೆಲೆಯಲ್ಲಿ, ಅವರ ವಿರುದ್ಧ ಬಲವಂತದ ಕ್ರಮ ಕೈಗೊಳ್ಳಬಾರದು ಎಂದು ಮಧ್ಯಂತರ ಆದೇಶ ನೀಡಲಾಗಿತ್ತು. ಆದರೆ, ಬಳಿಕ ಇಡಿ ಅವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದ್ದರಿಂದ, ಅದನ್ನು ಪ್ರಶ್ನಿಸಿ ಅವರು ಮತ್ತೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ಇಡಿ ಕೈಗೊಂಡ ಆಸ್ತಿ ಮುಟ್ಟುಗೋಲು ಕ್ರಮವು ನ್ಯಾಯಾಲಯದ ಮಧ್ಯಂತರ ಆದೇಶದ ಉಲ್ಲಂಘನೆಯಲ್ಲ ಎಂದು ಹೇಳಿ ಅರ್ಜಿಯನ್ನು ವಜಾಗೊಳಿಸಿದೆ.

BREAKING: ಯೋಗೇಶ್ ಗೌಡ ಕೊಲೆ ಕೇಸಲ್ಲಿ ವಿನಯ್ ಕುಲಕರ್ಣಿಗೆ ಜಾಮೀನು! ಜೀವಾವದಿ ಶಿಕ್ಷೆಗೆ ಹೈಕೋರ್ಟ್ ತಡೆ 

ಬೆಂಗಳೂರು: ಧಾರವಾಡ ಬಿಜೆಪಿ ಮುಖಂಡ ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿದ್ದ ಮಾಜಿ ಸಚಿವ ಹಾಗೂ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿಗೆ ಕರ್ನಾಟಕ ಹೈಕೋರ್ಟ್ ರಿಲೀಫ್ ನೀಡಿದೆ. ನ್ಯಾಯಾಲಯವು ಅವರಿಗೆ ವಿಧಿಸಲಾಗಿದ್ದ ಶಿಕ್ಷೆಯನ್ನು ಅಮಾನತುಗೊಳಿಸಿ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

ಹೈಕೋರ್ಟ್ ₹5 ಲಕ್ಷ ಮೌಲ್ಯದ ವೈಯಕ್ತಿಕ ಬಾಂಡ್ ಹಾಗೂ ಶ್ಯೂರಿಟಿ ಸಲ್ಲಿಸುವಂತೆ ಸೂಚಿಸಿದ್ದು, ನ್ಯಾಯಾಲಯದ ಅನುಮತಿ ಇಲ್ಲದೆ ದೇಶ ತೊರೆಯಬಾರದು ಎಂಬ ಷರತ್ತನ್ನೂ ವಿಧಿಸಿದೆ. ಇದೇ ವೇಳೆ, ವಿನಯ್ ಕುಲಕರ್ಣಿ ದೋಷಿ ಎಂದು ಸೆಷನ್ಸ್ ನ್ಯಾಯಾಲಯ ನೀಡಿದ್ದ ತೀರ್ಪಿನ ಜಾರಿಗೆ ತಡೆಯಾಜ್ಞೆಯನ್ನೂ ನೀಡಿದೆ.

ನ್ಯಾಯಮೂರ್ತಿಗಳಾದ ಮೊಹಮ್ಮದ್ ನವಾಜ್ ಮತ್ತು ಜಿ. ಬಸವರಾಜ್ ಅವರಿದ್ದ ವಿಭಾಗೀಯ ಪೀಠ ಈ ಆದೇಶ ಹೊರಡಿಸಿದೆ. ವಿನಯ್ ಕುಲಕರ್ಣಿ ಸೇರಿದಂತೆ ಒಟ್ಟು 10 ಆರೋಪಿಗಳಿಗೆ ಹೈಕೋರ್ಟ್ ಜಾಮೀನು ನೀಡಿದ್ದು, ಆರೋಪಿಗಳಲ್ಲೊಬ್ಬರಾದ ಚನ್ನಕೇಶವ ಟಿಂಗರಿಕರ್ ಅವರಿಗೂ ಜಾಮೀನು ಮಂಜೂರಾಗಿದೆ.

ವಿನಯ್ ಕುಲಕರ್ಣಿ ಪರ ಹಿರಿಯ ವಕೀಲ ಸಿ.ವಿ. ನಾಗೇಶ್ ವಾದ ಮಂಡಿಸಿದರೆ, ಸಿಬಿಐ ಪರವಾಗಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ. ರಾಜು ಹಾಜರಾಗಿ ಜಾಮೀನು ಅರ್ಜಿಗೆ ತೀವ್ರ ವಿರೋಧ ವ್ಯಕ್ತಪಡಿಸಿದರು.

ವಿನಯ್ ಕುಲಕರ್ಣಿ ವಿರುದ್ಧ ಈ ಹಿಂದೆ ಹಲವು ಪ್ರಕರಣಗಳು ದಾಖಲಾಗಿವೆ. ಕೆಲವು ಪ್ರಕರಣಗಳಲ್ಲಿ ಅವರು ಖುಲಾಸೆಯಾಗಿದ್ದರೂ, ಉಳಿದ ಪ್ರಕರಣಗಳ ಗಂಭೀರತೆಯನ್ನು ಪರಿಗಣಿಸಬೇಕು ಎಂದು ಸಿಬಿಐ ವಾದಿಸಿತು. ಅಲ್ಲದೆ, ಸಾಕ್ಷ್ಯ ನಾಶಪಡಿಸುವುದು ಹಾಗೂ ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಆರೋಪಗಳಿದ್ದು, ಅವರು ಪ್ರಭಾವಿ ರಾಜಕಾರಣಿಯಾಗಿರುವ ಕಾರಣ ಜಾಮೀನು ನೀಡಬಾರದು ಎಂದು ನ್ಯಾಯಾಲಯದ ಗಮನಕ್ಕೆ ತರಲಾಯಿತು.

ಆದರೆ, ಎರಡೂ ಪಕ್ಷಗಳ ವಾದ ಆಲಿಸಿದ ಹೈಕೋರ್ಟ್ ಶಿಕ್ಷೆಯನ್ನು ಅಮಾನತುಗೊಳಿಸಿ ಜಾಮೀನು ಮಂಜೂರು ಮಾಡಿದೆ. ಈ ಆದೇಶದಿಂದ ವಿನಯ್ ಕುಲಕರ್ಣಿ ಅವರ ಶಾಸಕ ಸ್ಥಾನ ಮುಂದುವರಿಯುವ ಸಾಧ್ಯತೆ ಹೆಚ್ಚಿದ್ದು, ಅವರ ರಾಜಕೀಯ ಭವಿಷ್ಯಕ್ಕೂ ತಾತ್ಕಾಲಿಕ ನೆಮ್ಮದಿ ದೊರೆತಂತಾಗಿದೆ.

ಹಟ್ಟಿ ಚಿನ್ನದ ಗಣಿ ವಿರುದ್ಧ ರೈತರ ರಣಕಹಳೆ; ಭೂ ಹಕ್ಕಿಗಾಗಿ ಅನಿರ್ದಿಷ್ಟಾವಧಿ ಹೋರಾಟ!

ರಾಯಚೂರು: ದೇಶಕ್ಕೆ ಚಿನ್ನ ನೀಡುವ ಹಟ್ಟಿ ಚಿನ್ನದ ಗಣಿ ಕಂಪನಿ ವಿರುದ್ಧ ರಾಯಚೂರು ಜಿಲ್ಲೆಯ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ತಮ್ಮ ಭೂ ಹಕ್ಕಿಗಾಗಿ ಬೀದಿಗಿಳಿದು ಅನಿರ್ದಿಷ್ಟಾವಧಿ ಪ್ರತಿಭಟನೆ ಆರಂಭಿಸಿದ್ದಾರೆ.

ಲಿಂಗಸುಗೂರು ತಾಲೂಕಿನ ಹಟ್ಟಿ ಪಟ್ಟಣದಲ್ಲಿರುವ ಹಟ್ಟಿ ಚಿನ್ನದ ಗಣಿ ಕಂಪನಿಯ ಮುಖ್ಯ ದ್ವಾರದ ಎದುರು ‘ಹಟ್ಟಿ ಭೂ ಹಕ್ಕು ವಂಚಿತ ರೈತ ಹೋರಾಟ ಸಮಿತಿ’ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಯುತ್ತಿದೆ.

ಭೂ ದಾಖಲೆಗಳಲ್ಲಿ ಕಂಪನಿ ಹೆಸರು; ರೈತರ ಸಂಕಷ್ಟ:

ಗಣಿ ಅಭಿವೃದ್ಧಿ ಉದ್ದೇಶಕ್ಕಾಗಿ ಹಟ್ಟಿ-ಕೋಠಾ ಸೀಮಾಂತರದ ಒಟ್ಟು 1,305 ಎಕರೆ ಜಮೀನನ್ನು ಗುತ್ತಿಗೆ ಪಡೆಯಲಾಗಿತ್ತು. ಈ ಪೈಕಿ 915 ಎಕರೆ ಭೂಮಿಯನ್ನು ಮಾತ್ರ ಭೂಸ್ವಾಧೀನಪಡಿಸಿಕೊಂಡು ರೈತರಿಗೆ ಪರಿಹಾರ ಹಾಗೂ ಉದ್ಯೋಗ ನೀಡಲಾಗಿದೆ ಎಂದು ರೈತರು ತಿಳಿಸಿದ್ದಾರೆ.

ಆದರೆ ಉಳಿದ 390 ಎಕರೆ ಜಮೀನನ್ನು ಕಂಪನಿ ಸ್ವಾಧೀನಪಡಿಸಿಕೊಳ್ಳದೇ, ರೈತರ ಗಮನಕ್ಕೂ ತರದೆ ಅವರ ಋಣಭಾರ ಪ್ರಮಾಣಪತ್ರ (EC) ದಾಖಲೆಗಳಲ್ಲಿ ‘ಹಟ್ಟಿ ಚಿನ್ನದ ಗಣಿ’ ಹೆಸರನ್ನು ನಮೂದಿಸಲಾಗಿದೆ ಎಂಬುದು ರೈತರ ಆರೋಪವಾಗಿದೆ.

ಸಾಲ ಸೌಲಭ್ಯವೂ ಇಲ್ಲ, ಪರಿಹಾರವೂ ಇಲ್ಲ:

ದಶಕಗಳಿಂದ ಜಮೀನಿನ ದಾಖಲೆಗಳಲ್ಲಿ ಗಣಿ ಕಂಪನಿಯ ಹೆಸರು ಇರುವ ಕಾರಣ ರೈತರಿಗೆ ಬ್ಯಾಂಕ್‌ಗಳಲ್ಲಿ ಬೆಳೆ ಸಾಲ ಸೇರಿದಂತೆ ಯಾವುದೇ ಸಾಲ ಸೌಲಭ್ಯಗಳು ದೊರೆಯುತ್ತಿಲ್ಲ. ಅಲ್ಲದೆ ಜಮೀನು ಮಾರಾಟಕ್ಕೂ ಅವಕಾಶವಿಲ್ಲದೆ, ಸರ್ಕಾರದಿಂದ ಸಿಗಬೇಕಾದ ಬೆಳೆ ಪರಿಹಾರ ಸೌಲಭ್ಯಗಳೂ ಲಭಿಸುತ್ತಿಲ್ಲ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.

ಈ ಸಮಸ್ಯೆ ಕಳೆದ 18 ವರ್ಷಗಳಿಂದ ಮುಂದುವರಿದಿದ್ದು, ಹಲವು ಬಾರಿ ಮನವಿ ಸಲ್ಲಿಸಿದರೂ ಪರಿಹಾರ ಸಿಕ್ಕಿಲ್ಲ ಎಂದು ರೈತರು ಆರೋಪಿಸಿದ್ದಾರೆ.

ಬೇಡಿಕೆ ಈಡೇರುವವರೆಗೂ ಹೋರಾಟ ಮುಂದುವರಿಕೆ:

ರೈತರ ಜಮೀನು ದಾಖಲೆಗಳಿಂದ ಹಟ್ಟಿ ಚಿನ್ನದ ಗಣಿ ಕಂಪನಿಯ ಹೆಸರನ್ನು ತಕ್ಷಣ ತೆಗೆದುಹಾಕಬೇಕು. ಇಲ್ಲವಾದರೆ ಸಂಪೂರ್ಣ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ಸೂಕ್ತ ಪರಿಹಾರ ಹಾಗೂ ಉದ್ಯೋಗ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.

ಬೇಡಿಕೆಗಳು ಈಡೇರುವವರೆಗೂ ಅನಿರ್ದಿಷ್ಟಾವಧಿ ಹೋರಾಟ ಮುಂದುವರಿಸಲಾಗುವುದು ಎಂದು ರೈತರು ಎಚ್ಚರಿಕೆ ನೀಡಿದ್ದಾರೆ.

3ನೇ ಆಷಾಢ ಶುಕ್ರವಾರದ ಸಂಭ್ರಮ; ಚಾಮುಂಡಿಬೆಟ್ಟಕ್ಕೆ ಯಡಿಯೂರಪ್ಪ ಕುಟುಂಬ ಭೇಟಿ!

ಮೈಸೂರು: ನಾಡಿನ ಅಧಿದೇವತೆ ಶ್ರೀ ಚಾಮುಂಡೇಶ್ವರಿ ದೇವಿಯ ಸನ್ನಿಧಿಯಾಗಿರುವ ಮೈಸೂರಿನ ಚಾಮುಂಡಿಬೆಟ್ಟಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು 3ನೇ ಆಷಾಢ ಶುಕ್ರವಾರದ ಅಂಗವಾಗಿ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

ಕುಟುಂಬ ಸಮೇತರಾಗಿ ಚಾಮುಂಡಿಬೆಟ್ಟಕ್ಕೆ ಆಗಮಿಸಿದ ಯಡಿಯೂರಪ್ಪ ಅವರು ದೇವಿಯ ದರ್ಶನ ಪಡೆದು ನಾಡಿನ ಒಳಿತಿಗಾಗಿ ಪ್ರಾರ್ಥನೆ ಸಲ್ಲಿಸಿದರು. ಈ ವೇಳೆ ಪುತ್ರ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸೇರಿದಂತೆ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.

ಆಷಾಢ ಶುಕ್ರವಾರದ ಹಿನ್ನೆಲೆಯಲ್ಲಿ ಚಾಮುಂಡಿಬೆಟ್ಟಕ್ಕೆ ಭಕ್ತರ ದಂಡೇ ಹರಿದು ಬಂದಿತ್ತು. ಯಡಿಯೂರಪ್ಪ ಅವರ ಭೇಟಿಯ ಹಿನ್ನೆಲೆಯಲ್ಲಿ ದೇವಾಲಯದ ಸುತ್ತಮುತ್ತ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಹಾಗೂ ಭಕ್ತರು ಜಮಾಯಿಸಿದ್ದರು.

ಯಾವುದೇ ಅಡಚಣೆ ಉಂಟಾಗದಂತೆ ದೇವಾಲಯದ ಅಧಿಕಾರಿಗಳು ಹಾಗೂ ಭದ್ರತಾ ಸಿಬ್ಬಂದಿ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದರು. ಭಕ್ತರ ಸುಗಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.

ಮಾಜಿ ಮುಖ್ಯಮಂತ್ರಿಗಳ ಧಾರ್ಮಿಕ ಭೇಟಿ ಆಷಾಢ ಶುಕ್ರವಾರದ ವಿಶೇಷ ದಿನದ ಸಂಭ್ರಮಕ್ಕೆ ಮತ್ತಷ್ಟು ಮೆರುಗು ನೀಡಿತು.

ಸ್ವಿಗ್ಗಿ ವಿರುದ್ಧ ಸಿಡಿದೆದ್ದ ಹೋಟೆಲ್ ಮಾಲೀಕರು; ಆರ್ಡರ್ ಸ್ಥಗಿತಕ್ಕೆ ಆಗಸ್ಟ್ 15 ಡೆಡ್‌ಲೈನ್!

ಬೆಂಗಳೂರು: ಆನ್‌ಲೈನ್ ಆಹಾರ ವಿತರಣಾ ಸಂಸ್ಥೆ ಸ್ವಿಗ್ಗಿಗೆ ಬೆಂಗಳೂರಿನಲ್ಲಿ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.

ಅನಗತ್ಯ ಕಮಿಷನ್ ಕಡಿತ, ಪಾವತಿಗಳಲ್ಲಿ ಪಾರದರ್ಶಕತೆಯ ಕೊರತೆ ಹಾಗೂ ಅನುಮತಿಯಿಲ್ಲದೆ ವಿವಿಧ ಶುಲ್ಕಗಳ ಹೆಸರಿನಲ್ಲಿ ಹಣ ಕಡಿತ ಮಾಡಲಾಗುತ್ತಿದೆ ಎಂದು ಆರೋಪಿಸಿರುವ ಬೆಂಗಳೂರು ಹೋಟೆಲ್‌ಗಳ ಸಂಘ ಸೇರಿದಂತೆ ಹಲವು ಹೋಟೆಲ್ ಮಾಲೀಕರ ಸಂಘಟನೆಗಳು ಸ್ವಿಗ್ಗಿ ವಿರುದ್ಧ ಬಾಯ್‌ಕಾಟ್‌ಗೆ ಮುಂದಾಗಿವೆ.

ಆಗಸ್ಟ್ 15ರಿಂದ ಸ್ವಿಗ್ಗಿ ಮೂಲಕ ಆರ್ಡರ್ ಸ್ವೀಕರಿಸುವುದನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುವ ಬಗ್ಗೆ ಸಂಘಟನೆಗಳು ಗಂಭೀರ ತೀರ್ಮಾನ ಕೈಗೊಂಡಿವೆ. ಸಮಸ್ಯೆಗಳನ್ನು ಬಗೆಹರಿಸಲು ಸ್ವಿಗ್ಗಿಗೆ ಆಗಸ್ಟ್ 15ರವರೆಗೆ 15 ದಿನಗಳ ಅಂತಿಮ ಗಡುವು ನೀಡಲಾಗಿದೆ.

ಕಳೆದ ಸುಮಾರು 10 ತಿಂಗಳಿನಿಂದ ಸ್ವಿಗ್ಗಿ ಜೊತೆ ಮಾತುಕತೆ ನಡೆಸುತ್ತಿದ್ದರೂ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿಲ್ಲ. ಹೀಗಾಗಿ ಅನಿವಾರ್ಯವಾಗಿ ಕಠಿಣ ನಿರ್ಧಾರ ಕೈಗೊಳ್ಳಬೇಕಾಗಿದೆ ಎಂದು ಹೋಟೆಲ್ ಸಂಘಟನೆಗಳು ತಿಳಿಸಿವೆ.

ಸ್ವಿಗ್ಗಿ ವಿರುದ್ಧ ಹೋಟೆಲ್ ಮಾಲೀಕರ ಆರೋಪವೇನು?

ಸ್ವಿಗ್ಗಿ ಹೋಟೆಲ್ ಮಾಲೀಕರ ಅನುಮತಿಯಿಲ್ಲದೆ ಪ್ರಚಾರ ವೆಚ್ಚ, ಕ್ಲಿಕ್ ವೆಚ್ಚ, ಕಸ್ಟಮರ್ ಅಕ್ವಿಸಿಷನ್ (CPA) ಹಾಗೂ ಜಾಹೀರಾತು ಶುಲ್ಕಗಳ ಹೆಸರಿನಲ್ಲಿ ಹಣ ಕಡಿತ ಮಾಡುತ್ತಿದೆ ಎಂದು ಸಂಘಟನೆಗಳು ಆರೋಪಿಸಿವೆ.

ಬೆಂಗಳೂರು ಹೋಟೆಲ್‌ಗಳ ಸಂಘದ ಗೌರವಾಧ್ಯಕ್ಷ ಪಿ.ಸಿ. ರಾವ್ ಮಾತನಾಡಿ, ಸಾಮಾನ್ಯ ಸೇವಾ ಶುಲ್ಕಕ್ಕೆ ತಮ್ಮ ವಿರೋಧವಿಲ್ಲ. ಆದರೆ ಸೇವಾ ಶುಲ್ಕ, ಪೇಔಟ್ ಶುಲ್ಕ, ಮ್ಯಾಪ್-ಅಪ್ ಶುಲ್ಕ ಸೇರಿದಂತೆ ವಿವಿಧ ಹೆಸರಿನಲ್ಲಿ ಹೆಚ್ಚಿನ ಮೊತ್ತ ಕಡಿತ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

“1 ಲಕ್ಷ ರೂಪಾಯಿ ಮೌಲ್ಯದ ಆರ್ಡರ್ ಹಣದಲ್ಲಿ ಹೋಟೆಲ್ ಮಾಲೀಕರಿಗೆ ಕೇವಲ 40 ಸಾವಿರದಿಂದ 50 ಸಾವಿರ ರೂಪಾಯಿ ಮಾತ್ರ ಸಿಗುವ ಪರಿಸ್ಥಿತಿ ಇದೆ” ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಗ್ರಾಹಕರಿಂದ ಸಂಗ್ರಹಿಸಿ ಸರ್ಕಾರಕ್ಕೆ ಪಾವತಿಸಬೇಕಾದ ಜಿಎಸ್‌ಟಿ ಮೊತ್ತಕ್ಕೂ ಸ್ವಿಗ್ಗಿ ಸೇವಾ ಶುಲ್ಕ ವಿಧಿಸುತ್ತಿದೆ ಎಂಬ ಗಂಭೀರ ಆರೋಪವನ್ನೂ ಹೋಟೆಲ್ ಸಂಘಟನೆಗಳು ಮಾಡಿವೆ.

ಹೋಟೆಲ್ ಸಂಘಟನೆಗಳ ಪ್ರಮುಖ ಬೇಡಿಕೆಗಳು;

ಹೋಟೆಲ್ ಮಾಲೀಕರು ಸ್ವಿಗ್ಗಿ ಮುಂದೆ ಹಲವು ಬೇಡಿಕೆಗಳನ್ನು ಇಟ್ಟಿದ್ದಾರೆ.

  • ಪ್ರತಿಯೊಂದು ಆರ್ಡರ್‌ನ ಕಮಿಷನ್, ಜಿಎಸ್‌ಟಿ, ಜಾಹೀರಾತು ವೆಚ್ಚ ಹಾಗೂ ರಿಯಾಯಿತಿ ವಿವರಗಳನ್ನು ಪ್ರತ್ಯೇಕವಾಗಿ ತೋರಿಸುವ ಸ್ಪಷ್ಟ ಬಿಲ್ ನೀಡಬೇಕು.
  • ಅನಗತ್ಯ ಜಾಹೀರಾತು ಮತ್ತು ಪ್ರಚಾರ ಅಭಿಯಾನಗಳಿಂದ ಹೊರಬರಲು ‘ಒನ್-ಕ್ಲಿಕ್’ ಆಯ್ಕೆ ನೀಡಬೇಕು.
  • ಹೋಟೆಲ್ ಮಾಲೀಕರ ಡಿಜಿಟಲ್ ಅಥವಾ ಲಿಖಿತ ಅನುಮತಿಯಿಲ್ಲದೆ ಯಾವುದೇ ಪ್ರಚಾರ ವೆಚ್ಚ ಕಡಿತ ಮಾಡಬಾರದು.
  • 15 ದಿನಗಳಲ್ಲಿ ಸಮಸ್ಯೆ ಬಗೆಹರಿಸದಿದ್ದರೆ ಬಾಯ್‌ಕಾಟ್:

ಹೋಟೆಲ್ ಸಂಘಟನೆಗಳು ಸ್ವಿಗ್ಗಿ ಜೊತೆಗಿನ ಸಂಬಂಧವನ್ನು ಸಂಪೂರ್ಣವಾಗಿ ಕಡಿತಗೊಳಿಸುವ ಉದ್ದೇಶ ಹೊಂದಿಲ್ಲ ಎಂದು ಸ್ಪಷ್ಟಪಡಿಸಿದ್ದು, ಸಮಸ್ಯೆಗಳನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಲು ಅವಕಾಶ ನೀಡಿವೆ.

ಮುಂದಿನ 15 ದಿನಗಳಲ್ಲಿ ಸ್ವಿಗ್ಗಿ ಎಲ್ಲಾ ಲೋಪದೋಷಗಳನ್ನು ಸರಿಪಡಿಸಿದರೆ ಸೇವೆ ಮುಂದುವರಿಸಲಾಗುವುದು. ಇಲ್ಲವಾದರೆ ಬಾಯ್‌ಕಾಟ್ ಮಾಡುವುದನ್ನು ಬಿಟ್ಟು ಬೇರೆ ದಾರಿ ಇಲ್ಲ ಎಂದು ಪಿ.ಸಿ. ರಾವ್ ತಿಳಿಸಿದ್ದಾರೆ.

ಇದರಿಂದ ಗ್ರಾಹಕರಿಗೆ ತೊಂದರೆಯಾಗದಂತೆ ಪರ್ಯಾಯ ವ್ಯವಸ್ಥೆ ರೂಪಿಸುವುದಾಗಿಯೂ ಹೋಟೆಲ್ ಸಂಘಟನೆಗಳು ಮಾಹಿತಿ ನೀಡಿವೆ.

SIR ಪರಿಷ್ಕರಣೆ: ಬೆಂಗಳೂರಿನಲ್ಲಿ 36.75 ಲಕ್ಷ ಮತದಾರರು ASDDO ಪಟ್ಟಿಗೆ; ಆಗಸ್ಟ್ 17ರಂದು ಕರಡು ಪಟ್ಟಿ ಪ್ರಕಟ

ಬೆಂಗಳೂರು: ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಬೆಂಗಳೂರು ಪ್ರಮುಖ ಕೇಂದ್ರವಾಗಿ ಹೊರಹೊಮ್ಮಿದೆ.

ರಾಜ್ಯದ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ ಸುಮಾರು ಒಂದು ಕೋಟಿ ಮತದಾರರು ಬೆಂಗಳೂರಿನಲ್ಲಿದ್ದಾರೆ ಎಂದು ಅಂದಾಜಿಸಲಾಗಿದೆ.

SIR ಪ್ರಕ್ರಿಯೆಯಡಿ ರಾಜ್ಯಾದ್ಯಂತ ಸುಮಾರು 84 ಲಕ್ಷ ಮತದಾರರನ್ನು ASDDO ವರ್ಗದಲ್ಲಿ ಗುರುತಿಸಲಾಗಿದೆ. ಈ ಹೆಸರುಗಳು ಆಗಸ್ಟ್ 17ರಂದು ಪ್ರಕಟವಾಗಲಿರುವ ಕರಡು ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗುವುದಿಲ್ಲ ಎಂದು ತಿಳಿದು ಬಂದಿದೆ.

ASDDO ಎಂದರೇನು?

ASDDO ಎಂದರೆ Absent (ಗೈರಾದವರು), Shifted (ಸ್ಥಳಾಂತರಗೊಂಡವರು), Dead (ಮೃತಪಟ್ಟವರು), Duplicate and Others ಅಂದರೆ ಗೈರುಹಾಜರಾಗಿರುವವರು, ಬೇರೆಡೆಗೆ ಸ್ಥಳಾಂತರಗೊಂಡವರು, ಮೃತಪಟ್ಟವರು, ನಕಲಿ ಹೆಸರುಗಳು ಅಥವಾ ಇತರ ಕಾರಣಗಳಿಂದ ಪರಿಶೀಲನೆಗೆ ಒಳಪಟ್ಟ ಮತದಾರರನ್ನು ಒಳಗೊಂಡ ವರ್ಗವಾಗಿದೆ.

ಬೆಂಗಳೂರಿನಲ್ಲಿ 36.75 ಲಕ್ಷ ಮತದಾರರು ಗುರುತು:

ರಾಜ್ಯದ ಒಟ್ಟು 84 ಲಕ್ಷ ASDDO ಮತದಾರರ ಪೈಕಿ ಬೆಂಗಳೂರಿನಲ್ಲೇ 36.75 ಲಕ್ಷ ಮತದಾರರು ಇದ್ದಾರೆ. ಇದು ರಾಜ್ಯದ ಒಟ್ಟು ASDDO ಪಟ್ಟಿಯ ಶೇ.46.7ರಷ್ಟಾಗಿದೆ.

ವಿಭಾಗವಾರು ಗಮನಿಸಿದರೆ, ಬೆಂಗಳೂರು ನಗರದಲ್ಲಿ 13.55 ಲಕ್ಷ, ಬೆಂಗಳೂರು ಉತ್ತರದಲ್ಲಿ 9 ಲಕ್ಷ, ಬೆಂಗಳೂರು ಕೇಂದ್ರದಲ್ಲಿ 7.40 ಲಕ್ಷ ಹಾಗೂ ಬೆಂಗಳೂರು ದಕ್ಷಿಣದಲ್ಲಿ 9.35 ಲಕ್ಷ ಮತದಾರರನ್ನು ASDDO ಪಟ್ಟಿಯಲ್ಲಿ ಗುರುತಿಸಲಾಗಿದೆ.

ಗೈರುಹಾಜರಾಗಿರುವ ಅಥವಾ ತಪ್ಪಾಗಿ ಸ್ಥಳಾಂತರಗೊಂಡಿರುವ ನೈಜ ಮತದಾರರು ಆಗಸ್ಟ್ 8ರೊಳಗೆ ತಮ್ಮ ಬೂತ್ ಮಟ್ಟದ ಅಧಿಕಾರಿಗಳನ್ನು (BLO) ಸಂಪರ್ಕಿಸಿ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸುವಂತೆ ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್ ಮನವಿ ಮಾಡಿದ್ದಾರೆ.

ರಾಜಕೀಯ ಪಕ್ಷಗಳ ಬೂತ್ ಮಟ್ಟದ ಏಜೆಂಟ್‌ಗಳು (BLA) ತಮ್ಮ ಬಳಿ ನೀಡಿರುವ ASDDO ಪಟ್ಟಿಯನ್ನು ಪರಿಶೀಲಿಸಿ, ಅರ್ಹ ಮತದಾರರ ಹೆಸರುಗಳು ಕೈಬಿಡದಂತೆ ನೋಡಿಕೊಳ್ಳುವಂತೆ ಸೂಚಿಸಲಾಗಿದೆ.

16.52 ಲಕ್ಷ ಅರ್ಜಿಗಳ ಡಿಜಿಟಲೀಕರಣ ಬಾಕಿ:

ಬೆಂಗಳೂರು ವ್ಯಾಪ್ತಿಯಲ್ಲಿ SIR ಪ್ರಕ್ರಿಯೆಯಡಿ ಸಲ್ಲಿಕೆಯಾದ ಅರ್ಜಿಗಳ ಡಿಜಿಟಲೀಕರಣ ಕಾರ್ಯವೂ ನಿಧಾನಗತಿಯಲ್ಲಿ ಸಾಗುತ್ತಿದೆ. ಒಟ್ಟು 16.52 ಲಕ್ಷ ಅರ್ಜಿಗಳು ಇನ್ನೂ ಡಿಜಿಟಲೀಕರಣಕ್ಕೆ ಬಾಕಿ ಉಳಿದಿವೆ.

ಬೆಂಗಳೂರು ನಗರದಲ್ಲಿ ಶೇ.48.8, ಬೆಂಗಳೂರು ಉತ್ತರದಲ್ಲಿ ಶೇ.46.2, ಬೆಂಗಳೂರು ಕೇಂದ್ರದಲ್ಲಿ ಶೇ.44.6 ಹಾಗೂ ಬೆಂಗಳೂರು ದಕ್ಷಿಣದಲ್ಲಿ ಶೇ.42.6ರಷ್ಟು ಅರ್ಜಿಗಳ ಡಿಜಿಟಲೀಕರಣ ಪೂರ್ಣಗೊಂಡಿದೆ.

ಮನೆ ಮನೆಗೆ ತೆರಳಿ ಜಾಗೃತಿ:

ಮತದಾರರಿಗೆ ಮಾಹಿತಿ ನೀಡಲು BLO ಹಾಗೂ ಇತರ ಸಿಬ್ಬಂದಿಯ ತಂಡಗಳನ್ನು ನಿಯೋಜಿಸಲಾಗಿದೆ. ಬೆಳಗ್ಗೆ ಮತ್ತು ಸಂಜೆ ವೇಳೆಯಲ್ಲಿ ಧ್ವನಿವರ್ಧಕಗಳ ಮೂಲಕ ಜಾಗೃತಿ ಮೂಡಿಸುವುದರ ಜೊತೆಗೆ ಮನೆ ಮನೆಗೆ ತೆರಳಿ ಮತದಾರರನ್ನು ಸಂಪರ್ಕಿಸಲಾಗುತ್ತಿದೆ ಎಂದು ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ.

SIR 2002ರ ಹಳೆಯ ಮಾಹಿತಿಯೊಂದಿಗೆ ಮ್ಯಾಪ್ ಆಗದಿದ್ದರೂ ಮತದಾರರು ಅರ್ಜಿ ಸಲ್ಲಿಸಬಹುದು. ಈಗಾಗಲೇ ಮ್ಯಾಪ್ ಆಗದ 29 ಲಕ್ಷಕ್ಕೂ ಹೆಚ್ಚು ಮತದಾರರು ಫಾರಂ ಸಲ್ಲಿಸಿದ್ದು, ಕರಡು ಪಟ್ಟಿಯಲ್ಲಿ ತಮ್ಮ ಹೆಸರು ಉಳಿಸಿಕೊಳ್ಳಲು ಅವಕಾಶ ಇದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬೆಂಗಳೂರಿನಲ್ಲಿ ASDDO ಪ್ರಕರಣಗಳು ಹೆಚ್ಚಾಗಲು ಕಾರಣವೇನು?

2002ರ ಹಳೆಯ ಮತದಾರರ ದಾಖಲೆಗಳನ್ನು ಪತ್ತೆಹಚ್ಚುವಲ್ಲಿ ಎದುರಾಗುತ್ತಿರುವ ಸಮಸ್ಯೆಗಳು ಬೆಂಗಳೂರಿನಲ್ಲಿ SIR ಪ್ರಕ್ರಿಯೆ ನಿಧಾನವಾಗಲು ಪ್ರಮುಖ ಕಾರಣವಾಗಿದೆ.

2008ರ ಕ್ಷೇತ್ರ ಪುನರ್‌ವಿಂಗಡಣೆ ಬಳಿಕ ವಿಧಾನಸಭಾ ಕ್ಷೇತ್ರಗಳು ಹಾಗೂ ಮತಗಟ್ಟೆಗಳಲ್ಲಿ ಬದಲಾವಣೆಗಳಾಗಿರುವುದರಿಂದ ಹಳೆಯ ದಾಖಲೆಗಳನ್ನು ಪತ್ತೆಹಚ್ಚುವುದು ಕಷ್ಟವಾಗುತ್ತಿದೆ. ಜೊತೆಗೆ ತಾಂತ್ರಿಕ ಸಮಸ್ಯೆಗಳೂ ASDDO ಪ್ರಕರಣಗಳ ಸಂಖ್ಯೆ ಹೆಚ್ಚಾಗಲು ಕಾರಣವಾಗಿದೆ.

ದಿನಕ್ಕೆ ಎಷ್ಟು ಬಾದಾಮಿ ತಿನ್ನಬೇಕು? ಜಾಸ್ತಿ ಸೇವನೆ ಮಾಡಿದ್ರೆ ಆಗುವ ಅಡ್ಡಪರಿಣಾಮಗಳೇನು..?

0

ಬಾದಾಮಿ (Almonds) ಅತ್ಯಂತ ಪೌಷ್ಟಿಕಾಂಶಯುಕ್ತ ಒಣಫಲಗಳಲ್ಲಿ ಒಂದಾಗಿದೆ. ಉತ್ತಮ ಕೊಬ್ಬು (Healthy Fats), ಪ್ರೋಟೀನ್, ನಾರಿನಂಶ, ವಿಟಮಿನ್ ಇ ಮತ್ತು ಮೆಗ್ನೀಸಿಯಮ್ ಸೇರಿದಂತೆ ಹಲವು ಅಗತ್ಯ ಪೋಷಕಾಂಶಗಳನ್ನು ಹೊಂದಿರುವ ಬಾದಾಮಿ ಹೃದಯದ ಆರೋಗ್ಯ,

ಮೆದುಳಿನ ಕಾರ್ಯಕ್ಷಮತೆ ಮತ್ತು ದೇಹದ ಒಟ್ಟಾರೆ ಆರೋಗ್ಯಕ್ಕೆ ಸಹಕಾರಿಯಾಗಿದೆ. ಆದರೆ ಆರೋಗ್ಯಕರ ಆಹಾರವೆಂದ ಮಾತ್ರಕ್ಕೆ ಮಿತಿಮೀರಿದ ಪ್ರಮಾಣದಲ್ಲಿ ಸೇವಿಸುವುದು ಸೂಕ್ತವಲ್ಲ ಎಂದು ಆರೋಗ್ಯ ತಜ್ಞರು ಎಚ್ಚರಿಸುತ್ತಾರೆ.

ದಿನಕ್ಕೆ ಎಷ್ಟು ಬಾದಾಮಿ ಸೇವಿಸಬೇಕು?

ಪೌಷ್ಟಿಕಾಂಶ ತಜ್ಞರ ಪ್ರಕಾರ, ಸಾಮಾನ್ಯ ಆರೋಗ್ಯವಂತ ವ್ಯಕ್ತಿಯು ದಿನಕ್ಕೆ ಸುಮಾರು 28 ಗ್ರಾಂ, ಅಂದರೆ 20 ರಿಂದ 23 ಬಾದಾಮಿಗಳನ್ನು ಸೇವಿಸಬಹುದು. ಬಾದಾಮಿ ತಿನ್ನುವ ಅಭ್ಯಾಸ ಇಲ್ಲದವರು ಅಥವಾ ಜೀರ್ಣಕ್ರಿಯೆ ಸೂಕ್ಷ್ಮವಾಗಿರುವವರು ಆರಂಭದಲ್ಲಿ 6 ರಿಂದ 8 ಬಾದಾಮಿಗಳನ್ನು ಸೇವಿಸಿ, ನಂತರ ಕ್ರಮೇಣ ಪ್ರಮಾಣವನ್ನು ಹೆಚ್ಚಿಸುವುದು ಉತ್ತಮ.

ಅತಿಯಾಗಿ ತಿಂದರೆ ಏನಾಗಬಹುದು?

ಬಾದಾಮಿಯಲ್ಲಿ ಕ್ಯಾಲೊರಿ ಮತ್ತು ಕೊಬ್ಬಿನಾಂಶ ಹೆಚ್ಚಿರುವುದರಿಂದ ದಿನಕ್ಕೆ 30 ರಿಂದ 40ಕ್ಕಿಂತ ಹೆಚ್ಚು ಬಾದಾಮಿ ಸೇವಿಸಿದರೆ ಕೆಲವು ಆರೋಗ್ಯ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ.

  • ತೂಕ ಹೆಚ್ಚಳ: ಹೆಚ್ಚುವರಿ ಕ್ಯಾಲೊರಿ ದೇಹದಲ್ಲಿ ಸಂಗ್ರಹವಾಗಿ ತೂಕ ಹೆಚ್ಚಾಗಬಹುದು.
  • ಜೀರ್ಣಕ್ರಿಯೆ ಸಮಸ್ಯೆ: ಹೆಚ್ಚಿನ ನಾರಿನಂಶದಿಂದ ಹೊಟ್ಟೆ ಉಬ್ಬರ, ಗ್ಯಾಸ್, ಮಲಬದ್ಧತೆ ಅಥವಾ ಭೇದಿಯಂತಹ ತೊಂದರೆಗಳು ಕಾಣಿಸಿಕೊಳ್ಳಬಹುದು.
  • ವಿಟಮಿನ್ ಇ ಅಧಿಕವಾಗುವುದು: ಮಿತಿಮೀರಿದ ಸೇವನೆಯಿಂದ ವಿಟಮಿನ್ ಇ ಪ್ರಮಾಣ ಹೆಚ್ಚಾಗಿ ತಲೆನೋವು ಅಥವಾ ಆಯಾಸದಂತಹ ಸಮಸ್ಯೆಗಳು ಉಂಟಾಗಬಹುದು.

ನೆನೆಸಿದ ಬಾದಾಮಿ ಉತ್ತಮವೇ?

ಬಾದಾಮಿಯನ್ನು ನೀರಿನಲ್ಲಿ ನೆನೆಸಿ, ಸಿಪ್ಪೆ ತೆಗೆದು ತಿನ್ನುವುದು ಹೆಚ್ಚು ಪ್ರಯೋಜನಕಾರಿ ಎಂದು ಹಲವರು ನಂಬುತ್ತಾರೆ. ನೆನೆಸುವುದರಿಂದ ಬಾದಾಮಿಯ ಸಿಪ್ಪೆಯಲ್ಲಿರುವ ಟ್ಯಾನಿನ್ (Tannin) ಎಂಬ ಅಂಶದ ಪರಿಣಾಮ ಕಡಿಮೆಯಾಗಬಹುದು ಎಂದು ಹೇಳಲಾಗುತ್ತದೆ. ಇದರಿಂದ ಕೆಲವು ಪೋಷಕಾಂಶಗಳ ಹೀರಿಕೊಳ್ಳುವಿಕೆಗೆ ಸಹಕಾರಿಯಾಗಬಹುದು. ಆದರೆ ಈ ವಿಷಯದಲ್ಲಿ ಲಭ್ಯವಿರುವ ವೈಜ್ಞಾನಿಕ ಸಾಕ್ಷ್ಯಗಳು ಸೀಮಿತವಾಗಿವೆ.

ಇನ್ನೊಂದೆಡೆ, ತೂಕ ಇಳಿಸುವ ಪ್ರಯತ್ನದಲ್ಲಿರುವವರು ಸಿಪ್ಪೆಯೊಂದಿಗೆ ಬಾದಾಮಿ ಸೇವಿಸಬಹುದು. ಏಕೆಂದರೆ ಸಿಪ್ಪೆಯಲ್ಲಿರುವ ನಾರಿನಂಶ ಹೊಟ್ಟೆ ತುಂಬಿರುವ ಅನುಭವ ನೀಡಲು ನೆರವಾಗುತ್ತದೆ.

ಬಾದಾಮಿ ತಿನ್ನಲು ಸೂಕ್ತ ಸಮಯ

ಬೆಳಿಗ್ಗೆ: ರಾತ್ರಿ ನೆನೆಸಿದ ಬಾದಾಮಿಯನ್ನು ಬೆಳಿಗ್ಗೆ ಸೇವಿಸುವುದು ದೇಹಕ್ಕೆ ಶಕ್ತಿ ನೀಡುವುದರ ಜೊತೆಗೆ ದಿನದ ಆರಂಭವನ್ನು ಆರೋಗ್ಯಕರವಾಗಿಸುತ್ತದೆ.

ಸಂಜೆ: ಸಂಜೆ 4 ರಿಂದ 5 ಗಂಟೆಯ ವೇಳೆಗೆ ಜಂಕ್ ಫುಡ್ ಸೇವಿಸುವ ಬದಲು ಒಂದು ಮುಷ್ಟಿ ಬಾದಾಮಿ ತಿನ್ನುವುದರಿಂದ ಹಸಿವು ನಿಯಂತ್ರಣದಲ್ಲಿರಲು ಹಾಗೂ ಆರೋಗ್ಯಕರ ಆಹಾರ ಪದ್ಧತಿ ಪಾಲಿಸಲು ನೆರವಾಗುತ್ತದೆ.

ದಿನಕ್ಕೆ ಸುಮಾರು 15 ರಿಂದ 20 ಬಾದಾಮಿಗಳನ್ನು ಮಿತವಾಗಿ ಸೇವಿಸುವುದು ಹೃದಯ, ಮೆದುಳು, ಚರ್ಮ ಮತ್ತು ಕೂದಲಿನ ಆರೋಗ್ಯಕ್ಕೆ ಸಹಕಾರಿಯಾಗಬಹುದು. ಆದರೆ ಸೇವಿಸಬೇಕಾದ ಪ್ರಮಾಣವು ವ್ಯಕ್ತಿಯ ವಯಸ್ಸು, ಆರೋಗ್ಯ ಸ್ಥಿತಿ, ದೈಹಿಕ ಚಟುವಟಿಕೆ ಮತ್ತು ಆಹಾರ ಪದ್ಧತಿಯನ್ನು ಅವಲಂಬಿಸಿರುತ್ತದೆ.

ಕೊಡಗಿನಲ್ಲಿ ಮಳೆ ಅಬ್ಬರ; ಕಾವೇರಿ ನದಿ ನೀರಿನ ಮಟ್ಟ ಏರಿಕೆ, ಭಾಗಮಂಡಲ ತ್ರಿವೇಣಿ ಸಂಗಮದಲ್ಲಿ ಪ್ರವಾಹದ ಆತಂಕ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಮಳೆಯ ಅಬ್ಬರ ಮುಂದುವರಿದಿದ್ದು, ಕಳೆದ ಎರಡು ದಿನಗಳಿಂದ ಗಾಳಿ ಸಹಿತ ಉತ್ತಮ ಮಳೆಯಾಗುತ್ತಿದೆ.

ನಿರಂತರ ಮಳೆಯಿಂದಾಗಿ ಜಿಲ್ಲೆಯ ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿದ್ದು, ನದಿ-ಜಲಾಶಯಗಳ ನೀರಿನ ಮಟ್ಟದಲ್ಲಿ ಏರಿಕೆ ಕಂಡು ಬಂದಿದೆ.

ತಲಕಾವೇರಿ ಹಾಗೂ ಭಾಗಮಂಡಲ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕಾವೇರಿ ನದಿಯ ನೀರಿನ ಹರಿವು ಹೆಚ್ಚಾಗಿದೆ. ಭಾಗಮಂಡಲದ ಪ್ರಸಿದ್ಧ ತ್ರಿವೇಣಿ ಸಂಗಮದಲ್ಲೂ ನೀರಿನ ಮಟ್ಟ ಏರಿಕೆಯಾಗಿದ್ದು, ಸ್ಥಳೀಯರಲ್ಲಿ ಕುತೂಹಲ ಮೂಡಿಸಿದೆ.

ಇತ್ತ ಹಾರಂಗಿ ಜಲಾನಯನ ಪ್ರದೇಶದಲ್ಲೂ ಮಳೆ ಚುರುಕುಗೊಂಡಿದೆ. ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳಾಗಿದ್ದು, ಸದ್ಯ ನೀರಿನ ಮಟ್ಟ 2,857.88 ಅಡಿಗಳಿಗೆ ತಲುಪಿದೆ. ಜಲಾಶಯಕ್ಕೆ 4,008 ಕ್ಯೂಸೆಕ್ ನೀರು ಒಳಹರಿವು ಬರುತ್ತಿದ್ದು, 3,700 ಕ್ಯೂಸೆಕ್ ನೀರನ್ನು ಕಾವೇರಿ ನದಿಗೆ ಹೊರಬಿಡಲಾಗುತ್ತಿದೆ.

ಮಳೆ ಮತ್ತೆ ಚುರುಕುಗೊಂಡಿರುವ ಹಿನ್ನೆಲೆಯಲ್ಲಿ ಕೊಡಗಿನ ರೈತರಲ್ಲಿ ಸಂತಸ ಮೂಡಿದೆ. ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗುವ ನಿರೀಕ್ಷೆಯಲ್ಲಿ ರೈತರು ಇದ್ದಾರೆ.

ಮುಂದಿನ ಕೆಲವು ದಿನಗಳ ಕಾಲ ಜಿಲ್ಲೆಯಲ್ಲಿ ಮಳೆ ಮುಂದುವರಿಯುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಎಚ್ಚರಿಕೆಯಿಂದ ಇರುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ. ನದಿ, ಹಳ್ಳ-ಕೊಳ್ಳಗಳ ಬಳಿ ತೆರಳದಂತೆ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.

BREAKING: ಕುಂದಾಪುರದಲ್ಲಿ ಬೆಳ್ಳಂಬೆಳಗ್ಗೆ ಗುಂಡಿನ ದಾಳಿ; ಚರ್ಚ್ ಎದುರು ವ್ಯಕ್ತಿ ಹತ್ಯೆ

ಉಡುಪಿ: ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ಬೆಳ್ಳಂಬೆಳಗ್ಗೆ ಗುಂಡಿನ ದಾಳಿ ನಡೆಸಿ ವ್ಯಕ್ತಿಯೊಬ್ಬರನ್ನು ಹತ್ಯೆ ಮಾಡಿರುವ ಘಟನೆ ನಡೆದಿದೆ.

ಬಾರ್ಕೂರು-ಕಚ್ಚೂರು ಮೂಲದ ಐವನ್ ರಿಚರ್ಡ್ ಮಸ್ಕರೇನಸ್ (45) ಮೃತಪಟ್ಟ ವ್ಯಕ್ತಿ. ಕುಂದಾಪುರದ ಚರ್ಚ್ ರಸ್ತೆಯ ಹೋಲಿ ರೋಸರಿ ಚರ್ಚ್ ಎದುರು ಈ ಘಟನೆ ನಡೆದಿದ್ದು, ಮುಂಜಾನೆ ಸುಮಾರು 3:30ರ ವೇಳೆಯಲ್ಲಿ ದುಷ್ಕರ್ಮಿಯೊಬ್ಬ ಗುಂಡಿನ ದಾಳಿ ನಡೆಸಿದ್ದಾನೆ ಎನ್ನಲಾಗಿದೆ.

ಮಾಹಿತಿಯ ಪ್ರಕಾರ, ಐವನ್ ರಿಚರ್ಡ್ ಅವರು ಕೆಲವು ವ್ಯವಹಾರಗಳನ್ನು ನಡೆಸುತ್ತಿದ್ದರು. ಮುಂಜಾನೆ ಮಹಿಳೆಯೊಬ್ಬರೊಂದಿಗೆ ಕಾರಿನಲ್ಲಿ ಚರ್ಚ್ ರಸ್ತೆಗೆ ಬಂದಿದ್ದ ವೇಳೆ ಅಪರಿಚಿತ ವ್ಯಕ್ತಿ ಪಿಸ್ತೂಲ್‌ನಿಂದ ಗುಂಡು ಹಾರಿಸಿದ್ದಾನೆ ಎಂದು ತಿಳಿದು ಬಂದಿದೆ.

ಗುಂಡಿನ ದಾಳಿಯಿಂದ ತೀವ್ರ ರಕ್ತಸ್ರಾವಗೊಂಡ ಐವನ್ ರಿಚರ್ಡ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕೃತ್ಯ ಎಸಗಿದ ಬಳಿಕ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ.

ಘಟನೆ ವೇಳೆ ಜೊತೆಯಲ್ಲಿದ್ದ ಮಹಿಳೆ ಆರೋಪಿಯನ್ನು ಗುರುತಿಸಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ. ಕೊಲೆಗೆ ನಿಖರ ಕಾರಣ ಇನ್ನಷ್ಟೇ ತಿಳಿದುಬರಬೇಕಿದೆ.

ಘಟನೆ ಮಾಹಿತಿ ತಿಳಿಯುತ್ತಿದ್ದಂತೆ ಕುಂದಾಪುರ ನಗರ ಪೊಲೀಸರು ಹಾಗೂ ಸೊಕೋ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸಾಕ್ಷ್ಯ ಸಂಗ್ರಹ ಕಾರ್ಯ ನಡೆಸಿದ್ದಾರೆ.

ಈ ಸಂಬಂಧ ಕುಂದಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪರಾರಿಯಾಗಿರುವ ಆರೋಪಿಯ ಪತ್ತೆಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Murder Case: ಇಂದು ವಿನಯ್ ಕುಲಕರ್ಣಿಗೆ ಜಾಮೀನು ಸಿಗುತ್ತಾ? ಹೈಕೋರ್ಟ್ ಆದೇಶದತ್ತ ರಾಜ್ಯದ ಚಿತ್ತ!

ಬೆಂಗಳೂರು: ಧಾರವಾಡದ ಬಿಜೆಪಿ ಮುಖಂಡ ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಅವರ ಜಾಮೀನು ಅರ್ಜಿ ಹಾಗೂ ಶಿಕ್ಷೆ ಅಮಾನತು ಕೋರಿ ಸಲ್ಲಿಸಿರುವ ಮಧ್ಯಂತರ ಅರ್ಜಿಗೆ ಹೈಕೋರ್ಟ್ ಇಂದು ತೀರ್ಪು ಪ್ರಕಟಿಸಲಿದೆ.

ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನೀಡಿರುವ ಜೀವಾವಧಿ ಶಿಕ್ಷೆಯ ಆದೇಶವನ್ನು ರದ್ದುಪಡಿಸುವಂತೆ ವಿನಯ್ ಕುಲಕರ್ಣಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದಾರೆ. ಜೊತೆಗೆ ಶಿಕ್ಷೆಯನ್ನು ತಾತ್ಕಾಲಿಕವಾಗಿ ಅಮಾನತಿನಲ್ಲಿಟ್ಟು ಜಾಮೀನು ನೀಡುವಂತೆ ಮಧ್ಯಂತರ ಮನವಿ ಮಾಡಿದ್ದಾರೆ.

ಈ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ಪೀಠದ ನ್ಯಾಯಮೂರ್ತಿ ಮೊಹಮ್ಮದ್ ನವಾಜ್ ಹಾಗೂ ನ್ಯಾಯಮೂರ್ತಿ ಜಿ. ಬಸವರಾಜ ಅವರ ಪೀಠ, ವಿನಯ್ ಕುಲಕರ್ಣಿ ಪರ ಹಾಗೂ ಸಿಬಿಐ ಪರ ವಕೀಲರ ವಾದ ಆಲಿಸಿ ತೀರ್ಪನ್ನು ಕಾಯ್ದಿರಿಸಿತ್ತು. ಇದೀಗ ಇಂದು ಆದೇಶ ಪ್ರಕಟವಾಗಲಿದೆ.

ಜೀವಾವಧಿ ಶಿಕ್ಷೆ ವಿಧಿಸಿದ್ದ ನ್ಯಾಯಾಲಯ

2016ರಲ್ಲಿ ನಡೆದ ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ವಿನಯ್ ಕುಲಕರ್ಣಿ ಸೇರಿದಂತೆ ಆರೋಪಿಗಳನ್ನು ದೋಷಿಗಳೆಂದು ತೀರ್ಪು ನೀಡಿತ್ತು. ಬಳಿಕ ವಿನಯ್ ಕುಲಕರ್ಣಿ ಸೇರಿ 16 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. ಮತ್ತೊಬ್ಬ ಆರೋಪಿಗೆ 7 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು.

ಈ ಆದೇಶ ಪ್ರಶ್ನಿಸಿ ವಿನಯ್ ಕುಲಕರ್ಣಿ ಹೈಕೋರ್ಟ್ ಮೊರೆ ಹೋಗಿದ್ದಾರೆ. ಶಿಕ್ಷೆ ಮುಂದುವರಿದರೆ ಶಾಸಕ ಸ್ಥಾನಕ್ಕೆ ಪರಿಣಾಮ ಬೀರುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಹೈಕೋರ್ಟ್ ಆದೇಶ ಮಹತ್ವ ಪಡೆದುಕೊಂಡಿದೆ.

ಏನಿದು ಯೋಗೀಶ್ ಗೌಡ ಕೊಲೆ ಪ್ರಕರಣ?

2016ರ ಜೂನ್‌ನಲ್ಲಿ ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ ಹಾಗೂ ಬಿಜೆಪಿ ಮುಖಂಡ ಯೋಗೀಶ್ ಗೌಡ ಅವರನ್ನು ಹತ್ಯೆ ಮಾಡಲಾಗಿತ್ತು. ಪ್ರಕರಣದಲ್ಲಿ ವಿನಯ್ ಕುಲಕರ್ಣಿ ಸೇರಿದಂತೆ 21 ಮಂದಿಯ ವಿರುದ್ಧ ಆರೋಪ ಕೇಳಿಬಂದಿತ್ತು.

ಬಳಿಕ ಪ್ರಕರಣವನ್ನು ಸಿಬಿಐಗೆ ವಹಿಸಲಾಗಿದ್ದು, ತನಿಖೆ ನಡೆಸಿದ ಸಿಬಿಐ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿತ್ತು. ವಿಚಾರಣೆ ಬಳಿಕ ಕೆಲ ಆರೋಪಿಗಳನ್ನು ಖುಲಾಸೆಗೊಳಿಸಲಾಗಿದ್ದು, ಉಳಿದ ಆರೋಪಿಗಳಿಗೆ ಶಿಕ್ಷೆ ವಿಧಿಸಲಾಗಿತ್ತು.

ಇದೀಗ ವಿನಯ್ ಕುಲಕರ್ಣಿ ಅವರ ಜಾಮೀನು ಅರ್ಜಿ ಕುರಿತು ಹೈಕೋರ್ಟ್ ನೀಡುವ ಆದೇಶದತ್ತ ರಾಜ್ಯದ ರಾಜಕೀಯ ವಲಯದ ಗಮನ ನೆಟ್ಟಿದೆ.