Home Blog

KPSC ನೇಮಕಾತಿ ಹಗರಣ ಪ್ರಕರಣ: ಜೈಲಿನಲ್ಲೇ ಗ್ಯಾನೇಂದ್ರ ಹಾಗೂ ಬಸವರಾಜ್ ಕನ್ನಾಳೆ ಬಂಧಿಸಿದ ED!

0

ಬೆಂಗಳೂರು: KPSC ನೇಮಕಾತಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ED) ಗ್ಯಾನೇಂದ್ರ ಕುಮಾರ್ ಹಾಗೂ ಬಸವರಾಜ್ ಕನ್ನಾಳೆ ಅವರನ್ನು ಜೈಲಿನಲ್ಲೇ ಬಂಧಿಸಿ, ಹೆಚ್ಚಿನ ವಿಚಾರಣೆಗಾಗಿ ತನ್ನ ಕಸ್ಟಡಿಗೆ ಪಡೆದಿದೆ.

ಬಂಧನದಲ್ಲಿದ್ದ ಇಬ್ಬರನ್ನು ED ಅಧಿಕಾರಿಗಳು ಮೂರು ದಿನಗಳ ಕಾಲ ಜೈಲಿನಲ್ಲೇ ವಿಚಾರಣೆ ನಡೆಸಿದ್ದರು. ಆದರೆ ವಿಚಾರಣೆಗೆ ಅಸಹಕಾರ ನೀಡಿದ ಹಿನ್ನೆಲೆಯಲ್ಲಿ ನಿನ್ನೆ ರಾತ್ರಿ ಜೈಲಿನಲ್ಲೇ ಗ್ಯಾನೇಂದ್ರ ಕುಮಾರ್ ಹಾಗೂ ಬಸವರಾಜ್ ಕನ್ನಾಳೆ ಅವರನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.

ಬಂಧನದ ಬಳಿಕ ಇಬ್ಬರನ್ನೂ ನ್ಯಾಯಾಲಯದ ಮುಂದೆ ಹಾಜರುಪಡಿಸಿದ ED ಅಧಿಕಾರಿಗಳು, ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ಪಡೆದಿದ್ದಾರೆ. KPSC ನೇಮಕಾತಿಗೆ ಸಂಬಂಧಿಸಿದ ಅಕ್ರಮ ಹಾಗೂ ಹಗರಣದ ತನಿಖೆಯ ಭಾಗವಾಗಿ ಈ ಬಂಧನ ನಡೆದಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರಿಂದಲೂ ಮತ್ತಷ್ಟು ಮಾಹಿತಿ ಸಂಗ್ರಹಿಸಲು ED ಅಧಿಕಾರಿಗಳು ವಿಚಾರಣೆ ಮುಂದುವರಿಸಲಿದ್ದಾರೆ. ನೇಮಕಾತಿ ಅಕ್ರಮದ ಹಿನ್ನೆಲೆ, ಹಣಕಾಸಿನ ವ್ಯವಹಾರಗಳು ಹಾಗೂ ಪ್ರಕರಣಕ್ಕೆ ಸಂಬಂಧಿಸಿದ ಇತರ ಅಂಶಗಳ ಕುರಿತು ತನಿಖೆ ನಡೆಯುತ್ತಿದೆ.

ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಭೀಕರ ದುರಂತ: ಟ್ರ್ಯಾಕ್ಟರ್ ಹರಿದು ಇಬ್ಬರು ಬಾಲಕರು ಸಾವು, ಓರ್ವ ಗಂಭೀರ!

0

ರಾಯಚೂರು: ರಾಯಚೂರು ನಗರದ ಜಹಿರಾಬಾದ್‌ನ ಎಂ.ಈರಣ್ಣ ವೃತ್ತದಲ್ಲಿ ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಚಾಲಕನ ಎಡವಟ್ಟಿನಿಂದ ಟ್ರ್ಯಾಕ್ಟರ್‌ ಹರಿದು ಇಬ್ಬರು ಬಾಲಕರು ದಾರುಣವಾಗಿ ಮೃತಪಟ್ಟಿದ್ದು, ಓರ್ವ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿರುವ ಭೀಕರ ಘಟನೆ ಸಂಭವಿಸಿದೆ.

ಜಹಿರಾಬಾದ್‌ನಿಂದ ನಗರದ ಖಾಸಬಾವಿಗೆ ಗಣೇಶ ಮೂರ್ತಿಯ ವಿಸರ್ಜನೆ ಮೆರವಣಿಗೆ ಹೊರಟಿದ್ದ ವೇಳೆ ಈ ದುರಂತ ನಡೆದಿದೆ. ಮೆರವಣಿಗೆಯಲ್ಲಿದ್ದ ಟ್ರ್ಯಾಕ್ಟರ್‌ ಚಾಲಕ ಬ್ರೇಕ್ ಒತ್ತುವ ಬದಲು ಆಕ್ಸಿಲರೇಟರ್ ಒತ್ತಿದ ಹಿನ್ನೆಲೆಯಲ್ಲಿ, ವಾಹನವು ನಿಯಂತ್ರಣ ತಪ್ಪಿ ಮೆರವಣಿಗೆಯಲ್ಲಿದ್ದ ಜನರ ಮೇಲೆ ಹರಿದಿದೆ.

ಘಟನೆಯಲ್ಲಿ 14 ವರ್ಷದ ಸುಚಿತ್ ಹಾಗೂ 16 ವರ್ಷದ ಚರಣಕುಮಾರ್ ಮೃತಪಟ್ಟ ದುರ್ದೈವಿಗಳಾಗಿದ್ದಾರೆ. 36 ವರ್ಷದ ವಿಜಯಕುಮಾರ್ ಎಂಬುವವರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ತಕ್ಷಣವೇ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಅಪಘಾತದಲ್ಲಿ ಮತ್ತೂ ನಾಲ್ವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಘಟನೆಗೆ ಸಂಬಂಧಿಸಿದಂತೆ ರಾಯಚೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

‘ವಾರಣಾಸಿ’ ಪ್ರಚಾರಕ್ಕೆ ಬರೋಬ್ಬರಿ ₹1,200 ಕೋಟಿ ಬಜೆಟ್? ಆಸ್ಕರ್ ಗೆಲ್ಲಲು ರಾಜಮೌಳಿ ಮಾಸ್ಟರ್ ಪ್ಲ್ಯಾನ್!

0

ಎಸ್‌.ಎಸ್‌. ರಾಜಮೌಳಿ ನಿರ್ದೇಶನದ, ಮಹೇಶ್ ಬಾಬು, ಪ್ರಿಯಾಂಕಾ ಚೋಪ್ರಾ ಹಾಗೂ ಪೃಥ್ವಿರಾಜ್ ಸುಕುಮಾರನ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ‘ವಾರಣಾಸಿ’ ಸಿನಿಮಾ ಭಾರತೀಯ ಚಿತ್ರರಂಗ ಮಾತ್ರವಲ್ಲದೆ ವಿಶ್ವದ ಸಿನಿಮಾ ಪ್ರೇಕ್ಷಕರಲ್ಲೂ ಭಾರೀ ನಿರೀಕ್ಷೆ ಮೂಡಿಸಿದೆ. ಮುಂದಿನ ವರ್ಷ ಏಪ್ರಿಲ್‌ನಲ್ಲಿ ಸಿನಿಮಾ ಬಿಡುಗಡೆಯಾಗಲಿದ್ದು, ಈಗಾಗಲೇ ಚಿತ್ರದ ಚಿತ್ರೀಕರಣ ಬಹುತೇಕ ಪೂರ್ಣಗೊಂಡಿದೆ ಎನ್ನಲಾಗಿದೆ.

ಭಾರತೀಯ ಚಿತ್ರರಂಗದ ಅತ್ಯಂತ ದುಬಾರಿ ಸಿನಿಮಾಗಳ ಪೈಕಿ ಒಂದಾಗಿ ಗುರುತಿಸಿಕೊಂಡಿರುವ ‘ವಾರಣಾಸಿ’ಗೆ ನಿರ್ಮಾಪಕರು ಭಾರೀ ಮೊತ್ತದ ಹಣವನ್ನು ಖರ್ಚು ಮಾಡುತ್ತಿದ್ದಾರೆ ಎನ್ನಲಾಗಿದೆ. ಸಿನಿಮಾ ನಿರ್ಮಾಣದ ಜೊತೆಗೆ ಇದೀಗ ಪ್ರಚಾರಕ್ಕೂ ದೊಡ್ಡ ಮಟ್ಟದ ಬಜೆಟ್ ಸಿದ್ಧಪಡಿಸಲಾಗಿದ್ದು, ಚಿತ್ರತಂಡದ ಯೋಜನೆಗಳು ಗಮನ ಸೆಳೆಯುತ್ತಿವೆ.

ವಿಶೇಷವಾಗಿ ನಿರ್ದೇಶಕ ರಾಜಮೌಳಿ ಈ ಬಾರಿ ಭಾರತೀಯ ಮಾರುಕಟ್ಟೆಯ ಜೊತೆಗೆ ವಿದೇಶಿ ಪ್ರೇಕ್ಷಕರನ್ನೂ ಗುರಿಯಾಗಿಸಿಕೊಂಡು ಪ್ರಚಾರ ನಡೆಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಅಮೆರಿಕ ಸೇರಿದಂತೆ ಹಲವು ದೇಶಗಳಲ್ಲಿ ಪ್ರತ್ಯೇಕ ಪ್ರೀ-ರಿಲೀಸ್ ಕಾರ್ಯಕ್ರಮಗಳು, ಸಂದರ್ಶನಗಳು, ಪತ್ರಿಕಾಗೋಷ್ಠಿಗಳು ಹಾಗೂ ಇನ್ನಿತರ ಪ್ರಚಾರ ಕಾರ್ಯಕ್ರಮಗಳನ್ನು ಆಯೋಜಿಸಲು ಯೋಜನೆ ರೂಪಿಸಲಾಗಿದೆ ಎಂದು ವರದಿಗಳು ತಿಳಿಸಿವೆ.

ಭಾರತದಲ್ಲೂ ‘ವಾರಣಾಸಿ’ಗೆ ಅದ್ಧೂರಿ ಪ್ರಚಾರ ನಡೆಸಲು ಸಿದ್ಧತೆ ನಡೆದಿದೆ ಎನ್ನಲಾಗುತ್ತಿದೆ. ದೇಶದ ಎರಡು ಪ್ರಮುಖ ನಗರಗಳಲ್ಲಿ ಬೃಹತ್ ಪ್ರೀ-ರಿಲೀಸ್ ಕಾರ್ಯಕ್ರಮಗಳನ್ನು ಆಯೋಜಿಸುವ ಯೋಜನೆ ಇದ್ದು, ದೇಶದ ಅತ್ಯಂತ ಗಣ್ಯ ವ್ಯಕ್ತಿಯೊಬ್ಬರನ್ನು ಈ ಕಾರ್ಯಕ್ರಮಗಳಿಗೆ ವಿಶೇಷ ಅತಿಥಿಯಾಗಿ ಆಹ್ವಾನಿಸುವ ಚಿಂತನೆಯೂ ಇದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಇನ್ನು ‘ವಾರಣಾಸಿ’ ಸಿನಿಮಾದ ಪ್ರಚಾರಕ್ಕೆ ಎರಡು ಹಂತಗಳಲ್ಲಿ ಬಜೆಟ್ ನಿಗದಿಪಡಿಸಲಾಗಿದೆ ಎನ್ನಲಾಗಿದೆ. ಸಿನಿಮಾ ಬಿಡುಗಡೆಯಾಗುವ ಮುನ್ನ ನಡೆಸುವ ಪ್ರಚಾರಕ್ಕಾಗಿ ಸುಮಾರು ₹200 ಕೋಟಿ ಮೀಸಲಿಡಲಾಗಿದೆ ಎಂಬ ವರದಿಗಳಿವೆ. ಆದರೆ ಸಿನಿಮಾ ಬಿಡುಗಡೆಯಾದ ಬಳಿಕ ಆರಂಭವಾಗಲಿರುವ ಪ್ರಶಸ್ತಿ ಪ್ರಚಾರಕ್ಕೆ ಇದಕ್ಕಿಂತ ಹಲವು ಪಟ್ಟು ದೊಡ್ಡ ಮೊತ್ತವನ್ನು ಮೀಸಲಿಡಲಾಗಿದೆ ಎನ್ನಲಾಗುತ್ತಿದೆ.

ವಿಶೇಷವಾಗಿ ಆಸ್ಕರ್, ಗೋಲ್ಡನ್ ಗ್ಲೋಬ್, BAFTA ಸೇರಿದಂತೆ ಅಂತಾರಾಷ್ಟ್ರೀಯ ಮಟ್ಟದ ಪ್ರತಿಷ್ಠಿತ ಪ್ರಶಸ್ತಿಗಳಿಗಾಗಿ ‘ವಾರಣಾಸಿ’ಯನ್ನು ದೊಡ್ಡ ಮಟ್ಟದಲ್ಲಿ ಪ್ರಚಾರ ಮಾಡುವ ಉದ್ದೇಶ ಚಿತ್ರತಂಡಕ್ಕಿದೆ ಎನ್ನಲಾಗಿದೆ. ಈ ಪ್ರಶಸ್ತಿ ಪ್ರಚಾರಕ್ಕಾಗಿ ಬರೋಬ್ಬರಿ ₹1,000 ಕೋಟಿ ಬಜೆಟ್ ಮೀಸಲಿಡಲಾಗಿದೆ ಎಂಬ ಮಾಹಿತಿ ಇದೀಗ ಚಿತ್ರರಂಗದಲ್ಲಿ ಚರ್ಚೆಗೆ ಕಾರಣವಾಗಿದೆ.

‘ಆರ್‌ಆರ್‌ಆರ್’ ಸಿನಿಮಾದ ‘ನಾಟು ನಾಟು’ ಹಾಡು ಆಸ್ಕರ್ ಪ್ರಶಸ್ತಿ ಗೆದ್ದ ಬಳಿಕ ರಾಜಮೌಳಿ ಅವರ ಸಿನಿಮಾಗಳ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮತ್ತಷ್ಟು ಕುತೂಹಲ ಮೂಡಿದೆ. ಇದೀಗ ‘ವಾರಣಾಸಿ’ ಮೂಲಕ ಇನ್ನಷ್ಟು ವಿಭಾಗಗಳಲ್ಲಿ ಜಾಗತಿಕ ಮಟ್ಟದ ಪ್ರಶಸ್ತಿಗಳನ್ನು ಪಡೆಯುವ ಗುರಿಯನ್ನು ಚಿತ್ರತಂಡ ಹೊಂದಿದೆ ಎನ್ನಲಾಗುತ್ತಿದೆ.

ಈ ಹಿನ್ನೆಲೆಯಲ್ಲಿ ಸಿನಿಮಾದ ಬಿಡುಗಡೆಯ ನಂತರದ ಪ್ರಶಸ್ತಿ ಪ್ರಚಾರಕ್ಕೆ ಪ್ರತ್ಯೇಕವಾಗಿ ಭಾರೀ ಬಜೆಟ್ ಮೀಸಲಿಡಲಾಗಿದೆ ಎಂಬ ವರದಿ ಗಮನ ಸೆಳೆಯುತ್ತಿದೆ. ಆದರೆ ₹1,000 ಕೋಟಿ ಪ್ರಶಸ್ತಿ ಪ್ರಚಾರ ಬಜೆಟ್ ಸೇರಿದಂತೆ ಈ ಕುರಿತ ಹಲವು ಮಾಹಿತಿಗಳಿಗೆ ಚಿತ್ರತಂಡದಿಂದ ಅಧಿಕೃತ ದೃಢೀಕರಣ ಇನ್ನಷ್ಟೇ ಬರಬೇಕಿದೆ.

ಮಹೇಶ್ ಬಾಬು ಅವರ ಪ್ಯಾನ್ ಇಂಡಿಯಾ ಎಂಟ್ರಿ, ಪ್ರಿಯಾಂಕಾ ಚೋಪ್ರಾ ಅವರ ಬಹುಭಾಷಾ ಸಿನಿಮಾ ವಾಪಸ್ಸು ಹಾಗೂ ರಾಜಮೌಳಿ ಅವರ ನಿರ್ದೇಶನ—ಈ ಮೂರು ಕಾರಣಗಳಿಂದಲೇ ‘ವಾರಣಾಸಿ’ ಈಗಾಗಲೇ ಜಾಗತಿಕ ಮಟ್ಟದಲ್ಲಿ ಭಾರೀ ಕುತೂಹಲ ಮೂಡಿಸಿದೆ. ಇದೀಗ ಅದರ ಪ್ರಚಾರ ಯೋಜನೆಗಳ ಕುರಿತು ಕೇಳಿಬರುತ್ತಿರುವ ಈ ಮಾಹಿತಿಗಳು ಸಿನಿಮಾದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿವೆ.

ಮೆದುಳು ಚುರುಕಾಗಿರಬೇಕಾ? ನೆನಪಿನ ಶಕ್ತಿ ಹೆಚ್ಚಿಸಿಕೊಳ್ಳಲು ಪ್ರತಿದಿನ ರೂಢಿಸಿಕೊಳ್ಳಬೇಕಾದ 5 ಸರಳ ಅಭ್ಯಾಸಗಳಿವು!

0

ಇಂದಿನ ವೇಗದ ಜೀವನಶೈಲಿಯಲ್ಲಿ ಕೆಲಸದ ಒತ್ತಡ, ನಿದ್ರೆಯ ಕೊರತೆ ಮತ್ತು ಮೊಬೈಲ್‌ ಸೇರಿದಂತೆ ಡಿಜಿಟಲ್‌ ಸ್ಕ್ರೀನ್‌ಗಳ ಅತಿಯಾದ ಬಳಕೆಯಿಂದ ಮರೆವು, ಏಕಾಗ್ರತೆಯ ಕೊರತೆ ಹಾಗೂ ಮಾನಸಿಕ ದಣಿವಿನ ಅನುಭವ ಹಲವರಲ್ಲಿ ಕಂಡುಬರುತ್ತಿದೆ. ನಮ್ಮ ದೇಹದ ಪ್ರತಿಯೊಂದು ಚಟುವಟಿಕೆಯ ಹಿಂದೆಯೂ ಮೆದುಳಿನ ಪಾತ್ರ ಪ್ರಮುಖವಾಗಿದೆ. ಯೋಚಿಸುವುದು, ನಿರ್ಧಾರ ತೆಗೆದುಕೊಳ್ಳುವುದು, ಭಾವನೆಗಳನ್ನು ನಿಯಂತ್ರಿಸುವುದು, ಹೊಸ ವಿಷಯಗಳನ್ನು ಕಲಿಯುವುದು ಮತ್ತು ಹಿಂದಿನ ಘಟನೆಗಳನ್ನು ನೆನಪಿಸಿಕೊಳ್ಳುವುದು ಸೇರಿದಂತೆ ಹಲವು ಕಾರ್ಯಗಳು ಮೆದುಳಿನ ಆರೋಗ್ಯಕ್ಕೆ ಸಂಬಂಧಿಸಿವೆ.

ಆದರೆ, ಮೆದುಳಿನ ಆರೋಗ್ಯದ ಬಗ್ಗೆ ನಾವು ಸಾಮಾನ್ಯವಾಗಿ ಮರೆವು ಅಥವಾ ಏಕಾಗ್ರತೆಯ ಸಮಸ್ಯೆ ಎದುರಾದಾಗ ಮಾತ್ರ ಹೆಚ್ಚು ಗಮನ ಹರಿಸುತ್ತೇವೆ. ವಾಸ್ತವವಾಗಿ, ದಿನನಿತ್ಯದ ಜೀವನಶೈಲಿಯಲ್ಲಿ ಕೆಲವು ಸರಳ ಬದಲಾವಣೆಗಳನ್ನು ಮಾಡಿಕೊಳ್ಳುವುದರಿಂದ ಒಟ್ಟಾರೆ ಮೆದುಳಿನ ಆರೋಗ್ಯವನ್ನು ಬೆಂಬಲಿಸಬಹುದು.

ಪ್ರತಿದಿನ 7ರಿಂದ 8 ಗಂಟೆಗಳ ಗುಣಮಟ್ಟದ ನಿದ್ರೆ

ಮೆದುಳಿನ ಆರೋಗ್ಯಕ್ಕೆ ಉತ್ತಮ ನಿದ್ರೆ ಅತ್ಯಂತ ಮುಖ್ಯ. ನಾವು ನಿದ್ರಿಸುತ್ತಿರುವಾಗಲೂ ಮೆದುಳು ಹಲವು ಪ್ರಮುಖ ಕಾರ್ಯಗಳನ್ನು ಮುಂದುವರಿಸುತ್ತದೆ. ದಿನವಿಡೀ ಕಲಿತ ಮಾಹಿತಿಯನ್ನು ಸಂಸ್ಕರಿಸುವುದು ಮತ್ತು ನೆನಪುಗಳನ್ನು ವ್ಯವಸ್ಥಿತಗೊಳಿಸುವ ಪ್ರಕ್ರಿಯೆಯಲ್ಲೂ ನಿದ್ರೆ ಪ್ರಮುಖ ಪಾತ್ರ ವಹಿಸುತ್ತದೆ.

ನಿದ್ರೆ ಕಡಿಮೆಯಾದಾಗ ಮರುದಿನ ಏಕಾಗ್ರತೆಯ ಕೊರತೆ, ಕಿರಿಕಿರಿ, ಮಾನಸಿಕ ದಣಿವು ಮತ್ತು ನೆನಪಿನ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಹೀಗಾಗಿ ಪ್ರತಿದಿನ ಒಂದೇ ಸಮಯಕ್ಕೆ ಮಲಗುವ ಮತ್ತು ಏಳುವ ಅಭ್ಯಾಸ ಬೆಳೆಸಿಕೊಳ್ಳುವುದು ಉತ್ತಮ.

ಮಲಗುವ ಮುನ್ನ ಮೊಬೈಲ್‌, ಕಂಪ್ಯೂಟರ್‌ ಮತ್ತು ಇತರ ಸ್ಕ್ರೀನ್‌ಗಳ ಬಳಕೆಯನ್ನು ಕಡಿಮೆ ಮಾಡುವುದು ಸಹ ಸಹಾಯಕವಾಗಬಹುದು. ಕೋಣೆಯ ಬೆಳಕನ್ನು ಮಂದಗೊಳಿಸಿ, ಕೆಲ ನಿಮಿಷ ಶಾಂತವಾಗಿ ಕುಳಿತುಕೊಳ್ಳುವುದು ಅಥವಾ ನಿಧಾನವಾಗಿ ಉಸಿರಾಟದ ವ್ಯಾಯಾಮ ಮಾಡುವುದು ಮನಸ್ಸನ್ನು ವಿಶ್ರಾಂತಿಗೆ ಸಿದ್ಧಪಡಿಸಬಹುದು.

ಒತ್ತಡವೂ ನಿದ್ರೆಯ ಗುಣಮಟ್ಟದ ಮೇಲೆ ಪರಿಣಾಮ ಬೀರಬಹುದು. ಹೀಗಾಗಿ ದಿನದಲ್ಲಿ ಕೆಲ ನಿಮಿಷ ಧ್ಯಾನ, ನಿಧಾನವಾದ ಉಸಿರಾಟ ಅಥವಾ ಶಾಂತವಾದ ವಿಶ್ರಾಂತಿಗೆ ಸಮಯ ಮೀಸಲಿಡುವುದು ಉತ್ತಮ ಅಭ್ಯಾಸ.

ಮೆದುಳಿಗೆ ಅಗತ್ಯವಾದ ಪೋಷಕಾಂಶಗಳನ್ನು ಆಹಾರದಲ್ಲಿ ಸೇರಿಸಿ

ಮೆದುಳಿನ ಸಾಮಾನ್ಯ ಕಾರ್ಯನಿರ್ವಹಣೆಗೆ ಸಮತೋಲಿತ ಆಹಾರ ಬಹಳ ಮುಖ್ಯ. ವಿಶೇಷವಾಗಿ ಒಮೆಗಾ-3 ಕೊಬ್ಬಿನಾಮ್ಲಗಳು ಸೇರಿದಂತೆ ಕೆಲವು ಅಗತ್ಯ ಪೋಷಕಾಂಶಗಳು ಮೆದುಳಿನ ಆರೋಗ್ಯಕ್ಕೆ ಸಹಾಯಕವಾಗಬಹುದು.

ಸಸ್ಯಾಹಾರಿಗಳು ಅಗಸೆ ಬೀಜ, ಚಿಯಾ ಬೀಜ, ಅಕ್ರೋಟ್‌ ಮುಂತಾದ ಆಹಾರಗಳನ್ನು ತಮ್ಮ ದಿನನಿತ್ಯದ ಆಹಾರದಲ್ಲಿ ಸೇರಿಸಿಕೊಳ್ಳಬಹುದು. ಮೀನು ಸೇವಿಸುವವರು ಒಮೆಗಾ-3 ಹೊಂದಿರುವ ಕೆಲವು ಮೀನುಗಳನ್ನು ಆಹಾರದ ಭಾಗವಾಗಿಸಬಹುದು.

ಆದರೆ, ಯಾವುದೇ ಒಂದು ಆಹಾರ ಅಥವಾ ಪೂರಕ ಮಾತ್ರ ಜ್ಞಾಪಕಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಒಟ್ಟಾರೆ ಸಮತೋಲಿತ ಆಹಾರ, ಸಾಕಷ್ಟು ತರಕಾರಿ-ಹಣ್ಣುಗಳು, ಧಾನ್ಯಗಳು, ಪ್ರೋಟೀನ್‌ ಮತ್ತು ಆರೋಗ್ಯಕರ ಕೊಬ್ಬುಗಳನ್ನು ಒಳಗೊಂಡ ಆಹಾರ ಪದ್ಧತಿಯೇ ಮುಖ್ಯ. ಒಮೆಗಾ-3 ಅಥವಾ ಇತರ ಪೂರಕ ಮಾತ್ರೆಗಳನ್ನು ವೈದ್ಯರ ಸಲಹೆಯಿಲ್ಲದೆ ಸ್ವಯಂಪ್ರೇರಿತವಾಗಿ ಸೇವಿಸುವುದನ್ನು ತಪ್ಪಿಸುವುದು ಉತ್ತಮ.

ಪ್ರತಿದಿನ ಅಲ್ಪ ಪ್ರಮಾಣದ ಡ್ರೈಫ್ರೂಟ್ಸ್‌ ಸೇವಿಸಿ

ಬಾದಾಮಿ, ಅಕ್ರೋಟ್‌, ಕುಂಬಳಕಾಯಿ ಬೀಜ, ಸೂರ್ಯಕಾಂತಿ ಬೀಜ ಸೇರಿದಂತೆ ವಿವಿಧ ಬೀಜಗಳು ಮತ್ತು ನಟ್ಸ್‌ಗಳಲ್ಲಿ ಆರೋಗ್ಯಕರ ಕೊಬ್ಬು, ಪ್ರೋಟೀನ್‌, ಖನಿಜಗಳು ಹಾಗೂ ಇತರ ಪೋಷಕಾಂಶಗಳು ದೊರೆಯುತ್ತವೆ.

ಇವುಗಳನ್ನು ಅಲ್ಪ ಪ್ರಮಾಣದಲ್ಲಿ ದಿನನಿತ್ಯದ ಆಹಾರದಲ್ಲಿ ಸೇರಿಸಿಕೊಳ್ಳಬಹುದು. ಸಕ್ಕರೆ ಅಥವಾ ಉಪ್ಪು ಹೆಚ್ಚಾಗಿ ಸೇರಿಸಿರುವ ಪ್ಯಾಕೆಟ್‌ ಸ್ನ್ಯಾಕ್ಸ್‌ಗಳ ಬದಲು ನೈಸರ್ಗಿಕ ನಟ್ಸ್‌ ಮತ್ತು ಬೀಜಗಳನ್ನು ಆಯ್ಕೆ ಮಾಡುವುದು ಉತ್ತಮ ಅಭ್ಯಾಸವಾಗಬಹುದು.

ಬಾದಾಮಿ ಅಥವಾ ಬೀಜಗಳನ್ನು ನೆನೆಸಿ ತಿನ್ನುವುದು ಕೆಲವರಲ್ಲಿ ರೂಢಿಯಲ್ಲಿದೆ. ಆದರೆ, ನೆನೆಸುವುದೇ ಕಡ್ಡಾಯ ಅಥವಾ ಅದರಿಂದಲೇ ಹೆಚ್ಚಿನ ಆರೋಗ್ಯ ಪ್ರಯೋಜನ ಸಿಗುತ್ತದೆ ಎಂಬುದಕ್ಕೆ ಸಾಕಷ್ಟು ಪುರಾವೆ ಇಲ್ಲ. ಮುಖ್ಯವಾಗಿ ಸೇವಿಸುವ ಪ್ರಮಾಣ ಮತ್ತು ಒಟ್ಟಾರೆ ಆಹಾರದ ಗುಣಮಟ್ಟವನ್ನು ಗಮನಿಸುವುದು ಮುಖ್ಯ.

ಪ್ರತಿದಿನ ದೈಹಿಕ ಚಟುವಟಿಕೆಗೆ ಸಮಯ ನೀಡಿ

ಮೆದುಳಿನ ಆರೋಗ್ಯಕ್ಕೆ ದೈಹಿಕ ಚಟುವಟಿಕೆಯೂ ಮಹತ್ವದ್ದಾಗಿದೆ. ನಿಯಮಿತ ವ್ಯಾಯಾಮ ದೇಹದ ರಕ್ತಸಂಚಾರವನ್ನು ಸುಧಾರಿಸುವುದರ ಜೊತೆಗೆ ಒತ್ತಡ ಕಡಿಮೆ ಮಾಡಲು ಮತ್ತು ಮನಸ್ಥಿತಿಯನ್ನು ಉತ್ತಮಗೊಳಿಸಲು ಸಹಾಯ ಮಾಡಬಹುದು.

ವ್ಯಾಯಾಮ ಎಂದರೆ ಪ್ರತಿದಿನ ಜಿಮ್‌ನಲ್ಲಿ ಗಂಟೆಗಟ್ಟಲೆ ಕಳೆಯಬೇಕು ಎಂದೇನಿಲ್ಲ. ವೇಗವಾಗಿ ನಡೆಯುವುದು, ಸೈಕ್ಲಿಂಗ್‌, ಈಜು, ಯೋಗ, ಮೆಟ್ಟಿಲು ಹತ್ತುವುದು ಅಥವಾ ಸರಳ ಸ್ಟ್ರೆಚಿಂಗ್‌ ಕೂಡ ದೈಹಿಕ ಚಟುವಟಿಕೆಯ ಭಾಗವಾಗಬಹುದು.

ವ್ಯಾಯಾಮದ ಅಭ್ಯಾಸ ಇಲ್ಲದವರು ಕಡಿಮೆ ಸಮಯದಿಂದ ಆರಂಭಿಸಬಹುದು. ಉದಾಹರಣೆಗೆ, 15ರಿಂದ 20 ನಿಮಿಷಗಳ ನಡಿಗೆಯಿಂದ ಆರಂಭಿಸಿ ಕ್ರಮೇಣ ಸಮಯ ಮತ್ತು ಚಟುವಟಿಕೆಯ ಪ್ರಮಾಣವನ್ನು ಹೆಚ್ಚಿಸಬಹುದು.

ಹೆಚ್ಚು ಸಮಯ ಕುಳಿತು ಕೆಲಸ ಮಾಡುವವರು ಮಧ್ಯೆ ಮಧ್ಯೆ ಎದ್ದು ಕೆಲವು ನಿಮಿಷ ನಡೆಯುವುದು ಅಥವಾ ದೇಹವನ್ನು ಸ್ಟ್ರೆಚ್‌ ಮಾಡುವುದು ಸಹ ಉತ್ತಮ ಅಭ್ಯಾಸ. ನಿಯಮಿತ ದೈಹಿಕ ಚಟುವಟಿಕೆ ಮಾನಸಿಕ ದಣಿವು ಮತ್ತು ‘ಬ್ರೇನ್‌ ಫಾಗ್‌’ನಂತಹ ಅನುಭವವನ್ನು ಕಡಿಮೆ ಮಾಡಲು ಕೆಲವರಿಗೆ ಸಹಾಯ ಮಾಡಬಹುದು.

ಅಡುಗೆಯಲ್ಲಿ ಅರಿಶಿನ ಬಳಸಿ

ಭಾರತೀಯ ಅಡುಗೆಯಲ್ಲಿ ಬಹಳ ಹಿಂದಿನಿಂದಲೂ ಬಳಕೆಯಲ್ಲಿರುವ ಅರಿಶಿನದಲ್ಲಿ ಕರ್ಕ್ಯುಮಿನ್‌ ಎಂಬ ಸಕ್ರಿಯ ಸಂಯುಕ್ತವಿದೆ. ಕರ್ಕ್ಯುಮಿನ್‌ಗೆ ಉತ್ಕರ್ಷಣ ನಿರೋಧಕ ಮತ್ತು ಉರಿಯೂತ ನಿಯಂತ್ರಣಕ್ಕೆ ಸಂಬಂಧಿಸಿದ ಗುಣಗಳಿವೆ ಎಂಬುದರ ಕುರಿತು ಸಂಶೋಧನೆಗಳು ನಡೆದಿವೆ.

ಸಾಂಬಾರ್‌, ಬೇಳೆ, ತರಕಾರಿ, ಸೂಪ್‌ ಸೇರಿದಂತೆ ವಿವಿಧ ಆಹಾರಗಳಲ್ಲಿ ಸೂಕ್ತ ಪ್ರಮಾಣದ ಅರಿಶಿನ ಬಳಸಬಹುದು. ಆದರೆ, ಅರಿಶಿನ ಅಥವಾ ಕರ್ಕ್ಯುಮಿನ್‌ ಅನ್ನು ಯಾವುದೇ ಕಾಯಿಲೆಗೆ ಖಚಿತ ಚಿಕಿತ್ಸೆ ಎಂದು ಪರಿಗಣಿಸಬಾರದು.

ಅರಿಶಿನವನ್ನು ಆಹಾರದ ಭಾಗವಾಗಿ ಬಳಸುವುದು ಮತ್ತು ಹೆಚ್ಚಿನ ಪ್ರಮಾಣದಲ್ಲಿ ಕರ್ಕ್ಯುಮಿನ್‌ ಪೂರಕಗಳನ್ನು ಸೇವಿಸುವುದು ಒಂದೇ ವಿಷಯವಲ್ಲ. ವಿಶೇಷವಾಗಿ ಪೂರಕಗಳನ್ನು ತೆಗೆದುಕೊಳ್ಳಲು ಯೋಚಿಸುತ್ತಿದ್ದರೆ ವೈದ್ಯರ ಸಲಹೆ ಪಡೆಯುವುದು ಸೂಕ್ತ.

ಒಟ್ಟಿನಲ್ಲಿ, ಮೆದುಳಿನ ಆರೋಗ್ಯ ಮತ್ತು ಜ್ಞಾಪಕಶಕ್ತಿಯನ್ನು ಬೆಂಬಲಿಸಲು ಒಂದೇ ಒಂದು ‘ಮ್ಯಾಜಿಕ್‌’ ಆಹಾರ ಅಥವಾ ಮನೆಮದ್ದು ಇರುವುದಿಲ್ಲ. ಉತ್ತಮ ನಿದ್ರೆ, ಸಮತೋಲಿತ ಆಹಾರ, ನಿಯಮಿತ ದೈಹಿಕ ಚಟುವಟಿಕೆ, ಒತ್ತಡ ನಿರ್ವಹಣೆ ಮತ್ತು ಆರೋಗ್ಯಕರ ಜೀವನಶೈಲಿ ಇವೆಲ್ಲವೂ ಒಟ್ಟಾಗಿ ಮುಖ್ಯವಾಗುತ್ತವೆ.

ಮರೆವು ಅಥವಾ ಏಕಾಗ್ರತೆಯ ಸಮಸ್ಯೆ ನಿರಂತರವಾಗಿ ಮುಂದುವರಿದರೆ ಅಥವಾ ದಿನನಿತ್ಯದ ಕೆಲಸಗಳ ಮೇಲೆ ಪರಿಣಾಮ ಬೀರುತ್ತಿದ್ದರೆ ಅದನ್ನು ಕೇವಲ ಜೀವನಶೈಲಿಯ ಸಮಸ್ಯೆ ಎಂದು ನಿರ್ಲಕ್ಷಿಸದೆ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

ಹುಬ್ಬಳ್ಳಿಯಲ್ಲಿ ನಾಳೆ ಕೆಎಲ್‌ಇ ಆಸ್ಪತ್ರೆ ಲೋಕಾರ್ಪಣೆ; ಇಂದೇ ಅಮಿತ್ ಶಾ ಆಗಮನ?

0

ಹುಬ್ಬಳ್ಳಿ: ನಗರದ ಗಬ್ಬೂರಿನಲ್ಲಿ ನಿರ್ಮಾಣಗೊಂಡಿರುವ ಕೆಎಲ್‌ಇ ಆಸ್ಪತ್ರೆ ನಾಳೆ ಲೋಕಾರ್ಪಣೆಗೊಳ್ಳಲಿದೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬೆಳಗ್ಗೆ 11.30ಕ್ಕೆ ಆಸ್ಪತ್ರೆಯನ್ನು ಲೋಕಾರ್ಪಣೆ ಮಾಡಲಿದ್ದಾರೆ.

ಸುಮಾರು ₹700 ಕೋಟಿ ವೆಚ್ಚದಲ್ಲಿ 50 ಎಕರೆ ಪ್ರದೇಶದಲ್ಲಿ ಈ ವೈದ್ಯಕೀಯ ಕ್ಯಾಂಪಸ್ ನಿರ್ಮಿಸಲಾಗಿದೆ. ಆಸ್ಪತ್ರೆಯು ಸುಮಾರು 1,200 ಹಾಸಿಗೆಗಳ ಸಾಮರ್ಥ್ಯ ಹೊಂದಿದ್ದು, ಮಲ್ಟಿ ಸ್ಪೆಷಾಲಿಟಿ ಮತ್ತು ಸೂಪರ್ ಸ್ಪೆಷಾಲಿಟಿ ಚಿಕಿತ್ಸಾ ಸೌಲಭ್ಯಗಳನ್ನು ಹೊಂದಿದೆ.

ಆಸ್ಪತ್ರೆಯಲ್ಲಿ ಅತ್ಯಾಧುನಿಕ ಕ್ಯಾಥ್‌ಲ್ಯಾಬ್, ಮಾಡ್ಯುಲರ್ ಆಪರೇಷನ್ ಥಿಯೇಟರ್ ಸೇರಿದಂತೆ ವಿವಿಧ ವೈದ್ಯಕೀಯ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.

ಲೋಕಾರ್ಪಣೆ ಕಾರ್ಯಕ್ರಮದ ವೇಳೆ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರಕ್ಕೂ ಚಾಲನೆ ನೀಡಲಾಗುತ್ತದೆ. ಇಲ್ಲಿ ಸುಮಾರು 800 ವಿದ್ಯಾರ್ಥಿಗಳಿಗೆ ಪದವಿ ಮತ್ತು ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಪಡೆಯಲು ಅವಕಾಶವಿದೆ.

₹35 ಕೋಟಿ ವೆಚ್ಚದಲ್ಲಿ AI ಆಧಾರಿತ ಸ್ಕಿಲ್ ಲ್ಯಾಬ್ ಕೂಡ ಸ್ಥಾಪಿಸಲಾಗಿದೆ. ಅಮಿತ್ ಶಾ ಅವರು ಇಂದು ರಾತ್ರಿ 11 ಗಂಟೆಗೆ ಹುಬ್ಬಳ್ಳಿಗೆ ಆಗಮಿಸಲಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ

ನಕಲಿ ಆ್ಯಪ್‌ನಿಂದ ವಂಚನೆ! 80s ಫೋಟೋ ಮಾಡಿಕೊಳ್ಳಲು ಹೋದವನ ಮೊಬೈಲ್ ಹ್ಯಾಕ್ ಮಾಡಿ ಬ್ಲ್ಯಾಕ್‌ಮೇಲ್

0

ನೆಲಮಂಗಲ: 80ರ ದಶಕದ ಹಳೆಯ ಫೋಟೋ ಶೈಲಿಗೆ ಚಿತ್ರಗಳನ್ನು ಬದಲಿಸುವ ಟ್ರೆಂಡ್ ಬಳಸಿಕೊಂಡು ಸೈಬರ್ ವಂಚಕರು ವ್ಯಕ್ತಿಯೊಬ್ಬರನ್ನು ಗುರಿಯಾಗಿಸಿಕೊಂಡಿರುವ ಘಟನೆ ನಡೆದಿದೆ.

ಬೆಂಗಳೂರು ಉತ್ತರ ತಾಲೂಕಿನ ಬಾಗಲಗುಂಟೆ ನಿವಾಸಿ ವಿನೋದ್ (45) ವಂಚನೆಗೊಳಗಾದವರು. ತಮ್ಮ ಫೋಟೋವನ್ನು 80ರ ದಶಕದ ಲುಕ್‌ಗೆ ಬದಲಾಯಿಸಲು ಮುಂದಾದ ಅವರು, ಚಾಟ್‌ಜಿಪಿಟಿ ಮಾದರಿಯ ತಂತ್ರಜ್ಞಾನ ಬಳಸುವ ಆ್ಯಪ್ ಎಂದು ಭಾವಿಸಿ ಅಪರಿಚಿತ ಆ್ಯಪ್‌ವೊಂದನ್ನು ಮೊಬೈಲ್‌ನಲ್ಲಿ ಇನ್‌ಸ್ಟಾಲ್ ಮಾಡಿಕೊಂಡಿದ್ದರು ಎನ್ನಲಾಗಿದೆ.

ಆ್ಯಪ್ ಇನ್‌ಸ್ಟಾಲ್ ಮಾಡಿದ ಕೆಲವೇ ಸಮಯದಲ್ಲಿ ಮೊಬೈಲ್ ಹಾಗೂ ಖಾತೆ ಹ್ಯಾಕ್ ಆಗಿದೆ ಎಂದು ಆರೋಪಿಸಲಾಗಿದೆ. ಬಳಿಕ ಅಪರಿಚಿತ ವ್ಯಕ್ತಿಯೊಬ್ಬ ವಿನೋದ್‌ಗೆ ಕರೆ ಮಾಡಿ ₹50 ಸಾವಿರ ನೀಡುವಂತೆ ಒತ್ತಾಯಿಸಿದ್ದಾನೆ.

ಹಣ ನೀಡಲು ನಿರಾಕರಿಸಿದರೆ ಫೋಟೋವನ್ನು ಅಶ್ಲೀಲವಾಗಿ ಎಡಿಟ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ. ವಿನೋದ್ ಕರೆ ಕಡಿತಗೊಳಿಸಿದ ಬಳಿಕ, ವಂಚಕರು ಅವರ ಫೋಟೋವನ್ನು ಅಶ್ಲೀಲವಾಗಿ ಎಡಿಟ್ ಮಾಡಿ ಸ್ನೇಹಿತರ ವಾಟ್ಸಾಪ್ ಗ್ರೂಪ್‌ಗಳಿಗೆ ಕಳುಹಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಘಟನೆ ಬಳಿಕ ವಿನೋದ್ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆಗುವ ಯಾವುದೇ ಫೋಟೋ ಎಡಿಟಿಂಗ್ ಸೇವೆಗಾಗಿ ಅಪರಿಚಿತ ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡುವ ಮುನ್ನ ಅದರ ಸುರಕ್ಷತೆ ಮತ್ತು ವಿಶ್ವಾಸಾರ್ಹತೆಯನ್ನು ಪರಿಶೀಲಿಸುವಂತೆ ಸಾರ್ವಜನಿಕರಿಗೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ಇ-ಸ್ವತ್ತು ನೀಡಿಕೆಯಲ್ಲಿ ವಿಳಂಬಕ್ಕೆ ಬ್ರೇಕ್: ಅಕ್ಟೋಬರ್ 2ರಿಂದ ಹೊಸ ಪ್ರಕ್ರಿಯೆ ಆರಂಭ!

0

ಬೆಂಗಳೂರು: ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಸ್ತಿಗಳಿಗೆ ಇ-ಸ್ವತ್ತು ನೀಡಿಕೆಯಲ್ಲಿ ಆಗುತ್ತಿರುವ ವಿಳಂಬವನ್ನು ತಪ್ಪಿಸಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಖಂಡ್ರೆ ಕ್ರಮ ಕೈಗೊಂಡಿದ್ದಾರೆ.

ಪ್ರಥಮ ಹಂತದಲ್ಲಿ ಗ್ರಾಮಠಾಣಾ ವ್ಯಾಪ್ತಿಯ ಆಸ್ತಿಗಳಿಗೆ ಅಕ್ಟೋಬರ್ 2ರಿಂದ ಇ-ಸ್ವತ್ತು ಪ್ರಕ್ರಿಯೆ ಆರಂಭಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಇ-ಸ್ವತ್ತು ನೀಡಿಕೆಯಲ್ಲಿ ಎದುರಾಗುತ್ತಿರುವ ತಾಂತ್ರಿಕ ಹಾಗೂ ಪ್ರಕ್ರಿಯಾತ್ಮಕ ಸಮಸ್ಯೆಗಳನ್ನು ಪರಿಹರಿಸಲು ಸರಳೀಕೃತ ‘ಇ-ಸ್ವತ್ತು-03’ ತಂತ್ರಾಂಶ ಸಿದ್ಧಪಡಿಸುವಂತೆ ಇಲಾಖೆಯ ಕಾರ್ಯದರ್ಶಿಗೆ ಲಿಖಿತ ಸೂಚನೆ ನೀಡಿದ್ದಾರೆ.

ನ್ಯಾಯಾಲಯದಲ್ಲಿ ವ್ಯಾಜ್ಯ ಇರುವ ಆಸ್ತಿಗಳು, ಸರ್ಕಾರಿ ಜಾಗ, ಕೆರೆ ಅಂಗಳ, ಬಿ ಖರಾಬು ಹಾಗೂ ಅರಣ್ಯ ಪ್ರದೇಶ ಒತ್ತುವರಿ ಮಾಡಿ ನಿರ್ಮಿಸಿರುವ ಮನೆಗಳನ್ನು ಹೊರತುಪಡಿಸಿ, ನಿಯಮಾನುಸಾರ ಅರ್ಹ ವಾರಸುದಾರರಿಗೆ ಇ-ಸ್ವತ್ತು ನೀಡಲಾಗುತ್ತದೆ.

ಅಕ್ಟೋಬರ್ 2ರಿಂದ ಅರ್ಜಿಗಳನ್ನು ಸ್ವೀಕರಿಸಿ, ನವೆಂಬರ್‌ನಲ್ಲಿ ಕನಿಷ್ಠ 10 ಲಕ್ಷ ಆಸ್ತಿಗಳಿಗೆ ಮನೆ ಬಾಗಿಲಿಗೆ ಇ-ಸ್ವತ್ತು ತಲುಪಿಸುವ ಗುರಿ ಹೊಂದಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ದಾಖಲೆಗಳಿಲ್ಲದ ಗ್ರಾಮಠಾಣಾ ಆಸ್ತಿಗಳ ಪೈಕಿ ಹಿತ್ತಲು ಮತ್ತು ಮನೆ ಅಂಗಳ ಸೇರಿದಂತೆ 4,000 ಚದರ ಅಡಿಯೊಳಗಿನ ಆಸ್ತಿಗಳಿಗೆ ಮಾತ್ರ ಇ-ಸ್ವತ್ತು ನೀಡಲು ಅವಕಾಶ ಕಲ್ಪಿಸಲಾಗಿದೆ.

ಈ ಸಂಬಂಧ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಹಳ್ಳಿಗಳಲ್ಲಿ ಪ್ರತ್ಯೇಕ ಗ್ರಾಮಸಭೆ ನಡೆಸಲಾಗುತ್ತದೆ. ಅರ್ಜಿದಾರರು ಅದೇ ಆಸ್ತಿಯಲ್ಲಿ ವಾಸಿಸುತ್ತಿದ್ದಾರೆಯೇ ಹಾಗೂ ಅವರೇ ಆಸ್ತಿಯ ನೈಜ ಮಾಲೀಕರೇ ಎಂಬುದನ್ನು ಗ್ರಾಮಸ್ಥರ ಸಮ್ಮುಖದಲ್ಲಿ ಪರಿಶೀಲಿಸಲಾಗುತ್ತದೆ.

ಸಾರ್ವಜನಿಕರಿಂದ ಆಕ್ಷೇಪಣೆ ಸಲ್ಲಿಸಲು 21 ದಿನಗಳ ಕಾಲಾವಕಾಶ ನೀಡಲಾಗುತ್ತದೆ. ಈ ಕುರಿತು ಪಂಚಾಯಿತಿ ಕಚೇರಿಗಳಲ್ಲಿ ನೋಟಿಸ್ ಪ್ರಕಟಿಸಲಾಗುತ್ತದೆ. ನಿಗದಿತ ಅವಧಿಯಲ್ಲಿ ಯಾವುದೇ ಆಕ್ಷೇಪಣೆ ಬಾರದಿದ್ದರೆ ನಿಯಮಾನುಸಾರ ಇ-ಸ್ವತ್ತು ನೀಡಲು ಕ್ರಮ ಕೈಗೊಳ್ಳಲಾಗುತ್ತದೆ.

ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ: ಅನಂತ್ ನಾಗ್ ನಿವಾಸಕ್ಕೆ ತೆರಳಿ ಶುಭ ಕೋರಿದ ವಿ.ಸೋಮಣ್ಣ

0

ಬೆಂಗಳೂರು: ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಭಾಜನರಾಗಿರುವ ಹಿರಿಯ ನಟ ಅನಂತ್ ನಾಗ್ ಅವರನ್ನು ಕೇಂದ್ರ ಸಚಿವ ವಿ. ಸೋಮಣ್ಣ ಭೇಟಿಯಾಗಿ ಅಭಿನಂದನೆ ಸಲ್ಲಿಸಿದ್ದಾರೆ.

ಅನಂತ್ ನಾಗ್ ಅವರ ನಿವಾಸಕ್ಕೆ ತೆರಳಿದ ಸೋಮಣ್ಣ ಅವರು, ಭಾರತೀಯ ಚಿತ್ರರಂಗದ ಅತ್ಯುನ್ನತ ಗೌರವಕ್ಕೆ ಪಾತ್ರರಾಗಿದ್ದಕ್ಕೆ ಹೃತ್ಪೂರ್ವಕ ಶುಭಾಶಯ ತಿಳಿಸಿದ್ದಾರೆ.

ಈ ಭೇಟಿಯ ಕುರಿತು ವಿ. ಸೋಮಣ್ಣ ಅವರು ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಕನ್ನಡ ಚಿತ್ರರಂಗದ ಹಿರಿಯ ನಟ ಅನಂತ್ ನಾಗ್ ಅವರು ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಭಾಜನರಾಗಿರುವುದು ಕನ್ನಡಿಗರಿಗೆ ಹೆಮ್ಮೆಯ ಸಂಗತಿ ಎಂದು ಅವರು ಹೇಳಿದ್ದಾರೆ.

ಕಳೆದ ಐದು ದಶಕಗಳಿಂದ ಭಾರತೀಯ ಚಿತ್ರರಂಗ, ಅದರಲ್ಲೂ ವಿಶೇಷವಾಗಿ ಕನ್ನಡ ಚಿತ್ರರಂಗಕ್ಕೆ ಅನಂತ್ ನಾಗ್ ಅವರು ಸಲ್ಲಿಸಿರುವ ಸೇವೆಯನ್ನು ಸೋಮಣ್ಣ ಅವರು ಸ್ಮರಿಸಿದ್ದಾರೆ. ತಮ್ಮ ಅಭಿನಯದ ಮೂಲಕ ಕನ್ನಡ ಚಿತ್ರರಂಗದಲ್ಲಿ ವಿಶಿಷ್ಟ ಛಾಪು ಮೂಡಿಸಿರುವ ಅನಂತ್ ನಾಗ್ ಅವರಿಗೆ ದೇಶದ ಅತ್ಯುನ್ನತ ಸಿನಿಮಾ ಗೌರವ ದೊರೆತಿರುವುದಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.

ಡಾ. ರಾಜ್‌ಕುಮಾರ್ ಅವರ ಬಳಿಕ ಮತ್ತೊಬ್ಬ ಕನ್ನಡಿಗರಿಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ದೊರೆತಿರುವುದು ಹೆಮ್ಮೆಯ ಸಂಗತಿ ಎಂದು ವಿ. ಸೋಮಣ್ಣ ತಿಳಿಸಿದ್ದಾರೆ.

ಹಾವೇರಿಯಲ್ಲಿ ಚಿರತೆ ಕಾಟ; ಜಮೀನಿಗೆ ತೆರಳಲು ರೈತರ ಹಿಂದೇಟು!

0

ಹಾವೇರಿ: ಜಿಲ್ಲೆಯಲ್ಲಿ ಚಿರತೆ ಹಾವಳಿ ಹೆಚ್ಚಾಗಿದ್ದು, ರೈತರು ಹಾಗೂ ಗ್ರಾಮಸ್ಥರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ರಾಣೆಬೆನ್ನೂರು ತಾಲೂಕಿನ ಹುಲ್ಲತ್ತಿ ಗ್ರಾಮದ ರೈತರ ಜಮೀನುಗಳ ಬಳಿ ಕಳೆದ ಕೆಲವು ದಿನಗಳಿಂದ ಚಿರತೆ ಕಾಣಿಸಿಕೊಳ್ಳುತ್ತಿದ್ದು, ಜಮೀನಿಗೆ ತೆರಳಲು ರೈತರು ಹಿಂದೇಟು ಹಾಕುವಂತಾಗಿದೆ.

ಅರಣ್ಯ ಪ್ರದೇಶದ ಗಡಿ ಭಾಗಕ್ಕೆ ಹೊಂದಿಕೊಂಡಿರುವ ಜಮೀನುಗಳಲ್ಲಿ ಚಿರತೆ ಓಡಾಡುತ್ತಿರುವುದು ಕಂಡುಬಂದಿದೆ ಎನ್ನಲಾಗಿದೆ. ಕುರಿಗಾಹಿಗಳು ಕೂಡ ಚಿರತೆಯನ್ನು ಪ್ರತ್ಯಕ್ಷವಾಗಿ ನೋಡಿದ್ದು, ಕುರಿ ಹಿಂಡಿನಲ್ಲಿದ್ದ ಮೂರ್ನಾಲ್ಕು ಮೇಕೆ ಮರಿಗಳನ್ನು ಚಿರತೆ ಹೊತ್ತೊಯ್ದಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಇತ್ತೀಚೆಗೆ ಜಮೀನಿನಲ್ಲಿ ರೈತರು ಕೆಲಸ ಮಾಡುತ್ತಿದ್ದ ವೇಳೆ ಚಿರತೆ ಏಕಾಏಕಿ ಎತ್ತುಗಳ ಮೇಲೆ ದಾಳಿ ಮಾಡಲು ಮುಂದಾಗಿದೆ. ಈ ವೇಳೆ ರೈತರು ಜೋರಾಗಿ ಕಿರುಚಿಕೊಂಡಿದ್ದರಿಂದ ಹೆದರಿದ ಚಿರತೆ ಅಲ್ಲಿಂದ ಓಡಿ ಹೋಗಿದೆ. ಘಟನೆಯಿಂದ ಆತಂಕಗೊಂಡ ರೈತರು ಎತ್ತುಗಳನ್ನು ಕರೆದುಕೊಂಡು ಮನೆಗೆ ವಾಪಸ್ ತೆರಳಿದ್ದಾರೆ.

ಇನ್ನು ರೈತರ ಜಮೀನುಗಳಲ್ಲಿ ಚಿರತೆ ಓಡಾಡಿರುವ ಹೆಜ್ಜೆ ಗುರುತುಗಳು ಕೂಡ ಪತ್ತೆಯಾಗಿದ್ದು, ಗ್ರಾಮಸ್ಥರ ಆತಂಕ ಮತ್ತಷ್ಟು ಹೆಚ್ಚಾಗಿದೆ. ಚಿರತೆಯನ್ನು ಕೂಡಲೇ ಸೆರೆ ಹಿಡಿಯುವಂತೆ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮನವಿ ಮಾಡಿದ್ದಾರೆ. ಚಿರತೆ ಸೆರೆಗೆ ಬೋನುಗಳನ್ನು ಅಳವಡಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ.

ಕಣ್ಣು ಕೆಂಪಾಗ್ತಿದೆಯಾ? ಕೊಡಗಿನಲ್ಲಿ ಹೆಚ್ಚುತ್ತಿದೆ ಕೆಂಗಣ್ಣು; ಈ ಲಕ್ಷಣಗಳಿದ್ದರೆ ನಿರ್ಲಕ್ಷ್ಯ ಬೇಡ

0

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕಳೆದ 15 ದಿನಗಳಿಂದ ಕೆಂಗಣ್ಣು ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿದ್ದು, ಜನರಲ್ಲಿ ಆತಂಕ ಮೂಡಿದೆ.

ಕಂಜಕ್ಟಿವೈಟಿಸ್ ಸೋಂಕಿನಿಂದ ಶಾಲಾ ಮಕ್ಕಳು ಸೇರಿದಂತೆ ಹಲವರು ಬಳಲುತ್ತಿದ್ದು, ಕಣ್ಣು ಕೆಂಪಾಗುವುದು, ನಿರಂತರವಾಗಿ ನೀರು ಸುರಿಯುವುದು, ತುರಿಕೆ ಹಾಗೂ ಕಣ್ಣಿನಲ್ಲಿ ಅಂಟಿಕೊಳ್ಳುವಂತಹ ಸಮಸ್ಯೆಗಳು ಕಂಡುಬರುತ್ತಿವೆ.

ಕಂಜಕ್ಟಿವೈಟಿಸ್ ಕಣ್ಣಿನ ಹೊರಪದರದಲ್ಲಿ ಕಾಣಿಸಿಕೊಳ್ಳುವ ಸೋಂಕಾಗಿದ್ದು, ಸೋಂಕಿತ ವ್ಯಕ್ತಿಯ ಕಣ್ಣು ಅಥವಾ ಅವರು ಬಳಸಿದ ವಸ್ತುಗಳ ಸಂಪರ್ಕದಿಂದ ಮತ್ತೊಬ್ಬರಿಗೆ ಹರಡುವ ಸಾಧ್ಯತೆ ಇದೆ. ಹೀಗಾಗಿ ಶಾಲೆ, ಕಚೇರಿ ಹಾಗೂ ಜನಸಂದಣಿ ಹೆಚ್ಚಿರುವ ಪ್ರದೇಶಗಳಲ್ಲಿ ಸಾರ್ವಜನಿಕರು ಹೆಚ್ಚಿನ ಮುನ್ನೆಚ್ಚರಿಕೆ ವಹಿಸುವಂತೆ ವೈದ್ಯರು ಸಲಹೆ ನೀಡಿದ್ದಾರೆ.

ಕೆಂಗಣ್ಣು ಸೋಂಕಿನ ಲಕ್ಷಣಗಳು ಕಂಡುಬಂದವರು ಪದೇಪದೇ ಕಣ್ಣು ಉಜ್ಜಿಕೊಳ್ಳಬಾರದು. ಕಣ್ಣು ಮುಟ್ಟಿದ ಬಳಿಕ ಕೈಗಳನ್ನು ಸಾಬೂನಿನಿಂದ ಸ್ವಚ್ಛವಾಗಿ ತೊಳೆದುಕೊಳ್ಳಬೇಕು. ಸೋಂಕಿತರು ಬಳಸುವ ಟವೆಲ್, ಕರವಸ್ತ್ರ ಸೇರಿದಂತೆ ವೈಯಕ್ತಿಕ ವಸ್ತುಗಳನ್ನು ಇತರರು ಬಳಸದಂತೆ ಎಚ್ಚರಿಕೆ ವಹಿಸಬೇಕು.

ವಿಶೇಷವಾಗಿ ಮಕ್ಕಳಲ್ಲಿ ಕಣ್ಣು ಕೆಂಪಾಗುವುದು ಅಥವಾ ನೀರು ಸುರಿಯುವಂತಹ ಲಕ್ಷಣಗಳು ಕಂಡುಬಂದರೆ ಪೋಷಕರು ನಿರ್ಲಕ್ಷ್ಯ ಮಾಡಬಾರದು. ಸೋಂಕು ಮತ್ತಷ್ಟು ಹರಡದಂತೆ ವೈಯಕ್ತಿಕ ಸ್ವಚ್ಛತೆ ಕಾಪಾಡಿಕೊಳ್ಳುವುದು ಮುಖ್ಯವಾಗಿದೆ.

ಇನ್ನು ಕಣ್ಣಿನಲ್ಲಿ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡ ತಕ್ಷಣ ಮೆಡಿಕಲ್ ಶಾಪ್‌ಗೆ ತೆರಳಿ ಸ್ವಯಂ ಆಗಿ ಐ ಡ್ರಾಪ್ಸ್ ಖರೀದಿಸಿ ಬಳಸುವುದು ಸರಿಯಲ್ಲ. ವೈದ್ಯರ ಸಲಹೆಯಿಲ್ಲದೆ ಯಾವುದೇ ಕಣ್ಣಿನ ಔಷಧಿ ಬಳಸಬಾರದು. ಕಣ್ಣಿನ ಸಮಸ್ಯೆ ಕಂಡುಬಂದರೆ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಪಡೆಯುವುದು ಅಗತ್ಯವಾಗಿದೆ.