ಇಸ್ಲಾಂ ಜಗದೊಡೆಯನಾದ ಅಲ್ಲಾಹನ ಧರ್ಮ. ಮಾನವರ ಮಾರ್ಗದರ್ಶನಕ್ಕಾಗಿ ಅಲ್ಲಾಹನು ಪ್ರವಾದಿಗಳ ಮೂಲಕ ನೀಡುತ್ತ ಬಂದ ಸಂದೇಶವನ್ನು ಅಂತಿಮ ಪ್ರವಾದಿ ಮುಹಮ್ಮದ್ (ಸ) ಅವರ ಮೂಲಕ ಪರಿಪೂರ್ಣಗೊಳಿಸಿದನು ಎಂಬುದು ಇಸ್ಲಾಮಿನ ನಂಬಿಕೆ.
ಮಾನವ ಕುಲದ ಇತಿಹಾಸದಲ್ಲಿ ಪ್ರೀತಿ, ಕರುಣೆ, ಸಹೋದರತ್ವ, ನ್ಯಾಯ ಮತ್ತು ಮಾನವೀಯತೆಯ ಮೌಲ್ಯಗಳನ್ನು ಸಾರಿದ ಮಹಾನ್ ದಾರ್ಶನಿಕರಲ್ಲಿ ಪ್ರವಾದಿ ಮುಹಮ್ಮದ್ (ಸ) ಅವರು ಅಗ್ರಗಣ್ಯರು. ವಿವಿಧ ಧರ್ಮಗಳ ಸದಾಶಯಗಳಂತೆ ಇಸ್ಲಾಂ ಧರ್ಮದ ಬೋಧನೆಯಲ್ಲಿಯೂ ಮಾನವೀಯ ಮೌಲ್ಯಗಳಿಗೆ ಮಹತ್ವವಿದೆ. ಪ್ರವಾದಿ (ಸ) ಅವರ ಜೀವನವನ್ನು ಅರಿತುಕೊಳ್ಳುವುದರಿಂದ ನಮ್ಮ ಬದುಕಿನ ಸತ್ವ ಮತ್ತು ಮೌಲ್ಯವನ್ನು ಹೆಚ್ಚಿಸಿಕೊಳ್ಳಬಹುದು. ಅವರ ಜೀವನ ಕೇವಲ ಮುಸ್ಲಿಮರಿಗೆ ಸೀಮಿತವಾದ ಧಾರ್ಮಿಕ ಮಾದರಿಯಲ್ಲ, ಸಮಸ್ತ ಮಾನವಕುಲಕ್ಕೆ ನೈತಿಕ ಬದುಕಿನ ದಾರಿದೀಪವಾಗಿದೆ.
ಕ್ರಿ.ಶ. 571ರಲ್ಲಿ ಅರೇಬಿಯಾದ ಮಕ್ಕಾ ನಗರದಲ್ಲಿ ಅಮೀನಾ ಮತ್ತು ಅಬ್ದುಲ್ಲಾ ದಂಪತಿಯ ಪುತ್ರನಾಗಿ ಮುಹಮ್ಮದ್ (ಸ) ಜನಿಸಿದರು. ಬಾಲ್ಯದಿಂದಲೇ ಸತ್ಯವಂತಿಕೆ, ಪ್ರಾಮಾಣಿಕತೆ ಮತ್ತು ವಿಶ್ವಾಸಾರ್ಹತೆಗೆ ಹೆಸರಾಗಿದ್ದ ಅವರು ಜನರಿಂದ ‘ಅಲ್-ಅಮೀನ್’ ಎಂಬ ಗೌರವದ ಹೆಸರಿನಿಂದ ಕರೆಯಲ್ಪಟ್ಟರು. ಸತ್ಯ ಮತ್ತು ಪ್ರಾಮಾಣಿಕತೆಯೇ ಅವರ ಜೀವನದ ಪ್ರಮುಖ ಸಂದೇಶವಾಗಿತ್ತು.
ಏಕದೇವತ್ವ ಮತ್ತು ಮಾನವ ಸಮಾನತೆ
ಪ್ರವಾದಿ (ಸ) ಅವರು ಮನುಷ್ಯರೆಲ್ಲರೂ ದೇವರ ಮುಂದೆ ಸಮಾನರು ಎಂದು ಸಾರಿದರು. ಜಾತಿ, ವರ್ಣ, ಸಂಪತ್ತು, ಅಧಿಕಾರ ಅಥವಾ ಜನ್ಮದ ಆಧಾರದ ಮೇಲೆ ಒಬ್ಬ ಮನುಷ್ಯ ಮತ್ತೊಬ್ಬನಿಗಿಂತ ಶ್ರೇಷ್ಠನಲ್ಲ ಎಂಬ ಮಾನವೀಯ ಸಂದೇಶ ನೀಡಿದರು. ಮನುಷ್ಯನ ಶ್ರೇಷ್ಠತೆ ಅವನ ಜನ್ಮದಲ್ಲಲ್ಲ, ಅವನ ಸದಾಚಾರ, ನೀತಿ ಮತ್ತು ಸತ್ಕರ್ಮಗಳಲ್ಲಿ ಇದೆ ಎಂಬುದನ್ನು ಬೋಧಿಸಿದರು.
ಕರುಣೆ ಮತ್ತು ಪ್ರೀತಿ
ಪ್ರವಾದಿ (ಸ) ಅವರ ಬದುಕಿನ ಪ್ರತಿಯೊಂದು ಹಂತದಲ್ಲೂ ಕರುಣೆ ಮತ್ತು ಪ್ರೀತಿ ಎದ್ದು ಕಾಣುತ್ತದೆ. ಬಡವರು, ಅನಾಥರು, ವಿಧವೆಯರು, ದುರ್ಬಲರು ಹಾಗೂ ಸಮಾಜದ ಅಂಚಿನಲ್ಲಿದ್ದವರ ಬಗ್ಗೆ ಅವರು ವಿಶೇಷ ಕಾಳಜಿ ಹೊಂದಿದ್ದರು. ನೆರೆಹೊರೆಯವರ ಹಕ್ಕು ಮತ್ತು ಹೊಣೆಗಾರಿಕೆಗೆ ಮಹತ್ವ ನೀಡಿದರು. ತನ್ನ ನೆರೆಯವನು ಹಸಿದಿರುವಾಗ ತಾನು ಮಾತ್ರ ಹೊಟ್ಟೆ ತುಂಬಿಸಿಕೊಳ್ಳುವುದು ನಿಜವಾದ ಮಾನವೀಯತೆಯಲ್ಲ ಎಂಬ ಸಂದೇಶವನ್ನು ಸಾರಿದರು.
ಕ್ಷಮೆ ಅವರ ಜೀವನದ ಮತ್ತೊಂದು ಮಹಾನ್ ಗುಣ. ತಮ್ಮ ವಿರುದ್ಧ ಅನ್ಯಾಯ ಮಾಡಿದವರ ಮೇಲೂ ದ್ವೇಷ ಬೆಳೆಸದೆ, ಸಾಧ್ಯವಾದಲ್ಲಿ ಕ್ಷಮೆ ಮತ್ತು ಸೌಹಾರ್ದತೆಯ ದಾರಿಯನ್ನು ಆರಿಸಿದರು. ಮಕ್ಕಾ ವಿಜಯದ ಸಂದರ್ಭದಲ್ಲಿ ತಮ್ಮ ಮೇಲೆ ದೌರ್ಜನ್ಯ ನಡೆಸಿದವರಿಗೂ ಕ್ಷಮೆ ತೋರಿದ ಘಟನೆ ಮಾನವ ಇತಿಹಾಸದಲ್ಲಿನ ಅಪೂರ್ವ ಕ್ಷಮೆಯ ಸಂದೇಶವಾಗಿದೆ.
ಮಹಿಳೆಯರು, ಬಡವರು ಮತ್ತು ಅನಾಥರ ಕಾಳಜಿ
ಆ ಕಾಲದ ಸಮಾಜದಲ್ಲಿ ಮಹಿಳೆಯರ ಹಕ್ಕುಗಳು ನಿರ್ಲಕ್ಷ್ಯಕ್ಕೊಳಗಾಗಿದ್ದ ಸಂದರ್ಭದಲ್ಲಿ, ಪ್ರವಾದಿ (ಸ) ಅವರು ಮಹಿಳೆಯರ ಗೌರವ, ಹಕ್ಕು ಮತ್ತು ಮಾನವೀಯ ಸ್ಥಾನಮಾನವನ್ನು ಒತ್ತಿಹೇಳಿದರು. ಹೆಣ್ಣು ಮಕ್ಕಳನ್ನು ಕೀಳಾಗಿ ಕಾಣುವ ಮನೋಭಾವವನ್ನು ವಿರೋಧಿಸಿದರು. ಕುಟುಂಬದಲ್ಲಿ ಪ್ರೀತಿ, ಗೌರವ ಮತ್ತು ಜವಾಬ್ದಾರಿಯನ್ನು ಬೆಳೆಸುವಂತೆ ಬೋಧಿಸಿದರು.
ಅನಾಥರ ಆಸ್ತಿ ಕಬಳಿಸುವುದು, ಬಡವರನ್ನು ಶೋಷಿಸುವುದು, ತೂಕ-ಅಳತೆಯಲ್ಲಿ ಮೋಸ ಮಾಡುವುದು ಹಾಗೂ ವ್ಯಾಪಾರದಲ್ಲಿ ವಂಚಿಸುವುದನ್ನು ಖಂಡಿಸಿದರು. ದಾನ, ಝಕಾತ್ ಮತ್ತು ನೆರವಿನ ಮೂಲಕ ಸಮಾಜದ ದುರ್ಬಲ ವರ್ಗಗಳ ಬದುಕಿನಲ್ಲಿ ಬೆಳಕು ಮೂಡಿಸುವ ಸಂದೇಶ ನೀಡಿದರು.
ಶಾಂತಿ, ಜ್ಞಾನ ಮತ್ತು ಸಹಬಾಳ್ವೆ
ಪ್ರವಾದಿ (ಸ) ಅವರ ಬೋಧನೆಯಲ್ಲಿ ಶಾಂತಿ ಮತ್ತು ನ್ಯಾಯಕ್ಕೆ ಮಹತ್ವವಿತ್ತು. ವಿವಿಧ ಸಮುದಾಯಗಳ ನಡುವೆ ಪರಸ್ಪರ ಗೌರವ, ನ್ಯಾಯಯುತ ಸಂಬಂಧ ಮತ್ತು ಶಾಂತಿಯುತ ಸಹಬಾಳ್ವೆಯನ್ನು ಅವರು ಪ್ರೋತ್ಸಾಹಿಸಿದರು. ಮದೀನಾದಲ್ಲಿ ವಿವಿಧ ಸಮುದಾಯಗಳೊಂದಿಗೆ ಸಾಮಾಜಿಕ ಒಪ್ಪಂದದ ಮೂಲಕ ಬದುಕನ್ನು ವ್ಯವಸ್ಥಿತಗೊಳಿಸಿದ ಅವರ ಪ್ರಯತ್ನವು ಬಹುಸಾಂಸ್ಕೃತಿಕ ಸಮಾಜದಲ್ಲಿ ಸಹಬಾಳ್ವೆಯ ಮಹತ್ವವನ್ನು ತೋರಿಸುತ್ತದೆ.
ಜ್ಞಾನಾರ್ಜನೆಗೂ ಅವರು ಮಹತ್ವ ನೀಡಿದರು. ಓದು, ಚಿಂತನೆ ಮತ್ತು ಜ್ಞಾನದಿಂದ ಮನುಷ್ಯ ತನ್ನ ಬದುಕನ್ನು ಉತ್ತಮಗೊಳಿಸಬೇಕು ಎಂಬ ಸಂದೇಶ ಅವರ ಬೋಧನೆಯ ಪ್ರಮುಖ ಭಾಗವಾಗಿತ್ತು. ಜ್ಞಾನವು ವೈಯಕ್ತಿಕ ಪ್ರಗತಿಗಷ್ಟೇ ಅಲ್ಲ, ಮಾನವ ಕಲ್ಯಾಣಕ್ಕೂ ಬಳಕೆಯಾಗಬೇಕು ಎಂಬ ದೃಷ್ಟಿಕೋನ ಅವರ ಜೀವನದಲ್ಲಿತ್ತು.
ಪ್ರಾಣಿಗಳು, ಸಸ್ಯಗಳು ಮತ್ತು ಪ್ರಕೃತಿಯ ಬಗ್ಗೆ ಕರುಣೆ ತೋರುವ ಸಂದೇಶವೂ ಅವರ ಬೋಧನೆಯಲ್ಲಿ ಕಾಣುತ್ತದೆ. ಭೂಮಿಯ ಮೇಲಿನ ಪ್ರತಿಯೊಂದು ಜೀವಿಯನ್ನೂ ಗೌರವದಿಂದ ಕಾಣಬೇಕು ಎಂಬ ಮನೋಭಾವ ಇಂದಿನ ಪರಿಸರ ಸಂಕಷ್ಟದ ಕಾಲದಲ್ಲಿಯೂ ಅತ್ಯಂತ ಪ್ರಸ್ತುತವಾಗಿದೆ.
ಇಂದಿನ ಸಮಾಜಕ್ಕೆ ಸಂದೇಶ
ಇಂದು ಜಗತ್ತು ಧರ್ಮ, ಜಾತಿ, ಭಾಷೆ, ದೇಶ ಮತ್ತು ವಿಚಾರಧಾರೆಗಳ ಹೆಸರಿನಲ್ಲಿ ವಿಭಜನೆಯತ್ತ ಸಾಗುತ್ತಿರುವ ಸಂದರ್ಭದಲ್ಲಿ ಪ್ರವಾದಿ (ಸ) ಅವರ ಜೀವನ ಸಂದೇಶ ಮತ್ತಷ್ಟು ಪ್ರಸ್ತುತವಾಗುತ್ತದೆ.
ದ್ವೇಷಕ್ಕೆ ಬದಲಾಗಿ ಪ್ರೀತಿ,
ಹಿಂಸೆಗೆ ಬದಲಾಗಿ ಶಾಂತಿ,
ಅನ್ಯಾಯಕ್ಕೆ ಬದಲಾಗಿ ನ್ಯಾಯ,
ಅಹಂಕಾರಕ್ಕೆ ಬದಲಾಗಿ ವಿನಯ,
ವೈರತ್ವಕ್ಕೆ ಬದಲಾಗಿ ಕ್ಷಮೆ,
ಸ್ವಾರ್ಥಕ್ಕೆ ಬದಲಾಗಿ ಸೇವೆ — ಇವೇ ಅವರ ಜೀವನದ ಮಹತ್ವದ ಪಾಠಗಳು.
ಪ್ರವಾದಿ (ಸ) ಅವರನ್ನು ಗೌರವಿಸುವ ಅತ್ಯುತ್ತಮ ಮಾರ್ಗವೆಂದರೆ ಕೇವಲ ಅವರ ಹೆಸರನ್ನು ಸ್ಮರಿಸುವುದಲ್ಲ, ಅವರು ಪ್ರತಿಪಾದಿಸಿದ ಮಾನವೀಯ ಮೌಲ್ಯಗಳನ್ನು ನಮ್ಮ ನಿತ್ಯ ಬದುಕಿನಲ್ಲಿ ಅಳವಡಿಸಿಕೊಳ್ಳುವುದು. ಇಸ್ಲಾಂ ಧರ್ಮದ ಅಂತರಂಗದಲ್ಲಿ ಶಾಂತಿ, ನ್ಯಾಯ, ಕರುಣೆ ಮತ್ತು ಸೌಹಾರ್ದತೆಗೆ ಮಹತ್ವವಿದೆ. ನ್ಯಾಯಯುತ ಮಾರ್ಗವಿಲ್ಲದೆ ಶಾಂತಿಯನ್ನು ಸಾಧಿಸಲು ಸಾಧ್ಯವಿಲ್ಲ ಎಂಬ ಸಂದೇಶವೂ ಅವರ ಬೋಧನೆಯಲ್ಲಿದೆ.
ಪ್ರವಾದಿ (ಸ) ಅವರ ಜೀವನ ಒಂದು ಧರ್ಮದ ಇತಿಹಾಸ ಮಾತ್ರವಲ್ಲ, ಅದು ಮಾನವೀಯತೆಯ ವಿಶ್ವವಿದ್ಯಾಲಯ. ಸತ್ಯ, ನ್ಯಾಯ, ಕರುಣೆ, ಸಹನೆ, ಕ್ಷಮೆ, ಸಹೋದರತ್ವ ಮತ್ತು ಶಾಂತಿಯ ಮೌಲ್ಯಗಳನ್ನು ಅವರು ತಮ್ಮ ಬದುಕಿನ ಮೂಲಕ ಸಾರಿದರು. ಸಹನೆ, ಪ್ರೀತಿ, ಕ್ಷಮೆ ಮತ್ತು ನ್ಯಾಯದಿಂದ ತಮ್ಮ ಹೃದಯವನ್ನು ಬೆಳಗಿಸಿಕೊಂಡು, ಆ ಬೆಳಕಿನ ಮೂಲಕ ಅಲ್ಲಾಹನ ಸಂದೇಶವನ್ನು ಜನಸಾಮಾನ್ಯರಿಗೆ ತಲುಪಿಸಿದರು.
ಇಂದಿನ ಜಗತ್ತಿಗೆ ಬೇಕಾಗಿರುವುದು ದ್ವೇಷದ ಗೋಡೆಗಳಲ್ಲ—ಪ್ರೀತಿಯ ಸೇತುವೆಗಳು. ಭಾರತವೆಂಬ ಹಡಗಿಗೆ ಬುದ್ಧನ ಕರುಣೆ, ಪ್ರವಾದಿ (ಸ) ಅವರ ಸಹೋದರತೆ, ಬಸವಣ್ಣನವರ ಸಮಾನತೆಯ ಚಿಂತನೆ, ಗಾಂಧೀಜಿಯವರ ಶಾಂತಿ ಮತ್ತು ಅಂಬೇಡ್ಕರ್ ಅವರ ಸಾಮಾಜಿಕ ನ್ಯಾಯದ ಆಶಯಗಳು ದಿಕ್ಕುದೀಪಗಳಾಗಬೇಕು. ಹಲವು ದಾರ್ಶನಿಕರ ಚಿಂತನೆಗಳ ಕುಲುಮೆಯಲ್ಲಿ ನಮ್ಮ ಸಂವಿಧಾನ ರೂಪುಗೊಂಡಿದೆ. ಮನುಷ್ಯನನ್ನು ಮನುಷ್ಯನಾಗಿ ಕಾಣುವ ಹೃದಯವೇ ಈ ದೇಶದ ನಿಜವಾದ ಶಕ್ತಿ.
ಪ್ರವಾದಿ (ಸ) ಅವರ ಯಾವುದೇ ಮೂರ್ತಿ ಅಥವಾ ಭಾವಚಿತ್ರವಿಲ್ಲದಿದ್ದರೂ, ಕೋಟ್ಯಂತರ ಅನುಯಾಯಿಗಳ ಹೃದಯದಲ್ಲಿ ಅವರು ವಿರಾಜಮಾನರಾಗಿದ್ದಾರೆ. ಅವರ ಜೀವನ ಸಂದೇಶ ಭಾವೈಕ್ಯತೆ ಮತ್ತು ಮಾನವೀಯತೆಯ ಬೀಜ ಬಿತ್ತುತ್ತದೆ.
“ಮಾನವೀಯತೆಯೇ ಮನುಷ್ಯನ ನಿಜವಾದ ಧರ್ಮ” ಎಂಬ ಆಶಯವನ್ನು ಬದುಕಿನಲ್ಲಿ ಸಾಕಾರಗೊಳಿಸುವುದೇ ಪ್ರವಾದಿ ಮುಹಮ್ಮದ್ (ಸ) ಅವರ ಜೀವನಕ್ಕೆ ಸಲ್ಲಿಸುವ ಶ್ರೇಷ್ಠ ಗೌರವ. ಬಹುತ್ವದ ಭಾರತದಲ್ಲಿ ಎಲ್ಲರೂ ಸಮಾನವಾಗಿ ಬಾಳಿ ಬದುಕಲು ನಮ್ಮ ಸಂಬಂಧಗಳು ಗಟ್ಟಿಯಾಗಬೇಕು. ಸ್ವಧರ್ಮನಿಷ್ಠೆ ಮತ್ತು ಪರಧರ್ಮ ಸಹಿಷ್ಣುತೆಯೊಂದಿಗೆ ಬದುಕುವ ಮಾರ್ಗವನ್ನು ಅಳವಡಿಸಿಕೊಳ್ಳಬೇಕು. ಆಗಲೇ ಈದ್ ಮಿಲಾದ್ ಆಚರಣೆಗೆ ನಿಜವಾದ ಅರ್ಥ ಸಿಗುತ್ತದೆ.

— ಎ.ಎಸ್. ಮಕಾನದಾರ
ಕವಿ, ಪ್ರಕಾಶಕರು
ನಿರಂತರ ಪ್ರಕಾಶನ, ಗದಗ