Home Blog

8 ವರ್ಷಗಳಾದರೂ ನ್ಯಾಯಕ್ಕಾಗಿ ಹೋರಾಟ ಮುಂದುವರಿದಿದೆ: ಸಂಜೀವ್ ಭಟ್ ಪುತ್ರ-ಪುತ್ರಿ

0

ನವದೆಹಲಿ: ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಅವರ ಬಂಧನಕ್ಕೆ ಎಂಟು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಅವರ ಪುತ್ರಿ ಆಕಾಶಿ ಭಟ್ ಮತ್ತು ಪುತ್ರ ಶಂತನು ಭಟ್ ಅವರು ಸೋಶಿಯಲ್ ಮೀಡಿಯದಲ್ಲಿ ಭಾವುಕ ಸಂದೇಶ ಹಂಚಿಕೊಂಡಿದ್ದು, ತಂದೆಯ ಬಿಡುಗಡೆ ಹಾಗೂ ನ್ಯಾಯಕ್ಕಾಗಿ ತಮ್ಮ ಹೋರಾಟ ಮುಂದುವರಿಯಲಿದೆ ಎಂದು ಹೇಳಿದ್ದಾರೆ.

ಸೆ.5, 2018ರಂದು ತಮ್ಮ ಕುಟುಂಬದ ಪಾಲಿಗೆ ಕರಾಳ ದಿನವಾಗಿತ್ತು. ಅಂದು ತಮ್ಮ ತಂದೆಯನ್ನು ಬಂಧಿಸಿದ ಪರಿಣಾಮ ಕುಟುಂಬವೇ ಛಿದ್ರಗೊಂಡಿತು ಎಂದು ಅವರು ಆರೋಪಿಸಿದ್ದಾರೆ. ಕಳೆದ ಎಂಟು ವರ್ಷಗಳಲ್ಲಿ ಒಟ್ಟು 2,923 ದಿನಗಳನ್ನು ತಂದೆಯಿಂದ ದೂರ ಕಳೆದಿದ್ದೇವೆ. ಕ್ಯಾಲೆಂಡರ್‌ನಲ್ಲಿ ಎಂಟು ವರ್ಷಗಳು ಕಳೆದಿದ್ದರೂ, ಆ ಸೆಪ್ಟೆಂಬರ್ ಬೆಳಗಿನ ಘಟನೆ ತಮ್ಮ ಮನಸ್ಸಿನಲ್ಲಿ ಇನ್ನೂ ಹಾಗೆಯೇ ಉಳಿದಿದೆ ಎಂದು ಅವರು ಹೇಳಿದ್ದಾರೆ.

ತಮ್ಮ ತಂದೆ ಅಧಿಕಾರದ ಎದುರು ಮೌನವಾಗಿರುವ ಬದಲು ಸತ್ಯ ಮತ್ತು ಆತ್ಮಸಾಕ್ಷಿಯ ಪರವಾಗಿ ನಿಲ್ಲುವುದನ್ನು ಆಯ್ಕೆ ಮಾಡಿಕೊಂಡಿದ್ದರು. ಅಧಿಕಾರವನ್ನು ಪ್ರಶ್ನಿಸುವುದು ಅಪಾಯಕಾರಿಯಾಗಿದ್ದರೂ, ತಮ್ಮ ವೃತ್ತಿ, ಗೌರವ, ಸ್ವಾತಂತ್ರ್ಯ ಹಾಗೂ ವೈಯಕ್ತಿಕ ಬದುಕಿನ ಮೇಲಿನ ಪರಿಣಾಮಗಳನ್ನು ಅರಿತಿದ್ದರೂ ಅವರು ತಮ್ಮ ನಿಲುವಿನಿಂದ ಹಿಂದೆ ಸರಿಯಲಿಲ್ಲ ಎಂದು ಪುತ್ರ-ಪುತ್ರಿ ತಿಳಿಸಿದ್ದಾರೆ.

‘ಅದು ಕೇವಲ ಐಪಿಎಸ್ ಅಧಿಕಾರಿ ಅಲ್ಲ, ನಮ್ಮ ತಂದೆ’

ಸಂಜೀವ್ ಭಟ್ ಅವರು ಕೇವಲ ಪತ್ರಿಕೆಗಳಲ್ಲಿ ಕಾಣಿಸಿಕೊಳ್ಳುವ ಹೆಸರು ಅಥವಾ ಐಪಿಎಸ್ ಅಧಿಕಾರಿಯಷ್ಟೇ ಅಲ್ಲ. ಅವರು ತಮ್ಮ ತಂದೆಯಾಗಿದ್ದು, ಸ್ವಂತ ನೆಮ್ಮದಿ, ವೃತ್ತಿ ಮತ್ತು ಸ್ವಾತಂತ್ರ್ಯಕ್ಕಿಂತ ಕೆಲವು ತತ್ವಗಳು ದೊಡ್ಡವು ಎಂಬುದನ್ನು ನಮಗೆ ಕಲಿಸಿದ ವ್ಯಕ್ತಿ ಎಂದು ಅವರು ಹೇಳಿದ್ದಾರೆ.

ರಾಜಕೀಯ ಅಧಿಕಾರ ಮತ್ತು ಆಡಳಿತ ವ್ಯವಸ್ಥೆಯನ್ನು ಪ್ರಶ್ನಿಸಿದ ಕಾರಣ ತಮ್ಮ ತಂದೆ ವೈಯಕ್ತಿಕವಾಗಿ ದೊಡ್ಡ ಬೆಲೆ ತೆತ್ತಿದ್ದಾರೆ. ದ್ವೇಷ ಮತ್ತು ಹಿಂಸೆಗೆ ಒಳಗಾದ ಜನರ ಪರವಾಗಿ ಧ್ವನಿ ಎತ್ತಲು ಅವರು ತಮ್ಮ ವೃತ್ತಿ ಹಾಗೂ ಸ್ವಾತಂತ್ರ್ಯವನ್ನೇ ಪಣಕ್ಕಿಟ್ಟಿದ್ದರು ಎಂದು ಆಕಾಶಿ ಮತ್ತು ಶಂತನು ಭಟ್ ಹೇಳಿದ್ದಾರೆ.

ಎಂಟು ವರ್ಷಗಳ ಅವಧಿಯಲ್ಲಿ ತಮ್ಮ ತಂದೆಯ ಸ್ವಾತಂತ್ರ್ಯ ಕಸಿದುಕೊಳ್ಳಲಾಗಿದೆ, ವೃತ್ತಿ ನಾಶವಾಗಿದೆ ಹಾಗೂ ಕುಟುಂಬದಿಂದ ಅಮೂಲ್ಯ ವರ್ಷಗಳು ದೂರವಾಗಿವೆ. ಆದರೆ ಅವರ ಆತ್ಮಸಾಕ್ಷಿಯನ್ನು ಮಾತ್ರ ಯಾರಿಂದಲೂ ಬಂಧಿಸಲು ಸಾಧ್ಯವಾಗಿಲ್ಲ ಎಂದು ಅವರು ಹೇಳಿದ್ದಾರೆ.

ಸಂಸ್ಥೆಗಳ ಸ್ವಾಯತ್ತತೆ ಕುರಿತು ಪ್ರಶ್ನೆ

ಪ್ರಜಾಪ್ರಭುತ್ವ ಒಂದೇ ಕ್ಷಣದಲ್ಲಿ ನಾಶವಾಗುವುದಿಲ್ಲ. ಅಧಿಕಾರವನ್ನು ನಿಯಂತ್ರಿಸಬೇಕಾದ ಸಂಸ್ಥೆಗಳು ಅದೇ ಅಧಿಕಾರದ ಪ್ರಭಾವಕ್ಕೆ ಒಳಗಾದಾಗ, ನ್ಯಾಯಾಂಗವು ದುರ್ಬಲರ ಕೊನೆಯ ಆಶ್ರಯವಾಗಿ ಕಾರ್ಯನಿರ್ವಹಿಸಲು ವಿಫಲವಾದಾಗ ಹಾಗೂ ಕಾನೂನು ಪ್ರಕ್ರಿಯೆ ದುರುಪಯೋಗಕ್ಕೆ ಒಳಗಾದಾಗ ಪ್ರಜಾಪ್ರಭುತ್ವದ ಅಡಿಪಾಯ ನಿಧಾನವಾಗಿ ದುರ್ಬಲವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ನ್ಯಾಯಾಂಗದ ಸ್ವಾತಂತ್ರ್ಯ, ಸಂಸ್ಥೆಗಳ ಸಮಗ್ರತೆ ಮತ್ತು ಕಾನೂನಿನ ಆಳ್ವಿಕೆ ಕೇವಲ ಸಂವಿಧಾನದ ಪದಗಳಲ್ಲ. ಅವು ಸಾಮಾನ್ಯ ನಾಗರಿಕರನ್ನು ರಾಜ್ಯದ ಅತಿಯಾದ ಅಧಿಕಾರದಿಂದ ರಕ್ಷಿಸುವ ಪ್ರಮುಖ ಕವಚಗಳಾಗಿವೆ. ಈ ಕವಚಗಳನ್ನು ಉಳಿಸಿಕೊಳ್ಳಲು ಜನರು ಪ್ರಶ್ನಿಸುವ ಧೈರ್ಯ ಹೊಂದಿರಬೇಕು ಎಂದು ಅವರು ಹೇಳಿದ್ದಾರೆ.

ಎಂಟು ವರ್ಷಗಳಿಂದ ತಮ್ಮ ತಂದೆಯ ವಿಚಾರದಲ್ಲಿ ಅಧಿಕಾರದ ವ್ಯವಸ್ಥೆ ಮತ್ತು ವಿವಿಧ ಸಂಸ್ಥೆಗಳ ನಡೆಗಳನ್ನು ಗಮನಿಸುತ್ತಿದ್ದೇವೆ. ತಮ್ಮ ತಂದೆಯನ್ನು ಮುರಿಯಲು ವ್ಯವಸ್ಥಿತ ಪ್ರಯತ್ನ ನಡೆದಿದ್ದರೂ, ಅವರು ಇನ್ನೂ ತಮ್ಮ ನಿಲುವಿನಲ್ಲಿ ಅಚಲವಾಗಿ ನಿಂತಿದ್ದಾರೆ ಎಂದು ಪುತ್ರ-ಪುತ್ರಿ ತಿಳಿಸಿದ್ದಾರೆ.

‘ಮೌನಕ್ಕೆ ಬೆಲೆ ತೆರಬೇಕಾಗುತ್ತದೆ’

ಅಧಿಕಾರವನ್ನು ಪ್ರಶ್ನಿಸಲು ಜನರು ಹೆದರಿ ಮೌನವಾಗುವುದು ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ. ಪ್ರಶ್ನಿಸುವ ಮನೋಭಾವ ಕಳೆದುಕೊಂಡರೆ ಸ್ವಾತಂತ್ರ್ಯವೂ ದುರ್ಬಲವಾಗುತ್ತದೆ. ಆದ್ದರಿಂದ ಅನ್ಯಾಯದ ವಿರುದ್ಧ ಧ್ವನಿ ಎತ್ತುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ ಎಂದು ಅವರು ಹೇಳಿದ್ದಾರೆ.

ಇತ್ತೀಚೆಗೆ ದೇಶದ ವಿವಿಧ ಭಾಗಗಳಲ್ಲಿ ಜನರು ಮತ್ತೆ ಪ್ರಶ್ನಿಸಲು ಆರಂಭಿಸಿದ್ದಾರೆ. ಪ್ರಚಾರ, ಏಕಪಕ್ಷೀಯ ನಿರೂಪಣೆ ಹಾಗೂ ಭಯದ ವಾತಾವರಣವನ್ನು ಮೀರಿ ಜನರು ತಮ್ಮದೇ ಆದ ಪ್ರಶ್ನೆಗಳನ್ನು ಕೇಳುವ ಧೈರ್ಯ ತೋರುತ್ತಿದ್ದಾರೆ. ತಲೆತಗ್ಗಿಸಿ ಬದುಕುವಂತೆ ಕಲಿತಿದ್ದ ಹೊಸ ತಲೆಮಾರು ಇದೀಗ ತಲೆ ಎತ್ತಿ ಪ್ರಶ್ನಿಸುವತ್ತ ಹೆಜ್ಜೆ ಇಡುತ್ತಿರುವುದು ಆಶಾದಾಯಕ ಬೆಳವಣಿಗೆ ಎಂದು ಅವರು ಹೇಳಿದ್ದಾರೆ.

ಒಬ್ಬ ವ್ಯಕ್ತಿಯ ಧೈರ್ಯ ದೊಡ್ಡ ಅಧಿಕಾರ ವ್ಯವಸ್ಥೆಯ ಎದುರು ಸಣ್ಣದಾಗಿ ಕಾಣಬಹುದು. ಆದರೆ ಇತಿಹಾಸದಲ್ಲಿ ಅಧಿಕಾರಕ್ಕೆ ಬಗ್ಗದವರ ಹೋರಾಟವೇ ನೆನಪಿನಲ್ಲಿ ಉಳಿಯುತ್ತದೆ. ಒಬ್ಬರ ಧೈರ್ಯ ಲಕ್ಷಾಂತರ ಜನರಲ್ಲಿ ಧೈರ್ಯ ಮೂಡಿಸಬಲ್ಲದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

‘2,923 ದಿನಗಳ ನೋವು; ಹೋರಾಟ ಮಾತ್ರ ನಿಲ್ಲದು’

ಸೆ.5 ಕೇವಲ 2,923 ದಿನಗಳ ವಿಭಜನೆಯ ದಿನವಲ್ಲ; ನ್ಯಾಯಕ್ಕಾಗಿ ಎಂಟು ವರ್ಷಗಳಿಂದ ನಡೆಯುತ್ತಿರುವ ನಿರಂತರ ಹೋರಾಟದ ಸಂಕೇತವಾಗಿದೆ ಎಂದು ಆಕಾಶಿ ಮತ್ತು ಶಂತನು ಭಟ್ ಹೇಳಿದ್ದಾರೆ.

ಸಂಜೀವ್ ಭಟ್ ಅವರು ಅಧಿಕಾರವನ್ನು ಎದುರಿಸಲು ತೋರಿದ ಧೈರ್ಯವನ್ನು ಜನರು ನೆನಪಿಸಿಕೊಳ್ಳಬೇಕು. ನಾಗರಿಕರನ್ನು ರಕ್ಷಿಸಬೇಕಾದ ಸಂಸ್ಥೆಗಳು ಅವರ ವಿರುದ್ಧವೇ ಬಳಸಲ್ಪಟ್ಟರೆ ಏನಾಗಬಹುದು ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ನ್ಯಾಯ ವಿಳಂಬವಾದಾಗ ಅದು ಕೇವಲ ಸಮಯದ ನಷ್ಟವಲ್ಲ; ನ್ಯಾಯಕ್ಕಾಗಿ ಸಮಾಜ ಎಷ್ಟು ಧೈರ್ಯದಿಂದ ಧ್ವನಿ ಎತ್ತುತ್ತದೆ ಎಂಬುದರ ಪರೀಕ್ಷೆಯೂ ಆಗಿದೆ ಎಂದು ಅವರು ಹೇಳಿದ್ದಾರೆ.

ತಮ್ಮ ತಂದೆ ದೇಶದ ಜಾತ್ಯತೀತ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ರಕ್ಷಿಸಲು ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದಾರೆ. ಅವರ ಧ್ವನಿ ಏಕಾಂಗಿಯಾಗದಂತೆ ಎಲ್ಲರೂ ಒಗ್ಗಟ್ಟಾಗಿ ನಿಲ್ಲಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಎಂಟು ವರ್ಷಗಳ ನಂತರವೂ ಸಂಜೀವ್ ಭಟ್ ಅವರು ಧೈರ್ಯ ಕಳೆದುಕೊಂಡಿಲ್ಲ. ತಲೆತಗ್ಗಿಸದೆ, ತಮ್ಮ ಆತ್ಮಸಾಕ್ಷಿಯನ್ನು ಕಾಪಾಡಿಕೊಂಡು, ಹೋರಾಟ ಮುಂದುವರಿಸಿದ್ದಾರೆ. ‘ನಾವು ಕೂಡ ಬಗ್ಗುವುದಿಲ್ಲ, ಮೌನವಾಗುವುದಿಲ್ಲ, ಶರಣಾಗುವುದಿಲ್ಲ. ನ್ಯಾಯಕ್ಕಾಗಿ ನಮ್ಮ ಹೋರಾಟ ಮುಂದುವರಿಯಲಿದೆ’ ಎಂದು ಆಕಾಶಿ ಭಟ್ ಮತ್ತು ಶಂತನು ಭಟ್ ತಿಳಿಸಿದ್ದಾರೆ.

ಶೈನ್ ಶೆಟ್ಟಿ ‘ಶಂಕರಾಭರಣ’ ಬಸ್ ಡ್ರೈವರ್; ಹಾರರ್ ಕಾಮಿಡಿ ಸಿನಿಮಾದ ಟೀಸರ್ ರಿಲೀಸ್, ನವೆಂಬರ್ 20ಕ್ಕೆ ತೆರೆಗೆ

0

ಸ್ಯಾಂಡಲ್‌ವುಡ್‌ನಲ್ಲಿ ವಿಭಿನ್ನ ಕಥಾಹಂದರದ ಸಿನಿಮಾಗಳ ಮೂಲಕ ಗಮನ ಸೆಳೆಯುತ್ತಿರುವ ನಟ ಶೈನ್ ಶೆಟ್ಟಿ ಅಭಿನಯದ ‘ಶಂಕರಾಭರಣ’ ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. ಈ ಹಿಂದೆ ‘ಶಂಕರಾಭರಣ’ ಹೆಸರಿನ ಬಸ್ ಪೋಸ್ಟರ್ ಮೂಲಕ ಸಿನಿಪ್ರೇಕ್ಷಕರ ಗಮನ ಸೆಳೆದಿದ್ದ ಚಿತ್ರತಂಡ, ಇದೀಗ ಟೀಸರ್ ಬಿಡುಗಡೆ ಮಾಡುವ ಮೂಲಕ ಸಿನಿಮಾದ ಪ್ರಮೋಷನ್‌ಗೆ ಚಾಲನೆ ನೀಡಿದೆ. ಸಿನಿಮಾ ನವೆಂಬರ್ 20ರಂದು ತೆರೆಗೆ ಬರಲು ಸಜ್ಜಾಗಿದೆ.

‘ಶಂಕರಾಭರಣ’ ಸಿನಿಮಾದಲ್ಲಿ ಶೈನ್ ಶೆಟ್ಟಿ ಬಸ್ ಚಾಲಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಶಂಕರಾಭರಣ ಎಂಬ ಬಸ್‌ನ ಚಾಲಕನಾಗಿ ಜೀವನ ಸಾಗಿಸುವ ಸಾಮಾನ್ಯ ವ್ಯಕ್ತಿಯ ಪಾತ್ರವನ್ನು ಶೈನ್ ನಿರ್ವಹಿಸಿದ್ದಾರೆ. ಸಿನಿಮಾದಲ್ಲಿ ನಾಯಕ, ನಾಯಕಿಯಷ್ಟೇ ಅಲ್ಲದೆ ಬಸ್ ಕೂಡ ಪ್ರಮುಖ ಪಾತ್ರ ವಹಿಸಲಿದೆ ಎನ್ನುವುದು ಚಿತ್ರದ ವಿಶೇಷತೆ.

ಈ ಸಿನಿಮಾಗೆ ಸುಮಂತ್ ಭಟ್ ಆಕ್ಷನ್ ಕಟ್ ಹೇಳಿದ್ದಾರೆ. ‘ಏಕಂ’ ವೆಬ್ ಸಿರೀಸ್ ಹಾಗೂ ರಾಷ್ಟ್ರ ಪ್ರಶಸ್ತಿ ಪಡೆದ ‘ಮಿಥ್ಯ’ ಫೀಚರ್ ಸಿನಿಮಾ ನಿರ್ದೇಶಿಸಿರುವ ಸುಮಂತ್ ಭಟ್, ಇದೇ ಮೊದಲ ಬಾರಿಗೆ ಔಟ್ ಅಂಡ್ ಔಟ್ ಕಮರ್ಷಿಯಲ್ ಸಿನಿಮಾವೊಂದನ್ನು ನಿರ್ದೇಶಿಸಿದ್ದಾರೆ. ‘ಶಂಕರಾಭರಣ’ ಹಾರರ್ ಕಾಮಿಡಿ ಸಿನಿಮಾವಾಗಿದ್ದು, ಟೀಸರ್ ಚಿತ್ರದ ವಿಭಿನ್ನ ಕಥಾಹಂದರದ ಬಗ್ಗೆ ಕುತೂಹಲ ಮೂಡಿಸಿದೆ.

‘ಶಂಕರಾಭರಣ’ ಸಿನಿಮಾದ ಕಥೆಯನ್ನೂ ಶೈನ್ ಶೆಟ್ಟಿ ಅವರೇ ಬರೆದಿದ್ದಾರೆ. ತಮ್ಮ ಜೀವನದಲ್ಲಿ ಹಾಗೂ ಸುತ್ತಮುತ್ತ ಕಂಡ ಕೆಲವು ಅನುಭವಗಳನ್ನು ಆಧರಿಸಿ ಕಥೆಯನ್ನು ರೂಪಿಸಿರುವುದಾಗಿ ಶೈನ್ ತಿಳಿಸಿದ್ದಾರೆ. ಅವರ ಕಥೆಗೆ ನಿರ್ದೇಶಕ ಸುಮಂತ್ ಭಟ್ ದೃಶ್ಯ ರೂಪ ನೀಡಿದ್ದಾರೆ.

ನಟನೆ ಮತ್ತು ಕಥೆಯ ಜತೆಗೆ ಶೈನ್ ಶೆಟ್ಟಿ ನಿರ್ಮಾಣದ ಜವಾಬ್ದಾರಿಯನ್ನೂ ಹೊತ್ತಿದ್ದಾರೆ. ‘ಶಂಕರಾಭರಣ’ ಸಿನಿಮಾ ಮೂಲಕ ಅವರು ನಿರ್ಮಾಪಕರಾಗಿಯೂ ಚಿತ್ರರಂಗಕ್ಕೆ ಹೆಜ್ಜೆ ಇಡುತ್ತಿದ್ದಾರೆ. ರಂಗಸ್ಥಳ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ದಿವಾಕರ್ ಶೆಟ್ಟಿ ಹಾಗೂ ಶೈನ್ ಶೆಟ್ಟಿ ಜಂಟಿಯಾಗಿ ಸಿನಿಮಾವನ್ನು ನಿರ್ಮಿಸಿದ್ದಾರೆ.

ಕರಾವಳಿ ಭಾಗದಿಂದ ಹಲವು ನಿರ್ಮಾಣ ಸಂಸ್ಥೆಗಳು ಈಗಾಗಲೇ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿವೆ. ರಕ್ಷಿತ್ ಶೆಟ್ಟಿ ಅವರ ಪರಂವ್ಹ ಸ್ಟುಡಿಯೋಸ್, ರಾಜ್ ಬಿ ಶೆಟ್ಟಿ ಅವರ ಲಾಫಿಂಗ್ ಬುದ್ಧ ಹಾಗೂ ರಿಷಬ್ ಶೆಟ್ಟಿ ಫಿಲ್ಮ್ಸ್‌ನಂತಹ ಸಂಸ್ಥೆಗಳ ಸಾಲಿಗೆ ಇದೀಗ ಶೈನ್ ಶೆಟ್ಟಿ ಅವರ ರಂಗಸ್ಥಳ ಸ್ಟುಡಿಯೋಸ್ ಕೂಡ ಸೇರ್ಪಡೆಯಾಗುತ್ತಿದೆ. ಉತ್ತಮ ಸಿನಿಮಾಗಳನ್ನು ನಿರ್ಮಾಣ ಮಾಡುವ ಉದ್ದೇಶ ಹೊಂದಿರುವ ರಂಗಸ್ಥಳ ಸ್ಟುಡಿಯೋಸ್‌ನ ಮೊದಲ ಹೆಜ್ಜೆ ‘ಶಂಕರಾಭರಣ’.

ಸಿನಿಮಾದಲ್ಲಿ ನಾಯಕಿಯಾಗಿ ತನ್ವಿ ರಾವ್ ಅಭಿನಯಿಸಿದ್ದಾರೆ. ಮಲಯಾಳಂನಲ್ಲಿ 17ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ತನ್ವಿ ರಾವ್, ಇದೇ ಮೊದಲ ಬಾರಿಗೆ ಶೈನ್ ಶೆಟ್ಟಿ ಅವರೊಂದಿಗೆ ತೆರೆ ಹಂಚಿಕೊಂಡಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ ಅನೂಪ್ ಸೀಳಿನ್ ಅವರ ಪತ್ನಿ ಕೃತಿ ಕೂಡ ಸಿನಿಮಾದ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ.

‘ಶಂಕರಾಭರಣ’ ಸಿನಿಮಾಕ್ಕೆ ಚರಣ್ ರಾಜ್ ಸಂಗೀತ ಸಂಯೋಜನೆ ಮಾಡಿದ್ದಾರೆ. ವಿಭಿನ್ನ ಟೈಟಲ್, ಬಸ್‌ನ್ನು ಕೇಂದ್ರವಾಗಿಟ್ಟುಕೊಂಡಿರುವ ಕಥೆ ಹಾಗೂ ಹಾರರ್ ಕಾಮಿಡಿ ಅಂಶಗಳೊಂದಿಗೆ ಸಿನಿಮಾ ಮೂಡಿಬಂದಿದ್ದು, ನವೆಂಬರ್ 20ರಂದು ಪ್ರೇಕ್ಷಕರ ಮುಂದೆ ಬರಲಿದೆ.

ಸೌದಿಗೆ ₹47,245 ಕೋಟಿ ಮೌಲ್ಯದ ಬಾಂಬ್‌-ರಕ್ಷಣಾ ಸಲಕರಣೆ ಮಾರಾಟಕ್ಕೆ ಅಮೆರಿಕ ಅಸ್ತು!

0

ವಾಷಿಂಗ್ಟನ್: ಪ್ರಾದೇಶಿಕ ಬೆದರಿಕೆಗಳ ವಿರುದ್ಧ ಸೌದಿ ಅರೇಬಿಯಾದ ರಕ್ಷಣಾ ಸಾಮರ್ಥ್ಯವನ್ನು ಬಲಪಡಿಸುವ ಉದ್ದೇಶದಿಂದ ಸುಮಾರು 5 ಶತಕೋಟಿ ಡಾಲರ್ (47,245 ಕೋಟಿ ರೂಪಾಯಿ) ಮೌಲ್ಯದ ಬಾಂಬ್‌ಗಳು, ಗೈಡೆನ್ಸ್ ಕಿಟ್ಸ್ ಮತ್ತು ಸಂಬಂಧಿತ ರಕ್ಷಣಾ ಸಲಕರಣೆಗಳ ಮಾರಾಟಕ್ಕೆ ಅಮೆರಿಕ ಒಪ್ಪಿಗೆ ನೀಡಿದೆ.

5,004 ಕೆಎಂಯು-572 ಜಂಟಿ ನೇರ ದಾಳಿ ಯುದ್ಧಸಾಮಗ್ರಿ, 5,004 ಬಿಎಲ್‌ಯು-111 (500-ಪೌಂಡ್ ತೂಕದ) ಸಾಮಾನ್ಯ ಬಳಕೆಯ ಬಾಂಬ್‌ಗಳು ಹಾಗೂ 5,000 ಬಿಎಲ್‌ಯು-117 (2,000-ಪೌಂಡ್ ತೂಕದ) ಸಾಮಾನ್ಯ ಬಳಕೆಯ ಬಾಂಬ್‌ಗಳನ್ನು ಸೌದಿ ಅರೇಬಿಯಾ ಅಮೆರಿಕದಿಂದ ಖರೀದಿಸಲಿದೆ.

ಇವುಗಳ ಜೊತೆಗೆ ಫ್ಯೂಸ್ ವ್ಯವಸ್ಥೆಗಳು, ಕಂಟೈನರ್‌ಗಳು, ಬಿಡಿಭಾಗಗಳು, ಲಾಜಿಸ್ಟಿಕ್ಸ್ ಬೆಂಬಲ ಹಾಗೂ ಅಮೆರಿಕ ಸರ್ಕಾರ ಮತ್ತು ಗುತ್ತಿಗೆದಾರರಿಂದ ಎಂಜಿನಿಯರಿಂಗ್ ಮತ್ತು ತಾಂತ್ರಿಕ ನೆರವು ಈ ಪ್ಯಾಕೇಜ್‌ನಲ್ಲಿ ಲಭ್ಯವಾಗಲಿದೆ. ಪ್ರಮುಖ ರಕ್ಷಣಾ ಸಂಸ್ಥೆ ಬೋಯಿಂಗ್ ಈ ಒಪ್ಪಂದದ ಮುಖ್ಯ ಗುತ್ತಿಗೆದಾರ ಸಂಸ್ಥೆಯಾಗಿರಲಿದೆ.

ಈ ಮಾರಾಟ ಸೌದಿ ಅರೇಬಿಯಾದ ವಾಯು ರಕ್ಷಣಾ ಸಾಮರ್ಥ್ಯ ಹೆಚ್ಚಿಸಲಿದ್ದು, ಭದ್ರತೆಯನ್ನು ಬಲಪಡಿಸಲು ಮತ್ತು ಅಮೆರಿಕ ಹಾಗೂ ಇತರ ಕೊಲ್ಲಿ ಪಾಲುದಾರರ ಪಡೆಗಳೊಂದಿಗೆ ಸಮನ್ವಯ ಸುಧಾರಿಸಲು ನೆರವಾಗಲಿದೆ ಎಂದು ಅಮೆರಿಕದ ವಿದೇಶಾಂಗ ಇಲಾಖೆ ತಿಳಿಸಿದೆ.

ಪ್ರಮುಖ ನ್ಯಾಟೋಯೇತರ ಮಿತ್ರರಾಷ್ಟ್ರದ ಭದ್ರತೆಯನ್ನು ಸುಧಾರಿಸುವ ಮೂಲಕ ಈ ಒಪ್ಪಂದ ಅಮೆರಿಕದ ವಿದೇಶಾಂಗ ನೀತಿ ಮತ್ತು ರಾಷ್ಟ್ರೀಯ ಭದ್ರತಾ ಗುರಿಗಳನ್ನು ಬೆಂಬಲಿಸುತ್ತದೆ ಎಂದು ಅಮೆರಿಕ ಸ್ಪಷ್ಟಪಡಿಸಿದೆ. ಈ ಮಾರಾಟದಿಂದ ಈ ಭಾಗದ ಪ್ರಾದೇಶಿಕ ಸೇನಾ ಸಮತೋಲನಕ್ಕೆ ಯಾವುದೇ ಧಕ್ಕೆ ಉಂಟಾಗುವುದಿಲ್ಲ ಹಾಗೂ ಅಮೆರಿಕದ ರಕ್ಷಣಾ ಸನ್ನದ್ಧತೆಯ ಮೇಲೂ ಯಾವುದೇ ಪ್ರತಿಕೂಲ ಪರಿಣಾಮ ಬೀರುವುದಿಲ್ಲ ಎಂದು ಪ್ರಕಟಣೆ ತಿಳಿಸಿದೆ.

ಇರಾನ್ ಪಡೆಗಳು ಮತ್ತು ಯೆಮೆನ್‌ನ ಹೌತಿ ಬಂಡುಕೋರರ ಡ್ರೋನ್ ಹಾಗೂ ಕ್ಷಿಪಣಿ ದಾಳಿಗಳ ಭೀತಿ ಎದುರಿಸುತ್ತಿರುವ ಸೌದಿ ಅರೇಬಿಯಾಗೆ ಈ ರಕ್ಷಣಾ ಒಪ್ಪಂದ ಮಹತ್ವದ ಬಲ ತಂದುಕೊಡಲಿದೆ.

ಬಂದೂಕಿನಿಂದ ಗುಂಡಿಟ್ಟು ಕೊಲೆ: 8 ವರ್ಷಗಳ ಬಳಿಕ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಹೈಕೋರ್ಟ್

0

ಬೆಂಗಳೂರು: ಜಮೀನಿನ ಖಾತಾ ಬದಲಾವಣೆ ವಿಚಾರದ ಹಳೆಯ ವೈಷಮ್ಯದಿಂದ ಕಾಫಿ ತೋಟದ ರಸ್ತೆಯಲ್ಲಿ ವ್ಯಕ್ತಿಯೊಬ್ಬರನ್ನು ಬಂದೂಕಿನಿಂದ ಗುಂಡಿಕ್ಕಿ ಕೊಂದ ಪ್ರಕರಣದಲ್ಲಿ ಆರೋಪಿಗೆ ಹೈಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ. ಚೆರಂಡ ಮೋಹನ್‌ಗೆ ಜೀವಾವಧಿ ಜೈಲು ಶಿಕ್ಷೆ ಜೊತೆಗೆ 1.10 ಲಕ್ಷ ರೂಪಾಯಿ ದಂಡ ವಿಧಿಸಿರುವ ನ್ಯಾಯಪೀಠ, ವಿಚಾರಣಾ ನ್ಯಾಯಾಲಯದ ಖುಲಾಸೆ ಆದೇಶವನ್ನು ರದ್ದುಗೊಳಿಸಿದೆ.

ವಿಚಾರಣಾ ನ್ಯಾಯಾಲಯದ ಖುಲಾಸೆ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಕ್ರಿಮಿನಲ್ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೆಚ್.ಪಿ. ಸಂದೇಶ್ ಹಾಗೂ ನ್ಯಾಯಮೂರ್ತಿ ಬಿ. ಪ್ರಮೋದ್ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿದೆ.

ಪ್ರಕರಣದ ಪ್ರಮುಖ ಸಾಕ್ಷ್ಯವಾಗಿ ಮೃತರ ಪತ್ನಿಯ ಹೇಳಿಕೆಯನ್ನು ನ್ಯಾಯಪೀಠ ಪರಿಗಣಿಸಿದೆ. ಗುಂಡಿನ ಸದ್ದು ಕೇಳಿ ಸ್ಥಳಕ್ಕೆ ಓಡಿಬಂದಿದ್ದ ಮೃತರ ಪತ್ನಿ, ಕೈಯಲ್ಲಿ ಬಂದೂಕು ಹಿಡಿದು ಬರುತ್ತಿದ್ದ ಆರೋಪಿಯನ್ನು ಕಂಡಿದ್ದರು. ಈ ವೇಳೆ ಆರೋಪಿ, “ನಿನ್ನ ಗಂಡನಿಗೆ ಬುದ್ಧಿ ಕಲಿಸಿದ್ದೇನೆ” ಎಂದು ಹೇಳಿದ್ದಾಗಿ ಅವರು ಸಾಕ್ಷ್ಯ ನೀಡಿದ್ದರು. ಈ ಹೇಳಿಕೆ ಭಾರತೀಯ ಸಾಕ್ಷ್ಯ ಕಾಯ್ದೆಯ ಸೆಕ್ಷನ್ 6ರ ಅಡಿಯಲ್ಲಿ ಪ್ರಮುಖ ಸಾಕ್ಷ್ಯವಾಗಿದೆ ಎಂದು ನ್ಯಾಯಪೀಠ ತಿಳಿಸಿದೆ.

ಅಲ್ಲದೆ ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಹಾಗೂ ಬ್ಯಾಲಿಸ್ಟಿಕ್ ತಜ್ಞರ ಸಾಕ್ಷ್ಯವನ್ನೂ ಪೀಠ ಪರಿಗಣಿಸಿದೆ. ಮೃತರ ದೇಹದಲ್ಲಿದ್ದ ರಂಧ್ರಗಳು ಹಾಗೂ ಸ್ಥಳದಲ್ಲಿ ಪತ್ತೆಯಾದ ಗುಂಡುಗಳು ಆರೋಪಿಯ ಬಂದೂಕಿನಿಂದಲೇ ಹಾರಿಸಲ್ಪಟ್ಟಿದ್ದವು ಎಂಬುದು ಸಾಕ್ಷ್ಯಗಳಿಂದ ಸಾಬೀತಾಗಿದೆ ಎಂದು ನ್ಯಾಯಪೀಠ ಹೇಳಿದೆ.

ಕೃತ್ಯ ಎಸಗಿದ ಬಳಿಕ ಆರೋಪಿಯೇ ಬಂದೂಕಿನೊಂದಿಗೆ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದ. ಆತನ ಮಾಹಿತಿ ಆಧರಿಸಿ ಗುಂಡಿನ ಖಾಲಿ ಕವರ್‌ಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಇಷ್ಟೆಲ್ಲ ಸಾಕ್ಷ್ಯಾಧಾರಗಳಿದ್ದರೂ ವಿಚಾರಣಾ ನ್ಯಾಯಾಲಯ ಅವುಗಳನ್ನು ಸೂಕ್ತವಾಗಿ ಪರಿಗಣಿಸದೆ ಆರೋಪಿಯನ್ನು ಖುಲಾಸೆಗೊಳಿಸಿದ್ದು ತಪ್ಪು ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಚೆರಂಡ ಮೋಹನ್ ಅವರನ್ನು ಐಪಿಸಿ ಸೆಕ್ಷನ್ 302 ಹಾಗೂ ಭಾರತೀಯ ಶಸ್ತ್ರಾಸ್ತ್ರ ಕಾಯ್ದೆಯ ಸೆಕ್ಷನ್ 27ರ ಅಡಿಯಲ್ಲಿ ತಪ್ಪಿತಸ್ಥರೆಂದು ಘೋಷಿಸಲಾಗಿದೆ. ಜೀವಾವಧಿ ಶಿಕ್ಷೆ ಜೊತೆಗೆ 1.10 ಲಕ್ಷ ರೂಪಾಯಿ ದಂಡ ವಿಧಿಸಿರುವ ನ್ಯಾಯಪೀಠ, ದಂಡದ ಮೊತ್ತದಲ್ಲಿ 90 ಸಾವಿರ ರೂಪಾಯಿಯನ್ನು ಮೃತರ ಪತ್ನಿಗೆ ಪರಿಹಾರವಾಗಿ ನೀಡುವಂತೆ ಆದೇಶಿಸಿದೆ.

ಬಡ್ಡಿ ಕಟ್ಟದಿದ್ದಕ್ಕೆ ಮಹಿಳೆ ಅಪಹರಣ: ಎರಡು ದಿನ ಕೂಡಿ ಹಾಕಿ ಹಲ್ಲೆ, ಮೂವರ ಬಂಧನ

0

ಬೆಂಗಳೂರು: ಹಣಕಾಸಿನ ವಿವಾದದ ಹಿನ್ನೆಲೆಯಲ್ಲಿ 30 ವರ್ಷದ ಮಹಿಳೆಯನ್ನು ಅಪಹರಿಸಿ ಎರಡು ದಿನಗಳ ಕಾಲ ಬಂಧನದಲ್ಲಿರಿಸಿ ಹಲ್ಲೆ ನಡೆಸಿದ ಆರೋಪದಡಿ ಇಬ್ಬರು ಮಹಿಳೆಯರು ಸೇರಿದಂತೆ ಮೂವರನ್ನು ಚಂದ್ರಾಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ನಜ್ರತ್ ಬೇಗಂ, ರೇಷ್ಮಾ ಭಾನು ಹಾಗೂ ಸುಹೇಲ್ ಬಂಧಿತ ಆರೋಪಿಗಳು.

ಸಂತ್ರಸ್ತ ಮಹಿಳೆ ನಜ್ರತ್ ಬೇಗಂ ಬಳಿ 50 ಸಾವಿರ ರೂಪಾಯಿ ಹಾಗೂ ರೇಷ್ಮಾ ಬಳಿ ಒಂದು ಲಕ್ಷ ರೂಪಾಯಿ ಸಾಲ ಪಡೆದಿದ್ದರು ಎನ್ನಲಾಗಿದೆ. ವಾರಕ್ಕೊಮ್ಮೆ ಬಡ್ಡಿ ಪಾವತಿಸುತ್ತಿದ್ದ ಮಹಿಳೆಗೆ ಕಳೆದ ಕೆಲವು ವಾರಗಳಿಂದ ಬಡ್ಡಿ ಕಟ್ಟಲು ಸಾಧ್ಯವಾಗಿರಲಿಲ್ಲ. ಇದರಿಂದ ಕೋಪಗೊಂಡ ಆರೋಪಿಗಳು ಆಗಸ್ಟ್ 27ರಂದು ಆಕೆಯನ್ನು ಮನೆಗೆ ಕರೆಸಿಕೊಂಡಿದ್ದರು.

ಬಳಿಕ ನಜ್ರತ್ ಬೇಗಂ ತನ್ನ ಮಗನೊಂದಿಗೆ ಮಹಿಳೆಯನ್ನು ಬಲವಂತವಾಗಿ ಆಟೋದಲ್ಲಿ ಕೂರಿಸಿಕೊಂಡು ಕುಂಬಳಗೋಡಿನಲ್ಲಿರುವ ರೇಷ್ಮಾ ಮನೆಗೆ ಕರೆದೊಯ್ದಿದ್ದಾರೆ ಎನ್ನಲಾಗಿದೆ. ಅಲ್ಲಿ ಮರದ ಕೋಲಿನಿಂದ ಹಲ್ಲೆ ನಡೆಸಿ, ಕೊಠಡಿಯಲ್ಲಿ ಕೂಡಿ ಹಾಕಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಇಷ್ಟೇ ಅಲ್ಲದೆ, ನಜ್ರತ್ ಬೇಗಂ ಸಂತ್ರಸ್ತೆಯನ್ನು ಬೆತ್ತಲೆಗೊಳಿಸಿ ಮೊಬೈಲ್‌ನಲ್ಲಿ ವಿಡಿಯೋ ಚಿತ್ರೀಕರಿಸಿದ್ದಾಳೆ ಎನ್ನಲಾಗಿದ್ದು, ಹಣ ನೀಡದಿದ್ದರೆ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾಳೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

ಬಳಿಕ ವಕೀಲರ ಬಳಿ ಕರೆದೊಯ್ದು ಕೆಲವು ದಾಖಲೆಗಳಿಗೆ ಬಲವಂತವಾಗಿ ಸಹಿ ಮಾಡಿಸಿಕೊಂಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಆಗಸ್ಟ್ 31ರಂದು ಶೌಚಾಲಯಕ್ಕೆ ತೆರಳುವ ವೇಳೆ ಸಂತ್ರಸ್ತೆ ತಪ್ಪಿಸಿಕೊಳ್ಳಲು ಯತ್ನಿಸಿದ್ದು, ಈ ವೇಳೆ ಸುಳಿವು ಪಡೆದು ಸ್ಥಳಕ್ಕೆ ಬಂದ ಪೊಲೀಸರು ಆಕೆಯನ್ನು ರಕ್ಷಿಸಿದ್ದಾರೆ. ಚಂದ್ರಾಲೇಔಟ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಆರೋಪಿಗಳು ಹಾಗೂ ಸಂತ್ರಸ್ತೆ ಸ್ನೇಹಿತರಾಗಿದ್ದು, ಹಣಕಾಸಿನ ವೈಷಮ್ಯದಿಂದ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೆಪಿಎಸ್ಸಿ ಹಗರಣದ ಬೇರು ತುಮಕೂರು ವಿವಿಗೂ ವಿಸ್ತಾರ; ಕನ್ನಾಳೆ ವಿರುದ್ಧ ಸಿಂಡಿಕೇಟ್ ಅಕ್ರಮ ಶಂಕೆ

0

ಬೆಂಗಳೂರು: ಕೆಪಿಎಸ್‌ಸಿ ಹಗರಣದ ಪ್ರಮುಖ ಆರೋಪಿ ಬಸವರಾಜ ಕನ್ನಾಳೆಯಿಂದ ತುಮಕೂರು ವಿಶ್ವವಿದ್ಯಾಲಯದಲ್ಲೂ ಹಲವು ಅವ್ಯವಹಾರ ನಡೆದಿರುವ ಅನುಮಾನ ವ್ಯಕ್ತವಾಗಿದ್ದು, ಈ ದಿಕ್ಕಿನಲ್ಲೂ ಸಿಐಡಿ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ.

ರಾಜ್ಯದಲ್ಲಿ ಸದ್ದು ಮಾಡುತ್ತಿರುವ ಕೆಪಿಎಸ್‌ಸಿ ಹಗರಣದ ಬೇರು ತುಮಕೂರಿಗೂ ವ್ಯಾಪಿಸಿದೆ. ಮಧ್ಯವರ್ತಿಯಾಗಿ ಬಂಧಿತನಾಗಿರುವ ಬಸವರಾಜ ಕನ್ನಾಳೆಯ ಅಕ್ರಮ ತುಮಕೂರು ವಿಶ್ವವಿದ್ಯಾಲಯಕ್ಕೂ ವ್ಯಾಪಿಸಿರುವ ಶಂಕೆ ವ್ಯಕ್ತವಾಗಿದೆ. ವಿವಿಯ ನಾಮನಿರ್ದೇಶಿತ ಸಿಂಡಿಕೇಟ್ ಸದಸ್ಯರಾಗಿದ್ದ ಬಸವರಾಜ ಕನ್ನಾಳೆ ಹಲವು ಭ್ರಷ್ಟಾಚಾರ ಎಸಗಿರುವ ಶಂಕೆಯಿದೆ.

ಬಸವರಾಜ ಕನ್ನಾಳೆ 2025ರ ಆಗಸ್ಟ್‌ನಲ್ಲಿ ತುಮಕೂರು ವಿವಿ ಸಿಂಡಿಕೇಟ್ ಸದಸ್ಯರಾಗಿ ನೇಮಕಗೊಂಡಿದ್ದರು. ಖರೀದಿ ಮತ್ತು ಕಾಮಗಾರಿ ನಿರ್ಧಾರದ ಉಪಸಮಿತಿಯಲ್ಲಿ ಸದಸ್ಯರಾಗಿ ನೇಮಕಗೊಂಡಿದ್ದ ಇವರು, ವಾರ್ಷಿಕ ಬಜೆಟ್ ಜಾರಿಯಲ್ಲೂ ಪ್ರಭಾವ ಬಳಸಿಕೊಂಡು ದುರ್ಬಳಕೆ ಮಾಡಿಕೊಂಡಿರುವ ಶಂಕೆಯಿದ್ದು, ಈ ನಿಟ್ಟಿನಲ್ಲಿ ಸಿಐಡಿ ತನಿಖೆ ನಡೆಸುತ್ತಿದೆ.

ಸಿಂಡಿಕೇಟ್ ಸದಸ್ಯರಾಗಿ ನೇಮಕಗೊಂಡ ಒಂದೇ ವರ್ಷದಲ್ಲಿ ಬಸವರಾಜ ಕನ್ನಾಳೆ ವ್ಯವಹಾರ ಚತುರ ಎನಿಸಿಕೊಂಡಿದ್ದರೆಂದೂ, ವಿವಿಯಲ್ಲಿ ಖಾಲಿಯಿರುವ ಕುಲಪತಿ ಹುದ್ದೆಗೆ ಅರ್ಜಿ ಸಲ್ಲಿಸಿದ್ದ ಹಿರಿಯ ಪ್ರಾಧ್ಯಾಪಕರ ಸಂಪರ್ಕ ಸಾಧಿಸಿ, ಹುದ್ದೆ ಕೊಡಿಸುವ ಭರವಸೆಯೊಂದಿಗೆ ವ್ಯವಹಾರ ಆರಂಭಿಸಿದ್ದರೆಂಬ ಮಾತು ವಿವಿ ಆವರಣದಲ್ಲಿ ಕೇಳಿಬರುತ್ತಿದೆ. ಅನಂತಪುರಂ ಕೇಂದ್ರೀಯ ವಿವಿಯಲ್ಲಿ ಖಾಲಿಯಿರುವ ಕುಲಪತಿ ಹುದ್ದೆಗೆ ನೇಮಕ ಮಾಡಿಸುವುದಾಗಿ ತುಮಕೂರು ವಿವಿ ವಿಶ್ರಾಂತ ಕುಲಪತಿಯೊಬ್ಬರಿಂದ ಬಂಡವಾಳ ಹೂಡಿಸಿರುವ ವದಂತಿಯೂ ಇದ್ದು, ಈ ಬಗ್ಗೆಯೂ ಸಿಐಡಿ ಹಾಗೂ ಸಿಬಿಐ ತನಿಖೆ ನಡೆಸುತ್ತಿದೆ ಎನ್ನಲಾಗಿದೆ.

ಬಸವರಾಜ ಕನ್ನಾಳೆಯ ದೂರವಾಣಿ ಕರೆಗಳ ಮಾಹಿತಿ ಸಂಗ್ರಹಿಸಿರುವ ತನಿಖಾಧಿಕಾರಿಗಳು ಅಕ್ರಮದ ಜಾಡು ಜಾಲಾಡುತ್ತಿದ್ದಾರೆ. ಈ ನಡುವೆ ಬಸವರಾಜ ಕನ್ನಾಳೆಯನ್ನು ಸಿಂಡಿಕೇಟ್‌ನಿಂದ ವಜಾಗೊಳಿಸುವಂತೆ ಎಬಿವಿಪಿ ಆಗ್ರಹಿಸಿದೆ.

ಆದರೆ ವಿವಿಯ ಆಡಳಿತ ಮಂಡಳಿ ಬಸವರಾಜ ಕನ್ನಾಳೆಗೆ ಕ್ಲೀನ್ ಚಿಟ್ ನೀಡಿದ್ದು, ಈ ಕುರಿತು ಸಿಬಿಐ, ಸಿಐಡಿ ಹಾಗೂ ರಾಜ್ಯ ಗೃಹ ಇಲಾಖೆಗೆ ಪ್ರಮಾಣ ಪತ್ರ ಸಲ್ಲಿಸಿದೆ. ತುಮಕೂರು ವಿವಿ ಕುಲಪತಿ ಹುದ್ದೆಗೆ ಅರ್ಜಿ ಸಲ್ಲಿಸಿರುವ ಸಾಕಷ್ಟು ಹಿರಿಯ ಪ್ರಾಧ್ಯಾಪಕರು ಬಸವರಾಜ ಕನ್ನಾಳೆ ಸಂಪರ್ಕದಲ್ಲಿದ್ದು, ನೇಮಕಾತಿಗೆ ಲಾಬಿ ನಡೆಸಲು ವ್ಯವಹಾರ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದ್ದು, ಈ ಬೆಳವಣಿಗೆಯಿಂದ ಆತನ ಸಂಪರ್ಕದಲ್ಲಿದ್ದ ಪ್ರಾಧ್ಯಾಪಕರಲ್ಲಿ ಆತಂಕ ಮನೆಮಾಡಿದೆ.

ರಾಜ್ಯದಲ್ಲಿ ಮಳೆ ಮತ್ತಷ್ಟು ಕ್ಷೀಣ! ಸೆಪ್ಟೆಂಬರ್‌ʼನಲ್ಲಿ ವಾಡಿಕೆಗಿಂತ ಕಡಿಮೆ ವರ್ಷಧಾರೆ, ಹೆಚ್ಚಲಿದೆ ಬಿಸಿಲಿನ ತಾಪಮಾನ

0

ಬೆಂಗಳೂರು: ನಿರೀಕ್ಷೆಯಂತೆ ಅಬ್ಬರಿಸದ ಮುಂಗಾರಿನ ನಡುವೆ, ರಾಜ್ಯದಲ್ಲಿ ಮಳೆ ಮತ್ತಷ್ಟು ಕ್ಷೀಣಿಸುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಸೆಪ್ಟೆಂಬರ್ ತಿಂಗಳಿನಲ್ಲಿ ದಕ್ಷಿಣ ಮತ್ತು ಉತ್ತರ ಒಳನಾಡಿನ ಬಹುತೇಕ ಭಾಗಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗುವ ಸಾಧ್ಯತೆಯಿದೆ ಎಂದು ಇಲಾಖೆ ಎಚ್ಚರಿಸಿದೆ. ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಮಾತ್ರ ಅಲ್ಲಲ್ಲಿ ಸಾಧಾರಣ ಅಥವಾ ಹಗುರ ಮಳೆಯಾಗುವ ನಿರೀಕ್ಷೆಯಿದ್ದು, ಉಳಿದೆಡೆ ಮಳೆ ಸಂಪೂರ್ಣ ಬಿಡುವು ನೀಡುವ ಸಾಧ್ಯತೆಯಿದೆ.

ಮಳೆಯ ಕೊರತೆಯ ಬೆನ್ನಲ್ಲೇ ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ತಾಪಮಾನ ಏರಿಕೆಯಾಗಲಿದೆ. ಕಳೆದೊಂದು ವಾರದಿಂದ ಮಳೆ ಕಡಿಮೆಯಾಗಿರುವ ಕಾರಣ ಬಿಸಿಲಿನ ಧಗೆ ಹೆಚ್ಚಾಗುತ್ತಿದ್ದು, ವಾಡಿಕೆಗಿಂತ 2ರಿಂದ 3 ಡಿಗ್ರಿ ಸೆಲ್ಸಿಯಸ್‌ನಷ್ಟು ಉಷ್ಣಾಂಶ ಏರಿಕೆಯಾಗುವ ಸಾಧ್ಯತೆಯಿದೆ. ಪರಿಣಾಮವಾಗಿ ಹಗಲು ವೇಳೆ ಬಿಸಿಲು ಚುರುಕಾಗಲಿದ್ದು, ಗರಿಷ್ಠ ತಾಪಮಾನ 30 ಡಿಗ್ರಿ ದಾಟುವ ಸಾಧ್ಯತೆಯಿದೆ. ಜೊತೆಗೆ ಕನಿಷ್ಠ ತಾಪಮಾನದಲ್ಲೂ ಏರಿಕೆಯಾಗುವುದರಿಂದ ರಾತ್ರಿ ವೇಳೆ ಸೆಕೆ ಹೆಚ್ಚಾಗಲಿದೆ ಎಂದು ಇಲಾಖೆ ಎಚ್ಚರಿಸಿದೆ.

ಮುಂದಿನ ಒಂದು ವಾರದ ಅವಧಿಯಲ್ಲಿ ರಾಜ್ಯದಾದ್ಯಂತ ಒಣಹವೆ ಮುಂದುವರಿಯಲಿದ್ದು, ತಾಪಮಾನ ಗಣನೀಯವಾಗಿ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ರೈತರು ಹಾಗೂ ಜನಸಾಮಾನ್ಯರಲ್ಲಿ ಆತಂಕ ಮನೆಮಾಡಿದೆ.

ನೇಪಾಳ ಪ್ರವಾಹ: ಕಾಣೆಯಾದ ಕನ್ನಡಿಗರ DNA ಸಂಗ್ರಹಕ್ಕೆ ಬೌರಿಂಗ್ ಆಸ್ಪತ್ರೆ ನೋಡಲ್ ಕೇಂದ್ರ

0

ಬೆಂಗಳೂರು: ನೇಪಾಳದಲ್ಲಿ ಕಾಣೆಯಾದ ಕನ್ನಡಿಗರ ಡಿಎನ್‌ಎ ಮಾದರಿ ಸಂಗ್ರಹಕ್ಕೆ ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯನ್ನು ನೋಡಲ್ ಕೇಂದ್ರವನ್ನಾಗಿ ಆಯ್ಕೆ ಮಾಡಲಾಗಿದೆ.

ನೇಪಾಳ ಮತ್ತು ಟಿಬೆಟ್ ಸ್ವಾಯತ್ತ ಪ್ರದೇಶದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪ ಹಾಗೂ ದಿಢೀರ್ ಪ್ರವಾಹದಲ್ಲಿ ಕಾಣೆಯಾಗಿರುವ ಕರ್ನಾಟಕದ ಸಂತ್ರಸ್ತರ ಪ್ರಥಮ ಹಂತದ ರಕ್ತಸಂಬಂಧಿಗಳ ಗುರುತು ಪತ್ತೆಹಚ್ಚಲು ಮತ್ತು ಡಿಎನ್‌ಎ ಮಾದರಿ ಸಂಗ್ರಹಕ್ಕಾಗಿ ಬೆಂಗಳೂರಿನ ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಯನ್ನು ‘ನೋಡಲ್ ಕೇಂದ್ರ’ವನ್ನಾಗಿ ನಿಯೋಜಿಸಲಾಗಿದೆ. ಈ ಕುರಿತು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಕೆಎಸ್‌ಡಿಎಂಎ) ಮತ್ತು ಕಂದಾಯ ಇಲಾಖೆ ಆದೇಶ ಹೊರಡಿಸಿವೆ.

ನೇಪಾಳದಲ್ಲಿ ಪತ್ತೆಯಾಗಿರುವ ಮೃತದೇಹಗಳ ಗುರುತು ಪತ್ತೆಹಚ್ಚಲು ಮತ್ತು ಅವುಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲು ನೇಪಾಳ ಸರ್ಕಾರ ಹಾಗೂ ಕಠ್ಮಂಡುವಿನಲ್ಲಿರುವ ಭಾರತೀಯ ರಾಯಭಾರ ಕಚೇರಿ ಸೂಚನೆ ನೀಡಿದೆ. ಫೋಟೋ ಹಾಗೂ ಇತರ ವಿವರಗಳಿಂದ ಗುರುತು ಹಿಡಿಯಲಾಗದ ಮೃತದೇಹಗಳ ಡಿಎನ್‌ಎ ಪ್ರೊಫೈಲ್ ತಯಾರಿಸಲಾಗುತ್ತಿದ್ದು, ಅದನ್ನು ಪರಿಶೀಲಿಸಲು ಸಂತ್ರಸ್ತರ ರಕ್ತಸಂಬಂಧಿಗಳ ಡಿಎನ್‌ಎ ಮಾದರಿಯ ಅಗತ್ಯವಿದೆ.

ಆಸ್ಪತ್ರೆಯ ನೋಡಲ್ ಅಧಿಕಾರಿಗಳ ವಿವರ: ಡಿಎನ್‌ಎ ಮಾದರಿ ಸಂಗ್ರಹ ಮತ್ತು ಸಂಬಂಧಿಕರ ಪರಿಶೀಲನೆಗಾಗಿ ಬೌರಿಂಗ್ ಹಾಗೂ ಲೇಡಿ ಕರ್ಜನ್ ಆಸ್ಪತ್ರೆಯಲ್ಲಿ ವಿಧಿವಿಜ್ಞಾನ ವಿಭಾಗದ ಮುಖ್ಯಸ್ಥ ಡಾ. ನಾಗೇಶ್ ಕುಪ್ಪಸ್ಟ್ ಹಾಗೂ ಆರ್‌ಎಂಒ ಡಾ. ವಾಡಿರಾಜ್ ಬಿ. ಪೊಕ್ಕನ್ ಅವರನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ.

ನೇಪಾಳದಲ್ಲಿ ಕಾಣೆಯಾದವರ ಪ್ರಥಮ ಹಂತದ ಸಂಬಂಧಿಕರು (ತಂದೆ, ತಾಯಿ, ಮಗ, ಮಗಳು ಅಥವಾ ಸಂಗಾತಿ) ಡಿಎನ್‌ಎ ಪರೀಕ್ಷೆಗೆ ಬರುವಾಗ ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ, ಸರ್ಕಾರದಿಂದ ನೀಡಲಾದ ಗುರುತಿನ ಚೀಟಿ ಹಾಗೂ ಸಂಬಂಧವನ್ನು ಸಾಬೀತುಪಡಿಸುವ ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕಿದೆ.

ಜಿಲ್ಲಾಡಳಿತ ಹಾಗೂ ಗ್ರೇಟರ್ ಬೆಂಗಳೂರು ಪ್ರಾಧಿಕಾರದಿಂದ ಪರಿಶೀಲನೆಗೊಂಡ ಬಳಿಕ ಈ ಮಾದರಿಗಳನ್ನು ರಾಜ್ಯ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (ಎಫ್‌ಎಸ್‌ಎಲ್) ಕಳುಹಿಸಿ, ನಂತರ ನೇಪಾಳದ ಅಧಿಕಾರಿಗಳೊಂದಿಗೆ ಹಂಚಿಕೊಳ್ಳಲಾಗುತ್ತದೆ. ಕಾಣೆಯಾದವರ ಬಗ್ಗೆ ಮಾಹಿತಿ ನೀಡಲು ಅಥವಾ ನೆರವು ಪಡೆಯಲು ಕೆಎಸ್‌ಡಿಎಂಎ ಹೆಲ್ಪ್‌ಲೈನ್ ಸಂಪರ್ಕಿಸಬಹುದೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ನೇಪಾಳದ ರಾಷ್ಟ್ರೀಯ ವಿಪತ್ತು ಅಪಾಯ ಕಡಿತ ಮತ್ತು ನಿರ್ವಹಣಾ ಪ್ರಾಧಿಕಾರ ಶುಕ್ರವಾರ ನೀಡಿದ ಮಾಹಿತಿ ಪ್ರಕಾರ, ಪ್ರವಾಹದಿಂದ ಸಾವನ್ನಪ್ಪಿದವರ ಸಂಖ್ಯೆ 1,295ಕ್ಕೆ ಏರಿದೆ. 32,000ಕ್ಕೂ ಹೆಚ್ಚು ಜನರು ತೊಂದರೆಗೊಳಗಾಗಿದ್ದು, ರಸ್ತೆಗಳು, ಸೇತುವೆಗಳು, ಶಾಲೆಗಳು ಮತ್ತು ಆರೋಗ್ಯ ಸೌಲಭ್ಯಗಳು ಹಾನಿಗೊಳಗಾಗಿವೆ.

ಗಡಿಪಾರು ಆದೇಶ ಮಾಡಲು ಎಸ್ಪಿಗೆ ಅಧಿಕಾರವಿಲ್ಲ: ಸರ್ಕಾರದ ಅಧಿಸೂಚನೆ ರದ್ದುಗೊಳಿಸಿದ ಹೈಕೋರ್ಟ್

0

ಬೆಂಗಳೂರು: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಗೆ ಕರ್ನಾಟಕ ಪೊಲೀಸ್ ಕಾಯ್ದೆಯಡಿ ಗಡಿಪಾರು ಆದೇಶ ಮಾಡುವ ಅಧಿಕಾರವಿಲ್ಲ ಎಂದು ಸ್ಪಷ್ಟಪಡಿಸಿರುವ ಹೈಕೋರ್ಟ್, ಎಸ್‌ಪಿಗಳಿಗೆ ಈ ಅಧಿಕಾರ ನೀಡಿ ರಾಜ್ಯ ಸರ್ಕಾರ 2025ರ ನವೆಂಬರ್ 18ರಂದು ಹೊರಡಿಸಿದ್ದ ಅಧಿಸೂಚನೆಯನ್ನು ರದ್ದುಪಡಿಸಿ ಆದೇಶಿಸಿದೆ.

ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗಡಿಪಾರು ಮಾಡಿದ್ದ ಆದೇಶ ಪ್ರಶ್ನಿಸಿ ಚಂದ್ರಕಾಂತ್ ಶಂಕರ್ ವಡ್ಡರ್ ಎಂಬವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ.

ಅಪರಾಧ ಎಸಗುವ ಸಾಧ್ಯತೆಯಿರುವ ಹಾಗೂ ಈಗಾಗಲೇ ಕೆಲ ಅಪರಾಧಗಳಲ್ಲಿ ಶಿಕ್ಷೆಗೊಳಗಾದ ವ್ಯಕ್ತಿಗಳನ್ನು ಗಡಿಪಾರು ಮಾಡಲು ಕರ್ನಾಟಕ ಪೊಲೀಸ್ ಕಾಯ್ದೆಯ ಸೆಕ್ಷನ್ 55 ಮತ್ತು 56ರ ಅಡಿ ಅಧಿಕಾರ ನೀಡಲಾಗಿದೆಯಾದರೂ, ಕಾಯ್ದೆಯಂತೆ ಬೆಂಗಳೂರು ಮತ್ತು ಇತರ ಕಮಿಷನರೇಟ್‌ಗಳಲ್ಲಿ ಪೊಲೀಸ್ ಕಮಿಷನರ್‌ಗಳು ಮಾತ್ರ ಸಮರ್ಥ ಪ್ರಾಧಿಕಾರವಾಗಿದ್ದಾರೆಂದೂ, ಇತರ ಪ್ರದೇಶಗಳಲ್ಲಿ ಸರ್ಕಾರ ಅಧಿಸೂಚನೆ ಮೂಲಕ ಜಿಲ್ಲಾಧಿಕಾರಿ ಅಥವಾ ಉಪ ವಿಭಾಗಾಧಿಕಾರಿಗಳಿಗೆ ಮಾತ್ರ ಈ ಅಧಿಕಾರ ನೀಡಬಹುದೆಂದೂ ಪೀಠ ಸ್ಪಷ್ಟಪಡಿಸಿದೆ. ಶಾಸನಸಭೆ ರೂಪಿಸಿದ ಶಾಸನಬದ್ಧ ಅವಕಾಶವನ್ನು ಕಾರ್ಯಾಂಗದ ಒಂದು ಅಧಿಸೂಚನೆಯ ಮೂಲಕ ವಿಸ್ತರಿಸಿ, ಕಾಯ್ದೆಯಲ್ಲಿ ಉಲ್ಲೇಖವಿಲ್ಲದ ಅಧಿಕಾರಿಗೆ ಅಧಿಕಾರ ನೀಡುವುದಕ್ಕೆ ಅವಕಾಶವಿಲ್ಲ ಎಂದು ಪೀಠ ಹೇಳಿದೆ.

ಸಂಗೀತಾ ಸೂರ್ಯವಂಶಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಆದೇಶವನ್ನು ಉಲ್ಲೇಖಿಸಿದ ನ್ಯಾಯಪೀಠ, ಸರ್ಕಾರದ ಸುತ್ತೋಲೆ ಅಥವಾ ಅಧಿಸೂಚನೆಗಳು ಮೂಲ ಕಾಯ್ದೆಯ ನಿಯಮಗಳಿಗೆ ವಿರುದ್ಧವಾದ ಕ್ರಮಕ್ಕೆ ಮುಂದಾಗಲು ಅವಕಾಶವಿಲ್ಲವೆಂದೂ, ಆದ್ದರಿಂದ ಕಮಿಷನರ್, ಜಿಲ್ಲಾಧಿಕಾರಿ ಅಥವಾ ಉಪವಿಭಾಗಾಧಿಕಾರಿಯಲ್ಲದ ಎಸ್‌ಪಿಗೆ ಗಡಿಪಾರು ಆದೇಶ ಹೊರಡಿಸುವ ಅಧಿಕಾರವಿಲ್ಲವೆಂದೂ ಸ್ಪಷ್ಟಪಡಿಸಿತು. ಇಂತಹ ಆದೇಶಗಳು ಅಧಿಕಾರ ವ್ಯಾಪ್ತಿ ಮೀರಿದ್ದಾಗಿರುತ್ತವೆ ಎಂದು ಪೀಠ ತಿಳಿಸಿದೆ.

ಆದರೆ, ಕರ್ನಾಟಕ ಪೊಲೀಸ್ ಕಾಯ್ದೆ 1963ರ ಪ್ರಕಾರ ಕಾನೂನುಬದ್ಧವಾಗಿ ಅಧಿಕಾರ ಹೊಂದಿರುವ ಸೂಕ್ತ ಪ್ರಾಧಿಕಾರದಿಂದ ನಿಯಮಗಳ ಪ್ರಕಾರ ಕ್ರಮ ಕೈಗೊಳ್ಳಲು ಅವಕಾಶವಿರುತ್ತದೆ ಎಂದು ಪೀಠ ಸ್ಪಷ್ಟಪಡಿಸಿದೆ.

ಪ್ರಕರಣದ ಹಿನ್ನೆಲೆ: ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ನಿವಾಸಿ ಚಂದ್ರಕಾಂತ್ ಶಂಕರ್ ವಡ್ಡರ್ ಅವರನ್ನು ಬೆಳಗಾವಿ ಎಸ್‌ಪಿ 2026ರ ಏಪ್ರಿಲ್ 28ರಂದು ಸೆಕ್ಷನ್ 55ರ ಅಡಿ ಗಡಿಪಾರು ಮಾಡಿ ಆದೇಶಿಸಿದ್ದರು. ಇದನ್ನು ಪ್ರಶ್ನಿಸಿ ಚಂದ್ರಕಾಂತ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು, 2025ರ ನವೆಂಬರ್ 25ರ ಅಧಿಸೂಚನೆ ಮೂಲಕ ರಾಜ್ಯ ಸರ್ಕಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಈ ಅಧಿಕಾರ ನೀಡಿ ಆದೇಶಿಸಿದೆ ಎಂದು ವಾದ ಮಂಡಿಸಿದ್ದರು.

ಬಾಗಲಕೋಟೆ ಶಾಲಾ ಛಾವಣಿ ಕುಸಿತ: ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡ ಲೋಕಾಯುಕ್ತ, ಅಧಿಕಾರಿಗಳಿಗೆ ನೋಟಿಸ್

0

ಬೆಂಗಳೂರು: ಬಾಗಲಕೋಟೆಯ ಮುಗಳೊಳ್ಳಿ ತಾಂಡಾದ ಸರ್ಕಾರಿ ಶಾಲೆಯೊಂದರಲ್ಲಿ ಬುಧವಾರ ತರಗತಿ ನಡೆಯುತ್ತಿದ್ದಾಗಲೇ ಕೊಠಡಿಯ ಛಾವಣಿ ಕುಸಿದುಬಿದ್ದು ಮಕ್ಕಳು ಗಾಯಗೊಂಡ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಲೋಕಾಯುಕ್ತ ನ್ಯಾ. ಬಿ.ಎಸ್. ಪಾಟೀಲ್ ಅವರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತ, ಹೆಚ್ಚುವರಿ ಆಯುಕ್ತ, ಬಾಗಲಕೋಟೆ ಜಿಲ್ಲಾಧಿಕಾರಿ, ಬಾಗಲಕೋಟೆ ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು (ಬಿಇಒ) ಪ್ರತಿವಾದಿಯನ್ನಾಗಿಸಿ ಲೋಕಾಯುಕ್ತರು ನೋಟಿಸ್ ಜಾರಿ ಮಾಡಿದ್ದಾರೆ.

ಈ ಸಂಬಂಧ ಅಕ್ಟೋಬರ್ 7ರಂದು ಖುದ್ದು ಹಾಜರಾಗಿ ವರದಿ ಸಲ್ಲಿಸುವಂತೆ ಧಾರವಾಡದ ಹೆಚ್ಚುವರಿ ಆಯುಕ್ತರು, ಶಿಕ್ಷಣ ಇಲಾಖೆಯ ಅಧಿಕಾರಿಗಳು, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಉಪ ನಿರ್ದೇಶಕರು ಹಾಗೂ ಬಿಇಒಗೆ ಲೋಕಾಯುಕ್ತರು ನಿರ್ದೇಶಿಸಿದ್ದಾರೆ.

ಈ ಘಟನೆಯ ಹಿನ್ನೆಲೆಯಲ್ಲಿ ಬಾಗಲಕೋಟೆ ಜಿಲ್ಲೆಯ ಶಾಲೆಗಳಿಗೆ ಭೇಟಿ ನೀಡಿ, ಕಟ್ಟಡಗಳ ಸ್ಥಿತಿಗತಿ, ಸುರಕ್ಷತಾ ಮಾನದಂಡಗಳು ಮತ್ತು ಮೂಲಸೌಕರ್ಯಗಳ ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ಲೋಕಾಯುಕ್ತರು ಪೊಲೀಸರಿಗೆ ಸೂಚಿಸಿದ್ದಾರೆ.

ಬುಧವಾರ ನಡೆದ ಘಟನೆಯ ಬಳಿಕ ಬಾಗಲಕೋಟೆ ಜಿಲ್ಲಾಡಳಿತ ತ್ವರಿತ ಕ್ರಮ ಕೈಗೊಂಡಿದ್ದು, ಘಟನೆಯಲ್ಲಿ ಗಾಯಗೊಂಡಿದ್ದ 8 ಮಕ್ಕಳನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿ ಬಿಡುಗಡೆ ಮಾಡಲಾಗಿದೆ.

ಶಾಲೆಯ ಮುಖ್ಯೋಪಾಧ್ಯಾಯರು ಮತ್ತು ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆಯ ಕಿರಿಯ ಎಂಜಿನಿಯರ್ ಅವರನ್ನು ಅಮಾನತುಗೊಳಿಸಲಾಗಿದೆ. ಅದೇ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಅವರನ್ನು ಅಮಾನತುಗೊಳಿಸುವಂತೆ ಸಂಬಂಧಪಟ್ಟ ಪ್ರಾಧಿಕಾರಕ್ಕೆ ಶಿಫಾರಸು ಮಾಡಲಾಗಿದೆ ಎಂದು ಬಾಗಲಕೋಟೆ ಜಿಲ್ಲಾಡಳಿತ ತಿಳಿಸಿದೆ.