Home Blog

ಮರಣದಂಡನೆ: ನೇಣು ಶಿಕ್ಷೆಯೇ ಮುಂದುವರಿಕೆ, ಇಂಜೆಕ್ಷನ್ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್

0

ನವದೆಹಲಿ: ಭಾರತದಲ್ಲಿ ಮರಣದಂಡನೆ ಶಿಕ್ಷೆ ಜಾರಿಗೊಳಿಸಲು ನೇಣು ಹಾಕುವ ಪದ್ಧತಿಯ ಬದಲಿಗೆ ಮಾರಕ ವಿಷಕಾರಿ ಚುಚ್ಚುಮದ್ದು ಬಳಸಬೇಕೆಂಬ ಬಹುದಿನಗಳ ಚರ್ಚೆಗೆ ಭಾರತದ ಸುಪ್ರೀಂ ಕೋರ್ಟ್ ತೆರೆ ಎಳೆದಿದೆ. ಗಲ್ಲು ಶಿಕ್ಷೆಗಿಂತ ಮಾರಕ ಇಂಜೆಕ್ಷನ್ ಹೆಚ್ಚು ವೈಜ್ಞಾನಿಕ, ಶಾಂತಿಯುತ ಅಥವಾ ಮಾನವೀಯ ಎಂದು ಸಾಬೀತುಪಡಿಸಲು ಯಾವುದೇ ಗಣನೀಯ ವೈಜ್ಞಾನಿಕ ಪುರಾವೆಗಳಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಅಸ್ತಿತ್ವದಲ್ಲಿರುವ ಕಾನೂನಿನಿಂದ ನೇಣು ಶಿಕ್ಷೆಯನ್ನು ತೆಗೆದುಹಾಕಬೇಕೆಂದು ಕೋರಿ ವಕೀಲ ರಿಷಿ ಮಲ್ಹೋತ್ರಾ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರ ಪೀಠ ವಜಾಗೊಳಿಸಿದೆ.

ಮಾರಕ ಇಂಜೆಕ್ಷನ್ ಪದ್ಧತಿಯಲ್ಲಿ ಗಂಭೀರ ಲೋಪಗಳಿವೆ ಎಂದು ಪೀಠ ಅಭಿಪ್ರಾಯಪಟ್ಟಿದೆ. ಅಮೆರಿಕ ಸೇರಿದಂತೆ ಹಲವು ದೇಶಗಳಲ್ಲಿ ಮಾರಕ ಇಂಜೆಕ್ಷನ್‌ಗಾಗಿ ಮೂರು ಹಂತದ ಔಷಧಿಗಳನ್ನು ಬಳಸಲಾಗುತ್ತದೆ. ಮೊದಲನೆಯದು ಪ್ರಜ್ಞೆ ತಪ್ಪಿಸಲು, ಎರಡನೆಯದು ಸ್ನಾಯುಗಳ ಚಲನೆ ನಿಲ್ಲಿಸಲು ಮತ್ತು ಮೂರನೆಯದು ಹೃದಯ ಸ್ಥಗಿತಗೊಳಿಸಲು. ಮೊದಲ ಔಷಧ ಸಮರ್ಪಕವಾಗಿ ಕೆಲಸ ಮಾಡದಿದ್ದರೆ, ವ್ಯಕ್ತಿ ಹೊರನೋಟಕ್ಕೆ ಶಾಂತವಾಗಿ ಕಂಡರೂ ದೇಹದೊಳಗೆ ಅಸಹನೀಯ ಉರಿ ಮತ್ತು ನರಕಯಾತನೆ ಅನುಭವಿಸುತ್ತಾನೆ ಎಂದು ನ್ಯಾಯಾಲಯ ವಿವರಿಸಿದೆ.

ದೆಹಲಿ ಎನ್‌ಎಲ್‌ಯುನ ‘ಪ್ರಾಜೆಕ್ಟ್ 39ಎ’ ವರದಿಯ ಪ್ರಕಾರ, ಅಮೆರಿಕದಲ್ಲಿ ನಡೆದ 9,000 ಮರಣದಂಡನೆಗಳಲ್ಲಿ 276 ಪ್ರಕರಣಗಳು ತಾಂತ್ರಿಕವಾಗಿ ಎಡವಿವೆ ಎಂಬ ಅಂಶವನ್ನೂ ಪೀಠ ಉಲ್ಲೇಖಿಸಿದೆ. 2024ರಲ್ಲಿ ಅಮೆರಿಕದ ಇಡಾಹೊದಲ್ಲಿ ಥಾಮಸ್ ಕ್ರೀಚ್ ಎಂಬ ಅಪರಾಧಿಗೆ ರಕ್ತನಾಳ ಸಿಗದೆ 8 ಬಾರಿ ಪ್ರಯತ್ನಿಸಿ ವಿಫಲವಾದಾಗ ಶಿಕ್ಷೆಯನ್ನೇ ಮುಂದೂಡಲಾಗಿತ್ತು ಎಂಬ ಉದಾಹರಣೆಯನ್ನೂ ನೀಡಲಾಗಿದೆ.

ಭಾರತದ ಅಟಾರ್ನಿ ಜನರಲ್ ಆರ್.ವೆಂಕಟರಮಣಿ ಅವರು ವಾದ ಮಂಡಿಸಿ, ಭಾರತದಲ್ಲಿ ನೇಣು ಶಿಕ್ಷೆಯು ಅತ್ಯಂತ ವಿಶ್ವಾಸಾರ್ಹವಾಗಿದ್ದು ಎಂದೂ ವಿಫಲವಾಗಿಲ್ಲ, ಆದರೆ ಇಂಜೆಕ್ಷನ್ ವಿಧಾನದಲ್ಲಿ ರಕ್ತನಾಳ ಪತ್ತೆ ಹಚ್ಚುವುದು ಮತ್ತು ಔಷಧಿ ಕೊರತೆಯಂತಹ ಸಮಸ್ಯೆಗಳಿವೆ ಎಂದು ವಿವರಿಸಿದರು.

1983ರ ‘ದೀನಾ ವರ್ಸಸ್ ಯೂನಿಯನ್ ಆಫ್ ಇಂಡಿಯಾ’ ಪ್ರಕರಣದಲ್ಲೂ ನ್ಯಾಯಾಲಯವು ವಿದ್ಯುತ್ ಕುರ್ಚಿ, ಗ್ಯಾಸ್ ಚೇಂಬರ್ ಮತ್ತು ಇಂಜೆಕ್ಷನ್‌ಗಳಿಗಿಂತ ನೇಣು ಪದ್ಧತಿಯೇ ಹೆಚ್ಚು ತ್ವರಿತ ಹಾಗೂ ಕಡಿಮೆ ದೋಷಪೂರಿತ ಎಂದು ಅಭಿಪ್ರಾಯಪಟ್ಟಿತ್ತು. ಈ ಎಲ್ಲಾ ಐತಿಹಾಸಿಕ ಮತ್ತು ವೈಜ್ಞಾನಿಕ ಅಂಶಗಳನ್ನು ಪರಿಗಣಿಸಿದ ಸುಪ್ರೀಂ ಕೋರ್ಟ್, ಪ್ರಸ್ತುತ ಇರುವ ನೇಣು ಶಿಕ್ಷೆಯ ವಿಧಾನವೇ ಮುಂದುವರಿಯಲಿದೆ ಎಂದು ತೀರ್ಪು ನೀಡಿದೆ.

ಪವಿತ್ರಾ ಗೌಡ ಮಾಜಿ ಪತಿ ಸಂಜಯ್ ಸಿಂಗ್ ನಿಧನ: ಸಾವಿಗೆ ಕಾರಣವೇನು ಗೊತ್ತಾ?

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ-1 ಆರೋಪಿ ಪವಿತ್ರಾ ಗೌಡ ಅವರ ಮಾಜಿ ಪತಿ ಸಂಜಯ್ ಸಿಂಗ್ (42) ಮೃತಪಟ್ಟಿರುವ ವಿಚಾರ ಇದೀಗ ಬೆಳಕಿಗೆ ಬಂದಿದೆ. ರಾಜಸ್ಥಾನದಲ್ಲಿ ಸುಮಾರು 7–8 ತಿಂಗಳ ಹಿಂದೆಯೇ ಅವರು ನಿಧನರಾಗಿದ್ದಾರೆ ಎನ್ನಲಾಗಿದ್ದು, ಇಷ್ಟು ದಿನಗಳ ಬಳಿಕ ಅವರ ಸಾವಿನ ಸುದ್ದಿ ಬಹಿರಂಗವಾಗಿದೆ.

ನಟಿ ಪವಿತ್ರಾ ಗೌಡ ಹಾಗೂ ನಟ ದರ್ಶನ್ ಬಂಧನದ ಸಂದರ್ಭದಲ್ಲಿ ಸಂಜಯ್ ಸಿಂಗ್ ರಾಜಸ್ಥಾನದಿಂದ ಬೆಂಗಳೂರಿಗೆ ಬಂದಿದ್ದರು. ಮಾಜಿ ಪತ್ನಿಯ ಪರವಾಗಿ ಮಾಧ್ಯಮಗಳ ಎದುರು ನಿಂತು ಮಾತನಾಡಿದ್ದ ಅವರು, ಪವಿತ್ರಾ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದರು.

ಬಳಿಕ ರಾಜಸ್ಥಾನಕ್ಕೆ ಮರಳಿದ್ದ ಸಂಜಯ್ ಸಿಂಗ್ ಅಲ್ಲಿ ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದರು. ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಪವಿತ್ರಾ ಗೌಡ ಅವರಿಂದ ವಿಚ್ಛೇದನ ಪಡೆದ ನಂತರ ಸಂಜಯ್ ಸಿಂಗ್ ರಾಜಸ್ಥಾನದಲ್ಲೇ ನೆಲೆಸಿದ್ದರು. ದಾಂಪತ್ಯ ಜೀವನದ ಮುರಿತದ ಬಳಿಕ ಅವರು ಖಿನ್ನತೆಗೆ ಒಳಗಾಗಿದ್ದರು ಹಾಗೂ ಮದ್ಯಪಾನದ ಚಟಕ್ಕೆ ಬಲಿಯಾಗಿದ್ದರು ಎನ್ನಲಾಗಿದೆ. ಆರೋಗ್ಯದಲ್ಲಿ ಕ್ರಮೇಣ ಏರುಪೇರು ಉಂಟಾಗಿ ಕೊನೆಗೆ ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಸಂಜಯ್ ಸಿಂಗ್ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದು, ಕಂಪ್ಯೂಟರ್ ಇನ್‌ಸ್ಟಿಟ್ಯೂಟ್ ಕೂಡ ನಡೆಸುತ್ತಿದ್ದರು. 2007–08ರಲ್ಲಿ ಪವಿತ್ರಾ ಗೌಡ ಅವರನ್ನು ಪ್ರೀತಿಸಿ ವಿವಾಹವಾಗಿದ್ದರು. 2011ರಲ್ಲಿ ಅವರಿಗೆ ಖುಷಿ ಎಂಬ ಪುತ್ರಿ ಜನಿಸಿದ್ದರು. ಬಳಿಕ ದಂಪತಿ ನಡುವೆ ಭಿನ್ನಾಭಿಪ್ರಾಯ ಉಂಟಾಗಿ ಪರಸ್ಪರ ಒಪ್ಪಿಗೆಯಿಂದ ವಿಚ್ಛೇದನ ಪಡೆದಿದ್ದರು.

ವಿಚ್ಛೇದನದ ಬಳಿಕ ಬೆಂಗಳೂರು ತೊರೆದಿದ್ದ ಸಂಜಯ್ ಸಿಂಗ್ ರಾಜಸ್ಥಾನದಲ್ಲಿ ತಮ್ಮ ಜೀವನ ಮುಂದುವರಿಸಿದ್ದರು. ಆದರೆ ಪವಿತ್ರಾ ಗೌಡ ಬಂಧನದ ಸಂದರ್ಭದಲ್ಲಿ ಮಾತ್ರ ಬೆಂಗಳೂರಿಗೆ ಮರಳಿ ಮಾಜಿ ಪತ್ನಿಯ ಬೆಂಬಲಕ್ಕೆ ನಿಂತಿದ್ದರು. ಇದೀಗ ಅವರ ನಿಧನದ ಸುದ್ದಿ ಹಲವು ತಿಂಗಳ ಬಳಿಕ ಹೊರಬಂದಿರುವುದು ಪ್ರಕರಣದ ಬೆಳವಣಿಗೆಗಳ ನಡುವೆ ಮತ್ತೊಂದು ಗಮನಾರ್ಹ ಸಂಗತಿಯಾಗಿದೆ.

ಬ್ರಹ್ಮಾವರ ಸಮೀಪ ಖಾಸಗಿ ಬಸ್‌ಗೆ ಬೆಂಕಿ: ಏಳು ಪ್ರಯಾಣಿಕರು ಪಾರು!

0

ಉಡುಪಿ: ಬ್ರಹ್ಮಾವರ ಸಮೀಪ ಖಾಸಗಿ ಬಸ್‌ಗೆ ಏಕಾಏಕಿ ಬೆಂಕಿ ಹೊತ್ತಿಕೊಂಡ ಘಟನೆ ನಡೆದಿದೆ.

ಬಸ್‌ನಲ್ಲಿದ್ದ ಏಳು ಪ್ರಯಾಣಿಕರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಉಡುಪಿಯಿಂದ ಸಾಗರದತ್ತ ಖಾಸಗಿ ಬಸ್ ತೆರಳುತ್ತಿತ್ತು. ಈ ವೇಳೆ ಬಸ್‌ನಲ್ಲಿ ಏಕಾಏಕಿ ಹೊಗೆ ಕಾಣಿಸಿಕೊಂಡಿದೆ. ಬಳಿಕ ಬಸ್‌ನ ಎಲೆಕ್ಟ್ರಿಕಲ್ ಬಾಕ್ಸ್ ಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕೆಲವೇ ಕ್ಷಣಗಳಲ್ಲಿ ಬೆಂಕಿ ವ್ಯಾಪಿಸಲು ಆರಂಭಿಸಿದೆ.

ಬೆಂಕಿ ಕಾಣಿಸಿಕೊಂಡ ಕೂಡಲೇ ಬಸ್ ನಿರ್ವಾಹಕ ಸಮಯಪ್ರಜ್ಞೆ ಮೆರೆದು ಬಸ್‌ನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿದ್ದಾರೆ. ತಕ್ಷಣವೇ ಬಸ್‌ನಲ್ಲಿದ್ದ ಏಳು ಪ್ರಯಾಣಿಕರನ್ನು ಕೆಳಗಿಳಿಸಿ ಸುರಕ್ಷಿತ ಸ್ಥಳಕ್ಕೆ ಕರೆದೊಯ್ದಿದ್ದಾರೆ.

ನಂತರ ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದು ಉಡುಪಿ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ನಡೆಸಿದ್ದಾರೆ. ಕೆಲಕಾಲ ಕಾರ್ಯಾಚರಣೆ ನಡೆಸಿದ ಬಳಿಕ ಬಸ್‌ಗೆ ಹೊತ್ತಿಕೊಂಡಿದ್ದ ಬೆಂಕಿಯನ್ನು ಸಂಪೂರ್ಣವಾಗಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ನಿರ್ವಾಹಕನ ಸಮಯೋಚಿತ ಕ್ರಮದಿಂದ ಬಸ್‌ನಲ್ಲಿದ್ದ ಪ್ರಯಾಣಿಕರಿಗೆ ಯಾವುದೇ ಅಪಾಯವಾಗಿಲ್ಲ. ಹೀಗಾಗಿ ಸಂಭವಿಸಬಹುದಾಗಿದ್ದ ದೊಡ್ಡ ಅನಾಹುತವೊಂದು ತಪ್ಪಿದೆ.

ಬಸ್‌ನ ಎಲೆಕ್ಟ್ರಿಕಲ್ ಬಾಕ್ಸ್‌ನಲ್ಲಿ ಬೆಂಕಿ ಕಾಣಿಸಿಕೊಂಡಿರುವುದರಿಂದ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಆದರೆ ಬೆಂಕಿಗೆ ನಿಖರ ಕಾರಣ ಇನ್ನಷ್ಟೇ ತಿಳಿದುಬರಬೇಕಿದೆ.

ಬ್ಯಾಡ್ಮಿಂಟನ್ ತಾರೆ ಸಿಂಧು ತಲೆಯ ಮೇಲಿದ್ದ ಡಿವೈಸ್ ಹಿಂದಿನ ರಹಸ್ಯವೇನು? ಇಲ್ಲಿದೆ ಉತ್ತರ

0

ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ. ಸಿಂಧು 2026ರ ಬಿಡಬ್ಲ್ಯೂಎಫ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಗೆಲುವಿನೊಂದಿಗೆ ಅಭಿಯಾನ ಆರಂಭಿಸಿದ್ದಾರೆ. ಆದರೆ, ಪಂದ್ಯದಲ್ಲಿ ಸಿಂಧು ಅವರ ಅದ್ಭುತ ಆಟದ ಜತೆಗೆ ಅವರ ತಲೆಯ ಬದಿಯಲ್ಲಿ ಕಾಣಿಸಿಕೊಂಡಿದ್ದ ಸಣ್ಣ ಸಾಧನವೊಂದು ಇದೀಗ ಭಾರೀ ಕುತೂಹಲಕ್ಕೆ ಕಾರಣವಾಗಿದೆ.

ಕಣ್ಣಿನ ಪಕ್ಕದಲ್ಲಿ ಸ್ಟಿಕ್ಕರ್‌ನಂತೆ ಕಾಣುತ್ತಿದ್ದ ಈ ಸಾಧನ ಸಾಮಾನ್ಯ ಹೆಡ್‌ಬ್ಯಾಂಡ್ ಅಥವಾ ಫ್ಯಾಷನ್ ಆಕ್ಸೆಸರಿಯಲ್ಲ. ಇದನ್ನು ‘Temple’ ಎಂದು ಕರೆಯಲಾಗುತ್ತಿದ್ದು, ಜೋಮಾಟೊ ಸಹ-ಸಂಸ್ಥಾಪಕ ದೀಪಿಂದರ್ ಗೋಯಲ್ ನೇತೃತ್ವದ ತಂಡ ಅಭಿವೃದ್ಧಿಪಡಿಸುತ್ತಿರುವ ಪ್ರಾಯೋಗಿಕ ವೇಯರಬಲ್ ತಂತ್ರಜ್ಞಾನವಾಗಿದೆ.

ಏನಿದು ‘Temple’ ಸಾಧನ?

ಹೆಚ್ಚಿನ ಸಾಮರ್ಥ್ಯದ ಕ್ರೀಡಾಪಟುಗಳ ತರಬೇತಿ ಹಾಗೂ ಸ್ಪರ್ಧೆಯ ಸಂದರ್ಭದಲ್ಲಿ ದೇಹ ಮತ್ತು ಮೆದುಳಿಗೆ ಸಂಬಂಧಿಸಿದ ವಿವಿಧ ಮಾಹಿತಿಯನ್ನು ಸಂಗ್ರಹಿಸುವ ಉದ್ದೇಶದಿಂದ Temple ಸಾಧನವನ್ನು ಅಭಿವೃದ್ಧಿಪಡಿಸಲಾಗುತ್ತಿದೆ.

ನೆತ್ತಿಯ ಬದಿಯಲ್ಲಿ ಧರಿಸಬಹುದಾದಷ್ಟು ಸಣ್ಣದಾಗಿರುವ ಈ ಸಾಧನವನ್ನು ಪಿ.ವಿ. ಸಿಂಧು ಈಗಾಗಲೇ ತರಬೇತಿ ಸಂದರ್ಭದಲ್ಲಿ ಪರೀಕ್ಷಿಸುತ್ತಿದ್ದಾರೆ ಎನ್ನಲಾಗಿದೆ. ಇದೀಗ ನೈಜ ಸ್ಪರ್ಧೆಯಲ್ಲೂ ಅವರು ಈ ಸಾಧನವನ್ನು ಧರಿಸಿರುವುದು ಗಮನ ಸೆಳೆದಿದೆ.

ವರದಿಗಳ ಪ್ರಕಾರ, Temple ಮೂಲಕ ಮೆದುಳಿಗೆ ಹೋಗುವ ರಕ್ತದ ಹರಿವು ಸೇರಿದಂತೆ ವಿವಿಧ ನರವೈಜ್ಞಾನಿಕ ಹಾಗೂ ಶಾರೀರಿಕ ಮಾಹಿತಿಯನ್ನು ಸಂಗ್ರಹಿಸುವ ಉದ್ದೇಶವಿದೆ. ಕ್ರೀಡಾಪಟುವಿನ ದೇಹ ಮತ್ತು ಮೆದುಳು ಒತ್ತಡಕ್ಕೆ ಹೇಗೆ ಪ್ರತಿಕ್ರಿಯಿಸುತ್ತವೆ, ಮಾನಸಿಕ ಶ್ರಮದ ಸಂದರ್ಭದಲ್ಲಿ ಏನೆಲ್ಲ ಬದಲಾವಣೆಗಳಾಗುತ್ತವೆ ಹಾಗೂ ಸ್ಪರ್ಧೆಯ ವೇಳೆ ದೈಹಿಕ ಮತ್ತು ಅರಿವಿನ ಸಾಮರ್ಥ್ಯ ಹೇಗೆ ಬದಲಾಗುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಈ ಡೇಟಾ ನೆರವಾಗಬಹುದು.

ಅಂದರೆ, ಇದು ಕೇವಲ ಹೃದಯ ಬಡಿತ ಅಥವಾ ಸಾಮಾನ್ಯ ಫಿಟ್ನೆಸ್ ಮಾಹಿತಿಯನ್ನು ಅಳೆಯುವ ಸಾಧನವಲ್ಲ. ಕ್ರೀಡಾಪಟುವಿನ ಮೆದುಳು ಮತ್ತು ದೇಹದ ಪ್ರತಿಕ್ರಿಯೆಗಳನ್ನು ಇನ್ನಷ್ಟು ಆಳವಾಗಿ ಅರ್ಥಮಾಡಿಕೊಳ್ಳುವ ಪ್ರಯತ್ನ ಇದರ ಹಿಂದಿದೆ.

ಸಿಂಧು ಏಕೆ ಪಂದ್ಯದಲ್ಲೂ Temple ಧರಿಸಿದ್ದಾರೆ?

ತರಬೇತಿ ಸಂದರ್ಭದಲ್ಲಿ ಸಾಧನವನ್ನು ಪರೀಕ್ಷಿಸುವುದರಿಂದ ನಿಯಂತ್ರಿತ ಪರಿಸ್ಥಿತಿಯಲ್ಲಿನ ಡೇಟಾ ಸಿಗುತ್ತದೆ. ಆದರೆ ನೈಜ ಪಂದ್ಯದಲ್ಲಿ ಒತ್ತಡ, ದೈಹಿಕ ಪರಿಶ್ರಮ ಹಾಗೂ ಸ್ಪರ್ಧಾತ್ಮಕ ವಾತಾವರಣದಿಂದ ಕ್ರೀಡಾಪಟುವಿನ ದೇಹ ಮತ್ತು ಮೆದುಳು ವಿಭಿನ್ನ ರೀತಿಯಲ್ಲಿ ಪ್ರತಿಕ್ರಿಯಿಸಬಹುದು.

ಹೀಗಾಗಿ ಪಿ.ವಿ. ಸಿಂಧು ಪಂದ್ಯದಲ್ಲೂ Temple ಧರಿಸಿರುವುದು ನೈಜ ಸ್ಪರ್ಧಾತ್ಮಕ ಪರಿಸ್ಥಿತಿಯಲ್ಲಿ ಸಾಧನ ಹೇಗೆ ಕಾರ್ಯನಿರ್ವಹಿಸುತ್ತದೆ ಮತ್ತು ಯಾವ ರೀತಿಯ ಮಾಹಿತಿಯನ್ನು ಸಂಗ್ರಹಿಸಬಹುದು ಎಂಬುದನ್ನು ಪರೀಕ್ಷಿಸುವ ಭಾಗವಾಗಿರಬಹುದು.

ಜೋಮಾಟೊದ ಸಹ-ಸಂಸ್ಥಾಪಕ ದೀಪಿಂದರ್ ಗೋಯಲ್ ನೇತೃತ್ವದ ತಂಡ ಈ ಸಾಧನವನ್ನು ಅಭಿವೃದ್ಧಿಪಡಿಸುತ್ತಿದ್ದು, ಕ್ರೀಡಾ ಪ್ರದರ್ಶನ ಮತ್ತು ಆರೋಗ್ಯ ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸ ಪ್ರಯೋಗವಾಗಿ ಇದನ್ನು ರೂಪಿಸಲಾಗುತ್ತಿದೆ. ಸಿಂಧು ಸೇರಿದಂತೆ ಉನ್ನತ ಮಟ್ಟದ ಕ್ರೀಡಾಪಟುಗಳಿಂದ ಸಾಧನದ ಪರೀಕ್ಷೆ ಹಾಗೂ ಪ್ರತಿಕ್ರಿಯೆ ಪಡೆಯಲಾಗುತ್ತಿದೆ ಎಂದು ವರದಿಯಾಗಿದೆ.

ಸಿಂಧು ಅವರ ಪತಿ ವೆಂಕಟ ದತ್ತ ಸಾಯಿ ಕೂಡ ಈ ಸಾಧನದ ಪರೀಕ್ಷೆಯಲ್ಲಿ ಭಾಗಿಯಾಗಿದ್ದು, ಆರಂಭಿಕ ಫಲಿತಾಂಶಗಳು ಉತ್ತೇಜನಕಾರಿಯಾಗಿವೆ ಎಂದು ತಿಳಿಸಿರುವುದಾಗಿ ವರದಿಗಳು ಹೇಳುತ್ತವೆ.

ಇನ್ನೂ ಮಾರುಕಟ್ಟೆಗೆ ಬಂದಿಲ್ಲ

ಸದ್ಯ Temple ಸಾಮಾನ್ಯ ಗ್ರಾಹಕರಿಗಾಗಿ ಮಾರುಕಟ್ಟೆಯಲ್ಲಿ ಲಭ್ಯವಿರುವ ಉತ್ಪನ್ನವಲ್ಲ. ಇದು ಇನ್ನೂ ಪರೀಕ್ಷೆ ಮತ್ತು ಅಭಿವೃದ್ಧಿಯ ಹಂತದಲ್ಲಿರುವ ಪ್ರಾಯೋಗಿಕ ಸಾಧನವಾಗಿದೆ.

ಮುಂದಿನ ದಿನಗಳಲ್ಲಿ ಇದನ್ನು ವೆಲ್‌ನೆಸ್ ಉತ್ಪನ್ನವಾಗಿ ಪರಿಚಯಿಸುವ ಉದ್ದೇಶವಿದೆ ಎಂದು ವರದಿಯಾಗಿದೆ. ಸಾಧನದ ವೈಜ್ಞಾನಿಕ ಅಂಶಗಳಿಗೆ ಪೀರ್-ರಿವ್ಯೂಡ್ ಸಂಶೋಧನಾ ಅಧ್ಯಯನಗಳ ಬೆಂಬಲ ಪಡೆಯುವ ಪ್ರಯತ್ನವೂ ನಡೆಯುತ್ತಿದೆ ಎನ್ನಲಾಗಿದೆ.

Temple ವಾಣಿಜ್ಯವಾಗಿ ಬಿಡುಗಡೆಯಾದರೆ ಇದರ ಬೆಲೆ ಸುಮಾರು 1,000 ಅಮೆರಿಕನ್ ಡಾಲರ್, ಅಂದರೆ ಸುಮಾರು ₹1 ಲಕ್ಷ ಇರಬಹುದು ಎಂಬ ವರದಿಗಳಿವೆ. ಆದರೆ ಇದು ಸದ್ಯದ ಅಂದಾಜು ಮಾತ್ರವಾಗಿದ್ದು, ಅಂತಿಮ ಬೆಲೆ ಮತ್ತು ಅಧಿಕೃತ ಬಿಡುಗಡೆಯ ದಿನಾಂಕ ಇನ್ನೂ ಖಚಿತವಾಗಿಲ್ಲ.

ಹೀಗಾಗಿ ಪಿ.ವಿ. ಸಿಂಧು ಅವರ ತಲೆಯ ಮೇಲಿದ್ದ ಸಣ್ಣ ಸಾಧನ ಇದೀಗ ಕೇವಲ ಅಭಿಮಾನಿಗಳ ಕುತೂಹಲಕ್ಕೆ ಕಾರಣವಾದ ಟೆಕ್ ಗ್ಯಾಜೆಟ್ ಆಗಿ ಉಳಿದಿಲ್ಲ. ಕ್ರೀಡಾಪಟುಗಳ ಕಾರ್ಯಕ್ಷಮತೆ, ಮಾನಸಿಕ ಒತ್ತಡ, ಚೇತರಿಕೆ ಹಾಗೂ ದೇಹ-ಮೆದುಳಿನ ಪ್ರತಿಕ್ರಿಯೆಗಳನ್ನು ಡೇಟಾ ಆಧಾರಿತವಾಗಿ ಅರ್ಥಮಾಡಿಕೊಳ್ಳುವ ಹೊಸ ಪ್ರಯತ್ನವಾಗಿ ‘Temple’ ಗಮನ ಸೆಳೆಯುತ್ತಿದೆ.

ಮಂಡ್ಯ: ಗಾರ್ಮೆಂಟ್ಸ್ ಕಾರ್ಖಾನೆಯಲ್ಲಿ ಅಗ್ನಿ ಅವಘಡ; ಕೋಟ್ಯಂತರ ರೂ. ಮೌಲ್ಯದ ವಸ್ತುಗಳು ಸುಟ್ಟು ಭಸ್ಮ

0

ಮಂಡ್ಯ: ಮದ್ದೂರು ನಗರದ ಮಳವಳ್ಳಿ ರಸ್ತೆಯಲ್ಲಿರುವ ಗಿಲ್ ವುಡ್ ಫ್ಯಾಷನ್ ಪ್ರೈವೇಟ್ ಲಿಮಿಟೆಡ್ ಗಾರ್ಮೆಂಟ್ಸ್ ಕಾರ್ಖಾನೆಯಲ್ಲಿ ಗುರುವಾರ ಬೆಳಗಿನ ಜಾವ ಭಾರೀ ಬೆಂಕಿ ಕಾಣಿಸಿಕೊಂಡಿದೆ.

ಬೆಂಕಿಯ ತೀವ್ರತೆಗೆ ಕಾರ್ಖಾನೆಯಲ್ಲಿದ್ದ ಬಟ್ಟೆ, ಯಂತ್ರೋಪಕರಣಗಳು ಸೇರಿದಂತೆ ಕೋಟ್ಯಂತರ ರೂಪಾಯಿ ಮೌಲ್ಯದ ವಸ್ತುಗಳು ಸುಟ್ಟು ಭಸ್ಮವಾಗಿವೆ.

ಗುರುವಾರ ಬೆಳಿಗ್ಗೆ ಕಾರ್ಮಿಕರು ಎಂದಿನಂತೆ ಕೆಲಸಕ್ಕೆ ಆಗಮಿಸಿದಾಗ ಕಾರ್ಖಾನೆಯಲ್ಲಿ ಬೆಂಕಿ ಕಾಣಿಸಿಕೊಂಡಿರುವುದು ಬೆಳಕಿಗೆ ಬಂದಿದೆ. ಕೆಲವೇ ಸಮಯದಲ್ಲಿ ಬೆಂಕಿ ಕಾರ್ಖಾನೆಯ ಒಳಭಾಗಕ್ಕೆ ವೇಗವಾಗಿ ಹರಡಿದ್ದು, ದಟ್ಟ ಹೊಗೆ ಆವರಿಸಿಕೊಂಡಿತ್ತು.

ತಕ್ಷಣ ಅಗ್ನಿಶಾಮಕ ಇಲಾಖೆಗೆ ಮಾಹಿತಿ ನೀಡಲಾಗಿದ್ದು, ಮದ್ದೂರು ಸೇರಿದಂತೆ ವಿವಿಧೆಡೆಯಿಂದ ಮೂರಕ್ಕೂ ಹೆಚ್ಚು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಆಗಮಿಸಿವೆ. ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಲು ಹಲವು ಗಂಟೆಗಳ ಕಾಲ ಹರಸಾಹಸ ನಡೆಸಿದರು. 15ಕ್ಕೂ ಹೆಚ್ಚು ಕಾರ್ಮಿಕರು ಹಾಗೂ ಸಿಬ್ಬಂದಿ ಕೂಡ ಬೆಂಕಿ ನಂದಿಸುವ ಕಾರ್ಯದಲ್ಲಿ ನೆರವಾದರು.

ಕಾರ್ಖಾನೆಯಲ್ಲಿದ್ದ ಬಟ್ಟೆ, ಸಿದ್ಧ ಉಡುಪುಗಳು, ಯಂತ್ರೋಪಕರಣಗಳು ಹಾಗೂ ಇತರ ಸಾಮಗ್ರಿಗಳು ಬೆಂಕಿಗೆ ಆಹುತಿಯಾಗಿವೆ. ಘಟನೆಯಿಂದ ಸುಮಾರು ₹5ರಿಂದ ₹6 ಕೋಟಿಗೂ ಹೆಚ್ಚು ಮೌಲ್ಯದ ವಸ್ತುಗಳು ನಾಶವಾಗಿರುವುದಾಗಿ ಅಂದಾಜಿಸಲಾಗಿದೆ.

ಈ ಗಾರ್ಮೆಂಟ್ಸ್ ಕಾರ್ಖಾನೆ ಈ ಹಿಂದೆ ಮದ್ದೂರು ತಾಲೂಕಿನ ಸೋಮನಹಳ್ಳಿ ಗ್ರಾಮದಲ್ಲಿ ಕಾರ್ಯನಿರ್ವಹಿಸುತ್ತಿತ್ತು. ಇತ್ತೀಚೆಗೆ ಕಾರ್ಖಾನೆಯನ್ನು ಸೋಮನಹಳ್ಳಿಯಿಂದ ಮದ್ದೂರು ನಗರಕ್ಕೆ ಸ್ಥಳಾಂತರಿಸಲಾಗಿತ್ತು. ಸ್ಥಳಾಂತರಗೊಂಡ ಕೆಲವೇ ದಿನಗಳಲ್ಲಿ ಈ ಅಗ್ನಿ ಅವಘಡ ಸಂಭವಿಸಿರುವುದು ಆತಂಕಕ್ಕೆ ಕಾರಣವಾಗಿದೆ.

ಅಗ್ನಿ ಅವಘಡದ ವೇಳೆ ಕಾರ್ಮಿಕರು ಕೆಲಸಕ್ಕೆ ಆಗಮಿಸುತ್ತಿದ್ದ ಸಮಯವಾಗಿದ್ದರೂ, ಬೆಂಕಿ ಕಾಣಿಸಿಕೊಂಡ ಕೂಡಲೇ ಎಲ್ಲರೂ ಹೊರಗೆ ಬಂದಿದ್ದಾರೆ ಎನ್ನಲಾಗಿದೆ. ಹೀಗಾಗಿ ಯಾವುದೇ ಪ್ರಾಣಹಾನಿ ಸಂಭವಿಸಿರುವ ಬಗ್ಗೆ ಸದ್ಯಕ್ಕೆ ಮಾಹಿತಿ ಇಲ್ಲ.

ಮದ್ದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೆಂಕಿ ಹೇಗೆ ಹೊತ್ತಿಕೊಂಡಿತು ಎಂಬುದು ಇನ್ನೂ ಖಚಿತವಾಗಿಲ್ಲ. ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಿತೇ ಅಥವಾ ಬೇರೆ ಕಾರಣವಿದೆಯೇ ಎಂಬ ಬಗ್ಗೆ ತನಿಖೆ ನಡೆಯಬೇಕಿದೆ.

ಘಟನೆಯಿಂದ ಗಾರ್ಮೆಂಟ್ಸ್ ಮಾಲೀಕರು ಹಾಗೂ ಕಾರ್ಮಿಕರಲ್ಲಿ ಆತಂಕ ಮೂಡಿದ್ದು, ಕೋಟ್ಯಂತರ ರೂಪಾಯಿ ನಷ್ಟ ಉಂಟಾಗಿದೆ. ಅಗ್ನಿ ಅವಘಡಕ್ಕೆ ನಿಖರ ಕಾರಣ ಹಾಗೂ ಸಂಭವಿಸಿದ ಒಟ್ಟು ನಷ್ಟದ ಬಗ್ಗೆ ಅಧಿಕಾರಿಗಳ ಪರಿಶೀಲನೆಯ ನಂತರ ಸ್ಪಷ್ಟ ಮಾಹಿತಿ ಲಭ್ಯವಾಗಲಿದೆ.

ಬೆಳ್ಳೂರು ಟೋಲ್ ಬಳಿ ಬಸ್ ಪಲ್ಟಿ; ಇಬ್ಬರು ದುರ್ಮರಣ, 20ಕ್ಕೂ ಹೆಚ್ಚು ಪ್ರಯಾಣಿಕರು ಗಾಯ

0

ಮಂಡ್ಯ: ಹೆದ್ದಾರಿಯಲ್ಲಿ ಅಳವಡಿಸಿದ್ದ ಸೈನ್‌ಬೋರ್ಡ್‌ಗೆ ಖಾಸಗಿ ಬಸ್ ಡಿಕ್ಕಿ ಹೊಡೆದು ಪಲ್ಟಿಯಾದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಬೆಳ್ಳೂರು ಟೋಲ್ ಬಳಿ ನಡೆದಿದೆ.

ಮಂಗಳೂರಿನಿಂದ ಬೆಂಗಳೂರಿನತ್ತ ತೆರಳುತ್ತಿದ್ದ ಖಾಸಗಿ ಬಸ್ ಬೆಳ್ಳೂರು ಟೋಲ್ ಸಮೀಪ ವೇಗವಾಗಿ ಸಂಚರಿಸುತ್ತಿತ್ತು. ಈ ವೇಳೆ ಹೆದ್ದಾರಿಯಲ್ಲಿ ಅಳವಡಿಸಿದ್ದ ಸೈನ್‌ಬೋರ್ಡ್‌ಗೆ ಬಸ್ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಚಾಲಕನ ನಿಯಂತ್ರಣ ತಪ್ಪಿ ಬಸ್ ರಸ್ತೆಯಲ್ಲಿ ಪಲ್ಟಿಯಾಗಿದೆ.

ಅಪಘಾತದಲ್ಲಿ ಬಸ್‌ನಲ್ಲಿದ್ದ ಬೆಂಗಳೂರಿನ ನಿವಾಸಿ ಕಸ್ತೂರಿ ಶಾನ್‌ಬಾಗ್ (64) ಹಾಗೂ ಬಸ್ ಕ್ಲೀನರ್ ಅಶೋಕ್ (25) ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಬಸ್ ಪಲ್ಟಿಯಾದ ಪರಿಣಾಮ 20ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ. ಅಪಘಾತದ ಬಳಿಕ ಸ್ಥಳೀಯರು ಹಾಗೂ ಪೊಲೀಸರು ಗಾಯಾಳುಗಳನ್ನು ಬಸ್‌ನಿಂದ ಹೊರತೆಗೆದು ಆಸ್ಪತ್ರೆಗೆ ಕರೆದೊಯ್ಯಲು ನೆರವಾದರು. ಗಾಯಾಳುಗಳನ್ನು ಬೆಳ್ಳೂರು ಬಿಜಿಎಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ಘಟನೆ ಕುರಿತು ಮಾಹಿತಿ ತಿಳಿದ ಕೂಡಲೇ ಬೆಳ್ಳೂರು ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಅಪಘಾತದಿಂದ ಕೆಲಕಾಲ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೂ ಅಡಚಣೆ ಉಂಟಾಯಿತು.

ಈ ಕುರಿತು ಬೆಳ್ಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಸ್ ಅತಿವೇಗವಾಗಿ ಚಲಿಸುತ್ತಿತ್ತೇ ಅಥವಾ ಅಪಘಾತಕ್ಕೆ ಬೇರೆ ಯಾವುದೇ ಕಾರಣವಿದೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇರಾನ್ ಜೊತೆ ವ್ಯಾಪಾರ ಬಂದ್ ಮಾಡಿ; ಇಲ್ಲದಿದ್ದರೆ ಆರ್ಥಿಕ ಪರಿಣಾಮ ಎದುರಿಸಿ: ಟ್ರಂಪ್ ಎಚ್ಚರಿಕೆ

0

ವಾಷಿಂಗ್ಟನ್: ಇರಾನ್‌ಗೆ ಸಹಾಯ ಮಾಡುವ ಅಥವಾ ಆ ದೇಶದೊಂದಿಗೆ ವ್ಯವಹಾರ ನಡೆಸುವ ದೇಶಗಳ ವಿರುದ್ಧ ಕಠಿಣ ಆರ್ಥಿಕ ಕ್ರಮ ಕೈಗೊಳ್ಳುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.

ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷ ಮುಂದುವರಿದಿರುವ ನಡುವೆಯೇ ಟ್ರಂಪ್ ಈ ಎಚ್ಚರಿಕೆ ನೀಡಿದ್ದಾರೆ. ಇರಾನ್‌ಗೆ ನೆರವು ನೀಡುವ ಅಥವಾ ಅದರೊಂದಿಗೆ ವ್ಯಾಪಾರ ನಡೆಸುವ ಯಾವುದೇ ದೇಶವು ಭಾರೀ ಆರ್ಥಿಕ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ.

ಇರಾನ್‌ಗೆ ಒಪ್ಪಂದ ಮಾಡಿಕೊಳ್ಳಲು ಅಮೆರಿಕದ ಕಡೆಯಿಂದ ದೊಡ್ಡ ಅವಕಾಶ ನೀಡಲಾಗಿತ್ತು. ಆದರೆ ಇರಾನ್ ಅದನ್ನು ಬಳಸಿಕೊಳ್ಳುವಲ್ಲಿ ವಿಫಲವಾಗಿದೆ ಎಂದು ಟ್ರಂಪ್ ಹೇಳಿದ್ದಾರೆ. ಹೀಗಾಗಿ ಇರಾನ್ ವಿರುದ್ಧ ಇದುವರೆಗೆ ಕೈಗೊಳ್ಳದಷ್ಟು ಕಠಿಣ ಆರ್ಥಿಕ ಕ್ರಮಗಳನ್ನು ಜಾರಿಗೆ ತರಲಾಗುವುದು ಎಂದು ಅವರು ತಿಳಿಸಿದ್ದಾರೆ.

ಇರಾನ್‌ಗೆ ಯಾವುದೇ ರೀತಿಯ ನೆರವು ನೀಡದಂತೆ ಇತರ ದೇಶಗಳಿಗೆ ಟ್ರಂಪ್ ಸೂಚನೆ ನೀಡಿದ್ದಾರೆ. ವಿಶೇಷವಾಗಿ ಹಣಕಾಸು ಸಂಸ್ಥೆಗಳು, ವ್ಯಾಪಾರ ಸಂಸ್ಥೆಗಳು, ವಿಮಾನ ನಿಲ್ದಾಣಗಳು ಅಥವಾ ಸರ್ಕಾರಿ ಸಂಸ್ಥೆಗಳ ಮೂಲಕ ಇರಾನ್‌ಗೆ ನೆರವು ನೀಡಿದರೆ ಸಂಬಂಧಪಟ್ಟ ದೇಶಗಳು ಗಂಭೀರ ಆರ್ಥಿಕ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಇರಾನ್‌ನ ತೈಲ ಕಳ್ಳಸಾಗಣೆ, ಹಣ ವರ್ಗಾವಣೆ, ವಿನಿಮಯ ವ್ಯವಸ್ಥೆ ಹಾಗೂ ಹಡಗು ನೋಂದಣಿ ಸೇರಿದಂತೆ ಇರಾನ್‌ನ ಆರ್ಥಿಕ ವ್ಯವಸ್ಥೆಗೆ ನೆರವಾಗುವ ಮಾರ್ಗಗಳನ್ನು ತಕ್ಷಣ ಸ್ಥಗಿತಗೊಳಿಸುವಂತೆ ಟ್ರಂಪ್ ಸೂಚಿಸಿದ್ದಾರೆ.

ಇರಾನ್‌ನ ಪ್ರಮುಖ ವ್ಯಾಪಾರ ಪಾಲುದಾರರಾಗಿ ಚೀನಾ, ಭಾರತ, ಟರ್ಕಿ, ಜರ್ಮನಿ, ದಕ್ಷಿಣ ಕೊರಿಯಾ ಮತ್ತು ಜಪಾನ್ ದೇಶಗಳು ಗುರುತಿಸಿಕೊಂಡಿವೆ. ಹೀಗಾಗಿ ಟ್ರಂಪ್ ಅವರ ಈ ಎಚ್ಚರಿಕೆ ಇರಾನ್ ಜೊತೆ ವ್ಯಾಪಾರ ನಡೆಸುವ ಹಲವು ದೇಶಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

ಹಾವೇರಿಯಲ್ಲಿ ಭೀಕರ ಅಪಘಾತ: ನಿಂತಿದ್ದ ಲಾರಿಗೆ ಕಾರು ಡಿಕ್ಕಿ, ಮೂವರು ಸ್ಥಳದಲ್ಲೇ ಸಾವು!

0

ಹಾವೇರಿ: ನಿಂತಿದ್ದ ಲಾರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದು, ಮೂವರು ಗಾಯಗೊಂಡಿರುವ ಘಟನೆ ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ಚಳಗೇರಿ ಟೋಲ್ ಬಳಿ ನಡೆದಿದೆ.

ಮೃತರನ್ನು ದಾವಣಗೆರೆಯ ನಿಟವಳ್ಳಿ ಮೌನೇಶ್ವರ ಬಡಾವಣೆ ನಿವಾಸಿಗಳಾದ ಸಿದ್ದಾರ್ಥ (27), ಹಸನ್ಮುಖಿ (29) ಹಾಗೂ ಯಶೋಧಾ ಬಾಯಿ (51) ಎಂದು ಗುರುತಿಸಲಾಗಿದೆ.

ಅಪಘಾತದಲ್ಲಿ ಸೌಂದರ್ಯ (26), ಸಿಂಧು (24) ಹಾಗೂ ಒಂದು ವರ್ಷದ ಮಗು ಕಶ್ವಶ್ರೀ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ದಾವಣಗೆರೆಯ ಎಸ್.ಎಸ್. ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ರಾಣೇಬೆನ್ನೂರಿನಿಂದ ದಾವಣಗೆರೆ ಕಡೆಗೆ ಕಾರಿನಲ್ಲಿ ತೆರಳುತ್ತಿದ್ದಾಗ ಚಳಗೇರಿ ಟೋಲ್ ಬಳಿ ನಿಂತಿದ್ದ ಲಾರಿಗೆ ಕಾರು ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಘಟನೆ ಬಗ್ಗೆ ಮಾಹಿತಿ ತಿಳಿದ ಕೂಡಲೇ ರಾಣೇಬೆನ್ನೂರು ಗ್ರಾಮೀಣ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ರಾಣೇಬೆನ್ನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಜೂಜಾಟ, ಅಕ್ರಮ ಮದ್ಯ ಮಾರಾಟ: ಗದಗ ಜಿಲ್ಲೆಯಿಂದ ಶಾಂತಪ್ಪ ಗಡಿಪಾರು!

0

ಗದಗ: ಜೂಜಾಟ ಹಾಗೂ ಅಕ್ರಮ ಮದ್ಯ ಮಾರಾಟದಂತಹ ಸಮಾಜವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದ ವ್ಯಕ್ತಿಯೊಬ್ಬನನ್ನು ಗದಗ ಜಿಲ್ಲೆಯಿಂದ ಗಡಿಪಾರು ಮಾಡಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.

ಗಜೇಂದ್ರಗಡ ತಾಲೂಕಿನ ಇಟಗಿ ಗ್ರಾಮದ ನಿವಾಸಿ ಮಲ್ಲಪ್ಪ ಜಾಲಿಹಾಳ ಅವರ ಪುತ್ರ ಶಾಂತಪ್ಪ ಎಂಬಾತನನ್ನು ಗದಗ ಜಿಲ್ಲೆಯಿಂದ ಕೊಪ್ಪಳ ಜಿಲ್ಲೆಗೆ ಗಡಿಪಾರು ಮಾಡಲಾಗಿದೆ. ಈತನ ನಿರಂತರ ಸಮಾಜವಿರೋಧಿ ಚಟುವಟಿಕೆಗಳಿಂದ ಬಡ ಹಾಗೂ ದುಡಿಯುವ ವರ್ಗದ ಜನರ ಆರ್ಥಿಕ ಪರಿಸ್ಥಿತಿಗೆ ಧಕ್ಕೆಯಾಗುವುದರ ಜತೆಗೆ ಯುವಜನರ ಮೇಲೂ ದುಷ್ಪರಿಣಾಮ ಬೀರುತ್ತಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.

ಶಾಂತಪ್ಪ ವಿರುದ್ಧ ಗಜೇಂದ್ರಗಡ ಪೊಲೀಸ್ ಠಾಣೆಯಲ್ಲಿ 2015ರಿಂದ 2026ರವರೆಗೆ ಒಟ್ಟು ಐದು ಪ್ರಕರಣಗಳು ದಾಖಲಾಗಿವೆ. ಈ ಪೈಕಿ ನಾಲ್ಕು ಪ್ರಕರಣಗಳು ಜೂಜಾಟಕ್ಕೆ ಸಂಬಂಧಿಸಿದ್ದು, ಅವುಗಳಲ್ಲಿ ಕರ್ನಾಟಕ ಪೊಲೀಸ್ ಕಾಯ್ದೆ ಕಲಂ 78(3)ರಡಿ ಪ್ರಕರಣ ದಾಖಲಾಗಿ ಶಿಕ್ಷೆಯೂ ಆಗಿದೆ.

ಪ್ರಕರಣಗಳ ವಿವರ ಹೀಗಿವೆ: 91/2015, 14/2019, 77/2021 ಹಾಗೂ 62/2022. ಇದಲ್ಲದೆ, 2026ರಲ್ಲಿ ಪ್ರಕರಣ ಸಂಖ್ಯೆ 40/2026ರಡಿ ಕರ್ನಾಟಕ ಅಬಕಾರಿ ಕಾಯ್ದೆಯ ಕಲಂ 32(3) ಅಡಿಯಲ್ಲಿ ಅಕ್ರಮ ಮದ್ಯ ಮಾರಾಟಕ್ಕೆ ಸಂಬಂಧಿಸಿದ ಪ್ರಕರಣವೂ ಶಾಂತಪ್ಪ ವಿರುದ್ಧ ದಾಖಲಾಗಿದೆ.

ಹಿಂದೆ ದಾಖಲಾಗಿದ್ದ ಪ್ರಕರಣಗಳು ಹಾಗೂ ಶಿಕ್ಷೆಯ ಹೊರತಾಗಿಯೂ ತನ್ನ ನಡವಳಿಕೆಯಲ್ಲಿ ಸುಧಾರಣೆ ಮಾಡಿಕೊಳ್ಳದೆ ಸಮಾಜವಿರೋಧಿ ಚಟುವಟಿಕೆಗಳನ್ನು ಮುಂದುವರಿಸಿದ್ದರಿಂದ ಆತನ ದುರ್ವರ್ತನೆಯನ್ನು ನಿಯಂತ್ರಿಸುವ ಉದ್ದೇಶದಿಂದ ಗಜೇಂದ್ರಗಡ ಪೊಲೀಸ್ ಠಾಣೆಯಿಂದ ಗಡಿಪಾರು ಪ್ರಸ್ತಾವನೆ ಸಲ್ಲಿಸಲಾಗಿತ್ತು. ಈ ಕುರಿತು ವಿಚಾರಣೆ ನಡೆಸಿದ ಬಳಿಕ ಶಾಂತಪ್ಪನನ್ನು ಗದಗ ಜಿಲ್ಲೆಯಿಂದ ಕೊಪ್ಪಳ ಜಿಲ್ಲೆಗೆ ಗಡಿಪಾರು ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಜೂಜಾಟ ಹಾಗೂ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿರುವವರಿಗೆ ಈ ಕ್ರಮ ಎಚ್ಚರಿಕೆಯಾಗಿದೆ. ಸಮಾಜವಿರೋಧಿ ಹಾಗೂ ಕಾನೂನುಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಇಲಾಖೆ ಎಚ್ಚರಿಸಿದೆ.

ಹಬ್ಬದ ದಿನ ಬೆಲೆ ಮತ್ತಷ್ಟು ಹೆಚ್ಚಾಗುವ ಆತಂಕ; ಮುಂಚಿತವಾಗಿಯೇ ಹೂ ಖರೀದಿಗೆ ಮುಗಿಬಿದ್ದ ಜನ!

0

ಬೆಂಗಳೂರು: ಆಷಾಢ ಮಾಸ ಮುಗಿದು ಶ್ರಾವಣ ಮಾಸ ಆರಂಭವಾಗುತ್ತಿದ್ದಂತೆ ಸಾಲು ಸಾಲು ಹಬ್ಬಗಳ ಸಂಭ್ರಮ ಶುರುವಾಗಿದೆ.

ಶ್ರಾವಣ ಮಾಸದ ಪ್ರಮುಖ ಹಬ್ಬವಾದ ವರಮಹಾಲಕ್ಷ್ಮೀ ಹಬ್ಬಕ್ಕೆ ಇನ್ನೇನು ಕೆಲವೇ ಗಂಟೆಗಳು ಬಾಕಿ ಇರುವ ಹಿನ್ನೆಲೆಯಲ್ಲಿ ಬೆಂಗಳೂರಿನ ಮಾರುಕಟ್ಟೆಗಳಲ್ಲಿ ಖರೀದಿ ಭರಾಟೆ ಜೋರಾಗಿದೆ. ಅದರಲ್ಲೂ ಕೆ.ಆರ್. ಮಾರ್ಕೆಟ್‌ನಲ್ಲಿ ಹೂವು, ಹಣ್ಣು ಹಾಗೂ ಪೂಜಾ ಸಾಮಗ್ರಿಗಳ ಖರೀದಿಗೆ ಜನರು ಮುಗಿಬಿದ್ದಿದ್ದಾರೆ.

ಶುಕ್ರವಾರ ವರಮಹಾಲಕ್ಷ್ಮೀ ಹಬ್ಬವಿದ್ದರೂ ಬುಧವಾರದಿಂದಲೇ ಮಾರುಕಟ್ಟೆಗಳಲ್ಲಿ ಜನದಟ್ಟಣೆ ಹೆಚ್ಚಾಗಿದೆ. ಕೆ.ಆರ್. ಮಾರ್ಕೆಟ್‌ನ ಹೂವಿನ ಮಾರುಕಟ್ಟೆಯಲ್ಲಿ ಕಾಲಿಡಲೂ ಜಾಗವಿಲ್ಲದಷ್ಟು ಜನ ಸೇರಿದ್ದಾರೆ. ಹಬ್ಬದ ದಿನ ಹೂವುಗಳ ಬೆಲೆ ಮತ್ತಷ್ಟು ಹೆಚ್ಚಾಗಬಹುದು ಎಂಬ ಆತಂಕದಿಂದ ಹಲವರು ಮುಂಚಿತವಾಗಿಯೇ ಹೂವುಗಳನ್ನು ಖರೀದಿಸುತ್ತಿದ್ದಾರೆ.

ಯಾವ ಹೂವಿಗೆ ಎಷ್ಟು ಬೆಲೆ?

ಹಬ್ಬದ ಬೇಡಿಕೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಹಲವು ಹೂವುಗಳ ಬೆಲೆ ಏರಿಕೆಯಾಗಿದೆ.

  • ಕನಕಾಂಬರ: ಕೆಜಿಗೆ ₹3,000–₹4,000
  • ಮಲ್ಲಿಗೆ: ಕೆಜಿಗೆ ₹1,000–₹2,000
  • ಮಳ್ಳೆ ಹೂವು: ಕೆಜಿಗೆ ₹600–₹800
  • ಕಾಕಡ ಹೂವು: ಕೆಜಿಗೆ ₹600–₹700
  • ಸೇವಂತಿಗೆ: ಕೆಜಿಗೆ ₹500–₹800
  • ಗುಲಾಬಿ: ಕೆಜಿಗೆ ₹400
  • ಕಣಗಲೆ ಹೂವು: ಕೆಜಿಗೆ ₹250
  • ತಾವರೆ ಹೂವು: ಒಂದು ಜೋಡಿಗೆ ₹100
  • ಬಾಳೆಕಂದು: ಒಂದು ಜೊತೆ ₹100
  • ಸುಗಂಧರಾಜ ಹಾರ: ₹1,500–₹2,000
  • ಹಣ್ಣುಗಳ ಬೆಲೆಯಲ್ಲೂ ಏರಿಕೆ:

ಹೂವುಗಳ ಜತೆಗೆ ಹಣ್ಣುಗಳ ಬೆಲೆಯಲ್ಲೂ ಕೊಂಚ ಏರಿಕೆಯಾಗಿದೆ. ಸೇಬಿನ ಬೆಲೆ ಕೆಜಿಗೆ ₹200ರಿಂದ ₹250ಕ್ಕೆ ತಲುಪಿದೆ. ಉಳಿದ ಹಣ್ಣುಗಳ ಬೆಲೆಯಲ್ಲೂ ಕೆಜಿಗೆ ಸುಮಾರು ₹10ರಿಂದ ₹20ರವರೆಗೆ ಹೆಚ್ಚಳವಾಗಿದೆ.

ವರಮಹಾಲಕ್ಷ್ಮೀ ಹಬ್ಬದ ಪೂಜೆ ಹಾಗೂ ಅಲಂಕಾರಕ್ಕೆ ಹೂವು, ಹಣ್ಣುಗಳಿಗೆ ಹೆಚ್ಚಿನ ಬೇಡಿಕೆ ಇರುವುದರಿಂದ ಮಾರುಕಟ್ಟೆಯಲ್ಲಿ ಬೆಲೆ ಏರಿಕೆಯಾಗಿದೆ. ಬೆಲೆ ಹೆಚ್ಚಿದ್ದರೂ ಹಬ್ಬದ ಸಂಭ್ರಮಕ್ಕೆ ಅಗತ್ಯ ವಸ್ತುಗಳನ್ನು ಖರೀದಿಸಲು ಜನರು ಹೆಚ್ಚಿನ ಸಂಖ್ಯೆಯಲ್ಲಿ ಮಾರುಕಟ್ಟೆಗೆ ಬರುತ್ತಿದ್ದಾರೆ. ಕೆ.ಆರ್. ಮಾರ್ಕೆಟ್ ಸುತ್ತಮುತ್ತ ಜನದಟ್ಟಣೆ ಹೆಚ್ಚಾಗಿರುವುದರಿಂದ ವಾಹನ ಸಂಚಾರಕ್ಕೂ ತೊಂದರೆ ಉಂಟಾಗಿದೆ.