Home Blog

9ನೇ ತರಗತಿ ಪಠ್ಯದಲ್ಲಿ ಚುನಾವಣಾ ಆಯೋಗದ ವಿಶೇಷ ಪರಿಷ್ಕರಣೆ ಪ್ರಕ್ರಿಯೆ ಸೇರ್ಪಡೆ

0

ನವದೆಹಲಿ: ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್‌ಸಿಇಆರ್‌ಟಿ) ಪ್ರಸಕ್ತ ಶೈಕ್ಷಣಿಕ ವರ್ಷಕ್ಕಾಗಿ ಪ್ರಕಟಿಸಿರುವ 9ನೇ ತರಗತಿಯ ಹೊಸ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ಭಾರತೀಯ ಚುನಾವಣಾ ಆಯೋಗದ ವಿಶೇಷ ತೀವ್ರ ಪರಿಷ್ಕರಣೆ (Special Intensive Revision) ಪ್ರಕ್ರಿಯೆಯನ್ನು ಮೊದಲ ಬಾರಿಗೆ ವಿವರವಾಗಿ ಸೇರಿಸಲಾಗಿದೆ.

‘ಅಂಡರ್ಸ್ಟ್ಯಾಂಡಿಂಗ್ ಸೊಸೈಟಿ: ಇಂಡಿಯಾ ಆಂಡ್ ಬಿಯಾಂಡ್’ ಹೆಸರಿನ ಈ ಹೊಸ ಪಠ್ಯಪುಸ್ತಕದಲ್ಲಿ ಭಾರತೀಯ ಪ್ರಜಾಪ್ರಭುತ್ವದ ವಿವಿಧ ಅಂಶಗಳೊಂದಿಗೆ ತುರ್ತು ಪರಿಸ್ಥಿತಿ ಹಾಗೂ ಚುನಾವಣಾ ಆಯೋಗದ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಗೆ ವಿಶೇಷ ಸ್ಥಾನ ನೀಡಲಾಗಿದೆ.

‘ಚುನಾವಣೆಗಳು’ ಎಂಬ ಅಧ್ಯಾಯದಲ್ಲಿ ವಿಶೇಷ ತೀವ್ರ ಪರಿಷ್ಕರಣೆ ಕುರಿತು ವಿವರಿಸಲಾಗಿದ್ದು, ಯಾವುದೇ ಅರ್ಹ ನಾಗರಿಕ ಮತದಾರರ ಪಟ್ಟಿಯಿಂದ ಹೊರಗುಳಿಯದಂತೆ ಹಾಗೂ ಅನರ್ಹ ವ್ಯಕ್ತಿಗಳು ಪಟ್ಟಿಯಲ್ಲಿ ಸೇರದಂತೆ ನೋಡಿಕೊಳ್ಳುವುದು ಈ ಪ್ರಕ್ರಿಯೆಯ ಮುಖ್ಯ ಉದ್ದೇಶ ಎಂದು ತಿಳಿಸಲಾಗಿದೆ.

ವಿಶೇಷವಾಗಿ 18 ವರ್ಷ ಪೂರೈಸಿದರೂ ಮತದಾರರ ಪಟ್ಟಿಗೆ ಹೆಸರು ನೋಂದಾಯಿಸದ ಯುವ ಮತದಾರರನ್ನು ಗುರುತಿಸಿ ಸೇರ್ಪಡೆಗೊಳಿಸುವಲ್ಲಿ ಈ ಪರಿಷ್ಕರಣೆ ಸಹಕಾರಿಯಾಗುತ್ತದೆ. ಜೊತೆಗೆ ಮೃತಪಟ್ಟವರು, ಶಾಶ್ವತವಾಗಿ ಸ್ಥಳಾಂತರಗೊಂಡವರು, ನಕಲಿ ಹೆಸರುಗಳು ಹಾಗೂ ಪತ್ತೆಯಾಗದ ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕುವ ವ್ಯವಸ್ಥೆಯನ್ನೂ ಪಠ್ಯದಲ್ಲಿ ವಿವರಿಸಲಾಗಿದೆ.

ಸಾರ್ವಜನಿಕರಿಂದ ಆಕ್ಷೇಪಣೆಗಳನ್ನು ಆಹ್ವಾನಿಸಿ, ಪರಿಶೀಲನೆ ನಡೆಸಿದ ಬಳಿಕವೇ ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ ಎಂದು ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ. ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಸಲು ಭಾರತೀಯ ಚುನಾವಣಾ ಆಯೋಗ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸುತ್ತಿದೆ ಎಂಬುದನ್ನೂ ವಿದ್ಯಾರ್ಥಿಗಳಿಗೆ ಪರಿಚಯಿಸಲಾಗಿದೆ.

ಇದೇ ವೇಳೆ, 2024ರ ಲೋಕಸಭಾ ಚುನಾವಣೆಯ ವೇಳೆಗೆ ದೇಶದಲ್ಲಿ 96.8 ಕೋಟಿಗೂ ಹೆಚ್ಚು ನೋಂದಾಯಿತ ಮತದಾರರಿದ್ದರು ಎಂಬ ಅಂಕಿ-ಅಂಶವನ್ನು ನೀಡಲಾಗಿದೆ. ಭಾರತದಲ್ಲಿ ಮಹಿಳೆಯರಿಗೆ ಆರಂಭದಿಂದಲೇ ಸಮಾನ ಮತದಾನದ ಹಕ್ಕು ದೊರೆತಿರುವುದು, ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳಾ ಮೀಸಲಾತಿ ಹಾಗೂ ಗುಜರಾತ್ ಮತ್ತು ಮಹಾರಾಷ್ಟ್ರದ ಮಹಿಳಾ ಸ್ನೇಹಿ ಪಂಚಾಯತ್‌ಗಳ ಉದಾಹರಣೆಗಳನ್ನೂ ಪಠ್ಯದಲ್ಲಿ ಸೇರಿಸಲಾಗಿದೆ.

ಇದಲ್ಲದೆ, ಎಲೆಕ್ಟ್ರಾನಿಕ್ ಮತಯಂತ್ರಗಳು (ಇವಿಎಂ), ಮತದಾರರು ಪರಿಶೀಲಿಸಬಹುದಾದ ಪೇಪರ್ ಆಡಿಟ್ ಟ್ರಯಲ್ (ವಿವಿಪ್ಯಾಟ್), ಮಾದರಿ ನೀತಿ ಸಂಹಿತೆ ಹಾಗೂ ಮತದಾರರ ಜಾಗೃತಿ ಅಭಿಯಾನಗಳ ಕುರಿತು ಸಹ ಹೊಸ ಪಠ್ಯದಲ್ಲಿ ಸಮಗ್ರ ಮಾಹಿತಿ ನೀಡಲಾಗಿದೆ.

ನನ್ನ ಮಗಳು ತಪ್ಪಿತಸ್ಥಳಾದರೆ ಅದೇ ಕೋಟೆಯಿಂದ ತಳ್ಳಿಬಿಡಿ: ಸಿಯಾ ಪೋಷಕರ ಆಕ್ರೋಶ

0

ಮುಂಬೈ: ಟ್ರೆಕ್ಕಿಂಗ್ ನೆಪದಲ್ಲಿ ಭಾವಿ ಪತಿ ಕೇತನ್ ಅಗರ್ವಾಲ್ ರನ್ನು ಕಂದಕಕ್ಕೆ ತಳ್ಳಿ ಕೊಲೆ ಮಾಡಿದ ಆರೋಪ ಎದುರಿಸುತ್ತಿರುವ ಸಿಯಾ ಗೋಯಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ಪೋಷಕರು ಭಾವನಾತ್ಮಕ ಪ್ರತಿಕ್ರಿಯೆ ನೀಡಿದ್ದಾರೆ.

ತಮ್ಮ ಮಗಳು ತಪ್ಪಿತಸ್ಥಳಾಗಿರುವುದು ಸಾಬೀತಾದರೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿರುವ ಅವರು, ಕೇತನ್ ಅವರನ್ನು ತಳ್ಳಿದ ಅದೇ ಸ್ಥಳದಿಂದ ಸಿಯಾಳನ್ನು ತಳ್ಳಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಸಿಯಾಳ ತಾಯಿ ಪೂಜಾ ಗೋಯಲ್, ಮದುವೆ ವಿಚಾರದಲ್ಲಿ ತಮ್ಮ ಮಗಳು ಯಾವುದೇ ಅಸಮಾಧಾನ ವ್ಯಕ್ತಪಡಿಸಿರಲಿಲ್ಲ ಎಂದು ಹೇಳಿದ್ದಾರೆ.

ಸಿಯಾ ಮತ್ತು ಕೇತನ್ ಅವರ ವಿವಾಹ ಇದೇ ವರ್ಷದ ನವೆಂಬರ್‌ನಲ್ಲಿ ರಾಜಸ್ಥಾನದ ಉದಯಪುರ ಅರಮನೆಯಲ್ಲಿ ನಡೆಯಬೇಕಾಗಿತ್ತು. ಈ ದುರ್ಘಟನೆ ಕೇತನ್ ಕುಟುಂಬಕ್ಕೆ ಮಾತ್ರವಲ್ಲ, ನಮ್ಮ ಕುಟುಂಬಕ್ಕೂ ತೀವ್ರ ನೋವುಂಟು ಮಾಡಿದೆ ಎಂದು ಅವರು ಹೇಳಿದ್ದಾರೆ.

“ಕೇತನ್ ಕುಟುಂಬಕ್ಕಿಂತಲೂ ಹೆಚ್ಚು ನೋವು ನಮ್ಮ ಕುಟುಂಬ ಅನುಭವಿಸುತ್ತಿದೆ. ಆರೋಪಿ ನನ್ನ ಮಗಳಾಗಿದ್ದರೂ, ತಪ್ಪಿತಸ್ಥಳಾಗಿದ್ದರೆ ಆಕೆಗೆ ಅತ್ಯಂತ ಕಠಿಣ ಶಿಕ್ಷೆಯಾಗಬೇಕು. ಕೇತನ್ ಅವರನ್ನು ತಳ್ಳಿದ ಸ್ಥಳದಿಂದಲೇ ಅವಳನ್ನೂ ತಳ್ಳಬೇಕು” ಎಂದು ಪೂಜಾ ಗೋಯಲ್ ಹೇಳಿದ್ದಾರೆ.

ಸಿಯಾಳ ತಂದೆ ಪ್ರವೀಣ್ ಗೋಯಲ್ ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದು, “ಆರೋಪಿ ನನ್ನ ಸ್ವಂತ ಮಗಳೇ ಆಗಿದ್ದರೂ, ಕಾನೂನಿನ ಪ್ರಕಾರ ಕಠಿಣ ಶಿಕ್ಷೆ ವಿಧಿಸಬೇಕು. ಕೇತನ್ ಅವರನ್ನು ತಳ್ಳಿದ ಅದೇ ಕೋಟೆಯಿಂದ ಅವಳನ್ನೂ ತಳ್ಳಬೇಕು” ಎಂದು ಹೇಳಿದ್ದಾರೆ.

ಈ ಘಟನೆಯನ್ನು ಇನ್ನೂ ನಂಬಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿರುವ ಅವರು, ಕೇತನ್ ಅವರನ್ನು ತಮ್ಮ ಮಗನಂತೆಯೇ ಪ್ರೀತಿಸುತ್ತಿದ್ದೆವು ಎಂದಿದ್ದಾರೆ. “ಕೇತನ್ ತಂದೆ-ತಾಯಿ ತಮ್ಮ ಮಗನನ್ನು ಕಳೆದುಕೊಂಡು ದುಃಖದಲ್ಲಿದ್ದಾರೆ. ಅದೇ ರೀತಿ ನಾವು ಕೂಡ ಅಪಾರ ನೋವಿನಲ್ಲಿದ್ದೇವೆ. ಒಬ್ಬ ಒಳ್ಳೆಯ ಹುಡುಗನನ್ನು ಕಳೆದುಕೊಂಡಿರುವುದು ನಮ್ಮೆಲ್ಲರಿಗೂ ದೊಡ್ಡ ಆಘಾತ” ಎಂದು ಭಾವುಕರಾಗಿ ಹೇಳಿದ್ದಾರೆ.

ಇದೇ ವೇಳೆ, ಚೇತನ್ ಎಂಬ ವ್ಯಕ್ತಿಯ ಬಗ್ಗೆ ತಮಗೆ ಯಾವುದೇ ಮಾಹಿತಿ ಇರಲಿಲ್ಲ ಎಂದು ಸಿಯಾ ಪೋಷಕರು ಸ್ಪಷ್ಟಪಡಿಸಿದ್ದಾರೆ. ನಿಶ್ಚಿತಾರ್ಥವಾದ ಬಳಿಕ ಸಿಯಾ ಕೇತನ್ ಜೊತೆಯೇ ಮಾತನಾಡುತ್ತಿದ್ದಳು. ಚೇತನ್ ಯಾರು ಎಂಬುದೇ ಗೊತ್ತಿರಲಿಲ್ಲ. ಆತನನ್ನು ನಾವು ಎಂದಿಗೂ ನೋಡಿಲ್ಲ, ಮಾತನಾಡಿಲ್ಲ ಹಾಗೂ ಆತ ನಮ್ಮ ಮನೆಗೂ ಬಂದಿರಲಿಲ್ಲ ಎಂದು ತಿಳಿಸಿದ್ದಾರೆ.

ಕೇತನ್ ಕುಟುಂಬ ಸಿಯಾಳನ್ನು ತಮ್ಮ ಮನೆಯ ಮಗಳಂತೆ ನೋಡಿಕೊಳ್ಳುತ್ತಿತ್ತು. ಆಕೆಯ ಹುಟ್ಟುಹಬ್ಬ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಅವರು ಅದ್ಧೂರಿಯಾಗಿ ಆಯೋಜಿಸಿದ್ದರು. ಮದುವೆ ಸಿದ್ಧತೆಗಳು ಸುಗಮವಾಗಿ ನಡೆಯುತ್ತಿದ್ದು, ಈ ಸಂಬಂಧದ ಬಗ್ಗೆ ಸಿಯಾ ಎಂದಿಗೂ ಅಸಮಾಧಾನ ವ್ಯಕ್ತಪಡಿಸಿರಲಿಲ್ಲ ಎಂದು ಪೋಷಕರು ಹೇಳಿದ್ದಾರೆ.

ಪ್ರಸ್ತುತ ಪ್ರಕರಣದ ತನಿಖೆಯನ್ನು ಪೊಲೀಸರು ಮುಂದುವರಿಸಿದ್ದು, ಸಿಯಾ ಗೋಯಲ್ ಹಾಗೂ ಚೇತನ್ ಚೌಧರಿ ವಿರುದ್ಧ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಯುತ್ತಿದೆ.

ವೈಶಾಖ್ ಆತ್ಮಹತ್ಯೆ ಪ್ರಕರಣ; ಕೃಷಿ ತಾಪಂಡ ಹೇಳಿಕೆ ದಾಖಲು, ಮೊಬೈಲ್ ಪರಿಶೀಲಿಸಿದ ಪೊಲೀಸರಿಗೆ ಸಿಕ್ಕಿದ್ದೇನು?

ಬೆಂಗಳೂರು: ಉದ್ಯಮಿ ವೈಶಾಖ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್.ಆರ್.ನಗರ ಪೊಲೀಸರು ನಟಿ ಕೃಷಿ ತಾಪಂಡ ಅವರ ಹೇಳಿಕೆ ದಾಖಲಿಸಿಕೊಂಡಿದ್ದು, ಅವರ ಮೊಬೈಲ್ ಫೋನ್ ಪರಿಶೀಲನೆ ನಡೆಸಿದ್ದಾರೆ. ತನಿಖೆಯಲ್ಲಿ ಯಾವುದೇ ಅನುಮಾನಾಸ್ಪದ ಸಂದೇಶಗಳು ಪತ್ತೆಯಾಗದ ಹಿನ್ನೆಲೆಯಲ್ಲಿ ಮೊಬೈಲ್ ಅನ್ನು ವಾಪಸ್ ನೀಡಿದ್ದಾರೆ.

ಕೃಷಿ ತಾಪಂಡ, ತಾವು ಮೂರು ದಿನ ಕ್ಷೇಮವನದಲ್ಲಿದ್ದು, ಬುಧವಾರ ರಾತ್ರಿ 11 ಗಂಟೆ ಸುಮಾರಿಗೆ ಫ್ಲ್ಯಾಟ್‌ಗೆ ಹಿಂದಿರುಗಿದ್ದಾಗಿ ತಿಳಿಸಿದ್ದಾರೆ. ತಮ್ಮ ಬಳಿಯಿದ್ದ ಕೀಯಿಂದ ಬಾಗಿಲು ತೆರೆದಾಗ ವೈಶಾಖ್ ಫ್ಯಾನ್‌ಗೆ ನೇಣು ಬಿಗಿದುಕೊಂಡಿರುವುದು ಕಂಡುಬಂದಿತ್ತು. ಬಳಿಕ ಸೀರೆಯನ್ನು ಕತ್ತರಿಸಿ ಮೃತದೇಹವನ್ನು ಕೆಳಗಿಳಿಸಿ, ಪೊಲೀಸರಿಗೆ ಹಾಗೂ ಕುಟುಂಬದವರಿಗೆ ಮಾಹಿತಿ ನೀಡಿದ್ದಾಗಿ ಹೇಳಿದ್ದಾರೆ.

ಪೊಲೀಸರು ಅವರ ಮೊಬೈಲ್‌ನಲ್ಲಿದ್ದ ಕಾಲ್ ಲಿಸ್ಟ್, ವಾಟ್ಸ್ಆಪ್ ಚಾಟ್ ಮತ್ತು ಮೆಸೇಜ್‌ಗಳನ್ನು ಪರಿಶೀಲಿಸಿದ್ದು, ಯಾವುದೇ ಅನುಮಾನಾಸ್ಪದ ಅಂಶ ಪತ್ತೆಯಾಗಿಲ್ಲ.

ಪ್ರಕರಣ ಸಂಬಂಧ ವೈಶಾಖ್ ಪತ್ನಿ ಮೇಘನಾ ನೀಡಿದ ದೂರಿನಲ್ಲಿ, ಎಲಿಗೆಂಟ್ ಟೆರಸ್ ಅಪಾರ್ಟ್‌ಮೆಂಟ್‌ನ 403ನೇ ಫ್ಲ್ಯಾಟ್‌ನಲ್ಲಿ ವೈಶಾಖ್ ಮೃತದೇಹ ಪತ್ತೆಯಾಗಿತ್ತು. ಫ್ಯಾನ್‌ಗೆ ಸೀರೆಯಿಂದ ನೇಣು ಬಿಗಿದ ಸ್ಥಿತಿಯಲ್ಲಿ ಶವ ಕಂಡುಬಂದಿದ್ದು, ಕುತ್ತಿಗೆ ಭಾಗದಲ್ಲಿ ಗುರುತುಗಳಿದ್ದವು ಎಂದು ಉಲ್ಲೇಖಿಸಿದ್ದಾರೆ.

ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಆತ್ಮಹತ್ಯೆ ಕುರಿತು ಯಾರ ಮೇಲೂ ಅನುಮಾನ ವ್ಯಕ್ತಪಡಿಸದ ಮೇಘನಾ, ಸಾವಿಗೆ ನಿಖರ ಕಾರಣ ಪತ್ತೆಹಚ್ಚುವಂತೆ ಮನವಿ ಮಾಡಿದ್ದಾರೆ. ಈ ದೂರಿನ ಆಧಾರದಲ್ಲಿ ಆರ್.ಆರ್.ನಗರ ಪೊಲೀಸರು ಅನುಮಾನಾಸ್ಪದ ಸಾವು (UDR) ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.

ಡೋರ್ ಗೈಡ್ ವೇಯಲ್ಲಿ ಸಿಲುಕಿದ ಮೆಟಲ್ ಚೈನ್: ಮೆಟ್ರೋ ಬಾಗಿಲು ಲಾಕ್ ಆಗದೇ ಇದ್ದುದರ ಅಸಲಿ ಕಾರಣ ಬಹಿರಂಗ

ಬೆಂಗಳೂರು: ನೇರಳೆ ಮಾರ್ಗದ ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣದಲ್ಲಿ ರೈಲಿನ ಬಾಗಿಲು ಮುಚ್ಚದೇ ಉಂಟಾದ ತಾತ್ಕಾಲಿಕ ಸೇವಾ ವ್ಯತ್ಯಯಕ್ಕೆ ಸಂಬಂಧಿಸಿದಂತೆ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್) ಸ್ಪಷ್ಟನೆ ನೀಡಿದೆ.

ರೈಲಿನಲ್ಲಿ ಯಾವುದೇ ತಾಂತ್ರಿಕ ದೋಷ ಕಂಡುಬಂದಿಲ್ಲ. ಪ್ರಯಾಣಿಕರೊಬ್ಬರ ಲೋಹದ ಸರ (ಮೆಟಲ್ ಚೈನ್) ಬಾಗಿಲಿನ ಡೋರ್ ಗೈಡ್‌ವೇಯಲ್ಲಿ ಸಿಲುಕಿದ್ದೇ ಘಟನೆಗೆ ಕಾರಣ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.

ನಿನ್ನೆ ಸಂಜೆ ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣದಲ್ಲಿ ರೈಲಿನ ಬಾಗಿಲು ಸರಿಯಾಗಿ ಮುಚ್ಚದ ಹಿನ್ನೆಲೆಯಲ್ಲಿ ಸಂಜೆ 7.36ರಿಂದ 7.54ರವರೆಗೆ ಮೆಟ್ರೋ ಸಂಚಾರದಲ್ಲಿ ತಾತ್ಕಾಲಿಕ ವ್ಯತ್ಯಯ ಉಂಟಾಗಿತ್ತು. ಘಟನೆ ಬಳಿಕ ಕಾರ್ಯಾಚರಣೆ ಮತ್ತು ನಿರ್ವಹಣಾ ತಂಡಗಳು ಸ್ಥಳದಲ್ಲೇ ಪರಿಶೀಲನೆ ನಡೆಸಿ ಪ್ರಾಥಮಿಕ ತನಿಖೆ ಕೈಗೊಂಡಿದ್ದವು.

ತನಿಖೆ ವೇಳೆ, ಪ್ರಯಾಣಿಕರೊಬ್ಬರ ಲೋಹದ ಸರ ರೈಲಿನ ಬಾಗಿಲಿನ ಡೋರ್ ಗೈಡ್‌ವೇಯಲ್ಲಿ ಸಿಲುಕಿಕೊಂಡಿದ್ದರಿಂದ ಬಾಗಿಲು ಸಂಪೂರ್ಣವಾಗಿ ಮುಚ್ಚಲು ಸಾಧ್ಯವಾಗಿರಲಿಲ್ಲ ಎಂಬುದು ಪತ್ತೆಯಾಗಿದೆ. ಇದರಿಂದ ಸುರಕ್ಷತಾ ವ್ಯವಸ್ಥೆ ಸಕ್ರಿಯಗೊಂಡು ರೈಲು ಸಂಚಾರದಲ್ಲಿ ಕೆಲಕಾಲ ವಿಳಂಬ ಉಂಟಾಗಿದೆ.

ಘಟನೆ ಬಳಿಕ ರೈಲು ಹಾಗೂ ಬಾಗಿಲಿನ ವ್ಯವಸ್ಥೆಯನ್ನು ಸಂಪೂರ್ಣ ತಾಂತ್ರಿಕವಾಗಿ ಪರಿಶೀಲಿಸಲಾಗಿದ್ದು, ರೈಲಿನ ಉಪಕರಣಗಳಲ್ಲಿ ಯಾವುದೇ ತಾಂತ್ರಿಕ ದೋಷ ಕಂಡುಬಂದಿಲ್ಲ ಎಂದು ಬಿಎಂಆರ್‌ಸಿಎಲ್ ಸ್ಪಷ್ಟಪಡಿಸಿದೆ.

ಪ್ರಯಾಣಿಕರ ಸುರಕ್ಷತೆಯೇ ನಮ್ಮ ಅತ್ಯುನ್ನತ ಆದ್ಯತೆಯಾಗಿದ್ದು, ಸುರಕ್ಷಿತ, ವಿಶ್ವಾಸಾರ್ಹ ಮತ್ತು ನಿರಂತರ ಮೆಟ್ರೋ ಸೇವೆ ಒದಗಿಸುವುದು ನಮ್ಮ ಬದ್ಧತೆಯಾಗಿದೆ ಎಂದು ಬಿಎಂಆರ್‌ಸಿಎಲ್ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ತಿಳಿಸಿದ್ದಾರೆ.

ಪ್ರಯಾಣಿಕರು ರೈಲು ಏರು-ಇಳಿಯುವ ವೇಳೆ ಬ್ಯಾಗ್, ಬಟ್ಟೆ, ಸರ ಸೇರಿದಂತೆ ಯಾವುದೇ ವಸ್ತುಗಳು ಬಾಗಿಲಿನ ನಡುವೆ ಸಿಲುಕದಂತೆ ಎಚ್ಚರಿಕೆ ವಹಿಸುವಂತೆ ಬಿಎಂಆರ್‌ಸಿಎಲ್ ಮನವಿ ಮಾಡಿದೆ.

ಏರ್ ಇಂಡಿಯಾ ಫ್ಲೈಟ್ ದುರಂತಕ್ಕೆ ಖಲಿಸ್ತಾನಿ ಉಗ್ರರೇ ಕಾರಣ; ನಾಲ್ಕು ದಶಕಗಳ ಬಳಿಕ ಕೆನಡಾ ಗುಪ್ತಚರ ಸಂಸ್ಥೆಯ ಮಹತ್ವದ ಹೇಳಿಕೆ

0

ಒಟ್ಟಾವ: 1985ರಲ್ಲಿ ಸಂಭವಿಸಿದ್ದ ಏರ್ ಇಂಡಿಯಾ ಫ್ಲೈಟ್ 182 (ಕನಿಷ್ಕ) ಬಾಂಬ್ ಸ್ಫೋಟ ಪ್ರಕರಣದ ಕುರಿತು ನಾಲ್ಕು ದಶಕಗಳ ಬಳಿಕ ಕೆನಡಾದ ಗುಪ್ತಚರ ಸಂಸ್ಥೆ (ಸಿಎಸ್ಐಎಸ್) ಮಹತ್ವದ ಒಪ್ಪಿಗೆಯನ್ನು ನೀಡಿದೆ. ಈ ಭೀಕರ ವಿಮಾನ ದುರಂತದ ಹಿಂದೆ ಕೆನಡಾ ಮೂಲದ ಖಲಿಸ್ತಾನಿ ಉಗ್ರರ ಕೈವಾಡವಿತ್ತು ಎಂದು ಸಂಸ್ಥೆ ಮೊದಲ ಬಾರಿಗೆ ಅಧಿಕೃತವಾಗಿ ಒಪ್ಪಿಕೊಂಡಿದೆ.

ಭಯೋತ್ಪಾದನೆ ಸಂತ್ರಸ್ತರ ರಾಷ್ಟ್ರೀಯ ಸ್ಮರಣ ದಿನದ ಅಂಗವಾಗಿ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಪ್ರಕಟಿಸಿದ ಸಂದೇಶದಲ್ಲಿ ಸಿಎಸ್ಐಎಸ್, ಈ ಘಟನೆಯನ್ನು “ಕೆನಡಾದ ಇತಿಹಾಸದಲ್ಲೇ ಅತ್ಯಂತ ಭೀಕರ ಭಯೋತ್ಪಾದಕ ದಾಳಿ” ಎಂದು ಬಣ್ಣಿಸಿದೆ.

ಸಂಸ್ಥೆಯ ಹೇಳಿಕೆಯ ಪ್ರಕಾರ, 1985ರ ಜೂನ್ 23ರಂದು ಕೆನಡಾದಲ್ಲೇ ಕಾರ್ಯಾಚರಣೆ ನಡೆಸುತ್ತಿದ್ದ ಖಲಿಸ್ತಾನಿ ಉಗ್ರರು ಇರಿಸಿದ್ದ ಸೂಟ್‌ಕೇಸ್ ಬಾಂಬ್ ಸ್ಫೋಟಗೊಂಡ ಪರಿಣಾಮ ಏರ್ ಇಂಡಿಯಾ ಫ್ಲೈಟ್ 182 ಪತನಗೊಂಡಿತ್ತು. ಈ ದಾಳಿಯಲ್ಲಿ ವಿಮಾನದಲ್ಲಿದ್ದ ಎಲ್ಲಾ 329 ಪ್ರಯಾಣಿಕರು ಮತ್ತು ಸಿಬ್ಬಂದಿ ಸಾವನ್ನಪ್ಪಿದ್ದರು. ಮೃತರಲ್ಲಿ ಹೆಚ್ಚಿನವರು ಕೆನಡಾ ಪ್ರಜೆಗಳಾಗಿದ್ದರು ಎಂದು ಸಿಎಸ್ಐಎಸ್ ಉಲ್ಲೇಖಿಸಿದೆ.

ಇದೇ ವೇಳೆ ಕೆನಡಾದ ಪ್ರಧಾನಿ ಮಾರ್ಕ್ ಕಾರ್ನೆ ಕೂಡ ಸಂತ್ರಸ್ತರಿಗೆ ಗೌರವ ನಮನ ಸಲ್ಲಿಸಿದ್ದು, ಕನಿಷ್ಕ ಬಾಂಬ್ ಸ್ಫೋಟವನ್ನು ದೇಶದ ಇತಿಹಾಸದಲ್ಲೇ ನಡೆದ ಅತ್ಯಂತ ಕ್ರೂರ ಭಯೋತ್ಪಾದಕ ದಾಳಿ ಎಂದು ಬಣ್ಣಿಸಿದ್ದಾರೆ. ಹಿಂಸಾತ್ಮಕ ಉಗ್ರವಾದವನ್ನು ನಿರ್ಮೂಲನೆ ಮಾಡಲು ಕೆನಡಾ ಬದ್ಧವಾಗಿದೆ ಎಂದು ಅವರು ಪುನರುಚ್ಚರಿಸಿದ್ದಾರೆ.

1985ರ ಜೂನ್ 23ರಂದು ಮಾಂಟ್ರಿಯಲ್‌ನಿಂದ ಲಂಡನ್ ಮಾರ್ಗವಾಗಿ ನವದೆಹಲಿಗೆ ಹೊರಟಿದ್ದ ಏರ್ ಇಂಡಿಯಾ ಫ್ಲೈಟ್ 182, ಲಂಡನ್‌ನ ಹೀಥ್ರೂ ವಿಮಾನ ನಿಲ್ದಾಣ ತಲುಪಲು ಸುಮಾರು 45 ನಿಮಿಷಗಳು ಬಾಕಿ ಇರುವಾಗ ಐರ್ಲೆಂಡ್ ಕರಾವಳಿ ಸಮೀಪದ ಅಟ್ಲಾಂಟಿಕ್ ಮಹಾಸಾಗರದ ಮೇಲೆ ಹಾರುತ್ತಿದ್ದ ವೇಳೆ ಸೂಟ್‌ಕೇಸ್‌ನಲ್ಲಿದ್ದ ಬಾಂಬ್ ಸ್ಫೋಟಗೊಂಡಿತ್ತು.

ಸ್ಫೋಟದ ತೀವ್ರತೆಗೆ ವಿಮಾನ ಸಮುದ್ರಕ್ಕೆ ಅಪ್ಪಳಿಸಿದ್ದು, ವಿಮಾನದಲ್ಲಿದ್ದ ಎಲ್ಲ 329 ಮಂದಿ ಮೃತಪಟ್ಟಿದ್ದರು. ಮೃತರಲ್ಲಿ 268 ಕೆನಡಾ ಪ್ರಜೆಗಳು, ಅವರಲ್ಲಿ ಹೆಚ್ಚಿನವರು ಭಾರತೀಯ ಮೂಲದವರಾಗಿದ್ದು, 24 ಮಂದಿ ಭಾರತೀಯ ಪ್ರಜೆಗಳೂ ಸೇರಿದ್ದರು. ದುರಂತದ ಬಳಿಕ ಮಹಾಸಾಗರದಿಂದ ಕೇವಲ 131 ಮೃತದೇಹಗಳನ್ನು ಮಾತ್ರ ಪತ್ತೆಹಚ್ಚಲಾಗಿತ್ತು.

1984ರಲ್ಲಿ ಅಮೃತಸರದ ಸ್ವರ್ಣ ಮಂದಿರದಲ್ಲಿ ಅಡಗಿದ್ದ ಸಶಸ್ತ್ರ ಉಗ್ರರನ್ನು ಹೊರಹಾಕಲು ಭಾರತೀಯ ಸೇನೆ ನಡೆಸಿದ್ದ ‘ಆಪರೇಷನ್ ಬ್ಲೂ ಸ್ಟಾರ್’ಗೆ ಪ್ರತೀಕಾರವಾಗಿ ಖಲಿಸ್ತಾನಿ ಉಗ್ರರು ಈ ಸಂಚು ರೂಪಿಸಿದ್ದರು ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿತ್ತು.

ನಾಲ್ಕು ದಶಕಗಳ ಬಳಿಕ ಕೆನಡಾದ ಗುಪ್ತಚರ ಸಂಸ್ಥೆಯ ಈ ಅಧಿಕೃತ ಒಪ್ಪಿಗೆ, ಕನಿಷ್ಕ ವಿಮಾನ ದುರಂತ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆಯಾಗಿ ಪರಿಗಣಿಸಲಾಗಿದೆ.

ಫಾರ್ಮ್‌ಹೌಸ್ ಗೇಟ್ ಬಳಿ ಭೀಕರ ಸ್ಫೋಟ: ನಾಡಬಾಂಬ್ ಮೇಲೆ ಕಾಲಿಟ್ಟ ವಕೀಲನ ಸ್ಥಿತಿ ಗಂಭೀರ ಗಾಯ

0

ರಾಮನಗರ: ಹಾರೋಹಳ್ಳಿ ತಾಲೂಕಿನ ಸುಂಡಗಟ್ಟ ಗ್ರಾಮದಲ್ಲಿ ನಾಡಬಾಂಬ್ ಸ್ಫೋಟಗೊಂಡು ಬೆಂಗಳೂರಿನ ವಕೀಲ ಮೋಹನ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಫಾರ್ಮ್‌ಹೌಸ್ ಗೇಟ್ ಬಳಿ ಇರಿಸಲಾಗಿದ್ದ ಸ್ಫೋಟಕದ ಮೇಲೆ ಕಾಲಿಟ್ಟಾಗ ಈ ದುರ್ಘಟನೆ ಸಂಭವಿಸಿದೆ.

ಸುಂಡಗಟ್ಟ ಗ್ರಾಮದಲ್ಲಿರುವ ತಮ್ಮ ಫಾರ್ಮ್‌ಹೌಸ್‌ನಲ್ಲಿ ಗುರುವಾರ ರಾತ್ರಿ ತಂಗಿದ್ದ ಮೋಹನ್, ಶುಕ್ರವಾರ ಬೆಳಗ್ಗೆ ಹೊರಬರುವಾಗ ಗೇಟ್ ಸಮೀಪ ಇರಿಸಿದ್ದ ನಾಡಬಾಂಬ್ ಗಮನಿಸದೆ ಅದರ ಮೇಲೆ ಕಾಲಿಟ್ಟಿದ್ದಾರೆ. ಕೂಡಲೇ ಸ್ಫೋಟ ಸಂಭವಿಸಿ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಗಾಯಾಳು ಮೋಹನ್ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಘಟನಾ ಸ್ಥಳಕ್ಕೆ ಕೋಡಿಹಳ್ಳಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕಾಡು ಪ್ರಾಣಿಗಳ ಬೇಟೆ ಉದ್ದೇಶದಿಂದ ನಾಡಬಾಂಬ್ ಇರಿಸಲಾಗಿರಬಹುದು ಎಂಬ ಶಂಕೆಯಡಿ ತನಿಖೆ ಮುಂದುವರಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸ್ಫೋಟಕವನ್ನು ಇಟ್ಟವರ ಪತ್ತೆಗೆ ಕಾರ್ಯಾಚರಣೆ ಆರಂಭಿಸಿದ್ದಾರೆ.

‘ಡಿಕೆಶಿ ಜೊತೆ ಬಿಸಿನೆಸ್, ಅಡ್ಡ ಮತದಾನ ಆರೋಪ ಎಲ್ಲವೂ ಸುಳ್ಳು’: ಧರ್ಮಸ್ಥಳದಲ್ಲಿ ಬಿ.ವೈ. ವಿಜಯೇಂದ್ರ ಸ್ಪಷ್ಟನೆ

0

ಮಂಗಳೂರು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ರಾಜಕೀಯ ಮತ್ತು ವ್ಯವಹಾರಿಕ ಸಂಬಂಧ ಹೊಂದಿದ್ದಾರೆ ಎಂಬ ಆರೋಪಗಳನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಧರ್ಮಸ್ಥಳದಲ್ಲಿ ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ. ವಿಧಾನ ಪರಿಷತ್ ಚುನಾವಣೆಯ ಅಡ್ಡ ಮತದಾನ ಪ್ರಕರಣದಲ್ಲೂ ತಮ್ಮ ವಿರುದ್ಧ ನಡೆದಿರುವ ಅಪಪ್ರಚಾರಕ್ಕೆ ಶ್ರೀ ಮಂಜುನಾಥ ಸ್ವಾಮಿಯ ಸನ್ನಿಧಿಯಲ್ಲೇ ಉತ್ತರ ನೀಡಿದ್ದಾರೆ.

ಧರ್ಮಸ್ಥಳದ ಸನ್ನಿಧಿ ಗೆಸ್ಟ್‌ಹೌಸ್‌ನಲ್ಲಿ ಸುದ್ದಿಗೋಷ್ಠಿ ನಡೆಸಿದ ವಿಜಯೇಂದ್ರ, ಧರ್ಮಸ್ಥಳಕ್ಕೆ ತಾವು ಕೇವಲ ದರ್ಶನಕ್ಕಾಗಿ ಬಂದಿದ್ದು, ಯಾವುದೇ ಆಣೆ-ಪ್ರಮಾಣ ಮಾಡುವ ಉದ್ದೇಶ ಇರಲಿಲ್ಲ ಎಂದು ಹೇಳಿದರು. ಪಕ್ಷದ ಹಿರಿಯರ ಸಲಹೆಯಂತೆ ಈ ವಿಚಾರವನ್ನು ಪಕ್ಷದೊಳಗೇ ಬಗೆಹರಿಸಿಕೊಳ್ಳುವ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದರು.

ಅಡ್ಡ ಮತದಾನದ ಘಟನೆ ತಮಗೂ ಹಾಗೂ ಪಕ್ಷದ ಕಾರ್ಯಕರ್ತರಿಗೂ ಆಘಾತ ತಂದಿದೆ. ಸತ್ಯ ಹೊರಬರಬೇಕು ಎಂಬ ಕಾರಣಕ್ಕೆ ಈ ಹಿಂದೆ ಆಣೆ-ಪ್ರಮಾಣದ ಬಗ್ಗೆ ಮಾತನಾಡಿದ್ದೆ. ಆದರೆ ಈಗ ಆ ನಿರ್ಧಾರದಿಂದ ಹಿಂದೆ ಸರಿದಿದ್ದೇನೆ ಎಂದು ಹೇಳಿದರು.

ಡಿ.ಕೆ. ಶಿವಕುಮಾರ್ ಅವರೊಂದಿಗೆ ಯಾವುದೇ ರಾಜಕೀಯ ಅಥವಾ ವ್ಯಾವಹಾರಿಕ ಸಂಬಂಧ ಇಲ್ಲ. ಸಿಎಂ ಪರವಾಗಿ ಅಡ್ಡ ಮತದಾನಕ್ಕೆ ಸಹಕರಿಸಿದ್ದೇನೆ ಎಂಬ ಆರೋಪಗಳು ಸಂಪೂರ್ಣ ಸುಳ್ಳು. ಮುಖ್ಯಮಂತ್ರಿಯಾಗಿರುವ ಕಾರಣ ಅವರಿಗೆ ನೀಡಬೇಕಾದ ಸಾಂಸ್ಥಿಕ ಗೌರವವನ್ನಷ್ಟೇ ನೀಡಿದ್ದೇನೆ ಎಂದು ವಿಜಯೇಂದ್ರ ಸ್ಪಷ್ಟಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಓರ್ವ ಸಂಸದ, ಎಂಟು ಶಾಸಕರು ಹಾಗೂ ಇಬ್ಬರು ಎಂಎಲ್‌ಸಿಗಳು ಉಪಸ್ಥಿತರಿದ್ದರು. ತಮ್ಮ ವಿರುದ್ಧ ಸುಳ್ಳು ಆರೋಪ ಮಾಡಿದವರಿಗೂ ದೇವರು ಒಳ್ಳೆಯದು ಮಾಡಲಿ ಎಂದು ವಿಜಯೇಂದ್ರ ಪ್ರತಿಕ್ರಿಯಿಸಿದರು.

ಆರೋಪಿ ಬದಲು ತಮ್ಮನ ಬಂಧನಕ್ಕೆ ಹೈಕೋರ್ಟ್ ಆಕ್ರೋಶ; ‘ಯೂನಿಫಾರಂ ಇದೆ ಎಂದು ಏನು ಬೇಕಾದರೂ ಮಾಡಬಹುದೇ?’ – ಪೊಲೀಸರಿಗೆ ತರಾಟೆ

ಬೆಂಗಳೂರು: ಮದುವೆಯಾಗುವುದಾಗಿ ನಂಬಿಸಿ ವಂಚಿಸಿದ ಪ್ರಕರಣದಲ್ಲಿ ಆರೋಪಿ ಪ್ರೊಬೇಷನರಿ ಎಸ್‌ಐ ಬದಲಿಗೆ ಅವರ ಸಹೋದರನನ್ನು ಬಂಧಿಸಿದ ಪೊಲೀಸರ ಕ್ರಮವನ್ನು ಕರ್ನಾಟಕ ಹೈಕೋರ್ಟ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.

‘ಯೂನಿಫಾರಂ ಇದೆ ಎಂದು ಏನು ಬೇಕಾದರೂ ಮಾಡುತ್ತೀರಾ?’ ಎಂದು ಪ್ರಶ್ನಿಸಿರುವ ನ್ಯಾಯಾಲಯ, ಕಾನೂನು ಉಲ್ಲಂಘಿಸಿ ನಿರಪರಾಧಿಗಳನ್ನು ಬಂಧಿಸುವ ಪೊಲೀಸರ ವಿರುದ್ಧ ಅಮಾನತು ಸೇರಿದಂತೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದೆ.

ದಾವಣಗೆರೆಯ ನಿವಾಸಿ ಎನ್. ದರ್ಶನ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಈ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ.

ವಿಚಾರಣೆ ವೇಳೆ, ಪ್ರಕರಣದಲ್ಲಿ ಯಾವುದೇ ತಪ್ಪಿಲ್ಲದಿದ್ದರೂ ಆರೋಪಿಯ ಸಹೋದರನನ್ನು ಏಕೆ ಬಂಧಿಸಲಾಗಿದೆ ಎಂದು ಪ್ರಶ್ನಿಸಿದ ನ್ಯಾಯಪೀಠ, ವಿನಾಕಾರಣ ಬಂಧಿಸುವುದು ಕೆಲ ಪೊಲೀಸರಿಗೆ ಅಭ್ಯಾಸವಾಗಿರುವಂತೆ ಕಾಣುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿತು. ಬಂಧನಕ್ಕೊಳಗಾಗುವ ವ್ಯಕ್ತಿಯ ಜೀವನದ ಮೇಲೆ ಅದರ ಪರಿಣಾಮ ಏನಾಗಬಹುದು ಎಂಬ ಅರಿವು ಪೊಲೀಸರಿಗೆ ಇರಬೇಕು ಎಂದು ಕೋರ್ಟ್‌ ಹೇಳಿತು.

ಬಂಧನ ಅಗತ್ಯವಿರುವ ಪ್ರಕರಣಗಳಲ್ಲಿ ಆರೋಪಿಗಳನ್ನು ಬಂಧಿಸಲು ಹಿಂದೇಟು ಹಾಕುವ ಪೊಲೀಸರು, ಅಗತ್ಯವಿಲ್ಲದ ಪ್ರಕರಣಗಳಲ್ಲಿ ನಿರಪರಾಧಿಗಳನ್ನು ಬಂಧಿಸಿ ಕಿರುಕುಳ ನೀಡುವುದು ಸರಿಯಲ್ಲ. ಇಂತಹ ಕ್ರಮಗಳು ಕಾನೂನು ದುರುಪಯೋಗಕ್ಕೆ ಕಾರಣವಾಗುತ್ತವೆ ಎಂದು ನ್ಯಾಯಾಲಯ ತೀಕ್ಷ್ಣವಾಗಿ ಟೀಕಿಸಿತು.

ಈ ವೇಳೆ, ತಪ್ಪಾಗಿ ಬಂಧನ ಮಾಡಿದ ಪೊಲೀಸ್ ಅಧಿಕಾರಿಯ ವಿರುದ್ಧ ಇಲಾಖಾ ತನಿಖೆ ನಡೆಸುವಂತೆ ಸೂಚಿಸಿದ ನ್ಯಾಯಪೀಠ, ಇಂತಹ ಪ್ರಕರಣಗಳಲ್ಲಿ ಮ್ಯಾಜಿಸ್ಟ್ರೇಟ್‌ಗಳೂ ಎಚ್ಚರಿಕೆಯಿಂದ ವರ್ತಿಸಬೇಕು ಎಂದು ತಿಳಿಸಿತು. ಕಾನೂನು ಉಲ್ಲಂಘಿಸಿ ಬಂಧನ ನಡೆಸುವ ಪೊಲೀಸರ ವಿರುದ್ಧ ಅಮಾನತು ಸೇರಿದಂತೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿತು.

ಪ್ರಕರಣಕ್ಕೆ ಸಂಬಂಧಿಸಿದಂತೆ ಅನಗತ್ಯವಾಗಿ ಪ್ರೊಬೇಷನರಿ ಎಸ್‌ಐ ಅವರ ಸಹೋದರನನ್ನು ಬಂಧಿಸಿದ್ದ ಚಿತ್ರದುರ್ಗ ಮಹಿಳಾ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ವಿರುದ್ಧ ಇಲಾಖಾ ತನಿಖೆ ನಡೆಸುವಂತೆ ಆದೇಶಿಸಿರುವ ನ್ಯಾಯಾಲಯ, ಪ್ರಕರಣದ ಮುಂದಿನ ವಿಚಾರಣೆಯನ್ನು ಮುಂದೂಡಿದೆ.

ಪ್ರಕರಣದ ಹಿನ್ನೆಲೆ

ಪ್ರೊಬೇಷನರಿ ಎಸ್‌ಐ ವರುಣ್ ಕುಮಾರ್ ಅವರು ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂ ಮೂಲಕ ಮಹಿಳೆಯೊಬ್ಬರೊಂದಿಗೆ ಸ್ನೇಹ ಬೆಳೆಸಿದ್ದರು. ಬಳಿಕ ಇಬ್ಬರ ನಡುವೆ ಆತ್ಮೀಯ ಸಂಬಂಧ ಬೆಳೆದಿತ್ತು. ನಂತರ ಆ ಮಹಿಳೆಗೆ ಈಗಾಗಲೇ ವಿವಾಹವಾಗಿರುವುದು ತಿಳಿದ ಹಿನ್ನೆಲೆಯಲ್ಲಿ ವರುಣ್ ಕುಮಾರ್ ಸಂಬಂಧವನ್ನು ಕಡಿತಗೊಳಿಸಿದ್ದರು.

ಇದಾದ ಬಳಿಕ ಮಹಿಳೆ, ಮದುವೆಯಾಗುವುದಾಗಿ ನಂಬಿಸಿ ವಂಚಿಸಿದ್ದಾರೆ ಎಂದು ಆರೋಪಿಸಿ ದೂರು ದಾಖಲಿಸಿದ್ದರು. ಈ ದೂರಿನ ಆಧಾರದ ಮೇಲೆ ಪೊಲೀಸರು ಪ್ರೊಬೇಷನರಿ ಎಸ್‌ಐ ಹಾಗೂ ಅವರ ಕುಟುಂಬ ಸದಸ್ಯರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು. ತನಿಖೆ ವೇಳೆ ಆರೋಪಿಯ ಸಹೋದರನನ್ನೂ ಬಂಧಿಸಲಾಗಿತ್ತು.

ಬಂಧನವನ್ನು ಪ್ರಶ್ನಿಸಿ ಆರೋಪಿ ಹಾಗೂ ಕುಟುಂಬ ಸದಸ್ಯರು ಹೈಕೋರ್ಟ್ ಮೆಟ್ಟಿಲೇರಿದ್ದರು. ಕಳೆದ ವಾರ ನ್ಯಾಯಾಲಯ ಪೊಲೀಸರ ಕ್ರಮವನ್ನು ಪ್ರಶ್ನಿಸಿದ ಬೆನ್ನಲ್ಲೇ ಬಂಧಿತನನ್ನು ಪೊಲೀಸರು ಬಿಡುಗಡೆ ಮಾಡಿದ್ದರು.

ಶುಕ್ರವಾರ ಲಕ್ಷ್ಮೀ ಪೂಜೆ ಹೀಗೆ ಮಾಡಿದರೆ ಧನಸಂಪತ್ತು ವೃದ್ಧಿ! ಈ ತಪ್ಪುಗಳನ್ನು ಮಾತ್ರ ಮಾಡಬೇಡಿ

0

ಹಿಂದೂ ಧರ್ಮದಲ್ಲಿ ಶುಕ್ರವಾರವನ್ನು ಅತ್ಯಂತ ಶುಭ ಮತ್ತು ಪವಿತ್ರ ದಿನವೆಂದು ಪರಿಗಣಿಸಲಾಗುತ್ತದೆ.

ಈ ದಿನ ಸಂಪತ್ತು, ಸಮೃದ್ಧಿ ಹಾಗೂ ಐಶ್ವರ್ಯದ ಅಧಿದೇವತೆಯಾದ ಮಹಾಲಕ್ಷ್ಮಿ ದೇವಿಯನ್ನು ಭಕ್ತಿಯಿಂದ ಆರಾಧಿಸಿದರೆ ಮನೆಯಲ್ಲಿ ಸುಖ-ಶಾಂತಿ, ಆರ್ಥಿಕ ಅಭಿವೃದ್ಧಿ ಮತ್ತು ಸೌಭಾಗ್ಯ ನೆಲೆಸುತ್ತದೆ ಎಂಬ ನಂಬಿಕೆ ಇದೆ.

ಶುಕ್ರವಾರ ಲಕ್ಷ್ಮೀ ಪೂಜೆ ಏಕೆ ವಿಶೇಷ?

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶುಕ್ರವಾರವು ಶುಕ್ರ ಗ್ರಹಕ್ಕೆ ಸಂಬಂಧಿಸಿದ ದಿನವಾಗಿದೆ. ಶುಕ್ರನು ಐಶ್ವರ್ಯ, ಸೌಂದರ್ಯ, ದಾಂಪತ್ಯ ಸುಖ ಹಾಗೂ ಭೌತಿಕ ಸಮೃದ್ಧಿಯ ಕಾರಕ ಎಂದು ಹೇಳಲಾಗುತ್ತದೆ. ಈ ದಿನ ಲಕ್ಷ್ಮೀ ಪೂಜೆ ಮಾಡುವುದರಿಂದ ಶುಕ್ರನ ಅನುಗ್ರಹ ಲಭಿಸಿ, ಕುಟುಂಬದ ಯೋಗಕ್ಷೇಮ ವೃದ್ಧಿಯಾಗುತ್ತದೆ ಎನ್ನಲಾಗುತ್ತದೆ.

ಪೂಜೆಗೆ ಮುನ್ನ ಮಾಡಬೇಕಾದ ಸಿದ್ಧತೆ:

  • ಬೆಳಿಗ್ಗೆ ಬೇಗ ಎದ್ದು ಸ್ನಾನ ಮಾಡಿ ಮನೆ ಹಾಗೂ ಪೂಜಾ ಕೋಣೆಯನ್ನು ಸ್ವಚ್ಛಗೊಳಿಸಿ.
  • ಮನೆಯ ಮುಖ್ಯ ಬಾಗಿಲಿನ ಬಳಿ ನೀರು ತುಂಬಿದ ಚೊಂಬು ಇಟ್ಟು ಶುಭ ದೀಪ ಹಚ್ಚಿ.
  • ಲಕ್ಷ್ಮೀ ದೇವಿಯ ವಿಗ್ರಹ ಅಥವಾ ಭಾವಚಿತ್ರವನ್ನು ಹೂವುಗಳಿಂದ ಅಲಂಕರಿಸಿ.
  • ಲಕ್ಷ್ಮೀ ದೇವಿಗೆ ಪ್ರಿಯವಾದ ಪೂಜೆ
  • ಹಸುವಿನ ತುಪ್ಪ ಅಥವಾ ಎಳ್ಳೆಣ್ಣೆಯಿಂದ ದೀಪ ಹಚ್ಚಿ.
  • ಕಮಲ ಅಥವಾ ಕೆಂಪು ಬಣ್ಣದ ಹೂವುಗಳಿಂದ ಅರ್ಚನೆ ಮಾಡಿ.
  • ಲಕ್ಷ್ಮೀ ಅಷ್ಟೋತ್ತರ ಅಥವಾ ಸಹಸ್ರನಾಮ ಪಠಿಸಿ.
  • ಹಾಲು, ಪಾಯಸ ಅಥವಾ ಸಕ್ಕರೆ ಪೊಂಗಲ್‌ ನೈವೇದ್ಯವಾಗಿ ಅರ್ಪಿಸಿ.
  • ಕೊನೆಯಲ್ಲಿ ಕುಟುಂಬದೊಂದಿಗೆ ಆರತಿ ಪಡೆದು ಪ್ರಸಾದ ಸ್ವೀಕರಿಸಿ.
  • ಲಕ್ಷ್ಮೀ ಕಟಾಕ್ಷಕ್ಕೆ ಸರಳ ಪರಿಹಾರ

ಶುಕ್ರವಾರ ಸಂಜೆ ಪ್ರದೋಷ ಕಾಲದಲ್ಲಿ ಮನೆಯ ಈಶಾನ್ಯ ದಿಕ್ಕಿನಲ್ಲಿ ಎರಡು ದೀಪಗಳನ್ನು ಹಚ್ಚಿ, “ಓಂ ಶ್ರೀ ಮಹಾಲಕ್ಷ್ಮಿ ನಮಃ” ಮಂತ್ರವನ್ನು 108 ಬಾರಿ ಜಪಿಸಿದರೆ ಆರ್ಥಿಕ ಪ್ರಗತಿ ಹಾಗೂ ಸಕಾರಾತ್ಮಕ ಶಕ್ತಿ ವೃದ್ಧಿಯಾಗುತ್ತದೆ ಎಂಬ ನಂಬಿಕೆ ಇದೆ.

ಶುಕ್ರವಾರ ಈ ಕೆಲಸಗಳನ್ನು ಮಾಡಬೇಡಿ:

  • ಕಬ್ಬಿಣದ ಪಾತ್ರೆಗಳು ಅಥವಾ ಕಬ್ಬಿಣದ ವಸ್ತುಗಳನ್ನು ಖರೀದಿಸಬೇಡಿ.
  • ಪ್ರಮುಖ ಆಸ್ತಿ ಖರೀದಿ ಅಥವಾ ಮಾರಾಟವನ್ನು ಸಾಧ್ಯವಾದರೆ ತಪ್ಪಿಸಿ.
  • ಅನಗತ್ಯವಾಗಿ ಸಾಲ ನೀಡುವುದು ಅಥವಾ ಸಾಲ ಪಡೆಯುವುದನ್ನು ತಪ್ಪಿಸಿ.
  • ಮನೆ ಕೊಳಕಾಗಿ ಇಡಬೇಡಿ ಹಾಗೂ ಸಂಜೆ ದೀಪ ಹಚ್ಚಿದ ಬಳಿಕ ಕಸವನ್ನು ಹೊರಗೆ ಹಾಕಬೇಡಿ.

ಡಿ.ಕೆ. ಶಿವಕುಮಾರ್ ಜೊತೆ ಯಾವುದೇ ವ್ಯವಹಾರವಿಲ್ಲ; ಅಪಪ್ರಚಾರ ಮಾಡುವವರಿಗೆ ದೇವರೇ ಬುದ್ಧಿ ಕೊಡಲಿ: ಬಿವೈ ವಿಜಯೇಂದ್ರ

ಧರ್ಮಸ್ಥಳ: ನನ್ನ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಡುವೆ ಯಾವುದೇ ರೀತಿಯ ವ್ಯವಹಾರ ಅಥವಾ ಆತ್ಮೀಯತೆ ಇಲ್ಲ. ಅವರು ಕೆಪಿಸಿಸಿ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಒಬ್ಬ ರಾಜಕಾರಣಿಯಾಗಿ ನೀಡಬೇಕಾದ ಗೌರವವನ್ನು ಮಾತ್ರ ನೀಡಿದ್ದೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸ್ಪಷ್ಟಪಡಿಸಿದರು.

ದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ನಾಯಕರನ್ನು ಭೇಟಿ ಮಾಡಿದ ಬಳಿಕ ನೇರವಾಗಿ ಧರ್ಮಸ್ಥಳಕ್ಕೆ ಆಗಮಿಸಿದ ವಿಜಯೇಂದ್ರ, ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ವಿಧಾನ ಪರಿಷತ್ ಚುನಾವಣೆಯಲ್ಲಿ ನಡೆದ ಅಡ್ಡಮತದಾನದ ಬಳಿಕ ತಮ್ಮ ವಿರುದ್ಧ ಕೇಳಿಬರುತ್ತಿರುವ ಆರೋಪಗಳಿಗೆ ಪ್ರತಿಕ್ರಿಯಿಸಿದ ಅವರು, ಅಡ್ಡಮತದಾನಕ್ಕೆ ತಾನೇ ಕಾರಣ ಎಂಬ ರೀತಿಯಲ್ಲಿ ಅಪಪ್ರಚಾರ ಮಾಡಲಾಗುತ್ತಿದೆ. ರಾಜ್ಯ ಬಿಜೆಪಿ ಅಧ್ಯಕ್ಷರು ಹಾಗೂ ರಾಜ್ಯದ ಮುಖ್ಯಮಂತ್ರಿಗಳು ಜೊತೆಯಾಗಿದ್ದಾರೆ ಎಂಬ ಸುಳ್ಳು ಸುದ್ದಿಗಳನ್ನು ಹರಡಲಾಗುತ್ತಿದೆ. ಆದರೆ ಡಿ.ಕೆ. ಶಿವಕುಮಾರ್ ಮತ್ತು ನನ್ನ ನಡುವೆ ಯಾವುದೇ ವ್ಯವಹಾರವಿಲ್ಲ. ನನ್ನ ವಿರುದ್ಧ ಅಪಪ್ರಚಾರ ಮಾಡುವವರಿಗೆ ದೇವರು ಒಳ್ಳೆಯ ಬುದ್ಧಿ ಕೊಡಲಿ ಎಂದು ಶ್ರೀ ಮಂಜುನಾಥ ಸ್ವಾಮಿಯಲ್ಲಿ ಪ್ರಾರ್ಥಿಸಿದ್ದೇನೆ ಎಂದು ಹೇಳಿದರು.

ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಇಬ್ಬರು ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರೂ, ಅಡ್ಡಮತದಾನ ಪಕ್ಷದ ಲಕ್ಷಾಂತರ ಕಾರ್ಯಕರ್ತರಿಗೆ ಹಾಗೂ ನನಗೆ ತೀವ್ರ ನೋವುಂಟು ಮಾಡಿದೆ. ಈ ಬೆಳವಣಿಗೆಯಿಂದ ಶಾಸಕಾಂಗ ಪಕ್ಷದ ಸಭೆಯನ್ನು ಧರ್ಮಸ್ಥಳದಲ್ಲೇ ನಡೆಸಿ, ಶಾಸಕರು ಆಣೆ-ಪ್ರಮಾಣ ಮಾಡಬೇಕು ಎಂದು ನಾನು ಹೇಳಿದ್ದು ನಿಜ. ಆದರೆ ಪಕ್ಷದ ಹಿರಿಯರು ನೀಡಿದ ಸಲಹೆಗೆ ಗೌರವ ನೀಡಿ ಆ ನಿರ್ಧಾರದಿಂದ ಹಿಂದೆ ಸರಿದಿದ್ದೇನೆ ಎಂದು ತಿಳಿಸಿದರು.

ಶ್ರೀ ಮಂಜುನಾಥ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದ್ದು, ರಾಜ್ಯದಲ್ಲಿ ಉತ್ತಮ ಮಳೆ ಆಗಲಿ, ಜನರ ಸಂಕಷ್ಟ ದೂರವಾಗಲಿ ಹಾಗೂ ಕರ್ನಾಟಕದಲ್ಲಿ ಮತ್ತೊಮ್ಮೆ ಬಿಜೆಪಿ ನೇತೃತ್ವದ ಜನಪರ, ಅಭಿವೃದ್ಧಿಪರ ಮತ್ತು ಹಿಂದೂಗಳ ರಕ್ಷಣೆ ಮಾಡುವ ಸರ್ಕಾರ ಅಧಿಕಾರಕ್ಕೆ ಬರಲಿ ಎಂದು ಪ್ರಾರ್ಥಿಸಿದ್ದೇನೆ ಎಂದರು.

ರಾಜ್ಯದ ರಾಜಕೀಯ ಬೆಳವಣಿಗೆಗಳ ಕುರಿತು ಮಾತನಾಡಿದ ಅವರು, ಬಿ.ಎಸ್. ಯಡಿಯೂರಪ್ಪ ಅವರ ನಾಯಕತ್ವದಲ್ಲಿ ಹಿಂದೆ 17 ಶಾಸಕರು ಬಿಜೆಪಿ ಸೇರ್ಪಡೆಯಾಗಿದ್ದ ಇತಿಹಾಸವನ್ನು ನೆನಪಿಸಿದರು. ಈಗಿನ ಕಾಂಗ್ರೆಸ್ ಸರ್ಕಾರ ಭ್ರಷ್ಟ, ಜನವಿರೋಧಿ ಹಾಗೂ ರೈತ ವಿರೋಧಿ ಆಡಳಿತ ನಡೆಸುತ್ತಿದ್ದು, ಮುಂದಿನ ದಿನಗಳಲ್ಲಿ ರಾಜ್ಯದ ಜನರು ಮತ್ತು ಬಿಜೆಪಿ ಕಾರ್ಯಕರ್ತರ ಶಕ್ತಿಯಿಂದ ಈ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.