Home Blog Page 2

ನಾನು ಏ.4ಕ್ಕೆ ಯುವ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದೇನೆ: ನನ್ನನ್ನು ಉಚ್ಚಾಟನೆ ಮಾಡಿರುವುದು ಅರ್ಥವಿಲ್ಲದ ನಿರ್ಧಾರ- ಆಫ್ರೀನ್ ಖಾನ್

ಬೆಂಗಳೂರು: ಯುವ ಬೆಂಗಳೂರು ಉತ್ತರ ಜಿಲ್ಲಾ ಉಪಾಧ್ಯಕ್ಷೆ ಆಫ್ರೀನ್ ಖಾನ್ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ.

ದಾವಣಗೆರೆ ಉಪಚುನಾವಣೆಗೆ ಸಂಬಂಧಿಸಿದಂತೆ ರಿಜ್ವಾನ್ ಅರ್ಷದ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಯೂತ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್ ಗೌಡ ಅವರು ಉಚ್ಚಾಟನೆ ಆದೇಶ ಹೊರಡಿಸಿದ್ದಾರೆ.

ಉಚ್ಚಾಟನೆಗೆ ಪ್ರತಿಕ್ರಿಯಿಸಿದ ಆಫ್ರೀನ್ ಖಾನ್, “ನಾನು ಏಪ್ರಿಲ್ 4ರಂದೇ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದೇನೆ. ಈಗ ನನ್ನನ್ನು ಉಚ್ಚಾಟನೆ ಮಾಡಿರುವುದು ಅರ್ಥವಿಲ್ಲದ ನಿರ್ಧಾರ” ಎಂದು ಕಿಡಿಕಾರಿದ್ದಾರೆ.

ಇದಾದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಲೈವ್ ಬಂದ ಅವರು, “ಮುಸ್ಲಿಂ ನಾಯಕರನ್ನು ಯಾಕೆ ಟಾರ್ಗೆಟ್ ಮಾಡಲಾಗುತ್ತಿದೆ ಎಂಬುದು ತಿಳಿಯುತ್ತಿಲ್ಲ. 2028ರ ಚುನಾವಣೆಯಲ್ಲಿ ಜನ ತಕ್ಕ ಉತ್ತರ ನೀಡುತ್ತಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನೂ ಕಾಂಗ್ರೆಸ್ ವಿರುದ್ಧ ಸರಣಿ ಪೋಸ್ಟ್‌ಗಳನ್ನು ಹಾಕಿರುವ ಅವರು, ಪಕ್ಷದ ಹೈಕಮಾಂಡ್ ಮುಸ್ಲಿಂ ನಾಯಕರನ್ನು ಪರಸ್ಪರ ಎದುರುಮಾಡುವ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ. ಜೊತೆಗೆ ಜಮೀರ್ ಅಹ್ಮದ್ ಖಾನ್ ಅವರ ಪ್ರಭಾವ ಕಡಿಮೆ ಮಾಡಲು ಇತರ ನಾಯಕರನ್ನು ಮುಂದಕ್ಕೆ ತರುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

ಯಜಮಾನರು ವೇದಿಕೆ ಮೇಲೆ ಯಡಿಯೂರಪಲ್ಪ ಪುತ್ರನನ್ನು ಗೆಲ್ಲಿಸಿ ಅಂದಾಗ ಯಾಕೆ ಕ್ರಮ ಕೈಗೊಂಡಿಲ್ಲ: ಅಬ್ದುಲ್ ಜಬ್ಬರ್ ಆಕ್ರೋಶ

ಬೆಂಗಳೂರು: ವೇದಿಕೆ ಮೇಲೆ ಬಿ.ಎಸ್. ಯಡಿಯೂರಪ್ಪ ಅವರ ಮಗನನ್ನು ಗೆಲ್ಲಿಸಿ ಎಂದು ಭಾಷಣ ಮಾಡಿದಾಗ ಕ್ರಮ ಕೈಗೊಳ್ಳದವರು, ಈಗ ನನ್ನ ವಿರುದ್ಧ ಅಮಾನತು ಕ್ರಮ ಕೈಗೊಂಡಿದ್ದು ಯಾಕೆ ಎಂದು ಪರಿಷತ್ ಸದಸ್ಯ ಅಬ್ದುಲ್ ಜಬ್ಬರ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್‌ನಿಂದ ತನ್ನನ್ನು ಅಮಾನತು ಮಾಡಿದ ಬಳಿಕ ಪ್ರತಿಕ್ರಿಯಿಸಿದ ಅವರು, “ನನಗೆ ಇನ್ನೂ ಅಮಾನತು ಪತ್ರ ಬಂದಿಲ್ಲ. ನಿಮ್ಮಿಂದಲೇ ಈ ವಿಚಾರ ಕೇಳುತ್ತಿದ್ದೇನೆ. ಅಧಿಕೃತ ಆದೇಶ ಬಂದ ಬಳಿಕ ಸೂಕ್ತ ಉತ್ತರ ನೀಡುತ್ತೇನೆ. ನನ್ನ ವಿರುದ್ಧ ಯಾವುದೇ ಆಡಿಯೋ ಅಥವಾ ವಿಡಿಯೋ ಇದ್ದರೆ ಅದನ್ನು ಸಾರ್ವಜನಿಕವಾಗಿ ತೋರಿಸಬೇಕಲ್ಲ. ಯಾವ ಆಧಾರದಲ್ಲಿ ಅಮಾನತು ಮಾಡಿದ್ದಾರೆ?” ಎಂದು ಪ್ರಶ್ನಿಸಿದರು.

ಇನ್ನು ಕಾಂಗ್ರೆಸ್ ಪಕ್ಷದ ಬಗ್ಗೆ ಮಾತನಾಡಿದ ಅವರು, “ಚುನಾವಣೆಯಲ್ಲಿ ಕಾಂಗ್ರೆಸ್ ಸೋಲುತ್ತದೆ ಎಂದು ನನಗೆ ಅನಿಸುವುದಿಲ್ಲ. ಶಾಮನೂರು ಕುಟುಂಬದ ಒಬ್ಬರು ಮಂತ್ರಿಯಾಗಿದ್ದಾರೆ, ಮತ್ತೊಬ್ಬರು ಸಂಸದರಾಗಿದ್ದಾರೆ. ನಮ್ಮ ಸಮುದಾಯದವರಿಗೆ ಟಿಕೆಟ್ ನೀಡಬೇಕು ಎಂದು ಕೇಳಿದ್ದೇವೆ” ಎಂದು ಹೇಳಿದರು.

“ನನಗೆ ಯಾರೂ ಪ್ರಚಾರಕ್ಕೆ ಬರಲು ಹೇಳಲಿಲ್ಲ. ಅಭ್ಯರ್ಥಿ ಅಥವಾ ಅವರ ಕುಟುಂಬದವರು ಕೂಡ ಸಂಪರ್ಕಿಸಿಲ್ಲ. ಆದ್ದರಿಂದಲೇ ನಾನು ರಾಜೀನಾಮೆ ನೀಡಿದ್ದೇನೆ. ನಾನು ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಎಲ್ಲಿಗೂ ಹೋಗಿಲ್ಲ. ನನ್ನನ್ನು ಪ್ರಚಾರಕ್ಕೆ ಕರೆಯಲೇ ಇಲ್ಲ” ಎಂದು ಸ್ಪಷ್ಟಪಡಿಸಿದರು.

ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸ್ಥಾನಕ್ಕೆ ನಾನು ಸ್ವಯಂ ಇಚ್ಛೆಯಿಂದಲೇ ರಾಜೀನಾಮೆ ನೀಡಿದ್ದೇನೆ. “ಅಧ್ಯಕ್ಷರು ಅಂದಮೇಲೆ ಏನು ಅಶಿಸ್ತು ಎಂಬುದನ್ನು ಸ್ಪಷ್ಟಪಡಿಸಬೇಕಲ್ಲ” ಎಂದು ಅವರು ಹೇಳಿದರು.

ಅಯೋಧ್ಯೆ ರಾಮಮಂದಿರಕ್ಕೆ ಭೇಟಿ ನೀಡಿದ ಕಾಂಗ್ರೆಸ್ ಹಿರಿಯ ಶಾಸಕರು!

ಲಕ್ನೋ: ಕರ್ನಾಟಕದ ಕಾಂಗ್ರೆಸ್ ಪಕ್ಷದ ಹಿರಿಯ ಶಾಸಕರು ಅಯೋಧ್ಯೆಯ ರಾಮಮಂದಿರಕ್ಕೆ ಭೇಟಿ ನೀಡಿ ರಾಮಲಲ್ಲಾ ದರ್ಶನ ಪಡೆದಿದ್ದಾರೆ.

ಒಟ್ಟು 12 ಮಂದಿ ಶಾಸಕರು ಇಂದು ಬೆಳಗ್ಗೆ ಅಯೋಧ್ಯೆಗೆ ತೆರಳಿ ಪೂಜೆ ಸಲ್ಲಿಸಿದರು. ದರ್ಶನದ ಬಳಿಕ ಅವರು ಮತ್ತೆ ದೆಹಲಿಗೆ ಮರಳಿದರು.

ದೆಹಲಿಯಲ್ಲಿ ಹೈಕಮಾಂಡ್ ನಾಯಕರು ಲಭ್ಯವಿರದ ಹಿನ್ನೆಲೆ, ಶಾಸಕರು ಬೆಳಗ್ಗೆ 8 ಗಂಟೆಗೆ ವಿಮಾನದ ಮೂಲಕ ಅಯೋಧ್ಯೆಗೆ ಪ್ರಯಾಣಿಸಿದ್ದರು.

ದರ್ಶನಕ್ಕೆ ತೆರಳಿದವರಲ್ಲಿ ಅಶೋಕ್ ಪಟ್ಟಣ್, ಟಿ.ಬಿ. ಜಯಚಂದ್ರ, ರಾಘವೇಂದ್ರ ಹಿಟ್ನಾಳ್, ಡಿ.ಜಿ. ಶಾಂತನಗೌಡ, ಹಂಪನಗೌಡ ಬಾದರ್ಲಿ, ಬಸವರಾಜ ಶಿವಣ್ಣನವರ್, ಮಹಾಂತೇಶ್ ಕೌಜಲಗಿ, ಷಡಕ್ಷರಿ, ಯಶವಂತರಾಯಗೌಡ ಪಾಟೀಲ್ ಹಾಗೂ ಜಿ.ಟಿ. ಪಾಟೀಲ್ ಸೇರಿದಂತೆ ಇತರರು ಸೇರಿದ್ದಾರೆ.

ನಾನು ಪೀಠದಲ್ಲೇ ಇದ್ದೇನೆ, ಮುಂದೆಯೂ ಅಲ್ಲಿಯೇ ಇರುತ್ತೇನೆ: ವಚನಾನಂದ ಸ್ವಾಮೀಜಿ ಸ್ಪಷ್ಟನೆ

ದಾವಣಗೆರೆ: ಸಮುದಾಯದ ಆರೋಗ್ಯ ಕಾಪಾಡುವುದು ನಮ್ಮ ಮೊದಲ ಆದ್ಯತೆ ಎಂದು ಹರಿಹರ ಪಂಚಮಸಾಲಿ ಗುರುಪೀಠದಿಂದ ಹೊರಗಣಿಸಲ್ಪಟ್ಟ ವಚನಾನಂದ ಸ್ವಾಮೀಜಿ ತಿಳಿಸಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಪೀಠದಲ್ಲೇ ಇದ್ದೇನೆ, ಮುಂದೆಯೂ ಅಲ್ಲಿಯೇ ಇರುತ್ತೇನೆ. ನಿಂದನೆ ಅಥವಾ ದ್ವೇಷಕ್ಕೆ ನಾನು ಮಹತ್ವ ಕೊಡುವುದಿಲ್ಲ. ನಮ್ಮನ್ನು ಟೀಕಿಸುವವರೇ ನಮ್ಮನ್ನು ಬೆಳೆಸುವವರು ಎಂದು ಹೇಳಿದರು.

ಇನ್ನೂ ಅನೇಕ ಕಾರ್ಯಗಳು ನಮ್ಮ ಮುಂದಿದ್ದು, ಅವುಗಳನ್ನು ನೆರವೇರಿಸುವತ್ತ ಸಂಪೂರ್ಣ ಗಮನ ಹರಿಸುತ್ತೇನೆ. ಸಣ್ಣ ಮಟ್ಟದಲ್ಲಿ ಅಲ್ಲ, ದೊಡ್ಡ ಮಟ್ಟದಲ್ಲಿ ಸಮಾಜ ಸೇವೆ ಮಾಡುವ ಉದ್ದೇಶ ನಮ್ಮದು ಎಂದು ಅವರು ತಿಳಿಸಿದರು.

ತಮ್ಮ ಆತ್ಮೀಯ ಜೀವನದ ಬಗ್ಗೆ ಮಾತನಾಡಿದ ಸ್ವಾಮೀಜಿ, ದೇಶದ ವಿವಿಧ ಮಠಗಳು, ಆಶ್ರಮಗಳಲ್ಲಿ ಅಧ್ಯಯನ ನಡೆಸಿದ್ದೇನೆ. ಹೆಚ್ಚಿನ ಜ್ಞಾನಕ್ಕಾಗಿ ಋಷಿಕೇಶ, ಹರಿದ್ವಾರ ಹಾಗೂ ಹಿಮಾಲಯ ಪ್ರದೇಶಗಳಲ್ಲಿ ಗುರುಗಳ ಮಾರ್ಗದರ್ಶನದಲ್ಲಿ ಸಾಧನೆ ಮಾಡಿದ್ದೇನೆ ಎಂದರು.

ಯೋಗದ ಮೂಲಕ ಜನರ ಆರೋಗ್ಯವನ್ನು ಸುಧಾರಿಸುವ ಉದ್ದೇಶದಿಂದ ಕಳೆದ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದು, ಔಷಧಿಯಿಲ್ಲದ ಆರೋಗ್ಯದ ಮೂಲಕ ಸಮಾಜದ ಸ್ವಾಸ್ಥ್ಯ ಕಾಪಾಡುವ ಕಾರ್ಯದಲ್ಲಿ ತೊಡಗಿದ್ದೇನೆ ಎಂದು ಹೇಳಿದರು.

ರಾಜ್ಯದಲ್ಲಿ ಕಲಬುರಗಿಯಲ್ಲಿ ಗರಿಷ್ಠ ತಾಪಮಾನ ದಾಖಲು: ಆರೆಂಜ್ ಅಲರ್ಟ್ ಘೋಷಣೆ!

ಕಲಬುರಗಿ: ರಾಜ್ಯದಲ್ಲಿ ಉಷ್ಣಾಂಶ ತೀವ್ರ ಏರಿಕೆಯಾಗಿದ್ದು, ಕಲಬುರಗಿ ಜಿಲ್ಲೆಯಲ್ಲಿ ಬುಧವಾರ ಅತೀ ಹೆಚ್ಚು ತಾಪಮಾನ ದಾಖಲಾಗಿದೆ. ಬಿಸಿಲಿನ ತೀವ್ರತೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ.

ಜಿಲ್ಲೆಯ ನಾಲ್ಕು ತಾಲೂಕುಗಳಲ್ಲಿ ಉಷ್ಣಾಂಶ ಗರಿಷ್ಠ ಮಟ್ಟ ತಲುಪಿದೆ. ಔರಾದ್ ಪ್ರದೇಶದಲ್ಲಿ 45 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದ್ದು, ಚಿಂಚೋಳಿ ಹಾಗೂ ಅಫಜಲಪುರ ತಾಲೂಕುಗಳಲ್ಲಿ ತಲಾ 44.03 ಡಿಗ್ರಿ, ಆಳಂದ ತಾಲೂಕಿನಲ್ಲಿ 44.01 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ವಿಶೇಷವಾಗಿ ಔರಾದ್ ಪ್ರದೇಶದಲ್ಲಿನ ಉಷ್ಣಾಂಶ ಏರಿಕೆ ಆತಂಕಕ್ಕೆ ಕಾರಣವಾಗಿದೆ.

ತಾಪಮಾನದಲ್ಲಿ ನಿರಂತರ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ಜಿಲ್ಲೆಗೆ ಆರೆಂಜ್ ಅಲರ್ಟ್ ಘೋಷಿಸಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಮಧ್ಯಾಹ್ನ 12 ಗಂಟೆಯಿಂದ ಸಂಜೆವರೆಗೆ ಅನಾವಶ್ಯಕವಾಗಿ ಹೊರಗೆ ಸಂಚರಿಸಬಾರದು ಎಂದು ಜಿಲ್ಲಾಡಳಿತ ಸಾರ್ವಜನಿಕರಿಗೆ ಸೂಚನೆ ನೀಡಿದೆ.

ಬಿಸಿಲಿನ ಪರಿಣಾಮ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ, ಹೆಚ್ಚಿನ ಪ್ರಮಾಣದಲ್ಲಿ ನೀರು ಕುಡಿಯುವುದು, ನೆರಳಿನಲ್ಲಿ ಇರುವಿಕೆ ಹಾಗೂ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

ರಸ್ತೆ ಅಪಘಾತದಲ್ಲಿ ಮೃತಪಟ್ಟ ಕ್ಷೌರಿಕನ ಕುಟುಂಬಕ್ಕೆ ₹44.47 ಲಕ್ಷ ಪರಿಹಾರ ನೀಡಲು ಹೈಕೋರ್ಟ್ ಆದೇಶ!

ಬೆಂಗಳೂರು: ರಸ್ತೆ ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ಪರಿಹಾರ ನೀಡುವುದು ಮೋಟಾರು ವಾಹನ ಕಾಯ್ದೆಯ ಪ್ರಮುಖ ಉದ್ದೇಶ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಈ ಹಿನ್ನೆಲೆ, ಅಪಘಾತದಲ್ಲಿ ಮೃತಪಟ್ಟ ಕ್ಷೌರಿಕನ ಕುಟುಂಬಕ್ಕೆ ₹44.47 ಲಕ್ಷ ಪರಿಹಾರವನ್ನು ನೀಡಲು ವಿಮಾ ಕಂಪನಿಗೆ ಆದೇಶಿಸಿದೆ.

ನ್ಯಾಯಮೂರ್ತಿಗಳಾದ ಡಿ.ಕೆ. ಸಿಂಗ್ ಮತ್ತು ಎಸ್. ರಾಚಯ್ಯ ಅವರಿದ್ದ ಪೀಠವು, ಮೃತರ ಕುಟುಂಬ ಹಾಗೂ ವಿಮಾ ಕಂಪನಿ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿ ಈ ತೀರ್ಪು ನೀಡಿದೆ.

ದಾಖಲೆಗಳ ಪರಿಶೀಲನೆಯ ಬಳಿಕ, ಮೃತ ವ್ಯಕ್ತಿ ಕ್ಷೌರಿಕ ವೃತ್ತಿಯಲ್ಲಿ ತೊಡಗಿದ್ದು ತಿಂಗಳಿಗೆ ₹14,000 ಆದಾಯ ಹೊಂದಿದ್ದನೆಂದು ಪರಿಗಣಿಸಿ, ನ್ಯಾಯಮಂಡಳಿ ನೀಡಿದ್ದ ₹32.56 ಲಕ್ಷ ಪರಿಹಾರವನ್ನು ₹44.47 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಹೆಚ್ಚುವರಿ ₹11.91 ಲಕ್ಷಕ್ಕೆ ಶೇ.6 ಬಡ್ಡಿಯೊಂದಿಗೆ ಆರು ವಾರಗಳಲ್ಲಿ ಪಾವತಿಸುವಂತೆ ಸೂಚಿಸಲಾಗಿದೆ.

ಇದಲ್ಲದೆ, ಅಪಘಾತದ ವೇಳೆ ಮೃತರೇ ವಾಹನ ಚಾಲನೆ ಮಾಡುತ್ತಿದ್ದರು ಎಂಬ ವಿಮಾ ಕಂಪನಿಯ ವಾದವನ್ನು ನ್ಯಾಯಾಲಯ ತಿರಸ್ಕರಿಸಿದೆ. ವಾಹನವನ್ನು ಚಲಾಯಿಸುತ್ತಿದ್ದವರು ಬೇರೆ ವ್ಯಕ್ತಿಯಾಗಿದ್ದು, ಮೃತರು ಹಿಂಬದಿ ಸವಾರರಾಗಿದ್ದರು ಎಂದು ಸ್ಪಷ್ಟಪಡಿಸಿದೆ. ಹೀಗಾಗಿ ಪರಿಹಾರ ಪಾವತಿಸುವ ಹೊಣೆಗಾರಿಕೆ ವಿಮಾ ಕಂಪನಿಯ ಮೇಲೇ ಇದೆ ಎಂದು ತಿಳಿಸಿ, ಕಂಪನಿಯ ಅರ್ಜಿಯನ್ನು ವಜಾಗೊಳಿಸಿದೆ.

ಘಟನೆಯ ಹಿನ್ನಲೆ:
2018ರ ಸೆಪ್ಟೆಂಬರ್ 4ರಂದು ಮಂಜುನಾಥ್ ಅವರು ಹಿಂಬದಿ ಸವಾರನಾಗಿ ಪ್ರಯಾಣಿಸುತ್ತಿದ್ದ ವೇಳೆ ನೆಲಮಂಗಲ ಸಮೀಪ ವಾಹನ ನಿಯಂತ್ರಣ ತಪ್ಪಿ ಕೆಳಗೆ ಬಿದ್ದಿದ್ದರು. ತಲೆಗೆ ಗಂಭೀರ ಗಾಯಗೊಂಡ ಅವರು 2019ರ ಫೆಬ್ರವರಿ 23ರಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ಬಳಿಕ ಕುಟುಂಬಸ್ಥರು ಪರಿಹಾರಕ್ಕಾಗಿ ನ್ಯಾಯಾಲಯದ ಮೆಟ್ಟಿಲೇರಿದ್ದರು.

ಬಿಹಾರದಲ್ಲಿ ಬಿಜೆಪಿ ಮೊದಲ ಮುಖ್ಯಮಂತ್ರಿ: ಸಾಮ್ರಾಟ್ ಚೌಧರಿ ಅಧಿಕಾರ ಸ್ವೀಕಾರ

0

ಪಾಟ್ನಾ: ಬಿಹಾರ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಬಿಜೆಪಿ ನಾಯಕ ಸಾಮ್ರಾಟ್ ಚೌಧರಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಈ ಮೂಲಕ ಅವರು ಬಿಹಾರದಲ್ಲಿ ಬಿಜೆಪಿಯಿಂದ ಆಯ್ಕೆಯಾದ ಮೊದಲ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಪಾಟ್ನಾದ ಲೋಕ ಭವನದಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲ ಸೈಯದ್ ಅತಾ ಹಸ್ನೈನ್ ಅವರು ಸಾಮ್ರಾಟ್ ಚೌಧರಿಗೆ ಪದವಿ ಪ್ರಮಾಣವಚನ ಬೋಧಿಸಿದರು. ಇದೇ ವೇಳೆ, ಉಪಮುಖ್ಯಮಂತ್ರಿಗಳಾಗಿ ಜೆಡಿಯು ನಾಯಕರುಗಳಾದ ವಿಜಯ್ ಚೌಧರಿ ಮತ್ತು ಬಿಜೇಂದ್ರ ಯಾದವ್ ಪ್ರಮಾಣವಚನ ಸ್ವೀಕರಿಸಿದರು.

ಪ್ರಮಾಣವಚನದ ನಂತರ ಮಾತನಾಡಿದ ಉಪಮುಖ್ಯಮಂತ್ರಿ ವಿಜಯ್ ಚೌಧರಿ, ಮಾಜಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರೊಂದಿಗೆ ಕೆಲಸ ಮಾಡಿದ ಅನುಭವದಿಂದ ಸಾಕಷ್ಟು ಕಲಿತಿದ್ದೇವೆ ಎಂದು ಹೇಳಿದರು. ಅವರ ಆಡಳಿತ ಶೈಲಿಯನ್ನು ಮುಂದುವರಿಸುವುದಾಗಿ ತಿಳಿಸಿದರು.

ಇನ್ನೋರ್ವ ಉಪಮುಖ್ಯಮಂತ್ರಿ ಬಿಜೇಂದ್ರ ಯಾದವ್ ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿ, ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ನಿತೀಶ್ ಕುಮಾರ್ ಅವರ ಆಡಳಿತ ಪರಂಪರೆಯನ್ನು ಮುಂದುವರಿಸಲಿದ್ದಾರೆ ಎಂದರು. ಸರ್ಕಾರದಲ್ಲಿ ಯಾವುದೇ ಗೊಂದಲವಿಲ್ಲದೆ ಸುಧಾರಣೆಗಾಗಿ ಒಟ್ಟಾಗಿ ಕೆಲಸ ಮಾಡುವುದಾಗಿ ಹೇಳಿದರು.

ರಾಜ್ಯಸಭೆಗೆ ಆಯ್ಕೆಯಾದ ಹಿನ್ನೆಲೆಯಲ್ಲಿ ನಿತೀಶ್ ಕುಮಾರ್ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಆದಿಚುಂಚನಗಿರಿ ಮಠವು ಆಧ್ಯಾತ್ಮಿಕ ಪರಂಪರೆ ಮತ್ತು ನೈತಿಕ ಮೌಲ್ಯಗಳ ದಾರಿದೀಪ: ಪ್ರಧಾನಿ ಮೋದಿ

ಮಂಡ್ಯ: ಆದಿಚುಂಚನಗಿರಿ ಮಠವು ಆಧ್ಯಾತ್ಮಿಕ ಪರಂಪರೆ ಮತ್ತು ನೈತಿಕ ಮೌಲ್ಯಗಳ ದಾರಿದೀಪವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಶ್ರೀಗುರು ಭೈರವೈಕ್ಯ ಮಂದಿರ ಉದ್ಘಾಟನೆ ಬಳಿಕ ಮಾತನಾಡಿದ ಅವರು, ಕನ್ನಡದಲ್ಲೇ ಭಾಷಣ ಆರಂಭಿಸಿ ಕರ್ನಾಟಕದ ಎಲ್ಲಾ ಸಹೋದರರು ಹಾಗೂ ಸಹೋದರಿಯರಿಗೆ ನನ್ನ ನಮಸ್ಕಾರಗಳು ಎಂದು ಹೇಳಿದರು.

ಕಾಲಭೈರವೇಶ್ವರನ ದರ್ಶನ ಪಡೆದು, ಭೈರವೈಕ್ಯ ಮಂದಿರವನ್ನು ಉದ್ಘಾಟಿಸಿರುವುದು ನನಗೆ ಅಪಾರ ಸಂತೋಷ ತಂದಿದೆ. ಈ ಅನುಭವವನ್ನು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ. ಪ್ರತೀ ಬಾರಿ ಕರ್ನಾಟಕಕ್ಕೆ ಬಂದಾಗ ಹೊಸ ಪ್ರೇರಣೆ ದೊರೆಯುತ್ತದೆ ಎಂದು ಅವರು ಹೇಳಿದರು.

ಆದಿಚುಂಚನಗಿರಿ ಮಠದಂತಹ ಆಧ್ಯಾತ್ಮಿಕ ಕೇಂದ್ರಗಳು ಸಮಾಜಕ್ಕೆ ದಾರಿದೀಪವಾಗಿವೆ. “ಜಗತ್ತಿನಲ್ಲಿ ಇಂತಹ ಶ್ರೀಮಂತ ಪರಂಪರೆ ಎಲ್ಲೂ ಇಲ್ಲ. ಇಲ್ಲಿ ಪರಂಪರೆ ನಿರಂತರವಾಗಿ ಮುಂದುವರಿದಿದೆ. ಬಾಲಗಂಗಾಧರನಾಥ ಸ್ವಾಮೀಜಿಯವರಂತಹ ಮಹಾತ್ಮರು ಈ ಮಣ್ಣಿನಲ್ಲಿ ಹುಟ್ಟಿದ್ದಾರೆ. ನಿರ್ಮಲಾನಂದನಾಥ ಸ್ವಾಮೀಜಿ ಆ ಪರಂಪರೆಯನ್ನು ಯಶಸ್ವಿಯಾಗಿ ಮುಂದುವರೆಸುತ್ತಿದ್ದಾರೆ ಎಂದು ಮೋದಿ ಪ್ರಶಂಸಿಸಿದರು.

ಸ್ವಾಮೀಜಿಗಳು ದೇಹತಃ ನಮ್ಮೊಂದಿಗೆ ಇರದಿದ್ದರೂ ಅವರ ಆಶೀರ್ವಾದ ಸದಾ ನಮ್ಮೊಂದಿಗಿದೆ. ಅವರು ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಮಹತ್ವದ ಸೇವೆ ಸಲ್ಲಿಸಿದ್ದಾರೆ. ನಮ್ಮ ಸರ್ಕಾರವೂ ಇದೇ ದೃಷ್ಟಿಯಿಂದ ಕೆಲಸ ಮಾಡುತ್ತಿದೆ ಎಂದು ಹೇಳಿದರು.

ಮಠದ ಕಾರ್ಯಗಳ ಬಗ್ಗೆ ಮಾತನಾಡಿದ ಅವರು, “ಇದು ಕೇವಲ ಮಾನವರ ಅಭಿವೃದ್ಧಿಗೆ ಮಾತ್ರವಲ್ಲ, ಜೀವ ಸಂಕುಲದ ರಕ್ಷಣೆಯಲ್ಲಿಯೂ ತೊಡಗಿದೆ. ನವಿಲಿನ ಸಂರಕ್ಷಣೆ ಸೇರಿದಂತೆ ಅನೇಕ ಕಾರ್ಯಗಳನ್ನು ಮಾಡುತ್ತಿದೆ,” ಎಂದು ಹೇಳಿದರು.

ಭೈರವೈಕ್ಯ ಮಂದಿರವು ಕೇವಲ ಕಟ್ಟಡವಲ್ಲ, ಭಾವನೆಗಳ ಸಾಕಾರ. ಇದು ಸೇವೆ, ಸಾಧನೆ ಮತ್ತು ಪ್ರೇರಣೆಯ ಕೇಂದ್ರವಾಗಿದೆ. ಇಲ್ಲಿ ಅನ್ನ, ಅಕ್ಷರ, ಆರೋಗ್ಯ, ಅರಣ್ಯ, ಆಕಳು, ಅನುಗ್ರಹ ಮತ್ತು ಅನುಕಂಪ ಎಂಬ ಮೌಲ್ಯಗಳ ಆಧಾರದ ಮೇಲೆ ಕಾರ್ಯ ನಡೆಯುತ್ತಿದೆ. ಇವುಗಳನ್ನು ಮುಂದುವರಿಸಲು ನಾವು ಎಲ್ಲರೂ ಸಾಮೂಹಿಕ ಸಂಕಲ್ಪ ಮಾಡಬೇಕು,” ಎಂದು ಕರೆ ನೀಡಿದರು.

ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆ: ಕಾಂಗ್ರೆಸ್‌ MLC ಅಬ್ದುಲ್ ಜಬ್ಬಾರ್ ಅಮಾನತು

ಬೆಂಗಳೂರು: ದಾವಣಗೆರೆ ದಕ್ಷಿಣ ಉಪಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್ ಅವರನ್ನು ಕಾಂಗ್ರೆಸ್ ಪಕ್ಷದಿಂದ ಅಮಾನತುಗೊಳಿಸಲಾಗಿದೆ.

ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ಅಬ್ದುಲ್ ಜಬ್ಬಾರ್ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟಿಸಿ ಆದೇಶ ಹೊರಡಿಸಿದ್ದಾರೆ.

ಇತ್ತೀಚೆಗೆ ಅಬ್ದುಲ್ ಜಬ್ಬಾರ್ ಅವರು ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಅದನ್ನು ಡಿ.ಕೆ. ಶಿವಕುಮಾರ್ ಅಂಗೀಕರಿಸಿದ್ದರು.

ಇದಕ್ಕೂ ಮೊದಲು, ಕಾಂಗ್ರೆಸ್ ನಾಯಕ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಸಚಿವ ಜಮೀರ್ ಅಹಮದ್, ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್ ಹಾಗೂ ನಸೀರ್ ಅಹಮದ್ ವಿರುದ್ಧ ಎರಡು ಪುಟಗಳ ವರದಿಯನ್ನು ಹೈಕಮಾಂಡ್‌ಗೆ ಸಲ್ಲಿಸಿ, ಕ್ರಮ ಕೈಗೊಳ್ಳುವಂತೆ ಶಿಫಾರಸು ಮಾಡಿದ್ದರು.

ಯೋಗೇಶ್‌ ಗೌಡ ಹತ್ಯೆ ಕೇಸ್‌: ಇಂದು ಮಧ್ಯಾಹ್ನ 3 ಗಂಟೆಗೆ ತೀರ್ಪು ಪ್ರಕಟ – ಆರೋಪಿಗಳಲ್ಲಿ ಆತಂಕ!

ಬೆಂಗಳೂರು: ಧಾರವಾಡ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣದ ತೀರ್ಪನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಇಂದು ಮಧ್ಯಾಹ್ನ 3 ಗಂಟೆಗೆ ಮುಂದೂಡಿದೆ.

ಪ್ರಕರಣದ ಎಲ್ಲಾ ಆರೋಪಿಗಳು ನ್ಯಾಯಾಲಯದಲ್ಲಿ ಹಾಜರಾಗಿದ್ದು, ನ್ಯಾಯಾಧೀಶರು ಅವರ ಹಾಜರಿಯನ್ನು ದಾಖಲಿಸಿ ತೀರ್ಪನ್ನು ಮುಂದೂಡಿದರು. ಮಧ್ಯಾಹ್ನ ಬಳಿಕ, ವಿಶೇಷವಾಗಿ 3 ಗಂಟೆ ಸುಮಾರಿಗೆ ತೀರ್ಪು ಪ್ರಕಟವಾಗುವ ಸಾಧ್ಯತೆ ಇದೆ ಎಂಬ ಸುಳಿವು ನೀಡಲಾಗಿದೆ.

ಸುಮಾರು 10 ವರ್ಷಗಳ ವಿಚಾರಣೆ ಬಳಿಕ ಈ ಕೊಲೆ ಪ್ರಕರಣದ ತೀರ್ಪು ಇಂದು ಹೊರಬೀಳಲಿದ್ದು, ಶಾಸಕ ವಿನಯ್ ಕುಲಕರ್ಣಿಗೆ ಶಿಕ್ಷೆಯೋ ಅಥವಾ ಖುಲಾಸೆಯೋ ಎಂಬ ಕುತೂಹಲ ಹಾಗೂ ಆತಂಕ ಹೆಚ್ಚಾಗಿದೆ.

2016ರ ಜೂನ್‌ನಲ್ಲಿ ಧಾರವಾಡದಲ್ಲಿ ಯೋಗೇಶ್ ಗೌಡ ಹತ್ಯೆ ನಡೆದಿತ್ತು. ಈ ಪ್ರಕರಣದಲ್ಲಿ ವಿನಯ್ ಕುಲಕರ್ಣಿ ವಿರುದ್ಧ ಕೊಲೆ ಸಂಚು ಆರೋಪ ಕೇಳಿಬಂದಿತ್ತು. ತನಿಖೆ ವೇಳೆ ಆರು ಮಂದಿ ಆರೋಪಿಗಳು ಪೊಲೀಸರ ಮುಂದೆ ಶರಣಾಗಿದ್ದರು.

ಯೋಗೇಶ್ ಗೌಡ ಕುಟುಂಬದ ಮನವಿಯ ಮೇರೆಗೆ 2019ರಲ್ಲಿ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಲಾಗಿತ್ತು. ಬಳಿಕ ಸಿಬಿಐ ಅಧಿಕಾರಿಗಳು ತನಿಖೆ ನಡೆಸಿ ವಿನಯ್ ಕುಲಕರ್ಣಿಯನ್ನು ಬಂಧಿಸಿದ್ದರು.

ಪ್ರಸ್ತುತ ಈ ಪ್ರಕರಣದಲ್ಲಿ ವಿನಯ್ ಕುಲಕರ್ಣಿ ಸೇರಿದಂತೆ ಇಬ್ಬರು ಪೊಲೀಸರು ಸೇರಿ ಒಟ್ಟು 21 ಮಂದಿ ಆರೋಪಿಗಳಿದ್ದಾರೆ. ಆರೋಪಿಗಳ ಹಾಗೂ ಸರ್ಕಾರಿ ವಕೀಲರು ಸಲ್ಲಿಸಿದ ದಾಖಲೆಗಳ ಪರಿಶೀಲನೆ ಹಿನ್ನೆಲೆಯಲ್ಲಿ, ನ್ಯಾಯಾಲಯ ಏಪ್ರಿಲ್ 9ರಂದು ತೀರ್ಪನ್ನು ಇಂದು (ಏಪ್ರಿಲ್ 15)ಕ್ಕೆ ಮುಂದೂಡಿತ್ತು.

error: Content is protected !!