Home Blog Page 2

ಬೆಳಕಿನ ಜೊತೆಗೆ ಬದುಕಿಗೆ ಭರವಸೆ ನೀಡಿದ ಗ್ಯಾರಂಟಿ ಯೋಜನೆ

ರಾಜ್ಯದ ಜನಸಾಮಾನ್ಯರ ಜೀವನದಲ್ಲಿ ನೇರ ಆರ್ಥಿಕ ಭಾರವನ್ನು ಕಡಿಮೆ ಮಾಡುವ ಉದ್ದೇಶದಿಂದ ಕರ್ನಾಟಕ ಸರ್ಕಾರ ಜಾರಿಗೆ ತಂದಿರುವ ಮಹತ್ವಾಕಾಂಕ್ಷೆಯ ಗ್ಯಾರಂಟಿ ಯೋಜನೆಗಳಲ್ಲಿ ಗೃಹಜ್ಯೋತಿ ಯೋಜನೆ ಪ್ರಮುಖವಾಗಿದೆ. ಮನೆಮಂದಿಗೆ ಉಚಿತ ವಿದ್ಯುತ್ ಸೌಲಭ್ಯ ಒದಗಿಸುವ ಮೂಲಕ ಕುಟುಂಬದ ಖರ್ಚನ್ನು ತಗ್ಗಿಸುವುದು ಮತ್ತು ಜೀವನ ಮಟ್ಟವನ್ನು ಸುಧಾರಿಸುವುದು ಈ ಯೋಜನೆಯ ಮೂಲ ಉದ್ದೇಶವಾಗಿದೆ.

ಗೃಹಜ್ಯೋತಿ ಯೋಜನೆಯ ಮೂಲಕ ಪ್ರತಿ ಕುಟುಂಬಕ್ಕೆ ನಿಗದಿತ ಮಿತಿಯೊಳಗಿನ ವಿದ್ಯುತ್ ಬಳಕೆಗೆ ಉಚಿತ ಸೌಲಭ್ಯ ನೀಡಲಾಗುತ್ತಿದೆ. ವಿದ್ಯುತ್ ವೆಚ್ಚವು ಮಧ್ಯಮ ಹಾಗೂ ಬಡ ವರ್ಗದ ಕುಟುಂಬಗಳಿಗೆ ದೊಡ್ಡ ಹೊರೆ ಆಗಿದ್ದ ಸಂದರ್ಭದಲ್ಲೇ ಈ ಯೋಜನೆ ಆಶಾಕಿರಣವಾಗಿ ಮೂಡಿಬಂದಿದೆ. ವಿದ್ಯುತ್ ಮೂಲಭೂತ ಅಗತ್ಯವಾಗಿರುವ ಈ ಕಾಲಘಟ್ಟದಲ್ಲಿ, ಸರ್ಕಾರದ ಈ ಕ್ರಮವು ಸಾಮಾಜಿಕ ನ್ಯಾಯದ ದಿಕ್ಕಿನಲ್ಲಿ ಮಹತ್ವದ ಹೆಜ್ಜೆಯಾಗಿದೆ.

ಈ ಯೋಜನೆಯಿಂದ ಗ್ರಾಮೀಣ ಹಾಗೂ ನಗರ ಪ್ರದೇಶದ ಲಕ್ಷಾಂತರ ಕುಟುಂಬಗಳಿಗೆ ನೇರ ಲಾಭ ಸಿಕ್ಕಿದ್ದು, ಮನೆಯ ಆರ್ಥಿಕ ಯೋಜನೆ ಸುಗಮವಾಗಿದೆ. ಉಳಿದ ಹಣವನ್ನು ಶಿಕ್ಷಣ, ಆರೋಗ್ಯ ಹಾಗೂ ಇತರ ಅಗತ್ಯಗಳಿಗೆ ಬಳಸುವ ಅವಕಾಶ ಜನರಿಗೆ ದೊರಕಿದೆ.

ಗೃಹಜ್ಯೋತಿ ಯೋಜನೆಯ ಸದುಪಯೋಗ ಪಡೆಯಲು ಜನರು ತಮ್ಮ ವಿದ್ಯುತ್ ಸಂಪರ್ಕವನ್ನು ನೋಂದಾಯಿಸಿಕೊಂಡು ಸರಿಯಾದ ಮಾಹಿತಿಯನ್ನು ನೀಡಬೇಕು. ಅನಗತ್ಯ ವಿದ್ಯುತ್ ವ್ಯರ್ಥವನ್ನು ತಪ್ಪಿಸಿ, ಜವಾಬ್ದಾರಿಯುತ ಬಳಕೆ ಮಾಡುವ ಮೂಲಕ ಯೋಜನೆಯ ದೀರ್ಘಕಾಲೀನ ಲಾಭವನ್ನು ಉಳಿಸಬಹುದು.

ಯೋಜನೆಯು ಕೇವಲ ಉಚಿತ ವಿದ್ಯುತ್ ನೀಡುವಷ್ಟಕ್ಕೇ ಸೀಮಿತವಲ್ಲ. ಇದು ವಿದ್ಯುತ್ ಉಳಿಸುವ ಅರಿವು ಮೂಡಿಸುವುದಕ್ಕೂ ಕಾರಣವಾಗಿದೆ. ಅನೇಕ ಮನೆಗಳಲ್ಲಿ ವಿದ್ಯುತ್ ಉಳಿತಾಯ ಸಾಧನಗಳ ಬಳಕೆ ಹೆಚ್ಚಾಗಿದೆ. ಇದು ಪರಿಸರ ಸಂರಕ್ಷಣೆಯ ದಿಕ್ಕಿನಲ್ಲಿ ಸಹ ಒಳ್ಳೆಯ ಬೆಳವಣಿಗೆ.

ಗೃಹಜ್ಯೋತಿ ಯೋಜನೆಯಿಂದ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳ ಜೀವನದಲ್ಲಿ ಆರ್ಥಿಕ ನೆಮ್ಮದಿ ಮೂಡಿದೆ. ಮಹಿಳೆಯರ ಸ್ವಾವಲಂಬನೆ ಹೆಚ್ಚಲು, ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಲು ಮತ್ತು ಕುಟುಂಬದ ಒಟ್ಟಾರೆ ಅಭಿವೃದ್ಧಿಗೆ ಈ ಯೋಜನೆ ಸಹಕಾರಿಯಾಗಿದೆ.

ಸರ್ಕಾರದ ಜನಪರ ಯೋಜನೆಗಳು ಜನರ ಕೈಗೆ ನೇರ ಲಾಭ ತಲುಪಿದಾಗ ಮಾತ್ರ ಅದರ ನಿಜವಾದ ಯಶಸ್ಸು ಸಾಧ್ಯ. ಗೃಹಜ್ಯೋತಿ ಯೋಜನೆ ಆ ದಿಕ್ಕಿನಲ್ಲಿ ಯಶಸ್ವಿಯಾಗಿ ಸಾಗುತ್ತಿರುವ ಒಂದು ಉತ್ತಮ ಮಾದರಿಯಾಗಿದೆ.

ಒಟ್ಟಾರೆ, ಗೃಹಜ್ಯೋತಿ ಯೋಜನೆ ಮನೆಗಳಿಗೆ ಬೆಳಕು ನೀಡುವುದಷ್ಟೇ ಅಲ್ಲ, ಜನರ ಬದುಕಿಗೆ ಆಶಾಕಿರಣವಾಗಿ ಪರಿಣಮಿಸಿದೆ. ಜನರು ಜವಾಬ್ದಾರಿಯುತವಾಗಿ ವಿದ್ಯುತ್ ಬಳಕೆ ಮಾಡಿದರೆ, ಈ ಯೋಜನೆ ಮುಂದಿನ ಪೀಳಿಗೆಗಳಿಗೂ ಉಪಯುಕ್ತವಾಗಲಿದೆ.

“ಗೃಹಜ್ಯೋತಿ ಯೋಜನೆ ಜನಸಾಮಾನ್ಯರ ಬದುಕಿನ ವೆಚ್ಚವನ್ನು ನೇರವಾಗಿ ಕಡಿಮೆ ಮಾಡುವ ಜನಪರ ಕಾರ್ಯಕ್ರಮವಾಗಿದೆ. ಪ್ರತೀ ಕುಟುಂಬಕ್ಕೂ ಆರ್ಥಿಕ ನೆಮ್ಮದಿ ನೀಡುವುದು ಸರ್ಕಾರದ ಬದ್ಧತೆ. ವಿದ್ಯುತ್ ಉಳಿಸಿ ಜವಾಬ್ದಾರಿಯುತ ಬಳಕೆ ಮಾಡಿದರೆ ಈ ಯೋಜನೆಯ ಲಾಭವನ್ನು ಇನ್ನಷ್ಟು ವರ್ಷಗಳ ಕಾಲ ಜನರು ಅನುಭವಿಸಬಹುದು. ಜನರ ಸಹಕಾರವೇ ಯೋಜನೆಯ ಯಶಸ್ಸಿಗೆ ಮುಖ್ಯ ಕಾರಣವಾಗಿದೆ”

  • ಎಚ್.ಕೆ. ಪಾಟೀಲ.
    ಗದಗ ಜಿಲ್ಲಾ ಉಸ್ತುವಾರಿ ಸಚಿವರು.

ಗದಗ ಜಿಲ್ಲೆಯ ಗೃಹಜ್ಯೋತಿ ಯೋಜನೆಯ ಪ್ರಗತಿ ವಿವರ: ಯೋಜನೆ ಆರಂಭದಿಂದ ಜನವರಿ 2026ರವರೆಗೆ ಒಟ್ಟು 278428 ಸ್ಥಾವರಗಳ ಪೈಕಿ 274305 ಸ್ಥಾವರಗಳು ನೋಂದಣಿಯಾಗಿವೆ. ಆ ಪೈಕಿ ತಾಲೂಕಾವಾರು ವಿವರ: ಗದಗ-99240, ಗಜೇಂದ್ರಗಡ-22443, ಲಕ್ಷೆö್ಮÃಶ್ವರ-26543, ಮುಂಡರಗಿ- 32960, ನರಗುಂದ-25308, ರೋಣ-46143, ಶಿರಹಟ್ಟಿ-21668. 31-1-2026ರವರೆಗೆ ನೋಂದಣಿಯಾಗದೇ ಬಾಕಿ ಇರುವ ಸ್ಥಾವರಗಳನ್ನು ಗೃಹ ಜ್ಯೋತಿ ಯೋಜನೆಗೆ ನೋಂದಣಿ ಪ್ರಗತಿಯಲ್ಲಿರುತ್ತದೆ.

  • ಹನುಮಂತ ಬೆಂತೂರ.
    ಪ್ರ-ಶಿಕ್ಷಣಾರ್ಥಿ,
    ವಾರ್ತಾ ಮತ್ತು ಸಾ.ಸಂ.ಇಲಾಖೆ, ಗದಗ.

ಅನುವಾದ ಕಾರ್ಯ ಅತ್ಯಂತ ಕ್ಲಿಷ್ಟಕರ: ಬಸು ಬೇವಿನಗಿಡದ

0

ವಿಜಯಸಾಕ್ಷಿ ಸುದ್ದಿ, ಧಾರವಾಡ: ಶ್ರೀಧರ ಗಸ್ತಿ ಓರ್ವ ಶಿಕ್ಷಕರಾಗಿ ಮಕ್ಕಳ ಮನಸ್ಸನ್ನು ಅರಳಿಸಿ, ಅವರ ಕಲ್ಪನಾ ಶಕ್ತಿಯನ್ನು ವೃದ್ಧಿಸುವ ಕಾರ್ಯವನ್ನು ಮಕ್ಕಳ ಸಾಹಿತ್ಯದ ಮೂಲಕ ಮಾಡಿದ್ದು ಅಭಿನಂದನೀಯ ಎಂದು ಆಕಾಶವಾಣಿಯ ವಿಶ್ರಾಂತ ನಿರ್ದೇಶಕ ಬಸು ಬೇವಿನಗಿಡದ ಅಭಿಪ್ರಾಯಪಟ್ಟರು.

ಅವರು ಕ.ವಿ.ವ ಸಂಘದಲ್ಲಿ ಧಾರವಾಡದ ಚಿಲಿಪಿಲಿ ಪ್ರಕಾಶನದ ವತಿಯಿಂದ ಸಾಹಿತಿ ಶ್ರೀಧರ ಗಸ್ತಿ ಅವರ ‘ದಿ ಕಪ್‌ಟಿಚ್ಡ್ ಬೈ ದೇವಮ್ಮ’ ಹಾಗೂ ‘ಎಳೆಬಾಳೆ ಸುಳಿ ನಾನವ್ವ’ ಕೃತಿಗಳ ಲೋಕಾರ್ಪಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಶ್ರೀಧರ ಗಸ್ತಿ ಓರ್ವ ಸೃಜನಶೀಲ ಬರಹಗಾರರು ಮಾತ್ರವಲ್ಲ, ಕಥೆಗಾರರು, ಅನುವಾದಕಾರರು ಹೌದು. ಅವರು ರಚಿಸಿದ ಮಕ್ಕಳ ಸಾಹಿತ್ಯ ಕೃತಿಗಳು ತಮ್ಮ ಶಾಲಾ ಜೀವನದ ವಾಸ್ತವಿಕ ಅನುಭವಗಳ ಸಾರವಾಗಿವೆ. ಅವರ ಸಾಹಿತ್ಯದಲ್ಲಿ ಬದುಕಿನ ಸತ್ಯಗಳಿವೆ. ಪ್ರಾಚೀನತೆಗಿಂತ ಆಧುನಿಕತೆಯ ವಾಸ್ತವಿಕ ಕಥೆಗಳಿವೆ. ಅವರು ರಚಿಸಿದ ಮಕ್ಕಳ ಕಥೆಗಳು ಕೇವಲ ಮಕ್ಕಳು ಮಾತ್ರವಲ್ಲ, ವಯಸ್ಕರರೂ ಓದುವಂತವುಗಳು. ವಾಯ್.ಜಿ. ಭಗವತಿಯವರ ‘ದೇವಮ್ಮನ ಲೋಟ’ ಕನ್ನಡ ಕೃತಿಯನ್ನು ಶ್ರೀಧರ ಗಸ್ತಿ ಆಂಗ್ಲ ಭಾಷೆಗೆ ಅನುವಾದಿಸಿ, ಅನ್ಯಭಾಷಿಕರಿಗೂ ಕನ್ನಡ ಭಾಷಾ ಸಾಹಿತ್ಯದ ಶ್ರೀಮಂತಿಕೆಯನ್ನು ಪರಿಚಯಿಸಿದ್ದಾರೆ. ಅನುವಾದ ಕಾರ್ಯ ಬಹಳ ಕ್ಲಿಷ್ಟಕರವಾದುದು. ದೇವಮ್ಮನ ಲೋಟದಲ್ಲಿ ಜಾತಿಯ ತಾರತಮ್ಯ, ಸಾಮಾಜಿಕ ಅನಿಷ್ಟಗಳ ಬಗ್ಗೆ ಮನೋಜ್ಞವಾಗಿ ಚಿತ್ರಿಸಲಾಗಿದೆ ಎಂದು ಹೇಳಿದರು.

ರಂಗಕರ್ಮಿ ಝಕೀರ ನದಾಫ್ `ಎಳೆಬಾಳೆ ಸುಳಿನಾನವ್ವ’ ಕೃತಿಯ ಕುರಿತು ಮಾತನಾಡಿ, ಮಕ್ಕಳ ನಾಟಕ ಬರೆಯುವುದು ಪ್ರಯಾಸದಾಯಕ. ಮಕ್ಕಳ ಮನಸ್ಥಿತಿ, ಭಾವನೆ ಅರಿತು ನಾಟಕ ರಚಿಸಬೇಕಾಗುತ್ತದೆ. ಸಾಮಾಜಿಕ ಅನಿಷ್ಟಗಳ ಕುರಿತು ನಾಟಕ ರಚಿಸಿ ಸಮಾಜ ಪರಿವರ್ತನೆಗೆ ಪ್ರಯತ್ನಿಸಿದ್ದು ಅಭಿನಂದನೀಯ ಎಂದು ಹೇಳಿದರು.

ರಂಗಕರ್ಮಿ ಸಿದ್ಧರಾಮ ಹಿಪ್ಪರಗಿ ಮಾತನಾಡಿ, ಚಿಲಿಪಿಲಿ ಸಂಸ್ಥೆ ಉದಯೋನ್ಮುಖ ಸಾಹಿತಿಗಳಿಗೊಂದು ವರದಾನ. ಅನೇಕ ಯುವ ಸಾಹಿತಿಗಳನ್ನು ನಿರಂತರವಾಗಿ ಪ್ರೋತ್ಸಾಹಿಸುತ್ತಾ ಬಂದಿದೆ. ಗಸ್ತಿಯವರ ಎರಡೂ ಕೃತಿಗಳು ಉತ್ಕೃಷ್ಟವಾಗಿವೆ ಎಂದು ಹೇಳಿದರು.

ಮಕ್ಕಳ ಸಾಹಿತಿಗಳಾದ ವಾಯ್.ಜಿ. ಭಗವತಿ ಹಾಗೂ ಶ್ರೀಧರ ಗಸ್ತಿ ಮಕ್ಕಳ ಸಾಹಿತ್ಯದ ಕುರಿತು ಮಾತನಾಡಿದರು. ಕಾರ್ಯಕ್ರಮದಲ್ಲಿ ಡಾ. ಶೈಲಜಾ ಅಮರಶೆಟ್ಟಿ, ವೀರಣ್ಣ ಒಡ್ಡೀನ, ಡಾ. ಮಹೇಶ ಧ.ಹೊರಕೇರಿ, ಡಾ. ಜಿನದತ್ತ ಹಡಗಲಿ, ಬಾಬಾಜಾನ ಮುಲ್ಲಾ, ಜಕಾತಿ, ಡಾ. ಚಂದ್ರಶೇಖರ ರೊಟ್ಟಿಗವಾಡ, ಎನ್.ಜಿ. ಗುರುಪುತ್ರನವರ, ಬಿ.ಬಿ. ಪಾಟೀಲ, ಮೀನಾಕಮಾರಿ ಆಚಾರ್ಯ, ಸುಧಾ ಕಬ್ಬೂರ, ತನುಜಾ ಮುಗದ, ಮಾಧುರಿ ಕುಲಕರ್ಣಿ, ಭಾರತಿ ಬಡಿಗೇರ, ಪ್ರಮೀಳಾ ಜಕ್ಕಣ್ಣನವರ ಮುಂತಾದವರಿದ್ದರು.

ನಿ. ಶ್ರೀಶೈಲ ಸ್ವಾಗತಿಸಿದರು. ಎನ್.ಬಿ. ದ್ಯಾಪೂರ ನಿರ್ವಹಿಸಿದರು. ಅಶೋಕ ಡೊಂಬರಕೊಪ್ಪ ವಂದಿಸಿದರು.

ಅಧ್ಯಕ್ಷತೆ ವಹಿಸಿದ್ದ ಕ.ವಿ.ವ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಮಾತನಾಡಿ, ಶ್ರೀಧರ ಗಸ್ತಿ ಹಾಗೂ ವಾಯ್.ಜಿ. ಭಗವತಿ ಇಬ್ಬರೂ ಶಿಕ್ಷಕ ವೃತ್ತಿಯ ಜೊತೆಗೆ ಮಕ್ಕಳ ಸಾಹಿತ್ಯದಲ್ಲಿ ಕೃಷಿ ಮಾಡುತ್ತಿರುವುದು ಅಭಿಮಾನದ ಸಂಗತಿ. ಸಾಹಿತಿಗಳಿಗೆ, ಬರಹಗಾರರಿಗೆ ಮೊದಲು ಸಾಹಿತ್ಯದ ಹಸಿವು ಮುಖ್ಯ. ಆಧುನಿಕತೆಯಲ್ಲೂ ಸುಶಿಕ್ಷಿತರೇ ಹೆಚ್ಚು ಮೌಢ್ಯಕ್ಕೆ ಒಳಗಾಗುತ್ತಿರುವುದು ಒಂದು ದುರಂತ. ಮಕ್ಕಳ ಸಾಹಿತಿಗಳು ಕಲಾಂ ಅವರಂತೆ ಮಕ್ಕಳ ಭಾವನೆಗೆ ಬಣ್ಣ ತುಂಬುವ ಕಾರ್ಯ ಮಾಡುವುದು ಇಂದಿನ ತುರ್ತು ಅಗತ್ಯವಾಗಿದೆ ಎಂದು ಹೇಳಿದರು.

ಕಾಂಗ್ರೆಸ್ ಸರ್ಕಾರ ಭರವಸೆಗಳನ್ನು ಈಡೇರಿಸಿದೆ: ಶಾಸಕ ಜಿ.ಎಸ್. ಪಾಟೀಲ

0

ವಿಜಯಸಾಕ್ಷಿ ಸುದ್ದಿ, ರೋಣ: ಹಿಂದಿನ ಬಿಜೆಪಿ ಸರ್ಕಾರ ಚುನಾವಣೆಯ ಸಂದರ್ಭದಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗುವುದು ಎಂದು ಘೋಷಿಸಿ ಮಾಡಿಟ್ಟಿರುವ 73 ಸಾವಿರ ಕೋಟಿ ರೂಗಳ ಸಾಲವನ್ನು ಈಗಿನ ಕಾಂಗ್ರೆಸ್ ಸರ್ಕಾರ ಭರ್ತಿ ಮಾಡಬೇಕಿದೆ ಎಂದು ರಾಜ್ಯ ಖನಿಜ ಅಭಿವೃದ್ಧಿ ನಿಗಮದ ಅಧ್ಯಕ್ಷರು, ಶಾಸಕರಾದ ಜಿ.ಎಸ್. ಪಾಟೀಲ ಹೇಳಿದರು.

ಅವರು ಸೋಮವಾರ ತಾಲೂಕಿನ ಹೊಸಳ್ಳಿ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ಕೆರೆ ಹೂಳೆತ್ತುವ ಕಾಮಗಾರಿ, ಸಿಸಿ ರಸ್ತೆ ನಿರ್ಮಾಣ, ಗ್ರಂಥಾಲಯ ಕಟ್ಟಡ ನಿರ್ಮಾಣ, ಹೊಸಳ್ಳಿ ರಸ್ತೆ ಸುಧಾರಣೆ, ಸಂಪರ್ಕ ರಸ್ತೆ ಸುಧಾರಣೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ಕಾಂಗ್ರೆಸ್ ಸರ್ಕಾರ ಚುನಾವಣೆ ಪೂರ್ವದಲ್ಲಿ ನೀಡಿರುವ ಐದು ಭರವಸೆಗಳನ್ನು ಈಡೇರಿಸುವ ಮೂಲಕ ಕೊಟ್ಟ ಮಾತಿನಂತೆ ನಡೆದುಕೊಂಡಿದೆ. ಮುಖ್ಯವಾಗಿ ಬಿಜೆಪಿಯವರು ಮಾಡಿರುವ ಸಾಲದ ಹಣವನ್ನು ಸರ್ಕಾರ ತೀರಿಸುವ ಮೂಲಕ ರಾಜ್ಯದಲ್ಲಿ ಅನೇಕ ಯೋಜನೆಗಳನ್ನು ಹಮ್ಮಿಕೊಂಡು ಪ್ರಗತಿಯತ್ತ ಸಾಗುತ್ತಿದೆ. ಸರ್ಕಾರದ ಬಳಿ ಹಣವಿಲ್ಲದಿದ್ದರೆ ಹೊಸಪೇಟಿಯಲ್ಲಿ 1.30 ಲಕ್ಷ, ಹಾವೇರಿ ಜಿಲ್ಲೆಯಲ್ಲಿ 1 ಲಕ್ಷ ಜನರಿಗೆ ಹಕ್ಕುಪತ್ರ ನೀಡಲು ಸಾಧ್ಯವಿತ್ತೇ? ಹೊಸಳ್ಳಿ ಗ್ರಾಮಕ್ಕೆ 1 ಕೋಟಿಗೂ ಅಧಿಕ ಅನುದಾನವನ್ನು ನೀಡಲು ಸಾಧ್ಯವಿತ್ತೇ ಎನ್ನುವುದನ್ನು ಜನರು ಅರಿಯಬೇಕು. ಮತಕ್ಷೇತ್ರದಲ್ಲಿ 200 ಕೋಟಿ ರೂಗಳಿಗೂ ಅಧಿಕ ವೆಚ್ಚದ ಅಭಿವೃದ್ಧಿ ಕಾರ್ಯಗಳಿಗೆ ಮುಖ್ಯಮಂತ್ರಿಗಳು ಬಂದು ಚಾಲನೆ ನೀಡಿರುವುದು ಎಲ್ಲರಿಗೂ ತಿಳಿದ ವಿಷಯ. ಸರ್ಕಾರದ ಖಜಾನೆಯಲ್ಲಿ ಹಣವಿಲ್ಲದಿದ್ದರೆ ರೋಣ ಮತಕ್ಷೇತ್ರಕ್ಕೆ 200 ಕೋಟಿ ರೂ ಅನುದಾನವನ್ನು ತರಲಾಗುತ್ತಿತ್ತೇ ಎಂದು ಪ್ರಶ್ನಿಸಿದ ಅವರು, ಬಿಜೆಪಿಯವರ ಅಪಪ್ರಚಾರಕ್ಕೆ ಕಿವಿಗೊಡಬಾರದು ಎಂದರು.

ಕೃಷ್ಣಾ ಬಿ ಸ್ಕೀಂ ಮೂಲಕ ಗಜೇಂದ್ರಗಡ ತಾಲೂಕಿನ 19 ಕೆರೆಗಳನ್ನು ಭರ್ತಿ ಮಾಡಲು ಈಗಾಗಲೇ ಕ್ರಿಯಾಯೋಜನೆಯನ್ನು ರೂಪಿಸಲಾಗಿದ್ದು, ಈ ಬಜೆಟ್‌ನಲ್ಲಿ ಘೋಷಣೆಯಾಗಿ ಅನುದಾನವೂ ಬರಲಿದೆ. ಈ ಯೋಜನೆಯಲ್ಲಿ ಹೊಸಳ್ಳಿ ಗ್ರಾಮದ ಕೆರೆಯನ್ನು ಸೇರಿಸಿಕೊಂಡು ಕೃಷ್ಣಾ ನದಿಯ ನೀರಿನಿಂದ ಭರ್ತಿ ಮಾಡಲಾಗುವುದು ಎಂದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯವರು 8 ಲಕ್ಷ ರೂಗಳ ವೆಚ್ಚದಲ್ಲಿ ಕೆರೆಯ ಹೂಳೆತ್ತುವ ಕಾರ್ಯವನ್ನು ಮಾಡುತ್ತಿರುವುದು ಹೆಮ್ಮೆಯ ವಿಚಾರ. ಗ್ರಾಮಸ್ಥರು ಸಹ ಸಾಮೂಹಿಕವಾಗಿ ಪಾಲ್ಗೊಂಡು ಅವರಿಗೆ ಸಹಕಾರ ನೀಡಬೇಕು ಮತ್ತು ಅಂತರ್ಜಲ ಹೆಚ್ಚಿಸಲು ಕೆರೆಯನ್ನು ರಕ್ಷಿಸಬೇಕು. ಅಭಿವೃದ್ಧಿ ಕಾರ್ಯಗಳಿಗೂ ಸಹಕಾರ ಅಗತ್ಯ ಎಂದರು.

ಸಾನ್ನಿಧ್ಯವನ್ನು ಗುರುಪಾದ ಶ್ರೀಗಳು ವಹಿಸಿದ್ದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೀರಣ್ಣ ಶೆಟ್ಟರ, ನ್ಯಾಯವಾದಿ ವಿ.ಆರ್. ಗುಡಿಸಾಗರ, ಎಪಿಎಂಸಿ ಮಾಜಿ ಅಧ್ಯಕ್ಷ ಪಿ.ಬಿ. ಅಳಗವಾಡಿ, ತಾ.ಪಂ ಮಾಜಿ ಉಪಾಧ್ಯಕ್ಷ ಪ್ರಭು ಮೇಟಿ, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಸಂಗಪ್ಪ ಮೆಣಸಿನಕಾಯಿ, ಪಿಎಲ್‌ಡಿ ಬ್ಯಾಂಕ್ ಉಪಾಧ್ಯಕ್ಷ ಯಚ್ಚರಗೌಡ ಗೋವಿಂದಗೌಡ, ಸದಸ್ಯ ಬಸವರಾಜ ನವಲಗುಂದ, ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷ ಯೂಸುಪ್ ಇಟಗಿ, ವಿ.ಬಿ. ಸೋಮನಕಟ್ಟಿಮಠ, ವಿ.ಬಿ. ಪಸಾರದ, ಕಾಶೀಮಸಾಬ ಪಿಂಜಾರ, ಬಿ.ಎಸ್. ರಡ್ಡೇರ ಸೇರಿದಂತೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿಗಳು ಉಪಸ್ಥಿತರಿದ್ದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ಜಿಲ್ಲೆಯಲ್ಲಿ 26 ಶುದ್ಧಗಂಗಾ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದೆ. ಜಿಲ್ಲೆಯಲ್ಲಿ 26 ಕೆರೆಗಳ ಹೂಳು ತೆಗೆಯುವ ಕಾರ್ಯವನ್ನು ಮಾಡಲಾಗಿದ್ದು, ಸಾರ್ವಜನಿಕರಿಗೆ ಉಪಯುಕ್ತವಾಗುವ ಕೆಲಸಗಳಿದ್ದಲ್ಲಿ ಅವುಗಳಿಗೆ ಸಹಕಾರ ನೀಡಲು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಸದಾಕಾಲ ಸಿದ್ಧವಿದೆ.

  • ಕೇಶವ ದೇವಾಂಗ.
    ಧ.ಗ್ರಾ.ಸಂ ಯೋಜನಾಧಿಕಾರಿ, ಗದಗ.

ಶ್ರೀ ಮುಕ್ತಿಮಂದಿರ ಧರ್ಮ ಕ್ಷೇತ್ರದಲ್ಲಿ ಸೇವೆ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದ ಅಗಡಿ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಮಹಾಶಿವರಾತ್ರಿಯ ದಿನದಂದು ಶ್ರೀ ಮುಕ್ತಿಮಂದಿರ ಧರ್ಮ ಕ್ಷೇತ್ರದಲ್ಲಿ ತ್ರಿಕೋಟಿ ಲಿಂಗ ಸ್ಥಾಪನೆಗಾಗಿ ಸಿದ್ಧಗೊಂಡಿರುವ 5 ಸಾವಿರ ಶಿವಲಿಂಗಗಳನ್ನು ಶುಭ್ರಗೊಳಿಸಿ ಪೂಜೆ ಸಲ್ಲಿಸುವ ಸೇವಾ ಕಾರ್ಯದ ಮೂಲಕ ಶ್ರದ್ಧಾ-ಭಕ್ತಿಯಿಂದ ಶಿವರಾತ್ರಿ ಹಬ್ಬದಲ್ಲಿ ಪಾಲ್ಗೊಂಡರು.

ಕಾಲೇಜಿನ ಪ್ರಾಚಾರ್ಯರಾದ ಡಾ. ಪರಶುರಾಮ ಬಾರ್ಕಿ ಮಾರ್ಗದರ್ಶನ ಮತ್ತು ಎನ್‌ಎಸ್‌ಎಸ್ ಘಟಕದ ಅಧಿಕಾರಿ ಪ್ರೊ. ಸೋಮಶೇಖರ ಕೆರಿಮನಿ ಅವರ ನೇತೃತ್ವದಲ್ಲಿ ನೂರಾರು ವಿದ್ಯಾರ್ಥಿ-ವಿದ್ಯಾರ್ಥಿನಿಯರು ಧರ್ಮಕ್ಷೇತ್ರಕ್ಕೆ ಆಗಮಿಸಿ ಶಿವಲಿಂಗಗಳನ್ನು ನೀರಿನಿಂದ ಶುಭ್ರಗೊಳಿಸಿ ವಿಭೂತಿ ಲೇಪಿಸಿ, ಪುಷ್ಪ, ಬಿಲ್ವಪತ್ರೆಗಳಿಂದ ಅಲಂಕರಿಸಿದರು. ಪೂಜಿತಗೊಂಡ ಶಿವಲಿಂಗಗಳನ್ನು ಆಗಮಿಸಿದ ಅಪಾರ ಭಕ್ತರು ಸ್ಪರ್ಶಿಸಿ ಭಕ್ತಿಯಿಂದ ನಮಿಸಿದರು.

ಕಾಲೇಜಿನ ಮುಖ್ಯ ಆಡಳಿತಾಧಿಕಾರಿ ಪ್ರೊ. ವಿಕ್ರಂ ಶಿರೋಳ, ಡಾ. ಅರುಣ ಕುಂಬಿ, ಪ್ರೊ. ಶಿವಲಿಂಗಪ್ಪ ಡಿ.ಆರ್, ಪ್ರೊ. ಷಣ್ಮುಖ ಗಡ್ಡೆಣ್ಣವರ, ಸೋಮು ನವಲಗುಂದ, ರವಿ ದುರಗಣ್ಣವರ, ಪ್ರೊ. ನವೀನ, ಮಂಜುನಾಥ್ ಸಾತಪುತೆ, ಸಿಬ್ಬಂದಿಗಳ ಸೇರಿ ಅನೇಕ ವಿದ್ಯಾರ್ಥಿಗಳು ಸೇವಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.

ಶಿವರಾತ್ರಿ ದಿನ ಧರ್ಮಕ್ಷೇತ್ರದಲ್ಲಿನ ಶಿವಲಿಂಗಗಳನ್ನು ಶುಭ್ರಗೊಳಿಸಿ ಪೂಜಿಸಲಾಗುತ್ತದೆ. ಈ ದಿನ ಉಪವಾಸ ವ್ರತಾಚರಣೆಯೊಂದಿಗೆ ಶಿವಲಿಂಗ ಪೂಜಾ ಸೇವೆ ಮಾಡುವುದು ತಮ್ಮ ಭಾಗ್ಯವೆಂದು ಕಾಲೇಜಿನ ವಿದ್ಯಾರ್ಥಿಗಳು ಸಂತಸ ವ್ಯಕ್ತಪಡಿಸಿದರು.

ಪ್ರತಿ ವರ್ಷ ಶಿವರಾತ್ರಿ ಹಬ್ಬದ ದಿನ ಅಗಡಿ ಇಂಜಿನಿಯರಿಂಗ್ ಕಾಲೇಜಿನ ನೂರಾರು ವಿದ್ಯಾರ್ಥಿಗಳು ಸ್ವಯಂ ಪ್ರೇರಣೆ ಮತ್ತು ಭಕ್ತಿಯಿಂದ ಕ್ಷೇತ್ರದಲ್ಲಿನ ಸಾವಿರಾರು ಶಿವಲಿಂಗಗಳಿಗೆ ಜಲಪ್ರೋಕ್ಷಣೆ ಮಾಡಿ ಅಲಂಕರಿಸುವ ಮೂಲಕ ಶಿವರಾತ್ರಿ ಜಾತ್ರಾಮಹೋತ್ಸವಕ್ಕೆ ಜೀವಕಳೆ ನೀಡುತ್ತಿರುವುದು ನಮಗೆ ಸಂತಸ ತಂದಿದೆ ಎಂದು ಕ್ಷೇತ್ರದ ಪಟ್ಟಾಧ್ಯಕ್ಷರಾದ ಶ್ರೀ ವಿಮಲ ರೇಣುಕ ವೀರಮುಕ್ತಿಮುನಿ ಶ್ರೀಗಳು ಹೇಳಿದರು.

ಶಿವರಾತ್ರಿಯ ನಿಮಿತ್ತ ಅಪಾರ ಭಕ್ತರು ಮುಕ್ತಿಮಂದಿರ ಧರ್ಮಕ್ಷೇತ್ರಕ್ಕೆ ಆಗಮಿಸಿ ಲಿಂ. ವೀರಗಂಗಾಧರ ಜಗದ್ಗುರುಗಳ ಕೃತ ಗದ್ದುಗೆ, ಶಿವಲಿಂಗ ದರ್ಶನ ಮತ್ತು ಕ್ಷೇತ್ರದ ಪಟ್ಟಾಧ್ಯಕ್ಷರ ದರ್ಶನಾಶೀರ್ವಾದ ಪಡೆದರು.

ಮತಕ್ಷೇತ್ರದ ಅಭಿವೃದ್ಧಿಗೆ ಮೊದಲ ಆದ್ಯತೆ: ಮಿಥುನ ಪಾಟೀಲ

0

ವಿಜಯಸಾಕ್ಷಿ ಸುದ್ದಿ, ಡಂಬಳ: ಶೈಕ್ಷಣಿಕ, ಧಾರ್ಮಿಕ, ಸಾಂಸ್ಕೃತಿಕ ಮತ್ತು ಐತಿಹಾಸಿಕ ಹಿನ್ನೆಲೆ ಹೊಂದಿರುವ ಹಿರೇವಡ್ಡಟ್ಟಿ ಗ್ರಾಮದ ಸಮಗ್ರ ಅಭಿವೃದ್ಧಿ ಮಾಡಲಾಗುವುದು. ರೋಣ ಮತಕ್ಷೇತ್ರದ ಶಾಸಕ ಜಿ.ಎಸ್. ಪಾಟೀಲರು ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಕುಡಿಯುವ ನೀರು, ರಸ್ತೆ ನಿರ್ಮಾಣ, ಆರೋಗ್ಯ, ಕೃಷಿ, ಶಿಕ್ಷಣ ಸೇರಿದಂತೆ ಕ್ಷೇತ್ರದ ಅಭಿವೃದ್ಧಿ ಮಾಡುವ ಮೂಲಕ ಮಾದರಿ ಕ್ಷೇತ್ರವನ್ನಾಗಿ ಮಾಡಲಾಗುವುದು ಎಂದು ರೋಣ ಗ್ಯಾರಂಟಿ ಸಮಿತಿ ಅಧ್ಯಕ್ಷ ಮಿಥುನ ಜಿ. ಪಾಟೀಲ ಹೇಳಿದರು.

ಡಂಬಳ ಹೋಬಳಿ ಹಿರೇವಡ್ಡಟ್ಟಿ ಗ್ರಾಮದ ಶ್ರೀವೀರಭದ್ರೇಶ್ವರ ದೇವಸ್ಥಾನದ ಯುವಕ ಮಂಡಳಿ ಹಾಗೂ ಭಜನಾ ಸಂಘದ ಸಮುದಾಯ ಭವನಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ 50 ಲಕ್ಷ ರೂಗಳ ಅನುದಾನದ ಕಾಮಗಾರಿಯ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ಸಮುದಾಯ ಭವನದ ಕಟ್ಟಡ ಸುಸಜ್ಜಿತವಾಗಿ ನಿರ್ಮಾಣವಾಗಬೇಕು. ಗ್ರಾಮದ ಮನಕವಾಡ ಮಠಕ್ಕೂ ಈಗಾಗಲೇ 20 ಲಕ್ಷ ರೂ ಅನುದಾನ ನೀಡಲಾಗಿದೆ. ಇನ್ನೂ ಹೆಚ್ಚಿನ ಅನುದಾನ ನೀಡಲು ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ. ಇಂತಹ ಧಾರ್ಮಿಕ ಕೇಂದ್ರಗಳಿಂದ ನಿರಂತರವಾಗಿ ಸಾಮಾಜಿಕ ಚಟುವಟಿಕೆಗಳು ನಡೆಯುತ್ತಿವೆ ಎಂದು ಹೇಳಿದರು.

ಪರಮಪೂಜ್ಯ ವೀರೇಶ್ವರ ಶಿವಾಚಾರ್ಯ ಸ್ವಾಮೀಜಿಗಳು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ಈ ಭಾಗದ ಗ್ರಾಮದ ಹಲವು ಅಭಿವೃದ್ಧಿ ಕಾರ್ಯಗಳಿಗೆ ಮತ್ತು ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಕಾರ್ಯಗಳಿಗೆ ಆದ್ಯತೆ ನೀಡುತ್ತಿರುವುದು ಪ್ರಶಂಸನೀಯ ಎಂದರು.

ಕಾರ್ಯಕ್ರಮದಲ್ಲಿ ಮುಖಂಡರಾದ ಹನಮರಡ್ಡಿ ಮೇಟಿ, ಲೋಕಪ್ಪ ನಂದಿಕೋಲ, ಶಿವಪ್ಪ ಅಂಕದ, ಸುರೇಶ ಕವಲೂರ, ಶರಣಪ್ಪ ನಂದಿಕೋಲ, ವೆಂಕಪ್ಪ ಬಳ್ಳಾರಿ, ಅಬ್ದುಲ್‌ಸಾಬ್ ಕಲಕೇರಿ, ಗುಳಪ್ಪ ಸಂಗನಾಳ, ಶರಣಪ್ಪ ಅಂಕದ, ಶ್ರೀವೀರಭದ್ರೇಶ್ವರ ದೇವಸ್ಥಾನದ ಯುವಕ ಮಂಡಳಿ ಹಾಗೂ ಭಜನಾ ಸಂಘದ ಅಧ್ಯಕ್ಷ ಹಾಲೇಶ ಹಲಿಗಿಲಿವಾಡ, ಉಪಾಧ್ಯಕ್ಷ ಶ್ರಾವಣ ಶಿವಳ್ಳಿ, ಕಾರ್ಯದರ್ಶಿ ಮಲ್ಲಣ್ಣ ಅಂಕದ, ಖಜಾಂಚಿ ಪ್ರಶಾಂತ ಹಂಚಿನಾಳ, ಉಮೇಶ ಕಿರಿಕಿರಿ, ಶರಣಪ್ಪ ಕುಂದ್ರಹಳ್ಳಿ, ಮಂಜುನಾಥ ಮೇವುಂಡಿ, ಸುರೇಶ ಮುಪ್ಪಿನಎಣ್ಣಿ, ಈರಣ್ಣ ಕಾಮಣ್ಣವರ, ಸುರೇಶಪ್ಪ ಬಣವಿ, ಚನ್ನಪ್ಪ ಜುಂಜುರಿ ಗುತ್ತಿಗೆದಾರ ಫಕ್ಕಿರಸಾಬ್ ಕೊಪ್ಪಳ, ಗ್ರಾಮದ ಹಿರಿಯರು, ಯುವಕರು ಇದ್ದರು.

ಸರ್ಕಾರಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ, ಜಿಲ್ಲಾಧ್ಯಕ್ಷ ಬಸವರಾಜ ಬಳ್ಳಾರಿ ಮಾತನಾಡಿ, ರೋಣ ಮತಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳು ನಿರಂತರವಾಗಿ ನಡೆಯುತ್ತಿವೆ. ಶಾಸಕ ಜಿ.ಎಸ್. ಪಾಟೀಲರ ಶಿಫಾರಸ್ಸಿನ ಮೇರೆಗೆ ಸಮುದಾಯ ಭವನ ನಿರ್ಮಾಣಕ್ಕೆ 50 ಲಕ್ಷ ರೂ ಅನುದಾನ ಬಿಡುಗಡೆ ಮಾಡಿದ ಹಿಂದುಳಿದ ವರ್ಗ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ಶಿವರಾಜ ತಂಗಡಿಯವರಿಗೂ ಗ್ರಾಮಸ್ಥರ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೇವೆ. ನಮ್ಮ ಗ್ರಾಮ ಐತಿಹಾಸಿಕ ಹಿನ್ನೆಲೆ ಹೊಂದಿದ್ದು, ಮಾದರಿ ಗ್ರಾಮವನ್ನಾಗಿ ಮಾಡಲು ಗ್ರಾಮದ ಪ್ರತಿಯೊಬ್ಬರೂ ಪಕ್ಷಾತೀತವಾಗಿ ಶ್ರಮಿಸೋಣ ಎಂದು ಹೇಳಿದರು.

ನಕಲಿ ದಾಖಲೆ ಸೃಷ್ಟಿಸಿ KSRTC ಸಿಬ್ಬಂದಿ ವರ್ಗಾವಣೆ: FIR ದಾಖಲು, ಪೊಲೀಸರಿಂದ ತನಿಖೆ ಚುರುಕು

0

ಬೆಂಗಳೂರು: ಬೆಂಗಳೂರು ದಕ್ಷಿಣ ವಿಭಾಗದ ಮಾಗಡಿ ಘಟಕದಲ್ಲಿ ಕೆಲಸಮಾಡುತ್ತಿದ್ದ ಕೆಎಸ್‌ಆರ್‌ಟಿಸಿ ಚಾಲಕ-ಕಂ ನಿರ್ವಾಹಕ ಎಂ. ಜಯದೇವ್ ಅವರನ್ನು ಏಕಾಏಕಿ ಮಂಗಳೂರು ವಿಭಾಗಕ್ಕೆ ವರ್ಗಾಯಿಸಲಾಗಿತ್ತು.

ಪರಿಶೀಲನೆಯ ವೇಳೆ ಜಯದೇವ್ ಅವರ ಹೆಸರಿನಲ್ಲಿ ವರ್ಗಾವಣೆ ಅರ್ಜಿ ಸಲ್ಲಿಸಲಾಗಿದೆ ಎಂಬುದು ಪತ್ತೆಯಾದರೂ, ಅವರು ಯಾವುದೇ ಅರ್ಜಿ ಸಲ್ಲಿಸಿಲ್ಲ ಎಂದು ದೂರಿನಲ್ಲಿ ಹೇಳಿದ್ದಾರೆ. ಇದರಿಂದಾಗಿ ವಿಧಾನಸೌಧ ಠಾಣೆಯಲ್ಲಿ ಸಚಿನ್ ವಿರುದ್ಧ ಪ್ರಕರಣ ದಾಖಲಾಗಿದೆ. ಹಿಂದಿನ ಘಟನೆಗಳಲ್ಲಿ, 11.11.2025 ರಂದು ಜಯದೇವ್ ಅನ್ನು ಬೆಂಗಳೂರು ಕೇಂದ್ರೀಯ 6ನೇ ಘಟಕದಿಂದ ಮಂಗಳೂರು ವಿಭಾಗಕ್ಕೆ ವರ್ಗಾಯಿಸಿದ್ದರು.

ಬಳಿಕ RTI ಮೂಲಕ ದಾಖಲಾತಿಗಳನ್ನು ಪರಿಶೀಲಿಸಿದಾಗ, ಜಯದೇವ್ ಅವರ ನಕಲಿ ಸಹಿ ಮತ್ತು ನಕಲಿ ಅರ್ಜಿಯನ್ನು ಸೃಷ್ಟಿಸಿ, ಸಚಿವರ ಕಚೇರಿಗೆ ಸಲ್ಲಿಸಿರುವುದು ಪತ್ತೆಯಾಗಿದ್ದು, ಸಂಬಂಧಿತ ವ್ಯಕ್ತಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಅವರು ದೂರಿನಲ್ಲಿ ಸೂಚಿಸಿದ್ದಾರೆ.

ವಿಜಯೇಂದ್ರನಂತೆ ಯತೀಂದ್ರ ಕೂಡ ವಸೂಲಿ ಕಂಪನಿಯಾಗಿದ್ದಾನೆ; ಯತ್ನಾಳ್

0

ವಿಜಯಪುರ:- ಯತೀಂದ್ರ ಕೂಡ ವಿಜಯೇಂದ್ರನಂತೆ ವಸೂಲಿಗೆ ಇಳಿದಿದ್ದಾನೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.

ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ವಿಜಯೇಂದ್ರ ಹೇಗೆ ಯಡ್ಡಿಯೂರಪ್ಪ ಸಿಎಂ ಇದ್ದಾಗ ವಸೂಲಿ ಮಾಡಿದ್ದ, ಹಾಗೆ ಸಿದ್ದರಾಮಯ್ಯ ಮಗ ಕೂಡ ವಿಜಯೇಂದ್ರನಂತೆ ವಸೂಲಿಗೆ ನಿಂತಿದ್ದಾನೆ. ವಿಜಯೇಂದ್ರ ಕಡೆ ರಾತ್ರಿ ಟ್ರೇನಿಂಗ್ ತೆಗೆದುಕೊಳ್ಳುತ್ತಾನಂತೆ. ಹೇಗೆ ನಕಲಿ ಸಹಿ ಮಾಡಬೇಕು ಅಂತ ತಿಳಿಸಿಕೊಳ್ಳುತ್ತಿದ್ದಾನೆ ಟ್ರೇನಿಂಗ್ ಕೊಡುವ ಮಾಸ್ಟರ್ ನಮ್ಮವನೇ. ಹೀಗಾಗಿ ಸಿದ್ದರಾಮಯ್ಯ ಸಿಎಂ ಸ್ಥಾನ ಬಿಡುವುದಿಲ್ಲ, ಡಿಕೆಶಿ ಸಿಎಂ ಆಗುವುದಿಲ್ಲ. ವಿಧಾನಸಭೆ ವಿಸರ್ಜನೆ ನಿಶ್ಚಿತ ಎಂದಿದ್ದಾರೆ.

ಗದ್ದುಗೆ ಗುದ್ದಾಟ ಜಗಳ ವಿಧಾನಸಭೆ ವಿಸರ್ಜನೆವರೆಗೆ ಬಂದ್ರೆ ಆಶ್ಚರ್ಯ ಇಲ್ಲ. ಡಿಕೆಶಿ ಅವರಿಗೆ ಡೂ ಆರ್ ಡೈ ಇದೆ. ಸಿದ್ದರಾಮಯ್ಯ ಅವರಿಗೆ ಏನಿದೆ ಇನ್ನೊಮ್ಮೆ ಸಿಎಂ ಆಗಲ್ಲ, ಹೇಗಿದ್ರೂ ಮನೆಗೆ ಹೋಗುತ್ತೇನೆ ಅಂತಾ ಗೊತ್ತಿದೆ. ನನ್ನ ಮಗ ಅಂತ್ರೂ ಅಷ್ಟು ಯೋಗ್ಯನಲ್ಲ ಅಂತಾ ಗೊತ್ತಾಗಿದೆ. ವಿಸರ್ಜನೆ ಆಗೇ ಆಗುತ್ತೆ, ಮುಂದೆ ಮತ್ತೆ ಒಳ್ಳೆಯ ಸರ್ಕಾರ ಬರುತ್ತೆ. ರಾಜ್ಯದಲ್ಲಿ ನಡೆದಿರುವ ಭೂಕಬಳಿಕೆ, ಹಿಂದೂ ದೇವಸ್ಥಾನಗಳಿಗೆ ಕಲ್ಲು ಎಸೆಯು ವುದು. ನಿನ್ನೆ ಒಂದು ಮೂರ್ತಿ ಭಗ್ನ ಮಾಡಿದ್ದಾರೆ. ಇದೆಕ್ಕೆಲ್ಲ ಶಾಶ್ವತ ಪರಿಹಾರ ಅಂದ್ರೆ ನಮ್ಮ ಜೆಸಿಬಿ ಒಂದೇ ಎಂದು ಹೇಳಿದ್ದಾರೆ.

ಭಾರತದ ವಿರುದ್ಧ ಸೋತ ಬೆನ್ನಲ್ಲೇ ಪಾಕ್ ನ ಇಬ್ಬರು ಸ್ಟಾರ್‌ ಆಟಗಾರರು ಔಟ್‌!?

0

ಕೊಲಂಬೋ: ಟಿ20 ವಿಶ್ವಕಪ್‌ನಲ್ಲಿ ಭಾರತ ವಿರುದ್ಧ ಸೋಲಿನಿಂದ ಕೆಟ್ಟ ಸ್ಥಿತಿಯಲ್ಲಿದ್ದ ಪಾಕಿಸ್ತಾನ ತಂಡ ಬಾಬರ್ ಅಜಂ ಮತ್ತು ಶಾಹಿನ್ ಅಫ್ರಿದಿಯನ್ನು ನಮೀಬಿಯಾ ವಿರುದ್ಧದ ಕೊನೆಯ ಪಂದ್ಯಕ್ಕೆ ವಿಶ್ರಾಂತಿಗೆ ಕಳಿಸಲು ನಿರ್ಧರಿಸಿದೆ.

ಈ ಪಂದ್ಯದಲ್ಲಿ ಗೆದ್ದರೆ ಮಾತ್ರ ಪಾಕ್ ಸೂಪರ್‌ 8 ಪ್ರವೇಶ ಸಾಧ್ಯವಾಗುತ್ತದೆ. ಭಾರತದೊಂದಿಗೆ ನಡೆದ ಪಂದ್ಯದಲ್ಲಿ 61 ರನ್‌ಗಳ ಸೋಲಿನ ಬಳಿಕ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಮೊಹ್ಸಿನ್ ನಖ್ವಿ ತಮ್ಮ ಅಸಮಾಧಾನವನ್ನು ತಂಡದ ವ್ಯವಸ್ಥಾಪಕ ನವೇದ್ ಅಕ್ರಮ್ ಚೀಮಾಗೆ ವ್ಯಕ್ತಪಡಿಸಿದ್ದಾರೆ.

ಇದೀಗ ನಮೀಬಿಯಾ ವಿರುದ್ಧ ಬಾಬರ್ ಮತ್ತು ಶಾಹೀನ್ ಅವರ ಜಾಗದಲ್ಲಿ ಸಲ್ಮಾನ್ ಮಿರ್ಜಾ/ನಸೀಮ್ ಶಾ ಮತ್ತು ಫಖರ್ ಜಮಾನ್ ಅವರನ್ನು ಆಡಿಸಲು ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ವರದಿಯಾಗಿದೆ.

ಎ ಗುಂಪಿನಲ್ಲಿ ಮೂರು ಪಂದ್ಯಗಳನ್ನು ಗೆದ್ದಿರುವ ಭಾರತ ಸೂಪರ್‌ 8 ಪ್ರವೇಶಿಸಿದೆ. ಇನ್ನೊಂದು ಕಡೆ 2 ಪಂದ್ಯ ಗೆದ್ದಿರುವ ಅಮೆರಿಕ ನೆಟ್‌ ರನ್‌ ರೇಟ್‌ ಆಧಾರದಲ್ಲಿ ಎರಡನೇ ಸ್ಥಾನದಲ್ಲಿದ್ದರೆ ಪಾಕಿಸ್ತಾನ ಮೂರನೇ ಸ್ಥಾನದಲ್ಲಿದೆ.

ಕೆಆರ್ ಪುರ| ಟ್ಯಾಕ್ಸ್ ಬಾಕಿ ಇರುವ ಕಟ್ಟಡ ಮಾಲೀಕರಿಗೆ ಶಾಕ್ ಕೊಟ್ಟ ಜಿಬಿಎ!

0

ಬೆಂಗಳೂರು:- ಕೆಆರ್ ಪುರ ವಲಯದಲ್ಲಿ ಜಿಬಿಎ ಅಧಿಕಾರಿಗಳು ಪ್ರಾಪರ್ಟಿ ಟ್ಯಾಕ್ಸ್ ಬಾಕಿ ಇರುವ ಕಟ್ಟಡ ಮಾಲೀಕರಿಗೆ ದಂಡ ಮತ್ತು ಹರಾಜು ಕ್ರಮ ಜಾರಿಗೊಳಿಸಿದ್ದಾರೆ.

ವಲಯ ಆಯುಕ್ತೆ ಡಾ. ಸುಧಾ ಸ್ವಪ್ನ್ ನೇತೃತ್ವದಲ್ಲಿ ನಡೆದ ಭರ್ಜರಿ ಕಾರ್ಯಾಚರಣೆಯಲ್ಲಿ, ಎರಡು–ಮೂರು ವರ್ಷಗಳಿಂದ ವಾಣಿಜ್ಯ ಮಳಿಗೆಗಳು ಮತ್ತು ಕಟ್ಟಡಗಳಿಗೆ ಪಾವತಿ ಮಾಡದವುಗಳಿಗೆ ಸೀಲ್ ಹಾಕಿ, ಹರಾಜು ನೋಟೀಸ್ ಅಂಟಿಸಲಾಗಿದೆ.

ಕೆಆರ್ ಪುರ ವಲಯ ವ್ಯಾಪ್ತಿಯಲ್ಲಿ ಒಟ್ಟು 24 ಕಟ್ಟಡಗಳನ್ನು ಹರಾಜಿಗೆ ಗುರುತಿಸಲಾಗಿದೆ. ಅಧಿಕಾರಿಗಳ ತಂಡವು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಕಟ್ಟಡ ಮಾಲೀಕರ ವಿರುದ್ದ ಕ್ರಮ ಕೈಗೊಂಡಿದ್ದಾರೆ.

ಕೆಂಪೇಗೌಡ ಏರ್ಪೋರ್ಟ್‌ನಲ್ಲಿ ಕೋಟಿ ಮೌಲ್ಯದ ಹೈಡ್ರೋಪೋನಿಕ್ ಗಾಂಜಾ ಸೀಜ್; ಆರೋಪಿ ಅರೆಸ್ಟ್!

0

ಬೆಂಗಳೂರು:- ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿ ಬ್ಯಾಂಕಾಕ್‌ನಿಂದ ಬೆಂಗಳೂರಿಗೆ ತರಲಾಗಿದ್ದ ಸುಮಾರು 6.90 ಕೆಜಿ ಹೈಡ್ರೋಪೋನಿಕ್ ಗಾಂಜಾವನ್ನು ವಶಕ್ಕೆ ಪಡೆದಿದ್ದಾರೆ.

ಈ ಗಾಂಜಾ ಮೌಲ್ಯವು ಸುಮಾರು 2.44 ಕೋಟಿ ರೂ. ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಗಾಂಜಾವನ್ನು ಸೂಟ್‌ಕೇಸ್‌ನಲ್ಲಿ ಕುಕ್ಕಿಸ್ ಪ್ಯಾಕೆಟ್‌ಗಳಾಗಿ ಮುಚ್ಚಿ ಸಾಗಿಸಲಾಗುತ್ತಿದ್ದು, ಇದೀಗ ಆರೋಪಿಗಳ ಬಂಧನವಾಗಿದೆ.

ಇದೀಗ ಆರೋಪಿ ವಿರುದ್ಧ NDPS ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!