ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಹಾಗೂ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯ ಹೊಸ ನಿಯಮಗಳಿಂದ ರೈತರಲ್ಲಿ ಉಂಟಾಗಿರುವ ಗೊಂದಲ ನಿವಾರಿಸಿ, ಬೆಳೆ ವಿಮೆ ಕಂತು ಪಾವತಿಸಲು ಅವಧಿ ವಿಸ್ತರಿಸಬೇಕು ಎಂದು ಆಗ್ರಹಿಸಿ ಲಕ್ಷ್ಮೇಶ್ವರ ತಾಲೂಕು ಸಮಗ್ರ ರೈತ ಹೋರಾಟ ಸಂಘಟನೆಗಳ ಒಕ್ಕೂಟದ ವತಿಯಿಂದ ಸೋಮವಾರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು, ಜಂಟಿ ಕೃಷಿ ನಿರ್ದೇಶಕರು, ಲೀಡ್ ಬ್ಯಾಂಕ್ ವ್ಯವಸ್ಥಾಪಕರು ಹಾಗೂ ವಿವಿಧ ಬ್ಯಾಂಕ್ಗಳ ಪ್ರಾದೇಶಿಕ ವ್ಯವಸ್ಥಾಪಕರೊಂದಿಗೆ ರೈತರು ಸಭೆ ನಡೆಸಿ, ಬೆಳೆ ವಿಮೆ ಸಮಸ್ಯೆ, ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸುವುದು ಸೇರಿದಂತೆ ರೈತರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳ ಕುರಿತು ಚರ್ಚಿಸಿದರು.
ಮನವಿಯಲ್ಲಿ, ಕಳೆದ ಹಲವು ವರ್ಷಗಳಿಂದ ರೈತರು ಬೆಳೆ ವಿಮೆ ಕಂತು ಪಾವತಿಸುತ್ತಿದ್ದರೂ ಸಮರ್ಪಕ ಪರಿಹಾರ ದೊರೆಯುತ್ತಿಲ್ಲ. ದಲ್ಲಾಳಿಗಳ ಹಾವಳಿಯಿಂದ ಬಹುತೇಕ ರೈತರು ವಂಚಿತರಾಗಿದ್ದು, ಕೆಲವೇ ರೈತರಿಗೆ ಅಲ್ಪ ಪ್ರಮಾಣದ ಪರಿಹಾರ ಸಿಕ್ಕಿದೆ ಎಂದು ಆರೋಪಿಸಲಾಗಿದೆ.
ಹೊಸ ನಿಯಮದಂತೆ ಬ್ಯಾಂಕ್ಗಳಲ್ಲಿ ಸಾಲ ಪಡೆದ ರೈತರು ಬೆಳೆ ಬದಲಾವಣೆ ದೃಢೀಕರಣ ಪತ್ರದೊಂದಿಗೆ ವಿಮೆ ಪಾವತಿಸಬೇಕಿದ್ದು, ಹತ್ತಿ ಹಾಗೂ ಹೆಸರು ಬೆಳೆಗಳಿಗೆ ಜುಲೈ 15 ಕೊನೆಯ ದಿನವಾಗಿರುವುದರಿಂದ ಅನೇಕ ರೈತರು ವಿಮೆ ಪಾವತಿಯಿಂದ ವಂಚಿತರಾಗುವ ಸಾಧ್ಯತೆ ಇದೆ ಎಂದು ತಿಳಿಸಿದರು.
ಸಾಲ ಪಡೆಯದ ರೈತರಿಗೆ ಸ್ವಘೋಷಣಾ ಪತ್ರದ ಮೂಲಕ ಕರ್ನಾಟಕ ಒನ್ ಹಾಗೂ ಸಿಎಸ್ಸಿ ಕೇಂದ್ರಗಳಲ್ಲಿ ವಿಮೆ ಪಾವತಿಸಲು ಅವಕಾಶ ನೀಡಲಾಗಿದ್ದರೂ, ಸರ್ವರ್ ಸಮಸ್ಯೆ, ತಾಂತ್ರಿಕ ತೊಂದರೆ, ದಾಖಲೆಗಳ ಗೊಂದಲ ಹಾಗೂ ಬ್ಯಾಂಕ್ಗಳಲ್ಲಿ ಕನ್ನಡ ಬಲ್ಲ ಸಿಬ್ಬಂದಿ ಕೊರತೆಯಿಂದ ರೈತರು ಪರದಾಡುವಂತಾಗಿದೆ ಎಂದು ದೂರಿದರು.
ಅಲ್ಲದೆ, ಅತಿವೃಷ್ಟಿ, ಮಳೆ ಕೊರತೆ ಹಾಗೂ ರೋಗಬಾಧೆಯಿಂದ ಸಂಕಷ್ಟದಲ್ಲಿರುವ ರೈತರಿಗೆ ಬೆಳೆ ವಿಮೆ ಪಾವತಿಸಲು ಅವಕಾಶ ಕಲ್ಪಿಸಬೇಕು. ವಿಮೆ ಪಾವತಿಗೆ ಇನ್ನಷ್ಟು ಕಾಲಾವಕಾಶ ನೀಡುವ ಜೊತೆಗೆ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿದರು.
ಸೋಮವಾರ ಬ್ಯಾಂಕ್ಗಳು ಹಾಗೂ ಆನ್ಲೈನ್ ಕೇಂದ್ರಗಳ ಮುಂದೆ ರೈತರು ದಿನವಿಡೀ ಕಾದರೂ, ಸರ್ವರ್ ಸಮಸ್ಯೆಯಿಂದ ವಿಮೆ ಪಾವತಿಸಲು ಸಾಧ್ಯವಾಗದೆ ನಿರಾಶರಾಗಿ ಹಿಂತಿರುಗಿದ ದೃಶ್ಯಗಳು ಕಂಡುಬಂದವು.
“ಬೆಳೆ ವಿಮೆ ನಿಯಮಗಳ ಗೊಂದಲ ನಿವಾರಿಸಿ, ಪಾವತಿ ಅವಧಿ ವಿಸ್ತರಿಸದಿದ್ದರೆ ಸಾವಿರಾರು ರೈತರು ವಿಮೆ ಸೌಲಭ್ಯದಿಂದ ವಂಚಿತರಾಗಲಿದ್ದಾರೆ.”
– ಮಂಜುನಾಥ ಮಾಗಡಿ, ತಾಲೂಕು ಅಧ್ಯಕ್ಷ, ಸಮಗ್ರ ರೈತ ಹೋರಾಟ ಸಂಘಟನೆಗಳ ಒಕ್ಕೂಟ



