Home Blog

ಓದು ಓದು ಎಂದಿದ್ದಕ್ಕೆ ಮನನೊಂದು 9ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ!

0

ಶಿವಮೊಗ್ಗ: ಓದಿನ ವಿಚಾರದಲ್ಲಿ ಪೋಷಕರು ಬುದ್ಧಿವಾದ ಹೇಳಿದ್ದರಿಂದ ಮನನೊಂದಿದ್ದ 9ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

ಮೃತ ವಿದ್ಯಾರ್ಥಿನಿಯನ್ನು ಸೃಷ್ಟಿ (14) ಎಂದು ಗುರುತಿಸಲಾಗಿದೆ. ನಗರದ ಖಾಸಗಿ ಶಾಲೆಯೊಂದರಲ್ಲಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಚೆನ್ನಾಗಿ ಓದುವಂತೆ ಪೋಷಕರು ಪದೇಪದೇ ಬುದ್ಧಿವಾದ ಹೇಳುತ್ತಿದ್ದ ಹಿನ್ನೆಲೆಯಲ್ಲಿ ಆಕೆ ಮನನೊಂದಿದ್ದಳು ಎನ್ನಲಾಗಿದೆ.

ಪೋಷಕರು ದೇವಸ್ಥಾನಕ್ಕೆ ತೆರಳಿದ್ದ ಸಂದರ್ಭದಲ್ಲಿ ಮನೆಯಲ್ಲಿ ಒಬ್ಬಳೇ ಇದ್ದ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಪೂಜೆ ಮುಗಿಸಿ ಪೋಷಕರು ಮನೆಗೆ ವಾಪಸ್ ಬಂದಾಗ ಘಟನೆ ಬೆಳಕಿಗೆ ಬಂದಿದೆ.

ಓದಿನ ವಿಚಾರವಾಗಿ ಪೋಷಕರು ಪದೇಪದೇ ಹೇಳುತ್ತಿದ್ದ ಮಾತುಗಳಿಂದ ಮನನೊಂದಿರುವುದಾಗಿ ಡೆತ್ ನೋಟ್‌ನಲ್ಲಿ ಉಲ್ಲೇಖಿಸಿದ್ದಾಳೆ ಎನ್ನಲಾಗಿದೆ.

ಘಟನೆ ಸಂಬಂಧ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಒಬ್ಬಂಟಿಯಾಗಿ ಊಟ ಮಾಡುವ ಅಭ್ಯಾಸ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಾ? ಇಲ್ಲಿದೆ ತಜ್ಞರ ಸಲಹೆ

0

ಇಂದಿನ ವೇಗದ ಜೀವನಶೈಲಿಯಲ್ಲಿ ಒಬ್ಬಂಟಿಯಾಗಿ ಊಟ ಮಾಡುವುದು ಹಲವರಿಗೆ ಸಾಮಾನ್ಯವಾಗಿದೆ.

ಕಚೇರಿ ಕೆಲಸ, ಬೇರೆ ನಗರಗಳಲ್ಲಿ ಏಕಾಂಗಿಯಾಗಿ ವಾಸಿಸುವುದು ಅಥವಾ ಸಮಯದ ಅಭಾವದಂತಹ ಕಾರಣಗಳಿಂದ ಹಲವರು ಒಬ್ಬರೇ ಊಟ ಮಾಡುತ್ತಾರೆ. ಕೆಲವರು ಊಟ ಮಾಡುವಾಗ ಮೊಬೈಲ್ ನೋಡುವುದು, ಟಿವಿ ವೀಕ್ಷಿಸುವುದು ಅಥವಾ ಕೆಲಸದಲ್ಲಿ ತೊಡಗಿರುವುದನ್ನೂ ರೂಢಿಸಿಕೊಂಡಿರುತ್ತಾರೆ.

ಆದರೆ ಪದೇಪದೇ ಒಬ್ಬಂಟಿಯಾಗಿ ಊಟ ಮಾಡುವ ಅಭ್ಯಾಸವು ಸಾಮಾಜಿಕ ಸಂಪರ್ಕ ಹಾಗೂ ಮಾನಸಿಕ ಯೋಗಕ್ಷೇಮದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಕೆಲವು ಅಧ್ಯಯನಗಳು ಸೂಚಿಸುತ್ತವೆ.

ಊಟದ ಸಮಯವೂ ಸಾಮಾಜಿಕ ಸಂಪರ್ಕಕ್ಕೆ ಅವಕಾಶ:

ಕುಟುಂಬದವರು, ಸ್ನೇಹಿತರು ಅಥವಾ ಸಹೋದ್ಯೋಗಿಗಳೊಂದಿಗೆ ಕುಳಿತು ಊಟ ಮಾಡುವುದು ಕೇವಲ ಆಹಾರ ಸೇವಿಸುವ ಸಮಯವಲ್ಲ. ಪರಸ್ಪರ ಮಾತನಾಡಲು, ದಿನದ ವಿಚಾರಗಳನ್ನು ಹಂಚಿಕೊಳ್ಳಲು ಹಾಗೂ ಒಟ್ಟಿಗೆ ಸಮಯ ಕಳೆಯಲು ಇದೊಂದು ಉತ್ತಮ ಅವಕಾಶವಾಗಿದೆ.

ಈ ರೀತಿಯ ಸಾಮಾಜಿಕ ಸಂಪರ್ಕದಿಂದ ಒಂಟಿತನದ ಭಾವನೆ ಕಡಿಮೆಯಾಗಲು ಸಹಾಯವಾಗಬಹುದು. ಈಗಾಗಲೇ ಸಾಮಾಜಿಕವಾಗಿ ಪ್ರತ್ಯೇಕವಾಗಿರುವ ವ್ಯಕ್ತಿಗಳಲ್ಲಿ ಒಬ್ಬಂಟಿಯಾಗಿ ಊಟ ಮಾಡುವ ಅಭ್ಯಾಸವು ಒಂಟಿತನದ ಅನುಭವದ ಮತ್ತೊಂದು ಭಾಗವಾಗುವ ಸಾಧ್ಯತೆಯೂ ಇದೆ.

ಮೊಬೈಲ್, ಟಿವಿ ನೋಡುತ್ತಾ ಊಟ ಮಾಡುವುದು?

ಒಬ್ಬಂಟಿಯಾಗಿ ಊಟ ಮಾಡುವುದಕ್ಕಿಂತ ಊಟದ ವೇಳೆ ಮೊಬೈಲ್ ಅಥವಾ ಟಿವಿಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳುವುದು ಮತ್ತೊಂದು ಸಮಸ್ಯೆಯಾಗಬಹುದು. ಪರದೆ ನೋಡುತ್ತಾ ಊಟ ಮಾಡುವಾಗ ಆಹಾರದ ಪ್ರಮಾಣ ಹಾಗೂ ಹೊಟ್ಟೆ ತುಂಬಿರುವ ಅನುಭವದ ಬಗ್ಗೆ ಗಮನ ಕಡಿಮೆಯಾಗಬಹುದು. ಇದರಿಂದ ಅಗತ್ಯಕ್ಕಿಂತ ಹೆಚ್ಚು ಅಥವಾ ಕಡಿಮೆ ಆಹಾರ ಸೇವಿಸುವ ಸಾಧ್ಯತೆ ಇದೆ.

ಹೀಗಾಗಿ ಊಟ ಮಾಡುವಾಗ ಸಾಧ್ಯವಾದಷ್ಟು ಮೊಬೈಲ್, ಟಿವಿಯಂತಹ ಗಮನ ಬೇರೆಡೆ ಸೆಳೆಯುವ ವಸ್ತುಗಳಿಂದ ದೂರವಿದ್ದು, ಆಹಾರದ ರುಚಿ ಹಾಗೂ ಪ್ರಮಾಣದತ್ತ ಗಮನ ಹರಿಸುವುದು ಉತ್ತಮ ಅಭ್ಯಾಸವಾಗಿದೆ.

ಸಾಧ್ಯವಾದಾಗ ಒಟ್ಟಿಗೆ ಊಟ ಮಾಡಿ:

ಕುಟುಂಬದ ಸದಸ್ಯರು, ಸ್ನೇಹಿತರು ಅಥವಾ ಸಹೋದ್ಯೋಗಿಗಳೊಂದಿಗೆ ಊಟ ಮಾಡುವುದರಿಂದ ಸಾಮಾಜಿಕ ಸಂಪರ್ಕ ಹೆಚ್ಚಿಸಿಕೊಳ್ಳಬಹುದು. ಮಾತನಾಡುವುದು, ನಗುವುದು ಮತ್ತು ಪರಸ್ಪರ ಸಮಯ ಕಳೆಯುವುದು ಮನಸ್ಸಿಗೆ ಉತ್ತಮ ಅನುಭವ ನೀಡಬಹುದು.

ಕಚೇರಿಯಲ್ಲಿ ಕೆಲಸ ಮಾಡುವವರು ಸಾಧ್ಯವಾದಾಗ ಸಹೋದ್ಯೋಗಿಗಳೊಂದಿಗೆ ಊಟದ ವಿರಾಮ ಹಂಚಿಕೊಳ್ಳಬಹುದು. ಮನೆಯಲ್ಲಿರುವವರು ದಿನಕ್ಕೆ ಕನಿಷ್ಠ ಒಂದು ಹೊತ್ತಾದರೂ ಕುಟುಂಬದ ಸದಸ್ಯರೊಂದಿಗೆ ಒಟ್ಟಿಗೆ ಊಟ ಮಾಡುವ ಅಭ್ಯಾಸ ಬೆಳೆಸಿಕೊಳ್ಳಬಹುದು.

ಒಬ್ಬಂಟಿಯಾಗಿ ಊಟ ಮಾಡುವುದು ಅನಿವಾರ್ಯವಾದರೆ?

ಕೆಲವೊಮ್ಮೆ ಕೆಲಸ, ವಾಸದ ಪರಿಸ್ಥಿತಿ ಅಥವಾ ಇತರ ಕಾರಣಗಳಿಂದ ಒಬ್ಬಂಟಿಯಾಗಿ ಊಟ ಮಾಡುವುದು ಅನಿವಾರ್ಯವಾಗಬಹುದು. ಅಂತಹ ಸಂದರ್ಭದಲ್ಲಿ ಆತಂಕಪಡುವ ಅಗತ್ಯವಿಲ್ಲ. ಊಟದ ವೇಳೆ ಮೊಬೈಲ್ ಮತ್ತು ಟಿವಿಯಿಂದ ದೂರವಿದ್ದು, ಆಹಾರದ ರುಚಿ, ಪ್ರಮಾಣ ಹಾಗೂ ತಿನ್ನುವಿಕೆಯತ್ತ ಗಮನ ಹರಿಸುವುದು ಉತ್ತಮ.

ಒಟ್ಟಿನಲ್ಲಿ, ಒಬ್ಬಂಟಿಯಾಗಿ ಊಟ ಮಾಡುವುದೇ ಆರೋಗ್ಯಕ್ಕೆ ಅಪಾಯಕಾರಿ ಎಂದು ಹೇಳಲು ಸಾಧ್ಯವಿಲ್ಲ. ಆದರೆ ಸಾಮಾಜಿಕ ಸಂಪರ್ಕವನ್ನು ಕಾಪಾಡಿಕೊಳ್ಳುವುದು, ಸಮತೋಲಿತ ಆಹಾರ ಸೇವಿಸುವುದು ಮತ್ತು ಗಮನವಿಟ್ಟು ಊಟ ಮಾಡುವ ಅಭ್ಯಾಸ ದೈಹಿಕ ಹಾಗೂ ಮಾನಸಿಕ ಯೋಗಕ್ಷೇಮಕ್ಕೆ ಸಹಾಯಕವಾಗಬಹುದು. ಸಾಧ್ಯವಾದಾಗ ಕುಟುಂಬ, ಸ್ನೇಹಿತರು ಅಥವಾ ಸಹೋದ್ಯೋಗಿಗಳೊಂದಿಗೆ ಊಟ ಹಂಚಿಕೊಳ್ಳುವುದು ಸಂಬಂಧಗಳನ್ನು ಮತ್ತಷ್ಟು ಬಲಪಡಿಸಲು ಸಹಕಾರಿ.

ಗೃಹಜ್ಯೋತಿ ಸರ್ವೆಗೆ ಸಿಗದ ಸ್ಪಂದನೆ: ರೀ-ವೆರಿಫಿಕೇಶನ್‌ಗೆ ಮತ್ತೊಂದು ತಿಂಗಳು ಅವಕಾಶ!

0

ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಜ್ಯೋತಿ ಯೋಜನೆಯ ಮರುಪರಿಶೀಲನೆ ಪ್ರಕ್ರಿಯೆಗೆ ಇನ್ನೊಂದು ತಿಂಗಳ ಗಡುವು ವಿಸ್ತರಿಸಲಾಗಿದೆ.

ಆರಂಭದಲ್ಲಿ ಆಗಸ್ಟ್ 31ರವರೆಗೆ ನಿಗದಿಪಡಿಸಿದ್ದ ಅವಧಿಯನ್ನು ಇದೀಗ ಸೆಪ್ಟೆಂಬರ್ 30ರವರೆಗೆ ವಿಸ್ತರಿಸಿ ಇಂಧನ ಇಲಾಖೆ ಆದೇಶ ಹೊರಡಿಸಿದೆ.

ಅನರ್ಹ ಫಲಾನುಭವಿಗಳನ್ನು ಗುರುತಿಸಿ ಯೋಜನೆಯ ಸೌಲಭ್ಯವನ್ನು ಅರ್ಹರಿಗೆ ತಲುಪಿಸುವ ಉದ್ದೇಶದಿಂದ ಗೃಹಜ್ಯೋತಿ ಯೋಜನೆಯ ಮರುಪರಿಶೀಲನೆ ಕಾರ್ಯ ಕೈಗೊಳ್ಳಲಾಗಿದೆ. ಜುಲೈ 1ರಿಂದ ಮರುಪರಿಶೀಲನೆ ಕಾರ್ಯ ಆರಂಭವಾಗಿದ್ದು, ಗಡುವು ಮುಕ್ತಾಯದ ವೇಳೆಗೆ ಸರ್ವೆ ಕಾರ್ಯ ಸಂಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಅವಧಿ ವಿಸ್ತರಣೆ ಮಾಡಲಾಗಿದೆ.

ಬೆಸ್ಕಾಂ ಸೇರಿದಂತೆ ರಾಜ್ಯದ ಎಲ್ಲಾ ಎಸ್ಕಾಂ ವ್ಯಾಪ್ತಿಯಲ್ಲಿ ಮನೆ ಮನೆಗೆ ತೆರಳಿ ಗೃಹಜ್ಯೋತಿ ಫಲಾನುಭವಿಗಳ ಪರಿಶೀಲನೆ ನಡೆಸಲಾಗುತ್ತಿದೆ. ಇದುವರೆಗೆ ಸುಮಾರು ಶೇ.70ರಷ್ಟು ಸರ್ವೆ ಕಾರ್ಯ ಪೂರ್ಣಗೊಂಡಿದ್ದು, ಇನ್ನೂ ಶೇ.30ರಷ್ಟು ಪರಿಶೀಲನೆ ಬಾಕಿಯಿದೆ.

ವಿದ್ಯುತ್ ಗ್ರಾಹಕರಿಂದ ನಿರೀಕ್ಷಿತ ಮಟ್ಟದಲ್ಲಿ ಸ್ಪಂದನೆ ದೊರೆಯದ ಹಿನ್ನೆಲೆಯಲ್ಲಿ ಬಾಕಿ ಉಳಿದಿರುವ ಸರ್ವೆ ಕಾರ್ಯ ಪೂರ್ಣಗೊಳಿಸಲು ಇಂಧನ ಇಲಾಖೆ ಇನ್ನೊಂದು ತಿಂಗಳ ಕಾಲಾವಕಾಶ ನೀಡಿದೆ.

ಹೀಗಾಗಿ ಗೃಹಜ್ಯೋತಿ ಯೋಜನೆಯ ಮರುಪರಿಶೀಲನೆ ವ್ಯಾಪ್ತಿಗೆ ಬರುವ ಫಲಾನುಭವಿಗಳು ಸೆಪ್ಟೆಂಬರ್ 30ರೊಳಗೆ ಸರ್ವೆ ಸಿಬ್ಬಂದಿಗೆ ಅಗತ್ಯ ಸಹಕಾರ ನೀಡುವಂತೆ ತಿಳಿಸಲಾಗಿದೆ.

ಕುಕ್ಕೆ ಕ್ಷೇತ್ರಕ್ಕೆ ಹೋಗುವ ಭಕ್ತರೇ ಗಮನಿಸಿ: ಸೆಪ್ಟೆಂಬರ್‌ನ ಈ ದಿನಗಳಲ್ಲಿ ಸೇವೆ ಇಲ್ಲ!

0

ಸುಬ್ರಹ್ಮಣ್ಯ: ನಾಗಕ್ಷೇತ್ರ ಎಂದೇ ಪ್ರಸಿದ್ಧವಾಗಿರುವ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಹಾಗೂ ದಶಮಿ-ಏಕಾದಶಿ ವ್ರತಗಳ ಹಿನ್ನೆಲೆಯಲ್ಲಿ ಸೆಪ್ಟೆಂಬರ್ ತಿಂಗಳ ಕೆಲವು ದಿನಗಳಲ್ಲಿ ವಿಶೇಷ ಧಾರ್ಮಿಕ ಸೇವೆಗಳನ್ನು ರದ್ದುಗೊಳಿಸಲಾಗಿದೆ.

ಈ ಕುರಿತು ದೇವಸ್ಥಾನದ ಆಡಳಿತ ಮಂಡಳಿ ಜಂಟಿ ಮಾಧ್ಯಮ ಪ್ರಕಟಣೆ ಹೊರಡಿಸಿದ್ದು, ಸೆಪ್ಟೆಂಬರ್ 3 ಮತ್ತು 4ರಂದು ಶ್ರೀಕೃಷ್ಣ ಜನ್ಮಾಷ್ಟಮಿ ಹಾಗೂ ಸೆಪ್ಟೆಂಬರ್ 6 ಮತ್ತು 7ರಂದು ದಶಮಿ-ಏಕಾದಶಿ ಹಿನ್ನೆಲೆಯಲ್ಲಿ ಕೆಲವು ವಿಶೇಷ ಸೇವೆಗಳು ನಡೆಯುವುದಿಲ್ಲ ಎಂದು ತಿಳಿಸಿದೆ.

ಸೆಪ್ಟೆಂಬರ್ 4ರಂದು ಶ್ರೀಕೃಷ್ಣ ಜನ್ಮಾಷ್ಟಮಿ ಹಾಗೂ ಸೆಪ್ಟೆಂಬರ್ 7ರಂದು ಏಕಾದಶಿ ಇರುವ ಹಿನ್ನೆಲೆಯಲ್ಲಿ ಆಶ್ಲೇಷಬಲಿ, ನಾಗಪ್ರತಿಷ್ಠೆ ಮತ್ತು ಮಹಾಭಿಷೇಕ ಸೇರಿದಂತೆ ಕೆಲವು ವಿಶೇಷ ಸೇವೆಗಳನ್ನು ರದ್ದುಗೊಳಿಸಲಾಗಿದೆ. ಈ ದಿನಗಳಲ್ಲಿ ದೇವಸ್ಥಾನಕ್ಕೆ ಆಗಮಿಸುವ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶವಿರಲಿದೆ ಎಂದು ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ.

ನಿತ್ಯದ ಪೂಜಾ ಕೈಂಕರ್ಯಗಳಿಗೆ ಅಡಚಣೆ ಇಲ್ಲ:

ವಿಶೇಷ ಸೇವೆಗಳನ್ನು ರದ್ದುಗೊಳಿಸಲಾಗಿದ್ದರೂ ದೇವಸ್ಥಾನದ ನಿತ್ಯದ ಧಾರ್ಮಿಕ ಕಾರ್ಯಕ್ರಮಗಳು ಎಂದಿನಂತೆ ನಡೆಯಲಿವೆ. ಮಹಾಪೂಜೆ, ಶೇಷಸೇವೆ, ಅಭಿಷೇಕ ಹಾಗೂ ಅರ್ಚನೆ ಸೇರಿದಂತೆ ದಿನನಿತ್ಯದ ಪೂಜಾ ಕೈಂಕರ್ಯಗಳು ಯಾವುದೇ ವ್ಯತ್ಯಯವಿಲ್ಲದೆ ನೆರವೇರಲಿವೆ.

ಹೀಗಾಗಿ ಶ್ರೀದೇವರ ದರ್ಶನ ಪಡೆಯಲು ದೇವಸ್ಥಾನಕ್ಕೆ ಆಗಮಿಸುವ ಭಕ್ತರಿಗೆ ಯಾವುದೇ ರೀತಿಯ ತೊಂದರೆ ಇರುವುದಿಲ್ಲ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.

ಭಕ್ತರಿಗೆ ಮುಂಗಡ ಯೋಜನೆಗೆ ಮನವಿ:

ಕುಕ್ಕೆ ಕ್ಷೇತ್ರದಲ್ಲಿ ಸರ್ಪಸಂಸ್ಕಾರ, ಆಶ್ಲೇಷಬಲಿ, ನಾಗಪ್ರತಿಷ್ಠೆ ಹಾಗೂ ಮಹಾಭಿಷೇಕ ಸೇರಿದಂತೆ ವಿಶೇಷ ಪೂಜೆಗಳನ್ನು ನೆರವೇರಿಸಲು ಯೋಜಿಸಿರುವ ಭಕ್ತರು ಈ ದಿನಾಂಕಗಳನ್ನು ಗಮನದಲ್ಲಿಟ್ಟುಕೊಂಡು ತಮ್ಮ ಪ್ರಯಾಣವನ್ನು ಯೋಜಿಸಿಕೊಳ್ಳುವಂತೆ ಮನವಿ ಮಾಡಲಾಗಿದೆ.

ಅಲ್ಲದೆ, ವಿಶೇಷ ಸೇವೆಗಳಿಗಾಗಿ ಮುಂಗಡ ಕಾಯ್ದಿರಿಸುವಿಕೆಯನ್ನು ದಿನಾಂಕಗಳನ್ನು ಪರಿಗಣಿಸಿ ಮಾಡಿಕೊಳ್ಳುವಂತೆ ದೇವಸ್ಥಾನದ ಆಡಳಿತ ಮಂಡಳಿ ಸೂಚಿಸಿದೆ.

ದೇವಸ್ಥಾನದ ಸುಗಮ ನಿರ್ವಹಣೆಗೆ ಭಕ್ತಾದಿಗಳು ಸಂಪೂರ್ಣ ಸಹಕಾರ ನೀಡುವಂತೆ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರು ಹಾಗೂ ಕಾರ್ಯನಿರ್ವಹಣಾಧಿಕಾರಿಗಳು ಜಂಟಿ ಪ್ರಕಟಣೆಯಲ್ಲಿ ಕೋರಿದ್ದಾರೆ.

ಬೇರೆಯವರ ಜೊತೆ ನಿಶ್ಚಿತಾರ್ಥ ಮಾಡಿಕೊಂಡ ಪ್ರೇಯಸಿ: ಕೋಪದಿಂದ ಬೈಕ್​ಗೆ ಬೆಂಕಿ ಹಚ್ಚಿದ ಪಾಗಲ್ ಪ್ರೇಮಿ

0

ಶಿವಮೊಗ್ಗ: ಇನ್‌ಸ್ಟಾಗ್ರಾಂನಲ್ಲಿ ಪರಿಚಯವಾಗಿ ಪ್ರೀತಿಗೆ ತಿರುಗಿದ್ದ ಸಂಬಂಧದಲ್ಲಿ ಯುವತಿ ಬೇರೊಬ್ಬನನ್ನು ಮದುವೆಯಾಗಲು ಮುಂದಾದ ಹಿನ್ನೆಲೆ ಆಕ್ರೋಶಗೊಂಡ ಯುವಕನೊಬ್ಬ ನಿಶ್ಚಿತಾರ್ಥ ಮಾಡಿಕೊಂಡ ಯುವಕನ ಬೈಕ್‌ಗೆ ಬೆಂಕಿ ಹಚ್ಚಿದ್ದಾನೆ. ಶಿವಮೊಗ್ಗದ ವೆಂಕಟೇಶ ನಗರದಲ್ಲಿ ನಡೆದ ಕೃತ್ಯಕ್ಕೆ ಸಂಬಂಧಿಸಿದಂತೆ ಮಂಡ್ಯ ಮೂಲದ ಮಣಿಕಂಠನನ್ನು ಜಯನಗರ ಪೊಲೀಸರು ಬಂಧಿಸಿದ್ದಾರೆ.

ಮಣಿಕಂಠನಿಗೆ ಇನ್‌ಸ್ಟಾಗ್ರಾಂ ಮೂಲಕ ಶಿವಮೊಗ್ಗದ ಯುವತಿಯ ಪರಿಚಯವಾಗಿತ್ತು. ಯುವತಿಯ ಮೇಲಿನ ಪ್ರೀತಿಯಿಂದ ಮಂಡ್ಯದಿಂದ ಶಿವಮೊಗ್ಗಕ್ಕೆ ಬಂದಿದ್ದ ಆತ, ಇಲ್ಲಿಯೇ ವಾಸವಾಗಿದ್ದ ಎನ್ನಲಾಗಿದೆ.

ಈ ನಡುವೆ ಯುವತಿಗೆ ಬೇರೊಬ್ಬ ಯುವಕನೊಂದಿಗೆ ವಿವಾಹ ನಿಶ್ಚಯವಾಗಿದ್ದು, ನಿಶ್ಚಿತಾರ್ಥವೂ ನೆರವೇರಿತ್ತು. ಇದರಿಂದ ಅಸಮಾಧಾನಗೊಂಡ ಮಣಿಕಂಠ, ಕಳೆದ ರಾತ್ರಿ ಮದ್ಯ ಸೇವಿಸಿ ಯುವತಿಯ ಮನೆ ಸಮೀಪಕ್ಕೆ ತೆರಳಿದ್ದಾನೆ.

ವೆಂಕಟೇಶ ನಗರದ ತುಂಗಾ ಕಾಲುವೆ ಮುಂಭಾಗದಲ್ಲಿ ನಿಲ್ಲಿಸಿದ್ದ ನಿಶ್ಚಿತಾರ್ಥ ಮಾಡಿಕೊಂಡ ಯುವಕನ ಬೈಕ್‌ಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದಾನೆ. ಬೆಂಕಿ ಪಕ್ಕದಲ್ಲಿದ್ದ ಯುವತಿಯ ಸಹೋದರನ ಬೈಕ್‌ಗೂ ತಗುಲಿದ್ದು, ಎರಡು ಬೈಕ್‌ಗಳು ಭಾಗಶಃ ಹಾನಿಗೊಳಗಾಗಿವೆ.

ಘಟನೆಯ ಬಳಿಕ ಬೈಕ್ ಮಾಲೀಕ ಜಯನಗರ ಠಾಣೆಗೆ ದೂರು ನೀಡಿದ್ದು, ಪೊಲೀಸರು ಸಿಸಿ ಕ್ಯಾಮೆರಾ ದೃಶ್ಯಗಳನ್ನು ಪರಿಶೀಲಿಸಿದ್ದಾರೆ. ದೃಶ್ಯಾವಳಿಗಳ ಆಧಾರದಲ್ಲಿ ಮಣಿಕಂಠನೇ ಕೃತ್ಯ ಎಸಗಿರುವುದು ದೃಢಪಟ್ಟಿದ್ದು, ಆತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಿಜೆಪಿ ಪ್ರತಿಭಟನಾ ಮೆರವಣಿಗೆಗೆ ತಡೆ ನಿರಾಕರಿಸಿದ ಸುಪ್ರೀಂ ಕೋರ್ಟ್: ಸೆ.10ಕ್ಕೆ ಮುಂದಿನ ವಿಚಾರಣೆ

0

ನವದೆಹಲಿ: ಸೆಪ್ಟೆಂಬರ್ 5ರಂದು ದೆಹಲಿಯಲ್ಲಿ ನಡೆಯಲಿರುವ ಸಿಜೆಪಿ ಪ್ರತಿಭಟನಾ ಮೆರವಣಿಗೆಗೆ ತಡೆ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದಲ್ಲಿ ನ್ಯಾಯಮೂರ್ತಿಗಳಾದ ಜಾಯ್ಮಾಲ್ಯ ಬಾಗ್ಚಿ ಹಾಗೂ ವಿ. ಮೊಹಾನ್ ಅವರನ್ನೊಳಗೊಂಡ ಪೀಠ ಈ ಅರ್ಜಿಯ ವಿಚಾರಣೆ ನಡೆಸಿತು. ಸೆಪ್ಟೆಂಬರ್ 5ರಂದು ಸಿಜೆಪಿ ಕರೆ ನೀಡಿರುವ ಪ್ರತಿಭಟನಾ ಮೆರವಣಿಗೆಯಿಂದ ಯಾವುದೇ ಅಹಿತಕರ ಘಟನೆ ಸಂಭವಿಸಲಿದೆ ಎಂದು ಊಹಿಸಲಾಗದು ಎಂದು ಪೀಠ ಅಭಿಪ್ರಾಯಪಟ್ಟಿದೆ.

ಸಿಜೆಪಿ ಮೆರವಣಿಗೆಗೆ ನಿರ್ಬಂಧ ವಿಧಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿದಾರರಿಗೆ, ಈ ವಿಚಾರದಲ್ಲಿ ಸುಪ್ರೀಂ ಕೋರ್ಟ್ ನೇರವಾಗಿ ಮಧ್ಯಪ್ರವೇಶಿಸುವ ಬದಲು ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸುವಂತೆ ನ್ಯಾಯಾಲಯ ಸೂಚಿಸಿದೆ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು ಸರ್ಕಾರ ಹಾಗೂ ಪೊಲೀಸ್ ಅಧಿಕಾರಿಗಳ ಜವಾಬ್ದಾರಿ ಎಂದು ಪೀಠ ಸ್ಪಷ್ಟಪಡಿಸಿದೆ.

ವಿದ್ಯಾರ್ಥಿಗಳ ವಿರುದ್ಧ ನಡೆದಿದೆ ಎನ್ನಲಾದ ಪೊಲೀಸ್ ಹಿಂಸಾಚಾರ ಆರೋಪಗಳ ತನಿಖೆಗಾಗಿ ಸುಪ್ರೀಂ ಕೋರ್ಟ್ ರಚಿಸಿರುವ ಉನ್ನತ ಮಟ್ಟದ ಸಮಿತಿಯ ಮುಂದೆ ಈ ಪ್ರಕರಣವನ್ನು ಸಲ್ಲಿಸುವಂತೆಯೂ ನ್ಯಾಯಾಲಯ ಸೂಚಿಸಿದೆ. ಈ ಸಂಬಂಧದ ಇತರ ಬಾಕಿ ಅರ್ಜಿಗಳೊಂದಿಗೆ ಪ್ರಕರಣವನ್ನು ಸೆಪ್ಟೆಂಬರ್ 10ರಂದು ವಿಚಾರಣೆಗೆ ಪಟ್ಟಿ ಮಾಡುವಂತೆ ಪೀಠ ನಿರ್ದೇಶಿಸಿದೆ.

ಸಿಜೆಪಿ ಸೆಪ್ಟೆಂಬರ್ 5ರಂದು ದೆಹಲಿಯ ಇಂಡಿಯಾ ಗೇಟ್‌ನಿಂದ ನವದೆಹಲಿ ಪೊಲೀಸ್ ಪ್ರಧಾನ ಕಚೇರಿಯವರೆಗೆ ಶಾಂತಿಯುತ ಪ್ರತಿಭಟನಾ ಮೆರವಣಿಗೆ ನಡೆಸಲು ಕರೆ ನೀಡಿದೆ. ಜುಲೈ 25ರಂದು ಯುವ ಪ್ರತಿಭಟನಾಕಾರರಿಗೆ ನೀಡಿದ್ದ ಭರವಸೆಗಳನ್ನು ಸರ್ಕಾರ ಈಡೇರಿಸಿಲ್ಲ ಎಂದು ಆರೋಪಿಸಿ ಈ ಮೆರವಣಿಗೆಗೆ ಕರೆ ನೀಡಲಾಗಿದೆ.

ವಿಶೇಷವಾಗಿ ವಿದ್ಯಾರ್ಥಿಗಳು ಹಾಗೂ ಪ್ರತಿಭಟನಾಕಾರರ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ಗಳನ್ನು ಹಿಂಪಡೆಯುವ ವಿಚಾರದಲ್ಲಿ ಸರ್ಕಾರ ವಿಳಂಬ ಮಾಡುತ್ತಿದೆ ಎಂದು ಸಿಜೆಪಿ ಆರೋಪಿಸಿದೆ. ಮೆರವಣಿಗೆಯಲ್ಲಿ ವಿದ್ಯಾರ್ಥಿಗಳು, ಯುವ ಸಂಘಟನೆಗಳು ಹಾಗೂ ಯುವಜನರು ಭಾಗವಹಿಸುವ ನಿರೀಕ್ಷೆಯಿದೆ.

ನಿರ್ಮಾಣ ಹಂತದ ಮನೆಯಲ್ಲೇ ಖೋಟಾ ನೋಟು ದಂಧೆ: ಅಂತರಜಿಲ್ಲಾ ಗ್ಯಾಂಗ್‌ನ ಐವರು ಪೊಲೀಸರ ವಶಕ್ಕೆ!

0

ರಾಮನಗರ: ಸಾರ್ವಜನಿಕರ ಕಣ್ಣುತಪ್ಪಿಸಿ ನಿರ್ಮಾಣ ಹಂತದ ಮನೆಯಲ್ಲೇ ಖೋಟಾ ನೋಟುಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದ ಅಂತರಜಿಲ್ಲಾ ಗ್ಯಾಂಗ್‌ನ ಜಾಲವನ್ನು ಐಜೂರು ಪೊಲೀಸರು ಭೇದಿಸಿದ್ದಾರೆ. ರಾಮನಗರದ ಶಾಂತಿಲಾಲ್ ಲೇಔಟ್‌ನ ಕಟ್ಟಡವೊಂದರ ಮೇಲೆ ದಾಳಿ ನಡೆಸಿದ ಪೊಲೀಸರು ಐವರನ್ನು ವಶಕ್ಕೆ ಪಡೆದು, ನಕಲಿ ನೋಟು ತಯಾರಿಕೆಗೆ ಬಳಸುತ್ತಿದ್ದ ಹಲವು ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.

ಶಾಂತಿಲಾಲ್ ಲೇಔಟ್‌ನಲ್ಲಿ ಸಂತೋಷ್ ಎಂಬುವವರಿಗೆ ಸೇರಿದ ನಿರ್ಮಾಣ ಹಂತದ ಕಟ್ಟಡವನ್ನು ಆರೋಪಿಗಳು ತಮ್ಮ ಅಡ್ಡೆಯನ್ನಾಗಿ ಮಾಡಿಕೊಂಡಿದ್ದರು ಎನ್ನಲಾಗಿದೆ. ಯಾರಿಗೂ ಅನುಮಾನ ಬಾರದಂತೆ ಅಲ್ಲಿಯೇ ನಕಲಿ ನೋಟು ಮುದ್ರಿಸಿ, ಬಳಿಕ ಅವುಗಳನ್ನು ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ವಿಶೇಷ ಕಾಗದದ ಶೀಟ್‌ಗಳನ್ನು ಹೊರಗಿನಿಂದ ತರಿಸಿಕೊಂಡು, ನಿರ್ದಿಷ್ಟ ರಾಸಾಯನಿಕ ಲೇಪನ ಮಾಡಿ ₹200 ಹಾಗೂ ₹500 ಮುಖಬೆಲೆಯ ನೋಟುಗಳನ್ನು ಅಸಲಿ ನೋಟಿನಂತೆ ಕಾಣುವ ರೀತಿಯಲ್ಲಿ ತಯಾರಿಸಲಾಗುತ್ತಿತ್ತು ಎನ್ನಲಾಗಿದೆ. ಮುದ್ರಣದ ಬಳಿಕ ಶೀಟ್‌ಗಳನ್ನು ಅಚ್ಚುಕಟ್ಟಾಗಿ ಕತ್ತರಿಸಿ, ಬಂಡಲ್‌ಗಳಾಗಿ ಪ್ಯಾಕ್ ಮಾಡಿ ಮಾರಾಟ ಮಾಡಲಾಗುತ್ತಿತ್ತು.

ಖಚಿತ ಮಾಹಿತಿ ಆಧರಿಸಿ ಐಜೂರು ಪೊಲೀಸರು ದಿಢೀರ್ ದಾಳಿ ನಡೆಸಿ ದಂಧೆಯನ್ನು ಬಯಲಿಗೆಳೆದಿದ್ದಾರೆ. ಘಟನಾ ಸ್ಥಳಕ್ಕೆ ವಿಧಿವಿಜ್ಞಾನ ಮತ್ತು ಬೆರಳಚ್ಚು ತಜ್ಞರನ್ನು ಒಳಗೊಂಡ SOCO ತಂಡವೂ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ನೋಟು ತಯಾರಿಕೆಗೆ ಬಳಸಿದ್ದ ರಾಸಾಯನಿಕ, ವಿಶೇಷ ಕಾಗದ ಹಾಗೂ ಇತರ ಮಹತ್ವದ ಸಾಕ್ಷ್ಯಗಳನ್ನು ತಂಡ ವಶಕ್ಕೆ ಪಡೆದುಕೊಂಡಿದೆ.

ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕಣಿಯೂರು ಗ್ರಾಮದ ಅಡೆಂಜದಲ್ಲೂ ಇದೇ ಮಾದರಿಯ ಖೋಟಾ ನೋಟು ತಯಾರಿಕಾ ಜಾಲ ಪತ್ತೆಯಾಗಿತ್ತು. ಮಹಮ್ಮದ್ ಇದ್ರೀಸ್ ಎಂಬಾತನ ನೂತನ ಕಟ್ಟಡದಲ್ಲಿ ದಂಧೆ ನಡೆಯುತ್ತಿತ್ತು ಎನ್ನಲಾಗಿದ್ದು, ಮಾಹಿತಿ ಆಧರಿಸಿ ಉಪ್ಪಿನಂಗಡಿ ಪೊಲೀಸರು ಮಧ್ಯರಾತ್ರಿ ದಾಳಿ ನಡೆಸಿ ಏಳು ಆರೋಪಿಗಳನ್ನು ಬಂಧಿಸಿದ್ದರು.

ಆ ಪ್ರಕರಣದಲ್ಲಿ ಸಿರಾಜುದ್ದೀನ್ (34), ಇರ್ಷಾದ್ (31), ಇಬ್ರಾಹಿಂ (60), ಸಲ್ಮಾನ್ ಪಾರೀಸ್ (25), ಶರೀಫ್ (51), ಸಂದೀಪ್ ಪುಂಡಲೀಕ ಶೋಳಂಬಿ (30) ಹಾಗೂ ಮಹಮ್ಮದ್ ನಬಾಸ್ (37) ಬಂಧಿತರಾಗಿದ್ದರು.

42 ಎಸೆತಗಳಲ್ಲಿ ಸ್ಫೋಟಕ ಅರ್ಧಶತಕ; 57 ವರ್ಷಗಳ ಹಳೆಯ ದಾಖಲೆ ಮುರಿದ ವೈಭವ್ ಸೂರ್ಯವಂಶಿ!

0

ಚೆನ್ನೈ: 15 ವರ್ಷದ ಯುವ ಬ್ಯಾಟರ್ ವೈಭವ್ ಸೂರ್ಯವಂಶಿ ಅವರ ಹೆಸರಿಗೆ ಮತ್ತೊಂದು ಮಹತ್ವದ ದಾಖಲೆ ಸೇರ್ಪಡೆಯಾಗಿದೆ. ಹಾಲಿ ಚಾಂಪಿಯನ್ ಸೆಂಟ್ರಲ್ ಝೋನ್ ವಿರುದ್ಧ ನಡೆಯುತ್ತಿರುವ ದುಲೀಪ್ ಟ್ರೋಫಿ ಸೆಮಿಫೈನಲ್ ಪಂದ್ಯದಲ್ಲಿ ಪೂರ್ವ ವಲಯ ತಂಡದ ಪರ ಸ್ಫೋಟಕ ಅರ್ಧಶತಕ ಸಿಡಿಸುವ ಮೂಲಕ ಸೂರ್ಯವಂಶಿ, ಟೂರ್ನಮೆಂಟ್ ಇತಿಹಾಸದಲ್ಲಿ ಅರ್ಧಶತಕ ಗಳಿಸಿದ ಅತ್ಯಂತ ಕಿರಿಯ ಆಟಗಾರ ಎಂಬ ದಾಖಲೆಯನ್ನು ನಿರ್ಮಿಸಿದ್ದಾರೆ.

ನಾಯಕ ಇಶಾನ್ ಕಿಶನ್ ಅನುಪಸ್ಥಿತಿಯಲ್ಲಿ ಪೂರ್ವ ವಲಯ ತಂಡವನ್ನು ಮುನ್ನಡೆಸಬೇಕಿದ್ದ ಸೂರ್ಯವಂಶಿ, ಬ್ಯಾಟಿಂಗ್‌ನಲ್ಲೂ ಅದ್ಭುತ ಪ್ರದರ್ಶನ ನೀಡಿದರು. ತಮ್ಮ ಎಂದಿನ ಆಕ್ರಮಣಕಾರಿ ಬ್ಯಾಟಿಂಗ್ ಶೈಲಿಯನ್ನು ಮುಂದುವರಿಸಿದ ಅವರು, ಕೇವಲ 42 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು.

ಸೂರ್ಯವಂಶಿ ಅವರ ಸ್ಫೋಟಕ ಇನ್ನಿಂಗ್ಸ್‌ನಲ್ಲಿ ಮೂರು ಸಿಕ್ಸರ್‌ಗಳು ಹಾಗೂ ಐದು ಬೌಂಡರಿಗಳು ಸೇರಿದ್ದವು. ಶತಕದತ್ತ ಮುನ್ನುಗ್ಗುತ್ತಿದ್ದ ಅವರು ಮೈಲಿಗಲ್ಲು ತಲುಪಲು ಕೇವಲ 8 ರನ್‌ಗಳ ಅಂತರದಲ್ಲಿದ್ದಾಗ ವಿಕೆಟ್ ಒಪ್ಪಿಸಿದರು.

ಆದರೂ ಅರ್ಧಶತಕದೊಂದಿಗೆ ಸೂರ್ಯವಂಶಿ ದುಲೀಪ್ ಟ್ರೋಫಿಯಲ್ಲಿ ಹೊಸ ಇತಿಹಾಸ ಬರೆದಿದ್ದಾರೆ. ಈ ಮೂಲಕ 57 ವರ್ಷಗಳ ಹಿಂದೆ ನಿರ್ಮಾಣವಾಗಿದ್ದ ಲಕ್ಷ್ಮಣ್ ಸಿಂಗ್ ಅವರ ದಾಖಲೆಯನ್ನು ಮುರಿದಿದ್ದಾರೆ. 1969ರಲ್ಲಿ ಲಕ್ಷ್ಮಣ್ ಸಿಂಗ್ ಅವರು 16 ವರ್ಷ 23 ದಿನಗಳ ವಯಸ್ಸಿನಲ್ಲಿ ದುಲೀಪ್ ಟ್ರೋಫಿಯಲ್ಲಿ ಅರ್ಧಶತಕ ಬಾರಿಸಿದ್ದರು.

ಇದೀಗ ವೈಭವ್ ಸೂರ್ಯವಂಶಿ ಕೇವಲ 15 ವರ್ಷ 157 ದಿನಗಳ ವಯಸ್ಸಿನಲ್ಲಿ ಅರ್ಧಶತಕ ಸಿಡಿಸಿ ಈ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. 2025ರಲ್ಲಿ 16 ವರ್ಷ 307 ದಿನಗಳ ವಯಸ್ಸಿನಲ್ಲಿ ಅರ್ಧಶತಕ ಗಳಿಸಿದ್ದ ಪಿಯೂಷ್ ಚಾವ್ಲಾ ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.

ದುಲೀಪ್ ಟ್ರೋಫಿಯಲ್ಲಿ ಅರ್ಧಶತಕ ಬಾರಿಸಿದ ಅತ್ಯಂತ ಕಿರಿಯ ಆಟಗಾರರು:

1. ವೈಭವ್ ಸೂರ್ಯವಂಶಿ – 15 ವರ್ಷ 157 ದಿನಗಳು
2. ಲಕ್ಷ್ಮಣ್ ಸಿಂಗ್ (1969) – 16 ವರ್ಷ 23 ದಿನಗಳು
3. ಪಿಯೂಷ್ ಚಾವ್ಲಾ (2025) – 16 ವರ್ಷ 307 ದಿನಗಳು

15ನೇ ವಯಸ್ಸಿನಲ್ಲೇ ದೇಶೀಯ ಕ್ರಿಕೆಟ್‌ನ ಪ್ರತಿಷ್ಠಿತ ಟೂರ್ನಿಯೊಂದರಲ್ಲಿ ದಾಖಲೆ ನಿರ್ಮಿಸಿರುವ ವೈಭವ್ ಸೂರ್ಯವಂಶಿ, ಭಾರತೀಯ ಕ್ರಿಕೆಟ್‌ನಲ್ಲಿ ಮತ್ತೊಬ್ಬ ಯುವ ಪ್ರತಿಭೆಯಾಗಿ ಗಮನ ಸೆಳೆಯುತ್ತಿದ್ದಾರೆ.

US ಓಪನ್ʼನಲ್ಲಿ ಜೊಕೊವಿಚ್ʼಗೆ ಬಿಗ್ ಶಾಕ್: ಟೆನ್ನಿಸ್ ಕೋರ್ಟ್ʼನಲ್ಲೇ ವಾಂತಿ, 2ನೇ ಸುತ್ತಿನಲ್ಲೇ ಟೂರ್ನಿಯಿಂದ ಔಟ್!

0

ವಾಷಿಂಗ್ಟನ್: ಟೆನಿಸ್ ದಿಗ್ಗಜ ಹಾಗೂ 24 ಗ್ರ್ಯಾನ್ ಸ್ಲ್ಯಾಮ್ ಪ್ರಶಸ್ತಿಗಳ ಒಡೆಯ ನೊವಾಕ್ ಜೊಕೊವಿಚ್ ಅವರಿಗೆ ಸಿನ್ಸಿನಾಟಿ ಓಪನ್‌ನಲ್ಲಿ ಭಾರೀ ಆಘಾತ ಎದುರಾಗಿದೆ. ಅರ್ಜೆಂಟೀನಾದ ಥಿಯಾಗೊ ಟಿರಾಂಟೆ ವಿರುದ್ಧದ ಎರಡನೇ ಸುತ್ತಿನ ಪಂದ್ಯದಲ್ಲಿ ಸೋಲು ಕಂಡ ಜೊಕೊವಿಚ್, ಟೂರ್ನಿಯಿಂದ ಹೊರಬಿದ್ದಿದ್ದಾರೆ.

ಪಂದ್ಯದ ಆರಂಭದಲ್ಲಿ ಜೊಕೊವಿಚ್ ಭರ್ಜರಿ ಆಟ ಪ್ರದರ್ಶಿಸಿದರು. ಮೊದಲ ಸೆಟ್‌ನಲ್ಲಿ 6-2 ಅಂತರದಲ್ಲಿ ಗೆದ್ದು ಪಂದ್ಯದಲ್ಲಿ ಮುನ್ನಡೆ ಸಾಧಿಸಿದರು. ಆದರೆ, ನಂತರದ ಎರಡು ಸೆಟ್‌ಗಳಲ್ಲಿ ಟಿರಾಂಟೆ ತಿರುಗೇಟು ನೀಡಿದರು. ಎರಡನೇ ಹಾಗೂ ಮೂರನೇ ಸೆಟ್‌ಗಳನ್ನು ತಲಾ 6-4 ಅಂತರದಲ್ಲಿ ಗೆದ್ದ ಟಿರಾಂಟೆ, ಪಂದ್ಯವನ್ನು ತಮ್ಮದಾಗಿಸಿಕೊಂಡರು.

ಪಂದ್ಯದ ವೇಳೆ ಜೊಕೊವಿಚ್ ತೀವ್ರ ಸುಸ್ತಿನಿಂದ ಬಳಲಿದಂತೆ ಕಂಡುಬಂದಿದ್ದು, ಕೋರ್ಟ್‌ನಲ್ಲೇ ಅಸ್ವಸ್ಥರಾದರು. ಬಳಿಕ ವೈದ್ಯರು ಹಾಗೂ ಫಿಸಿಯೋಥೆರಪಿಸ್ಟ್‌ಗಳು ಅವರಿಗೆ ಚಿಕಿತ್ಸೆ ನೀಡಿದರು. ಈ ನಡುವೆಯೂ ಜೊಕೊವಿಚ್ ಹೋರಾಟ ಮುಂದುವರಿಸಿದರು.

ಎರಡನೇ ಸೆಟ್‌ನ ಒಂದು ಗೇಮ್ ಬರೋಬ್ಬರಿ 18 ನಿಮಿಷಗಳ ಕಾಲ ನಡೆದಿದ್ದು, ಪಂದ್ಯ ಮತ್ತಷ್ಟು ಕಠಿಣವಾಗುವಂತೆ ಮಾಡಿತು. ಮೂರನೇ ಸೆಟ್‌ನಲ್ಲಿ ಉಭಯ ಆಟಗಾರರು 4-4ರ ಹಂತದವರೆಗೂ ಸಮಬಲದ ಹೋರಾಟ ನಡೆಸಿದರು. ಆದರೆ ನಿರ್ಣಾಯಕ ಹಂತದಲ್ಲಿ ಟಿರಾಂಟೆ ಬ್ರೇಕ್ ಪಡೆದುಕೊಂಡರು. ಬಳಿಕ ತಮ್ಮ ಸರ್ವ್ ಉಳಿಸಿಕೊಂಡು ಪಂದ್ಯವನ್ನು ಗೆದ್ದು ವೃತ್ತಿಜೀವನದ ಮಹತ್ವದ ಗೆಲುವು ದಾಖಲಿಸಿದರು.

ಪಂದ್ಯ ಒಟ್ಟು 2 ಗಂಟೆ 44 ನಿಮಿಷಗಳ ಕಾಲ ನಡೆಯಿತು. ವಿಶ್ವದ 50ನೇ ಶ್ರೇಯಾಂಕದ ಆಟಗಾರರಾಗಿರುವ ಥಿಯಾಗೊ ಟಿರಾಂಟೆಗೆ ಇದು ನೊವಾಕ್ ಜೊಕೊವಿಚ್ ವಿರುದ್ಧದ ಮೊದಲ ಗೆಲುವಾಗಿದೆ. ಅಲ್ಲದೆ, ಟೆನಿಸ್ ದಿಗ್ಗಜನ ವಿರುದ್ಧದ ಈ ಗೆಲುವು ಟಿರಾಂಟೆ ಅವರ ವೃತ್ತಿಜೀವನದ ಪ್ರಮುಖ ಗೆಲುವುಗಳಲ್ಲೊಂದಾಗಿ ಗುರುತಿಸಿಕೊಂಡಿದೆ.

ಹಿಂದೂ ಧರ್ಮದ ಬಗ್ಗೆ ಕಾಂಗ್ರೆಸ್ ನಿಲುವೇನು? ರಾಯರೆಡ್ಡಿ ಹೇಳಿಕೆ ವಿಚಾರ ಪ್ರಸ್ತಾಪಿಸಿ ರವಿಕುಮಾರ್ ಪ್ರಶ್ನೆ

0

ಬೆಂಗಳೂರು: ಹಿಂದೂ ಧರ್ಮದ ಬಗ್ಗೆ ಕಾಂಗ್ರೆಸ್ ನಿಲುವೇನು ಎಂಬುದನ್ನು ಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಕಾಂಗ್ರೆಸ್ ಹೈಕಮಾಂಡ್ ಸ್ಪಷ್ಟಪಡಿಸಬೇಕು ಎಂದು ಬಿಜೆಪಿ ಎಂಎಲ್‌ಸಿ ರವಿಕುಮಾರ್ ಆಗ್ರಹಿಸಿದ್ದಾರೆ.

ಇಸ್ಲಾಂ ಧರ್ಮ ಶ್ರೇಷ್ಠ ಎಂಬ ಸಚಿವ ಬಸವರಾಜ ರಾಯರೆಡ್ಡಿ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ರವಿಕುಮಾರ್, ಹಿಂದೂ ಧರ್ಮ ಕಾಂಗ್ರೆಸ್ ದೃಷ್ಟಿಯಲ್ಲಿ ಎಷ್ಟನೇ ಸ್ಥಾನದಲ್ಲಿದೆ ಎಂದು ರಾಯರೆಡ್ಡಿ ಹಾಗೂ ರಾಹುಲ್ ಗಾಂಧಿ ಸೇರಿ ಕಾಂಗ್ರೆಸ್ ಪಕ್ಷವನ್ನು ಪ್ರಶ್ನಿಸಿದ್ದಾರೆ. ಇಸ್ಲಾಂ ಧರ್ಮ ಶ್ರೇಷ್ಠವಾದರೆ ಹಿಂದೂ ಧರ್ಮದ ಬಗ್ಗೆ ಏನು ಹೇಳುತ್ತೀರಿ, ಬಸವಣ್ಣನವರ ಬಗ್ಗೆ ಏನು ಹೇಳುತ್ತೀರಿ ಎಂದು ಅವರು ಪ್ರಶ್ನಿಸಿದರು.

ಹಿಂದೂ ಧರ್ಮವನ್ನು ಜಗತ್ತಿನಾದ್ಯಂತ ಪಾಲಿಸಲಾಗುತ್ತಿದ್ದು, ಶ್ರೇಷ್ಠ ವಿಚಾರಗಳನ್ನು ಈ ಧರ್ಮ ನೀಡಿದೆ ಎಂದು ಪ್ರತಿಪಾದಿಸಿದ ರವಿಕುಮಾರ್, ರಾಯರೆಡ್ಡಿ ಅವರು ಹಿಂದೂ ಧರ್ಮದಲ್ಲೇ ಹುಟ್ಟಿದವರಲ್ಲವೇ ಎಂದು ಪ್ರಶ್ನಿಸಿದರು. ಹಿಂದೂ ಧರ್ಮ ಕಾಂಗ್ರೆಸ್‌ಗೆ ಶ್ರೇಷ್ಠವೋ ಅಥವಾ ಕಳಪೆಯೋ ಎಂಬುದನ್ನು ಪಕ್ಷ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದ ಅವರು,

ಸನಾತನ ಧರ್ಮ ಹಾಗೂ ರಾಮನ ಅಸ್ತಿತ್ವದ ಬಗ್ಗೆ ಈ ಹಿಂದೆಯೂ ಕಾಂಗ್ರೆಸ್ ನಾಯಕರು ಪ್ರಶ್ನೆ ಎತ್ತಿದ್ದರು ಎಂದು ಆರೋಪಿಸಿದರು. ಈ ಹಿನ್ನೆಲೆಯಲ್ಲೇ ಸಚಿವರು ಇಂತಹ ಹೇಳಿಕೆ ನೀಡಲು ಸಾಧ್ಯವಾಗುತ್ತಿದೆ ಎಂದು ಅವರು ಆರೋಪಿಸಿದರು. ರಾಯರೆಡ್ಡಿ ಹೇಳಿಕೆ ಬಗ್ಗೆ ಸಿಎಂ ಶಿವಕುಮಾರ್ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸ್ಪಷ್ಟನೆ ನೀಡಬೇಕು ಎಂದು ರವಿಕುಮಾರ್ ಒತ್ತಾಯಿಸಿದರು.

ಭಾನುವಾರ ಬಿಜೆಪಿ ಕಚೇರಿಗೆ ಯುವ ಕಾಂಗ್ರೆಸ್ ಕಾರ್ಯಕರ್ತರು ಮುತ್ತಿಗೆ ಹಾಕಿದ ಘಟನೆ ಕುರಿತೂ ಪ್ರತಿಕ್ರಿಯಿಸಿದ ರವಿಕುಮಾರ್, ಬಿಜೆಪಿ ಕಚೇರಿಗೆ ಸೂಕ್ತ ಭದ್ರತೆ ಒದಗಿಸದಿದ್ದರೆ ಪೊಲೀಸ್ ಆಯುಕ್ತರ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ನೀಡಿದರು. ಭಾನುವಾರ ಸಂಜೆ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಿದ್ದು, ಇಂತಹ ಘಟನೆ ಇದೇ ಮೊದಲಲ್ಲ, ಈವರೆಗೆ 19ನೇ ಬಾರಿ ಈ ರೀತಿ ನಡೆದಿದೆ ಎಂದು ಅವರು ಆರೋಪಿಸಿದರು. ರಾಜ್ಯದಲ್ಲಿ ಪೊಲೀಸ್ ಇಲಾಖೆ ಏನು ಮಾಡುತ್ತಿದೆ, ಕಾರ್ಯಕರ್ತರು ಕಚೇರಿ ಸಮೀಪ ಬರುವವರೆಗೆ ಪೊಲೀಸರು ಏನು ಮಾಡುತ್ತಿದ್ದರು ಎಂದು ಪ್ರಶ್ನಿಸಿದ ಅವರು, ಪೊಲೀಸರು ಕಾಂಗ್ರೆಸ್ ಜೊತೆ ಒಳ ಒಪ್ಪಂದ ಮಾಡಿಕೊಂಡಿದ್ದಾರಾ ಎಂದೂ ಪ್ರಶ್ನಿಸಿದರು.