ಚಾಮರಾಜನಗರ: ಮಲೆ ಮಹದೇಶ್ವರ ವನ್ಯಜೀವಿಧಾಮ ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆಯ ವಿರುದ್ಧ ಗಂಭೀರ ಆರೋಪಗಳು ಕೇಳಿಬಂದಿದ್ದು, ಈ ಹಿಂದೆ ಮಾನವ ಬಲಿ ಪಡೆದಿದ್ದ ನರಭಕ್ಷಕ ಚಿರತೆಯನ್ನು ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ ಎಂದು ಹೇಳಿದ್ದ ಅಧಿಕಾರಿಗಳ ಹೇಳಿಕೆ ಪ್ರಶ್ನಾರ್ಥಕವಾಗಿದೆ. ಬೋನಿಗೆ ಬಿದ್ದ ಚಿರತೆಯ ಕತ್ತಿನಲ್ಲಿ ಪತ್ತೆಯಾದ ಕಾಲರ್ ಐಡಿ ಇದೀಗ ಹೊಸ ವಿವಾದಕ್ಕೆ ಕಾರಣವಾಗಿದೆ.
ಹನೂರು ತಾಲೂಕಿನ ಪೊನ್ನಾಚಿ ಬಳಿಯ ಕಕ್ಕೆಹೊಲ ಗ್ರಾಮದಲ್ಲಿ ಹಸು, ಮೇಕೆ ಸೇರಿದಂತೆ ಸಾಕುಪ್ರಾಣಿಗಳ ಮೇಲೆ ನಿರಂತರ ದಾಳಿ ನಡೆಸುತ್ತಿದ್ದ ಚಿರತೆಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಬೋನು ಅಳವಡಿಸಿತ್ತು. ತಡರಾತ್ರಿ ಬೋನಿಗೆ ಸಿಕ್ಕಿಬಿದ್ದ ಚಿರತೆಯನ್ನು ಪರಿಶೀಲಿಸಿದ ವೇಳೆ ಅದರ ಕತ್ತಿನಲ್ಲಿ ಅಳವಡಿಸಿದ್ದ ಕಾಲರ್ ಐಡಿ ಪತ್ತೆಯಾಗಿದೆ.
ಈ ಚಿರತೆ ಈ ಹಿಂದೆ ತಾಳಬೆಟ್ಟ ಪ್ರದೇಶದಲ್ಲಿ ಪಾದಯಾತ್ರಿಕ ಪ್ರವೀಣ್ ಎಂಬುವವರನ್ನು ಬಲಿ ಪಡೆದಿದ್ದ ನರಭಕ್ಷಕ ಚಿರತೆಯೇ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಘಟನೆಯ ಬಳಿಕ ರಂಗಸ್ವಾಮಿವೊಡ್ಡು ಪ್ರದೇಶದಲ್ಲಿ ಸೆರೆ ಹಿಡಿದಿದ್ದ ಚಿರತೆಯನ್ನು ಮೈಸೂರಿನ ಚಾಮುಂಡಿ ಪುನರ್ವಸತಿ ಕೇಂದ್ರಕ್ಕೆ ರವಾನಿಸಲಾಗಿದೆ ಎಂದು ಅರಣ್ಯ ಇಲಾಖೆ ಅಧಿಕೃತವಾಗಿ ತಿಳಿಸಿತ್ತು.
ಆದರೆ, ಈಗ ಅದೇ ಚಿರತೆ ಪೊನ್ನಾಚಿ ಪ್ರದೇಶದಲ್ಲಿ ಪತ್ತೆಯಾಗಿರುವುದು ಅರಣ್ಯ ಇಲಾಖೆಯ ಹೇಳಿಕೆಯನ್ನು ಅನುಮಾನಕ್ಕೆ ದೂಡಿದೆ. ಅಧಿಕಾರಿಗಳು ಸಾರ್ವಜನಿಕರಿಗೆ ತಪ್ಪು ಮಾಹಿತಿ ನೀಡಿ, ನರಭಕ್ಷಕ ಚಿರತೆಯನ್ನು ಆದಿವಾಸಿ ಹಾಡಿಗಳು ಮತ್ತು ಗ್ರಾಮಗಳ ಸಮೀಪದ ಅರಣ್ಯ ಪ್ರದೇಶದಲ್ಲಿ ಬಿಟ್ಟಿದ್ದಾರೆ ಎಂಬ ಆರೋಪ ತೀವ್ರಗೊಂಡಿದೆ.
ಈ ಬೆಳವಣಿಗೆಗೆ ಕಕ್ಕೆಹೊಲ ಗ್ರಾಮ ಹಾಗೂ ಸುತ್ತಮುತ್ತಲಿನ ಸೋಲಿಗ ಸಮುದಾಯ ತೀವ್ರ ವಿರೋಧ ವ್ಯಕ್ತಪಡಿಸಿದೆ. “ಮಾನವ ಜೀವಕ್ಕೆ ಅಪಾಯಕಾರಿಯಾದ ಚಿರತೆಯನ್ನು ನಮ್ಮ ವಾಸಸ್ಥಳದ ಸಮೀಪ ಬಿಡುವುದು ಅತ್ಯಂತ ನಿರ್ಲಕ್ಷ್ಯದ ಕ್ರಮ. ಜಾನುವಾರು ನಷ್ಟದ ಜೊತೆಗೆ ಗ್ರಾಮಸ್ಥರ ಜೀವಕ್ಕೂ ಅಪಾಯ ತಂದೊಡ್ಡಲಾಗಿದೆ” ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.
ಘಟನೆಯ ಕುರಿತು ಉನ್ನತ ಮಟ್ಟದ ತನಿಖೆ ನಡೆಸಿ, ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು ಎಂಬ ಒತ್ತಾಯ ಸಾರ್ವಜನಿಕ ವಲಯದಿಂದ ಕೇಳಿಬಂದಿದೆ.

