Home Blog

ದಸರಾ ಜಂಬೂಸವಾರಿಯಲ್ಲಿ ಅಭಿಮನ್ಯುಗೆ ವಿಶೇಷ ಗೌರವ: ಈ ಬಾರಿ ‘ನಿಶಾನೆ ಆನೆ’ಯಾಗಿ ಕಾಣಿಸಿಕೊಳ್ಳಲಿರುವ ಗಜರಾಜ

0

ಮೈಸೂರು: ಸಾಮಾಜಿಕ ಜಾಲತಾಣ ಬಳಕೆದಾರರು ಹಾಗೂ ಸಾರ್ವಜನಿಕರ ತೀವ್ರ ಆಗ್ರಹದ ಬೆನ್ನಲ್ಲೇ, ಗಜಪಡೆ ಮಾಜಿ ಕ್ಯಾಪ್ಟನ್ ಅಭಿಮನ್ಯುಗೆ ಈ ಬಾರಿಯ ದಸರಾ ಮಹೋತ್ಸವದಲ್ಲಿ ನಿಶಾನೆ ಆನೆಯಾಗಿ ಭಾಗವಹಿಸಲು ಅರಣ್ಯ ಇಲಾಖೆ ಅವಕಾಶ ನೀಡಿದೆ.

ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅರಣ್ಯ ಸಚಿವ ರಾಮಲಿಂಗಾರೆಡ್ಡಿ, ಮೈಸೂರು ದಸರಾ 2026ರಲ್ಲಿ ಅಭಿಮನ್ಯುವಿನ ಅಮೂಲ್ಯ ಸೇವೆಗೆ ಸರ್ಕಾರ ವಿಶೇಷ ಗೌರವ ನೀಡುತ್ತಿದೆ ಎಂದು ತಿಳಿಸಿದ್ದಾರೆ. ಹಲವು ವರ್ಷಗಳ ಕಾಲ ಚಿನ್ನದ ಅಂಬಾರಿಯನ್ನು ಗಾಂಭೀರ್ಯದಿಂದ ಹೊತ್ತು ಕರುನಾಡಿನ ಜನರ ಮನಗೆದ್ದ ಅಭಿಮನ್ಯುವಿನ ಸುದೀರ್ಘ ಸೇವೆಯನ್ನು ಗೌರವಿಸಿ, ಈ ಬಾರಿಯ ಮೈಸೂರು ದಸರಾ-2026ರ ಜಂಬೂಸವಾರಿಯಲ್ಲಿ ಅಭಿಮನ್ಯುವಿಗೆ ಸಕಲ ಸರ್ಕಾರಿ ಗೌರವಗಳೊಂದಿಗೆ ‘ನಿಶಾನೆ ಆನೆ’ಯಾಗಿ ಮುಂಚೂಣಿಯಲ್ಲಿ ಮುನ್ನಡೆಸುವಂತೆ ಅರಣ್ಯ ಇಲಾಖೆಗೆ ಸೂಚಿಸಿರುವುದಾಗಿ ಅವರು ತಿಳಿಸಿದ್ದಾರೆ.

ಅಲ್ಲದೆ ಪ್ರಕಟಣೆ ಹೊರಡಿಸಿರುವ ಅರಣ್ಯ ಸಚಿವರು, ಮೈಸೂರು ದಸರಾ ಕರ್ನಾಟಕದ ನಾಡಹಬ್ಬವಾಗಿದ್ದು, ನಾಡಿನ ಕಲೆ, ಸಂಸ್ಕೃತಿ, ಪರಂಪರೆ ಹಾಗೂ ವೈಭವವನ್ನು ವಿಶ್ವದಾದ್ಯಂತ ಸಾರುವ ಐತಿಹಾಸಿಕ ಉತ್ಸವವಾಗಿದೆ ಎಂದು ಹೇಳಿದ್ದಾರೆ. ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿ ಉತ್ಸವದಲ್ಲಿ ದಸರಾ ಗಜಪಡೆಯ ಆನೆಗಳು ವರ್ಷಗಳಿಂದಲೂ ಪ್ರಮುಖ ಪಾತ್ರ ವಹಿಸುತ್ತಾ ಬಂದಿವೆ ಎಂದು ಸಚಿವರು ತಿಳಿಸಿದ್ದಾರೆ.

ಅಧಿಕಾರಿಗಳೇ ಅಕ್ರಮದಲ್ಲಿ ಭಾಗಿಯಾದರೆ ಸಮಾಜದ ಗತಿ ಏನು?: ಶಿವಶಂಕರಪ್ಪ ಸಾಹುಕಾರ್ʼಗೆ ಹೈಕೋರ್ಟ್ ಚಾಟಿ

0

ಬೆಂಗಳೂರು: ಉನ್ನತ ಮಟ್ಟದ ಅಧಿಕಾರಿಗಳನ್ನು ನೇಮಕ ಮಾಡುವ ಜವಾಬ್ದಾರಿ ಹೊಂದಿರುವವರೇ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎನ್ನುವ ಆರೋಪಗಳು ಕೇಳಿಬಂದಿರುವುದು ಆತಂಕಕಾರಿ ಬೆಳವಣಿಗೆ ಎಂದು ಹೈಕೋರ್ಟ್ ಮೌಖಿಕವಾಗಿ ಕಳವಳ ವ್ಯಕ್ತಪಡಿಸಿದೆ. ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ)ದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌ ಅವರ ವಿರುದ್ಧದ ನೇಮಕಾತಿ ಅಕ್ರಮ ಪ್ರಕರಣದ ವಿಚಾರಣೆ ವೇಳೆ ನ್ಯಾಯಪೀಠ ತೀವ್ರ ಅಸಮಾಧಾನ ವ್ಯಕ್ತಪಡಿಸಿತು.

ಬಂಧನ ಭೀತಿಯಲ್ಲಿರುವ ಶಿವಶಂಕರಪ್ಪ ಸಾಹುಕಾರ್‌ ಅವರು ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್. ವಿಶ್ವಜಿತ್ ಶೆಟ್ಟಿ ಅವರ ಏಕಸದಸ್ಯ ಪೀಠ ನಡೆಸಿತು.

ವಿಚಾರಣೆ ವೇಳೆ, “ನೇಮಕಾತಿ ಸಂಸ್ಥೆಯ ಮುಖ್ಯಸ್ಥರಾಗಿದ್ದು, ಸಾಂವಿಧಾನಿಕ ಹುದ್ದೆಯಲ್ಲಿರುವವರು ನೇಮಕಾತಿಗೆ ಸಂಬಂಧಿಸಿದ ವಂಚನೆಯಲ್ಲಿ ಹೇಗೆ ಭಾಗಿಯಾಗಲು ಸಾಧ್ಯ? ಭವಿಷ್ಯದ ಆಡಳಿತಗಾರರನ್ನು ನೇಮಕ ಮಾಡುವ ಹುದ್ದೆಯಲ್ಲಿದ್ದ ನೀವು ಇಂತಹ ಕೃತ್ಯದಲ್ಲಿ ಭಾಗಿಯಾಗಿದ್ದರೆ, ಭವಿಷ್ಯದಲ್ಲಿ ಯಾವ ರೀತಿಯ ಸಮಾಜವನ್ನು ನಿರೀಕ್ಷಿಸಲು ಸಾಧ್ಯ?” ಎಂದು ನ್ಯಾಯಪೀಠ ಪ್ರಶ್ನಿಸಿತು.

ಈ ವೇಳೆ ಸರ್ಕಾರದ ಪರ ವಕೀಲರು ಕೆಲವು ದಾಖಲೆಗಳನ್ನು ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಿದರು. ದಾಖಲೆಗಳನ್ನು ಪರಿಶೀಲಿಸಿದ ಬಳಿಕ ಪೀಠ, ಪ್ರಕರಣದಲ್ಲಿ ಸಾಹುಕಾರ್‌ ಅವರ ಪಾತ್ರವೂ ಪತ್ತೆಯಾಗಿರುವುದಾಗಿ ಸೂಚಿಸಿತು. ಅಲ್ಲದೆ, ಅವರ ಪುತ್ರಿಯ ನೇಮಕಾತಿಗೆ ಸಂಬಂಧಿಸಿದ ಕೆಲವು ವಾಸ್ತವಿಕ ಅಂಶಗಳನ್ನು ಅವರು ಮರೆಮಾಚಿದ್ದಾರೆ ಎಂದು ನ್ಯಾಯಾಲಯದ ಗಮನಕ್ಕೆ ಬಂದಿರುವುದಾಗಿ ಹೇಳಿತು.

ಮುಚ್ಚಿದ ಲಕೋಟೆಯಲ್ಲಿರುವ ದಾಖಲೆಗಳು ಗೌಪ್ಯ ಸ್ವರೂಪದ್ದಾಗಿದ್ದು, ಅದರಲ್ಲಿರುವ ಮಾಹಿತಿಯನ್ನು ಈ ಹಂತದಲ್ಲಿ ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ತಿಳಿಸಿತು.

ಇದಕ್ಕೆ ಪ್ರತಿಯಾಗಿ ಸಾಹುಕಾರ್‌ ಪರ ವಾದ ಮಂಡಿಸಿದ ಹಿರಿಯ ವಕೀಲ ಎಂ. ಅರುಣ್ ಶ್ಯಾಮ್, ಕೆಪಿಎಸ್ಸಿ ಪರೀಕ್ಷಾ ನಿಯಂತ್ರಕರು ಹಾಗೂ ಪರೀಕ್ಷಾ ಪ್ರಕ್ರಿಯೆಗೆ ಸಂಬಂಧಿಸಿದಂತೆ ಆರೋಪಗಳು ಕೇಳಿಬಂದಿವೆ ಎಂದು ತಿಳಿಸಿದರು. ಪ್ರಶ್ನೆಪತ್ರಿಕೆ, ಉತ್ತರ ಪತ್ರಿಕೆಗಳ ಪರಿಶೀಲನೆ ಹಾಗೂ ಅಂಕ ನಿಗದಿ ಸೇರಿದಂತೆ ಪರೀಕ್ಷಾ ಪ್ರಕ್ರಿಯೆಯ ಹಲವು ವಿಚಾರಗಳು ಪರೀಕ್ಷಾ ನಿಯಂತ್ರಕರ ವ್ಯಾಪ್ತಿಗೆ ಬರುತ್ತವೆ ಎಂದು ವಾದಿಸಿದರು.

ಈಗಾಗಲೇ ಶಿವಶಂಕರಪ್ಪ ಸಾಹುಕಾರ್‌ ಅವರನ್ನು ಅಮಾನತುಗೊಳಿಸಲಾಗಿದ್ದು, ಕೆಪಿಎಸ್ಸಿ ಕಚೇರಿಗೆ ಪ್ರವೇಶವನ್ನೂ ನಿರಾಕರಿಸಲಾಗಿದೆ ಎಂದು ಅವರ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು.

ಸಾಹುಕಾರ್‌ ಅವರ ಪುತ್ರಿ ಕೆಪಿಎಸ್ಸಿ ಪರೀಕ್ಷೆಗೆ ಹಾಜರಾಗಿರುವ ವಿಚಾರಕ್ಕೆ ಸಂಬಂಧಿಸಿದಂತೆ, ಕೆಪಿಎಸ್ಸಿ ಕಾಯಿದೆ, ನಿಯಮಗಳು ಅಥವಾ ಕೈಪಿಡಿಯಲ್ಲಿ ಆಯೋಗದ ಆಡಳಿತಗಾರರ ಪುತ್ರಿ ಪರೀಕ್ಷೆಗೆ ಹಾಜರಾಗಬಾರದು ಎಂಬ ನಿರ್ಬಂಧವಿಲ್ಲ ಎಂದು ವಕೀಲರು ವಾದಿಸಿದರು. ಈ ವಿಚಾರವನ್ನು ಸಂದರ್ಶನದ ಸಂದರ್ಭದಲ್ಲಿ ಬಹಿರಂಗಪಡಿಸುವ ಅಗತ್ಯವಿದೆ ಎಂದು ತಿಳಿಸಿದರು.

ಜಾರಿ ನಿರ್ದೇಶನಾಲಯದ ಶೋಧ ಕಾರ್ಯಾಚರಣೆ ವೇಳೆ ಸಾಹುಕಾರ್‌ ಅವರ ಮನೆಯಲ್ಲಿ ಯಾವುದೇ ಆಕ್ಷೇಪಾರ್ಹ ದಾಖಲೆಗಳು ಪತ್ತೆಯಾಗಿಲ್ಲ ಎಂದೂ ಅವರ ಪರ ವಕೀಲರು ವಾದಿಸಿದರು.

ಇನ್ನು, ಸಿಐಡಿ ಅಧಿಕಾರಿಗಳು ಮಧ್ಯಾಹ್ನ 1 ಗಂಟೆಗೆ ನೋಟಿಸ್‌ ನೀಡಿ, ಅದೇ ದಿನ ಸಂಜೆ 4 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ. ನ್ಯಾಯಾಲಯ ವಿಧಿಸುವ ಯಾವುದೇ ಷರತ್ತಿಗೆ ಬದ್ಧರಾಗಿ ತನಿಖೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ಸಾಹುಕಾರ್‌ ತಿಳಿಸಿದ್ದಾರೆ. ಹೀಗಾಗಿ ಅವರಿಗೆ ಬಂಧನದಿಂದ ರಕ್ಷಣೆ ನೀಡಬೇಕು ಎಂದು ವಕೀಲರು ಮನವಿ ಮಾಡಿದರು.

ಆದರೆ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸರ್ಕಾರಿ ವಕೀಲರು, ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿರುವ ಮಧ್ಯಂತರ ಅರ್ಜಿಯಲ್ಲಿ ನ್ಯಾಯಾಲಯ ತನ್ನ ವಿಶೇಷಾಧಿಕಾರವನ್ನು ಬಳಸಬಾರದು. ಅರ್ಜಿದಾರರಿಗೆ ಯಾವುದೇ ಮಧ್ಯಂತರ ಪರಿಹಾರ ನೀಡಬಾರದು ಎಂದು ಮನವಿ ಮಾಡಿದರು.

ಎರಡೂ ಕಡೆಯ ವಾದ ಆಲಿಸಿದ ನ್ಯಾಯಪೀಠ, ನಿರೀಕ್ಷಣಾ ಜಾಮೀನು ಅರ್ಜಿಗೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸಲು ಸರ್ಕಾರಕ್ಕೆ ಕಾಲಾವಕಾಶ ನೀಡಿತು. ಬಳಿಕ ಅರ್ಜಿಯ ವಿಚಾರಣೆಯನ್ನು ಮುಂದೂಡಿತು.

ಪ್ರಕರಣದ ಹಿನ್ನೆಲೆ

ಕೆಪಿಎಸ್ಸಿಯ ಪಶುವೈದ್ಯಾಧಿಕಾರಿ ಹುದ್ದೆಗಳು ಸೇರಿದಂತೆ ವಿವಿಧ ಹುದ್ದೆಗಳ ನೇಮಕಾತಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಕ್ಕೆ ಸಂಬಂಧಿಸಿದಂತೆ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಶಿವಶಂಕರಪ್ಪ ಸಾಹುಕಾರ್‌ ಸೇರಿದಂತೆ ಇತರರ ವಿರುದ್ಧ ಪ್ರಕರಣ ದಾಖಲಾಗಿದೆ.

ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಸೆಕ್ಷನ್‌ 318(3) ಹಾಗೂ ಕರ್ನಾಟಕ ಸರ್ಕಾರಿ ಪರೀಕ್ಷೆಗಳ (ಭ್ರಷ್ಟಾಚಾರ ನಿಷೇಧ ಮತ್ತು ಅಕ್ರಮ ನೇಮಕಾತಿ) ತಡೆ ಕಾಯ್ದೆಯ ಸೆಕ್ಷನ್‌ 10ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪ್ರಕರಣದಲ್ಲಿ ಬಂಧನ ಭೀತಿ ಎದುರಿಸುತ್ತಿರುವ ಸಾಹುಕಾರ್‌, ಬಂಧನದಿಂದ ರಕ್ಷಣೆ ಕೋರಿ ಹೈಕೋರ್ಟ್‌ನಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದಾರೆ.

EOS-05 Launch: ಭಾರತದ ಮೊದಲ ಜಿಯೋಸಿಂಕ್ರೋನಸ್ ಇಮೇಜಿಂಗ್ ಉಪಗ್ರಹ ಯಶಸ್ವಿಯಾಗಿ ಉಡಾವಣೆ

0

ಅಮರಾವತಿ: ಏಳು ತಿಂಗಳ ವಿರಾಮದ ಬಳಿಕ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಮತ್ತೊಂದು ಮಹತ್ವದ ಉಡಾವಣೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.

ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ GSLV-F17 ರಾಕೆಟ್‌ ಮೂಲಕ ಭಾರತದ ಮೊದಲ ಜಿಯೋಸಿಂಕ್ರೋನಸ್ ಇಮೇಜಿಂಗ್ ಉಪಗ್ರಹ EOS-05 ಅನ್ನು ಶುಕ್ರವಾರ ನಸುಕಿನ ಜಾವ 2.55ಕ್ಕೆ ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ.

ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ಎರಡನೇ ಉಡಾವಣಾ ಪ್ಯಾಡ್‌ನಿಂದ ಉಡಾವಣೆಯಾದ GSLV-F17, EOS-05 ಉಪಗ್ರಹವನ್ನು ನಿಗದಿತ ಸಬ್-ಜಿಯೋಸಿಂಕ್ರೋನಸ್ ಟ್ರಾನ್ಸ್‌ಫರ್ ಆರ್ಬಿಟ್‌ ಗೆ ಯಶಸ್ವಿಯಾಗಿ ನಿಯೋಜಿಸಿದೆ. ಇದು GSLV ರಾಕೆಟ್‌ನ 19ನೇ ಹಾರಾಟವಾಗಿದೆ.

ಭಾರತದ ಮೊದಲ ಜಿಯೋಸಿಂಕ್ರೋನಸ್ ಇಮೇಜಿಂಗ್ ಉಪಗ್ರಹ:

EOS-05 ಸಾಮಾನ್ಯ ಭೂ ವೀಕ್ಷಣಾ ಉಪಗ್ರಹಗಳಿಗಿಂತ ಭಿನ್ನವಾಗಿದೆ. ಜಿಯೋಸಿಂಕ್ರೋನಸ್ ಕಕ್ಷೆಯಿಂದ ಭೂಮಿಯ ದೊಡ್ಡ ಪ್ರದೇಶವನ್ನು ನಿರಂತರವಾಗಿ ವೀಕ್ಷಿಸುವ ಸಾಮರ್ಥ್ಯ ಇದಕ್ಕಿದೆ. ಈ ಮೂಲಕ ನಿರ್ದಿಷ್ಟ ಪ್ರದೇಶದ ಹವಾಮಾನ, ಪರಿಸರ ಸೇರಿದಂತೆ ವಿವಿಧ ಬದಲಾವಣೆಗಳನ್ನು ಕಡಿಮೆ ಸಮಯದ ಅಂತರದಲ್ಲಿ ಗಮನಿಸಲು ಸಾಧ್ಯವಾಗಲಿದೆ.

ಉಪಗ್ರಹದಿಂದ ದೊರೆಯುವ ಮಾಹಿತಿಯನ್ನು ಕೃಷಿ, ಜಲ ಸಂಪನ್ಮೂಲ ನಿರ್ವಹಣೆ, ನಗರ ಯೋಜನೆ, ಪರಿಸರ ಮೇಲ್ವಿಚಾರಣೆ, ಅರಣ್ಯ, ಸಾಗರ ಸಂಪನ್ಮೂಲ ಹಾಗೂ ಪ್ರಕೃತಿ ವಿಕೋಪ ನಿರ್ವಹಣೆಯಂತಹ ಕ್ಷೇತ್ರಗಳಲ್ಲಿ ಬಳಸಬಹುದಾಗಿದೆ.

ರೈತರಿಗೆ ಹೇಗೆ ಸಹಾಯ?

EOS-05ನ ಭೂ ವೀಕ್ಷಣಾ ಸಾಮರ್ಥ್ಯವು ಕೃಷಿ ಕ್ಷೇತ್ರಕ್ಕೂ ಉಪಯುಕ್ತವಾಗುವ ನಿರೀಕ್ಷೆಯಿದೆ. ಉಪಗ್ರಹ ಚಿತ್ರಗಳ ಮೂಲಕ ಬೆಳೆ ಪ್ರದೇಶ, ಬೆಳೆ ಬೆಳವಣಿಗೆ, ಬರ ಪರಿಸ್ಥಿತಿ ಹಾಗೂ ಬೆಳೆ ಹಾನಿಯಂತಹ ಬದಲಾವಣೆಗಳನ್ನು ದೊಡ್ಡ ಪ್ರಮಾಣದಲ್ಲಿ ಮೇಲ್ವಿಚಾರಣೆ ಮಾಡಬಹುದು. ಈ ಮಾಹಿತಿಯನ್ನು ಬೆಳೆ ಅಂದಾಜು, ಬರ ನಿರ್ವಹಣೆ ಮತ್ತು ಇತರ ಕೃಷಿ ಸಂಬಂಧಿತ ಯೋಜನೆಗಳಿಗೆ ಬಳಸುವ ಸಾಧ್ಯತೆಯಿದೆ.

ಏಳು ತಿಂಗಳ ಬಳಿಕ ಇಸ್ರೋ ಉಡಾವಣಾ ಹಾದಿಗೆ:

2026ರ ಜನವರಿ 12ರಂದು PSLV-C62/EOS-N1 ಮಿಷನ್‌ ಉಡಾವಣೆಯಾಗಿತ್ತು. ಆದರೆ ಮಿಷನ್‌ ಯಶಸ್ವಿಯಾಗದೆ, ಬಳಿಕ ಕಾರಣ ಪತ್ತೆಹಚ್ಚಲು ವಿವರವಾದ ಪರಿಶೀಲನೆ ನಡೆಸಲಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರಮುಖ ಉಡಾವಣೆಗಳ ನಡುವೆ ಸುಮಾರು ಏಳು ತಿಂಗಳ ಅಂತರ ಕಂಡುಬಂದಿತ್ತು. ಇದೀಗ GSLV-F17/EOS-05 ಮಿಷನ್‌ ಯಶಸ್ವಿಯಾಗುವ ಮೂಲಕ ಇಸ್ರೋ ಮತ್ತೆ ಮಹತ್ವದ ಉಡಾವಣಾ ಹಾದಿಗೆ ಮರಳಿದೆ.

ಈ ಯಶಸ್ವಿ ಮಿಷನ್‌ ಭಾರತದ ಭೂ ವೀಕ್ಷಣಾ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸುವ ಜೊತೆಗೆ, ಜಿಯೋಸಿಂಕ್ರೋನಸ್ ಕಕ್ಷೆಯಿಂದ ನಿರಂತರ ಭೂ ವೀಕ್ಷಣೆಯಲ್ಲಿ ದೇಶದ ಸಾಮರ್ಥ್ಯಕ್ಕೆ ಹೊಸ ಅಧ್ಯಾಯವನ್ನು ತೆರೆದಿದೆ.

Women’s Asia Cup 2026: ಹಾಂಗ್‌ಕಾಂಗ್ ವಿರುದ್ಧ ಭಾರತಕ್ಕೆ 137 ರನ್‌ಗಳ ಭರ್ಜರಿ ಜಯ; ಸೆಮಿಫೈನಲ್‌ಗೆ ಲಗ್ಗೆ!

0

2026ರ ಮಹಿಳಾ ಟಿ20 ಏಷ್ಯಾಕಪ್‌ನಲ್ಲಿ ಭಾರತ ಮಹಿಳಾ ತಂಡ ಸತತ ಎರಡನೇ ಗೆಲುವು ದಾಖಲಿಸಿದ್ದು, ಹಾಂಗ್‌ಕಾಂಗ್ ಚೀನಾ ವಿರುದ್ಧ 137 ರನ್‌ಗಳ ಭರ್ಜರಿ ಜಯ ಸಾಧಿಸಿದೆ.

ಈ ಗೆಲುವಿನೊಂದಿಗೆ ಭಾರತ ತಂಡ ಸೆಮಿಫೈನಲ್ ಸ್ಥಾನವನ್ನು ಖಚಿತಪಡಿಸಿಕೊಂಡಿದೆ.

ಟಾಸ್ ಗೆದ್ದ ಹಾಂಗ್‌ಕಾಂಗ್ ಚೀನಾ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ಸ್ಮೃತಿ ಮಂಧಾನ ಅವರ ದಾಖಲೆಯ ಶತಕದ ನೆರವಿನಿಂದ 20 ಓವರ್‌ಗಳಲ್ಲಿ 193 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡಿತು. ಗುರಿ ಬೆನ್ನತ್ತಿದ ಹಾಂಗ್‌ಕಾಂಗ್ ತಂಡ 16.2 ಓವರ್‌ಗಳಲ್ಲಿ ಕೇವಲ 56 ರನ್‌ಗಳಿಗೆ ಆಲೌಟ್ ಆಯಿತು.

ಸ್ಮೃತಿ ಮಂಧಾನ ಸ್ಫೋಟಕ ಶತಕ:

ಭಾರತದ ಪರ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. 64 ಎಸೆತಗಳಲ್ಲಿ 124 ರನ್ ಗಳಿಸಿದ ಅವರು 14 ಬೌಂಡರಿ ಹಾಗೂ 7 ಸಿಕ್ಸರ್‌ಗಳನ್ನು ಸಿಡಿಸಿದರು. ಈ ಮೂಲಕ ಮಹಿಳಾ ಏಷ್ಯಾಕಪ್ ಇತಿಹಾಸದಲ್ಲೇ ಅತ್ಯಧಿಕ ವೈಯಕ್ತಿಕ ಸ್ಕೋರ್ ದಾಖಲಿಸಿದರು.

ಆರಂಭದಲ್ಲಿ ಎಚ್ಚರಿಕೆಯಿಂದ ಆಡಿದ ಮಂಧಾನ ಅರ್ಧಶತಕದ ಬಳಿಕ ಬ್ಯಾಟಿಂಗ್ ವೇಗ ಹೆಚ್ಚಿಸಿದರು. ಕೇವಲ 57 ಎಸೆತಗಳಲ್ಲಿ ಶತಕ ಪೂರೈಸಿ ತಂಡದ ಮೊತ್ತವನ್ನು ದೊಡ್ಡ ಮಟ್ಟಕ್ಕೆ ಕೊಂಡೊಯ್ದರು.

ಮಿಥಾಲಿ ರಾಜ ದಾಖಲೆ ಹಿಂದಿಕ್ಕಿದ ಮಂಧಾನ:

ಈ ದಾಖಲೆಯ ಇನ್ನಿಂಗ್ಸ್‌ನೊಂದಿಗೆ ಮಂಧಾನ ಮಹಿಳಾ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ್ತಿಯಾಗಿ ಹೊಸ ದಾಖಲೆ ನಿರ್ಮಿಸಿದ್ದಾರೆ. ಹಾಂಗ್‌ಕಾಂಗ್ ವಿರುದ್ಧದ ಇನ್ನಿಂಗ್ಸ್ ವೇಳೆ ಅವರು ಒಟ್ಟು 10,880 ಅಂತಾರಾಷ್ಟ್ರೀಯ ರನ್ ಗಳಿಸಿ, ಮಾಜಿ ನಾಯಕಿ ಮಿಥಾಲಿ ರಾಜ್ ಅವರ 10,868 ರನ್‌ಗಳ ದಾಖಲೆಯನ್ನು ಹಿಂದಿಕ್ಕಿದರು.

ಅಲ್ಲದೆ, ಇದು ಮಂಧಾನ ಅವರ 18ನೇ ಅಂತಾರಾಷ್ಟ್ರೀಯ ಶತಕವಾಗಿದ್ದು, ಮಹಿಳಾ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕ ಗಳಿಸಿದ ಆಟಗಾರ್ತಿಯೆಂಬ ಹೆಗ್ಗಳಿಕೆಯನ್ನು ಮತ್ತಷ್ಟು ಬಲಪಡಿಸಿದೆ.

ಬೌಲಿಂಗ್‌ನಲ್ಲೂ ಭಾರತದ ಪ್ರಾಬಲ್ಯ:

193 ರನ್‌ಗಳ ಗುರಿ ಬೆನ್ನತ್ತಿದ ಹಾಂಗ್‌ಕಾಂಗ್ ಬ್ಯಾಟರ್‌ಗಳಿಗೆ ಭಾರತದ ಬೌಲರ್‌ಗಳು ಅವಕಾಶ ನೀಡಲಿಲ್ಲ. ದೀಪ್ತಿ ಶರ್ಮಾ 3 ವಿಕೆಟ್ ಪಡೆದು ಮಿಂಚಿದರೆ, ಶ್ರೀ ಚರಣಿ, ಪ್ರೇಮಾ ರಾವತ್ ಹಾಗೂ ನಂದಿನಿ ಶರ್ಮಾ ತಲಾ ಎರಡು ವಿಕೆಟ್‌ಗಳನ್ನು ಕಬಳಿಸಿದರು. ಪರಿಣಾಮ ಹಾಂಗ್‌ಕಾಂಗ್ 56 ರನ್‌ಗಳಿಗೆ ಕುಸಿಯಿತು. ಈ ಗೆಲುವಿನೊಂದಿಗೆ ಭಾರತ ಮಹಿಳಾ ಏಷ್ಯಾಕಪ್‌ನಲ್ಲಿ ಸತತ ಎರಡನೇ ಜಯ ದಾಖಲಿಸಿ ಸೆಮಿಫೈನಲ್‌ಗೆ ಪ್ರವೇಶಿಸಿದ ಮೊದಲ ತಂಡವಾಗಿದೆ.

Young Heart Attack: ಯುವಕರಲ್ಲಿ ಹೃದಯಾಘಾತದ ಅಪಾಯ ಹೆಚ್ಚಿಸುತ್ತಿರುವ ಈ 4 ಅಂಶಗಳು; ICMR ಅಧ್ಯಯನದಲ್ಲಿ ಶಾಕಿಂಗ್ ಮಾಹಿತಿ

0

ಜಿಮ್‌ನಲ್ಲಿ ವ್ಯಾಯಾಮ ಮಾಡುವಾಗ, ನೃತ್ಯ ಮಾಡುವ ವೇಳೆ ಅಥವಾ ದೈನಂದಿನ ಚಟುವಟಿಕೆಗಳಲ್ಲಿ ತೊಡಗಿರುವಾಗ ಯುವಕರು ಹಠಾತ್ತನೆ ಕುಸಿದು ಸಾವನ್ನಪ್ಪುವ ಘಟನೆಗಳು ಇತ್ತೀಚಿನ ವರ್ಷಗಳಲ್ಲಿ ಗಮನ ಸೆಳೆಯುತ್ತಿವೆ.

ಈ ಹಿನ್ನೆಲೆಯಲ್ಲಿ ಯುವಕರಲ್ಲಿ ಹೃದಯಾಘಾತ ಮತ್ತು ರಕ್ತ ಹೆಪ್ಪುಗಟ್ಟುವಿಕೆಯ ಅಪಾಯಕ್ಕೆ ಕಾರಣವಾಗುವ ಅಂಶಗಳ ಕುರಿತು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ನಡೆಸಿದ ಅಧ್ಯಯನ ಹಲವು ಪ್ರಮುಖ ಸಂಗತಿಗಳನ್ನು ಬಹಿರಂಗಪಡಿಸಿದೆ.

18ರಿಂದ 45 ವರ್ಷದ 767 ಮಂದಿಯ ಅಧ್ಯಯನ:

ICMRನ ರಾಷ್ಟ್ರೀಯ ಸಾಂಕ್ರಾಮಿಕ ರೋಗಶಾಸ್ತ್ರ ಸಂಸ್ಥೆಯ ಸಂಶೋಧಕರು ದೇಶದ 25 ಪ್ರಮುಖ ಆಸ್ಪತ್ರೆಗಳಲ್ಲಿ 18ರಿಂದ 45 ವರ್ಷದೊಳಗಿನ 767 ಮಂದಿಯ ಆರೋಗ್ಯ ಮಾಹಿತಿಯನ್ನು ಅಧ್ಯಯನ ಮಾಡಿದ್ದಾರೆ. ಇವರಲ್ಲಿ ಹೃದಯಾಘಾತ ಸೇರಿದಂತೆ ತೀವ್ರ ಹೃದಯರಕ್ತನಾಳದ ಸಮಸ್ಯೆಗಳನ್ನು ಎದುರಿಸಿದವರ ಮಾಹಿತಿಯನ್ನು ಪರಿಶೀಲಿಸಲಾಗಿದೆ.

ಅಧ್ಯಯನದಲ್ಲಿ 432 ಮಂದಿ ಹೃದಯಾಘಾತಕ್ಕೆ ಒಳಗಾಗಿದ್ದರು. 31ರಿಂದ 45 ವರ್ಷದೊಳಗಿನವರು ಒಟ್ಟು ಅಧ್ಯಯನ ಗುಂಪಿನ ಶೇ.80ರಷ್ಟಿದ್ದರು.

ಹೃದಯಾಘಾತದ ಅಪಾಯ ಹೆಚ್ಚಿಸುವ ಅಂಶಗಳು ಯಾವುವು?

ಅಧ್ಯಯನದಲ್ಲಿ ಕೆಲವು ಪ್ರಮುಖ ಅಪಾಯದ ಅಂಶಗಳು ಪತ್ತೆಯಾಗಿವೆ. ಈ ಹಿಂದೆ ರಕ್ತ ಹೆಪ್ಪುಗಟ್ಟುವಿಕೆಯ ಸಮಸ್ಯೆ ಹೊಂದಿದ್ದವರಲ್ಲಿ ಹೃದಯಾಘಾತದ ಸಾಧ್ಯತೆ ಸುಮಾರು 60 ಪಟ್ಟು ಹೆಚ್ಚಿರುವುದು ಕಂಡುಬಂದಿದೆ.

ಅದೇ ರೀತಿ, ಮೊದಲೇ ಇದ್ದ ಕೆಲವು ಆರೋಗ್ಯ ಸಮಸ್ಯೆಗಳು ಹೃದಯಾಘಾತದ ಅಪಾಯವನ್ನು 4.6 ಪಟ್ಟು, ಧೂಮಪಾನ 3.5 ಪಟ್ಟು ಹಾಗೂ ಕುಟುಂಬದಲ್ಲಿ ರಕ್ತ ಹೆಪ್ಪುಗಟ್ಟುವಿಕೆಯ ಇತಿಹಾಸ 3.3 ಪಟ್ಟು ಹೆಚ್ಚಿಸಿರುವುದು ಅಧ್ಯಯನದಲ್ಲಿ ಕಂಡುಬಂದಿದೆ.

ಕೋವಿಡ್ ಸೋಂಕಿನ ಬಗ್ಗೆಯೂ ಗಮನಾರ್ಹ ಅಂಶ:

ಈ ಹಿಂದೆ ತೀವ್ರ ಕೋವಿಡ್ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿದ್ದವರಲ್ಲಿ ನಂತರ ರಕ್ತ ಹೆಪ್ಪುಗಟ್ಟುವಿಕೆಯ ಅಪಾಯ ಹೆಚ್ಚಿರುವುದು ಅಧ್ಯಯನದಲ್ಲಿ ಗಮನಕ್ಕೆ ಬಂದಿದೆ. ಆದರೆ ಕೋವಿಡ್-19 ಲಸಿಕೆ ಪಡೆದವರಲ್ಲಿ ಹೃದಯಾಘಾತ ಅಥವಾ ರಕ್ತ ಹೆಪ್ಪುಗಟ್ಟುವಿಕೆಯ ಹೆಚ್ಚುವರಿ ಅಪಾಯ ಕಂಡುಬಂದಿಲ್ಲ ಎಂದು ಸಂಶೋಧಕರು ತಿಳಿಸಿದ್ದಾರೆ. ಹೀಗಾಗಿ ಲಸಿಕೆಯನ್ನು ಈ ಸಮಸ್ಯೆಗಳಿಗೆ ನೇರ ಕಾರಣವೆಂದು ಅಧ್ಯಯನ ಬೆಂಬಲಿಸುವುದಿಲ್ಲ.

ಜಿಮ್‌ಗೆ ಹೋಗುವವರು ಏನು ಗಮನಿಸಬೇಕು?

ಈ ಅಧ್ಯಯನವು ವ್ಯಾಯಾಮವೇ ಅಪಾಯಕಾರಿ ಎಂದು ಹೇಳುವುದಿಲ್ಲ. ನಿಯಮಿತ ದೈಹಿಕ ಚಟುವಟಿಕೆ ಆರೋಗ್ಯಕರ ಜೀವನಶೈಲಿಯ ಪ್ರಮುಖ ಭಾಗವಾಗಿದೆ. ಆದರೆ ಆರೋಗ್ಯ ಸಮಸ್ಯೆ, ಹಿಂದಿನ ರಕ್ತ ಹೆಪ್ಪುಗಟ್ಟುವಿಕೆ ಅಥವಾ ಕುಟುಂಬದಲ್ಲಿ ಚಿಕ್ಕ ವಯಸ್ಸಿನಲ್ಲೇ ಹೃದಯ ಸಂಬಂಧಿತ ಸಮಸ್ಯೆಗಳ ಇತಿಹಾಸವಿರುವವರು ಹೆಚ್ಚಿನ ಎಚ್ಚರಿಕೆ ವಹಿಸುವುದು ಅಗತ್ಯ.

ಇಂತಹವರು ವೈದ್ಯಕೀಯ ಸಲಹೆ ಪಡೆದು ತಮ್ಮ ಆರೋಗ್ಯ ಸ್ಥಿತಿಗೆ ಅನುಗುಣವಾಗಿ ವ್ಯಾಯಾಮದ ತೀವ್ರತೆಯನ್ನು ನಿರ್ಧರಿಸಿಕೊಳ್ಳುವುದು ಸೂಕ್ತ. ಧೂಮಪಾನ ತ್ಯಜಿಸುವುದು, ಸಮತೋಲಿತ ಆಹಾರ ಸೇವನೆ ಹಾಗೂ ಉತ್ತಮ ನಿದ್ರೆಯಂತಹ ಜೀವನಶೈಲಿ ಬದಲಾವಣೆಗಳಿಗೂ ಆದ್ಯತೆ ನೀಡಬೇಕು.

ಮುಖ್ಯವಾಗಿ, ಎದೆನೋವು, ಉಸಿರಾಟದ ತೊಂದರೆ, ತಲೆಸುತ್ತು ಅಥವಾ ಅಸಹಜ ಹೃದಯ ಬಡಿತದಂತಹ ಲಕ್ಷಣಗಳು ಕಂಡುಬಂದರೆ ನಿರ್ಲಕ್ಷಿಸದೆ ತಕ್ಷಣ ವೈದ್ಯಕೀಯ ನೆರವು ಪಡೆಯುವುದು ಅಗತ್ಯ.

4 ಟೆಸ್ಟ್, 36 ವಿಕೆಟ್… ವಿವ್ ರಿಚರ್ಡ್ಸ್ʼಗೇ ತಲೆನೋವಾಗಿದ್ದ ಬೌಲಿಂಗ್ ದಿಗ್ಗಜ; ಕುಂಬ್ಳೆ ಆಗಮನದಿಂದ ಬದಲಾಯ್ತು ಈ ದಾಖಲೆ!

0

1988ರ ಜನವರಿ. ಮದ್ರಾಸ್‌ನಲ್ಲಿ ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಟೆಸ್ಟ್ ಪಂದ್ಯ. ಭಾರತದ ಪರ ಕೇವಲ 19 ವರ್ಷದ ಯುವ ಲೆಗ್‌ಸ್ಪಿನ್ನರ್ ನರೇಂದ್ರ ಹಿರ್ವಾನಿ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಎದುರಿಗಿದ್ದದ್ದು ವಿವ್ ರಿಚರ್ಡ್ಸ್ ಸೇರಿದಂತೆ ವಿಶ್ವದ ಬಲಿಷ್ಠ ಬ್ಯಾಟಿಂಗ್ ಪಡೆಯಾಗಿತ್ತು. ಆದರೆ ಯುವ ಸ್ಪಿನ್ನರ್ ನೀಡಿದ ಪ್ರದರ್ಶನ ಕ್ರಿಕೆಟ್ ಇತಿಹಾಸದಲ್ಲಿ ವಿಶೇಷ ಸ್ಥಾನ ಪಡೆಯಿತು.

ತಮ್ಮ ಚೊಚ್ಚಲ ಟೆಸ್ಟ್ ಪಂದ್ಯದ ಎರಡೂ ಇನ್ನಿಂಗ್ಸ್‌ಗಳಲ್ಲಿ ಬರೋಬ್ಬರಿ 54.3 ಓವರ್‌ಗಳನ್ನು ಬೌಲಿಂಗ್ ಮಾಡಿದ ಹಿರ್ವಾನಿ, ಕೇವಲ 136 ರನ್ ನೀಡಿ 16 ವಿಕೆಟ್‌ಗಳನ್ನು ಕಬಳಿಸಿದರು. ವೆಸ್ಟ್ ಇಂಡೀಸ್‌ನ ದಿಗ್ಗಜ ಬ್ಯಾಟರ್ ವಿವ್ ರಿಚರ್ಡ್ಸ್ ಅವರನ್ನೂ ಎರಡೂ ಇನ್ನಿಂಗ್ಸ್‌ಗಳಲ್ಲಿ ಔಟ್ ಮಾಡುವ ಮೂಲಕ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದರು.

ಈ ಅದ್ಭುತ ಪ್ರದರ್ಶನದೊಂದಿಗೆ ಹಿರ್ವಾನಿ, ಟೆಸ್ಟ್ ಪದಾರ್ಪಣೆಯ ಪಂದ್ಯದಲ್ಲಿ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದ ಬೌಲರ್ ಎಂಬ ದಾಖಲೆ ನಿರ್ಮಿಸಿದರು. ಚೊಚ್ಚಲ ಪಂದ್ಯದಲ್ಲೇ ಇಂತಹ ಅಸಾಮಾನ್ಯ ಸಾಧನೆ ಮಾಡಿದ್ದರಿಂದ ಭಾರತೀಯ ಕ್ರಿಕೆಟ್‌ನಲ್ಲಿ ಅವರ ಭವಿಷ್ಯದ ಬಗ್ಗೆ ಭಾರೀ ನಿರೀಕ್ಷೆಗಳು ಮೂಡಿದವು.

ಅವರ ಯಶಸ್ಸು ಕೇವಲ ಮೊದಲ ಟೆಸ್ಟ್‌ಗೆ ಸೀಮಿತವಾಗಲಿಲ್ಲ. ನ್ಯೂಜಿಲೆಂಡ್ ವಿರುದ್ಧದ ಮುಂದಿನ ಮೂರು ಟೆಸ್ಟ್ ಪಂದ್ಯಗಳಲ್ಲಿ ಹಿರ್ವಾನಿ ಮತ್ತಷ್ಟು 20 ವಿಕೆಟ್‌ಗಳನ್ನು ಕಬಳಿಸಿದರು. ಇದರೊಂದಿಗೆ ತಮ್ಮ ಮೊದಲ ನಾಲ್ಕು ಟೆಸ್ಟ್ ಪಂದ್ಯಗಳಲ್ಲೇ ಒಟ್ಟು 36 ವಿಕೆಟ್ ಪಡೆದ ಅವರು, ಭಾರತದ ಮುಂದಿನ ದೊಡ್ಡ ಸ್ಪಿನ್ ತಾರೆಯಾಗಿ ಹೊರಹೊಮ್ಮುವ ಸೂಚನೆ ನೀಡಿದರು.

ಆದರೆ ವಿದೇಶಿ ಪಿಚ್‌ಗಳು ಹಿರ್ವಾನಿ ಅವರಿಗೆ ನಿರೀಕ್ಷಿತ ಯಶಸ್ಸು ನೀಡಲಿಲ್ಲ. 1988-89ರ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಮೂರು ಟೆಸ್ಟ್ ಪಂದ್ಯಗಳಿಂದ ಅವರು ಕೇವಲ ಆರು ವಿಕೆಟ್ ಪಡೆಯಲು ಸಾಧ್ಯವಾಯಿತು. ಇದಾದ ಬಳಿಕ ನಿಧಾನವಾಗಿ ಭಾರತ ಟೆಸ್ಟ್ ತಂಡದಲ್ಲಿ ಅವರ ಸ್ಥಾನ ಕುಸಿಯತೊಡಗಿತು.

ಇದೇ ಸಮಯದಲ್ಲಿ ಭಾರತದ ಸ್ಪಿನ್ ವಿಭಾಗದಲ್ಲಿ ಅನಿಲ್ ಕುಂಬ್ಳೆ ಅವರ ಬೆಳವಣಿಗೆ ವೇಗ ಪಡೆದುಕೊಂಡಿತು. ಪರಿಣಾಮವಾಗಿ ಹಿರ್ವಾನಿಗೆ ತಂಡದಲ್ಲಿ ಅವಕಾಶಗಳು ಮತ್ತಷ್ಟು ಕಡಿಮೆಯಾದವು. 1995ರಲ್ಲಿ ಪುನರಾಗಮನ ಮಾಡಿದ ಹಿರ್ವಾನಿ ಒಂದು ಪಂದ್ಯದಲ್ಲಿ 59 ರನ್ ನೀಡಿ ಆರು ವಿಕೆಟ್ ಕಬಳಿಸಿ ತಮ್ಮ ಸಾಮರ್ಥ್ಯ ತೋರಿಸಿದರೂ, ಟೆಸ್ಟ್ ತಂಡದಲ್ಲಿ ಶಾಶ್ವತ ಸ್ಥಾನವನ್ನು ಮರಳಿ ಪಡೆಯಲು ಸಾಧ್ಯವಾಗಲಿಲ್ಲ.

ಆದರೂ ಹಿರ್ವಾನಿಯ ಕ್ರಿಕೆಟ್ ಪಯಣ ಅಲ್ಲಿಗೆ ಅಂತ್ಯವಾಗಲಿಲ್ಲ. ದೇಶೀಯ ಕ್ರಿಕೆಟ್‌ನಲ್ಲಿ ಅವರು ಹಲವು ವರ್ಷಗಳ ಕಾಲ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದರು. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಬರೋಬ್ಬರಿ 732 ವಿಕೆಟ್‌ಗಳನ್ನು ಕಬಳಿಸಿರುವ ಹಿರ್ವಾನಿ, ರಣಜಿ ಟ್ರೋಫಿಯಲ್ಲೇ 441 ವಿಕೆಟ್‌ಗಳನ್ನು ಪಡೆದಿದ್ದಾರೆ.

2002-03ರಲ್ಲೂ 34 ವರ್ಷದ ವಯಸ್ಸಿನಲ್ಲಿ 79 ಪ್ರಥಮ ದರ್ಜೆ ವಿಕೆಟ್‌ಗಳನ್ನು ಕಬಳಿಸುವ ಮೂಲಕ ತಮ್ಮಲ್ಲಿದ್ದ ಸಾಮರ್ಥ್ಯ ಇನ್ನೂ ಕುಂದಿಲ್ಲ ಎಂಬುದನ್ನು ತೋರಿಸಿಕೊಟ್ಟರು.

ಹೀಗಾಗಿ ನರೇಂದ್ರ ಹಿರ್ವಾನಿಯ ಕಥೆ ಕೇವಲ ಚೊಚ್ಚಲ ಟೆಸ್ಟ್‌ನ 16 ವಿಕೆಟ್‌ಗಳ ದಾಖಲೆಗೆ ಸೀಮಿತವಾಗಿಲ್ಲ. ಅಸಾಧಾರಣ ಆರಂಭದೊಂದಿಗೆ ಅಪಾರ ನಿರೀಕ್ಷೆಗಳನ್ನು ಹುಟ್ಟುಹಾಕಿ, ನಂತರ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅವಕಾಶಗಳನ್ನು ಕಳೆದುಕೊಂಡರೂ ದೇಶೀಯ ಕ್ರಿಕೆಟ್‌ನಲ್ಲಿ ವರ್ಷಗಳ ಕಾಲ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ ಅಪರೂಪದ ಸ್ಪಿನ್ನರ್‌ನ ಪಯಣ ಇದಾಗಿದೆ.

ಚೊಚ್ಚಲ ಟೆಸ್ಟ್‌ನಲ್ಲೇ ಇತಿಹಾಸ ಸೃಷ್ಟಿಸಿದ ಹಿರ್ವಾನಿ ನಂತರ ದೀರ್ಘಕಾಲ ಟೀಂ ಇಂಡಿಯಾದಲ್ಲಿ ಕಾಣಿಸಿಕೊಳ್ಳಲು ಸಾಧ್ಯವಾಗದಿರುವುದು ಭಾರತೀಯ ಕ್ರಿಕೆಟ್‌ನ ಅಪರೂಪದ ಅಧ್ಯಾಯಗಳಲ್ಲಿ ಒಂದಾಗಿದೆ.

ಸಾಲದ ಕಂತು ಕಟ್ಟಲಿಲ್ಲವೆಂದು ಮಹಿಳೆ ಕಿಡ್ನ್ಯಾಪ್? ಚಂದ್ರಾಲೇಔಟ್‌ನಲ್ಲಿ ಮೂವರ ಬಂಧನ

0

ಬೆಂಗಳೂರು: ಸಾಲದ ಹಣ ಹಾಗೂ ಬಡ್ಡಿ ವಿಚಾರಕ್ಕೆ ಮಹಿಳೆಯೊಬ್ಬರನ್ನು ಅಪಹರಿಸಿ ಹಲ್ಲೆ ನಡೆಸಿ, ಆಕೆಯ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿದ ಆರೋಪದ ಮೇಲೆ ಚಂದ್ರಾಲೇಔಟ್ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.

ಬಂಧಿತರನ್ನು ರೇಷ್ಮಾ ಬಾನು, ನಝತ್ ಹಾಗೂ ಸುಹೇಲ್ ಎಂದು ಗುರುತಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಸಾಲದ ಹಣ ಪಾವತಿಸದ ಹಿನ್ನೆಲೆ ತಕರಾರು:

ಪೊಲೀಸರ ದೂರಿನ ಪ್ರಕಾರ, ಸಂತ್ರಸ್ತ ಮಹಿಳೆಗೆ ರೇಷ್ಮಾ ಬಾನು ಈ ಹಿಂದೆ ಪರಿಚಯವಿದ್ದರು. ಸುಮಾರು ಎರಡು ವರ್ಷಗಳ ಹಿಂದೆ ರೇಷ್ಮಾ ಅವರಿಂದ ಮಹಿಳೆ ₹1 ಲಕ್ಷ ಸಾಲ ಪಡೆದಿದ್ದರು ಎನ್ನಲಾಗಿದೆ. ಬಳಿಕ ರೇಷ್ಮಾ ಮೂಲಕ ನಝತ್ ಪರಿಚಯವಾಗಿದ್ದು, ನಝತ್ ಅವರಿಂದ ₹50 ಸಾವಿರ ಸಾಲ ಪಡೆದಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ನಝತ್‌ಗೆ ಪ್ರತಿ ತಿಂಗಳು ₹5 ಸಾವಿರದಂತೆ ಕಂತಿನಲ್ಲಿ ಹಣ ಪಾವತಿಸುತ್ತಿದ್ದ ಮಹಿಳೆಗೆ ವೈಯಕ್ತಿಕ ಕಾರಣಗಳಿಂದ ಕಳೆದ ಆರು ತಿಂಗಳಿಂದ ಹಣ ಪಾವತಿಸಲು ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ನಝತ್ ಪದೇಪದೆ ಸಂಪರ್ಕಿಸುತ್ತಿದ್ದರು. ಇದರಿಂದಾಗಿ ಮಹಿಳೆ ನಝತ್ ಅವರ ಮೊಬೈಲ್ ಸಂಖ್ಯೆಯನ್ನು ಬ್ಲಾಕ್ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಕೆಲಸದ ನೆಪದಲ್ಲಿ ಮನೆಗೆ ಕರೆಸಿ ಹಲ್ಲೆ:

ಮಹಿಳೆ ಮನೆ ಖಾಲಿ ಮಾಡಿಕೊಂಡು ತಾಯಿಯ ಮನೆಗೆ ತೆರಳಿದ್ದ ಸಂದರ್ಭದಲ್ಲಿ, ಕೆಲಸವೊಂದಿದೆ ಹಾಗೂ ಹಣ ಸಿಗಲಿದೆ ಎಂದು ಹೇಳಿ ನಝತ್ ತಮ್ಮ ಮನೆಗೆ ಕರೆಸಿಕೊಂಡಿದ್ದರು ಎನ್ನಲಾಗಿದೆ. ಮಹಿಳೆ ಅಲ್ಲಿಗೆ ತೆರಳಿದ ಬಳಿಕ ಆಕೆಯ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಈ ವೇಳೆ ರೇಷ್ಮಾ ಬಾನು ಹಾಗೂ ಆಕೆಯ ಪತಿ ಸುಹೇಲ್ ಕೂಡ ಅಲ್ಲಿಗೆ ಬಂದು ಮಹಿಳೆಯ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಚಾಕುವಿನಿಂದ ಹಲ್ಲೆ ನಡೆಸಿದ ಬಳಿಕ ಮಹಿಳೆಯನ್ನು ಆಟೋದಲ್ಲಿ ಕುಂಬಳಗೋಡು ಸಮೀಪದ ಮನೆಯೊಂದಕ್ಕೆ ಕರೆದೊಯ್ದು ಇರಿಸಲಾಗಿತ್ತು ಎಂದು ದೂರಿನಲ್ಲಿ ತಿಳಿಸಲಾಗಿದೆ.

ವಿಡಿಯೋ ಹರಿಬಿಡುವುದಾಗಿ ಬೆದರಿಕೆ:

ಮಹಿಳೆಯನ್ನು ಮನೆಯಲ್ಲಿ ಇರಿಸಿಕೊಂಡಿದ್ದ ವೇಳೆ ಆಕೆಯನ್ನು ಅವಮಾನಿಸಿ ವಿಡಿಯೋ ಮಾಡಲಾಗಿತ್ತು. ಹಣ ನೀಡದಿದ್ದರೆ ಆ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಲಾಗಿತ್ತು ಎಂದು ಆರೋಪಿಸಲಾಗಿದೆ.

ಈ ನಡುವೆ ಮಹಿಳೆ ಕಾಣೆಯಾಗಿದ್ದರಿಂದ ಆಕೆಯ ತಾಯಿ ಚಂದ್ರಾಲೇಔಟ್ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು. ದೂರಿನ ಆಧಾರದ ಮೇಲೆ ತನಿಖೆ ಕೈಗೊಂಡ ಪೊಲೀಸರು ಮಹಿಳೆಯನ್ನು ಪತ್ತೆಹಚ್ಚಿ ರಕ್ಷಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ರೇಷ್ಮಾ ಬಾನು, ನಝತ್ ಹಾಗೂ ಸುಹೇಲ್ ಅವರನ್ನು ಬಂಧಿಸಿರುವ ಪೊಲೀಸರು, ಘಟನೆಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಯನ್ನು ಕಲೆಹಾಕುತ್ತಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿದೆ.

Karnataka Weather: ರಾಜ್ಯದಲ್ಲಿ ಮುಂಗಾರು ದುರ್ಬಲ; ಕರಾವಳಿ ಸೇರಿ ಹಲವೆಡೆ ಮಳೆ ಸಾಧ್ಯತೆ

0

ಬೆಂಗಳೂರು: ಕರ್ನಾಟಕದಲ್ಲಿ ಮುಂಗಾರು ಚಟುವಟಿಕೆ ತುಸು ದುರ್ಬಲಗೊಂಡಿದೆ.

ಭಾರತೀಯ ಹವಾಮಾನ ಇಲಾಖೆ (IMD) ಪ್ರಕಾರ, ಉತ್ತರ ಒಳನಾಡಿನಲ್ಲಿ ಮುಂಗಾರು ಸಾಮಾನ್ಯವಾಗಿದ್ದರೆ, ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ದುರ್ಬಲವಾಗಿದೆ. ಸೆಪ್ಟೆಂಬರ್ 4 ಮತ್ತು 5ರಂದು ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ.

ಕರಾವಳಿ ಕರ್ನಾಟಕದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಸೆ.4 ಮತ್ತು 5ರಂದು ಹಲವು ಕಡೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಅಲ್ಲಲ್ಲಿ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

ಉತ್ತರ ಒಳನಾಡಿನಲ್ಲಿ ಮಳೆ, ಬಿರುಗಾಳಿ ಸಾಧ್ಯತೆ:

ಸೆ.4ರಂದು ವಿಜಯಪುರ, ಗದಗ, ರಾಯಚೂರು, ಬೆಳಗಾವಿ, ಧಾರವಾಡ ಹಾಗೂ ಬಾಗಲಕೋಟೆ ಜಿಲ್ಲೆಗಳ ಕೆಲವೆಡೆ ಸಾಧಾರಣ ಮಳೆಯೊಂದಿಗೆ ಗಂಟೆಗೆ 40ರಿಂದ 50 ಕಿ.ಮೀ. ವೇಗದ ಗಾಳಿ ಬೀಸುವ ಸಾಧ್ಯತೆಯಿದೆ.

ಬೀದರ್, ಹಾವೇರಿ, ಕಲಬುರಗಿ, ಕೊಪ್ಪಳ ಹಾಗೂ ಯಾದಗಿರಿ ಜಿಲ್ಲೆಗಳ ಕೆಲವೆಡೆ ಹಗುರದಿಂದ ಸಾಧಾರಣ ಮಳೆಯೊಂದಿಗೆ ಗಂಟೆಗೆ 30ರಿಂದ 40 ಕಿ.ಮೀ. ವೇಗದ ಗಾಳಿ ಬೀಸುವ ಸಾಧ್ಯತೆಯಿದೆ.

ಸೆ.5ರಂದು ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ ಹಾಗೂ ಯಾದಗಿರಿ ಜಿಲ್ಲೆಗಳ ಕೆಲವೆಡೆ ಮಳೆಯೊಂದಿಗೆ ಗಂಟೆಗೆ 30ರಿಂದ 40 ಕಿ.ಮೀ. ವೇಗದ ಗಾಳಿ ಬೀಸುವ ಸಾಧ್ಯತೆಯಿದೆ.

ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನಲ್ಲೂ ಮಳೆ:

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಬಳ್ಳಾರಿ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು ಹಾಗೂ ವಿಜಯನಗರ ಜಿಲ್ಲೆಗಳ ಕೆಲವೆಡೆ ಸೆ.4ರಂದು ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.

ಈ ವೇಳೆ ಗಂಟೆಗೆ 30ರಿಂದ 40 ಕಿ.ಮೀ. ವೇಗದ ಗಾಳಿ ಬೀಸುವ ಸಾಧ್ಯತೆಯೂ ಇದೆ. ಸೆ.5ರಂದು ಇದೇ ಜಿಲ್ಲೆಗಳ ಹಲವೆಡೆ ಮಳೆಯೊಂದಿಗೆ ಗಾಳಿ ಬೀಸುವ ಮುನ್ಸೂಚನೆ ನೀಡಲಾಗಿದೆ.

ರಾಜ್ಯದಲ್ಲಿ ಎಲ್ಲಿ ಎಷ್ಟು ಮಳೆ?

ಸೆ.3ರ ಬೆಳಗ್ಗೆ 8.30ಕ್ಕೆ ಕೊನೆಗೊಂಡ 24 ಗಂಟೆ ಅವಧಿಯಲ್ಲಿ ಕೊಪ್ಪಳ ಜಿಲ್ಲೆಯ ಕುಷ್ಟಗಿಯಲ್ಲಿ 3 ಸೆಂ.ಮೀ. ಮಳೆಯಾಗಿದ್ದು, ಉತ್ತರ ಕನ್ನಡ ಜಿಲ್ಲೆಯ ಬಸಗೋಡ, ಗದಗ ಮತ್ತು ಗೋಕರ್ಣದಲ್ಲಿ ತಲಾ 2 ಸೆಂ.ಮೀ. ಮಳೆ ದಾಖಲಾಗಿದೆ.

ಉತ್ತರ ಕನ್ನಡದ ಕಾರವಾರ, ಕುಮಟಾ ಹಾಗೂ ಮಾಣ್ಕಿ, ಕೊಪ್ಪಳದ ತಾವರಗೇರಾ ಸೇರಿದಂತೆ ಹಲವು ಪ್ರದೇಶಗಳಲ್ಲೂ ಮಳೆಯಾಗಿದೆ. ಶಿವಮೊಗ್ಗದ ಆಗುಂಬೆ, ಉಡುಪಿ ಜಿಲ್ಲೆಯ ಬ್ರಹ್ಮಾವರ, ರಾಯಚೂರಿನ ದೇವದುರ್ಗ ಸೇರಿದಂತೆ ಹಲವು ಕಡೆ 1 ಸೆಂ.ಮೀ. ಮಳೆ ದಾಖಲಾಗಿದೆ.

ಮುಂದಿನ ದಿನಗಳಲ್ಲೂ ರಾಜ್ಯದ ಹಲವು ಭಾಗಗಳಲ್ಲಿ ಮಳೆ ಹಾಗೂ ಗಾಳಿಯ ವಾತಾವರಣ ಮುಂದುವರಿಯುವ ಸಾಧ್ಯತೆಯಿದೆ. ಉತ್ತರ ಮತ್ತು ದಕ್ಷಿಣ ಒಳನಾಡಿನಲ್ಲಿ ಗುಡುಗು-ಮಿಂಚು ಹಾಗೂ ಬಲವಾದ ಮೇಲ್ಮೈ ಗಾಳಿಯ ಕುರಿತು IMD ಮುನ್ಸೂಚನೆ ನೀಡಿದೆ.

ಕೆ.ಆರ್. ಮಾರುಕಟ್ಟೆಗೆ ಇನ್ಮುಂದೆ ಎಂಟ್ರಿ ಫೀ; ವಾಹನ, ಸರಕುಗಳಿಗೂ ಶುಲ್ಕ!

0

ಬೆಂಗಳೂರು: ನಗರದ ಐತಿಹಾಸಿಕ ಕೆ.ಆರ್. ಮಾರುಕಟ್ಟೆಯ ಅಭಿವೃದ್ಧಿ ಮತ್ತು ನಿರ್ವಹಣೆಗೆ ಹೊಸ ಶುಲ್ಕ ವ್ಯವಸ್ಥೆ ಜಾರಿಗೆ ತರಲು ಬೆಂಗಳೂರು ಕೇಂದ್ರ ನಗರ ಪಾಲಿಕೆ ಮುಂದಾಗಿದೆ.

ಇದರ ಭಾಗವಾಗಿ ಮಾರುಕಟ್ಟೆ ಪ್ರವೇಶಿಸುವ ಸರಕು ಸಾಗಣೆ ವಾಹನಗಳು ಹಾಗೂ ವಿವಿಧ ಸರಕುಗಳ ಮೇಲೆ ಪ್ರವೇಶ ಶುಲ್ಕ ವಿಧಿಸಲು ಸ್ಮಾರ್ಟ್ ಗೇಟ್ ವ್ಯವಸ್ಥೆ ಅಳವಡಿಸಲಾಗುತ್ತಿದೆ.

ನಿಗದಿತ ದರದ ಪ್ರಕಾರ, ಆರು ಚಕ್ರ ಅಥವಾ ಅದಕ್ಕಿಂತ ಹೆಚ್ಚಿನ ಸರಕು ವಾಹನಗಳಿಗೆ ಪ್ರತಿ ಪ್ರವೇಶ ಮತ್ತು ನಿರ್ಗಮನಕ್ಕೆ ₹350, ನಾಲ್ಕು ಚಕ್ರದ ಸರಕು ವಾಹನಗಳಿಗೆ ₹100 ಹಾಗೂ ಮೂರು ಚಕ್ರದ ಸರಕು ವಾಹನಗಳಿಗೆ ₹75 ಶುಲ್ಕ ವಿಧಿಸಲಾಗುತ್ತದೆ.

ತರಕಾರಿ, ಹಣ್ಣು, ಹೂವಿಗೂ ಶುಲ್ಕ:

ವಾಹನಗಳ ಪ್ರವೇಶ ಶುಲ್ಕದ ಜತೆಗೆ ಮಾರುಕಟ್ಟೆಗೆ ತರಲಾಗುವ ಸರಕುಗಳಿಗೂ ಪ್ರತ್ಯೇಕ ಶುಲ್ಕ ನಿಗದಿಪಡಿಸಲಾಗಿದೆ. ತರಕಾರಿ, ಹಣ್ಣು, ಹೂವು, ಸೊಪ್ಪು ಸೇರಿದಂತೆ ಹಲವು ಕೃಷಿ ಉತ್ಪನ್ನಗಳಿಗೆ ಪ್ರತಿ ಮೂಟೆ ಅಥವಾ ನಿಗದಿತ ಘಟಕಕ್ಕೆ ₹5 ಶುಲ್ಕ ವಿಧಿಸಲಾಗುತ್ತದೆ.

ಮೊಟ್ಟೆಗಳಿಗೆ ಪ್ರತಿ ಬಾಕ್ಸ್‌ಗೆ ₹10, ಮೀನು ಹಾಗೂ ಸಮುದ್ರ ಉತ್ಪನ್ನಗಳ ಬಾಕ್ಸ್‌ಗೆ ₹10 ಮತ್ತು ಕೋಳಿ ಹಾಗೂ ಇತರ ಮಾಂಸ ಉತ್ಪನ್ನಗಳ ಪ್ರತಿ ಟ್ರೇಗೆ ₹10 ಶುಲ್ಕ ನಿಗದಿಪಡಿಸಲಾಗಿದೆ.

ಡಿಜಿಟಲ್ ಮೂಲಕ ಶುಲ್ಕ ಪಾವತಿ:

ಮಾರುಕಟ್ಟೆ ಪ್ರವೇಶಕ್ಕೂ ಮುನ್ನ ನಿಗದಿತ ಶುಲ್ಕ ಪಾವತಿಸುವ ವ್ಯವಸ್ಥೆ ಜಾರಿಗೆ ಬರಲಿದೆ. ಯುಪಿಐ, ಕ್ಯೂಆರ್ ಕೋಡ್, ಫಾಸ್ಟ್‌ಟ್ಯಾಗ್, ಕಾರ್ಡ್ ಹಾಗೂ ಪಿಒಎಸ್‌ ಸೇರಿದಂತೆ ಡಿಜಿಟಲ್ ವಿಧಾನಗಳ ಮೂಲಕ ಶುಲ್ಕ ಸಂಗ್ರಹಿಸಲು ವ್ಯವಸ್ಥೆ ಮಾಡಲಾಗುತ್ತಿದೆ. ಸ್ಮಾರ್ಟ್ ಗೇಟ್‌ಗಳ ಜತೆಗೆ ವಾಹನಗಳ ಮೇಲ್ವಿಚಾರಣೆಗೆ ಎಎನ್‌ಪಿಆರ್ ಕ್ಯಾಮೆರಾ ಹಾಗೂ ಸಿಸಿಟಿವಿ ವ್ಯವಸ್ಥೆಯನ್ನೂ ಬಳಸುವ ಯೋಜನೆ ಇದೆ.

10 ವರ್ಷಗಳ ಒಪ್ಪಂದ:

ಕೆ.ಆರ್. ಮಾರುಕಟ್ಟೆಯ ಅಭಿವೃದ್ಧಿ, ನಿರ್ವಹಣೆ, ಸಿವಿಲ್ ಕಾಮಗಾರಿ, ಸ್ಮಾರ್ಟ್ ತಂತ್ರಜ್ಞಾನ ಅಳವಡಿಕೆ ಹಾಗೂ ಸರಕು ವಾಹನಗಳಿಂದ ಪ್ರವೇಶ ಶುಲ್ಕ ಸಂಗ್ರಹಿಸುವ ಕಾರ್ಯವನ್ನು 10 ವರ್ಷಗಳ ಅವಧಿಯ ಒಪ್ಪಂದದಡಿ ಕೈಗೊಳ್ಳಲು ಟೆಂಡರ್ ಪ್ರಕ್ರಿಯೆ ಆರಂಭಿಸಲಾಗಿದೆ.

ಹೊಸ ಶುಲ್ಕ ವ್ಯವಸ್ಥೆಯಿಂದ ಮಾರುಕಟ್ಟೆಯ ನಿರ್ವಹಣೆ ಹಾಗೂ ಸ್ವಚ್ಛತೆ ಸುಧಾರಿಸುವ ಉದ್ದೇಶವಿದೆ ಎಂದು ಪಾಲಿಕೆ ತಿಳಿಸಿದೆ. ಆದರೆ ಹೆಚ್ಚುವರಿ ಶುಲ್ಕದ ಹೊರೆ ಅಂತಿಮವಾಗಿ ಸರಕುಗಳ ಬೆಲೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ವ್ಯಾಪಾರಿಗಳು ಹಾಗೂ ಗ್ರಾಹಕರಲ್ಲಿ ಆತಂಕವೂ ವ್ಯಕ್ತವಾಗುತ್ತಿದೆ.

Krishna Janmashtami: ಬೆಂಗಳೂರಿನ ಇಸ್ಕಾನ್‌ನಲ್ಲಿ ಕೃಷ್ಣ ಜನ್ಮಾಷ್ಟಮಿ ಸಂಭ್ರಮ; 3 ಲಕ್ಷ ಭಕ್ತರ ನಿರೀಕ್ಷೆ!

0

ಬೆಂಗಳೂರು: ನಗರ ಸೇರಿದಂತೆ ರಾಜ್ಯಾದ್ಯಂತ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮ ಮನೆಮಾಡಿದೆ.

ಬೆಂಗಳೂರಿನ ವಿವಿಧ ಶ್ರೀಕೃಷ್ಣ ದೇವಾಲಯಗಳಲ್ಲಿ ವಿಶೇಷ ಪೂಜೆ, ಅಭಿಷೇಕ ಹಾಗೂ ಅಲಂಕಾರಗಳನ್ನು ಹಮ್ಮಿಕೊಳ್ಳಲಾಗಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ದೇವರ ದರ್ಶನ ಪಡೆಯುತ್ತಿದ್ದಾರೆ.

ನಗರದ ಪ್ರಸಿದ್ಧ ಇಸ್ಕಾನ್ ದೇವಾಲಯದಲ್ಲೂ ಜನ್ಮಾಷ್ಟಮಿ ಆಚರಣೆ ಅದ್ಧೂರಿಯಾಗಿ ನಡೆಯುತ್ತಿದೆ. ಹಬ್ಬದ ಹಿನ್ನೆಲೆಯಲ್ಲಿ ಮುಖ್ಯ ಮಂದಿರವನ್ನು ವಿಶೇಷವಾಗಿ ನವಿಲಿನ ಅಲಂಕಾರದಿಂದ ಸಿಂಗರಿಸಲಾಗಿದೆ.

ರಂಗಮಂದಿರದಲ್ಲಿ ಶ್ರೀ ರಾಧಾ-ಕೃಷ್ಣ ಉತ್ಸವ ಮೂರ್ತಿಗಳಿಗೆ ವಿಶೇಷ ಅಭಿಷೇಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಹಾಲು, ಮೊಸರು, ತುಪ್ಪ, ಜೇನು ಸೇರಿದಂತೆ ವಿವಿಧ ಪವಿತ್ರ ದ್ರವ್ಯಗಳಿಂದ ಅಭಿಷೇಕ ನೆರವೇರಿಸಲಾಗುತ್ತಿದೆ. ಇಸ್ಕಾನ್ ಬೆಂಗಳೂರಿನ ಅಧಿಕೃತ ಮಾಹಿತಿಯ ಪ್ರಕಾರ ಸೆ.4ರಂದು ರಾತ್ರಿ ವಿಶೇಷ ಮಹಾಭಿಷೇಕ ಹಾಗೂ ಮಧ್ಯರಾತ್ರಿ ಮಹಾ ಆರತಿ ನಡೆಯಲಿದೆ.

ಭಕ್ತರ ಅನುಕೂಲಕ್ಕಾಗಿ ರಾತ್ರಿ 12 ಗಂಟೆಯವರೆಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಜನ್ಮಾಷ್ಟಮಿ ಹಿನ್ನೆಲೆಯಲ್ಲಿ ಇಸ್ಕಾನ್ ಸೇರಿದಂತೆ ನಗರದ ಪ್ರಮುಖ ಕೃಷ್ಣ ದೇವಾಲಯಗಳಿಗೆ ಭಕ್ತರ ದಂಡೇ ಹರಿದುಬರುತ್ತಿದೆ.

ಶ್ರೀಕೃಷ್ಣನ ಜನ್ಮದಿನದ ಅಂಗವಾಗಿ ಭಜನೆ, ಕೀರ್ತನೆ, ವಿಶೇಷ ಪೂಜೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಭಕ್ತರು ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಿದ್ದಾರೆ.