Home Blog

ಆನ್ ಲೈನ್ ಗೇಮಿಂಗ್ ಚಟಕ್ಕೆ ಲಕ್ಷಾಂತರ ರೂಪಾಯಿ ಕಳೆದುಕೊಂಡ ಗೃಹಿಣಿ: ಸಾಲಬಾಧೆ ತಾಳಲಾರದೆ ಆತ್ಮಹತ್ಯೆ

0

ನೆಲಮಂಗಲ: ಆನ್‌ಲೈನ್ ಗೇಮಿಂಗ್ ಚಟಕ್ಕೆ ಬಿದ್ದು ಲಕ್ಷಾಂತರ ರೂಪಾಯಿ ಕಳೆದುಕೊಂಡಿದ್ದ ಗೃಹಿಣಿಯೊಬ್ಬರು ಸಾಲಬಾಧೆ ತಾಳಲಾರದೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರು ಹೊರವಲಯದ ನೆಲಮಂಗಲ ತಾಲೂಕಿನ ಬೊಮ್ಮನಹಳ್ಳಿಯಲ್ಲಿ ನಡೆದಿದೆ.

ಮೃತರನ್ನು 28 ವರ್ಷದ ರಂಜಿತಾ ಎಂದು ಗುರುತಿಸಲಾಗಿದೆ. ನೆಲಮಂಗಲದ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ರಂಜಿತಾ, ಸುಮಾರು 10 ವರ್ಷಗಳ ಹಿಂದೆ ಅರುಣ್ ಎಂಬುವವರನ್ನು ವಿವಾಹವಾಗಿದ್ದರು. ಮೂಲತಃ ಕಲಬುರಗಿ ನಿವಾಸಿಗಳಾಗಿದ್ದ ದಂಪತಿ ಕಳೆದ ಐದು ವರ್ಷಗಳಿಂದ ನೆಲಮಂಗಲದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು ಎನ್ನಲಾಗಿದೆ.

ಕಳೆದ ಒಂದು ವರ್ಷದಿಂದ ರಂಜಿತಾ ಆನ್‌ಲೈನ್ ಗೇಮಿಂಗ್ ಚಟಕ್ಕೆ ಒಳಗಾಗಿದ್ದರು ಎಂದು ತಿಳಿದುಬಂದಿದೆ. ಗೇಮಿಂಗ್‌ನಲ್ಲಿ ಲಕ್ಷಾಂತರ ರೂಪಾಯಿ ಹಣ ಕಳೆದುಕೊಂಡಿದ್ದ ಅವರು, ಬಳಿಕ ಸಾಲದ ಸುಳಿಗೆ ಸಿಲುಕಿದ್ದರು ಎನ್ನಲಾಗಿದೆ.

ರಂಜಿತಾ ಮಾಡಿದ್ದ ಸಾಲದಲ್ಲಿ ಸುಮಾರು ₹15 ಲಕ್ಷವನ್ನು ಅವರ ತಾಯಿ ಹಾಗೂ ಪತಿ ಸೇರಿ ಈಗಾಗಲೇ ತೀರಿಸಿದ್ದರು ಎಂದು ತಿಳಿದುಬಂದಿದೆ. ಆದರೂ ಆನ್‌ಲೈನ್ ಗೇಮಿಂಗ್ ಚಟವನ್ನು ಬಿಡದ ರಂಜಿತಾ ಮತ್ತೆ ಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ.

ಎರಡು ದಿನಗಳ ಹಿಂದೆ ಪತಿ ಅರುಣ್ ಕೆಲಸದ ನಿಮಿತ್ತ ಕಲಬುರಗಿಗೆ ತೆರಳಿದ್ದರು. ಈ ವೇಳೆ ರಂಜಿತಾ ತಮ್ಮ ಏಳು ವರ್ಷದ ಮಗನೊಂದಿಗೆ ಮನೆಯಲ್ಲಿ ಇದ್ದರು. ಕಳೆದ ರಾತ್ರಿ ಮನೆಯಲ್ಲಿ ರಂಜಿತಾ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ತಿಳಿದು ಸ್ಥಳಕ್ಕೆ ನೆಲಮಂಗಲ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನೆಲಮಂಗಲ ಸರ್ಕಾರಿ ಶವಾಗಾರದಲ್ಲಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.

ಈ ಸಂಬಂಧ ನೆಲಮಂಗಲ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ಕೋಲಾರ: ಗಂಡನನ್ನು ಕೊಂದು ತಾನೇ ಪೊಲೀಸ್ ಠಾಣೆಗೆ ಹೋಗಿ ಶರಣಾದ ಪತ್ನಿ!

0

ಕೋಲಾರ: ಗಂಡನನ್ನು ಕೊಂದು ಪತ್ನಿ ಪೊಲೀಸ್ ಠಾಣೆಗೆ ಹೋಗಿ ಶರಣಾಗಿರುವ ಘಟನೆ ಕೋಲಾರ ತಾಲ್ಲೂಕು ಚೆನ್ನಸಂದ್ರ ಗ್ರಾಮದಲ್ಲಿ ನಡೆದಿದೆ. ನಾರಾಯಣಸ್ವಾಮಿ (68) ಕೊಲೆಯಾದ ಪತಿಯಾಗಿದ್ದು, ಜಗದಾಂಭ (58) ಕೊಲೆ ಮಾಡಿದ ಪತ್ನಿಯಾಗಿದ್ದಾರೆ.

ಊಟದಲ್ಲಿ ನಿದ್ರೆ ಮಾತ್ರೆ ಹಾಕಿ, ನಿದ್ರೆ ಮಾಡಿದ‌ ನಂತರ ಹಗ್ಗದಿಂದ ಕುತ್ತಿಗೆ ಬಿಗಿದು ಕೊಲೆ ಮಾಡಲಾಗಿದೆ. ಜಮೀನು ಮಾರಾಟ ಮಾಡಿದ ಹಣ ಕೊಟ್ಟಿಲ್ಲ ಹಾಗೂ  ಇರುವ ಜಮೀನನ್ನು ಮಾರಾಟ ಮಾಡುತ್ತಾನೆಂದು ಕೊಲೆ ಮಾಡಲಾಗಿದೆಯಂತೆ.

ಇಷ್ಟು ದಿನ ಪತಿ ಮತ್ತು ಪತ್ನಿ  ಪ್ರತ್ಯೇಕವಾಗಿಯೇ ಇದ್ದರು. ಆದರೆ ಹಣಕ್ಕಾಗಿ ಕಳೆದ ಎರಡು ಮೂರು ದಿನದಿಂದ ಪುಸಲಾಯಿಸಿ ತೋಟದ‌ ಮನೆಗೆ ಕೆರತಂದು ಕೊಲೆ ಮಾಡಲಾಗಿದೆ. ಕೊಲೆ ಮಾಡಿ ನಂತರ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾರೆ. ಇನ್ನೂ ಘಟನೆ ಸಂಬಂಧ ವೇಮಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಮತದಾರರ ಪಟ್ಟಿಯಿಂದ ಪ್ರಕಾಶ್ ರಾಜ್ ಹೆಸರು ಡಿಲೀಟ್: ಅಧಿಕಾರಿಗಳಿಂದ ಸ್ಪಷ್ಟನೆ

ಬೆಂಗಳೂರು: ಕರ್ನಾಟಕದಲ್ಲಿ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (SIR) ಪ್ರಕ್ರಿಯೆ ನಡೆಯುತ್ತಿರುವ ಬೆನ್ನಲ್ಲೇ ನಟ ಪ್ರಕಾಶ್ ರಾಜ್ ಅವರ ಹೆಸರು ಮತದಾರರ ಪಟ್ಟಿಯಿಂದ ಕೈಬಿಟ್ಟಿರುವ ವಿಚಾರ ವಿವಾದಕ್ಕೆ ಕಾರಣವಾಗಿದೆ. ತಮ್ಮ ಹೆಸರು ಡಿಲೀಟ್ ಆಗಿರುವುದನ್ನು ಪ್ರಶ್ನಿಸಿ ಪ್ರಕಾಶ್ ರಾಜ್ ವಿಡಿಯೋ ಮೂಲಕ ಆಕ್ಷೇಪ ವ್ಯಕ್ತಪಡಿಸಿದ ಬೆನ್ನಲ್ಲೇ, ಚುನಾವಣಾ ಆಯೋಗದ ಅಧಿಕಾರಿಗಳು ಈ ಕುರಿತು ಸ್ಪಷ್ಟನೆ ನೀಡಿದ್ದಾರೆ.

ರಾಜ್ಯಾದ್ಯಂತ ಮತದಾರರ ಪಟ್ಟಿಯ ಪರಿಷ್ಕರಣೆ ಪ್ರಕ್ರಿಯೆ ನಡೆಯುತ್ತಿದ್ದು, ಅಕ್ರಮ ಹಾಗೂ ಗೊಂದಲಭರಿತ ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲಾಗುತ್ತಿದೆ. ಬೆಂಗಳೂರಿನಲ್ಲಿ ಸುಮಾರು 65 ಲಕ್ಷ ಮತದಾರರ ಹೆಸರು ಪಟ್ಟಿಯಿಂದ ಡಿಲೀಟ್ ಆಗಿರುವ ಮಾಹಿತಿ ಇದೆ.

ಆಗಸ್ಟ್ 11ರಂದು ವಿಡಿಯೋ ಹಂಚಿಕೊಂಡಿದ್ದ ಪ್ರಕಾಶ್ ರಾಜ್, ತಾವು ಹುಟ್ಟಿ ಬೆಳೆದ, ಶಿಕ್ಷಣ ಪಡೆದ ಹಾಗೂ ಈ ಹಿಂದೆ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದ ಕ್ಷೇತ್ರದಲ್ಲೇ ತಮ್ಮ ಹೆಸರು ಮತದಾರರ ಪಟ್ಟಿಯಿಂದ ಹೇಗೆ ಡಿಲೀಟ್ ಆಗಲು ಸಾಧ್ಯ ಎಂದು ಪ್ರಶ್ನಿಸಿದ್ದರು. ಈ ಬೆಳವಣಿಗೆಯನ್ನು ‘ಒಂದು ಜೋಕ್’ ಎಂದು ವ್ಯಂಗ್ಯವಾಡಿದ್ದ ಅವರು, ತಮ್ಮ ಮತದಾನದ ಹಕ್ಕನ್ನು ಮರಳಿ ಪಡೆಯಲು ಅಗತ್ಯವಿರುವ ಎಲ್ಲ ಕಾನೂನು ಕ್ರಮಗಳನ್ನು ಕೈಗೊಳ್ಳುವುದಾಗಿ ಹೇಳಿದ್ದರು.

ಪ್ರಕಾಶ್ ರಾಜ್ ಅವರ ಆರೋಪಕ್ಕೆ ಪ್ರತಿಕ್ರಿಯಿಸಿರುವ ಚುನಾವಣಾಧಿಕಾರಿಗಳು, ಅವರು ಶಾಂತಿನಗರದ ಮತದಾರರಾಗಿದ್ದರು. ಆದರೆ SIR ಪ್ರಕ್ರಿಯೆಯಡಿ ನಡೆದ ಮನೆ-ಮನೆ ಪರಿಶೀಲನೆ ವೇಳೆ ಅವರು ತಮ್ಮ ನೋಂದಾಯಿತ ನಿವಾಸವಾದ ನಂಬರ್ 266, ಗಾರ್ಡನ್ ಅಪಾರ್ಟ್‌ಮೆಂಟ್‌ನಿಂದ ಸ್ಥಳಾಂತರಗೊಂಡಿರುವುದು ಪತ್ತೆಯಾಗಿದೆ ಎಂದು ತಿಳಿಸಿದ್ದಾರೆ.

ಸ್ಥಳೀಯವಾಗಿ ಬೂತ್ ಮಟ್ಟದ ಅಧಿಕಾರಿ (BLO) ವಿಚಾರಣೆ ನಡೆಸಿದಾಗ, ಪ್ರಕಾಶ್ ರಾಜ್ ಅವರು ಕಳೆದ ನಾಲ್ಕು ವರ್ಷಗಳಿಂದ ಆ ನಿವಾಸದಲ್ಲಿ ವಾಸಿಸುತ್ತಿಲ್ಲ. ಬದಲಾಗಿ ಅಲ್ಲಿ ಬಾಡಿಗೆದಾರರು ವಾಸಿಸುತ್ತಿದ್ದಾರೆ ಎಂಬ ಮಾಹಿತಿ ದೊರೆತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

BLO ನೀಡಿದ ಮಾಹಿತಿಯ ಆಧಾರದ ಮೇಲೆ ಸ್ಥಳ ಪರಿಶೀಲನೆ ನಡೆಸಲಾಗಿದ್ದು, ನಿಗದಿತ ವಿಳಾಸದಲ್ಲಿ ಪ್ರಕಾಶ್ ರಾಜ್ ಅವರು ದೀರ್ಘಕಾಲದಿಂದ ವಾಸಿಸುತ್ತಿಲ್ಲ ಎಂಬ ಕಾರಣಕ್ಕೆ ಅವರ ಹೆಸರನ್ನು ಶಾಶ್ವತವಾಗಿ ಸ್ಥಳಾಂತರಗೊಂಡ ಮತದಾರರ ಪಟ್ಟಿಗೆ (ASDDO) ಸೇರಿಸಲಾಗಿದೆ ಎಂದು ಚುನಾವಣಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಈ ಕುರಿತು ಪ್ರಕಾಶ್ ರಾಜ್ ಅವರೊಂದಿಗೆ ದೂರವಾಣಿ ಮೂಲಕವೂ ಮಾತನಾಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಈ ವೇಳೆ ತಾವು ಶಾಂತಿನಗರದಲ್ಲೇ ಬೇರೆ ಸ್ಥಳದಲ್ಲಿ ವಾಸಿಸುತ್ತಿರುವುದಾಗಿ ಪ್ರಕಾಶ್ ರಾಜ್ ತಿಳಿಸಿದ್ದಾರೆ ಎನ್ನಲಾಗಿದೆ.

ಹೀಗಾಗಿ, ಅವರು ಸ್ಥಳೀಯ BLO ಅವರನ್ನು ಸಂಪರ್ಕಿಸಿ ಫಾರ್ಮ್-6 ಸಲ್ಲಿಸಿದರೆ ಶಾಂತಿನಗರದ ಮತದಾರರ ಪಟ್ಟಿಯಲ್ಲಿ ಮತ್ತೆ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು ಎಂದು ಚುನಾವಣಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

ತಮ್ಮ ಹೆಸರು ಮತದಾರರ ಪಟ್ಟಿಯಿಂದ ಕೈಬಿಟ್ಟಿರುವ ಕುರಿತು ವಿಡಿಯೋ ಹಂಚಿಕೊಂಡಿದ್ದ ಪ್ರಕಾಶ್ ರಾಜ್, ತಮಗೆ ಮತ ಹಾಕದವರಿಗೆ ಮತದಾನದ ಹಕ್ಕಿನಿಂದಲೇ ವಂಚಿಸಲಾಗುತ್ತಿದೆ ಎಂದು ಆರೋಪಿಸಿದ್ದರು. ಇದೀಗ ಚುನಾವಣಾಧಿಕಾರಿಗಳ ಸ್ಪಷ್ಟನೆಯೊಂದಿಗೆ ಪ್ರಕಾಶ್ ರಾಜ್ ಅವರ ಹೆಸರು ಪಟ್ಟಿಯಿಂದ ಕೈಬಿಟ್ಟಿರುವುದರ ಹಿಂದಿನ ಕಾರಣದ ಬಗ್ಗೆ ಉಂಟಾಗಿದ್ದ ಗೊಂದಲಕ್ಕೆ ತೆರೆ ಬಿದ್ದಿದೆ.

ಚಿನ್ನದ ಬೆಲೆಯಲ್ಲಿ ಅಲ್ಪ ಇಳಿಕೆ; 22 ಕ್ಯಾರಟ್ 10 ಗ್ರಾಂಗೆ ₹1.41 ಲಕ್ಷ, ಬೆಳ್ಳಿ ದರ ಸ್ಥಿರ

0

ನವದೆಹಲಿ: ಚಿನ್ನದ ಬೆಲೆಯಲ್ಲಿ ಬುಧವಾರ ಅಲ್ಪ ಇಳಿಕೆ ಕಂಡುಬಂದಿದೆ. ಪ್ರತಿ ಗ್ರಾಂ ಚಿನ್ನದ ದರದಲ್ಲಿ ₹25ರಷ್ಟು ಕುಸಿತ ದಾಖಲಾಗಿದ್ದು, ಬೆಳ್ಳಿ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಭಾರತದಲ್ಲಿ ಸದ್ಯ 10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ ₹1,41,950 ಇದ್ದರೆ, 24 ಕ್ಯಾರಟ್ ಅಪರಂಜಿ ಚಿನ್ನದ ದರ ₹1,54,860ಕ್ಕೆ ತಲುಪಿದೆ. ಬೆಳ್ಳಿಯ ಬೆಲೆ 100 ಗ್ರಾಂಗೆ ₹25,500ರಷ್ಟಿದೆ. ಬೆಂಗಳೂರಿನಲ್ಲೂ ಇದೇ ದರ ಮುಂದುವರಿದಿದೆ.

ಭಾರತದಲ್ಲಿ ಇಂದಿನ ಚಿನ್ನ, ಬೆಳ್ಳಿ ದರ

ಆಗಸ್ಟ್ 12ರಂದು 24 ಕ್ಯಾರಟ್ ಚಿನ್ನದ 1 ಗ್ರಾಂ ದರ ₹15,486 ಇದ್ದರೆ, 22 ಕ್ಯಾರಟ್ ಚಿನ್ನದ 1 ಗ್ರಾಂಗೆ ₹14,195 ಇದೆ. 18 ಕ್ಯಾರಟ್ ಚಿನ್ನದ 1 ಗ್ರಾಂ ದರ ₹11,614ಕ್ಕೆ ನಿಗದಿಯಾಗಿದೆ. ಬೆಳ್ಳಿಯ 1 ಗ್ರಾಂ ದರ ₹255 ಇದೆ.

ಬೆಂಗಳೂರಿನಲ್ಲಿ ಚಿನ್ನ-ಬೆಳ್ಳಿ ದರ

ಬೆಂಗಳೂರಿನಲ್ಲಿ 24 ಕ್ಯಾರಟ್ ಚಿನ್ನದ 1 ಗ್ರಾಂಗೆ ₹15,486 ಹಾಗೂ 22 ಕ್ಯಾರಟ್ ಚಿನ್ನದ 1 ಗ್ರಾಂಗೆ ₹14,195 ಇದೆ. ಬೆಳ್ಳಿಯ 1 ಗ್ರಾಂ ದರ ₹255ರಷ್ಟಿದೆ.

ವಿವಿಧ ನಗರಗಳಲ್ಲಿ 22 ಕ್ಯಾರಟ್ ಚಿನ್ನದ ದರ

ಬೆಂಗಳೂರು, ಚೆನ್ನೈ, ಮುಂಬೈ, ಕೋಲ್ಕತಾ ಮತ್ತು ಕೇರಳದಲ್ಲಿ 22 ಕ್ಯಾರಟ್ ಚಿನ್ನದ 1 ಗ್ರಾಂ ದರ ₹14,195 ಇದೆ. ದೆಹಲಿ, ಜೈಪುರ್ ಹಾಗೂ ಲಕ್ನೋದಲ್ಲಿ ₹14,210, ಅಹ್ಮದಾಬಾದ್‌ನಲ್ಲಿ ₹14,200 ಮತ್ತು ಭುವನೇಶ್ವರದಲ್ಲಿ ₹14,195ರಷ್ಟಿದೆ.

ವಿವಿಧ ದೇಶಗಳಲ್ಲಿ 24 ಕ್ಯಾರಟ್ ಚಿನ್ನದ ದರ

ಭಾರತದಲ್ಲಿ 24 ಕ್ಯಾರಟ್ ಚಿನ್ನದ 1 ಗ್ರಾಂ ದರ ₹15,486 ಇದ್ದರೆ, ಮಲೇಷ್ಯಾದಲ್ಲಿ 595 ರಿಂಗಿಟ್ (₹13,871), ದುಬೈನಲ್ಲಿ 528.75 ಡಿರಾಮ್ (₹13,737), ಅಮೆರಿಕದಲ್ಲಿ 144.50 ಡಾಲರ್ (₹13,789) ಇದೆ.

ಸಿಂಗಾಪುರದಲ್ಲಿ 193.50 ಸಿಂಗಾಪುರ್ ಡಾಲರ್ (₹14,418), ಕತಾರ್‌ನಲ್ಲಿ 529.50 ಕತಾರಿ ರಿಯಾಲ್ (₹13,861), ಸೌದಿ ಅರೇಬಿಯಾದಲ್ಲಿ 544 ಸೌದಿ ರಿಯಾಲ್ (₹13,846), ಓಮನ್‌ನಲ್ಲಿ 56.20 ಒಮಾನಿ ರಿಯಾಲ್ (₹13,960) ಹಾಗೂ ಕುವೇತ್‌ನಲ್ಲಿ 43.91 ಕುವೇತಿ ದಿನಾರ್ (₹13,637) ದರ ದಾಖಲಾಗಿದೆ.

ವಿವಿಧ ನಗರಗಳಲ್ಲಿ ಬೆಳ್ಳಿ ದರ

ಬೆಂಗಳೂರಿನಲ್ಲಿ ಬೆಳ್ಳಿಯ 1 ಗ್ರಾಂಗೆ ₹255 ಇದ್ದರೆ, ಚೆನ್ನೈ ಮತ್ತು ಕೇರಳದಲ್ಲಿ ₹260 ಇದೆ. ಮುಂಬೈ, ದೆಹಲಿ, ಕೋಲ್ಕತಾ, ಅಹ್ಮದಾಬಾದ್, ಜೈಪುರ್, ಲಕ್ನೋ ಹಾಗೂ ಪುಣೆಯಲ್ಲಿ ₹255ರಷ್ಟಿದೆ. ಭುವನೇಶ್ವರದಲ್ಲಿ 1 ಗ್ರಾಂ ಬೆಳ್ಳಿ ₹260ಕ್ಕೆ ಲಭ್ಯವಿದೆ.

ಚಿನ್ನ ಮತ್ತು ಬೆಳ್ಳಿ ದರಗಳು ಸ್ಥಳೀಯ ಮಾರುಕಟ್ಟೆ, ತೆರಿಗೆ, ಬೇಡಿಕೆ ಹಾಗೂ ಇತರ ಅಂಶಗಳಿಗೆ ಅನುಗುಣವಾಗಿ ಬದಲಾಗಬಹುದು. ಆಭರಣ ಖರೀದಿಸುವ ಮುನ್ನ ಸ್ಥಳೀಯ ಜುವೆಲ್ಲರ್ ಬಳಿ ಇಂದಿನ ಅಂತಿಮ ದರವನ್ನು ಖಚಿತಪಡಿಸಿಕೊಳ್ಳುವುದು ಸೂಕ್ತ.

ಟಾಟಾ ಸನ್ಸ್ ಅಧ್ಯಕ್ಷ ಸ್ಥಾನಕ್ಕೆ ಎನ್. ಚಂದ್ರಶೇಖರನ್ ರಾಜೀನಾಮೆ!

0

ಮುಂಬೈ: ಟಾಟಾ ಸನ್ಸ್ ಕಾರ್ಯಾಧ್ಯಕ್ಷ ಎನ್. ಚಂದ್ರಶೇಖರನ್ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದು, ಪ್ರಸ್ತುತ ಅಧಿಕಾರಾವಧಿ ಪೂರ್ಣಗೊಂಡ ಬಳಿಕ ಮರುನೇಮಕಗೊಳ್ಳಲು ತಾನು ಬಯಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆಗಸ್ಟ್ 18ರಂದು ನಡೆಯಲಿರುವ ಟಾಟಾ ಸನ್ಸ್ ವಾರ್ಷಿಕ ಸಾಮಾನ್ಯ ಸಭೆ (AGM)ಗೂ ಮುನ್ನ ಈ ಮಹತ್ವದ ಬೆಳವಣಿಗೆ ನಡೆದಿದೆ.

ಚಂದ್ರಶೇಖರನ್ ಅವರ ಪ್ರಸ್ತುತ ಅಧಿಕಾರಾವಧಿ 2027ರ ಫೆಬ್ರವರಿವರೆಗೆ ಇದೆ. ಆಗಸ್ಟ್ 18ರ ಎಜಿಎಂನಲ್ಲಿ ಅವರ ಮರುನೇಮಕದ ಕುರಿತು ಷೇರುದಾರರು ಮತದಾನ ಮಾಡಬೇಕಿತ್ತು. ಆದರೆ ಈ ಪ್ರಕ್ರಿಯೆ ನಡೆಯುವ ಮೊದಲೇ ಅವರು ರಾಜೀನಾಮೆ ಸಲ್ಲಿಸಿದ್ದಾರೆ. ರಾಜೀನಾಮೆ ನೀಡಿದ್ದರೂ, ಅವರ ಪ್ರಸ್ತುತ ಅಧಿಕಾರಾವಧಿ ಮುಗಿಯುವವರೆಗೆ ಅಂದರೆ 2027ರ ಫೆಬ್ರವರಿವರೆಗೆ ಅವರು ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ.

ಟಾಟಾ ಸಮೂಹದ ದತ್ತಿ ಸಂಸ್ಥೆಯಾದ ಟಾಟಾ ಟ್ರಸ್ಟ್ಸ್ ಅಧ್ಯಕ್ಷ ನೋಯೆಲ್ ಟಾಟಾ ಅವರು ಚಂದ್ರಶೇಖರನ್ ಅವರ ಮರುನೇಮಕಕ್ಕೆ ವಿರೋಧ ವ್ಯಕ್ತಪಡಿಸಿದ್ದರು ಎನ್ನಲಾಗಿದೆ.

ಬೋರ್ಡ್‌ನಲ್ಲಿ ಪ್ರಾತಿನಿಧ್ಯ, ಟಾಟಾ ಸನ್ಸ್‌ನ ಸಾಲ ಕಡಿತ, ಸಂಸ್ಥೆಯನ್ನು ಸಾರ್ವಜನಿಕ ಷೇರು ಮಾರುಕಟ್ಟೆಗೆ ತರದಿರುವುದು ಹಾಗೂ ಶಾಪೂರ್ಜಿ ಪಲ್ಲೊಂಜಿ ಸಮೂಹದೊಂದಿಗಿನ ವಿವಾದಗಳನ್ನು ಬಗೆಹರಿಸುವ ವಿಚಾರ ಸೇರಿದಂತೆ ಹಲವು ವಿಷಯಗಳಲ್ಲಿ ಟಾಟಾ ಟ್ರಸ್ಟ್ಸ್ ಮತ್ತು ಟಾಟಾ ಸನ್ಸ್ ನಡುವೆ ಭಿನ್ನಾಭಿಪ್ರಾಯಗಳು ಮೂಡಿದ್ದವು ಎಂದು ತಿಳಿದುಬಂದಿದೆ.

ಚಂದ್ರಶೇಖರನ್ ಅವರ ರಾಜೀನಾಮೆಯ ಬೆನ್ನಲ್ಲೇ ಸರ್ ರತನ್ ಟಾಟಾ ಟ್ರಸ್ಟ್‌ನ ಟ್ರಸ್ಟಿ ವಿಜಯ್ ಸಿಂಗ್ ಕೂಡ ತಮ್ಮ ಅಧಿಕಾರಾವಧಿ ಪೂರ್ಣಗೊಳ್ಳುವ ಮುನ್ನವೇ ರಾಜೀನಾಮೆ ಸಲ್ಲಿಸಿದ್ದಾರೆ. ಅಲ್ಲದೆ, ಮರುನೇಮಕಗೊಳ್ಳಲು ತಾವು ಬಯಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಇದರಿಂದ ಟಾಟಾ ಸಮೂಹದ ಆಡಳಿತ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಗಳಾಗುವ ಸಾಧ್ಯತೆ ಕುರಿತು ಚರ್ಚೆ ಆರಂಭವಾಗಿದೆ.

1987ರಲ್ಲಿ ಟಾಟಾ ಸಮೂಹವನ್ನು ಸೇರಿದ ಎನ್. ಚಂದ್ರಶೇಖರನ್, 2009ರಲ್ಲಿ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್‌ (TCS) ಸಿಇಒ ಆಗಿ ನೇಮಕಗೊಂಡಿದ್ದರು. ಬಳಿಕ 2017ರಲ್ಲಿ ದಿವಂಗತ ರತನ್ ಟಾಟಾ ಅವರ ಮಾರ್ಗದರ್ಶನದಲ್ಲಿ ಟಾಟಾ ಸನ್ಸ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು. ಟಾಟಾ ಕುಟುಂಬಕ್ಕೆ ಸೇರದ ವ್ಯಕ್ತಿಯೊಬ್ಬರು ಟಾಟಾ ಸಮೂಹದ ಅತ್ಯುನ್ನತ ಹುದ್ದೆಗೇರಿದ್ದು ಇದೇ ಮೊದಲ ಬಾರಿಯಾಗಿತ್ತು.

ಸೆಮಿಕಂಡಕ್ಟರ್ ಚಿಪ್ ತಯಾರಿಕೆ ಸೇರಿದಂತೆ ಹಲವು ಪ್ರಮುಖ ಹಾಗೂ ಬಹುಕೋಟಿ ರೂಪಾಯಿ ಮೌಲ್ಯದ ಉದ್ಯಮ ಯೋಜನೆಗಳಲ್ಲಿ ಟಾಟಾ ಸಮೂಹ ತೊಡಗಿಸಿಕೊಂಡಿರುವ ಸಂದರ್ಭದಲ್ಲಿ ಚಂದ್ರಶೇಖರನ್ ಅವರ ನಿರ್ಗಮನ ಮಹತ್ವ ಪಡೆದುಕೊಂಡಿದೆ.

ಅವರ ರಾಜೀನಾಮೆ ಟಾಟಾ ಸನ್ಸ್‌ನ ಭವಿಷ್ಯದ ಆಡಳಿತ ಶೈಲಿ, ಬೋರ್ಡ್ ರಚನೆ ಹಾಗೂ ಸಮೂಹದ ಪ್ರಮುಖ ವ್ಯವಹಾರಿಕ ನಿರ್ಧಾರಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಮುಂದಿನ ದಿನಗಳಲ್ಲಿ ಟಾಟಾ ಸನ್ಸ್‌ನ ಹೊಸ ನಾಯಕತ್ವದ ಆಯ್ಕೆ ಕುರಿತು ಕುತೂಹಲ ಹೆಚ್ಚಾಗಿದೆ.

ತಮಿಳುನಾಡಿಗೆ ಕಾವೇರಿ ನೀರು ಬಿಟ್ಟರೆ ಸರ್ಕಾರದ ವಿರುದ್ಧ ನಾನೇ ಹೋರಾಟ ಮಾಡುತ್ತೇನೆ: ಗಣಿಗ ರವಿಕುಮಾರ್

0

ಮಂಡ್ಯ: ತಮಿಳುನಾಡಿಗೆ ಕಾವೇರಿ ನೀರು ಹರಿಸಿದರೆ ರಾಜ್ಯ ಸರ್ಕಾರದ ವಿರುದ್ಧ ತಾನೇ ಹೋರಾಟ ನಡೆಸುವುದಾಗಿ ಮಂಡ್ಯ ಕಾಂಗ್ರೆಸ್ ಶಾಸಕ ಗಣಿಗ ರವಿಕುಮಾರ್ ಎಚ್ಚರಿಕೆ ನೀಡಿದ್ದಾರೆ. ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಬಿಡಬಾರದು ಎಂದು ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಮಂಡ್ಯದಲ್ಲಿ ಮಾತನಾಡಿದ ಗಣಿಗ ರವಿಕುಮಾರ್, ತಾವು ರೈತರ ಪರವಾಗಿದ್ದು, ರೈತರಿಗಾಗಿ ಹೋರಾಟ ಮಾಡುವುದಾಗಿ ಹೇಳಿದ್ದಾರೆ. ಸರ್ಕಾರ ತಮಿಳುನಾಡಿಗೆ ನೀರು ಹರಿಸಿದರೆ ಸರ್ಕಾರದ ವಿರುದ್ಧವೇ ಹೋರಾಟ ನಡೆಸಬೇಕಾದ ಪರಿಸ್ಥಿತಿ ಎದುರಾಗಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ರಾಜ್ಯದ ಸಂಸದರು ಏನು ಮಾಡುತ್ತಿದ್ದಾರೆ ಎಂಬುದು ಗೊತ್ತಾಗುತ್ತಿಲ್ಲ. ಅವರು ರಾಜ್ಯ ಸರ್ಕಾರದ ಬಗ್ಗೆ ವಿವಿಧ ರೀತಿಯಲ್ಲಿ ಮಾತನಾಡುತ್ತಿದ್ದಾರೆ. ನಿತ್ಯ 12 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಆದೇಶವಾಗಿದೆ ಎಂಬ ಮಾಹಿತಿ ಇದೆ. ಆದರೆ, ಯಾವ ರೀತಿಯ ಆದೇಶ ನೀಡಲಾಗಿದೆ ಎಂಬುದು ಸ್ಪಷ್ಟವಾಗಿಲ್ಲ ಎಂದು ಗಣಿಗ ರವಿಕುಮಾರ್ ಹೇಳಿದ್ದಾರೆ.

ಸದ್ಯ ಕಬಿನಿ ಜಲಾಶಯ ಭರ್ತಿಯಾಗಿರುವ ಹಿನ್ನೆಲೆಯಲ್ಲಿ ಹೆಚ್ಚುವರಿ ನೀರು ತಮಿಳುನಾಡಿನತ್ತ ಹರಿಯುತ್ತಿದೆ. ಆದರೆ, ರಾಜ್ಯ ಸರ್ಕಾರ ತಮಿಳುನಾಡಿಗೆ ಪ್ರತ್ಯೇಕವಾಗಿ ನೀರು ಬಿಟ್ಟಿಲ್ಲ ಎಂದು ಅವರು ತಿಳಿಸಿದ್ದಾರೆ.

ಒಂದು ವೇಳೆ ಸರ್ಕಾರ ತಮಿಳುನಾಡಿಗೆ ನೀರು ಹರಿಸಲು ಮುಂದಾದರೆ, ರೈತರ ಪರವಾಗಿ ತಾನೇ ಸರ್ಕಾರದ ವಿರುದ್ಧ ಹೋರಾಟ ನಡೆಸುವುದಾಗಿ ಗಣಿಗ ರವಿಕುಮಾರ್ ಪುನರುಚ್ಚರಿಸಿದ್ದಾರೆ.

136 ವರ್ಷಗಳ ಹಳೆಯ ದಾಖಲೆ ಧೂಳೀಪಟ: ಆಂಡ್ರ್ಯೂ ಫ್ಲಿಂಟಾಫ್ ಪುತ್ರ ರಾಕಿ ಫ್ಲಿಂಟಾಫ್ ಹೊಸ ಇತಿಹಾಸ ನಿರ್ಮಾಣ

0

ಇಂಗ್ಲೆಂಡ್: ಇಂಗ್ಲೆಂಡ್ ಕ್ರಿಕೆಟ್ ಇತಿಹಾಸದ ಶ್ರೇಷ್ಠ ಆಲ್‌ರೌಂಡರ್‌ಗಳಲ್ಲಿ ಒಬ್ಬರಾದ ಆಂಡ್ರ್ಯೂ ಫ್ಲಿಂಟಾಫ್ ಅವರ ಪುತ್ರ ರಾಕಿ ಫ್ಲಿಂಟಾಫ್ ಇದೀಗ ಕ್ರಿಕೆಟ್ ಜಗತ್ತಿನಲ್ಲಿ ಹೊಸ ಸಂಚಲನ ಮೂಡಿಸಿದ್ದಾರೆ. ಕೇವಲ 18ನೇ ವಯಸ್ಸಿನಲ್ಲೇ ಲಂಕಾಷೈರ್ ಪರ ಶತಕ ಸಿಡಿಸಿರುವ ರಾಕಿ, ಬರೋಬ್ಬರಿ 136 ವರ್ಷಗಳಷ್ಟು ಹಳೆಯ ದಾಖಲೆಯನ್ನು ಮುರಿದು ಹೊಸ ಇತಿಹಾಸ ನಿರ್ಮಿಸಿದ್ದಾರೆ.

ಇಂಗ್ಲೆಂಡ್‌ನಲ್ಲಿ ನಡೆಯುತ್ತಿರುವ ಮೆಟ್ರೋ ಬ್ಯಾಂಕ್ ಒನ್-ಡೇ ಕಪ್ ಟೂರ್ನಿಯಲ್ಲಿ ಲಂಕಾಷೈರ್ ಪರ ಕಣಕ್ಕಿಳಿದ ರಾಕಿ ಫ್ಲಿಂಟಾಫ್ ಸೋಮರ್‌ಸೆಟ್ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಕೇವಲ 65 ಎಸೆತಗಳಲ್ಲಿ ಶತಕ ಪೂರೈಸಿದ ಅವರು, ಅಂತಿಮವಾಗಿ 76 ಎಸೆತಗಳನ್ನು ಎದುರಿಸಿ 10 ಬೌಂಡರಿ ಹಾಗೂ 7 ಸಿಕ್ಸರ್‌ಗಳ ನೆರವಿನಿಂದ 123 ರನ್ ಸಿಡಿಸಿದರು.

ಇದು ರಾಕಿ ಫ್ಲಿಂಟಾಫ್ ಅವರ ಹಿರಿಯ ವೃತ್ತಿಪರ ಕ್ರಿಕೆಟ್ ವೃತ್ತಿಜೀವನದ ಚೊಚ್ಚಲ ಶತಕವಾಗಿದೆ. ಈ ಶತಕದೊಂದಿಗೆ 18 ವರ್ಷ ಹಾಗೂ 126 ದಿನಗಳ ವಯಸ್ಸಿನ ರಾಕಿ, ಲಂಕಾಷೈರ್ ಕ್ರಿಕೆಟ್ ಕ್ಲಬ್ ಪರ ಶತಕ ಸಿಡಿಸಿದ ಅತ್ಯಂತ ಕಿರಿಯ ಬ್ಯಾಟರ್ ಎಂಬ ದಾಖಲೆ ನಿರ್ಮಿಸಿದ್ದಾರೆ.

ಇದಕ್ಕೂ ಮುನ್ನ ಈ ದಾಖಲೆ ಆರ್ಚಿ ಮೆಕ್‌ಲಾರೆನ್ ಅವರ ಹೆಸರಿನಲ್ಲಿತ್ತು. 1890ರಲ್ಲಿ ಲಂಕಾಷೈರ್ ಪರ ಆಡಿದ್ದ ಮೆಕ್‌ಲಾರೆನ್, ಸಸೆಕ್ಸ್ ವಿರುದ್ಧ 106 ರನ್ ಗಳಿಸಿದ್ದರು. ಆಗ ಅವರಿಗೆ 18 ವರ್ಷ ಹಾಗೂ 256 ದಿನಗಳ ವಯಸ್ಸಾಗಿತ್ತು. ಈ ಮೂಲಕ ಲಂಕಾಷೈರ್ ಪರ ಶತಕ ಬಾರಿಸಿದ ಅತ್ಯಂತ ಕಿರಿಯ ಬ್ಯಾಟರ್ ಎಂಬ ದಾಖಲೆ ಅವರ ಹೆಸರಿನಲ್ಲಿತ್ತು.

ಆದರೆ ಇದೀಗ ಬರೋಬ್ಬರಿ 136 ವರ್ಷಗಳ ಬಳಿಕ ರಾಕಿ ಫ್ಲಿಂಟಾಫ್ ಈ ದಾಖಲೆಯನ್ನು ಅಳಿಸಿಹಾಕಿದ್ದಾರೆ. ಆ ಮೂಲಕ ಲಂಕಾಷೈರ್‌ನ ದೀರ್ಘಕಾಲದ ದಾಖಲೆಯನ್ನು ತಮ್ಮ ಹೆಸರಿಗೆ ವರ್ಗಾಯಿಸಿಕೊಂಡಿದ್ದಾರೆ.

162 ವರ್ಷಗಳ ಇತಿಹಾಸ ಹೊಂದಿರುವ ಲಂಕಾಷೈರ್ ಕ್ರಿಕೆಟ್ ಕ್ಲಬ್ ಪರ ಲಿಸ್ಟ್-ಎ ಕ್ರಿಕೆಟ್‌ನಲ್ಲಿ ಶತಕ ಸಿಡಿಸಿದ ಅತ್ಯಂತ ಕಿರಿಯ ಬ್ಯಾಟರ್ ಎಂಬ ವಿಶೇಷ ದಾಖಲೆಗೂ ರಾಕಿ ಪಾತ್ರರಾಗಿದ್ದಾರೆ.

ತಂದೆ ಆಂಡ್ರ್ಯೂ ಫ್ಲಿಂಟಾಫ್ ಇಂಗ್ಲೆಂಡ್ ಕ್ರಿಕೆಟ್‌ನಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರೆ, ಇದೀಗ ಪುತ್ರ ರಾಕಿ ಫ್ಲಿಂಟಾಫ್ ಕೂಡ ಅದ್ಭುತ ಬ್ಯಾಟಿಂಗ್ ಪ್ರದರ್ಶನದ ಮೂಲಕ ಕ್ರಿಕೆಟ್ ಜಗತ್ತಿಗೆ ತಮ್ಮ ಆಗಮನವನ್ನು ಸಾರಿದ್ದಾರೆ. ಕೇವಲ 18ನೇ ವಯಸ್ಸಿನಲ್ಲಿ ಐತಿಹಾಸಿಕ ದಾಖಲೆ ನಿರ್ಮಿಸಿರುವ ರಾಕಿ, ಮುಂದಿನ ದಿನಗಳಲ್ಲಿ ಇಂಗ್ಲೆಂಡ್ ಕ್ರಿಕೆಟ್‌ನ ಪ್ರಮುಖ ಆಟಗಾರನಾಗಿ ಬೆಳೆಯುವ ನಿರೀಕ್ಷೆ ಮೂಡಿಸಿದ್ದಾರೆ.

ಕ್ರಿಕೆಟ್ ಬಿಕ್ಕಟ್ಟು ಶೀಘ್ರ ಬಗೆಹರಿಸಲು ಬಾಂಗ್ಲಾದೇಶ ಪ್ರಯತ್ನ; ಭಾರತ ವಿರುದ್ಧದ ಸರಣಿ ಆಯೋಜನೆಗೆ ಮಾತುಕತೆ

0

ನವದೆಹಲಿ: ಭಾರತದ ಜೊತೆಗಿನ ಕ್ರಿಕೆಟ್ ಸಂಬಂಧವನ್ನು ಮತ್ತೆ ಸಹಜ ಸ್ಥಿತಿಗೆ ತರುವ ನಿಟ್ಟಿನಲ್ಲಿ ಬಾಂಗ್ಲಾದೇಶ ಪ್ರಯತ್ನ ಆರಂಭಿಸಿದೆ. ಉಭಯ ದೇಶಗಳ ನಡುವಿನ ಬಿಕ್ಕಟ್ಟನ್ನು ಬಗೆಹರಿಸಿ, ದ್ವಿಪಕ್ಷೀಯ ಕ್ರಿಕೆಟ್ ಸರಣಿಯನ್ನು ಆಯೋಜಿಸುವ ಕುರಿತು ಮಾತುಕತೆ ನಡೆಯುತ್ತಿದೆ ಎಂದು ಬಾಂಗ್ಲಾದೇಶದ ಕ್ರೀಡಾ ಸಚಿವ ಅಮೀನುಲ್ ಹಕ್ ತಿಳಿಸಿದ್ದಾರೆ.

ಕ್ರಿಕೆಟ್‌ಗೆ ಸಂಬಂಧಿಸಿದಂತೆ ಭಾರತ ಮತ್ತು ಬಾಂಗ್ಲಾದೇಶ ನಡುವೆ ಉಂಟಾಗಿರುವ ಬಿಕ್ಕಟ್ಟನ್ನು ಶೀಘ್ರವಾಗಿ ಪರಿಹರಿಸುವ ಉದ್ದೇಶ ಹೊಂದಿರುವುದಾಗಿ ಅಮೀನುಲ್ ಹಕ್ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಬಾಂಗ್ಲಾದೇಶದ ಪ್ರಧಾನಿ ತಾರಿಕ್ ರೆಹಮಾನ್ ಅವರು ಭಾರತೀಯ ಹೈಕಮಿಷನರ್ ಜೊತೆ ಮಾತುಕತೆ ನಡೆಸುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.

“ಕ್ರಿಕೆಟ್ ಕುರಿತು ಮಾತುಕತೆ ನಡೆಯುತ್ತಿದೆ. ಕ್ರಿಕೆಟ್ ವಿಶ್ವಕಪ್‌ಗೆ ಸಂಬಂಧಿಸಿದಂತೆ ಉಂಟಾಗಿರುವ ಬಿಕ್ಕಟ್ಟನ್ನು ತ್ವರಿತವಾಗಿ ಬಗೆಹರಿಸಲು ನಾವು ಬಯಸುತ್ತೇವೆ. ಭಾರತೀಯ ಹೈಕಮಿಷನರ್ ಅವರು ಪ್ರಧಾನಿಯನ್ನು ಭೇಟಿಯಾಗಿದ್ದಾರೆ. ವಿದೇಶಾಂಗ ಸಚಿವರು ಹಾಗೂ ರಾಜ್ಯ ಸಚಿವರೊಂದಿಗೂ ಮಾತುಕತೆ ನಡೆಸಲಾಗಿದೆ” ಎಂದು ಅಮೀನುಲ್ ಹಕ್ ಹೇಳಿದ್ದಾರೆ.

ಭಾರತ ತಂಡ 2025ರ ಆಗಸ್ಟ್‌ನಲ್ಲಿ ಬಾಂಗ್ಲಾದೇಶ ಪ್ರವಾಸ ಕೈಗೊಳ್ಳಬೇಕಿತ್ತು. ಈ ಪ್ರವಾಸದಲ್ಲಿ ಮೂರು ಏಕದಿನ ಹಾಗೂ ಮೂರು ಟಿ20 ಪಂದ್ಯಗಳನ್ನು ಆಡಲು ವೇಳಾಪಟ್ಟಿ ನಿಗದಿಯಾಗಿತ್ತು. ಆದರೆ 2025ರ ಜುಲೈನಲ್ಲಿ ಉಭಯ ದೇಶಗಳ ನಡುವಿನ ಸಂಬಂಧ ಹದಗೆಟ್ಟ ಹಿನ್ನೆಲೆಯಲ್ಲಿ ಸರಣಿಯನ್ನು ಮುಂದೂಡಲಾಗಿತ್ತು.

ಇದಾದ ಬಳಿಕ ಟಿ20 ವಿಶ್ವಕಪ್‌ನಲ್ಲಿ ಭಾಗವಹಿಸಲು ಬಾಂಗ್ಲಾದೇಶ ತಂಡ ಭಾರತಕ್ಕೆ ಆಗಮಿಸಿರಲಿಲ್ಲ. ಇದೀಗ ಉಭಯ ದೇಶಗಳ ನಡುವಿನ ಕ್ರಿಕೆಟ್ ಸಂಬಂಧವನ್ನು ಮತ್ತೆ ಸುಧಾರಿಸುವ ಪ್ರಯತ್ನಗಳು ಆರಂಭವಾಗಿದ್ದು, ಮುಂದಿನ ದಿನಗಳಲ್ಲಿ ಭಾರತ-ಬಾಂಗ್ಲಾದೇಶ ನಡುವಿನ ದ್ವಿಪಕ್ಷೀಯ ಸರಣಿಗೆ ವೇದಿಕೆ ಸಿದ್ಧವಾಗಲಿದೆಯೇ ಎಂಬುದು ಕುತೂಹಲ ಮೂಡಿಸಿದೆ.

ಡಿಕೆ ಶಿವಕುಮಾರ್‌ ಸಂಪುಟಕ್ಕೆ ಖಾತೆ ಹಂಚಿಕೆ ಪ್ರಕಟ; ಯಾವ ಸಚಿವರಿಗೆ ಯಾವ ಖಾತೆ? ಇಲ್ಲಿದೆ ಪೂರ್ಣ ಪಟ್ಟಿ

0

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಕಳೆದ ಕೆಲ ದಿನಗಳಿಂದ ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಸಚಿವ ಸಂಪುಟದ ಖಾತೆ ಹಂಚಿಕೆ ಪ್ರಕ್ರಿಯೆಗೆ ಕೊನೆಗೂ ತೆರೆ ಬಿದ್ದಿದೆ. ಆಗಸ್ಟ್ 3ರಂದು ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದ ನಾಯಕರಿಗೆ ಹಲವು ದಿನಗಳ ಕಾಲ ಖಾತೆ ಹಂಚಿಕೆ ಮಾಡದಿರುವುದು ಆಡಳಿತಾರೂಢ ಕಾಂಗ್ರೆಸ್ ವಲಯದಲ್ಲಿ ಚರ್ಚೆಗೆ ಕಾರಣವಾಗಿತ್ತು.

ಇದೀಗ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನೂತನ ಸಚಿವರಿಗೆ ಖಾತೆಗಳನ್ನು ಹಂಚಿಕೆ ಮಾಡಿದ್ದು, ಅಧಿಕೃತ ಆದೇಶ ಹೊರಬೀಳುವುದು ಮಾತ್ರ ಬಾಕಿ ಇದೆ ಎಂದು ತಿಳಿದುಬಂದಿದೆ.

ಖಾತೆ ಹಂಚಿಕೆ ವಿಚಾರವಾಗಿ ಸಚಿವರ ನಡುವೆ ನಡೆದಿದ್ದ ಪೈಪೋಟಿ, ಹಿರಿಯ ನಾಯಕರೊಂದಿಗೆ ನಡೆದ ಚರ್ಚೆಗಳು ಹಾಗೂ ದೆಹಲಿಯಲ್ಲಿ ಪಕ್ಷದ ವರಿಷ್ಠರೊಂದಿಗೆ ನಡೆದ ಸಮಾಲೋಚನೆಗಳ ಬಳಿಕ ಅಂತಿಮ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ ಎನ್ನಲಾಗಿದೆ. ಅನುಭವ, ಪ್ರಾದೇಶಿಕ ಸಮತೋಲನ ಹಾಗೂ ಪಕ್ಷದ ಆಂತರಿಕ ಲೆಕ್ಕಾಚಾರಗಳನ್ನು ಗಮನದಲ್ಲಿಟ್ಟುಕೊಂಡು ಪ್ರಮುಖ ಇಲಾಖೆಗಳ ಜವಾಬ್ದಾರಿಯನ್ನು ಹಂಚಿಕೆ ಮಾಡಲಾಗಿದೆ.

ಯಾರಿಗೆ ಯಾವ ಖಾತೆ?

  • ಚಲುವರಾಯಸ್ವಾಮಿ – ಕೃಷಿ ಇಲಾಖೆ
  • ಎಚ್.ಸಿ. ಬಾಲಕೃಷ್ಣ – ಸಣ್ಣ ನೀರಾವರಿ ಇಲಾಖೆ
  • ಕೆ.ಎಚ್. ಮುನಿಯಪ್ಪ – ಸಾಮಾಜಿಕ ಕಲ್ಯಾಣ ಇಲಾಖೆ
  • ಸಂತೋಷ್ ಲಾಡ್ – ಕಾರ್ಮಿಕ ಇಲಾಖೆ
  • ಬಸವಂತಪ್ಪ – ಬಂದರು ಮತ್ತು ಮೀನುಗಾರಿಕೆ ಇಲಾಖೆ
  • ಮಧು ಬಂಗಾರಪ್ಪ – ಪ್ರಾಥಮಿಕ ಶಿಕ್ಷಣ ಇಲಾಖೆ
  • ಕೆ.ಸಿ. ರಾಯರೆಡ್ಡಿ – ಉನ್ನತ ಶಿಕ್ಷಣ ಇಲಾಖೆ
  • ಬಿ.ಝಡ್. ಜಮೀರ್ ಅಹಮದ್ ಖಾನ್ – ವಸತಿ ಇಲಾಖೆ
  • ಯು.ಟಿ. ಖಾದರ್ – ಆರೋಗ್ಯ, ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ವಕ್ಫ್ ಇಲಾಖೆ
  • ಲಕ್ಷ್ಮಣ್ ಸವದಿ – ಸಹಕಾರ ಇಲಾಖೆ
  • ಡಾ. ಅಜಯ್ ಸಿಂಗ್ – ಅರಣ್ಯ ಇಲಾಖೆ
  • ಎಸ್.ಎಸ್. ಮಲ್ಲಿಕಾರ್ಜುನ – ಗಣಿ ಮತ್ತು ಭೂವಿಜ್ಞಾನ ಇಲಾಖೆ
  • ಪುಟ್ಟರಂಗ ಶೆಟ್ಟಿ – ಪಶು ಸಂಗೋಪನೆ

ಪ್ರಮುಖ ಖಾತೆಗಳ ಮೇಲೆ ಸಚಿವರ ಕಣ್ಣು

ನೂತನ ಸಚಿವರಿಗೆ ಖಾತೆ ಹಂಚಿಕೆ ವಿಳಂಬವಾಗಿದ್ದ ಹಿನ್ನೆಲೆಯಲ್ಲಿ ಹಲವು ನಾಯಕರಲ್ಲಿ ಅಸಮಾಧಾನ ವ್ಯಕ್ತವಾಗಿತ್ತು. ಕೃಷಿ, ಶಿಕ್ಷಣ, ಆರೋಗ್ಯ, ಸಹಕಾರ ಸೇರಿದಂತೆ ಪ್ರಮುಖ ಇಲಾಖೆಗಳ ಜವಾಬ್ದಾರಿ ಪಡೆಯಲು ಸಚಿವರ ನಡುವೆ ಪೈಪೋಟಿ ನಡೆದಿತ್ತು ಎನ್ನಲಾಗಿತ್ತು.

ಹಿರಿಯ ನಾಯಕ ಲಕ್ಷ್ಮಣ್ ಸವದಿ ಅವರಿಗೆ ಸಹಕಾರ ಇಲಾಖೆಯ ಜವಾಬ್ದಾರಿ ನೀಡಲಾಗಿದೆ. ಮಧು ಬಂಗಾರಪ್ಪ ಅವರಿಗೆ ಪ್ರಾಥಮಿಕ ಶಿಕ್ಷಣದಂತಹ ಪ್ರಮುಖ ಇಲಾಖೆ ದೊರೆತಿದೆ. ಯು.ಟಿ. ಖಾದರ್ ಅವರಿಗೆ ಆರೋಗ್ಯ ಇಲಾಖೆಯ ಜೊತೆಗೆ ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ವಕ್ಫ್ ಇಲಾಖೆಯ ಜವಾಬ್ದಾರಿಯನ್ನೂ ನೀಡಲಾಗಿದೆ.

ಇನ್ನು ಚಲುವರಾಯಸ್ವಾಮಿ ಅವರಿಗೆ ಕೃಷಿ ಇಲಾಖೆ ನೀಡಲಾಗಿದ್ದು, ರಾಜ್ಯದ ರೈತರ ಸಮಸ್ಯೆಗಳು, ಕೃಷಿ ವಲಯದ ಅಭಿವೃದ್ಧಿ ಹಾಗೂ ಸರ್ಕಾರದ ಕೃಷಿ ಯೋಜನೆಗಳ ಅನುಷ್ಠಾನದ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ.

ಆತ್ಮಹತ್ಯೆಯಂತೆ ಬಿಂಬಿಸಿ ಅದ್ವೈತ್ ನಾಪತ್ತೆ? 3 ದಿನ ಶೋಧಿಸಿದರೂ ಸಿಗಲಿಲ್ಲ ಒಂದೇ ಒಂದು ಸುಳಿವು!

0

ಬೆಂಗಳೂರು: ಶಿವಗಂಗೆ ಬೆಟ್ಟದಲ್ಲಿ ನಾಪತ್ತೆಯಾಗಿರುವ ಟೆಕ್ಕಿ ಅದ್ವೈತ್ ಉಪಾಧ್ಯಾಯ ಪ್ರಕರಣ ಇದೀಗ ಹಲವು ಅನುಮಾನಗಳಿಗೆ ಕಾರಣವಾಗಿದೆ.

ಆತ್ಮಹತ್ಯೆ ಮಾಡಿಕೊಂಡಿರುವಂತೆ ಬಿಂಬಿಸಿ ಅದ್ವೈತ್ ಉದ್ದೇಶಪೂರ್ವಕವಾಗಿಯೇ ನಾಪತ್ತೆಯಾಗಿದ್ದಾನಾ ಎಂಬ ಅನುಮಾನ ಪೊಲೀಸರಿಗೆ ಮೂಡಿದೆ.

ಕಳೆದ ಮೂರು ದಿನಗಳಿಂದ ಪೊಲೀಸರ ಐದು ತಂಡಗಳು ಶಿವಗಂಗೆ ಬೆಟ್ಟವನ್ನು ಇಂಚಿಂಚಾಗಿ ಪರಿಶೀಲನೆ ನಡೆಸಿವೆ. ಬೆಟ್ಟದ ಹಲವು ಭಾಗಗಳಲ್ಲಿ ವ್ಯಾಪಕ ಶೋಧ ನಡೆಸಿದರೂ, ಇದುವರೆಗೆ ಅದ್ವೈತ್ ಆತ್ಮಹತ್ಯೆ ಮಾಡಿಕೊಂಡಿರುವುದಕ್ಕೆ ಅಥವಾ ಆತನಿಗೆ ಯಾವುದೇ ಅನಾಹುತ ಸಂಭವಿಸಿರುವುದಕ್ಕೆ ಪ್ರಮುಖ ಸುಳಿವು ಪತ್ತೆಯಾಗಿಲ್ಲ ಎನ್ನಲಾಗಿದೆ.

ನಾಪತ್ತೆಯಾಗುವ ಮುನ್ನ ಅದ್ವೈತ್ ಮದುವೆಯಾಗಬೇಕಿದ್ದ ಯುವತಿಗೆ ಶಿವಗಂಗೆ ಬೆಟ್ಟದಿಂದ ಫೋಟೋ ಕಳುಹಿಸಿದ್ದಾನೆ ಎನ್ನಲಾಗಿದೆ. ಆದರೆ ಅದರ ಬಳಿಕ ಯಾವುದೇ ಫೋನ್ ಕಾಲ್ ಅಥವಾ ಮೆಸೇಜ್ ಮಾಡಿಲ್ಲ.

ಹೀಗಾಗಿ ಆತ ಉದ್ದೇಶಪೂರ್ವಕವಾಗಿಯೇ ಮೊಬೈಲ್‌ನ್ನು ಬೆಟ್ಟದಲ್ಲಿ ಬಿಟ್ಟು ಹೋಗಿದ್ದಾನಾ ಎಂಬ ಅನುಮಾನ ಪೊಲೀಸರಿಗೆ ಮೂಡಿದೆ. ಮೊಬೈಲ್ ಪತ್ತೆಯಾದ ಸ್ಥಳ ಹಾಗೂ ಅದ್ವೈತ್ ಕೊನೆಯದಾಗಿ ನಡೆಸಿದ ಚಟುವಟಿಕೆಗಳ ಬಗ್ಗೆಯೂ ತನಿಖೆ ನಡೆಯುತ್ತಿದೆ.

ಇದಕ್ಕೂ ಮುನ್ನ ಅದ್ವೈತ್ ಮನೆಯ ಲ್ಯಾಪ್‌ಟಾಪ್‌ನಲ್ಲಿ ಶಿವಗಂಗೆ ಬೆಟ್ಟ ಹಾಗೂ ಶಾಂತಲಾ ಡ್ರಾಪ್‌ಗೆ ಸಂಬಂಧಿಸಿದ ಮಾಹಿತಿಯನ್ನು ಸರ್ಚ್ ಮಾಡಿರುವುದು ಪೊಲೀಸರ ಗಮನಕ್ಕೆ ಬಂದಿದೆ ಎನ್ನಲಾಗಿದೆ.

ಜೊತೆಗೆ ChatGPTಯಲ್ಲಿ ಮಾಡಿದ್ದ ಕೆಲವು ಸರ್ಚ್ ಹಿಸ್ಟರಿಯೂ ಹಾಗೆಯೇ ಉಳಿದಿರುವುದು ತನಿಖಾಧಿಕಾರಿಗಳ ಅನುಮಾನಕ್ಕೆ ಕಾರಣವಾಗಿದೆ. ಈ ಸರ್ಚ್‌ಗಳು ಅದ್ವೈತ್ ನಾಪತ್ತೆಗೂ ಮುನ್ನ ನಡೆಸಿದ್ದ ಸಿದ್ಧತೆಯ ಭಾಗವಾಗಿದ್ದವೆಯೇ ಎಂಬುದನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.

ಅದ್ವೈತ್ ಟೆಕ್ಕಿಯಾಗಿದ್ದು, ತಾಂತ್ರಿಕವಾಗಿ ಪರಿಣತಿ ಹೊಂದಿದ್ದ ಎನ್ನಲಾಗಿದೆ. ಹೀಗಾಗಿ ತನ್ನ ಮೊಬೈಲ್ ಸೇರಿದಂತೆ ಕೆಲವು ಸಾಕ್ಷ್ಯಗಳನ್ನು ಉದ್ದೇಶಪೂರ್ವಕವಾಗಿ ಬಿಟ್ಟುಹೋಗುವ ರೀತಿಯಲ್ಲಿ ಯಾವುದೇ ಯೋಜನೆ ರೂಪಿಸಿದ್ದಾನಾ ಎಂಬ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇನ್ನು ಅದ್ವೈತ್‌ನ ವೈಯಕ್ತಿಕ ಹಿನ್ನೆಲೆಯನ್ನೂ ಪೊಲೀಸರು ಪರಿಶೀಲಿಸಿದ್ದು, ಹಲವು ಯುವತಿಯರೊಂದಿಗೆ ಆತ ಸಲುಗೆಯಿಂದ ಸಂಪರ್ಕ ಹೊಂದಿದ್ದ ಬಗ್ಗೆ ಮಾಹಿತಿ ಲಭ್ಯವಾಗಿದೆ ಎನ್ನಲಾಗಿದೆ. ಈ ಸಂಪರ್ಕಗಳು ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದವೆಯೇ ಎಂಬುದನ್ನು ಕೂಡ ತನಿಖೆ ಮಾಡಲಾಗುತ್ತಿದೆ.

ಅದ್ವೈತ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬ ಯಾವುದೇ ಖಚಿತ ಸಾಕ್ಷ್ಯ ಈವರೆಗೆ ಸಿಕ್ಕಿಲ್ಲ. ಮೂರು ದಿನಗಳ ಕಾಲ ಐದು ಪೊಲೀಸ್ ತಂಡಗಳು ಬೆಟ್ಟದ ವಿವಿಧ ಭಾಗಗಳಲ್ಲಿ ಶೋಧ ನಡೆಸಿದರೂ ಮೃತದೇಹ ಅಥವಾ ಆತ್ಮಹತ್ಯೆಗೆ ಸಂಬಂಧಿಸಿದ ಪ್ರಮುಖ ಸುಳಿವು ಪತ್ತೆಯಾಗದಿರುವುದು ಪೊಲೀಸರ ಮುಂದಿರುವ ಪ್ರಮುಖ ಪ್ರಶ್ನೆಯಾಗಿದೆ.

ಹೀಗಾಗಿ ಆತ ಮೊದಲೇ ಯೋಜನೆ ರೂಪಿಸಿಕೊಂಡು ಉದ್ದೇಶಪೂರ್ವಕವಾಗಿ ನಾಪತ್ತೆಯಾಗಿದ್ದಾನಾ ಎಂಬ ಅನುಮಾನ ಮತ್ತಷ್ಟು ಬಲಗೊಂಡಿದೆ ಎನ್ನಲಾಗಿದೆ.

ಸದ್ಯ ಅದ್ವೈತ್ ನಾಪತ್ತೆಯಾಗಿರುವ ಹಿಂದಿನ ನಿಜವಾದ ಕಾರಣವೇನು ಎಂಬುದನ್ನು ಪತ್ತೆಹಚ್ಚಲು ಪೊಲೀಸರು ಹಲವು ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ. ಮೊಬೈಲ್‌, ಲ್ಯಾಪ್‌ಟಾಪ್‌ ಹಾಗೂ ಇತರ ಡಿಜಿಟಲ್ ಸಾಕ್ಷ್ಯಗಳ ಪರಿಶೀಲನೆ ಮುಂದುವರಿದಿದ್ದು, ಮಹತ್ವದ ಸುಳಿವು ಸಿಕ್ಕರೆ ಮುಂದಿನ ಒಂದೆರಡು ದಿನಗಳಲ್ಲಿ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಗುವ ಸಾಧ್ಯತೆ ಇದೆ.