ನವದೆಹಲಿ: ನೇಪಾಳದ ಭೀಕರ ಜಲಪ್ರಳಯದ ಬಳಿಕ ನಾಪತ್ತೆಯಾಗಿರುವ ಅಪ್ಪ-ಅಮ್ಮನನ್ನು ನೆನೆದು ಮಗಳು ಕಣ್ಣೀರಿಟ್ಟಿದ್ದಾರೆ. ನೇಪಾಳ-ಟಿಬೆಟ್ ಗಡಿಯಲ್ಲಿ ಸಂಭವಿಸಿದ ಹಠಾತ್ ಪ್ರವಾಹ ಮತ್ತು ಭೂಕುಸಿತದ ನಂತರ ಕಾಣೆಯಾದ ಸುಮಾರು 1,400 ಜನರಲ್ಲಿ ದೀಪಕ್ ಮತ್ತು ಅವರ ಪತ್ನಿ ಮಧು ಅಹುಜಾ ಕೂಡ ಸೇರಿದ್ದಾರೆ.
ಅಮೆರಿಕದ ನಾಗರಿಕರೂ ಭಾರತದ ಸಾಗರೋತ್ತರ ನಾಗರಿಕರು (OCI) ಕಾರ್ಡ್ ಹೊಂದಿದ್ದ ಈ ದಂಪತಿ, ದೀಪಕ್ ಅವರ 60ನೇ ಹುಟ್ಟುಹಬ್ಬದಂದು ಪವಿತ್ರ ಕೈಲಾಸ ಮಾನಸ ಸರೋವರ ಯಾತ್ರೆ ಕೈಗೊಳ್ಳುವ ಬಹುನಿರೀಕ್ಷಿತ ಆಸೆ ಪೂರೈಸಲು ಅಮೆರಿಕದಿಂದ ಪ್ರಯಾಣ ಬೆಳೆಸಿದ್ದರು.
ಇಶಾ ಸೇಕ್ರೆಡ್ ವಾಕ್ಸ್ ಮತ್ತು ಟ್ರೆಕ್ಕರ್ಸ್ ಸೊಸೈಟಿಯೊಂದಿಗೆ ಗ್ರೂಪ್ ಎಸ್3 ಅಡಿಯಲ್ಲಿ ಟಿಬೆಟ್ನ ಸಾಗಾ ತಲುಪಿದ್ದ ಅವರು, ಅಲ್ಲಿ ತಮ್ಮ ಗ್ರೂಪ್ನೊಂದಿಗೆ ಸದ್ಗುರುಗಳನ್ನು ಭೇಟಿಯಾಗಿದ್ದರು. ನಂತರ ಅಮೆರಿಕಗೆ ವಾಪಸ್ ಆಗಲು ಗಡಿಯ ಕಡೆಗೆ ದಕ್ಷಿಣಕ್ಕೆ ಹೋಗುತ್ತಿದ್ದಾಗ ಹವಾಮಾನ ಪರಿಸ್ಥಿತಿ ಅವರ ಪ್ರಯಾಣಕ್ಕೆ ಅಡ್ಡಿಪಡಿಸಿತು.
ಗೈರಾಂಗ್ ಬಂದರಿನ ವಲಸೆ ಪೋಸ್ಟ್ನಲ್ಲಿ ಸ್ಥಳೀಯ ಸಮಯ ಬೆಳಗ್ಗೆ 9 ಗಂಟೆ ಸುಮಾರಿಗೆ ಅಹುಜಾ ಕುಟುಂಬವನ್ನು ಕೊನೆಯದಾಗಿ ಪತ್ತೆಹಚ್ಚಲಾಗಿತ್ತು. ಕೆಲವು ನಿಮಿಷಗಳ ನಂತರ ಧಾರಾಕಾರ ಮಳೆ ಮತ್ತು ಹಿಮನದಿ ಸರೋವರದ ಸ್ಫೋಟದಿಂದ ಉಂಟಾದ ಬೃಹತ್ ಪ್ರವಾಹ ಆ ಪ್ರದೇಶವನ್ನು ಆವರಿಸಿ, ರಸ್ತೆಗಳು, ವಿದ್ಯುತ್ ಮತ್ತು ದೂರಸಂಪರ್ಕ ಕಡಿತಗೊಂಡಿತು.
ತಮ್ಮ ಪೋಷಕರು ಗಡಿ ಠಾಣೆಯ ಚೀನಾದ ಬದಿಯಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಭಾವಿಸಿರುವ ಪುತ್ರಿಯರಾದ ಶ್ರೇಯಾ ಮತ್ತು ಆಶ್ನಾ, ಅಂತರರಾಷ್ಟ್ರೀಯ ರಾಯಭಾರ ಕಚೇರಿಗಳೊಂದಿಗೆ ನೇರ ಸಂಪರ್ಕದಲ್ಲಿದ್ದಾರೆ. ಅಪ್ಪ-ಅಮ್ಮ ಕೈಲಾಸ ಯಾತ್ರೆಯ ಕೊನೆಯ ಹಂತದಲ್ಲಿ, ಮನೆಗೆ ಮರಳಲು ಸಾಗಾವನ್ನು ಬಿಡುತ್ತಿದ್ದರು ಎಂದೂ, ಇಶಾ ಫೌಂಡೇಶನ್ ಪ್ರಕಾರ ಅವರು ನೇಪಾಳ ಸ್ಥಳೀಯ ಸಮಯ ಬೆಳಗ್ಗೆ 9 ಗಂಟೆಗೆ ಟಿಬೆಟ್-ನೇಪಾಳ ಗಡಿ ತಲುಪಿದ್ದರೆಂದೂ, ಕೊನೆಯದಾಗಿ ಗೈರಾಂಗ್ ಬಂದರು ಗಡಿ ದಾಟುವ ಕಚೇರಿಯಲ್ಲಿದ್ದ ಕೆಲವೇ ನಿಮಿಷಗಳ ನಂತರ ಆ ಕಚೇರಿಗೆ ಪ್ರವಾಹ ಅಪ್ಪಳಿಸಿತು ಎಂದು ಶ್ರೇಯಾ ಕಣ್ಣೀರಿಟ್ಟಿದ್ದಾರೆ.
ಅಂದು ಪೋಷಕರೊಂದಿಗೆ ಮಾತನಾಡಿ ನಿದ್ರೆಗೆ ಜಾರಿದ್ದೆವು, ಪ್ರವಾಹದ ಸುದ್ದಿ ಕೇಳಿ ಎಚ್ಚರವಾದೆವು ಎಂದ ಶ್ರೇಯಾ, ಪೋಷಕರು ಇಶಾ ಫೌಂಡೇಶನ್ನೊಂದಿಗೆ ಇರುವುದರಿಂದ ಅವರು ಪ್ರವಾಹಕ್ಕೆ ಸಿಲುಕಿದ ಗುಂಪಿನ ಭಾಗವಾಗಿದ್ದಾರೆ ಎಂದು ಫೌಂಡೇಶನ್ ಇಮೇಲ್ ಮೂಲಕ ತಿಳಿಸಿತು ಎಂದು ಹೇಳಿದ್ದಾರೆ.

