ವಿಜಯಸಾಕ್ಷಿ ಸುದ್ದಿ, ಗದಗ: ಜಾತ್ರೆಗಳು ಪರಸ್ಪರ ಪ್ರೀತಿ, ಸೌಹಾರ್ದತೆ ಹಾಗೂ ಏಕತೆಯನ್ನು ಬೆಸೆಯುವ ಹಬ್ಬಗಳಾಗಿದ್ದು, ವಿಶೇಷವಾಗಿ ಗ್ರಾಮ ದೇವತೆಗಳ ಜಾತ್ರೆಗಳು ಸಡಗರ–ಸಂಭ್ರಮದ ಪ್ರತೀಕವಾಗಿವೆ. ಸದ್ಗುಣಗಳ ಬೆಳವಣಿಗೆ ಹಾಗೂ ದುರ್ಗುಣಗಳ ಅವನತಿಯೇ ಜಾತ್ರೆಗಳ ಪ್ರಮುಖ ಉದ್ದೇಶವಾಗಿದ್ದು, ಭಕ್ತರು ಜಾತ್ರೆಯ ನಿಜವಾದ ಮೌಲ್ಯಗಳನ್ನು ಅರಿತು ಭಾಗವಹಿಸಬೇಕು ಎಂದು ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ನಗರದ ಒಕ್ಕಲಗೇರಿ ಓಣಿಯ ಉಸುಗಿನಕಟ್ಟಿ ಬಳಿ ಗದಗ-ಬೆಟಗೇರಿ ಗ್ರಾಮ ದೇವತೆಗಳಾದ ಶ್ರೀ ದ್ಯಾಮವ್ವ ಹಾಗೂ ಶ್ರೀ ದುರುಗಮ್ಮ ದೇವಿಯರ ಹರಿ ಜಾತ್ರೋತ್ಸವದ ನಾಲ್ಕನೇ ದಿನದ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಗ್ರಾಮಗಳ ರಕ್ಷಣೆ, ಕಳ್ಳಕಾಕರ ಹಾವಳಿ ತಡೆ ಹಾಗೂ ರೋಗ-ರುಜಿನಗಳಿಂದ ಜನರನ್ನು ರಕ್ಷಿಸುವ ಉದ್ದೇಶದಿಂದ ಹಿಂದಿನ ಕಾಲದಲ್ಲಿ ಜಾತ್ರೆಗಳು ಆರಂಭಗೊಂಡಿದ್ದವು. ಆಧುನಿಕ ಕಾಲಘಟ್ಟದಲ್ಲಿ ಅವುಗಳಿಗೆ ವೈಚಾರಿಕ ಹಾಗೂ ವೈಜ್ಞಾನಿಕ ದೃಷ್ಟಿಕೋನ ದೊರೆತಿದ್ದು, ಜಾತ್ರೆಗಳು ಹೊಸ ಸ್ವರೂಪ ಪಡೆದುಕೊಂಡಿವೆ ಎಂದರು.
ಹಿಂದೆ ಗ್ರಾಮ ದೇವತೆಗಳನ್ನು ವಿವಿಧ ಕುತಂತ್ರ ವಿದ್ಯೆಗಳ ಮೂಲಕ ಉಗ್ರ ಸ್ವರೂಪಕ್ಕೆ ತರುವ ಆಚರಣೆಗಳಿದ್ದವು. ಮಧುರೈ ಮೀನಾಕ್ಷಿ ಹಾಗೂ ಕೊಲ್ಲೂರು ಮೂಕಾಂಬಿಕೆ ದೇವಿಯರು ಉಗ್ರ ಸ್ವರೂಪದಲ್ಲಿದ್ದ ಸಂದರ್ಭದಲ್ಲಿ ಶ್ರೀ ಶಂಕರಾಚಾರ್ಯರು ಭಕ್ತಿ ಹಾಗೂ ಜ್ಞಾನದ ಮೂಲಕ ದೇವಿಯರನ್ನು ಸಮಾಧಾನಗೊಳಿಸಿ ಭಕ್ತರನ್ನು ಭಯಮುಕ್ತರನ್ನಾಗಿಸಿದ ಸಂಗತಿಗಳು ಹಲವು ಗ್ರಂಥಗಳಲ್ಲಿ ಉಲ್ಲೇಖವಾಗಿವೆ ಎಂದು ಹೇಳಿದರು.
ಜಾತ್ರೆಗಳು ಭಕ್ತಿ, ಸಡಗರ, ಸಂಭ್ರಮದ ಜೊತೆಗೆ ಮಾನವೀಯ ಮೌಲ್ಯಗಳನ್ನು ಬೆಳೆಸುವ ವೇದಿಕೆಗಳಾಗಿವೆ. ಎಲ್ಲರ ಒಗ್ಗೂಡುವಿಕೆ ಹಾಗೂ ಒಕ್ಕಟ್ಟೇ ಜಾತ್ರೆಗಳ ಯಶಸ್ಸಿಗೆ ಪ್ರಮುಖ ಕಾರಣ. ಆದ್ದರಿಂದ ಸದ್ಭಕ್ತರು ಜಾತ್ರೆಗಳ ಹಿಂದಿರುವ ಮಹತ್ವವನ್ನು ಅರಿತು ಅದರಂತೆ ನಡೆದುಕೊಳ್ಳಬೇಕು ಎಂದರು.
ಬದುಕಿನಲ್ಲಿ ದೇವಾಲಯ ಸಂಸ್ಕೃತಿ ಹಾಗೂ ಮಠದ ಸಂಸ್ಕೃತಿ ಎಂಬ ಎರಡು ಪ್ರಮುಖ ಪರಂಪರೆಗಳಿವೆ. ದೇವಾಲಯ ಸಂಸ್ಕೃತಿಯಲ್ಲಿ ನಮಗೆ ಇಷ್ಟವಾದ ದೇವರನ್ನು ಪ್ರತಿಷ್ಠಾಪಿಸಿ ಆರಾಧಿಸುತ್ತೇವೆ. ಮಠದ ಸಂಸ್ಕೃತಿಯಲ್ಲಿ ಮಠಾಧೀಶರ ಜ್ಞಾನ ಹಾಗೂ ಅವರು ನಡೆಸಿಕೊಂಡು ಬರುವ ಪರಂಪರೆಗೆ ಅನುಗುಣವಾಗಿ ನಡೆಯುತ್ತೇವೆ. ಈ ಎರಡೂ ಸಂಸ್ಕೃತಿಗಳು ಬದುಕನ್ನು ಸುಧಾರಿಸಿ ಉನ್ನತಿಗೆ ಕೊಂಡೊಯ್ಯುವ ಮಾರ್ಗಗಳಾಗಿವೆ ಎಂದು ಶ್ರೀಗಳು ವಿವರಿಸಿದರು.
ಜಾತ್ರಾ ಸಮಿತಿ ಕಾರ್ಯಾಧ್ಯಕ್ಷ ಫಕ್ಕೀರಪ್ಪ ಹೆಬಸೂರ ಮಾತನಾಡಿ, ಸುಮಾರು ಎಂಟು ದಿನಗಳ ಕಾಲ ನಡೆಯುವ ಹರಿ ಜಾತ್ರೆಯಲ್ಲಿ ಸದ್ಭಕ್ತರ ಸಹಭಾಗಿತ್ವ, ಮಹಿಳೆಯರ ಸಮರ್ಪಣೆ ಹಾಗೂ ಒಗ್ಗಟ್ಟು ವಿಶೇಷವಾಗಿದೆ. ಮುಂದಿನ ದಿನಗಳಲ್ಲಿ ಜಾತ್ರೆಯನ್ನು ಮತ್ತಷ್ಟು ವಿಜೃಂಭಣೆಯಿಂದ ನಡೆಸಲು ಎಲ್ಲರ ಸಹಕಾರ ಅಗತ್ಯ ಎಂದರು.
ಶ್ರೀ ಫಕ್ಕೀರೇಶ್ವರ ಮಹಾಸ್ವಾಮಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಲೆಕ್ಕ ಪರಿಶೋಧಕ ಶಂಕ್ರಪ್ಪ ಕನೋಜ, ಐ.ಎಸ್. ಪೂಜಾರ, ವಸಂತ ಪಡಗದ, ಕೃಷ್ಣಾಪುರ, ಅಬ್ದುಲ್ ಮುನಾಫ ಮುಲ್ಲಾ, ನಗರಸಭಾ ಸದಸ್ಯ ಮಹಾಂತೇಶ ನಲವಡಿ ಸೇರಿದಂತೆ ಹಲವು ಗಣ್ಯರು ಮಾತನಾಡಿ, ಶ್ರೀ ದ್ಯಾಮವ್ವ ಹಾಗೂ ಶ್ರೀ ದುರುಗಮ್ಮ ದೇವಿಯರ ಹರಿ ಜಾತ್ರೋತ್ಸವದಿಂದ ಗದುಗಿನ ಕೀರ್ತಿ ಹೆಚ್ಚಿದೆ. ಈ ಭಾಗದ ಒಗ್ಗಟ್ಟು ಪ್ರೇರಣಾದಾಯಕವಾಗಿದ್ದು, ರಚನಾತ್ಮಕ ಕಾರ್ಯಗಳಿಗೆ ದಾನಿಗಳು ಸಹಕಾರ ನೀಡುವ ಸಂದೇಶವನ್ನು ಜಾತ್ರೆ ಸಾರುತ್ತಿದೆ. ಇಂತಹ ಚಟುವಟಿಕೆಗಳು ನಿರಂತರವಾಗಿ ನಡೆದರೆ ಯುವ ಪೀಳಿಗೆಗೆ ಸೂಕ್ತ ಮಾರ್ಗದರ್ಶನ ದೊರೆಯಲಿದೆ ಎಂದರು.
ಗದಗ ಆಧ್ಯಾತ್ಮ ವಿದ್ಯಾಶ್ರಮದ ಶ್ರೀ ನೀಲಮ್ಮತಾಯಿ ಅಸುಂಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಟ್ರಸ್ಟ್ ಕಮಿಟಿ ಅಧ್ಯಕ್ಷ ಕೊಟ್ರಪ್ಪ ಕಮತರ ಅಧ್ಯಕ್ಷತೆ ವಹಿಸಿದ್ದರು.
ಪ್ರೀತಿ ವಿಶ್ವನಾಥಯ್ಯ ಶಿವಪ್ಪಯ್ಯನಮಠ, ಎಚ್.ಕೆ. ಮುಲ್ಲಾ, ಎಫ್.ವಿ. ಮರಿಗೌಡ್ರ, ಚಿದಾನಂದ ಕ್ಷತ್ರಿಯ, ವಿನೋದ ಮರಬದ, ಪ್ರಭು ಕಲಬಂಡಿ, ಬಸವರಾಜ ಗೂಳಪ್ಪ ಹೆರಕಲ್, ಸಂತೋಷ ಕಬಾಡಿ, ಶಂಕರ ಶಿದ್ದಿಂಗ, ಸೀತಾರಾಮ ಕದಾಂಪೂರ, ರಾಮಣ್ಣ ಬರಬಣ್ಣವರ, ಅಶ್ವಿನಿ ಅಭಿಷೇಕ ಕುಂದಗೋಳ, ಅಭಿಷೇಕ ಕುಂದಗೋಳ, ವಿರುಪಾಕ್ಷಪ್ಪ ಅಕ್ಕಿ, ಈಶ್ವರಪ್ಪ ಖ್ಯಾಡದ, ಮುತ್ತು ರೋಣದ, ಶೈಲಾ ತುಪ್ಪದ, ಶಿವಾನಂದ ಹೂಗಾರ, ನವೀನ ನಾಲ್ವಾಡ ಸೇರಿದಂತೆ ಹಲವಾರು ಗಣ್ಯರು, ದಾನಿಗಳು, ಯುವಕರು ಹಾಗೂ ಹಿರಿಯರು ಉಪಸ್ಥಿತರಿದ್ದರು.
ವಾಣಿ ಅಸುಂಡಿ ಸ್ವಾಗತಿಸಿದರು. ಬಾಹುಬಲಿ ಜೈನರ ನಿರೂಪಿಸಿದರು. ನಂತರ ಶಂಕ್ರಣ್ಣ ಸಂಕಣ್ಣವರ ನೇತೃತ್ವದ ಅರುಣೋದಯ ಕಲಾತಂಡದಿಂದ ಜೋಗತಿ ನೃತ್ಯ ಪ್ರದರ್ಶನ ನಡೆಯಿತು.
ಜಾತ್ರೆಯ ಸಂಭ್ರಮ ಕೇವಲ ಆಚರಣೆಗೆ ಸೀಮಿತವಾಗದೆ, ನಮ್ಮೊಳಗಿನ ಸದ್ಗುಣಗಳನ್ನು ಬೆಳೆಸುವ ಹಾಗೂ ದುರ್ಗುಣಗಳನ್ನು ದೂರ ಮಾಡುವ ಸಂಕಲ್ಪವಾಗಬೇಕು. ಎಲ್ಲರ ಒಗ್ಗಟ್ಟು, ಪ್ರೀತಿ ಮತ್ತು ಸೌಹಾರ್ದತೆಯೇ ಜಾತ್ರೆಯ ನಿಜವಾದ ಯಶಸ್ಸು.
— ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ

