Home Blog

ತರಕಾರಿ ಬೆಲೆ ಸೆಂಚುರಿ ಹೊಡೆಯುತ್ತಾ..? ಬೆಂಗಳೂರಲ್ಲಿ ಗ್ರಾಹಕರ ಜೇಬಿಗೆ ಬಿತ್ತು ಬೆಲೆ ಏರಿಕೆಯ ಬಿಸಿ!

ಬೆಂಗಳೂರು: ಮುಂಗಾರು ಮಳೆ ಕೈಕೊಟ್ಟ ಪರಿಣಾಮ ರಾಜ್ಯದಲ್ಲಿ ತರಕಾರಿ ಬೆಲೆಗಳು ನಿಧಾನವಾಗಿ ಏರಿಕೆಯಾಗುತ್ತಿವೆ.

30-40 ರೂ.ಗೆ ಸಿಗುತ್ತಿದ್ದ ಹಲವು ತರಕಾರಿಗಳ ದರ ಇದೀಗ 60-80 ರೂ.ಗೆ ತಲುಪಿದ್ದು, ಗ್ರಾಹಕರ ಜೇಬಿಗೆ ಹೊರೆ ಹೆಚ್ಚಾಗಿದೆ. ಬೆಲೆ ಏರಿಕೆಯಿಂದ ತರಕಾರಿ ಖರೀದಿ ಪ್ರಮಾಣವೂ ಕಡಿಮೆಯಾಗುತ್ತಿದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.

ಬೆಂಗಳೂರಿನ ಹೋಲ್‌ಸೇಲ್ ಹಾಗೂ ರಿಟೇಲ್ ಮಾರುಕಟ್ಟೆಯಲ್ಲಿ ತರಕಾರಿಗಳ ದರ ಹೀಗಿದೆ:

  • ಶುಂಠಿ: ₹120–130
  • ಬೆಳ್ಳುಳ್ಳಿ: ₹230–250
  • ಬೀನ್ಸ್: ₹100–110
  • ಹಸಿಬಟಾಣಿ: ₹80–90
  • ಹಸಿಮೆಣಸಿನಕಾಯಿ: ₹80–90
  • ಈರುಳ್ಳಿ: ₹50–70
  • ನುಗ್ಗೆಕಾಯಿ: ₹90–100
  • ಟೊಮೇಟೊ: ₹25–30
  • ಕ್ಯಾರೆಟ್: ₹60–70
  • ಬೀಟ್‌ರೂಟ್: ₹60–70
  • ಕ್ಯಾಪ್ಸಿಕಂ: ₹70–80
  • ಹೀರೆಕಾಯಿ: ₹60–80
  • ಬೆಂಡೆಕಾಯಿ: ₹50–60
  • ಬದನೆಕಾಯಿ: ₹50–60
  • ಹಾಗಲಕಾಯಿ: ₹40–50
  • ಹೂಕೋಸು: ₹40–50
  • ಎಲೆಕೋಸು: ₹50–60
  • ಮೂಲಂಗಿ: ₹40–50

ಒಂದು ಕೆಜಿ ಬದಲು ಅರ್ಧ ಕೆಜಿ ಖರೀದಿ:

ತರಕಾರಿ ಬೆಲೆ ಹೆಚ್ಚಳದಿಂದ ಗ್ರಾಹಕರು ಒಂದು ಕೆಜಿ ಖರೀದಿಸುವ ಬದಲು ಅರ್ಧ ಕೆಜಿ ಅಥವಾ ಕಾಲು ಕೆಜಿಗೆ ಸೀಮಿತವಾಗುತ್ತಿದ್ದಾರೆ. ದಿನನಿತ್ಯದ ಅಡುಗೆಗೆ ತರಕಾರಿ ಅಗತ್ಯವಿದ್ದರೂ, ಬೆಲೆ ಹೆಚ್ಚಿರುವುದರಿಂದ ಖರೀದಿಸಲು ಕಷ್ಟವಾಗುತ್ತಿದೆ ಎಂದು ಗ್ರಾಹಕರು ಅಳಲು ತೋಡಿಕೊಂಡಿದ್ದಾರೆ.

ಮನೆ ಸಮೀಪದ ತರಕಾರಿ ಅಂಗಡಿಗಳಿಗಿಂತ ಕೆ.ಆರ್. ಮಾರುಕಟ್ಟೆಯಲ್ಲಿ ಕೆಲವು ತರಕಾರಿಗಳು ಕಡಿಮೆ ಬೆಲೆಗೆ ಸಿಗುತ್ತಿವೆ. ಹೀಗಾಗಿ ತಾಜಾ ತರಕಾರಿ ಕಡಿಮೆ ದರದಲ್ಲಿ ಸಿಗುತ್ತದೆ ಎಂಬ ಕಾರಣಕ್ಕೆ ದೂರದಿಂದಲೂ ಗ್ರಾಹಕರು ಕೆ.ಆರ್. ಮಾರುಕಟ್ಟೆಗೆ ಬರುತ್ತಿದ್ದಾರೆ.

ರೈತರು ಮತ್ತು ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ:

ಮುಂಗಾರು ಮಳೆಯಲ್ಲಿನ ವ್ಯತ್ಯಾಸದಿಂದ ತರಕಾರಿ ಬೆಳೆ ಮೇಲೆ ಪರಿಣಾಮ ಬೀರಿದ್ದು, ಮಾರುಕಟ್ಟೆಗೆ ಪೂರೈಕೆ ಕಡಿಮೆಯಾದರೆ ದರ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ. ಈಗಾಗಲೇ ಕೆಲವು ತರಕಾರಿಗಳ ಬೆಲೆ ₹100ರ ಗಡಿ ತಲುಪಿದ್ದು, ಬೆಲೆ ಏರಿಕೆ ಗ್ರಾಹಕರಿಗೆ ನುಂಗಲಾರದ ತುತ್ತಾಗಿದೆ.

ಒಟ್ಟಿನಲ್ಲಿ ತರಕಾರಿ ಬೆಲೆ ಏರಿಕೆಯಿಂದ ಒಂದೆಡೆ ರೈತರು ಸಂಕಷ್ಟದಲ್ಲಿದ್ದರೆ, ಮತ್ತೊಂದೆಡೆ ಗ್ರಾಹಕರು ಹೆಚ್ಚಿದ ದರಕ್ಕೆ ಹೊಂದಿಕೊಳ್ಳುವ ಅನಿವಾರ್ಯತೆ ಎದುರಾಗಿದೆ.

ಮೊಳಕಾಲ್ಮೂರು ಜನರೇ ಗಮನಿಸಿ..! ನಾಳೆ 7 ಗಂಟೆ ಕರೆಂಟ್ ಇರಲ್ಲ, ಈ ಪ್ರದೇಶಗಳಲ್ಲಿ ವಿದ್ಯುತ್ ಕಟ್

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಜನತೆಗೆ ಪ್ರಮುಖ ಮಾಹಿತಿ.

KPTCL ವತಿಯಿಂದ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಆಗಸ್ಟ್ 27ರಂದು ಗುರುವಾರ ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ತಾಲೂಕಿನ ಹಲವು ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಳ್ಳಲಿದೆ.

11 ಕೆ.ವಿ. ವಿದ್ಯುತ್ ಮಾರ್ಗಗಳ ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ ಸುಮಾರು 7 ಗಂಟೆಗಳ ಕಾಲ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಎನ್.ಜೆ.ವೈ., ಟೌನ್, ವಾಟರ್ ವರ್ಕ್ಸ್ ಹಾಗೂ ಇಂಡಸ್ಟ್ರಿಯಲ್ ಮಾರ್ಗಗಳ ವ್ಯಾಪ್ತಿಯ ಗ್ರಾಹಕರು ಇದರಿಂದ ತೊಂದರೆ ಅನುಭವಿಸುವ ಸಾಧ್ಯತೆಯಿದೆ.

ಈ ಪ್ರದೇಶಗಳಲ್ಲಿ ವಿದ್ಯುತ್ ಇರುವುದಿಲ್ಲ:

ಮೊಳಕಾಲ್ಮೂರು ಉಪವಿಭಾಗದ ವ್ಯಾಪ್ತಿಯ ಹಲವು ಗ್ರಾಮಗಳು ಹಾಗೂ ಪಟ್ಟಣ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಳ್ಳಲಿದೆ. ಪ್ರಮುಖವಾಗಿ:

  • ಬಿಜಿಕೆರೆ
  • ಕೊಂಡ್ಲಹಳ್ಳಿ
  • ಗೌರಸಮುದ್ರ
  • ಅಬ್ಬೇನಹಳ್ಳಿ
  • ಮೊಳಕಾಲ್ಮೂರು ಪಟ್ಟಣ ಪಂಚಾಯಿತಿ ವ್ಯಾಪ್ತಿ
  • ಹಾನಗಲ್
  • ನೇರ್ಲಹಳ್ಳಿ
  • ರಾಯಾಪುರ
  • ತುಮಕೂರ್ಲಹಳ್ಳಿ
  • ಹಿರೇಕೆರೆಹಳ್ಳಿ
  • ಚಿಕ್ಕೇರಹಳ್ಳಿ
  • ಅಶೋಕ ಸಿದ್ದಾಪುರ
  • ನಾಗಸಮುದ್ರ
  • ದೇವಸಮುದ್ರ
  • ರಾಂಪುರ
  • ಜೆ.ಬಿ.ಹಳ್ಳಿ
  • ತಮ್ಮೇನಹಳ್ಳಿ
  • ಸಂತೇಗುಡ್ಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳು

ನೀರು ಸಂಗ್ರಹಿಸಿಟ್ಟುಕೊಳ್ಳಲು ಮನವಿ:

ವಿದ್ಯುತ್ ವ್ಯತ್ಯಯದಿಂದ ಕುಡಿಯುವ ನೀರಿನ ಸರಬರಾಜು, ಗೃಹಬಳಕೆ ಹಾಗೂ ವಿದ್ಯುತ್ ಆಧಾರಿತ ಚಟುವಟಿಕೆಗಳಿಗೆ ತೊಂದರೆಯಾಗುವ ಸಾಧ್ಯತೆಯಿದೆ. ಹೀಗಾಗಿ ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸಿ, ಅಗತ್ಯವಿರುವಷ್ಟು ನೀರನ್ನು ಮುಂಚಿತವಾಗಿ ಸಂಗ್ರಹಿಸಿಟ್ಟುಕೊಳ್ಳುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

ನಿಗದಿತ ಸಮಯದೊಳಗೆ ನಿರ್ವಹಣಾ ಕಾಮಗಾರಿ ಪೂರ್ಣಗೊಳಿಸಿ ಆದಷ್ಟು ಬೇಗ ವಿದ್ಯುತ್ ಪೂರೈಕೆ ಪುನಃಸ್ಥಾಪಿಸಲು ಸಿಬ್ಬಂದಿ ಕ್ರಮ ಕೈಗೊಳ್ಳಲಿದ್ದಾರೆ.

ಕಾಮಗಾರಿ ನಡೆಯುವ ಸಂದರ್ಭದಲ್ಲಿ ಸಾರ್ವಜನಿಕರು ವಿದ್ಯುತ್ ಕಂಬಗಳು ಅಥವಾ ವಿದ್ಯುತ್ ಲೈನ್‌ಗಳ ಬಳಿ ಯಾವುದೇ ತಾಂತ್ರಿಕ ಕೆಲಸಗಳನ್ನು ಕೈಗೊಳ್ಳದಂತೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಈದ್ ಮಿಲಾದ್: ಡಂಬಳದಲ್ಲಿ ಸಂಭ್ರಮದ ಮೆರವಣಿಗೆ

0

ವಿಜಯಸಾಕ್ಷಿ ಸುದ್ದಿ, ಡಂಬಳ: ಪ್ರವಾದಿ ಹಜರತ್ ಮುಹಮ್ಮದ್ ಪೈಗಂಬರ್ ಅವರ ಜನ್ಮದಿನದ ಅಂಗವಾಗಿ ಗ್ರಾಮದಲ್ಲಿ ಬುಧವಾರ ಈದ್ ಮಿಲಾದ್ ಆಚರಣೆ ಹಾಗೂ ಧಾರ್ಮಿಕ ಮೆರವಣಿಗೆ ಶ್ರದ್ಧಾಭಕ್ತಿ ಮತ್ತು ಸಂಭ್ರಮದಿಂದ ನಡೆಯಿತು.

ಗ್ರಾಮದ ಜುಮ್ಮಾ ಮಸೀದಿಯಿಂದ ಆರಂಭಗೊಂಡ ಮೆರವಣಿಗೆಗೆ ಧರ್ಮಗುರುಗಳು ಹಾಗೂ ಸಮಾಜದ ಮುಖಂಡರು ಚಾಲನೆ ನೀಡಿದರು. ಮೆರವಣಿಗೆಯಲ್ಲಿ ನೂರಾರು ಮುಸ್ಲಿಂ ಬಾಂಧವರು, ಯುವಕರು ಹಾಗೂ ಮಕ್ಕಳು ಪಾಲ್ಗೊಂಡು ಪ್ರವಾದಿಯ ಸಂದೇಶಗಳನ್ನು ಸಾರಿದರು.

ಪ್ರವಾದಿ ಮುಹಮ್ಮದ್ ಅವರು ಜಗತ್ತಿಗೆ ಶಾಂತಿ, ಸೌಹಾರ್ದತೆ ಹಾಗೂ ಮಾನವೀಯತೆಯ ಸಂದೇಶ ಸಾರಿದರು. ಸಮಾಜದಲ್ಲಿ ಶಾಂತಿ ನೆಲೆಸಬೇಕು ಎಂಬುದೇ ಅವರ ಆಶಯವಾಗಿತ್ತು. ಅವರ ಜೀವನದ ಮೌಲ್ಯಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು ಎಂದು ಧರ್ಮಗುರು ಖಾದರಸಾಬ ಮುಲ್ಲಾ ಹೇಳಿದರು.

ಮುಂಜಾನೆ ಆರಂಭವಾದ ಮೆರವಣಿಗೆ ಬೆಳಗ್ಗೆ 11.30ರವರೆಗೆ ನಡೆಯಿತು. ಮಾರ್ಗದುದ್ದಕ್ಕೂ ಪ್ರವಾದಿ ಮುಹಮ್ಮದ್ ಅವರ ಪರ ಘೋಷಣೆಗಳು ಮೊಳಗಿದವು. ವಿವಿಧ ಸಂಘ-ಸಂಸ್ಥೆಗಳ ವತಿಯಿಂದ ಜಮಾಲಶಾವಲಿ ಶರಣರ ದರ್ಗಾ ಬಳಿ ಭಕ್ತರಿಗೆ ಗಂಜಿ ಹಾಗೂ ಬಾಳೆಹಣ್ಣು ವಿತರಿಸಲಾಯಿತು.

ದೇಶದ ಪ್ರಗತಿ, ಎಲ್ಲ ಧರ್ಮಗಳ ಜನರ ಶ್ರೇಯಸ್ಸು ಹಾಗೂ ಗ್ರಾಮದಲ್ಲಿ ಉತ್ತಮ ಮಳೆ-ಬೆಳೆಗಾಗಿ ಮಸೀದಿ ಮತ್ತು ದರ್ಗಾಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.

ಮೆರವಣಿಗೆ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಸೂಕ್ತ ಬಂದೋಬಸ್ತ್ ಕಲ್ಪಿಸಿದ್ದರು.

ಈ ಸಂದರ್ಭದಲ್ಲಿ ಧರ್ಮಗುರುಗಳಾದ ಬಶೀರಹಮ್ಮದ ತಾಂಬೋಟಿ, ಖಾಜಾಹುಸೇನ ಹೊಸಪೇಟಿ, ಬಾಬುಸಾಬ ಮೂಲಿಮನಿ, ಜಾಕೀರ ಮೂಲಿಮನಿ, ಹುಸೇನಸಾಬ ದೊಡ್ಡಮನಿ, ಇಂಮತ್ಯಾಜ ದಪೇದಾರ, ಹುಸೇನಸಾಬ ಹೊಸಬಾವಿ, ಮುನ್ನಾ ನದಾಫ್, ಹಜರತಲಿ ಹೊಂಬಳ, ಇಮಾಮ ಹೊಂಬಳ, ರಫೀಕ ಮನಿಯಾರ, ರಜಾಕಸಾಬ ತಾಂಬೋಟಿ, ಶಪೀಕ ಮೂಲಿಮನಿ, ಬುಡ್ನೆಸಾಬ ಅತ್ತಾರ, ಮೋದಿನಸಾಬ ಚಾಂದಖಾನವರ, ಮೀರಾಸಾಬ ದೊಡ್ಡಮನಿ, ಮಹಮ್ಮದಗೌಸ ಅತ್ತಾರ, ನಜೀರ ಸರಕಾವಾಸ್, ಮುರ್ತುಜಾ ಮನಿಯಾರ, ರಾಯಸಾಬ ಹಳ್ಳಿಕೇರಿ, ಗೌಸುಸಾಬ ಆಲೂರ, ಡಿ.ಡಿ. ಸೊರಟೂರ ಸೇರಿದಂತೆ ಮುಸ್ಲಿಂ ಸಮಾಜದ ಹಿರಿಯರು, ಯುವಕರು ಹಾಗೂ ಮಕ್ಕಳು ಪಾಲ್ಗೊಂಡಿದ್ದರು.

ಈರುಳ್ಳಿ ಬೆಲೆ ನಿಯಂತ್ರಣಕ್ಕೆ ರೈತರ ವಿರೋಧ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಈರುಳ್ಳಿ ಬೆಲೆ ಏರಿಕೆಯಾಗುವ ಮುನ್ನವೇ ನಿಯಂತ್ರಿಸಲು ಕೇಂದ್ರ ಸರ್ಕಾರ ಮುಂದಾಗಿರುವುದು ಗ್ರಾಹಕರ ಹಿತದೃಷ್ಟಿಯಿಂದ ಸರಿಯಾದ ಕ್ರಮವಾದರೂ, ಹಲವು ವರ್ಷಗಳಿಂದ ಅತಿವೃಷ್ಟಿ, ಅನಾವೃಷ್ಟಿ, ರೋಗಬಾಧೆ ಹಾಗೂ ಬೆಲೆ ಕುಸಿತದಿಂದ ನಷ್ಟ ಅನುಭವಿಸುತ್ತಿರುವ ಈರುಳ್ಳಿ ಬೆಳೆಗಾರರ ಹಿತವನ್ನೂ ಸರ್ಕಾರ ಗಮನಿಸಬೇಕು ಎಂದು ಪ್ರಗತಿಪರ ರೈತ ಸೋಮನಗೌಡ ಪಾಟೀಲ ಆಗ್ರಹಿಸಿದ್ದಾರೆ.

ನಾಸಿಕ್‌ನಿಂದ ರೈಲುಗಳ ಮೂಲಕ ದೇಶದ ಪ್ರಮುಖ ನಗರಗಳಿಗೆ 800 ಮೆಟ್ರಿಕ್ ಟನ್ ಈರುಳ್ಳಿ ಪೂರೈಸಿ, ಬಫರ್ ದಾಸ್ತಾನಿನ ಈರುಳ್ಳಿಯನ್ನು ಕೆ.ಜಿ.ಗೆ ₹35ರಂತೆ ಏಜೆನ್ಸಿಗಳ ಮೂಲಕ ಮಾರಾಟ ಮಾಡಲು ಕೇಂದ್ರ ಸರ್ಕಾರ ಕೈಗೊಂಡಿರುವ ಕ್ರಮ ರೈತರಿಗೆ ಮತ್ತಷ್ಟು ಸಂಕಷ್ಟ ತಂದೊಡ್ಡಲಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪ್ರಸಕ್ತ ವರ್ಷ ಮಳೆ ಕೊರತೆಯಿಂದ ರೈತರು ಸಂಕಷ್ಟದಲ್ಲಿದ್ದು, ಬೆಳೆ ಸಮೀಕ್ಷೆ ಹಾಗೂ ಬರ ಘೋಷಣೆಯಲ್ಲೂ ವಿಳಂಬವಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ರೈತರು ಹರಸಾಹಸಪಟ್ಟು ಉಳಿಸಿಕೊಂಡಿರುವ ಬೆಳೆಗೆ ಯೋಗ್ಯ ಬೆಲೆ ದೊರೆಯುವಂತೆ ಮಾಡುವುದು ಸರ್ಕಾರದ ಆದ್ಯತೆಯಾಗಬೇಕು. ಬೆಲೆ ನಿಯಂತ್ರಣದ ಕ್ರಮಗಳಿಂದ ರೈತರಿಗೆ ದೊರೆಯುತ್ತಿರುವ ಅಲ್ಪ ಆದಾಯಕ್ಕೂ ಧಕ್ಕೆ ತರಬಾರದು ಎಂದು ಒತ್ತಾಯಿಸಿದ್ದಾರೆ.

ಬೆಲೆ ಏರಿಕೆಯಾದಾಗ ಗ್ರಾಹಕರ ರಕ್ಷಣೆಗೆ ತಕ್ಷಣ ಕ್ರಮ ಕೈಗೊಳ್ಳುವ ಸರ್ಕಾರ, ಬೆಲೆ ಕುಸಿದಾಗ ರೈತರ ನೆರವಿಗೂ ಇದೇ ರೀತಿಯ ಮುನ್ನೆಚ್ಚರಿಕೆ ವಹಿಸಬೇಕು. ಹಲವು ವರ್ಷಗಳ ನಷ್ಟದ ಬಳಿಕ ಈ ಬಾರಿ ದೊರೆಯುತ್ತಿರುವ ಉತ್ತಮ ಬೆಲೆ ರೈತರಿಗೆ ಕೊಂಚ ನೆಮ್ಮದಿ ನೀಡಿದೆ. ಅದಕ್ಕೂ ಬೆಲೆ ನಿಯಂತ್ರಣದ ಹೆಸರಿನಲ್ಲಿ ಧಕ್ಕೆ ತರಬಾರದು ಎಂದು ಸೋಮನಗೌಡ ಪಾಟೀಲ ಹೇಳಿದ್ದಾರೆ.

ಈರುಳ್ಳಿ ಬೆಳೆಗಾರರಿಗೆ ಯೋಗ್ಯ ಬೆಲೆ, ಬೆಳೆ ವಿಮೆ, ಬೆಂಬಲ ಬೆಲೆ ಹಾಗೂ ವೈಜ್ಞಾನಿಕ ಸಂಗ್ರಹಣಾ ವ್ಯವಸ್ಥೆ ಕಲ್ಪಿಸಬೇಕು. ಮಳೆ ಕೊರತೆಯಿಂದ ಹಾನಿಗೊಳಗಾದ ಪ್ರದೇಶಗಳನ್ನು ವೈಜ್ಞಾನಿಕವಾಗಿ ಗುರುತಿಸಿ, ರೈತರಿಗೆ ಸೂಕ್ತ ಪರಿಹಾರ ನೀಡಬೇಕು. ಸಂಸದರಾದ ಪ್ರಹ್ಲಾದ ಜೋಶಿ ಹಾಗೂ ಬಸವರಾಜ ಬೊಮ್ಮಾಯಿ ಅವರು ಕೇಂದ್ರ ಸರ್ಕಾರದ ಗಮನ ಸೆಳೆದು ರೈತರ ಪರ ಧ್ವನಿ ಎತ್ತಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ಈರುಳ್ಳಿ ದೊರೆಯುವುದರ ಜತೆಗೆ ಬೆಳೆಗಾರರಿಗೂ ನ್ಯಾಯಯುತ ಬೆಲೆ ಸಿಗುವಂತಹ ಸಮತೋಲನದ ನೀತಿಯನ್ನು ಸರ್ಕಾರ ರೂಪಿಸಬೇಕು ಎಂದು ಸೋಮನಗೌಡ ಪಾಟೀಲ ಒತ್ತಾಯಿಸಿದ್ದಾರೆ.

ಬಂಡಾರದಲ್ಲಿ ಮಿಂದೆದ್ದ ಭಕ್ತರು

0

ವಿಜಯಸಾಕ್ಷಿ ಸುದ್ದಿ, ಗದಗ: ಅವಳಿ ನಗರದ ಗ್ರಾಮ ದೇವತೆಗಳಾದ ಶ್ರೀ ದ್ಯಾಮವ್ವ ಹಾಗೂ ಶ್ರೀ ದುರ್ಗಮ್ಮ ದೇವಿಯರ ಹರಿ ಜಾತ್ರಾ ಮಹೋತ್ಸವದ ಅಂಗವಾಗಿ 18 ವರ್ಷಗಳ ಬಳಿಕ ಬುಧವಾರ ನಡೆದ ಬಂಡಾರದ ಜಾತ್ರೆ ಅಪಾರ ಭಕ್ತಸಾಗರಕ್ಕೆ ಸಾಕ್ಷಿಯಾಯಿತು. 140 ಕ್ವಿಂಟಾಲ್ ಬಂಡಾರದಲ್ಲಿ ನಗರದ ಪ್ರಮುಖ ರಸ್ತೆಗಳು ಹಳದಿಮಯವಾಗಿ ಕಂಗೊಳಿಸಿದರೆ, ಸಹಸ್ರಾರು ಭಕ್ತರು ಪರಸ್ಪರ ಬಂಡಾರ ಹಚ್ಚಿಕೊಂಡು ದೇವಿಯರಿಗೆ ಭಕ್ತಿಯನ್ನು ಸಮರ್ಪಿಸಿ ಸಂಭ್ರಮಿಸಿದರು.

ಒಕ್ಕಲಗೇರಿಯ ದ್ಯಾಮವ್ವನ ಕಟ್ಟಿಯಿಂದ ಆರಂಭಗೊಂಡ ದೇವರ ಪಲ್ಲಕ್ಕಿಗಳ ಮೆರವಣಿಗೆ ಗಂಜಿ ಬಸವೇಶ್ವರ ವೃತ್ತ, ರಾಚೋಟೇಶ್ವರ ಗುಡಿ, ಹನುಮಾನ್ ಗರಡಿ, ಮಾಬುಸುಬಾನಿ ಕಟ್ಟಿ, ನಾಲ್ವಾಡ ಗಲ್ಲಿ, ತಿಲಕ್ ಪಾರ್ಕ್ ರಸ್ತೆ ಮಾರ್ಗವಾಗಿ ಜೋಡ ಮಾರುತಿ ದೇವಸ್ಥಾನದ ಎದುರಿನ ದುರ್ಗಾದೇವಿ ದೇವಸ್ಥಾನದವರೆಗೆ ಸಾಗಿತು.

ಮೆರವಣಿಗೆ ಸಾಗಿದ ರಸ್ತೆಯುದ್ದಕ್ಕೂ ಬಂಡಾರದ ಹಳದಿ ಬಣ್ಣವೇ ಕಂಗೊಳಿಸಿತು. ವಿವಿಧೆಡೆ ಬಂಡಾರ ತುಂಬಿದ ಚೀಲಗಳನ್ನು ಇರಿಸಲಾಗಿತ್ತು. ಭಕ್ತರು ಪರಸ್ಪರ ಬಂಡಾರ ಎರಚಿಕೊಂಡು, ‘ಉಧೋ ಉಧೋ’ ಘೋಷಣೆಗಳನ್ನು ಮೊಳಗಿಸುತ್ತ ದೇವಿಯರ ಕೃಪೆಗೆ ಪಾತ್ರರಾಗಲು ಹಂಬಲಿಸಿದರು. ಮಹಿಳೆಯರು ಕುಂಭ-ಆರತಿ ಹಿಡಿದು ಮೆರವಣಿಗೆಯಲ್ಲಿ ಪಾಲ್ಗೊಂಡರೆ, ಮಕ್ಕಳು, ಯುವಕರು ಹಾಗೂ ಹಿರಿಯರು ಉತ್ಸಾಹದಿಂದ ಹೆಜ್ಜೆ ಹಾಕಿದರು.

108 ಡೊಳ್ಳುಗಳ ನಿನಾದ; ಭಕ್ತಿಯ ಮೆರವಣಿಗೆ

ಮೆರವಣಿಗೆಯಲ್ಲಿ 108 ಡೊಳ್ಳು ಕುಣಿತ, ಸಮ್ಮಾಳ, ಚಂಡಿ ವಾದ್ಯ, ವಿವಿಧ ವೇಷಧಾರಿಗಳ ತಂಡಗಳು ಸೇರಿದಂತೆ ಹಲವು ಕಲಾತಂಡಗಳು ಭಾಗವಹಿಸಿ ಜಾತ್ರೆಯ ಸಡಗರ ಹೆಚ್ಚಿಸಿದವು. ವಾದ್ಯಗಳ ಝೇಂಕಾರ, ಭಕ್ತರ ಜಯಘೋಷ ಹಾಗೂ ಬಂಡಾರದ ಎರಚಾಟದಿಂದ ಇಡೀ ನಗರವೇ ಜಾತ್ರೆಯ ಸಂಭ್ರಮದಲ್ಲಿ ಮಿಂದೆದ್ದಿತ್ತು.

ಹರಿ ಜಾತ್ರೆಯ ಹಿನ್ನೆಲೆಯಲ್ಲಿ ಒಂಬತ್ತು ದಿನಗಳ ಕಾಲ ವಿಶೇಷ ನಿಯಮಗಳನ್ನು ಪಾಲಿಸಲಾಗಿತ್ತು. ಜಾತ್ರೆ ನಡೆಯುವ ಅವಧಿಯಲ್ಲಿ ಮನೆಗಳಲ್ಲಿ ಅಡುಗೆ ಮಾಡದಿರುವುದು, ಪಾದರಕ್ಷೆ ಧರಿಸದಿರುವುದು ಸೇರಿದಂತೆ ಹಲವು ಧಾರ್ಮಿಕ ಆಚರಣೆಗಳನ್ನು ಭಕ್ತರು ಶ್ರದ್ಧೆಯಿಂದ ಅನುಸರಿಸಿದರು.

12 ವರ್ಷಕ್ಕೊಮ್ಮೆ ನಡೆಯುವ ಈ ಜಾತ್ರೆ ಕೋವಿಡ್ ಕಾರಣದಿಂದ ಮುಂದೂಡಲ್ಪಟ್ಟಿತ್ತು. ಹೀಗಾಗಿ 18 ವರ್ಷಗಳ ಬಳಿಕ ನಡೆದ ಜಾತ್ರೆಗೆ ವಿಶೇಷ ಮಹತ್ವ ದೊರೆತಿದ್ದು, ಗದಗ-ಬೆಟಗೇರಿ ಅವಳಿ ನಗರ ಮಾತ್ರವಲ್ಲದೆ ಸುತ್ತಮುತ್ತಲಿನ ಜಿಲ್ಲೆಗಳಿಂದಲೂ ಭಕ್ತರು ಆಗಮಿಸಿದ್ದರು.

ತವರುಮನೆಯಿಂದ ಗಂಡನ ಮನೆಗೆ ದೇವಿಯರ ಪಯಣ

ಒಕ್ಕಲಗೇರಿಯ ದ್ಯಾಮವ್ವನ ಕಟ್ಟೆ ದೇವಿಯರ ತವರುಮನೆಯ ಪ್ರತೀಕವಾಗಿದ್ದು, ನಾಲ್ವಾಡ ಮನೆತನದ ಮಗಳು ಎಂಬ ನಂಬಿಕೆಯ ಹಿನ್ನೆಲೆಯಲ್ಲಿ ಮೆರವಣಿಗೆ ನಾಲ್ವಾಡದವರ ಮನೆಗೆ ತೆರಳಿ ಉಡಿ ತುಂಬಿಸಿಕೊಳ್ಳುವ ಸಂಪ್ರದಾಯ ನೆರವೇರಿತು. ಬಳಿಕ ಗಂಡನ ಮನೆಯಾದ ಕಿಲ್ಲಾ ಓಣಿಯತ್ತ ದೇವಿಯರ ಪಯಣ ಸಾಗಿತು.

ಭಕ್ತರು ದೇವಿಯರಿಗೆ ಉಡಿ ತುಂಬಿ, ಹರಕೆ ಸಲ್ಲಿಸಿ ಇಷ್ಟಾರ್ಥ ಈಡೇರಿಸುವಂತೆ ಪ್ರಾರ್ಥಿಸಿದರು. ಗಂಡನ ಮನೆಗೆ ಬೀಳ್ಕೊಡುವ ಸಂಭ್ರಮದಲ್ಲೂ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ಹಳದಿಮಯವಾದ ನಗರ

ಬಂಡಾರದ ಜಾತ್ರೆಯ ಹಿನ್ನೆಲೆಯಲ್ಲಿ ನಗರದ ಪ್ರಮುಖ ರಸ್ತೆಗಳು ಹಳದಿ ಬಣ್ಣದಲ್ಲಿ ಮಿಂದೆದ್ದಿದ್ದವು. ಹಲವರು ಹಳದಿ ಬಣ್ಣದ ಉಡುಪು ಧರಿಸಿ ಜಾತ್ರೆಯ ಸಡಗರದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.

ಸಾವಿರಾರು ಭಕ್ತರು ಒಂದೆಡೆ ಸೇರಿದ್ದರಿಂದ ಜೋಡ ಮಾರುತಿ ದೇವಸ್ಥಾನ, ರಾಚೋಟೇಶ್ವರ ದೇವಸ್ಥಾನ ಹಾಗೂ ಮೇನ್ ಬಜಾರ್ ಸುತ್ತಮುತ್ತ ಕೆಲಕಾಲ ವಾಹನ ದಟ್ಟಣೆ ಉಂಟಾಯಿತು. ಪೊಲೀಸರು ಸ್ಥಳದಲ್ಲಿದ್ದು ಸಂಚಾರ ವ್ಯವಸ್ಥೆ ನಿಯಂತ್ರಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಬಂಡಾರ ಜಾತ್ರೆಯಲ್ಲಿ ವಿನೋದ ಮೊರಬದ, ಸಂಗಮೇಶ ಕವಳಿಕಾಯಿ, ಬಸವರಾಜ ತುಪ್ಪದ, ಸುನೀಲ ಮುದೇನಗುಡಿ, ಪ್ರವೀಣ ಅಂದೇಲಿ, ಮಲ್ಲು ಕಿರೇಸೂರು, ಶ್ರೀಧರ್ ವಜ್ರಬಂಡಿ, ರಾಜು ಖಾನಪ್ಪನವರ್ ಇತರರು ಭಾಗವಹಿಸಿದ್ದರು.

ಗದಗ-ಬೆಟಗೇರಿ ಗ್ರಾಮದೇವಿಯರ ಹರಿ ಜಾತ್ರೋತ್ಸವದ ಪ್ರಮುಖ ಆಕರ್ಷಣೆಯೇ ಬಂಡಾರದ ಜಾತ್ರೆ. ಅವಳಿ ನಗರ ಮಾತ್ರವಲ್ಲದೆ ಅಕ್ಕಪಕ್ಕದ ಜಿಲ್ಲೆಗಳಿಂದಲೂ ಸಾವಿರಾರು ಜನರು ಪಾಲ್ಗೊಂಡು ಜಾತ್ರೆಯ ಯಶಸ್ಸಿಗೆ ಕಾರಣರಾಗಿದ್ದಾರೆ.

— ವಸಂತ ಪಡಗದ, ಜಾತ್ರಾ ಸಮಿತಿ ಸಹ ಕಾರ್ಯದರ್ಶಿ

ಬಂಡಾರದ ಜಾತ್ರೆಯಲ್ಲಿ ಸಾವಿರಾರು ಜನರು ಪಾಲ್ಗೊಂಡಿರುವುದು ನಮ್ಮ ಪ್ರಾಚೀನ ಸಂಸ್ಕೃತಿ ಹಾಗೂ ಪರಂಪರೆ ಇಂದಿಗೂ ಜೀವಂತವಾಗಿರುವುದಕ್ಕೆ ಸಾಕ್ಷಿಯಾಗಿದೆ. ಜಾತಿ, ಧರ್ಮದ ಭೇದವಿಲ್ಲದೆ ಎಲ್ಲರೂ ಒಂದಾಗಿ ಪಾಲ್ಗೊಂಡು ಜಾತ್ರೆಯನ್ನು ಅದ್ದೂರಿಗೊಳಿಸಿದ್ದಾರೆ.

ಕೊಟ್ರಪ್ಪ ಕಮತರ

ಬಾಕ್ಸ್: 18 ವರ್ಷಗಳ ಬಳಿಕ ಹಳದಿಮಯವಾದ ಗದಗ

ಒಂಬತ್ತು ದಿನಗಳ ಹರಿ ಜಾತ್ರಾ ಮಹೋತ್ಸವದ ಕೊನೆಯ ದಿನ ನಡೆದ ಬಂಡಾರದ ಜಾತ್ರೆ ಭಕ್ತರ ಪಾಲಿಗೆ ಅವಿಸ್ಮರಣೀಯ ಕ್ಷಣವಾಯಿತು. 140 ಕ್ವಿಂಟಾಲ್ ಬಂಡಾರ, ಸಾವಿರಾರು ಭಕ್ತರ ಪಾಲ್ಗೊಳ್ಳುವಿಕೆ, 108 ಡೊಳ್ಳುಗಳ ನಿನಾದ ಹಾಗೂ ವೈವಿಧ್ಯಮಯ ಕಲಾತಂಡಗಳ ಪ್ರದರ್ಶನ ಜಾತ್ರೆಯ ವೈಭವವನ್ನು ಮತ್ತಷ್ಟು ಹೆಚ್ಚಿಸಿತು.

ಶಿರಹಟ್ಟಿಯಲ್ಲಿ ಮೊಳಗಿದ ಸೌಹಾರ್ದದ ಸಂದೇಶ

0

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಪ್ರವಾದಿ ಹಜರತ್ ಮಹಮ್ಮದ್ ಪೈಗಂಬರ್ ಅವರ ಜನ್ಮದಿನದ ಅಂಗವಾಗಿ ಪಟ್ಟಣದಲ್ಲಿ ಬುಧವಾರ ಈದ್ ಮಿಲಾದ್ ಹಬ್ಬವನ್ನು ಮುಸ್ಲಿಂ ಬಾಂಧವರು ಶ್ರದ್ಧಾಭಕ್ತಿ ಹಾಗೂ ಸಡಗರದಿಂದ ಆಚರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮೌಲಾನಾ ಮಜಹರಖಾನ್ ಪಠಾಣ, ಪ್ರವಾದಿ ಮಹಮ್ಮದ್ ಪೈಗಂಬರ್ ಅವರು ವಿಶ್ವಕ್ಕೆ ಶಾಂತಿ, ಕರುಣೆ ಹಾಗೂ ಸಹಬಾಳ್ವೆಯ ಸಂದೇಶ ಸಾರಿದ್ದಾರೆ. ಅವರ ಜನ್ಮದಿನ ಮುಸ್ಲಿಮರಿಗೆ ಅತ್ಯಂತ ಪವಿತ್ರವಾಗಿದ್ದು, ಎಲ್ಲರೂ ಪರಸ್ಪರ ಸೌಹಾರ್ದದಿಂದ ಬದುಕಬೇಕು ಎಂದರು.

ಹಬ್ಬದ ಅಂಗವಾಗಿ ಪಟ್ಟಣದ ಆಸಾರ ಓಣಿ, ಮಕಾನಗಲ್ಲಿ, ತಳಗೇರಿ, ಇಂಗಲಾಪುರ ಓಣಿ ಸೇರಿದಂತೆ ವಿವಿಧೆಡೆ ಮುಸ್ಲಿಂ ಬಾಂಧವರು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.

ಬಳಿಕ ಹಜರತ್ ಮಹಬೂಬ್ ಸುಬಾನಿ ದರ್ಗಾದಿಂದ ಬೃಹತ್ ಮೆರವಣಿಗೆಗೆ ಚಾಲನೆ ನೀಡಲಾಯಿತು. ಪಟ್ಟಣದ ಪ್ರಮುಖ ವೃತ್ತ ಹಾಗೂ ಬೀದಿಗಳಲ್ಲಿ ಸಾಗಿದ ಮೆರವಣಿಗೆಯಲ್ಲಿ ನೂರಾರು ಮಂದಿ ಪಾಲ್ಗೊಂಡಿದ್ದರು. ಧಾರ್ಮಿಕ ಘೋಷಣೆಗಳು ಮೊಳಗಿದವು. ಈ ವೇಳೆ ಹಬ್ಬದ ಸಂಭ್ರಮ ಎಲ್ಲೆಡೆ ಕಂಡುಬಂತು.

ಹಗರಿಬೊಮ್ಮನಹಳ್ಳಿಯಲ್ಲಿ ಈದ್ ಮಿಲಾದ್ ಸಂಭ್ರಮ

0

ವಿಜಯಸಾಕ್ಷಿ ಸುದ್ದಿ, ಹಗರಿಬೊಮ್ಮನಹಳ್ಳಿ: ಪ್ರವಾದಿ ಹಜರತ್ ಮಹಮ್ಮದ್ ಅವರ ಜನ್ಮದಿನದ ಸ್ಮರಣಾರ್ಥ ಆಚರಿಸುವ ಈದ್ ಮಿಲಾದ್-ಉನ್-ನಬಿ ಹಬ್ಬವನ್ನು ಪಟ್ಟಣದಲ್ಲಿ ಮುಸ್ಲಿಂ ಬಾಂಧವರು ಬುಧವಾರ ಸಡಗರ, ಸಂಭ್ರಮ ಹಾಗೂ ಭಕ್ತಿಭಾವದಿಂದ ಆಚರಿಸಿದರು.

ಹಬ್ಬದ ಅಂಗವಾಗಿ ಪಟ್ಟಣದಲ್ಲಿ ಅದ್ದೂರಿ ಧಾರ್ಮಿಕ ಮೆರವಣಿಗೆ ನಡೆಯಿತು. ರಾಮನಗರ, ಅರಳಿಹಳ್ಳಿ, ಬಸವೇಶ್ವರ ಬಜಾರ್, ಹಳೆ ಊರು, ಜಾಲೀನಗರ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಮುಸ್ಲಿಂ ಸಮಾಜದ ಬಾಂಧವರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಮಕ್ಕಳು, ಯುವಕರು ಹಾಗೂ ಸಮಾಜದ ಮುಖಂಡರು ಪ್ರವಾದಿಯ ಸಂದೇಶ ಸಾರುವ ಘೋಷಣೆಗಳನ್ನು ಮೊಳಗಿಸುತ್ತ ಸಾಗಿದರು.

ಪ್ರವಾದಿ ಮಹಮ್ಮದ್ ಅವರು ಸಾರಿದ ಸಮಾನತೆ, ಶಾಂತಿ, ಸಹೋದರತ್ವ ಹಾಗೂ ಮಾನವೀಯತೆಯ ಸಂದೇಶಗಳು ಇಂದಿಗೂ ಪ್ರಸ್ತುತವಾಗಿವೆ. ಅವರ ಜೀವನಾದರ್ಶಗಳನ್ನು ಸ್ಮರಿಸುತ್ತ ಈದ್ ಮಿಲಾದ್ ಆಚರಿಸುವುದು ವಿಶೇಷವಾಗಿದೆ ಎಂದು ಸಮಾಜದ ಮುಖಂಡರು ತಿಳಿಸಿದರು.

ಮೆರವಣಿಗೆಯಲ್ಲಿ ಮಾಜಿ ಶಾಸಕ ಎಸ್. ಭೀಮ ನಾಯ್ಕ್, ಜಿಲ್ಲಾ ಕಾಂಗ್ರೆಸ್ ಮಹಿಳಾ ಅಧ್ಯಕ್ಷೆ ಡಾ. ಸಾಹಿರಾಬಾನು, ಪುರಸಭೆ ಸದಸ್ಯೆ ರೇಷ್ಮಾ ಶಿಖಂದರ್, ತೆಲಿಗಿ ನೆಲ ಇಸ್ಮಾಯಿಲ್ ಸಾಹೇಬ್, ಬಶೀರ್ ಸಾಹೇಬ್, ಎಣ್ಣಿ ಭಾಷಾ, ದಾದಾ ಕಲಂದರ್, ಜಂದಿ ಸಾಹೇಬ್, ನೂರು ಮಹಮ್ಮದ್ ಅಬ್ಬು, ನೂರಿ, ಗುಲ್ಜರ್, ದಾದಾಪೀರ್, ಕೆಜಿಎನ್ ಅಲ್ಲಾಭಕ್ಷಿ, ದಾದು ತತ್ತಿ ಕಾಶಿಂ, ಜಿನ್ನ ಸಾಹೇಬ್ ಸೇರಿದಂತೆ ಸಮಾಜದ ಮುಖಂಡರು ಹಾಗೂ ನೂರಾರು ಮಂದಿ ಪಾಲ್ಗೊಂಡಿದ್ದರು.

ಸೌಹಾರ್ದದ ಸಂದೇಶ ಸಾರಿದ ಈದ್ ಮಿಲಾದ್

0

ವಿಜಯಸಾಕ್ಷಿ ಸುದ್ದಿ, ಗದಗ: ಎಲ್ಲ ಧರ್ಮಗಳ ಜನರು ಪರಸ್ಪರ ಗೌರವ ಹಾಗೂ ಸಹೋದರತ್ವದಿಂದ ಒಂದಾಗಿ ಸಾಗಿದಾಗ ಮಾತ್ರ ರಾಷ್ಟ್ರದ ಸಮಗ್ರ ಪ್ರಗತಿ ಸಾಧ್ಯ. ದೇಶಪ್ರೇಮ ಮತ್ತು ಸಂವಿಧಾನದ ರಕ್ಷಣೆ ಇಸ್ಲಾಂ ಧರ್ಮದ ಪ್ರಮುಖ ಆಶಯಗಳಾಗಿದ್ದು, ದ್ವೇಷ-ವೈಷಮ್ಯ ಬದಿಗೊತ್ತಿ ದೇಶದ ಏಳಿಗೆಗೆ ಶ್ರಮಿಸಬೇಕು ಎಂದು ಬೆಳಗಾವಿಯ ಜಮಿಯತೆ ಉಲ್ಮಾ ಜಿಲ್ಲಾ ಕಾರ್ಯದರ್ಶಿ ಹಜರತ್ ಮೌಲಾನಾ ಮಹಮ್ಮದ್ ಆರೀಫ್ ಸಾಬ್ ಇನಾಮಿ ಹೇಳಿದರು.

ನಗರದ ಉರ್ದು ಸೆಂಟ್ರಲ್ ಶಾಲೆ ಆವರಣದಲ್ಲಿ ಗದಗ–ಬೆಟಗೇರಿ ಈದ್ ಮಿಲಾದ್ ಕಮಿಟಿ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಹಜರತ್ ಮಹಮ್ಮದ್ ಪೈಗಂಬರ್ ಜಯಂತ್ಯುತ್ಸವದಲ್ಲಿ ಪಾಲ್ಗೊಂಡ ಅವರು ಉಪನ್ಯಾಸ ನೀಡಿದರು.

ಮಾನವ ಕಲ್ಯಾಣಕ್ಕಾಗಿ ಬದುಕಿದ ಪೈಗಂಬರ್ ಮಹಮ್ಮದ ಅವರು ಪ್ರೀತಿ, ಕ್ಷಮೆ, ಸಹನೆ ಮತ್ತು ಕರುಣೆಯ ಹಾದಿ ತೋರಿಸಿದ್ದಾರೆ. ವಿರೋಧಿಗಳನ್ನೂ ದ್ವೇಷಿಸದೆ ಮಾನವೀಯತೆಯಿಂದ ಕಾಣಬೇಕು ಎಂಬ ಅವರ ಸಂದೇಶ ಸಾರ್ವಕಾಲಿಕವಾದದ್ದು. ಹೀಗಾಗಿ ಅವರ ಜನ್ಮದಿನದ ಆಚರಣೆ ಕೇವಲ ಸಂಪ್ರದಾಯವಾಗದೆ, ಆದರ್ಶಗಳ ಅನುಷ್ಠಾನಕ್ಕೆ ಪ್ರೇರಣೆಯಾಗಬೇಕು ಎಂದರು.

ಬಡವರು, ನಿರ್ಗತಿಕರು ಹಾಗೂ ಸಂಕಷ್ಟದಲ್ಲಿರುವವರ ನೆರವಿಗೆ ಧಾವಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಪೈಗಂಬರ್ ಅವರ ತತ್ವಗಳನ್ನು ಅಳವಡಿಸಿಕೊಂಡರೆ ವೈಯಕ್ತಿಕ ಬದುಕಿನಲ್ಲೂ ಶಾಂತಿ ನೆಲೆಸುವುದರ ಜತೆಗೆ ಸಮಾಜದಲ್ಲಿ ಸಕಾರಾತ್ಮಕ ವಾತಾವರಣ ನಿರ್ಮಾಣವಾಗಲಿದೆ. ಜಗತ್ತಿನ ಶಾಂತಿಗಾಗಿ ಪ್ರತಿಯೊಬ್ಬರೂ ತಮ್ಮದೇ ಆದ ಕೊಡುಗೆ ನೀಡಬೇಕು ಎಂದರು.

ಭಕ್ತಿ–ಸಡಗರದ ಮೆರವಣಿಗೆ

ಹಬ್ಬದ ಅಂಗವಾಗಿ ನಗರದ ವಿವಿಧ ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ ನೆರವೇರಿಸಲಾಯಿತು. ಬಳಿಕ ಪ್ರಮುಖ ರಸ್ತೆಗಳಲ್ಲಿ ನಡೆದ ಮೆರವಣಿಗೆಯಲ್ಲಿ ಮಕ್ಕಳು, ಯುವಕರು ಹಾಗೂ ಹಿರಿಯರು ಉತ್ಸಾಹದಿಂದ ಪಾಲ್ಗೊಂಡರು. ಬಾವುಟಗಳನ್ನು ಹಿಡಿದು ಸಾಗಿದ ಜನರು ಧಾರ್ಮಿಕ ಘೋಷಣೆಗಳನ್ನು ಮೊಳಗಿಸಿದರು.

ಮೆರವಣಿಗೆಯ ಮಾರ್ಗದಲ್ಲಿ ಸಾರ್ವಜನಿಕರಿಗೆ ಸಿಹಿತಿನಿಸು ಹಾಗೂ ತಂಪು ಪಾನೀಯ ವಿತರಿಸಲಾಯಿತು. ಉರ್ದು ಸೆಂಟ್ರಲ್ ಶಾಲೆ ಆವರಣದ ಕಾರ್ಯಕ್ರಮದ ವೇದಿಕೆಯವರೆಗೆ ಸಾಗಿದ ಮೆರವಣಿಗೆಯಲ್ಲಿ ನಿರ್ಮಿಸಿದ್ದ ಮೆಕ್ಕಾ ಮಾದರಿ ಗಮನ ಸೆಳೆಯಿತು.

ಕಾರ್ಯಕ್ರಮದಲ್ಲಿ ರೋಣದ ಬಾಲಕಿ ಇಕ್ರಾನಾಜ್ ರಚಿಸಿರುವ ಆರು ಪುಸ್ತಕಗಳನ್ನು ಲೋಕಾರ್ಪಣೆ ಮಾಡಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಅಭಿನಂದಿಸಿ ಸನ್ಮಾನಿಸಲಾಯಿತು. ನಗರದ ಮಸೀದಿಗಳ ಮುಖ್ಯಸ್ಥರನ್ನೂ ಗೌರವಿಸಲಾಯಿತು.

ಜಮಿಯತೆ ಉಲ್ಮಾ ಕಮಿಟಿ ಅಧ್ಯಕ್ಷ ಅಕ್ಬರ್‌ಸಾಬ್ ಪಿರಜಾದೆ, ಈದ್ ಮಿಲಾದ್ ಕಮಿಟಿ ಅಧ್ಯಕ್ಷ ಆಸೀಫ್ ಜಿ. ದಂಡಿನ, ಯೂಸುಫ್ ಡಂಬಳ, ಯುವ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಗೌಡ ಪಾಟೀಲ, ಎಂ.ಎಂ. ಮಾಳೆಕೊಪ್ಪ, ಡಾ. ನಿಜಾಮುದ್ದೀನ್ ಅತ್ತಾರ್, ಜೀವನಸಾಬ್ ನಮಾಜಿ, ಡಾ. ಪ್ಯಾರಾ ಅಲಿ ನೂರಾನಿ, ವಿನಾಯಕ ಬಳ್ಳಾರಿ, ಬಸವರಾಜ ಕಡೇಮನಿ, ಎಂ.ಸಿ. ಶೇಖ್, ಅನ್ವರ್‌ಸಾಬ್ ಬಳ್ಳಾರಿ, ಪೀರ್‌ಸಾಬ್ ಕೌತಾಳ, ಖಾಜಿ, ಪೆಂಡಾರಿ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.

ಡಿ.ಜೆ.ಗೆ ಅವಕಾಶ ನೀಡದೆ ಈ ಬಾರಿ ಆಚರಣೆಯನ್ನು ಅರ್ಥಪೂರ್ಣಗೊಳಿಸಿರುವುದು ವಿಶೇಷ. 150 ಮಂದಿಯ ಕಣ್ಣು ತಪಾಸಣೆ ಹಾಗೂ 50 ಜನರಿಗೆ ನೇತ್ರ ಶಸ್ತ್ರಚಿಕಿತ್ಸೆ ಮಾಡಿಸಿರುವುದು ಸಮಾಜಮುಖಿ ಕಾಳಜಿಗೆ ಸಾಕ್ಷಿಯಾಗಿದೆ.

— ಅಕ್ಬರ್‌ಸಾಬ್ ಬಬರ್ಚಿ, ಅಧ್ಯಕ್ಷ, ಗದಗ–ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರ

ಆಚರಣೆಗೆ ಸಮಾಜಸೇವೆಯ ಸ್ಪರ್ಶ

ಧಾರ್ಮಿಕ ಕಾರ್ಯಕ್ರಮದ ಜತೆಗೆ ಆರೋಗ್ಯ, ಶಿಕ್ಷಣ ಮತ್ತು ಪ್ರತಿಭಾ ಪ್ರೋತ್ಸಾಹಕ್ಕೆ ಒತ್ತು ನೀಡಲಾಯಿತು. ನೇತ್ರ ತಪಾಸಣೆ ಹಾಗೂ ಶಸ್ತ್ರಚಿಕಿತ್ಸೆ, ಬಾಲಕಿ ಇಕ್ರಾನಾಜ್‌ಳ ಆರು ಕೃತಿಗಳ ಬಿಡುಗಡೆ, ವಿದ್ಯಾರ್ಥಿಗಳ ಅಭಿನಂದನೆ ಮತ್ತು ಮಸೀದಿ ಮುಖ್ಯಸ್ಥರ ಗೌರವ ಸಮಾರಂಭಕ್ಕೆ ವಿಶೇಷ ಮೆರುಗು ನೀಡಿದವು.

ರಾತ್ರಿ ಫೋನ್ ನೋಡುವ ಅಭ್ಯಾಸ ಇದೆಯಾ? ಮಲಗುವ 1 ಗಂಟೆ ಮೊದಲು ಮೊಬೈಲ್ ದೂರವಿಡಿ

0

ರಾತ್ರಿ ಮಲಗುವ ಮುನ್ನ ಮೊಬೈಲ್ ನೋಡುವುದು ಬಹುತೇಕ ಜನರ ದಿನನಿತ್ಯದ ಅಭ್ಯಾಸವಾಗಿದೆ. ರೀಲ್ಸ್, ಸಾಮಾಜಿಕ ಜಾಲತಾಣ, ಮೆಸೇಜ್, ಸುದ್ದಿ ಅಥವಾ ಕೆಲಸದ ವಿಚಾರಗಳನ್ನು ನೋಡುತ್ತಾ ಸಮಯ ಕಳೆಯುವುದರಿಂದ ನಿದ್ರೆಯ ಸಮಯ ಕಡಿಮೆಯಾಗುವ ಸಾಧ್ಯತೆಯಿದೆ.

ಇದರ ಪರಿಣಾಮವಾಗಿ ಬೆಳಗ್ಗೆ ದಣಿವು, ಕಣ್ಣುಗಳಲ್ಲಿ ಒಣತನ ಅಥವಾ ಅಸ್ವಸ್ಥತೆ ಹಾಗೂ ದಿನವಿಡೀ ಸುಸ್ತು ಕಾಣಿಸಿಕೊಳ್ಳಬಹುದು.

ತಜ್ಞರ ಪ್ರಕಾರ, ಮಲಗುವ ಕನಿಷ್ಠ ಒಂದು ಗಂಟೆ ಮೊದಲು ಮೊಬೈಲ್‌ ಸೇರಿದಂತೆ ಸ್ಕ್ರೀನ್‌ಗಳಿಂದ ದೂರವಿರುವುದು ನಿದ್ರೆಯ ಗುಣಮಟ್ಟಕ್ಕೆ ಸಹಾಯ ಮಾಡಬಹುದು. ರಾತ್ರಿ ಸ್ಕ್ರೀನ್‌ನಿಂದ ಬರುವ ಬೆಳಕು, ವಿಶೇಷವಾಗಿ ನೀಲಿ ಬೆಳಕು, ನಿದ್ರೆಗೆ ಸಂಬಂಧಿಸಿದ ಮೆಲಟೋನಿನ್ ಹಾರ್ಮೋನ್‌ನ ಸ್ರಾವಕ್ಕೆ ಅಡ್ಡಿಯಾಗಬಹುದು. ಇದರಿಂದ ನಿದ್ರೆ ಬರಲು ಹೆಚ್ಚು ಸಮಯ ಬೇಕಾಗುವ ಸಾಧ್ಯತೆಯಿದೆ.

ಒಂದು ಗಂಟೆ ಮೊಬೈಲ್ ದೂರವಿಟ್ಟರೆ ಏನೆಲ್ಲಾ ಪ್ರಯೋಜನ?

ಮಲಗುವ ಒಂದು ಗಂಟೆ ಮೊದಲು ಫೋನ್ ದೂರವಿಟ್ಟರೆ ಸ್ಕ್ರೀನ್ ಬೆಳಕಿನ ಪ್ರಭಾವ ಕಡಿಮೆಯಾಗುವುದರ ಜೊತೆಗೆ ಮೆದುಳಿಗೆ ವಿಶ್ರಾಂತಿ ಸಿಗುತ್ತದೆ. ಇದರಿಂದ:

  • ನಿದ್ರೆಗೆ ಮಾನಸಿಕವಾಗಿ ಸಿದ್ಧವಾಗಲು ಸಹಾಯವಾಗಬಹುದು.
  • ನಿದ್ರೆ ಬರುವ ಪ್ರಕ್ರಿಯೆ ಸುಲಭವಾಗಬಹುದು.
  • ರಾತ್ರಿ ತಡವಾಗಿ ಮಲಗುವ ಅಭ್ಯಾಸ ಕಡಿಮೆಯಾಗಬಹುದು.
  • ಒಟ್ಟು ನಿದ್ರೆಯ ಅವಧಿಯನ್ನು ಕಾಪಾಡಿಕೊಳ್ಳಲು ನೆರವಾಗಬಹುದು.
  • ಬೆಳಗ್ಗೆ ಎದ್ದಾಗ ದಣಿವು ಕಡಿಮೆಯಾಗಲು ಸಹಾಯವಾಗಬಹುದು.
  • ಫೋನ್ ಬದಲು ಏನು ಮಾಡಬಹುದು?

ಮಲಗುವ ಒಂದು ಗಂಟೆ ಮೊದಲು ಮೊಬೈಲ್ ದೂರವಿಟ್ಟು ಪುಸ್ತಕ ಓದುವುದು, ಲಘು ಸ್ಟ್ರೆಚಿಂಗ್ ಮಾಡುವುದು, ಧ್ಯಾನ ಅಥವಾ ಉಸಿರಾಟದ ವ್ಯಾಯಾಮ ಮಾಡುವುದು ಸೇರಿದಂತೆ ಹಲವು ಶಾಂತ ಚಟುವಟಿಕೆಗಳನ್ನು ಮಾಡಬಹುದು.

ಅಲ್ಲದೆ, ಕುಟುಂಬದವರೊಂದಿಗೆ ಶಾಂತವಾಗಿ ಮಾತನಾಡುವುದು, ಮಲಗುವ ಕೋಣೆಯ ಬೆಳಕನ್ನು ಕಡಿಮೆ ಮಾಡುವುದು ಹಾಗೂ ಪ್ರತಿದಿನ ಒಂದೇ ಸಮಯಕ್ಕೆ ಮಲಗಿ ಒಂದೇ ಸಮಯಕ್ಕೆ ಏಳುವ ಅಭ್ಯಾಸ ಬೆಳೆಸಿಕೊಳ್ಳುವುದು ಉತ್ತಮ.

ಫೋನ್ ಆಫ್ ಮಾಡಿದರೆ ಮಾತ್ರ ಸಾಕೇ?

ಒಳ್ಳೆಯ ನಿದ್ರೆಗಾಗಿ ಕೇವಲ ಮೊಬೈಲ್ ಬಳಕೆ ಕಡಿಮೆ ಮಾಡುವುದು ಮಾತ್ರ ಸಾಕಾಗುವುದಿಲ್ಲ. ನಿಯಮಿತ ನಿದ್ರೆ ಸಮಯ, ಸಾಕಷ್ಟು ನಿದ್ರೆ, ದೈಹಿಕ ಚಟುವಟಿಕೆ ಹಾಗೂ ಆರೋಗ್ಯಕರ ದಿನಚರಿಯೂ ಮುಖ್ಯ.

ದೀರ್ಘಕಾಲದಿಂದ ನಿದ್ರೆ ಬರದಿರುವುದು, ಪದೇಪದೇ ನಿದ್ರೆಯಿಂದ ಎಚ್ಚರವಾಗುವುದು ಅಥವಾ ಹಗಲಿನಲ್ಲಿ ಅತಿಯಾದ ನಿದ್ರೆ ಕಾಣಿಸಿಕೊಳ್ಳುತ್ತಿದ್ದರೆ ವೈದ್ಯರ ಸಲಹೆ ಪಡೆಯುವುದು ಸೂಕ್ತ.

ಸೂಚನೆ: ಈ ಮಾಹಿತಿ ಸಾಮಾನ್ಯ ಆರೋಗ್ಯ ಮಾಹಿತಿಗಾಗಿ ಮಾತ್ರ. ನಿರಂತರ ನಿದ್ರೆಯ ಸಮಸ್ಯೆಗಳಿದ್ದರೆ ಅರ್ಹ ವೈದ್ಯರನ್ನು ಸಂಪರ್ಕಿಸಿ.

ಬಿಸಿಎ ನಾಲ್ಕನೇ ಸೆಮಿಸ್ಟರ್‌ನಲ್ಲಿ ಮನೋರಮಾ ಕಾಲೇಜಿನ ವಿದ್ಯಾರ್ಥಿಗಳ ಸಾಧನೆ

0

ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಮನೋರಮಾ ಮಹಾವಿದ್ಯಾಲಯದ ಬಿಸಿಎ ಕೋರ್ಸ್‌ನ ನಾಲ್ಕನೇ ಸೆಮಿಸ್ಟರ್ ಪರೀಕ್ಷೆಯಲ್ಲಿ ವಿದ್ಯಾರ್ಥಿನಿಯರು ಉತ್ತಮ ಸಾಧನೆ ಮಾಡಿದ್ದು, ಐವರು ವಿದ್ಯಾರ್ಥಿನಿಯರು ಮೊದಲ ಐದು ಸ್ಥಾನಗಳನ್ನು ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ.

ಕುಮಾರಿ ಮೆಹೆಕ ದುಕಾಂದಾರ 575 ಅಂಕ ಪಡೆದು ಪ್ರಥಮ ಸ್ಥಾನ, ಕುಮಾರಿ ಮೇಘಾ ಅಂಗಡಿ 559 ಅಂಕ ಪಡೆದು ದ್ವಿತೀಯ ಸ್ಥಾನ, ಕುಮಾರಿ ಮೆಹತಾಬಾನು ಕಾತರಕಿ 533 ಅಂಕ ಪಡೆದು ತೃತೀಯ ಸ್ಥಾನ, ಕುಮಾರಿ ಸ್ವಾತಿ ಚುದಗುಂಡ 525 ಅಂಕ ಪಡೆದು ನಾಲ್ಕನೇ ಸ್ಥಾನ ಹಾಗೂ ಕುಮಾರಿ ಸೌಮ್ಯ ಬಣ್ಣದಬಾವಿ 521 ಅಂಕ ಪಡೆದು ಐದನೇ ಸ್ಥಾನ ಪಡೆದಿದ್ದಾರೆ.

ವಿದ್ಯಾರ್ಥಿನಿಯರ ಸಾಧನೆಗೆ ಸಂಸ್ಥೆಯ ಚೇರ್ಮನ್ ಎನ್.ಎಂ. ಕುಡತರಕರ, ಪ್ರಾಚಾರ್ಯ ಬಿ.ಎಸ್. ಹಿರೇಮಠ, ಆಡಳಿತಾಧಿಕಾರಿ ಕಿಶೋರ ಮುದಗಲ್ಲ, ಸಂಸ್ಥೆಯ ನಿರ್ದೇಶಕರಾದ ಮಂಜುನಾಥ ಕುಡತರಕರ, ಸಂಜಯಕುಮಾರ ಕುಡತರಕರ, ಚೇತನ ಕುಡತರಕರ, ಸಂಯೋಜಕಿ ಪ್ರೊ. ಸವಿತಾ ಪೂಜಾರ ಹಾಗೂ ಸಿಬ್ಬಂದಿ ವರ್ಗದವರು ಅಭಿನಂದಿಸಿ, ಮುಂದಿನ ಶೈಕ್ಷಣಿಕ ಬದುಕಿಗೆ ಶುಭ ಹಾರೈಸಿದ್ದಾರೆ.