Home Blog

ಟಿಪ್ಪು ಕಟೌಟ್ ವಿಡಿಯೋಗೆ ಪಾಕಿಸ್ತಾನ ಪರ ಹಾಡು ಬಳಕೆ ಆರೋಪ: ಆರೋಪಿಗಳ ಬಂಧನಕ್ಕೆ SP ವಿಶೇಷ ತಂಡ ರಚನೆ

0

ಚಿಕ್ಕಮಗಳೂರು: ಈದ್ ಮಿಲಾದ್ ಮೆರವಣಿಗೆಯ ಹಿನ್ನೆಲೆಯಲ್ಲಿ ನಗರದ ಟಿಪ್ಪು ನಗರದಲ್ಲಿ ಅಳವಡಿಸಲಾಗಿದ್ದ 40 ಅಡಿ ಎತ್ತರದ ಟಿಪ್ಪು ಸುಲ್ತಾನ್ ಕಟೌಟ್‌ನ ವಿಡಿಯೋಗೆ ಪಾಕಿಸ್ತಾನ ಪರ ಹಾಡು ಬಳಸಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಚಿಕ್ಕಮಗಳೂರು ನಗರ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

‘ಚಿಕ್ಕಮಗಳೂರು ಪವರ್ ಟಿಪ್ಪು ಬಾಯ್ಸ್’ ಎಂಬ ಇನ್‌ಸ್ಟಾಗ್ರಾಮ್ ಖಾತೆಯ ವಿರುದ್ಧ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯ ಪಿಎಸ್‌ಐ ಧನರಾಜ್ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಭಾರತೀಯ ನ್ಯಾಯ ಸಂಹಿತೆ (BNS)ಯ ಸೆಕ್ಷನ್ 196 ಹಾಗೂ 299ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಕೋಮು ಪ್ರಚೋದನೆ ಹಾಗೂ ಸಂಬಂಧಿತ ಆರೋಪಗಳ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಬಳಿಕ ಸ್ಥಳೀಯ ಹಿಂದೂ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. ಪ್ರಕರಣದಲ್ಲಿ ಭಾಗಿಯಾಗಿರುವವರನ್ನು ಕೂಡಲೇ ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಂಘಟನೆಗಳ ಮುಖಂಡರು ಒತ್ತಾಯಿಸಿದ್ದಾರೆ.

ಇನ್ನು ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿರುವ ಪೊಲೀಸರು, ಸಂಬಂಧಿಸಿದ ಇನ್‌ಸ್ಟಾಗ್ರಾಮ್ ಖಾತೆದಾರರನ್ನು ಪತ್ತೆಹಚ್ಚಿ ಬಂಧಿಸಲು ವಿಶೇಷ ತಂಡವನ್ನು ರಚಿಸಿದ್ದಾರೆ. ವಿಡಿಯೋವನ್ನು ಯಾರು ಸೃಷ್ಟಿಸಿದ್ದಾರೆ, ಯಾರು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿದ್ದಾರೆ ಹಾಗೂ ಇದರ ಹಿಂದೆ ಬೇರೆ ಯಾರಾದರೂ ಇದ್ದಾರೆಯೇ ಎಂಬುದರ ಕುರಿತು ತನಿಖೆ ನಡೆಯುತ್ತಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ಕುಮಾರ್ ದಯ್ಮಾ, ಶಾಂತಿ ಮತ್ತು ಸೌಹಾರ್ದತೆಗೆ ಧಕ್ಕೆ ತರುವಂತಹ ಯಾವುದೇ ಚಟುವಟಿಕೆಗಳನ್ನು ಪೊಲೀಸರು ಸಹಿಸುವುದಿಲ್ಲ. ಶಾಂತಿ ಕದಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಪ್ರಕರಣದ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ನಗರದಲ್ಲಿ ಪೊಲೀಸರು ಪರಿಸ್ಥಿತಿಯ ಮೇಲೆ ನಿಗಾ ಇರಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ಅಥವಾ ಕೋಮು ಸೌಹಾರ್ದತೆಗೆ ಧಕ್ಕೆ ತರುವಂತಹ ಯಾವುದೇ ವಿಷಯಗಳನ್ನು ಹಂಚಿಕೊಳ್ಳದಂತೆ ಸಾರ್ವಜನಿಕರಿಗೆ ಸೂಚಿಸಲಾಗಿದೆ.

ವಿಧಾನಸಭೆ ಕಾರ್ಯಕಲಾಪದಲ್ಲಿ ತಾರತಮ್ಯ ಆರೋಪ: ಸ್ಪೀಕರ್ʼಗೆ ಆರ್. ಅಶೋಕ್ ಪತ್ರ

0

ಬೆಂಗಳೂರು: ವಿಧಾನಸಭೆಯ ಕಾರ್ಯಕಲಾಪಗಳಲ್ಲಿ ತಾರತಮ್ಯ ನಡೆಸಲಾಗುತ್ತಿದೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಗಂಭೀರ ಆರೋಪ ಮಾಡಿದ್ದಾರೆ. ವಿರೋಧ ಪಕ್ಷದ ನಾಯಕರು ಹಾಗೂ ಶಾಸಕರು ನೀಡುವ ಹೇಳಿಕೆಗಳು, ಭಾಷಣಗಳು ಮತ್ತು ಧ್ವನಿ-ದೃಶ್ಯ ತುಣುಕುಗಳನ್ನು ಮಾಧ್ಯಮಗಳಿಗೆ ವಾರ್ತಾ ಇಲಾಖೆ ಅಧಿಕಾರಿಗಳು ಸಮರ್ಪಕವಾಗಿ ಬಿಡುಗಡೆ ಮಾಡುತ್ತಿಲ್ಲ ಎಂದು ಅವರು ಆರೋಪಿಸಿದ್ದಾರೆ.

ಈ ಸಂಬಂಧ ಕೂಡಲೇ ವಾರ್ತಾ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿ ತಾರತಮ್ಯವನ್ನು ಸರಿಪಡಿಸುವಂತೆ ಕೋರಿ ಆರ್. ಅಶೋಕ್ ಅವರು ವಿಧಾನಸಭೆ ಸ್ಪೀಕರ್ ಜಿ.ಎಸ್. ಪಾಟೀಲ್ ಅವರಿಗೆ ಪತ್ರ ಬರೆದಿದ್ದಾರೆ.

ಆಗಸ್ಟ್ 13ರಿಂದ ಮಳೆಗಾಲದ ಅಧಿವೇಶನ ನಡೆಯುತ್ತಿದ್ದು, ವಿಧಾನಸಭೆಯ ಕಾರ್ಯಕಲಾಪಗಳಲ್ಲಿ ವಿರೋಧ ಪಕ್ಷದ ನಾಯಕರು ಮತ್ತು ಶಾಸಕರು ನೀಡುವ ಹೇಳಿಕೆಗಳು, ಭಾಷಣಗಳು ಹಾಗೂ ಫೋಟೋ, ವೀಡಿಯೋಗಳು ಮುದ್ರಣ ಮತ್ತು ಟಿವಿ ಮಾಧ್ಯಮಗಳಲ್ಲಿ ಸಮರ್ಪಕವಾಗಿ ಪ್ರಸಾರವಾಗುತ್ತಿಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಮುಖ್ಯಮಂತ್ರಿ, ಸಚಿವರು ಹಾಗೂ ಆಡಳಿತ ಪಕ್ಷದ ಶಾಸಕರ ಹೇಳಿಕೆಗಳಿಗೆ ಹೆಚ್ಚಿನ ಪ್ರಚಾರ ದೊರೆಯುತ್ತಿದೆ. ಆದರೆ ವಿಪಕ್ಷ ನಾಯಕರ ಹೇಳಿಕೆಗಳಿಗೆ ಸೂಕ್ತ ಪ್ರಚಾರ ನೀಡಲಾಗುತ್ತಿಲ್ಲ. ಇದರಿಂದ ವಿಧಾನಸಭೆಯ ಕಾರ್ಯಕಲಾಪಗಳಲ್ಲಿ ತಾರತಮ್ಯ ನಡೆಯುತ್ತಿದೆ ಎಂದು ಆರ್. ಅಶೋಕ್ ಆರೋಪಿಸಿದ್ದಾರೆ.

ವಿಧಾನಸಭೆಯ ಕಾರ್ಯಕಲಾಪಗಳಲ್ಲಿ ಈ ರೀತಿಯ ತಾರತಮ್ಯ ಹಿಂದೆಂದೂ ನಡೆದಿರಲಿಲ್ಲ ಎಂದು ಅಶೋಕ್ ತಿಳಿಸಿದ್ದಾರೆ. ಕೂಡಲೇ ಸಂಬಂಧಪಟ್ಟ ವಾರ್ತಾ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿ ಸಮಸ್ಯೆ ಬಗೆಹರಿಸಬೇಕು. ಇಲ್ಲವಾದಲ್ಲಿ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಹಕ್ಕುಚ್ಯುತಿ ಮಂಡಿಸುವುದಾಗಿ ಸ್ಪೀಕರ್‌ಗೆ ಬರೆದಿರುವ ಪತ್ರದಲ್ಲಿ ಎಚ್ಚರಿಕೆ ನೀಡಿದ್ದಾರೆ.

ಕಾವೇರಿ ನೀರು ವಿವಾದ: ಕರ್ನಾಟಕ-ತಮಿಳುನಾಡಿಗೆ ಅಂಕಿಅಂಶಗಳೊಂದಿಗೆ ಬರುವಂತೆ ಸುಪ್ರೀಂಕೋರ್ಟ್ ಸೂಚನೆ

0

ನವದೆಹಲಿ: ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ನೀಡಿರುವ ನಿರ್ದೇಶನದಂತೆ ಕರ್ನಾಟಕದಿಂದ ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ಕೋರಿ ತಮಿಳುನಾಡು ಸಲ್ಲಿಸಿರುವ ಅರ್ಜಿಯ ವಿಚಾರಣೆ ಸೋಮವಾರ ಸುಪ್ರೀಂಕೋರ್ಟ್‌ನಲ್ಲಿ ನಡೆಯಿತು.

ನ್ಯಾಯಮೂರ್ತಿ ವಿಕ್ರಮ್ ನಾಥ್ ಹಾಗೂ ನ್ಯಾಯಮೂರ್ತಿ ಸಂದೀಪ್ ಮೆಹ್ತಾ ಅವರನ್ನೊಳಗೊಂಡ ದ್ವಿಸದಸ್ಯ ಪೀಠ ಅರ್ಜಿಯ ವಿಚಾರಣೆ ನಡೆಸಿತು. ವಿಚಾರಣೆ ವೇಳೆ ಕರ್ನಾಟಕ ಮತ್ತು ತಮಿಳುನಾಡು ಎರಡೂ ರಾಜ್ಯಗಳು ಅಗತ್ಯ ಅಂಕಿಅಂಶಗಳೊಂದಿಗೆ ಮುಂದಿನ ವಿಚಾರಣೆಗೆ ಹಾಜರಾಗುವಂತೆ ಸುಪ್ರೀಂಕೋರ್ಟ್ ಸೂಚಿಸಿದೆ.

ಈ ಹಿನ್ನೆಲೆಯಲ್ಲಿ ಅರ್ಜಿಯ ವಿಚಾರಣೆಯನ್ನು ಮುಂದಿನ ಸೋಮವಾರಕ್ಕೆ ಮುಂದೂಡಲಾಗಿದೆ. ಅಲ್ಲಿಯವರೆಗೆ ಈ ಹಿಂದೆ ನೀಡಿರುವ ಆದೇಶದಂತೆ ಪ್ರತಿದಿನ 12 ಸಾವಿರ ಕ್ಯೂಸೆಕ್ ನೀರು ಹರಿಸುವ ವ್ಯವಸ್ಥೆಯನ್ನು ಕರ್ನಾಟಕ ಮುಂದುವರಿಸಬೇಕಾದ ಪರಿಸ್ಥಿತಿ ಎದುರಾಗಿದೆ.

ವಿಚಾರಣೆ ವೇಳೆ ತಮಿಳುನಾಡು ಪರ ಹಿರಿಯ ವಕೀಲ ಸಿಎಸ್ ವೈದ್ಯನಾಥನ್ ವಾದ ಮಂಡಿಸಿದರು. ರಾಜ್ಯಕ್ಕೆ ಬರಬೇಕಾದ ಪ್ರಮಾಣದ ಕಾವೇರಿ ನೀರು ಸಮರ್ಪಕವಾಗಿ ದೊರೆಯುತ್ತಿಲ್ಲ ಎಂದು ಅವರು ನ್ಯಾಯಾಲಯದ ಗಮನಕ್ಕೆ ತಂದರು.

ಅಲ್ಲದೆ, ಕಾವೇರಿ ನದಿಯ ಒಳಹರಿವು, ನೀರಿನ ಬಳಕೆ, ರಾಜ್ಯದಿಂದ ನೀರು ಬಿಡುಗಡೆ, ಜಲಾಶಯಗಳಲ್ಲಿನ ನೀರಿನ ಸಂಗ್ರಹ ಹಾಗೂ ಅನುಮತಿಸಲಾದ ನೀರಿನ ಬಳಕೆಯನ್ನು ನಿರ್ಧರಿಸುವ ವಿಚಾರದಲ್ಲಿ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಅಧಿಕಾರ, ಕಾರ್ಯ ಮತ್ತು ಕರ್ತವ್ಯಗಳ ಕುರಿತು ಸುಪ್ರೀಂಕೋರ್ಟ್ ಪರಿಶೀಲನೆ ನಡೆಸಬೇಕು ಎಂದು ಮನವಿ ಮಾಡಿದರು.

ಈ ಹಿಂದೆ ಕರ್ನಾಟಕದಿಂದ ತಮಿಳುನಾಡಿಗೆ ಬಿಡುಗಡೆಯಾದ ನೀರಿನ ಪ್ರಮಾಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಚಾರ್ಟ್ ಸಲ್ಲಿಸಲಾಗಿತ್ತು. ವಿಚಾರಣೆ ವೇಳೆ ಈ ಚಾರ್ಟ್‌ನ್ನು ಉಲ್ಲೇಖಿಸಿದ ನ್ಯಾಯಮೂರ್ತಿ ವಿಕ್ರಮ್ ನಾಥ್, CWMA ನೀಡಿರುವ ನಿರ್ದೇಶನದಂತೆ ಕರ್ನಾಟಕ ಈಗಾಗಲೇ ನೀರು ಒದಗಿಸಿರುವುದನ್ನು ಚಾರ್ಟ್ ತೋರಿಸುತ್ತಿದೆ ಎಂದು ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ತಮಿಳುನಾಡು ಪರ ವಕೀಲ ಸಿಎಸ್ ವೈದ್ಯನಾಥನ್, ಸೋಮವಾರ ಬೆಳಗಿನ ವೇಳೆಗೆ CWMA ನಿರ್ದೇಶಿಸಿದ್ದ ಪ್ರಮಾಣದ ನೀರು ತಮಿಳುನಾಡಿಗೆ ತಲುಪಿದೆ ಎಂದು ತಿಳಿಸಿದರು.

ಆದರೆ, ಹಿಂದಿನ ದಿನದ ಲೆಕ್ಕಾಚಾರದಲ್ಲಿ ನೀರಿನ ಕೊರತೆ ಉಂಟಾಗಿತ್ತು. ತಮಿಳುನಾಡಿಗೆ ನಿಗದಿತ ಪ್ರಮಾಣದಲ್ಲಿ ನೀರು ತಲುಪುವಂತೆ ಆ ಕೊರತೆಯನ್ನು ಕರ್ನಾಟಕದಿಂದ ಸರಿದೂಗಿಸುವಂತೆ CWMA ಸೂಚನೆ ನೀಡುತ್ತಿಲ್ಲ ಎಂದು ಅವರು ವಾದಿಸಿದರು.

ಮುಂದಿನ ವಿಚಾರಣೆಯಲ್ಲಿ ಉಭಯ ರಾಜ್ಯಗಳು ನೀರಿನ ಒಳಹರಿವು, ಬಳಕೆ, ಜಲಾಶಯಗಳ ಸಂಗ್ರಹ ಹಾಗೂ ನೀರು ಬಿಡುಗಡೆಗೆ ಸಂಬಂಧಿಸಿದ ಸಂಪೂರ್ಣ ಅಂಕಿಅಂಶಗಳನ್ನು ನ್ಯಾಯಾಲಯದ ಮುಂದೆ ಸಲ್ಲಿಸುವ ಸಾಧ್ಯತೆಯಿದೆ.

ಪನ್ನೀರ್ ಮಾತ್ರವಲ್ಲ, ಎಲ್ಲಾ ಕೃತಕ ಉತ್ಪನ್ನಗಳೂ ನಿಷೇಧ: ಸಚಿವ ಯು.ಟಿ. ಖಾದರ್

0

ಬೆಂಗಳೂರು: ಕರ್ನಾಟಕದಲ್ಲಿ ಕೃತಕ ಪನ್ನೀರ್‌ ನಿಷೇಧಿಸಿರುವ ವಿಚಾರಕ್ಕೆ ಸಂಬಂಧಿಸಿದಂತೆ ಆರೋಗ್ಯ ಸಚಿವ ಯು.ಟಿ. ಖಾದರ್ ಮಹತ್ವದ ಸ್ಪಷ್ಟನೆ ನೀಡಿದ್ದಾರೆ. ಕೃತಕ ಪನ್ನೀರ್ ಮಾತ್ರವಲ್ಲದೆ, ಆರೋಗ್ಯಕ್ಕೆ ಹಾನಿಕಾರಕವಾಗಬಹುದಾದ ಎಲ್ಲಾ ರೀತಿಯ ಕೃತಕ ಆಹಾರ ಉತ್ಪನ್ನಗಳ ಬಳಕೆಯನ್ನು ನಿಯಂತ್ರಿಸುವ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ.

ಕೃತಕ ಪನ್ನೀರ್‌ ಅನ್ನು ಒಂದು ವರ್ಷದ ಅವಧಿಗೆ ಮಾತ್ರ ನಿಷೇಧಿಸಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಆಹಾರ ಸುರಕ್ಷತಾ ಆಯುಕ್ತರಿಗೆ ಒಂದು ವರ್ಷದ ಅವಧಿಗೆ ನಿಷೇಧ ಆದೇಶ ಹೊರಡಿಸುವ ಅಧಿಕಾರವಿದೆ ಎಂದು ವಿವರಿಸಿದರು.

ಪ್ರತಿ ವರ್ಷವೂ ಪ್ರತ್ಯೇಕವಾಗಿ ನಿಷೇಧದ ಆದೇಶ ಹೊರಡಿಸುವ ಬದಲು, ಕೃತಕ ಉತ್ಪನ್ನಗಳ ವಿರುದ್ಧ ಶಾಶ್ವತ ಹಾಗೂ ಬಲವಾದ ನಿಯಮಗಳನ್ನು ಜಾರಿಗೆ ತರಬೇಕಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಯು.ಟಿ. ಖಾದರ್ ತಿಳಿಸಿದ್ದಾರೆ.

“ಒಂದು ವರ್ಷದ ನಿಷೇಧದ ಬಳಿಕ ಮತ್ತೆ ಆದೇಶ ಹೊರಡಿಸುವ ಪರಿಸ್ಥಿತಿ ಬರಬಾರದು. ಶಾಶ್ವತ ನಿಯಮಗಳು ಜಾರಿಗೆ ಬರಬೇಕು” ಎಂಬ ನಿಲುವನ್ನು ಸಚಿವರು ವ್ಯಕ್ತಪಡಿಸಿದ್ದಾರೆ.

ಇದೇ ವೇಳೆ ಹಣ್ಣುಗಳನ್ನು ರಾಸಾಯನಿಕ ಬಳಸಿ ಮಾಗಿಸುವ ವಿಚಾರದ ಬಗ್ಗೆಯೂ ಸಚಿವರು ಕಳವಳ ವ್ಯಕ್ತಪಡಿಸಿದ್ದಾರೆ. ಬಾಳೆಹಣ್ಣು, ಸಪೋಟ, ಮಾವಿನಹಣ್ಣು ಸೇರಿದಂತೆ ಹಲವು ಹಣ್ಣುಗಳನ್ನು ರಾಸಾಯನಿಕಗಳ ಮೂಲಕ ಕೃತಕವಾಗಿ ಮಾಗಿಸುವುದನ್ನು ತಡೆಯಬೇಕಿದೆ ಎಂದು ಅವರು ಹೇಳಿದ್ದಾರೆ.

ಜನರ ಆರೋಗ್ಯದ ಮೇಲೆ ಪರಿಣಾಮ ಬೀರುವ ಕೃತಕ ಆಹಾರ ಉತ್ಪನ್ನಗಳ ಬಳಕೆಯನ್ನು ನಿಯಂತ್ರಿಸುವುದು ಸರ್ಕಾರದ ಪ್ರಮುಖ ಆದ್ಯತೆಯಾಗಿದೆ. ಈ ಹಿನ್ನೆಲೆಯಲ್ಲಿ ಕೃತಕ ಪನ್ನೀರ್ ಸೇರಿದಂತೆ ಇತರೆ ಕೃತಕ ಉತ್ಪನ್ನಗಳ ಮೇಲೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದು ಸಚಿವರು ತಿಳಿಸಿದ್ದಾರೆ.

ಚಿನ್ನ ಖರೀದಿಸುವವರಿಗೆ ಬಿಗ್ ಶಾಕ್: ಒಂದೇ ದಿನ 10 ಗ್ರಾಂಗೆ ₹880 ಏರಿಕೆ! ಬೆಳ್ಳಿ ದರ ಎಷ್ಟಿದೆ ಗೊತ್ತಾ..?

0

ಬೆಂಗಳೂರು: ಜಾಗತಿಕ ಮಾರುಕಟ್ಟೆಯಲ್ಲಿನ ಅನಿಶ್ಚಿತತೆ ಹಾಗೂ ಡಾಲರ್‌ ಮೌಲ್ಯದಲ್ಲಿನ ಇಳಿಕೆಯ ಹಿನ್ನೆಲೆಯಲ್ಲಿ ಚಿನ್ನದ ಮೇಲಿನ ಹೂಡಿಕೆ ಹೆಚ್ಚಾಗಿದ್ದು, ದೇಶದಲ್ಲಿ ಚಿನ್ನದ ಬೆಲೆ ಮತ್ತೊಮ್ಮೆ ಭರ್ಜರಿ ಏರಿಕೆ ಕಂಡಿದೆ. ಆಗಸ್ಟ್‌ 24, 2026ರ ಸೋಮವಾರದಂದು 24 ಕ್ಯಾರೆಟ್‌ ಚಿನ್ನದ ಬೆಲೆ 10 ಗ್ರಾಂಗೆ ₹880 ಹೆಚ್ಚಳವಾಗಿದೆ.

ಗುಡ್‌ ರಿಟರ್ನ್ಸ್‌ ವರದಿ ಪ್ರಕಾರ, 24 ಕ್ಯಾರೆಟ್‌ ಚಿನ್ನದ 1 ಗ್ರಾಂ ಬೆಲೆ ₹88 ಏರಿಕೆಯಾಗಿದ್ದು, ಇದೀಗ ₹16,397ಕ್ಕೆ ತಲುಪಿದೆ. 10 ಗ್ರಾಂ ಚಿನ್ನದ ಬೆಲೆ ₹880 ಹೆಚ್ಚಳವಾಗಿ ₹1,63,970ಕ್ಕೆ ಏರಿಕೆಯಾಗಿದೆ.

ಇನ್ನು 22 ಕ್ಯಾರೆಟ್‌ ಚಿನ್ನದ ಬೆಲೆಯಲ್ಲೂ ಏರಿಕೆ ಕಂಡುಬಂದಿದೆ. 1 ಗ್ರಾಂಗೆ ₹80 ಹೆಚ್ಚಳವಾಗಿದ್ದು, ₹15,030ಕ್ಕೆ ತಲುಪಿದೆ. 10 ಗ್ರಾಂ 22 ಕ್ಯಾರೆಟ್‌ ಚಿನ್ನದ ಬೆಲೆ ₹800 ಏರಿಕೆಯಾಗಿ ₹1,50,300ಕ್ಕೆ ತಲುಪಿದೆ.

ಬೆಂಗಳೂರಿನಲ್ಲಿ ಶುದ್ಧ ಚಿನ್ನದ 1 ಗ್ರಾಂ ಬೆಲೆ ₹16,397 ಇದ್ದು, ಬೆಳ್ಳಿ ಬೆಲೆ ಪ್ರತಿ ಗ್ರಾಂಗೆ ₹260ರಷ್ಟಿದೆ. ಇಂದು ಬೆಳ್ಳಿ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಪ್ರತಿ ಕೆಜಿ ಬೆಳ್ಳಿ ಬೆಲೆ ₹2,60,000ರಷ್ಟಿದೆ.

ಇನ್ನು ಆಗಸ್ಟ್‌ 1ರಂದು 24 ಕ್ಯಾರೆಟ್‌ ಚಿನ್ನದ 1 ಗ್ರಾಂ ಬೆಲೆ ₹14,422ರಷ್ಟಿತ್ತು. ಇದೀಗ ₹16,397ಕ್ಕೆ ಏರಿಕೆಯಾಗಿದ್ದು, 10 ಗ್ರಾಂ ಬೆಲೆ ₹1,63,970ಕ್ಕೆ ತಲುಪಿದೆ. ಚಿನ್ನದ ಬೆಲೆ ಸತತ ನಾಲ್ಕನೇ ವಾರವೂ ಗರಿಷ್ಠ ಮಟ್ಟದಲ್ಲಿ ಏರಿಕೆ ಕಾಣುತ್ತಿದ್ದು, ಹೂಡಿಕೆದಾರರ ಗಮನ ಮತ್ತೊಮ್ಮೆ ಚಿನ್ನದತ್ತ ನೆಟ್ಟಿದೆ.

ಬ್ರಹ್ಮಾವರದಲ್ಲಿ ಬೆಚ್ಚಿಬೀಳಿಸಿದ ಕೃತ್ಯ: ಹೆತ್ತ ತಂದೆ-ತಾಯಿಯನ್ನೇ ಹತ್ಯೆ ಮಾಡಿದನ ಮಗ?

0

ಉಡುಪಿ: ಹೆತ್ತ ತಂದೆ-ತಾಯಿಯನ್ನೇ ಮಗ ಸುತ್ತಿಗೆಯಿಂದ ಹೊಡೆದು ಹತ್ಯೆ ಮಾಡಿರುವ ದಾರುಣ ಘಟನೆ ಬ್ರಹ್ಮಾವರ ಸಮೀಪದ ಗಾಂಧಿನಗರದಲ್ಲಿ ನಡೆದಿದೆ. ಮನೆಯಲ್ಲಿ ನಡೆದ ಜಗಳದ ಬಳಿಕ ಶಾಹಿದ್ ಅಲಿ ಎಂಬಾತ ಈ ಕೃತ್ಯ ಎಸಗಿದ್ದಾನೆ ಎಂದು ಆರೋಪಿಸಲಾಗಿದ್ದು, ಪೊಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಮೃತ ದಂಪತಿಯನ್ನು ಗಾಂಧಿನಗರ ನಿವಾಸಿಗಳಾದ ಮೆಹಬೂಬ್ ಅಲಿ ಮತ್ತು ಶಂಶಾದ್ ಬೇಗಂ ಎಂದು ಗುರುತಿಸಲಾಗಿದೆ. ಮೆಹಬೂಬ್ ಅಲಿ ಲಾರಿ ಚಾಲಕರಾಗಿದ್ದು, ಪುತ್ರ ಶಾಹಿದ್ ಅಲಿ ಫುಡ್ ಡೆಲಿವರಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.

ಭಾನುವಾರ ರಾತ್ರಿ ಮನೆಯಲ್ಲೇ ತಂದೆ-ತಾಯಿ ಹಾಗೂ ಶಾಹಿದ್ ಅಲಿ ನಡುವೆ ಯಾವುದೋ ವಿಚಾರಕ್ಕೆ ಜಗಳ ನಡೆದಿದೆ. ಜಗಳ ತೀವ್ರಗೊಂಡ ವೇಳೆ ಶಾಹಿದ್ ಅಲಿ ಸುತ್ತಿಗೆಯಿಂದ ತಂದೆ ಹಾಗೂ ತಾಯಿಯ ಮೇಲೆ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ.

ತಲೆ ಮತ್ತು ದೇಹದ ಭಾಗಗಳಿಗೆ ಸುತ್ತಿಗೆಯಿಂದ ಬಲವಾದ ಹೊಡೆತ ಬಿದ್ದ ಪರಿಣಾಮ ದಂಪತಿ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಹತ್ಯೆ ನಡೆದ ಬಳಿಕ ಆರೋಪಿ ಪೊಲೀಸರಿಗೆ ಕರೆ ಮಾಡಿ ಘಟನೆ ಬಗ್ಗೆ ಮಾಹಿತಿ ನೀಡಿದ್ದಾನೆ ಎನ್ನಲಾಗಿದೆ. ಮಾಹಿತಿ ತಿಳಿದ ಬ್ರಹ್ಮಾವರ ಠಾಣೆ ಪೊಲೀಸರು ತಕ್ಷಣ ಸ್ಥಳಕ್ಕೆ ತೆರಳಿ ಶಾಹಿದ್ ಅಲಿಯನ್ನು ವಶಕ್ಕೆ ಪಡೆದಿದ್ದಾರೆ.

ಘಟನೆಯ ಹಿಂದಿನ ನಿಖರ ಕಾರಣ ಇನ್ನೂ ಬಹಿರಂಗವಾಗಿಲ್ಲ. ಕುಟುಂಬದಲ್ಲಿ ನಡೆದಿದ್ದ ಕಲಹವೇ ಹತ್ಯೆಗೆ ಕಾರಣವಾಗಿತ್ತೇ ಅಥವಾ ಮತ್ತೇನಾದರೂ ವಿಚಾರ ಇದೆಯೇ ಎಂಬ ಹಲವು ಆಯಾಮಗಳಲ್ಲಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ತಮಿಳುನಾಡು ಜನರಿಗೆ ಬಂಪರ್ ಸುದ್ದಿ: ವರ್ಷಕ್ಕೆ ಮೂರು ಸಿಲಿಂಡರ್ ಉಚಿತ ನೀಡಲಿದೆ ವಿಜಯ್ ಸರ್ಕಾರ!

0

ಚೆನ್ನೈ: ತಮಿಳುನಾಡಿನ ಜನರಿಗೆ ಮುಖ್ಯಮಂತ್ರಿ ವಿಜಯ್ ನೇತೃತ್ವದ ಸರ್ಕಾರ ಭರ್ಜರಿ ಘೋಷಣೆ ಮಾಡಿದ್ದು, ಅರ್ಹ ಕುಟುಂಬಗಳಿಗೆ ವರ್ಷಕ್ಕೆ ಮೂರು ಎಲ್‌ಪಿಜಿ ಸಿಲಿಂಡರ್‌ಗಳನ್ನು ಉಚಿತವಾಗಿ ನೀಡಲು ಮುಂದಾಗಿದೆ. ‘ಅನ್ನಪೂರ್ಣಿ ಸೂಪರ್ ಸಿಕ್ಸ್’ ಹೆಸರಿನಲ್ಲಿ ಈ ಯೋಜನೆಯನ್ನು ಸರ್ಕಾರ ಘೋಷಿಸಿದೆ.

ವಾರ್ಷಿಕ ಆದಾಯ 2.5 ಲಕ್ಷ ರೂಪಾಯಿಗಿಂತ ಕಡಿಮೆ ಇರುವ ಕುಟುಂಬಗಳಿಗೆ ಈ ಯೋಜನೆ ಅನ್ವಯವಾಗಲಿದೆ. ಒಟ್ಟಾರೆ ಸುಮಾರು 1.30 ಕೋಟಿ ಕುಟುಂಬಗಳಿಗೆ ಯೋಜನೆಯಿಂದ ಪ್ರಯೋಜನ ದೊರೆಯಲಿದ್ದು, ಇದಕ್ಕಾಗಿ ಸರ್ಕಾರ ಸುಮಾರು 4,000 ಕೋಟಿ ರೂಪಾಯಿ ವೆಚ್ಚ ಮಾಡಲಿದೆ ಎಂದು ತಿಳಿಸಲಾಗಿದೆ.

ವಿಧಾನಸಭೆಯಲ್ಲಿ ಯೋಜನೆ ಕುರಿತು ಮಾತನಾಡಿದ ಮುಖ್ಯಮಂತ್ರಿ ವಿಜಯ್, ವಾರ್ಷಿಕ ಆದಾಯ 2.5 ಲಕ್ಷ ರೂಪಾಯಿಗಿಂತ ಮೀರದ ಕುಟುಂಬಗಳು, ಆರ್ಥಿಕವಾಗಿ ದುರ್ಬಲ ವರ್ಗಗಳು, ಸಣ್ಣ ಮತ್ತು ಅತಿ ಸಣ್ಣ ರೈತರ ಕುಟುಂಬಗಳು ಹಾಗೂ ಅಂಗವಿಕಲರನ್ನು ಹೊಂದಿರುವ ಕುಟುಂಬಗಳು ಯೋಜನೆಯ ವ್ಯಾಪ್ತಿಗೆ ಬರಲಿವೆ ಎಂದು ಹೇಳಿದರು.

ಯೋಜನೆಯಡಿ ಎಲ್‌ಪಿಜಿ ಸಿಲಿಂಡರ್ ಖರೀದಿಗೆ ಖರ್ಚಾಗುವ ಮೊತ್ತವನ್ನು ಮರುಪಾವತಿ ಮಾಡಲಾಗುತ್ತದೆ. ಸಂಬಂಧಪಟ್ಟ ಕಂಪನಿಗಳ ಅಧಿಕೃತ ಬಿಲ್ಲಿಂಗ್ ಆಧಾರದ ಮೇಲೆ ಸಿಲಿಂಡರ್ ಬುಕ್ಕಿಂಗ್ ಮತ್ತು ವಿತರಣೆ ಪೂರ್ಣಗೊಂಡ ಬಳಿಕ, ಯೋಜನೆಯ ಹಣವನ್ನು ಕುಟುಂಬದ ಯಜಮಾನಿಯ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡಲಾಗುತ್ತದೆ ಎಂದು ಮುಖ್ಯಮಂತ್ರಿ ತಿಳಿಸಿದರು.

ಕೊಲ್ಲಿ ರಾಷ್ಟ್ರಗಳ ನಡುವಿನ ಸಂಘರ್ಷದಿಂದಾಗಿ ಅನಿಲ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತಿದ್ದು, ಎಲ್‌ಪಿಜಿ ಬೆಲೆಯೂ ಏರಿಕೆಯಾಗುತ್ತಿದೆ. ಇದರಿಂದ ಕಳೆದ ನಾಲ್ಕು ತಿಂಗಳಲ್ಲಿ ಕುಟುಂಬಗಳ ಮೇಲಿನ ಆರ್ಥಿಕ ಹೊರೆ ಹೆಚ್ಚಾಗಿದೆ. ಅನೇಕ ಕುಟುಂಬಗಳು ಅಡುಗೆಗಾಗಿ ಪರ್ಯಾಯ ಇಂಧನಗಳತ್ತ ಮುಖ ಮಾಡುತ್ತಿರುವ ಹಿನ್ನೆಲೆಯಲ್ಲಿ ‘ಅನ್ನಪೂರ್ಣಿ ಸೂಪರ್ ಸಿಕ್ಸ್’ ಯೋಜನೆ ಜಾರಿಗೆ ತರಲಾಗುತ್ತಿದೆ ಎಂದು ಸರ್ಕಾರ ತಿಳಿಸಿದೆ.

ಮಹಿಳೆಯರ ಜತೆಗೆ ತೃತೀಯ ಲಿಂಗಿಗಳಿಗೂ ಉಚಿತ ಬಸ್ ಪ್ರಯಾಣ

ಇದೇ ವೇಳೆ ‘ವೆಟ್ರಿ ಪಯಣಂ’ ಯೋಜನೆಯ ವ್ಯಾಪ್ತಿಯನ್ನು ವಿಸ್ತರಿಸುವುದಾಗಿಯೂ ಮುಖ್ಯಮಂತ್ರಿ ವಿಜಯ್ ಘೋಷಿಸಿದ್ದಾರೆ. ಪ್ರಸ್ತುತ ಮಹಿಳೆಯರಿಗೆ ಲಭ್ಯವಿರುವ ಉಚಿತ ಬಸ್ ಪ್ರಯಾಣದ ಸೌಲಭ್ಯವನ್ನು ತೃತೀಯ ಲಿಂಗಿಗಳಿಗೂ ವಿಸ್ತರಿಸಲಾಗುತ್ತದೆ.

ಅಕ್ಟೋಬರ್ 2ರ ಗಾಂಧಿ ಜಯಂತಿಯಿಂದ ವಿಸ್ತರಿತ ಯೋಜನೆ ಜಾರಿಗೆ ಬರಲಿದೆ. ಇದರಡಿ ಎಕ್ಸ್‌ಪ್ರೆಸ್, ಎಲ್‌ಎಸ್‌ಎಸ್, ಡಿಲಕ್ಸ್ ಹಾಗೂ ಅಂತರ್‌ಜಿಲ್ಲಾ ಬಸ್‌ಗಳಲ್ಲೂ ಅರ್ಹ ಫಲಾನುಭವಿಗಳಿಗೆ ಉಚಿತ ಪ್ರಯಾಣದ ಸೌಲಭ್ಯ ದೊರೆಯಲಿದೆ.

‘ವೆಟ್ರಿ ಪಯಣಂ’ ಯೋಜನೆಯ ಅನುಷ್ಠಾನದಿಂದ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ವಾರ್ಷಿಕ ಸುಮಾರು 6,000 ಕೋಟಿ ರೂಪಾಯಿ ವೆಚ್ಚವಾಗಲಿದೆ. ಈ ಯೋಜನೆಗೆ ಯಾವುದೇ ಆದಾಯ ಮಿತಿ ಅಥವಾ ಪ್ರಯಾಣಗಳ ಸಂಖ್ಯೆಗೆ ಮಿತಿ ಇರುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ಊಟದ ನಂತರ 10 ನಿಮಿಷ ವಾಕಿಂಗ್ ಮಾಡಿ: ತೂಕ ನಿಯಂತ್ರಣ, ಜೀರ್ಣಕ್ರಿಯೆ ಸೇರಿದಂತೆ ಹಲವು ಲಾಭ ಸಿಗಲಿದೆ.!

0

ಊಟವಾದ ತಕ್ಷಣ ಸೋಫಾ ಅಥವಾ ಹಾಸಿಗೆಯಲ್ಲಿ ವಿಶ್ರಾಂತಿ ಪಡೆಯುವ ಬದಲು ಕೆಲಕಾಲ ಲಘುವಾಗಿ ನಡೆಯುವ ಅಭ್ಯಾಸ ಆರೋಗ್ಯಕ್ಕೆ ಹಲವು ರೀತಿಯಲ್ಲಿ ಪ್ರಯೋಜನಕಾರಿಯಾಗಬಹುದು. ವಿಶೇಷವಾಗಿ ಮಧ್ಯಾಹ್ನದ ಊಟದ ಬಳಿಕ ಆಲಸ್ಯ ಅಥವಾ ನಿದ್ರೆಯ ಭಾವನೆ ಕಾಡುವುದು ಸಾಮಾನ್ಯ. ಇಂತಹ ಸಂದರ್ಭದಲ್ಲಿ ಸುಮಾರು 10 ನಿಮಿಷಗಳ ಕಾಲ ನಿಧಾನವಾಗಿ ನಡೆಯುವುದು ದೇಹವನ್ನು ಚಟುವಟಿಕೆಯಿಂದ ಇರಿಸಲು ನೆರವಾಗಬಹುದು.

ತಜ್ಞರ ಪ್ರಕಾರ, ಊಟದ ಬಳಿಕ ಲಘು ವಾಕಿಂಗ್ ಮಾಡುವುದರಿಂದ ಜೀರ್ಣಕ್ರಿಯೆಗೆ ಬೆಂಬಲ ದೊರೆಯುವುದರ ಜೊತೆಗೆ ದೇಹದ ಚಟುವಟಿಕೆ ಮತ್ತು ಚಯಾಪಚಯ ಕ್ರಿಯೆಯನ್ನು ಸಕ್ರಿಯವಾಗಿರಿಸಲು ಸಹಾಯವಾಗಬಹುದು. ಪ್ರತಿದಿನದ ದಿನಚರಿಯಲ್ಲಿ ಕೇವಲ 10 ನಿಮಿಷಗಳ ನಡಿಗೆಯನ್ನು ಸೇರಿಸುವ ಮೂಲಕ ದೈಹಿಕ ಚಟುವಟಿಕೆಯನ್ನು ಹೆಚ್ಚಿಸಬಹುದು.

ತೂಕ ನಿಯಂತ್ರಣಕ್ಕೆ ಸಹಕಾರಿ

ಬೆಳಗಿನ ಉಪಾಹಾರ, ಮಧ್ಯಾಹ್ನದ ಊಟ ಮತ್ತು ರಾತ್ರಿ ಊಟದ ಬಳಿಕ ಸುಮಾರು 10 ನಿಮಿಷಗಳ ಕಾಲ ನಡೆಯುವುದು ತೂಕ ನಿರ್ವಹಣೆಗೆ ಸಹಾಯ ಮಾಡಬಹುದು. ಊಟದ ನಂತರದ ಲಘು ದೈಹಿಕ ಚಟುವಟಿಕೆ ದೇಹವು ಶಕ್ತಿಯನ್ನು ಬಳಸಿಕೊಳ್ಳಲು ನೆರವಾಗುವುದರಿಂದ ತೂಕ ನಿಯಂತ್ರಣಕ್ಕೆ ಇದು ಸಹಾಯಕ ಅಭ್ಯಾಸವಾಗಬಹುದು.

ಜೀರ್ಣಕ್ರಿಯೆಗೆ ಬೆಂಬಲ

ಊಟದ ಬಳಿಕ ಲಘುವಾಗಿ ನಡೆಯುವುದರಿಂದ ಜೀರ್ಣಾಂಗ ವ್ಯವಸ್ಥೆಯ ಚಲನೆಯನ್ನು ಉತ್ತೇಜಿಸಲು ಸಹಾಯವಾಗಬಹುದು. ಇದರಿಂದ ಆಹಾರ ಜೀರ್ಣಾಂಗದ ಮೂಲಕ ಮುಂದಕ್ಕೆ ಸಾಗುವ ಪ್ರಕ್ರಿಯೆಗೆ ಬೆಂಬಲ ದೊರೆಯಬಹುದು. ಅಲ್ಲದೆ, ಊಟದ ಬಳಿಕ ಉಂಟಾಗುವ ಹೊಟ್ಟೆ ತುಂಬಿದ ಭಾವನೆ ಮತ್ತು ಅಸ್ವಸ್ಥತೆಯನ್ನು ಕಡಿಮೆ ಮಾಡಲು ಸಹಾಯಕವಾಗಬಹುದು.

ಚಯಾಪಚಯ ಕ್ರಿಯೆ ಸಕ್ರಿಯವಾಗಿರಲು ನೆರವು

ರಾತ್ರಿ ಊಟದ ಬಳಿಕ ಸ್ವಲ್ಪ ಸಮಯ ನಡೆಯುವುದರಿಂದ ದೇಹದ ಚಟುವಟಿಕೆ ಮುಂದುವರಿಯುತ್ತದೆ. ಇದರಿಂದ ದೇಹವು ಕ್ಯಾಲೊರಿಗಳನ್ನು ಬಳಸಿಕೊಳ್ಳುವ ಪ್ರಕ್ರಿಯೆಗೆ ಬೆಂಬಲ ದೊರೆಯಬಹುದು. ಹೀಗಾಗಿ ತೂಕ ನಿರ್ವಹಣೆಯಲ್ಲೂ ಇದು ಉಪಯುಕ್ತವಾಗಬಹುದು.

ಊಟದ ಬಳಿಕದ ಆಲಸ್ಯ ಕಡಿಮೆಯಾಗಬಹುದು

ಭಾರೀ ಊಟ ಮಾಡಿದ ನಂತರ ಕೆಲವರಿಗೆ ಇದ್ದಕ್ಕಿದ್ದಂತೆ ನಿದ್ರೆ ಅಥವಾ ಆಲಸ್ಯ ಆವರಿಸುತ್ತದೆ. ಇಂತಹ ಸಂದರ್ಭದಲ್ಲಿ ನಿಧಾನವಾದ ನಡಿಗೆ ದೇಹವನ್ನು ಸಕ್ರಿಯವಾಗಿರಿಸಲು ಸಹಾಯ ಮಾಡಬಹುದು. ಇದರಿಂದ ಊಟದ ಬಳಿಕದ ಸುಸ್ತು ಕಡಿಮೆಯಾಗುವ ಸಾಧ್ಯತೆ ಇದೆ.

ಒತ್ತಡ ಕಡಿಮೆ ಮಾಡಲು ಸಹಕಾರಿ

ನಡಿಗೆ ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯಕ್ಕೂ ಪ್ರಯೋಜನಕಾರಿಯಾಗಿದೆ. ನಿಯಮಿತ ದೈಹಿಕ ಚಟುವಟಿಕೆ ಒತ್ತಡವನ್ನು ಕಡಿಮೆ ಮಾಡಲು ಮತ್ತು ಮನಸ್ಥಿತಿಯನ್ನು ಸುಧಾರಿಸಲು ನೆರವಾಗಬಹುದು. ನಡೆಯುವಾಗ ದೇಹದಲ್ಲಿ ಎಂಡಾರ್ಫಿನ್‌ಗಳಂತಹ ನೈಸರ್ಗಿಕ ರಾಸಾಯನಿಕಗಳು ಬಿಡುಗಡೆಯಾಗುವುದರಿಂದ ಮನಸ್ಸಿಗೆ ಉಲ್ಲಾಸ ದೊರೆಯಬಹುದು.

ರೋಗನಿರೋಧಕ ವ್ಯವಸ್ಥೆಗೆ ಬೆಂಬಲ

ನಿಯಮಿತ ದೈಹಿಕ ಚಟುವಟಿಕೆಯ ಭಾಗವಾಗಿ ಊಟದ ಬಳಿಕದ ಸಣ್ಣ ನಡಿಗೆಯು ಒಟ್ಟಾರೆ ದೈಹಿಕ ಆರೋಗ್ಯವನ್ನು ಉತ್ತಮವಾಗಿರಿಸಲು ಸಹಾಯ ಮಾಡಬಹುದು. ಇದರ ಮೂಲಕ ದೇಹದ ರೋಗನಿರೋಧಕ ವ್ಯವಸ್ಥೆಯ ಸಾಮಾನ್ಯ ಕಾರ್ಯಕ್ಕೂ ಬೆಂಬಲ ದೊರೆಯಬಹುದು.

ಊಟವಾದ ತಕ್ಷಣ ವೇಗವಾಗಿ ನಡೆಯಬೇಡಿ!

ಊಟವಾದ ತಕ್ಷಣ ವೇಗವಾಗಿ ಅಥವಾ ಕಠಿಣವಾಗಿ ನಡೆಯುವುದು ಸೂಕ್ತವಲ್ಲ. ಹೊಟ್ಟೆಯ ಮೇಲೆ ಹೆಚ್ಚಿನ ಒತ್ತಡ ಉಂಟಾಗದಂತೆ ನಿಧಾನ ಅಥವಾ ಆರಾಮದಾಯಕ ವೇಗದಲ್ಲಿ ನಡೆಯುವುದು ಉತ್ತಮ. ನಿಮ್ಮ ದೇಹದ ಸಾಮರ್ಥ್ಯಕ್ಕೆ ಅನುಗುಣವಾಗಿ ನಡಿಗೆಯ ವೇಗವನ್ನು ಹೊಂದಿಸಿಕೊಳ್ಳಬೇಕು.

ಹೀಗಾಗಿ ಪ್ರತಿದಿನದ ಊಟಗಳ ಬಳಿಕ ಕೇವಲ 10 ನಿಮಿಷಗಳ ಲಘು ನಡಿಗೆಯನ್ನು ಅಭ್ಯಾಸವನ್ನಾಗಿ ಮಾಡಿಕೊಳ್ಳುವುದು ದೈಹಿಕ ಚಟುವಟಿಕೆಯನ್ನು ದಿನಚರಿಯಲ್ಲಿ ಸುಲಭವಾಗಿ ಸೇರಿಸಿಕೊಳ್ಳುವ ಸರಳ ವಿಧಾನವಾಗಿದೆ.

ಡೇವಿಡ್ ಡಿಸೋಜ ಹತ್ಯೆಗೆ ಶಾರ್ಪ್ ಶೂಟರ್ ಗಳನ್ನು ರವಾನಿಸಿದ್ದ ಮುಂಬೈನ ಕುಖ್ಯಾತ ಗ್ಯಾಂಗ್ ಸ್ಟಾರ್‌ ಅನುಜ್ ಪಾಟೀಲ್ ಬಂಧನ

0

ಉಡುಪಿ, ಆ.24: ಕಾಂಗ್ರೆಸ್ ಮುಖಂಡ ಹಾಗೂ ಉದ್ಯಮಿ ಡೇವಿಡ್ ಡಿಸೋಜಾ ಹತ್ಯೆ ಪ್ರಕರಣದಲ್ಲಿ ಬಂಧಿತ ಮುಂಬೈ ಗ್ಯಾಂಗ್‌ಸ್ಟರ್ ಅನುಜ್ ಪಾಟೀಲ್ ಪೊಲೀಸ್ ಸಿಬ್ಬಂದಿಯ ಮೇಲೆಯೇ ದಾಳಿ ನಡೆಸಿ ಪಿಸ್ತೂಲ್ ಕಸಿದುಕೊಂಡು ಪ್ರತಿದಾಳಿ ನಡೆಸಲು ಯತ್ನಿಸಿದ ಘಟನೆ ನಡೆದಿದೆ. ಆತ್ಮರಕ್ಷಣೆಗಾಗಿ ಪೊಲೀಸರು ಆರೋಪಿಯ ಕಾಲಿಗೆ ಗುಂಡು ಹಾರಿಸಿದ್ದು, ಗಾಯಗೊಂಡ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಆಗಸ್ಟ್ 7ರಂದು ಮುದರಂಗಡಿಯಲ್ಲಿ ಪ್ರಿನ್ಸ್ ಎಂಟರ್‌ಪ್ರೈಸಸ್ ಮಾಲೀಕ ಡೇವಿಡ್ ಡಿಸೋಜಾ ಅವರನ್ನು ಬೈಕ್‌ನಲ್ಲಿ ಬಂದಿದ್ದ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದರು. ಹಂತಕರ ಪೈಕಿ ಓರ್ವ ಡೇವಿಡ್ ಅವರ ತಲೆಗೆ ಹತ್ತಿರದಿಂದ ಪಿಸ್ತೂಲ್‌ನಿಂದ ಗುಂಡು ಹಾರಿಸಿ ಪರಾರಿಯಾಗಿದ್ದ.

ಪ್ರಕರಣದ ತನಿಖೆ ನಡೆಸುತ್ತಿದ್ದ ಉಡುಪಿ ಪೊಲೀಸರು ಹತ್ಯೆಯ ಹಿಂದಿನ ಸಂಚು ಹಾಗೂ ಶೂಟರ್‌ಗಳ ಜಾಲದ ಬಗ್ಗೆ ತನಿಖೆ ನಡೆಸಿದ್ದು, ಮುಂಬೈ ಮೂಲದ ಅನುಜ್ ಪಾಟೀಲ್ ಪ್ರಮುಖ ಆರೋಪಿಯಾಗಿ ಪತ್ತೆಯಾಗಿದ್ದಾನೆ. ಡೇವಿಡ್ ಹತ್ಯೆಗಾಗಿ ಮೂವರು ಶೂಟರ್‌ಗಳನ್ನು ಕಳುಹಿಸಿದ್ದ ಆರೋಪದ ಮೇಲೆ ಆತನನ್ನು ಮುಂಬೈನಲ್ಲಿ ಬಂಧಿಸಲಾಗಿದೆ.

ಕುಂದಾಪುರ ಠಾಣೆಯ ಎಸ್‌ಐ ನಂಜ ನಾಯಕ್, ಕೊಲ್ಲೂರು ಠಾಣೆಯ ಎಸ್‌ಐ ವಿನಯ್ ಹಾಗೂ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ ಅನುಜ್ ಪಾಟೀಲ್ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಆದರೆ ಬಂಧಿತನನ್ನು ಉಡುಪಿಗೆ ಕರೆತರುವ ಮಾರ್ಗಮಧ್ಯೆ ಆತ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಪಿಎಸ್‌ಐ ವಿನಯ್ ಅವರ ಬಳಿಯಿದ್ದ ಪಿಸ್ತೂಲ್ ಕಸಿದುಕೊಂಡು ಪೊಲೀಸರ ವಿರುದ್ಧವೇ ಬಳಸಲು ಯತ್ನಿಸಿದ ಸಂದರ್ಭದಲ್ಲಿ ಪಿಎಸ್‌ಐ ನಂಜ ನಾಯಕ್ ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದ್ದಾರೆ.

ಕಾಲಿಗೆ ಗುಂಡೇಟು ತಗುಲಿದ ಅನುಜ್ ಪಾಟೀಲ್‌ನನ್ನು ತಕ್ಷಣ ಉಡುಪಿಯ ಅಜ್ಜರಕಾಡು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪೊಲೀಸರ ಪ್ರಕಾರ, ಅನುಜ್ ಪಾಟೀಲ್ 2017ರಿಂದ ತಲೆಮರೆಸಿಕೊಂಡು ಮುಂಬೈನಲ್ಲಿ ಕಾರ್ಯಾಚರಿಸುತ್ತಿದ್ದ. ಆತನ ವಿರುದ್ಧ ಮಹಾರಾಷ್ಟ್ರದಲ್ಲಿ MCOCA ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಒಟ್ಟು 11 ಕ್ರಿಮಿನಲ್ ಪ್ರಕರಣಗಳು ಆತನ ವಿರುದ್ಧ ಇವೆ.

ಈ ಪೈಕಿ 10 ಪ್ರಕರಣಗಳು ಶಸ್ತ್ರಾಸ್ತ್ರ ಕಾಯ್ದೆಗೆ ಸಂಬಂಧಿಸಿದ್ದಾಗಿವೆ. ಮಹಾರಾಷ್ಟ್ರದಲ್ಲಿ ನಾಲ್ಕು, ಗುಜರಾತ್‌ನಲ್ಲಿ ಐದು, ದಮನ್ ಮತ್ತು ದಿಯುನಲ್ಲಿ ಒಂದು ಹಾಗೂ ಕರ್ನಾಟಕದಲ್ಲಿ ಒಂದು ಪ್ರಕರಣ ದಾಖಲಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಪೊಲೀಸರಿಗೆ ಸಿಗದೆ ತಲೆಮರೆಸಿಕೊಂಡಿದ್ದ ಗೌರವ್ ಶೆಟ್ಟಿ ವಿಜಯಲಕ್ಷ್ಮಿ ದರ್ಶನ್ ಜೊತೆ ಪ್ರತ್ಯಕ್ಷ!

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ ಸಾಕ್ಷಿಗಳಿಗೆ ಬೆದರಿಕೆ ಹಾಕಿದ ಆರೋಪದ ತನಿಖೆಯಲ್ಲಿ ಪೊಲೀಸರಿಗೆ ಬೇಕಾಗಿರುವ ಗೌರವ್ ಶೆಟ್ಟಿ, ದರ್ಶನ್ ಪತ್ನಿ ವಿಜಯಲಕ್ಷ್ಮಿ ದರ್ಶನ್ ಅವರ ಮಂಗಳೂರು ಭೇಟಿಯ ವೇಳೆ ಬಹಿರಂಗವಾಗಿ ಕಾಣಿಸಿಕೊಂಡಿರುವುದು ಪ್ರಕರಣಕ್ಕೆ ಹೊಸ ತಿರುವು ನೀಡಿದೆ. ವಿಜಯಲಕ್ಷ್ಮಿ ಅವರನ್ನು ಮಂಗಳೂರು ವಿಮಾನ ನಿಲ್ದಾಣದಲ್ಲಿ ಗೌರವ್ ಶೆಟ್ಟಿ ಸ್ವಾಗತಿಸಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಸಾಕ್ಷಿಗಳಿಗೆ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಮಾಕ್ಷಿಪಾಳ್ಯ ಪೊಲೀಸರು ಪುನೀತ್, ಸುಹಾಸ್ ಹಾಗೂ ವೇಣು ಅವರನ್ನು ಬಂಧಿಸಿದ್ದರು. ಪ್ರಕರಣದ ತನಿಖೆ ಮುಂದುವರಿದ ಸಂದರ್ಭದಲ್ಲಿ ಗೌರವ್ ಶೆಟ್ಟಿ ಹಾಗೂ ಕಿರಣ್ ರೆಡ್ಡಿ ಅವರ ಮೇಲೂ ಪೊಲೀಸರಿಗೆ ಅನುಮಾನ ಮೂಡಿತ್ತು.

ಪೊಲೀಸರು ಇಬ್ಬರಿಗೂ ನೋಟಿಸ್ ನೀಡಲು ಪ್ರಯತ್ನಿಸಿದ್ದರೂ ಅವರು ಪೊಲೀಸರ ಸಂಪರ್ಕಕ್ಕೆ ಸಿಗದೆ ತಲೆಮರೆಸಿಕೊಂಡಿದ್ದರು ಎನ್ನಲಾಗಿದೆ. ಪುನೀತ್ ಬಂಧನದ ಬಳಿಕ ಗೌರವ್ ಶೆಟ್ಟಿ ಹಾಗೂ ಕಿರಣ್ ರೆಡ್ಡಿ ಮೊಬೈಲ್‌ಗಳನ್ನು ಸ್ವಿಚ್ ಆಫ್ ಮಾಡಿಕೊಂಡಿದ್ದರು ಎಂದು ತನಿಖಾ ಮೂಲಗಳು ತಿಳಿಸಿವೆ.

ವಿಧಿವಿಜ್ಞಾನ ಪ್ರಯೋಗಾಲಯದ ವರದಿಯಲ್ಲಿ ಬಂಧಿತ ಪುನೀತ್ ಜೊತೆ ಗೌರವ್ ಶೆಟ್ಟಿ ಮತ್ತು ಕಿರಣ್ ರೆಡ್ಡಿ ಸಂಪರ್ಕದಲ್ಲಿದ್ದರು ಎಂಬ ಮಾಹಿತಿ ಬಹಿರಂಗವಾಗಿದೆ ಎನ್ನಲಾಗಿದೆ. ಇದೇ ಹಿನ್ನೆಲೆಯಲ್ಲಿ ಇಬ್ಬರ ವಿಚಾರಣೆಗೆ ಪೊಲೀಸರು ಮುಂದಾಗಿದ್ದರು.

ಈ ನಡುವೆ ವಿಜಯಲಕ್ಷ್ಮಿ ದರ್ಶನ್ ಇತ್ತೀಚೆಗೆ ಮಂಗಳೂರಿಗೆ ಭೇಟಿ ನೀಡಿದ್ದು, ವಿಮಾನ ನಿಲ್ದಾಣದಲ್ಲಿ ಅವರನ್ನು ಹಾಗೂ ಅವರ ಗೆಳತಿಯನ್ನು ಗೌರವ್ ಶೆಟ್ಟಿ ಸ್ವಾಗತಿಸಿರುವುದು ಕಂಡುಬಂದಿದೆ. ವಿಜಯಲಕ್ಷ್ಮಿ ಬಳಿಕ ಶ್ರೀ ಮಂದಾರ ಧರ್ಮ ಚಾವಡಿಗೆ ತೆರಳಿದ ಸಂದರ್ಭದಲ್ಲೂ ಗೌರವ್ ಶೆಟ್ಟಿ ಜೊತೆಗಿದ್ದರು ಎನ್ನಲಾಗಿದೆ.

ವಿಜಯಲಕ್ಷ್ಮಿ ಅವರ ಮಂಗಳೂರು ಭೇಟಿಯ ವೇಳೆ ಗೌರವ್ ಶೆಟ್ಟಿ ಸಾರ್ವಜನಿಕವಾಗಿ ಕಾಣಿಸಿಕೊಂಡಿರುವ ದೃಶ್ಯಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ. ಪೊಲೀಸರ ವಿಚಾರಣೆಗೆ ಸಿಗದೆ ತಲೆಮರೆಸಿಕೊಂಡಿರುವ ಆರೋಪಿಯೊಬ್ಬರು ಸಾರ್ವಜನಿಕವಾಗಿ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ತನಿಖಾಧಿಕಾರಿಗಳ ಮುಂದಿನ ಕ್ರಮದ ಬಗ್ಗೆ ಕುತೂಹಲ ಮೂಡಿದೆ.