ವಿಜಯಸಾಕ್ಷಿ ಸುದ್ದಿ, ಗದಗ: ಕೇವಲ ವಚನಗಳನ್ನು ಸಂಗ್ರಹಿಸಿದ ವ್ಯಕ್ತಿಯಾಗಿ ಅಲ್ಲ, ನಶಿಸಿಹೋಗುತ್ತಿದ್ದ ವಚನ ಸಾಹಿತ್ಯಕ್ಕೆ ಹೊಸ ಜೀವ ತುಂಬಿದ ಮಹಾನ್ ಸಂಶೋಧಕರಾಗಿ ಡಾ. ಫ.ಗು. ಹಳಕಟ್ಟಿಯವರನ್ನು ಸಮಾಜ ಸದಾ ಸ್ಮರಿಸಬೇಕು. ಅವರ ಆದರ್ಶಗಳು ಮತ್ತು ವಚನಗಳ ಸಂದೇಶಗಳು ಪ್ರತಿಯೊಬ್ಬರ ಬದುಕಿನ ದಾರಿದೀಪವಾಗಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಹೇಳಿದರು.
ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತವಾಗಿ ಗುರುವಾರ ಆಯೋಜಿಸಿದ್ದ ‘ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ–2026’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
12ನೇ ಶತಮಾನದಲ್ಲಿ ಶರಣರು ತಾಳೆಗರಿ ಮತ್ತು ಓಲೆಗರಿಗಳಲ್ಲಿ ಬರೆದಿಟ್ಟಿದ್ದ ವಚನಗಳು ಕಾಲಗರ್ಭದಲ್ಲಿ ಕಣ್ಮರೆಯಾಗುವ ಸ್ಥಿತಿಯಲ್ಲಿದ್ದಾಗ, ಊರೂರು ಅಲೆದು ಅವುಗಳನ್ನು ಸಂಗ್ರಹಿಸಿ ಉಳಿಸಿದ ಶ್ರೇಯಸ್ಸು ಹಳಕಟ್ಟಿಯವರಿಗೆ ಸಲ್ಲುತ್ತದೆ. ಇದೇ ಕಾರಣಕ್ಕೆ ಅವರನ್ನು ‘ವಚನ ಪಿತಾಮಹ’ ಎಂದು ಗೌರವಿಸಲಾಗುತ್ತಿದೆ. ವಕೀಲಿ ವೃತ್ತಿಯನ್ನೇ ತ್ಯಜಿಸಿ ಸೈಕಲ್ನಲ್ಲಿ ಹಳ್ಳಿಹಳ್ಳಿಗೆ ಸಂಚರಿಸಿ ಸಾವಿರಾರು ವಚನಗಳನ್ನು ಸಂಗ್ರಹಿಸಿದ ಅವರು, ಸ್ವಂತ ಮುದ್ರಣಾಲಯ ಸ್ಥಾಪಿಸಿ ವಚನಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಿದ ಮಹಾನ್ ಸಾಧಕರು ಎಂದು ಸಂಕನೂರ ಸ್ಮರಿಸಿದರು.
ಹಳಕಟ್ಟಿಯವರು ಸಾಹಿತ್ಯ ಕ್ಷೇತ್ರಕ್ಕೆ ಮಾತ್ರ ಸೀಮಿತರಾಗಿರಲಿಲ್ಲ. ವಿಜಯಪುರದಲ್ಲಿ ಲಿಂಗಾಯತ ವಿದ್ಯಾವರ್ಧಕ ಸಂಘ (ಬಿಎಲ್ಡಿಇ), ಸಿದ್ದೇಶ್ವರ ಬ್ಯಾಂಕ್ ಸೇರಿದಂತೆ ಹಲವು ಶೈಕ್ಷಣಿಕ, ಸಹಕಾರಿ ಸಂಸ್ಥೆಗಳನ್ನು ಕಟ್ಟುವ ಮೂಲಕ ಸಮಾಜದ ಅಭಿವೃದ್ಧಿಗೂ ಅಪಾರ ಕೊಡುಗೆ ನೀಡಿದ್ದಾರೆ. ಇಂದಿನ ಯುವಜನರು ವಚನಗಳನ್ನು ಓದುವುದಷ್ಟೇ ಅಲ್ಲ, ಬದುಕಿನಲ್ಲೂ ಅಳವಡಿಸಿಕೊಳ್ಳಬೇಕು. ‘ಕಳಬೇಡ, ಕೊಲಬೇಡ, ಮುನಿಯಬೇಡ…’ ಎಂಬ ಒಂದೇ ವಚನವನ್ನು ಜೀವನದಲ್ಲಿ ಪಾಲಿಸಿದರೂ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಹೇಳಿದರು.
ಶರಣ ತತ್ವ ಚಿಂತಕ ಅಶೋಕ ಬರಗುಂಡಿ ಮಾತನಾಡಿ, ನಶಿಸಿಹೋಗುತ್ತಿದ್ದ ವಚನ ಸಾಹಿತ್ಯವನ್ನು ಉಳಿಸಲು ಡಾ. ಫ.ಗು. ಹಳಕಟ್ಟಿಯವರು ನಡೆಸಿದ ಹೋರಾಟ ಅಪರೂಪದದ್ದು ಎಂದು ಬಣ್ಣಿಸಿದರು.
ಬಸವಣ್ಣ, ಅಲ್ಲಮಪ್ರಭು ಸೇರಿದಂತೆ ಶರಣರ ವಚನಗಳು ಚದುರಿಹೋಗಿದ್ದ ಸಂದರ್ಭದಲ್ಲಿ ಅವುಗಳನ್ನು ಸಂಗ್ರಹಿಸಿ, ವೈಜ್ಞಾನಿಕವಾಗಿ ವರ್ಗೀಕರಿಸಿ ಸಮಾಜಕ್ಕೆ ಮರಳಿ ನೀಡಿದ ಪುಣ್ಯಾತ್ಮ ಹಳಕಟ್ಟಿಯವರು. ಅವರ ಅಸಾಧಾರಣ ಪರಿಶ್ರಮದ ಫಲವಾಗಿ 15 ಸಂಪುಟಗಳು ಹಾಗೂ ಶಿವಾನುಭವದ 35 ಸಂಪುಟಗಳು ಪ್ರಕಟವಾಗಿವೆ ಎಂದು ಹೇಳಿದರು.
1880ರ ಜುಲೈ 2ರಂದು ಜನಿಸಿದ ಹಳಕಟ್ಟಿಯವರು ವಿದ್ಯಾರ್ಥಿ ಜೀವನದಿಂದಲೇ ಲಿಂಗಾಯತ ಧರ್ಮದ ಇತಿಹಾಸ ಮತ್ತು ವಚನ ಸಾಹಿತ್ಯದ ಕುರಿತು ಅಪಾರ ಆಸಕ್ತಿ ಹೊಂದಿದ್ದರು. ವಕೀಲರಾಗಿ ಲಕ್ಷಾಂತರ ರೂಪಾಯಿ ಸಂಪಾದಿಸುವ ಅವಕಾಶವಿದ್ದರೂ ಅದನ್ನು ತ್ಯಜಿಸಿ ವಚನಗಳ ಹುಡುಕಾಟಕ್ಕೆ ಜೀವನವನ್ನೇ ಮೀಸಲಿಟ್ಟರು ಎಂದು ವಿವರಿಸಿದರು.
ಹಾಲಭಾವಿ ವೀರಭದ್ರಪ್ಪ ತಂದ ಪ್ರಭುಲಿಂಗಲೀಲೆ ಹಾಗೂ ಗಣಭಾಷಿತ ರತ್ನಮಾಲೆ ಗ್ರಂಥಗಳ ಮೂಲಕ ವಚನಗಳತ್ತ ಆಕರ್ಷಿತರಾದ ಹಳಕಟ್ಟಿಯವರು ನಂತರ ಸಾವಿರಾರು ತಾಳೆಗರಿಗಳನ್ನು ಸಂಗ್ರಹಿಸಿ, ವಚನಗಳನ್ನು ವೈಜ್ಞಾನಿಕವಾಗಿ ವರ್ಗೀಕರಿಸಿದರು. ಸುಮಾರು 2,665 ವಚನಗಳನ್ನು 232 ಶೀರ್ಷಿಕೆಗಳಡಿ ಜೋಡಿಸಲು ಹತ್ತು ವರ್ಷಗಳ ಕಾಲ ನಿರಂತರ ಶ್ರಮಿಸಿದರು ಎಂದು ಹೇಳಿದರು.
ಮುದ್ರಣಕ್ಕೆ ಹಣದ ಕೊರತೆ ಎದುರಾದಾಗ ಸ್ವಂತ ಮನೆಯನ್ನೇ ಮಾರಾಟ ಮಾಡಿ ‘ಹಿತಚಿಂತಕ’ ಮುದ್ರಣಾಲಯ ಆರಂಭಿಸಿದರು. ನವಕರ್ನಾಟಕ ವಾರಪತ್ರಿಕೆಯ ಮೂಲಕ 25 ವರ್ಷಗಳ ಕಾಲ ಶರಣ ತತ್ವಗಳನ್ನು ಜನರಿಗೆ ತಲುಪಿಸಿದರು. ಮಗನನ್ನು ಕಳೆದುಕೊಂಡ ನೋವು, ಕಡು ಬಡತನ, ಅನಾರೋಗ್ಯ ಸೇರಿದಂತೆ ಅನೇಕ ಸಂಕಷ್ಟಗಳ ನಡುವೆಯೂ ವಚನ ಸಂಶೋಧನೆಯಿಂದ ಹಿಂದೆ ಸರಿಯಲಿಲ್ಲ. ಸುಮಾರು 25 ಸಾವಿರ ಪುಟಗಳಷ್ಟು ವಚನ ಸಾಹಿತ್ಯವನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಿದ ಮಹಾತ್ಮ ಅವರು ಎಂದು ಬರಗುಂಡಿ ಭಾವುಕರಾಗಿ ಸ್ಮರಿಸಿದರು.
“ನನ್ನನ್ನು ಹೊಗಳಬೇಡಿ, ನನ್ನನ್ನು ನೆನೆಯಬೇಡಿ, ನನ್ನನ್ನು ಹೊಗಳುವ ಬದಲು ವಚನಗಳಂತೆ ಬದುಕಿ” ಎಂಬ ಹಳಕಟ್ಟಿಯವರ ಕೊನೆಯ ಸಂದೇಶವೇ ಅವರ ಬದುಕಿನ ಸಾರವಾಗಿದೆ. ಸಮಾಜದ ಪ್ರತಿಯೊಬ್ಬರೂ ಆ ಆದರ್ಶವನ್ನು ಪಾಲಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ ಅಂಗವಾಗಿ ಪ್ರೌಢಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಮೃತ್ಯುಂಜಯ ಹಿರೇಮಠ ಮತ್ತು ತಂಡ ನಾಡಗೀತೆ ಪ್ರಸ್ತುತಪಡಿಸಿದರು.
ಗದಗ-ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ ಬಬರ್ಚಿ, ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್, ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್., ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಬಸವರಾಜ ವಿ. ಬಳ್ಳಾರಿ, ಶರಣ ಸಾಹಿತ್ಯ ಚಿಂತಕ ಬಳಿಗಾರ, ಕರ್ನಾಟಕ ಜನಪದ ಅಕಾಡೆಮಿಯ ಸದಸ್ಯ ಶಂಕರಣ್ಣ ಸಂಕಣ್ಣನವರ, ಎಸ್.ಎನ್. ಬಳ್ಳಾರಿ, ವಿವಿಧ ಇಲಾಖೆಗಳ ಅಧಿಕಾರಿಗಳು, ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
“ವಚನ ಸಾಹಿತ್ಯ ಉಳಿಸಲು ಡಾ. ಫ.ಗು. ಹಳಕಟ್ಟಿ ತಮ್ಮ ಇಡೀ ಬದುಕನ್ನೇ ಮುಡಿಪಾಗಿಟ್ಟಿದ್ದರು. ಅವರನ್ನು ಸ್ಮರಿಸುವುದಕ್ಕಿಂತ ಅವರ ಆದರ್ಶ ಮತ್ತು ವಚನಗಳ ಸಂದೇಶವನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವುದೇ ನಿಜವಾದ ಗೌರವ.” –
ಎಸ್.ವಿ. ಸಂಕನೂರ, ವಿಧಾನ ಪರಿಷತ್ ಸದಸ್ಯ