Home Blog

‘ನಮ್ಮ ಸಿನಿಮಾವನ್ನೇ ಹತ್ತಿಕ್ಕಿದರು!’ ವಿಘ್ನೇಶ್ ಶಿವನ್ ಕಣ್ಣೀರಿನ ಆರೋಪಕ್ಕೆ ನೆಟ್ಟಿಗರ ತಿರುಗೇಟು

‘ಲವ್ ಇನ್ಶೂರೆನ್ಸ್ ಕಂಪನಿ’ ಚಿತ್ರದ ಸೋಲಿನ ಬಗ್ಗೆ ನಿರ್ದೇಶಕ ವಿಘ್ನೇಶ್ ಶಿವನ್ ಮಾಡಿರುವ ಹೇಳಿಕೆ ಇದೀಗ ಹೊಸ ವಿವಾದಕ್ಕೆ ಕಾರಣವಾಗಿದೆ. ಬಾಕ್ಸ್ ಆಫೀಸ್‌ನಲ್ಲಿ ಸಿನಿಮಾ ಮುಗ್ಗರಿಸಲು ನೆಗೆಟಿವ್ ವಿಮರ್ಶೆಗಳು ಮತ್ತು ಸಂಘಟಿತ ಆನ್‌ಲೈನ್ ಪ್ರಚಾರವೇ ಕಾರಣ ಎಂದು ಅವರು ಹೇಳಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

190 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿದ್ದ ಈ ಚಿತ್ರ ಕೇವಲ 66 ಕೋಟಿ ರೂ. ಗಳಿಕೆ ಮಾಡಿ ದೊಡ್ಡ ಆರ್ಥಿಕ ಹೊಡೆತ ಅನುಭವಿಸಿತ್ತು. ಆದರೆ ಒಟಿಟಿಯಲ್ಲಿ ಚಿತ್ರಕ್ಕೆ ಸಕಾರಾತ್ಮಕ ಪ್ರತಿಕ್ರಿಯೆ ಸಿಗುತ್ತಿರುವುದರಿಂದ ತಮ್ಮ ಅಸಮಾಧಾನವನ್ನು ಬಹಿರಂಗಪಡಿಸಿರುವ ವಿಘ್ನೇಶ್, “ಚಿತ್ರರಂಗದೊಳಗಿನಿಂದಲೇ ಬೆಂಬಲ ಸಿಗದಿದ್ದರೆ ಸಾರ್ವಜನಿಕ ಅಭಿಪ್ರಾಯವೂ ಬದಲಾಗುತ್ತದೆ. ಅದು ಚಿತ್ರದ ಭವಿಷ್ಯವನ್ನು ನಿರ್ಧರಿಸುತ್ತದೆ” ಎಂದು ಹೇಳಿದ್ದಾರೆ.

“ಮೊದಲ ವಾರಾಂತ್ಯದಲ್ಲಿ ಸಿನಿಮಾ ಉತ್ತಮ ಪ್ರದರ್ಶನ ಕಂಡಿತ್ತು. ಆದರೆ ನಂತರ ದಿಢೀರ್ ನೆಗೆಟಿವ್ ಟ್ರೆಂಡ್ ಹುಟ್ಟುಹಾಕಲಾಯಿತು. ಆ ಆಘಾತದಿಂದ ಇನ್ನೂ ಹೊರಬರಲು ಸಾಧ್ಯವಾಗಿಲ್ಲ” ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಆದರೆ ವಿಘ್ನೇಶ್ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. “ಜನರು ಹಣ ಕೊಟ್ಟು ಸಿನಿಮಾ ನೋಡುತ್ತಾರೆ. ಸಿನಿಮಾ ಇಷ್ಟವಾಗದಿದ್ದರೆ ಅಭಿಪ್ರಾಯ ಹೇಳುವ ಹಕ್ಕು ಅವರಿಗಿದೆ” ಎಂದು ಅನೇಕರು ಪ್ರತಿಕ್ರಿಯಿಸಿದ್ದು, ಚಿತ್ರದ ಸೋಲಿಗೆ ವಿಮರ್ಶಕರನ್ನು ಮಾತ್ರ ಹೊಣೆ ಮಾಡುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ಬ್ಯಾಕ್ ಟು ಬ್ಯಾಕ್ ಚಾಂಪಿಯನ್ RCB: ಮುಂದಿನ IPLನಲ್ಲಿ ಹೋಂ ಗ್ರೌಂಡ್ ಯಾವುದು?

ಬೆಂಗಳೂರು: ಐಪಿಎಲ್‌ 2026ರ ಫೈನಲ್‌ನಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಭರ್ಜರಿ ಜಯ ಸಾಧಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಸತತ ಎರಡನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿ ಹೊಸ ಇತಿಹಾಸ ನಿರ್ಮಿಸಿದೆ.

ಆದರೆ ಈ ಸಂಭ್ರಮದ ನಡುವೆಯೇ ಮುಂದಿನ ಐಪಿಎಲ್‌ ಋತುವಿನಲ್ಲಿ ತಂಡದ ತವರು ಮೈದಾನ ಯಾವುದು ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ.

52 ವರ್ಷಗಳ ಇತಿಹಾಸ ಹೊಂದಿರುವ ಎಂ. ಚಿನ್ನಸ್ವಾಮಿ ಕ್ರೀಡಾಂಗಣವನ್ನು ಆಧುನೀಕರಣಗೊಳಿಸಲು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (KSCA) ಮುಂದಾಗಿದ್ದು, ಸದ್ಯದ 35 ಸಾವಿರ ಆಸನಗಳ ಸಾಮರ್ಥ್ಯವನ್ನು 55 ಸಾವಿರಕ್ಕೆ ಹೆಚ್ಚಿಸುವ ಯೋಜನೆ ರೂಪಿಸಿದೆ. ಇದಕ್ಕಾಗಿ ಹಳೆಯ ಕ್ರೀಡಾಂಗಣವನ್ನು ಸಂಪೂರ್ಣವಾಗಿ ಪುನರ್‌ನಿರ್ಮಿಸುವ ಅಗತ್ಯವಿದ್ದು, ಕಾಮಗಾರಿ ಪೂರ್ಣಗೊಳ್ಳಲು ಕನಿಷ್ಠ ಎರಡು ವರ್ಷಗಳ ಕಾಲಾವಕಾಶ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಮುಂದಿನ ಐಪಿಎಲ್‌ ಋತುವಿನಲ್ಲಿ ಆರ್‌ಸಿಬಿ ತನ್ನ ತವರು ಪಂದ್ಯಗಳನ್ನು ಬೇರೆ ಕ್ರೀಡಾಂಗಣದಲ್ಲಿ ಆಡಬೇಕಾದ ಅನಿವಾರ್ಯತೆ ಎದುರಾಗುವ ಸಾಧ್ಯತೆ ಇದೆ. ರಾಯ್ಪುರ ಸೇರಿದಂತೆ ಕೆಲವು ನಗರಗಳ ಕ್ರೀಡಾಂಗಣಗಳನ್ನು ಪರ್ಯಾಯ ತವರು ಮೈದಾನವಾಗಿ ಪರಿಗಣಿಸುವ ಕುರಿತು ಚರ್ಚೆಗಳು ನಡೆಯುತ್ತಿವೆ ಎನ್ನಲಾಗಿದೆ.

ಈಗಾಗಲೇ ಈ ಋತುವಿನಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಕೆಲವು ಪಂದ್ಯಗಳಿಗೆ ರಾಯ್ಪುರವನ್ನು ತಾತ್ಕಾಲಿಕ ತವರು ಮೈದಾನವಾಗಿ ಬಳಸಲಾಗಿತ್ತು. ಹೀಗಾಗಿ ಮುಂದಿನ ಸೀಸನ್‌ನಲ್ಲೂ ರಾಯ್ಪುರವೇ ಆರ್‌ಸಿಬಿಯ ತಾತ್ಕಾಲಿಕ ಹೋಂ ಗ್ರೌಂಡ್ ಆಗುವ ಸಾಧ್ಯತೆಗಳಿವೆ.

ಸತತ ಎರಡು ಬಾರಿ ಐಪಿಎಲ್‌ ಟ್ರೋಫಿ ಗೆದ್ದು ಆತ್ಮವಿಶ್ವಾಸದಲ್ಲಿರುವ ಆರ್‌ಸಿಬಿ, ಮುಂದಿನ ಸೀಸನ್‌ನಲ್ಲಿ ಹ್ಯಾಟ್ರಿಕ್ ಚಾಂಪಿಯನ್ ಪಟ್ಟದ ಕನಸಿನೊಂದಿಗೆ ಕಣಕ್ಕಿಳಿಯಲಿದ್ದು, ತವರು ಮೈದಾನದ ಬದಲಾವಣೆ ತಂಡದ ಪ್ರದರ್ಶನದ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ಆಟಗಾರರ ಬಸ್‌ನಲ್ಲಿ ಬೆಂಕಿ: ಫೈನಲ್ ಸೋಲಿನ ಬೆನ್ನಲ್ಲೇ ಗುಜರಾತ್ ಟೈಟಾನ್ಸ್‌ಗೆ ಮತ್ತೊಂದು ಶಾಕ್!

ಅಹಮದಾಬಾದ್‌: ಐಪಿಎಲ್‌ ಫೈನಲ್‌ನಲ್ಲಿ ಆರ್‌ಸಿಬಿ ವಿರುದ್ಧ ಸೋತು ನಿರಾಸೆ ಅನುಭವಿಸಿದ್ದ ಗುಜರಾತ್ ಟೈಟಾನ್ಸ್ ತಂಡ ಮತ್ತೊಂದು ಆತಂಕಕಾರಿ ಘಟನೆಯಿಂದ ಪಾರಾಗಿದೆ.

ಪಂದ್ಯ ಮುಗಿದ ಬಳಿಕ ಹೋಟೆಲ್‌ಗೆ ತೆರಳುತ್ತಿದ್ದ ವೇಳೆ ಆಟಗಾರರು ಪ್ರಯಾಣಿಸುತ್ತಿದ್ದ ಬಸ್‌ನಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡ ಘಟನೆ ನಡೆದಿದೆ.

ನರೇಂದ್ರ ಮೋದಿ ಕ್ರೀಡಾಂಗಣದಿಂದ ಹೋಟೆಲ್‌ಗೆ ತೆರಳುತ್ತಿದ್ದ ವೇಳೆ ಬಸ್‌ನಲ್ಲಿ ತಾಂತ್ರಿಕ ದೋಷ ಉಂಟಾಗಿ ಹೊಗೆ ಹಾಗೂ ಬೆಂಕಿ ಕಾಣಿಸಿಕೊಂಡಿದೆ ಎಂದು ವರದಿಯಾಗಿದೆ. ಈ ಕಾರಣದಿಂದ ಆಟಗಾರರು ಸುಮಾರು ಒಂದು ಗಂಟೆ ಕಾಲ ಬಸ್‌ನಲ್ಲೇ ಸಿಲುಕಿಕೊಂಡಿದ್ದರು.

ಬಳಿಕ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದ ಅಧಿಕಾರಿಗಳು ಮತ್ತು ಭದ್ರತಾ ಸಿಬ್ಬಂದಿ, ಆಟಗಾರರನ್ನು ಸುರಕ್ಷಿತವಾಗಿ ಮತ್ತೊಂದು ಬಸ್‌ಗೆ ಸ್ಥಳಾಂತರಿಸಿದರು. ಅದೃಷ್ಟವಶಾತ್ ಯಾವುದೇ ಆಟಗಾರರಿಗೆ ಅಥವಾ ಸಿಬ್ಬಂದಿಗೆ ಗಾಯಗಳಾಗಿಲ್ಲ ಎಂದು ತಿಳಿದುಬಂದಿದೆ.

ಈ ಘಟನೆ ಐಪಿಎಲ್‌ ಫೈನಲ್‌ನಲ್ಲಿ ಸೋಲಿನ ಆಘಾತದಿಂದ ಹೊರಬರದಿದ್ದ ಗುಜರಾತ್ ಟೈಟಾನ್ಸ್ ತಂಡಕ್ಕೆ ಮತ್ತೊಂದು ಸಂಕಷ್ಟವನ್ನು ತಂದೊಡ್ಡಿದೆ. ಪ್ಲೇಆಫ್ ಹಂತದಿಂದಲೇ ನಿರಂತರ ಪ್ರಯಾಣ, ಬಿಗಿಯಾದ ವೇಳಾಪಟ್ಟಿ ಹಾಗೂ ಪ್ರತಿಕೂಲ ಹವಾಮಾನದಿಂದ ತಂಡ ಸಾಕಷ್ಟು ಒತ್ತಡ ಅನುಭವಿಸಿತ್ತು ಎನ್ನಲಾಗಿದೆ.

ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟಾನ್ಸ್ 20 ಓವರ್‌ಗಳಲ್ಲಿ 155 ರನ್‌ ಗಳಿಸಿತ್ತು. ಗುರಿ ಬೆನ್ನತ್ತಿದ ಆರ್‌ಸಿಬಿ 18 ಓವರ್‌ಗಳಲ್ಲೇ 161 ರನ್‌ ಕಲೆಹಾಕಿ ಸತತ ಎರಡನೇ ಬಾರಿಗೆ ಐಪಿಎಲ್‌ ಚಾಂಪಿಯನ್ ಪಟ್ಟ ಅಲಂಕರಿಸಿತು.

ಬೈಕ್-ಸ್ಕೂಟರ್ ನಡುವೆ ಡಿಕ್ಕಿ: ಯುವಕ ಸ್ಥಳದಲ್ಲೇ ಸಾವು!

ಬೆಂಗಳೂರು:- ಬೈಕ್ ಗೆ ಸ್ಕೂಟರ್ ಡಿಕ್ಕಿ ಹೊಡೆದ ಪರಿಣಾಮ ಯುವಕನೋರ್ವ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಿಕ್ಕಬಾಣಾವರದ ಲಕ್ಷ್ಮಿಪುರದ ಬಳಿ ಜರುಗಿದೆ.

ಮನೋಜ್ (22) ಮೃತ ಯುವಕ. ಸ್ಕೂಟರ್ ನಲ್ಲಿ ಮನೋಜ್ ಹಾಗೂ ಆತನ ಸ್ನೇಹಿತ ತೆರಳುತ್ತಿದ್ದರು. ಆಗ ಬೈಕ್ ಗೆ ಸ್ಕೂಟರ್ ಡಿಕ್ಕಿಯಾಗಿದೆ. ನೆನ್ನೆ ರಾತ್ರಿ ಸುಮಾರು 11:30 ಕ್ಕೆ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ.

ಸಧ್ಯ ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕ್ಕಬಾಣಾವರ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.

ಜನತೆಗೆ ಮತ್ತೊಂದು ಶಾಕ್: ವಾಣಿಜ್ಯ LPG ಸಿಲಿಂಡರ್ ದರ ಮತ್ತೆ ಏರಿಕೆ!

ನವದೆಹಲಿ/ಬೆಂಗಳೂರು: ಈಗಾಗಲೇ ಪೆಟ್ರೋಲ್, ಡೀಸೆಲ್ ಹಾಗೂ ಸಿಎನ್‌ಜಿ ದರ ಏರಿಕೆಯಿಂದ ತತ್ತರಿಸಿರುವ ಜನತೆಗೆ ಕೇಂದ್ರ ಸರ್ಕಾರ ಮತ್ತೊಮ್ಮೆ ಆಘಾತ ನೀಡಿದೆ.

ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ದರವನ್ನು ಮತ್ತೆ ಹೆಚ್ಚಿಸಲಾಗಿದ್ದು, ಪರಿಷ್ಕೃತ ದರಗಳು ಇಂದಿನಿಂದಲೇ ಜಾರಿಗೆ ಬಂದಿವೆ.

ನವದೆಹಲಿ ನಗರದಲ್ಲಿ 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ ದರವು 42 ರೂಪಾಯಿ ಹೆಚ್ಚಳವಾಗಿ ಪ್ರತಿ ಸಿಲಿಂಡರ್‌ ಬೆಲೆ 3,113.5 ರೂಪಾಯಿಗೆ ತಲುಪಿದೆ. ಇದೇ ವೇಳೆ ಬೆಂಗಳೂರಿನಲ್ಲಿ 46 ರೂಪಾಯಿ ಏರಿಕೆಯಾಗಿದ್ದು, ಪ್ರತಿ ಸಿಲಿಂಡರ್‌ ದರ 3,198 ರೂಪಾಯಿಗೆ ಏರಿಕೆಯಾಗಿದೆ.

ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ದರದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

ಇದು ಕಳೆದ ಮೇ 1 ರಿಂದ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಮೇಲೆ 2ನೇ ಬಾರಿಗೆ ಮಾಡಿದ ಬೆಲೆ ಏರಿಕೆಯಾಗಿದೆ. ಪಂಚ ರಾಜ್ಯಗಳ ಚುನಾವಣೆ ಮುಗಿದ ಬೆನ್ನಲ್ಲೇ ಕೇಂದ್ರ ಸರ್ಕಾರ ಮೇ 1 ರಂದು ಏಕಾಏಕಿ ಪ್ರತಿ ವಾಣಿಜ್ಯ ಸಿಲಿಂಡರ್‌ ಮೇಲಿನ ಬೆಲೆಯನ್ನು 993 ರೂ.ಗಳಷ್ಟು ಹೆಚ್ಚಳ ಮಾಡಿತ್ತು. ಆದಾಗ್ಯೂ ತೈಲ ಕಂಪನಿಗಳು ಸಾಕಷ್ಟು ನಷ್ಟ ಅನುಭವಿಸುತ್ತಿರುವುದರಿಂದ ಬೆಲೆ ಏರಿಕೆಯು ಅನಿವಾರ್ಯವಾಗಿದೆ ಎಂದು ಸರ್ಕಾರ ಹೇಳಿದೆ.

 

ಕರ್ನಾಟಕದ ವಾಯು ಗುಣಮಟ್ಟ ವರದಿ: ಇಳಿಕೆಯಾಯ್ತು ಮಾಲಿನ್ಯ, ಬೆಂಗಳೂರು ಮಂದಿಗೆ ಗುಡ್ ನ್ಯೂಸ್!

ಬೆಂಗಳೂರು: ರಾಜ್ಯದಲ್ಲಿ ಇತ್ತೀಚೆಗೆ ಸುರಿದ ಪ್ರೀ-ಮಾನ್ಸೂನ್ ಮಳೆ ಹಾಗೂ ಮುಂಗಾರು ಮಾರುತಗಳ ಪರಿಣಾಮದಿಂದ ಕರ್ನಾಟಕದ ಪ್ರಮುಖ ನಗರಗಳಲ್ಲಿ ವಾಯು ಗುಣಮಟ್ಟವು ಉತ್ತಮ ಹಾಗೂ ಸಮಾಧಾನಕರ ಮಟ್ಟದಲ್ಲಿದೆ ಎಂದು ವರದಿ ತಿಳಿಸಿದೆ.

ರಾಜಧಾನಿ ಬೆಂಗಳೂರು ನಗರದಲ್ಲಿ ಧೂಳಿನ ಕಣಗಳು ಗಣನೀಯವಾಗಿ ಇಳಿಕೆಯಾಗಿ ಸರಾಸರಿ ವಾಯು ಗುಣಮಟ್ಟ ಸೂಚ್ಯಂಕ (AQI) 45 ರಿಂದ 65ರ ನಡುವೆ ದಾಖಲಾಗಿದೆ. ಇದು ಆರೋಗ್ಯಕರ ವಾತಾವರಣವನ್ನು ಸೂಚಿಸುತ್ತದೆ.

ನಗರದ ಪ್ರಮುಖ ಪ್ರದೇಶಗಳಲ್ಲಿ ಸಿಲ್ಕ್ ಬೋರ್ಡ್ ಹಾಗೂ ಮೆಜೆಸ್ಟಿಕ್ ಭಾಗಗಳಲ್ಲಿ ವಾಹನ ದಟ್ಟಣೆಯ ಕಾರಣದಿಂದ AQI ಸ್ವಲ್ಪ ಹೆಚ್ಚಾಗಿ 60–70ರ ನಡುವೆ ದಾಖಲಾಗಿದ್ದು, ಜಯನಗರ ಮತ್ತು ಮಲ್ಲೇಶ್ವರಂ ಪ್ರದೇಶಗಳಲ್ಲಿ ಹಸಿರು ವಲಯ ಹೆಚ್ಚಿರುವ ಕಾರಣ AQI 35–45ರಷ್ಟಿದೆ. ಹೂಡಿ ಮತ್ತು ವೈಟ್‌ಫೀಲ್ಡ್ ಪ್ರದೇಶಗಳಲ್ಲಿ AQI 50–62ರ ನಡುವೆ ದಾಖಲಾಗಿದೆ.

ರಾಜ್ಯದ ಇತರೆ ನಗರಗಳಲ್ಲಿಯೂ ವಾಯು ಗುಣಮಟ್ಟ ಉತ್ತಮ ಸ್ಥಿತಿಯಲ್ಲಿದ್ದು, ಮೈಸೂರು ನಗರದಲ್ಲಿ 30–40, ಮಂಗಳೂರು 35–45, ಹುಬ್ಬಳ್ಳಿ-ಧಾರವಾಡ 50–60 ಹಾಗೂ ಕಲಬುರಗಿಯಲ್ಲಿ 65–75ರಷ್ಟು AQI ದಾಖಲಾಗಿದೆ.

ಸಾಮಾನ್ಯವಾಗಿ 0–50 AQI ಅನ್ನು ‘ಅತ್ಯಂತ ಉತ್ತಮ’ ಹಾಗೂ 51–100 ಅನ್ನು ‘ಸಮಾಧಾನಕರ’ ಎಂದು ಪರಿಗಣಿಸಲಾಗುತ್ತದೆ. ಸದ್ಯಕ್ಕೆ ರಾಜ್ಯದಲ್ಲಿ ವಾಯು ಮಾಲಿನ್ಯದಿಂದ ಯಾವುದೇ ಆರೋಗ್ಯ ತುರ್ತು ಪರಿಸ್ಥಿತಿ ಇಲ್ಲ ಎಂದು ವರದಿ ತಿಳಿಸಿದೆ.

RCB ಗೋಲ್ಡನ್ ಯುಗ: 3 ವರ್ಷಗಳಲ್ಲಿ 4 ಟ್ರೋಫಿಗಳ ಭರ್ಜರಿ ಸಾಧನೆ!

ಭಾರತೀಯ ಟಿ20 ಲೀಗ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಗೆಲುವಿನ ಅಧ್ಯಾಯ ಮತ್ತೊಮ್ಮೆ ವಿಸ್ತರಿಸಿದೆ.

2024ರಿಂದ ಆರಂಭವಾದ ಈ ಸುವರ್ಣ ಯುಗದಲ್ಲಿ ಕೇವಲ ಮೂರು ವರ್ಷಗಳ ಅವಧಿಯಲ್ಲಿ ಆರ್ಸಿಬಿ ಒಟ್ಟು 4 ಟ್ರೋಫಿಗಳನ್ನು ಗೆದ್ದು ಕ್ರಿಕೆಟ್ ಲೋಕದಲ್ಲಿ ಹೊಸ ಇತಿಹಾಸ ನಿರ್ಮಿಸಿದೆ.

2024ರಲ್ಲಿ ನಡೆದ ವುಮೆನ್ಸ್ ಪ್ರೀಮಿಯರ್ ಲೀಗ್ (WPL)ನಲ್ಲಿ ಸ್ಮೃತಿ ಮಂಧಾನ ನೇತೃತ್ವದ ಆರ್ಸಿಬಿ ಮಹಿಳಾ ತಂಡ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮಣಿಸಿ ಫ್ರಾಂಚೈಸಿಗೆ ಮೊದಲ ಟ್ರೋಫಿ ತಂದುಕೊಟ್ಟಿತು. ಇದು ಆರ್ಸಿಬಿಯ ಯಶಸ್ಸಿನ ಹೊಸ ಅಧ್ಯಾಯಕ್ಕೆ ನಾಂದಿ ಹಾಡಿತು.

2025ರಲ್ಲಿ ನಡೆದ ಐಪಿಎಲ್‌ನಲ್ಲಿ 17 ವರ್ಷಗಳ ನಿರೀಕ್ಷೆಗೆ ಅಂತ್ಯವಿಟ್ಟು, ರಜತ್ ಪಾಟಿದಾರ್ ನೇತೃತ್ವದ ಪುರುಷರ ತಂಡ ಪಂಜಾಬ್ ಕಿಂಗ್ಸ್ ವಿರುದ್ಧ ಭರ್ಜರಿ ಜಯ ಸಾಧಿಸಿ ಮೊದಲ ಐಪಿಎಲ್ ಟ್ರೋಫಿಯನ್ನು ತಮ್ಮದಾಗಿಸಿಕೊಂಡಿತು.

2026ರಲ್ಲಿ ಆರ್ಸಿಬಿ ಮಹಿಳಾ ತಂಡ ಮತ್ತೆ ಮಿಂಚಿ, ಫೆಬ್ರವರಿಯಲ್ಲಿ ನಡೆದ ರೋಮಾಂಚಕ ಫೈನಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ದಾಖಲೆಯ ರನ್ ಚೇಸ್ ಮೂಲಕ ಎರಡನೇ WPL ಕಪ್ ಗೆದ್ದುಕೊಂಡಿತು.

ಇದೇ ವರ್ಷದ ಐಪಿಎಲ್ ಸೀಸನ್‌ನಲ್ಲೂ ಆರ್ಸಿಬಿ ಪುರುಷರ ತಂಡ ಮತ್ತೊಮ್ಮೆ ಚಾಂಪಿಯನ್ ಪಟ್ಟ ಅಲಂಕರಿಸಿದ್ದು, ಬ್ಯಾಕ್ ಟು ಬ್ಯಾಕ್ ಟ್ರೋಫಿ ಜಯದೊಂದಿಗೆ ಹೊಸ ದಾಖಲೆ ನಿರ್ಮಿಸಿದೆ.

ಈ ಮೂಲಕ ಕೇವಲ ಮೂರು ವರ್ಷಗಳಲ್ಲಿ 4 ಟ್ರೋಫಿಗಳ ಸಾಧನೆಯೊಂದಿಗೆ ಆರ್ಸಿಬಿ ತನ್ನ ಫ್ರಾಂಚೈಸಿ ಇತಿಹಾಸದಲ್ಲಿ ‘ಗೋಲ್ಡನ್ ಏರಾ’ ಆರಂಭಿಸಿದೆ.

ಕರ್ನಾಟಕದಾದ್ಯಂತ ಮುಂಗಾರು ಪೂರ್ವ ಮಳೆ ಅಬ್ಬರ: 7 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ

ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಪೂರ್ವ ಮಾರುತಗಳು ಹಾಗೂ ಚಂಡಮಾರುತದ ಪ್ರಭಾವ ಹೆಚ್ಚಾಗಿದ್ದು, ಮುಂದಿನ ಕೆಲವು ದಿನಗಳಲ್ಲಿ ಕರ್ನಾಟಕದಾದ್ಯಂತ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ವಿಶೇಷವಾಗಿ ದಕ್ಷಿಣ ಒಳನಾಡಿನ ಚಾಮರಾಜನಗರ, ಚಿಕ್ಕಮಗಳೂರು, ಚಿತ್ರದುರ್ಗ, ಹಾಸನ, ಕೊಡಗು, ಮೈಸೂರು ಹಾಗೂ ತುಮಕೂರು ಜಿಲ್ಲೆಗಳಲ್ಲಿ ಗುಡುಗು-ಸಿಡಿಲು ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಈ ಜಿಲ್ಲೆಗಳಲ್ಲಿ ಗಂಟೆಗೆ 30 ರಿಂದ 40 ಕಿಲೋಮೀಟರ್ ವೇಗದಲ್ಲಿ ಬಲವಾದ ಗಾಳಿಯೂ ಬೀಸುವ ಸಾಧ್ಯತೆ ಇರುವುದರಿಂದ ಹವಾಮಾನ ಇಲಾಖೆ ‘ಯೆಲ್ಲೋ ಅಲರ್ಟ್’ ಘೋಷಿಸಿದೆ.

ಶಿವಮೊಗ್ಗ ಹಾಗೂ ಮಂಡ್ಯ ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ನಿರೀಕ್ಷೆಯಿದ್ದು, ಉಳಿದ ಭಾಗಗಳಲ್ಲಿ ಒಣ ಹವಾಮಾನ ಮುಂದುವರಿಯಲಿದೆ.

ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡದಲ್ಲಿ ಕೆಲವು ಸ್ಥಳಗಳಲ್ಲಿ ಹಗುರ ಮಳೆ ಅಥವಾ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಇನ್ನು ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ, ಯಾದಗಿರಿ, ಕಲಬುರಗಿ ಹಾಗೂ ಬೀದರ್ ಜಿಲ್ಲೆಗಳಲ್ಲಿ ಗಂಟೆಗೆ 40 ರಿಂದ 50 ಕಿಲೋಮೀಟರ್ ವೇಗದ ಗಾಳಿಯೊಂದಿಗೆ ಹಗುರದಿಂದ ಸಾಧಾರಣ ಮಳೆಯ ಮುನ್ಸೂಚನೆ ನೀಡಲಾಗಿದೆ.

ಮಳೆ ಹಾಗೂ ಬಿರುಗಾಳಿ ಸಂದರ್ಭಗಳಲ್ಲಿ ಸಾರ್ವಜನಿಕರು ಸುರಕ್ಷಿತ ಸ್ಥಳಗಳಲ್ಲಿ ಆಶ್ರಯ ಪಡೆಯಬೇಕು ಎಂದು ಹವಾಮಾನ ಇಲಾಖೆ ಹಾಗೂ ವಿಪತ್ತು ನಿರ್ವಹಣಾ ಇಲಾಖೆ ಸೂಚನೆ ನೀಡಿದೆ. ಗುಡುಗು-ಮಿಂಚಿನ ಸಮಯದಲ್ಲಿ ಮರಗಳ ಕೆಳಗೆ ಅಥವಾ ವಿದ್ಯುತ್ ಕಂಬಗಳ ಬಳಿ ನಿಲ್ಲದಂತೆ ಎಚ್ಚರಿಕೆ ನೀಡಲಾಗಿದೆ.

“ಈ ಸಲವೂ ಕಪ್ ನಮ್ದೇ! RCBಗೆ ಸತತ 2ನೇ ಐಪಿಎಲ್ ಕಿರೀಟ

ಬೌಲರ್‌ಗಳ ಶಿಸ್ತುಬದ್ಧ ಮಾರಕ ದಾಳಿ ಹಾಗೂ ರನ್‌ ಮಷಿನ್ ವಿರಾಟ್ ಕೊಹ್ಲಿಯ ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಇತಿಹಾಸ ನಿರ್ಮಿಸಿದೆ.

ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಫೈನಲ್‌ನಲ್ಲಿ ಗುಜರಾತ್ ಟೈಟಾನ್ಸ್ (GT) ತಂಡವನ್ನು ಧೂಳೀಪಟ ಮಾಡಿದ RCB ಸತತ ಎರಡನೇ ಬಾರಿಗೆ ಐಪಿಎಲ್ ಚಾಂಪಿಯನ್ ಪಟ್ಟ ಅಲಂಕರಿಸಿದೆ.

ಐಪಿಎಲ್ ಇತಿಹಾಸದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK) ಮತ್ತು ಮುಂಬೈ ಇಂಡಿಯನ್ಸ್ (MI) ನಂತರ ಸತತ ಎರಡು ಬಾರಿ ಟ್ರೋಫಿ ಗೆದ್ದ ಮೂರನೇ ತಂಡ ಎಂಬ ಗೌರವಕ್ಕೂ RCB ಪಾತ್ರವಾಗಿದೆ. ಈ ಐತಿಹಾಸಿಕ ಗೆಲುವಿನ ನಂತರ ವಿಶ್ವದಾದ್ಯಂತ ಕೋಟ್ಯಂತರ ಅಭಿಮಾನಿಗಳಲ್ಲಿ ಸಂಭ್ರಮದ ಹೊಳೆ ಹರಿದಿದ್ದು, “ಈ ಸಲವೂ ಕಪ್ ನಮ್ದೇ” ಎಂಬ ಘೋಷಣೆ ಎಲ್ಲೆಡೆ ಮೊಳಗಿದೆ.

ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟಾನ್ಸ್, RCB ಬೌಲರ್‌ಗಳ  ದಾಳಿಗೆ ನಲುಗಿ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 155 ರನ್‌ಗಳ ಸಾಧಾರಣ ಮೊತ್ತಕ್ಕೆ ಸೀಮಿತವಾಯಿತು.

ಗುರಿ ಬೆನ್ನಟ್ಟಿದ RCB 18 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 161 ರನ್ ಗಳಿಸಿ ಜಯ ಸಾಧಿಸಿತು.

ಕೊಹ್ಲಿಯ ಮಾಸ್ಟರ್ ಕ್ಲಾಸ್ ಇನ್ನಿಂಗ್ಸ್:

ಈ ಗೆಲುವಿನಲ್ಲಿ ವಿರಾಟ್ ಕೊಹ್ಲಿ ಮತ್ತೊಮ್ಮೆ ಕೇಂದ್ರಬಿಂದು. ಆರಂಭಿಕ ಆಟಗಾರನಾಗಿ ಕ್ರೀಸ್‌ಗೆ ಇಳಿದ ಕೊಹ್ಲಿ ಮೊದಲ ಓವರ್‌ನಿಂದಲೇ ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶಿಸಿದರು. 42 ಎಸೆತಗಳಲ್ಲಿ ಅಜೇಯ 75 ರನ್ (9 ಬೌಂಡರಿ, 3 ಸಿಕ್ಸರ್) ಸಿಡಿಸಿ ತಂಡವನ್ನು ಗೆಲುವಿನತ್ತ ಕೊಂಡೊಯ್ದರು.

ವೆಂಕಟೇಶ್ ಅಯ್ಯರ್ ಕೂಡ ಭರ್ಜರಿ ಆರಂಭ ನೀಡಿದರು. ಅಯ್ಯರ್ ಮತ್ತು ಕೊಹ್ಲಿ ಮೊದಲ ವಿಕೆಟ್‌ಗೆ 27 ಎಸೆತಗಳಲ್ಲಿ 62 ರನ್ ಜೊತೆಯಾಟವಾಡಿದರು. ಅಯ್ಯರ್ 16 ಎಸೆತಗಳಲ್ಲಿ 32 ರನ್ ಗಳಿಸಿ ಔಟಾದರು. ದೇವದತ್ ಪಡಿಕ್ಕಲ್ ಕೇವಲ 1 ರನ್‌ಗೆ ನಿರಾಸೆ ಮೂಡಿಸಿದರು.

ರಶೀದ್ ಖಾನ್ ಒಂದೇ ಓವರ್‌ನಲ್ಲಿ ರಜತ್ ಪಟೀದಾರ್ ಮತ್ತು ಕೃನಾಲ್ ಪಾಂಡ್ಯ ಅವರನ್ನು ಔಟ್ ಮಾಡಿ ಪಂದ್ಯಕ್ಕೆ ತಿರುವು ನೀಡಲು ಯತ್ನಿಸಿದರೂ, ಕೊಹ್ಲಿ ಸ್ಥಿರತೆಯಿಂದ ಆಟವನ್ನು ಹಿಡಿದಿಟ್ಟರು. ಟಿಮ್ ಡೇವಿಡ್ ಜೊತೆಗೂಡಿ 41 ರನ್‌ಗಳ ಮಹತ್ವದ ಜೊತೆಯಾಟವಾಡಿ ತಂಡವನ್ನು ಗೆಲುವಿನ ಹಾದಿಗೆ ಕರೆದೊಯ್ದರು.

ಪ್ರಮಾಣವಚನದ ದಿನವೇ ಕಾಂಗ್ರೆಸ್ ಭವನಕ್ಕೆ ಗುದ್ದಲಿ ಪೂಜೆಗೆ ಡಿಕೆಶಿ ಪ್ಲಾನ್!

ಬೆಂಗಳೂರು: ಮುಖ್ಯಮಂತ್ರಿ ಪದಗ್ರಹಣದ ದಿನವೇ ಕಾಂಗ್ರೆಸ್ ಪಕ್ಷದ ನೂತನ ಕಚೇರಿ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಲು ನಿಯೋಜಿತ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಿದ್ಧತೆ ನಡೆಸಿದ್ದಾರೆ.

ರೇಸ್ ಕೋರ್ಸ್ ರಸ್ತೆಯಲ್ಲಿರುವ ಕಾಂಗ್ರೆಸ್ ಭವನವನ್ನು ಸಂಪೂರ್ಣವಾಗಿ ಹೊಸದಾಗಿ ನಿರ್ಮಿಸಲು ನಿರ್ಧರಿಸಲಾಗಿದ್ದು, ಪ್ರಮಾಣವಚನ ಸ್ವೀಕಾರದ ನಂತರ ಅದೇ ಸಂಜೆ ರಾಹುಲ್ ಗಾಂಧಿ ಸಮ್ಮುಖದಲ್ಲಿ ಭೂಮಿ ಪೂಜೆ ನೆರವೇರಿಸುವ ಯೋಜನೆ ರೂಪಿಸಲಾಗಿದೆ.

ಇದಕ್ಕೂ ಮುನ್ನ ರೇಸ್ ಕೋರ್ಸ್ ರಸ್ತೆಯ ಸ್ಥಳಕ್ಕೆ ಭೇಟಿ ನೀಡಿದ ಡಿಕೆ ಶಿವಕುಮಾರ್, ಅಧಿಕಾರಿಗಳೊಂದಿಗೆ ಸಿದ್ಧತೆಗಳ ಕುರಿತು ಪರಿಶೀಲನೆ ನಡೆಸಿದರು. ಕುರ್ಚಿಗಳ ವ್ಯವಸ್ಥೆ, ವೇದಿಕೆ ರೂಪುರೇಷೆ ಹಾಗೂ ಪ್ರಮಾಣವಚನ ಸಮಾರಂಭದ ನೇರ ಪ್ರಸಾರದ ವ್ಯವಸ್ಥೆ ಕುರಿತು ಸೂಚನೆಗಳನ್ನು ನೀಡಿದರು.

ರಾಜ್ಯದಾದ್ಯಂತ 100 ಕಾಂಗ್ರೆಸ್ ಕಚೇರಿಗಳನ್ನು ನಿರ್ಮಿಸುವ ಗುರಿಯೂ ಹೊಂದಲಾಗಿದ್ದು, ಅವುಗಳ ಶಂಕುಸ್ಥಾಪನೆ ಮುಂದಿನ ಹಂತದಲ್ಲಿ ನಡೆಯಲಿದೆ ಎಂದು ಡಿಕೆ ಶಿವಕುಮಾರ್ ತಿಳಿಸಿದ್ದಾರೆ.

error: Content is protected !!