ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲೂಕಿನ ಐಮಂಗಲ ಗ್ರಾಮದಲ್ಲಿ ದಲಿತ ಸಮುದಾಯದ ಶಿವಶರಣ ಹರಳಯ್ಯ ಮಠದ ಪೀಠಾಧಿಪತಿ ಬಸವ ಹರಳಯ್ಯ ಶ್ರೀಗಳ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿರುವ ಘಟನೆ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮಠದ ಪಕ್ಕದ ಜಮೀನಿನ ವಿವಾದವೇ ಹಲ್ಲೆಗೆ ಕಾರಣ ಎನ್ನಲಾಗಿದ್ದು, ಜಮೀನಿನ ಮಾಲೀಕ ಸಿದ್ದೇಶ್ವರ ಹಾಗೂ ಆತನ ಸಹಚರರ ವಿರುದ್ಧ ಆರೋಪ ಕೇಳಿಬಂದಿದೆ.
ಸುಮಾರು ಒಂದು ವರ್ಷದಿಂದ ಮಠದ ಪ್ರವೇಶ ದ್ವಾರದ ಜಾಗಕ್ಕೆ ಸಂಬಂಧಿಸಿದ ವಿವಾದ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದೆ. ಆದರೆ ಪ್ರಕರಣ ಇತ್ಯರ್ಥವಾಗುವ ಮುನ್ನವೇ ಭಾನುವಾರ ರಾತ್ರಿ ಆರೋಪಿಗಳು ಮಠಕ್ಕೆ ನುಗ್ಗಿ ಹರಳಯ್ಯ ಶ್ರೀಗಳು ಹಾಗೂ ಶಾಲಾ ಬಸ್ ಚಾಲಕ ಭೀಮರಾಜ್ ಮೇಲೆ ಹಲ್ಲೆ ನಡೆಸಿದ್ದಾರೆ. ಹಲ್ಲೆಯಲ್ಲಿ ಇಬ್ಬರಿಗೂ ಗಾಯಗಳಾಗಿದ್ದು, ಮೂಗು ಮತ್ತು ಬಾಯಿಗೆ ತೀವ್ರ ಪೆಟ್ಟಾಗಿದೆ.
ಹಲ್ಲೆಯ ಬಳಿಕ ದೂರು ನೀಡಲು ಐಮಂಗಲ ಪೊಲೀಸ್ ಠಾಣೆಗೆ ತೆರಳಿದ್ದ ಶ್ರೀಗಳ ಹಿಂದೆ ಠಾಣೆಗೂ ನುಗ್ಗಿದ ಆರೋಪಿಗಳು ಅಲ್ಲಿಯೂ ಗಲಾಟೆ ನಡೆಸಿದ್ದಾರೆ ಎನ್ನಲಾಗಿದೆ. ಶ್ರೀಗಳು ಕುಳಿತಿದ್ದ ಕುರ್ಚಿಯನ್ನು ಒದ್ದು ಮುರಿದು ಬೆದರಿಕೆ ಹಾಕಿರುವ ಆರೋಪವೂ ಕೇಳಿಬಂದಿದೆ.
ಗಾಯಾಳುಗಳಾದ ಹರಳಯ್ಯ ಶ್ರೀಗಳು ಹಾಗೂ ಚಾಲಕ ಭೀಮರಾಜ್ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. “ಪೊಲೀಸ್ ಠಾಣೆಗೆ ಬಂದರೂ ರಕ್ಷಣೆ ಸಿಗುತ್ತಿಲ್ಲ. ಸ್ವಾಮೀಜಿಯೇ ಸುರಕ್ಷಿತರಲ್ಲದಿದ್ದರೆ ಸಾಮಾನ್ಯ ಜನರ ಸ್ಥಿತಿ ಏನು?” ಎಂದು ಹರಳಯ್ಯ ಶ್ರೀಗಳು ಪ್ರಶ್ನಿಸಿದ್ದು, ಐಮಂಗಲ ಪಿಎಸ್ಐ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಘಟನಾ ಸ್ಥಳಕ್ಕೆ ಸಿಪಿಐ ಗುಡ್ಡಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿಗಳಿಗಾಗಿ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ. ಐಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

