Home Blog

ಹುಬ್ಬಳ್ಳಿಗೆ ಬಾಂಗ್ಲಾ ವಲಸಿಗರ ಎಂಟ್ರಿ ಆರೋಪ: ಆಧಾರ್ ನೋಡಿ ಬಿಟ್ಟ ಪೊಲೀಸರಿಗೆ ಮುತಾಲಿಕ್ ಕಿಡಿ

0

ಹುಬ್ಬಳ್ಳಿ: ಅಕ್ರಮ ಬಾಂಗ್ಲಾ ವಲಸಿಗರು ಹುಬ್ಬಳ್ಳಿ ಸೇರಿದಂತೆ ದಕ್ಷಿಣ ಭಾರತದ ನಗರಗಳಿಗೆ ನುಸುಳುತ್ತಿದ್ದಾರೆ ಎಂಬ ಆರೋಪದ ನಡುವೆ ಹುಬ್ಬಳ್ಳಿಯ ಶ್ರೀ ಸಿದ್ದಾರೂಢ ರೈಲ್ವೇ ನಿಲ್ದಾಣದ ಎದುರು ಶ್ರೀರಾಮಸೇನೆ ಭಾರೀ ಪ್ರತಿಭಟನೆ ನಡೆಸಿತು. ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಪಶ್ಚಿಮ ಬಂಗಾಳದಿಂದ ಆಗಮಿಸುವವರ ಮೇಲೆ ಕಠಿಣ ನಿಗಾವಹಿಸಬೇಕೆಂದು ಆಗ್ರಹಿಸಲಾಯಿತು.

ಇತ್ತೀಚೆಗೆ ಪಶ್ಚಿಮ ಬಂಗಾಳದಿಂದ ಬಂದಿದ್ದ ಕೆಲ ಶಂಕಿತರನ್ನು ರೈಲ್ವೆ ಪೊಲೀಸರು ಕೇವಲ ಆಧಾರ್ ಕಾರ್ಡ್ ಪರಿಶೀಲಿಸಿ ಬಿಡುಗಡೆ ಮಾಡಿರುವುದು ವಿವಾದಕ್ಕೆ ಕಾರಣವಾಗಿದೆ. ಅವರು ಬಾಗಲಕೋಟೆಗೆ ಕೂಲಿ ಕೆಲಸಕ್ಕೆ ತೆರಳುತ್ತಿದ್ದೇವೆ ಎಂದು ಮಾಹಿತಿ ನೀಡಿದ್ದರೂ, ನಕಲಿ ದಾಖಲೆಗಳ ಮೂಲಕ ದೇಶದೊಳಗೆ ಅಕ್ರಮ ಪ್ರವೇಶ ನಡೆಯುತ್ತಿರುವ ಸಾಧ್ಯತೆಯನ್ನು ನಿರ್ಲಕ್ಷ್ಯ ಮಾಡಬಾರದು ಎಂದು ಹಿಂದೂಪರ ಸಂಘಟನೆಗಳು ಎಚ್ಚರಿಸಿವೆ.

ಪ್ರಮೋದ್ ಮುತಾಲಿಕ್ ಮಾತನಾಡಿ, “ಆಧಾರ್ ಕಾರ್ಡ್ ತೋರಿಸಿದರೆ ಸಾಕು ಎಂಬ ರೀತಿಯ ತಪಾಸಣೆ ದೇಶದ ಭದ್ರತೆಗೆ ಅಪಾಯಕಾರಿಯಾಗಿದೆ. ಪಶ್ಚಿಮ ಬಂಗಾಳದಿಂದ ಆಗಮಿಸುವವರ ಹಿನ್ನೆಲೆ ಪರಿಶೀಲನೆ ಕಡ್ಡಾಯವಾಗಬೇಕು” ಎಂದು ಒತ್ತಾಯಿಸಿದರು.

ಪಶ್ಚಿಮ ಬಂಗಾಳ ಚುನಾವಣೆಯ ಬಳಿಕ ಅಕ್ರಮ ಬಾಂಗ್ಲಾ ವಲಸಿಗರ ವಿಚಾರ ದೇಶವ್ಯಾಪಿ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ದಕ್ಷಿಣ ಭಾರತದ ನಗರಗಳತ್ತ ವಲಸೆ ಹೆಚ್ಚಾಗಿದೆ ಎಂಬ ಆರೋಪ ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.

ಪ್ರತಿಭಟನೆಯ ನಂತರ ಶಾಲಿಮಾರ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಬಂದ ಪ್ರಯಾಣಿಕರ ತಪಾಸಣೆಗೆ ರೈಲ್ವೆ ಮತ್ತು ಸ್ಥಳೀಯ ಪೊಲೀಸರು ಮುಂದಾದರೂ, ಹೆಚ್ಚಿನ ಸಂಖ್ಯೆಯ ಪ್ರಯಾಣಿಕರ ನಡುವೆ ಸಮಗ್ರ ಪರಿಶೀಲನೆ ಸಾಧ್ಯವಾಗಲಿಲ್ಲ. ಈ ಕುರಿತು ಮೇಲಾಧಿಕಾರಿಗಳ ನಿರ್ದೇಶನದಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಕ್ರಮ ವಲಸಿಗರ ಕುರಿತ ಆರೋಪಗಳ ಹಿನ್ನೆಲೆ ಹುಬ್ಬಳ್ಳಿಯಲ್ಲಿ ಭದ್ರತಾ ಚರ್ಚೆ ತೀವ್ರಗೊಂಡಿದ್ದು, ಕಟ್ಟುನಿಟ್ಟಿನ ತನಿಖೆಗೆ ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.

KPCC ಕಚೇರಿಯಲ್ಲಿ ಯೂತ್ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಗಲಾಟೆ; ಕೈಕೈ ಮಿಲಾಯಿಸಿದ ಬೆಂಬಲಿಗರು

ಬೆಂಗಳೂರು: ರಾಜಧಾನಿಯ ಕೆಪಿಸಿಸಿ ಕಚೇರಿಯಲ್ಲಿ ಯೂತ್ ಕಾಂಗ್ರೆಸ್ ಕಾರ್ಯಕರ್ತರ ನಡುವಿನ ಗಲಾಟೆ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದ ಘಟನೆ ನಡೆದಿದೆ. ರಾಷ್ಟ್ರೀಯ ಯುವ ಕಾಂಗ್ರೆಸ್ ಕೆಲವು ಪದಾಧಿಕಾರಿಗಳನ್ನು ಹುದ್ದೆಯಿಂದ ವಜಾಗೊಳಿಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

ರಾಷ್ಟ್ರೀಯ ಯುವ ಕಾಂಗ್ರೆಸ್ ನಿನ್ನೆ ಹಲವು ಪದಾಧಿಕಾರಿಗಳನ್ನು ಸ್ಥಾನದಿಂದ ತೆರವುಗೊಳಿಸಿತ್ತು. ಈ ವಿಚಾರಕ್ಕೆ ಸಂಬಂಧಿಸಿದ ಅಸಮಾಧಾನ ಇಂದು ಕೆಪಿಸಿಸಿ ಕಚೇರಿಯಲ್ಲಿ ಬಹಿರಂಗಗೊಂಡಿದ್ದು, ಪದಾಧಿಕಾರಿಗಳ ಬೆಂಬಲಿಗರ ನಡುವೆ ತೀವ್ರ ವಾಗ್ವಾದ ನಡೆದಿದೆ.

NEET ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ ಖಂಡಿಸಿ ನಡೆಸಲು ಉದ್ದೇಶಿಸಿದ್ದ ಪ್ರತಿಭಟನೆಗೆ ಸಂಬಂಧ ಪೂರ್ವಭಾವಿ ಸಭೆ ಕರೆಯಲಾಗಿತ್ತು. ಈ ಸಭೆಯ ವೇಳೆ ಯುವ ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷೆ ದೀಪಿಕಾ ರೆಡ್ಡಿ ಹಾಗೂ ರಾಜ್ಯಾಧ್ಯಕ್ಷ ಮಂಜುನಾಥ್ ಗೌಡ ಬೆಂಬಲಿಗರ ನಡುವೆ ಮಾತಿನ ಚಕಮಕಿ ಶುರುವಾಗಿದೆ.

ವಾದ-ಪ್ರತಿವಾದ ತೀವ್ರಗೊಂಡ ಪರಿಣಾಮ, ಉಭಯ ಗುಂಪಿನ ಕಾರ್ಯಕರ್ತರು ಪರಸ್ಪರ ತಳ್ಳಾಟ-ನೂಕಾಟ ನಡೆಸಿದ್ದು, ಬಳಿಕ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದ್ದಾರೆ ಎನ್ನಲಾಗಿದೆ.

ಕಚೇರಿಯಲ್ಲಿದ್ದ ಹಿರಿಯ ಮುಖಂಡರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಘಟನೆಯಿಂದ ಕೆಲಕಾಲ ಕೆಪಿಸಿಸಿ ಕಚೇರಿಯಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.

ಪಕ್ಷದ ಆಂತರಿಕ ಬೆಳವಣಿಗೆ ಹಾಗೂ ಪದಾಧಿಕಾರಿಗಳ ವಜಾ ನಿರ್ಧಾರವೇ ಈ ಗಲಾಟೆಗೆ ಕಾರಣ ಎನ್ನಲಾಗುತ್ತಿದ್ದು, ಈ ಬಗ್ಗೆ ಪಕ್ಷದ ನಾಯಕರು ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.

ಆನೆಗಳ ಅಟ್ಟಹಾಸಕ್ಕೆ ಪ್ರವಾಸಿ ಮಹಿಳೆ ಸಾವು: ದುಬಾರೆ ಶಿಬಿರದಲ್ಲಿ ಬೆಚ್ಚಿಬೀಳಿಸಿದ ದುರಂತ!

0

ಮಡಿಕೇರಿ: ಕೊಡಗು ಜಿಲ್ಲೆಯ ಪ್ರಸಿದ್ಧ ದುಬಾರೆ ಆನೆ ಶಿಬಿರದಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ ಚೆನ್ನೈ ಮೂಲದ ಮಹಿಳೆಯೊಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಸಾಕಾನೆಗಳ ನಡುವೆ ಏಕಾಏಕಿ ಆರಂಭವಾದ ಕಾದಾಟ ಪ್ರವಾಸಿಗರ ಮುಂದೆ ಭೀಕರ ದುರಂತಕ್ಕೆ ಕಾರಣವಾಗಿದ್ದು, ಜಿನ್ಶು (33) ಎಂಬ ಮಹಿಳೆ ಆನೆಯಡಿ ಸಿಲುಕಿ ಮೃತಪಟ್ಟಿದ್ದಾರೆ.

ನಂಜರಾಯಪಟ್ಟಣದ ದುಬಾರೆ ಶಿಬಿರಕ್ಕೆ ಕುಟುಂಬದೊಂದಿಗೆ ಪ್ರವಾಸಕ್ಕೆ ಬಂದಿದ್ದ ಜಿನ್ಶು, ಕಾವೇರಿ ತೀರದಲ್ಲಿ ಸಮಯ ಕಳೆಯುತ್ತಿದ್ದ ವೇಳೆ ಮಾವುತರು ಆನೆಗಳನ್ನು ಸ್ನಾನಕ್ಕೆ ಕರೆತಂದಿದ್ದರು. ಇದೇ ಸಂದರ್ಭದಲ್ಲಿ ಎರಡು ಆನೆಗಳ ನಡುವೆ ತೀವ್ರ ಕಾದಾಟ ಶುರುವಾಗಿದೆ. ಒಂದು ಆನೆ ಮತ್ತೊಂದನ್ನು ದಂತದಿಂದ ತಿವಿದ ಪರಿಣಾಮ ಆನೆ ನಿಯಂತ್ರಣ ತಪ್ಪಿ ಮಹಿಳೆಯ ಮೇಲೆಯೇ ಬಿದ್ದಿದೆ.

ಗಂಭೀರವಾಗಿ ಗಾಯಗೊಂಡಿದ್ದ ಜಿನ್ಶು ಅವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಘಟನೆ ವೇಳೆ ಪ್ರವಾಸಿಗರಲ್ಲಿ ಭಾರೀ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಕೆಲವರು ಸ್ಥಳದಿಂದ ಓಡಿ ಪ್ರಾಣ ಉಳಿಸಿಕೊಂಡಿದ್ದಾರೆ.

ಮಹಿಳೆಯನ್ನು ರಕ್ಷಿಸಲು ಮಾವುತರು ಹಾಗೂ ಸ್ಥಳದಲ್ಲಿದ್ದ ಕೆಲವರು ಶಕ್ತಿಮೀರಿ ಪ್ರಯತ್ನಿಸಿದರೂ ಫಲ ನೀಡಲಿಲ್ಲ. ಆನೆಗಳ ನಿಯಂತ್ರಣ ತಪ್ಪಿದ ವರ್ತನೆ ಇದೀಗ ಶಿಬಿರದ ಸುರಕ್ಷತಾ ಕ್ರಮಗಳ ಕುರಿತು ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದೆ.

ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನೆಯ ಕುರಿತು ತನಿಖೆ ಮುಂದುವರಿದಿದೆ.

‘ಸಮಾಜದಲ್ಲಿ ದ್ವೇಷ ಹರಡುವ ಹೇಳಿಕೆ’: ಅನುರಾಗ್ ಕಶ್ಯಪ್ ವಿರುದ್ಧ FIR ದಾಖಲಿಸಲು ಕೋರ್ಟ್ ಗ್ರೀನ್ ಸಿಗ್ನಲ್

ಸೂರತ್: ಬ್ರಾಹ್ಮಣ ಸಮುದಾಯದ ವಿರುದ್ಧ ಆಕ್ಷೇಪಾರ್ಹ ಕಾಮೆಂಟ್ ಮಾಡಿದ್ದಾರೆಯೆಂಬ ಆರೋಪದಲ್ಲಿ ಖ್ಯಾತ ನಿರ್ದೇಶಕ ಅನುರಾಗ್ ಕಶ್ಯಪ್ ವಿರುದ್ಧ ಕಾನೂನು ಕ್ರಮಕ್ಕೆ ಸೂರತ್ ನ್ಯಾಯಾಲಯ ಗ್ರೀನ್ ಸಿಗ್ನಲ್ ನೀಡಿದೆ. ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಸ್ಥಳೀಯ ಪೊಲೀಸರಿಗೆ ಕೋರ್ಟ್ ಸ್ಪಷ್ಟ ನಿರ್ದೇಶನ ನೀಡಿದೆ.

ವಿಎಚ್‌ಪಿ ನಾಯಕ ಕಮಲೇಶ್ ರಾವಲ್ ಸಲ್ಲಿಸಿದ್ದ ದೂರಿನ ಆಧಾರದ ಮೇಲೆ ವಿಚಾರಣೆ ನಡೆಸಿದ ನ್ಯಾಯಾಲಯ, ಅನುರಾಗ್ ಕಶ್ಯಪ್ ಅವರ ಸಾಮಾಜಿಕ ಜಾಲತಾಣದ ಪೋಸ್ಟ್‌ಗಳು ಸಮುದಾಯಗಳ ನಡುವೆ ದ್ವೇಷ ಹುಟ್ಟುಹಾಕುವ ಸ್ವಭಾವ ಹೊಂದಿವೆ ಎಂಬ ಪ್ರಾಥಮಿಕ ಅಂಶಗಳು ಕಂಡುಬಂದಿವೆ ಎಂದು ಅಭಿಪ್ರಾಯಪಟ್ಟಿದೆ.

ಬ್ರಾಹ್ಮಣ ಸಮುದಾಯವನ್ನು ಅವಮಾನಿಸುವ ಉದ್ದೇಶದಿಂದಲೇ ಪೋಸ್ಟ್‌ಗಳನ್ನು ಮಾಡಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ‘ಫುಲೆ’ ಚಿತ್ರದ ಟ್ರೇಲರ್ ವಿವಾದದ ಬಳಿಕ ಎಕ್ಸ್ ಖಾತೆಯಲ್ಲಿ ಕಶ್ಯಪ್ ಮಾಡಿದ್ದ ಪ್ರತಿಕ್ರಿಯೆಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದ್ದವು.

ಇದಲ್ಲದೆ, 2020ರಲ್ಲಿ ಕೇಂದ್ರ ಸರ್ಕಾರ ಹಾಗೂ ಹಿಂದೂ ಸಮುದಾಯ ಕುರಿತು ಮಾಡಿದ್ದ ಹಳೆಯ ಪೋಸ್ಟ್‌ಗಳನ್ನೂ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಸಾರ್ವಜನಿಕ ಪ್ರಭಾವ ಹೊಂದಿರುವ ವ್ಯಕ್ತಿಗಳು ಜವಾಬ್ದಾರಿಯಿಂದ ನಡೆದುಕೊಳ್ಳಬೇಕು ಎಂದು ದೂರಿನಲ್ಲಿ ಒತ್ತಿ ಹೇಳಲಾಗಿದೆ.

ಗೇರು ಕ್ಷೇತ್ರಕ್ಕೆ ರಾಜ್ಯ ಸರ್ಕಾರದ ಮಾಸ್ಟರ್ ಪ್ಲಾನ್: ರೈತರಿಗೆ ಸಬ್ಸಿಡಿ ಸಸಿ, ₹1 ಕೋಟಿ ಫಂಡ್ ಘೋಷಣೆ

0

ಮಂಗಳೂರು: ಗೇರು ಬೆಳೆಗಾರರಿಗೆ ಹೊಸ ಭರವಸೆ ನೀಡುವ ಉದ್ದೇಶದಿಂದ ರಾಜ್ಯ ಸರ್ಕಾರ ಮಹತ್ವದ ಘೋಷಣೆ ಮಾಡಿದೆ. ಮಂಗಳೂರಿನಲ್ಲಿ ನಡೆದ ಗೇರು ಮೇಳದಲ್ಲಿ ಮಾತನಾಡಿದ ಸಚಿವ ಈಶ್ವರ್ ಬಿ ಖಂಡ್ರೆ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಗೇರು ಕೃಷಿಗೆ ಉತ್ತೇಜನ ನೀಡಲು ₹1 ಕೋಟಿ ಅನುದಾನ ಬಿಡುಗಡೆ ಮಾಡುವುದಾಗಿ ಘೋಷಿಸಿದರು.

ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ನರ್ಸರಿಗಳಲ್ಲೇ ಉನ್ನತ ಗುಣಮಟ್ಟದ ಕಸಿ ಮಾಡಿದ ಗೋಡಂಬಿ ಸಸಿಗಳನ್ನು ಬೆಳೆಸಿ ರೈತರಿಗೆ ಕಡಿಮೆ ದರದಲ್ಲಿ ಪೂರೈಸಲು ಸರ್ಕಾರ ಮುಂದಾಗಿದೆ. ಎಂಡೋಸಲ್ಫಾನ್ ದುರಂತದ ಬಳಿಕ ಕುಸಿದಿದ್ದ ಗೇರು ಕೃಷಿಯನ್ನು ಮತ್ತೆ ಲಾಭದಾಯಕವಾಗಿಸಲು ಸರ್ಕಾರ ವಿಶೇಷ ಯೋಜನೆ ರೂಪಿಸಿದೆ ಎಂದು ಸಚಿವರು ತಿಳಿಸಿದರು.

ರಾಜ್ಯದಲ್ಲಿ ಗೇರು ಉತ್ಪಾದನೆ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ವಿದೇಶಗಳಿಂದ ಕಚ್ಚಾ ಗೋಡಂಬಿ ಆಮದು ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಸಂಕಷ್ಟ ನಿವಾರಣೆಗೆ ರೈತರಿಗೆ ತಾಂತ್ರಿಕ ಮಾರ್ಗದರ್ಶನ, ಮೌಲ್ಯವರ್ಧನೆ ಮತ್ತು ಸಬ್ಸಿಡಿ ಸಸಿ ವಿತರಣೆಗೆ ಒತ್ತು ನೀಡಲಾಗುತ್ತಿದೆ. ಗೇರು ಕ್ಷೇತ್ರದಲ್ಲಿ ಕರ್ನಾಟಕವನ್ನು ಮತ್ತೆ ಬಲಿಷ್ಠ ರಾಜ್ಯವನ್ನಾಗಿಸುವ ಗುರಿ ಸರ್ಕಾರದದ್ದಾಗಿದೆ ಎಂದು ಖಂಡ್ರೆ ಹೇಳಿದರು.

ಪಶ್ಚಿಮಘಟ್ಟಗಳ ಸಂರಕ್ಷಣೆ ಕುರಿತು ಮಾತನಾಡಿದ ಸಚಿವರು, ಹವಾಮಾನ ವೈಪರೀತ್ಯದಿಂದ ಮಳೆಯ ಸ್ವರೂಪ ಸಂಪೂರ್ಣ ಬದಲಾಗಿದೆ. ಕಡಿಮೆ ಅವಧಿಯಲ್ಲಿ ಅತಿಯಾದ ಮಳೆ ಸುರಿಯುತ್ತಿರುವುದರಿಂದ ಕೃಷಿ ಕ್ಷೇತ್ರಕ್ಕೆ ದೊಡ್ಡ ನಷ್ಟ ಉಂಟಾಗುತ್ತಿದೆ. ಹೀಗಾಗಿ ಪರಿಸರ ಸಂರಕ್ಷಣೆ ಮತ್ತು ವೃಕ್ಷಾರೋಪಣೆಗೆ ಎಲ್ಲರೂ ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ಗೇರು ಮೇಳದಲ್ಲಿ ಮಕ್ಕಳಿಗಾಗಿ ಚಿತ್ರಕಲೆ ಹಾಗೂ ರಂಗೋಲಿ ಸ್ಪರ್ಧೆ ನಡೆಸಲಾಗಿದ್ದು, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 12 ಪ್ರಗತಿಪರ ರೈತರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಹಲವು ಶಾಸಕರು ಮತ್ತು ಗಣ್ಯರು ಉಪಸ್ಥಿತರಿದ್ದರು.

ಸಂಬಂಧದ ಹುಡಗನೊಂದಿಗೆ ಪ್ರೀತಿ: ಅಪ್ರಾಪ್ತ ಮಗಳನ್ನು ಹತ್ಯೆ ಮಾಡಿದ್ದ ತಂದೆ ಬಂಧನ

0

ತುಮಕೂರು: ಮನೆತನದ ಗೌರವಕ್ಕೆ ಧಕ್ಕೆ ತಂದಿದ್ದಾಳೆ ಎಂಬ ಕೋಪದಲ್ಲಿ ತಂದೆಯೇ ತನ್ನ ಅಪ್ರಾಪ್ತ ಮಗಳನ್ನು ಕೊಲೆ ಮಾಡಿರುವ ಆಘಾತಕಾರಿ ಘಟನೆ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ನಿಂಬೆ ಮರದಹಳ್ಳಿಯಲ್ಲಿ ನಡೆದಿದೆ.

ಮೇಘನ (17) ಮೃತ ಬಾಲಕಿ. ಈ ಪ್ರಕರಣದಲ್ಲಿ ಆಕೆಯ ತಂದೆ ತಿಮ್ಮರಾಯಪ್ಪನನ್ನು ಕಳ್ಳಂಬೆಳ್ಳ ಪೊಲೀಸರು ಬಂಧಿಸಿದ್ದಾರೆ.

ಮಗಳು ಕಾಣೆಯಾಗಿದ್ದಾಳೆ ಎಂದು ಆಕೆಯ ತಾಯಿ ತಿಂಗಳ ಹಿಂದೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತನಿಖೆ ವೇಳೆ ಬಾಲಕಿಯ ತಂದೆ ನಾಪತ್ತೆಯಾಗಿದ್ದರಿಂದ ಅನುಮಾನ ಗಾಢವಾಗಿತ್ತು. ಬಳಿಕ ಪೊಲೀಸರು ಆತನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಕೊಲೆ ಸತ್ಯ ಹೊರಬಿದ್ದಿದೆ.

ಮೇಘನ ತನ್ನ ಸಂಬಂಧಿಕನೊಬ್ಬನೊಂದಿಗೆ ಪ್ರೀತಿಯಲ್ಲಿ ಇದ್ದಳು ಎನ್ನಲಾಗಿದ್ದು, ಇದಕ್ಕೆ ತಂದೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದ. ಇದೇ ವಿಚಾರವಾಗಿ ತಂದೆ-ಮಗಳ ನಡುವೆ ಹಲವು ಬಾರಿ ಜಗಳ ನಡೆದಿತ್ತು.

ಏಪ್ರಿಲ್ 16ರಂದು ನಡೆದ ಜಗಳದ ವೇಳೆ ಕೋಪಗೊಂಡ ತಿಮ್ಮರಾಯಪ್ಪ ಮಗಳನ್ನು ಹತ್ಯೆ ಮಾಡಿ, ಶವವನ್ನು ಜಮೀನಿನ ಪಕ್ಕದ ಸರ್ಕಾರಿ ಹಳ್ಳದಲ್ಲಿ ಹೂತು ಹಾಕಿದ್ದಾನೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ.

ಪ್ರಕರಣ ಸಂಬಂಧ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದು, ಅಧಿಕಾರಿಗಳ ಸಮ್ಮುಖದಲ್ಲಿ ಶವ ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಲು ಸಿದ್ಧತೆ ಮಾಡಲಾಗಿದೆ.

ಮುಷ್ಕರಕ್ಕೆ ಹೋದ್ರೆ ಸಂಬಳ ಕಟ್! KSRTC ನೌಕರರಿಗೆ ಅಕ್ರಮ್ ಪಾಷಾ ಖಡಕ್ ವಾರ್ನಿಂಗ್

ಬೆಂಗಳೂರು: ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳಿಗಾಗಿ ಮೇ 20ರಂದು ಮುಷ್ಕರಕ್ಕೆ ಸಜ್ಜಾಗಿರುವ ಸರ್ಕಾರಿ ಸಾರಿಗೆ ನೌಕರರಿಗೆ ಕೆಎಸ್‌ಆರ್‌ಟಿಸಿ ಆಡಳಿತ ಮಂಡಳಿ ಕಠಿಣ ಎಚ್ಚರಿಕೆ ನೀಡಿದೆ.

ಕರ್ತವ್ಯಕ್ಕೆ ಗೈರಾದರೆ ‘ನೋ ವರ್ಕ್, ನೋ ಪೇ’ ನಿಯಮ ಜಾರಿಯಾಗಲಿದೆ ಎಂದು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಅಕ್ರಮ್ ಪಾಷಾ ಸ್ಪಷ್ಟಪಡಿಸಿದ್ದಾರೆ.

ಎಲ್ಲಾ ನೌಕರರು ಕಡ್ಡಾಯವಾಗಿ ಕರ್ತವ್ಯಕ್ಕೆ ಹಾಜರಾಗಬೇಕು. ಮುಷ್ಕರ ಅಥವಾ ಪ್ರತಿಭಟನೆಯಲ್ಲಿ ಭಾಗಿಯಾದರೆ ಸೇವಾ ನಿಯಮಗಳ ಅನ್ವಯ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಸಾರಿಗೆ ಸಂಸ್ಥೆ ಸಾರ್ವಜನಿಕ ಉಪಯುಕ್ತ ಸೇವಾ ಸಂಸ್ಥೆಯಾಗಿರುವ ಕಾರಣ, ಮೇ 20ರಂದು ಬಸ್ ಕಾರ್ಯಾಚರಣೆಯಲ್ಲಿ ಯಾವುದೇ ವ್ಯತ್ಯಯ ಉಂಟಾಗಬಾರದು ಎಂದು ಸೂಚಿಸಲಾಗಿದೆ. ಅನಿವಾರ್ಯ ಪರಿಸ್ಥಿತಿ ಹೊರತುಪಡಿಸಿ ನೌಕರರಿಗೆ ರಜೆ ನೀಡುವುದಿಲ್ಲ ಎಂದೂ ತಿಳಿಸಿದ್ದಾರೆ.

ಮುಷ್ಕರದ ದಿನ ಕರ್ತವ್ಯಕ್ಕೆ ಹಾಜರಾಗದ ಸಿಬ್ಬಂದಿಗಳ ಪಟ್ಟಿಯನ್ನು ಸಿದ್ಧಪಡಿಸಿ ವೇತನ ಕಡಿತ ಮಾಡಲಾಗುವುದು. ಜೊತೆಗೆ ಗೈರಾಗುವ ನೌಕರರ ವಿರುದ್ಧ ಶಿಸ್ತು ಕ್ರಮವೂ ಜಾರಿಯಾಗಲಿದೆ ಎಂದು ಕೆಎಸ್‌ಆರ್‌ಟಿಸಿ ಆಡಳಿತ ಮಂಡಳಿ ಎಚ್ಚರಿಸಿದೆ.

94ನೇ ವಸಂತಕ್ಕೆ ಕಾಲಿಟ್ಟ HD ದೇವೇಗೌಡ: ಮೋದಿ, ಅಮಿತ್ ಶಾ, ಸಿದ್ದರಾಮಯ್ಯ ಸೇರಿದಂತೆ ಗಣ್ಯರಿಂದ ಶುಭಾಶಯಗಳ ಮಹಾಪೂರ

ಬೆಂಗಳೂರು:  ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ಹಿರಿಯ ನಾಯಕ ಹೆಚ್.ಡಿ. ದೇವೇಗೌಡ ಅವರು ಇಂದು 94ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಸಚಿವ ಹಾಗೂ ಪುತ್ರ ಹೆಚ್.ಡಿ. ಕುಮಾರಸ್ವಾಮಿ ಸೇರಿದಂತೆ ಹಲವು ರಾಜಕೀಯ ಗಣ್ಯರು ಶುಭಾಶಯ ಕೋರಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ‘ಎಕ್ಸ್’ ಖಾತೆಯ ಮೂಲಕ ದೇವೇಗೌಡರಿಗೆ ಜನ್ಮದಿನದ ಶುಭಾಶಯ ತಿಳಿಸಿದ್ದು, “ಹೆಚ್.ಡಿ. ದೇವೇಗೌಡ ಜೀ ಅವರಿಗೆ ಹಾರ್ದಿಕ ಜನ್ಮದಿನದ ಶುಭಾಶಯಗಳು. ಸಾರ್ವಜನಿಕ ಜೀವನದಲ್ಲಿ ದೀರ್ಘಕಾಲ ಸೇವೆ ಸಲ್ಲಿಸುವ ಮೂಲಕ ಅವರು ರಾಷ್ಟ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ.

ನೀತಿ ಸಂಬಂಧಿತ ವಿಷಯಗಳ ಬಗ್ಗೆ ಅವರ ಆಳವಾದ ಅರಿವು ಹಾಗೂ ಹಿಂದುಳಿದವರ ಸೇವೆಯ ಮೇಲಿನ ಬದ್ಧತೆ ಎಲ್ಲರಿಗೂ ಪರಿಚಿತವಾಗಿದೆ. ಅವರು ದೀರ್ಘಾಯುಷಿ ಹಾಗೂ ಆರೋಗ್ಯವಂತರಾಗಿರಲಿ ಎಂದು ಪ್ರಾರ್ಥಿಸುತ್ತೇನೆ” ಎಂದು ಬರೆದು ಶುಭ ಹಾರೈಸಿದ್ದಾರೆ.

ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ರಾಜಕೀಯ ನಾಯಕರು ಕೂಡ ದೇವೇಗೌಡರ ದೀರ್ಘ ರಾಜಕೀಯ ಅನುಭವ ಮತ್ತು ಸಾರ್ವಜನಿಕ ಸೇವೆಯನ್ನು ಸ್ಮರಿಸಿ ಶುಭಾಶಯ ಸಲ್ಲಿಸಿದ್ದಾರೆ.

ಹುಟ್ಟುಹಬ್ಬದ ಅಂಗವಾಗಿ ದೇವೇಗೌಡರು ಬೆಳಿಗ್ಗೆ ಬೆಂಗಳೂರಿನ ಜೆ.ಪಿ.ನಗರದಲ್ಲಿರುವ ವೆಂಕಟೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಪದ್ಮನಾಭನಗರದಲ್ಲಿರುವ ತಮ್ಮ ನಿವಾಸದಲ್ಲಿ ಕುಟುಂಬ ಸದಸ್ಯರೊಂದಿಗೆ ಸರಳವಾಗಿ ಹುಟ್ಟುಹಬ್ಬವನ್ನು ಆಚರಿಸಿಕೊಂಡರು.

ಈ ವೇಳೆ ದೇವೇಗೌಡರ ಮೊಮ್ಮಕ್ಕಳು ಪ್ರೀತಿಯ ಅಪ್ಪುಗೆ ನೀಡಿ ಶುಭಾಶಯ ಕೋರಿದ್ದು, ಕುಟುಂಬದವರೊಂದಿಗೆ ಆತ್ಮೀಯ ಕ್ಷಣಗಳನ್ನು ಹಂಚಿಕೊಂಡರು. ದೇವೇಗೌಡರ ನಿವಾಸಕ್ಕೆ ಜೆಡಿಎಸ್ ಕಾರ್ಯಕರ್ತರು, ಅಭಿಮಾನಿಗಳು ಹಾಗೂ ಹಲವು ಗಣ್ಯರು ಭೇಟಿ ನೀಡಿ ಶುಭಾಶಯ ತಿಳಿಸಿದ್ದಾರೆ.

SSLC ಪರೀಕ್ಷೆ ಶುರು; ಹಿಜಾಬ್‌ಗೆ ಅವಕಾಶ ಇಲ್ಲ! ಮೇ 20ರಿಂದ KSRTC-BMTC ಬಸ್‌ಗಳು ಸ್ಥಗಿತ?

ಬೆಂಗಳೂರು: ರಾಜ್ಯಾದ್ಯಂತ ಎಸ್ಎಸ್ಎಲ್ಸಿ ಎರಡನೇ ಪರೀಕ್ಷೆ ಇಂದಿನಿಂದ ಆರಂಭವಾಗಿದ್ದು, ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಅವಕಾಶ ನೀಡದ ವಿಚಾರ ಮತ್ತೆ ಚರ್ಚೆಗೆ ಕಾರಣವಾಗಿದೆ.

ಸರ್ಕಾರ ಇತ್ತೀಚೆಗೆ ಧಾರ್ಮಿಕ ಸಂಕೇತಗಳಾದ ಜನಿವಾರ, ಶಿವದಾರ, ಲಿಂಗ, ರುದ್ರಾಕ್ಷಿ ಧರಿಸಲು ಅವಕಾಶ ನೀಡಿದ್ದರೂ, ಹಿಜಾಬ್ ಬಗ್ಗೆ ಪ್ರತ್ಯೇಕ ಆದೇಶ ಹೊರಡಿಸಿಲ್ಲ. ಈ ಹಿನ್ನೆಲೆ ಕಳೆದ ಬಾರಿ ಅನುಸರಿಸಿದ್ದ ವಸ್ತ್ರಸಂಹಿತೆಯನ್ನೇ ಮುಂದುವರಿಸಲಾಗಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿನಿಯರಿಗೆ ಅದನ್ನು ತೆಗೆಯಿಸಿ ಪರೀಕ್ಷಾ ಕೊಠಡಿಗೆ ಪ್ರವೇಶ ನೀಡಲಾಗಿದೆ. ಮೇ 25ರವರೆಗೆ ನಡೆಯಲಿರುವ ಎಸ್‌ಎಸ್‌ಎಲ್‌ಸಿ-2 ಪರೀಕ್ಷೆಗೆ ಒಟ್ಟು 1,15,112 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದು, ಅವರಲ್ಲಿ 7,658 ವಿದ್ಯಾರ್ಥಿಗಳು ಅಂಕ ಹೆಚ್ಚಿಸಿಕೊಳ್ಳಲು ಪರೀಕ್ಷೆ ಬರೆಯುತ್ತಿದ್ದಾರೆ.

ಇತ್ತ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಇಂದು 94ನೇ ಜನ್ಮದಿನ ಆಚರಿಸಿಕೊಂಡರು. ಜೆ.ಪಿ.ನಗರದ ವೆಂಕಟೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ದೇವೇಗೌಡರಿಗೆ ರಾಜ್ಯಾದ್ಯಂತ ಅಭಿಮಾನಿಗಳು ಶುಭಾಶಯ ಕೋರಿದರು.

ಅದೇ ವೇಳೆ ಕೇರಳದ ನೂತನ ಮುಖ್ಯಮಂತ್ರಿಯಾಗಿ ವಿಡಿ ಸತೀಶನ್ ಪ್ರಮಾಣವಚನ ಸ್ವೀಕರಿಸಿದ್ದು, ಕಾಂಗ್ರೆಸ್ ನೇತೃತ್ವದ ಯುಡಿಎಫ್ ಸರ್ಕಾರ ಅಧಿಕಾರಕ್ಕೆ ಬಂದಿದೆ.

ಇನ್ನೊಂದೆಡೆ ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಸಾರಿಗೆ ನೌಕರರು ಮೇ 20ರಿಂದ ಮುಷ್ಕರಕ್ಕೆ ಕರೆ ನೀಡಿದ್ದಾರೆ. ಇಂದು ನಡೆಯಲಿರುವ ಸಭೆ ಫಲಪ್ರದವಾದರೆ ಮುಷ್ಕರ ಹಿಂಪಡೆಯುವ ಸಾಧ್ಯತೆಯೂ ಇದೆ.

‘ತಿಲಕ್ ವರ್ಮಾನೇ ಗೊತ್ತಿಲ್ಲ!’ ವೈರಲ್ ಡೇಟಿಂಗ್ ಗಾಸಿಪ್‌ಗೆ ಶ್ರೀಲೀಲಾ ತಾಯಿ ಕ್ಲಾರಿಟಿ

ನಟಿ ಶ್ರೀಲೀಲಾ ಮತ್ತು ಕ್ರಿಕೆಟಿಗ ತಿಲಕ್ ವರ್ಮ ನಡುವೆ ಪ್ರೀತಿ ಬೆಳೆದಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದ್ದ ಬೆನ್ನಲ್ಲೇ, ಇದೀಗ ಈ ವದಂತಿಗೆ ಶ್ರೀಲೀಲಾ ತಾಯಿ ಡಾ. ಸ್ವರ್ಣಲತಾ ಸ್ಪಷ್ಟನೆ ನೀಡಿದ್ದಾರೆ.

ಮುಂಬೈ ಇಂಡಿಯನ್ಸ್ ಪಂದ್ಯದ ವೇಳೆ ವಿಐಪಿ ಸ್ಟ್ಯಾಂಡ್‌ನಲ್ಲಿ ಶ್ರೀಲೀಲಾ ತಾಯಿ ಕಾಣಿಸಿಕೊಂಡಿದ್ದು, ಜೊತೆಗೆ ತಿಲಕ್ ಹೆಸರಿನ ಜರ್ಸಿ ವಿಚಾರದಿಂದ ನೆಟ್ಟಿಗರು ಇಬ್ಬರ ನಡುವಿನ ಸಂಬಂಧದ ಬಗ್ಗೆ ಊಹಾಪೋಹಗಳನ್ನು ಹರಿಬಿಟ್ಟಿದ್ದರು.

ಆದರೆ ಈ ಎಲ್ಲಾ ಸುದ್ದಿಗಳನ್ನು ತಳ್ಳಿಹಾಕಿರುವ ಡಾ. ಸ್ವರ್ಣಲತಾ, “ಇದರಲ್ಲಿ ಯಾವುದೇ ಸತ್ಯವಿಲ್ಲ. ಶ್ರೀಲೀಲಾ ಮತ್ತು ತಿಲಕ್ ವರ್ಮ ಇದುವರೆಗೆ ಭೇಟಿಯಾಗಿಲ್ಲ, ಮಾತನಾಡಿಲ್ಲ ಕೂಡ. ಇದು ಕೇವಲ ಸೋಶಿಯಲ್ ಮೀಡಿಯಾ ಕಲ್ಪನೆ” ಎಂದು ಹೇಳಿದ್ದಾರೆ.

ಅವರು ಮುಂದುವರಿದು, “ಶ್ರೀಲೀಲಾ ಈಗ ಸಿನಿಮಾ ಮತ್ತು ಓದಿನ ನಡುವೆ ಬ್ಯಾಲೆನ್ಸ್ ಮಾಡುತ್ತಿದ್ದಾಳೆ. ಜೂನ್‌ನಲ್ಲಿ ನಡೆಯುವ ನೀಟ್ ಪಿಜಿ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಾಳೆ. ಸದ್ಯ ಅವಳ ಗಮನ ಸಂಪೂರ್ಣ ಕರಿಯರ್ ಮೇಲಷ್ಟೇ ಇದೆ” ಎಂದು ತಿಳಿಸಿದ್ದಾರೆ.

ಈ ಹಿಂದೆ ಕೂಡ ಬಾಲಿವುಡ್ ನಟ ಕಾರ್ತಿಕ್ ಆರ್ಯನ್ ಜೊತೆ ಶ್ರೀಲೀಲಾ ಹೆಸರು ಕೇಳಿಬಂದಿತ್ತು. ಆದರೆ ಅದೂ ಗಾಸಿಪ್ ಮಾತ್ರವಾಗಿಯೇ ಉಳಿದಿತ್ತು.

error: Content is protected !!