ಗದಗ: ಭಾನುವಾರ ಸಂಜೆ ಗದಗ ಜಿಲ್ಲೆಯಲ್ಲಿ ಗುಡುಗು, ಸಿಡಿಲು ಹಾಗೂ ಬಿರುಗಾಳಿ ಸಹಿತ ಸುರಿದ ಭಾರೀ ಮಳೆಯು ಜನಜೀವನವನ್ನು ಸಂಪೂರ್ಣವಾಗಿ ಅಸ್ತವ್ಯಸ್ತಗೊಳಿಸಿದೆ.
ಗದಗ–ಬೆಟಗೇರಿ ಅವಳಿ ನಗರ ಸೇರಿದಂತೆ ಜಿಲ್ಲೆಯ ಹಲವೆಡೆ ಮಳೆಯ ರೌದ್ರಾವತಾರ ಕಂಡುಬಂದಿದೆ.
ಭಾರೀ ಗಾಳಿ–ಮಳೆಯ ಪರಿಣಾಮ ಅನೇಕ ಕಡೆಗಳಲ್ಲಿ ಮರಗಳು ಧರೆಗುರುಳಿದ್ದು, ವಿದ್ಯುತ್ ಕಂಬಗಳು ಉರುಳಿ ಬಿದ್ದಿವೆ. ಇದರಿಂದ ಹಲವು ವಾಹನಗಳು ಜಖಂಗೊಂಡಿದ್ದು, ಕೆಲವೆಡೆ ಸಂಚಾರವೂ ತೀವ್ರವಾಗಿ ಅಸ್ತವ್ಯಸ್ತಗೊಂಡಿದೆ.
ಸುಮಾರು ಒಂದು ಗಂಟೆಗೂ ಅಧಿಕ ಕಾಲ ಸುರಿದ ಧಾರಾಕಾರ ಮಳೆ ಹಾಗೂ ಬಿರುಗಾಳಿಯಿಂದ ವಾಹನ ಸವಾರರು ಪರದಾಡಿದರೆ, ರಸ್ತೆಗಳಲ್ಲಿ ನೀರು ನಿಂತು ಸಂಚಾರ ವ್ಯತ್ಯಯ ಉಂಟಾಗಿದೆ. ಬಿಸಿಲಿನ ತಾಪದಿಂದ ಕಂಗೆಟ್ಟಿದ್ದ ಜನರಿಗೆ ಮಳೆ ತಂಪು ನೀಡಿದರೂ, ಬಿರುಗಾಳಿಯ ಆರ್ಭಟ ಆತಂಕ ಹೆಚ್ಚಿಸಿದೆ.
ಜಿಮ್ಸ್ ಬಳಿ ಕೂದಲೆಳೆ ಅಂತರದಲ್ಲಿ ಮಹಿಳೆ ಪಾರು:
ಗದಗ ಜಿಮ್ಸ್ ಆಸ್ಪತ್ರೆ ಸಮೀಪ ಬಿರುಗಾಳಿಯ ರಭಸಕ್ಕೆ ಕಟ್ಟಡದ ತಗಡೊಂದು ಹಾರಿ ಬಂದು ರಸ್ತೆ ಬದಿಯಲ್ಲಿ ಸಾಗುತ್ತಿದ್ದ ಮಹಿಳಾ ಹೋಮ್ ಗಾರ್ಡ್ ಒಬ್ಬರ ಸಮೀಪ ಬಿದ್ದ ಘಟನೆ ಆತಂಕ ಸೃಷ್ಟಿಸಿದೆ. ಕ್ಷಣಾರ್ಧದಲ್ಲಿ ಎಚ್ಚೆತ್ತುಕೊಂಡ ಹೋಮ್ ಗಾರ್ಡ್ ಬದಿಗೆ ಸರಿದ ಪರಿಣಾಮ ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ. ಡ್ಯೂಟಿ ಮುಗಿಸಿಕೊಂಡು ಮನೆ ಕಡೆ ಬರಲು ಬಸ್ ಹತ್ತಲು ಹೋಗುವಾಗ ಈ ಘಟನೆ ನಡೆದಿದೆ.
ಮಕಾನ ಗಲ್ಲಿಯಲ್ಲಿ ತಪ್ಪಿದ ಭಾರೀ ದುರಂತ:
ನಗರದ ಮಕಾನ ಗಲ್ಲಿಯಲ್ಲಿ ಬೃಹತ್ ಮರವೊಂದು ಧರೆಗುರುಳಿದ ಪರಿಣಾಮ ಎರಡು ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಅಲ್ಲೇ ನಿಲ್ಲಿಸಿದ್ದ ಮೋಟಾರ್ ಸೈಕಲ್ ಸಂಪೂರ್ಣ ಜಖಂಗೊಂಡಿದೆ. ಭಾನುವಾರ ಮಾರುಕಟ್ಟೆ ಬಂದ್ ಇದ್ದ ಕಾರಣ ದೊಡ್ಡ ಅನಾಹುತ ತಪ್ಪಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ವಿದ್ಯುತ್ ಕಂಬಗಳು ಬಿದ್ದ ಕಾರಣ ಎರಡು ಗಂಟೆಗೂ ಹೆಚ್ಚು ಕಾಲ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ಹೆಸ್ಕಾಂ ಹಾಗೂ ನಗರಸಭೆ ಸಿಬ್ಬಂದಿ ತಡವಾಗಿ ಸ್ಥಳಕ್ಕೆ ಬಂದಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಿಡಿಲಿಗೆ ಹೊತ್ತಿ ಉರಿದ ತೆಂಗಿನ ಮರ:
ಬಸವೇಶ್ವರ ಸರ್ಕಲ್ ಬಳಿ ಸಿಡಿಲು ಬಡಿದ ಪರಿಣಾಮ ತೆಂಗಿನ ಮರಕ್ಕೆ ಬೆಂಕಿ ಹೊತ್ತಿಕೊಂಡು ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು.
ಮನೆಯ ಮೇಲೆ ಮರ ಬಿದ್ದು ಹಾನಿ:
ಗಂಗಾಪೂರ ಪೇಟೆಯ ದುರ್ಗಾದೇವಿ ಗುಡಿ ಸಮೀಪ ಶ್ರೀಕಾಂತ್ ಹಬೀಬ ಅವರ ಮನೆಯ ಮೇಲೆ ಭಾರೀ ತೆಂಗಿನ ಮರ ಬಿದ್ದ ಪರಿಣಾಮ ಮನೆಯ ಒಂದು ಭಾಗಕ್ಕೆ ಹಾನಿಯಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ನಾಗಾವಿಯಲ್ಲಿ ಕಾರು ಜಖಂ:
ನಾಗಾವಿ ಗ್ರಾಮದಲ್ಲಿ ಮರಗಳು ಧರೆಗುರುಳಿದ ಪರಿಣಾಮ ಬೃಹತ್ ಮರೊಂದು ಕಾರಿನ ಮೇಲೆ ಬಿದ್ದು ಕಾರು ಸಂಪೂರ್ಣ ಜಖಂಗೊಂಡಿದೆ.
ಎಪಿಎಂಸಿ ಹಾಗೂ ಕ್ರೀಡಾಂಗಣಕ್ಕೂ ಹಾನಿ:
ಗದಗ ಎಪಿಎಂಸಿ ಆವರಣದಲ್ಲೂ ಮರಗಳು ಉರುಳಿಬಿದ್ದಿದ್ದು, ಕೆ.ಎಚ್. ಪಾಟೀಲ ಜಿಲ್ಲಾ ಕ್ರೀಡಾಂಗಣದ ಬಳಿ ವಿದ್ಯುತ್ ಕಂಬಗಳು ಹಾನಿಗೊಂಡಿವೆ. ಮುಳಗುಂದ ರಸ್ತೆಯ ಕನಕ ಭವನ ಸಮೀಪದ ಇಂಡೋರ್ ಸ್ಟೇಡಿಯಂ ಭಾಗಕ್ಕೂ ಹಾನಿ ಸಂಭವಿಸಿದೆ.
ಭಾರೀ ಮಳೆಯ ಅಬ್ಬರದಿಂದ ಅವಳಿ ನಗರ ಜನತೆ ತತ್ತರಿಸಿದರೆ, ಮತ್ತೊಂದೆಡೆ ಈ ಮಳೆ ಮುಂಗಾರು ಬಿತ್ತನೆಗೆ ರೈತರಲ್ಲಿ ಹೊಸ ಆಶಾಭಾವನೆ ಮೂಡಿಸಿದೆ.

