Home Blog

Dharavada Breaking: ಮರ್ಯಾದೆಗೆ ಅಂಜಿ ನೇಣಿಗೆ ಶರಣಾದ ವಿದ್ಯಾರ್ಥಿ! ನಡೆದಿದ್ದೇನು?

ಧಾರವಾಡ: ಮರ್ಯಾದೆಗೆ ಅಂಜಿ ಮನನೊಂದು ವಿದ್ಯಾರ್ಥಿಯೋರ್ವ ನೇಣಿಗೆ ಶರಣಾದ ಘಟನೆ ಧಾರವಾಡ ಜಿಲ್ಲೆಯಲ್ಲಿ ನಡೆದಿದೆ.

ಮೃತ ಯುವಕನನ್ನು ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಬೇಲೂರು ಗ್ರಾಮದ ಆದಿತ್ಯ ಮಗ್ಯಾಗೇರಿ ಎಂದು ಗುರುತಿಸಲಾಗಿದೆ. ಆತ ಧಾರವಾಡದ ಕಿಟಲ್ ಕಾಲೇಜಿನಲ್ಲಿ ಬಿಎಸ್‌ಸಿ ಅಭ್ಯಾಸ ಮಾಡುತ್ತಿದ್ದನು ಎಂದು ತಿಳಿದುಬಂದಿದೆ.

ಕಳೆದ ಶನಿವಾರ ಗಾಂಜಾ ಸೇವನೆ ಸಂಶಯದ ಮೇಲೆ ಆದಿತ್ಯ ಸೇರಿದಂತೆ 40ಕ್ಕೂ ಹೆಚ್ಚು ಯುವಕರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ನಂತರ ನಡೆಸಿದ ವೈದ್ಯಕೀಯ ಪರೀಕ್ಷೆಯಲ್ಲಿ ಆದಿತ್ಯನ ವರದಿ ನೆಗೆಟಿವ್ ಬಂದಿದೆ ಎನ್ನಲಾಗಿದೆ. ಆದರೂ, ಪೊಲೀಸರು 10 ಸಾವಿರ ರೂಪಾಯಿ ಬೇಡಿಕೆ ಇಟ್ಟು, 2 ಸಾವಿರ ರೂಪಾಯಿ ಪಡೆದಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಈ ಬೆಳವಣಿಗೆಯಿಂದ ಮನನೊಂದು ಹಾಗೂ ಸಮಾಜದಲ್ಲಿ ಮರ್ಯಾದೆಗೆ ಧಕ್ಕೆಯಾಗುವ ಭೀತಿಯಿಂದ ಆದಿತ್ಯ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಮಗನ ಸಾವಿಗೆ ಪೊಲೀಸರೇ ಕಾರಣ ಎಂದು ತಾಯಿ ಆಕ್ರೋಶ ವ್ಯಕ್ತಪಡಿಸಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಅಲ್ಲದೆ, ಪಾಸಿಟಿವ್ ವರದಿ ಬಂದ ಕೆಲವರಿಂದ 25 ಸಾವಿರದಿಂದ 30 ಸಾವಿರ ರೂಪಾಯಿ ವರೆಗೆ ಹಣವನ್ನು ಫೋನ್‌ಪೇ ಮೂಲಕ ಮೂರನೇ ವ್ಯಕ್ತಿಗಳಿಂದ ವಸೂಲಿ ಮಾಡಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ.

ಈ ಪ್ರಕರಣ ಸಂಬಂಧ ತನಿಖೆ ಮುಂದುವರಿದಿದ್ದು, ಸತ್ಯಾಸತ್ಯತೆ ಹೊರಬರಬೇಕಿದೆ.

ಕರಾವಳಿ ಹಾಗೂ ಉತ್ತರ ಒಳನಾಡಿನಲ್ಲಿ ಮಳೆಯ ಅಬ್ಬರ, 6 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್! ಇಂದಿನ ಹವಾಮಾನ ಹೀಗಿದೆ

ಬೆಂಗಳೂರು: ರಾಜ್ಯದಲ್ಲಿ ಬಿಸಿಲಿನ ತಾಪದಿಂದ ಕಂಗೆಟ್ಟ ಜನತೆಗೆ ಇದೀಗ ಮಳೆರಾಯನ ಆಗಮನವಾಗುವ ಸೂಚನೆ ಕಂಡುಬಂದಿದೆ.

ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ, ಕರಾವಳಿ ಹಾಗೂ ಉತ್ತರ ಒಳನಾಡಿನ ಹಲವೆಡೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದ್ದು, ಕೆಲ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.

ಕರಾವಳಿಯ ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಇತ್ತೀಚಿನ ದಿನಗಳಲ್ಲಿ ಉಷ್ಣ ಅಲೆಯ ಪ್ರಭಾವವಿದ್ದರೂ, ಇಂದು ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಇಲಾಖೆ ತಿಳಿಸಿದೆ.

ಉತ್ತರ ಒಳನಾಡಿನಲ್ಲಿ ಬಾಗಲಕೋಟೆ, ರಾಯಚೂರು, ಯಾದಗಿರಿ, ಧಾರವಾಡ, ಗದಗ, ಹಾವೇರಿ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ 40–50 ಕಿ.ಮೀ ವೇಗದ ಗಾಳಿಯೊಂದಿಗೆ ಆಲಿಕಲ್ಲು ಮಳೆಯ ಅಬ್ಬರ ಹೆಚ್ಚಾಗುವ ಸಾಧ್ಯತೆ ಇದೆ. ಈ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.

ದಕ್ಷಿಣ ಒಳನಾಡಿನ ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಗುಡುಗು ಹಾಗೂ ಸಿಡಿಲು ಸಹಿತ ಮಳೆಯ ಮುನ್ಸೂಚನೆ ನೀಡಲಾಗಿದೆ. ಕೊಡಗು, ಕೋಲಾರ ಮತ್ತು ಮೈಸೂರು ಜಿಲ್ಲೆಗಳಲ್ಲಿ ಸಹ ಸಾಧಾರಣ ಮಳೆಯೊಂದಿಗೆ ಬಲವಾದ ಗಾಳಿಯ ಸಾಧ್ಯತೆ ಇದೆ.

ಇದೇ ವೇಳೆ ಬೆಂಗಳೂರು ನಗರ ಸೇರಿದಂತೆ ಬೆಂಗಳೂರು ಗ್ರಾಮಾಂತರ, ಬಳ್ಳಾರಿ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಹಾಸನ, ಮಂಡ್ಯ, ರಾಮನಗರ ಮತ್ತು ತುಮಕೂರು ಜಿಲ್ಲೆಗಳಲ್ಲಿ ಕೆಲವೆಡೆ ಸಾಧಾರಣ ಮಳೆಯೊಂದಿಗೆ ಗಾಳಿಯ ವೇಗ ಹೆಚ್ಚಾಗುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಮುಂದಿನ 2–3 ದಿನಗಳ ಕಾಲ ರಾಜ್ಯದ ಹಲವೆಡೆ ಆಲಿಕಲ್ಲು ಹಾಗೂ ಗುಡುಗು ಮಳೆಯ ಸಾಧ್ಯತೆ ಇರುವುದರಿಂದ ಜನರು ಎಚ್ಚರಿಕೆಯಿಂದ ಇರಲು ಇಲಾಖೆ ಸೂಚಿಸಿದೆ.

ಗ್ರೇಟರ್ ಬೆಂಗಳೂರು ಪ್ರಾಧಿಕಾರದಲ್ಲಿ ಹಣಕಾಸು ಬಿಕ್ಕಟ್ಟು: ಹೊಸ ಆಡಳಿತ ವ್ಯವಸ್ಥೆ ವಿರುದ್ಧ ಟೀಕೆ!

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಸಮಗ್ರ ಅಭಿವೃದ್ಧಿಗಾಗಿ ರಚಿಸಲಾದ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಇದೀಗ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವುದು ಬೆಳಕಿಗೆ ಬಂದಿದೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು ವಿಭಜಿಸಿ ಐದು ನಗರ ಪಾಲಿಕೆಗಳಾಗಿ ರೂಪಿಸಲಾದ ಈ ಹೊಸ ವ್ಯವಸ್ಥೆಯಲ್ಲಿ ಈಗ ಹಣಕಾಸಿನ ಕೊರತೆ ತೀವ್ರವಾಗಿದ್ದು, ಪಾಲಿಕೆಗಳ ವಿಲೀನ ಅಥವಾ ಸಂಖ್ಯೆಯನ್ನು ಕಡಿತಗೊಳಿಸುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚೆಗಳು ಆರಂಭವಾಗಿವೆ.

ವಿಶೇಷವಾಗಿ ಪಶ್ಚಿಮ ನಗರ ಪಾಲಿಕೆ ಸೇರಿದಂತೆ ಕೆಲವು ಪಾಲಿಕೆಗಳಲ್ಲಿ ಸಿಬ್ಬಂದಿಯ ವೇತನ ಪಾವತಿಗೂ ಆದಾಯ ಕೊರತೆ ಉಂಟಾಗಿದೆ. ಸ್ವಂತ ಆದಾಯದಿಂದ ವೆಚ್ಚ ನಿರ್ವಹಿಸಲು ಸಾಧ್ಯವಾಗದ ಸ್ಥಿತಿಯಲ್ಲಿ ಪಾಲಿಕೆಗಳು ಸರ್ಕಾರದ ಅನುದಾನಕ್ಕೆ ಅವಲಂಬಿತವಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

GBA ಮುಖ್ಯ ಆಯುಕ್ತ ಎಂ. ಮಹೇಶ್ವರ್ ರಾವ್ ಅವರ ಪ್ರಕಾರ, ಪಶ್ಚಿಮ ನಗರ ಪಾಲಿಕೆಯ ಆರ್ಥಿಕ ಸ್ಥಿತಿ ಗಂಭೀರವಾಗಿದ್ದು, ಹೆಚ್ಚುವರಿ ಅನುದಾನಕ್ಕಾಗಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಪಾಲಿಕೆಗಳ ಭವಿಷ್ಯ ಕುರಿತು ಅಂತಿಮ ನಿರ್ಧಾರ ಸರ್ಕಾರವೇ ಕೈಗೊಳ್ಳಲಿದೆ ಎಂದು ಅವರು ಹೇಳಿದ್ದಾರೆ.

ಇದೇ ವೇಳೆ, ಈ ಹೊಸ ಆಡಳಿತ ವ್ಯವಸ್ಥೆಯನ್ನು ಮಾಜಿ ಬಿಬಿಎಂಪಿ ನಾಯಕ ಎನ್.ಆರ್. ರಮೇಶ್ ಅವರು “ಅವೈಜ್ಞಾನಿಕ” ಎಂದು ಟೀಕಿಸಿದ್ದಾರೆ.

ಅಭಿವೃದ್ಧಿ ಭರವಸೆಗಳೊಂದಿಗೆ ಆರಂಭವಾದ GBA ವ್ಯವಸ್ಥೆಯಲ್ಲೇ ಈಗ ಆರ್ಥಿಕ ಬಿಕ್ಕಟ್ಟು ಎದುರಾಗಿರುವುದು ಸರ್ಕಾರಕ್ಕೆ ಸವಾಲಾಗಿದ್ದು, ಮುಂದಿನ ದಿನಗಳಲ್ಲಿ ಮಹತ್ವದ ನಿರ್ಧಾರಗಳು ಕೈಗೊಳ್ಳುವ ಸಾಧ್ಯತೆ ಇದೆ.

ರಾಜ್ಯದಲ್ಲಿ ಒಳಮೀಸಲಾತಿ ಜಾರಿ: 56,432 ಹುದ್ದೆಗಳ ನೇಮಕಾತಿಗೆ ಸರ್ಕಾರ ಆದೇಶ!

ಬೆಂಗಳೂರು: ರಾಜ್ಯದಲ್ಲಿ ಸರ್ಕಾರಿ ನೇಮಕಾತಿಗಳಲ್ಲಿ ಒಳಮೀಸಲಾತಿ ಜಾರಿಗೆ ಸಂಬಂಧಿಸಿದಂತೆ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.

ಪರಿಶಿಷ್ಟ ಜಾತಿಗಳ ಒಟ್ಟು ಮೀಸಲಾತಿಯನ್ನು ಶೇ.17ರಿಂದ ಶೇ.15ಕ್ಕೆ ಮರುಹಂಚಿಕೆ ಮಾಡಿ ಒಳಮೀಸಲಾತಿ ವ್ಯವಸ್ಥೆ ಜಾರಿಗೆ ತರಲಾಗಿದೆ.

ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಕರ್ನಾಟಕ ರಾಜ್ಯ ಸರ್ಕಾರ ಎಸ್‌ಸಿ ಸಮುದಾಯದ 101 ಉಪಜಾತಿಗಳಿಗೆ ಒಳಮೀಸಲಾತಿ ಹಂಚಿಕೆ ಮಾಡಿತ್ತು. ಇದರ ಬೆನ್ನಲ್ಲೇ 56,432 ಹುದ್ದೆಗಳ ನೇರ ನೇಮಕಾತಿಗೆ ಸಂಬಂಧಿಸಿದಂತೆ ತಕ್ಷಣ ಕ್ರಮ ಕೈಗೊಳ್ಳಲು ಎಲ್ಲಾ ಇಲಾಖೆಗಳಿಗೆ ಸೂಚನೆ ನೀಡಲಾಗಿದೆ.

ಹೊಸ ನಿಯಮದ ಪ್ರಕಾರ, ಪರಿಶಿಷ್ಟ ಜಾತಿಯ ಒಳಮೀಸಲಾತಿಯನ್ನು ಹೀಗಾಗಿ ಹಂಚಲಾಗಿದೆ:

  • ಪ್ರವರ್ಗ ‘ಎ’ (ದಲಿತ ಎಡಗೈ): ಶೇ.5.25
  • ಪ್ರವರ್ಗ ‘ಬಿ’ (ದಲಿತ ಬಲಗೈ): ಶೇ.5.25
  • ಪ್ರವರ್ಗ ‘ಸಿ’ (ಅಲೆಮಾರಿ, ಅರೆ ಅಲೆಮಾರಿ ಹಾಗೂ ಇತರೆ ಜಾತಿಗಳು): ಶೇ.4.5

ಪ್ರವರ್ಗ ‘ಸಿ’ಯಡಿ ಲಭ್ಯವಾಗುವ ಹುದ್ದೆಗಳಲ್ಲಿ 59 ಅತ್ಯಂತ ಹಿಂದುಳಿದ ಜಾತಿಗಳಿಗೆ ಶೇ.20ರಷ್ಟು ಮೀಸಲಾತಿ ನೀಡಲಾಗುತ್ತದೆ. ಅಭ್ಯರ್ಥಿಗಳು ಲಭ್ಯವಾಗದಿದ್ದಲ್ಲಿ ಆ ಹುದ್ದೆಗಳನ್ನು ಇತರ ಜಾತಿಗಳಿಗೆ ವರ್ಗಾಯಿಸಲಾಗುತ್ತದೆ.

ನೇಮಕಾತಿ ಪ್ರಕ್ರಿಯೆಗಾಗಿ 400-ಬಿಂದು ರೋಸ್ಟರ್ ಪದ್ಧತಿಯನ್ನು ಕಟ್ಟುನಿಟ್ಟಾಗಿ ಅನುಸರಿಸಲು ಸೂಚಿಸಲಾಗಿದೆ. ಕೆಲವು ವೃಂದಗಳಲ್ಲಿ 3ಕ್ಕಿಂತ ಕಡಿಮೆ ಹುದ್ದೆಗಳಿದ್ದರೆ ಅವುಗಳನ್ನು ‘ಪರಿಶಿಷ್ಟ ಜಾತಿ ಸಾಮಾನ್ಯ’ ಎಂದು ಪರಿಗಣಿಸಲಾಗುವುದು.

ಇದೇ ವೇಳೆ, ಹೈಕೋರ್ಟ್‌ನ ಮುಂದಿನ ತೀರ್ಪಿಗೆ ಒಳಪಟ್ಟು ಈ ನೀತಿ ಜಾರಿಯಾಗಲಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಒಟ್ಟು ಶೇ.24ರ ಮೀಸಲಾತಿ ಒಪ್ಪಿಗೆಯಾದರೆ, ಹೆಚ್ಚುವರಿ ಶೇ.6 ಹುದ್ದೆಗಳನ್ನು ಬ್ಯಾಕ್‌ಲಾಗ್ ಎಂದು ಪರಿಗಣಿಸಲಾಗುತ್ತದೆ.

ಈ ಹೊಸ ವ್ಯವಸ್ಥೆಯಿಂದ ನೇಮಕಾತಿ ಪ್ರಕ್ರಿಯೆ ವೇಗಗೊಳ್ಳಲಿದ್ದು, ಹುದ್ದೆಗಳ ಹಂಚಿಕೆಯಲ್ಲಿ ಸಮಾನ ಅವಕಾಶ ಕಲ್ಪಿಸುವ ಉದ್ದೇಶ ಹೊಂದಿದೆ ಎಂದು ಸರ್ಕಾರ ತಿಳಿಸಿದೆ.

ಕೆಸರಿನಲ್ಲಿ ಸಿಲುಕಿದ KSRTC ಬಸ್ – ಶಿರಸಿ–ಹಾವೇರಿ ಹೆದ್ದಾರಿ ಸ್ಥಿತಿ ಶೋಚನೀಯ!

ಶಿರಸಿ: ಶಿರಸಿ–ಹಾವೇರಿ ರಾಷ್ಟ್ರೀಯ ಹೆದ್ದಾರಿಯ ದುಸ್ಥಿತಿ ಮತ್ತೆ ಬೆಳಕಿಗೆ ಬಂದಿದೆ.

ರಸ್ತೆಯ ಭೀಕರ ಸ್ಥಿತಿಯಿಂದ ಸರ್ಕಾರಿ ಬಸ್‌ಗಳೇ ಸಂಚಾರಕ್ಕೆ ಪರದಾಡುವಂತಾಗಿದ್ದು, ಪ್ರಯಾಣಿಕರು ಸಂಕಷ್ಟ ಎದುರಿಸುತ್ತಿದ್ದಾರೆ.

ಈ ಮಾರ್ಗದಲ್ಲಿ ಸಂಚರಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಒಂದೇ ಕೆಸರಿನಲ್ಲಿ ಸಿಲುಕಿ ಮುಂದೆ ಸಾಗಲು ಹರಸಾಹಸ ಪಡುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ರಸ್ತೆಯನ್ನು ನೋಡಿದರೆ ಇದು ರಾಷ್ಟ್ರೀಯ ಹೆದ್ದಾರಿಯೋ ಅಥವಾ ಕೆಸರು ಗದ್ದೆಯೋ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ.

ಸ್ಥಳೀಯರ ಪ್ರಕಾರ, ಹೊಂಡ–ಗುಂಡಿಗಳು ಮತ್ತು ಕೆಸರು ತುಂಬಿದ ರಸ್ತೆಯಿಂದ ದ್ವಿಚಕ್ರ ವಾಹನಗಳು ಹಾಗೂ ಸಣ್ಣ ಕಾರುಗಳ ಸಂಚಾರವೂ ಕಷ್ಟಕರವಾಗಿದೆ. ತುರ್ತು ಸಂದರ್ಭಗಳಲ್ಲಿ ಸಂಚರಿಸುವ ಆಂಬ್ಯುಲೆನ್ಸ್‌ಗಳು ಕೂಡ ಇಲ್ಲಿ ಸಿಲುಕುವ ಸಾಧ್ಯತೆ ಹೆಚ್ಚಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದ್ದು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಿರ್ಲಕ್ಷ್ಯವನ್ನು ಜನರು ತೀವ್ರವಾಗಿ ಟೀಕಿಸಿದ್ದಾರೆ. ರಸ್ತೆ ತೆರಿಗೆ ಪಾವತಿಸಿದರೂ ಸರಿಯಾದ ಮೂಲಸೌಕರ್ಯ ಸಿಗುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಸ್ಥಳೀಯರು ತಕ್ಷಣ ರಸ್ತೆ ದುರಸ್ತಿ ಕಾರ್ಯ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದು, ಇಲ್ಲದಿದ್ದರೆ ದೊಡ್ಡ ಅಪಘಾತ ಸಂಭವಿಸುವ ಅಪಾಯವಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಮನೆಯಲ್ಲಿ ಹಲ್ಲಿಗಳ ಸಮಸ್ಯೆ ಹೆಚ್ಚಾಗಿದ್ಯಾ!? ಹಾಗಿದ್ರೆ ಈ ಒಂದು ಗಿಡ ನೆಡಿ, ಶಾಶ್ವತ ಮುಕ್ತಿ ಸಿಗತ್ತೆ

0

ಬೇಸಿಗೆಯ ಸಮಯದಲ್ಲಿ ಮನೆ ಹೊರಗಡೆ ಹಾವುಗಳ ಕಾಟ ಹೆಚ್ಚಾದಂತೆ, ಮನೆಯೊಳಗಡೆ ಹಲ್ಲಿಗಳ (lizards) ಹಾವಳಿ ಹೆಚ್ಚಾಗುವುದು ಸಾಮಾನ್ಯ.

ಇವುಗಳು ನೇರವಾಗಿ ಮನುಷ್ಯರಿಗೆ ಹಾನಿ ಮಾಡದಿದ್ದರೂ, ಆಹಾರ ಪದಾರ್ಥಗಳ ಮೇಲೆ ಬಿದ್ದರೆ ಆರೋಗ್ಯಕ್ಕೆ ಅಪಾಯ ಉಂಟಾಗುವ ಸಾಧ್ಯತೆ ಇರುತ್ತದೆ. ಈ ಕಾರಣದಿಂದ ಅನೇಕರು ಹಲ್ಲಿಗಳನ್ನು ಓಡಿಸಲು ರಾಸಾಯನಿಕ ಉತ್ಪನ್ನಗಳನ್ನು ಬಳಸುತ್ತಾರೆ. ಆದರೆ ಪರಿಣಾಮಕಾರಿ ಮತ್ತು ಸುರಕ್ಷಿತ ಉಪಾಯವಾಗಿ ತುಳಸಿ ಗಿಡವನ್ನು ಬಳಸಬಹುದು.

ಧಾರ್ಮಿಕ ಮಹತ್ವ ಹೊಂದಿರುವ ತುಳಸಿ ಗಿಡವು ಆರೋಗ್ಯಕ್ಕೂ ಉಪಯುಕ್ತವಾಗಿದ್ದು, ಹಲ್ಲಿ, ಸೊಳ್ಳೆ ಹಾಗೂ ಕೀಟಗಳನ್ನು ದೂರವಿಡಲು ಸಹ ಸಹಾಯಕವಾಗಿದೆ. ತುಳಸಿ ಗಿಡದಿಂದ ಹೊರಬರುವ ವಿಶಿಷ್ಟ ವಾಸನೆ ಹಲ್ಲಿಗಳಿಗೆ ಅಸಹ್ಯವಾಗಿದ್ದು, ಅವುಗಳು ಆ ಸ್ಥಳದಲ್ಲಿ ಉಳಿಯುವುದಿಲ್ಲ ಎಂದು ಹೇಳಲಾಗುತ್ತದೆ. ಇದರಿಂದ ಹಲ್ಲಿಗಳ ಕಾಟ ಸ್ವಾಭಾವಿಕವಾಗಿ ಕಡಿಮೆಯಾಗುತ್ತದೆ.

ತುಳಸಿ ಗಿಡವನ್ನು ಮನೆಯ ಕಿಟಕಿ, ಬಾಗಿಲು ಹಾಗೂ ಬಾಲ್ಕನಿಯಲ್ಲಿ ಇಡುವುದರಿಂದ ಹಲ್ಲಿಗಳ ಜೊತೆಗೆ ಸೊಳ್ಳೆ, ನೊಣ ಹಾಗೂ ಇತರ ಕೀಟಗಳ ಪ್ರವೇಶವೂ ಕಡಿಮೆಯಾಗುತ್ತದೆ. ಇದರಿಂದ ಮನೆಯೊಳಗಿನ ಪರಿಸರ ಸ್ವಚ್ಛವಾಗಿಯೂ, ಸುರಕ್ಷಿತವಾಗಿಯೂ ಇರುತ್ತದೆ.

ತುಳಸಿ ಗಿಡದ ಇನ್ನೊಂದು ಉಪಾಯವಾಗಿ ಅದರ ಎಲೆಗಳನ್ನು ಮನೆಯ ಮೂಲೆಗಳಲ್ಲಿ ಇಡುವುದರಿಂದ ಅಥವಾ ತುಳಸಿ ಎಲೆಗಳನ್ನು ನೀರಿನಲ್ಲಿ ಕುದಿಸಿ ಆ ನೀರನ್ನು ಸ್ಪ್ರೇ ರೂಪದಲ್ಲಿ ಮನೆಯೊಳಗೆ ಸಿಂಪಡಿಸುವುದರಿಂದಲೂ ಹಲ್ಲಿಗಳು ಹಾಗೂ ಕೀಟಗಳನ್ನು ದೂರವಿಡಬಹುದು.

ಇದೇ ಕಾರಣಕ್ಕೆ ತುಳಸಿ ಗಿಡವು ಕೇವಲ ಧಾರ್ಮಿಕ ಸಸ್ಯವಲ್ಲ, ಮನೆಯ ಸ್ವಚ್ಛತೆ ಮತ್ತು ಕೀಟ ನಿಯಂತ್ರಣಕ್ಕೂ ಸಹಾಯಕವಾದ ನೈಸರ್ಗಿಕ ಪರಿಹಾರವಾಗಿದೆ.

ಉದ್ಯೋಗ ಖಾತ್ರಿ ಕೆಲಸದ ವೇಳೆ ಕಾರ್ಮಿಕ ಕುಸಿದು ಸಾವು! ದುರಂತಕ್ಕೆ ಹೀಟ್ ಸ್ಟ್ರೋಕ್ ಕಾರಣವಾ!?

ರಾಯಚೂರು: ಉದ್ಯೋಗ ಖಾತ್ರಿ ಯೋಜನೆಯ ಕೆಲಸಕ್ಕೆ ತೆರಳಿದ್ದ ಕಾರ್ಮಿಕನೊಬ್ಬ ಕೆಲಸದ ವೇಳೆ ಏಕಾಏಕಿ ಕುಸಿದು ಬಿದ್ದು ಮೃತಪಟ್ಟ ಘಟನೆ ಯಾಪಲದಿನ್ನಿ ಗ್ರಾಮದ ಹೊರಭಾಗದಲ್ಲಿ ನಡೆದಿದೆ.

ಮೃತರನ್ನು ಹುಸೇನಪ್ಪ ಮಡಿವಾಳ (49) ಎಂದು ಗುರುತಿಸಲಾಗಿದೆ. ಕೆಲಸದ ಸ್ಥಳದಲ್ಲೇ ಕುಸಿದು ಬಿದ್ದ ಅವರನ್ನು ಕೂಡಲೇ ರಿಮ್ಸ್ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು. ಆದರೆ ಮಾರ್ಗ ಮಧ್ಯೆಯೇ ಅವರು ಉಸಿರು ಚೆಲ್ಲಿದ್ದಾರೆ ಎಂದು ತಿಳಿದುಬಂದಿದೆ.

ಸುಮಾರು 40 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ಒಣಗಿದ ಕೆರೆಯ ಪ್ರದೇಶದಲ್ಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ. ಹೀಟ್‌ಸ್ಟ್ರೋಕ್ ಕಾರಣದಿಂದ ಸಾವು ಸಂಭವಿಸಿರಬಹುದು ಎಂದು ಕುಟುಂಬಸ್ಥರು ಮತ್ತು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ.

ಘಟನೆ ಬಳಿಕ ಸುಡು ಬಿಸಿಲಿನಲ್ಲಿ ಸರಿಯಾದ ನೆರಳು, ಕುಡಿಯುವ ನೀರು ಹಾಗೂ ORS ವ್ಯವಸ್ಥೆ ಇಲ್ಲದೆ ಕೆಲಸ ಮಾಡಿಸಿದ್ದೇ ಸಾವಿಗೆ ಕಾರಣ ಎಂದು ಆರೋಪಿಸಿ ಗ್ರಾಮ ಪಂಚಾಯಿತಿ ಹಾಗೂ ಪಿಡಿಒ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

ಆದರೆ ವೈದ್ಯರ ಪ್ರಕಾರ, ತೀವ್ರ ಬಿಸಿಲಿನಲ್ಲಿ ದೇಹದ ನೀರಿನ ಅಂಶ ಕಡಿಮೆಯಾಗಿ ರಕ್ತದೊತ್ತಡ ಇಳಿಯುವ ಕಾರಣವೂ ಸಾವಿಗೆ ಕಾರಣವಾಗಿರಬಹುದು ಎಂದು ತಿಳಿಸಲಾಗಿದೆ.

ಮೃತನ ಕುಟುಂಬಕ್ಕೆ ಇದುವರೆಗೆ ಯಾವುದೇ ಹಿರಿಯ ಅಧಿಕಾರಿಗಳು ಭೇಟಿ ನೀಡಿಲ್ಲ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಪರಿಹಾರ ನೀಡಬೇಕು ಹಾಗೂ ನಿರ್ಲಕ್ಷ್ಯಕ್ಕೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಕೇಳಿಬಂದಿದೆ.

Kolara Breaking: ಆರ್ಡರ್ ನೆಪದಲ್ಲಿ ಕರೆದುಕೊಂಡು ಹೋಗಿ ಯುವಕನ ಬರ್ಬರ ಹತ್ಯೆ!

0

ಕೋಲಾರ: ಆರ್ಡರ್ ಇದೆ ಎಂದು ನಂಬಿಸಿ ಕರೆದುಕೊಂಡು ಹೋಗಿ ಯುವಕನೊಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಕೋಲಾರ ನಗರದ ಹೊರವಲಯದಲ್ಲಿ ನಡೆದಿದೆ.

ಬೀಡಿ ಕಾಲೋನಿಯ ನಿವಾಸಿ ಸಲ್ಮಾನ್ ಪಾಷಾ (26) ಮೃತ ಯುವಕನಾಗಿದ್ದಾನೆ. ಸೋಫಾ ತಯಾರಿಕೆ ಹಾಗೂ ರಿಪೇರಿ ಕೆಲಸ ಮಾಡುತ್ತಿದ್ದ ಸಲ್ಮಾನ್ ಪಾಷಾ ಅವರನ್ನು ನಿನ್ನೆ ರಾತ್ರಿ ಸುಮಾರು 11:30ರ ವೇಳೆಗೆ ಪರಿಚಯಸ್ಥರು ಮನೆಗೆ ಬಂದು “ಹೊಸ ಸೋಫಾ ಆರ್ಡರ್ ಬಂದಿದೆ, ಅಳತೆ ತೆಗೆದುಕೊಳ್ಳಲು ಬಾ” ಎಂದು ಹೇಳಿ ಆಟೋದಲ್ಲಿ ಕರೆದುಕೊಂಡು ಹೋಗಿದ್ದಾರೆ.

ಅವರು ಎಪಿಎಂಸಿ ಮಾರುಕಟ್ಟೆ ಸಮೀಪದ ಮೆಹಬೂಬ್ ಪೆಟ್ರೋಲ್ ಬಂಕ್ ಬಳಿಯ ಲಕ್ಷ್ಮೀ ಬಾರ್ ಬಳಿ ಹೋಗಿ ಮದ್ಯಪಾನ ಮಾಡಿದ್ದಾರೆ. ಈ ವೇಳೆ ಕುಡಿದ ಅಮಲಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಸಲ್ಮಾನ್ ಮತ್ತು ಆಟೋ ಚಾಲಕ ಅಬ್ದುಲ್ ರಶೀದ್ ನಡುವೆ ಗಲಾಟೆ ಆರಂಭವಾಗಿದೆ.

ಗಾಂಜಾ ಮತ್ತು ಮದ್ಯದ ಅಮಲಿನಲ್ಲಿದ್ದ ಅಬ್ದುಲ್ ರಶೀದ್, ಏಕಾಏಕಿ ಸಲ್ಮಾನ್ ಮೇಲೆ ಕಲ್ಲಿನಿಂದ ದಾಳಿ ನಡೆಸಿ, ಬಳಿಕ ಚಾಕುವಿನಿಂದ ಅನೇಕ ಬಾರಿ ಇರಿದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ತೀವ್ರ ರಕ್ತಸ್ರಾವದಿಂದ ಸಲ್ಮಾನ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಘಟನೆ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು, ಕೊಲೆ ಮಾಡಿದ ಬಳಿಕ ಅದೇ ಸ್ಥಳದಲ್ಲಿ ಮತ್ತಿನಲ್ಲಿ ಬಿದ್ದಿದ್ದ ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಯನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ.

“ಮನೆಗೆ ಆಸರೆಯಾಗಿದ್ದ ಮಗನನ್ನು ಸುಳ್ಳು ಹೇಳಿ ಕರೆದುಕೊಂಡು ಹೋಗಿ ಕೊಂದಿದ್ದಾರೆ” ಎಂದು ಮೃತನ ತಂದೆ ಖಾದರ್ ಪಾಷಾ ಮತ್ತು ತಾಯಿ ಶಕೀಲಾ ಕಣ್ಣೀರಿಟ್ಟಿದ್ದಾರೆ.

ಜಿಲ್ಲೆಯಲ್ಲಿ ಗಾಂಜಾ ಹಾಗೂ ಮಾದಕ ವಸ್ತುಗಳ ಹಾವಳಿ ಹೆಚ್ಚಾಗುತ್ತಿರುವುದರಿಂದ ಇಂತಹ ಘಟನೆಗಳು ಹೆಚ್ಚುತ್ತಿರುವುದಾಗಿ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೊಳೆ ಬಿತ್ತಿ ಹಣ ವಸೂಲಿ: ಬೆಂಗಳೂರಲ್ಲಿ ಮತ್ತೆ ತಲೆ ಎತ್ತಿದ ‘ಪಂಕ್ಚರ್ ಮಾಫಿಯಾ’!

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ವಾಹನ ಸವಾರರಿಗೆ ಹೊಸ ಆತಂಕ ಎದುರಾಗಿದೆ.

ನಗರದ ಹೆಬ್ಬಾಳ ಮತ್ತು ಗೊರಗುಂಟೆಪಾಳ್ಯ ನಡುವಿನ ಪ್ರಮುಖ ರಸ್ತೆಯಲ್ಲಿ ಪಂಕ್ಚರ್ ದಂಧೆಕೋರರ ಸಂಚು ಬೆಳಕಿಗೆ ಬಂದಿದೆ.

ಕಳೆದ ಕೆಲವು ದಿನಗಳಿಂದ ಈ ಮಾರ್ಗದಲ್ಲಿ ಸಂಚರಿಸುವ ವಾಹನಗಳಿಗೆ ಸರಣಿ ಪಂಕ್ಚರ್ ಸಮಸ್ಯೆ ಎದುರಾಗುತ್ತಿತ್ತು. ಇದರಿಂದ ಸಂಶಯಗೊಂಡು ಪರಿಶೀಲನೆ ನಡೆಸಿದಾಗ ರಸ್ತೆಯ ಮೇಲೆ ಉದ್ದೇಶಪೂರ್ವಕವಾಗಿ ನೂರಾರು ಮೊಳೆಗಳನ್ನು ಹರಡಿರುವುದು ಪತ್ತೆಯಾಗಿದೆ. ಇದು ಸಾಮಾನ್ಯ ಘಟನೆ ಅಲ್ಲ, ವಾಹನ ಸವಾರರನ್ನು ಸುಲಿಗೆ ಮಾಡಲು ನಡೆಸುತ್ತಿರುವ ಸಂಚು ಎಂಬ ಆರೋಪ ಕೇಳಿಬಂದಿದೆ.

ವಿಶೇಷವೆಂದರೆ, ಮೊಳೆಗಳು ಬಿದ್ದಿರುವ ಸ್ಥಳದ ಹತ್ತಿರವೇ ಪಂಕ್ಚರ್ ರಿಪೇರಿ ಅಂಗಡಿಗಳು ಇರುವುದರಿಂದ ಅನುಮಾನ ಮತ್ತಷ್ಟು ಗಟ್ಟಿಯಾಗುತ್ತಿದೆ. ವಾಹನಗಳು ಪಂಕ್ಚರ್ ಆದಾಗ ಹೆಚ್ಚಿನ ಹಣ ವಸೂಲಿ ಮಾಡಲು ಈ ರೀತಿಯ ಕೃತ್ಯ ನಡೆಸಲಾಗುತ್ತಿದೆ ಎನ್ನಲಾಗಿದೆ.

ವೇಗವಾಗಿ ಸಾಗುತ್ತಿರುವ ವಾಹನಗಳ ಟೈರ್ ಏಕಾಏಕಿ ಪಂಕ್ಚರ್ ಆದರೆ ನಿಯಂತ್ರಣ ತಪ್ಪಿ ಭಾರೀ ಅಪಘಾತ ಸಂಭವಿಸುವ ಅಪಾಯವಿದೆ. ಇದರಿಂದ ಸಾರ್ವಜನಿಕರ ಪ್ರಾಣಕ್ಕೂ ಅಪಾಯ ಉಂಟಾಗುತ್ತಿದೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದ್ದು, ನಾಗರಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ತಪ್ಪಿತಸ್ಥರನ್ನು ಪತ್ತೆಹಚ್ಚಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಬೆಂಗಳೂರಿನಂತಹ ಐಟಿ ನಗರದಲ್ಲಿ ಇಂತಹ ದಂಧೆಗಳು ನಡೆಯುತ್ತಿರುವುದು ನಗರದ ಪ್ರತಿಷ್ಠೆಗೆ ಧಕ್ಕೆಯಾಗಿದೆ ಎಂದು ಜನರು ಅಭಿಪ್ರಾಯಪಟ್ಟಿದ್ದಾರೆ.

ಊಟಕ್ಕೆ ಹೋದ ಯುವತಿ ಮೇಲೆ ಹಲ್ಲೆ: ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್ ಮ್ಯಾನೇಜರ್ ಮೇಲೆ ಗಂಭೀರ ಆರೋಪ!

ಬೆಂಗಳೂರು: ನಗರದ ಎಂ.ಜಿ. ರಸ್ತೆಯಲ್ಲಿರುವ ಪ್ರಖ್ಯಾತ ತಂದೂರ್ ಹೋಟೆಲ್‌ನಲ್ಲಿ ಯುವತಿಯೊಬ್ಬಳ ಮೇಲೆ ಮ್ಯಾನೇಜರ್ ಅಸಭ್ಯವಾಗಿ ವರ್ತಿಸಿ ಹಲ್ಲೆ ನಡೆಸಿದ ಆರೋಪ ಬೆಳಕಿಗೆ ಬಂದಿದೆ.

ಈ ಸಂಬಂಧ ಮ್ಯಾನೇಜರ್ ರವಿ ವಿರುದ್ಧ ಪ್ರಕರಣ ದಾಖಲಾಗಿದೆ. ಕೀರ್ತಿ ಎಂಬ ಯುವತಿ ಏ.27ರಂದು ಮಧ್ಯಾಹ್ನ ಸುಮಾರು 2:30ರ ವೇಳೆಗೆ ಸ್ನೇಹಿತರೊಂದಿಗೆ ಹೋಟೆಲ್‌ಗೆ ಊಟಕ್ಕೆ ತೆರಳಿದ್ದರು. ಈ ವೇಳೆ ಕ್ಷುಲ್ಲಕ ಕಾರಣಕ್ಕೆ ಗ್ರಾಹಕರು ಮತ್ತು ಮ್ಯಾನೇಜರ್ ನಡುವೆ ವಾಗ್ವಾದ ಉಂಟಾಗಿ, ಅದು ತೀವ್ರಗೊಂಡಿದೆ ಎಂದು ತಿಳಿದುಬಂದಿದೆ.

ದೂರು ಪ್ರಕಾರ, ಮ್ಯಾನೇಜರ್ ರವಿ ಯುವತಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಗಲಾಟೆಯ ವೇಳೆ ಯುವತಿಯ ಬಟ್ಟೆ ಹರಿಯಲು ಯತ್ನಿಸಿದ್ದಾನೆ ಎಂಬ ಗಂಭೀರ ಆರೋಪವೂ ಕೇಳಿಬಂದಿದೆ.

ಘಟನೆ ನಂತರ ಯುವತಿ ಹಲಸೂರು ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದು, ಅದರ ಆಧಾರದ ಮೇಲೆ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಹೋಟೆಲ್‌ನ ಸಿಸಿಟಿವಿ ದೃಶ್ಯಾವಳಿಗಳನ್ನು ವಶಕ್ಕೆ ಪಡೆದು ತನಿಖೆ ಮುಂದುವರಿಸಲಾಗಿದೆ.

ಈ ಘಟನೆ ನಗರದಲ್ಲಿ ಆತಂಕ ಹಾಗೂ ಆಕ್ರೋಶಕ್ಕೆ ಕಾರಣವಾಗಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರ ಸುರಕ್ಷತೆ ಕುರಿತು ಮತ್ತೆ ಪ್ರಶ್ನೆಗಳು ಎದ್ದಿವೆ.

error: Content is protected !!