Home Blog

ಬೆಂಗಳೂರು ಜನತೆಗೆ ಬಿಗ್ ಶಾಕ್..! ತರಕಾರಿ–ಹಣ್ಣುಗಳ ದರ ಭಾರೀ ಏರಿಕೆ

ಬೆಂಗಳೂರು: ಈಗಾಗಲೇ ದಿನನಿತ್ಯದ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಸಂಕಷ್ಟದಲ್ಲಿರುವ ಜನಸಾಮಾನ್ಯರಿಗೆ ಮತ್ತೊಂದು ಆಘಾತ ಎದುರಾಗಿದೆ.

ರಾಜಧಾನಿ ಬೆಂಗಳೂರಿನಲ್ಲಿ ತರಕಾರಿ ಹಾಗೂ ಹಣ್ಣುಗಳ ದರಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಕುಟುಂಬಗಳ ಮಾಸಿಕ ಬಜೆಟ್ ಮೇಲೆ ಹೆಚ್ಚುವರಿ ಹೊರೆ ಬೀಳುತ್ತಿದೆ.

ಹವಾಮಾನ ವೈಪರೀತ್ಯ ಮತ್ತು ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದ ಪರಿಣಾಮ ತರಕಾರಿಗಳ ಇಳುವರಿ ಕಡಿಮೆಯಾಗಿರುವುದೇ ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಮಳೆ ಕೊರತೆ ಮುಂದುವರಿದರೆ ಇನ್ನಷ್ಟು ಬೆಲೆ ಏರಿಕೆಯ ಸಾಧ್ಯತೆ ಇರುವುದಾಗಿ ಅಂದಾಜಿಸಲಾಗಿದೆ.

ಹಾಪ್‌ಕಾಮ್ಸ್ ಮಾರುಕಟ್ಟೆ ದರಗಳ ಪ್ರಕಾರ ಹಲವಾರು ತರಕಾರಿಗಳ ಬೆಲೆ ಕೆಜಿಗೆ 90ರಿಂದ 200 ರೂಪಾಯಿವರೆಗೂ ಏರಿಕೆಯಾಗಿದೆ. ಬೆಳ್ಳುಳ್ಳಿ ದರ ₹270, ಬಟಾಣಿ ಕಾಳು ₹200, ಡಬಲ್ ಬೀನ್ಸ್ ₹160, ಮೆಂತ್ಯೆ ಸೊಪ್ಪು ಕಟ್ಟಿಗೆ ₹30 ಸೇರಿದಂತೆ ಹಲವು ತರಕಾರಿಗಳು ಸಾಮಾನ್ಯ ಜನರಿಗೆ ಭಾರೀ ಹೊರೆ ಆಗಿವೆ.

ಹಣ್ಣುಗಳ ದರದಲ್ಲೂ ಏರಿಕೆ ಕಂಡುಬಂದಿದ್ದು, ಸೇಬು ₹325, ಗಾಲ ಸೇಬು ₹350, ಕಿವಿ ಫ್ರೂಟ್ ₹800ರಿಂದ ₹1000, ಲಿಚ್ಚಿ ₹500, ಮೂಸಂಬಿ ₹160, ಸಪೋಟ ₹190 ರೂಪಾಯಿವರೆಗೆ ಮಾರಾಟವಾಗುತ್ತಿದೆ.

ಬೆಲೆ ಏರಿಕೆಯ ಪರಿಣಾಮವಾಗಿ ಮಧ್ಯಮ ವರ್ಗ ಹಾಗೂ ಸಾಮಾನ್ಯ ಕುಟುಂಬಗಳ ಖರ್ಚು ಹೆಚ್ಚಾಗಿದ್ದು, ಅಗತ್ಯ ವಸ್ತುಗಳ ಖರೀದಿ ಮೇಲೂ ಪ್ರಭಾವ ಬೀರುತ್ತಿದೆ.

ವ್ಯಾಪಾರಿಗಳು ಮಳೆ ಉತ್ತಮವಾಗಿ ಸುರಿದರೆ ಮುಂದಿನ ವಾರಗಳಲ್ಲಿ ದರಗಳು ಸ್ಥಿರವಾಗುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.

ವಾಣಿಜ್ಯ LPG ಬಳಕೆದಾರರಿಗೆ ಭಾರೀ ರಿಲೀಫ್..! ಕೋಟಾ ವ್ಯವಸ್ಥೆ ಸಂಪೂರ್ಣ ರದ್ದುಪಡಿಸಿದ ಕೇಂದ್ರ ಸರ್ಕಾರ

0

ನವದೆಹಲಿ: ಪಶ್ಚಿಮ ಏಷ್ಯಾ ಬಿಕ್ಕಟ್ಟು ತಣ್ಣಗಾಗುತ್ತಿರುವ ಹಿನ್ನೆಲೆ ಕೇಂದ್ರ ಸರ್ಕಾರವು ವಾಣಿಜ್ಯ ಹಾಗೂ ಕೈಗಾರಿಕಾ ಬಳಕೆಯ ಎಲ್‌ಪಿಜಿ (LPG) ಗ್ರಾಹಕರಿಗೆ ಮಹತ್ವದ ರಿಲೀಫ್ ನೀಡಿದೆ.

ಹೋಟೆಲ್, ರೆಸ್ಟೋರೆಂಟ್ ಹಾಗೂ ಫ್ಯಾಕ್ಟರಿಗಳಿಗೆ ನೀಡಲಾಗುತ್ತಿದ್ದ ವಾಣಿಜ್ಯ ಸಿಲಿಂಡರ್ ಪೂರೈಕೆ ಮೇಲಿದ್ದ ಎಲ್ಲ ವಲಯವಾರು ನಿಯಂತ್ರಣ ಹಾಗೂ ಕೋಟಾ ವ್ಯವಸ್ಥೆಯನ್ನು ಕೇಂದ್ರ ಸರ್ಕಾರ ಸಂಪೂರ್ಣವಾಗಿ ರದ್ದುಗೊಳಿಸಿದೆ.

ದೇಶೀಯವಾಗಿ ಗ್ಯಾಸ್ ಉತ್ಪಾದನೆ ಹಾಗೂ ಪೂರೈಕೆ ಸ್ಥಿತಿ ಸುಧಾರಿಸಿರುವುದರಿಂದ ಪರಿಸ್ಥಿತಿಯನ್ನು ಯುದ್ಧಪೂರ್ವ ಸ್ಥಿತಿಗೆ ಮರುಸ್ಥಾಪಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಈ ನಿರ್ಧಾರದಿಂದ ವಾಣಿಜ್ಯ ಬಳಕೆಯ ಎಲ್‌ಪಿಜಿ ಲಭ್ಯತೆ ಸುಲಭವಾಗುವ ನಿರೀಕ್ಷೆಯಿದೆ. ಆದರೆ ಗೃಹ ಬಳಕೆಯ ಅಡುಗೆ ಅನಿಲ ಪೂರೈಕೆಗೆ ಯಾವುದೇ ತೊಂದರೆ ಉಂಟಾಗುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ಈ ನಿರ್ಧಾರವನ್ನು ಹೋಟೆಲ್ ಸಂಘ ಸ್ವಾಗತಿಸಿದ್ದು, ಹೋಟೆಲ್ ಹಾಗೂ ರೆಸ್ಟೋರೆಂಟ್ ಉದ್ಯಮಕ್ಕೆ ಇದು ದೊಡ್ಡ ರಿಲೀಫ್ ಆಗಲಿದೆ ಎಂದು ಅಭಿಪ್ರಾಯಪಟ್ಟಿದೆ.

ಮಂತ್ರಾಲಯಕ್ಕೆ ತೆರಳುತ್ತಿದ್ದ ಭಕ್ತರಿಗೆ ವಿಧಿಯ ಆಘಾತ..! ಮೂವರು ಸ್ಥಳದಲ್ಲೇ ಸಾವು

ಕೊಪ್ಪಳ: ಮಂತ್ರಾಲಯಕ್ಕೆ ತೆರಳುತ್ತಿದ್ದ ಭಕ್ತರಿದ್ದ ಓಮಿನಿ ವಾಹನಕ್ಕೆ ಅಶೋಕ್ ಲೇಲ್ಯಾಂಡ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದು, ಆರು ಮಂದಿ ಗಾಯಗೊಂಡಿರುವ ಘಟನೆ ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಭಾನಾಪೂರ ಸಮೀಪದ ರಾಷ್ಟ್ರೀಯ ಹೆದ್ದಾರಿ-63ರಲ್ಲಿ ಇಂದು ಮುಂಜಾನೆ ನಡೆದಿದೆ.

ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಕಬ್ಬಾರ್ ಗ್ರಾಮದ ನಿವಾಸಿಗಳು ಓಮಿನಿ ವಾಹನದಲ್ಲಿ ಮಂತ್ರಾಲಯಕ್ಕೆ ತೆರಳುತ್ತಿದ್ದರು. ಈ ವೇಳೆ ಪಕ್ಕದ ರಸ್ತೆಯಲ್ಲಿ ಸಂಚರಿಸುತ್ತಿದ್ದ ಅಶೋಕ್ ಲೇಲ್ಯಾಂಡ್ ವಾಹನ ನಿಯಂತ್ರಣ ತಪ್ಪಿ ಏಕಾಏಕಿ ಡಿವೈಡರ್ ದಾಟಿ ಎದುರಿನಿಂದ ಬರುತ್ತಿದ್ದ ಓಮಿನಿ ವಾಹನಕ್ಕೆ ಡಿಕ್ಕಿ ಹೊಡೆದಿದೆ.

ಅಪಘಾತದ ತೀವ್ರತೆಗೆ ಓಮಿನಿ ವಾಹನ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಅದರಲ್ಲಿದ್ದ ಕೆಂಚಮ್ಮ ಬಾಳೆಕಾಯಿ (35), ಅಮೃತಾ ಕೋಟ್ಯಾಳ್ (25) ಹಾಗೂ ರಮೇಶ್ ಬಳ್ಳಾರಿ (45) ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಘಟನೆಯಲ್ಲಿ ಗಾಯಗೊಂಡಿರುವ ಉಳಿದ ಆರು ಮಂದಿಯನ್ನು ತಕ್ಷಣವೇ ರಕ್ಷಿಸಿ ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದ್ದು, ಅವರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.

ಅಪಘಾತದ ಮಾಹಿತಿ ತಿಳಿಯುತ್ತಿದ್ದಂತೆ ಕುಕನೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಅಪಘಾತಕ್ಕೆ ನಿಖರ ಕಾರಣವೇನು ಎಂಬುದರ ಕುರಿತು ತನಿಖೆ ಕೈಗೊಂಡಿದ್ದಾರೆ.

KSRTC ಬಸ್‌ಗಳಲ್ಲಿ ಟಿಕೆಟ್ ರಹಿತ ಪ್ರಯಾಣಿಕರಿಗೆ ಬಿಗ್ ಶಾಕ್..! ಒಂದೇ ತಿಂಗಳಲ್ಲಿ ₹8.94 ಲಕ್ಷ ದಂಡ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್‌ಗಳಲ್ಲಿ ಟಿಕೆಟ್ ಪಡೆಯದೇ ಪ್ರಯಾಣಿಸುವವರ ವಿರುದ್ಧ ಮೇ ತಿಂಗಳಿನಲ್ಲಿ ವ್ಯಾಪಕ ಕಾರ್ಯಾಚರಣೆ ನಡೆಸಿದ್ದು, ಟಿಕೆಟ್ ರಹಿತ ಪ್ರಯಾಣಿಕರಿಂದ ಒಟ್ಟು 8.94 ಲಕ್ಷ ರೂಪಾಯಿ ದಂಡ ವಸೂಲಿ ಮಾಡಲಾಗಿದೆ.

ಕೆಎಸ್‌ಆರ್‌ಟಿಸಿ ಜಾಗೃತ ದಳದ ಸಿಬ್ಬಂದಿ ಕರ್ನಾಟಕ ಹಾಗೂ ನೆರೆಯ ರಾಜ್ಯಗಳಲ್ಲಿ ಸಂಚರಿಸುವ ಬಸ್‌ಗಳಲ್ಲಿ ದಿಢೀರ್ ತಪಾಸಣೆ ನಡೆಸಿದ್ದರು. ಈ ವೇಳೆ ಒಟ್ಟು 42,518 ಬಸ್‌ಗಳನ್ನು ಪರಿಶೀಲನೆ ನಡೆಸಲಾಗಿದ್ದು, 4,353 ಪ್ರಕರಣಗಳು ಪತ್ತೆಯಾಗಿವೆ. ಟಿಕೆಟ್ ಇಲ್ಲದೆ ಪ್ರಯಾಣಿಸುತ್ತಿದ್ದ 4,476 ಪ್ರಯಾಣಿಕರಿಗೆ ದಂಡ ವಿಧಿಸಲಾಗಿದೆ.

ಈ ಕಾರ್ಯಾಚರಣೆಯಿಂದ ಸುಮಾರು 1.52 ಲಕ್ಷ ರೂಪಾಯಿ ಮೌಲ್ಯದ ಆದಾಯ ಸೋರಿಕೆ ತಡೆಗಟ್ಟಲಾಗಿದ್ದು, ದಂಡದ ರೂಪದಲ್ಲಿ ಒಟ್ಟು 8.94 ಲಕ್ಷ ರೂಪಾಯಿ ಸಂಗ್ರಹವಾಗಿದೆ ಎಂದು ಕೆಎಸ್‌ಆರ್‌ಟಿಸಿ ತಿಳಿಸಿದೆ.

ಇದರೊಂದಿಗೆ, ಟಿಕೆಟ್ ವಿತರಣೆ ಮತ್ತು ಕರ್ತವ್ಯ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ತೋರಿದ ಸಿಬ್ಬಂದಿಯ ವಿರುದ್ಧವೂ ಸಂಸ್ಥೆ ಶಿಸ್ತು ಕ್ರಮ ಕೈಗೊಂಡಿದೆ. ಅಕ್ರಮಗಳಿಗೆ ಕಾರಣರಾದ ಸಿಬ್ಬಂದಿಗಳ ವಿರುದ್ಧ ಇಲಾಖಾ ಮಟ್ಟದಲ್ಲಿ ಅಗತ್ಯ ಕ್ರಮ ಜರುಗಿಸಲಾಗಿದೆ ಎಂದು ಸಂಸ್ಥೆ ಸ್ಪಷ್ಟಪಡಿಸಿದೆ.

ಮುಂದಿನ ದಿನಗಳಲ್ಲಿಯೂ ಟಿಕೆಟ್ ರಹಿತ ಪ್ರಯಾಣಿಕರ ವಿರುದ್ಧ ವಿಶೇಷ ತಪಾಸಣೆ ಮುಂದುವರಿಯಲಿದ್ದು, ನಿಯಮ ಉಲ್ಲಂಘಿಸುವವರ ವಿರುದ್ಧ ಇನ್ನಷ್ಟು ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಕೆಎಸ್‌ಆರ್‌ಟಿಸಿ ಎಚ್ಚರಿಕೆ ನೀಡಿದೆ.

ಪ್ರಯಾಣಿಕರು ಬಸ್‌ನಲ್ಲಿ ಪ್ರಯಾಣಿಸುವಾಗ ಕಡ್ಡಾಯವಾಗಿ ಟಿಕೆಟ್ ಅಥವಾ ಮಾನ್ಯ ಪಾಸ್‌ಗಳನ್ನು ಪಡೆದು, ಸಂಸ್ಥೆಯೊಂದಿಗೆ ಸಹಕರಿಸುವಂತೆ ಕೆಎಸ್‌ಆರ್‌ಟಿಸಿ ಮನವಿ ಮಾಡಿದೆ.

ರಾಮಮಂದಿರ ಟ್ರಸ್ಟ್‌ನಲ್ಲಿ ಆರೋಪ ಸತ್ಯವಾದರೆ ಕಠಿಣ ಕ್ರಮ ಅನಿವಾರ್ಯ: ಪೇಜಾವರ ಶ್ರೀ!

ಉಡುಪಿ: ಅಯೋಧ್ಯೆ ರಾಮಮಂದಿರ ಟ್ರಸ್ಟ್‌ನಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪದ ಕುರಿತು ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಪ್ರತಿಕ್ರಿಯೆ ನೀಡಿದ್ದು, ಜುಲೈ 11ರಂದು ನಡೆಯಲಿರುವ ಟ್ರಸ್ಟ್ ಸಭೆಯಲ್ಲಿ ವಿಷಯ ಚರ್ಚೆಗೆ ಬರಲಿದ್ದು, ಸಂಪೂರ್ಣ ಮಾಹಿತಿ ಪಡೆದ ಬಳಿಕವೇ ಪ್ರತಿಕ್ರಿಯೆ ನೀಡುವುದಾಗಿ ತಿಳಿಸಿದ್ದಾರೆ.

ರಾಮಮಂದಿರ ಟ್ರಸ್ಟ್‌ನ ಸದಸ್ಯರಾಗಿರುವ ಶ್ರೀಗಳು, ಕೇವಲ ಮಾಧ್ಯಮ ವರದಿಗಳ ಆಧಾರದ ಮೇಲೆ ಯಾವುದೇ ಅಭಿಪ್ರಾಯ ವ್ಯಕ್ತಪಡಿಸುವುದು ಸರಿಯಲ್ಲ. ಸಭೆಯಲ್ಲಿ ವಿಷಯದ ಸತ್ಯಾಸತ್ಯತೆ ತಿಳಿದುಕೊಂಡ ನಂತರವೇ ಸೂಕ್ತ ಪ್ರತಿಕ್ರಿಯೆ ನೀಡುವುದಾಗಿ ಹೇಳಿದರು.

ಸಿಂಧಿ ಸಮುದಾಯವು 200 ಕೆ.ಜಿ. ಬೆಳ್ಳಿ ದೇಣಿಗೆ ನೀಡಿದ್ದರೂ ಗೌರವ ನೀಡಿಲ್ಲ ಎಂಬ ಆರೋಪದ ಕುರಿತು ಪ್ರತಿಕ್ರಿಯಿಸಿದ ಅವರು, ಯಾವುದೇ ದೇಣಿಗೆ ನೀಡುವಾಗ ಕಡ್ಡಾಯವಾಗಿ ರಶೀದಿ ಪಡೆಯಬೇಕು. ರಶೀದಿ ನೀಡದಿರುವುದು ಗಂಭೀರ ತಪ್ಪಾಗಿದ್ದು, ಬಾಯಿಮಾತಿಗಿಂತ ದಾಖಲೆಗಳಿಗೆ ಹೆಚ್ಚಿನ ಮಹತ್ವವಿದೆ ಎಂದು ಹೇಳಿದರು.

ಅವ್ಯವಹಾರ ಆರೋಪಗಳ ತನಿಖೆಗೆ ಎಸ್‌ಐಟಿ ರಚಿಸಿರುವುದನ್ನು ಸ್ವಾಗತಿಸಿದ ಶ್ರೀಗಳು, ಆರೋಪಗಳಲ್ಲಿ ಸತ್ಯಾಂಶ ಇದ್ದರೆ ತಪ್ಪಿತಸ್ಥರ ವಿರುದ್ಧ ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ದೇಶ-ವಿದೇಶದ ಕೋಟ್ಯಂತರ ಭಕ್ತರ ನಂಬಿಕೆಯ ಕೇಂದ್ರವಾಗಿರುವ ರಾಮಮಂದಿರದಲ್ಲಿ ಇಂತಹ ಆರೋಪಗಳು ಕೇಳಿಬರಬಾರದು ಎಂದರು.

ಟ್ರಸ್ಟ್ ಸದಸ್ಯನಾಗಿ ತಾವು ಹಲವು ಸಲಹೆಗಳನ್ನು ನೀಡಿದ್ದಾಗಿ ತಿಳಿಸಿದ ಶ್ರೀಗಳು, ಟ್ರಸ್ಟ್‌ನ ಜವಾಬ್ದಾರಿ ಹೊಂದಿರುವವರು ವಿಶ್ವಾಸಾರ್ಹವಾಗಿ ನಡೆದುಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು. ಸೇವಾ ಪಟ್ಟಿ ಪ್ರಕಟಿಸದಿರುವ ಕುರಿತು ಈಗಾಗಲೇ ಟ್ರಸ್ಟ್‌ನಲ್ಲಿ ನಿರ್ಧಾರ ಕೈಗೊಳ್ಳಲಾಗಿತ್ತು ಎಂದೂ ಸ್ಪಷ್ಟಪಡಿಸಿದರು.

ಇದೇ ವೇಳೆ, ರಾಮಮಂದಿರಕ್ಕೆ ದೊಡ್ಡ ಮೊತ್ತದ ದೇಣಿಗೆ ನೀಡುವುದಕ್ಕಿಂತ ಬಡವರಿಗೆ ಮನೆ ನಿರ್ಮಿಸಿಕೊಡುವಂತಹ ಸಮಾಜಸೇವೆ ಮಾಡುವುದೇ ನಿಜವಾದ ರಾಮಸೇವೆ ಎಂದು ಕರೆ ನೀಡಿದ ಅವರು, ರಾಜ್ಯ ಸರ್ಕಾರದ ತನಿಖೆಯ ಮೇಲೆ ವಿಶ್ವಾಸವಿದೆ ಎಂದು ಹೇಳಿದರು.

ಆರ್‌ಎಸ್‌ಎಸ್ ನೋಂದಣಿ ಕುರಿತು ಸಚಿವ ಪ್ರಿಯಾಂಕ್ ಖರ್ಗೆ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಶ್ರೀಗಳು, ಸಂಘಟನೆಯನ್ನು ನೋಂದಣಿ ಮಾಡಿದರೆ ಅನಗತ್ಯ ಆರೋಪಗಳಿಗೆ ಅವಕಾಶ ಇರುವುದಿಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ತ್ಯಾಗದ ನೆನಪು… ಸೌಹಾರ್ದದ ಸಂಭ್ರಮ!

0

ವಿಜಯಸಾಕ್ಷಿ ಸುದ್ದಿ, ಗದಗ: ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಮೊಮ್ಮಕ್ಕಳಾದ ಹಜರತ್ ಹಸನ್ ಮತ್ತು ಹಜರತ್ ಹುಸೈನ್ ಅವರ ತ್ಯಾಗ, ಬಲಿದಾನ ಹಾಗೂ ನ್ಯಾಯಕ್ಕಾಗಿ ನಡೆದ ಹೋರಾಟವನ್ನು ಸ್ಮರಿಸುವ ಮೊಹರಂ ಹಬ್ಬವನ್ನು ಗದಗ–ಬೆಟಗೇರಿ ಅವಳಿ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಶುಕ್ರವಾರ ಶ್ರದ್ಧೆ, ಭಕ್ತಿ ಹಾಗೂ ಧಾರ್ಮಿಕ ಸೌಹಾರ್ದದ ವಾತಾವರಣದಲ್ಲಿ ಆಚರಿಸಲಾಯಿತು.

ಜಿಲ್ಲೆಯಾದ್ಯಂತ ಪ್ರತಿಷ್ಠಾಪಿಸಲಾಗಿದ್ದ ಪುಷ್ಪಾಲಂಕೃತ ಪಾಂಜಾಗಳು, ಡೋಲಿಗಳು ಹಾಗೂ ಅಲಾಯಿ ದೇವರುಗಳ ಭವ್ಯ ಮೆರವಣಿಗೆಗಳು ಜನರ ಗಮನ ಸೆಳೆದವು. ಹಬ್ಬದಲ್ಲಿ ಹಿಂದೂ–ಮುಸ್ಲಿಂ ಬಾಂಧವರು ಜಾತಿ–ಧರ್ಮದ ಬೇಧ ಮರೆತು ಒಂದಾಗಿ ಪಾಲ್ಗೊಂಡು ಭಾವೈಕ್ಯತೆಯ ಸಂದೇಶ ಸಾರಿದರು.

ಗದಗ ನಗರದಲ್ಲಿ ಮಾಬುಸುಬಾನಿ ಕಟ್ಟೆ, ಜಾಮೀಯಾ ಮಸೀದಿ, ದಖನಿ ಗಲ್ಲಿ, ಒಕ್ಕಲಗೇರಿ ಓಣಿ, ಖಾನ್‌ತೋಟ, ಮುಕ್ತುಮ್ ಗರಡಿ, ಹಳೇ ಕಚೇರಿ, ಹನುಮಂತ ಗರಡಿ ಸೇರಿದಂತೆ ವಿವಿಧೆಡೆ ಪ್ರತಿಷ್ಠಾಪಿಸಿದ್ದ ಪಾಂಜಾ ದೇವರು ಹಾಗೂ ಡೋಲಿಗಳ ಮೆರವಣಿಗೆಗಳು ಶ್ರದ್ಧಾಭಕ್ತಿಯಿಂದ ನಡೆದವು. ನಗರದ ಕಾಗದಗೇರಿ ಓಣಿಯ ಬಾವಿ ಹಾಗೂ ಮುಕ್ತುಮ್ ಬಾವಡಿಯಲ್ಲಿ ಹತ್ತಾರು ಪವಿತ್ರ ತಾಬೂತ್‌ಗಳು ಸೇರಿ, ಬಳಿಕ ಸಂಪ್ರದಾಯದಂತೆ ಹೊಳೆಗೆ ಕಳುಹಿಸಲಾಯಿತು.

ಲಕ್ಷ್ಮೇಶ್ವರ ಪಟ್ಟಣದಲ್ಲಿ 12 ಮಸೀದಿಗಳ ಪಾಂಜಾಗಳು ಮುಖ್ಯ ಬಜಾರ್ ರಸ್ತೆ, ಸೋಮೇಶ್ವರ ಪಾದಗಟ್ಟಿ, ಪುರಸಭೆ ಮುಂಭಾಗ ಹಾಗೂ ಶಿಗ್ಲಿ ಕ್ರಾಸ್ ಮೂಲಕ ಛೋಟೆ ಲಂಕಾಪತಿ ಮಸೀದಿವರೆಗೆ ಮೆರವಣಿಗೆ ನಡೆಸಿ ನಂತರ ತಮ್ಮ ಮೂಲ ಸ್ಥಳಗಳಿಗೆ ಮರಳಿದವು. ಸಂಜೆ ಸಂಪ್ರದಾಯದಂತೆ ಪಾಂಜಾಗಳನ್ನು ಹೊಳೆಗೆ ಕೊಂಡೊಯ್ಯಲಾಯಿತು.

ಶಿಗ್ಲಿ, ರಾಮಗೇರಿ, ಸೂರಣಗಿ, ಬಾಲೆಹೊಸೂರ, ಹುಲ್ಲೂರು, ಬಟ್ಟೂರು, ಬಡ್ನಿ, ಯಳವತ್ತಿ, ಗೊಜನೂರು, ಮಂಜಲಾಪುರ ಸೇರಿದಂತೆ ಅನೇಕ ಗ್ರಾಮಗಳಲ್ಲಿಯೂ ಮೊಹರಂ ಆಚರಣೆ ವಿಜೃಂಭಣೆಯಿಂದ ನಡೆಯಿತು. ವಿಶೇಷವೆಂದರೆ ಮುಸ್ಲಿಂ ಕುಟುಂಬಗಳೇ ಇಲ್ಲದ ಅಡರಕಟ್ಟಿ ಹಾಗೂ ಒಡೆಯರ ಮಲ್ಲಾಪುರ ಗ್ರಾಮಗಳಲ್ಲಿಯೂ ಸಂಪ್ರದಾಯದಂತೆ ಮೊಹರಂ ಆಚರಿಸಿ ಧಾರ್ಮಿಕ ಸೌಹಾರ್ದಕ್ಕೆ ಮತ್ತೊಮ್ಮೆ ಸಾಕ್ಷಿಯಾದವು.

ಹುಲಿವೇಷ, ಫಕೀರರ ವೇಷ, ಅಳ್ಳೊಳ್ಳಿ ಬಾವಾಗಳ ವೇಷಧಾರಿಗಳು, ಅಲಾಯಿ ಕುಣಿತ, ಹೆಜ್ಜೆ ಮೇಳ, ಶಸ್ತ್ರಸೇವೆ, ಬಾರಕೋಲು ಸೇವೆ, ಕೆಂಡ ಹಾಯುವುದು ಸೇರಿದಂತೆ ವಿವಿಧ ಸಾಂಪ್ರದಾಯಿಕ ಆಚರಣೆಗಳು ಹಬ್ಬದ ಮೆರುಗನ್ನು ಹೆಚ್ಚಿಸಿದವು. ಹರಕೆ ಹೊತ್ತಿದ್ದ ಹಿಂದೂ ಹಾಗೂ ಮುಸ್ಲಿಂ ಭಕ್ತರು ಪಾಂಜಾ ದೇವರಿಗೆ ಸಕ್ಕರೆ ಓದು ಹಾಕಿಸಿ ತಮ್ಮ ಭಕ್ತಿಯನ್ನು ಸಮರ್ಪಿಸಿದರು.

ಕಳೆದ ಐದು ದಿನಗಳಿಂದ ಹಜರತ್ ಹಸನ್–ಹುಸೈನ್ ಅವರ ತ್ಯಾಗವನ್ನು ಸ್ಮರಿಸಿ ಧಾರ್ಮಿಕ ಕಾರ್ಯಕ್ರಮಗಳು, ಪ್ರಾರ್ಥನೆ ಹಾಗೂ ಶೋಕಾಚರಣೆಗಳು ನಡೆದವು. ಗದಗದ ಇರಾನಿ ಕಾಲೋನಿಯ ಶಿಯಾ ಮುಸ್ಲಿಂ ಸಮುದಾಯದವರು ಕರ್ಬಲಾ ಘಟನೆಯನ್ನು ಸ್ಮರಿಸಿ ಸಂಪ್ರದಾಯದಂತೆ ಮಾತಂ (ಎದೆ ಬಡಿದುಕೊಂಡು ಶೋಕ ವ್ಯಕ್ತಪಡಿಸುವುದು) ಆಚರಿಸಿ ಶೋಕ ಮೆರವಣಿಗೆ ನಡೆಸಿದರು. ಶೋಕಗೀತೆಗಳ ನಡುವೆ ಕಣ್ಣೀರು ಸುರಿಸುತ್ತ ಭಕ್ತರು ತ್ಯಾಗದ ಸಂದೇಶವನ್ನು ಸ್ಮರಿಸಿದರು.

ಬರಗಾಲದ ನಡುವೆ ಮಂಕಾದ ಸಂಭ್ರಮ

ಈ ಬಾರಿ ಬರಗಾಲ ಹಾಗೂ ಕೃಷಿ ಸಂಕಷ್ಟದ ಪರಿಣಾಮ ಮೊಹರಂ ಹಬ್ಬದ ಸಂಭ್ರಮದ ಮೇಲೂ ಕಂಡುಬಂದಿತು. ಹಿಂದಿನ ವರ್ಷಗಳಂತೆ ರಾತ್ರಿಯಿಡೀ ಹೆಜ್ಜೆ ಮೇಳ, ಹಾಡು, ನೃತ್ಯ ಹಾಗೂ ಜನಸಾಗರ ಕಾಣಿಸದಿದ್ದರೂ, “ಸಂಪ್ರದಾಯ ಬಿಡಬಾರದು” ಎಂಬ ಭಾವನೆಯೊಂದಿಗೆ ಭಕ್ತರು ಎಲ್ಲ ಧಾರ್ಮಿಕ ವಿಧಿವಿಧಾನಗಳನ್ನು ಶ್ರದ್ಧಾಭಕ್ತಿಯಿಂದ ನೆರವೇರಿಸಿದರು. ಕೃಷಿಯನ್ನೇ ಜೀವನವಾಗಿಸಿಕೊಂಡಿರುವ ಅನೇಕ ಕುಟುಂಬಗಳಲ್ಲಿ ಸಂಕಷ್ಟದ ಛಾಯೆ ಕಂಡರೂ, ಭಕ್ತಿ ಮತ್ತು ಭಾವೈಕ್ಯ ಮಾತ್ರ ಮಂಕಾಗಲಿಲ್ಲ.

ತ್ಯಾಗದ ಸಂಕೇತ ಮೊಹರಂ

ಮೊಹರಂ ಹಬ್ಬವು ಕೇವಲ ಒಂದು ಧಾರ್ಮಿಕ ಆಚರಣೆಯಲ್ಲ, ಅನ್ಯಾಯದ ವಿರುದ್ಧದ ಹೋರಾಟ, ಸತ್ಯಕ್ಕಾಗಿ ಪ್ರಾಣ ತ್ಯಾಗ ಮಾಡಿದ ಹಜರತ್ ಹಸನ್ ಮತ್ತು ಹಜರತ್ ಹುಸೈನ್ ಅವರ ಆದರ್ಶವನ್ನು ನೆನಪಿಸುವ ಪವಿತ್ರ ಹಬ್ಬವಾಗಿದೆ. ಈ ಹಬ್ಬವು ವರ್ಷದಿಂದ ವರ್ಷಕ್ಕೆ ಗದಗ ಜಿಲ್ಲೆಯಲ್ಲಿ ಹಿಂದೂ–ಮುಸ್ಲಿಂ ಸೌಹಾರ್ದದ ಜೀವಂತ ಸಂಕೇತವಾಗಿ ಆಚರಿಸಲ್ಪಡುತ್ತಿದ್ದು, ಧರ್ಮಕ್ಕಿಂತ ಮಾನವೀಯತೆಯೇ ಶ್ರೇಷ್ಠ ಎಂಬ ಸಂದೇಶವನ್ನು ಸಮಾಜಕ್ಕೆ ಸಾರುತ್ತಿದೆ.

ಮೆಟ್ರೋ ಪಿಲ್ಲರ್‌ಗೆ ಲೈಟಿಂಗ್ ಅಳವಡಿಸುವಾಗ ವಿದ್ಯುತ್ ಶಾಕ್: ಕಾರ್ಮಿಕ ಸಾವು!

ಬೆಂಗಳೂರು: ನಮ್ಮ ಮೆಟ್ರೋ ಪಿಲ್ಲರ್‌ಗೆ ಲೈಟಿಂಗ್ ಅಳವಡಿಸುವ ಕಾಮಗಾರಿ ವೇಳೆ ವಿದ್ಯುತ್ ಪ್ರವಹಿಸಿ ಕಾರ್ಮಿಕನೊಬ್ಬ ಮೃತಪಟ್ಟಿರುವ ದುರ್ಘಟನೆ ನಗರದ ಟ್ರಿನಿಟಿ ಮೆಟ್ರೋ ನಿಲ್ದಾಣದ ಸಮೀಪ ಸಂಭವಿಸಿದೆ.

ಮೃತ ಕಾರ್ಮಿಕನನ್ನು ಗುರಪ್ಪ (70) ಎಂದು ಗುರುತಿಸಲಾಗಿದೆ. ವೈಟ್‌ಫೀಲ್ಡ್–ಚಲ್ಲಘಟ್ಟ ನೇರಳೆ ಮಾರ್ಗದ ಟ್ರಿನಿಟಿ ಮೆಟ್ರೋ ನಿಲ್ದಾಣದ 153ನೇ ಪಿಲ್ಲರ್ ಸಮೀಪ ಈ ಅವಘಡ ನಡೆದಿದೆ.

ಬಿಎಂಆರ್‌ಸಿಎಲ್‌ನಿಂದ ಲೈಟಿಂಗ್ ಅಳವಡಿಸುವ ಕಾಮಗಾರಿಯ ಗುತ್ತಿಗೆಯನ್ನು ಎಂಆರ್ ಎಲೆಕ್ಟ್ರಿಕಲ್ಸ್ ಸಂಸ್ಥೆ ಪಡೆದಿತ್ತು. ಅದರಂತೆ ಗುರಪ್ಪ ಅವರು ಪಿಲ್ಲರ್‌ಗೆ ಲೈಟಿಂಗ್ ಅಳವಡಿಸುವ ಕೆಲಸದಲ್ಲಿ ನಿರತರಾಗಿದ್ದರು.

ಲೈಟಿಂಗ್ ವ್ಯವಸ್ಥೆಗಾಗಿ ಅರ್ಥಿಂಗ್ ಗುಂಡಿ ಅಗೆಯುವ ವೇಳೆ ಡ್ರಿಲ್ಲಿಂಗ್ ಯಂತ್ರವು ನೆಲದಡಿಯಲ್ಲಿದ್ದ ವಿದ್ಯುತ್ ಕೇಬಲ್‌ಗೆ ತಾಗಿದ ಪರಿಣಾಮ ವಿದ್ಯುತ್ ಪ್ರವಹಿಸಿ ಗುರಪ್ಪ ಗಂಭೀರವಾಗಿ ಅಸ್ವಸ್ಥರಾಗಿದ್ದಾರೆ.

ಸ್ಥಳದಲ್ಲಿದ್ದವರು ತಕ್ಷಣ ಅವರನ್ನು ನಗರದ ಸೇಂಟ್ ಫಿಲೋಮಿನಾ ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.

ಘಟನೆ ಗುರುವಾರ ಸಂಜೆ ಸುಮಾರು 4 ಗಂಟೆ ಸುಮಾರಿಗೆ ನಡೆದಿದ್ದು, ಪ್ರಕರಣ ಸಂಬಂಧ ಹಲಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅವಘಡದ ನಿಖರ ಕಾರಣ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಮೊಹರಂ ಕಾರಣಿಕದಲ್ಲಿ ಮೊಳಗಿದ ವರ್ಷದ ನುಡಿ

0

ವಿಜಯಸಾಕ್ಷಿ ಸುದ್ದಿ, ಹಗರಿಬೊಮ್ಮನಹಳ್ಳಿ: ತಾಲೂಕಿನ ಹಂಪಾಪಟ್ಟಣ ಗ್ರಾಮದಲ್ಲಿ ಐತಿಹಾಸಿಕ ಹಿನ್ನೆಲೆಯೊಂದಿಗೆ ಆಚರಿಸಲಾಗುವ ಮೊಹರಂ ಹಬ್ಬದ ಅಂಗವಾಗಿ ನಡೆದ ಕಾರಣಿಕೋತ್ಸವದಲ್ಲಿ ಈ ವರ್ಷದ ಕಾರಣಿಕ ನುಡಿ ಮೊಳಗಿತು. ಗ್ರಾಮದ ಶ್ರೀ ಚೌಡದಾಪುರ ಸ್ವಾಮಿಯ ಸೇವಕ ಬಿಲ್ಲನ್ನೇರಿ, “ಮಳೆ ಬೆಳೆ ಕಷ್ಟದಿಂದ ಸಂಪಾಯಿತಲೇ ಸಂತೋಷದ ದಿನ್” ಎಂದು 2026ನೇ ಸಾಲಿನ ಕಾರಣಿಕ ನುಡಿಯನ್ನು ಘೋಷಿಸಿದರು.

ಕಾರಣಿಕೋತ್ಸವಕ್ಕೂ ಮುನ್ನ ಗಂಗೆ ಪೂಜೆ, ನೀರಿನಲ್ಲಿ ದೀಪ ಹಚ್ಚುವುದು, ಅರಿಕೆಯ ಸಕ್ಕರೆ ದಾನ, ಪಟಾಕ್ಷಿಯ ಹರಾಜು, ಸ್ವಾಮಿಯ ಕಿಚ್ಚು ಹಾಯಿಸುವುದು, ಕಾರಣಿಕ ನುಡಿಯುವುದು ಹಾಗೂ ಹುಡಿ ತುಂಬುವ ಸಂಪ್ರದಾಯಗಳು ಶ್ರದ್ಧಾಭಕ್ತಿಯಿಂದ ನೆರವೇರಿದವು. ಬಳಿಕ ಶ್ರೀ ಸ್ವಾಮಿಯ ಅಲಾಯಿ ಕುಣಿತವೂ ಗಮನ ಸೆಳೆಯಿತು.

ಮೊಹರಂ ಹಬ್ಬದ ಪ್ರಯುಕ್ತ ರಾತ್ರಿ 12 ಗಂಟೆಯಿಂದ ಬೆಳಿಗ್ಗೆ 4 ಗಂಟೆಯವರೆಗೆ ರಿವಾಯತ್ ಜಾನಪದ ಕಲಾವಿದ ಬಡೇಸಾಬ್ ತಂಡ ತ್ಯಾಗ, ವೀರತೆ ಹಾಗೂ ಬಲಿದಾನದ ಸಂದೇಶ ಸಾರುವ ರಿವಾಯತ್ ಸವಾಲ್ ಪದಗಳನ್ನು ಹಾಡಿ ನೆರೆದಿದ್ದ ಭಕ್ತರನ್ನು ರಂಜಿಸಿತು.

ಕಾರ್ಯಕ್ರಮದಲ್ಲಿ ಹಂಪಾಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ಭಕ್ತರು ಭಾಗವಹಿಸಿ ಧಾರ್ಮಿಕ ಕಾರ್ಯಕ್ರಮಗಳಿಗೆ ಸಾಕ್ಷಿಯಾದರು.

ಮೊಹರಂ ಸಂಭ್ರಮಕ್ಕೆ ರಂಗೇರಿಸಿದ ಕುಸ್ತಿ ಕಾಳಗ!

0

ವಿಜಯಸಾಕ್ಷಿ ಸುದ್ದಿ, ಹಗರಿಬೊಮ್ಮನಹಳ್ಳಿ: ತಾಲೂಕಿನ ಬಲ್ಲಾಹುಣ್ಸಿ ಗ್ರಾಮದಲ್ಲಿ ಮೊಹರಂ ಹಬ್ಬದ ಅಂಗವಾಗಿ ಆಯೋಜಿಸಿದ್ದ ವಾರ್ಷಿಕ ಕುಸ್ತಿ ಪಂದ್ಯಾವಳಿಗೆ ಪುರಸಭೆ ಸದಸ್ಯ ಪವಾಡಿ ಹನುಮಂತಪ್ಪ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕುಸ್ತಿ ಕೇವಲ ಕ್ರೀಡೆಯಲ್ಲ, ಅದು ಗ್ರಾಮೀಣ ಸಂಸ್ಕೃತಿ, ದೈಹಿಕ ಸಾಮರ್ಥ್ಯ ಹಾಗೂ ಶಿಸ್ತಿನ ಪ್ರತೀಕವಾಗಿದೆ. ಯುವಕರಲ್ಲಿ ಧೈರ್ಯ, ಆತ್ಮವಿಶ್ವಾಸ ಮತ್ತು ಆರೋಗ್ಯಕರ ಜೀವನಶೈಲಿಯನ್ನು ಬೆಳೆಸುವಲ್ಲಿ ಕುಸ್ತಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೇಳಿದರು.

ದಾವಣಗೆರೆ, ಹಾವೇರಿ, ಹೊಸಪೇಟೆ, ಕೊಪ್ಪಳ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಪೈಲ್ವಾನರು ಸುಮಾರು 15ರಿಂದ 20 ಕುಸ್ತಿಗಳಲ್ಲಿ ಸೆಣಸಾಡಿ ಪ್ರೇಕ್ಷಕರ ಮನರಂಜಿಸಿದರು. ಪರ್ಸಿ ಪೈಕಿ ಫೈನಲ್ ಕುಸ್ತಿಯಲ್ಲಿ ಶರತ್ (ರಾಣೆಬೆನ್ನೂರು) ಹಾಗೂ ವಿಜಯ (ಹರಿಹರ) ನಡುವಿನ ಸೆಣಸಾಟ ಸಮಬಲದಲ್ಲಿ ಅಂತ್ಯಗೊಂಡ ಕಾರಣ ಬೆಳ್ಳಿ ಗದೆ ಪ್ರಶಸ್ತಿ ಈ ಬಾರಿ ನೀಡಲಾಗಲಿಲ್ಲ.

ಕುಸ್ತಿ ಸ್ಪರ್ಧೆ ವೀಕ್ಷಿಸಲು ಸಾವಿರಾರು ಜನರು ಸೇರಿದ್ದು, ಕುಸ್ತಿ ಕಣ ರೋಚಕ ಪೈಪೋಟಿಗೆ ಸಾಕ್ಷಿಯಾಯಿತು. ಪ್ರತಿವರ್ಷ ಕುಸ್ತಿಪಟುಗಳಿಗೆ ಧನಸಹಾಯ ಹಾಗೂ ಸಾರಿಗೆ ಭತ್ಯೆ ನೀಡಿ ಪ್ರೋತ್ಸಾಹಿಸುತ್ತಿರುವ ಗ್ರಾಮಸ್ಥರ ಸೇವೆಯನ್ನು ಅವರು ಶ್ಲಾಘಿಸಿದರು.

ಕಾರ್ಯಕ್ರಮದಲ್ಲಿ ಕೆ. ಮೈಲಾರಪ್ಪ, ದೊಡ್ಡ ಬಸಪ್ಪ, ಡಿಶ್ ಮಂಜುನಾಥ್, ಶಿಖಂದರ್, ಇಮ್ತಿಯಾಜ್, ಪೈಂಟರ್ ಬಾಬು, ಕೆ. ಹುಚ್ಚಪ್ಪ, ಬಲ್ಲಾಹುಣ್ಸಿ ರಾಮಣ್ಣ, ಸಾಹಿರಾಬಾನು, ಎಣ್ಣೆ ದಾದು ಸೇರಿದಂತೆ ಹಲವರು ಉಪಸ್ಥಿತರಿದ್ದರು. ನಿರ್ಣಾಯಕರಾಗಿ ಫಾಜಿಲ್ ಸಾಬ್, ಶಾನುಭೋಗರ ತಿಪ್ಪಣ್ಣ, ಶಾನುಭೋಗರ ನಾಗರಾಜ್, ಬಿಸ್ನಳ್ಳಿ ಕರೀಂಸಾಬ್ ಹಾಗೂ ಪೂಜಾರ್ ಮಂಜುನಾಥ್ ಕಾರ್ಯನಿರ್ವಹಿಸಿದರು.

“ಕುಸ್ತಿ ಯುವಕರಲ್ಲಿ ಧೈರ್ಯ, ಶಿಸ್ತು ಮತ್ತು ಆತ್ಮವಿಶ್ವಾಸ ಬೆಳೆಸುವ ಶ್ರೇಷ್ಠ ಕ್ರೀಡೆ. ಗ್ರಾಮೀಣ ಭಾಗದಲ್ಲಿ ಈ ಕ್ರೀಡೆಯನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಹೊಣೆ.”

– ಪವಾಡಿ ಹನುಮಂತಪ್ಪ, ಪುರಸಭೆ ಸದಸ್ಯ, ಹಗರಿಬೊಮ್ಮನಹಳ್ಳಿ

ಕೆಆರ್‌ಪುರ ತ್ರಿವಳಿ ಕೊಲೆ ಪ್ರಕರಣ: ಮೂವರನ್ನು ನಾವೇ ಕೊಂದಿದ್ದೇವೆ ಎಂದು ತಪ್ಪೊಪ್ಪಿಕೊಂಡ ಆರೋಪಿಗಳು!

ಬೆಂಗಳೂರು: ಕೆಆರ್‌ಪುರದ ಸಿಗೇಹಳ್ಳಿಯಲ್ಲಿ ನಡೆದ ತ್ರಿವಳಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ಶ್ವೇತಾ ಮತ್ತು ಆಕೆಯ ಪ್ರಿಯಕರ ಕೆನತ್, ಮೂವರು ಕುಟುಂಬ ಸದಸ್ಯರನ್ನು ತಾವೇ ಹತ್ಯೆ ಮಾಡಿರುವುದಾಗಿ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾರೆ.

ಕಳೆದ ಸೋಮವಾರ ಕೌಟುಂಬಿಕ ಕಲಹದ ಹಿನ್ನೆಲೆ ಶ್ವೇತಾ ಹಾಗೂ ಕೆನತ್ ಸೇರಿ, ಶ್ವೇತಾಳ ತಂದೆ ಸೋಮಸುಂದರ್, ತಾಯಿ ಮುತ್ತುಲಕ್ಷ್ಮೀ ಮತ್ತು ಸಹೋದರಿ ಸುಪ್ರಿಯಾ ಅವರನ್ನು ಸಿಗೇಹಳ್ಳಿಯ ಫ್ಲ್ಯಾಟ್‌ನಲ್ಲಿ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದರು. ಘಟನೆ ಬಳಿಕ ಇಬ್ಬರೂ ಪರಾರಿಯಾಗಿದ್ದು, ಪುದುಚೇರಿಯಲ್ಲಿ ಪೊಲೀಸರು ಬಂಧಿಸಿದ್ದರು.

ಬಂಧನದ ಬಳಿಕ ಕೆಆರ್‌ಪುರ ಪೊಲೀಸರು ಆರೋಪಿಗಳ ಪ್ರಾಥಮಿಕ ವಿಚಾರಣೆ ನಡೆಸಿದ ವೇಳೆ, “ಮೂವರನ್ನು ನಾವೇ ಕೊಲೆ ಮಾಡಿದ್ದೇವೆ” ಎಂದು ಇಬ್ಬರೂ ಒಪ್ಪಿಕೊಂಡಿದ್ದಾರೆ. ಆದರೆ ಕೊಲೆಗೆ ನಿಖರ ಕಾರಣವೇನು ಎಂಬುದರ ಬಗ್ಗೆ ಆರೋಪಿಗಳು ಸ್ಪಷ್ಟ ಮಾಹಿತಿ ನೀಡುತ್ತಿಲ್ಲ ಎಂದು ತಿಳಿದುಬಂದಿದೆ.

ಪ್ರಕರಣದ ಸತ್ಯಾಸತ್ಯತೆ ಹಾಗೂ ಕೊಲೆಯ ಹಿಂದಿನ ಉದ್ದೇಶವನ್ನು ಪತ್ತೆಹಚ್ಚಲು ನ್ಯಾಯಾಲಯದ ಆದೇಶದಂತೆ ಶ್ವೇತಾ ಮತ್ತು ಕೆನತ್ ಅವರನ್ನು ತಲಾ 15 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.

ಆರೋಪಿಗಳ ವಿಚಾರಣೆ ಮುಂದುವರಿದಿದ್ದು, ತ್ರಿವಳಿ ಕೊಲೆಯ ಹಿಂದಿನ ನಿಜವಾದ ಕಾರಣ ಏನು ಎಂಬುದು ಪೊಲೀಸ್ ತನಿಖೆಯಿಂದಷ್ಟೇ ಬಹಿರಂಗವಾಗಬೇಕಿದೆ.