Home Blog

ಪ್ರೀತಿ ಹೆಸರಿನಲ್ಲಿ ತರಬೇತಿ ನಿರತ ಗಗನಸಖಿಗೆ ಕಿರುಕುಳ: ಕಾಮುಕ ಅರೆಸ್ಟ್!

ಬೆಂಗಳೂರು: ತರಬೇತಿ ಪಡೆಯುತ್ತಿದ್ದ ಗಗನಸಖಿಯೊಬ್ಬಳಿಗೆ ರಸ್ತೆಯಲ್ಲೇ ಅನುಚಿತವಾಗಿ ವರ್ತಿಸಿ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಬಾಗಲೂರು ಪೊಲೀಸರು ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ.

ಬಂಧಿತನನ್ನು ಚಂದ್ರಶೇಖರ್ ಎಂದು ಗುರುತಿಸಲಾಗಿದೆ. ಆರೋಪಿ ಹಾಗೂ ಸಂತ್ರಸ್ತ ಯುವತಿ ಇಬ್ಬರೂ ಒಂದೇ ಪ್ರದೇಶದಲ್ಲಿ ವಾಸಿಸುತ್ತಿದ್ದು, ಪರಸ್ಪರ ಪರಿಚಯಸ್ಥರಾಗಿದ್ದರು. ಆರಂಭದಲ್ಲಿ ಸ್ನೇಹಿತರಾಗಿದ್ದ ಇವರ ನಡುವೆ ಬಳಿಕ ಆರೋಪಿ ಪ್ರೀತಿಸುವಂತೆ ಒತ್ತಡ ಹೇರುತ್ತಿದ್ದ ಎನ್ನಲಾಗಿದೆ.

ಆರೋಪಿಯ ವರ್ತನೆಯಿಂದ ಅಸಹ್ಯಗೊಂಡ ಯುವತಿ ಆತನಿಂದ ದೂರವಾಗಲು ಪ್ರಯತ್ನಿಸಿದ್ದಳು. ಇದರಿಂದ ಕೋಪಗೊಂಡ ಚಂದ್ರಶೇಖರ್, ಯುವತಿ ಕಾಲೇಜಿಗೆ ತೆರಳುವಾಗ ಸ್ನೇಹಿತರೊಂದಿಗೆ ಬೈಕ್‌ನಲ್ಲಿ ಹಿಂಬಾಲಿಸುತ್ತಿದ್ದ ಎಂದು ತಿಳಿದುಬಂದಿದೆ.

ಕಳೆದ ಒಂದು ವಾರದಲ್ಲಿ ಮೂರರಿಂದ ನಾಲ್ಕು ಬಾರಿ ಯುವತಿಯನ್ನು ಹಿಂಬಾಲಿಸಿ ಕಿರುಕುಳ ನೀಡಿದ್ದು, ನಡುರಸ್ತೆಯಲ್ಲೇ ತಡೆದು ನಿಲ್ಲಿಸಿ ಕಿರಿಕಿರಿ ಮಾಡಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಇದರ ನಡುವೆ, ಇತ್ತೀಚೆಗೆ ಸಾರ್ವಜನಿಕ ಸ್ಥಳದಲ್ಲೇ ಯುವತಿಯನ್ನು ಹಿಂಬಾಲಿಸಿಕೊಂಡು ಬಂದು ಅನುಚಿತವಾಗಿ ಸ್ಪರ್ಶಿಸಿ ಅಸಭ್ಯವಾಗಿ ವರ್ತಿಸಿದ್ದಾನೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ನಿರಂತರ ಕಿರುಕುಳದಿಂದ ಬೇಸತ್ತ ಯುವತಿ, ಪೋಷಕರೊಂದಿಗೆ ಬಾಗಲೂರು ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾಳೆ. ದೂರಿನ ಆಧಾರದ ಮೇಲೆ ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿ ಚಂದ್ರಶೇಖರ್‌ನನ್ನು ಬಂಧಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.

ನೀರಿನಲ್ಲಿ ಮುಳುಗುತ್ತಿದ್ದ ಮಕ್ಕಳ ಜೀವ ಉಳಿಸಿ ತಾನೇ ಬಲಿಯಾದ ತಾಯಿ!

ಚಿಕ್ಕಬಳ್ಳಾಪುರ: ಜಿಲ್ಲೆಯ ಚಿಂತಾಮಣಿ ತಾಲೂಕಿನ ಮುರಗಮಲ್ಲ ಕೆರೆಯಲ್ಲಿ ಮಕ್ಕಳನ್ನು ರಕ್ಷಿಸಲು ಹೋಗಿದ್ದ ತಾಯಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ನಡೆದಿದೆ.

ಬೆಂಗಳೂರಿನ ಬನಶಂಕರಿ ಮೂಲದ ತಬುಸುಮ್ ಖಾನ್ (24) ಮೃತ ದುರ್ದೈವಿ. ಕುಟುಂಬದ ಸದಸ್ಯರು ಮುರಗಮಲ್ಲದ ದರ್ಗಾಕ್ಕೆ ಭೇಟಿ ನೀಡಿದ್ದ ವೇಳೆ ಈ ದುರಂತ ಸಂಭವಿಸಿದೆ.

ಕುಟುಂಬಸ್ಥರು ಕೆರೆಯ ಸಮೀಪ ಕಾಲ ಕಳೆಯುತ್ತಿದ್ದಾಗ ಮಕ್ಕಳು ನೀರಿನಲ್ಲಿ ಆಟವಾಡುತ್ತಿದ್ದರು. ಈ ವೇಳೆ ತಾಯಿ ತಬುಸುಮ್ ಖಾನ್ ಬಟ್ಟೆ ತರಲು ತೆರಳಿದ್ದರು. ಅಷ್ಟರಲ್ಲಿ ಮಕ್ಕಳು ಕೆರೆಯೊಳಗೆ ಹೋಗಿ ಮುಳುಗಲು ಆರಂಭಿಸಿದ್ದಾರೆ.

ಮಕ್ಕಳು ಅಪಾಯದಲ್ಲಿರುವುದನ್ನು ಗಮನಿಸಿದ ತಬುಸುಮ್ ಖಾನ್ ಕೂಡಲೇ ಕೆರೆಗೆ ಹಾರಿದ್ದಾರೆ. ಆದರೆ ಅವರಿಗೆ ಈಜು ಬಾರದ ಕಾರಣ ತಾವೇ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

ಅದೃಷ್ಟವಶಾತ್ ಅಲ್ಲೇ ಇದ್ದ ಮಕ್ಕಳ ತಂದೆ ಹಾಗೂ ಸಂಬಂಧಿಕ ಯುವಕರು ತಕ್ಷಣ ಕೆರೆಗೆ ಇಳಿದು ಮಕ್ಕಳನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ತಬುಸುಮ್ ಖಾನ್ ರನ್ನು ಬದುಕಿಸಲು ಸಾಧ್ಯವಾಗಲಿಲ್ಲ. ಮಕ್ಕಳನ್ನು ಉಳಿಸಿಕೊಂಡರೂ ಪತ್ನಿಯನ್ನು ಕಳೆದುಕೊಂಡೆ ಎಂದು ಪತಿ ಕಣ್ಣೀರಿಟ್ಟಿದ್ದು, ಕುಟುಂಬದವರ ಆಕ್ರಂದನ ಮುಗಿಲುಮುಟ್ಟಿದೆ. ಘಟನೆ ಸಂಬಂಧ ಸ್ಥಳೀಯ ಪೊಲೀಸರು ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಾಗಿದೆ.

ಸುಡು ಬಿಸಿ ನೀರಿನಲ್ಲಿ ತಲೆ ಸ್ನಾನ ಮಾಡ್ತೀರಾ? ಆರೋಗ್ಯಕ್ಕೆ ಅಪಾಯ ಈ ಅಭ್ಯಾಸ

ಕೂದಲು ವ್ಯಕ್ತಿಯ ಸೌಂದರ್ಯವನ್ನು ಹೆಚ್ಚಿಸುವ ಪ್ರಮುಖ ಅಂಶವಾಗಿದ್ದು, ಆರೋಗ್ಯಕರ ಹಾಗೂ ದಪ್ಪ ಕೂದಲುಗಾಗಿ ಮಹಿಳೆಯರು ಹಲವು ಪ್ರಯತ್ನಗಳನ್ನು ಮಾಡುತ್ತಾರೆ. ಶಾಂಪೂ, ಕಂಡೀಷನರ್ ಮತ್ತು ಎಣ್ಣೆ ಬಳಕೆ ಸೇರಿದಂತೆ ವಿವಿಧ ವಿಧಾನಗಳನ್ನು ಅನುಸರಿಸಿದರೂ, ತಲೆ ಸ್ನಾನದ ವೇಳೆ ಮಾಡುವ ಕೆಲವು ಸಾಮಾನ್ಯ ತಪ್ಪುಗಳು ಕೂದಲಿನ ಆರೋಗ್ಯಕ್ಕೆ ಹಾನಿ ಉಂಟುಮಾಡುತ್ತವೆ.

ತಲೆ ಸ್ನಾನ ಮಾಡುವಾಗ ನೀರಿನ ತಾಪಮಾನ ಅತ್ಯಂತ ಮಹತ್ವದ್ದಾಗಿದೆ. ಸಾಮಾನ್ಯವಾಗಿ ಬೇಸಿಗೆಯಲ್ಲಿ ತಣ್ಣನೆಯ ಅಥವಾ ಉಗುರು ಬೆಚ್ಚಗಿನ ನೀರನ್ನು ಬಳಸಲಾಗುತ್ತದೆ. ಆದರೆ ಚಳಿಗಾಲದಲ್ಲಿ ಹೆಚ್ಚು ಬಿಸಿ ನೀರನ್ನು ಬಳಸುವುದು ಹೆಚ್ಚಾಗಿ ಕಂಡುಬರುತ್ತದೆ. ತಾತ್ಕಾಲಿಕವಾಗಿ ಸುಖಕರವಾಗಿ ಅನಿಸಿದರೂ, ಅತಿಯಾಗಿ ಬಿಸಿ ನೀರು ಕೂದಲಿನ ಮೇಲೆ ಹಾನಿಕಾರಕ ಪರಿಣಾಮ ಬೀರುತ್ತದೆ.

ತಲೆಯ ಮೇಲಿನ ಚರ್ಮದಲ್ಲಿ ನೈಸರ್ಗಿಕ ತೈಲದ ಪದರವಿದ್ದು, ಇದು ಕೂದಲನ್ನು ತೇವಾಂಶದಿಂದ ಕಾಪಾಡುತ್ತದೆ. ಆದರೆ ಬಿಸಿ ನೀರಿನಿಂದ ಸ್ನಾನ ಮಾಡುವುದರಿಂದ ಈ ತೈಲ ಪದರ ತೆಗೆಯಲ್ಪಟ್ಟು, ತಲೆಚರ್ಮ ಒಣಗುವ ಸಾಧ್ಯತೆ ಹೆಚ್ಚುತ್ತದೆ. ಇದರಿಂದ ಹೊಟ್ಟು, ತುರಿಕೆ ಹಾಗೂ ಚರ್ಮದ ಸಮಸ್ಯೆಗಳು ಉಂಟಾಗಬಹುದು.

ಇದರ ಪರಿಣಾಮವಾಗಿ ಕೂದಲು ಒಣಗುವುದು, ಬಿರುಕು ಬರುವುದು, ಸೀಳುವುದು ಮತ್ತು ಸುಲಭವಾಗಿ ಮುರಿಯುವುದು ಸೇರಿದಂತೆ ಹಲವು ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ವಿಶೇಷವಾಗಿ ಕೂದಲಿಗೆ ಬಣ್ಣ ಹಚ್ಚಿರುವವರು ಬಿಸಿ ನೀರನ್ನು ಬಳಸಿದರೆ, ಕೂದಲಿನ ಬಣ್ಣ ಬೇಗ ಮಂಕಾಗುವುದು ಹಾಗೂ ಹೊಳಪು ಕಡಿಮೆಯಾಗುವುದು ಸಾಮಾನ್ಯ.

ಇನ್ನು ತಲೆಚರ್ಮದ ಮೇಲೆ ಬಿಸಿ ನೀರು ಬೀಳುವುದರಿಂದ ಕೂದಲಿನ ಬುಡ ದುರ್ಬಲವಾಗಿ, ಕೂದಲು ಉದುರುವ ಸಮಸ್ಯೆ ಕೂಡ ಹೆಚ್ಚಾಗಬಹುದು. ಜೊತೆಗೆ ತಲೆಚರ್ಮದಲ್ಲಿ ಒಣತನ, ಸಿಪ್ಪೆ ಸುಲಿಯುವುದು ಮತ್ತು ಕೆರಳಿಕೆ ಉಂಟಾಗುವ ಸಾಧ್ಯತೆ ಇದೆ.

ಕೂದಲಿನ ಆರೋಗ್ಯವನ್ನು ಕಾಪಾಡಲು ಉಗುರು ಬೆಚ್ಚಗಿನ ನೀರನ್ನು ಬಳಸುವುದು ಉತ್ತಮ ಎಂದು ತಜ್ಞರು ಸಲಹೆ ನೀಡುತ್ತಾರೆ. ಎಣ್ಣೆ ಹಚ್ಚಿ ಸ್ವಲ್ಪ ಸಮಯ ಬಿಟ್ಟು, ನಂತರ ಉಗುರು ಬೆಚ್ಚಗಿನ ನೀರಿನಿಂದ ಸ್ನಾನ ಮಾಡುವುದು ಒಳ್ಳೆಯ ಅಭ್ಯಾಸವಾಗಿದೆ.

ಹಾಗೆಯೇ, ಕಂಡೀಷನರ್ ಬಳಕೆ ಮಾಡಿದ ಬಳಿಕ ತಣ್ಣನೆಯ ನೀರಿನಲ್ಲಿ ಕೂದಲು ತೊಳೆಯುವುದು ಉತ್ತಮ. ಇದು ಕೂದಲಿನ ಹೊರಪದರವನ್ನು ಮುಚ್ಚಿ, ಹೊಳಪು ಹೆಚ್ಚಿಸುವುದಲ್ಲದೆ ಕೂದಲು ಉದುರುವುದನ್ನೂ ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ನವಿಲುಗಳ ಸರಣಿ ಸಾವು ರಹಸ್ಯ ಬಯಲು: ತುಮಕೂರಿನಲ್ಲಿ ಹಕ್ಕಿ ಜ್ವರ ಅಟ್ಟಹಾಸ, ಕಟ್ಟುನಿಟ್ಟಿನ ನಿಯಂತ್ರಣ ಕ್ರಮಗಳು ಜಾರಿ!

0

ತುಮಕೂರು: ಜಿಲ್ಲೆಯಲ್ಲಿ ಆತಂಕ ಮೂಡಿಸಿದ್ದ ನವಿಲುಗಳ ಸರಣಿ ಸಾವು ಪ್ರಕರಣದ ರಹಸ್ಯ ಬಯಲಾಗಿದೆ. FSL ವರದಿ H5N1 ಹಕ್ಕಿ ಜ್ವರ ಸೋಂಕನ್ನು ದೃಢಪಡಿಸಿದ್ದು, ಜಿಲ್ಲಾಡಳಿತ ತಕ್ಷಣ ಕಂಟೈನ್‌ಮೆಂಟ್ ಕ್ರಮಗಳಿಗೆ ಮುಂದಾಗಿದೆ.

11 ದಿನಗಳಲ್ಲಿ 44 ನವಿಲುಗಳ ಸಾವು ದಾಖಲಾದ ಈ ಪ್ರಕರಣ ಆರಂಭದಲ್ಲಿ ತಾಪಮಾನ ಏರಿಕೆ ಕಾರಣವೆಂದು ಭಾವಿಸಲಾಗಿತ್ತು. ಆದರೆ ವೈಜ್ಞಾನಿಕ ಪರೀಕ್ಷೆಗಳು ವೈರಸ್ ಹಾವಳಿಯನ್ನೇ ಕಾರಣವೆಂದು ಸಾಬೀತುಪಡಿಸಿವೆ.

ಊರ್ಡಿಗೆರೆ, ಗೂಳೂರು, ಬೊಮ್ಮನಹಳ್ಳಿ, ಟಿ.ಜಿ.ಪಾಳ್ಯ ಸೇರಿ 10 ಕಿಮೀ ವ್ಯಾಪ್ತಿಯ 33 ಹಳ್ಳಿಗಳನ್ನು ಸೂಕ್ಷ್ಮ ವಲಯವಾಗಿ ಗುರುತಿಸಿ, ಪ್ರತಿಯೊಂದು ಪ್ರದೇಶದಲ್ಲೂ ವಿಶೇಷ ತಂಡಗಳನ್ನು ನಿಯೋಜಿಸಲಾಗಿದೆ. ಡಿಸ್‌ಇನ್‌ಫೆಕ್ಟ್ ಸ್ಪ್ರೇ ಮತ್ತು ನಿಗಾ ಕ್ರಮಗಳು ತೀವ್ರಗೊಳಿಸಲಾಗಿದೆ.

ಸುತ್ತಮುತ್ತಲಿನ ಕೋಳಿ ಫಾರ್ಮ್‌ಗಳಲ್ಲಿ ನಾಟಿ ಕೋಳಿಗಳ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗುತ್ತಿದ್ದು, ಅಪರಿಚಿತರ ಪ್ರವೇಶ ನಿಷೇಧಿಸಲಾಗಿದೆ. ಸೋಂಕು ನಿಯಂತ್ರಣವೇ ಈಗ ಜಿಲ್ಲಾಡಳಿತದ ಪ್ರಮುಖ ಸವಾಲಾಗಿದೆ.

ಲೋಕಾಯುಕ್ತ ತನಿಖೆಯಲ್ಲಿ ಸ್ಫೋಟಕ ಮಾಹಿತಿ ಬಹಿರಂಗ: ಮಂಡ್ಯ ಜಿಲ್ಲೆಯಲ್ಲಿ 1,354 ಬಾಲಗರ್ಭಿಣಿಯರು ಪತ್ತೆ!

0

ಮಂಡ್ಯ: ಜಿಲ್ಲೆಯಲ್ಲಿ ಬಾಲಗರ್ಭಿಣಿಯರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿರುವುದು ಕಳವಳಕ್ಕೆ ಕಾರಣವಾಗಿದೆ. RCH ಪೋರ್ಟಲ್ ಅಂಕಿಅಂಶಗಳ ಪ್ರಕಾರ, ಐದು ವರ್ಷಗಳಲ್ಲಿ 1,354 ಪ್ರಕರಣಗಳು ದಾಖಲಾಗಿವೆ.

ಈ ಬೆಳವಣಿಗೆ ಜಿಲ್ಲೆಯ ಸಾಮಾಜಿಕ ಸ್ಥಿತಿ ಹಾಗೂ ಆರೋಗ್ಯ ಜಾಗೃತಿಯ ಕೊರತೆಯನ್ನು ಬಿಂಬಿಸುತ್ತಿದೆ. ತಜ್ಞರ ಪ್ರಕಾರ, ಅಪ್ರಾಪ್ತ ವಯಸ್ಸಿನ ಗರ್ಭಧಾರಣೆ ಬಾಲಕಿಯರ ಭವಿಷ್ಯಕ್ಕೆ ದೊಡ್ಡ ಹೊಡೆತ ನೀಡುವ ಜೊತೆಗೆ ಆರೋಗ್ಯದ ಮೇಲೂ ಗಂಭೀರ ಪರಿಣಾಮ ಬೀರುತ್ತದೆ.

ಈ ಹಿನ್ನೆಲೆ, ಜಾಗೃತಿ ಕಾರ್ಯಕ್ರಮಗಳನ್ನು ಬಲಪಡಿಸುವುದು ಮತ್ತು ಕಾನೂನು ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವುದು ಅವಶ್ಯಕ ಎಂದು ಅಭಿಪ್ರಾಯ ವ್ಯಕ್ತವಾಗಿದೆ.

ಹಾಸನ: ದಂತ ಕಳೆದುಕೊಂಡ ಭೀಮಾ ಮತ್ತೆ ಅಟ್ಟಹಾಸಕ್ಕೆ ಸಜ್ಜು!

ಹಾಸನ: ಜಿಲ್ಲೆಯ ಬೇಲೂರು ತಾಲೂಕಿನ ಕೋಗೋಡು ಗ್ರಾಮದಲ್ಲಿ ಎರಡು ಕಾಡಾನೆಗಳ ಚಲನವಲನ ಆತಂಕ ಮೂಡಿಸಿದೆ.

ಭೀಮಾ ಹಾಗೂ ಕ್ಯಾಪ್ಟನ್ ಮತ್ತೆ ಮುಖಾಮುಖಿಯಾಗಿದ್ದು, ಕಾಳಗಕ್ಕೆ ಸಜ್ಜಾಗಿರುವಂತೆ ಕಾಣಿಸಿಕೊಂಡಿವೆ. ಗ್ರಾಮದ ಸುತ್ತಮುತ್ತ ಅಡ್ಡಾಡುತ್ತಿದ್ದ ಈ ಎರಡು ಆನೆಗಳು ಪರಸ್ಪರ ಎದುರಾಗಿ ಕಾದಾಟಕ್ಕೆ ಮುಂದಾದರೂ, ಜನರ ಹಾಜರಾತಿಯಿಂದ ಅಲ್ಲಿಂದ ದೂರ ಸರಿದು ಒಟ್ಟಿಗೆ ನಡೆದುಕೊಂಡು ಹೋದವು. ಈ ದೃಶ್ಯ ಸ್ಥಳೀಯರಲ್ಲಿ ಆತಂಕ ಹೆಚ್ಚಿಸಿದೆ.

ಗಮನಾರ್ಹವಾಗಿ, ಕಳೆದ ನವೆಂಬರ್‌ನಲ್ಲಿ ಜಗಬೋರನಹಳ್ಳಿ ಗ್ರಾಮದ ಬಳಿ ನಡೆದ ಭೀಕರ ಕಾಳಗದಲ್ಲಿ ಭೀಮಾ ತನ್ನ ಒಂದು ದಂತ ಕಳೆದುಕೊಂಡಿತ್ತು. ಸಿಟ್ಟಿನಲ್ಲಿ ಮರಕ್ಕೆ ಗುದ್ದಿದ ಪರಿಣಾಮ ದಂತ ಮುರಿದು ಬಿದ್ದಿತ್ತು ಎಂದು ತಿಳಿದುಬಂದಿದೆ.

ಪ್ರಸ್ತುತ ಎರಡು ಕಾಡಾನೆಗಳ ಚಲನವಲನಗಳನ್ನು ಅರಣ್ಯ ಇಲಾಖೆಯ ಇಟಿಎಫ್ ಸಿಬ್ಬಂದಿ ನಿಗಾ ಇಟ್ಟು ಗಮನಿಸುತ್ತಿದ್ದಾರೆ. ಕೂಲಿ ಕಾರ್ಮಿಕರು ಹಾಗೂ ಗ್ರಾಮಸ್ಥರಲ್ಲಿ ಭೀತಿ ಹೆಚ್ಚಿರುವ ಹಿನ್ನೆಲೆಯಲ್ಲಿ ಎಚ್ಚರಿಕೆಯಿಂದ ಇರಲು ಸೂಚಿಸಲಾಗಿದೆ.

 

ಗೋಡೆ ಕೊರೆದು ಮಳಿಗೆಗೆ ನುಗ್ಗಿದ ಕಳ್ಳರು: ಕೋಟ್ಯಂತರ ರೂ.ಮೌಲ್ಯದ ಬೆಳ್ಳಿ ಲೂಟಿ!

ಬೆಂಗಳೂರು: ನಗರದಲ್ಲಿ ಚಿನ್ನ ಹಾಗೂ ಬೆಳ್ಳಿ ದರ ಏರಿಕೆಯಾಗುತ್ತಿದ್ದಂತೆ ಕಳ್ಳರ ಕಾಟ ಮತ್ತೆ ಹೆಚ್ಚಾಗಿದೆ.

ದಾಸರಹಳ್ಳಿ ಎಂಟನೇ ಮೈಲಿ ಸಮೀಪದ ಹಾವನೂರಿನ ಎಂಬಿ ಜ್ಯುವೆಲ್ಲರ್ಸ್ ಮಳಿಗೆಯಲ್ಲಿ ಭಾರೀ ಕಳ್ಳತನ ನಡೆದಿದ್ದು, ಸುಮಾರು 1.20 ಕೋಟಿ ರೂ. ಮೌಲ್ಯದ ಬೆಳ್ಳಿ ವಸ್ತುಗಳನ್ನು ಕದಿಯಲಾಗಿದೆ.

ಎರಡು ದಿನಗಳ ಹಿಂದೆ ನಡೆದ ಈ ಕಳ್ಳತನವನ್ನು ಅತ್ಯಂತ ಯೋಜಿತವಾಗಿ ನಡೆಸಲಾಗಿದೆ. ಕಳ್ಳರು ಮಳಿಗೆಯ ಹಿಂಭಾಗದ ಕೋಣೆಯ ಬೀಗ ಮುರಿದು ಒಳನುಗ್ಗಿ, ನಂತರ ಗೋಡೆಯನ್ನು ಕೊರೆದು ಅಂಗಡಿಗೆ ಪ್ರವೇಶಿಸಿದ್ದಾರೆ. ಈ ವೇಳೆ ಸುಮಾರು 70 ಕೆಜಿ ಬೆಳ್ಳಿ ವಸ್ತುಗಳನ್ನು ದೋಚಿದ್ದಾರೆ.

ಘಟನೆಯ ಮಾಹಿತಿ ಸಿಗುತ್ತಿದ್ದಂತೆ ಬಾಗಲಗುಂಟೆ ಪೊಲೀಸ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಳಿಗೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ, ಕಳ್ಳರು ಬಳಸಿದ ವಿಧಾನಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ.

ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಕಳ್ಳರ ಪತ್ತೆಗೆ ತೀವ್ರ ಶೋಧ ಕಾರ್ಯ ಮುಂದುವರಿದಿದೆ. ನಗರದಲ್ಲಿ ಇತ್ತೀಚೆಗೆ ಸರಣಿ ಕಳ್ಳತನಗಳು ಹೆಚ್ಚುತ್ತಿರುವುದು ವ್ಯಾಪಾರಿಗಳು ಹಾಗೂ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.

 

ಹಾಸನದಲ್ಲಿ ಬಿರುಗಾಳಿ ಮಳೆ ಅಬ್ಬರ: ಎಕರೆಗಟ್ಟಲೆ ಬಾಳೆ ಬೆಳೆ ನಾಶ – ರೈತರ ಕಣ್ಣೀರು

ಹಾಸನ: ಜಿಲ್ಲೆಯ ವಿವಿಧೆಡೆ ಬಿರುಗಾಳಿ ಸಹಿತ ಸುರಿದ ಭಾರೀ ಮಳೆಯಿಂದ ಲಕ್ಷಾಂತರ ರೂ. ಮೌಲ್ಯದ ಬಾಳೆ ಬೆಳೆ ನಾಶವಾಗಿರುವ ಘಟನೆ ವರದಿಯಾಗಿದೆ.

ಅರಕಲಗೂಡು ತಾಲೂಕಿನ ಬಸವನಹಳ್ಳಿಕೊಪ್ಪಲು ಗ್ರಾಮದಲ್ಲಿ ಬಿರುಗಾಳಿಗೆ ಲೋಕೇಶ್, ಪರಮೇಶ್, ನಾಗರಾಜ್ ಸೇರಿದಂತೆ ಹಲವು ರೈತರಿಗೆ ಸೇರಿದ ಸಾವಿರಾರು ಬಾಳೆ ಗಿಡಗಳು ನೆಲಕಚ್ಚಿವೆ.

ಕಟಾವಿಗೆ ಸಿದ್ಧವಾಗಿದ್ದ ಬಾಳೆಗೊನೆಗಳು ಗಾಳಿಯ ತೀವ್ರತೆಗೆ ಮುರಿದು ಬಿದ್ದಿದ್ದು, ರೈತರು ಅಪಾರ ನಷ್ಟ ಅನುಭವಿಸಿದ್ದಾರೆ. ಇನ್ನೂ ಒಂದು ತಿಂಗಳಲ್ಲಿ ಕೊಯ್ಲು ಮಾಡಿ ಮಾರಾಟ ಮಾಡಬೇಕಿದ್ದ ಬೆಳೆ ಹಾನಿಯಾಗಿರುವುದು ರೈತರ ಸಂಕಷ್ಟವನ್ನು ಮತ್ತಷ್ಟು ಹೆಚ್ಚಿಸಿದೆ.

ಇದೇ ಗ್ರಾಮದ ಕೆಲ ರೈತರು ಬೆಳೆದಿದ್ದ ಮೆಕ್ಕೆಜೋಳ ಬೆಳೆ ಕೂಡ ಹಾನಿಗೊಳಗಾಗಿದ್ದು, ಎರಡು ವಾಸದ ಮನೆಗಳ ಮೇಲ್ಛಾವಣಿ ಹಾರಿಹೋಗಿವೆ. ಪ್ರಕೃತಿ ವಿಕೋಪದಿಂದ ಉಂಟಾದ ನಷ್ಟಕ್ಕೆ ಸೂಕ್ತ ಪರಿಹಾರ ನೀಡುವಂತೆ ರೈತರು ಸರ್ಕಾರವನ್ನು ಆಗ್ರಹಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಇದುವರೆಗೆ ಯಾವುದೇ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

ಬೆಂಗಳೂರು ಆಸ್ತಿ ಮಾಲೀಕರಿಗೆ ಸಿಹಿ ಸುದ್ದಿ: ಆಸ್ತಿ ತೆರಿಗೆಗೆ 5% ರಿಯಾಯಿತಿ ಅವಧಿ ಮೇ 31ರವರೆಗೆ ವಿಸ್ತರಣೆ!

ಬೆಂಗಳೂರು: ನಗರದಲ್ಲಿನ ಆಸ್ತಿ ಮಾಲೀಕರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದ್ದು, ಆಸ್ತಿ ತೆರಿಗೆ ಪಾವತಿಯಲ್ಲಿ ನೀಡಲಾಗುತ್ತಿದ್ದ ಶೇ 5ರಷ್ಟು ರಿಯಾಯಿತಿ ಅವಧಿಯನ್ನು ಮೇ 31, 2026ರವರೆಗೆ ವಿಸ್ತರಿಸಲಾಗಿದೆ.

ಈ ನಿರ್ಧಾರದಿಂದ ಗ್ರೇಟರ್ ಬೆಂಗಳೂರು ಪ್ರದೇಶದ ಐದು ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿರುವ ಸುಮಾರು 25 ಲಕ್ಷ ಆಸ್ತಿ ಮಾಲೀಕರಿಗೆ ನೇರ ಲಾಭವಾಗಲಿದೆ. ಸಾಮಾನ್ಯವಾಗಿ ಏಪ್ರಿಲ್ ಅಂತ್ಯಕ್ಕೆ ಈ ರಿಯಾಯಿತಿ ಅವಧಿ ಮುಕ್ತಾಯವಾಗುತ್ತಿತ್ತು.

ಆಸ್ತಿ ತೆರಿಗೆ ಪಾವತಿಯಲ್ಲಿ ಉಂಟಾದ ತಾಂತ್ರಿಕ ಗೊಂದಲಗಳು ಹಾಗೂ ಬಲ್ಕ್ ವೇಸ್ಟ್ ಜನರೇಟರ್ ವರ್ಗೀಕರಣದ ಅಸ್ಪಷ್ಟತೆ ಹಿನ್ನೆಲೆಯಲ್ಲಿ ಹಲವು ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿದ್ದವು. ಜೊತೆಗೆ ಮೇ ತಿಂಗಳಲ್ಲಿ ಶಾಲಾ ಶುಲ್ಕ ಸೇರಿದಂತೆ ಗೃಹ ವೆಚ್ಚಗಳು ಹೆಚ್ಚಾಗುವ ಕಾರಣದಿಂದ ರಿಯಾಯಿತಿ ಅವಧಿ ವಿಸ್ತರಿಸಲು ಸಾರ್ವಜನಿಕರಿಂದ ಬೇಡಿಕೆ ವ್ಯಕ್ತವಾಗಿತ್ತು.

ಈ ಹಿನ್ನೆಲೆ ಸರ್ಕಾರ ಅವಧಿ ವಿಸ್ತರಣೆ ಮಾಡಿದ್ದು, ಇದರಿಂದ ತೆರಿಗೆ ಪಾವತಿ ಪ್ರಮಾಣ ಹೆಚ್ಚಾಗುವ ನಿರೀಕ್ಷೆ ವ್ಯಕ್ತವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ತೆರಿಗೆ ಸಂಗ್ರಹದಲ್ಲಿ ಸುಮಾರು 500 ಕೋಟಿ ರೂಪಾಯಿ ಕೊರತೆ ಉಂಟಾಗಿದೆ. ಕಳೆದ ವರ್ಷ ಸುಮಾರು 1,500 ಕೋಟಿ ರೂಪಾಯಿ ಸಂಗ್ರಹವಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹೆಚ್ಚುವರಿ ಅವಧಿ ನೀಡುವುದರಿಂದ ಮಾಲೀಕರು ತೆರಿಗೆ ಪಾವತಿಸಲು ಮುಂದಾಗುತ್ತಾರೆ ಮತ್ತು ಪಾಲಿಕೆಯ ಆದಾಯದ ಕೊರತೆಯನ್ನು ಭಾಗಶಃ ಭರ್ತಿ ಮಾಡಬಹುದು ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

 

ಬೌರಿಂಗ್ ಆಸ್ಪತ್ರೆ ಗೋಡೆ ಕುಸಿದು ದುರಂತ: ಇಬ್ಬರು ಇಂಜಿನಿಯರ್ ಅಮಾನತು!

ಬೆಂಗಳೂರು: ಬೌರಿಂಗ್ ಆಸ್ಪತ್ರೆಯ ಕಾಂಪೌಂಡ್ ಗೋಡೆ ಕುಸಿದು 7 ಮಂದಿ ಸಾವನ್ನಪ್ಪಿದ ದುರಂತಕ್ಕೆ ಸಂಬಂಧಿಸಿ ರಾಜ್ಯ ಸರ್ಕಾರ ತಕ್ಷಣ ಕ್ರಮ ಕೈಗೊಂಡಿದ್ದು, ಇಬ್ಬರು ಇಂಜಿನಿಯರ್‌ಗಳನ್ನು ಅಮಾನತುಗೊಳಿಸಲಾಗಿದೆ.

ಸಹಾಯಕ ಕಾರ್ಯನಿರ್ವಹಕ ಅಭಿಯಂತರ ಆರ್.ಟಿ. ರುದ್ರಮುನಿ ಹಾಗೂ ಕಾರ್ಯನಿರ್ವಹಕ ಅಭಿಯಂತರ ಮೊಹಮದ್ ಜಾವೇದ್ ಅವರನ್ನು ಅಮಾನತು ಮಾಡಿ ಜಿಬಿಎ ಉಪ ಆಯುಕ್ತರು ಆದೇಶ ಹೊರಡಿಸಿದ್ದಾರೆ.

ಘಟನೆಗೆ ಸಂಬಂಧಿಸಿ ಸಂಪೂರ್ಣ ತನಿಖೆ ನಡೆಸಲು ಬೆಂಗಳೂರು ನಗರ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದ್ದು, 7 ದಿನಗಳೊಳಗೆ ವರದಿ ಸಲ್ಲಿಸಲು ಸೂಚಿಸಲಾಗಿದೆ. ಈ ತನಿಖಾ ಸಮಿತಿಯಲ್ಲಿ ತಹಸೀಲ್ದಾರ್ ಸೇರಿದಂತೆ ಪಿಡಬ್ಲ್ಯುಡಿ ನಿವೃತ್ತ ಮುಖ್ಯ ಇಂಜಿನಿಯರ್ ಸೇರಿ ಒಟ್ಟು 6 ಮಂದಿ ಸದಸ್ಯರಿದ್ದಾರೆ.

ಇನ್ನೊಂದೆಡೆ, ಈ ಪ್ರಕರಣವನ್ನು ಕರ್ನಾಟಕ ಲೋಕಾಯುಕ್ತ ಗಂಭೀರವಾಗಿ ಪರಿಗಣಿಸಿದ್ದು, ಸ್ಥಳಕ್ಕೆ ಭೇಟಿ ನೀಡಿದ ಲೋಕಾಯುಕ್ತ ನ್ಯಾಯಮೂರ್ತಿ ಬಿಎಸ್ ಪಾಟೀಲ್ ಆಡಳಿತದ ನಿರ್ಲಕ್ಷ್ಯಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗೋಡೆಯ ಅಡಿಪಾಯ ದುರ್ಬಲವಾಗಿರುವುದೇ ದುರಂತಕ್ಕೆ ಪ್ರಮುಖ ಕಾರಣವಾಗಿದ್ದು, ಮಳೆಗಾಲದಲ್ಲಿ ಇಂತಹ ಅಪಾಯದ ಬಗ್ಗೆ ಅರಿವು ಇದ್ದರೂ ಸೂಕ್ತ ಕ್ರಮ ಕೈಗೊಳ್ಳದಿರುವುದು ಅಧಿಕಾರಿಗಳ ಬೇಜವಾಬ್ದಾರಿ ಎಂದು ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಲೋಕಾಯುಕ್ತರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಲು ನಿರ್ಧರಿಸಿದ್ದು, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಜಿಬಿಎ ಮುಖ್ಯ ಆಯುಕ್ತ ಸೇರಿದಂತೆ ಪ್ರಮುಖ ಅಧಿಕಾರಿಗಳನ್ನು ಆರೋಪಿಗಳನ್ನಾಗಿ ಮಾಡುವ ಸಾಧ್ಯತೆ ಇದೆ.

ಇದರ ಜೊತೆಗೆ ಕೆ.ಆರ್. ಸರ್ಕಲ್ ಅಂಡರ್‌ಪಾಸ್ ಪ್ರದೇಶಕ್ಕೂ ಭೇಟಿ ನೀಡಿ ಪರಿಸ್ಥಿತಿ ಪರಿಶೀಲನೆ ನಡೆಸಿದ್ದಾರೆ.

 

error: Content is protected !!