Home Blog

ರಾಮನಗರದಲ್ಲಿ ಭಯಾನಕ ಘಟನೆ: ರೈಲ್ವೆ ಬ್ಯಾರಿಕೇಡ್‌ನಲ್ಲಿ ಸಿಲುಕಿದ ಕಾಡಾನೆ, ಅರಣ್ಯ ಇಲಾಖೆಯಿಂದ ತೀವ್ರ ಕಸರತ್ತು!

ರಾಮನಗರ: ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದ ಕಾಡಾನೆಯೊಂದು ಕನಕಪುರ ತಾಲೂಕಿನ ಅರೆಕೊಪ್ಪ ಗ್ರಾಮದ ಬಳಿ ರೈಲ್ವೆ ಹಳಿಗಳ ಬ್ಯಾರಿಕೇಡ್ ಕಬ್ಬಿಣದ ಕಂಬಗಳ ನಡುವೆ ಸಿಲುಕಿಕೊಂಡು ಪರದಾಡಿದ ಘಟನೆ ನಡೆದಿದೆ.

ಕಾವೇರಿ ವನ್ಯಜೀವಿ ವಲಯದ ಮುಗ್ಗೂರು ಅರಣ್ಯ ಪ್ರದೇಶದ ಕಾಡಂಚಿನಲ್ಲಿ ಈ ಘಟನೆ ನಡೆದಿದ್ದು, ಆಹಾರ ಮತ್ತು ನೀರಿನ ಹುಡುಕಾಟದಲ್ಲಿ ನಾಡಿಗೆ ಬಂದಿದ್ದ ಆನೆ ತಪ್ಪಾಗಿ ಬ್ಯಾರಿಕೇಡ್‌ನ ಕಬ್ಬಿಣದ ಕಂಬಗಳ ಮಧ್ಯೆ ಸಿಲುಕಿದೆ. ಇದರಿಂದ ಮುಂದೆ ಅಥವಾ ಹಿಂದೆ ಹೋಗಲು ಸಾಧ್ಯವಾಗದೆ ಆನೆ ತೀವ್ರವಾಗಿ ನರಳಾಡಿದೆ.

ಆನೆಯ ಕಿರುಚಾಟ ಕೇಳಿ ಸ್ಥಳೀಯ ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಕಾವೇರಿ ವನ್ಯಜೀವಿ ವಿಭಾಗದ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಆನೆಯನ್ನು ಯಾವುದೇ ಗಾಯಗಳಾಗದಂತೆ ಸುರಕ್ಷಿತವಾಗಿ ಹೊರತೆಗೆಯಲು ಜೆಸಿಬಿ ಹಾಗೂ ಗ್ಯಾಸ್ ಕಟರ್ ಬಳಸಿ ರಕ್ಷಣಾ ಕಾರ್ಯಾಚರಣೆ ನಡೆಸಲು ಅರಣ್ಯ ಇಲಾಖೆ ಸಿದ್ಧತೆ ಮಾಡಿಕೊಂಡಿದೆ ಎಂದು ತಿಳಿದುಬಂದಿದೆ.

ಘಟನೆಯ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಆನೆಯನ್ನು ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದಾರೆ ಎಂದು ವರದಿಯಾಗಿದೆ.

ಮಹಿಳಾ ನಿರ್ದೇಶಕಿಯರ ಪೈಕಿ ಮುಂಚೂಣಿಯ ವಿಜಯಾ ಮೆಹ್ತಾ ಇನ್ನಿಲ್ಲ; ಪ್ರಧಾನಿ ಮೋದಿ ಸೇರಿ ಗಣ್ಯರ ಸಂತಾಪ

ಮುಂಬೈ: ಭಾರತೀಯ ರಂಗಭೂಮಿ ಹಾಗೂ ಚಿತ್ರರಂಗದ ಹಿರಿಯ ನಟಿ-ನಿರ್ದೇಶಕಿ ವಿಜಯಾ ಮೆಹ್ತಾ ಅವರು ಸೋಮವಾರ ತಡರಾತ್ರಿ ವಿಧಿವಶರಾಗಿದ್ದಾರೆ. 92 ವರ್ಷದ ಅವರು ಹಲವು ದಶಕಗಳ ಕಾಲ ರಂಗಭೂಮಿ ಮತ್ತು ಸಿನಿಮಾ ಕ್ಷೇತ್ರದಲ್ಲಿ ಅಚ್ಚಳಿಯದ ಛಾಪು ಮೂಡಿಸಿದ್ದು, ಅವರ ನಿಧನದಿಂದ ಭಾರತೀಯ ಕಲಾ ಲೋಕ ಮಹತ್ವದ ವ್ಯಕ್ತಿತ್ವವೊಂದನ್ನು ಕಳೆದುಕೊಂಡಂತಾಗಿದೆ.

ಮಹಿಳಾ ನಿರ್ದೇಶಕಿಯರು ವಿರಳವಾಗಿದ್ದ ಕಾಲದಲ್ಲೇ ವಿಜಯಾ ಮೆಹ್ತಾ ತಮ್ಮ ಪ್ರತಿಭೆ ಮತ್ತು ಸೃಜನಶೀಲತೆಯ ಮೂಲಕ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದರು. ಮುಂಬೈನ ರಂಗಾಯಣ ರಂಗ ತಂಡದ ಸ್ಥಾಪಕ ಸದಸ್ಯೆಯಾಗಿದ್ದ ಅವರು ವಿಜಯ್ ತೆಂಡೂಲ್ಕರ್, ಅರವಿಂದ್ ದೇಶಪಾಂಡೆ ಮತ್ತು ಶ್ರೀರಾಮ್ ಲಾಗೂ ಅವರೊಂದಿಗೆ ಮರಾಠಿ ರಂಗಭೂಮಿಯ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದರು.

ಇಬ್ರಾಹಿಂ ಅಲ್ಕಾಜಿ ಹಾಗೂ ಆದಿ ಮರ್ಜ್‌ಬಾನ್ ಅವರ ಮಾರ್ಗದರ್ಶನದಲ್ಲಿ ರಂಗಭೂಮಿ ತರಬೇತಿ ಪಡೆದಿದ್ದ ವಿಜಯಾ ಮೆಹ್ತಾ, 1975ರಲ್ಲಿ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪಡೆದರು. 1986ರಲ್ಲಿ ಬಿಡುಗಡೆಯಾದ ‘ರಾವ್ ಸಾಹೇಬ್’ ಚಿತ್ರದ ಅಭಿನಯಕ್ಕಾಗಿ ಅತ್ಯುತ್ತಮ ಪೋಷಕ ನಟಿ ರಾಷ್ಟ್ರೀಯ ಪ್ರಶಸ್ತಿ ತಮ್ಮದಾಗಿಸಿಕೊಂಡರು.

1980ರ ದಶಕದಲ್ಲಿ ನಿರ್ದೇಶನ ಕ್ಷೇತ್ರಕ್ಕೆ ಕಾಲಿಟ್ಟ ಅವರು ದೂರದರ್ಶನ ಚಿತ್ರಗಳ ಜೊತೆಗೆ ‘ರಾವ್ ಸಾಹೇಬ್’ ಮತ್ತು ರಾಷ್ಟ್ರಪ್ರಶಸ್ತಿ ವಿಜೇತ ‘ಪೆಸ್ತೂಂಜಿ’ ಚಿತ್ರಗಳನ್ನು ನಿರ್ದೇಶಿಸಿ ಪ್ರಶಂಸೆ ಗಳಿಸಿದರು. ನಸೀರುದ್ದೀನ್ ಶಾ, ಶಬಾನಾ ಆಜ್ಮಿ, ಕಿರಣ್ ಖೇರ್ ಹಾಗೂ ಅನುಪಮ್ ಖೇರ್ ಅಭಿನಯಿಸಿದ್ದ ‘ಪೆಸ್ತೂಂಜಿ’ ಅವರ ಪ್ರಮುಖ ಕೃತಿಗಳಲ್ಲಿ ಒಂದಾಗಿದೆ.

‘ಭಾಯಿ’ ಎಂದೇ ಆತ್ಮೀಯವಾಗಿ ಕರೆಸಿಕೊಳ್ಳುತ್ತಿದ್ದ ವಿಜಯಾ ಮೆಹ್ತಾ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ. “ಆಧುನಿಕ ಮರಾಠಿ ರಂಗಭೂಮಿಯ ಪ್ರವರ್ತಕರಾಗಿದ್ದ ವಿಜಯಾ ಮೆಹ್ತಾ ಅವರ ಕೊಡುಗೆ ಸದಾ ಸ್ಮರಣೀಯ. ಅವರ ಸೃಜನಶೀಲತೆ ಮುಂದಿನ ಪೀಳಿಗೆಗಳಿಗೂ ಪ್ರೇರಣೆಯಾಗಲಿದೆ” ಎಂದು ಪ್ರಧಾನಿ ಮೋದಿ ತಮ್ಮ ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.

ಜುಲೈನಲ್ಲಿ ಜನಿಸಿದವರ ವ್ಯಕ್ತಿತ್ವ ಹೇಗಿರುತ್ತೆ? ತಿಳಿದುಕೊಳ್ಳಿ ವಿಶೇಷ ಲಕ್ಷಣಗಳು!

ಜ್ಯೋತಿಷ್ಯಶಾಸ್ತ್ರ ಮತ್ತು ಸಂಖ್ಯಾಶಾಸ್ತ್ರದಂತೆ ಹುಟ್ಟಿದ ದಿನಾಂಕ, ಸಮಯ ಮತ್ತು ಗ್ರಹಗಳ ಸ್ಥಾನದಿಂದ ವ್ಯಕ್ತಿಯ ಸ್ವಭಾವ ಮತ್ತು ಭವಿಷ್ಯವನ್ನು ಅಂದಾಜಿಸಲಾಗುತ್ತದೆ.

ಅದೇ ರೀತಿಯಲ್ಲಿ ಹುಟ್ಟಿದ ತಿಂಗಳ ಆಧಾರದಲ್ಲೂ ವ್ಯಕ್ತಿತ್ವದ ಕೆಲವು ವಿಶೇಷ ಲಕ್ಷಣಗಳನ್ನು ಹೇಳಲಾಗುತ್ತದೆ. ಈಗ ಜುಲೈ ತಿಂಗಳಲ್ಲಿ ಜನಿಸಿದವರ ಸ್ವಭಾವ ಹೇಗಿರುತ್ತದೆ ಎಂಬುದನ್ನು ನೋಡೋಣ.

ಜುಲೈನಲ್ಲಿ ಜನಿಸಿದವರು ಸಾಮಾನ್ಯವಾಗಿ ಭಾವನಾತ್ಮಕ, ಸಂವೇದನಾಶೀಲ ಹಾಗೂ ಸೃಜನಶೀಲ ವ್ಯಕ್ತಿತ್ವ ಹೊಂದಿರುತ್ತಾರೆ ಎಂದು ಹೇಳಲಾಗುತ್ತದೆ. ಇವರು ತಮ್ಮ ಕುಟುಂಬಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುವವರು. ಪ್ರೀತಿಪಾತ್ರರ ಸಂತೋಷ ಮತ್ತು ಯೋಗಕ್ಷೇಮಕ್ಕಾಗಿ ಶ್ರಮಿಸುವ ಸ್ವಭಾವ ಇವರಲ್ಲಿ ಹೆಚ್ಚು ಕಾಣಿಸುತ್ತದೆ.

ಇವರ ಮತ್ತೊಂದು ಪ್ರಮುಖ ಗುಣ ಸಹಾನುಭೂತಿ. ಇತರರ ದುಃಖವನ್ನು ಸುಲಭವಾಗಿ ಅರ್ಥಮಾಡಿಕೊಳ್ಳುವವರು ಹಾಗೂ ಸಹಾಯ ಮಾಡಲು ಸದಾ ಸಿದ್ಧರಾಗಿರುವವರು ಎಂದು ಹೇಳಲಾಗುತ್ತದೆ. ಶಾಂತ ಸ್ವಭಾವ ಮತ್ತು ಸರಳ ಜೀವನದತ್ತ ಇವರಿಗೆ ಹೆಚ್ಚಿನ ಒಲವು ಇರುತ್ತದೆ.

ಜುಲೈನಲ್ಲಿ ಜನಿಸಿದವರು ಬುದ್ಧಿವಂತಿಕೆ ಮತ್ತು ವಿಶ್ಲೇಷಣಾತ್ಮಕ ಶಕ್ತಿಯಲ್ಲಿ ಮುಂದಿರುವವರು ಎಂದು ನಂಬಲಾಗಿದೆ. ಕಠಿಣ ಸಮಸ್ಯೆಗಳನ್ನೂ ತಾರ್ಕಿಕವಾಗಿ ಪರಿಹರಿಸುವ ಸಾಮರ್ಥ್ಯ ಇವರಲ್ಲಿರುತ್ತದೆ. ಶೈಕ್ಷಣಿಕ ಕ್ಷೇತ್ರದಲ್ಲೂ ಉತ್ತಮ ಸಾಧನೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತದೆ.

ಅದೇ ವೇಳೆ ಇವರ ಭಾವನಾತ್ಮಕ ಸ್ವಭಾವ ಕೆಲವೊಮ್ಮೆ ದುರ್ಬಲತೆಯಾಗಬಹುದು. ಅತಿಯಾದ ಚಿಂತನೆ, ಭಾವನೆಗಳಿಂದ ಪ್ರೇರಿತ ನಿರ್ಧಾರಗಳು ಇವರಲ್ಲಿ ಕಂಡುಬರುವ ಸಾಧ್ಯತೆ ಇದೆ. ಆದ್ದರಿಂದ ಮನಸ್ಸಿನ ಸಮತೋಲನ ಕಾಪಾಡಿಕೊಳ್ಳುವುದು ಮುಖ್ಯ ಎಂದು ಸಲಹೆ ನೀಡಲಾಗುತ್ತದೆ.

ಒಟ್ಟಿನಲ್ಲಿ, ಜುಲೈನಲ್ಲಿ ಜನಿಸಿದವರು ಸಹೃದಯ, ಕಾಳಜಿಯುಳ್ಳ ಮತ್ತು ಸೃಜನಶೀಲ ವ್ಯಕ್ತಿತ್ವ ಹೊಂದಿರುವವರು ಎಂದು ಹೇಳಲಾಗುತ್ತದೆ. ತಮ್ಮ ಭಾವನೆಗಳನ್ನು ಸರಿಯಾಗಿ ನಿಯಂತ್ರಿಸಿದರೆ ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ಯಶಸ್ಸು ಸಾಧಿಸಬಹುದು ಎಂದು ನಂಬಿಕೆ ಇದೆ.

ಬೆಂಗಳೂರಿನಲ್ಲಿ ಹಾವುಗಳ ಸಂಖ್ಯೆ ಹೆಚ್ಚಳ! ಉರಗ ರಕ್ಷಕರ ಕೊರತೆಯಿಂದ ಜನತೆಗೆ ಆತಂಕ

ಬೆಂಗಳೂರು: ಜೂನ್‌ನಿಂದ ಆಗಸ್ಟ್‌ವರೆಗಿನ ಹಾವುಗಳ ಸಂತಾನೋತ್ಪತ್ತಿ ಕಾಲದಲ್ಲಿ ಬೆಂಗಳೂರಿನಲ್ಲಿ ಹಾವು ಪ್ರಕರಣಗಳು ಹೆಚ್ಚಾಗಿದ್ದು, ಸಾರ್ವಜನಿಕರಲ್ಲಿ ಆತಂಕ ಉಂಟಾಗಿದೆ.

ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಐದು ವಲಯಗಳಲ್ಲಿ ಕೇವಲ 7 ಮಂದಿ ಹಾವು ರಕ್ಷಕರೇ ಕಾರ್ಯನಿರ್ವಹಿಸುತ್ತಿದ್ದಾರೆ. ನಿಯಮದ ಪ್ರಕಾರ ಪ್ರತಿ ವಲಯಕ್ಕೆ ಕನಿಷ್ಠ ನಾಲ್ಕು ರಕ್ಷಕರು ಇರಬೇಕಾದರೂ, ಈಗ ಎಲ್ಲಾ ವಲಯಗಳಲ್ಲಿ ಸಿಬ್ಬಂದಿ ಕೊರತೆ ಇದೆ.

ದಿನಕ್ಕೆ 100ಕ್ಕೂ ಹೆಚ್ಚು ಹಾವು ರೆಸ್ಕ್ಯೂ ಕರೆಗಳು ಬರುತ್ತಿದ್ದರೂ, ರಕ್ಷಕರು 10 ರಿಂದ 15 ಕರೆಗಳಿಗೆ ಮಾತ್ರ ಸ್ಪಂದಿಸಲು ಸಾಧ್ಯವಾಗುತ್ತಿದೆ. ಉಳಿದ ಕರೆಗಳಿಗೆ ತಕ್ಷಣ ಸಹಾಯ ಸಿಗದ ಕಾರಣ ಜನರು ಭಯದಿಂದ ಹಾವುಗಳನ್ನು ಕೊಲ್ಲುವ ಘಟನೆಗಳು ಹೆಚ್ಚಾಗುವ ಸಾಧ್ಯತೆ ಇದೆ ಎಂದು ತಜ್ಞರು ತಿಳಿಸಿದ್ದಾರೆ.

ನಗರದಲ್ಲಿ ನಾಗರಹಾವು, ಕಟ್ಟುಹಾವು ಹಾಗೂ ರಸೆಲ್ಸ್ ವೈಪರ್ ಸೇರಿದಂತೆ ವಿಷಪೂರಿತ ಹಾವುಗಳ ಪ್ರಕರಣಗಳು ಹೆಚ್ಚಾಗಿದೆ ಎಂದು ವನ್ಯಜೀವಿ ತಜ್ಞರು ಎಚ್ಚರಿಸಿದ್ದಾರೆ. ಇವು ಅತ್ಯಂತ ಅಪಾಯಕಾರಿ ಹಾವುಗಳಾಗಿದ್ದು, ಜನರು ಎಚ್ಚರಿಕೆಯಿಂದ ಇರಬೇಕು ಎಂದು ಸಲಹೆ ನೀಡಿದ್ದಾರೆ.

ಇದೇ ವೇಳೆ, ಹಾವು ರಕ್ಷಕರಿಗೆ ಕಳೆದ 6 ತಿಂಗಳಿಂದ ಗೌರವಧನ ಪಾವತಿಯಾಗಿಲ್ಲ ಎಂಬ ಮಾಹಿತಿ ಕೂಡ ಲಭ್ಯವಾಗಿದೆ. ಗೌರವಧನ ಹೆಚ್ಚಿಸುವ ಪ್ರಸ್ತಾವನೆ ಬಾಕಿಯಲ್ಲಿರುವುದರಿಂದ ರಕ್ಷಣಾ ಕಾರ್ಯದಲ್ಲಿ ತೊಂದರೆ ಉಂಟಾಗಿದೆ ಎಂದು ತಿಳಿದುಬಂದಿದೆ.

ಮಳೆಗಾಗಿ ಕತ್ತೆಗಳ ಮದುವೆ!: ಬೆಳಗಾವಿಯಲ್ಲಿ ವರುಣನ ಮೊರೆ ಹೋದ ರೈತರು

0

ಬೆಳಗಾವಿ: ಪಶ್ಚಿಮ ಘಟ್ಟದಲ್ಲಿ ಈ ಬಾರಿ ಮುಂಗಾರು ನಿರೀಕ್ಷಿತ ಪ್ರಮಾಣದಲ್ಲಿ ಸುರಿಯದ ಪರಿಣಾಮ ಬೆಳಗಾವಿ ಜಿಲ್ಲೆಯಲ್ಲಿ ಮಳೆ ಅಭಾವ ಗಂಭೀರ ಸ್ವರೂಪ ಪಡೆದುಕೊಂಡಿದೆ. ಜೂನ್ ತಿಂಗಳು ಕಳೆದುಹೋದರೂ ಮಳೆಯ ಲಕ್ಷಣ ಕಾಣಿಸದ ಹಿನ್ನೆಲೆಯಲ್ಲಿ ರೈತರು ಆತಂಕಕ್ಕೊಳಗಾಗಿದ್ದು, ಸಂಪ್ರದಾಯದ ಆಚರಣೆಯ ಮೂಲಕ ಮಳೆಗಾಗಿ ವರುಣ ದೇವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ.

ಕಾಗವಾಡ ತಾಲೂಕಿನ ಶೇಡಬಾಳ ಗ್ರಾಮದಲ್ಲಿ ಗ್ರಾಮಸ್ಥರು ಕತ್ತೆಗಳ ಮದುವೆ ನಡೆಸುವ ಮೂಲಕ ಮಳೆಗಾಗಿ ವಿಶಿಷ್ಟ ಪೂಜೆ ನೆರವೇರಿಸಿದರು. ಮದುಮಗ ಮತ್ತು ಮದುಮಗಳಂತೆ ಕತ್ತೆಗಳನ್ನು ಅಲಂಕರಿಸಿ, ಡೊಳ್ಳು-ತಮಟೆಗಳ ಸದ್ದಿನ ನಡುವೆ ಗ್ರಾಮದಲ್ಲಿ ಮೆರವಣಿಗೆ ನಡೆಸಲಾಯಿತು. ಬಳಿಕ ವಿಧಿವಿಧಾನಗಳೊಂದಿಗೆ ವಿವಾಹ ನೆರವೇರಿಸಿ, ಸಮೃದ್ಧ ಮಳೆಯಾಗಲಿ ಎಂದು ಗ್ರಾಮಸ್ಥರು ಕೈಮುಗಿದು ಪ್ರಾರ್ಥಿಸಿದರು.

ಈ ವರ್ಷ ಕರ್ನಾಟಕ ಹಾಗೂ ಮಹಾರಾಷ್ಟ್ರದ ಜಲಾನಯನ ಪ್ರದೇಶಗಳಲ್ಲಿ ಮಳೆಯ ಕೊರತೆಯಿಂದ ಕೃಷ್ಣಾ ನದಿಯ ಒಳಹರಿವು ಗಣನೀಯವಾಗಿ ಇಳಿಕೆಯಾಗಿದೆ. ಮುಂಗಾರು ಆರಂಭವಾಗಲಿದೆ ಎಂಬ ನಿರೀಕ್ಷೆಯಲ್ಲಿ ರೈತರು ಸಾಲ ಮಾಡಿ ಬಿತ್ತನೆ ನಡೆಸಿದ್ದರೂ, ಮಳೆ ಕೈಕೊಟ್ಟ ಪರಿಣಾಮ ಮೊಳಕೆ ಬಂದ ಬೆಳೆಗಳು ಒಣಗುತ್ತಿವೆ. ನೀರಿನ ಮೂಲಗಳು ಬರಿದಾಗುತ್ತಿದ್ದು, ಕೃಷಿ ಚಟುವಟಿಕೆಗಳು ತೀವ್ರ ಸಂಕಷ್ಟಕ್ಕೆ ಸಿಲುಕಿವೆ.

“ಮಳೆ ನಮ್ಮ ಬದುಕಿನ ಆಧಾರ. ಮಳೆ ಇಲ್ಲದಿದ್ದರೆ ಕೃಷಿ ಉಳಿಯುವುದಿಲ್ಲ. ಸಂಪ್ರದಾಯದಂತೆ ಕತ್ತೆಗಳ ವಿವಾಹ ಮಾಡಿ ವರುಣ ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದ್ದೇವೆ” ಎಂದು ರೈತರು ತಿಳಿಸಿದ್ದಾರೆ. ಗ್ರಾಮದಲ್ಲಿ ನಡೆದ ಈ ವಿಶಿಷ್ಟ ಆಚರಣೆ ಸಾರ್ವಜನಿಕರ ಗಮನ ಸೆಳೆದಿದೆ.

ಬೆಂಗಳೂರಿನಲ್ಲಿ ಫುಟ್​ಪಾತ್​ ತೆರವು ಕಾರ್ಯಾಚರಣೆ ಆರಂಭ! ಪಾದಚಾರಿಗಳಿಗೆ ರಿಲೀಫ್

ಬೆಂಗಳೂರು: ಬೃಹತ್ ಬೆಂಗಳೂರು ಪ್ರಾಧಿಕಾರ ನಗರದಾದ್ಯಂತ ಫುಟ್‌ಪಾತ್‌ಗಳ ಮೇಲೆ ನಡೆದಿರುವ ಒತ್ತುವರಿ ತೆರವುಗೊಳಿಸುವ ವಿಶೇಷ ಕಾರ್ಯಾಚರಣೆಯನ್ನು ಆರಂಭಿಸಿದೆ.

ಜಯನಗರದ ಅಶೋಕ ಪಿಲ್ಲರ್ ಸಮೀಪದಿಂದ ಬುಧವಾರ ಬೆಳಗ್ಗೆ ಈ ಕಾರ್ಯಾಚರಣೆ ಆರಂಭವಾಗಿದ್ದು, ಬೆಳಗ್ಗೆ 9:30ಕ್ಕೆ ಜೆಸಿಬಿಗಳ ಸಹಾಯದಿಂದ ಸ್ಥಳೀಯ ಅಧಿಕಾರಿಗಳು ಹಾಗೂ ಪೊಲೀಸರ ಬೆಂಗಾವಲಿನಲ್ಲಿ ಕಾರ್ಯಾಚರಣೆ ನಡೆಯಿತು.

ವಾರ್ಡ್ ನಂ.153 ವ್ಯಾಪ್ತಿಯ ಅಶೋಕ ಪಿಲ್ಲರ್‌ನಿಂದ ಮಾಧವನ್ ಪಾರ್ಕ್ ವರೆಗೆ ಅಂಗಡಿಗಳು ಹಾಗೂ ಕಟ್ಟಡ ಕಾಮಗಾರಿಗೆ ಸಂಬಂಧಿಸಿದ ವಸ್ತುಗಳಿಂದ ನಡೆದಿದ್ದ ಒತ್ತುವರಿಗಳನ್ನು ತೆರವುಗೊಳಿಸಲಾಗಿದೆ. ಭವಿಷ್ಯದಲ್ಲಿ ಮತ್ತೆ ಒತ್ತುವರಿ ನಡೆಯದಂತೆ ಕಟ್ಟುನಿಟ್ಟಿನ ನಿಗಾವಹಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭಾರೀ ಮಳೆಗೆ ನರಕದಂತಾದ ಬೆಳಗಾವಿ-ಗೋವಾ ಹೆದ್ದಾರಿ: ಬಸ್ ಸಿಲುಕಿ ಪ್ರಯಾಣಿಕರ ಪರದಾಟ

ಬೆಳಗಾವಿ: ಸತತ ಮಳೆಯಿಂದಾಗಿ ಬೆಳಗಾವಿ–ಗೋವಾ ಹೆದ್ದಾರಿ ಕೆಸರು ಗದ್ದೆಯಾಗಿ ಮಾರ್ಪಟ್ಟಿದೆ.

ಈ ಹಿನ್ನೆಲೆಯಲ್ಲಿ ಖಾನಾಪುರ ತಾಲೂಕಿನ ವರಕಡ ಗ್ರಾಮದ ಬಳಿ ಕೆಎಸ್‌ಆರ್‌ಟಿಸಿ ಬಸ್ ಕೆಸರಿನಲ್ಲಿ ಸಿಲುಕಿದ ಘಟನೆ ನಡೆದಿದೆ.

ಬೆಳಗಾವಿಯಿಂದ ಗೋವಾ ಕಡೆಗೆ ಹೋಗುತ್ತಿದ್ದ ಬಸ್ ವರಕಡ ಬಳಿ ಬರುತ್ತಿದ್ದಾಗ ರಸ್ತೆಯಲ್ಲಿ ತುಂಬಿಕೊಂಡಿದ್ದ ಕೆಸರಿನಲ್ಲಿ ಚಕ್ರಗಳು ಹೂತುಹೋಗಿವೆ. ಇದರಿಂದ ಬಸ್ ಮುಂದೆ ಹೋಗಲು ಸಾಧ್ಯವಾಗದೆ ನಡುರಸ್ತೆಯಲ್ಲೇ ನಿಂತಿದೆ.

ಚಾಲಕ ಬಸ್ ಹೊರತೆಗೆಯಲು ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ. ಬಳಿಕ ಪ್ರಯಾಣಿಕರನ್ನು ಸುರಕ್ಷಿತವಾಗಿ ಕೆಳಗಿಳಿಸಲಾಗಿದೆ.

ಬಸ್ ಕೆಸರಿನಲ್ಲಿ ಸಿಲುಕಿದ್ದರಿಂದ ಈ ಮಾರ್ಗದಲ್ಲಿ ಕೆಲಕಾಲ ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು. ನಂತರ ಸ್ಥಳೀಯರ ಸಹಾಯದಿಂದ ಸುಮಾರು ಎರಡು ಗಂಟೆಗಳ ಕಾರ್ಯಾಚರಣೆ ನಡೆಸಿ ಬಸ್ ಅನ್ನು ಹೊರತೆಗೆದಿದ್ದಾರೆ.

ಈ ವೇಳೆ ಪ್ರಯಾಣಿಕರು ಮಳೆಯಲ್ಲೇ ರಸ್ತೆಬದಿಯಲ್ಲಿ ನಿಂತು ತೊಂದರೆ ಅನುಭವಿಸಿದ್ದಾರೆ.

ಈ ಹೆದ್ದಾರಿ ಕರ್ನಾಟಕ–ಗೋವಾ ನಡುವಿನ ಪ್ರಮುಖ ರಸ್ತೆ ಆಗಿದ್ದು, ಅದರ ದುಸ್ಥಿತಿಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಕ್ಷಣ ರಸ್ತೆ ದುರಸ್ತಿ ಮಾಡಬೇಕೆಂದು ಅವರು ಆಗ್ರಹಿಸಿದ್ದಾರೆ.

ಮುಂಗಾರು ಅಬ್ಬರಕ್ಕೆ ಕರ್ನಾಟಕ ತತ್ತರ; ಕರಾವಳಿ-ಮಲೆನಾಡಿಗೆ ಭಾರೀ ಮಳೆ ಎಚ್ಚರಿಕೆ, 10 ಜಿಲ್ಲೆಗಳಿಗೆ ಅಲರ್ಟ್

0

ಮಂಗಳೂರು: ರಾಜ್ಯದಲ್ಲಿ ಮುಂಗಾರು ಮಳೆ ತೀವ್ರಗೊಂಡಿದ್ದು, ಮುಂದಿನ ಕೆಲ ದಿನಗಳ ಕಾಲ ಹಲವೆಡೆ ಧಾರಾಕಾರ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಭಾರೀ ಮಳೆಯೊಂದಿಗೆ ಗಂಟೆಗೆ 30 ರಿಂದ 40 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇರುವುದರಿಂದ ಹಲವು ಜಿಲ್ಲೆಗಳಿಗೆ ಆರೆಂಜ್ ಹಾಗೂ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಕರಾವಳಿ ಭಾಗದ ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಅತ್ಯಂತ ಭಾರೀ ಮಳೆಯಾಗುವ ಸಾಧ್ಯತೆ ಇರುವುದರಿಂದ ಆರೆಂಜ್ ಅಲರ್ಟ್ ಜಾರಿಯಲ್ಲಿದೆ. ಇದೇ ವೇಳೆ ಬೆಳಗಾವಿ ಹಾಗೂ ಶಿವಮೊಗ್ಗ ಜಿಲ್ಲೆಗಳಿಗೂ ಆರೆಂಜ್ ಅಲರ್ಟ್ ಘೋಷಿಸಲಾಗಿದ್ದು, ತುರ್ತು ಪರಿಸ್ಥಿತಿಗೆ ಜಿಲ್ಲಾಡಳಿತಗಳು ಸಜ್ಜಾಗುವಂತೆ ಸೂಚಿಸಲಾಗಿದೆ.

ಧಾರವಾಡ, ಗದಗ, ಹಾವೇರಿ, ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ. ಈ ಜಿಲ್ಲೆಗಳಲ್ಲಿ ಭಾರೀ ಮಳೆಯ ಜೊತೆಗೆ ಬಿರುಗಾಳಿ ಬೀಸುವ ಸಾಧ್ಯತೆ ಇದೆ.

ಪ್ರಾದೇಶಿಕ ಮುನ್ಸೂಚನೆಯ ಪ್ರಕಾರ, ಬೆಳಗಾವಿ, ಧಾರವಾಡ, ಗದಗ ಹಾಗೂ ಹಾವೇರಿಯಲ್ಲಿ ಭಾರೀ ಮಳೆಯಾಗಲಿದ್ದು, ಬಾಗಲಕೋಟೆ, ಬೀದರ್, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗಲಿದೆ. ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ಹಾಸನ ಜಿಲ್ಲೆಗಳಲ್ಲಿ ಅತಿ ಭಾರೀ ಮಳೆಯ ಸಾಧ್ಯತೆ ಇದ್ದು, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮೈಸೂರು, ಮಂಡ್ಯ, ಕೊಡಗು, ಕೋಲಾರ ಹಾಗೂ ತುಮಕೂರು ಸೇರಿದಂತೆ ಉಳಿದ ಜಿಲ್ಲೆಗಳಲ್ಲಿ ಸಾಧಾರಣ ಮಳೆಯ ನಿರೀಕ್ಷೆಯಿದೆ.

ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಾರ್ವಜನಿಕರಿಗೆ ಕಟ್ಟುನಿಟ್ಟಿನ ಮುನ್ನೆಚ್ಚರಿಕೆ ಸೂಚನೆ ನೀಡಿದೆ. ಮೀನುಗಾರರು ಸಮುದ್ರಕ್ಕೆ ಇಳಿಯಬಾರದು. ನದಿ, ಹೊಳೆ, ಜಲಪಾತಗಳ ಬಳಿ ತೆರಳುವುದನ್ನು ತಪ್ಪಿಸಬೇಕು. ಹಳೆಯ ಮರಗಳು, ವಿದ್ಯುತ್ ಕಂಬಗಳು ಹಾಗೂ ಅಪಾಯಕಾರಿಯಾದ ಕಟ್ಟಡಗಳ ಸಮೀಪ ನಿಲ್ಲದಂತೆ ಸೂಚಿಸಲಾಗಿದ್ದು, ಸ್ಥಳೀಯ ಆಡಳಿತದ ನಿರ್ದೇಶನಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಮನವಿ ಮಾಡಲಾಗಿದೆ.

ಕಂಕನಾಡಿಯಲ್ಲಿ ಮಳೆ ತಂದ ದುರಂತ: ಮನೆ ಮೇಲ್ಚಾವಣಿ ಕುಸಿದು ಮೂವರು ಬಲಿ

0

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಕಂಕನಾಡಿಯಲ್ಲಿ ನಿರಂತರ ಮಳೆ ಭೀಕರ ದುರಂತಕ್ಕೆ ಕಾರಣವಾಗಿದ್ದು, ಹಳೆಯ ಹಂಚಿನ ಮನೆಯ ಗೋಡೆ ಹಾಗೂ ಮೇಲ್ಚಾವಣಿ ಕುಸಿದು ಮಹಿಳೆ ಮತ್ತು ಇಬ್ಬರು ಬಾಲಕಿಯರು ಮೃತಪಟ್ಟಿದ್ದಾರೆ. ಅವಶೇಷಗಳಡಿ ಸಿಲುಕಿದ್ದ ಮೂವರನ್ನು ಅಗ್ನಿಶಾಮಕ ಸಿಬ್ಬಂದಿ ಹಾಗೂ ಸ್ಥಳೀಯರು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಮಂಗಳವಾರ ರಾತ್ರಿಯಿಂದ ಸುರಿದ ಭಾರಿ ಮಳೆಯಿಂದ ಕಟ್ಟಡದ ಗೋಡೆಗಳು ದುರ್ಬಲಗೊಂಡಿದ್ದರಿಂದ ಬುಧವಾರ ಮುಂಜಾನೆ ಮನೆ ಏಕಾಏಕಿ ಕುಸಿದು ಬಿದ್ದಿದೆ. ದುರಂತದ ವೇಳೆ ಮನೆಯೊಳಗೆ ಮಲಗಿದ್ದವರು ಅವಶೇಷಗಳಡಿ ಸಿಲುಕಿದ್ದು, ರಕ್ಷಣಾ ಕಾರ್ಯಾಚರಣೆಯ ವೇಳೆ ಮೂವರ ಮೃತದೇಹಗಳನ್ನು ಹೊರತೆಗೆಯಲಾಗಿದೆ.

ಕುಸಿದ ಕಟ್ಟಡದಲ್ಲಿ ನಾಲ್ಕು ಕುಟುಂಬಗಳು ವಾಸವಾಗಿದ್ದವು. ಬಿಹಾರ ಮೂಲದ ಲಾಲ್ ಬಾಬು ಕುಟುಂಬದ 8 ವರ್ಷದ ಅನಾಮಿಕ ಚೌರಾಸಿಯಾ ಹಾಗೂ 4 ವರ್ಷದ ಪರಿ ಮೃತಪಟ್ಟಿದ್ದು, ಲಾಲ್ ಬಾಬು ಮತ್ತು ಪತ್ನಿ ಇಂದು ಬದುಕುಳಿದಿದ್ದಾರೆ. ಮತ್ತೊಂದು ಕುಟುಂಬದ ಸದಸ್ಯೆ 46 ವರ್ಷದ ಶಾಂತಾ ಕೂಡ ಮೃತಪಟ್ಟಿದ್ದಾರೆ.

ಘಟನೆಯಲ್ಲಿ ಗಾಯಗೊಂಡವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಜಿಲ್ಲಾಡಳಿತ ಚಿಕಿತ್ಸೆ ವೆಚ್ಚವನ್ನು ಭರಿಸುವುದಾಗಿ ಘೋಷಿಸಿದೆ. ಮೃತರ ಕುಟುಂಬಗಳಿಗೆ ತಲಾ ₹5 ಲಕ್ಷ ಪರಿಹಾರ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ದರ್ಶನ್ ತಿಳಿಸಿದ್ದಾರೆ. ಮನೆ ಮಾಲೀಕರಿಗೆ ನಿಯಮಾನುಸಾರ ನೆರವು ನೀಡುವ ಪ್ರಕ್ರಿಯೆಯೂ ಆರಂಭವಾಗಲಿದೆ.

ದುರಂತದ ಸುದ್ದಿ ತಿಳಿಯುತ್ತಿದ್ದಂತೆಯೇ ಸಚಿವ ಯು.ಟಿ. ಖಾದರ್ ದೆಹಲಿ ಪ್ರವಾಸ ಸ್ಥಗಿತಗೊಳಿಸಿ ಅಧಿಕಾರಿಗಳೊಂದಿಗೆ ಸಂಪರ್ಕ ಸಾಧಿಸಿ ಪರಿಹಾರ ಮತ್ತು ರಕ್ಷಣಾ ಕಾರ್ಯಗಳನ್ನು ವೇಗಗೊಳಿಸುವಂತೆ ಸೂಚನೆ ನೀಡಿದ್ದಾರೆ.

ಕರಾವಳಿ ಜಿಲ್ಲೆಗಳಲ್ಲಿ ಭಾರಿ ಮಳೆ ಮುಂದುವರಿಯುವ ಸಾಧ್ಯತೆ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಿದೆ. ಕಂಕನಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನೆಗೆ ಸಂಬಂಧಿಸಿದಂತೆ ತನಿಖೆ ಮುಂದುವರಿದಿದೆ.

ಜಿಬಿಎ ಚುನಾವಣೆ ಟಿಕೆಟ್ ಆಕಾಂಕ್ಷಿ ಸೋಮಶೇಖರ್ ರೆಡ್ಡಿಗೆ ಚಾಕು ಇರಿತ!

ಬೆಂಗಳೂರು: ಜಿಬಿಎ ಚುನಾವಣೆ ಘೋಷಣೆಯಾಗಿರುವ ಸಂದರ್ಭದಲ್ಲೇ ಜಯನಗರದಲ್ಲಿ ಬಿಜೆಪಿ ಮುಖಂಡ ಸೋಮಶೇಖರ್ ರೆಡ್ಡಿ ಮೇಲೆ ದುಷ್ಕರ್ಮಿಗಳು ಚಾಕುವಿನಿಂದ ಹಲ್ಲೆ ನಡೆಸಿದ ಘಟನೆ ನಡೆದಿದೆ.

ಜೂನ್ 24ರ ಸಂಜೆ ಜಯನಗರ 9ನೇ ಬ್ಲಾಕ್‌ನಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕ ಬಳಿ ಈ ಘಟನೆ ನಡೆದಿದ್ದು, ಸೋಮಶೇಖರ್ ರೆಡ್ಡಿ ಕೆಲಸ ಸಂಬಂಧ ಸ್ಥಳಕ್ಕೆ ಬಂದಿದ್ದ ವೇಳೆ ಆಟೋದಲ್ಲಿ ಆಗಮಿಸಿದ ಐವರ ಗುಂಪು ಅವರೊಂದಿಗೆ ಗಲಾಟೆ ನಡೆಸಿದೆ. ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದ್ದು, ಆರೋಪಿಗಳು ಚಾಕುವಿನಿಂದ ಹೊಟ್ಟೆ, ಎದೆ ಹಾಗೂ ಬೆನ್ನಿಗೆ ಇರಿದಿದ್ದಾರೆ ಎಂದು ತಿಳಿದುಬಂದಿದೆ.

ಗಂಭೀರವಾಗಿ ಗಾಯಗೊಂಡ ಅವರನ್ನು ಸ್ಥಳೀಯರು ತಕ್ಷಣವೇ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಘಟನೆ ಸಂಬಂಧ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ರವಿ, ಬಾಲು, ಪುಲಿ, ವಿಷ್ಣು ಹಾಗೂ ಶಂಕರ್ ಎಂಬ ಐವರನ್ನು ಬಂಧಿಸಿದ್ದಾರೆ.

ಸೋಮಶೇಖರ್ ರೆಡ್ಡಿ ಬಿಜೆಪಿ ಪಕ್ಷದಲ್ಲಿ ಸಕ್ರಿಯರಾಗಿದ್ದು, ಮುಂಬರುವ ಜಿಬಿಎ ಚುನಾವಣೆಗೆ ಟಿಕೆಟ್ ಆಕಾಂಕ್ಷಿಯಾಗಿದ್ದರು ಎಂದು ತಿಳಿದುಬಂದಿದೆ. ಹೀಗಾಗಿ ಹಲ್ಲೆಯ ಹಿಂದೆ ರಾಜಕೀಯ ಕಾರಣಗಳ ಶಂಕೆಯೂ ವ್ಯಕ್ತವಾಗಿದೆ. ಪೊಲೀಸರು ಎಲ್ಲಾ ಆಯಾಮಗಳಲ್ಲಿ ತನಿಖೆ ಮುಂದುವರಿಸಿದ್ದಾರೆ.