Home Blog

ಬೀದರ್‌ನ ಇಬ್ಬರು ಯುವ ರೈತರು ಸಿಡಿಲು ಬಡಿದು ಸಾವು!

ಬೀದರ್: ಸಿಡಿಲು ಬಡಿದು ಇಬ್ಬರು ಯುವ ರೈತರು ದಾರುಣವಾಗಿ ಸಾವನ್ನಪ್ಪಿದ ಘಟನೆ ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ನಾವದಗಿ ಗ್ರಾಮದಲ್ಲಿ ನಡೆದಿದೆ.

ಮೃತರನ್ನು ನಾವದಗಿ ಗ್ರಾಮದ ರೇವಣಸಿದ್ದ (28) ಹಾಗೂ ಜೇವರ್ಗಿಯ ಯಲ್ಲಾಲಿಂಗ (28) ಎಂದು ಗುರುತಿಸಲಾಗಿದೆ. ಗುರುವಾರ ಸಂಜೆ ಜಮೀನಿನಲ್ಲಿ ಕೃಷಿ ಕೆಲಸ ಮಾಡುತ್ತಿದ್ದ ವೇಳೆ ಮಳೆ ಆರಂಭವಾದ ಹಿನ್ನೆಲೆ, ಇಬ್ಬರು ಮಾವಿನ ಮರದ ಕೆಳಗೆ ನಿಂತಿದ್ದರು.

ಈ ವೇಳೆ ಆ ಮರಕ್ಕೆ ಸಿಡಿಲು ಅಪ್ಪಳಿಸಿದ್ದು, ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆಯ ಮಾಹಿತಿ ತಿಳಿದು ಖಟಕ್ ಚಿಂಚೋಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈ ಕುರಿತು ಖಟಕ್ ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಬೆಂಗಳೂರಿನ ಗಾಳಿ ಸ್ವಲ್ಪ ಸುಧಾರಣೆ: ಇನ್ನೂ ಅಪಾಯದ ಮಟ್ಟದಲ್ಲೇ ಏರ್ ಕ್ವಾಲಿಟಿ!

ಬೆಂಗಳೂರು: ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ವಾಯು ಗುಣಮಟ್ಟದಲ್ಲಿ ಸುಧಾರಣೆ ಕಂಡುಬಂದಿದ್ದು, ಬೆಂಗಳೂರಿನ ಗಾಳಿಯ ಮಟ್ಟವೂ ಸ್ವಲ್ಪ ಮಟ್ಟಿಗೆ ಉತ್ತಮವಾಗಿದೆ.

ದೇಶದ ಇತರ ಮೆಟ್ರೋ ನಗರಗಳಿಗೆ ಹೋಲಿಸಿದರೆ ಬೆಂಗಳೂರಿನ ವಾಯು ಗುಣಮಟ್ಟ ಉತ್ತಮವಾಗಿದ್ದರೂ, ಇನ್ನೂ ಆರೋಗ್ಯಕ್ಕೆ ಹಾನಿಕರ ಮಟ್ಟದಲ್ಲೇ ಇದೆ ಎಂದು ತಜ್ಞರು ತಿಳಿಸಿದ್ದಾರೆ.

ಇತ್ತೀಚಿನ ವರದಿಗಳ ಪ್ರಕಾರ, ಕೆಲ ದಿನಗಳ ಹಿಂದೆ ತೀವ್ರ ಕಳಪೆ ಮಟ್ಟಕ್ಕಿಳಿದಿದ್ದ ಬೆಂಗಳೂರಿನ ಏರ್ ಕ್ವಾಲಿಟಿ ಇಂಡೆಕ್ಸ್ (AQI) ಈಗ 146ಕ್ಕೆ ಏರಿಕೆಯಾಗಿದೆ. ಇದು ಹಿಂದಿನ ಮಟ್ಟಗಳಿಗೆ ಹೋಲಿಸಿದರೆ ಸುಧಾರಣೆಯಾಗಿದ್ದರೂ, WHO ಮಾನದಂಡದ ಪ್ರಕಾರ ಇನ್ನೂ ಅಪಾಯದ ಮಟ್ಟದಲ್ಲಿಯೇ ಉಳಿದಿದೆ.

ರಾಜ್ಯದ ಇತರ ನಗರಗಳಲ್ಲಿಯೂ ಗಾಳಿಯ ಗುಣಮಟ್ಟದಲ್ಲಿ ಏರುಪೇರು ಕಂಡುಬಂದಿದೆ. ಮಂಗಳೂರು ನಗರದಲ್ಲಿ AQI 115, ಮೈಸೂರಿನಲ್ಲಿ 126, ಬಳ್ಳಾರಿಯಲ್ಲಿ 141 ಮತ್ತು ಶಿವಮೊಗ್ಗದಲ್ಲಿ 125 ದಾಖಲಾಗಿದೆ. ಬೆಳಗಾವಿಯಲ್ಲಿ 53 ಮತ್ತು ಹುಬ್ಬಳ್ಳಿಯಲ್ಲಿ 67 AQI ದಾಖಲಾಗಿದ್ದು, ಈ ನಗರಗಳಲ್ಲಿ ಗಾಳಿ ಗುಣಮಟ್ಟ ಸ್ವಲ್ಪ ಮಟ್ಟಿಗೆ ಉತ್ತಮವಾಗಿದೆ. ಕಲಬುರ್ಗಿ (109), ವಿಜಯಪುರ (109) ಮತ್ತು ಉಡುಪಿ (124) ನಗರಗಳಲ್ಲಿಯೂ ಮಧ್ಯಮದಿಂದ ಕಳಪೆ ಮಟ್ಟದ ಗಾಳಿ ಗುಣಮಟ್ಟ ದಾಖಲಾಗಿದೆ.

ತಜ್ಞರ ಪ್ರಕಾರ, AQI 0ರಿಂದ 50ರವರೆಗೆ ಉತ್ತಮ, 50ರಿಂದ 100 ಮಧ್ಯಮ, 100ರಿಂದ 150 ಕಳಪೆ, 150ರಿಂದ 200 ಅನಾರೋಗ್ಯಕರ, 200ರಿಂದ 300 ಗಂಭೀರ ಮತ್ತು 300ಕ್ಕೂ ಮೇಲ್ಪಟ್ಟರೆ ಅಪಾಯಕಾರಿ ಮಟ್ಟವೆಂದು ಪರಿಗಣಿಸಲಾಗುತ್ತದೆ.

ಗಾಳಿಯ ಗುಣಮಟ್ಟದಲ್ಲಿ ಸುಧಾರಣೆ ಕಂಡುಬಂದಿದ್ದರೂ, ಸಂವೇದನಾಶೀಲ ವ್ಯಕ್ತಿಗಳು, ವೃದ್ಧರು ಮತ್ತು ಮಕ್ಕಳ ಆರೋಗ್ಯದ ದೃಷ್ಟಿಯಿಂದ ಎಚ್ಚರಿಕೆ ವಹಿಸುವಂತೆ ವೈದ್ಯರು ಸಲಹೆ ನೀಡಿದ್ದಾರೆ.

ತಮಿಳುನಾಡು ಚುನಾವಣೆ 2026: ಇತಿಹಾಸದಲ್ಲೇ ದಾಖಲೆ ಮತದಾನ!

0

ಚೆನ್ನೈ: ತಮಿಳುನಾಡಿನಲ್ಲಿ ನಡೆದ ಮೊದಲ ಹಂತದ ಚುನಾವಣೆಯಲ್ಲಿ ಶೇ.84.69ರಷ್ಟು ಮತದಾನ ದಾಖಲಾಗಿದ್ದು, ಸ್ವಾತಂತ್ರ್ಯ ನಂತರದ ಪ್ರಜಾಪ್ರಭುತ್ವ ಇತಿಹಾಸದಲ್ಲಿ ಹೊಸ ದಾಖಲೆ ನಿರ್ಮಾಣವಾಗಿದೆ.

1967ರಿಂದ ದ್ರಾವಿಡ ರಾಜಕೀಯ ಪ್ರಭಾವ ಹೆಚ್ಚಾದ ಬಳಿಕವೂ ರಾಜ್ಯದಲ್ಲಿ ಮತದಾನದ ಪ್ರಮಾಣ ಶೇಕಡಾ 80 ದಾಟಿರಲಿಲ್ಲ. ಆದರೆ ಈ ಬಾರಿ ಎಲ್ಲಾ ಹಿಂದಿನ ದಾಖಲೆಗಳನ್ನು ಮೀರಿಸಿ ಮತದಾನದಲ್ಲಿ ಭಾರೀ ಏರಿಕೆ ಕಂಡುಬಂದಿದೆ.

ಜಿಲ್ಲಾ ಹಾಗೂ ಲಿಂಗವಾರು ಅಂಕಿಅಂಶಗಳ ಪ್ರಕಾರ, ಪುರುಷರು ಶೇ.83.57, ಮಹಿಳೆಯರು ಶೇ.85.76 ಮತ್ತು ತೃತೀಯ ಲಿಂಗಿಗಳು ಶೇ.60.49ರಷ್ಟು ಮತದಾನ ಮಾಡಿದ್ದಾರೆ.

ಈ ಬಾರಿ ಮಹಿಳಾ ಮತದಾರರ ಹೆಚ್ಚಿನ ಭಾಗವಹಿಸುವಿಕೆ, ಎಸ್‌ಐಆರ್ ಪ್ರಕ್ರಿಯೆಯ ಪರಿಣಾಮ, ಹಾಗೂ ಹೊಸ ರಾಜಕೀಯ ಚಲನಶೀಲತೆ ಮತದಾನ ಹೆಚ್ಚಳಕ್ಕೆ ಕಾರಣವಾಗಿರಬಹುದು ಎಂದು ವಿಶ್ಲೇಷಿಸಲಾಗಿದೆ.

ಎಸ್‌ಐಆರ್ ಬಳಿಕ ಮತದಾರರ ಸಂಖ್ಯೆ 6.41 ಕೋಟಿಯಿಂದ 5.73 ಕೋಟಿಗೆ ಇಳಿಕೆಯಾಗಿದ್ದು, ಸುಮಾರು 58 ಲಕ್ಷ ಮತದಾರರು ಡಿಲೀಟ್ ಆಗಿದ್ದಾರೆ ಎಂಬ ಮಾಹಿತಿ ಇದೆ.

ಇದರೊಂದಿಗೆ ಮಹಿಳಾ ಮತದಾರರು ಪುರುಷರಿಗಿಂತ 10 ಲಕ್ಷ ಹೆಚ್ಚಾಗಿ ನೋಂದಾಯಿತರಾಗಿದ್ದಾರೆ. ಜೊತೆಗೆ ಯುವ ಮತದಾರರ ಭಾಗವಹಿಸುವಿಕೆ, ಹೊಸ ರಾಜಕೀಯ ಪಕ್ಷಗಳ ಉದಯ ಹಾಗೂ ಆಡಳಿತ ವಿರೋಧಿ ಅಲೆಯೂ ಮತದಾನ ಏರಿಕೆಗೆ ಕಾರಣವಾಗಿರಬಹುದು ಎಂದು ವಿಶ್ಲೇಷಕರು ಹೇಳಿದ್ದಾರೆ.

ಕಾಂಗ್ರೆಸ್‌ನಲ್ಲಿ ಅಲ್ಪಸಂಖ್ಯಾತ ನಾಯಕರ ಅಸಮಾಧಾನ: ತಪ್ಪಾಗಿದ್ದರೆ ಸರಿಪಡಿಸಿಕೊಳ್ಳೋಣ ಎಂದ ಪರಮೇಶ್ವರ್‌

ಬೆಂಗಳೂರು: ಕಾಂಗ್ರೆಸ್ ಪಕ್ಷದೊಳಗೆ ಅಲ್ಪಸಂಖ್ಯಾತ ನಾಯಕರ ಅಸಮಾಧಾನ ಕುರಿತು ಬಂದಿರುವ ವರದಿಗಳ ಹಿನ್ನೆಲೆಯಲ್ಲಿ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ.

 

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಸ್ಲಿಂ ನಾಯಕರ ವಿರುದ್ಧದ ಕ್ರಮಗಳಲ್ಲಿ ಅಥವಾ ನಡೆಗಳಲ್ಲಿ ಯಾವುದೇ ತಪ್ಪುಗಳಿದ್ದರೆ ಅವುಗಳನ್ನು ಚರ್ಚೆಯ ಮೂಲಕ ಸರಿಪಡಿಸಿಕೊಳ್ಳಲು ಸರ್ಕಾರ ಹಾಗೂ ಪಕ್ಷ ಸಿದ್ಧವಿದೆ ಎಂದು ಹೇಳಿದರು.

ವ್ಯವಸ್ಥೆಯಲ್ಲಿ ಕೆಲವೊಮ್ಮೆ ಸಣ್ಣಪುಟ್ಟ ಲೋಪಗಳು ಸಂಭವಿಸುವುದು ಸಹಜ. ಅಂತಹ ವಿಷಯಗಳನ್ನು ಕುಳಿತು ಮಾತನಾಡಿ ಪರಿಹರಿಸಿಕೊಳ್ಳಲಾಗುತ್ತದೆ ಎಂದು ಅವರು ತಿಳಿಸಿದರು.

ದೇಶದ ಬಡವರು, ದಲಿತರು, ಹಿಂದುಳಿದವರು ಹಾಗೂ ಅಲ್ಪಸಂಖ್ಯಾತರನ್ನು ಮುಖ್ಯವಾಹಿನಿಗೆ ತರುವುದೇ ಕಾಂಗ್ರೆಸ್ ಪಕ್ಷದ ಮೂಲ ಉದ್ದೇಶವಾಗಿದ್ದು, ಅದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಪಕ್ಷದೊಳಗಿನ ಅಸಮಾಧಾನವನ್ನು ಕೆಲವರು ಬಳಸಿಕೊಂಡು ಪರಿಸ್ಥಿತಿಯನ್ನು ಕೆಡಿಸಲು ಪ್ರಯತ್ನಿಸುತ್ತಿದ್ದಾರೆ ಎಂಬ ಆರೋಪವನ್ನು ಉಲ್ಲೇಖಿಸಿದ ಅವರು, ಇಂತಹ ವಿಷಯಗಳಲ್ಲಿ ಎಚ್ಚರಿಕೆ ಅಗತ್ಯವಿದೆ ಎಂದು ಹೇಳಿದರು.

ಅಸಮಾಧಾನಗೊಂಡ ಅಲ್ಪಸಂಖ್ಯಾತ ನಾಯಕರೊಂದಿಗೆ ಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷರು ನೇರವಾಗಿ ಮಾತುಕತೆ ನಡೆಸಲಿದ್ದಾರೆ ಎಂದು ತಿಳಿಸಿದ ಪರಮೇಶ್ವರ್, ಎಲ್ಲರನ್ನೂ ಮನವೊಲಿಸುವ ಪ್ರಯತ್ನ ನಡೆಯಲಿದೆ, ಯಾವುದೇ ಆತಂಕ ಬೇಡ ಎಂದು ಭರವಸೆ ನೀಡಿದರು.

ಲಂಗ್ಸ್ ಆರೋಗ್ಯ ಕಾಪಾಡುವುದು ಹೇಗೆ? ಡಿಟಾಕ್ಸ್ ಡ್ರಿಂಕ್ಸ್ ನಂಬಬೇಡಿ! ಇಲ್ಲಿದೆ ಸ್ಪಷ್ಟ ಮಾಹಿತಿ

0

ಇಂದಿನ ಕಾಲದಲ್ಲಿ ಹೆಚ್ಚುತ್ತಿರುವ ವಾಯುಮಾಲಿನ್ಯ ಹಾಗೂ ಧೂಮಪಾನದಿಂದ ಶ್ವಾಸಕೋಶ (ಲಂಗ್ಸ್) ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ.

ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ “ಲಂಗ್ಸ್ ಡಿಟಾಕ್ಸ್” ಎಂಬ ಹೆಸರಿನಲ್ಲಿ ಹಲವು ಪಾನೀಯಗಳು ಮತ್ತು ಉತ್ಪನ್ನಗಳು ಹರಡುತ್ತಿರುವುದು ಗಮನಕ್ಕೆ ಬಂದಿದೆ.

ಆದರೆ ಆರೋಗ್ಯ ತಜ್ಞರ ಪ್ರಕಾರ, ಯಾವುದೇ ವಿಶೇಷ ಡಿಟಾಕ್ಸ್ ಡ್ರಿಂಕ್ ಅಥವಾ ಉತ್ಪನ್ನಗಳಿಂದ ಶ್ವಾಸಕೋಶಗಳನ್ನು ಸ್ವಚ್ಛಗೊಳಿಸಲು ಸಾಧ್ಯವಿಲ್ಲ. ಲಂಗ್ಸ್ ಸ್ವಾಭಾವಿಕವಾಗಿಯೇ ತಮ್ಮನ್ನು ತಾವು ಶುದ್ಧಗೊಳಿಸಿಕೊಳ್ಳುವ ಸಾಮರ್ಥ್ಯ ಹೊಂದಿವೆ ಎಂದು ವೈದ್ಯರು ತಿಳಿಸಿದ್ದಾರೆ.

ತಜ್ಞರ ಸಲಹೆಯಂತೆ, ಲಂಗ್ಸ್ ಆರೋಗ್ಯ ಕಾಪಾಡಿಕೊಳ್ಳಲು ಮೊದಲಿಗೆ ಧೂಮಪಾನವನ್ನು ಸಂಪೂರ್ಣವಾಗಿ ನಿಲ್ಲಿಸುವುದು ಅತ್ಯಂತ ಮುಖ್ಯ. ಧೂಮಪಾನದಿಂದ ಉರಿಯೂತ ಉಂಟಾಗಿ ದೀರ್ಘಕಾಲದಲ್ಲಿ ಗಂಭೀರ ಶ್ವಾಸಕೋಶ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.

ಇದೇ ವೇಳೆ ವಾಯುಮಾಲಿನ್ಯವೂ ಪ್ರಮುಖ ಅಪಾಯವಾಗಿದ್ದು, ಧೂಳು ಮತ್ತು ಸೂಕ್ಷ್ಮ ಕಣಗಳು ಉಸಿರಾಟದ ಮೂಲಕ ಶ್ವಾಸಕೋಶಕ್ಕೆ ಹಾನಿ ಮಾಡುತ್ತವೆ. ಇಂತಹ ಸಂದರ್ಭಗಳಲ್ಲಿ N-95 ಮಾಸ್ಕ್ ಬಳಕೆ, ಧೂಳು ಪ್ರದೇಶಗಳನ್ನು ತಪ್ಪಿಸುವುದು ಹಾಗೂ AQI ಹೆಚ್ಚಿರುವ ದಿನಗಳಲ್ಲಿ ಹೊರ ವ್ಯಾಯಾಮವನ್ನು ತಪ್ಪಿಸುವುದು ಉತ್ತಮ ಎಂದು ತಜ್ಞರು ಸಲಹೆ ನೀಡಿದ್ದಾರೆ.

ಪ್ರತಿದಿನ ಕನಿಷ್ಠ 30 ನಿಮಿಷ ವಾಕಿಂಗ್, ಜಾಗಿಂಗ್ ಅಥವಾ ಯೋಗ ಮಾಡುವುದರಿಂದ ಶ್ವಾಸಕೋಶ ಆರೋಗ್ಯ ಉತ್ತಮವಾಗಿರುತ್ತದೆ. ಜೊತೆಗೆ ಹಣ್ಣುಗಳು ಮತ್ತು ಹಸಿರು ತರಕಾರಿಗಳನ್ನು ಆಹಾರದಲ್ಲಿ ಸೇರಿಸಿಕೊಳ್ಳುವುದು ಸಹ ಸಹಾಯಕವಾಗಿದೆ ಎಂದು ತಜ್ಞರು ತಿಳಿಸಿದ್ದಾರೆ.

IPL 2026: ಬೆಂಗಳೂರಿನಲ್ಲಿ ನಾಳೆ RCB ಮ್ಯಾಚ್; ವಾಹನ ಪಾರ್ಕಿಂಗ್, ಸಂಚಾರ ಬದಲಾವಣೆ!

0

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಏಪ್ರಿಲ್ 24ರಂದು ನಡೆಯಲಿರುವ RCB ಮತ್ತು GT ನಡುವಿನ ಐಪಿಎಲ್ ಪಂದ್ಯ ಹಿನ್ನೆಲೆಯಲ್ಲಿ ಬೆಂಗಳೂರು ಸಂಚಾರ ಪೊಲೀಸರು ವಿಶೇಷ ಸಂಚಾರ ನಿರ್ವಹಣಾ ವ್ಯವಸ್ಥೆ ಜಾರಿಗೆ ತಂದಿದ್ದಾರೆ.

ಪಂದ್ಯ ವೀಕ್ಷಣೆಗೆ ಭಾರೀ ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸುವ ನಿರೀಕ್ಷೆಯಿರುವುದರಿಂದ ಸ್ಟೇಡಿಯಂ ಸುತ್ತಮುತ್ತ ಹಲವಾರು ರಸ್ತೆಗಳಲ್ಲಿ ವಾಹನ ನಿಲುಗಡೆ ಸಂಪೂರ್ಣ ನಿಷೇಧಿಸಲಾಗಿದೆ. ಕ್ವೀನ್ಸ್ ರಸ್ತೆ, ಎಂ.ಜಿ. ರಸ್ತೆ, ಲಿಂಕ್ ರಸ್ತೆ, ರಾಜಭವನ್ ರಸ್ತೆ, ಟಿ. ಚೌಡಯ್ಯ ರಸ್ತೆ, ರೇಸ್ ಕೋರ್ಸ್ ರಸ್ತೆ ಹಾಗೂ ಸೆಂಟ್ರಲ್ ಸ್ಟ್ರೀಟ್ ಸೇರಿದಂತೆ ಪ್ರಮುಖ ಮಾರ್ಗಗಳಲ್ಲಿ ಪಾರ್ಕಿಂಗ್‌ಗೆ ನಿರ್ಬಂಧ ವಿಧಿಸಲಾಗಿದೆ.

ಕಬ್ಬನ್ ರಸ್ತೆಯ ಸಿಟಿಒ ವೃತ್ತದಿಂದ ಡಿಕ್ಕೆನ್ಸನ್ ರಸ್ತೆ ಜಂಕ್ಷನ್‌ವರೆಗೆ ಹಾಗೂ ಕಾಮರಾಜ್ ರಸ್ತೆ ಭಾಗದಲ್ಲಿಯೂ ಬಿಎಂಟಿಸಿ ಬಸ್‌ಗಳನ್ನು ಹೊರತುಪಡಿಸಿ ಇತರ ವಾಹನಗಳ ನಿಲುಗಡೆಯನ್ನು ನಿಷೇಧಿಸಲಾಗಿದೆ.

ಇದೇ ವೇಳೆ ಸಾರ್ವಜನಿಕರ ಅನುಕೂಲಕ್ಕಾಗಿ ಸಿದ್ಧಲಿಂಗಯ್ಯ ವೃತ್ತದ ಸೇಂಟ್ ಜೋಸೆಫ್ ಶಾಲಾ ಮೈದಾನ, ಮ್ಯೂಸಿಯಂ ರಸ್ತೆ ಸೇಂಟ್ ಜೋಸೆಫ್ ಸ್ಕೂಲ್ ಮೈದಾನ, ಫ್ರೀಡಂ ಪಾರ್ಕ್ MLCP, ಗರುಡ ಮಾಲ್, ಯು.ಬಿ. ಸಿಟಿ ಹಾಗೂ ಕಂಠೀರವ ಕ್ರೀಡಾಂಗಣ ಆವರಣದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.

ಸ್ಟೇಡಿಯಂ ಪ್ರವೇಶಕ್ಕೆ ಕಬ್ಬನ್ ರಸ್ತೆ, ಲಿಂಕ್ ರಸ್ತೆ ಮತ್ತು ಕ್ವೀನ್ಸ್ ರಸ್ತೆಗಳ ಮೂಲಕ ವಿವಿಧ ಗೇಟ್‌ಗಳನ್ನು ನಿಗದಿಪಡಿಸಲಾಗಿದೆ. VIP ಹಾಗೂ ಆಟಗಾರರಿಗೆ ಮಾತ್ರ ಪ್ರತ್ಯೇಕ ಗೇಟ್ ಮೀಸಲಾಗಿದೆ.

ಟ್ರಾಫಿಕ್ ದಟ್ಟಣೆ ತಪ್ಪಿಸಲು ಸಾರ್ವಜನಿಕರು ಮೆಟ್ರೋ ಮತ್ತು ಬಿಎಂಟಿಸಿ ಬಸ್‌ಗಳನ್ನು ಬಳಸುವಂತೆ ಸಂಚಾರ ಪೊಲೀಸರು ಮನವಿ ಮಾಡಿದ್ದಾರೆ.

ಚಿಕ್ಕಬಳ್ಳಾಪುರ ಬಾಲಕಿ ದುಬೈ ದಂಪತಿ ಮಡಿಲಿಗೆ – ಹೊಸ ಜೀವನ ಆರಂಭ!

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರದಲ್ಲಿ ಐದು ವರ್ಷಗಳ ಹಿಂದೆ ಭಿಕ್ಷೆ ಬೇಡುತ್ತಿದ್ದ ಮಹಿಳೆ, ಆರ್ಥಿಕ ಸಂಕಷ್ಟದಿಂದ ತನ್ನ ಮಗುವನ್ನು ಮಾರಾಟ ಮಾಡಲು ಮುಂದಾಗಿದ್ದ ಘಟನೆ ಇದೀಗ ಹೊಸ ತಿರುವು ಪಡೆದುಕೊಂಡಿದೆ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳ ಮಧ್ಯಸ್ಥಿಕೆಯಿಂದ ಮಗುವನ್ನು ರಕ್ಷಿಸಿ ವಶಕ್ಕೆ ಪಡೆದುಕೊಳ್ಳಲಾಗಿತ್ತು. ವೈದ್ಯಕೀಯ ಪರೀಕ್ಷೆಯಲ್ಲಿ ಬಾಲಕಿಗೆ ಹೃದಯ ಸಂಬಂಧಿತ ಸಮಸ್ಯೆ ಇರುವುದೂ ಬೆಳಕಿಗೆ ಬಂದಿತ್ತು. ಬಳಿಕ ಐದು ವರ್ಷಗಳ ಕಾಲ ಇಲಾಖೆಯ ಆರೈಕೆಯಲ್ಲಿ ಬೆಳೆದ ಈ ಬಾಲಕಿಗೆ ಇದೀಗ ಹೊಸ ಕುಟುಂಬ ದೊರೆತಿದೆ.

ಭಾರತೀಯ ಮೂಲದ, ದುಬೈನಲ್ಲಿ ನೆಲೆಸಿರುವ ದಂಪತಿ ಈ ಏಳು ವರ್ಷದ ಬಾಲಕಿಯನ್ನು ದತ್ತು ಪಡೆದುಕೊಂಡಿದ್ದಾರೆ. ಮಗುವಿಗೆ ಹೃದಯ ಸಮಸ್ಯೆ ಇದ್ದರೂ ಚಿಕಿತ್ಸೆ ನೀಡಿ ಸಾಕಿಕೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಇಂದು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬಾಲಕಿ ದಂಪತಿಯೊಂದಿಗೆ ದುಬೈಗೆ ಪ್ರಯಾಣ ಬೆಳೆಸಿದ್ದಾಳೆ.

ಚಿಕ್ಕಬಳ್ಳಾಪುರ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ನವತಾಜ್ ಮಾತನಾಡಿ, ಭಾರತದಲ್ಲಿ ಯಾರೂ ದತ್ತು ಪಡೆಯಲು ಮುಂದೆ ಬರದಿದ್ದರೂ ದುಬೈ ದಂಪತಿ ಮುಂದೆ ಬಂದು ಮಾನವೀಯತೆ ತೋರಿದ್ದಾರೆ ಎಂದು ತಿಳಿಸಿದ್ದಾರೆ. ಮಗುವಿಗೆ ಮುಂದಿನ ದಿನಗಳಲ್ಲಿ ಅಗತ್ಯ ಚಿಕಿತ್ಸೆ ನೀಡಲಾಗುವುದು ಎಂದು ಅವರು ಹೇಳಿದರು.

ಈ ಘಟನೆ ಬಾಲಕಿಯ ಜೀವನಕ್ಕೆ ಹೊಸ ಆಶಾಕಿರಣ ನೀಡಿದಂತಾಗಿದೆ.

ಪಶ್ಚಿಮ ಬಂಗಾಳ ಚುನಾವಣೆ ವೇಳೆ ಮತಗಟ್ಟೆಗೆ ಆಗಮಿಸಿದ ಆನೆ!

0

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ಮೊದಲ ಹಂತದ ವಿಧಾನಸಭಾ ಚುನಾವಣೆಯ ವೇಳೆ ಅಚ್ಚರಿಯ ಘಟನೆ ನಡೆದಿದೆ.

ಝಾರ್ಗ್ರಾಮ್ ಜಿಲ್ಲೆಯ ಮತಗಟ್ಟೆಯೊಂದಕ್ಕೆ ಕಾಡಾನೆಯೊಂದು ಆಗಮಿಸಿದ್ದು ಮತದಾರರು ಹಾಗೂ ಅಧಿಕಾರಿಗಳು ಕೆಲಕಾಲ ಆತಂಕಗೊಂಡಿದ್ದಾರೆ.

ಝಾರ್ಗ್ರಾಮ್ ಜಿಲ್ಲೆಯ ಜಿತುಸೋಲ್ ಪ್ರಾಥಮಿಕ ಶಾಲೆಯಲ್ಲಿ ಸ್ಥಾಪಿಸಲಾಗಿದ್ದ ಮತಗಟ್ಟೆ ಬಳಿ ‘ರಾಮಲಾಲ್’ ಎಂಬ ಹೆಸರಿನ ಕಾಡಾನೆ ಮತದಾನ ಆರಂಭಕ್ಕೂ ಮುನ್ನವೇ ಕಾಣಿಸಿಕೊಂಡಿತ್ತು. ಮತಗಟ್ಟೆ ಸಾಲಿನ ಬಳಿ ಆನೆ ಸುಳಿದಾಡಿದ ಘಟನೆ ಸ್ಥಳದಲ್ಲಿ ಕ್ಷಣಕಾಲ ಗೊಂದಲಕ್ಕೆ ಕಾರಣವಾಯಿತು.

ಆನೆ ಸಮೀಪದಲ್ಲಿದ್ದ ಸರಕು ಸಾಗಣೆ ವಾಹನವನ್ನು ಕುತೂಹಲದಿಂದ ಗಮನಿಸಿದರೂ ಯಾರಿಗೂ ಹಾನಿ ಮಾಡದೆ ಶಾಂತವಾಗಿ ಅಲ್ಲಿಂದ ತೆರಳಿದೆ ಎಂದು ತಿಳಿದುಬಂದಿದೆ.

ಘಟನೆಗೆ ಸಂಬಂಧಿಸಿದಂತೆ ಲೋಧಾಶುಲಿ ವಲಯದ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಆನೆಯನ್ನು ಸುರಕ್ಷಿತವಾಗಿ ಅರಣ್ಯದ ಕಡೆಗೆ ಕಳುಹಿಸಿದ್ದಾರೆ. ನಂತರ ಮತದಾನ ಪ್ರಕ್ರಿಯೆ ಯಾವುದೇ ಅಡಚಣೆಯಿಲ್ಲದೆ ಮುಂದುವರಿದಿದೆ.

ಜಂಗಲ್‌ಮಹಲ್ ಪ್ರದೇಶದಲ್ಲಿ ಮಾನವ–ಪ್ರಾಣಿ ಸಂಘರ್ಷ ಸಾಮಾನ್ಯವಾಗಿರುವ ಹಿನ್ನೆಲೆಯಲ್ಲಿ, ಚುನಾವಣಾ ಆಯೋಗವು ವಿಶೇಷ 15 ಸದಸ್ಯರ ತಂಡ ಹಾಗೂ ‘ಐರಾವತ’ ವಾಹನವನ್ನು ನಿಯೋಜಿಸಿದೆ.

ಬೆಂಗಳೂರಿನ ರಾಂಪುರದಲ್ಲಿ ಭೀಕರ ಅಗ್ನಿ ದುರಂತ: 10 ಕಿಮೀ ವ್ಯಾಪ್ತಿಗೆ ದಟ್ಟ ಹೊಗೆ!

ಬೆಂಗಳೂರು: ನಗರದ ದೊಡ್ಡಗುಬ್ಬಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಂಪುರ ಬಳಿ ಭಾರೀ ಅಗ್ನಿ ದುರಂತ ಸಂಭವಿಸಿದೆ.

ಅನುಪಯುಕ್ತ ವಸ್ತುಗಳ (ಗುಜರಿ) ಗೋದಾಮಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕ್ಷಣಾರ್ಧದಲ್ಲೇ ಭಾರಿ ಪ್ರಮಾಣದಲ್ಲಿ ವ್ಯಾಪಿಸಿದೆ.

ಬೆಂಕಿಯ ತೀವ್ರತೆಯಿಂದ ಸುಮಾರು 10 ಕಿಲೋಮೀಟರ್ ವ್ಯಾಪ್ತಿವರೆಗೆ ದಟ್ಟ ಹೊಗೆ ಆವರಿಸಿರುವುದು ಕಂಡುಬಂದಿದ್ದು, ಸುತ್ತಮುತ್ತಲಿನ ಪ್ರದೇಶಗಳಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

ಘಟನೆ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಅಗ್ನಿಶಾಮಕ ದಳದ ವಾಹನಗಳು ದೌಡಾಯಿಸಿದ್ದು, ಬೆಂಕಿ ನಂದಿಸಲು ಸಿಬ್ಬಂದಿ ತೀವ್ರ ಪ್ರಯತ್ನ ನಡೆಸುತ್ತಿದ್ದಾರೆ. ಬೆಂಕಿಯ ವ್ಯಾಪ್ತಿ ದೊಡ್ಡದಾಗಿರುವುದರಿಂದ ಕಾರ್ಯಾಚರಣೆ ಮುಂದುವರಿದಿದೆ ಎಂದು ತಿಳಿದುಬಂದಿದೆ.

ಬಳಂಜ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ದಾಂಧಲೆ: ದೈವದ ಪರಿಕರಗಳನ್ನ ಚೆಲ್ಲಾಪಿಲ್ಲಿ ಮಾಡಿದ ಪದವೀಧರ!

ಮಂಗಳೂರು: ಬೆಳ್ತಂಗಡಿ ತಾಲೂಕಿನ ಐತಿಹಾಸಿಕ ಬಳಂಜ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ತಡರಾತ್ರಿ ಅಮಾನವೀಯ ಘಟನೆ ನಡೆದಿದೆ.

ವ್ಯಕ್ತಿಯೋರ್ವ ದೇಗುಲಕ್ಕೆ ನುಗ್ಗಿ ದಾಂಧಲೆ ನಡೆಸಿ ದೇವರ ಮೂರ್ತಿಯನ್ನು ಭಗ್ನಗೊಳಿಸಿರುವ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

ಸ್ಥಳೀಯ ನಿವಾಸಿ ಅಜೇಯ್ ಎಂಬಾತ ಈ ಕೃತ್ಯ ಎಸಗಿರುವುದು ಬೆಳಕಿಗೆ ಬಂದಿದೆ. ಮೊದಲು ದೇವಸ್ಥಾನದ ಕೆರೆಗೆ ಹಾರಿದ ಆತ, ನಂತರ ಹೆಂಚು ತೆಗೆದು ಒಳನುಗ್ಗಿದ್ದಾನೆ. ದೇಗುಲದ ಒಳಗಿದ್ದ ಪೂಜಾ ಪರಿಕರಗಳು ಹಾಗೂ ದೈವದ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದಾನೆ. ಬಳಿಕ ದೇವರ ಮೂರ್ತಿಯನ್ನು ಹಾನಿಗೊಳಿಸಿದ್ದಾನೆ ಎಂದು ತಿಳಿದುಬಂದಿದೆ.

ಅಜೇಯ್ ಇಂಜಿನಿಯರಿಂಗ್ ಪದವೀಧರನಾಗಿದ್ದು, ಮಾನಸಿಕ ಅಸ್ವಸ್ಥತೆಯ ಶಂಕೆ ವ್ಯಕ್ತವಾಗಿದೆ. ಘಟನೆ ಸಂಬಂಧ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

error: Content is protected !!