ನವದೆಹಲಿ: ಭಾರತ ಹಿಂದೂ ರಾಷ್ಟ್ರವಾದರೂ ಮುಸ್ಲಿಮರು ಹಾಗೂ ಕ್ರೈಸ್ತರು ಯಾವುದೇ ರೀತಿಯ ಭಯಪಡುವ ಅಗತ್ಯವಿಲ್ಲ ಎಂದು ಯೋಗಗುರು ಬಾಬಾ ರಾಮ್ದೇವ್ ಹೇಳಿದ್ದಾರೆ. ಅವರ ಈ ಹೇಳಿಕೆ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದ್ದು, ಕಾಂಗ್ರೆಸ್ ಹಾಗೂ ಎಐಎಂಐಎಂ ನಾಯಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಬಾಬಾ ರಾಮ್ದೇವ್, “ಹಿಂದೂ ರಾಷ್ಟ್ರದ ಪರಿಕಲ್ಪನೆಯನ್ನು ಕಂಡು ಯಾರೂ ಆತಂಕಪಡುವ ಅಗತ್ಯವಿಲ್ಲ. ಒಂದು ವೇಳೆ ಭಾರತ ಹಿಂದೂ ರಾಷ್ಟ್ರವಾದರೂ ಇಲ್ಲಿನ ಮುಸ್ಲಿಮರು ಮತ್ತು ಕ್ರೈಸ್ತರಿಗೆ ಯಾವುದೇ ಅಪಾಯವಿರುವುದಿಲ್ಲ” ಎಂದು ಹೇಳಿದರು.
“ಧರ್ಮಗಳು ಬೇರೆಬೇರೆಯಾಗಿರಬಹುದು. ಆದರೆ ನಮ್ಮ ಪೂರ್ವಜರು ಒಂದೇ. ನಮ್ಮೆಲ್ಲರ ಡಿಎನ್ಎ ಒಂದೇ ಆಗಿದೆ. ನಿಮ್ಮ ಪೂರ್ವಜರ ಸಂಪ್ರದಾಯಗಳನ್ನು ಅನುಸರಿಸಿ. ಗಡ್ಡ ಇಟ್ಟುಕೊಳ್ಳುವುದೋ ಅಥವಾ ಕ್ಷೌರ ಮಾಡಿಸಿಕೊಳ್ಳುವುದೋ, ಯಾವ ಉಡುಪು ಧರಿಸಬೇಕೋ ಅದು ನಿಮ್ಮ ವೈಯಕ್ತಿಕ ಆಯ್ಕೆ. ಆದರೆ ನಿಮ್ಮ ಮೂಲ ಸಂಸ್ಕೃತಿಯನ್ನು ಉಳಿಸಿಕೊಳ್ಳಿ” ಎಂದು ಅವರು ಅಭಿಪ್ರಾಯಪಟ್ಟರು.
ಬಾಬಾ ರಾಮ್ದೇವ್ ಅವರ ಈ ಹೇಳಿಕೆ ಸಾಮಾಜಿಕ ಹಾಗೂ ರಾಜಕೀಯ ವಲಯದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್ ಪ್ರತಿಕ್ರಿಯಿಸಿ, “ಎಲ್ಲರೂ ಸನಾತನಿಗಳೇ ಆಗಿದ್ದರೆ ದೇಶದಲ್ಲಿ ವಿಭಜನೆಯ ವಾತಾವರಣ ಏಕೆ ನಿರ್ಮಿಸಲಾಗುತ್ತಿದೆ? ಎಲ್ಲರನ್ನೂ ಒಂದೇ ಎಂದು ಹೇಳುವವರು ಮುಸ್ಲಿಮರ ವಿರುದ್ಧ ದ್ವೇಷದ ಭಾವನೆ ಏಕೆ ಮೂಡಿಸುತ್ತಿದ್ದಾರೆ?” ಎಂದು ಪ್ರಶ್ನಿಸಿದ್ದಾರೆ.
ಎಐಎಂಐಎಂ ವಕ್ತಾರ ವಾರಿಸ್ ಪಠಾಣ್ ಕೂಡ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. “ಭಾರತವು ಸಂವಿಧಾನದ ಆಶಯಗಳ ಪ್ರಕಾರವೇ ನಡೆಯುವ ದೇಶ. ಭಾರತ ಯಾವುದೇ ಕಾರಣಕ್ಕೂ ಹಿಂದೂ ರಾಷ್ಟ್ರವಾಗುವುದಿಲ್ಲ. ಮುಸ್ಲಿಮರು ಯಾರ ಬೆದರಿಕೆಗೂ ಹೆದರುವುದಿಲ್ಲ” ಎಂದು ಅವರು ಹೇಳಿದ್ದಾರೆ.
ಇದೇ ವೇಳೆ, “ನಾವು ಸಂವಿಧಾನದ ಚೌಕಟ್ಟಿನೊಳಗೆ ಬದುಕುತ್ತೇವೆ ಮತ್ತು ನಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತೇವೆ. ಸಂವಿಧಾನವನ್ನು ಗೌರವಿಸಿ, ಅದರ ಮಿತಿಯೊಳಗೆ ಮಾತನಾಡಬೇಕು. ಸಮಾಜದಲ್ಲಿ ದ್ವೇಷ ಹರಡುವಂತಹ ಹೇಳಿಕೆಗಳನ್ನು ನಿಲ್ಲಿಸಬೇಕು” ಎಂದು ವಾರಿಸ್ ಪಠಾಣ್ ಆಗ್ರಹಿಸಿದ್ದಾರೆ.

