Home Blog

2 ವರ್ಷಕ್ಕಿಂತ ಕಡಿಮೆ ಮಕ್ಕಳಿಗೆ ಮೊಬೈಲ್ ಬೇಡ! ಮಕ್ಕಳಿಗೆ ಮಾತು ತಡವಾಗಲು ಇದು ಕಾರಣ

ಇಂದಿನ ಡಿಜಿಟಲ್ ಯುಗದಲ್ಲಿ ಚಿಕ್ಕ ಮಕ್ಕಳ ಕೈಯಲ್ಲಿ ಮೊಬೈಲ್, ಟ್ಯಾಬ್, ಲ್ಯಾಪ್‌ಟಾಪ್ ಸಾಮಾನ್ಯವಾಗಿರುವ ನಡುವೆಯೇ, ಸ್ಕ್ರೀನ್ ಟೈಮ್ ಹೆಚ್ಚಾದರೆ ಮಕ್ಕಳ ಮಾತಿನ ಬೆಳವಣಿಗೆಗೆ ಹಾನಿ ಉಂಟಾಗಬಹುದು ಎಂದು ಹೊಸ ಅಧ್ಯಯನವು ಎಚ್ಚರಿಸಿದೆ.

ಚಂಡೀಗಢದ ಪೋಸ್ಟ್ ಗ್ರಾಜುವೇಟ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಎಜುಕೇಶನ್ ಅಂಡ್ ರಿಸರ್ಚ್ (PGIMER) ನಡೆಸಿದ ಅಧ್ಯಯನದಲ್ಲಿ, ದಿನಕ್ಕೆ ಒಂದು ಗಂಟೆಗೂ ಹೆಚ್ಚು ಸ್ಕ್ರೀನ್ ಬಳಸುವ ಮಕ್ಕಳಲ್ಲಿ “ಸ್ಪೀಚ್ ಡಿಲೇ” ಸಮಸ್ಯೆ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚು ಎಂಬುದು ಬಹಿರಂಗವಾಗಿದೆ. 18 ರಿಂದ 24 ತಿಂಗಳೊಳಗಿನ 140 ಆರೋಗ್ಯಕರ ಮಕ್ಕಳ ಮೇಲೆ ಈ ಸಂಶೋಧನೆ ನಡೆಸಲಾಗಿದೆ.

ತಜ್ಞರ ಪ್ರಕಾರ, ಮಕ್ಕಳ ಮೊದಲ ಎರಡು ವರ್ಷಗಳು ಮೆದುಳಿನ ಬೆಳವಣಿಗೆಗೆ ಅತ್ಯಂತ ಮಹತ್ವದ ಹಂತವಾಗಿದ್ದು, ಈ ಅವಧಿಯಲ್ಲಿ ನೇರ ಸಂವಹನದ ಮೂಲಕವೇ ಭಾಷಾ ಕೌಶಲ್ಯಗಳು ಅಭಿವೃದ್ಧಿಯಾಗುತ್ತವೆ. ಆದರೆ ಸ್ಕ್ರೀನ್ ಬಳಕೆ ಹೆಚ್ಚಾದರೆ ಪೋಷಕರೊಂದಿಗೆ ಸಂಭಾಷಣೆ ಕಡಿಮೆಯಾಗುವುದರಿಂದ ಮಾತನಾಡುವ ಸಾಮರ್ಥ್ಯ ನಿಧಾನಗೊಳ್ಳಬಹುದು.

ಅಧ್ಯಯನವು ಮತ್ತೊಂದು ಮಹತ್ವದ ಅಂಶವನ್ನು ಬಹಿರಂಗಪಡಿಸಿದ್ದು, 18 ತಿಂಗಳಿಗಿಂತ ಮುಂಚೆ ಸ್ಕ್ರೀನ್ ಬಳಸುವ ಮಕ್ಕಳಲ್ಲಿ ಮಾತಿನ ವಿಳಂಬ ಹೆಚ್ಚು ಕಂಡುಬಂದಿದೆ. ಈ ಹಿನ್ನೆಲೆ, 2 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಸ್ಕ್ರೀನ್ ಟೈಮ್ ಸಂಪೂರ್ಣವಾಗಿ ತಪ್ಪಿಸುವುದು ಅಗತ್ಯವೆಂದು ತಜ್ಞರು ಸಲಹೆ ನೀಡಿದ್ದಾರೆ.

ಮಕ್ಕಳ ಭಾಷಾ ಬೆಳವಣಿಗೆಗೆ ಪೋಷಕರು ಹೆಚ್ಚಿನ ಸಮಯವನ್ನು ಮೀಸಲಿಟ್ಟು, ಅವರೊಂದಿಗೆ ಮಾತನಾಡುವುದು, ಕಥೆ ಹೇಳುವುದು ಮತ್ತು ಆಟಗಳಲ್ಲಿ ತೊಡಗಿಸುವುದು ಅತ್ಯಂತ ಪರಿಣಾಮಕಾರಿ ವಿಧಾನಗಳಾಗಿವೆ. ಅಗತ್ಯವಿದ್ದಲ್ಲಿ ಮಾತ್ರ, ಉದಾಹರಣೆಗೆ ವಿಡಿಯೋ ಕಾಲ್‌ಗಳಿಗೆ ಸ್ಕ್ರೀನ್ ಬಳಕೆಯನ್ನು ಮಿತಿಗೊಳಿಸುವುದು ಒಳಿತು ಎಂದು ತಜ್ಞರು ಸೂಚಿಸಿದ್ದಾರೆ.

ನಿಧಿ ಆಸೆಗೆ ಹೆತ್ತ ತಾಯಿಯನ್ನೇ ಬಲಿ ಕೊಡಲು ಯತ್ನ; ಚಾಮರಾಜನಗರದಲ್ಲಿ ಪುತ್ರನ ಭೀಕರ ಕೃತ್ಯ ಬಯಲು

ಚಾಮರಾಜನಗರ: ಧಿ ಆಸೆಗೆ ಹೆತ್ತ ತಾಯಿಯನ್ನೇ ಬಲಿ ಕೊಡಲು ಪುತ್ರನೊಬ್ಬ ಸಿದ್ಧತೆ ನಡೆಸಿದ್ದ ಆಘಾತಕಾರಿ ಘಟನೆ ಚಾಮರಾಜನಗರ ತಾಲೂಕಿನ ಸಾಗಡೆ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಈ ಪ್ರಕರಣ ಗ್ರಾಮಸ್ಥರಲ್ಲಿ ಭೀತಿ ಮೂಡಿಸಿದ್ದು, ಪೊಲೀಸರ ತಕ್ಷಣದ ಕ್ರಮದಿಂದ ದುರಂತ ತಪ್ಪಿದೆ.

ಕೊಂಡಯ್ಯನ ಮಾದಶೆಟ್ಟಿ ಎಂಬಾತ, ಹುಣ್ಣಿಮೆ ದಿನ ಬಲಿ ಕೊಟ್ಟರೆ ನಿಧಿ ಸಿಗುತ್ತದೆ ಎಂಬ ನಂಬಿಕೆಯಲ್ಲಿ, ತನ್ನ 80 ವರ್ಷದ ಕಣ್ಣು ಕಾಣದ ಹಾಗೂ ಕಿವಿ ಕೇಳದ ತಾಯಿ ಮಾದಮ್ಮಶೆಟ್ಟಿಯನ್ನು ಬಲಿಕೊಡಲು ಸಿದ್ಧತೆ ನಡೆಸಿದ್ದಾನೆ. ಬೆಳಗ್ಗಿನ ಜಾವ ತನ್ನ ಮನೆಯಲ್ಲೇ ಸುಮಾರು 4 ಅಡಿ ಆಳದ ಗುಂಡಿ ತೆಗೆದು, ಅದರೊಳಗೆ ಮಡಕೆ ಇಟ್ಟು ಲಿಂಬೆಹಣ್ಣು, ಅರಿಶಿನ, ಕುಂಕುಮ ಹಾಗೂ ಕಳಸವಿಟ್ಟು ಪೂಜೆ ನೆರವೇರಿಸಿದ್ದಾನೆ.

ಈ ಸಂಶಯಾಸ್ಪದ ಚಟುವಟಿಕೆ ಗಮನಿಸಿದ ಅಕ್ಕಪಕ್ಕದ ನಿವಾಸಿಗಳು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸುತ್ತಿದ್ದಂತೆ ಮಾಟಗಾರ ಸ್ಥಳದಿಂದ ಪರಾರಿಯಾಗಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಾದಶೆಟ್ಟಿಯನ್ನು ಪೊಲೀಸರು ಬಂಧಿಸಿದ್ದಾರೆ.

ನಿಧಿಗಾಗಿ ಇಂತಹ ಮಾಟ ಮಾಡಿರುವ ವಿಚಾರ ತಿಳಿದು ಸಾಗಡೆ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ. ಈ ಕುರಿತು ಚಾಮರಾಜನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.

ಚಿಕನ್ ತರಲು ತೆರಳಿದ್ದ SSLC ವಿದ್ಯಾರ್ಥಿಗೆ ಖಾಸಗಿ ಬಸ್ ಡಿಕ್ಕಿ; ಸ್ಥಳದಲ್ಲೇ ದುರ್ಮರಣ

ಬೆಂಗಳೂರು: ಚಿಕನ್ ತರಲು ಮನೆಬಿಟ್ಟು ತೆರಳಿದ್ದ ಬಾಲಕನಿಗೆ ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ ದುರ್ಘಟನೆ ನಗರದಲ್ಲಿ ನಡೆದಿದೆ.

ಇಂದು ಬೆಳಗ್ಗೆ ಸುಮಾರು 9 ಗಂಟೆ ವೇಳೆಗೆ ಬಾಗಲೂರು ರಸ್ತೆಯ ವೈಟ್ ಟ್ಯಾಪಿಂಗ್ ಕಾಮಗಾರಿ ನಡೆಯುತ್ತಿದ್ದ ಪ್ರದೇಶದ ಬಳಿ ಈ ಅಪಘಾತ ಸಂಭವಿಸಿದೆ. ಮೃತ ಬಾಲಕನನ್ನು ವರುಣ್ (16) ಎಂದು ಗುರುತಿಸಲಾಗಿದೆ.

ರಸ್ತೆ ದಾಟುತ್ತಿದ್ದ ವೇಳೆ ವೇಗವಾಗಿ ಬಂದ ಖಾಸಗಿ ಬಸ್ ವರುಣ್‌ಗೆ ಡಿಕ್ಕಿ ಹೊಡೆದಿದ್ದು, ಡಿಕ್ಕಿಯ ತೀವ್ರತೆಗೆ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತ ವರುಣ್ ಇತ್ತೀಚೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣನಾಗಿದ್ದನೆಂದು ತಿಳಿದುಬಂದಿದ್ದು, ಈ ದುರ್ಘಟನೆ ಕುಟುಂಬದವರಲ್ಲಿ ಆಕ್ರಂದನ ಮೂಡಿಸಿದೆ.

ಘಟನೆಯ ಬಳಿಕ ಬಸ್ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಹೆಣ್ಣೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.

ಶಿವಮೊಗ್ಗ – ಬೆಂಗಳೂರು ನಡುವಿನ ಹಾರಾಟ ನಿಲ್ಲಿಸಿದ ಇಂಡಿಗೋ ವಿಮಾನ! ಯಾಕೆ ಗೊತ್ತಾ..?

ಶಿವಮೊಗ್ಗ: ಪ್ರಯಾಣಿಕರಿಂದ ನಿರಂತರ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದ್ದರೂ, ಹಲವು ತಾಂತ್ರಿಕ ಹಾಗೂ ಆಡಳಿತಾತ್ಮಕ ಕಾರಣಗಳನ್ನು ಉಲ್ಲೇಖಿಸಿ ಇಂಡಿಗೋ ವಿಮಾನಯಾನ ಸಂಸ್ಥೆ ಶಿವಮೊಗ್ಗ–ಬೆಂಗಳೂರು ನಡುವಿನ ವಿಮಾನ ಸೇವೆಯನ್ನು ಸ್ಥಗಿತಗೊಳಿಸಿದೆ. ಏಪ್ರಿಲ್ 30ರಂದು ಮಧ್ಯಾಹ್ನ 2.30ಕ್ಕೆ ಈ ಮಾರ್ಗದ ಕೊನೆಯ ವಿಮಾನ ಹಾರಾಟ ನಡೆಸಿದ್ದು, ಇದರೊಂದಿಗೆ 33 ತಿಂಗಳ ಸೇವೆಗೆ ತೆರೆ ಬಿದ್ದಂತಾಗಿದೆ.

ಇಂಡಿಗೋ ಸಂಸ್ಥೆ 2023ರ ಆಗಸ್ಟ್ 11ರಂದು ಶಿವಮೊಗ್ಗ–ಬೆಂಗಳೂರು ನಡುವೆ ಮೊದಲ ಸೇವೆ ಆರಂಭಿಸಿತ್ತು. ಈ ಸೇವೆಯಿಂದ ಮಲೆನಾಡು ಹಾಗೂ ಮಧ್ಯ ಕರ್ನಾಟಕ ಭಾಗದ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗಿತ್ತು. ಕಳೆದ 33 ತಿಂಗಳ ಅವಧಿಯಲ್ಲಿ 1 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ಈ ಸೇವೆಯ ಪ್ರಯೋಜನ ಪಡೆದುಕೊಂಡಿದ್ದರು.

ಇದೀಗ ಸಂಸ್ಥೆ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಬೆಂಗಳೂರು–ಶಿವಮೊಗ್ಗ ಮಾರ್ಗದ ಟಿಕೆಟ್ ಬುಕ್ಕಿಂಗ್ ಅನ್ನು ಸ್ಥಗಿತಗೊಳಿಸಿದ್ದು, ಸೇವೆ ಪುನರಾರಂಭದ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ನೀಡಿಲ್ಲ.

ಸೇವೆ ಸ್ಥಗಿತಕ್ಕೆ ಕಾರಣಗಳೇನು?

ಉಡಾನ್ ಯೋಜನೆಯಡಿ ರಾಜಧಾನಿಗೆ ಸಂಪರ್ಕ ಕಲ್ಪಿಸುವಲ್ಲಿ ಕೆಲವು ನಿರ್ಬಂಧಗಳು ಎದುರಾಗಿರುವುದು ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ಇದರ ಜೊತೆಗೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ಜಾರಿಗೊಳಿಸಿರುವ ಹೊಸ ನಿಯಮಗಳಿಂದ ಪೈಲಟ್‌ಗಳು ಹಾಗೂ ಸಿಬ್ಬಂದಿ ಕೊರತೆ ಉಂಟಾಗಿದೆ ಎನ್ನಲಾಗಿದೆ.

ಈ ಹಿಂದೆ ಶಿವಮೊಗ್ಗ–ಬೆಂಗಳೂರು ಸೇವೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಹಾಗೂ ಇಂಡಿಗೋ ನಡುವೆ ಒಪ್ಪಂದವಾಗಿದ್ದು, ಪ್ರತಿ ಟಿಕೆಟ್‌ಗೆ ರಾಜ್ಯ ಸರ್ಕಾರ 500 ರೂಪಾಯಿ ಸಹಾಯಧನ ನೀಡುತ್ತಿತ್ತು. 2025ರ ಆಗಸ್ಟ್‌ನಲ್ಲಿ ಈ ಒಪ್ಪಂದ ಅವಧಿ ಮುಕ್ತಾಯಗೊಂಡಿದ್ದರೂ ಇಂಡಿಗೋ ಸೇವೆಯನ್ನು ಮುಂದುವರಿಸಿತ್ತು. ಆದರೆ ಒಪ್ಪಂದ ನವೀಕರಣದಲ್ಲಿ ವಿಳಂಬವಾಗಿರುವುದು ಕೂಡ ಸೇವೆ ಸ್ಥಗಿತಕ್ಕೆ ಕಾರಣವಾಗಿದೆ ಎಂದು ತಿಳಿದುಬಂದಿದೆ.

ಇದರ ಜೊತೆಗೆ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ನೈಟ್ ಲ್ಯಾಂಡಿಂಗ್ ವ್ಯವಸ್ಥೆ ಇನ್ನೂ ಪೂರ್ಣಗೊಂಡಿಲ್ಲ. ವಿಶೇಷವಾಗಿ ಮಳೆಗಾಲದಲ್ಲಿ ಲ್ಯಾಂಡಿಂಗ್ ಸಮಸ್ಯೆಗಳು ಹಾಗೂ ವಿಮಾನ ರದ್ದತಿ ಸಂಭವಿಸುವ ಸಾಧ್ಯತೆ ಇರುವುದರಿಂದ ಸಂಸ್ಥೆ ಈ ನಿರ್ಧಾರ ಕೈಗೊಂಡಿದೆ ಎಂದು ಮೂಲಗಳು ತಿಳಿಸಿವೆ.

ಇದು ಆಡಳಿತವಲ್ಲ, ಸಂಘಟಿತ ಲೂಟಿ: ಸಿಲಿಂಡರ್ ದರ ಏರಿಕೆ ವಿರುದ್ಧ ಸಿಎಂ ಸಿದ್ದರಾಮಯ್ಯ ಕಿಡಿ

ಬೆಂಗಳೂರು: ದೇಶಾದ್ಯಂತ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ದರ ಏರಿಕೆ ವಿಚಾರ ಭಾರೀ ಚರ್ಚೆಗೆ ಗ್ರಾಸವಾಗಿರುವ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಇದು ಆಡಳಿತವಲ್ಲ, ಸಂಘಟಿತ ಲೂಟಿ ಎಂದು ಟೀಕಿಸಿರುವ ಅವರು, ಚುನಾವಣೆ ವೇಳೆ ಜನರನ್ನು ದಾರಿ ತಪ್ಪಿಸಿ ಬಳಿಕ ಬೆಲೆ ಏರಿಕೆಯ ಹೊರೆ ಹಾಕುವುದು ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಕಾರ್ಯವೈಖರಿ ಎಂದು ಆರೋಪಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, ಚುನಾವಣೆಗಳು ಮುಗಿದ ತಕ್ಷಣವೇ ಕೇಂದ್ರ ಸರ್ಕಾರ ಮತ್ತೊಮ್ಮೆ ದರ ಏರಿಕೆ ಮಾಡಿದೆ ಎಂದು ಆರೋಪಿಸಿದರು. ಚುನಾವಣೆ ಅವಧಿಯಲ್ಲಿ ಉದ್ದೇಶಪೂರ್ವಕವಾಗಿ ದರ ಏರಿಕೆಯನ್ನು ತಡೆಹಿಡಿದಿದ್ದ ಸರ್ಕಾರ, ಮೇ 1ರಂದು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ದರವನ್ನು ಹೆಚ್ಚಿಸಿದೆ ಎಂದು ಅವರು ತಿಳಿಸಿದ್ದಾರೆ.

ಇದರ ಪರಿಣಾಮವಾಗಿ ಒಂದು ವಾಣಿಜ್ಯ ಸಿಲಿಂಡರ್ ಬೆಲೆ 3,071.50 ರೂಪಾಯಿಗೆ ತಲುಪಿದೆ ಎಂದು ಸಿಎಂ ಉಲ್ಲೇಖಿಸಿದ್ದಾರೆ. ಕಳೆದ ನಾಲ್ಕು ತಿಂಗಳಲ್ಲಿ ಮೋದಿ ಸರ್ಕಾರ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ದರವನ್ನು ಆರು ಬಾರಿ ಏರಿಕೆ ಮಾಡಿದ್ದು, ಇದರಿಂದ ಸಾಮಾನ್ಯ ಜನರ ಮೇಲೆ 1,518 ರೂಪಾಯಿಯಷ್ಟು ಹೆಚ್ಚುವರಿ ಹೊರೆ ಬಿದ್ದಿದೆ ಎಂದು ದೂರಿದ್ದಾರೆ.

ಜಾಗತಿಕ ಮಟ್ಟದಲ್ಲಿ ಸಮಸ್ಯೆಗಳು ಎದುರಾದಾಗ ದೇಶದ ಜನರನ್ನು ರಕ್ಷಿಸುವ ಬದಲು ಕೇಂದ್ರ ಸರ್ಕಾರ ಜನರ ಮೇಲೆಯೇ ಹೆಚ್ಚುವರಿ ಹೊರೆ ಹಾಕುತ್ತಿದೆ ಎಂದು ಸಿದ್ದರಾಮಯ್ಯ ಟೀಕಿಸಿದರು. ಕೇಂದ್ರದ ವಿದೇಶಾಂಗ ನೀತಿಯ ವೈಫಲ್ಯದಿಂದ ದೇಶದ ಆರ್ಥಿಕತೆ ಮೇಲೆ ಪರಿಣಾಮ ಬಿದ್ದಿದ್ದು, ಅದರ ಬೆಲೆಯನ್ನು ಇದೀಗ ಸಾಮಾನ್ಯ ಭಾರತೀಯರು ಪಾವತಿಸುತ್ತಿದ್ದಾರೆ ಎಂದು ಹೇಳಿದರು.

ಈ ದರ ಏರಿಕೆ ಕೇವಲ ವ್ಯಾಪಾರ ವಲಯಕ್ಕೆ ಮಾತ್ರ ಸೀಮಿತವಾಗದೇ, ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು, ಸಣ್ಣ ಆಹಾರ ಮಳಿಗೆಗಳು ಹಾಗೂ ಅಡುಗೆ ಸೇವೆಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ಪರಿಣಾಮವಾಗಿ ಆಹಾರ ಪದಾರ್ಥಗಳ ಬೆಲೆಯೂ ಏರಿಕೆಯಾಗುವ ಆತಂಕ ಎದುರಾಗಿದೆ ಎಂದು ಸಿಎಂ ಅಭಿಪ್ರಾಯಪಟ್ಟಿದ್ದಾರೆ.

“ಖರ್ಗೆ ಮಾತೇ ಅಂತಿಮ”: ನಾಯಕತ್ವ ಬದಲಾವಣೆ ಊಹಾಪೋಹಗಳಿಗೆ ಪರಮೇಶ್ವರ್ ಸ್ಪಷ್ಟನೆ

ಬೆಂಗಳೂರು: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು “ಸದ್ಯಕ್ಕೆ ಯಾವುದೇ ಬದಲಾವಣೆ ಇಲ್ಲ” ಎಂದು ಸ್ಪಷ್ಟಪಡಿಸಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬದಲಾವಣೆ ಕುರಿತ ಎಲ್ಲಾ ಚರ್ಚೆಗಳಿಗೆ ತೆರೆ ಬಿದ್ದಂತಾಗಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದ್ದಾರೆ.

ಸದಾಶಿವನಗರದ ತಮ್ಮ ನಿವಾಸದ ಬಳಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಖರ್ಗೆ ಅವರು ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿದ್ದು ಅಪಾರ ರಾಜಕೀಯ ಅನುಭವ ಹೊಂದಿದ್ದಾರೆ ಎಂದು ಹೇಳಿದರು.

ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಎಂಬ ಪ್ರಶ್ನೆ ಎದುರಾದರೆ, ಖರ್ಗೆ ಅವರಂತಹ ಅನುಭವಿಗಳ ಮಾತಿಗೆ ವಿಶೇಷ ಮಹತ್ವ ಇರುತ್ತದೆ. ಅವರು ಸದ್ಯಕ್ಕೆ ಮುಖ್ಯಮಂತ್ರಿ ಇದ್ದಾರೆ, ಬದಲಾವಣೆ ಮಾಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ. ಇದರಿಂದ ಸ್ಪಷ್ಟ ಸಂದೇಶ ಸಿಕ್ಕಿದೆ,” ಎಂದು ಪರಮೇಶ್ವರ್ ತಿಳಿಸಿದರು.

ಖರ್ಗೆ ಅವರ ಹೇಳಿಕೆಯನ್ನು ಸ್ವಾಗತಿಸುವುದಾಗಿ ಹೇಳಿದ ಅವರು, ಈ ಅಭಿಪ್ರಾಯವು ಕಾಂಗ್ರೆಸ್ ಹಿರಿಯ ನಾಯಕರಾದ ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಕೆ.ಸಿ. ವೇಣುಗೋಪಾಲ್ ಹಾಗೂ ರಣದೀಪ್ ಸಿಂಗ್ ಸುರ್ಜೇವಾಲಾ ಅವರೊಂದಿಗೆ ಚರ್ಚಿಸಿದ ಬಳಿಕವೇ ಹೊರಬಂದಿರಬಹುದು ಎಂದು ಅಭಿಪ್ರಾಯಪಟ್ಟರು.

ಖರ್ಗೆ ಅವರು ಹೇಳಿದ ಮಾತಿಗೆ ಪಕ್ಷದಲ್ಲಿ ಬಹಳ ಪ್ರಾಮುಖ್ಯತೆ ಇದೆ. ಹೀಗಾಗಿ ಸಿಎಂ ಬದಲಾವಣೆ ಕುರಿತ ಚರ್ಚೆ ಇಲ್ಲಿಗೇ ಮುಕ್ತಾಯವಾದಂತಾಗಿದೆ,” ಎಂದು ಹೇಳಿದರು.

ಇನ್ನೂ ಕೆಲವರು ವಿಭಿನ್ನ ಅಭಿಪ್ರಾಯ ವ್ಯಕ್ತಪಡಿಸುತ್ತಿರುವ ಕುರಿತು ಪ್ರತಿಕ್ರಿಯಿಸಿದ ಪರಮೇಶ್ವರ್, “ನಮ್ಮ ದೃಷ್ಟಿಯಲ್ಲಿ ಖರ್ಗೆ ಅವರು ಸುಪ್ರೀಂ ಅಥಾರಿಟಿ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಹೈಕಮಾಂಡ್ ಪರವಾಗಿ ಬರುವ ಹೇಳಿಕೆಯನ್ನು ಎಲ್ಲರೂ ಗೌರವಿಸಬೇಕು. ಇದರ ಬಗ್ಗೆ ಇನ್ನಷ್ಟು ವ್ಯಾಖ್ಯಾನ ಮಾಡುವ ಅಗತ್ಯವಿಲ್ಲ,” ಎಂದು ಸ್ಪಷ್ಟಪಡಿಸಿದರು.

ಇಬ್ಬರ ಜಗಳ, ಮೂರನೆಯವನಿಗೆ ಲಾಭ: ಖರ್ಗೆ ಸಿಎಂ ಆಗಲು ಪ್ರಯತ್ನಿಸುತ್ತಿದ್ದಾರೆ – ಆರ್.ಅಶೋಕ್

ಬೆಂಗಳೂರು: ರಾಜ್ಯ ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಸಂಬಂಧಿಸಿದ ಒಳಕಲಹ ಮತ್ತಷ್ಟು ತೀವ್ರಗೊಂಡಿದ್ದು, ಈ ಬೆಳವಣಿಗೆಗಳ ನಡುವೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೂಡ ಮುಖ್ಯಮಂತ್ರಿ ಹುದ್ದೆಯತ್ತ ಆಸಕ್ತಿ ತೋರಿದ್ದಾರೆ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ವ್ಯಂಗ್ಯವಾಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಕುರ್ಚಿಗಾಗಿ ಕಾಂಗ್ರೆಸ್‌ನಲ್ಲಿ ನಡೆಯುತ್ತಿರುವ ಪೈಪೋಟಿಯಿಂದ ರಾಜ್ಯ ಸರ್ಕಾರವೇ ಗೊಂದಲದ ಗೂಡಾಗಿದೆ ಎಂದು ಟೀಕಿಸಿದರು.

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು “ಮುಂದೆ ನನ್ನ ಪರ್ವ” ಎಂದು ಹೇಳುತ್ತಿರುವ ಸಂದರ್ಭದಲ್ಲಿ, ಮಲ್ಲಿಕಾರ್ಜುನ ಖರ್ಗೆ ಅವರ ಇತ್ತೀಚಿನ ಹೇಳಿಕೆ ಮತ್ತಷ್ಟು ಗೊಂದಲ ಸೃಷ್ಟಿಸಿದೆ ಎಂದು ಅಶೋಕ್ ಹೇಳಿದರು. ಡಿ.ಕೆ. ಶಿವಕುಮಾರ್ ಅವರ ಸಿಎಂ ಕನಸಿಗೆ ಇದೀಗ ಅಡ್ಡಿ ಉಂಟಾಗಿದೆ ಎಂದೂ ವ್ಯಂಗ್ಯವಾಡಿದರು.

“ಮಲ್ಲಿಕಾರ್ಜುನ ಖರ್ಗೆ ಮಧ್ಯಪ್ರವೇಶ ಮಾಡಿ, ನನಗೂ ಸಿಎಂ ಆಗುವ ಆಸೆಯಿದೆ ಹಾಗೂ ಈ ಹಿಂದೆ ನನಗೆ ಮೋಸವಾಗಿದೆ ಎಂದು ಹೇಳಿದ್ದಾರೆ. ಬಹುಶಃ ಕಾಂಗ್ರೆಸ್ ಹೈಕಮಾಂಡ್‌ನಿಂದ ಅವರಿಗೆ ಗ್ರೀನ್ ಸಿಗ್ನಲ್ ಸಿಕ್ಕಿರಬಹುದು,” ಎಂದು ಅವರು ಹೇಳಿದರು.

ಖರ್ಗೆ ಅವರು ಈ ಹಿಂದೆ ಸಾಕಷ್ಟು ಬಾರಿ ಮುಖ್ಯಮಂತ್ರಿ ಹುದ್ದೆಗೆ ಪ್ರಯತ್ನಿಸಿದರೂ ಅವಕಾಶ ಸಿಕ್ಕಿರಲಿಲ್ಲ. ಈಗಿನ ರಾಜಕೀಯ ಪರಿಸ್ಥಿತಿಯನ್ನು ಗಮನಿಸಿ ಮತ್ತೊಮ್ಮೆ ಆ ಹುದ್ದೆಗೆ ಪ್ರಯತ್ನಿಸುತ್ತಿರುವಂತೆ ಕಾಣುತ್ತದೆ ಎಂದು ಅಶೋಕ್ ಅಭಿಪ್ರಾಯಪಟ್ಟರು.

ಪ್ರಸ್ತುತ ಕಾಂಗ್ರೆಸ್‌ನಲ್ಲಿ ಇಬ್ಬರ ನಡುವಿನ ಅಧಿಕಾರ ಪೈಪೋಟಿಯಿಂದ ಮೂರನೇ ವ್ಯಕ್ತಿಗೆ ಲಾಭವಾಗುವಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ಟೀಕಿಸಿದ ಅವರು, ರಾಜ್ಯದ ಆಡಳಿತದ ಮೇಲೆ ಇದರ ಪರಿಣಾಮ ಬೀರುತ್ತಿದೆ ಎಂದು ಆರೋಪಿಸಿದರು.

ಬರ್ಗಿ ಅಣೆಕಟ್ಟಿನಲ್ಲಿ ಭೀಕರ ದೋಣಿ ದುರಂತ: 9 ಮಂದಿ ಸಾವು, ಹಲವರು ನಾಪತ್ತೆ

ಮಧ್ಯಪ್ರದೇಶದ: ಜಬಲ್ಪುರ್ ಸಮೀಪದ ಬರ್ಗಿ ಅಣೆಕಟ್ಟುನಲ್ಲಿ ಸಂಭವಿಸಿದ ಭೀಕರ ದೋಣಿ ದುರಂತ ದೇಶವನ್ನೇ ಬೆಚ್ಚಿಬೀಳಿಸಿದೆ. ನರ್ಮದಾ ನದಿಯಲ್ಲಿ ಪ್ರವಾಸಿಗರನ್ನು ಹೊತ್ತೊಯ್ಯುತ್ತಿದ್ದ ಕ್ರೂಸ್ ದೋಣಿ ಮಗುಚಿ ಬಿದ್ದ ಪರಿಣಾಮ ಕನಿಷ್ಠ 9 ಮಂದಿ ಸಾವನ್ನಪ್ಪಿದ್ದಾರೆ. ಈ ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ನರೇಂದ್ರ ಮೋದಿ ತಲಾ ₹2 ಲಕ್ಷ ಪರಿಹಾರ ಘೋಷಿಸಿದ್ದಾರೆ.

ಗುರುವಾರ ಸಂಜೆ ನಡೆದ ಈ ದುರಂತದಲ್ಲಿ ಮಧ್ಯಪ್ರದೇಶ ಪ್ರವಾಸೋದ್ಯಮ ಇಲಾಖೆಯ ಕ್ರೂಸ್ ದೋಣಿಯಲ್ಲಿ 40-45 ಮಂದಿ ಪ್ರಯಾಣಿಕರು ಇದ್ದರು. ಏಕಾಏಕಿ ಸುರಿದ ಭಾರೀ ಮಳೆ ಹಾಗೂ ಗಂಟೆಗೆ 60-70 ಕಿಮೀ ವೇಗದ ಗಾಳಿಯಿಂದ ದೋಣಿ ನಿಯಂತ್ರಣ ಕಳೆದುಕೊಂಡು ಜಲಾಶಯದ ಮಧ್ಯದಲ್ಲಿ ಮಗುಚಿಬಿದ್ದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದೇವರೆಗೆ 21 ಮಂದಿಯನ್ನು ರಕ್ಷಿಸಲಾಗಿದ್ದು, ಇನ್ನೂ ಹಲವರಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ. ಮುಳುಗಿದ ದೋಣಿ ಸುಮಾರು 20 ಅಡಿ ಆಳದಲ್ಲಿ ಸಿಲುಕಿಕೊಂಡಿದ್ದು, ಡೈವರ್‌ಗಳು, ದೋಣಿಗಳು ಮತ್ತು ಯಂತ್ರೋಪಕರಣಗಳ ಸಹಾಯದಿಂದ ರಕ್ಷಣಾ ಕಾರ್ಯ ಜೋರಾಗಿದೆ.

ರಕ್ಷಣಾ ಕಾರ್ಯಾಚರಣೆಯಲ್ಲಿ ಭಾರತೀಯ ಸೇನೆ, ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (NDRF), ರಾಜ್ಯ ವಿಪತ್ತು ನಿರ್ವಹಣಾ ತಂಡಗಳು ಹಾಗೂ ಸ್ಥಳೀಯ ಆಡಳಿತ ಸಕ್ರಿಯವಾಗಿ ಭಾಗವಹಿಸಿವೆ. ವೈಮಾನಿಕ ನಿಗಾವಿಗಾಗಿ ಹೆಲಿಕಾಪ್ಟರ್‌ಗಳನ್ನೂ ಬಳಸಲಾಗುತ್ತಿದೆ.

ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ ರಾಜ್ಯ ಸರ್ಕಾರದಿಂದ ಮೃತರ ಕುಟುಂಬಗಳಿಗೆ ತಲಾ ₹4 ಲಕ್ಷ ಪರಿಹಾರ ಘೋಷಿಸಿದ್ದು, ಘಟನೆಯ ಕುರಿತು ಸಮಗ್ರ ತನಿಖೆಗೆ ಆದೇಶಿಸಿದ್ದಾರೆ.

ಹಾಸನದಲ್ಲಿ ಕುರ್ಚಿ ಯುದ್ಧ: ಹೆಚ್‌ಆರ್‌ಪಿ ಕಚೇರಿಯಲ್ಲಿ ಭಾರೀ ಹೈಡ್ರಾಮಾ

0

ಹಾಸನ: ಹೇಮಾವತಿ ಜಲಾಶಯ ಯೋಜನೆ ಕಚೇರಿಯಲ್ಲಿ ಅಪರೂಪದ ಘಟನೆ ನಡೆದಿದೆ. ಹೇಮಾವತಿ ಜಲಾಶಯ ಯೋಜನೆ (HRP) ವಿಶೇಷ ಭೂಸ್ವಾಧೀನಾಧಿಕಾರಿ ಹುದ್ದೆಗೆ ಇಬ್ಬರು ಅಧಿಕಾರಿಗಳು ಹಕ್ಕು ಹೇಳಿಕೊಂಡು ಮುಖಾಮುಖಿಯಾಗಿದ್ದಾರೆ.

ಮಂಜುನಾಥ್ ಅವರನ್ನು ಒಂದು ವಾರದ ಹಿಂದೆ ಸರ್ಕಾರ ವರ್ಗಾವಣೆ ಮಾಡಿದ್ದು, ಅವರ ಸ್ಥಾನಕ್ಕೆ ಮಹೇಶ್ ಅವರನ್ನು ನೇಮಕ ಮಾಡಿತ್ತು. ಆದೇಶದಂತೆ ಮಹೇಶ್ ಈಗಾಗಲೇ ಅಧಿಕಾರ ಸ್ವೀಕರಿಸಿ ಕುರ್ಚಿ ಅಲಂಕರಿಸಿದ್ದಾರೆ.

ಆದರೆ ಈ ವರ್ಗಾವಣೆಯನ್ನು ಪ್ರಶ್ನಿಸಿದ ಮಂಜುನಾಥ್ ಕರ್ನಾಟಕ ಆಡಳಿತ ನ್ಯಾಯಮಂಡಳಿ (KAT) ಮೊರೆ ಹೋಗಿ ತಡೆಯಾಜ್ಞೆ ತಂದಿದ್ದಾರೆ. ಸ್ಟೇ ಆದೇಶದೊಂದಿಗೆ ಕಚೇರಿಗೆ ಬಂದ ಮಂಜುನಾಥ್ ತಮ್ಮ ಹುದ್ದೆ ಮರಳಿ ನೀಡುವಂತೆ ಆಗ್ರಹಿಸಿದ್ದಾರೆ.

ಇದರಿಂದ ಕಚೇರಿಯಲ್ಲಿ ವಿಚಿತ್ರ ಸ್ಥಿತಿ ನಿರ್ಮಾಣವಾಗಿದೆ. ಕುರ್ಚಿಯ ಮೇಲೆ ಮಹೇಶ್ ಕುಳಿತಿದ್ದರೆ, ಮಂಜುನಾಥ್ ಪಕ್ಕದಲ್ಲೇ ನಿಂತು “ಇದು ನನ್ನ ಸ್ಥಾನ” ಎಂದು ಹಕ್ಕು ಸಾಧಿಸುತ್ತಿದ್ದಾರೆ.

ಈ ಗೊಂದಲದಿಂದ ಕಚೇರಿಯ ದಿನನಿತ್ಯದ ಕಾರ್ಯಗಳು ಅಸ್ತವ್ಯಸ್ತಗೊಂಡಿವೆ. ಸಿಬ್ಬಂದಿ ಯಾರ ಆದೇಶ ಪಾಲಿಸಬೇಕು ಎಂಬ ಗೊಂದಲದಲ್ಲಿ ಸಿಲುಕಿದ್ದಾರೆ. ಕಡತಗಳ ವಿಲೇವಾರಿ ಕೂಡ ವಿಳಂಬವಾಗುತ್ತಿದೆ.

ಪ್ರಮುಖ ಯೋಜನೆಗೆ ಸಂಬಂಧಿಸಿದ ಕಚೇರಿಯಲ್ಲೇ ಈ ರೀತಿಯ ಅಧಿಕಾರಿಗಳ ಕಿತ್ತಾಟ ಸಾರ್ವಜನಿಕರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಈಗ ಈ ಕುರ್ಚಿ ಯುದ್ಧಕ್ಕೆ ಅಂತ್ಯ ಯಾವಾಗ ಎಂಬುದರತ್ತ ಎಲ್ಲರ ಕಣ್ಣು ನೆಟ್ಟಿದೆ.

ಅಪ್ರಾಪ್ತೆಯ ಅತ್ಯಾಚಾರ-ಹತ್ಯೆ ಪ್ರಕರಣ: ಅಪರಾಧಿಯ ಮರಣದಂಡನೆ ರದ್ದು ಮಾಡಿ ಜೀವಾವಧಿಗೆ ಇಳಿಸಿದ ಧಾರವಾಡ ಹೈಕೋರ್ಟ್

0

ಧಾರವಾಡ: ನಗರದ ಹೈಕೋರ್ಟ್ ಪೀಠವು ಪೋಕ್ಸೋ ಹಾಗೂ ಕೊಲೆ ಪ್ರಕರಣದಲ್ಲಿ ಮಹತ್ವದ ತೀರ್ಪು ನೀಡಿದ್ದು, ಮರಣದಂಡನೆಗೆ ಗುರಿಯಾಗಿದ್ದ ಅಪರಾಧಿಯ ಶಿಕ್ಷೆಯನ್ನು ಜೀವಾವಧಿಗೆ ಇಳಿಸಿದೆ.

ಕರ್ನಾಟಕರಾಯಬಾಗ ತಾಲೂಕಿನ ಉದ್ದಪ್ಪ ಗಾಣಗೇರ (39) 2017ರಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಬಳಿಕ ಕೊಲೆ ಮಾಡಿದ್ದನು. ಈ ಪ್ರಕರಣದಲ್ಲಿ ಬೆಳಗಾವಿ ಸೆಷನ್ ಕೋರ್ಟ್ 2024ರಲ್ಲಿ ಮರಣದಂಡನೆ ವಿಧಿಸಿತ್ತು.

ಆದರೆ ಈ ತೀರ್ಪನ್ನು ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗಿದ್ದ ಆರೋಪಿಯ ಅರ್ಜಿಯನ್ನು ವಿಚಾರಣೆ ನಡೆಸಿದ ಧಾರವಾಡ ಹೈಕೋರ್ಟ್ ಪೀಠ ಸಾಕ್ಷ್ಯಾಧಾರಗಳನ್ನು ಮರುಪರಿಶೀಲಿಸಿ ಶಿಕ್ಷೆಯನ್ನು ಜೀವಾವಧಿಗೆ ಪರಿವರ್ತಿಸಿದೆ.

ಇದೇ ವೇಳೆ ಪೀಡಿತೆಯ ಕುಟುಂಬಕ್ಕೆ ನೆರವಾಗುವ ನಿಟ್ಟಿನಲ್ಲಿ ಕಾನೂನು ಸೇವಾ ಪ್ರಾಧಿಕಾರ ಮೂಲಕ ₹5 ಲಕ್ಷ ಪರಿಹಾರ ನೀಡಲು ನಿರ್ದೇಶಿಸಲಾಗಿದೆ.

ಈ ತೀರ್ಪು ನ್ಯಾಯಾಂಗದ ಸಮತೋಲನ ದೃಷ್ಟಿಕೋನವನ್ನು ತೋರಿಸುವುದರ ಜೊತೆಗೆ, ಅಪರಾಧದ ಗಂಭೀರತೆಯನ್ನು ಗಮನದಲ್ಲಿಟ್ಟುಕೊಂಡೇ ಶಿಕ್ಷೆಯಲ್ಲಿ ಬದಲಾವಣೆ ಮಾಡುವ ಸಂದೇಶವನ್ನು ನೀಡಿದೆ.

error: Content is protected !!