Home Blog Page 2

ರೈತನ ಸೋಲಾರ್ ಪ್ಲಾಂಟ್ ಧ್ವಂಸ; ಕಿಡಿಗೇಡಿಗಳ ವಿರುದ್ಧ ಕ್ರಮಕ್ಕೆ ಆಗ್ರಹ

0

ವಿಜಯಸಾಕ್ಷಿ ಸುದ್ದಿ, ಹಗರಿಬೊಮ್ಮನಹಳ್ಳಿ: ತಾಲೂಕಿನ ಮರಬ್ಬಿಹಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಕರಾಳ ತಾಂಡಾದಲ್ಲಿ ರೈತನೊಬ್ಬನ ಹೊಲದಲ್ಲಿದ್ದ ಸೋಲಾರ್ ಪ್ಲಾಂಟ್‌ಗಳನ್ನು ಕಿಡಿಗೇಡಿಗಳು ಕಲ್ಲು ತೂರಿ ಧ್ವಂಸಗೊಳಿಸಿರುವ ಘಟನೆಗೆ ಸಂಬಂಧಿಸಿದಂತೆ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಂಡು, ರೈತನಿಗೆ ಉಂಟಾದ ಲಕ್ಷಾಂತರ ರೂಪಾಯಿ ನಷ್ಟವನ್ನು ಭರ್ತಿ ಮಾಡಿಕೊಡಬೇಕು ಎಂದು ಆಗ್ರಹಿಸಿ ಕರುನಾಡ ವಿಜಯ ಸೇನೆ ಪದಾಧಿಕಾರಿಗಳು ಹಗರಿಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದರು.

ದೂರು ಸಲ್ಲಿಸಿದ ಬಳಿಕ ಮಾತನಾಡಿದ ಕರುನಾಡ ವಿಜಯ ಸೇನೆ ತಾಲೂಕು ಅಧ್ಯಕ್ಷ ಪ್ರಕಾಶ್ ಆರ್., ನಕರಾಳ ತಾಂಡಾ ಗ್ರಾಮದ ರೈತ ಹಾಗೂ ಸಂಘಟನೆಯ ತಾಲೂಕು ಜಂಟಿ ಕಾರ್ಯದರ್ಶಿ ಪಾಂಡು ನಾಯ್ಕ್ ಎಲ್. ಅವರು ತಮ್ಮ ಹೊಲದಲ್ಲಿ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಸೋಲಾರ್ ಪ್ಲಾಂಟ್ ಅಳವಡಿಸಿಕೊಂಡಿದ್ದರು.

ಆದರೆ, ಹೊಲದ ಪಕ್ಕದಲ್ಲಿರುವ ಮನೆಯೊಂದರಲ್ಲಿ ಕೆಲವರು ಪ್ರತಿನಿತ್ಯ ಅಕ್ರಮವಾಗಿ ಜೂಜಾಟ ನಡೆಸಿ ಮದ್ಯಪಾನ ಮಾಡುತ್ತಿದ್ದು, ಗಲಾಟೆ ವೇಳೆ ಸೋಲಾರ್ ಪ್ಲಾಂಟ್ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ ಎಂದು ಆರೋಪಿಸಿದರು.

ರೈತನಿಗೆ ಲಕ್ಷಾಂತರ ರೂಪಾಯಿ ನಷ್ಟ

ಕಲ್ಲು ತೂರಾಟದಿಂದ ಸೋಲಾರ್ ಪ್ಯಾನೆಲ್‌ಗಳು ಸಂಪೂರ್ಣ ಜಖಂಗೊಂಡಿದ್ದು, ರೈತನಿಗೆ ಭಾರೀ ಆರ್ಥಿಕ ನಷ್ಟ ಉಂಟಾಗಿದೆ. ದುಡಿದು ಅಳವಡಿಸಿಕೊಂಡಿದ್ದ ಆಸ್ತಿಯನ್ನು ಧ್ವಂಸಗೊಳಿಸಿರುವ ಕೃತ್ಯ ಖಂಡನೀಯವಾಗಿದೆ ಎಂದು ಕರುನಾಡ ವಿಜಯ ಸೇನೆ ಆಕ್ರೋಶ ವ್ಯಕ್ತಪಡಿಸಿದೆ.

ಜೂಜಾಟ ನಡೆಸಿ ಸಾರ್ವಜನಿಕ ಆಸ್ತಿಗೆ ಹಾನಿ ಉಂಟುಮಾಡಿದ ಕಿಡಿಗೇಡಿಗಳನ್ನು ತಕ್ಷಣ ಪತ್ತೆಹಚ್ಚಿ ಕಠಿಣ ಕ್ರಮ ಕೈಗೊಳ್ಳಬೇಕು. ಅಲ್ಲದೆ, ರೈತ ಪಾಂಡು ನಾಯ್ಕ್ ಅವರಿಗೆ ಉಂಟಾದ ನಷ್ಟವನ್ನು ತಪ್ಪಿತಸ್ಥರಿಂದಲೇ ವಸೂಲಿ ಮಾಡಿ ಸೋಲಾರ್ ಪ್ಲಾಂಟ್ ಮರುಸ್ಥಾಪನೆಗೆ ಕ್ರಮ ಕೈಗೊಳ್ಳಬೇಕು ಎಂದು ಸಂಘಟನೆ ಒತ್ತಾಯಿಸಿದೆ.

ಈ ಸಂಬಂಧ ಪೊಲೀಸ್ ಠಾಣೆಯ ಪಿಎಸ್‌ಐ ಉಮಾಪತಿ ನಾಯ್ಕ ಅವರಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಪ್ರಕಾಶ್ ಆರ್., ವಿಶ್ವನಾಥ್ ಹಿಟ್ನಾಳ್, ರಘು ನಾಯ್ಕ್, ಶಿವಕುಮಾರ್ ಎಂ., ಪಾಂಡು ನಾಯ್ಕ್, ಯಶವಂತ್ ಕುಮಾರ್, ಮೋಹನ್ ನಾಯ್ಕ್, ಕಾರ್ತಿಕ್ ಕುಮಾರ್ ಸೇರಿದಂತೆ ಕರುನಾಡ ವಿಜಯ ಸೇನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಜು.18ರಿಂದ ‘ಗಣಿತ ಬಾಲ ಭಾಸ್ಕರ’ ರಸಪ್ರಶ್ನೆ ಸ್ಪರ್ಧೆ

0

ವಿಜಯಸಾಕ್ಷಿ ಸುದ್ದಿ, ಗದಗ: ಎಚ್.ಕೆ. ಪಾಟೀಲ ಪ್ರತಿಷ್ಠಾನ ಹಾಗೂ ಜಿ-ಎನ್‌ಟಿಟಿಎಫ್ ಸಹಯೋಗದಲ್ಲಿ 2026ನೇ ಸಾಲಿನ ‘ಗಣಿತ ಬಾಲ ಭಾಸ್ಕರ’ ರಸಪ್ರಶ್ನೆ ಸ್ಪರ್ಧೆಯು ಜುಲೈ 18ರಿಂದ ಆರಂಭವಾಗಲಿದ್ದು, ಜಿಲ್ಲೆಯ 140ಕ್ಕೂ ಹೆಚ್ಚು ಶಾಲೆಗಳ ಸುಮಾರು 20 ಸಾವಿರ ವಿದ್ಯಾರ್ಥಿಗಳು ಭಾಗವಹಿಸುವ ನಿರೀಕ್ಷೆಯಿದೆ ಎಂದು ಎಚ್.ಕೆ. ಪಾಟೀಲ ಪ್ರತಿಷ್ಠಾನದ ಸದಸ್ಯ ಆನಂದ ಪೊತ್ನಿಸ್ ತಿಳಿಸಿದರು.

ನಗರದ ಪತ್ರಿಕಾಭವನದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳಲ್ಲಿ ತಾರ್ಕಿಕ ಚಿಂತನೆ, ವಿಶ್ಲೇಷಣಾತ್ಮಕ ಸಾಮರ್ಥ್ಯ ಹಾಗೂ ಸ್ಪರ್ಧಾತ್ಮಕ ಮನೋಭಾವ ಬೆಳೆಸುವ ಉದ್ದೇಶದಿಂದ ಪ್ರತಿವರ್ಷ ಈ ಸ್ಪರ್ಧೆ ಆಯೋಜಿಸಲಾಗುತ್ತಿದೆ ಎಂದರು.

ಜುಲೈ 18ರಂದು ಮೊದಲ ಹಂತದ ಲಿಖಿತ ಪರೀಕ್ಷೆ ಜಿಲ್ಲೆಯ ಎಲ್ಲ ಶಾಲೆಗಳಲ್ಲಿ ನಡೆಯಲಿದೆ. ಜುಲೈ 25ರಂದು ಜಿ-ಎನ್‌ಟಿಟಿಎಫ್‌ನಲ್ಲಿ ಎರಡನೇ ಹಂತದ ಲಿಖಿತ ಪರೀಕ್ಷೆ ಜರುಗಲಿದ್ದು, ಮೊದಲ ಹಂತದಿಂದ ಆಯ್ಕೆಯಾಗುವ ಸುಮಾರು 1,500 ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಅಂತಿಮ ಹಂತ ಆಗಸ್ಟ್ 8ರಂದು ನಡೆಯಲಿದ್ದು, 60 ರಿಂದ 70 ವಿದ್ಯಾರ್ಥಿಗಳು ಅಂತಿಮ ಸುತ್ತಿನಲ್ಲಿ ಸ್ಪರ್ಧಿಸಲಿದ್ದಾರೆ ಎಂದು ತಿಳಿಸಿದರು.

ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವಾಗಿ ₹5 ಸಾವಿರ, ದ್ವಿತೀಯ ಬಹುಮಾನ ₹3 ಸಾವಿರ ಹಾಗೂ ತೃತೀಯ ಬಹುಮಾನ ₹2 ಸಾವಿರ ನಗದು ನೀಡಲಾಗುವುದು. ಸಮಾಧಾನಕರ ಬಹುಮಾನವಾಗಿ ₹1 ಸಾವಿರ ಹಾಗೂ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ವಿಶೇಷ ಬಹುಮಾನಗಳನ್ನೂ ನೀಡಲಾಗುವುದು ಎಂದರು.

ಕಳೆದ ವರ್ಷ 8 ಮತ್ತು 9ನೇ ತರಗತಿ ವಿದ್ಯಾರ್ಥಿಗಳಿಗೆ ಮಾತ್ರ ಸ್ಪರ್ಧೆ ಆಯೋಜಿಸಲಾಗಿತ್ತು. ಈ ಬಾರಿ 10ನೇ ತರಗತಿ ವಿದ್ಯಾರ್ಥಿಗಳನ್ನೂ ಸೇರಿಸಿ ಸ್ಪರ್ಧೆಯನ್ನು ವಿಸ್ತರಿಸಲಾಗಿದೆ ಎಂದು ಹೇಳಿದರು.

ಕೃಷ್ಣೇಗೌಡ ಪಾಟೀಲ ಮಾತನಾಡಿ, ಮುಂದಿನ ದಿನಗಳಲ್ಲಿ ಜಿಲ್ಲೆಯ ಎಲ್ಲ ಶಾಲೆಗಳಲ್ಲಿ ರಸಪ್ರಶ್ನೆ ಸ್ಪರ್ಧೆಗೆ ಸಂಬಂಧಿಸಿದ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸುವ ಜೊತೆಗೆ ವಿಜ್ಞಾನ ರಸಪ್ರಶ್ನೆಯನ್ನೂ ನಡೆಸುವ ಯೋಜನೆ ಇದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸಿದ್ದಣ್ಣ ಬಂಗಾರಶೆಟ್ಟರ್, ಏಕನಾಥ ನಾಗನೂರ ಸೇರಿದಂತೆ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

ಧಾರವಾಡ ಅಪಾರ್ಟ್‌ಮೆಂಟ್‌ನಲ್ಲಿ ವೈದ್ಯನ ಶವ ಪತ್ತೆ; ಮಗನಿಗೂ ಚಾಕು ಇರಿತ! ಪತ್ನಿ ಅರೆಸ್ಟ್

0

ಧಾರವಾಡ: ನಗರದ ಕರ್ನಾಟಕ ವಿಶ್ವವಿದ್ಯಾಲಯ ರಸ್ತೆಯ ರನ್ಕಾಸ್ಟೆಲ್ಲೋ ಅಪಾರ್ಟ್‌ಮೆಂಟ್‌ನಲ್ಲಿ ವೈದ್ಯರೊಬ್ಬರನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ನಡೆದಿದೆ.

ಚಿರಾಯು ಆಸ್ಪತ್ರೆಯಲ್ಲಿ ಅನಸ್ತೇಶಿಯಾ ತಜ್ಞರಾಗಿದ್ದ ಡಾ. ಕಿರಣ್ ಹೊನ್ನಣ್ಣನವರ್ ಮೃತಪಟ್ಟವರು. ಘಟನೆಯಲ್ಲಿ ಅವರ 10 ವರ್ಷದ ಮಗನ ಮೇಲೂ ಹಲ್ಲೆ ನಡೆದಿದ್ದು, ಗಾಯಗೊಂಡ ಬಾಲಕನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಮಾಹಿತಿ ತಿಳಿದ ಕೂಡಲೇ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಡಾ. ಕಿರಣ್ ಅವರ ಪತ್ನಿ ಡಾ. ಪ್ರಿಯಾರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಪ್ರಾಥಮಿಕ ತನಿಖೆಯಲ್ಲಿ ಡಾ. ಕಿರಣ್ ಅವರನ್ನು ಪತ್ನಿ ಪ್ರಿಯಾರೇ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಮಂಗಳವಾರ ರಾತ್ರಿ ಘಟನೆ ನಡೆದಿರುವ ಸಾಧ್ಯತೆ ಇದೆ ಎನ್ನಲಾಗಿದ್ದು, ಪತಿಯ ಮೇಲೆ ಹಲ್ಲೆ ನಡೆಸಿದ ಬಳಿಕ ಮಗನ ಮೇಲೂ ದಾಳಿ ನಡೆದಿರುವ ಅನುಮಾನವಿದೆ.

ಬಳಿಕ ಡಾ. ಪ್ರಿಯಾ ಆತ್ಮಹತ್ಯೆಗೆ ಯತ್ನಿಸಿರುವ ಬಗ್ಗೆಯೂ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

ಈ ಕುರಿತು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಮಾತನಾಡಿ, “ಸಂಬಂಧಿಕರು ಫೋನ್ ಮಾಡಿದಾಗ ಪ್ರಿಯಾ ಅವರು ಪತಿ ವಿಶ್ರಾಂತಿ ಪಡೆಯುತ್ತಿದ್ದಾರೆ ಎಂದು ಹೇಳಿದ್ದಾರೆ. ಆದರೆ ಸಂಜೆವರೆಗೂ ಡಾ. ಕಿರಣ್ ಕರೆ ಸ್ವೀಕರಿಸದ ಹಿನ್ನೆಲೆಯಲ್ಲಿ ಅನುಮಾನಗೊಂಡ ಸಂಬಂಧಿಕರು ಮನೆಗೆ ಬಂದು ನೋಡಿದಾಗ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡುಬಂದಿದೆ” ಎಂದು ತಿಳಿಸಿದ್ದಾರೆ.

“ಬಾಲಕನಿಗೆ ಜೀವ ಇರುವುದನ್ನು ಗಮನಿಸಿ ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಾರ್ಟ್‌ಮೆಂಟ್‌ನಲ್ಲಿ ಭದ್ರತಾ ವ್ಯವಸ್ಥೆ ಇರುವುದರಿಂದ ಹೊರಗಿನಿಂದ ಯಾರಾದರೂ ಬಂದು ಕೃತ್ಯ ಎಸಗಿರುವ ಸಾಧ್ಯತೆ ಕಡಿಮೆ. ಘಟನೆಯ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಪ್ರಿಯಾ ಅವರು ಆಘಾತದ ಸ್ಥಿತಿಯಲ್ಲಿದ್ದು, ಹಲವು ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸಲಾಗುತ್ತಿದೆ” ಎಂದು ಹೇಳಿದರು.

ಡಾ. ಕಿರಣ್ ಅವರು ಅನಸ್ತೇಶಿಯಾ ತಜ್ಞರಾಗಿದ್ದರೆ, ಅವರ ಪತ್ನಿ ಡಾ. ಪ್ರಿಯಾ ನೇತ್ರ ವೈದ್ಯೆಯಾಗಿದ್ದರು ಎನ್ನಲಾಗಿದೆ.

ರಂಗಭೂಮಿ ಸಮಾಜಕ್ಕೆ ದಾರಿದೀಪ: ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು

0

ವಿಜಯಸಾಕ್ಷಿ ಸುದ್ದಿ, ಗದಗ: ಕನ್ನಡ ನಾಡು-ನುಡಿಗೆ ರಂಗಭೂಮಿಯ ಕೊಡುಗೆ ಅಪಾರವಾಗಿದ್ದು, ನಾಟಕಗಳು ಸಮಾಜದ ಸಮಸ್ಯೆಗಳನ್ನು ಜನರ ಮುಂದಿಟ್ಟು ಜಾಗೃತಿ ಮೂಡಿಸುವ ಪರಿಣಾಮಕಾರಿ ಮಾಧ್ಯಮವಾಗಿವೆ ಎಂದು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಹೇಳಿದರು.

ಲಿಂಗಾಯತ ಪ್ರಗತಿಶೀಲ ಸಂಘದ 2806ನೇ ಶಿವಾನುಭವ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು, ಮನುಷ್ಯ ಸಮಾಜ ಜೀವಿಯಾಗಿದ್ದು, ಬದುಕಿನ ನೈಜ ಸತ್ಯಗಳನ್ನು ಹಾಗೂ ಸವಾಲುಗಳನ್ನು ನಾಟಕಗಳಂತಹ ರಂಗಪ್ರದರ್ಶನಗಳ ಮೂಲಕ ಪರಿಣಾಮಕಾರಿಯಾಗಿ ಅನಾವರಣಗೊಳಿಸಬಹುದು. ಮನುಷ್ಯನ ಭಾವನೆಗಳ ಅಭಿವ್ಯಕ್ತಿಗೆ ರಂಗಭೂಮಿ ಅತ್ಯಂತ ಅಗತ್ಯವಾಗಿದೆ ಎಂದು ಹೇಳಿದರು.

‘ರಂಗಭೂಮಿ ಮಹತ್ವ’ ಕುರಿತು ಉಪನ್ಯಾಸ ನೀಡಿದ ಗಣೇಶ ಅಮೀನಗಡದ, ಸಾಹಿತ್ಯ, ಸಂಗೀತ, ನಾಟಕ ಹಾಗೂ ವಚನಗಳು ಮನಸ್ಸಿಗೆ ನೆಮ್ಮದಿ ನೀಡುವುದರ ಜೊತೆಗೆ ಉತ್ತಮ ಜೀವನ ಮೌಲ್ಯಗಳನ್ನು ಬೆಳೆಸುತ್ತವೆ ಎಂದರು. ಗದಗ ನಗರವು ಸಂಗೀತ ಮತ್ತು ರಂಗಭೂಮಿ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಅಪಾರವಾಗಿದೆ. ಪಾಲಕರು ಮಕ್ಕಳನ್ನು ಮೊಬೈಲ್‌ನಿಂದ ದೂರವಿಟ್ಟು ಸಾಹಿತ್ಯ, ಸಂಗೀತ ಮತ್ತು ನಾಟಕಗಳತ್ತ ಒಲವು ಬೆಳೆಸಬೇಕು ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಮೈಸೂರಿನ ಕವಿತಾ ಕಲಾ ತಂಡದಿಂದ ‘ಕೌದಿ’ ನಾಟಕ ಪ್ರದರ್ಶನ ನಡೆಯಿತು.

ಕಾರ್ಯಕ್ರಮದಲ್ಲಿ ಮಾಜಿ ಅಧ್ಯಕ್ಷ ಸಿದ್ಧಣ್ಣ ಬಂಗಾರಶೆಟ್ಟರ ದಂಪತಿ ಹಾಗೂ ರೋಟರಿ ಮತ್ತು ಲಯನ್ಸ್ ಸಂಸ್ಥೆಗಳ ನೂತನ ಅಧ್ಯಕ್ಷರಾದ ಡಾ. ಪಿ.ಎಸ್. ಉಗಲಾಟ (ರೋಟರಿ ಗದಗ-ಬೆಟಗೇರಿ), ಮಲ್ಲಿಕಾರ್ಜುನ ಸಿ. ಚಂದಪ್ಪನವರ (ರೋಟರಿ ಗದಗ ಸೆಂಟ್ರಲ್) ಮತ್ತು ಪ್ರವೀಣ್ ವಾರಕರ (ಲಯನ್ಸ್ ಸಂಸ್ಥೆ, ಗದಗ) ಅವರನ್ನು ಸನ್ಮಾನಿಸಲಾಯಿತು.

ವಚನ ಸಂಗೀತವನ್ನು ಮೃತ್ಯುಂಜಯ ಹಿರೇಮಠ ಹಾಗೂ ಗುರುನಾಥ ಸುತಾರ ಪ್ರಸ್ತುತಪಡಿಸಿದರು. ಧರ್ಮಗ್ರಂಥ ಪಠಣವನ್ನು ದೀಕ್ಷಾ ಸಂಗನಾಯ್ಕರ, ವಚನ ಚಿಂತನವನ್ನು ಪ್ರತೀಕ್ಷಾ ಮಹಾಂತೇಶ ಪೂಜಾರ ನಡೆಸಿಕೊಟ್ಟರು. ದಾಸೋಹ ಸೇವೆಯನ್ನು ಡಾ. ಜಿ.ಬಿ. ಪಾಟೀಲ ಮತ್ತು ಕುಟುಂಬದವರು ವಹಿಸಿಕೊಂಡಿದ್ದರು.

ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಡಾ. ಉಮೇಶ ಪುರದ ಸ್ವಾಗತಿಸಿದರು. ರಮೇಶ ಕಲ್ಲನಗೌಡರ ಹಾಗೂ ವಿದ್ಯಾ ಗಂಜಿಹಾಳ ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷ ಪ್ರಭು ಗಂಜಿಹಾಳ, ಸುರೇಖಾ ಪಿಳ್ಳಿ, ಕಾರ್ಯದರ್ಶಿ ಸಿದ್ಧರಾಮ ಪಟ್ಟೇದ, ಸಹಕಾರ್ಯದರ್ಶಿ ಪ್ರತಿಭಾ ಬಡ್ನಿ, ಕೋಶಾಧ್ಯಕ್ಷ ವೀರಣ್ಣ ಗೋಟಡಕಿ, ಕೆ.ಎಸ್. ಕೋರಿಮಠ, ಸೋಮಶೇಖರ ಪುರಾಣಿಮಠ, ಆದೇಶ ಅಂಗಡಿ ಸೇರಿದಂತೆ ಸಂಘದ ಪದಾಧಿಕಾರಿಗಳು ಹಾಗೂ ಭಕ್ತರು ಉಪಸ್ಥಿತರಿದ್ದರು.

“ಸಮಾಜದಲ್ಲಿರುವ ಸಮಸ್ಯೆಗಳ ಕುರಿತು ಜನರಲ್ಲಿ ಅರಿವು ಮೂಡಿಸುವ ಶಕ್ತಿಯೇ ರಂಗಭೂಮಿಯದು. ಕನ್ನಡ ನಾಡು-ನುಡಿಯನ್ನು ಶ್ರೀಮಂತಗೊಳಿಸುವಲ್ಲಿ ರಂಗಭೂಮಿಯ ಪಾತ್ರ ಅನನ್ಯವಾಗಿದೆ.”

– ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು

‘ಬೆಳೆ ಉಳಿಸಬೇಕಾದರೆ ವಿದ್ಯುತ್ ಕೊಡಿ’: ಕೆಇಬಿ ಕಚೇರಿ ಎದುರು ರೈತರ ಆಕ್ರೋಶ

0

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ರೈತರ ಪಂಪ್‌ಸೆಟ್‌ಗಳಿಗೆ ಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡಬೇಕೆಂದು ಆಗ್ರಹಿಸಿ ಸಮೀಪದ ಅಬ್ಬಿಗೇರಿ ಗ್ರಾಮದ ರೈತರು ಮಂಗಳವಾರ ನರೇಗಲ್ಲ ಕೆಇಬಿ ಗ್ರಿಡ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಕೆಇಬಿ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ ರೈತರಿಗೆ ಗ್ರಾಮಸ್ಥರೂ ಬೆಂಬಲ ಸೂಚಿಸಿದರು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ರೈತ ಮುಖಂಡ ಸಂಗಪ್ಪ ಕುಂಬಾರ, ಸರ್ಕಾರ ರೈತರಿಗೆ ಏಳು ತಾಸು ಉಚಿತ ವಿದ್ಯುತ್ ನೀಡುವ ಯೋಜನೆ ಜಾರಿಗೆ ತಂದಿದ್ದರೂ, ಅದು ಸಮರ್ಪಕವಾಗಿ ಅನುಷ್ಠಾನವಾಗುತ್ತಿಲ್ಲ. ವಿದ್ಯುತ್ ಪೂರೈಕೆಯಲ್ಲಿ ಆಗಾಗ ವ್ಯತ್ಯಯ ಉಂಟಾಗುತ್ತಿರುವುದರಿಂದ ಬೆಳೆಗಳಿಗೆ ನೀರುಣಿಸಲು ಸಾಧ್ಯವಾಗದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಆರೋಪಿಸಿದರು.

ರಾಜ್ಯದಲ್ಲಿ ಮಳೆಯ ಕೊರತೆ ಎದುರಾಗಿರುವ ಸಂದರ್ಭದಲ್ಲಿ ಪಂಪ್‌ಸೆಟ್‌ಗಳಿಗೆ ನಿರಂತರವಾಗಿ ತ್ರಿಫೇಸ್ ವಿದ್ಯುತ್ ಪೂರೈಕೆ ಅತ್ಯಗತ್ಯವಾಗಿದೆ. ಆದರೆ ಅಗತ್ಯ ಪ್ರಮಾಣದಲ್ಲಿ ವಿದ್ಯುತ್ ಸಿಗದ ಕಾರಣ ಕೃಷಿ ಚಟುವಟಿಕೆಗಳಿಗೆ ತೀವ್ರ ಅಡಚಣೆ ಉಂಟಾಗುತ್ತಿದೆ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದರು.

ಮುಖಂಡ ಬಸವರಾಜ ತಳವಾರ ಮಾತನಾಡಿ, ಬರದ ಪರಿಸ್ಥಿತಿಯಲ್ಲಿ ರೈತರ ನೆರವಿಗೆ ಸರ್ಕಾರ ಮತ್ತು ಕೆಇಬಿ ಇಲಾಖೆ ಧಾವಿಸಬೇಕು. ಕನಿಷ್ಠ ಏಳು ತಾಸು ನಿರಂತರ ತ್ರಿಫೇಸ್ ವಿದ್ಯುತ್ ಪೂರೈಕೆ ಮಾಡಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆ ಸ್ಥಳಕ್ಕೆ ಆಗಮಿಸಿದ ಕೆಇಬಿ ಸೆಕ್ಷನ್ ಅಧಿಕಾರಿ ವಿರೂಪಾಕ್ಷ ಸರ್ವಿ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಕೊಚ್ಚಿ ಹಾಗೂ ಕಾರ್ಯನಿರ್ವಾಹಕ ಅಭಿಯಂತರ ರಾಜೂರ ರೈತರ ಅಹವಾಲು ಆಲಿಸಿ, ಪಂಪ್‌ಸೆಟ್‌ಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆ ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಅಧಿಕಾರಿಗಳ ಭರವಸೆಯ ಬಳಿಕ ರೈತರು ಪ್ರತಿಭಟನೆಯನ್ನು ಹಿಂಪಡೆದರು.

ಪ್ರತಿಭಟನೆಯಲ್ಲಿ ಸುರೇಶ ನಾಯ್ಕರ್, ಶಿವಕುಮಾರ ಮಲ್ಲಾಪೂರ, ಶಿದ್ದಪ್ಪ ಹನಮನಾಳ, ರವಿ ಯತ್ನಟ್ಟಿ, ಮಂಜುನಾಥ ಡಂಬಳ, ಗಣೇಶ ಬಂಡಿವಡ್ಡರ, ದೇವಪ್ಪ ಜಂತ್ಲಿ, ರಮೇಶ ಬಸವರಡ್ಡಿ, ಉಮೇಶ ಹೊಸಮನಿ, ದೇವೇಂದ್ರ ಮುನೆನಕೊಪ್ಪ, ಪ್ರಮೋದ ಅಣ್ಣಿಗೇರಿ, ದೇವರಾಜ ಉಪಾದ್ಯ ಸೇರಿದಂತೆ ಅನೇಕ ರೈತರು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.

“ಸರ್ಕಾರ ಏಳು ತಾಸು ಉಚಿತ ವಿದ್ಯುತ್ ನೀಡುವುದಾಗಿ ಘೋಷಿಸಿದ್ದರೂ ರೈತರಿಗೆ ಸಮರ್ಪಕ ವಿದ್ಯುತ್ ಸಿಗುತ್ತಿಲ್ಲ. ಬೆಳೆಗಳು ಒಣಗುವ ಪರಿಸ್ಥಿತಿ ನಿರ್ಮಾಣವಾಗಿದ್ದು, ರೈತರ ಬದುಕು ಸಂಕಷ್ಟಕ್ಕೆ ಸಿಲುಕಿದೆ. ಕೂಡಲೇ ನಿರಂತರ ತ್ರಿಫೇಸ್ ವಿದ್ಯುತ್ ಪೂರೈಕೆ ಕಲ್ಪಿಸಬೇಕು.”

– ಸಂಗಪ್ಪ ಕುಂಬಾರ, ರೈತ ಮುಖಂಡ

ಮರ್ಚಂಟ್ಸ್ ಲಿಬರಲ್ ಕೋ-ಆಪ್ ಬ್ಯಾಂಕ್‌ಗೆ ₹3.81 ಕೋಟಿ ಲಾಭ

0

ವಿಜಯಸಾಕ್ಷಿ ಸುದ್ದಿ, ಗದಗ: ಮರ್ಚಂಟ್ಸ್ ಲಿಬರಲ್ ಕೋ-ಆಪ್ ಬ್ಯಾಂಕ್ ಲಿ., ಗದಗ 2025–26ನೇ ಸಾಲಿನಲ್ಲಿ ತೆರಿಗೆ ಪೂರ್ವ ₹3.81 ಕೋಟಿ ಲಾಭ ಗಳಿಸಿದ್ದು, ಸದಸ್ಯರಿಗೆ ಶೇ.12 ಡಿವಿಡೆಂಡ್ ಘೋಷಿಸಲಾಗಿದೆ ಎಂದು ಬ್ಯಾಂಕ್ ಅಧ್ಯಕ್ಷ ಮೋಹನ ಟಿ. ಕೋಟಿ ತಿಳಿಸಿದರು.

ನಗರದ ಎಸ್.ಬಿ.ಎಸ್. ಗಾರ್ಡನ್‌ನಲ್ಲಿ ನಡೆದ ಬ್ಯಾಂಕಿನ 62ನೇ ವಾರ್ಷಿಕ ಸರ್ವಸಾಧಾರಣ ಸಭೆಯಲ್ಲಿ ಮಾತನಾಡಿದ ಅವರು, ಬ್ಯಾಂಕಿನ ಎಲ್ಲ ಶಾಖೆಗಳಲ್ಲಿ ಕೋರ್ ಬ್ಯಾಂಕಿಂಗ್, ಐಎಂಪಿಎಸ್, ಎಟಿಎಂ, ಮೊಬೈಲ್ ಬ್ಯಾಂಕಿಂಗ್ ಸೇರಿದಂತೆ ಡಿಜಿಟಲ್ ಸೇವೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಲಾಗಿದೆ ಎಂದರು.

ಸಭೆಯಲ್ಲಿ ಎಸ್‌ಎಸ್‌ಎಲ್‌ಸಿ, ಪಿಯುಸಿ, ಪದವಿ ಹಾಗೂ ಸ್ನಾತಕೋತ್ತರ ಪರೀಕ್ಷೆಗಳಲ್ಲಿ ಶೇ.90ಕ್ಕಿಂತ ಹೆಚ್ಚು ಅಂಕ ಪಡೆದ ಸದಸ್ಯರ ಪ್ರತಿಭಾವಂತ ಮಕ್ಕಳಿಗೆ ಪ್ರೋತ್ಸಾಹಧನ ವಿತರಿಸಲಾಯಿತು. ರಾಷ್ಟ್ರ ಹಾಗೂ ರಾಜ್ಯ ಪ್ರಶಸ್ತಿ ಪುರಸ್ಕೃತ ಸದಸ್ಯರಿಗೆ ಪ್ರೋತ್ಸಾಹಧನ, ಸದಸ್ಯರ ಕಲ್ಯಾಣ ನಿಧಿ ಹಾಗೂ ಅಪಘಾತ ವಿಮೆ ಸೇರಿದಂತೆ ವಿವಿಧ ಕಲ್ಯಾಣ ಯೋಜನೆಗಳನ್ನು ಮುಂದುವರಿಸಲಾಗಿದೆ ಎಂದು ತಿಳಿಸಲಾಯಿತು.

ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಕುಬೇರಗೌಡ ಎಸ್. ಪರ್ವತಗೌಡ್ರ, ಆಡಳಿತ ಮಂಡಳಿ ಸದಸ್ಯರಾದ ವಿಶ್ವನಾಥ ಸಿ. ರಾಮನಕೊಪ್ಪ, ಶರಣಬಸಪ್ಪ ಕೆ. ಕುರಡಗಿ, ತೋತೋಸಾ ಆರ್. ಭಾಂಡಗೆ, ಸಂತೋಷ ಬಿ. ಅಬ್ಬಿಗೇರಿ, ಚಂದ್ರಕಾಂತ ಎಸ್. ಸಂಕಣ್ಣವರ, ಶಿವಾನಂದ ಎಚ್. ನಡವಲಗುಡ್ಡ, ಚನವೀರಪ್ಪ ಟಿ. ದುಂದೂರ, ಶಿವವ್ವ ಕೆ. ಕುರಡಗಿ, ಪಾರ್ವತಿದೇವಿ ಎಸ್. ಸಂಕಣ್ಣವರ, ವೃತ್ತಿಪರ ನಿರ್ದೇಶಕರಾದ ಸಿ.ಎ. ಬಸವರಾಜ ಎಂ. ಬಳಗೇರಿ ಹಾಗೂ ಬಸವರಾಜ ಎಂ. ಬಂದಕ್ಕನವರ, ಬ್ಯಾಂಕಿನ ಶೇರುದಾರರು, ಠೇವಣಿದಾರರು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.

ಎಸ್‌ಎಸ್‌ಎಲ್‌ಸಿ ಸಾಧಕರಿಗೆ ಸನ್ಮಾನ

0

ವಿಜಯಸಾಕ್ಷಿ ಸುದ್ದಿ, ಗದಗ: 2026ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆಗೈದ ಸಿದ್ದಲಿಂಗನಗರ ಸರ್ಕಾರಿ ಪ್ರೌಢಶಾಲೆಯ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

ಪರೀಕ್ಷೆಯಲ್ಲಿ ಶಾಲೆಗೆ ಭೂಮಿಕಾ ಶೇನ್ದ್ರೆ ಪ್ರಥಮ, ಉಮಾಮಹೇಶ್ವರಿ ಬುಕ್ಕಸಾಗರಮಠ ದ್ವಿತೀಯ ಹಾಗೂ ಮೇಹಕ್ ಇಲ್ಲಾಳ ತೃತೀಯ ಸ್ಥಾನ ಪಡೆದು ಶಾಲೆಯ ಕೀರ್ತಿ ಹೆಚ್ಚಿಸಿದರು. ಸಾಧಕ ವಿದ್ಯಾರ್ಥಿನಿಯರನ್ನು ಗಣ್ಯರು ಅಭಿನಂದಿಸಿ, ಸನ್ಮಾನಿಸಿದರು.

ಕಾರ್ಯಕ್ರಮದಲ್ಲಿ ಸಭಾಪತಿ ಬಸವರಾಜ ಹೊರಟ್ಟಿ, ವಿಧಾನ ಪರಿಷತ್ ಸದಸ್ಯ ಪ್ರೊ. ಎಸ್.ವಿ. ಸಂಕನೂರ, ಡಾ. ಬಸವರಾಜ ಧಾರವಾಡ, ಎಸ್.ಎಸ್. ಪಟ್ಟಣಶೆಟ್ಟಿ, ವಿದ್ಯಾವತಿ ಗಡಗಿ, ಎಂ.ಎಚ್. ಕಂಬಳಿ, ಶಂಕರ ಹಡಗಲಿ, ಐ.ಬಿ. ಬೆನಕಪ್ಪ, ಜಿ.ಎಂ. ಮುಂದಿನಮನಿ, ವಿ.ವಿ. ನಡುವಿನಮನಿ, ಬಿ.ಎಫ್. ಪೂಜಾರ, ಶರಣಪ್ಪ ನಾಗರಹಳ್ಳಿ, ಜಯಲಕ್ಷ್ಮಿ ಅಣ್ಣಿಗೇರಿ, ದತ್ತ ಪ್ರಸನ್ನ ಪಾಟೀಲ್, ಪ್ರಕಾಶ ಶೇನ್ದ್ರೆ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

ಸಾಮಾಜಿಕ ಕಾಳಜಿಯ ‘ದೇವಿ’ ಈ ವಾರ ಬಿಡುಗಡೆ

ವಿಜಯಸಾಕ್ಷಿ ಸುದ್ದಿ, ಬೆಂಗಳೂರು: ಸೂರ್ಯ ವಿಷನ್ ಬೆಂಗಳೂರು ನಿರ್ಮಾಣದ ‘ದೇವಿ’ ಕನ್ನಡ ಚಲನಚಿತ್ರ ಈ ವಾರ ರಾಜ್ಯಾದ್ಯಂತ ತೆರೆ ಕಾಣುತ್ತಿದ್ದು, ಮಕ್ಕಳ ಕನಸುಗಳು, ಪೋಷಕರ ಮಹತ್ವಾಕಾಂಕ್ಷೆ ಹಾಗೂ ಸಾಮಾಜಿಕ ಜವಾಬ್ದಾರಿಯಂತಹ ಸೂಕ್ಷ್ಮ ವಿಷಯಗಳನ್ನು ತೆರೆ ಮೇಲೆ ಕಟ್ಟಿಕೊಡಲಿದೆ.

ಬಡತನದಲ್ಲಿ ಬದುಕುತ್ತಿರುವ ತಾಯಿ ರೇಣುಕಾ ತನ್ನ ಮಗಳು ಗೌರಿ ಚಿತ್ರರಂಗದಲ್ಲಿ ದೊಡ್ಡ ನಾಯಕಿಯಾಗಿ ಹೆಸರು, ಹಣ ಮತ್ತು ಗೌರವ ಗಳಿಸಬೇಕು ಎಂಬ ಕನಸು ಕಾಣುತ್ತಾಳೆ. ಆದರೆ ಗೌರಿ ವೈದ್ಯೆಯಾಗಿ ಸಮಾಜಸೇವೆ ಮಾಡುವ ಕನಸು ಹೊಂದಿರುತ್ತಾಳೆ. ಮಗಳ ಇಚ್ಛೆ ಮತ್ತು ತಾಯಿಯ ಮಹತ್ವಾಕಾಂಕ್ಷೆಯ ನಡುವಿನ ಸಂಘರ್ಷ, ಸ್ಲಿಮ್ ಆಗುವ ಒತ್ತಡ, ಹಾರ್ಮೋನುಗಳ ಬದಲಾವಣೆ, ಮಾನಸಿಕ ತಲ್ಲಣ ಹಾಗೂ ಅದರ ಪರಿಣಾಮಗಳು ಕಥೆಗೆ ತಿರುವು ನೀಡುತ್ತವೆ.

ಪೋಷಕರ ಅತಿಯಾದ ನಿರೀಕ್ಷೆ, ಅಂಧಭಕ್ತಿ, ಬಡತನ ಮತ್ತು ಬಾಲ್ಯದ ಹಕ್ಕುಗಳ ನಡುವಿನ ಸಂಘರ್ಷವನ್ನು ಚಿತ್ರ ಪರಿಣಾಮಕಾರಿಯಾಗಿ ಅನಾವರಣಗೊಳಿಸಿದ್ದು, “ಮಕ್ಕಳ ಕನಸುಗಳನ್ನು ಹಾಳು ಮಾಡಬಾರದು; ಮಾಡಿದರೆ ಅದರ ಪರಿಣಾಮ ಭೀಕರವಾಗಬಹುದು” ಎಂಬ ಸಂದೇಶವನ್ನು ಸಾರುತ್ತದೆ.

ಚಿತ್ರದಲ್ಲಿ ಛಾಯಾರಾಣಿ, ಧನಲಕ್ಷ್ಮಿ, ರಂಗನಾಥ ನಂಜನಗೂಡು, ಮಣಿಕಂಠ ಸೂರ್ಯ, ಸುಕುಮಾರ, ಪ್ರೀತಿ ಎಸ್. ಬಾಬು, ಕಾವೇರಿ ಶ್ರೀಧರ್, ವೀರೇಂದ್ರ ಬೆಳ್ಳಿಚುಕ್ಕಿ ಹಾಗೂ ಕಾಳಿಪ್ರಸಾದ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ವಿನಾಯಕ ರೇವಡಿ ಅವರ ಛಾಯಾಗ್ರಹಣ, ಶಿವಸತ್ಯ ಸಂಗೀತ, ಕೃಷ್ಣಪ್ರಸಾದ ಹಳೇಬೀಡು ಸಂಭಾಷಣೆ, ಪೂರ್ಣೇಶ ಸಾಗರ ಚಿತ್ರಕಥೆ, ವೀರೇಂದ್ರ ಬೆಳ್ಳಿಚುಕ್ಕಿ ವಸ್ತ್ರ ವಿನ್ಯಾಸ, ಮುತ್ತುರಾಜ ಟಿ. ಸಂಕಲನ, ಸಚಿನ್ ಕಲರ್ ಗ್ರೇಡಿಂಗ್ ನಿರ್ವಹಿಸಿದ್ದಾರೆ. ಕಾಳಿಪ್ರಸಾದ್ ಕಥೆ, ಸಾಹಿತ್ಯ ಹಾಗೂ ನಿರ್ದೇಶನ ಮಾಡಿದ್ದು, ಮಾರುತಿ ಎಂ. ಸಹ ನಿರ್ಮಾಪಕರಾಗಿ, ವೀಣಾ ಎಂ. ನಿರ್ಮಾಪಕರಾಗಿ ಚಿತ್ರವನ್ನು ನಿರ್ಮಿಸಿದ್ದಾರೆ.

ಕುಟುಂಬ ಸಮೇತ ವೀಕ್ಷಿಸಬಹುದಾದ ಈ ಚಿತ್ರ ಮಕ್ಕಳ ಭಾವನೆ, ಬಾಲ್ಯದ ಸ್ವಾಯತ್ತತೆ ಹಾಗೂ ಪೋಷಕರ ಜವಾಬ್ದಾರಿಯ ಕುರಿತು ಸಮಾಜದಲ್ಲಿ ಚಿಂತನೆ ಮೂಡಿಸುವ ಪ್ರಯತ್ನ ಮಾಡಿದೆ.

ಅಣ್ಣಿಗೇರಿ ರೈಲ್ವೆ ನಿಲ್ದಾಣಕ್ಕೆ ‘ಆದಿಕವಿ ಪಂಪ’ ಹೆಸರಿಡಿ

0

ವಿಜಯಸಾಕ್ಷಿ ಸುದ್ದಿ, ಅಣ್ಣಿಗೇರಿ: ಕನ್ನಡದ ಆದಿಕವಿ ಪಂಪನ ಜನ್ಮಸ್ಥಳವಾದ ಅಣ್ಣಿಗೇರಿಯ ರೈಲ್ವೆ ನಿಲ್ದಾಣಕ್ಕೆ ‘ಆದಿಕವಿ ಪಂಪ ರೈಲ್ವೆ ನಿಲ್ದಾಣ’ ಎಂದು ನಾಮಕರಣ ಮಾಡಬೇಕೆಂಬ ಬೇಡಿಕೆ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ.

ಈ ಸಂಬಂಧ ಅಕಾಡೆಮಿ ಫಾರ್ ಕ್ರಿಯೇಟಿವ್ ಲರ್ನಿಂಗ್ ವತಿಯಿಂದ ನಡೆಸಲಾಗುತ್ತಿರುವ ನಿರಂತರ ಹೋರಾಟ ಮತ್ತು ಪ್ರಯತ್ನಗಳ ಸಮಗ್ರ ದಾಖಲೆ ಪುಸ್ತಕವನ್ನು ಧಾರವಾಡ ಜಿಲ್ಲಾಧಿಕಾರಿಗಳು ಹಾಗೂ ನೈರುತ್ಯ ರೈಲ್ವೆಯ ಮಹಾಪ್ರಬಂಧಕರಿಗೆ ಅಧಿಕೃತವಾಗಿ ಸಲ್ಲಿಸಲಾಯಿತು.

ಜತೆಗೆ, ಈ ಬೇಡಿಕೆಯನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಗೆ ತುರ್ತಾಗಿ ಶಿಫಾರಸು ಮಾಡುವಂತೆ ಮನವಿ ಪತ್ರವನ್ನೂ ಸಲ್ಲಿಸಲಾಯಿತು.

ಕನ್ನಡ ಸಾಹಿತ್ಯದ ಆದಿಕವಿ ಪಂಪ ಅವರ ಕೊಡುಗೆ ಅಪಾರವಾಗಿದ್ದು, ಅವರ ಜನ್ಮಭೂಮಿಯಾದ ಅಣ್ಣಿಗೇರಿಯ ರೈಲ್ವೆ ನಿಲ್ದಾಣಕ್ಕೆ ಅವರ ಹೆಸರನ್ನು ನಾಮಕರಣ ಮಾಡುವುದು ಕನ್ನಡ ನಾಡು, ಸಾಹಿತ್ಯ ಮತ್ತು ಇತಿಹಾಸಕ್ಕೆ ಸಲ್ಲಿಸುವ ಸೂಕ್ತ ಗೌರವವಾಗಲಿದೆ ಎಂದು ಅಕಾಡೆಮಿ ಅಭಿಪ್ರಾಯಪಟ್ಟಿದೆ.

ಈ ಸಂದರ್ಭದಲ್ಲಿ ಅಕಾಡೆಮಿ ಫಾರ್ ಕ್ರಿಯೇಟಿವ್ ಲರ್ನಿಂಗ್ ಸಂಸ್ಥೆಯ ಅಧ್ಯಕ್ಷ ಡಾ. ಮಹಮ್ಮದ್ ಸಾದಿಕ್ ಸೈಯದ್, ನಿರ್ದೇಶಕರಾದ ಶಿವಾನಂದ ಚವಡಿ, ವಿಠ್ಠಲ ರಾಮಣ್ಣವರ ಹಾಗೂ ಶಿವಾನಂದ ಕಪ್ಪತ್ತನವರ ಉಪಸ್ಥಿತರಿದ್ದರು.

ರಾತ್ರೋರಾತ್ರಿ 3 ಟನ್ ದ್ರಾಕ್ಷಿ ಕಳ್ಳತನ: ರೈತನಿಗೆ 3 ಲಕ್ಷ ರೂ. ನಷ್ಟ!

ಚಿಕ್ಕಬಳ್ಳಾಪುರ: ಚಿನ್ನ, ಬೆಳ್ಳಿ, ನಗದು ಕಳ್ಳತನ ಸಾಮಾನ್ಯ. ಆದರೆ ಇದೀಗ ಕಳ್ಳರ ಕಣ್ಣು ರೈತರ ತೋಟಗಳ ಮೇಲೆ ಬಿದ್ದಿದೆ.

ಟೊಮೆಟೊ, ದಾಳಿಂಬೆ ಬಳಿಕ ಇದೀಗ ದ್ರಾಕ್ಷಿ ತೋಟಕ್ಕೆ ನುಗ್ಗಿದ ಕಳ್ಳರು, ರಾತ್ರೋರಾತ್ರಿ ಲಕ್ಷಾಂತರ ರೂ. ಮೌಲ್ಯದ ದ್ರಾಕ್ಷಿಯನ್ನು ಕದ್ದೊಯ್ದ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಕೊಳವನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ರೈತ ಬಸವರಾಜ್ ಎಂಬುವವರಿಗೆ ಸೇರಿದ ತೋಟದಲ್ಲಿ ಕಳ್ಳತನ ನಡೆದಿದೆ. ಬಸವರಾಜ್ ತಮ್ಮ ತೋಟದಲ್ಲಿ ರೆಡ್ ಗ್ಲೋಬ್ ತಳಿಯ ದ್ರಾಕ್ಷಿ ಬೆಳೆದಿದ್ದರು. ಪ್ರಸ್ತುತ ಮಾರುಕಟ್ಟೆಯಲ್ಲಿ ಕೆಜಿಗೆ ಸುಮಾರು 150 ರೂ. ಬೆಲೆ ಹಾಗೂ ಭಾರೀ ಬೇಡಿಕೆ ಇದೆ.

ದ್ರಾಕ್ಷಿ ಗೊಂಚಲುಗಳು ಒಂದೂವರೆಯಿಂದ ಎರಡೂವರೆ ಕೆಜಿಯಷ್ಟು ತೂಕ ಬರುವಂತೆ ಬೆಳೆದಿದ್ದು, ವರ್ತಕರು ತೋಟದಲ್ಲೇ ಖರೀದಿಸಿ ಕಟಾವು ಮಾಡಿಕೊಂಡು ಹೋಗುತ್ತಿದ್ದರು. ಆದರೆ, ರಾತ್ರಿ ವೇಳೆ ತೋಟಕ್ಕೆ ನುಗ್ಗಿದ ಕಳ್ಳರು ಸುಮಾರು ಮೂರು ಟನ್ ದ್ರಾಕ್ಷಿಯನ್ನು ಕಟಾವು ಮಾಡಿಕೊಂಡು ಪರಾರಿಯಾಗಿದ್ದಾರೆ.

3 ಲಕ್ಷ ರೂ. ಮೌಲ್ಯದ ದ್ರಾಕ್ಷಿ ಕಳವು:

ಕಳುವಾದ ದ್ರಾಕ್ಷಿಯ ಒಟ್ಟು ಮೌಲ್ಯ ಸುಮಾರು 3 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಮಾಹಿತಿ ತಿಳಿದ ತಕ್ಷಣ ನಂದಿಗಿರಿಧಾಮ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ತೋಟದ ಹಿಂಭಾಗದಲ್ಲಿರುವ ಕೆರೆಯ ಬಳಿ ವಾಹನ ನಿಲ್ಲಿಸಿ, ಅಲ್ಲಿಂದ ದ್ರಾಕ್ಷಿಯನ್ನು ಸಾಗಿಸಿರುವ ಶಂಕೆ ವ್ಯಕ್ತವಾಗಿದೆ. ಈ ಸಂಬಂಧ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಈ ಹಿಂದೆ ಟೊಮೆಟೊ ಹಾಗೂ ದಾಳಿಂಬೆ ಬೆಲೆ ಏರಿಕೆಯಾದ ಸಂದರ್ಭದಲ್ಲೂ ತೋಟಗಳಿಗೆ ನುಗ್ಗಿ ಬೆಳೆ ಕಳವು ಮಾಡಿದ್ದ ಪ್ರಕರಣಗಳು ವರದಿಯಾಗಿದ್ದವು. ಆದರೆ ದ್ರಾಕ್ಷಿ ತೋಟದಲ್ಲಿ ಇಂತಹ ಕಳ್ಳತನ ನಡೆದಿರುವುದು ಇದೇ ಮೊದಲ ಬಾರಿ ಎನ್ನಲಾಗಿದೆ.

ಒಂದೇ ರಾತ್ರಿಯಲ್ಲಿ ಲಕ್ಷಾಂತರ ರೂ. ಮೌಲ್ಯದ ದ್ರಾಕ್ಷಿ ಕಳುವಾಗಿರುವುದು ಜಿಲ್ಲೆಯ ರೈತರನ್ನು ಬೆಚ್ಚಿಬೀಳಿಸಿದೆ. ತೋಟಗಾರಿಕಾ ಬೆಳೆಗಳ ಮೇಲೆ ಕಳ್ಳರ ಕಣ್ಣು ಬೀಳುತ್ತಿರುವ ಹಿನ್ನೆಲೆಯಲ್ಲಿ ತೋಟಗಳಿಗೆ ಸೂಕ್ತ ಭದ್ರತೆ ಒದಗಿಸಬೇಕು ಹಾಗೂ ಆರೋಪಿಗಳನ್ನು ಶೀಘ್ರ ಬಂಧಿಸಬೇಕು ಎಂದು ಸ್ಥಳೀಯ ರೈತರು ಪೊಲೀಸರನ್ನು ಒತ್ತಾಯಿಸಿದ್ದಾರೆ.