Home Blog

ನೆಮ್ಮದಿಯ ಬದುಕಿಗೆ ಧರ್ಮ ಬೋಧನೆಗಳು ಅವಶ್ಯ

0

ವಿಜಯಸಾಕ್ಷಿ ಸುದ್ದಿ, ಗದಗ: ನೆಮ್ಮದಿಯ ಬದುಕಿಗೆ, ಮಾನವ ಕಲ್ಯಾಣಕ್ಕಾಗಿ ಆಧ್ಯಾತ್ಮಿಕ ಚಿಂತನೆಗಳು, ಧರ್ಮ ಬೋಧನೆಗಳು ಅವಶ್ಯ ಎಂದು ವಿಧಾನ ಪರಿಷತ್ ಸದಸ್ಯ ಪ್ರೊ. ಎಸ್.ವ್ಹಿ. ಸಂಕನೂರ ಹೇಳಿದರು.

ಅವರು ನಗರದ ಗಾಣಿಗ ಭವನದಲ್ಲಿ ಗದಗ-ಬೆಟಗೇರಿ ಶ್ರೀ ಸಿದ್ಧಾಂತ ಶಿಖಾಮಣಿ ಆಧ್ಯಾತ್ಮಿಕ ಪ್ರವಚನ ಸಮಿತಿ ಶ್ರೀಮದ್ ಕಾಶೀ ನೂತನ ಜಗದ್ಗುರುಗಳವರ ಆಷಾಡ ಮಾಸದ ಇಷ್ಟಲಿಂಗ ಮಹಾಪೂಜೆ ಹಾಗೂ ಶ್ರೀ ಸಿದ್ಧಾಂತ ಶಿಖಾಮಣಿ ಆಧ್ಯಾತ್ಮಿಕ ಪ್ರವಚನ 10 ದಿನಗಳ ಮಾಲಿಕೆಯನ್ನು ಉದ್ಘಾಟಿಸಿ ಮಾತನಾಡಿದರು.

ನೈತಿಕ ಮೌಲ್ಯಗಳು ಕುಸಿಯುತ್ತಿರುವ ಇಂದಿನ ದಿನಗಳಲ್ಲಿ ಜನತೆಗೆ ಮಾನಸಿಕ ನೆಮ್ಮದಿ ಇಲ್ಲದಂತಾಗಿದೆ. ಹಣ-ಅಧಿಕಾರದ ಹಿಂದೆ ಬಿದ್ದು ನೆಮ್ಮದಿಯನ್ನು ಕಳೆದುಕೊಳ್ಳುತ್ತಿದ್ದೇವೆ. ಇಂದು ಮಾನವ ಮಾನವನಾಗಿ ಬದುಕಬೇಕು. ಅದಕ್ಕಾಗಿ ವೀರಶೈವ ಧರ್ಮವನ್ನು ಬೋಧಿಸುವ ಧರ್ಮದ ಸನ್ಮಾರ್ಗದಲ್ಲಿ ಮುನ್ನಡೆಸುವ ಸಿದ್ಧಾಂತ ಶಿಖಾಮಣಿಯ ಆಧ್ಯಾತ್ಮಿಕ ಪ್ರವಚನವನ್ನು ನಾವಿಂದು ಆಲಿಸಬೇಕಿದೆ ಎಂದರು.

ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಜಂಗಮವಾಡಿಮಠ ವಾರಣಾಸಿ ಕಾಶೀ ಮಹಾಪೀಠದ ಶ್ರೀಮತ್ ಕಾಶೀ ಜ್ಞಾನಸಿಂಹಾಸನಾಧೀಶ್ವರ ಜ. ಡಾ. ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಭಗವತ್ಪಾದಂಗಳವರು, ವೀರಶೈವ ಲಿಂಗಾಯತ ಧರ್ಮಕ್ಕೆ ಧರ್ಮ ಗ್ರಂಥವಾಗಿರುವ ಶ್ರೀ ಸಿದ್ಧಾಂತ ಶಿಖಾಮಣಿ ಸಾಧಕರನ್ನು ಸಾಧನೆಯ ಮಾರ್ಗಕ್ಕೆ, ಧರ್ಮದ ಸನ್ಮಾರ್ಗದಲ್ಲಿ ಮುನ್ನಡೆಸುವಂತದ್ದು ಎಂದರು.

ನರೇಗಲ್ ಹಿರೇಮಠದ ಪೂಜ್ಯ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳು ಶ್ರೀ ಸಿದ್ಧಾಂತ ಶಿಖಾಮಣಿ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಗಣ್ಯರಾದ ಶರಣಬಸಪ್ಪ ಗುಡಿಮನಿ, ಬಸವರಾಜ ಬಿಂಗಿ, ಶ್ರೀಕಾಂತ ಲಕ್ಕುಂಡಿ, ರಾಜು ಕುರಡಗಿ, ಮುರುಗೇಶ ಬಡ್ನಿ, ವೀರಣ್ಣ ಕರಬಿಷ್ಠಿ, ಫಕ್ಕೀರಪ್ಪ ಹೆಬಸೂರ, ಶಿವಾನಂದಯ್ಯ ಹಿರೇಮಠ, ಸಿ.ಕೆ.ಮಾಳಶೆಟ್ಟಿ, ಶಂಕರ ಹಾನಗಲ್ಲ, ಜಿ.ಎಸ್.ಗಡ್ಡದೇವರಮಠ, ಗುರಣ್ಣ ಬಳಗಾನೂರ, ಶ್ವೇತಾ ದಂಡಿನ, ವಿಜಯಲಕ್ಷ್ಮೀ ದಿಂಡೂರ ಅವರಿಗೆ ಪೂಜ್ಯರು ಸನ್ಮಾನಿಸಿ ಆಶೀರ್ವದಿಸಿದರು.

ಕಾಂಚನಮಾಲಾ ಬಾಳಿಹಳ್ಳಿಮಠ, ಶಿವಯೋಗಿ ತೆಗ್ಗಿನಮಠ, ಸಿ.ಜಿ. ಜಿನಗಾ, ಈಶ್ವರಪ್ಪ ಮುನವಳ್ಳಿ, ಬಸವರಾಜ ಹೆರಕಲ್, ಜಾಹ್ನವಿ ದೇಸಾಯಿ ಅವರಿಗೆ ಪೂಜ್ಯರು ಸನ್ಮಾನಿಸಿ ಆಶೀರ್ವದಿಸಿದರು.

ಡಾ. ಶಿವಬಸಯ್ಯ ಗಡ್ಡದಮಠ ಪ್ರಾರ್ಥಿಸಿದರು. ಮಂಜುನಾಥ ಬೇಲೇರಿ ಸ್ವಾಗತಿಸಿದರು. ಚಂದ್ರು ಬಾಳಿಹಳ್ಳಿಮಠ ಪ್ರಾಸ್ತಾವಿಕವಾಗಿ ಮಾತನಾಡಿದರು ವ್ಹಿ.ಕೆ. ಗುರುಮಠ ನಿರೂಪಿಸಿ ವಂದಿಸಿದರು.

ಮಾಜಿ ಶಾಸಕ ಡಿ.ಆರ್. ಪಾಟೀಲ ಮಾತನಾಡಿ, ಗದುಗಿನಲ್ಲಿ ಶ್ರೀಮತ್ ಕಾಶೀ ಪೀಠದ ಹಿರಿಯ ಜಗದ್ಗುರುಗಳು ಪ್ರತಿ ವರ್ಷ ಆಷಾಢ ಮಾಸದ ಇಷ್ಟಲಿಂಗ ಮಹಾಪೂಜೆ ಹಾಗೂ ಶ್ರೀ ಸಿದ್ಧಾಂತ ಶಿಖಾಮಣಿ ಆಧ್ಯಾತ್ಮಿಕ ಪ್ರವಚನ ನಡೆಸಿದ ಪರಿಣಾಮವಾಗಿ ಗದಗ ಪರಿಸರದಲ್ಲಿ ಧರ್ಮಜಾಗೃತಿ, ಆಧ್ಯಾತ್ಮಿಕ ಚಿಂತನೆಗಳು ಜನತೆಯನ್ನು ಸನ್ಮಾರ್ಗದಲ್ಲಿ ಮುನ್ನಡೆಸಿವೆ ಎಂದರು.

ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್, ಮಾಧ್ಯಮ ಸಂಜೀವಿನಿ ಯೋಜನೆಗೆ ನಾಳೆ ಸಿಎಂ ಚಾಲನೆ!

ಬೆಂಗಳೂರು:- ಕರ್ನಾಟಕದ ಗ್ರಾಮೀಣ ಭಾಗದ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ಹಾಗೂ ಮಾಧ್ಯಮ ಸಂಜೀವಿನಿ ಯೋಜನೆಗೆ ನಾಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಲಿದ್ದಾರೆ. ಈ ಬಗ್ಗೆ ಸಿ.ಎಂ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಮಾಹಿತಿ ನೀಡಿದ್ದಾರೆ.

ಮಾನ್ಯ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆವಿ ಪ್ರಭಾಕರ್ ಈ ಬಗ್ಗೆ ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ. “ಪತ್ರಕರ್ತರಿಗೆ 5 ಲಕ್ಷ ರೂ.ವರೆಗೆ ನಗದು ರಹಿತ ಉಚಿತ ಆರೋಗ್ಯ ಸೇವೆಯ ಮುಖ್ಯಮಂತ್ರಿಗಳ ಮಾಧ್ಯಮ ಸಂಜೀವಿನಿ ಹಾಗೂ ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್‌ಪಾಸ್ ಸೇವಾ ಸೌಲಭ್ಯಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾಳೆ ಚಾಲನೆ ನೀಡಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಈ ಮೂಲಕ ಪತ್ರಕರ್ತರಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ಕೊಟ್ಟಂತಾಗಿದೆ. ಇನ್ನೂ ಕಳೆದ ಬಜೆಟ್ ನಲ್ಲಿ ಪತ್ರಕರ್ತರ ಅಭ್ಯುದಯಕ್ಕಾಗಿ ಸಿಎಂ ಸಿದ್ದರಾಮಯ್ಯ ಅವರು ಒಂದಿಷ್ಟು ಯೋಜನೆಗಳನ್ನು ಘೋಷಿಸಿದ್ದರು. ಒಟ್ಟು 2,500 ಪತ್ರಕರ್ತರು ಹಾಗೂ ಅವರ ಅವಲಂಬಿತ ಕುಟುಂಬ ಸದಸ್ಯರಿಗೆ 5 ಲಕ್ಷ ರೂ.ವರೆಗೆ ನಗದುರಹಿತ ಚಿಕಿತ್ಸೆಗಾಗಿ ‘ಮುಖ್ಯಮಂತ್ರಿಗಳ ಮಾಧ್ಯಮ ಸಂಜೀವಿನಿ’ ಯೋಜನೆಯನ್ನು ಅನುಷ್ಠಾನಗೊಳಿಸುವುದಾಗಿ ಹೇಳಿದ್ದರು. ಅದರಂತೆ ನಾಳೆ ಅಂದ್ರೆ ಜುಲೈ 1 ರಂದು ಸಿಎಂ ಸಿದ್ದರಾಮಯ್ಯ ಅವರು ಚಾಲನೆ ಕೊಡಲಿದ್ದಾರೆ.

ಅನುದಾನವನ್ನು ಎಲ್ಲ ವಾರ್ಡ್‌ ಗಳಿಗೂ ಹಂಚಿಕೆ ಮಾಡಿ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದ ಅಭಿವೃದ್ಧಿಗಾಗಿ ಸರ್ಕಾರದಿಂದ ಬಿಡುಗಡೆ ಆಗಿರುವ ಅನುದಾನವನ್ನು ಎಲ್ಲ 23 ವಾರ್ಡ್‌ ಗಳಿಗೆ ನೀಡುವ ಬದಲು ಅಧ್ಯಕ್ಷರು ಹಾಗೂ ಕಾಂಗ್ರೆಸ್ ಪಕ್ಷದ ಸದಸ್ಯರು ತಮಗೆ ಬೇಕಾದ ವಾರ್ಡ್ಗಳಿಗೆ ಹಾಕಿಕೊಂಡಿದ್ದಾರೆ. ಕಾರಣ, ಅನುದಾನವನ್ನು ಎಲ್ಲ ವಾರ್ಡ್‌ ಗಳಿಗೂ ಹಂಚಿಕೆ ಮಾಡಬೇಕು ಎಂದು ಒತ್ತಾಯಿಸಿ ಸೋಮವಾರ ಲಕ್ಷ್ಮೇಶ್ವರ ಪುರಸಭೆಯ ಬಿಜೆಪಿ ಸದಸ್ಯರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಆಗ್ರಹಿಸಿದರು.

ಈ ಸಂದರ್ಭದಲ್ಲಿ ಪುರಸಭೆ ಸದಸ್ಯೆ ಅಶ್ವಿನಿ ಅಂಕಲಕೋಟಿ ಮಾತನಾಡಿ, ಪಟ್ಟಣದ ಅಭಿವೃದ್ಧಿಗಾಗಿ 1 ಕೋಟಿ 93 ಲಕ್ಷ ರೂಪಾಯಿ ಅನುದಾನ ಬಿಡುಗಡೆಯಾಗಿದೆ. ಆದರೆ ಅಧ್ಯಕ್ಷರು ಹಾಗೂ ಕಾಂಗ್ರೆಸ್ ಪಕ್ಷದ ಸದಸ್ಯರು ಅಧಿಕಾರಿಗಳ ಮೇಲೆ ಒತ್ತಡ ಹಾಕಿ ಏಕಾಏಕಿ ವಿಶೇಷ ಸಾಮಾನ್ಯ ಸಭೆ ನಡೆಸಿ ಕೇವಲ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ಸದಸ್ಯರ ವಾರ್ಡ್ಗಳಿಗೆ ಕ್ರಿಯಾಯೋಜನೆ ತಯಾರಿಸಿ ಆಡಳಿತಾತ್ಮಕ ಅನುಮೋದನೆಗೆ ಸಲ್ಲಿಸಿರುವುದು ಖಂಡನೀಯ. ಎಲ್ಲ ವಾರ್ಡ್ಗಳ ಜನರು ಪುರಸಭೆಗೆ ತೆರಿಗೆ ಪಾವತಿಸುವುದರಿಂದ ಎಲ್ಲರಿಗೂ ಸಮಾನವಾದ ನ್ಯಾಯವನ್ನು ಒದಗಿಸಬೇಕಾದದ್ದು ಪ್ರಜಾಪ್ರತಿನಿಧಿಗಳ ಕರ್ತವ್ಯ.

ಈಚೆಗೆ ಸುರಿದ ಮಳೆಗೆ ಪ್ರವಾಹ ರೀತಿಯಲ್ಲಿ ಮಳೆ ನೀರು ಹರಿದು ಸಾಕಷ್ಟು ತೊಂದರೆ ಆಗಿರುವ ವಾರ್ಡ್ಗಳಲ್ಲಿ ಕಾಮಗಾರಿಗಳನ್ನು ಕೈಗೊಳ್ಳಲು ಸದಸ್ಯರು ಸೂಚಿಸಿದರೂ ಸಹ ಬೇಜವಾಬ್ದಾರಿಯುತ ಹೇಳಿಕೆಗಳನ್ನು ನೀಡಿ ತಾರತಮ್ಯ ಮಾಡಿರುವುದು ಕಂಡು ಬಂದಿದೆ. ಕಾರಣ ಜಿಲ್ಲಾಧಿಕಾರಿಗಳು ವಿಶೇಷ ಸಾಮಾನ್ಯ ಸಭೆಯಲ್ಲಿ ಮಂಡಿಸಿದ ಕ್ರಿಯಾಯೋಜನೆಗೆ ಅನುಮೋದನೆ ನೀಡಬಾರದು. ಹಾಗೇನಾದರೂ ಅನುಮೋದನೆ ಕೊಟ್ಟಿದ್ದೇ ಆದರೆ ಪುರಸಭೆ ಎದುರು ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಪುರಸಭೆ ಬಿಜೆಪಿ ಸದಸ್ಯರಾದ ಮಹೇಶ ಹುಲಬಜಾರ, ವಾಣಿ ಹತ್ತಿ, ಮಹಾದೇವಪ್ಪ ಅಣ್ಣಿಗೇರಿ, ಪೂರ್ಣಿಮಾ ಪಾಟೀಲ, ಕವಿತಾ ಶೆರಸೂರಿ, ಶೋಭಾ ಮೆಣಸಿನಕಾಯಿ, ಮಂಜಕ್ಕ ಗುಂಜಳ, ಪೂಜಾ ಖರಾಟೆ, ಮಂಜುನಾಥ ಹೊಗೆಸೊಪ್ಪಿನ, ರಮೇಶ ಹಾಳದೋಟದ, ರುದ್ರಪ್ಪ ಉಮಚಗಿ, ಬಸವರಾಜ ಕಲ್ಲೂರ ಇದ್ದರು.

ಬಿಜೆಪಿ ಮುಖಂಡ ಗಂಗಾಧರ ಮೆಣಸಿನಕಾಯಿ ಮಾತನಾಡಿ, ಅನುದಾನವನ್ನು ಎಲ್ಲ ವಾರ್ಡ್‌ ಗಳ ಅಭಿವೃದ್ಧಿಗೆ ಬಳಸುವುದು ನ್ಯಾಯ. ಆದರೆ ಕಾಂಗ್ರೆಸ್ ಸದಸ್ಯರು ಪ್ರತಿನಿಧಿಸುವ ವಾರ್ಡ್‌ ಗಳಿಗೆ ಹಂಚಿಕೆ ಮಾಡಿರುವುದು ಪುರಸಭೆ ಅಧ್ಯಕ್ಷರ ಬೇಜವಾಬ್ದಾರಿಯನ್ನು ತೋರಿಸುತ್ತದೆ. ಆದ್ದರಿಂದ ಜಿಲ್ಲಾಧಿಕಾರಿಗಳು ಸಲ್ಲಿಸಿರುವ ಕ್ರಿಯಾಯೋಜನೆಯನ್ನು ಅನುಮೋದಿಸಬಾರದು. ಮತ್ತೊಮ್ಮೆ ಕ್ರಿಯಾಯೋಜನೆ ಸಿದ್ಧಪಡಿಸಬೇಕು. ಇಲ್ಲದಿದ್ದರೆ ಪುರಸಭೆ ಎದುರು ಪಕ್ಷದ ಕಾರ್ಯಕರ್ತರೊಂದಿಗೆ ಹೋರಾಟ ಮಾಡಲಾಗುವುದು ಎಂದು ತಿಳಿಸಿದರು.

ವಾಹನ ಸವಾರರ ಗಮನಕ್ಕೆ: ನಾಳೆಯಿಂದ ಬೆಂಗಳೂರಿನ ಈ ರಸ್ತೆಗಳ ಟೋಲ್‌ ದರ ಭಾರೀ ಹೆಚ್ಚಳ- ಯಾವ ವಾಹನಕ್ಕೆ ಎಷ್ಟು?

ಬೆಂಗಳೂರು:- ಇದು ವಾಹನ ಸವಾರರು ಮಿಸ್ ಮಾಡ್ದೇ ನೋಡಲೇಬೇಕಾದ ಸ್ಟೋರಿ. ನಾಳೆಯಿಂದ ಬೆಂಗಳೂರಿನ ಪ್ರಮುಖ ರಸ್ತೆಯ ಎರಡು ಟೋಲ್ ದರ ಏರಿಕೆಯಾಗಲಿದೆ.

ಬೆಂಗಳೂರು ಎಲಿವೇಟೆಡ್ ಕಾರಿಡಾರ್ ಟೋಲ್‍ವೇ ಶುಲ್ಕ ಹೆಚ್ಚಾಗಲಿದೆ. ಪರಿಣಾಮ ಸೆಂಟ್ರಲ್ ಸಿಲ್ಕ್ ಬೋರ್ಡ್‍ನಿಂದ ಎಲೆಕ್ಟ್ರಾನಿಕ್ಸ್ ಸಿಟಿಗೆ ಮತ್ತು ಕರ್ನಾಟಕ, ತಮಿಳುನಾಡು ಗಡಿಯ ಬಳಿಯ ಅತ್ತಿಬೆಲೆ ಕಡೆಯ ಮಾರ್ಗದಲ್ಲಿ ಚಲಿಸುವ ಪ್ರಯಾಣಿಕರು ಎಲಿವೇಟೆಡ್ ಹೆಚ್ಚಿನ ಟೋಲ್ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಈ ಕುರಿತ ಪರಿಷ್ಕೃತ ದರಗಳು ಮಾರ್ಚ್ 31 ರ ಸಗಟು ಬೆಲೆ ಸೂಚ್ಯಂಕ ಆಧರಿಸಿ ದರ ಏರಿಕೆ ಮಾಡಲಾಗಿದೆ.

ದಿನದ ಟೋಲ್ ದರ ಜೊತೆ ಜೊತೆಗೆ ತಿಂಗಳ ಪಾಸ್ ಹಾಗೂ ವಾರ್ಷಿಕ ಪಾಸ್ ದರವೂ ಹೆಚ್ಚಳವಾಗುತ್ತಿದೆ. ಕಾರ್, ಜೀಪ್, ಲಘು ವಾಹನ, ಭಾರಿ ವಾಹನಗಳಲ್ಲಿ ಕನಿಷ್ಠ 5 ರೂಪಾಯಿ ಹೆಚ್ಚಳವಾಗಲಿದೆ.

ಅತ್ತಿಬೆಲೆ ಟೋಲ್ ದರ ಹೆಚ್ಚಳ:-

ಕಾರುಗಳು ಏಕ ಬದಿ ಪ್ರಯಾಣಕ್ಕೆ 40 ರೂಪಾಯಿ (ಹಳೆ ಬೆಲೆ 35).

ಲಘು ವಾಹನಗಳು,‌ ಮಿನಿ ಬಸ್ 65 ರೂಪಾಯಿ (ಹಳೆ ಬೆಲೆ 60).

ಟ್ರಕ್, ಬಸ್ 125 ರೂಪಾಯಿ (ಹಳೆ ಬೆಲೆ 120).

ದೊಡ್ಡ ಮಲ್ಟಿ ಎಕ್ಸೆಲ್ ವಾಹನಗಳಿಗೆ ಒಂದು ಟ್ರಿಪ್‌ಗೆ 265 ರೂಪಾಯಿ ಇದೆ (ಹಳೆ ಬೆಲೆ 260).

ಎಲೆಕ್ಟ್ರಾನಿಕ್ ಸಿಟಿ ಫ್ಲೈ ಓವರ್ ದರ ಎಷ್ಟಾಗಲಿದೆ?

ಕಾರು, ಜೀಪ್, ನಾಲ್ಕು ಚಕ್ರದ ಲಘು ವಾಹನಗಳಿಗೆ ಒಂದು ಪ್ರಯಾಣಕ್ಕೆ 65 ರೂಪಾಯಿ (ಹಳೆ ಬೆಲೆ 60). ಎರಡು ಕಡೆಗಿನ ಪ್ರಯಾಣಕ್ಕೆ ರೂಪಾಯಿ 90 ರೂಪಾಯಿ (ಹಳೆ ಬೆಲೆ 85).

ದ್ವಿಚಕ್ರ ವಾಹನಗಳಿಗೆ ಒಂದು ಮಾರ್ಗದ ಪ್ರಯಾಣಕ್ಕೆ 25 ರೂಪಾಯಿ ಪಾವತಿಸಬೇಕಾಗಿದೆ (ಬದಲಾವಣೆ ಇಲ್ಲ).

ಲಾರಿ (ಟ್ರಕ್) ಹಾಗೂ ಬಸ್‌ಗಳಿಗೆ ಒಂದು ಬದಿ ಪ್ರಯಾಣಕ್ಕೆ 175 (ಹಳೆ ಬೆಲೆ 170) ರೂಪಾಯಿ.

ಮಲ್ಟಿ-ಆಕ್ಸಲ್ ವಾಹನಗಳಿಗೆ ಒಂದು ಬದಿಗೆ 350 ರೂಪಾಯಿ ಕಟ್ಟಬೇಕಿದೆ (ಹಳೆ ಬೆಲೆ 345).

ಆಟೋ ಓಡಿಸುವಾಗಲೇ ಹೃದಯಾಘಾತ: ದಿಢೀರ್ ರಸ್ತೆಗೆ ಕುಸಿದು ಚಾಲಕ ಸಾವು!

ಹಾಸನ:- ಜಿಲ್ಲೆಯಲ್ಲಿ ಹೃದಯಾಘಾತ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ರಾಜ್ಯದ ಜನರಲ್ಲಿ ಆತಂಕ ಮೂಡಿಸಿದೆ. ಅದರಂತೆ ಇಂದು ಸಂಜೆ ವೇಳೆ ಆಟೋ ಚಾಲಕನೋರ್ವ ಹೃದಯಾಘಾತದಿಂದ ರಸ್ತೆಗೆ ಕುಸಿದುಬಿದ್ದು ಸಾವನ್ನಪ್ಪಿದ ದುರ್ಘಟನೆ ನಡೆದಿದೆ.

ಮೃತರನ್ನು ಹಾಸನ ನಗರದ ರಂಗೋಲಿ ಹಳ್ಳ ಬಡಾವಣೆ ನಿವಾಸಿ ಸತ್ಯನಾರಾಯಣ ರಾವ್ (63) ಎಂದು ಗುರುತಿಸಲಾಗಿದೆ. ಅವರು ಪ್ರತಿದಿನದಂತೆ ಇಂದು ಬೆಳಿಗ್ಗೆಯೂ ಆಟೋ ಚಾಲನೆಗಾಗಿ ಮನೆಯಿಂದ ಹೊರಟಿದ್ದರು. ಹಾಸನಾಂಬ ದೇಗುಲ ಹಿಂಭಾಗದ ಹೊಸಲೈನ್ ರಸ್ತೆಯ ಬಳಿ ಆಟೋ ಚಲಾಯಿಸುತ್ತಿದ್ದ ವೇಳೆ ಅಸ್ವಸ್ಥರಾಗಿದ್ದು, ತಕ್ಷಣವೇ ಆಟೋದೊಳಗೆ ಕುಸಿದು ಬಿದ್ದರು. ಈ ಘಟನೆಯ ಸಮಯದಲ್ಲಿ ಅಕ್ಕಪಕ್ಕದಲ್ಲಿದ್ದ ಜನರು ಬೆಚ್ಚಿಬಿದ್ದು, ಸಹಾಯಕ್ಕೆ ಓಡಿದರು. ಸ್ಥಳದಲ್ಲೇ ಹಾಜರಿದ್ದ ನರ್ಸಿಂಗ್ ವಿದ್ಯಾರ್ಥಿಗಳು ತಕ್ಷಣ ಸತ್ಯನಾರಾಯಣರನ್ನು ಆಸ್ಪತ್ರೆಗೆ ಕರೆದೊಯ್ದರು. ಆದರೆ ಆಗಲೇ ಅವರ ಪ್ರಾಣ ಹೋಗಿದ್ದಾಗಿ ವೈದ್ಯರು ದೃಢಪಡಿಸಿದರು.

ಸತ್ಯನಾರಾಯಣ ರಾವ್ ಅವರು ಕೆಲ ಸಮಯದ ಹಿಂದೆ ಹೃದಯ ಸಂಬಂಧಿ ಖಾಯಿಲೆಗೆ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದರು. ಆದರೆ ಇಂದು ಬೆಳ್ಳಿಗ್ಗೆ ಮನೆಯಿಂದ ಆಟೋ ಚಾಲನೆಗಾಗಿ ಹೊರಟ ಕೆಲವೇ ನಿಮಿಷಗಳಲ್ಲಿ ಅಕಾಲಿಕ ಹೃದಯಾಘಾತದಿಂದ ಅವರು ಮೃತಪಟ್ಟಿದ್ದಾರೆ. ಘಟನೆಯಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಸಿದ್ಧಾಂತ ಶಿಖಾಮಣಿ ಜಾಗತಿಕ ಧರ್ಮಗ್ರಂಥ

0

ವಿಜಯಸಾಕ್ಷಿ ಸುದ್ದಿ, ಗದಗ: ಸಮಸ್ತ ಮನುಕುಲಕ್ಕೆ ಉಪದೇಶ ಮಾಡುವ ಗ್ರಂಥ ಸಿದ್ಧಾಂತ ಶಿಖಾಮಣಿ. ಈ ಪವಿತ್ರ ಗ್ರಂಥವನ್ನು ವೀರಶೈವ ಧರ್ಮಗ್ರಂಥ ಎಂದು ಬಣ್ಣಿಸಲಾಗಿದ್ದರೂ ಅದು ವೀರಶೈವರಿಗೆ ಅಷ್ಟೇ ಸೀಮಿತವಾಗಿಲ್ಲ. ಜಗತ್ತಿನ ಎಲ್ಲ ಧರ್ಮಿಯರೂ ಅಧ್ಯಯನ ಮಾಡುವುದರಿಂದ ಇದನ್ನು ಜಾಗತಿಕ ಧರ್ಮಗ್ರಂಥ ಎನ್ನಲಾಗಿದೆ ಎಂದು ಜಂಗಮವಾಡಿಮಠ ವಾರಣಾಸಿ ಕಾಶೀ ಮಹಾಪೀಠದ ಶ್ರೀಮತ್ ಕಾಶೀ ಜ್ಞಾನಸಿಂಹಾಸನಾಧೀಶ್ವರ ಜ. ಡಾ. ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಭಗವತ್ಪಾದಂಗಳವರು ಹೇಳಿದರು.

ಅವರು ರವಿವಾರ ನಗರದ ಗಾಣಿಗ ಭವನದಲ್ಲಿ ಗದಗ-ಬೆಟಗೇರಿ ಶ್ರೀ ಸಿದ್ಧಾಂತ ಶಿಖಾಮಣಿ ಆಧ್ಯಾತ್ಮಿಕ ಪ್ರವಚನ ಸಮಿತಿ ಶ್ರೀಮದ್ ಕಾಶೀ ನೂತನ ಜಗದ್ಗುರುಗಳವರ ಆಷಾಡ ಮಾಸದ ಇಷ್ಟಲಿಂಗ ಮಹಾಪೂಜೆ ಹಾಗೂ ಶ್ರೀ ಸಿದ್ಧಾಂತ ಶಿಖಾಮಣಿ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಎಲ್ಲ ಸಿದ್ಧಾಂತಗಳಿಗಿಂತ ಈ ಗ್ರಂಥವು ಮೇಲಿನ ಸ್ತರದಲ್ಲಿ ಇರುವುದರಿಂದ ವೀರಶೈವ ಧರ್ಮದ ಪ್ರಮುಖ ಗ್ರಂಥವೆಂದು ಬಣ್ಣಿಸಲಾಗಿದೆ. ಹೀಗಾಗಿ, ಈ ಗ್ರಂಥವನ್ನು ಎಲ್ಲರೂ ಓದಬೇಕು, ತಿಳಿಯಬೇಕು. ಅದರಂತೆ ಧರ್ಮದ ಹಾದಿಯಲ್ಲಿ ಮುನ್ನಡೆದು ತಮ್ಮ ಜೀವನವನ್ನು ಪಾವನ ಮಾಡಿಕೊಳ್ಳಬೇಕೆಂದರು.

ನೇತೃತ್ವ ವಹಿಸಿದ್ದ ಯಲಬುರ್ಗಾದ ಧರಮುರಡಿ ಹಿರೇಮಠದ ಪೂಜ್ಯ ಬಸವಲಿಂಗ ಶಿವಾಚಾರ್ಯ ಸ್ವಾಮಿಗಳು ಸಂದರ್ಭೋಚಿತವಾಗಿ ಮಾತನಾಡಿದರು. ನರೇಗಲ್ ಹಿರೇಮಠದ ಪೂಜ್ಯ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳು ಶ್ರೀ ಸಿದ್ಧಾಂತ ಶಿಖಾಮಣಿ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.

ಫಂಡರಪುರದ ಸುಭಾಸ ಸಿದ್ಧರಾಮ ಮಮಾನೆ ಅವರಿಗೆ ‘ಧರ್ಮಪ್ರಕಾಶ’ ಪ್ರಶಸ್ತಿಯನ್ನು ಹಾಗೂ ಉಡನಕಲ್‌ನ ಸರ್ಕಾರಿ ಪ್ರೌಢಶಾಲೆಯ ಸಂಗೀತ ಶಿಕ್ಷಕ ವೀರಭದ್ರಪ್ಪ ಹಿರೇಬೆನಕಲ್ ಅವರಿಗೆ ‘ದಿವ್ಯಾಂಗ ಪ್ರತಿಭಾ ಪುರಸ್ಕಾರ’ ನೀಡಿ ಗೌರವಿಸಲಾಯಿತು.

ಭಕ್ತಿಸೇವೆ ವಹಿಸಿಕೊಂಡಿದ್ದ ಪಂಚಾಕ್ಷರಯ್ಯ ಹಿರೇಮಠ, ಲಿಂಗರಾಜ ಶಿಗ್ಲಿಮಠ, ಎಸ್.ಎಸ್. ಮೇಟಿ, ಮರಿಸ್ವಾಮಿ ಹಿರೇಮಠ, ಅನ್ನಪೂರ್ಣ ಗಡಾದ, ಶಾಂತಾ ಹಿರೇಮಠ, ಶಾಂತೇಶ ಅರಮನಿ ದಂಪತಿಗಳನ್ನು ಪೂಜ್ಯರು ಆಶೀರ್ವದಿಸಿದರು ವ್ಹಿ.ಸಿ. ಧನ್ನೂರಹಿರೇಮಠ, ಕೆ.ವ್ಹಿ. ಪಾಟೀಲ, ಉಮೇಶ ಭೂಸ್ತ, ಗುರುಸಿದ್ಧಯ್ಯ ಹಿರೇಮಠ ವೇದಿಕೆಯ ಮೇಲಿದ್ದರು.

ಕಸ್ತೂರಿಬಾಯಿ ಕಮ್ಮಾರ ಅವರಿಂದ ಸಂಗೀತ ಜರುಗಿತು. ಸುರೇಶ ಅಬ್ಬಿಗೇರಿ ಸ್ವಾಗತಿಸಿದರು. ನಿತ್ಯಂ ಯೋಗ ಕೇಂದ್ರದ ಮಹಿಳೆಯರಿಂದ ನೃತ್ಯ ದರ್ಶನ ಜರುಗಿತು. ವ್ಹಿ.ಕೆ. ಗುರುಮಠ ನಿರೂಪಿಸಿ ವಂದಿಸಿದರು.

ಗುಳೇದಗುಡ್ಡದ ಒಪ್ಪತ್ತೇಶ್ವರ ಮಠದ ಪೂಜ್ಯ ಒಪ್ಪತ್ತೇಶ್ವರ ಮಹಾಸ್ವಾಮಿಗಳು ಮಾತನಾಡಿ, ಎಲ್ಲರೂ ಧರ್ಮದ ಸನ್ಮಾರ್ಗದಲ್ಲಿ ಮುನ್ನಡೆಯಬೇಕು. ಭಾರತೀಯ ಸಂಸ್ಕೃತಿ, ಸಂಸ್ಕಾರವನ್ನು ಪಾಲಿಸುವ ಮೂಲಕ ಮಕ್ಕಳಿಗೂ ಇವುಗಳನ್ನು ರೂಢಿಸಬೇಕು. ಈ ಶರೀರಕ್ಕೆ ಸದ್ಗುಣಗಳ ಸಂಸ್ಕಾರ ನೀಡಿದಲ್ಲಿ ಮೋಕ್ಷ ಪ್ರಾಪ್ತಿಯಾಗಲು ಸಾಧ್ಯ ಎಂದರು.

ಬಿ.ಕಾಂ ವಿದ್ಯಾರ್ಥಿಗಳ ವಾರ್ಷಿಕೋತ್ಸವ

0

ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಮನೋರಮಾ ಮಹಾವಿದ್ಯಾಲಯದ ಬಿ.ಕಾಂ ವಿದ್ಯಾರ್ಥಿಗಳ ವಾರ್ಷಿಕೋತ್ಸವ ಹಾಗೂ ಪಾರಿತೋಷಕ ವಿತರಣೆ ಕಾರ್ಯಕ್ರಮ ಜರುಗಿತು.

ಪ್ರೊ. ಎಸ್.ಎಚ್. ಬಡೆಖಾನವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಶ್ರದ್ಧಾ ಭಕ್ತಿಯಿಂದ ಅಧ್ಯಯನಶೀಲರಾದರೆ ಉತ್ತಮ ಫಲಿತಾಂಶ ಹೊಂದುವಿರಿ. ವಿದ್ಯೆಯ ಜೊತೆಗೆ ಆತ್ಮವಿಶ್ವಾಸ ಹಾಗೂ ಅಂತರಾತ್ಮದ ಅರಿವಿನ ಮೂಲಕ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯ ಎಂದರು.

ಪ್ರಾಚಾರ್ಯ ಬಿ.ಎಸ್. ಹಿರೇಮಠ ಮಾತನಾಡಿ, ವಿದ್ಯಾರ್ಥಿಗಳು ಹೆತ್ತ ತಂದೆ–ತಾಯಿ, ಕಲಿತ ಶಾಲೆ, ಕಲಿಸಿದ ಗುರು ಮತ್ತು ಹೊತ್ತ ಭೂಮಿಯ ಋಣ ತೀರಿಸಬೇಕಾದರೆ ಸಮಾಜ ಮೆಚ್ಚುವ ರೀತಿಯಲ್ಲಿ ಉತ್ತಮ ಪ್ರಜೆಗಳಾಗಬೇಕು. ವಿದ್ಯಾರ್ಥಿ ಜೀವನ ಅತ್ಯಂತ ಅಮೂಲ್ಯವಾದದ್ದು. ಓದುವ ಸಮಯದಲ್ಲಿ ಕಾಲಹರಣ ಮಾಡಿದರೆ ಕಷ್ಟ ಕಟ್ಟಿಟ್ಟ ಬುತ್ತಿ ಎಂಬುದನ್ನು ಮರೆಯಬಾರದು ಎಂದರು.

ಸಭೆಯ ಅಧ್ಯಕ್ಷತೆಯನ್ನು ಸಂಸ್ಥೆಯ ಚೇರಮನ್ ಎನ್.ಎಮ್. ಕುಡತರಕರ ವಹಿಸಿದ್ದರು. ವಿವಿಧ ವಿಭಾಗಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಬಹುಮಾನ ಹಾಗೂ ಪ್ರಶಸ್ತಿಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ಮಂಜುನಾಥ ಕುಡತರಕರ, ಸಂಸ್ಥೆಯ ಖಜಾಂಚಿ ಸಂಜಯ ಕುಡತರಕರ, ನಿರ್ದೇಶಕ ಚೇತನ ಕುಡತರಕರ, ಆಡಳಿತಾಧಿಕಾರಿ ಕಿಶೋರ ಮುದಗಲ್ಲ, ಸಂಯೋಜಕರುಗಳಾದ ಪ್ರೊ. ಅಲ್ವೀನಾ ಡಿ, ಪ್ರೊ. ಸವೀತಾ ಪೂಜಾರ, ಪ್ರೊ. ಚೈತ್ರಾ ಡಿ, ಪ್ರೊ. ಶಾಹೀದಾ ಶಿರಹಟ್ಟಿ ಸೇರಿದಂತೆ ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು ಇದ್ದರು.

ಸಂಸ್ಕೃತ ಸಂಭಾಷಣಾ ಶಿಬಿರ ಮುಕ್ತಾಯ

0

ವಿಜಯಸಾಕ್ಷಿ ಸುದ್ದಿ, ಗದಗ: ಸಂಸ್ಕೃತ ಭಾರತೀ ಗದಗ ಜಿಲ್ಲೆ ಹಾಗೂ ಕಣವಿ ಗ್ರಾಮದ ಹನುಮಂತ ದೇವಸ್ಥಾನದ ಕಮಿಟಿಯ ಬಿ.ಜಿ. ಅಣ್ಣಿಗೇರಿ ಸಂಸ್ಕೃತ ಪಾಠಶಾಲೆಯ ಸಹಯೋಗದಲ್ಲಿ ತೇಜಸ್ವಿನಿ ಕುರ್ತಕೋಟಿ ಅವರು ನಡೆಸಿದ ಉಚಿತ ಸಂಸ್ಕೃತ ಸಂಭಾಷಣಾ ಶಿಬಿರವು ಅಡ್ನೂರ ದಾಸೋಹ ಮಠದ ಪೂಜ್ಯ ಅಭಿನವ ಪಂಚಾಕ್ಷರ ಶಿವಾಚಾರ್ಯ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ಸಮಾರೋಪಗೊಂಡಿತು.

ಸಂಸ್ಕೃತ ಭಾರತಿಯ ಗದಗ ಜಿಲ್ಲಾ ಸಂಯೋಜಕರು ಹಾಗೂ ಮುಖ್ಯಾಧ್ಯಾಪಕರಾದ ಎಸ್.ಎನ್. ಶಿಂಪಿಗೇರ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಸಂಸ್ಕೃತ ಉಳಿಸಿ ಬೆಳೆಸುತ್ತಿರುವದು ಸಂತಸ ತಂದಿದೆ ಎಂದರಲ್ಲದೆ, ಪೂಜ್ಯ ಶ್ರೀಗಳು ಪೂರ್ವಾಶ್ರಮದಲ್ಲಿ ಸಂಸ್ಕೃತ ಕಲಿತಿದ್ದನ್ನು ಸ್ಮರಿಸಿದರು.

ಪಂಜಾಬ್ ನ್ಯಾಷನಲ್ ಬ್ಯಾಂಕ್ ನಿವೃತ್ತ ಮ್ಯಾನೇಜರ್ ಬಸವರಾಜ ಬಂದಕ್ಕನವರ, ತಾ.ಪಂ ಮಾಜಿ ಅಧ್ಯಕ್ಷ ಎಸ್.ಎಸ್. ಪಾಟೀಲ, ಟ್ರಸ್ಟ್ ಉಪಾಧ್ಯಕ್ಷ ಮಹಾದೇವಪ್ಪ ಬಂದಕ್ಕನವರ, ಕಾರ್ಯದರ್ಶಿ ಕಳಕಪ್ಪ ಕುರ್ತಕೋಟಿ, ಅರುಣ್ ಕಲ್ಲನಗೌಡ್ರು, ಕಲ್ಲಯ್ಯ ಮರೆಣ್ಣವರ, ಆನಂದ ಸ್ವಾಮಿ, ಪರಪ್ಪ ಕೋಳಿವಾಡ, ವಿ.ಟಿ. ಕುರ್ತಕೋಟಿ, ರೇವಣಸಿದ್ದನಗೌಡ ದೊಡ್ಡಗೌಡ್ರ, ಸಂಸ್ಕೃತ ಭಾರತೀ ಗದಗ ನಗರ ಸಂಯೋಜಕ ಮೌನೇಶ್ ಭಜಂತ್ರಿ ಮುಂತಾದವರು ಉಪಸ್ಥಿತರಿದ್ದರು.

ಹಿರೇಹಂದಿಗೋಳದಲ್ಲಿ ಗ್ರಂಥಾಲಯ ಉದ್ಘಾಟನೆ

0

ವಿಜಯಸಾಕ್ಷಿ ಸುದ್ದಿ, ಗದಗ: ಜ್ಞಾನ ದೇಗುಲವಾಗಿರುವ ಗ್ರಂಥಾಲಯ ನಮ್ಮ ಹಿರೇಹಂದಿಗೋಳ ಗ್ರಾಮದಲ್ಲಿ ಪ್ರಾರಂಭವಾಗುತ್ತಿರುವುದು ನನಗೆ ಹಾಗೂ ವಿದ್ಯಾರ್ಥಿಗಳಿಗೆ, ಗ್ರಂಥಾಲಯ ಪ್ರೇಮಿಗಳಿಗೆ ಬಹಳಷ್ಟು ಖುಷಿ ತಂದಿದೆ ಎಂದು ಬಿಂಕದಕಟ್ಟಿ ಗ್ರಾಮ ಪಂಚಾಯಿತಿ ಅಧ್ಯಕ್ಷ ನಿಂಗಪ್ಪ ಪರಪ್ಪನವರು ಹೇಳಿದರು.

ಅವರು ಬಿಂಕದಕಟ್ಟಿ ಗ್ರಾಪಂ ವ್ಯಾಪ್ತಿಯ ಹಿರೇಹಂದಿಗೋಳ ಗ್ರಾಮದಲ್ಲಿ ಉಪಗ್ರಂಥಾಲಯ ಉದ್ಘಾಟಿಸಿ ಮಾತನಾಡಿ, ನಮ್ಮೂರಲ್ಲಿ ಗ್ರಂಥಾಲಯದ ಅವಶ್ಯಕತೆಯಿತ್ತು. ಅದು ಓದುಗರ ಬಹುದಿನಗಳ ಬೇಡಿಕೆಯಾಗಿತ್ತು. ಆ ಕನಸು ಈಗ ನನಸಾಗಿದೆ. ಪ್ರತಿಯೊಬ್ಬರು ಅದರಲ್ಲೂ ವಿದ್ಯಾರ್ಥಿಗಳು ಈ ಗ್ರಂಥಾಲಯದ ಸೌಲಭ್ಯವನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಹೇಳಿದರು.

ಈ ಸಂದರ್ಭದಲ್ಲಿ ಗದಗ ತಾ.ಪಂ ಮಾಜಿ ಅಧ್ಯಕ್ಷ ಎಂ.ಐ. ಪಾಟೀಲ, ಬಿಂಕದಕಟ್ಟಿ ಗ್ರಾ.ಪಂ ಸದಸ್ಯ ಅಶೋಕ್ ಕರೂರ, ಸದಸ್ಯ ಡಿ.ಬಿ. ಕರಿಗೌಡ್ರ, ಎಮ್.ಎಚ್. ಮಡಿಕೇರಿ, ಬಿಂಕದಕಟ್ಟಿ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಆರ್.ಎಂ. ಕಿರೇಸೂರು ಗ್ರಂಥಾಲಯದ ಮಹತ್ವ ಕುರಿತು ಮಾತನಾಡಿದರು.

ವೇದಿಕೆಯ ಮೇಲೆ ಬಿಂಕದಕಟ್ಟಿ ಗ್ರಾ.ಪಂ ಸದಸ್ಯೆ ಗಂಗವ್ವ ತಡಸಿ, ಉಪಾಧ್ಯಕ್ಷೆ ದ್ಯಾಮವ್ವ ಆರಟ್ಟಿ, ಎಸ್‌ಡಿಎಮ್‌ಸಿ ಅಧ್ಯಕ್ಷ ನಿಂಗಪ್ಪ ತಳವಾರ, ಮಹಾದೇವಪ್ಪ ಚುರ್ಚಿಹಾಳ, ಶಿವಪುತ್ರಯ್ಯ ಯಲಬುರ್ಗಿಮಠ, ಎಸ್.ಎನ್. ಪಾಟೀಲ, ಆರ್.ಎಚ್. ಪಾಟೀಲ, ಮಲ್ಲನಗೌಡ ಗುರನಗೌಡ್ರ, ವಿರೂಪಾಕ್ಷಿಗೌಡ್ರು ತಡಸಿ, ದುರ್ಗಪ್ಪ ದಾಸಣ್ಣವರ, ಜಕ್ಕನಗೌಡ ಜಕ್ಕನಗೌಡ್ರ ಈಶ್ವರಗೌಡ ತಡಸಿ, ಎಸ್.ಬಿ. ಕುರ್ತಕೋಟಿ, ಶಂಕರಗೌಡ ಹುಲ್ಲೂರು, ಮುತ್ತಣ್ಣ ಹೂಗಾರ ಮತ್ತಿತರರು ಉಪಸ್ಥಿತರಿದ್ದರು. ಮಲ್ಲೇಶಪ್ಪ ಮಡಿಕೇರಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ತಾಯಿ ಜೊತೆ ಅನೈತಿಕ ಸಂಬಂಧ: ವ್ಯಕ್ತಿಯನ್ನು ಬರ್ಬರವಾಗಿ ಹತ್ಯೆಗೈದ ಮಕ್ಕಳು

0

ಶಿವಮೊಗ್ಗ:- ಶಿವಮೊಗ್ಗ ತಾಲೂಕಿನ ಕುಂಸಿಯ ಕುಂಬೇಶ್ವರ್ ಬೀದಿಯಲ್ಲಿ ತಮ್ಮ ತಾಯಿ ಜೊತೆ ಅನೈತಿಕ ಸಂಬಂಧ ಹೊಂದಿದ್ದ ವ್ಯಕ್ತಿಯನ್ನು ಮಕ್ಕಳಿಬ್ಬರು ಸೇರಿಕೊಂಡು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಜರುಗಿದೆ. 35 ವರ್ಷದ ವಾಸು ಅಲಿಯಾಸ್ ವಸಂತ್ ಕೊಲೆಯಾದ ದುರ್ದೈವಿ.

ಆಕಾಶ್ ಮತ್ತು ಹರೀಶ್ ಸಹೋದರಿಬ್ಬರು ಸೇರಿ ಮಚ್ಚಿನಿಂದ ಅಟ್ಟಾಡಿಸಿಕೊಂಡು ಕೊಲೆ ಮಾಡಿದ್ದಾರೆ. ಇವರ ತಾಯಿ ಜೊತೆ ವಸಂತ್ ಅನೈತಿಕ ಸಂಬಂಧ ಹೊಂದಿದ್ದು, ನಿನ್ನೆ ಕುಡಿದು ಆಕೆಯ ಮನೆ ಬಳಿ ಹೋಗಿ ಗಲಾಟೆ ಮಾಡಿದ್ದಾನೆ. ಈ ವಿಚಾರದಿಂದ ಮಕ್ಕಳಾದ ಹರೀಶ್ ಮತ್ತು ಪುತ್ರ ಆಕಾಶ್ ಸೇರಿಕೊಂಡು ವಸಂತ್​ ನನ್ನು ಹೊಡೆದು ಕೊಂದಿದ್ದಾರೆ.

ಅನೈತಿಕ ಸಂಬಂಧಕ್ಕೆ ಮುಂದಾಗುವವರಿಗೆ ತಕ್ಕ ಪಾಠ ಆಗಬೇಕೆಂದು ಸಹೋದರರಿಬ್ಬರು ಬೀದಿಯಲ್ಲೇ ವಸಂತನನ್ನು ಗ್ರಾಮಸ್ಥರ ಎದುರೇ ಕೊಚ್ಚಿ ಹಾಕಿದ್ದಾರೆ. ವಸಂತ ಕೊಲೆ ಮಾಡಿದ ಬಳಿಕ ಇಬ್ಬರು ಎಸ್ಕೇಪ್ ಆಗಿದ್ದಾರೆ. ಕುಂಸಿ ಠಾಣೆಯ ಸಿಪಿಐ ದೀಪಕ್ ನೇತೃತ್ವದ ತಂಡವು ಅರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

error: Content is protected !!