Home Blog

ಜಿಲ್ಲಾ ಉತ್ತಮ ಶಿಕ್ಷಕಿ ಭಾರತಿ ಕುಲಕರ್ಣಿಗೆ ಸನ್ಮಾನ

0

ವಿಜಯಸಾಕ್ಷಿ ಸುದ್ದಿ, ಗದಗ: ಶಿಕ್ಷಕರು ಸದಾ ಅಧ್ಯಯನಶೀಲರಾಗಿರಬೇಕು. ಮುಗ್ಧ ಮಕ್ಕಳ ಮನಸ್ಸಿನಲ್ಲಿ ಅಕ್ಷರದ ಬೀಜ ಬಿತ್ತುವ ಕಾರ್ಯದಲ್ಲಿ ನಿರಂತರ ತೊಡಗಿ, ಅವರ ಭವ್ಯ ಭವಿಷ್ಯಕ್ಕೆ ಸಕಲ ರೀತಿಯಲ್ಲಿ ಸಿದ್ಧಗೊಳಿಸುವ ಹೊಣೆಗಾರಿಕೆ ಶಿಕ್ಷಕ ಸಮುದಾಯದ ಮೇಲಿದೆ ಎಂದು ಸಂಪನ್ಮೂಲ ವ್ಯಕ್ತಿ ಕವಿತಾ ದಂಡಿನ ಹೇಳಿದರು.

ಗದುಗಿನ ಸರ್ಕಾರಿ ಮಾದರಿ ಶಾಲೆಯಲ್ಲಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಗದಗ ಜಿಲ್ಲಾ ಉತ್ತಮ ಶಿಕ್ಷಕಿ ಪ್ರಶಸ್ತಿ ಪಡೆದ ಶ್ರೀಮತಿ ಭಾರತಿ ಕುಲಕರ್ಣಿ ಅವರನ್ನು ಸನ್ಮಾನಿಸಿ ಅವರು ಮಾತನಾಡಿದರು.

ವ್ಯಕ್ತಿ ಹಾಗೂ ವ್ಯಕ್ತಿತ್ವ ವಿಕಸನದಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಮಕ್ಕಳೊಂದಿಗೆ ಮಕ್ಕಳಾಗಿ ಬೆರೆತು ಅವರಲ್ಲಿ ಅಕ್ಷರದ ಅರಿವು ಮೂಡಿಸಿ, ಅವರನ್ನು ಉನ್ನತ ವ್ಯಕ್ತಿಗಳನ್ನಾಗಿ ರೂಪಿಸಲು ಅಗತ್ಯವಾದ ಅಡಿಪಾಯವನ್ನು ಪ್ರಾಥಮಿಕ ಹಂತದಲ್ಲಿಯೇ ಗಟ್ಟಿಗೊಳಿಸುವ ಪ್ರಾಥಮಿಕ ಶಾಲಾ ಶಿಕ್ಷಕರು ಮಕ್ಕಳ ಭವಿಷ್ಯದ ನಿಜವಾದ ರೂವಾರಿಗಳು ಎಂದು ಹೇಳಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಜಿಲ್ಲಾ ಉತ್ತಮ ಶಿಕ್ಷಕಿ ಪ್ರಶಸ್ತಿ ವಿಜೇತೆ ಬಿ.ವಿ. ಕುಲಕರ್ಣಿ, ಸರ್ಕಾರಿ ಶಾಲೆಗಳು ಮಕ್ಕಳಲ್ಲಿ ‘ನನ್ನತನ’ದ ಜತೆಗೆ ಸಾಮಾಜಿಕ ಅರಿವನ್ನೂ ಮೂಡಿಸುತ್ತವೆ. ಶಿಕ್ಷಕರು ಪರಿಶ್ರಮದಿಂದ ಕಲಿಸುವಿಕೆಯಲ್ಲಿ ತೊಡಗಿಸಿಕೊಂಡಾಗ ಮಕ್ಕಳು ಕಲಿಕೆಯಲ್ಲಿ ಯಶಸ್ಸು ಸಾಧಿಸುತ್ತಾರೆ. ತಮ್ಮ ಪರಿಶ್ರಮವನ್ನು ಸಮುದಾಯ ಗುರುತಿಸಿ ಗೌರವಿಸಿರುವುದು ಸಂತಸ ತಂದಿದೆ ಎಂದು ಹೇಳಿದರು.

ಅಕ್ಕಮಹಾದೇವಿಯ ಕದಳಿಶ್ರೀ ಮಹಿಳಾ ವೇದಿಕೆ ವತಿಯಿಂದ ಭಾರತಿ ಕುಲಕರ್ಣಿ ಅವರನ್ನು ಸನ್ಮಾನಿಸಿ ಗೌರವಿಸಿ, ಶುಭ ಹಾರೈಸಲಾಯಿತು.

ಈ ಸಂದರ್ಭದಲ್ಲಿ ಮುಖ್ಯೋಪಾಧ್ಯಾಯಿನಿಯರಾದ ವಿ.ಎಸ್. ಜಕರಡ್ಡಿ ಹಾಗೂ ಎಚ್.ಎಲ್. ಆಸಂಗಿ, ಶಿಕ್ಷಕಿಯರಾದ ವಿ.ಎ. ಕುಂಟೋಜಿ, ಸರ್ವಮಂಗಳಾ ಗುಜಮಾಗಡಿ, ಮಂಜುಳಾ ಕೊಳ್ಳಿ, ರೇಣುಕಾ ಹೊಸಮನಿ, ಎಫ್.ಎಸ್. ಹಿರೇಮಠ, ಶೋಭಾ ವಗ್ಗಿ, ಶ್ರೇಯಾ ಬಾರಾಟಕ್ಕೆ ಸೇರಿದಂತೆ ಶಾಲಾ ಮಕ್ಕಳು, ಪಾಲಕರು ಉಪಸ್ಥಿತರಿದ್ದರು.

ಉತ್ತಮ ಯೋಚನೆಗಳೇ ಬದುಕಿನ ಯಶಸ್ಸಿನ ಬೀಜಗಳು : ಸುಮಂತ ಕುಮುಚಗಿ

0

ವಿಜಯಸಾಕ್ಷಿ ಸುದ್ದಿ, ಗದಗ: ನಮ್ಮ ಮನಸ್ಸು ಒಂದು ಉದ್ಯಾನವನವಿದ್ದಂತೆ. ಉತ್ತಮ ಯೋಚನೆಗಳೇ ಅದರಲ್ಲಿನ ಬೀಜಗಳು. ಹೂವು ಬೆಳೆಯಬೇಕೋ, ಕಳೆ ಬೆಳೆಯಬೇಕೋ ಎಂಬುದನ್ನು ನಿರ್ಧರಿಸುವವರು ನಾವೇ. ಆದ್ದರಿಂದ ವಿದ್ಯಾರ್ಥಿ ದೆಸೆಯಲ್ಲಿಯೇ ಉತ್ತಮ ಯೋಚನೆಗಳನ್ನು ಬೆಳೆಸಿಕೊಂಡು ಸನ್ಮಾರ್ಗದಲ್ಲಿ ನಡೆಯಬೇಕು ಎಂದು ಚಿಂತಕ ಸುಮಂತ ಕುಮುಚಗಿ ಹೇಳಿದರು.

ಗದುಗಿನ ಮಾದರಿ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಗಂಡು ಮಕ್ಕಳ ಶಾಲೆ ನಂ. ೧ ಹಾಗೂ ಹೆಣ್ಣು ಮಕ್ಕಳ ಶಾಲೆ ನಂ. ೧ರಲ್ಲಿ ಗದಗ ಜಿಲ್ಲಾ ಶರಣ ಸಂಕುಲದ ಶರಣೆ ಅಕ್ಕಮಹಾದೇವಿಯ ಕದಳಿಶ್ರೀ ವೇದಿಕೆ ವತಿಯಿಂದ ಆಯೋಜಿಸಿದ್ದ ಶ್ರಾವಣ ಮಾಸದ ‘ಅಮೃತ ಭೋಜನ–ಜ್ಞಾನ ಸಿಂಚನ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಶಿಕ್ಷಕರು ನಮ್ಮ ಬದುಕಿನ ದಾರಿದೀಪ. ಬಾಲ್ಯದಲ್ಲಿಯೇ ಬದುಕಿನ ಸುಂದರ ಕಲ್ಪನೆಗಳನ್ನು ಮಕ್ಕಳಲ್ಲಿ ಮೂಡಿಸಿ, ಅವುಗಳಿಗೆ ರೆಕ್ಕೆ ಕಟ್ಟಿ ಪ್ರಗತಿಯತ್ತ ಕೊಂಡೊಯ್ಯುವವರು ಶಿಕ್ಷಕರು. ಇಂದು ನಾವು ಸಾಧನೆ ಮಾಡಿದ್ದರೆ ಅದರ ಹಿಂದೆ ಶಿಕ್ಷಕರ ಅಭಯ ಹಸ್ತವಿದೆ. ಹೀಗಾಗಿ ಮಕ್ಕಳು ಶಿಕ್ಷಕರನ್ನು ಗೌರವಿಸಿ, ಅವರ ಮಾರ್ಗದರ್ಶನದಲ್ಲಿ ಮುನ್ನಡೆಯಬೇಕು ಎಂದರು.

ಮಕ್ಕಳಿಗೆ ಸಿಹಿಭೋಜನ ವಿತರಿಸಿ ಮಾತನಾಡಿದ ಚಿಂತಕಿ ರೇಣುಕಾ ಅಮಾತ್ಯ, ನಮ್ಮ ಹೆಸರುಗಳು ಕೇವಲ ಗುರುತಿನ ಚೀಟಿಗಳಲ್ಲ. ಅವು ನಮ್ಮ ಮನೋಭಾವ, ಸಮಾಜದ ದೃಷ್ಟಿಕೋನ ಹಾಗೂ ಮೌಲ್ಯಗಳನ್ನು ರೂಪಿಸುವ ಶಕ್ತಿ ಹೊಂದಿವೆ. ಹೆಸರನ್ನು ಹಸಿರಾಗಿಸಿಕೊಳ್ಳಲು ಮಕ್ಕಳು ಸಜ್ಜನರ ಸಂಗ ಮಾಡಬೇಕು. ಶಿಕ್ಷಕರು, ತಂದೆ-ತಾಯಿ ಹಾಗೂ ಹಿರಿಯರನ್ನು ಗೌರವಿಸುವ ಗುಣ ಬೆಳೆಸಿಕೊಳ್ಳಬೇಕು ಎಂದರು.

ಮಕ್ಕಳಿಗೆ ಕಲಿಕಾ ಸಾಮಗ್ರಿ ವಿತರಿಸಿ ಮಾತನಾಡಿದ ಚಿಂತಕಿ ಶಿವಲೀಲಾ ಅಕ್ಕಿ, ನಮ್ಮಲ್ಲಿ ಸಮರಸತೆಯ ಭಾವನೆ ನನಸಾಗಬೇಕು. ಇಷ್ಟಪ್ರೇಮ ಹಾಗೂ ಗುರುಭಕ್ತಿ ಸದೃಢವಾಗಬೇಕು. ಆಪ್ತತೆ ಮತ್ತು ವಿನಮ್ರತೆ ಸದಾ ಇರಲಿ. ದುಶ್ಚಟಗಳಿಂದ ದೂರವಿದ್ದು, ಗುರುವಿನ ಆದೇಶಗಳನ್ನು ಪಾಲಿಸುತ್ತ ಏಕಾಗ್ರತೆಯಿಂದ ಶಿಕ್ಷಣ ಪಡೆದು ಉತ್ತಮ ಮಕ್ಕಳಾಗಬೇಕು ಎಂದು ಸಲಹೆ ನೀಡಿದರು.

ವೇದಿಕೆಯ ಸಂಚಾಲಕಿ ಕವಿತಾ ದಂಡಿನ ಪ್ರಾಸ್ತಾವಿಕವಾಗಿ ಮಾತನಾಡಿ, ಸಮುದಾಯವು ಸರ್ಕಾರಿ ಶಾಲೆಗಳಿಗೆ ಆಗಮಿಸಿ ಅಗತ್ಯ ಸೌಲಭ್ಯಗಳ ಬಗ್ಗೆ ಕಾಳಜಿ ವಹಿಸುತ್ತಿರುವುದು ಶ್ಲಾಘನೀಯ. ಮಕ್ಕಳಿಗೆ ಸಿಹಿಭೋಜನದ ಜತೆಗೆ ಕಲಿಕಾ ಸಾಮಗ್ರಿಗಳನ್ನು ವಿತರಿಸುವ ಮೂಲಕ ಮಕ್ಕಳು ಹಾಗೂ ಶಿಕ್ಷಕ ಬಳಗಕ್ಕೆ ಸ್ಫೂರ್ತಿ ತುಂಬುತ್ತಿರುವ ದಾನಿಗಳಿಗೆ ಅಭಿನಂದನೆ ಸಲ್ಲಿಸಿದರು.

ಎಂ.ಕೆ.ಬಿ.ಎಸ್. ನಂ. ೧ ಹಾಗೂ ಕೆ.ಜಿ.ಎಸ್. ನಂ. ೧ ಶಾಲೆಗಳ ಮಕ್ಕಳಿಗೆ ಸಿಹಿಭೋಜನ ಹಾಗೂ ಕಲಿಕಾ ಸಾಮಗ್ರಿಗಳನ್ನು ವಿತರಿಸಲಾಯಿತು. ವಿದ್ಯಾರ್ಥಿನಿಯರಾದ ಸಂಜನಾ ಸಾಳುಂಕೆ, ದಿವ್ಯ ದೊಡ್ಡಮನಿ, ಪಲ್ಲವಿ ಪತ್ತಾರ ಹಾಗೂ ವೈಷ್ಣವಿ ಶಿಗ್ಲಿ ವಚನ ಪ್ರಾರ್ಥನೆ ನೆರವೇರಿಸಿದರು.

ಮುಖ್ಯೋಪಾಧ್ಯಾಯಿನಿ ವಿ.ಎಸ್. ಜಕರಡ್ಡಿ ಸ್ವಾಗತಿಸಿದರು. ಎಚ್.ಎಲ್. ಆಸಂಗಿ ಪರಿಚಯಿಸಿದರು. ವಿ.ಎ. ಕುಂಟೋಜಿ ನಿರೂಪಿಸಿದರು. ಸರ್ವಮಂಗಳಾ ಗುಜಮಾಗಡಿ ನಿರ್ವಹಿಸಿದರು. ಎಫ್.ಎಸ್. ಹಿರೇಮಠ ವಂದಿಸಿದರು.

ಶೋಭಾ ವಗ್ಗಿ, ಶ್ರೇಯಾ ಬಾರಾಟಕ್ಕೆ ಸೇರಿದಂತೆ ಶಾಲಾ ಮಕ್ಕಳು ಹಾಗೂ ಪಾಲಕರು ಉಪಸ್ಥಿತರಿದ್ದರು.

‘ಸಾಕ್ಷಿ’ ಕಿರುಚಿತ್ರ ಚಿತ್ರೀಕರಣ ಮುಕ್ತಾಯ

ವಿಜಯಸಾಕ್ಷಿ ಸುದ್ದಿ, ಬೆಂಗಳೂರು: ಕಲಾಪೋಷಕರ ಮಠ, ಸುಕ್ಷೇತ್ರ ಸಿದ್ಧನಕೊಳ್ಳದ ಪೂಜ್ಯ ಶ್ರೀ ಡಾ. ಶಿವಕುಮಾರ ಸ್ವಾಮೀಜಿಯವರ ಆಶೀರ್ವಾದದೊಂದಿಗೆ ಕೀರ್ತನ ಮೂವಿ ಮೇಕರ್ಸ್ ವತಿಯಿಂದ ನಿರ್ಮಾಣವಾಗುತ್ತಿರುವ ‘ಸಾಕ್ಷಿ’ ಕಿರುಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಸಂಕಲನ ಕಾರ್ಯ ಆರಂಭವಾಗಿದೆ.

ಕೊಲೆ ರಹಸ್ಯವನ್ನು ಭೇದಿಸುವ ರೋಚಕ ಕಥಾಹಂದರ ಹೊಂದಿರುವ ಈ ಕಿರುಚಿತ್ರದ ಚಿತ್ರೀಕರಣ ಬೆಂಗಳೂರಿನ ವಿವಿಧೆಡೆ ಐದು ದಿನಗಳ ಕಾಲ ನಡೆದಿದೆ.

ಈ ಹಿಂದೆ ‘ಒಬ್ಬಟ್ಟು’ ಸಸ್ಪೆನ್ಸ್, ಥ್ರಿಲ್ಲರ್ ಹಾಗೂ ಹಾಸ್ಯ ಕಥಾಹಂದರದ ಚಿತ್ರವನ್ನು ನಿರ್ದೇಶಿಸಿ, ನಿರ್ಮಿಸಿ ಬಿಡುಗಡೆ ಮಾಡಿರುವ ನಿರ್ದೇಶಕ ಲೋಕೇಶ್ ವಿದ್ಯಾಧರ, ಇದೀಗ ತಮ್ಮ ನಿರ್ದೇಶನದ ಎರಡನೇ ಸಿನಿಮಾ ‘ಹೂಗಾರ’ ಚಲನಚಿತ್ರವನ್ನು ಸೆನ್ಸಾರ್‌ಗೆ ಕಳುಹಿಸಲು ಅಂತಿಮ ಸಿದ್ಧತೆ ನಡೆಸಿದ್ದಾರೆ. ಈಗಾಗಲೇ ಮೂರನೇ ಸಸ್ಪೆನ್ಸ್, ಥ್ರಿಲ್ಲರ್ ಹಿನ್ನೆಲೆಯ ಸಿನಿಮಾದ ಸ್ಕ್ರಿಪ್ಟ್ ಸಿದ್ಧಪಡಿಸಲಾಗುತ್ತಿದ್ದು, ಕಲಾವಿದರ ಆಯ್ಕೆಯೂ ನಡೆದಿದೆ.

ತಂಡದ ಸದಸ್ಯರು ಬಿಡುವಿನ ಅವಧಿಯಲ್ಲೂ ಸಕ್ರಿಯವಾಗಿರಲು ಕಿರುಚಿತ್ರ ನಿರ್ಮಿಸುವ ನಿರ್ಧಾರ ಕೈಗೊಂಡು ‘ಸಾಕ್ಷಿ’ ಚಿತ್ರವನ್ನು ನಿರ್ಮಿಸಿದ್ದಾರೆ. ಮುಂದಿನ ತಿಂಗಳು ಒಟಿಟಿ ಹಾಗೂ ಯೂಟ್ಯೂಬ್‌ನಲ್ಲಿ ಚಿತ್ರವನ್ನು ಬಿಡುಗಡೆ ಮಾಡಲು ಸಿದ್ಧತೆ ನಡೆಸಲಾಗುತ್ತಿದೆ. ಚಿತ್ರಪ್ರೇಮಿಗಳು ತಂಡವನ್ನು ಪ್ರೋತ್ಸಾಹಿಸಬೇಕು ಎಂದು ನಿರ್ದೇಶಕ ಲೋಕೇಶ್ ವಿದ್ಯಾಧರ ತಿಳಿಸಿದ್ದಾರೆ.

ಕಿರುಚಿತ್ರದಲ್ಲಿ ಲೋಕೇಶ್ ವಿದ್ಯಾಧರ, ವಿದ್ಯಾಶ್ರೀ, ಹುನಗುಂದದ ಮಹಾಂತೇಶ್ ಹಳ್ಳೂರ, ಸತೀಶ್ ಶೆಟ್ಟಿ, ಮುತ್ತುರಾಜ್ ಬುದ್ನಿ, ಜೀವನ ಗೌಡ, ಗೀತಾ, ರೋಹಿತ್, ಪಲ್ಲವಿ, ಸುರೇಶ್ ಗ್ಲೋರಿ, ಕಿಟ್ಟಿ ತಾಳಿಕೋಟೆ ಮೊದಲಾದವರು ಅಭಿನಯಿಸಿದ್ದಾರೆ.

ಕ್ಯಾಮೆರಾ-ಬೆಟ್ಟೆಗೌಡ ಕಿಲಾರ, ಮೇಕಪ್-ಗೋವರ್ಧನ್, ಹೇರ್‌ಸ್ಟೈಲ್-ಶಿವು, ಸಂಕಲನ-ಶಿವರಾಜ್, ಡಿಐ-ಜೀವನ್, ನೃತ್ಯ-ರಾಜು ಮಾಸ್ಟರ್. ಡಾ. ಪ್ರಭು ಗಂಜಿಹಾಳ ಹಾಗೂ ಡಾ. ವೀರೇಶ್ ಹಂಡಿಗಿ ಪತ್ರಿಕಾ ಸಂಪರ್ಕದ ಜವಾಬ್ದಾರಿ ನಿರ್ವಹಿಸಿದ್ದಾರೆ.

ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ನಿರ್ದೇಶನದ ಹೊಣೆಯನ್ನು ಲೋಕೇಶ್ ವಿದ್ಯಾಧರ ವಹಿಸಿಕೊಂಡಿದ್ದಾರೆ. ಕೀರ್ತನ ಮೂವಿ ಮೇಕರ್ಸ್ ಹಾಗೂ ಚಿತ್ರತಂಡದ ಬಳಗದ ಸಹಯೋಗದಲ್ಲಿ ಚಿತ್ರ ನಿರ್ಮಾಣವಾಗಿದೆ.

ಲಿಂಗಾಯತ ಮಠಗಳಿಂದ ಶೈಕ್ಷಣಿಕ ಕ್ರಾಂತಿ: .ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು

0

ವಿಜಯಸಾಕ್ಷಿ ಸುದ್ದಿ, ಗದಗ: ಕರ್ನಾಟಕದಲ್ಲಿ ಶೈಕ್ಷಣಿಕ ಕ್ರಾಂತಿ ಆಗಿದ್ದರೆ ಅದಕ್ಕೆ ಲಿಂಗಾಯತ ಮಠಗಳ ಕೊಡುಗೆ ಅಪಾರ. ಸ್ವಾತಂತ್ರ್ಯಪೂರ್ವದಲ್ಲೇ ಜಾತಿ–ಮತ ಭೇದವಿಲ್ಲದೆ ಪ್ರಸಾದ ನಿಲಯಗಳನ್ನು ತೆರೆದು ಬಡ ಮಕ್ಕಳಿಗೆ ಅನ್ನದಾಸೋಹದ ಜತೆಗೆ ಜ್ಞಾನದಾಸೋಹ ನೀಡಿದ ಪರಂಪರೆ ನಮ್ಮದು ಎಂದು ಗದುಗಿನ ತೋಂಟದಾರ್ಯ ಮಠದ ಪೂಜ್ಯ ಜ.ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಹೇಳಿದರು.

ಗದುಗಿನ ಹಾಲಕೆರೆ ಮಠದ ಆನಂದಾಶ್ರಮದಲ್ಲಿ ಭಾನುವಾರ ನಡೆದ ಪೂಜ್ಯ ಅನ್ನದಾನ ಮಹಾಶಿವಯೋಗಿಗಳ 49ನೇ ಪುಣ್ಯಾರಾಧನೆ ಹಾಗೂ ನರೇಗಲ್ಲಿನ ಅನ್ನದಾನ ವಿಜಯ ವಿದ್ಯಾಪ್ರಸಾರಕ ಸಮಿತಿಯ ಅನ್ನದಾನೇಶ್ವರ ಪದವಿ ಪೂರ್ವ ವಿಜ್ಞಾನ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಶಿಕ್ಷಣದ ಜತೆಗೆ ಸಂಸ್ಕಾರ ನೀಡುವುದೇ ಮಠಗಳ ವೈಶಿಷ್ಟ್ಯ. ಮಕ್ಕಳು ವಿದ್ಯಾವಂತರಾಗಿ, ಜ್ಞಾನವಂತರಾಗಿ, ಶ್ರೇಷ್ಠ ವಿಜ್ಞಾನಿಗಳಾಗಬೇಕು ಎಂಬ ಉದ್ದೇಶದಿಂದ ಈ ಮಹಾವಿದ್ಯಾಲಯ ಆರಂಭಿಸಲಾಗಿದೆ. ಆನಂದಾಶ್ರಮದಲ್ಲಿ ಕಲಿತವರು ಜೀವನದುದ್ದಕ್ಕೂ ಆನಂದ ಪಡೆಯಲಿ ಎಂದರು.

ಪೂಜ್ಯ ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳ ಅನ್ನದಾಸೋಹ–ಜ್ಞಾನದಾಸೋಹದ ಸೇವೆಯನ್ನು ಶ್ಲಾಘಿಸಿದ ಅವರು, ವಯಸ್ಸಿನಲ್ಲಿ ಚಿಕ್ಕವರಾದರೂ ಜ್ಞಾನದಲ್ಲಿ ಹಿರಿಯರು ಎಂದು ಬಣ್ಣಿಸಿದರು.

90 ವರ್ಷ ಚೈತನ್ಯದಿಂದ ಬದುಕಿದ ಅನ್ನದಾನ ಶಿವಯೋಗಿಗಳು (ಬೆತ್ತದ ಅಜ್ಜ) 87ನೇ ವಯಸ್ಸಿನಲ್ಲೂ ಹಳ್ಳಿ–ಹಳ್ಳಿಗೆ ತೆರಳಿ ಭಿಕ್ಷೆ ಬೇಡಿ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ 13 ಬೋರ್ಡಿಂಗ್‌ಗಳನ್ನು ಮುನ್ನಡೆಸಿದ ಮಹಾನ್ ಸಾಧಕರು. ಅವರ ಜೀವನಾಧಾರಿತ ಸಿನಿಮಾ ಆರು ತಿಂಗಳಲ್ಲಿ ಬಿಡುಗಡೆಯಾಗಲಿದೆ ಎಂದು ತೋಂಟದ ಶ್ರೀಗಳು ತಿಳಿಸಿದರು.

ಸಾನ್ನಿಧ್ಯ ವಹಿಸಿದ್ದ ಪೂಜ್ಯ ಜ.ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳು ಮಾತನಾಡಿ, ವಿದ್ಯಾರ್ಥಿಗಳು ಏಕಾಗ್ರತೆಯಿಂದ ಅಭ್ಯಾಸ ಮಾಡಿ ತಮ್ಮ ಭವಿಷ್ಯ ರೂಪಿಸಿಕೊಳ್ಳಬೇಕು. ಶಿಕ್ಷಣವೇ ಬದುಕಿನ ಪೋಷಕಾಂಶ ಎಂದರು. ಕಾರು, ಬಂಗಲೆಗಳ ಕನಸಿಗಿಂತ ಆದರ್ಶವಾಗಿ ಬದುಕುವ ಕನಸು ಕಾಣಬೇಕು. ಸಮಯವನ್ನು ವ್ಯರ್ಥ ಮಾಡದೆ ಮುನ್ನಡೆಯಬೇಕು ಎಂದು ಸಲಹೆ ನೀಡಿದರು.

ಪ್ರಾ. ಎಂ.ಸಿ. ಕಟ್ಟಿಮನಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಎಸ್.ಪಿ. ಸಂಶಿಮಠ ಸಂದರ್ಭೋಚಿತವಾಗಿ ಮಾತನಾಡಿದರು. ವೇದಿಕೆಯಲ್ಲಿ ಮಹೇಶ್ವರ ಸ್ವಾಮಿಗಳು, ಡಾ.ಜಿ.ಕೆ. ಕಾಳೆ, ಆರ್.ಬಿ. ಪಾಟೀಲ, ಜಿ.ಎನ್. ಪಾಟೀಲ, ಡಿಡಿಪಿಐ ಆರ್.ಎಸ್. ಬುರಡಿ, ಡಾ.ಬಿ.ಎನ್. ಪಾಟೀಲ, ವ್ಹಿ.ಆರ್. ಪಾಟೀಲ, ಶರಣಬಸಪ್ಪ ಗುಡಿಮನಿ, ಗಿರೀಶಗೌಡ ಪಾಟೀಲ, ಈಶಣ್ಣ ಮುನವಳ್ಳಿ, ಸದು ಮದರಿಮಠ ಮತ್ತಿತರರು ಉಪಸ್ಥಿತರಿದ್ದರು. ಗಣ್ಯರು, ಭಕ್ತರು, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಪರಿಶ್ರಮಕ್ಕೆ ಶಾರ್ಟ್‌ಕಟ್ ಇಲ್ಲ. ಗಿಡ ಹತ್ತಿದರೆ ಹಣ್ಣು ಸಿಗುತ್ತದೆ; ಕೆಳಗೆ ಮಲಗಿದರೆ ಸಿಗುವುದಿಲ್ಲ. ವಿದ್ಯಾರ್ಥಿಗಳು ಪ್ರಯತ್ನದಿಂದ ಜ್ಞಾನ ಸಂಪಾದಿಸಿ, ತಂದೆ–ತಾಯಿ ಹಾಗೂ ಗುರುಹಿರಿಯರನ್ನು ಗೌರವಿಸಿ, ಬದುಕಿನಲ್ಲಿ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು.

— ಜ.ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು, ತೋಂಟದಾರ್ಯ ಮಠ, ಗದಗ

ಬರಹದಂತೆ ಬದುಕುವ ಸಾಹಿತಿಗಳಿಂದ ಸಮಾಜಕ್ಕೆ ಪರಿಣಾಮಕಾರಿ ಸಂದೇಶ: ನೀಲಕಂಠ ಮರಡಿ

0

ವಿಜಯಸಾಕ್ಷಿ ಸುದ್ದಿ, ಮುಂಡರಗಿ: ಬರಹದಂತೆ ಬದುಕುವ ಸಾಹಿತಿಗಳು ಮಾತ್ರ ಸಮಾಜಕ್ಕೆ ಪರಿಣಾಮಕಾರಿ ಸಂದೇಶ ನೀಡಲು ಸಾಧ್ಯ. ನಡೆ–ನುಡಿಗಳಲ್ಲಿನ ಏಕತೆಯಿಂದ ಸಮಾಜದಲ್ಲಿ ಮನ್ನಣೆ ಗಳಿಸಲು ಸಾಧ್ಯ ಎಂದು ನಿವೃತ್ತ ಪ್ರಾಚಾರ್ಯ ನೀಲಕಂಠ ಮರಡಿ ಹೇಳಿದರು.

ಪಟ್ಟಣದ ಜ. ಅನ್ನದಾನೀಶ್ವರ ಕನ್ನಡ ಸಾಹಿತ್ಯ ಭವನದಲ್ಲಿ ಶನಿವಾರ ಮುಂಡರಗಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಹಿರಿಯ ಸಾಹಿತಿ ಐ.ಕೆ. ಕಮ್ಮಾರ ಅವರ ‘ಬದುಕು–ಬರಹ’ ಕೃತಿ ಅವಲೋಕನ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಅವರು ಮಾತನಾಡಿದರು.

ಹಿರೇವಡ್ಡಟ್ಟಿಯಿಂದ ಗದಗಕ್ಕೆ ಬಂದು ಕಡುಬಡತನದ ನಡುವೆಯೇ ಟ್ಯೂಷನ್, ಪತ್ರಿಕಾರಂಗ ಹಾಗೂ ಬರಹದ ಮೂಲಕ ಸಾಹಿತ್ಯ ಕ್ಷೇತ್ರ ಪ್ರವೇಶಿಸಿದ ಐ.ಕೆ. ಕಮ್ಮಾರ ಅವರು ಹಿಂದೂ–ಮುಸ್ಲಿಂ ಭಾವೈಕ್ಯತೆ ಸಾರುವ ಹಲವು ಕೃತಿಗಳನ್ನು ಸಮಾಜಕ್ಕೆ ನೀಡಿದ್ದಾರೆ. ಅವರ 22 ಕೃತಿಗಳು ಮೌಲ್ಯಯುತವಾಗಿದ್ದು, ಯಾವುದೇ ಹಮ್ಮು–ಬಿಮ್ಮು, ಪ್ರಚಾರ ಬಯಸದೆ ಸಾಹಿತ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಕಾವ್ಯ, ನಾಟಕ, ಸಂವಾದ, ಕಾದಂಬರಿ ಹಾಗೂ ಅಧ್ಯಾತ್ಮಕ ಬರಹ ಸೇರಿದಂತೆ ಹಲವು ಪ್ರಕಾರಗಳಲ್ಲಿ ಅವರ ಸಾಹಿತ್ಯ ಸೇವೆ ನಿರಂತರವಾಗಿದೆ. ಇಂತಹ ಸಾಹಿತಿಯ ಬದುಕು–ಬರಹದ ಕುರಿತು ಕಸಾಪ ಕಾರ್ಯಕ್ರಮ ಆಯೋಜಿಸಿರುವುದು ಅವರಿಗೆ ಸಲ್ಲಿಸುವ ದೊಡ್ಡ ಗೌರವ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಸಾಮಾಜಿಕ ಕಾರ್ಯಕರ್ತ ಎನ್.ಡಿ. ಕೆಲೂರ ಮಾತನಾಡಿ, ಮುಂಡರಗಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ತಾಲೂಕಿನ ಸಾಹಿತಿಗಳ ಸಮಗ್ರ ಪರಿಚಯ ಹಾಗೂ ಅವರ ಬದುಕು–ಬರಹದ ಕುರಿತು ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ಶ್ಲಾಘನೀಯ. ತೆರೆಮರೆಯಲ್ಲಿ ಸಾಹಿತ್ಯ ಚಟುವಟಿಕೆಗಳಲ್ಲಿ ತೊಡಗಿರುವ ಸಾಹಿತಿಗಳನ್ನು ಗುರುತಿಸಿ ಗೌರವಿಸುವ ಕಾರ್ಯವಾಗಬೇಕು ಎಂದರು.

ಹಿರಿಯ ಸಾಹಿತಿ ಐ.ಕೆ. ಕಮ್ಮಾರ ಮಾತನಾಡಿ, ತಮ್ಮ ತವರು ನೆಲದಲ್ಲಿಯೇ ಕೃತಿ ಪರಿಚಯ ಹಾಗೂ ಅವಲೋಕನ ನಡೆಯುತ್ತಿರುವುದು ಅತೀವ ಸಂತಸ ತಂದಿದೆ. ಜೀವನಾನುಭವವೇ ಸಾಹಿತ್ಯದ ಮೂಲವಾಗಿದ್ದು, ಸಮಾಜದ ನೈಜ ಬದುಕು ಹಾಗೂ ಆಗುಹೋಗುಗಳು ಕಾವ್ಯ–ಕಥೆಗಳಿಗೆ ಪ್ರೇರಣೆಯಾಗುತ್ತವೆ. ತಮ್ಮ ಕೃತಿಗಳ ರಚನೆಗೆ ಮಣಕವಾಡ ಶ್ರೀಗಳು ಹಾಗೂ ಪುಟ್ಟರಾಜ ಗವಾಯಿಗಳಂತಹ ಪುಣ್ಯಪುರುಷರ ಪ್ರೇರಣೆ ಮತ್ತು ಶಕ್ತಿ ಕಾರಣವಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಸಾಪ ಅಧ್ಯಕ್ಷ ಎಂ.ಜಿ. ಗಚ್ಚಣ್ಣವರ ಮಾತನಾಡಿದರು. ನಿಕಟಪೂರ್ವ ಅಧ್ಯಕ್ಷ ಎಸ್.ಬಿ. ಹಿರೇಮಠ, ಉಪಾಧ್ಯಕ್ಷ ಶಂಕರ ಕುಕನೂರ, ಕಾರ್ಯಕಾರಿಣಿ ಸದಸ್ಯರಾದ ರಮೇಶ ಪಾಟೀಲ, ಸಿ.ಕೆ. ಗಣಪ್ಪನವರ, ಗುಡ್ಲಾನೂರ, ಮಧುಮತಿ ಇಳಕಲ್, ಎಸ್.ಬಿ.ಕೆ. ಗೌಡರ, ಆರ್.ಎಲ್. ಪೋಲಿಸಪಾಟೀಲ, ನಿಂಗು ಸೊಲಗಿ, ನಾಗೇಶ ಹುಬ್ಬಳ್ಳಿ, ಸಿ.ಎಸ್. ಅರಸನಾಳ, ಮಹೇಶ ಮೇಟಿ, ಲಿಂಗರಾಜ ದಾವಣಗೆರೆ, ಜಯಶ್ರೀ ಅಳವಂಡಿ, ಜ್ಯೋತಿ ಕುರಿಯವರ, ಕೊಟ್ರೇಶ ಜವಳಿ, ಕಳಕಪ್ಪ ಜಲ್ಲಿಗೇರಿ ಮತ್ತಿತರರು ಪಾಲ್ಗೊಂಡಿದ್ದರು.

ನಿಂಗಪ್ಪ ಕುರಿ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಕಸಾಪ ಗೌರವ ಕಾರ್ಯದರ್ಶಿ ವೀಣಾ ಪಾಟೀಲ ಸ್ವಾಗತಿಸಿದರು. ಮಂಜುನಾಥ ಮುಧೋಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಐ.ಎಂ. ಮುಲ್ಲಾ ನಿರೂಪಿಸಿದರು.

ಸಾಹಿತ್ಯ ಮತ್ತು ಕಾವ್ಯ ಉಳ್ಳವರ ಮನೆಯಲ್ಲಿ ಹುಟ್ಟುವುದಿಲ್ಲ; ನೊಂದ–ಬೆಂದ ಸಮಾಜದ ಆಗುಹೋಗುಗಳು ಹಾಗೂ ನೈಜ ಬದುಕಿನ ಅನುಭವದಿಂದ ಹುಟ್ಟುತ್ತವೆ. ಸಾಹಿತ್ಯ ಸಮಾಜಕ್ಕೆ ಉಪಯುಕ್ತವಾದಾಗ ಸಾಹಿತಿಯ ಕೆಲಸ ಸಾರ್ಥಕವಾಗುತ್ತದೆ.

— ಐ.ಕೆ. ಕಮ್ಮಾರ, ಹಿರಿಯ ಸಾಹಿತಿ

ಗಣೇಶೋತ್ಸವಕ್ಕೆ ಕಟ್ಟುನಿಟ್ಟಿನ ನಿಯಮ

0

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಸಾರ್ವಜನಿಕ ಗಣೇಶೋತ್ಸವವನ್ನು ಶಾಂತಿ, ಸೌಹಾರ್ದ ಹಾಗೂ ಶಿಸ್ತುಬದ್ಧವಾಗಿ ಆಚರಿಸುವ ನಿಟ್ಟಿನಲ್ಲಿ ಈ ಬಾರಿ ಕಟ್ಟುನಿಟ್ಟಿನ ನಿಯಮಗಳನ್ನು ಪಾಲಿಸುವುದು ಕಡ್ಡಾಯ. ಗಣೇಶ ಪ್ರತಿಷ್ಠಾಪನೆಯಿಂದ ವಿಸರ್ಜನೆಯವರೆಗೆ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಆಯೋಜಕರು ಮುನ್ನೆಚ್ಚರಿಕೆ ವಹಿಸಬೇಕು ಎಂದು ಠಾಣೆ ಪಿಎಸ್‌ಐ ಐಶ್ವರ್ಯ ನಾಗರಾಳ ಹೇಳಿದರು.

ಪಟ್ಟಣದ ಪೊಲೀಸ್ ಠಾಣೆಯಲ್ಲಿ ಶನಿವಾರ ಸಂಜೆ ನಡೆದ ಗಣೇಶೋತ್ಸವದ ಶಾಂತಿ ಸಭೆಯಲ್ಲಿ ಅವರು ಮಾತನಾಡಿದರು.

ಗಣೇಶೋತ್ಸವ ಹಾಗೂ ವಿಸರ್ಜನಾ ಮೆರವಣಿಗೆಯಲ್ಲಿ ಡಿಜೆ ಬಳಕೆಯನ್ನು ಸಂಪೂರ್ಣ ನಿಷೇಧಿಸಲಾಗಿದೆ. ನಿಯಮ ಉಲ್ಲಂಘಿಸಿ ಡಿಜೆ ಬಳಸಿದರೆ ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ವೃದ್ಧರು, ಮಕ್ಕಳು, ರೋಗಿಗಳು ಹಾಗೂ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಧ್ವನಿವರ್ಧಕ ಬಳಕೆಯಲ್ಲಿಯೂ ಸರ್ಕಾರದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದರು.

ವಿಸರ್ಜನಾ ಮೆರವಣಿಗೆಯನ್ನು ಅನಗತ್ಯವಾಗಿ ವಿಳಂಬ ಮಾಡದೆ ರಾತ್ರಿ 10 ಗಂಟೆಯೊಳಗೆ ವಿಸರ್ಜನೆ ಪೂರ್ಣಗೊಳಿಸುವುದು ಕಡ್ಡಾಯ. ತಡರಾತ್ರಿವರೆಗೆ ಮೆರವಣಿಗೆ ನಡೆಸುವುದು, ಅತಿಯಾದ ಧ್ವನಿವರ್ಧಕ ಬಳಸುವುದು ಹಾಗೂ ಸಾರ್ವಜನಿಕರಿಗೆ ತೊಂದರೆ ಉಂಟುಮಾಡುವ ಚಟುವಟಿಕೆಗಳಿಗೆ ಅವಕಾಶವಿಲ್ಲ. ಮೆರವಣಿಗೆಯನ್ನು ನಿಗದಿತ ಮಾರ್ಗದಲ್ಲಿಯೇ ನಡೆಸಬೇಕು. ಸಂಚಾರಕ್ಕೆ ಅಡ್ಡಿಯಾಗದಂತೆ ಸ್ವಯಂಸೇವಕರನ್ನು ನಿಯೋಜಿಸಿ ಪೊಲೀಸ್ ಹಾಗೂ ಸ್ಥಳೀಯ ಆಡಳಿತದೊಂದಿಗೆ ಸಹಕರಿಸಬೇಕು ಎಂದು ಸೂಚಿಸಿದರು.

ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸುವ ಸಂಘ–ಸಂಸ್ಥೆಗಳು ಹಾಗೂ ಯುವಕ ಮಂಡಳಿಗಳು ಸಂಬಂಧಪಟ್ಟ ಇಲಾಖೆಯಿಂದ ಅಗತ್ಯ ಅನುಮತಿ ಪಡೆಯಬೇಕು. ವಿದ್ಯುತ್ ಸಂಪರ್ಕ, ಪಟ್ಟಣ ಪಂಚಾಯಿತಿ ಸೇರಿದಂತೆ ಸಂಬಂಧಿಸಿದ ಇಲಾಖೆಗಳ ಅನುಮತಿಯೂ ಕಡ್ಡಾಯವಾಗಿದೆ. ಪೆಂಡಾಲ್ ಹಾಗೂ ಬ್ಯಾನರ್ ಅಳವಡಿಸುವಾಗ ಸಾರ್ವಜನಿಕ ಸುರಕ್ಷತೆ ಮತ್ತು ಸಂಚಾರಕ್ಕೆ ಅಡ್ಡಿಯಾಗದಂತೆ ಎಚ್ಚರಿಕೆ ವಹಿಸಬೇಕು. ವಿದ್ಯುತ್ ದೀಪಾಲಂಕಾರದಲ್ಲಿ ಕಳಪೆ ತಂತಿ ಹಾಗೂ ಅಸುರಕ್ಷಿತ ಸಂಪರ್ಕ ಬಳಸಬಾರದು ಎಂದರು.

ರಘುನಾಥ ಕೊಂಡಿ ಮಾತನಾಡಿ, ಗಣೇಶೋತ್ಸವವು ಭಕ್ತಿ, ಸಂಸ್ಕೃತಿ ಹಾಗೂ ಸಾಮರಸ್ಯದ ಹಬ್ಬವಾಗಬೇಕು. ಯಾವುದೇ ಧರ್ಮ, ಸಮುದಾಯ ಅಥವಾ ವ್ಯಕ್ತಿಗಳ ಭಾವನೆಗಳಿಗೆ ಧಕ್ಕೆ ತರುವ ಘೋಷಣೆ, ಹಾಡು, ಭಾಷಣ ಹಾಗೂ ಪ್ರಚೋದನಕಾರಿ ವರ್ತನೆಗೆ ಅವಕಾಶ ನೀಡಬಾರದು. ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ಸಂದೇಶ, ವಿಡಿಯೊ ಹಾಗೂ ಸುಳ್ಳು ಸುದ್ದಿಗಳನ್ನು ಹಂಚಿಕೊಳ್ಳದಂತೆ ಯುವಕರು ಎಚ್ಚರ ವಹಿಸಬೇಕು ಎಂದರು.

ಮುಖಂಡ ಮಂಜುನಾಥ ಹೆಗಡೆ ಮಾತನಾಡಿ, ಗಣೇಶೋತ್ಸವ ಅಬ್ಬರದ ಮೆರವಣಿಗೆ ಹಾಗೂ ಕಿವಿಗಡಚಿಕ್ಕುವ ಸಂಗೀತಕ್ಕೆ ಸೀಮಿತವಾಗದೆ ಪರಿಸರ ಸ್ನೇಹಿ ಆಚರಣೆ, ಭಜನೆ, ದೇಶಭಕ್ತಿ ಗೀತೆ, ಮಕ್ಕಳ ಸ್ಪರ್ಧೆಗಳು, ಆರೋಗ್ಯ ಹಾಗೂ ರಕ್ತದಾನ ಶಿಬಿರದಂತಹ ಸಮಾಜಮುಖಿ ಕಾರ್ಯಕ್ರಮಗಳಿಗೆ ವೇದಿಕೆಯಾಗಬೇಕು ಎಂದರು.

ಮುಖಂಡ ಸಂತೋಷ್ ಮಣ್ಣೋಡ್ಡರ್, ಪಪಂ ಉಪಾಧ್ಯಕ್ಷ ಕುಮಾರಸ್ವಾಮಿ ಕೊರಧಾನ್ಯಮಠ ಮಾತನಾಡಿದರು. ಮಂಜುನಾಥ ಬಿ.ಎಸ್.ಎಸ್. ಮಣ್ಣೋಡ್ಡರ್, ರುದ್ರೇಶ್ ಕೋಟಗಿ, ನಿಂಗರಾಜ ಕೆಂಗಾರ, ಬಸಪ್ಪ, ಎಸ್.ಸಿ. ಸಂಗನಾಳಮಠ, ಬಸವರಾಜ ವಂಕಲಕುಂಟಿ, ವೀರಣ್ಣ ಗುಜಮಾಗಡಿ, ಶ್ರೀಕಾಂತ ಹೊಸಮನಿ, ಮುತ್ತುರಾಜ ಮೇಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಪೊಲೀಸ್ ಸಿಬ್ಬಂದಿ ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.

ಗಣೇಶ ಪ್ರತಿಷ್ಠಾಪನೆಯಿಂದ ವಿಸರ್ಜನೆಯವರೆಗೆ ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಆಯೋಜಕರು ಮುನ್ನೆಚ್ಚರಿಕೆ ವಹಿಸಬೇಕು. ನಿಯಮ ಉಲ್ಲಂಘಿಸಿ ಡಿಜೆ ಬಳಸಿದರೆ ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು.

— ಐಶ್ವರ್ಯ ನಾಗರಾಳ, ಪಿಎಸ್‌ಐ, ನರೇಗಲ್ಲ

ಸಮಾನತೆ–ಸಹಬಾಳ್ವೆಯ ಸಂದೇಶ ಸಾರಿದ ಮೌನೇಶ್ವರರು: ಸಣ್ಣವೀರಪ್ಪ ಫ. ಹಳ್ಳೆಪ್ಪನವರ

0

ವಿಜಯಸಾಕ್ಷಿ ಸುದ್ದಿ, ಗದಗ: ಸಮಾಜದಲ್ಲಿ ಸೌಹಾರ್ದತೆ, ಸಮಾನತೆ ಹಾಗೂ ಸಹಬಾಳ್ವೆ ಬೆಳೆಸುವಲ್ಲಿ ಜಾತ್ರಾಮಹೋತ್ಸವಗಳ ಪಾತ್ರ ಮಹತ್ವದ್ದಾಗಿದೆ. ಜಗತ್ತಿಗೆ ಸಮಾನತೆ, ಸಹಬಾಳ್ವೆ, ಭ್ರಾತೃತ್ವ ಹಾಗೂ ಸಾಮರಸ್ಯದ ಸಂದೇಶ ಸಾರಿದ ಶ್ರೀಕ್ಷೇತ್ರ ವರವಿ ಜಗದ್ಗುರು ಮೌನೇಶ್ವರರ ಜಾತ್ರಾಮಹೋತ್ಸವದಲ್ಲಿ ಪಾಲ್ಗೊಳ್ಳುವುದು ಧನ್ಯತೆಯ ಸಂಗತಿ ಎಂದು ಹೊಳೆ ಇಟಗಿಯ ಹಿರಿಯ ಮುಖಂಡ ಸಣ್ಣವೀರಪ್ಪ ಫ. ಹಳ್ಳೆಪ್ಪನವರ ಹೇಳಿದರು.

ಶ್ರೀಕ್ಷೇತ್ರ ವರವಿಯ ಮೌನೇಶ್ವರ ದೇವಸ್ಥಾನದಲ್ಲಿ 2026ನೇ ಸಾಲಿನ ಜಾತ್ರಾಮಹೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ರಾಜ್ಯದ ಮೂಲೆಮೂಲೆಗಳಿಂದ ಭಕ್ತರು ಜಾತ್ರೆಗೆ ಆಗಮಿಸಿ ಮೌನೇಶ್ವರರಿಗೆ ಭಕ್ತಿ ಸಮರ್ಪಿಸುತ್ತಾರೆ. ಸ್ಥಳೀಯ ಜನಪ್ರತಿನಿಧಿಗಳೂ ಜಾತ್ರಾಮಹೋತ್ಸವದ ಆಹ್ವಾನಕ್ಕೆ ಗೌರವ ನೀಡಿ ಭಾಗವಹಿಸಬೇಕು. ಇದು ನಮ್ಮ ಮಠದ ಜಾತ್ರೆ ಎಂಬ ಭಾವನೆಯೊಂದಿಗೆ ಪಾಲ್ಗೊಂಡು ಮೌನೇಶ್ವರರ ಕೃಪೆಗೆ ಪಾತ್ರರಾಗಬೇಕು ಎಂದರು.

ಎಲ್ಲರೊಂದಿಗೆ ಅರಿತು ಬೆರೆತು ಬಾಳುವ ವಿಶ್ವಕರ್ಮ ಸಮಾಜ ಬಹುದೊಡ್ಡ ಸಮಾಜ. ಬೇರೆಯವರನ್ನು ತಿದ್ದಿ, ತೀಡಿ, ಬುದ್ಧಿಹೇಳಿ ಮೂರ್ತಿ ಮಾಡುವ ಬುದ್ಧಿವಂತಿಕೆ ಹೊಂದಿರುವ ಈ ಸಮಾಜದ ಬಗ್ಗೆ ಎಲ್ಲರೂ ಅಭಿಮಾನ ಹೊಂದಬೇಕು ಎಂದು ಹಳ್ಳೆಪ್ಪನವರ ಹೇಳಿದರು.

ವಿಶೇಷ ಆಹ್ವಾನಿತರಾಗಿ ಪಾಲ್ಗೊಂಡ ಬಾಗಲಕೋಟೆಯ ವೈದ್ಯ ಡಾ. ವಿನೋದ ಅಕ್ಕಸಾಲಿ ಮಾತನಾಡಿ, ಸಮಾಜ ಹಾಗೂ ಸರ್ಕಾರದ ವ್ಯವಸ್ಥೆಯಲ್ಲಿ ಉತ್ತಮ ಸ್ಥಾನದಲ್ಲಿದ್ದು ಸೇವೆ ಸಲ್ಲಿಸುತ್ತಿರುವವರನ್ನು ಗುರುತಿಸಿ ಗೌರವಿಸುತ್ತಿರುವುದು ಸಂತಸದ ಸಂಗತಿ. ವಿಶ್ವಕರ್ಮ ಸಮಾಜ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು. ಯುವಜನರು ಮಾದಕ ವ್ಯಸನಗಳಿಗೆ ಮಾರುಹೋಗಬಾರದು ಎಂದು ಕರೆ ನೀಡಿದರು.

ಪೊಲೀಸ್ ಇಲಾಖೆಯ ರಾಜ್ಯಮಟ್ಟದ ಪುರಸ್ಕಾರಕ್ಕೆ ಭಾಜನರಾದ ವಿಶ್ವನಾಥ ಬಡಿಗೇರ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಇಲಾಖೆ ನೀಡಿದ ಗೌರವವನ್ನು ಸಮಾಜಕ್ಕೆ ಅರ್ಪಿಸುವೆ. ಸಾಧಕರನ್ನು ಗೌರವಿಸುವುದರಿಂದ ಇನ್ನಷ್ಟು ಸಾಧನೆಗೆ ಪ್ರೇರಣೆ ದೊರೆಯುತ್ತದೆ. ಇಂತಹ ಪವಿತ್ರ ಕ್ಷೇತ್ರದಲ್ಲಿ ಆಶೀರ್ವಾದ ದೊರೆತಿರುವುದು ಧನ್ಯತಾ ಭಾವ ಮೂಡಿಸಿದೆ ಎಂದರು.

ವರವಿ ಜಗದ್ಗುರು ಮೌನೇಶ್ವರ ದೇವಸ್ಥಾನ ಹಾಗೂ ಮಠದ ವಿಕಾಸ ಟ್ರಸ್ಟ್ ಕಮಿಟಿ ಅಧ್ಯಕ್ಷ ಮೋಹನ ಸಿ. ನರಗುಂದ ಪ್ರಾಸ್ತಾವಿಕವಾಗಿ ಮಾತನಾಡಿ, ನಾಡಿನ ಮಠಾಧಿಪತಿಗಳು, ಪೀಠಾಧಿಪತಿಗಳು ಹಾಗೂ ಹರಗುರು ಚರಮೂರ್ತಿಗಳ ಸಾನ್ನಿಧ್ಯದಲ್ಲಿ ಸಮಸ್ತ ಭಕ್ತರ ಸಮ್ಮುಖದಲ್ಲಿ ಜಾತ್ರಾಮಹೋತ್ಸವ ಶ್ರದ್ಧೆ–ಭಕ್ತಿಯಿಂದ ವಿಜೃಂಭಣೆಯಿಂದ ನಡೆಯುತ್ತಿದೆ. ಸಹಕಾರ ನೀಡಿದ ಎಲ್ಲರಿಗೂ ಮೌನೇಶ್ವರರು ಸನ್ಮಂಗಲವನ್ನುಂಟು ಮಾಡಲಿ ಎಂದರು.

ಶಿರಹಟ್ಟಿ ಪಿಎಸ್‌ಐ ಈರಣ್ಣ ರಿತ್ತಿ, ಚಿಕ್ಕಮಗಳೂರಿನ ರೈತ ಸೇನೆಯ ರಾಜ್ಯಾಧ್ಯಕ್ಷ ಚಂದ್ರಶೇಖರ ಹಾಗೂ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಗದಗ ಜಿಲ್ಲಾ ಅಧ್ಯಕ್ಷ ದೇವೇಂದ್ರಪ್ಪ ಹ. ಬಡಿಗೇರ ಮಾತನಾಡಿದರು.

ವಿಜಯಪುರ ಮೂರು ಜಾವಧೀಶ್ವರ ಮಠದ ಶ್ರೀ ಮಹೇಂದ್ರ ಮಹಾಸ್ವಾಮೀಜಿ, ಲೇಬಗಿರಿ ಲಕ್ಷ್ಮೀಂದ್ರಸ್ವಾಮಿಗಳ ಮಠದ ಶ್ರೀ ನಾಗಮೂತೇಂದ್ರ ಮಹಾಸ್ವಾಮೀಜಿ ಹಾಗೂ ಹುಬ್ಬಳ್ಳಿ ವೇ.ಬ್ರ. ಶ್ರೀ ಶಂಕರಾಚಾರ್ಯ ಗು. ಕಡ್ಲಾಸ್ಕರ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ವಿಶ್ವಕರ್ಮ ಸಮಾಜದ ಮುಖಂಡ ಮುತ್ತಣ್ಣ ಬಡಿಗೇರ ಸೇರಿದಂತೆ ಟ್ರಸ್ಟ್ ಕಮಿಟಿಯ ಪದಾಧಿಕಾರಿಗಳು, ಸದಸ್ಯರು ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ಪಾಲ್ಗೊಂಡಿದ್ದರು. ಶಿಕ್ಷಕ ಸತೀಶ ಹೊರಪೇಟೆ ಪ್ರಾರ್ಥಿಸಿದರು. ಮೋಹನ ಸಿ. ನರಗುಂದ ಸ್ವಾಗತಿಸಿದರು. ಪ್ರಾಧ್ಯಾಪಕ ವಿಶ್ವನಾಥ ಯ. ಕಮ್ಮಾರ ನಿರೂಪಿಸಿದರು. ಚಂದ್ರಕಾಂತ ಸೋನಾರ ವಂದಿಸಿದರು.

ನಾವು ಎಷ್ಟೇ ಬುದ್ಧಿವಂತರಾಗಿದ್ದರೂ ಶಿಕ್ಷಣವಿಲ್ಲದಿದ್ದರೆ ಪ್ರಯೋಜನವಿಲ್ಲ. ಆದ್ದರಿಂದ ನಮ್ಮ ಸಮಾಜ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು.

— ಡಾ. ವಿನೋದ ಅಕ್ಕಸಾಲಿ, ವೈದ್ಯರು, ಬಾಗಲಕೋಟೆ

ಸಾವಿನಲ್ಲೂ ಸಾರ್ಥಕತೆ ಮೆರೆದ ನಿವೃತ್ತ ಬ್ಯಾಂಕ್ ವ್ಯವಸ್ಥಾಪಕ

0

xವಿಜಯಸಾಕ್ಷಿ ಸುದ್ದಿ, ಗದಗ: ಬದುಕಿನುದ್ದಕ್ಕೂ ಸೇವಾ ಮನೋಭಾವ ಮೆರೆದಿದ್ದ ಸಹಕಾರಿ ಬ್ಯಾಂಕ್‌ನ ನಿವೃತ್ತ ವ್ಯವಸ್ಥಾಪಕ ಗುರಪ್ಪ ಬಸವಣ್ಣೆಪ್ಪ ಅಂಗಡಿ (78) ಅವರು ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಸೆ. 2ರಂದು ನಿಧನರಾದ ಅವರ ಸ್ವಇಚ್ಛೆಯಂತೆ ಕುಟುಂಬದವರು ನೇತ್ರದಾನ ಹಾಗೂ ದೇಹದಾನ ಮಾಡುವ ಮೂಲಕ ಮಾನವೀಯ ಮೌಲ್ಯಕ್ಕೆ ಮಾದರಿಯಾಗಿದ್ದಾರೆ.

ಗದುಗಿನ ಹಾತಲಗೇರಿ ನಾಕಾ ಸಮೀಪದ ನಿವಾಸಿಯಾಗಿದ್ದ ಅಂಗಡಿ ಅವರ ನಿಧನದ ಬಳಿಕ ಕುಟುಂಬದವರ ಒಪ್ಪಿಗೆಯೊಂದಿಗೆ ತಜ್ಞ ವೈದ್ಯರ ತಂಡ ನೇತ್ರದಾನದ ಪ್ರಕ್ರಿಯೆ ನೆರವೇರಿಸಿತು. ಬಳಿಕ ಸೆ. 3ರಂದು ಅವರ ದೇಹವನ್ನು ವೈದ್ಯಕೀಯ ವಿದ್ಯಾರ್ಥಿಗಳ ಅಂಗರಚನಾ ಶಾಸ್ತ್ರ ಅಧ್ಯಯನಕ್ಕಾಗಿ ಗದಗಿನ ಕೆ.ಎಚ್. ಪಾಟೀಲ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ದಾನ ಮಾಡಲಾಯಿತು.

ನಮ್ಮ ಬದುಕು ಮುಗಿದರೂ ಮತ್ತೊಬ್ಬರ ಬದುಕಿಗೆ ನೆರವಾಗಲಿ ಎಂಬ ಮಾನವೀಯ ಸಂದೇಶ ಸಾರುವಂತೆ ಅಂಗಡಿ ಕುಟುಂಬದ ಈ ನಿರ್ಧಾರ ಗಮನ ಸೆಳೆದಿದೆ. ಮೃತರ ಕೊನೆಯ ಇಚ್ಛೆಯನ್ನು ಗೌರವಿಸಿ ಕುಟುಂಬದವರು ಕೈಗೊಂಡ ನೇತ್ರದಾನ ಹಾಗೂ ದೇಹದಾನವು ಸಮಾಜಕ್ಕೆ ಸೇವಾ ಮನೋಭಾವ, ದಾನಧರ್ಮ ಮತ್ತು ಮಾನವೀಯತೆಯ ಮಹತ್ವವನ್ನು ಸಾರಿದೆ.

ಮರಣದ ಬಳಿಕವೂ ಅಂಗಾಂಗಗಳು ಮತ್ತೊಬ್ಬರಿಗೆ ದೃಷ್ಟಿ ನೀಡಲು ಹಾಗೂ ದೇಹ ವೈದ್ಯಕೀಯ ವಿದ್ಯಾರ್ಥಿಗಳ ಅಧ್ಯಯನಕ್ಕೆ ಉಪಯೋಗವಾಗುವ ಮೂಲಕ ಸಮಾಜಕ್ಕೆ ಕೊಡುಗೆ ನೀಡಿವೆ. ಈ ನಿಟ್ಟಿನಲ್ಲಿ ಸಾರ್ವಜನಿಕರು ನೇತ್ರದಾನ ಮತ್ತು ದೇಹದಾನದ ಕುರಿತು ಜಾಗೃತಿ ಬೆಳೆಸಿಕೊಳ್ಳಬೇಕು ಎಂಬ ಸಂದೇಶವೂ ಮೂಡಿಬಂದಿದೆ.

ಈ ಸಂದರ್ಭದಲ್ಲಿ ಕುಟುಂಬದ ಸದಸ್ಯರೊಂದಿಗೆ ಡಾ. ಪ್ರೀತ್ ಖೋನಾ, ಚೇತನ ಅಂಗಡಿ, ಗದಗ–ಬೆಟಗೇರಿ ಲಯನ್ಸ್ ಕ್ಲಬ್ ಅಧ್ಯಕ್ಷ ಪ್ರವೀಣ ವಾರಕರ, ಕಾರ್ಯದರ್ಶಿ ಲಿಂಗರಾಜ ತೋಟದ, ದತ್ತಣ್ಣ ಬೇವಿನಕಟ್ಟಿ, ಶ್ರೀನಿವಾಸ ಬಾಕಳೆ ಸೇರಿದಂತೆ ಬಂಧು–ಬಳಗದವರು ಉಪಸ್ಥಿತರಿದ್ದರು.

ಮಹಿಳಾ ಕಾರ್ಮಿಕರ ಮನವಿ ಸ್ವೀಕರಿಸಿದ ಕೃಷ್ಣಗೌಡ ಪಾಟೀಲ

0

ವಿಜಯಸಾಕ್ಷಿ ಸುದ್ದಿ, ಗದಗ: ಗದಗ-ಬೆಟಗೇರಿ ನಗರಸಭೆ ಎದುರು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿರುವ 133 ಮಹಿಳಾ ಕಾರ್ಮಿಕರಿಗೆ ಗದಗ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಗೌಡ ಎಚ್. ಪಾಟೀಲ ಬೆಂಬಲ ವ್ಯಕ್ತಪಡಿಸಿದರು.

ಧರಣಿ ಸ್ಥಳಕ್ಕೆ ಭೇಟಿ ನೀಡಿದ ಅವರು, ಮಹಿಳಾ ಕಾರ್ಮಿಕರಿಂದ ಮನವಿ ಸ್ವೀಕರಿಸಿ ಅವರ ಸಮಸ್ಯೆಗಳನ್ನು ಆಲಿಸಿದರು. ಬಳಿಕ ಅಧಿಕಾರಿಗಳೊಂದಿಗೆ ಚರ್ಚಿಸಿ, ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತಂದು ಶೀಘ್ರ ಪರಿಹಾರ ಕಲ್ಪಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಬೆಟಗೇರಿ ನಗರಸಭೆ ಸದಸ್ಯ ಕೃಷ್ಣಾ ಪರಾಪೂರ, ಅಶೋಕ ಕುಡತಿನಿ, ಪೃಥ್ವಿ ಪರಾಪುರ, ಯುವರಾಜ ಬಳ್ಳಾರಿ, ಗೋವಿಂದರಾಜ ಬಳ್ಳಾರಿ, ವಿಜಯ ಕಲ್ಮನಿ, ಮಲಿಕ್ ಸಂಗಾಪುರ, ನಿಂಗಪ್ಪ ದೊಡ್ಡಮನಿ, ಮೈಲಾರಪ್ಪ ಚಳ್ಳಮರ, ಚಂದ್ರು ದೊಡ್ಡಮನಿ, ಉಡಚಪ್ಪ ಹಳ್ಳಿಕೇರಿ, ಪವನ ಬಳ್ಳಾರಿ ಸೇರಿದಂತೆ ಧರಣಿ ನಿರತ ಮಹಿಳಾ ಕಾರ್ಮಿಕರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.

ಶಿಕ್ಷಕರ ಸಮ್ಮೇಳನಕ್ಕೆ ಡಾ. ನಿಂಗು ಸೊಲಗಿ ಸರ್ವಾಧ್ಯಕ್ಷ

0

ವಿಜಯಸಾಕ್ಷಿ ಸುದ್ದಿ, ಗದಗ: ಕಪ್ಪತ್ತಗಿರಿ ಫೌಂಡೇಶನ್ (ರಿ), ಕಳಸಾಪೂರ–ಗದಗ ವತಿಯಿಂದ ಶಿಕ್ಷಕರ ದಿನಾಚರಣೆ ಅಂಗವಾಗಿ ಪ್ರತಿವರ್ಷದಂತೆ ಈ ವರ್ಷವೂ ಶಿಕ್ಷಕರ ಸಮ್ಮೇಳನ ಆಯೋಜಿಸಲಾಗುತ್ತಿದೆ.

ಸಮ್ಮೇಳನದ ಅಂಗವಾಗಿ ರಾಜ್ಯಮಟ್ಟದ ವಿಚಾರ ಸಂಕಿರಣ, ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಹಾಗೂ ಉತ್ತಮ ಜಿಲ್ಲಾ ಶಿಕ್ಷಕ ಪ್ರಶಸ್ತಿ ಪ್ರದಾನ, ಪುಸ್ತಕ ಬಿಡುಗಡೆ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.

ಈ ವರ್ಷದ ಶಿಕ್ಷಕರ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಮುಂಡರಗಿಯ ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ಹಾಗೂ ಮಕ್ಕಳ ಸಾಹಿತಿ ಡಾ. ನಿಂಗು ಸೊಲಗಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಕಪ್ಪತ್ತಗಿರಿ ಫೌಂಡೇಶನ್‌ನ ಸಂಸ್ಥಾಪಕ ಅಧ್ಯಕ್ಷೆ ಚಂದ್ರಕಲಾ ಎಂ. ಇಟಗಿಮಠ ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ರಾಜ್ಯಮಟ್ಟದ ಶೈಕ್ಷಣಿಕ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ಡಾ. ನಿಂಗು ಸೊಲಗಿ ಅವರಿಗೆ ಅಧಿಕೃತ ಆಹ್ವಾನ ನೀಡಲಾಯಿತು. ಈ ಸಂದರ್ಭದಲ್ಲಿ ಕಪ್ಪತ್ತಗಿರಿ ಫೌಂಡೇಶನ್‌ನ ಸಂಸ್ಥಾಪಕ ಅಧ್ಯಕ್ಷೆ ಚಂದ್ರಕಲಾ ಎಂ. ಇಟಗಿಮಠ, ತೋಟಯ್ಯ ಗುಡ್ಡಿಮಠ, ಕಾವ್ಯಾ ಅಂಗಡಿ, ಮಂಜುನಾಥ ಮುಧೋಳ ಹಾಗೂ ಚಂದ್ರಶೇಖರ ಮಜ್ಜಗಿ ಉಪಸ್ಥಿತರಿದ್ದರು.