Home Blog

ವೈಭವ್ ಅಬ್ಬರ, ಶಮಿ-ಮುಕೇಶ್ ಬೌಲಿಂಗ್ ದಾಳಿ; ಕೇಂದ್ರ ವಲಯವನ್ನು ಮಣಿಸಿ ಫೈನಲ್ʼಗೆ ಲಗ್ಗೆ ಇಟ್ಟ ಪೂರ್ವ ವಲಯ

0

ಚೆನ್ನೈ: ದುಲೀಪ್ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಪೂರ್ವ ವಲಯ ತಂಡ ಬರೋಬ್ಬರಿ 14 ವರ್ಷಗಳ ಬಳಿಕ ಫೈನಲ್ ಪ್ರವೇಶಿಸಿದೆ. ಮಂಗಳವಾರ ಮುಕ್ತಾಯಗೊಂಡ ಸೆಮಿಫೈನಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೇಂದ್ರ ವಲಯ ತಂಡವನ್ನು 4 ವಿಕೆಟ್‌ಗಳಿಂದ ಮಣಿಸುವ ಮೂಲಕ ಪೂರ್ವ ವಲಯ ಪ್ರಶಸ್ತಿ ಸುತ್ತಿಗೆ ಲಗ್ಗೆ ಇಟ್ಟಿದೆ.

ಪೂರ್ವ ವಲಯ ತಂಡ ಕೊನೆಯ ಬಾರಿ 2012-13ರ ಆವೃತ್ತಿಯಲ್ಲಿ ದುಲೀಪ್ ಟ್ರೋಫಿ ಚಾಂಪಿಯನ್ ಆಗಿತ್ತು. ಆ ಬಳಿಕ ತಂಡಕ್ಕೆ ಫೈನಲ್ ಪ್ರವೇಶಿಸಲು ಸಾಧ್ಯವಾಗಿರಲಿಲ್ಲ. ಇದೀಗ ನಾಯಕ ಇಶಾನ್ ಕಿಶನ್ ಅವರ ನೇತೃತ್ವದಲ್ಲಿ ತಂಡ ಮತ್ತೆ ಪ್ರಶಸ್ತಿ ಸುತ್ತಿಗೆ ಪ್ರವೇಶಿಸಿದ್ದು, 14 ವರ್ಷಗಳ ಕಾಯುವಿಕೆಗೆ ತೆರೆ ಎಳೆದಿದೆ.

ತಂಡದ ಯಶಸ್ಸಿನಲ್ಲಿ ಯುವ ಬ್ಯಾಟರ್ ವೈಭವ್ ಸೂರ್ಯವಂಶಿ ಅವರ ಆಕ್ರಮಣಕಾರಿ ಆಟದ ಜೊತೆಗೆ ಅನುಭವಿ ವೇಗಿಗಳಾದ ಮೊಹಮ್ಮದ್ ಶಮಿ ಹಾಗೂ ಮುಕೇಶ್ ಕುಮಾರ್ ಅವರ ಬೌಲಿಂಗ್ ಪ್ರಮುಖ ಪಾತ್ರ ವಹಿಸಿದೆ.

ಮೊದಲ ಇನ್ನಿಂಗ್ಸ್‌ನಲ್ಲಿ ರಜತ್ ಪಾಟೀದಾರ್ ನಾಯಕತ್ವದ ಕೇಂದ್ರ ವಲಯ 266 ರನ್‌ಗಳಿಗೆ ಆಲೌಟ್ ಆಗಿತ್ತು. ಇದಕ್ಕೆ ಉತ್ತರವಾಗಿ ಪೂರ್ವ ವಲಯವೂ 266 ರನ್‌ಗಳಿಗೆ ಸರ್ವಪತನ ಕಂಡಿದ್ದರಿಂದ ಎರಡೂ ತಂಡಗಳ ಮೊದಲ ಇನ್ನಿಂಗ್ಸ್ ಸ್ಕೋರ್ ಸಮಬಲಗೊಂಡಿತ್ತು.

ನಂತರ ಎರಡನೇ ಇನ್ನಿಂಗ್ಸ್‌ನಲ್ಲಿ ಪೂರ್ವ ವಲಯದ ಬೌಲರ್‌ಗಳು ಅದ್ಭುತ ಪ್ರದರ್ಶನ ನೀಡಿದರು. ಕೇಂದ್ರ ವಲಯದ ಬ್ಯಾಟಿಂಗ್ ಪಡೆಯನ್ನು ಕೇವಲ 158 ರನ್‌ಗಳಿಗೆ ಕಟ್ಟಿಹಾಕಿದರು. ಅಮನ್ ಮೋಖಡೆ 41, ಅರ್ಶದ್ ಖಾನ್ 25 ಹಾಗೂ ರಿಂಕು ಸಿಂಗ್ 20 ರನ್ ಗಳಿಸಿದರು. ಪೂರ್ವ ವಲಯದ ಪರ ಮುಕೇಶ್ ಕುಮಾರ್ 4 ವಿಕೆಟ್ ಹಾಗೂ ಮೊಹಮ್ಮದ್ ಶಮಿ 3 ವಿಕೆಟ್ ಕಬಳಿಸಿದರು.

ಗೆಲುವಿಗೆ 159 ರನ್‌ಗಳ ಗುರಿ ಪಡೆದ ಪೂರ್ವ ವಲಯಕ್ಕೆ ಮತ್ತೊಮ್ಮೆ ಯುವ ಬ್ಯಾಟರ್ ವೈಭವ್ ಸೂರ್ಯವಂಶಿ ಹಾಗೂ ನಾಯಕ ಇಶಾನ್ ಕಿಶನ್ ಆಸರೆಯಾದರು. ವೈಭವ್ 43 ಎಸೆತಗಳಲ್ಲಿ 40 ರನ್‌ಗಳ ಅಮೂಲ್ಯ ಇನ್ನಿಂಗ್ಸ್ ಆಡಿದರೆ, ಇಶಾನ್ ಕಿಶನ್ 41 ಎಸೆತಗಳಲ್ಲಿ ಅಜೇಯ 39 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.

ಕೇಂದ್ರ ವಲಯದ ಪರ ಹರ್ಷ್ ದುಬೆ 4 ವಿಕೆಟ್ ಕಬಳಿಸಿದರೂ ತಂಡದ ಗೆಲುವಿಗೆ ಅದು ಸಾಕಾಗಲಿಲ್ಲ. ಅಂತಿಮವಾಗಿ ಪೂರ್ವ ವಲಯ 6 ವಿಕೆಟ್ ಕಳೆದುಕೊಂಡು 162 ರನ್ ಗಳಿಸಿ 4 ವಿಕೆಟ್‌ಗಳ ಗೆಲುವು ಸಾಧಿಸಿತು.

ಪಂದ್ಯದ ಸ್ಕೋರ್:

ಕೇಂದ್ರ ವಲಯ: 266/10 & 158/10
ಪೂರ್ವ ವಲಯ: 266/10 & 162/6

ಕೇಂದ್ರ ವಲಯ ಪರ: ಅಮನ್ ಮೋಖಡೆ 41, ಅರ್ಶದ್ ಖಾನ್ 25, ಮುಕೇಶ್ ಕುಮಾರ್ 4/44, ಮೊಹಮ್ಮದ್ ಶಮಿ 3/56

ಪೂರ್ವ ವಲಯ ಪರ: ವೈಭವ್ ಸೂರ್ಯವಂಶಿ 40, ಇಶಾನ್ ಕಿಶನ್ ಅಜೇಯ 39

ಕೇಂದ್ರ ವಲಯ ಪರ: ಹರ್ಷ್ ದುಬೆ 4/53

ಸುದೀಪ್‌ಗೆ ಬರ್ತಡೇಗೆ ಮತ್ತೊಂದು ಬಿಗ್‌ ಸರ್ಪ್ರೈಸ್: ‘ದೇವರಾಯ’ ಚಿತ್ರದಲ್ಲಿ ಶ್ರೀ ಕೃಷ್ಣದೇವರಾಯನಾಗಿ ಕಿಚ್ಚ

ಬೆಂಗಳೂರು: ಕಿಚ್ಚ ಸುದೀಪ್ ಅವರ 53ನೇ ಹುಟ್ಟುಹಬ್ಬ ಕನ್ನಡ ಚಿತ್ರರಂಗಕ್ಕೆ ಒಂದರ ಹಿಂದೊಂದರಂತೆ ದೊಡ್ಡ ಸಿನಿಮಾ ಘೋಷಣೆಗಳನ್ನು ನೀಡುತ್ತಿದೆ. ‘ಬಿಲ್ಲಾ ರಂಗ ಭಾಷಾ’ ಬಳಿಕ ಇದೀಗ ಸುದೀಪ್ ಮತ್ತೊಂದು ಬೃಹತ್ ಪ್ರಾಜೆಕ್ಟ್ ಘೋಷಿಸಿದ್ದು, ಈ ಬಾರಿ ವಿಜಯನಗರ ಸಾಮ್ರಾಜ್ಯದ ಖ್ಯಾತ ಚಕ್ರವರ್ತಿ ಕೃಷ್ಣದೇವರಾಯನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರಕ್ಕೆ ‘ದೇವರಾಯ’ ಎಂಬ ಶೀರ್ಷಿಕೆ ಅಂತಿಮಗೊಂಡಿದೆ.

ಸುದೀಪ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ವಿಶೇಷ ಕಾನ್ಸೆಪ್ಟ್ ವೀಡಿಯೋ ಸಿನಿಮಾದ ಪ್ರಮಾಣದ ಬಗ್ಗೆ ಸುಳಿವು ನೀಡಿದೆ. ವಿಜಯನಗರ ಸಾಮ್ರಾಜ್ಯದ ಭವ್ಯತೆ, ಗಗನಚುಂಬಿ ದೇವಸ್ಥಾನಗಳ ಗೋಪುರಗಳು, ಆನೆ ಪಡೆಗಳು, ಯುದ್ಧದ ಸನ್ನಿವೇಶಗಳು ಹಾಗೂ ರಾಜನ ಗಾಂಭೀರ್ಯವನ್ನು ಬಿಂಬಿಸುವ ದೃಶ್ಯಗಳ ನಡುವೆ ಸುದೀಪ್ ಅವರ ಕೃಷ್ಣದೇವರಾಯನ ಲುಕ್ ಅನಾವರಣಗೊಂಡಿದೆ.

ಸುದೀಪ್ ಈ ಪಾತ್ರವನ್ನು ಮಾಡುತ್ತಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದ್ದು, ಐತಿಹಾಸಿಕ ರಾಜನ ಪರಂಪರೆಯನ್ನು ಹಂಚಿಕೊಳ್ಳುತ್ತಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದ್ದಾರೆ. ಬಿಡುಗಡೆಯಾಗಿರುವ ಕಾನ್ಸೆಪ್ಟ್ ವೀಡಿಯೋ ಸಂಪೂರ್ಣವಾಗಿ ಎಐ ತಂತ್ರಜ್ಞಾನದಲ್ಲಿ ಸಿದ್ಧಪಡಿಸಲಾಗಿದೆ.

ಕೃಷ್ಣದೇವರಾಯ ವಿಜಯನಗರ ಸಾಮ್ರಾಜ್ಯದ ಅತ್ಯಂತ ಪ್ರಭಾವಶಾಲಿ ದೊರೆಗಳಲ್ಲಿ ಒಬ್ಬರು. ಯುದ್ಧ ಕೌಶಲ, ಸಮರ್ಥ ಆಡಳಿತ ಮತ್ತು ಸಾಹಿತ್ಯದ ಮೇಲಿನ ಆಸಕ್ತಿಗೆ ಹೆಸರುವಾಸಿಯಾಗಿದ್ದ ಅವರ ಜೀವನವನ್ನು ಆಧರಿಸಿ ಸಿನಿಮಾ ರೂಪಿಸುವುದು ದೊಡ್ಡ ಸವಾಲಿನ ಕೆಲಸವಾಗಿದ್ದು, ‘ದೇವರಾಯ’ ಆ ನಿಟ್ಟಿನಲ್ಲಿ ಮಹತ್ವಾಕಾಂಕ್ಷೆಯ ಚಿತ್ರವಾಗಿ ಮೂಡಿಬರುವ ನಿರೀಕ್ಷೆ ಮೂಡಿಸಿದೆ.

ಈ ಹಿಂದೆ ಡಾ. ರಾಜ್‌ಕುಮಾರ್ ಅವರು ಕೃಷ್ಣದೇವರಾಯನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈಗ ದಶಕಗಳ ಬಳಿಕ ಅದೇ ಐತಿಹಾಸಿಕ ಪಾತ್ರವನ್ನು ಸುದೀಪ್ ನಿರ್ವಹಿಸಲಿದ್ದು, ಈ ಸಿನಿಮಾ ಅವರ ವೃತ್ತಿಬದುಕಿನಲ್ಲೇ ಪ್ರಮುಖ ಮೈಲಿಗಲ್ಲಾಗುವ ನಿರೀಕ್ಷೆ ಅಭಿಮಾನಿಗಳಲ್ಲಿದೆ.

ಪ್ರಿಯಾ ಸುದೀಪ್ ಅವರ ಅರ್ಪಣೆಯಲ್ಲಿ ನಿರ್ಮಾಣವಾಗುತ್ತಿರುವ ಸಿನಿಮಾಕ್ಕೆ ಟಿ.ಜಿ. ವಿಶ್ವಪ್ರಸಾದ್ ಮತ್ತು ಕೃತಿ ಪ್ರಸಾದ್ ಹಣ ಹೂಡುತ್ತಿದ್ದಾರೆ. ಪ್ಯಾನ್-ಇಂಡಿಯಾ ಮಟ್ಟದಲ್ಲಿ ಹಲವು ಯಶಸ್ವಿ ಸಿನಿಮಾಗಳನ್ನು ನಿರ್ಮಿಸಿರುವ ‘ಪೀಪಲ್ ಮೀಡಿಯಾ ಫ್ಯಾಕ್ಟರಿ’ ‘ದೇವರಾಯ’ ಮೂಲಕ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಹೆಜ್ಜೆ ಇಡುತ್ತಿದೆ.

ಚಿತ್ರದ ನಿರ್ದೇಶಕರ ಹೆಸರನ್ನು ಸದ್ಯಕ್ಕೆ ಸಸ್ಪೆನ್ಸ್ ಆಗಿ ಇಡಲಾಗಿದೆ. ಐತಿಹಾಸಿಕ ಕಥೆಗೆ ಅಗತ್ಯವಿರುವ ಭವ್ಯ ಸೆಟ್‌ಗಳು ಮತ್ತು ವಿಎಫ್‌ಎಕ್ಸ್ ಕೆಲಸಗಳಿಗೆ ಹೆಚ್ಚಿನ ಸಮಯ ಬೇಕಾಗಿರುವುದರಿಂದ 2027ರ ಡಿಸೆಂಬರ್‌ನಲ್ಲಿ ‘ದೇವರಾಯ’ ಚಿತ್ರವನ್ನು ವಿಶ್ವದಾದ್ಯಂತ ಬಿಡುಗಡೆ ಮಾಡುವ ಯೋಜನೆ ಹೊಂದಲಾಗಿದೆ.

ಅತ್ಯಾಚಾರ ಪ್ರಕರಣದ ಬೆನ್ನಲ್ಲೇ ಬಸ್ ಸುರಕ್ಷತೆಗೆ ಕಠಿಣ ನಿಯಮ; ಪ್ಯಾನಿಕ್ ಬಟನ್, ಪರದೆ ನಿಷೇಧ ಕಡ್ಡಾಯ

0

ನವದೆಹಲಿ: ಅಪ್ರಾಪ್ತ ಬಾಲಕಿಯ ಮೇಲೆ ಚಲಿಸುತ್ತಿದ್ದ ಸ್ಲೀಪರ್ ಬಸ್‌ನಲ್ಲಿ ಸಾಮೂಹಿಕ ಅತ್ಯಾಚಾರ ನಡೆದ ಪ್ರಕರಣದ ಬೆನ್ನಲ್ಲೇ ದೆಹಲಿ ಸರ್ಕಾರ ಬಸ್‌ಗಳ ಸುರಕ್ಷತಾ ನಿಯಮಗಳನ್ನು ಮತ್ತಷ್ಟು ಕಠಿಣಗೊಳಿಸಿದೆ.

ದೆಹಲಿಯಲ್ಲಿ ಸಂಚರಿಸುವ ಎಲ್ಲ ಬಸ್‌ಗಳಲ್ಲಿ ಪ್ಯಾನಿಕ್ ಬಟನ್ ಮತ್ತು ವಾಹನ ಟ್ರ್ಯಾಕಿಂಗ್ ಸಾಧನಗಳು ಸದಾ ಕಾರ್ಯನಿರ್ವಹಿಸುವ ಸ್ಥಿತಿಯಲ್ಲಿರಬೇಕು ಎಂದು ಸಾರಿಗೆ ಇಲಾಖೆ ಹೊಸ ನಿರ್ದೇಶನ ಹೊರಡಿಸಿದೆ. ಬಸ್‌ಗಳ ಕಿಟಕಿಗಳಿಗೆ ಪರದೆ ಹಾಕುವುದನ್ನು ನಿಷೇಧಿಸಲಾಗಿದ್ದು, ಒಳಗೆ ಮತ್ತು ಹೊರಗಿನ ದೃಶ್ಯ ಸ್ಪಷ್ಟವಾಗಿ ಕಾಣುವಂತೆ ಕಿಟಕಿ ಹಾಗೂ ಗಾಜಿನ ಪಾರದರ್ಶಕತೆ ಕಾಪಾಡಬೇಕು ಎಂದು ಸೂಚಿಸಲಾಗಿದೆ.

ಅಪ್ರಾಪ್ತೆಯ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಬಸ್ ಚಾಲಕ ಮತ್ತು ಕಂಡಕ್ಟರ್ ಕೃತ್ಯ ಎಸಗಿದ್ದು, ಇಬ್ಬರನ್ನೂ ಬಂಧಿಸಲಾಗಿದೆ. ಬಾಲಕಿ ಪ್ರಯಾಣಿಸುತ್ತಿದ್ದ ವೇಳೆ ಬಸ್ ಕಿಟಕಿಗಳಿಗೆ ಪರದೆ ಹಾಕಲಾಗಿದ್ದು, ಇದರಿಂದ ಒಳಗಿನ ಚಟುವಟಿಕೆ ಹೊರಗಿನಿಂದ ಕಾಣದಂತಾಗಿತ್ತು ಎನ್ನಲಾಗಿದೆ. ಕಾನೂನಿನ ಪ್ರಕಾರ ಇರಬೇಕಾದ ಸಿಸಿಟಿವಿ ವ್ಯವಸ್ಥೆಯೂ ಕಾರ್ಯನಿರ್ವಹಿಸುತ್ತಿರಲಿಲ್ಲ ಎಂದು ವರದಿಯಾಗಿದೆ.

ಆಗಸ್ಟ್ 4ರ ರಾತ್ರಿ ಈ ಘಟನೆ ನಡೆದಿದ್ದು, ಕೃತ್ಯದ ಬಳಿಕ ಚಾಲಕ ಮತ್ತು ಕಂಡಕ್ಟರ್ ಬಾಲಕಿಯನ್ನು ಕಾಶ್ಮೀರಿ ಗೇಟ್ ಬಳಿ ಬಿಟ್ಟು ಪರಾರಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಬಾಲಕಿ ಗ್ರೇಟರ್ ನೋಯ್ಡಾದಿಂದ ಬಸ್ ಹತ್ತಿದ್ದು, ಅಲ್ಲಿಂದ 40 ಕಿ.ಮೀ.ಗೂ ಹೆಚ್ಚು ದೂರದ ಕಾಶ್ಮೀರಿ ಗೇಟ್ ಬಳಿ ಆಕೆಯನ್ನು ಬಿಟ್ಟು ಹೋಗಲಾಗಿತ್ತು ಎನ್ನಲಾಗಿದೆ.

ದೆಹಲಿ ಸಾರಿಗೆ ಇಲಾಖೆ ಹೊರಡಿಸಿರುವ ಈ ಹೊಸ ನಿರ್ದೇಶನಗಳು ದೆಹಲಿಯಲ್ಲಿ ಸಂಚರಿಸುವ ಎಲ್ಲ ಬಸ್‌ಗಳಿಗೆ ಅನ್ವಯಿಸಲಿದ್ದು, ಇತರ ರಾಜ್ಯಗಳ ಬಸ್‌ಗಳಿಗೂ ಇವು ಅನ್ವಯವಾಗಲಿವೆ. ಪ್ರತಿ ಬಸ್‌ನಲ್ಲಿರುವ ವೆಹಿಕಲ್ ಲೊಕೇಷನ್ ಟ್ರ್ಯಾಕಿಂಗ್ ಡಿವೈಸ್ ಹಾಗೂ ಪ್ಯಾನಿಕ್ ಬಟನ್‌ಗಳು ಸದಾ ಕಾರ್ಯನಿರ್ವಹಿಸುವ ಸ್ಥಿತಿಯಲ್ಲಿರಬೇಕು ಮತ್ತು ಪ್ಯಾನಿಕ್ ಬಟನ್ ಪ್ರಯಾಣಿಕರಿಗೆ ಸುಲಭವಾಗಿ ಸಿಗುವಂತಿರಬೇಕು ಎಂದು ಸೂಚಿಸಲಾಗಿದೆ.

ಪ್ರತಿ ಬಸ್‌ನಲ್ಲಿ ಕಾರ್ಯನಿರ್ವಹಿಸುವ ಅಗ್ನಿಶಾಮಕ ಸಾಧನ ಮತ್ತು ಪ್ರಥಮ ಚಿಕಿತ್ಸಾ ಕಿಟ್ ಕಡ್ಡಾಯವಾಗಿ ಇರಬೇಕು. ರಾತ್ರಿ ವೇಳೆ ಅಥವಾ ಸಂಚಾರದಲ್ಲಿಲ್ಲದ ಸಮಯದಲ್ಲಿ ವಾಹನಗಳನ್ನು ಸುರಕ್ಷಿತ, ಅಧಿಕೃತ ಹಾಗೂ ಸೂಕ್ತ ಬೆಳಕಿನ ವ್ಯವಸ್ಥೆ ಇರುವ ಸ್ಥಳಗಳಲ್ಲೇ ನಿಲ್ಲಿಸಬೇಕು ಎಂದೂ ಸೂಚಿಸಲಾಗಿದೆ.

ಸಾರಿಗೆ ಸಚಿವ ಡಾ. ಪಂಕಜ್ ಕುಮಾರ್ ಸಿಂಗ್ ಮಾತನಾಡಿ, ಪ್ರಯಾಣಿಕರ ಸುರಕ್ಷತೆ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ ಎಂದು ಸ್ಪಷ್ಟಪಡಿಸಿದರು. ದೆಹಲಿಯಲ್ಲಿ ಸಂಚರಿಸುವ ಪ್ರತಿಯೊಂದು ಬಸ್ ಕೂಡ ನಿಗದಿತ ಸುರಕ್ಷತಾ ಮತ್ತು ಕಾರ್ಯಾಚರಣಾ ಮಾನದಂಡಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಅವರು ತಿಳಿಸಿದರು.

ಮೋದಿ ಸಾರ್ವಜನಿಕ ಜೀವನಕ್ಕೆ 25 ವರ್ಷ: ‘ಸೇವಾ ಸಂಕಲ್ಪ’ ಅಭಿಯಾನಕ್ಕೆ ಬಿಜೆಪಿ ಸಿದ್ಧತೆ, ಇಂದು ಪ್ರಮುಖರ ಸಭೆ

0

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಸಾರ್ವಜನಿಕ ಜೀವನಕ್ಕೆ 25 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ದೇಶಾದ್ಯಂತ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲು ಬಿಜೆಪಿ ಸಿದ್ಧತೆ ನಡೆಸಿದೆ. ಇದರ ಭಾಗವಾಗಿ ‘ಸೇವಾ ಸಂಕಲ್ಪ’ ಹೆಸರಿನಲ್ಲಿ ವಿಶೇಷ ಅಭಿಯಾನ ಹಮ್ಮಿಕೊಳ್ಳಲು ಪಕ್ಷ ಮುಂದಾಗಿದೆ.

ಅಭಿಯಾನದ ರೂಪುರೇಷೆ ಹಾಗೂ ಕಾರ್ಯಕ್ರಮಗಳ ಕುರಿತು ಚರ್ಚಿಸಲು ಇಂದು ನವದೆಹಲಿಯಲ್ಲಿ ಬಿಜೆಪಿ ಪ್ರಮುಖರ ಮಹತ್ವದ ಸಭೆ ನಡೆಯಲಿದೆ. ಬಿಜೆಪಿ ಹಾಗೂ ಎನ್‌ಡಿಎ ಆಡಳಿತದ ರಾಜ್ಯಗಳ ಆಯ್ದ ಮುಖ್ಯಮಂತ್ರಿಗಳು ಮತ್ತು ಸಚಿವರು ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅವರ ನಿವಾಸದಲ್ಲಿ ನಡೆಯಲಿರುವ ತರಬೇತಿ ಕಾರ್ಯಾಗಾರದಲ್ಲಿ ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳ ಸುಮಾರು 25 ಮುಖ್ಯಮಂತ್ರಿಗಳು ಹಾಗೂ ಸಚಿವರು ಭಾಗವಹಿಸುವ ನಿರೀಕ್ಷೆಯಿದೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಪ್ರಮುಖ ಸಾಧನೆಗಳು ಹಾಗೂ ವಿವಿಧ ಜನಪರ ಯೋಜನೆಗಳನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಈ ಕಾರ್ಯಾಗಾರದಲ್ಲಿ ತಂತ್ರಗಾರಿಕೆ ರೂಪಿಸಲಾಗುವುದು. ಅಭಿಯಾನವನ್ನು ದೇಶಾದ್ಯಂತ ಪರಿಣಾಮಕಾರಿಯಾಗಿ ನಡೆಸುವ ಕುರಿತು ನಾಯಕರು ಚರ್ಚೆ ನಡೆಸಲಿದ್ದಾರೆ. ಕಾರ್ಯಾಗಾರ ಮುಗಿದ ಬಳಿಕ ಬಿಜೆಪಿ ನಾಯಕರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗುವ ಸಾಧ್ಯತೆಯೂ ಇದೆ.

ಮೋದಿ ಅವರ ಸಾರ್ವಜನಿಕ ಜೀವನದ 25ನೇ ವರ್ಷದ ಸಂಭ್ರಮಾಚರಣೆಯ ಅಂಗವಾಗಿ ಮುಂದಿನ ಒಂದು ತಿಂಗಳ ಅವಧಿಯಲ್ಲಿ ಒಟ್ಟು 17 ಕಾರ್ಯಕ್ರಮಗಳನ್ನು ಆಯೋಜಿಸಲು ಬಿಜೆಪಿ ಸಿದ್ಧತೆ ನಡೆಸಿದೆ. ಸೇವೆ, ಅಭಿವೃದ್ಧಿ ಹಾಗೂ ಸರ್ಕಾರದ ಸಾಧನೆಗಳನ್ನು ಜನರಿಗೆ ತಲುಪಿಸುವುದೇ ಈ ಕಾರ್ಯಕ್ರಮಗಳ ಪ್ರಮುಖ ಉದ್ದೇಶವಾಗಿದೆ.

ರೇಣುಕಾಸ್ವಾಮಿ ಕೇಸ್‌ನಲ್ಲಿ ಇಂದು ಮಹತ್ವದ ದಿನ: ಪ್ರದೋಷ್ ಮಾಫಿ ಸಾಕ್ಷಿ ಹೇಳಿಕೆ ದಾಖಲಾಗುತ್ತಾ?

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಇಂದು ಮಹತ್ವದ ಬೆಳವಣಿಗೆಗಳಿಗೆ ವೇದಿಕೆ ಸಿದ್ಧವಾಗಿದೆ. ಆರೋಪಿ ದರ್ಶನ್‌ ಸಲ್ಲಿಸಿರುವ ಅರ್ಜಿಯ ವಿಚಾರದಲ್ಲಿ ಹೈಕೋರ್ಟ್‌ ಆದೇಶದ ನಿರೀಕ್ಷೆಯ ನಡುವೆಯೇ, ಪ್ರದೋಷ್‌ ಅವರ ಮಾಫಿ ಸಾಕ್ಷಿ ಹೇಳಿಕೆ ಕೂಡ ದಾಖಲಾಗುವ ಸಾಧ್ಯತೆಯಿದೆ. ಹೀಗಾಗಿ ಇಂದು ಪ್ರಕರಣ ಯಾವ ತಿರುವು ಪಡೆಯಲಿದೆ ಎಂಬ ಕುತೂಹಲ ಹೆಚ್ಚಾಗಿದೆ.

ಕೊಲೆ ಪ್ರಕರಣದಲ್ಲಿ ತನ್ನನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸುವಂತೆ ಪ್ರದೋಷ್‌ ಸಲ್ಲಿಸಿದ್ದ ಅರ್ಜಿಯನ್ನು 59ನೇ ಸಿಸಿಹೆಚ್ ನ್ಯಾಯಾಲಯ ಈ ಹಿಂದೆ ಅಂಗೀಕರಿಸಿತ್ತು. ಬಳಿಕ ಸೆಪ್ಟೆಂಬರ್ 2ರಂದು ಸಾಕ್ಷಿ ಹೇಳಿಕೆ ದಾಖಲಿಸಲು ವಿಟ್ನೆಸ್‌ ಸಮನ್ಸ್‌ ಜಾರಿಗೊಳಿಸಲಾಗಿತ್ತು.

ನ್ಯಾಯಾಲಯದ ಮುಂದೆ ಹಾಜರಾಗಿ ಸಾಕ್ಷಿ ನುಡಿಯುವಂತೆ ಜೈಲಾಧಿಕಾರಿಗಳ ಮೂಲಕ ಪ್ರದೋಷ್‌ಗೆ ಸಮನ್ಸ್‌ ಜಾರಿ ಮಾಡಲು ನ್ಯಾಯಾಧೀಶರಾದ ಸುಜಾತ ಮಡಿವಾಳಪ್ಪ ಸಾಂಬ್ರಾಣಿ ಸೂಚಿಸಿದ್ದರು. ಹೀಗಾಗಿ ಇಂದು ಮಧ್ಯಾಹ್ನ ಪ್ರದೋಷ್‌ ಹೇಳಿಕೆ ದಾಖಲಿಸುವ ಪ್ರಕ್ರಿಯೆ ನಡೆಯಲಿದೆಯೇ ಎಂಬುದೇ ಸದ್ಯದ ಪ್ರಮುಖ ಪ್ರಶ್ನೆಯಾಗಿದೆ.

ಇದರ ನಡುವೆ, ಪ್ರದೋಷ್‌ ಅವರನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸಲು ಸೆಷನ್ಸ್‌ ಕೋರ್ಟ್ ನೀಡಿರುವ ಆದೇಶವನ್ನು ಪ್ರಶ್ನಿಸಿ ದರ್ಶನ್‌ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ದರ್ಶನ್‌ ಪರ ವಕೀಲರು ಸಲ್ಲಿಸಿರುವ ಅರ್ಜಿ ಹೈಕೋರ್ಟ್‌ ಕಾಸ್‌ ಲಿಸ್ಟ್‌ನಲ್ಲಿ 49ನೇ ಮ್ಯಾಟರ್‌ ಆಗಿದೆ.

ಇಂದು ಬೆಳಗ್ಗೆ 11.30ರ ಸುಮಾರಿಗೆ ಈ ಅರ್ಜಿಗೆ ಸಂಬಂಧಿಸಿದಂತೆ ಹೈಕೋರ್ಟ್‌ ಆದೇಶ ಹೊರಬೀಳುವ ಸಾಧ್ಯತೆ ಇದೆ. ಇದೇ ಕಾರಣಕ್ಕೆ ಮಧ್ಯಾಹ್ನ 12ರ ವೇಳೆಗೆ ಪ್ರದೋಷ್‌ ಹೇಳಿಕೆ ದಾಖಲಿಸಲು ಕೋರ್ಟ್‌ ಸಿದ್ಧತೆ ನಡೆಸಿದೆ. ಹೈಕೋರ್ಟ್‌ ಆದೇಶ ಹಾಗೂ ಪ್ರದೋಷ್‌ ಸಾಕ್ಷಿ ಹೇಳಿಕೆ—ಎರಡೂ ಬೆಳವಣಿಗೆಗಳು ಒಂದೇ ದಿನ ನಡೆಯುವ ಸಾಧ್ಯತೆಯಿಂದ ಪ್ರಕರಣ ಕ್ಷಣಕ್ಷಣಕ್ಕೂ ಕುತೂಹಲ ಕೆರಳಿಸಿದೆ.

ಓವರ್‌ಟೇಕ್ ವಿಚಾರಕ್ಕೆ ಗಲಾಟೆ: ‘ದುನಿಯಾ’ ವಿಜಯ್ ಪುತ್ರ ಸಾಮ್ರಾಟ್ ವಿರುದ್ಧ ಅಪಹರಣ, ಹಲ್ಲೆ ಆರೋಪ- ದೂರು ದಾಖಲು

ಬೆಂಗಳೂರು: ಕಾರು ಓವರ್‌ಟೇಕ್ ಮಾಡಿದ ವಿಚಾರಕ್ಕೆ ಆರಂಭವಾದ ಗಲಾಟೆ ಇದೀಗ ಅಪಹರಣ ಮತ್ತು ಹಲ್ಲೆ ಆರೋಪದವರೆಗೆ ತಲುಪಿದೆ. ನಟ ‘ದುನಿಯಾ’ ವಿಜಯ್ ಪುತ್ರ ಸಾಮ್ರಾಟ್ ವಿರುದ್ಧ ತನ್ನ ಸಹಪಾಠಿ ಮನೀಶ್ ಗೌಡನನ್ನು ಕಾರಿನಲ್ಲಿ ಅಪಹರಿಸಿ ಹಲ್ಲೆ ನಡೆಸಿದ ಆರೋಪ ಕೇಳಿಬಂದಿದ್ದು, ಈ ಸಂಬಂಧ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಗಾಯಗೊಂಡಿರುವ ಮನೀಶ್ ಗೌಡ ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ನಿನ್ನೆ ಸಂಜೆ ರಾಜರಾಜೇಶ್ವರಿನಗರದಲ್ಲಿ ಘಟನೆಗೆ ಮುನ್ನ ಇಬ್ಬರು ವಿದ್ಯಾರ್ಥಿಗಳ ನಡುವೆ ಗಲಾಟೆ ನಡೆದಿತ್ತು ಎನ್ನಲಾಗಿದೆ. ಸಾಮ್ರಾಟ್ ಹಾಗೂ ಆತನ ಸ್ನೇಹಿತರು ಜಿಪ್ಸಿ ಕಾರಿನಲ್ಲಿ ತೆರಳುತ್ತಿದ್ದಾಗ, ಮನೀಶ್ ಗೌಡ ಮತ್ತು ಆತನ ಸ್ನೇಹಿತರು ಐ20 ಕಾರಿನಲ್ಲಿ ಬಂದು ಸಾಮ್ರಾಟ್ ಚಲಾಯಿಸುತ್ತಿದ್ದ ಕಾರನ್ನು ಓವರ್‌ಟೇಕ್ ಮಾಡಿದ್ದರು. ಇದರಿಂದಾಗಿ ಎರಡೂ ಕಡೆಯವರ ನಡುವೆ ಮಾತಿನ ಚಕಮಕಿ ನಡೆದಿತ್ತು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಇಂದು ಮಧ್ಯಾಹ್ನ ಮೈಸೂರು ರಸ್ತೆಯ ಆರ್‌ವಿ ಯೂನಿವರ್ಸಿಟಿ ಹೊರಭಾಗದಲ್ಲಿದ್ದ ಮನೀಶ್ ಗೌಡನನ್ನು ಸಾಮ್ರಾಟ್ ಹಾಗೂ ಆತನ ಕಡೆಯವರು ಸಫಾರಿ ಕಾರಿನಲ್ಲಿ ಬಲವಂತವಾಗಿ ಕರೆದೊಯ್ದಿದ್ದಾರೆ ಎಂದು ಆರೋಪಿಸಲಾಗಿದೆ. ಬಳಿಕ ಆತನ ಮೇಲೆ ತೀವ್ರವಾಗಿ ಹಲ್ಲೆ ನಡೆಸಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ.

ಮನೀಶ್ ಗೌಡ ಮತ್ತು ಸಾಮ್ರಾಟ್ ಇಬ್ಬರೂ ಒಂದೇ ಕಾಲೇಜಿನ ವಿದ್ಯಾರ್ಥಿಗಳಾಗಿದ್ದು, ಪ್ರಕರಣದ ಕುರಿತು ಕೆಂಗೇರಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಮನೀಶ್ ಪರ ವಕೀಲ ಮಂಜುನಾಥ್ ಮಾತನಾಡಿ, ಸಾಮ್ರಾಟ್ ವಿಜಯ್ ಅವರನ್ನು ಎ-1 ಆರೋಪಿಯನ್ನಾಗಿ ಹೆಸರಿಸಿ ಒಟ್ಟು ಆರು ಜನರ ವಿರುದ್ಧ ದೂರು ನೀಡಲಾಗಿದೆ ಎಂದು ಹೇಳಿದ್ದಾರೆ. ಸಣ್ಣ ವಿಚಾರಕ್ಕೆ ನಡೆದಿದ್ದ ಹಿಂದಿನ ದಿನದ ಗಲಾಟೆಯ ಬಳಿಕ ಸಾಮ್ರಾಟ್ ಹಾಗೂ ಆತನ ತಂಡ ಸಫಾರಿ ಕಾರಿನಲ್ಲಿ ಬಂದು ಮನೀಶ್‌ನನ್ನು ಅಪಹರಿಸಿ ಹಲ್ಲೆ ನಡೆಸಿದೆ ಎಂದು ಅವರು ಆರೋಪಿಸಿದ್ದಾರೆ.

“ನಿನ್ನೆ ಕಾರು ಓವರ್‌ಟೇಕ್ ಮಾಡಿದ ವಿಚಾರಕ್ಕೆ ಗಲಾಟೆ ನಡೆದಿತ್ತು. ಇಂದು ಸಾಮ್ರಾಟ್ ಹಾಗೂ ಆತನ ಕಡೆಯವರು ಸಫಾರಿ ಕಾರಿನಲ್ಲಿ ಬಂದು ಮನೀಶ್‌ನನ್ನು ಕರೆದೊಯ್ದು, ಆರು ಜನರು ಸೇರಿಕೊಂಡು ಹಲ್ಲೆ ನಡೆಸಿದ್ದಾರೆ” ಎಂದು ವಕೀಲ ಮಂಜುನಾಥ್ ತಿಳಿಸಿದ್ದಾರೆ.

ಘಟನೆ ನಡೆದ ಸ್ಥಳ ಯಾವ ಪೊಲೀಸ್ ಠಾಣಾ ವ್ಯಾಪ್ತಿಗೆ ಬರುತ್ತದೆ ಎಂಬ ಬಗ್ಗೆ ಕೆಲ ಗೊಂದಲಗಳಿವೆ. ಈ ಕುರಿತು ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಭರವಸೆ ನೀಡಿದ್ದಾರೆ ಎಂದು ವಕೀಲರು ಹೇಳಿದ್ದಾರೆ.

53ನೇ ಬರ್ತ್‌ಡೇಗೆ ಕಿಚ್ಚ ಸುದೀಪ್ ಮಾಸ್ ಗಿಫ್ಟ್: ‘ಬಿಲ್ಲ ರಂಗ ಬಾಷಾ’ ಫ್ಯೂಚರಿಸ್ಟಿಕ್ ಲುಕ್ ವೈರಲ್

ಬೆಂಗಳೂರು: ಕಿಚ್ಚ ಸುದೀಪ್ ಅವರ 53ನೇ ಜನ್ಮದಿನದ ಸಂಭ್ರಮಕ್ಕೆ ‘ಬಿಲ್ಲ ರಂಗ ಬಾಷಾ’ ಚಿತ್ರತಂಡ ಸರ್ಪ್ರೈಸ್ ಗಿಫ್ಟ್ ನೀಡಿದೆ. ಹಿಮಾಚ್ಛಾದಿತ ಪ್ರದೇಶದಲ್ಲಿ ಬೈಕ್ ಮೇಲೆ ರಗಡ್ ಅವತಾರದಲ್ಲಿ ಕಾಣಿಸಿಕೊಂಡಿರುವ ಸುದೀಪ್ ಅವರ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದ್ದು, ಸ್ಯಾಂಡಲ್‌ವುಡ್‌ನಲ್ಲಿ ಭಾರೀ ಸದ್ದು ಮಾಡುತ್ತಿದೆ.

ಪೋಸ್ಟರ್‌ನಲ್ಲಿ ಸುದೀಪ್ ಗಾಗಲ್ಸ್ ಧರಿಸಿ, ವಿಭಿನ್ನ ವಿನ್ಯಾಸದ ಕೋಟ್‌ನಲ್ಲಿ ಬೈಕ್ ರೈಡ್ ಮಾಡುತ್ತಿರುವ ದೃಶ್ಯ ಗಮನ ಸೆಳೆಯುತ್ತಿದೆ. ಹಿಮದ ನಡುವೆ ಬೈಕ್ ವೇಗವಾಗಿ ಸಾಗುತ್ತಿದ್ದರೆ, ಆಕಾಶದಲ್ಲಿ ಹೆಲಿಕಾಪ್ಟರ್ ಹಾರುತ್ತಿರುವುದು ಕಾಣಿಸುತ್ತದೆ. ಇದರ ಜೊತೆಗೆ ವಿಮಾನ ಹಾಗೂ ರೈಲು ಪಲ್ಟಿಯಾಗುತ್ತಿರುವ ದೃಶ್ಯಗಳು ಚಿತ್ರದ ಆ್ಯಕ್ಷನ್ ಪ್ರಮಾಣದ ಬಗ್ಗೆ ಕುತೂಹಲ ಮೂಡಿಸಿವೆ.

ಸುದೀಪ್ ಅವರ ಈ ಲುಕ್ ಅಭಿಮಾನಿಗಳಿಗೆ ಸಂಪೂರ್ಣ ಹೊಸ ಅನುಭವ ನೀಡಿದೆ. ಸಾಮಾನ್ಯ ಮಾಸ್ ಲುಕ್‌ಗಿಂತ ಭಿನ್ನವಾಗಿ ಫ್ಯೂಚರಿಸ್ಟಿಕ್ ಹಾಗೂ ರಗಡ್ ಶೈಲಿಯಲ್ಲಿ ಕಾಣಿಸಿಕೊಂಡಿರುವ ನಟನ ಪೋಸ್ಟರ್ ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿ ಪ್ರತಿಕ್ರಿಯೆ ಪಡೆಯುತ್ತಿದೆ.

‘ವಿಕ್ರಾಂತ್ ರೋಣ’ ಮೂಲಕ ಯಶಸ್ಸು ಕಂಡ ಸುದೀಪ್-ಅನೂಪ್ ಭಂಡಾರಿ ಜೋಡಿ ಮತ್ತೆ ಒಂದಾಗಿರುವುದು ಚಿತ್ರದ ಮತ್ತೊಂದು ಪ್ರಮುಖ ಆಕರ್ಷಣೆ. ‘ಬಿಲ್ಲ ರಂಗ ಬಾಷಾ’ ಇವರ ಕಾಂಬಿನೇಷನ್‌ನ ಎರಡನೇ ಸಿನಿಮಾ ಆಗಿದೆ.

ಪ್ರೈಮ್ ಶೋ ಎಂಟರ್‌ಟೈನ್‌ಮೆಂಟ್ ಬ್ಯಾನರ್‌ನಲ್ಲಿ ಕೆ. ನಿರಂಜನ್ ರೆಡ್ಡಿ ಮತ್ತು ಚೈತನ್ಯ ರೆಡ್ಡಿ ನಿರ್ಮಿಸುತ್ತಿರುವ ಈ ಬಿಗ್ ಬಜೆಟ್ ಸಿನಿಮಾ ಪ್ಯಾನ್-ಇಂಡಿಯಾ ಪ್ರೇಕ್ಷಕರನ್ನು ಗುರಿಯಾಗಿಸಿಕೊಂಡಿದೆ. ಚಿತ್ರವು ಆ್ಯಕ್ಷನ್ ಎಂಟರ್‌ಟೈನರ್ ಆಗಿ ಮೂಡಿಬರುತ್ತಿದೆ.

ಕಾರಣಾಂತರಗಳಿಂದ ಶೂಟಿಂಗ್ ವಿಳಂಬಗೊಂಡಿದ್ದ ಸಿನಿಮಾ, ಜೂನ್‌ನಲ್ಲಿ ಮತ್ತೆ ಚಿತ್ರೀಕರಣಕ್ಕೆ ಚಾಲನೆ ಪಡೆದುಕೊಂಡಿದೆ. ಇದೀಗ ಫಸ್ಟ್ ಲುಕ್ ಬಿಡುಗಡೆಯಾಗಿರುವ ಹಿನ್ನೆಲೆಯಲ್ಲಿ ಚಿತ್ರದ ಕುರಿತು ಚರ್ಚೆ ಜೋರಾಗಿದೆ. ‘ಬಿಲ್ಲ ರಂಗ ಬಾಷಾ’ 2027ರಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ತಾಯಿಯ ಎದೆಹಾಲು ಸಿಗದ ಶಿಶುಗಳಿಗೆ ವರದಾನ; ಮಂಡ್ಯ ಮಿಮ್ಸ್‌ನಲ್ಲಿ ಮಿಲ್ಕ್ ಬ್ಯಾಂಕ್‌ ಸ್ಥಾಪನೆ!

0

ಮಂಡ್ಯ: ಹುಟ್ಟುತ್ತಲೇ ತಾಯಿಯ ಎದೆಹಾಲಿನಿಂದ ವಂಚಿತವಾಗುವ ನವಜಾತ ಶಿಶುಗಳಿಗೆ ಆಸರೆಯಾಗುವ ನಿಟ್ಟಿನಲ್ಲಿ ಮಂಡ್ಯ ಮಿಮ್ಸ್‌ ಆಸ್ಪತ್ರೆಯಲ್ಲಿ ಎದೆಹಾಲು ಶೇಖರಣಾ ಘಟಕ ಸ್ಥಾಪಿಸಲಾಗಿದೆ.

ಜಾಗೃತಿ ಕಾರ್ಯಕ್ರಮಗಳಿಗಾಗಿ ಪೋಸ್ಟರ್‌ಗಳಿಗೆ ಖರ್ಚಾಗುತ್ತಿದ್ದ ಹಣವನ್ನು ನವಜಾತ ಶಿಶುಗಳ ಆರೋಗ್ಯಕ್ಕಾಗಿ ಬಳಸಿರುವ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ಇಡೀ ರಾಜ್ಯಕ್ಕೆ ಮಾದರಿಯಾಗುವ ರೀತಿಯಲ್ಲಿ ಮಿಮ್ಸ್‌ನಲ್ಲಿ ಎದೆಹಾಲು ಶೇಖರಣಾ ಘಟಕ ಸ್ಥಾಪಿಸಲು ಮಂಡ್ಯ ಜಿಲ್ಲಾ ಪಂಚಾಯತ್‌ ಸಿಇಒ ಕೆ.ಆರ್. ನಂದಿನಿ ಮುಂದಾಗಿದ್ದಾರೆ. ವೈದ್ಯರ ಸಹಕಾರದೊಂದಿಗೆ ಆಸ್ಪತ್ರೆಯಲ್ಲಿ ನಿರುಪಯುಕ್ತವಾಗಿ ಬಿದ್ದಿದ್ದ ಕೊಠಡಿಯನ್ನೇ ಸ್ವಚ್ಛಗೊಳಿಸಿ, ಸುಮಾರು ₹24.50 ಲಕ್ಷ ವೆಚ್ಚದಲ್ಲಿ ಮಿಲ್ಕ್ ಬ್ಯಾಂಕ್‌ ಸಿದ್ಧಪಡಿಸಲಾಗಿದೆ.

ತಿಂಗಳಿಗೆ 250ಕ್ಕೂ ಹೆಚ್ಚು ನವಜಾತ ಶಿಶುಗಳ ದಾಖಲು:

ಮಂಡ್ಯ ಮಿಮ್ಸ್‌ ಆಸ್ಪತ್ರೆಗೆ ಪ್ರತಿ ತಿಂಗಳು ಸುಮಾರು 250ಕ್ಕೂ ಹೆಚ್ಚು ನವಜಾತ ಶಿಶುಗಳು ದಾಖಲಾಗುತ್ತವೆ. ಈ ಪೈಕಿ ಕನಿಷ್ಠ 50ರಿಂದ 60 ಶಿಶುಗಳಿಗೆ ತಾಯಿಯ ಎದೆಹಾಲು ಲಭ್ಯವಾಗದ ಪರಿಸ್ಥಿತಿ ಎದುರಾಗುತ್ತಿತ್ತು.

ಈ ಸಮಸ್ಯೆಯನ್ನು ಮನಗಂಡು ಮಿಲ್ಕ್ ಬ್ಯಾಂಕ್‌ ಸ್ಥಾಪಿಸಲಾಗಿದ್ದು, ತಾಯಿಯ ಎದೆಹಾಲು ಸಿಗದ ಶಿಶುಗಳಿಗೆ ದಾನಿ ತಾಯಂದಿರಿಂದ ಸಂಗ್ರಹಿಸಿದ ಎದೆಹಾಲು ಒದಗಿಸುವ ವ್ಯವಸ್ಥೆ ಮಾಡಲು ಮುಂದಾಗಿದೆ.

ಈ ಸತ್ಕಾರ್ಯಕ್ಕೆ ಜಿಲ್ಲೆಯ ಶಾಸಕರು ಕೂಡ ₹10.50 ಲಕ್ಷ ಅನುದಾನ ನೀಡಿ ಬೆಂಬಲ ನೀಡಿದ್ದಾರೆ. ಇದರೊಂದಿಗೆ ಮಂಡ್ಯದಲ್ಲಿ ಸ್ಥಾಪನೆಯಾಗುತ್ತಿರುವ ಈ ಮಿಲ್ಕ್ ಬ್ಯಾಂಕ್‌ ರಾಜ್ಯದಲ್ಲೇ ಸ್ಥಾಪನೆಯಾಗುತ್ತಿರುವ 5ನೇ ಎದೆಹಾಲು ಶೇಖರಣಾ ಘಟಕ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಮಿಮ್ಸ್‌ ಆಸ್ಪತ್ರೆಯಲ್ಲಿ ಮಿಲ್ಕ್ ಬ್ಯಾಂಕ್‌ಗಾಗಿ ಕೊಠಡಿ ಸಿದ್ಧವಾಗಿದ್ದು, ಸಿಬ್ಬಂದಿಯನ್ನೂ ನಿಯೋಜಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಆದರೆ ಎದೆಹಾಲನ್ನು ಸುರಕ್ಷಿತವಾಗಿ ಸಂಗ್ರಹಿಸಿ ಸಂರಕ್ಷಿಸಲು ಅಗತ್ಯವಿರುವ ಮೂರು ಪ್ರಮುಖ ಯಂತ್ರಗಳು ಇನ್ನೂ ಅಳವಡಿಕೆಯಾಗಬೇಕಿದೆ.

ಪಾಶ್ಚರೈಸರ್, ವರ್ಟಿಕಲ್ ಲ್ಯಾಮಿನಾರ್ ಮತ್ತು ಡೀಪ್ ಫ್ರೀಜರ್ ಯಂತ್ರಗಳನ್ನು ಅಳವಡಿಸಲು ಸುಮಾರು ₹36 ಲಕ್ಷ ಅನುದಾನದ ಅಗತ್ಯವಿದೆ.

ಈ ಯಂತ್ರಗಳು ಅಳವಡಿಕೆಯಾದ ಬಳಿಕ ದಾನಿ ತಾಯಂದಿರಿಂದ ಸಂಗ್ರಹಿಸುವ ಎದೆಹಾಲನ್ನು ಸುರಕ್ಷಿತವಾಗಿ ಸಂರಕ್ಷಿಸಿ, ಅಗತ್ಯವಿರುವ ನವಜಾತ ಶಿಶುಗಳಿಗೆ ನೀಡಲು ಸಾಧ್ಯವಾಗಲಿದೆ. ಸಂಗ್ರಹಿಸಿದ ಎದೆಹಾಲನ್ನು ಸುಮಾರು 6 ತಿಂಗಳವರೆಗೆ ಸಂರಕ್ಷಿಸಿಡಲು ಸಾಧ್ಯವಾಗಲಿದೆ ಎಂದು ತಿಳಿಸಲಾಗಿದೆ.

ತಾಯಿಯ ಎದೆಹಾಲಿನಿಂದ ವಂಚಿತವಾಗುವ ನವಜಾತ ಶಿಶುಗಳಿಗೆ ಪೌಷ್ಟಿಕ ಆಹಾರ ಹಾಗೂ ಅಗತ್ಯ ಪೋಷಕಾಂಶಗಳನ್ನು ಒದಗಿಸುವಲ್ಲಿ ಈ ಮಿಲ್ಕ್ ಬ್ಯಾಂಕ್‌ ಮಹತ್ವದ ಪಾತ್ರ ವಹಿಸುವ ನಿರೀಕ್ಷೆಯಿದೆ.

ಮಹಿಳೆಯರೇ ಎಚ್ಚರ! ಮೆನೋಪಾಸ್‌ಗೂ ಮುನ್ನವೇ ಈ ಲಕ್ಷಣಗಳು ಕಾಣಿಸಿಕೊಳ್ಳಬಹುದು; ನಿರ್ಲಕ್ಷ್ಯ ಬೇಡ

0

ಮಹಿಳೆಯರ ಜೀವನದಲ್ಲಿ ಮೆನೋಪಾಸ್‌ ಒಂದು ಸಹಜ ಹಾರ್ಮೋನಲ್ ಬದಲಾವಣೆಯ ಹಂತ. ಆದರೆ ಮೆನೋಪಾಸ್‌ ಏಕಾಏಕಿ ಆರಂಭವಾಗುವುದಿಲ್ಲ.

ಅದಕ್ಕೂ ಹಲವು ವರ್ಷಗಳ ಮುನ್ನವೇ ಮಹಿಳೆಯರ ದೇಹದಲ್ಲಿ ಹಾರ್ಮೋನ್‌ಗಳ ಏರಿಳಿತ ಆರಂಭವಾಗಬಹುದು. ಈ ಪರಿವರ್ತನಾ ಹಂತವನ್ನೇ ಪೆರಿಮೆನೋಪಾಸ್‌ ಎಂದು ಕರೆಯಲಾಗುತ್ತದೆ.

ಈ ಅವಧಿಯಲ್ಲಿ ಪಿರಿಯಡ್ಸ್‌ ಅನಿಯಮಿತವಾಗುವುದು, ಹಠಾತ್ ದೇಹದಲ್ಲಿ ಬಿಸಿ ಹೆಚ್ಚಾಗುವುದು, ರಾತ್ರಿ ವೇಳೆ ಅತಿಯಾಗಿ ಬೆವರುವುದು, ನಿದ್ರೆಯ ಸಮಸ್ಯೆ, ಮೂಡ್ ಬದಲಾವಣೆ ಸೇರಿದಂತೆ ಹಲವು ಲಕ್ಷಣಗಳು ಕಾಣಿಸಿಕೊಳ್ಳಬಹುದು. ಬಹುತೇಕ ಮಹಿಳೆಯರು ಇವುಗಳನ್ನು ವಯಸ್ಸಿನ ಸಹಜ ಬದಲಾವಣೆ ಎಂದು ಭಾವಿಸಿ ನಿರ್ಲಕ್ಷ್ಯ ಮಾಡುತ್ತಾರೆ.

ಆದರೆ ಪೆರಿಮೆನೋಪಾಸ್‌ ಅವಧಿಯಲ್ಲಿ ದೇಹದಲ್ಲಿ ಹಲವು ಹಾರ್ಮೋನಲ್ ಬದಲಾವಣೆಗಳು ಸಂಭವಿಸುವುದರಿಂದ ಈ ಬಗ್ಗೆ ಮಹಿಳೆಯರು ಅರಿವು ಹೊಂದಿರುವುದು ಅಗತ್ಯ ಎಂದು ಯಥಾರ್ಥ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಡಾ. ರುಚಿ ಭಂಡಾರಿ ಸಲಹೆ ನೀಡಿದ್ದಾರೆ.

ಪೆರಿಮೆನೋಪಾಸ್‌ ಎಂದರೇನು?

ಮೆನೋಪಾಸ್‌ಗೂ ಮುನ್ನ ಮಹಿಳೆಯ ದೇಹದಲ್ಲಿ ಈಸ್ಟ್ರೋಜನ್ ಮತ್ತು ಪ್ರೊಜೆಸ್ಟೆರೋನ್ ಹಾರ್ಮೋನ್‌ಗಳ ಮಟ್ಟದಲ್ಲಿ ಏರಿಳಿತ ಆರಂಭವಾಗುತ್ತದೆ. ಈ ಹಂತವೇ ಪೆರಿಮೆನೋಪಾಸ್‌.

ಸತತ 12 ತಿಂಗಳ ಕಾಲ ಪಿರಿಯಡ್ಸ್‌ ಆಗದೇ ಇರುವ ಸ್ಥಿತಿಯನ್ನು ಮೆನೋಪಾಸ್‌ ಎಂದು ಕರೆಯಲಾಗುತ್ತದೆ. ಅದಕ್ಕೂ ಮುನ್ನ ನಡೆಯುವ ಪರಿವರ್ತನಾ ಅವಧಿಯೇ ಪೆರಿಮೆನೋಪಾಸ್‌.

ಪಿರಿಯಡ್ಸ್‌ನಲ್ಲಿ ಬದಲಾವಣೆ”

ಪೆರಿಮೆನೋಪಾಸ್‌ನ ಪ್ರಮುಖ ಲಕ್ಷಣಗಳಲ್ಲಿ ಪಿರಿಯಡ್ಸ್‌ನಲ್ಲಿ ಆಗುವ ಬದಲಾವಣೆಯೂ ಒಂದು.

  • ಪಿರಿಯಡ್ಸ್‌ ಬೇಗ ಅಥವಾ ತಡವಾಗಿ ಬರಬಹುದು.
  • ಎರಡು ಪಿರಿಯಡ್ಸ್‌ಗಳ ನಡುವಿನ ಅಂತರ ಹೆಚ್ಚಾಗಬಹುದು.
  • ಕೆಲವು ತಿಂಗಳು ಪಿರಿಯಡ್ಸ್‌ ಆಗದೇ ಇರಬಹುದು.
  • ರಕ್ತಸ್ರಾವದ ಪ್ರಮಾಣ ಕಡಿಮೆಯಾಗಬಹುದು ಅಥವಾ ಹೆಚ್ಚಾಗಬಹುದು.

ಆದರೆ ಪಿರಿಯಡ್ಸ್‌ ಅನಿಯಮಿತವಾಗಿರುವುದೆಲ್ಲವೂ ಪೆರಿಮೆನೋಪಾಸ್‌ನ ಲಕ್ಷಣ ಎಂದೇನಲ್ಲ. ಬೇರೆ ಆರೋಗ್ಯ ಸಮಸ್ಯೆಗಳೂ ಇದಕ್ಕೆ ಕಾರಣವಾಗಿರಬಹುದು.

ಹಠಾತ್ ದೇಹದಲ್ಲಿ ಬಿಸಿ ಹೆಚ್ಚಾಗುವುದು:

ಯಾವುದೇ ಕಾರಣವಿಲ್ಲದೆ ದೇಹದಲ್ಲಿ ಏಕಾಏಕಿ ಬಿಸಿ ಹೆಚ್ಚಾದಂತೆ ಅನಿಸುವುದನ್ನು ಹಾಟ್ ಫ್ಲ್ಯಾಶ್ ಎಂದು ಕರೆಯಲಾಗುತ್ತದೆ. ಈ ಸಂದರ್ಭದಲ್ಲಿ ಮುಖ, ಕುತ್ತಿಗೆ ಹಾಗೂ ಎದೆಯ ಭಾಗದಲ್ಲಿ ಬಿಸಿ ಹೆಚ್ಚಾಗಿ ನಂತರ ಬೆವರು ಕಾಣಿಸಿಕೊಳ್ಳಬಹುದು.

ರಾತ್ರಿ ವೇಳೆ ಅತಿಯಾಗಿ ಬೆವರುವುದು:

ನಿದ್ರೆಯಲ್ಲಿರುವಾಗ ಅತಿಯಾಗಿ ಬೆವರುವುದು ಕೂಡ ಪೆರಿಮೆನೋಪಾಸ್‌ನ ಸಾಮಾನ್ಯ ಲಕ್ಷಣಗಳಲ್ಲಿ ಒಂದಾಗಿದೆ. ಇದರಿಂದ ಪದೇಪದೇ ನಿದ್ರೆ ಕೆಡುವುದು, ಬೆಳಗ್ಗೆ ಎದ್ದಾಗ ದಣಿವಿನ ಅನುಭವವಾಗುವುದು ಸೇರಿದಂತೆ ಹಲವು ಸಮಸ್ಯೆಗಳು ಉಂಟಾಗಬಹುದು.

ನಿದ್ರೆಯ ಸಮಸ್ಯೆ:

ಪೆರಿಮೆನೋಪಾಸ್‌ ಅವಧಿಯಲ್ಲಿ ಕೆಲ ಮಹಿಳೆಯರಿಗೆ ನಿದ್ರೆ ಬರಲು ಕಷ್ಟವಾಗಬಹುದು. ಮಧ್ಯರಾತ್ರಿ ಪದೇಪದೇ ಎಚ್ಚರವಾಗುವುದು ಅಥವಾ ಬೆಳಗ್ಗೆ ಬೇಗ ಎಚ್ಚರವಾಗುವುದು ಕೂಡ ಸಂಭವಿಸಬಹುದು.

ಹಾಟ್ ಫ್ಲ್ಯಾಶ್‌, ರಾತ್ರಿ ಬೆವರು, ಮೂಡ್ ಬದಲಾವಣೆ ಮತ್ತು ಆತಂಕದಂತಹ ಸಮಸ್ಯೆಗಳು ನಿದ್ರೆಯ ಗುಣಮಟ್ಟವನ್ನು ಮತ್ತಷ್ಟು ಕಡಿಮೆ ಮಾಡಬಹುದು.

ಮೂಡ್ ಬದಲಾವಣೆ ಮತ್ತು ಕಿರಿಕಿರಿ:

ಹಾರ್ಮೋನಲ್ ಬದಲಾವಣೆಗಳಿಂದ ಕೆಲ ಮಹಿಳೆಯರಲ್ಲಿ ಕಿರಿಕಿರಿ, ಆತಂಕ, ಮೂಡ್ ಸ್ವಿಂಗ್‌ ಹಾಗೂ ಭಾವನಾತ್ಮಕ ಬದಲಾವಣೆಗಳು ಕಾಣಿಸಿಕೊಳ್ಳಬಹುದು.

ಸಾಕಷ್ಟು ನಿದ್ರೆ ಮಾಡಿದರೂ ದೇಹದಲ್ಲಿ ಶಕ್ತಿ ಇಲ್ಲದಂತೆ ಅನಿಸುವುದು ಅಥವಾ ದಿನವಿಡೀ ಆಯಾಸವಾಗಿರುವ ಅನುಭವವೂ ಕಾಣಿಸಿಕೊಳ್ಳಬಹುದು. ಹಾರ್ಮೋನಲ್ ಬದಲಾವಣೆ ಮತ್ತು ನಿದ್ರೆಯ ಕೊರತೆ ಇದಕ್ಕೆ ಕಾರಣವಾಗಬಹುದು.

ಪೆರಿಮೆನೋಪಾಸ್‌ ಅವಧಿಯಲ್ಲಿ ಕೆಲ ಮಹಿಳೆಯರಿಗೆ ಬ್ರೇನ್ ಫಾಗ್ ರೀತಿಯ ಅನುಭವವಾಗಬಹುದು. ಅಂದರೆ ಕೆಲಸದ ಮೇಲೆ ಗಮನ ಕೇಂದ್ರೀಕರಿಸಲು ಕಷ್ಟವಾಗುವುದು, ವಿಷಯಗಳನ್ನು ನೆನಪಿಸಿಕೊಳ್ಳಲು ಸ್ವಲ್ಪ ಹೆಚ್ಚು ಸಮಯ ತೆಗೆದುಕೊಳ್ಳುವುದು ಮುಂತಾದ ಬದಲಾವಣೆಗಳು ಕಂಡುಬರಬಹುದು.

ಈಸ್ಟ್ರೋಜನ್‌ ಮಟ್ಟದಲ್ಲಿನ ಬದಲಾವಣೆಯಿಂದ ಕೆಲ ಮಹಿಳೆಯರಲ್ಲಿ ಯೋನಿ ಒಣತನ ಉಂಟಾಗಬಹುದು. ಇದರಿಂದ ಅಸಹಜತೆ ಅಥವಾ ಲೈಂಗಿಕ ಸಂಪರ್ಕದ ಸಂದರ್ಭದಲ್ಲಿ ನೋವು ಕಾಣಿಸಿಕೊಳ್ಳುವ ಸಾಧ್ಯತೆಯೂ ಇದೆ.

ಈ ರೀತಿಯ ಸಮಸ್ಯೆ ಎದುರಾದರೆ ಮುಜುಗರಪಡದೆ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

ತೂಕದಲ್ಲೂ ಬದಲಾವಣೆಯಾಗಬಹುದು:

ಪೆರಿಮೆನೋಪಾಸ್‌ ಸಮಯದಲ್ಲಿ ಹಾರ್ಮೋನಲ್ ಬದಲಾವಣೆಗಳ ಜೊತೆಗೆ ವಯಸ್ಸು, ದೈಹಿಕ ಚಟುವಟಿಕೆ, ಆಹಾರ ಪದ್ಧತಿ ಮತ್ತು ನಿದ್ರೆಯಂತಹ ಅಂಶಗಳಿಂದ ತೂಕದಲ್ಲಿ ಬದಲಾವಣೆ ಕಾಣಿಸಿಕೊಳ್ಳಬಹುದು.

ಮಿಡ್‌ಲೈಫ್‌ ನಂತರ ಮಹಿಳೆಯರು ಕೇವಲ ಪಿರಿಯಡ್ಸ್‌ ಬದಲಾವಣೆಗಳತ್ತ ಮಾತ್ರ ಗಮನ ಹರಿಸದೆ ಮೂಳೆಗಳ ಆರೋಗ್ಯ, ರಕ್ತದೊತ್ತಡ, ತೂಕ ಮತ್ತು ಹೃದಯದ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಬೇಕು.

ಕ್ಯಾಲ್ಸಿಯಂ ಮತ್ತು ಪ್ರೋಟೀನ್‌ಯುಕ್ತ ಸಮತೋಲಿತ ಆಹಾರ ಸೇವನೆ, ನಿಯಮಿತ ವ್ಯಾಯಾಮ ಹಾಗೂ ಸಾಕಷ್ಟು ನಿದ್ರೆ ಆರೋಗ್ಯಕರ ಜೀವನಶೈಲಿಯ ಪ್ರಮುಖ ಭಾಗಗಳಾಗಿವೆ.

ಮಹಿಳೆಯರು 35-40ರ ವಯಸ್ಸಿನ ನಂತರ ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸುವುದು ಮುಖ್ಯ. ವಿಶೇಷವಾಗಿ ತುಂಬಾ ಅಧಿಕ ರಕ್ತಸ್ರಾವ, ಅಸಹಜ ರಕ್ತಸ್ರಾವ, ದೀರ್ಘಕಾಲ ಪಿರಿಯಡ್ಸ್‌ ನಿಂತ ಬಳಿಕ ಮತ್ತೆ ರಕ್ತಸ್ರಾವವಾಗುವುದು ಅಥವಾ ಯಾವುದೇ ಲಕ್ಷಣಗಳು ದಿನನಿತ್ಯದ ಜೀವನಕ್ಕೆ ತೀವ್ರ ತೊಂದರೆ ಉಂಟುಮಾಡುತ್ತಿದ್ದರೆ ವೈದ್ಯರನ್ನು ಸಂಪರ್ಕಿಸಬೇಕು.

ಸೂಚನೆ: ಈ ಮಾಹಿತಿ ಸಾಮಾನ್ಯ ಆರೋಗ್ಯ ಜಾಗೃತಿಗಾಗಿ ಮಾತ್ರ. ಪೆರಿಮೆನೋಪಾಸ್‌ ಅಥವಾ ಮೆನೋಪಾಸ್‌ಗೆ ಸಂಬಂಧಿಸಿದ ಲಕ್ಷಣಗಳು ಕಂಡುಬಂದರೆ ವೈಯಕ್ತಿಕ ಚಿಕಿತ್ಸೆ ಪಡೆಯುವ ಮೊದಲು ಅರ್ಹ ವೈದ್ಯರನ್ನು ಸಂಪರ್ಕಿಸುವುದು ಅಗತ್ಯ.

ಕಾವೇರಿ ನೀರು ತಮಿಳುನಾಡಿಗೆ ಹರಿಯುತ್ತಿದೆಯಾ? KRSನಿಂದ 5,500 ಕ್ಯೂಸೆಕ್ ನೀರು ಹೊರಕ್ಕೆ

0

ಮಂಡ್ಯ: ರಾಜ್ಯದಲ್ಲಿ ನೀರಿನ ಅಭಾವದ ಆತಂಕ ಎದುರಾಗಿರುವ ನಡುವೆಯೇ ಕೆಆರ್‌ಎಸ್‌ ಜಲಾಶಯದಿಂದ ಹೆಚ್ಚಿನ ಪ್ರಮಾಣದ ನೀರು ಹೊರಬಿಡಲಾಗುತ್ತಿದೆ.

ಯಾವುದೇ ಕಾರಣಕ್ಕೂ ತಮಿಳುನಾಡಿಗೆ ಕಾವೇರಿ ನೀರು ಬಿಡುವುದಿಲ್ಲ ಎಂದು ರಾಜ್ಯ ಸರ್ಕಾರ ಹೇಳುತ್ತಿದ್ದರೂ, ಕೆಆರ್‌ಎಸ್‌ನಿಂದ ಹೊರಹೋಗುತ್ತಿರುವ ನೀರಿನ ಪ್ರಮಾಣ ಇದೀಗ ರೈತರು ಹಾಗೂ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.

ಕೆಆರ್‌ಎಸ್‌ ಜಲಾಶಯಕ್ಕೆ ಒಳಹರಿವು ತೀವ್ರವಾಗಿ ಕುಸಿದಿದ್ದು, ಪ್ರಸ್ತುತ 3,864 ಕ್ಯೂಸೆಕ್‌ ಒಳಹರಿವು ದಾಖಲಾಗಿದೆ. ಆದರೆ ಜಲಾಶಯದಿಂದ ಬರೋಬ್ಬರಿ 8,544 ಕ್ಯೂಸೆಕ್‌ ನೀರನ್ನು ಹೊರಬಿಡಲಾಗುತ್ತಿದೆ. ಈ ಪೈಕಿ ಸುಮಾರು 5,500 ಕ್ಯೂಸೆಕ್‌ ನೀರು ನದಿಯ ಮೂಲಕ ತಮಿಳುನಾಡಿನತ್ತ ಹರಿಯುತ್ತಿದೆ ಎನ್ನಲಾಗಿದೆ.

KRSನಲ್ಲಿ ಎಷ್ಟು ನೀರಿದೆ?

124.80 ಅಡಿ ಗರಿಷ್ಠ ಸಾಮರ್ಥ್ಯದ ಕೆಆರ್‌ಎಸ್‌ ಜಲಾಶಯದಲ್ಲಿ ಸದ್ಯ 109.32 ಅಡಿ ನೀರು ಸಂಗ್ರಹವಾಗಿದೆ. ಟಿಎಂಸಿ ಲೆಕ್ಕದಲ್ಲಿ ಸುಮಾರು 31.044 ಟಿಎಂಸಿ ನೀರು ಜಲಾಶಯದಲ್ಲಿದೆ.

ಒಂದೆಡೆ ಮಳೆಯ ಕೊರತೆಯಿಂದ ಜಲಾಶಯಕ್ಕೆ ಹರಿದುಬರುವ ನೀರಿನ ಪ್ರಮಾಣ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಮತ್ತೊಂದೆಡೆ ಒಳಹರಿವಿಗಿಂತ ದುಪ್ಪಟ್ಟಿಗೂ ಹೆಚ್ಚು ಪ್ರಮಾಣದಲ್ಲಿ ನೀರನ್ನು ಹೊರಬಿಡುತ್ತಿರುವುದು ಕಾವೇರಿ ಕೊಳ್ಳದ ರೈತರಲ್ಲಿ ಆತಂಕ ಹೆಚ್ಚಿಸಿದೆ.

ತಮಿಳುನಾಡಿಗೆ ನೀರು ಹರಿಸುತ್ತಿಲ್ಲ ಎಂದ ಸರ್ಕಾರ:

ರಾಜ್ಯ ಸರ್ಕಾರ ತಮಿಳುನಾಡಿಗೆ ನೀರು ಹರಿಸುತ್ತಿಲ್ಲ ಎಂದು ಪ್ರತಿಪಾದಿಸುತ್ತಿದೆ. ಆದರೆ ಕೆಆರ್‌ಎಸ್‌ನಿಂದ ಕಾವೇರಿ ನದಿಗೆ ಹರಿಸಲಾಗುತ್ತಿರುವ ನೀರಿನ ಒಂದು ಭಾಗ ನದಿಯ ಮೂಲಕ ತಮಿಳುನಾಡಿಗೆ ಸೇರುತ್ತಿದೆ ಎಂಬ ಆರೋಪ ಕೇಳಿಬಂದಿದೆ.

ಇದೇ ರೀತಿಯಲ್ಲಿ ಹೆಚ್ಚಿನ ಪ್ರಮಾಣದ ನೀರಿನ ಹೊರಹರಿವು ಮುಂದುವರಿದರೆ, ಮುಂದಿನ ದಿನಗಳಲ್ಲಿ ಕಾವೇರಿ ಕೊಳ್ಳದ ರೈತರ ಬೆಳೆಗಳಿಗೆ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆಯಿದೆ. ಅಷ್ಟೇ ಅಲ್ಲದೆ ಬೆಂಗಳೂರು ಸೇರಿದಂತೆ ಹಲವು ನಗರಗಳ ಕುಡಿಯುವ ನೀರಿನ ಮೇಲೂ ಪರಿಣಾಮ ಬೀರುವ ಆತಂಕ ವ್ಯಕ್ತವಾಗುತ್ತಿದೆ.

ಹೀಗಾಗಿ ಕೆಆರ್‌ಎಸ್‌ ಜಲಾಶಯದ ಒಳಹರಿವು, ಹೊರಹರಿವು ಹಾಗೂ ನೀರಿನ ಬಳಕೆ ಕುರಿತು ಸರ್ಕಾರ ಸ್ಪಷ್ಟನೆ ನೀಡಬೇಕು ಎಂದು ರೈತರು ಹಾಗೂ ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.