Home Blog

ಜಮಖಂಡಿಯಲ್ಲಿ ಗ್ಯಾಸ್ ಸೋರಿಕೆಯಿಂದ ಮನೆಗೆ ಬೆಂಕಿ; 67 ವರ್ಷದ ವೃದ್ಧೆಗೆ ಗಾಯ

0

ಬಾಗಲಕೋಟೆ: ಅಡುಗೆ ಅನಿಲ ಸೋರಿಕೆಯಾಗಿ ಮನೆಯಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡ ಪರಿಣಾಮ 67 ವರ್ಷದ ವೃದ್ಧೆಯೊಬ್ಬರು ಗಾಯಗೊಂಡಿರುವ ಘಟನೆ ಜಮಖಂಡಿಯ ಚೌಡಯ್ಯನಗರದ ಮಾವಿನ ಮಸಾರಿ ಬಡಾವಣೆಯಲ್ಲಿ ನಡೆದಿದೆ.

ಲಕ್ಷ್ಮೀಬಾಯಿ ಪತ್ತಾರ (67) ಗಾಯಗೊಂಡವರು. ಮನೆಯಲ್ಲಿ ಅಡುಗೆ ಅನಿಲ ಸೋರಿಕೆಯಾಗಿದ್ದು, ಏಕಾಏಕಿ ಬೆಂಕಿ ಹೊತ್ತಿಕೊಂಡಿದೆ. ಈ ವೇಳೆ ಮನೆಯಲ್ಲಿದ್ದ ಲಕ್ಷ್ಮೀಬಾಯಿ ಅವರಿಗೆ ಸಣ್ಣಪುಟ್ಟ ಸುಟ್ಟ ಗಾಯಗಳಾಗಿವೆ.

ಘಟನೆ ಗಮನಿಸಿದ ಸ್ಥಳೀಯರು ಕೂಡಲೇ ಅಗ್ನಿಶಾಮಕ ದಳ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಜಮಖಂಡಿ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.

ಬಳಿಕ ಗಾಯಗೊಂಡ ಲಕ್ಷ್ಮೀಬಾಯಿ ಅವರನ್ನು ರಕ್ಷಿಸಿ ಜಮಖಂಡಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಂಕಿ ಮನೆಯ ಇತರೆ ಭಾಗಗಳಿಗೆ ಹರಡುವ ಮುನ್ನವೇ ನಿಯಂತ್ರಣಕ್ಕೆ ಬಂದಿದ್ದರಿಂದ ಹೆಚ್ಚಿನ ಅನಾಹುತ ತಪ್ಪಿದೆ.

ಹೈಹೀಲ್ಸ್ ಪ್ರಿಯರೇ ಗಮನಿಸಿ! ಹೆಚ್ಚು ಹೊತ್ತು ಧರಿಸಿದರೆ ಎದುರಾಗಬಹುದು ಈ ಸಮಸ್ಯೆಗಳು

0

ಹೈಹೀಲ್ಸ್‌ ಎಂದರೆ ಫ್ಯಾಷನ್, ಸ್ಟೈಲ್ ಹಾಗೂ ಆತ್ಮವಿಶ್ವಾಸದ ಸಂಕೇತ.

ಆದರೆ ಸುಂದರವಾಗಿ ಕಾಣಲು ಪ್ರತಿದಿನ ಅಥವಾ ದೀರ್ಘಕಾಲ ಹೈಹೀಲ್ಸ್ ಧರಿಸುವುದು ಪಾದಗಳ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ತಜ್ಞರ ಪ್ರಕಾರ, ಅತಿ ಎತ್ತರದ ಹೀಲ್ಸ್‌ಗಳನ್ನು ಹೆಚ್ಚು ಸಮಯ ಧರಿಸುವುದರಿಂದ ಪಾದಗಳು ಮಾತ್ರವಲ್ಲದೆ ಮಣಿಕಟ್ಟು, ಮೊಣಕಾಲು, ಸೊಂಟ ಮತ್ತು ಬೆನ್ನುಮೂಳೆಯ ಮೇಲೂ ಹೆಚ್ಚುವರಿ ಒತ್ತಡ ಬೀಳಬಹುದು.

ಹೈಹೀಲ್ಸ್ ಧರಿಸಿದಾಗ ದೇಹದ ತೂಕ ಪಾದದ ಮುಂಭಾಗದ ಭಾಗದ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ಬೀಳುತ್ತದೆ. ದೇಹದ ಸಮತೋಲನ ಕಾಪಾಡಿಕೊಳ್ಳಲು ಸ್ನಾಯುಗಳು ಹೆಚ್ಚುವರಿಯಾಗಿ ಕೆಲಸ ಮಾಡಬೇಕಾಗುತ್ತದೆ. ಇದರಿಂದ ನೋವು ಹಾಗೂ ಆಯಾಸ ಉಂಟಾಗುವ ಸಾಧ್ಯತೆಯಿದೆ.

ಪಾದ ನೋವು, ಸ್ನಾಯುಗಳ ಆಯಾಸ:

ಹೀಲ್ಸ್‌ನ ಎತ್ತರ ಹೆಚ್ಚಾದಂತೆ ಪಾದದ ಕೆಲವು ಭಾಗಗಳ ಮೇಲೆ ಒತ್ತಡವೂ ಹೆಚ್ಚಾಗಬಹುದು. ಇದರಿಂದ ಪಾದದ ಮುಂಭಾಗದಲ್ಲಿ ನೋವು, ಸ್ನಾಯುಗಳ ಆಯಾಸ, ಮಣಿಕಟ್ಟು ನೋವು ಹಾಗೂ ನಡೆಯುವಾಗ ಅಸ್ವಸ್ಥತೆ ಕಾಣಿಸಿಕೊಳ್ಳಬಹುದು.

ಸ್ನಾಯುಗಳಲ್ಲಿ ಬಿಗಿತ:

ಹೈಹೀಲ್ಸ್ ಧರಿಸಿ ನಡೆಯುವಾಗ ಪಾದ ಮತ್ತು ಕಾಲಿನ ಸ್ನಾಯುಗಳು ಸಾಮಾನ್ಯಕ್ಕಿಂತ ವಿಭಿನ್ನ ರೀತಿಯಲ್ಲಿ ಕೆಲಸ ಮಾಡುತ್ತವೆ. ಪ್ರತಿದಿನ ಹಲವು ಗಂಟೆಗಳ ಕಾಲ ಹೀಲ್ಸ್ ಧರಿಸುವ ಅಭ್ಯಾಸವಿದ್ದರೆ ಸ್ನಾಯುಗಳಲ್ಲಿ ಬಿಗಿತ ಹಾಗೂ ಆಯಾಸ ಉಂಟಾಗಬಹುದು.

ಸೊಂಟ, ಬೆನ್ನು ನೋವಿಗೂ ಕಾರಣವಾಗಬಹುದು:

ಹೈಹೀಲ್ಸ್ ಧರಿಸಿದಾಗ ದೇಹದ ಭಂಗಿಯಲ್ಲಿ ಬದಲಾವಣೆಯಾಗುತ್ತದೆ. ಸಮತೋಲನ ಕಾಪಾಡಿಕೊಳ್ಳಲು ಸೊಂಟ ಮತ್ತು ಬೆನ್ನುಮೂಳೆಯ ಮೇಲೆ ಹೆಚ್ಚುವರಿ ಒತ್ತಡ ಬೀಳಬಹುದು. ಇದರಿಂದ ಕೆಳಬೆನ್ನು ನೋವು, ಸೊಂಟ ನೋವು ಹಾಗೂ ಸ್ನಾಯುಗಳ ಬಿಗಿತ ಉಂಟಾಗುವ ಸಾಧ್ಯತೆಯಿದೆ.

ದೀರ್ಘಕಾಲ ನಿಂತುಕೊಳ್ಳಬೇಕಾದ ಸಂದರ್ಭಗಳಲ್ಲಿ ಈ ಸಮಸ್ಯೆ ಮತ್ತಷ್ಟು ಕಾಡಬಹುದು. ಹೀಲ್ಸ್ ಎತ್ತರವಾಗಿದ್ದಷ್ಟೂ ದೇಹದ ಸ್ಥಿರತೆ ಕಾಪಾಡಿಕೊಳ್ಳುವುದು ಕಷ್ಟವಾಗಬಹುದು.

ಎಡವಿ ಬೀಳುವ ಅಪಾಯ:

ಹೈಹೀಲ್ಸ್ ಧರಿಸಿ ಅಸಮತಟ್ಟಾದ ನೆಲದಲ್ಲಿ ನಡೆಯುವಾಗ ಅಥವಾ ಮೆಟ್ಟಿಲು ಹತ್ತುವಾಗ ಮಣಿಕಟ್ಟು ತಿರುಗುವುದು, ಎಡವಿ ಬೀಳುವುದು ಹಾಗೂ ಪಾದಕ್ಕೆ ಗಾಯವಾಗುವ ಅಪಾಯ ಹೆಚ್ಚಾಗಬಹುದು. ಹೀಗಾಗಿ ಹೀಲ್ಸ್ ಧರಿಸಿ ವೇಗವಾಗಿ ನಡೆಯುವುದು ಅಥವಾ ಓಡುವುದನ್ನು ತಪ್ಪಿಸುವುದು ಉತ್ತಮ.

ಹೈಹೀಲ್ಸ್ ಧರಿಸುವವರು ಈ ಮುನ್ನೆಚ್ಚರಿಕೆ ವಹಿಸಿ:

  • ಸಾಧ್ಯವಾದಷ್ಟು ಕಡಿಮೆ ಎತ್ತರದ ಹೀಲ್ಸ್ ಆಯ್ಕೆ ಮಾಡಿ.
  • ಸುಮಾರು 1–1.5 ಇಂಚಿನ ಹೀಲ್ಸ್ ಹೆಚ್ಚು ಆರಾಮದಾಯಕವಾಗಿರಬಹುದು.
  • ನಿರಂತರವಾಗಿ ಹಲವು ಗಂಟೆಗಳ ಕಾಲ ಹೈಹೀಲ್ಸ್ ಧರಿಸಬೇಡಿ.
  • ಪಾದಕ್ಕೆ ಸರಿಯಾಗಿ ಹೊಂದಿಕೊಳ್ಳುವ ಹಾಗೂ ಮುಂಭಾಗದಲ್ಲಿ ಸಾಕಷ್ಟು ಅಗಲವಿರುವ ಶೂ ಆಯ್ಕೆ ಮಾಡಿ.
  • ಹೀಲ್ಸ್ ತೆಗೆದ ಬಳಿಕ ಪಾದಗಳಿಗೆ ವಿಶ್ರಾಂತಿ ನೀಡಿ.
  • ನಿಯಮಿತವಾಗಿ ವಾಕಿಂಗ್, ಸ್ಟ್ರೆಚಿಂಗ್ ಹಾಗೂ ಸೂಕ್ತ ವ್ಯಾಯಾಮ ಮಾಡಿ.
  • ಪಾದ ಅಥವಾ ಬೆನ್ನು ನೋವು ಕಾಣಿಸಿಕೊಂಡರೆ ಅದನ್ನು ನಿರ್ಲಕ್ಷಿಸದೆ ಹೀಲ್ಸ್ ಬಳಕೆಯನ್ನು ಕಡಿಮೆ ಮಾಡಿ.

ಗಮನಿಸಿ: ಹೈಹೀಲ್ಸ್‌ಗಳ ಪರಿಣಾಮ ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ನಿರಂತರ ಅಥವಾ ತೀವ್ರ ನೋವು ಕಂಡುಬಂದರೆ ವೈದ್ಯರು ಅಥವಾ ತಜ್ಞರನ್ನು ಸಂಪರ್ಕಿಸುವುದು ಉತ್ತಮ.

ಅನಧಿಕೃತ ಶೆಡ್, ಅಂಗಡಿ, ಬೋರ್ಡ್ ತೆರವು; ಅವೆನ್ಯೂ ರಸ್ತೆ ಸ್ವಚ್ಛಗೊಳಿಸಿದ ಪಾಲಿಕೆ!

0

ಬೆಂಗಳೂರು: ರಾಜಧಾನಿ ಬೆಂಗಳೂರಿನ ಪ್ರಮುಖ ವಾಣಿಜ್ಯ ಪ್ರದೇಶವಾದ ಅವೆನ್ಯೂ ರಸ್ತೆಯಲ್ಲಿ ಪಾದಚಾರಿ ಮಾರ್ಗಗಳ ಅತಿಕ್ರಮಣ ತೆರವು ಕಾರ್ಯಾಚರಣೆ ನಡೆಸಲಾಗಿದೆ.

ಬೆಂಗಳೂರು ಸೆಂಟ್ರಲ್ ಸಿಟಿ ಕಾರ್ಪೊರೇಷನ್ ವತಿಯಿಂದ ನಡೆದ ಕಾರ್ಯಾಚರಣೆಯಲ್ಲಿ ಪಾದಚಾರಿಗಳ ಸಂಚಾರಕ್ಕೆ ಅಡ್ಡಿಯಾಗಿದ್ದ ಅನಧಿಕೃತ ಅಂಗಡಿಗಳು, ತಾತ್ಕಾಲಿಕ ಶೆಡ್‌ಗಳು, ಜಾಹೀರಾತು ಫಲಕಗಳು ಹಾಗೂ ರಸ್ತೆ ಬದಿಯ ವಿವಿಧ ಅಡೆತಡೆಗಳನ್ನು ತೆರವುಗೊಳಿಸಲಾಯಿತು.

ಅವೆನ್ಯೂ ರಸ್ತೆಯಲ್ಲಿ ಫುಟ್‌ಪಾತ್‌ಗಳು ಒತ್ತುವರಿಯಾಗಿದ್ದರಿಂದ ಪಾದಚಾರಿಗಳು ಮುಖ್ಯ ರಸ್ತೆಯಲ್ಲೇ ಸಂಚರಿಸುವಂತಾಗಿತ್ತು. ಇದರಿಂದ ಅಪಘಾತದ ಆತಂಕ ಎದುರಾಗಿತ್ತು. ಈ ಹಿನ್ನೆಲೆಯಲ್ಲಿ ಪಾದಚಾರಿಗಳ ಸುರಕ್ಷತೆ ಹಾಗೂ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ಪಾಲಿಕೆ ಅಧಿಕಾರಿಗಳು ತೆರವು ಕಾರ್ಯಾಚರಣೆ ಕೈಗೊಂಡಿದ್ದಾರೆ.

ಕಾರ್ಯಾಚರಣೆ ವೇಳೆ ಫುಟ್‌ಪಾತ್ ಒತ್ತುವರಿ ಮಾಡಿಕೊಂಡಿದ್ದ ಅಂಗಡಿಕಾರರ ಅನಧಿಕೃತ ವಸ್ತುಗಳನ್ನು ತೆರವುಗೊಳಿಸಿ, ಪಾದಚಾರಿಗಳಿಗೆ ಮುಕ್ತವಾಗಿ ಸಂಚರಿಸಲು ಮಾರ್ಗ ಕಲ್ಪಿಸಲಾಯಿತು.

ಮುಂದಿನ ದಿನಗಳಲ್ಲಿ ಮತ್ತೆ ಫುಟ್‌ಪಾತ್ ಅತಿಕ್ರಮಣ ಮಾಡಿದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದರ ಜೊತೆಗೆ ದಂಡ ವಿಧಿಸಲಾಗುವುದು ಎಂದು ಪಾಲಿಕೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಶಿವಮೊಗ್ಗದಲ್ಲಿ ಮನಕಲಕುವ ಘಟನೆ: ಇಬ್ಬರು ಹೆಣ್ಣು ಮಕ್ಕಳನ್ನು ತುಂಗಾ ನದಿಗೆ ಎಸೆದ ತಾಯಿ, ಕಂದಮ್ಮಗಳಿಗಾಗಿ ತೀವ್ರ ಶೋಧ

0

ಶಿವಮೊಗ್ಗ: ಕೌಟುಂಬಿಕ ಕಲಹದಿಂದ ಮನನೊಂದ ಮಹಿಳೆಯೊಬ್ಬರು ತನ್ನ ಇಬ್ಬರು ಪುಟ್ಟ ಹೆಣ್ಣು ಮಕ್ಕಳನ್ನು ತುಂಗಾ ನದಿಗೆ ಎಸೆದು, ಬಳಿಕ 11 ತಿಂಗಳ ಗಂಡು ಮಗುವಿನೊಂದಿಗೆ ತಾನೂ ನದಿಗೆ ಹಾರಿದ ದಾರುಣ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

ಸ್ಥಳೀಯ ಯುವಕರ ಸಮಯಪ್ರಜ್ಞೆ ಹಾಗೂ ಸಾಹಸದಿಂದ ಮಹಿಳೆ ಮತ್ತು 11 ತಿಂಗಳ ಮಗು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ 6 ಮತ್ತು 4 ವರ್ಷದ ಇಬ್ಬರು ಹೆಣ್ಣು ಮಕ್ಕಳು ನದಿ ಪಾಲಾಗಿದ್ದು, ಅವರಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ.

ಚಿತ್ರದುರ್ಗ ಜಿಲ್ಲೆಯ ಹೊಸೂರು ಗ್ರಾಮದ ಭವಾನಿ ಎಂಬ ಮಹಿಳೆ ಈ ಕೃತ್ಯಕ್ಕೆ ಮುಂದಾದವರು ಎಂದು ಗುರುತಿಸಲಾಗಿದೆ. ಪತಿ ದುಗ್ಗಪ್ಪ ಅವರೊಂದಿಗೆ ನಡೆದ ಕೌಟುಂಬಿಕ ಗಲಾಟೆಯಿಂದ ಮನನೊಂದು ಮಕ್ಕಳೊಂದಿಗೆ ಶಿವಮೊಗ್ಗಕ್ಕೆ ಬಂದಿದ್ದರು ಎನ್ನಲಾಗಿದೆ.

ಭವಾನಿ ತನ್ನ 6 ವರ್ಷದ ಮಗಳು ಸಾನ್ವಿಕಾ ಹಾಗೂ 4 ವರ್ಷದ ಮಗಳು ತನ್ವಿಕಾಳನ್ನು ರೈಲ್ವೆ ಸೇತುವೆಯಿಂದ ತುಂಗಾ ನದಿಗೆ ಎಸೆದ ಬಳಿಕ, 11 ತಿಂಗಳ ಗಂಡು ಮಗುವಿನೊಂದಿಗೆ ತಾನೂ ನದಿಗೆ ಹಾರಿದ್ದಾರೆ ಎನ್ನಲಾಗಿದೆ.

ಘಟನೆಯನ್ನು ಗಮನಿಸಿದ ನವೀನ್, ದಾದಾಪೀರ್ ಸೇರಿದಂತೆ ಸ್ಥಳೀಯ ನಾಲ್ಕೈದು ಯುವಕರು ತಕ್ಷಣ ನದಿಗೆ ಹಾರಿ, ಭವಾನಿ ಹಾಗೂ 11 ತಿಂಗಳ ಮಗುವನ್ನು ರಕ್ಷಿಸಿದ್ದಾರೆ. ಬಳಿಕ ಇಬ್ಬರನ್ನೂ ಶಿವಮೊಗ್ಗ ಜಿಲ್ಲಾಸ್ಪತ್ರೆಯ ಐಸಿಯು ವಿಭಾಗಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಇತ್ತ ನದಿ ಪಾಲಾಗಿರುವ ಇಬ್ಬರು ಮಕ್ಕಳಿಗಾಗಿ ಅಗ್ನಿಶಾಮಕ ದಳ ಹಾಗೂ ಸ್ಥಳೀಯರು ಬೋಟ್‌ಗಳು ಮತ್ತು ತೆಪ್ಪಗಳ ಮೂಲಕ ಸುಮಾರು 15ರಿಂದ 20 ಕಿಲೋಮೀಟರ್ ವ್ಯಾಪ್ತಿಯಲ್ಲಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಘಟನಾ ಸ್ಥಳಕ್ಕೆ ಸಂಬಂಧಿಕರು ಹಾಗೂ ಗ್ರಾಮಸ್ಥರು ಧಾವಿಸಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಶಿವಮೊಗ್ಗದ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಭವಾನಿ ಮೌನಕ್ಕೆ ಶರಣಾಗಿರುವ ಹಿನ್ನೆಲೆಯಲ್ಲಿ ಆತ್ಮಹತ್ಯೆ ಯತ್ನದ ಹಿಂದಿನ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.

ಕಣ್ಣೆದುರೇ ಜಾನುವಾರುಗಳ ಸಾವು; ಮುನಿಯಾನ ತಾಂಡಾದಲ್ಲಿ ಮಾಲೀಕರ ಕಣ್ಣೀರು!

0

ಲಕ್ಷ್ಮೇಶ್ವರ: ಬೆಳಗಾಗುವಷ್ಟರಲ್ಲಿ ಮನೆಯ ಮುಂದೆ ಒಂದೊಂದೇ ಜಾನುವಾರುಗಳು ಉಸಿರು ಚೆಲ್ಲಿದ್ದವು. ಇನ್ನೂ ಕೆಲವು ಜಾನುವಾರುಗಳು ಬದುಕಿಗಾಗಿ ಹೋರಾಡುತ್ತಿದ್ದವು.

ನಿತ್ಯದ ಬದುಕಿಗೆ ಆಸರೆಯಾಗಿದ್ದ ಮೂಕ ಪ್ರಾಣಿಗಳನ್ನು ಕಣ್ಣೆದುರೇ ಕಳೆದುಕೊಂಡ ಮಾಲೀಕರ ಆಕ್ರಂದನ ಮುನಿಯಾನ ತಾಂಡಾದಲ್ಲಿ ಮಂಗಳವಾರ ಮನಕಲಕುವ ದೃಶ್ಯ ಸೃಷ್ಟಿಸಿತು.

ತಾಲೂಕಿನ ಮುನಿಯಾನ ತಾಂಡಾದಲ್ಲಿ ಕ್ರಿಮಿನಾಶಕ ಸಿಂಪಡಿಸಿದ ಹುಲ್ಲು ಅಥವಾ ಗೋವಿನ ಜೋಳದ ಬೆಳೆಯನ್ನು ಸೇವಿಸಿದ ಶಂಕೆಯಲ್ಲಿ ಎಂಟಕ್ಕೂ ಹೆಚ್ಚು ಜಾನುವಾರುಗಳು ಮೃತಪಟ್ಟಿದ್ದು, 10ಕ್ಕೂ ಅಧಿಕ ಜಾನುವಾರುಗಳು ಸಾವು-ಬದುಕಿನ ನಡುವೆ ಹೋರಾಡುತ್ತಿವೆ. ಜಾನುವಾರುಗಳ ಸರಣಿ ಸಾವು ತಾಂಡಾದ ಹೈನುಗಾರಿಕೆ ಕುಟುಂಬಗಳಲ್ಲಿ ಆತಂಕ ಮೂಡಿಸಿದೆ.

ಸುಮಾರು 30–35 ಮನೆಗಳಿರುವ ತಾಂಡಾದಲ್ಲಿ 300ಕ್ಕೂ ಹೆಚ್ಚು ದೇಶಿ ದನ ಹಾಗೂ ಎಮ್ಮೆಗಳಿವೆ. ಬಹುತೇಕ ಕುಟುಂಬಗಳ ಜೀವನ ಹೈನುಗಾರಿಕೆಯನ್ನೇ ಅವಲಂಬಿಸಿದೆ. ಒಂದೊಂದು ಕುಟುಂಬ 10ರಿಂದ 30ರವರೆಗೆ ಜಾನುವಾರುಗಳನ್ನು ಸಾಕಿಕೊಂಡಿದ್ದು, ಹಾಲು, ಮೊಸರು, ತುಪ್ಪ ಮಾರಾಟ ಹಾಗೂ ಸೆಗಣಿ ಗೊಬ್ಬರದಿಂದ ಬಂದ ಆದಾಯದಿಂದ ಜೀವನ ನಡೆಸುತ್ತಿವೆ.

ಸೋಮವಾರ ಸಂಜೆ ಎಂದಿನಂತೆ ತಾಂಡಾದ ಸುತ್ತಮುತ್ತಲಿನ ಜಮೀನುಗಳಲ್ಲಿ ಮೇಯಲು ತೆರಳಿದ್ದ ಜಾನುವಾರುಗಳು ರಾತ್ರಿ ಮನೆಗಳಿಗೆ ಮರಳಿದ್ದವು. ಎಲ್ಲವೂ ಸಹಜವಾಗಿಯೇ ಇತ್ತು. ಆದರೆ ಮಧ್ಯರಾತ್ರಿ ವೇಳೆಗೆ ಕೆಲ ಜಾನುವಾರುಗಳು ಇದ್ದಕ್ಕಿದ್ದಂತೆ ಅಸ್ವಸ್ಥಗೊಂಡು ಉಸಿರಾಡಲು ಪರದಾಡತೊಡಗಿದವು. ಏನಾಗುತ್ತಿದೆ ಎಂಬುದು ತಿಳಿಯುವಷ್ಟರಲ್ಲಿ ಪರಿಸ್ಥಿತಿ ಕೈಮೀರಿತ್ತು.

ಗಾಬರಿಗೊಂಡ ಗ್ರಾಮಸ್ಥರು ನಸುಕಿನ ಜಾವ ಪಶುವೈದ್ಯಕೀಯ ಇಲಾಖೆಗೆ ಮಾಹಿತಿ ನೀಡಿದರು. ಕೂಡಲೇ ವೈದ್ಯರು, ಸಿಬ್ಬಂದಿ ಹಾಗೂ ಅಂಬುಲೆನ್ಸ್‌ ಸಹಿತ ತಾಂಡಾಕ್ಕೆ ತೆರಳಿ ಅಸ್ವಸ್ಥ ಜಾನುವಾರುಗಳಿಗೆ ಚಿಕಿತ್ಸೆ ಆರಂಭಿಸಿದರು. ರೋಗನಿರೋಧಕ ಚುಚ್ಚುಮದ್ದು ಹಾಗೂ ಸಲೈನ್ ನೀಡಿದರೂ ಕೆಲವು ಜಾನುವಾರುಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ.

ಮಧ್ಯಾಹ್ನದ ವೇಳೆಗೆ ನಾಲ್ಕು ಆಕಳು, ಎರಡು ಎಮ್ಮೆ ಹಾಗೂ ಎರಡು ಎತ್ತು ಸೇರಿದಂತೆ ಎಂಟಕ್ಕೂ ಹೆಚ್ಚು ಜಾನುವಾರುಗಳು ಮೃತಪಟ್ಟಿದ್ದವು. ಮತ್ತೊಂದೆಡೆ 10ಕ್ಕೂ ಅಧಿಕ ಜಾನುವಾರುಗಳು ಸಾವು-ಬದುಕಿನ ನಡುವೆ ಹೋರಾಡುತ್ತಿದ್ದವು. ತಮ್ಮ ಮನೆಯ ಸದಸ್ಯರಂತೆಯೇ ಸಾಕಿದ್ದ ಜಾನುವಾರುಗಳನ್ನು ಕಳೆದುಕೊಂಡ ಮಾಲೀಕರ ಕಣ್ಣೀರು ತಾಂಡಾದ ನೋವಿನ ಚಿತ್ರಣವಾಗಿತ್ತು.

ಸಕ್ರವ್ವ ಲಮಾಣಿ, ಮಂಗಲಪ್ಪ ಲಾಲಪ್ಪ ಲಮಾಣಿ, ಸೋಮಣ್ಣ ಲಮಾಣಿ, ಜಾನಪ್ಪ ಲಮಾಣಿ, ರಾಮಣ್ಣ ಲಮಾಣಿ, ಶಿವಪ್ಪ ಲಮಾಣಿ, ಜೇಮ್ಲಪ್ಪ ಲಮಾಣಿ ಸೇರಿದಂತೆ ಹಲವು ಮಾಲೀಕರು ಮೃತಪಟ್ಟ ಜಾನುವಾರುಗಳ ಬಳಿ ಕುಳಿತು ಕಣ್ಣೀರಿಟ್ಟರು. ವರ್ಷಗಳ ಕಾಲ ಸಾಕಿ, ಕುಟುಂಬದ ದುಡಿಮೆಗೆ ಆಸರೆಯಾಗಿದ್ದ ಜಾನುವಾರುಗಳು ಕೆಲವೇ ಗಂಟೆಗಳಲ್ಲಿ ಕಣ್ಮುಂದೆ ಇಲ್ಲವಾಗಿರುವ ನೋವು ಕುಟುಂಬಗಳನ್ನು ಕಂಗೆಡಿಸಿದೆ.

ಜಾನುವಾರುಗಳ ಸರಣಿ ಸಾವಿಗೆ ಕ್ರಿಮಿನಾಶಕ ಸೇವನೆಯೇ ಕಾರಣವಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಸೋಮವಾರ ಮೇಯಲು ತೆರಳಿದ್ದ ಜಾನುವಾರುಗಳು ಕ್ರಿಮಿನಾಶಕ ಸಿಂಪಡಿಸಿದ ಹುಲ್ಲು ಅಥವಾ ಗೋವಿನ ಜೋಳದ ಬೆಳೆಯನ್ನು ತಿಂದಿರುವ ಸಾಧ್ಯತೆ ಇದೆ. ಆದರೆ ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕವಷ್ಟೇ ಸಾವಿಗೆ ನಿಖರ ಕಾರಣ ತಿಳಿಯಲಿದೆ.

ಮುನಿಯಾನ ತಾಂಡಾದಲ್ಲಿ ಜಾನುವಾರುಗಳು ಸಾವನ್ನಪ್ಪುತ್ತಿರುವ ಮಾಹಿತಿ ಲಭ್ಯವಾಗಿದೆ. ಬಹುತೇಕ ಜಾನುವಾರುಗಳು ಕ್ರಿಮಿನಾಶಕ ಸಿಂಪಡಿಸಿದ ಹುಲ್ಲು ಅಥವಾ ಗೋವಿನ ಜೋಳದ ಬೆಳೆಯನ್ನು ತಿಂದಿರುವ ಶಂಕೆ ಇದೆ. ಮೃತಪಟ್ಟ ಜಾನುವಾರುಗಳ ಮರಣೋತ್ತರ ಪರೀಕ್ಷೆ ನಡೆಸಿದ ನಂತರವೇ ನಿಖರ ಕಾರಣ ತಿಳಿಯಲಿದೆ. ಅಸ್ವಸ್ಥ ಜಾನುವಾರುಗಳಿಗೆ ಅಗತ್ಯ ಚಿಕಿತ್ಸೆ ನೀಡಲಾಗುತ್ತಿದೆ. ನಿಖರ ಮಾಹಿತಿಗಾಗಿ ಜಾನುವಾರುಗಳ ಹೊಟ್ಟೆಯ ಅಂಶದ ಮಾದರಿಯನ್ನು ಬಾಗಲಕೋಟೆಯ ಪ್ರಾಣಿ ರೋಗ ತಪಾಸಣಾ ಕೇಂದ್ರಕ್ಕೆ ಕಳುಹಿಸಲಾಗಿದೆ ಎಂದು ಶಿರಹಟ್ಟಿ ಪಶುವೈದ್ಯಕೀಯ ಸೇವಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ನಿಂಗಪ್ಪ ಓಲೆಕಾರ ತಿಳಿಸಿದ್ದಾರೆ.

ಜಾನುವಾರುಗಳನ್ನೇ ನಂಬಿ ಬದುಕುತ್ತಿರುವ ಕುಟುಂಬಗಳಿಗೆ ಈ ಸಾವು ದೊಡ್ಡ ಆರ್ಥಿಕ ಹೊಡೆತ ನೀಡಿದೆ. ಒಂದು ಜಾನುವಾರು ಕಳೆದುಕೊಂಡರೂ ಕುಟುಂಬದ ದಿನನಿತ್ಯದ ಆದಾಯಕ್ಕೆ ಹೊಡೆತ ಬೀಳುವ ಪರಿಸ್ಥಿತಿಯಲ್ಲಿ, ಒಂದೇ ತಾಂಡಾದಲ್ಲಿ ಹಲವು ಜಾನುವಾರುಗಳನ್ನು ಕಳೆದುಕೊಂಡಿರುವುದು ಕುಟುಂಬಗಳ ಮುಂದಿನ ಬದುಕಿನ ಬಗ್ಗೆಯೂ ಪ್ರಶ್ನೆ ಮೂಡಿಸಿದೆ.

ಹೈನುಗಾರಿಕೆಯನ್ನೇ ನಂಬಿ ಬದುಕುತ್ತಿರುವ ಕುಟುಂಬಗಳ ಜೀವನಾಧಾರವೇ ಕಳೆದುಹೋಗಿದೆ. ಸರ್ಕಾರ ತಕ್ಷಣ ಸ್ಪಂದಿಸಿ ಮೃತಪಟ್ಟ ಪ್ರತಿ ಜಾನುವಾರಿಗೆ ಕನಿಷ್ಠ ₹30 ಸಾವಿರ ಪರಿಹಾರ ನೀಡಬೇಕು ಎಂದು ಮುಖಂಡ ನೂರಪ್ಪ ಲಮಾಣಿ ಆಗ್ರಹಿಸಿದ್ದಾರೆ.

ಮುನಿಯಾನ ತಾಂಡಾದಲ್ಲಿ ಈಗ ಒಂದೇ ಬೇಡಿಕೆ—ಮೂಕ ಪ್ರಾಣಿಗಳ ಸಾವಿಗೆ ಕಾರಣವೇನು ಎಂಬುದು ಬೇಗ ಬಹಿರಂಗವಾಗಬೇಕು. ಅಸ್ವಸ್ಥ ಜಾನುವಾರುಗಳು ಬದುಕುಳಿಯಬೇಕು. ಜಾನುವಾರುಗಳನ್ನು ಕಳೆದುಕೊಂಡ ಕುಟುಂಬಗಳಿಗೆ ಸರ್ಕಾರ ನೆರವಿನ ಹಸ್ತ ಚಾಚಬೇಕು. ಕಣ್ಣೀರಿನಲ್ಲಿ ಮುಳುಗಿರುವ ತಾಂಡಾದ ಕುಟುಂಬಗಳು ಈಗ ಸರ್ಕಾರದ ಸ್ಪಂದನೆಯತ್ತ ಎದುರು ನೋಡುತ್ತಿವೆ.

SIR ನೋಟಿಸ್ ಪಡೆದವರಿಗೆ 3–4 ವಾರ ಕಾಲಾವಕಾಶ? ಚುನಾವಣಾ ಆಯುಕ್ತರಿಗೆ ಡಿಕೆಶಿ ಮಹತ್ವದ ಪತ್ರ!

0

ಬೆಂಗಳೂರು: ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ಕುರಿತು ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಭಾರತದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರಿಗೆ ಪತ್ರ ಬರೆದಿದ್ದಾರೆ.

SIR ಪ್ರಕ್ರಿಯೆಯಲ್ಲಿ 1.08 ಕೋಟಿಗೂ ಅಧಿಕ ಮತದಾರರನ್ನು ASDDO ಪಟ್ಟಿಯಲ್ಲಿ ಗುರುತಿಸಿರುವುದು ಹಾಗೂ ಸುಮಾರು 43 ಲಕ್ಷ ಮತದಾರರಿಗೆ ತಾರ್ಕಿಕ ವ್ಯತ್ಯಾಸಗಳ ಕುರಿತು ನೋಟಿಸ್ ನೀಡಿರುವುದು ಗಂಭೀರ ಆತಂಕಕ್ಕೆ ಕಾರಣವಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.

ಕರಡು ಮತದಾರರ ಪಟ್ಟಿಯಿಂದ ಹೊರಗುಳಿದಿರುವ ಅರ್ಹ ಮತದಾರರಿಗೆ ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಸಲು ನೀಡಿರುವ ಅವಧಿಯನ್ನು ವಿಸ್ತರಿಸುವಂತೆ ಅವರು ಮನವಿ ಮಾಡಿದ್ದಾರೆ.

ಅಲ್ಲದೆ, ಗ್ರಾಮೀಣ ಪ್ರದೇಶಗಳಲ್ಲಿ ಗ್ರಾಮಸಭೆ ಹಾಗೂ ನಗರ ಪ್ರದೇಶಗಳಲ್ಲಿ ವಾರ್ಡ್ ಸಮಿತಿ ಸಭೆಗಳನ್ನು ನಡೆಸುವಂತೆ ಮುಖ್ಯ ಚುನಾವಣಾಧಿಕಾರಿಗೆ ನಿರ್ದೇಶನ ನೀಡಬೇಕು. ಈ ಸಭೆಗಳ ಕುರಿತು ವ್ಯಾಪಕ ಪ್ರಚಾರ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ತಾರ್ಕಿಕ ವ್ಯತ್ಯಾಸಗಳು ಅಥವಾ 2002ರ ಮತದಾರರ ಪಟ್ಟಿಯೊಂದಿಗೆ ಲಿಂಕ್ ಇಲ್ಲದಿರುವ ಕಾರಣ ನೋಟಿಸ್ ಪಡೆದಿರುವ ಮತದಾರರಿಗೆ ಪ್ರತಿಕ್ರಿಯಿಸಲು ಹಾಗೂ ಅಗತ್ಯ ದಾಖಲೆಗಳನ್ನು ಸಲ್ಲಿಸಲು ಕನಿಷ್ಠ 3ರಿಂದ 4 ವಾರಗಳ ಕಾಲಾವಕಾಶ ನೀಡಬೇಕು ಎಂದು ಸಿಎಂ ಮನವಿ ಮಾಡಿದ್ದಾರೆ.

ಹೆಚ್ಚಿನ ಸಂಖ್ಯೆಯಲ್ಲಿ ಸಲ್ಲಿಕೆಯಾಗುವ ಹಕ್ಕು, ಆಕ್ಷೇಪಣೆ ಹಾಗೂ ಅರ್ಜಿಗಳನ್ನು ನಿರ್ವಹಿಸಲು ಚುನಾವಣಾ ನೋಂದಣಿ ಅಧಿಕಾರಿಗಳ (ERO) ಸಂಖ್ಯೆಯನ್ನು ಹೆಚ್ಚಿಸಬೇಕು. ಅಗತ್ಯವಿದ್ದರೆ ಜಿಲ್ಲಾ ಚುನಾವಣಾಧಿಕಾರಿಗಳ (DEO) ಸಂಖ್ಯೆಯನ್ನೂ ಹೆಚ್ಚಿಸಿ, ತಪ್ಪುಗಳು ಹಾಗೂ ಅನ್ಯಾಯಯುತ ಮತದಾರರ ಹೊರಗಿಡುವಿಕೆಯನ್ನು ತಡೆಯಬೇಕು ಎಂದು ಪತ್ರದಲ್ಲಿ ತಿಳಿಸಿದ್ದಾರೆ.

SIR ಪ್ರಕ್ರಿಯೆಯನ್ನು ಪರಿಣಾಮಕಾರಿಯಾಗಿ ಪೂರ್ಣಗೊಳಿಸಲು ಕರ್ನಾಟಕ ಸರ್ಕಾರವು ಚುನಾವಣಾ ಆಯೋಗಕ್ಕೆ ಸಾಧ್ಯವಿರುವ ಎಲ್ಲ ರೀತಿಯ ಸಹಕಾರ ನೀಡಲು ಸಿದ್ಧವಿದೆ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ಗ್ರಾಮಸಭೆ ಹಾಗೂ ವಾರ್ಡ್ ಸಮಿತಿ ಸಭೆಗಳನ್ನು ಆಯೋಜಿಸಲು ಸ್ಥಳೀಯ ಆಡಳಿತದ ನೆರವು, ವ್ಯಾಪಕ ಜನಜಾಗೃತಿ ಮತ್ತು ಸಾರ್ವಜನಿಕ ಸಂಪರ್ಕ ಕಾರ್ಯಕ್ರಮಗಳು ಹಾಗೂ ಅಗತ್ಯ ಸಮನ್ವಯ ಮತ್ತು ಲಾಜಿಸ್ಟಿಕ್ ನೆರವನ್ನು ಸರ್ಕಾರ ಒದಗಿಸಲಿದೆ ಎಂದು ಅವರು ಭರವಸೆ ನೀಡಿದ್ದಾರೆ.

ಬೆಂಗಳೂರಲ್ಲಿ ನೇಪಾಳಿ ಗ್ಯಾಂಗ್ ಕೈಚಳಕ: ಖಾಸಗಿ ಕಂಪನಿ ಉದ್ಯೋಗಿ ಮನೆಯಲ್ಲಿ ಬರೋಬ್ಬರಿ 1 ಕೆಜಿ ಚಿನ್ನಾಭರಣ ಕಳ್ಳತನ!

0

ಬೆಂಗಳೂರು: ಯಲಹಂಕ ಪೊಲೀಸ್ ಠಾಣೆ ವ್ಯಾಪ್ತಿಯ ಕಟ್ಟಿಗೆನಹಳ್ಳಿಯಲ್ಲಿ ನೇಪಾಳಿ ಗ್ಯಾಂಗ್ ಖಾಸಗಿ ಕಂಪನಿ ಉದ್ಯೋಗಿ ಚಂದ್ರಮೌಳಿ ಅವರ ಮನೆಯಲ್ಲಿ ಬರೋಬ್ಬರಿ ಒಂದು ಕೆಜಿ ಚಿನ್ನಾಭರಣ ಕಳ್ಳತನ ನಡೆಸಿರುವ ಘಟನೆ ನಡೆದಿದೆ. ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ಆರೋಪಿಗಳಾದ ಧೀರೇಂದ್ರ ಪ್ರೇಮ್, ಅಭಿಷೇಕ್, ಅಂಬರೆ ಧಮೈ ಹಾಗೂ ದೀಪಕ್ ಶಾಹಿ ಅವರನ್ನು ಬಂಧಿಸಲಾಗಿದ್ದು, ಇಬ್ಬರು ಪ್ರಮುಖ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.

ಚಂದ್ರಮೌಳಿ ಅವರ ಮನೆಯಲ್ಲಿ ಕಳ್ಳತನ ನಡೆಸಲು ನೇಪಾಳಿ ಗ್ಯಾಂಗ್ 6 ತಿಂಗಳಿನಿಂದ ಯೋಜನೆ ರೂಪಿಸಿತ್ತು. ಪ್ರಮುಖ ಆರೋಪಿ ಸಂಜಯ್ ಮತ್ತು ಆತನ ಪತ್ನಿ ಚಂದ್ರಮೌಳಿ ಮನೆಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು.

ಕಳೆದ ವರ್ಷ ವರಮಹಾಲಕ್ಷ್ಮೀ ಪೂಜೆ ವೇಳೆ ಚಿನ್ನಾಭರಣಗಳು ಸಂಜಯ್ ಪತ್ನಿಯ ಕಣ್ಣಿಗೆ ಬಿದ್ದಿದ್ದವು. ಆಗಸ್ಟ್ 16ರಂದು ಚಂದ್ರಮೌಳಿ ಕುಟುಂಬ ಸಂಬಂಧಿಯ ತಿಥಿ ಕಾರ್ಯಕ್ಕೆ ತೆರಳಿದ ಸಂದರ್ಭ ನೋಡಿಕೊಂಡು ರಾತ್ರಿ 2 ಗಂಟೆ ಸುಮಾರಿಗೆ ಸಂಜಯ್ ಚಿನ್ನಾಭರಣ ಕದ್ದಿದ್ದಾನೆ ಎನ್ನಲಾಗಿದೆ. ಬಳಿಕ ಸಂಬಂಧಿಕರ ಬಳಿ ಚಿನ್ನ ಕೊಟ್ಟು, ಬೆಳಿಗ್ಗೆ ವಿಮಾನದಲ್ಲಿ ದಂಪತಿ ಪರಾರಿಯಾಗಿದ್ದರು ಎಂದು ತಿಳಿದುಬಂದಿದೆ.

ಉಳಿದ ಆರೋಪಿಗಳು ಚಿನ್ನಾಭರಣದೊಂದಿಗೆ ಬಸ್ ಹತ್ತಿ ಹೊರಟಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಯಲಹಂಕ ಪೊಲೀಸರು ಫೇಸ್‌ಬುಕ್ ಮೂಲಕ ಆರೋಪಿಗಳ ಸುಳಿವು ಪತ್ತೆ ಮಾಡಿದ್ದು, ಅಷ್ಟೊತ್ತಿಗಾಗಲೇ ಅವರು ನೇಪಾಳ ಗಡಿ ತಲುಪಿದ್ದರು. ತಕ್ಷಣ ಶಸ್ತ್ರ ಸೀಮಾ ಬಲ (SSB)ಗೆ ಮಾಹಿತಿ ನೀಡಿದ ಪೊಲೀಸರು, ಆರೋಪಿಗಳಿದ್ದ ಬಸ್ ತಡೆದು ನಿಲ್ಲಿಸಿದರು. ವಿಮಾನದಲ್ಲಿ ತೆರಳಿದ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದಿದ್ದು, ಅವರಿಂದ 55 ಲಕ್ಷ ರೂ. ಮೌಲ್ಯದ 360 ಗ್ರಾಂ ಚಿನ್ನ, 960 ಗ್ರಾಂ ಬೆಳ್ಳಿ ವಶಪಡಿಸಿಕೊಳ್ಳಲಾಗಿದೆ. ಪ್ರಮುಖ ಆರೋಪಿ ಸಂಜಯ್ ಮತ್ತು ಆತನ ಪತ್ನಿಗಾಗಿ ಹುಡುಕಾಟ ಮುಂದುವರಿದಿದೆ.

ಈ ಪ್ರಕರಣದ ಪ್ರಮುಖ ಆರೋಪಿ ಸಂಜಯ್‌ಗೆ ಈ ಹಿಂದೆಯೂ ಕ್ರೈಂ ಹಿನ್ನೆಲೆ ಇರುವುದು ತನಿಖೆ ವೇಳೆ ಬಯಲಾಗಿದೆ. 2021ರಲ್ಲಿ ಕೆ.ಜಿ. ಹಳ್ಳಿ ಪೊಲೀಸರು ಮನೆಗಳ್ಳತನ ಪ್ರಕರಣ ಸಂಬಂಧ ಈತನನ್ನು ಬಂಧಿಸಿದ್ದರು ಎಂದು ತಿಳಿದುಬಂದಿದೆ.

ಶಾಸಕ ವಿನಯ್ ಕುಲಕರ್ಣಿʼಗೆ ಬಿಗ್ ರಿಲೀಫ್: ಧಾರವಾಡ ಪ್ರವೇಶಕ್ಕೆ ಕೋರ್ಟ್ ಅನುಮತಿ

0

ಬೆಂಗಳೂರು: ಬಿಜೆಪಿ ಮುಖಂಡ ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಅವರಿಗೆ ಧಾರವಾಡ ಪ್ರವೇಶಿಸಲು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಅನುಮತಿ ನೀಡಿದೆ.

ಪ್ರಕರಣ ಸಂಬಂಧ ಹೈಕೋರ್ಟ್ ಜಾಮೀನು ಮಂಜೂರು ಮಾಡಿದ ಬಳಿಕ, ಧಾರವಾಡ ಪ್ರವೇಶಕ್ಕೆ ಅನುಮತಿ ನೀಡಬೇಕು ಎಂದು ಕೋರಿ ವಿನಯ್ ಕುಲಕರ್ಣಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನಗರದ 42ನೇ ಎಸಿಜೆಎಂ (ಜನಪ್ರತಿನಿಧಿಗಳ ನ್ಯಾಯಾಲಯ) ಈ ಆದೇಶ ನೀಡಿದೆ.

ಧಾರವಾಡ ಪ್ರವೇಶದ ಸಂದರ್ಭದಲ್ಲಿ ಮೆರವಣಿಗೆ ಸೇರಿದಂತೆ ಯಾವುದೇ ಆಚರಣೆಗಳನ್ನು ನಡೆಸಬಾರದು ಎಂಬ ಷರತ್ತು ವಿಧಿಸಿರುವ ನ್ಯಾಯಾಲಯ, ಈ ಷರತ್ತು ಉಲ್ಲಂಘಿಸಿದಲ್ಲಿ ಜಾಮೀನು ರದ್ದುಪಡಿಸಲಾಗುವುದು ಎಂದು ಸ್ಪಷ್ಟಪಡಿಸಿದೆ.

ಅನುಮತಿಯಿಲ್ಲದೆ ಇಟ್ಟಿಗೆ ಅಲುಗಾಡಿಸಬೇಡಿ, ಮರ ಕಡಿಯಬೇಡಿ: ಬಿಡದಿ ಟೌನ್ʼಶಿಪ್ ಯೋಜನೆಗೆ ಹೈಕೋರ್ಟ್ ಬ್ರೇಕ್

0

ಬೆಂಗಳೂರು: ನ್ಯಾಯಾಲಯದ ಅನುಮತಿಯಿಲ್ಲದೆ ಬಿಡದಿ ಟೌನ್‌ಶಿಪ್‌ ಯೋಜನಾ ಪ್ರದೇಶದಲ್ಲಿ ಯಾವುದೇ ನಿರ್ಮಾಣ ಕಾಮಗಾರಿ ನಡೆಸುವಂತಿಲ್ಲ ಹಾಗೂ ಒಂದೇ ಒಂದು ಮರವನ್ನೂ ಕಡಿಯಬಾರದು ಎಂದು ಹೈಕೋರ್ಟ್‌ ರಾಜ್ಯ ಸರ್ಕಾರಕ್ಕೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.

ಬಿಡದಿ ಸ್ಮಾರ್ಟ್‌ ಸಿಟಿ ಯೋಜನೆಗಾಗಿ ಭೂಸ್ವಾಧೀನ ಪ್ರಕ್ರಿಯೆಯನ್ನು ಪ್ರಶ್ನಿಸಿ ನಾಲ್ವರು ರೈತರು ಸಲ್ಲಿಸಿದ್ದ ರಿಟ್‌ ಅರ್ಜಿಯ ವಿಚಾರಣೆ ನ್ಯಾಯಮೂರ್ತಿ ಆರ್. ನಟರಾಜ್‌ ಅವರಿದ್ದ ಏಕಸದಸ್ಯ ಪೀಠದಲ್ಲಿ ನಡೆಯಿತು.

ವಿಚಾರಣೆ ವೇಳೆ ಸರ್ಕಾರದ ಕ್ರಮದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಪೀಠ, ಪರಿಹಾರ ಮೊತ್ತ ನಿಗದಿಪಡಿಸಿದ ತಕ್ಷಣವೇ ಬುಲ್ಡೋಜರ್‌ ತೆಗೆದುಕೊಂಡು ಹೋಗಿ ಆಸ್ತಿ ನಾಶಪಡಿಸುವಂತಿಲ್ಲ ಎಂದು ಎಚ್ಚರಿಕೆ ನೀಡಿತು. ರಾತ್ರೋರಾತ್ರಿ ರೈತರ ಆಸ್ತಿಯನ್ನು ನಾಶಪಡಿಸುವ ಯಾವುದೇ ಕ್ರಮಕ್ಕೆ ಸರ್ಕಾರ ಮುಂದಾಗಬಾರದು ಎಂದು ಸೂಚಿಸಿತು.

ಪರಿಹಾರ ಮೊತ್ತ ಪ್ರಕಟವಾದರೂ ಹೈಕೋರ್ಟ್‌ ಅನುಮತಿ ಪಡೆಯದೆ ರೈತರ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳಬಾರದು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಇದೇ ವೇಳೆ, ಹೆಚ್ಚಿನ ರೈತರು ಭೂಮಿ ನೀಡಲು ಸ್ವಯಂಪ್ರೇರಿತರಾಗಿ ಮುಂದೆ ಬಂದಿದ್ದಾರೆ ಎಂದು ಸರ್ಕಾರ ಹೇಳುತ್ತಿದೆ. ಆದರೆ ಇದಕ್ಕೆ ಸಂಬಂಧಿಸಿದ ಯಾವುದೇ ಅಧಿಕೃತ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿಲ್ಲ ಎಂದು ರೈತರ ಪರ ವಕೀಲರು ವಾದಿಸಿದರು. ವಾಸ್ತವದಲ್ಲಿ ಶೇ.5ರಷ್ಟು ರೈತರೂ ಭೂಮಿ ನೀಡಲು ಒಪ್ಪಿಲ್ಲ ಎಂದು ಅವರು ತಿಳಿಸಿದರು.

ಗ್ರೇಟರ್‌ ಬೆಂಗಳೂರು ಡೆವಲಪ್‌ಮೆಂಟ್‌ ಅಥಾರಿಟಿ (GBDA) ಪರ ವಕೀಲ ಶಿವಪ್ರಕಾಶ್‌ ಶಾಂತನಗೌಡರ್‌ ವಾದ ಮಂಡಿಸಿ, ರೈತರನ್ನು ಬಲವಂತವಾಗಿ ಒಕ್ಕಲೆಬ್ಬಿಸುವುದಿಲ್ಲ. ಯಾವುದೇ ಬಲವಂತದ ಕ್ರಮ ಕೈಗೊಳ್ಳುವುದಿಲ್ಲ ಎಂದು ಅಡ್ವೊಕೇಟ್‌ ಜನರಲ್‌ ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಭೂಸ್ವಾಧೀನ ಪ್ರಕ್ರಿಯೆ ಇನ್ನೂ ಆರಂಭಿಕ ಹಂತದಲ್ಲಿದೆ ಎಂದು ತಿಳಿಸಿದರು.

ರಾಜ್ಯ ಸರ್ಕಾರದ ಪರ ಅಡ್ವೊಕೇಟ್‌ ಜನರಲ್‌ ಕೆ. ಶಶಿಕಿರಣ್‌ ಶೆಟ್ಟಿ ಅವರು, ಪರಿಹಾರ ಮೊತ್ತವನ್ನು ಅಂತಿಮವಾಗಿ ನಿಗದಿಪಡಿಸುವವರೆಗೆ ಯಾವುದೇ ರೈತರನ್ನು ತೆರವುಗೊಳಿಸುವುದಿಲ್ಲ ಎಂದು ನ್ಯಾಯಾಲಯಕ್ಕೆ ಭರವಸೆ ನೀಡಿದರು. ಪರಿಹಾರದ ವಿವರಗಳನ್ನು ಮೊದಲು ಹೈಕೋರ್ಟ್‌ ಮುಂದೆ ಮಂಡಿಸಿ, ನ್ಯಾಯಾಲಯದ ಗಮನಕ್ಕೆ ತಂದ ಬಳಿಕವೇ ಮುಂದಿನ ಪ್ರಕ್ರಿಯೆ ಮುಂದುವರಿಸಲಾಗುವುದು ಎಂದು ತಿಳಿಸಿದರು.

ಸರ್ಕಾರದ ಪರ ಎಜಿ ನೀಡಿದ ಹೇಳಿಕೆಯನ್ನು ದಾಖಲಿಸಿಕೊಂಡ ನ್ಯಾಯಾಲಯ, ರಾತ್ರೋರಾತ್ರಿ ಪರಿಹಾರ ನಿಗದಿಪಡಿಸಿ ಮರ ಕಡಿಯುವಂತಹ ಯಾವುದೇ ಕ್ರಮ ನಡೆಯುವುದಿಲ್ಲ. ಹೀಗಾಗಿ ರೈತರು ಆತಂಕಪಡುವ ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟಿತು.

ಮುಖ್ಯ ಅರ್ಜಿಯ ವಿಚಾರಣೆಯನ್ನು ಸೆಪ್ಟೆಂಬರ್‌ 29ಕ್ಕೆ ಮುಂದೂಡಲಾಗಿದ್ದು, ಇದೇ ವಿಚಾರಕ್ಕೆ ಸಂಬಂಧಿಸಿದ ಹೊಸ ಅರ್ಜಿಗಳ ವಿಚಾರಣೆಯನ್ನು ಸೆಪ್ಟೆಂಬರ್‌ 1ಕ್ಕೆ ನಿಗದಿಪಡಿಸಲಾಗಿದೆ.

₹27 ಕೋಟಿ ವೆಚ್ಚದಲ್ಲಿ ಮೋಡ ಬಿತ್ತನೆಗೆ ಸರ್ಕಾರ ಸಿದ್ಧತೆ: 3-4 ದಿನಗಳಲ್ಲಿ ಕಾರ್ಯಾರಂಭ – ಚಲುವರಾಯಸ್ವಾಮಿ

0

ಬೆಂಗಳೂರು: ರಾಜ್ಯದಲ್ಲಿ ಮಳೆ ಕೊರತೆ ಹಾಗೂ ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ₹27 ಕೋಟಿ ವೆಚ್ಚದಲ್ಲಿ ಮೋಡ ಬಿತ್ತನೆ ಮಾಡಲು ಸರ್ಕಾರ ನಿರ್ಧರಿಸಿದೆ. ಇನ್ನೂ 3-4 ದಿನಗಳಲ್ಲಿ ಮೋಡ ಬಿತ್ತನೆ ಕಾರ್ಯ ಆರಂಭವಾಗಲಿದೆ ಎಂದು ನೀರಾವರಿ ಸಚಿವ ಚಲುವರಾಯಸ್ವಾಮಿ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮೋಡ ಬಿತ್ತನೆ ಕುರಿತು ಈಗಾಗಲೇ ಸಚಿವ ಸಂಪುಟದಲ್ಲಿ ಚರ್ಚೆ ನಡೆಸಲಾಗಿದೆ. ನೀರಾವರಿ ಇಲಾಖೆ ಮೂಲಕವೇ ಮೋಡ ಬಿತ್ತನೆ ಕಾರ್ಯ ಕೈಗೊಳ್ಳಲಾಗುವುದು. ಈ ಸಂಬಂಧ ಏಜೆನ್ಸಿಗಳೊಂದಿಗೆ ಮಾತುಕತೆ ನಡೆಸಲಾಗಿದೆ ಎಂದು ಹೇಳಿದರು.

ಅಭಿವೃದ್ಧಿ ಆಯುಕ್ತರ ನೇತೃತ್ವದಲ್ಲಿ ಮಾನಿಟರಿಂಗ್‌ ಕಮಿಟಿ ಹಾಗೂ ತಾಂತ್ರಿಕ ಸಮಿತಿ ರಚನೆ ಮಾಡಲಾಗುವುದು. ಈ ಕುರಿತು ಮುಖ್ಯ ಕಾರ್ಯದರ್ಶಿ ಅವರೊಂದಿಗೆ ಚರ್ಚಿಸಿದ್ದು, ಇಂದೇ ಸಮಿತಿ ರಚನೆಯಾಗಲಿದೆ. ಸಮಿತಿಯಿಂದ ವರದಿ ಪಡೆದು ಮುಂದಿನ ಪ್ರಕ್ರಿಯೆ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

4 ಕಂದಾಯ ವಿಭಾಗಗಳಲ್ಲಿ ಮೋಡ ಬಿತ್ತನೆ

ರಾಜ್ಯದ 4 ಕಂದಾಯ ವಿಭಾಗಗಳಲ್ಲಿ ಮೋಡ ಬಿತ್ತನೆ ನಡೆಸಲಾಗುವುದು. ಎಲ್ಲಿ ಮೋಡಗಳ ಲಭ್ಯತೆ ಇರುತ್ತದೆಯೋ, ಅಲ್ಲಿಯೇ ಮೋಡ ಬಿತ್ತನೆ ಕಾರ್ಯ ಕೈಗೊಳ್ಳಲಾಗುತ್ತದೆ ಎಂದು ಸಚಿವರು ಹೇಳಿದರು.

ಕ್ಲೌಡ್‌ ಅಸೆಸ್ಮೆಂಟ್‌ ಪ್ರಕಾರ ಸೆಪ್ಟೆಂಬರ್‌ ಹಾಗೂ ಅಕ್ಟೋಬರ್‌ವರೆಗೂ ಮೋಡಗಳ ಲಭ್ಯತೆ ಇರುವ ನಿರೀಕ್ಷೆಯಿದೆ. ಮೋಡ ಬಿತ್ತನೆಯಿಂದ ಪರಿಸರದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ತಜ್ಞರು ತಿಳಿಸಿದ್ದಾರೆ ಎಂದು ಚಲುವರಾಯಸ್ವಾಮಿ ಹೇಳಿದರು.

ಕಳೆದ ವರ್ಷ ಶೇ.20ರಷ್ಟು ಯಶಸ್ಸು

ಕಳೆದ ವರ್ಷ ನಡೆದ ಮೋಡ ಬಿತ್ತನೆ ಪ್ರಯೋಗದಲ್ಲಿ ಸುಮಾರು ಶೇ.20ರಷ್ಟು ಯಶಸ್ಸು ದೊರೆತಿತ್ತು. ಈ ಬಾರಿ ಕನಿಷ್ಠ ಶೇ.30ರಷ್ಟು ಯಶಸ್ಸು ದೊರೆಯಬೇಕು ಎಂಬುದು ಸರ್ಕಾರದ ಆಶಯವಾಗಿದೆ ಎಂದು ಸಚಿವರು ತಿಳಿಸಿದರು.

ಈ ಹಿಂದೆ ರಾಜ್ಯದಲ್ಲಿ ಮೂರು ಬಾರಿ ಮೋಡ ಬಿತ್ತನೆ ಪ್ರಯೋಗ ನಡೆಸಲಾಗಿದೆ. ಆದರೆ ಮಳೆ ಪ್ರಮಾಣ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ರೈತರಿಂದಲೂ ಮೋಡ ಬಿತ್ತನೆ ನಡೆಸುವಂತೆ ಒತ್ತಡವಿದೆ. ಬರ ಪರಿಸ್ಥಿತಿಯಲ್ಲಿ ಮೋಡ ಬಿತ್ತನೆಯಿಂದ ಅನುಕೂಲವಾಗಬಹುದು ಎಂಬ ನಿರೀಕ್ಷೆಯಲ್ಲಿ ಸರ್ಕಾರ ಈ ಕ್ರಮ ಕೈಗೊಳ್ಳುತ್ತಿದೆ ಎಂದು ಹೇಳಿದರು.

₹27 ಕೋಟಿ ವೆಚ್ಚದಲ್ಲಿ 60 ಗಂಟೆಗಳ ಆಧಾರದ ಮೇಲೆ ಮೋಡ ಬಿತ್ತನೆ ಕಾರ್ಯ ನಡೆಸಲಾಗುವುದು. ಯಶಸ್ಸಿನ ಪ್ರಮಾಣ ಕಡಿಮೆಯಿದ್ದರೂ ರೈತರ ಹಿತದೃಷ್ಟಿಯಿಂದ ಈ ಪ್ರಯೋಗ ಕೈಗೊಳ್ಳಲಾಗುತ್ತಿದೆ ಎಂದು ಚಲುವರಾಯಸ್ವಾಮಿ ಸ್ಪಷ್ಟಪಡಿಸಿದರು.