Home Blog

ಮ್ಯಾಜಿಸ್ಟ್ರೇಟ್ ವರದಿ ಬಳಿಕ ಹನೂರು ಎನ್‌ಕೌಂಟರ್‌ ತನಿಖೆ ಚುರುಕು: ನಾಲ್ಕು ಪ್ರಕರಣಗಳ ಫೈಲ್ ಸಿಐಡಿ ವಶಕ್ಕೆ

0

ಚಾಮರಾಜನಗರ: ಕಾವೇರಿ ವನ್ಯಧಾಮ ಎನ್‌ಕೌಂಟರ್‌ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಮ್ಯಾಜಿಸ್ಟ್ರೇಟ್ ತನಿಖಾ ವರದಿ ಸಲ್ಲಿಕೆಯಾದ ಬೆನ್ನಲ್ಲೇ ರಾಜ್ಯ ಸರ್ಕಾರ ತನಿಖೆಯನ್ನು ಸಿಐಡಿಗೆ ವಹಿಸಿದ್ದು, ನಾಲ್ಕು ಪ್ರತ್ಯೇಕ ತಂಡಗಳು ತನಿಖೆಗಿಳಿದಿವೆ.

ಸಿಐಡಿ ತನಿಖೆಗೆ ಇಬ್ಬರು ಡಿವೈಎಸ್ಪಿಗಳು ಹಾಗೂ ಇಬ್ಬರು ಇನ್ಸ್‌ಪೆಕ್ಟರ್‌ಗಳನ್ನು ನಿಯೋಜಿಸಲಾಗಿದೆ. ಡಿವೈಎಸ್ಪಿ ಸತೀಶ್ ಚಿಟಗುಬ್ಬಿ, ಡಿವೈಎಸ್ಪಿ ಡಿ.ಎಸ್. ರಾಜೇಂದ್ರ, ಇನ್ಸ್‌ಪೆಕ್ಟರ್ ಕೆ.ಪಿ. ಗೋಪಾಲ್ ಹಾಗೂ ಇನ್ಸ್‌ಪೆಕ್ಟರ್ ಹೆಚ್.ಎನ್. ಹೊನ್ನಪ್ಪ ಅವರ ನೇತೃತ್ವದಲ್ಲಿ ತಂಡಗಳು ಕಾರ್ಯನಿರ್ವಹಿಸುತ್ತಿವೆ.

ಈಗಾಗಲೇ ಸಿಐಡಿ ಅಧಿಕಾರಿಗಳು ಘಟನಾ ಸ್ಥಳದಲ್ಲಿ ಬೀಡುಬಿಟ್ಟು ತನಿಖೆ ಆರಂಭಿಸಿದ್ದಾರೆ. ಸ್ಥಳೀಯ ಪೊಲೀಸರು ಇದುವರೆಗೆ ನಡೆಸಿದ ತನಿಖೆಗೆ ಸಂಬಂಧಿಸಿದ ಕೇಸ್ ಫೈಲ್‌ಗಳು ಹಾಗೂ ದಾಖಲೆಗಳನ್ನು ಸಿಐಡಿಗೆ ಹಸ್ತಾಂತರಿಸಿದ್ದಾರೆ.

ಎನ್‌ಕೌಂಟರ್‌ ಪ್ರಕರಣ ಮಾತ್ರವಲ್ಲದೆ, ಹನೂರು, ರಾಮಾಪುರ ಹಾಗೂ ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ಪ್ರಕರಣಗಳನ್ನೂ ಸಿಐಡಿ ತನಿಖೆ ನಡೆಸಲಿದೆ. ಒಟ್ಟು ನಾಲ್ಕು ಪ್ರಕರಣಗಳು ಸಿಐಡಿ ತನಿಖೆಯ ವ್ಯಾಪ್ತಿಗೆ ಬಂದಿವೆ.

ಪ್ರಕರಣದ ವಿವಿಧ ಆಯಾಮಗಳನ್ನು ಪರಿಶೀಲಿಸಲು ಸಿಐಡಿ ತಂಡಗಳು ಸ್ಥಳೀಯ ದಾಖಲೆಗಳು, ಪ್ರಕರಣದ ಹಿನ್ನೆಲೆ ಹಾಗೂ ಘಟನಾ ಸ್ಥಳದ ಮಾಹಿತಿಯನ್ನು ಕಲೆಹಾಕುತ್ತಿವೆ. ಮ್ಯಾಜಿಸ್ಟ್ರೇಟ್ ತನಿಖೆಯ ಬಳಿಕ ಇದೀಗ ಸಿಐಡಿ ತನಿಖೆ ಆರಂಭವಾಗಿರುವುದರಿಂದ ಪ್ರಕರಣದ ಮುಂದಿನ ಬೆಳವಣಿಗೆ ಕುತೂಹಲ ಮೂಡಿಸಿದೆ.

ಬಿಟ್ ಕಾಯಿನ್ ಹಗರಣ: ಹ್ಯಾಕರ್ ಶ್ರೀಕಿ, ರಾಬಿನ್ ಖಂಡೇವಾಲ ಜಾಮೀನು ಅರ್ಜಿ ವಜಾ

0

ಬೆಂಗಳೂರು: ಬಿಟ್‌ಕಾಯಿನ್ ಹಗರಣ ಪ್ರಕರಣದಲ್ಲಿ ಆರೋಪಿಗಳಾಗಿರುವ ಹ್ಯಾಕರ್ ಶ್ರೀಕಿ ಹಾಗೂ ರಾಬಿನ್ ಖಂಡೇವಾಲ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಇ.ಡಿ ವಿಶೇಷ ನ್ಯಾಯಾಲಯ ವಜಾಗೊಳಿಸಿದೆ.

ಬಿಟ್‌ಕಾಯಿನ್ ಹಗರಣಕ್ಕೆ ಸಂಬಂಧಿಸಿದಂತೆ ಇ.ಡಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದು, ಕೆಲ ತಿಂಗಳ ಹಿಂದೆ ಪ್ರಕರಣ ದಾಖಲಿಸಿಕೊಂಡು ಹಲವು ಆರೋಪಿಗಳ ಮನೆಗಳ ಮೇಲೆ ದಾಳಿ ನಡೆಸಿದ್ದರು. ಈ ಪ್ರಕರಣದಲ್ಲಿ ಹ್ಯಾಕರ್ ಶ್ರೀಕಿ, ರಾಬಿನ್ ಖಂಡೇವಾಲ ಹಾಗೂ ಸುಖೇಶ್ ಹೆಗ್ಡೆ ಅವರನ್ನು ಇ.ಡಿ ಅಧಿಕಾರಿಗಳು ಬಂಧಿಸಿದ್ದರು. ಕಾಂಗ್ರೆಸ್ ಯುವ ನಾಯಕ ಮೊಹಮ್ಮದ್ ನಲಪಾಡ್, ಶ್ರೀಕಿ, ರಾಬಿನ್ ಖಂಡೇವಾಲ ಹಾಗೂ ಸುಖೇಶ್ ಹೆಗ್ಡೆ ಅವರ ನಿವಾಸಗಳ ಮೇಲೂ ಇ.ಡಿ ದಾಳಿ ನಡೆಸಿತ್ತು.

ತನಿಖೆ ಪೂರ್ಣಗೊಳಿಸಿದ ಬಳಿಕ ಮೊಹಮ್ಮದ್ ನಲಪಾಡ್ ಸೇರಿದಂತೆ ಆರೋಪಿಗಳ ವಿರುದ್ಧ ಇ.ಡಿ ಅಧಿಕಾರಿಗಳು ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದ್ದರು. ಚಾರ್ಜ್‌ಶೀಟ್ ಸಲ್ಲಿಕೆಯ ಕೆಲ ದಿನಗಳ ಬಳಿಕ ಶ್ರೀಕಿ ಹಾಗೂ ರಾಬಿನ್ ಖಂಡೇವಾಲ ಜಾಮೀನು ಕೋರಿ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಿದ್ದರು.

ಜಾಮೀನು ಅರ್ಜಿಗಳಿಗೆ ಇ.ಡಿ ಪರ ವಿಶೇಷ ಸರ್ಕಾರಿ ಅಭಿಯೋಜಕ ಮಧು ಆರ್. ರಾವ್ ಆಕ್ಷೇಪಣೆ ಸಲ್ಲಿಸಿ, ಆರೋಪಿಗಳಿಗೆ ಜಾಮೀನು ನೀಡಬಾರದು ಎಂದು ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದರು. ವಾದ-ಪ್ರತಿವಾದ ಆಲಿಸಿದ ಇ.ಡಿ ವಿಶೇಷ ನ್ಯಾಯಾಲಯ, ಶ್ರೀಕಿ ಹಾಗೂ ರಾಬಿನ್ ಖಂಡೇವಾಲ ಅವರ ಜಾಮೀನು ಅರ್ಜಿಗಳನ್ನು ವಜಾಗೊಳಿಸಿದೆ.

ನಾಗೇಂದ್ರ ರಾಜೀನಾಮೆ ಬಿಜೆಪಿ-ಜೆಡಿಎಸ್ ಹೋರಾಟದ ಫಲ: ಆರ್‌. ಅಶೋಕ್

0

ಬೆಂಗಳೂರು: ನಿರ್ಗಮಿತ ಸಚಿವ ಬಿ. ನಾಗೇಂದ್ರ ಅವರ ರಾಜೀನಾಮೆ ಬಿಜೆಪಿ-ಜೆಡಿಎಸ್ ನಡೆಸಿದ ನಿರಂತರ ಹೋರಾಟದ ಫಲ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌. ಅಶೋಕ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ನಾಗೇಂದ್ರ ಪ್ರಕರಣವನ್ನು ವಿಧಾನಸಭೆಯಲ್ಲಿ ಬಿಜೆಪಿ-ಜೆಡಿಎಸ್ ಒಟ್ಟಾಗಿ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ದಿವೆ. ಕರ್ನಾಟಕ ವಿಧಾನಸಭೆಯ ಇತಿಹಾಸದಲ್ಲೇ ಈ ಪ್ರಕರಣ ಅಪರೂಪದ್ದು. ಆರಂಭದಿಂದಲೂ ನಮ್ಮ ಗುರಿ ಸ್ಪಷ್ಟವಾಗಿತ್ತು ಎಂದು ಹೇಳಿದರು.

ನಾಗೇಂದ್ರ ಅವರು ಪಕ್ಷಕ್ಕೆ ಮುಜುಗರವಾಗಬಾರದು ಎಂಬ ಕಾರಣಕ್ಕೆ ರಾಜೀನಾಮೆ ನೀಡಿದ್ದಾಗಿ ಹೇಳಿರುವುದನ್ನು ಉಲ್ಲೇಖಿಸಿದ ಅಶೋಕ್, “ಹಾಗಾದರೆ ಪಕ್ಷವೇ ಲೂಟಿ ಮಾಡುವಂತೆ ಹೇಳಿಕೊಡುತ್ತದೆಯೇ?” ಎಂದು ಪ್ರಶ್ನಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಾಗೇಂದ್ರ ಅವರನ್ನು ಅಮಾಯಕರು ಎಂದು ಹೇಳುತ್ತಿದ್ದಾರೆ. ಆದರೆ ತನಿಖಾ ಸಂಸ್ಥೆಗಳು ಪ್ರಕರಣದಲ್ಲಿ ಆರೋಪಗಳನ್ನು ದಾಖಲಿಸಿವೆ. ಇಡಿ ನಾಲ್ಕು ಚಾರ್ಜ್‌ಶೀಟ್‌ಗಳನ್ನು ಸಲ್ಲಿಸಿದ್ದು, ಅವುಗಳಲ್ಲಿ ನಾಗೇಂದ್ರ ವಿರುದ್ಧವೂ ಆರೋಪಗಳಿವೆ ಎಂದು ಅಶೋಕ್ ಹೇಳಿದರು.

ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಚಂದ್ರಶೇಖರ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರ ಕುಟುಂಬಕ್ಕೆ ಪಿಂಚಣಿ, ಗ್ರಾಚ್ಯುಯಿಟಿ ಹಾಗೂ ಮಗನಿಗೆ ಸರ್ಕಾರಿ ಉದ್ಯೋಗ ನೀಡಿಲ್ಲ. 187 ಕೋಟಿ ರೂ. ಹಣವನ್ನು ಉಳಿಸಿದ ಅಧಿಕಾರಿಯ ಕುಟುಂಬಕ್ಕೆ ಅನ್ಯಾಯವಾಗಿರುವಾಗ, ನಾಗೇಂದ್ರ ಅವರಿಗೆ ಅನ್ಯಾಯವಾಗಿದೆ ಎಂದು ಕಾಂಗ್ರೆಸ್ ನಾಯಕರು ಹೇಳುತ್ತಿರುವುದು ಯಾವ ರೀತಿಯ ದಲಿತ ಕಾಳಜಿ ಎಂದು ಅಶೋಕ್ ಪ್ರಶ್ನಿಸಿದರು.

ವಿಧಾನಸಭೆಯಲ್ಲಿ ನಾಗೇಂದ್ರ ವಿರುದ್ಧ 37 ದಾಖಲೆಗಳನ್ನು ಬಿಡುಗಡೆ ಮಾಡಿದ್ದೇನೆ. ಸಿಬಿಐ ನಾಗೇಂದ್ರ ಅವರನ್ನು ಕಿಂಗ್‌ಪಿನ್ ಎಂದು ಹೇಳಿದೆ. ಸಿಬಿಐ ಸುಳ್ಳು ಹೇಳುತ್ತಿದ್ದರೆ ಡಿ.ಕೆ. ಶಿವಕುಮಾರ್ ಅದರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲಿ ಎಂದು ಸವಾಲು ಹಾಕಿದರು.

“600 ಖಾತೆಗಳಿಗೆ 187 ಕೋಟಿ ರೂ. ಹಣವನ್ನು ಒಬ್ಬ ಕ್ಲರ್ಕ್ ವರ್ಗಾವಣೆ ಮಾಡಲು ಸಾಧ್ಯವೇ?” ಎಂದು ಪ್ರಶ್ನಿಸಿದ ಅಶೋಕ್, ಚಂದ್ರಶೇಖರ್ ಅವರ ಡೆತ್‌ನೋಟ್‌ನಲ್ಲಿ ಸಚಿವರ ಮೌಖಿಕ ಸೂಚನೆಯ ಮೇರೆಗೆ ಹಣ ವರ್ಗಾವಣೆ ಮಾಡಲಾಗಿದೆ ಎಂಬ ಉಲ್ಲೇಖವಿದೆ ಎಂದು ಹೇಳಿದರು.

ನಾಗೇಂದ್ರ ವಿರುದ್ಧ ಲೋಕಾಯುಕ್ತದಲ್ಲಿ 12 ಪ್ರಕರಣಗಳಿದ್ದು, ಒಟ್ಟಾರೆ 35 ಪ್ರಕರಣಗಳಿವೆ ಎಂದು ಅಶೋಕ್ ಆರೋಪಿಸಿದರು. ಎಫ್‌ಎಸ್‌ಎಲ್ ವರದಿಯಲ್ಲಿ ನೆಕ್ಕುಂಟಿ ನಾಗರಾಜ್ ಅವರೊಂದಿಗೆ ನಾಗೇಂದ್ರ ನಡೆಸಿದ ಸಂಪರ್ಕದ ಮಾಹಿತಿಯೂ ಇದೆ ಎಂದು ತಿಳಿಸಿದರು.

ನಾಗೇಂದ್ರ ಅಮಾಯಕರೆಂದಾದರೆ ಅವರನ್ನು ಸಂಪುಟದಿಂದ ಏಕೆ ತೆಗೆದುಹಾಕಲಾಯಿತು? ರಾಜೀನಾಮೆ ತಡೆಯಲು ಡಿ.ಕೆ. ಶಿವಕುಮಾರ್ ಏಕೆ ಪ್ರಯತ್ನಿಸಲಿಲ್ಲ? ಇದೀಗ ಹೈಕಮಾಂಡ್ ಜತೆ ಚರ್ಚೆ ನಡೆಸುವ ಅಗತ್ಯ ಏಕೆ ಬಂತು ಎಂದು ಅಶೋಕ್ ಪ್ರಶ್ನಿಸಿದರು.

ಹಣ ವಶಪಡಿಸಿಕೊಂಡ ಮಾತ್ರಕ್ಕೆ ಆರೋಪಿಯಿಂದ ನಿರಪರಾಧಿ ಎಂಬ ತೀರ್ಪು ನೀಡಲು ಸಾಧ್ಯವಿಲ್ಲ. ಯಾರು ಅಪರಾಧಿ, ಯಾರು ನಿರಪರಾಧಿ ಎಂಬುದನ್ನು ತನಿಖಾ ಸಂಸ್ಥೆಗಳು ಹಾಗೂ ನ್ಯಾಯಾಲಯಗಳು ನಿರ್ಧರಿಸಬೇಕು ಎಂದು ಅವರು ಸ್ಪಷ್ಟಪಡಿಸಿದರು.

ಸಿಬಿಐ ಮತ್ತು ಇಡಿ ಪ್ರಾಸಿಕ್ಯೂಷನ್‌ಗೆ ಅನುಮತಿ ಕೇಳಿವೆ. ರಾಜ್ಯಪಾಲರ ಅನುಮತಿ ದೊರೆತ ಬಳಿಕ ಮುಂದಿನ ಕಾನೂನು ಕ್ರಮ ನಡೆಯಲಿದೆ. ಸಚಿವರಾಗಿದ್ದಾಗ ಬಂಧನವಾದರೆ ಸರ್ಕಾರಕ್ಕೆ ಮುಜುಗರವಾಗಬಹುದು ಎಂಬ ಕಾರಣಕ್ಕೆ ರಾಜೀನಾಮೆ ಪಡೆಯಲಾಗಿದೆ ಎಂದು ಅಶೋಕ್ ಆರೋಪಿಸಿದರು.

ನಾಗೇಂದ್ರ ರಾಜೀನಾಮೆ ಬಿಜೆಪಿ-ಜೆಡಿಎಸ್ ಹೋರಾಟದ ಫಲ ಮಾತ್ರವಲ್ಲ, ಇದು ದಲಿತ ಸಮುದಾಯದ ಜಯವೂ ಹೌದು. ದಲಿತರ ಹಣ ದುರುಪಯೋಗ ಮಾಡಿದರೆ ಉಳಿಗಾಲವಿಲ್ಲ ಎಂಬ ಸಂದೇಶ ಕಾಂಗ್ರೆಸ್‌ಗೆ ಸಿಕ್ಕಿದೆ. ಮುಂದಿನ ದಿನಗಳಲ್ಲಿ ಅಧಿವೇಶನದಲ್ಲಿ ಚರ್ಚೆಯಾಗದ ಇತರ ವಿಚಾರಗಳನ್ನು ಪಾದಯಾತ್ರೆ ಮೂಲಕ ಜನರ ಬಳಿಗೆ ಕೊಂಡೊಯ್ಯುತ್ತೇವೆ ಎಂದು ಆರ್‌. ಅಶೋಕ್ ಹೇಳಿದರು.

ಪ್ರವಾಹದ ಬೆನ್ನಲ್ಲೇ ನೇಪಾಳಕ್ಕೆ ಮತ್ತೊಂದು ಆತಂಕ; ಯಾವ ಕ್ಷಣದಲ್ಲಾದರೂ ಸರೋವರ ಸ್ಫೋಟಿಸುವ ಸಾಧ್ಯತೆ, ಚೀನಾದಿಂದ ಎಚ್ಚರಿಕೆ!

0

ಕಠ್ಮಂಡು: ವಿನಾಶಕಾರಿ ಹಠಾತ್ ಪ್ರವಾಹದಿಂದ ತತ್ತರಿಸಿರುವ ನೇಪಾಳಕ್ಕೆ ಚೀನಾ ಮತ್ತೊಂದು ಎಚ್ಚರಿಕೆ ನೀಡಿದೆ. ಲ್ಹೆಂಡೆ ನದಿ ದಂಡೆಯ ಮೇಲ್ಭಾಗದಲ್ಲಿ ರೂಪುಗೊಂಡಿರುವ ಬ್ಯಾರಿಯರ್ ಲೇಕ್ (ನೈಸರ್ಗಿಕವಾಗಿ ರೂಪುಗೊಂಡ ಸರೋವರ) ಯಾವ ಕ್ಷಣದಲ್ಲಾದರೂ ಒಡೆದುಹೋಗುವ ಸಾಧ್ಯತೆ ಇದೆ ಎಂದು ಎಚ್ಚರಿಸಿದೆ.

ಸರೋವರದ ನೀರಿನ ಬಣ್ಣ ನಿರಂತರವಾಗಿ ಗಾಢವಾಗುತ್ತಿದ್ದು, ಇದು ಅಪಾಯ ಹೆಚ್ಚುತ್ತಿರುವ ಸೂಚನೆಯಾಗಿರಬಹುದು ಎಂದು ಚೀನಾದ ಅಧಿಕಾರಿಗಳು ತಿಳಿಸಿದ್ದಾರೆ. ಒಂದು ವೇಳೆ ಸರೋವರ ಒಡೆದರೆ ನದಿಗೆ ಹರಿಯುವ ನೀರಿನ ಪ್ರಮಾಣ ಸೆಕೆಂಡಿಗೆ 500 ಕ್ಯುಬಿಕ್ ಮೀಟರ್‌ನಷ್ಟಿರಲಿದೆ. ಆದಾಗ್ಯೂ ದೊಡ್ಡ ಪ್ರಮಾಣದ ಪ್ರವಾಹ ಉಂಟಾಗುವ ಸಾಧ್ಯತೆ ಕಡಿಮೆ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.

ನೇಪಾಳದ ವಿದೇಶಾಂಗ ಸಚಿವಾಲಯದೊಂದಿಗೆ ಹಂಚಿಕೊಂಡ ಸಂದೇಶದಲ್ಲಿ, ಎರಡು ದಿನಗಳ ಹಿಂದೆ ರೂಪುಗೊಳ್ಳಲು ಆರಂಭಿಸಿದ ಸರೋವರದ ನೀರಿನ ಬಣ್ಣ ನಿರಂತರವಾಗಿ ಗಾಢವಾಗುತ್ತಿದ್ದು, ಇದು ಸರೋವರ ಯಾವ ಕ್ಷಣದಲ್ಲಾದರೂ ಒಡೆಯಬಹುದು ಎಂಬುದನ್ನು ಸೂಚಿಸುತ್ತದೆ ಎಂದು ಚೀನಾದ ಅಧಿಕಾರಿಗಳು ತಿಳಿಸಿದ್ದಾರೆ. ನೀರಿನ ಪ್ರಮಾಣ ದೊಡ್ಡದಾಗಿಲ್ಲದ ಕಾರಣ ಕೆಳಭಾಗದ ನದಿಗಳಲ್ಲಿ ನೀರಿನ ಹರಿವು ಸ್ವಲ್ಪ ಹೆಚ್ಚಾಗಬಹುದೇ ಹೊರತು ಗಮನಾರ್ಹ ಪ್ರಮಾಣದಲ್ಲಿ ನೀರು ಏರಿಕೆಯಾಗುವ ಸಾಧ್ಯತೆ ಇಲ್ಲ ಎಂದೂ, ಆದರೂ ನದಿಯ ಕೆಳಭಾಗದಲ್ಲಿ ವಾಸಿಸುವ ಜನರು ಮುನ್ನೆಚ್ಚರಿಕೆ ವಹಿಸಬೇಕು ಎಂದೂ ಸೂಚಿಸಿದ್ದಾರೆ.

ನೇಪಾಳ ಮತ್ತು ಟಿಬೆಟ್ ಪ್ರದೇಶಗಳಲ್ಲಿ ಭೀಕರ ಹಠಾತ್ ಪ್ರವಾಹಕ್ಕೆ ಕಾರಣವಾದ ಹಿಮನದಿ ಕುಸಿತದ ಬಳಿಕ ಈ ತಾತ್ಕಾಲಿಕ ಸರೋವರ ರೂಪುಗೊಂಡಿದೆ. ಹಿಮನದಿ ಕುಸಿತದಿಂದ ಕೆಳಕ್ಕೆ ಹರಿದುಬಂದ ಅವಶೇಷಗಳಿಂದ ನೈಸರ್ಗಿಕ ಅಣೆಕಟ್ಟು ನಿರ್ಮಾಣವಾಗಿದ್ದು, ಅದರ ಪರಿಣಾಮವಾಗಿ ಚೀನಾದ ಭಾಗದಲ್ಲಿರುವ ಚೋಚೆನ್ ನದಿ ಹಾಗೂ ನೇಪಾಳದ ಭಾಗದಲ್ಲಿರುವ ಪುರೇಪು ನದಿ ಸೇರುವ ಪ್ರದೇಶದ ಸಮೀಪ ಈ ಸರೋವರ ನಿರ್ಮಾಣವಾಗಿದೆ.

ಚೀನಾದ ಜಲಸಂಪನ್ಮೂಲ ಸಚಿವಾಲಯದ ಪ್ರಕಾರ, ಸರೋವರದ ನೀರಿನ ಮಟ್ಟ ನಿಧಾನವಾಗಿ ಏರುತ್ತಿದ್ದು, ಶುಕ್ರವಾರದ ವೇಳೆಗೆ ಸುಮಾರು 25 ಲಕ್ಷ ಕ್ಯುಬಿಕ್ ಮೀಟರ್ ನೀರು ಸಂಗ್ರಹವಾಗಿತ್ತು.

ಸರೋವರ ಒಡೆದ ಸಂದರ್ಭದಲ್ಲಿ ಉಂಟಾಗಬಹುದಾದ ಪ್ರವಾಹದ ಪರಿಣಾಮವನ್ನು ಅಂದಾಜಿಸಲು ಚೀನಾ ಈಗಾಗಲೇ ಫ್ಲಡ್ ಮಾಡೆಲಿಂಗ್ ನಡೆಸಿದೆ. ಚೀನಾದ ಅಂದಾಜಿನ ಪ್ರಕಾರ, ನೈಸರ್ಗಿಕ ಅಣೆಕಟ್ಟಿನ ಒಂದು ಭಾಗ ಒಡೆದರೆ ನದಿ ವ್ಯವಸ್ಥೆಗೆ ಹರಿಯುವ ನೀರಿನ ಗರಿಷ್ಠ ಪ್ರಮಾಣ ಸೆಕೆಂಡಿಗೆ 500 ಕ್ಯುಬಿಕ್ ಮೀಟರ್ ತಲುಪಬಹುದಾದರೂ, ಈ ನೀರು ನದಿಯ ದಡಗಳ ಒಳಗೇ ಹರಿಯುವ ಸಾಧ್ಯತೆ ಹೆಚ್ಚಿದ್ದು, ಭಾರೀ ಪ್ರಮಾಣದ ನೀರು ದಡಗಳನ್ನು ಮೀರುವ ಸಾಧ್ಯತೆ ಕಡಿಮೆ ಎಂದು ತಿಳಿಸಲಾಗಿದೆ. ಈ ಹಿಂದೆ ಚೀನಾ, ಮುಂದಿನ ಮೂರು ದಿನಗಳಲ್ಲಿ ಸರೋವರಕ್ಕೆ ಇನ್ನೂ 30 ಲಕ್ಷ ಕ್ಯುಬಿಕ್ ಮೀಟರ್ ನೀರು ಸೇರುವ ಸಾಧ್ಯತೆಯಿದೆ ಎಂದು ಎಚ್ಚರಿಸಿತ್ತು.

ಹನೂರು ಎನ್ʼಕೌಂಟರ್ ತನಿಖೆ CID ಹೆಗಲಿಗೆ; ನಾಲ್ಕು ವಿಶೇಷ ತಂಡ ರಚಿಸಿ ತನಿಖೆ ಆರಂಭಿಸಲು ಸಿದ್ಧತೆ!

0

ಚಾಮರಾಜನಗರ: ಕಾವೇರಿ ವನ್ಯಧಾಮದಲ್ಲಿ ನಡೆದ ಎನ್‌ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮ್ಯಾಜಿಸ್ಟ್ರೇಟ್ ತನಿಖಾ ವರದಿ ಸಲ್ಲಿಕೆಯಾದ ಬಳಿಕ ಇದೀಗ ಸಿಐಡಿ ತಂಡ ಎಂಟ್ರಿ ನೀಡಿದೆ.

ಎನ್‌ಕೌಂಟರ್ ಪ್ರಕರಣದ ತನಿಖೆಯನ್ನು ಸರ್ಕಾರ ಸಿಐಡಿಗೆ ವಹಿಸಿದ್ದು, ತನಿಖೆಗಾಗಿ ನಾಲ್ಕು ತಂಡಗಳನ್ನು ರಚಿಸಲಾಗಿದೆ. ಇಬ್ಬರು ಡಿವೈಎಸ್‌ಪಿಗಳು ಹಾಗೂ ಇಬ್ಬರು ಇನ್ಸ್‌ಪೆಕ್ಟರ್‌ಗಳ ನೇತೃತ್ವದಲ್ಲಿ ಈ ನಾಲ್ಕು ತಂಡಗಳನ್ನು ರಚಿಸಲಾಗಿದ್ದು, ಈಗಾಗಲೇ ಸಿಐಡಿ ತಂಡ ಸ್ಥಳದಲ್ಲಿ ಬೀಡುಬಿಟ್ಟಿದೆ.

ಎನ್‌ಕೌಂಟರ್ ಹಾಗೂ ಹನೂರು, ರಾಮಾಪುರ, ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ಒಟ್ಟು ನಾಲ್ಕು ಪ್ರಕರಣಗಳ ತನಿಖೆಯನ್ನು ಸಿಐಡಿ ನಡೆಸಲಿದೆ. ಈ ಕುರಿತು ಸ್ಥಳೀಯ ಪೊಲೀಸರು ಈಗಾಗಲೇ ಸಿಐಡಿಗೆ ಕೇಸ್ ಫೈಲ್ ಹಸ್ತಾಂತರಿಸಿದ್ದಾರೆ. ಡಿವೈಎಸ್‌ಪಿ ಸತೀಶ್ ಚಿಟಗುಬ್ಬಿ, ಡಿವೈಎಸ್‌ಪಿ ಡಿ.ಎಸ್. ರಾಜೇಂದ್ರ, ಪೊಲೀಸ್ ಇನ್ಸ್‌ಪೆಕ್ಟರ್ ಕೆ.ಪಿ. ಗೋಪಾಲ್ ಹಾಗೂ ಪೊಲೀಸ್ ಇನ್ಸ್‌ಪೆಕ್ಟರ್ ಎಚ್.ಎನ್. ಹೊನ್ನಪ್ಪ ಅವರ ನೇತೃತ್ವದಲ್ಲಿ ಸಿಐಡಿಯ ನಾಲ್ಕು ತಂಡಗಳು ತನಿಖೆ ಕೈಗೊಳ್ಳಲಿವೆ.

ವೆನೆಜುವೆಲಾ ಜೊತೆ ಐತಿಹಾಸಿಕ ತೈಲ ಒಪ್ಪಂದ: 65 ಶತಕೋಟಿ ಬ್ಯಾರಲ್ ನಿಕ್ಷೇಪದ ಮೇಲೆ ಅಮೆರಿಕ ಹಿಡಿತ

0

ವಾಷಿಂಗ್ಟನ್: ಅಮೆರಿಕ ವೆನೆಜುವೆಲಾದೊಂದಿಗೆ ವಿಶ್ವದ ಇತಿಹಾಸದಲ್ಲೇ ಅತಿದೊಡ್ಡ ತೈಲ ಒಪ್ಪಂದ ಮಾಡಿಕೊಂಡಿದೆ. ಈ ಒಪ್ಪಂದದ ಅನ್ವಯ ವೆನೆಜುವೆಲಾದ 65 ಶತಕೋಟಿ ಬ್ಯಾರಲ್ ತೈಲ ನಿಕ್ಷೇಪಗಳ ಮೇಲೆ ಅಮೆರಿಕ ಹಿಡಿತ ಸಾಧಿಸಲಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ವೆನೆಜುವೆಲಾದ ಮಾಜಿ ಅಧ್ಯಕ್ಷ ನಿಕೋಲಸ್ ಮಡುರೊ ಅವರ ಸರ್ಕಾರವನ್ನು ಅಮೆರಿಕ ಉರುಳಿಸಿದ ಬಹುದಿನಗಳ ನಂತರ ಈ ಮಹತ್ವದ ಬೆಳವಣಿಗೆ ಸಂಭವಿಸಿದೆ. ಈ ಒಪ್ಪಂದಕ್ಕಾಗಿ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಮತ್ತು ಯುದ್ಧ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಹಾಗೂ ವೆನೆಜುವೆಲಾದ ಅಧ್ಯಕ್ಷ ಡೆಲ್ಸಿ ರೊಡ್ರಿಗಸ್ ಅವರೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಿರುವುದಾಗಿಯೂ,

ಈ ಒಪ್ಪಂದ ಉಭಯ ದೇಶಗಳ ನಡುವಿನ ಸಂಬಂಧವನ್ನು ಮತ್ತಷ್ಟು ಬಲಪಡಿಸಲಿದೆ ಎಂದೂ ಟ್ರಂಪ್ ತಿಳಿಸಿದ್ದಾರೆ. ಈ ಐತಿಹಾಸಿಕ ಒಪ್ಪಂದ ಅಮೆರಿಕದ ತೈಲ ನಿಕ್ಷೇಪಗಳ ಸಾಮರ್ಥ್ಯವನ್ನು ದ್ವಿಗುಣಗೊಳಿಸಲಿದ್ದು, ತೈಲ ಪೂರೈಕೆ ಗಣನೀಯವಾಗಿ ಹೆಚ್ಚಿಸುವ ಜೊತೆಗೆ ಭವಿಷ್ಯದಲ್ಲಿ ಪ್ರತಿಯೊಬ್ಬ ಅಮೆರಿಕನ್ನರಿಗೆ ಕಡಿಮೆ ಬೆಲೆಯಲ್ಲಿ ತೈಲ ಮತ್ತು ಅನಿಲ ದೊರಕಿಸಿಕೊಡಲು ಸಹಾಯ ಮಾಡುತ್ತದೆ ಎಂದು ಟ್ರಂಪ್ ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆ ಟ್ರೂತ್ ಸೋಷಿಯಲ್‌ನಲ್ಲಿ ಬರೆದುಕೊಂಡಿದ್ದಾರೆ.

ಇದಕ್ಕಿಂತ ಮುಖ್ಯವಾಗಿ ಈ ಒಪ್ಪಂದ ವೆನೆಜುವೆಲಾವನ್ನು ಸಮೃದ್ಧಿಯತ್ತ ಸಾಗಿಸಲು ಸಹಾಯ ಮಾಡುತ್ತದೆ ಎಂದೂ, ವೆನೆಜುವೆಲಾದೊಂದಿಗಿನ ಈ ಒಪ್ಪಂದ ವಿಶ್ವ ಇತಿಹಾಸದಲ್ಲೇ ಇದುವರೆಗಿನ ಅತಿದೊಡ್ಡ ತೈಲ ಒಪ್ಪಂದ ಎಂದೂ ಅವರು ಪುನರುಚ್ಚರಿಸಿದ್ದಾರೆ.

ವೆನೆಜುವೆಲಾ ವಿಶ್ವದ ಅತಿದೊಡ್ಡ ತೈಲ ನಿಕ್ಷೇಪಗಳಲ್ಲಿ ಒಂದಾಗಿದೆ. ಅಮೆರಿಕದ ಇಂಧನ ಮಾಹಿತಿ ಆಡಳಿತದ ಅಂದಾಜಿನ ಪ್ರಕಾರ, ದಕ್ಷಿಣ ಅಮೆರಿಕದ ಈ ದೇಶ ಸುಮಾರು 303 ಶತಕೋಟಿ ಬ್ಯಾರಲ್ ಕಚ್ಚಾ ತೈಲ ಹೊಂದಿದ್ದು, ಇದು ವಿಶ್ವದ ಒಟ್ಟು ಪೂರೈಕೆಯ ಸರಿಸುಮಾರು ಶೇ.17ರಷ್ಟಿದೆ. ಆದರೆ ಕಳಪೆ ಮೂಲಸೌಕರ್ಯದಿಂದಾಗಿ ವೆನೆಜುವೆಲಾ ವಿಶ್ವದ ತೈಲದ ಸುಮಾರು ಶೇ.1ರಷ್ಟನ್ನಷ್ಟೇ ಉತ್ಪಾದಿಸುತ್ತಿದೆ. ಇದೀಗ ಹೊಸ ಒಪ್ಪಂದಗಳ ಅಡಿಯಲ್ಲಿ ಅಮೆರಿಕ ವೆನೆಜುವೆಲಾ ತೈಲ ನಿಕ್ಷೇಪಗಳನ್ನು ಅಭಿವೃದ್ಧಿಪಡಿಸಲು ಅವಕಾಶ ನೀಡಲಿದ್ದು, ಇದಕ್ಕೆ ಪ್ರತಿಯಾಗಿ ಹೆಚ್ಚಿನ ಪಾಲನ್ನು ಅಮೆರಿಕ ಪಡೆಯಲಿದೆ ಎಂದು ತಿಳಿದುಬಂದಿದೆ.

ಕರ್ನಾಟಕದಲ್ಲಿ ಮುಂಗಾರು ಅಬ್ಬರ: ಕರಾವಳಿ, ಮಲೆನಾಡು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ

0

ಬೆಂಗಳೂರು: ರಾಜ್ಯದ ವಿವಿಧ ಭಾಗಗಳಲ್ಲಿ ಮುಂಗಾರು ಮಳೆಯ ಚಟುವಟಿಕೆ ಮುಂದುವರಿದಿದ್ದು, ಕರಾವಳಿ, ಮಲೆನಾಡು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮುಂದಿನ ಎರಡು ದಿನವೂ ಮಳೆ ಮುಂದುವರಿಯುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಕರಾವಳಿ ಕರ್ನಾಟಕದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಹೆಚ್ಚಿನ ಭಾಗಗಳಲ್ಲಿ ಇಂದು ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಇದೇ ವೇಳೆ ಗಂಟೆಗೆ 30ರಿಂದ 40 ಕಿ.ಮೀ. ವೇಗದಲ್ಲಿ ನಿರಂತರ ಬಲವಾದ ಗಾಳಿ ಬೀಸುವ ಸಾಧ್ಯತೆಯಿದೆ.

ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ ಹಾಗೂ ಹಾವೇರಿ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ. ಈ ಭಾಗಗಳಲ್ಲಿ ಗಂಟೆಗೆ 40ರಿಂದ 50 ಕಿ.ಮೀ. ವೇಗದಲ್ಲಿ ಬಲವಾದ ಗಾಳಿ ಬೀಸುವ ಸಾಧ್ಯತೆಯಿರುವುದರಿಂದ ಸಾರ್ವಜನಿಕರು ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.

ದಕ್ಷಿಣ ಒಳನಾಡಿನ ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಹಾಗೂ ಹಾಸನ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದ್ದು, ಗಂಟೆಗೆ 30ರಿಂದ 40 ಕಿ.ಮೀ. ವೇಗದಲ್ಲಿ ಗಾಳಿ ಬೀಸಬಹುದು.

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ ಹಾಗೂ ತುಮಕೂರು ಜಿಲ್ಲೆಗಳಲ್ಲಿ ಮೇಘಾವೃತ ವಾತಾವರಣದೊಂದಿಗೆ ಗಂಟೆಗೆ 30ರಿಂದ 40 ಕಿ.ಮೀ. ವೇಗದ ಗಾಳಿಯ ನಡುವೆ ಹಗುರ ಮಳೆಯಾಗುವ ಸಾಧ್ಯತೆಯಿದೆ.

ಆ.30ರಂದು ಎಲ್ಲೆಲ್ಲಿ ಮಳೆ?

ನಾಳೆ (ಆ.30) ಕೂಡ ಕರಾವಳಿ ಕರ್ನಾಟಕದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮಳೆಯ ಅಬ್ಬರ ಮುಂದುವರಿಯಲಿದ್ದು, ಹಲವೆಡೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.

ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ ಹಾಗೂ ಹಾವೇರಿ ಜಿಲ್ಲೆಗಳಲ್ಲಿ ಗಾಳಿಯ ವೇಗ ತಗ್ಗಲಿದ್ದು, ಸಾಧಾರಣ ಮಳೆಯಾಗುವ ಮುನ್ಸೂಚನೆ ಇದೆ.

ದಕ್ಷಿಣ ಒಳನಾಡಿನ ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಹಾಗೂ ಹಾಸನ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಇನ್ನು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ಮೈಸೂರು, ರಾಮನಗರ ಹಾಗೂ ತುಮಕೂರು ಜಿಲ್ಲೆಗಳಲ್ಲಿ ಕೆಲವೆಡೆ ಹಗುರ ಮಳೆಯಾಗಬಹುದು.

ಹೀಗಾಗಿ ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಸಂಚರಿಸುವವರು ಮಳೆ ಮತ್ತು ಬಲವಾದ ಗಾಳಿಯ ಮುನ್ಸೂಚನೆಯನ್ನು ಗಮನದಲ್ಲಿಟ್ಟುಕೊಂಡು ಮುನ್ನೆಚ್ಚರಿಕೆ ವಹಿಸುವುದು ಸೂಕ್ತವಾಗಿದೆ.

ಹೆಸರು ಸೇರಿಸದಿದ್ದರೆ ಶೀಟ್ʼಗೆ ಸಹಿ ಹಾಕಲ್ಲ: ಟೀಂ ಇಂಡಿಯಾ ಆಯ್ಕೆ ವೇಳೆ ಕುಂಬ್ಳೆಗಾಗಿ ಪಟ್ಟು ಹಿಡಿದಿದ್ದ ಗಂಗೂಲಿ!

0

ನವದೆಹಲಿ: ಭಾರತೀಯ ಕ್ರಿಕೆಟ್ ಕಂಡ ಅತ್ಯಂತ ಯಶಸ್ವಿ ನಾಯಕರಲ್ಲಿ ಒಬ್ಬರಾದ ಸೌರವ್ ಗಂಗೂಲಿ, ಮೈದಾನದಲ್ಲಿ ತಮ್ಮ ಆಕ್ರಮಣಕಾರಿ ನಾಯಕತ್ವದ ಮೂಲಕ ಗಮನ ಸೆಳೆದಿದ್ದಷ್ಟೇ ಅಲ್ಲದೆ, ತಂಡದ ಆಯ್ಕೆ ವಿಚಾರದಲ್ಲೂ ತಮ್ಮ ನಿಲುವಿಗೆ ಬದ್ಧರಾಗಿದ್ದರು. ಇದೀಗ 2003ರ ಆಸ್ಟ್ರೇಲಿಯಾ ಪ್ರವಾಸಕ್ಕೂ ಮುನ್ನ ನಡೆದ ಟೀಂ ಇಂಡಿಯಾ ಆಯ್ಕೆ ಸಭೆಯ ಕುತೂಹಲಕಾರಿ ಘಟನೆಯೊಂದನ್ನು ಗಂಗೂಲಿ ಹಂಚಿಕೊಂಡಿದ್ದಾರೆ.

ಅನಿಲ್ ಕುಂಬ್ಳೆ ಅವರನ್ನು 2003ರ ಆಸ್ಟ್ರೇಲಿಯಾ ಪ್ರವಾಸದ ತಂಡದಿಂದ ಕೈಬಿಡಲು ಆಯ್ಕೆಗಾರರು ನಿರ್ಧರಿಸಿದ್ದರು. ಆದರೆ ಗಂಗೂಲಿ ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿ, ಕುಂಬ್ಳೆ ಅವರನ್ನು ತಂಡದಲ್ಲಿ ಸೇರಿಸಿಕೊಳ್ಳುವಂತೆ ಪಟ್ಟು ಹಿಡಿದಿದ್ದರು. ಅಷ್ಟೇ ಅಲ್ಲದೆ, ಅವರ ಹೆಸರನ್ನು ತಂಡದಲ್ಲಿ ಸೇರಿಸದಿದ್ದರೆ ಸೆಲೆಕ್ಷನ್ ಶೀಟ್‌ಗೆ ಸಹಿ ಹಾಕುವುದಿಲ್ಲ ಎಂದು ಆಯ್ಕೆಗಾರರಿಗೆ ಸ್ಪಷ್ಟವಾಗಿ ತಿಳಿಸಿದ್ದರು.

ಕೆಲ ತಿಂಗಳ ಹಿಂದೆ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸೌರವ್ ಗಂಗೂಲಿ, ಆ ಘಟನೆಯ ಸಂಪೂರ್ಣ ವಿವರವನ್ನು ಹಂಚಿಕೊಂಡಿದ್ದಾರೆ. 2003ರ ಆಸ್ಟ್ರೇಲಿಯಾ ಪ್ರವಾಸಕ್ಕೂ ಮುನ್ನ ಹೈದರಾಬಾದ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯವನ್ನು ಭಾರತ ಗೆದ್ದಿತ್ತು. ಅದೇ ರಾತ್ರಿ ಸುಮಾರು 11.30ಕ್ಕೆ ಆಸ್ಟ್ರೇಲಿಯಾ ಪ್ರವಾಸಕ್ಕೆ ತಂಡವನ್ನು ಆಯ್ಕೆ ಮಾಡಲು ಹೋಟೆಲ್‌ನಲ್ಲಿ ಸಭೆ ಕರೆಯಲಾಗಿತ್ತು.

ತಾವು ಸಭೆಯ ಕೊಠಡಿಗೆ ಪ್ರವೇಶಿಸಿದಾಗಲೇ ಆಯ್ಕೆಗಾರರು ಅನಿಲ್ ಕುಂಬ್ಳೆ ಅವರನ್ನು ತಂಡದಿಂದ ಕೈಬಿಡಲು ನಿರ್ಧರಿಸಿರುವುದು ತಿಳಿಯಿತು ಎಂದು ಗಂಗೂಲಿ ಹೇಳಿದ್ದಾರೆ. ಈ ವೇಳೆ ತಮ್ಮೊಂದಿಗೆ ಇದ್ದ ಅಂದಿನ ಕೋಚ್ ಜಾನ್ ರೈಟ್ ಕೂಡ ಆತಂಕಗೊಂಡಿದ್ದರು. ಆಯ್ಕೆಗಾರರು ಯಾವುದೇ ಕಾರಣಕ್ಕೂ ಕುಂಬ್ಳೆ ಅವರನ್ನು ತಂಡಕ್ಕೆ ಸೇರಿಸಲು ಸಿದ್ಧರಿರಲಿಲ್ಲ ಎಂದು ಗಂಗೂಲಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಗಂಗೂಲಿ, ಕುಂಬ್ಳೆ ಅವರನ್ನು ತಂಡದಿಂದ ಕೈಬಿಟ್ಟರೆ ಬಹುಶಃ ಅವರು ಮತ್ತೆ ಟೀಂ ಇಂಡಿಯಾ ಪರ ಆಡಲು ಸಾಧ್ಯವಾಗದೇ ಹೋಗಬಹುದು ಎಂಬ ಆತಂಕವನ್ನು ವ್ಯಕ್ತಪಡಿಸಿದ್ದರು. ಭಾರತದ ಪ್ರಮುಖ ಪಂದ್ಯ ಗೆಲ್ಲಿಸುವ ಬೌಲರ್ ಆಗಿದ್ದ ಕುಂಬ್ಳೆ ಅವರನ್ನು ಯಾವುದೇ ಕಾರಣಕ್ಕೂ ಆಸ್ಟ್ರೇಲಿಯಾ ಪ್ರವಾಸದಿಂದ ಕೈಬಿಡಬಾರದು ಎಂದು ಆಯ್ಕೆಗಾರರ ಮುಂದೆ ಗಂಗೂಲಿ ವಾದಿಸಿದ್ದರು.

ಆದರೂ ಆಯ್ಕೆಗಾರರು ತಮ್ಮ ನಿರ್ಧಾರದಿಂದ ಹಿಂದೆ ಸರಿಯದಿದ್ದಾಗ, ಗಂಗೂಲಿ ಮತ್ತಷ್ಟು ಕಠಿಣ ನಿಲುವು ತಾಳಿದರು. ಕುಂಬ್ಳೆ ಅವರ ಹೆಸರನ್ನು ತಂಡಕ್ಕೆ ಸೇರಿಸದಿದ್ದರೆ ಸೆಲೆಕ್ಷನ್ ಶೀಟ್‌ಗೆ ತಾವು ಸಹಿ ಹಾಕುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದರು.

ಕುಂಬ್ಳೆ ಭಾರತದ ಅತಿ ದೊಡ್ಡ ಮ್ಯಾಚ್ ವಿನ್ನರ್ ಎಂದ ಗಂಗೂಲಿ

ಅನಿಲ್ ಕುಂಬ್ಳೆ ಅವರ ಕೊಡುಗೆಯನ್ನು ಸ್ಮರಿಸಿದ ಸೌರವ್ ಗಂಗೂಲಿ, ಭಾರತೀಯ ಕ್ರಿಕೆಟ್‌ನ ಕಳೆದ 20-25 ವರ್ಷಗಳ ಇತಿಹಾಸದಲ್ಲಿ ಕುಂಬ್ಳೆ ಅವರಿಗಿಂತ ದೊಡ್ಡ ಮ್ಯಾಚ್ ವಿನ್ನರ್ ಮತ್ತೊಬ್ಬರಿಲ್ಲ ಎಂದು ಶ್ಲಾಘಿಸಿದ್ದಾರೆ.

ಸಚಿನ್ ತೆಂಡುಲ್ಕರ್, ವೇಗವಾಗಿ 300 ವಿಕೆಟ್‌ಗಳ ಗಡಿ ದಾಟಿದ ರವಿಚಂದ್ರನ್ ಅಶ್ವಿನ್ ಹಾಗೂ ಈ ಕಾಲದ ಪ್ರಮುಖ ರನ್ ಸ್ಕೋರರ್ ವಿರಾಟ್ ಕೊಹ್ಲಿ ಅವರಂತಹ ದಿಗ್ಗಜರ ಬಗ್ಗೆ ನಾವು ಮಾತನಾಡುತ್ತೇವೆ. ಆದರೆ ಭಾರತಕ್ಕೆ ಕುಂಬ್ಳೆ ಅವರಿಗಿಂತ ಹೆಚ್ಚು ಪಂದ್ಯಗಳನ್ನು ಗೆಲ್ಲಿಸಿಕೊಟ್ಟ ಆಟಗಾರ ಮತ್ತೊಬ್ಬರಿಲ್ಲ ಎಂದು ಗಂಗೂಲಿ ಹೇಳಿದ್ದಾರೆ.

ಗಂಗೂಲಿ ನಿರ್ಧಾರ ಸರಿ ಎಂದು ಸಾಬೀತುಪಡಿಸಿದ ಕುಂಬ್ಳೆ

ಇತ್ತ, ಆಯ್ಕೆಗಾರರು ಕುಂಬ್ಳೆ ಅವರನ್ನು ತಂಡಕ್ಕೆ ಸೇರಿಸುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಒಂದು ವೇಳೆ ಆಸ್ಟ್ರೇಲಿಯಾ ಪ್ರವಾಸದಲ್ಲಿ ಕುಂಬ್ಳೆ ವಿಫಲರಾದರೆ, ಅವರಿಗಿಂತ ಮೊದಲು ತಂಡದಿಂದ ಹೊರಬೀಳುವ ವ್ಯಕ್ತಿ ಸೌರವ್ ಗಂಗೂಲಿ ಆಗಿರುತ್ತಾರೆ ಎಂಬ ಎಚ್ಚರಿಕೆಯನ್ನೂ ನೀಡಲಾಗಿತ್ತು.

ಆದರೆ ಪ್ರವಾಸದಲ್ಲಿ ಅನಿಲ್ ಕುಂಬ್ಳೆ ತಮ್ಮ ಸಾಮರ್ಥ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದರು. ಆಸ್ಟ್ರೇಲಿಯಾ ಪ್ರವಾಸದಲ್ಲಿ ಉತ್ತಮ ಪ್ರದರ್ಶನ ನೀಡಿದ ಅವರು, ಆ ವರ್ಷ ಟೆಸ್ಟ್ ಕ್ರಿಕೆಟ್‌ನಲ್ಲಿ 80ಕ್ಕೂ ಅಧಿಕ ವಿಕೆಟ್‌ಗಳನ್ನು ಕಬಳಿಸಿದ್ದರು. ಇದರೊಂದಿಗೆ ಒಂದೇ ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ಟೆಸ್ಟ್ ವಿಕೆಟ್ ಪಡೆದ ಸ್ಪಿನ್ನರ್ ಎಂಬ ವಿಶೇಷ ದಾಖಲೆಯನ್ನೂ ನಿರ್ಮಿಸಿದ್ದರು ಎಂದು ಗಂಗೂಲಿ ತಿಳಿಸಿದ್ದಾರೆ.

ಹೀಗಾಗಿ 2003ರ ಆಸ್ಟ್ರೇಲಿಯಾ ಪ್ರವಾಸಕ್ಕೂ ಮುನ್ನ ಸೌರವ್ ಗಂಗೂಲಿ ತೆಗೆದುಕೊಂಡಿದ್ದ ಕಠಿಣ ನಿರ್ಧಾರ, ಅನಿಲ್ ಕುಂಬ್ಳೆ ಅವರ ವೃತ್ತಿಜೀವನದ ಮಹತ್ವದ ತಿರುವಾಗಿ ಪರಿಣಮಿಸಿತು. ನಾಯಕನಾಗಿ ಆಟಗಾರನ ಸಾಮರ್ಥ್ಯದ ಮೇಲೆ ನಂಬಿಕೆ ಇಟ್ಟು ಆಯ್ಕೆಗಾರರ ವಿರುದ್ಧವೂ ನಿಂತಿದ್ದ ಗಂಗೂಲಿ ಅವರ ಈ ನಡೆ ಇದೀಗ ಮತ್ತೊಮ್ಮೆ ಚರ್ಚೆಗೆ ಬಂದಿದೆ.

ಸಹೋದರರ ಕೈಗೆ ರಾಖಿ ಕಟ್ಟಿದ ಅಕ್ಕ–ತಂಗಿ: ಮಲ್ಲಸಮುದ್ರದಲ್ಲಿ ರಕ್ಷಾ ಬಂಧನ ಸಂಭ್ರಮ

0
ಗದಗ: ರಕ್ಷಾ ಬಂಧನ ಹಬ್ಬದ ಅಂಗವಾಗಿ ತಾಲೂಕಿನ ಮಲ್ಲಸಮುದ್ರ ಗ್ರಾಮದ ಅಕ್ಕತಂಗಿಯರಾದ ಶ್ರೇಯಾ ಕಡ್ಲಿಮಟ್ಟಿ ಹಾಗೂ ಅಶ್ವಿನಿ ಹುಣಸಿಮರದ ಅವರು ಸಹೋದರರಾದ ಶ್ರೇಯಂ ಕಡ್ಲಿಮಟ್ಟಿ ಮತ್ತು ಅಭಿಷೇಕ ಕಟ್ಟಿಮನಿ ಅವರಿಗೆ ರಾಖಿ ಕಟ್ಟಿ ಹಬ್ಬ ಆಚರಿಸಿದರು.

ಕೆಲಸ ಬೇಕೇ? ನಮೂನೆ–6 ಸಲ್ಲಿಸಿ, ಜಾಬ್ ಕಾರ್ಡ್ ಪಡೆಯಿರಿ: ಚಂದ್ರಶೇಖರ ಕಂದಕೂರ

0

ವಿಜಯಸಾಕ್ಷಿ ಸುದ್ದಿ, ರೋಣ: ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗದ ಅಗತ್ಯವಿರುವ ಕೂಲಿ ಕಾರ್ಮಿಕರು ಹಾಗೂ ಕುಟುಂಬಗಳು ಸರ್ಕಾರದ ವಿಬಿಜಿ ರಾಮ್ ಜಿ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು. ಉದ್ಯೋಗಕ್ಕಾಗಿ ಸಂಬಂಧಪಟ್ಟ ಗ್ರಾಮ ಪಂಚಾಯಿತಿಯಲ್ಲಿ ನಮೂನೆ–6 ಸಲ್ಲಿಸಿ ಜಾಬ್ ಕಾರ್ಡ್ ಮಾಡಿಸಿಕೊಳ್ಳುವಂತೆ ರೋಣ ಹಾಗೂ ಗಜೇಂದ್ರಗಡ ತಾಲೂಕುಗಳ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ ಬಿ. ಕಂದಕೂರ ಕರೆ ನೀಡಿದರು.

ಗ್ರಾಮೀಣ ಜನರಿಗೆ ತಮ್ಮ ಊರಿನಲ್ಲಿಯೇ ಉದ್ಯೋಗಾವಕಾಶ ಕಲ್ಪಿಸುವ ಉದ್ದೇಶದಿಂದ ಯೋಜನೆ ಜಾರಿಗೊಳಿಸಲಾಗಿದೆ. ಯೋಜನೆಯಡಿ ಗ್ರಾಮೀಣ ಕುಟುಂಬಗಳ ವಯಸ್ಕ ಸದಸ್ಯರು ಉದ್ಯೋಗಕ್ಕೆ ಮುಂದೆ ಬಂದಲ್ಲಿ ನಿಯಮಾನುಸಾರ ಕೂಲಿ ಆಧಾರಿತ ಉದ್ಯೋಗ ಒದಗಿಸಲಾಗುತ್ತದೆ. ಇದರಿಂದ ಕುಟುಂಬಗಳಿಗೆ ಆದಾಯದ ಮೂಲ ಕಲ್ಪಿಸುವುದರ ಜತೆಗೆ ಗ್ರಾಮಗಳ ಅಭಿವೃದ್ಧಿಗೂ ಸಹಕಾರಿಯಾಗಲಿದೆ ಎಂದು ಅವರು ತಿಳಿಸಿದರು.

ಜಾಬ್ ಕಾರ್ಡ್ ಹೊಂದಿರುವ ಕುಟುಂಬದ ಸದಸ್ಯರು ಉದ್ಯೋಗ ಪಡೆಯಲು ಗ್ರಾಮ ಪಂಚಾಯಿತಿಯಲ್ಲಿ ನಮೂನೆ–6 ಮೂಲಕ ಉದ್ಯೋಗದ ಬೇಡಿಕೆ ಸಲ್ಲಿಸುವುದು ಕಡ್ಡಾಯವಾಗಿದೆ. ಇನ್ನೂ ಜಾಬ್ ಕಾರ್ಡ್ ಮಾಡಿಸಿಕೊಳ್ಳದ ಅರ್ಹ ಕುಟುಂಬಗಳು ಕೂಡಲೇ ಸಂಬಂಧಪಟ್ಟ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬೇಕು. ಜಾಬ್ ಕಾರ್ಡ್ ಪಡೆದ ಬಳಿಕ ಕೆಲಸದ ಅಗತ್ಯವಿದ್ದಾಗ ನಮೂನೆ–6 ಸಲ್ಲಿಸಿ ಉದ್ಯೋಗಕ್ಕಾಗಿ ಬೇಡಿಕೆ ಸಲ್ಲಿಸಬಹುದು ಎಂದು ಹೇಳಿದರು.

ರಸ್ತೆ, ಚರಂಡಿ, ಕೆರೆ ಅಭಿವೃದ್ಧಿ, ಜಲ ಸಂರಕ್ಷಣೆ, ಮಳೆ ನೀರು ಸಂಗ್ರಹಣೆ, ಕೃಷಿ ಹಾಗೂ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿಗೆ ಪೂರಕವಾದ ವಿವಿಧ ಕಾಮಗಾರಿಗಳನ್ನು ಯೋಜನೆಯಡಿ ಕೈಗೆತ್ತಿಕೊಳ್ಳಲಾಗುತ್ತದೆ. ಈ ಕಾಮಗಾರಿಗಳ ಮೂಲಕ ಸ್ಥಳೀಯರಿಗೆ ಉದ್ಯೋಗಾವಕಾಶ ಕಲ್ಪಿಸಲಾಗುತ್ತಿದ್ದು, ಅರ್ಹರು ಇದರ ಪ್ರಯೋಜನ ಪಡೆಯಬೇಕು ಎಂದು ಕಂದಕೂರ ಹೇಳಿದರು.

ಯೋಜನೆಯ ಸೌಲಭ್ಯ ಪಡೆಯಲು ಸಾರ್ವಜನಿಕರು ಯಾವುದೇ ಮಧ್ಯವರ್ತಿಗಳ ಮೊರೆ ಹೋಗದೆ ನೇರವಾಗಿ ಗ್ರಾಮ ಪಂಚಾಯಿತಿಯನ್ನು ಸಂಪರ್ಕಿಸಬೇಕು. ಜಾಬ್ ಕಾರ್ಡ್ ಪಡೆಯುವ ಹಾಗೂ ಉದ್ಯೋಗಕ್ಕಾಗಿ ಬೇಡಿಕೆ ಸಲ್ಲಿಸುವ ಪ್ರಕ್ರಿಯೆ ಕುರಿತು ಪಂಚಾಯಿತಿ ಸಿಬ್ಬಂದಿಯಿಂದ ಮಾಹಿತಿ ಪಡೆದುಕೊಳ್ಳಬಹುದು ಎಂದರು.

ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗದ ಅಗತ್ಯವಿರುವ ಕುಟುಂಬಗಳನ್ನು ಗುರುತಿಸಿ ಯೋಜನೆಯ ಕುರಿತು ಮಾಹಿತಿ ನೀಡಬೇಕು. ಹೆಚ್ಚಿನ ಸಂಖ್ಯೆಯ ಅರ್ಹರಿಗೆ ಉದ್ಯೋಗ ದೊರಕಿಸುವ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ಕೆಲಸ ಬೇಕಿರುವವರು ಅರ್ಜಿ ಸಲ್ಲಿಸಲು ಹಿಂಜರಿಯಬೇಡಿ. ಒಂದು ತಿಂಗಳ ಕಾಲ ನಡೆಯುವ ಜಾಬ್ ಕಾರ್ಡ್ ಮೇಳದ ಪ್ರಯೋಜನ ಪಡೆದು ಜಾಬ್ ಕಾರ್ಡ್ ಮಾಡಿಸಿಕೊಳ್ಳಿ. ನಂತರ ನಮೂನೆ–6 ಸಲ್ಲಿಸಿ ಉದ್ಯೋಗಕ್ಕಾಗಿ ಬೇಡಿಕೆ ನೀಡಿ ಸರ್ಕಾರದ ಯೋಜನೆಯ ಸದುಪಯೋಗ ಪಡೆಯಿರಿ.

— ಚಂದ್ರಶೇಖರ ಬಿ. ಕಂದಕೂರ, ಕಾರ್ಯನಿರ್ವಾಹಕ ಅಧಿಕಾರಿ, ರೋಣ ಹಾಗೂ ಗಜೇಂದ್ರಗಡ ತಾಲೂಕು