Home Blog

ನಮ್ಮೂರ ಜಾತ್ರೆಗೆ ಬನ್ನಿ… ನಾಗಾವಿ ತಾಂಡಾದಲ್ಲಿ ಭಕ್ತಿಯ ಸಂಭ್ರಮ

0

ವಿಜಯಸಾಕ್ಷಿ ಸುದ್ದಿ, ಗದಗ: ತಾಲೂಕಿನ ನಾಗಾವಿ-ತಾಂಡಾದಲ್ಲಿ ಶ್ರೀ ನಾಗದೇವತೆಯ 26ನೇ ವರ್ಷದ ಜಾತ್ರಾಮಹೋತ್ಸವವು ಆ.29ರಂದು ಭಕ್ತಿ, ಸಂಭ್ರಮ ಹಾಗೂ ಸಾಂಸ್ಕೃತಿಕ ವೈಭವದೊಂದಿಗೆ ಜರುಗಲಿದೆ.

ಶ್ರೀ ಛತ್ರಪ್ಪ ವಾಗಪ್ಪ ರಾಠೋಡ ಅವರ ತೋಟದಲ್ಲಿರುವ ಶ್ರೀ ನಾಗದೇವತೆಯ ಸನ್ನಿಧಿಯಲ್ಲಿ ಜಾತ್ರಾಮಹೋತ್ಸವವನ್ನು ಆಯೋಜಿಸಲಾಗಿದೆ. ಜಾತ್ರೆಯ ಅಂಗವಾಗಿ ರುದ್ರಾಭಿಷೇಕ, 108 ಸುಮಂಗಲೆಯರಿಗೆ ಉಡಿ ತುಂಬುವ ಕಾರ್ಯಕ್ರಮ, ಕುಂಭಮೇಳ, ಧರ್ಮ ಚಿಂತನಗೋಷ್ಠಿ, ಸನ್ಮಾನ ಸಮಾರಂಭ ಹಾಗೂ ಅನ್ನಸಂತರ್ಪಣೆ ನಡೆಯಲಿದೆ.

ಸಂಜೆ ಭಕ್ತಿಭಾವದಿಂದ ರಥೋತ್ಸವ ಜರುಗಲಿದ್ದು, ಡೊಳ್ಳು, ಭಜನಾ ಮಂಡಳಿಗಳು, ಜಾಂಜ್ ಮೇಳ ಸೇರಿದಂತೆ ವಿವಿಧ ಕಲಾ ಪ್ರದರ್ಶನಗಳು ಜಾತ್ರೆಯ ಮೆರುಗು ಹೆಚ್ಚಿಸಲಿವೆ. ರಾತ್ರಿ ಡ್ಯಾನ್ಸ್ ಸ್ಪರ್ಧೆ ಹಾಗೂ ನೃತ್ಯ ಕಾರ್ಯಕ್ರಮವೂ ನಡೆಯಲಿದೆ.

ಇದಕ್ಕೂ ಮುನ್ನ ಆ.28ರಂದು ಸಂಜೆ ವಿವಿಧ ಬಂಜಾರ ಭಜನಾ ತಂಡಗಳು ಹಾಗೂ ಗಾಯಕರಿಂದ ಭಜನಾ ಜಾಗರಣೆ ಕಾರ್ಯಕ್ರಮ ಏರ್ಪಡಿಸಲಾಗಿದೆ.

ಆ.29ರಂದು ನಡೆಯುವ ಧರ್ಮ ಚಿಂತನಗೋಷ್ಠಿಯಲ್ಲಿ ಮುಂಡರಗಿಯ ಜಗದ್ಗುರು ಅನ್ನದಾನೀಶ್ವರ ಮಹಾಶಿವಯೋಗಿಗಳು, ಹರ್ಲಾಪೂರ-ಹಳ್ಳಿಗುಡಿಯ ಡಾ. ಅಭಿನವ ಕೊಟ್ಟೂರೇಶ್ವರ ಮಹಾಸ್ವಾಮಿಗಳು, ಕೇಸರಟ್ಟಿಯ ಬಾಲತಪಸ್ವಿ ಸೋಮಲಿಂಗ ಸ್ವಾಮಿಗಳು ಸೇರಿದಂತೆ ವಿವಿಧ ಧಾರ್ಮಿಕ ಮುಖಂಡರು ಭಾಗವಹಿಸಲಿದ್ದಾರೆ.

ಗ್ರಾಮೀಣ ಸಂಸ್ಕೃತಿ, ಪರಂಪರೆ, ಭಕ್ತಿ ಹಾಗೂ ಸಹೋದರತ್ವವನ್ನು ಬೆಸೆಯುವ ಈ ಜಾತ್ರಾಮಹೋತ್ಸವದಲ್ಲಿ ನಾಡಿನ ಭಕ್ತರು, ಬಂಧು-ಬಳಗ ಹಾಗೂ ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಶ್ರೀ ನಾಗದೇವತೆ ವಿವಿಧೋದ್ದೇಶಗಳ ಸೇವಾ ಟ್ರಸ್ಟ್ ಹಾಗೂ ಜಾತ್ರಾ ಸಮಿತಿ ಮನವಿ ಮಾಡಿದೆ.

ಮಾದರಿ ಉದ್ಯಾನವನ ನಿರ್ಮಾಣ ಹೆಮ್ಮೆಯ ಸಂಗತಿ: ಕೆ.ಎಚ್. ಪಾಟೀಲ

0

ವಿಜಯಸಾಕ್ಷಿ ಸುದ್ದಿ, ಗದಗ: ಗದಗ ನಗರದ ನಂದೀಶ್ವರ ನಗರದಲ್ಲಿ ಸುಮಾರು ಒಂದು ಎಕರೆ ಪ್ರದೇಶದಲ್ಲಿ ಮಾದರಿ ಉದ್ಯಾನವನ ನಿರ್ಮಾಣವಾಗುತ್ತಿರುವುದು ಹೆಮ್ಮೆಯ ಸಂಗತಿಯಾಗಿದ್ದು, ನಗರದ ಶೋಭೆ ಹೆಚ್ಚಿಸುವ ಜತೆಗೆ ಬಡಾವಣೆಯ ನಾಗರಿಕರಿಗೆ ಉತ್ತಮ ವಾತಾವರಣ ಕಲ್ಪಿಸಲಿದೆ ಎಂದು ಯುವ ಮುಖಂಡ ಕೆ.ಎಚ್. ಪಾಟೀಲ ಹೇಳಿದರು.

ಕಳಸಾಪೂರ ರಸ್ತೆಯ ನಂದೀಶ್ವರ ನಗರದ ಇಂಡೋರ್ ಸ್ಟೇಡಿಯಂ ಬಡಾವಣೆ ನಾಗರಿಕರ ವಿವಿಧೋದ್ದೇಶಗಳ ಸಹಕಾರಿ ಸಂಘದ ಪ್ರಥಮ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಿದ್ದ ಪಂಚವಟಿ ನಾಗದೇವತಾ ರುದ್ರಾಭಿಷೇಕ, ಪಂಚವಟಿ ನಾಗರಕಟ್ಟೆ ಉದ್ಯಾನವನದ ಕಾಂಪೌಂಡ್ ಹಾಗೂ ಹೈಮಾಸ್ಟ್ ಉದ್ಘಾಟನೆ, ವನಮಹೋತ್ಸವ ಮತ್ತು ಅನ್ನಸಂತರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬಡಾವಣೆಯ ಸರ್ವತೋಮುಖ ಅಭಿವೃದ್ಧಿಗೆ ಅಗತ್ಯವಿರುವ ಕಾಮಗಾರಿಗಳನ್ನು ಜನಪ್ರತಿನಿಧಿಗಳ ಗಮನಕ್ಕೆ ತಂದು ಪೂರ್ಣಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರ್‌ಸಾಬ ಬಬರ್ಚಿ, ನಗರಸಭೆ ಸದಸ್ಯೆ ವಿದ್ಯಾವತಿ ಗಡಗಿ, ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ಬಿ.ಬಿ. ಅಸೂಟಿ, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಅಶೋಕ ಮಂದಾಲಿ, ಮಾಜಿ ನಗರಸಭೆ ಸದಸ್ಯ ಅನಿಲ ಗರಗ ಸೇರಿದಂತೆ ಪ್ರಮುಖರು ಭಾಗವಹಿಸಿದ್ದರು.

ಸಂಘದ ಅಧ್ಯಕ್ಷ ವಿಶ್ವನಾಥರೆಡ್ಡಿ ಗದ್ದಿಕೇರಿ ಅಧ್ಯಕ್ಷತೆ ವಹಿಸಿದ್ದರು. ಗೌರವಾಧ್ಯಕ್ಷ ಜಿ.ಎಸ್. ಹಿರೇಮಠ ಉಪಸ್ಥಿತರಿದ್ದರು.

ಈ ವೇಳೆ ಪಂಚವಟಿ ನಾಗದೇವತಾ ರುದ್ರಾಭಿಷೇಕ ನೆರವೇರಿಸಿ, ಉದ್ಯಾನವನದ ಕಾಂಪೌಂಡ್ ಹಾಗೂ ಹೈಮಾಸ್ಟ್ ಉದ್ಘಾಟಿಸಲಾಯಿತು. ವನಮಹೋತ್ಸವದ ಅಂಗವಾಗಿ ಸಸಿ ನೆಡುವ ಮೂಲಕ ಪರಿಸರ ಸಂರಕ್ಷಣೆಯ ಸಂದೇಶ ಸಾರಲಾಯಿತು. ಬಳಿಕ ಅನ್ನಸಂತರ್ಪಣೆ ನಡೆಯಿತು.

ನಂದೀಶ್ವರ ನಗರದಲ್ಲಿ ನಿರ್ಮಾಣವಾಗುತ್ತಿರುವ ಮಾದರಿ ಉದ್ಯಾನವನ ಬಡಾವಣೆಯ ಅಭಿವೃದ್ಧಿಗೆ ಹೊಸ ಮೆರುಗು ನೀಡಲಿದೆ. ಸಾರ್ವಜನಿಕರ ಸಹಭಾಗಿತ್ವದಿಂದ ಅಭಿವೃದ್ಧಿ ಕಾರ್ಯಗಳಿಗೆ ಮತ್ತಷ್ಟು ವೇಗ ಸಿಗಲಿದೆ.

— ಕೆ.ಎಚ್. ಪಾಟೀಲ, ಯುವ ಮುಖಂಡ

ಈದ್ ಮಿಲಾದ್ ಅಂಗವಾಗಿ ರಕ್ತದಾನ ಶಿಬಿರ

0

ವಿಜಯಸಾಕ್ಷಿ ಸುದ್ದಿ, ಗದಗ: ಈದ್ ಮಿಲಾದ್-ಉನ್-ನಬಿ ಅಂಗವಾಗಿ ನಗರದ ಐಎಂಎ ರಕ್ತನಿಧಿಯ ಸಹಯೋಗದಲ್ಲಿ ಈದ್ ಮಿಲಾದ್-ಉನ್-ನಬಿ ಸಮಿತಿಯಿಂದ ರಕ್ತದಾನ ಹಾಗೂ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು.

ಪ್ರವಾದಿ ಮುಹಮ್ಮದ್ (ಸ.ಅ.ಸ.) ಅವರ ಜನ್ಮದಿನಾಚರಣೆಯ ಅಂಗವಾಗಿ ನಡೆದ ಶಿಬಿರದಲ್ಲಿ ಸಾರ್ವಜನಿಕರಿಗೆ ಉಚಿತ ವೈದ್ಯಕೀಯ ತಪಾಸಣೆ ಹಾಗೂ ರಕ್ತದಲ್ಲಿನ ಸಕ್ಕರೆ ಪ್ರಮಾಣ ಪರೀಕ್ಷೆ ನಡೆಸಲಾಯಿತು.

ಸಮುದಾಯದಲ್ಲಿ ಹೆಚ್ಚುತ್ತಿರುವ ಮಧುಮೇಹ ಸಮಸ್ಯೆಯ ಹಿನ್ನೆಲೆಯಲ್ಲಿ ರೋಗನಿರ್ಣಯವಾಗದ ಪ್ರಕರಣಗಳನ್ನು ಆರಂಭಿಕ ಹಂತದಲ್ಲಿಯೇ ಗುರುತಿಸುವ ಉದ್ದೇಶದಿಂದ ಸಕ್ಕರೆ ಪರೀಕ್ಷೆ ನಡೆಸಲಾಯಿತು.

ಶಿಬಿರವನ್ನು ಡಾ. ಪ್ಯಾರಾಲಿ ನೂರಾನಿ, ಐಎಂಎ ರಕ್ತನಿಧಿಯ ಅಧ್ಯಕ್ಷ ಡಾ. ಅಜಯ್ ರಾಜು, ಕಾರ್ಯದರ್ಶಿ ಡಾ. ಅರವಿಂದ್ ಕೆ. ಹಾಗೂ ಡಾ. ಪವಾಡಶೆಟ್ಟರ್ ಸಂಯೋಜಿಸಿದರು.

ಕಾರ್ಯಕ್ರಮ ಯಶಸ್ವಿಗೊಳಿಸಲು ಶ್ರಮಿಸಿದ ವೈದ್ಯರು, ಸ್ವಯಂಸೇವಕರು ಹಾಗೂ ಸಿಬ್ಬಂದಿಗೆ ಈದ್ ಮಿಲಾದ್-ಉನ್-ನಬಿ ಸಮಿತಿ ಮತ್ತು ಸಂಘಟಕರು ಕೃತಜ್ಞತೆ ಸಲ್ಲಿಸಿದರು.

ಯಜ್ಞೋಪವೀತ ಧಾರಣೆಯಿಂದ ಶಾರೀರಿಕ–ಮಾನಸಿಕ ಆರೋಗ್ಯಕ್ಕೆ ಬಲ: ಪ್ರಜ್ವಲ್ ಜೋಶಿ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಯಜ್ಞೋಪವೀತ ಧಾರಣ ಸಂಸ್ಕಾರವು ಪರಮ ಪವಿತ್ರವಾಗಿದ್ದು, ಧಾರ್ಮಿಕ ಮಹತ್ವದ ಜತೆಗೆ ವೈಜ್ಞಾನಿಕ ಹಿನ್ನೆಲೆಯನ್ನೂ ಹೊಂದಿದೆ. ಇದು ವ್ಯಕ್ತಿಯ ಶಾರೀರಿಕ ಹಾಗೂ ಮಾನಸಿಕ ಆರೋಗ್ಯ ದೃಢವಾಗಲು ಸಹಕಾರಿಯಾಗಿದೆ ಎಂದು ಯುವ ಧಾರ್ಮಿಕ ಚಿಂತಕ ಪ್ರಜ್ವಲ್ ಜೋಶಿ ಹೇಳಿದರು.

ಪಟ್ಟಣದ ಶಂಕರಭಾರತಿಮಠದಲ್ಲಿ ಮಂಗಳವಾರ ಹಸ್ತಾಯುಕ್ತ ಷಷ್ಠಿ ತಿಥಿಯಂದು ಬ್ರಾಹ್ಮಣ ಸಮಾಜದ ವತಿಯಿಂದ ಆಯೋಜಿಸಿದ್ದ ಯಜ್ಞೋಪವೀತ ಧಾರಣಾ ಕಾರ್ಯಕ್ರಮದ ನೇತೃತ್ವ ವಹಿಸಿ ಅವರು ಮಾತನಾಡಿದರು.

ಹಿಂದೂ ಧರ್ಮದ 16 ಪ್ರಮುಖ ಸಂಸ್ಕಾರಗಳಲ್ಲಿ ಉಪನಯನ ಅಥವಾ ಯಜ್ಞೋಪವೀತ ಧಾರಣೆಯೂ ಒಂದಾಗಿದೆ. ವೇದಾಧ್ಯಯನ, ಗಾಯತ್ರಿ ಮಂತ್ರ ಜಪ ಹಾಗೂ ಧಾರ್ಮಿಕ ಅನುಷ್ಠಾನಗಳಿಗೆ ದೀಕ್ಷೆ ನೀಡುವ ಸಂಕೇತವಾಗಿ ಯಜ್ಞೋಪವೀತವನ್ನು ಪರಿಗಣಿಸಲಾಗುತ್ತದೆ ಎಂದು ತಿಳಿಸಿದರು.

ಬ್ರಹ್ಮವೃಂದದ ಅಧ್ಯಕ್ಷ ಗೋಪಾಲ ಪಡ್ನಿಸ್ ಮಾತನಾಡಿ, ವೇದ, ಪುರಾಣ ಹಾಗೂ ಪೂಜೆ-ಪುನಸ್ಕಾರಗಳ ಹಿಂದೆ ಧಾರ್ಮಿಕತೆಯ ಜತೆಗೆ ವೈಜ್ಞಾನಿಕ ಅಂಶಗಳೂ ಅಡಗಿವೆ. ಬ್ರಾಹ್ಮಣರು ನಿತ್ಯ ಗಾಯತ್ರಿ ಮಂತ್ರ ಜಪಿಸುವ ರೂಢಿ ಬೆಳೆಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ನೂರಾರು ವಿಪ್ರಬಾಂಧವರು ಋಷಿ ಹೋಮ ಹಾಗೂ ಉಪಾಕರ್ಮ ಹೋಮ ನೆರವೇರಿಸಿದರು. ಬಳಿಕ ‘ಯಜ್ಞೋಪವೀತಂ ಪರಮಂ ಪವಿತ್ರಂ’ ಮಂತ್ರ ಪಠಣದೊಂದಿಗೆ ಹೊಸ ಯಜ್ಞೋಪವೀತ ಧರಿಸಿ, ಹಳೆಯ ಯಜ್ಞೋಪವೀತವನ್ನು ಶಾಸ್ತ್ರೋಕ್ತವಾಗಿ ವಿಸರ್ಜಿಸಿದರು.

ಕಾರ್ಯದರ್ಶಿ ಅರವಿಂದ ದೇಶಪಾಂಡೆ, ತಾಲೂಕು ಬ್ರಾಹ್ಮಣ ಸಮಾಜದ ಅಧ್ಯಕ್ಷ ಕೃಷ್ಣ ಕುಲಕರ್ಣಿ ಸೇರಿದಂತೆ ಸಮಾಜದ ಪ್ರಮುಖರು ಹಾಗೂ ವಿಪ್ರಬಾಂಧವರು ಪಾಲ್ಗೊಂಡಿದ್ದರು.

ಯಜ್ಞೋಪವೀತ ಧಾರಣೆಯು ಕೇವಲ ಧಾರ್ಮಿಕ ಆಚರಣೆಯಲ್ಲ. ಜ್ಞಾನ, ಶಿಸ್ತು ಮತ್ತು ಆಧ್ಯಾತ್ಮಿಕ ಸಾಧನೆಯತ್ತ ವ್ಯಕ್ತಿಯನ್ನು ಮುನ್ನಡೆಸುವ ಮಹತ್ವದ ಸಂಸ್ಕಾರವಾಗಿದೆ.

— ಪ್ರಜ್ವಲ್ ಜೋಶಿ, ಯುವ ಧಾರ್ಮಿಕ ಚಿಂತಕ

ಲಕ್ಕುಂಡಿಯಲ್ಲಿ ಸಂಭ್ರಮದ ಈದ್ ಮಿಲಾದ್ ಆಚರಣೆ

0

ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ: ಪ್ರವಾದಿ ಮೊಹಮ್ಮದ್ ಪೈಗಂಬರ್ ಜಯಂತಿಯ ಅಂಗವಾಗಿ ಲಕ್ಕುಂಡಿಯಲ್ಲಿ ಮುಸ್ಲಿಂ ಬಾಂಧವರು ಸಂಭ್ರಮದಿಂದ ಈದ್ ಮಿಲಾದ್ ಆಚರಿಸಿದರು.

ಅಂಜುಮನ್-ಎ-ಇಸ್ಲಾಂ ಕಮಿಟಿ ಹಾಗೂ ಟಿಪ್ಪು ಸುಲ್ತಾನ್ ಯೂತ್ ಅಸೋಸಿಯೇಷನ್ ಸಹಯೋಗದಲ್ಲಿ ಪಾಪನಾಶಿ ರಸ್ತೆಯ ಮಾಬು ಸುಬಾನಿ ದರ್ಗಾದಿಂದ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.

ಮೆರವಣಿಗೆಯಲ್ಲಿ ಹಾಫೀಜ್ ಸಲೀಂ ಅಹ್ಮದ್ ಮಂಗಳೂರು ಅವರ ನೇತೃತ್ವದಲ್ಲಿ ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರ ಸಂದೇಶ ಸಾರುವ ಹಾಡುಗಳನ್ನು ಹಾಡಿ ಜಯಘೋಷ ಮೊಳಗಿಸಲಾಯಿತು.

ಮೆರವಣಿಗೆ ಹಿರೇಮಸೂತಿಗೆ ತಲುಪಿದ ಬಳಿಕ ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರ ಜೀವನ ಹಾಗೂ ಸಂದೇಶಗಳ ಕುರಿತು ಉಪನ್ಯಾಸ ಕಾರ್ಯಕ್ರಮ ನಡೆಯಿತು. ಬಳಿಕ ಸಾರ್ವಜನಿಕರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.

ಅಂಜುಮನ್-ಎ-ಇಸ್ಲಾಂ ಕಮಿಟಿ ಅಧ್ಯಕ್ಷ ನಜೀರ ಅಹ್ಮದ್ ಕಿರೀಟಗೇರಿ, ಉಪಾಧ್ಯಕ್ಷ ದಾದಸಾಬ ಕೊರ್ಲಹಳ್ಳಿ, ಟಿಪ್ಪು ಸುಲ್ತಾನ್ ಯೂತ್ ಅಸೋಸಿಯೇಷನ್ ಅಧ್ಯಕ್ಷ ಹೈದರಾಲಿ ನದಾಫ್, ಉಪಾಧ್ಯಕ್ಷ ರಿಯಾಜ್ ಮಸೂತಿ ಸೇರಿದಂತೆ ಮುಸ್ಲಿಂ ಸಮಾಜದ ಬಾಂಧವರು ಪಾಲ್ಗೊಂಡಿದ್ದರು.

ವಿದ್ಯಾರ್ಥಿ ಸಂಘಟನೆ ನಿಷೇಧ ಚಿಂತನೆ ಕೈಬಿಡಿ: ಎಂ. ಶಾಂತಿ

0

ವಿಜಯಸಾಕ್ಷಿ ಸುದ್ದಿ, ಗದಗ: ಪಿಯು ಹಾಗೂ ಪದವಿ ಕಾಲೇಜುಗಳಲ್ಲಿ ವಿದ್ಯಾರ್ಥಿ ಸಂಘಗಳ ಚುನಾವಣೆ ನಡೆಯಲಿರುವ ಸಂದರ್ಭದಲ್ಲಿ ವಿದ್ಯಾರ್ಥಿ ಸಂಘಟನೆಗಳನ್ನು ಕ್ಯಾಂಪಸ್‌ನಿಂದ ದೂರವಿಡಲು ರಾಜ್ಯ ಸರ್ಕಾರ ಮುಂದಾಗಿರುವ ಕ್ರಮವನ್ನು ಎಐಡಿಎಸ್‌ಒ ಗದಗ ಜಿಲ್ಲಾ ಘಟಕ ತೀವ್ರವಾಗಿ ಖಂಡಿಸಿದೆ.

ಶಿಕ್ಷಣ ವ್ಯವಸ್ಥೆ ಹಲವು ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿದ್ದು, ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಧ್ವನಿಯಾಗುವ ಮತ್ತು ಅವುಗಳ ಪರಿಹಾರಕ್ಕಾಗಿ ಸಂಘಟಿತ ಹೋರಾಟ ನಡೆಸುವಲ್ಲಿ ವಿದ್ಯಾರ್ಥಿ ಸಂಘಟನೆಗಳ ಪಾತ್ರ ಮಹತ್ವದ್ದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ರಾಜಕೀಯ ಪಕ್ಷಗಳಿಗೆ ಕಡಿವಾಣ ಹಾಕುವ ನೆಪದಲ್ಲಿ ವಿದ್ಯಾರ್ಥಿಗಳನ್ನು ರಾಜಕೀಯ ಮತ್ತು ಸಾಮಾಜಿಕ ಚಟುವಟಿಕೆಗಳಿಂದ ದೂರವಿಡುವುದು ಸರಿಯಲ್ಲ. ವಿದ್ಯಾರ್ಥಿ ಸಂಘಟನೆಗಳನ್ನೇ ನಿಷೇಧಿಸಿದರೆ ವಿದ್ಯಾರ್ಥಿಗಳ ಸಂಘಟಿತ ಹೋರಾಟಕ್ಕೆ ಹಿನ್ನಡೆಯಾಗಲಿದೆ ಎಂದು ಎಐಡಿಎಸ್‌ಒ ಆತಂಕ ವ್ಯಕ್ತಪಡಿಸಿದೆ.

ವಿದ್ಯಾರ್ಥಿ ಸಂಘಗಳ ಚುನಾವಣೆ ನಡೆಸುವ ಸರ್ಕಾರದ ನಿರ್ಧಾರವನ್ನು ಎಐಡಿಎಸ್‌ಒ ಬೆಂಬಲಿಸಿತ್ತು. ಆದರೆ, ಈಗ ವಿದ್ಯಾರ್ಥಿ ಸಂಘಟನೆಗಳನ್ನು ಕಾಲೇಜು ಕ್ಯಾಂಪಸ್‌ಗೆ ಪ್ರವೇಶಿಸದಂತೆ ತಡೆಯುವ ಚಿಂತನೆ ವಿದ್ಯಾರ್ಥಿ ವಿರೋಧಿ ಕ್ರಮವಾಗಿದೆ ಎಂದು ಸಂಘಟನೆ ಆರೋಪಿಸಿದೆ.

ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಹೋರಾಟ ನಡೆಸುವ ಸಂಘಟನೆಗಳನ್ನು ನಿಷೇಧಿಸುವುದು ಪ್ರಜಾಸತ್ತಾತ್ಮಕ ಹಕ್ಕುಗಳ ಮೇಲಿನ ದಾಳಿಯಾಗಿದೆ. ರಾಜ್ಯ ಸರ್ಕಾರ ಕೂಡಲೇ ಈ ನಿಲುವನ್ನು ಹಿಂಪಡೆದು ವಿದ್ಯಾರ್ಥಿ ಸಂಘಟನೆಗಳಿಗೆ ಮುಕ್ತವಾಗಿ ಕಾರ್ಯನಿರ್ವಹಿಸಲು ಅವಕಾಶ ನೀಡಬೇಕು.

— ಎಂ. ಶಾಂತಿ, ಜಿಲ್ಲಾ ಸಂಚಾಲಕಿ, ಎಐಡಿಎಸ್‌ಒ ಗದಗ

ಕಾರ್ಮಿಕರ ಹಕ್ಕುಗಳ ಅರಿವಿಗೆ ರೋಜ್‌ಗಾರ್ ದಿನಾಚರಣೆ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಗ್ರಾಮೀಣ ಪ್ರದೇಶದ ಕೂಲಿಕಾರರಿಗೆ ಉದ್ಯೋಗದ ಜೊತೆಗೆ ಅವರ ಹಕ್ಕುಗಳು, ಕೂಲಿ ಪಾವತಿ, ಕೆಲಸದ ಸ್ಥಳದಲ್ಲಿನ ಸೌಲಭ್ಯಗಳು ಹಾಗೂ ಸರ್ಕಾರದ ಯೋಜನೆಗಳ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಬಟ್ಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಂದ್ರಳ್ಳಿ ತಾಂಡಾದಲ್ಲಿ ಗುರುವಾರ ರೋಜ್‌ಗಾರ್ ದಿನಾಚರಣೆ ನಡೆಯಿತು.

ವಿಬಿಜಿ ರಾಮ್‌ಜಿ ಯೋಜನೆಯಡಿ ನಡೆಯುತ್ತಿರುವ ಕೆರೆ ಹೂಳೆತ್ತುವ ಸಮುದಾಯ ಕಾಮಗಾರಿ ಸ್ಥಳದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾಮಗಾರಿ ಸ್ಥಳಕ್ಕೆ ಸಹಾಯಕ ನಿರ್ದೇಶಕ (ಗ್ರಾಮೀಣ ಉದ್ಯೋಗ) ಧರ್ಮರ ಕೃಷ್ಣಪ್ಪ ಭೇಟಿ ನೀಡಿ, ಕೂಲಿಕಾರರೊಂದಿಗೆ ಸಂವಾದ ನಡೆಸಿದರು.

ಕಾರ್ಮಿಕರು ನಿಗದಿಪಡಿಸಿದ ಅಳತೆಗೆ ಅನುಗುಣವಾಗಿ ಗುಣಮಟ್ಟದ ಕಾಮಗಾರಿ ನಿರ್ವಹಿಸಬೇಕು. ಪುರುಷ ಮತ್ತು ಮಹಿಳಾ ಕಾರ್ಮಿಕರಿಗೆ ಸಮಾನ ಕೂಲಿ ನೀಡಲಾಗುತ್ತಿದ್ದು, ಕೆಲಸಕ್ಕೆ ಹಾಜರಾಗುವ ಪ್ರತಿಯೊಬ್ಬರೂ ಕಡ್ಡಾಯವಾಗಿ ಎರಡು ಬಾರಿ ಹಾಜರಾತಿ ದಾಖಲಿಸಬೇಕು ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಮಾಹಿತಿ, ಶಿಕ್ಷಣ ಮತ್ತು ಸಂವಹನ (ಐಇಸಿ) ಚಟುವಟಿಕೆಯಡಿ ಕಾರ್ಮಿಕರಿಗೆ ಯೋಜನೆಯ ಉದ್ದೇಶ, ಉದ್ಯೋಗದ ದಿನಗಳು, ಕೂಲಿ ದರ ಹಾಗೂ ಕಾರ್ಮಿಕರಿಗೆ ದೊರೆಯುವ ವಿವಿಧ ಸೌಲಭ್ಯಗಳ ಕುರಿತು ವಿವರವಾಗಿ ಮಾಹಿತಿ ನೀಡಲಾಯಿತು.

ದಿನಗೂಲಿ ಮೊತ್ತವನ್ನು ₹370ರಿಂದ ₹382ಕ್ಕೆ ಹೆಚ್ಚಿಸಿರುವುದು ಹಾಗೂ ವಾರ್ಷಿಕ ಮಾನವ ದಿನಗಳ ಮಿತಿಯನ್ನು 100ರಿಂದ 125 ದಿನಗಳಿಗೆ ಹೆಚ್ಚಿಸಿರುವುದನ್ನು ತಿಳಿಸಲಾಯಿತು. ಒಂದು ಗ್ರಾಮೀಣ ರೋಜ್‌ಗಾರ್ ಗ್ಯಾರಂಟಿ ಕಾರ್ಡ್ ಮೂಲಕ ವಾರ್ಷಿಕ ₹47,750ರವರೆಗೆ ಕೂಲಿ ಪಡೆಯಲು ಅವಕಾಶವಿದ್ದು, ಕಾರ್ಮಿಕರು ಯೋಜನೆಯ ಸದುಪಯೋಗ ಪಡೆದುಕೊಳ್ಳುವಂತೆ ಕರೆ ನೀಡಲಾಯಿತು.

ನೂತನ ಯೋಜನೆಯಡಿ ಗ್ರಾಮೀಣ ಪ್ರದೇಶಗಳಲ್ಲಿ ಒಟ್ಟು 318 ಬಗೆಯ ಕಾಮಗಾರಿಗಳಿಗೆ ಅವಕಾಶವಿದ್ದು, ಗ್ರಾಮಗಳ ಅಭಿವೃದ್ಧಿಯ ಜತೆಗೆ ಸ್ಥಳೀಯರಿಗೆ ಉದ್ಯೋಗ ಕಲ್ಪಿಸುವುದು ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಕಾಮಗಾರಿ ನಡೆಯುವ ಸ್ಥಳಗಳಲ್ಲಿ ಕಾರ್ಮಿಕರಿಗೆ ಕುಡಿಯುವ ನೀರು, ನೆರಳು, ಪ್ರಥಮ ಚಿಕಿತ್ಸಾ ಪೆಟ್ಟಿಗೆ ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಕಡ್ಡಾಯವಾಗಿ ಕಲ್ಪಿಸಬೇಕು. ಈ ಸೌಲಭ್ಯಗಳು ಸಮರ್ಪಕವಾಗಿ ದೊರೆಯುತ್ತಿರುವ ಕುರಿತು ಕಾಯಕ ಬಂಧುಗಳು ನಿಗಾ ವಹಿಸಬೇಕು ಎಂದು ಅಧಿಕಾರಿಗಳು ಸೂಚಿಸಿದರು.

ಕೆರೆ ಹೂಳೆತ್ತುವಂತಹ ಸಮುದಾಯ ಕಾಮಗಾರಿಗಳಿಂದ ಗ್ರಾಮೀಣ ಜನರಿಗೆ ಸ್ಥಳೀಯವಾಗಿಯೇ ಉದ್ಯೋಗ ದೊರೆಯುವುದರ ಜತೆಗೆ ಜಲಸಂರಕ್ಷಣೆಗೂ ಉತ್ತೇಜನ ದೊರೆಯಲಿದೆ. ಮಳೆ ನೀರು ಸಂಗ್ರಹ ಸಾಮರ್ಥ್ಯ ಹೆಚ್ಚಿಸುವ ಮೂಲಕ ಕೃಷಿ ಹಾಗೂ ಗ್ರಾಮೀಣ ಬದುಕಿಗೆ ಅನುಕೂಲವಾಗುವ ಹಿನ್ನೆಲೆಯಲ್ಲಿ ಇಂತಹ ಕಾಮಗಾರಿಗಳಿಗೆ ಹೆಚ್ಚಿನ ಮಹತ್ವವಿದೆ ಎಂದು ತಿಳಿಸಲಾಯಿತು.

ಕಾರ್ಯಕ್ರಮದಲ್ಲಿ ಪಿಡಿಒ ಹನುಮಂತಪ್ಪ ಲಮಾಣಿ, ತಾಂತ್ರಿಕ ಸಂಯೋಜಕ ಹರೀಶ್ ಸೋಬರದ, ಟಿಐಇಸಿ ಮಂಜುನಾಥ ಸ್ವಾಮಿ ಹಂಜಿಗಿಮಠ, ಟಿಎಇ ಶ್ರೀನಿವಾಸ್ ಕಲಾಲ್, ಕಾರ್ಯದರ್ಶಿ ಸುರೇಶ್ ಹಡಪದ, ಎಸ್‌ಡಿಎ ಯಲ್ಲಪ್ಪ ನಡುವಿನಕೇರಿ, ಬಿಎಫ್‌ಟಿ ಶಿಲ್ಪಾ ಲಮಾಣಿ, ಜಿಕೆಎಂ ಗಂಗಮ್ಮ ಹರಿಜನ, ಟಿಆರ್‌ಎಂ ಭೀಮಪ್ಪ ರಾಥೋಡ್, ಕಾಯಕ ಬಂಧುಗಳು ಹಾಗೂ ಗ್ರಾಪಂ ಸಿಬ್ಬಂದಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸುಮಾರು 325 ಕೂಲಿಕಾರರು ಭಾಗವಹಿಸಿದ್ದರು.

ಕಾರ್ಮಿಕರು ನಿಗದಿಪಡಿಸಿದ ಅಳತೆಗೆ ಅನುಗುಣವಾಗಿ ಗುಣಮಟ್ಟದ ಕಾಮಗಾರಿ ನಿರ್ವಹಿಸಬೇಕು. ಪುರುಷ ಮತ್ತು ಮಹಿಳಾ ಕಾರ್ಮಿಕರಿಗೆ ಸಮಾನ ಕೂಲಿ ನೀಡಲಾಗುತ್ತಿದ್ದು, ಪ್ರತಿಯೊಬ್ಬರೂ ಕಡ್ಡಾಯವಾಗಿ ಎರಡು ಬಾರಿ ಹಾಜರಾತಿ ದಾಖಲಿಸಬೇಕು.

— ಧರ್ಮರ ಕೃಷ್ಣಪ್ಪ, ಸಹಾಯಕ ನಿರ್ದೇಶಕ (ಗ್ರಾಮೀಣ ಉದ್ಯೋಗ)

ನಂಬಿಕೆ ಗೆದ್ದವಳೇ ಚಿನ್ನ ಕದ್ದಳು! 12 ವರ್ಷ ಮನೆಕೆಲಸ ಮಾಡುತ್ತಿದ್ದ ಮಹಿಳೆ ಬಂಧನ; 8 ಗಂಟೆಯಲ್ಲಿ ಪತ್ತೆ, ₹14.80 ಲಕ್ಷ ಮೌಲ್ಯದ ಚಿನ್ನ ವಶ

0

ಗದಗ: ಕಳೆದ ಸುಮಾರು 12 ವರ್ಷಗಳಿಂದ ಮನೆಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬಳು ಅದೇ ಮನೆಯ ಚಿನ್ನಾಭರಣ ಕಳವು ಮಾಡಿರುವ ಪ್ರಕರಣವನ್ನು ಮುಂಡರಗಿ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಭೇದಿಸಿದ್ದಾರೆ.

ಪ್ರಕರಣ ದಾಖಲಾದ ಕೇವಲ 8 ಗಂಟೆಗಳಲ್ಲಿ ಆರೋಪಿಯನ್ನು ಪತ್ತೆಹಚ್ಚಿದ ಮುಂಡರಗಿ ಪೊಲೀಸರು, 21 ಗಂಟೆಗಳೊಳಗೆ ₹14.80 ಲಕ್ಷ ಮೌಲ್ಯದ 185 ಗ್ರಾಂ ಬಂಗಾರದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ಮುಂಡರಗಿ ಪೊಲೀಸ್ ಠಾಣೆಯಲ್ಲಿ ಆಗಸ್ಟ್ 26ರಂದು ಮನೆಕಳ್ಳತನ ಪ್ರಕರಣ ದಾಖಲಾಗಿತ್ತು. ಅನ್ನದಾನೇಶ್ವರ ನಗರದ ನಿವಾಸಿ ಹಾಗೂ ಶಿಕ್ಷಣ ಇಲಾಖೆಯ ಎಫ್‌ಡಿಎ ಆಗಿರುವ ವಸಂತ ಮೊರಬ ಅವರ ಮನೆಯಲ್ಲಿ ಕಳ್ಳತನ ನಡೆದಿತ್ತು. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಮುಂಡರಗಿ ಪೊಲೀಸರು ತನಿಖೆ ಆರಂಭಿಸಿದ್ದರು.

ಪ್ರಕರಣದ ಆರೋಪಿ ಹಾಗೂ ಕಳುವಾದ ಮಾಲು ಪತ್ತೆಗಾಗಿ ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ಅವರ ಸೂಚನೆಯಂತೆ ವಿಶೇಷ ತಂಡವನ್ನು ರಚಿಸಲಾಗಿತ್ತು. ನರಗುಂದ ಉಪವಿಭಾಗದ ಡಿವೈಎಸ್‌ಪಿ ಪ್ರಭುಗೌಡ ಕಿರೇದಳ್ಳಿ ಅವರ ಮಾರ್ಗದರ್ಶನದಲ್ಲಿ ಮುಂಡರಗಿ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಅಯ್ಯನಗೌಡ ವಿ. ಪಾಟೀಲ, ಪಿಎಸ್‌ಐ ಬಿ.ಎನ್. ಯಳವತ್ತಿ ಹಾಗೂ ಅಪರಾಧ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು.

8 ಗಂಟೆಯಲ್ಲಿ ಆರೋಪಿ ಪತ್ತೆ:

ತನಿಖೆ ವೇಳೆ ಪ್ರಕರಣದ ಆರೋಪಿಯಾಗಿರುವ ಲಲಿತಾ, ಪತಿ ಈರಪ್ಪ ಗೊಂಡಬಾಳ (47), ಎ.ಡಿ. ನಗರ, ಮುಂಡರಗಿ ಅವರನ್ನು ಪೊಲೀಸರು ಪತ್ತೆಹಚ್ಚಿ ಬಂಧಿಸಿದ್ದಾರೆ.

ಆರೋಪಿತ ಮಹಿಳೆ ಕೃತ್ಯ ಎಸಗಿರುವ ಕುರಿತು ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿದ ಪೊಲೀಸರು, ಪ್ರಕರಣ ದಾಖಲಾಗಿದ ಕೇವಲ 8 ಗಂಟೆಗಳಲ್ಲಿಯೇ ಆಕೆಯನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

ಬಳಿಕ ಆರೋಪಿತೆಯಿಂದ ಕಳವು ಮಾಡಿದ್ದ 185 ಗ್ರಾಂ ತೂಕದ ಬಂಗಾರದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಚಿನ್ನಾಭರಣಗಳ ಒಟ್ಟು ಮೌಲ್ಯ ₹14.80 ಲಕ್ಷ ಎಂದು ಅಂದಾಜಿಸಲಾಗಿದೆ.

ಪ್ರಕರಣದ ವಿಶೇಷವೆಂದರೆ, ಬಂಧಿತ ಮಹಿಳೆ ಕಳೆದ ಸುಮಾರು 12 ವರ್ಷಗಳಿಂದ ದೂರುದಾರರ ಮನೆಯಲ್ಲಿ ಮನೆಕೆಲಸ ಮಾಡುತ್ತಿದ್ದಳು ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಪ್ರಕರಣವನ್ನು ತ್ವರಿತವಾಗಿ ಭೇದಿಸಿ ಆರೋಪಿಯನ್ನು ಬಂಧಿಸುವಲ್ಲಿ ನರಗುಂದ ಉಪವಿಭಾಗದ ಡಿವೈಎಸ್‌ಪಿ ಪ್ರಭುಗೌಡ ಡಿ.ಕೆ., ಮುಂಡರಗಿ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಅಯ್ಯನಗೌಡ ವಿ. ಪಾಟೀಲ, ಪಿಎಸ್‌ಐ ಬಿ.ಎನ್. ಯಳವತ್ತಿ ಹಾಗೂ ಪೊಲೀಸ್ ಸಿಬ್ಬಂದಿಗಳಾದ ಜೆ.ಐ. ಬಚ್ಚೇರಿ, ಅಶೋಕ ಬೂದಿಹಾಳ, ಮಂಜುನಾಥ ಅಗಸಿಮನಿ, ಗಂಗಾಧರ ಮಜ್ಜಗಿ, ಎಚ್.ಕೆ. ನದಾಫ್, ಶರಣಪ್ಪ ಓಜನಹಳ್ಳಿ, ಭಾಗ್ಯ ಪತ್ತಾರ, ಎಂ.ಎ. ಕೊಟಗಿ ಮತ್ತು ಜಿ.ಎಫ್. ಉಪ್ಪಾರ ಅವರು ಶ್ರಮಿಸಿದ್ದಾರೆ.

ಪ್ರಕರಣವನ್ನು ತ್ವರಿತವಾಗಿ ಭೇದಿಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾದ ಪೊಲೀಸ್ ತಂಡದ ಕಾರ್ಯವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ಪ್ರಶಂಸಿಸಿ, ಸೂಕ್ತ ಬಹುಮಾನ ಘೋಷಿಸಿದ್ದಾರೆ.

ಕುಡಿಯುವ ನೀರಿನ ಯೋಜನೆಗಳಿಗೆ ಡಿಜಿಟಲ್ ನಿಗಾ: ‘ಜಲ ಆಸ್ತಿ’ ಆ್ಯಪ್‌ ಬಿಡುಗಡೆ!

0

ಬೆಂಗಳೂರು: ಕರ್ನಾಟಕದ ಗ್ರಾಮೀಣ ಭಾಗದ ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಯೋಜನೆಗಳಲ್ಲಿ ಪಾರದರ್ಶಕತೆ ಹಾಗೂ ನಿಖರತೆ ಹೆಚ್ಚಿಸುವ ನಿಟ್ಟಿನಲ್ಲಿ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಮಹತ್ವದ ಹೆಜ್ಜೆ ಇಟ್ಟಿದೆ.

ಇಲಾಖೆಯ ವ್ಯಾಪ್ತಿಗೆ ಬರುವ ಸಮಗ್ರ ಮೂಲಸೌಕರ್ಯ ಹಾಗೂ ಆಸ್ತಿಗಳ ನಿರ್ವಹಣೆಗಾಗಿ ರೂಪಿಸಿರುವ ‘ಜಲ ಆಸ್ತಿ’ ವೆಬ್ ಅಪ್ಲಿಕೇಶನ್ ಮತ್ತು ಮೊಬೈಲ್ ಆ್ಯಪ್ ಅನ್ನು ಸಚಿವ ಈಶ್ವರ ಖಂಡ್ರೆ ಅವರು ಗುರುವಾರ ಅಧಿಕೃತವಾಗಿ ಲೋಕಾರ್ಪಣೆಗೊಳಿಸಿದರು.

ಆ್ಯಪ್ ಬಿಡುಗಡೆ ಬಳಿಕ ಮಾತನಾಡಿದ ಸಚಿವ ಈಶ್ವರ ಖಂಡ್ರೆ, ಗ್ರಾಮೀಣ ಭಾಗದ ಜನರಿಗೆ ಕುಡಿಯುವ ನೀರಿನ ಕೊರತೆಯಾಗದಂತೆ ‘ಜಲಜೀವನ್ ಮಿಷನ್’ ಸೇರಿದಂತೆ ಸುಮಾರು ₹37 ಸಾವಿರ ಕೋಟಿ ವೆಚ್ಚದ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳು ಪ್ರಗತಿಯಲ್ಲಿವೆ ಎಂದು ತಿಳಿಸಿದರು.

ಈ ಯೋಜನೆಗಳಡಿ ನಿರ್ಮಾಣವಾಗುವ ಆಸ್ತಿಗಳು ದೀರ್ಘಕಾಲ ಜನರಿಗೆ ಸೇವೆ ನೀಡಬೇಕಾದರೆ ಅವುಗಳ ಸಮಗ್ರ ದಾಖಲೀಕರಣ ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಇಲಾಖೆಯ ವ್ಯಾಪ್ತಿಯಲ್ಲಿರುವ ಸುಮಾರು 3 ಲಕ್ಷ ಜಲ ಆಸ್ತಿಗಳನ್ನು ಡಿಜಿಟಲೀಕರಣಗೊಳಿಸಲಾಗುತ್ತಿದೆ. ಈಗಾಗಲೇ ಮೊದಲ ಹಂತದ ಪರಿಶೀಲನೆಯಲ್ಲಿ 70 ಸಾವಿರಕ್ಕೂ ಅಧಿಕ ಜಲ ಸ್ವತ್ತುಗಳ ದಾಖಲೀಕರಣ ಪೂರ್ಣಗೊಂಡಿದೆ ಎಂದು ಹೇಳಿದರು.

ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ:

ಬೋರ್‌ವೆಲ್‌ಗಳು, ಪೈಪ್‌ಲೈನ್‌ಗಳು, ನೀರಿನ ಟ್ಯಾಂಕ್‌ಗಳು, ಅವುಗಳ ಪ್ರಸ್ತುತ ಕಾರ್ಯಕ್ಷಮತೆ ಹಾಗೂ ಪ್ರಗತಿಯಲ್ಲಿರುವ ಕಾಮಗಾರಿಗಳ ಹಂತ ಸೇರಿದಂತೆ ಪ್ರತಿಯೊಂದು ಮಾಹಿತಿಯನ್ನೂ ‘ಜಲ ಆಸ್ತಿ’ ತಂತ್ರಾಂಶದಲ್ಲಿ ದಾಖಲಿಸಲಾಗುತ್ತದೆ.

ಸಹಾಯಕ ಎಂಜಿನಿಯರ್‌ಗಳು ಸ್ಥಳಕ್ಕೆ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಿ ವರದಿಯನ್ನು ಆ್ಯಪ್‌ನಲ್ಲಿ ಅಪ್‌ಲೋಡ್ ಮಾಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಈ ವ್ಯವಸ್ಥೆಯ ಮೂಲಕ ಯಾವುದೇ ಲೋಪವಾಗದಂತೆ ನಿಗಾ ವಹಿಸಿ, ಹಳ್ಳಿಗಾಡಿನ ಕಟ್ಟಕಡೆಯ ಮನೆಗೂ ನಿರಂತರ ಕುಡಿಯುವ ನೀರು ಪೂರೈಕೆಯಾಗುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.

ರಕ್ಷಾಬಂಧನಕ್ಕೆ ಮಹಿಳೆಯರಷ್ಟೇ ಅಲ್ಲ, ಪುರುಷರಿಗೂ ರಜೆ: ಹಿಮಾಚಲ ಸರ್ಕಾರದ ಮಹತ್ವದ ಘೋಷಣೆ

0

ಶಿಮ್ಲಾ: ಹಿಮಾಚಲ ಪ್ರದೇಶದಲ್ಲಿ ರಕ್ಷಾಬಂಧನದ ಪ್ರಯುಕ್ತ ಈ ಬಾರಿ ಸರ್ಕಾರ ಮಹಿಳೆಯರಲ್ಲದೆ ಪುರುಷರಿಗೂ ಸಾರ್ವಜನಿಕ ರಜೆ ಘೋಷಿಸಿದೆ. ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು ನೇತೃತ್ವದ ಕಾಂಗ್ರೆಸ್ ಸರ್ಕಾರ ಗುರುವಾರ ಆಗಸ್ಟ್ 28 (ಶುಕ್ರವಾರ) ರಾಜ್ಯಾದ್ಯಂತ ರಜೆ ಘೋಷಿಸಿದೆ. ಮೊದಲು ರಕ್ಷಾಬಂಧನದಂದು ಮಹಿಳೆಯರಿಗೆ ಮಾತ್ರ ರಜೆ ನೀಡಲಾಗುತ್ತಿತ್ತು, ಆದರೆ ಈ ಬಾರಿ ಪುರುಷರಿಗೂ ರಜೆ ಘೋಷಿಸಲಾಗಿದೆ.

ಈ ಕುರಿತು ಸಾಮಾಜಿಕ ಜಾಲತಾಣ X ನಲ್ಲಿ ಮಾಹಿತಿ ಹಂಚಿಕೊಂಡ ಮುಖ್ಯಮಂತ್ರಿ ಸುಖು, ರಕ್ಷಾಬಂಧನ ಸಹೋದರ-ಸಹೋದರಿಯರ ನಡುವಿನ ಪ್ರೀತಿ, ವಿಶ್ವಾಸ ಮತ್ತು ವಾತ್ಸಲ್ಯವನ್ನು ಆಚರಿಸುವ ಪವಿತ್ರ ಹಬ್ಬ ಎಂದರು. ಬಾಲ್ಯದ ಚೇಷ್ಟೆಯಿಂದ ಹಿಡಿದು ಜೀವನದ ಪ್ರತಿಯೊಂದು ಹಂತದಲ್ಲೂ ಪರಸ್ಪರ ಬೆಂಬಲವಾಗಿ ನಿಲ್ಲುವವರೆಗೆ ಈ ಬಂಧ ವಿಶೇಷ ಎಂದ ಅವರು, ಸಹೋದರ-ಸಹೋದರಿಯರು ರಕ್ಷಾಬಂಧನವನ್ನು ಒಟ್ಟಿಗೆ ಆಚರಿಸಲು ಹಾಗೂ ಕುಟುಂಬಗಳೊಂದಿಗೆ ಸಂತೋಷ ಹಂಚಿಕೊಳ್ಳಲು ಅನುವು ಮಾಡಿಕೊಡಲು ಶುಕ್ರವಾರ ರಾಜ್ಯಾದ್ಯಂತ ಒಂದು ದಿನದ ಸಾರ್ವಜನಿಕ ರಜೆ ಘೋಷಿಸುವುದಾಗಿ ತಿಳಿಸಿದರು.

ಉತ್ತರ ಪ್ರದೇಶದಲ್ಲಿ, ಆಗಸ್ಟ್ 28ರಂದು ರಕ್ಷಾಬಂಧನದ ಸಂದರ್ಭದಲ್ಲಿ ರಾಜ್ಯಾದ್ಯಂತ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ನೀಡಲಾಗುವುದು ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಘೋಷಿಸಿದ್ದಾರೆ. ಉತ್ತರ ಪ್ರದೇಶ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ಸೇರಿದ ಬಸ್‌ಗಳಲ್ಲಿ ಆಗಸ್ಟ್ 27ರಂದು ಬೆಳಿಗ್ಗೆ 6 ಗಂಟೆಯಿಂದ ಆಗಸ್ಟ್ 29ರ ಮಧ್ಯರಾತ್ರಿಯವರೆಗೆ ಉಚಿತ ಪ್ರಯಾಣ ಲಭ್ಯವಿರಲಿದೆ. ಈ ವರ್ಷ ರಕ್ಷಾಬಂಧನವನ್ನು ಆಗಸ್ಟ್ 28 (ಶುಕ್ರವಾರ) ರಂದು ಆಚರಿಸಲಾಗುತ್ತಿದ್ದು, ಉತ್ತರ ಪ್ರದೇಶ, ಬಿಹಾರ, ಪಂಜಾಬ್, ಹರಿಯಾಣ, ಉತ್ತರಾಖಂಡ ಮತ್ತು ಗುಜರಾತ್‌ನಂತಹ ಹಲವಾರು ರಾಜ್ಯಗಳು ಶಾಲಾ ರಜೆ ಘೋಷಿಸಿವೆ.