Home Blog

ರೌಡಿಶೀಟರ್ ಮಂಜುನಾಥ ಗದಗ ಜಿಲ್ಲೆಯಿಂದ ಗಡಿಪಾರು

0

ಗದಗ: ಅಪರಾಧಿಕ ಹಿನ್ನೆಲೆಯುಳ್ಳ ವ್ಯಕ್ತಿಯೊಬ್ಬನನ್ನು ಗದಗ ಜಿಲ್ಲೆಯಿಂದ ಗಡಿಪಾರು ಮಾಡಲಾಗಿದೆ. ಗಜೇಂದ್ರಗಡ ನಿವಾಸಿ ಮಂಜುನಾಥ ತಂದೆ ಕಮಲಪ್ಪ ಮಾಳೋತ್ತರ ಎಂಬಾತನನ್ನು ಗದಗ ಜಿಲ್ಲೆಯಿಂದ ಚಿತ್ರದುರ್ಗ ಜಿಲ್ಲೆಗೆ ಗಡಿಪಾರು ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ಕಾರ್ಯಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

ಮಂಜುನಾಥ ರೌಡಿ ಶೀಟರ್ ಆಗಿದ್ದು, ಈತನ ವಿರುದ್ಧ ಈಗಾಗಲೇ ಹಲವು ಪ್ರಕರಣಗಳು ದಾಖಲಾಗಿವೆ. ನ್ಯಾಯಾಂಗ ಬಂಧನಕ್ಕೆ ಹೋಗಿ ಬಂದರೂ ತನ್ನ ಸ್ವಭಾವದಲ್ಲಿ ಸುಧಾರಣೆಯಾಗದೇ ಅಪರಾಧಿಕ ಪ್ರವೃತ್ತಿಯನ್ನು ಮುಂದುವರಿಸಿಕೊಂಡು ಬಂದ ಹಿನ್ನೆಲೆಯಲ್ಲಿ ಈತನ ದುರ್ವರ್ತನೆಯನ್ನು ನಿಯಂತ್ರಿಸಲು ಸಂಬಂಧಪಟ್ಟ ಪೊಲೀಸ್ ಠಾಣೆಯವರು ಗಡಿಪಾರು ಪ್ರಸ್ತಾವನೆ ಸಲ್ಲಿಸಿದ್ದರು.

ಈ ಗಡಿಪಾರು ಅರ್ಜಿಯನ್ನು ಕೂಲಂಕಷವಾಗಿ ವಿಚಾರಣೆ ನಡೆಸಿದ ಬಳಿಕ ಮಂಜುನಾಥನನ್ನು ಗದಗ ಜಿಲ್ಲೆಯಿಂದ ಚಿತ್ರದುರ್ಗ ಜಿಲ್ಲೆಗೆ ಗಡಿಪಾರು ಮಾಡಲಾಗಿದೆ ಎಂದು ಎಸ್ಪಿ ರೋಹನ್ ಜಗದೀಶ್ ತಿಳಿಸಿದ್ದಾರೆ.

ಮಂಜುನಾಥ ವಿರುದ್ಧ ಕೊಲೆ, ಸಾಕ್ಷಿನಾಶ, ಅಪರಾಧಿಕ ಸಂಚು ಹಾಗೂ ಕಳ್ಳತನದಂತಹ ಅಪರಾಧಗಳ ಅಡಿಯಲ್ಲಿ ಕೆಳಕಂಡ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸ್ ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.

1)ಗಜೇಂದ್ರಗಡ ಪೊಲೀಸ್ ಠಾಣೆ — ಗುನ್ನಾ ನಂ. 275/2018; ಕಲಂ 302, 201, 120(ಬಿ) ಹಾಗೂ 109 ಐಪಿಸಿ.

2)ಸವದತ್ತಿ ಪೊಲೀಸ್ ಠಾಣೆ — ಗುನ್ನಾ ನಂ. 70/2026; ಕಲಂ 303(2) ಬಿಎನ್‌ಎಸ್‌–2023.

3)ಸವದತ್ತಿ ಪೊಲೀಸ್ ಠಾಣೆ — ಗುನ್ನಾ ನಂ. 296/2026; ಕಲಂ 303(2) ಬಿಎನ್‌ಎಸ್‌–2023.

4)ಸವದತ್ತಿ ಪೊಲೀಸ್ ಠಾಣೆ — ಗುನ್ನಾ ನಂ. 340/2026; ಕಲಂ 303(2) ಬಿಎನ್‌ಎಸ್‌–2023.

ಕಾನೂನುಬಾಹಿರ ಚಟುವಟಿಕೆಗಳಿಗೆ ಪೊಲೀಸ್ ಎಚ್ಚರಿಕೆ

ಗದಗ ಜಿಲ್ಲೆಯಲ್ಲಿ ಕಾನೂನುಬಾಹಿರ ಕೃತ್ಯಗಳಲ್ಲಿ ಭಾಗಿಯಾಗುವವರಿಗೆ ಇದು ಎಚ್ಚರಿಕೆಯಾಗಿದೆ. ಸಮಾಜವಿರೋಧಿ ಹಾಗೂ ಕಾನೂನುಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗುವ ಯಾವುದೇ ವ್ಯಕ್ತಿಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ಎಚ್ಚರಿಕೆ ನೀಡಿದ್ದಾರೆ.

ವಿಬಿ-ಜಿರಾಮ್ ಜಿ ಅಡಿ ಕೆಲಸ ಮಾಡಿದವರಿಗೆ 15 ದಿನದಲ್ಲಿ ಕೂಲಿ ಪಾವತಿ: ವಿಳಂಬವಾದರೆ ಕಠಿಣ ಕ್ರಮ – ಈಶ್ವರ ಖಂಡ್ರೆ

0

ಬೆಂಗಳೂರು: ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡಿದ ಕಾರ್ಮಿಕರಿಗೆ ನಿಗದಿತ ಅವಧಿಯಲ್ಲಿ ಕೂಲಿ ಹಣ ಪಾವತಿಸದಿದ್ದರೆ ಸಂಬಂಧಪಟ್ಟ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ. ಖಂಡ್ರೆ ಎಚ್ಚರಿಕೆ ನೀಡಿದ್ದಾರೆ.

ವಿಕಾಸಸೌಧದಲ್ಲಿ ಹಿರಿಯ ಅಧಿಕಾರಿಗಳು ಹಾಗೂ ಚಾಮರಾಜನಗರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳೊಂದಿಗೆ ಸಭೆ ನಡೆಸಿದ ಸಚಿವರು, ಗ್ರಾಮೀಣ ಭಾಗದಲ್ಲಿ ಕೂಲಿ ಕಾರ್ಮಿಕರಿಗೆ ಸಾಮಾನ್ಯವಾಗಿ ದಿನನಿತ್ಯ ಅಥವಾ ವಾರಕ್ಕೊಮ್ಮೆ ಕೂಲಿ ಪಾವತಿಯಾಗುತ್ತದೆ. ಆದರೆ ವಿಬಿಜಿ ರಾಮ್‌ಜಿ ಯೋಜನೆಯಡಿ ಕೆಲಸ ಮಾಡಿದವರಿಗೆ 15ರಿಂದ 20 ದಿನಗಳಾದರೂ ಹಣ ಪಾವತಿಯಾಗದಿದ್ದರೆ ಕಾರ್ಮಿಕರು ಕೆಲಸಕ್ಕೆ ಬರಲು ಹಿಂದೇಟು ಹಾಕುತ್ತಾರೆ ಎಂದು ಹೇಳಿದರು.

ಕನಿಷ್ಠ 7ರಿಂದ ಗರಿಷ್ಠ 10 ದಿನಗಳೊಳಗೆ ಕಾರ್ಮಿಕರಿಗೆ ಕೂಲಿ ಹಣ ಪಾವತಿಯಾಗುವಂತೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಸಚಿವರು ಸೂಚಿಸಿದರು. ಕಷ್ಟಪಟ್ಟು ದುಡಿದ ಕಾರ್ಮಿಕರಿಗೆ ನಿಗದಿತ ಅವಧಿಯಲ್ಲಿ ಕೂಲಿ ನೀಡದಿರುವುದು ಗಂಭೀರ ವಿಚಾರ ಎಂದು ಹೇಳಿದ ಈಶ್ವರ ಖಂಡ್ರೆ, ಚಾಮರಾಜನಗರ ಜಿಲ್ಲೆಯಲ್ಲಿ ಪಿಡಿಒಗಳ ಲಾಗಿನ್‌ನಲ್ಲಿಯೇ ಸುಮಾರು 57 ಲಕ್ಷ ರೂಪಾಯಿ ಕಾಮಗಾರಿಯ ಕೂಲಿ ಹಣ ಬಾಕಿ ಇದೆ. ಕೂಡಲೇ ಬಾಕಿ ಇರುವ ಎಲ್ಲ ಕೂಲಿ ಹಣ ಪಾವತಿಗೆ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪಂಚಾಯಿತಿ ಸಿಇಒಗೆ ಸೂಚಿಸಿದರು.

ಬೋಗಸ್ ಬಿಲ್, ನಕಲಿ ಮಾನವ ದಿನ ಸೃಷ್ಟಿಗೆ ಬ್ರೇಕ್

ಚಾಮರಾಜನಗರ ತಾಲೂಕಿನ ಮಾದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಟ್ರ್ಯಾಕ್ಟರ್‌ನಿಂದ ಉಳುಮೆ ಮಾಡಲಾಗಿದ್ದ ಜಮೀನಿನಲ್ಲಿ ಜನರನ್ನು ಕೂರಿಸಿ ಫೋಟೋ ತೆಗೆದು, ಬೋಗಸ್ ಮಾನವ ದಿನ ಸೃಜನೆ ಹಾಗೂ ನಕಲಿ ಬಿಲ್ ಮಾಡಿರುವ ಆರೋಪದ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಯಿತು.

ಈ ಪ್ರಕರಣದಲ್ಲಿ ಈಗಾಗಲೇ ಕ್ರಮಕ್ಕೆ ಆದೇಶ ನೀಡಿರುವುದಾಗಿ ತಿಳಿಸಿದ ಸಚಿವ ಈಶ್ವರ ಖಂಡ್ರೆ, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕೂಡಲೇ ಕಠಿಣ ಕ್ರಮ ಜರುಗಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಬೋಗಸ್ ಬಿಲ್ ಹಾಗೂ ಕಳಪೆ ಕಾಮಗಾರಿಗಳಿಗೆ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ. ಈ ರೀತಿಯ ದೂರುಗಳು ಬಂದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಎಚ್ಚರಿಸಿದರು.

ಗಡಿ ಜಿಲ್ಲೆಯಾದ ಚಾಮರಾಜನಗರದಿಂದ ಉದ್ಯೋಗ ಅರಸಿ ಜನರು ಬೇರೆಡೆಗೆ ಗುಳೆ ಹೋಗದಂತೆ, ಸ್ಥಳೀಯವಾಗಿಯೇ ಉದ್ಯೋಗಾವಕಾಶ ಕಲ್ಪಿಸಬೇಕು ಎಂದು ಈಶ್ವರ ಖಂಡ್ರೆ ಹೇಳಿದರು.

ಗ್ರಾಮೀಣ ಭಾಗದಲ್ಲಿ ಗುಣಮಟ್ಟದ ಹಾಗೂ ಶಾಶ್ವತ ಆಸ್ತಿಗಳನ್ನು ನಿರ್ಮಿಸುವ ಮೂಲಕ ಜನರಿಗೆ ದೀರ್ಘಕಾಲಿಕ ಪ್ರಯೋಜನ ಕಲ್ಪಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಮನ್ರೇಗಾ ಯೋಜನೆ ಇದೀಗ ವಿಬಿಜಿ ರಾಮ್‌ಜಿ ಯೋಜನೆಯಾಗಿ ಮುಂದುವರಿದಿದ್ದು, ಇದರಡಿ ಗ್ರಾಮಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಅವಕಾಶವಿದೆ. ಗ್ರಾಮೀಣ ಜನರು ತಮ್ಮ ಗ್ರಾಮಗಳ ಅಭಿವೃದ್ಧಿಗೆ ಅಗತ್ಯವಿರುವ ಕಾಮಗಾರಿಗಳಿಗಾಗಿ ಒತ್ತಾಯಿಸಬೇಕು ಎಂದು ಸಚಿವರು ಕರೆ ನೀಡಿದರು.

ಅದೇ ವೇಳೆ, ಯಾವುದೇ ಕಾರಣಕ್ಕೂ ನಕಲಿ ಬಿಲ್‌ಗಳಿಗೆ ಸಹಕಾರ ನೀಡಬಾರದು. ಯೋಜನೆಯಡಿ ನಡೆಯುವ ಕಾಮಗಾರಿಗಳಲ್ಲಿ ಪಾರದರ್ಶಕತೆ ಹಾಗೂ ಗುಣಮಟ್ಟ ಕಾಪಾಡಬೇಕು ಎಂದು ಗ್ರಾಮೀಣ ಜನರಿಗೆ ಸಚಿವ ಈಶ್ವರ ಖಂಡ್ರೆ ಮನವಿ ಮಾಡಿದರು.

ವಿದ್ಯಾರ್ಥಿಗಳಿದ್ದ KSRTC ಬಸ್ ಪಲ್ಟಿ; 20ಕ್ಕೂ ಹೆಚ್ಚು ಮಂದಿಗೆ ಗಾಯ

ಲಕ್ಷ್ಮೇಶ್ವರ: ವಿದ್ಯಾರ್ಥಿಗಳು ಸೇರಿದಂತೆ ನೂರಾರು ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ KSRTC ಬಸ್ ಬೈಕ್‌ಗೆ ಸೈಡ್ ಕೊಡಲು ಹೋಗಿ ಪಲ್ಟಿಯಾದ ಘಟನೆ ಗದಗ ಜಿಲ್ಲೆಯ ಲಕ್ಷ್ಮೇಶ್ವರ ಸಮೀಪದ ಶಿಗ್ಲಿ ಬಳಿ ನಡೆದಿದೆ. ಅಪಘಾತದಲ್ಲಿ 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಹೊಸರಿತ್ತಿಯಿಂದ ಲಕ್ಷ್ಮೇಶ್ವರಕ್ಕೆ ಬರುತ್ತಿದ್ದ ಬಸ್‌ನಲ್ಲಿ ಗ್ರಾಮೀಣ ಭಾಗಗಳಿಂದ ಶಿಗ್ಲಿ ಬಳಿಯ ಕಾಲೇಜು ಹಾಗೂ ಲಕ್ಷ್ಮೇಶ್ವರದ ಕಾಲೇಜುಗಳಿಗೆ ತೆರಳುತ್ತಿದ್ದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಬಸ್‌ ಚಲಿಸುತ್ತಿದ್ದ ವೇಳೆ ಬೈಕ್‌ಗೆ ಸೈಡ್ ಕೊಡಲು ಹೋಗಿದಾಗ ಚಾಲಕನ ನಿಯಂತ್ರಣ ತಪ್ಪಿ ಬಸ್‌ ಪಲ್ಟಿಯಾಗಿದೆ ಎನ್ನಲಾಗಿದೆ.

ಅಪಘಾತದಲ್ಲಿ 20ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದು, ಗಾಯಾಳುಗಳಿಗೆ ಲಕ್ಷ್ಮೇಶ್ವರ ಹಾಗೂ ಶಿಗ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಗಂಭೀರವಾಗಿ ಗಾಯಗೊಂಡವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಗದಗ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.

ಬಸ್‌ನ ವೇಗ ಕಡಿಮೆ ಇದ್ದಿದ್ದರಿಂದ ಭಾರೀ ಅನಾಹುತ ತಪ್ಪಿದೆ ಎನ್ನಲಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಕೂದಲೆಳೆ ಅಂತರದಲ್ಲಿ ಭಾರೀ ದುರಂತ ತಪ್ಪಿದ್ದು, ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಅಪಘಾತದಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗಾಯಗೊಂಡಿರುವ ಹಿನ್ನೆಲೆಯಲ್ಲಿ ಅವರ ಸುರಕ್ಷತೆ ಕುರಿತು ಪೋಷಕರಲ್ಲಿ ಆತಂಕ ಮೂಡಿದೆ. ಘಟನೆ ಸವಣೂರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

ಗೃಹ ಖಾತೆ ಬಿಟ್ಟು RSS ವಿರೋಧಿ ಇಲಾಖೆ ತೆಗೆದುಕೊಳ್ಳಲಿ: ಪ್ರಿಯಾಂಕ್ ಖರ್ಗೆ ವಿರುದ್ಧ ಬಿವೈ ವಿಜಯೇಂದ್ರ ಟೀಕೆ

0

ಬೆಂಗಳೂರು: ಆರ್‌ಎಸ್‌ಎಸ್ ವಿಚಾರವಾಗಿ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಆರ್‌ಎಸ್‌ಎಸ್ ವಿರುದ್ಧವೇ ಇಷ್ಟೊಂದು ಆಸಕ್ತಿ ಇದ್ದರೆ ಪ್ರಿಯಾಂಕ್ ಖರ್ಗೆ ಅವರು ಗೃಹ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ, ಆರ್‌ಎಸ್‌ಎಸ್ ವಿರೋಧಿ ಇಲಾಖೆಯನ್ನು ಪಡೆದುಕೊಳ್ಳಲಿ ಎಂದು ವಿಜಯೇಂದ್ರ ವ್ಯಂಗ್ಯವಾಡಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಹಾಗೂ ಗೃಹ ಸಚಿವರು ನೇರವಾಗಿ ಆರ್‌ಎಸ್‌ಎಸ್ ಹೆಸರನ್ನು ಉಲ್ಲೇಖಿಸದಿದ್ದರೂ, ಸರ್ಕಾರದ ಕ್ರಮಗಳ ಉದ್ದೇಶ ಏನು ಎಂಬುದು ಸ್ಪಷ್ಟವಾಗಿದೆ ಎಂದು ಆರೋಪಿಸಿದರು.

ತಮ್ಮ ಇಲಾಖೆಯ ಜವಾಬ್ದಾರಿಗಳತ್ತ ಗಮನಹರಿಸುವ ಬದಲು ಪ್ರಿಯಾಂಕ್ ಖರ್ಗೆ ಅವರು ಪದೇಪದೇ ಆರ್‌ಎಸ್‌ಎಸ್ ವಿರುದ್ಧ ಟೀಕೆ ಮಾಡುತ್ತಿದ್ದಾರೆ. ಆರ್‌ಎಸ್‌ಎಸ್ ಬಗ್ಗೆ ಇಷ್ಟೊಂದು ಆಸಕ್ತಿ ಇದ್ದರೆ ಗೃಹ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ, ಆರ್‌ಎಸ್‌ಎಸ್ ವಿರೋಧಿ ಇಲಾಖೆಯನ್ನು ವಹಿಸಿಕೊಳ್ಳಲಿ ಎಂದು ವಿಜಯೇಂದ್ರ ಟೀಕಿಸಿದರು.

ಸದನದಲ್ಲಿ ಆರ್‌ಎಸ್‌ಎಸ್ ಪ್ರಾರ್ಥನೆಯ ಕುರಿತು ಮುಖ್ಯಮಂತ್ರಿ ಉಲ್ಲೇಖಿಸಿರುವ ಹಿನ್ನೆಲೆಯಲ್ಲಿ ಸರ್ಕಾರದ ನಿಲುವು ಇದೀಗ ಬಹಿರಂಗವಾಗಿದೆ ಎಂದು ವಿಜಯೇಂದ್ರ ಹೇಳಿದರು.

ಆರ್‌ಎಸ್‌ಎಸ್ ವಿರುದ್ಧ ಕ್ರಮ ಕೈಗೊಳ್ಳುವ ಧೈರ್ಯವಿದ್ದರೆ ಸಂಘಟನೆಯನ್ನು ನಿಷೇಧಿಸುವ ಪ್ರಯತ್ನ ಮಾಡಲಿ ಎಂದು ಸರ್ಕಾರಕ್ಕೆ ಸವಾಲು ಹಾಕಿದ ಅವರು, ಆರ್‌ಎಸ್‌ಎಸ್‌ನಿಂದ ಯಾವ ದೇಶವಿರೋಧಿ ಚಟುವಟಿಕೆ ನಡೆದಿದೆ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.

ಆರ್‌ಎಸ್‌ಎಸ್ ಶತಮಾನ ಪೂರೈಸಿರುವ ಸಂಘಟನೆಯಾಗಿದ್ದು, ದೇಶಭಕ್ತಿ, ರಾಷ್ಟ್ರಾಭಿಮಾನ ಹಾಗೂ ಸೇವಾ ಮನೋಭಾವ ಬೆಳೆಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ವಿಜಯೇಂದ್ರ ಹೇಳಿದರು.

ದೇಶದ ಪರವಾಗಿ ಧ್ವನಿ ಎತ್ತುವ ಶಕ್ತಿಗಳಲ್ಲಿ ಆರ್‌ಎಸ್‌ಎಸ್ ಪ್ರಮುಖವಾಗಿದೆ. ಹೀಗಾಗಿ ಹಿಂಬಾಗಿಲಿನ ಮೂಲಕ ಆರ್‌ಎಸ್‌ಎಸ್ ಚಟುವಟಿಕೆಗಳಿಗೆ ಕಡಿವಾಣ ಹಾಕುವ ಯಾವುದೇ ಪ್ರಯತ್ನವನ್ನು ಬಿಜೆಪಿ ಸಹಿಸುವುದಿಲ್ಲ ಎಂದು ಎಚ್ಚರಿಸಿದರು.

ಹಿಂದೆ ಜವಾಹರಲಾಲ್ ನೆಹರು ಹಾಗೂ ಇಂದಿರಾ ಗಾಂಧಿ ಅವರ ಅವಧಿಯಲ್ಲಿ ಆರ್‌ಎಸ್‌ಎಸ್ ವಿರುದ್ಧ ನಿಷೇಧ ಹೇರಲಾಗಿತ್ತು. ಆದರೂ ಸಂಘಟನೆ ಮತ್ತಷ್ಟು ಬಲಿಷ್ಠವಾಗಿ ಬೆಳೆದಿದೆ ಎಂದು ವಿಜಯೇಂದ್ರ ಹೇಳಿದರು.

ಹೀಗಾಗಿ ಸರ್ಕಾರ ಇತಿಹಾಸದಿಂದ ಪಾಠ ಕಲಿತು ಮುಂದುವರಿಯಬೇಕು. ಆರ್‌ಎಸ್‌ಎಸ್ ವಿಚಾರದಲ್ಲಿ ತನ್ನ ನಿಲುವನ್ನು ಮರುಪರಿಶೀಲಿಸಬೇಕು ಎಂದು ಅವರು ಆಗ್ರಹಿಸಿದರು.

ದೇಶದ ಭದ್ರತೆಗೆ ಧಕ್ಕೆ ತರುವಂತಹ ಚಟುವಟಿಕೆಗಳಲ್ಲಿ ತೊಡಗಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು ಗೃಹ ಸಚಿವರ ಕರ್ತವ್ಯ ಎಂದು ವಿಜಯೇಂದ್ರ ಹೇಳಿದರು.

ಅಂತಹ ಪ್ರಮುಖ ವಿಚಾರಗಳತ್ತ ಗಮನಹರಿಸುವ ಬದಲು ಆರ್‌ಎಸ್‌ಎಸ್ ಕುರಿತು ಚರ್ಚೆ ಮಾಡುವುದಕ್ಕೆ ಸರ್ಕಾರ ಹೆಚ್ಚಿನ ಆದ್ಯತೆ ನೀಡುತ್ತಿದೆ ಎಂದು ಅವರು ಟೀಕಿಸಿದರು.

ಆರ್‌ಎಸ್‌ಎಸ್ ಕುರಿತ ಸರ್ಕಾರದ ನಡೆ ಹಾಗೂ ಸಚಿವ ಪ್ರಿಯಾಂಕ್ ಖರ್ಗೆ ಅವರ ಹೇಳಿಕೆಗಳ ವಿರುದ್ಧ ಬಿಜೆಪಿ ಮುಂದಿನ ದಿನಗಳಲ್ಲಿ ಮತ್ತಷ್ಟು ಆಕ್ರೋಶ ವ್ಯಕ್ತಪಡಿಸುವ ಸಾಧ್ಯತೆ ಇದೆ.

ಜಿ.ಎಸ್. ಪಾಟೀಲ್ ವಿಧಾನಸಭೆ ಸ್ಪೀಕರ್ ಆಗಿ ಅವಿರೋಧ ಆಯ್ಕೆ: ಚುನಾವಣಾ ಪ್ರಕ್ರಿಯೆ ಬಹಿಷ್ಕರಿಸಿ ಬಿಜೆಪಿ ಪ್ರತಿಭಟನೆ

0

ಬೆಂಗಳೂರು: ವಿಧಾನಸಭೆಯ ನೂತನ ಸಭಾಧ್ಯಕ್ಷರಾಗಿ ಗುರುಪಾದಗೌಡ ಸಂಗನಗೌಡ ಪಾಟೀಲ್‌ (ಜಿ.ಎಸ್. ಪಾಟೀಲ್‌) ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ವಿಪಕ್ಷಗಳು ಯಾವುದೇ ಅಭ್ಯರ್ಥಿಯನ್ನು ಕಣಕ್ಕಿಳಿಸದ ಹಿನ್ನೆಲೆಯಲ್ಲಿ ಜಿ.ಎಸ್. ಪಾಟೀಲ್‌ ಅವರು ಸ್ಪೀಕರ್‌ ಆಗಿ ಚುನಾಯಿತರಾದರು.

ಸ್ಪೀಕರ್‌ ಚುನಾವಣಾ ಪ್ರಕ್ರಿಯೆಯನ್ನು ಬಿಜೆಪಿ ಸದಸ್ಯರು ಬಹಿಷ್ಕರಿಸುವ ಮೂಲಕ ತಮ್ಮ ವಿರೋಧ ವ್ಯಕ್ತಪಡಿಸಿದರು. ಕಾಂಗ್ರೆಸ್‌ ಹೈಕಮಾಂಡ್‌ ಪಕ್ಷದ ಲೆಟರ್‌ಹೆಡ್‌ನಲ್ಲಿ ಪ್ರಕಟಿಸಿದ್ದ ಸಚಿವರ ಪಟ್ಟಿಯಲ್ಲಿ ಸ್ಪೀಕರ್‌ ಹಾಗೂ ಸಭಾಪತಿ ಹುದ್ದೆಗಳ ಹೆಸರುಗಳನ್ನು ಉಲ್ಲೇಖಿಸಿದ್ದಕ್ಕೆ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿತು.

ಇದಕ್ಕೂ ಮುನ್ನ ಜಿ.ಎಸ್. ಪಾಟೀಲ್‌ ಅವರನ್ನು ವಿಧಾನಸಭಾಧ್ಯಕ್ಷರಾಗಿ ಚುನಾಯಿಸಬೇಕೆಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಪ್ರಸ್ತಾವನೆ ಮಂಡಿಸಿದರು. ಉಪಮುಖ್ಯಮಂತ್ರಿ ಜಿ. ಪರಮೇಶ್ವರ್‌ ಅವರು ಪ್ರಸ್ತಾವನೆಯನ್ನು ಅನುಮೋದಿಸಿದರು. ಹಂಗಾಮಿ ಸ್ಪೀಕರ್‌ ಪ್ರಸ್ತಾವನೆಯನ್ನು ಸದನದ ಮತಕ್ಕೆ ಹಾಕಿದ್ದು, ಬಳಿಕ ಅದು ಅಂಗೀಕಾರವಾಯಿತು.

ಚುನಾವಣಾ ಪ್ರಕ್ರಿಯೆ ವೇಳೆ ಸದನ ಬಹಿಷ್ಕರಿಸಿದ್ದ ಬಿಜೆಪಿ ಸದಸ್ಯರು, ಜಿ.ಎಸ್. ಪಾಟೀಲ್‌ ಅವರ ಹೆಸರು ಘೋಷಣೆಯಾದ ಬಳಿಕ ಸದನಕ್ಕೆ ವಾಪಸ್‌ ಬಂದರು. ನಂತರ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ವಿರೋಧ ಪಕ್ಷದ ನಾಯಕ ಆರ್‌. ಅಶೋಕ್‌ ಹಾಗೂ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಸುರೇಶ್‌ ಬಾಬು ಅವರು ನೂತನ ಸ್ಪೀಕರ್‌ ಜಿ.ಎಸ್. ಪಾಟೀಲ್‌ ಅವರನ್ನು ಪೀಠಕ್ಕೆ ಕರೆತಂದು ಕೂರಿಸಿದರು.

ಸ್ಪೀಕರ್‌ ತಲೆಯನ್ನು ವಿಪಕ್ಷಗಳತ್ತ ತಿರುಗಿಸಿದ ಸಿಎಂ

ನೂತನ ಸ್ಪೀಕರ್‌ ಪೀಠಕ್ಕೆ ಆಗಮಿಸಿದ ಬಳಿಕ ಸಿಎಂ ಡಿ.ಕೆ. ಶಿವಕುಮಾರ್‌, ಆರ್‌. ಅಶೋಕ್‌ ಹಾಗೂ ಹಂಗಾಮಿ ಸ್ಪೀಕರ್‌ ಅವರೊಂದಿಗೆ ಫೋಟೋಗೆ ಪೋಸ್‌ ನೀಡಿದರು. ಈ ವೇಳೆ ಅಶೋಕ್‌ ಅವರೊಂದಿಗೆ ಕೈಕುಲುಕುತ್ತಾ ಸದನದತ್ತ ನೋಡುತ್ತಿದ್ದ ಜಿ.ಎಸ್. ಪಾಟೀಲ್‌ ಅವರ ತಲೆಯನ್ನು ಸಿಎಂ ಡಿ.ಕೆ. ಶಿವಕುಮಾರ್‌ ಕೈಯಿಂದ ವಿಪಕ್ಷಗಳತ್ತ ತಿರುಗಿಸಿದರು.

ಈ ವೇಳೆ ಬಿಜೆಪಿ ಶಾಸಕ ಸುನೀಲ್‌ ಕುಮಾರ್‌, “ನೀವು ನಿಮ್ಮ ಕೈಯಲ್ಲಿ ತಲೆ ತಿರುಗಿಸಿದರೆ ಆಗುವುದಿಲ್ಲ, ಅವರೇ ನಮ್ಮತ್ತ ತಿರುಗಬೇಕು” ಎಂದು ಹಾಸ್ಯ ಚಟಾಕಿ ಹಾರಿಸಿದರು. ಇದರಿಂದ ಸದನದಲ್ಲಿ ನಗೆ ಮೂಡಿತು.

‘ಸ್ಪೀಕರ್‌ ಪೀಠ ಪಕ್ಷಕ್ಕಿಂತ ಎತ್ತರದಲ್ಲಿರಬೇಕು’

ನೂತನ ಸ್ಪೀಕರ್‌ ಜಿ.ಎಸ್. ಪಾಟೀಲ್‌ ಅವರಿಗೆ ಅಭಿನಂದನೆ ಸಲ್ಲಿಸಿದ ವಿಪಕ್ಷ ನಾಯಕ ಆರ್‌. ಅಶೋಕ್‌, “ನಿಮ್ಮ ಪೀಠ ಪಕ್ಷ ಮತ್ತು ವ್ಯಕ್ತಿಗಿಂತ ಎತ್ತರದಲ್ಲಿರಬೇಕು. ಪೀಠದ ಮುಂದೆ ಪಕ್ಷದ ಲೆಟರ್‌ಹೆಡ್‌ನ ನೆರಳು ಇರಬಾರದು, ಸಂವಿಧಾನದ ನೆರಳು ಇರಬೇಕು” ಎಂದು ಹೇಳಿದರು.

ಕಾಂಗ್ರೆಸ್‌ ಲೆಟರ್‌ಹೆಡ್‌ನಲ್ಲಿ ಸ್ಪೀಕರ್‌ ಹುದ್ದೆಗೆ ಜಿ.ಎಸ್. ಪಾಟೀಲ್‌ ಅವರ ಹೆಸರು ಉಲ್ಲೇಖಿಸಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಅವರು, “ಇದು ಸ್ಪೀಕರ್‌ ಹುದ್ದೆಗೆ ಅಗೌರವ ತರುವಂತಹದ್ದು. ಕಾಂಗ್ರೆಸ್‌ ಲೆಟರ್‌ಹೆಡ್‌ನಲ್ಲಿ ಕಳುಹಿಸುವ ಹುದ್ದೆ ಇದಲ್ಲ. ಮೊದಲ ಬಾರಿಗೆ ಇಂತಹ ಕೆಟ್ಟ ಸಂಪ್ರದಾಯಕ್ಕೆ ಮುನ್ನುಡಿ ಬರೆಯಲಾಗಿದೆ” ಎಂದು ಟೀಕಿಸಿದರು.

ಮುಂದೆಯೂ ಪಕ್ಷದ ಲೆಟರ್‌ಹೆಡ್‌ನಲ್ಲಿ ನಿರ್ದೇಶನಗಳು ಬಂದರೆ ಅದು ಸಮಸ್ಯೆಯಾಗಲಿದೆ. ಸ್ಪೀಕರ್‌ ಅವರ ತೀರ್ಪು ಕಾಂಗ್ರೆಸ್‌ ಪಕ್ಷದಿಂದ ಬರಬಾರದು, ಸ್ಪೀಕರ್‌ ಅವರಿಂದಲೇ ಬರಬೇಕು. ಇಂತಹ ತಪ್ಪುಗಳು ಮುಂದೆ ನಡೆಯಬಾರದು ಎಂದು ಅಶೋಕ್‌ ಹೇಳಿದರು.

ಹಿಂದಿನ ಸ್ಪೀಕರ್‌ ಕಾರ್ಯವೈಖರಿ ಬಗ್ಗೆ ಅಶೋಕ್‌ ಟೀಕೆ

ಹಿಂದಿನ ಸ್ಪೀಕರ್‌ ಯು.ಟಿ. ಖಾದರ್‌ ಅವರ ಕಾರ್ಯವೈಖರಿ ಕುರಿತು ಮಾತನಾಡಿದ ಅಶೋಕ್‌, ವಿಧಾನಸೌಧದಲ್ಲಿ ಹಲವು ಬದಲಾವಣೆಗಳನ್ನು ಮಾಡಿದ್ದಾರೆ ಎಂದು ಉಲ್ಲೇಖಿಸಿದರು. 18 ಬಿಜೆಪಿ ಶಾಸಕರನ್ನು ಆರು ತಿಂಗಳ ಕಾಲ ಸದನದಿಂದ ಅಮಾನತುಗೊಳಿಸಿದ್ದನ್ನೂ ಪ್ರಸ್ತಾಪಿಸಿ, “ಅಂತಹ ನಿಯಮವೇ ಇಲ್ಲ. ಇಂತಹ ಕೆಟ್ಟ ಸಂಪ್ರದಾಯವನ್ನು ಮಾಡಿ ಹೋಗಿದ್ದಾರೆ” ಎಂದು ಟೀಕಿಸಿದರು.

ಅದೇ ವೇಳೆ ಯು.ಟಿ. ಖಾದರ್‌ ಅವರು ಕೆಲವು ಉತ್ತಮ ಕೆಲಸಗಳನ್ನೂ ಮಾಡಿದ್ದಾರೆ. ಅವರನ್ನು ಸಂಪೂರ್ಣವಾಗಿ ಟೀಕಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.

ನೂತನ ಸ್ಪೀಕರ್‌ ಜಿ.ಎಸ್. ಪಾಟೀಲ್‌ ಅವರಿಗೆ ಶುಭ ಹಾರೈಸಿದ ಅಶೋಕ್‌, “ಈ ಪೀಠ ನ್ಯಾಯಯುತವಾಗಿರಬೇಕು. ನಿಮ್ಮ ಕುಟುಂಬ ಪೊಲೀಸ್‌ ಪಟೇಲ್‌ ಮನೆತನ. ನೀವು ಜನಸ್ನೇಹಿ ಪೊಲೀಸ್‌ನಂತೆ ಇರಬೇಕು. ಸರ್ಕಾರದ ವಿರುದ್ಧ ಮಾತನಾಡುವುದು ನಮ್ಮ ಕೆಲಸ. ನಾವು ಜನರ ಪರವಾಗಿ ಮಾತನಾಡುತ್ತೇವೆ. ಸಭಾಧ್ಯಕ್ಷರ ಸ್ಥಾನದಲ್ಲಿ ಕುಳಿತು ಇತಿಹಾಸ ಸೃಷ್ಟಿಸಿ, ನಿಮ್ಮದೇ ಛಾಪು ಮೂಡಿಸಿ ಹೋಗಿ” ಎಂದು ಸಲಹೆ ನೀಡಿದರು.

ಕರೂರು ದುರಂತ ಸಂತ್ರಸ್ತರ ಕುಟುಂಬಗಳಿಗೆ ಸರ್ಕಾರಿ ಉದ್ಯೋಗ: ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ಮಧ್ಯಂತರ ತಡೆ

0

ನವದೆಹಲಿ/ಚೆನ್ನೈ: ಕರೂರು ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಮಿಳುನಾಡು ಸರ್ಕಾರ ನೀಡಿದ್ದ ಅನುಕಂಪದ ಆಧಾರದ ಸರ್ಕಾರಿ ಉದ್ಯೋಗ ನೇಮಕಾತಿ ಆದೇಶವನ್ನು ರದ್ದುಗೊಳಿಸಿದ್ದ ಮದ್ರಾಸ್ ಹೈಕೋರ್ಟ್ ತೀರ್ಪಿಗೆ ಸುಪ್ರೀಂ ಕೋರ್ಟ್ ಮಧ್ಯಂತರ ತಡೆ ನೀಡಿದೆ.

ನ್ಯಾಯಮೂರ್ತಿ ಜೆ.ಬಿ. ಪರ್ದಿವಾಲಾ ಹಾಗೂ ನ್ಯಾಯಮೂರ್ತಿ ಕೆ. ವಿನೋದ್ ಚಂದ್ರನ್ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್ ಪೀಠ ಈ ಆದೇಶ ನೀಡಿದೆ. ಇದೇ ವೇಳೆ ತಮಿಳುನಾಡು ಮುಖ್ಯ ಕಾರ್ಯದರ್ಶಿ ಸೇರಿದಂತೆ ಸಂಬಂಧಪಟ್ಟವರಿಗೆ ನೋಟಿಸ್ ಜಾರಿಗೊಳಿಸಿದೆ.

‘ಕುಟುಂಬದ ಆಧಾರಸ್ತಂಭವೇ ಮೃತಪಟ್ಟಿದ್ದರೆ ಉದ್ಯೋಗ ನೀಡುವುದರಲ್ಲಿ ತಪ್ಪೇನು?’

ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಪೀಠ ಮಹತ್ವದ ಪ್ರಶ್ನೆಗಳನ್ನು ಮುಂದಿಟ್ಟಿತು. ದುರಂತದಲ್ಲಿ ಜನರು ಮೃತಪಟ್ಟಾಗ, ಸಂತ್ರಸ್ತ ಕುಟುಂಬಗಳಿಗೆ ಪರಿಹಾರ ನೀಡಲು ಸರ್ಕಾರ ಮುಂದಾದರೆ ಅದನ್ನು ಪ್ರಶ್ನಿಸುವುದು ಹೇಗೆ ಎಂದು ಪೀಠ ಪ್ರಶ್ನಿಸಿತು.

ಒಂದು ಕುಟುಂಬದ ಏಕೈಕ ಆಧಾರಸ್ತಂಭವೇ ಮೃತಪಟ್ಟಿದ್ದರೆ, ಆ ಕುಟುಂಬದ ಮಗ ಅಥವಾ ಮಗಳಿಗೆ ಸರ್ಕಾರ ಅನುಕಂಪದ ಆಧಾರದ ಮೇಲೆ ಉದ್ಯೋಗ ನೀಡುವುದರಲ್ಲಿ ತಪ್ಪೇನಿದೆ ಎಂದು ನ್ಯಾಯಮೂರ್ತಿಗಳು ಪ್ರಶ್ನಿಸಿದರು.

32 ಕುಟುಂಬಗಳಿಗೆ ಸರ್ಕಾರಿ ಉದ್ಯೋಗದ ಆದೇಶ

ಜುಲೈ ತಿಂಗಳ ಆರಂಭದಲ್ಲಿ ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರು ಕರೂರಿಗೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಕರೂರು ದುರಂತದಲ್ಲಿ ಮೃತಪಟ್ಟ 41 ಮಂದಿಯ ಕುಟುಂಬಗಳ ಪೈಕಿ 32 ಕುಟುಂಬಗಳಿಗೆ ಅನುಕಂಪದ ಆಧಾರದ ಮೇಲೆ ಸರ್ಕಾರಿ ಉದ್ಯೋಗ ನೇಮಕಾತಿ ಆದೇಶದ ಪ್ರತಿಗಳನ್ನು ವಿತರಿಸಿದ್ದರು.

ಸರ್ಕಾರದ ಈ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ಮದ್ರಾಸ್ ಹೈಕೋರ್ಟ್, ಜುಲೈ 27ರಂದು ಸರ್ಕಾರಿ ಉದ್ಯೋಗ ನೀಡುವ ಆದೇಶವನ್ನು ರದ್ದುಗೊಳಿಸಿತ್ತು.

ಸರ್ಕಾರದ ಈ ನಿರ್ಧಾರವು ಸಂವಿಧಾನದ ಆರ್ಟಿಕಲ್ 14ರ ಸಮಾನತೆಯ ಹಕ್ಕು ಹಾಗೂ ಆರ್ಟಿಕಲ್ 16ರ ಸರ್ಕಾರಿ ಉದ್ಯೋಗದಲ್ಲಿ ಅವಕಾಶದ ಸಮಾನತೆಗೆ ವಿರುದ್ಧವಾಗಿದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿತ್ತು.

ಕರೂರು ದುರಂತದಲ್ಲಿ 41 ಮಂದಿ ಸಾವು

ಕಳೆದ ವರ್ಷ ಡಿಎಂಕೆ ಸರ್ಕಾರದ ಅವಧಿಯಲ್ಲಿ ನಡೆದ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK) ರ‍್ಯಾಲಿಯಲ್ಲಿ ಭೀಕರ ಕಾಲ್ತುಳಿತ ಸಂಭವಿಸಿತ್ತು. ಈ ದುರಂತದಲ್ಲಿ ಮಕ್ಕಳು ಸೇರಿದಂತೆ ಒಟ್ಟು 41 ಮಂದಿ ಮೃತಪಟ್ಟಿದ್ದರು.

ದುರಂತಕ್ಕೆ ವಿಜಯ್ ಅವರು ತಡವಾಗಿ ಸ್ಥಳಕ್ಕೆ ಆಗಮಿಸಿದ್ದು ಹಾಗೂ ಪೊಲೀಸ್ ಮತ್ತು ಆಡಳಿತ ವ್ಯವಸ್ಥೆಯಲ್ಲಿನ ವೈಫಲ್ಯ ಕಾರಣ ಎಂದು ಪೊಲೀಸರು ಆರೋಪಿಸಿದ್ದರು.

ಆದರೆ, ಈ ಆರೋಪಗಳನ್ನು ಟಿವಿಕೆ ತಳ್ಳಿಹಾಕಿತ್ತು. ದುರಂತಕ್ಕೆ ಪೊಲೀಸ್ ವೈಫಲ್ಯವೇ ಕಾರಣ ಎಂದು ಆರೋಪಿಸಿದ್ದ ಪಕ್ಷ, ಮಾಜಿ ಸಚಿವ ಸೆಂಥಿಲ್ ಬಾಲಾಜಿ ಅವರ ಪಿತೂರಿಯ ಬಗ್ಗೆಯೂ ಆರೋಪ ಮಾಡಿತ್ತು.

ಸದ್ಯ ಸಂತ್ರಸ್ತ ಕುಟುಂಬಗಳಿಗೆ ಸರ್ಕಾರಿ ಉದ್ಯೋಗ ನೀಡುವ ವಿಚಾರದಲ್ಲಿ ಮದ್ರಾಸ್ ಹೈಕೋರ್ಟ್ ನೀಡಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ್ ಮಧ್ಯಂತರ ತಡೆ ನೀಡಿರುವುದರಿಂದ, ಈ ಪ್ರಕರಣದ ಮುಂದಿನ ವಿಚಾರಣೆ ಮಹತ್ವ ಪಡೆದುಕೊಂಡಿದೆ.

ಕರ್ತವ್ಯದಲ್ಲಿದ್ದ PSIಗೆ ಕಪಾಳಮೋಕ್ಷ: ಪುತ್ರಿಯ ವರ್ತನೆಗೆ ಶಾಸಕ ಸುರೇಶ್ ಗೌಡ ಸಾರ್ವಜನಿಕ ಕ್ಷಮೆಯಾಚನೆ

0

ಬೆಂಗಳೂರು: ಕರ್ತವ್ಯದಲ್ಲಿದ್ದ ಪೊಲೀಸ್ ಸಬ್ ಇನ್‌ಸ್ಪೆಕ್ಟರ್‌ಗೆ ಕಪಾಳಮೋಕ್ಷ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ತಮ್ಮ ಪುತ್ರಿ ಐಶ್ವರ್ಯಾ ಅವರ ವರ್ತನೆಗೆ ಬಿಜೆಪಿ ಶಾಸಕ ಬಿ. ಸುರೇಶ್ ಗೌಡ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದಾರೆ. ವಿಧಾನಸೌಧದ ಆವರಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಘಟನೆ ನಡೆದ ಸಂದರ್ಭದಲ್ಲಿ ವಾಸ್ತವವಾಗಿ ಏನಾಯಿತು ಎಂಬುದು ತಮಗೆ ಸಂಪೂರ್ಣವಾಗಿ ತಿಳಿದಿಲ್ಲ ಎಂದು ಹೇಳಿದ್ದಾರೆ.

ಶಾಸಕರ ಹೇಳಿಕೆಯ ಪ್ರಕಾರ, ಭೀಮನ ಅಮಾವಾಸ್ಯೆಯಂದು ಅವರ ಪುತ್ರಿ ಇಬ್ಬರು ಸಣ್ಣ ಮಕ್ಕಳೊಂದಿಗೆ ಶ್ರೀರಂಗಪಟ್ಟಣ ತಾಲೂಕಿನ ಆರತಿ ಉಕ್ಕಡ ದೇವಸ್ಥಾನಕ್ಕೆ ತೆರಳಿದ್ದರು. ಭಾರಿ ಸಂಖ್ಯೆಯಲ್ಲಿ ಭಕ್ತರು ಸೇರಿದ್ದ ಹಿನ್ನೆಲೆಯಲ್ಲಿ ಕರ್ತವ್ಯದಲ್ಲಿದ್ದ ಪಿಎಸ್‌ಐ ಅವರನ್ನು ಒಳಗೆ ಬಿಡಲಿಲ್ಲ ಎನ್ನಲಾಗಿದೆ. ವಿಐಪಿ ಸಾಲಿನಲ್ಲಿ ನಿಂತಿದ್ದಾಗ ಬೇರೆಯವರನ್ನು ಒಳಗೆ ಬಿಡಲಾಗಿದೆ ಎಂಬ ವಿಚಾರದಿಂದ ಅಸಮಾಧಾನ ಉಂಟಾಗಿ, ಮಾತಿಗೆ ಮಾತು ಬೆಳೆದು ಘಟನೆ ನಡೆದಿರಬಹುದು ಎಂದು ಸುರೇಶ್ ಗೌಡ ಹೇಳಿದ್ದಾರೆ.

ಘಟನೆಯಲ್ಲಿ ತಮ್ಮ ಪುತ್ರಿಯ ಕಡೆಯ ದೂರನ್ನೂ ಪೊಲೀಸರು ಆಲಿಸಬೇಕಿತ್ತು ಎಂದು ಶಾಸಕ ಹೇಳಿದ್ದಾರೆ. ಈ ಕುರಿತು ಈಗಾಗಲೇ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಮಾತನಾಡಿರುವುದಾಗಿ ತಿಳಿಸಿದ್ದಾರೆ.

ಪುತ್ರಿಯ ತಪ್ಪು ಸಾಬೀತಾದರೆ ಸಾರ್ವಜನಿಕವಾಗಿ ಕ್ಷಮೆಯಾಚಿಸಲು ಸಿದ್ಧ ಎಂದು ಹೇಳಿದ ಸುರೇಶ್ ಗೌಡ, ಆ ಕ್ಷಣದಲ್ಲಿ ಐಶ್ವರ್ಯಾ ತಾಳ್ಮೆ ಕಳೆದುಕೊಂಡಿರಬಹುದು ಎಂದಿದ್ದಾರೆ. ಆದರೆ ಸಾರ್ವಜನಿಕ ಜೀವನದಲ್ಲಿರುವವರು ಈ ರೀತಿಯ ವರ್ತನೆ ತೋರಬಾರದು. ಹೀಗಾಗಿ ತಮ್ಮ ಪುತ್ರಿಯ ವರ್ತನೆಗಾಗಿ ತಾವೇ ಸಾರ್ವಜನಿಕವಾಗಿ ಕ್ಷಮೆಯಾಚಿಸುತ್ತಿರುವುದಾಗಿ ಸ್ಪಷ್ಟಪಡಿಸಿದ್ದಾರೆ.

ದೇವಸ್ಥಾನದಲ್ಲಿ ನಡೆದಿದ್ದೇನು?

ಆಗಸ್ಟ್ 12ರಂದು ಭೀಮನ ಅಮಾವಾಸ್ಯೆ ಹಿನ್ನೆಲೆಯಲ್ಲಿ ಶ್ರೀರಂಗಪಟ್ಟಣ ತಾಲೂಕಿನ ಆರತಿ ಉಕ್ಕಡ ದೇವಸ್ಥಾನಕ್ಕೆ ಸಾವಿರಾರು ಭಕ್ತರು ಆಗಮಿಸಿದ್ದರು. ಈ ಸಂದರ್ಭದಲ್ಲಿ ಶಾಸಕರ ಪುತ್ರಿ ಐಶ್ವರ್ಯಾ ಪ್ರಭಾವ ಬಳಸಿ ವಿಐಪಿ ಪ್ರವೇಶ ಪಡೆದಿದ್ದರು ಎಂದು ಆರೋಪಿಸಲಾಗಿದೆ.

ಗರ್ಭಗುಡಿ ಸಮೀಪಕ್ಕೆ ತೆರಳಿ ಒಳಗೆ ಬಿಡುವಂತೆ ಅವರು ಕೇಳಿದಾಗ, ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಇರುವುದರಿಂದ ಆ ಕ್ಷಣದಲ್ಲಿ ಒಳಗೆ ಬಿಡಲು ಸಾಧ್ಯವಿಲ್ಲ ಎಂದು ಪಿಎಸ್‌ಐ ಸವಿತಾ ತಿಳಿಸಿದ್ದರು. ನಿಮ್ಮನ್ನು ಒಳಗೆ ಬಿಟ್ಟರೆ ಸಾಲಿನಲ್ಲಿ ನಿಂತಿರುವ ಭಕ್ತರಿಂದ ಗಲಾಟೆಯಾಗುವ ಸಾಧ್ಯತೆಯಿದೆ. ಹೀಗಾಗಿ ಸ್ವಲ್ಪ ಸಮಯ ಕಾಯುವಂತೆ ಅವರು ಸೂಚಿಸಿದ್ದರು ಎನ್ನಲಾಗಿದೆ.

ಇದೇ ವೇಳೆ ಮಫ್ತಿಯಲ್ಲಿದ್ದ ಸರ್ಕಲ್ ಇನ್‌ಸ್ಪೆಕ್ಟರ್ ಲಕ್ಷ್ಮಿ ಗರ್ಭಗುಡಿಯತ್ತ ತೆರಳಿದಾಗ, ಐಶ್ವರ್ಯಾ ಅದನ್ನು ಪ್ರಶ್ನಿಸಿದ್ದಾರೆ. ಅವರು ಕರ್ತವ್ಯದಲ್ಲಿರುವ ಸರ್ಕಲ್ ಇನ್‌ಸ್ಪೆಕ್ಟರ್ ಎಂದು ಪಿಎಸ್‌ಐ ಸವಿತಾ ಸ್ಪಷ್ಟಪಡಿಸಿದ್ದರು.

ಆದರೂ ಒಳಗೆ ಹೋಗಲು ಅವಕಾಶ ನೀಡುವಂತೆ ಐಶ್ವರ್ಯಾ ಒತ್ತಾಯಿಸಿದ್ದು, ಇಬ್ಬರ ನಡುವೆ ವಾಗ್ವಾದ ನಡೆದಿದೆ ಎನ್ನಲಾಗಿದೆ. ಈ ವೇಳೆ ಪಿಎಸ್‌ಐ ಸವಿತಾ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಕಪಾಳಮೋಕ್ಷ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಪಿಎಸ್‌ಐ ಸವಿತಾ ನೀಡಿದ ದೂರಿನ ಆಧಾರದ ಮೇಲೆ ಶ್ರೀರಂಗಪಟ್ಟಣ ತಾಲೂಕಿನ ಕ್ಯಾತನಹಳ್ಳಿ ಪೊಲೀಸ್ ಠಾಣೆಯಲ್ಲಿ ಐಶ್ವರ್ಯಾ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಜೈಲಿನಲ್ಲೇ 2 ವರ್ಷ ಮೊಬೈಲ್ ಬಳಕೆ? ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಸ್ಫೋಟಕ ಮಾಹಿತಿ

0

ಬೆಂಗಳೂರು: ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಜೈಲಿನಲ್ಲೇ ಮೊಬೈಲ್ ಬಳಕೆ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆದ ಇಲಾಖಾ ತನಿಖೆಯಲ್ಲಿ ಮಹತ್ವದ ಮಾಹಿತಿ ಬಹಿರಂಗವಾಗಿದೆ. ಸಿಸಿಬಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಪ್ರಜ್ವಲ್ ರೇವಣ್ಣ ಬಳಿ ಮೊಬೈಲ್ ಪತ್ತೆಯಾಗಿದ್ದ ಬಳಿಕ, ಜೈಲಿನೊಳಗೆ ಅವರು ಮೊಬೈಲ್ ಬಳಸುತ್ತಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಈ ವಿಡಿಯೋ ಇತ್ತೀಚೆಗೆ ರೆಕಾರ್ಡ್ ಮಾಡಿದ್ದಲ್ಲ ಎಂಬುದು ಇಲಾಖಾ ತನಿಖೆಯಲ್ಲಿ ತಿಳಿದುಬಂದಿದೆ. 2024ರ ಸೆಪ್ಟೆಂಬರ್‌ನಲ್ಲೇ ಪ್ರಜ್ವಲ್ ರೇವಣ್ಣ ಜೈಲಿನೊಳಗೆ ಮೊಬೈಲ್ ಬಳಸುತ್ತಿದ್ದಾಗ ಅವರ ರೂಮ್‌ಮೇಟ್ ಈ ವಿಡಿಯೋವನ್ನು ರೆಕಾರ್ಡ್ ಮಾಡಿದ್ದ ಎನ್ನಲಾಗಿದೆ. ಇದೀಗ ಇದೇ ಹಳೆಯ ವಿಡಿಯೋ ವೈರಲ್ ಆಗಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

2024ರಿಂದಲೇ ಮೊಬೈಲ್ ಬಳಕೆ ಆರೋಪ

ಇಲಾಖಾ ತನಿಖೆಯ ಮಾಹಿತಿಯ ಪ್ರಕಾರ, ಪ್ರಜ್ವಲ್ ರೇವಣ್ಣ 2024ರಿಂದಲೇ ಜೈಲಿನೊಳಗೆ ಮೊಬೈಲ್ ಬಳಸುತ್ತಿದ್ದರು ಎನ್ನಲಾಗಿದೆ. ಸೆಪ್ಟೆಂಬರ್ 2024ರಲ್ಲಿ ಅವರು ಮೊಬೈಲ್ ಬಳಸುತ್ತಿದ್ದ ದೃಶ್ಯವನ್ನು ರೂಮ್‌ಮೇಟ್ ಸೆರೆಹಿಡಿದಿದ್ದ ಎನ್ನಲಾಗಿದ್ದು, ಇದೇ ವಿಡಿಯೋ ಈಗ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

ಇದರ ಬೆನ್ನಲ್ಲೇ ಜೈಲಿನೊಳಗೆ ಅಧಿಕಾರಿಗಳು ನಡೆಸಿದ ದಾಳಿ ಹಾಗೂ ತಪಾಸಣೆಗಳ ಬಗ್ಗೆಯೂ ತನಿಖೆಯಲ್ಲಿ ಮಾಹಿತಿ ಹೊರಬಿದ್ದಿದೆ. ಜೈಲು ಅಧಿಕಾರಿಗಳು ಪದೇಪದೇ ದಾಳಿ ನಡೆಸಿದರೂ, ಸಿಬ್ಬಂದಿಯ ಸಹಾಯದಿಂದ ಪ್ರಜ್ವಲ್ ರೇವಣ್ಣ ಮೊಬೈಲ್ ಬಳಕೆಯಿಂದ ತಪ್ಪಿಸಿಕೊಳ್ಳುತ್ತಿದ್ದರು ಎನ್ನಲಾಗಿದೆ.

ಈ ರೀತಿಯ ದಾಳಿಗಳಿಂದ ಅವರು ಒಂದಲ್ಲ, ಎರಡಲ್ಲ, ಒಟ್ಟು ಆರು ಬಾರಿ ತಪ್ಪಿಸಿಕೊಂಡಿದ್ದರು ಎಂಬ ಅಂಶವೂ ಇಲಾಖಾ ತನಿಖೆಯಲ್ಲಿ ಬಹಿರಂಗವಾಗಿದೆ.

ಪ್ರಜ್ವಲ್ ರೇವಣ್ಣ ಅವರಿಗೆ ಜೈಲಿನೊಳಗೆ ಮೊಬೈಲ್ ಬಳಕೆಗೆ ಹೇಗೆ ಅವಕಾಶ ಸಿಕ್ಕಿತು, ದಾಳಿಗಳ ಸಂದರ್ಭದಲ್ಲೂ ಅವರು ಹೇಗೆ ಪಾರಾಗುತ್ತಿದ್ದರು ಹಾಗೂ ಇದರಲ್ಲಿ ಜೈಲು ಸಿಬ್ಬಂದಿಯ ಪಾತ್ರವೇನು ಎಂಬುದರ ಕುರಿತು ತನಿಖೆ ಮುಂದುವರಿದಿದೆ.

ಕರ್ನಾಟಕ ವಿಧಾನಸಭೆಯ ನೂತನ ಸ್ಪೀಕರ್ ಆಗಿ ಜಿ.ಎಸ್. ಪಾಟೀಲ್ ಅವಿರೋಧ ಆಯ್ಕೆ!

0

ಬೆಂಗಳೂರು: ಕರ್ನಾಟಕ ವಿಧಾನಸಭೆಯ ನೂತನ ಸ್ಪೀಕರ್‌ ಆಗಿ ಜಿ.ಎಸ್. ಪಾಟೀಲ್ ಸರ್ವಾನುಮತದಿಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸ್ಪೀಕರ್‌ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಸಂಪ್ರದಾಯದಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹಾಗೂ ವಿಪಕ್ಷ ನಾಯಕ ಆರ್. ಅಶೋಕ್‌ ಅವರು ಜಿ.ಎಸ್. ಪಾಟೀಲ್ ಅವರನ್ನು ಸ್ಪೀಕರ್‌ ಪೀಠಕ್ಕೆ ಕರೆತಂದು ಕೂರಿಸಿದರು.

ಸ್ಪೀಕರ್‌ ಆಯ್ಕೆ ಪ್ರಕ್ರಿಯೆ ಆರಂಭಕ್ಕೂ ಮುನ್ನ ಹಂಗಾಮಿ ಸ್ಪೀಕರ್‌ ಜಯಚಂದ್ರ ಅವರು ಸದನದಲ್ಲಿ ರೂಲಿಂಗ್ ನೀಡಿದರು. ಬಳಿಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಸ್ಪೀಕರ್‌ ಸ್ಥಾನಕ್ಕೆ ಜಿ.ಎಸ್. ಪಾಟೀಲ್ ಅವರ ಹೆಸರನ್ನು ಪ್ರಸ್ತಾಪಿಸಿದರು.

ಈ ಪ್ರಸ್ತಾವನೆಗೆ ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ಅನುಮೋದನೆ ನೀಡಿದರು. ಬಳಿಕ ಹಂಗಾಮಿ ಸ್ಪೀಕರ್‌ ಪ್ರಸ್ತಾವನೆಯನ್ನು ಮತಕ್ಕೆ ಹಾಕಿದರು. ಪ್ರಸ್ತಾವನೆ ಅಂಗೀಕಾರವಾದ ನಂತರ ಜಿ.ಎಸ್. ಪಾಟೀಲ್ ಅವರು ವಿಧಾನಸಭೆಯ ನೂತನ ಸ್ಪೀಕರ್‌ ಆಗಿ ಅವಿರೋಧವಾಗಿ ಆಯ್ಕೆಯಾದರು. ಸ್ಪೀಕರ್‌ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಸದನದ ಕಲಾಪಕ್ಕೆ ವಿಪಕ್ಷ ಬಿಜೆಪಿ ಸದಸ್ಯರು ಪ್ರವೇಶಿಸಿದರು.

‘ರಾಜಕಾರಣದಲ್ಲಿ ಯಾವುದೂ ಶಾಶ್ವತವಲ್ಲ’

ಸ್ಪೀಕರ್‌ ಆಯ್ಕೆಗೂ ಮುನ್ನ ಸದನವನ್ನು ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ತಮ್ಮ ರಾಜಕೀಯ ಚಿಂತನೆಗಳು ಹಾಗೂ ಯೋಜನೆಗಳ ಬಗ್ಗೆ ಮುಂದಿನ ದಿನಗಳಲ್ಲಿ ಮಾತನಾಡುವುದಾಗಿ ಹೇಳಿದರು.

ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಯಾರಿಗೂ ತೊಂದರೆ ನೀಡುವ ಉದ್ದೇಶ ತಮ್ಮದಲ್ಲ. ಯಾರಿಗೆ ಎಷ್ಟು ಗೌರವ ನೀಡಬೇಕೋ ಅಷ್ಟೇ ಗೌರವ ನೀಡುತ್ತೇನೆ ಎಂದು ಅವರು ಹೇಳಿದರು.

ಹಿಂದೆ ಇದೇ ಸದನದಲ್ಲಿ ಸಿದ್ದರಾಮಯ್ಯ ಅವರೊಂದಿಗೆ ಕುಳಿತುಕೊಂಡು, ‘ಒನ್ ಮ್ಯಾನ್ ವಿತ್ ಕರೇಜ್ ಮೇಕ್ಸ್ ಮೇಜಾರಿಟಿ’ ಎಂದು ಹೇಳಿದ್ದನ್ನು ಡಿಕೆ ಶಿವಕುಮಾರ್‌ ನೆನಪಿಸಿಕೊಂಡರು. ಸಿದ್ದರಾಮಯ್ಯ ಸೇರಿದಂತೆ ತಮ್ಮ ಸಂಖ್ಯೆ 136 ಎಂದು ಹೇಳಿದ್ದೆ. ನಾವೆಲ್ಲರೂ ಒಂದಾಗಿ, ಒಗ್ಗಟ್ಟಿನಿಂದ ಇರಲಿದ್ದೇವೆ ಎಂದು ಅವರು ತಿಳಿಸಿದರು. 2028ರ ಚುನಾವಣೆಯಲ್ಲಿ ಏನಾಗಬೇಕು ಎಂಬುದನ್ನು ರಾಜ್ಯದ ಜನರು ತೀರ್ಮಾನಿಸಲಿದ್ದಾರೆ ಎಂದು ಡಿಕೆ ಶಿವಕುಮಾರ್‌ ಹೇಳಿದರು.

‘ನಾನು ಫುಟ್‌ಬಾಲ್ ಆಡೋನಲ್ಲ, ಚೆಸ್ ಆಡೋನೂ ಅಲ್ಲ’

ತಮಗೆ ರಾಜಕಾರಣ ಗೊತ್ತಿದೆ ಎಂದು ಹೇಳಿದ ಡಿಕೆ ಶಿವಕುಮಾರ್‌, ‘ನಾನು ಫುಟ್‌ಬಾಲ್ ಆಡುವವನಲ್ಲ, ಚೆಸ್ ಆಡುವವನೂ ಅಲ್ಲ’ ಎಂದು ರಾಜಕೀಯದ ಬಗ್ಗೆ ತಮ್ಮದೇ ಶೈಲಿಯಲ್ಲಿ ಮಾತನಾಡಿದರು.

ವಿಪಕ್ಷಗಳು ಹಾಗೂ ಆಡಳಿತ ಪಕ್ಷದವರು ಒಟ್ಟಾಗಿ ರಾಜ್ಯದ ಹಿತಕ್ಕಾಗಿ ಕೆಲಸ ಮಾಡಬೇಕು ಎಂದು ಅವರು ಕರೆ ನೀಡಿದರು. ರಾಜಕಾರಣದಲ್ಲಿ ಯಾವುದೂ ಶಾಶ್ವತವಲ್ಲ. ಇಂದು ಇಲ್ಲಿರುವವರು ನಾಳೆ ಅಲ್ಲಿರಬಹುದು, ಅಲ್ಲಿರುವವರು ಇಲ್ಲಿಗೆ ಬರಬಹುದು. ನಾವು ಎಲ್ಲರೂ ರಾಜ್ಯದ ಹಿತಕ್ಕಾಗಿ ಜನರಿಂದ ಆಯ್ಕೆಯಾಗಿದ್ದೇವೆ ಎಂದು ಡಿಕೆ ಶಿವಕುಮಾರ್‌ ಹೇಳಿದರು.

‘ವಿಶ್ವಾಸದ ಮೇಲೆ ಬದುಕಬೇಕು’

ಹಂಗಾಮಿ ಸ್ಪೀಕರ್‌ ಜಯಚಂದ್ರ ಅವರನ್ನು ಉದ್ದೇಶಿಸಿ ಮಾತನಾಡಿದ ಡಿಕೆ ಶಿವಕುಮಾರ್‌, ನೀವು ಹಿರಿಯರು. ದೇವರು ನಿಮ್ಮನ್ನು ಈ ಸ್ಥಾನದಲ್ಲಿ ಕೂರಿಸಿದ್ದಾನೆ ಎಂದು ಹೇಳಿದರು.

ಈ ಸ್ಥಾನದಲ್ಲಿ ಕುಳಿತಿದ್ದವರು ಮುಂದೆ ಮುಖ್ಯಮಂತ್ರಿಗಳಾಗಿದ್ದಾರೆ ಎಂದು ಉದಾಹರಣೆ ನೀಡಿದ ಅವರು, ಎಸ್.ಎಂ. ಕೃಷ್ಣ ಹಾಗೂ ಜಗದೀಶ್ ಶೆಟ್ಟರ್‌ ಅವರು ಸ್ಪೀಕರ್‌ ಸ್ಥಾನದಲ್ಲಿದ್ದು ಬಳಿಕ ಮುಖ್ಯಮಂತ್ರಿಗಳಾದ ಸಂದರ್ಭವನ್ನು ಉಲ್ಲೇಖಿಸಿದರು.

ಹಾಗೆಯೇ ಖಾದರ್‌ ಅವರು ಸ್ಪೀಕರ್‌ ಸ್ಥಾನದಲ್ಲಿ ಕುಳಿತಿದ್ದರು. ಇದೀಗ ಅವರು ‘ಡಬಲ್ ಧಮಾಕಾ’ ಪಡೆದಿದ್ದಾರೆ ಎಂದು ಡಿಕೆ ಶಿವಕುಮಾರ್‌ ಹಾಸ್ಯಮಿಶ್ರಿತವಾಗಿ ಹೇಳಿದರು. ‘ವಿಶ್ವಾಸ ಇಡಿ, ವಿಶ್ವಾಸದ ಮೇಲೆ ಬದುಕಬೇಕು’ ಎಂದು ಹೇಳುವ ಮೂಲಕ ಡಿಕೆ ಶಿವಕುಮಾರ್‌ ಅವರು ಸದನದ ಸದಸ್ಯರಿಗೆ ಕಿವಿಮಾತು ಹೇಳಿದರು.

ವೀರೇಶ್ವರ ಪುಣ್ಯಾಶ್ರಮದ ಹುಂಡಿಯಲ್ಲಿ ₹6.36 ಲಕ್ಷ ನಗದು, 1.3 ಗ್ರಾಂ ಚಿನ್ನ: ಒಂದೂವರೆ ತಿಂಗಳ ಸಂಗ್ರಹದ ಎಣಿಕೆ ಕಾರ್ಯ ಯಶಸ್ವಿ

0

ಗದಗ: ನಗರದ ಶ್ರೀ ವೀರೇಶ್ವರ ಪುಣ್ಯಾಶ್ರಮದಲ್ಲಿ ಸುಮಾರು ಒಂದೂವರೆ ತಿಂಗಳಿನಿಂದ ಸಂಗ್ರಹವಾಗಿದ್ದ ಕಾಣಿಕೆ ಹುಂಡಿಗಳ ಎಣಿಕೆ ಕಾರ್ಯ ಆ.10ರಂದು ನೆರವೇರಿದ್ದು, ಒಟ್ಟು 6,36,616 ರೂ. ನಗದು ಹಾಗೂ 1.3 ಗ್ರಾಂ ಚಿನ್ನ ಸಂಗ್ರಹವಾಗಿರುವುದು ತಿಳಿದುಬಂದಿದೆ.

ಶ್ರೀ ವೀರೇಶ್ವರ ಪುಣ್ಯಾಶ್ರಮದ ಪ.ಪೂಜ್ಯ ಕಲ್ಲಯ್ಯಜ್ಜನವರ ಸಮ್ಮುಖದಲ್ಲಿ ಇದೇ ಮೊದಲ ಬಾರಿಗೆ ಟ್ರಸ್ಟಿಗಳು ಹಾಗೂ ಸಂಬಂಧಪಟ್ಟವರ ಉಪಸ್ಥಿತಿಯಲ್ಲಿ ಕಾಣಿಕೆ ಹುಂಡಿಗಳ ಎಣಿಕೆ ಕಾರ್ಯ ನಡೆಸಲಾಯಿತು. ಭಕ್ತರು ಸಲ್ಲಿಸಿದ್ದ ಕಾಣಿಕೆಗಳ ಎಣಿಕೆ ಕಾರ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಯಿತು.

ಹುಂಡಿ ಎಣಿಕೆ ಸಂದರ್ಭದಲ್ಲಿ 1.3 ಗ್ರಾಂ ಚಿನ್ನದ ಜೊತೆಗೆ 6,36,616 ರೂ. ನಗದು ಸಂಗ್ರಹವಾಗಿರುವುದು ಲೆಕ್ಕಪತ್ರದಲ್ಲಿ ದಾಖಲಾಗಿದೆ. ಎಣಿಕೆ ಕಾರ್ಯದಲ್ಲಿ ಶ್ರೀ ವೀರೇಶ್ವರ ಪುಣ್ಯಾಶ್ರಮದ ಸೋಲ್ ಟ್ರಸ್ಟ್ ಅಧ್ಯಕ್ಷ ನಿಂಗಪ್ಪ ಕೆಂಗಾರ, ಉಪಾಧ್ಯಕ್ಷ ಪ್ರಕಾಶ ಬಸರಿಗೆಡ, ಸಂಗಮೇಶ ದುಂದೂರ, ಶಿವರುದ್ರಪ್ಪ ಇಟಗಿ, ಪಿ.ಸಿ. ಹಿರೇಮಠ, ಚನ್ನಬಸಯ್ಯ ಬಂಕಾಪೂರಮಠ, ಪುಣ್ಯಾಶ್ರಮದ ಹಳೆಯ ವಿದ್ಯಾರ್ಥಿ ಸಾಧಕರ ಪ್ರತಿನಿಧಿ ಸಂದೀಪ ಸೇರಿದಂತೆ ಸಿಬ್ಬಂದಿ ವರ್ಗದವರು ಸಹಕರಿಸಿದರು.

ಭಕ್ತರು ಸಲ್ಲಿಸಿದ ಕಾಣಿಕೆಗಳ ಮೂಲಕ ಸಂಗ್ರಹವಾದ ಹಣ ಹಾಗೂ ಚಿನ್ನದ ವಿವರಗಳನ್ನು ಹುಂಡಿ ಎಣಿಕೆ ಕಾರ್ಯದ ಮೂಲಕ ದಾಖಲಿಸಲಾಗಿದೆ ಎಂದು ಪುಣ್ಯಾಶ್ರಮದ ಪ್ರಕಟಣೆ ತಿಳಿಸಿದೆ.