ಲಕ್ಷ್ಮೇಶ್ವರ: ಬೆಳಗಾಗುವಷ್ಟರಲ್ಲಿ ಮನೆಯ ಮುಂದೆ ಒಂದೊಂದೇ ಜಾನುವಾರುಗಳು ಉಸಿರು ಚೆಲ್ಲಿದ್ದವು. ಇನ್ನೂ ಕೆಲವು ಜಾನುವಾರುಗಳು ಬದುಕಿಗಾಗಿ ಹೋರಾಡುತ್ತಿದ್ದವು.
ನಿತ್ಯದ ಬದುಕಿಗೆ ಆಸರೆಯಾಗಿದ್ದ ಮೂಕ ಪ್ರಾಣಿಗಳನ್ನು ಕಣ್ಣೆದುರೇ ಕಳೆದುಕೊಂಡ ಮಾಲೀಕರ ಆಕ್ರಂದನ ಮುನಿಯಾನ ತಾಂಡಾದಲ್ಲಿ ಮಂಗಳವಾರ ಮನಕಲಕುವ ದೃಶ್ಯ ಸೃಷ್ಟಿಸಿತು.
ತಾಲೂಕಿನ ಮುನಿಯಾನ ತಾಂಡಾದಲ್ಲಿ ಕ್ರಿಮಿನಾಶಕ ಸಿಂಪಡಿಸಿದ ಹುಲ್ಲು ಅಥವಾ ಗೋವಿನ ಜೋಳದ ಬೆಳೆಯನ್ನು ಸೇವಿಸಿದ ಶಂಕೆಯಲ್ಲಿ ಎಂಟಕ್ಕೂ ಹೆಚ್ಚು ಜಾನುವಾರುಗಳು ಮೃತಪಟ್ಟಿದ್ದು, 10ಕ್ಕೂ ಅಧಿಕ ಜಾನುವಾರುಗಳು ಸಾವು-ಬದುಕಿನ ನಡುವೆ ಹೋರಾಡುತ್ತಿವೆ. ಜಾನುವಾರುಗಳ ಸರಣಿ ಸಾವು ತಾಂಡಾದ ಹೈನುಗಾರಿಕೆ ಕುಟುಂಬಗಳಲ್ಲಿ ಆತಂಕ ಮೂಡಿಸಿದೆ.
ಸುಮಾರು 30–35 ಮನೆಗಳಿರುವ ತಾಂಡಾದಲ್ಲಿ 300ಕ್ಕೂ ಹೆಚ್ಚು ದೇಶಿ ದನ ಹಾಗೂ ಎಮ್ಮೆಗಳಿವೆ. ಬಹುತೇಕ ಕುಟುಂಬಗಳ ಜೀವನ ಹೈನುಗಾರಿಕೆಯನ್ನೇ ಅವಲಂಬಿಸಿದೆ. ಒಂದೊಂದು ಕುಟುಂಬ 10ರಿಂದ 30ರವರೆಗೆ ಜಾನುವಾರುಗಳನ್ನು ಸಾಕಿಕೊಂಡಿದ್ದು, ಹಾಲು, ಮೊಸರು, ತುಪ್ಪ ಮಾರಾಟ ಹಾಗೂ ಸೆಗಣಿ ಗೊಬ್ಬರದಿಂದ ಬಂದ ಆದಾಯದಿಂದ ಜೀವನ ನಡೆಸುತ್ತಿವೆ.
ಸೋಮವಾರ ಸಂಜೆ ಎಂದಿನಂತೆ ತಾಂಡಾದ ಸುತ್ತಮುತ್ತಲಿನ ಜಮೀನುಗಳಲ್ಲಿ ಮೇಯಲು ತೆರಳಿದ್ದ ಜಾನುವಾರುಗಳು ರಾತ್ರಿ ಮನೆಗಳಿಗೆ ಮರಳಿದ್ದವು. ಎಲ್ಲವೂ ಸಹಜವಾಗಿಯೇ ಇತ್ತು. ಆದರೆ ಮಧ್ಯರಾತ್ರಿ ವೇಳೆಗೆ ಕೆಲ ಜಾನುವಾರುಗಳು ಇದ್ದಕ್ಕಿದ್ದಂತೆ ಅಸ್ವಸ್ಥಗೊಂಡು ಉಸಿರಾಡಲು ಪರದಾಡತೊಡಗಿದವು. ಏನಾಗುತ್ತಿದೆ ಎಂಬುದು ತಿಳಿಯುವಷ್ಟರಲ್ಲಿ ಪರಿಸ್ಥಿತಿ ಕೈಮೀರಿತ್ತು.
ಗಾಬರಿಗೊಂಡ ಗ್ರಾಮಸ್ಥರು ನಸುಕಿನ ಜಾವ ಪಶುವೈದ್ಯಕೀಯ ಇಲಾಖೆಗೆ ಮಾಹಿತಿ ನೀಡಿದರು. ಕೂಡಲೇ ವೈದ್ಯರು, ಸಿಬ್ಬಂದಿ ಹಾಗೂ ಅಂಬುಲೆನ್ಸ್ ಸಹಿತ ತಾಂಡಾಕ್ಕೆ ತೆರಳಿ ಅಸ್ವಸ್ಥ ಜಾನುವಾರುಗಳಿಗೆ ಚಿಕಿತ್ಸೆ ಆರಂಭಿಸಿದರು. ರೋಗನಿರೋಧಕ ಚುಚ್ಚುಮದ್ದು ಹಾಗೂ ಸಲೈನ್ ನೀಡಿದರೂ ಕೆಲವು ಜಾನುವಾರುಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ.
ಮಧ್ಯಾಹ್ನದ ವೇಳೆಗೆ ನಾಲ್ಕು ಆಕಳು, ಎರಡು ಎಮ್ಮೆ ಹಾಗೂ ಎರಡು ಎತ್ತು ಸೇರಿದಂತೆ ಎಂಟಕ್ಕೂ ಹೆಚ್ಚು ಜಾನುವಾರುಗಳು ಮೃತಪಟ್ಟಿದ್ದವು. ಮತ್ತೊಂದೆಡೆ 10ಕ್ಕೂ ಅಧಿಕ ಜಾನುವಾರುಗಳು ಸಾವು-ಬದುಕಿನ ನಡುವೆ ಹೋರಾಡುತ್ತಿದ್ದವು. ತಮ್ಮ ಮನೆಯ ಸದಸ್ಯರಂತೆಯೇ ಸಾಕಿದ್ದ ಜಾನುವಾರುಗಳನ್ನು ಕಳೆದುಕೊಂಡ ಮಾಲೀಕರ ಕಣ್ಣೀರು ತಾಂಡಾದ ನೋವಿನ ಚಿತ್ರಣವಾಗಿತ್ತು.
ಸಕ್ರವ್ವ ಲಮಾಣಿ, ಮಂಗಲಪ್ಪ ಲಾಲಪ್ಪ ಲಮಾಣಿ, ಸೋಮಣ್ಣ ಲಮಾಣಿ, ಜಾನಪ್ಪ ಲಮಾಣಿ, ರಾಮಣ್ಣ ಲಮಾಣಿ, ಶಿವಪ್ಪ ಲಮಾಣಿ, ಜೇಮ್ಲಪ್ಪ ಲಮಾಣಿ ಸೇರಿದಂತೆ ಹಲವು ಮಾಲೀಕರು ಮೃತಪಟ್ಟ ಜಾನುವಾರುಗಳ ಬಳಿ ಕುಳಿತು ಕಣ್ಣೀರಿಟ್ಟರು. ವರ್ಷಗಳ ಕಾಲ ಸಾಕಿ, ಕುಟುಂಬದ ದುಡಿಮೆಗೆ ಆಸರೆಯಾಗಿದ್ದ ಜಾನುವಾರುಗಳು ಕೆಲವೇ ಗಂಟೆಗಳಲ್ಲಿ ಕಣ್ಮುಂದೆ ಇಲ್ಲವಾಗಿರುವ ನೋವು ಕುಟುಂಬಗಳನ್ನು ಕಂಗೆಡಿಸಿದೆ.
ಜಾನುವಾರುಗಳ ಸರಣಿ ಸಾವಿಗೆ ಕ್ರಿಮಿನಾಶಕ ಸೇವನೆಯೇ ಕಾರಣವಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಸೋಮವಾರ ಮೇಯಲು ತೆರಳಿದ್ದ ಜಾನುವಾರುಗಳು ಕ್ರಿಮಿನಾಶಕ ಸಿಂಪಡಿಸಿದ ಹುಲ್ಲು ಅಥವಾ ಗೋವಿನ ಜೋಳದ ಬೆಳೆಯನ್ನು ತಿಂದಿರುವ ಸಾಧ್ಯತೆ ಇದೆ. ಆದರೆ ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕವಷ್ಟೇ ಸಾವಿಗೆ ನಿಖರ ಕಾರಣ ತಿಳಿಯಲಿದೆ.
ಮುನಿಯಾನ ತಾಂಡಾದಲ್ಲಿ ಜಾನುವಾರುಗಳು ಸಾವನ್ನಪ್ಪುತ್ತಿರುವ ಮಾಹಿತಿ ಲಭ್ಯವಾಗಿದೆ. ಬಹುತೇಕ ಜಾನುವಾರುಗಳು ಕ್ರಿಮಿನಾಶಕ ಸಿಂಪಡಿಸಿದ ಹುಲ್ಲು ಅಥವಾ ಗೋವಿನ ಜೋಳದ ಬೆಳೆಯನ್ನು ತಿಂದಿರುವ ಶಂಕೆ ಇದೆ. ಮೃತಪಟ್ಟ ಜಾನುವಾರುಗಳ ಮರಣೋತ್ತರ ಪರೀಕ್ಷೆ ನಡೆಸಿದ ನಂತರವೇ ನಿಖರ ಕಾರಣ ತಿಳಿಯಲಿದೆ. ಅಸ್ವಸ್ಥ ಜಾನುವಾರುಗಳಿಗೆ ಅಗತ್ಯ ಚಿಕಿತ್ಸೆ ನೀಡಲಾಗುತ್ತಿದೆ. ನಿಖರ ಮಾಹಿತಿಗಾಗಿ ಜಾನುವಾರುಗಳ ಹೊಟ್ಟೆಯ ಅಂಶದ ಮಾದರಿಯನ್ನು ಬಾಗಲಕೋಟೆಯ ಪ್ರಾಣಿ ರೋಗ ತಪಾಸಣಾ ಕೇಂದ್ರಕ್ಕೆ ಕಳುಹಿಸಲಾಗಿದೆ ಎಂದು ಶಿರಹಟ್ಟಿ ಪಶುವೈದ್ಯಕೀಯ ಸೇವಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ನಿಂಗಪ್ಪ ಓಲೆಕಾರ ತಿಳಿಸಿದ್ದಾರೆ.
ಜಾನುವಾರುಗಳನ್ನೇ ನಂಬಿ ಬದುಕುತ್ತಿರುವ ಕುಟುಂಬಗಳಿಗೆ ಈ ಸಾವು ದೊಡ್ಡ ಆರ್ಥಿಕ ಹೊಡೆತ ನೀಡಿದೆ. ಒಂದು ಜಾನುವಾರು ಕಳೆದುಕೊಂಡರೂ ಕುಟುಂಬದ ದಿನನಿತ್ಯದ ಆದಾಯಕ್ಕೆ ಹೊಡೆತ ಬೀಳುವ ಪರಿಸ್ಥಿತಿಯಲ್ಲಿ, ಒಂದೇ ತಾಂಡಾದಲ್ಲಿ ಹಲವು ಜಾನುವಾರುಗಳನ್ನು ಕಳೆದುಕೊಂಡಿರುವುದು ಕುಟುಂಬಗಳ ಮುಂದಿನ ಬದುಕಿನ ಬಗ್ಗೆಯೂ ಪ್ರಶ್ನೆ ಮೂಡಿಸಿದೆ.
ಹೈನುಗಾರಿಕೆಯನ್ನೇ ನಂಬಿ ಬದುಕುತ್ತಿರುವ ಕುಟುಂಬಗಳ ಜೀವನಾಧಾರವೇ ಕಳೆದುಹೋಗಿದೆ. ಸರ್ಕಾರ ತಕ್ಷಣ ಸ್ಪಂದಿಸಿ ಮೃತಪಟ್ಟ ಪ್ರತಿ ಜಾನುವಾರಿಗೆ ಕನಿಷ್ಠ ₹30 ಸಾವಿರ ಪರಿಹಾರ ನೀಡಬೇಕು ಎಂದು ಮುಖಂಡ ನೂರಪ್ಪ ಲಮಾಣಿ ಆಗ್ರಹಿಸಿದ್ದಾರೆ.
ಮುನಿಯಾನ ತಾಂಡಾದಲ್ಲಿ ಈಗ ಒಂದೇ ಬೇಡಿಕೆ—ಮೂಕ ಪ್ರಾಣಿಗಳ ಸಾವಿಗೆ ಕಾರಣವೇನು ಎಂಬುದು ಬೇಗ ಬಹಿರಂಗವಾಗಬೇಕು. ಅಸ್ವಸ್ಥ ಜಾನುವಾರುಗಳು ಬದುಕುಳಿಯಬೇಕು. ಜಾನುವಾರುಗಳನ್ನು ಕಳೆದುಕೊಂಡ ಕುಟುಂಬಗಳಿಗೆ ಸರ್ಕಾರ ನೆರವಿನ ಹಸ್ತ ಚಾಚಬೇಕು. ಕಣ್ಣೀರಿನಲ್ಲಿ ಮುಳುಗಿರುವ ತಾಂಡಾದ ಕುಟುಂಬಗಳು ಈಗ ಸರ್ಕಾರದ ಸ್ಪಂದನೆಯತ್ತ ಎದುರು ನೋಡುತ್ತಿವೆ.