Home Blog

ಮಳೆಯ ನಿರೀಕ್ಷೆಯಲ್ಲಿ ಗುರ್ಜಿ ಪೂಜೆ: ಅಬ್ಬಿಗೇರಿಯಲ್ಲಿ ಜೀವಂತವಾದ ಜನಪದ ಸಂಪ್ರದಾಯ

0

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: “ಗುರ್ಜಿ… ಗುರ್ಜಿ… ಎಲ್ಲಾಡಿ ಬಂದೆ… ಹಳ್ಳ-ಕೊಳ್ಳ ತಿರುಗಾಡಿ ಬಂದೆ… ಕಾರ ಮಳೆಯೇ, ಕಪ್ಪತ್ತ ಮಳೆಯೇ…” ಎಂಬ ಜನಪದ ಗೀತೆಯ ನಿನಾದದೊಂದಿಗೆ ಸಮೀಪದ ಅಬ್ಬಿಗೇರಿ ಗ್ರಾಮದ ಗೌಡ್ರ ಓಣಿಯ ರೈತ ಮಹಿಳೆಯರು ಸಾಂಪ್ರದಾಯಿಕ ಗುರ್ಜಿ ಪೂಜೆ ನೆರವೇರಿಸಿ ಮಳೆರಾಯನಿಗೆ ಮೊರೆ ಹೋದರು.

ಮುಂಗಾರು ಆರಂಭದಲ್ಲಿ ಸುರಿದ ಅಲ್ಪ ಪ್ರಮಾಣದ ಮಳೆಯನ್ನೇ ನಂಬಿ ರೈತರು ಶೇಂಗಾ, ತೊಗರಿ, ಹೆಸರು ಹಾಗೂ ಗೋವಿನ ಜೋಳ ಸೇರಿದಂತೆ ವಿವಿಧ ಬೆಳೆಗಳ ಬಿತ್ತನೆ ಪೂರ್ಣಗೊಳಿಸಿದ್ದರು. ಆದರೆ ಕಳೆದ ಹಲವು ದಿನಗಳಿಂದ ಮಳೆ ಕಾಣಿಸದ ಕಾರಣ ಮೊಳಕೆ ಒಡೆಯುತ್ತಿರುವ ಬೀಜಗಳಿಗೆ ತೇವಾಂಶದ ಕೊರತೆ ಎದುರಾಗಿದ್ದು, ರೈತರಲ್ಲಿ ಆತಂಕ ಮನೆ ಮಾಡಿದೆ.

ಈ ಹಿನ್ನೆಲೆಯಲ್ಲಿ ಗ್ರಾಮದ ಮಹಿಳೆಯರು ಶತಮಾನಗಳಿಂದ ನಡೆದುಕೊಂಡು ಬಂದಿರುವ ಜನಪದ ಸಂಪ್ರದಾಯದಂತೆ ಗುರ್ಜಿ ಪೂಜೆ ಆಚರಿಸಿದರು. ರೊಟ್ಟಿ ಬೇಯಿಸುವ ಹಂಚಿನ ಮೇಲೆ ಆಕಳ ಸಗಣಿಯಿಂದ ತಯಾರಿಸಿದ ಗುರ್ಜಿ ಮೂರ್ತಿಯನ್ನು ಪ್ರತಿಷ್ಠಾಪಿಸಿ, ಹಸಿರು ಹುಲ್ಲಿನ ಸಸಿಗಳಿಂದ ಅಲಂಕರಿಸಿ ಗ್ರಾಮದ ಓಣಿ-ಓಣಿಗಳಲ್ಲಿ ಸಂಚರಿಸಿದರು.

ಮಹಿಳೆಯರು ಜನಪದ ಹಾಡುಗಳನ್ನು ಹಾಡುತ್ತಾ ಪ್ರತಿ ಮನೆಯ ಮುಂದೆ ತೆರಳಿದಾಗ, ಮನೆಯವರು ಗುರ್ಜಿ ಹೊತ್ತ ಮಹಿಳೆಯರ ತಲೆ ಮೇಲೆ ನೀರು ಸುರಿದು ಪೂಜೆ ಸಲ್ಲಿಸಿದರು. ಜೋಳ, ರೊಟ್ಟಿ-ಪಲ್ಲೆ, ಧಾನ್ಯ, ಪುಡಿಗಾಸು ಸೇರಿದಂತೆ ವಿವಿಧ ದವಸಧಾನ್ಯಗಳನ್ನು ಸಮರ್ಪಿಸಿದರು.

ಪೂಜೆಯ ನಂತರ ಸಂಗ್ರಹವಾದ ದವಸಧಾನ್ಯಗಳಿಂದ ಗೋಧಿ ಹುಗ್ಗಿ, ಜೋಳದ ಸಂಗಟಿ ಹಾಗೂ ಸಾರು ತಯಾರಿಸಿ ಹಳ್ಳದ ದಡದಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು. ಬಳಿಕ ಜಂಗಮರಾಧನೆ ಮತ್ತು ಅನ್ನಸಂತರ್ಪಣೆ ನಡೆಯಿತು.

ರೈತ ಮಹಿಳೆಯರಾದ ಮಲ್ಲಮ್ಮ ಬೇಲೇರಿ, ಮಂಜಕ್ಕ ಸೊಬರದ, ಶಿವಲೀಲಾ ಪಾಟೀಲ, ಸಂಗಮ್ಮ ಬಾಗೂರ, ಅಕ್ಕಮ್ಮ ಚನ್ನಪ್ಪಗೌಡ್ರ, ವೀಣಾ ಬೇಲೇರಿ ಹಾಗೂ ಕವಿತಾ ಕಿರಟಗೇರಿ ಮಾತನಾಡಿ, ಇನ್ನೂ ಕೆಲವೇ ದಿನಗಳಲ್ಲಿ ಮಳೆಯಾಗದಿದ್ದರೆ ಬಿತ್ತಿದ ಬೀಜಗಳು ಒಣಗುವ ಭೀತಿ ಇದೆ. ಈಗಾಗಲೇ ಬೀಜ, ಗೊಬ್ಬರ ಮತ್ತು ಉಳುಮೆಗೆ ಹೆಚ್ಚಿನ ವೆಚ್ಚ ಮಾಡಿದ್ದು, ಮಳೆ ಕೈಕೊಟ್ಟರೆ ರೈತರು ಸಂಕಷ್ಟಕ್ಕೆ ಸಿಲುಕಲಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

“ಗುರ್ಜಿ ಪೂಜೆ ನಮ್ಮ ಸಂಪ್ರದಾಯ ಮಾತ್ರವಲ್ಲ, ರೈತರ ಬದುಕಿನ ಭರವಸೆಯ ಸಂಕೇತ. ಮಳೆರಾಯ ಕೃಪೆ ತೋರಿ ಬೆಳೆ ಉಳಿಸಲಿ ಎಂಬುದೇ ನಮ್ಮ ಪ್ರಾರ್ಥನೆ.”

 ಶಿವಲೀಲಾ ಪಾಟೀಲ, ರೈತ ಮಹಿಳೆ

ಕನ್ನಡ ವಿದ್ಯಾರ್ಥಿಗಳಿಗೆ ‘ಬಿ ಶ್ರೇಣಿ’ ನೀಡುವುದು ಖಂಡನೀಯ

0

ವಿಜಯಸಾಕ್ಷಿ ಸುದ್ದಿ, ಗದಗ: ಸರ್ಕಾರಿ ಶಾಲೆಗಳಲ್ಲಿ ದ್ವಿಭಾಷಾ ಮಾಧ್ಯಮದ ಹೆಸರಿನಲ್ಲಿ ಕನ್ನಡ ಮಾಧ್ಯಮದಲ್ಲಿ ಉತ್ತರಿಸುವ ವಿದ್ಯಾರ್ಥಿಗಳಿಗೆ ‘ಬಿ ಶ್ರೇಣಿ’ ಹಾಗೂ ಇಂಗ್ಲಿಷ್ ಮಾಧ್ಯಮದಲ್ಲಿ ಉತ್ತರಿಸುವವರಿಗೆ ಮಾತ್ರ ‘ಎ ಶ್ರೇಣಿ’ ನೀಡುತ್ತಿರುವ ಕ್ರಮವನ್ನು ಎಐಡಿಎಸ್ಓ (ಅಖಿಲ ಭಾರತ ಪ್ರಜಾಸತ್ತಾತ್ಮಕ ವಿದ್ಯಾರ್ಥಿ ಸಂಘಟನೆ) ತೀವ್ರವಾಗಿ ಖಂಡಿಸಿದೆ.

ಸೇತುಬಂಧ ಪರೀಕ್ಷೆಗಳ ಮೌಲ್ಯಮಾಪನದಲ್ಲಿ ಈ ಮಾನದಂಡವನ್ನು ಅನುಸರಿಸುತ್ತಿರುವುದು ಭಾಷಾ ಆಯ್ಕೆಯ ಸ್ವಾತಂತ್ರ್ಯದ ಉಲ್ಲಂಘನೆಯಾಗಿದ್ದು, ಕನ್ನಡ ಮಾಧ್ಯಮದ ವಿದ್ಯಾರ್ಥಿಗಳ ವಿರುದ್ಧ ತಾರತಮ್ಯ ಎಸಗಿದಂತಾಗಿದೆ ಎಂದು ಸಂಘಟನೆ ಆರೋಪಿಸಿದೆ.

ಪ್ರಾಥಮಿಕ ಶಿಕ್ಷಣದಲ್ಲಿ ಮಾತೃಭಾಷೆಗೆ ಉತ್ತೇಜನ ನೀಡಬೇಕೆಂದು ಸುಪ್ರೀಂಕೋರ್ಟ್ ನೀಡಿರುವ ನಿರ್ದೇಶನಗಳಿಗೂ ಈ ಕ್ರಮ ವಿರುದ್ಧವಾಗಿದೆ. ಪ್ರಾಥಮಿಕ ಹಂತದಲ್ಲಿ ಮಾತೃಭಾಷಾ ಶಿಕ್ಷಣವನ್ನು ಬಲಪಡಿಸುವ ಬದಲು ಕನ್ನಡಕ್ಕೆ ಎರಡನೇ ಸ್ಥಾನ ನೀಡುವ ರೀತಿಯಲ್ಲಿ ಸರ್ಕಾರ ನಡೆದುಕೊಳ್ಳುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪಾಲಕರೊಂದಿಗೆ ಸಮಾಲೋಚನೆ ನಡೆಸದೆ ದ್ವಿಭಾಷಾ ಮಾಧ್ಯಮವನ್ನು ಜಾರಿಗೊಳಿಸಿರುವುದೇ ಇಂತಹ ಸಮಸ್ಯೆಗಳಿಗೆ ಕಾರಣವಾಗಿದೆ. ಮಾತೃಭಾಷಾ ಶಿಕ್ಷಣವು ವಿದ್ಯಾರ್ಥಿಗಳ ಮಾನಸಿಕ ಬೆಳವಣಿಗೆಗೆ ಮೂಲಾಧಾರವಾಗಿದ್ದು, ಶಿಕ್ಷಣ ತಜ್ಞರ ಅಭಿಪ್ರಾಯಗಳನ್ನು ಕಡೆಗಣಿಸಿ ಸರ್ಕಾರ ನಡೆದುಕೊಳ್ಳುತ್ತಿದೆ ಎಂದು ಎಐಡಿಎಸ್ಓ ಆರೋಪಿಸಿದೆ.

ಕನ್ನಡ ಮಾಧ್ಯಮದ ಆಯ್ಕೆ ಸ್ವಾತಂತ್ರ್ಯವನ್ನು ರಕ್ಷಿಸಿ ಉತ್ತೇಜನ ನೀಡಬೇಕು ಹಾಗೂ ಈ ಅವೈಜ್ಞಾನಿಕ ಮತ್ತು ಅಪ್ರಜಾತಾಂತ್ರಿಕ ಕ್ರಮವನ್ನು ಕೂಡಲೇ ಕೈಬಿಡಬೇಕು ಎಂದು ಎಐಡಿಎಸ್ಓ ಜಿಲ್ಲಾ ಸಂಚಾಲಕಿ ಎಂ. ಶಾಂತಿ ಆಗ್ರಹಿಸಿದ್ದಾರೆ.

“ಕನ್ನಡದಲ್ಲಿ ಉತ್ತರ ಬರೆದ ವಿದ್ಯಾರ್ಥಿಗಳಿಗೆ ಕಡಿಮೆ ಶ್ರೇಣಿ ನೀಡುವುದು ಭಾಷಾ ತಾರತಮ್ಯವಾಗಿದೆ. ಸರ್ಕಾರ ಕೂಡಲೇ ಈ ಕ್ರಮವನ್ನು ಹಿಂಪಡೆದು ಕನ್ನಡ ಮಾಧ್ಯಮದ ವಿದ್ಯಾರ್ಥಿಗಳ ಹಕ್ಕುಗಳನ್ನು ರಕ್ಷಿಸಬೇಕು.”

ಎಂ. ಶಾಂತಿ, ಜಿಲ್ಲಾ ಸಂಚಾಲಕಿ, ಎಐಡಿಎಸ್ಓ ಗದಗ

ಜನ್ಮದಿನಕ್ಕೆ ಸಮಾಜಸೇವೆ ಸ್ಪರ್ಶ: ವಿದ್ಯಾರ್ಥಿಗಳಿಗೆ ವಿದ್ಯಾಕಿಟ್, ರೈತರಿಗೆ ಸಾವಯವ ಗೊಬ್ಬರ ವಿತರಣೆ

0

ವಿಜಯಸಾಕ್ಷಿ ಸುದ್ದಿ, ಗದಗ: ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಕನ್ನಡ ಜಾಗೃತಿ ವೇದಿಕೆಯ ರಾಜ್ಯ ಕಾರ್ಯದರ್ಶಿಗಳಾದ, ರೈತಪರ ಯುವ ಮುಖಂಡ ಪ್ರಭುರಾಜಗೌಡ ವಿ. ಪಾಟೀಲ ಅವರ ಜನ್ಮದಿನದ ಅಂಗವಾಗಿ ನಗರದ ಶ್ರೀ ದುರ್ಗಾದೇವಿ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಉಚಿತ ವಿದ್ಯಾಕಿಟ್ ಹಾಗೂ ರೈತರಿಗೆ ಸಾವಯವ ಗೊಬ್ಬರದ ಕಿಟ್‌ಗಳನ್ನು ವಿತರಿಸುವ ಮೂಲಕ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಪ್ರಭುರಾಜಗೌಡ ಪಾಟೀಲ ಅವರ ಸ್ನೇಹಿತರ ಬಳಗದ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಾಲೆಯ ಎಲ್ಲ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ಹಾಗೂ ಇತರೆ ಶೈಕ್ಷಣಿಕ ಸಾಮಗ್ರಿಗಳ ಕಿಟ್ ವಿತರಿಸಲಾಯಿತು. ಇದೇ ವೇಳೆ ರೈತರಿಗೆ ಸಾವಯವ ಕೃಷಿ ಉತ್ತೇಜಿಸುವ ಉದ್ದೇಶದಿಂದ ಸಾವಯವ ಗೊಬ್ಬರದ ಕಿಟ್‌ಗಳನ್ನು ಉಚಿತವಾಗಿ ನೀಡಲಾಯಿತು.

ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ್ದ ವೈದ್ಯ ಹಾಗೂ ಸಾಮಾಜಿಕ ಕಾರ್ಯಕರ್ತ ಡಾ. ಗಣೇಶ ಸುಲ್ತಾನಪೂರ ಮಾತನಾಡಿ, ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಕಿಟ್ ಹಾಗೂ ರೈತರಿಗೆ ಸಾವಯವ ಕೃಷಿ ಕಿಟ್ ವಿತರಿಸುವ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡಲಾಗಿದೆ. ಕಳೆದ ಎರಡು ದಶಕಗಳಿಂದ ಕನ್ನಡಪರ, ರೈತಪರ ಹಾಗೂ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿರುವ ಪ್ರಭುರಾಜಗೌಡ ಪಾಟೀಲ ಯುವಜನತೆಗೆ ಮಾದರಿಯಾಗಿದ್ದಾರೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಶ್ರೀ ದುರ್ಗಾದೇವಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವೆಂಕಟೇಶ ಇಮರಾಪೂರ ಮಾತನಾಡಿ, ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಮಗ್ರಿ ಹಾಗೂ ರೈತರಿಗೆ ಸಾವಯವ ಗೊಬ್ಬರ ವಿತರಿಸಿರುವುದು ಶ್ಲಾಘನೀಯ ಕಾರ್ಯವಾಗಿದೆ. ರೈತರು ಸಾವಯವ ಕೃಷಿಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ವಿಷಮುಕ್ತ ಆಹಾರ ಉತ್ಪಾದನೆಗೆ ಮುಂದಾಗಬೇಕು ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಶ್ರೀ ದುರ್ಗಾದೇವಿ ಶಿಕ್ಷಣ ಸಂಸ್ಥೆ ಹಾಗೂ ಡಾ. ಗಣೇಶ ಸುಲ್ತಾನಪೂರ ಅವರ ವತಿಯಿಂದ ಪ್ರಭುರಾಜಗೌಡ ಪಾಟೀಲ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಪ್ರಭುರಾಜಗೌಡ ಪಾಟೀಲ, ವಿದ್ಯಾರ್ಥಿಗಳು ಉತ್ತಮ ಶಿಕ್ಷಣದೊಂದಿಗೆ ಶಿಸ್ತು, ಸಂಸ್ಕಾರಗಳನ್ನು ರೂಢಿಸಿಕೊಳ್ಳಬೇಕು. ರಾಸಾಯನಿಕ ಗೊಬ್ಬರಗಳ ಅತಿಯಾದ ಬಳಕೆಯಿಂದ ಮಣ್ಣಿನ ಫಲವತ್ತತೆ ಕುಂಠಿತವಾಗುತ್ತಿದ್ದು, ರೈತರು ಸಾವಯವ ಕೃಷಿಯತ್ತ ಮುಖ ಮಾಡಿದರೆ ಕಡಿಮೆ ವೆಚ್ಚದಲ್ಲಿ ಉತ್ತಮ ಇಳುವರಿ ಪಡೆಯಬಹುದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಪ್ರಗತಿಪರ ರೈತರಾದ ಈರಪ್ಪ ಜಡಿ, ವಿರುಪಾಕ್ಷಪ್ಪ ಕೋತಂಬ್ರಿ, ಬಾಪುಗೌಡ ಮಲ್ಲಾಪೂರ, ಯುವ ಮುಖಂಡರಾದ ಚೇತನಕುಮಾರ ಹುಡೇದ, ಅಜಯ ಕುಲಕರ್ಣಿ, ಸಂತೋಷ ಪಾಟೀಲ, ಯಲ್ಲಪ್ಪ ಜಡಿ, ಸಂಗಪ್ಪ ಮೇಟಿ, ಶಿಕ್ಷಣ ಸಂಸ್ಥೆಯ ಪ್ರಮುಖರಾದ ಡಾ. ಮುತ್ತು ಜಡಿ, ಹೀರಾಲಾಲ ಸಿಂಗ್ರಿ, ರುದ್ರಗೌಡ ಪಾಟೀಲ, ಲೋಕೇಶ ಮಲ್ಲಿಗವಾಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.

“ವಿದ್ಯಾರ್ಥಿಗಳಿಗೆ ಶಿಕ್ಷಣ ಮತ್ತು ರೈತರಿಗೆ ಸಾವಯವ ಕೃಷಿಯ ಅರಿವು ನೀಡುವ ಕಾರ್ಯಗಳು ಸಮಾಜಮುಖಿ ಚಟುವಟಿಕೆಗಳಾಗಿವೆ. ಯುವಕರು ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುವುದು ಅಗತ್ಯ.”

ಡಾ. ಗಣೇಶ ಸುಲ್ತಾನಪೂರ

ಎಚ್.ಕೆ. ಪಾಟೀಲರಿಗೆ ಸಚಿವ ಸ್ಥಾನಕ್ಕೆ ಗದಗದಲ್ಲಿ ಬೃಹತ್ ಪ್ರತಿಭಟನೆ

0

ವಿಜಯಸಾಕ್ಷಿ ಸುದ್ದಿ, ಗದಗ: ರಾಜ್ಯದ ಸಮಗ್ರ ಅಭಿವೃದ್ಧಿಯ ದೃಷ್ಟಿಯಿಂದ ಹಿರಿಯ ಕಾಂಗ್ರೆಸ್ ನಾಯಕ, ಶಾಸಕ ಎಚ್.ಕೆ. ಪಾಟೀಲರಿಗೆ ಮುಂಬರುವ ಸಚಿವ ಸಂಪುಟ ವಿಸ್ತರಣೆಯಲ್ಲಿ ಸೂಕ್ತ ಸ್ಥಾನ ನೀಡಬೇಕು ಎಂದು ಆಗ್ರಹಿಸಿ ಮಂಗಳವಾರ ಗದಗ ನಗರದಲ್ಲಿ ಅಭಿಮಾನಿಗಳು, ಕಾಂಗ್ರೆಸ್ ಕಾರ್ಯಕರ್ತರು ಹಾಗೂ ವಿವಿಧ ಸಂಘಟನೆಗಳ ಮುಖಂಡರು ಬೃಹತ್ ಪ್ರತಿಭಟನೆ ನಡೆಸಿದರು.

ದಿ. ಕಾಟನ್ ಸೇಲ್ ಸೊಸೈಟಿ ಆವರಣದಿಂದ ಆರಂಭವಾದ ಮೆರವಣಿಗೆ ಭೂಮರಡ್ಡಿ ಸರ್ಕಲ್, ಮಹಾತ್ಮ ಗಾಂಧಿ ಸರ್ಕಲ್, ಮಹೇಂದ್ರಕರ್ ಸರ್ಕಲ್, ಟಾಂಗಾ ಕೂಟ, ಬಸವೇಶ್ವರ ಸರ್ಕಲ್, ಪಂಚರ ಹೊಂಡ ಹಾಗೂ ಐತಿಹಾಸಿಕ ಜೋಡ ಮಾರುತಿ ದೇವಸ್ಥಾನದ ಮಾರ್ಗವಾಗಿ ಮುಳಗುಂದ ನಾಕಾವರೆಗೆ ಸಾಗಿತು. ಮೆರವಣಿಗೆಯುದ್ದಕ್ಕೂ ಕಾರ್ಯಕರ್ತರು ಎಚ್.ಕೆ. ಪಾಟೀಲರ ಪರ ಘೋಷಣೆಗಳನ್ನು ಕೂಗಿ ಸಚಿವ ಸ್ಥಾನ ನೀಡುವಂತೆ ಕಾಂಗ್ರೆಸ್ ಹೈಕಮಾಂಡ್‌ಗೆ ಒತ್ತಾಯಿಸಿದರು.

ಗದಗ-ಬೆಟಗೇರಿ ಅವಳಿ ನಗರದ 35 ವಾರ್ಡ್‌ಗಳ ಜೊತೆಗೆ ಗದಗ ವಿಧಾನಸಭಾ ಕ್ಷೇತ್ರದ ಗ್ರಾಮೀಣ ಭಾಗಗಳಿಂದಲೂ ಅಪಾರ ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು. ಆಟೋ ಚಾಲಕರು, ರೈತರು, ಯುವಕರು, ಮಹಿಳೆಯರು, ಎತ್ತು ಚಕ್ಕಡಿಗಳು ಹಾಗೂ ಟ್ರ್ಯಾಕ್ಟರ್‌ಗಳ ಮೂಲಕ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದು ಗಮನ ಸೆಳೆಯಿತು.

ಮೆರವಣಿಗೆಯಲ್ಲಿ ಎಚ್.ಕೆ. ಪಾಟೀಲರ ರಾಜಕೀಯ ಅನುಭವ, ಆಡಳಿತಾತ್ಮಕ ಸಾಮರ್ಥ್ಯ ಹಾಗೂ ರಾಜ್ಯದ ಅಭಿವೃದ್ಧಿಗೆ ನೀಡಿರುವ ಕೊಡುಗೆಗಳನ್ನು ಬಿಂಬಿಸುವ ಬ್ಯಾನರ್‌ಗಳು ಮತ್ತು ಫಲಕಗಳು ರಾರಾಜಿಸುತ್ತಿದ್ದವು. ಬಿರು ಬಿಸಿಲಿನ ನಡುವೆಯೂ ಕಾರ್ಯಕರ್ತರು ಉತ್ಸಾಹದಿಂದ ಹೆಜ್ಜೆ ಹಾಕಿದರು. ಪ್ರತಿಭಟನಾಕಾರರಿಗಾಗಿ ಸ್ಥಳೀಯ ಮುಖಂಡರು ಮಜ್ಜಿಗೆ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದರು.

ಸಮಾವೇಶದಲ್ಲಿ ಏಕಸ್ವರದ ಆಗ್ರಹ

ಮುಳಗುಂದ ನಾಕಾದಲ್ಲಿ ಮೆರವಣಿಗೆ ಬೃಹತ್ ಸಮಾವೇಶವಾಗಿ ಮಾರ್ಪಟ್ಟಿತು. ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು, ಎಚ್.ಕೆ. ಪಾಟೀಲ ಅವರು ಕೇವಲ ಗದಗ ಕ್ಷೇತ್ರದ ಶಾಸಕರಲ್ಲ, ಇಡೀ ರಾಜ್ಯದ ರಾಜಕೀಯ ಆಸ್ತಿ. ಆಡಳಿತ, ಕಾನೂನು, ಅಭಿವೃದ್ಧಿ ಮತ್ತು ಸಾರ್ವಜನಿಕ ಜೀವನದ ಅಪಾರ ಅನುಭವ ಹೊಂದಿರುವ ಅವರನ್ನು ಸಚಿವ ಸಂಪುಟದಲ್ಲಿ ಸೇರಿಸಿಕೊಳ್ಳುವುದು ರಾಜ್ಯದ ಹಿತದೃಷ್ಟಿಯಿಂದ ಅಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.

ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ಬಿ.ಬಿ. ಅಸೂಟಿ, ಹಾವೇರಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕೊಟ್ರಪ್ಪ ಬಸೇಗಣ್ಣಿ, ಸುಜಾತಾ ದೊಡ್ಡಮನಿ, ಗುರಣ್ಣ ಬಳಗಾನೂರ, ರವಿ ಮೂಲಿಮನಿ, ಬಸವರಾಜ ಸುಂಕಾಪೂರ, ನೀಲಮ್ಮ ಬೋಳನವರ, ಅಶೋಕ ಮಂದಾಲಿ, ಬರಕತ್ ಅಲಿ ಮುಲ್ಲಾ, ವಾಸಣ್ಣ ಕುರುಡಗಿ, ಬಸವರಾಜ ಕಡೆಮನಿ, ಶಾಂತಣ್ಣ ಮುಳವಾಡ, ಬಿ.ಆರ್. ದೇವರಡ್ಡಿ, ಮಹಮ್ಮದ್ ಶಾಲಗಾರ, ಮಾಂತೇಶ ಮಡಿವಾಳರ, ಪರಪ್ಪ ಕಮತರ, ಸರಫರಾಜ್ ಬಬರ್ಚಿ, ಮೋಹನ ದುರಗಣ್ಣವರ, ಚಂದ್ರಪ್ಪ ಕರಿಕಟ್ಟಿ, ಪೀರಸಾಬ ಕೌತಾಳ, ಅಕ್ಬರ್ ಸಾಬ್ ಬಬರ್ಚಿ, ಎಸ್.ಪಿ. ಬಳಿಗಾರ ಸೇರಿದಂತೆ ಸಾವಿರಾರು ಜನರು ಪಾಲ್ಗೊಂಡಿದ್ದರು.

“ಎಚ್.ಕೆ. ಪಾಟೀಲರು ಈ ರಾಜ್ಯದ ನೆಲ, ಜಲ, ಭಾಷೆ ಮತ್ತು ಸಮಗ್ರ ಅಭಿವೃದ್ಧಿಗಾಗಿ ನಿರಂತರವಾಗಿ ಹೋರಾಡಿದ ನಾಯಕರು. ಅವರ ಅನುಭವ ಮತ್ತು ದೂರದೃಷ್ಟಿ ಸಚಿವ ಸಂಪುಟದಲ್ಲಿ ರಾಜ್ಯಕ್ಕೆ ಅಗತ್ಯವಾಗಿದೆ. ಅವರಿಗೆ ಸಚಿವ ಸ್ಥಾನ ನೀಡುವುದು ಗದಗ ಜಿಲ್ಲೆಯ ಬೇಡಿಕೆಯಷ್ಟೇ ಅಲ್ಲ, ರಾಜ್ಯದ ಜನರ ಆಶಯವಾಗಿದೆ.”

ಸಯ್ಯದ್ ಖಾಲಿದ್ ಕೊಪ್ಪಳ

ಕಾಂಗ್ರೆಸ್ ಯುವ ಮುಖಂಡ

ಸಾಧಕರಿಗೆ ಸನ್ಮಾನಿಸಿ ಮಾದರಿಯಾದ ಐಎಂಎ

0

ವಿಜಯಸಾಕ್ಷಿ ಸುದ್ದಿ, ಗದಗ: ವಿದ್ಯಾರ್ಥಿಗಳ ಜೀವನ ರೂಪಿಸುವಲ್ಲಿ ಎಸ್‌ಎಸ್‌ಎಲ್‌ಸಿ ಹಂತ ಮಹತ್ವದ ಘಟ್ಟವಾಗಿದ್ದು, ರಾಜ್ಯಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಗದಗ ಜಿಲ್ಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿರುವುದು ಹೆಮ್ಮೆಯ ಸಂಗತಿ ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಹೇಳಿದರು.

ನಗರದ ಭಾರತೀಯ ವೈದ್ಯಕೀಯ ಸಂಘ (ಐಎಂಎ), ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಶಾಲಾ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಐಎಂಎ ಶತಮಾನೋತ್ಸವ ಸಂಭ್ರಮದ ಅಂಗವಾಗಿ ಆಯೋಜಿಸಿದ್ದ 2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪ್ರತಿಭಾವಂತ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಗದಗದ ಐಎಂಎ ಸಂಸ್ಥೆಗೆ ಶತಮಾನಕ್ಕೂ ಮೀರಿದ ಇತಿಹಾಸವಿದ್ದು, ಸಮಾಜಕ್ಕೆ ಮರಳಿ ಏನನ್ನಾದರೂ ನೀಡಬೇಕು ಎಂಬ ಧ್ಯೇಯದೊಂದಿಗೆ ವೈದ್ಯರು ಶಿಕ್ಷಣ, ಆರೋಗ್ಯ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ನಿರಂತರ ಸೇವೆ ಸಲ್ಲಿಸುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.

ಸಾಧಕ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ಹಾಗೂ ಸನ್ಮಾನ ನೀಡುವ ಮೂಲಕ ಅವರಲ್ಲಿ ಆತ್ಮವಿಶ್ವಾಸ ತುಂಬುವ ಕಾರ್ಯವನ್ನು ಐಎಂಎ ಮಾಡುತ್ತಿದೆ. ವಿದ್ಯಾರ್ಥಿಗಳು ತಮ್ಮ ಸಾಧನೆಯ ಹಾದಿಯನ್ನು ಮುಂದುವರಿಸಿಕೊಂಡು ಯಶಸ್ಸಿನ ಶಿಖರ ತಲುಪಬೇಕು ಎಂದು ಕರೆ ನೀಡಿದರು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ಹಂಗಾಮಿ ಕುಲಪತಿ ಹಾಗೂ ಕುಲಸಚಿವ ಪ್ರೊ. ಡಾ. ಸುರೇಶ ನಾಡಗೌಡರ ಮಾತನಾಡಿ, ಅಂಕಗಳ ಜೊತೆಗೆ ಉತ್ತಮ ನಡತೆ, ಕೃತಜ್ಞತೆ ಮತ್ತು ಸಂವಹನ ಕೌಶಲ್ಯವೂ ವಿದ್ಯಾರ್ಥಿಗಳ ಯಶಸ್ಸಿಗೆ ಅಗತ್ಯವಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಜಿಲ್ಲೆ ಹಾಗೂ ತಾಲೂಕು ಮಟ್ಟದಲ್ಲಿ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

“ಸಮಾಜಕ್ಕೆ ಕೊಡುಗೆ ನೀಡುವುದರಲ್ಲಿ ಸಿಗುವ ಆತ್ಮತೃಪ್ತಿ ಅತ್ಯಂತ ದೊಡ್ಡದು. ಐಎಂಎ ವೈದ್ಯರು ಶಿಕ್ಷಣ, ಆರೋಗ್ಯ ಮತ್ತು ಸಮಾಜಮುಖಿ ಕಾರ್ಯಗಳ ಮೂಲಕ ಮಾದರಿಯಾಗಿದ್ದಾರೆ.”

 ಸಿ.ಎನ್. ಶ್ರೀಧರ್, ಜಿಲ್ಲಾಧಿಕಾರಿ

ಶಿಕ್ಷಕರು ಭವಿಷ್ಯ ರೂಪಿಸುವ ಶ್ರೇಷ್ಠ ಶಿಲ್ಪಿಗಳು: ಶ್ರೀ ಫಕೀರ ದಿಂಗಾಲೇಶ್ವರ ಮಹಾಸ್ವಾಮಿಗಳು

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಶಿಕ್ಷಕರು ಕೇವಲ ಅಕ್ಷರ ಜ್ಞಾನ ನೀಡುವವರಲ್ಲ, ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಶ್ರೇಷ್ಠ ಶಿಲ್ಪಿಗಳಾಗಿದ್ದಾರೆ ಎಂದು ಶಿರಹಟ್ಟಿ ಫಕ್ಕೀರೇಶ್ವರ ಸಂಸ್ಥಾನಮಠದ ಉತ್ತರಾಧಿಕಾರಿ ಶ್ರೀ ಫಕೀರ ದಿಂಗಾಲೇಶ್ವರ ಮಹಾಸ್ವಾಮಿಗಳು ಹೇಳಿದರು.

ಪಟ್ಟಣದ ಶ್ರೀ ಶಂಕರ ಭಾರತಿ ಕಲ್ಯಾಣ ಮಂಟಪದಲ್ಲಿ ನಿವೃತ್ತ ಮುಖ್ಯೋಪಾಧ್ಯಾಯಿನಿ ವರಮಹಾಲಕ್ಷ್ಮೀ ಪೂಜಾರ ಅವರ ಕುಟುಂಬದ ವತಿಯಿಂದ ಹಮ್ಮಿಕೊಂಡಿದ್ದ ಕೃತಜ್ಞತಾ ಸಮರ್ಪಣೆ ಹಾಗೂ ಸಾಧಕರ ಸನ್ಮಾನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಭಾರತೀಯ ಸಂಸ್ಕೃತಿಯಲ್ಲಿ ಗುರುವಿಗೆ ದೇವರ ಸ್ಥಾನ ನೀಡಲಾಗಿದ್ದು, ಅಕ್ಷರ ಜ್ಞಾನದ ಜೊತೆಗೆ ಉತ್ತಮ ಸಂಸ್ಕಾರ ಮತ್ತು ನೈತಿಕ ಮೌಲ್ಯಗಳನ್ನು ಕಲಿಸುವುದೇ ನಿಜವಾದ ಶಿಕ್ಷಣ ಎಂದು ಶ್ರೀಗಳು ಹೇಳಿದರು. 32 ವರ್ಷಗಳ ಸೇವಾವಧಿಯಲ್ಲಿ ಸಾವಿರಾರು ವಿದ್ಯಾರ್ಥಿಗಳ ಬದುಕಿಗೆ ಬೆಳಕು ನೀಡಿರುವ ವರಮಹಾಲಕ್ಷ್ಮೀ ಪೂಜಾರ ಅವರ ಸೇವೆ ಮಾದರಿಯಾಗಿದೆ ಎಂದು ಶ್ಲಾಘಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಡಿಡಿಪಿಐ ಆರ್.ಎಸ್. ಬುರಡಿ ಮಾತನಾಡಿ, ಶಿಕ್ಷಕ ವೃತ್ತಿ ಸಮಾಜ ನಿರ್ಮಾಣದ ಶ್ರೇಷ್ಠ ಸೇವೆಯಾಗಿದ್ದು, ವಿದ್ಯಾರ್ಥಿಗಳನ್ನು ಸತ್ಪ್ರಜೆಗಳಾಗಿ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳನ್ನು ಹಾಗೂ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು.

“ನಿವೃತ್ತಿ ಎಂದರೆ ಸೇವೆಯ ಅಂತ್ಯವಲ್ಲ. ಸಮಾಜಕ್ಕೆ ಜ್ಞಾನ ಮತ್ತು ಅನುಭವ ಹಂಚಿಕೊಳ್ಳಲು ದೊರೆಯುವ ಮತ್ತೊಂದು ಅವಕಾಶ.”

 ಶ್ರೀ ಫಕೀರ ದಿಂಗಾಲೇಶ್ವರ ಮಹಾಸ್ವಾಮಿಗಳು

ಜಾನಪದ ಹಾಡುಗಳು ಜನಸಾಮಾನ್ಯರ ಜೀವನಾಡಿ: ತೋಂಟದ ಶ್ರೀ

0

ವಿಜಯಸಾಕ್ಷಿ ಸುದ್ದಿ, ಗದಗ: ಜನಪದ ಸಾಹಿತ್ಯವು ಕನ್ನಡ ಸಂಸ್ಕೃತಿಯ ಜೀವಂತ ಆಕರವಾಗಿದ್ದು, ಜಾನಪದ ಹಾಡುಗಳು ಜನಸಾಮಾನ್ಯರ ಬದುಕಿನ ಭಾವನೆ, ಅನುಭವ ಮತ್ತು ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಜೀವನಾಡಿಯಾಗಿವೆ ಎಂದು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಹೇಳಿದರು.

ಲಿಂಗಾಯತ ಪ್ರಗತಿಶೀಲ ಸಂಘದ 2802ನೇ ಶಿವಾನುಭವ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು, ಗ್ರಾಮೀಣ ಜನರು ತಮ್ಮ ಕಾಯಕ, ಸುಖ-ದುಃಖ ಹಾಗೂ ಬದುಕಿನ ವಿವಿಧ ಅನುಭವಗಳನ್ನು ಜಾನಪದ ಹಾಡುಗಳ ಮೂಲಕ ಅಭಿವ್ಯಕ್ತಿಪಡಿಸುತ್ತಿದ್ದರು. ಯಾವುದೇ ಪದವಿ ಅಥವಾ ಔಪಚಾರಿಕ ಶಿಕ್ಷಣವಿಲ್ಲದಿದ್ದರೂ ತಮ್ಮ ಆಶು ಕವಿತ್ವದ ಮೂಲಕ ಅಮೂಲ್ಯ ಸಾಹಿತ್ಯವನ್ನು ಸೃಷ್ಟಿಸಿದ್ದಾರೆ ಎಂದು ಹೇಳಿದರು.

ಜನಪದ ಕೋಗಿಲೆ ಗೌರಮ್ಮ ಚಲವಾದಿ ಅವರ ಕಥೆಗಳು ಅಪಾರ ಮೌಲಿಕತೆಯನ್ನು ಹೊಂದಿದ್ದು, ಅವುಗಳನ್ನು ಇಂಗ್ಲಿಷ್‌ಗೆ ಅನುವಾದಿಸಿದರೆ ವಿಶ್ವಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗುವಷ್ಟು ಆಳವಾದ ವಿಚಾರಗಳನ್ನು ಒಳಗೊಂಡಿವೆ ಎಂದು ಅಭಿಪ್ರಾಯಪಟ್ಟರು.

‘ಜನಪದ ಸಾಹಿತ್ಯದಲ್ಲಿ ಜೀವನ ಮೌಲ್ಯಗಳು’ ವಿಷಯದ ಕುರಿತು ಉಪನ್ಯಾಸ ನೀಡಿದ ಕುಷ್ಟಗಿಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಜೀವನಸಾಬ್ ಮಾ. ವಾಲಿಕಾರ, ಜನಪದರು ಸಂಸ್ಕೃತಿಯ ರಾಯಭಾರಿಗಳಾಗಿದ್ದು, ಸಮಾಜದಲ್ಲಿ ಸಮಷ್ಟಿ ಹಿತದ ಬದುಕಿಗೆ ಪ್ರೇರಣೆಯಾಗಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಲಿಂಗಾಯತ ಪ್ರಗತಿಶೀಲ ಸಂಘದ ಮಾಜಿ ಅಧ್ಯಕ್ಷ ಈಶ್ವರಪ್ಪ ಮುನವಳ್ಳಿ ದಂಪತಿಗಳನ್ನು ಸನ್ಮಾನಿಸಲಾಯಿತು. ಲಲಿತಕಲಾ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ತಿರುಪತಿ ಶಿವನಗುತ್ತಿ ಅವರನ್ನು ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ವಚನ ಸಂಗೀತ, ಧರ್ಮಗ್ರಂಥ ಪಠಣ ಹಾಗೂ ವಚನ ಚಿಂತನ ಕಾರ್ಯಕ್ರಮಗಳು ಜರುಗಿದವು. ಸಂಘದ ಪದಾಧಿಕಾರಿಗಳು, ಭಕ್ತರು ಹಾಗೂ ಗಣ್ಯರು ಭಾಗವಹಿಸಿದ್ದರು.

ಕೋಟ್

“ಜನಪದ ಸಾಹಿತ್ಯವು ಕೇವಲ ಹಾಡು ಅಥವಾ ಕಥೆಗಳ ಸಂಗ್ರಹವಲ್ಲ; ಅದು ಕನ್ನಡಿಗರ ಬದುಕು, ಸಂಸ್ಕೃತಿ ಮತ್ತು ಜೀವನ ಮೌಲ್ಯಗಳನ್ನು ಪ್ರತಿಬಿಂಬಿಸುವ ಅಮೂಲ್ಯ ಪರಂಪರೆಯಾಗಿದೆ.”

ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು

ಮಲೇರಿಯಾ ನಿರ್ಮೂಲನೆಗೆ ಜನಸಹಭಾಗಿತ್ವ ಅಗತ್ಯ: ಸಹದೇವಪ್ಪ ಹನಕನಹಳ್ಳಿ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: “ಮಲೇರಿಯಾ ಅಂತ್ಯಗೊಳಿಸಲು ಸಕಲರೂ ಸಂಕಲ್ಪ ಮಾಡೋಣ, ನಮಗಿದು ಸಾಧ್ಯವಿದೆ, ನಾವು ಇದನ್ನು ಮಾಡಲೇಬೇಕು” ಎಂಬ ಘೋಷವಾಕ್ಯದೊಂದಿಗೆ ಮಲೇರಿಯಾ ನಿರ್ಮೂಲನೆಗೆ ಸಾರ್ವಜನಿಕರ ಸಹಕಾರ ಅತ್ಯಗತ್ಯ ಎಂದು ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಸಹದೇವಪ್ಪ ಹನಕನಹಳ್ಳಿ ಹೇಳಿದರು.

ಶಿಗ್ಲಿಯ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಗ್ರಾಮ ಪಂಚಾಯಿತಿ ಆಶ್ರಯದಲ್ಲಿ ಮಲೇರಿಯಾ ವಿರೋಧಿ ಮಾಸಾಚರಣೆ ಅಂಗವಾಗಿ ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಲೇರಿಯಾ ಪರಾವಲಂಬಿ ಜೀವಿಗಳಿಂದ ಉಂಟಾಗುವ ಸಾಂಕ್ರಾಮಿಕ ರೋಗವಾಗಿದ್ದು, ಹೆಣ್ಣು ಅನೋಫಿಲೀಸ್ ಸೊಳ್ಳೆಯ ಕಡಿತದಿಂದ ಹರಡುತ್ತದೆ. ಸೋಂಕಿನ ಲಕ್ಷಣಗಳು ಸಾಮಾನ್ಯವಾಗಿ 7ರಿಂದ 14 ದಿನಗಳೊಳಗೆ ಕಾಣಿಸಿಕೊಳ್ಳುತ್ತವೆ. ಚಳಿ, ತೀವ್ರ ಜ್ವರ ಹಾಗೂ ಬೆವರುವುದು ಪ್ರಮುಖ ಲಕ್ಷಣಗಳಾಗಿದ್ದು, ಯಾವುದೇ ರೀತಿಯ ಜ್ವರ ಕಂಡುಬಂದರೂ ತಕ್ಷಣ ರಕ್ತ ಪರೀಕ್ಷೆ ಮಾಡಿಸಿಕೊಂಡು ಚಿಕಿತ್ಸೆ ಪಡೆಯಬೇಕು ಎಂದು ಸಲಹೆ ನೀಡಿದರು.

ಮನೆ ಹಾಗೂ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿಡುವುದು, ನೀರು ನಿಲ್ಲದಂತೆ ನೋಡಿಕೊಳ್ಳುವುದು, ಸೊಳ್ಳೆ ಪರದೆ ಹಾಗೂ ಸೊಳ್ಳೆ ನಿವಾರಕ ಕ್ರಮಗಳನ್ನು ಅನುಸರಿಸುವುದರಿಂದ ಮಲೇರಿಯಾ ತಡೆಗಟ್ಟಲು ಸಾಧ್ಯ ಎಂದು ತಿಳಿಸಿದರು.

ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಎಫ್.ಸಿ. ಹೊಸಮಠ ಮಾತನಾಡಿ, ಆರೋಗ್ಯ ಇಲಾಖೆಯ ಜಾಗೃತಿ ಕಾರ್ಯಕ್ರಮಗಳು ಸಾರ್ವಜನಿಕರಲ್ಲಿ ಆರೋಗ್ಯ ಅರಿವು ಮೂಡಿಸುವುದರ ಜೊತೆಗೆ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೂ ಸಹಕಾರಿಯಾಗುತ್ತವೆ ಎಂದರು.

ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು, ಗ್ರಾಮ ಪಂಚಾಯಿತಿ ಸಿಬ್ಬಂದಿ ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.

“ಮಲೇರಿಯಾ ನಿರ್ಮೂಲನೆ ಕೇವಲ ಆರೋಗ್ಯ ಇಲಾಖೆಯ ಜವಾಬ್ದಾರಿ ಅಲ್ಲ. ಪ್ರತಿಯೊಬ್ಬ ನಾಗರಿಕರೂ ಸ್ವಚ್ಛತೆ ಕಾಪಾಡಿ ಸೊಳ್ಳೆ ನಿಯಂತ್ರಣ ಕ್ರಮಗಳನ್ನು ಪಾಲಿಸಿದರೆ ಮಾತ್ರ ರೋಗವನ್ನು ಸಂಪೂರ್ಣವಾಗಿ ತಡೆಗಟ್ಟಬಹುದು.”

ಸಹದೇವಪ್ಪ ಹನಕನಹಳ್ಳಿ, ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ

ಸಮರ್ಪಕ ಬಸ್ ಸೌಲಭ್ಯಕ್ಕೆ ಕರವೇ ಆಗ್ರಹ

0

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ತಾಲೂಕಿನ ಕೋಗನೂರು, ಹೆಬ್ಬಾಳ, ಬೆಳಗಟ್ಟಿ ಸೇರಿದಂತೆ ಗಡಿಭಾಗದ ಗ್ರಾಮಗಳ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಿಗೆ ಸಮರ್ಪಕ ಬಸ್ ಸೌಲಭ್ಯ ಮತ್ತು ಬಸ್‌ಪಾಸ್ ವ್ಯವಸ್ಥೆ ಕಲ್ಪಿಸುವಂತೆ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ವತಿಯಿಂದ ತಹಸೀಲ್ದಾರ್ ಕೆ. ರಾಘವೇಂದ್ರ ರಾವು ಅವರಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಕರವೇ ತಾಲೂಕು ಅಧ್ಯಕ್ಷ ಶಿವು ಮಠದ, ಕೋಗನೂರು, ಗೋವನಕೊಪ್ಪ, ಹೆಬ್ಬಾಳ, ಬೆಳಗಟ್ಟಿ ಸೇರಿದಂತೆ ಹಲವು ಗ್ರಾಮಗಳ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಶಿಕ್ಷಣ, ಉದ್ಯೋಗ ಮತ್ತು ಆರೋಗ್ಯ ಸೇವೆಗಳಿಗಾಗಿ ನಿತ್ಯ ಗದಗ, ಶಿರಹಟ್ಟಿ ಹಾಗೂ ರಾಣೆಬೆನ್ನೂರುಗೆ ಸಂಚರಿಸುತ್ತಿದ್ದಾರೆ. ಆದರೆ ಸಮರ್ಪಕ ಬಸ್ ವ್ಯವಸ್ಥೆಯ ಕೊರತೆಯಿಂದ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಹೇಳಿದರು.

ಪ್ರಸ್ತುತ ಸಂಚರಿಸುತ್ತಿರುವ ಕೆಲವು ಬಸ್‌ಗಳ ಮಾರ್ಗ ಬದಲಾವಣೆ ಮಾಡಿ ಕೋಗನೂರು, ಗೋವನಕೊಪ್ಪ, ಹೆಬ್ಬಾಳ ಹಾಗೂ ಬೆಳಗಟ್ಟಿ ಮಾರ್ಗವಾಗಿ ಸಂಚರಿಸುವಂತೆ ಕ್ರಮ ಕೈಗೊಳ್ಳಬೇಕು. ಹೆಚ್ಚುವರಿ ಬಸ್‌ಗಳಲ್ಲಿ ವಿದ್ಯಾರ್ಥಿ ಪಾಸ್‌ಗೆ ಅವಕಾಶ ಕಲ್ಪಿಸಬೇಕು ಹಾಗೂ ವೇಗದೂತ ಬಸ್‌ಗಳನ್ನು ಈ ಮಾರ್ಗದಲ್ಲಿ ಓಡಿಸಬೇಕು ಎಂದು ಆಗ್ರಹಿಸಿದರು.

ಬೇಡಿಕೆಗಳನ್ನು ಏಳು ದಿನಗಳೊಳಗೆ ಈಡೇರಿಸದಿದ್ದರೆ ರಾಜ್ಯ ಹೆದ್ದಾರಿ ತಡೆದು ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಮನವಿಯಲ್ಲಿ ಎಚ್ಚರಿಕೆ ನೀಡಲಾಗಿದೆ.

ಈ ಸಂದರ್ಭದಲ್ಲಿ ಶರಣಪ್ಪ ಪುರ್ತಗೇರಿ, ಪ್ರಕಾಶ ಬಡೆಣ್ಣವರ, ರಾಹುಲ್ ಮಡಿವಾಳರ, ಜಗದೀಶ ಮೇಲಿನಮನಿ, ಕಿರಣಕುಮಾರ ಚನ್ನೂರ, ಮಣಿಕಂಠ ಕಟ್ಟಿ, ಗಾಳೆಪ್ಪ ಮರಚಣ್ಣನವರ, ಸಾಗರ ಡಿಳ್ಳೆಪ್ಪನವರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಗ್ಯಾರಂಟಿ ಯೋಜನೆಗಳಲ್ಲಿ ನಿರ್ಲಕ್ಷ್ಯ ಬೇಡ: ಸೊನ್ನದ ಗುರುಬಸವರಾಜ್

0

ವಿಜಯಸಾಕ್ಷಿ ಸುದ್ದಿ, ಹಗರಿಬೊಮ್ಮನಹಳ್ಳಿ: ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ತಾಲೂಕು ಪಂಚಾಯಿತಿ ಮಹಾತ್ಮಗಾಂಧಿ ಸಭಾಂಗಣದಲ್ಲಿ ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಸೊನ್ನದ ಗುರುಬಸವರಾಜ್ ಅಧ್ಯಕ್ಷತೆಯಲ್ಲಿ ನಡೆಯಿತು.

ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಸಾರಿಗೆ ಇಲಾಖೆ, ಆಹಾರ ಇಲಾಖೆ, ಕೆಇಬಿ ಹಾಗೂ ಉದ್ಯೋಗ ವಿನಿಮಯ ಕಚೇರಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿ ತಮ್ಮ ಇಲಾಖೆಗಳ ಪ್ರಗತಿ ವರದಿಯನ್ನು ಮಂಡಿಸಿದರು.

ತಾಲೂಕಿನಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಸೌಲಭ್ಯಗಳು ಅರ್ಹ ಫಲಾನುಭವಿಗಳಿಗೆ ಸಮರ್ಪಕವಾಗಿ ತಲುಪುತ್ತಿದ್ದು, ಯಾವುದೇ ಲೋಪದೋಷಗಳಿಗೆ ಅವಕಾಶ ನೀಡದೆ ಕಾರ್ಯನಿರ್ವಹಿಸಬೇಕು ಎಂದು ಸೊನ್ನದ ಗುರುಬಸವರಾಜ್ ಅಧಿಕಾರಿಗಳಿಗೆ ಸೂಚಿಸಿದರು.

ಯುವನಿಧಿ ಯೋಜನೆಯಡಿ ನೋಂದಾಯಿತ ಫಲಾನುಭವಿಗಳಿಗೆ “ಯುವನಿಧಿ ಪ್ಲಸ್” ಕಾರ್ಯಕ್ರಮದ ಮೂಲಕ ಕೌಶಲ್ಯ ತರಬೇತಿ ನೀಡಿ ವಿವಿಧ ಕಂಪನಿಗಳು ಹಾಗೂ ಕೈಗಾರಿಕೆಗಳಲ್ಲಿ ಉದ್ಯೋಗಾವಕಾಶ ಕಲ್ಪಿಸುವ ಉದ್ದೇಶದಿಂದ ಡಿಗ್ರಿ ಕಾಲೇಜಿನಲ್ಲಿ ಸಮಾವೇಶ ಆಯೋಜಿಸಲು ಪ್ರಯತ್ನಿಸಲಾಗಿತ್ತು. ಆದರೆ ಅದಕ್ಕೆ ಅವಕಾಶ ದೊರೆಯದಿರುವುದು ಯುವಕರಿಗೆ ಅನ್ಯಾಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು. ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಅನುಮತಿ ಪಡೆದು ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಗ್ಯಾರಂಟಿ ಪ್ರಾಧಿಕಾರದ ಉಪಾಧ್ಯಕ್ಷ ಜಂದಿಸಾಹೇಬ್, ಸದಸ್ಯ ಪರಶುರಾಮ ಹೆಗ್ಡಾಳ, ತಾಲೂಕು ಸದಸ್ಯರಾದ ರಾಘು ಉಲವತ್ತಿ, ಮೇಟಿ ಮಂಜುನಾಥ, ತಂಬ್ರಳ್ಳಿ ಗಿರೀಶ್, ವೆಂಕಟೇಶ್ ನಾಯ್ಕ್, ಸಂತೋಷ, ಸರ್ದಾರ್ ರಾಮಣ್ಣ, ಪ್ರಕಾಶ್ ಉಪ್ಪಾರ್, ಸದ್ದಾಂ, ದೊಡ್ಡಬಸಪ್ಪ, ನಾಗಮ್ಮ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಗ್ಯಾರಂಟಿ ಸಮಿತಿ ಕಾರ್ಯದರ್ಶಿ ಪಾಲಯ್ಯನಕೋಟೆ ವಿಶ್ವನಾಥ್, ಯೋಜನಾ ಅಧಿಕಾರಿ ನಾಗರಾಜ್ ನಾಯ್ಕ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

“ಪಂಚ ಗ್ಯಾರಂಟಿ ಯೋಜನೆಗಳ ಸೌಲಭ್ಯಗಳು ಅರ್ಹರಿಗೆ ತಲುಪುವಲ್ಲಿ ಯಾವುದೇ ನಿರ್ಲಕ್ಷ್ಯವಾಗಬಾರದು. ಯುವನಿಧಿ ಯೋಜನೆಯ ಫಲಾನುಭವಿಗಳಿಗೆ ಉದ್ಯೋಗಾವಕಾಶ ಕಲ್ಪಿಸಲು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು.”

 ಸೊನ್ನದ ಗುರುಬಸವರಾಜ್ಅ

ಧ್ಯಕ್ಷರು, ತಾಲೂಕು ಗ್ಯಾರಂಟಿ ಸಮಿತಿ

error: Content is protected !!