Home Blog

ಅಸ್ಸಾಂ, ಬಂಗಾಳದಲ್ಲಿ BJPಗೆ ನೆರವಾದವರು ಜ್ಞಾನೇಶ್ ಕುಮಾರ್: ಚುನಾವಣಾ ಆಯೋಗದ ವಿರುದ್ಧ ಸಂತೋಷ್ ಲಾಡ್ ಕಿಡಿ

ಬೆಂಗಳೂರು: ಪಂಚರಾಜ್ಯ ವಿಧಾನಸಭಾ ಚುನಾವಣಾ ಫಲಿತಾಂಶಗಳ ಬಳಿಕ ಸಚಿವ ಸಂತೋಷ್ ಲಾಡ್ ಚುನಾವಣಾ ಆಯೋಗದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಪಶ್ಚಿಮ ಬಂಗಾಳ ಹಾಗೂ ಅಸ್ಸಾಂನಲ್ಲಿ ಬಿಜೆಪಿ ಗೆಲುವಿನ ಹಿಂದೆ ಕೇಂದ್ರ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಪಾತ್ರವಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಉಪ ಚುನಾವಣೆಯಲ್ಲಿ ಕಾಂಗ್ರೆಸ್ ನಿರೀಕ್ಷೆಯಂತೆ ಎರಡು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ ಎಂದು ಹೇಳಿದರು.

ಸರ್ಕಾರದ ಜನಪರ ಕಾರ್ಯಕ್ರಮಗಳು, ಕಾರ್ಯಕರ್ತರು ಹಾಗೂ ಮುಖಂಡರ ಪರಿಶ್ರಮದಿಂದ ಜನರು ನಮ್ಮ ಪರ ಮತ ಹಾಕಿದ್ದಾರೆ. ಅದರ ಫಲವಾಗಿ ಉಪ ಚುನಾವಣೆಯಲ್ಲಿ ಗೆಲುವು ದೊರೆತಿದೆ,” ಎಂದು ಸಂತೋಷ್ ಲಾಡ್ ಹೇಳಿದರು.

ಪಂಚರಾಜ್ಯಗಳ ಫಲಿತಾಂಶಗಳಲ್ಲಿ ತಮಿಳುನಾಡಿನ ಬೆಳವಣಿಗೆ ಅಚ್ಚರಿ ತಂದಿದೆ ಎಂದು ಹೇಳಿದ ಅವರು, ಟಿವಿಕೆ ನಾಯಕ ವಿಜಯ್ ಅವರ ಗೆಲುವಿಗೆ ಶುಭಾಶಯ ಕೋರಿದರು.

ತಮಿಳುನಾಡಿನಲ್ಲಿ ವಿಜಯ್ ಗೆಲುವು ಸರ್ಪ್ರೈಸ್ ಆಗಿದೆ. ಅವರು 35 ಶೇಕಡಾ ಮತಗಳನ್ನು ಪಡೆದಿದ್ದಾರೆ. ಕೇವಲ ಒಂದು ವರ್ಷದೊಳಗೆ ಸರಳ ಬಹುಮತ ಪಡೆದಿರುವುದು ಗಮನಾರ್ಹ ಸಾಧನೆ. ಅವರಿಗೆ ಶುಭವಾಗಲಿ,” ಎಂದರು.

ಟಿವಿಕೆ ಜೊತೆ ಕಾಂಗ್ರೆಸ್ ಮೈತ್ರಿ ಸಾಧ್ಯತೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ಹೈಕಮಾಂಡ್ ಅಂತಿಮ ನಿರ್ಧಾರ ಕೈಗೊಳ್ಳಲಿದೆ ಎಂದು ಹೇಳಿದರು.

ಇದೇ ವೇಳೆ ಅಸ್ಸಾಂ ಹಾಗೂ ಪಶ್ಚಿಮ ಬಂಗಾಳ ಚುನಾವಣಾ ಫಲಿತಾಂಶಗಳ ಕುರಿತು ತೀವ್ರ ಆರೋಪ ಮಾಡಿದ ಸಂತೋಷ್ ಲಾಡ್, ಅಸ್ಸಾಂ ಚುನಾವಣೆಯಲ್ಲಿ ‘ಮ್ಯಾನ್ ಆಫ್ ದಿ ಮ್ಯಾಚ್’ ಮತ್ತು ‘ಮ್ಯಾನ್ ಆಫ್ ದಿ ಸಿರೀಸ್’ ಜ್ಞಾನೇಶ್ ಕುಮಾರ್, ಎಂದು ವ್ಯಂಗ್ಯವಾಡಿದರು.

ಹರಿಹರ ಪಂಚಮಸಾಲಿ ಪೀಠದಲ್ಲಿ ಹೆಚ್ಚಿದ ಉದ್ವಿಗ್ನತೆ; ಸಭೆ-ಸಮಾರಂಭಗಳಿಗೆ ಜಿಲ್ಲಾಡಳಿತ ನಿಷೇಧಾಜ್ಞೆ

ದಾವಣಗೆರೆ: ಹರಿಹರ ಪಂಚಮಸಾಲಿ ಪೀಠದಲ್ಲಿ ಸ್ವಾಮೀಜಿ ಬೆಂಬಲಿಗರು ಮತ್ತು ಟ್ರಸ್ಟಿಗಳ ನಡುವಿನ ಗಲಾಟೆ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಮಠದಲ್ಲಿ ಸಭೆ, ಸಮಾರಂಭ ಹಾಗೂ ಪತ್ರಿಕಾಗೋಷ್ಠಿ ನಡೆಸುವುದನ್ನು ನಿಷೇಧಿಸಿ ಆದೇಶ ಹೊರಡಿಸಿದೆ.

ಮಠದಲ್ಲಿ ಕಳೆದ ಮಾರ್ಚ್ 10ರಿಂದ ಎರಡು ಬಣಗಳ ಬೆಂಬಲಿಗರು ಪ್ರತ್ಯೇಕವಾಗಿ ಸಭೆಗಳು, ಸಮಾರಂಭಗಳು ಹಾಗೂ ಸುದ್ದಿಗೋಷ್ಠಿಗಳನ್ನು ನಡೆಸುತ್ತಿದ್ದು, ಪರಿಸ್ಥಿತಿ ಉದ್ವಿಗ್ನ ಸ್ವರೂಪ ಪಡೆದುಕೊಂಡಿದೆ.

ಈ ಬೆಳವಣಿಗೆಗಳಿಂದ ಗಲಾಟೆ, ಪ್ರಚೋದನಕಾರಿ ಹೇಳಿಕೆಗಳು ಹಾಗೂ ಕಾನೂನು ಸುವ್ಯವಸ್ಥೆ ಸಮಸ್ಯೆ ಉಂಟಾಗುವ ಸಾಧ್ಯತೆ ಹೆಚ್ಚಾಗಿದೆ. ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿಯಾಗುವ ಆತಂಕವೂ ವ್ಯಕ್ತವಾಗಿದೆ.

ಪೊಲೀಸ್ ಇಲಾಖೆ ಪದೇ ಪದೇ ಭದ್ರತೆ ಒದಗಿಸಲು ಸಾಧ್ಯವಿಲ್ಲದ ಹಿನ್ನೆಲೆ, ಜಿಲ್ಲಾಡಳಿತ ಈ ಕ್ರಮ ಕೈಗೊಂಡಿದೆ. ಮೇ 1ರಿಂದ ಮೇ 30ರವರೆಗೆ ಮಠದಲ್ಲಿ ಯಾವುದೇ ಸಭೆ, ಸಮಾರಂಭ ಅಥವಾ ಪತ್ರಿಕಾಗೋಷ್ಠಿ ನಡೆಸದಂತೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ಈ ಸಂಬಂಧ ಸ್ವಾಮೀಜಿ, ಟ್ರಸ್ಟಿಗಳು ಹಾಗೂ ಅವರ ಬೆಂಬಲಿಗರಿಗೆ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯಿಂದ ನೋಟಿಸ್ ಜಾರಿಗೊಳಿಸಲಾಗಿದೆ.

ಇದೀಗ ಮೇ 5ರಂದು ಟ್ರಸ್ಟಿಗಳ ವಿರುದ್ಧ ಸ್ವಾಮೀಜಿ ಬೆಂಬಲಿಗರು ‘ಲೆಕ್ಕಕೊಡಿ’ ಅಭಿಯಾನ ಹಮ್ಮಿಕೊಳ್ಳಲು ಮುಂದಾಗಿದ್ದರು. ಏಪ್ರಿಲ್ 27ರಂದು ಟ್ರಸ್ಟಿಗಳು ಸುಳ್ಳು ಲೆಕ್ಕ ನೀಡಿದ್ದಾರೆ ಎಂದು ಆರೋಪಿಸಿರುವ ಬೆಂಬಲಿಗರು, ಪಾರದರ್ಶಕ ಲೆಕ್ಕಪತ್ರ ಮಂಡನೆಗೆ ಒತ್ತಾಯಿಸಲು ಸಜ್ಜಾಗಿದ್ದರು.

ಇದರ ಜೊತೆಗೆ ಗ್ರಾಮಾಂತರ ಪ್ರದೇಶಗಳಿಗೆ ತೆರಳಿ ಭಕ್ತರು ನೀಡಿದ ಕಾಣಿಕೆಗಳ ವಿವರ ಸಂಗ್ರಹಿಸುವ ಅಭಿಯಾನಕ್ಕೂ ಅವರು ಮುಂದಾಗಿದ್ದಾರೆ. ನಿಷೇಧಾಜ್ಞೆ ಜಾರಿಯಲ್ಲಿದ್ದರೂ ಸಭೆ ನಡೆಸಲು ಸ್ವಾಮೀಜಿ ಬೆಂಬಲಿಗರು ಯತ್ನಿಸಿರುವುದು ಮಠದ ಒಳಗಿರುವ ವಿವಾದ ಮತ್ತಷ್ಟು ತೀವ್ರಗೊಂಡಿರುವುದನ್ನು ಸೂಚಿಸಿದೆ.

ಸೈಕಲ್ ಸವಾರಿ ವೇಳೆ ಗೂಡ್ಸ್ ವಾಹನ ಡಿಕ್ಕಿ: ಬೇಸಿಗೆ ರಜೆಗೆ ತಾತನ ಮನೆಗೆ ಬಂದಿದ್ದ ಬಾಲಕನ ದುರ್ಮರಣ!

ಚಾಮರಾಜನಗರ: ಬೇಸಿಗೆ ರಜೆ ಹಿನ್ನೆಲೆಯಲ್ಲಿ ತಾತನ ಮನೆಗೆ ಬಂದಿದ್ದ 11 ವರ್ಷದ ಬಾಲಕ ಸೈಕಲ್ ಸವಾರಿ ವೇಳೆ ಗೂಡ್ಸ್ ವಾಹನ ಡಿಕ್ಕಿಯಾಗಿ ಸ್ಥಳದಲ್ಲೇ ಮೃತಪಟ್ಟ ಹೃದಯವಿದ್ರಾವಕ ಘಟನೆ ಕೊಳ್ಳೇಗಾಲ ತಾಲೂಕಿನ ಹರಳೆ–ಅಣಗಳ್ಳಿ ಗ್ರಾಮದ ರಸ್ತೆಯಲ್ಲಿ ನಡೆದಿದೆ.

ಮೃತ ಬಾಲಕನನ್ನು ಬೆಂಗಳೂರಿನ ನಿವಾಸಿ ಆನಂದ್ರಾಜ್ ಅವರ ಪುತ್ರ ಯಶವಂತ್ ಎಂದು ಗುರುತಿಸಲಾಗಿದೆ. ಬೇಸಿಗೆ ರಜೆ ಹಿನ್ನೆಲೆಯಲ್ಲಿ ಯಶವಂತ್ ಅಣಗಳ್ಳಿ ಗ್ರಾಮದ ತನ್ನ ತಾತ ಶಿವಲಿಂಗಯ್ಯ ಅವರ ಮನೆಗೆ ಬಂದಿದ್ದ. ಮಂಗಳವಾರ ಬೆಳಗ್ಗೆ ಆಟವಾಡಲು ಕುಟುಂಬಸ್ಥರು ಸೈಕಲ್ ನೀಡಿದ್ದರು.

ಸೈಕಲ್ ಸವಾರಿ ಮಾಡುತ್ತಿದ್ದ ವೇಳೆ ಹಿಂಬದಿಯಿಂದ ವೇಗವಾಗಿ ಬಂದ ಗೂಡ್ಸ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಘಟನೆ ಮಾಹಿತಿ ತಿಳಿದು ಸ್ಥಳಕ್ಕೆ ಕೊಳ್ಳೇಗಾಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಉಪವಿಭಾಗ ಆಸ್ಪತ್ರೆಗೆ ರವಾನಿಸಲಾಗಿದೆ.

ಪೊಲೀಸರು ಗೂಡ್ಸ್ ವಾಹನ ಹಾಗೂ ಸೈಕಲ್ ಅನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ಮುಂದುವರಿಸಿದ್ದಾರೆ. ಘಟನೆಯಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಗ್ರಾಮದಲ್ಲಿ ಶೋಕದ ವಾತಾವರಣ ಆವರಿಸಿದೆ.

ಶೃಂಗೇರಿ ಅಂಚೆ ಮತ ವಿವಾದ: ಶಾಸಕ ಜೀವರಾಜ್ ವಿರುದ್ಧದ FIR ಗೆ ಹೈಕೋರ್ಟ್ ಮಧ್ಯಂತರ ತಡೆ

ಬೆಂಗಳೂರು/ಚಿಕ್ಕಮಗಳೂರು: ಶೃಂಗೇರಿ ಕ್ಷೇತ್ರದ ಅಂಚೆ ಮತಗಳ ತಿರುಚಾಟ ಆರೋಪ ಸಂಬಂಧ ಶಾಸಕ ಜೀವರಾಜ್ ವಿರುದ್ಧ ದಾಖಲಾಗಿದ್ದ ಎಫ್‌ಐಆರ್‌ಗೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.

ತಮ್ಮ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಪ್ರಕರಣವನ್ನು ರದ್ದುಪಡಿಸುವಂತೆ ಕೋರಿ ಶಾಸಕ ಜೀವರಾಜ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಶ್ರೀಶಾನಂದ ಅವರ ರಜಾಕಾಲದ ಪೀಠ ಇಂದು ನಡೆಸಿತು.

ವಿಚಾರಣೆ ವೇಳೆ ಸರ್ಕಾರದ ನಡೆ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಾಲಯ, ವಿಶೇಷ ಸಾರ್ವಜನಿಕ ಅಭಿಯೋಜಕ ಬೆಳ್ಳಿಯಪ್ಪ ಅವರನ್ನು ಪ್ರಶ್ನಿಸಿತು.

“2023ರ ಮೇ 13ರಂದು ನಡೆದ ಘಟನೆಗೆ ಈಗ ಎಫ್‌ಐಆರ್ ದಾಖಲಿಸುವುದು ಹೇಗೆ ಸಾಧ್ಯ? ಮತಪತ್ರ ತಿರುಚಾಟ ನಡೆದಿದೆ ಎನ್ನುವ ಮಾಹಿತಿ ನ್ಯಾಯಾಲಯದ ಗಮನಕ್ಕೆ ತಂದುಕೊಳ್ಳದೆ ಈಗ ಪ್ರಕರಣ ದಾಖಲಿಸುತ್ತೀರಾ?” ಎಂದು ನ್ಯಾಯಮೂರ್ತಿಗಳು ಪ್ರಶ್ನಿಸಿದರು.

ಇದಲ್ಲದೆ ತನಿಖಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ನ್ಯಾಯಪೀಠ, “ನಿಮಗೆ ಏನೂ ಕಾಣಿಸಲಿಲ್ಲವೇ? ಇಂತಹ ವಿಚಾರಗಳಲ್ಲಿ ಸಮರ್ಪಕವಾಗಿ ನಡೆದುಕೊಳ್ಳದಿದ್ದರೆ ಅಮಾನತು ಆದೇಶ ಬರೆಯಬೇಕಾಗುತ್ತದೆ,” ಎಂದು ಎಚ್ಚರಿಕೆ ನೀಡಿತು.

2023ರಲ್ಲಿ ಅಧಿಕಾರದಲ್ಲಿದ್ದ ಜಿಲ್ಲಾಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿರುವುದರ ಕುರಿತು ಪ್ರಶ್ನಿಸಿದ ನ್ಯಾಯಾಲಯ, “ಈಗಿನ ಚುನಾವಣಾಧಿಕಾರಿ ಗೌರವ್ ಶೆಟ್ಟಿ ವಿರುದ್ಧ ಏಕೆ ಕ್ರಮ ಕೈಗೊಂಡಿಲ್ಲ?” ಎಂದು ಪ್ರಶ್ನಿಸಿತು.

“ರಾಜಕೀಯ ಪ್ರಭಾವಕ್ಕೆ ಒಳಗಾಗಿ ಪೊಲೀಸರು ಎಫ್‌ಐಆರ್ ದಾಖಲಿಸಬಾರದು. ಹೈಕೋರ್ಟ್ ಆದೇಶದ ಮೇರೆಗೆ ಅಂಚೆ ಮತಗಳ ಮರುಎಣಿಕೆ ನಡೆದಿತ್ತು. ಮತಪತ್ರಗಳಲ್ಲಿ ಸೀಲ್ ಇಲ್ಲದಿದ್ದರೆ ಅಥವಾ ಡಬಲ್ ಟಿಕ್ ಇದ್ದರೆ, ಆ ಸಂದರ್ಭದಲ್ಲೇ ನ್ಯಾಯಾಲಯದ ಗಮನಕ್ಕೆ ಏಕೆ ತರಲಿಲ್ಲ?” ಎಂದು ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿತು.

ಪ್ರಕರಣದಲ್ಲಿ ರಾಜೇಗೌಡ ಅವರ ಹೆಸರು ಇದ್ದರೂ ಕೂಡ ತಡೆ ನೀಡುತ್ತಿದ್ದೆ ಎಂದು ಅಭಿಪ್ರಾಯಪಟ್ಟ ನ್ಯಾಯಮೂರ್ತಿಗಳು, ಪ್ರಜಾಪ್ರತಿನಿಧಿ ಕಾಯ್ದೆಯಡಿ ಜಿಲ್ಲಾಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಲು ಅವಕಾಶವಿಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ಈ ನಡುವೆ ದೂರುದಾರ ಸುಧೀರ್ ಅವರಿಗೆ ನ್ಯಾಯಾಲಯ ನೋಟಿಸ್ ಜಾರಿಗೊಳಿಸಿದ್ದು, ಜೀವರಾಜ್ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳದಂತೆ ಸೂಚಿಸಿದೆ. ಎಫ್‌ಐಆರ್‌ಗೆ ಮಧ್ಯಂತರ ತಡೆ ನೀಡಿರುವ ಹೈಕೋರ್ಟ್, ಪ್ರಕರಣದ ಮುಂದಿನ ವಿಚಾರಣೆಯನ್ನು ಮೇ 7ಕ್ಕೆ ಮುಂದೂಡಿದೆ.

ತಮಿಳುನಾಡು ಸಿಎಂ ಹುದ್ದೆಗೆ ಎಂ.ಕೆ. ಸ್ಟಾಲಿನ್ ರಾಜೀನಾಮೆ; ಸೋಲಿನ ಬಳಿಕ ಭಾವನಾತ್ಮಕ ಸಂದೇಶ

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಹಾಗೂ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಅಧ್ಯಕ್ಷ ಎಂ.ಕೆ. ಸ್ಟಾಲಿನ್ ತಮ್ಮ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ. ರಾಜೀನಾಮೆ ಪತ್ರವನ್ನು ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರಿಗೆ ಔಪಚಾರಿಕವಾಗಿ ರವಾನಿಸಿರುವ ಸ್ಟಾಲಿನ್, ವಿಧಾನಸಭಾ ಚುನಾವಣೆಯಲ್ಲಿ ಡಿಎಂಕೆ ಬಹುಮತ ಗಳಿಸಲು ವಿಫಲವಾದ ಹಿನ್ನೆಲೆ ಈ ನಿರ್ಧಾರ ಕೈಗೊಂಡಿದ್ದಾರೆ.

ಇದರ ನಡುವೆಯೇ ಸರ್ಕಾರ ರಚನೆಗೆ ಹಕ್ಕು ಮಂಡಿಸಿರುವ ಟಿವಿಕೆ ನಾಯಕ ದಳಪತಿ ವಿಜಯ್, ಎರಡು ವಾರಗಳೊಳಗೆ ಬಹುಮತ ಸಾಬೀತುಪಡಿಸುವುದಾಗಿ ಘೋಷಿಸಿದ್ದಾರೆ. ರಾಜೀನಾಮೆ ಬಳಿಕ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಸುದೀರ್ಘ ಸಂದೇಶ ಹಂಚಿಕೊಂಡಿರುವ ಸ್ಟಾಲಿನ್, ಡಿಎಂಕೆ ಮೈತ್ರಿಕೂಟಕ್ಕೆ ಮತ ನೀಡಿದ ಜನತೆಗೆ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಿದ್ದಾರೆ.

ತಮಿಳುನಾಡಿನ ಜನರು ನಮ್ಮ ಮೇಲೆ ಇಟ್ಟಿರುವ ನಂಬಿಕೆ ಅಮೂಲ್ಯ. ಇತ್ತೀಚಿನ ಚುನಾವಣೆಯಲ್ಲಿ ಡಿಎಂಕೆ ಮೈತ್ರಿಕೂಟಕ್ಕೆ 1 ಕೋಟಿ 54 ಲಕ್ಷಕ್ಕೂ ಹೆಚ್ಚು ಮತಗಳು ಲಭಿಸಿವೆ. ಪ್ರತಿಯೊಂದು ಮತವನ್ನೂ ನಾನು ಜನರ ವಿಶ್ವಾಸದ ಸಂಕೇತವಾಗಿ ಪರಿಗಣಿಸುತ್ತೇನೆ ಎಂದು ಅವರು ಬರೆದಿದ್ದಾರೆ.

ಗೆದ್ದ ಪಕ್ಷವು ಡಿಎಂಕೆಗಿಂತ ಕೇವಲ 17.43 ಲಕ್ಷ ಮತಗಳಷ್ಟು ಹೆಚ್ಚು ಮತ ಪಡೆದಿದ್ದು, ಮತ ಶೇಕಡಾವಾರು ಅಂತರ ಕೇವಲ 3.52 ಮಾತ್ರವಾಗಿದೆ ಎಂದು ಉಲ್ಲೇಖಿಸಿದ ಸ್ಟಾಲಿನ್, ಇದು ಜನರು ಪಕ್ಷದ ಮೇಲೆ ಇಟ್ಟಿರುವ ನಂಬಿಕೆಯನ್ನು ತೋರಿಸುತ್ತದೆ ಎಂದು ಹೇಳಿದ್ದಾರೆ.

ಮತದಾರರನ್ನು ನೇರವಾಗಿ ಭೇಟಿ ಮಾಡಿ ಕೃತಜ್ಞತೆ ಸಲ್ಲಿಸುವಂತೆ ಪಕ್ಷದ ಎಲ್ಲಾ ಗೆದ್ದ ಅಭ್ಯರ್ಥಿಗಳಿಗೆ ಸೂಚಿಸಿರುವ ಅವರು, “ಪ್ರಜಾಪ್ರಭುತ್ವದಲ್ಲಿ ಜನರೇ ಶ್ರೇಷ್ಠರು. ನಾವು ಅವರಿಗಾಗಿ ರಾಜಕೀಯ ಮಾಡುತ್ತೇವೆ,” ಎಂದು ಹೇಳಿದ್ದಾರೆ.

ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸುವಂತೆ ಕಾರ್ಯಕರ್ತರಿಗೆ ಕರೆ ನೀಡಿರುವ ಸ್ಟಾಲಿನ್, ಡಿಎಂಕೆ ಈಗಲೂ ಬಲಿಷ್ಠ ರಾಜಕೀಯ ಶಕ್ತಿಯಾಗಿಯೇ ಮುಂದುವರಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಡಿಎಂಕೆ ಆರು ಬಾರಿ ಅಧಿಕಾರಕ್ಕೆ ಬಂದಿದೆ. ನಾವು ಅನೇಕ ಗೆಲುವು-ಸೋಲುಗಳನ್ನು ಕಂಡಿದ್ದೇವೆ. ಆದರೆ ನಮ್ಮ ತತ್ವ ಮತ್ತು ಹೋರಾಟ ಎಂದಿಗೂ ಕುಂದುವುದಿಲ್ಲ ಎಂದು ಅವರು ಹೇಳಿದ್ದಾರೆ. ವಿರೋಧ ಪಕ್ಷದಲ್ಲಿದ್ದರೂ ಜನರ ಹಕ್ಕುಗಳಿಗಾಗಿ ಹೋರಾಟ ಮುಂದುವರಿಸುವುದಾಗಿ ಸ್ಪಷ್ಟಪಡಿಸಿದ ಸ್ಟಾಲಿನ್, ನಾವು ಮತ್ತೆ ಗೆಲ್ಲುತ್ತೇವೆ” ಎಂದು ಕಾರ್ಯಕರ್ತರಲ್ಲಿ ಆತ್ಮವಿಶ್ವಾಸ ತುಂಬಿದ್ದಾರೆ.

ಶೃಂಗೇರಿ ಕ್ಷೇತ್ರದಲ್ಲಿ ಅಂಚೆ ಮತ ಅಕ್ರಮ ನಡೆದಿದೆ: ದೇಶದಲ್ಲೇ ದೊಡ್ಡ ಷಡ್ಯಂತ್ರ – ಬಿಜೆಪಿ ವಿರುದ್ಧ ಡಿಕೆಶಿ ವಾಗ್ದಾಳಿ

ಬೆಂಗಳೂರು: ಶೃಂಗೇರಿ ಕ್ಷೇತ್ರದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಬಿದ್ದಿರುವ ಅಂಚೆ ಮತಗಳನ್ನು ತಿದ್ದುವ ಮೂಲಕ ಮರುಎಣಿಕೆಯಲ್ಲಿ ಅಸಿಂಧುಗೊಳಿಸಲಾಗಿದೆ. ಇಡೀ ದೇಶದಲ್ಲಿ ಇಂತಹ ಅಪರಾಧ ನಡೆದಿಲ್ಲ. ಇದರ ವಿರುದ್ಧ ಕಾನೂನು ಹೋರಾಟ ಮಾಡುತ್ತೇವೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.

ಸಿಎಂ ಗೃಹಕಚೇರಿ ಕೃಷ್ಣಾದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಮಂಗಳವಾರ ಪ್ರತಿಕ್ರಿಯೆ ನೀಡಿದರು. ಶೃಂಗೇರಿ ಕ್ಷೇತ್ರದ ಮರುಎಣಿಕೆಯ ಬಗ್ಗೆ ಕೇಳಿದಾಗ, “ಚುನಾವಣೆ ಮತ ಎಣಿಕೆ ಸಮಯದಲ್ಲಿ ಪ್ರತಿ ಅಂಚೆ ಮತವನ್ನು ತೆರೆದು ಎರಡೂ ಪಕ್ಷಗಳ ಏಜೆಂಟರು ಹಾಗೂ ಅಧಿಕಾರಿಗಳಿಗೆ ತೋರಿಸಿ ಅದನ್ನು ಮಾನ್ಯ ಮಾಡಿ ಎಣಿಕೆ ಮಾಡಲಾಗಿರುತ್ತದೆ.

ಈ ರೀತಿ ಮತ ಎಣಿಕೆ ಮಾಡಿದ ಬಳಿಕ ಬಿಜೆಪಿ ಅಭ್ಯರ್ಥಿ ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಂಡು ಅಂಚೆ ಮತಗಳನ್ನು ತಿದ್ದಲಾಗಿದೆ. ಹೀಗಾಗಿಯೇ ಅವರು ನಿರ್ದಿಷ್ಟ ಮತಗಳ ಬಂಡಲ್ ಅನ್ನೇ ಮರು ಎಣಿಕೆ ಮಾಡಿ ಎಂದು ಪಟ್ಟು ಹಿಡಿದಿದ್ದರು.

ಅಧಿಕಾರಿಗಳು ಹಾಗೂ ಬಿಜೆಪಿ ಅಭ್ಯರ್ಥಿ ಈ ಅಕ್ರಮದಲ್ಲಿ ಭಾಗಿಯಾಗಿದ್ದು, ಗಂಭೀರವಾದ ತನಿಖೆ ನಡೆಯಬೇಕಿದೆ. ಚುನಾವಣಾ ಆಯೋಗವು ಈ ವಿಚಾರದಲ್ಲಿ ನ್ಯಾಯ ಒದಗಿಸಬೇಕಿದೆ. ಇದು ದೇಶದಲ್ಲೇ ಅತಿ ದೊಡ್ಡ ಷಡ್ಯಂತ್ರವಾಗಿದೆ. ಕರ್ನಾಟಕದಲ್ಲಿ ಬಿಜೆಪಿ ಇಂತಹ ಕೆಲಸದಲ್ಲಿ ಭಾಗಿಯಾಗಿದ್ದು, ನಾವು ಕಾನೂನಾತ್ಮಕ ಹೋರಾಟ ಮಾಡುತ್ತೇವೆ. ರಾಜಕೀಯ ಹೇಗೆ ಮಾಡಬೇಕು ಎಂದು ನಮಗೆ ಗೊತ್ತಿದೆ” ಎಂದು ಕಿಡಿಕಾರಿದರು.

ಬೌರಿಂಗ್ ಆಸ್ಪತ್ರೆ ಗೋಡೆ ಕುಸಿತ ದುರಂತ: ಲೋಕಾಯುಕ್ತದಿಂದ ವಿಶೇಷ ತನಿಖಾ ತಂಡ ರಚನೆ

ಬೆಂಗಳೂರು: ನಗರದ ಬೌರಿಂಗ್ ಆಸ್ಪತ್ರೆಯಲ್ಲಿ ಗೋಡೆ ಕುಸಿದು 7 ಮಂದಿ ಸಾವನ್ನಪ್ಪಿದ ದಾರುಣ ಘಟನೆಗೆ ಸಂಬಂಧಿಸಿದಂತೆ ಕರ್ನಾಟಕ ಲೋಕಾಯುಕ್ತ ವಿಶೇಷ ತನಿಖಾ ತಂಡವನ್ನು ರಚಿಸಿದೆ. ಘಟನೆಯ ನಂತರ ಸ್ಥಳಕ್ಕೆ ಭೇಟಿ ನೀಡಿದ್ದ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ಖಡಕ್ ಎಚ್ಚರಿಕೆ ನೀಡಿದ್ದರು. ಬಳಿಕ ಪ್ರಕರಣ ದಾಖಲಿಸಿಕೊಂಡ ಲೋಕಾಯುಕ್ತ, ಈಗ ಸಮಗ್ರ ತನಿಖೆಗೆ ಮುಂದಾಗಿದೆ.

ಈ ವಿಶೇಷ ತನಿಖಾ ತಂಡದಲ್ಲಿ ಪೊಲೀಸ್ ಅಧೀಕ್ಷಕ (SP) ದರ್ಜೆಯ ಅಧಿಕಾರಿಯನ್ನು ಮುಖ್ಯ ತನಿಖಾಧಿಕಾರಿಯಾಗಿ ನೇಮಕ ಮಾಡಲಾಗಿದೆ. ಜೊತೆಗೆ, ತಂಡದಲ್ಲಿ ಒಬ್ಬ ಜಿಲ್ಲಾ ನ್ಯಾಯಾಧೀಶರು ಮತ್ತು ಲೋಕಾಯುಕ್ತ ತಾಂತ್ರಿಕ ವಿಭಾಗದ ಮುಖ್ಯ ಇಂಜಿನಿಯರ್ ಕೂಡ ಭಾಗಿಯಾಗಿದ್ದಾರೆ. ಇದೇ ತಿಂಗಳ 16ರೊಳಗೆ ಸಂಪೂರ್ಣ ವರದಿ ಸಲ್ಲಿಸುವಂತೆ ನ್ಯಾಯಮೂರ್ತಿ ಪಾಟೀಲ್ ಸೂಚನೆ ನೀಡಿದ್ದಾರೆ.

ಇಂದು ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ತನಿಖಾ ತಂಡ ಸಭೆ ನಡೆಸುತ್ತಿದ್ದು, ವಿಚಾರಣೆಗಾಗಿ ಯಾರಿಗೆ ನೋಟಿಸ್ ನೀಡಬೇಕು ಎಂಬುದರ ಬಗ್ಗೆ ಚರ್ಚೆ ನಡೆಯುತ್ತಿದೆ. ಸಭೆಯಲ್ಲಿ ಬೌರಿಂಗ್ ಆಸ್ಪತ್ರೆಯ ಡೀನ್ ಕೂಡ ಭಾಗವಹಿಸಲಿದ್ದು, ಅಗತ್ಯ ಮಾಹಿತಿ ಸಂಗ್ರಹಿಸಲಾಗುತ್ತಿದೆ.

ಈ ನಡುವೆ, ಘಟನಾ ಸ್ಥಳದಿಂದ ಸಿಮೆಂಟ್, ಮಣ್ಣು, ಕಲ್ಲು ಸೇರಿದಂತೆ ವಿವಿಧ ಮಾದರಿಗಳನ್ನು ಇಂಜಿನಿಯರ್‌ಗಳ ತಂಡ ಸಂಗ್ರಹಿಸಿದೆ. ಈ ಮಾದರಿಗಳ ಆಧಾರದ ಮೇಲೆ ಆಸ್ಪತ್ರೆ ಆಡಳಿತ ಮಂಡಳಿಯವರನ್ನು ವಿಚಾರಣೆ ನಡೆಸಲಾಗುತ್ತದೆ. ಒಂದೆಡೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಪ್ರತ್ಯೇಕ ತನಿಖೆ ನಡೆಯುತ್ತಿದ್ದರೆ, ಇನ್ನೊಂದೆಡೆ ಇಂಜಿನಿಯರ್‌ಗಳ ತಂಡ ಹಾಗೂ ಲೋಕಾಯುಕ್ತದ ವಿಶೇಷ ತಂಡದಿಂದ ಸಮಗ್ರ ಪರಿಶೀಲನೆ ಮುಂದುವರಿದಿದೆ.

ಶೃಂಗೇರಿ ಅಂಚೆ ಮತ ಮರುಎಣಿಕೆ ವಿವಾದ: BJP ವಿರುದ್ಧ ‘ವೋಟ್ ಚೋರಿ’ ಆರೋಪ ಮಾಡಿದ ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ ಅಂಚೆ ಮತಗಳ ಮರುಎಣಿಕೆ ಸಂಬಂಧ ಬಿಜೆಪಿ ವಿರುದ್ಧ ಗಂಭೀರ ಆರೋಪಗಳನ್ನು ಸಿದ್ದರಾಮಯ್ಯ ಹೊರಿಸಿದ್ದಾರೆ. ಬೆಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮರುಎಣಿಕೆ ಪ್ರಕ್ರಿಯೆಯಲ್ಲಿ “ವೋಟ್ ಚೋರಿ” ನಡೆದಿದೆ ಎಂದು ಆರೋಪಿಸಿದರು.

ಶೃಂಗೇರಿ ಕ್ಷೇತ್ರದಲ್ಲಿ ಕೋರ್ಟ್ ಆದೇಶದ ಮೇರೆಗೆ ಅಂಚೆ ಮತಗಳ ಮರುಎಣಿಕೆ ನಡೆದಿತ್ತು. 2023ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ರಾಜೇಗೌಡ 201 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಅವರಿಗೆ ಇವಿಎಂನಲ್ಲಿ 59,171 ಮತಗಳು ಹಾಗೂ 569 ಅಂಚೆ ಮತಗಳು ಲಭಿಸಿದ್ದರೆ, ಕಾಂಗ್ರೆಸ್ ಅಭ್ಯರ್ಥಿ ಜೀವರಾಜ್ ಅವರಿಗೆ 58,970 ಇವಿಎಂ ಮತಗಳು ಮತ್ತು 692 ಅಂಚೆ ಮತಗಳು ಲಭಿಸಿದ್ದವು.

ಈ ಫಲಿತಾಂಶವನ್ನು ಚುನಾವಣಾ ಅಧಿಕಾರಿಗಳು ಮಾನ್ಯಗೊಳಿಸಿದ ನಂತರ, ಜೀವರಾಜ್ ಚುನಾವಣಾ ಅಕ್ರಮ ನಡೆದಿದೆ ಎಂದು ಕರ್ನಾಟಕ ಹೈಕೋರ್ಟ್ ಗೆ ಮೊರೆ ಹೋಗಿ ಮರುಎಣಿಕೆಗೆ ಅರ್ಜಿ ಸಲ್ಲಿಸಿದ್ದರು. ಹೈಕೋರ್ಟ್ 2026ರ ಮಾರ್ಚ್ 6ರಂದು ಅರ್ಜಿಯನ್ನು ಪುರಸ್ಕರಿಸಿ, 279 ಅಂಚೆ ಮತಗಳ ಮರುಎಣಿಕೆಗೆ ಆದೇಶ ನೀಡಿತ್ತು.

ಅದನ್ವಯ ಮೇ 2ರಂದು ಮರುಎಣಿಕೆ ನಡೆದಿದ್ದು, ಪರಿಶೀಲನೆ ವೇಳೆ 314 ಮತಗಳು ಮಾತ್ರ ಮಾನ್ಯವಾಗಿವೆ ಎಂದು ತಿಳಿದುಬಂದಿದೆ. ಉಳಿದ 255 ಮತಗಳನ್ನು ಅಮಾನ್ಯಗೊಳಿಸಲಾಗಿದೆ. ಈ ಬೆಳವಣಿಗೆ ಕುರಿತು ಪ್ರಶ್ನೆ ಎತ್ತಿದ ಮುಖ್ಯಮಂತ್ರಿ, 2023ರಲ್ಲಿ ಜೀವರಾಜ್ ಅವರಿಗೆ 692 ಅಂಚೆ ಮತಗಳು ಬಂದಿದ್ದರೆ, ಮರುಎಣಿಕೆಯಲ್ಲಿ 690 ಮತಗಳು ಮಾತ್ರ ಲಭಿಸಿರುವುದು ಅನುಮಾನಕ್ಕೆ ಕಾರಣವಾಗಿದೆ ಎಂದು ಹೇಳಿದ್ದಾರೆ. ಈ ಎಲ್ಲ ಅಂಶಗಳನ್ನು ಆಧರಿಸಿ, ಬಿಜೆಪಿ “ಕ್ರಿಮಿನಲ್ ಪಿತೂರಿ” ಮೂಲಕ ಮತಗಳ ಅಕ್ರಮ ನಡೆಸಿದೆ ಎಂದು ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದ್ದಾರೆ.

ಆಭರಣ ಪ್ರಿಯರಿಗೆ ಬಂಪರ್ ಸಿಹಿಸುದ್ದಿ: ಎಲೆಕ್ಷನ್ ಮರುದಿನವೇ ಚಿನ್ನದ ಬೆಲೆ ಕುಸಿತ!

ಬೆಂಗಳೂರು: ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷ ತೀವ್ರವಾಗುತ್ತಿರುವ ಹಿನ್ನೆಲೆ, ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನ ಹಾಗೂ ಬೆಳ್ಳಿ ಬೆಲೆಯಲ್ಲಿ ಅಸ್ಥಿರತೆ ಮುಂದುವರಿದಿದೆ. ಇರಾನ್ ಗಲ್ಫ್ ಪ್ರದೇಶದ ಮೇಲೆ ದಾಳಿ ನಡೆಸಿದ ಬಳಿಕ, ಹಾರ್ಮುಜ್ ಜಲಸಂಧಿ ನಿರ್ಬಂಧದ ಆತಂಕ ಹೆಚ್ಚಿದ್ದು, ತೈಲ ಬೆಲೆಗಳು ಗಗನಕ್ಕೇರಿವೆ. ಇದರ ಪರಿಣಾಮವಾಗಿ ಚಿನ್ನದ ಬೆಲೆಯಲ್ಲಿ ಕುಸಿತ ಕಂಡುಬಂದಿದೆ.

ಮೇ 5, 2026 ಮಂಗಳವಾರದಂದು, 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 440 ರೂಪಾಯಿ ಇಳಿಕೆ ಕಂಡು 1,49,180 ರೂಪಾಯಿಗೆ ತಲುಪಿದೆ. ಅದೇ ರೀತಿ 1 ಗ್ರಾಂ ಚಿನ್ನದ ಬೆಲೆ 44 ರೂಪಾಯಿ ಇಳಿಕೆಯಿಂದ 14,918 ರೂಪಾಯಿಗೆ ದಾಖಲಾಗಿದೆ.

22 ಕ್ಯಾರೆಟ್ ಚಿನ್ನದ ದರದಲ್ಲಿಯೂ ಇಳಿಕೆ ಕಂಡುಬಂದಿದ್ದು, 1 ಗ್ರಾಂಗೆ 40 ರೂಪಾಯಿ ಇಳಿಕೆಯಿಂದ 13,675 ರೂಪಾಯಿ ಆಗಿದೆ. 10 ಗ್ರಾಂ ಚಿನ್ನದ ಬೆಲೆ 400 ರೂಪಾಯಿ ಇಳಿಕೆಯಿಂದ 1,36,750 ರೂಪಾಯಿಗೆ ತಲುಪಿದೆ.

ಇನ್ನೊಂದೆಡೆ, ಬೆಳ್ಳಿ ಬೆಲೆಯಲ್ಲೂ ಭಾರೀ ಕುಸಿತ ಕಂಡುಬಂದಿದ್ದು, ಇಂದು ಸುಮಾರು 10,000 ರೂಪಾಯಿ ಇಳಿಕೆಯಾಗಿದೆ. ಪ್ರತಿ ಗ್ರಾಂ ಬೆಲೆ 255 ರೂಪಾಯಿಯಾಗಿ ದಾಖಲಾಗಿದ್ದು, ಪ್ರತಿ ಕಿಲೋಗ್ರಾಂ ಬೆಲೆ 2,55,000 ರೂಪಾಯಿಗೆ ಇಳಿದಿದೆ.

ಜಾಗತಿಕ ರಾಜಕೀಯ ಉದ್ವಿಗ್ನತೆ, ವಿಶೇಷವಾಗಿ ಅಮೆರಿಕ-ಇರಾನ್ ಸಂಘರ್ಷ ಮತ್ತು ಡಾಲರ್ ಮೌಲ್ಯದ ಏರಿಳಿತದ ಪರಿಣಾಮವಾಗಿ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಭಾರೀ ಚಲನವಲನ ಮುಂದುವರಿಯುತ್ತಿದೆ.

ಸಚಿವ ಜಮೀರ್ ನಿವಾಸದಲ್ಲಿ 1.13 ಕೋಟಿ ರೂ. ಚಿನ್ನಾಭರಣ ಕಳ್ಳತನ: ಇಬ್ಬರು ಆರೋಪಿಗಳು ಅರೆಸ್ಟ್

ಬೆಂಗಳೂರು: ಸಚಿವ ಜಮೀರ್ ಅಹ್ಮದ್ ಖಾನ್ ಅವರ ನಿವಾಸದಲ್ಲಿ ನಡೆದ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳವು ಪ್ರಕರಣವನ್ನು ಶಿವಾಜಿನಗರ ಪೊಲೀಸರು ಭೇದಿಸಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಸಯ್ಯದ್ ಅಮೀರ್ ಮತ್ತು ಅಮೀರ್ ಅಹ್ಮದ್ ಎಂದು ಗುರುತಿಸಲಾಗಿದೆ. ಇಬ್ಬರೂ ಸಚಿವರ ಪರಿಚಯಸ್ಥರಾಗಿದ್ದು, ವಿಶ್ವಾಸದ ದುರುಪಯೋಗಪಡಿಸಿಕೊಂಡು ಕಳ್ಳತನ ನಡೆಸಿರುವುದಾಗಿ ತನಿಖೆಯಲ್ಲಿ ಬಹಿರಂಗವಾಗಿದೆ.

ಪೊಲೀಸರ ಮಾಹಿತಿ ಪ್ರಕಾರ, ವ್ಯವಹಾರದಲ್ಲಿ ನಷ್ಟ ಅನುಭವಿಸಿದ್ದ ಹಿನ್ನೆಲೆ ಆರೋಪಿಗಳು ಈ ಕೃತ್ಯಕ್ಕೆ ಮುಂದಾಗಿದ್ದರು. ಅಮೀರ್ ಅಹ್ಮದ್ ಟ್ರಾವೆಲ್ಸ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರೆ, ಸಯ್ಯದ್ ಅಮೀರ್ ಜೊತೆಗೂಡಿ ಸಚಿವರ ಮನೆಯಲ್ಲಿ ಪ್ರವೇಶಿಸಿ ಕಳ್ಳತನ ನಡೆಸಿದ್ದಾನೆ ಎನ್ನಲಾಗಿದೆ.

ಆರೋಪಿಗಳು ಸಚಿವ ಜಮೀರ್ ಅಹ್ಮದ್ ಅವರ ತಾಯಿಗೆ ಸೇರಿದ ಸುಮಾರು 1.13 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣವನ್ನು ಕಳವು ಮಾಡಿದ್ದರು. ಬಳಿಕ ಆಭರಣಗಳನ್ನು ಅಡವಿಟ್ಟು ಹಣ ಪಡೆದು, ಆ ಮೊತ್ತವನ್ನು ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಹೂಡಿಕೆ ಮಾಡಿ ಲಾಭ ಗಳಿಸಲು ಯೋಜನೆ ರೂಪಿಸಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.

ಸಂದೇಹದ ಆಧಾರದ ಮೇಲೆ ಆರೋಪಿಗಳನ್ನು ಸಂಪರ್ಕಿಸಲು ಯತ್ನಿಸಿದಾಗ ಕರೆ ಸ್ವೀಕರಿಸದಿರುವುದು ಅನುಮಾನಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ತೀವ್ರಗೊಳಿಸಿ ಇಬ್ಬರನ್ನೂ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಕರಣ ಸಂಬಂಧ ಶಿವಾಜಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಂದ ಹೆಚ್ಚಿನ ಮಾಹಿತಿ ಕಲೆಹಾಕಲು ವಿಚಾರಣೆ ಮುಂದುವರಿದಿದೆ.

error: Content is protected !!