Home Blog

ಕರ್ತವ್ಯದಲ್ಲಿದ್ದ ಬ್ರಿಮ್ಸ್ ವೈದ್ಯನ ಮೇಲೆ ಹಲ್ಲೆ

0

ಬೀದರ್: ತಡರಾತ್ರಿ ಕರ್ತವ್ಯದಲ್ಲಿದ್ದ ಬ್ರಿಮ್ಸ್ ಆಸ್ಪತ್ರೆಯ ವೈದ್ಯರ ಮೇಲೆ ರೋಗಿಯ ಸಂಬಂಧಿಕರು ಹಲ್ಲೆ ನಡೆಸಿದ ಘಟನೆ ಬೀದರ್ ನಗರದಲ್ಲಿ ಆತಂಕಕ್ಕೆ ಕಾರಣವಾಗಿದೆ. ಆಸ್ಪತ್ರೆಯ ಕ್ಯಾಜುವಾಲಿಟಿ ವಾರ್ಡ್‌ನಲ್ಲೇ ನಡೆದ ಈ ಘಟನೆ ವೈದ್ಯಕೀಯ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

ಮಾಹಿತಿಯ ಪ್ರಕಾರ, ರಾತ್ರಿ ಸುಮಾರು ೧ ಗಂಟೆ ವೇಳೆಗೆ ಇನ್ನೋವಾ ಕಾರಿನಲ್ಲಿ ಬಂದಿದ್ದ ಕೆಲವರು ಕುಡಿದ ಅಮಲಿನಲ್ಲಿ ಕ್ಯಾಜುವಾಲಿಟಿ ವಾರ್ಡ್‌ಗೆ ನುಗ್ಗಿ ಗಲಾಟೆ ನಡೆಸಿದ್ದಾರೆ. ಬಳಿಕ ಕರ್ತವ್ಯದಲ್ಲಿದ್ದ ವೈದ್ಯ ಡಾ. ತುಕರಾಮ ಮಚ್ಚಂದ್ರ ಅವರ ಮೇಲೆ ಏಕಾಏಕಿ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ.

ಹಲ್ಲೆಯಿಂದ ಡಾ. ತುಕರಾಮ ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ. ಆಸ್ಪತ್ರೆಯೊಳಗೆ ಭಯಭೀತ ವಾತಾವರಣ ನಿರ್ಮಾಣವಾಗಿದ್ದು, ಸಿಬ್ಬಂದಿ ಕೆಲಕಾಲ ಆತಂಕಗೊಂಡಿದ್ದರು.

ಈ ಸಂಬಂಧ ಆದಿತ್ಯ, ವಿನೋದ ಚಾಂಚೋಳ, ಗೋವಿಂದ ಬೆನಕನಳ್ಳಿ, ಅನಿಲ ಬೆನಕನಳ್ಳಿ, ಮಹಾದೇವ ಬೆನಕನಳ್ಳಿ, ಬಾಲಾಜಿ ತಾಜಲಾಪೂರ, ಪವನ ಚಾಂಬೋಳ ಸೇರಿದಂತೆ ಇತರರ ವಿರುದ್ಧ ದೂರು ದಾಖಲಾಗಿದೆ.

ಘಟನೆ ಕುರಿತು ಬೀದರ್ ನಗರದ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಬೆಂಗಳೂರಿಗರೇ ಎಚ್ಚರ! ಮುಂದಿನ ಮೂರು ದಿನ ನಗರದಲ್ಲಿ ಭಾರೀ ಮಳೆಯ ಮುನ್ಸೂಚನೆ

ಬೆಂಗಳೂರು: ರಾಜ್ಯದ ವಿವಿಧ ಭಾಗಗಳಲ್ಲಿ ಇಂದೂ ಮಳೆಯ ಅಬ್ಬರ ಮುಂದುವರಿಯಲಿದ್ದು, ಕೆಲವು ಜಿಲ್ಲೆಗಳಿಗೆ ಹವಾಮಾನ ಇಲಾಖೆ ಯೆಲ್ಲೋ ಹಾಗೂ ಆರೆಂಜ್ ಅಲರ್ಟ್ ಘೋಷಿಸಿದೆ. ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು, ಮಿಂಚು ಮತ್ತು ಬಿರುಗಾಳಿ ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ.

ದಕ್ಷಿಣ ಒಳನಾಡಿನ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ತುಮಕೂರು, ಚಿಕ್ಕಬಳ್ಳಾಪುರ ಮತ್ತು ರಾಮನಗರ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಗಂಟೆಗೆ 50 ರಿಂದ 60 ಕಿ.ಮೀ ವೇಗದ ಗಾಳಿಯೊಂದಿಗೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಇದೇ ವೇಳೆ ಬಳ್ಳಾರಿ, ವಿಜಯನಗರ, ಚಿತ್ರದುರ್ಗ, ಮೈಸೂರು, ಮಂಡ್ಯ, ಶಿವಮೊಗ್ಗ ಹಾಗೂ ದಾವಣಗೆರೆ ಜಿಲ್ಲೆಗಳಲ್ಲಿ ಸಾಧಾರಣ ಮಳೆಯ ನಿರೀಕ್ಷೆಯಿದೆ.

ಉತ್ತರ ಒಳನಾಡಿನ ಯಾದಗಿರಿ, ರಾಯಚೂರು, ಕೊಪ್ಪಳ, ಗದಗ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಸಹ ಬಿರುಗಾಳಿ ಸಹಿತ ಮಳೆಯಾಗುವ ಸಾಧ್ಯತೆ ಇದೆ. ಧಾರವಾಡ, ಹಾವೇರಿ ಮತ್ತು ಬೆಳಗಾವಿ ಜಿಲ್ಲೆಗಳಲ್ಲೂ ಗಾಳಿಯ ವೇಗ ಹೆಚ್ಚಾಗುವ ಮುನ್ಸೂಚನೆ ನೀಡಲಾಗಿದೆ. ಉಳಿದ ಜಿಲ್ಲೆಗಳಲ್ಲಿ ಸಾಮಾನ್ಯವಾಗಿ ಒಣಹವಾಮಾನ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಕರಾವಳಿ ಭಾಗದ ಕರ್ನಾಟಕ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಕೆಲವೆಡೆ ಹಗುರದಿಂದ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ.

ಮೇ 25ರವರೆಗೆ ಭಾರೀ ಮಳೆಯ ಎಚ್ಚರಿಕೆ

ಮೇ 22ರಿಂದ ಮೇ 25ರವರೆಗೆ ರಾಜ್ಯದ ಒಳನಾಡು ಭಾಗಗಳಲ್ಲಿ ಗುಡುಗು-ಸಿಡಿಲಿನ ಅಬ್ಬರ ಹೆಚ್ಚಾಗಲಿದ್ದು, ಗಂಟೆಗೆ 50-60 ಕಿ.ಮೀ ವೇಗದ ಗಾಳಿಯೊಂದಿಗೆ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಕರಾವಳಿ ಜಿಲ್ಲೆಗಳಲ್ಲಿ ಮೇ 21ರಿಂದ ಮೇ 25ರವರೆಗೆ ಮಿಂಚು ಹಾಗೂ ಸಿಡಿಲಿನ ಮುನ್ನೆಚ್ಚರಿಕೆ ನೀಡಲಾಗಿದ್ದು, ಸಾರ್ವಜನಿಕರು ಸುರಕ್ಷಿತ ಸ್ಥಳಗಳಲ್ಲಿ ಇರಲು ಸೂಚಿಸಲಾಗಿದೆ.

ಸಾರ್ವಜನಿಕರಿಗೆ ಮುನ್ನೆಚ್ಚರಿಕೆ ಸೂಚನೆ

ತೀವ್ರ ಮಳೆ ಮತ್ತು ಗಾಳಿಯಿಂದ ತಗ್ಗು ಪ್ರದೇಶಗಳಲ್ಲಿ ಜಲಾವೃತ, ಸಂಚಾರ ದಟ್ಟಣೆ ಹಾಗೂ ವಿದ್ಯುತ್ ವ್ಯತ್ಯಯ ಸಂಭವಿಸುವ ಸಾಧ್ಯತೆ ಇದೆ. ಬಲವಾದ ಗಾಳಿಗೆ ಮರಗಳು ಮತ್ತು ವಿದ್ಯುತ್ ಕಂಬಗಳು ಉರುಳುವ ಅಪಾಯವೂ ಇದೆ ಎಂದು ಇಲಾಖೆ ತಿಳಿಸಿದೆ.

ಸಾರ್ವಜನಿಕರು ಮಳೆ-ಗಾಳಿಯ ವೇಳೆ ಅನಗತ್ಯವಾಗಿ ಹೊರಗೆ ಸಂಚರಿಸದಂತೆ, ಮರಗಳ ಕೆಳಗೆ ಆಶ್ರಯ ಪಡೆಯದಂತೆ ಹಾಗೂ ಸುರಕ್ಷಿತ ಸ್ಥಳಗಳಲ್ಲಿ ಇರಲು ಸೂಚಿಸಲಾಗಿದೆ. ಜೊತೆಗೆ ರೈತರು ತೆರೆದ ಪ್ರದೇಶಗಳಲ್ಲಿ ಸಂಗ್ರಹಿಸಿರುವ ಬೆಳೆಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿಕೊಳ್ಳುವಂತೆ ಜಾಗೃತಿ ಮೂಡಿಸಲಾಗಿದೆ.

‘ಮ್ಯಾಂಗೋ ಪಚ್ಚ’ಗೆ ಯಾಕಿಲ್ಲ ಹೈಪ್? ಸುದೀಪ್ ಬೆಂಬಲ ಇದ್ದರೂ ಸೋಶಿಯಲ್ ಮೀಡಿಯಾದಲ್ಲಿ ಶುರುವಾಯ್ತು ಚರ್ಚೆ!

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಸದ್ಯ ದೊಡ್ಡ ಮಟ್ಟದ ನಿರೀಕ್ಷೆ ಮೂಡಿಸಿರುವ ಸಿನಿಮಾಗಳಲ್ಲಿ ‘ಮ್ಯಾಂಗೋ ಪಚ್ಚ’ ಕೂಡ ಒಂದು. ಕಿಚ್ಚ ಸುದೀಪ್ ಕುಟುಂಬದ ಹಿನ್ನೆಲೆಯೊಂದಿಗೆ ಬರುತ್ತಿರುವ ಈ ಸಿನಿಮಾ ಜೂನ್ 5ರಂದು ಬಿಡುಗಡೆಯಾಗಲಿದ್ದು, ಚಿತ್ರತಂಡ ಈಗ ಪ್ರಚಾರ ಚಟುವಟಿಕೆಗಳನ್ನು ವೇಗಗೊಳಿಸಿದೆ.

ಸಂಚಿತ್ ಅಭಿನಯದ ಮೊದಲ ಸಿನಿಮಾವಾದ ‘ಮ್ಯಾಂಗೋ ಪಚ್ಚ’ ಮೈಸೂರು ಹಿನ್ನೆಲೆಯ ಕಥೆಯನ್ನು ಹೊಂದಿದ್ದು, 25 ವರ್ಷ ಹಿಂದಿನ ಕಾಲಘಟ್ಟವನ್ನು ತೆರೆಗೆ ತರಲು ಚಿತ್ರತಂಡ ವಿಶೇಷ ಕಾಳಜಿ ವಹಿಸಿದೆ. ರೆಟ್ರೋ ಲುಕ್, ಹಳೆಯ ಮೈಸೂರು ವಾತಾವರಣ ಮತ್ತು ಯುವಕರ ಭಾವನಾತ್ಮಕ ಕಥಾಹಂದರ ಚಿತ್ರದ ಪ್ರಮುಖ ಆಕರ್ಷಣೆ ಎನ್ನಲಾಗುತ್ತಿದೆ.

ಆದರೆ ಸಿನಿಮಾ ಬಿಡುಗಡೆಯ ದಿನಾಂಕ ಸಮೀಪಿಸುತ್ತಿದ್ದರೂ ನಿರೀಕ್ಷಿತ ಮಟ್ಟದಲ್ಲಿ ಬಝ್ ಸೃಷ್ಟಿಯಾಗಿಲ್ಲ ಎನ್ನುವ ಮಾತುಗಳು ಕೇಳಿಬರುತ್ತಿವೆ. ವಿಶೇಷವಾಗಿ ಎರಡು ದೊಡ್ಡ ನಿರ್ಮಾಣ ಸಂಸ್ಥೆಗಳ ಬ್ಯಾನರ್ ಅಡಿಯಲ್ಲಿ ಸಿನಿಮಾ ಮೂಡಿಬಂದಿದ್ದರೂ, ಪ್ರಚಾರ ಕಡಿಮೆ ಎನ್ನುವ ಚರ್ಚೆ ಸಿನಿ ವಲಯದಲ್ಲೇ ಶುರುವಾಗಿದೆ.

ಈ ಬಗ್ಗೆ ನಿರ್ಮಾಪಕ ಕಾರ್ತಿಕ್ ಗೌಡ ಸ್ಪಷ್ಟನೆ ನೀಡಿದ್ದು, “ನಾವು ಹಂತ ಹಂತವಾಗಿ ಪ್ರಚಾರ ಮಾಡುತ್ತಿದ್ದೇವೆ. ಇತ್ತೀಚೆಗೆ ಟೀಸರ್ ಬಿಡುಗಡೆ ಮಾಡಿದ್ದೇವೆ. ಶೀಘ್ರದಲ್ಲೇ ಟ್ರೇಲರ್ ಬರುತ್ತದೆ. ಸಂಚಿತ್ ಸೇರಿದಂತೆ ಚಿತ್ರತಂಡ ಸಂದರ್ಶನಗಳು ಹಾಗೂ ಪ್ರಚಾರ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದೆ” ಎಂದು ತಿಳಿಸಿದ್ದಾರೆ.

ಕಿಚ್ಚ ಸುದೀಪ್ ಧ್ವನಿಯಲ್ಲಿ ಬಂದಿರುವ ಚಿತ್ರದ ಪರಿಚಯ ಟೀಸರ್ ಈಗಾಗಲೇ ಸಿನಿಪ್ರೇಕ್ಷಕರಲ್ಲಿ ಕುತೂಹಲ ಹುಟ್ಟಿಸಿದ್ದು, “ಇವ್ನೇ ಪಚ್ಚ.. ಇದು ಇವನ ಕಥೆ” ಎನ್ನುವ ಡೈಲಾಗ್ ವೈರಲ್ ಆಗಿದೆ.

ವಿವೇಕ್ ನಿರ್ದೇಶಿಸಿರುವ ಈ ಚಿತ್ರಕ್ಕೆ ಚರಣ್ ರಾಜ್ ಸಂಗೀತ ನೀಡಿದ್ದು, ಕಾಜಲ್ ಕುಂದರ್ ನಾಯಕಿಯಾಗಿ ನಟಿಸಿದ್ದಾರೆ. ಮಯೂರ್ ಪಟೇಲ್, ಉಗ್ರಂ ಮಂಜು, ಪ್ರಶಾಂತ್ ಹಿರೇಮಠ್ ಹಾಗೂ ಹಂಸ ನಾರಾಯಣಸ್ವಾಮಿ ತಾರಾಗಣದಲ್ಲಿ ಇದ್ದಾರೆ.

ಡಾಲಿ ಧನಂಜಯ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ಸಹ ಹರಿದಾಡುತ್ತಿದೆ. ಈಗಾಗಲೇ ಬಿಡುಗಡೆಯಾದ ಹಾಡುಗಳು ಹಿಟ್ ಆಗಿದ್ದು, ಮುಂದಿನ ದಿನಗಳಲ್ಲಿ ಚಿತ್ರದ ಟ್ರೇಲರ್ ಸಿನಿಮಾ ಹವಾ ಹೆಚ್ಚಿಸುವ ನಿರೀಕ್ಷೆಯಿದೆ.

ದಿಲೀಪ್ ರಾಜ್ ನೆನೆದು ಕಣ್ಣೀರಾದ ನವೀನ್ ಕೃಷ್ಣ; ಗೆಳೆಯನಿಗಾಗಿ ಹಾಡಿದ ಭಾವುಕ ಗಾನ ನಮನ ವೈರಲ್

ಬೆಂಗಳೂರು: ನಟ ದಿಲೀಪ್ ರಾಜ್ ಅಗಲಿಕೆಯ ನೋವಿನಿಂದ ಕನ್ನಡ ಚಿತ್ರರಂಗ ಇನ್ನೂ ಹೊರಬಂದಿಲ್ಲ. ಅವರ ನಿಧನದ ಬಳಿಕ ಸ್ನೇಹಿತರು, ಸಹ ಕಲಾವಿದರು ಹಾಗೂ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾವುಕ ನೆನಪುಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇದೀಗ ನಟ ಹಾಗೂ ನಿರ್ದೇಶಕ ನವೀನ್ ಕೃಷ್ಣ ತಮ್ಮ ಆಪ್ತ ಗೆಳೆಯ ದಿಲೀಪ್ ರಾಜ್ ಅವರಿಗೆ ಹಾಡಿನ ಮೂಲಕ ಭಾವುಕ ನಮನ ಸಲ್ಲಿಸಿದ್ದಾರೆ.

ಕಾಲೇಜು ದಿನಗಳಿಂದಲೂ ದಿಲೀಪ್ ರಾಜ್ ಮತ್ತು ನವೀನ್ ಕೃಷ್ಣ ಆತ್ಮೀಯ ಸ್ನೇಹಿತರಾಗಿದ್ದರು. ಕೇವಲ ನಟನೆಯಲ್ಲ, ಜೀವನದ ಅನೇಕ ಹಂತಗಳಲ್ಲಿ ಇಬ್ಬರೂ ಜೊತೆಯಾಗಿದ್ದರು. ನಿರ್ದೇಶನದತ್ತ ಹೆಜ್ಜೆ ಇಡಲು ಕೂಡ ದಿಲೀಪ್ ರಾಜ್ ಅವರೇ ಪ್ರೇರಣೆ ಎಂದು ನವೀನ್ ಕೃಷ್ಣ ಹಲವು ಬಾರಿ ಹೇಳಿಕೊಂಡಿದ್ದರು.

ಗೆಳೆಯನ ಅಗಲಿಕೆಯಿಂದ ಮನನೊಂದಿರುವ ನವೀನ್ ಕೃಷ್ಣ, ಇದೀಗ ದಿಲೀಪ್ ರಾಜ್ ಅವರ ವ್ಯಕ್ತಿತ್ವ ಮತ್ತು ಮಾನವೀಯತೆಯನ್ನು ಹಾಡಿನ ಮೂಲಕ ಸ್ಮರಿಸಿದ್ದಾರೆ.

“ಕಲೆಯೇ ಅವನ ಉಸಿರಾಯ್ತು.. ನಗುವೇ ಅವನ ಹೆಸರಾಯ್ತು.. ಸಾಧನೆ ರೂಢಿಯಾಯ್ತು.. ಹಸಿದವರ ಅನ್ನದಾತ..” ಎಂಬ ಸಾಲುಗಳು ದಿಲೀಪ್ ರಾಜ್ ಬದುಕಿನ ನೈಜ ಚಿತ್ರಣದಂತಿವೆ.

ಹಾಡಿನ ಕೊನೆಯಲ್ಲಿ “ವಿಧಿಯೂ ಬಂದು ಕರೆದರೂ ಸಾವಿಗೂ ಕೈ ಚಾಚಿದಾತ” ಎಂಬ ಸಾಲು ಕೇಳುಗರನ್ನು ಕಣ್ಣೀರಾಗಿಸುವಂತಿದೆ.

ಈ ಹಾಡಿನ ವಿಡಿಯೋ ಹಂಚಿಕೊಂಡಿರುವ ನವೀನ್ ಕೃಷ್ಣ, “ನೀನಿಲ್ಲ ಅಂತ ನಾನು ಒಪ್ಪಲ್ಲ.. ನೀನು ಎಲ್ಲಿದ್ದರೂ ಎಂದಿನಂತೆ ನಗು ನಗ್ತಾ ಇರು” ಎಂದು ಬರೆದುಕೊಂಡಿದ್ದು, ಆ ಪೋಸ್ಟ್ ಈಗ ಭಾರೀ ವೈರಲ್ ಆಗಿದೆ.

ಚಿತ್ರರಂಗದ ಅನೇಕ ಕಲಾವಿದರು ಈ ಪೋಸ್ಟ್‌ಗೆ ಪ್ರತಿಕ್ರಿಯಿಸಿ ದಿಲೀಪ್ ರಾಜ್ ಅವರನ್ನು ನೆನಪಿಸಿಕೊಂಡಿದ್ದಾರೆ. ಅಭಿಮಾನಿಗಳೂ ಸಹ “ಒಬ್ಬ ನಿಜವಾದ ಸ್ನೇಹಿತ ಮಾತ್ರ ಇಷ್ಟು ಹೃದಯಸ್ಪರ್ಶಿಯಾಗಿ ಗೆಳೆಯನನ್ನು ನೆನಪಿಸಿಕೊಳ್ಳಬಹುದು” ಎಂದು ಕಾಮೆಂಟ್ ಮಾಡುತ್ತಿದ್ದಾರೆ.

ದಿಲೀಪ್ ರಾಜ್ ಅವರ ಸರಳತೆ, ನಗುಮುಖ ಮತ್ತು ಮಾನವೀಯತೆ ಅವರನ್ನು ಇಂದಿಗೂ ಅಭಿಮಾನಿಗಳ ಮನಸ್ಸಿನಲ್ಲಿ ಜೀವಂತವಾಗಿರಿಸಿದೆ.

ವಿಜಯ್ ಟಿವಿಕೆ, ಪವನ್ ಜನಸೇನಾ ಕರ್ನಾಟಕದತ್ತ? ದಕ್ಷಿಣ ರಾಜಕೀಯದಲ್ಲಿ ಹೊಸ ಸಮೀಕರಣ!

ಬೆಂಗಳೂರು: ತಮಿಳು ನಟ ವಿಜಯ್ ನೇತೃತ್ವದ ಟಿವಿಕೆ ಪಕ್ಷ ಕರ್ನಾಟಕ ರಾಜಕೀಯಕ್ಕೆ ಕಾಲಿಡಲಿದೆ ಎಂಬ ಚರ್ಚೆ ಜೋರಾಗಿದ್ದು, ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆಯಲ್ಲಿ ಪಕ್ಷ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಸಾಧ್ಯತೆಗಳ ಕುರಿತು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿದೆ.

ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯ ಐದು ನಗರ ಪಾಲಿಕೆಗಳಿಗೆ 2026ರ ಆಗಸ್ಟ್ ಅಂತ್ಯದೊಳಗೆ ಚುನಾವಣೆ ನಡೆಸಲು ಸುಪ್ರೀಂ ಕೋರ್ಟ್ ಸೂಚನೆ ನೀಡಿದ ಬಳಿಕ, ಹಲವು ಹೊಸ ರಾಜಕೀಯ ಲೆಕ್ಕಾಚಾರಗಳು ಆರಂಭವಾಗಿವೆ. ವಿಶೇಷವಾಗಿ ತಮಿಳು ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಇರುವ ಬೆಂಗಳೂರಿನ ಕೆಲ ವಾರ್ಡ್‌ಗಳಲ್ಲಿ ಟಿವಿಕೆ ಪಕ್ಷ ಸಂಘಟನೆ ಮಾಡುವ ಪ್ರಯತ್ನ ನಡೆಯುತ್ತಿದೆ ಎನ್ನಲಾಗಿದೆ.

ತಮಿಳುನಾಡಿನಲ್ಲಿ ವಿಜಯ್ ಪಕ್ಷ ಸಾಧಿಸಿದ ಜನಪ್ರಿಯತೆಯನ್ನು ಕರ್ನಾಟಕದಲ್ಲೂ ಬಳಸಿಕೊಳ್ಳಲು ಅಭಿಮಾನಿ ಬಳಗ ಮತ್ತು ಕೆಲ ಸಂಘಟಕರು ತೆರೆಮರೆಯಲ್ಲಿ ಚರ್ಚೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಹರಿದಾಡುತ್ತಿದೆ. ಆರಂಭಿಕ ಹಂತದಲ್ಲಿ ಸಣ್ಣ ಮಟ್ಟದಲ್ಲಿ ಪಕ್ಷ ಸಂಘಟನೆ ಮಾಡಿ ನಂತರ ವಿಸ್ತರಣೆ ಮಾಡುವ ಚಿಂತನೆ ಇದೆ ಎಂದು ಹೇಳಲಾಗುತ್ತಿದೆ.

ಇದೇ ಸಮಯದಲ್ಲಿ ಆಂಧ್ರ ಪ್ರದೇಶದ ಜನಸೇನಾ ಪಕ್ಷವೂ ಕರ್ನಾಟಕದಲ್ಲಿ ತನ್ನ ಪ್ರಭಾವ ಹೆಚ್ಚಿಸಲು ಮುಂದಾಗಿದೆ. ಚಿತ್ರದುರ್ಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಾಗಬಾಬು ಭಾಗವಹಿಸಿದ್ದರಿಂದ, ಪವನ್ ಕಲ್ಯಾಣ್ ಪಕ್ಷದ ಚಟುವಟಿಕೆಗಳ ಮೇಲೂ ಗಮನ ಸೆಳೆಯಲಾಗಿದೆ.

ಕರ್ನಾಟಕದಲ್ಲಿ ಬಿಜೆಪಿ-ಕಾಂಗ್ರೆಸ್ ಪ್ರಾಬಲ್ಯ ಮುಂದುವರಿದಿರುವಾಗ, ಪ್ರಾದೇಶಿಕ ರಾಜಕೀಯ ಪರ್ಯಾಯದ ಬಗ್ಗೆ ಮತ್ತೆ ಚರ್ಚೆ ಆರಂಭವಾಗಿದೆ. ಉಪೇಂದ್ರ ಅವರ ಪ್ರಜಾಕೀಯ ಪಕ್ಷದ ಬಗ್ಗೆ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಮರುಚರ್ಚೆ ನಡೆಯುತ್ತಿದೆ.

ದಕ್ಷಿಣ ಭಾರತದ ರಾಜಕೀಯ ಪಕ್ಷಗಳು ಕರ್ನಾಟಕದಲ್ಲಿ ನೆಲೆ ಕಂಡುಕೊಳ್ಳಲು ಪ್ರಯತ್ನಿಸುತ್ತಿರುವುದು ಮುಂದಿನ ದಿನಗಳಲ್ಲಿ ರಾಜ್ಯ ರಾಜಕೀಯದ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎನ್ನುವುದು ಕುತೂಹಲದ ವಿಷಯವಾಗಿದೆ.

‘ಪುನೀತ್ ಜೊತೆಯೇ ಆ ಕಥೆಯೂ ಹೋಯಿತು’: ಅಪ್ಪು ನೆನೆದು ಪ್ರಶಾಂತ್ ನೀಲ್ ಭಾವುಕ

ನಿರ್ದೇಶಕ ಪ್ರಶಾಂತ್ ನೀಲ್ ಮತ್ತು ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಕಾಂಬಿನೇಷನ್‌ನಲ್ಲಿ ಸಿನಿಮಾ ಬರಬೇಕಿತ್ತು ಎಂಬ ವಿಚಾರ ಮತ್ತೆ ಚರ್ಚೆಗೆ ಬಂದಿದೆ. ಅಪ್ಪುಗಾಗಿ ವಿಶೇಷವಾಗಿ ಸಿದ್ಧಪಡಿಸಿದ್ದ ಕಥೆಯನ್ನು ಈಗ ಯಾರಿಗೂ ಮಾಡಲು ಮನಸ್ಸಿಲ್ಲ ಎಂದು ಪ್ರಶಾಂತ್ ನೀಲ್ ಭಾವುಕರಾಗಿ ಹೇಳಿದ್ದು, ಅಭಿಮಾನಿಗಳ ಮನ ಮುಟ್ಟಿದೆ.

‘ಕೆಜಿಎಫ್’ ಸಿನಿಮಾ ಆರಂಭಕ್ಕೂ ಮುನ್ನವೇ ಪ್ರಶಾಂತ್ ನೀಲ್ ಒಂದು ಫ್ಯಾಮಿಲಿ ಡ್ರಾಮಾ ಕಥೆ ಸಿದ್ಧಪಡಿಸಿದ್ದರು. ಆ ಕಥೆಯನ್ನು ಪುನೀತ್ ರಾಜ್‌ಕುಮಾರ್ ಅವರನ್ನು ಗಮನದಲ್ಲಿಟ್ಟುಕೊಂಡೇ ಬರೆಯಲಾಗಿತ್ತು. ಹೊಂಬಾಳೆ ಫಿಲ್ಮ್ಸ್ ಎದುರು ಮೊದಲಿಗೆ ಇದೇ ಕಥೆ ಹೇಳಲಾಗಿತ್ತಾದರೂ, ನಂತರ ‘ಕೆಜಿಎಫ್’ ಕಥೆ ಕೇಳಿದ ನಿರ್ಮಾಪಕರು ಅದನ್ನೇ ಮೊದಲು ಕೈಗೆತ್ತಿಕೊಂಡಿದ್ದರು.

ಈ ಕುರಿತು ಮಾತನಾಡಿರುವ ಪ್ರಶಾಂತ್ ನೀಲ್, ‘ಆ ಕಥೆ ಸಂಪೂರ್ಣವಾಗಿ ಪುನೀತ್ ಸರ್‌ಗಾಗಿ ಮಾಡಿದ್ದೆ. ಅವರ ಅಗಲಿಕೆಯ ನಂತರ ಆ ಕಥೆಯನ್ನು ಮತ್ತಾರಿಗೂ ಮಾಡಲು ಸಾಧ್ಯವೆನಿಸಲಿಲ್ಲ. ಅವರ ಜೊತೆ ಆ ಕಥೆಯೂ ಹೋಗಿಬಿಟ್ಟಿತು’ ಎಂದು ಹೇಳಿದ್ದಾರೆ.

ಪುನೀತ್ ಜೊತೆ ಸಿನಿಮಾ ಮಾಡಲು ಆಗದೇ ಹೋದದ್ದೇ ತಮ್ಮ ವೃತ್ತಿಜೀವನದ ಅತಿ ದೊಡ್ಡ ಬೇಸರ ಎಂದು ನೀಲ್ ಹೇಳಿದ್ದಾರೆ. ಅಪ್ಪು ಅವರ ವ್ಯಕ್ತಿತ್ವ, ಸ್ಕ್ರೀನ್ ಪ್ರೆಸೆನ್ಸ್ ಮತ್ತು ಭಾವನಾತ್ಮಕ ತೂಕವನ್ನು ಮನಸ್ಸಿನಲ್ಲಿ ಇಟ್ಟುಕೊಂಡೇ ಕಥೆ ನಿರ್ಮಿಸಲಾಗಿತ್ತು ಎನ್ನಲಾಗಿದೆ.

ಪ್ರಸ್ತುತ ಪ್ರಶಾಂತ್ ನೀಲ್ ‘ಡ್ರ್ಯಾಗನ್’ ಸಿನಿಮಾದ ಕೆಲಸಗಳಲ್ಲಿ ನಿರತರಾಗಿದ್ದಾರೆ. ಜೂನಿಯರ್ ಎನ್‌ಟಿಆರ್ ನಟನೆಯ ಈ ಚಿತ್ರದ ಗ್ಲಿಂಪ್ಸ್ ಈಗಾಗಲೇ ದೊಡ್ಡ ಮಟ್ಟದಲ್ಲಿ ವೈರಲ್ ಆಗಿದೆ. ಸುಮಾರು 9 ನಿಮಿಷಗಳ ವಿಶೇಷ ಟ್ರೇಲರ್ ಬಿಡುಗಡೆ ಮಾಡಲು ಚಿತ್ರತಂಡ ಯೋಜನೆ ರೂಪಿಸಿದೆ ಎಂಬ ಮಾಹಿತಿ ಹೊರಬಿದ್ದಿದೆ.

‘ಕೆಜಿಎಫ್ 3’ಗೆ ಇನ್ನೂ ಸಮಯ ಬೇಕು: ‘ಸಲಾರ್ 2’ ಬಗ್ಗೆ ದೊಡ್ಡ ಅಪ್ಡೇಟ್ ಕೊಟ್ಟ ಪ್ರಶಾಂತ್ ನೀಲ್

ಹೈದರಾಬಾದ್: ಪ್ಯಾನ್ ಇಂಡಿಯಾ ನಿರ್ದೇಶಕ ಪ್ರಶಾಂತ್ ನೀಲ್ ಇದೀಗ ‘ಸಲಾರ್ 2’ ಸಿನಿಮಾದ ಬಗ್ಗೆ ಸ್ಪಷ್ಟ ಅಪ್ಡೇಟ್ ನೀಡಿ ಸಿನಿಪ್ರೇಕ್ಷಕರ ಕುತೂಹಲ ಹೆಚ್ಚಿಸಿದ್ದಾರೆ. ಆದರೆ ಇದೇ ವೇಳೆ ‘ಕೆಜಿಎಫ್ 3’ ಕುರಿತು ಅವರು ನೀಡಿದ ಪ್ರತಿಕ್ರಿಯೆ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದೆ.

ಪ್ರಭಾಸ್ ಅಭಿನಯದ ‘ಸಲಾರ್: ಪಾರ್ಟ್ 1 – ಸೀಸ್‌ಫೈರ್’ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಯಶಸ್ಸು ಕಂಡಿತ್ತು. ಈಗ ಅದರ ಮುಂದುವರಿದ ಭಾಗ ‘ಸಲಾರ್: ಪಾರ್ಟ್ 2 – ಶೌರ್ಯಾಂಗ ಪರ್ವಂ’ ಯಾವಾಗ ಶುರುವಾಗಲಿದೆ ಎಂಬ ಪ್ರಶ್ನೆಗೆ ಪ್ರಶಾಂತ್ ನೀಲ್ ಉತ್ತರ ನೀಡಿದ್ದಾರೆ.

ಸದ್ಯ ಜೂನಿಯರ್ ಎನ್‌ಟಿಆರ್ ಜೊತೆ ‘ಡ್ರ್ಯಾಗನ್’ ಸಿನಿಮಾ ಮಾಡುತ್ತಿರುವ ಅವರು, ಆ ಚಿತ್ರದ ಕೆಲಸ ಮುಗಿದ ತಕ್ಷಣವೇ ‘ಸಲಾರ್ 2’ ಶೂಟಿಂಗ್ ಆರಂಭವಾಗಲಿದೆ ಎಂದು ಹೇಳಿದ್ದಾರೆ. ‘ಗಲಾಟಾ ಪ್ಲಸ್’ ಸಂದರ್ಶನದಲ್ಲಿ ಮಾತನಾಡಿದ ಅವರು, ‘ಡ್ರ್ಯಾಗನ್ ನಂತರ ನನ್ನ ಸಂಪೂರ್ಣ ಗಮನ ಸಲಾರ್ 2 ಕಡೆ ಇರಲಿದೆ’ ಎಂದು ತಿಳಿಸಿದ್ದಾರೆ.

ಇದೇ ವೇಳೆ ‘ಕೆಜಿಎಫ್ 3’ ಬಗ್ಗೆ ಮಾತನಾಡಿದ ಪ್ರಶಾಂತ್ ನೀಲ್, ‘ಆ ಫ್ರಾಂಚೈಸಿಗೆ ನಾನು ಯಾವಾಗ ಮರಳುತ್ತೇನೆ ಎಂಬುದರ ಬಗ್ಗೆ ಇನ್ನೂ ಅಂತಿಮ ತೀರ್ಮಾನವಾಗಿಲ್ಲ’ ಎಂದು ಹೇಳಿದ್ದಾರೆ.

ಪ್ರಶಾಂತ್ ನೀಲ್ ತಮ್ಮ ಮುಂದಿನ ಸಿನಿಮಾ ಯೋಜನೆಗಳ ಬಗ್ಗೆಯೂ ಮಾಹಿತಿ ಹಂಚಿಕೊಂಡಿದ್ದಾರೆ. ಡಾರ್ಕ್ ಥೀಮ್ ಆ್ಯಕ್ಷನ್ ಸಿನಿಮಾಗಳಿಂದ ಸ್ವಲ್ಪ ಬ್ರೇಕ್ ತೆಗೆದುಕೊಂಡು, ಪೌರಾಣಿಕ ಕಥಾಹಂದರದ ಕಲರ್‌ಫುಲ್ ಸಿನಿಮಾ ಸರಣಿ ಮಾಡಲು ಅವರು ಆಸಕ್ತಿ ತೋರಿದ್ದಾರೆ. ಜೊತೆಗೆ ಸಣ್ಣ ಬಜೆಟ್‌ನ ಭಾವನಾತ್ಮಕ ಕುಟುಂಬ ಕಥೆಯ ಸಿನಿಮಾ ಮಾಡುವ ಕನಸನ್ನೂ ಹೊರಹಾಕಿದ್ದಾರೆ.

‘ಸಲಾರ್ 2’ನಲ್ಲಿ ದೇವ ಮತ್ತು ವರದರಾಜ ಮನ್ನಾರ್ ನಡುವಿನ ಯುದ್ಧ ಮತ್ತಷ್ಟು ತೀವ್ರವಾಗಲಿದೆ. ಮೊದಲ ಭಾಗದಲ್ಲಿ ಕಟ್ಟಿಕೊಡಲಾದ ಸ್ನೇಹ ಮತ್ತು ದ್ರೋಹದ ಕಥೆ, ಎರಡನೇ ಭಾಗದಲ್ಲಿ ರಕ್ತಪಾತದ ಅಧಿಕಾರ ಸಮರವಾಗಿ ಮಾರ್ಪಡಲಿದೆ ಎಂದು ಹೇಳಲಾಗುತ್ತಿದೆ.

ಚಿತ್ರದಲ್ಲಿ ಪ್ರಭಾಸ್, ಪೃಥ್ವಿರಾಜ್ ಸುಕುಮಾರನ್, ಜಗಪತಿ ಬಾಬು, ಬಾಬಿ ಸಿಂಹ, ಶ್ರುತಿ ಹಾಸನ್, ಶ್ರಿಯಾ ರೆಡ್ಡಿ ಸೇರಿದಂತೆ ಹಲವರು ನಟಿಸುತ್ತಿದ್ದಾರೆ.

‘ನಟಿ ಮಾತ್ರವಲ್ಲ, ಸಮಾಜಸೇವಕಿಯೂ ಆಗಬೇಕು’: ಹೊಸ ಮಿಷನ್ ಜೊತೆ ಮೈತ್ರಿಯಾ ಗೌಡ ರೀ-ಎಂಟ್ರಿ

ಬೆಂಗಳೂರು: ನಟನೆಯಿಂದ ಕೆಲವು ವರ್ಷ ದೂರ ಉಳಿದಿದ್ದ ನಟಿ ಮೈತ್ರಿಯಾ ಗೌಡ ಇದೀಗ ನಿರ್ಮಾಪಕಿ ಮತ್ತು ಸಮಾಜಸೇವಕಿಯಾಗಿ ಹೊಸ ಪಯಣ ಆರಂಭಿಸಿದ್ದಾರೆ. ‘ಮೈತ್ರಿಯಾ ಗ್ಲೋಬಲ್ ಟ್ರಸ್ಟ್’ ಮೂಲಕ ಸಮಾಜಮುಖಿ ಕೆಲಸಗಳ ಜೊತೆಗೆ ಹೊಸ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವುದಾಗಿ ಅವರು ಘೋಷಿಸಿದ್ದಾರೆ.

‘ಮೌರ್ಯ’ ಸಿನಿಮಾದಲ್ಲಿ ಪುನೀತ್ ರಾಜ್‌ಕುಮಾರ್ ಅವರ ತಂಗಿ ಪಾತ್ರದಲ್ಲಿ ನಟಿಸುವ ಮೂಲಕ ಗಮನ ಸೆಳೆದಿದ್ದ ಮೈತ್ರಿಯಾ ಗೌಡ, ಬಳಿಕ ಹಲವು ಸಿನಿಮಾಗಳಲ್ಲಿ ನಾಯಕಿಯಾಗಿ ಅಭಿನಯಿಸಿದ್ದರು. ನಂತರ ಕೆಲವು ವರ್ಷ ಚಿತ್ರರಂಗದಿಂದ ದೂರ ಉಳಿದಿದ್ದ ಅವರು ಈಗ ಮತ್ತೆ ಸಕ್ರಿಯರಾಗಿದ್ದಾರೆ.

ಚಿತ್ರರಂಗದ ಹಲವಾರು ಗಣ್ಯರ ಸಮ್ಮುಖದಲ್ಲಿ ‘ಮೈತ್ರಿಯಾ ಗ್ಲೋಬಲ್ ಟ್ರಸ್ಟ್’ ಉದ್ಘಾಟನೆಗೊಂಡಿದೆ. ಕಾರ್ಯಕ್ರಮದಲ್ಲಿ ಅನಿರುದ್ಧ್ ಜತ್ಕರ್, ಉದಯ್ ಮೆಹ್ತಾ, ಶರವಣ, ಯಶಸ್ ಸೂರ್ಯ, ರವಿಚೇತನ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಟ್ರಸ್ಟ್ ಆರಂಭದ ಬಗ್ಗೆ ಮಾತನಾಡಿದ ಮೈತ್ರಿಯಾ ಗೌಡ, ‘ನಾನು ಚಿಕ್ಕವಳಿದ್ದಾಗಲೇ ನಟನೆಯ ಜೊತೆಗೆ ಸಮಾಜ ಸೇವೆ ಮಾಡಬೇಕು ಅನ್ನೋ ಕನಸು ಇತ್ತು. ಅನಿರುದ್ಧ್ ಜತ್ಕರ್ ಅವರ ಸೇವಾ ಕಾರ್ಯಗಳು ಮತ್ತು ಉದಯ್ ಮೆಹ್ತಾ ಅವರ ಕೆಲಸದ ರೀತಿ ನನ್ನ ಮೇಲೆ ದೊಡ್ಡ ಪ್ರಭಾವ ಬೀರಿದೆ’ ಎಂದು ಹೇಳಿದರು.

‘ಮೈತ್ರಿಯಾ ಗ್ಲೋಬಲ್ ಟ್ರಸ್ಟ್ ಮೂಲಕ ಸಿನಿಮಾ ಕ್ಷೇತ್ರದ ಹೊಸ ಪ್ರತಿಭೆಗಳಿಗೆ ಅವಕಾಶ ನೀಡಲಾಗುತ್ತದೆ. ಜೊತೆಗೆ ಅನಾಥಾಶ್ರಮ, ವೃದ್ಧಾಶ್ರಮ, ಗೋಶಾಲೆ ಹಾಗೂ ಬೀದಿ ಪ್ರಾಣಿಗಳ ರಕ್ಷಣೆಯಂತಹ ಸಮಾಜಮುಖಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗುತ್ತದೆ’ ಎಂದು ಅವರು ತಿಳಿಸಿದರು.

ಇತ್ತೀಚೆಗೆ ತಮ್ಮ ಹುಟ್ಟುಹಬ್ಬದ ಸಂದರ್ಭದಲ್ಲೇ ಟ್ರಸ್ಟ್ ಉದ್ಘಾಟನೆಗೊಂಡಿರುವುದು ಮೈತ್ರಿಯಾ ಗೌಡ ಅವರಿಗೆ ಮತ್ತಷ್ಟು ವಿಶೇಷ ಕ್ಷಣವಾಗಿತ್ತು.

‘ಕೆಂಪು ಬೇಡ, ಕಿತ್ತಳೆ ಬೇಕು!’; ಮದುವೆ ಲುಕ್‌ನಲ್ಲಿ ಟ್ರೆಂಡ್ ಬ್ರೇಕ್ ಮಾಡಿದ ರಶ್ಮಿಕಾ ಮಂದಣ್ಣ

ಹೈದರಾಬಾದ್: ನಟಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರ ಮದುವೆ ಬಳಿಕವೂ ಅವರ ವೆಡ್ಡಿಂಗ್ ಸ್ಟೈಲ್ ಈಗಲೂ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆಗುತ್ತಿದೆ. ವಿಶೇಷವಾಗಿ ರಶ್ಮಿಕಾ ಧರಿಸಿದ್ದ ಕಿತ್ತಳೆ ಬಣ್ಣದ ಸೀರೆ ಮತ್ತು ಅವರು ಸ್ವತಃ ವಿನ್ಯಾಸಗೊಳಿಸಿದ್ದ ಮಂಗಳಸೂತ್ರ ಇದೀಗ ಮತ್ತೆ ಚರ್ಚೆಗೆ ಬಂದಿದೆ.

ಸ್ಟೈಲಿಸ್ಟ್ ಪ್ರಿಯಾ ಮಗಂತಿ ಈ ಬಗ್ಗೆ ಮಾತನಾಡಿ ಹಲವು ಕುತೂಹಲಕಾರಿ ಸಂಗತಿಗಳನ್ನು ಬಹಿರಂಗಪಡಿಸಿದ್ದಾರೆ. ‘ರಶ್ಮಿಕಾ ಅವರ ಮಂಗಳಸೂತ್ರ ಸಂಪೂರ್ಣವಾಗಿ ಅವರದೇ ಕಲ್ಪನೆ. ಅವರು ಸ್ವತಃ ಅದನ್ನು ಡಿಸೈನ್ ಮಾಡಿದ್ದರು. ಪ್ರತಿಯೊಂದು ವಿವರಕ್ಕೂ ಅವರು ವೈಯಕ್ತಿಕ ಸ್ಪರ್ಶ ನೀಡಿದ್ದರು’ ಎಂದು ಹೇಳಿದ್ದಾರೆ.

ಸೆಲೆಬ್ರಿಟಿ ಮದುವೆಗಳಲ್ಲಿ ಸಾಮಾನ್ಯವಾಗಿ ಟ್ರೆಂಡಿಂಗ್ ಲುಕ್‌ಗಳನ್ನು ಅನುಸರಿಸಲಾಗುತ್ತದೆ. ಆದರೆ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಾತ್ರ ತಮ್ಮ ಮದುವೆಯನ್ನು ಸಂಪೂರ್ಣವಾಗಿ ವೈಯಕ್ತಿಕ ಭಾವನೆಗಳ ಆಧಾರದಲ್ಲಿ ರೂಪಿಸಿಕೊಂಡಿದ್ದರು ಎನ್ನಲಾಗಿದೆ.

ಮದುವೆ ಸೀರೆ ವಿಚಾರದಲ್ಲೂ ಇದೇ ದೃಷ್ಟಿಕೋನ ಅನುಸರಿಸಲಾಗಿತ್ತು. ಹಲವರು ಕೆಂಪು ಅಥವಾ ಬಿಳಿ ಬಣ್ಣದ ಸೀರೆ ಧರಿಸುವಂತೆ ಸಲಹೆ ನೀಡಿದ್ದರೂ, ರಶ್ಮಿಕಾ ಮಾತ್ರ ಕಿತ್ತಳೆ ಬಣ್ಣಕ್ಕೇ ಒತ್ತಾಯಿಸಿದ್ದರು.

‘ಕಿತ್ತಳೆ ಬಣ್ಣದ ವೆಡ್ಡಿಂಗ್ ಸೀರೆ ಅಪರೂಪ. ಆದರೆ ರಶ್ಮಿಕಾ ಅದನ್ನೇ ಬಯಸಿದ್ದರು. ಇತರರ ಅಭಿಪ್ರಾಯಕ್ಕಿಂತ ತಮ್ಮ ಮನಸ್ಸಿನ ಮಾತಿಗೆ ಹೆಚ್ಚು ಮಹತ್ವ ನೀಡಿದರು’ ಎಂದು ಪ್ರಿಯಾ ಮಗಂತಿ ಹೇಳಿದ್ದಾರೆ.

ಇಂಟರ್ನೆಟ್ ಟ್ರೆಂಡ್‌ಗಿಂತ ವೈಯಕ್ತಿಕ ಖುಷಿಗೆ ಆದ್ಯತೆ ನೀಡಿದ ಈ ಜೋಡಿ, ತಮ್ಮ ಮದುವೆಯನ್ನು ವಿಭಿನ್ನವಾಗಿಸಲು ವಿಶೇಷ ಕಾಳಜಿ ವಹಿಸಿತ್ತು ಎನ್ನಲಾಗಿದೆ.

ಸದ್ಯ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ‘ರಣಬಾಲಿ’ ಸಿನಿಮಾದಲ್ಲಿ ಮತ್ತೆ ಜೋಡಿಯಾಗಿ ನಟಿಸುತ್ತಿದ್ದು, ಅಭಿಮಾನಿಗಳಲ್ಲಿ ಈ ಚಿತ್ರದ ಮೇಲೆ ಈಗಾಗಲೇ ದೊಡ್ಡ ಮಟ್ಟದ ನಿರೀಕ್ಷೆ ಮೂಡಿದೆ.

ಪುರಸಭೆ ಜಾಗದಲ್ಲೇ ಗೋಹತ್ಯೆ ಆರೋಪ!

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದ ಹಳೆ ಆಸಾರ ಓಣಿಯ ಪುರಸಭೆ ಜಾಗೆಯಲ್ಲಿ ಪರವಾನಗಿ ಇಲ್ಲದೆ ಅಕ್ರಮವಾಗಿ ನಡೆಸಲಾಗುತ್ತಿರುವ ಕಸಾಯಿಖಾನೆಯಲ್ಲಿ ಗೋಹತ್ಯೆ ನಡೆಸಿ ಮಾಂಸ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಗುರುವಾರ ಲಕ್ಷ್ಮೇಶ್ವರದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು.

ನೂರಾರು ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಕಸಾಯಿಖಾನೆಯ ಬಳಿ ಜಮಾಯಿಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಅಕ್ರಮ ಕಸಾಯಿಖಾನೆಯನ್ನು ಕೂಡಲೇ ಬಂದ್ ಮಾಡಿಸಿ, ಸಂಬಂಧಪಟ್ಟವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದರು.

ಶ್ರೀರಾಮ ಸೇನೆಯ ತಾಲೂಕು ಅಧ್ಯಕ್ಷ ಈರಣ್ಣ ಪೂಜಾರ ನೀಡಿದ ದೂರಿನ ಪ್ರಕಾರ, ಬಲ್ಲ ಮೂಲಗಳ ಮಾಹಿತಿ ಮೇರೆಗೆ ಯುವಕರೊಂದಿಗೆ ಸ್ಥಳಕ್ಕೆ ತೆರಳಿದಾಗ 8ರಿಂದ 10 ಆಕಳುಗಳನ್ನು ಕಡಿಯಲಾಗುತ್ತಿರುವ ದೃಶ್ಯ ಕಂಡು ಬಂದಿದೆ ಎಂದು ಆರೋಪಿಸಲಾಗಿದೆ. ಪ್ರಶ್ನಿಸಲು ಹೋದಾಗ ಕಸಾಯಿಖಾನೆಯಲ್ಲಿದ್ದವರು ಮಾರಕಾಸ್ತ್ರಗಳಿಂದ ಹಲ್ಲೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ.

ಬಳಿಕ ಪೊಲೀಸರೊಂದಿಗೆ ಸ್ಥಳಕ್ಕೆ ತೆರಳಿದ ಯುವಕರು, ಆಕಳು, ಎತ್ತು ಹಾಗೂ ಎಮ್ಮೆಗಳನ್ನು ಕಡಿಯಲಾಗಿರುವ ದೃಶ್ಯಗಳನ್ನು ತೋರಿಸಿ ಆಕ್ರೋಶ ವ್ಯಕ್ತಪಡಿಸಿದರು.

ಮಾತಿನ ಚಕಮಕಿ, ಉದ್ವಿಗ್ನ ವಾತಾವರಣ

ಘಟನಾ ಸ್ಥಳದಲ್ಲಿ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಹಾಗೂ ಕಸಾಯಿಖಾನೆ ಸಿಬ್ಬಂದಿ ನಡುವೆ ಮಾತಿನ ಚಕಮಕಿ ನಡೆಯಿತು. ಪರಿಸ್ಥಿತಿ ಉದ್ವಿಗ್ನಗೊಂಡ ಹಿನ್ನೆಲೆಯಲ್ಲಿ ಪೊಲೀಸರು ಸ್ಥಳದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಿದರು.

ಈ ವೇಳೆ ಓರ್ವ ಕಸಾಯಿಖಾನೆಯ ಸಿಬ್ಬಂದಿ ಅಂಗಡಿ ಬಂದ್ ಮಾಡಿ ಅಲ್ಲಿಂದ ತೆರಳಿದ್ದಾನೆ ಎಂದು ತಿಳಿದು ಬಂದಿದೆ.

ಬಸವರಾಜ ಚಕ್ರಸಾಲಿ ಮಾತನಾಡಿ, “ಪಟ್ಟಣದಲ್ಲಿ ಹಲವು ವರ್ಷಗಳಿಂದ ಅಕ್ರಮ ಕಸಾಯಿಖಾನೆ, ಗೋ ಸಾಗಾಣಿಕೆ ಹಾಗೂ ಅನಧಿಕೃತ ಮಾಂಸ ಮಾರಾಟ ನಡೆಯುತ್ತಿದ್ದರೂ ಪುರಸಭೆ ಮತ್ತು ಪೊಲೀಸರು ಕಣ್ಮುಚ್ಚಿ ಕುಳಿತಿರುವುದು ಸಾರ್ವಜನಿಕರ ಅನುಮಾನಕ್ಕೆ ಕಾರಣವಾಗಿದೆ” ಎಂದು ಆರೋಪಿಸಿದರು.

ಸ್ಥಳೀಯರ ಪ್ರಕಾರ, ಪುರಸಭೆ ಜಾಗವನ್ನು ಹಲವು ವರ್ಷಗಳಿಂದ ಅಕ್ರಮವಾಗಿ ಬಳಸಲಾಗುತ್ತಿದ್ದು, ಇದರಿಂದ ಪರಿಸರ ಮಾಲಿನ್ಯ ಹಾಗೂ ದುರ್ವಾಸನೆ ಸಮಸ್ಯೆ ಹೆಚ್ಚಾಗಿದೆ ಎಂದು ದೂರಲಾಗಿದೆ.

ಕ್ರಮದ ಭರವಸೆ ನೀಡಿದ ಪೊಲೀಸರು

ಸಿಪಿಐ ಬಿ.ವೈ. ನ್ಯಾಮಗೌಡ ಹಾಗೂ ಪಿಎಸ್‌ಐ ನಾಗರಾಜ ಗಡದ ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನಾಕಾರರನ್ನು ಸಮಾಧಾನಪಡಿಸಿದರು. ಪ್ರಕರಣದ ಕುರಿತು ಪರಿಶೀಲನೆ ನಡೆಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಘಟನೆಯ ಗಂಭೀರತೆ ಅರಿತು ಸ್ಥಳಕ್ಕೆ ಆಗಮಿಸಿದ ಡಿವೈಎಸ್‌ಪಿ ಮುರ್ತುಜಾ ಖಾದ್ರಿ ಸ್ಥಳ ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಮುತ್ತು ಕರ್ಜೆಕಣ್ಣವರ, ಅಮರೀಶ ಗಾಂಜಿ, ಪ್ರತಾಪ ಅಂಕಲಿ, ಪ್ರಾಣೇಶ ವ್ಯಾಪಾರಿ, ನವೀನ ಹಿರೇಮಠ, ಪ್ರವೀಣ ಬೋಮಲೆ, ವಿಜಯ ಕುಂಬಾರ, ಚಿನ್ನು ಹಾಳದೋಳದ, ವಾಸು ಗೋಸಾವಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

“ಹಿಂದೂಗಳ ಪೂಜ್ಯನೀಯ ಆಕಳುಗಳನ್ನು ಹತ್ಯೆ ಮಾಡುತ್ತಿರುವುದನ್ನು ಸಹಿಸುವ ಪ್ರಶ್ನೆಯೇ ಇಲ್ಲ. ಅಕ್ರಮ ಕಸಾಯಿಖಾನೆ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಉಗ್ರ ಹೋರಾಟ ಅನಿವಾರ್ಯವಾಗಲಿದೆ.”

ಈರಣ್ಣ ಪೂಜಾರ

ತಾಲೂಕು ಅಧ್ಯಕ್ಷ, ಶ್ರೀರಾಮ ಸೇನೆ

error: Content is protected !!