Home Blog

ಅಡ್ಡ ಮತದಾನ ಆರೋಪ: ತನಿಖೆಗೆ ಸಿದ್ಧ, ಸಾಬೀತಾದರೆ ರಾಜೀನಾಮೆ – ಡಾ. ಚಂದ್ರು ಲಮಾಣಿ

0

ಗದಗ: ವಿಧಾನ ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಯಾವುದೇ ತನಿಖೆ ಎದುರಿಸಲು ಸಿದ್ಧನಿದ್ದೇನೆ ಎಂದು ಹೇಳಿದ್ದಾರೆ.

ಲಕ್ಷ್ಮೇಶ್ವರ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ ನಿರ್ದೇಶನದಂತೆ ಎನ್‌ಡಿಎ ಅಭ್ಯರ್ಥಿಗೆ ಮತ ಚಲಾಯಿಸಿದ್ದೇನೆ. ಆದರೂ ನನ್ನ ಹೆಸರನ್ನು ಅನಗತ್ಯವಾಗಿ ಈ ವಿವಾದಕ್ಕೆ ಎಳೆದು ತಳಕು ಹಾಕಲಾಗುತ್ತಿದೆ. ಇದರಿಂದ ನನಗೆ ಹಾಗೂ ನನ್ನ ಕ್ಷೇತ್ರದ ಜನತೆಗೆ ನೋವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

“ನಾನು ಯಾವುದೇ ರೀತಿಯ ತನಿಖೆಗೆ ಸಿದ್ಧನಿದ್ದೇನೆ. ಧರ್ಮಸ್ಥಳ ಮಾತ್ರವಲ್ಲ, ಯಾವುದೇ ದೇವಸ್ಥಾನದಲ್ಲಿ ಆಣೆ-ಪ್ರಮಾಣ ಮಾಡಲು ಸಿದ್ಧ. ಅಡ್ಡ ಮತದಾನ ಮಾಡಿರುವುದು ಸಾಬೀತಾದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಷ್ಟೇ ಅಲ್ಲ, ರಾಜಕೀಯ ಜೀವನದಿಂದಲೇ ನಿವೃತ್ತಿಯಾಗಲು ಸಿದ್ಧನಿದ್ದೇನೆ” ಎಂದು ಸವಾಲು ಹಾಕಿದರು.

ತಮ್ಮ ವಿರುದ್ಧ ಉದ್ದೇಶಪೂರ್ವಕ ಷಡ್ಯಂತ್ರ ನಡೆಯುತ್ತಿದೆ ಎಂದು ಆರೋಪಿಸಿದ ಅವರು, “ಕಳೆದ ಒಂದು ವರ್ಷದಿಂದ ನನ್ನ ವಿರುದ್ಧ ಸಂಚು ರೂಪಿಸಲಾಗುತ್ತಿದೆ. ಇದರಲ್ಲಿ ಕಾಂಗ್ರೆಸ್ ನಾಯಕರಷ್ಟೇ ಅಲ್ಲ, ನಮ್ಮ ಪಕ್ಷದ ಕೆಲ ಮುಖಂಡರ ಕೈವಾಡವೂ ಇದೆ” ಎಂದು ಗಂಭೀರ ಆರೋಪ ಮಾಡಿದರು.

ಅಡ್ಡ ಮತದಾನ ಆರೋಪದ ಹಿನ್ನೆಲೆಯಲ್ಲಿ ಜಿಲ್ಲೆಯ ರಾಜಕೀಯ ವಲಯದಲ್ಲಿ ಚರ್ಚೆಗಳು ತೀವ್ರಗೊಂಡಿರುವ ನಡುವೆ ಡಾ. ಲಮಾಣಿ ನೀಡಿರುವ ಈ ಹೇಳಿಕೆ ಹೊಸ ರಾಜಕೀಯ ಚರ್ಚೆಗೆ ಕಾರಣವಾಗಿದೆ.

ಯಶ್ ಅಭಿಮಾನಿಗಳಿಗೆ ಸಿಹಿಸುದ್ದಿ: ವದಂತಿಗಳಿಗೆ ಫುಲ್ ಸ್ಟಾಪ್, ಆಗಸ್ಟ್ 26ಕ್ಕೆ ‘ಟಾಕ್ಸಿಕ್’ ವರ್ಲ್ಡ್ ವೈಡ್ ರಿಲೀಸ್

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ ಚಿತ್ರದ ಅಧಿಕೃತ ಬಿಡುಗಡೆಯ ದಿನಾಂಕ ಕೊನೆಗೂ ಘೋಷಣೆಯಾಗಿದೆ. ಹಲವು ದಿನಗಳಿಂದ ಹರಿದಾಡುತ್ತಿದ್ದ ಊಹಾಪೋಹಗಳಿಗೆ ತೆರೆ ಎಳೆದಿರುವ ಯಶ್, ತಮ್ಮ ಬಹುಕೋಟಿ ವೆಚ್ಚದ ಪ್ಯಾನ್-ವರ್ಡ್ ಸಿನಿಮಾವನ್ನು ಆಗಸ್ಟ್ 26ರಂದು ವಿಶ್ವದಾದ್ಯಂತ ಭರ್ಜರಿಯಾಗಿ ಬಿಡುಗಡೆ ಮಾಡುವುದಾಗಿ ಘೋಷಿಸಿದ್ದಾರೆ.

ಮೂಲತಃ ಈ ಸಿನಿಮಾ ಜೂನ್ 4ರಂದು ಬಿಡುಗಡೆಯಾಗಬೇಕಿತ್ತು. ಆದರೆ ಜಾಗತಿಕ ಮಾರುಕಟ್ಟೆಯನ್ನು ಗಮನದಲ್ಲಿಟ್ಟುಕೊಂಡು ಚಿತ್ರತಂಡ ಬಿಡುಗಡೆ ದಿನಾಂಕವನ್ನು ಮುಂದೂಡಿತ್ತು. ಇತ್ತೀಚೆಗೆ ಅಮೆರಿಕದ ಲಾಸ್ ವೇಗಾಸ್‌ನಲ್ಲಿ ನಡೆದ ಪ್ರತಿಷ್ಠಿತ ಸಿನಿಮಾಕಾನ್ ಕಾರ್ಯಕ್ರಮದಲ್ಲಿ ಯಶ್ ಭಾಗವಹಿಸಿದ್ದು, ಅಲ್ಲಿ ಹಾಲಿವುಡ್ ಹಾಗೂ ಅಂತರರಾಷ್ಟ್ರೀಯ ವಿತರಕರಿಂದ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು.

ಈ ಬೆಳವಣಿಗೆಯ ಬಳಿಕ ಜಾಗತಿಕ ಮಟ್ಟದಲ್ಲಿ ಚಿತ್ರದ ವಿತರಣೆಯನ್ನು ಇನ್ನಷ್ಟು ವಿಸ್ತರಿಸಲು ನಿರ್ಮಾಪಕರು ಮತ್ತು ನಿರ್ದೇಶಕಿ ಗೀತು ಮೋಹನ್‌ದಾಸ್ ಹೊಸ ಯೋಜನೆ ರೂಪಿಸಿದರು. ಅಂತರರಾಷ್ಟ್ರೀಯ ವಿತರಣಾ ಸಂಸ್ಥೆಗಳೊಂದಿಗೆ ಒಪ್ಪಂದಗಳನ್ನು ಅಂತಿಮಗೊಳಿಸಲು ಹೆಚ್ಚುವರಿ ಸಮಯ ಬೇಕಾದ ಹಿನ್ನೆಲೆಯಲ್ಲಿ ಬಿಡುಗಡೆಯನ್ನು ಆಗಸ್ಟ್‌ಗೆ ಮುಂದೂಡಲಾಗಿದೆ.

ಚಿತ್ರದ ಬಿಡುಗಡೆ ತಡವಾದ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಮರುಚಿತ್ರೀಕರಣ ನಡೆಯುತ್ತಿದೆ, ನಿರ್ದೇಶಕರೊಂದಿಗೆ ಭಿನ್ನಾಭಿಪ್ರಾಯ ಉಂಟಾಗಿದೆ ಎಂಬ ವದಂತಿಗಳು ಹರಿದಾಡಿದ್ದವು. ಆದರೆ ಇದೀಗ ಬಿಡುಗಡೆಯ ದಿನಾಂಕವನ್ನು ಅಧಿಕೃತವಾಗಿ ಪ್ರಕಟಿಸುವ ಮೂಲಕ ಚಿತ್ರತಂಡ ಆ ಎಲ್ಲ ಊಹಾಪೋಹಗಳಿಗೆ ತೆರೆ ಎಳೆದಿದೆ. ಸಿನಿಮಾ ಸಂಪೂರ್ಣ ಸಿದ್ಧವಾಗಿದ್ದು, ಸದ್ಯ ಜಾಗತಿಕ ಪ್ರಚಾರ ಹಾಗೂ ಬಿಡುಗಡೆಯ ಅಂತಿಮ ಸಿದ್ಧತೆಗಳು ಮಾತ್ರ ನಡೆಯುತ್ತಿವೆ ಎಂದು ತಿಳಿಸಲಾಗಿದೆ.

ಗೀತು ಮೋಹನ್‌ದಾಸ್ ನಿರ್ದೇಶನದ ಈ ಆಕ್ಷನ್ ಥ್ರಿಲ್ಲರ್ ಚಿತ್ರ ಮತ್ತೊಂದು ವಿಶೇಷತೆಯನ್ನು ಹೊಂದಿದೆ. ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಏಕಕಾಲದಲ್ಲಿ ನೇರವಾಗಿ ಚಿತ್ರೀಕರಿಸಲಾಗಿದ್ದು, ಬಳಿಕ ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲೂ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ.

ಕೆವಿಎನ್ ಪ್ರೊಡಕ್ಷನ್ಸ್ ಹಾಗೂ ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ನಿರ್ಮಾಣದ ಈ ಚಿತ್ರದಲ್ಲಿ ಯಶ್ ಜೊತೆಗೆ ನಯನತಾರಾ, ಕಿಯಾರಾ ಅಡ್ವಾಣಿ ಮತ್ತು ತಾರಾ ಸುತಾರಿಯಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಭಾರೀ ನಿರೀಕ್ಷೆ ಮೂಡಿಸಿರುವ ‘ಟಾಕ್ಸಿಕ್’ ಆಗಸ್ಟ್ 26ರಂದು ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ ಹೊಸ ದಾಖಲೆ ಬರೆಯುವ ವಿಶ್ವಾಸವನ್ನು ಚಿತ್ರತಂಡ ಹೊಂದಿದೆ.

ಬೆಂಗಳೂರು ನಿವಾಸಿಗಳೇ ಗಮನಿಸಿ: ಜೂನ್ 22 ಮತ್ತು 23ರಂದು ವಿದ್ಯುತ್ ವ್ಯತ್ಯಯ, ಈ ಪ್ರದೇಶಗಳಲ್ಲಿ ಪವರ್ ಕಟ್

ಬೆಂಗಳೂರು: ನಿರ್ವಹಣಾ ಕಾಮಗಾರಿಗಳ ಹಿನ್ನೆಲೆಯಲ್ಲಿ ನಗರದ ವಿವಿಧ ಭಾಗಗಳಲ್ಲಿ ಜೂನ್ 22 (ಸೋಮವಾರ) ಮತ್ತು ಜೂನ್ 23 (ಮಂಗಳವಾರ) ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ. ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಕಡಿತವಾಗುವ ಸಾಧ್ಯತೆ ಇದೆ.

ಸೋಲದೇವನಹಳ್ಳಿ–ಹೆಸರಘಟ್ಟ ಭಾಗದಲ್ಲಿ ವಿದ್ಯುತ್ ವ್ಯತ್ಯಯ

ಸೋಲದೇವನಹಳ್ಳಿ, ಹೆಸರಘಟ್ಟ, ತರಬನಹಳ್ಳಿ, ಹುರುಳಿಚಿಕ್ಕನಹಳ್ಳಿ, ಟಿ.ಬಿ. ಕ್ರಾಸ್, ಬಿಲಿಜಾಜಿ ದ್ವಾರಕಾನಗರ, ಚಿಕ್ಕಬಾಣಾವರ, ಮಾರುತಿ ನಗರ, ಗಣಪತಿ ನಗರ, ಬ್ರದರ್ಸ್ ಕಾಲೋನಿ, ಕೃಷ್ಣ ಕಾಲೇಜು ರಸ್ತೆ, ರಾಘವೇಂದ್ರ ಲೇಔಟ್, ಸಾಸುವೆಘಟ್ಟ, ಶಿವಕುಮಾರಸ್ವಾಮೀಜಿ ಲೇಔಟ್,

ಡ್ಯಾನಿಶ್ ಫಾರ್ಮ್, ಕೆಎಂಎಫ್, ಪಶುಸಂಗೋಪನೆ ಇಲಾಖೆ, ಶಿವಕೋಟೆ, ಮಾವಳ್ಳಿಪುರ, ಕೊಂಡಶೆಟ್ಟಿಹಳ್ಳಿ, ಬ್ಯಾಲಕೆರೆ, ಆಚಾರ್ಯ ಕಾಲೇಜು ಮುಖ್ಯ ರಸ್ತೆ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ಸೋಮವಾರ ವಿದ್ಯುತ್ ಕಡಿತವಾಗುವ ಪ್ರಮುಖ ಪ್ರದೇಶಗಳು

ಔಟರ್ ರಿಂಗ್ ರೋಡ್ (ORR) ವಲಯ

ಸೆಸ್ನಾ ಬಿಸಿನೆಸ್ ಪಾರ್ಕ್, ಎಕ್ಸೋರಾ ಬಿಸಿನೆಸ್ ಪಾರ್ಕ್, ಶೋಭಾ ಅಪಾರ್ಟ್‌ಮೆಂಟ್ಸ್, ವಿಕಾಸ್ ಟೆಲಿಕಾಂ, ಐಬಿಸ್ ಹೋಟೆಲ್, ತಕ್ಷಶಿಲಾ ಹೆಲ್ತ್‌ಕೇರ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.

ಪೂರ್ವ ವಲಯ

ಶೋಭಾ ಕ್ರಿಸಾಂಥಿಮಮ್, ಗೋವಿಂದಪುರ, ಕಾರ್ಲೆ, ಬೃಂದಾವನ ನಗರ, ಗಾಂಧಿನಗರ, ಹೆಗ್ಡೆ ನಗರ, ಚಂದ್ರಿಕಾ ಸೋಪ್ ಫ್ಯಾಕ್ಟರಿ, ಬಿಎಂಟಿಸಿ ಡಿಪೋ ಸೇರಿದಂತೆ ಹಲವು ಪ್ರದೇಶಗಳು.

ಕೇಂದ್ರ ವಲಯ

ಎಂ.ಜಿ. ರಸ್ತೆ, ಬ್ರಿಗೇಡ್ ರಸ್ತೆ, ಮ್ಯೂಸಿಯಂ ರಸ್ತೆ, ಸೇಂಟ್ ಮಾರ್ಕ್ಸ್ ರಸ್ತೆ, ರೆಸಿಡೆನ್ಸಿ ರಸ್ತೆ, ಕಾನ್ವೆಂಟ್ ರಸ್ತೆ, ಕೇಂಬ್ರಿಡ್ಜ್ ಲೇಔಟ್, ಗೌತಮಪುರ, ಆರ್ಟಿಲರಿ ರಸ್ತೆ, ಎಂವಿ ಗಾರ್ಡನ್, ಜೋಗುಪಾಳ್ಯ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.

ದಕ್ಷಿಣ ವಲಯ

ಅಂಜನಾಪುರ, ಆವಲಹಳ್ಳಿ, ರಾಘವನಪಾಳ್ಯ, ನಾರಾಯಣನಗರ, ಅಮೃತನಗರ, ವಡ್ಡರಪಾಳ್ಯ, ಕೆಂಬತ್ತಹಳ್ಳಿ, ತಲಘಟ್ಟಪುರ ಸೇರಿದಂತೆ ಹಲವು ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ಸ್ಥಗಿತಗೊಳ್ಳಲಿದೆ.

ಪಶ್ಚಿಮ ವಲಯ

ಮಲ್ಲೇಶ್ವರಂ, ವೈಯಾಲಿಕಾವಲ್, ಕೋದಂಡರಾಮಪುರ, ಅಂಬೇಡ್ಕರ್ ನಗರ, ಮತ್ತಿಕೆರೆ, ಜೆ.ಪಿ. ಪಾರ್ಕ್, ಯಶವಂತಪುರ, ಎಚ್‌ಎಂಟಿ ಲೇಔಟ್, ಗೋಕುಲ 1ನೇ ಹಂತ, ಎಸ್‌ಬಿಎಂ ಕಾಲೋನಿ ಸೇರಿದಂತೆ ಹಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ಮಂಗಳವಾರ ವಿದ್ಯುತ್ ಕಡಿತವಾಗುವ ಪ್ರದೇಶಗಳು

ಕೋರಮಂಗಲ ಹಾಗೂ ಸುತ್ತಮುತ್ತ

ಕೋರಮಂಗಲ 3, 4, 5 ಮತ್ತು 6ನೇ ಬ್ಲಾಕ್, ಕೋರಮಂಗಲ ಕೈಗಾರಿಕಾ ಪ್ರದೇಶ, ಮಡಿವಾಳ, ವೆಂಕಟೇಶ್ವರ ಲೇಔಟ್, ಚಿಕ್ಕಡುಗೋಡಿ, ಜೋಗಿ ಕಾಲೋನಿ, ಆಡುಗೋಡಿ, ಸೇಂಟ್ ಜಾನ್ಸ್ ಆಸ್ಪತ್ರೆ ಮತ್ತು ಸಿಬ್ಬಂದಿ ಕ್ವಾರ್ಟರ್ಸ್, ಬನ್ನೇರುಘಟ್ಟ ರಸ್ತೆ, ಕೆಎಚ್‌ಬಿ ಕಾಲೋನಿ, ಕಾವೇರಿ ಲೇಔಟ್, ಎಸ್.ಜಿ. ಪಾಳ್ಯ, ಮಡಿವಾಳ ಮಾರುಕಟ್ಟೆ, ಜಕ್ಕಸಂದ್ರ ವಿಸ್ತರಣೆ ಸೇರಿದಂತೆ ಹಲವು ಪ್ರದೇಶಗಳಲ್ಲಿ ಬೆಳಿಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.

ಸಾರ್ವಜನಿಕರಿಗೆ ಬೆಸ್ಕಾಂ ಮನವಿ

ವಿದ್ಯುತ್ ವ್ಯತ್ಯಯದ ಅವಧಿಯಲ್ಲಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಹಾಗೂ ವಿದ್ಯುತ್ ಆಧಾರಿತ ಕೆಲಸಗಳನ್ನು ಮುಂಚಿತವಾಗಿ ಯೋಜಿಸಿಕೊಳ್ಳುವಂತೆ ಬೆಸ್ಕಾಂ ಸಾರ್ವಜನಿಕರಿಗೆ ಮನವಿ ಮಾಡಿದೆ.

5 ಸಿಕ್ಸ್, 5 ಫೋರ್ ಗಳ ಅಬ್ಬರ: ಕೇವಲ 11 ಎಸೆತಗಳಲ್ಲಿ ವಿಶ್ವದಾಖಲೆ ಬರೆದ ಯುವ ಬ್ಯಾಟರ್ ವೈಭವ್ ಸೂರ್ಯವಂಶಿ

0

ಡಾಂಬುಲಾ: ಕಳೆದ ಪಂದ್ಯದಲ್ಲಿ ಶ್ರೀಲಂಕಾ ಆಟಗಾರರು ನಡೆಸಿದ್ದ ಸ್ಲೆಡ್ಜಿಂಗ್‌ಗೆ ಭಾರತ ‘ಎ’ ತಂಡದ ಯುವ ಬ್ಯಾಟರ್ ವೈಭವ್ ಸೂರ್ಯವಂಶಿ ಬ್ಯಾಟ್‌ನಲ್ಲೇ ತಕ್ಕ ಉತ್ತರ ನೀಡಿದ್ದಾರೆ. ಶ್ರೀಲಂಕಾದಲ್ಲಿ ನಡೆಯುತ್ತಿರುವ ತ್ರಿಕೋನ ಏಕದಿನ ಸರಣಿಯ ಫೈನಲ್‌ನಲ್ಲಿ ಲಂಕಾ ಬೌಲರ್‌ಗಳ ಮೇಲೆ ಮುಗಿಬಿದ್ದ ಸೂರ್ಯವಂಶಿ, ಬೌಂಡರಿ ಮತ್ತು ಸಿಕ್ಸರ್‌ಗಳ ಸುರಿಮಳೆಗೈದು ಎದುರಾಳಿಗಳ ಲೆಕ್ಕಾಚಾರವನ್ನು ಸಂಪೂರ್ಣವಾಗಿ ಹಾಳು ಮಾಡಿದರು.

ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ಭಾರತಕ್ಕೆ ಸೂರ್ಯವಂಶಿ ಸ್ಫೋಟಕ ಆರಂಭ ನೀಡಿದರು. ಕೇವಲ 29 ಎಸೆತಗಳಲ್ಲಿ 10 ಬೌಂಡರಿ ಹಾಗೂ 8 ಸಿಕ್ಸರ್‌ಗಳ ನೆರವಿನಿಂದ 94 ರನ್ ಸಿಡಿಸಿ ಶತಕದ ಅಂಚಿನಲ್ಲಿ ಔಟಾದರು. ಆರಂಭದಿಂದಲೇ ಆಕ್ರಮಣಕಾರಿ ಆಟ ಪ್ರದರ್ಶಿಸಿದ ಅವರು ಶ್ರೀಲಂಕಾ ಬೌಲರ್‌ಗಳಿಗೆ ಯಾವುದೇ ಅವಕಾಶ ನೀಡಲಿಲ್ಲ.

ಇನಿಂಗ್ಸ್‌ನ ಆರಂಭದಲ್ಲೇ ಅಬ್ಬರಿಸಿದ ಸೂರ್ಯವಂಶಿ ಕೇವಲ 11 ಎಸೆತಗಳಲ್ಲಿ ಅರ್ಧಶತಕ ಪೂರೈಸಿ ಹೊಸ ದಾಖಲೆ ಬರೆದರು. ಐದು ಬೌಂಡರಿ ಮತ್ತು ಐದು ಸಿಕ್ಸರ್‌ಗಳೊಂದಿಗೆ ಅರ್ಧಶತಕ ಪೂರೈಸಿದ ಅವರು, ಲಿಸ್ಟ್ ‘ಎ’ ಕ್ರಿಕೆಟ್‌ನಲ್ಲಿ ಅತಿ ವೇಗವಾಗಿ ಅರ್ಧಶತಕ ಸಿಡಿಸಿದ ಅತಿ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಬಳಿಕದ 18 ಎಸೆತಗಳಲ್ಲಿ ಇನ್ನೂ 44 ರನ್ ಸೇರಿಸಿ ಲಂಕಾ ಬೌಲಿಂಗ್ ದಾಳಿಯನ್ನು ಸಂಪೂರ್ಣವಾಗಿ ಧ್ವಂಸಗೊಳಿಸಿದರು.

ಕಳೆದ ಪಂದ್ಯದ ಸ್ಲೆಡ್ಜಿಂಗ್‌ಗೆ ಉತ್ತರ ನೀಡುವಂತೆ ಆಡಿದ ಸೂರ್ಯವಂಶಿ, ನಾಲ್ಕನೇ ಓವರ್‌ನಲ್ಲಿ ಸಮುದಿತಾ ಬೌಲಿಂಗ್‌ನಲ್ಲಿ 20 ರನ್, ಏಳನೇ ಓವರ್‌ನಲ್ಲಿ ಕುಗಥಾಸ್ ಮಥುಲನ್ ಬೌಲಿಂಗ್‌ನಲ್ಲಿ 16 ರನ್ ಕಲೆಹಾಕಿ ಮೈದಾನದಲ್ಲಿ ಸಿಕ್ಸರ್‌ಗಳ ಮಳೆಗರೆದರು.

ಸೂರ್ಯವಂಶಿಗೆ ಮತ್ತೊಬ್ಬ ಆರಂಭಿಕ ಬ್ಯಾಟರ್ ಪ್ರಿಯಾಂಶ್ ಆರ್ಯ ಉತ್ತಮ ಸಾಥ್ ನೀಡಿದರು. ಈ ಜೋಡಿ ಮೊದಲ ವಿಕೆಟ್‌ಗೆ ಕೇವಲ 53 ಎಸೆತಗಳಲ್ಲಿ 132 ರನ್‌ಗಳ ಭರ್ಜರಿ ಜೊತೆಯಾಟ ನಿರ್ಮಿಸಿತು. ಪ್ರಿಯಾಂಶ್ ಆರ್ಯ 24 ಎಸೆತಗಳಲ್ಲಿ 35 ರನ್ (5 ಬೌಂಡರಿ, 1 ಸಿಕ್ಸರ್) ಗಳಿಸಿ ಭಾರತಕ್ಕೆ ಭದ್ರ ಅಡಿಪಾಯ ಹಾಕಿಕೊಟ್ಟರು.

ಕಳೆದ ಪಂದ್ಯದಲ್ಲಿ ಕೆಣಕಿದ್ದ ಶ್ರೀಲಂಕಾ ಆಟಗಾರರಿಗೆ ಫೈನಲ್‌ನಲ್ಲೇ ವೈಭವ್ ಸೂರ್ಯವಂಶಿ ತಮ್ಮ ಬ್ಯಾಟ್ ಮೂಲಕ ಮರೆಯಲಾಗದ ಉತ್ತರ ನೀಡಿದ್ದಾರೆ. ಅವರ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ಭಾರತದ ಪರ ಪಂದ್ಯದ ದಿಕ್ಕನ್ನೇ ಬದಲಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿತು.

ಕೇರಳ ಉದ್ಯಮಿಯಿಂದ ₹20 ಲಕ್ಷ ದರೋಡೆ ಕೇಸ್: ಇನ್ಸ್ಪೆಕ್ಟರ್ ಮಹೇಶ್ ಕನಕಗಿರಿಗೆ 14 ದಿನ ನ್ಯಾಯಾಂಗ ಬಂಧನ

0

ಬೆಂಗಳೂರು: ಕೇರಳ ಮೂಲದ ಉದ್ಯಮಿಯೊಬ್ಬರಿಂದ ₹20 ಲಕ್ಷ ದರೋಡೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಇನ್ಸ್‌ಪೆಕ್ಟರ್ ಮಹೇಶ್ ಕನಕಗಿರಿ ಅವರನ್ನು ಬಂಧಿಸಿರುವ ಪೊಲೀಸರು, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯವು ಅವರಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.

ಈ ಪ್ರಕರಣದಲ್ಲಿ ಮಹೇಶ್ ಕನಕಗಿರಿ ಸೇರಿದಂತೆ ಒಟ್ಟು ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಕುಪೇಂದ್ರ ರೆಡ್ಡಿ ಮತ್ತು ವಸಂತ್ ಕುಮಾರ್ ಬಂಧಿತ ಇತರ ಆರೋಪಿಗಳಾಗಿದ್ದು, ಅವರನ್ನು ಪೊಲೀಸ್ ಕಸ್ಟಡಿಗೆ ಪಡೆದು ತೀವ್ರ ವಿಚಾರಣೆ ನಡೆಸಲಾಗುತ್ತಿದೆ.

ಮಡಿವಾಳ ಪೊಲೀಸರ ವಿಚಾರಣೆ ವೇಳೆ ಇನ್ಸ್‌ಪೆಕ್ಟರ್ ಮಹೇಶ್ ಕನಕಗಿರಿ, “ಕುಪೇಂದ್ರ ರೆಡ್ಡಿ ಪರಿಚಯದ ವ್ಯಕ್ತಿ. ಆತನೊಂದಿಗೆ ಹೋಗಿದ್ದೇ ಹೊರತು ದರೋಡೆ ಪ್ರಕರಣದ ಬಗ್ಗೆ ನನಗೆ ಯಾವುದೇ ಮಾಹಿತಿ ಇರಲಿಲ್ಲ. ಪೊಲೀಸರು ವಿಚಾರಿಸಿದ ನಂತರವೇ ಈ ಪ್ರಕರಣದ ಬಗ್ಗೆ ತಿಳಿಯಿತು” ಎಂದು ಹೇಳಿರುವುದಾಗಿ ತಿಳಿದುಬಂದಿದೆ.

ಇನ್ನು, ತಮ್ಮ ಗುರುತಿನ ಚೀಟಿ (ಐಡಿ ಕಾರ್ಡ್) ದುರ್ಬಳಕೆಯ ಬಗ್ಗೆ ಪ್ರತಿಕ್ರಿಯಿಸಿದ ಅವರು, “ಐಡಿ ಕಾರ್ಡ್‌ನ್ನು ವಾಹನದ ಡ್ಯಾಶ್‌ಬೋರ್ಡ್‌ನಲ್ಲಿ ಇಟ್ಟಿದ್ದೆ. ನನ್ನ ಗಮನಕ್ಕೆ ಬಾರದೆ ಅದನ್ನು ತೆಗೆದುಕೊಂಡು ದುರ್ಬಳಕೆ ಮಾಡಲಾಗಿದೆ. ಅಗತ್ಯವಿದ್ದರೆ ಐಡಿ ಕಾರ್ಡ್ ದುರ್ಬಳಕೆ ಕುರಿತು ನಾನು ಕೂಡ ದೂರು ನೀಡುತ್ತೇನೆ” ಎಂದು ಹೇಳಿರುವುದಾಗಿ ಮೂಲಗಳು ತಿಳಿಸಿವೆ.

ಆದರೆ, ಪ್ರಕರಣದ ಇತರ ಆರೋಪಿಗಳು ವಿಚಾರಣೆ ವೇಳೆ ಮಹೇಶ್ ಕನಕಗಿರಿ ವಿರುದ್ಧವೇ ಆರೋಪ ಮಾಡಿದ್ದಾರೆ. “ಎಲ್ಲವೂ ಅವರಿಗೆ ಗೊತ್ತಿತ್ತು. ಅವರ ಸೂಚನೆಯಂತೆ ನಾವು ನಡೆದುಕೊಂಡಿದ್ದೇವೆ” ಎಂದು ಅವರು ಪೊಲೀಸರಿಗೆ ಹೇಳಿರುವುದಾಗಿ ತಿಳಿದುಬಂದಿದೆ.

ಇದರಿಂದಾಗಿ ಮಹೇಶ್ ಕನಕಗಿರಿ ಅವರ ಪಾತ್ರದ ಕುರಿತು ತನಿಖೆ ಮತ್ತಷ್ಟು ಮಹತ್ವ ಪಡೆದುಕೊಂಡಿದ್ದು, ಅವರ ಹೇಳಿಕೆ ಮತ್ತು ಸಹಆರೋಪಿಗಳ ಹೇಳಿಕೆಗಳ ನಡುವಿನ ವ್ಯತ್ಯಾಸವನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.

ಮಹೇಶ್ ಕನಕಗಿರಿ ಅವರ ಮೊಬೈಲ್ ಫೋನ್‌ನ್ನು ಪೊಲೀಸರು ವಶಪಡಿಸಿಕೊಂಡಿದ್ದು, ದರೋಡೆಗೆ ಸಂಬಂಧಿಸಿದಂತೆ ಯಾವುದೇ ಕರೆ, ಸಂದೇಶ ಅಥವಾ ಚಾಟಿಂಗ್ ನಡೆದಿದೆಯೇ ಎಂಬುದನ್ನು ತಾಂತ್ರಿಕವಾಗಿ ಪರಿಶೀಲಿಸಲಾಗುತ್ತಿದೆ. ತನಿಖೆ ವೇಳೆ ಅವರು ಕುಪೇಂದ್ರ ರೆಡ್ಡಿ ಜೊತೆ ನಿರಂತರ ಸಂಪರ್ಕದಲ್ಲಿದ್ದ ಮಾಹಿತಿ ಕೂಡ ಬೆಳಕಿಗೆ ಬಂದಿದೆ ಎನ್ನಲಾಗಿದೆ.

ಇದಲ್ಲದೆ, ಘಟನೆ ನಡೆದ ಸ್ಥಳದ ಹೋಟೆಲ್ ಸಿಸಿಟಿವಿ ದೃಶ್ಯಗಳು ಸೇರಿದಂತೆ ಹಲವು ತಾಂತ್ರಿಕ ಸಾಕ್ಷ್ಯಗಳನ್ನು ಪೊಲೀಸರು ಸಂಗ್ರಹಿಸುತ್ತಿದ್ದಾರೆ. ಪ್ರಕರಣದ ಮತ್ತೊಬ್ಬ ಆರೋಪಿ ಶಫಿ ತಲೆಮರೆಸಿಕೊಂಡಿದ್ದು, ಆತನ ಪತ್ತೆಗೆ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.

ಶಫಿ ವಿರುದ್ಧ ಈ ಹಿಂದೆಯೂ ದರೋಡೆ ಪ್ರಕರಣಗಳು ದಾಖಲಾಗಿರುವ ಹಿನ್ನೆಲೆಯಲ್ಲಿ, ಆ ಪ್ರಕರಣಗಳಿಗೂ ಇನ್ಸ್‌ಪೆಕ್ಟರ್ ಮಹೇಶ್ ಕನಕಗಿರಿ ಅವರಿಗೆ ಯಾವುದೇ ಸಂಬಂಧವಿದೆಯೇ ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ.

ಪ್ರಕರಣದ ಸಮಗ್ರ ತನಿಖೆ ನಡೆಸಿ ಮಹೇಶ್ ಕನಕಗಿರಿ ಅವರ ಪಾತ್ರದ ಕುರಿತು ಸಂಪೂರ್ಣ ಮಾಹಿತಿ ಕಲೆಹಾಕುವಂತೆ ನಗರ ಪೊಲೀಸ್ ಆಯುಕ್ತರು ಡಿಸಿಪಿ ಸುಜಿತಾ ಅವರಿಗೆ ಸೂಚನೆ ನೀಡಿದ್ದಾರೆ. ಪ್ರಕರಣದ ಎಲ್ಲಾ ಆಯಾಮಗಳಲ್ಲೂ ತನಿಖೆ ಮುಂದುವರಿದಿದೆ.

ಅಡ್ಡ ಮತದಾನ ಪಾಪದ ಕೆಲಸ, ದ್ರೋಹ ಮಾಡಿದವರನ್ನು ಜನ ಕ್ಷಮಿಸುವುದಿಲ್ಲ: ವಿ. ಸೋಮಣ್ಣ

ತುಮಕೂರು: ವಿಧಾನಪರಿಷತ್ ಚುನಾವಣೆಯಲ್ಲಿ ನಡೆದ ಅಡ್ಡಮತದಾನದ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ವಿ. ಸೋಮಣ್ಣ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಪಕ್ಷಕ್ಕೆ ದ್ರೋಹ ಮಾಡಿದವರನ್ನು ಜನರೂ ಕ್ಷಮಿಸುವುದಿಲ್ಲ, ಪಕ್ಷವೂ ಕ್ಷಮಿಸುವುದಿಲ್ಲ ಎಂದು ಹೇಳಿದ್ದಾರೆ.

ತುಮಕೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಪಕ್ಷ ಎನ್ನುವುದು ತಾಯಿ ಇದ್ದಂತೆ. ಆ ತಾಯಿಯ ಗೌರವಕ್ಕೆ ಧಕ್ಕೆ ತಂದರೆ ಅದಕ್ಕಿಂತ ದೊಡ್ಡ ತಪ್ಪು ಮತ್ತೊಂದಿಲ್ಲ. ಈ ರೀತಿಯ ಪಾಪದ ಕೆಲಸ ಮಾಡಿದವರಿಗೆ ಮನೆಯಲ್ಲಿ ಕೂಡ ನೆಮ್ಮದಿ ಸಿಗುವುದಿಲ್ಲ” ಎಂದು ಕಿಡಿಕಾರಿದರು.

“ಅಡ್ಡಮತದಾನ ಮಾಡಿರುವುದು ಅತ್ಯಂತ ಹೇಯ ಕೃತ್ಯ. ಇಂತಹವರು ಜನಪ್ರತಿನಿಧಿಗಳಾಗಿ ಮುಂದುವರಿಯುವುದಕ್ಕಿಂತ ಗೌರವಯುತವಾಗಿ ರಾಜೀನಾಮೆ ನೀಡಿ ಮನೆಯಲ್ಲೇ ಇರುವುದು ಉತ್ತಮ. ಶಾಸಕರಾಗಿ ಹೊಂದಬೇಕಾದ ನಿಷ್ಠೆ ಮತ್ತು ಕರ್ತವ್ಯವನ್ನು ಮರೆತು ಮಾಡಿದ ಈ ತಪ್ಪಿಗೆ ಯಾವುದೇ ಪ್ರಾಯಶ್ಚಿತ್ತವಿಲ್ಲ” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಅಡ್ಡಮತದಾನದಿಂದ ಬಿಜೆಪಿ-ಜೆಡಿಎಸ್ ಮೈತ್ರಿಗೆ ಯಾವುದೇ ರೀತಿಯ ಧಕ್ಕೆಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ ಸೋಮಣ್ಣ, ನಾಯಕತ್ವದ ವಿಚಾರ ಸೇರಿದಂತೆ ಇತರೆ ಬೆಳವಣಿಗೆಗಳ ಬಗ್ಗೆ ಅಂತಿಮ ತೀರ್ಮಾನವನ್ನು ಪಕ್ಷದ ಹೈಕಮಾಂಡ್ ಕೈಗೊಳ್ಳುತ್ತದೆ ಎಂದರು.

ರಾಷ್ಟ್ರ ನಿರ್ಮಾಣದಲ್ಲಿ ಬಿಜೆಪಿಯ ಕೊಡುಗೆ ಅಪಾರವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವವನ್ನು ಇಡೀ ವಿಶ್ವ ಮೆಚ್ಚುತ್ತಿರುವ ಸಂದರ್ಭದಲ್ಲಿ, ನಮ್ಮದೇ ಪಕ್ಷದ ಕೆಲ ಶಾಸಕರು ಪರಿಸ್ಥಿತಿಯ ಗಂಭೀರತೆಯನ್ನು ಅರ್ಥಮಾಡಿಕೊಳ್ಳದೆ ಅಡ್ಡಮತದಾನ ಮಾಡಿರುವುದು ದುಃಖದ ಸಂಗತಿ. ಇದು ಆಗಬಾರದಿತ್ತು. ಆದರೂ ನಡೆದಿರುವ ಈ ಬೆಳವಣಿಗೆಯನ್ನು ಪಕ್ಷದ ವರಿಷ್ಠರು ಗಂಭೀರವಾಗಿ ಪರಿಗಣಿಸಲಿದ್ದಾರೆ ಎಂದು ಹೇಳಿದರು.

ಕ್ರಾಸ್ ವೋಟಿಂಗ್‌ಗೆ ಬಿಜೆಪಿ ಬ್ರೇಕ್? ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣಕ್ಕೆ ಮುಂದಾದ ಬಿಜೆಪಿ

ಬೆಂಗಳೂರು: ವಿಧಾನ ಪರಿಷತ್ ಚುನಾವಣೆಯಲ್ಲಿ ನಡೆದಿರುವ ಅಡ್ಡಮತದಾನದ ಆರೋಪದ ಬೆನ್ನಲ್ಲೇ ರಾಜ್ಯ ಬಿಜೆಪಿ ಮಹತ್ವದ ಹೆಜ್ಜೆ ಇಡಲು ಮುಂದಾಗಿದೆ.

ಅಡ್ಡಮತದಾನ ಮಾಡಿದ ಶಾಸಕರನ್ನು ಪತ್ತೆಹಚ್ಚುವ ಉದ್ದೇಶದಿಂದ ಧರ್ಮಸ್ಥಳದಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಸಲು ತೀರ್ಮಾನಿಸಲಾಗಿದೆ.

ಮುಂದಿನ ವಾರ ಈ ಸಭೆ ನಡೆಯುವ ಸಾಧ್ಯತೆ ಇದ್ದು, ಸಭೆಯಲ್ಲಿ ಬಿಜೆಪಿ ಶಾಸಕರಿಂದ ದೇವರ ಮೇಲೆ ಆಣೆ-ಪ್ರಮಾಣ ಮಾಡಿಸಿ ಮಾಹಿತಿ ಸಂಗ್ರಹಿಸುವ ಕುರಿತು ಚರ್ಚೆ ನಡೆಯಲಿದೆ ಎನ್ನಲಾಗಿದೆ.

ಈ ಕುರಿತು ಮಾತನಾಡಿರುವ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ ವಿಜಯೇಂದ್ರ, “ಪರಿಷತ್ ಚುನಾವಣೆಯಲ್ಲಿ ನಮ್ಮಿಂದ ನಾಲ್ಕು ಅಡ್ಡಮತಗಳು ಬಿದ್ದಿವೆ ಎಂಬ ಚರ್ಚೆ ಮಾಧ್ಯಮಗಳಲ್ಲಿ ನಡೆಯುತ್ತಿದೆ. ನಮ್ಮ ಕಾರ್ಯಕರ್ತರು, ಶಾಸಕರ ನಡವಳಿಕೆ ಬಗ್ಗೆ ಬೇಸರ ಪಟ್ಟಿದ್ದಾರೆ. ಹೀಗಾಗಿ ಎಲ್ಲ 63 ಶಾಸಕರ ಮೇಲೂ ಅನುಮಾನ ಪಡುವಂತಾಗಿದೆ. ನಿನ್ನೆ ನಿತಿನ್ ನಬಿನ್ ಅವರಿಗೆ ಕರೆ ಮಾಡಿ ಈ ಬಗ್ಗೆ ಮಾಹಿತಿ ನೀಡಿದ್ದೇನೆ. ದೆಹಲಿಗೆ ನಾನು ಹಾಗೂ ಅಶೋಕ್ ಅವರು ಹೋಗುತ್ತಿದ್ದು, ಈ ವಾರದಲ್ಲೇ ಧರ್ಮಸ್ಥಳದಲ್ಲಿ ಶಾಸಕಾಂಗ ಪಕ್ಷದ ಸಭೆ ಕರೆಯಲು ಅಶೋಕ್ ಅವರ ಜತೆ ಚರ್ಚೆ ಮಾಡುತ್ತೇನೆ. ತಾಯಿಗೆ ದ್ರೋಹ ಮಾಡಿದ ಶಾಸಕರು ಯಾರೆಂದು ಶ್ರೀಕ್ಷೇತ್ರದಲ್ಲೇ ಗೊತ್ತಾಗಲಿ ಎಂದವರು ತಿಳಿಸಿದ್ದಾರೆ.

ಇತ್ತೀಚೆಗೆ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟದಿಂದ ಒಟ್ಟು 11 ಮತಗಳು ಕ್ರಾಸ್ ವೋಟಿಂಗ್ ಆಗಿವೆ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಮೂಡಿಸಿತ್ತು. ಇದರ ಪರಿಣಾಮ ಜೆಡಿಎಸ್ ಅಭ್ಯರ್ಥಿ ಸೋಲು ಕಂಡಿದ್ದರೆ, ಬಿಜೆಪಿ ಅಭ್ಯರ್ಥಿಗಳ ಪೈಕಿ ಒಬ್ಬರು ಅಲ್ಪ ಅಂತರದಲ್ಲಿ ಗೆಲುವು ಸಾಧಿಸಿದ್ದರು.

ಈ ಬೆಳವಣಿಗೆಯ ಬಳಿಕ ಪಕ್ಷಕ್ಕೆ ದ್ರೋಹ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಬಿಜೆಪಿ ನಾಯಕರು ಎಚ್ಚರಿಕೆ ನೀಡಿದ್ದು, ಧರ್ಮಸ್ಥಳ ಸಭೆ ರಾಜಕೀಯವಾಗಿ ಮಹತ್ವ ಪಡೆದುಕೊಂಡಿದೆ.

 

ಮರದ ಕೊಂಬೆ ಕತ್ತರಿಸಲು ಹೋಗಿ ಟೆರಸ್ ಮೇಲಿಂದ ಬಿದ್ದು ಮಹಿಳೆ ಸಾವು!

ಬೆಂಗಳೂರು: ಮನೆಗೆ ಚಾಚಿಕೊಂಡಿದ್ದ ಮರದ ಕೊಂಬೆಗಳನ್ನು ಕತ್ತರಿಸಲು ಯತ್ನಿಸಿದ ವೇಳೆ ಟೆರಸ್ ಮೇಲಿಂದ ಬಿದ್ದು ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ರಾಜಾಜಿನಗರದಲ್ಲಿ ನಡೆದಿದೆ.

ಪ್ರಮೀಳಾ ಬಾಯಿ (58) ಮೃತ ಮಹಿಳೆ. ಜೂನ್ 18ರಂದು ಸಂಜೆ 5 ಗಂಟೆ ಸುಮಾರಿಗೆ ಈ ದುರ್ಘಟನೆ ನಡೆದಿದ್ದು, ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ರಾಜಾಜಿನಗರದಲ್ಲಿರುವ ತಮ್ಮ ಮನೆಯ ಬಳಿ ಬೆಳೆದಿದ್ದ ಮರದ ಕೊಂಬೆಗಳು ಮನೆಗೆ ಚಾಚಿಕೊಂಡಿದ್ದ ಕಾರಣ, ಅವುಗಳನ್ನು ಕತ್ತರಿಸುವಂತೆ ಸಂಬಂಧಪಟ್ಟ ಜಿಬಿಎ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಲಾಗಿತ್ತು. ಆದರೆ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಪ್ರಮೀಳಾ ಬಾಯಿ ಸ್ವತಃ ಕೊಂಬೆಗಳನ್ನು ಕತ್ತರಿಸಲು ಮುಂದಾಗಿದ್ದರು ಎನ್ನಲಾಗಿದೆ.

ಟೆರಸ್ ಮೇಲೆ ನಿಂತು ಮರದ ಕೊಂಬೆ ಕತ್ತರಿಸುತ್ತಿದ್ದ ವೇಳೆ, ಕೊಠಡಿಯೊಂದರ ಮೇಲ್ಭಾಗಕ್ಕೆ ಅಳವಡಿಸಲಾಗಿದ್ದ ಶೀಟ್ ಮೇಲೆ ಅವರು ಕಾಲಿಟ್ಟಿದ್ದಾರೆ. ಈ ವೇಳೆ ಶೀಟ್ ಮುರಿದು ಹೋಗಿದ್ದು, ಪ್ರಮೀಳಾ ಬಾಯಿ ಕಟ್ಟಡದ ಮೇಲಿನಿಂದ ಕೆಳಗೆ ಬಿದ್ದಿದ್ದಾರೆ.

ತಲೆ ಕೆಳಗಾಗಿ ಬಿದ್ದ ಪರಿಣಾಮ ತೀವ್ರ ರಕ್ತಸ್ರಾವ ಉಂಟಾಗಿ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಘಟನೆ ಸಂಬಂಧ ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಆರೋಗ್ಯವಂತ ಸಮಾಜಕ್ಕೆ ಯೋಗವೇ ಅಡಿಪಾಯ: ಯು.ಟಿ. ಖಾದರ್

ಬೆಂಗಳೂರು: ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಯೋಗ ಅತ್ಯಗತ್ಯವಾಗಿದ್ದು, ಪ್ರತಿಯೊಬ್ಬರೂ ತಮ್ಮ ದೈನಂದಿನ ಜೀವನದಲ್ಲಿ ಯೋಗವನ್ನು ಅಳವಡಿಸಿಕೊಳ್ಳಬೇಕು ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ಹೇಳಿದರು.

ಅಂತರರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ವಿಧಾನಸೌಧದ ಮುಂಭಾಗ ಆಯೋಜಿಸಲಾಗಿದ್ದ ಯೋಗ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, “ನಾವು ಮಾತ್ರವಲ್ಲ, ನಮ್ಮ ಕುಟುಂಬದ ಎಲ್ಲ ಸದಸ್ಯರೂ ಯೋಗವನ್ನು ಅಳವಡಿಸಿಕೊಳ್ಳಬೇಕು. ಆಗ ಮಾತ್ರ ಆರೋಗ್ಯವಂತ ಸಮಾಜ ನಿರ್ಮಾಣ ಸಾಧ್ಯ. ಯೋಗ ಇಂದು ದೇಶದ ಗಡಿಗಳನ್ನು ದಾಟಿ ವಿಶ್ವದಾದ್ಯಂತ ಹರಡಿದೆ. ಯೋಗ ಒಂದು ದಿನಕ್ಕೆ ಸೀಮಿತವಾಗದೆ ಪ್ರತಿದಿನದ ಅಭ್ಯಾಸವಾಗಬೇಕು” ಎಂದು ಹೇಳಿದರು.

ಮುಂದಿನ ಪೀಳಿಗೆಗೆ ಯೋಗದ ಮಹತ್ವವನ್ನು ವರ್ಗಾಯಿಸುವ ಅಗತ್ಯವಿದೆ. ಜನರು ಆಸ್ಪತ್ರೆಗಳಿಗೆ ಹೋಗುವ ಪ್ರಮಾಣ ಕಡಿಮೆಯಾಗಬೇಕಾದರೆ ಆರೋಗ್ಯಕರ ಜೀವನಶೈಲಿಯನ್ನು ರೂಢಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಗ್ರಾಮ ಗ್ರಾಮಕ್ಕೂ ಯೋಗವನ್ನು ವಿಸ್ತರಿಸುವ ಕಾರ್ಯ ಮಾಡುತ್ತಿದೆ ಎಂದು ತಿಳಿಸಿದರು.

ಈಗಾಗಲೇ ಹಲವು ಗ್ರಾಮಗಳಲ್ಲಿ ಯೋಗ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದು, ಈ ವ್ಯವಸ್ಥೆಯನ್ನು ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ವಿಸ್ತರಿಸುವ ಗುರಿ ಹೊಂದಲಾಗಿದೆ ಎಂದರು. ಸಾವಿರಾರು ಜನರು ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಆರೋಗ್ಯದ ಕುರಿತು ಉತ್ತಮ ಸಂದೇಶ ನೀಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಇದೇ ವೇಳೆ ರಾಜ್ಯಪಾಲ Thawar Chand Gehlot ಅಂತರರಾಷ್ಟ್ರೀಯ ಯೋಗ ದಿನದ ಶುಭಾಶಯಗಳನ್ನು ತಿಳಿಸಿ ಮಾತನಾಡಿ, ಯೋಗವು ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಭಾರತೀಯ ಪರಂಪರೆಯಾಗಿದ್ದು, ಮಾನವನ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ದಾರಿ ತೋರಿಸುವ ಸಾಧನವಾಗಿದೆ ಎಂದು ಹೇಳಿದರು.

“ಮನಸ್ಸು ಮತ್ತು ದೇಹದ ಏಕತೆಗೆ ಯೋಗ ಅತ್ಯಂತ ಮುಖ್ಯ. ಇಂದಿನ ಸ್ಪರ್ಧಾತ್ಮಕ ಜೀವನದಲ್ಲಿ ಮಾನಸಿಕ ಹಾಗೂ ದೈಹಿಕ ಸಮಸ್ಯೆಗಳು ಹೆಚ್ಚುತ್ತಿವೆ. ಇಂತಹ ಸಂದರ್ಭದಲ್ಲಿ ಯೋಗ ಉತ್ತಮ ಆರೋಗ್ಯದ ಮಾರ್ಗವಾಗಿದೆ. ಯುವಕರು ಪ್ರತಿದಿನ ಯೋಗಕ್ಕೆ ಸಮಯ ಮೀಸಲಿಡಬೇಕು” ಎಂದು ಸಲಹೆ ನೀಡಿದರು.

ಯೋಗವನ್ನು ಜೀವನದ ಅವಿಭಾಜ್ಯ ಅಂಗವನ್ನಾಗಿ ಮಾಡಿಕೊಳ್ಳಬೇಕಿದ್ದು, ರಾಜ್ಯ ಸರ್ಕಾರ ಯೋಗದ ಕುರಿತು ಜಾಗೃತಿ ಹಾಗೂ ಪ್ರಚಾರ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸುತ್ತಿದೆ ಎಂದು ರಾಜ್ಯಪಾಲರು ತಿಳಿಸಿದರು.

ಆರೋಗ್ಯಕರ ವೃದ್ಧಾಪ್ಯಕ್ಕೆ ಯೋಗವೇ ಮಂತ್ರ: ಸಾಮೂಹಿಕ ಯೋಗಾಭ್ಯಾಸದಲ್ಲಿ ಮೋದಿ ಸಂದೇಶ

0

ಕೋಲ್ಕತ್ತಾ: “ನೀವು 30ನೇ ವಯಸ್ಸಿಗಿಂತ 50ನೇ ವಯಸ್ಸಿನಲ್ಲಿ ಹೆಚ್ಚು ಚೈತನ್ಯಶೀಲರಾಗಿರಬೇಕು” ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದರು.

ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಕೋಲ್ಕತ್ತಾದಲ್ಲಿ ನಡೆದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಬಳಿಕ ಸಾವಿರಾರು ಸಾರ್ವಜನಿಕರೊಂದಿಗೆ ಸಾಮೂಹಿಕ ಯೋಗಾಭ್ಯಾಸದಲ್ಲಿ ಭಾಗವಹಿಸಿದರು.

ಈ ಬಾರಿಯ ಅಂತರರಾಷ್ಟ್ರೀಯ ಯೋಗ ದಿನವನ್ನು ‘ಆರೋಗ್ಯಕರ ವೃದ್ಧಾಪ್ಯಕ್ಕಾಗಿ ಯೋಗ’ ಎಂಬ ವಿಶೇಷ ಥೀಮ್ ಅಡಿಯಲ್ಲಿ ಆಚರಿಸಲಾಗುತ್ತಿದೆ. ವಯಸ್ಸಾಗುತ್ತಿದ್ದಂತೆ ಎದುರಾಗುವ ಆರೋಗ್ಯ ಸಮಸ್ಯೆಗಳನ್ನು ಯೋಗದ ಮೂಲಕ ಹೇಗೆ ಎದುರಿಸಬಹುದು ಎಂಬ ಸಂದೇಶವನ್ನು ಈ ವರ್ಷದ ಧ್ಯೇಯವಾಕ್ಯ ಸಾರುತ್ತಿದೆ.

ವಯಸ್ಸಾದಂತೆ ದೇಹದ ನಮ್ಯತೆ, ಸಮತೋಲನ ಮತ್ತು ಮೂಳೆಗಳ ಬಲವನ್ನು ಕಾಪಾಡಿಕೊಳ್ಳಲು ಯೋಗ ಸಹಕಾರಿಯಾಗಿದೆ. ಅಲ್ಲದೆ ವೃದ್ಧಾಪ್ಯದಲ್ಲಿ ಕಾಣಿಸಿಕೊಳ್ಳುವ ಆತಂಕ, ಒಂಟಿತನ ಮತ್ತು ಮಾನಸಿಕ ಒತ್ತಡವನ್ನು ಕಡಿಮೆ ಮಾಡಿ ಮನಸ್ಸಿಗೆ ನೆಮ್ಮದಿ ನೀಡುತ್ತದೆ.

ಜೀವನದ ಅಂತಿಮ ಹಂತದಲ್ಲಿ ಎದುರಾಗುವ ಸವಾಲುಗಳನ್ನು ಧೈರ್ಯದಿಂದ ಎದುರಿಸುವ ಶಕ್ತಿಯನ್ನು ಯೋಗ ತುಂಬುತ್ತದೆ. ಹಿರಿಯ ನಾಗರಿಕರು ಇತರರ ಮೇಲೆ ಅವಲಂಬಿತರಾಗದೆ ಸ್ವಾವಲಂಬಿಯಾಗಿ, ಸಕ್ರಿಯವಾಗಿ ಹಾಗೂ ಉತ್ಸಾಹದಿಂದ ಬದುಕಲು ಯೋಗ ಪ್ರೇರಣೆ ನೀಡುತ್ತದೆ ಎಂದು ಪ್ರಧಾನಿ ಮೋದಿ ಹೇಳಿದರು.

ವಯಸ್ಸಾದ ಮೇಲೂ ಯೌವನದ ಚೈತನ್ಯವನ್ನು ಉಳಿಸಿಕೊಳ್ಳಲು ಯೋಗ ಎಷ್ಟು ಪರಿಣಾಮಕಾರಿ ಎಂಬುದನ್ನು ಪ್ರಧಾನಿ ಮೋದಿ ಅವರು ಸ್ವತಃ ಯೋಗಾಸನಗಳನ್ನು ಮಾಡುವ ಮೂಲಕ ಜನರಿಗೆ ಸಂದೇಶ ನೀಡಿದರು.

error: Content is protected !!