ಬೆಂಗಳೂರು: ಪಂಚರಾಜ್ಯ ವಿಧಾನಸಭಾ ಚುನಾವಣಾ ಫಲಿತಾಂಶಗಳ ಬಳಿಕ ಸಚಿವ ಸಂತೋಷ್ ಲಾಡ್ ಚುನಾವಣಾ ಆಯೋಗದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಪಶ್ಚಿಮ ಬಂಗಾಳ ಹಾಗೂ ಅಸ್ಸಾಂನಲ್ಲಿ ಬಿಜೆಪಿ ಗೆಲುವಿನ ಹಿಂದೆ ಕೇಂದ್ರ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಪಾತ್ರವಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಉಪ ಚುನಾವಣೆಯಲ್ಲಿ ಕಾಂಗ್ರೆಸ್ ನಿರೀಕ್ಷೆಯಂತೆ ಎರಡು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ ಎಂದು ಹೇಳಿದರು.
ಸರ್ಕಾರದ ಜನಪರ ಕಾರ್ಯಕ್ರಮಗಳು, ಕಾರ್ಯಕರ್ತರು ಹಾಗೂ ಮುಖಂಡರ ಪರಿಶ್ರಮದಿಂದ ಜನರು ನಮ್ಮ ಪರ ಮತ ಹಾಕಿದ್ದಾರೆ. ಅದರ ಫಲವಾಗಿ ಉಪ ಚುನಾವಣೆಯಲ್ಲಿ ಗೆಲುವು ದೊರೆತಿದೆ,” ಎಂದು ಸಂತೋಷ್ ಲಾಡ್ ಹೇಳಿದರು.
ಪಂಚರಾಜ್ಯಗಳ ಫಲಿತಾಂಶಗಳಲ್ಲಿ ತಮಿಳುನಾಡಿನ ಬೆಳವಣಿಗೆ ಅಚ್ಚರಿ ತಂದಿದೆ ಎಂದು ಹೇಳಿದ ಅವರು, ಟಿವಿಕೆ ನಾಯಕ ವಿಜಯ್ ಅವರ ಗೆಲುವಿಗೆ ಶುಭಾಶಯ ಕೋರಿದರು.
ತಮಿಳುನಾಡಿನಲ್ಲಿ ವಿಜಯ್ ಗೆಲುವು ಸರ್ಪ್ರೈಸ್ ಆಗಿದೆ. ಅವರು 35 ಶೇಕಡಾ ಮತಗಳನ್ನು ಪಡೆದಿದ್ದಾರೆ. ಕೇವಲ ಒಂದು ವರ್ಷದೊಳಗೆ ಸರಳ ಬಹುಮತ ಪಡೆದಿರುವುದು ಗಮನಾರ್ಹ ಸಾಧನೆ. ಅವರಿಗೆ ಶುಭವಾಗಲಿ,” ಎಂದರು.
ಟಿವಿಕೆ ಜೊತೆ ಕಾಂಗ್ರೆಸ್ ಮೈತ್ರಿ ಸಾಧ್ಯತೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ಹೈಕಮಾಂಡ್ ಅಂತಿಮ ನಿರ್ಧಾರ ಕೈಗೊಳ್ಳಲಿದೆ ಎಂದು ಹೇಳಿದರು.
ಇದೇ ವೇಳೆ ಅಸ್ಸಾಂ ಹಾಗೂ ಪಶ್ಚಿಮ ಬಂಗಾಳ ಚುನಾವಣಾ ಫಲಿತಾಂಶಗಳ ಕುರಿತು ತೀವ್ರ ಆರೋಪ ಮಾಡಿದ ಸಂತೋಷ್ ಲಾಡ್, ಅಸ್ಸಾಂ ಚುನಾವಣೆಯಲ್ಲಿ ‘ಮ್ಯಾನ್ ಆಫ್ ದಿ ಮ್ಯಾಚ್’ ಮತ್ತು ‘ಮ್ಯಾನ್ ಆಫ್ ದಿ ಸಿರೀಸ್’ ಜ್ಞಾನೇಶ್ ಕುಮಾರ್, ಎಂದು ವ್ಯಂಗ್ಯವಾಡಿದರು.

