Home Blog

3 ವರ್ಷದಲ್ಲಿ 100 ಕೋಟಿ ಖರ್ಚು, ಫಲಿತಾಂಶ ಶೂನ್ಯ?: ಗ್ಯಾರಂಟಿ ಅನುಷ್ಠಾನ ಸಮಿತಿಗಳ ವಿರುದ್ಧ ಬಿಜೆಪಿ ವಾಗ್ದಾಳಿ

ಬೆಂಗಳೂರು: ರಾಜ್ಯ ಸರ್ಕಾರ ರಚಿಸಿರುವ ಗ್ಯಾರಂಟಿ ಅನುಷ್ಠಾನ ಸಮಿತಿಗಳ ಕಾರ್ಯವೈಖರಿ ಹಾಗೂ ಅವುಗಳ ಮೇಲಿನ ವೆಚ್ಚದ ಕುರಿತು ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಕಳೆದ ಮೂರು ವರ್ಷಗಳಲ್ಲಿ ಈ ಸಮಿತಿಗಳ ನಿರ್ವಹಣೆಗೆ ಸುಮಾರು 100 ಕೋಟಿ ರೂಪಾಯಿ ವೆಚ್ಚ ಮಾಡಲಾಗಿದ್ದು, ಸಮಿತಿಗಳು ನಿರೀಕ್ಷಿತ ಮಟ್ಟದಲ್ಲಿ ಕಾರ್ಯನಿರ್ವಹಿಸಿಲ್ಲ ಎಂದು ಬಿಜೆಪಿ ರಾಜ್ಯ ವಕ್ತಾರ ಎಸ್. ಪ್ರಕಾಶ್ ಆರೋಪಿಸಿದ್ದಾರೆ.

ನಗರದ ಜಗನ್ನಾಥ ಭವನದಲ್ಲಿರುವ ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಗೃಹಲಕ್ಷ್ಮಿ ಯೋಜನೆಯಡಿ 3ರಿಂದ 4 ಲಕ್ಷ ಅನರ್ಹ ಹಾಗೂ ಅಪಾತ್ರ ಫಲಾನುಭವಿಗಳ ಹೆಸರನ್ನು ಸರ್ಕಾರ ಇದೀಗ ಪಟ್ಟಿಯಿಂದ ತೆಗೆದುಹಾಕಲು ಮುಂದಾಗಿರುವುದೇ ಅನುಷ್ಠಾನ ಸಮಿತಿಗಳ ವೈಫಲ್ಯಕ್ಕೆ ಸ್ಪಷ್ಟ ಉದಾಹರಣೆ ಎಂದು ಹೇಳಿದರು.

ಅನುಷ್ಠಾನ ಸಮಿತಿಯ ಪದಾಧಿಕಾರಿಗಳಿಗೆ ಸಂಪುಟ ದರ್ಜೆಯ ಸ್ಥಾನಮಾನ ನೀಡಲಾಗಿದ್ದು, ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ ನೇಮಕಾತಿ ಮಾಡಲಾಗಿದೆ. ಅವರಿಗೆ ಸಂಬಳ, ಪ್ರವಾಸ ಭತ್ಯೆ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಈ ಸಮಿತಿಗಳ ನಿರ್ವಹಣೆಗೆ ವರ್ಷಕ್ಕೆ ಸುಮಾರು 35 ಕೋಟಿ ರೂಪಾಯಿ ವೆಚ್ಚವಾಗುತ್ತಿದೆ ಎಂದು ಅವರು ತಿಳಿಸಿದರು.

ಸಮಿತಿಗಳು ಇದುವರೆಗೆ ಒಂದೇ ಒಂದು ಅರ್ಹ ಫಲಾನುಭವಿಯ ಹೆಸರನ್ನು ಸೇರ್ಪಡೆಗೊಳಿಸಿಲ್ಲ ಹಾಗೂ ಅನರ್ಹ ಫಲಾನುಭವಿಯ ಹೆಸರನ್ನು ರದ್ದುಪಡಿಸಲು ಯಾವುದೇ ಶಿಫಾರಸು ಮಾಡಿಲ್ಲ ಎಂದು ಆರೋಪಿಸಿದ ಎಸ್. ಪ್ರಕಾಶ್, “ಸರ್ಕಾರದ ಸೌಲಭ್ಯಗಳನ್ನು ಪಡೆದು ಯಾವುದೇ ಪರಿಣಾಮಕಾರಿ ಕೆಲಸ ಮಾಡದಿದ್ದರೆ ಇಂತಹ ಸಮಿತಿಗಳ ಅಗತ್ಯವೇನು?” ಎಂದು ಪ್ರಶ್ನಿಸಿದರು.

ಅನುಷ್ಠಾನ ಸಮಿತಿ ಉಪಾಧ್ಯಕ್ಷ ಮೆಹ್ರಾಜ್ ಖಾನ್ ಅವರಿಗೆ ಬೆಂಗಳೂರಿನ ಜಯಮಹಲ್ ಪ್ರದೇಶದಲ್ಲಿ ಸರ್ಕಾರಿ ನಿವಾಸ ಒದಗಿಸಿರುವುದನ್ನೂ ಅವರು ಟೀಕಿಸಿದರು. ಮೇಲ್ಮನೆ ಹಾಗೂ ಕೆಳಮನೆ ವಿರೋಧ ಪಕ್ಷದ ನಾಯಕರಿಗೆ ಸಮರ್ಪಕ ವಸತಿ ಸೌಲಭ್ಯ ದೊರೆಯದಿರುವ ಸಂದರ್ಭದಲ್ಲಿ ಈ ರೀತಿಯ ಕ್ರಮಗಳು ಸರ್ಕಾರಿ ಸಂಪನ್ಮೂಲಗಳ ದುರುಪಯೋಗಕ್ಕೆ ಕಾರಣವಾಗುತ್ತಿವೆ ಎಂದು ಆರೋಪಿಸಿದರು.

CCB ಡ್ರಗ್ಸ್ ವಿರುದ್ಧ ಭರ್ಜರಿ ಕಾರ್ಯಾಚರಣೆ: ₹70.50 ಲಕ್ಷ ಮೌಲ್ಯದ ಕೊಕೇನ್ ಜಪ್ತಿ! ಮಹಿಳೆ ಸೇರಿ ಇಬ್ಬರ ಬಂಧನ

0

ಬೆಂಗಳೂರು: ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳ ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ₹70.50 ಲಕ್ಷ ಮೌಲ್ಯದ 130 ಗ್ರಾಂ ಕೊಕೇನ್ ಅನ್ನು ವಶಪಡಿಸಿಕೊಳ್ಳಲಾಗಿದ್ದು, ಉಗಾಂಡಾ ಮೂಲದ ಮಹಿಳೆ ಸೇರಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

ಬಂಧಿತರನ್ನು ಉಗಾಂಡಾ ಮೂಲದ ಮಹಿಳಾ ಡ್ರಗ್ ಪೆಡ್ಲರ್ ಜನತ್ ಹಾಗೂ ಡ್ರಗ್ಸ್ ಸ್ವೀಕರಿಸುತ್ತಿದ್ದ ವಾಹಬ್ ಎಲ್ವಿಸ್ ಯುನಿಸ್ ಎಂದು ಗುರುತಿಸಲಾಗಿದೆ.

ಪೊಲೀಸರ ಮಾಹಿತಿ ಪ್ರಕಾರ, ಆರೋಪಿಗಳು ಯಶವಂತಪುರ ಮತ್ತು ಗೊರಗುಂಟೆಪಾಳ್ಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಾದಕ ದ್ರವ್ಯಗಳ ಅಕ್ರಮ ಮಾರಾಟದಲ್ಲಿ ತೊಡಗಿಕೊಂಡಿದ್ದರು. ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳವು ಚಿಕ್ಕಬಾಣವರದಲ್ಲಿ ಇಬ್ಬರನ್ನೂ ಬಂಧಿಸಿ, ಅವರಿಂದ 130 ಗ್ರಾಂ ಕೊಕೇನ್ ವಶಪಡಿಸಿಕೊಂಡಿದೆ. ಜಪ್ತಿ ಮಾಡಿದ ಕೊಕೇನ್‌ನ ಮೌಲ್ಯ ಸುಮಾರು ₹70.50 ಲಕ್ಷ ಎಂದು ಅಂದಾಜಿಸಲಾಗಿದೆ.

ಪ್ರಾಥಮಿಕ ತನಿಖೆಯಲ್ಲಿ, ಉಗಾಂಡಾ ಮೂಲದ ಜನತ್ ಬಿಸಿನೆಸ್ ವೀಸಾದಡಿ ಭಾರತಕ್ಕೆ ಬಂದು ಡ್ರಗ್ ಪೆಡ್ಲಿಂಗ್‌ನಲ್ಲಿ ತೊಡಗಿದ್ದಳು ಎಂಬುದು ಬೆಳಕಿಗೆ ಬಂದಿದೆ. ಅಲ್ಲದೆ, ಈ ಹಿಂದೆ ದೆಹಲಿಯಲ್ಲಿ ಇದೇ ರೀತಿಯ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಐದು ವರ್ಷಗಳ ಜೈಲು ಶಿಕ್ಷೆ ಅನುಭವಿಸಿದ್ದಳು ಎಂಬ ಮಾಹಿತಿಯೂ ತನಿಖೆಯಲ್ಲಿ ಪತ್ತೆಯಾಗಿದೆ.

ಈ ಕಾರ್ಯಾಚರಣೆಯನ್ನು ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳದ ಎಸಿಪಿ ರಾಜೇಶ್ ಎಲ್.ವೈ. ಅವರ ನೇತೃತ್ವದಲ್ಲಿ ನಡೆಸಲಾಗಿದ್ದು, ಆರೋಪಿಗಳ ಜಾಲ ಹಾಗೂ ಮಾದಕ ದ್ರವ್ಯಗಳ ಮೂಲದ ಕುರಿತು ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.

ರೈತರಿಗೆ ಬಂಪರ್ ಗಿಫ್ಟ್‌ ಕೊಟ್ಟ ಸಿಎಂ ವಿಜಯ್‌:‌ 75,000 ರೂ. ವರೆಗಿನ ಬೆಳೆ ಸಾಲ ಸಂಪೂರ್ಣ ಮನ್ನಾ

0

ಚೆನ್ನೈ: ತಮಿಳುನಾಡು ಸಿಎಂ ವಿಜಯ್ ರೈತ ಕಲ್ಯಾಣದ ಭಾಗವಾಗಿ ಮಹತ್ವದ ನಿರ್ಧಾರ ಕೈಗೊಂಡಿದ್ದು, ಸಹಕಾರಿ ಬ್ಯಾಂಕುಗಳಲ್ಲಿ ಪಡೆದಿರುವ ₹75,000 ವರೆಗಿನ ಬೆಳೆ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡುವುದಾಗಿ ಘೋಷಿಸಿದ್ದಾರೆ.

ಹೊಸ ಯೋಜನೆಯ ಪ್ರಕಾರ 2025ರ ಮೇ 1ರಿಂದ 2026ರ ಫೆಬ್ರವರಿ 28ರ ನಡುವೆ ಪಡೆದ ಸಾಲಗಳಿಗೆ ಈ ಸೌಲಭ್ಯ ಅನ್ವಯವಾಗಲಿದೆ. ₹75,000ಕ್ಕಿಂತ ಹೆಚ್ಚು ಸಾಲ ಹೊಂದಿರುವ ರೈತರಿಗೆ ₹35,000 ವರೆಗೆ ಸಾಲ ಮನ್ನಾ ನೀಡಲಾಗುತ್ತದೆ.

ಈ ಯೋಜನೆಯಿಂದ ಒಟ್ಟು 14.43 ಲಕ್ಷ ರೈತರು ಪ್ರಯೋಜನ ಪಡೆಯಲಿದ್ದಾರೆ. ಇವರಲ್ಲಿ ಸಣ್ಣ, ಮಧ್ಯಮ ಹಾಗೂ ದೊಡ್ಡ ರೈತರು ಸೇರಿದ್ದಾರೆ ಎಂದು ಸರ್ಕಾರ ವಿವರಿಸಿದೆ. ಸಂಪೂರ್ಣ ಸಾಲ ಮನ್ನಾ ಪಡೆಯುವ ರೈತರ ಸಂಖ್ಯೆ 6.22 ಲಕ್ಷಕ್ಕೂ ಹೆಚ್ಚು ಎಂದು ಅಂದಾಜಿಸಲಾಗಿದೆ.

ಈ ನಿರ್ಧಾರದಿಂದ ಸರ್ಕಾರಕ್ಕೆ ಸುಮಾರು ₹5,932 ಕೋಟಿ ಆರ್ಥಿಕ ಹೊರೆ ಉಂಟಾಗಲಿದೆ. ಯೋಜನೆ ಅನುಷ್ಠಾನದ ಹಣಕಾಸು ನಿರ್ವಹಣೆಯನ್ನು RBI ಮಾರ್ಗಸೂಚಿಗಳ ಪ್ರಕಾರ 45–60 ದಿನಗಳಲ್ಲಿ ಪೂರ್ಣಗೊಳಿಸುವ ಯೋಜನೆ ಸರ್ಕಾರದದು.

ರೌಡಿಪಟ್ಟಿಯಿಂದ 66 ಮಂದಿಯ ಹೆಸರು ಕೈಬಿಟ್ಟ ಪ್ರಕರಣ: ಪೊಲೀಸ್ ಆಯುಕ್ತ ಸೀಮಾಂತ್ ಕುಮಾರ್ ಸಿಂಗ್ ಹೇಳಿದ್ದೇನು..?

ಬೆಂಗಳೂರು: ರೌಡಿಪಟ್ಟಿಯಿಂದ 66 ಮಂದಿಯ ಹೆಸರು ಕೈಬಿಟ್ಟಿರುವ ಪ್ರಕರಣದ ಕುರಿತು ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಾಂತ್ ಕುಮಾರ್ ಸಿಂಗ್ ಪ್ರತಿಕ್ರಿಯೆ ನೀಡಿದ್ದಾರೆ.

ಈ ಕುರಿತು ಮಾತನಾಡಿದ ಅವರು, ಸೈಲೆಂಟ್ ಸುನಿಲ್, ಒಂಟೆ ರೋಹಿತ್ ಸೇರಿದಂತೆ ಒಟ್ಟು 66 ಮಂದಿಯ ಹೆಸರನ್ನು ರೌಡಿಪಟ್ಟಿಯಿಂದ ಕೈಬಿಡಲಾಗಿದೆ ಎಂಬ ಮಾಹಿತಿ ಇದೆ. ಬೆಂಗಳೂರಿನಲ್ಲಿ ಮಾತ್ರ 7 ಮಂದಿಯ ಹೆಸರು ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂದು ಹೇಳಿದರು.

ಇನ್ನೂ ಐದು ಮಂದಿಗೆ ಸಂಬಂಧಿಸಿದಂತೆ ಪೊಲೀಸ್ ದೂರು ಪ್ರಾಧಿಕಾರದಿಂದ ನೋಟಿಸ್ ಬಂದಿದ್ದು, ಆ ಎಲ್ಲ ದಾಖಲೆಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಇದುವರೆಗೆ ಯಾವುದೇ ಹೊಸ ಕಡತ (New File) ಸೃಷ್ಟಿಯಾಗಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಈ ವಿಚಾರ ಅತ್ಯಂತ ಸೂಕ್ಷ್ಮವಾಗಿದ್ದು, ನ್ಯಾಯಾಲಯದಲ್ಲಿಯೂ ಪ್ರಕರಣ ಇರುವುದರಿಂದ ಹೆಚ್ಚಿನ ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಲ. ಪೊಲೀಸ್ ಮಹಾನಿರ್ದೇಶಕರು (ಡಿಜಿ & ಐಜಿಪಿ) ಅವರೊಂದಿಗೆ ಚರ್ಚಿಸಿ, ಕಾನೂನು ಸಲಹೆ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುವುದು ಹಾಗೂ ಅಗತ್ಯವಿದ್ದರೆ ಮೇಲ್ಮನವಿ ಸಲ್ಲಿಸಲಾಗುವುದು ಎಂದು ಆಯುಕ್ತರು ತಿಳಿಸಿದರು.

ರೌಡಿಗಳನ್ನು ನಿಯಂತ್ರಿಸುವ ವಿಧಾನ ಪೊಲೀಸರಿಗೆ ತಿಳಿದಿದ್ದು, ರೌಡಿ ಪರೇಡ್ ಎಂಬುದು ಕೇವಲ ಒಂದು ಹಂತ ಮಾತ್ರ ಎಂದು ಹೇಳಿದರು. ಅಲ್ಲದೆ, ಯಾವ ಕಾರಣಕ್ಕೆ ರೌಡಿಪಟ್ಟಿಯಿಂದ ಹೆಸರು ಕೈಬಿಡಲಾಗಿದೆ ಎಂಬುದರ ಕುರಿತು ಸಂಪೂರ್ಣ ಮಾಹಿತಿ ಸಂಗ್ರಹಿಸಲಾಗುವುದು. ಮಾರ್ಗಸೂಚಿಗಳನ್ನು ಪಾಲಿಸದೇ ಈ ಕ್ರಮ ಕೈಗೊಳ್ಳಲಾಗಿದೆಯೇ ಎಂಬ ಆರೋಪದ ಬಗ್ಗೆಯೂ ಸಮಗ್ರ ಪರಿಶೀಲನೆ ನಡೆಸಲಾಗುವುದು ಎಂದು ಸೀಮಾಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.

ಮೆಡಿಕಲ್ ಅಂಗಡಿಗಳಲ್ಲಿ ಇನ್ಮುಂದೆ ಸಿರಪ್ ಖರೀದಿಗೆ ಹೊಸ ನಿಯಮ: ಕೇಂದ್ರ ಸರ್ಕಾರದಿಂದ ಮಹತ್ವದ ಆದೇಶ ಜಾರಿ

0

ನವದೆಹಲಿ: ಔಷಧಿಗಳ ದುರುಪಯೋಗ ತಡೆ ಹಾಗೂ ನಿಯಂತ್ರಣ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಕೇಂದ್ರ ಆರೋಗ್ಯ ಇಲಾಖೆ ಮಹತ್ವದ ನಿರ್ಧಾರ ಕೈಗೊಂಡಿದ್ದು, ಇನ್ಮುಂದೆ ವೈದ್ಯರ ಪ್ರಿಸ್ಕ್ರಿಪ್ಷನ್ ಇಲ್ಲದೆ ಯಾವುದೇ ಸಿರಪ್ ಖರೀದಿಸಲು ಅವಕಾಶ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಕೇಂದ್ರ ಸರ್ಕಾರ 1945ರ ಔಷಧ ನಿಯಮಾವಳಿಗಳಿಗೆ ತಿದ್ದುಪಡಿ ತಂದಿದ್ದು, ವೇಳಾಪಟ್ಟಿ-K ಅಡಿಯಲ್ಲಿ ವಿನಾಯಿತಿ ಪಡೆದ ಔಷಧಿಗಳ ಪಟ್ಟಿಯಿಂದ ‘ಸಿರಪ್ಗಳು’ ಎಂಬ ವರ್ಗವನ್ನು ತೆಗೆದುಹಾಕಿದೆ. ಇದರೊಂದಿಗೆ ಸಿರಪ್ ಆಧಾರಿತ ಔಷಧಿಗಳ ಮಾರಾಟದ ಮೇಲೆ ಕಠಿಣ ನಿಯಂತ್ರಣ ಜಾರಿಯಾಗಲಿದೆ.

ಹೊಸ ನಿಯಮದ ಪ್ರಕಾರ, ಕೆಮ್ಮಿನ ಸಿರಪ್ ಸೇರಿದಂತೆ ಯಾವುದೇ ರೀತಿಯ ಸಿರಪ್‌ಗಳನ್ನು ವೈದ್ಯರ ಶಿಫಾರಸು ಇಲ್ಲದೆ ಮೆಡಿಕಲ್ ಶಾಪ್‌ಗಳಿಂದ ಖರೀದಿಸಲು ಸಾಧ್ಯವಾಗುವುದಿಲ್ಲ. ಔಷಧ ಮಾರಾಟಗಾರರು ಕೂಡ ನೋಂದಾಯಿತ ವೈದ್ಯಕೀಯ ತಜ್ಞರ ಪ್ರಿಸ್ಕ್ರಿಪ್ಷನ್ ಇಲ್ಲದೆ ಸಿರಪ್ ವಿತರಿಸದಂತೆ ಸೂಚಿಸಲಾಗಿದೆ.

ಇಲ್ಲಿಯವರೆಗೆ ಕೆಮ್ಮು, ಶೀತ, ಜ್ವರ ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳಿಗೆ ಬಳಸುವ ಅನೇಕ ಸಿರಪ್‌ಗಳನ್ನು ಸಾರ್ವಜನಿಕರು ವೈದ್ಯರನ್ನು ಸಂಪರ್ಕಿಸದೆ ನೇರವಾಗಿ ಔಷಧ ಅಂಗಡಿಗಳಿಂದ ಖರೀದಿಸುತ್ತಿದ್ದರು. ಆದರೆ ಹೊಸ ತಿದ್ದುಪಡಿ ಜಾರಿಯಾದ ಬಳಿಕ ಈ ಪದ್ಧತಿಗೆ ತೆರೆ ಬೀಳಲಿದೆ.

ಹೀಗಾಗಿ ಕೆಮ್ಮು, ಶೀತ, ಜ್ವರ ಅಥವಾ ಇತರ ಕಾಯಿಲೆಗಳ ಚಿಕಿತ್ಸೆಗೆ ಸಿರಪ್ ಆಧಾರಿತ ಔಷಧಿಗಳ ಅಗತ್ಯವಿದ್ದರೆ ಮೊದಲು ವೈದ್ಯರನ್ನು ಸಂಪರ್ಕಿಸಿ ಪ್ರಿಸ್ಕ್ರಿಪ್ಷನ್ ಪಡೆಯುವುದು ಕಡ್ಡಾಯವಾಗಲಿದೆ. ಈ ಕ್ರಮವು ಔಷಧಿಗಳ ಅನಗತ್ಯ ಬಳಕೆ ಹಾಗೂ ದುರುಪಯೋಗವನ್ನು ತಡೆಗಟ್ಟಲು ಸಹಕಾರಿಯಾಗಲಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಸುರಕ್ಷತಾ ನಿಯಮ ಉಲ್ಲಂಘಿಸಿದ್ದೆ ಮೈಸೂರಿನ ಪಬ್‌ ಅಗ್ನಿ ದುರಂತಕ್ಕೆ ಕಾರಣ

0

ಮೈಸೂರು: ರಿಂಗ್ ರಸ್ತೆಯಲ್ಲಿರುವ ಫಾಕ್ಸ್ಡೆನ್ ಲಿಕ್ಕರ್ ಗ್ಯಾರೇಜ್ ಪಬ್‌ನಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಇಬ್ಬರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ಘಟನೆಯ ನಂತರ ಪಬ್ ಮಾಲೀಕ ಹಾಗೂ ನಟ ಪ್ರೀತಂ ಪುನೀತ್ ಅವರ ನಿರ್ಲಕ್ಷ್ಯವೇ ದುರಂತಕ್ಕೆ ಕಾರಣವೇ ಎಂಬ ಪ್ರಶ್ನೆ ಎದ್ದಿದೆ.

ಪಬ್‌ನಲ್ಲಿ ಅಗ್ನಿ ಸುರಕ್ಷತಾ ನಿಯಮಗಳನ್ನು ಪಾಲಿಸಿಲ್ಲ ಎಂಬ ಆರೋಪ ಕೇಳಿಬಂದಿದ್ದು, ಲೈಸೆನ್ಸ್ ಅವಧಿ ಮುಗಿದಿದ್ದರೂ ನವೀಕರಣ ಮಾಡಿಸದೇ ವ್ಯವಹಾರ ನಡೆಸಲಾಗುತ್ತಿತ್ತು ಎಂಬ ಮಾಹಿತಿ ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಜೊತೆಗೆ ಫೈರ್ ಎಕ್ಸಿಟ್ ಇಲ್ಲದಿರುವುದು ಹಾಗೂ ಅಗ್ನಿಶಾಮಕ ವ್ಯವಸ್ಥೆ ಕೊರತೆಯೂ ಕಂಡುಬಂದಿದೆ.

ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿರಬಹುದೆಂಬ ಶಂಕೆಯಿದ್ದು, ಕೆಲವೇ ಕ್ಷಣಗಳಲ್ಲಿ ಬೆಂಕಿ ಮೇಲ್ಮಹಡಿಗೆ ವ್ಯಾಪಿಸಿದೆ. ಒಳಾಂಗಣದಲ್ಲಿ ಮರದ ಅಲಂಕಾರ ಮತ್ತು ಸುಲಭವಾಗಿ ಹೊತ್ತಿಕೊಳ್ಳುವ ವಸ್ತುಗಳಿದ್ದ ಕಾರಣ ಅವಘಡ ತೀವ್ರಗೊಂಡಿದೆ.

ಘಟನೆಯಲ್ಲಿ ಸಾಹಿನ್ (ಡಾರ್ಜಿಲಿಂಗ್) ಹಾಗೂ ಪ್ರಕಾಶ್ (ನೇಪಾಳ) ಮೃತಪಟ್ಟಿದ್ದು, ಹಲವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ 15ಕ್ಕೂ ಹೆಚ್ಚು ಮಂದಿಯನ್ನು ರಕ್ಷಿಸಿದ್ದಾರೆ. ಪ್ರಕರಣದ ಕುರಿತು ತನಿಖೆ ಮುಂದುವರಿದಿದೆ.

ಪೋಷಕರು ಕೆಲಸಕ್ಕೆ ಹೋದಾಗ ಶೆಡ್‌ಗೆ ನುಗ್ಗಿದ ಕಾಮುಕ: ಇಬ್ಬರು ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ- ಆರೋಪಿ ಬಂಧನ

0

ರಾಯಚೂರು ಜಿಲ್ಲೆ: ಜಿಲ್ಲೆಯ ಸಿಂಧನೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಬ್ಬರು ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವ ಘಟನೆ ಬೆಳಕಿಗೆ ಬಂದಿದೆ. 8 ಹಾಗೂ 9 ವರ್ಷದ ಸಹೋದರಿಯರ ಮೇಲೆ ನಡೆದ ಈ ಕೃತ್ಯ ಸ್ಥಳೀಯರಲ್ಲಿ ಆಕ್ರೋಶ ಹುಟ್ಟಿಸಿದೆ.

ಪೊಲೀಸ್ ಮಾಹಿತಿ ಪ್ರಕಾರ, ಬಡ ಕುಟುಂಬದ ಪೋಷಕರು ಕೂಲಿ ಕೆಲಸಕ್ಕೆ ತೆರಳಿದ್ದ ವೇಳೆ, ಕುಟುಂಬಕ್ಕೆ ಪರಿಚಯಸ್ಥನಾಗಿದ್ದ 30 ವರ್ಷದ ಬಾಬಾ ಎಂಬ ವ್ಯಕ್ತಿ ಶೆಡ್‌ಗೆ ನುಗ್ಗಿ ದೌರ್ಜನ್ಯ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ. ಆರೋಪಿ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದಾನೆ ಎಂದು ತಿಳಿದುಬಂದಿದೆ.

ಘಟನೆ ಸಂಬಂಧ ಸಿಂಧನೂರು ನಗರ ಪೊಲೀಸ್ ಠಾಣೆಯಲ್ಲಿ ಪೋಕ್ಸೊ, ಅತ್ಯಾಚಾರ ಹಾಗೂ ಜಾತಿನಿಂದನೆ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ತನಿಖೆ ಮುಂದುವರಿದಿದೆ.

ಫೇಸ್ ಬುಕ್, OLXನಲ್ಲಿ ಬೈಕ್ ಖರೀದಿಸುವ ಮುನ್ನ ಎಚ್ಚರ: ಕದ್ದ ವಾಹನ ಮಾರಾಟ ಮಾಡುತ್ತಿದ್ದ ಆರೋಪಿ ಅರೆಸ್ಟ್!

ಬೆಂಗಳೂರು: ಫೇಸ್‌ಬುಕ್ ಮತ್ತು ಓಎಲ್‌ಎಕ್ಸ್‌ನಲ್ಲಿ ಜಾಹೀರಾತು ನೀಡಿ ಕಳವು ಮಾಡಿದ ಬೈಕ್‌ಗಳನ್ನು ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಜಯನಗರ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಸಲ್ಮಾನ್ ಮೆಹಬೂಬ್ @ ಬಿಲಾಲ್ ಎಂದು ಗುರುತಿಸಲಾಗಿದೆ. ಆರೋಪಿ ನಗರದ ವಿವಿಧ ಪ್ರದೇಶಗಳಲ್ಲಿ ಪಾರ್ಕಿಂಗ್ ಮಾಡಿದ್ದ ಬೈಕ್‌ಗಳನ್ನು ನಕಲಿ ಕೀ ಬಳಸಿ ಕಳವು ಮಾಡುತ್ತಿದ್ದ ಎನ್ನಲಾಗಿದೆ.

ಕಳವು ಮಾಡಿದ ಬೈಕ್‌ಗಳ ಮೂಲ ಗುರುತು ಸಿಗದಂತೆ ಅವುಗಳ ನಂಬರ್ ಪ್ಲೇಟ್ ಬದಲಾಯಿಸಿ, ಬಳಿಕ ಫೇಸ್‌ಬುಕ್ ಹಾಗೂ ಓಎಲ್‌ಎಕ್ಸ್‌ನಲ್ಲಿ ಜಾಹೀರಾತು ನೀಡಿ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದನು ಎಂದು ತನಿಖೆಯಲ್ಲಿ ತಿಳಿದುಬಂದಿದೆ.

ಜಯನಗರ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದು, ಆತನಿಂದ ₹22 ಲಕ್ಷ ಮೌಲ್ಯದ 37 ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಪ್ರಾಥಮಿಕ ತನಿಖೆಯಲ್ಲಿ ಆರೋಪಿಯ ವಿರುದ್ಧ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಖಲಾಗಿದ್ದ ಒಂದು ಬೈಕ್ ಕಳವು ಪ್ರಕರಣವೂ ಪತ್ತೆಯಾಗಿದೆ. ಪ್ರಕರಣ ಸಂಬಂಧ ಜಯನಗರ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.

ಹೋಲ್ ಸೇಲ್ʼನಲ್ಲಿ ಚಿನ್ನ ಖರೀದಿಸುವ ನೆಪದಲ್ಲಿ ದರೋಡೆ: ಇಬ್ಬರ ಬಂಧನ – ₹1.64 ಕೋಟಿ ಮೌಲ್ಯದ ಚಿನ್ನ ವಶಕ್ಕೆ

ಬೆಂಗಳೂರು: ಹೋಲ್‌ಸೇಲ್‌ನಲ್ಲಿ ಚಿನ್ನ ಖರೀದಿಸುವುದಾಗಿ ನಂಬಿಸಿ ದರೋಡೆ ನಡೆಸಿದ್ದ ಮುಂಬೈ ಗ್ಯಾಂಗ್‌ನ ಇಬ್ಬರು ಆರೋಪಿಗಳನ್ನು ಮಲ್ಲೇಶ್ವರಂ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಪ್ರವೀಣ್ ಅಲಿಯಾಸ್ ಪಪ್ಪು ಹಾಗೂ ಪರೇಶ್ ಸೋನಿ ಎಂದು ಗುರುತಿಸಲಾಗಿದೆ. ಆರೋಪಿಗಳು ಮುಂಬೈನಿಂದ ಬೆಂಗಳೂರಿಗೆ ಬಂದು, ಕೇವಲ ಒಂದು ವಾರದ ಹಿಂದಷ್ಟೇ ಮಲ್ಲೇಶ್ವರಂ 3ನೇ ಕ್ರಾಸ್‌ನಲ್ಲಿ ಕಚೇರಿ ಆರಂಭಿಸಿ ತಮ್ಮ ಕೃತ್ಯಕ್ಕೆ ಸಂಚು ರೂಪಿಸಿದ್ದರು.

ಹೋಲ್‌ಸೇಲ್‌ನಲ್ಲಿ ಚಿನ್ನಾಭರಣ ಖರೀದಿಸುವುದಾಗಿ ಆನ್‌ಲೈನ್‌ನಲ್ಲಿ ಜಾಹೀರಾತು ನೀಡಿದ್ದ ಆರೋಪಿಗಳು, ಅದನ್ನು ನಂಬಿದ ಮೆಹ್ತಾ ಗೋಲ್ಡ್ ಸಂಸ್ಥೆಯ ಪ್ರತಿನಿಧಿಗಳನ್ನು ತಮ್ಮ ಕಚೇರಿಗೆ ಕರೆಸಿಕೊಂಡಿದ್ದರು. ಸುಮಾರು 3 ಕೆ.ಜಿ. ಚಿನ್ನಾಭರಣ ಮಾರಾಟಕ್ಕೆ ತರಿಸಿದ್ದ ವ್ಯಾಪಾರಿಗಳಿಂದ ಆಭರಣಗಳನ್ನು ಪರಿಶೀಲಿಸಿ ಫೋಟೋ ತೆಗೆದುಕೊಳ್ಳುವುದಾಗಿ ಹೇಳಿ ಒಳಗೆ ತೆಗೆದುಕೊಂಡು ಹೋಗಿದ್ದರು.

ಅನುಮಾನ ಬಾರದಂತೆ ಮೊದಲು ಸುಮಾರು ಒಂದೂವರೆ ಕೆ.ಜಿ. ಚಿನ್ನಾಭರಣವನ್ನು ಮಾತ್ರ ಒಳಗೆ ತೆಗೆದುಕೊಂಡು ಹೋಗಿ, ಅಲ್ಲಿಂದಲೇ ಪರಾರಿಯಾಗಿದ್ದರು. ಘಟನೆ ಸಂಬಂಧ ಮೆಹ್ತಾ ಗೋಲ್ಡ್ ಸಂಸ್ಥೆಯವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಮಲ್ಲೇಶ್ವರಂ ಪೊಲೀಸರು, ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಆರೋಪಿಗಳ ಪತ್ತೆಗಾಗಿ ಕಾರ್ಯಾಚರಣೆ ನಡೆಸಿದರು.

ಕಾರ್ಯಾಚರಣೆಯಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ಅವರಿಂದ ₹1.64 ಕೋಟಿ ಮೌಲ್ಯದ 1 ಕೆಜಿ 8 ಗ್ರಾಂ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ. ಪ್ರಕರಣದಲ್ಲಿ ಭಾಗಿಯಾಗಿರುವ ಇನ್ನಿಬ್ಬರು ಆರೋಪಿಗಳಿಗಾಗಿ ಮಲ್ಲೇಶ್ವರಂ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದು, ತನಿಖೆ ನಡೆಯುತ್ತಿದೆ.

ನೀಟ್‌ ಪರೀಕ್ಷೆ ಹಿನ್ನೆಲೆ ಟೆಲಿಗ್ರಾಂ ಆ್ಯಪ್‌‌ʼಗೆ ನಿರ್ಬಂಧ: ಕೇಂದ್ರ ಸರ್ಕಾರ ಆದೇಶ

0

ನವದೆಹಲಿ: NEET-UG 2026 ಮರುಪರೀಕ್ಷೆಯ ಪಾರದರ್ಶಕತೆ ಮತ್ತು ಭದ್ರತೆ ಕಾಪಾಡುವ ಉದ್ದೇಶದಿಂದ ಕೇಂದ್ರ ಸರ್ಕಾರ ದೇಶಾದ್ಯಂತ ಟೆಲಿಗ್ರಾಂ ಅಪ್ಲಿಕೇಶನ್‌ಗೆ ಜೂನ್ 22ರವರೆಗೆ ತಾತ್ಕಾಲಿಕ ನಿರ್ಬಂಧ ವಿಧಿಸಿದೆ. ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಶಿಫಾರಸಿನ ಮೇರೆಗೆ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 69A ಅಡಿಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.

ಇದರ ಜೊತೆಗೆ, ಟೆಲಿಗ್ರಾಂನಲ್ಲಿರುವ Message Editing ವೈಶಿಷ್ಟ್ಯವನ್ನು ಜೂನ್ 30ರವರೆಗೆ ಸ್ಥಗಿತಗೊಳಿಸುವಂತೆ ಸೂಚಿಸಲಾಗಿದೆ. ಈಗಾಗಲೇ ಪ್ರಕಟಿಸಿರುವ ಸಂದೇಶಗಳನ್ನು ಬಳಿಕ ತಿದ್ದುಪಡಿ ಮಾಡಿ ಪ್ರಶ್ನೆಪತ್ರಿಕೆ ಸೋರಿಕೆಯ ನಕಲಿ ಸಾಕ್ಷ್ಯ ಸೃಷ್ಟಿಸುವ ಸಾಧ್ಯತೆಯನ್ನು ತಡೆಯುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ವರದಿಗಳು ತಿಳಿಸಿವೆ.

ಇತ್ತೀಚಿನ ವಾರಗಳಲ್ಲಿ ‘Paper Leaked NEET’, ‘Re-NEET 2026’, ‘Private Mafia’ ಹಾಗೂ ‘REE NEET MAFIAA’ ಸೇರಿದಂತೆ ಹಲವು ಟೆಲಿಗ್ರಾಂ ಚಾನೆಲ್‌ಗಳು ಪ್ರಶ್ನೆಪತ್ರಿಕೆ ಸೋರಿಕೆ ಸಂಬಂಧದ ದಾವೆಗಳನ್ನು ಹರಡುತ್ತಿದ್ದವು. ಈ ಕುರಿತು NTA ಹಾಗೂ ಶಿಕ್ಷಣ ಸಚಿವಾಲಯ ಕೇಂದ್ರ ಸರ್ಕಾರದ ಗಮನಕ್ಕೆ ತಂದಿದ್ದರಿಂದ ಟೆಲಿಗ್ರಾಂ ಮೇಲೆ ತಾತ್ಕಾಲಿಕ ನಿರ್ಬಂಧ ಹೇರಲಾಗಿದೆ.

ಈ ಹಿಂದೆ ನಡೆದ NEET-UG 2026 ಪರೀಕ್ಷೆಯಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಆರೋಪದ ಹಿನ್ನೆಲೆಯಲ್ಲಿ ಪರೀಕ್ಷೆಯನ್ನು ರದ್ದುಗೊಳಿಸಲಾಗಿತ್ತು. ಪರಿಣಾಮ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಅನಿಶ್ಚಿತತೆ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಜೂನ್ 21ರಂದು ನಡೆಯಲಿರುವ ಮರುಪರೀಕ್ಷೆಯನ್ನು ಯಾವುದೇ ಅಕ್ರಮವಿಲ್ಲದೆ ನಡೆಸಲು NTA ವಿಶೇಷ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ.

ಮರುಪರೀಕ್ಷೆಗೆ ಸಂಬಂಧಿಸಿದಂತೆ ಯಾವುದೇ ಅನುಮಾನಾಸ್ಪದ ಚಟುವಟಿಕೆಗಳು, ನಕಲಿ ಪ್ರಶ್ನೆಪತ್ರಿಕೆ, ಹಣ ಪಡೆದು ಫಲಿತಾಂಶ ಕೊಡಿಸುವ ಭರವಸೆ ಅಥವಾ ಪರೀಕ್ಷಾ ಅಕ್ರಮಗಳ ಬಗ್ಗೆ ಮಾಹಿತಿ ದೊರೆತಲ್ಲಿ ತಕ್ಷಣವೇ ವರದಿ ಮಾಡುವಂತೆ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ NTA ಮನವಿ ಮಾಡಿದೆ. ಈ ಉದ್ದೇಶಕ್ಕಾಗಿ ವಿಶೇಷ ದೂರು ಪೋರ್ಟಲ್‌ನ್ನೂ ಆರಂಭಿಸಲಾಗಿದೆ.

NTA ಪ್ರಕಟಿಸಿರುವ ಮಾರ್ಗಸೂಚಿಗಳ ಪ್ರಕಾರ, NEET (UG) 2026 ಪ್ರಶ್ನೆಪತ್ರಿಕೆ ಅಥವಾ ಉತ್ತರ ಕೀ ದೊರಕಿಸುವುದಾಗಿ ಹೇಳುವ ಅನಧಿಕೃತ ವೆಬ್‌ಸೈಟ್‌ಗಳು, ಸಾಮಾಜಿಕ ಜಾಲತಾಣ ಖಾತೆಗಳು, ಮೆಸೇಜಿಂಗ್ ಚಾನೆಲ್‌ಗಳು, ನಕಲಿ ಅಧಿಕಾರಿಗಳು ಹಾಗೂ ಪ್ರಶ್ನೆಪತ್ರಿಕೆ ಸೋರಿಕೆ ಹೆಸರಿನಲ್ಲಿ ಹಣ ವಸೂಲಿ ಮಾಡುವ ವ್ಯಕ್ತಿಗಳು ಅಥವಾ ಗುಂಪುಗಳ ಕುರಿತು ಸಾರ್ವಜನಿಕರು ಮಾಹಿತಿ ನೀಡಬಹುದು.

ಯಾವುದೇ ಕಾರಣಕ್ಕೂ ಈ ಬಾರಿ ಪ್ರಶ್ನೆಪತ್ರಿಕೆ ಸೋರಿಕೆಗೆ ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿರುವ NTA, ವಿದ್ಯಾರ್ಥಿಗಳು ನಕಲಿ ವೆಬ್‌ಸೈಟ್‌ಗಳು, ಸುಳ್ಳು ಪ್ರಚಾರಗಳು ಹಾಗೂ ವಂಚಕರ ಬಗ್ಗೆ ಎಚ್ಚರಿಕೆಯಿಂದಿರಬೇಕು ಎಂದು ಸೂಚಿಸಿದೆ. ಪರೀಕ್ಷೆಯ ಸಮಗ್ರತೆ ಮತ್ತು ವಿಶ್ವಾಸಾರ್ಹತೆಯನ್ನು ಕಾಪಾಡಲು ಎಲ್ಲ ಅಗತ್ಯ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಸಂಸ್ಥೆ ಭರವಸೆ ನೀಡಿದೆ.

error: Content is protected !!