ಚಿಕ್ಕಬಳ್ಳಾಪುರ: ಪ್ಲಾಸ್ಟಿಕ್ ಕ್ಯಾನ್ಗಳಿಗೆ ಪೆಟ್ರೋಲ್ ಮತ್ತು ಡೀಸೆಲ್ ವಿತರಣೆ ನಿರಾಕರಿಸಿದ ವಿಚಾರ ಚಿಕ್ಕಬಳ್ಳಾಪುರದಲ್ಲಿ ತೀವ್ರ ಪ್ರತಿಭಟನೆಗೆ ಕಾರಣವಾಗಿದೆ. ಭಾರತ್ ಪೆಟ್ರೋಲಿಯಂ ಬಂಕ್ ಎದುರು ರೈತರು ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರೆ, ಬಳಿಕ ರಾಷ್ಟ್ರೀಯ ಹೆದ್ದಾರಿಯನ್ನೇ ತಡೆದು ಪ್ರತಿಭಟನೆ ನಡೆಸಿದರು.
ಜಿಲ್ಲಾಡಳಿತ ಭವನದ ಸಮೀಪದ ಪೆಟ್ರೋಲ್ ಬಂಕ್ಗೆ ಟ್ರ್ಯಾಕ್ಟರ್ ಹಾಗೂ ಪವರ್ ಟಿಲ್ಲರ್ಗಳೊಂದಿಗೆ ಆಗಮಿಸಿದ ರೈತರು, ಬಂಕ್ ಮಾಲೀಕ ಸಂದೀಪ್ ಅವರನ್ನು ಪ್ರಶ್ನಿಸಿ ತೀವ್ರ ವಾಗ್ವಾದ ನಡೆಸಿದರು. ರೈತರಿಗೆ ಇಂಧನ ನೀಡದಿದ್ದರೆ ಇತರ ಗ್ರಾಹಕರಿಗೂ ಇಂಧನ ವಿತರಿಸಬಾರದು ಎಂದು ಒತ್ತಾಯಿಸಿದರು.
ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ರೈತರು ಚಿಕ್ಕಬಳ್ಳಾಪುರ-ಶಿಡ್ಲಘಟ್ಟ ಹೆದ್ದಾರಿಯನ್ನು ತಡೆದು ವಾಹನ ಸಂಚಾರಕ್ಕೆ ಅಡ್ಡಿಪಡಿಸಿದರು. ರಸ್ತೆಯ ಮಧ್ಯಭಾಗದಲ್ಲಿ ಕೃಷಿ ಯಂತ್ರೋಪಕರಣಗಳನ್ನು ನಿಲ್ಲಿಸಿದ್ದರಿಂದ ಹೆದ್ದಾರಿಯಲ್ಲಿ ವಾಹನಗಳ ಸಾಲು ನಿರ್ಮಾಣಗೊಂಡಿತು.
ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಮುಂದಾದರು. ಹೆದ್ದಾರಿ ಬಂದ್ನಿಂದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು, ರೈತರು ಮತ್ತು ಸಾರ್ವಜನಿಕರ ನಡುವೆ ವಾಗ್ವಾದ ನಡೆದಿದೆ. ವಾಹನಗಳನ್ನು ತೆರವುಗೊಳಿಸುವಂತೆ ಸೂಚಿಸಿದ ವೇಳೆ ರೈತರು ಮತ್ತು ಪಿಎಸ್ಐ ನಡುವೆ ಮಾತಿನ ಚಕಮಕಿ ನಡೆದಿದ್ದು, ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಪೊಲೀಸರು ಪರಿಸ್ಥಿತಿ ನಿಯಂತ್ರಣಕ್ಕೆ ತಂದು ಸಂಚಾರವನ್ನು ಪುನಃ ಆರಂಭಿಸಿದರು.

