Home Blog

ಅಜಯ್ ದೇವಗನ್ ಮಗನ ಹೊಸ ಅವತಾರ: ಜಿಮ್ ವಿಡಿಯೋಗೆ ನೆಟ್ಟಿಗರು ಫಿದಾ

ಮುಂಬೈ: ಬಾಲಿವುಡ್ ಸ್ಟಾರ್ ದಂಪತಿ ಅಜಯ್ ದೇವಗನ್ ಮತ್ತು ಕಾಜೋಲ್ ಪುತ್ರ ಯುಗ್ ದೇವಗನ್ ತಮ್ಮ ಫಿಟ್‌ನೆಸ್ ಟ್ರಾನ್ಸ್‌ಫಾರ್ಮೇಶನ್ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯ ಕೇಂದ್ರಬಿಂದುವಾಗಿದ್ದಾರೆ. ಜಿಮ್‌ನಲ್ಲಿ ಬೆವರು ಸುರಿಸುತ್ತಿರುವ ಅವರ ಹೊಸ ವಿಡಿಯೋ ವೈರಲ್ ಆಗಿದ್ದು, ಅಭಿಮಾನಿಗಳಿಂದ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ವೈರಲ್ ವಿಡಿಯೋದಲ್ಲಿ ಯುಗ್ ದೇವಗನ್ ಕಠಿಣ ವರ್ಕೌಟ್ ಹಾಗೂ ಪುಷ್-ಅಪ್ಸ್‌ಗಳನ್ನು ಮಾಡುತ್ತಿರುವುದು ಕಾಣಿಸುತ್ತದೆ. ಫಿಟ್‌ನೆಸ್ ಪ್ರಯಾಣದ ಆರಂಭದಿಂದ ಇಂದಿನವರೆಗಿನ ದೇಹದ ಬದಲಾವಣೆಯನ್ನು ವಿಡಿಯೋದಲ್ಲಿ ತೋರಿಸಲಾಗಿದ್ದು, ಅವರ ಪರಿಶ್ರಮ ಮತ್ತು ಶಿಸ್ತಿನ ಜೀವನಶೈಲಿ ಸ್ಪಷ್ಟವಾಗಿ ಗೋಚರಿಸುತ್ತಿದೆ.

ವಿಡಿಯೋ ಹಂಚಿಕೊಂಡಿರುವ ಫಿಟ್‌ನೆಸ್ ಕೋಚ್ ರಾಬಿನ್ ಬಹ್ಲ್, ‘ಯುಗ್ ಜಿಮ್‌ನಲ್ಲಿ ಅತ್ಯಂತ ಸಮರ್ಪಣೆಯಿಂದ ತರಬೇತಿ ಪಡೆಯುವ ಹುಡುಗ. ಅವನ ಬದ್ಧತೆ ಮತ್ತು ಬೆಳವಣಿಗೆ ಪ್ರತಿದಿನವೂ ಹೊಸ ಪ್ರೇರಣೆ ನೀಡುತ್ತದೆ’ ಎಂದು ಬರೆದುಕೊಂಡಿದ್ದಾರೆ.

ಕಾಜೋಲ್ ಕೂಡ ಈ ವಿಡಿಯೋಗೆ ಪ್ರತಿಕ್ರಿಯೆ ನೀಡಿ ಫೈರ್ ಎಮೋಜಿ ಪೋಸ್ಟ್ ಮಾಡಿದ್ದು, ಮಗನ ಸಾಧನೆಗೆ ಬೆಂಬಲ ಸೂಚಿಸಿದ್ದಾರೆ.

ಗ್ಲಾಮರ್ ಪ್ರಪಂಚದಿಂದ ದೂರ ಉಳಿಯಲು ಇಷ್ಟಪಡುವ ಯುಗ್, ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಅಪರೂಪವಾಗಿ ಮಾತ್ರ ಕಾಣಿಸಿಕೊಳ್ಳುತ್ತಾರೆ. ಆದರೆ ಈಗಾಗಲೇ ‘ಕರಾಟೆ ಕಿಡ್: ಲೆಜೆಂಡ್ಸ್’ ಚಿತ್ರದ ಹಿಂದಿ ಆವೃತ್ತಿಗೆ ಧ್ವನಿ ನೀಡುವ ಮೂಲಕ ಸಿನಿಮಾ ಕ್ಷೇತ್ರದಲ್ಲಿ ಮೊದಲ ಹೆಜ್ಜೆ ಇಟ್ಟಿದ್ದಾರೆ.

ಸದ್ಯ ಫಿಟ್‌ನೆಸ್, ವಿದ್ಯಾಭ್ಯಾಸ ಮತ್ತು ಡಬ್ಬಿಂಗ್ ಕೆಲಸಗಳ ನಡುವೆ ಸಮತೋಲನ ಸಾಧಿಸುತ್ತಿರುವ ಯುಗ್ ದೇವಗನ್, ಭವಿಷ್ಯದಲ್ಲಿ ಬಾಲಿವುಡ್‌ಗೆ ಎಂಟ್ರಿ ಕೊಡಲಿದ್ದಾರೆಯೇ ಎಂಬ ಕುತೂಹಲವೂ ಅಭಿಮಾನಿಗಳಲ್ಲಿ ಮೂಡಿದೆ.

ಹಾಸನ ಕೋರ್ಟ್ ಮುಂಭಾಗ ರಕ್ತಪಾತ: ರೌಡಿಶೀಟರ್ ಬರ್ಬರ ಹತ್ಯೆ!

ಹಾಸನ: ಹಾಸನ ನಗರದಲ್ಲಿ ಭೀಕರ ಘಟನೆ ನಡೆದಿದ್ದು, ರೌಡಿಶೀಟರ್ ಮಂಜೇಶ್ (43) ಅವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿದ್ದಾರೆ.

ಈ ಘಟನೆ ಚನ್ನಪಟ್ಟಣದ ಜಿಲ್ಲಾ ಕೋರ್ಟ್ ಮುಂಭಾಗ ಇಂದು ಮುಂಜಾನೆ ನಡೆದಿದೆ. ಸಾರ್ವಜನಿಕ ಸ್ಥಳದಲ್ಲೇ ನಡೆದ ಈ ಹತ್ಯೆಯಿಂದ ನಗರದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

ಮೃತ ಮಂಜೇಶ್ ಮೂಲತಃ ಹಾಸನ ಜಿಲ್ಲೆಯವರಾಗಿದ್ದು, ಬೆಂಗಳೂರಿನಲ್ಲಿ ವಾಸವಾಗಿದ್ದರು ಎಂದು ತಿಳಿದುಬಂದಿದೆ. ಇಂದು ಹಾಸನಕ್ಕೆ ಬಂದಿದ್ದ ವೇಳೆ ದುಷ್ಕರ್ಮಿಗಳು ಅವರನ್ನು ಗುರಿಯಾಗಿಸಿ ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದಾರೆ. ಮುಖ ಗುರುತು ಸಿಗದಂತೆ ತೀವ್ರವಾಗಿ ಕೊಚ್ಚಿ ಕೊಲೆಗೈದ ಬಳಿಕ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.

ಘಟನೆ ನಡೆದ ಸ್ಥಳಕ್ಕೆ ಹಾಸನ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣವನ್ನು ಗಂಭೀರವಾಗಿ ತನಿಖೆ ಮಾಡುತ್ತಿದ್ದಾರೆ. ಹಾಸನ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಸಾರ್ವಜನಿಕ ಸ್ಥಳದಲ್ಲೇ ನಡೆದ ಈ ಹತ್ಯೆಯಿಂದ ನಗರದಲ್ಲಿ ಭದ್ರತೆ ಕುರಿತು ಪ್ರಶ್ನೆಗಳು ಎದ್ದಿದ್ದು, ಆರೋಪಿಗಳ ಪತ್ತೆಗೆ ವಿಶೇಷ ತಂಡಗಳನ್ನು ರಚಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

‘ಟಾಕ್ಸಿಕ್’ಗೆ ಮೂರು ಹಾಡು ಬರೆದಿದ್ದೇನೆ: ಲೆಕ್ಕ ಕೊಟ್ಟ ಯೋಗರಾಜ್ ಭಟ್

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಟಾಕ್ಸಿಕ್’ ಚಿತ್ರದ ಕುರಿತು ಅಭಿಮಾನಿಗಳು ಕಾಯುತ್ತಿದ್ದ ಮತ್ತೊಂದು ಅಪ್‌ಡೇಟ್ ಹೊರಬಿದ್ದಿದೆ. ಖ್ಯಾತ ಗೀತರಚನೆಕಾರ ಯೋಗರಾಜ್ ಭಟ್ ಚಿತ್ರದ ಹಾಡುಗಳ ಬಗ್ಗೆ ಮಾತನಾಡಿದ್ದು, ಚಿತ್ರದ ಸಂಗೀತ ವಿಭಾಗದ ಬಗ್ಗೆ ಹೊಸ ಮಾಹಿತಿ ನೀಡಿದ್ದಾರೆ.

ಯೂಟ್ಯೂಬ್ ಸಂದರ್ಶನವೊಂದರಲ್ಲಿ ಮಾತನಾಡಿದ ಯೋಗರಾಜ್ ಭಟ್, ‘ಟಾಕ್ಸಿಕ್’ ಚಿತ್ರಕ್ಕಾಗಿ ತಾವು ಮೂರು ಹಾಡುಗಳನ್ನು ಬರೆದಿರುವುದಾಗಿ ತಿಳಿಸಿದ್ದಾರೆ. ‘ಎರಡು-ಮೂರು ಹಾಡುಗಳನ್ನು ಬರೆದಿದ್ದೇನೆ. ಮೂರು ಅಂತಲೇ ಲೆಕ್ಕ. ಯಾವಾಗ ರಿಲೀಸ್ ಆಗುತ್ತವೆ ಎಂಬುದನ್ನು ಕಾದು ನೋಡಬೇಕು’ ಎಂದು ಹೇಳಿದ್ದಾರೆ.

ಚಿತ್ರದ ದೃಶ್ಯಗಳನ್ನು ನೋಡಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಇದು ಆತ್ಮೀಯ ಗೆಳೆಯನ ಮಹೋನ್ನತ ಸಿನಿಮಾ. ಅಭೂತಪೂರ್ವ ಯಶಸ್ಸು ಸಾಧಿಸುತ್ತದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಹಾಡುಗಳ ಕೆಲಸಕ್ಕಾಗಿ ತಾವು ಮುಂಬೈಗೆ ತೆರಳಿದ್ದ ಸಂಗತಿಯನ್ನೂ ಅವರು ಹಂಚಿಕೊಂಡಿದ್ದಾರೆ.

ನಿರ್ದೇಶಕಿ ಗೀತು ಮೋಹನ್‌ದಾಸ್ ಸಾರಥ್ಯದಲ್ಲಿ ಮೂಡಿಬರುತ್ತಿರುವ ‘ಟಾಕ್ಸಿಕ್’ ಸಿನಿಮಾ ಭಾರತೀಯ ಚಿತ್ರರಂಗದ ಬಹು ನಿರೀಕ್ಷಿತ ಪ್ರಾಜೆಕ್ಟ್‌ಗಳಲ್ಲಿ ಒಂದಾಗಿದೆ. ಚಿತ್ರದಲ್ಲಿ ಹಲವು ಖ್ಯಾತ ಕಲಾವಿದರು ನಟಿಸುತ್ತಿದ್ದು, ಅಂತರರಾಷ್ಟ್ರೀಯ ಮಟ್ಟದ ತಾಂತ್ರಿಕ ತಂಡ ಕಾರ್ಯನಿರ್ವಹಿಸುತ್ತಿದೆ.

ಸದ್ಯ ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದು, ಬಿಡುಗಡೆ ದಿನಾಂಕದ ಬಗ್ಗೆ ಇನ್ನೂ ಅಧಿಕೃತ ಘೋಷಣೆ ಆಗಿಲ್ಲ. ಆದರೂ ಚಿತ್ರದ ಪ್ರತಿಯೊಂದು ಅಪ್‌ಡೇಟ್ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗುತ್ತಿದೆ.

ಇದೀಗ ಯೋಗರಾಜ್ ಭಟ್ ನೀಡಿರುವ ಹೇಳಿಕೆಯಿಂದ ಚಿತ್ರದ ಹಾಡುಗಳ ಬಗ್ಗೆ ನಿರೀಕ್ಷೆ ಹೆಚ್ಚಾಗಿದ್ದು, ‘ಟಾಕ್ಸಿಕ್’ ಸಂಗೀತವೂ ದೊಡ್ಡ ಮಟ್ಟದಲ್ಲಿ ಸದ್ದು ಮಾಡಲಿದೆ ಎಂಬ ವಿಶ್ವಾಸ ಅಭಿಮಾನಿಗಳಲ್ಲಿ ಮೂಡಿದೆ.

ಪ್ರತಿಭೆ ಇದ್ದರೆ ಮಾತ್ರ ಉಳಿಯಲು ಸಾಧ್ಯ! ನೆಪೋಟಿಸಂ ಪ್ರಶ್ನೆಗೆ ಶಿವಣ್ಣ ಖಡಕ್ ಉತ್ತರ

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ನೆಪೋಟಿಸಂ ಪ್ರಶ್ನೆಗೆ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಸ್ಪಷ್ಟ ಮತ್ತು ನೇರ ಉತ್ತರ ನೀಡಿದ್ದಾರೆ. ‘ಮ್ಯಾಂಗೋ ಪಚ್ಚ’ ಚಿತ್ರದ ಸುದ್ದಿಗೋಷ್ಠಿಯಲ್ಲಿ ಈ ವಿಚಾರ ಪ್ರಸ್ತಾಪವಾದಾಗ, ನೆಪೋಟಿಸಂ ಎಂಬ ಪದವನ್ನೇ ಪ್ರಶ್ನಿಸಿದ ಶಿವಣ್ಣ, ಚಿತ್ರರಂಗದಲ್ಲಿ ಉಳಿಯುವುದು ಕುಟುಂಬದ ಹೆಸರಿನಿಂದಲ್ಲ, ಪ್ರತಿಭೆಯಿಂದ ಮಾತ್ರ ಎಂದು ಹೇಳಿದ್ದಾರೆ.

ನಟ ಕಿಚ್ಚ ಸುದೀಪ್ ಅವರ ಅಳಿಯ ಸಂಚಿತ್ ಸಂಜೀವ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಬಳಿಕ ನೆಪೋಟಿಸಂ ಚರ್ಚೆ ಆರಂಭವಾಗಿತ್ತು. ಈ ಹಿನ್ನೆಲೆಯಲ್ಲಿ ಪತ್ರಕರ್ತರು ಶಿವರಾಜ್‌ಕುಮಾರ್ ಅವರ ಪ್ರತಿಕ್ರಿಯೆ ಕೇಳಿದಾಗ, ‘ನೀವು ಆ ಪ್ರಶ್ನೆಯನ್ನೇ ಯಾಕೆ ಕೇಳುತ್ತೀರಿ? ಅದು ಕೇಳಬೇಕಾದ ಪ್ರಶ್ನೆಯೇ ಅಲ್ಲ’ ಎಂದು ಖಡಕ್ ಉತ್ತರ ನೀಡಿದರು.

ಚಿತ್ರರಂಗ ಯಾರೊಬ್ಬರ ಖಾಸಗಿ ಆಸ್ತಿ ಅಲ್ಲ ಎಂದು ಹೇಳಿದ ಶಿವಣ್ಣ, ‘ಪ್ರತಿಯೊಬ್ಬರಿಗೂ ಕನಸು ಕಾಣುವ ಹಕ್ಕಿದೆ. ಯಾರ ಮಕ್ಕಳು ಬೇಕಾದರೂ ಸಿನಿಮಾಗೆ ಬರಬಹುದು. ನೀವು ಕೂಡ ಬರಬಹುದು. ಅವಕಾಶ ಎಲ್ಲರಿಗೂ ಇದೆ. ಆದರೆ ಇಲ್ಲಿ ಉಳಿಯುವುದು ಮಾತ್ರ ಪ್ರತಿಭೆ ಇದ್ದರೆ ಮಾತ್ರ’ ಎಂದು ಹೇಳಿದರು.

ಶಿವಣ್ಣ ಅವರ ಈ ಪ್ರತಿಕ್ರಿಯೆ ಕನ್ನಡ ಚಿತ್ರರಂಗದ ಕಾರ್ಯವೈಖರಿಯನ್ನೇ ಪ್ರತಿಬಿಂಬಿಸುತ್ತದೆ. ಬಾಲಿವುಡ್‌ನಲ್ಲಿ ನೆಪೋಟಿಸಂ ದೊಡ್ಡ ಚರ್ಚೆಯ ವಿಷಯವಾಗಿದ್ದರೂ, ಕನ್ನಡ ಚಿತ್ರರಂಗದಲ್ಲಿ ಪ್ರತಿಭೆಗೆ ಹೆಚ್ಚಿನ ಆದ್ಯತೆ ಸಿಗುತ್ತದೆ ಎಂಬ ಸಂದೇಶವನ್ನು ಅವರು ನೀಡಿದ್ದಾರೆ.

ಈ ಸಂದರ್ಭದಲ್ಲಿ ಸುದೀಪ್ ಕೂಡ ಶಿವಣ್ಣ ಅವರನ್ನು ಕೊಂಡಾಡಿದ್ದು, ‘ಗ್ರೇಟ್‌ನೆಸ್ ಅಂದ್ರೆ ಇದೇ’ ಎಂದು ಹೇಳುವ ಮೂಲಕ ಅವರ ಉತ್ತರಕ್ಕೆ ಬೆಂಬಲ ಸೂಚಿಸಿದರು.

ಸದ್ಯ ಇಬ್ಬರು ಸ್ಟಾರ್ ನಟರ ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ನೆಪೋಟಿಸಂ ಕುರಿತ ಚರ್ಚೆಗೆ ಹೊಸ ತಿರುವು ನೀಡಿವೆ.

ನರ್ಸ್‌ಗಳ ಲೈಂಗಿಕೀಕರಣ ಖಂಡಿಸಿದ ಕಂಗನಾ ರಣಾವತ್: ಗೌರವ ಹೆಚ್ಚಿಸುವಂತೆ ಕರೆ

ನರ್ಸಿಂಗ್ ವೃತ್ತಿಯ ಕುರಿತು ನಟಿ ಹಾಗೂ ಬಿಜೆಪಿ ಸಂಸದೆ ಕಂಗನಾ ರಣಾವತ್ ನೀಡಿರುವ ಹೇಳಿಕೆ ಹೊಸ ಚರ್ಚೆಗೆ ಕಾರಣವಾಗಿದೆ. ತಮ್ಮ ಅಭಿನಯದ ‘ಭಾರತ ಭಾಗ್ಯ ವಿದಾತ’ ಚಿತ್ರದ ಪ್ರಚಾರದ ವೇಳೆ ಮಾತನಾಡಿದ ಅವರು, ಭಾರತದಲ್ಲಿ ನರ್ಸ್‌ಗಳ ವೃತ್ತಿಯನ್ನು ದೀರ್ಘಕಾಲದಿಂದ ತಪ್ಪು ರೀತಿಯಲ್ಲಿ ಚಿತ್ರಿಸಲಾಗಿದೆ ಎಂದು ಹೇಳಿದ್ದಾರೆ.

ಸಿನಿಮಾಗಳು, ಕಾಮಿಡಿ ಶೋಗಳು ಹಾಗೂ ಜನಪ್ರಿಯ ಮಾಧ್ಯಮಗಳಲ್ಲಿ ನರ್ಸ್ ಪಾತ್ರಗಳನ್ನು ಅನಗತ್ಯವಾಗಿ ಲೈಂಗಿಕೀಕರಣ ಮಾಡುವ ಪ್ರವೃತ್ತಿ ಕಂಡುಬರುತ್ತಿದೆ. ಇದರ ಪರಿಣಾಮವಾಗಿ ನರ್ಸ್‌ಗಳಿಗೆ ಸಿಗಬೇಕಾದ ವೃತ್ತಿಪರ ಗೌರವ ಕಡಿಮೆಯಾಗುತ್ತಿದೆ ಎಂದು ಕಂಗನಾ ಅಭಿಪ್ರಾಯಪಟ್ಟಿದ್ದಾರೆ.

ಆರೋಗ್ಯ ಕ್ಷೇತ್ರದಲ್ಲಿ ವೈದ್ಯರ ಜೊತೆಗೆ ನರ್ಸ್‌ಗಳ ಪಾತ್ರವೂ ಅತ್ಯಂತ ಮಹತ್ವದ್ದಾಗಿದೆ. ರೋಗಿಗಳ ಆರೈಕೆ, ಚಿಕಿತ್ಸೆ ಪ್ರಕ್ರಿಯೆ ಹಾಗೂ ತುರ್ತು ಸೇವೆಗಳಲ್ಲಿ ಅವರ ಕೊಡುಗೆ ಅಪಾರವಾಗಿದೆ. ಆದರೂ ಅವರ ಸೇವೆಗಿಂತ ಹೆಚ್ಚು ಅವರ ಬಾಹ್ಯ ರೂಪ ಅಥವಾ ಪಾತ್ರದ ಬಗ್ಗೆ ಚರ್ಚೆಯಾಗುತ್ತಿರುವುದು ವಿಷಾದನೀಯ ಎಂದು ಅವರು ಹೇಳಿದ್ದಾರೆ.

ಬ್ರಿಟಿಷರ ಕಾಲದಿಂದ ಮುಂದುವರಿದಿರುವ ಯೂನಿಫಾರ್ಮ್ ಮಾದರಿಗಳ ಬಗ್ಗೆಯೂ ಅವರು ಪ್ರಶ್ನೆ ಎತ್ತಿದ್ದು, ಅವು ಭಾರತೀಯ ಸಾಮಾಜಿಕ ವಾತಾವರಣಕ್ಕೆ ಅನುಗುಣವಾಗಿ ಪರಿಷ್ಕೃತವಾಗಬೇಕೆಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ನರ್ಸ್‌ಗಳನ್ನು ಕೇವಲ ಒಂದು ಪಾತ್ರ ಅಥವಾ ಗ್ಲಾಮರ್ ಪ್ರತೀಕವಾಗಿ ನೋಡುವುದನ್ನು ಬಿಟ್ಟು, ಸಮಾಜದ ಆರೋಗ್ಯ ವ್ಯವಸ್ಥೆಯನ್ನು ಮುನ್ನಡೆಸುವ ಪ್ರಮುಖ ವೃತ್ತಿಪರರಾಗಿ ಗೌರವಿಸಬೇಕಾಗಿದೆ ಎಂದು ಕಂಗನಾ ಒತ್ತಿ ಹೇಳಿದ್ದಾರೆ.

ಅವರ ಈ ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ನರ್ಸಿಂಗ್ ವೃತ್ತಿಯ ಗೌರವ ಮತ್ತು ಮಾಧ್ಯಮಗಳಲ್ಲಿ ಅದರ ಚಿತ್ರಣದ ಕುರಿತು ಹೊಸ ಸಂವಾದಕ್ಕೆ ಕಾರಣವಾಗಿವೆ.

ಮುಂಗಾರು ಅಬ್ಬರ : ಎರಡು ದಿನ ರಾಜ್ಯಾದ್ಯಂತ ರೆಡ್ ಅಲರ್ಟ್! ಹವಾಮಾನ ಇಲಾಖೆ ಎಚ್ಚರಿಕೆ

ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಮಳೆ ಚುರುಕು ಪಡೆದುಕೊಂಡಿದ್ದು ದಕ್ಷಿಣ ಕನ್ನಡ, ಬಳ್ಳಾರಿ, ಬಾಗಲಕೋಟೆ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ವರುಣನ ಆರ್ಭಟ ಜೋರಾಗಿದೆ.

ಧಾರಾಕಾರ ಮಳೆಯಿಂದಾಗಿ ಹಲವು ಭಾಗಗಳಲ್ಲಿ ರಸ್ತೆಗಳು ಜಲಾವೃತಗೊಂಡಿದ್ದು, ಮನೆಗಳು, ಆಸ್ಪತ್ರೆಗಳು ಹಾಗೂ ಕಚೇರಿಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತವಾಗಿದೆ.

ಈ ಮಧ್ಯೆ ಕೇಂದ್ರ ಹವಾಮಾನ ಇಲಾಖೆ (IMD) ರಾಜ್ಯಕ್ಕೆ ಎರಡು ದಿನಗಳ ಕಾಲ ರೆಡ್ ಅಲರ್ಟ್ ಘೋಷಿಸಿದೆ. ಜೂನ್ 9ರಂದು ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಪ್ರಮುಖ ಜಿಲ್ಲೆಗಳಿಗೆ ಹಾಗೂ ಜೂನ್ 10ರಂದು ಇಡೀ ಕರ್ನಾಟಕಕ್ಕೆ ರೆಡ್ ಅಲರ್ಟ್ ಘೋಷಿಸಲಾಗಿದ್ದು, ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸಲು ಸೂಚಿಸಲಾಗಿದೆ.

ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ, ಜೂನ್ 9ರಂದು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಮಂಡ್ಯ, ಮೈಸೂರು, ಚಾಮರಾಜನಗರ, ಚಿತ್ರದುರ್ಗ ಹಾಗೂ ದಾವಣಗೆರೆ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ.

ರಾಜ್ಯದ ಹಲವೆಡೆ ಈಗಾಗಲೇ ಮಳೆಯ ಅಬ್ಬರ ಹೆಚ್ಚಾಗಿದ್ದು, ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ಮುಂದಿನ ಎರಡು ದಿನಗಳ ಕಾಲ ಹೆಚ್ಚಿನ ಮಳೆಯ ಸಾಧ್ಯತೆ ಇರುವುದರಿಂದ ಜಿಲ್ಲಾಡಳಿತಗಳು ಎಚ್ಚರಿಕೆ ಕ್ರಮಗಳನ್ನು ಕೈಗೊಂಡಿವೆ. ಸಾರ್ವಜನಿಕರಿಗೆ ಅನಾವಶ್ಯಕವಾಗಿ ಮನೆಯಿಂದ ಹೊರಬಾರದಂತೆ ಮನವಿ ಮಾಡಲಾಗಿದೆ.

ರೌಡಿಸಂ ವಿರುದ್ಧ ಕಠಿಣ ಕ್ರಮ: ರಾಜ್ಯಾದ್ಯಂತ ಆ್ಯಂಟಿ ರೌಡಿ ಸ್ಕ್ವಾಡ್ ರಚನೆ!

ಬೆಂಗಳೂರು: ರಾಜ್ಯದಲ್ಲಿ ರೌಡಿಸಂ ಹಾಗೂ ಅಸಾಮಾಜಿಕ ಚಟುವಟಿಕೆಗಳನ್ನು ನಿಯಂತ್ರಿಸಲು ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಂಡಿದೆ.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸೂಚನೆಯ ಹಿನ್ನೆಲೆಯಲ್ಲಿ ಪ್ರತಿ ಪೊಲೀಸ್ ವಲಯ ಮತ್ತು ಠಾಣಾ ಮಟ್ಟದಲ್ಲಿ ಆ್ಯಂಟಿ ರೌಡಿ ಸ್ಕ್ವಾಡ್‌ಗಳನ್ನು ರಚಿಸಲು ಆದೇಶಿಸಲಾಗಿದೆ.

ಈ ಕುರಿತು ಪೊಲೀಸ್ ಮಹಾನಿರ್ದೇಶಕ ಮತ್ತು ಮಹಾ ಪರಿಶೋಧಕ ಡಾ. ಎಂ.ಎ. ಸಲೀಂ ಅವರು ಸರ್ಕ್ಯುಲರ್ ಹೊರಡಿಸಿದ್ದು, ಕಾನೂನು ಮತ್ತು ಸುವ್ಯವಸ್ಥೆಯನ್ನು ಬಲಪಡಿಸಲು ಶೂನ್ಯ ಸಹಿಷ್ಣುತೆ ನೀತಿ ಅನುಸರಿಸಲು ಎಲ್ಲಾ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಹೊಸ ವ್ಯವಸ್ಥೆಯಡಿ ಸರ್ಕಲ್ ಇನ್ಸ್‌ಪೆಕ್ಟರ್‌ಗಳ ಮೇಲ್ವಿಚಾರಣೆಯಲ್ಲಿ ಪ್ರತಿ ವಲಯದಲ್ಲಿ ರೌಡಿ ಸ್ಕ್ವಾಡ್ ಕಾರ್ಯನಿರ್ವಹಿಸಲಿದ್ದು, ಠಾಣಾ ಮಟ್ಟದಲ್ಲೂ ಪ್ರತ್ಯೇಕ ತಂಡಗಳನ್ನು ರಚಿಸಲಾಗುತ್ತದೆ. ಸ್ಥಳೀಯ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಎಸಿಪಿ ಅಥವಾ ಉಪ ವಿಭಾಗಾಧಿಕಾರಿಗಳು ತಂಡದ ಸಂಯೋಜನೆ ನಿರ್ಧರಿಸಲಿದ್ದಾರೆ.

ಸ್ಕ್ವಾಡ್‌ಗಳಿಗೆ ರೌಡಿ ಶೀಟ್ ತೆರೆಯುವುದು, ಅಪರಾಧ ಚಟುವಟಿಕೆಗಳ ಮೇಲೆ ನಿಗಾ ವಹಿಸುವುದು, ಹೊಸ ಗ್ಯಾಂಗ್‌ಗಳನ್ನು ಗುರುತಿಸುವುದು ಹಾಗೂ ಗುಪ್ತಚರ ಮಾಹಿತಿ ಸಂಗ್ರಹಿಸುವ ಜವಾಬ್ದಾರಿ ನೀಡಲಾಗಿದೆ. ಜೊತೆಗೆ ಗುಂಡಾ ಕಾಯ್ದೆ, ಕೆಸಿಒಸಿಎ ಹಾಗೂ ಪಿಎಆರ್ ಸೇರಿದಂತೆ ಕಾನೂನು ಕ್ರಮಗಳನ್ನು ತ್ವರಿತವಾಗಿ ಕೈಗೊಳ್ಳುವಂತೆ ಸೂಚಿಸಲಾಗಿದೆ.

ಪ್ರತಿ ಠಾಣೆಯಲ್ಲಿ ಸ್ಕ್ವಾಡ್ ಚಟುವಟಿಕೆಗಳ ದಾಖಲಾತಿಗಾಗಿ ಪ್ರತ್ಯೇಕ ರಿಜಿಸ್ಟರ್ ನಿರ್ವಹಿಸಲಾಗುವುದು ಹಾಗೂ ಮಾಸಿಕ ವರದಿಯನ್ನು ಸಲ್ಲಿಸಬೇಕಾಗಿದೆ. ಹಿರಿಯ ಅಧಿಕಾರಿಗಳು ನಿಯಮಿತವಾಗಿ ಪರಿಶೀಲನೆ ನಡೆಸಿ ಕಾರ್ಯಕ್ಷಮತೆಯನ್ನು ವಿಮರ್ಶಿಸಲಿದ್ದಾರೆ.

ರೌಡಿ ಚಟುವಟಿಕೆಗಳ ವಿರುದ್ಧ ಯಾವುದೇ ರೀತಿಯ ಸಡಿಲತೆ ತೋರಬಾರದು ಎಂದು ಸ್ಪಷ್ಟವಾಗಿ ಸೂಚಿಸಿರುವ ಪೊಲೀಸ್ ಇಲಾಖೆ, ಸಾರ್ವಜನಿಕ ಶಾಂತಿ ಕಾಪಾಡಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದೆ.

ದೇವರಾಜ ಅರಸು ಮೊಮ್ಮಗ ಸೂರಜ್ ಹೆಗ್ಡೆ ಹಠಾತ್ ನಿಧನ!

ಬೆಂಗಳೂರು: ಎಐಸಿಸಿ ಕಾರ್ಯದರ್ಶಿ ಹಾಗೂ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಉಪಾಧ್ಯಕ್ಷರಾಗಿದ್ದ ಹಿರಿಯ ಕಾಂಗ್ರೆಸ್ ನಾಯಕ ಸೂರಜ್ ಹೆಗ್ಡೆ (50) ಅವರು ಭಾನುವಾರ ರಾತ್ರಿ ಬೆಂಗಳೂರಿನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.

ರಾತ್ರಿ ವೇಳೆ ಅಚಾನಕ್ ತೀವ್ರ ಹೃದಯಾಘಾತ ಸಂಭವಿಸಿದ ಹಿನ್ನೆಲೆಯಲ್ಲಿ ಅವರನ್ನು ತಕ್ಷಣವೇ ನಗರದ ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಮೃತರು ಮಾಜಿ ಮುಖ್ಯಮಂತ್ರಿ ದಿವಂಗತ ಡಿ. ದೇವರಾಜ ಅರಸು ಅವರ ಮೊಮ್ಮಗನಾಗಿದ್ದು, ರಾಜಕೀಯ ಜೀವನದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ರಾಷ್ಟ್ರೀಯ ಯುವ ಕಾಂಗ್ರೆಸ್ ಉಸ್ತುವಾರಿಯಾಗಿ ತಮ್ಮ ರಾಜಕೀಯ ಪಯಣ ಆರಂಭಿಸಿದ್ದ ಸೂರಜ್ ಹೆಗ್ಡೆ, ನಂತರ ಎಐಸಿಸಿ ಕಾರ್ಯದರ್ಶಿಯಾಗಿ ತಮಿಳುನಾಡು ಹಾಗೂ ಪುದುಚೇರಿ ರಾಜ್ಯಗಳ ಕಾಂಗ್ರೆಸ್ ಉಸ್ತುವಾರಿಯಾಗಿ ಸೇವೆ ಸಲ್ಲಿಸಿದ್ದರು.

ಸದ್ಯ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದರು.

ಅವರ ಅಕಾಲಿಕ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಎಐಸಿಸಿ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಹಲವು ನಾಯಕರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಇಷ್ಟು ಚಿಕ್ಕ ವಯಸ್ಸಿನಲ್ಲಿ ಸಕ್ರಿಯ ನಾಯಕನ ಅಗಲಿಕೆಯಿಂದ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ನಷ್ಟವಾಗಿದೆ ಎಂದು ನಾಯಕರು ಹೇಳಿದ್ದಾರೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಕುಟುಂಬಕ್ಕೆ ಈ ದುಃಖವನ್ನು ಸಹಿಸುವ ಶಕ್ತಿ ದೊರೆಯಲಿ ಎಂದು ಪ್ರಾರ್ಥಿಸಿದ್ದಾರೆ.

ಭಾರೀ ಮಳೆ: ಚಿಂಚೋಳಿ ಬಳಿ ಕಿರು ಸೇತುವೆ ಕುಸಿತ; ಸಂಚಾರ ಸ್ಥಗಿತ!

ಕಲಬುರಗಿ: ಜಿಲ್ಲೆಯ ಚಿಂಚೋಳಿ ತಾಲೂಕಿನ ಚಿಮ್ಮನಚೋಡ ಗ್ರಾಮದ ಬಳಿ ಭಾರೀ ಮಳೆಯಿಂದ ಕಿರು ಸೇತುವೆ ಕುಸಿದ ಘಟನೆ ನಡೆದಿದೆ.

ಚಿಮ್ಮನಚೋಡ–ನರನಾಳ ಗ್ರಾಮದ ನಡುವೆ ಇರುವ ಈ ಸೇತುವೆ ಕುಸಿತಗೊಂಡ ಪರಿಣಾಮ ಚಿಂಚೋಳಿಯಿಂದ ಭಾಲ್ಕಿಗೆ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಇದರಿಂದ ಸ್ಥಳೀಯರು ತೀವ್ರ ತೊಂದರೆ ಎದುರಿಸುತ್ತಿದ್ದಾರೆ.

ಇದೇ ವೇಳೆ ಬೆಡಕಪಳ್ಳಿ ಗ್ರಾಮದ 20ಕ್ಕೂ ಹೆಚ್ಚು ಮನೆಗಳಿಗೆ ಮಳೆ ನೀರು ನುಗ್ಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಗ್ರಾಮಸ್ಥರು ತಕ್ಷಣವೇ ಸೂಕ್ತ ಪರಿಹಾರ ಮತ್ತು ವ್ಯವಸ್ಥೆ ಕಲ್ಪಿಸುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ರಾಜ್ಯದಲ್ಲಿ ಮುಂಗಾರು ಪ್ರವೇಶಗೊಂಡಿರುವ ಹಿನ್ನೆಲೆಯಲ್ಲಿ ಮುಂದಿನ ನಾಲ್ಕೈದು ದಿನಗಳ ಕಾಲ ಕರಾವಳಿ ಮತ್ತು ಮಲೆನಾಡು ಪ್ರದೇಶಗಳಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಉಳಿದ ಭಾಗಗಳಲ್ಲಿ ಸಾಧಾರಣ ಮಳೆ ಸಾಧ್ಯತೆ ಇದೆ ಎಂದು ತಿಳಿಸಲಾಗಿದೆ.

ಮೋದಿ ಸರ್ಕಾರ ಜನವಿರೋಧಿ ನೀತಿ ಅನುಸರಿಸುತ್ತಿದೆ: ಯತೀಂದ್ರ ಸಿದ್ದರಾಮಯ್ಯ ವಾಗ್ದಾಳಿ

ವಿಜಯಪುರ: ಗ್ಯಾಸ್ ಬೆಲೆ ಏರಿಕೆ ವಿಚಾರವಾಗಿ ಕೇಂದ್ರ ಸರ್ಕಾರದ ವಿರುದ್ಧ ಸಚಿವ ಯತೀಂದ್ರ ಸಿದ್ದರಾಮಯ್ಯ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಜನರ ಮೇಲೆ ಕಾಳಜಿ ಇಲ್ಲದೆ ಕೇಂದ್ರ ಸರ್ಕಾರ ಬೆಲೆ ಏರಿಕೆ ಮಾಡುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಮೋದಿ ಸರ್ಕಾರ ಜನವಿರೋಧಿ ನೀತಿ ಅನುಸರಿಸುತ್ತಿದೆ. ಜನರು ಹಾಳಾಗಿ ಹೋಗಲಿ ಎಂಬಂತೆ ಬೆಲೆಗಳನ್ನು ಹೆಚ್ಚಿಸುತ್ತಿದೆ” ಎಂದು ಕಿಡಿಕಾರಿದರು.

ಅಂತರರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾತೈಲ ಬೆಲೆ ಕಡಿಮೆ ಇದ್ದಾಗಲೂ ಜನರಿಗೆ ಅದರ ಲಾಭ ನೀಡಲಾಗಲಿಲ್ಲ ಎಂದು ಆರೋಪಿಸಿದ ಅವರು, ಆಗಲೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಿಸಲಾಗಿತ್ತು ಎಂದು ಹೇಳಿದರು. ಈಗ ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯಾದ ಕಾರಣ ಮತ್ತೆ ದರ ಹೆಚ್ಚಳವಾಗುತ್ತಿದೆ ಎಂದು ಟೀಕಿಸಿದರು.

ಕಚ್ಚಾ ತೈಲ ಬೆಲೆ ಕಡಿಮೆಯಾಗಿದ್ದ ಸಮಯದಲ್ಲಿ ಜನರಿಗೆ ಇಂಧನ ದರ ಕಡಿಮೆ ಮಾಡಿದರೆ ಇಂದು ಈ ರೀತಿಯ ಹೊರೆ ಬೀಳುತ್ತಿರಲಿಲ್ಲ. ಇಂದಿನ ಬೆಲೆ ಏರಿಕೆ ಜನಸಾಮಾನ್ಯರ ಮೇಲೆ ಆರ್ಥಿಕ ಹೊರೆ ಹೆಚ್ಚಿಸುವುದರ ಜೊತೆಗೆ ಆರ್ಥಿಕ ವ್ಯವಸ್ಥೆಯ ಮೇಲೂ ಪರಿಣಾಮ ಬೀರುತ್ತದೆ ಎಂದು ಹೇಳಿದರು.

ಇದೇ ವೇಳೆ ‘ಕಾಕ್ರೋಚ್ ಜನತಾ ಪಕ್ಷ’ದ ಪ್ರತಿಭಟನೆ ಕುರಿತು ಪ್ರತಿಕ್ರಿಯಿಸಿದ ಯತೀಂದ್ರ ಸಿದ್ದರಾಮಯ್ಯ, ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಪ್ರತಿಭಟನೆ ಮಾಡುವ ಹಕ್ಕು ಇದೆ. ಅವರು ಒಳ್ಳೆಯ ಉದ್ದೇಶದಿಂದ ಪ್ರತಿಭಟನೆ ಮಾಡುತ್ತಿರುವುದಾಗಿ ತಿಳಿದುಬರುತ್ತಿದೆ ಎಂದು ಹೇಳಿ, ಪ್ರತಿಭಟನೆ ಮುಂದುವರಿಸಲು ಅವಕಾಶ ನೀಡಬೇಕು ಎಂದು ಅಭಿಪ್ರಾಯಪಟ್ಟರು.

error: Content is protected !!