Home Blog

ಬೆಂಗಳೂರು ಮಳೆ ಅವಾಂತರಕ್ಕೆ 10 ಬಲಿ: ಇಂದೂ ಆಲಿಕಲ್ಲು ಸಹಿತ ಮಳೆಯ ಮುನ್ಸೂಚನೆ

ಬೆಂಗಳೂರು: ಬುಧವಾರ ನಗರಾದ್ಯಂತ ಸುರಿದ ಭಾರೀ ಆಲಿಕಲ್ಲು ಮಳೆಯಿಂದ 10 ಮಂದಿ ಸಾವನ್ನಪ್ಪಿದ್ದು, ಹಲವು ಅವಾಂತರಗಳು ಸಂಭವಿಸಿವೆ. ಈ ನಡುವೆಯೇ ಇಂದು ಕೂಡ ಬೆಂಗಳೂರಿನಲ್ಲಿ ಗುಡುಗು-ಆಲಿಕಲ್ಲು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಹವಾಮಾನ ಇಲಾಖೆ ನೀಡಿರುವ ಮಾಹಿತಿಯಂತೆ, ಮೇ 1ರವರೆಗೆ ನಗರದಲ್ಲಿ ಮಳೆ ಮುಂದುವರಿಯುವ ಸಾಧ್ಯತೆ ಇದೆ. ಗುಡುಗು, ಮಿಂಚು ಹಾಗೂ ಬಿರುಗಾಳಿಯೊಂದಿಗೆ ಮಳೆಯಾಗುವ ಸಾಧ್ಯತೆಯಿರುವುದರಿಂದ ನಾಗರಿಕರು ಎಚ್ಚರಿಕೆಯಿಂದಿರಬೇಕು ಎಂದು ಸೂಚಿಸಲಾಗಿದೆ.

ಬೇಸಿಗೆಯ ಬಿಸಿಲಿಗೆ ಬೇಸತ್ತಿದ್ದ ಬೆಂಗಳೂರಿಗರಿಗೆ ಮಳೆ ತಂಪು ನೀಡಿದರೂ, ಅದರ ಅಬ್ಬರ ಭಾರೀ ಅನಾಹುತಗಳಿಗೆ ಕಾರಣವಾಯಿತು. ಬೌರಿಂಗ್ ಆಸ್ಪತ್ರೆಯಲ್ಲಿ ಗೋಡೆ ಕುಸಿದು ಏಳು ಮಂದಿ ಮೃತಪಟ್ಟಿದ್ದು, ಪ್ರತ್ಯೇಕ ಘಟನೆಗಳಲ್ಲಿ ಇನ್ನೂ ಮೂವರು ಜೀವ ಕಳೆದುಕೊಂಡಿದ್ದಾರೆ.

ಧಾರಾಕಾರ ಮಳೆಯಿಂದ ನಗರದಲ್ಲಿ ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿದ್ದು, 170ಕ್ಕೂ ಹೆಚ್ಚು ಮರಗಳು ಧರೆಗುರುಳಿವೆ. ಜೊತೆಗೆ 408 ಮರಗಳ ಕೊಂಬೆಗಳು ಮುರಿದು ಬಿದ್ದಿದ್ದು, ಅನೇಕ ಕಡೆ ಟ್ರಾಫಿಕ್ ಜಾಮ್ ಉಂಟಾಯಿತು.

ನಗರದ ಐದು ಪಾಲಿಕೆ ವ್ಯಾಪ್ತಿಗಳಲ್ಲಿನ 68 ಪ್ರದೇಶಗಳು ಜಲಾವೃತಗೊಂಡಿದ್ದು, ಜನಜೀವನಕ್ಕೆ ತೀವ್ರ ತೊಂದರೆ ಉಂಟಾಗಿದೆ. ಹವಾಮಾನ ಇಲಾಖೆ ಪ್ರಕಾರ, ಕಳೆದ 25 ವರ್ಷಗಳ ಬಳಿಕ ಏಪ್ರಿಲ್ ತಿಂಗಳಲ್ಲಿ ಇಷ್ಟೊಂದು ಪ್ರಮಾಣದ ದಾಖಲೆ ಮಳೆಯಾಗಿದೆ.

ಲಡಾಖ್ʼನಲ್ಲಿ ಮುಂಜಾನೆ ಭೂ ಕಂಪನ: 4.1 ತೀವ್ರತೆ ದಾಖಲು

0

ಲೇಹ್: ಲಡಾಖ್‌ನ ಲೇಹ್ ಪ್ರದೇಶದಲ್ಲಿ ಗುರುವಾರ ಮುಂಜಾನೆ 4.1 ತೀವ್ರತೆಯ ಭೂಕಂಪ ಸಂಭವಿಸಿದ್ದು, ಕೆಲಕಾಲ ಸ್ಥಳೀಯರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ.

ಮುಂಜಾನೆ ಸುಮಾರು 3:54ರ ಸುಮಾರಿಗೆ ಭೂಮಿ ಕಂಪಿಸಿದ ಅನುಭವವಾಗಿದ್ದು, ಭೂಕಂಪದ ಕೇಂದ್ರಬಿಂದು ಲೇಹ್‌ನಲ್ಲಿ 150 ಕಿಲೋಮೀಟರ್ ಆಳದಲ್ಲಿ ದಾಖಲಾಗಿದೆ. ಇದು ಮಧ್ಯಮ ತೀವ್ರತೆಯ ಭೂಕಂಪವಾಗಿದ್ದು, ಯಾವುದೇ ಪ್ರಾಣಹಾನಿ ಅಥವಾ ಆಸ್ತಿಪಾಸ್ತಿ ನಷ್ಟದ ವರದಿಗಳು ಲಭ್ಯವಾಗಿಲ್ಲ.

ಭೂಕಂಪದ ಕಂಪನ ಅನುಭವವಾಗುತ್ತಿದ್ದಂತೆ ಮನೆಯೊಳಗಿದ್ದ ಹಲವರು ಆತಂಕದಿಂದ ಹೊರಗೆ ಓಡಿ ಬಂದಿದ್ದಾರೆ. ಕೆಲವೇ ಕ್ಷಣಗಳಲ್ಲಿ ಪರಿಸ್ಥಿತಿ ಸಹಜಗೊಂಡಿದ್ದು, ಜನರು ತಮ್ಮ ಮನೆಗಳಿಗೆ ಮರಳಿದ್ದಾರೆ.

ಇದೇ ವೇಳೆ ಅಫ್ಘಾನಿಸ್ಥಾನದಲ್ಲಿಯೂ 4.3 ತೀವ್ರತೆಯ ಮತ್ತೊಂದು ಭೂಕಂಪ ಸಂಭವಿಸಿರುವುದಾಗಿ ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ಮಾಹಿತಿ ನೀಡಿದೆ.

ಭೂಕಂಪದ ಪರಿಣಾಮ ಯಾವುದೇ ಗಂಭೀರ ಹಾನಿ ಉಂಟಾಗದಿದ್ದರೂ, ಮುಂಜಾನೆ ಸಂಭವಿಸಿದ ಈ ಕಂಪನ ಸ್ಥಳೀಯರಲ್ಲಿ ಕೆಲಕಾಲ ಆತಂಕ ಸೃಷ್ಟಿಸಿತು.

ಪುರಸಭೆ ಅಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ: ನಾಮಪತ್ರ ಸಲ್ಲಿಕೆಗೂ ಮುನ್ನ ರಾಜಕೀಯ ಗದ್ದಲ!

ಹಗರಿಬೊಮ್ಮನಹಳ್ಳಿ: ಪಟ್ಟಣದ ರಾಜಕೀಯ ತಾಪಮಾನ ತಾರಕಕ್ಕೇರಿದ್ದು, ಪುರಸಭೆ ಅಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ ನಡೆಯಲಿದ್ದು, ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಇನ್ನೇನು ಕೆಲವೇ ನಿಮಿಷಗಳಲ್ಲಿ ಆರಂಭಗೊಳ್ಳಲಿದೆ.

ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಅಭ್ಯರ್ಥಿಗಳು ಸಹಾಯಕ ಆಯುಕ್ತರು ಹಾಗೂ ಪುರಸಭೆ ಮುಖ್ಯಾಧಿಕಾರಿಗಳ ಮುಂದೆ ತಮ್ಮ ನಾಮಪತ್ರ ಸಲ್ಲಿಸುವ ಹುಮ್ಮಸ್ಸಿನಲ್ಲಿದ್ದಾರೆ. ಭಾರತೀಯ ಜನತಾ ಪಕ್ಷದಿಂದ ಚಿಂತರಪಳ್ಳಿ ಬಣಕಾರ ಸುರೇಶ್ ಒಮ್ಮತದ ಅಭ್ಯರ್ಥಿಯಾಗಿ ಘೋಷಣೆಯಾಗಿದ್ದು, ಅವರ ನಾಮಪತ್ರ ಸಲ್ಲಿಕೆ ಖಚಿತವಾಗಿದೆ.

ಇನ್ನು ಕಾಂಗ್ರೆಸ್ ಪಾಳಯದಲ್ಲಿ ಗೊಂದಲ ಗರಿಗೆದರಿದ್ದು, ತೆಲಿಗಿ ನೆಲ್ಲು ಇಸ್ಮಾಯಿಲ್ ಸಾಬ್, ರೇಷ್ಮಾ ಸಿಖಂದರ್, ಅಜೀಜುಲ್ಲಾ, ಖಾಜಾ ಬನ್ನಿ ಹಾಗೂ ಗುಂಡ್ರು ಸರಸ್ವತಿ ಸೇರಿದಂತೆ ಐವರು ಆಕಾಂಕ್ಷಿಗಳು ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ನಡೆಸುತ್ತಿದ್ದಾರೆ. ಕೊನೆಯ ಕ್ಷಣದಲ್ಲಿ ಇಬ್ಬರು ಪ್ರಬಲ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ಸಾಧ್ಯತೆ ಇದ್ದು, ಅಂತಿಮ ಆಯ್ಕೆಯಲ್ಲಿ ಅಚ್ಚರಿಯ ತಿರುವು ಕಂಡು ಬರುವ ಸೂಚನೆಗಳು ಗೋಚರಿಸುತ್ತಿವೆ.

ಈ ನಡುವೆ ಸ್ಥಳೀಯ ಮಟ್ಟದಲ್ಲಿ ಹೈಕಮಾಂಡ್ ಆಗಿರುವ ಮಾಜಿ ಶಾಸಕ ಭೀಮಾನಾಯ್ಕ ಅವರ ನಿರ್ಧಾರವೇ ಕಾಂಗ್ರೆಸ್‌ನಲ್ಲಿ ಅಂತಿಮವಾಗಿದ್ದು, ಅವರ ಬೆಂಬಲ ಯಾರಿಗೆ ಸಿಗಲಿದೆ ಎಂಬ ಕುತೂಹಲ ತಾರಕಕ್ಕೇರಿದೆ.

ಈ ಚುನಾವಣೆಯಲ್ಲಿ ಹಣದ ಹರಿವು ಸಾಧ್ಯತೆ ಕುರಿತು ಸಾರ್ವಜನಿಕ ವಲಯದಲ್ಲಿ ಚರ್ಚೆಗಳು ಜೋರಾಗಿದ್ದು, ಈ ಕದನವು ಪ್ರತಿಷ್ಠಿತ ಹಾಗೂ ತೀವ್ರ ಪೈಪೋಟಿಯೊಂದಾಗಿ ರೂಪುಗೊಳ್ಳುವುದು ಖಚಿತವಾದಂತಾಗಿದೆ.

ಬಳ್ಳಾರಿ: ಶಾರ್ಟ್ ಸರ್ಕ್ಯೂಟ್‌ನಿಂದ ಭಾರೀ ಅಗ್ನಿ ಅವಘಡ – 25ಕ್ಕೂ ಹೆಚ್ಚು ಬಣವೆಗಳು ಭಸ್ಮ

ಬಳ್ಳಾರಿ: ತಾಲೂಕಿನ ಚಾಗನೂರು ಗ್ರಾಮದಲ್ಲಿ ತಡರಾತ್ರಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಭಾರೀ ಅಗ್ನಿ ಅವಘಡ ಸಂಭವಿಸಿ 25ಕ್ಕೂ ಹೆಚ್ಚು ಹುಲ್ಲಿನ ಬಣವೆಗಳು ಸುಟ್ಟು ಭಸ್ಮವಾಗಿವೆ.

ನೋಡನೋಡುತ್ತಿದ್ದಂತೆ ಬಣವೆಗಳಿಗೆ ಬೆಂಕಿ ತಗುಲಿ ಧಗಧಗನೆ ಹೊತ್ತಿ ಉರಿದ ಪರಿಣಾಮ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ತಕ್ಷಣ ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದು, ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಲು ಹರಸಾಹಸ ಪಟ್ಟರು.

ಹಲವು ಗಂಟೆಗಳ ಕಾರ್ಯಾಚರಣೆಯ ಬಳಿಕ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದೆ. ಈ ಅವಘಡದಲ್ಲಿ ಸುಮಾರು ₹10 ಲಕ್ಷ ಮೌಲ್ಯದ ಹುಲ್ಲಿನ ಬಣವೆಗಳು ನಾಶವಾಗಿರುವುದಾಗಿ ಅಂದಾಜಿಸಲಾಗಿದೆ.

ಘಟನೆ ಪಿಡಿಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣ ದಾಖಲಿಸಿ ತನಿಖೆ ಮುಂದುವರಿದಿದೆ.

ಬಂಜಾರ ಸಮಾಜದಿಂದ ಐತಿಹಾಸಿಕ ನಿರ್ಧಾರ: ವರದಕ್ಷಿಣೆ ಸಂಪೂರ್ಣ ನಿಷೇಧ, ದುಂದು ವೆಚ್ಚಕ್ಕೂ ಕಡಿವಾಣ!

0

ಗಜೇಂದ್ರಗಡ: ಸಮಾಜದಲ್ಲಿ ಆಳವಾಗಿ ಬೇರೂರಿರುವ ವರದಕ್ಷಿಣೆ ಪಿಡುಗಿಗೆ ಅಂತ್ಯ ಹಾಡುವ ದಿಶೆಯಲ್ಲಿ ಗಜೇಂದ್ರಗಡ ತಾಲ್ಲೂಕಿನ 17 ತಾಂಡಾದ ಬಂಜಾರ ಸಮಾಜದ ಹಿರಿಯರು ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ.

ದಕ್ಷಿಣಕಾಶಿ ಕಾಲಕಾಲೇಶ್ವರ ದೇವಸ್ಥಾನ ಆವರಣದಲ್ಲಿ ಬುಧವಾರ ನಡೆದ ಸಭೆಯಲ್ಲಿ ವರದಕ್ಷಿಣೆ ನೀಡುವುದು ಹಾಗೂ ಪಡೆಯುವುದನ್ನು ಸಂಪೂರ್ಣವಾಗಿ ನಿಷೇಧಿಸುವ ಠರಾವು ಅಂಗೀಕರಿಸಲಾಯಿತು.

ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆವರೆಗೆ ನಡೆದ ಸಭೆಯಲ್ಲಿ ಸಮಾಜದ ನಾಯಕರು, ಕಾರಬಾರಿಗಳು, ಡಾವ್‌ಗಳು, ಗುರುಹಿರಿಯರು ಹಾಗೂ ಯುವಕರು ಭಾಗವಹಿಸಿ ವಿವಿಧ ವಿಷಯಗಳ ಕುರಿತು ಚರ್ಚೆ ನಡೆಸಿದರು. ಹೆಚ್ಚುತ್ತಿರುವ ಬಂಗಾರದ ಬೆಲೆ, ಮದುವೆ ಖರ್ಚಿನ ಭಾರ ಹಾಗೂ ಸಾಮಾಜಿಕ ಒತ್ತಡದ ಹಿನ್ನೆಲೆಯಲ್ಲಿ ಬಡ ಕುಟುಂಬಗಳು ಎದುರಿಸುತ್ತಿರುವ ಸಂಕಷ್ಟಗಳ ಬಗ್ಗೆ ಆತಂಕ ವ್ಯಕ್ತವಾಯಿತು.

ಸಭೆಯಲ್ಲಿ ವರದಕ್ಷಿಣೆ ನಿಷೇಧದ ಜೊತೆಗೆ ಮದುವೆಗಳಲ್ಲಿ ದುಂದು ವೆಚ್ಚಕ್ಕೆ ತಡೆ, ಮದ್ಯಪಾನ ಹಾಗೂ ಡಿಜೆ ಸಂಪೂರ್ಣ ನಿಷೇಧ, ಆಹಾರ ವ್ಯಯ ಕಡಿತ, ಮದುವೆ ಕಾರ್ಯಕ್ರಮಗಳಲ್ಲಿ ಅತಿಥಿಗಳ ಸಂಖ್ಯೆಗೆ ಮಿತಿ ಸೇರಿದಂತೆ ಹಲವು ಸಮಾಜಮುಖಿ ನಿರ್ಧಾರಗಳನ್ನು ಕೈಗೊಳ್ಳಲಾಯಿತು. ಮದುವೆಗಳಲ್ಲಿ ಅಗತ್ಯ ವಸ್ತುಗಳಷ್ಟೇ ನೀಡಬೇಕು, ಹೆಣ್ಣಿನ ಮನೆ ಮುಂದೆ ಮದುವೆ ಮಾಡಿದರೆ ಖರ್ಚನ್ನು ಅರ್ಧ-ಅರ್ಧವಾಗಿ ಹಂಚಿಕೊಳ್ಳಬೇಕು ಎಂಬ ನಿಯಮಕ್ಕೂ ಒಪ್ಪಿಗೆ ನೀಡಲಾಗಿದೆ. ತಾಳಿಯಲ್ಲಿ ಗಂಡು-ಹೆಣ್ಣಿನ ಕಡೆಯವರು ಒಂದೊಂದು ತಾಳಿ ನೀಡಬೇಕು, ತಾಳಿಯ ತೂಕ 5 ಗ್ರಾಂ ಒಳಗಿರಬೇಕು ಎಂದು ಕೂಡ ನಿರ್ಧರಿಸಲಾಗಿದೆ.

ಅದೇ ರೀತಿ, ಮರಣಾನಂತರ ನಡೆಯುವ ಅನಗತ್ಯ ಮಾಂಸಹಾರಿ ಊಟಗಳನ್ನು (ಹಾಡ್ ಬಕರಾ) ಸಂಪೂರ್ಣ ನಿಷೇಧಿಸಲಾಗಿದ್ದು, ದುಃಖದ ಸಂದರ್ಭಗಳಲ್ಲಿ ಸಾಂತ್ವಾನ ನೀಡುವ ಸಂಪ್ರದಾಯವನ್ನು ಮಾತ್ರ ಅನುಸರಿಸಲು ತೀರ್ಮಾನಿಸಲಾಗಿದೆ.

ಸಭೆಯಲ್ಲಿ ಭಾಗವಹಿಸಿದ್ದ 17 ತಾಂಡಾದ ಹಿರಿಯರು ಒಮ್ಮತದಿಂದ ಈ ನಿಯಮಗಳಿಗೆ ಒಪ್ಪಿಗೆ ಸೂಚಿಸಿ ಠರಾವು ಪಾಸ್ ಮಾಡಿದರು. ಈ ನಿಯಮಗಳನ್ನು ಇತರ ಜಿಲ್ಲೆಗಳ ತಾಂಡಾಗಳಿಗೂ ಮಾದರಿಯಾಗಿ ಅನುಸರಿಸುವಂತೆ ಮನವಿ ಮಾಡಲಾಗಿದ್ದು, ಉಲ್ಲಂಘನೆ ಮಾಡಿದರೆ ತಾಂಡಾ ಹಿರಿಯರು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ಸಭೆಯಲ್ಲಿ ಅನೇಕ ತಾಂಡಾ ಮುಖಂಡರು ಹಾಗೂ ಸಮಾಜದ ಪ್ರಮುಖರು ಭಾಗವಹಿಸಿದ್ದರು. ಈ ನಿರ್ಧಾರವನ್ನು ಸಮಾಜದ ಇತರ ವರ್ಗಗಳು ಕೂಡ ಮಾದರಿಯಾಗಿ ಪರಿಗಣಿಸುವ ಸಾಧ್ಯತೆ ವ್ಯಕ್ತವಾಗಿದೆ.

ಈ ವೇಳೆ ಗಜೇಂದ್ರಗಡ ತಾಂಡಾದ ಸುರೇಶ ಸಿ. ರಾಠೋಡ, ಯಮನಪ್ಪ ಎಸ್.‌ ರಾಠೋಡ, ಮನ್ನುನಾಯಕ ಡಿ. ರಾಠೋಡ, ದುರಗಪ್ಪ ಮಾಳೋತ್ತರ, ಶಿವಪುತ್ರಪ್ಪ ಡಿ. ಮಾಳೋತ್ತರ, ಗೋವಿಂದಪ್ಪ ಗುಗಲೊತ್ತರ, ರಾಜೂರ ತಾಂಡಾದ ತುಕ್ಕಪ್ಪ ರಾಠೋಡ, ಪಡಿಯಪ್ಪ ಚವ್ಹಾಣ, ದಿಂಡೂರ ತಾಂಡಾದ ಎಸ್. ಎಸ್. ಲಮಾಣಿ, ಲಕ್ಕಲಕಟ್ಟಿ ತಾಂಡಾದ ಭೀಮಪ್ಪ ನಾಯಕ, ಭೈರಾಪುರ ತಾಂಡಾದ ಲಕ್ಷ್ಮಣ ರಾಠೋಡ, ಜನತಾ ಪ್ಲಾಟ್ ತಾಂಡಾದ ಕೃಷ್ಣಪ್ಪ ರಾಠೋಡ, ನಾರಾಯಣಪ್ಪ ಮಾಳೋತ್ತರ, ನೆಲ್ಲೂರು ತಾಂಡಾದ ಶಾಂತಪ್ಪ ರಾಠೋಡ, ಶರಣಪ್ಪ ಲಮಾಣಿ, ಸರ್ಜಾಪುರ ತಾಂಡಾದ ಮಹಾಂತೇಶ ರಾಠೋಡ,

ಚಂದ್ರು ಕಾರಬಾರಿ, ಶಂಕ್ರಪ್ಪ ನಾಯಕ, ಪೋಮಪ್ಪ ಕಾರಬಾರಿ, ರುದ್ರಾಪುರ ತಾಂಡಾದ ಎಂ. ವೈ. ಮಾಳೋತ್ತರ, ತುಕ್ಕಪ್ಪ ರಾಠೋಡ, ನೇಮಪ್ಪ ಮಾಳೋತ್ತರ, ಅಮರಗಟ್ಟಿ ತಾಂಡಾದ ಸಕ್ರಪ್ಪ ರಾಠೋಡ, ಕೊಡಗಾನೂರ ತಾಂಡಾದ ಕಮಲಪ್ಪ ರಾಠೋಡ, ದುರ್ಗಪ್ಪ ಮಾಳೋತ್ತರ, ಬೆಣಚಮಟ್ಟಿ ತಾಂಡಾದ ಪುಂಡಲೀಕ ನಾಯಕ, ಕಾಂತಪ್ಪ ಕಾರಬಾರಿ, ನಾಗರಸಕೊಪ್ಪ ತಾಂಡಾದ ರಾಮಪ್ಪ ರಾಠೋಡ, ಶರಣಪ್ಪ ಮಾಳೋತ್ತರ ಗೌಡಗೇರಿ ತಾಂಡಾದ ಕುಮಾರ ರಾಠೋಡ, ಯಮನಪ್ಪ ಮಾಳೋತ್ತರ ಇತರರು ಇದ್ದರು.

ಗಾಳಿ-ಮಳೆ ಅಬ್ಬರಕ್ಕೆ ಬೆಂಗಳೂರು ತತ್ತರ: ಈ ರಸ್ತೆಗಳಲ್ಲಿ ಸಂಚರಿಸೋ ಮುನ್ನ ಈ ಸ್ಟೋರಿ ನೋಡಿ!

ಬೆಂಗಳೂರು: ತೀವ್ರ ಬಿಸಿಲಿನಿಂದ ಕಂಗೆಟ್ಟಿದ್ದ ನಗರಕ್ಕೆ ನಿನ್ನೆ ಸುರಿದ ಭಾರಿ ಮಳೆ ತಂಪು ನೀಡಿದರೂ, ಅದರ ಅಬ್ಬರಕ್ಕೆ ಉಂಟಾದ ಅನಾಹುತಗಳಿಂದ ಬೆಂಗಳೂರು ನಿವಾಸಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಭಾರಿ ಗಾಳಿಗೆ ನಗರದ ಹಲವೆಡೆ ಮರಗಳು ಧರೆಗುರುಳಿದ್ದು, ತಗ್ಗು ಪ್ರದೇಶಗಳು ಮತ್ತು ಅಂಡರ್‌ಪಾಸ್‌ಗಳಲ್ಲಿ ನೀರು ನಿಂತು ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಲೌರಿ ಅಂಡರ್‌ಪಾಸ್‌ನಲ್ಲಿ ನೀರು ನಿಂತಿರುವುದರಿಂದ ಮಹದೇವಪುರ ಕಡೆಗೆ ನಿಧಾನಗತಿಯ ಸಂಚಾರ ಕಂಡುಬರುತ್ತಿದೆ. ಕೆ.ಆರ್. ಸರ್ಕಲ್ ಅಂಡರ್‌ಪಾಸ್‌ ಜಲಾವೃತವಾಗಿದ್ದು, ಪೊಲೀಸರು ಬ್ಯಾರಿಕೇಡ್ ಹಾಕಿ ಬಂದ್ ಮಾಡಿದ್ದಾರೆ.

ನಗರದ ವಿವಿಧ ಭಾಗಗಳಲ್ಲಿ ಮರಗಳು ಮತ್ತು ಕೊಂಬೆಗಳು ರಸ್ತೆಗೆ ಉರುಳಿದ ಪರಿಣಾಮ ಸಂಚಾರಕ್ಕೆ ತೊಂದರೆ ಉಂಟಾಗಿದೆ. ಭಾಷ್ಯಂ ವೃತ್ತದ ಬಳಿ ಮರ ಬಿದ್ದಿರುವುದರಿಂದ ಕಾವೇರಿ ಥಿಯೇಟರ್ ಜಂಕ್ಷನ್ ಕಡೆ ನಿಧಾನಗತಿಯ ಸಂಚಾರ ಕಂಡುಬಂದಿದೆ. ಬಸವನಗುಡಿಯಲ್ಲಿಯೂ ಬೃಹತ್ ಮರ ಬಿದ್ದು, ವಿದ್ಯಾಪೀಠ ಸರ್ಕಲ್‌ಗೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಬಂದ್ ಆಗಿದೆ.

ಇದರಿಂದ ಸ್ಥಳೀಯರು ಜಿಬಿಎ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಬೊಮ್ಮನಹಳ್ಳಿ ಜಂಕ್ಷನ್ ಬಳಿ ವಾಹನ ಕೆಟ್ಟು ನಿಂತಿರುವುದರಿಂದ ರೂಪೇನ ಅಗ್ರಹಾರ ಕಡೆಗೂ ಟ್ರಾಫಿಕ್ ಜಾಮ್ ಉಂಟಾಗಿದೆ ಎಂದು ಬೆಂಗಳೂರು ಟ್ರಾಫಿಕ್ ಪೊಲೀಸರು ಮಾಹಿತಿ ನೀಡಿದ್ದಾರೆ.

ಒಟ್ಟಿನಲ್ಲಿ, ಮಳೆಯ ಅಬ್ಬರದಿಂದ ನಗರದಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದ್ದು, ತೆರವು ಕಾರ್ಯಾಚರಣೆಗಳು ಇನ್ನೂ ಮುಂದುವರಿದಿವೆ.

IPL 2026: ತವರಲ್ಲಿ ಮುಂಬೈಗೆ ಮತ್ತೆ ಮುಖಭಂಗ; ಹೈದ್ರಾಬಾದ್‌ಗೆ 6 ವಿಕೆಟ್‌ಗಳ ಭರ್ಜರಿ ಜಯ!

0

ಮುಂಬೈ: ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ರಣರೋಚಕ ಪಂದ್ಯ ಅಭಿಮಾನಿಗಳ ಕಣ್ಣಿಗೆ ಹಬ್ಬವಾಗಿದ್ದು, ಸಿಕ್ಸರ್‌–ಬೌಂಡರಿಗಳ ಮಳೆಯ ನಡುವೆ ಸನ್‌ರೈಸರ್ಸ್ ಹೈದರಾಬಾದ್ ತಂಡ ಮುಂಬೈ ಇಂಡಿಯನ್ಸ್ ವಿರುದ್ಧ 6 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ.

244 ರನ್‌ಗಳ ಬೃಹತ್ ಗುರಿ ಬೆನ್ನಟ್ಟಿದ ಹೈದರಾಬಾದ್ ತಂಡ 18.4 ಓವರ್‌ಗಳಲ್ಲೇ 249 ರನ್‌ ಕಲೆಹಾಕಿ ಜಯ ಸಾಧಿಸಿತು. ಈ ಗೆಲುವಿನೊಂದಿಗೆ 12 ಅಂಕಗಳನ್ನು ಸಂಪಾದಿಸಿ ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿದೆ.

ಚೇಸಿಂಗ್ ಆರಂಭಿಸಿದ ಅಭಿಷೇಕ್ ಶರ್ಮಾ ಹಾಗೂ ಟ್ರಾವಿಸ್ ಹೆಡ್ ಜೋಡಿ ಪವರ್ ಪ್ಲೇಯಲ್ಲೇ 92 ರನ್‌ಗಳ ಸ್ಫೋಟಕ ಆರಂಭ ನೀಡಿ ತಂಡಕ್ಕೆ ಬಲವಾದ ಅಡಿಪಾಯ ಹಾಕಿದರು. ಮೊದಲ ವಿಕೆಟ್‌ಗೆ 8.4 ಓವರ್‌ಗಳಲ್ಲಿ 129 ರನ್‌ಗಳ ಜೊತೆಯಾಟ ನೀಡಿದ ಈ ಜೋಡಿ ಮುಂಬೈ ಬೌಲರ್‌ಗಳನ್ನು ಕಂಗೆಡಿಸಿತು.

ಆದರೆ 9ನೇ ಮತ್ತು 10ನೇ ಓವರ್‌ನಲ್ಲಿ ಹೈದರಾಬಾದ್ ತಂಡ ಮೂರು ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡು ಕ್ಷಣಿಕ ಸಂಕಷ್ಟಕ್ಕೆ ಸಿಲುಕಿತು. ಆದರೂ ನಂತರದಲ್ಲಿ ಹೆನ್ರಿಕ್ ಕ್ಲಾಸೆನ್ ಆಕ್ರಮಣಕಾರಿ ಆಟ ಪ್ರದರ್ಶಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.

ಹೈದರಾಬಾದ್ ಪರ ಟ್ರಾವಿಸ್ ಹೆಡ್ 30 ಎಸೆತಗಳಲ್ಲಿ 76 ರನ್‌ ಸಿಡಿಸಿದರೆ, ಕ್ಲಾಸೆನ್ 30 ಎಸೆತಗಳಲ್ಲಿ 65 ರನ್‌ ಬಾರಿಸಿದರು. ಸಲೀಲ್ ಅರೋರಾ 30 ರನ್‌, ನಿತೀಶ್ ರೆಡ್ಡಿ 21 ರನ್‌ಗಳ ಕೊಡುಗೆ ನೀಡಿದರು.

ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ತಂಡ ರನ್‌ ಹೊಳೆ ಹರಿಸಿತು. ರಿಕಲ್ಟನ್ ಅಜೇಯ 123 ರನ್‌ಗಳ ಸ್ಫೋಟಕ ಇನ್ನಿಂಗ್ಸ್ ಆಡಿದರೆ, ವಿಲ್ ಜ್ಯಾಕ್ಸ್ 46 ರನ್‌, ಹಾರ್ದಿಕ್ ಪಾಂಡ್ಯ 31 ರನ್‌ ಸೇರಿಸಿ ತಂಡವನ್ನು ಭರ್ಜರಿ ಮೊತ್ತಕ್ಕೆ ಕೊಂಡೊಯ್ದರು.

ಆದರೆ ಬೌಲಿಂಗ್ ವೈಫಲ್ಯದಿಂದ ಮುಂಬೈ ತಂಡಕ್ಕೆ ಸೋಲು ಅನುಭವಿಸಬೇಕಾಯಿತು. ಪಂದ್ಯದಲ್ಲಿ ಎರಡೂ ತಂಡಗಳ ದಿಟ್ಟ ಬ್ಯಾಟಿಂಗ್ ಅಭಿಮಾನಿಗಳಿಗೆ ರಸದೌತಣ ನೀಡಿತು.

ಬೌರಿಂಗ್ ಆಸ್ಪತ್ರೆ ದುರಂತಕ್ಕೆ ಡಿಸಿಎಂ ಆಘಾತ: ಇಂತಹ ಘಟನೆ ಆಗಬಾರದಿತ್ತು ಎಂದ ಡಿ.ಕೆ. ಶಿವಕುಮಾರ್!

ಬೆಂಗಳೂರು: ಕಾಂಪೌಂಡ್ ಗೋಡೆ ಕುಸಿದು ಏಳು ಮಂದಿ ಸಾವನ್ನಪ್ಪಿರುವ ಘಟನೆ ಅತ್ಯಂತ ದುಃಖಕರವಾಗಿದ್ದು, ಇಂತಹ ದುರಂತ ಸಂಭವಿಸಬಾರದಿತ್ತು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಬೇಸರ ವ್ಯಕ್ತಪಡಿಸಿದ್ದಾರೆ.

ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳನ್ನು ಭೇಟಿ ಮಾಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೃತರಲ್ಲಿ ನಾಲ್ವರು ಬೀದಿ ಬದಿ ವ್ಯಾಪಾರಿಗಳು, ಇಬ್ಬರು ಕೇರಳ ಮೂಲದವರು ಹಾಗೂ ಒಂದು ಮಗು ಸೇರಿದೆ. ಇನ್ನೊಬ್ಬರ ಗುರುತು ಪತ್ತೆಯಾಗಿಲ್ಲ. ಕೇರಳದ “ಕುಟುಂಬಶ್ರೀ” ಸಂಸ್ಥೆಯ ಮೂಲಕ 56 ಮಂದಿ ಪ್ರವಾಸಕ್ಕೆ ಬೆಂಗಳೂರಿಗೆ ಬಂದಿದ್ದು, ಕಮರ್ಷಿಯಲ್ ಸ್ಟ್ರೀಟ್‌ನಲ್ಲಿ ಶಾಪಿಂಗ್ ಮಾಡುವ ವೇಳೆ ಮಳೆ ಆರಂಭವಾಗಿತ್ತು. ಮಳೆಯಿಂದ ರಕ್ಷಣೆ ಪಡೆಯಲು ಗೋಡೆ ಪಕ್ಕ ನಿಂತಿದ್ದಾಗ ಸುಮಾರು 8 ಅಡಿ ಎತ್ತರದ ಗೋಡೆ ಕುಸಿದು ಈ ದುರಂತ ಸಂಭವಿಸಿದೆ ಎಂದು ವಿವರಿಸಿದರು.

ಮರಗಳು ಮತ್ತು ಕೊಂಬೆಗಳು ಬಿದ್ದು ವಾಹನಗಳಿಗೆ ಹಾನಿಯಾಗಿರುವ ಹಿನ್ನೆಲೆಯಲ್ಲಿ, ನಗರದಲ್ಲಿ ಅಪಾಯಕಾರಿಯಾದ ಮರಗಳು ಮತ್ತು ದುರ್ಬಲ ಕೊಂಬೆಗಳನ್ನು ತಕ್ಷಣ ತೆರವುಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ತಿಳಿಸಿದರು. ನೂರಕ್ಕೂ ಹೆಚ್ಚು ಕಡೆಗಳಲ್ಲಿ ಮರ ಬಿದ್ದಿರುವುದು ಗಮನಕ್ಕೆ ಬಂದಿದ್ದು, ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

ಮೃತರ ಕುಟುಂಬಗಳಿಗೆ ಸರ್ಕಾರ ಪರಿಹಾರ ಘೋಷಿಸಿದ್ದು, ಕೇರಳ ಸರ್ಕಾರಕ್ಕೂ ಮಾಹಿತಿ ನೀಡಲಾಗುವುದು. ಮೃತದೇಹಗಳನ್ನು ಗೌರವಯುತವಾಗಿ ಸಾಗಿಸಲು ವ್ಯವಸ್ಥೆ ಮಾಡಲಾಗುತ್ತದೆ. ಗಾಯಗೊಂಡವರಲ್ಲಿ ಕೆಲವರು ಚೇತರಿಸಿಕೊಂಡಿದ್ದಾರೆ ಎಂದು ತಿಳಿಸಿದರು.

ವಿಪಕ್ಷಗಳ ಟೀಕೆಗೆ ಪ್ರತಿಕ್ರಿಯಿಸಿದ ಅವರು, “ಇದು ಆರೋಪ ಮಾಡುವ ಸಮಯವಲ್ಲ, ಸಮಸ್ಯೆಗೆ ಪರಿಹಾರ ಕಂಡುಹಿಡಿಯುವುದು ಮುಖ್ಯ. ಹಳೆಯ ಗೋಡೆಯ ನಿರ್ವಹಣೆಯಲ್ಲಿ ಕೊರತೆ ಇದ್ದುದರಿಂದ ಈ ಘಟನೆ ಸಂಭವಿಸಿರುವ ಸಾಧ್ಯತೆ ಇದೆ ಎಂದು ಹೇಳಿ, ತನಿಖೆಗೆ ಆದೇಶಿಸಲಾಗಿದೆ ಎಂದರು.

ಮುಂದೆ ಇಂತಹ ಅನಾಹುತಗಳು ಸಂಭವಿಸದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಡಿಸಿಎಂ ಸ್ಪಷ್ಟಪಡಿಸಿದರು.

ಬೌರಿಂಗ್ ಆಸ್ಪತ್ರೆಯ ಗೋಡೆ ಕುಸಿದು 8 ಮಂದಿ ಸಾವು: ಸಂತಾಪ ಸೂಚಿಸಿದ ಮೋದಿ, ಮೃತರ ಕುಟುಂಬಕ್ಕೆ 2 ಲಕ್ಷ ಪರಿಹಾರ!

ಬೆಂಗಳೂರು: ಬುಧವಾರ ಸಂಜೆ ಶಿವಾಜಿನಗರದಲ್ಲಿ ಸುರಿದ ಭಾರಿ ಮಳೆಯ ಪರಿಣಾಮ ಬೌರಿಂಗ್ ಆಸ್ಪತ್ರೆಯ ಗೋಡೆ ಕುಸಿದು 8 ಮಂದಿ ಸಾವನ್ನಪ್ಪಿದ್ದಾರೆ.

ಮಳೆಯ ತೀವ್ರತೆಗೆ ಆಸ್ಪತ್ರೆ ಕಾಂಪೌಂಡ್ ಗೋಡೆ ಅಚಾನಕ್ ಕುಸಿದು ಬಿದ್ದ ಪರಿಣಾಮ ಈ ದುರ್ಘಟನೆ ನಡೆದಿದ್ದು, ಸ್ಥಳದಲ್ಲೇ ಹಲವರು ಸಿಲುಕಿಕೊಂಡಿದ್ದರು. ರಕ್ಷಣಾ ಕಾರ್ಯಾಚರಣೆಯ ಬಳಿಕ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.

ಘಟನೆಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಮೃತರ ಕುಟುಂಬಗಳಿಗೆ PMNRF ಮೂಲಕ ತಲಾ ₹2 ಲಕ್ಷ ಹಾಗೂ ಗಾಯಾಳುಗಳಿಗೆ ₹50,000 ಪರಿಹಾರ ನೀಡಲಾಗುವುದು ಎಂದು ಘೋಷಿಸಲಾಗಿದೆ.

ಸ್ಥಳದಲ್ಲಿ ಇಂದಿಗೂ ರಕ್ಷಣಾ ಹಾಗೂ ಪರಿಶೀಲನಾ ಕಾರ್ಯ ಮುಂದುವರಿದಿದೆ ಎನ್ನಲಾಗಿದೆ.

ಮುರುಡೇಶ್ವರದಿಂದ ಉಡುಪಿಗೆ ಹೊರಟಿದ್ದ ಬಸ್ ಅಪಘಾತ: ಮೂವರು ಸಾವು!

ಉಡುಪಿ: ಜಿಲ್ಲೆಯ ಬೈಂದೂರು ತಾಲೂಕಿನ ತ್ರಾಸಿಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿ ಮೂವರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.

ರಸ್ತೆ ಬದಿ ನಿಂತಿದ್ದ ಟ್ಯಾಂಕರ್‌ಗೆ ಪ್ರವಾಸಿಗರನ್ನು ಹೊತ್ತೊಯ್ಯುತ್ತಿದ್ದ ಮಿನಿ ಬಸ್ ಅತಿ ವೇಗದಲ್ಲಿ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಮೃತರನ್ನು ರಂಗನಾಥ್ (21, ಚಿಕ್ಕಮಗಳೂರು), ಮನೋಜ್ (25) ಹಾಗೂ ಉಮೇಶ್ ಯಾನ್ ರಘು ಎಂದು ಗುರುತಿಸಲಾಗಿದೆ.

ಮಿನಿ ಬಸ್‌ನಲ್ಲಿ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಮೂಲದ ಶಂಕರಘಟ್ಟ ರಂಭಾಪುರಿ ಕಾಲೇಜಿನ ಬಿಕಾಂ ವಿದ್ಯಾರ್ಥಿಗಳು ಪ್ರವಾಸಕ್ಕೆ ತೆರಳಿದ್ದರು ಎಂದು ತಿಳಿದುಬಂದಿದೆ. ಬಸ್‌ನಲ್ಲಿ ಒಟ್ಟು 47 ವಿದ್ಯಾರ್ಥಿಗಳಿದ್ದು, ಅವರಲ್ಲಿ ಹೆಚ್ಚಿನವರು ಅಪಾಯದಿಂದ ಪಾರಾಗಿದ್ದಾರೆ.

ಅಪಘಾತದಲ್ಲಿ ಬಸ್‌ನಲ್ಲಿದ್ದ ಅಡುಗೆ ಸಹಾಯಕ, ಚಾಲಕ ಮತ್ತು ಕ್ಲೀನರ್ ಸಾವನ್ನಪ್ಪಿದ್ದಾರೆ ಎಂದು ಪ್ರಾಥಮಿಕ ಮಾಹಿತಿ ತಿಳಿಸಿದೆ. ಹಲವರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಕುಂದಾಪುರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಮುರುಡೇಶ್ವರದಿಂದ ಉಡುಪಿಯತ್ತ ಪ್ರಯಾಣಿಸುತ್ತಿದ್ದ ವೇಳೆ ಈ ಘಟನೆ ನಡೆದಿದೆ.

error: Content is protected !!