ಮಂಡ್ಯ: ಜಿಲ್ಲೆಯ ತಂಗಳಗೆರೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಿಂದ ನಾಪತ್ತೆಯಾಗಿದ್ದ ವಿದ್ಯಾರ್ಥಿ ನಾಲ್ಕು ವರ್ಷಗಳ ಬಳಿಕ ಬೆಂಗಳೂರಿನಲ್ಲಿ ಪತ್ತೆಯಾಗಿದ್ದಾನೆ. ಕಬಡ್ಡಿ ಆಟದ ಮೇಲಿದ್ದ ಆಸಕ್ತಿಯೇ ಕೊನೆಗೂ ಬಾಲಕನ ಸುಳಿವು ನೀಡಿದ್ದು, ಪ್ರಕರಣ ಸುಖಾಂತ್ಯ ಕಂಡಿದೆ.
ಪಾಂಡವಪುರ ತಾಲೂಕಿನ ಹಿರೇಮರಹಳ್ಳಿ ಗ್ರಾಮದ ಈರೇಗೌಡರ ಪುತ್ರ ಕಿಶೋರ್ 9ನೇ ತರಗತಿಯಲ್ಲಿ ಓದುತ್ತಿದ್ದ ವೇಳೆ 2022ರ ಆಗಸ್ಟ್ 10ರಂದು ಶಾಲೆಯಿಂದ ನಾಪತ್ತೆಯಾಗಿದ್ದ. ಸಿಸಿ ಕ್ಯಾಮರಾ ದೃಶ್ಯಾವಳಿಯಲ್ಲಿ ಆತ ಶಾಲೆಯತ್ತ ಹೋಗುತ್ತಿರುವುದು ಮಾತ್ರ ದಾಖಲಾಗಿತ್ತು. ಬಳಿಕ ಆತ ಎಲ್ಲಿಗೆ ತೆರಳಿದ್ದಾನೆ ಎಂಬುದು ಪತ್ತೆಯಾಗಿರಲಿಲ್ಲ.
ತಂದೆ ಶಾಲೆಗೆ ಭೇಟಿ ನೀಡಿದಾಗ ಮಗ ಕಳೆದ ಹಲವು ದಿನಗಳಿಂದ ಶಾಲೆಗೆ ಬಂದಿಲ್ಲ ಎಂಬ ಮಾಹಿತಿ ತಿಳಿದುಬಂದಿತ್ತು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ನಾಲ್ಕು ವರ್ಷಗಳಿಂದ ನಿರಂತರ ಶೋಧ ನಡೆಸುತ್ತಿದ್ದರು.
ತನಿಖೆಯಲ್ಲಿ ಕಿಶೋರ್ ಸ್ವಯಂಪ್ರೇರಿತವಾಗಿ ಶಾಲೆ ಬಿಟ್ಟು ಬೆಂಗಳೂರಿಗೆ ತೆರಳಿದ್ದಾನೆ ಎಂಬುದು ಬೆಳಕಿಗೆ ಬಂದಿದೆ. ಓದಿನಲ್ಲಿ ಆಸಕ್ತಿ ಇಲ್ಲದ ಕಾರಣ ಶಾಲೆಯ ಕಾಂಪೌಂಡ್ ಹಾರಿ ಹೊರಬಂದಿದ್ದ ಆತ, ಬೆಂಗಳೂರಿನಲ್ಲಿ ವಿವಿಧ ಹೋಟೆಲ್ಗಳಲ್ಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಎಂದು ತಿಳಿದುಬಂದಿದೆ.
ಕಬಡ್ಡಿ ಮೇಲೆ ಅಪಾರ ಆಸಕ್ತಿ ಹೊಂದಿದ್ದ ಕಿಶೋರ್ ಸ್ಥಳೀಯ ಟೂರ್ನಮೆಂಟ್ಗಳಲ್ಲಿ ಭಾಗವಹಿಸುತ್ತಿದ್ದ ವೇಳೆ ಪರಿಚಿತರು ಆತನನ್ನು ಗುರುತಿಸಿದ್ದಾರೆ. ಮಾಹಿತಿ ಆಧರಿಸಿ ಪೊಲೀಸರು ಆತನನ್ನು ಪತ್ತೆಹಚ್ಚಿ ಸುರಕ್ಷಿತವಾಗಿ ಗ್ರಾಮಕ್ಕೆ ಕರೆತಂದಿದ್ದಾರೆ.
ನಾಲ್ಕು ವರ್ಷಗಳಿಂದ ಮಗನಿಗಾಗಿ ಕಾದಿದ್ದ ಕುಟುಂಬಕ್ಕೆ ಈಗ ಸಂತಸದ ಕ್ಷಣ ಮರಳಿ ಬಂದಿದೆ.

