Home Blog Page 2

ತ್ರಿವಳಿ ಕೊಲೆ ಪ್ರಕರಣ: ಬ್ರೈನ್ ಮ್ಯಾಪಿಂಗ್‌ʼಗೆ ಮುನ್ನವೇ ಮೂವರನ್ನು ಕೊಂದಿದ್ದು ನಾನೇ ಎಂದು ಆರೋಪಿ ತಪ್ಪೊಪ್ಪಿಗೆ

0

ಬೆಂಗಳೂರು: ನಗರದ ಕೆ.ಆರ್. ಪುರಂನಲ್ಲಿ ನಡೆದ ತ್ರಿವಳಿ ಕೊಲೆ ಪ್ರಕರಣದ ತನಿಖೆಗೆ ಮಹತ್ವದ ತಿರುವು ಸಿಕ್ಕಿದ್ದು, ಆರೋಪಿ ಕೆನತ್ ಮೂವರನ್ನೂ ಕೊಲೆ ಮಾಡಿದ್ದು ತಾನೇ ಎಂದು ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ.

ಪ್ರಕರಣದ ಆರಂಭಿಕ ತನಿಖೆಯಲ್ಲಿ ಆರೋಪಿ ಶ್ವೇತಾ, ತನ್ನ ತಾಯಿಯನ್ನು ತಾನೇ ಕೊಲೆ ಮಾಡಿದ್ದಾಗಿ ಹೇಳಿಕೆ ನೀಡಿದ್ದಳು. ಮತ್ತೊಂದೆಡೆ, ಕೆನತ್ ಕೂಡ ಮೂವರ ಹತ್ಯೆಯನ್ನು ತಾನೇ ನಡೆಸಿದ್ದಾಗಿ ಹೇಳಿದ್ದ. ಅಲ್ಲದೆ, ಸಾವಿಗೂ ಮುನ್ನ ನೀಡಿದ್ದ ಹೇಳಿಕೆಯಲ್ಲಿ ಶ್ವೇತಾಳ ತಂದೆ ಸೋಮಸುಂದರ್, “ಕೆನತ್ ಮತ್ತು ಶ್ವೇತಾ ಇಬ್ಬರೂ ಸೇರಿ ನನ್ನ ಮೇಲೆ ಹಲ್ಲೆ ನಡೆಸಿದ್ದರು” ಎಂದು ಉಲ್ಲೇಖಿಸಿದ್ದರಿಂದ ಪ್ರಕರಣ ಮತ್ತಷ್ಟು ಗೊಂದಲಕ್ಕೆ ಕಾರಣವಾಗಿತ್ತು.

ಈ ಹಿನ್ನೆಲೆಯಲ್ಲಿ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದರು. ಒಬ್ಬ ವ್ಯಕ್ತಿ ಒಂದೇ ವೇಳೆ ಮೂವರನ್ನು ಹತ್ಯೆ ಮಾಡುವುದು ಹೇಗೆ ಸಾಧ್ಯ ಎಂಬ ಅನುಮಾನ ವ್ಯಕ್ತವಾಗಿದ್ದರಿಂದ, ಪ್ರಕರಣದ ಸತ್ಯಾಸತ್ಯತೆ ತಿಳಿಯಲು ನ್ಯಾಯಾಲಯದ ಅನುಮತಿ ಪಡೆದು ಕೆನತ್‌ಗೆ ಬ್ರೈನ್ ಮ್ಯಾಪಿಂಗ್ ಪರೀಕ್ಷೆ ನಡೆಸಲು ಕೆ.ಆರ್. ಪುರಂ ಪೊಲೀಸರು ಸಿದ್ಧತೆ ನಡೆಸಿದ್ದರು.

ಆದರೆ, ಬ್ರೈನ್ ಮ್ಯಾಪಿಂಗ್ ಪರೀಕ್ಷೆಗೂ ಮುನ್ನವೇ ಕೆನತ್ ತನ್ನ ತಪ್ಪನ್ನು ಒಪ್ಪಿಕೊಂಡಿದ್ದು, “ಈ ಪ್ರಕರಣದಲ್ಲಿ ಶ್ವೇತಾಳ ಪಾತ್ರವಿಲ್ಲ. ಮೂವರನ್ನೂ ಕೊಲೆ ಮಾಡಿದ್ದು ನಾನೇ” ಎಂದು ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾನೆ ಎಂದು ಮೂಲಗಳು ತಿಳಿಸಿವೆ.

ಪ್ರಕರಣದಲ್ಲಿ ಶ್ವೇತಾ ಮತ್ತು ಕೆನತ್ ವಿರುದ್ಧ ಶ್ವೇತಾಳ ತಂದೆ ಸೋಮಸುಂದರ್, ತಾಯಿ ಮುತ್ತುಲಕ್ಷ್ಮಿ ಹಾಗೂ ಸಹೋದರಿ ಸುಪ್ರಿಯಾ ಅವರ ಕೊಲೆ ಆರೋಪ ದಾಖಲಾಗಿತ್ತು. ಇದೀಗ ಕೆನತ್ ನೀಡಿರುವ ಹೊಸ ಹೇಳಿಕೆ ತನಿಖೆಗೆ ಹೊಸ ತಿರುವು ನೀಡಿದ್ದು, ಪ್ರಕರಣದ ಎಲ್ಲ ಆಯಾಮಗಳಲ್ಲೂ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಸ್ಮಶಾನವಿಲ್ಲ… ಮೃತದೇಹದೊಂದಿಗೆ ಗ್ರಾಮಸ್ಥರ ಹೋರಾಟ!

0

ಗದಗ: ತಾಲೂಕಿನ ಹೊಸೂರು ಗ್ರಾಮದಲ್ಲಿ ಸ್ಮಶಾನ ಭೂಮಿಯ ಕೊರತೆ ಗಂಭೀರ ಸ್ವರೂಪ ಪಡೆದುಕೊಂಡಿದ್ದು, ಮೃತ ಮಹಿಳೆಯ ಅಂತ್ಯಕ್ರಿಯೆಗೆ ಸ್ಥಳ ಸಿಗದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಪ್ರತಿಭಟನೆಗೆ ಇಳಿದ ಘಟನೆ ಬುಧವಾರ ನಡೆದಿದೆ.

ಗ್ರಾಮದ ಬಸವಣ್ಣೆಮ್ಮ ಬೋಳನವರ್ (51) ಅವರು ಅನಾರೋಗ್ಯದಿಂದ ಮೃತಪಟ್ಟಿದ್ದರು. ಆದರೆ ಗ್ರಾಮದಲ್ಲಿ ಅಧಿಕೃತ ಸ್ಮಶಾನ ಜಾಗ ಇಲ್ಲದ ಕಾರಣ, ಮೃತದೇಹವನ್ನು ಬಸ್ ನಿಲ್ದಾಣದ ಸಮೀಪವೇ ಚಿತೆಗೆ ಸಜ್ಜುಗೊಳಿಸಲು ಗ್ರಾಮಸ್ಥರು ಮುಂದಾದರು.

ಇಲ್ಲಿಯವರೆಗೆ ಗ್ರಾಮದ ಯಾರೇ ಮೃತಪಟ್ಟರೂ ಬಶೆಟ್ಟಿ ಎಂಬುವರ ಜಮೀನಿನಲ್ಲಿ ಅಂತ್ಯಸಂಸ್ಕಾರ ನಡೆಯುತ್ತಿತ್ತು. ಆದರೆ ಈಗ ಜಮೀನಿನ ಮಾಲೀಕ ಚಂದ್ರು ಬಶೆಟ್ಟಿ ತಮ್ಮ ಜಮೀನಿನಲ್ಲಿ ಅಂತ್ಯಕ್ರಿಯೆ ನಡೆಸಲು ವಿರೋಧ ವ್ಯಕ್ತಪಡಿಸಿದ್ದರಿಂದ ಪರಿಸ್ಥಿತಿ ಉದ್ವಿಗ್ನಗೊಂಡಿತು.

ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು, “ಗ್ರಾಮದಲ್ಲಿಯೇ ಅಂತ್ಯಕ್ರಿಯೆ ನಡೆಸುತ್ತೇವೆ” ಎಂದು ಪಟ್ಟು ಹಿಡಿದು ಪ್ರತಿಭಟನೆ ನಡೆಸಿದರು.

ವಿಷಯ ತಿಳಿಯುತ್ತಿದ್ದಂತೆ ಸಹಾಯಕ ಆಯುಕ್ತ ಗಂಗಪ್ಪ, ಗದಗ ತಹಸೀಲ್ದಾರ್ ಶ್ರೀನಿವಾಸಮೂರ್ತಿ ಕುಲಕರ್ಣಿ ಹಾಗೂ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಮಾತುಕತೆ ನಡೆಸಿದರು. ಪರಿಸ್ಥಿತಿಯನ್ನು ತಿಳಿಗೊಳಿಸಲು ಅಧಿಕಾರಿಗಳು ಮತ್ತು ಪೊಲೀಸರು ಗ್ರಾಮಸ್ಥರ ಮನವೊಲಿಸುವ ಪ್ರಯತ್ನ ನಡೆಸಿದರು.

ಘಟನೆ ಮುಳಗುಂದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಸ್ಥಳದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.

ರಾಮಭಕ್ತರ ಮೇಲೆ ಗುಂಡು ಹಾರಿಸಿದವರೇ ಇಂದು ಧರ್ಮದ ಪಾಠ ಮಾಡುತ್ತಿದ್ದಾರೆ: ಕಾಂಗ್ರೆಸ್-SP ವಿರುದ್ಧ ಯೋಗಿ ವಾಗ್ದಾಳಿ

0

ಲಕ್ನೋ: ಅಯೋಧ್ಯೆ ರಾಮಮಂದಿರದ ದೇಣಿಗೆಗೆ ಸಂಬಂಧಿಸಿದ ಆರೋಪಗಳ ವಿಚಾರವಾಗಿ ಕಾಂಗ್ರೆಸ್ ಹಾಗೂ ಸಮಾಜವಾದಿ ಪಕ್ಷದ ವಿರುದ್ಧ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ರಾಮಭಕ್ತರ ಮೇಲೆ ಗುಂಡು ಹಾರಿಸಿದವರು ಮತ್ತು ಶ್ರೀರಾಮನ ಅಸ್ತಿತ್ವವನ್ನೇ ಪ್ರಶ್ನಿಸಿದ್ದವರು ಇಂದು ಧರ್ಮದ ಬಗ್ಗೆ ಮಾತನಾಡುತ್ತಿರುವುದು ವಿಪರ್ಯಾಸ ಎಂದು ಟೀಕಿಸಿದ್ದಾರೆ.

ಖಾಸಗಿ ವಾಹಿನಿಯೊಂದರ ಕಾರ್ಯಕ್ರಮದಲ್ಲಿ ಮಾತನಾಡಿದ ಯೋಗಿ ಆದಿತ್ಯನಾಥ್, ರಾಮಮಂದಿರ ದೇಣಿಗೆಗೆ ಸಂಬಂಧಿಸಿದಂತೆ ಪ್ರತಿಪಕ್ಷಗಳು ಮಾಡುತ್ತಿರುವ ಭ್ರಷ್ಟಾಚಾರದ ಆರೋಪಗಳಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.

ಸಮಾಜವಾದಿ ಪಕ್ಷದ ಹಿಂದಿನ ಆಡಳಿತವನ್ನು ಉಲ್ಲೇಖಿಸಿದ ಅವರು, ರಾಮ ಜನ್ಮಭೂಮಿ ಚಳವಳಿಯ ವೇಳೆ ಕರಸೇವಕರ ಮೇಲೆ ಲಾಠಿಚಾರ್ಜ್ ನಡೆಸಿ, ಗುಂಡು ಹಾರಿಸಲು ಆದೇಶ ನೀಡಿದವರೇ ಇಂದು ಧರ್ಮದ ಬಗ್ಗೆ ಉಪದೇಶ ನೀಡುತ್ತಿದ್ದಾರೆ ಎಂದು ಆರೋಪಿಸಿದರು. ರಾಜಕೀಯ ಲಾಭ ಹಾಗೂ ಚುನಾವಣಾ ಅನಿವಾರ್ಯತೆಗಾಗಿ ಪ್ರತಿಪಕ್ಷಗಳು ತಮ್ಮ ನಿಲುವು ಬದಲಾಯಿಸುತ್ತಿವೆ ಎಂದು ಹೇಳಿದರು.

ಭಾರತದ ಅಸ್ಮಿತೆ ಮತ್ತು ಧಾರ್ಮಿಕ ನಂಬಿಕೆಗಳ ವಿರುದ್ಧ ಪ್ರತಿಪಕ್ಷಗಳು ನಿರಂತರವಾಗಿ ದಾಳಿ ನಡೆಸುತ್ತಿವೆ ಎಂದು ಆರೋಪಿಸಿದ ಯೋಗಿ, ತನಿಖೆ ಪೂರ್ಣಗೊಳ್ಳುವ ಮುನ್ನವೇ ಇಡೀ ರಾಮಮಂದಿರ ಟ್ರಸ್ಟ್‌ಗೆ ಕಳಂಕ ತರುವುದು, ಅಯೋಧ್ಯೆ ಹಾಗೂ ಶ್ರೀರಾಮನ ಪರಂಪರೆಯನ್ನು ಅವಮಾನಿಸುವುದು ಸರಿಯಲ್ಲ ಎಂದು ಪ್ರಶ್ನಿಸಿದರು.

ರಾಮಮಂದಿರ ದೇಣಿಗೆ ಪ್ರಕರಣದ ಕುರಿತು ರಾಜ್ಯ ಸರ್ಕಾರ ಈಗಾಗಲೇ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿದೆ ಎಂದು ತಿಳಿಸಿದ ಅವರು, ಯಾರ ಬಳಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಸಾಕ್ಷ್ಯಾಧಾರಗಳಿದ್ದರೂ ಅವನ್ನು ಎಸ್‌ಐಟಿಗೆ ಸಲ್ಲಿಸಬೇಕು ಎಂದು ಮನವಿ ಮಾಡಿದರು.

ತನಿಖಾ ವರದಿ ಬರುವವರೆಗೂ ರಾಮಭಕ್ತರ ಭಾವನೆಗಳಿಗೆ ಧಕ್ಕೆ ಉಂಟುಮಾಡುವ ರೀತಿಯ ಸುಳ್ಳು ವದಂತಿಗಳನ್ನು ಹರಡಬಾರದು ಎಂದು ಪ್ರತಿಪಕ್ಷಗಳಿಗೆ ಎಚ್ಚರಿಕೆ ನೀಡಿದ ಮುಖ್ಯಮಂತ್ರಿ, ತನಿಖೆಯಲ್ಲಿ ಯಾರೇ ತಪ್ಪಿತಸ್ಥರೆಂದು ಸಾಬೀತಾದರೂ ಅವರ ವಿರುದ್ಧ ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.

ಟೆಂಡರ್ ನಿಯಮ ಉಲ್ಲಂಘನೆ ಆರೋಪ: ಲೋಕೋಪಯೋಗಿ ಇಲಾಖೆಯ ಇಬ್ಬರು ಅಧಿಕಾರಿಗಳ ಅಮಾನತು

ಚಾಮರಾಜನಗರ: ರಸ್ತೆ ಕಾಮಗಾರಿಯಲ್ಲಿ ಟೆಂಡರ್ ನಿಯಮ ಉಲ್ಲಂಘನೆ, ಗುಣಮಟ್ಟ ಪರಿಶೀಲನೆ ನಡೆಸದೇ ಬಿಲ್ ಪಾವತಿಸಿರುವುದು ಸೇರಿದಂತೆ ಹಲವು ಅಕ್ರಮಗಳು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಲೋಕೋಪಯೋಗಿ ಇಲಾಖೆಯ ಇಬ್ಬರು ಅಧಿಕಾರಿಗಳನ್ನು ರಾಜ್ಯ ಸರ್ಕಾರ ಅಮಾನತುಗೊಳಿಸಿದೆ.

ಅಮಾನತುಗೊಂಡ ಅಧಿಕಾರಿಗಳಲ್ಲಿ ಹಿಂದಿನ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ (AEE) ಪುರುಷೋತ್ತಮ (ಪ್ರಸ್ತುತ ಆನೇಕಲ್ ಉಪ ವಿಭಾಗ) ಹಾಗೂ ಕೊಳ್ಳೇಗಾಲ ಉಪ ವಿಭಾಗದ ಪ್ರಸ್ತುತ ಎಇಇ ಎನ್. ಸುರೇಂದ್ರ ಕುಮಾರ್ ಸೇರಿದ್ದಾರೆ.

ಹನೂರು ತಾಲೂಕಿನ ಕೊರಮನಕತ್ರಿ–ಟಿಬೇಟಿಯನ್ ಸೆಟಲ್‌ಮೆಂಟ್ ಮಾರ್ಗದ 4.20 ಕಿಲೋಮೀಟರ್ ರಸ್ತೆ ಕಾಮಗಾರಿ ವೇಳೆ ಹಲವು ನಿಯಮಗಳನ್ನು ಉಲ್ಲಂಘಿಸಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ತನಿಖೆಯ ಪ್ರಕಾರ, ಪೂರ್ವಾನುಮೋದನೆ ಪಡೆಯದೇ ಟೆಂಡರ್ ಆಹ್ವಾನಿಸಿ ಅನುಮೋದನೆ ನೀಡಲಾಗಿದೆ. ಕಾಮಗಾರಿಯ ಗುಣಮಟ್ಟ ಪರೀಕ್ಷೆ ನಡೆಸಿಲ್ಲ. ಅಳತೆ ಪುಸ್ತಕದಲ್ಲಿನ ವಿವರಗಳು ಮತ್ತು ನೈಜ ಕಾಮಗಾರಿಯಲ್ಲಿ ವ್ಯತ್ಯಾಸ ಕಂಡುಬಂದಿದೆ. ಈ ಎಲ್ಲ ಲೋಪಗಳ ನಡುವೆಯೂ ಚಾಲ್ತಿ ಬಿಲ್ ಮೂಲಕ 88.83 ಲಕ್ಷ ರೂಪಾಯಿ ಪಾವತಿಸಲಾಗಿದೆ.

ಈ ಅಕ್ರಮಗಳಿಂದ ಸರ್ಕಾರಕ್ಕೆ ಆರ್ಥಿಕ ನಷ್ಟ ಉಂಟಾಗಿದೆ ಎಂದು ತನಿಖೆಯಲ್ಲಿ ದೃಢಪಟ್ಟ ಹಿನ್ನೆಲೆಯಲ್ಲಿ, ಕರ್ತವ್ಯ ಲೋಪ ಮತ್ತು ಟೆಂಡರ್ ನಿಯಮ ಉಲ್ಲಂಘನೆ ಆರೋಪದಡಿ ಇಬ್ಬರು ಅಧಿಕಾರಿಗಳನ್ನು ಅಮಾನತುಗೊಳಿಸಿ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಲಾಖಾ ಮಟ್ಟದಲ್ಲಿ ಮುಂದಿನ ತನಿಖೆಯೂ ಮುಂದುವರಿದಿದೆ.

CBSEಯಿಂದ 9-10ನೇ ತರಗತಿಗೆ ಹೊಸ ತ್ರಿಭಾಷಾ ನಿಯಮ: ಮೂರನೇ ಭಾಷೆಯಲ್ಲಿ ತೇರ್ಗಡೆ ಕಡ್ಡಾಯ

0

ನವದೆಹಲಿ: ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‌ಇ) 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ ಹೊಸ ತ್ರಿಭಾಷಾ ನೀತಿಯನ್ನು ಜಾರಿಗೊಳಿಸಿದ್ದು, ಹೊಸ ವ್ಯವಸ್ಥೆಯಡಿ ವಿದ್ಯಾರ್ಥಿಗಳು ಮೂರನೇ ಭಾಷೆಯ ಮೌಲ್ಯಮಾಪನದಲ್ಲಿ ಕಡ್ಡಾಯವಾಗಿ ತೇರ್ಗಡೆಯಾಗಬೇಕು ಎಂದು ಸೂಚಿಸಿದೆ. ಆದರೆ, ಈ ಮೌಲ್ಯಮಾಪನವು 2027–28ನೇ ಸಾಲಿನ 10ನೇ ತರಗತಿ ಬೋರ್ಡ್ ಪರೀಕ್ಷೆಯ ಭಾಗವಾಗಿರುವುದಿಲ್ಲ ಎಂದು ಮಂಡಳಿ ಸ್ಪಷ್ಟಪಡಿಸಿದೆ.

ಜುಲೈ 10ರಂದು ಈ ಕುರಿತು ಸುತ್ತೋಲೆ ಹೊರಡಿಸಿರುವ ಸಿಬಿಎಸ್‌ಇ, 10ನೇ ತರಗತಿಯಲ್ಲಿ R3 (ಮೂರನೇ ಭಾಷೆ) ಪರೀಕ್ಷೆಯಲ್ಲಿ ಅನುತ್ತೀರ್ಣರಾಗುವ ವಿದ್ಯಾರ್ಥಿಗಳಿಗೆ ಫಲಿತಾಂಶ ಪ್ರಕಟಿಸುವ ಮುನ್ನ ಮತ್ತೊಮ್ಮೆ ಮೌಲ್ಯಮಾಪನಕ್ಕೆ ಅವಕಾಶ ನೀಡಲಾಗುವುದು ಎಂದು ತಿಳಿಸಿದೆ.

ಹೊಸ ನಿಯಮದಂತೆ, ವಿದ್ಯಾರ್ಥಿಗಳು 8ನೇ ತರಗತಿಯಲ್ಲಿ ಕಲಿತಿದ್ದ ಮೂರು ಭಾಷೆಗಳನ್ನೇ 9ನೇ ತರಗತಿಯಲ್ಲೂ ಮುಂದುವರಿಸಬೇಕು. ಅವುಗಳಲ್ಲಿ ಒಂದನ್ನು R3 ಭಾಷೆಯಾಗಿ ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಈ ಸಂಬಂಧ ವಿದ್ಯಾರ್ಥಿಗಳು ಮತ್ತು ಶಾಲೆಗಳ ಅನುಕೂಲಕ್ಕಾಗಿ ಎನ್‌ಸಿಇಆರ್‌ಟಿ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ R3 ಭಾಷೆಯ ಕಲಿಕಾ ಸಂಪನ್ಮೂಲಗಳನ್ನು ಪ್ರಕಟಿಸಿದೆ.

ತ್ರಿಭಾಷಾ ನೀತಿಯ ಪ್ರಕಾರ ಪ್ರತಿಯೊಬ್ಬ ವಿದ್ಯಾರ್ಥಿಯೂ ಕಡ್ಡಾಯವಾಗಿ ಮೂರು ಭಾಷೆಗಳನ್ನು ಕಲಿಯಬೇಕು. ವಿಶೇಷ ವಿನಾಯಿತಿಗಳನ್ನು ಹೊರತುಪಡಿಸಿ, ಈ ಮೂರರಲ್ಲಿ ಕನಿಷ್ಠ ಎರಡು ಭಾಷೆಗಳು ಭಾರತೀಯ ಭಾಷೆಗಳಾಗಿರಬೇಕು. ಕನ್ನಡ, ಹಿಂದಿ, ಸಂಸ್ಕೃತ, ತಮಿಳು, ತೆಲುಗು ಸೇರಿದಂತೆ ಭಾರತೀಯ ಭಾಷೆಗಳನ್ನು ಈ ಪಟ್ಟಿಯಲ್ಲಿ ಸೇರಿಸಲಾಗಿದೆ. ಇಂಗ್ಲಿಷ್, ಫ್ರೆಂಚ್ ಹಾಗೂ ಜರ್ಮನ್ ಭಾಷೆಗಳನ್ನು ಭಾರತೀಯೇತರ ಭಾಷೆಗಳೆಂದು ಪರಿಗಣಿಸಲಾಗುತ್ತದೆ.

ಸಿಬಿಎಸ್‌ಇ ಸ್ಪಷ್ಟಪಡಿಸಿರುವಂತೆ, 2026–27ನೇ ಶೈಕ್ಷಣಿಕ ವರ್ಷದ 10ನೇ ತರಗತಿ ವಿದ್ಯಾರ್ಥಿಗಳಿಗೆ ಹಳೆಯ ನಿಯಮವೇ ಅನ್ವಯವಾಗಲಿದೆ. ಅವರು ಕೇವಲ ಎರಡು ಭಾಷೆಗಳನ್ನೇ ಕಲಿಯಲಿದ್ದು, ಮೂರನೇ ಭಾಷೆ ಕಡ್ಡಾಯವಾಗಿರುವುದಿಲ್ಲ.

ಮೂರನೇ ಭಾಷೆಯ (R3) ಮೌಲ್ಯಮಾಪನವನ್ನು ಶಾಲಾ ಮಟ್ಟದ ಆಂತರಿಕ ಪರೀಕ್ಷೆಗಳ ಮೂಲಕವೇ ನಡೆಸಲಾಗುತ್ತದೆ. ಈ ಬ್ಯಾಚ್‌ನ ವಿದ್ಯಾರ್ಥಿಗಳು 10ನೇ ತರಗತಿಗೆ ಬಂದಾಗ ಮೂರನೇ ಭಾಷೆಗೆ ಸಿಬಿಎಸ್‌ಇ ಬೋರ್ಡ್ ಪರೀಕ್ಷೆ ಇರುವುದಿಲ್ಲ ಎಂದು ಮಂಡಳಿ ತನ್ನ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದೆ.

ಸುರತ್ಕಲ್‌ನಲ್ಲಿ ವೈದ್ಯಕೀಯ ವಿದ್ಯಾರ್ಥಿನಿ ಆತ್ಮಹತ್ಯೆ: ಪೋಷಕರು ಮನೆಯಲ್ಲಿದ್ದ ವೇಳೆಯೇ 5ನೇ ಮಹಡಿಯಿಂದ ಹಾರಿ ಸಾವು

0

ಮಂಗಳೂರು: ಸುರತ್ಕಲ್‌ನಲ್ಲಿ ಖಾಸಗಿ ಅಪಾರ್ಟ್‌ಮೆಂಟ್‌ನಲ್ಲಿ ವಾಸವಿದ್ದ ದ್ವಿತೀಯ ವರ್ಷದ ಎಂಬಿಬಿಎಸ್ ವಿದ್ಯಾರ್ಥಿನಿಯೊಬ್ಬರು ಐದನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಮೃತ ವಿದ್ಯಾರ್ಥಿನಿಯನ್ನು ಹುಬ್ಬಳ್ಳಿ ಮೂಲದ 21 ವರ್ಷದ ಮಹಾಲಕ್ಷ್ಮೀ ಎಂದು ಗುರುತಿಸಲಾಗಿದೆ.

ಶ್ರೀನಿವಾಸ್ ವೈದ್ಯಕೀಯ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಮಹಾಲಕ್ಷ್ಮೀ, ಸುರತ್ಕಲ್‌ನ ಫ್ಲ್ಯಾಟ್‌ನಲ್ಲಿ ವಾಸವಾಗಿದ್ದರು. ಎರಡನೇ ಮಹಡಿಯ ಫ್ಲ್ಯಾಟ್‌ನಿಂದ ಹೊರಬಂದು ಐದನೇ ಮಹಡಿಗೆ ತೆರಳಿದ ಅವರು ಅಲ್ಲಿಂದ ಜಿಗಿದಿದ್ದಾರೆ. ಗಂಭೀರವಾಗಿ ಗಾಯಗೊಂಡ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಪ್ರಾಥಮಿಕ ತನಿಖೆಯಲ್ಲಿ ವಿದ್ಯಾರ್ಥಿನಿ ಈ ಹಿಂದೆ ಆತ್ಮಹತ್ಯೆಗೆ ಯತ್ನಿಸಿದ್ದ ಮಾಹಿತಿ ಲಭ್ಯವಾಗಿದೆ. ಆತ್ಮಹತ್ಯೆಗೆ ನಿಖರ ಕಾರಣ ಇನ್ನೂ ಬಹಿರಂಗವಾಗಿಲ್ಲ. ಆದರೆ ಮಾನಸಿಕ ಖಿನ್ನತೆಯ ಸಾಧ್ಯತೆ ಬಗ್ಗೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

ಘಟನೆ ನಡೆದ ವೇಳೆ ವಿದ್ಯಾರ್ಥಿನಿಯ ಪೋಷಕರು ಕೂಡ ಫ್ಲ್ಯಾಟ್‌ನಲ್ಲಿ ಇದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಎಲ್ಲ ಆಯಾಮಗಳಲ್ಲಿ ತನಿಖೆ ಮುಂದುವರಿಸಿದ್ದು, ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಘಟನೆಯನ್ನು ದೃಢಪಡಿಸಿದ್ದಾರೆ.

ಸಾಲ ಕೊಡಿಸುವ ನೆಪದಲ್ಲಿ ಬ್ಯಾಂಕ್ ಖಾತೆ ತೆರೆಯಿಸಿ ಕೋಟಿ ಕೋಟಿ ವ್ಯವಹಾರ: 6 ಮಂದಿ ಅರೆಸ್ಟ್

ಚಿಕ್ಕಮಗಳೂರು: ಬಡವರು ಮತ್ತು ಕೂಲಿ ಕಾರ್ಮಿಕರಿಗೆ ಸಾಲ ಕೊಡಿಸುವುದಾಗಿ ಆಮಿಷವೊಡ್ಡಿ ಅವರ ಹೆಸರಲ್ಲಿ ನಕಲಿ ಬ್ಯಾಂಕ್ ಖಾತೆಗಳನ್ನು ತೆರೆದು ಕೋಟಿ ಕೋಟಿ ರೂಪಾಯಿ ಅಕ್ರಮ ಹಣ ವರ್ಗಾವಣೆ ನಡೆಸಿದ ಬೃಹತ್ ಜಾಲವನ್ನು ಚಿಕ್ಕಮಗಳೂರು ಪೊಲೀಸರು ಭೇದಿಸಿದ್ದಾರೆ. ಪ್ರಕರಣದಲ್ಲಿ ಬ್ಯಾಂಕ್ ಸಿಬ್ಬಂದಿ, ಸ್ಥಳೀಯ ಮಧ್ಯವರ್ತಿಗಳು ಹಾಗೂ ಪ್ರಭಾವಿಗಳ ಪಾತ್ರದ ಬಗ್ಗೆ ತನಿಖೆ ತೀವ್ರಗೊಂಡಿದೆ.

ಆಧಾರ್ ಹಾಗೂ ವೈಯಕ್ತಿಕ ದಾಖಲೆಗಳನ್ನು ಪಡೆದು 2022-23ರ ಅವಧಿಯಲ್ಲಿ ಹಲವು ಖಾಸಗಿ ಬ್ಯಾಂಕ್‌ಗಳಲ್ಲಿ ನೂರಾರು ಖಾತೆಗಳನ್ನು ತೆರೆಯಲಾಗಿತ್ತು. ಈ ಖಾತೆಗಳ ಮೂಲಕ ಆನ್‌ಲೈನ್ ಕ್ರಿಕೆಟ್ ಬೆಟ್ಟಿಂಗ್ ಮತ್ತು ಇತರೆ ಅನುಮಾನಾಸ್ಪದ ಹಣಕಾಸು ವ್ಯವಹಾರಗಳಿಗೆ ಕೋಟ್ಯಂತರ ರೂಪಾಯಿ ವರ್ಗಾವಣೆಯಾಗಿರುವ ಶಂಕೆ ವ್ಯಕ್ತವಾಗಿದೆ. ಒಂದೊಂದು ಖಾತೆಯಲ್ಲೂ 20ರಿಂದ 30 ಲಕ್ಷ ರೂಪಾಯಿವರೆಗೆ ವಹಿವಾಟು ನಡೆದಿರುವುದು ತನಿಖೆಯಲ್ಲಿ ಪತ್ತೆಯಾಗಿದೆ.

ಬಂಧಿತ ಆರೋಪಿಗಳ ವಿಚಾರಣೆ ವೇಳೆ ಶಂಕರಪುರ ವಾರ್ಡ್‌ನ ಜೆಡಿಎಸ್ ನಗರಸಭೆ ಸದಸ್ಯ ಗೋಪಿ ಹೆಸರು ಕೇಳಿಬಂದಿದ್ದು, 50ಕ್ಕೂ ಹೆಚ್ಚು ಖಾತೆಗಳನ್ನು ಮಾಡಿಸಿಕೊಟ್ಟಿರುವ ಆರೋಪ ಕೇಳಿಬಂದಿದೆ. ಈ ಬೆಳವಣಿಗೆಯಿಂದ ಪ್ರಕರಣ ರಾಜಕೀಯ ಸ್ವರೂಪ ಪಡೆದುಕೊಂಡಿದೆ.

ಬಿಜೆಪಿ ಎಂಎಲ್ಸಿ ಸಿ.ಟಿ. ರವಿ ಪ್ರಕರಣದ ಹಿಂದೆ ಅಂತರರಾಜ್ಯ ಹಾಗೂ ಅಂತರರಾಷ್ಟ್ರೀಯ ಜಾಲ ಇರುವ ಶಂಕೆ ವ್ಯಕ್ತಪಡಿಸಿ, ಸಿಬಿಐ ಹಾಗೂ ಜಾರಿ ನಿರ್ದೇಶನಾಲಯ (ED) ಮೂಲಕ ಸಮಗ್ರ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.

ಪ್ರಕರಣ ಸಂಬಂಧ ಬ್ಯಾಂಕ್ ಅಧಿಕಾರಿಗಳು ಸೇರಿದಂತೆ ಏಳು ಮಂದಿಯ ವಿರುದ್ಧ CEN ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರು ಆರೋಪಿಗಳನ್ನು ಬಂಧಿಸಲಾಗಿದೆ. ಜಾಲದಲ್ಲಿ ಭಾಗಿಯಾಗಿರುವ ಇತರರು ಹಾಗೂ ಬ್ಯಾಂಕ್ ಸಿಬ್ಬಂದಿಯ ಪಾತ್ರದ ಕುರಿತು ತನಿಖೆ ಮುಂದುವರಿದಿದೆ.

‘ನಾವು ಅಪಾಯದಿಂದ ಪಾರಾಗಿದ್ದೇವೆ’… ಅದೇ ಕೊನೆಯ ಸಂದೇಶ! ಇರಾನ್ ದಾಳಿಯಲ್ಲಿ ಸಾವನ್ನಪ್ಪಿದ ಭಾರತೀಯ ನಾವಿಕನ ಮನಕಲಕುವ ಕಥೆ

0

ಟೆಹ್ರಾನ್: ಒಮಾನ್ ಕರಾವಳಿ ಸಮೀಪ ಹಾರ್ಮುಜ್ ಜಲಸಂಧಿಯಲ್ಲಿ ಸೈಪ್ರಸ್ ಧ್ವಜ ಹೊತ್ತ ವಾಣಿಜ್ಯ ಹಡಗಿನ ಮೇಲೆ ನಡೆದ ದಾಳಿಯಲ್ಲಿ ಮೃತಪಟ್ಟ ಭಾರತೀಯ ನಾವಿಕ ಹೆರಾಂಬ್ ಕರ್ಮಾರ್ಕರ್ ಅವರ ಕುಟುಂಬಕ್ಕೆ ಕಳುಹಿಸಿದ್ದ ಕೊನೆಯ ಸಂದೇಶ ಇದೀಗ ಮನಕಲಕುವ ಸಂಗತಿಯಾಗಿ ಹೊರಬಂದಿದೆ.

30 ವರ್ಷದ ಹೆರಾಂಬ್ ಕರ್ಮಾರ್ಕರ್, ದಾಳಿ ನಡೆಯುವ ಕೆಲವೇ ಕ್ಷಣಗಳ ಮೊದಲು “ನಾವು ಅಪಾಯದಿಂದ ಪಾರಾಗಿದ್ದೇವೆ. ಹಡಗು ಸುರಕ್ಷಿತವಾಗಿ ಕೊಲ್ಲಿಯನ್ನು ದಾಟಿದೆ” ಎಂದು ಕುಟುಂಬಕ್ಕೆ ಸಂದೇಶ ಕಳುಹಿಸಿದ್ದರು. ಆದರೆ ಅದಾದ ಕೆಲವೇ ಕ್ಷಣಗಳಲ್ಲಿ ಹಡಗು ದಾಳಿಗೆ ಒಳಗಾಗಿದ್ದು, ಇದೇ ಸಂದೇಶ ಕುಟುಂಬದೊಂದಿಗೆ ಅವರ ಕೊನೆಯ ಸಂಪರ್ಕವಾಗಿದೆ.

ಭಾನುವಾರ ಒಮಾನ್ ಕರಾವಳಿ ಸಮೀಪದ ಹಾರ್ಮುಜ್ ಜಲಸಂಧಿಯಲ್ಲಿ ‘ಜಿಎಫ್‌ಎಕ್ಸ್ ಗ್ಯಾಲಕ್ಸಿ’ ವಾಣಿಜ್ಯ ಹಡಗಿನ ಮೇಲೆ ದಾಳಿ ನಡೆದಿದ್ದು, ಹಡಗಿನಲ್ಲಿದ್ದ ಭಾರತೀಯ ಸಿಬ್ಬಂದಿಯ ಪೈಕಿ ಹೆರಾಂಬ್ ಕರ್ಮಾರ್ಕರ್ ಮೃತಪಟ್ಟಿದ್ದಾರೆ.

ಘಟನೆ ಕುರಿತು ಪ್ರತಿಕ್ರಿಯಿಸಿರುವ ಹೆರಾಂಬ್ ಅವರ ಮಾವ ವಿವೇಕ್ ಟಂಡನ್, “ಅವನಿಗೆ ಕೇವಲ 30 ವರ್ಷ ವಯಸ್ಸು. ಭಾರತ ಸರ್ಕಾರಕ್ಕೆ ನಮ್ಮ ಒಂದೇ ಮನವಿ, ಅವನ ಪಾರ್ಥಿವ ಶರೀರವನ್ನು ಸುರಕ್ಷಿತವಾಗಿ ಭಾರತಕ್ಕೆ ತಂದು ನಮಗೆ ಹಸ್ತಾಂತರಿಸಬೇಕು” ಎಂದು ಕಂಬನಿ ಮಿಡಿದಿದ್ದಾರೆ.

ಈ ದಾಳಿಯನ್ನು ಭಾರತ ತೀವ್ರವಾಗಿ ಖಂಡಿಸಿದ್ದು, ವಾಣಿಜ್ಯ ಹಡಗುಗಳ ಮೇಲಿನ ದಾಳಿಗಳು ಅಂತರರಾಷ್ಟ್ರೀಯ ಸಮುದ್ರ ಸುರಕ್ಷತೆಗೆ ಗಂಭೀರ ಬೆದರಿಕೆ ಎಂದು ಹೇಳಿದೆ.

ಹೆದ್ದಾರಿಯಲ್ಲೇ ಟಿವಿ-ಮ್ಯೂಸಿಕ್ ಹಾಕಿ ಅಟ್ಟಹಾಸ! ಕತ್ತಿ ತೋರಿಸಿ ಪೊಲೀಸರನ್ನೇ ಬೆದರಿಸಿದ ಯುವಕ ಅರೆಸ್ಟ್

0

ಉಡುಪಿ: ಕೋಟ ಸಮೀಪದ ರಾಷ್ಟ್ರೀಯ ಹೆದ್ದಾರಿ-66ರಲ್ಲಿ ಯುವಕನೊಬ್ಬ ಟೇಬಲ್, ಟಿವಿ ಹಾಗೂ ಮ್ಯೂಸಿಕ್ ಸಿಸ್ಟಮ್ ಅಳವಡಿಸಿ ಸಂಚಾರ ತಡೆದು ಅಟ್ಟಹಾಸ ಮೆರೆದ ಘಟನೆ ನಡೆದಿದೆ. ಪರಿಸ್ಥಿತಿ ನಿಯಂತ್ರಿಸಲು ಬಂದ ಪೊಲೀಸರ ಮೇಲೆಯೂ ಕತ್ತಿ ಬೀಸಿ ಬೆದರಿಕೆ ಹಾಕಿದ ಆರೋಪದಡಿ ಯುವಕನನ್ನು ಬಂಧಿಸಲಾಗಿದೆ.

ಬೆಲ್ಲದ ಗಣಪತಿ ದೇವಸ್ಥಾನ ಸಮೀಪದ ನಿವಾಸಿ ರಂಜಿತ್ ಸೋಮಯಾಜಿ (25) ಹೆದ್ದಾರಿಯಲ್ಲೇ ಟೇಬಲ್ ಇಟ್ಟು ಟಿವಿ ಹಾಗೂ ಸೌಂಡ್ ಸಿಸ್ಟಮ್ ಮೂಲಕ ಜೋರಾಗಿ ಹಾಡುಗಳನ್ನು ಪ್ರಸಾರ ಮಾಡುತ್ತ ವಾಹನಗಳ ಸಂಚಾರಕ್ಕೆ ಅಡ್ಡಿಪಡಿಸಿದ್ದಾನೆ. ಪರಿಣಾಮ ಕೆಲಕಾಲ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳ ಸಾಲು ನಿರ್ಮಾಣವಾಗಿ ಸಾರ್ವಜನಿಕರು ಭಯಭೀತರಾಗಿದ್ದರು.

ಪೊಲೀಸರು ಸ್ಥಳಕ್ಕೆ ಆಗಮಿಸಿ ಮನವೊಲಿಸಲು ಮುಂದಾದ ವೇಳೆ ರಂಜಿತ್ ತನ್ನ ಬಳಿಯಿದ್ದ ಕತ್ತಿಯನ್ನು ಹೊರತೆಗೆದು ಪೊಲೀಸರ ಮೇಲೆಯೇ ಹಲ್ಲೆಗೆ ಮುಂದಾಗಿದ್ದಾನೆ ಎಂದು ತಿಳಿದುಬಂದಿದೆ. ಬಳಿಕ ಪೊಲೀಸರು ಆತನನ್ನು ನಿಯಂತ್ರಣಕ್ಕೆ ತೆಗೆದುಕೊಂಡು ಬಂಧಿಸಿದ್ದಾರೆ.

ಪ್ರಾಥಮಿಕ ವಿಚಾರಣೆಯಲ್ಲಿ ಯುವಕ ಮಾನಸಿಕ ಅಸ್ವಸ್ಥನಾಗಿರುವ ಸಾಧ್ಯತೆ ಬಗ್ಗೆ ಅನುಮಾನ ವ್ಯಕ್ತವಾಗಿದ್ದರೂ, ಕುಟುಂಬಸ್ಥರು ಯಾವುದೇ ವೈದ್ಯಕೀಯ ದಾಖಲೆಗಳನ್ನು ಸಲ್ಲಿಸದ ಹಿನ್ನೆಲೆಯಲ್ಲಿ ಪೊಲೀಸರು ಅಧಿಕೃತ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.

ಘಟನೆಯ ಸಂಪೂರ್ಣ ದೃಶ್ಯ ಸ್ಥಳೀಯರ ಮೊಬೈಲ್‌ನಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಸಾವಿನ ಕ್ಷಣ ಕ್ಯಾಮೆರಾದಲ್ಲಿ ಸೆರೆ! ಭೀಕರ ಅಪಘಾತದ ಕ್ಷಣದ ವಿಡಿಯೊ ವೈರಲ್

0

ಗದಗ: ಜಿಲ್ಲೆಯ ನರಗುಂದ ತಾಲೂಕಿನ ಭೈರನಹಟ್ಟಿ ಗ್ರಾಮದ ಬಳಿ ಜುಲೈ 12ರಂದು ಸಂಭವಿಸಿದ್ದ ಭೀಕರ ರಸ್ತೆ ಅಪಘಾತದ ಬೆಚ್ಚಿಬೀಳಿಸುವ ದೃಶ್ಯ ಇದೀಗ ಬೆಳಕಿಗೆ ಬಂದಿದೆ. ಅಪಘಾತ ಸಂಭವಿಸಿದ ಕ್ಷಣ ಎದುರುಗಡೆಯಿಂದ ಬರುತ್ತಿದ್ದ ಲಾರಿಯಲ್ಲಿ ಅಳವಡಿಸಲಾಗಿದ್ದ ಡ್ಯಾಶ್‌ಕ್ಯಾಮ್‌ನಲ್ಲಿ ಸೆರೆಯಾಗಿದ್ದು, ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಧಾರವಾಡದಿಂದ ಬಾಗಲಕೋಟೆ ಜಿಲ್ಲೆಯ ನೀರಲಗಿ ಗ್ರಾಮಕ್ಕೆ ಕಾರಿನಲ್ಲಿ ತೆರಳುತ್ತಿದ್ದ ಧಾರವಾಡ ಕಾರಾಗೃಹದ ವಾರ್ಡರ್ ಸಂಗಪ್ಪ ಮಜ್ಜಗಿ (41) ಅವರು ಟ್ರ್ಯಾಕ್ಟರ್‌ನ್ನು ಓವರ್‌ಟೇಕ್ ಮಾಡುವ ವೇಳೆ ಕಾರಿನ ಮೇಲಿನ ನಿಯಂತ್ರಣ ಕಳೆದುಕೊಂಡು ಎದುರುಗಡೆಯಿಂದ ಬರುತ್ತಿದ್ದ ಲಾರಿಗೆ ಭೀಕರವಾಗಿ ಡಿಕ್ಕಿ ಹೊಡೆದಿದ್ದಾರೆ.

ಅಪಘಾತದ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಸಂಗಪ್ಪ ಮಜ್ಜಗಿ ಸ್ಥಳದಲ್ಲೇ ಮೃತಪಟ್ಟಿದ್ದರು. ಕಾರಿನೊಳಗೆ ಸಿಲುಕಿಕೊಂಡಿದ್ದ ಅವರನ್ನು ಹೊರತೆಗೆಯಲು ಸ್ಥಳೀಯರು ಹಾಗೂ ರಕ್ಷಣಾ ಸಿಬ್ಬಂದಿ ಹರಸಾಹಸ ಪಟ್ಟಿದ್ದರು.

ಲಾರಿಯ ಡ್ಯಾಶ್‌ಕ್ಯಾಮ್‌ನಲ್ಲಿ ಅಪಘಾತದ ಸಂಪೂರ್ಣ ದೃಶ್ಯ ಸೆರೆಯಾಗಿದ್ದು, ಟ್ರ್ಯಾಕ್ಟರ್‌ನ್ನು ಹಿಂದಿಕ್ಕುವ ವೇಳೆ ಕಾರು ನಿಯಂತ್ರಣ ತಪ್ಪಿ ನೇರವಾಗಿ ಲಾರಿಗೆ ಡಿಕ್ಕಿ ಹೊಡೆಯುವ ದೃಶ್ಯ ಎದೆ ಝಲ್ಲೆನಿಸುವಂತಿದೆ. ಈ ವಿಡಿಯೊ ತನಿಖೆಗೆ ಮಹತ್ವದ ಸಾಕ್ಷ್ಯವಾಗಿದ್ದು, ಅಪಘಾತದ ನಿಖರ ಕಾರಣ ಪತ್ತೆಗೆ ನೆರವಾಗುವ ಸಾಧ್ಯತೆ ಇದೆ.

ಮೃತ ಸಂಗಪ್ಪ ಮಜ್ಜಗಿ ಅವರು ಧಾರವಾಡ ಕಾರಾಗೃಹದಲ್ಲಿ ವಾರ್ಡರ್ ಆಗಿ ಸೇವೆ ಸಲ್ಲಿಸುತ್ತಿದ್ದು, ಸ್ವಗ್ರಾಮ ನೀರಲಗಿಗೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಪ್ರಕರಣ ನರಗುಂದ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.