Home Blog

ED ಪ್ರೆಸ್ ನೋಟ್ʼನಲ್ಲಿ ‘ಶಂಕೆ’ ಎಂದಷ್ಟೇ ಉಲ್ಲೇಖ, ನೋಟಿಸ್ ಕೊಡಲಿ, ಎಲ್ಲದಕ್ಕೂ ದಾಖಲೆ ಸಮೇತ ಉತ್ತರಿಸುತ್ತೇವೆ: ಸತೀಶ್ ಜಾರಕಿಹೊಳಿ

0

ಬೆಂಗಳೂರು: ಆಫ್ರಿಕಾದ ಚಿನ್ನದ ಗಣಿಗಾರಿಕೆ ಸಂಸ್ಥೆಯಲ್ಲಿ ಶೇ.40ರಷ್ಟು ಪಾಲು ಇದೆ ಎಂದು ಇಡಿ ಹೇಳಿರುವುದಕ್ಕೆ ಸಚಿವ ಸತೀಶ್ ಜಾರಕಿಹೊಳಿ ತಿರುಗೇಟು ನೀಡಿದ್ದಾರೆ. ತಮ್ಮ ಬಳಿ ಅಥವಾ ತಮ್ಮ ಕುಟುಂಬದ ಬಳಿ ಆಫ್ರಿಕಾದ ಚಿನ್ನದ ಗಣಿಗಳಲ್ಲಿ ಪಾಲು ಇದೆ ಎಂಬುದಕ್ಕೆ ಇಡಿ ಬಳಿ ದಾಖಲೆಗಳಿದ್ದರೆ ಅದನ್ನು ಸಾಬೀತುಪಡಿಸಲಿ ಎಂದು ಹೇಳಿದ್ದಾರೆ.

ಬೆಂಗಳೂರು ನಿವಾಸದ ಬಳಿ ಮಾತನಾಡಿದ ಸತೀಶ್ ಜಾರಕಿಹೊಳಿ, ಇಡಿ ಮಾಧ್ಯಮ ಪ್ರಕಟಣೆಯಲ್ಲಿ ಹೂಡಿಕೆ ಹಾಗೂ ಪಿಡಬ್ಲ್ಯುಡಿ ಇಲಾಖೆಗೆ ಸಂಬಂಧಿಸಿದ ಅಂಶಗಳನ್ನು ಮಾತ್ರ ಉಲ್ಲೇಖಿಸಲಾಗಿದೆ ಎಂದರು. ಇಡಿ ನೋಟಿಸ್ ನೀಡಿದರೆ ತಾವು ಹಾಜರಾಗಿ ಅಗತ್ಯ ದಾಖಲೆಗಳನ್ನು ಸಲ್ಲಿಸಿ ಎಲ್ಲದಕ್ಕೂ ಸ್ಪಷ್ಟೀಕರಣ ನೀಡುವುದಾಗಿ ಹೇಳಿದರು.

ಇಡಿ ಹೊರಡಿಸಿರುವ ಪ್ರೆಸ್ ನೋಟ್‌ನಲ್ಲೇ ‘ಶಂಕೆ’ ಎಂದು ಉಲ್ಲೇಖಿಸಲಾಗಿದೆ. ಹೀಗಾಗಿ ಪ್ರಕರಣ ಇನ್ನೂ ಅಂತಿಮವಾಗಿಲ್ಲ. ಇಡಿ ನೋಟಿಸ್ ನೀಡಿ ವಿಚಾರಣೆಗೆ ಕರೆದರೆ ಹೋಗಿ ಎಲ್ಲಾ ಪ್ರಶ್ನೆಗಳಿಗೂ ಉತ್ತರ ನೀಡುತ್ತೇವೆ ಎಂದು ಸತೀಶ್ ಜಾರಕಿಹೊಳಿ ಹೇಳಿದರು.

ಪಿಡಬ್ಲ್ಯುಡಿ ಇಲಾಖೆಯಲ್ಲಿ ಲಂಚ ಪಡೆದ ಆರೋಪದ ಕುರಿತು ಪ್ರತಿಕ್ರಿಯಿಸಿದ ಅವರು, ಇಡಿ ಕೇವಲ ಶಂಕೆ ವ್ಯಕ್ತಪಡಿಸಿದೆ. ಮೊದಲು ವಿಚಾರಣೆ ನಡೆಯಲಿ, ಬಳಿಕ ಸತ್ಯಾಸತ್ಯತೆ ತಿಳಿಯಲಿದೆ. ವಿಚಾರಣೆಗೆ ಹಾಜರಾಗಿ ಅಗತ್ಯ ಸ್ಪಷ್ಟೀಕರಣ ನೀಡುತ್ತೇವೆ ಎಂದರು.

ಇಡಿ ಪ್ರೆಸ್ ನೋಟ್‌ನಿಂದ ರಾಜಕೀಯವಾಗಿ ಹಾನಿಯಾಗುತ್ತದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸತೀಶ್ ಜಾರಕಿಹೊಳಿ, ಸಾಮಾನ್ಯವಾಗಿ ಇಂತಹ ಆರೋಪಗಳಿಂದ ಹಾನಿಯಾಗುತ್ತದೆ. ಆದರೆ ಇಡಿ ಸ್ವತಃ ‘ಶಂಕೆ’ ಎಂದು ಹೇಳಿರುವುದರಿಂದ ಮುಂದಿನ ಬೆಳವಣಿಗೆಗಳನ್ನು ನೋಡೋಣ ಎಂದರು. ‘ಇಡಿಗಿಂತ ಮೊದಲು ಪಬ್ಲಿಕ್ ನಮ್ಮ ನ್ಯಾಯಾಲಯ’ ಎಂದು ಹೇಳಿದರು.

ಇನ್ನು ಇಡಿಗೆ ದೂರು ನೀಡಿದವರ ಬಗ್ಗೆ ಮಾತನಾಡಿದ ಅವರು, ದೂರು ನೀಡಿರುವವರು ಯಾರು ಎಂಬುದು ತಮಗೆ ಗೊತ್ತಿದೆ. ಈ ವಿಚಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿದ್ದೇನೆ. ಮುಖ್ಯಮಂತ್ರಿಗಳು ಈ ಬಗ್ಗೆ ನೋಡಿಕೊಳ್ಳುತ್ತಾರೆ ಎಂದರು. ದೂರುದಾರರಿಗೆ ಕಾಂಗ್ರೆಸ್‌ನೊಂದಿಗೆ ಸಂಬಂಧವಿರುವುದಷ್ಟೇ, ಅವರ ಮತಗಳು ಬಿಜೆಪಿಯಲ್ಲಿವೆ ಎಂದು ಸತೀಶ್ ಜಾರಕಿಹೊಳಿ ಪ್ರತಿಕ್ರಿಯಿಸಿದರು.

ಭದ್ರವಾಹ್ʼನಲ್ಲಿ ಜೈಶ್ ಉಗ್ರ ಸಂಘಟನೆಗೆ ಬಿಗ್ ಶಾಕ್; ಕಮಾಂಡರ್ ಹತ್ಯೆ, ಎಂ4 ರೈಫಲ್ ಪತ್ತೆ

0

ಜಮ್ಮು: ಜಮ್ಮು-ಕಾಶ್ಮೀರದ ದೋಡಾ ಜಿಲ್ಲೆಯ ಭದ್ರವಾಹ್‌ನ ಸೆವೋಜ್‌ಧಾರ್ ಪ್ರದೇಶದಲ್ಲಿ ಭದ್ರತಾ ಪಡೆಗಳು ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ ಜೈಶ್-ಎ-ಮೊಹಮ್ಮದ್ ಸಂಘಟನೆಯ ಪಾಕಿಸ್ತಾನಿ ಉಗ್ರ ಕಮಾಂಡರ್ ಯಾಸಿರ್ ಹತನಾಗಿರುವುದು ಪತ್ತೆಯಾಗಿದೆ.

ಸೆವೋಜ್‌ಧಾರ್ ಅರಣ್ಯ ಪ್ರದೇಶದಲ್ಲಿ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಯಾಸಿರ್‌ನ ಮೃತದೇಹ ಪತ್ತೆಯಾಗಿದೆ. ಎಸ್‌ಒಜಿ ದೋಡಾ, ರಾಷ್ಟ್ರೀಯ ರೈಫಲ್ಸ್ ಹಾಗೂ ಸಿಆರ್‌ಪಿಎಫ್ ತಂಡಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸಿವೆ.

ಮೃತದೇಹದ ಬಳಿಯಿಂದ ಅಮೆರಿಕ ನಿರ್ಮಿತ ಎಂ4 ರೈಫಲ್ ಸೇರಿದಂತೆ ಶಸ್ತ್ರಾಸ್ತ್ರಗಳನ್ನು ಭದ್ರತಾ ಪಡೆಗಳು ವಶಪಡಿಸಿಕೊಂಡಿವೆ. ಮೃತದೇಹ ಹಾಗೂ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆದಿರುವ ಭದ್ರತಾ ಪಡೆಗಳು ಮುಂದಿನ ತನಿಖೆ ಆರಂಭಿಸಿದ್ದು, ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ಮುಂದುವರಿದಿದೆ.

ಯಾಸಿರ್‌ನನ್ನು ಸೆಪ್ಟೆಂಬರ್ 5ರಂದು ಮಧ್ಯ ಕಾಶ್ಮೀರದ ಬದ್ಗಾಮ್ ಜಿಲ್ಲೆಯ ಅಶ್ದರ್ ಗಲಿ ಪ್ರದೇಶದಲ್ಲಿ ನಡೆದ ‘ಆಪರೇಷನ್ ಅಶ್ದರ್’ ಕಾರ್ಯಾಚರಣೆಯಲ್ಲಿ ಹತ್ಯೆ ಮಾಡಲಾಗಿತ್ತು. ಈ ಕಾರ್ಯಾಚರಣೆಯಲ್ಲಿ ಭಾರತೀಯ ಸೇನೆಯ ಚಿನಾರ್ ಕಾರ್ಪ್ಸ್, ಜಮ್ಮು-ಕಾಶ್ಮೀರ ಪೊಲೀಸ್ ಹಾಗೂ ಸಿಆರ್‌ಪಿಎಫ್ ತಂಡಗಳು ಭಾಗವಹಿಸಿದ್ದವು.

ಆ ಕಾರ್ಯಾಚರಣೆಯ ವೇಳೆ ಎಕೆ ರೈಫಲ್ ಸೇರಿದಂತೆ ಹಲವು ಯುದ್ಧೋಪಕರಣಗಳನ್ನು ಭದ್ರತಾ ಪಡೆಗಳು ವಶಪಡಿಸಿಕೊಂಡಿದ್ದವು. ಇದೀಗ ಯಾಸಿರ್‌ನ ಸ್ಥಳೀಯ ಸಂಪರ್ಕಗಳು ಹಾಗೂ ಆತನ ಚಟುವಟಿಕೆಗಳ ಕುರಿತು ಭದ್ರತಾ ಸಂಸ್ಥೆಗಳು ತನಿಖೆ ನಡೆಸುತ್ತಿವೆ.

ಮಹಿಳಾ ಏಷ್ಯಾಕಪ್ ಫೈನಲ್ʼನಲ್ಲಿ ಭಾರತ-ಶ್ರೀಲಂಕಾ ಕದನ: ಗೆದ್ದರೂ ಟೀಂ ಇಂಡಿಯಾಗೆ ಟ್ರೋಫಿ ಸಿಗಲ್ಲ, ಕಾರಣವೇನು?

0

2026ರ ಮಹಿಳಾ ಟಿ20 ಏಷ್ಯಾಕಪ್ ಫೈನಲ್‌ನಲ್ಲಿ ಭಾರತ ಮತ್ತು ಶ್ರೀಲಂಕಾ ತಂಡಗಳು ಮುಖಾಮುಖಿಯಾಗಲಿವೆ. ಸೆಪ್ಟೆಂಬರ್ 13ರಂದು ನಡೆಯಲಿರುವ ಈ ಮಹತ್ವದ ಪಂದ್ಯದಲ್ಲಿ ಗೆದ್ದು ಚಾಂಪಿಯನ್ ಪಟ್ಟಕ್ಕೇರುವ ಗುರಿಯನ್ನು ಎರಡೂ ತಂಡಗಳು ಹೊಂದಿವೆ. ಅದರಲ್ಲೂ ಕಳೆದ ಆವೃತ್ತಿಯ ಫೈನಲ್‌ನಲ್ಲಿ ಶ್ರೀಲಂಕಾ ವಿರುದ್ಧ ಅನುಭವಿಸಿದ್ದ ಸೋಲಿಗೆ ಸೇಡು ತೀರಿಸಿಕೊಳ್ಳಲು ಟೀಂ ಇಂಡಿಯಾ ಸಜ್ಜಾಗಿದೆ.

ಟೂರ್ನಿಯ ಮೊದಲ ಸೆಮಿಫೈನಲ್‌ನಲ್ಲಿ ಬಾಂಗ್ಲಾದೇಶವನ್ನು ಮಣಿಸಿದ ಭಾರತ ಅಜೇಯವಾಗಿ ಫೈನಲ್ ಪ್ರವೇಶಿಸಿದೆ. ಮತ್ತೊಂದೆಡೆ, ಎರಡನೇ ಸೆಮಿಫೈನಲ್‌ನಲ್ಲಿ ಪಾಕಿಸ್ತಾನವನ್ನು ಸೋಲಿಸಿದ ಆತಿಥೇಯ ಶ್ರೀಲಂಕಾ ಕೂಡ ಅಜೇಯವಾಗಿ ಪ್ರಶಸ್ತಿ ಸುತ್ತಿಗೆ ಲಗ್ಗೆ ಇಟ್ಟಿದೆ.

ಕಳೆದ ಆವೃತ್ತಿಯ ಏಷ್ಯಾಕಪ್ ಫೈನಲ್‌ನಲ್ಲೂ ಭಾರತ ಮತ್ತು ಶ್ರೀಲಂಕಾ ತಂಡಗಳೇ ಮುಖಾಮುಖಿಯಾಗಿದ್ದವು. ಆ ಪಂದ್ಯದಲ್ಲಿ ಭಾರತವನ್ನು ಮಣಿಸಿದ್ದ ಶ್ರೀಲಂಕಾ ಚಾಂಪಿಯನ್ ಆಗಿತ್ತು. ಹೀಗಾಗಿ ಈ ಬಾರಿ ಶ್ರೀಲಂಕಾವನ್ನು ಸೋಲಿಸಿ ಪ್ರಶಸ್ತಿ ಗೆಲ್ಲುವ ಮೂಲಕ ಹಿಂದಿನ ಸೋಲಿಗೆ ಸೇಡು ತೀರಿಸಿಕೊಳ್ಳುವ ಉದ್ದೇಶದಲ್ಲಿ ಹರ್ಮನ್‌ಪ್ರೀತ್ ಕೌರ್ ಪಡೆ ಕಣಕ್ಕಿಳಿಯಲಿದೆ.

ಆದರೆ ಈ ಫೈನಲ್‌ನಲ್ಲಿ ಭಾರತ ಗೆದ್ದರೂ ಟ್ರೋಫಿ ಹಾಗೂ ಬಹುಮಾನದ ಹಣವನ್ನು ತಂಡ ತನ್ನಲ್ಲೇ ಉಳಿಸಿಕೊಳ್ಳುವುದಿಲ್ಲ ಎಂಬುದು ಗಮನಾರ್ಹ. ಬಿಸಿಸಿಐ ಹಲವು ವರ್ಷಗಳಿಂದ ಅನುಸರಿಸಿಕೊಂಡು ಬರುತ್ತಿರುವ ಸಂಪ್ರದಾಯದಂತೆ, ಏಷ್ಯನ್ ಕ್ರಿಕೆಟ್ ಕೌನ್ಸಿಲ್‌ನಿಂದ ಲಭಿಸುವ ಬಹುಮಾನದ ಮೊತ್ತವನ್ನು ಏಷ್ಯಾದ ಇತರ ಕ್ರಿಕೆಟ್ ಮಂಡಳಿಗಳ ಅಭಿವೃದ್ಧಿಗಾಗಿ ನೀಡುವ ಸಾಧ್ಯತೆಯಿದೆ.

ಇನ್ನು ಟ್ರೋಫಿ ವಿಚಾರದಲ್ಲೂ ವಿಶೇಷ ಬೆಳವಣಿಗೆ ನಡೆದಿದೆ. ಏಷ್ಯನ್ ಕ್ರಿಕೆಟ್ ಕೌನ್ಸಿಲ್‌ನ ಅಧ್ಯಕ್ಷರಾಗಿರುವ ಪಾಕಿಸ್ತಾನದ ಮೊಹ್ಸಿನ್ ನಖ್ವಿ ಅವರಿಂದ ಟ್ರೋಫಿ ಸ್ವೀಕರಿಸುವ ವಿಚಾರದಲ್ಲಿ ಭಾರತೀಯ ತಂಡದ ನಿಲುವು ಕುತೂಹಲ ಮೂಡಿಸಿದೆ.

ಇತ್ತೀಚೆಗೆ ನಡೆದ ಪುರುಷರ ಏಷ್ಯಾಕಪ್‌ನಲ್ಲಿ ಭಾರತ ತಂಡ ನಖ್ವಿ ಅವರಿಂದ ಟ್ರೋಫಿ ಸ್ವೀಕರಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಮಹಿಳಾ ತಂಡವೂ ಇದೇ ನಿಲುವನ್ನು ಮುಂದುವರಿಸುವ ಸಾಧ್ಯತೆ ಇದೆ. ಹೀಗಾಗಿ ಭಾರತ ಚಾಂಪಿಯನ್ ಆದರೂ ಪ್ರಶಸ್ತಿ ಟ್ರೋಫಿಯನ್ನು ನಖ್ವಿ ಅವರಿಂದ ಸ್ವೀಕರಿಸದೇ ಇರುವ ಸಾಧ್ಯತೆಗಳು ಹೆಚ್ಚಿವೆ.

ಒಟ್ಟಿನಲ್ಲಿ ಸೆಪ್ಟೆಂಬರ್ 13ರಂದು ನಡೆಯಲಿರುವ ಭಾರತ-ಶ್ರೀಲಂಕಾ ಫೈನಲ್ ಕೇವಲ ಪ್ರಶಸ್ತಿ ಕದನವಷ್ಟೇ ಅಲ್ಲದೆ, ಹಿಂದಿನ ಸೋಲಿಗೆ ಸೇಡು ತೀರಿಸಿಕೊಳ್ಳುವ ಪಂದ್ಯವಾಗಿಯೂ ಕುತೂಹಲ ಮೂಡಿಸಿದೆ.

ಗಣೇಶ ಚತುರ್ಥಿ: ಸೆ.14ರಂದು ಬೆಂಗಳೂರಿನಲ್ಲಿ ಮಾಂಸ ಮಾರಾಟಕ್ಕೆ ಸಂಪೂರ್ಣ ನಿಷೇಧ!

0

ಬೆಂಗಳೂರು: ಗಣೇಶ ಚತುರ್ಥಿ ಹಬ್ಬದ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 14ರಂದು ಜಿಬಿಎ (GBA) ವ್ಯಾಪ್ತಿಯಲ್ಲಿ ಮಾಂಸ ಮಾರಾಟ ಮತ್ತು ಪ್ರಾಣಿವಧೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಗಣೇಶ ಚತುರ್ಥಿ ಹಬ್ಬದ ಪ್ರಯುಕ್ತ ಸೋಮವಾರ, ಸೆಪ್ಟೆಂಬರ್ 14ರಂದು ನಗರದ ಕಸಾಯಿಖಾನೆಗಳಲ್ಲಿ ಪ್ರಾಣಿವಧೆ ನಡೆಸುವಂತಿಲ್ಲ. ಇದರ ಜೊತೆಗೆ ಮಾಂಸದ ಅಂಗಡಿಗಳು ಹಾಗೂ ಮಳಿಗೆಗಳಲ್ಲೂ ಮಾಂಸ ಮಾರಾಟಕ್ಕೆ ನಿರ್ಬಂಧ ವಿಧಿಸಲಾಗಿದೆ.

ಹೀಗಾಗಿ ಸೆಪ್ಟೆಂಬರ್ 14ರಂದು ಜಿಬಿಎ ವ್ಯಾಪ್ತಿಯ ಎಲ್ಲಾ ಪ್ರದೇಶಗಳಲ್ಲಿ ಮಾಂಸ ಮಾರಾಟ ಮತ್ತು ಪ್ರಾಣಿವಧೆ ಸಂಪೂರ್ಣ ಬಂದ್ ಆಗಲಿದೆ. ಗಣೇಶ ಚತುರ್ಥಿ ಹಬ್ಬದ ಹಿನ್ನೆಲೆಯಲ್ಲಿ ಜಿಬಿಎ ವ್ಯಾಪ್ತಿಯಲ್ಲಿ ಈ ನಿರ್ಬಂಧ ಜಾರಿಗೊಳಿಸಲಾಗಿದ್ದು, ಮಾಂಸ ಮಾರಾಟ ಮಾಡುವ ಅಂಗಡಿಗಳು ಹಾಗೂ ಕಸಾಯಿಖಾನೆಗಳು ನಿಯಮ ಪಾಲಿಸುವಂತೆ ಸೂಚಿಸಲಾಗಿದೆ.

ಮೋದಿಯವರೇ ಹೊರಗಡೆ ಹೋಗಿ ಹೂಡಿಕೆ ಮಾಡಿ ಅಂತಾರೆ, ಜಾರಕಿಹೊಳಿ ಅದನ್ನೇ ಮಾಡಿದ್ದಾರೆ: ಪ್ರಿಯಾಂಕ್‌ ಖರ್ಗೆ ಹೇಳಿದ್ದೇನು?

0

ಬೆಂಗಳೂರು: ಸಚಿವ ಸತೀಶ್ ಜಾರಕಿಹೊಳಿ ಅವರ ವಿದೇಶಿ ಹೂಡಿಕೆ ವಿಚಾರವಾಗಿ ಜಾರಿ ನಿರ್ದೇಶನಾಲಯ (ಇಡಿ) ಹೊರಡಿಸಿರುವ ಪತ್ರಿಕಾ ಪ್ರಕಟಣೆಗೆ ಗೃಹಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಭಾರತೀಯರು ವಿದೇಶಗಳಲ್ಲೂ ಹೂಡಿಕೆ ಮಾಡುವಂತೆ ಹೇಳುತ್ತಾರೆ. ಸತೀಶ್ ಜಾರಕಿಹೊಳಿ ಅವರು ಅದನ್ನೇ ಮಾಡಿದ್ದಾರೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇಡಿ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ಮುಂದಿನ ತನಿಖೆ ನಡೆಯಬೇಕು ಎಂದು ಹೇಳಿದೆ. ಇದು ಕೇವಲ ಆರೋಪವಾಗಿದ್ದು, ಸಾಕ್ಷ್ಯ ಸಿಕ್ಕಿದೆ ಎಂದು ಹೇಳಲಾಗಿದೆಯಾದರೂ ಯಾವ ಸಾಕ್ಷ್ಯ ಸಿಕ್ಕಿದೆ ಎಂಬುದನ್ನು ಸ್ಪಷ್ಟಪಡಿಸಿಲ್ಲ ಎಂದು ಪ್ರಶ್ನಿಸಿದರು.

ಇಡಿ ನಡೆಸಿರುವ ದಾಳಿಗಳ ಕುರಿತು ಮಾತನಾಡಿದ ಪ್ರಿಯಾಂಕ್ ಖರ್ಗೆ, ಇಂತಹ 196 ದಾಳಿಗಳ ಬಗ್ಗೆ ತಾವು ಈ ಹಿಂದೆ ಅಂಕಿ-ಅಂಶ ನೀಡಿದ್ದಾಗಿ ಹೇಳಿದರು. ಆದರೆ ಈ ಪೈಕಿ ಕೇವಲ ಎರಡು ಪ್ರಕರಣಗಳಲ್ಲಿ ಮಾತ್ರ ಶಿಕ್ಷೆಯಾಗಿದೆ ಎಂದು ಆರೋಪಿಸಿದರು. ಎಲ್ಲಾ ದಾಳಿಗಳಿಗೂ ಇಡಿ ಪತ್ರಿಕಾ ಪ್ರಕಟಣೆ ಹೊರಡಿಸುತ್ತದೆ. ಹಾಗಾದರೆ ಶಿಕ್ಷೆಯ ಪ್ರಮಾಣ ಇಷ್ಟೊಂದು ಕಡಿಮೆ ಏಕೆ ಎಂದು ಪ್ರಶ್ನಿಸಿದರು.

ಸತೀಶ್ ಜಾರಕಿಹೊಳಿ ಅವರು ತಾವು ಯಾವುದೇ ಕಾನೂನುಬಾಹಿರ ಹೂಡಿಕೆ ಮಾಡಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ವಿದೇಶದಲ್ಲಿ ಹೂಡಿಕೆ ಮಾಡಲು ಉದ್ದೇಶಿಸಿದ್ದಾಗಿ ಹೇಳಿರುವುದರಲ್ಲಿ ತಪ್ಪೇನಿದೆ ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು. ಕಾನೂನುಬಾಹಿರವಾಗಿ ಹೂಡಿಕೆ ಮಾಡಿದ್ದರೆ ಮಾತ್ರ ಅದು ತಪ್ಪಾಗುತ್ತದೆ ಎಂದು ಹೇಳಿದರು.

ಕಾಂಗೋ, ಕೆನಡಾ ಸೇರಿದಂತೆ ವಿದೇಶಗಳಲ್ಲಿ ಹೂಡಿಕೆ ಮಾಡುವುದೇ ತಪ್ಪು ಎಂದು ಎಲ್ಲಿಯೂ ಹೇಳಿಲ್ಲ. ಸತೀಶ್ ಜಾರಕಿಹೊಳಿ ಅವರು ಹೂಡಿಕೆ ಮಾಡಿರುವುದಾಗಿ ಹೇಳಿದ್ದಾರೆ. ಆದರೆ ಇಡಿ ಲಂಚದ ಹಣವನ್ನು ವಿದೇಶದಲ್ಲಿ ಹೂಡಿಕೆ ಮಾಡಿದ್ದಾರೆ ಎಂದು ಆರೋಪಿಸುತ್ತಿದೆ. ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಇಡಿ ನೀಡಬೇಕು ಎಂದು ಪ್ರಿಯಾಂಕ್ ಖರ್ಗೆ ಒತ್ತಾಯಿಸಿದರು.

ಇನ್ನು ಪಿಡಬ್ಲ್ಯುಡಿ ಇಲಾಖೆಯಲ್ಲಿ ಗುತ್ತಿಗೆ ನೀಡಲು ಲಂಚ ಪಡೆದ ಆರೋಪದ ಬಗ್ಗೆಯೂ ಪ್ರತಿಕ್ರಿಯಿಸಿದ ಅವರು, ಗಾಳಿ ಸುದ್ದಿಗಳಿಗೆ ತಾವು ಉತ್ತರಿಸುವುದಿಲ್ಲ ಎಂದರು. ಇಡಿ ಆರೋಪ ಮಾಡಿದ್ದರೆ ಅದಕ್ಕೆ ದಾಖಲೆಗಳನ್ನು ನೀಡಲಿ. ಗುತ್ತಿಗೆಗಳಲ್ಲಿ ಲಂಚ ಪಡೆದ ಹಣವನ್ನೇ ವಿದೇಶದಲ್ಲಿ ಹೂಡಿಕೆ ಮಾಡಿದ್ದಾರೆ ಎಂಬುದಕ್ಕೆ ದಾಖಲೆಗಳನ್ನು ನೀಡಲಿ ಎಂದು ಸವಾಲು ಹಾಕಿದರು.

ಅಲ್ಲದೆ, ವಿದೇಶ ಪ್ರಯಾಣ ಮತ್ತು ಹೂಡಿಕೆಗಳ ಬಗ್ಗೆ ತನಿಖೆ ನಡೆಸುವುದಾದರೆ ಪಾಸ್‌ಪೋರ್ಟ್‌ಗಳನ್ನು ಪರಿಶೀಲಿಸಲಿ ಎಂದ ಅವರು, ತಮ್ಮ ಪಾಸ್‌ಪೋರ್ಟ್‌ಗಳನ್ನು ನೀಡಲು ಸಿದ್ಧವಿರುವುದಾಗಿ ಹೇಳಿದರು. ಬಿಜೆಪಿ ಶಾಸಕರು ಹಾಗೂ ಮಾಜಿ ಸಚಿವರು ಕೂಡ ತಮ್ಮ ಪಾಸ್‌ಪೋರ್ಟ್‌ಗಳನ್ನು ನೀಡಲಿ. ಯಾರು ದುಬೈ, ಮಾರಿಷಸ್ ಸೇರಿದಂತೆ ಯಾವ ದೇಶಗಳಿಗೆ ಎಷ್ಟು ಬಾರಿ ಹೋಗಿ ಬಂದಿದ್ದಾರೆ ಎಂಬುದರ ಬಗ್ಗೆಯೂ ತನಿಖೆ ನಡೆಯಲಿ ಎಂದು ಪ್ರಿಯಾಂಕ್ ಖರ್ಗೆ ಆಗ್ರಹಿಸಿದರು.

ಸಿಎಂ ಡಿಕೆಶಿ APMCಗೆ ದಿಢೀರ್ ಭೇಟಿ ಬೆನ್ನಲ್ಲೇ ಬೆಂಗಳೂರಿನಲ್ಲಿ ಪೊಲೀಸರ ಸ್ಪೆಷಲ್ ಡ್ರೈವ್: 17 ಬಾಲಕಾರ್ಮಿಕರ ರಕ್ಷಣೆ

0

ಬೆಂಗಳೂರು: ಸಿಎಂ ಡಿ.ಕೆ. ಶಿವಕುಮಾರ್ ಅವರು ಎಪಿಎಂಸಿಗೆ ದಿಢೀರ್ ಭೇಟಿ ನೀಡಿ ಬಾಲಕಾರ್ಮಿಕರ ಬಗ್ಗೆ ಪರಿಶೀಲನೆ ನಡೆಸುವಂತೆ ಸೂಚನೆ ನೀಡಿದ ಬೆನ್ನಲ್ಲೇ ಬೆಂಗಳೂರು ಪೊಲೀಸರು ನಗರದಾದ್ಯಂತ ಸ್ಪೆಷಲ್ ಡ್ರೈವ್ ಆರಂಭಿಸಿದ್ದಾರೆ. ಹೋಟೆಲ್‌, ಅಂಗಡಿ, ಗ್ಯಾರೇಜ್‌, ಪೆಟ್ರೋಲ್ ಬಂಕ್ ಸೇರಿದಂತೆ ವಿವಿಧೆಡೆ ವ್ಯಾಪಕ ಪರಿಶೀಲನೆ ನಡೆಸಲಾಗಿದೆ.

ಈ ವೇಳೆ ಹಲವು ಕಡೆಗಳಲ್ಲಿ ಬಾಲಕಾರ್ಮಿಕರು ಪತ್ತೆಯಾಗಿದ್ದು, ಇದುವರೆಗೆ 17 ಬಾಲಕಾರ್ಮಿಕರನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ. ಉತ್ತರ ವಿಭಾಗವೊಂದರಲ್ಲೇ 100ಕ್ಕೂ ಹೆಚ್ಚು ಸ್ಥಳಗಳಲ್ಲಿ ಪರಿಶೀಲನೆ ನಡೆಸಲಾಗಿದೆ ಎಂದು ಉತ್ತರ ವಿಭಾಗದ ಡಿಸಿಪಿ ನ್ಯಾಮಗೌಡ ಮಾಹಿತಿ ನೀಡಿದ್ದಾರೆ.

ಇತ್ತೀಚೆಗೆ ಎಪಿಎಂಸಿಗೆ ದಿಢೀರ್ ಭೇಟಿ ನೀಡಿದ್ದ ವೇಳೆ ಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಬಾಲಕಾರ್ಮಿಕನೊಬ್ಬ ಕೆಲಸ ಮಾಡುತ್ತಿರುವುದು ಗಮನಕ್ಕೆ ಬಂದಿತ್ತು. ಈ ವೇಳೆ ಸ್ಥಳೀಯ ಪೊಲೀಸರನ್ನು ಸಿಎಂ ತರಾಟೆಗೆ ತೆಗೆದುಕೊಂಡಿದ್ದರು.

ಇದರ ಜೊತೆಗೆ, ಮಹಿಳಾ ಕೂಲಿ ಕಾರ್ಮಿಕರು ತಮ್ಮ ಮಕ್ಕಳನ್ನೇ ಕೆಲಸಕ್ಕೆ ಬಳಸಿಕೊಳ್ಳುತ್ತಿರುವ ಬಗ್ಗೆ ಕೆಲವರು ಸಿಎಂ ಗಮನಕ್ಕೆ ತಂದಿದ್ದರು. ಈ ದೂರಿನ ಬೆನ್ನಲ್ಲೇ ಇಡೀ ಬೆಂಗಳೂರಿನಲ್ಲಿ ಬಾಲಕಾರ್ಮಿಕರ ಬಗ್ಗೆ ಕಟ್ಟುನಿಟ್ಟಿನ ಪರಿಶೀಲನೆ ನಡೆಸುವಂತೆ ಸಿಎಂ ಸೂಚನೆ ನೀಡಿದ್ದರು.

ಸಿಎಂ ಸೂಚನೆ ಬೆನ್ನಲ್ಲೇ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ನಗರದ ವಿವಿಧೆಡೆ ಬಾಲಕಾರ್ಮಿಕ ಪದ್ಧತಿ ಇನ್ನೂ ಮುಂದುವರಿದಿರುವುದು ಬೆಳಕಿಗೆ ಬಂದಿದೆ.

ಸರ್ಕಾರಿ ಜಮೀನು ಮಾರಾಟಕ್ಕೆ ಖಾಸಗಿಯವರಿಗೆ ಅಧಿಕಾರವಿಲ್ಲ: 33 ಎಕರೆ 33 ಗುಂಟೆ ಜಾಗ ಸರ್ಕಾರದ ವಶಕ್ಕೆ ಪಡೆಯಲು ಹೈಕೋರ್ಟ್ ಆದೇಶ

0

ಬೆಂಗಳೂರು: ಸರ್ಕಾರಿ ಜಮೀನನ್ನು ಯಾವುದೇ ಖಾಸಗಿ ವ್ಯಕ್ತಿ ಮತ್ತೊಬ್ಬರಿಗೆ ಮಾರಾಟ ಮಾಡಲು ಅಥವಾ ವರ್ಗಾವಣೆ ಮಾಡಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಕರ್ನಾಟಕ ಹೈಕೋರ್ಟ್‌ನ ವಿಭಾಗೀಯ ಪೀಠ ಮಹತ್ವದ ಆದೇಶ ನೀಡಿದೆ. ಯಲಹಂಕ ತಾಲೂಕಿನ ನೆಲ್ಲುಕುಂಟೆ ಗ್ರಾಮದಲ್ಲಿ ಕೃಷ್ಣದೇವರಾಯ ಎಜುಕೇಷನಲ್ ಟ್ರಸ್ಟ್ ಹೊಂದಿದೆ ಎನ್ನಲಾದ 33 ಎಕರೆ 33 ಗುಂಟೆ ‘ಬಿ ಖರಾಬು’ ಸರ್ಕಾರಿ ಜಮೀನನ್ನು ಸರ್ವೆ ನಡೆಸಿ, ಗಡಿ ಗುರುತಿಸಿ ಸರ್ಕಾರದ ವಶಕ್ಕೆ ಪಡೆಯುವಂತೆ ನ್ಯಾಯಪೀಠ ಸೂಚಿಸಿದೆ.

ಸರ್ಕಾರಿ ಜಮೀನು ವಿಚಾರಕ್ಕೆ ಸಂಬಂಧಿಸಿದಂತೆ ಟ್ರಸ್ಟ್ ಪರವಾಗಿ ಏಕಸದಸ್ಯ ಪೀಠ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಡಿ.ಕೆ. ಸಿಂಗ್ ಮತ್ತು ಹೆಚ್. ಶಾಂತಿ ಭೂಷಣ್ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿದೆ.

ಯಾವುದೇ ಖಾಸಗಿ ವ್ಯಕ್ತಿಗೆ ಸರ್ಕಾರಿ ‘ಬಿ ಖರಾಬು’ ಜಮೀನನ್ನು ಮತ್ತೊಬ್ಬರಿಗೆ ಮಾರಾಟ ಮಾಡಲು ಅಥವಾ ವರ್ಗಾವಣೆ ಮಾಡಲು ಅವಕಾಶವಿಲ್ಲ. ಇಂತಹ ಜಮೀನಿನ ಮಾರಾಟ ಪತ್ರಗಳು ಕಾನೂನುಬದ್ಧವಾಗಿ ಅಸಿಂಧುವಾಗುತ್ತವೆ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

101 ಎಕರೆ ಹಕ್ಕು, 133 ಎಕರೆ ಮಾರಾಟ

ಟ್ರಸ್ಟ್ ಪರವಾಗಿ ಏಕಸದಸ್ಯ ಪೀಠದ ಮುಂದೆ ಸಲ್ಲಿಸಿದ್ದ ಅರ್ಜಿಯಲ್ಲಿ, ಸರಸ್ವತಮ್ಮ ಎಂಬುವರಿಂದ ಜಮೀನು ಖರೀದಿಸಿರುವುದಾಗಿ ಹೇಳಲಾಗಿತ್ತು. ಆದರೆ ಸರಸ್ವತಮ್ಮ ಅವರಿಗೆ ಕೇವಲ 101 ಎಕರೆ 37 ಗುಂಟೆ ಜಮೀನಿನ ಮೇಲಷ್ಟೇ ಹಕ್ಕು ಇತ್ತು. ಇದಕ್ಕಿಂತ ಹೆಚ್ಚಿನ ಜಮೀನನ್ನು ಅವರು ಟ್ರಸ್ಟ್‌ಗೆ ಮಾರಾಟ ಮಾಡಿರುವುದು ಕಂಡುಬಂದಿದೆ. ಹೀಗಾಗಿ ಹೆಚ್ಚುವರಿ ಜಮೀನಿನ ಮೇಲೆ ಟ್ರಸ್ಟ್ ಮಾಲೀಕತ್ವ ಹೊಂದಲು ಸಾಧ್ಯವಿಲ್ಲ ಎಂದು ವಿಭಾಗೀಯ ಪೀಠ ಹೇಳಿದೆ.

ಮುಂದಿನ ಮೂರು ತಿಂಗಳೊಳಗೆ ಸಂಬಂಧಪಟ್ಟ ಎಲ್ಲ ಪಕ್ಷಗಾರರಿಗೆ ನೋಟಿಸ್ ಜಾರಿ ಮಾಡಬೇಕು. ವಿವಾದಿತ ಜಮೀನಿನ ಜಂಟಿ ಸರ್ವೆ ನಡೆಸಿ ಸ್ಕೆಚ್ ಸಿದ್ಧಪಡಿಸಬೇಕು ಎಂದು ನ್ಯಾಯಪೀಠ ಸೂಚಿಸಿದೆ.

ಸರ್ವೆಯಲ್ಲಿ ಗುರುತಿಸಲಾಗುವ 33 ಎಕರೆ 33 ಗುಂಟೆ ಜಮೀನನ್ನು ಕಂದಾಯ ದಾಖಲೆಗಳಲ್ಲಿ ‘ಬಿ ಖರಾಬು ಸರ್ಕಾರಿ ಜಮೀನು’ ಎಂದು ದಾಖಲಿಸಬೇಕು. ಈ ಜಾಗವನ್ನು ಉದ್ಯಾನವನ, ಸ್ಮಶಾನ, ರಸ್ತೆ ಸೇರಿದಂತೆ ಸಾರ್ವಜನಿಕ ಉದ್ದೇಶಗಳಿಗೆ ಮಾತ್ರ ಬಳಸಬೇಕು ಎಂದು ಪೀಠ ತಿಳಿಸಿದೆ.

ಇದಲ್ಲದೆ, ವಿವಾದಿತ ಸರ್ಕಾರಿ ಜಮೀನನ್ನು ಯಾವುದೇ ಬಿಲ್ಡರ್‌ಗಳು, ಡೆವಲಪರ್‌ಗಳು ಅಥವಾ ಖಾಸಗಿ ಸಂಸ್ಥೆಗಳಿಗೆ ವಾಣಿಜ್ಯ ಹಾಗೂ ರಿಯಲ್ ಎಸ್ಟೇಟ್ ಚಟುವಟಿಕೆಗಳಿಗಾಗಿ ನೀಡಬಾರದು ಎಂದು ಸರ್ಕಾರದಿಂದ ಪ್ರಮಾಣಪತ್ರ ಪಡೆದುಕೊಳ್ಳಬೇಕು ಎಂಬ ಅಂಶವನ್ನೂ ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಪ್ರಕರಣದ ಹಿನ್ನೆಲೆ ಏನು?

ಮೂಲ ಜಮೀನುದಾರರಾದ ಕೃಷ್ಣರಾವ್ ಎಲ್. ಬಾಳೇಕಾಯಿ ಅವರು 1961ರಲ್ಲಿ ತಮ್ಮ ಪತ್ನಿ ಸರಸ್ವತಮ್ಮ ಅವರಿಗೆ ಸೆಟಲ್ಮೆಂಟ್ ಡೀಡ್ ಮೂಲಕ 101 ಎಕರೆ 37 ಗುಂಟೆ ಜಮೀನನ್ನು ನೀಡಿದ್ದರು.

ಆದರೆ ಸರಸ್ವತಮ್ಮ ಅವರು ತಮಗಿದ್ದ ಹಕ್ಕಿಗಿಂತ ಹೆಚ್ಚಿನ ಪ್ರಮಾಣದ, ಒಟ್ಟು 133 ಎಕರೆ 33 ಗುಂಟೆ ಜಮೀನನ್ನು ಕೃಷ್ಣದೇವರಾಯ ಎಜುಕೇಷನಲ್ ಟ್ರಸ್ಟ್‌ಗೆ ಆರು ಪ್ರತ್ಯೇಕ ಕ್ರಯ ಪತ್ರಗಳ ಮೂಲಕ ಮಾರಾಟ ಮಾಡಿದ್ದರು. ಇದರಲ್ಲಿ 31 ಎಕರೆ 36 ಗುಂಟೆ ಖರಾಬು ಜಮೀನು ಕೂಡ ಸೇರಿತ್ತು ಎನ್ನಲಾಗಿದೆ.

ಮೂಲ ಮಾರಾಟಗಾರರಿಗೇ ಹಕ್ಕಿಲ್ಲದ ಜಮೀನನ್ನು ಟ್ರಸ್ಟ್ ಖರೀದಿಸಿ ಬಳಸಿಕೊಳ್ಳುತ್ತಿದೆ ಎಂದು ಪ್ರಶ್ನಿಸಿ ಭೂಮಾಪನ ಇಲಾಖೆ ಸರ್ವೆ ನೋಟಿಸ್ ಜಾರಿ ಮಾಡಿತ್ತು. ಈ ನೋಟಿಸ್ ಪ್ರಶ್ನಿಸಿ ಟ್ರಸ್ಟ್ ಹೈಕೋರ್ಟ್ ಮೊರೆ ಹೋಗಿತ್ತು. ಈ ಹಿಂದೆ ಏಕಸದಸ್ಯ ಪೀಠವು ನೋಟಿಸ್ ರದ್ದುಗೊಳಿಸಿತ್ತು. ಇದನ್ನು ಪ್ರಶ್ನಿಸಿ ಸರ್ಕಾರ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿತ್ತು.

ಇದೀಗ ವಿಚಾರಣೆ ನಡೆಸಿದ ವಿಭಾಗೀಯ ಪೀಠ, ಸರ್ಕಾರಿ ‘ಬಿ ಖರಾಬು’ ಜಮೀನಿನ ಮಾರಾಟ ಅಥವಾ ವರ್ಗಾವಣೆ ಕಾನೂನುಬದ್ಧವಲ್ಲ ಎಂದು ಸ್ಪಷ್ಟಪಡಿಸಿ, ಜಮೀನನ್ನು ಸರ್ವೆ ನಡೆಸಿ ಸರ್ಕಾರದ ವಶಕ್ಕೆ ಪಡೆಯುವಂತೆ ಆದೇಶಿಸಿದೆ.

ಕರ್ನಾಟಕದಲ್ಲಿ ಮುಂಗಾರು ಮಳೆ ದುರ್ಬಲ: ರಾಜ್ಯದ ಕೆಲ ಜಿಲ್ಲೆಗಳಲ್ಲಿ ಹಗುರ ಮಳೆ ಮುನ್ಸೂಚನೆ

0

ಬೆಂಗಳೂರು: ಕರ್ನಾಟಕದಲ್ಲಿ ಮುಂಗಾರು ಮಳೆ ದುರ್ಬಲವಾಗಿದ್ದು, ರಾಜ್ಯದ ಕೆಲವೆಡೆ ಮಾತ್ರ ಹಗುರ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಕರಾವಳಿ ಕರ್ನಾಟಕದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆ ಇದೆ. ಉತ್ತರ ಒಳನಾಡಿನ ಬೀದರ್‌, ಕಲಬುರಗಿ, ರಾಯಚೂರು ಹಾಗೂ ಯಾದಗಿರಿ ಜಿಲ್ಲೆಗಳಲ್ಲೂ ಅಲ್ಲಲ್ಲಿ ಹಗುರ ಮಳೆಯ ಮುನ್ಸೂಚನೆ ನೀಡಲಾಗಿದೆ.

ದಕ್ಷಿಣ ಒಳನಾಡಿನ ಮೈಸೂರು, ಚಾಮರಾಜನಗರ, ರಾಮನಗರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಗಳ ಒಂದೆರಡು ಕಡೆಗಳಲ್ಲೂ ಹಗುರ ಮಳೆಯಾಗುವ ಸಾಧ್ಯತೆ ಇದೆ. ಉತ್ತರ ಒಳನಾಡಿನ ಉಳಿದ ಜಿಲ್ಲೆಗಳಲ್ಲಿ ಸದ್ಯಕ್ಕೆ ವ್ಯಾಪಕ ಮಳೆಯ ನಿರೀಕ್ಷೆ ಇಲ್ಲ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಸೆ.13ರಂದು ಗುಡುಗು ಸಹಿತ ಮಳೆ ಸಾಧ್ಯತೆ

ಸೆಪ್ಟೆಂಬರ್‌ 13ರಂದು ಮೈಸೂರು, ಚಾಮರಾಜನಗರ, ರಾಮನಗರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಗಳ ಕೆಲವೆಡೆ ಹಗುರ ಮಳೆಯ ಜೊತೆಗೆ ಗುಡುಗು ಸಹಿತ ಮಳೆ ಬೀಳುವ ಸಾಧ್ಯತೆ ಇದೆ. ಇದೇ ವೇಳೆ ಗಂಟೆಗೆ 30ರಿಂದ 40 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯನ್ನೂ ಹವಾಮಾನ ಇಲಾಖೆ ತಿಳಿಸಿದೆ.

ಶುಕ್ರವಾರ ಸಂಜೆ ಕೊನೆಗೊಂಡ 24 ಗಂಟೆಗಳ ಅವಧಿಯಲ್ಲಿ ರಾಜ್ಯದಲ್ಲಿ ಮುಂಗಾರು ದುರ್ಬಲವಾಗಿತ್ತು. ಒಂದೆರಡು ಕಡೆಗಳಲ್ಲಿ ಮಾತ್ರ ಮಳೆಯಾಗಿದ್ದು, ಚಾಮರಾಜನಗರ ಜಿಲ್ಲೆಯಲ್ಲಿ 2 ಸೆಂ.ಮೀ ಮಳೆ ದಾಖಲಾಗಿದೆ. ಮುಂದಿನ ದಿನಗಳಲ್ಲೂ ಹಲವು ಜಿಲ್ಲೆಗಳಲ್ಲಿ ಒಣಹವೆಯ ವಾತಾವರಣ ಮುಂದುವರಿಯುವ ಸಾಧ್ಯತೆ ಇದೆ.

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ

ಇನ್ನು ವಾಯವ್ಯ-ಪಶ್ಚಿಮ ಮಧ್ಯ ಬಂಗಾಳಕೊಲ್ಲಿ ಹಾಗೂ ದಕ್ಷಿಣ ಒಡಿಶಾ–ಉತ್ತರ ಆಂಧ್ರಪ್ರದೇಶ ಕರಾವಳಿ ಭಾಗಕ್ಕೆ ಹೊಂದಿಕೊಂಡಂತೆ ವಾಯುಭಾರ ಕುಸಿತ ಉಂಟಾಗಿದೆ.

ಇದಕ್ಕೆ ಸಂಬಂಧಿಸಿದ ಚಂಡಮಾರುತದ ಪರಿಚಲನೆಯು ಸಮುದ್ರಮಟ್ಟದಿಂದ ಸುಮಾರು 7.6 ಕಿಲೋಮೀಟರ್ ಎತ್ತರದವರೆಗೆ ವಿಸ್ತರಿಸಿದೆ. ಈ ವ್ಯವಸ್ಥೆ ನೈಋತ್ಯ ದಿಕ್ಕಿನತ್ತ ಚಲಿಸುವ ಸಾಧ್ಯತೆಯಿದ್ದು, ಮುಂದಿನ 24 ಗಂಟೆಗಳಲ್ಲಿ ಮತ್ತಷ್ಟು ಸ್ಪಷ್ಟವಾಗಲಿದೆ.

ನಂತರ ಉತ್ತರ ಕರಾವಳಿ ಆಂಧ್ರಪ್ರದೇಶ–ದಕ್ಷಿಣ ಒಡಿಶಾ ಭಾಗದ ಮೂಲಕ ಪಶ್ಚಿಮ-ವಾಯವ್ಯ ದಿಕ್ಕಿನಲ್ಲಿ ಚಲಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಇಂತಹ ಘಟನೆ ಬೇರೆ ಯಾವ ದೇಶದಲ್ಲೂ ನಡೆಯಲ್ಲ: ಸತೀಶ್ ಜಾರಕಿಹೊಳಿ ಪರ ವಿಜಯ್ ಮಲ್ಯ ಬ್ಯಾಟಿಂಗ್

0

ನವದೆಹಲಿ: ಕಾಂಗ್ರೆಸ್‌ನ ಪ್ರಭಾವಿ ನಾಯಕ ಹಾಗೂ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ಕುಟುಂಬಕ್ಕೆ ಸೇರಿದ 21 ಸ್ಥಳಗಳಲ್ಲಿ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ ಶೋಧ ಕಾರ್ಯ ಇದೀಗ ರಾಜಕೀಯ ಚರ್ಚೆಗೆ ಕಾರಣವಾಗಿದೆ. ಇಡಿ ತನ್ನ ಪ್ರಕಟಣೆಯಲ್ಲಿ ಲೋಕೋಪಯೋಗಿ ಇಲಾಖೆಯಲ್ಲಿ ಅವ್ಯವಹಾರ ಹಾಗೂ ಗುತ್ತಿಗೆದಾರರಿಂದ ಲಂಚ ಪಡೆದಿರುವ ಆರೋಪಗಳ ಕುರಿತು ಮಾಹಿತಿ ನೀಡಿದೆ ಎನ್ನಲಾಗಿದೆ.

ಈ ನಡುವೆ ಉದ್ಯಮಿ ವಿಜಯ್ ಮಲ್ಯ ಅವರು ಸತೀಶ್ ಜಾರಕಿಹೊಳಿ ಪರವಾಗಿ ಬ್ಯಾಟ್ ಬೀಸಿದ್ದಾರೆ. ತಮ್ಮ ಎಕ್ಸ್ ಖಾತೆಯಲ್ಲಿ ಪ್ರತಿಕ್ರಿಯಿಸಿರುವ ಮಲ್ಯ, ಇಡಿ ಈ ಕಾರ್ಯಾಚರಣೆಯನ್ನು ದೊಡ್ಡ ಸಾಧನೆಯಂತೆ ಬಿಂಬಿಸುತ್ತಿದೆ. ಆದರೆ ಯಾವುದೇ ದೋಷಾರೋಪ ಪಟ್ಟಿ ಅಥವಾ ವಿಚಾರಣೆ ಇಲ್ಲದೆ ಸಾರ್ವಜನಿಕವಾಗಿ ವ್ಯಕ್ತಿತ್ವ ಹನನ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಇಂತಹ ರೀತಿಯ ಕ್ರಮ ಬೇರೆ ಯಾವುದೇ ದೇಶದಲ್ಲಿ ನಡೆಯುವುದಿಲ್ಲ. ಈ ವಿಚಾರದಲ್ಲಿ ಸಾರ್ವಜನಿಕರು ಸ್ವತಃ ಯೋಚಿಸಬೇಕು ಎಂದು ವಿಜಯ್ ಮಲ್ಯ ತಮ್ಮ ಪೋಸ್ಟ್‌ನಲ್ಲಿ ಹೇಳಿದ್ದಾರೆ. ಮಲ್ಯ ಅವರ ಈ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧದ ಅಭಿಪ್ರಾಯಗಳು ವ್ಯಕ್ತವಾಗಿವೆ.

ಡಿಕೆಶಿಯಿಂದ ಮತ್ತೆ ದಾಳಿ ಬಗ್ಗೆ ಎಚ್ಚರಿಕೆ

ಇನ್ನು ಸತೀಶ್ ಜಾರಕಿಹೊಳಿ ಅವರ ನಿವಾಸ ಹಾಗೂ ಕುಟುಂಬಕ್ಕೆ ಸಂಬಂಧಿಸಿದ ಸ್ಥಳಗಳ ಮೇಲೆ ಇಡಿ ಶೋಧ ನಡೆಸಿದ ಬೆನ್ನಲ್ಲೇ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕೂಡ ಪ್ರತಿಕ್ರಿಯಿಸಿದ್ದಾರೆ.

ಕಾಂಗ್ರೆಸ್ ನಾಯಕರನ್ನು ಟ್ರ್ಯಾಪ್ ಮಾಡಲು ಇಡಿ ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ. ಇನ್ನೂ ಮೂರ್ನಾಲ್ಕು ಕಾಂಗ್ರೆಸ್ ನಾಯಕರ ಮೇಲೆ ದಾಳಿ ನಡೆಯುವ ಸಾಧ್ಯತೆ ಇದೆ ಎಂದು ಡಿಕೆ ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ. ಇದೇ ವೇಳೆ ಬಿಜೆಪಿ ನಾಯಕರ ಮೇಲೆ ಇಂತಹ ದಾಳಿಗಳು ಏಕೆ ನಡೆಯುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ. ಇಡಿ ದಾಳಿ ನಡೆಯುವ ಮುನ್ನವೇ ಸತೀಶ್ ಜಾರಕಿಹೊಳಿ ಅವರು ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಈ ಬಗ್ಗೆ ಮಾಹಿತಿ ನೀಡಿದ್ದರು ಎನ್ನಲಾಗಿದೆ.

‘ನಮ್ಮ ಸಂಸ್ಥೆಗಳ ವಹಿವಾಟು ₹2,000 ಕೋಟಿ’

ಇಡಿ ದಾಳಿ ಕುರಿತು ಈ ಹಿಂದೆ ಪ್ರತಿಕ್ರಿಯಿಸಿದ್ದ ಸತೀಶ್ ಜಾರಕಿಹೊಳಿ, ತಮ್ಮ ಹಾಗೂ ಕುಟುಂಬಸ್ಥರಿಗೆ ಸೇರಿದ ಸಂಸ್ಥೆಗಳ ವಾರ್ಷಿಕ ವಹಿವಾಟು ₹2,000 ಕೋಟಿಗೂ ಅಧಿಕವಾಗಿದೆ ಎಂದು ಹೇಳಿದ್ದರು.

ವಿದೇಶದಲ್ಲಿ ಹೂಡಿಕೆ ಮಾಡಲು ಯೋಜನೆ ರೂಪಿಸಲಾಗಿದ್ದು, ಈವರೆಗೆ ಹೂಡಿಕೆ ಮಾಡಿಲ್ಲ. ಹೂಡಿಕೆ ಮಾಡುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಅವರು ಸ್ಪಷ್ಟಪಡಿಸಿದ್ದರು. ಇಡಿ ವಶಪಡಿಸಿಕೊಂಡಿದೆ ಎನ್ನಲಾದ ₹2 ಕೋಟಿಯನ್ನು ಕಾನೂನುಬದ್ಧವಾಗಿ ಕ್ಲೈಮ್ ಮಾಡುವುದಾಗಿ ಕೂಡ ಸತೀಶ್ ಜಾರಕಿಹೊಳಿ ಹೇಳಿದ್ದರು.

ಇದರ ಬೆನ್ನಲ್ಲೇ ಇಡಿ ತನ್ನ ಪ್ರಕಟಣೆಯಲ್ಲಿ ಗುತ್ತಿಗೆದಾರರಿಂದ ಲಂಚ ಪಡೆದಿರುವುದು ಹಾಗೂ ಲೋಕೋಪಯೋಗಿ ಇಲಾಖೆಯಲ್ಲೂ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪಗಳ ಕುರಿತು ಮಾಹಿತಿ ನೀಡಿದೆ ಎನ್ನಲಾಗಿದೆ. ಹೀಗಾಗಿ ಸತೀಶ್ ಜಾರಕಿಹೊಳಿ ಕುಟುಂಬಕ್ಕೆ ಸಂಬಂಧಿಸಿದ ಇಡಿ ಶೋಧ ಕಾರ್ಯ ಇದೀಗ ರಾಜ್ಯ ರಾಜಕೀಯದಲ್ಲಿ ಮತ್ತಷ್ಟು ಚರ್ಚೆಗೆ ಗ್ರಾಸವಾಗಿದೆ.

ಪರಪುರುಷನೊಂದಿಗೆ ಲವ್ವಿಡವ್ವಿ: ಪಾರ್ಶ್ವವಾಯುವಿನಿಂದ ಹಾಸಿಗೆ ಹಿಡಿದ ಪತಿಯ ಕೊಂದ ಪತ್ನಿ

0

ಬೆಂಗಳೂರು: ಪಾರ್ಶ್ವವಾಯುವಿನಿಂದ ಹಾಸಿಗೆ ಹಿಡಿದಿದ್ದ ಪತಿಯನ್ನು ಪತ್ನಿ ತನ್ನ ಪ್ರಿಯಕರ ಹಾಗೂ ತಾಯಿಯೊಂದಿಗೆ ಸೇರಿ ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ. ಆವಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಕಿತ್ತಗನೂರು ಯಲ್ಲಪ್ಪ ಗಾರ್ಡನ್‌ನಲ್ಲಿ ಸೆಪ್ಟೆಂಬರ್ 9ರಂದು ರಾತ್ರಿ ಘಟನೆ ನಡೆದಿದೆ ಎನ್ನಲಾಗಿದ್ದು, ಬಳಿಕ ಪತಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಪತ್ನಿ ನಾಟಕವಾಡಿದ್ದಾಳೆ ಎನ್ನಲಾಗಿದೆ. ಪ್ರಕರಣದ ತನಿಖೆ ನಡೆಸಿದ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಸುಮಾರು 20 ವರ್ಷಗಳ ಹಿಂದೆ ಮುಬಾರಕ್‌ ಎಂಬುವರನ್ನು ಶಹಿನಾ ಬಾನು ವಿವಾಹವಾಗಿದ್ದಳು. ಕಳೆದ ಎರಡು ವರ್ಷಗಳಿಂದ ಮುಬಾರಕ್‌ ಪಾರ್ಶ್ವವಾಯುವಿನಿಂದ ಹಾಸಿಗೆ ಹಿಡಿದಿದ್ದರು ಎನ್ನಲಾಗಿದೆ. ಇದೇ ವೇಳೆ ದಂಪತಿಯ ಪುತ್ರಿಯೂ ಅನಾರೋಗ್ಯಕ್ಕೆ ಒಳಗಾಗಿದ್ದಳು. ಮಗಳನ್ನು ಗುಣಪಡಿಸುವುದಾಗಿ ಮನೆಗೆ ಬಂದಿದ್ದ ನಹೀಮ್‌ ಉದ್ದೀನ್‌ ಖುರೇಶಿ ಎಂಬಾತನೊಂದಿಗೆ ಶಹಿನಾ ಬಾನು ಸಲುಗೆ ಬೆಳೆಸಿಕೊಂಡಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ಬಳಿಕ ಶಹಿನಾ ಬಾನು ಹಾಗೂ ನಹೀಮ್‌ ನಡುವೆ ಪ್ರೇಮ ಸಂಬಂಧ ಬೆಳೆದಿತ್ತು ಎನ್ನಲಾಗಿದೆ. ಪತಿಯನ್ನು ನೋಡಿಕೊಳ್ಳುವ ವಿಚಾರದಲ್ಲಿ ಬೇಸತ್ತಿದ್ದ ಶಹಿನಾ ಬಾನುಗೆ ನಹೀಮ್‌ ಕೊಲೆ ಮಾಡುವ ಸಲಹೆ ನೀಡಿದ್ದ ಎನ್ನಲಾಗಿದೆ. ಅದರಂತೆ ಸೆಪ್ಟೆಂಬರ್ 9ರಂದು ರಾತ್ರಿ ಶಹಿನಾ ಬಾನು ತನ್ನ ತಾಯಿ ಹಸೀನ ಜಾನ್ ಜೊತೆ ಸೇರಿ ಪತಿಯನ್ನು ಕೊಲೆ ಮಾಡಲು ಸಂಚು ರೂಪಿಸಿದ್ದಳು ಎಂದು ಆರೋಪಿಸಲಾಗಿದೆ.

ಮುಬಾರಕ್‌ ಮಲಗಿದ್ದ ವೇಳೆ ಉಸಿರುಗಟ್ಟಿಸಿ ಹಾಗೂ ಖಾಸಗಿ ಭಾಗಕ್ಕೆ ಒದ್ದು ಕೊಲೆ ಮಾಡಲಾಗಿದೆ ಎನ್ನಲಾಗಿದೆ. ಬಳಿಕ ಮುಬಾರಕ್‌ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಶಹಿನಾ ಬಾನು ಹಾಗೂ ಹಸೀನ ಜಾನ್ ಹೇಳಿಕೊಂಡಿದ್ದರು.

ಆದರೆ ಮುಬಾರಕ್‌ ಸಾವಿನ ಬಗ್ಗೆ ಸಂಬಂಧಿಕರಿಗೆ ಅನುಮಾನ ಮೂಡಿದ್ದು, ಪೊಲೀಸರಿಗೆ ದೂರು ನೀಡಿದ್ದರು. ಆವಲಹಳ್ಳಿ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ಮರಣೋತ್ತರ ಪರೀಕ್ಷೆ ನಡೆಸಿದಾಗ ಮುಬಾರಕ್‌ ಉಸಿರುಗಟ್ಟಿ ಮೃತಪಟ್ಟಿರುವುದು ಹಾಗೂ ಕೆನ್ನೆ, ಮೂಗು, ಕುತ್ತಿಗೆ ಮತ್ತು ಖಾಸಗಿ ಭಾಗದಲ್ಲಿ ಗಾಯಗಳಾಗಿರುವುದು ಬೆಳಕಿಗೆ ಬಂದಿದೆ.

ಮರಣೋತ್ತರ ಪರೀಕ್ಷಾ ವರದಿ ಆಧರಿಸಿ ಪೊಲೀಸರು ಶಹಿನಾ ಬಾನು, ಆಕೆಯ ತಾಯಿ ಹಸೀನ ಜಾನ್ ಹಾಗೂ ನಹೀಮ್‌ ಉದ್ದೀನ್‌ ಖುರೇಶಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ಕೊಲೆ ಪ್ರಕರಣದ ಬಗ್ಗೆ ಮಾಹಿತಿ ಹೊರಬಂದಿದೆ ಎನ್ನಲಾಗಿದ್ದು, ಮೂವರನ್ನೂ ಬಂಧಿಸಿರುವ ಆವಲಹಳ್ಳಿ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.