Home Blog

ಪದೇಪದೇ ಕಣ್ಣುಗಳಿಂದ ನೀರು ಬರುತ್ತಿದೆಯೇ? ಈ ಸಮಸ್ಯೆಗಳನ್ನು ನಿರ್ಲಕ್ಷಿಸಬೇಡಿ!

0

ಕಣ್ಣುಗಳಿಂದ ನೀರು ಬರುವುದು ಸಾಮಾನ್ಯವಾಗಿ ಕಂಡುಬರುವ ಸಮಸ್ಯೆ.

ಧೂಳು, ಹೊಗೆ, ಗಾಳಿ, ತೀವ್ರ ಬೆಳಕು ಅಥವಾ ಕಣ್ಣಿಗೆ ಸಣ್ಣ ಕಸ ಹೋಗುವುದರಿಂದ ಕೆಲವೊಮ್ಮೆ ಕಣ್ಣೀರು ಹೆಚ್ಚಾಗಬಹುದು. ಕಣ್ಣಿನಲ್ಲಿ ಉರಿ ಅಥವಾ ಆಯಾಸವಾದಾಗಲೂ ಕಣ್ಣುಗಳು ತಮ್ಮನ್ನು ರಕ್ಷಿಸಿಕೊಳ್ಳಲು ಹೆಚ್ಚಿನ ಕಣ್ಣೀರನ್ನು ಉತ್ಪಾದಿಸುತ್ತವೆ.

ಆದರೆ ಕಣ್ಣುಗಳಿಂದ ಪದೇಪದೇ ಅಥವಾ ನಿರಂತರವಾಗಿ ನೀರು ಬರುತ್ತಿದ್ದರೆ, ಅದನ್ನು ನಿರ್ಲಕ್ಷಿಸಬಾರದು. ಡ್ರೈ ಐ ಸಿಂಡ್ರೋಮ್, ಅಲರ್ಜಿ, ಸೋಂಕು ಅಥವಾ ಕಣ್ಣೀರಿನ ನಾಳಿಯಲ್ಲಿ ಅಡಚಣೆ ಸೇರಿದಂತೆ ಹಲವು ಕಾರಣಗಳಿಂದ ಈ ಸಮಸ್ಯೆ ಉಂಟಾಗಬಹುದು.

ಕಣ್ಣುಗಳಿಂದ ಪದೇಪದೇ ನೀರು ಬರುವುದಕ್ಕೆ ಕಾರಣಗಳೇನು?

ಡ್ರೈ ಐ ಸಿಂಡ್ರೋಮ್:

ಕಣ್ಣಿನಲ್ಲಿ ಸಾಕಷ್ಟು ತೇವಾಂಶ ಇಲ್ಲದಿದ್ದಾಗ ಡ್ರೈ ಐ ಸಿಂಡ್ರೋಮ್ ಉಂಟಾಗಬಹುದು. ಇದರಿಂದ ಕಣ್ಣಿನಲ್ಲಿ ಉರಿ, ಕಿರಿಕಿರಿ ಅಥವಾ ಒಣಗಿದ ಅನುಭವ ಕಾಣಿಸಿಕೊಳ್ಳಬಹುದು. ಇದಕ್ಕೆ ಪ್ರತಿಕ್ರಿಯೆಯಾಗಿ ಕಣ್ಣುಗಳು ಹೆಚ್ಚಿನ ಪ್ರಮಾಣದಲ್ಲಿ ಕಣ್ಣೀರನ್ನು ಉತ್ಪಾದಿಸುವುದರಿಂದ ಕಣ್ಣುಗಳಿಂದ ನೀರು ಹರಿಯಬಹುದು.

ಅಲರ್ಜಿ ಮತ್ತು ಸೋಂಕು:

ಧೂಳು, ಪರಾಗಕಣಗಳು ಅಥವಾ ಇತರ ಅಲರ್ಜಿಕಾರಕಗಳಿಂದ ಕಣ್ಣಿನಲ್ಲಿ ಅಲರ್ಜಿ ಉಂಟಾದಾಗ ನೀರು ಬರುವುದು, ತುರಿಕೆ ಮತ್ತು ಕಣ್ಣು ಕೆಂಪಾಗುವುದು ಕಂಡುಬರಬಹುದು. ಕಣ್ಣಿನ ಸೋಂಕು ಕೂಡ ಹೆಚ್ಚಿನ ಕಣ್ಣೀರಿಗೆ ಕಾರಣವಾಗಬಹುದು.

ಕಣ್ಣಿನಿಂದ ಉತ್ಪತ್ತಿಯಾಗುವ ಕಣ್ಣೀರು ಸರಿಯಾಗಿ ಹೊರಹೋಗಲು ಸಾಧ್ಯವಾಗದಿದ್ದಾಗ ಕಣ್ಣೀರಿನ ನಾಳಿಯಲ್ಲಿ ಅಡಚಣೆ ಉಂಟಾಗಿರಬಹುದು. ಇದರಿಂದ ಕಣ್ಣೀರು ಕಣ್ಣಿನಲ್ಲೇ ಸಂಗ್ರಹವಾಗಿ ಹೊರಗೆ ಹರಿಯುವ ಸಾಧ್ಯತೆ ಇರುತ್ತದೆ.

ಗಾಳಿ, ಧೂಳು ಮತ್ತು ಹೊಗೆ:

ತೀವ್ರ ಗಾಳಿ, ತಂಪಾದ ಗಾಳಿ, ಹೊಗೆ, ಧೂಳು ಅಥವಾ ಅತಿಯಾದ ಬೆಳಕು ಕಣ್ಣಿಗೆ ಕಿರಿಕಿರಿ ಉಂಟುಮಾಡಬಹುದು. ಇಂತಹ ಸಂದರ್ಭಗಳಲ್ಲಿ ಕಣ್ಣುಗಳು ರಕ್ಷಣಾತ್ಮಕವಾಗಿ ಹೆಚ್ಚಿನ ಕಣ್ಣೀರನ್ನು ಉತ್ಪಾದಿಸುತ್ತವೆ.

ಕಣ್ಣಿನ ಗಾಯ ಅಥವಾ ಔಷಧಿಗಳ ಪರಿಣಾಮ:

ಕಣ್ಣಿಗೆ ಗಾಯವಾದ ನಂತರವೂ ನಿರಂತರವಾಗಿ ನೀರು ಬರಬಹುದು. ಕೆಲವು ಔಷಧಿಗಳ ಪರಿಣಾಮ ಅಥವಾ ನಿರ್ದಿಷ್ಟ ವೈದ್ಯಕೀಯ ಚಿಕಿತ್ಸೆಗಳ ಸಂದರ್ಭದಲ್ಲಿಯೂ ಕಣ್ಣೀರಿನ ಪ್ರಮಾಣದಲ್ಲಿ ಬದಲಾವಣೆ ಕಾಣಿಸಿಕೊಳ್ಳಬಹುದು.

ಯಾವಾಗ ಕಣ್ಣಿನ ವೈದ್ಯರನ್ನು ಭೇಟಿಯಾಗಬೇಕು?

ಒಂದೆರಡು ಬಾರಿ ಕಣ್ಣುಗಳಿಂದ ನೀರು ಬರುವುದು ಸಾಮಾನ್ಯವಾಗಿರಬಹುದು. ಆದರೆ ಸಮಸ್ಯೆ ಪದೇಪದೇ ಕಾಣಿಸಿಕೊಳ್ಳುತ್ತಿದ್ದರೆ ಅಥವಾ ಹಲವು ದಿನಗಳವರೆಗೆ ಮುಂದುವರಿದರೆ, ಕಣ್ಣಿನ ತಜ್ಞರನ್ನು ಸಂಪರ್ಕಿಸುವುದು ಸೂಕ್ತ.

ಈ ಕೆಳಗಿನ ಲಕ್ಷಣಗಳು ಕಂಡುಬಂದರೆ ವಿಶೇಷವಾಗಿ ನಿರ್ಲಕ್ಷಿಸಬೇಡಿ:

  • ಕಣ್ಣಿನಲ್ಲಿ ತೀವ್ರ ನೋವು
  • ಕಣ್ಣು ಹೆಚ್ಚು ಕೆಂಪಾಗುವುದು
  • ಕಣ್ಣಿನಲ್ಲಿ ಊತ
  • ದೃಷ್ಟಿ ಮಸುಕಾಗುವುದು
  • ಬೆಳಕನ್ನು ನೋಡಲು ಕಷ್ಟವಾಗುವುದು
  • ಕಣ್ಣಿಗೆ ಗಾಯವಾದ ನಂತರ ನಿರಂತರವಾಗಿ ನೀರು ಬರುವುದು
  • ಕಣ್ಣಿನಿಂದ ಹೆಚ್ಚು ಜಿಗುಟಾದ ಸ್ರಾವ ಹೊರಬರುವುದು
  • ಕಣ್ಣು ತೆರೆಯಲು ಕಷ್ಟವಾಗುವುದು

ಪದೇಪದೇ ಕಣ್ಣುಗಳಿಂದ ನೀರು ಬರುತ್ತಿದ್ದರೆ ಕಾರಣವನ್ನು ಸ್ವತಃ ಊಹಿಸುವ ಬದಲು ಕಣ್ಣಿನ ತಜ್ಞರಿಂದ ಪರೀಕ್ಷಿಸಿಕೊಳ್ಳುವುದು ಉತ್ತಮ.

ತುಮಕೂರಲ್ಲಿ KSRTC ಬಸ್‌ಗಳ ಮುಂದೆ ಮಲಗಿ ವಿದ್ಯಾರ್ಥಿಗಳ ಪ್ರತಿಭಟನೆ; ಪೊಲೀಸರ ಜೊತೆ ತಳ್ಳಾಟ-ನೂಕಾಟ!

0

ತುಮಕೂರು: ಗ್ರಾಮೀಣ ಭಾಗಗಳಿಗೆ ಸಮಯಕ್ಕೆ ಸರಿಯಾಗಿ ಸಮರ್ಪಕ ಕೆಎಸ್‌ಆರ್‌ಟಿಸಿ ಬಸ್ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ನೇತೃತ್ವದಲ್ಲಿ ವಿದ್ಯಾರ್ಥಿಗಳು ತುಮಕೂರು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಭಾರಿ ಪ್ರತಿಭಟನೆ ನಡೆಸಿದರು.

ಬಸ್‌ಗಳ ಮುಂದೆ ಅಡ್ಡಲಾಗಿ ಮಲಗಿ ಬಸ್ ಸಂಚಾರವನ್ನು ತಡೆದ ವಿದ್ಯಾರ್ಥಿಗಳು ಸರ್ಕಾರ ಹಾಗೂ ಸಾರಿಗೆ ಇಲಾಖೆಯ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದರು.

ಶಾಲೆ ಹಾಗೂ ಕಾಲೇಜುಗಳಿಗೆ ತೆರಳಲು ಸೂಕ್ತ ಸಮಯಕ್ಕೆ ಬಸ್‌ಗಳು ಸಿಗದೇ ನಿತ್ಯ ಪರದಾಡುತ್ತಿರುವ ವಿದ್ಯಾರ್ಥಿಗಳು, ಗ್ರಾಮೀಣ ಮಾರ್ಗಗಳಲ್ಲಿ ಹೆಚ್ಚುವರಿ ಬಸ್‌ಗಳನ್ನು ಓಡಿಸುವಂತೆ ಒತ್ತಾಯಿಸಿದರು. ಪ್ರತಿಭಟನೆಯ ವೇಳೆ ಬಸ್ ನಿಲ್ದಾಣದೊಳಗೆ ಬಸ್‌ಗಳ ಸಂಚಾರ ಕೆಲಕಾಲ ಅಸ್ತವ್ಯಸ್ತಗೊಂಡಿತು.

ಸಾರ್ವಜನಿಕ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದ್ದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಬಂದ ಪೊಲೀಸರು ಪ್ರತಿಭಟನೆಯನ್ನು ನಿಯಂತ್ರಿಸಲು ಮುಂದಾದರು. ಈ ವೇಳೆ ವಿದ್ಯಾರ್ಥಿಗಳು ಹಾಗೂ ಪೊಲೀಸರ ನಡುವೆ ತಳ್ಳಾಟ-ಪಟಾಟ ಮತ್ತು ವಾಗ್ವಾದ ನಡೆದಿದ್ದು, ಕೆಲಕಾಲ ಬಸ್ ನಿಲ್ದಾಣದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು.

ಕೊರಟಗೆರೆ, ಪಾವಗಡ, ಮಧುಗಿರಿ ಹಾಗೂ ಚಿಕ್ಕನಾಯಕನಹಳ್ಳಿ ಭಾಗಗಳಿಂದ ಸಾವಿರಾರು ವಿದ್ಯಾರ್ಥಿಗಳು ಪ್ರತಿದಿನ ತುಮಕೂರು ನಗರದ ಕಾಲೇಜುಗಳಿಗೆ ಸಂಚರಿಸುತ್ತಿದ್ದಾರೆ. ಈ ಮಾರ್ಗಗಳಲ್ಲಿ ಬಸ್‌ಗಳ ಕೊರತೆಯಿಂದ ಸಮಯಕ್ಕೆ ಕಾಲೇಜು ತಲುಪಲು ಸಾಧ್ಯವಾಗುತ್ತಿಲ್ಲ ಎಂದು ವಿದ್ಯಾರ್ಥಿಗಳು ಆರೋಪಿಸಿದರು.

ರೇಣುಕಾಸ್ವಾಮಿ ಹತ್ಯೆ ಪ್ರಕರಣ: ಪ್ರದೂಷ್ ಮಾಫಿ ಸಾಕ್ಷಿ ಅರ್ಜಿ ವಿಚಾರಣೆ ಆ.20ಕ್ಕೆ ಮುಂದೂಡಿಕೆ

ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಮಾಫಿ ಸಾಕ್ಷಿಯಾಗಿ ಪರಿಗಣಿಸುವಂತೆ ಆರೋಪಿ ಪ್ರದೂಷ್ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ 59ನೇ ಸಿಸಿಎಚ್ ನ್ಯಾಯಾಲಯ, ಆಗಸ್ಟ್ 20ಕ್ಕೆ ವಿಚಾರಣೆಯನ್ನು ಮುಂದೂಡಿದೆ.

ಪ್ರದೂಷ್ ಅವರ ವಿಚಾರಣೆ ನಡೆಸಿದ 59ನೇ ಸಿಸಿಎಚ್ ನ್ಯಾಯಾಲಯದ ನ್ಯಾಯಾಧೀಶೆ ಸುಜಾತಾ ಮಡಿವಾಳಪ್ಪ ಸಾಂಬ್ರಾಣಿ ಅವರು ಆದೇಶ ಕಾಯ್ದಿರಿಸಿ ವಿಚಾರಣೆ ಮುಂದೂಡಿದ್ದಾರೆ.

ಪ್ರದೂಷ್ ಪರ ವಕೀಲರು ಸಲ್ಲಿಸಿದ್ದ ಅರ್ಜಿಯಲ್ಲಿನ ಅಂಶಗಳನ್ನು ಅವರಿಂದಲೇ ಖಚಿತಪಡಿಸಿಕೊಳ್ಳಬೇಕು ಎಂದು ಕೋರಿದ ದರ್ಶನ್ ಪರ ವಕೀಲರು, ಪ್ರದೂಷ್ ಮಾಫಿ ಸಾಕ್ಷಿಯಾದರೆ ಪ್ರಕರಣದಿಂದ ಹೊರಬರಬಹುದು ಎಂಬ ಆಸೆಯಿಂದ ಈ ರೀತಿ ಹೇಳಿಕೆ ನೀಡುತ್ತಿರಬಹುದು ಎಂದು ಅಭಿಪ್ರಾಯಪಟ್ಟರು. ಅವರಿಗೆ ಯಾವುದಾದರೂ ಆಮಿಷ ಅಥವಾ ಒತ್ತಡ ಇರಬಹುದೇ ಎಂಬ ಬಗ್ಗೆ ವಿಚಾರಣೆ ನಡೆಸಬೇಕು ಎಂದು ನ್ಯಾಯಾಲಯದ ಮುಂದೆ ಮನವಿ ಮಾಡಿದರು.

ವಿಚಾರಣೆ ನಡೆಸಿದ ನ್ಯಾಯಾಧೀಶರು, ಮಾಫಿ ಸಾಕ್ಷಿಯ ಪರಿಣಾಮಗಳ ಕುರಿತು ಪ್ರದೂಷ್‌ಗೆ ಅರಿವು ಮೂಡಿಸಿದರು. ಹೇಳುವ ಅಂಶಗಳು ಸತ್ಯವಲ್ಲ ಎಂದಾದರೆ ಜೈಲಿನಲ್ಲೇ ಇರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ನ್ಯಾಯಾಧೀಶರ ಪ್ರಶ್ನೆಗೆ ಉತ್ತರಿಸಿದ ಪ್ರದೂಷ್, ತನ್ನ ಪರ ವಕೀಲರು ಎಲ್ಲ ಅಂಶಗಳನ್ನು ಗಮನಕ್ಕೆ ತಂದಿರುವುದಾಗಿ ತಿಳಿಸಿದರು. ಅಂತಿಮವಾಗಿ ಆದೇಶ ಕಾಯ್ದಿರಿಸಿದ ನ್ಯಾಯಾಧೀಶರು, ವಿಚಾರಣೆಯನ್ನು ಆಗಸ್ಟ್ 20ಕ್ಕೆ ಮುಂದೂಡಿದರು.

ಬರಗಾಲ ಪೀಡಿತ ಪ್ರದೇಶಗಳ ಅಧ್ಯಯನ ಪೂರ್ಣ: ಬಿಜೆಪಿ ತಂಡಗಳ ವರದಿ ಶೀಘ್ರ ಸರ್ಕಾರಕ್ಕೆ ಸಲ್ಲಿಕೆ – ಎನ್. ರವಿಕುಮಾರ್

0

ಬೆಂಗಳೂರು: ರಾಜ್ಯ ಸರ್ಕಾರಕ್ಕೆ ಬಿಜೆಪಿ ತಂಡಗಳ ಬರಗಾಲ ಅಧ್ಯಯನ ಸಂಬಂಧಿತ ವರದಿಯನ್ನು ಶೀಘ್ರವೇ ಸಲ್ಲಿಸಲಾಗುವುದು ಎಂದು ವಿಧಾನ ಪರಿಷತ್ತಿನ ವಿಪಕ್ಷ ಮುಖ್ಯ ಸಚೇತಕ ಎನ್.ರವಿಕುಮಾರ್ ತಿಳಿಸಿದ್ದಾರೆ.

ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಬರಗಾಲದ ಅಧ್ಯಯನಕ್ಕಾಗಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು 6 ತಂಡಗಳನ್ನು ರಚಿಸಿದ್ದರು ಎಂದು ವಿವರಿಸಿದರು. ಈ ತಂಡಗಳು ಜಿಲ್ಲೆಗಳು ಮಾತ್ರವಲ್ಲದೇ ಕೆಲವು ತಾಲೂಕುಗಳಿಗೂ ಭೇಟಿ ನೀಡಿ ಪರಿಶೀಲನೆ ನಡೆಸಿವೆ ಎಂದು ಹೇಳಿದರು.

ರಾಜ್ಯದಲ್ಲಿ ಭೀಕರ ಬರಗಾಲ ಇದ್ದರೂ ರಾಜ್ಯ ಸರ್ಕಾರ ನಯಾಪೈಸೆ ಬಿಡುಗಡೆ ಮಾಡಿಲ್ಲ ಎಂಬ ವಿಚಾರವನ್ನು ಗಮನಕ್ಕೆ ತರುವ ಉದ್ದೇಶ ಈ ವರದಿಯ ಹಿಂದಿದೆ ಎಂದು ರವಿಕುಮಾರ್ ತಿಳಿಸಿದರು. ರೈತರು ಸಂಕಷ್ಟದಲ್ಲಿದ್ದು, ಈ ಬಗ್ಗೆ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಬೇಕೆಂದು ನಿರ್ಧರಿಸಲಾಗಿದೆ ಎಂದರು. ಈ ಸಂಬಂಧ ವರದಿಯನ್ನು ಸಿದ್ಧಪಡಿಸಲಾಗಿದ್ದು, ಅದನ್ನು ಪಕ್ಷದ ರಾಜ್ಯಾಧ್ಯಕ್ಷರಿಗೆ ಸಲ್ಲಿಸಲಾಗುತ್ತಿದೆ ಎಂದು ಅವರು ವಿವರಿಸಿದರು.

ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ಪ್ರಕಟ: 17 ಕ್ರೀಡಾಪಟುಗಳಿಗೆ ಅರ್ಜುನ ಪ್ರಶಸ್ತಿ, ಈ ಬಾರಿ ಯಾರಿಗೂ ಖೇಲ್ ರತ್ನ ಇಲ್ಲ

0

ನವದೆಹಲಿ: ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳನ್ನು ಕ್ರೀಡಾ ಸಚಿವಾಲಯ ಪ್ರಕಟಿಸಿದ್ದು, ಈ ಬಾರಿ ಒಟ್ಟು 17 ಕ್ರೀಡಾಪಟುಗಳಿಗೆ ಪ್ರತಿಷ್ಠಿತ ಅರ್ಜುನ ಪ್ರಶಸ್ತಿಯನ್ನು ನೀಡಲು ನಿರ್ಧರಿಸಲಾಗಿದೆ. ಆದರೆ ಮೇಜರ್ ಧ್ಯಾನ್‌ಚಂದ್ ಖೇಲ್ ರತ್ನ ಪ್ರಶಸ್ತಿಯನ್ನು ಈ ಬಾರಿ ಯಾವುದೇ ಕ್ರೀಡಾಪಟುವಿಗೂ ನೀಡದಿರಲು ಸಚಿವಾಲಯ ತೀರ್ಮಾನಿಸಿದೆ.

ಆಯ್ಕೆ ಸಮಿತಿ ಶಿಫಾರಸು ಮಾಡಿದ್ದ ಪಟ್ಟಿಯನ್ನು ಸುಮಾರು ಆರು ತಿಂಗಳ ಬಳಿಕ ಮರುಪರಿಶೀಲನೆಗೆ ಒಳಪಡಿಸಿದ ಕ್ರೀಡಾ ಸಚಿವಾಲಯ, ಅಂತಿಮವಾಗಿ 17 ಕ್ರೀಡಾಪಟುಗಳ ಹೆಸರನ್ನು ಅರ್ಜುನ ಪ್ರಶಸ್ತಿಗೆ ಅನುಮೋದಿಸಿದೆ. 2014ರ ಬಳಿಕ ಖೇಲ್ ರತ್ನ ಪ್ರಶಸ್ತಿಯನ್ನು ಯಾವುದೇ ಕ್ರೀಡಾಪಟುವಿಗೂ ನೀಡದೇ ಇರುವುದೇ ಇದೇ ಮೊದಲ ಬಾರಿಯಾಗಿದೆ.

ಖೇಲ್ ರತ್ನ ಪ್ರಶಸ್ತಿಗೆ ಹಾಕಿ ಆಟಗಾರ ಹಾರ್ದಿಕ್ ಸಿಂಗ್ ಅವರ ಹೆಸರನ್ನು ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಮೂರ್ತಿ ಅರುಣ್ ಕುಮಾರ್ ಮಿಶ್ರಾ ನೇತೃತ್ವದ ಆಯ್ಕೆ ಸಮಿತಿ ಶಿಫಾರಸು ಮಾಡಿತ್ತು. ಆದರೆ ಅಂತಿಮ ಪಟ್ಟಿಯಲ್ಲಿ ಹಾರ್ದಿಕ್ ಸಿಂಗ್ ಅವರ ಹೆಸರು ಕಾಣಿಸಿಕೊಂಡಿಲ್ಲ.

ಇನ್ನು ಅರ್ಜುನ ಪ್ರಶಸ್ತಿಗಾಗಿ ಆಯ್ಕೆ ಸಮಿತಿಯು ಒಟ್ಟು 24 ಹೆಸರುಗಳನ್ನು ಶಿಫಾರಸು ಮಾಡಿತ್ತು. ಆದರೆ ಪ್ರಶಸ್ತಿಯ ಘನತೆ ಹಾಗೂ ಅರ್ಹತೆಯ ಮಾನದಂಡವನ್ನು ಕಾಪಾಡುವ ಉದ್ದೇಶದಿಂದ ಸಚಿವಾಲಯವು 17 ಕ್ರೀಡಾಪಟುಗಳ ಹೆಸರನ್ನು ಮಾತ್ರ ಅಂತಿಮಗೊಳಿಸಿದೆ.

ಅರ್ಜುನ ಪ್ರಶಸ್ತಿಗೆ ಆಯ್ಕೆಯಾದ 17 ಕ್ರೀಡಾಪಟುಗಳು

ಅಥ್ಲೆಟಿಕ್ಸ್‌ನ ತೇಜಸ್ವಿನ್ ಶಂಕರ್, ಪ್ರಿಯಾಂಕಾ ಗೋಸ್ವಾಮಿ ಹಾಗೂ ಮುಹಮ್ಮದ್ ಅಜ್ಮಲ್, ಬಾಕ್ಸಿಂಗ್‌ನ ನರೇಂದರ್, ಚೆಸ್‌ನ ವಿದಿತ್ ಗುಜರಾತಿ ಹಾಗೂ ದಿವ್ಯಾ ದೇಶಮುಖ್, ಕಿವುಡರ ಶೂಟಿಂಗ್‌ನ ಧನುಷ್ ಶ್ರೀಕಾಂತ್, ಹಾಕಿಯ ರಾಜ್‌ಕುಮಾರ್ ಪಾಲ್ ಹಾಗೂ ಲಾಲ್ರೆಮ್ಸಿಯಾಮಿ, ಕಬಡ್ಡಿಯ ಸುರ್ಜಿತ್ ಹಾಗೂ ಪೂಜಾ, ಪ್ಯಾರಾ ಶೂಟಿಂಗ್‌ನ ರುದ್ರಾಂಶ್ ಖಂಡೇಲ್‌ವಾಲ್, ಪ್ಯಾರಾ ಅಥ್ಲೆಟಿಕ್ಸ್‌ನ ಏಕ್ತಾ ಭ್ಯಾನ್, ರೋಯಿಂಗ್‌ನ ಅರವಿಂದ್ ಸಿಂಗ್, ಶೂಟಿಂಗ್‌ನ ಅಖಿಲ್ ಶಿಯೋರಾನ್, ಬ್ಯಾಡ್ಮಿಂಟನ್‌ನ ತ್ರೀಸಾ ಜೋಲಿ ಹಾಗೂ ಗಾಯತ್ರಿ ಗೋಪಿಚಂದ್ ಅವರಿಗೆ ಅರ್ಜುನ ಪ್ರಶಸ್ತಿ ಘೋಷಿಸಲಾಗಿದೆ.

ಜೀವಮಾನ ಸಾಧನೆಗಾಗಿ ಅರ್ಜುನ ಪ್ರಶಸ್ತಿ

ಫುಟ್‌ಬಾಲ್ ಕ್ಷೇತ್ರದ ಐ. ಅರುಮೈನಾಯಗಂ ಅವರಿಗೆ ಅರ್ಜುನ ಪ್ರಶಸ್ತಿಯ ಜೀವಮಾನ ಸಾಧನೆ ವಿಭಾಗದಲ್ಲಿ ಗೌರವ ನೀಡಲಾಗಿದೆ. ಅವರು 1962ರ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಭಾರತೀಯ ತಂಡದ ಸದಸ್ಯರಾಗಿದ್ದರು.

ದ್ರೋಣಾಚಾರ್ಯ ಪ್ರಶಸ್ತಿ

ದ್ರೋಣಾಚಾರ್ಯ ಪ್ರಶಸ್ತಿಯ ಸಾಮಾನ್ಯ ವಿಭಾಗದಲ್ಲಿ ಬಾಕ್ಸಿಂಗ್‌ನ ಚೋಟೆ ಲಾಲ್ ಯಾದವ್, ಪರ್ವೀರ್ ಸಿಂಗ್ ಹಾಗೂ ನೇಹಾ ಚವಾಣ್ ಅವರಿಗೆ ಪ್ರಶಸ್ತಿ ಘೋಷಿಸಲಾಗಿದೆ.

ಜೀವಮಾನ ಸಾಧನೆ ವಿಭಾಗದಲ್ಲಿ ಧರ್ಮೇಂದ್ರ ಯಾದವ್ ಹಾಗೂ ವೀರೇಂದ್ರ ಕುಮಾರ್ ಅವರಿಗೆ ದ್ರೋಣಾಚಾರ್ಯ ಪ್ರಶಸ್ತಿ ನೀಡಲಾಗುತ್ತಿದೆ.

ಕ್ರಿಕೆಟಿಗರಿಗೆ ಈ ಬಾರಿಯೂ ಸ್ಥಾನವಿಲ್ಲ

1991ರಲ್ಲಿ ಪ್ರಶಸ್ತಿ ಆರಂಭವಾದ ಬಳಿಕ ಈ ಬಾರಿ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳು ಅತ್ಯಂತ ತಡವಾಗಿ ಪ್ರಕಟಗೊಂಡಿವೆ. ಗಮನಾರ್ಹ ಸಂಗತಿಯೆಂದರೆ ಈ ಬಾರಿಯ ಪಟ್ಟಿಯಲ್ಲೂ ಯಾವುದೇ ಕ್ರಿಕೆಟಿಗರಿಗೆ ಸ್ಥಾನ ದೊರೆತಿಲ್ಲ.

2023ರಲ್ಲಿ ವೇಗಿ ಮೊಹಮ್ಮದ್ ಶಮಿ ಅವರಿಗೆ ಅರ್ಜುನ ಪ್ರಶಸ್ತಿ ಲಭಿಸಿದ ಬಳಿಕ ಯಾವುದೇ ಕ್ರಿಕೆಟಿಗರು ಈ ಗೌರವಕ್ಕೆ ಆಯ್ಕೆಯಾಗಿಲ್ಲ. ಖೇಲ್ ರತ್ನ ಪ್ರಶಸ್ತಿಯು ₹25 ಲಕ್ಷ ನಗದು ಬಹುಮಾನ ಹಾಗೂ ಸ್ಮರಣಿಕೆಯನ್ನು ಒಳಗೊಂಡಿದ್ದರೆ, ಅರ್ಜುನ ಪ್ರಶಸ್ತಿಯು ₹15 ಲಕ್ಷ ನಗದು ಬಹುಮಾನ ಮತ್ತು ಸ್ಮರಣಿಕೆಯನ್ನು ಒಳಗೊಂಡಿದೆ.

ಸಾಮಾನ್ಯವಾಗಿ ಹಾಕಿ ದಿಗ್ಗಜ ಮೇಜರ್ ಧ್ಯಾನ್‌ಚಂದ್ ಅವರ ಜನ್ಮದಿನವಾದ ಆಗಸ್ಟ್ 29ರಂದು ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತಿತ್ತು. ಆದರೆ ಕೋವಿಡ್-19 ಆರೋಗ್ಯ ನಿಯಮಾವಳಿಗಳ ಹಿನ್ನೆಲೆಯಲ್ಲಿ 2020ರಿಂದ ಸಮಾರಂಭದ ಸ್ವರೂಪದಲ್ಲಿ ಬದಲಾವಣೆ ಕಂಡುಬಂದಿತ್ತು. ನಂತರದ ವರ್ಷಗಳಲ್ಲಿ ವಿವಿಧ ಕಾರಣಗಳಿಂದ ಪ್ರಶಸ್ತಿ ಪ್ರದಾನ ಸಮಾರಂಭ ವಿಳಂಬಗೊಂಡಿದೆ. ಕಳೆದ ವರ್ಷ ಪ್ರಕಟಗೊಂಡ ಪ್ರಶಸ್ತಿಗಳನ್ನು ಈ ವರ್ಷದ ಜನವರಿ 17ರಂದು ಪ್ರದಾನ ಮಾಡಲಾಗಿತ್ತು.

ಶಿವಶಂಕರಪ್ಪ ಅಮಾನತು ರದ್ದುಗೊಳಿಸಿದ ಹೈಕೋರ್ಟ್: 7 ದಿನದಲ್ಲಿ ಮರುನೇಮಕಕ್ಕೆ ಆದೇಶ

0

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ ನೇಮಕಾತಿಯಲ್ಲಿ ಭ್ರಷ್ಟಾಚಾರ ಆರೋಪ ಹಾಗೂ ಜಾರಿ ನಿರ್ದೇಶನಾಲಯದ ತನಿಖೆಯ ನಡುವೆಯೇ, ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಅವರಿಗೆ ಹೈಕೋರ್ಟ್‌ನಿಂದ ದೊಡ್ಡ ರಿಲೀಫ್ ಸಿಕ್ಕಿದೆ. ರಾಜ್ಯಪಾಲರು ಹೊರಡಿಸಿದ್ದ ಅಮಾನತು ಆದೇಶವನ್ನು ಹೈಕೋರ್ಟ್ ಏಕಸದಸ್ಯ ಪೀಠ ರದ್ದುಗೊಳಿಸಿದೆ.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಹೈಕೋರ್ಟ್ ಪೀಠ, ನಿಯಮಾವಳಿಗಳ ಉಲ್ಲಂಘನೆಯಾಗಿದೆ ಎಂದು ಅಭಿಪ್ರಾಯಪಟ್ಟಿದೆ. ಕೆಪಿಎಸ್‌ಸಿ ಅಧ್ಯಕ್ಷರನ್ನು ಅಮಾನತುಗೊಳಿಸುವಂತೆ ರಾಜ್ಯ ಸಚಿವ ಸಂಪುಟ ಯಾವುದೇ ಸಲಹೆ ಅಥವಾ ಶಿಫಾರಸು ಮಾಡಿರಲಿಲ್ಲ. ಸಂವಿಧಾನಬದ್ಧವಾಗಿ ರಾಜ್ಯಪಾಲರು ಸಚಿವ ಸಂಪುಟದ ತೀರ್ಮಾನವನ್ನಷ್ಟೇ ಅನುಸರಿಸಬೇಕಿರುತ್ತದೆ. ಆದರೆ ಈ ಪ್ರಕ್ರಿಯೆಯನ್ನು ಉಲ್ಲಂಘಿಸಿ ಆದೇಶ ಹೊರಡಿಸಲಾಗಿದೆ ಎಂದು ನ್ಯಾಯಪೀಠ ತಿಳಿಸಿದೆ.

ಜುಲೈ 10ರಂದು ರಾಜ್ಯಪಾಲರು ಹೊರಡಿಸಿದ್ದ ಅಮಾನತು ಆದೇಶವನ್ನು ರದ್ದುಪಡಿಸಿರುವ ಹೈಕೋರ್ಟ್, ಮುಂದಿನ 7 ದಿನಗಳ ಒಳಗೆ ಶಿವಶಂಕರಪ್ಪ ಸಾಹುಕಾರ್ ಅವರನ್ನು ಕೆಪಿಎಸ್‌ಸಿ ಅಧ್ಯಕ್ಷರನ್ನಾಗಿ ಮರುನೇಮಕ ಮಾಡುವಂತೆ ಆದೇಶಿಸಿದೆ. ಆದರೆ, ತಮ್ಮ ಪುತ್ರಿಯ ನೇಮಕಾತಿಗೆ ಸಂಬಂಧಿಸಿದ ಯಾವುದೇ ಆಡಳಿತಾತ್ಮಕ ಪ್ರಕ್ರಿಯೆ ಅಥವಾ ನಿರ್ಣಯಗಳಲ್ಲಿ ಭಾಗಿಯಾಗಬಾರದು, ಯಾವುದೇ ತೀರ್ಮಾನ ತೆಗೆದುಕೊಳ್ಳಬಾರದು ಎಂದು ನಿರ್ಬಂಧ ವಿಧಿಸಿದೆ.

ಕೆಪಿಎಸ್‌ಸಿ ಅಧ್ಯಕ್ಷರ ವಿರುದ್ಧ ಕೇಳಿಬಂದಿರುವ ಭ್ರಷ್ಟಾಚಾರ ಆರೋಪಗಳ ಸರಿ-ತಪ್ಪುಗಳ ಬಗ್ಗೆ ತಾನು ಯಾವುದೇ ತೀರ್ಮಾನ ನೀಡಿಲ್ಲ, ಅಮಾನತು ಪ್ರಕ್ರಿಯೆಗೆ ಸಂಬಂಧಿಸಿದಂತೆ ಮಾತ್ರ ಈ ಆದೇಶ ಪ್ರಕಟಿಸಲಾಗಿದೆ ಎಂದು ಹೈಕೋರ್ಟ್ ಏಕಸದಸ್ಯ ಪೀಠ ಸ್ಪಷ್ಟಪಡಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಹಂತದಲ್ಲೂ ಯಾರ ಮೇಲೂ ಪ್ರಭಾವ ಬೀರಲು ಪ್ರಯತ್ನಿಸಬಾರದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

ಅಮಾನತು ಪ್ರಕ್ರಿಯೆಯಲ್ಲಿದ್ದ ಲೋಪದ ಹಿನ್ನೆಲೆಯಲ್ಲಿ ಈ ಆದೇಶ ನೀಡಲಾಗಿದೆಯೇ ಹೊರತು, ಆರೋಪಗಳಿಗೆ ಸಂಬಂಧಿಸಿದಂತೆ ಸಕ್ಷಮ ಪ್ರಾಧಿಕಾರವು ಕಾನೂನು ಪ್ರಕಾರ ಅಗತ್ಯ ಕ್ರಮ ಕೈಗೊಳ್ಳಲು ಸ್ವತಂತ್ರವಾಗಿದೆ ಎಂದು ಹೈಕೋರ್ಟ್ ಹೇಳಿದೆ. ಶಿವಶಂಕರಪ್ಪ ಪರವಾಗಿ ಹಿರಿಯ ವಕೀಲ ಅರುಣ್ ಶ್ಯಾಮ್ ವಾದ ಮಂಡಿಸಿ, ರಾಜ್ಯಪಾಲರ ನಿರ್ಧಾರ ಕಾನೂನುಬಾಹಿರ ಎಂದು ವಾದಿಸಿದ್ದರು.

ಹನೂರು ಶೂಟೌಟ್: ಮೃತರ ಕುಟುಂಬಕ್ಕೆ ತಲಾ 10 ಲಕ್ಷ ಪರಿಹಾರ ಘೋಷಿಸಿದ ತಮಿಳುನಾಡು

0

ಚೆನ್ನೈ: ಚಾಮರಾಜನಗರ ಜಿಲ್ಲೆಯ ಹನೂರಿನಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಗುಂಡೇಟಿಗೆ ಮೂವರು ಬಲಿಯಾದ ಘಟನೆಯನ್ನು ತಮಿಳುನಾಡು ಸಿಎಂ ವಿಜಯ್ ಖಂಡಿಸಿದ ಬೆನ್ನಲ್ಲೇ, ಮೃತ ಕುಟುಂಬಕ್ಕೆ ತಲಾ ₹10 ಲಕ್ಷ ಪರಿಹಾರವನ್ನು ನೆರೆ ರಾಜ್ಯದ ಸರ್ಕಾರ ಘೋಷಿಸಿದೆ.

ತಮಿಳುನಾಡು ವಿಧಾನಸಭೆಯಲ್ಲೂ ಹನೂರು ಶೂಟೌಟ್ ವಿಚಾರ ಪ್ರಸ್ತಾಪವಾಗಿದ್ದು, ಡಿಎಂಕೆ ಮತ್ತು ಎಐಡಿಎಂಕೆ ಮುಖಂಡರು ಈ ಬಗ್ಗೆ ಸದನದಲ್ಲಿ ಧ್ವನಿ ಎತ್ತಿದ್ದಾರೆ. ಮೃತರ ಕುಟುಂಬಗಳಿಗೆ ತಲಾ ₹10 ಲಕ್ಷ ಪರಿಹಾರ ನೀಡುವುದಾಗಿ ಅರಣ್ಯ ಸಚಿವ ರಂಜಿತ್ ಕುಮಾರ್ ಘೋಷಿಸಿದ್ದಾರೆ. ಜೊತೆಗೆ, ಕರ್ನಾಟಕ ಸರ್ಕಾರ ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂಬ ಆಗ್ರಹವೂ ಸದನದಲ್ಲಿ ವ್ಯಕ್ತವಾಗಿದೆ.

ಹನೂರಿನಲ್ಲಿ ನಡೆದಿರುವ ಘಟನೆ ಕುರಿತು ತಮಿಳುನಾಡು ವಿಧಾನಸಭೆಯಲ್ಲಿ ಭಾರಿ ಚರ್ಚೆಯಾಗಿದೆ. ಮೃತರೆಲ್ಲರೂ ತಮಿಳುನಾಡು ಮೂಲದವರಾಗಿದ್ದು, ಮೆಟ್ಟೂರು ಜಲಾಶಯ ನಿರ್ಮಾಣದ ಕಾರಣದಿಂದ ಹನೂರಿನಲ್ಲಿ ವಾಸವಿದ್ದರು ಎಂದು ಸದನದಲ್ಲಿ ಪ್ರಸ್ತಾಪವಾಗಿದೆ. ಅವರೆಲ್ಲ ತಮಿಳರಾಗಿದ್ದು, ಅವರ ರಕ್ಷಣೆಯಾಗಬೇಕು ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ. ಅರಣ್ಯಾಧಿಕಾರಿಗಳು ಬಿಡುಗಡೆ ಮಾಡಿದ್ದ ಫೋಟೋಗಳಲ್ಲಿ ಸ್ಟಿಕ್ಕರ್ ತೆಗೆಯದ ಹೊಸ ಚಪ್ಪಲಿ ಇರುವ ಬಗ್ಗೆಯೂ ಸದನದಲ್ಲಿ ಚರ್ಚೆಯಾಗಿದೆ. ಮೃತರ ಕುಟುಂಬಕ್ಕೆ ₹1 ಕೋಟಿ ಪರಿಹಾರ ನೀಡಬೇಕು ಮತ್ತು ಪ್ರಕರಣದ ಬಗ್ಗೆ ಸಿಬಿಐ ತನಿಖೆಯಾಗಬೇಕು ಎಂದು ಶಾಸಕರು ಆಗ್ರಹಿಸಿದ್ದಾರೆ.

ಮತ್ತೊಂದೆಡೆ, ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ತೋಮಿಯರ್‌ಪಾಳ್ಯಕ್ಕೆ ತಮಿಳುನಾಡಿನ ಮಾಜಿ ಶಾಸಕರ ತಂಡ ಭೇಟಿ ನೀಡಿದೆ. ತೋಮಿಯರ್‌ಪಾಳ್ಯದ ಚರ್ಚ್‌ನಲ್ಲಿ ಘಟನೆ ಸಂಬಂಧ ಸಭೆಯನ್ನೂ ನಡೆಸಲಾಗಿದೆ. ತಮಿಳರ ಹತ್ಯೆಯಾಗಿದೆ ಎಂದು ಉಲ್ಲೇಖಿಸಿ ಘಟನೆಯನ್ನು ಖಂಡಿಸಿ ತಮಿಳುನಾಡು ಸಿಎಂ ವಿಜಯ್ ಎಕ್ಸ್ ಪೋಸ್ಟ್ ಮಾಡಿದ್ದ ಬೆನ್ನಲ್ಲೇ ಈ ಮಹತ್ವದ ಬೆಳವಣಿಗೆಗಳು ನಡೆದಿವೆ.

ವಂದೇ ಮಾತರಂಗೆ ಕಾಂಗ್ರೆಸ್ ವಿರೋಧವಿಲ್ಲ, ಆದರೆ ಎರಡು ಪ್ಯಾರಾ ಮಾತ್ರ ಹಾಡುತ್ತೇವೆ: ಬಿ.ಕೆ. ಹರಿಪ್ರಸಾದ್

0

ನವದೆಹಲಿ: ಕಾಂಗ್ರೆಸ್ ಕಾರ್ಯಕ್ರಮಗಳಲ್ಲಿ ‘ವಂದೇ ಮಾತರಂ’ ಗೀತೆಯನ್ನು ಪೂರ್ಣವಾಗಿ ಹಾಡುವುದಿಲ್ಲ, ಬದಲಿಗೆ ಎರಡು ಪ್ಯಾರಾಗಳನ್ನಷ್ಟೇ ಹಾಡಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಸ್ಪಷ್ಟಪಡಿಸಿದ್ದಾರೆ.

ಸೋನಿಯಾ ಗಾಂಧಿ ಅವರು ವಂದೇ ಮಾತರಂಗೆ ಅಪಮಾನ ಮಾಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಪ್ರತಿಕ್ರಿಯಿಸಿದ ಹರಿಪ್ರಸಾದ್, ವಂದೇ ಮಾತರಂಗೆ ಕಾಂಗ್ರೆಸ್‌ನ ವಿರೋಧವಿಲ್ಲ ಎಂದು ಸ್ಪಷ್ಟಪಡಿಸಿದರು. ಬಂಕಿಮಚಂದ್ರ ಚಟರ್ಜಿ ಬರೆದಿರುವ ಗೀತೆಯ ಎರಡು ಪ್ಯಾರಾಗಳನ್ನು ಮಾತ್ರ ಕಾಂಗ್ರೆಸ್ ಕಾರ್ಯಕ್ರಮಗಳಲ್ಲಿ ಹಾಡಲಾಗುವುದು, ನೇಣು ಹಾಕಿದರೂ ಜೈಲಿಗೆ ಹಾಕಿದರೂ ಇದೇ ನಿಲುವು ಮುಂದುವರಿಯಲಿದೆ ಎಂದು ಅವರು ಹೇಳಿದರು.

ವಂದೇ ಮಾತರಂ ಅನ್ನು ಕಡ್ಡಾಯಗೊಳಿಸುವ ಮೂಲಕ ರಾಷ್ಟ್ರಗೀತೆ ‘ಜನಗಣಮನ’ವನ್ನು ಎರಡನೇ ದರ್ಜೆಗೆ ತರುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದ ಅವರು, ರಾಷ್ಟ್ರಗೀತೆ, ರಾಷ್ಟ್ರಧ್ವಜ ಹಾಗೂ ರಾಷ್ಟ್ರಚಿಹ್ನೆಗೆ ಬಿಜೆಪಿ ಮತ್ತು ಆರ್‌ಎಸ್‌ಎಸ್ ಅಪಮಾನ ಮಾಡಿದೆ ಎಂದು ಟೀಕಿಸಿದರು. ರಾಜ್ಯ ಸರ್ಕಾರದ ಕಾರ್ಯಕ್ರಮಗಳಲ್ಲಿ ಪೂರ್ಣ ಗೀತೆ ಹಾಡುವ ವಿಚಾರ ಆಯಾ ಸರ್ಕಾರಕ್ಕೆ ಬಿಟ್ಟಿದ್ದು, ಜನರಿಂದ ಆಯ್ಕೆಯಾದ ಸರ್ಕಾರ ಕಾನೂನು ಪಾಲಿಸಲಿ, ತಮ್ಮ ಆಕ್ಷೇಪ ಇಲ್ಲ ಎಂದು ಸ್ಪಷ್ಟಪಡಿಸಿದರು.

ಆರ್‌ಎಸ್‌ಎಸ್ ಹಾಗೂ ಹಿಂದೂ ಮಹಾಸಭಾದ ಚಟುವಟಿಕೆಗಳನ್ನು ಪ್ರಸ್ತಾಪಿಸಿದ ಹರಿಪ್ರಸಾದ್, ‘ಸದಾ ವತ್ಸಲೇ’ಯನ್ನು ರಾಷ್ಟ್ರಗೀತೆ ಎಂದು ಪರಿಗಣಿಸಬಹುದೇ ಎಂದು ಪ್ರಶ್ನಿಸಿದರು. ಆಜಾದ್ ಹಿಂದ್ ಜಿಂದಾಬಾದ್, ಇಂಕಲಾಬ್ ಜಿಂದಾಬಾದ್ ಘೋಷಣೆಗಳನ್ನು ಬಿಜೆಪಿಯವರು ಕೂಗುತ್ತಾರೆಯೇ ಎಂದು ಪ್ರಶ್ನಿಸಿದ ಅವರು, ವಂದೇ ಮಾತರಂ ವಿಚಾರವನ್ನು ಮುಂದಿಟ್ಟುಕೊಂಡು ದೇಶದಲ್ಲಿ ಸೌಹಾರ್ದತೆ ಹಾಳು ಮಾಡುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದರು.

ಸೋನಿಯಾ ಗಾಂಧಿ ವಿರುದ್ಧದ ಆರೋಪವನ್ನು ಆರ್‌ಎಸ್‌ಎಸ್‌ನ ಕುತಂತ್ರ ಎಂದು ಬಣ್ಣಿಸಿದ ಹರಿಪ್ರಸಾದ್, ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕುರ್ಚಿ ಕೇಳಿದವರು ಸೋನಿಯಾ ಗಾಂಧಿ ಎಂಬ ಆರೋಪಗಳ ಬಗ್ಗೆಯೂ ಪ್ರತಿಕ್ರಿಯಿಸಿದರು. 2024ಕ್ಕೂ ಮುನ್ನ ಸಂವಿಧಾನ ಬದಲಿಸಲು ಬಿಜೆಪಿ ಮುಂದಾಗಿತ್ತು, ಆದರೆ ಜನರು ಸೂಕ್ತ ಉತ್ತರ ನೀಡಿದ್ದಾರೆ ಎಂದು ಅವರು ಹೇಳಿದರು.

‘ಶಾರುಖ್ ನನ್ನ ಸ್ನೇಹಿತನಲ್ಲ, ಸಹೋದ್ಯೋಗಿ’: 16 ವರ್ಷಗಳ ಮೌನದ ಬಗ್ಗೆ ಸನ್ನಿ ಡಿಯೋಲ್ ಮಾತು

ಮುಂಬೈ: ಬಾಲಿವುಡ್‌ನ ಎರಡು ದೊಡ್ಡ ಹೆಸರುಗಳಾದ ಸನ್ನಿ ಡಿಯೋಲ್ ಮತ್ತು ಶಾರುಖ್ ಖಾನ್ ನಡುವಿನ ಹಳೆಯ ಸಂಘರ್ಷ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. 1993ರ ‘ಡರ್’ ಚಿತ್ರದ ಚಿತ್ರೀಕರಣದ ಸಂದರ್ಭದಲ್ಲಿ ಕ್ಲೈಮ್ಯಾಕ್ಸ್ ದೃಶ್ಯದ ವಿಚಾರವಾಗಿ ಇಬ್ಬರ ನಡುವೆ ದೊಡ್ಡ ಜಟಾಪಟಿ ನಡೆದಿತ್ತು. ಈ ವೇಳೆ ತೀವ್ರ ಕೋಪಗೊಂಡಿದ್ದ ಸನ್ನಿ ಡಿಯೋಲ್ ತಮ್ಮ ಕೈಗಳಿಂದಲೇ ಜೀನ್ಸ್ ಹರಿದುಕೊಂಡಿದ್ದಾಗಿ ಇದೀಗ ಹೇಳಿದ್ದಾರೆ.

ಇತ್ತೀಚಿನ ಸಂದರ್ಶನದಲ್ಲಿ ಈ ಘಟನೆಯ ಕುರಿತು ಮಾತನಾಡಿದ ಸನ್ನಿ, ಆ ಸಂದರ್ಭದಲ್ಲಿ ತಮ್ಮ ವಯಸ್ಸು ಕಡಿಮೆಯಾಗಿತ್ತು ಹಾಗೂ ನಟರಲ್ಲಿ ಕಂಡುಬರುವ ಅಭದ್ರತೆಯೂ ಸಂಘರ್ಷಕ್ಕೆ ಕಾರಣವಾಗಬಹುದು ಎಂದು ಹೇಳಿದ್ದಾರೆ.

ಅವರ ಪ್ರಕಾರ, ನಟರು ತಮ್ಮ ಪಾತ್ರದ ಮೇಲೆ ಮಾತ್ರ ಗಮನಹರಿಸಬೇಕು. ಆದರೆ ಪಾತ್ರಕ್ಕೆ ಸಿಗುವ ಪ್ರಾಮುಖ್ಯತೆ, ಪರದೆ ಮೇಲಿನ ಪ್ರಭಾವ ಸೇರಿದಂತೆ ಹಲವು ವಿಚಾರಗಳಲ್ಲಿ ಅಭದ್ರತೆ ಮೂಡಿದಾಗ ಅನಗತ್ಯ ಗೊಂದಲಗಳು ಸೃಷ್ಟಿಯಾಗುತ್ತವೆ.

‘ಡರ್’ನಲ್ಲಿ ಸನ್ನಿ ಡಿಯೋಲ್ ನಾಯಕನಾಗಿ ನಟಿಸಿದ್ದರೆ, ಶಾರುಖ್ ಖಾನ್ ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಆದರೆ ಶಾರುಖ್ ನಿರ್ವಹಿಸಿದ ಪಾತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ಸಿಕ್ಕಿದ್ದು ಸನ್ನಿ ಅವರ ಅಸಮಾಧಾನಕ್ಕೆ ಕಾರಣವಾಗಿತ್ತು. ಇದೇ ವಿಚಾರ ಕ್ಲೈಮ್ಯಾಕ್ಸ್ ದೃಶ್ಯದ ಸಂದರ್ಭದಲ್ಲಿ ದೊಡ್ಡ ವಿವಾದಕ್ಕೆ ತಿರುಗಿತ್ತು.

ಜಗಳದ ಬಳಿಕ ಇಬ್ಬರೂ ಸುಮಾರು 16 ವರ್ಷಗಳ ಕಾಲ ಪರಸ್ಪರ ಮಾತನಾಡಲಿಲ್ಲ. ಆದರೆ ತಾವು ಶಾರುಖ್ ಖಾನ್ ಅವರನ್ನು ಎಂದಿಗೂ ಶತ್ರುವಾಗಿ ನೋಡಿರಲಿಲ್ಲ ಎಂದು ಸನ್ನಿ ಸ್ಪಷ್ಟಪಡಿಸಿದ್ದಾರೆ.

ಇಂದಿನ ಸಂಬಂಧದ ಕುರಿತು ಮಾತನಾಡಿದ ಅವರು, “ಶಾರುಖ್ ಖಾನ್ ನನ್ನ ಸ್ನೇಹಿತನಲ್ಲ, ಅವರು ನನ್ನ ಸಹೋದ್ಯೋಗಿ” ಎಂಬ ನಿಲುವು ವ್ಯಕ್ತಪಡಿಸಿದ್ದಾರೆ. ಚಿತ್ರರಂಗದಲ್ಲಿ ಕೆಲಸ ಮಾಡುವವರನ್ನು ವೃತ್ತಿಪರ ಸಹೋದ್ಯೋಗಿಗಳಾಗಿ ನೋಡುವುದಾಗಿ ಹಾಗೂ ನಿಜವಾದ ಸ್ನೇಹ ಬಾಲ್ಯದಲ್ಲೇ ಸಿಗುತ್ತದೆ ಎಂದು ಹೇಳಿದ್ದಾರೆ.

ಸುಮಾರು ಒಂದೂವರೆ ದಶಕದ ಈ ಮೌನಕ್ಕೆ 2023ರಲ್ಲಿ ತೆರೆ ಬಿದ್ದಿತ್ತು. ಸನ್ನಿ ಡಿಯೋಲ್ ಅಭಿನಯದ ‘ಗದರ್ 2’ ಭರ್ಜರಿ ಯಶಸ್ಸು ಕಂಡ ಸಂದರ್ಭದಲ್ಲಿ ಇಬ್ಬರು ಮತ್ತೆ ಆತ್ಮೀಯವಾಗಿ ಭೇಟಿಯಾಗಿದ್ದರು. ಆ ಬಳಿಕ ‘ಡರ್’ ಕಾಲದ ವೈಮನಸ್ಸು ಕೊನೆಗೊಂಡಿತ್ತು.

ರಾಷ್ಟ್ರಗೀತೆ ಬದಲಾವಣೆಗೆ ಮುಖೇಶ್ ಖನ್ನಾ ಒತ್ತಾಯ: ‘ಜನ ಗಣ ಮನ’ ವಿರುದ್ಧ ನಟನ ವಿವಾದಾತ್ಮಕ ಹೇಳಿಕೆ

ಮುಂಬೈ: ರಾಷ್ಟ್ರಗೀತೆ ‘ಜನ ಗಣ ಮನ’ ಕುರಿತು ಬಾಲಿವುಡ್ ನಟ ಮುಖೇಶ್ ಖನ್ನಾ ನೀಡಿರುವ ಹೇಳಿಕೆ ಇದೀಗ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ‘ಜನ ಗಣ ಮನ’ ಬದಲಿಗೆ ‘ವಂದೇ ಮಾತರಂ’ ಅನ್ನು ಭಾರತದ ಅಧಿಕೃತ ರಾಷ್ಟ್ರಗೀತೆಯನ್ನಾಗಿ ಮಾಡಬೇಕು ಎಂದು ‘ಶಕ್ತಿಮಾನ್’ ಖ್ಯಾತಿಯ ನಟ ಆಗ್ರಹಿಸಿದ್ದಾರೆ.

ಸ್ವಾತಂತ್ರ್ಯ ಹೋರಾಟಗಾರರ ಸ್ಮರಣಾರ್ಥ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹೊಸ ದೇಶಭಕ್ತಿ ಗೀತೆ ‘ಆವೋ ಬಚ್ಚೋಂ’ ಬಿಡುಗಡೆ ಮಾಡಿದ ಸಂದರ್ಭದಲ್ಲಿ ನೀಡಿದ ಸಂದರ್ಶನದಲ್ಲಿ ಮುಖೇಶ್ ಖನ್ನಾ ಈ ಹೇಳಿಕೆ ನೀಡಿದ್ದಾರೆ.

‘ಜನ ಗಣ ಮನ’ ಭಾರತದ ನಿಜವಾದ ರಾಷ್ಟ್ರಗೀತೆಯಲ್ಲ ಎಂದು ಪ್ರತಿಪಾದಿಸಿರುವ ಅವರು, ಈ ಗೀತೆಯನ್ನು ರವೀಂದ್ರನಾಥ ಠಾಗೋರ್ ಅವರು ಬ್ರಿಟಿಷ್ ರಾಜಮನೆತನವನ್ನು ಹೊಗಳಲು ಬರೆದಿದ್ದರು ಎಂಬ ವಾದವನ್ನು ಮುಂದಿಟ್ಟಿದ್ದಾರೆ.

‘ವಂದೇ ಮಾತರಂ’ ಮಾತ್ರವೇ ಭಾರತದ ನಿಜವಾದ ರಾಷ್ಟ್ರಗೀತೆ ಆಗಬೇಕು ಎಂದು ಮುಖೇಶ್ ಖನ್ನಾ ಹೇಳಿದ್ದಾರೆ. ಲತಾ ಮಂಗೇಷ್ಕರ್ ಅವರ ಗಾಯನವನ್ನು ಉಲ್ಲೇಖಿಸಿ, ‘ವಂದೇ ಮಾತರಂ’ ಅತ್ಯಂತ ಸುಂದರವಾಗಿ ಮೂಡಿಬಂದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

‘ಜನ ಗಣ ಮನ’ವನ್ನು ದೇಶದಿಂದ ತೆಗೆದುಹಾಕಿ ‘ವಂದೇ ಮಾತರಂ’ ಅನ್ನು ಅಧಿಕೃತವಾಗಿ ಜಾರಿಗೆ ತರಬೇಕು. ಈ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕೆಲಸ ಮಾಡುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

ಶಾಲೆಗಳು ಮತ್ತು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ‘ವಂದೇ ಮಾತರಂ’ ಹಾಡಲಾಗುತ್ತಿದೆ ಎಂಬುದನ್ನೂ ಮುಖೇಶ್ ಖನ್ನಾ ಉಲ್ಲೇಖಿಸಿದ್ದಾರೆ.

ತಮ್ಮ ಹೇಳಿಕೆಗೆ ಮತ್ತಷ್ಟು ಬಲ ನೀಡುವಂತೆ ಮುಖೇಶ್ ಖನ್ನಾ, ತಾವು ಸುಮಾರು 7 ನಿಮಿಷಗಳ ಅವಧಿಯ ‘ವಂದೇ ಮಾತರಂ’ ಗೀತೆಯನ್ನು ಸ್ವತಃ ರೆಕಾರ್ಡ್ ಮಾಡಿರುವುದಾಗಿ ತಿಳಿಸಿದ್ದಾರೆ. ಈ ಗೀತೆಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ.

ನಟನ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ರಾಷ್ಟ್ರಗೀತೆ ಕುರಿತ ಅವರ ನಿಲುವಿನ ಬಗ್ಗೆ ವ್ಯಾಪಕ ಪರ-ವಿರೋಧದ ಚರ್ಚೆ ನಡೆಯುತ್ತಿದೆ.