ನವದೆಹಲಿ: ಭಾರತೀಯ ಯುವಜನತೆಯನ್ನು ಮಾದಕದ್ರವ್ಯಗಳ ದುಷ್ಪರಿಣಾಮಗಳಿಂದ ದೂರವಿಡುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಅವರು ‘ವಿಕಸಿತ ಭಾರತಕ್ಕಾಗಿ ಮಾದಕದ್ರವ್ಯ ಮುಕ್ತ ಯುವ ಸಂಕಲ್ಪ ಅಭಿಯಾನ’ಕ್ಕೆ ರಾಷ್ಟ್ರವ್ಯಾಪಿ ಚಾಲನೆ ನೀಡಿದ್ದಾರೆ.
ದೇಶದ ಯುವಕರನ್ನು ಡ್ರಗ್ಸ್ ಜಾಲದಿಂದ ಮುಕ್ತಗೊಳಿಸಿ, ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತರುವ ಉದ್ದೇಶದಿಂದ ಈ ಅಭಿಯಾನ ಆರಂಭಿಸಲಾಗಿದೆ. ಈ ಅಭಿಯಾನವು ಕೇವಲ ಒಬ್ಬ ವ್ಯಕ್ತಿಗಾಗಿ ಮಾತ್ರವಲ್ಲ, ಕುಟುಂಬ, ಸಮಾಜ ಹಾಗೂ ಇಡೀ ರಾಷ್ಟ್ರದ ಭವಿಷ್ಯಕ್ಕಾಗಿ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ವಿಕಸಿತ ಭಾರತ ನಿರ್ಮಾಣದ ಸಂಕಲ್ಪಕ್ಕೆ ಮಾದಕದ್ರವ್ಯ ಮುಕ್ತ ಯುವಶಕ್ತಿ ಅತ್ಯಗತ್ಯ ಎಂದು ಹೇಳಿರುವ ಪ್ರಧಾನಿ, ದೇಶದ ಪ್ರಗತಿಗೆ ಯುವಜನತೆಯೇ ಪ್ರಮುಖ ಆಧಾರವಾಗಿದ್ದಾರೆ. ಯುವಕರು ಯಾವುದೇ ರೀತಿಯ ವ್ಯಸನಗಳಿಗೆ ಒಳಗಾಗದಂತೆ ತಡೆಯುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ ಎಂದು ಕರೆ ನೀಡಿದ್ದಾರೆ.
ಅಭಿಯಾನದ ಭಾಗವಾಗಿ ದೇಶದ ಪ್ರತಿಯೊಂದು ಶಾಲೆ, ಕಾಲೇಜು ಹಾಗೂ ವಿಶ್ವವಿದ್ಯಾಲಯಗಳಲ್ಲಿ ಮಾದಕದ್ರವ್ಯ ವಿರೋಧಿ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಇದರ ಜೊತೆಗೆ ಯುವಕರಿಂದ ‘ಸಂಕಲ್ಪ ಪ್ರಮಾಣ ವಚನ’ ಸ್ವೀಕಾರ ಕಾರ್ಯಕ್ರಮಗಳನ್ನು ಸಹ ಹಮ್ಮಿಕೊಳ್ಳಲಾಗುತ್ತದೆ.
ಮಾದಕದ್ರವ್ಯಗಳ ವಿರುದ್ಧ ಜಾಗೃತಿ ಮೂಡಿಸಲು ಯುವಕರು ‘ಮೈ ಭಾರತ್’ ಪೋರ್ಟಲ್ ಮೂಲಕ ಸ್ವಯಂಸೇವಕರಾಗಿ ನೋಂದಾಯಿಸಿಕೊಳ್ಳುವಂತೆ ಪ್ರೋತ್ಸಾಹಿಸಲಾಗುತ್ತಿದೆ.
ಇದೇ ವೇಳೆ ದೇಶದಲ್ಲಿ ಮಾದಕದ್ರವ್ಯ ಪೂರೈಕೆ ಜಾಲವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಮಟ್ಟದ ತನಿಖಾ ಸಂಸ್ಥೆಗಳಿಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ಡ್ರಗ್ಸ್ ಜಾಲದ ವಿರುದ್ಧ ಶೂನ್ಯ ಸಹಿಷ್ಣುತೆ ನೀತಿ ಅನುಸರಿಸುವ ಮೂಲಕ ಯುವಕರ ಭವಿಷ್ಯ ರಕ್ಷಿಸಲು ಸರ್ಕಾರ ಬದ್ಧವಾಗಿದೆ ಎಂದು ತಿಳಿಸಲಾಗಿದೆ.

