Home Blog

RSS ಶಾಖೆಯಲ್ಲಿ ಸಂಘದ ಗೀತೆ ಬಿಟ್ಟು ರಾಷ್ಟ್ರಗೀತೆ ಹಾಡಿ ತೋರಿಸಿ: ಬಿಜೆಪಿಗೆ ಬಿ.ಕೆ. ಹರಿಪ್ರಸಾದ್ ನೇರ ಸವಾಲು

0

ನವದೆಹಲಿ: ಬಿಜೆಪಿಯವರು ತಾಕತ್ತಿದ್ದರೆ ಆರ್‌ಎಸ್‌ಎಸ್ ಶಾಖೆಯಲ್ಲಿ ಸಂಘದ ಗೀತೆ ಬಿಟ್ಟು ರಾಷ್ಟ್ರಗೀತೆ ಹಾಡಲಿ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಸವಾಲು ಹಾಕಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ಸಿಡಬ್ಲ್ಯುಸಿ ನಿರ್ಣಯವನ್ನು ಸ್ವಾಗತಿಸುವುದಾಗಿ ಹೇಳಿದ ಹರಿಪ್ರಸಾದ್, ಇವರು ತಮ್ಮನ್ನು ಗಲ್ಲಿಗಾದರೂ ಹಾಕಲಿ, ಜೈಲಿಗಾದರೂ ಹಾಕಲಿ, ತಾವು ಹಾಡುವುದು ವಂದೇ ಮಾತರಂ ಗೀತೆಯ ಎರಡು ಚರಣ ಮಾತ್ರ ಎಂದು ಪುನರುಚ್ಚರಿಸಿದರು. ಈ ವಿಚಾರದಲ್ಲಿ ರಾಜಕೀಯ ಮಾಡುವವರೇ ದೇಶದ್ರೋಹಿಗಳು ಎಂದು ಆರೋಪಿಸಿದ ಅವರು, ಸಿಡಬ್ಲ್ಯುಸಿ ಸಭೆಯಲ್ಲಿ ಸರಿಯಾದ ನಿರ್ಣಯ ತೆಗೆದುಕೊಳ್ಳಲಾಗಿದೆ ಎಂದು ಅಭಿಪ್ರಾಯಪಟ್ಟರು.

ಇವರೆಲ್ಲ ಕಂಗನಾ ರಣಾವತ್ ಅಭಿಮಾನಿಗಳು ಎಂದು ವ್ಯಂಗ್ಯವಾಡಿದ ಹರಿಪ್ರಸಾದ್, ಕಂಗನಾ ಹಾಡನ್ನೇ ಬೇಕಿದ್ದರೆ ಸಂಸತ್ತಿಗೆ ತಂದು ರಾಷ್ಟ್ರಗೀತೆ ಮಾಡುತ್ತಾರೆ ಎಂದು ಟೀಕಿಸಿದರು. ಬಿಜೆಪಿಯವರು ಪಾರ್ಲಿಮೆಂಟ್‌ಗೆ ಬರುವ ಧೈರ್ಯವೂ ಇಲ್ಲದ ನರಹೇಡಿಗಳು ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.

ರೇಣುಕಾಸ್ವಾಮಿ ಕೊಲೆ ಪ್ರಕರಣ: ಪ್ರದೋಷ್ ಮಾಫಿ ಸಾಕ್ಷಿ ಅರ್ಜಿ ಆದೇಶ ಆ.24ಕ್ಕೆ ಮುಂದೂಡಿಕೆ

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪ್ರದೋಷ್ ಸಲ್ಲಿಸಿರುವ ಮಾಫಿ ಸಾಕ್ಷಿ ಅರ್ಜಿಯ ಆದೇಶವನ್ನು 59ನೇ ಸೆಷನ್ಸ್ ಕೋರ್ಟ್ ಆಗಸ್ಟ್ 24ಕ್ಕೆ ಮುಂದೂಡಿದೆ.

ಪ್ರದೋಷ್ ಅಪರಾಧಿಕ ಹಿನ್ನೆಲೆ ಬಗ್ಗೆ ಕಾಮಾಕ್ಷಿಪಾಳ್ಯ ಪೊಲೀಸರು ಕೋರ್ಟ್‌ಗೆ ವರದಿ ಸಲ್ಲಿಸಿದ್ದಾರೆ. ಪ್ರದೋಷ್ ಮೇಲೆ ಈ ಕೇಸ್ ಬಿಟ್ಟು ಬೇರೆ ಯಾವ ಕೇಸ್ ಇಲ್ಲ ಎಂದು ಎಸಿಪಿ ವರದಿಯಲ್ಲಿ ತಿಳಿಸಿದ್ದಾರೆ. ಜೈಲಿನಲ್ಲಿರುವ ವೇಳೆ ಪ್ರದೋಷ್ ನಡವಳಿಕೆಯ ಬಗ್ಗೆಯೂ ವರದಿ ನೀಡುವಂತೆ ಕೋರ್ಟ್ ಸೂಚಿಸಿತ್ತು.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಗ್ಯಾಂಗ್ ಆರೋಪಿ ಪ್ರದೋಷ್, ಮಾಫಿ ಸಾಕ್ಷಿಯಾಗಿ ತನ್ನನ್ನು ಪರಿಗಣಿಸುವಂತೆ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾನೆ. ಈ ಮಾಫಿ ಸಾಕ್ಷಿ ವಿಚಾರ ತೀವ್ರ ಕುತೂಹಲ ಮೂಡಿಸಿದೆ. ಇದೇ ವೇಳೆ, ಮತ್ತೊಬ್ಬ ಆರೋಪಿ ವಿನಯ್ ಕೂಡ ಮಾಫಿ ಸಾಕ್ಷಿಯಾಗಲು ಅರ್ಜಿ ಸಲ್ಲಿಸಿದ್ದಾನೆ.

ನೀರು ಒಗ್ಗೂಡಿಸಬೇಕು, ವಿಭಜಿಸಬಾರದು: ವಿಜಯ್ ಎದುರಲ್ಲೇ ಕಾವೇರಿ ವಿಚಾರ ಪ್ರಸ್ತಾಪಿಸಿದ CM ಡಿಕೆಶಿ!

ಚೆನ್ನೈ: “ನಮ್ಮ ನದಿಗಳಿಗೆ ರಾಜಕೀಯ ಗಡಿಗಳು ತಿಳಿದಿಲ್ಲ. ನೀರು ನಮ್ಮನ್ನು ಒಗ್ಗೂಡಿಸಬೇಕೇ ಹೊರತು ವಿಭಜಿಸಬಾರದು” ಎಂದು ತಮಿಳುನಾಡು ಸಿಎಂ ವಿಜಯ್ ಎದುರೇ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ‘ಕಾವೇರಿ’ ವಿಷಯ ಪ್ರಸ್ತಾಪ ಮಾಡಿದ್ದಾರೆ.

ತಮಿಳುನಾಡಿನ ಮಹಾಬಲಿಪುರಂನಲ್ಲಿ ನಡೆದ ದಕ್ಷಿಣ ವಲಯ ಮಂಡಳಿಯ 31ನೇ ಸಭೆಯಲ್ಲಿ ಮಾತನಾಡಿದ ಡಿಕೆಶಿ, ದಕ್ಷಿಣ ಭಾರತದ ವೇದಿಕೆಯಲ್ಲಿ ಹೆಮ್ಮೆಯ ಭಾರತೀಯನಾಗಿ ಹಾಗೂ 16 ಶತಮಾನಗಳಿಗೂ ಹೆಚ್ಚು ಸುದೀರ್ಘ ಇತಿಹಾಸ ಹೊಂದಿರುವ ಭಾಷೆ ಮತ್ತು ಸಂಸ್ಕೃತಿಯನ್ನು ಪ್ರತಿನಿಧಿಸುವ ಕನ್ನಡಿಗನಾಗಿ ಮಾತನಾಡುತ್ತಿರುವುದಾಗಿ ಹೇಳಿದರು. ದಕ್ಷಿಣದ ಐದು ರಾಜ್ಯಗಳ ಜನಸಂಖ್ಯೆ ದೇಶದ ಒಟ್ಟು ಜನಸಂಖ್ಯೆಯ ಶೇ.20ರಷ್ಟಿದ್ದರೂ, ದೇಶದ ಜಿಡಿಪಿಗೆ ಶೇ.33ರಷ್ಟು ಕೊಡುಗೆ ನೀಡುತ್ತಿರುವುದಾಗಿ ತಿಳಿಸಿದ ಅವರು, ದೇಶದ ಆರ್ಥಿಕ ಶಕ್ತಿಯ ಎಂಜಿನ್‌ನಲ್ಲಿ ಕರ್ನಾಟಕ ಅತ್ಯಂತ ಬಲವಾದ ಚಾಲನಾ ಶಕ್ತಿಯಾಗಿದೆ ಎಂದರು.

ಭಾರತದ ಸಾಫ್ಟ್‌ವೇರ್ ರಫ್ತಿನಲ್ಲಿ ಶೇ.42ರಷ್ಟು ಕೊಡುಗೆ ಕರ್ನಾಟಕದ್ದಾಗಿದ್ದು, 1,100 ಜಾಗತಿಕ ಸಾಮರ್ಥ್ಯ ಕೇಂದ್ರಗಳನ್ನು ಹೊಂದುವ ಮೂಲಕ ಇತರ ರಾಜ್ಯಗಳಿಗಿಂತ ಅಗ್ರ ಸ್ಥಾನದಲ್ಲಿರುವುದಾಗಿ ಹೇಳಿದರು. 2019ರಿಂದ 2025ರ ನಡುವೆ ಭಾರತದ ನೇರ ವಿದೇಶಿ ಹೂಡಿಕೆಯ ಈಕ್ವಿಟಿ ಹರಿವಿನಲ್ಲಿ ಶೇ.21ಕ್ಕೂ ಹೆಚ್ಚು ಪಾಲು ಕರ್ನಾಟಕದ್ದಾಗಿದ್ದು, ಭಾರತದ ಕಾಫಿ ಉತ್ಪಾದನೆಯ ಶೇ.70 ಹಾಗೂ ಸಂಸ್ಕರಿಸಿದ ಸೌತೆಕಾಯಿ ರಫ್ತಿನ ಶೇ.90 ಕೊಡುಗೆ ಕರ್ನಾಟಕದ್ದಾಗಿದೆ ಎಂದು ವಿವರಿಸಿದ ಅವರು, ಬೆಂಗಳೂರು AI ರಾಜಧಾನಿಯಾಗಿ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿದ್ದು, ನ್ಯೂಯಾರ್ಕ್, ಬೀಜಿಂಗ್, ಲಂಡನ್ ಮತ್ತು ಸಿಲಿಕಾನ್ ವ್ಯಾಲಿ ಜೊತೆ ಪೈಪೋಟಿ ನೀಡುತ್ತಿದೆ ಎಂದರು. ಈ ಸಾಧನೆಗಳಿಗೆ ನ್ಯಾಯಯುತ ಮನ್ನಣೆ ಮತ್ತು ಪ್ರೋತ್ಸಾಹ ನಿರೀಕ್ಷಿಸುತ್ತಿರುವುದಾಗಿ ಸಿಎಂ ತಿಳಿಸಿದರು.

ದೇಶದ ಆರ್ಥಿಕತೆ ಹೆಚ್ಚಿಸುವ ಪಾತ್ರವನ್ನು ಕರ್ನಾಟಕ ಯಶಸ್ವಿಯಾಗಿ ನಿರ್ವಹಿಸುತ್ತಿದೆ ಎಂದ ಡಿಕೆಶಿ, ಕೊಟ್ಟಷ್ಟೇ ಪ್ರಮಾಣದಲ್ಲಿ ಕೇಂದ್ರ ಕೂಡ ಹಂಚಿಕೊಳ್ಳಬೇಕು ಎಂದು ಒತ್ತಾಯಿಸಿದರು. 15ನೇ ಹಣಕಾಸು ಆಯೋಗದ ಅಡಿಯಲ್ಲಿ ತೆರಿಗೆ ಪಾಲಿನಲ್ಲಿ ಕರ್ನಾಟಕದ ಪಾಲು ಶೇ.4.7ರಿಂದ ಶೇ.3.6ಕ್ಕೆ ಕುಸಿದಿದ್ದು, ಇದರಿಂದ ಆರು ವರ್ಷಗಳಲ್ಲಿ ಅಂದಾಜು ₹65,000 ಕೋಟಿ ನಷ್ಟವಾಗಿದೆ ಎಂದು ವಿವರಿಸಿದರು.

15ನೇ ಹಣಕಾಸು ಆಯೋಗ ಶಿಫಾರಸು ಮಾಡಿದ್ದ ₹5,495 ಕೋಟಿ ವಿಶೇಷ ಅನುದಾನ ಮತ್ತು ₹6,000 ಕೋಟಿ ರಾಜ್ಯ ನಿರ್ದಿಷ್ಟ ಅನುದಾನಗಳು ಇಂದಿಗೂ ಬಿಡುಗಡೆಯಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಅವರು, 16ನೇ ಹಣಕಾಸು ಆಯೋಗ ಕರ್ನಾಟಕದ ಪಾಲನ್ನು ಶೇ.4.131ಕ್ಕೆ ಹೆಚ್ಚಿಸಿದ್ದಕ್ಕಾಗಿ ಧನ್ಯವಾದ ಅರ್ಪಿಸುತ್ತಾ, ಇದನ್ನು ಮತ್ತೆ ಶೇ.4.7ಕ್ಕೆ ಮರುಸ್ಥಾಪಿಸಬೇಕು ಎಂದು ಒತ್ತಾಯಿಸಿದರು.

ಪೋಷಕರಿಗೆ ದೂರು ನೀಡಿದ್ದೇ ತಪ್ಪಾಯ್ತಾ..? ಶಿಕ್ಷಕಿಯನ್ನು 27 ಬಾರಿ ಇರಿದು ಕೊಂದ ವಿದ್ಯಾರ್ಥಿಗಳು!

0

ನಲ್ಗೊಂಡ: ಕೇವಲ ಪೋಷಕರಿಗೆ ದೂರು ಕೊಟ್ಟಿದ್ದಕ್ಕೆ 10ನೇ ತರಗತಿ ವಿದ್ಯಾರ್ಥಿಗಳು ಶಿಕ್ಷಕಿಯನ್ನು ಹತ್ಯೆ ಮಾಡಿರುವ ಆಘಾತಕಾರಿ ಘಟನೆ ತೆಲಂಗಾಣದ ನಲ್ಗೊಂಡ ಜಿಲ್ಲೆಯ ಕೊಂಡಮಲ್ಲೇಪಲ್ಲಿಯ ಖಾಸಗಿ ಶಾಲೆಯಲ್ಲಿ ನಡೆದಿದೆ. ವಿದ್ಯಾರ್ಥಿಗಳು ಶಾಲೆಯ ಮುಖ್ಯೋಪಾಧ್ಯಾಯರನ್ನೇ ಹತ್ಯೆ ಮಾಡಿದ್ದಾರೆ.

ದುಬಾರಿ ಜೀವನಶೈಲಿ ಮತ್ತು ದುಂದುವೆಚ್ಚವನ್ನು ಪ್ರಶ್ನಿಸಿ ಪೋಷಕರಿಗೆ ದೂರು ನೀಡುವುದಾಗಿ ಎಚ್ಚರಿಸಿದ್ದಕ್ಕೆ, ಅದೇ ಶಾಲೆಯ 10ನೇ ತರಗತಿಯ ಇಬ್ಬರು ಅಪ್ರಾಪ್ತ ವಿದ್ಯಾರ್ಥಿಗಳು ಶಿಕ್ಷಕಿಯ ಮನೆಗೆ ನುಗ್ಗಿ ಬರೋಬ್ಬರಿ 27 ಬಾರಿ ಚಾಕುವಿನಿಂದ ಇರಿದು ಭೀಕರವಾಗಿ ಹತ್ಯೆ ಮಾಡಿದ್ದಾರೆ. ಹತ್ಯೆಯ ನಂತರ ಮನೆಯಲ್ಲಿದ್ದ ನಗದು ಮತ್ತು ಮೊಬೈಲ್ ದೋಚಿಕೊಂಡು ಪರಾರಿಯಾಗಿದ್ದ ಇಬ್ಬರೂ ಬಾಲಕರನ್ನು ಪೊಲೀಸರು ಬಂಧಿಸಿದ್ದಾರೆ.

ಒಂದೇ ಹಾಸ್ಟೆಲ್ ಕೊಠಡಿಯಲ್ಲಿದ್ದ ಇಬ್ಬರು ವಿದ್ಯಾರ್ಥಿಗಳು ಐಫೋನ್, ಬೈಕ್ ಮತ್ತು ಐಷಾರಾಮಿ ಜೀವನದ ಆಸೆಗೆ ಬಿದ್ದಿದ್ದರು. ಸುಲಭವಾಗಿ ಹಣ ಸಂಪಾದಿಸಲು ಯೂಟ್ಯೂಬ್ ಮತ್ತು ಸೋಷಿಯಲ್ ಮೀಡಿಯಾದಲ್ಲಿ ಮಾರ್ಗಗಳನ್ನು ಹುಡುಕುತ್ತಿದ್ದರು.

ಹಾಸ್ಟೆಲ್ ತಪಾಸಣೆ ವೇಳೆ ಬ್ಯಾಗ್ನಲ್ಲಿ ಅಕ್ರಮವಾಗಿ ಇಟ್ಟುಕೊಂಡಿದ್ದ ಹಣ ಮತ್ತು ಮೊಬೈಲ್ ಸಿಕ್ಕಿಬಿದ್ದಾಗ ಮುಖ್ಯೋಪಾಧ್ಯಾಯಿನಿ ರೂಪಾ ರೆಡ್ಡಿ ಅವರು ಇಬ್ಬರನ್ನೂ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದರು. ಪೋಷಕರಿಗೆ ತಿಳಿಸುವುದಾಗಿ ಎಚ್ಚರಿಕೆ ನೀಡಿದ್ದೇ ಕೊಲೆ ಸಂಚಿಗೆ ಕಾರಣವಾಯಿತು.

ಒಂದು ವಾರ ಮುಂಚಿತವಾಗಿಯೇ ಪ್ರಾಂಶುಪಾಲೆಯ ಮನೆಯ ಸುತ್ತ ಕಣ್ಗಾವಲಿರಿಸಿದ್ದ ಬಾಲಕರು, ಚಾಕು, ಮುಖವಾಡ ಮತ್ತು ಕೈಗವಸುಗಳನ್ನು ಖರೀದಿಸಿ ಹಿಂಬಾಗಿಲಿನಿಂದ ಮನೆಗೆ ನುಗ್ಗಿದ್ದರು. ರೂಪಾ ರೆಡ್ಡಿ ಅವರ ಫೋನ್ ಸ್ವಿಚ್ ಆಫ್ ಆಗುವ ಮುನ್ನ ಅವರು ತಮ್ಮ ಚಿಕ್ಕಮ್ಮನೊಂದಿಗೆ ಮಾತನಾಡುತ್ತಿದ್ದರು. ವಿದ್ಯಾರ್ಥಿಗಳನ್ನು ಪ್ರೀತಿಯಿಂದಬಾಬುಎಂದು ಕರೆಯುತ್ತಿದ್ದ ಕಾರಣ, ಪೊಲೀಸರು ತಮ್ಮ ತನಿಖೆಯನ್ನು ಶಾಲಾ ವಿದ್ಯಾರ್ಥಿಗಳ ಮೇಲೆಯೇ ಕೇಂದ್ರೀಕರಿಸಿದರು.

ಡೊನಿಯಾಲ ಎಕ್ಸ್ರೋಡ್ ಬಳಿ ಬೈಕ್ನಲ್ಲಿ ಸಂಚರಿಸುತ್ತಿದ್ದ ಇಬ್ಬರು ಬಾಲಕರನ್ನು ತಡೆದು ತಪಾಸಣೆ ನಡೆಸಿದಾಗ, ಅವರ ಬಳಿಯಿದ್ದ ನೋಟುಗಳ ಮೇಲೆ ರಕ್ತದ ಕಲೆಗಳು ಪತ್ತೆಯಾದವು. ಪೊಲೀಸರು ಆರೋಪಿಗಳಿಂದ ₹1.54 ಲಕ್ಷ ನಗದು, ರಕ್ತಸಿಕ್ತ ಚಾಕು, ಕೈಗವಸುಗಳು ಹಾಗೂ ಕದ್ದ ಹಣದಲ್ಲಿ ₹60 ಸಾವಿರ ನೀಡಿ ಖರೀದಿಸಿದ್ದ ಹೊಸ ಐಫೋನ್ ಅನ್ನು ವಶಪಡಿಸಿಕೊಂಡಿದ್ದಾರೆ.

ನಲ್ಗೊಂಡ ಎಸ್ಪಿ ಶರತ್ ಚಂದ್ರ ಪವಾರ್ ನೇತೃತ್ವದಲ್ಲಿ 5 ವಿಶೇಷ ತನಿಖಾ ತಂಡಗಳು 30 ಕಿ.ಮೀ ವ್ಯಾಪ್ತಿಯ 70ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿ 80ಕ್ಕೂ ಹೆಚ್ಚು ಜನರನ್ನು ವಿಚಾರಣೆ ನಡೆಸಿದ ನಂತರ ಜಾಲ ಬಯಲಾಯಿತು.

ಹದಿಹರೆಯದ ಶಾಲಾ ಮಕ್ಕಳಲ್ಲಿ ಮೊಬೈಲ್ ಮತ್ತು ದುಬಾರಿ ವಸ್ತುಗಳಿಗಾಗಿ ಹಿಂಸಾತ್ಮಕ ದಾರಿ ತುಳಿಯುವ ಪ್ರವೃತ್ತಿ ಹೆಚ್ಚುತ್ತಿರುವುದು ಪೋಷಕರು ಹಾಗೂ ಶಿಕ್ಷಣ ತಜ್ಞರಲ್ಲಿ ತೀವ್ರ ಕಳವಳ ಮೂಡಿಸಿದೆ.

ಚಾಮರಾಜನಗರ ಎನ್‌ಕೌಂಟರ್ ಪ್ರತಿಕಾರಕ್ಕೆ ಅರಣ್ಯ ಬಲಿ: 10 ಎಕರೆ ಕಾಡಿಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು

0

ಚಾಮರಾಜನಗರ: ಎನ್‌ಕೌಂಟರ್ ಘಟನೆ ನಂತರ ಚಾಮರಾಜನಗರದ ಅರಣ್ಯ ಪ್ರದೇಶದಲ್ಲಿ ಪರಿಸ್ಥಿತಿ ಮತ್ತಷ್ಟು ಉದ್ವಿಗ್ನಗೊಂಡಿದ್ದು, ದುಷ್ಕರ್ಮಿಗಳು ಅರಣ್ಯ ಇಲಾಖೆಗೆ ಸವಾಲೆಸೆದಿದ್ದಾರೆ. ಕೊಳ್ಳೇಗಾಲ ತಾಲೂಕಿನ ಶಿಲುಬೆಪುರ ವ್ಯಾಪ್ತಿಯ ಮಲೆ ಮಹದೇಶ್ವರ ವನ್ಯಜೀವಿಧಾಮದಲ್ಲಿ ಸುಮಾರು 10 ಎಕರೆ ಅರಣ್ಯ ಪ್ರದೇಶಕ್ಕೆ ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ.

ಅರಣ್ಯಕ್ಕೆ ಬೆಂಕಿ ಹಚ್ಚಿದ ಪರಿಣಾಮ ಅಪಾರ ಪ್ರಮಾಣದ ಸಸ್ಯಸಂಪತ್ತು ಸುಟ್ಟುಹೋಗಿದೆ. ಬೆಂಕಿ ವ್ಯಾಪಿಸುತ್ತಿರುವುದನ್ನು ಗಮನಿಸಿದ ಅರಣ್ಯ ಸಿಬ್ಬಂದಿ ತಕ್ಷಣ ಕಾರ್ಯಾಚರಣೆ ಆರಂಭಿಸಿ ಬೆಂಕಿಯನ್ನು ನಂದಿಸಿದ್ದಾರೆ. ಪ್ರಕರಣದ ಹಿಂದೆ ಉದ್ದೇಶಪೂರ್ವಕ ಕೃತ್ಯದ ಶಂಕೆ ವ್ಯಕ್ತವಾಗಿದ್ದು, ದುಷ್ಕರ್ಮಿಗಳಿಗಾಗಿ ಅರಣ್ಯ ಇಲಾಖೆ ಶೋಧ ಕಾರ್ಯ ಆರಂಭಿಸಿದೆ.

ಇದಕ್ಕೂ ಮುನ್ನ ಕಾವೇರಿ ವನ್ಯಜೀವಿಧಾಮದ ಕಳ್ಳಬೇಟೆ ತಡೆ ಶಿಬಿರಗಳನ್ನೇ ದುಷ್ಕರ್ಮಿಗಳು ಗುರಿಯಾಗಿಸಿಕೊಂಡಿದ್ದರು. ಜಿಲೆಟಿನ್ ಕಡ್ಡಿಗಳನ್ನು ಬಳಸಿ ನಾಲ್ಕು ಎಪಿಸಿ ಕ್ಯಾಂಪ್‌ಗಳನ್ನು ಸ್ಫೋಟಿಸಿ ಧ್ವಂಸಗೊಳಿಸಿದ ಘಟನೆ ಅರಣ್ಯ ಇಲಾಖೆಗೆ ದೊಡ್ಡ ಸವಾಲಾಗಿತ್ತು.

ಇದೀಗ ಮಲೆ ಮಹದೇಶ್ವರ ವನ್ಯಜೀವಿಧಾಮದಲ್ಲಿ ಅರಣ್ಯಕ್ಕೆ ಬೆಂಕಿ ಹಚ್ಚಿರುವ ಘಟನೆ ಬೆಳಕಿಗೆ ಬಂದಿದ್ದು, ಸರಣಿ ಕೃತ್ಯಗಳ ಹಿಂದೆ ಒಂದೇ ಗುಂಪಿನ ಕೈವಾಡವಿದೆಯೇ ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ.

ಮೂವರು ಬೇಟೆಗಾರರ ಎನ್‌ಕೌಂಟರ್ ಬಳಿಕ ಅರಣ್ಯ ಪ್ರದೇಶದಲ್ಲಿ ದುಷ್ಕರ್ಮಿಗಳ ಚಟುವಟಿಕೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಅರಣ್ಯ ಸಿಬ್ಬಂದಿಯ ಭದ್ರತೆಯ ಬಗ್ಗೆಯೂ ಆತಂಕ ವ್ಯಕ್ತವಾಗಿದೆ. ಸಿಬ್ಬಂದಿ ನಿರಂತರ ನಿಗಾ ವಹಿಸುತ್ತಿದ್ದು, ಘಟನೆಗೆ ಕಾರಣರಾದವರನ್ನು ಪತ್ತೆಹಚ್ಚಲು ಕಾರ್ಯಾಚರಣೆ ತೀವ್ರಗೊಳಿಸಲಾಗಿದೆ.

Gold Rate: ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ: ಬೆಂಗಳೂರಿನಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ ಗೊತ್ತಾ..?

0

ಬೆಂಗಳೂರು: ಜಾಗತಿಕ ಮಾರುಕಟ್ಟೆ ಹಾಗೂ ಆರ್ಥಿಕತೆಯ ಪ್ರಭಾವವು ಚಿನ್ನ-ಬೆಳ್ಳಿ ದರವನ್ನು ನಿರ್ಧರಿಸುತ್ತಿದ್ದು, ಇಂದಿನ ಚಿನ್ನ-ಬೆಳ್ಳಿ ದರದಲ್ಲಿ ಭಾರಿ ಹೆಚ್ಚಳ ಕಂಡುಬಂದಿದೆ. ಗುಡ್ ರಿಟರ್ನ್ಸ್ ವರದಿಯ ಬೆಲೆ ಪಟ್ಟಿಯ ಪ್ರಕಾರ ಈ ಮಾಹಿತಿ ಇಲ್ಲಿದೆ.

ಆಗಸ್ಟ್ 20, 2026 ಗುರುವಾರದಂದು 24 ಕ್ಯಾರೆಟ್ 1 ಗ್ರಾಂ ಬೆಲೆಯಲ್ಲಿ ₹430 ಏರಿಕೆಯಾಗಿದ್ದು, ಗ್ರಾಂ ಬೆಲೆ ಈಗ ₹15,927ಕ್ಕೆ ದಾಖಲಾಗಿದೆ. 24 ಕ್ಯಾರೆಟ್ 10 ಗ್ರಾಂ ಬೆಲೆಯಲ್ಲಿ ₹4,300 ಏರಿಕೆಯಾಗಿದ್ದು, ₹1,59,270ಕ್ಕೆ ಹೆಚ್ಚಳವಾಗಿದೆ.

22 ಕ್ಯಾರೆಟ್ ಚಿನ್ನದ ಬೆಲೆಯಲ್ಲೂ ಏರಿಕೆ ದಾಖಲಾಗಿದ್ದು, 1 ಗ್ರಾಂ ಬೆಲೆ ಈಗ ₹14,600 ಆಗಿದೆ. 10 ಗ್ರಾಂ ಬೆಲೆ ₹3,950 ಏರಿಕೆಯಾಗಿ, ಈಗ ₹1,46,000ಕ್ಕೆ ತಲುಪಿದೆ. ಬೆಂಗಳೂರಿನಲ್ಲಿ ಶುದ್ಧ ಚಿನ್ನದ ಗ್ರಾಂ ಬೆಲೆ ₹15,927 ಇದ್ದು, ಬೆಳ್ಳಿ ಬೆಲೆ ಗ್ರಾಂಗೆ ₹255 ಇದೆ.

ಬೆಳ್ಳಿ ಬೆಲೆಯೂ ಇಂದು ಭಾರಿ ಏರಿಕೆ ಕಂಡಿದ್ದು, ಗ್ರಾಂಗೆ ₹255ಕ್ಕೆ ತಲುಪಿದೆ. ಇಂದು ₹10 ಸಾವಿರ ಏರಿಕೆಯಾಗಿ ಬೆಳ್ಳಿ ಬೆಲೆ ಕೆಜಿಗೆ ₹2,55,000ಕ್ಕೆ ತಲುಪಿದೆ. ಆಗಸ್ಟ್ 1ರಂದು ₹14,422 ಇದ್ದ 24 ಕ್ಯಾರೆಟ್ 1 ಗ್ರಾಂ ಚಿನ್ನ ಬೆಲೆ, ಕೇವಲ 20 ದಿನಗಳಲ್ಲಿ ದಿಢೀರನೆ ₹15,927ಕ್ಕೆ ಹೆಚ್ಚಳವಾಗಿದೆ.

ಕುಟುಂಬದ ನೆಮ್ಮದಿಗೆ ಕೊಡುಗೆ ನೀಡುವ ಎಲ್ಲರೂ ‘ಹೋಮ್ ಮೇಕರ್’ ಎಂದ ಹೈಕೋರ್ಟ್

0

ಬೆಂಗಳೂರು: ಕುಟುಂಬದ ಆರೈಕೆ ಮತ್ತು ಜವಾಬ್ದಾರಿಗಳನ್ನು ಹೊರುವ ‘ಹೋಮ್‌ಮೇಕರ್’ ಎಂಬ ಪದವು ಕೇವಲ ಮಹಿಳೆಯರಿಗೆ ಮಾತ್ರ ಸೀಮಿತವಾಗಿಲ್ಲ, ಅದು ಸಂಪೂರ್ಣವಾಗಿ ಲಿಂಗತಟಸ್ಥ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ. ಪುರುಷನಾಗಲಿ, ಮಹಿಳೆಯಾಗಲಿ ಅಥವಾ ಉದ್ಯೋಗದಲ್ಲಿರುವ ವೃತ್ತಿಪರರಾಗಲಿ, ಮನೆಯಲ್ಲಿ ಕುಟುಂಬದ ಕಲ್ಯಾಣಕ್ಕಾಗಿ ಶ್ರಮಿಸುವ ಪ್ರತಿಯೊಬ್ಬರೂ ‘ಗೃಹ ನಿರ್ವಾಹಕರು’ ಎಂದು ಪರಿಗಣಿಸಲ್ಪಡುತ್ತಾರೆ ಎಂದು ನ್ಯಾಯಾಲಯ ತಿಳಿಸಿದೆ.

ರಸ್ತೆ ಅಪಘಾತದಲ್ಲಿ ಶಾಶ್ವತ ಅಂಗವೈಕಲ್ಯಕ್ಕೆ ತುತ್ತಾಗಿದ್ದ ಮಹಿಳೆಗೆ ಮೋಟಾರು ಅಪಘಾತಗಳ ಪರಿಹಾರ ನ್ಯಾಯಾಧಿಕರಣ ನೀಡಿದ್ದ ಪರಿಹಾರ ಮೊತ್ತ ಹೆಚ್ಚಳ ಮಾಡುವಂತೆ ಕೋರಿ ಪಶ್ಚಿಮ ಬಂಗಾಳ ಮೂಲದ ಪಂಪಪಾಲ್ ಎಂಬ ಮಹಿಳೆ ಹಾಗೂ ಪರಿಹಾರ ಘೋಷಣೆಯನ್ನು ಪ್ರಶ್ನಿಸಿ ಕೆಎಸ್‌ಆರ್‌ಟಿಸಿ ಹೈಕೋರ್ಟ್‌ಗೆ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಗಳನ್ನು ಜಂಟಿಯಾಗಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಡಾ.ಚಿಲಕೂರು ಸುಮಲತಾ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿತು.

ಉನ್ನತ ಶಿಕ್ಷಣ ಅಥವಾ ವೃತ್ತಿಪರ ಹಿನ್ನೆಲೆ ಹೊಂದಿರುವ ಮಾತ್ರಕ್ಕೆ ಯಾರೂ ಗೃಹಿಣಿಯಾಗಿರಲು ಅನರ್ಹರಾಗುವುದಿಲ್ಲ ಎಂದ ಪೀಠ, ಪದವಿ, ಸ್ನಾತಕೋತ್ತರ ಪದವಿ ಅಥವಾ ಡಾಕ್ಟರೇಟ್ ಪಡೆದಿದ್ದರೂ ಸಹ ಅವರು ಕುಟುಂಬಕ್ಕಾಗಿ ನೀಡುವ ಸೇವೆಗಳ ಮೌಲ್ಯ ಕಡಿಮೆಯಾಗುವುದಿಲ್ಲ ಎಂದು ಹೇಳಿತು. ಗೃಹ ನಿರ್ವಾಹಕರೆಂದರೆ ಕೇವಲ ಅನಕ್ಷರಸ್ಥರಾಗಿರಬೇಕು, ದಿನದ 24 ಗಂಟೆಯೂ ಮನೆಯಲ್ಲೇ ಇರಬೇಕು ಅಥವಾ ಕೇವಲ ಮನೆಕೆಲಸಗಳನ್ನೇ ಮಾಡಬೇಕು ಎಂಬ ಹಳೆಯ ಸಾಂಪ್ರದಾಯಿಕ ಕಲ್ಪನೆ ತಪ್ಪು ಎಂದು ಪೀಠ ಸ್ಪಷ್ಟಪಡಿಸಿತು.

ಅವಿಶ್ರಾಂತವಾಗಿ ಶ್ರಮಿಸುತ್ತಾ, ಬೇಷರತ್ ಪ್ರೀತಿ ತೋರುತ್ತಾ, ವೈಯಕ್ತಿಕ ಹಿತಾಸಕ್ತಿಗಳನ್ನು ತ್ಯಾಗ ಮಾಡಿ ಕುಟುಂಬದ ಸುಖ-ಶಾಂತಿಗೆ ಆಧಾರಸ್ತಂಭವಾಗಿ ನಿಲ್ಲುವ ಪ್ರತಿಯೊಬ್ಬ ವ್ಯಕ್ತಿಯೂ ಗೃಹಿಣಿಯೇ ಆಗಿದ್ದಾರೆ, ಇದು ಪುರುಷರಿಗೂ ಹಾಗೂ ದುಡಿಯುವ ಉದ್ಯೋಗಸ್ಥರಿಗೂ ಅನ್ವಯಿಸುತ್ತದೆ ಎಂದು ಪೀಠ ತಿಳಿಸಿತು.

ಅರ್ಜಿದಾರರು ಮಾಡಿಸಿಕೊಂಡಿದ್ದ ವೈದ್ಯಕೀಯ ವಿಮೆಯಿಂದ ಆಸ್ಪತ್ರೆ ಖರ್ಚು ಮರುಪಾವತಿಯಾಗಿದ್ದು, ಈ ಪ್ರೀಮಿಯಂ ಹಣವನ್ನು ಗ್ರಾಹಕರೇ ಪಾವತಿಸಿರುವುದರಿಂದ ಆ ಮೊತ್ತವನ್ನು ದ್ವಿ ಲಾಭ ಎಂದು ಪರಿಗಣಿಸಿ ಪರಿಹಾರ ಮೊತ್ತದಲ್ಲಿ ಕಡಿತ ಮಾಡುವುದಕ್ಕೆ ಅವಕಾಶವಿಲ್ಲ ಎಂದು ಪೀಠ ತಿಳಿಸಿದೆ. ಅಪಘಾತಕ್ಕೆ ಒಳಗಾಗಿದ್ದ ಮಹಿಳೆಗೆ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ನಿಗದಿಪಡಿಸಿರುವ ಕಾಲ್ಪನಿಕ ಆದಾಯ ಪರಿಗಣಿಸಿ ಮಾಸಿಕ ₹8,000ರಂತೆ ಪರಿಹಾರ ನೀಡಿದ್ದು, ನ್ಯಾಯಾಧಿಕರಣ ನೀಡಿದ್ದ ಪರಿಹಾರಕ್ಕೆ ₹1,96,800 ಹೆಚ್ಚಿಸಿ ಆದೇಶಿಸಿದೆ.

ಪ್ರಕರಣದ ಹಿನ್ನೆಲೆ: ಸಂತ್ರಸ್ತ ಮಹಿಳೆ 2013ರ ಅಕ್ಟೋಬರ್ 19ರಂದು ಬೆಂಗಳೂರಿನಿಂದ ಮಡಿಕೇರಿಗೆ ಕೆಎಸ್‌ಆರ್‌ಟಿಸಿ ರಾಜಹಂಸ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದಾಗ ಬಸ್ ಲಾರಿಗೆ ಡಿಕ್ಕಿ ಹೊಡೆದಿತ್ತು. ಈ ಅಪಘಾತದಲ್ಲಿ ಅರ್ಜಿದಾರ ಪಂಪಪಾಲ್ ಅವರು ಶಾಶ್ವತ ದೈಹಿಕ ವೈಕಲ್ಯಕ್ಕೆ ಒಳಗಾಗಿ ಚಿಕಿತ್ಸೆಗಾಗಿ ₹10 ಲಕ್ಷದವರೆಗೂ ವೆಚ್ಚ ಮಾಡಿದ್ದರು. ಬೆಂಗಳೂರಿನ ಮೋಟಾರು ವಾಹನಗಳ ಪರಿಹಾರ ನ್ಯಾಯಾಧಿಕರಣ ವೈದ್ಯಕೀಯ ವೆಚ್ಚ ಸೇರಿ ಒಟ್ಟು ₹4,55,243 ಪರಿಹಾರ ಘೋಷಿಸಿತ್ತು, ಇದನ್ನು ಪ್ರಶ್ನಿಸಿ ಕೆಎಸ್‌ಆರ್‌ಟಿಸಿ ಮತ್ತು ಸಂತ್ರಸ್ತೆ ಹೈಕೋರ್ಟ್ ಮೆಟ್ಟಿಲೇರಿದ್ದರು.

ಬಯೋಟೆಕ್ನಾಲಜಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಅರ್ಜಿದಾರರು ಅಪಘಾತಕ್ಕೂ ಮುನ್ನ ಅತಿಥಿ ಉಪನ್ಯಾಸಕರಾಗಿ ಮಾಸಿಕ ₹35 ಸಾವಿರದವರೆಗೂ ದುಡಿಯುತ್ತಿದ್ದರು, ಘಟನೆ ನಡೆದ ದಿನ ಗೃಹಿಣಿಯಾಗಿ ಕೆಲಸ ಮಾಡುತ್ತಿದ್ದರು ಎಂದು ಅರ್ಜಿದಾರರ ಪರ ವಕೀಲರು ವಾದಿಸಿದ್ದರು. ಇದಕ್ಕೆ ಆಕ್ಷೇಪಿಸಿದ್ದ ಕೆಎಸ್‌ಆರ್‌ಟಿಸಿ ಪರ ವಕೀಲರು, ಅರ್ಜಿದಾರರು ಉನ್ನತ ಶಿಕ್ಷಣ ಪಡೆದವರಾಗಿರುವುದರಿಂದ ಗೃಹಿಣಿಯಾಗಿರುವುದಕ್ಕೆ ಅವಕಾಶವಿಲ್ಲ, ಆದ್ದರಿಂದ ಭವಿಷ್ಯದ ನಷ್ಟಕ್ಕೆ ಪರಿಹಾರ ನೀಡಲಾಗದು ಎಂದು ವಾದಿಸಿದ್ದರು.

ಫೇಕ್ ಮೆಡಿಸಿನ್ ವಿರುದ್ಧ ಸರ್ಕಾರದ ಮಾಸ್ಟರ್‌ಸ್ಟ್ರೋಕ್: ಮಾಹಿತಿ ಕೊಟ್ಟವರಿಗೆ ₹10,000-₹50,000 ಕ್ಯಾಶ್ ರಿವಾರ್ಡ್

0

ಬೆಂಗಳೂರು: ರಾಜ್ಯದಲ್ಲಿ ನಕಲಿ ಔಷಧಗಳ ತಯಾರಿಕೆ, ದಾಸ್ತಾನು, ಮಾರಾಟ ಮತ್ತು ಪೂರೈಕೆ ಜಾಲಕ್ಕೆ ಕಡಿವಾಣ ಹಾಕಲು ಕರ್ನಾಟಕ ಆರೋಗ್ಯ ಇಲಾಖೆ ಮಹತ್ವದ ಕ್ರಮ ಕೈಗೊಂಡಿದೆ. ನಕಲಿ ಔಷಧ ದಂಧೆಯ ಬಗ್ಗೆ ಖಚಿತ ಮಾಹಿತಿ ನೀಡುವ ಸಾರ್ವಜನಿಕರಿಗೆ ₹10 ಸಾವಿರದಿಂದ ₹50 ಸಾವಿರದವರೆಗೆ ನಗದು ಬಹುಮಾನ ನೀಡಲು ಇಲಾಖೆ ಮುಂದಾಗಿದೆ.

ನಕಲಿ ಔಷಧಗಳ ಜಾಲದ ಕುರಿತು ಸಾರ್ವಜನಿಕರಿಂದಲೇ ಮಾಹಿತಿ ಸಂಗ್ರಹಿಸಿ ಕಾರ್ಯಾಚರಣೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ. ಅನುಮಾನಾಸ್ಪದ ಔಷಧಗಳು, ಮೆಡಿಕಲ್ ಸ್ಟೋರ್‌ಗಳು ಅಥವಾ ನಕಲಿ ಔಷಧಗಳ ತಯಾರಿಕೆ ಹಾಗೂ ಮಾರಾಟದ ಕುರಿತು ಮಾಹಿತಿ ಇದ್ದರೆ ಔಷಧ ನಿಯಂತ್ರಣ ಮಂಡಳಿಯ ಸಹಾಯವಾಣಿಗೆ ಮಾಹಿತಿ ನೀಡುವಂತೆ ಆರೋಗ್ಯ ಇಲಾಖೆ ಮನವಿ ಮಾಡಿದೆ.

ಸಾರ್ವಜನಿಕರಿಂದ ಲಭ್ಯವಾಗುವ ಮಾಹಿತಿಯನ್ನು ಆಧರಿಸಿ ಔಷಧ ನಿಯಂತ್ರಣ ಅಧಿಕಾರಿಗಳು ಪರಿಶೀಲನೆ ಮತ್ತು ತನಿಖೆ ನಡೆಸಲಿದ್ದಾರೆ. ಮಾಹಿತಿ ಖಚಿತವೆಂದು ದೃಢಪಟ್ಟರೆ ಸಂಬಂಧಪಟ್ಟವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ.

ಇತ್ತೀಚೆಗೆ ಬೆಂಗಳೂರಿನಲ್ಲಿ ಪತ್ತೆಯಾದ ನಕಲಿ ಔಷಧ ತಯಾರಿಕಾ ಜಾಲದ ತನಿಖೆ ಹಲವು ರಾಜ್ಯಗಳಿಗೆ ವಿಸ್ತರಿಸಿರುವ ಸಾಧ್ಯತೆ ಬೆಳಕಿಗೆ ಬಂದಿತ್ತು. ಬೆಂಗಳೂರಿನಿಂದ ಮುಂಬೈವರೆಗೆ ಸಂಪರ್ಕ ಹೊಂದಿರುವ ಅಂತರರಾಜ್ಯ ಜಾಲದ ಕುರಿತು ದೇಶದ ವಿವಿಧ ರಾಜ್ಯಗಳ ಔಷಧ ನಿಯಂತ್ರಣ ಅಧಿಕಾರಿಗಳು ಹಾಗೂ ಸ್ಟೇಟ್ ಲೈಸೆನ್ಸಿಂಗ್ ಅಥಾರಿಟಿಗಳಿಗೆ ಎಚ್ಚರಿಕೆ ನೀಡಲಾಗಿತ್ತು.

ರೋಗಿಗಳ ಆರೋಗ್ಯ ಮತ್ತು ಜೀವಕ್ಕೆ ಅಪಾಯ ಉಂಟುಮಾಡಬಹುದಾದ ನಕಲಿ ಔಷಧಗಳ ದಂಧೆ ವಿರುದ್ಧದ ಕಾರ್ಯಾಚರಣೆಗೆ ಸಾರ್ವಜನಿಕರ ಸಹಕಾರ ಅತ್ಯಂತ ಮುಖ್ಯ ಎಂದು ಇಲಾಖೆ ತಿಳಿಸಿದೆ. ಅನುಮಾನಾಸ್ಪದ ಔಷಧ ಅಥವಾ ದಂಧೆ ಕಂಡುಬಂದರೆ ಯಾವುದೇ ಕಾರಣಕ್ಕೂ ಮೌನವಾಗಿರದೆ ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ಮನವಿ ಮಾಡಲಾಗಿದೆ.

ಮಾಹಿತಿ ನೀಡುವವರ ಗುರುತು ಹಾಗೂ ವೈಯಕ್ತಿಕ ವಿವರಗಳನ್ನು ಗೌಪ್ಯವಾಗಿಡುವ ವ್ಯವಸ್ಥೆಯನ್ನೂ ಕಲ್ಪಿಸಲು ಇಲಾಖೆ ಮುಂದಾಗಿದೆ. ನಕಲಿ ಔಷಧ ಜಾಲದ ವಿರುದ್ಧದ ಹೋರಾಟದಲ್ಲಿ ಜನರನ್ನೇ ಮಾಹಿತಿ ಜಾಲದ ಭಾಗವಾಗಿಸುವ ಮೂಲಕ ದಂಧೆಗೆ ಕಡಿವಾಣ ಹಾಕಲು ಸರ್ಕಾರ ಮುಂದಾಗಿದೆ.

ಷೇರು ಮಾರುಕಟ್ಟೆ ನಷ್ಟದ ಬೆನ್ನಲ್ಲೇ ಕುಟುಂಬ ನಾಪತ್ತೆ: ಇಬ್ಬರು ಮಕ್ಕಳ ಸಮೇತ ದಂಪತಿ ನಾಪತ್ತೆ

0

ದಾವಣಗೆರೆ: ಷೇರು ಮಾರುಕಟ್ಟೆಯಲ್ಲಿ ನಷ್ಟ ಅನುಭವಿಸಿದ ಹಿನ್ನೆಲೆಯಲ್ಲಿ ಕುಟುಂಬ ಸಮೇತ ಮನೆ ತೊರೆದಿರಬಹುದೇ ಎಂಬ ಅನುಮಾನ ಮೂಡಿಸಿರುವ ಪ್ರಕರಣವೊಂದು ದಾವಣಗೆರೆಯಲ್ಲಿ ನಡೆದಿದೆ. ಬೆಂಗಳೂರಿಗೆ ತೆರಳಿ ಬರುವುದಾಗಿ ಪೋಷಕರಿಗೆ ತಿಳಿಸಿದ್ದ ದಂಪತಿ, ಇಬ್ಬರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ನಾಲ್ವರು ಇದೀಗ ನಾಪತ್ತೆಯಾಗಿದ್ದಾರೆ.

ಬನಶಂಕರಿ ಬಡಾವಣೆಯ ನಿವಾಸಿಗಳಾದ ರಮೇಶ್ ಕುಮಾರ್ (38), ಪತ್ನಿ ಜಯಶೀಲ (36), ಪುತ್ರ ಹಿತೇಶ್ (9) ಹಾಗೂ ಪುತ್ರಿ ಪ್ರೇರಣ (3) ಕಾಣೆಯಾಗಿದ್ದಾರೆ. ರಮೇಶ್ ಕುಮಾರ್ ಷೇರು ಮಾರುಕಟ್ಟೆ ಹೂಡಿಕೆ ವ್ಯವಹಾರ ನಡೆಸುತ್ತಿದ್ದು, ಸಾರ್ವಜನಿಕರಿಂದ ಹಣ ಪಡೆದು ಹೂಡಿಕೆ ಮಾಡುತ್ತಿದ್ದರು ಎನ್ನಲಾಗಿದೆ.

ಇತ್ತೀಚೆಗೆ ಷೇರು ಮಾರುಕಟ್ಟೆಯಲ್ಲಿ ಭಾರಿ ನಷ್ಟವಾಗಿತ್ತು ಎನ್ನಲಾಗಿದ್ದು, ಕುಟುಂಬದ ನಾಪತ್ತೆಗೂ ಇದಕ್ಕೂ ಸಂಬಂಧವಿದೆಯೇ ಎಂಬ ಕೋನದಲ್ಲೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಆಗಸ್ಟ್ 14ರಂದು ರಮೇಶ್ ಕುಮಾರ್ ಪೋಷಕರಿಗೆ ಕರೆ ಮಾಡಿ ಬೆಂಗಳೂರಿಗೆ ವೈಯಕ್ತಿಕ ಕೆಲಸದ ನಿಮಿತ್ತ ತೆರಳುವುದಾಗಿ ಹೇಳಿದ್ದರು. ಬಳಿಕ ಕುಟುಂಬ ತಮ್ಮ ಕಾರು ಮತ್ತು ಬೈಕ್‌ಗಳನ್ನು ಮನೆಯಲ್ಲೇ ಬಿಟ್ಟು ಆಟೋ ಮೂಲಕ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ತೆರಳಿದೆ ಎನ್ನಲಾಗಿದೆ.

ಬೆಂಗಳೂರಿಗೆ ತೆರಳಿದ ನಂತರ ನಾಲ್ವರೂ ಕುಟುಂಬಸ್ಥರ ಸಂಪರ್ಕಕ್ಕೆ ಸಿಕ್ಕಿಲ್ಲ. ಎಲ್ಲರ ಮೊಬೈಲ್‌ಗಳು ಸ್ವಿಚ್‌ಆಫ್ ಆಗಿರುವುದರಿಂದ ಆತಂಕಗೊಂಡ ಕುಟುಂಬಸ್ಥರು ಬೆಂಗಳೂರು ಸೇರಿದಂತೆ ವಿವಿಧೆಡೆ ಹುಡುಕಾಟ ನಡೆಸಿದ್ದಾರೆ. ಆದರೆ ಇದುವರೆಗೆ ಯಾವುದೇ ಸುಳಿವು ಪತ್ತೆಯಾಗಿಲ್ಲ.

ನಾಲ್ವರು ನಾಪತ್ತೆಯಾಗಿರುವ ಕುರಿತು ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಕುಟುಂಬದ ಪ್ರಯಾಣದ ಮಾರ್ಗ, ಕೊನೆಯ ಮೊಬೈಲ್ ಲೊಕೇಶನ್ ಹಾಗೂ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸುತ್ತಿದ್ದಾರೆ.

ಕುಟುಂಬದ ನಾಪತ್ತೆಗೆ ನಿಖರ ಕಾರಣವೇನು, ಅವರು ಬೆಂಗಳೂರಿಗೆ ತೆರಳಿದ್ದಾರೆಯೇ ಅಥವಾ ಬೇರೆಡೆಗೆ ಪ್ರಯಾಣಿಸಿದ್ದಾರೆಯೇ ಎಂಬುದನ್ನು ಪತ್ತೆಹಚ್ಚಲು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಮರಣದಂಡನೆ: ನೇಣು ಶಿಕ್ಷೆಯೇ ಮುಂದುವರಿಕೆ, ಇಂಜೆಕ್ಷನ್ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್

0

ನವದೆಹಲಿ: ಭಾರತದಲ್ಲಿ ಮರಣದಂಡನೆ ಶಿಕ್ಷೆ ಜಾರಿಗೊಳಿಸಲು ನೇಣು ಹಾಕುವ ಪದ್ಧತಿಯ ಬದಲಿಗೆ ಮಾರಕ ವಿಷಕಾರಿ ಚುಚ್ಚುಮದ್ದು ಬಳಸಬೇಕೆಂಬ ಬಹುದಿನಗಳ ಚರ್ಚೆಗೆ ಭಾರತದ ಸುಪ್ರೀಂ ಕೋರ್ಟ್ ತೆರೆ ಎಳೆದಿದೆ. ಗಲ್ಲು ಶಿಕ್ಷೆಗಿಂತ ಮಾರಕ ಇಂಜೆಕ್ಷನ್ ಹೆಚ್ಚು ವೈಜ್ಞಾನಿಕ, ಶಾಂತಿಯುತ ಅಥವಾ ಮಾನವೀಯ ಎಂದು ಸಾಬೀತುಪಡಿಸಲು ಯಾವುದೇ ಗಣನೀಯ ವೈಜ್ಞಾನಿಕ ಪುರಾವೆಗಳಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಅಸ್ತಿತ್ವದಲ್ಲಿರುವ ಕಾನೂನಿನಿಂದ ನೇಣು ಶಿಕ್ಷೆಯನ್ನು ತೆಗೆದುಹಾಕಬೇಕೆಂದು ಕೋರಿ ವಕೀಲ ರಿಷಿ ಮಲ್ಹೋತ್ರಾ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರ ಪೀಠ ವಜಾಗೊಳಿಸಿದೆ.

ಮಾರಕ ಇಂಜೆಕ್ಷನ್ ಪದ್ಧತಿಯಲ್ಲಿ ಗಂಭೀರ ಲೋಪಗಳಿವೆ ಎಂದು ಪೀಠ ಅಭಿಪ್ರಾಯಪಟ್ಟಿದೆ. ಅಮೆರಿಕ ಸೇರಿದಂತೆ ಹಲವು ದೇಶಗಳಲ್ಲಿ ಮಾರಕ ಇಂಜೆಕ್ಷನ್‌ಗಾಗಿ ಮೂರು ಹಂತದ ಔಷಧಿಗಳನ್ನು ಬಳಸಲಾಗುತ್ತದೆ. ಮೊದಲನೆಯದು ಪ್ರಜ್ಞೆ ತಪ್ಪಿಸಲು, ಎರಡನೆಯದು ಸ್ನಾಯುಗಳ ಚಲನೆ ನಿಲ್ಲಿಸಲು ಮತ್ತು ಮೂರನೆಯದು ಹೃದಯ ಸ್ಥಗಿತಗೊಳಿಸಲು. ಮೊದಲ ಔಷಧ ಸಮರ್ಪಕವಾಗಿ ಕೆಲಸ ಮಾಡದಿದ್ದರೆ, ವ್ಯಕ್ತಿ ಹೊರನೋಟಕ್ಕೆ ಶಾಂತವಾಗಿ ಕಂಡರೂ ದೇಹದೊಳಗೆ ಅಸಹನೀಯ ಉರಿ ಮತ್ತು ನರಕಯಾತನೆ ಅನುಭವಿಸುತ್ತಾನೆ ಎಂದು ನ್ಯಾಯಾಲಯ ವಿವರಿಸಿದೆ.

ದೆಹಲಿ ಎನ್‌ಎಲ್‌ಯುನ ‘ಪ್ರಾಜೆಕ್ಟ್ 39ಎ’ ವರದಿಯ ಪ್ರಕಾರ, ಅಮೆರಿಕದಲ್ಲಿ ನಡೆದ 9,000 ಮರಣದಂಡನೆಗಳಲ್ಲಿ 276 ಪ್ರಕರಣಗಳು ತಾಂತ್ರಿಕವಾಗಿ ಎಡವಿವೆ ಎಂಬ ಅಂಶವನ್ನೂ ಪೀಠ ಉಲ್ಲೇಖಿಸಿದೆ. 2024ರಲ್ಲಿ ಅಮೆರಿಕದ ಇಡಾಹೊದಲ್ಲಿ ಥಾಮಸ್ ಕ್ರೀಚ್ ಎಂಬ ಅಪರಾಧಿಗೆ ರಕ್ತನಾಳ ಸಿಗದೆ 8 ಬಾರಿ ಪ್ರಯತ್ನಿಸಿ ವಿಫಲವಾದಾಗ ಶಿಕ್ಷೆಯನ್ನೇ ಮುಂದೂಡಲಾಗಿತ್ತು ಎಂಬ ಉದಾಹರಣೆಯನ್ನೂ ನೀಡಲಾಗಿದೆ.

ಭಾರತದ ಅಟಾರ್ನಿ ಜನರಲ್ ಆರ್.ವೆಂಕಟರಮಣಿ ಅವರು ವಾದ ಮಂಡಿಸಿ, ಭಾರತದಲ್ಲಿ ನೇಣು ಶಿಕ್ಷೆಯು ಅತ್ಯಂತ ವಿಶ್ವಾಸಾರ್ಹವಾಗಿದ್ದು ಎಂದೂ ವಿಫಲವಾಗಿಲ್ಲ, ಆದರೆ ಇಂಜೆಕ್ಷನ್ ವಿಧಾನದಲ್ಲಿ ರಕ್ತನಾಳ ಪತ್ತೆ ಹಚ್ಚುವುದು ಮತ್ತು ಔಷಧಿ ಕೊರತೆಯಂತಹ ಸಮಸ್ಯೆಗಳಿವೆ ಎಂದು ವಿವರಿಸಿದರು.

1983ರ ‘ದೀನಾ ವರ್ಸಸ್ ಯೂನಿಯನ್ ಆಫ್ ಇಂಡಿಯಾ’ ಪ್ರಕರಣದಲ್ಲೂ ನ್ಯಾಯಾಲಯವು ವಿದ್ಯುತ್ ಕುರ್ಚಿ, ಗ್ಯಾಸ್ ಚೇಂಬರ್ ಮತ್ತು ಇಂಜೆಕ್ಷನ್‌ಗಳಿಗಿಂತ ನೇಣು ಪದ್ಧತಿಯೇ ಹೆಚ್ಚು ತ್ವರಿತ ಹಾಗೂ ಕಡಿಮೆ ದೋಷಪೂರಿತ ಎಂದು ಅಭಿಪ್ರಾಯಪಟ್ಟಿತ್ತು. ಈ ಎಲ್ಲಾ ಐತಿಹಾಸಿಕ ಮತ್ತು ವೈಜ್ಞಾನಿಕ ಅಂಶಗಳನ್ನು ಪರಿಗಣಿಸಿದ ಸುಪ್ರೀಂ ಕೋರ್ಟ್, ಪ್ರಸ್ತುತ ಇರುವ ನೇಣು ಶಿಕ್ಷೆಯ ವಿಧಾನವೇ ಮುಂದುವರಿಯಲಿದೆ ಎಂದು ತೀರ್ಪು ನೀಡಿದೆ.