Home Blog

ಕಬ್ಬಿನ ಜ್ಯೂಸ್ ಎಲ್ಲರಿಗೂ ಒಳ್ಳೆಯದಲ್ಲ! ಈ ಆರೋಗ್ಯ ಸಮಸ್ಯೆ ಇದ್ದಲ್ಲಿ ಕುಡಿಯಬೇಡಿ

0

ಬೇಸಿಗೆ ಕಾಲದಲ್ಲಿ ತಂಪು ನೀಡುವ ಜನಪ್ರಿಯ ಪಾನೀಯಗಳಲ್ಲೊಂದು ಕಬ್ಬಿನ ಜ್ಯೂಸ್ ಆಗಿದ್ದು, ಎಳನೀರು ಸೇರಿದಂತೆ ಇತರ ನೈಸರ್ಗಿಕ ಪಾನೀಯಗಳಂತೆ ಇದು ಹೆಚ್ಚು ಸೇವನೆಗೆ ಒಳಗಾಗುತ್ತದೆ.

ಆದರೆ ಕಬ್ಬಿನ ರಸ ಎಲ್ಲರಿಗೂ ಸುರಕ್ಷಿತವಲ್ಲ ಎಂಬ ವೈದ್ಯಕೀಯ ಎಚ್ಚರಿಕೆ ಇದೀಗ ಮತ್ತೆ ಗಮನ ಸೆಳೆದಿದೆ.

ಆರೋಗ್ಯ ತಜ್ಞರ ಪ್ರಕಾರ, ಕಬ್ಬಿನ ಜ್ಯೂಸ್‌ನಲ್ಲಿ ನೈಸರ್ಗಿಕ ಸಕ್ಕರೆ ಪ್ರಮಾಣ ಹೆಚ್ಚಿರುವುದರಿಂದ ಮಧುಮೇಹ ಇರುವವರು ಇದನ್ನು ಸೇವಿಸುವುದು ಅಪಾಯಕಾರಿ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ತಕ್ಷಣ ಏರಿಸಬಹುದಾಗಿ ವೈದ್ಯರು ತಿಳಿಸಿದ್ದಾರೆ.

ಅತಿಯಾದ ತೂಕ (ಒಬಿಸಿಟಿ) ಇರುವವರು ಕೂಡ ಕಬ್ಬಿನ ಜ್ಯೂಸ್ ಸೇವನೆ ವೇಳೆ ಎಚ್ಚರಿಕೆ ವಹಿಸಬೇಕಾಗಿದೆ. ಹೆಚ್ಚಿನ ಕ್ಯಾಲೊರಿ ಇರುವುದರಿಂದ ತೂಕ ಹೆಚ್ಚುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ವಾರಕ್ಕೆ ಒಂದು ಬಾರಿ ಮಿತ ಪ್ರಮಾಣದಲ್ಲಿ ಮಾತ್ರ ಸೇವಿಸುವುದು ಸೂಕ್ತ ಎಂದು ಸಲಹೆ ನೀಡಲಾಗಿದೆ.

ಇದೇ ವೇಳೆ ಜೀರ್ಣಕ್ರಿಯೆ ಸಮಸ್ಯೆ, ಅಜೀರ್ಣ ಅಥವಾ ಗ್ಯಾಸ್ಟ್ರಿಕ್ ಸಮಸ್ಯೆ ಇರುವವರು ಕಬ್ಬಿನ ಜ್ಯೂಸ್ ತಪ್ಪಿಸುವುದು ಉತ್ತಮ ಎಂದು ವೈದ್ಯರು ಸೂಚಿಸಿದ್ದಾರೆ. ಕೆಲವೊಮ್ಮೆ ಇದು ಹೊಟ್ಟೆಯ ಅಸೌಕರ್ಯವನ್ನು ಹೆಚ್ಚಿಸಬಹುದಾಗಿದೆ.

ವೈದ್ಯರ ಪ್ರಕಾರ, ಕಬ್ಬಿನ ಜ್ಯೂಸ್ ಸದಾ ತಾಜಾ ಹಾಗೂ ಸ್ವಚ್ಛವಾಗಿ ತಯಾರಿಸಿದದ್ದಾಗಿರಬೇಕು. ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡುವುದು ಹಾಗೂ ಅತಿಯಾದ ಪ್ರಮಾಣದಲ್ಲಿ ಕುಡಿಯುವುದನ್ನು ತಪ್ಪಿಸಬೇಕು ಎಂದು ಎಚ್ಚರಿಕೆ ನೀಡಲಾಗಿದೆ.

ಒಟ್ಟಿನಲ್ಲಿ ಬೇಸಿಗೆಯಲ್ಲಿ ತಂಪು ನೀಡುವ ಪಾನೀಯವಾಗಿದ್ದರೂ, ಕಬ್ಬಿನ ಜ್ಯೂಸ್ ಎಲ್ಲರಿಗೂ ಸಮಾನವಾಗಿ ಉಪಯುಕ್ತವಲ್ಲ ಎಂದು ತಜ್ಞರು ಸ್ಪಷ್ಟಪಡಿಸಿದ್ದಾರೆ. ಆರೋಗ್ಯ ಸಮಸ್ಯೆಗಳಿರುವವರು ವೈದ್ಯರ ಸಲಹೆಯ ನಂತರವೇ ಇದನ್ನು ಸೇವಿಸುವುದು ಸೂಕ್ತ ಎಂದು ತಿಳಿಸಿದ್ದಾರೆ.

ಕೇವಲ 57 ಎಸೆತಗಳಲ್ಲಿ ಶತಕ: ಚಿನ್ನಸ್ವಾಮಿಯಲ್ಲಿ ದಾಖಲೆ ನಿರ್ಮಿಸಿದ ಸಾಯಿ ಸುದರ್ಶನ್!

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026ರ 34ನೇ ಪಂದ್ಯದಲ್ಲಿ ಆರ್‌ಸಿಬಿ ವಿರುದ್ಧ ಗುಜರಾತ್ ಟೈಟಾನ್ಸ್ ಆರಂಭಿಕ ಆಟಗಾರ ಸಾಯಿ ಸುದರ್ಶನ್ ಭರ್ಜರಿ ಶತಕ ಸಿಡಿಸಿದ್ದಾರೆ.

ಆರಂಭದಿಂದಲೇ ಆಕ್ರಮಣಕಾರಿ ಆಟ ಪ್ರದರ್ಶಿಸಿದ ಸುದರ್ಶನ್, ಆರ್‌ಸಿಬಿ ವೇಗದ ಬೌಲರ್‌ಗಳಾದ ಭುವನೇಶ್ವರ್ ಕುಮಾರ್ ಹಾಗೂ ಜೋಶ್ ಹೇಜಲ್‌ವುಡ್ ವಿರುದ್ಧ ಸಿಡಿಲಿನ ಬ್ಯಾಟಿಂಗ್ ನಡೆಸಿದರು. ಪವರ್‌ಪ್ಲೇಯಲ್ಲೇ ವೇಗವಾಗಿ ರನ್ ಕಲೆಹಾಕಿದ ಅವರು ಕೇವಲ 33 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು.

ನಂತರ ನಾಯಕ ಶುಭಮನ್ ಗಿಲ್ ಜೊತೆಗೆ ಉತ್ತಮ ಜೊತೆಯಾಟ ಕಟ್ಟಿದ ಸುದರ್ಶನ್, ತಂಡವನ್ನು ಭದ್ರ ಸ್ಥಿತಿಗೆ ಕೊಂಡೊಯ್ದರು. 57 ಎಸೆತಗಳಲ್ಲಿ ಭರ್ಜರಿ ಶತಕ ಪೂರೈಸಿದ ಅವರು, ಅಂತಿಮವಾಗಿ 58 ರನ್‌ಗಳಲ್ಲಿ 100 ರನ್ ಮಾಡಿ ಹೇಜಲ್‌ವುಡ್ ಬೌಲಿಂಗ್‌ನಲ್ಲಿ ವಿಕೆಟ್ ಒಪ್ಪಿಸಿದರು.

ಈ ಶತಕದೊಂದಿಗೆ ಸಾಯಿ ಸುದರ್ಶನ್ ಐಪಿಎಲ್‌ನಲ್ಲಿ ತಮ್ಮ ಮೂರನೇ ಶತಕ ದಾಖಲಿಸಿದ್ದಾರೆ. ಅವರು ಈ ಹಿಂದೆ 2024 ಹಾಗೂ 2025 ಆವೃತ್ತಿಗಳಲ್ಲಿಯೂ ತಲಾ ಒಂದು ಶತಕ ಬಾರಿಸಿದ್ದರು.

ಇದೇ ವೇಳೆ ಸುದರ್ಶನ್ ಐಪಿಎಲ್‌ನಲ್ಲಿ ಅತಿ ಕಡಿಮೆ ಇನ್ನಿಂಗ್ಸ್‌ಗಳಲ್ಲಿ 2000 ರನ್ ಪೂರೈಸಿದ ದಾಖಲೆ ನಿರ್ಮಿಸಿದ್ದಾರೆ. ಕೇವಲ 47 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿ, ಕ್ರಿಸ್ ಗೇಲ್ ಅವರ ಹಿಂದಿನ ದಾಖಲೆ ಮುರಿದಿದ್ದಾರೆ.

ಸುದರ್ಶನ್ ಅವರ ಈ ಇನ್ನಿಂಗ್ಸ್‌ಗೆ ಅಭಿಮಾನಿಗಳು ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದು, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗುಜರಾತ್ ಟೈಟಾನ್ಸ್ ಪರ ಅಬ್ಬರದ ಬ್ಯಾಟಿಂಗ್ ಕಾಣಿಸಿಕೊಂಡಿದೆ.

ಚಿಕ್ಕಮಗಳೂರಿನಲ್ಲಿ ಗಾಳಿ ಸಹಿತ ಭಾರೀ ಮಳೆ: ಜನಜೀವನ ಅಸ್ತವ್ಯಸ್ತ!

ಚಿಕ್ಕಮಗಳೂರು: ಜಿಲ್ಲೆಯ ಕೊಟ್ಟಿಗೆಹಾರ, ಬಣಕಲ್, ಆಲ್ದೂರು ಹಾಗೂ ಮತ್ತಿಕಟ್ಟೆ ಭಾಗಗಳಲ್ಲಿ ಇಂದು ಗುಡುಗು-ಸಿಡಿಲು ಸಮೇತ ಧಾರಾಕಾರ ಮಳೆ ಸುರಿದಿದೆ.

ಹಲವೆಡೆ ಆಲಿಕಲ್ಲು ಸಹಿತ ಮಳೆಯೂ ಸುರಿದಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಕಳೆದೊಂದು ವಾರದಿಂದ ಜಿಲ್ಲೆಯಲ್ಲಿ ಹಗಲಿನಲ್ಲಿ ಬಿಸಿಲು, ಸಂಜೆ ವೇಳೆಗೆ ಮಳೆ ಎಂಬಂತೆ ಹವಾಮಾನ ಬದಲಾವಣೆ ಕಂಡುಬರುತ್ತಿದ್ದು, ಇದರಿಂದ ಜನರಿಗೂ ಕೊಂಚ ತೊಂದರೆ ಆಗಿತ್ತು. ಅಷ್ಟೇ ಅಲ್ಲ ಬಿಸಿಲು–ಮಳೆಯ ನಡುವಿನ ಈ ತೀವ್ರ ಬದಲಾವಣೆಯಿಂದ ಭೂಮಿಯ ಉಷ್ಣತೆ ಹೆಚ್ಚಾಗಿ ಜನರು ಹೈರಾಣಾಗಿದ್ದಾರೆ.

ಮತ್ತೊಂದೆಡೆ, ಈ ಮಳೆಯಿಂದ ಕಾಫಿ ಮತ್ತು ಅಡಿಕೆ ಬೆಳೆಗಳಿಗೆ ನೀರಿನ ಕೊರತೆಯಿಂದ ಪರದಾಡುತ್ತಿದ್ದ ರೈತರಿಗೆ ಸ್ವಲ್ಪ ನಿರಾಳತೆ ದೊರೆತಿದೆ. ಆದರೆ ಆಲಿಕಲ್ಲು ಮಳೆಯ ಪರಿಣಾಮ ಬೆಳೆಗಳಿಗೆ ಹಾನಿಯಾಗುವ ಆತಂಕವೂ ಬೆಳೆಗಾರರಲ್ಲಿ ಉಂಟಾಗಿದೆ.

ಆಲ್ದೂರು ಪಟ್ಟಣದಲ್ಲಿ ಮಳೆಯ ಸಂತೋಷದಲ್ಲಿ ವೃದ್ಧರೊಬ್ಬರು ರಸ್ತೆಯ ಮಧ್ಯದಲ್ಲಿ ಮಳೆಯಲ್ಲಿ ನೆನೆಯುತ್ತಾ ಡ್ಯಾನ್ಸ್ ಮಾಡಿದ್ದು ಸ್ಥಳೀಯರಲ್ಲಿ ಗಮನ ಸೆಳೆದಿದೆ. ಮತ್ತಿಕಟ್ಟೆ ಸಮೀಪದ ಅಡ್ಡಮಕ್ಕಿ ಗ್ರಾಮದಲ್ಲಿ ಆಲಿಕಲ್ಲು ಮಳೆ ಸುರಿದಿದ್ದು, ಮಹಿಳೆಯೊಬ್ಬರು ಆಲಿಕಲ್ಲುಗಳನ್ನು ಸಂಗ್ರಹಿಸಿರುವ ಘಟನೆ ಕೂಡ ನಡೆದಿದೆ.

ಒಟ್ಟಿನಲ್ಲಿ, ನಿರಂತರ ಹವಾಮಾನ ಬದಲಾವಣೆಯಿಂದ ಚಿಕ್ಕಮಗಳೂರು ಜಿಲ್ಲೆಯಲ್ಲಿ ಜನಜೀವನದ ಮೇಲೆ ಪರಿಣಾಮ ಬೀರುತ್ತಿದೆ.

ಚಿಂಚೋಳಿ–ತೆಲಂಗಾಣ ಹೆದ್ದಾರಿಯಲ್ಲಿ ಭೀಕರ ಸರಣಿ ಅಪಘಾತ: 10 ಜನರಿಗೆ ಗಾಯ

ಕಲಬುರಗಿ: ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಚಿಂಚೋಳಿ–ತೆಲಂಗಾಣ ರಾಜ್ಯ ಹೆದ್ದಾರಿಯಲ್ಲಿ ಇಂದು ಭೀಕರ ಸರಣಿ ಅಪಘಾತ ಸಂಭವಿಸಿದೆ.

ಸಿಮೆಂಟ್ ಟ್ಯಾಂಕರ್, ಖಾಸಗಿ ಬಸ್ ಹಾಗೂ ಆಟೋ ನಡುವೆ ನಡೆದ ಈ ಅಪಘಾತದಲ್ಲಿ ಹತ್ತು ಮಂದಿ ಗಾಯಗೊಂಡಿದ್ದು, ಓರ್ವನ ಸ್ಥಿತಿ ಗಂಭೀರವಾಗಿದೆ.

ತೆಲಂಗಾಣದ ತಾಂಡೂರು ಕಡೆಯಿಂದ ಚಿಂಚೋಳಿ ಕಡೆಗೆ ಬರುತ್ತಿದ್ದ ಸಿಮೆಂಟ್ ಟ್ಯಾಂಕರ್, ಎದುರಿನಲ್ಲಿದ್ದ ಆಟೋಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಯತ್ನಿಸಿದ ವೇಳೆ ನಿಯಂತ್ರಣ ತಪ್ಪಿದೆ. ಇದೇ ವೇಳೆ ಟ್ಯಾಂಕರ್ ಚಿಂಚೋಳಿಯಿಂದ ವೆಂಕಟಾಪುರ ಕಡೆಗೆ ತೆರಳುತ್ತಿದ್ದ ಖಾಸಗಿ ಬಸ್ಸಿಗೆ ಮುಖಾಮುಖಿ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಯಿಂದ ಆಟೋ ಕೂಡ ಸಂಪೂರ್ಣ ಜಖಂಗೊಂಡಿದೆ.

ಘಟನೆಯಲ್ಲಿ ಗಾಯಗೊಂಡ ಹತ್ತು ಮಂದಿಯನ್ನು ತಕ್ಷಣವೇ ಚಿಂಚೋಳಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಒಬ್ಬನ ಸ್ಥಿತಿ ಗಂಭೀರವಾಗಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ವೈದ್ಯರು ನಿಗಾ ವಹಿಸಿದ್ದಾರೆ ಎಂದು ತಿಳಿದುಬಂದಿದೆ.

ಅಪಘಾತದ ಬಳಿಕ ಸ್ಥಳದಲ್ಲಿ ಕೆಲಕಾಲ ಸಂಚಾರ ಅಸ್ತವ್ಯಸ್ತವಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ. ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಪಘಾತದ ನಿಖರ ಕಾರಣ ಕುರಿತು ತನಿಖೆ ನಡೆಯುತ್ತಿದೆ.

ಹಿರಣ್ಯಕೇಶಿ ನದಿಯಲ್ಲಿ ಮುಳುಗಿ ತಾಯಿ ಮಗ ಸಾವು ಪ್ರಕರಣ: ಬಾಲಕನ ಶವ 1.5 ಕಿ.ಮೀ ದೂರದಲ್ಲಿ ಪತ್ತೆ!

ಚಿಕ್ಕೋಡಿ: ಸಂಕೇಶ್ವರದಲ್ಲಿ ಕಳೆದ ನಾಲ್ಕು ದಿನಗಳ ಹಿಂದೆ ತಾಯಿ ಮತ್ತು ಮಗ ಹಿರಣ್ಯಕೇಶಿ ನದಿಗೆ ಬಿದ್ದು ಸಾವನ್ನಪ್ಪಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಬಾಲಕನ ಶವ ಪತ್ತೆಯಾಗಿದೆ.

ಸಂಕೇಶ್ವರದ ಹನುಮಾನ ನಗರ ನಿವಾಸಿ ಲಕ್ಷ್ಮೀ ಸುಧಾಕರ ಕುಟೋಳಿ (27) ಹಾಗೂ ಅವರ ಮಗ ಸುಪ್ರೀತ ಸುಧಾಕರ ಕುಟೋಳಿ (9) ಕಳೆದ ನಾಲ್ಕು ದಿನಗಳ ಹಿಂದೆ ಶಂಕರಲಿಂಗ ಮಠದ ಹಿಂಭಾಗದ ಹಿರಣ್ಯಕೇಶಿ ನದಿಯಲ್ಲಿ ನೀರಿಗೆ ಬಿದ್ದಿದ್ದರು ಎಂದು ತಿಳಿದುಬಂದಿದೆ. ಘಟನೆಯ ದಿನವೇ ತಾಯಿಯ ಶವವನ್ನು ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ನದಿಯಿಂದ ಹೊರತೆಗೆದಿದ್ದರು.

ಮಗನಿಗಾಗಿ ಕಳೆದ ನಾಲ್ಕು ದಿನಗಳಿಂದ ಪೊಲೀಸರು, ಅಗ್ನಿಶಾಮಕ ದಳ ಹಾಗೂ ಎಸ್‌ಡಿಆರ್‌ಎಫ್ ತಂಡಗಳು ನಿರಂತರ ಶೋಧ ಕಾರ್ಯ ನಡೆಸುತ್ತಿದ್ದವು. ಇದೀಗ ಬಾಲಕನ ಶವವು ಘಟನೆ ನಡೆದ ಸ್ಥಳದಿಂದ ಸುಮಾರು 1.5 ಕಿಲೋಮೀಟರ್ ದೂರದಲ್ಲಿ ನದಿಯಲ್ಲಿ ತೇಲಿ ಹೋಗಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಪತ್ತೆಯಾದ ಶವವನ್ನು ಪೊಲೀಸರು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ. ಈ ಘಟನೆ ಪ್ರದೇಶದಲ್ಲಿ ದುಃಖದ ವಾತಾವರಣವನ್ನು ಸೃಷ್ಟಿಸಿದೆ.

ಶ್ರೀನಗರ ಹೋಟೆಲ್‌ನಲ್ಲಿ ಲಿಫ್ಟ್ ಕುಸಿತ: ಬೆಂಗಳೂರಿನ 6 ಪ್ರವಾಸಿಗರಿಗೆ ಗಾಯ!

ಬೆಂಗಳೂರು: ಜಮ್ಮು-ಕಾಶ್ಮೀರದ ಶ್ರೀನಗರದ ಹೈದರ್ಪೋರ ಪ್ರದೇಶದಲ್ಲಿರುವ ನೂತನ ಹೋಟೆಲ್‌ನಲ್ಲಿ ಲಿಫ್ಟ್ ಕುಸಿದು ಬಿದ್ದ ಪರಿಣಾಮ ಬೆಂಗಳೂರಿನ ಆರು ಮಂದಿ ಪ್ರವಾಸಿಗರು ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.

ಅರಿಸನ್ ಲಕ್ಷುರಿ ಹೋಟೆಲ್‌ನಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಲಿಫ್ಟ್ ಏಕಾಏಕಿ ಕುಸಿದು ಬಿದ್ದ ಕಾರಣ ಪ್ರವಾಸಿಗರು ಗಾಯಗೊಂಡಿದ್ದಾರೆ. ತಕ್ಷಣವೇ ಗಾಯಾಳುಗಳನ್ನು ಶ್ರೀನಗರದ ಬರ್ಜುಲ್ಲಾದ ಬೋನ್ ಆ್ಯಂಡ್ ಜಾಯಿಂಟ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿದುಬಂದಿದೆ.

ಗಾಯಗೊಂಡವರನ್ನು ವೆಂಕಟೇಶ್ (65), ಡಿ. ಮಂಗಲಾ (54), ಕುಶಲ್ಲಾ (18), ಪಂಕಜಾ (16), ವೆಂಕಟಲಕ್ಷ್ಮಮ್ಮ (60) ಹಾಗೂ ಸೌಭಾಗ್ಯ (60) ಎಂದು ಗುರುತಿಸಲಾಗಿದೆ. ಇವರೆಲ್ಲರೂ ಬೆಂಗಳೂರಿನ ನಿವಾಸಿಗಳಾಗಿದ್ದಾರೆ.

ಘಟನೆ ಹೇಗೆ ಸಂಭವಿಸಿತು ಎಂಬ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಲಿಫ್ಟ್ ಕುಸಿತಕ್ಕೆ ತಾಂತ್ರಿಕ ದೋಷವೇ ಅಥವಾ ನಿರ್ಲಕ್ಷ್ಯವೇ ಕಾರಣವೋ ಎಂಬುದರ ಕುರಿತು ತನಿಖೆ ನಡೆಯುತ್ತಿದೆ. ಆದರೆ ಈವರೆಗೆ ಹೋಟೆಲ್ ಆಡಳಿತದಿಂದ ಯಾವುದೇ ಅಧಿಕೃತ ಹೇಳಿಕೆ ನೀಡಲಾಗಿಲ್ಲ.

ಈ ಘಟನೆ ಪ್ರವಾಸಿಗರ ಸುರಕ್ಷತೆ ಕುರಿತು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದ್ದು, ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಅಂತಾರಾಜ್ಯ ಕಳ್ಳರಿಗೆ ಬಿಗ್​​ ಶಾಕ್: BSNL ಸಿಬ್ಬಂದಿ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದ ಗ್ಯಾಂಗ್ ಬಂಧನ!

ಬೆಂಗಳೂರು: ಬಿಎಸ್‌ಎನ್‌ಎಲ್ ಮಾಡ್ಯೂಲ್‌ಗಳು ಮತ್ತು ಕಾಪರ್ ವೈರ್‌ಗಳನ್ನು ಕದಿಯುತ್ತಿದ್ದ ಗ್ಯಾಂಗ್‌ವೊಂದನ್ನು ಯಶವಂತಪುರ ಪೊಲೀಸರು ಬಂಧಿಸಿದ್ದಾರೆ.

ಉತ್ತರಪ್ರದೇಶ ಮೂಲದ ರವಿ ಚೌಹಾಣ್, ಸಂದೀಪ್ ಹಾಗೂ ಸೈಯದ್ ಜಾಹೇದ್ ಬಂಧಿತ ಆರೋಪಿಗಳು. ಇವರು ಬಿಎಸ್‌ಎನ್‌ಎಲ್ ಸಿಬ್ಬಂದಿಯಂತೆ ನೀಲಿ ಸಮವಸ್ತ್ರ ಧರಿಸಿ, ರಿಪೇರಿ ಕೆಲಸದ ನೆಪದಲ್ಲಿ ಕಳ್ಳತನ ನಡೆಸುತ್ತಿದ್ದರೆಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳು ಫುಟ್‌ಪಾತ್‌ಗಳಲ್ಲಿ ಅಳವಡಿಸಿದ್ದ ಟೆಲಿಫೋನ್ ಹಾಗೂ ಇಂಟರ್ನೆಟ್ LAN ಕೇಬಲ್‌ಗಳನ್ನು ಹೊಂದಿದ್ದ ಕಬ್ಬಿಣದ ಪಿಲ್ಲರ್‌ಗಳನ್ನು ಪಿಕಾಸಿ, ಸುತ್ತಿಗೆ, ಸ್ಕ್ರೂಡ್ರೈವರ್ ಮತ್ತು ಕಟ್ಟರ್ ಬಳಸಿ ಒಡೆದು ತಂತಿಗಳನ್ನು ಕದ್ದೊಯ್ಯುತ್ತಿದ್ದರು ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ವಿಶೇಷವೆಂದರೆ, ಕಳ್ಳತನಕ್ಕಾಗಿ ವಿಮಾನದ ಮೂಲಕ ಬೆಂಗಳೂರಿಗೆ ಬಂದು ಕೃತ್ಯ ನಡೆಸಿ, ನಂತರ ಕದ್ದ ವಸ್ತುಗಳೊಂದಿಗೆ ರೈಲಿನಲ್ಲಿ ಬೇರೆ ರಾಜ್ಯಗಳಿಗೆ ಪರಾರಿಯಾಗುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ದಿನಕ್ಕೊಂದು ರಾಜ್ಯದಲ್ಲಿ ಕಳ್ಳತನ ಮಾಡಿ ತಪ್ಪಿಸಿಕೊಳ್ಳುತ್ತಿದ್ದ ಈ ಗ್ಯಾಂಗ್‌ನ್ನು ಯಶವಂತಪುರ ಪೊಲೀಸರು ಕಾರ್ಯಾಚರಣೆ ನಡೆಸಿ ಯಶಸ್ವಿಯಾಗಿ ಬಂಧಿಸಿದ್ದಾರೆ. ಮುಂದಿನ ತನಿಖೆ ಮುಂದುವರಿದಿದೆ.

ಅತಿಯಾದ ಉಪ್ಪು ಸೇವನೆ ಕ್ಯಾಲ್ಸಿಯಂ ಕೊರತೆಗೆ ಕಾರಣವಾಗುತ್ತಾ? ತಜ್ಞರ ಎಚ್ಚರಿಕೆ ತಿಳಿದುಕೊಳ್ಳಿ

0

ದೈನಂದಿನ ಆಹಾರದ ಅವಿಭಾಜ್ಯ ಭಾಗವಾಗಿರುವ ಉಪ್ಪನ್ನು ಅತಿಯಾಗಿ ಸೇವಿಸುವುದು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂಬುದು ವೈದ್ಯಕೀಯವಾಗಿ ತಿಳಿದ ವಿಚಾರ.

ಇದೀಗ ಉಪ್ಪು ಮತ್ತು ಕ್ಯಾಲ್ಸಿಯಂ ನಡುವಿನ ಸಂಬಂಧದ ಬಗ್ಗೆ ಹೊಸ ಚರ್ಚೆ ಆರಂಭವಾಗಿದೆ.

ತಜ್ಞರ ಪ್ರಕಾರ, ಹೆಚ್ಚಿನ ಪ್ರಮಾಣದ ಉಪ್ಪು ಸೇವನೆಯಿಂದ ದೇಹದಲ್ಲಿ ಖನಿಜಗಳ ಸಮತೋಲನ ವ್ಯತ್ಯಯಗೊಳ್ಳಬಹುದು. ವಿಶೇಷವಾಗಿ ಮೂತ್ರದ ಮೂಲಕ ಕ್ಯಾಲ್ಸಿಯಂ ಹೊರಹೋಗುವ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ. ಇದರಿಂದ ದೀರ್ಘಕಾಲದಲ್ಲಿ ಎಲುಬುಗಳ ದುರ್ಬಲತೆ ಮತ್ತು ಕ್ಯಾಲ್ಸಿಯಂ ಕೊರತೆಯ ಅಪಾಯ ಹೆಚ್ಚಾಗಬಹುದು.

ಕ್ಯಾಲ್ಸಿಯಂ ಎಲುಬು ಮತ್ತು ಹಲ್ಲುಗಳ ಬಲಕ್ಕೆ ಮಾತ್ರವಲ್ಲದೆ ನರ ಹಾಗೂ ಸ್ನಾಯುಗಳ ಸರಿಯಾದ ಕಾರ್ಯನಿರ್ವಹಣೆಗೆ ಅಗತ್ಯವಾಗಿರುವ ಪ್ರಮುಖ ಖನಿಜವಾಗಿದೆ. ಆದರೆ ಉಪ್ಪಿನ ಅತಿಯಾದ ಸೇವನೆ ಈ ಸಮತೋಲನವನ್ನು ಹಾಳುಮಾಡುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಸುತ್ತಿದ್ದಾರೆ.

ವಿಶೇಷವಾಗಿ ಹಿರಿಯರು, ಮಹಿಳೆಯರು ಹಾಗೂ ಈಗಾಗಲೇ ಕ್ಯಾಲ್ಸಿಯಂ ಕೊರತೆಯಿಂದ ಬಳಲುತ್ತಿರುವವರು ಹೆಚ್ಚು ಎಚ್ಚರಿಕೆಯಿಂದ ಇರಬೇಕು ಎಂದು ಸಲಹೆ ನೀಡಲಾಗಿದೆ.

ತಡೆಗಟ್ಟುವ ಕ್ರಮಗಳು:
ಉಪ್ಪಿನ ಸೇವನೆಯನ್ನು ನಿಯಂತ್ರಿತ ಮಟ್ಟದಲ್ಲಿ ಇಡುವುದು, ಪ್ರೊಸೆಸ್ಡ್ ಆಹಾರಗಳನ್ನು ಕಡಿಮೆ ಮಾಡುವುದು ಹಾಗೂ ಹಾಲು, ಮೊಸರು, ಹಸಿರು ತರಕಾರಿಗಳಂತಹ ಕ್ಯಾಲ್ಸಿಯಂ ಸಮೃದ್ಧ ಆಹಾರಗಳನ್ನು ದಿನನಿತ್ಯದ ಆಹಾರದಲ್ಲಿ ಸೇರಿಸಿಕೊಳ್ಳುವುದು ಉತ್ತಮ ಎಂದು ತಜ್ಞರು ಸೂಚಿಸಿದ್ದಾರೆ.

ಮಹೇಶ್ ಶೆಟ್ಟಿ ಗಡಿಪಾರು ಪ್ರಕರಣ: ವಿಚಾರಣೆ ಪೂರ್ಣ, ತೀರ್ಪು ಕಾಯ್ದಿರಿಸಿದ ಹೈಕೋರ್ಟ್

ಬೆಂಗಳೂರು: ಬೆಳ್ತಂಗಡಿ ವಿದ್ಯಾರ್ಥಿನಿ ಸಾವಿನ ಪ್ರಕರಣಕ್ಕೆ ಸಂಬಂಧಿಸಿ ಹೋರಾಟ ನಡೆಸುತ್ತಿರುವ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಹೊರಡಿಸಿರುವ ಗಡಿಪಾರು ಆದೇಶ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಪೂರ್ಣಗೊಳಿಸಿ ತೀರ್ಪನ್ನು ಕಾಯ್ದಿರಿಸಿದೆ.

ದಕ್ಷಿಣ ಕನ್ನಡ ಜಿಲ್ಲೆಯಿಂದ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿಗೆ ಮೂರನೇ ಬಾರಿ ಗಡಿಪಾರು ಮಾಡುವಂತೆ ಪುತ್ತೂರು ಉಪವಿಭಾಗಾಧಿಕಾರಿಗಳು ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ಮಹೇಶ್ ಶೆಟ್ಟಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಸಚಿನ್ ಶಂಕರ್ ಮಗದಂ ಅವರ ಪೀಠ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಬೆಳ್ತಂಗಡಿ ವಿದ್ಯಾರ್ಥಿನಿ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ನ್ಯಾಯ ಒದಗಿಸುವ ಉದ್ದೇಶದಿಂದ ಅರ್ಜಿದಾರರು ಹೋರಾಟ ನಡೆಸಿದ್ದು, ಇದೇ ಕಾರಣಕ್ಕೆ ಅವರ ವಿರುದ್ಧ ಕ್ಷುಲ್ಲಕ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ವಾದಿಸಿದರು.

ಹಿಂದಿನ ಗಡಿಪಾರು ಆದೇಶವನ್ನು ಹೈಕೋರ್ಟ್ ರದ್ದುಪಡಿಸಿದ್ದರೂ, ಹೊಸದಾಗಿ ಹೊರಡಿಸಿದ ಆದೇಶವೂ ಕಾನೂನು ನಿಯಮಗಳಿಗೆ ವಿರುದ್ಧವಾಗಿದೆ. ಅರ್ಜಿದಾರರ ವಿರುದ್ಧ ದಾಖಲಾಗಿರುವ ಪ್ರಕರಣಗಳು ಮತ್ತು ಗಡಿಪಾರು ಆದೇಶದ ನಡುವೆ ಸಂಬಂಧ ಇಲ್ಲ ಎಂದು ತಿಳಿಸಿದ್ದಾರೆ.

ಮಹೇಶ್ ಶೆಟ್ಟಿ ವಿರುದ್ಧ ಒಟ್ಟು 26 ಪ್ರಕರಣಗಳು ದಾಖಲಾಗಿದ್ದು, ಅದರಲ್ಲಿ 16 ಪ್ರಕರಣಗಳಲ್ಲಿ ಖುಲಾಸೆಗೊಂಡಿದ್ದಾರೆ. ಎರಡು ಪ್ರಕರಣಗಳು ವಿಚಾರಣೆಯಲ್ಲಿದ್ದು, ಎಂಟು ಪ್ರಕರಣಗಳು ತನಿಖಾ ಹಂತದಲ್ಲಿವೆ. ಇತ್ತೀಚಿನ ಐದು ಕ್ಷುಲ್ಲಕ ಪ್ರಕರಣಗಳನ್ನು ಆಧರಿಸಿ ಗಡಿಪಾರು ಆದೇಶ ಹೊರಡಿಸಲಾಗಿದೆ ಎಂದು ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು.

ಅರ್ಜಿದಾರರ ಚಟುವಟಿಕೆಗಳಿಂದ ಸಾರ್ವಜನಿಕ ಶಾಂತಿ ಮತ್ತು ಸುವ್ಯವಸ್ಥೆಗೆ ಧಕ್ಕೆ ಉಂಟಾಗುತ್ತದೆ ಎಂಬುದಕ್ಕೆ ಯಾವುದೇ ಸ್ಪಷ್ಟ ಪುರಾವೆ ಇಲ್ಲ. ಆದ್ದರಿಂದ ಗಡಿಪಾರು ಆದೇಶ ದುರುದ್ದೇಶಪೂರ್ವಕವಾಗಿದೆ ಮತ್ತು ಅದನ್ನು ರದ್ದುಪಡಿಸಬೇಕು ಎಂದು ಮನವಿ ಮಾಡಿದರು.

ಇದಕ್ಕೆ ವಿರೋಧ ವ್ಯಕ್ತಪಡಿಸಿದ ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ, ಮಹೇಶ್ ಶೆಟ್ಟಿ ಹಲವು ಬಾರಿ ಕಾನೂನು ಸುವ್ಯವಸ್ಥೆಗೆ ಸಮಸ್ಯೆ ಉಂಟುಮಾಡಿದ್ದಾರೆ. ಇತ್ತೀಚೆಗೆ ಏಪ್ರಿಲ್ 13 ಮತ್ತು 15ರಂದು ಹೊಸ ಪ್ರಕರಣಗಳೂ ದಾಖಲಾಗಿವೆ ಎಂದು ತಿಳಿಸಿದರು.

ಅರ್ಜಿದಾರರ ವಿರುದ್ಧ ಈಗಾಗಲೇ ಅನೇಕ ಪ್ರಕರಣಗಳು ದಾಖಲಾಗಿರುವ ಹಿನ್ನೆಲೆ, ಗಡಿಪಾರು ಕ್ರಮದಲ್ಲಿ ಯಾವುದೇ ಕಾನೂನು ಉಲ್ಲಂಘನೆ ಆಗಿಲ್ಲ. ಆದ್ದರಿಂದ ಅರ್ಜಿಯನ್ನು ವಜಾಗೊಳಿಸಬೇಕು ಎಂದು ಸರ್ಕಾರ ಪರವಾಗಿ ವಾದಿಸಲಾಯಿತು.

ಎರಡೂ ಪಕ್ಷಗಳ ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಏಪ್ರಿಲ್ 29ಕ್ಕೆ ಆದೇಶ ಕಾಯ್ದಿರಿಸಿರುವುದಾಗಿ ತಿಳಿಸಿದೆ. ಅಷ್ಟರವರೆಗೆ ಗಡಿಪಾರು ಆದೇಶ ಜಾರಿಗೆ ಯಾವುದೇ ಕ್ರಮ ಕೈಗೊಳ್ಳಬಾರದು ಎಂದು ಸೂಚಿಸಿದೆ.

AAPಗೆ ಬಿಗ್ ಶಾಕ್: ರಾಘವ್ ಚಡ್ಡಾ ಸೇರಿ ಬಿಜೆಪಿ ಸೇರಿದ 7 ರಾಜ್ಯಸಭಾ ಸಂಸದರು!

ನವದೆಹಲಿ: ಆಮ್ ಆದ್ಮಿ ಪಕ್ಷಕ್ಕೆ ದೊಡ್ಡ ಆಘಾತ ಎದುರಾಗಿದ್ದು, ರಾಘವ್ ಚಡ್ಡಾ ಸೇರಿದಂತೆ ಏಳು ರಾಜ್ಯಸಭಾ ಸದಸ್ಯರು ಬಿಜೆಪಿಗೆ ಬೆಂಬಲ ಘೋಷಿಸಿದ್ದಾರೆ ಎಂಬ ಮಾಹಿತಿ ಹೊರಬಂದಿದೆ.

ರಾಘವ್ ಚಡ್ಡಾ, ಅಶೋಕ್ ಮಿತ್ತಲ್, ಸಂದೀಪ್ ಪಾಠಕ್ ಸೇರಿದಂತೆ ಒಟ್ಟು ಏಳು ಮಂದಿ ರಾಜ್ಯಸಭಾ ಸಂಸದರು ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಲಾಗಿದೆ. ರಾಜ್ಯಸಭೆಯ ಎಎಪಿ ಸದಸ್ಯರ ಪೈಕಿ ಎರಡು ಮೂರಂಚು ಮಂದಿ ಬಿಜೆಪಿಗೆ ಬೆಂಬಲ ನೀಡಿರುವುದಾಗಿ ಅವರು ಹೇಳಿದ್ದಾರೆ.

ಈ ಕುರಿತು ಮಾತನಾಡಿದ ರಾಘವ್ ಚಡ್ಡಾ, “ನಾವು ಸಂವಿಧಾನದ ನಿಯಮಾನುಸಾರ ಬಿಜೆಪಿಯೊಂದಿಗೆ ವಿಲೀನಗೊಳ್ಳುವ ನಿರ್ಧಾರ ಕೈಗೊಂಡಿದ್ದೇವೆ. ನಾನು ನನ್ನ ಯೌವನದ 15 ವರ್ಷಗಳನ್ನು ಎಎಪಿಗೆ ಸಮರ್ಪಿಸಿದ್ದರೂ, ಈಗ ಪಕ್ಷ ತನ್ನ ಮೂಲ ತತ್ವಗಳು ಮತ್ತು ಮೌಲ್ಯಗಳಿಂದ ದೂರವಾಗಿದೆ” ಎಂದು ಆರೋಪಿಸಿದ್ದಾರೆ.

ಪಕ್ಷವು ರಾಷ್ಟ್ರ ಹಿತಾಸಕ್ತಿಗೆ ಕೆಲಸ ಮಾಡುವ ಬದಲು ವೈಯಕ್ತಿಕ ಲಾಭಕ್ಕಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಟೀಕಿಸಿದ ಅವರು, ಕಳೆದ ಕೆಲವು ವರ್ಷಗಳಿಂದ ತಾನು ತಪ್ಪು ಪಕ್ಷದಲ್ಲಿ ಕೆಲಸ ಮಾಡುತ್ತಿರುವ ಸರಿಯಾದ ವ್ಯಕ್ತಿ ಎಂಬ ಭಾವನೆ ಹೊಂದಿದ್ದೆ ಎಂದು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಎಎಪಿಯಿಂದ ದೂರ ಸರಿದು, ಜನರೊಂದಿಗೆ ಹೆಚ್ಚು ಹತ್ತಿರವಾಗಲು ನಿರ್ಧರಿಸಿದ್ದಾಗಿ ರಾಘವ್ ಚಡ್ಡಾ ಘೋಷಿಸಿದ್ದಾರೆ.

error: Content is protected !!