Home Blog

ಬಡವರ ಅನ್ನಕ್ಕೂ ಸರ್ವರ್ ಕಂಟಕ!

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಸಮೀಪದ ಜಕ್ಕಲಿ ಗ್ರಾಮದ ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ಬಯೋಮೆಟ್ರಿಕ್ ಸರ್ವರ್ ಕೈಕೊಟ್ಟ ಪರಿಣಾಮ, ಪಡಿತರ ಪಡೆಯಲು ಫಲಾನುಭವಿಗಳು ಕಳೆದ ಹಲವು ದಿನಗಳಿಂದ ನರಕಯಾತನೆ ಅನುಭವಿಸುತ್ತಿದ್ದಾರೆ. ಹೆಬ್ಬೆಟ್ಟು ಹಾಕಲು ಸಾಧ್ಯವಾಗದೆ ನೂರಾರು ಮಂದಿ ದಿನಪೂರ್ತಿ ಸಾಲಿನಲ್ಲಿ ನಿಂತರೂ ಖಾಲಿಕೈಯಿಂದ ಮನೆಗೆ ಹಿಂತಿರುಗುತ್ತಿರುವ ದೃಶ್ಯ ಗ್ರಾಮದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.
ಸಮಸ್ಯೆ ದಿನದಿಂದ ದಿನಕ್ಕೆ ಗಂಭೀರವಾಗುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಮಂಗಳವಾರ ಗ್ರಾಮಸ್ಥರು ನ್ಯಾಯಬೆಲೆ ಅಂಗಡಿ ಎದುರು ಪ್ರತಿಭಟನೆ ನಡೆಸಿ ಸರ್ಕಾರ ಹಾಗೂ ಆಡಳಿತದ ವಿರುದ್ಧ ಘೋಷಣೆ ಕೂಗಿದರು.
“ಬೇಕೇ ಬೇಕು ನ್ಯಾಯ ಬೇಕು”, “ಸರ್ವರ್ ಸಮಸ್ಯೆ ನಿವಾರಿಸಿ” ಎಂದು ಕೂಗಿದ ಪ್ರತಿಭಟನಾಕಾರರು, ಸಾರ್ವಜನಿಕರಿಗೆ ಮೂಲಭೂತ ಸೇವೆ ಒದಗಿಸುವಲ್ಲಿಯೂ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಆರೋಪಿಸಿದರು.
ಮಳೆಗಾಲದ ಕೃಷಿ ಚಟುವಟಿಕೆ ಆರಂಭವಾಗಿರುವ ವೇಳೆಯಲ್ಲೇ ರೈತರು ಹೊಲದ ಕೆಲಸ ಬಿಟ್ಟು ನ್ಯಾಯಬೆಲೆ ಅಂಗಡಿ ಮುಂದೆ ಸಾಲಿನಲ್ಲಿ ನಿಲ್ಲಬೇಕಾದ ಪರಿಸ್ಥಿತಿ ಎದುರಾಗಿದೆ.
“ಬೆಳಗ್ಗೆಯಿಂದ ಸಂಜೆವರೆಗೆ ಕಾಯಿಸುತ್ತಾರೆ. ಕೊನೆಗೆ ‘ಸರ್ವರ್ ಇಲ್ಲ’ ಎಂದು ಮನೆಗೆ ಕಳುಹಿಸುತ್ತಾರೆ. ಎರಡು-ಮೂರು ದಿನಗಳಿಂದ ಬರುತ್ತಿದ್ದರೂ ಪಡಿತರ ಸಿಗುತ್ತಿಲ್ಲ,” ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.
“ಒಂದೆಡೆ ಕೃಷಿ ಕೆಲಸ, ಮತ್ತೊಂದೆಡೆ ಪಡಿತರದ ಕಷ್ಟ. ಕೆಲಸವೂ ಆಗುತ್ತಿಲ್ಲ, ಪಡೀತರವೂ ಸಿಗುತ್ತಿಲ್ಲ,” ಎಂದು ಅಸಮಾಧಾನ ಹೊರಹಾಕಿದರು.
ಮಹಿಳೆಯರು ಮಾತನಾಡಿ, “ಮನೆಯ ಕೆಲಸ, ಮಕ್ಕಳ ಜವಾಬ್ದಾರಿ ಬಿಟ್ಟು ಬರುತ್ತಿದ್ದೇವೆ. ದಿನವಿಡೀ ಕಾಯಿಸಿದರೂ ಪಡಿತರ ಸಿಗುತ್ತಿಲ್ಲ. ಬಡವರ ಸಂಕಷ್ಟ ಸರ್ಕಾರಕ್ಕೆ ಕಾಣುತ್ತಿಲ್ಲ,” ಎಂದು ಬೇಸರ ವ್ಯಕ್ತಪಡಿಸಿದರು.
ಹಿರಿಯ ನಾಗರಿಕರು ಹಾಗೂ ಅಂಗವಿಕಲರು ಬಿಸಿಲಿನಲ್ಲಿ ಗಂಟೆಗಟ್ಟಲೆ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಲ ವೃದ್ಧರು, “ಬೆರಳಚ್ಚೇ ಸರಿಯಾಗಿ ಬರುತ್ತಿಲ್ಲ. ಅದರ ಮೇಲೆ ಸರ್ವರ್ ಸಮಸ್ಯೆ. ಪ್ರತಿದಿನ ಬಂದು ಹಿಂತಿರುಗುವುದು ತುಂಬಾ ಕಷ್ಟ,” ಎಂದು ಅಳಲು ತೋಡಿಕೊಂಡರು.
ಅಂಗವಿಕಲರು ಮತ್ತು ವೃದ್ಧ ಮಹಿಳೆಯರು ನೆಲದ ಮೇಲೆಯೇ ಕುಳಿತು ಕಾಯುತ್ತಿರುವ ದೃಶ್ಯ ಜನರ ಮನಕಲುಕಿತು.
“ಸರ್ವರ್ ಸಮಸ್ಯೆ ಇದೆ ಎಂದು ಹೇಳುವುದನ್ನು ಬಿಟ್ಟರೆ ಬೇರೆ ಯಾವುದೇ ಸ್ಪಂದನೆ ಇಲ್ಲ. ಅಧಿಕಾರಿಗಳು ಸ್ಥಳಕ್ಕೆ ಬಂದು ಸಮಸ್ಯೆ ಕೇಳುವವರೇ ಇಲ್ಲ,” ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ತಕ್ಷಣ ಆಫ್‌ಲೈನ್ ಮೂಲಕವಾದರೂ ಪಡಿತರ ವಿತರಣೆ ಮಾಡಬೇಕು. ಇಲ್ಲವಾದರೆ ತಾಲೂಕು ಮಟ್ಟದಲ್ಲಿ ಹೋರಾಟ ತೀವ್ರಗೊಳಿಸುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.

ಜನರ ಪ್ರಮುಖ ಆಗ್ರಹಗಳು

  •  ಸರ್ವರ್ ಸಮಸ್ಯೆ ತಕ್ಷಣ ಬಗೆಹರಿಸಬೇಕು
  •  ಆಫ್‌ಲೈನ್ ಮೂಲಕ ಪಡಿತರ ವಿತರಣೆ ಆರಂಭಿಸಬೇಕು
  •  ಹಿರಿಯ ನಾಗರಿಕರು, ಅಂಗವಿಕಲರಿಗೆ ವಿಶೇಷ ವ್ಯವಸ್ಥೆ ಕಲ್ಪಿಸಬೇಕು
  •  ಆಹಾರ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಪರಿಹರಿಸಬೇಕು

ಗುಲ್ಮೋಹರ್ ಹೂವಿನ ಸುರಂಗವಾಗಿ ಮಿಂಚಿದ ರಸ್ತೆ!

0
ವಿಜಯಸಾಕ್ಷಿ ಸುದ್ದಿ, ರೋಣ: ತಾಲೂಕಿನ ಮಾರನಬಸರಿ ಗ್ರಾಮದಿಂದ ಕೊಪ್ಪದ ಕ್ರಾಸ್‌ವರೆಗೆ ಸುಮಾರು ಒಂದು ಕಿಲೋಮೀಟರ್ ವ್ಯಾಪ್ತಿಯಲ್ಲಿ ಬೆಳೆದು ನಿಂತಿರುವ ಗುಲ್ಮೋಹರ್ ಮರಗಳು ಇದೀಗ ಸಂಚಾರಿಗಳ ಕಣ್ಮನ ಸೆಳೆಯುತ್ತಿವೆ. ಕೆಂಪು-ಕಿತ್ತಳೆ ಬಣ್ಣದ ಹೂವುಗಳಿಂದ ಕಂಗೊಳಿಸುತ್ತಿರುವ ಈ ಮರಗಳು ರಸ್ತೆಯನ್ನೇ ನೈಸರ್ಗಿಕ ಹೂವಿನ ಸುರಂಗವನ್ನಾಗಿ ಮಾರ್ಪಡಿಸಿವೆ.
ಮುಖ್ಯ ರಸ್ತೆಯ ಎರಡೂ ಬದಿಗಳಲ್ಲಿ ದಟ್ಟವಾಗಿ ಬೆಳೆದಿರುವ ಮರಗಳು ಪ್ರಯಾಣಿಕರಿಗೆ ತಂಪಾದ ನೆರಳನ್ನು ನೀಡುತ್ತಿದ್ದು, ಬೇಸಿಗೆಯ ಬಿಸಿಲಿನ ಮಧ್ಯೆಯೂ ಮನಸಿಗೆ ಹಿತ ನೀಡುವ ವಾತಾವರಣ ಸೃಷ್ಟಿಸಿವೆ.
ಹೂವುಗಳಿಂದ ಆವೃತವಾಗಿರುವ ರಸ್ತೆಯಲ್ಲಿ ಯುವಕರು, ಪ್ರವಾಸಿಗರು ಹಾಗೂ ಸ್ಥಳೀಯರು ನಿಂತು ಸೆಲ್ಫಿ ತೆಗೆದುಕೊಳ್ಳುವುದು ಸಾಮಾನ್ಯ ದೃಶ್ಯವಾಗಿದೆ. ರಸ್ತೆಯ ಮೇಲೆ ಉದುರಿರುವ ಗುಲ್ಮೋಹರ್ ಹೂವುಗಳು ಪ್ರಕೃತಿಯ ರಂಗೋಲಿಯಂತೆಯೇ ಕಂಗೊಳಿಸುತ್ತಿದ್ದು, ಈ ಮಾರ್ಗವನ್ನು ಮತ್ತಷ್ಟು ಆಕರ್ಷಕವಾಗಿಸಿವೆ.
ಪ್ರಕೃತಿ ಪ್ರೇಮಿಗಳು ಹಾಗೂ ವಾಹನ ಸವಾರರು ಈ ರಸ್ತೆಯ ಸೌಂದರ್ಯವನ್ನು ಕಣ್ತುಂಬಿಕೊಳ್ಳುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿಯೂ ಈ ದೃಶ್ಯಗಳು ವೈರಲ್ ಆಗುತ್ತಿವೆ.

ಬೆಂಗಳೂರಿನಲ್ಲಿ ಎಬೋಲಾ ಶಂಕಿತ ಪ್ರಕರಣ: ಉಗಾಂಡಾ ಮೂಲದ ಮಹಿಳೆ ಆಸ್ಪತ್ರೆಗೆ ಶಿಫ್ಟ್!

ಬೆಂಗಳೂರು: ರಾಜ್ಯದಲ್ಲಿ ಮೊದಲ ಎಬೋಲಾ ಪ್ರಕರಣ ಪತ್ತೆಯಾಗಿರುವ ಶಂಕೆ ವ್ಯಕ್ತವಾಗಿದೆ.

ಉಗಾಂಡಾದಿಂದ ಬೆಂಗಳೂರಿಗೆ ಆಗಮಿಸಿದ್ದ 28 ವರ್ಷದ ಮಹಿಳೆಯಲ್ಲಿ ಎಬೋಲಾ ರೋಗದ ಲಕ್ಷಣಗಳು ಕಂಡುಬಂದಿದ್ದು, ಆತಂಕದ ಪರಿಸ್ಥಿತಿ ನಿರ್ಮಾಣವಾಗಿದೆ.

ಆರೋಗ್ಯ ಇಲಾಖೆ ತಕ್ಷಣ ಕ್ರಮ ಕೈಗೊಂಡು ಶಂಕಿತ ಮಹಿಳೆಯನ್ನು ನಗರದ ರಾಜೀವ್ ಗಾಂಧಿ ಆಸ್ಪತ್ರೆಗೆ ಸ್ಥಳಾಂತರಿಸಿ ಐಸೋಲೇಷನ್ ವಾರ್ಡ್‌ನಲ್ಲಿ ತೀವ್ರ ನಿಗಾದಲ್ಲಿ ಇರಿಸಿದೆ ಎಂದು ತಿಳಿದುಬಂದಿದೆ.

ಮಹಿಳೆಯಿಂದ ರಕ್ತ ಹಾಗೂ ಅಗತ್ಯ ಮಾದರಿಗಳನ್ನು ಸಂಗ್ರಹಿಸಿ ಹೆಚ್ಚಿನ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ವರದಿ ಬಂದ ಬಳಿಕವೇ ಸೋಂಕಿನ ಕುರಿತು ಅಧಿಕೃತ ಮಾಹಿತಿ ಲಭ್ಯವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಎಚ್ಚರಿಕೆ ಕ್ರಮಗಳನ್ನು ಹೆಚ್ಚಿಸಿದ್ದು, ಅಂತಾರಾಷ್ಟ್ರೀಯ ಪ್ರಯಾಣಿಕರ ಮೇಲಿನ ನಿಗಾ ಮತ್ತಷ್ಟು ಕಠಿಣಗೊಳಿಸಲಾಗಿದೆ.

ಸನಾತನ ಸಂರಕ್ಷಣೆಗೆ ಹಿಂದೂ ಸಮಾವೇಶ!

0
ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಸನಾತನ ಹಿಂದೂ ಧರ್ಮದ ವಿರುದ್ಧ ಹುನ್ನಾರ ನಡೆಸುತ್ತಿರುವ ಪಟ್ಟಭದ್ರ ಹಿತಾಸಕ್ತಿಗಳಿಗೆ ತಕ್ಕ ಸಂದೇಶ ನೀಡುವ ಉದ್ದೇಶದಿಂದ ಮೇ 31ರಂದು ಗದಗದಲ್ಲಿ ಬೃಹತ್ ಹಿಂದೂ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಸಮಾವೇಶದ ಸಂಚಾಲಕ ರಾಜು ಖಾನಪ್ಪನವರ ಹೇಳಿದರು.
ಶಿರಹಟ್ಟಿಯ ಟೀಚರ್ ಸೊಸೈಟಿಯಲ್ಲಿ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹಿಂದೂ ಸರ್ವ ಸಮಾಜಗಳ ಒಕ್ಕೂಟದ ವತಿಯಿಂದ ಬಸವಾದಿ ಶಿವಶರಣರ ನೇತೃತ್ವದಲ್ಲಿ ಈ ಮಹಾಸಮಾವೇಶ ಆಯೋಜಿಸಲಾಗುತ್ತಿದೆ ಎಂದರು.
ಗದಗ ನಗರದ ವಿಡಿಎಸ್ಟಿಸಿ ಮೈದಾನದಲ್ಲಿ ನಡೆಯಲಿರುವ ಸಮಾವೇಶದಲ್ಲಿ ಕನ್ಹೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಸೇರಿದಂತೆ ಅನೇಕ ಮಠಾಧೀಶರು ಭಾಗವಹಿಸಲಿದ್ದಾರೆ. ಸಾವಯವ ಕೃಷಿ ಕುರಿತಂತೆ ರೈತರಿಗೆ ತಜ್ಞರಿಂದ ಮಾರ್ಗದರ್ಶನವೂ ಇರಲಿದ್ದು, ಜಿಲ್ಲೆಯ ರೈತರು ಹಾಗೂ ಹಿಂದೂ ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಕರೆ ನೀಡಿದರು.
ಸಂಘಟನೆಯ ಮುಖಂಡ ಸಂತೋಷ ಕುರಿ ಮಾತನಾಡಿ, ಮೇ ೩೧ರಂದು ಮಧ್ಯಾಹ್ನ ೩.೩೦ಕ್ಕೆ ಭೂಮರಡ್ಡಿ ಸರ್ಕಲ್‌ನಿಂದ ಕುಂಭ ಮೆರವಣಿಗೆ ಆರಂಭವಾಗಲಿದ್ದು, ಎರಡು ರಿಂದ ಮೂರು ಸಾವಿರ ಮಹಿಳೆಯರು ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದರು. ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಸಂಜೆ ೫.೩೦ಕ್ಕೆ ವಿಡಿಎಸ್ಟಿ ಮೈದಾನದಲ್ಲಿ ಬೃಹತ್ ಸಮಾವೇಶವಾಗಿ ರೂಪುಗೊಳ್ಳಲಿದೆ ಎಂದು ಹೇಳಿದರು.
ಈ ಮಹಾಸಭೆಯಲ್ಲಿ ೨೫ರಿಂದ ೩೦ ಸಾವಿರ ಜನ ಭಾಗವಹಿಸುವ ಸಾಧ್ಯತೆ ಇದ್ದು, ೩೦೦ಕ್ಕೂ ಹೆಚ್ಚು ಮಠಗಳ ಮಠಾಧೀಶರು ಆಗಮಿಸಲಿದ್ದಾರೆ ಎಂದು ತಿಳಿಸಿದರು.
ಸಭೆಯಲ್ಲಿ ಶ್ರೀಧರ್ ಕುಲಕರ್ಣಿ, ರಾಜೀವರಡ್ಡಿ ಬಮ್ಮನಕಟ್ಟಿ, ವೆಂಕಟೇಶ್ ಕುಲಕರ್ಣಿ, ತಿಪ್ಪಣ್ಣ ಕೊಂಚಗೇರಿ, ಯಲ್ಲಪ್ಪಗೌಡ ಅಣ್ಣಿಗೇರಿ, ರಾಮಣ್ಣ ಕಂಬಳಿ, ಬಸವರಾಜ ತುಳಿ, ಗೂಳಪ್ಪ ಕರಿಗಾರ, ಪರಶುರಾಮ ಡೊಂಕಬಳ್ಳಿ, ನೀಲಪ್ಪ ಖಾನಾಪುರ, ನಾಗರಾಜ ಇಂಗಳಗಿ, ಫಕೀರೇಶ ಕರಿಗಾರ, ಸಂತೋಷ ಸೊಂಟನೂರ, ವಿರುಪಾಕ್ಷಿ ಹಿರೇಮಠ, ದೇವು ಪೂಜಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.
 “ಹಿಂದೂ ಸಮಾಜದ ಐಕ್ಯತೆ ಮತ್ತು ಜಾಗೃತಿಯೇ ಸಮಾವೇಶದ ಪ್ರಮುಖ ಉದ್ದೇಶ.”
ರಾಜು ಖಾನಪ್ಪನವರ

ರಸ್ತೆ ಅಭಿವೃದ್ಧಿಗೆ ಸಚಿವ ಎಚ್‌ಕೆಪಿ ಚಾಲನೆ

ವಿಜಯಸಾಕ್ಷಿ ಸುದ್ದಿ, ಗದಗ: ಗದಗ-ಬೆಟಗೇರಿ ಅವಳಿ ನಗರದಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಮತ್ತೊಂದು ದೊಡ್ಡ ಹೆಜ್ಜೆಯಾಗಿ ಕಳಸಾಪುರ ರಸ್ತೆ, ಬೆಟಗೇರಿ ಹಾಗೂ ಕುರಹಟ್ಟಿ ಪೇಟೆ ಭಾಗಗಳಲ್ಲಿ ಒಟ್ಟು ₹3 ಕೋಟಿ ವೆಚ್ಚದ ಸಿ.ಸಿ ರಸ್ತೆ ಮತ್ತು ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ರಾಜ್ಯದ ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಇಲಾಖೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಮಂಗಳವಾರ ಭೂಮಿಪೂಜೆ ನೆರವೇರಿಸಿದರು.
ನಗರದ ವಾರ್ಡ್ ಸಂಖ್ಯೆ 34 ಮತ್ತು 35ರ ಕಳಸಾಪುರ ರಸ್ತೆಯ ಇಂಡಿಯನ್ ಬ್ಯಾಂಕ್ ಸಮೀಪ, ವಾರ್ಡ್ ಸಂಖ್ಯೆ 06ರ ಬೆಟಗೇರಿ ಹಾಗೂ ವಾರ್ಡ್ ಸಂಖ್ಯೆ 10ರ ಕುರಹಟ್ಟಿ ಪೇಟೆಯಲ್ಲಿ ಕೈಗೆತ್ತಿಕೊಳ್ಳಲಾದ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಸಚಿವರು, ಗುಣಮಟ್ಟದ ರಸ್ತೆ ನಿರ್ಮಾಣಕ್ಕೆ ಯಾವುದೇ ರಾಜಿ ಆಗಬಾರದು ಎಂದು ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
“ಸಾರ್ವಜನಿಕರು ವರ್ಷಗಳ ಕಾಲ ಸುಗಮವಾಗಿ ಸಂಚಾರ ಮಾಡಲು ಅನುಕೂಲವಾಗುವ ರೀತಿಯಲ್ಲಿ ಕಾಮಗಾರಿ ನಡೆಯಬೇಕು. ನಾಲ್ಕು ತಿಂಗಳೊಳಗೆ ಎಲ್ಲ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು,” ಎಂದು ಸೂಚಿಸಿದರು.
ನಗರ ಅಭಿವೃದ್ಧಿಗೆ ಸರ್ಕಾರ ಬದ್ಧ
ಪ್ರದೇಶದ ಸಮಗ್ರ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದ್ದು, ಮುಂದಿನ ಹಂತದಲ್ಲೂ ಹೆಚ್ಚುವರಿ ಅನುದಾನ ಒದಗಿಸಲಾಗುವುದು ಎಂದು ಸಚಿವರು ಭರವಸೆ ನೀಡಿದರು. ರಸ್ತೆ, ಕುಡಿಯುವ ನೀರು, ಉದ್ಯಾನವನ ಹಾಗೂ ಶಿಕ್ಷಣ ಮೂಲಸೌಕರ್ಯಗಳ ಅಭಿವೃದ್ಧಿಗೆ ಸರ್ಕಾರ ಆದ್ಯತೆ ನೀಡುತ್ತಿದೆ ಎಂದರು.
ಕಳಸಾಪುರ ಭಾಗದ ಸಾರ್ವಜನಿಕ ಉದ್ಯಾನವನ ಅಭಿವೃದ್ಧಿಗೆ ವಿಶೇಷ ಒತ್ತು ನೀಡಿದ ಸಚಿವರು, ಜಿಮ್ ಸಾಮಗ್ರಿ ಖರೀದಿಗೆ ₹5 ಲಕ್ಷ ಅನುದಾನ ಘೋಷಿಸಿದರು.
ಬೆಟಗೇರಿ ಹಾಗೂ ಕುರಹಟ್ಟಿ ಪೇಟೆ ಭಾಗಗಳಲ್ಲಿ ಮುಖ್ಯಮಂತ್ರಿಗಳ ಅಮೃತ ನಗರೋತ್ತಾನ ಯೋಜನೆಯಡಿ ನಿರ್ಮಿಸಲಾದ ನೂತನ ಅಂಗನವಾಡಿ ಕಟ್ಟಡಗಳನ್ನು ಸಚಿವರು ಲೋಕಾರ್ಪಣೆ ಮಾಡಿದರು.
“ಅಂಗನವಾಡಿಗಳು ಕೇವಲ ಪೋಷಣಾ ಕೇಂದ್ರಗಳಲ್ಲ, ಮಕ್ಕಳ ಭವಿಷ್ಯದ ಅಡಿಪಾಯ ನಿರ್ಮಿಸುವ ಮೊದಲ ಪಾಠಶಾಲೆಗಳು,” ಎಂದು ಸಚಿವರು ಹೇಳಿದರು.
ಈ ಸಂದರ್ಭದಲ್ಲಿ ವಾರ್ಡ್‌ನ 35 ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲಾಯಿತು. ನೀಲವ್ವ ಪರಸಪ್ಪ ಬಜಂತ್ರಿ, ರೇಖವ್ವ ರಾಜಪ್ಪ ಬಜಂತ್ರಿ, ಅನಂತ ಬೋಜಪ್ಪ ಬಜಂತ್ರಿ, ಯಮನವ್ವ ಬಜಂತ್ರಿ, ಮಾಯವ್ವ ಬಜಂತ್ರಿ, ಗವಿಸಿದ್ದಪ್ಪ ಬಜಂತ್ರಿ ಸೇರಿದಂತೆ ಹಲವರು ಸಚಿವರಿಂದ ಹಕ್ಕುಪತ್ರ ಸ್ವೀಕರಿಸಿ ಸಂತಸ ವ್ಯಕ್ತಪಡಿಸಿದರು.
ಗುಣಮಟ್ಟದಲ್ಲಿ ರಾಜಿ ಬೇಡ
ಕುರಹಟ್ಟಿ ಪೇಟೆ ಕಾಮಗಾರಿಯ ವೇಳೆ ಮಾತನಾಡಿದ ಸಚಿವರು, “ರಸ್ತೆ ಕಾಮಗಾರಿಗಳು ದೀರ್ಘಕಾಲ ಬಾಳಿಕೆ ಬರುವಂತಿರಬೇಕು. ಪ್ರತಿಯೊಂದು ಹಂತದಲ್ಲೂ ಅಧಿಕಾರಿಗಳು ನಿಗಾ ವಹಿಸಬೇಕು,” ಎಂದು ಎಚ್ಚರಿಕೆ ನೀಡಿದರು.
ಕಾರ್ಯಕ್ರಮಗಳಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರ್ ಸಾಬ್ ಬಬರ್ಚಿ, ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಬಿ.ಬಿ. ಅಸೂಟಿ, ಉಷಾ ದಾಸರ, ಅನಿಲ ಗರಗ, ದುರಗೇಶ್ ವಿಭೂತಿ, ನಗರಸಭಾ ಸದಸ್ಯೆ ಲಕ್ಷ್ಮವ್ವ ಬಜಂತ್ರಿ, ನಗರಸಭಾ ಸದಸ್ಯ ಇಮ್ತಿಯಾಜ್ ಶಿರಹಟ್ಟಿ, ಜಾಂಗೀರ ಅಣ್ಣಿಗೇರಿ, ಈಶ್ವರ ಗದುಗಿನ, ಹಣಗಿ ಭಾಷಾ, ಇಬ್ರಾಹಿಂ ಶಿರಹಟ್ಟಿ, ಸೋಪೀನ್ ಅಣ್ಣಿಗೇರಿ, ಫಾರುಕ್ ಮಖಾಂದಾರ್, ಯಾಶೀನ್, ಬಸವರಾಜ ಕಡೇಮನಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬಸನಗೌಡ ಕೋಟೂರ, ನಗರಸಭೆ ಪೌರಾಯುಕ್ತ ರಾಜಾರಾಮ್ ಪವಾರ ಸೇರಿದಂತೆ ಅನೇಕ ಗಣ್ಯರು ಹಾಗೂ ಸ್ಥಳೀಯ ನಿವಾಸಿಗಳು ಉಪಸ್ಥಿತರಿದ್ದರು.
 “ನಗರದ ಅಭಿವೃದ್ಧಿಗೆ ಗುಣಮಟ್ಟದ ರಸ್ತೆ ಮತ್ತು ಮೂಲಸೌಕರ್ಯಗಳೇ ಅಡಿಪಾಯ.”
ಎಚ್.ಕೆ. ಪಾಟೀಲ, ಜಿಲ್ಲಾ ಉಸ್ತುವಾರಿ ಸಚಿವ

ಗ್ಯಾರಂಟಿ ಯೋಜನೆಗಳಲ್ಲಿ ಗೊಂದಲ ಬೇಡ

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ರಾಜ್ಯ ಸರ್ಕಾರ ಜಾರಿಗೊಳಿಸಿರುವ ಪಂಚ ಗ್ಯಾರಂಟಿ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ಸಮರ್ಪಕವಾಗಿ ತಲುಪಬೇಕು. ಯಾವುದೇ ಅರ್ಹರು ಯೋಜನೆಗಳಿಂದ ವಂಚಿತರಾಗಬಾರದು ಎಂದು ತಾಲೂಕು ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ನಾಗರಾಜ ಮಡಿವಾಳರ ಹೇಳಿದರು.
ಪಟ್ಟಣದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಮಂಗಳವಾರ ನಡೆದ ಪಂಚ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಅಕ್ರಮವಾಗಿ ಮಾರಾಟ ಮಾಡುವವರ ವಿರುದ್ಧ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ರಾತ್ರಿ ವೇಳೆ ಲಾರಿಗಳ ಮೂಲಕ ಅಕ್ಕಿ ಸಾಗಾಟ ನಡೆಯುತ್ತಿರುವ ಬಗ್ಗೆ ದೂರುಗಳು ಬರುತ್ತಿದ್ದು, ಅದನ್ನು ತಡೆಗಟ್ಟುವ ಕೆಲಸ ಆಗಬೇಕು ಎಂದು ಸೂಚಿಸಿದರು.
ಯುವನಿಧಿ ಯೋಜನೆ ಕುರಿತು ನಗರ ಹಾಗೂ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಹೆಚ್ಚಿನ ಜಾಗೃತಿ ಮೂಡಿಸಬೇಕು. ಮಳೆಗಾಲ ಹಿನ್ನೆಲೆಯಲ್ಲಿ ಹೆಸ್ಕಾಂ ಇಲಾಖೆ ವಿದ್ಯುತ್ ಅವಘಡಗಳನ್ನು ತಡೆಯಲು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಪಟ್ಟಣದ ಬಸ್ ಡಿಪೋಗೆ ಹೆಚ್ಚಿನ ಆದಾಯ ಇದ್ದರೂ ಹೊಸ ಬಸ್‌ಗಳು ಪದೇಪದೆ ಕೆಟ್ಟು ನಿಲ್ಲುತ್ತಿರುವುದನ್ನು ಸರಿಪಡಿಸಬೇಕು. ಬಸ್ ನಿಲ್ದಾಣದ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ಸಾರಿಗೆ ಇಲಾಖೆಗೆ ಸೂಚಿಸಿದರು.
ನ್ಯಾಯಬೆಲೆ ಅಂಗಡಿಗಳಲ್ಲಿ ವೃದ್ಧರಿಗೆ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಮನೆಗೆ ತಲುಪಿಸುವ ವ್ಯವಸ್ಥೆ ಮಾಡಬೇಕು. ಅಧಿಕಾರಿಗಳು ಸಾರ್ವಜನಿಕರೊಂದಿಗೆ ಜವಾಬ್ದಾರಿಯುತವಾಗಿ ವರ್ತಿಸಬೇಕು ಎಂದು ಹೇಳಿದರು.
ಸಭೆಯಲ್ಲಿ ಗ್ಯಾರಂಟಿ ಸಮಿತಿ ಸದಸ್ಯ ಶಿವರಾಜಗೌಡ ಪಾಟೀಲ ಮಾತನಾಡಿ, ನ್ಯಾಯಬೆಲೆ ಅಂಗಡಿಗಳ ಮೂಲಕ ಅನ್ನಭಾಗ್ಯ ಅಕ್ಕಿ ಸರಿಯಾಗಿ ವಿತರಣೆ ಆಗುವಂತೆ ಅಧಿಕಾರಿಗಳು ಗಮನ ಹರಿಸಬೇಕು ಎಂದು ಮನವಿ ಮಾಡಿದರು.
ಸದಸ್ಯೆ ಶಶಿಕಲಾ ಬಡಿಗೇರ ಮಾತನಾಡಿ, ನ್ಯಾಯಬೆಲೆ ಅಂಗಡಿಗಳಲ್ಲಿ ವಿತರಿಸುವ ಅಕ್ಕಿಯಲ್ಲಿ ಕಸ-ಕಡ್ಡಿ ಬರುತ್ತಿರುವ ಬಗ್ಗೆ ದೂರಿದ್ದು, ಅದನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿದರು.
ಪಂಚ ಗ್ಯಾರಂಟಿ ಯೋಜನೆಗಳಿಗೆ ಸಂಬಂಧಿಸಿದ ವಿವಿಧ ಇಲಾಖೆಗಳ ಅಧಿಕಾರಿಗಳು ಯೋಜನೆಗಳ ಪ್ರಗತಿ ಕುರಿತು ಮಾಹಿತಿ ನೀಡಿದರು.
ತಾಲೂಕು ಪಂಚಾಯತ್ ಇಒ ಮಂಜುಳಾ ಹಕಾರಿ, ಎಡಿ ಕೃಷ್ಣಪ್ಪ ಧರ್ಮರ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸಿಡಿಪಿಓ ಮೃತ್ಯುಂಜಯ ಗುಡ್ಡದಅನ್ಬೇರಿ, ಹೆಸ್ಕಾಂ ಇಲಾಖೆಯ ಆಂಜನಪ್ಪ, ಆಹಾರ ಇಲಾಖೆಯ ಜಗದೀಶ್ ಕುರುಬರ, ಸಾರಿಗೆ ಇಲಾಖೆಯ ಅಶೋಕ, ಉದ್ಯೋಗ ವಿನಿಮಯ ಕೇಂದ್ರದ ಅಧಿಕಾರಿಗಳು, ಪಂಚ ಗ್ಯಾರಂಟಿ ಸಮಿತಿ ಸದಸ್ಯರಾದ ರಮಜಾನಸಾಬ್ ನದಾಫ, ಕಲ್ಲಪ್ಪ ಗಂಗಣ್ಣವರ, ರಮೇಶ ಬಾರಕೇರ, ಖಾದರಸಾಬ್ ರಿತ್ತಿ, ಹಸನಸಾಬ್ ಜಂಗ್ಲಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
 “ಪಂಚ ಗ್ಯಾರಂಟಿ ಯೋಜನೆಗಳ ಲಾಭ ಅರ್ಹರಿಗೆ ತಲುಪಿದಾಗಲೇ ಸರ್ಕಾರದ ಉದ್ದೇಶ ಸಾರ್ಥಕವಾಗುತ್ತದೆ.”
ನಾಗರಾಜ ಮಡಿವಾಳರ

ಕರ್ನಾಟಕ ಮಾದರಿ ದೇಶಕ್ಕೆ ಮಾದರಿ!

ವಿಜಯಸಾಕ್ಷಿ ಸುದ್ದಿ, ಗದಗ: ಜನಪರ ಗ್ಯಾರಂಟಿ ಯೋಜನೆಗಳು, ಕೈಗಾರಿಕಾ ಕ್ರಾಂತಿ, ಉದ್ಯೋಗ ಸೃಷ್ಟಿ ಹಾಗೂ ಸಾಮಾಜಿಕ ಭದ್ರತಾ ಕಾರ್ಯಕ್ರಮಗಳ ಮೂಲಕ ಕಾಂಗ್ರೆಸ್ ಸರ್ಕಾರ ಮೂರು ವರ್ಷದ ಆಡಳಿತದಲ್ಲಿ ಕರ್ನಾಟಕವನ್ನು ದೇಶದ ಮಾದರಿ ರಾಜ್ಯವನ್ನಾಗಿ ರೂಪಿಸಿದೆ ಎಂದು ಗದಗ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಹಾಗೂ ಗದಗ ತಾಲೂಕು ಪಂಚ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಅಶೋಕ ಮಂದಾಲಿ ಹೇಳಿದರು.
ಈ ಕುರಿತು ಪ್ರಕಟಣೆ ನೀಡಿರುವ ಅವರು, ರಾಜ್ಯದ ಜಿಎಸ್‌ಡಿಪಿ ಬೆಳವಣಿಗೆಯಲ್ಲಿ ಕರ್ನಾಟಕ ಶೇ. 10.2ರೊಂದಿಗೆ ದೇಶದಲ್ಲೇ ಮೊದಲ ಸ್ಥಾನದಲ್ಲಿದ್ದು, ತೆರಿಗೆ ಸಂಗ್ರಹ ಹಾಗೂ ವಿದೇಶಿ ಬಂಡವಾಳ ಹೂಡಿಕೆಯಲ್ಲಿ ಎರಡನೇ ಸ್ಥಾನ ಪಡೆದಿದೆ ಎಂದು ತಿಳಿಸಿದ್ದಾರೆ.
“1.31 ಲಕ್ಷ ಕೋಟಿ ನೇರವಾಗಿ ಜನರ ಖಾತೆಗೆ”
ಗ್ಯಾರಂಟಿ ಯೋಜನೆಗಳ ಮೂಲಕ 1.31 ಲಕ್ಷ ಕೋಟಿ ರೂ.ಗಿಂತ ಹೆಚ್ಚು ಮೊತ್ತವನ್ನು ನೇರವಾಗಿ ಜನರಿಗೆ ತಲುಪಿಸಲಾಗಿದೆ. ಗೃಹಜ್ಯೋತಿ, ಗೃಹಲಕ್ಷ್ಮೀ, ಶಕ್ತಿ, ಅನ್ನಭಾಗ್ಯ ಹಾಗೂ ಯುವನಿಧಿ ಯೋಜನೆಗಳಿಂದ ಸುಮಾರು 4.5 ಕೋಟಿ ಕನ್ನಡಿಗರ ಬದುಕಿಗೆ ಆರ್ಥಿಕ ಬಲ ಸಿಕ್ಕಿದೆ ಎಂದು ಹೇಳಿದರು.
ಗೃಹಲಕ್ಷ್ಮೀ ಯೋಜನೆಗೆ 74,180 ಕೋಟಿ ರೂ., ಗೃಹಜ್ಯೋತಿಗೆ 28,657 ಕೋಟಿ ರೂ., ಶಕ್ತಿ ಯೋಜನೆಗೆ 18,625 ಕೋಟಿ ರೂ., ಅನ್ನಭಾಗ್ಯಕ್ಕೆ 20,211 ಕೋಟಿ ರೂ. ಹಾಗೂ ಯುವನಿಧಿಗೆ 950 ಕೋಟಿ ರೂ. ಅನುದಾನ ನೀಡಲಾಗಿದೆ ಎಂದು ವಿವರಿಸಿದರು.
ಕೈಗಾರಿಕೆ-ಉದ್ಯೋಗದಲ್ಲಿ ದಾಖಲೆ
ಕಾಂಗ್ರೆಸ್ ಸರ್ಕಾರ ಕಳೆದ ಮೂರು ವರ್ಷಗಳಲ್ಲಿ 117 ಕೈಗಾರಿಕಾ ಒಪ್ಪಂದಗಳ ಮೂಲಕ 6.70 ಲಕ್ಷ ಕೋಟಿ ರೂ. ಹೂಡಿಕೆ ಆಕರ್ಷಿಸಿ, 2.47 ಲಕ್ಷ ನೇರ ಉದ್ಯೋಗ ಸೃಷ್ಟಿಸಿದೆ.
ಇನ್ವೆಸ್ಟ್ ಕರ್ನಾಟಕ-2025 ಕಾರ್ಯಕ್ರಮದಲ್ಲಿ 10.27 ಲಕ್ಷ ಕೋಟಿ ರೂ. ಹೂಡಿಕೆ ಘೋಷಣೆಯಾಗಿದ್ದು, 6 ಲಕ್ಷ ಉದ್ಯೋಗ ಅವಕಾಶಗಳು ಸೃಷ್ಟಿಯಾಗಲಿವೆ ಎಂದು ತಿಳಿಸಿದರು.
ಉತ್ತರ ಕರ್ನಾಟಕ ಸೇರಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕೈಗಾರಿಕಾ ಕ್ಲಸ್ಟರ್‌ಗಳು, ಸೆಮಿಕಂಡಕ್ಟರ್ ಪಾರ್ಕ್, ಜವಳಿ ಪಾರ್ಕ್, ಎಲೆಕ್ಟ್ರಿಕ್ ವಾಹನ ಕ್ಲಸ್ಟರ್ ಹಾಗೂ ಜಿಸಿಸಿ ಕೇಂದ್ರಗಳ ಸ್ಥಾಪನೆಯಿಂದ ರಾಜ್ಯದ ಆರ್ಥಿಕತೆ ಮತ್ತಷ್ಟು ಬಲಗೊಳ್ಳಲಿದೆ ಎಂದರು.
ರೈತರು, ಕಾರ್ಮಿಕರು, ಮಹಿಳೆಯರಿಗೆ ವಿಶೇಷ ಯೋಜನೆ
ರೈತರಿಗೆ ಬೆಳೆ ಪರಿಹಾರ, ಹನಿ-ತುಂತುರು ನೀರಾವರಿ, ಕೃಷಿ ಹೊಂಡ, ಆಹಾರ ಸಂಸ್ಕರಣಾ ಘಟಕ, ತೋಟಗಾರಿಕಾ ಕಿಸಾನ್ ಮಾಲ್ ಯೋಜನೆಗಳಿಂದ ನೆರವು ನೀಡಲಾಗಿದೆ.
ಒಂದೇ ಬಾರಿ 20 ಸಾವಿರ ಪೌರಕಾರ್ಮಿಕರನ್ನು ಕಾಯಂಗೊಳಿಸಿ ಮಾಸಿಕ ವೇತನ ಸೌಲಭ್ಯ ಕಲ್ಪಿಸಲಾಗಿದೆ. ಮಹಿಳಾ ಸಬಲೀಕರಣಕ್ಕಾಗಿ 30 ಸಾವಿರ ಮಹಿಳೆಯರಿಗೆ ಉದ್ಯೋಗಾಧಾರಿತ ತರಬೇತಿ ನೀಡಲಾಗುತ್ತಿದೆ ಎಂದು ಹೇಳಿದರು.
ಆರೋಗ್ಯ-ಶಿಕ್ಷಣದಲ್ಲಿ ಹೊಸ ಹೆಜ್ಜೆ
ಆರೋಗ್ಯ ಕ್ಷೇತ್ರಕ್ಕೆ 17,473 ಕೋಟಿ ರೂ. ಮೀಸಲಿಟ್ಟು ಗೃಹ ಆರೋಗ್ಯ ಯೋಜನೆಯಡಿ ಮನೆ ಮನೆಗೆ ಆರೋಗ್ಯ ತಪಾಸಣೆ ಆರಂಭಿಸಲಾಗಿದೆ.
ಶಿಕ್ಷಣ ಕ್ಷೇತ್ರದಲ್ಲಿ 51 ಸಾವಿರ ಅತಿಥಿ ಶಿಕ್ಷಕರ ನೇಮಕ, 26 ಸರ್ಕಾರಿ ಮಹಿಳಾ ಕಾಲೇಜುಗಳ ಅಭಿವೃದ್ಧಿ ಹಾಗೂ ಕಲ್ಯಾಣ ಕರ್ನಾಟಕ ಭಾಗದಲ್ಲಿ ವಿಶೇಷ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗಿದೆ ಎಂದು ಹೇಳಿದರು.
ಉತ್ತರ ಕರ್ನಾಟಕಕ್ಕೂ ಭರಪೂರ ಯೋಜನೆ
ಉತ್ತರ ಕರ್ನಾಟಕ ಅಭಿವೃದ್ಧಿಗೆ ಸಾವಿರಾರು ಕೋಟಿ ರೂ. ಮೌಲ್ಯದ ನೀರಾವರಿ, ರಸ್ತೆ, ಕುಡಿಯುವ ನೀರು ಹಾಗೂ ಕೈಗಾರಿಕಾ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ.
ಕೃಷ್ಣಾ ಮೇಲ್ದಂಡೆ ಯೋಜನೆ, ಎತ್ತಿನಹೊಳೆ ಯೋಜನೆ, ಕೊಟ್ಟಲಗಿ ಅಮ್ಮಾಜೇಶ್ವರಿ ಏತ ನೀರಾವರಿ ಯೋಜನೆ ಸೇರಿದಂತೆ ಹಲವು ಯೋಜನೆಗಳಿಂದ ರೈತರಿಗೆ ನೀರಾವರಿ ಸೌಲಭ್ಯ ಒದಗಿಸಲಾಗುತ್ತಿದೆ ಎಂದು ತಿಳಿಸಿದರು.
 “ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿ ಕುಸಿಯುತ್ತದೆ ಎಂದವರಿಗೆ ಕರ್ನಾಟಕದ ಸಾಧನೆಗಳೇ ಉತ್ತರವಾಗಿವೆ.”
ಅಶೋಕ ಮಂದಾಲಿ, ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ
ಕಾಂಗ್ರೆಸ್ ಸರ್ಕಾರದ ಪ್ರಮುಖ ಸಾಧನೆಗಳು
  • ಜಿಎಸ್‌ಡಿಪಿ ಬೆಳವಣಿಗೆಯಲ್ಲಿ ದೇಶದಲ್ಲೇ 1ನೇ ಸ್ಥಾನ
  • 1.31 ಲಕ್ಷ ಕೋಟಿ ರೂ. ಗ್ಯಾರಂಟಿ ಯೋಜನೆಗಳಿಗೆ ವೆಚ್ಚ
  • 10.27 ಲಕ್ಷ ಕೋಟಿ ರೂ. ಹೂಡಿಕೆ ಆಕರ್ಷಣೆ
  • 6 ಲಕ್ಷ ಉದ್ಯೋಗ ಸೃಷ್ಟಿ ಗುರಿ
  • 20 ಸಾವಿರ ಪೌರಕಾರ್ಮಿಕರ ಕಾಯಂಗೊಳಿಸುವಿಕೆ
  • 4.5 ಕೋಟಿ ಜನರಿಗೆ ಗ್ಯಾರಂಟಿ ಯೋಜನೆಗಳ ಲಾಭ
  • 17 ಡೆಂಗೀ, ಆರೋಗ್ಯ ಸೇವೆ, ಗೃಹ ಆರೋಗ್ಯ ಯೋಜನೆ ಜಾರಿ
  • ರೈತರಿಗೆ ಸಾವಿರಾರು ಕೋಟಿ ರೂ. ಬೆಳೆ ಪರಿಹಾರ ಹಾಗೂ ನೀರಾವರಿ ಯೋಜನೆಗಳು
ಕನ್ನಡಿಗರಿಗೆ ನುಡಿದಂತೆ ನಡೆದ ಸರ್ಕಾರ
2023ರ ಚುನಾವಣೆಯಲ್ಲಿ ನೀಡಿದ 593 ಭರವಸೆಗಳಲ್ಲಿ 242 ಭರವಸೆಗಳನ್ನು ಈಡೇರಿಸಿ ಶೇ. 40ರಷ್ಟು ಗುರಿ ಸಾಧಿಸಲಾಗಿದೆ. ಅಭಿವೃದ್ಧಿ, ಉದ್ಯೋಗ ಹಾಗೂ ಸಾಮಾಜಿಕ ಭದ್ರತೆಯಲ್ಲಿ ಕರ್ನಾಟಕ ದೇಶಕ್ಕೆ ಮಾದರಿಯಾಗುತ್ತಿದೆ ಎಂದು ಅಶೋಕ ಮಂದಾಲಿ ತಿಳಿಸಿದ್ದಾರೆ.

ಬಸವಾದಿ ಶರಣರ ಹೆಸರಲ್ಲಿ ಹಿಂದೂ ಸಮಾವೇಶ ಯಾಕೆ?

ವಿಜಯಸಾಕ್ಷಿ ಸುದ್ದಿ, ಗದಗ: ಸಮಾನತೆ ಮತ್ತು ಜಾತಿ ವಿರೋಧದ ತತ್ವ ಸಾರಿದ ಬಸವಾದಿ ಶರಣರ ಹೆಸರಿನಲ್ಲಿ ‘ಹಿಂದೂ ಸಮಾವೇಶ’ ನಡೆಸುತ್ತಿರುವುದು ಖೇದಕರವಾಗಿದ್ದು, ಮೇ 31ರಂದು ಗದಗದಲ್ಲಿ ನಡೆಯಲಿರುವ ಸಮಾವೇಶಕ್ಕೆ ಆಗಮಿಸುತ್ತಿರುವ ಕನ್ಹೇರಿ ಮಠದ ಶ್ರೀ ಕಾಡಸಿದ್ಧೇಶ್ವರ ಸ್ವಾಮೀಜಿಗಳಿಗೆ ಜಿಲ್ಲಾಡಳಿತ ಗದಗ ಪ್ರವೇಶ ನಿರ್ಬಂಧಿಸಿ ಶಾಂತಿ ಕಾಪಾಡಬೇಕು ಎಂದು ಸಾಹಿತಿ ಬಸವರಾಜ ಸೂಳಿಬಾವಿ ಆಗ್ರಹಿಸಿದರು.
ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಸವಾದಿ ಶರಣರು ಸಮಾನತೆಗಾಗಿ ಹಿಂದುತ್ವದ ಜಾತಿ ವ್ಯವಸ್ಥೆಗೆ ವಿರುದ್ಧವಾಗಿ ಹೋರಾಡಿದವರು. ಅಂತಹ ಶರಣರ ಹೆಸರಿನಲ್ಲಿ ಹಿಂದೂ ಸಮಾವೇಶ ನಡೆಸುವುದು ಶರಣ ಚಿಂತನೆಗೆ ವಿರುದ್ಧವಾಗಿದೆ ಎಂದು ಟೀಕಿಸಿದರು.
“ಈ ಸಮಾವೇಶ ರೈತರಿಗೆ ಸಲಹೆ ನೀಡಲು ಎಂದಾದರೆ ಅದನ್ನು ‘ರೈತ ಹಿಂದೂ ಸಮಾವೇಶ’ ಎಂದು ಕರೆಯಬಹುದಿತ್ತು. ಹಿಂದುತ್ವಕ್ಕೂ ಬಸವಾದಿ ಶರಣರಿಗೂ ಯಾವುದೇ ಸಂಬಂಧವಿಲ್ಲ. ಹಿಂದುತ್ವಕ್ಕೆ ಪರ್ಯಾಯವಾಗಿ ಹುಟ್ಟಿಕೊಂಡದ್ದೇ ಲಿಂಗಾಯತ ಧರ್ಮ,” ಎಂದು ಹೇಳಿದರು.
ಜಾತಿ ವ್ಯವಸ್ಥೆಯನ್ನು ಒಪ್ಪದ ಶರಣ ಚಳವಳಿಯನ್ನು ಹಿಂದುತ್ವದ ಚೌಕಟ್ಟಿಗೆ ಸೇರಿಸಲು ಕೆಲವರು ವ್ಯವಸ್ಥಿತ ಪಿತೂರಿ ನಡೆಸುತ್ತಿದ್ದಾರೆ. ಈ ಸಮಾವೇಶ ಲಿಂಗಾಯತ ಧರ್ಮ ಹಾಗೂ ಸಂವಿಧಾನದ ಮೌಲ್ಯಗಳ ಮೇಲಿನ ದಾಳಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
“ನಾವೆಲ್ಲ ಹಿಂದೂ-ನಾವೆಲ್ಲ ಒಂದು” ಎಂಬ ಘೋಷಣೆ ನೀಡುವವರೊಂದಿಗೆ ಕಾಣಿಸಿಕೊಳ್ಳುತ್ತಿರುವ ಕನ್ಹೇರಿ ಮಠದ ಶ್ರೀ ಕಾಡಸಿದ್ಧೇಶ್ವರ ಸ್ವಾಮೀಜಿ ಸಮಾನತೆ ಸಾಧ್ಯವಿಲ್ಲ ಎನ್ನುವ ನಿಲುವು ವ್ಯಕ್ತಪಡಿಸುತ್ತಿದ್ದಾರೆ. ಅವರು ಮಠಾಧೀಶರಂತೆ ಅಲ್ಲ, ವಿಶ್ವ ಹಿಂದೂ ಪರಿಷತ್ ಪ್ರತಿನಿಧಿಯಂತೆ ಮಾತನಾಡುತ್ತಿದ್ದಾರೆ. ಹೀಗಾಗಿ ಪೀಠ ತ್ಯಜಿಸಿ ಅದರ ಪ್ರಚಾರಕರಾಗಲಿ,” ಎಂದು ಸವಾಲು ಹಾಕಿದರು.
ಬಸವ ಅನುಯಾಯಿ ಅಶೋಕ ಬರಗುಂಡಿ ಮಾತನಾಡಿ, ಬಸವಾದಿ ಶರಣರು ವೈದಿಕ ವ್ಯವಸ್ಥೆಯ ವಿರುದ್ಧ ಹೋರಾಡಿದವರು. ಅಂತಹ ಶರಣರ ಹೆಸರಿನಲ್ಲಿ ನಡೆಯುವ ಈ ಸಮಾವೇಶ ವಚನ ಚಳವಳಿಯ ಹಿಂದೂಕರಣದ ಪ್ರಯತ್ನವಾಗಿದೆ ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಜಾಗತಿಕ ಲಿಂಗಾಯತ ಮಹಾಸಭಾದ ಶೇಖಣ್ಣ ಕವಳಿಕಾಯಿ, ಪ್ರೊ. ಡಿ.ಜಿ. ಜೋಗಣ್ಣವರ, ಗಿರಿಜಾ ಹಸಬಿ, ನಿವೃತ್ತ ಶಿಕ್ಷಕ ಡಿಎಸ್‌ಎಸ್‌ನ ಎಸ್.ಎನ್. ಬಳ್ಳಾರಿ, ಕರಿಗೌಡರ, ಪ್ರಕಾಶ ಅಸುಂಡಿ, ಲಿಂಗರಾಜ, ಡಾ. ರಾಮಚಂದ್ರ ಹಂಸನೂರ, ಶಿವನಗೌಡ ಗೌಡರ, ಕಳಸಾಪೂರಶೆಟ್ಟರ, ಗಂಗವ್ವ ಹೂಗಾರ, ಮುತ್ತು ಬಿಳೆಯಲಿ, ಶರೀಫ ಬಿಳೆಯಲಿ, ಸುಜಾತಾ ವಾರದ ಸೇರಿದಂತೆ ಹಲವರು ಉಪಸ್ಥಿತರಿದ್ದರು.
 “ಬಸವಾದಿ ಶರಣರ ತತ್ವ ಸಮಾನತೆಗಾಗಿ, ಅದನ್ನು ಹಿಂದೂತ್ವದ ರಾಜಕೀಯಕ್ಕೆ ಬಳಸುವುದು ಸರಿಯಲ್ಲ.”
ಬಸವರಾಜ ಸೂಳಿಬಾವಿ, ಬಂಡಾಯ ಸಾಹಿತಿ
ಮೇ 31ಕ್ಕೆ ಸಾಮೂಹಿಕ ವಚನ ಪಠಣ
ಮೇ 31ರಂದು ಬೆಳಿಗ್ಗೆ 11 ಗಂಟೆಗೆ ಗದಗದ ಗಾಂಧಿ ವೃತ್ತದಲ್ಲಿ ‘ಬಸವಾದಿ ಶರಣರ ಹಿಂದೂ ಸಮಾವೇಶ’ ವಿರೋಧಿಸಿ ಸಾಮೂಹಿಕ ವಚನ ಪಠಣ ಹಮ್ಮಿಕೊಳ್ಳಲಾಗಿದೆ ಎಂದು ಬಸವರಾಜ ಸೂಳಿಬಾವಿ ತಿಳಿಸಿದರು. ಮುಂದಿನ ದಿನಗಳಲ್ಲಿ ಅವಳಿ ನಗರದ ಪ್ರತಿ ವಾರ್ಡ್ ಹಾಗೂ ಹಳ್ಳಿಗಳಲ್ಲಿ ಜಾಗೃತಿ ಮೂಡಿಸಿ, ರಾಜ್ಯಮಟ್ಟದ ‘ಸಮಾನತಾ ಸಮಾವೇಶ’ ಆಯೋಜಿಸುವ ಚಿಂತನೆಯೂ ನಡೆದಿದೆ ಎಂದು ಬಸವರಾಜ ಸೂಳಿಬಾವಿ ಹೇಳಿದರು.

ಅಂಬಾಭವಾನಿ ಸನ್ನಿಧಿಯಲ್ಲಿ 111 ಮುತ್ತೈದೆಯರ ಕುಂಕುಮಾರ್ಚನೆ ವೈಭವ!

ವಿಜಯಸಾಕ್ಷಿ ಸುದ್ದಿ, ಬೆಟಗೇರಿ: ಮೂರು ವರ್ಷಕ್ಕೊಮ್ಮೆ ಬರುವ ಅಧಿಕ ಮಾಸದ ಪುಣ್ಯಪರ್ವದ ಅಂಗವಾಗಿ ಬೆಟಗೇರಿಯ ಐತಿಹಾಸಿಕ ಶ್ರೀ ಅಂಬಾಭವಾನಿ ದೇವಸ್ಥಾನದಲ್ಲಿ ಮಂಗಳವಾರ ಭಕ್ತಿ, ಪರಂಪರೆ ಮತ್ತು ಆಧ್ಯಾತ್ಮಿಕತೆಯ ವೈಭವ ಮೆರೆದಿತು. ಎಸ್‌ಎಸ್‌ಕೆ ಸಮಾಜದ ಆಶ್ರಯದಲ್ಲಿ ಆಯೋಜಿಸಲಾದ ವಿಶೇಷ ಕುಂಕುಮಾರ್ಚನೆ ಕಾರ್ಯಕ್ರಮದಲ್ಲಿ 111 ಮುತ್ತೈದೆಯರು ಭಾಗವಹಿಸಿ ದೇವಿ ಆರಾಧನೆ ನೆರವೇರಿಸಿದರು.
ಕೆಂಪು ಸೀರೆ ಧರಿಸಿದ ಮುತ್ತೈದೆಯರು ದೇವಿಯ ಸನ್ನಿಧಿಯಲ್ಲಿ ಸಾಲಾಗಿ ಕುಳಿತು ಭಕ್ತಿಭಾವದಿಂದ ಕುಂಕುಮಾರ್ಚನೆ ನೆರವೇರಿಸಿದ ದೃಶ್ಯ ದೇವಸ್ಥಾನ ಆವರಣಕ್ಕೆ ವಿಶೇಷ ಕಳೆ ತಂದಿತು. ಕೆಂಪು ಬಣ್ಣವನ್ನು ಶಕ್ತಿ, ಮಂಗಳ ಹಾಗೂ ಸೌಭಾಗ್ಯದ ಪ್ರತೀಕವೆಂದು ಪರಿಗಣಿಸಲಾಗಿದ್ದು, 111 ಸಂಖ್ಯೆಯನ್ನು ಶುಭ ಸಂಕೇತವಾಗಿ ಆಯ್ಕೆ ಮಾಡಲಾಗಿತ್ತು.
ದೇವಿಯ ಸಹಸ್ರ ಅಂಬಾಭವಾನಿ ನಾಮಾವಳಿ ಪಠಣದ ನಡುವೆ ಪ್ರತಿಯೊಂದು ನಾಮಕ್ಕೂ ಮಹಿಳೆಯರು ಕುಂಕುಮ ಅರ್ಪಿಸಿ ವಿಶೇಷ ಪೂಜೆ ಸಲ್ಲಿಸಿದರು. ದೇವಸ್ಥಾನದ ಆಧ್ಯಾತ್ಮಿಕ ವಾತಾವರಣ ಭಕ್ತರನ್ನು ಭಾವಪರವಶಗೊಳಿಸಿತು.
ಬೆಳಗ್ಗಿನಿಂದಲೇ ದೇವಸ್ಥಾನಕ್ಕೆ ಭಕ್ತರ ದಂಡೇ ಹರಿದುಬಂದಿದ್ದು, ನೂರಾರು ಮಂದಿ ಈ ಧಾರ್ಮಿಕ ವೈಭವಕ್ಕೆ ಸಾಕ್ಷಿಯಾದರು. ಊರಿನ ಸುಖ-ಶಾಂತಿ, ಉತ್ತಮ ಮಳೆ-ಬೆಳೆ ಹಾಗೂ ಜನರ ಸಂಕಲ್ಪ ಸಿದ್ಧಿಯಾಗಲಿ ಎಂಬ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ನೆರವೇರಿತು.

ಜನಸೇವೆಗೆ ಡಾಕ್ಟರೇಟ್ ಗೌರವ!

ಗದಗ: ಸಮಾಜ ಸೇವೆ, ಜನಪರ ಆಡಳಿತ ಹಾಗೂ ಗ್ರಾಮೀಣ ಅಭಿವೃದ್ಧಿಯ ಮೂಲಕ ಜನಮನ ಗೆದ್ದಿರುವ ಗದಗ ತಾಲೂಕಿನ ಲಕ್ಕುಂಡಿ ಗ್ರಾಮ ಪಂಚಾಯಿತಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಒ)  ಅಮೀರ ನಾಯಕರಿಗೆ ಬೆಂಗಳೂರಿನ ಪ್ರತಿಷ್ಠಿತ ಏಷ್ಯಾ ಇಂಟರ್ ನ್ಯಾಷನಲ್ ಕಲ್ಚರಲ್ ಅಕಾಡೆಮಿ ವತಿಯಿಂದ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಗಿದೆ.
ಬೆಂಗಳೂರಿನಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳ ಗಣ್ಯರ ಸಮ್ಮುಖದಲ್ಲಿ ಅವರಿಗೆ ಈ ಗೌರವ ನೀಡಿ ಸನ್ಮಾನಿಸಲಾಯಿತು. ಗ್ರಾಮೀಣ ಜನರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವ ಜನಪರ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಅಮೀರ ನಾಯಕ, ಸರಳತೆ ಮತ್ತು ಮಾನವೀಯ ಮೌಲ್ಯಗಳ ಮೂಲಕ ವಿಶಿಷ್ಟ ಗುರುತಿಸಿಕೊಂಡಿದ್ದಾರೆ.
ಅಧಿಕಾರವೆಂದರೆ ಕೇವಲ ಕಚೇರಿಯ ಗಡಿಗಳೊಳಗಿನ ವ್ಯವಸ್ಥೆಯಲ್ಲ, ಜನರ ನೋವು-ನಲಿವುಗಳಿಗೆ ಸ್ಪಂದಿಸುವ ಸೇವಾ ಧರ್ಮ ಎಂಬ ನಂಬಿಕೆಯನ್ನು ಅಮೀರ ನಾಯಕರು ತಮ್ಮ ಕಾರ್ಯಶೈಲಿಯಲ್ಲಿ ಅಳವಡಿಸಿಕೊಂಡಿದ್ದಾರೆ.
ಲಕ್ಕುಂಡಿ ಗ್ರಾಮ ಪಂಚಾಯಿತಿಯಲ್ಲಿ ಅವರ ನೇತೃತ್ವದಲ್ಲಿ ನಡೆದ ಅಭಿವೃದ್ಧಿ ಕಾಮಗಾರಿಗಳು, ಸಾರ್ವಜನಿಕ ಸಮಸ್ಯೆಗಳ ತ್ವರಿತ ಪರಿಹಾರ ಹಾಗೂ ಸಮಾಜಮುಖಿ ಯೋಜನೆಗಳ ಪರಿಣಾಮಕಾರಿ ಅನುಷ್ಠಾನ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರವಾಗಿದೆ.
ಅಕಾಡೆಮಿಯ ಪದಾಧಿಕಾರಿಗಳು ಮಾತನಾಡಿ, “ಗ್ರಾಮೀಣ ಜನರ ಬದುಕಿಗೆ ಹತ್ತಿರವಾಗಿ ಕೆಲಸ ಮಾಡಿದ ಅಮೀರ ನಾಯಕರ ಸೇವಾ ಪಯಣಕ್ಕೆ ಈ ಗೌರವ ಡಾಕ್ಟರೇಟ್ ಮಹತ್ವದ ಮಾನ್ಯತೆ,” ಎಂದು ಅಭಿಪ್ರಾಯಪಟ್ಟರು.
ಆಡಳಿತ ಕ್ಷೇತ್ರದ ಜೊತೆಗೆ ಸಾಹಿತ್ಯ, ಸಾಮಾಜಿಕ ಜಾಗೃತಿ ಹಾಗೂ ಮಾನವೀಯ ಮೌಲ್ಯಗಳ ಪ್ರಚಾರದಲ್ಲಿಯೂ ಅಮೀರ ನಾಯಕರು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಬಡವರು, ಹಿಂದುಳಿದವರು ಹಾಗೂ ಸಂಕಷ್ಟದಲ್ಲಿರುವ ಜನರ ಪರ ಸದಾ ಸ್ಪಂದಿಸುವ ಅವರ ಸೇವಾ ಮನೋಭಾವ ಅನೇಕರಿಗೆ ಪ್ರೇರಣೆಯಾಗಿದೆ.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ಹಾಗೂ ಗದಗ ಜಿಲ್ಲಾಧ್ಯಕ್ಷ ಡಾ. ಬಸವರಾಜ ಬಳ್ಳಾರಿ ಮಾತನಾಡಿ, “ಗ್ರಾಮೀಣ ಭಾರತದ ನಿಜವಾದ ಶಕ್ತಿ ಜನಪರ ಅಧಿಕಾರಿಗಳಲ್ಲಿದೆ. ಅಮೀರ ನಾಯಕರಿಗೆ ದೊರೆತಿರುವ ಗೌರವ ಡಾಕ್ಟರೇಟ್ ಗ್ರಾಮೀಣ ಸೇವಾ ಕ್ಷೇತ್ರಕ್ಕೇ ಸಂದ ಗೌರವ,” ಎಂದು ಹೇಳಿದರು.
ಸಮಾರಂಭದಲ್ಲಿ ಹಿರಿಯ ಸಾಹಿತಿ ಎ.ಎಸ್. ಮಕಾನದಾರ, ರಾಜ್ಯ ಸಂಘದ ಜಂಟಿ ಕಾರ್ಯದರ್ಶಿ ರಾಜು ಕಂಟಿಗೊಣ್ಣವರ, ರಾಜ್ಯ ಸಂಘದ ಕ್ರೀಡಾ ಕಾರ್ಯದರ್ಶಿ ಐ.ಎ. ಗಾಡಗೋಳಿ, ಜಿಲ್ಲಾ ಸಂಘದ ಕಾರ್ಯದರ್ಶಿ ಎಂ.ವೈ. ಮಲಕಶೆಟ್ಟಿ, ಸಮಾಜ ಸೇವಕ ಕರೀಮಸಾಬ ಸುಣಗಾರ, ಎಸ್.ಎಸ್. ಪಾರ್ವತಿಮಠ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ಅಮೀರ ನಾಯಕರ ಸಾಧನೆಗೆ ಗದಗ ಜಿಲ್ಲೆಯ ವಿವಿಧ ಸಂಘ-ಸಂಸ್ಥೆಗಳು, ಸಾಹಿತ್ಯ ವಲಯದ ಗಣ್ಯರು ಹಾಗೂ ಸಾರ್ವಜನಿಕರಿಂದ ಅಭಿನಂದನೆಗಳ ಮಹಾಪೂರ ಹರಿದು ಬಂದಿದೆ.
“ಈ ಗೌರವ ನನ್ನೊಬ್ಬರದ್ದಲ್ಲ; ಗ್ರಾಮಸ್ಥರು, ಸಹೋದ್ಯೋಗಿಗಳು, ಸ್ನೇಹಿತರು ಹಾಗೂ ಕುಟುಂಬದವರ ಬೆಂಬಲದ ಫಲ ಇದು. ಜನರ ನೋವಿಗೆ ಸ್ಪಂದಿಸುವ ಆಡಳಿತವೇ ನಿಜವಾದ ಸೇವೆ. ಈ ಸನ್ಮಾನ ಇನ್ನಷ್ಟು ಜನಪರ ಸೇವೆ ಮಾಡಲು ಹೊಸ ಪ್ರೇರಣೆ ನೀಡಿದೆ.”
ಅಮೀರ ನಾಯಕ, ಪಿಡಿಒ
error: Content is protected !!