ದಾವಣಗೆರೆ: ಹರಿಹರ ಪಂಚಮಸಾಲಿ ಪೀಠದಲ್ಲಿ ನಡೆದ ಬೆಳವಣಿಗೆ ಭಾರೀ ಚರ್ಚೆಗೆ ಕಾರಣವಾಗಿದ್ದು, ʻಲೆಕ್ಕ ಕೊಡಿʼ ಅಭಿಯಾನ ತೀವ್ರಗೊಂಡ ಹಿನ್ನೆಲೆ ವಚನಾನಂದ ಸ್ವಾಮೀಜಿ ಅವರನ್ನು ಪೀಠದಿಂದ ಉಚ್ಛಾಟನೆ ಮಾಡಲು ಟ್ರಸ್ಟಿಗಳು ನಿರ್ಧಾರ ಕೈಗೊಂಡಿದ್ದಾರೆ.
ಇಂದು ನಡೆದ ಟ್ರಸ್ಟಿಗಳ ಸಭೆಯಲ್ಲಿ ಒಟ್ಟು 15 ಸದಸ್ಯರ ಪೈಕಿ 13 ಮಂದಿ ಭಾಗವಹಿಸಿ ಈ ನಿರ್ಣಯ ಕೈಗೊಂಡಿದ್ದಾರೆ. ಮಠದ ಟ್ರಸ್ಟಿಗಳ ನಿರ್ಧಾರವನ್ನು ಟ್ರಸ್ಟಿ ಬಸವರಾಜ್ ದಿಂಡೂರು ಮಾಧ್ಯಮಗಳಿಗೆ ದೃಢಪಡಿಸಿದ್ದಾರೆ.
ಪೀಠಕ್ಕೆ ಸರ್ಕಾರದಿಂದ 2008ರಿಂದ ಬಂದ ಅನುದಾನ ಹಾಗೂ ಭಕ್ತರ ದೇಣಿಗೆ ಹಣ ದುರ್ಬಳಕೆಗೊಂಡಿದೆ ಎಂಬ ಆರೋಪಗಳು ಕೇಳಿಬಂದಿವೆ. ಪ್ರಧಾನ ಧರ್ಮಧರ್ಶಿ ಬಿ.ಸಿ. ಉಮಾಪತಿ ಮತ್ತು ಟ್ರಸ್ಟಿ ಚಂದ್ರಶೇಖರ್ ಪೂಜಾರ್ ಸೇರಿದಂತೆ ಕೆಲವರ ವಿರುದ್ಧ ಹಣ ದುರ್ಬಳಕೆ ಆರೋಪಗಳು ಹೊರಬಿದ್ದಿವೆ. ಇದೇ ವಿಚಾರವಾಗಿ ಕಳೆದ ಕೆಲ ದಿನಗಳ ಹಿಂದೆ ನಡೆದ ಸಭೆಯಲ್ಲಿ ಗಲಾಟೆ ಉಂಟಾಗಿ ಆಡಳಿತಾಧಿಕಾರಿ ರಾಜಕುಮಾರ್ ಮೇಲೆ ಹಲ್ಲೆ ನಡೆದಿತ್ತು ಎಂಬ ಆರೋಪವೂ ಕೇಳಿಬಂದಿತ್ತು. ಇದರಿಂದಲೇ ʻಲೆಕ್ಕ ಕೊಡಿʼ ಅಭಿಯಾನ ಶುರುವಾಗಿದೆ.
ಈ ನಡುವೆ, ಪೀಠದ ಮುಂದೆ ಭಕ್ತರು ದೊಡ್ಡ ಸಂಖ್ಯೆಯಲ್ಲಿ ಸೇರಿ ಆಕ್ರೋಶ ವ್ಯಕ್ತಪಡಿಸಿದರು. ಭಕ್ತರು ಮತ್ತು ಟ್ರಸ್ಟಿಗಳ ನಡುವೆ ತೀವ್ರ ವಾಗ್ವಾದ ನಡೆಯುವುದರಿಂದ ಮಠದ ಆವರಣದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಯಿತು.
ಸ್ಥಿತಿಗತಿಯನ್ನು ಗಮನದಲ್ಲಿಟ್ಟುಕೊಂಡು, ಮುಂಜಾಗ್ರತಾ ಕ್ರಮವಾಗಿ ತಹಶೀಲ್ದಾರ್ ಸಂತೋಷ್ ಕುಮಾರ್ ಅವರು ಕಲಂ 163 ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಿದರು. ಆದರೂ ಮಠದ ಗೇಟ್ ಬಳಿ ಭಕ್ತರು ಪ್ರತಿಭಟನೆ ಮುಂದುವರಿಸಿದ್ದು, ಈ ವೇಳೆ 100ಕ್ಕೂ ಹೆಚ್ಚು ಜನರನ್ನು ಪೊಲೀಸರು ವಶಕ್ಕೆ ಪಡೆದರು. ಇದೇ ವೇಳೆ ಸಭೆ ನಡೆಸಿದ ಟ್ರಸ್ಟಿಗಳು ವಚನಾನಂದ ಶ್ರೀಗಳನ್ನು ಉಚ್ಛಾಟನೆ ಮಾಡುವ ಅಂತಿಮ ನಿರ್ಧಾರ ಕೈಗೊಂಡರು.
ಈ ಕುರಿತು ಟ್ರಸ್ಟಿ ಬಾವಿ ಬೆಟ್ಟಪ್ಪ ಪ್ರತಿಕ್ರಿಯಿಸಿ, “ಸ್ವಾಮೀಜಿಗಳಿಗೆ ಮಾರ್ಚ್ 24ರವರೆಗೆ ಗಡುವು ನೀಡಲಾಗಿತ್ತು. ಆದರೆ ಯಾವುದೇ ಸ್ಪಷ್ಟ ನಿರ್ಧಾರ ಕೈಗೊಳ್ಳದ ಹಿನ್ನೆಲೆ ಉಚ್ಛಾಟನೆ ಮಾಡಲಾಗಿದೆ. ಅವರು ಶ್ವಾಸ ಪೀಠದಲ್ಲಿರಬೇಕೋ ಅಥವಾ ಹರಿಹರ ಪಂಚಮಸಾಲಿ ಪೀಠದಲ್ಲಿರಬೇಕೋ ಎಂಬುದರ ಬಗ್ಗೆ ಗೊಂದಲವಿತ್ತು. ಹೀಗಾಗಿ ಈ ಕ್ರಮ ತೆಗೆದುಕೊಳ್ಳಲಾಗಿದೆ. ಸ್ವಾಮೀಜಿಗಳು ಗೌರವಯುತವಾಗಿ ಮಠವನ್ನು ತೊರೆಯಬೇಕು” ಎಂದು ಹೇಳಿದ್ದಾರೆ.

