ಬೆಂಗಳೂರು: ರಾಜ್ಯಕ್ಕೆ ಅಗತ್ಯವಿರುವ ಕನಿಷ್ಠ ಅನಿಲ ಪೂರೈಕೆಯನ್ನೂ ಕೇಂದ್ರ ಸರ್ಕಾರ ನೀಡುತ್ತಿಲ್ಲ ಎಂದು ಗೃಹಸಚಿವ ಜಿ. ಪರಮೇಶ್ವರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಎಲ್ಪಿಜಿ ಪೂರೈಕೆಯಲ್ಲಿ ಉಂಟಾಗಿರುವ ವ್ಯತ್ಯಯ ಕುರಿತು ಬೆಂಗಳೂರಿನಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಈಗಾಗಲೇ ಕೇಂದ್ರಕ್ಕೆ ಬೇಡಿಕೆ ಸಲ್ಲಿಸಿದ್ದು, ಪ್ರತಿ ರಾಜ್ಯಕ್ಕೆ ನೀಡಬೇಕಾದ ಅಲಾಟ್ಮೆಂಟ್ ಸಮರ್ಪಕವಾಗಿ ನೀಡಬೇಕು ಎಂದು ಒತ್ತಾಯಿಸಿದರು.
ಯುದ್ಧ ಪರಿಸ್ಥಿತಿಯ ಪರಿಣಾಮದಿಂದ ದೇಶದಾದ್ಯಂತ ಕೆಲವು ಸಮಸ್ಯೆಗಳು ಉಂಟಾಗಿವೆ. ಆದಾಗ್ಯೂ, ರಾಜ್ಯಕ್ಕೆ ಕನಿಷ್ಠ ಅನಿಲ ಪೂರೈಕೆಯಾದರೂ ನೀಡಬೇಕಾಗಿತ್ತು. ಅದೇ ಆಗದ ಕಾರಣ ಪ್ರಸ್ತುತ ತೊಂದರೆ ಎದುರಾಗುತ್ತಿದೆ ಎಂದು ಹೇಳಿದರು.
ಎಲ್ಲಾ ರಾಜ್ಯಗಳಿಗೆ ನೀಡುವಂತೆ ಕರ್ನಾಟಕಕ್ಕೂ ಸಮರ್ಪಕವಾಗಿ ಗ್ಯಾಸ್, ಪೆಟ್ರೋಲ್ ಮತ್ತು ಡೀಸೆಲ್ ಪೂರೈಕೆ ಮಾಡಬೇಕು ಎಂದು ಕೇಂದ್ರವನ್ನು ಅವರು ಆಗ್ರಹಿಸಿದರು. ಜೊತೆಗೆ ಕಾಳಸಂತೆಯಲ್ಲಿ ಮಾರಾಟ ಮಾಡುವವರ ಮೇಲೆ ನಿಗಾವಹಿಸಲಾಗಿದ್ದು, ಕೆಲವು ಕಡೆ ಪ್ರಕರಣಗಳೂ ದಾಖಲಾಗಿವೆ ಎಂದು ತಿಳಿಸಿದ್ದಾರೆ.
ಹಿಂದಿ ಭಾಷೆ ಕಡ್ಡಾಯವಲ್ಲ ಎಂಬ ನಿಯಮ ಜಾರಿಗೆ ಸಂಬಂಧಿಸಿದ ವಿಚಾರಕ್ಕೂ ಅವರು ಪ್ರತಿಕ್ರಿಯೆ ನೀಡಿದರು. ಹಿಂದಿ ಬಳಸದ ರಾಜ್ಯಗಳಲ್ಲಿ ಈ ರೀತಿಯ ಚರ್ಚೆಗಳು ಹಿಂದಿನಿಂದಲೂ ನಡೆಯುತ್ತಿವೆ. ಈ ವಿಷಯ ಶೀಘ್ರದಲ್ಲೇ ಬಗೆಹರಿದರೆ ಉತ್ತಮ ಎಂದು ಅಭಿಪ್ರಾಯಪಟ್ಟರು.
ಲೋಕಸಭಾ ಕ್ಷೇತ್ರಗಳ ಪುನರ್ವಿಂಗಡಣೆ ವಿಚಾರವಾಗಿ ಮಾತನಾಡಿದ ಅವರು, ಜನಸಂಖ್ಯೆ ಆಧಾರದ ಮೇಲೆ ಮರುಹಂಚಿಕೆ ಮಾಡಬಾರದು ಎಂಬ ಮುಖ್ಯಮಂತ್ರಿ ಹೇಳಿಕೆ ಸಮಂಜಸವಾಗಿದೆ ಎಂದು ಹೇಳಿದರು. ಉತ್ತರ ಭಾರತದ ರಾಜ್ಯಗಳಲ್ಲಿ ಜನಸಂಖ್ಯೆ ಹೆಚ್ಚು ಇರುವುದರಿಂದ ಈ ವಿಚಾರ ಪ್ರಸ್ತಾಪವಾಗಿದೆ ಎಂದರು.

