Home Blog

ಕೇಕ್ ಕಟ್ ಮಾಡಿ ಸಂಭ್ರಮಿಸಿದ ಕೆಲ ಗಂಟೆಗಳಲ್ಲಿ ಕೊಲೆ: ಪತ್ನಿಯನ್ನು ಹತ್ಯೆ ಮಾಡಿದ ಪತಿ ಅರೆಸ್ಟ್

0

ಬಳ್ಳಾರಿ: ಹುಟ್ಟುಹಬ್ಬ ಆಚರಣೆಯ ಹೆಸರಿನಲ್ಲಿ ಪತ್ನಿಯನ್ನು ಮನೆಯಿಂದ ಕರೆದುಕೊಂಡು ಹೋಗಿ ಕೊಲೆ ಮಾಡಿದ ಅಮಾನವೀಯ ಘಟನೆ ಬಳ್ಳಾರಿಯಲ್ಲಿ ಬೆಳಕಿಗೆ ಬಂದಿದೆ. ಕೊಲೆ ನಡೆದ ಬಳಿಕ 13 ದಿನಗಳ ಕಾಲ ನಾಪತ್ತೆ ನಾಟಕವಾಡಿದ ಪತಿಯೇ ಅಂತಿಮವಾಗಿ ಪೊಲೀಸರ ವಿಚಾರಣೆ ವೇಳೆ ಅಪರಾಧ ಒಪ್ಪಿಕೊಂಡಿದ್ದಾನೆ.

ಮೃತ ಮಹಿಳೆ ಆಫ್ರೀನ್ ಬಾನು ಹಾಗೂ ಆರೋಪಿ ನೂರ್ ಅಹ್ಮದ್ ಪ್ರೀತಿಸಿ ವಿವಾಹವಾಗಿದ್ದರು. ದಾಂಪತ್ಯ ಜೀವನಕ್ಕೆ ಎರಡು ವರ್ಷವಾಗಿದ್ದು, ಎಂಟು ತಿಂಗಳ ಮಗು ಸಹ ಇದೆ. ಆದರೆ ಕಳೆದ ಕೆಲವು ತಿಂಗಳುಗಳಿಂದ ದಂಪತಿ ನಡುವೆ ವೈಮನಸ್ಸು ಹೆಚ್ಚಾಗಿತ್ತು. ಇದೇ ಕಾರಣಕ್ಕೆ ಆಫ್ರೀನ್ ತವರು ಮನೆಯಲ್ಲಿ ವಾಸವಾಗಿದ್ದರು.

ಪತ್ನಿಯ ಹುಟ್ಟುಹಬ್ಬದ ದಿನ ಮನೆಗೆ ಬಂದ ನೂರ್ ಅಹ್ಮದ್, ಕುಟುಂಬದವರ ಸಮ್ಮುಖದಲ್ಲೇ ಕೇಕ್ ಕಟ್ ಮಾಡಿ ಸಂಭ್ರಮಿಸಿದ್ದ. ಬಳಿಕ ಪಾರ್ಟಿ ನೆಪದಲ್ಲಿ ಪತ್ನಿಯನ್ನು ಹೊರಗೆ ಕರೆದುಕೊಂಡು ಹೋಗಿದ್ದಾನೆ.

ತನಿಖೆ ಪ್ರಕಾರ, ಪೂರ್ವಯೋಜಿತವಾಗಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದ ಆರೋಪಿ, ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದಾನೆ. ನಂತರ ಮೃತದೇಹವನ್ನು ಬೈಕ್‌ನಲ್ಲಿ ಸಾಗಿಸಿ ಕುಡತಿನಿ ಸಮೀಪದ ಪ್ರದೇಶದಲ್ಲಿ ಎಸೆದು ಪರಾರಿಯಾಗಿದ್ದಾನೆ.

ರಾತ್ರಿ ಮನೆಗೆ ಹಿಂದಿರುಗಿದ ಆರೋಪಿ, ಪತ್ನಿ ಕಾಣೆಯಾಗಿದ್ದಾಳೆ ಎಂದು ಹೇಳಿ ಕುಟುಂಬಸ್ಥರ ಜೊತೆ ಹುಡುಕಾಟ ನಡೆಸುವ ನಾಟಕ ಮಾಡಿದ್ದಾನೆ. ಆದರೆ ಕುಟುಂಬದವರ ಅನುಮಾನ ಹೆಚ್ಚಾದ ಹಿನ್ನೆಲೆಯಲ್ಲಿ ಪೊಲೀಸರಿಗೆ ದೂರು ನೀಡಲಾಗಿತ್ತು.

ಪೊಲೀಸರು ತಾಂತ್ರಿಕ ಮಾಹಿತಿ ಹಾಗೂ ವಿಚಾರಣೆಯ ಆಧಾರದ ಮೇಲೆ ನೂರ್ ಅಹ್ಮದ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಕೊಲೆ ಸತ್ಯ ಹೊರಬಿದ್ದಿದೆ. ಆರೋಪಿಯ ಮಾಹಿತಿ ಮೇರೆಗೆ 13 ದಿನಗಳ ಬಳಿಕ ಮೃತದೇಹ ಪತ್ತೆಯಾಗಿದ್ದು, ಶವ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿತ್ತು.

ಪ್ರಕರಣ ದಾಖಲಿಸಿಕೊಂಡಿರುವ ಕೌಲ್ ಬಜಾರ್ ಪೊಲೀಸರು ಆರೋಪಿ ವಿರುದ್ಧ ಕೊಲೆ ಆರೋಪದಡಿ ಕಾನೂನು ಕ್ರಮ ಜರುಗಿಸಿ ಜೈಲಿಗೆ ಕಳುಹಿಸಿದ್ದಾರೆ.

ಹೊಸ ಸಿಎಂ ಸ್ವಾಗತಕ್ಕೆ ಸಜ್ಜಾದ ವಿಧಾನಸೌಧ: ಹೂವಿನ ಅಲಂಕಾರದಲ್ಲಿ ಮಿನುಗಿದ ಆಡಳಿತ ಕೇಂದ್ರ

ಬೆಂಗಳೂರು: ನೂತನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಸಚಿವರ ಪ್ರಮಾಣವಚನ ಸಮಾರಂಭದ ಬಳಿಕ ರಾಜ್ಯದ ಆಡಳಿತ ಕೇಂದ್ರ ವಿಧಾನಸೌಧದಲ್ಲಿ ಸಂಭ್ರಮದ ವಾತಾವರಣ ನಿರ್ಮಾಣವಾಗಿದೆ. ಹೊಸ ಸರ್ಕಾರದ ಸ್ವಾಗತಕ್ಕಾಗಿ ವಿಧಾನಸೌಧವನ್ನು ವಿಶೇಷವಾಗಿ ಸಜ್ಜುಗೊಳಿಸಲಾಗಿದ್ದು, ಎಲ್ಲೆಡೆ ಹಬ್ಬದ ಕಳೆ ಕಂಡುಬಂದಿದೆ.

ವಿಧಾನಸೌಧದ ಪ್ರಮುಖ ಪ್ರವೇಶ ದ್ವಾರಗಳನ್ನು ಬಣ್ಣ ಬಣ್ಣದ ಹೂವುಗಳಿಂದ ಅಲಂಕರಿಸಲಾಗಿದೆ. ವಿವಿಧ ಜಾತಿಯ ಆಕರ್ಷಕ ಹೂಗಳನ್ನು ಬಳಸಿ ತೋರಣಗಳು ಮತ್ತು ವಿಶೇಷ ವಿನ್ಯಾಸದ ಅಲಂಕಾರಗಳನ್ನು ಮಾಡಲಾಗಿದ್ದು, ಹೊಸ ಸರ್ಕಾರಕ್ಕೆ ಅದ್ಧೂರಿ ಸ್ವಾಗತ ನೀಡಲು ಸಿದ್ಧತೆ ನಡೆಸಲಾಗಿದೆ.

ಮುಖ್ಯಮಂತ್ರಿ ಹಾಗೂ ಸಚಿವರ ಮೊದಲ ಸಭೆ ನಡೆಯಲಿರುವ ಕ್ಯಾಬಿನೆಟ್ ಸಭಾಂಗಣಕ್ಕೂ ವಿಶೇಷ ಮೆರುಗು ನೀಡಲಾಗಿದೆ. ಸುಗಂಧಭರಿತ ಹೂಗಳಿಂದ ಸಭಾಂಗಣವನ್ನು ಅಲಂಕರಿಸಲಾಗಿದ್ದು, ಅಧಿಕಾರಿಗಳು ಹಾಗೂ ಸಿಬ್ಬಂದಿ ಅಂತಿಮ ಹಂತದ ಸಿದ್ಧತೆಗಳಲ್ಲಿ ತೊಡಗಿದ್ದಾರೆ.

ಪ್ರಮಾಣವಚನ ಸ್ವೀಕಾರದ ಬಳಿಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇರವಾಗಿ ವಿಧಾನಸೌಧಕ್ಕೆ ಆಗಮಿಸಲಿದ್ದು, ನೂತನ ಸಚಿವರೊಂದಿಗೆ ಮೊದಲ ಸಚಿವ ಸಂಪುಟ ಸಭೆ ನಡೆಸಲಿದ್ದಾರೆ. ಈ ಸಭೆಯಲ್ಲಿ ಸರ್ಕಾರದ ಆರಂಭಿಕ ಆಡಳಿತಾತ್ಮಕ ನಿರ್ಧಾರಗಳ ಕುರಿತು ಚರ್ಚೆ ನಡೆಯುವ ಸಾಧ್ಯತೆ ಇದೆ.

ಹೊಸ ಸರ್ಕಾರ ಅಧಿಕಾರಕ್ಕೆ ಬಂದಿರುವ ಹಿನ್ನೆಲೆಯಲ್ಲಿ ವಿಧಾನಸೌಧದಲ್ಲಿ ಉತ್ಸಾಹದ ವಾತಾವರಣ ಕಂಡುಬಂದಿದ್ದು, ಆಡಳಿತ ಯಂತ್ರವೂ ಹೊಸ ಜವಾಬ್ದಾರಿಗಳಿಗೆ ಸಜ್ಜಾಗಿದೆ.

ಸಿದ್ದರಾಮಯ್ಯ ಪುತ್ರ ಯತೀಂದ್ರಗೆ ಸಚಿವ ಸ್ಥಾನ: ಡಿಕೆಶಿ ಸಂಪುಟಕ್ಕೆ ಅಧಿಕೃತ ಎಂಟ್ರಿ

ಬೆಂಗಳೂರು: ನೂತನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸಚಿವ ಸಂಪುಟದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಡಾ. ಯತೀಂದ್ರ ಸಿದ್ದರಾಮಯ್ಯ ಅವರಿಗೆ ಸಚಿವ ಸ್ಥಾನ ದೊರೆತಿದೆ. ನಿರೀಕ್ಷೆಯಂತೆ ಅವರು ಇಂದು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.

ಬೆಂಗಳೂರಿನ ಲೋಕಭವನದ ಗ್ಲಾಸ್‌ಹೌಸ್‌ನಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಸಚಿವರಾಗಿ ಶ್ರದ್ಧಾಪೂರ್ವಕವಾಗಿ ಪ್ರತಿಜ್ಞೆ ಸ್ವೀಕರಿಸಿದರು. ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರು ನೂತನ ಸಚಿವರಿಗೆ ಪ್ರಮಾಣ ಬೋಧಿಸಿದರು.

ಡಿಕೆ ಶಿವಕುಮಾರ್ ನೇತೃತ್ವದ ಮೊದಲ ಸಚಿವ ಸಂಪುಟದಲ್ಲಿ ಯತೀಂದ್ರ ಅವರಿಗೆ ಸ್ಥಾನ ನೀಡಿರುವುದು ಕಾಂಗ್ರೆಸ್ ವಲಯದಲ್ಲಿ ಮಹತ್ವದ ಬೆಳವಣಿಗೆಯಾಗಿ ಪರಿಗಣಿಸಲಾಗಿದೆ. ಸಮಾರಂಭದಲ್ಲಿ ಕಾಂಗ್ರೆಸ್‌ನ ಹಿರಿಯ ನಾಯಕರು, ಶಾಸಕರು ಹಾಗೂ ಗಣ್ಯರು ಉಪಸ್ಥಿತರಿದ್ದರು.

ಪ್ರಮಾಣವಚನ ಸ್ವೀಕಾರದ ಬಳಿಕ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಹಾಗೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನೂತನ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಅವರಿಗೆ ಹೂಗುಚ್ಛ ನೀಡಿ ಶುಭ ಹಾರೈಸಿದರು.

ಸಚಿವ ಸ್ಥಾನ ದೊರೆತಿರುವ ಹಿನ್ನೆಲೆಯಲ್ಲಿ ಯತೀಂದ್ರ ಬೆಂಬಲಿಗರಲ್ಲಿ ಸಂಭ್ರಮ ಮನೆ ಮಾಡಿದ್ದು, ರಾಜ್ಯ ರಾಜಕೀಯದಲ್ಲಿ ಇದು ಹೊಸ ಅಧ್ಯಾಯಕ್ಕೆ ನಾಂದಿ ಹಾಡಿದೆ.

ಡಿಕೆಶಿ ಪದಗ್ರಹಣ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾಯ್ತು ಸಿಎಂ ಕಚೇರಿಯ ನಾಮಫಲಕ

ಬೆಂಗಳೂರು: ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರು ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ವಿಧಾನಸೌಧದಲ್ಲಿರುವ ಮುಖ್ಯಮಂತ್ರಿಗಳ ಕಚೇರಿಯಲ್ಲಿ ಆಡಳಿತಾತ್ಮಕ ಬದಲಾವಣೆಗಳು ಆರಂಭಗೊಂಡಿವೆ. ಅದರ ಭಾಗವಾಗಿ ಮುಖ್ಯಮಂತ್ರಿಗಳ ಕಚೇರಿಯ ನಾಮಫಲಕವನ್ನು ಬದಲಾಯಿಸಲಾಗಿದೆ.

ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರ ಹೆಸರಿನ ನಾಮಫಲಕವನ್ನು ತೆರವುಗೊಳಿಸಿ, ನೂತನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಹೆಸರಿನ ನಾಮಫಲಕವನ್ನು ಅಳವಡಿಸಲಾಗಿದೆ. ಪ್ರಮಾಣವಚನ ಸ್ವೀಕಾರದ ಬಳಿಕವೇ ಈ ಪ್ರಕ್ರಿಯೆ ಪೂರ್ಣಗೊಂಡಿದ್ದು, ಮುಖ್ಯಮಂತ್ರಿ ಕಚೇರಿ ಹೊಸ ಆಡಳಿತಕ್ಕೆ ಸಜ್ಜಾಗಿದೆ.

ವಿಧಾನಸೌಧದ ಮುಖ್ಯಮಂತ್ರಿಗಳ ಕಚೇರಿಯ ಮುಂಭಾಗದಲ್ಲಿ ಡಿ.ಕೆ. ಶಿವಕುಮಾರ್ ಅವರ ಹೆಸರಿನ ಫಲಕ ಅಳವಡಿಕೆಯಾಗಿರುವುದು ಹೊಸ ಸರ್ಕಾರದ ಅಧಿಕೃತ ಆರಂಭದ ಸಂಕೇತವಾಗಿದೆ.

ನೂತನ ಮುಖ್ಯಮಂತ್ರಿಯಾಗಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಡಿಕೆ ಶಿವಕುಮಾರ್ ಅವರು ಆಡಳಿತಾತ್ಮಕ ಚಟುವಟಿಕೆಗಳಿಗೆ ಚಾಲನೆ ನೀಡಿದ್ದು, ಮುಂದಿನ ದಿನಗಳಲ್ಲಿ ಸರ್ಕಾರದ ವಿವಿಧ ಮಹತ್ವದ ನಿರ್ಧಾರಗಳು ಇದೇ ಕಚೇರಿಯಿಂದ ಹೊರಬೀಳಲಿವೆ.

‘ನೋಟಿಸ್‌ಗೆ ಹೆದರಿಲ್ಲ’: ರಣವೀರ್ ಮೇಲಿನ ನಿಷೇಧ ಹಿಂಪಡೆದರೂ FWICE ತಿರುಗೇಟು!

ಮುಂಬೈ: ರಣವೀರ್ ಸಿಂಗ್ ವಿರುದ್ಧ ಘೋಷಿಸಿದ್ದ ಅಸಹಕಾರ ಆದೇಶವನ್ನು ಹಿಂಪಡೆದಿರುವ ಫೆಡರೇಶನ್ ಆಫ್ ವೆಸ್ಟರ್ನ್ ಇಂಡಿಯಾ ಸಿನಿ ಎಂಪ್ಲಾಯೀಸ್ (FWICE), ಈ ನಿರ್ಧಾರಕ್ಕೆ ನಟನ ಕಾನೂನು ನೋಟಿಸ್ ಕಾರಣವಲ್ಲ ಎಂದು ಸ್ಪಷ್ಟಪಡಿಸಿದೆ.

‘ಡಾನ್ 3’ ಚಿತ್ರದಿಂದ ರಣವೀರ್ ಸಿಂಗ್ ಹೊರನಡೆದ ಬಳಿಕ ಎಕ್ಸೆಲ್ ಎಂಟರ್‌ಟೈನ್‌ಮೆಂಟ್‌ಗೆ ನಷ್ಟ ಉಂಟಾಗಿದೆ ಎಂಬ ದೂರಿನ ಆಧಾರದಲ್ಲಿ FWICE ಅಸಹಕಾರ ಆದೇಶ ಹೊರಡಿಸಿತ್ತು. ಬಳಿಕ ರಣವೀರ್ ಸಿಂಗ್ ಒಕ್ಕೂಟಕ್ಕೆ ಲೀಗಲ್ ನೋಟಿಸ್ ಕಳುಹಿಸಿ ಕ್ರಮ ಪ್ರಶ್ನಿಸಿದ್ದರು.

ಈ ನಡುವೆ ಇಂಡಿಯನ್ ಮೋಷನ್ ಪಿಕ್ಚರ್ ಪ್ರೊಡ್ಯೂಸರ್ಸ್ ಅಸೋಸಿಯೇಷನ್ (IMPPA), ಪ್ರೊಡ್ಯೂಸರ್ಸ್ ಗಿಲ್ಡ್ ಆಫ್ ಇಂಡಿಯಾ ಹಾಗೂ CINTAA ಜೊತೆ ನಡೆದ ಚರ್ಚೆಗಳ ಬಳಿಕ ನಿಷೇಧ ಹಿಂಪಡೆಯಲಾಗಿದೆ.

FWICE ಅಧ್ಯಕ್ಷ ಬಿ.ಎನ್. ತಿವಾರಿ ಪ್ರತಿಕ್ರಿಯಿಸಿ, “ನಾವು ಯಾವುದೇ ಒತ್ತಡಕ್ಕೆ ಮಣಿದಿಲ್ಲ. 70 ವರ್ಷಗಳ ಇತಿಹಾಸ ಹೊಂದಿರುವ ಸಂಸ್ಥೆ. ಇಂತಹ ಅನೇಕ ಕಾನೂನು ನೋಟಿಸ್‌ಗಳನ್ನು ನಾವು ಎದುರಿಸಿದ್ದೇವೆ. ರಣವೀರ್ ಕಳುಹಿಸಿದ ನೋಟಿಸ್‌ಗೆ ನಮ್ಮ ಕಾನೂನು ತಂಡ ಸೂಕ್ತ ಉತ್ತರ ನೀಡಲಿದೆ” ಎಂದು ಹೇಳಿದ್ದಾರೆ.

ಇದೇ ವೇಳೆ ‘ಡಾನ್ 3’ ವಿವಾದದಿಂದ ನಿರ್ಮಾಪಕರಿಗೆ ನಷ್ಟವಾಗಿರುವುದನ್ನು ಪ್ರೊಡ್ಯೂಸರ್ಸ್ ಗಿಲ್ಡ್ ಖಂಡಿಸಿದೆ ಎಂದು FWICE ತಿಳಿಸಿದೆ. ರಣವೀರ್ ಸಿಂಗ್ ನೇರವಾಗಿ ಮಾತುಕತೆಗೆ ಬರಬಹುದು ಎಂದು ನಿರೀಕ್ಷಿಸಿದ್ದೆವು. ಆದರೆ ಅವರ ತಂಡವೇ ತಪ್ಪು ಸಲಹೆ ನೀಡಿದೆ ಎಂದು FWICE ಅಸಮಾಧಾನ ವ್ಯಕ್ತಪಡಿಸಿದೆ.

ನಿಷೇಧ ಹಿಂಪಡೆಯಲ್ಪಟ್ಟಿದ್ದರೂ, ‘ಡಾನ್ 3’ ವಿವಾದ ಮತ್ತು ಪರಿಹಾರದ ವಿಚಾರದಲ್ಲಿ ರಣವೀರ್ ಸಿಂಗ್ ಹಾಗೂ ನಿರ್ಮಾಪಕರ ನಡುವಿನ ಸಂಘರ್ಷ ಇನ್ನೂ ಮುಕ್ತಾಯಗೊಂಡಿಲ್ಲ.

ಡಿಕೆಶಿ ಸಂಪುಟದಲ್ಲಿ ಜಿ. ಪರಮೇಶ್ವರ್ʼಗೆ ಉಪಮುಖ್ಯಮಂತ್ರಿ ಸ್ಥಾನ: ಅಂಬೇಡ್ಕರ್ ಹೆಸರಿನಲ್ಲಿ ಪ್ರಮಾಣ ಸ್ವೀಕಾರ

ಬೆಂಗಳೂರು: ರಾಜ್ಯದ ನೂತನ ಸರ್ಕಾರದ ರಚನೆಗೆ ವೇಗ ಸಿಕ್ಕಿರುವ ನಡುವೆ, ಹಿರಿಯ ಕಾಂಗ್ರೆಸ್ ನಾಯಕ ಡಾ. ಜಿ. ಪರಮೇಶ್ವರ್ ಅವರು ಕರ್ನಾಟಕದ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಇದರೊಂದಿಗೆ ಕಳೆದ ಕೆಲವು ದಿನಗಳಿಂದ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದ್ದ ಡಿಸಿಎಂ ಹುದ್ದೆಯ ಕುತೂಹಲಕ್ಕೆ ಅಧಿಕೃತ ತೆರೆ ಬಿದ್ದಿದೆ.

ಬೆಂಗಳೂರಿನ ಲೋಕಭವನದ ಗ್ಲಾಸ್ ಹೌಸ್‌ನಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಡಾ. ಜಿ. ಪರಮೇಶ್ವರ್ ಅವರಿಗೆ ಪ್ರಮಾಣವಚನ ಬೋಧಿಸಿದರು. ಈ ವೇಳೆ ಪರಮೇಶ್ವರ್ ಅವರು ಭಾರತದ ಸಂವಿಧಾನ ಮತ್ತು ಡಾ. ಬಿ.ಆರ್. ಅಂಬೇಡ್ಕರ್ ಅವರ ಆದರ್ಶಗಳ ಹೆಸರಿನಲ್ಲಿ ಉಪಮುಖ್ಯಮಂತ್ರಿಯಾಗಿ ಪ್ರಮಾಣ ಸ್ವೀಕರಿಸಿದರು.

ಪ್ರಮಾಣವಚನ ಸ್ವೀಕಾರದ ಬಳಿಕ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹಾಗೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪರಮೇಶ್ವರ್ ಅವರಿಗೆ ಹೂಗುಚ್ಛ ನೀಡಿ ಅಭಿನಂದಿಸಿದರು. ಸಮಾರಂಭದಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು, ಶಾಸಕರು, ವಿವಿಧ ಗಣ್ಯರು ಹಾಗೂ ಸಾವಿರಾರು ಕಾರ್ಯಕರ್ತರು ಉಪಸ್ಥಿತರಿದ್ದು, ಪರಮೇಶ್ವರ್ ಅವರ ಪ್ರಮಾಣವಚನಕ್ಕೆ ಸಾಕ್ಷಿಯಾದರು.

ಸಂಪುಟ ರಚನೆ ಪ್ರಕ್ರಿಯೆ ಆರಂಭವಾದ ದಿನದಿಂದಲೇ ಉಪಮುಖ್ಯಮಂತ್ರಿ ಸ್ಥಾನ ಯಾರ ಪಾಲಾಗಲಿದೆ ಎಂಬ ಕುರಿತು ಸಾಕಷ್ಟು ಊಹಾಪೋಹಗಳು ಹರಿದಾಡುತ್ತಿದ್ದವು. ಅಂತಿಮವಾಗಿ ಪಕ್ಷದ ಹಿರಿಯ ನಾಯಕ ಹಾಗೂ ಅನುಭವಿ ರಾಜಕಾರಣಿ ಜಿ. ಪರಮೇಶ್ವರ್ ಅವರಿಗೆ ಡಿಸಿಎಂ ಹುದ್ದೆ ನೀಡುವ ಮೂಲಕ ಕಾಂಗ್ರೆಸ್ ಹೈಕಮಾಂಡ್ ಮಹತ್ವದ ನಿರ್ಧಾರ ಕೈಗೊಂಡಿದೆ.

ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಪ್ರಮಾಣವಚನ: ವೀರ ಗಂಗಾಧರ ಅಜ್ಜನ ಹೆಸರಿನಲ್ಲಿ ಅಧಿಕಾರ ಸ್ವೀಕಾರ

ಬೆಂಗಳೂರು: ಕಾಂಗ್ರೆಸ್ ಪಕ್ಷವನ್ನು ತಳಮಟ್ಟದಿಂದ ಸಂಘಟಿಸಿ ಬೆಳೆಸಿದ ಹಿರಿಯ ನಾಯಕ ಡಿ.ಕೆ. ಶಿವಕುಮಾರ್ ಅವರು ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಇಂದು ಅಧಿಕೃತವಾಗಿ ಅಧಿಕಾರ ಸ್ವೀಕರಿಸಿದರು. ಲೋಕಭವನದ ಗಾಜಿನ ಮನೆಯಲ್ಲಿ ನಡೆದ ಭವ್ಯ ಪ್ರಮಾಣವಚನ ಸಮಾರಂಭದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಡಿ.ಕೆ. ಶಿವಕುಮಾರ್ ಅವರಿಗೆ ಪ್ರಮಾಣವಚನ ಬೋಧಿಸಿದರು.

ಸಂವಿಧಾನದ ಪ್ರತಿಯನ್ನು ಕೈಯಲ್ಲಿ ಹಿಡಿದುಕೊಂಡು ಡಿ.ಕೆ. ಶಿವಕುಮಾರ್ ಅವರು ವೀರ ಗಂಗಾಧರ ಅಜ್ಜನ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಈ ಮೂಲಕ ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಅಧಿಕಾರದ ಚುಕ್ಕಾಣಿ ಹಿಡಿದು ಹೊಸ ಆಡಳಿತಕ್ಕೆ ಚಾಲನೆ ನೀಡಿದರು.

ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ರಾಜಕೀಯ ಮುಖಂಡರು, ಧಾರ್ಮಿಕ ನಾಯಕರು, ಗಣ್ಯರು ಹಾಗೂ ಸಾವಿರಾರು ಕಾರ್ಯಕರ್ತರ ಸಮ್ಮುಖದಲ್ಲಿ ನಡೆದ ಈ ಕಾರ್ಯಕ್ರಮವು ವಿಶೇಷ ಆಕರ್ಷಣೆಯಾಗಿತ್ತು. ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ನಾಯಕರು ಕೂಡ ಸಮಾರಂಭದಲ್ಲಿ ಭಾಗವಹಿಸಿ ಶುಭ ಹಾರೈಸಿದರು.

ಇನ್ನು ಡಿ.ಕೆ. ಶಿವಕುಮಾರ್ ಅವರ ಪದಗ್ರಹಣಕ್ಕೆ ಜ್ಯೋತಿಷ್ಯ ಮತ್ತು ಸಂಖ್ಯಾಶಾಸ್ತ್ರದ ಆಧಾರದ ಮೇಲೆ ವಿಶೇಷ ಮುಹೂರ್ತವನ್ನು ಆಯ್ಕೆ ಮಾಡಲಾಗಿತ್ತು. ಜ್ಯೋತಿಷಿಗಳ ಪ್ರಕಾರ ಅತ್ಯಂತ ಶಕ್ತಿಶಾಲಿ ಎಂದು ಪರಿಗಣಿಸಲಾಗುವ ‘ಮಾಲವ್ಯ ಯೋಗ’ದಲ್ಲಿ ಪ್ರಮಾಣವಚನ ಸ್ವೀಕರಿಸುವಂತೆ ಸಮಯ ನಿಗದಿಪಡಿಸಲಾಗಿತ್ತು.

ತುಲಾ ಲಗ್ನದಲ್ಲಿ ನಡೆದ ಈ ಪ್ರತಿಜ್ಞಾವಿಧಿಯು ಆಡಳಿತಾತ್ಮಕವಾಗಿ ಶುಭ ಫಲಗಳನ್ನು ನೀಡಲಿದೆ ಎಂಬ ನಂಬಿಕೆ ವ್ಯಕ್ತವಾಗಿದೆ. ಪ್ರಸ್ತುತ ಗ್ರಹಸ್ಥಿತಿಯಲ್ಲಿ ಗುರು ಗ್ರಹ ಉಚ್ಚ ಸ್ಥಾನದಲ್ಲಿದ್ದು, ದಶಮ ಭಾವ ಬಲಿಷ್ಠವಾಗಿರುವ ಹಿನ್ನೆಲೆಯಲ್ಲಿ ಮುಂಬರುವ ದಿನಗಳಲ್ಲಿ ಎದುರಾಗುವ ಸವಾಲುಗಳನ್ನು ಯಶಸ್ವಿಯಾಗಿ ಎದುರಿಸಿ ಜನಪರ ಆಡಳಿತ ನೀಡಲು ಇದು ಅನುಕೂಲಕರವಾಗಲಿದೆ ಎಂದು ಜ್ಯೋತಿಷ್ಯ ವಲಯ ಅಭಿಪ್ರಾಯಪಟ್ಟಿದೆ.

ಸುದೀರ್ಘ ರಾಜಕೀಯ ಅನುಭವ, ಪಕ್ಷ ಸಂಘಟನೆಯಲ್ಲಿನ ಪರಿಶ್ರಮ ಮತ್ತು ಆಡಳಿತಾತ್ಮಕ ಸಾಮರ್ಥ್ಯದ ಮೂಲಕ ಗುರುತಿಸಿಕೊಂಡಿರುವ ಡಿ.ಕೆ. ಶಿವಕುಮಾರ್ ಅವರ ನಾಯಕತ್ವದಲ್ಲಿ ಕರ್ನಾಟಕದ ಅಭಿವೃದ್ಧಿಗೆ ಹೊಸ ದಿಕ್ಕು ದೊರೆಯುವ ನಿರೀಕ್ಷೆ ವ್ಯಕ್ತವಾಗಿದೆ.

ಕರ್ನಾಟಕ ಹೈಕೋರ್ಟ್ ಗೆ 6 ಹೊಸ ನ್ಯಾಯಮೂರ್ತಿಗಳ ನೇಮಕಕ್ಕೆ ಕೊಲಿಜಿಯಂ ಶಿಫಾರಸು

ಬೆಂಗಳೂರು: ಕರ್ನಾಟಕ ಹೈಕೋರ್ಟ್‌ಗೆ ಆರು ಹೊಸ ನ್ಯಾಯಮೂರ್ತಿಗಳನ್ನು ನೇಮಕ ಮಾಡುವ ಸಂಬಂಧ ಸುಪ್ರೀಂ ಕೋರ್ಟ್ ಕೊಲಿಜಿಯಂ ಮಹತ್ವದ ಶಿಫಾರಸು ಮಾಡಿದೆ. ಜೂನ್ 2ರಂದು ನಡೆದ ಕೊಲಿಜಿಯಂ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಪ್ರಸ್ತಾವಿತ ಹೆಸರುಗಳನ್ನು ಕೇಂದ್ರ ಸರ್ಕಾರ ಅನುಮೋದಿಸಿದರೆ ಹೈಕೋರ್ಟ್‌ನ ಕಾರ್ಯನಿರ್ವಹಣಾ ನ್ಯಾಯಮೂರ್ತಿಗಳ ಸಂಖ್ಯೆ 54ಕ್ಕೆ ಏರಿಕೆಯಾಗಲಿದೆ.

ಪ್ರಸ್ತುತ ಕರ್ನಾಟಕ ಹೈಕೋರ್ಟ್‌ನಲ್ಲಿ ಮಂಜೂರಾಗಿರುವ ಒಟ್ಟು 62 ನ್ಯಾಯಮೂರ್ತಿಗಳ ಹುದ್ದೆಗಳ ಪೈಕಿ ಹಲವು ಹುದ್ದೆಗಳು ಖಾಲಿ ಉಳಿದಿದ್ದು, ಹೊಸ ನೇಮಕಾತಿಗಳ ಮೂಲಕ ನ್ಯಾಯಾಂಗ ಕಾರ್ಯಭಾರವನ್ನು ಮತ್ತಷ್ಟು ಸಮರ್ಥವಾಗಿ ನಿರ್ವಹಿಸುವ ನಿರೀಕ್ಷೆ ವ್ಯಕ್ತವಾಗಿದೆ.

ನ್ಯಾಯಮೂರ್ತಿ ಹುದ್ದೆಗೆ ಶಿಫಾರಸಾದವರು ಯಾರು?

ಸುಪ್ರೀಂ ಕೋರ್ಟ್ ಕೊಲಿಜಿಯಂ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿಗಳಾಗಿ ನೇಮಕ ಮಾಡಲು ಕೆಳಕಂಡ ಆರು ಹಿರಿಯ ವಕೀಲರ ಹೆಸರನ್ನು ಶಿಫಾರಸು ಮಾಡಿದೆ.

  • ರಾಘವೇಂದ್ರ ಸೀತಾರಾಂ ಶ್ರೀವತ್ಸ
  • ಹೇಮಾ ಕುಲಕರ್ಣಿ
  • ಸುಬ್ರಮಣ್ಯ ರಂಗರಾವ್
  • ತಡಗವಾಡಿ ಪ್ರಕಾಶ್ ವಿವೇಕಾನಂದ
  • ಬಕ್ಕೇಶ್ವರ ಪ್ರಮೋದ್
  • ಹೊಂಬೆಗೌಡ ಶಾಂತಿ ಭೂಷಣ್

ಕಾನೂನು ಕ್ಷೇತ್ರದ ಅನುಭವಿ ಮುಖಗಳಿಗೆ ಅವಕಾಶ

ಶಿಫಾರಸು ಪಟ್ಟಿಯಲ್ಲಿರುವ ರಾಘವೇಂದ್ರ ಸೀತಾರಾಂ ಶ್ರೀವತ್ಸ ಅವರು ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲರಾಗಿ ದೇಶಾದ್ಯಂತ ಹೆಸರಾಗಿದ್ದಾರೆ. ಹೇಮಾ ಕುಲಕರ್ಣಿ ಅವರು ಕಲಬುರಗಿ ಪೀಠದಲ್ಲಿ ದೀರ್ಘಕಾಲ ವಕಾಲತ್ತು ನಡೆಸಿದ್ದು, ಕಾನೂನು ಕ್ಷೇತ್ರದಲ್ಲಿ ವಿಶಾಲ ಅನುಭವ ಹೊಂದಿದ್ದಾರೆ.

ಹಿರಿಯ ವಕೀಲರಾದ ಸುಬ್ರಮಣ್ಯ ರಂಗರಾವ್ ಹಾಗೂ ತಡಗವಾಡಿ ಪ್ರಕಾಶ್ ವಿವೇಕಾನಂದ ಅವರು ಕರ್ನಾಟಕ ಹೈಕೋರ್ಟ್‌ನಲ್ಲಿ ಹಲವು ಮಹತ್ವದ ಪ್ರಕರಣಗಳಲ್ಲಿ ವಾದ ಮಂಡಿಸಿರುವ ಅನುಭವ ಹೊಂದಿದ್ದಾರೆ. ಬಕ್ಕೇಶ್ವರ ಪ್ರಮೋದ್ ಅವರು ಬೆಂಗಳೂರಿನ ಖ್ಯಾತ ಕಾನೂನು ತಜ್ಞರಾಗಿದ್ದು, ಹೊಂಬೆಗೌಡ ಶಾಂತಿ ಭೂಷಣ್ ಅವರು ಈ ಹಿಂದೆ ಕರ್ನಾಟಕ ಹೈಕೋರ್ಟ್‌ಗೆ ಭಾರತ ಸರ್ಕಾರದ ಸಹಾಯಕ ಸಾಲಿಸಿಟರ್ ಜನರಲ್ ಆಗಿಯೂ ಸೇವೆ ಸಲ್ಲಿಸಿದ್ದರು.

ಇತ್ತೀಚೆಗೆ ಮೂವರು ಹೆಚ್ಚುವರಿ ನ್ಯಾಯಮೂರ್ತಿಗಳ ನೇಮಕ

ಇತ್ತೀಚೆಗಷ್ಟೇ ಕೇಂದ್ರ ಸರ್ಕಾರ ಕರ್ನಾಟಕ ಹೈಕೋರ್ಟ್‌ಗೆ ಮೂವರು ನ್ಯಾಯಾಂಗ ಅಧಿಕಾರಿಗಳನ್ನು ಹೆಚ್ಚುವರಿ ನ್ಯಾಯಮೂರ್ತಿಗಳಾಗಿ ನೇಮಕ ಮಾಡಲು ಅನುಮೋದನೆ ನೀಡಿತ್ತು. ಅದರೊಂದಿಗೆ ಕಾರ್ಯನಿರ್ವಹಣೆಯಲ್ಲಿದ್ದ ನ್ಯಾಯಮೂರ್ತಿಗಳ ಸಂಖ್ಯೆ 48ಕ್ಕೆ ಏರಿಕೆಯಾಗಿತ್ತು.

ಈಗ ಮತ್ತಷ್ಟು ಆರು ನ್ಯಾಯಮೂರ್ತಿಗಳ ನೇಮಕಕ್ಕೆ ಕೊಲಿಜಿಯಂ ಶಿಫಾರಸು ಮಾಡಿರುವುದರಿಂದ, ಕೇಂದ್ರ ಸರ್ಕಾರದ ಅಂತಿಮ ಅನುಮೋದನೆ ದೊರೆತ ಬಳಿಕ ನ್ಯಾಯಮೂರ್ತಿಗಳ ಸಂಖ್ಯೆ 54ಕ್ಕೆ ತಲುಪಲಿದೆ. ಇದರಿಂದ ಬಾಕಿ ಇರುವ ಪ್ರಕರಣಗಳ ವಿಲೇವಾರಿ ಪ್ರಕ್ರಿಯೆಗೆ ವೇಗ ಸಿಗುವ ನಿರೀಕ್ಷೆಯಿದೆ.

ಪೋಷಕರ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಟೆಕ್ಕಿ ರೋಹನ್ ಮಾನಸಿಕ ಅಸ್ವಸ್ಥನಲ್ಲ ಎಂದ ನಿಮ್ಹಾನ್ಸ್

ಬೆಂಗಳೂರು: ನಗರದ ವಿಜ್ಞಾನನಗರದ ಆದರ್ಶ ವಿಸ್ತಾ ವಿಲ್ಲಾದಲ್ಲಿ ತಂದೆ-ತಾಯಿಯನ್ನು ಬರ್ಬರವಾಗಿ ಹತ್ಯೆಗೈದ ಆರೋಪದಡಿ ಬಂಧನಕ್ಕೊಳಗಾಗಿರುವ ಟೆಕ್ಕಿ ರೋಹನ್ ಚಂದ್ರ ಭಟ್ ಪ್ರಕರಣದಲ್ಲಿ ಮಹತ್ವದ ತಿರುವು ಸಿಕ್ಕಿದೆ. ಘಟನೆ ಬಳಿಕ ರೋಹನ್ ಸ್ಕಿಜೋಫ್ರೇನಿಯಾ ಸೇರಿದಂತೆ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದ ಎಂಬ ಮಾಹಿತಿ ಹರಿದಾಡಿದ್ದರೂ, ನಿಮ್ಹಾನ್ಸ್ ವೈದ್ಯಕೀಯ ಪರೀಕ್ಷೆಯಲ್ಲಿ ಆತ ಸಂಪೂರ್ಣ ಮಾನಸಿಕವಾಗಿ ಸದೃಢನಾಗಿದ್ದಾನೆ ಎಂಬುದು ದೃಢಪಟ್ಟಿದೆ.

ನೌಕಾಪಡೆಯ ನಿವೃತ್ತ ಕ್ಯಾಪ್ಟನ್ ನವೀನ್‌ಚಂದ್ರ ಭಟ್ ಹಾಗೂ ದಂತ ವೈದ್ಯೆ ಡಾ. ಶ್ಯಾಮಲಾ ಭಟ್ ಅವರನ್ನು ಚಾಕುವಿನಿಂದ ಇರಿದು ಕೊಂದ ಪ್ರಕರಣದ ತನಿಖೆ ವೇಳೆ ಆರೋಪಿಯನ್ನು ನಿಮ್ಹಾನ್ಸ್‌ಗೆ ದಾಖಲಿಸಿ ವೈದ್ಯಕೀಯ ವೀಕ್ಷಣೆಗೆ ಒಳಪಡಿಸಲಾಗಿತ್ತು. ಒಂದು ವಾರದ ಪರಿಶೀಲನೆ ಬಳಿಕ ವೈದ್ಯರು ರೋಹನ್‌ಗೆ ಒತ್ತಡ, ಆತಂಕ ಅಥವಾ ಸ್ಕಿಜೋಫ್ರೇನಿಯಾ ಸೇರಿದಂತೆ ಯಾವುದೇ ಗಂಭೀರ ಮಾನಸಿಕ ಕಾಯಿಲೆಯ ಲಕ್ಷಣಗಳು ಕಂಡುಬಂದಿಲ್ಲ ಎಂದು ವರದಿ ನೀಡಿದ್ದಾರೆ.

ಪೊಲೀಸ್ ತನಿಖೆ ಪ್ರಕಾರ, ಸ್ಟಾರ್ಟ್‌ಅಪ್ ಆರಂಭಿಸಲು 10 ಲಕ್ಷ ರೂಪಾಯಿ ನೀಡುವಂತೆ ಪೋಷಕರನ್ನು ರೋಹನ್ ಒತ್ತಾಯಿಸಿದ್ದ. ಆದರೆ ಉದ್ಯೋಗ ಪಡೆದು ಸ್ಥಿರವಾಗುವಂತೆ ಸಲಹೆ ನೀಡಿದ ಪೋಷಕರು ಹಣ ನೀಡಲು ನಿರಾಕರಿಸಿದ್ದರು. ಇದೇ ವಿಚಾರದಲ್ಲಿ ಆತನ ಅಸಮಾಧಾನ ಹೆಚ್ಚಾಗಿತ್ತು.

ಇದರ ಜೊತೆಗೆ ತನ್ನ ಮೊಬೈಲ್ ಸಂಖ್ಯೆಯನ್ನು ಜಿಯೋದಿಂದ ಏರ್‌ಟೆಲ್‌ಗೆ ಪೋರ್ಟ್ ಮಾಡಲು ತಂದೆ ಅವಕಾಶ ನೀಡದಿದ್ದ ವಿಚಾರವೂ ಕುಟುಂಬದೊಳಗಿನ ಕಲಹಕ್ಕೆ ಕಾರಣವಾಗಿತ್ತು ಎನ್ನಲಾಗಿದೆ. ಈ ಎರಡೂ ವಿಚಾರಗಳ ಬಗ್ಗೆ ನಡೆದ ತೀವ್ರ ವಾಗ್ವಾದವೇ ಫೆಬ್ರವರಿ 11ರಂದು ನಡೆದ ಭೀಕರ ಕೊಲೆಗೆ ಕಾರಣವಾಯಿತು ಎಂದು ತನಿಖೆ ವೇಳೆ ಬೆಳಕಿಗೆ ಬಂದಿದೆ.

ಪ್ರಕರಣ ಸಂಬಂಧ ಪೊಲೀಸರು ಸುಮಾರು 500 ಪುಟಗಳ ಚಾರ್ಜ್‌ಶೀಟ್ ಸಲ್ಲಿಸಿದ್ದು, 40ಕ್ಕೂ ಹೆಚ್ಚು ಸಾಕ್ಷಿಗಳ ಹೇಳಿಕೆಗಳು ಹಾಗೂ ಫಾರೆನ್ಸಿಕ್ ವರದಿಗಳನ್ನು ಸೇರಿಸಿದ್ದಾರೆ. ಆರೋಪಿಯ ಬಟ್ಟೆ ಮತ್ತು ದೇಹದಲ್ಲಿ ಪತ್ತೆಯಾದ ರಕ್ತದ ಕಲೆಗಳು ಮೃತ ಪೋಷಕರದ್ದೇ ಎಂಬುದು ಪ್ರಯೋಗಾಲಯ ಪರೀಕ್ಷೆಯಲ್ಲಿ ದೃಢಪಟ್ಟಿದೆ.

ಬಿ.ಕೆ. ಹರಿಪ್ರಸಾದ್‌ಗೆ ಕೆಪಿಸಿಸಿ ಸಾರಥ್ಯ: ಸಚಿವ ಸ್ಥಾನ ಬದಲು ಪಕ್ಷ ಸಂಘಟನೆಯ ಹೊಣೆ

ಬೆಂಗಳೂರು: ಕರ್ನಾಟಕ ಕಾಂಗ್ರೆಸ್ ಸಂಘಟನೆಯಲ್ಲಿ ಮಹತ್ವದ ಬೆಳವಣಿಗೆ ನಡೆದಿದ್ದು, ಹಿರಿಯ ನಾಯಕ ಹಾಗೂ ವಿಧಾನಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಅವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಲು ಕಾಂಗ್ರೆಸ್ ಹೈಕಮಾಂಡ್ ತೀರ್ಮಾನಿಸಿದೆ. ಈ ಕುರಿತು ಅಧಿಕೃತ ಘೋಷಣೆ ಶೀಘ್ರದಲ್ಲೇ ಹೊರಬೀಳುವ ಸಾಧ್ಯತೆ ಇದೆ.

ಡಿ.ಕೆ. ಶಿವಕುಮಾರ್ ನೇತೃತ್ವದ ನೂತನ ಸರ್ಕಾರದಲ್ಲಿ ಬಿ.ಕೆ. ಹರಿಪ್ರಸಾದ್ ಅವರಿಗೆ ಸಚಿವ ಸ್ಥಾನ ಸಿಗಲಿದೆ ಎಂಬ ನಿರೀಕ್ಷೆ ಇತ್ತು. ಆದರೆ ಕೊನೆಯ ಕ್ಷಣದಲ್ಲಿ ಹೈಕಮಾಂಡ್ ಅವರನ್ನು ಸರ್ಕಾರಕ್ಕಿಂತ ಪಕ್ಷ ಸಂಘಟನೆಯ ಜವಾಬ್ದಾರಿಗೆ ಆಯ್ಕೆ ಮಾಡಿದೆ.

ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಸಚಿವ ಸತೀಶ್ ಜಾರಕಿಹೊಳಿ ಹೆಸರು ಕೂಡ ಬಲವಾಗಿ ಕೇಳಿಬಂದಿತ್ತು. ಆದರೆ ಅವರ ಆಯ್ಕೆಗೆ ಪಕ್ಷದೊಳಗಿನ ಒಂದು ಬಣ ವಿರೋಧ ವ್ಯಕ್ತಪಡಿಸಿದ್ದ ಹಿನ್ನೆಲೆಯಲ್ಲಿ ಹೈಕಮಾಂಡ್ ಬಿ.ಕೆ. ಹರಿಪ್ರಸಾದ್ ಪರ ಒಲವು ತೋರಿದೆ ಎನ್ನಲಾಗಿದೆ.

ಸದ್ಯ ವಿಧಾನಪರಿಷತ್ ಸದಸ್ಯರಾಗಿರುವ ಹರಿಪ್ರಸಾದ್ ಅವರು ಕಾಂಗ್ರೆಸ್ ಸಂಘಟನೆ ಹಾಗೂ ರಾಷ್ಟ್ರೀಯ ರಾಜಕಾರಣದಲ್ಲಿ ದೀರ್ಘ ಅನುಭವ ಹೊಂದಿದ್ದಾರೆ. ಪಕ್ಷವನ್ನು ಬಲಪಡಿಸುವ ಉದ್ದೇಶದಿಂದಲೇ ಅವರಿಗೆ ಈ ಜವಾಬ್ದಾರಿ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಇದರ ಜೊತೆಗೆ ಹಿಂದುಳಿದ ವರ್ಗಗಳಿಗೆ ಪಕ್ಷದಲ್ಲಿ ಹೆಚ್ಚಿನ ಪ್ರಾತಿನಿಧ್ಯ ಮತ್ತು ಸ್ಥಾನಮಾನ ನೀಡುವ ಉದ್ದೇಶವೂ ಈ ನಿರ್ಧಾರದ ಹಿಂದೆ ಇದೆ ಎನ್ನಲಾಗಿದೆ. ಡಿ.ಕೆ. ಶಿವಕುಮಾರ್ ಅವರ ಪ್ರಮಾಣವಚನ ಸಮಾರಂಭದ ಬಳಿಕ ಈ ಕುರಿತು ಅಧಿಕೃತ ಪ್ರಕಟಣೆ ಹೊರಬೀಳುವ ಸಾಧ್ಯತೆ ಇದೆ.

error: Content is protected !!