Home Blog

ಹರಿಹರ ಪಂಚಮಸಾಲಿ ಪೀಠದಲ್ಲಿ ಹೈಡ್ರಾಮಾ: ವಚನಾನಂದ ಶ್ರೀಗಳ ಉಚ್ಛಾಟನೆಗೆ ಟ್ರಸ್ಟಿಗಳ ನಿರ್ಧಾರ

ದಾವಣಗೆರೆ: ಹರಿಹರ ಪಂಚಮಸಾಲಿ ಪೀಠದಲ್ಲಿ ನಡೆದ ಬೆಳವಣಿಗೆ ಭಾರೀ ಚರ್ಚೆಗೆ ಕಾರಣವಾಗಿದ್ದು, ʻಲೆಕ್ಕ ಕೊಡಿʼ ಅಭಿಯಾನ ತೀವ್ರಗೊಂಡ ಹಿನ್ನೆಲೆ ವಚನಾನಂದ ಸ್ವಾಮೀಜಿ ಅವರನ್ನು ಪೀಠದಿಂದ ಉಚ್ಛಾಟನೆ ಮಾಡಲು ಟ್ರಸ್ಟಿಗಳು ನಿರ್ಧಾರ ಕೈಗೊಂಡಿದ್ದಾರೆ.

ಇಂದು ನಡೆದ ಟ್ರಸ್ಟಿಗಳ ಸಭೆಯಲ್ಲಿ ಒಟ್ಟು 15 ಸದಸ್ಯರ ಪೈಕಿ 13 ಮಂದಿ ಭಾಗವಹಿಸಿ ಈ ನಿರ್ಣಯ ಕೈಗೊಂಡಿದ್ದಾರೆ. ಮಠದ ಟ್ರಸ್ಟಿಗಳ ನಿರ್ಧಾರವನ್ನು ಟ್ರಸ್ಟಿ ಬಸವರಾಜ್ ದಿಂಡೂರು ಮಾಧ್ಯಮಗಳಿಗೆ ದೃಢಪಡಿಸಿದ್ದಾರೆ.

ಪೀಠಕ್ಕೆ ಸರ್ಕಾರದಿಂದ 2008ರಿಂದ ಬಂದ ಅನುದಾನ ಹಾಗೂ ಭಕ್ತರ ದೇಣಿಗೆ ಹಣ ದುರ್ಬಳಕೆಗೊಂಡಿದೆ ಎಂಬ ಆರೋಪಗಳು ಕೇಳಿಬಂದಿವೆ. ಪ್ರಧಾನ ಧರ್ಮಧರ್ಶಿ ಬಿ.ಸಿ. ಉಮಾಪತಿ ಮತ್ತು ಟ್ರಸ್ಟಿ ಚಂದ್ರಶೇಖರ್ ಪೂಜಾರ್ ಸೇರಿದಂತೆ ಕೆಲವರ ವಿರುದ್ಧ ಹಣ ದುರ್ಬಳಕೆ ಆರೋಪಗಳು ಹೊರಬಿದ್ದಿವೆ. ಇದೇ ವಿಚಾರವಾಗಿ ಕಳೆದ ಕೆಲ ದಿನಗಳ ಹಿಂದೆ ನಡೆದ ಸಭೆಯಲ್ಲಿ ಗಲಾಟೆ ಉಂಟಾಗಿ ಆಡಳಿತಾಧಿಕಾರಿ ರಾಜಕುಮಾರ್ ಮೇಲೆ ಹಲ್ಲೆ ನಡೆದಿತ್ತು ಎಂಬ ಆರೋಪವೂ ಕೇಳಿಬಂದಿತ್ತು. ಇದರಿಂದಲೇ ʻಲೆಕ್ಕ ಕೊಡಿʼ ಅಭಿಯಾನ ಶುರುವಾಗಿದೆ.

ಈ ನಡುವೆ, ಪೀಠದ ಮುಂದೆ ಭಕ್ತರು ದೊಡ್ಡ ಸಂಖ್ಯೆಯಲ್ಲಿ ಸೇರಿ ಆಕ್ರೋಶ ವ್ಯಕ್ತಪಡಿಸಿದರು. ಭಕ್ತರು ಮತ್ತು ಟ್ರಸ್ಟಿಗಳ ನಡುವೆ ತೀವ್ರ ವಾಗ್ವಾದ ನಡೆಯುವುದರಿಂದ ಮಠದ ಆವರಣದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಯಿತು.

ಸ್ಥಿತಿಗತಿಯನ್ನು ಗಮನದಲ್ಲಿಟ್ಟುಕೊಂಡು, ಮುಂಜಾಗ್ರತಾ ಕ್ರಮವಾಗಿ ತಹಶೀಲ್ದಾರ್ ಸಂತೋಷ್ ಕುಮಾರ್ ಅವರು ಕಲಂ 163 ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಿದರು. ಆದರೂ ಮಠದ ಗೇಟ್ ಬಳಿ ಭಕ್ತರು ಪ್ರತಿಭಟನೆ ಮುಂದುವರಿಸಿದ್ದು, ಈ ವೇಳೆ 100ಕ್ಕೂ ಹೆಚ್ಚು ಜನರನ್ನು ಪೊಲೀಸರು ವಶಕ್ಕೆ ಪಡೆದರು. ಇದೇ ವೇಳೆ ಸಭೆ ನಡೆಸಿದ ಟ್ರಸ್ಟಿಗಳು ವಚನಾನಂದ ಶ್ರೀಗಳನ್ನು ಉಚ್ಛಾಟನೆ ಮಾಡುವ ಅಂತಿಮ ನಿರ್ಧಾರ ಕೈಗೊಂಡರು.

ಈ ಕುರಿತು ಟ್ರಸ್ಟಿ ಬಾವಿ ಬೆಟ್ಟಪ್ಪ ಪ್ರತಿಕ್ರಿಯಿಸಿ, “ಸ್ವಾಮೀಜಿಗಳಿಗೆ ಮಾರ್ಚ್ 24ರವರೆಗೆ ಗಡುವು ನೀಡಲಾಗಿತ್ತು. ಆದರೆ ಯಾವುದೇ ಸ್ಪಷ್ಟ ನಿರ್ಧಾರ ಕೈಗೊಳ್ಳದ ಹಿನ್ನೆಲೆ ಉಚ್ಛಾಟನೆ ಮಾಡಲಾಗಿದೆ. ಅವರು ಶ್ವಾಸ ಪೀಠದಲ್ಲಿರಬೇಕೋ ಅಥವಾ ಹರಿಹರ ಪಂಚಮಸಾಲಿ ಪೀಠದಲ್ಲಿರಬೇಕೋ ಎಂಬುದರ ಬಗ್ಗೆ ಗೊಂದಲವಿತ್ತು. ಹೀಗಾಗಿ ಈ ಕ್ರಮ ತೆಗೆದುಕೊಳ್ಳಲಾಗಿದೆ. ಸ್ವಾಮೀಜಿಗಳು ಗೌರವಯುತವಾಗಿ ಮಠವನ್ನು ತೊರೆಯಬೇಕು” ಎಂದು ಹೇಳಿದ್ದಾರೆ.

ಜಯ ಮೃತ್ಯುಂಜಯ ಸ್ವಾಮೀಜಿ ಪ್ರಕರಣಕ್ಕೆ ಟ್ವಿಸ್ಟ್ : ಲೈಂಗಿಕ ದೌರ್ಜನ್ಯವೇ ಎಸಗಿಲ್ಲ ಎಂದ ಮಹಿಳೆ!

ಬೆಂಗಳೂರು: ಬಸವಜಯ ಮೃತ್ಯುಂಜಯ ಸ್ವಾಮೀಜಿ ವಿರುದ್ಧದ ಲೈಂಗಿಕ ಕಿರುಕುಳ ಆರೋಪ ಪ್ರಕರಣವು ಇದೀಗ ಹೊಸ ತಿರುವು ಪಡೆದಿದೆ. ಸ್ವಾಮೀಜಿಗಳ ವಿರುದ್ಧ ಆರೋಪ ಮಾಡಿದ್ದ ಮಹಿಳೆ ಇದೀಗ ಯು-ಟರ್ನ್ ಹೊಡೆದಿದ್ದಾರೆ.

ವಿಡಿಯೋ ರಿಲೀಸ್ ಮಾಡಿರುವ ಮಾಡಿರುವ ಅವರು, ನಾನು ಯಾವುದೇ ರೀತಿಯ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿಲ್ಲ. ನನ್ನ ಹಾಗೂ ಸ್ವಾಮೀಜಿಗಳ ನಡುವೆ ಗುರು–ಭಕ್ತಿಯ ಸಂಬಂಧ ಮಾತ್ರವಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ನನ್ನ ಹೆಸರಿನಲ್ಲಿ ಯಾರೋ ದೂರು ದಾಖಲಿಸಿದ್ದಾರೆ. ಅದಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ಏಪ್ರಿಲ್ 6ರಂದು ನೀಡಲಾಗಿದೆ ಎನ್ನಲಾಗುತ್ತಿರುವ ದೂರು ಸುಳ್ಳಾಗಿದೆ. ಅದನ್ನು ಯಾರೂ ನಂಬಬೇಡಿ ಎಂದು  ಹೇಳಿದ್ದಾರೆ.

ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ತಿಳಿಸಿರುವ ಮಹಿಳೆ, ನಾಲ್ಕು ದಿನಗಳ ಬಳಿಕ ಸಂಪೂರ್ಣ ಮಾಹಿತಿ ನೀಡುತ್ತೇನೆ ಎಂದು ತಿಳಿಸಿದ್ದಾರೆ.

ಹಿರಿಯ ಶಾಸಕರು ಬಹಿರಂಗವಾಗಿ ಸಚಿವ ಸ್ಥಾನ ಕೇಳೋದ್ರಲ್ಲಿ ತಪ್ಪಿಲ್ಲ: ಸಚಿವ ಪರಮೇಶ್ವರ್

ಬೆಂಗಳೂರು: ಹಿರಿಯ ಶಾಸಕರು ಸಚಿವ ಸ್ಥಾನ ಕೇಳುವುದು ತಪ್ಪಲ್ಲ, ಅದು ಗ್ಯಾಂಬ್ಲಿಂಗ್ ಅಲ್ಲ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ಎರಡು–ಮೂರು ಬಾರಿ ಗೆದ್ದಿರುವ ಶಾಸಕರು ಸಚಿವರಾಗಲು ಸಮರ್ಥರು. ಹೀಗಾಗಿ ಸಚಿವ ಸ್ಥಾನ ಕೇಳುವುದರಲ್ಲಿ ತಪ್ಪೇನಿಲ್ಲ. ಆದರೆ ಅಂತಿಮ ತೀರ್ಮಾನ ಮುಖ್ಯಮಂತ್ರಿಯವರೂ ಹಾಗೂ ಹೈಕಮಾಂಡ್‌ನದ್ದೇ,” ಎಂದು ಹೇಳಿದರು.

ಶಾಸಕರು ತಮ್ಮ ಬೇಡಿಕೆಯನ್ನು ಬಹಿರಂಗವಾಗಿ ವ್ಯಕ್ತಪಡಿಸಬಹುದು. ಅದನ್ನು ಗ್ಯಾಂಬ್ಲಿಂಗ್ ಎಂದು ಕರೆಯುವುದು ಸರಿಯಲ್ಲ. ನಾಯಕತ್ವ ಅಥವಾ ಸಂಪುಟ ಪುನರ್‌ರಚನೆ ಬಗ್ಗೆ ತೀರ್ಮಾನ ಕೈಗೊಳ್ಳುವುದು ಹೈಕಮಾಂಡ್ ಹೊಣೆ. ಎಲ್ಲ ವಿಚಾರಗಳನ್ನೂ ಹೈಕಮಾಂಡ್ ಗಮನದಲ್ಲಿಟ್ಟುಕೊಂಡಿದೆ ಎಂದು ತಿಳಿಸಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಸ್ಥಾನ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಈಗ ಸಂಪುಟ ಪುನರ್‌ರಚನೆ ಬಗ್ಗೆ ಮಾತ್ರ ಚರ್ಚೆ ನಡೆಯುತ್ತಿದೆ. ಅಧ್ಯಕ್ಷ ಸ್ಥಾನ ವಿಚಾರವನ್ನು ಹೈಕಮಾಂಡ್ ನಿರ್ಧರಿಸುತ್ತದೆ. ವಿವಿಧ ನಾಯಕರಿಂದ ಮಾಹಿತಿ ಪಡೆದು ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದರು.

ದಾವಣಗೆರೆ ರಾಜಕೀಯ ಬೆಳವಣಿಗೆಗಳ ಕುರಿತು ಮಾತನಾಡಿದ ಅವರು, ಜಬ್ಬಾರ್ ಟಿಕೆಟ್ ಕೇಳಿದ್ದರು, ಆದರೆ ಸಿಗಲಿಲ್ಲ. ಬಳಿಕ ಅವರು ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಕೆಲವು ಮುಸ್ಲಿಂ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದರೆ ಡಿ.ಕೆ. ಶಿವಕುಮಾರ್ ಹೊಸ ಘಟಕ ರಚನೆ ಮಾಡುವ ಸಾಧ್ಯತೆ ಇದೆ ಎಂದು ಹೇಳಿದರು.

ಜಮೀರ್ ಅಹ್ಮದ್ ಅವರನ್ನು ದಾವಣಗೆರೆಯಲ್ಲಿ ಪ್ರಚಾರ ಮಾಡಲು ನಾನು ಕೇಳಿದ್ದೆ. ಆದರೆ ನನಗೆ ಕೇರಳ ಉಸ್ತುವಾರಿ ಇದ್ದುದರಿಂದ ಅವರು ಮೊದಲು ನಿರಾಕರಿಸಿದ್ದರು. ಬಳಿಕ ಸಿಎಂ ಸೂಚನೆಯಂತೆ ಬಾಗಲಕೋಟೆಗೆ ಬಂದು ಪ್ರಚಾರ ನಡೆಸಿದರು,” ಎಂದು ವಿವರಿಸಿದರು.

ಬಾಣಂತಿ, ಮಗು ಸಾವು: ಬಿಮ್ಸ್ ವೈದ್ಯರ ನಿರ್ಲಕ್ಷ್ಯ ಆರೋಪ, ಕುಟುಂಬದ ಆಕ್ರೋಶ!

ಬೆಳಗಾವಿ: ಬಿಮ್ಸ್ ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯದಿಂದ ಬಾಣಂತಿ ಹಾಗೂ ಗರ್ಭದಲ್ಲಿದ್ದ ನವಜಾತ ಶಿಶು ಸಾವನ್ನಪ್ಪಿದ ಆರೋಪ ಕೇಳಿಬಂದಿದೆ.

ತುರಮರಿ ಗ್ರಾಮದ 21 ವರ್ಷದ ಈರಮ್ಮ ಶಿಗಿಹಳ್ಳಿ ಅವರನ್ನು ಏಪ್ರಿಲ್ 10ರಂದು ಮಧ್ಯಾಹ್ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ದಾಖಲಾದ ನಂತರ ಸಮರ್ಪಕ ಚಿಕಿತ್ಸೆ ನೀಡಲಿಲ್ಲ ಎಂದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಂದು ಮಧ್ಯರಾತ್ರಿ ಸುಮಾರು 1.30ರ ಸುಮಾರಿಗೆ ಈರಮ್ಮ ಹಾಗೂ ಅವರ ಗರ್ಭದಲ್ಲಿದ್ದ ಹೆಣ್ಣು ಶಿಶು ಮೃತಪಟ್ಟಿದ್ದಾರೆ. ವೈದ್ಯರ ನಿರ್ಲಕ್ಷ್ಯವೇ ಸಾವಿಗೆ ಕಾರಣ ಎಂದು ಆರೋಪಿಸಿರುವ ಕುಟುಂಬಸ್ಥರು ನ್ಯಾಯಕ್ಕಾಗಿ ಆಗ್ರಹಿಸಿ ಕಣ್ಣೀರಿಟ್ಟಿದ್ದಾರೆ.

ಘಟನೆಯ ಮಾಹಿತಿ ತಿಳಿದ ತಕ್ಷಣ ಎಪಿಎಂಸಿ ಸಿಪಿಐ ಉಸ್ಮಾನ್ ಅವಟಿ ಮತ್ತು ಪಿಎಸ್ಐ ಸರ್ದಾರ್ ಮುಟ್ಟತರು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಘಟನೆ ಎಪಿಎಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ವಿಧಾನಸೌಧಕ್ಕೆ ಮರಳುವುದು ದೇವರ ಇಚ್ಛೆ: ಕೇಂದ್ರ ಸಚಿವ ಕುಮಾರಸ್ವಾಮಿ

ಬೆಂಗಳೂರು: ವಿಧಾನಸೌಧಕ್ಕೆ ಮತ್ತೆ ಮರಳುವುದು ಭಗವಂತನ ಇಚ್ಛೆ ಹಾಗೂ ಜನರ ಆಶೀರ್ವಾದದ ಮೇಲೆ ಅವಲಂಬಿತವಾಗಿದೆ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ತಿಳಿಸಿದ್ದಾರೆ.

ಎರಡು ವರ್ಷಗಳ ಬಳಿಕ ಕೈಗಾರಿಕಾ ಸಚಿವರ ಜೊತೆ ಸಭೆ ನಡೆಸಲು ವಿಧಾನಸೌಧಕ್ಕೆ ಆಗಮಿಸಿದ್ದ ವೇಳೆ, ಮಾಧ್ಯಮ ಪ್ರತಿನಿಧಿಗಳು ಮತ್ತೆ ಯಾವಾಗ ವಿಧಾನಸೌಧಕ್ಕೆ ಬರುತ್ತೀರಿ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಅವರು, ಭವಿಷ್ಯವನ್ನು ಭಗವಂತನೇ ನಿರ್ಧರಿಸುತ್ತಾನೆ. ಜನರ ಆಶೀರ್ವಾದ ಹಾಗೂ ಭಗವಂತನ ಇಚ್ಛೆಯಂತೆ ನಾವು ಕೆಲಸ ಮಾಡಬೇಕಾಗುತ್ತದೆ ಎಂದು ಹೇಳಿದರು.

ಮುಂದಿನ ದಿನಗಳಲ್ಲಿ ಏನಾಗುತ್ತದೆ ಎಂಬುದು ಭಗವಂತನ ನಿರ್ಧಾರ ಎಂದು ಹೇಳಿದ ಅವರು, ಅದನ್ನು ಕಾದು ನೋಡಬೇಕಿದೆ ಎಂದು ತಿಳಿಸಿದ್ದಾರೆ.

ಇದೇ ವೇಳೆ, ನಾವು ಮೈತ್ರಿ ಪಕ್ಷಗಳ ಹೊಂದಾಣಿಕೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದೇವೆ. ದೆಹಲಿಯ ಬಿಜೆಪಿ ಹೈಕಮಾಂಡ್ ಹಾಗೂ ರಾಜ್ಯ ನಾಯಕರು ಒಟ್ಟಾಗಿ ಕೆಲಸ ಮಾಡುತ್ತಿದ್ದು, ಜನರ ಆಶೀರ್ವಾದದೊಂದಿಗೆ ಮುಂದಿನ ದಿನಗಳಲ್ಲಿ ವಿಧಾನಸೌಧಕ್ಕೆ ಮರಳಲು ಪ್ರಯತ್ನಿಸುತ್ತೇವೆ ಎಂದು ಹೇಳಿದರು.

ಶಾಸಕರು ಸಚಿವ ಸ್ಥಾನ ಕೇಳುವುದರಲ್ಲಿ ತಪ್ಪಿಲ್ಲ, ಅದು ಅವರ ಹಕ್ಕು: ಬಸವರಾಜ ರಾಯರೆಡ್ಡಿ

ಕೊಪ್ಪಳ: ಸಚಿವ ಸ್ಥಾನಕ್ಕಾಗಿ ಶಾಸಕರು ದೆಹಲಿಗೆ ತೆರಳಿರುವ ವಿಚಾರ ತಿಳಿದಿದ್ದು, ಅವರಿಗೆ ಶುಭವಾಗಲಿ. ಸಚಿವ ಸ್ಥಾನ ಕೇಳುವುದು ತಪ್ಪಲ್ಲ, ಅದು ಶಾಸಕರ ಹಕ್ಕು ಎಂದು ಶಾಸಕ ಬಸವರಾಜ ರಾಯರೆಡ್ಡಿ ತಿಳಿಸಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಂದಿನ ಎರಡು ವರ್ಷಗಳವರೆಗೆ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿ ಮುಂದುವರೆಯಲಿದ್ದಾರೆ. ಅವರ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರ ಉತ್ತಮ ಆಡಳಿತ ನೀಡುತ್ತಿದೆ ಎಂದು ಹೇಳಿದರು.

ಸಂಪುಟ ಪುನರ್‌ರಚನೆ ಯಾವಾಗ ನಡೆಯಬೇಕು ಎಂಬುದು ಪಕ್ಷದ ವರಿಷ್ಠರು ಹಾಗೂ ಮುಖ್ಯಮಂತ್ರಿಯವರ ನಿರ್ಧಾರಕ್ಕೆ ಒಳಪಟ್ಟದ್ದು ಎಂದು ತಿಳಿಸಿದ ಅವರು, ಮುಂದಿನ ಸಂಪುಟ ವಿಸ್ತರಣೆಯಲ್ಲಿ ಸಚಿವರಾಗುವವರಿಗೆ ಶುಭಾಶಯಗಳು,” ಎಂದರು.

“ನನ್ನನ್ನು ಸಚಿವನಾಗಲು ಹೇಳಿದರೆ ಆಗುತ್ತೇನೆ, ಬೇಡ ಎಂದರೆ ಬಿಡುತ್ತೇನೆ. 2028ರಲ್ಲಿ ಮತ್ತೆ ನಮ್ಮದೇ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ಗ್ಯಾರಂಟಿ ಯೋಜನೆಗಳಿಂದ ಜನರಿಗೆ ಹೆಚ್ಚಿನ ಪ್ರಯೋಜನವಾಗಿದೆ. ಆದ್ದರಿಂದ ಮುಂದಿನ ಚುನಾವಣೆಯಲ್ಲೂ ಕಾಂಗ್ರೆಸ್ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರ ಮಹಿಳಾ ಮೀಸಲಾತಿ ಮಸೂದೆ ತರಲು ಮುಂದಾಗಿರುವುದನ್ನು ಸ್ವಾಗತಿಸಿದ ಅವರು, ಮಹಿಳೆಗಳಿಗೆ ಸೂಕ್ತ ಸ್ಥಾನಗಳು ಸಿಗಬೇಕು. ಆದರೆ ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆ ಪ್ರಕ್ರಿಯೆಯನ್ನು ತ್ವರಿತವಾಗಿ ಕೈಗೊಳ್ಳುವುದು ಸರಿಯಲ್ಲ,” ಎಂದು ಹೇಳಿದರು.

ಈ ವಿಚಾರದಲ್ಲಿ ಪ್ರಧಾನಿ ಎಲ್ಲ ರಾಜಕೀಯ ಪಕ್ಷಗಳ ನಾಯಕರನ್ನು ಕರೆದು ಚರ್ಚೆ ನಡೆಸಬೇಕು. ಉತ್ತರ ಭಾರತಕ್ಕೆ ಹೆಚ್ಚು ಸ್ಥಾನ ನೀಡಿ, ದಕ್ಷಿಣಕ್ಕೆ ಕಡಿಮೆ ಸ್ಥಾನ ನೀಡುವಂತಾಗಬಾರದು ಎಂದು ಎಚ್ಚರಿಸಿದರು.

ತುಂಗಭದ್ರೆಯಲ್ಲಿ ಅಕ್ರಮ ಮರಳು ದಂಧೆ: ಪೊಲೀಸರ ದಾಳಿ! ಎಸ್ಪಿ ಖಡಕ್ ವಾರ್ನಿಂಗ್ ಬಳಿಕ ಟ್ರ್ಯಾಕ್ಟರ್ʼಗಳ ಸೀಜ್

0

ಗದಗ: ತುಂಗಭದ್ರಾ ನದಿಯಲ್ಲಿ ಎಗ್ಗಿಲ್ಲದೇ ಸಾಗುತ್ತಿದ್ದ ಅಕ್ರಮ ಮರಳು ದಂಧೆಗೆ ಗದಗ ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಂಡಿದೆ. ಎಸ್ಪಿ ರೋಹನ್ ಜಗದೀಶ್ ನೀಡಿದ ಖಡಕ್ ಎಚ್ಚರಿಕೆಯ ಬೆನ್ನಲ್ಲೇ ಮುಂಡರಗಿ ಪೊಲೀಸರು ಕಾರ್ಯಾಚರಣೆ ನಡೆಸಿ ಐದಕ್ಕೂ ಹೆಚ್ಚು ಟ್ರ್ಯಾಕ್ಟರ್‌ಗಳನ್ನು ವಶಕ್ಕೆ ಪಡೆದಿದ್ದಾರೆ.

ಮುಂಡರಗಿ ತಾಲೂಕಿನ ಗಂಗಾಪೂರ, ಕೊರ್ಲಹಳ್ಳಿ ಹಾಗೂ ಸಿಂಗಟಾಲೂರು ಗ್ರಾಮಗಳ ಸುತ್ತಮುತ್ತ ತುಂಗಭದ್ರಾ ನದಿಯಲ್ಲಿ ಅಕ್ರಮವಾಗಿ ಮರಳು ಸಾಗಾಟ ನಡೆಯುತ್ತಿತ್ತು. ಈ ಅಕ್ರಮ ದಂಧೆಗೆ ಸ್ಥಳೀಯ ಮಟ್ಟದಲ್ಲಿ ತಾಲೂಕು ಆಡಳಿತದ ಸಾಥ್ ಇದೆ ಎಂಬ ಆರೋಪವೂ ಕೇಳಿಬಂದಿದೆ.

ಈ ಹಿನ್ನೆಲೆಯಲ್ಲಿ ಎಚ್ಚೆತ್ತ ಎಸ್ಪಿ ರೋಹನ್ ಜಗದೀಶ್ ಅಕ್ರಮ ಮರಳು ಸಾಗಾಟವನ್ನು ಕಟ್ಟುನಿಟ್ಟಾಗಿ ತಡೆಯುವಂತೆ ಸೂಚನೆ ನೀಡಿದ್ದರು. ಅದರಂತೆ ಅಲರ್ಟ್ ಆದ ಮುಂಡರಗಿ ಪೊಲೀಸರು ದಾಳಿ ನಡೆಸಿ ಅಕ್ರಮ ಸಾಗಾಟದಲ್ಲಿ ತೊಡಗಿದ್ದ ಟ್ರ್ಯಾಕ್ಟರ್‌ಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.

ಪೊಲೀಸ್ ಇಲಾಖೆಯ ಈ ಕ್ರಮದಿಂದ ಮರಳು ಮಾಫಿಯಾಗೆ ತಾತ್ಕಾಲಿಕ ಕಡಿವಾಣ ಬಿದ್ದಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಕಠಿಣ ಕ್ರಮ ಕೈಗೊಳ್ಳುವ ಸೂಚನೆ ದೊರೆತಿದೆ.

ಜಿಲ್ಲೆಯಲ್ಲಿ ಅಕ್ರಮ ಮರಳು ದಂಧೆ ಮರುಕಳಿಸುತ್ತಿರುವುದು ಪರಿಸರ ಹಾಗೂ ಆಡಳಿತದ ಮೇಲೆ ಗಂಭೀರ ಪ್ರಶ್ನೆಗಳನ್ನು ಎತ್ತಿದೆ. ಪೊಲೀಸ್ ಇಲಾಖೆಯ ಕ್ರಮದಿಂದ ತಾತ್ಕಾಲಿಕ ತಡೆ ಕಂಡರೂ, ಶಾಶ್ವತ ಪರಿಹಾರಕ್ಕೆ ಕಟ್ಟುನಿಟ್ಟಿನ ನಿಯಂತ್ರಣ ಅಗತ್ಯ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.

ಕಾಫಿನಾಡಲ್ಲಿ ಸಿಎಂ ದಂಪತಿ: ಪತ್ನಿಯಿಂದ ಟೆಂಪಲ್ ರನ್!

ಚಿಕ್ಕಮಗಳೂರು: ಕಾಫಿನಾಡಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರಿ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದ್ದರೆ, ಅವರ ಪತ್ನಿ ಪಾರ್ವತಿ ಸಿದ್ದರಾಮಯ್ಯ ದೇವಸ್ಥಾನ ಭೇಟಿ ಮೂಲಕ ‘ಟೆಂಪಲ್ ರನ್’ ನಡೆಸಿದ್ದಾರೆ.

ಜಿಲ್ಲೆಯ ಎನ್.ಆರ್.ಪುರದಲ್ಲಿ ಸಿಎಂ ದಂಪತಿ ವಾಸ್ತವ್ಯ ಹೂಡಿದ್ದರು. ನಿನ್ನೆ ಮಧ್ಯಾಹ್ನ ಸುಮಾರು 3 ಗಂಟೆಗೆ ಪಾರ್ವತಿ ಸಿದ್ದರಾಮಯ್ಯ ಅವರು ಹೊರನಾಡಿನ ಅನ್ನಪೂರ್ಣೇಶ್ವರಿ ದೇವಾಲಯಕ್ಕೆ ಭೇಟಿ ನೀಡಿ ದರ್ಶನ ಪಡೆದರು. ಬಳಿಕ ಶೃಂಗೇರಿಗೆ ತೆರಳಿ ಶಾರದಾಂಬೆ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.

ಪೂಜೆ ನಂತರ ಶಾರದಾಂಬೆ ದೇವಸ್ಥಾನದ ಮಠದಲ್ಲೇ ವಾಸ್ತವ್ಯ ಹೂಡಿದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಎನ್.ಆರ್.ಪುರದ ಐಬಿಯಲ್ಲಿ ತಂಗಿದ್ದರು.

ಇಂದು ಎನ್.ಆರ್.ಪುರ–ಶೃಂಗೇರಿ ತಾಲೂಕಿನಲ್ಲಿ ಸುಮಾರು 38 ಕೋಟಿ ರೂ. ವೆಚ್ಚದ ಸೇತುವೆ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ, ಸಿಎಂ ದಂಪತಿ ವಾಪಸ್ಸಾಗಲಿದ್ದಾರೆ.

ಮಹಿಳಾ ಮೀಸಲಾತಿ ಅಲ್ಲ, ಕ್ಷೇತ್ರ ಮರುವಿಂಗಡಣೆ ಅಸಲಿ ಉದ್ದೇಶ: ಸೋನಿಯಾ ಗಾಂಧಿ ಆರೋಪ

0

ನವದೆಹಲಿ: ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಕೇಂದ್ರ ಸರ್ಕಾರ ಮಂಡಿಸಲು ಉದ್ದೇಶಿಸಿರುವ ಮಸೂದೆಗಳ ಹಿಂದಿರುವ ನಿಜವಾದ ಉದ್ದೇಶ ಮಹಿಳಾ ಮೀಸಲಾತಿ ಅಲ್ಲ, ಕ್ಷೇತ್ರಗಳ ಮರುವಿಂಗಡಣೆ ಎಂಬುದಾಗಿ ಕಾಂಗ್ರೆಸ್‌ ಹಿರಿಯ ನಾಯಕಿ ಸೋನಿಯಾ ಗಾಂಧಿ ಆರೋಪಿಸಿದ್ದಾರೆ.

ಕ್ಷೇತ್ರಗಳ ಮರುವಿಂಗಡಣೆ ಪ್ರಸ್ತಾಪವು ಸಂವಿಧಾನದ ಮೇಲೆ ದಾಳಿ ಸಮಾನವಾಗಿದ್ದು, ಅತ್ಯಂತ ಅಪಾಯಕಾರಿ ಎಂದು ಅವರು ಟೀಕಿಸಿದ್ದಾರೆ. ಈ ಕುರಿತು ಅವರು ಬರೆದ ಲೇಖನವನ್ನು ‘ದಿ ಹಿಂದೂ’ ಪತ್ರಿಕೆಯಲ್ಲಿ ಪ್ರಕಟಿಸಲಾಗಿದ್ದು, ಅದನ್ನು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಲೋಕಸಭೆಯ ಬಲವರ್ಧನೆಗೆ ಸಂಬಂಧಿಸಿದ ಯಾವುದೇ ಗಡಿ ನಿರ್ಣಯವು ಗಣಿತದ ಆಧಾರದಲ್ಲಷ್ಟೇ ಅಲ್ಲ, ರಾಜಕೀಯ ಸಮತೋಲನದ ದೃಷ್ಟಿಯಿಂದಲೂ ಸಮಾನವಾಗಿರಬೇಕು ಎಂದು ಒತ್ತಿ ಹೇಳಿದ್ದಾರೆ.

ಇದೇ ವೇಳೆ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಪ್ರಚಾರ ತೀವ್ರಗೊಂಡಿರುವ ಸಂದರ್ಭದಲ್ಲಿ, ಕೇಂದ್ರ ಸರ್ಕಾರ ವಿಶೇಷ ಅಧಿವೇಶನದಲ್ಲಿ ಮಂಡಿಸಲು ಬಯಸಿರುವ ಮಸೂದೆಗಳಿಗೆ ಬೆಂಬಲ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ವಿರೋಧ ಪಕ್ಷಗಳಿಗೆ ಮನವಿ ಮಾಡುತ್ತಿರುವುದನ್ನು ಅವರು ಉಲ್ಲೇಖಿಸಿದ್ದಾರೆ.

2023ರ ಸೆಪ್ಟೆಂಬರ್‌ನಲ್ಲಿ ಸಂಸತ್ತಿನಲ್ಲಿ ‘ನಾರಿ ಶಕ್ತಿ ವಂದನ ಅಧಿನಿಯಮ–2023’ನ್ನು ಸರ್ವಾನುಮತದಿಂದ ಅಂಗೀಕರಿಸಲಾಗಿತ್ತು. ಈ ಕಾಯ್ದೆಯ ಮೂಲಕ ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಮಹಿಳೆಯರಿಗೆ 33% ಮೀಸಲಾತಿ ಕಲ್ಪಿಸಲು ಸಂವಿಧಾನದ 334ಎ ವಿಧಿ ಸೇರಿಸಲಾಗಿದೆ. ಆದರೆ ಈ ಮೀಸಲಾತಿ ಮುಂದಿನ ಜನಗಣತಿ ಹಾಗೂ ಕ್ಷೇತ್ರ ಮರುವಿಂಗಡಣೆಯ ನಂತರವೇ ಜಾರಿಗೆ ಬರಲಿದೆ.

ವಿಪಕ್ಷಗಳು ಈ ಷರತ್ತನ್ನು ಕೇಳಿರಲಿಲ್ಲ ಎಂದು ಸೋನಿಯಾ ಗಾಂಧಿ ಹೇಳಿದ್ದಾರೆ. ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು 2024ರ ಲೋಕಸಭಾ ಚುನಾವಣೆಯಿಂದಲೇ ಮೀಸಲಾತಿ ಜಾರಿಗೆ ತರಬೇಕು ಎಂದು ಒತ್ತಾಯಿಸಿದ್ದರು. ಆದರೆ ಸರ್ಕಾರ ಅದನ್ನು ಒಪ್ಪಲಿಲ್ಲ ಎಂದು ಅವರು ಆರೋಪಿಸಿದ್ದಾರೆ.

ಈಗ 2029ರಿಂದ ಮಹಿಳಾ ಮೀಸಲಾತಿ ಜಾರಿಗೆ ತರಲು 334ಎ ವಿಧಿಯಲ್ಲಿ ತಿದ್ದುಪಡಿ ಮಾಡಲು ಸರ್ಕಾರ ಮುಂದಾಗಿದೆ ಎಂಬ ಮಾಹಿತಿ ದೊರೆತಿದೆ. “ಪ್ರಧಾನಿ ಯೂ-ಟರ್ನ್ ತೆಗೆದುಕೊಳ್ಳಲು 30 ತಿಂಗಳು ಏಕೆ ಬೇಕಾಯಿತು? ವಿಶೇಷ ಅಧಿವೇಶನ ಕರೆಯಲು ಇನ್ನೂ ಕೆಲವು ವಾರ ಕಾಯಬಹುದಿರಲಿಲ್ಲವೇ?” ಎಂದು ಪ್ರಶ್ನಿಸಿದ್ದಾರೆ.

ಏಪ್ರಿಲ್ 29ರಂದು ಪಶ್ಚಿಮ ಬಂಗಾಳದ ಕೊನೆಯ ಹಂತದ ಮತದಾನ ಮುಗಿದ ಬಳಿಕ ಹೊಸ ಪ್ರಸ್ತಾಪಗಳ ಕುರಿತು ಚರ್ಚಿಸಲು ಸರ್ವಪಕ್ಷ ಸಭೆ ಕರೆಯುವಂತೆ ವಿಪಕ್ಷ ನಾಯಕರು ಮೂರು ಬಾರಿ ಪತ್ರ ಬರೆದಿದ್ದರೂ, ಸರ್ಕಾರ ಅದನ್ನು ನಿರಾಕರಿಸಿದೆ ಎಂದು ತಿಳಿಸಿದ್ದಾರೆ.

ಇದರ ಬದಲು ಪ್ರಧಾನಿ ಸಾರ್ವಜನಿಕ ಮನವಿ ಹಾಗೂ ಸಭೆಗಳಲ್ಲಿ ನಿರತರಾಗಿದ್ದು, ಇದು ಏಕಪಕ್ಷೀಯ ನಿರ್ಧಾರಗಳ ಸಂಕೇತವಾಗಿದೆ ಎಂದು ಸೋನಿಯಾ ಗಾಂಧಿ ಟೀಕಿಸಿದ್ದಾರೆ.

ಇರಾನ್ ಗೆ ದೊಡ್ಡ ಹೊಡೆತ: ಇಂದಿನಿಂದ ಬಂದರುಗಳಿಗೆ ದಿಗ್ಬಂಧನ ವಿಧಿಸಿದ ಅಮೆರಿಕ!

0

ಅಮೆರಿಕ: ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೂಚನೆಯ ಮೇರೆಗೆ ಇರಾನ್ ಬಂದರುಗಳಿಗೆ ದಿಗ್ಬಂಧನ ಹೇರಲಾಗುತ್ತಿದೆ ಎಂದು ಅಮೆರಿಕ ಸೇನೆ ಘೋಷಿಸಿದೆ. ಈ ನಿರ್ಧಾರದ ಪರಿಣಾಮವಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯಾಗಿದೆ.

ಯುನೈಟೆಡ್ ಸ್ಟೇಟ್ಸ್ ಸೆಂಟ್ರಲ್ ಕಮಾಂಡ್ ನೀಡಿದ ಮಾಹಿತಿ ಪ್ರಕಾರ, ಈ ನಿರ್ಬಂಧವು ಇರಾನ್‌ನ ಬಂದರುಗಳು, ಕರಾವಳಿ ಪ್ರದೇಶಗಳು ಹಾಗೂ ಅದರ ಸುತ್ತಮುತ್ತ ಸಂಚರಿಸುವ ಎಲ್ಲಾ ದೇಶಗಳ ಹಡಗುಗಳಿಗೆ ಅನ್ವಯವಾಗುತ್ತದೆ.

ಎಕ್ಸ್ (X) ಜಾಲತಾಣದಲ್ಲಿ ಪ್ರಕಟಿಸಿದ ಹೇಳಿಕೆಯಲ್ಲಿ, ಏಪ್ರಿಲ್ 13ರಂದು ಬೆಳಗ್ಗೆ 10 ಗಂಟೆಯಿಂದ ಇರಾನ್ ಬಂದರುಗಳಿಗೆ ಪ್ರವೇಶಿಸುವ ಮತ್ತು ನಿರ್ಗಮಿಸುವ ಎಲ್ಲಾ ಹಡಗುಗಳ ಸಂಚಾರವನ್ನು ನಿಯಂತ್ರಿಸಲಾಗುತ್ತದೆ ಎಂದು ತಿಳಿಸಿದೆ.

ಅರೇಬಿಯನ್ ಕೊಲ್ಲಿ ಮತ್ತು ಒಮಾನ್ ಕೊಲ್ಲಿಯಲ್ಲಿರುವ ಇರಾನ್ ಬಂದರುಗಳಿಗೂ ಈ ನಿಯಮ ಅನ್ವಯವಾಗಲಿದ್ದು, ಎಲ್ಲ ದೇಶಗಳ ಹಡಗುಗಳಿಗೆ ಸಮಾನವಾಗಿ ನಿರ್ಬಂಧ ಜಾರಿಗೊಳಿಸಲಾಗುತ್ತದೆ ಎಂದು ಹೇಳಿದೆ. ಆದರೆ, ಹಾರ್ಮುಜ್ ಜಲಸಂಧಿಯಿಂದ ಇರಾನಿನ ಹೊರಗಿನ ಬಂದರುಗಳಿಗೆ ಸಾಗುವ ಹಡಗುಗಳ ಸಂಚಾರಕ್ಕೆ ಅಡ್ಡಿಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಇದಲ್ಲದೆ, ಒಮಾನ್ ಕೊಲ್ಲಿ ಮತ್ತು ಹಾರ್ಮುಜ್ ಜಲಸಂಧಿಯ ಸುತ್ತಮುತ್ತ ಕಾರ್ಯನಿರ್ವಹಿಸುವ ನೌಕಾಪಡೆಯವರು ಮ್ಯಾರಿನರ್‌ಗಳ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ, ಬ್ರಿಡ್ಜ್-ಟು-ಬ್ರಿಡ್ಜ್ ಚಾನೆಲ್ 16 ಮೂಲಕ ಅಮೆರಿಕ ನೌಕಾಪಡೆಯೊಂದಿಗೆ ಸಂಪರ್ಕದಲ್ಲಿರಲು ಸೂಚಿಸಲಾಗಿದೆ.

error: Content is protected !!