Home Blog

ದೆಹಲಿ ಸ್ಫೋಟ ಪ್ರಕರಣ: AI ಮತ್ತು ಯೂಟ್ಯೂಬ್ ಬಳಸಿ ಬಾಂಬ್ ತಯಾರಿ – NIA ತನಿಖೆಯಲ್ಲಿ ಸ್ಪೋಟಕ ಮಾಹಿತಿ ಲಭ್ಯ

ನವದೆಹಲಿ: ಕೆಂಪು ಕೋಟೆ ಪ್ರದೇಶದಲ್ಲಿ ನಡೆದ ಕಾರು ಸ್ಫೋಟ ಪ್ರಕರಣದಲ್ಲಿ ಆರೋಪಿಗಳು ಚಾಟ್‌ಜಿಪಿಟಿ ಸೇರಿದಂತೆ ಕೃತಕ ಬುದ್ಧಿಮತ್ತೆ ಉಪಕರಣಗಳು ಹಾಗೂ ಯೂಟ್ಯೂಬ್ ವಿಡಿಯೋಗಳ ಮೂಲಕ ಬಾಂಬ್ ತಯಾರಿಕೆ ಮಾಹಿತಿ ಸಂಗ್ರಹಿಸಿದ್ದರು ಎಂಬ ಗಂಭೀರ ಅಂಶ ಬೆಳಕಿಗೆ ಬಂದಿದೆ.

ಈ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (NIA) ತನಿಖೆ ನಡೆಸುತ್ತಿದ್ದು, 7,500 ಪುಟಗಳ ಚಾರ್ಜ್‌ಶೀಟ್‌ನಲ್ಲಿ ಆರೋಪಿಗಳ ಸಂಚು ವಿವರಗಳನ್ನು ಉಲ್ಲೇಖಿಸಲಾಗಿದೆ ಎಂದು ತಿಳಿದುಬಂದಿದೆ. ಆರೋಪಿಗಳಲ್ಲಿ ಕೆಲವರು ಜಾಗತಿಕ ಉಗ್ರ ಸಂಘಟನೆ ಅಲ್-ಖೈದಾ ಹಾಗೂ ಅದರ ಉಪಘಟಕ ಅನ್ಸಾರ್ ಘಜ್ವತ್-ಉಲ್-ಹಿಂದ್ ಜೊತೆ ಸಂಪರ್ಕ ಹೊಂದಿದ್ದರು ಎಂಬುದೂ ತನಿಖೆಯಲ್ಲಿ ಹೊರಬಿದ್ದಿದೆ.

ತನಿಖೆಯ ಪ್ರಕಾರ, ಆರೋಪಿಯೊಬ್ಬ “ಇನ್-ಹೌಸ್ ಎಂಜಿನಿಯರ್” ಆಗಿ ಕಾರ್ಯನಿರ್ವಹಿಸಿ ಸುಧಾರಿತ ಸ್ಫೋಟಕ ಸಾಧನ (IED) ತಯಾರಿಕೆಗೆ ತಾಂತ್ರಿಕ ನೆರವು ನೀಡಿದ್ದಾನೆ. ಈತ ಹರಿಯಾಣದ ಫರಿದಾಬಾದ್‌ನಲ್ಲಿರುವ ಖಾಸಗಿ ವಿಶ್ವವಿದ್ಯಾಲಯದ ಆವರಣದಲ್ಲಿ ಹಲವು ಬಾರಿ ತಂಗಿದ್ದನೆಂದು ತಿಳಿದುಬಂದಿದೆ.

ಬಾಂಬ್ ತಯಾರಿಕೆಗೆ ಅಮೋನಿಯಂ ನೈಟ್ರೇಟ್ ಸೇರಿದಂತೆ ಇಂಧನ ತೈಲ ಮಿಶ್ರಣಗಳನ್ನು ಬಳಸಲಾಗಿದ್ದು, ಬ್ಯಾಟರಿ ಚಾಲಿತ ಟೈಮಿಂಗ್ ಸಾಧನದ ಮೂಲಕ ಸ್ಫೋಟಕ್ಕೆ ವ್ಯವಸ್ಥೆ ಮಾಡಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಸಾಧನವನ್ನು ಅತ್ಯಂತ ಕಡಿಮೆ ಸಮಯದಲ್ಲಿ ಜೋಡಿಸಲಾಗಿದೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ.

2024ರಲ್ಲಿ ಕೆಂಪು ಕೋಟೆ ಬಳಿ ಸಂಭವಿಸಿದ ಈ ಸ್ಫೋಟದಲ್ಲಿ 11 ಮಂದಿ ಸಾವನ್ನಪ್ಪಿ, ಹಲವರು ಗಾಯಗೊಂಡಿದ್ದರು. ಸ್ಫೋಟದ ದೃಶ್ಯಗಳು ಸಿಸಿಟಿವಿಯಲ್ಲಿ ದಾಖಲಾಗಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ ಎಂದು NIA ತಿಳಿಸಿದೆ.

ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆಚಿಪ್ಪು ಸಂಗ್ರಹಕ್ಕೆ ಹೋದವರು ನೀರುಪಾಲು: ಒಂದೇ ಕುಟುಂಬದ 8 ಮಂದಿ ಸಾವು!

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆಚಿಪ್ಪು ಸಂಗ್ರಹಕ್ಕೆ ತೆರಳಿದ್ದವರು ನೀರಿನ ರಭಸಕ್ಕೆ ಸಿಲುಕಿ ಭೀಕರ ದುರಂತ ಸಂಭವಿಸಿದೆ. ಈ ಘಟನೆಯಲ್ಲಿ 8 ಮಂದಿ ಸಾವನ್ನಪ್ಪಿದ್ದು, 2 ಜನ ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ.

ಮಾಹಿತಿಯ ಪ್ರಕಾರ, ಒಟ್ಟು 14 ಜನರು ಇಂದು ಬೆಳಗ್ಗೆ ನದಿಗೆ ಕಪ್ಪೆಚಿಪ್ಪು ಸಂಗ್ರಹಿಸಲು ತೆರಳಿದ್ದರು. ಈ ವೇಳೆ ಏಕಾಏಕಿ ನದಿಯಲ್ಲಿ ನೀರಿನ ಮಟ್ಟ ಹೆಚ್ಚಾಗಿ ರಭಸವಾದ ನೀರಿನ ಸುಳಿಗೆ ಎಲ್ಲರೂ ಸಿಲುಕಿಕೊಂಡಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಘಟನೆಯಲ್ಲಿ 4 ಜನರನ್ನು ರಕ್ಷಿಸಲಾಗಿದ್ದು, ಉಳಿದವರಲ್ಲಿ 8 ಮಂದಿ ಮೃತದೇಹಗಳು ಪತ್ತೆಯಾಗಿವೆ. ಮೃತರಲ್ಲಿ ಒಬ್ಬ ಪುರುಷ ಹಾಗೂ 7 ಮಹಿಳೆಯರು ಸೇರಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ. ನಾಪತ್ತೆಯಾದ ಇಬ್ಬರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.

ಮೃತರನ್ನು ಭಟ್ಕಳದ ಶಿರಾಲಿ ಮೂಲದವರು ಎಂದು ಗುರುತಿಸಲಾಗಿದ್ದು, ಎಲ್ಲರೂ ಒಂದೇ ಕುಟುಂಬದ ಸದಸ್ಯರು ಎಂಬ ಮಾಹಿತಿ ದೊರೆತಿದೆ. ಮೃತದೇಹಗಳನ್ನು ಭಟ್ಕಳ ತಾಲೂಕು ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.

ಘಟನೆ ತಿಳಿಯುತ್ತಿದ್ದಂತೆಯೇ ಭಟ್ಕಳ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸ್ಥಳೀಯ ಮೀನುಗಾರರ ಸಹಾಯದಿಂದ ರಕ್ಷಣಾ ಕಾರ್ಯಾಚರಣೆ ಮುಂದುವರಿಸಿದ್ದಾರೆ. ಈ ದುರ್ಘಟನೆ ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಿಸಿದೆ.

ಮಹಿಳೆ ಮೇಲೆ ಅತ್ಯಾಚಾರ ಆರೋಪ? ಬಿಜೆಪಿ ಯುವ ಮೋರ್ಚಾ ಮುಖಂಡನ ಮೇಲೆ FIR ದಾಖಲು!

ಶಿವಮೊಗ್ಗ: ಭದ್ರಾವತಿ ಬಿಜೆಪಿ ಯುವ ಮೋರ್ಚಾ ಮುಖಂಡ ಹಾಗೂ ವಕೀಲ ಭರತ್ ಬಿ.ಎಸ್ ವಿರುದ್ಧ ಅತ್ಯಾಚಾರ ಹಾಗೂ ಬ್ಲ್ಯಾಕ್‌ಮೇಲ್ ಆರೋಪ ಕೇಳಿಬಂದಿದ್ದು, ಈ ಸಂಬಂಧ ಭದ್ರಾವತಿ ಪೇಪರ್ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಾಹಿತಿಯ ಪ್ರಕಾರ, ಆರೋಪಿ 23 ವರ್ಷದ ಮಹಿಳೆಯ ಪತಿಯ ಸ್ನೇಹಿತನೆಂದು ಪರಿಚಯಿಸಿಕೊಂಡು ಇನ್‌ಸ್ಟಾಗ್ರಾಮ್ ಮೂಲಕ ಸಂಪರ್ಕ ಬೆಳೆಸಿಕೊಂಡಿದ್ದಾನೆ. ನಂತರ ದಿನಸಿ ಅಂಗಡಿಗೆ ಪದೇ ಪದೇ ಭೇಟಿ ನೀಡಿ ಮಹಿಳೆಗೆ ದೈಹಿಕ ಕಿರುಕುಳ ನೀಡುತ್ತಿದ್ದಾನೆ ಎಂದು ಆರೋಪಿಸಲಾಗಿದೆ.

ಏಪ್ರಿಲ್ 11ರಂದು ಮಹಿಳೆಯ ಪತಿ ಮನೆಯಲ್ಲಿ ಇಲ್ಲದ ವೇಳೆ, ಆರೋಪಿ ಮನೆಗೆ ಬಂದಿದ್ದಾಗ ಒಂಟಿಯಾಗಿದ್ದ ಮಹಿಳೆ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಘಟನೆ ಬಗ್ಗೆ ಹೇಳಿದರೆ ಮಾನಹಾನಿ ಮಾಡುವುದಾಗಿ ಬೆದರಿಕೆ ಹಾಕಿ ಹಣದೊಂದಿಗೆ ಪರಾರಿಯಾಗಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಏಪ್ರಿಲ್ 25ರಂದು ಮತ್ತೆ ಅಂಗಡಿಗೆ ಬಂದು ಲೈಂಗಿಕ ಕಿರುಕುಳ ನೀಡಲು ಯತ್ನಿಸಿದ್ದಾನೆ ಎಂದು ಕೂಡ ಆರೋಪಿಸಲಾಗಿದೆ. ಈ ನಡುವೆ ಪತಿ ಮೊಬೈಲ್ ಪರಿಶೀಲನೆ ವೇಳೆ ಅನುಮಾನಾಸ್ಪದ ಚಾಟ್‌ಗಳು ಕಂಡುಬಂದಿದ್ದು, ನಂತರ ಮಹಿಳೆ ಸಂಪೂರ್ಣ ವಿಷಯವನ್ನು ಬಿಚ್ಚಿಟ್ಟಿದ್ದಾರೆ.

ದಂಪತಿ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿ ಭರತ್ ಬಿ.ಎಸ್ ತಲೆಮರೆಸಿಕೊಂಡಿದ್ದಾನೆ. ಆತನ ಪತ್ತೆಗಾಗಿ ಪೊಲೀಸರು ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ.

ಧಾರವಾಡದಲ್ಲಿ ಮುಂಗಾರು ಮುನ್ನೆಚ್ಚರಿಕೆ: ಮುಂದಿನ 3 ದಿನ ಭಾರೀ ಮಳೆ ಸಾಧ್ಯತೆ!

ಧಾರವಾಡ: ರಾಜ್ಯದಲ್ಲಿ ಮುಂಗಾರು ಮಳೆ ಚುರುಕುಗೊಳ್ಳುವ ಲಕ್ಷಣಗಳು ಕಾಣಿಸುತ್ತಿದ್ದು, ಮುಂದಿನ ಮೂರು ದಿನಗಳಲ್ಲಿ ಕೇರಳಕ್ಕೆ ಮುಂಗಾರು ಪ್ರವೇಶಿಸುವ ಸಾಧ್ಯತೆ ಇದೆ ಎಂದು ಧಾರವಾಡ ಕೃಷಿ ವಿಶ್ವವಿದ್ಯಾಲಯ ಹಾಗೂ ಹವಾಮಾನ ಇಲಾಖೆ ವರದಿ ನೀಡಿದೆ.

ಇದೇ ವೇಳೆ ಜೂನ್ 1ರ ವೇಳೆಗೆ ಮುಂಗಾರು ಕರ್ನಾಟಕಕ್ಕೆ ಪ್ರವೇಶಿಸುವ ಸಾಧ್ಯತೆ ಇದ್ದು, ಇವತ್ತಿನಿಂದಲೇ ಉತ್ತರ ಕರ್ನಾಟಕದಲ್ಲಿ ಗುಡುಗು ಸಹಿತ ಮಳೆಯ ಅಬ್ಬರ ಮುಂದುವರೆಯಲಿದೆ ಎಂದು ತಿಳಿಸಲಾಗಿದೆ.

ಕಳೆದ ರಾತ್ರಿಯಿಂದಲೇ ಯಾದಗಿರಿ, ರಾಯಚೂರು, ಬಾಗಲಕೋಟೆ, ಬಳ್ಳಾರಿ, ವಿಜಯನಗರ, ದಾವಣಗೆರೆ, ಚಿತ್ರದುರ್ಗ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮಳೆಯಾಗಿದ್ದು, ಮುಂದಿನ ಮೂರು ದಿನವೂ ಮುಂದುವರೆಯುವ ಸಾಧ್ಯತೆ ಇದೆ.

ಬೆಂಗಳೂರು ನಗರ, ಗ್ರಾಮಾಂತರ, ಕೋಲಾರ, ರಾಮನಗರ, ಚಾಮರಾಜನಗರ ಸೇರಿದಂತೆ ದಕ್ಷಿಣ ಕರ್ನಾಟಕದಲ್ಲೂ ಗುಡುಗು, ಮಿಂಚು ಹಾಗೂ ಗಾಳಿಯೊಂದಿಗೆ ಮಳೆಯಾಗುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಲಾಗಿದೆ.

ಬಂಗಾಳ ಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತದ ಪರಿಣಾಮವಾಗಿ ಬಾಗಲಕೋಟೆ, ಗದಗ, ಧಾರವಾಡ ಜಿಲ್ಲೆಗಳಲ್ಲಿ ಆಲಿಕಲ್ಲು ಮಳೆಯ ಎಚ್ಚರಿಕೆ ಕೂಡ ನೀಡಲಾಗಿದೆ.

ರೈತರು ಕೃಷಿ ಚಟುವಟಿಕೆಗಳಲ್ಲಿ ಜಾಗೃತಿ ವಹಿಸುವಂತೆ ಹವಾಮಾನ ಇಲಾಖೆ ಸಲಹೆ ನೀಡಿದೆ.

ನಕಲಿ ಚಿನ್ನ ಅಡವಿಟ್ಟು ಲಕ್ಷಾಂತರ ಸಾಲ ಪಡೆದು ವಂಚನೆ: ಕರ್ನಾಟಕ ಬ್ಯಾಂಕ್‌ಗೆ ಮಹಮೊಸ! FIR ದಾಖಲು

ಬೆಂಗಳೂರು: ನಗರದ ವರ್ತೂರಿನಲ್ಲಿರುವ ಕರ್ನಾಟಕ ಬ್ಯಾಂಕ್‌ನಲ್ಲಿ ನಕಲಿ ಚಿನ್ನವನ್ನು ಅಡಮಾನವಾಗಿ ಇಟ್ಟು 16.53 ಲಕ್ಷ ರೂಪಾಯಿ ಸಾಲ ಪಡೆದ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ.

ಈ ಸಂಬಂಧ ಬ್ಯಾಂಕ್‌ನ ಚಿನ್ನ ಮೌಲ್ಯಮಾಪಕ ರವಿಕುಮಾರ್ ಸೇರಿದಂತೆ ನಾಲ್ವರ ವಿರುದ್ಧ ವರ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಾಹಿತಿಯ ಪ್ರಕಾರ, ಚಿನ್ನ ಮೌಲ್ಯಮಾಪಕ ರವಿಕುಮಾರ್ ಕೆಲವು ನಕಲಿ ಗ್ರಾಹಕರೊಂದಿಗೆ ಸೇರಿಕೊಂಡು ನಕಲಿ ಚಿನ್ನವನ್ನು ಅಸಲಿ ಚಿನ್ನವೆಂದು ತೋರಿಸಿ ಬ್ಯಾಂಕ್‌ಗೆ ವಂಚನೆ ಮಾಡಿದ್ದಾನೆ. ಬ್ಯಾಂಕ್‌ನ ನಿಯಮಿತ ಮೌಲ್ಯಮಾಪನ ಪ್ರಕ್ರಿಯೆಯನ್ನೇ ದುರುಪಯೋಗಪಡಿಸಿಕೊಂಡು ಈ ವಂಚನೆ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನಕಲಿ ಚಿನ್ನವನ್ನು ಅಡಮಾನವಾಗಿ ಇಟ್ಟು, ನಕಲಿ ಗ್ರಾಹಕರಿಗೆ ಸಾಲ ಮಂಜೂರು ಮಾಡಿಸುವ ಮೂಲಕ ಬ್ಯಾಂಕ್‌ಗೆ ಆರ್ಥಿಕ ನಷ್ಟ ಉಂಟುಮಾಡಲಾಗಿದೆ. ನಂತರ ಬ್ಯಾಂಕ್ ಅಧಿಕಾರಿಗಳಿಗೆ ಅನುಮಾನ ಬಂದು ಪರಿಶೀಲನೆ ನಡೆಸಿದಾಗ ವಂಚನೆ ಬಯಲಾಗಿದೆ.

ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ವರ್ತೂರು ಪೊಲೀಸರು ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಚಿನ್ನ ಮೌಲ್ಯಮಾಪಕ ರವಿಕುಮಾರ್ ಸೇರಿದಂತೆ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಈ ಸಂಬಂಧ ಹೆಚ್ಚಿನ ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಯಾಣಿಕ ರೈಲಿನ ಮೇಲೆ ಆತ್ಮಾಹುತಿ ದಾಳಿ! 24 ಜನ ಸಾವು, 70 ಮಂದಿಗೆ ಗಾಯ

ಇಸ್ಲಮಾಬಾದ್: ಪಾಕಿಸ್ತಾನದ ಬಲೂಚಿಸ್ತಾನ್ ಪ್ರಾಂತ್ಯದ ರಾಜಧಾನಿ ಕ್ವೆಟ್ಟಾದಲ್ಲಿ ರೈಲ್ವೆ ಹಳಿ ಬಳಿ ಭೀಕರ ಆತ್ಮಾಹುತಿ ಬಾಂಬ್ ಸ್ಫೋಟ ಸಂಭವಿಸಿದ್ದು, ಕನಿಷ್ಠ 24 ಮಂದಿ ಮೃತಪಟ್ಟಿದ್ದಾರೆ ಹಾಗೂ 70ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸರು ಮತ್ತು ರಕ್ಷಣಾ ಪಡೆಗಳು ದೃಢಪಡಿಸಿವೆ.

ಕ್ವೆಟ್ಟಾದ ಚಮನ್ ಫಾಟಕ್ ರೈಲ್ವೆ ನಿಲ್ದಾಣದ ಬಳಿ ಈ ಸ್ಫೋಟ ಸಂಭವಿಸಿದೆ. ಭದ್ರತಾ ಸಿಬ್ಬಂದಿ ಹಾಗೂ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ರೈಲನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ ಎಂದು ಪ್ರಾಥಮಿಕ ಮಾಹಿತಿ ತಿಳಿಸಿದೆ.

ಸ್ಫೋಟದ ತೀವ್ರತೆಗೆ ರೈಲಿನ ಎರಡು ಬೋಗಿಗಳು ಸಂಪೂರ್ಣವಾಗಿ ಜಖಂಗೊಂಡಿದ್ದು, ಬೆಂಕಿ ಹೊತ್ತಿಕೊಂಡ ಘಟನೆ ಕೂಡ ನಡೆದಿದೆ. ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರೀ ಸದ್ದು ಕೇಳಿಸಿಕೊಂಡಿದ್ದು, ಹಲವಾರು ಕಿಲೋಮೀಟರ್ ದೂರದವರೆಗೆ ಕಂಪನ ಅನುಭವವಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಘಟನೆ ಬಳಿಕ ಬಲೂಚಿಸ್ತಾನ್ ರಕ್ಷಣಾ ಪಡೆಗಳು ಸ್ಥಳಕ್ಕೆ ಧಾವಿಸಿದ್ದು, ಗಾಯಾಳುಗಳನ್ನು ತಕ್ಷಣ ಕ್ವೆಟ್ಟಾದ ಮಿಲಿಟರಿ ಆಸ್ಪತ್ರೆ ಮತ್ತು ಇತರ ಸರ್ಕಾರಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಹಲವಾರು ಆಸ್ಪತ್ರೆಗಳಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದ್ದು, ರಕ್ತದಾನಕ್ಕೆ ಸಾರ್ವಜನಿಕರಿಗೆ ಮನವಿ ಮಾಡಲಾಗಿದೆ.

ಸ್ಫೋಟದಿಂದ ರೈಲ್ವೆ ಹಳಿಯ ಪಕ್ಕದಲ್ಲಿದ್ದ ವಾಹನಗಳು ಹಾಗೂ ಮನೆಗಳು ಸಹ ಹಾನಿಗೊಳಗಾಗಿವೆ. ಗಾಯಗೊಂಡವರಲ್ಲಿ ಹಲವರ ಸ್ಥಿತಿ ಗಂಭೀರವಾಗಿದ್ದು, ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಲೂಚಿಸ್ತಾನ್ ಗೃಹ ಸಚಿವಾಲಯದ ವಕ್ತಾರರು ಘಟನೆಯನ್ನು ನಿಯಂತ್ರಣಕ್ಕೆ ತರಲು ಭದ್ರತಾ ಪಡೆಗಳನ್ನು ಹೈ ಅಲರ್ಟ್‌ನಲ್ಲಿ ಇಡಲಾಗಿದೆ ಎಂದು ತಿಳಿಸಿದ್ದಾರೆ.

ಈ ದಾಳಿಯ ಹೊಣೆಯನ್ನು ನಿಷೇಧಿತ ಬಲೂಚಿಸ್ತಾನ್ ಲಿಬರೇಶನ್ ಆರ್ಮಿ (BLA) ಸಂಘಟನೆ ಹೊತ್ತುಕೊಂಡಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಸೇನಾ ಸಿಬ್ಬಂದಿಯನ್ನು ಗುರಿಯಾಗಿಸಿಕೊಂಡು ಆತ್ಮಾಹುತಿ ದಾಳಿ ನಡೆಸಲಾಗಿದೆ ಎಂದು ಅವರು ಹೇಳಿಕೊಂಡಿದ್ದಾರೆ.

ಘಟನೆಯ ಬಳಿಕ ಪ್ರದೇಶದಲ್ಲಿ ಭದ್ರತಾ ಪಡೆಗಳು ತೀವ್ರ ಶೋಧ ಕಾರ್ಯಾಚರಣೆ ಮುಂದುವರೆಸಿವೆ.

ನೀಟ್ ಫಲಿತಾಂಶದ ಒತ್ತಡದಲ್ಲಿದ್ದ ವಿದ್ಯಾರ್ಥಿನಿ ಸೂಸೈಡ್? ಸಾವಿಗೆ ಇದು ಕಾರಣವಾ?

ಕಲಬುರಗಿ: ವೈದ್ಯಕೀಯ ಶಿಕ್ಷಣದ ಕನಸು ಹೊತ್ತಿದ್ದ 18 ವರ್ಷದ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಲಬುರಗಿ ನಗರದಲ್ಲಿ ನಡೆದಿದೆ.

ಮೃತ ಯುವತಿಯನ್ನು ಭಾಗ್ಯಶ್ರೀ (18) ಎಂದು ಗುರುತಿಸಲಾಗಿದೆ.

ಮಾಹಿತಿಯ ಪ್ರಕಾರ, ಕಲಬುರಗಿ ನಗರದ ಕೋರ್ಟ್ ವೃತ್ತದ ಬಳಿ ಇರುವ ಅಪಾರ್ಟ್‌ಮೆಂಟ್‌ನಲ್ಲಿ ಈ ಘಟನೆ ನಡೆದಿದೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಆಕೆ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಭಾಗ್ಯಶ್ರೀ ಇತ್ತೀಚೆಗೆ ನಡೆದ NEET ಪರೀಕ್ಷೆಯನ್ನು ಬರೆದು ಫಲಿತಾಂಶಕ್ಕಾಗಿ ಕಾಯುತ್ತಿದ್ದಳು. ದ್ವಿತೀಯ ಪಿಯುಸಿಯಲ್ಲಿ ಶೇಕಡಾ 92 ಅಂಕಗಳನ್ನು ಪಡೆದು ಉತ್ತಮ ಸಾಧನೆ ಮಾಡಿದ್ದ ಆಕೆ ವೈದ್ಯಕೀಯ ಶಿಕ್ಷಣದ ಮೇಲೆ ದೊಡ್ಡ ಆಸೆ ಹೊಂದಿದ್ದಳು.

ಆತ್ಮಹತ್ಯೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲವಾದರೂ, ಪರೀಕ್ಷಾ ಫಲಿತಾಂಶದ ಆತಂಕ ಅಥವಾ ಮಾನಸಿಕ ಒತ್ತಡ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ.

ಘಟನೆ ಕುರಿತು ಮೃತಳ ತಂದೆ ರಾಜಶೇಖರ್ ಪ್ರತಿಕ್ರಿಯಿಸಿ, ಮಗಳು ಯಾವುದೇ ಸಮಸ್ಯೆ ಇಲ್ಲದೆ ಸಂತೋಷವಾಗಿದ್ದಳು ಎಂದು ತಿಳಿಸಿದ್ದಾರೆ. “ನಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯ ಇರಲಿಲ್ಲ” ಎಂದು ಅವರು ಕಣ್ಣೀರು ಹಾಕಿದ್ದಾರೆ.

ಸ್ಥಳಕ್ಕೆ ಭೇಟಿ ನೀಡಿದ ಕಲಬುರಗಿ ಸ್ಟೇಷನ್ ಬಜಾರ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಡಿಸೇಲ್ ಹಾಹಾಕಾರ: ಬಂಕ್‌ಗಳ ಮುಂದೆ ರೈತರ ದಂಡು!

ಲಕ್ಷ್ಮೇಶ್ವರ: ಕಳೆದ ಎರಡು-ಮೂರು ತಿಂಗಳಿಂದ ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮ ದೇಶದ ಮೇಲೂ ಬೀಳತೊಡಗಿದ್ದು, ಪೆಟ್ರೋಲ್, ಡಿಸೇಲ್ ಹಾಗೂ ಅಡುಗೆ ಅನಿಲ ಬೆಲೆ ಏರಿಕೆಯ ನಡುವೆಯೇ ಇದೀಗ ಡಿಸೇಲ್ ಕೊರತೆ ರೈತರನ್ನು ಕಂಗಾಲಾಗಿಸಿದೆ.

ಪಟ್ಟಣದಲ್ಲಿ ಶನಿವಾರದಿಂದಲೇ ಪೆಟ್ರೋಲ್ ಬಂಕ್‌ಗಳ ಮುಂದೆ ಡಿಸೇಲ್‌ಗಾಗಿ ರೈತರು ಮುಗಿ ಬಿದ್ದ ದೃಶ್ಯ ಕಂಡುಬಂದಿದ್ದು, ಬಹುತೇಕ ಬಂಕ್‌ಗಳಲ್ಲಿ ಡಿಸೇಲ್ ಸಂಪೂರ್ಣ ಖಾಲಿಯಾಗಿದೆ. “ಮುಂದಿನ ಟ್ಯಾಂಕರ್ ಬರುವವರೆಗೂ ಕಾಯಿರಿ” ಎಂಬ ಉತ್ತರ ಕೇಳಿ ರೈತರು ನಿರಾಶೆಯಿಂದ ಹಿಂದಿರುಗುವ ಸ್ಥಿತಿ ನಿರ್ಮಾಣವಾಗಿದೆ. ಎಲ್ಲೆಡೆ ಡಿಸೇಲ್ ಹಾಹಾಕಾರ ಉಂಟಾಗಿದೆ.

ಈ ಬಾರಿ ಮುಂಗಾರು ಪೂರ್ವ ಮಳೆ ಉತ್ತಮವಾಗಿರುವ ಹಿನ್ನೆಲೆಯಲ್ಲಿ ರೈತರು ಭೂಮಿ ಸಜ್ಜುಗೊಳಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ. ಹಿಂದೆ ಎತ್ತುಗಳ ಮೂಲಕ ಉಳುಮೆ ಮಾಡುತ್ತಿದ್ದ ಪರಿಸ್ಥಿತಿ ಈಗಿಲ್ಲ. ಬಹುತೇಕ ರೈತರು ಟ್ರ್ಯಾಕ್ಟರ್‌ಗಳನ್ನೇ ಅವಲಂಬಿಸಿದ್ದಾರೆ. ಆದರೆ ಟ್ರ್ಯಾಕ್ಟರ್‌ಗಳಿಗೆ ಅಗತ್ಯವಾದ ಡಿಸೇಲ್ ಸಿಗದೇ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಶನಿವಾರ ಹಾಗೂ ಭಾನುವಾರ ಡಿಸೇಲ್ ಲಭ್ಯವಿದ್ದ ಪೆಟ್ರೋಲ್ ಬಂಕ್‌ಗಳ ಮುಂದೆ ಟ್ರ್ಯಾಕ್ಟರ್‌ಗಳು, ಬೈಕ್‌ಗಳು, ಆಟೋಗಳು ಮತ್ತು ಕ್ಯಾನ್‌ಗಳೊಂದಿಗೆ ಜನರು ಸರದಿ ಸಾಲಿನಲ್ಲಿ ನಿಂತ ದೃಶ್ಯ ಸಾಮಾನ್ಯವಾಗಿತ್ತು. ಕೆಲವೆಡೆ ಟ್ರ್ಯಾಕ್ಟರ್‌ಗಳ ಸಾಲು ಕಿಲೋಮೀಟರ್‌ಗಳವರೆಗೆ ವಿಸ್ತರಿಸಿತ್ತು.

ಪಟ್ಟಣದಲ್ಲಿ ಸುಮಾರು ೮ ರಿಂದ ೧೦ ಪೆಟ್ರೋಲ್ ಬಂಕ್‌ಗಳಿದ್ದು, ಭಾನುವಾರ ಮಧ್ಯಾಹ್ನದೊಳಗೆ ಬಹುತೇಕ ಎಲ್ಲ ಬಂಕ್‌ಗಳಲ್ಲೂ ಡಿಸೇಲ್ ಖಾಲಿಯಾಗಿದೆ. ಶನಿವಾರ ಸಂಜೆದಿಂದ ಭಾನುವಾರ ಮಧ್ಯಾಹ್ನದವರೆಗೆ ಸಾವಿರಾರು ಲೀಟರ್ ಡಿಸೇಲ್ ಮಾರಾಟವಾಗಿದೆ ಎಂದು ತಿಳಿದುಬಂದಿದೆ.

ಕೆಲವು ಬಂಕ್‌ಗಳಲ್ಲಿ ಶನಿವಾರವೇ ಡಿಸೇಲ್ ಖಾಲಿಯಾಗಿದ್ದರೆ, ಭಾನುವಾರ ಮುಂಜಾನೆಯಿಂದಲೇ ಮತ್ತೆ ಉದ್ದನೆಯ ಕ್ಯೂಗಳು ಆರಂಭವಾಗಿದ್ದವು. ನೂರಾರು ಕ್ಯಾನ್‌ಗಳೊಂದಿಗೆ ಜನರು ಬಂಕ್ ಮುಂದೆ ಸಾಲಿನಲ್ಲಿ ನಿಂತಿದ್ದು, ಗಂಟೆಗಟ್ಟಲೆ ಕಾಯುವ ಪರಿಸ್ಥಿತಿ ನಿರ್ಮಾಣವಾಗಿತ್ತು.

ಮಧ್ಯಾಹ್ನ ವೇಳೆಗೆ ಡಿಸೇಲ್ ಸಂಪೂರ್ಣ ಖಾಲಿಯಾಗುತ್ತಿದ್ದಂತೆ ಹಲವರು ಬರಿಗೈಯಲ್ಲಿ ಮನೆಗೆ ಮರಳಬೇಕಾಯಿತು. ಕೆಲ ಬಂಕ್‌ಗಳಲ್ಲಿ ಕ್ಯಾನ್‌ಗಳಿಗೆ ಕೇವಲ ೨ ಸಾವಿರ ರೂ. ಮೌಲ್ಯದ ಡಿಸೇಲ್ ಮಾತ್ರ ನೀಡಲಾಗುತ್ತಿತ್ತು. ಹೀಗಾಗಿ ರೈತರು ೩-೪ ಕ್ಯಾನ್‌ಗಳನ್ನು ಹೊತ್ತು ತರುವ ದೃಶ್ಯ ಕಂಡುಬಂತು.

ಲಕ್ಷ್ಮೇಶ್ವರ ಪಟ್ಟಣ ಮಾತ್ರವಲ್ಲದೆ ತಾಲೂಕಿನ ಶಿಗ್ಲಿ, ಸೂರಣಗಿ, ಗೊಜನೂರು, ಬಾಲೇಹೊಸೂರು, ಮಾಡಳ್ಳಿ, ಯಳವತ್ತಿ ಸೇರಿದಂತೆ ಅನೇಕ ಗ್ರಾಮಗಳಲ್ಲೂ ಡಿಸೇಲ್ ಕೊರತೆ ತೀವ್ರವಾಗಿದೆ. ಈ ನಡುವೆ ಕೆಲವರು ಡಿಸೇಲ್ ಸಂಗ್ರಹಿಸಿಟ್ಟುಕೊಂಡಿದ್ದಾರೆ ಎಂಬ ಆರೋಪವೂ ಕೇಳಿಬರುತ್ತಿದೆ.

*ಬಿತ್ತನೆ ಹೊತ್ತಲ್ಲೇ ಇಂಧನ ಸಂಕಷ್ಟ*

ಈಗಾಗಲೇ ಮಳೆಯು ಪೂರಕವಾಗಿ ಸುರಿಯುತ್ತಿರುವ ಹಿನ್ನೆಲೆ ರೈತರು ಹರಗುವುದು ಸೇರಿದಂತೆ ಹೆಸರು, ಶೇಂಗಾ, ಸೋಯಾಬಿನ್, ಉದ್ದು ಬೆಳೆಗಳ ಬಿತ್ತನೆಗೆ ಸಜ್ಜಾಗುತ್ತಿದ್ದಾರೆ. ಬಹುತೇಕ ರೈತರು ಭೂಮಿ ಹರಗಲು, ಬಿತ್ತನೆ ಮಾಡಲು ಹಾಗೂ ಎಡೆ ಹೊಡೆಯಲು ಟ್ರ್ಯಾಕ್ಟರ್‌ಗಳನ್ನೇ ಅವಲಂಬಿಸಿದ್ದಾರೆ.

ಇಂತಹ ಸಮಯದಲ್ಲೇ ಡಿಸೇಲ್ ಕೊರತೆ ಎದುರಾಗಿರುವುದು ರೈತರ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ. ಇದೇ ತಿಂಗಳಿಂದ ಬಿತ್ತನೆ ಕಾರ್ಯ ಚುರುಕುಗೊಳ್ಳಲಿರುವ ಹಿನ್ನೆಲೆ ಡಿಸೇಲ್ ಸಮಸ್ಯೆ ಮುಂದುವರಿದರೆ ಕೃಷಿ ಚಟುವಟಿಕೆಗಳ ಮೇಲೂ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ.

“ರೈತರು ಬಿತ್ತನೆ ಬೀಜ, ಗೊಬ್ಬರ ಖರೀದಿ, ಬೆಳೆದ ಫಸಲು ಮಾರಾಟ, ಹಣ ಪಡೆಯುವುದು, ಬೆಳೆಹಾನಿ ಹಾಗೂ ವಿಮೆ ಪರಿಹಾರಕ್ಕಾಗಿ ಈಗಾಗಲೇ ನಾನಾ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಕೃಷಿ ಚಟುವಟಿಕೆಗಳು ಭರದಿಂದ ಸಾಗುತ್ತಿರುವ ಸಂದರ್ಭದಲ್ಲಿ ಇದೀಗ ಡಿಸೇಲ್‌ಗಾಗಿ ಹಗಲು-ರಾತ್ರಿ ಕಾಯುವ ಪರಿಸ್ಥಿತಿ ಬಂದಿದೆ. ಒಟ್ಟಿನಲ್ಲಿ ರೈತರ ಬದುಕು ಹೋರಾಟದಿಂದಲೇ ಕೂಡಿದೆ. ಬಿತ್ತನೆ ಹಂಗಾಮಿನಲ್ಲಿ ಒಂದು ದಿನ ವ್ಯತ್ಯಯವಾದರೂ ದೊಡ್ಡ ಪರಿಣಾಮ ಎದುರಿಸಬೇಕಾಗುತ್ತದೆ. ಸರ್ಕಾರ ರೈತರಿಗೆ ಸಮರ್ಪಕವಾಗಿ ಡಿಸೇಲ್ ಪೂರೈಕೆ ಆಗುವಂತೆ ತಕ್ಷಣ ಕ್ರಮ ಕೈಗೊಳ್ಳಬೇಕು.”
— ನಂದೀಶ ಬಂಡಿವಾಡ, ರೈತ

ಇಂದು ಪ್ಲೇಆಫ್ ಭವಿಷ್ಯ ನಿರ್ಧಾರ! RRಗೆ ಮಾಡು ಇಲ್ಲವೇ ಮಡಿ ಪಂದ್ಯ, ಮುಂಬೈ ಕೈಯಲ್ಲಿ 2 ತಂಡಗಳ ಭವಿಷ್ಯ!

ಇಂಡಿಯನ್ ಪ್ರೀಮಿಯರ್ ಲೀಗ್ ಹತ್ತೊಂಬತ್ತನೇ ಆವೃತ್ತಿಯ ಲೀಗ್ ಹಂತದ ಪಂದ್ಯಗಳಿಗೆ ಇಂದು ತೆರೆ ಬೀಳಲಿದ್ದು, ಪ್ಲೇಆಫ್‌ನ ಕೊನೆಯ ಸ್ಥಾನಕ್ಕಾಗಿ ಭಾರೀ ಪೈಪೋಟಿ ಏರ್ಪಟ್ಟಿದೆ.

ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ಮುಖಾಮುಖಿಯಾಗಲಿವೆ. ರಾಜಸ್ಥಾನ್ ರಾಯಲ್ಸ್ ಪಾಲಿಗೆ ಇದು ‘ಮಾಡು ಇಲ್ಲವೇ ಮಡಿ’ ಪಂದ್ಯವಾಗಿದ್ದು, ಪ್ಲೇಆಫ್ ಪ್ರವೇಶಿಸಲು ಗೆಲುವು ಅನಿವಾರ್ಯವಾಗಿದೆ.

ಪ್ರಸ್ತುತ ರಾಜಸ್ಥಾನ್ 14 ಅಂಕಗಳೊಂದಿಗೆ ಐದನೇ ಸ್ಥಾನದಲ್ಲಿದೆ. ಇನ್ನೊಂದೆಡೆ ಈಗಾಗಲೇ ಪೈಪೋಟಿಯಿಂದ ಹೊರಬಿದ್ದಿರುವ ಮುಂಬೈ ಇಂಡಿಯನ್ಸ್ ಕೇವಲ ಔಪಚಾರಿಕ ಪಂದ್ಯವನ್ನಾಡುತ್ತಿದೆ. ಆದರೆ ಮುಂಬೈ ಗೆದ್ದರೆ ಪ್ಲೇಆಫ್ ಲೆಕ್ಕಾಚಾರ ಸಂಪೂರ್ಣ ಬದಲಾಗಲಿದೆ.

ಸದ್ಯ ಪಂಜಾಬ್ ಕಿಂಗ್ಸ್‌ 15 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದು, ಅದರ ಭವಿಷ್ಯ ರಾಜಸ್ಥಾನ್ ಪಂದ್ಯದ ಫಲಿತಾಂಶದ ಮೇಲೆ ನಿಂತಿದೆ. ರಾಜಸ್ಥಾನ್ ಸೋತರೆ, ಸಂಜೆ ಪಂದ್ಯದಲ್ಲಿ ಪಂಜಾಬ್ ಮತ್ತು ಕೋಲ್ಕತ್ತಾ  ನಡುವಿನ ಪಂದ್ಯ ನಿರ್ಣಾಯಕವಾಗಲಿದೆ.

ಒಂದು ವೇಳೆ ಕೋಲ್ಕತ್ತಾ ಗೆದ್ದರೆ ಪಂಜಾಬ್ ಹಾಗೂ ಕೋಲ್ಕತ್ತಾ ಎರಡೂ ತಂಡಗಳು 15 ಅಂಕಗಳನ್ನು ಹೊಂದಲಿವೆ. ಆಗ ರನ್‌ರೇಟ್ ಮುಖ್ಯವಾಗಲಿದೆ. ಸದ್ಯ ಪಂಜಾಬ್ ರನ್‌ರೇಟ್ +0.309 ಇದ್ದರೆ, ಕೋಲ್ಕತ್ತಾ ರನ್‌ರೇಟ್ +0.011 ಇದೆ.

ಹೀಗಾಗಿ ಕೋಲ್ಕತ್ತಾ ಪ್ಲೇಆಫ್‌ಗೆ ಪ್ರವೇಶಿಸಬೇಕಾದರೆ ಕೇವಲ ಗೆಲುವು ಸಾಲದು, ಭರ್ಜರಿ ಅಂತರದ ಜಯ ಸಾಧಿಸಬೇಕಿದೆ. ಮೊದಲು ಬ್ಯಾಟಿಂಗ್ ಮಾಡಿದರೆ ಕನಿಷ್ಠ 77 ರನ್‌ಗಳ ಅಂತರದಿಂದ ಗೆಲ್ಲಬೇಕು. ಗುರಿ ಬೆನ್ನಟ್ಟಿದರೆ 12.1 ಓವರ್‌ಗಳೊಳಗೆ ಪಂದ್ಯ ಮುಗಿಸಬೇಕಿದೆ.

ಇನ್ನೊಂದೆಡೆ ಮಳೆ ಕೂಡ ಲೆಕ್ಕಾಚಾರ ಬದಲಾಯಿಸುವ ಸಾಧ್ಯತೆ ಇದೆ. ಮುಂಬೈ-ರಾಜಸ್ಥಾನ್ ಪಂದ್ಯ ಮಳೆಯಿಂದ ರದ್ದಾದರೆ ಉಭಯ ತಂಡಗಳಿಗೆ ತಲಾ ಒಂದು ಅಂಕ ಸಿಗಲಿದೆ. ಆಗ ರಾಜಸ್ಥಾನ್ 15 ಅಂಕಗಳನ್ನೇರಿದರೂ, ಉತ್ತಮ ರನ್‌ರೇಟ್ ಹೊಂದಿರುವ ಪಂಜಾಬ್ ಕಿಂಗ್ಸ್ ಯಾವುದೇ ಆತಂಕವಿಲ್ಲದೆ ಪ್ಲೇಆಫ್ ಪ್ರವೇಶಿಸಲಿದೆ.

ಇಂದಿನ ಪಂದ್ಯಗಳ ಫಲಿತಾಂಶದ ಮೇಲೆ ಮೂರು ತಂಡಗಳ ಭವಿಷ್ಯ ನಿಂತಿದ್ದು, ಕ್ರಿಕೆಟ್ ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿದೆ.

ಪ್ರಧಾನಿ ಮೋದಿ ಭೇಟಿ ವೇಳೆ ಸ್ಫೋಟಕ ಪತ್ತೆ ಪ್ರಕರಣ: 6 ಪೊಲೀಸ್ ಸಿಬ್ಬಂದಿ ಅಮಾನತು!

ಬೆಂಗಳೂರು; ಬೆಂಗಳೂರಿಗೆ ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ಕೊಟ್ಟಿದ್ದ ವೇಳೆ ಸ್ಫೋಟಕ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸ್ ಇಲಾಖೆಯಲ್ಲಿ ಕ್ರಮ ಕೈಗೊಳ್ಳಲಾಗಿದೆ.

ಕರ್ತವ್ಯಲೋಪ ಆರೋಪದಡಿ ಓರ್ವ ಪಿಎಸ್‌ಐ, ಓರ್ವ ಸಹಾಯಕ ಉಪನಿರೀಕ್ಷಕ ಹಾಗೂ ನಾಲ್ವರು ಪೊಲೀಸ್ ಸಿಬ್ಬಂದಿಯನ್ನು ಅಮಾನತು ಮಾಡಿ ಬೆಂಗಳೂರು ದಕ್ಷಿಣ ಜಿಲ್ಲಾ ಪೊಲೀಸ್ ಅಧೀಕ್ಷಕ ಶ್ರೀನಿವಾಸ್ ಗೌಡ ಆದೇಶಿಸಿದ್ದಾರೆ.

ಮೇ 10ರಂದು ಪ್ರಧಾನಿ ಮೋದಿ ಅವರು ಆರ್ಟ್​​ ಆಫ್​​ ಲಿವಿಂಗ್​​ ಆಶ್ರಮದ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಪ್ರಧಾನಿ ಸಂಚಾರಕ್ಕೂ ಮುನ್ನ ಬೆಂಗಳೂರು ದಕ್ಷಿಣ ತಾಲೂಕಿನ ವಡೇರಹಳ್ಳಿ ಗೇಟ್ ಸಮೀಪ ರಸ್ತೆ ಬದಿಯಲ್ಲಿ ಅನುಮಾನಾಸ್ಪದ ಪೆಟ್ಟಿಗೆ ಪತ್ತೆಯಾಗಿತ್ತು.

ಬೆಳಿಗ್ಗೆ ಸುಮಾರು 9 ಗಂಟೆ ವೇಳೆಗೆ ಬಂದೋಬಸ್ತ್ ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿಯೊಬ್ಬರು ಈ ಪೆಟ್ಟಿಗೆಯನ್ನು ಗಮನಿಸಿದ್ದರು. ತಕ್ಷಣ ಮಾಹಿತಿ ನೀಡಲಾಗಿದ್ದು, ಬಾಂಬ್ ನಿಷ್ಕ್ರಿಯ ದಳ ಸ್ಥಳಕ್ಕೆ ಧಾವಿಸಿತ್ತು.

ಪೆಟ್ಟಿಗೆಯನ್ನು ಪರಿಶೀಲಿಸಿದ ವೇಳೆ ಅದರೊಳಗೆ ಸ್ಫೋಟಕ ವಸ್ತುಗಳು ಪತ್ತೆಯಾಗಿದ್ದವು. ಬಳಿಕ ಪೊಲೀಸರು ಸ್ಫೋಟಕಗಳನ್ನು ವಶಕ್ಕೆ ಪಡೆದು ಪ್ರಧಾನಿ ಸಂಚರಿಸುವ ಸಂಪೂರ್ಣ ಮಾರ್ಗವನ್ನು ಮರುಪರಿಶೀಲನೆ ನಡೆಸಿದ್ದರು.

ಸ್ಫೋಟಕ ಪತ್ತೆಯಾದ ಪ್ರದೇಶದ ಭದ್ರತಾ ಜವಾಬ್ದಾರಿ ಹೊಂದಿದ್ದ ಅಧಿಕಾರಿಗಳು ಮತ್ತು ಸಿಬ್ಬಂದಿ ಸೂಕ್ತ ಎಚ್ಚರಿಕೆ ವಹಿಸಿಲ್ಲ ಹಾಗೂ ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿದ್ದಾರೆ ಎಂಬ ಕಾರಣಕ್ಕೆ ಇಲಾಖಾ ಕ್ರಮ ಕೈಗೊಳ್ಳಲಾಗಿದೆ.

error: Content is protected !!