ವಿಜಯಸಾಕ್ಷಿ ಸುದ್ದಿ, ಗದಗ: ನೆಮ್ಮದಿಯ ಬದುಕಿಗೆ, ಮಾನವ ಕಲ್ಯಾಣಕ್ಕಾಗಿ ಆಧ್ಯಾತ್ಮಿಕ ಚಿಂತನೆಗಳು, ಧರ್ಮ ಬೋಧನೆಗಳು ಅವಶ್ಯ ಎಂದು ವಿಧಾನ ಪರಿಷತ್ ಸದಸ್ಯ ಪ್ರೊ. ಎಸ್.ವ್ಹಿ. ಸಂಕನೂರ ಹೇಳಿದರು.
ಅವರು ನಗರದ ಗಾಣಿಗ ಭವನದಲ್ಲಿ ಗದಗ-ಬೆಟಗೇರಿ ಶ್ರೀ ಸಿದ್ಧಾಂತ ಶಿಖಾಮಣಿ ಆಧ್ಯಾತ್ಮಿಕ ಪ್ರವಚನ ಸಮಿತಿ ಶ್ರೀಮದ್ ಕಾಶೀ ನೂತನ ಜಗದ್ಗುರುಗಳವರ ಆಷಾಡ ಮಾಸದ ಇಷ್ಟಲಿಂಗ ಮಹಾಪೂಜೆ ಹಾಗೂ ಶ್ರೀ ಸಿದ್ಧಾಂತ ಶಿಖಾಮಣಿ ಆಧ್ಯಾತ್ಮಿಕ ಪ್ರವಚನ 10 ದಿನಗಳ ಮಾಲಿಕೆಯನ್ನು ಉದ್ಘಾಟಿಸಿ ಮಾತನಾಡಿದರು.
ನೈತಿಕ ಮೌಲ್ಯಗಳು ಕುಸಿಯುತ್ತಿರುವ ಇಂದಿನ ದಿನಗಳಲ್ಲಿ ಜನತೆಗೆ ಮಾನಸಿಕ ನೆಮ್ಮದಿ ಇಲ್ಲದಂತಾಗಿದೆ. ಹಣ-ಅಧಿಕಾರದ ಹಿಂದೆ ಬಿದ್ದು ನೆಮ್ಮದಿಯನ್ನು ಕಳೆದುಕೊಳ್ಳುತ್ತಿದ್ದೇವೆ. ಇಂದು ಮಾನವ ಮಾನವನಾಗಿ ಬದುಕಬೇಕು. ಅದಕ್ಕಾಗಿ ವೀರಶೈವ ಧರ್ಮವನ್ನು ಬೋಧಿಸುವ ಧರ್ಮದ ಸನ್ಮಾರ್ಗದಲ್ಲಿ ಮುನ್ನಡೆಸುವ ಸಿದ್ಧಾಂತ ಶಿಖಾಮಣಿಯ ಆಧ್ಯಾತ್ಮಿಕ ಪ್ರವಚನವನ್ನು ನಾವಿಂದು ಆಲಿಸಬೇಕಿದೆ ಎಂದರು.
ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಜಂಗಮವಾಡಿಮಠ ವಾರಣಾಸಿ ಕಾಶೀ ಮಹಾಪೀಠದ ಶ್ರೀಮತ್ ಕಾಶೀ ಜ್ಞಾನಸಿಂಹಾಸನಾಧೀಶ್ವರ ಜ. ಡಾ. ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಭಗವತ್ಪಾದಂಗಳವರು, ವೀರಶೈವ ಲಿಂಗಾಯತ ಧರ್ಮಕ್ಕೆ ಧರ್ಮ ಗ್ರಂಥವಾಗಿರುವ ಶ್ರೀ ಸಿದ್ಧಾಂತ ಶಿಖಾಮಣಿ ಸಾಧಕರನ್ನು ಸಾಧನೆಯ ಮಾರ್ಗಕ್ಕೆ, ಧರ್ಮದ ಸನ್ಮಾರ್ಗದಲ್ಲಿ ಮುನ್ನಡೆಸುವಂತದ್ದು ಎಂದರು.
ನರೇಗಲ್ ಹಿರೇಮಠದ ಪೂಜ್ಯ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳು ಶ್ರೀ ಸಿದ್ಧಾಂತ ಶಿಖಾಮಣಿ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಗಣ್ಯರಾದ ಶರಣಬಸಪ್ಪ ಗುಡಿಮನಿ, ಬಸವರಾಜ ಬಿಂಗಿ, ಶ್ರೀಕಾಂತ ಲಕ್ಕುಂಡಿ, ರಾಜು ಕುರಡಗಿ, ಮುರುಗೇಶ ಬಡ್ನಿ, ವೀರಣ್ಣ ಕರಬಿಷ್ಠಿ, ಫಕ್ಕೀರಪ್ಪ ಹೆಬಸೂರ, ಶಿವಾನಂದಯ್ಯ ಹಿರೇಮಠ, ಸಿ.ಕೆ.ಮಾಳಶೆಟ್ಟಿ, ಶಂಕರ ಹಾನಗಲ್ಲ, ಜಿ.ಎಸ್.ಗಡ್ಡದೇವರಮಠ, ಗುರಣ್ಣ ಬಳಗಾನೂರ, ಶ್ವೇತಾ ದಂಡಿನ, ವಿಜಯಲಕ್ಷ್ಮೀ ದಿಂಡೂರ ಅವರಿಗೆ ಪೂಜ್ಯರು ಸನ್ಮಾನಿಸಿ ಆಶೀರ್ವದಿಸಿದರು.
ಕಾಂಚನಮಾಲಾ ಬಾಳಿಹಳ್ಳಿಮಠ, ಶಿವಯೋಗಿ ತೆಗ್ಗಿನಮಠ, ಸಿ.ಜಿ. ಜಿನಗಾ, ಈಶ್ವರಪ್ಪ ಮುನವಳ್ಳಿ, ಬಸವರಾಜ ಹೆರಕಲ್, ಜಾಹ್ನವಿ ದೇಸಾಯಿ ಅವರಿಗೆ ಪೂಜ್ಯರು ಸನ್ಮಾನಿಸಿ ಆಶೀರ್ವದಿಸಿದರು.
ಡಾ. ಶಿವಬಸಯ್ಯ ಗಡ್ಡದಮಠ ಪ್ರಾರ್ಥಿಸಿದರು. ಮಂಜುನಾಥ ಬೇಲೇರಿ ಸ್ವಾಗತಿಸಿದರು. ಚಂದ್ರು ಬಾಳಿಹಳ್ಳಿಮಠ ಪ್ರಾಸ್ತಾವಿಕವಾಗಿ ಮಾತನಾಡಿದರು ವ್ಹಿ.ಕೆ. ಗುರುಮಠ ನಿರೂಪಿಸಿ ವಂದಿಸಿದರು.
ಮಾಜಿ ಶಾಸಕ ಡಿ.ಆರ್. ಪಾಟೀಲ ಮಾತನಾಡಿ, ಗದುಗಿನಲ್ಲಿ ಶ್ರೀಮತ್ ಕಾಶೀ ಪೀಠದ ಹಿರಿಯ ಜಗದ್ಗುರುಗಳು ಪ್ರತಿ ವರ್ಷ ಆಷಾಢ ಮಾಸದ ಇಷ್ಟಲಿಂಗ ಮಹಾಪೂಜೆ ಹಾಗೂ ಶ್ರೀ ಸಿದ್ಧಾಂತ ಶಿಖಾಮಣಿ ಆಧ್ಯಾತ್ಮಿಕ ಪ್ರವಚನ ನಡೆಸಿದ ಪರಿಣಾಮವಾಗಿ ಗದಗ ಪರಿಸರದಲ್ಲಿ ಧರ್ಮಜಾಗೃತಿ, ಆಧ್ಯಾತ್ಮಿಕ ಚಿಂತನೆಗಳು ಜನತೆಯನ್ನು ಸನ್ಮಾರ್ಗದಲ್ಲಿ ಮುನ್ನಡೆಸಿವೆ ಎಂದರು.