ವಿಜಯಸಾಕ್ಷಿ ಸುದ್ದಿ, ರೋಣ : ರೋಣ ಪಟ್ಟಣದ ವೀರಭದ್ರೇಶ್ವರ ಜಾತ್ರಾ ಮಹೋತ್ಸವದ ಸಂಧರ್ಭದಲ್ಲಿ ರಥೋತ್ಸವದ ಗಾಲಿಗೆ ಸಿಲುಕಿ ಇಬ್ಬರು ಭಕ್ತರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದರು. ಈ ಹಿನ್ನೆಲೆಯಲ್ಲಿ, ಶಾಸಕ ಜಿ.ಎಸ್. ಪಾಟೀಲ ಮೃತರ ಮನೆಗಳಿಗೆ ತೆರಳಿ ಸಾಂತ್ವಾನ ಹೇಳಿದರಲ್ಲದೆ, ವಯಕ್ತಿಕವಾಗಿ ಎರಡೂ ಕುಟುಂಬಕ್ಕೆ ತಲಾ 1 ಲಕ್ಷ ರೂಗಳ ಪರಿಹಾರ ವಿತರಿಸಿ, ತುಟುಂಬದ ಸದಸ್ಯರಿಗೆ ಧೈರ್ಯ ತುಂಬಿದರು.
ಮೇ 18ರಂದು ಪಟ್ಟಣದ ವೀರಭದ್ರೇಶ್ವರ ಜಾತ್ರಾ ಮಹೋತ್ಸವದ ರಥೋತ್ಸವದ ಸಂಧರ್ಭದಲ್ಲಿ ಈ ದುರ್ಘಟನೆ ಸಂಭವಿಸಿತ್ತು. ಪಟ್ಟಣದ ನಿವಾಸಿ ಮಲ್ಲನಗೌಡ ಲಿಂಗನಗೌಡ್ರ (55) ಹಾಗೂ ತಾಲೂಕಿನ ಬಾಸಲಾಪೂರ ಗ್ರಾಮದ ಗೊಡಚಪ್ಪ ಬಾರಕೇರ (32) ಎಂಬ ಇಬ್ಬರು ಭಕ್ತರು ಮೃತರಾಗಿದ್ದರು.
ಮೃತ ಮಲ್ಲನಗೌಡ ಲಿಂಗನಗೌಡ್ರ ಅವರ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿರುವ ಶಾಸಕ ಪಾಟೀಲ, ತಮ್ಮದೇ ಶಿಕ್ಷಣ ಸಂಸ್ಥೆಯಲ್ಲಿ ಉಚಿತ ಶಿಕ್ಷಣ ಒದಗಿಸಲಾಗುವುದು ಎಂದರಲ್ಲದೆ, ಕುಟುಂಬಸ್ಥರು ಅತಂತ್ರ ಭಾವನೆ ಅನುಭವಿಸುವ ಅಗತ್ಯವಿಲ್ಲ. ನಿಮ್ಮೊಂದಿಗೆ ಸದಾಕಾಲವೂ ಇರುವುದಾಗಿ ತಿಳಿಸಿ, ಸರಕಾರದಿಂದಲೂ ಹೆಚ್ಚಿನ ಪರಿಹಾರ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ತಿಳಿಸಿದರು.
ಬಾಸಾಲಾಪೂರ ಗ್ರಾಮಕ್ಕೆ ತೆರಳಿ ಮೃತ ಯುವಕನ ತಂದೆ-ತಾಯಿಗಳಿಗೆ ಧೈರ್ಯ ತುಂಬಿದ ಶಾಸಕ ಜಿ.ಎಸ್. ಪಾಟೀಲ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಐ.ಎಸ್. ಪಾಟೀಲ, ಬಸವರಾಜ ನವಲಗುಂದ, ವ್ಹಿ.ವಿ. ಸೋಮನಕಟ್ಟಿಮಠ, ಸಂಗು ನವಲಗುಂದ ಸೇರಿದಂತೆ ಮುಖಂಡರು ಹಾಗೂ ಕುಟುಂಬಸ್ಥರು ಉಪಸ್ಥಿತರಿದ್ದರು.
ಈ ಘಟನೆ ನನ್ನ ಮನಸ್ಸಿಗೆ ತುಂಬಾ ನೋವು ತರಿಸಿದೆ. ಕುಟುಂಬಸ್ಥರಿಗೆ ಮೃತರ ಅಗಲಿಕೆಯ ದುಃಖ ಭರಿಸುವ ಶಕ್ತಿಯನ್ನು ಭಗವಂತ ದಯಪಾಲಿಸಲಿ. ಸರಕಾರದಿಂದ ಸೂಕ್ತ ಪರಿಹಾರ ಕೊಡಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ.
– ಜಿ.ಎಸ್. ಪಾಟೀಲ.
ಶಾಸಕರು, ರೋಣ.