ವಿಜಯಸಾಕ್ಷಿ ಸುದ್ದಿ, ಗದಗ : ನಗರದಲ್ಲಿ ವಿಜಯನಗರ ಕಾಲದ ಕೋಟೆ ಗೋಡೆ ಪತ್ತೆಯಾಗಿದ್ದು, ಈ ಗೋಡೆಯು ದೊಡ್ಡ ಕಲ್ಲು ಹಾಗೂ ಮಣ್ಣಿನಿಂದ ಕಟ್ಟಲಾಗಿದೆ. ಇತಿಹಾಸ ತಜ್ಞರಾದ ಅ.ದ. ಕಟ್ಟಿಮನಿ ಅವರು ಪತ್ರಕರ್ತ, ಪಾರಂಪರಿಕ ವೈದ್ಯರಾದ ರಘು ಕೊಪ್ಪರ್ ಹಾಗೂ ಜೋಡ ಮಾರುತಿ ಟ್ರಸ್ಟ್ ಕಮಿಟಿ ಅಧ್ಯಕ್ಷ ವಿಶ್ವನಾಥ ರಾಮನಕೊಪ್ಪ ಅವರಿಗೆ ಗದುಗಿನ ಹಳೆಯ ಕಿಲ್ಲೆಯ ಬಗ್ಗೆ ಪ್ರಸ್ತಾಪಿಸಿ ಆ ಕಿಲ್ಲೆಯ ಸುತ್ತ ಇದ್ದ ಕೋಟೆಯ ಬಗ್ಗೆ ತಿಳಿಸಿದರು. ಇಂದಿನ ಗದುಗಿನ ಕೋಳಿಕೇರಿ ಜಿನ್ನ ಮೂಲೆಯ ಭಾಗದಲ್ಲಿ ಆ ಕೋಟೆಯು ಸ್ವಲ್ಪವೇ ಉಳಿದುಕೊಂಡಿದ್ದು, ಬಹುತೇಕರಿಗೆ ಅದರ ಬಗ್ಗೆ ತಿಳಿದಿಲ್ಲ. ಅದು ಖಾಸಗಿ ಒಡೆತನದ ಜಾಗವಾಗಿದ್ದು, ಅಲ್ಲಿ ಓಡಾಡುವವರೂ ಕೂಡ ಆ ಹಳೆಯ ಕೋಟೆ ಗೋಡೆ ಗಮನಿಸಿಲ್ಲ ಅಥವಾ ಗಮನಿಸಿದರೂ ಅದರ ಇತಿಹಾಸ ಬಗ್ಗೆ ಗೊತ್ತಿಲ್ಲ.
ರಘು ಕೊಪ್ಪರ್ ಮತ್ತು ಅ.ದ. ಕಟ್ಟಿಮನಿ ಅವರು ಪಾರ್ಶ್ವನಾಥ ಗುಡಿಯ ರಸ್ತೆಯಲ್ಲಿ ಸಾಗುತ್ತಿದ್ದಾಗ ಕಟ್ಟಿಮನಿ ಅವರು ಆ ಕೋಟೆ ಗೋಡೆ ಇಲ್ಲಿಯೇ ಬರುತ್ತದೆ ಎಂದು ಅರಸುತ್ತ ಸಾಗಿದರು. ನಂತರ ನರಸಿಂಗಸಾ ಸಂಸ್ಥೆಯ ಹಬೀಬ ಅವರು ಕೋಳಿಕೇರಿ ಜಿನ್ನ ಹತ್ತಿರ ಸಿಕ್ಕರು. ಅವರ ಜೊತೆಗೆ ಮಾತನಾಡುತ್ತ ಕೊಪ್ಪರ್ ಮತ್ತು ಕಟ್ಟಿಮನಿಯವರು ನಾಗಡಾ ಅವರ ಅನುಮತಿ ಪಡೆದು ಆ ಕೋಟೆ ಗೋಡೆಯ ಹತ್ತಿರ ಹೋಗಿ ನೋಡಿ, ಇದು ವಿಜಯನಗರದ ಕಾಲದ್ದು ಎಂದು ಖಾತ್ರಿಪಡಿಸಿದರು.
ಗದಗ ಎಂದರೆ ಬರೀ ವೀರನಾರಾಯಣ ಮತ್ತು ತ್ರಿಕೊಟೇಶ್ವರ ದೇವಸ್ಥಾನಗಳು ಎಂದು ಬಹುತೇಕರು ತಿಳಿದಿದ್ದು, ಇಲ್ಲಿ ಇನ್ನೂ ಅನೇಕ ಐತಿಹಾಸಿಕ ದೇವಾಲಯಗಳು ಹಾಗೂ ಕೋಟೆ ಗೋಡೆಯಂತಹ ಇತಿಹಾಸ ತಿಳಿಸುವ ಸ್ಥಳಗಳಿವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ಕೋಟೆ ಗೋಡೆಯು 20 ಅಡಿಗಿಂತ ಹೆಚ್ಚಿದ್ದು ಈಗ ಸ್ವಲ್ಪವಷ್ಟೇ ಉಳಿದುಕೊಂಡಿದೆ. ಆಗಿನ ಕಾಲದಲ್ಲಿ ಸುರಕ್ಷತೆಯ ಉದ್ದೇಶದಿಂದ ಊರ ಸುತ್ತಲೂ ಕೋಟೆ ಕಟ್ಟುತ್ತಿದ್ದರು. ಅಂದಿನ ಕಿಲ್ಲಾ ಇಂದಿನ ಕೋಳಿಕೆರಿ ಜಿನ್ನಿಂದ ಐಬಿ ನಂತರ ಹಳೆಯ ಪೋಸ್ಟ್ ಆಫೀಸ್ನಿಂದ ಸರ್ಕಾರಿ ನಂ.1 ಶಾಲೆ ನಂತರ ಪಾರ್ಶ್ವನಾಥ ರಸ್ತೆಯವರೆಗೆ ಎಂದು ಓದಿರುವುದಾಗಿ ಅ.ದ. ಕಟ್ಟಿಮನಿ ತಿಳಿಸಿದರು.