ವಿಜಯಸಾಕ್ಷಿ ಸುದ್ದಿ, ಡಂಬಳ: ತಮ್ಮ ಪ್ರಾಮಾಣಿಕ ಕಲಿಕಾ ಚಟುವಟಿಕೆಗಳ ಮೂಲಕ 30 ವರ್ಷಗಳ ಕಾಲ ಸಾವಿರಾರು ಪ್ರತಿಭಾವಂತ ವಿದ್ಯಾರ್ಥಿಗಳ ಭವಿಷ್ಯ ರೂಪಿಸುತ್ತಿರುವ ಕದಾಂಪುರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಅಬ್ದುಲಮುನಾಫ್ ಬಿಜಾಪುರ ಹೊಳೆಆಲೂರು ಎಸ್.ಎಸ್. ಆಡಿನ್ ಜನಸೇವಾ ಸಂಸ್ಥೆ ಕೊಡಮಾಡುವ `ರಾಜ್ಯಮಟ್ಟದ ಉತ್ತಮ ಶಿಕ್ಷಕ’ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಲಾಡಸಾಬ್-ಮಹಬೂಬಿ ಅವರು ಅಬ್ದುಲಮುನಾಫ್ ಅವರ ತಂದೆ-ತಾಯಿಗಳು. ಪತ್ನಿ ಶಬಿಯಾಸುತನ ಅವರ ಕೈ ಹಿಡಿದರು. 1995ರಲ್ಲಿ ಹುಲಕೋಟಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ವೃತ್ತಿಜೀವನ ಪ್ರಾರಂಭಿಸಿ 14 ವರ್ಷ, ನಂತರ ರಾಜೀವ್ ಗಾಂಧಿ ಪ್ರೌಢಶಾಲೆಯಲ್ಲಿ 11 ವರ್ಷ, ಮುಧೋಳದಲ್ಲಿ, ನಾಗಾವಿ ಗ್ರಾಮದಲ್ಲಿ, ಈಗ ಕದಾಂಪುರ ಗ್ರಾಮದಲ್ಲಿ 3 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ.
ವಿದ್ಯಾರ್ಥಿಗಳ, ಜನತೆಯ ಮೆಚ್ಚಿನ ಶಿಕ್ಷಕರಾದ ಇವರಿಗೆ 2010ರಲ್ಲಿ ಗದಗ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ, ತಾಲ್ಲೂಕು ಉತ್ತಮ ಮಾರ್ಗದರ್ಶಕ ಪ್ರಶಸ್ತಿಗಳು ಸಂದಿವೆ. ಕರ್ನಾಟಕ ರಾಜ್ಯ ಹಿಂದಿ ಭಾಷಾ ಸಂಚಾಲಕರಾಗಿ, ಸಂಪನ್ಮೂಲ ವ್ಯಕ್ತಿಯಾಗಿ, ಗದಗ ಜಿಲ್ಲಾ ಹಿಂದಿ ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾಗಿ, ಹಲವು ಹಿಂದಿ ಕಾರ್ಯಾಗಾರಗಳ ಮೂಲಕ ಸೇವೆ ಸಲ್ಲಿಸಿದ ಇವರ ಕಾರ್ಯಕ್ಕೆ ವಿದ್ಯಾರ್ಥಿಗಳು, ಶಿಕ್ಷಕರು ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಹಿಂದಿ ಶಿಕ್ಷಣಕ್ಕೆ ಒತ್ತು ನೀಡುವುದರೊಂದಿಗೆ ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ನಿರಂತರ ಶ್ರಮಿಸುತ್ತಿರುವ ಫಲವಾಗಿ ಸಾವಿರಾರು ವಿದ್ಯಾರ್ಥಿಗಳು ಉನ್ನತ ಹುದ್ದೆಯನ್ನು ಹೊಂದುತ್ತಿರುವ ಶ್ರೇಯಸ್ಸು ಇವರದಾಗಿದೆ.
“ವಿದ್ಯಾರ್ಥಿಗಳ ಭವಿಷ್ಯದಲ್ಲಿ ದೇಶದ ಭವಿಷ್ಯ ಅಡಗಿದೆ. ಆ ನಿಟ್ಟಿನಲ್ಲಿ ಶ್ರಮಿಸುತ್ತಿರುವ ಎ.ಎಲ್. ಬಿಜಾಪುರ ಅವರು ಹೊಳೆಆಲೂರು ಎಸ್.ಎಸ್. ಆಡಿನ್ ಜನಸೇವಾ ಸಂಸ್ಥೆ ಕೊಡಮಾಡುವ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿರುವುದು ಪ್ರಶಂಸನೀಯ”
ಗಂಗಾಧರ ಅಣ್ಣಿಗೇರಿ,
ಕ್ಷೇತ್ರ ಶಿಕ್ಷಣಾಧಿಕಾರಿ, ಮುಂಡರಗಿ.
“ವಿದ್ಯಾರ್ಥಿಗಳು ಮೊಬೈಲ್ ಗೀಳನ್ನು ಬಿಟ್ಟು ಉತ್ತಮ ಭವಿಷ್ಯ ಹೊಂದಲು, ತಂದೆ-ತಾಯಿ, ಗುರುಗಳ ಮಾರ್ಗದರ್ಶನದಲ್ಲಿ ಸಾಗಿದಾಗ ನಿಮ್ಮ ಭವಿಷ್ಯ ಬೆಳಗುತ್ತದೆ”
— ಎ.ಎಲ್. ಬಿಜಾಪುರ,
ಪ್ರಶಸ್ತಿ ಪುರಸ್ಕೃತ ಶಿಕ್ಷಕ.


