ಚೆನ್ನೈ: ತಮಿಳು ನಾಡು ರಾಜಕಾರಣದಲ್ಲಿ ಇಂದು ಹೊಸ ಅಧ್ಯಾಯ ಆರಂಭವಾಗಿದೆ. ನಟ ಹಾಗೂ ತಮಿಳಗ ವೆಟ್ರಿ ಕಳಗಂ ಮುಖ್ಯಸ್ಥ ಸಿ. ಜೋಸೆಫ್ ವಿಜಯ್ ಅವರು ಇಂದು ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಚೆನ್ನೈನ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಈ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ನೆರವೇರಿತು. ಕಾರ್ಯಕ್ರಮವು ಪ್ರಾರ್ಥನೆಯೊಂದಿಗೆ ಆರಂಭಗೊಂಡಿದ್ದು, ಬಳಿಕ ರಾಜ್ಯಪಾಲರು ಮಾತನಾಡಿ ನಂತರ ವಿಜಯ್ ಅವರಿಗೆ ಪ್ರಮಾಣ ವಚನ ಬೋಧಿಸಿದರು. “ನಾನು ಸಿ. ಜೋಸೆಫ್ ವಿಜಯ್ ಎನ್ನುವ ನಾನು…” ಎಂದು ಹೇಳುತ್ತಾ ವಿಜಯ್ ಪ್ರಮಾಣ ವಚನ ಸ್ವೀಕರಿಸಿದರು. ಈ ವೇಳೆ ಅವರ ತಂದೆ–ತಾಯಿ ಭಾವುಕರಾಗಿ ಮಗನನ್ನು ನೋಡಿ ಕೈಮುಗಿದ ದೃಶ್ಯ ಗಮನ ಸೆಳೆದಿತು.
ಸಿನಿಮಾ ಲೋಕದಿಂದ ರಾಜಕೀಯಕ್ಕೆ ಎಂಟ್ರಿ ನೀಡಿದ ವಿಜಯ್, 2009ರಲ್ಲಿ ಅಭಿಮಾನಿ ಸಂಘಟನೆ ‘ವಿಜಯ್ ಮಕ್ಕಳ್ ಅಯ್ಯಕಂ’ ಮೂಲಕ ಸಾಮಾಜಿಕ ಸೇವೆ ಆರಂಭಿಸಿದ್ದರು. ನಂತರ 2024 ಫೆಬ್ರವರಿ 2ರಂದು ತಮಿಳಗ ವೆಟ್ರಿ ಕಳಗಂ (TVK) ಪಕ್ಷವನ್ನು ಅಧಿಕೃತವಾಗಿ ಸ್ಥಾಪಿಸಿದ್ದರು. ಅದೇ ವರ್ಷ ಅಕ್ಟೋಬರ್ನಲ್ಲಿ ವಿಕ್ರವಂಡಿಯಲ್ಲಿ ಮೊದಲ ಮಹಾಸಮಾವೇಶ ನಡೆಸಿ ರಾಜಕೀಯ ಪಯಣಕ್ಕೆ ವೇಗ ನೀಡಿದ್ದರು.
ಈ ಮಧ್ಯೆ 2025ರ ಸೆಪ್ಟೆಂಬರ್ನಲ್ಲಿ ಕರೂರು ಕಾಲ್ತುಳಿತ ದುರಂತದಲ್ಲಿ 41 ಜನರು ಸಾವನ್ನಪ್ಪಿ, 80ಕ್ಕೂ ಹೆಚ್ಚು ಮಂದಿ ಗಾಯಗೊಂಡ ಘಟನೆ ರಾಜ್ಯವನ್ನು ತತ್ತರಗೊಳಿಸಿತ್ತು. ಆದರೆ ಈ ಘಟನೆಯ ನಂತರವೂ ವಿಜಯ್ ರಾಜಕೀಯದಿಂದ ಹಿಂದೆ ಸರಿಯದೆ 2026ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಯಶಸ್ಸು ಸಾಧಿಸಿದ್ದಾರೆ.
ಟಿವಿಕೆ ಪಕ್ಷವು ಮೊದಲ ಪ್ರಯತ್ನದಲ್ಲೇ ಅಧಿಕಾರಕ್ಕೆ ಬಂದಿದ್ದು, ಚುನಾವಣಾ ತಂತ್ರಜ್ಞರಾದ ಕಪಿಲ್ ಸಾಹು ಮತ್ತು ಜಾನ್ ಆರೋಗ್ಯಸ್ವಾಮಿ ಅವರ ಮಾರ್ಗದರ್ಶನ ಪ್ರಮುಖ ಪಾತ್ರ ವಹಿಸಿದೆ ಎಂದು ತಿಳಿದುಬಂದಿದೆ.
ಸರ್ಕಾರವು ಹಲವು ಜನಹಿತ ಘೋಷಣೆಗಳನ್ನು ಕೂಡ ಮಾಡಿದೆ. ಮನೆ ಯಜಮಾನಿಗೆ ಮಾಸಿಕ ₹2,500, ಉಚಿತ ಸಿಲಿಂಡರ್ ಯೋಜನೆ, ಮಹಿಳಾ ಮದುವೆಗೆ ಚಿನ್ನ, ಬಡ್ಡಿರಹಿತ ಸಾಲ, ಉಚಿತ ಬಸ್ ಪ್ರಯಾಣ, ವಿದ್ಯುತ್ ಹಾಗೂ ನೀರಿನ ಉಚಿತ ಸೇವೆ, ರೈತರ ಸಾಲ ಮನ್ನಾ, ನಿರುದ್ಯೋಗಿಗಳಿಗೆ ಧನಸಹಾಯ ಸೇರಿದಂತೆ ಹಲವು ಭರವಸೆಗಳನ್ನು ಘೋಷಿಸಲಾಗಿದೆ.



