ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿ ಮೂಲಕ ಹೊಸ ಸಂದೇಶ ರವಾನಿಸಲಾಗಿದೆ: ಡಿ.ಕೆ. ಶಿವಕುಮಾರ್

0
Spread the love

ಯಾದಗಿರಿ: “ಕಾಂಗ್ರೆಸ್ ಸರ್ಕಾರದ ಸಚಿವರು, ಶಾಸಕರು ಹಾಗೂ ಸಂಸದರು ಸೇರಿ ಎಲ್ಲಾ ರಂಗದಲ್ಲಿಯೂ ಕಲ್ಯಾಣ ಕರ್ನಾಟಕವನ್ನು ಅಭಿವೃದ್ಧಿಯ ಪಥದಲ್ಲಿ ಮುನ್ನಡೆಸುತ್ತಿದ್ದಾರೆ, ಅಭಿವೃದ್ಧಿಯ ರಥ ಎಳೆಯುತ್ತಿದ್ದಾರೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

Advertisement

 ಯಾದಗಿರಿ ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಆರೋಗ್ಯ ಆವಿಷ್ಕಾರ ಯೋಜನೆಯಡಿ ಆರೋಗ್ಯ ಇಲಾಖೆಯ ವಿವಿಧ ಕಾಮಗಾರಿಗಳಿಗೆ ಅಡಿಗಲ್ಲು ಸಮಾರಂಭದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಭಾಗವಹಿಸಿ ಮಾತನಾಡಿದರು.

 “ಅಧಿಕಾರ ನಶ್ವರ, ಸಾಧನೆಗಳು ಅಜರಾಮರ, ಆದರೆ ಮತದಾರರೇ ಈಶ್ವರ. ಹೀಗಾಗಿ ನಿಮಗೆ ಅಭಿನಂದನೆ ಹೇಳಲು ನಾವು ಇಲ್ಲಿಗೆ ಬಂದಿದ್ದೇವೆ. ಕಲ್ಯಾಣ ಕರ್ನಾಟಕದ ಜನರು ಕಾಂಗ್ರೆಸ್ ಪಕ್ಷಕ್ಕೆ, ಮಲ್ಲಿಕಾರ್ಜುನ ಖರ್ಗೆ ಅವರ ನಾಯಕತ್ವಕ್ಕೆ, ಸಿದ್ದರಾಮಯ್ಯ ಅವರ ಆಡಳಿತಕ್ಕೆ ಮೆಚ್ಚಿ ಈ ಭಾಗದಲ್ಲಿ ಆರು ಸಂಸದರನ್ನು ಆಯ್ಕೆ ಮಾಡಿ ದೇಶಕ್ಕೆ ದೊಡ್ಡ ಸಂದೇಶ ರವಾನಿಸಿದ್ದೀರಿ.

 ದೇವರು ನಮಗೆ ಎರಡು ಆಯ್ಕೆ ಕೊಟ್ಟಿದ್ದಾನೆ. ಒಂದು ಕೊಟ್ಟು ಹೋಗುವುದು, ಮತ್ತೊಂದು ಬಿಟ್ಟು ಹೋಗುವುದು. ನಿಮ್ಮ ಬೆಂಬಲದಿಂದ 140 ಶಾಸಕರ ಸಂಖ್ಯಾಬಲದಲ್ಲಿ ನಮ್ಮ ಸರ್ಕಾರ ರಚನೆಯಾಗಿದೆ. ನಾವು ಅಧಿಕಾರಕ್ಕೆ ಬಂದ ಮೊದಲ ದಿನ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ಅನುಮೋದನೆ ನೀಡಿದ್ದೆವು. ನಿಮ್ಮ ಈ ಭಾಗದ ಸಚಿವರಾದ ಪ್ರಿಯಾಂಕ್ ಖರ್ಗೆ,

ಕೆಕೆಆರ್ ಡಿಬಿ ಅಧ್ಯಕ್ಷರಾದ ಅಜಯ್ ಸಿಂಗ್, ಜಿಲ್ಲಾ ಉಸ್ತುವಾರಿ ಸಚಿವರಾದ ದರ್ಶನಾಪುರ್, ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್, ಸಂಸದರಾದ ರಾಧಕೃಷ್ಣ, ಬಿ.ವಿ.ನಾಯಕ್ ಹಾಗೂ ಜಿಲ್ಲೆಯ ಎಲ್ಲಾ ಶಾಸಕರು ಸೇರಿ ಕಲ್ಯಾಣ ಪಥವನ್ನು ಅಭಿವೃದ್ಧಿಯ ಪಥವನ್ನಾಗಿ ಮಾಡಿದ್ದಾರೆ. ಇಲ್ಲಿ ಸೇರಿರುವ ಜನಸಮೂಹವೇ ಇದಕ್ಕೆ ಸಾಕ್ಷಿ.

 ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿ ಮೂಲಕ ಹೊಸ ಸಂದೇಶ ರವಾನಿಸಲಾಗಿದೆ. ಶಿಕ್ಷಣ, ಆರೋಗ್ಯ, ರಸ್ತೆ, ಗ್ರಾಮೀಣಾಭಿವೃದ್ಧಿ, ಉದ್ಯೋಗ ಸೇರಿ ಎಲ್ಲಾ ರಂಗದಲ್ಲೂ ಅಭಿವೃದ್ಧಿ ಮಾಡಲಾಗುತ್ತಿದೆ. ಇಂದು ಆರೋಗ್ಯ ಕ್ಷೇತ್ರದಲ್ಲಿ ರೂ.416 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗಿದೆ.

ರಾಜ್ಯದ ಆರೋಗ್ಯ ಕ್ಷೇತ್ರದಲ್ಲಿ ಬೆಂಗಳೂರು ನಂತರ ಹೈದರಾಬಾದ್ ಕರ್ನಾಟಕ ಎರಡನೇ ಸ್ಥಾನವನ್ನು ಅಲಂಕರಿಸುವಂತೆ ಮಾಡಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರು ಕೇಂದ್ರದ ಕಾರ್ಮಿಕ ಸಚಿವರಾಗಿದ್ದಾಗ ಈ ಭಾಗದ ಜನರ ಆರೋಗ್ಯ ಸುಧಾರಣೆಗೆ ಅತಿ ದೊಡ್ಡ ಇಎಸ್ ಐ ಆಸ್ಪತ್ರೆ ನಿರ್ಮಿಸಿ ಹೊಸ ಇತಿಹಾಸ ಬರೆದಿದ್ದಾರೆ.

 ನಮ್ಮ ಜಿಲ್ಲೆಗಳಿಗಿಂತ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳು ಹೆಚ್ಚು ಪ್ರಗತಿ ಸಾಧಿಸುತ್ತಿವೆ. ಯುಪಿಎ ಸರ್ಕಾರದಲ್ಲಿ ಮಲ್ಲಿಕಾರ್ಜುನ ಖರ್ಗೆ, ಮನಮೋಹನ್ ಸಿಂಗ್, ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರಿಂದಾಗಿ ಈ ಭಾಗಕ್ಕೆ 371ಜೆ ಮೂಲಕ ವಿಶೇಷ ಸ್ಥಾನಮಾನ ನೀಡಲಾಗಿದೆ. ಇದನ್ನು ಪಡೆದ ನೀವೆ ಪುಣ್ಯವಂತರು. ಕಾಂಗ್ರೆಸ್ ಪಕ್ಷದ ಈ ಕೊಡುಗೆಯನ್ನು ನೀವು ನಿಮ್ಮ ಮುಂದಿನ ಪೀಳಿಗೆಗಳು ಸ್ಮರಿಸಬೇಕು.

 ನಾವು ಕೇವಲ ಗ್ಯಾರಂಟಿ ಬಗ್ಗೆ ಮಾತನಾಡುವುದಿಲ್ಲ. ಎಲ್ಲಾ ರಂಗಗಳಲ್ಲಿ ಸಾಧಿಸಿರುವ ಪ್ರಗತಿ ಬಗ್ಗೆ ಮಾತನಾಡುತ್ತೇವೆ. ವಿರೋಧ ಪಕ್ಷಗಳು ಏನೇ ಟೀಕೆ ಮಾಡಲಿ. ನಾವು ಭಾವನೆಗಿಂತ ಜನರ ಬದುಕು ಸುಧಾರಿಸಲು ರಾಜಕಾರಣ ಮಾಡುತ್ತೇವೆ. ಬೆಲೆ ಏರಿಕೆಯಿಂದ ತತ್ತರಿಸುತ್ತಿದ್ದ ಜನರನ್ನು ರಕ್ಷಿಸಲು ಗೃಹಲಕ್ಷ್ಮಿ, ಗೃಹಜ್ಯೋತಿ, ಅನ್ನಭಾಗ್ಯ, ಶಕ್ತಿ, ಯುವನಿಧಿ ಯೋಜನೆಗಳನ್ನು ನೀಡಿದ್ದೇವೆ.

 ಯುಪಿಎ ಸರ್ಕಾರದ ಅವಧಿಯಲ್ಲಿ ಉದ್ಯೋಗ ಖಾತರಿ, ಶೈಕ್ಷಣಿಕ ಹಕ್ಕು, ಅರಣ್ಯ ಭೂಮಿ ಹಕ್ಕು ಕಾಯ್ದೆ, ಆಹಾರ ಭದ್ರತೆ ಸೇರಿದಂತೆ ಅನೇಕ ಕ್ರಾಂತಿಕಾರಕ ಕಾನೂನು ತಂದಿದ್ದಾರೆ. ಇಂದಿರಾ ಗಾಂಧಿ ಅವರು 50 ವರ್ಷಗಳ ಹಿಂದೆ ಅಂಗನವಾಡಿಗಳನ್ನು ಆರಂಭಿಸಿ ಮಕ್ಕಳಿಗೆ ಆರೋಗ್ಯ ಹಾಗೂ ಶಿಕ್ಷಣ ನೀಡಲು ಮುಂದಾದರು. ಅವರ ಈ ಕೆಲಸವನ್ನು ಇಡೀ ವಿಶ್ವ ಶ್ಲಾಘಿಸಿತು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗೆಲ್ಲಾ ಸರ್ವರಿಗೂ ಸಮಬಾಳು, ಸಮಪಾಲು ತತ್ವದ ಮೇಲೆ ಕಾರ್ಯಕ್ರಮ ರೂಪಿಸಿಕೊಂಡು ಬಂದಿದೆ.

 ಈ ಭಾಗದ ಶಾಸಕರು, ಮಂತ್ರಿಗಳು ಒಟ್ಟಾಗಿ ಕಲ್ಯಾಣ ರಥವನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ಅವರಿಗೆ ನಾನು ಶುಭಕೋರುತ್ತೇನೆ. ಮಲ್ಲಿಕಾರ್ಜುನ ಖರ್ಗೆ ಅವರು ಶೋಷಿತ ವರ್ಗಗಳಿಗೆ, ಸಾಮಾಜಿಕವಾಗಿ ಹಿಂದುಳಿದವರಿಗೆ ಸಾಮಾಜಿಕ ನ್ಯಾಯ ನೀಡಲು ಮುಂದಾಗಿದ್ದಾರೆ.

ವಿರೋಧ ಪಕ್ಷಗಳು ಏನೇ ಟೀಕೆ ಮಾಡಿದರೂ ಎಲ್ಲರಿಗೂ ಸಾಮಾಜಿಕ ನ್ಯಾಯ ನೀಡಲು ನಾವು ಬದ್ಧವಾಗಿದ್ದೇವೆ. ರಾಹುಲ್ ಗಾಂಧಿಯವರ ಚಿಂತನೆ, ಮಲ್ಲಿಕಾರ್ಜುನ ಖರ್ಗೆ ಅವರ ನಾಯಕತ್ವದಲ್ಲಿ ನಾವು ಜಾತಿಗಣತಿ ಮರುಸಮೀಕ್ಷೆ ಮಾಡಲು ಮುಂದಾಗಿದ್ದೇವೆ. ಎಲ್ಲಾ ವರ್ಗ, ಸಮುದಾಯ, ಜಾತಿ, ಧರ್ಮದವರು ಈ ಅವಕಾಶವನ್ನು ಬಳಸಿಕೊಂಡು ತಮ್ಮ ಮಾಹಿತಿಯನ್ನು ಸರಿಯಾಗಿ ಒದಗಿಸಬೇಕು ಎಂದರು.


Spread the love

LEAVE A REPLY

Please enter your comment!
Please enter your name here