ಹಾವೇರಿ: ಮನುಷ್ಯ ಮುಂದೆ ಬರಲು ಧ್ಯಾನ ಮತ್ತು ಜ್ಞಾನ ಬಹಳ ಮುಖ್ಯ. ಇವೆರಡೂ ಆಗಬೇಕಾದರೆ ವಿದ್ಯೆ ಮತ್ತು ಧಾರ್ಮಿಕ ಸಂಸ್ಕಾರ ಮುಖ್ಯ. ಯಾವ ಸಮಾಜದಲ್ಲಿ ವಿದ್ಯಾವಂತರು ಸಂಸ್ಕಾರವಂತರು ಇರುತ್ತಾರೊ ಆ ಸಮಾಜಕ್ಕೆ ಒಳ್ಳೆಯ ಭವಿಷ್ಯ ಇದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅಭಿಪ್ರಾಯ ಪಟ್ಟರು.
ಇಂದು ಹಾವೇರಿಯಲ್ಲಿ ಜಿಲ್ಲಾ ವೀರಶೈವ ಲಿಂಗಾಯತ ಪಂಚಮಸಾಲಿ ಟ್ರಸ್ಟ್ ಹಾಗೂ ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ವತಿಯಿಂದ ಏರ್ಪಡಿಸಿದ ಪ್ರಥಮ ಸ್ವಾತಂತ್ರ್ಯ ಹೋರಾಟಗಾರ್ತಿ ವೀರಮಾತೆ ವೀರರಾಣಿ ಕಿತ್ತೂರು ಚನ್ನಮ್ಮನ 201 ನೇಯ ವಿಜಯೋತ್ಸವ, ರಾಣಿ ಚನ್ನಮ್ಮನ ವೃತ್ತದ ಭೂಮಿ ಪೂಜೆ, ಸಮುದಾಯ ಭವನದ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸಿ, ಮಾತನಾಡಿದರು.
ವೀರರಾಣಿ ಕಿತ್ತೂರು ಚೆನ್ನಮ್ಮ ಅವರ ವೈಶಿಷ್ಟ್ಯ ಏನು ಅಂದರೆ ಯುದ್ದದಲ್ಲಿ ಮೊದಲು ಸೈನಿಕರು, ಸೇನಾಪತಿ ಹೋಗುತ್ತಾರೆ. ಆದರೆ, ವೀರರಾಣಿ ಕಿತ್ತೂರು ಚೆನ್ನಮ್ಮ ಹಾಗೆ ಅಲ್ಲ. ವೀರ ರಾಣಿ ಕಿತ್ತೂರು ಚೆನ್ನಮ್ಮಳೇ ಯುದ್ದದಲ್ಲಿ ಮೊದಲು ಹೋಗಿ ಯುದ್ದ ಭೂಮಿಯಲ್ಲಿ ನಾಯಕತ್ವ ಕೊಟ್ಟಿರುವ ವೀರ ಮಹಿಳೆ ಕಿತ್ತೂರು ರಾಣಿ ಚೆನ್ನಮ್ಮ.
ಅವಳನ್ನು ಬೈಲಹೊಂಗಲ ಜೈಲಿನಲ್ಲಿ ಹಾಕಿದಾಗ ಬ್ರಿಟೀಷರು ಪ್ರತಿದಿನ ಅವಳ ನೈತಿಕ ಸ್ಥೈರ್ಯವನ್ನು ಕುಗ್ಗಿಸುವ ಕೆಲಸವನ್ನು ಮಾಡುತ್ತಿದ್ದರು. ಆದರೆ, ಎಂದೂ ಕುಗ್ಗಿರಲಿಲ್ಲ. ಆದರೆ, ಯಾವಾಗ ಸಂಗೊಳ್ಳಿ ರಾಯಣ್ಣ ಸೆರೆ ಸಿಕ್ಕ ಅಂತ ಸುದ್ದಿ ಬಂತೊ ಆಗ ಚೆನ್ನಮ್ಮ ತನ್ನ ಆತ್ಮಾಹುತಿ ಮಾಡಿಕೊಂಡಳು. ಅಂದರೆ ನಂಬಿಕೆಯನ್ನು ಇಟ್ಟು ಯಾವ ರೀತಿ ತಮ್ಮ ಸಂಸಾರ ನೋಡಿಕೊಳ್ಳುತ್ತಿದ್ದಳು ಎನ್ನುವುದಕ್ಕೆ ಸಾಕ್ಷಿ ಎಂದು ಹೇಳಿದರು.
ಬ್ರಿಟೀಷರ ವಿರುದ್ದ ಹೋರಾಟ ಮಾಡುವುದು ಸುಲಭವಿರಲಿಲ್ಲ. ಆದರೆ, ಚೆನ್ನಮ್ಮ ಮೋಸಕ್ಕೆ ಬಲಿಯಾದಳು. ನಮಗೆ ವೀರರಾಣಿ ಕಿತ್ತೂರು ಚೆನ್ನಮ್ಮ ಪ್ರೇರಣೆ. ಅವರಿಗೆ ಇಡೀ ದೇಶಕ್ಕೆ ಪ್ರೇರಣೆ ಕೊಡುವ ಶಕ್ತಿ ಇದೆ. ಅದಕ್ಕಾಗಿಯೇ ಸಂಸತ್ತಿನಲ್ಲಿ ಅವರ ಪ್ರತಿಮೆಗೆ ಗೌರವದಿಂದ ತಲೆ ಬಾಗುತ್ತೇವೆ ಎಂದು ಹೇಳಿದರು.
ರಾಜ್ಯಾದ್ಯಂತ ಚೆನ್ನಮ್ಮನ ಜ್ಯೋತಿ
ನಾನು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದೆ. ಆ ಸಂದರ್ಭದಲ್ಲಿ ಕಿತ್ತೂರು ಜ್ಯೋತಿ ಬೆಳಗಾವಿಯಲ್ಲಿ ಸುತ್ತಿ ಅಲ್ಲಿಯೇ ಕಿತ್ತೂರಿಗೆ ಹೋಗುತ್ತಿತ್ತು. ಕಿತ್ತೂರು ಚೆನ್ನಮ್ಮಳನ್ನು ಬೆಳಗಾವಿಗೆ ಮಾತ್ರ ಸೀಮಿತ ಮಾಡಬೇಡಿ ಎಂದು ಕಿತ್ತೂರು ಚೆನ್ನಮ್ಮನ ಜ್ಯೋತಿಯನ್ನು ಬೆಂಗಳೂರಿಗೆ ತೆಗೆದುಕೊಂಡು ಹೋಗಿ ಮತ್ತೆ ಕಿತ್ತೂರಿಗೆ ಬರುವಂತೆ ಮಾಡಿದೆ ಈಗ ಅದು ನಿರಂತರವಾಗಿ ನಡೆಯುತ್ತಿದೆ.
ನಮ್ಮ ನಾಯಕರಾಗಿರುವ ಬಿ.ಎಸ್. ಯಡಿಯೂರಪ್ಪ ಅವರು ಕಿತ್ತೂರು ಕೋಟೆ ಅಭಿವೃದ್ಧಿಗೆ 8 ಕೋಟಿ ರೂ.ಯನ್ನು ಕೊಟ್ಟಿರುವುದನ್ನು ಸ್ಮರಿಸುತ್ತೇನೆ. ಅಂತಹ ಮಹಾರಾಣಿಯ ಬಗ್ಗೆ ನಮ್ಮ ಯುವಕರಿಗೆ ಸದಾ ನೆನಪಿಸಬೇಕೆಂಬ ಕಾರಣಕ್ಕೆ ಅವರ ಜಯಂತಿಯನ್ನು ಆಚರಿಸುತ್ತಿರುವುದಕ್ಕೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಹೇಳಿದರು.
ಪಂಚಮಸಾಲಿ ಸಮಾಜ ಕೃಷಿ ಆಧಾರಿತವಾದ ಐದು ರೀತಿಯ ಕಸುಬು ಮಾಡುವ ಸಮಾಜ. ಕೃಷಿ ವೃತ್ತಿ ಮಾಡುವ ರೈತರು ಅನಿಶ್ಚಿತತೆಯ ಬದುಕು ಬದುಕುತ್ತಾರೆ. ಭೂಮಿ ಮೇಲೆ ನಂಬಿಕೆ ಇಟ್ಟು ಬದುಕುತ್ತಾರೆ ಒಮ್ಮೊಮ್ಮೆ ಬದುಕು ಕಷ್ಟವಾಗಿರುತ್ತದೆ. ಗಾಳಿ ಮಳೆಯಲ್ಲಿ ಬಯಲಿನಲ್ಲಿ ಬದುಕಿದೆ. ಮಳೆ ಬಂದರೆ ಬೆಳೆ ಬರುತ್ತದೆಯೊ ಗೊತ್ತಿಲ್ಲ, ಬೆಳೆ ಬಂದರೆ ದರ ಬರುತ್ತದೆಯೊ ಗೊತ್ತಿಲ್ಲ, ಅನಿಶ್ಚಿತತೆಯ ಬದುಕಿದೆ. ಶೇ 80% ರಷ್ಟು ಈ ಸಮಾಜದ ಜನರು ಕೃಷಿ ಮಾಡುತ್ತಾರೆ ಎಂದರು.


