ವಿಜಯಸಾಕ್ಷಿ ಸುದ್ದಿ, ರೋಣ : ಹಿಂದುಳಿದ ತಾಲೂಕು ಎಂಬ ಹೆಗ್ಗಳಿಕೆಯನ್ನು ಹೊಂದಿದ್ದ ರೋಣ ತಾಲೂಕಿಗೆ ಈ ಬಾರಿಯ ಬಜೆಟ್ನಲ್ಲಿ ಸರಕಾರ ೧೫೦ ಕೋಟಿ ರೂ.ಗಳ ವಿಶೇಷ ಅನುದಾನವನ್ನು ನೀಡುವ ಮೂಲಕ ಪಟ್ಟಣದ ಅಭಿವೃದ್ಧಿಗೆ ಮುತುವರ್ಜಿ ವಹಿಸಿದ್ದು, ಶಾಸಕ ಜಿ.ಎಸ್. ಪಾಟೀಲರ ಅಭಿವೃದ್ಧಿಪರ ಚಿಂತನೆಗೆ ಸಾಕ್ಷಿಯಾಗಿದೆ.
ಶಿಕ್ಷಣ ಕ್ಷೇತ್ರದಲ್ಲಿ ಅತ್ಯಂತ ಹಿಂದುಳಿದ ತಾಲೂಕಿನಲ್ಲಿ ಜೆಟಿಟಿಸಿ ಕೋರ್ಸ್ ಆರಂಭವಾಗುತ್ತಿರುವುದು ಈ ಭಾಗದ ಜನರಲ್ಲಿ ಹೊಸ ಮನ್ವಂತರ ಮೂಡುವಂತೆ ಮಾಡಿದೆ. ಶಾಸಕ ಜಿ.ಎಸ್. ಪಾಟೀಲ ತಮ್ಮ ಅಧಿಕಾರದ ಅವದಿಯಲ್ಲಿ ಶಹರ ಹಾಗೂ ಗ್ರಾಮೀಣ ಭಾಗಗಳಲ್ಲಿ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುವ ಮೂಲಕ, ವಿದ್ಯಾರ್ಥಿಗಳ ಅನುಕೂಲಕ್ಕಾಗಿ ೬ ಸಾವಿರಕ್ಕೂ ಹೆಚ್ಚಿನ ವಿದ್ಯಾರ್ಥಿಗಳಿಗೆ ಸೋಲಾರ್ ವಿದ್ಯುತ್ ದೀಪಗಳನ್ನು ಸಹ ವಿತರಿಸಿದ್ದು ಸ್ಮರಣೀಯ.
ಇದಲ್ಲದೆ, ರೋಣ-ಮಲ್ಲಾಪೂರ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿಗೂ ಗಮನವಹಿಸಿದ ಶಾಸಕರು ಸರಕಾರದ ಚಿತ್ತ ಸೆಳೆದು, ಈ ರಸ್ತೆ ಅಭಿವೃದ್ಧಿಯ ಕುರಿತಾಗಿಯೂ ಈ ಬಾರಿಯ ಬಜೆಟ್ನಲ್ಲಿ ಪ್ರಸ್ತಾಪವಾಗಿರುವುದು ಹೆದ್ದಾರಿ ನಿರ್ಮಾಣಕ್ಕೆ ಸಹಕಾರಿಯಾಗಿದೆ. ಅಲ್ಲದೆ ಈ ರಸ್ತೆ ನಿರ್ಮಾಣದಿಂದ ಹುಬ್ಬಳ್ಳಿ-ಹೈದ್ರಾಬಾದ್ ಸಂಪರ್ಕಕ್ಕೆ ಹೆಚ್ಚಿನ ಅನುಕೂಲವಾಗಲಿದೆ. ಅಲ್ಲದೆ, ಜನರು ನಿರೀಕ್ಷಿಸಿದಂತೆ ಜಿಂಕೆ ವನ ಹಾಗೂ ಕೈಗಾರಿಕೆ ಸ್ಥಾಪನೆಗೆ ಒತ್ತು ನೀಡಿಲ್ಲವಾದರೂ ಸಹ ಮುಂದಿನ ದಿನಗಳಲ್ಲಿ ಅವಕಾಶ ದೊರಕಬಹುದು ಎಂಬ ನಿರೀಕ್ಷೆಯನ್ನು ಸಾರ್ವಜನಿಕರು ಹೊಂದಿದ್ದಾರೆ. ಒಟ್ಟಿನಲ್ಲಿ ಈ ಬಾರಿಯ ಬಜೆಟ್ ರೋಣಕ್ಕೆ ತುಸು ಸಿಹಿಯುಣ್ಣಿಸಿದೆ.
ಇದೊಂದು ಸಮಾಜ ಹಾಗೂ ಸಮುದಾಯದ ಉನ್ನತೀಕರಣಕ್ಕೆ ಸಹಕಾರಿಯಾಗುವ ಬಜೆಟ್ ಆಗಿದೆ. ಇನ್ನು ರೋಣದಲ್ಲಿ ಜೆಟಿಟಿಸಿ ಆರಂಭಿಸುತ್ತಿರುವುದು ಉದ್ಯೋಗ ಸೃಷ್ಟಿಸಿಲು ಅನುಕೂಲವಾಗಲಿದೆ. ಒಟ್ಟಿನಲ್ಲಿ ಬಜೆಟ್ ಜನರಲ್ಲಿ ಹೊಸ ಭರವಸೆಯನ್ನು ತುಂಬಿದೆ. ಸರ್ಕಾರದ ಗಮನಸೆಳೆಯುವಲ್ಲಿ ಸಫಲರಾದ ನಮ್ಮ ಶಾಸಕ ಜಿ.ಎಸ್. ಪಾಟೀಲರ ಶ್ರಮವಿದೆ.
– ಅಂದಪ್ಪ ಬಿಚ್ಚೂರ.
ಮುಖಂಡರು, ರೋಣ.
ಮಧ್ಯಮ ವರ್ಗದ ಮೆಲೆ ತೆರಿಗೆ ಹೆಚ್ಚಿಸುವ ಬಜೆಟ್ ಇದಾಗಿದ್ದು, ಜನ ಸಾಮಾನ್ಯರಿಗೆ ಅನುಕೂಲವಿಲ್ಲ. ಮುದ್ರಾಂಕ, ಅಬಕಾರಿ, ತೆರಿಗೆ ಸುಂಕವನ್ನು ಹೆಚ್ಚಳ ಮಾಡಿದ್ದು, ಇದ್ದಿದ್ದನ್ನು ಕಿತ್ತುಕೊಂಡು ಮತ್ತೊಂದು ಕಡೆಗೆ ಕೊಡುವ ಪ್ರಯತ್ನ ಮಾಡಲಾಗಿದೆ. ಘೋಷಣೆ ಮಾಡಿದ ಇತರ ಯೋಜನೆಗಳು ಜಾರಿಯಾಗುವುದು ಅನುಮಾನವಿದೆ ಎಂದು ರೋಣ ಮಂಡಲ ಬಿಜೆಪಿ ಘಟಕದ ಅಧ್ಯಕ್ಷ ಮುತ್ತಣ್ಣ ಕಡಗದ ಪ್ರತಿಕ್ರಿಯಿಸಿದರು.