ವಿಜಯಸಾಕ್ಷಿ ಸುದ್ದಿ, ನರೇಗಲ್ : ಒಂದು ಮನೆಯ ಪರಿಸರ ಸ್ವಚ್ಛತೆಯಿಂದ ಇದ್ದರೆ ನಮ್ಮ ಇಡೀ ಕುಟುಂಬವೇ ಸ್ವಚ್ಛತೆಯಿಂದ ಇರಲು ಸಾದ್ಯವಾಗುತ್ತದೆ ಎಂದು ಗದಗ ಜಿಲ್ಲಾ ಶ್ರೀ.ಧ.ಗ್ರಾ ಯೋಜನೆಯ ಹಿರಿಯ ನಿರ್ದೇಶಕ ಯೋಗಿಶ ಹೇಳಿದರು.
ನರೇಗಲ್ಲ ಪ.ಪಂ ಹತ್ತಿರದ ಗಾಂಧಿ ಭವನದಲ್ಲಿ ಶ್ರೀ.ಧ.ಗ್ರಾ.ಯೋಜನೆ ಬಿ.ಸಿ. ಟ್ರಸ್ಟ್ ವತಿಯಿಂದ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ ನಡೆದ ಬೀದಿ ನಾಟಕ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶ್ರೀ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಗ್ರಾಮೀಣ ನಾಗರಿಕರ ಅಭಿವೃದ್ಧಿಗಾಗಿ ಸಾಂಸ್ಕೃತಿಕ, ಶಿಕ್ಷಣ, ಆರೋಗ್ಯ, ಮಹಿಳಾ ಸಬಲೀಕರಣ ಸೇರಿದಂತೆ ಹತ್ತು ಹಲವಾರು ಯೋಜನೆಗಳನ್ನು ರೂಪಿಸಿದೆ. ಸಾಮಾಜಿಕ ಸ್ವಾಸ್ಥ್ಯ ಕಾಪಾಡುವ ನಿಟ್ಟಿನಲ್ಲಿ ಮನೆಗೊಂದು ಶೌಚಾಲಯ ನಿರ್ಮಿಸಿಕೊಳ್ಳುವ ಮೂಲಕ ಸಾಮಾಜಿಕ ಜಿವನದಲ್ಲಿ ಪ್ರತಿಯೊಂದು ಕುಟುಂಬಗಳು ಆರೋಗ್ಯಯುತ ಜೀವನಕ್ಕೆ ಮುಂದಾಗಬೇಕು ಎಂದ ಅವರು, ಧರ್ಮಸ್ಥಳ ಸಂಸ್ಥೆ ವತಿಯಿಂದ ಬಯಲು ಬಹಿರ್ದೆಸೆ ಮುಕ್ತ ಗ್ರಾಮವಾಗಿಸುವ ನಿಟ್ಟಿನಲ್ಲಿ ಶೃತಿ ಕಲಾ ತಂಡದವರು ಪ್ರಸ್ತುತಪಡಿಸುವ ಬೀದಿ ನಾಟಕದ ಮೂಲಕ ಜಾಗೃತಿ ಕೈಗೊಂಡಿದ್ದು, ಮುಂದಿನ ದಿನಗಳಲ್ಲಿ ತಮ್ಮ ಕುಟುಂಬಕ್ಕೆ ಒಂದು ಶೌಚಾಲಯ ನಿರ್ಮಿಸಿ ಆರೋಗ್ಯಯುತ ಜೀವನಕ್ಕೆ ಮುಂದಾಗಿ ಎಂದು ತಿಳಿಸಿದರು.
ಅತಿಥಿಗಳಾಗಿ ಪಾಲ್ಗೊಂಡ ನರೇಗಲ್ಲ ಪಿಎಸ್ಆಯ್ ಶಿವಾನಂದ ಬನ್ನಿಕೊಪ್ಪ ಮಾತನಾಡಿ, ಮಹಿಳೆಯರ ಸ್ವಾಭಿಮಾನ, ಗೌರವಯುತ ಜೀವನಕ್ಕೆ ಮನೆಗೊಂದು ಶೌಚಾಲಯ ಅತಿ ಅವಶ್ಯಕವಾಗಿದ್ದು, ಇದರಿಂದ ತಮ್ಮ ಕುಟುಂಬ ಆರೋಗ್ಯತವಾಗಿರಲು ಸಾಧ್ಯ. ಇಲ್ಲಿರುವ ಮಹಿಳೆಯರು ಶುಚಿತ್ವಕ್ಕೆ ಆದ್ಯತೆ ನೀಡಿದಲ್ಲಿ ಸಮಾಜಕ್ಕೆ ಮಾದರಿ ಜೀವನಕ್ಕೆ ನಾಂದಿಗಲಿದೆ ಎಂದು ತಿಳಿಸಿದರು.
ಸಮಾರಂಭದಲ್ಲಿ ಪ.ಪಂ ಅಧಿಕಾರಿ ವಿ.ಆಯ್. ಮಡಿವಾಳ, ರೋಣ ತಾಲೂಕಾ ಶ್ರೀ.ಧ.ಗ್ರಾ ಯೋಜನಾಧಿಕಾರಿ ಮಹಾಬಲೇಶ್ವರ ಪಟಗಾರ, ಈಶ್ವರ ಬೆಟಗೇರಿ, ಜ್ಞಾನ ವಿಕಾಸ ಸಮನ್ವಯಾಧಿಕಾರಿ ಅಶ್ವಿನಿ ಪಿ.ಎಮ್ ಹಾಗೂ ವಲಯ ಮೇಲ್ವಿಚಾರಕ ಯತಿರಾಜ ಉಪಸ್ತಿತರಿದ್ದರು. ಶೃತಿ ಕಲಾ ತಂಡದವರು ಬೀದಿ ನಾಟಕ ಹಾಗೂ ಗೀತೆಗಳ ಮೂಲಕ ಜಾಗೃತಿ ಕಾರ್ಯಕ್ರಮ ನಡೆಸಿಕೊಟ್ಟರು. ಸೇವಾ ಪ್ರತಿನಿಧಿಗಳಾದ ಸುಮಲತಾ ಕೋರದಾನ್ಯಮಠ, ಸಾವಿತ್ರಿ ಹಾಗೂ ಅನುಸೂಯಾ ಇದ್ದರು. ಪುಷ್ಪಲತಾ ಜಕ್ಕಲಿ ಸ್ವಾಗತಿಸಿದರು. ಸುಮಾ ಹರಟೆ ನಿರೂಪಿಸಿ ವಂದಿಸಿದರು.