ಗ್ರಾಮೀಣ ಪರಂಪರೆಯ ಪ್ರತೀಕ

0
vishvavidyalaya
Spread the love

ಗ್ರಾಮೀಣಾಭಿವೃದ್ಧಿ ಸಂಕಲ್ಪದೊಂದಿಗೆ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯವು ಮಾರ್ಚ್ ೬, ೨೦೨೪ರಂದು ೪ನೇ ಘಟಿಕೋತ್ಸವಕ್ಕೆ ಸಜ್ಜುಗೊಳ್ಳುತ್ತಿದೆ. ಘಟಿಕೋತ್ಸವವು ವಿಶ್ವವಿದ್ಯಾಲಯ ಸಂಘಟಿಸುವ ಅತ್ಯಂತ ಮುಖ್ಯ ಸಮಾರಂಭವಾಗಿದೆ. ಈ ಸಮಾರಂಭವು ವಿಶ್ವವಿದ್ಯಾಲಯದ ಶೈಕ್ಷಣಿಕ ಪರಿಧಿಯಲ್ಲಿ ಸ್ಮರಣೀಯ ಸಂದರ್ಭವಾಗಿ ನಿಲ್ಲುತ್ತದೆ. ಇದು ವಿದ್ಯಾರ್ಥಿಗಳಿಗೆ ಕಲೆ, ಸಾಹಿತ್ಯ, ಸಂಸ್ಕೃತಿ, ವಾಣಿಜ್ಯ, ವಿಜ್ಞಾನ, ಗ್ರಾಮೀಣಾಭಿವೃದ್ಧಿ ಮೊದಲಾದ ವಿಷಯಗಳಲ್ಲಿ ಪ್ರತಿಭೆಯನ್ನು ಪ್ರದರ್ಶಿಸುವ ಅವಕಾಶವನ್ನು ನೀಡುತ್ತದೆ. ಇದರಿಂದ ಅವರ ಸಾಮಾಜಿಕ, ಸಂಸ್ಕೃತಿಕ, ಕಲೆ ಹಾಗೂ ವೈಜ್ಞಾನಿಕ ದೃಷ್ಟಿಕೋನಗಳು ವಿಕಸಿತಗೊಳ್ಳುತ್ತವೆ.

Advertisement

ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಯ ಜೊತೆಗೆ, ವಿದ್ಯಾರ್ಥಿಗಳನ್ನು ಗ್ರಾಮೀಣಾಭಿವೃದ್ಧಿಯ ವಿವಿಧ ಆಯಾಮಗಳಿಗೆ ಕೊಡುಗೆ ನೀಡುವ ಹಿನ್ನೆಲೆಯಲ್ಲಿ ಸದಾ ಸನ್ನದ್ಧವಾಗಿ ಕಾರ್ಯನಿರ್ವಹಿಸುತ್ತಿರುವ ವಿಶ್ವವಿದ್ಯಾಲಯವು, ಗ್ರಾಮೀಣಾಭಿವೃದ್ಧಿಗೆ ಪೂರಕವಾದ ವಿವಿಧ ವಿಷಯಗಳಲ್ಲಿ ಬೋಧನೆ, ಸಂಶೋಧನೆ, ವಿಸ್ತೀರ್ಣ ಚಟುವಟಿಕೆಗಳನ್ನು ನಡೆಸುತ್ತಾ, ಪದವಿಗಳನ್ನು ನೀಡುತ್ತಾ ಬಂದಿದೆ. ಕಳೆದ ೬ ಶೈಕ್ಷಣಿಕ ವರ್ಷಗಳಲ್ಲಿ ಮೂರು ಅರ್ಥಪೂರ್ಣ ಘಟಿಕೋತ್ಸವಗಳನ್ನು ಆಚರಿಸಿದೆ.

ವಿಶ್ವವಿದ್ಯಾಲಯದ ಪ್ರತಿ ಘಟಿಕೋತ್ಸವಕ್ಕೆ ವಿಶ್ವವಿದ್ಯಾಲಯದ ಗಾಂಧಿ ಸಬರಮತಿ ಆಶ್ರಮದಿಂದ ಚಾಲನೆಯನ್ನು ನೀಡಲಾಗುತ್ತದೆ. ಸಮಾರಂಭದಲ್ಲಿ ಭಾಗಿಯಾದ ಗಣ್ಯರೆಲ್ಲರೂ ಆಶ್ರಮದ ಮಹಾತ್ಮ ಗಾಂಧಿ ಪ್ರತಿಮೆಗೆ ಪುಷ್ಪ ನಮನವನ್ನು ಸಲ್ಲಿಸಿ, ಖಾದಿ ಪೋಷಾಕಿನೊಂದಿಗೆ ಮೆರವಣಿಗೆಯಲ್ಲಿ ಪಾಲ್ಗೊಳ್ಳುತ್ತಾರೆ. ಶಬ್ದಗಳ ಸ್ವರಮೇಳ, ಗಣ್ಯರ, ಅಧ್ಯಾಪಕರ, ಪದವಿ ಪಡೆದ ವಿದ್ಯಾರ್ಥಿಗಳಿಂದ ಕೂಡಿದ ಭವ್ಯವಾದ ಈ ಮೆರವಣಿಗೆ, ಪದವೀಧರರನ್ನು ಪ್ರೇರೇಪಿಸುವ ಅತಿಥಿಗಳ ಸ್ಪೂರ್ತಿದಾಯಕ ಭಾಷಣ, ವಿದ್ಯಾರ್ಥಿಗಳು ವೇದಿಕೆ ಉದ್ದಕ್ಕೂ ನಡೆದು ಬಂದು ಪದವಿ ಪ್ರಮಾಣ ಪತ್ರ ಸ್ವೀಕರಿಸುವ ದೃಶ್ಯಗಳು, ಇದನ್ನು ಹುರಿದುಂಬಿಸುವ ಸ್ನೇಹಿತರು ಮತ್ತು ಕುಟುಂಬದವರು ಸಮಾರಂಭದ ಇಂತಹ ಪ್ರತಿಯೊಂದು ಸನ್ನಿವೇಶಗಳು ವಿಶ್ವವಿದ್ಯಾಲಯಕ್ಕೆ ಮತ್ತು ವಿದ್ಯಾರ್ಥಿಗಳಿಗೆ ಅನುಭವವನ್ನು ಕಟ್ಟಿಕೊಡುತ್ತವೆ.

collageಗ್ರಾಮೀಣಾಭಿವೃದ್ಧಿ, ಗ್ರಾಮೀಣ ನಿರ್ವಹಣೆ, ಸಮಾಜಕಾರ್ಯ, ವಾಣಿಜ್ಯ, ಆಹಾರ ತಂತ್ರಜ್ಞಾನ, ಭೂ-ಮಾಹಿತಿ ತಂತ್ರಜ್ಞಾನ, ಆಡಳಿತ ಹಾಗೂ ಅರ್ಥಶಾಸ್ತç ಸೇರಿದಂತೆ ಮೊದಲಾದ ವಿಷಯಗಳಲ್ಲಿ ಉತ್ತೀರ್ಣರಾದ ೨೫೦ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯವು ಈ ಘಟಿಕೋತ್ಸವದಲ್ಲಿ ಸ್ನಾತಕೋತ್ತರ ಪದವಿಯನ್ನು ಪ್ರದಾನ ಮಾಡಲಿದೆ.

ಘಟಿಕೋತ್ಸವದಲ್ಲಿ ವಿಶ್ವವಿದ್ಯಾಲಯದ ೧೦ ಸ್ನಾತಕೋತ್ತರ ಅಧ್ಯಯನ ಕಾರ್ಯಕ್ರಮಗಳಲ್ಲಿ ಪ್ರಥಮ ಶ್ರೇಣಿಯನ್ನು ಗಳಿಸಿದ ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಮತ್ತು ಪ್ರಮಾಣಪತ್ರವನ್ನು ಪ್ರದಾನ ಮಾಡಲಾಗುವುದು. ದ್ವಿತೀಯ ಮತ್ತು ತೃತೀಯ ಸ್ಥಾನವನ್ನು ಗಳಿಸಿದ ೨೦ ವಿದ್ಯಾರ್ಥಿಗಳಿಗೆ ರ‍್ಯಾಂಕ್ ಪ್ರಮಾಣಪತ್ರವನ್ನು ವಿಶ್ವವಿದ್ಯಾಲಯವು ನೀಡಲಿದೆ.

ಘಟಿಕೋತ್ಸವದ ಅದ್ಧೂರಿ ಸಮಾರಂಭಕ್ಕೆ ಗಣ್ಯರ ಆಗಮನ ಮತ್ತು ಉಪಸ್ಥಿತಿಯು ಮೆರಗನ್ನು ನೀಡಲಿದೆ. ಘಟಿಕೋತ್ಸವದಲ್ಲಿ ಕರ್ನಾಟಕ ರಾಜ್ಯದ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಭಾಗಿಯಾಗಿ, ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಿದ್ದಾರೆ. ಗ್ರಾಮೀಣಾಭಿವೃದ್ಧಿ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಗೌರವ ಡಾಕ್ಟರೇಟ್‌ನ್ನು ಪ್ರದಾನ ಮಾಡುವರು. ಕರ್ನಾಟಕ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವರಾದ ಮತ್ತು ವಿಶ್ವವಿದ್ಯಾಲಯದ ಸಹಕುಲಾಧಿಪತಿಗಳಾದ ಪ್ರಿಯಾಂಕ್ ಖರ್ಗೆ ಉಪಸ್ಥಿತರಿರುವರು. ಕೇಂದ್ರ ಪಂಚಾಯತ್ ರಾಜ್ ಸಚಿವಾಲಯದ ಮಾಜಿ ಜಂಟಿ ಕಾರ್ಯದರ್ಶಿಗಳಾದ ಡಾ. ಟಿ.ಆರ್. ರಘನಂದನ್ ಘಟಿಕೋತ್ಸವದ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಘಟಿಕೋತ್ಸವ ವೇದಿಕೆಯಲ್ಲಿ ಕುಲಪತಿಗಳಾದ ಪ್ರೊ. ವಿಷ್ಣುಕಾಂತ ಚಟಪಲ್ಲಿ, ಕುಲಸಚಿವರಾದ ಪ್ರೊ. ಸುರೇಶ ವಿ. ನಾಡಗೌಡರ, ವಿವಿಧ ನಿಕಾಯಗಳ ಮುಖ್ಯಸ್ಥರುಗಳು, ಮತ್ತು ವಿಶ್ವವಿದ್ಯಾಲಯದ ಕಾರ್ಯನಿರ್ವಾಹಕ ಮಂಡಳಿ ಸದಸ್ಯರುಗಳು, ಶೈಕ್ಷಣಿಕ ಪರಿಷತಿನ ಸದಸ್ಯರುಗಳು ಹಾಜರಿದ್ದು, ಸಮಾರಂಭಕ್ಕೆ ಮತ್ತಷ್ಟು ಮೆರಗನ್ನು ತರಲಿದ್ದಾರೆ.

ಅಂತಿಮವಾಗಿ ವಿಶ್ವವಿದ್ಯಾಲಯದ ಘಟಿಕೋತ್ಸವವು ವಿದ್ಯಾರ್ಥಿಗಳ ಅನುಭವ ಮತ್ತು ಬೆಳವಣಿಗೆಗೆ ಅತ್ಯಂತ ಪ್ರಮುಖ ಘಟ್ಟವಾಗಿ ನಿಲ್ಲುತ್ತದೆ. ಪದವೀಧರರು ಈ ಮೂಲಕ ಶಿಕ್ಷಣದಿಂದ ವಿಶಾಲ ಜಗತ್ತಿಗೆ ತಮ್ಮನ್ನು ತಾವು ಪರಿಚಯಿಸಿಕೊಳ್ಳುತ್ತಾರೆ. ಅವರು ಪಡೆದ ಶಿಕ್ಷಣ, ಮಾಹಿತಿ ಮತ್ತು ಅನುಭವನ್ನು ಸಂಸ್ಕರಿಸಿ ಗ್ರಾಮೀಣ ಸಾಮಾಜಿಕ ಸಂದರ್ಭಕ್ಕೆ ಸೂಕ್ತವಾಗುವ ವಿಚಾರಗಳ ಮತ್ತು ಕ್ರಿಯೆಗಳ ಸುಸಂಗತವಾದ ರೂಪವೊಂದನ್ನು ಸೃಷ್ಟಿಸಬಲ್ಲ ಸಂತುಲಿತವಾದ ಮನಸ್ಸುಗಳಾಗಿ ಹೊರಹೊಮ್ಮುಲಿ ಎಂದು ಆಶಿಸುತ್ತಾ, ವಿಶ್ವವಿದ್ಯಾಲಯದ ಘಟಿಕೋತ್ಸವವು ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಗಳನ್ನು ಗೌರವಿಸುವುದು ಮಾತ್ರವಲ್ಲದೆ, ಅವರ ಉಜ್ಜಲ ಮತ್ತು ಪ್ರಭುದ್ಧ ಭವಿಷ್ಯಕ್ಕಾಗಿ ಶುಭ ಹಾರೈಸುತ್ತದೆ.

ಘಟಿಕೋತ್ಸವವು ಮಧ್ಯಕಾಲೀನ ಯುರೋಪ್‌ನಲ್ಲಿ ಪರಿಚಿತವಾದ ಶೈಕ್ಷಣಿಕ ಸಂಪ್ರದಾಯವಾಗಿದೆ. ಘಟಿಕೋತ್ಸವದ ಸಮಾರಂಭಗಳಲ್ಲಿ ಪಾಶ್ಚಾತ್ಯ ಸಂಪ್ರದಾಯಗಳು ಕಂಡುಬರುವುದು ಸಾಮಾನ್ಯ. ಆದರೆ ನಮ್ಮ ವಿಶ್ವವಿದ್ಯಾಲಯ ಆಯೋಜಿಸುವ ಘಟಿಕೋತ್ಸವ ಸಮಾರಂಭವು ಸಂಪೂರ್ಣವಾಗಿ ಗ್ರಾಮೀಣ ಸೊಗಡಿನೊಂದಿಗೆ ಹಾಗೂ ಮಹಾತ್ಮ ಗಾಂಧೀಜಿಯವರ ವಿಚಾರಧಾರೆಗಳೊಂದಿಗೆ ಅನಾವರಣಗೊಂಡಿರುತ್ತದೆ. ಘಟಿಕೋತ್ಸವದಲ್ಲಿ ಭಾಗಿಯಾಗುವ ಗಣ್ಯರು, ಮುಖ್ಯ ಅತಿಥಿಗಳು, ಅತಿಥಿಗಳು, ಪದವೀಧರ ವಿದ್ಯಾರ್ಥಿಗಳು, ಅಧ್ಯಾಪಕರೆಲ್ಲರೂ ಖಾದಿ ದಿರಿಸನ್ನು ಧರಿಸಿ ಸಮಾರಂಭದಲ್ಲಿ ಭಾಗಿಯಾಗುತ್ತಾರೆ. ಇದರೊಂದಿಗೆ ಗ್ರಾಮೀಣ ಪರಂಪರೆಯನ್ನು ಪ್ರತಿನಿಧಿಸುವುದು, ವಿದ್ಯಾರ್ಥಿಗಳನ್ನು ಗ್ರಾಮೀಣಾಭಿವೃದ್ಧಿಗೆ ಅಣಿಗೊಳಿಸುವುದು ಘಟಿಕೋತ್ಸವದ ಮುಖ್ಯ ಉದ್ದೇಶವಾಗಿರುತ್ತದೆ.
– ಪ್ರಕಾಶ ಎಸ್.ಮಾಚೇನಹಳ್ಳಿ.
ಅಧ್ಯಾಪಕರು, ಕೆ.ಎಸ್.ಆರ್.ಡಿ.ಪಿ.ಆರ್. ವಿಶ್ವವಿದ್ಯಾಲಯ, ಗದಗ.


Spread the love

LEAVE A REPLY

Please enter your comment!
Please enter your name here