ವಿಜಯಸಾಕ್ಷಿ ಸುದ್ದಿ, ಧಾರವಾಡ : ನ್ಯಾಯದಾನದ ವಿಳಂಬವನ್ನು ತಪ್ಪಿಸಲು ಮತ್ತು ನ್ಯಾಯಾಲಯಗಳ ಕಾರ್ಯದೊತ್ತಡ ಕಡಿಮೆ ಮಾಡುವಲ್ಲಿ ಮಧ್ಯಸ್ಥಿಕೆ ಕೇಂದ್ರಗಳು ಪರಿಣಾಮಕಾರಿಯಾದ ಪಾತ್ರ ನಿರ್ವಹಿಸುತ್ತವೆ.
ನ್ಯಾಯಾಧೀಶರು, ನ್ಯಾಯವಾದಿಗಳು ಕಕ್ಷಿದಾರರಿಗೆ ತ್ವರಿತ ನ್ಯಾಯಾಲಯ, ಲೋಕ ಅದಾಲತ್ ಮತ್ತು ಮಧ್ಯಸ್ಥಿಕೆ ಕೇಂದ್ರಗಳ ಬಗ್ಗೆ ಅರಿವು ಮೂಡಿಸಬೇಕೆಂದು ಧಾರವಾಡ ಜಿಲ್ಲಾ ಪ್ರಧಾನ ಹಾಗೂ ಸತ್ರ ನ್ಯಾಯಾಧೀಶೆ ಬಿ.ಜಿ. ರಮಾ ಹೇಳಿದರು.
ಅವರು ಶನಿವಾರ ಬೆಳಿಗ್ಗೆ ಧಾರವಾಡ ಜಿಲ್ಲಾ ಪಂಚಾಯತ ಸಭಾಗಂಣದಲ್ಲಿ ಕರ್ನಾಟಕ ಮಧ್ಯಸ್ಥಿಕೆ ಕೇಂದ್ರ, ಕರ್ನಾಟಕ ಕಾನೂನು ಸೇವೆಗಳ ಪ್ರಾಧಿಕಾರ, ಉಚ್ಛ ನ್ಯಾಯಾಲಯ, ಕಾನೂನು ಸೇವಾ ಸಮಿತಿ, ಧಾರವಾಡ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಧಾರವಾಡ ವಕೀಲರ ಸಂಘದ ಆಶ್ರಯದಲ್ಲಿ ಗದಗ ಮತ್ತು ಧಾರವಾಡ ಜಿಲ್ಲೆಗಳ ನ್ಯಾಯವಾದಿಗಳಿಗೆ ಮಧ್ಯಸ್ಥಿಕೆಗಾರಿಕೆ ಕುರಿತು ಪುನರ್ ಮನನದ ಎರಡು ದಿನಗಳ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಧ್ಯಸ್ಥಿಕೆ ಒಂದು ಕೌಶಲ್ಯ. ಕಾನೂನು ಚೌಕಟ್ಟಿನಲ್ಲಿ ಪ್ರಕರಣಗಳನ್ನು ಸುಗಮವಾಗಿ ಪರಿಹರಿಸಬೇಕು. ಜನರ ಮಧ್ಯದಲ್ಲಿರುವ ವಿವಾದಗಳನ್ನು ಸೌರ್ಹಾದಯುತವಾಗಿ ಬಗೆಹರಿಸಬೇಕು. ಈ ನಿಟ್ಟಿನಲ್ಲಿ ಮಧ್ಯಸ್ಥ ನ್ಯಾಯವಾದಿಗಳ ಪಾತ್ರ ಮಹತ್ವದ್ದಾಗಿದೆ ಎಂದು ಅವರು ಹೇಳಿದರು.
ಅತಿಥಿಗಳಾಗಿದ್ದ ಕರ್ನಾಟಕ ಬಾರ್ ಕೌನ್ಸಿಲ್ ಸದಸ್ಯ ವಿ.ಡಿ. ಕಾಮರಡ್ಡಿ ಹಾಗೂ ಧಾರವಾಡ ವಕೀಲರ ಸಂಘದ ಅಧ್ಯಕ್ಷ ಅಶೋಕ ಏಣಗಿ ಮಾತನಾಡಿದರು. ಕರ್ನಾಟಕ ರಾಜ್ಯ ಬಾರ್ ಕೌನ್ಸಿಲ್ ಮಾಜಿ ಅಧ್ಯಕ್ಷ ಆನಂದಕುಮಾರ ಮಗದುಮ್ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾರ್ಯಗಾರ ಸಂಪನ್ಮೂಲ ವ್ಯಕ್ತಿಗಳಾದ ಬೆಂಗಳೂರು ಮಧ್ಯಸ್ಥಿಕೆಗಾರ ಕೇಂದ್ರದ ಲಕ್ಷ್ಮಿಶರಾವ್ ಮತ್ತು ಬಿನಾ ದೇವರಾಜ್ ವೇದಿಕೆಯಲ್ಲಿದ್ದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪರಶುರಾಮ ದೊಡ್ಡಮನಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಮಧ್ಯಸ್ಥಿಕೆ ಕೇಂದ್ರದ ದೀಪಕ ವಾಳದ ಕಾರ್ಯಕ್ರಮ ನಿರೂಪಿಸಿದರು. ಹಿರಿಯ ನ್ಯಾಯವಾದಿ ವೈ.ಪಿ. ಮದ್ನೂರ ವಂದಿಸಿದರು.
ಕಾರ್ಯಗಾರದಲ್ಲಿ ಧಾರವಾಡ ಜಿಲ್ಲಾ ನ್ಯಾಯಾಲಯಗಳ ವಿವಿಧ ನ್ಯಾಯಾಧೀಶರು ಗದಗ ಮತ್ತು ಧಾರವಾಡ ಜಿಲ್ಲೆಗಳ ಮಧ್ಯಸ್ಥಗಾರ ನ್ಯಾಯವಾದಿಗಳು ಭಾಗವಹಿಸಿದ್ದರು.
ಕಾರ್ಯಾಗಾರದಲ್ಲಿ ಪೂರ್ಣ ಮಾಹಿತಿ ಪಡೆದುಕೊಂಡು ಉಭಯ ಕಕ್ಷಿದಾರರಿಗೆ ಅದರ ಅನುಕೂಲತೆಗಳನ್ನು ತಿಳಿ ಹೇಳಬೇಕು. ಅವರು ಇಬ್ಬರು ಸ್ವಯಂ ಆಗಿ ಒಪ್ಪಿಗೆ ಸೂಚಿಸುವಂತೆ ಅರಿವು ಮೂಡಿಸಬೇಕು. ವಿವಾದಗಳನ್ನು ಬಗೆ ಹರಿಸಯುವ ಹಂತಕ್ಕೆ ಒಯ್ಯುವುದು ಒಂದು ಜಾಣತನ. ನ್ಯಾಯದಾನದಲ್ಲಿ ವಿಳಂಬವಾಗದಂತೆ ಗಮನ ಹರಿಸಲು ಜನತಾ ನ್ಯಾಯಾಲಯ, ತ್ವರಿತ ನ್ಯಾಯಾಲಯ ಮತ್ತು ಮಧ್ಯಸ್ಥಗಾರಿಕೆ ಕೇಂದ್ರಗಳನ್ನು ಕಾನೂನು ಚೌಕಟ್ಟಿನಲ್ಲಿ ನ್ಯಾಯದಾನ ವ್ಯವಸ್ಥೆ ಮಾಡಿದೆ ಎಂದು ನ್ಯಾಯಾಧೀಶೆ ಬಿ.ಜಿ. ರಮಾ ತಿಳಿಸಿದರು.