ವಿಜಯಸಾಕ್ಷಿ ಸುದ್ದಿ, ರೋಣ : ಪ್ರಾಮಾಣಿಕತೆಯ ಬದುಕು ಮುಸ್ಲಿಂರ ಆದ್ಯ ಕರ್ತವ್ಯವಾಗಬೇಕು. ಜೊತೆಗೆ ಶಾಂತಿ-ಸಹಬಾಳ್ವೆಯ ಜೀವನವನ್ನು ಕಟ್ಟಿಕೊಳ್ಳಬೇಕು ಎಂದು ಮೌಲಾನ್ ಮಲೀಕ್ ಹೇಳಿದರು.
ಅವರು ಗುರುವಾರ ಮಾರನಬಸರಿ ಗ್ರಾಮದ ಈದ್ಗಾ ಮೈದಾನದಲ್ಲಿ ಜರುಗಿದ ರಂಜಾನ್ ಹಬ್ಬದ ಸಾಮೂಹಿಕ ಪ್ರಾರ್ಥನೆಯ ನೇತೃತ್ವ ವಹಿಸಿ ಸಂದೇಶ ನೀಡಿದರು.
ಮುಸ್ಲಿಂರಿಗೆ ರಂಜಾನ್ ಅತ್ಯಂತ ಪವಿತ್ರ ಹಬ್ಬವಾಗಿದ್ದು, ತಿಂಗಳಕಾಲ ಉಪವಾಸ ಆಚರಣೆ ಮಾಡುವ ಮೂಲಕ ದೇವನಿಗೆ ವಿಷೇಷ ಪ್ರಾರ್ಥನೆಯನ್ನು ಸಲ್ಲಿಸಲಾಗುತ್ತದೆ. ಮುಸ್ಲಿಮರು ತಮ್ಮಲ್ಲಿ ಅಡಕವಾಗಿರುವ ದುಶ್ಚಟಗಳನ್ನು ತ್ಯಜಿಸಿ ಸುಂದರ ಜೀವನ ರೂಪಿಸಿಕೊಳ್ಳುವತ್ತ ದಾಪುಗಾಲು ಹಾಕಬೇಕು. ಮುಖ್ಯವಾಗಿ ಮಕ್ಕಳಿಗೆ ಧಾರ್ಮಿಕತೆಯ ಜೊತೆಗೆ ಗುಣಮಟ್ಟದ ಶಿಕ್ಷಣ ಕೊಡಿಸುವಲ್ಲಿ ಮುತುವರ್ಜಿ ವಹಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ಸಮಾಜಕ್ಕೆ ಭೂದಾನ ಮಾಡಿದ ಅಲ್ಲಾಸಾಬ ಹುಡೇದ ಹಾಗೂ ಬುಡ್ನೇಸಾಬ ಕಳಕಾಪೂರರವರನ್ನು ಸಮಾಜದ ವತಿಯಿಂದ ಸತ್ಕರಿಸಲಾಯಿತು. ಕಾಶಿಮಸಾಬ ದೋಟಿಹಾಳ, ನಬಿಸಾಬ ಹುಡೇದ, ಖಾದಿರಸಾಬ ಕಳಕಾಪೂರ, ರೈಮಾನಸಾಬ ಮೋತೆಖಾನ್, ಅಲ್ಲಿಸಾಬ ಸವಡಿ, ಪಕ್ರುಸಾಬ ಹಜರತನವರ, ಮೌಲಾಸಾಬ ಸವಡಿ, ಬಾಬು ಮೋತೆಖಾನ್, ಬಾಬು ಅತ್ತಾರ, ಅಲ್ಲಾಸಾಬ ಮೋತೆಖಾನ್, ಡಿ.ಡಿ. ದೋಟಿಹಾಳ, ರಿಯಾಜ್ ಆಲೂರ, ಮಹ್ಮದ ಸವಡಿ, ಅಬ್ದುಲ್ ಗದಗ, ಹುಸೇನಸಾಬ ಹುಡೇದ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಮುಸ್ಲಿಂ ಬಾಂಧವರು ಉಪಸ್ಥಿತರಿದ್ದರು.