ಗದಗ: ಎರಡು ಬೈಕ್ಗಳ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ರಸ್ತೆಗೆ ಬಿದ್ದ ಯುವಕನ ತಲೆ ಮೇಲೆ ಅಪರಿಚಿತ ವಾಹನ ಹರಿದ ಪರಿಣಾಮ ಯುವ ಕಾರ್ಮಿಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಕೊರ್ಲಹಳ್ಳಿ ಬಳಿ ನಡೆದಿದೆ.
ಸಾಹೇಬ ಮಹತೋ (30) ಮೃತ ಕಾರ್ಮಿಕ. ಈತ ಬಿಹಾರ ರಾಜ್ಯದ ಪೂರ್ವ ಚಂಪಾರಣ ಜಿಲ್ಲೆಯ ಹೈಸಿಂಗಪುರ ಗ್ರಾಮದ ನಿವಾಸಿ ಆಗಿದ್ದು, ವಿಜಯನಗರ ಸಕ್ಕರೆ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ರಾತ್ರಿ ವೇಳೆ ವೇಗವಾಗಿ ಸಂಚರಿಸುತ್ತಿದ್ದ ಎರಡು ಬೈಕ್ಗಳು ಕೊರ್ಲಹಳ್ಳಿ ಸಮೀಪ ಮುಖಾಮುಖಿಯಾಗಿ ಡಿಕ್ಕಿ ಹೊಡೆದಿವೆ. ಡಿಕ್ಕಿಯ ತೀವ್ರತೆಗೆ ಸಾಹೇಬ ಮಹತೋ ಬೈಕ್ನಿಂದ ರಸ್ತೆಗೆ ಬಿದ್ದಿದ್ದಾನೆ. ಇದೇ ವೇಳೆ ಹಿಂದಿನಿಂದ ಬಂದ ಅಪರಿಚಿತ ವಾಹನ ಆತನ ತಲೆಯ ಮೇಲೆ ಹರಿದ ಪರಿಣಾಮ ಸಾಹೇಬ ಮಹತೋ (30) ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ. ಅಪಘಾತದ ದೃಶ್ಯ ಕಂಡ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.
ಘಟನೆಯಲ್ಲಿ ಗಾಯಗೊಂಡ ಬಿಹಾರ ರಾಜ್ಯದ ಮುಜಿಯಾ ಮೂಲದ ರಂಜಿತ್ ಎಂಬಾತ ರಸ್ತೆ ಬದಿಯಲ್ಲಿ ನರಳಾಡುತ್ತಿದ್ದದ್ದನ್ನು ಕಂಡ ಸ್ಥಳೀಯರು ತಕ್ಷಣವೇ ಮುಂಡರಗಿ ತಾಲೂಕು ಆಸ್ಪತ್ರೆಗೆ ರವಾನಿಸಿದ್ದಾರೆ.
ಸುದ್ದಿ ತಿಳಿಯುತ್ತಿದ್ದಂತೆ ಮುಂಡರಗಿ ಪಿಎಸ್ಐ ಚನ್ನಯ್ಯ ದೇವೂರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಪರಿಚಿತ ವಾಹನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದು, ಮುಂಡರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



