ನಟ ಅನಿರುದ್ಧ ಜಟ್ಕರ್ ಅವರು ಬೆಂಗಳೂರು ನಗರಾಭಿವೃದ್ಧಿ ಸಚಿವ ಹಾಗೂ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರಿಗೆ ಬೆಂಗಳೂರಿನ ಸಮಸ್ಯೆಗಳ ಕುರಿತು ಪತ್ರ ಬರೆದಿದ್ದಾರೆ. ಬೆಂಗಳೂರಿನ ರಸ್ತೆಗಳ ಡಾಂಬರೀಕರಣ, ಬೀದಿ ದೀಪಗಳ ಸಮಸ್ಯೆ ಹಾಗೂ ಕಸದ ಸಮಸ್ಯೆ ಸೇರಿದಂತೆ ಇನ್ನೂ ಹಲವರು ಸಮಸ್ಯೆಗಳ ಕುರಿತು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಸಿಲಿಕಾನ್ ಸಿಟಿಯಲ್ಲಿ ಸಾಕಷ್ಟು ಮೂಲಭೂತ ಸೌಕರ್ಯಗಳ ಕೊರತೆ ಇದ್ದು ಇದರಿಂದ ಸಮಸ್ಯೆ ಆಗುತ್ತಿದೆ. ಇವನ್ನೆಲ್ಲಾ ಸರಿ ಪಡಿಸುವಂತೆ ಅನಿರುದ್ಧ ಜಟ್ಕರ್ ಪತ್ರದ ಮೂಲಕ ಡಿ.ಕೆ ಶಿವಕುಮಾರ್ ಬಳಿ ಮನವಿ ಮಾಡಿದ್ದಾರೆ. ಇದರ ಜೊತೆಗೆ ಕನಕಪುರ ರಸ್ತೆಯಲ್ಲಿರುವ ಕಗ್ಗಲೀಪುರ ಕೆರೆಯನ್ನು ಶುದ್ಧೀಕರಿಸುವ ಬಗ್ಗೆಯೂ ಮನವಿ ಮಾಡಿದ್ದಾರೆ.
ಪತ್ರದಲ್ಲಿ ಈ ಬಗ್ಗೆ ಬರೆದಿರುವ ಅನಿರುದ್ಧ್, ಬೆಂಗಳೂರಿನ ನಗರದಾದ್ಯಂತ ಮೂಲಭೂತ ಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದೆ. ದಯಮಾಡಿ ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕಾಗಿ ವಿನಂತಿ. ಬಹುತೇಕ ರಸ್ತೆಗಳ ಡಾಂಬರೀಕರಣ ಆಗಬೇಕು. ಬೀದಿ ದೀಪಗಳ ಸಮಸ್ಯೆ, ರಸ್ತೆಗಳಲ್ಲಿ ಕಸದ ಸಮಸ್ಯೆ, ಫುಟ್ಪಾತ್ಗಳ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದಿದ್ದಾರೆ.
ಅಲ್ಲದೆ ದುಸ್ಥಿತಿಯಲ್ಲಿರುವ ಕನಕಪುರ ರಸ್ತೆಯಲ್ಲಿರುವ ಕಗ್ಗಲೀಪುರ ಕೆರೆಯನ್ನು ಶುದ್ಧೀಕರಿಸುವ ಮೂಲಕ ಜೀರ್ಣೋದ್ಧಾರ ಮಾಡಿ, ಕೆರೆಯನ್ನು ಪುನಶ್ಚೇತನ ಮಾಡಬೇಕು. ಇದರಿಂದ ಸುತ್ತಲಿನ ಜನರಿಗೆ ಅನುಕೂಲವಾಗುತ್ತದೆ. ದುಸ್ಥಿತಿಯಲ್ಲಿರುವ ಕನಕಪುರ ರಸ್ತೆಯಲ್ಲಿರುವ ಕಗ್ಗಲೀಪುರ ಸಮೀಪದ ತರಳು ಗ್ರಾಮದ ಬಳಿ ಇರುವ ಗುಳಕಮಲೆ ಕೆರೆಯನ್ನು ಜೀರ್ಣೋದ್ಧಾರ ಮಾಡಬೇಕಾಗಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.