ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ವಿದ್ಯೆ ಯಾರ ಸ್ವತ್ತು ಅಲ್ಲ. ಪ್ರಾಮಾಣಿಕವಾಗಿ ಪ್ರಯತ್ನ ಮಾಡಿ, ನಿಷ್ಠೆಯಿಂದ ಸಾಧನೆ ಮಾಡುವ ಗುರಿ ಹೊಂದುವ ಪ್ರತಿಯೊಬ್ಬರೂ ಉತ್ತಮ ವಿದ್ಯಾವಂತರಾಗಬಹುದು. ಉನ್ನತ ಗುರಿ, ಸತತ ಅಭ್ಯಾಸ, ಕಠಿಣ ಪರಿಶ್ರಮ ಇವು ಸಾಧನೆಗೆ ರಹದಾರಿಯಾಗಿವೆ ಎಂದು ಹಿರಿಯ ಸಾಹಿತಿ ಪ್ರೊ.ನೀಲಗಿರಿ ತಳವಾರ ಹೇಳಿದರು.
ಅವರು ತಾಲ್ಲೂಕಿನ ಒಡೆಯರಮಲ್ಲಾಪುರ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಜರುಗಿದ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿ ಜೀವನ ಒಂದು ಮಹತ್ವದ ಘಟ್ಟವಾಗಿದ್ದು, ಶಿಸ್ತು, ಪ್ರಾಮಾಣಿಕತೆ ಬೆಳೆಸಿಕೊಳ್ಳುವದು ಅವಶ್ಯವಾಗಿದೆ.
ಇಂದು ನೀವು ವಿದ್ಯಾಭ್ಯಾಸಕ್ಕೆ ಪಡುವ ಶ್ರಮ ಮುಂದಿನ ಒಳ್ಳೆಯ ದಿನಗಳ ನಿಮಗಾಗಿ ಕಾಯುತ್ತಿರುತ್ತವೆ ಎನ್ನುವದನ್ನು ಮನದಟ್ಟು ಮಾಡಿಕೊಳ್ಳಬೇಕು. ಉತ್ತಮ ನಾಗರಿಕರಾಗಿ ದೇಶ ಸೇವೆ ಮಾಡುವ ನಿಟ್ಟಿನಲ್ಲಿ ಎಲ್ಲರೂ ಸಾಗಬೇಕೆಂದು ಕರೆನೀಡಿದರು.
ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಶರಣಯ್ಯ ಕುಲಕರ್ಣಿ ಮಾತನಾಡಿ, ವಿದ್ಯಾರ್ಥಿಗಳಾದವರಿಗೆ ಉತ್ತಮ ಸಂಸ್ಕಾರ, ಸಂಸ್ಕೃತಿ ಅವಶ್ಯ. ಇಂದು ಸರಕಾರಗಳು ಅನೇಕ ಯೋಜನೆಗಳನ್ನು ಶಿಕ್ಷಣಕ್ಕಾಗಿ ನೀಡುತ್ತಿವೆ. ಬಡ-ಮದ್ಯಮ ವರ್ಗದ ಜನರು ಇಂತಹ ಸೌಲಭ್ಯಗಳನ್ನು ಪಡೆದಕೊಂಡು ಉತ್ತಮ ವಿದ್ಯೆ ಪಡೆಯುವ ನಿಟ್ಟಿನಲ್ಲಿ ಯೋಚಿಸಬೇಕು ಎಂದರು.
ಪ್ರಾಚಾರ್ಯ ಡಿ.ಸಿ. ನರೇಗಲ್ಲ ಅಧ್ಯಕ್ಷತೆ ವಹಿಸಿದ್ದರು. ಕಸಾಪ ತಾಲೂಕು ಘಟಕದ ಅಧ್ಯಕ್ಷ ಈಶ್ವರ ಮೆಡ್ಲೇರಿ, ನಾಗರಾಜ ಹಣಗಿ, ಯಲ್ಲಪ್ಪ ತಳವಾರ, ಜ್ಯೋತಿ ಗಾಯಕವಾಡ, ಎಸ್.ಎನ್. ತಳ್ಳಳ್ಳಿ, ರೂಪಾ ಮನ್ನಂಗಿ ಮತ್ತು ಅರ್ಜುನ ವಠಾರ ಇದ್ದರು.