ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಪಟ್ಟಣದ ಶ್ರೀ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಗುರುಪೂರ್ಣಿಮೆ ನಿಮಿತ್ತ ನೂರಾರು ಮಕ್ಕಳಿಗೆ ತಂದೆ-ತಾಯಿಯರ ಸಮ್ಮುಖದಲ್ಲಿ ಸಂಪ್ರದಾಯದಂತೆ ಶಾಸ್ತ್ರೋಕ್ತವಾಗಿ ಸಾಯಿಬಾಬಾ ಅವರ ಸನ್ನಿಧಿಯಲ್ಲಿ ಅಕ್ಷರಾಭ್ಯಾಸವನ್ನು ನೆರವೇರಿಸಲಾಯಿತು. ಸಾಯಿ ಮಂದಿರದ ಅಧ್ಯಕ್ಷರು ಹಾಗೂ ಪ್ರಧಾನ ಅರ್ಚಕರಾಗಿರುವ ಸಿದ್ದಲಿಂಗಯ್ಯಶಾಸ್ತಿçಗಳು ಹಿರೇಮಠ ಮತ್ತು ಶಿವಾನಂದ ಶಾಸ್ತಿçಗಳ ಸಾನ್ನಿಧ್ಯದಲ್ಲಿ ಯಶಸ್ವಿಯಾಗಿ ಜರುಗಿತು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಷೋಡಶ ಸಂಸ್ಕಾರಗಳಲ್ಲಿ ಅಕ್ಷರಾಭ್ಯಾಸವೂ ಒಂದು. ಅಕ್ಷರ ಎಂಬ ಶಬ್ಧಕ್ಕೆ ನಾಶವಿಲ್ಲದಿರುವುದು ಎಂದರ್ಥ. ಅಭ್ಯಾಸವೆಂದರೆ ಆ ತತ್ವಕ್ಕೆ ತನ್ನನ್ನು ಅಭಿಮುಖವಾಗಿ ಇರಿಸಿಕೊಳ್ಳುವುದು. ಅಕ್ಷರಾಭ್ಯಾಸ ಅತ್ಯಂತ ಶ್ರೇಷ್ಠವಾದುದು. ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸುವ ಮೂಲಕ ಕಲಿಕೆಗೆ ಮುನ್ನುಡಿ ಬರೆಯಲಾಗುತ್ತಿದೆ ಎಂದು ಹೇಳಿದರು.
ಅಕ್ಷರಾಭ್ಯಾಸ ಒಂದು ಮಹತ್ವದ ಸಂಸ್ಕಾರವಾಗಿದ್ದು, ಪೋಷಕರು ತಮ್ಮ ಮಕ್ಕಳಿಗೆ ಆಸ್ತಿ ಮಾಡುವ ಬದಲು ಅಕ್ಷರ ಕಲಿಸಿದರೆ ಪೋಷಕರು ನೀಡುವ ಆಸ್ತಿಗಿಂದ 10 ಪಟ್ಟು ಆಸ್ತಿ ಸಂಪಾದನೆ ಮಾಡುವ ಶಕ್ತಿ ಬರುತ್ತದೆ. ಈ ಹಿನ್ನೆಲೆಯಲ್ಲಿ ಮಕ್ಕಳಿಗೆ ಶಾಲೆ ದೇವಾಲಯವಿದ್ದಂತೆ. ಈ ನಿಟ್ಟಿನಲ್ಲಿ ಸಾಯಿಬಾಬಾರ ಸನ್ನಿಧಿಯಲ್ಲಿ ಅಕ್ಷರಾಭ್ಯಾಸ ಕೈಗೊಳ್ಳುವ ಮೂಲಕ ಮಗುವಿಗೆ ಉತ್ತಮ ಸಂಪ್ರದಾಯವನ್ನು ಕಲಿಸಿ ಉಳಿಸಿ ಬೆಳೆಸುವ ಕಾರ್ಯವನ್ನು ಪಾಲಕರು ಮಾಡಬೇಕು. ಇಂತಹ ಪವಿತ್ರ ಕಾರ್ಯದಲ್ಲಿ ಪಾಲ್ಗೊಂಡ ಎಲ್ಲರಿಗೂ ಉತ್ತಮ ಸಂಸ್ಕಾರ ದೊರೆಯುವಂತಾಗಲಿ ಎಂದು ಹೇಳಿದರು.
ನೂರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದ ಮಕ್ಕಳು ಮತ್ತು ಪಾಲಕರು ತಮ್ಮ ತಮ್ಮ ಮಕ್ಕಳ ಅಕ್ಷರಾಭ್ಯಾಸಕ್ಕೆ ನಾಂದಿ ಹಾಡಿದರು. ಗುರುಪೂರ್ಣಿಯ ದಿನವಾಗಿದ್ದರಿಂದ ಎಲ್ಲರಿಗೂ ಉಚಿತವಾಗಿ ಅಕ್ಷರಾಭ್ಯಾಸದ ವ್ಯವಸ್ಥೆಯನ್ನು ಮಂದಿರದ ಕಮಿಟಿಯವರು ಮಾಡಿದ್ದು ವಿಶೇಷವಾಗಿತ್ತು.
ಅಕ್ಷರಾಭ್ಯಾಸದಲ್ಲಿ ಅರ್ಚಕರಾದ ಶಿವಾನಂದ ಶಾಸ್ತಿçಗಳು, ಗುರುಸಿದ್ದಯ್ಯಶಾಸ್ತ್ರಿಗಳು, ಆನಂದಸ್ವಾಮಿಶಾಸ್ತ್ರಿಗಳು, ಪ್ರಸನ್ನ ಶಾಸ್ತ್ರಿಗಳು ಸೇರಿದಂತೆ ಅನೇಕರಿದ್ದರು.