ಬೆಂಗಳೂರು:- ಸಂಜು ವೆಡ್ಸ್ ಗೀತಾ 2′ ನಿರ್ದೇಶಕ ನಾಗಶೇಖರ್ ಮಾಡಿರುವ ಆರೋಪಗಳಿಗೆ ನಟಿ ರಚಿತಾ ರಾಮ್ ವಿಡಿಯೋ ಮೂಲಕ ಇದೀಗ ಸ್ಪಷ್ಟನೆ ಕೊಟ್ಟಿದ್ದಾರೆ. ಕಳೆದೊಂದು ವಾರದಿಂದ ನಡೆಯುತ್ತಿರುವ ವಿವಾದದ ಕುರಿತು ಬೇಸರ ವ್ಯಕ್ತಪಡಿಸಿರುವ ರಚಿತಾ, ಚಿತ್ರತಂಡದ ಮಾತುಗಳು ತಮಗೆ ಬೇಸರ ಉಂಟು ಮಾಡಿವೆ ಅಂತ ಹೇಳಿದ್ದಾರೆ.
ಈ ಸಂಬಂಧ ರಚಿತಾ ರಾಮ್ ಇನ್ಸ್ಟಾಗ್ರಾಮ್ನಲ್ಲಿ ವಿಡಿಯೋ ಅಪ್ಲೋಡ್ ಮಾಡುವ ಮೂಲಕ ಸ್ಪಷ್ಟನೆ ನೀಡಿದ್ದಾರೆ. ನಾಗಶೇಖರ್ ಈಗ ನನ್ನ ವಿರುದ್ಧ ಮಾಡುತ್ತಿರುವ ಎಲ್ಲಾ ಆರೋಪಗಳು ಸುಳ್ಳು. ಜನವರಿ 17 ರಂದು ಸಂಜು ವೆಡ್ಸ್ ಗೀತಾ 2 ಮೊದಲ ಬಾರಿ ಬಿಡುಗಡೆಯಾಗಿತ್ತು. ಮೊದಲ ಬಾರಿ ಸಿನಿಮಾ ಬಿಡುಗಡೆಯಾದಾಗ ನಾನು ಎಲ್ಲಾ ಪ್ರಚಾರಕ್ಕೆ ಹೋಗಿದ್ದೇನೆ. ಈ ಸಂದರ್ಭದಲ್ಲಿ ಇಡೀ ಸಿನಿಮಾ ತಂಡ ನನಗೆ ಮೆಚ್ಚುಗೆ ಸೂಚಿಸಿತ್ತು. ಈಗ ಯಾಕೆ ನನ್ನ ಅನುಪಸ್ಥಿತಿಯಲ್ಲಿ ಆ ರೀತಿ ಮಾತಾನಾಡುತ್ತಿದ್ದಾರೋ ಗೊತ್ತಿಲ್ಲ. ಈಗ ನಾನು ಬೇರೊಂದು ಸಿನಿಮಾದಲ್ಲಿ ಅಭಿನಯಿಸುತ್ತಿದ್ದು ಅವರಿಗೆ ಡೇಟ್ ನೀಡಿದ್ದೇನೆ. ಈ ಸಂದರ್ಭದಲ್ಲಿ ಎರಡನೇ ಬಾರಿ ಸಿನಿಮಾ ರಿಲೀಸ್ ಆಗುತ್ತಿದ್ದು ಈಗ ಪ್ರಚಾರಕ್ಕೆ ಬರಬೇಕು ಎಂದು ಹೇಳಿದರೆ ಹೇಗೆ? ಇದೇ ಸಂಜು ವೆಡ್ಸ್ ಗೀತಾ ತಂಡ ಶೂಟಿಂಗ್ ಕಾರಣವೊಡ್ಡಿ ಬೇರೊಂದು ಸಿನಿಮಾ ಪ್ರಚಾರಕ್ಕೆ ಅವಕಾಶ ಮಾಡಿಕೊಡಲಿಲ್ಲ. ಆ ಸಿನಿಮಾವನ್ನು ಮಹಿಳಾ ನಿರ್ಮಾಪಕಿ ನಿರ್ಮಾಣ ಮಾಡಿದ್ದರು. ಅವರು ದುಡ್ಡು ಹಾಕಿರ್ಲಿಲ್ವಾ? ಅವಾಗ ಆ ನಿರ್ಮಾಪಕರಿಗೆ ಕಷ್ಟ ಆಗಿಲ್ವಾ?
ನಾನು ಪ್ರಚಾರಕ್ಕೆ ಹೋಗದೇ ಇದ್ರೂ ನಾನು ಸಾಮಾಜಿಕ ಜಾಲತಾಣದಲ್ಲಿ ಚಿತ್ರದ ಬಗ್ಗೆ ಪೋಸ್ಟ್, ಸ್ಟೋರಿ ಹಾಕಿದ್ದೇನೆ. ಈ ಹಿಂದೆ ಪ್ರಚಾರದ ಸಮಯದಲ್ಲಿ ಸರಿಯಾದ ಪ್ಲ್ಯಾನಿಂಗ್ ಮಾಡಿರಲಿಲ್ಲ. ಒಂದೊಂದು ದಿನ ಒಂದೊಂದು ಶೆಡ್ಯೂಲ್ ಹೇಳುತ್ತಿದ್ದರು. ಇಂದು ಕಾರ್ಯಕ್ರಮ ಎಂದು ಹೇಳಿ ಮುಂದೂಡುತ್ತಿದ್ದರು. ಹೀಗಾಗಿ ನನಗೆ ಎರಡನೇ ಬಾರಿ ಪ್ರಚಾರದಲ್ಲಿ ಭಾಗಿಯಾಗಲು ಸಾಧ್ಯವಾಗಿಲ್ಲ. ಇದೆಲ್ಲಾ ನನ್ನ ಮೇಲೆ ಉದ್ದೇಶಪೂರ್ವಕವಾಗಿಯೇ ಮಾಡಿರುವ ಆರೋಪ. ಇನ್ನೊಂದು ಸಿನಿಮಾದ ಅಡ್ವಾನ್ಸ್ ಪಡೆದು ವಾಪಸ್ ಮಾಡಿಲ್ಲ ಎಂಬ ಮತ್ತೊಂದು ಆರೋಪ ನನ್ನ ಮೇಲೆ ಬಂದಿದೆ. ಈ ಆರೋಪದ ಬಗ್ಗೆ ಸಾರಾ ಗೋವಿಂದು ಅವರ ನೇತೃತ್ವದಲ್ಲಿ ಮಾತುಕತೆ ನಡೆಯುತ್ತಿದೆ. ಅವರು ನನ್ನ ಬಳಿ ಈ ಬಗ್ಗೆ ಏನು ಮಾತನಾಡಬೇಡ ಎಂದು ಹೇಳಿದ್ದಾರೆ. ಹೀಗಾಗಿ ನಾನು ಈ ಆರೋಪದ ಬಗ್ಗೆ ಈಗ ಮಾತನಾಡುತ್ತಿಲ್ಲ.
ನಾನು ಸಂಜು ವೆಡ್ಸ್ ಗೀತಾ 2 ಚಿತ್ರತಂಡದ ಜೊತೆ ಯಾವುದೇ ತಪ್ಪು ಮಾಡಿಲ್ಲ. ತಪ್ಪು ಮಾಡದೇ ಇರುವಾಗ ನಾನು ಯಾಕೆ ಕ್ಷಮೆ ಕೇಳಬೇಕು? ಈಗಾಗಲೇ ನಾನು ಈ ವಿಚಾರದ ಬಗ್ಗೆ ಅಭಿಮಾನಿಗಳಿಗೆ ಸ್ಪಷ್ಟನೆ ನೀಡಿದ್ದೇನೆ. ಈ ಎಲ್ಲಾ ವಿಚಾರ ತಿಳಿದುಕೊಂಡು ನಾನು ತಪ್ಪು ಮಾಡಿದ್ದೇನೆ ಎಂದು ಅಭಿಮಾನಿಗಳು ಭಾವಿಸಿದರೆ ಅಭಿಮಾನಿಗಳ ಜೊತೆ ಮಾತ್ರ ಕ್ಷಮೆ ಕೇಳುತ್ತೇನೆ ಹೊರತು ಬೇರೆ ಯಾರ ಬಳಿಯೂ ಕ್ಷಮೆ ಕೇಳುವುದಿಲ್ಲ ಎಂದು ರಚಿತಾ ರಾಮ್ ಹೇಳಿದ್ದಾರೆ.