ದಾವಣಗೆರೆ: ಕಳ್ಳತನ ಪ್ರಕರಣ ವಿಚಾರಣೆ ವೇಳೆ ಪೊಲೀಸ್ ಹಿಂಸೆ ಆರೋಪ ಕೇಳಿಬಂದಿದ್ದು, ಆತ್ಮಹತ್ಯೆಗೆ ಯತ್ನಿಸಿದ ಯುವಕನ ಸ್ಥಿತಿ ಗಂಭೀರವಾಗಿದೆ. ಈ ಘಟನೆ ಚನ್ನಗಿರಿ ತಾಲೂಕಿನ ಚಿಕ್ಕಬೆನ್ನೂರು ಗ್ರಾಮದಲ್ಲಿ ನಡೆದಿದೆ. ಗ್ರಾಮದ ಕಿರಣ್ (24) ಅತ್ಮಹತ್ಯೆಗೆ ಯತ್ನಿಸಿದ ಯುವಕ.
ಒಂದು ತಿಂಗಳ ಹಿಂದೆ ಸಂತೆಬೆನ್ನೂರು ಠಾಣೆ ವ್ಯಾಪ್ತಿಯ ಕಾಕನೂರು ಗ್ರಾಮದ ಒಂಟಿ ಮನೆಯಲ್ಲಿ ಕಳ್ಳತನವಾಗಿತ್ತು. ಕಳ್ಳತನವನ್ನು ಕಿರಣ್ ಮಾಡಿದ್ದಾನೆ ಎಂದು ಅರೋಪಿಸಿ ಅ.27 ರಂದು ಮಫ್ತಿಯಲ್ಲಿ ಬಂದ ಪೊಲೀಸರು ಕರೆದೊಯ್ದಿದ್ದರು. ಈ ವೇಳೆ ಪೊಲೀಸರು ಟಾರ್ಚರ್ ನೀಡಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಕಳ್ಳತನ ಮಾಡಿದವರು ಯಾರು ಎಂದು ಹೇಳಬೇಕು. ಇಲ್ಲ ನೀನೇ ಒಪ್ಪಿಕೊಳ್ಳಬೇಕು ಎಂದು ಪೊಲೀಸರು ಹೇಳಿ ಕಳುಹಿಸಿದ್ದರಂತೆ. ಮತ್ತೆ ಪೊಲೀಸ್ ಠಾಣೆಗೆ ಹೋಗಬೇಕಾಗುತ್ತದೆ ಎಂದು ಹೆದರಿ ನೇಣುಬಿಗಿದುಕೊಂಡು ಅತ್ಮಹತ್ಯೆಗೆ ಯತ್ನಿಸಿದ್ದಾನೆ.
ಕುಟುಂಬಸ್ಥರು ಆತನನ್ನು ರಕ್ಷಿಸಿ ದಾವಣಗೆರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆತನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ. ಟಾರ್ಚರ್ ನೀಡಿದ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕುಟುಂಬಸ್ಥರು ಆಗ್ರಹಿಸಿದ್ದಾರೆ.


