ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ-2 ಆರೋಪಿಯಾಗಿರುವ ನಟ ದರ್ಶನ್ಗೆ ಇಂದು ಬಿಗ್ ಡೇ ಆಗಿದೆ. ಈ ಪ್ರಕರಣದ ಪ್ರಮುಖ ಆರೋಪಿ ದರ್ಶನ್ ಜೊತೆಗೆ ನಟಿ ಪವಿತ್ರಾ ಗೌಡ ಸೇರಿದಂತೆ ಒಟ್ಟು 17 ಮಂದಿ ಆರೋಪಿಗಳು ಇಂದು ಕೋರ್ಟ್ ಮುಂದೆ ಹಾಜರಾಗಬೇಕಿದೆ.
ಬೆಂಗಳೂರು ಸಿಸಿಎಚ್ 64ನೇ ಕೋರ್ಟ್ನಲ್ಲಿ ನಡೆಯಲಿರುವ ಚಾರ್ಜ್ ಫ್ರೇಮ್ ಪ್ರಕ್ರಿಯೆಯಲ್ಲಿ, ಈ 17 ಮಂದಿ ಆರೋಪಿಗಳ ವಿರುದ್ಧ ದಾಖಲಾಗಿರುವ ಐಪಿಸಿ ಸೆಕ್ಷನ್ಗಳ ಆಧಾರದಲ್ಲಿ ಆರೋಪ ನಿಗದಿಯಾಗಲಿದೆ. ಕೊಲೆ ಪ್ರಕರಣದಲ್ಲಿ ದರ್ಶನ್ ಎರಡನೇ ಆರೋಪಿಯಾಗಿ (A2) ಹೆಸರು ಸೇರಿದ್ದು, ಈ ಪ್ರಕರಣವು ಅವರ ವೈಯಕ್ತಿಕ ಜೀವನ ಮತ್ತು ಚಲನಚಿತ್ರ ವೃತ್ತಿಜೀವನಕ್ಕೆ ದೊಡ್ಡ ಹೊಡೆತ ನೀಡಿದೆ ಎಂದು ಚಿತ್ರರಂಗದ ಮೂಲಗಳು ಹೇಳಿವೆ.
ದೋಷಾರೋಪ ನಿಗದಿಯ ಸಮಯದಲ್ಲಿ ನ್ಯಾಯಾಧೀಶರು ಪ್ರತಿ ಆರೋಪಿಯ ಹೆಸರು ಕೂಗಿ, ಅವರ ವಿರುದ್ಧ ದಾಖಲಾದ ಸೆಕ್ಷನ್ಗಳನ್ನು ಓದಿ ಹೇಳಲಿದ್ದಾರೆ. ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 302 (ಕೊಲೆ), 364 (ಕಿಡ್ನ್ಯಾಪ್), 202 (ಸಾಕ್ಷಿ ನಾಶ) ಸೇರಿದಂತೆ ಹಲವು ಕಾನೂನು ಪ್ರಕಾರ ಪ್ರಕರಣ ದಾಖಲಿಸಲಾಗಿದೆ.
ಪ್ರತಿ ಆರೋಪಿಯು “ಒಪ್ಪುತ್ತೇನೆ” ಅಥವಾ “ನಿರಾಕರಿಸುತ್ತೇನೆ” ಎಂದು ಕೋರ್ಟ್ ಮುಂದೆ ಸ್ಪಷ್ಟಪಡಿಸಬೇಕಿದೆ.
ತಾಂತ್ರಿಕ ಸಾಕ್ಷ್ಯಗಳಿಂದ ‘ಡಿ’ ಗ್ಯಾಂಗ್ಗೆ ಸಂಕಷ್ಟ:
ಪೊಲೀಸರು ಸಂಗ್ರಹಿಸಿದ ತಾಂತ್ರಿಕ ಮತ್ತು ವೈಜ್ಞಾನಿಕ ಸಾಕ್ಷ್ಯಗಳು ಆರೋಪಿಗಳ ವಿರುದ್ಧ ಭಾರೀ ತೂಕದಂತೆ ಪರಿಣಮಿಸಿವೆ. ಕೃತ್ಯ ನಡೆದ ದಿನ ಧರಿಸಿದ್ದ ಬಟ್ಟೆ, ಶೂ, ಚಪ್ಪಲಿಗಳ ಮೇಲೆ ರೇಣುಕಾಸ್ವಾಮಿ ರಕ್ತದ ಕಲೆಗಳು ಪತ್ತೆಯಾಗಿವೆ.
ಎಫ್ಎಸ್ಎಲ್ ವರದಿ ಪ್ರಕಾರ, ದರ್ಶನ್ನ ಲೂಫರ್ ಶೂ, ಪವಿತ್ರಗೌಡ ಚಪ್ಪಲಿ ಮತ್ತು ರಾಘವೇಂದ್ರನ ಪಾದರಕ್ಷೆಗಳಲ್ಲಿ ರಕ್ತದ ಅಂಶಗಳು ಕಂಡುಬಂದಿವೆ. ಈ ಡಿಎನ್ಎ ರಿಪೋರ್ಟ್ ಆರೋಪಿಗಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಹಾಗೆಯೇ, ವಾಟ್ಸಪ್ ಚಾಟ್ಗಳು, ಸಿಡಿಆರ್ (ಕಾಲ್ ಡೀಟೈಲ್ ರೆಕಾರ್ಡ್ಸ್) ಸೇರಿದಂತೆ ಸುತ್ತಮುತ್ತ 230 ಸಾಕ್ಷ್ಯಗಳನ್ನು ಪ್ರಾಸಿಕ್ಯೂಷನ್ ದಾಖಲಿಸಿದ್ದು, 76 ಪ್ರಮುಖ ಸಾಕ್ಷಿಗಳು ಕೋರ್ಟ್ ಮುಂದೆ ಸಾಕ್ಷ್ಯ ನೀಡಲಿದ್ದಾರೆ. ಘಟನಾ ಸ್ಥಳದಲ್ಲಿದ್ದ ಮೂವರು ನೇರ ಸಾಕ್ಷಿದಾರರ ಹೇಳಿಕೆಗಳು ಈ ಪ್ರಕರಣದ ತಿರುಳು.
ಅವರ ಹೇಳಿಕೆಗಳೇ ಆರೋಪಿಗಳ ವಿರುದ್ಧದ ಕೇಸ್ನ ನಡಿಗೆಯ ದಿಕ್ಕು ತೋರಿಸಲಿವೆ. ದೋಷಾರೋಪ ನಿಗದಿ ಬಳಿಕ ಕೋರ್ಟ್ ಟ್ರಯಲ್ಗೆ ದಿನಾಂಕ ಘೋಷಿಸುವ ಸಾಧ್ಯತೆ ಇದೆ. ಇಂದು ನಡೆಯಲಿರುವ ಪ್ರಕ್ರಿಯೆ ದರ್ಶನ್ ಸೇರಿದಂತೆ ಎಲ್ಲ ಆರೋಪಿಗಳಿಗೆ “ಟರ್ನಿಂಗ್ ಪಾಯಿಂಟ್” ಆಗಬಹುದು ಎಂದು ಕಾನೂನು ತಜ್ಞರು ಹೇಳುತ್ತಿದ್ದಾರೆ.



