ವಿಜಯಸಾಕ್ಷಿ ಸುದ್ದಿ, ಗದಗ : ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್ ಅವರ ಅಧ್ಯಕ್ಷತೆಯಲ್ಲಿ ಭಯೋತ್ಪಾದನಾ ವಿರೋಧಿ ದಿನಾಚರಣೆಯ ಅಂಗವಾಗಿ ಹಿಂಸೆ ಮತ್ತು ಭಯೋತ್ಪಾದನೆ ಮೆಟ್ಟಿ, ಶಾಂತಿ-ಸೌಹಾರ್ದತೆ ಕಾಪಾಡುವ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ಜರುಗಿತು.
ಅಪರ ಜಿಲ್ಲಾಧಿಕಾರಿ ಸುರೇಖಾ ಅವರು ಅಹಿಂಸೆ ಹಾಗೂ ಸಹನೆಗೆ ಹೆಸರಾದ ನಮ್ಮ ರಾಷ್ಟ್ರದ ಭವ್ಯ ಪರಂಪರೆಯಲ್ಲಿ ದೃಢ ವಿಶ್ವಾಸವುಳ್ಳ ನಾವು ಎಲ್ಲ ಬಗೆಯ ಭಯೋತ್ಪಾದನೆ ಮತ್ತು ಹಿಂಸೆಯನ್ನು ನಮ್ಮ ಶಕ್ತಿ ಸಾಮರ್ಥ್ಯದಿಂದ ಎದುರಿಸಿ ಶಾಂತಿ, ಸಾಮಾಜಿಕ ಸೌಹಾರ್ದತೆ ಸಾಧಿಸಿ ವಿಚ್ಛಿದ್ರಕಾರಿ ಶಕ್ತಿಗಳೊಡನೆ ಹೋರಾಡುವ ಪಣ ತೊಡುವ ಪ್ರಮಾಣ ವಚನ ಬೋಧಿಸಿದರು.
ಈ ಸಂದರ್ಭದಲ್ಲಿ ಕಂದಾಯ ಇಲಾಖೆಯ ಶಿರಸ್ತೇದಾರರಾದ ಎಂ.ಎಸ್. ಮೇಲ್ಮನಿ, ಎಸ್.ಎಂ. ಹಿರೇಮಠ, ಎಂ.ಎಸ್. ಫರ್ನಾಂಡೀಸ್, ಮಹೇಶ ಕರಡ್ಡಿಗುಡ್ಡ, ಸಹನಾ ಹಂಜೆ, ಎಸ್.ಪಿ. ಸಾವಳಗಿಮಠ, ಸಹಾಯಕ ನಿರ್ದೇಶಕರಾದ ತಾರಾಬಾಯಿ ನಾಯಕ ಸೇರಿದಂತೆ ವಿವಿಧ ಇಲಾಖೆಯ ಸಿಬ್ಬಂದಿಗಳು ಹಾಜರಿದ್ದರು.